SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

...

ನಂಬಿಕೆ ಕಳೆದುಕೊಂಡ ಸಾಂವಿಧಾನಿಕ ಸಂಸ್ಥೆಗಳು

PC: PTI ಭಾರತದ ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಕಳೆದುಕೊಂಡು ವಿವಾದಕ್ಕೆ ಕಾರಣವಾಗಿರುವ ಹಾಗೂ ಅಧೋಗತಿಯತ್ತ ಸಾಗಿರುವ ಇಂದಿನ ದಿನಗಳಲ್ಲಿ ಮುಂದೇನು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಸ್ವತಂತ್ರ ಭಾರತದ ಏಳೂವರೆ ದಶಕಗಳ ಇತಿಹಾಸದಲ್ಲಿ ಇಂಥ ಪರಿಸ್ಥಿತಿ ಹಿಂದೆಂದೂ ಉದ್ಭವವಾಗಿರಲಿಲ್ಲ. ಟಿ.ಎನ್. ಶೇಷನ್ ಅವರಂಥ ದಿಟ್ಟ ಮುಖ್ಯ ಚುನಾವಣಾ ಆಯುಕ್ತರನ್ನು ಕಂಡ ಈ ದೇಶದಲ್ಲಿ ಚುನಾವಣಾ ಆಯೋಗದ ಈಗಿನ ಮುಖ್ಯ ಆಯುಕ್ತರನ್ನು ಸಂಶಯದಿಂದ ನೋಡಬೇಕಾಗಿ ಬಂದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈಗಿನ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಇತ್ತೀಚಿನ ಕಾರ್ಯ ನಿರ್ವಹಣೆ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಅವರನ್ನು ಉಚ್ಚಾಟಿಸಲು ಪ್ರತಿಪಕ್ಷಗಳು ನಡೆಸಿರುವ ಪ್ರಯತ್ನ ಅಭೂತಪೂರ್ವವಾದುದು. ಸಂಸತ್ತಿನ ಪ್ರಮುಖ ಪ್ರತಿಪಕ್ಷಗಳು ಈಗಿನ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸಬೇಕೆಂದು ನೋಟಿಸ್ ಸಲ್ಲಿಸಿರುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ ಇಂಡಿಯಾ ಮೈತ್ರಿ ಕೂಟದ 130 ಲೋಕಸಭಾ ಸದಸ್ಯರು ಹಾಗೂ 63 ರಾಜ್ಯಸಭಾ ಸದಸ್ಯರು ಸಹಿ ಹಾಕಿದ್ದಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಸಲ ಇಂಥ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಪ್ರತಿಪಕ್ಷಗಳ ಅಪನಂಬಿಕೆ ಹಾಗೂ ಸಂಘರ್ಷ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ನಡೆಸಿರುವ ರೀತಿಯೇ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಂದ್ರ ಕುಮಾರ್ ಉಚ್ಚಾಟನೆಯ ಪ್ರಯತ್ನಕ್ಕೆ ಮುಖ್ಯ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿರುವಾಗಲೇ ಪರಿಷ್ಕರಣೆಯ ಹೆಸರಿನಲ್ಲಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಹೊರಟಿರುವುದು ಬಿಜೆಪಿಗೆ ಅನುಕೂಲ ಮಾಡಿಕೊಡುವ ದುರುದ್ದೇಶವನ್ನು ಹೊಂದಿದೆ ಎಂದು ಟಿಎಂಸಿ ಹಾಗೂ ಇತರ ಪ್ರತಿಪಕ್ಷಗಳ ಮುಖ್ಯ ಆರೋಪವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ ಚುನಾವಣಾ ಆಯೋಗ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಿರುವ ಇತರ ರಾಜ್ಯಗಳಲ್ಲೂ ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಮುಖ್ಯ ಚುನಾವಣಾ ಆಯುಕ್ತರು ಗುರಿಯಾಗಿದ್ದಾರೆ. ಪ್ರತಿಪಕ್ಷಗಳು ಮಾಡುತ್ತಿರುವ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ಸರ್ವೋಚ್ಚ ನ್ಯಾಯಾಲಯ ಪದೇ ಪದೇ ಮಧ್ಯಪ್ರವೇಶ ಮಾಡಿ ಚುನಾವಣಾ ಆಯೋಗಕ್ಕೆ ನೀಡಿರುವ ನಿರ್ದೇಶನಗಳನ್ನು ಗಮನಿಸಿದರೆ ಸಹಜವಾಗಿ ಈ ಕುರಿತು ಆಯೋಗದ ನಡೆಯ ಬಗ್ಗೆ ಸಂದೇಹ ಉಂಟಾಗುತ್ತದೆ. ಬಿಜೆಪಿಗೆ ಅನುಕೂಲ ಮಾಡಿಕೊಡಲು ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಿದೆ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳ ಇಂಥ ಪಕ್ಷಪಾತದಿಂದ ಕೂಡಿದ ಕಾರ್ಯ ವೈಖರಿ ಸರಿಯಲ್ಲ. ಚುನಾವಣಾ ಆಯೋಗ ಸಂಶಯಾಸ್ಪದವಾಗದಂತೆ ಯಾವುದೇ ಆರೋಪ ಬರದಂತೆ ಎಚ್ಚರವಾಗಿರಬೇಕು, ಅಷ್ಟೇ ಅಲ್ಲ ಎಲ್ಲರನ್ನೂ ಒಳಗೊಳ್ಳುವಂತೆ ಅದರ ಕಾರ್ಯ ವೈಖರಿ ಇರಬೇಕು. ಆದರೆ ಈಗಿನ ಮುಖ್ಯ ಚುನಾವಣಾ ಆಯುಕ್ತರು ಹಲವಾರು ಸಂದರ್ಭಗಳಲ್ಲಿ ಸಂಶಯಾಸ್ಪದವಾಗಿ ನಡೆದುಕೊಂಡಿದ್ದಾರೆ. ಇದು ಕೇವಲ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧ ಪಟ್ಟಂತೆ ಮಾತ್ರವಲ್ಲ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಕುರಿತು (ವೋಟ್ ಚೋರಿ) ಮಾಡಿರುವ ಆರೋಪ ಹಾಗೂ ಕೇಳಿರುವ ಪ್ರಶ್ನೆಗಳಿಗೆ ಮುಖ್ಯ ಚುನಾವಣಾ ಆಯುಕ್ತರು ವ್ಯಕ್ತಪಡಿಸಿದ ಪ್ರತಿಕ್ರಿಯೆ ಸಮಾಧಾನಕರವಾಗಿರಲಿಲ್ಲ. ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೇರಿದಂತೆ ಸರಕಾರದ ಜವಾಬ್ದಾರಿ ಸ್ಥಾನಗಳಲ್ಲಿ ಇರುವವರು ಚುನಾವಣೆಗೆ ಸಂಬಂಧಿಸಿದ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ದೂರುಗಳ ಬಗ್ಗೆಯೂ ಮುಖ್ಯ ಚುನಾವಣಾ ಆಯುಕ್ತರ ಪ್ರತಿಕ್ರಿಯೆಗಳು ನಿಷ್ಪಕ್ಷಪಾತವಾಗಿರಲಿಲ್ಲ. ಚುನಾವಣಾ ವೇಳಾಪಟ್ಟಿ ತಯಾರಿಸುವುದು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಮನವಿಯ ಬಗ್ಗೆ ಸ್ಪಂದಿಸುವಲ್ಲಿ ಮುಖ್ಯ ಚುನಾವಣಾ ಆಯುಕ್ತರು ವಿಫಲಗೊಂಡರು ಎಂಬುದು ಬರೀ ಆರೋಪವಲ್ಲ. ಸಂಸದೀಯ ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗದ ಹೊಣೆಗಾರಿಕೆ ಮಹತ್ವದ್ದಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸುವುದು ಅದರ ಸಾಂವಿಧಾನಿಕ ಕರ್ತವ್ಯವಾಗಿದೆ. ಆದರೆ ಈಗಿನ ಮುಖ್ಯ ಚುನಾವಣಾ ಆಯುಕ್ತರು ಪ್ರತಿಪಕ್ಷಗಳ ಬಗ್ಗೆ ನಕಾರಾತ್ಮಕವಾಗಿ ನಡೆದುಕೊಳ್ಳುತ್ತಲೇ ಬಂದಿದ್ದಾರೆ. ಕೆಲವು ಸಲ ಬಿಜೆಪಿಗೆ ಅನುಕೂಲಕರವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸಬೇಕೆಂದು ಪ್ರತಿಪಕ್ಷಗಳು ಸ್ವಾತಂತ್ರ್ಯಾನಂತರ ಹಿಂದೆಂದೂ ಆಗ್ರಹಿಸಿರಲಿಲ್ಲ. ನೋಟಿಸ್ ನೀಡಿರಲಿಲ್ಲ. ಆದರೆ ಈಗ ಪ್ರತಿಪಕ್ಷಗಳಿಂದ ಇಂಥ ಬೇಡಿಕೆ ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಪ್ರತಿಪಕ್ಷಗಳ ನಡುವಣ ಸಂಬಂಧ ಸಂಪೂರ್ಣ ಹಾಳಾಗಿ ಹೋಗಿದೆ ಅಂದರೆ ಅತಿಶಯೋಕ್ತಿಯಲ್ಲ. ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಯ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತರ ಉಚ್ಚಾಟನೆ ಸಂಬಂಧದ ಪ್ರಸ್ತಾವ ಮಹತ್ವದ ಬೆಳವಣಿಗೆಯಾಗಿದೆ. ಸಂಸತ್ತಿನಲ್ಲಿ ಪ್ರತಿಪಕ್ಷಗಳಿಗೆ ಸಂಖ್ಯಾ ಬಲವಿಲ್ಲದಿರುವುದರಿಂದ ಸ್ಪೀಕರ್ ಪ್ರಕರಣದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕುರಿತ ಗೊತ್ತುವಳಿ ಸದನದಲ್ಲಿ ಪಾಸಾಗದಿರಬಹುದು. ಆದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಎರಡು ಮಹತ್ವದ ಸಾಂವಿಧಾನಿಕ ಹುದ್ದೆಗಳು ಹಳ್ಳ ಹಿಡಿದಿರುವುದಕ್ಕೆ ಈ ವಿದ್ಯಮಾನಗಳು ಸಾಕ್ಷಿಯಾಗಿವೆ. ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ಬಿಜೆಪಿಗೆ ವೋಟು ಹಾಕ ದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಬಿಜೆಪಿಗೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲು ಈಗಿನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಹೊರಟಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಘನ ಘೋರ ಅಪಚಾರವಾಗಿದೆ. ಇದರ ವಿರುದ್ಧ ಜನರು ಶಾಂತಿಯುತ ಪ್ರತಿಭಟನೆಗೆ ಬೀದಿಗೆ ಬರುವುದೊಂದೇ ಉಳಿದ ದಾರಿಯಾಗಿದೆ.

ವಾರ್ತಾ ಭಾರತಿ 24 Mar 2026 9:11 am

ವಸತಿ ಶಾಲೆಗಳಿಗೆ ಬೇಕು ಕಣ್ಗಾವಲು

ಸಾಂದರ್ಭಿಕ ಚಿತ್ರ PC: freepik ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ ಇತ್ತೀಚೆಗೆ ಬಳ್ಳಾರಿಯ ಗುರುಕುಲ ಪರಿಕಲ್ಪನೆಯ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಮಾರಕ ಆಯುಧದಿಂದ ಸಹ ವಿದ್ಯಾರ್ಥಿಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಓರ್ವನನ್ನು ಹತೈಗೈದ ಘಟನೆ ನಾಡನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದಲ್ಲಿ ವಸತಿ ನಿಲಯದ ವಾರ್ಡನ್ ಸಹಿತ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಗಳು ಆರೋಪಿಯಿಂದ ಹೊರ ಬಿದ್ದವು. ಗುರುಕುಲದಲ್ಲಿ ಬೇರೆ ರಾಜ್ಯಗಳ ಬೇರೆ ಭಾಷೆ ಮಾತನಾಡುವ ವಿದ್ಯಾರ್ಥಿಗಳು ಈತನನ್ನು ‘ರ್ಯಾಗಿಂಗ್’ಗೆ ಒಳಪಡಿಸುತ್ತಾ ಇದ್ದರು. ಅಣಕಿಸುವುದು, ವ್ಯಂಗ್ಯ ಮಾಡುವುದು ಹೀಗೆ ಅನೇಕ ಮಾನಸಿಕ, ದೈಹಿಕ ಕಿರುಕುಳಗಳನ್ನು ನೀಡುತ್ತಾ ಬಂದಿದ್ದಾರೆ. ಇದನ್ನು ಗಮನಿಸಿ ತಕ್ಷಣವೇ ಸರಿಪಡಿಸಬೇಕಾದ ಹೊಣೆಗಾರಿಕೆ ವಾರ್ಡನ್‌ಗೆ ಸೇರಿದ್ದು. ಆದರೆ ಆತ ಇದನ್ನೆಲ್ಲ ನೋಡಿಯೂ ನೋಡದಂತಿದ್ದ. ತನ್ನ ಅವಮಾನ, ಅಂಜಿಕೆಯನ್ನು ಯಾರ ಜೊತೆಯೂ ಹಂಚಿಕೊಳ್ಳಲಾಗದೆ ಒಳಗೊಳಗೆ ವಿದ್ಯಾರ್ಥಿ ನೊಂದುಕೊಂಡಿದ್ದ. ಈ ಮಾನಸಿಕ ಒತ್ತಡ ವಿಪರೀತವಾಗಿ ಒಮ್ಮೆ ಸ್ಫೋಟಗೊಂಡಿದೆ. ಇದು ಅಂತಿಮವಾಗಿ ವಿದ್ಯಾರ್ಥಿಯನ್ನು ಹಿಂಸೆಗೆ ಶರಣಾಗುವಂತೆ ಮಾಡಿತು. ಆತ ಮಾರಕಾಯುಧವನ್ನು ಕೈಗೆತ್ತಿಕೊಂಡು ತನ್ನ ಒಳಗಿನ ಅಸಹನೆ, ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿದ. ತಡೆಯಲು ಬಂದ ವಾರ್ಡನ್‌ಗೂ ಹಲ್ಲೆಗೈದ. ಈ ಸಂದರ್ಭದಲ್ಲಿ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ‘ಗುರುಕುಲ ಪರಿಕಲ್ಪನೆಯ ವಸತಿ ಶಾಲೆ’ ಎಂಬ ಹೆಗ್ಗಳಿಕೆೆ ಸಂತ್ರಸ್ತ ವಿದ್ಯಾರ್ಥಿಗಳ ಪಾಲಿಗೆ ಯಾವ ರೀತಿಯ ಸಹಾಯಕ್ಕೂ ಬರಲಿಲ್ಲ. ಇಂದು ವಸತಿಶಾಲೆಗಳು ಈ ನಾಡಿನ ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ದಲಿತ ವಿದ್ಯಾರ್ಥಿಗಳ ಪಾಲಿಗೆ ಬದುಕಿನ ಆಶಾಕಿರಣವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಲವು ಕೊರತೆಗಳ ನಡುವೆಯೂ ಈ ವಸತಿಶಾಲೆಗಳು ಶೋಷಿತ, ದುರ್ಬಲ ವರ್ಗದ ವಿದ್ಯಾರ್ಥಿಗಳನ್ನು ಮೇಲೆತ್ತುವಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಾ ಬರುತ್ತಿವೆೆ. ಮೊರಾರ್ಜಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡಿ ಎಸ್ಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯೊಬ್ಬಳನ್ನು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದ್ದರು. ಇಂದು ರಾಜ್ಯಾದ್ಯಂತ 800ಕ್ಕೂ ಅಧಿಕ ವಸತಿ ಶಾಲೆಗಳು ಶೋಷಿತ ಸಮುದಾಯದ ಮಕ್ಕಳನ್ನು ಪೊರೆಯುತ್ತಿವೆ. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೂ ವಸತಿಶಾಲೆಗಳ ವ್ಯವಸ್ಥೆಗಳಿವೆ. ಇವುಗಳ ನಡುವೆ ಬೇರೆ ಬೇರೆ ಧಾರ್ಮಿಕ ಸಂಸ್ಥೆಗಳು ವಸತಿ ಶಾಲೆಗಳನ್ನು ನಿರ್ಮಾಣ ಮಾಡಿ ಬಡ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ. ಗುರುಕುಲ ಶಿಕ್ಷಣದ ಹೆಸರಿನಲ್ಲಿ ಆರೆಸ್ಸೆಸ್‌ನಂತಹ ಬಲಪಂಥೀಯ ಸಂಘಟನೆಗಳೂ ವಸತಿ ಶಾಲೆಗಳನ್ನು ತೆರೆದಿವೆ. ಹಾಗೆಯೇ ಶ್ರೀಮಂತ ಮಕ್ಕಳಿಗಾಗಿ ವೈಭವೋಪೇತ ವಸತಿಶಾಲೆಗಳೂ ಇವೆ. ವಾಣಿಜ್ಯ ದೃಷ್ಟಿಯನ್ನು ಇಟ್ಟುಕೊಂಡು ತೆರೆದ ವಸತಿ ಶಾಲೆಗಳನ್ನು ಬದಿಗಿಟ್ಟು, ಸಾಮಾಜಿಕ ಕಲ್ಯಾಣದ ಉದ್ದೇಶದಿಂದ ತೆರೆದ ಸರಕಾರಿ ಮತ್ತು ಸರಕಾರೇತರ ವಸತಿ ಶಾಲೆಗಳ ಬಿಕ್ಕಟ್ಟನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲದೇ ಇದ್ದರೆ ಬಳ್ಳಾರಿಯ ಗುರುಕುಲದಲ್ಲಿ ನಡೆದ ಘಟನೆ ಇತರೆಡೆಗೂ ವ್ಯಾಪಿಸುವುದಕ್ಕೆ ದಿನ ದೂರವಿಲ್ಲ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಆತ್ಮಹತ್ಯೆಗೈದ ಘಟನೆಗಳ ಪೈಕಿ ಸರಕಾರಿ ಶಾಲೆಗಳಲ್ಲಿ 10, ವಸತಿ ನಿಲಯಗಳಲ್ಲಿ 5 ಹಾಗೂ ವಿದ್ಯಾರ್ಥಿನಿಲಯಗಳಲ್ಲಿ 12 ಪ್ರಕರಣಗಳು ದಾಖಲಾಗಿವೆ. ಮಾನಸಿಕ ಒತ್ತಡ, ವೈಯಕ್ತಿಕ ಸಮಸ್ಯೆಗಳು ಮತ್ತು ಆನ್‌ಲೈನ್ ಜೂಜಾಟಗಳು ಇದಕ್ಕೆ ಕಾರಣವೆಂದು ಊಹಿಸಲಾಗಿದೆ. ನಾಡಿನಾದ್ಯಂತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚ್ಚುತ್ತಿರುವುದನ್ನು ಸರಕಾರ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಇತ್ತೀಚೆಗಂತೂ ಈ ಆತ್ಮಹತ್ಯೆಗಳಿಗೆ ಮೊಬೈಲ್‌ಗಳನ್ನೇ ಹೊಣೆ ಮಾಡಿ, ಸಮಾಜ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಪಿಯುಸಿ ಮತ್ತು ಎಸ್ಸೆಸೆಲ್ಸಿ ಪರೀಕ್ಷೆಗಳು ಹತ್ತಿರ ಬರುವಾಗ ಅಥವಾ ಫಲಿತಾಂಶ ಘೋಷಣೆಯಾದ ಬೆನ್ನಿಗೇ ಹೆಚ್ಚುವ ಆತ್ಮಹತ್ಯೆಯ ಹಿಂದೆ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಶಾಲೆ, ಕಾಲೇಜುಗಳು ಮತ್ತು ಪೋಷಕರು ಜೊತೆಯಾಗಿ ವಿದ್ಯಾರ್ಥಿಗಳ ಮೇಲೆ ಹೇರುವ ಒತ್ತಡ ಅಂತಿಮವಾಗಿ ಆತ್ಮಹತ್ಯೆಗಳಿಗೆ ಕಾರಣವಾಗುತ್ತದೆ. ಶಿಕ್ಷಣವೆಂದರೆ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಎನ್ನುವ ತಪ್ಪು ಕಲ್ಪನೆಯನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಿ, ಗರಿಷ್ಠ ಅಂಕಗಳನ್ನು ಪಡೆಯದ ವಿದ್ಯಾರ್ಥಿಯನ್ನು ನಿಷ್ಪ್ರಯೋಜಕನೆಂದು ನಿಂದಿಸಿ ಆತನನ್ನು ಮಾನಸಿಕವಾಗಿ ಕುಗ್ಗಿಸಿ ಅಂತಿಮವಾಗಿ ಆತನನ್ನು ಆತ್ಮಹತ್ಯೆಯೆಡೆಗೆ ನೂಕುವ ಕೆಲಸದಲ್ಲಿ ಪೋಷಕರು ಕೂಡ ಶಾಮೀಲಾಗುತ್ತಿರುವುದು ವಿಪರ್ಯಾಸವಾಗಿದೆ. ಆದರೆ ವಸತಿ ಶಾಲೆಗಳ ದುರಂತಗಳೇ ಇನ್ನೊಂದು ಬಗೆಯದು. ಬೇರೆ ಬೇರೆ ಜಾತಿ, ಸಮುದಾಯ, ವರ್ಗ, ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಒಂದಾಗಿ ಬದುಕುವುದು ನಮ್ಮ ಸಮಾಜದಲ್ಲಿ ಸಾಮಾನ್ಯ ವಿಷಯವಲ್ಲ. ಜಾತಿ ಮತ್ತು ವರ್ಗ ವ್ಯವಸ್ಥೆ ಇಂತಹ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವೆಯೂ ದುಷ್ಪರಿಣಾಮಗಳನ್ನು ಬೀರುತ್ತವೆ. ಇಲ್ಲಿ, ಕೆಳಜಾತಿಗೆ ಸೇರಿದ ವಿದ್ಯಾರ್ಥಿಗಳು ಅನುಭವಿಸುವ ಸಮಸ್ಯೆ ಒಂದಾದರೆ, ಹೆಣ್ಣುಮಕ್ಕಳು ಅನುಭವಿಸುವ ವೇದನೆಗಳು ಇನ್ನೊಂದು ಬಗೆಯದು. ತಾವು ಅನುಭವಿಸುವ ನೋವು ದುಮ್ಮಾನಗಳನ್ನು ತೋಡಿಕೊಳ್ಳುವ ಅವಕಾಶಗಳೂ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಪರಿಣಾಮವಾಗಿ ಒಂದೋ ಅವರು ಖಿನ್ನತೆಗೊಳಗಾಗುತ್ತಾರೆ. ಇದು ತೀವ್ರವಾದರೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಕೆಲವೊಮ್ಮೆ ಒತ್ತಡಗಳನ್ನು ಭರಿಸಲಾಗದೆ ಅದು ಆಕ್ರೋಶವಾಗಿ ಮಾರ್ಪಟ್ಟರೆ ಹಿಂಸಾಚಾರಕ್ಕೂ ಕಾರಣವಾಗುತ್ತದೆ. ನೈತಿಕ ಶಿಕ್ಷಣವನ್ನು ಕಲಿಸುವ ಮಠಗ ನೇತೃತ್ವದಲ್ಲಿ ನಡೆಯುವ ವಸತಿಶಾಲೆಗಳಲ್ಲಿಯೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಲೌಕಿಕ ಕಾಮನೆಗಳನ್ನು ತೊರೆದ ಸ್ವಾಮೀಜಿಗಳೇ ಎಳೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ ಆರೋಪಗಳಲ್ಲಿ ಸಿಲುಕಿಕೊಂಡಿದ್ದಾರೆ. ಧಾರ್ಮಿಕ ಸಂಘಟನೆಗಳು ನಡೆಸುವ ವಸತಿಶಾಲೆಗಳಲ್ಲಿ ನಡೆಯುವ ಇಂತಹ ದೌರ್ಜನ್ಯಗಳು ಬೆಳಕಿಗೆ ಬರುವುದು ತೀರಾ ಅಪರೂಪ. ಸರಕಾರಿ ವಸತಿ ಶಾಲೆಗಳಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳ ಕುಟುಂಬ ಆರ್ಥಿಕವಾಗಿ ತುಂಬಾ ಹಿಂದುಳಿದಿರುತ್ತವೆ. ಈ ಕಾರಣಕ್ಕೆ ತಮ್ಮ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳ ವಿರುದ್ಧ ಧ್ವನಿಯೆತ್ತಲು ಅಂಜುತ್ತಾರೆ. ಹೇಗಾದರೂ ಶಿಕ್ಷಣ ಮುಗಿಸುವುದಕ್ಕೆ ಸಾಧ್ಯವಾದರೆ ಸಾಕು ಎಂದು ಎಲ್ಲವನ್ನೂ ಸಹಿಸುತ್ತಾರೆ. ಇಂತಹ ವಸತಿಶಾಲೆಗಳಲ್ಲಿ ನಡೆಯುವ ಜಾತಿ ಅಸಮಾನತೆ, ನಿಂದನೆಗಳಲ್ಲಿ ವಸತಿಶಾಲೆಯ ಸಿಬ್ಬಂದಿಯೇ ನೇರವಾಗಿ ಭಾಗಿಯಾಗುತ್ತಾರೆ. ಈ ಕಾರಣಕ್ಕೆ ಎಲ್ಲ ವಸತಿ ಶಾಲೆಗಳಿಗೆ ಕಡ್ಡಾಯವಾಗಿ ಅರ್ಹ ಮನೋವೈದ್ಯರು, ಕೌನ್ಸಿಲರ್ ಅಥವಾ ಸಮಾಜ ಸೇವಕರನ್ನು ನೇಮಿಸಬೇಕು ಮಾತ್ರವಲ್ಲ ತಿಂಗಳಿಗೊಮ್ಮೆ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿ ಅವರ ನೋವು ದುಮ್ಮಾನಗಳನ್ನು ಆಲಿಸಬೇಕು. ಅವರಿಗೆ ಸಿಗುವ ಅಡುಗೆಯ ಗುಣಮಟ್ಟವನ್ನು ಪರೀಕ್ಷಿಸುವ ಕೆಲಸವೂ ಆಗಾಗ ನಡೆಯುತ್ತಿರಬೇಕು. ಮೇಲಧಿಕಾರಿಗಳು ಮಾಸಿಕವಾಗಿ ಅನಿರೀಕ್ಷಿತ ಭೇಟಿಯನ್ನು ನೀಡಿ ಪರಿಶೀಲನೆಗಳನ್ನು ಮಾಡುವುದು ಅತ್ಯಗತ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಸತಿ ಶಾಲೆಯ ವಾರ್ಡನ್‌ಗಳಿಗೆ, ಸಿಬ್ಬಂದಿಗೆ ವಿದ್ಯಾರ್ಥಿಗಳ ಜೊತೆಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಕುರಿತಂತೆ ತರಬೇತಿಯನ್ನು ನೀಡಬೇಕು. ಇಲ್ಲದೇ ಇದ್ದರೆ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಬೇಕಾದ ವಸತಿಶಾಲೆಗಳೇ ಅವರ ಭವಿಷ್ಯವನ್ನು ಹಿಸುಕಿ ಹಾಕಬಹುದು.

ವಾರ್ತಾ ಭಾರತಿ 17 Mar 2026 12:40 am

ರಾಜ್ಯ ಬಜೆಟ್‌ನಲ್ಲಿ ರಾಯಚೂರು ಅಭಿವೃದ್ಧಿಗೆ 200 ಕೋಟಿ ರೂ.: ಮೂಲಸೌಕರ್ಯ ಸುಧಾರಣೆಯ ನಿರೀಕ್ಷೆ; ಭರದಿಂದ ಸಾಗಿದೆ ಕಾಮಗಾರಿಗಳು

ರಾಯಚೂರು: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಜ್ಯ ಬಜೆಟ್‌ನಲ್ಲಿ ನೂತನ ರಾಯಚೂರು ಮಹಾನಗರ ಪಾಲಿಕೆಗೆ 200 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನಗರದ ಅಭಿವೃದ್ಧಿಗೆ ಹೊಸ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷವೇ ಪಾಲಿಕೆಗೆ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ಅನುದಾನ ನೀಡಲು ಪಾಲಿಕೆಯಿಂದ ಮನವಿ ಮಾಡಲಾಗಿತ್ತು ಹಾಗೂ ವಿವಿಧ ಕಾಮಗಾರಿಗಳ ನೀಲಿನಕ್ಷೆ ತಯಾರಿಸಲಾಗಿತ್ತು. ಪಾಲಿಕೆಯ ಪ್ರಕಾರ ಈ ಹಿಂದೆ 200 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು ಅದರಂತೆ ಪ್ರಸ್ತುತ 2026-27ನೇ ಸಾಲಿನಲ್ಲಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ರಾಯಚೂರು ನಗರವು ವೇಗವಾಗಿ ವಿಸ್ತರಿಸುತ್ತಿದ್ದರೂ ಮೂಲಸೌಕರ್ಯ ಅಭಿವೃದ್ಧಿ ಅಗತ್ಯ ಮಟ್ಟದಲ್ಲಿ ನಡೆಯದಿರುವುದು ಹಲವು ವರ್ಷಗಳಿಂದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ನಗರದ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿರುವುದು, ಮಳೆ ಬಂದಾಗ ನೀರು ನಿಲ್ಲುವ ಸಮಸ್ಯೆ, ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆ, ಸ್ಟೇಷನ್ ರಸ್ತೆ, ಬಸವೇಶ್ವರ ರಸ್ತೆ, ಜಿಪಂಮುಂಭಾಗ, ಚಂದ್ರಮೌಳೇಶ್ವರ ರಸ್ತೆ, ಗಂಜ್ ರಸ್ತೆ ಸೇರಿ ಹಲವೆಡೆ ಫುಟ್‌ಪಾತ್ ಅತುಕ್ರಮಣದಿಂದ ಪಾದಾಚಾರಿಗಳಿಗೆ ನಡೆದಾಡಲು ಸಮಸ್ಯೆ ಇದೆ. ಜನಸಂಖ್ಯೆ ಹೆಚ್ಚಳ, ವಾಹನಗಳ ಓಡಾಟಗಳ ಸಂಖ್ಯೆಯೂ ಹೆಚ್ಚಾದರೂ ರಸ್ತೆಗಳ ಅಗಲೀಕರಣ ಆಗುತ್ತಿಲ್ಲ, ಆದರೆ ರಾಯಚೂರು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಪಾಲಿಕೆಯ ಆಯುಕ್ತ ಜುಬೀನ್ ಮೊಹಾಪಾತ್ರ, ಜಿಲ್ಲಾಧಿಕಾರಿ ನಿತಿಶ್.ಕೆ ಅವರು ವಿಶೇಷ ಕಾಳಜಿಯಿಂದ ಅನೇಕ ಸುಧಾರಣೆಯಾಗಿದೆ. ಈಗ ಬಜೆಟ್‌ನಲ್ಲಿ 200ಕೋಟಿ ರೂ. ಬಿಡುಗಡೆಯಾಗಿದ್ದು ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. ನಗರದಲ್ಲಿನ ಸ್ಲಂ ಪ್ರದೇಶ, ಪ್ರತಿಷ್ಠಿತರ ಕಾಲನಿ ಎಂದು ಹೇಳುವ ನಿಜಲಿಂಗಪ್ಪ ಕಾಲನಿ, ಆಜಾದ್ ನಗರ, ಸ್ಟೇಷನ್ ರಸ್ತೆ, ಮಂತ್ರಾಲಯ ರಸ್ತೆ, ಆಶಾಪುರ ರಸ್ತೆಯ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಧಿಕಾರಿಗಳು, ರಾಜಕೀಯ ಗಣ್ಯ ವ್ಯಕ್ತಿಗಳು ವಾಸವಾಗಿದ್ದರು ಕೂಡ ಹದಗೆಟ್ಟ ರಸ್ತೆಯಿಂದ ಬಡಾವಣೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಜನರಿಗೆ ತೊಂದರೆ ಉಂಟಾಗುತ್ತಿದೆ. ಹೊಸ ಡ್ರೈನೇಜ್ ವ್ಯವಸ್ಥೆ ನಿರ್ಮಾಣ ಹಾಗೂ ಹಳೆಯ ಒಳಚರಂಡಿಗಳ ದುರಸ್ತಿ ಮಾಡಿದರೆ ಈ ಸಮಸ್ಯೆ ಕಡಿಮೆಯಾಗಲಿದೆ ಎಂದು ನಾಗರಿಕರು ನಿರೀಕ್ಷಿಸಿದ್ದಾರೆ. ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯಲ್ಲಿಯೂ ಸುಧಾರಣೆಯಾಗಬೇಕಿದೆ. ಕೆಲವು ಪ್ರದೇಶಗಳಲ್ಲಿ ನೀರಿನ ಪೈಪ್‌ಲೈನ್ ಹಳೆಯದಾಗಿ,ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹಲವೆಡೆ ಚರಂಡಿ ಪಕ್ಕದಲ್ಲೇ ನಳದ ಪೈಪ್‌ಲೈನ್ ಇರುವುದರಿಂದ ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂಬ ಆರೋಪವಿದೆ. ಪಾಲಿಕೆಯ ಗಮನಕ್ಕೂ ಬಂದಿದ್ದು ಸರಿಪಡಿಸುವ ಕೆಲಸ ನಡೆಯುತ್ತಿದೆ. ಭರದಿಂದ ಸಾಗಿದ ರಸ್ತೆ ಕಾಮಾಗಾರಿಗಳು: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಈಗಾಗಲೇ ನಗರದ ರಾಂಪೂರ ರಸ್ತೆಯಲ್ಲಿ ಡಾಂಬರೀಕರಣ, ಎಲ್‌ಬಿಎಸ್ ನಗರದಿಂದ ಆಶ್ರಯ ಕಾಲನಿಗೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ, ಸ್ಲ್ಯಾಬ್ ಅಳವಡಿಕೆ, ಸಿಯತಲಾಬ್ ಹಾಗೂ ಭಂಗಿಕುಂಟಾ ಮತ್ತಿತರೆಡೆ ರಾಜಕಾಲುವೆ ಸ್ವಚ್ಛತೆ,ಹಲವೆಡೆ ಒಳಚರಂಡಿ ಕಾಮಗಾರಿ, ಪ್ರಮುಖ ರಸ್ತೆಗಳಲ್ಲಿ ಧೂಳು ನಿಯಂತ್ರಣ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಿ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿದೆ. ಸಚಿವರ, ವಿಧಾನ ಪರಿಷತ್ ಸದಸ್ಯರ ಸಹಕಾರದಿಂದ ಅನುದಾನ: ಮಹಾನಗರ ಪಾಲಿಕೆಯಾದ ಬಳಿಕ ಒತ್ತುವರಿಯಾಗಿ ನಶಿಸುತ್ತಿದ್ಧ ಮಾವಿನಕೆರೆ ಅಭಿವೃದ್ಧಿಗೆ ಸಚಿವ ಎನ್.ಎಸ್ ಬೋಸರಾಜು ಅವರಿಂದ ಕಾಯಕಲ್ಪ ಸಿಕ್ಕಿದೆ, ಹಲವು ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ವಿಧಾನಪರಿಷತ್ ಸದಸ್ಯ ಎ.ವಸಂತ ಕುಮಾರ ಅವರು ತಮ್ಮ ಕ್ಷೇತ್ರದ ಅನುದಾನದಿಂದ ನೆರವಾಗುತ್ತಿದ್ದಾರೆ. ಆದರೆ ರಿಂಗ್ ರಸ್ತೆಯ ಬಹಳ ಅವಶ್ಯಕತೆ ಇದ್ದರೂ ಕೈತಪ್ಪಿದ್ದು ಶಾಸಕ ಡಾ.ಶಿವರಾಜ ಪಾಟೀಲರು ತಾವು ವಿರೋಧ ಪಕ್ಷದಲ್ಲಿರುವುದರಿಂದಲೇ ನನ್ನ ಕ್ಷೇತ್ರಕ್ಕೆ ಹೆಚ್ಚಿನಯೋಜನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಈಗ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಭ್ರಷ್ಟಾಚಾರ ರಹಿತ ಆಡಳಿತ,ಕಾಮಗಾರಿ ನಡೆಸಿದರೆ ತಕ್ಕ ಮಟ್ಟಿಗೆ ಅಭಿವೃದ್ಧಿ ಆಗಬಹುದು ಎಂದು ನಾಗರಿಕರ ಅಭಿಪ್ರಾಯವಾಗಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಂಪೂರ ಕೆರೆಯ ಕುಡಿಯುವ ನೀರು ಶುದ್ಧೀಕರಣ ಘಟಕದ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಜೊತೆಗೆ ರಾಂಪೂರ ರಸ್ತೆ ಸೇರಿದಂತೆ ನಗರದಲ್ಲಿನ ಹಲವೆಡೆ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯವೂ ಪ್ರಗತಿಯಲ್ಲಿದೆ. ನಗರದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯವರ್ಧನೆಗೆ ಸಂಬಂಧಿಸಿದ ಕಾರ್ಯಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಸ್ಥಳಗಳ ಸುಧಾರಣೆ ಮಾಡಲಾಗುವುದು. -ಜುಬಿನ್ ಮೊಹಪಾತ್ರ ಮಹಾನಗರಪಾಲಿಕೆಯಆಯುಕ್ತರು

ವಾರ್ತಾ ಭಾರತಿ 10 Mar 2026 2:59 pm

ಪ್ರಾಣ ಘಾತುಕ ರಸ್ತೆ ಅಪಘಾತಗಳು

ಸಾಂದರ್ಭಿಕ ಚಿತ್ರ PC: freepik ನಮ್ಮ ಕರ್ನಾಟಕ ಮಾತ್ರವಲ್ಲ, ದೇಶದ ಅನೇಕ ಕಡೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸರಕಾರ ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ರಸ್ತೆ ಅಪಘಾತಗಳಲ್ಲಿ ಸಾಯುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ರಸ್ತೆ ಅಪಘಾತ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಅವರು ಆಗಾಗ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ವಾಸ್ತವ ಸಂಗತಿಯೆಂದರೆ ಕೊರೋನ ವೈರಾಣುನಿಂದ ಸಾವಿಗೀಡಾದವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಜಾಗತಿಕ ವಾಹನ ಚಾಲನಾ ಶಿಕ್ಷಣ ಕಂಪೆನಿಯೊಂದು ನಡೆಸಿದ ಸಮೀಕ್ಷೆಯ ವರದಿಯ ಪ್ರಕಾರ ಜಗತ್ತಿನಲ್ಲಿ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಒಳನಾಡಿನ ರಸ್ತೆಗಳು ಈಗ ಸಾಕಷ್ಟು ಸುಧಾರಿಸಿವೆ. ಈಗ ಎಲ್ಲೆಡೆ ಸುಸಜ್ಜಿತ ಚತುಷ್ಪಥ ರಸ್ತೆಗಳಿವೆ. ಆದರೆ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ಇದರಿಂದ ಬೆಳಕಿಗೆ ಬಂದ ಇನ್ನೊಂದು ಸಂಗತಿಯೆಂದರೆ ಅಪಘಾತಗಳಿಗೆ ರಸ್ತೆಗಳು ಮಾತ್ರವಲ್ಲ, ಬಹುತೇಕ ವಾಹನ ಚಾಲಕರು ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕೂಡ ಕಾರಣವಾಗಿದೆ. ಇದರ ಪರಿಣಾಮವಾಗಿ ಅಪಘಾತಗಳು ಹೆಚ್ಚಾಗುತ್ತಲೇ ಇವೆ.ರಸ್ತೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕಿ ಎಚ್ಚರಿಕೆ ನೀಡಿದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಇದರಿಂದಾಗಿ ಸರಕಾರ ಇನ್ನೊಂದು ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ದೇಶದಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ನಿಯಂತ್ರಿಸಲು ಅಂಕ ಆಧಾರಿತ ದಂಡ ಪದ್ಧತಿಯನ್ನು ಜಾರಿಗೆ ತರಲು ಕ್ರಮ ಕೈಗೊಂಡಿದೆ. ಪ್ರತೀ ಸಲ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಾಗ ಚಾಲನಾ ಪರವಾನಿಗೆಯಿಂದ ನಿರ್ದಿಷ್ಟ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಒಬ್ಬ ಚಾಲಕನು ಗರಿಷ್ಠ ಮಿತಿಯನ್ನು ಮೀರಿದರೆ ತಕ್ಷಣ ಅವನ ವಾಹನ ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ. ಮದ್ಯ ಸೇವಿಸಿ ವಾಹನ ಚಲಾಯಿಸುವುದು ಹಾಗೂ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ಮುಂತಾದ ಅಪರಾಧಗಳಿಗಾಗಿ ಹೆಚ್ಚಿನ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಈ ಹೊಸ ಕ್ರಮಗಳಿಂದ ವಾಹನ ಅಪಘಾತಗಳ ಸಂಖ್ಯೆ ಕಡಿಮೆಯಾಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ರಸ್ತೆ ಅಪಘಾತಗಳಿಗೆ ಒಂದೆರಡು ಕಾರಣಗಳಲ್ಲ, ಹಲವಾರು ಕಾರಣಗಳಿವೆ. ವೇಗದ ವಾಹನ ಚಾಲನೆ, ಅಜಾಗರೂಕತೆಯ ಚಾಲನೆ, ಸಿಗ್ನಲ್ ಜಂಪ್ ಮಾಡುವುದು, ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವುದು ಇತ್ಯಾದಿ ಲೋಪಗಳು ಹೆಚ್ಚಾಗುತ್ತಿರುವುದು ಕೂಡಾ ಅಪಘಾತಗಳಿಗೆ ಕಾರಣವಾಗಿವೆ. ಹೀಗಾಗಿ ಹೊಸದಾಗಿ ಜಾರಿಗೆ ತರಲಿರುವ ಕಠಿಣವಾದ ಸಂಚಾರ ನಿಯಮದ ಪರಿಣಾಮವಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ರಾಜ್ಯದಲ್ಲೂ ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಇನ್ನೊಂದು ಕಾರಣವೆಂದರೆ ರಸ್ತೆಗಳಲ್ಲಿ ಆಗಾಗ ಒಳಚರಂಡಿ ಇತ್ಯಾದಿ ಕಾಮಗಾರಿಗಳಿಗೆ ಹೊಂಡತೆಗೆದು ಸಮರ್ಪಕವಾಗಿ ಅದನ್ನು ಮುಚ್ಚದಿರುವುದು. ಇಂತಹ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಸಮತೋಲನ ಕಳೆದುಕೊಳ್ಳುವುದರಿಂದಾಗಿ ಅಪಘಾತಗಳಾಗುತ್ತ್ತವೆೆ. ಇದರ ಜೊತೆಗೆ ಅವೈಜ್ಞಾನಿಕ ರಸ್ತೆ ವಿನ್ಯಾಸಗಳು ಹಾಗೂ ಸರಿಯಾದ ಫಲಕಗಳಿಲ್ಲದಿರುವುದು ವಾಹನ ಚಾಲಕರನ್ನು ಗೊಂದಲಕ್ಕೀಡು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಕಠಿಣ ನಿಯಮಾವಳಿಗಳು ಒಂದಿಷ್ಟು ಪ್ರಯೋಜನಕಾರಿಯಾಗಿವೆ. ನಿಯಮ ಉಲ್ಲಂಘಿಸುವ ವಾಹನ ಚಾಲಕರು ದಂಡಕ್ಕೆ ಹೆದರುವುದಿಲ್ಲ, ಆದರೆ ಡಿ.ಎಲ್.(ವಾಹನ ಚಾಲನಾ ಪರವಾನಿಗೆ ಪತ್ರ) ಕಳೆದುಕೊಳ್ಳಬಹುದು ಎಂಬ ಭಯದಿಂದ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಲು ಇನ್ನಾದರೂ ಮುಂದಾಗಬಹುದು. ಈಗ ನಗರ ಪ್ರದೇಶಗಳಲ್ಲಿ ಅಳವಡಿಸಲಾಗುವ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಕ್ಯಾಮರಾ ತಾನಾಗಿಯೇ ವಾಹನದ ನಂಬರ್ ಪ್ಲೇಟ್‌ಗಳನ್ನು ಗುರುತಿಸಿ ತಪ್ಪಿತಸ್ಥ ವಾಹನ ಚಾಲಕರ ಲೈಸನ್ಸ್‌ಗೆ ಅಂಕಗಳನ್ನು ಸೇರಿಸುತ್ತದೆ. ಆದ್ದರಿಂದ ಇನ್ನು ಮುಂದೆ ರಸ್ತೆಯಲ್ಲಿ ಪೊಲೀಸರು ಇರಲಿ, ಇಲ್ಲದಿರಲಿ ರಸ್ತೆ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಮಾತ್ರವಲ್ಲ, ಅನಿವಾರ್ಯವಾಗುತ್ತದೆ. ಸರಕಾರ ಇಂತಹ ರಸ್ತೆ ನಿಯಮಾವಳಿಗಳನ್ನು ರೂಪಿಸಿದರೆ ಸಾಲದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ವಾಹನ ಚಾಲಕರು ಮಾತ್ರ ಕಾರಣವೆಂದರೆ ತಪ್ಪಾಗುತ್ತದೆ. ನಮ್ಮ ಮಹಾನಗರಗಳು ಹಾಗೆಯೇ ಸಣ್ಣಪುಟ್ಟ ಪಟ್ಟಣಗಳಲ್ಲಿ ಕಳಪೆಯಾದ ರಸ್ತೆ ನಿರ್ವಹಣೆ, ಕಿತ್ತು ಹೋದ ಡಾಂಬರು, ಅವೈಜ್ಞಾನಿಕ ಜಾಮರ್‌ಗಳು, ಅಸುರಕ್ಷಿತ ತಿರುವುಗಳು, ದಾರಿ ತುಂಬಾ ಜೀವ ತೆಗೆಯುವ ಗುಂಡಿಗಳು, ಪಾದಚಾರಿ ಮಾರ್ಗದ ಒತ್ತುವರಿ, ಏಕಾಏಕಿ ರಸ್ತೆಗೆ ನುಗ್ಗುವ ಪಾದಚಾರಿಗಳು ಹೀಗೆ ನಾನಾ ಕಾರಣಗಳಿವೆ. ಇದರ ಜೊತೆಗೆ ಬೇಕಾಬಿಟ್ಟಿ ವಾಹನ ಚಾಲನೆ, ಎಲ್ಲ ಸೇರಿ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಅಪಘಾತಗಳಿಗೆ ಇದಲ್ಲದೆ ಇನ್ನೂ ಒಂದು ಮುಖ್ಯ ಕಾರಣವಿದೆ. ಜನರ ಅಗತ್ಯಕ್ಕಿಂತ ಹೆಚ್ಚು ವಾಹನಗಳು ರಸ್ತೆಗಿಳಿಯುತ್ತಿರುವುದು ಕೂಡ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ನಗರಗಳಲ್ಲಿ ಮೂವರು ಸದಸ್ಯರನ್ನು ಹೊಂದಿರುವ ಕುಟುಂಬಗಳಲ್ಲಿ ಮೂರ್ನಾಲ್ಕು ಕಾರುಗಳು, ಮೂರ್ನಾಲ್ಕು ದ್ವಿಚಕ್ರ ವಾಹನಗಳಿರುತ್ತವೆ. ಇದರಿಂದಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಸರಕಾರವು ವಾಹನಗಳ ವಹಿವಾಟಿನ ಮೇಲೆ ಇನ್ನಾದರೂ ನಿಗಾ ಇಡುವುದು ತುರ್ತು ಅಗತ್ಯವಾಗಿದೆ. ಆಟೊಮೊಬೈಲ್ ಉದ್ದಿಮೆಯನ್ನು ಕಾಪಾಡಲು ಜನಸಾಮಾನ್ಯರ ಅಮೂಲ್ಯ ಜೀವವನ್ನು ಬಲಿಕೊಡುವುದು ಸರಿಯಲ್ಲ. ಸಾರ್ವಜನಿಕರು ಕೂಡ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ವಾರ್ತಾ ಭಾರತಿ 10 Mar 2026 8:46 am

ಜನಸಂಖ್ಯಾ ನೀತಿ: ಆಂಧ್ರದ ಮಹತ್ವದ ಹೆಜ್ಜೆ

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು | Photo Credit : PTI   ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ ದೇಶದ ಮೊತ್ತ ಮೊದಲ ಕರಡು ಜನಸಂಖ್ಯೆ ನಿರ್ವಹಣೆ ನೀತಿಯನ್ನು ಅನಾವರಣಗೊಳಿಸಿದ ಹೆಗ್ಗಳಿಕೆಯನ್ನು ನೆರೆಯ ಆಂಧ್ರ ಪ್ರದೇಶ ತನ್ನದಾಗಿಸಿದೆ. ಜನಸಂಖ್ಯಾ ನೀತಿಯ ಅನುಷ್ಠಾನದ ಕುರಿತಂತೆ ದೇಶದ ರಾಜಕಾರಣಿಗಳು ದಿನಕ್ಕೊಂದು ಮಾತುಗಳನ್ನಾಡುತ್ತಾ ಜನರನ್ನು ಗೊಂದಲದಲ್ಲಿ ಸಿಲುಕಿಸುತ್ತಿರುವ ಹೊತ್ತಿನಲ್ಲೇ ಆಂಧ್ರ ಪ್ರದೇಶ ಸರಕಾರವು, ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗೆ 25,000 ರೂಪಾಯಿ ಪಾವತಿಸುವುದಾಗಿ ಘೋಷಿಸಿದೆ. ಗುರುವಾರ ವಿಧಾನಸಭೆಯಲ್ಲಿ ಕರಡು ನೀತಿಯನ್ನು ಪ್ರಕಟಿಸಿದ ಮುಖ್ಯಮಂತ್ರಿ ಎನ್. ಚಂದ್ರ ಬಾಬು ನಾಯ್ಡು ಅವರು, ಎ.1ರಿಂದ ನೀತಿಯನ್ನು ಜಾರಿಗೊಳಿಸಲು ಪ್ರಯತ್ನಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮೂರನೇ ಮಗುವಿಗೆ 18 ವರ್ಷ ಪ್ರಾಯದವರೆಗೆ ಉಚಿತ ಶಿಕ್ಷಣ, ಸಬ್ಸಿಡಿ ದರಗಳಲ್ಲಿ ಐವಿಎಫ್ ಸೇವೆಗಳು, ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗೆ ವಿಶೇಷ ರಜೆಗಳ ಮಂಜೂರು, ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್‌ಗಳು, ಮಕ್ಕಳ ಆರೈಕೆ ಕೇಂದ್ರಗಳ ನಿರ್ಮಾಣ ಇತ್ಯಾದಿಗಳನ್ನು ಅವರು ಪ್ರಕಟಿಸಿದ್ದಾರೆ. ಕರಡು ನೀತಿಯು ದಂಪತಿಯ ಮೂರನೇ ಅಥವಾ ಆನಂತರದ ಮಗುವಿನ ಜನನ ಸಮಯದಲ್ಲಿ 12 ತಿಂಗಳುಗಳ ಮಾತೃತ್ವ ರಜೆಯನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ತಂದೆಗೆ ಎರಡು ತಿಂಗಳ ಪಿತೃತ್ವ ರಜೆಯೂ ಸೇರಿದೆ. ನಿವೃತ್ತಿ ಸಮೀಪಿಸುತ್ತಿರುವ ಮೂವರು ಮಕ್ಕಳನ್ನು ಹೊಂದಿರುವ ಸರಕಾರಿ ನೌಕರರಿಗೆ 15 ದಿನಗಳ ಯೋಗಕ್ಷೇಮ ರಜೆಯ ಜೊತೆಗೆ 50,000 ರೂ. ಗಳ ಆರೋಗ್ಯ ನಿಧಿಯನ್ನು ಒದಗಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ದೇಶದಲ್ಲಿ ಹುಟ್ಟಿದ ಮೂರನೇ ಮಗುವಿನ ಹಣೆಗೆ ‘ದೇಶದ್ರೋಹಿ’ ಮೊಹರನ್ನು ಒತ್ತಿ, ಅವುಗಳನ್ನು ಸಂವಿಧಾನದ ಸವಲತ್ತುಗಳಿಂದ ಹೊರಗಿಡಲು ಒಂದಿಷ್ಟು ರಾಜಕೀಯ ನಾಯಕರು ಒತ್ತಾಯಿಸುತ್ತಿರುವ ಹೊತ್ತಿನಲ್ಲಿ ಆಂಧ್ರ ಪ್ರದೇಶ ಸರಕಾರವು ಜನಸಂಖ್ಯೆಯ ನಿರ್ವಹಣೆಯ ಬಗ್ಗೆ ದೂರದೃಷ್ಟಿಯ, ಮುತ್ಸದ್ದಿ ನಿಲುವುಗಳನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹ. ಜನಸಂಖ್ಯೆಯ ಕುರಿತಂತೆ ಆಂಧ್ರ ತೆಗೆದುಕೊಂಡಿರುವ ನಿಲುವನ್ನು ಭವಿಷ್ಯದಲ್ಲಿ ಇತರ ರಾಜ್ಯಗಳೂ ಹಂತಹಂತವಾಗಿ ಅಳವಡಿಸಿಕೊಳ್ಳಲೇ ಬೇಕಾದ ಅನಿವಾರ್ಯ ಸ್ಥಿತಿ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಭಾರತದಲ್ಲಿ ಗೋವು, ಮತಾಂತರಕ್ಕೆ ಒದಗಿದ ಗತಿಯೇ ಜನಸಂಖ್ಯೆಗೂ ಒದಗಿದೆ. ಇಲ್ಲಿ ಜನಸಂಖ್ಯಾ ನೀತಿಯೂ ಒಂದು ರಾಜಕೀಯ ವಿಷಯವೇ ಆಗಿದೆ. ಆದುದರಿಂದ, ಅದರ ಕುರಿತಂತೆ ಒಂದು ಸ್ಪಷ್ಟ ಧೋರಣೆಯನ್ನು ಹೊಂದಲು ರಾಜಕಾರಣಿಗಳಿಗೆ ಸಾಧ್ಯವಾಗಿಲ್ಲ. ಒಂದೆಡೆ ಈ ದೇಶದಲ್ಲಿ ಮುಸ್ಲಿಮರಿಂದ ಜನಸಂಖ್ಯೆ ಹೆಚ್ಚುತ್ತಿದೆ ಎನ್ನುವ ವದಂತಿಯನ್ನು ರಾಜಕೀಯ ಕಾರಣಗಳಿಗಾಗಿ ಕೆಲವು ರಾಜಕೀಯ ಪಕ್ಷಗಳು ಹರಿಯ ಬಿಡುತ್ತಿವೆ. ದೇಶದಲ್ಲಿ ಕಠಿಣ ಜನಸಂಖ್ಯಾ ನೀತಿಯನ್ನು ಜಾರಿಗೊಳಿಸಬೇಕು ಎಂದೂ ಒತ್ತಾಯಿಸುತ್ತಿವೆ. ಇದೇ ಸಂದರ್ಭದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ‘ಹಿಂದೂಗಳು ಐದು ಮಕ್ಕಳನ್ನು ಹುಟ್ಟಿಸಬೇಕು, ಹತ್ತು ಮಕ್ಕಳನ್ನು ಹುಟ್ಟಿಸಬೇಕು’ ಎಂದೂ ಕರೆಗಳನ್ನು ನೀಡುತ್ತವೆ. ಈ ವಿರೋಧಾಭಾಸಗಳೇ ಜನಸಂಖ್ಯೆ ಬಗ್ಗೆ ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಲು ಸರಕಾರಕ್ಕೆ ಬಹುದೊಡ್ಡ ಅಡ್ಡಿಯಾಗಿದೆ. ಎರಡು ಮಕ್ಕಳನ್ನಷ್ಟೇ ಹೊಂದಬೇಕು ಎನ್ನುವ ನೀತಿಯು ಭವಿಷ್ಯದಲ್ಲಿ ಹಲವು ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡಬಹುದು ಎನ್ನುವ ಎಚ್ಚರಿಕೆಯನ್ನು ಈಗಾಗಲೇ ತಜ್ಞರು ನೀಡಿದ್ದಾರೆ. ಕಠಿಣ ಜನಸಂಖ್ಯಾ ನೀತಿ ಮತ್ತು ಫರ್ಟಿಲಿಟಿ ಕುಸಿತ ನಿಧಾನಕ್ಕೆ ವಿಶ್ವದಲ್ಲಿ ವೃದ್ಧರ ಸಂಖ್ಯೆಯನ್ನು ಹೆಚ್ಚಿಸಲಿವೆ ಮತ್ತು ಯುವಕರ ಸಂಖ್ಯೆಯನ್ನು ಇಳಿಸಲಿವೆ ಎಂದು ವರದಿ ತಿಳಿಸಿದೆ. ಚೀನಾದಲ್ಲಿ 2000ದಲ್ಲಿ ಒಟ್ಟು ಜನಸಂಖ್ಯೆಯ ಶೇ. 22.9ರಷ್ಟಿದ್ದ 15ರಿಂದ 59 ವರ್ಷ ವಯೋಮಾನದವರ ಪ್ರಮಾಣ 2020ರಲ್ಲಿ ಶೇ. 9.8ಕ್ಕೆ ಕುಸಿದಿತ್ತು. ಹಾಗೆಯೇ 2010ರಲ್ಲಿ ಒಟ್ಟು ಜನಸಂಖ್ಯೆಯ ಶೇ. 13.26ರಷ್ಟಿದ್ದ ವೃದ್ಧರ ಪ್ರಮಾಣ 2020ರಲ್ಲಿ 18.70ಗೆ ಏರಿಕೆಯಾಗಿತ್ತು. ಇದು ಪಾಪ್ಯುಲೇಶನ್ ಆಫ್ ಇಂಡಿಯಾ ನೀಡಿದ ವರದಿ. ಭಾರತವೂ ಶೀಘ್ರದಲ್ಲೇ ಈ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ವರದಿಯು ಎಚ್ಚರಿಸಿದೆ. ಜನಸಂಖ್ಯಾ ನಿರ್ವಹಣೆ ನೀತಿಯನ್ನು ಆಂಧ್ರ ಪ್ರದೇಶ ಅನಾವರಣಗೊಳಿಸಲು ಮುಖ್ಯ ಕಾರಣ, ಆಂಧ್ರ ಪ್ರದೇಶದಲ್ಲಿ ಇಳಿಕೆಯಾಗುತ್ತಿರುವ ಫಲವಂತಿಕೆ ಅಥವಾ ಫರ್ಟಿಲಿಟಿ ದರ. ಇಲ್ಲಿ 1993ರಲ್ಲಿ 3.0ಯಷ್ಟಿದ್ದ ಫಲವಂತಿಕೆ ದರವು 1.4ಕ್ಕೆ ಇಳಿದಿದೆ. ಇದು ರಾಜ್ಯದಲ್ಲಿ ಯುವಕರ ಸಂಖ್ಯೆಯನ್ನು ಇಳಿಕೆ ಮಾಡುತ್ತಿದೆ ಎಂದು ಸರಕಾರ ಆತಂಕಕ್ಕೀಡಾಗಿದೆ. ಇದು ಹೀಗೇ ಮುಂದುವರಿದರೆ ರಾಜ್ಯದಲ್ಲಿ 2047ರ ವೇಳೆಗೆ ಶೇ. 23ರಷ್ಟು ವೃದ್ಧರೇ ತುಂಬಬಹುದು. ಈ ಹಿನ್ನೆಲೆಯಲ್ಲಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಅಲ್ಲಿ ನ ಸರಕಾರ ಪ್ರೋತ್ಸಾಹ ನೀಡುತ್ತಿದೆ. ವಿಪರ್ಯಾಸವೆಂದರೆ, ದೇಶದ ಹಲವೆಡೆ ಜನಸಂಖ್ಯೆಯ ಕುರಿತು ಕಠಿಣ ನೀತಿ ಜಾರಿಯಲ್ಲಿದೆ. ಈ ನೀತಿಯ ಕಾರಣದಿಂದ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಪಂಚಾಯತ್ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಅಸ್ಸಾಂ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಹರ್ಯಾಣಗಳಲ್ಲಿ ಈ ನೀತಿಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ. ಅಸ್ಸಾಂ 2021ರಿಂದ ಈ ನೀತಿಯನ್ನು ಜಾರಿಗೆ ತಂದಿದ್ದು, ಸರಕಾರಿ ಕೆಲಸಕ್ಕೂ ಎರಡು ಮಕ್ಕಳ ನೀತಿಯನ್ನು ಅನ್ವಯಗೊಳಿಸಿದೆ. ಮಹಾರಾಷ್ಟ್ರದಲ್ಲಿ ಗ್ರಾಮಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹಾಗೂ ಕೆಲವು ನಾಗರಿಕ ಸೇವಾ ಹುದ್ದೆಗಳಿಗೂ ಅವರು ಅನರ್ಹರಾಗುತ್ತಾರೆ. ಈ ನೀತಿಯು ಹಲವು ಅನಾಹುತಗಳಿಗೆ ಕಾರಣವಾಗಿವೆ. ಕಳೆದ ಜನವರಿಯಲ್ಲಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರು ಗ್ರಾಮದ ನಿವಾಸಿ ಪಾಂಡುರಂಗ ಕೊಂಡ್ಮಂಗಲೆ ಎಂಬಾತ ತನ್ನ ಆರು ವರ್ಷದ ಪುತ್ರಿಯನ್ನು ಕಾಲುವೆಯೊಂದಕ್ಕೆ ತಳ್ಳಿ ಕೊಂದು ಹಾಕಿದ್ದಾನೆ. ಪಾಂಡುರಂಗನಿಗೆ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿತ್ತು. ಆದರೆ ಜನಸಂಖ್ಯಾ ನಿಯಮ ಆತ ಸ್ಪರ್ಧಿಸುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಯಾಕೆಂದರೆ ಈತ ಮೂರು ಮಕ್ಕಳನ್ನು ಹೊಂದಿದ್ದ. ಹಾಗೆ ನೋಡಿದರೆ ಈತನಿಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಉದ್ದೇಶವಿರಲಿಲ್ಲ. ಆದರೆ ಒಂದು ಗಂಡು ಮಗುವಿನ ಬಳಿಕ ಅವಳಿ ಮಕ್ಕಳಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಇಲ್ಲ ಎಂದಾಗ ಊರಿನ ಸರಪಂಚ ನೀಡಿದ ಸಲಹೆಯಂತೆ ಒಬ್ಬ ಹೆಣ್ಣು ಮಗುವನ್ನೇ ಕೊಂದು ಹಾಕಿ ಜೈಲು ಪಾಲಾದ. ಹಲವು ವರ್ಷಗಳ ಹಿಂದೆ ಗುಜರಾತ್‌ನ ಅಮ್ರೇಲಿ ಎಂಬಲ್ಲಿ ಇಂತಹದೇ ಒಂದು ಕೃತ್ಯ ನಡೆಯಿತು. ಅಲ್ಲಿನ ಮಹಿಳಾ ಸರಪಂಚರೊಬ್ಬರು ತನ್ನ ಮೂರನೇ ಮಗುವನ್ನು ಮುಚ್ಚಿಟ್ಟು ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಅಂತಿಮವಾಗಿ ಡಿಎನ್‌ಎ ಪರೀಕ್ಷೆ ನಡೆದು ಆಕೆ ತನ್ನ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಕೆಲವು ರಾಜ್ಯಗಳಲ್ಲಿರುವ ಈ ನಿಯಮ ಹಲವು ಅವಘಡಗಳಿಗೆ ಕಾರಣವಾಗುತ್ತಿವೆ. ಮೂರನೇ ಮಗುವನ್ನು ಹೊಂದಿದ ಗರ್ಭಿಣಿಯರು ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡಿಸಲು ಮುಂದಾಗಿ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದೊಳಗೇ ಮೂರನೇ ಮಗು ತನ್ನದಲ್ಲದ ಕಾರಣಕ್ಕೆ ಪೋಷಕರ ಅಸಹನೆಗೆ ಬಲಿಯಾಗಬೇಕಾಗುತ್ತದೆ. ಈ ನಿಯಮದ ವಿರುದ್ಧ ಹಲವರು ನ್ಯಾಯಾಲಯದ ಮೊರೆ ಹೋಗಿದ್ದಾರಾದರೂ ಯಾವ ಪ್ರಯೋಜನವೂ ಆಗಿಲ್ಲ. ಇದೇ ಸಂದರ್ಭದಲ್ಲಿ, ಪಂಚಾಯತ್ ಚುನಾವಣೆಗೆ ಈ ನಿಯಮ ಅನ್ವಯವಾಗುತ್ತದೆಯಾದರೆ, ಶಾಸಕ, ಸಂಸದರಿಗೂ ಅನ್ವಯವಾಗಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ. ಭಾರತದ ಸಂಪನ್ಮೂಲಕ್ಕೆ ಹೋಲಿಸಿದರೆ ಜನಸಂಖ್ಯೆ ಯಾವತ್ತೂ ಸಮಸ್ಯೆಯಲ್ಲ. ನೈಸರ್ಗಿಕ ಸಂಪನ್ಮೂಲದ ಅಸಮಾನ ಹಂಚಿಕೆಯೇ ಎಲ್ಲ ಸಮಸ್ಯೆಗಳಿಗೆ ಕಾರಣ. ನಮ್ಮ ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಸರಕಾರ ಭಾವಿಸಬೇಕು. ಎರಡು ಮಗುವಿಗೆ ಬದ್ಧರಾದರೆ ಭವಿಷ್ಯದಲ್ಲಿ ಯುವಕರು-ವೃದ್ಧರ ನಡುವಿನ ಅನುಪಾತದಲ್ಲಿ ಏರುಪೇರುಗಳಾಗಿ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಜನಸಂಖ್ಯಾ ನೀತಿಯ ಬಗ್ಗೆ ಸ್ಪಷ್ಟ ನಿಲುವೊಂದನ್ನು ತಳೆಯಲು ಸಮಯ ಬಂದಿದೆ. ಮುಖ್ಯವಾಗಿ ಜನಸಂಖ್ಯಾ ವಿಷಯವನ್ನು ರಾಜಕೀಯ ದುರುದ್ದೇಶಗಳಿಗೆ ಬಳಕೆಯಾಗಲು ಅವಕಾಶ ನೀಡದೆ, ದೇಶದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಗಂಭೀರ ಚರ್ಚೆಗೆ ಒಳಪಡಿಸಬೇಕಾಗಿದೆ.

ವಾರ್ತಾ ಭಾರತಿ 9 Mar 2026 4:32 pm

ಸಿದ್ದಾಪುರ: ಮಿತಿಮೀರಿದ ಕಾಡುಪ್ರಾಣಿಗಳ ಹಾವಳಿ...aaa

ಕಾರ್ಮಿಕರಲ್ಲಿ ಹೆಚ್ಚಿದ ಆತಂಕ

ವಾರ್ತಾ ಭಾರತಿ 9 Mar 2026 12:29 pm

ತನ್ನ ಪಕ್ಷವನ್ನು ಶುಚಿಗೊಳಿಸಲು ಕೇಜ್ರಿವಾಲ್ ಕಸಬರಿಕೆ ಬಳಸಲಿ

PC: x.com/ArvindKejriwal 2025ರಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಅರವಿಂದ ಕೇಜ್ರಿವಾಲ್ ಪಾಲಿಗೆ ತಡವಾಗಿ ಹೊರ ಬಿದ್ದಿದೆ. ಅಬಕಾರಿ ಹಗರಣದಲ್ಲಿ ತನಗೂ, ತನ್ನ ಸಹೋದ್ಯೋಗಿಗಳಿಗೂ ಸಿಕ್ಕಿದ ಕ್ಲೀನ್ ಚಿಟ್‌ನಿಂದ ಅವರು ತಕ್ಷಣಕ್ಕೆ ನಿರಾಳರಾಗಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆ ಮತ್ತು ಆರೋಪ ಪಟ್ಟಿಯಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ 23 ಜನರನ್ನು ಖುಲಾಸೆಗೊಳಿಸಿ ರೌಸ್ ಅವೆನ್ಯೂ ನ್ಯಾಯಾಲಯ ಕಳೆದ ಶುಕ್ರವಾರ ಆದೇಶ ಪ್ರಕಟಿಸಿದೆ. ಪರೋಕ್ಷವಾಗಿ ನ್ಯಾಯಾಲಯವೇ ‘ಇದೊಂದು ಪಿತೂರಿ’ ಎಂದು ಕರೆದಿರುವುದು ತನಿಖಾ ಸಂಸ್ಥೆಗಷ್ಟೇ ಅಲ್ಲದೆ ಕೇಂದ್ರ ಸರಕಾರಕ್ಕೂ ನೀಡಿದ ತಪರಾಕಿಯಾಗಿದೆ. ಕಳೆದ ಚುನಾವಣೆಯಲ್ಲಿ ಆಪ್ ಪಕ್ಷವನ್ನು ಸೋಲಿಸಲು ತನಿಖಾ ಸಂಸ್ಥೆಯು ಬಿಜೆಪಿಯೊಂದಿಗೆ ಕೈ ಜೋಡಿಸಿದೆ ಎನ್ನುವ ಆರೋಪಕ್ಕೆ ನ್ಯಾಯಾಲಯದ ಆದೇಶ ಪುಷ್ಟಿ ನೀಡುವಂತಿದೆ. ‘‘ಯಾವುದೇ ಸ್ಪಷ್ಟ ಸಾಕ್ಷ್ಯಗಳಿಲ್ಲದೆ ಕೇಜ್ರಿವಾಲ್ ಅವರ ವಿರುದ್ಧ ದೋಷಾರೋಪಣೆ ಮಾಡಲಾಗಿದೆ. ಅವರು ದೋಷಿ ಎಂದು ಹೇಳುವ ಯಾವುದೇ ಪುರಾವೆಗಳಿಲ್ಲ ’’ ಎಂದಿರುವ ನ್ಯಾಯಾಲಯ, ಸಿಸೋಡಿಯಾ ಪ್ರಕರಣದಲ್ಲೂ ಇದೇ ಅಂಶವನ್ನು ಎತ್ತಿ ಹಿಡಿದು ಖುಲಾಸೆಗೊಳಿಸಿದೆ. ಈ ಹಗರಣಕ್ಕೆ ಸಂಬಂಧಿಸಿ ಕೇಜ್ರಿವಾಲ್ ಸುಮಾರು 56 ದಿನಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದರೆ, ಸಿಸೋಡಿಯಾ 530ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ನೇರಾ ನೇರ ಸ್ಪರ್ಧೆ ಬಿಜೆಪಿಯಿಂದಾಗಿರಲಿಲ್ಲ, ವಿವಿಧ ತನಿಖಾ ಸಂಸ್ಥೆಗಳ ಜೊತೆಗೆ ಅದು ಗುದ್ದಾಡಬೇಕಾಗಿತ್ತು. ಆಮ್ ಆದ್ಮಿ ಪಕ್ಷವು ತನ್ನ ಮೇಲಿರುವ ಆರೋಪಗಳಿಂದ ಕಳಚಿಕೊಳ್ಳಲು ಒದ್ದಾಡುತ್ತಿರುವಾಗ ಇತ್ತ ಬಿಜೆಪಿ ದಿಲ್ಲಿಯನ್ನು ಸಲೀಸಾಗಿ ಬಗಲಿಗೆ ಹಾಕಿಕೊಂಡಿತು. ಹಾಗೆಂದು ಪ್ರಕರಣದಲ್ಲಿ ಕೇಜ್ರಿವಾಲ್ ಪೂರ್ಣ ಪ್ರಮಾಣದಲ್ಲಿ ಅಮಾಯಕರು ಎಂದು ಹೇಳಿಕೊಳ್ಳುವಂತೇನೂ ಇಲ್ಲ. ದಿಲ್ಲಿ ಸರಕಾರವು 2021ರಲ್ಲಿ ಪರಿಷ್ಕೃತ ಅಬಕಾರಿ ನೀತಿಯನ್ನು ಪರಿಚಯಿಸಿದ್ದು ಯಾವುದೇ ಸುಧಾರಣೆಯ ಉದ್ದೇಶದಿಂದಲ್ಲ. ಈ ನೀತಿಯು ಅಬಕಾರಿ ಉದ್ಯಮದಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸಿತ್ತು. ಅಬಕಾರಿ ಉದ್ಯಮದೊಂದಿಗೆ ಬೇರೆ ಬೇರೆ ಶಕ್ತಿಗಳು ಶಾಮೀಲಾಗಲು ಸಾಧ್ಯವಾಯಿತು. ಆಪ್ ಪಕ್ಷಕ್ಕೆ ಅಪಾರ ಪ್ರಮಾಣದ ಹಣ ಹರಿದು ಬರುವುದಕ್ಕೂ ಈ ನೀತಿ ಕಾರಣವಾಯಿತು ಎನ್ನುವ ಆರೋಪಗಳಿವೆ. ಇಲ್ಲಿ ನಡೆದ ಅಕ್ರಮಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಸರಕಾರ ಈ ನೀತಿಯನ್ನು ಹಿಂದೆಗೆದುಕೊಂಡಿತು. ಆದರೆ ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶಿಸಿದರು. ದಿಲ್ಲಿಯಲ್ಲಿ ಆಪ್‌ನ್ನು ಬಗ್ಗು ಬಡಿಯಲು ಈ ಹಗರಣವನ್ನು ಕೇಂದ್ರ ಸರಕಾರ ಬಳಸಿಕೊಂಡಿತು ಎನ್ನುವುದು ಸ್ಪಷ್ಟ. ಆದರೆ ಇದೇ ಸಂದರ್ಭದಲ್ಲಿ, ಬಿಜೆಪಿಯ ಆಡಳಿತವಿರುವ ರಾಜ್ಯಗಳ ಹಗರಣಗಳ ಕುರಿತಂತೆ ಕೇಂದ್ರ ಕಣ್ಣಿದ್ದು ಕುರುಡಾಯಿತು. ಮಧ್ಯಪ್ರದೇಶದ ವ್ಯಾಪಂ ಹಗರಣ, ಗುಜರಾತ್‌ನ ಪೋಂಜಿ ಸ್ಕೀಂ, ಚುನಾವಣಾ ಬಾಂಡ್ ಹಗರಣ, ರಫೇಲ್ ಹಗರಣ, ಅದಾನಿ ಹಗರಣ, ಪಿಎಂ ಕೇರ್ಸ್‌ ಫಂಡ್, ನೀಟ್ ಪೇಪರ್ ಸೋರಿಕೆ, ಕೊರೋನ ಅಕ್ರಮಗಳು ಇವೆಲ್ಲವುಗಳಿಗೆ ಸಂಬಂಧಿಸಿ ಯಾವುದೇ ರಾಜಕಾರಣಿ ಜೈಲು ಪಾಲಾಗಿಲ್ಲ. ಹೀಗಿರುವಾಗ, ಮದ್ಯ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯನ್ನು ನೇರ ಆರೋಪಿಯಾಗಿ ತನಿಖಾ ಸಂಸ್ಥೆ ಬಂಧಿಸಲು ಮುಂದಾದದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಸಿ ಹಾಕಿತ್ತು. ಇದೀಗ ಹಗರಣದಿಂದ ಬಿಡಿಸಿಕೊಂಡರೂ ಕೇಜ್ರಿವಾಲ್ ನಾಯಕತ್ವದ ಮೇಲೆ ಅದು ಅಳಿಸಲಾಗದಷ್ಟು ಮಸಿ ಬಳಿದಿದೆ. ನ್ಯಾಯಾಲಯದ ತೀರ್ಪು ಹೊರ ಬಿದ್ದದ್ದೇ ಮತ್ತೆ ಕೇಜ್ರಿವಾಲ್ ಕಸಬರಿಕೆ ಕೈಗೆತ್ತಿಕೊಂಡಿದ್ದಾರೆ. ‘‘ಈಗ ಚುನಾವಣೆ ನಡೆದರೆ ಬಿಜೆಪಿ 10 ಸ್ಥಾನವನ್ನೂ ಪಡೆದುಕೊಳ್ಳುವುದಿಲ್ಲ’’ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿ ಈ ಪ್ರಕರಣದಿಂದ ಖುಲಾಸೆಗೊಂಡಿರುವುದು ಅವರನ್ನು ರಾಜಕೀಯದಲ್ಲಿ ಸಕ್ರಿಯವಾಗುವುದಕ್ಕೆ ಸಹಾಯ ಮಾಡಬಹುದು. ಆದರೆ ದಿಲ್ಲಿಯನ್ನು ಕಳೆದುಕೊಳ್ಳಲು ಈ ಹಗರಣವಷ್ಟೇ ಕಾರಣವಾಗಿತ್ತೆ? ಆಡಳಿತದಲ್ಲಿ ಕೇಜ್ರಿವಾಲ್ ಹತ್ತು ಹಲವು ಸುಧಾರಣೆಗಳನ್ನು ಮಾಡಿದ್ದರು ನಿಜ. ಆದರೆ ರಾಜಕೀಯವಾಗಿ ಅವರ ಸಿದ್ಧಾಂತದ ಬಗ್ಗೆ, ಸಂವಿಧಾನದ ಆಶಯಗಳ ಅನುಷ್ಠಾನದ ಬದ್ಧತೆಯ ಬಗ್ಗೆ ಜನರಲ್ಲಿ ಅನುಮಾನಗಳು ಎದ್ದಿದ್ದವು. ದಿಲ್ಲಿಗಲಭೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಅವರ ಆಡಳಿತ ಪ್ರತಿಕ್ರಿಯಿಸಿದ ರೀತಿ ಅಲ್ಪಸಂಖ್ಯಾತರನ್ನು ರೊಚ್ಚಿಗೆಬ್ಬಿಸಿತ್ತು. ಕೇಜ್ರಿವಾಲ್ ಮೃದು ಹಿಂದುತ್ವವಾದವನ್ನು ಆಡಳಿತದಲ್ಲಿ ಪಾಲಿಸಿಕೊಂಡು ಬಂದರು. ಕೆಲವು ಜನಪ್ರಿಯ ಯೋಜನೆಗಳನ್ನು ಅವರು ಜಾರಿಗೊಳಿಸಿದರಾದರೂ ರಸ್ತೆ, ಒಳಚರಂಡಿಯಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಜನರಲ್ಲಿ ಅಸಮಾಧಾನವಿತ್ತು. ಕೇಜ್ರಿವಾಲ್ ಅವರ ಸರ್ವಾಧಿಕಾರಿ ಧೋರಣೆಯ ಬಗ್ಗೆ ಪಕ್ಷದೊಳಗೇ ಅಸಮಾಧಾನವಿತ್ತು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆಪ್ ಗೆಲ್ಲು ವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದು ಹಿನ್ನಡೆಗೆ ಬಹುದೊಡ್ಡ ಕಾರಣವಾಯಿತು. ನ್ಯಾಯಾಲಯ ನೀಡಿದ ಆದೇಶದ ಪ್ರತಿಯನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಎದುರಿಸಿ ಗೆಲ್ಲುವುದು ಕಷ್ಟ. ಚುನಾವಣೆಯ ಹೊತ್ತಿಗೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಇನ್ನೊಂದು ಪ್ರಕರಣದಲ್ಲಿ ಕೇಜ್ರಿವಾಲ್ ತಂಡವನ್ನು ಸಿಲುಕಿಸುವುದು ಕೇಂದ್ರ ಸರಕಾರಕ್ಕೆ ಕಷ್ಟವೇನೂ ಇಲ್ಲ. ತನ್ನ ಪಕ್ಷಕ್ಕೆ ಮಾತ್ರವಲ್ಲ, ವೈಯಕ್ತಿಕವಾಗಿ ತನಗೆ ಒದಗಿರುವ ಸೋಲನ್ನು ಸ್ವೀಕರಿಸಿ ಕೇಜ್ರಿವಾಲ್ ಆತ್ಮವಿಮರ್ಶೆಗಿಳಿಯಬೇಕು. ನ್ಯಾಯಾಲಯ ನೀಡಿದ ತೀರ್ಪು ಏನೇ ಇರಲಿ, ಅಕ್ರಮ ಮದ್ಯ ನೀತಿಯಲ್ಲಿ ತಾನು ಎಲ್ಲಿ, ಹೇಗೆ ಎಡವಿದ್ದೇನೆ ಎನ್ನುವುದನ್ನು ಅರಿತುಕೊಂಡು ಪಕ್ಷವನ್ನು ಮುನ್ನಡೆಸಬೇಕು. ದಿಲ್ಲಿಯಲ್ಲಿ ಪಕ್ಷವನ್ನು ಮತ್ತೆ ಹೊಸದಾಗಿ ಕಟ್ಟುವುದಕ್ಕೆ ಅವರು ಸಿದ್ಧವಾಗಬೇಕು. ಆಪ್‌ನ ಬಗ್ಗೆ ಯುವ ತಲೆಮಾರು ಬಹಳಷ್ಟು ನಿರೀಕ್ಷೆಗಳನ್ನಿಟ್ಟಿತ್ತು. ಇಂದು ಆಪ್ ಅವೆಲ್ಲವನ್ನು ಕಳೆದುಕೊಂಡಿದೆ. ಆ ನಿರೀಕ್ಷೆಗಳನ್ನು ಮತ್ತೆ ಸಂಪಾದಿಸಿಕೊಳ್ಳುವ ಅಗತ್ಯವಿದೆ. ಕಾರ್ಪೊರೇಟ್‌ಶಕ್ತಿಗಳು ಮತ್ತು ಕೋಮುವಾದಿ ಶಕ್ತಿಗಳು ಜಂಟಿಯಾಗಿ ದೇಶವನ್ನು ನಿಯಂತ್ರಿಸುತ್ತಿರುವ ಈ ದಿನಗಳಲ್ಲಿ ಅವುಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಜಾತ್ಯತೀತ ಮತಗಳು ಒಡೆದು ಹೋಗದಂತೆ ಇತರ ಪಕ್ಷಗಳ ಜೊತೆಗೆ ಮೈತ್ರಿಗೆ ಪಕ್ಷವನ್ನು ತೆರೆದುಕೊಳ್ಳಬೇಕು. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಬಿಜೆಪಿ ಜನಪ್ರಿಯತೆಯನ್ನು ಕಳೆದುಕೊಂಡಿದೆ. ದಿಲ್ಲಿ ಸ್ಫೋಟ, ಹೆಚ್ಚುತ್ತಿರುವ ಮಾಲಿನ್ಯ ಇತ್ಯಾದಿಗಳಿಂದಾಗಿ ಹೆಸರು ಕೆಡಿಸಿಕೊಂಡಿದೆ. ಕೇಜ್ರಿವಾಲ್ ಜಾರಿಗೆ ತಂದ ಕೆಲವು ಜನಪ್ರಿಯ ಯೋಜನೆಗಳಿಗೆ ಮೊರೆ ಹೋಗುವ ಸ್ಥಿತಿ ಬಿಜೆಪಿ ಸರಕಾರಕ್ಕೆ ನಿರ್ಮಾಣವಾಗಿದೆ. ಇವೆಲ್ಲವನ್ನು ಪೂರಕವಾಗಿ ಬಳಸಿಕೊಂಡು ಕೇಜ್ರಿವಾಲ್ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಬೇಕು. ಪಕ್ಷದ ಚಿಹ್ನೆಯಾಗಿರುವ ಕಸಬರಿಕೆಯನ್ನು ಮೊದಲು ತನ್ನ ಪಕ್ಷವನ್ನು ಸ್ವಚ್ಛಗೊಳಿಸಲು ಕೇಜ್ರಿವಾಲ್ ಬಳಸಬೇಕಾಗಿದೆ.

ವಾರ್ತಾ ಭಾರತಿ 4 Mar 2026 9:09 am

ದಾಳಿಯಲ್ಲ, ಅಮೆರಿಕ ಪ್ರಾಯೋಜಿತ ಅಂತರ್‌ರಾಷ್ಟ್ರೀಯ ಭಯೋತ್ಪಾದನೆ!

Photo credit: PTI   ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯು ಅಂತರ್‌ರಾಷ್ಟ್ರೀಯ ಭಯೋತ್ಪಾದನೆಗೆ ಸರಿಸಮಾನವಾಗಿದೆ. ಸಾರ್ವಭೌಮ ರಾಷ್ಟ್ರವೊಂದರ ಮೇಲೆ ಏಕಾಏಕಿ ಯುದ್ಧ ಸಾರಿ, ಅದರ ಸರ್ವೋಚ್ಚ ನಾಯಕನೂ ಸೇರಿದಂತೆ ಹಿರಿಯ ಸೇನಾಧಿಕಾರಿಗಳನ್ನು, ಮಾಜಿ ನಾಯಕರನ್ನು ಹತ್ಯೆಗೈದಿರುವುದನ್ನು ಈ ಎರಡೂ ರಾಷ್ಟ್ರಗಳು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿವೆ. ಸ್ವತಃ ಅಮೆರಿಕದೊಳಗಿಂದಲೇ ಇದರ ವಿರುದ್ಧ ಆಕ್ರೋಶವೆದ್ದಿವೆ. ರಶ್ಯ, ಚೀನಾ ಸೇರಿದಂತೆ ಅರ್ಧ ಜಗತ್ತು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಎಸಗುತ್ತಿರುವ ನರಮೇಧವನ್ನು ಖಂಡಿಸಿವೆ. ಅಮೆರಿಕದ ವಿರುದ್ಧ ವ್ಯಾಪಕವಾಗಿ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಹುಸೇನ್ ಖಾಮಿನೈ ಮತ್ತು ಅವರ ಸಹೋದ್ಯೋಗಿಗಳ ಹತ್ಯೆಯೊಂದಿಗೆ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವು ತನ್ನ ಮುಖದ ಮೇಲೆ ವಾಸಿಯಾಗದ ಗಾಯಗಳನ್ನು ಮಾಡಿಕೊಂಡಿದೆ. ಇರಾನನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಜಗತ್ತಿನಲ್ಲಿ ತನ್ನ ಏಕಸ್ವಾಮ್ಯವನ್ನು ಪ್ರತಿಪಾದಿಸಲು ಇಟ್ಟಿರುವ ಮೊದಲ ಹೆಜ್ಜೆಯೇ ಅದರ ಪಾಲಿಗೆ ಬಹಳ ದುಬಾರಿಯಾಗಲಿದೆ. ಈ ಯುದ್ಧ ಜಗತ್ತನ್ನು ಇನ್ನಷ್ಟು ನಾಶ ನಷ್ಟದೆಡೆಗೆ ಎಳೆದೊಯ್ಯುವ ಎಲ್ಲ ಸೂಚನೆಗಳು ಕಾಣುತ್ತಿವೆ. ಎರಡನೇ ಮಹಾಯುದ್ಧಕ್ಕೆ ಕಾರಣನಾದ ಸರ್ವಾಧಿಕಾರಿ ಹಿಟ್ಲರ್‌ನನ್ನೂ ಮೀರಿಸುವಂತಿರುವ ಟ್ರಂಪ್ ಕೃತ್ಯಗಳು ಮೂರನೇ ಮಹಾಯುದ್ಧಕ್ಕೆ ವೇದಿಕೆ ನಿರ್ಮಾಣ ಮಾಡುತ್ತಿರುವುದನ್ನು ಜಗತ್ತು ಅಸಹಾಯಕವಾಗಿ ನೋಡುತ್ತಿದೆ. ಈ ಯುದ್ಧವು ಅಮೆರಿಕ-ಇರಾನ್‌ಗಷ್ಟೇ ಸೀಮಿತವಾಗಿ ಉಳಿಯದೆ ಇದರ ನಾಶ ನಷ್ಟಗಳನ್ನು ಇಡೀ ಜಗತ್ತು ಅನುಭವಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇರಾನ್‌ನ ವಿರುದ್ಧ ಯುದ್ಧ ಹೂಡಲು ಅಮೆರಿಕ-ಇಸ್ರೇಲ್ ನೀಡಿರುವ ಕಾರಣಗಳು ಸಮಯಸಾಧಕತನದಿಂದ ಕೂಡಿವೆ. ಒಂದು ರೀತಿಯಲ್ಲಿ ಕುರಿಯ ಮೇಲೆ ದಾಳಿ ನಡೆಸಲು ತೋಳ ಮುಂದಿಟ್ಟ ನೆಪಗಳಂತಿವೆ. ‘ಇರಾನ್ ಅಣ್ವಸ್ತ್ರ ತಯಾರಿಸುವ ತನ್ನ ಗುರಿಗೆ ತುಂಬಾ ಹತ್ತಿರವಿದೆ’ ಎನ್ನುವುದು ಮೊದಲ ನೆಪ. ಈ ‘ಅಣ್ವಸ್ತ್ರ ಗುಮ್ಮ’ನನ್ನು ತೋರಿಸಿ ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಕಾಲು ಕೆರೆಯುತ್ತಿರುವುದು ಇಂದು ನಿನ್ನೆಯಲ್ಲ. 25 ವರ್ಷಗಳ ಹಿಂದೆಯೇ ಈ ಆರೋಪವನ್ನು ಮಾಡಿದ್ದು, ಬಳಿಕ ಪದೇ ಪದೇ ಈ ಹಾಡನ್ನು ಬೇರೆ ಬೇರೆ ರಾಗಗಳಲ್ಲಿ ಜಗತ್ತಿನ ಮುಂದಿಡುತ್ತಾ ಬಂದಿವೆೆ. ಈ ಆರೋಪವೇ ಇರಾನ್ ಮೇಲೆ ಬೇರೆ ಬೇರೆ ದಿಗ್ಬಂಧನ ಹೇರುವುದಕ್ಕೆ ಕಾರಣವಾಯಿತು. ಆದರೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಅಂತರ್‌ರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಮುಖ್ಯಸ್ಥ ರಾಫೇಲ್ ಅವರು, ಇರಾನ್ ಅಣ್ವಸ್ತ್ರ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಶ್ರಮಿಸುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು. ಕಳೆದ ವರ್ಷ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯ ಸಂದರ್ಭದಲ್ಲಿ ಇರಾನ್‌ನ ಅಣುಸ್ಥಾವರಗಳ ನೆಲೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶ ಪಡಿಸಿದ್ದೇವೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಈಗಾಗಲೇ ಅಕ್ರಮವಾಗಿ ಅಣ್ವಸ್ತ್ರವನ್ನು ದಾಸ್ತಾನು ಮಾಡಿಕೊಂಡಿರುವ ಇಸ್ರೇಲ್ ಜೊತೆಗೆ ಸೇರಿ ಇರಾನ್‌ನ ಅಣ್ವಸ್ತ್ರ ತಯಾರಿ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ ಎನ್ನುವ ಅಮೆರಿಕದ ಹೇಳಿಕೆಯೇ ಸಮಯಸಾಧಕತನದಿಂದ ಕೂಡಿರುವುದು. ಇಷ್ಟಕ್ಕೂ ಇರಾನ್‌ನ ಬಳಿ ಅಣ್ವಸ್ತ್ರಗಳು ಇಲ್ಲ ಎನ್ನುವುದು ಅರಿವಿದ್ದೇ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿಗಿಳಿದಿವೆ. ರಾಸಾಯನಿಕ ಶಸ್ತ್ರಾಸ್ತ್ರ ದಾಸ್ತಾನಿನ ನೆಪಗಳನ್ನು ಮುಂದಿಟ್ಟು ಈ ಹಿಂದೆ ಇರಾಕ್‌ನ ಮೇಲೆ ನಡೆಸಿದ ದಾಳಿಯ ಸವಕಲು ತಂತ್ರವನ್ನೇ ಮತ್ತೆ ಮತ್ತೆ ಬಳಸಿ ಜಗತ್ತನ್ನು ಮೂರ್ಖನನ್ನಾಗಿಸಲು ಮುಂದಾಗಿವೆ. ಒಂದು ವೇಳೆ ಇರಾನ್ ಅಣ್ವಸ್ತ್ರವನ್ನು ಹೊಂದಿದ್ದರೆ ಇಷ್ಟೊಂದು ಸಲೀಸಾಗಿ ಒಂದು ಸಾರ್ವಭೌಮ ದೇಶದ ಮೇಲೆ ದಾಳಿ ನಡೆಸಿ ಅದರ ನೇತಾರರನ್ನು ಹತ್ಯೆಗೈಯುವ ಧೈರ್ಯವನ್ನು ಅಮೆರಿಕ ಪ್ರದರ್ಶಿಸುತ್ತಿರಲಿಲ್ಲ. ತೈಲ ಮಾರುಕಟ್ಟೆಯಲ್ಲಿ ಇರಾನ್ ಒಡ್ಡುತ್ತಿರುವ ಸ್ಪರ್ಧೆ, ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಗೆ ಅದು ತೋರುತ್ತಿರುವ ಪ್ರಬಲ ಪ್ರತಿರೋಧವೇ ಅಮೆರಿಕದ ಈ ದಾಳಿಗೆ ಮುಖ್ಯ ಕಾರಣ. ನಿರ್ಬಂಧಗಳ ಮೂಲಕ ವೆನೆಝುವೆಲಾದ ಆರ್ಥಿಕತೆಯನ್ನು ನಾಶ ಮಾಡಿದಂತೆಯೇ ಇರಾನ್‌ನ ಆರ್ಥಿಕತೆಯನ್ನು ನಾಶ ಮಾಡಲು ಗರಿಷ್ಠ ಪ್ರಯತ್ನವನ್ನು ಅಮೆರಿಕ ಮಾಡಿದೆ. ಇದು ಇರಾನ್‌ನ ಬೇರೆ ಬೇರೆ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಇರಾನ್‌ನ ಆಡಳಿತದ ಬಗ್ಗೆ ಅಲ್ಲಿನ ಸ್ಥಳೀಯರು ರೋಸಿ ಹೋಗಿದ್ದರು. ಹೊಸ ತಲೆಮಾರು ಇರಾನ್ ಆಡಳಿತದ ವಿರುದ್ಧ ಪದೇ ಪದೇ ಬೀದಿಗಿಳಿದಿವೆಯಾದರೂ ಅದನ್ನು ನಿಷ್ಕರುಣೆಯಿಂದ ಅಲ್ಲಿನ ಸರಕಾರ ದಮನ ಮಾಡುತ್ತಾ ಬಂದಿರುವುದು ಕೂಡ ನಿಜ. ಯುವಜನರು ಇರಾನ್ ಆಡಳಿತದ ಬಗ್ಗೆ ಭ್ರಮ ನಿರಸನ ಹೊಂದಿರುವುದು ಸ್ಪಷ್ಟವಾಗಿತ್ತು. ಆದರೆ ಒಂದೆಡೆ ಇರಾನ್‌ನ್ನು ನುಂಗಲು ಅಮೆರಿಕ ಹೊಂಚು ಹಾಕಿ ಕಾಯುತ್ತಿತ್ತು. ದಂಗೆ ಎದ್ದರೆ ಅದರ ಲಾಭವನ್ನು ಅಮೆರಿಕ ಪಡೆಯುತ್ತದೆ ಎನ್ನುವ ಆತಂಕವು ಇರಾನ್ ಜನತೆಯನ್ನು ಕಾಡುತ್ತಿತ್ತು. ಇದೀಗ ಇರಾನ್ ಮೇಲೆ ಅಮೆರಿಕ ನಡೆಸಿರುವ ಭೀಕರ ದಾಳಿಯು ಇರಾನ್ ಜನರನ್ನು ಒಂದಾಗುವಂತೆ ಮಾಡಿದೆ. ‘‘ನಾವು ನಿಮಗೆ ಸಹಾಯ ಮಾಡಿದ್ದೇವೆ. ನೀವು ಇರಾನ್ ಆಡಳಿತವನ್ನು ವಶಪಡಿಸಿಕೊಳ್ಳಿ’’ ಎಂದು ದಂಗೆಗೆ ಇಸ್ರೇಲ್ ಮತ್ತು ಅಮೆರಿಕ ಪದೇ ಪದೇ ಕರೆಕೊಡುತ್ತಿದ್ದರೂ ಇರಾನ್ ಜನತೆ ಅದಕ್ಕೆ ಸ್ಪಂದಿಸುತ್ತಿಲ್ಲ. ತನ್ನ ಹಲವು ನಾಯಕರನ್ನು ಅಮೆರಿಕ ಬಲಿತೆಗೆದುಕೊಂಡಿದ್ದರೂ ಇರಾನ್ ಜಗ್ಗಿದಂತಿಲ್ಲ. ಪ್ರತಿಯಾಗಿ ಕೊಲ್ಲಿ ರಾಷ್ಟ್ರದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುತ್ತಿವೆ. ಇದು ಯುದ್ಧದ ಗತಿಯನ್ನು ಬದಲಿಸಿದೆ. ದುಬೈಯೊಳಗೆ ಇಡೀ ಜಗತ್ತು ತುಂಬಿಕೊಂಡಿದೆ. ಜಗತ್ತಿನ ಅತಿ ಸುರಕ್ಷಿತ ವಾಣಿಜ್ಯ ತಾಣವಾಗಿ ಗುರುತಿಸಿಕೊಂಡಿರುವ ದುಬೈ ಮೇಲೆ ಬೀಳುವ ಒಂದೊಂದು ಕ್ಷಿಪಣಿಯ ಕಿಡಿಗಳು ಜಗತ್ತಿನ ಮೂಲೆ ಮೂಲೆಗಳಿಗೆ ತಲುಪುತ್ತಿವೆ. ಇರಾನ್ ಇದೇ ಮೊದಲ ಬಾರಿಗೆ ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿ ದಾಳಿ ಮಾಡುತ್ತಿರುವುದು. ಇರಾನ್‌ಗೆ ಇಂತಹ ದಾಳಿಯನ್ನು ಅಮೆರಿಕವೇ ಅನಿವಾರ್ಯವಾಗಿಸಿತು. ಈ ದಾಳಿಯ ವಿರುದ್ಧ ಕೊಲ್ಲಿ ರಾಷ್ಟ್ರಗಳು ಅಮೆರಿಕವನ್ನು ಹೊಣೆಗಾರನನ್ನಾಗಿ ಮಾಡಬೇಕಾಗಿದೆ ಮತ್ತು ಖಂಡನೆ ವ್ಯಕ್ತಪಡಿಸುವುದಿದ್ದರೆ ಅಮೆರಿಕದ ವಿರುದ್ಧವೇ ವ್ಯಕ್ತಪಡಿಸಬೇಕಾಗಿದೆ. ಅಮೆರಿಕವು ಇರಾನ್‌ಗೆ ಮಾಡಿರುವ ಹಲವು ಗಾಯಗಳ ಪರಿಣಾಮವನ್ನು ಭಾರತವೂ ಉಣ್ಣಬೇಕಾಗಿ ಬಂದಿದೆ. ಒಂದು ಕಾಲದಲ್ಲಿ ಭಾರತವು ಅಕ್ಕಿ ಕೊಟ್ಟು ಇರಾನ್‌ನಿಂದ ತೈಲ ಖರೀದಿಸಿ ಅಮೆರಿಕದ ನಿರ್ಬಂಧಗಳಿಂದ ತನ್ನನ್ನು ತಾನು ಕಾಪಾಡಿಕೊಂಡಿತ್ತು. ಬಾಸ್ಮತಿ ಅಕ್ಕಿಯ ಬಹುದೊಡ್ಡ ಮಾರುಕಟ್ಟೆ ಇರಾನ್. ಅಮೆರಿಕದ ಒತ್ತಡದ ಕಾರಣದಿಂದಲೇ ಇರಾನ್‌ನ ಚಾಬಹಾರ್ ಬಂದರು ನಿರ್ಮಾಣದಿಂದ ಭಾರತ ಹಿಂಜರಿಯಬೇಕಾಯಿತು. ಅದಕ್ಕಾಗಿ ಹೂಡಿದ ಹಣವೂ ನೀರುಪಾಲಾಗಿದೆ. ಇರಾನ್-ಭಾರತದ ಸಂಬಂಧ ಸುಧಾರಿಸಿದಂತೆಯೇ ಅದು ಡಾಲರ್ ಆರ್ಥಿಕತೆಯ ಮೇಲೆ ದುಷ್ಟರಿಣಾಮ ಬೀರುತ್ತದೆ ಎನ್ನುವುದು ಅಮೆರಿಕಕ್ಕೆ ಗೊತ್ತಿತ್ತು. ಆದುದರಿಂದಲೇ ಇರಾನ್ ಜೊತೆಗೆ ಸಂಬಂಧ ಬೆಳೆಸದಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ. ಭಾರತದ ಮೇಲೆ ಸುಂಕಾಸ್ತ್ರದ ಮೂಲಕ ದಾಳಿ ನಡೆಸಿದ ಅಮೆರಿಕ, ಇದೀಗ ಇರಾನ್‌ನನ್ನು ಗಾಯಗೊಳಿಸಿ ಭಾರತಕ್ಕೆ ಇನ್ನೊಂದು ಆಘಾತ ನೀಡಿದೆ. ಇರಾನ್ ಮೇಲಿನ ದಾಳಿಯು ಪರೋಕ್ಷವಾಗಿ ಭಾರತದ ಹಲವು ಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರಲಿವೆ. ಹಾಗೆಯೇ ಕೊಲ್ಲಿ ರಾಷ್ಟ್ರಗಳಲ್ಲಿ ಬದುಕು ಕಟ್ಟುತ್ತಿರುವ ಸಾವಿರಾರು ಭಾರತೀಯರ ಬದುಕೂ ಅತಂತ್ರದಲ್ಲಿದೆ. ಈ ಕಾರಣಕ್ಕಾಗಿಯೇ ಇರಾನ್‌ನ ಮೇಲೆ ನಡೆದ ದಾಳಿಯನ್ನು ಭಾರತ ಏಕ ಪಕ್ಷೀಯವಾಗಿ ಖಂಡಿಸಬೇಕಾಗಿದೆ. ಇಂದು ಇರಾನ್‌ಗೆ ಸಂಭವಿಸಿದ್ದು ನಾಳೆ ತನಗೂ ಸಂಭವಿಸಬಹುದು ಎನ್ನುವ ಜಾಗರೂಕತೆಯೊಂದಿಗೆ ಸದ್ಯದ ಬಿಕ್ಕಟ್ಟನ್ನು ಭಾರತ ನಿಭಾಯಿಸಬೇಕಾಗಿದೆ. ಇಸ್ರೇಲ್ ಎನ್ನುವ ಭಯೋತ್ಪಾದಕ ದೇಶವನ್ನು ಸೆರಗಿನಲ್ಲಿ ಕಟ್ಟಿಕೊಂಡಿರುವ ಅಮೆರಿಕ ಒಂದಲ್ಲ ಒಂದು ದಿನ ತಾನೂ ಸುಡುತ್ತಾ, ತನ್ನ ಮಿತ್ರ ದೇಶಗಳನ್ನೂ ಸುಡಲಿದೆ ಎನ್ನುವ ಎಚ್ಚರಿಕೆ ಭಾರತಕ್ಕೆ ಇರಬೇಕಾಗಿದೆ.

ವಾರ್ತಾ ಭಾರತಿ 2 Mar 2026 8:24 am

ಸುಪ್ರೀಂಕೋರ್ಟ್ ಬುಡಕ್ಕೆ ಬೆಂಕಿಯಿಟ್ಟ ಎನ್‌ಸಿಇಆರ್‌ಟಿ

ಎನ್‌ಸಿಇಆರ್‌ಟಿಯು ಪಠ್ಯಪುಸ್ತಕದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಕೊನೆಗೂ ನ್ಯಾಯಾಲಯದ ಗಮನಕ್ಕೆ ಬಂದಿದೆ. ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಎಂಬ ಅಧ್ಯಾಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ವಿವಾದಿತ ಪಠ್ಯ ಪುಸ್ತಕವನ್ನು ನಿಷೇಧಿಸಿದೆ ಮಾತ್ರವಲ್ಲ, ವಿವರಣೆಯನ್ನು ಕೋರಿ ಎನ್‌ಸಿಇಆರ್‌ಟಿ ನಿರ್ದೇಶಕರಿಗೆ ನೋಟಿಸ್ ನೀಡಿದೆ. ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಎನ್‌ಸಿಇಆರ್‌ಟಿಯು ಪಠ್ಯಪುಸ್ತಕದಲ್ಲಿ ನಡೆಸುತ್ತಿರುವ ಹಸ್ತಕ್ಷೇಪಗಳ ಬಗ್ಗೆ ಹಲವು ಶಿಕ್ಷಣ ತಜ್ಞರು, ಇತಿಹಾಸ ತಜ್ಞರು, ವಿಚಾರವಾದಿಗಳು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಎನ್‌ಸಿಇಆರ್‌ಟಿಯ ಬೇಜವಾಬ್ದಾರಿಯ ಬಗ್ಗೆ ತೀವ್ರವಾಗಿ ಸ್ಪಂದಿಸಿದೆ. ಸುಪ್ರೀಂಕೋರ್ಟ್ ನ ಸಿಟ್ಟಿಗೆ ಕೇಂದ್ರ ಸರಕಾರವೂ ಬೆಚ್ಚಿ ಬಿದ್ದಿದ್ದು, ಪಠ್ಯದಲ್ಲಾಗಿರುವ ಅಚಾತುರ‌್ಯಕ್ಕೆ ಕ್ಷಮೆಯಾಚನೆ ಮಾಡಿದೆ. ಪ್ರಧಾನಿ ಮೋದಿಯವರೂ ಈ ಬಗ್ಗೆ ಪ್ರತ್ರಿಕಿಯಿಸಿದ್ದಾರೆ. ಯಾವಾಗ ತನ್ನ ಬುಡಕ್ಕೇ ಬೆಂಕಿ ಇಡುವುದಕ್ಕೆ ಎನ್‌ಸಿಇಆರ್‌ಟಿ ಮುಂದಾಯಿತೋ ಆಗ ಸುಪ್ರೀಂಕೋರ್ಟ್‌ಗೆ ಪಠ್ಯ ಪುಸ್ತಕದ ಬಗ್ಗೆ ಕಾಳಜಿ ಬಂದು ಬಿಟ್ಟಿತು. ಇಷ್ಟಕ್ಕೂ ಎನ್‌ಸಿಇಆರ್‌ಟಿಯು ವಿಜ್ಞಾನ, ಇತಿಹಾಸ ವಿಷಯಗಳಿಗೆ ಸಂಬಂಧಿಸಿ ಪಠ್ಯದಲ್ಲಿ ಮಾಡಿದ ರಾದ್ಧಾಂತಕ್ಕೆ ಹೋಲಿಸಿದರೆ, ಅಷ್ಟೇನೂ ಗಾಬರಿ ಪಡಬೇಕಾದ ಅಧ್ವಾನ ಇದಾಗಿರಲಿಲ್ಲ. ಎಂಟನೇ ತರಗತಿಯ ಪಠ್ಯ ಪುಸ್ತಕದಲ್ಲಿ ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಅಧ್ಯಾಯವನ್ನು ಎನ್‌ಸಿಇಆರ್‌ಟಿಯು ಸೇರಿಸಿತ್ತು. ವಿದ್ಯಾರ್ಥಿಗಳಿಗೆ ನ್ಯಾಯಾಂಗ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶವನ್ನು ಈ ಪಠ್ಯ ಹೊಂದಿದೆ. ಆದರೆ ಎನ್‌ಸಿಇಆರ್‌ಟಿಯು ಒಂದು ಹೆಜ್ಜೆ ಮುಂದೆ ಹೋಗಿ, ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಉಪಶೀರ್ಷಿಕೆಯನ್ನು ಇದರಲ್ಲಿ ಸೇರಿಸಿತು. ಅಲ್ಲಿ, ‘‘ನ್ಯಾಯಾಂಗದ ವಿವಿಧ ಹಂತಗಳಲ್ಲಿನ ಭ್ರಷ್ಟಾಚಾರ ಮತ್ತು ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರ ಕೊರತೆ, ಸಂಕೀರ್ಣ ಕಾನೂನು ಕಾರ್ಯ ವಿಧಾನಗಳು, ಕಳಪೆ ಮೂಲ ಸೌಕರ್ಯ’’ ಇತ್ಯಾದಿಗಳನ್ನು ಚರ್ಚಿಸಲಾಗಿದೆ. ನ್ಯಾಯಾಂಗ ವ್ಯವಸ್ಥೆಯ ವಿವಿಧ ಸವಾಲುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಭ್ರಷ್ಟಾಚಾರದಿಂದಾಗಿ ಬಡವರು ನ್ಯಾಯ ಪಡೆಯುವಲ್ಲಿ ತೊಡಕುಗಳು ಎದುರಾಗಬಹುದು ಎನ್ನುವುದನ್ನೂ ಈ ಪಠ್ಯ ಹೇಳುತ್ತದೆ. ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಪ್ರತಿದಿನ ಚರ್ಚೆಯ ವಿಷಯವಾಗುತ್ತಿದೆ. ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರು ನೀಡುವ ತೀರ್ಪುಗಳಲ್ಲಿರುವ ವಿರೋಧಾಭಾಸಗಳು, ನಿವೃತ್ತಿಯ ಬಳಿಕ ಅವರು ಸರಕಾರದಿಂದ ಪಡೆಯುತ್ತಿರುವ ಸವಲತ್ತುಗಳು ಭಾರೀ ಟೀಕೆಗಳಿಗೆ ಕಾರಣವಾಗಿವೆ. ಹೊರಗಿನ ಒತ್ತಡಗಳಿಗೆ ನ್ಯಾಯಾಧೀಶರು ಬಲಿಯಾಗುತ್ತಿದ್ದಾರೆ ಎನ್ನುವ ಆರೋಪಗಳೂ ಹೆಚ್ಚುತ್ತಿವೆ. ಇತ್ತೀಚೆಗೆ ಓರ್ವ ನ್ಯಾಯಾಧೀಶರ ನಿವಾಸದಲ್ಲಿ ಪತ್ತೆಯಾದ ಹಣವೂ ಕೂಡ ನ್ಯಾಯ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನೆಗೊಳಪಡಿಸಿತ್ತು. ಈ ಹಿನ್ನೆಲೆಯಲ್ಲಿ ಎನ್‌ಸಿಆರ್‌ಟಿಯು ಪಠ್ಯದಲ್ಲಿ ಪ್ರಸ್ತಾಪಿಸಿದ ವಿಷಯ ಸತ್ಯಕ್ಕೆ ದೂರವಾದುದೇನೂ ಅಲ್ಲ. ಆದರೆ ಸುಪ್ರೀಂಕೋರ್ಟ್ ಮಾತ್ರ ಕುಂಬಳಕಾಯಿ ಕದ್ದವನಂತೆ ಹೆಗಲು ಮುಟ್ಟಿ ನೋಡಿಕೊಂಡಿದೆ. ಮುಖ್ಯವಾಗಿ ಎಂಟನೇ ತರಗತಿಯ ಪಠ್ಯದಲ್ಲಿ ಇವುಗಳನ್ನು ಚರ್ಚಿಸುವ ಅಗತ್ಯವಿದೆಯೇ ಎನ್ನುವುದು ಸಂವಿಧಾನ ತಜ್ಞರ ಮೊದಲ ಆಕ್ಷೇಪವಾಗಿದೆ. ನ್ಯಾಯಾಂಗ ವ್ಯವಸ್ಥೆಯ ಪಠ್ಯದಲ್ಲಿ ನ್ಯಾಯಾಂಗ ವ್ಯವಸ್ಥೆ ಎದುರಿಸುವ ಭ್ರಷ್ಟಾಚಾರಗಳನ್ನು ಪ್ರಸ್ತಾಪಿಸುವುದಾದರೆ, ಕಾರ್ಯಾಂಗ ಮತ್ತು ಶಾಸಕಾಂಗಗಳ ವಿಷಯಗಳಲ್ಲೂ ಇವುಗಳನ್ನು ಚರ್ಚಿಸಬೇಡವೆ? ಎನ್ನುವುದು ಇನ್ನೊಂದು ವಾದ. ಇಂದು ಭ್ರಷ್ಟಾಚಾರ ನ್ಯಾಯ ವ್ಯವಸ್ಥೆಗೆ ಮಾತ್ರ ಸವಾಲಾಗಿರುವುದಲ್ಲ, ಕಾರ್ಯಾಂಗ ಮತ್ತು ಶಾಸಕಾಂಗದ ಕಾರ್ಯವೈಖರಿಯಲ್ಲೂ ಇದು ಪರಿಣಾಮವನ್ನು ಬೀರುತ್ತಿದೆ. ಆದರೆ ವಿದ್ಯಾರ್ಥಿಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಾತ್ರ ತಪ್ಪು ತಿಳುವಳಿಕೆಯನ್ನು ಬಿತ್ತಿದಂತಾಗುತ್ತದೆ ಎನ್ನುವುದು ಸುಪ್ರೀಂಕೋರ್ಟ್‌ನ ಆತಂಕ. ಈ ಪಠ್ಯದಿಂದ ನ್ಯಾಯಾಂಗದ ಮಾನಹರಣವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ನ್ಯಾಯಾಲಯವು ಈ ಪಠ್ಯಕ್ಕೆ ನಿಷೇಧ ಹೇರಿದ್ದು ಮಾತ್ರವಲ್ಲ, ಎಲ್ಲ ಪ್ರತಿಗಳನ್ನು ವಶಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್‌ನ ಆತಂಕ, ಕಳವಳ, ಆಕ್ರೋಶವನ್ನು ಸಾರಾಸಗಟಾಗಿ ತಿರಸ್ಕರಿಸಲಾಗುವುದಿಲ್ಲ. ಆದರೆ, ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತರುವ ಸಾಲುಗಳಿವೆ ಎಂದು ಗದ್ದಲ ಎಬ್ಬಿಸಿರುವ ಸುಪ್ರೀಂಕೋರ್ಟ್ ವಿಜ್ಞಾನ, ಇತಿಹಾಸಗಳಲ್ಲಿ ಎನ್‌ಸಿಇಆರ್‌ಟಿ ಮಾಡಿರುವ ಅಧ್ವಾನಗಳ ಬಗ್ಗೆ ಮಾತ್ರ ಯಾಕೆ ಕುರುಡಾಗಿದೆೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಒಂದೆಡೆ ವಿಜ್ಞಾನ ಪಠ್ಯದಲ್ಲಿ ವಿಜ್ಞಾನೇತರ ವಿಷಯಗಳನ್ನು ತುರುಕುವ ಪ್ರಯತ್ನ ನಡೆಯುತ್ತಿದೆ. ಪುರಾಣಗಳನ್ನು ವಿಜ್ಞಾನದೊಳಗೆ ತುರುಕಿ ಅದನ್ನು ವಿಜ್ಞಾನದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಸುಪ್ರೀಂಕೋರ್ಟ್‌ಗೆ ಇದು ಈ ದೇಶದ ವೈಜ್ಞಾನಿಕ, ವೈಚಾರಿಕ ಚಿಂತನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಈವರೆಗೆ ಅನ್ನಿಸಿಲ್ಲ. ಎನ್‌ಸಿಇಆರ್‌ಟಿಯ ಈ ನಡೆಯು ಶಿಕ್ಷಣದ ಗುಣಮಟ್ಟವನ್ನು ಕುಗ್ಗಿಸುತ್ತಿರುವ ಬಗ್ಗೆ ಯಾವ ಆತಂಕವೂ ಸುಪ್ರೀಂಕೋರ್ಟ್‌ಗೆ ಇಲ್ಲ. ಇತಿಹಾಸ ಪಠ್ಯದಲ್ಲಿ ಎನ್‌ಸಿಇಆರ್‌ಟಿ ಮಾಡುತ್ತಿರುವ ದಾಳಿಯು ಭಾರತದ ಇತಿಹಾಸದ ಮೇಲೆ ಮಾತ್ರವಲ್ಲ, ವರ್ತಮಾನದ ಮೇಲೂ ಪರಿಣಾಮಗಳನ್ನು ಬೀರುತ್ತಿದೆ. ಸಂಘಪರಿವಾರದ ಅಜೆಂಡಾಗಳಿಗೆ ಪೂರಕವಾಗಿ ಇತಿಹಾಸವನ್ನು ಪಠ್ಯದಲ್ಲಿ ತಿರುಚಲಾಗುತ್ತಿದೆ. ಮಾತ್ರವಲ್ಲ, ಕೆಲವು ಪಠ್ಯಗಳಿಗೇ ಕತ್ತರಿ ಹಾಕಲಾಗುತ್ತಿದೆ. ಈ ಹಿಂದೆ ಎಂಟನೇ ತರಗತಿ ಪಠ್ಯ ಪುಸ್ತಕಗಳಿಂದ ಟಿಪ್ಪು ಸುಲ್ತಾನ್, ರಝಿಯಾ ಸುಲ್ತಾನ್ ಹಾಗೂ ನೂರ್ ಜಹಾನ್‌ರಂತಹ ಚಾರಿತ್ರಿಕ ವ್ಯಕ್ತಿಗಳನ್ನು ಕೈ ಬಿಡಲಾಗಿತ್ತು. ಸರಕಾರ ಈ ಕೃತ್ಯವನ್ನು ಸಮರ್ಥಿಸಿಕೊಂಡಿತ್ತು. ಭಾರತದ ಇತಿಹಾಸದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೈದರಲಿ, ಟಿಪ್ಪು ಸುಲ್ತಾನ್‌ರ ಬದುಕಿನ ತುಣುಕುಗಳನ್ನು ಕೈ ಬಿಟ್ಟು ಬೋಧಿಸುವ ಇತಿಹಾಸ ಈ ದೇಶದ ಚಿತ್ರಣವನ್ನು ಪೂರ್ಣವಾಗಿ ತೆರೆದಿಡಲಾರದು ಎಂದು ಈವರೆಗೆ ಸುಪ್ರೀಂಕೋರ್ಟ್‌ಗೆ ಅನ್ನಿಸದೇ ಇರುವುದು ಖೇದಕರವಾಗಿದೆ. ‘ಭ್ರಷ್ಟಾಚಾರ’ವನ್ನು ಪ್ರಸ್ತಾಪಿಸಿದ ಕಾರಣಕ್ಕೇ ನ್ಯಾಯಾಂಗ ವ್ಯವಸ್ಥೆಯ ಮಾನಹರಣವಾಯಿತು ಎಂದು ಆತಂಕಪಡುವ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಆಗಿಹೋಗಿರುವ ಭಾರತದ ಮಹತ್ವದ ಘಟನೆಗಳನ್ನು, ಮಹತ್ವದ ವ್ಯಕ್ತಿಗಳನ್ನು ರಾಜಕೀಯ ಕಾರಣಗಳಿಗಾಗಿ ಕಿತ್ತು ಹಾಕುತ್ತಿರುವುದರ ಬಗ್ಗೆ ಯಾಕೆ ಮೌನವಾಗಿದೆ ಎನ್ನುವ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ಆದುದರಿಂದ ಎನ್‌ಸಿಇಆರ್‌ಟಿಯು ಇತಿಹಾಸ, ವಿಜ್ಞಾನ ಸೇರಿದಂತೆ ಇತರ ಭಾಗಗಳಲ್ಲಿ ಮಾಡಿರುವ ಅಧ್ವಾನಗಳನ್ನೂ ಸುಪ್ರೀಂಕೋರ್ಟ್ ಗಂಭೀರವಾಗಿ ತೆಗೆದುಕೊಂಡು ಅವುಗಳ ಕುರಿತಂತೆಯೂ ತೀರ್ಪುಗಳನ್ನು ನೀಡುವುದು ಶಿಕ್ಷಣದ ಗುಣಮಟ್ಟವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ತನ್ನ ಮಾನದ ಕುರಿತಂತೆ ಇರುವ ಕಾಳಜಿಯನ್ನು ವಿಜ್ಞಾನ, ಇತಿಹಾಸ ಕ್ಷೇತ್ರಗಳಿಗೆ ಸಂಬಂಧಿಸಿಯೂ ಸುಪ್ರೀಂಕೋರ್ಟ್ ಪ್ರದರ್ಶಿಸಬೇಕಾಗಿದೆ. ಇದು ಒಟ್ಟು ಭಾರತದ ಶಿಕ್ಷಣದ ಮಾನದ ಪ್ರಶ್ನೆಯಾಗಿದೆ.

ವಾರ್ತಾ ಭಾರತಿ 27 Feb 2026 9:48 am

ನಿರುದ್ಯೋಗಿ ಯುವ ಭಾರತದ ಗಾಯಗಳಿಗೆ ಎಐ ಬರೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯ ಸಂಭ್ರಮ ಮುಗಿಲು ಮುಟ್ಟಿದೆ. ಹತ್ತು ಹಲವು ಕೊರತೆಗಳ ನಡುವೆಯೂ ದೇಶ ವಿದೇಶಗಳ ಉದ್ಯಮಿಗಳು, ರಾಜಕೀಯ ನಾಯಕರ ಜೊತೆಗೆ ಪ್ರಧಾನಿ ಮೋದಿಯವರು ಮದುವೆ ಮನೆಯ ಬೀಗತಿಯಂತೆ ಸಂಭ್ರಮಿಸುತ್ತಿದ್ದಾರೆ. ಎಐ ಕ್ರಾಂತಿಯಲ್ಲಿ ಭಾರತ ಕೇವಲ ಪಾಲುದಾರ ಮಾತ್ರವಲ್ಲ, ಅದು ನಾಯಕತ್ವವನ್ನು ವಹಿಸಿಕೊಂಡಿದೆ ಎಂದು ಪ್ರಧಾನಿ ಮೋದಿಯವರು ಘೋಷಿಸಿದ್ದಾರೆ. ಇತ್ತೀಚೆಗೆ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರು ‘ಭಾರತದ ನಗರ-ಗ್ರಾಮೀಣ ಅಂತರವನ್ನು ಎಐ ಕಡಿಮೆ ಮಾಡಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ‘‘ಎಐ ಅಸಮಾನತೆಗಳನ್ನು ಆಳಗೊಳಿಸುತ್ತದೆ ಎಂದು ಜಗತ್ತು ಆತಂಕ ಪಡುತ್ತಿರುವ ಸಮಯದಲ್ಲಿ, ಭಾರತವು ಅಂತರಗಳನ್ನು ಅಳಿಸಲು ಅದನ್ನು ಬಳಸುತ್ತಿದೆ. ನಾವು ಇದನ್ನು ಪ್ರತೀ ಹಳ್ಳಿಗೆ, ಪ್ರತೀ ಜಿಲ್ಲೆಗೆ ಮತ್ತು ಪ್ರತಿಯೊಬ್ಬ ನಾಗರಿಕನಿಗೆ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳನ್ನು ತಲುಪಿಸುವ ಸಮರ್ಥ ಸಾಧನವನ್ನಾಗಿ ಮಾಡುತ್ತಿದ್ದೇವೆ’’ ಎಂದು ಅವರು ಹೇಳಿಕೊಂಡಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯ ಕುಂದುಕೊರತೆಗಳು, ಮೂಲಭೂತ ಸೌಕರ್ಯಗಳಲ್ಲಾಗಿರುವ ಲೋಪಗಳು, ವಿಶ್ವವಿದ್ಯಾನಿಲಯವೊಂದರ ನಕಲಿ ರೋಬೋಟ್‌ಗಳು ಚರ್ಚೆಯಾದಷ್ಟು, ಎಐ ಈ ದೇಶದ ಜನರ ಬದುಕಿನ ಮೇಲೆ ಭವಿಷ್ಯದಲ್ಲಿ ಬೀರುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದಿಲ್ಲ. ವಿದೇಶಿ ಸಂಸ್ಥೆಗಳ ನಡುವೆ ನಡೆದ ಒಪ್ಪಂದಗಳ ‘ಭೋಪರಾಕ್’ಗಳಿಗೆ ಮಾಧ್ಯಮಗಳು ಸೀಮಿತವಾಗಿವೆ. ಶೃಂಗಸಭೆಯ ಸಫಲತೆಯ ಮಾನದಂಡಗಳು ಯಾವುವು? ಎಷ್ಟು ವಿದೇಶಿ ಕಂಪೆನಿಗಳು ಭಾರತದೊಂದಿಗೆ ಒಪ್ಪಂದಕ್ಕೆ ಸಿದ್ಧವಾಗಿವೆ, ಭಾರತದಲ್ಲಿ ತನ್ನ ನೆಲೆಗಳನ್ನು ಸ್ಥಾಪಿಸಲು ಮುಂದಾಗಿವೆ ಎನ್ನುವುದು ಈ ಸಭೆಯ ಯಶಸ್ಸನ್ನು ಹೇಳುತ್ತದೆಯೋ ಅಥವಾ ಭವಿಷ್ಯದಲ್ಲಿ ಅದು ಭಾರತದ ಅಭಿವೃದ್ಧಿಯ ಮೇಲೆ ಯಾವ ರೀತಿ ಪರಿಣಾಮಗಳನ್ನು ಬೀರಲಿದೆ ಎನ್ನುವುದರ ಮಾನದಂಡದಲ್ಲಿ ನಿರ್ಧಾರವಾಗುತ್ತದೆಯೋ? ಈ ಸಂದರ್ಭದಲ್ಲಿ ಐಎಂಎಫ್ ಆಡಳಿತ ನಿದೇಶಕಿ ಕ್ರಿಸ್ಟಲೀನಾ ಅವರು ಸಮ್ಮೇಳನದ ಭಾಷಣದಲ್ಲಿ ನೀಡಿದ ಎಚ್ಚರಿಕೆಯನ್ನು ಭಾರತ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ‘‘ಎಐಯು ಜಾಗತಿಕ ಬೆಳವಣಿಗೆಯನ್ನು ಹೆಚ್ಚಿಸಬಹುದೇನೋ ನಿಜ. ಆದರೆ ಅದೇ ವೇಳೆ ಉದ್ಯೋಗ ಕಡಿತ ಮತ್ತು ಆರ್ಥಿಕ ಅಸ್ಥಿರತೆಯ ದೊಡ್ಡ ಅಪಾಯವನ್ನೂ ಒಡ್ಡಿದೆ’’ ಎಂದು ಅವರು ತಮ್ಮ ಭಾಷಣದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಅನೇಕ ಸಂದರ್ಭದಲ್ಲಿ ಎಐ ಕುರಿತ ಬಣ್ಣನೆಗಳು ಒಳಗಿರುವ ಕಹಿಗಳಿಗೆ ನೀಡಿದ ಸಿಹಿ ಲೇಪನವಾಗುವ ಸಾಧ್ಯತೆಗಳಿವೆ ಎನ್ನುವ ಅವರ ಮಾತು ಭಾರತವನ್ನೇ ಉದ್ದೇಶಿಸಿ ಆಡಿರುವಂತಿದೆ. ಕೆಲವು ದೇಶಗಳು ಈ ತಂತ್ರಜ್ಞಾನವನ್ನು ಬಳಸಿ ಅತಿ ಎತ್ತರಕ್ಕೆ ತಲುಪುವ ಸಂದರ್ಭದಲ್ಲಿ ಎಐಯ ವ್ಯಾಪ್ತಿಯಲ್ಲಿಲ್ಲದ ಬಡ ಮತ್ತು ಹಿಂದುಳಿದ ದೇಶಗಳು ಪಾತಾಳಕ್ಕೆ ತಲುಪಬಹುದು. ಈ ಅಂತರಗಳನ್ನು ತುಂಬುವುದು ಸುಲಭವಿಲ್ಲ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಅಂತರವನ್ನು ಇಲ್ಲವಾಗಿಸುವ, ಸಮತೋಲನವನ್ನು ಕಾಯ್ದುಕೊಳ್ಳುವ ಬಗ್ಗೆ ಸಮ್ಮೇಳನದಲ್ಲಿ ಯಾರೂ ಗಂಭೀರವಾಗಿ ಚರ್ಚಿಸಿಲ್ಲ. ಎಲ್ಲ ದೇಶ ವಿದೇಶಗಳ ಸಂಸ್ಥೆಗಳು ತಮ್ಮ ತಮ್ಮ ಬಟ್ಟಲನ್ನು ತುಂಬಿಸಿಕೊಳ್ಳುವುದರಲ್ಲೇ ಮಗ್ನವಾಗಿದ್ದವು. ಕ್ರಿಸ್ಟಲೀನಾ ಮಾತುಗಳಲ್ಲಿ ಈ ಬಗ್ಗೆ ಕಳವಳಗಳಿದ್ದವು. ಅವರದೇ ಮಾತುಗಳ ಪ್ರಕಾರ, ಜಾಗತಿಕವಾಗಿ ಉದ್ಯೋಗಗಳ ಮೇಲೆ ಎಐ ಪರಿಣಾಮ ಬೀರುತ್ತದೆ. ಕೆಲವು ಕೆಲಸಗಳನ್ನು ಸುಲಲಿತಗೊಳಿಸುವುದರ ಜೊತೆಗೇ ಹಲವು ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ. ಈಗಾಗಲೇ ಕಸಿದುಕೊಳ್ಳುವ ಕೆಲಸ ಶುರುವಾಗಿದೆ. ಅಭಿವೃದ್ಧಿ ಶೀಲ ದೇಶಗಳಲ್ಲಿ ಶೇ. 40ರಷ್ಟು ಉದ್ಯೋಗಗಳು ನಾಶವಾಗಲಿದ್ದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇ. 60 ಉದ್ಯೋಗಗಳು ನಾಶವಾಗಲಿವೆ. ಉದ್ಯೋಗಗಳು ನಾಶವಾದಾಗ ಅದರ ಲಾಭವನ್ನು ಪಡೆದುಕೊಳ್ಳುವುದು ಉದ್ಯಮಿಗಳು. ಅಂದರೆ ಕಡಿಮೆ ಉದ್ಯೋಗಿಗಳಿಂದ ಹೆಚ್ಚು ಸಂಪಾದಿಸುವ ಅವಕಾಶ ಅವರಿಗೆ. ಭಾರತ ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನು ತೀವ್ರವಾಗಿ ಅನುಭವಿಸುತ್ತಿದೆ. ವಿಪರ್ಯಾಸವೆಂದರೆ, ವಿದ್ಯಾವಂತ ಯುವ ಸಮೂಹದಲ್ಲೇ ನಿರುದ್ಯೋಗ ಏರುಗತಿಯಲ್ಲಿದೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ನಿರುದ್ಯೋಗ ಪ್ರಮಾಣದಲ್ಲಿ ಯುವಜನತೆಯ ಪಾಲು ಶೇ. 83ರಷ್ಟಿದೆ ಎಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಭಾರತದ ಮಾನವಾಭಿವೃದ್ಧಿ ಸಂಸ್ಥೆ ಬಿಡುಗಡೆ ಮಾಡಿದ 2024ರ ವರದಿ ವಿವರಿಸುತ್ತದೆ. 2000ದಿಂದ 2019ರ ಅವಧಿಯಲ್ಲಿ ಭಾರತದ ಯುವ ಸಮೂಹದಲ್ಲಿನ ಉದ್ಯೋಗ ಮತ್ತು ಅರೆ ಉದ್ಯೋಗ ಪ್ರಮಾಣ ಏರುಗತಿಯಲ್ಲೇ ಇತ್ತು. ಆದರೆ ಕೋವಿಡ್ ಅವಧಿಯಲ್ಲಿ ಅದು ಇಳಿಮುಖವಾಯಿತು. 2000ನೇ ಇಸವಿಯಲ್ಲಿ ದೇಶದಲ್ಲಿನ ಒಟ್ಟು ವಿದ್ಯಾವಂತ ಯುವ ಸಮೂಹ ಉದ್ಯೋಗಿಗಳ ಪೈಕಿ ಶೇ. 50ರಷ್ಟು ಜನರು ಸ್ವಯಂ ಉದ್ಯೋಗ ಮಾಡುತ್ತಿದ್ದರು. ಶೇ. 13ರಷ್ಟು ಜನರು ನಿಯಮಿತ ಉದ್ಯೋಗವನ್ನು ಹೊಂದಿದ್ದರು. ಶೇ. 37ರಷ್ಟು ಜನರು ತಾತ್ಕಾಲಿಕ ಉದ್ಯೋಗ ಹೊಂದಿದ್ದರು. 2022ರಲ್ಲಿ ಅದು ತೀವ್ರ ಇಳಿಕೆ ಕಂಡಿದೆ. ಭಾರತವು ಮುಂದಿನ ಒಂದು ದಶಕದಲ್ಲಿ 80 ಲಕ್ಷ ಜನರು ಉದ್ಯೋಗ ಪಡೆದುಕೊಳ್ಳಲಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅಭಿಪ್ರಾಯ ಪಟ್ಟಿತ್ತು. ಆದರೆ ಎಐ ಕ್ರಾಂತಿಯು ಆ ಅಂದಾಜುಗಳನ್ನು ಬುಡಮೇಲು ಮಾಡಲಿದೆ. ಎಐ ಗ್ರಾಮೀಣ ಮತ್ತು ನಗರದ ನಡುವಿನ ಅಸಮಾನತೆಯನ್ನು ಅಳಿಸುತ್ತದೆ ಎನ್ನುವುದು ಪ್ರಧಾನಿಯ ಬುರುಡೆ ಮಾತು. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಲಭ್ಯಗಳಿಂದಲೇ ವಂಚಿತವಾಗಿವೆ. ಆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರಕಾರ ವಿಶೇಷ ಆಸಕ್ತಿಯನ್ನೇ ಹೊಂದಿಲ್ಲ. ಹೀಗಿರುವಾಗ ಎಐ ಗ್ರಾಮೀಣ ಪ್ರದೇಶಗಳಿಗೆ ಹೇಗೆ ಪೂರಕವಾಗಿ ಕೆಲಸ ಮಾಡಬಹುದು? ಕೆಲಸ ಕಳೆದುಕೊಳ್ಳುವ ವಿದ್ಯಾವಂತ ಸಮುದಾಯಗಳಿಗೆ ನೀಡುವುದಕ್ಕೆ ಸರಕಾರದ ಬಳಿ ಏನಿದೆ? ಉದ್ಯೋಗಿಗಳ ಸಂಖ್ಯೆಗಳನ್ನು ಇಳಿಸಿ ಬೃಹತ್ ಕಾರ್ಪೊರೇಟ್ ಸಂಸ್ಥೆಗಳನ್ನು ಇನ್ನಷ್ಟು ಲಾಭದಾಯಕವನ್ನಾಗಿಸುವುದರಿಂದ ಗ್ರಾಮೀಣ ಪ್ರದೇಶಗಳಿಗೆ ಹೇಗೆ ಲಾಭವಾಗಲಿದೆ? ಈಗಾಗಲೇ ಗ್ರಾಮೀಣ ಪ್ರದೇಶದ ತಳಸ್ತರದ ಜನರ ಬದುಕಿಗೆ ಆಸರೆಯಾಗಿರುವ ಮನರೇಗಾ ಯೋಜನೆಯನ್ನು ಕೂಡ ಹಂತಹಂತವಾಗಿ ಇಲ್ಲವಾಗಿಸಲು ಸರಕಾರ ಹೊರಟಿದೆ. ಎಐ ತಂತ್ರಜ್ಞಾನ ವಿದ್ಯಾವಂತ ಯುವಕರು ಅದರಲ್ಲೂ ಐಟಿ ಕ್ಷೇತ್ರದಲ್ಲಿರುವ ಯುವಕರ ಕೆಲಸಗಳನ್ನೇ ಮೊದಲಿಗೆ ನುಂಗಿ ಹಾಕಲಿದೆ.ಆ ಬಳಿಕ ಹಂತಹಂತವಾಗಿ ಇತರ ಉದ್ಯೋಗಗಳನ್ನು ಆಪೋಷನ ತೆಗೆದುಕೊಳ್ಳಲಿದೆ. ಇವೆಲ್ಲವೂ ಅಂತಿಮವಾಗಿ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳನ್ನು ಸರಕಾರ ಶೃಂಗಸಭೆಯಲ್ಲಿ ಗಂಭೀರವಾಗಿ ಚರ್ಚಿಸಬೇಕಾಗಿತ್ತು. ಆಧುನಿಕ ಸಂಶೋಧನೆಗಳನ್ನು, ಅದರ ಮೂಲಕ ನಡೆಯುವ ವಿಕಾಸವನ್ನು ತಡೆಯಲು ಸಾಧ್ಯವಿಲ್ಲ ನಿಜ. ಆದರೆ ಇಂದು ನಮ್ಮ ನೆಲ, ಜಲವನ್ನು ಒತ್ತೆಯಿಟ್ಟು ವಿದೇಶಿ ಕಂಪೆನಿಗಳನ್ನು ಭಾರತಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ ಅದು ಒಟ್ಟು ದೇಶದ ಅಭಿವೃದ್ಧಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚೆನಡೆಸುವುದು ಅತ್ಯಗತ್ಯವಾಗಿದೆ. ಕೃತಕ ಬುದ್ಧಿ ಮತ್ತೆಯ ‘ಮಾನವ್’ ನೋಟವನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ, ಮಾನವ್ ಅಂದರೆ ನೈತಿಕತೆ, ಉತ್ತರದಾಯಿತ್ವವುಳ್ಳ ಆಡಳಿತ, ಪಾರದರ್ಶಕ ನಿಯಮಗಳು ಮತ್ತು ಸದೃಢ ಮೇಲುಸ್ತುವಾರಿ, ರಾಷ್ಟ್ರೀಯ ಸಾರ್ವಭೌಮತೆ, ಎಲ್ಲರನ್ನೂ ಒಳಗೊಳ್ಳುವುದು ಎಂದು ವಿವರಿಸಿದ್ದಾರೆ. ನಮ್ಮ ನೆಲ ಜಲವನ್ನು ಬಲಿಕೊಟ್ಟು ಕಾರ್ಪೊರೇಟ್ ಸಂಸ್ಥೆಯನ್ನು ಬೆಳೆಸುವುದು ನೈತಿಕತೆಯೆ? ನಮ್ಮ ದತ್ತಾಂಶಗಳನ್ನು ಅಮೆರಿಕದಂತಹ ದೇಶಗಳಿಗೆ ಒತ್ತೆಯಿಡುವುದು ಸಾರ್ವಭೌಮತೆಯ ರಕ್ಷಣೆಯೆ? ಉತ್ತರದಾಯಿತ್ವವುಳ್ಳ ಆಡಳಿತ ರೀತಿಯೆ? ಲಕ್ಷಾಂತರ ವಿದ್ಯಾವಂತ ಯುವಕರು ಉದ್ಯೋಗಗಳನ್ನು ಕಳೆದುಕೊಳ್ಳುವುದು ಎಲ್ಲರನ್ನು ಒಳಗೊಳ್ಳುವ ಬಗೆಯೆ? ಭಾರತವು ವಿದೇಶಿ ಕಂಪೆನಿಗಳ ಜೊತೆಗೆ ನಡೆಸಿದ ಒಪ್ಪಂದಗಳು ನಿಜಕ್ಕೂ ಪಾರದರ್ಶಕವಾಗಿವೆ ಎಂದು ಪ್ರಧಾನಿ ಎದೆ ಮುಟ್ಟಿ ಹೇಳಿಕೊಳ್ಳಬಲ್ಲರೆ?

ವಾರ್ತಾ ಭಾರತಿ 21 Feb 2026 3:30 pm

ನೀಟ್: ವೈದ್ಯಕೀಯ ಆಕಾಂಕ್ಷಿಗಳ ಸಾವು ನೋವು

ನೀಟ್ ಪರೀಕ್ಷೆ ಇರುವುದೇ ಹಗರಣ ಮಾಡಲು ಮತ್ತು ವಂಚನೆ ಮಾಡಲು, ನೀಟ್ ಕೋಚಿಂಗ್ ಸೆಂಟರ್‌ಗಳು ಇರುವುದೇ ಲೂಟಿ ಮಾಡಲು. ದಕ್ಷಿಣ ಭಾರತೀಯ ವೈದ್ಯಕೀಯ ಆಕಾಂಕ್ಷಿಗಳ ಪ್ರಾಣಕ್ಕೆ ಕಂಟಕವಾದ ಈ ದರಿದ್ರ ವ್ಯವಸ್ಥೆಯನ್ನು ಕಿತ್ತೊಗೆದು ಮೊದಲಿದ್ದ ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ಮಾಡಿಕೊಡುತ್ತಿದ್ದ ವ್ಯವಸ್ಥೆಯೇ ಜಾರಿಯಾಗಲಿ. ಈ ಸಾವು ನೋವುಗಳು ನಿಲ್ಲಲಿ, ಈಗ ಆಗಿರುವ ಸಾವು ನೋವುಗಳಿಗೆ  ನ್ಯಾಯ ಸಿಗಲಿ. ನಾಲ್ಕು ವಾರಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದ ಘಟನೆಯಿಂದ ಭಾರತದ ಶಿಕ್ಷಣ ವ್ಯವಸ್ಥೆ ತನ್ನ ಪಥ ಬದಲಾಯಿಸಿದೆ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ. ಶಿಕ್ಷಣ ಜೀವನ ಕಟ್ಟಿಕೊಳ್ಳಲಿಕ್ಕೆ ಬೇಕಾದ ಬುನಾದಿ ಆದರೆ ಈಗ ಸಾವು ನೋವುಗಳಿಗೆ ಮೆಟ್ಟಿಲು. ಜೌನ್ ಪುರ ಜಿಲ್ಲೆಯ ಖಲೀಲ್‌ಪುರದಲ್ಲಿ 20 ವರ್ಷದ ಸೂರಜ್ ಭಾಸ್ಕರ್ ಎಂಬ ನೀಟ್ ಆಕಾಂಕ್ಷಿ ಸ್ವತಹ ತಾನೇ ತನ್ನ ಕಾಲನ್ನು ಕತ್ತರಿಸಿಕೊಂಡಿದ್ದಾನೆ, ಕಾರಣ- ಈತ ಎರಡು ಬಾರಿ ನೀಟ್ ಪರೀಕ್ಷೆಗೆ ಪ್ರಯತ್ನಿಸಿದ್ದರೂ ಪರೀಕ್ಷೆಯಲ್ಲಿ ಪಾಸ್ ಆಗಿರಲಿಲ್ಲ. ತಾನು ಡಾಕ್ಟರ್ ಆಗಲೇ ಬೇಕೆಂಬ ಕನಸುಕಂಡಿದ್ದ, ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ, ‘‘2026ಕ್ಕೆ ನಾನು ಡಾಕ್ಟರ್ ಆಗುತ್ತೇನೆ’’ ಎಂದು ಆತನ ಡೈರಿಯಲ್ಲಿ ಬರೆದುಕೊಂಡಿದ್ದ. ವೈದ್ಯಕೀಯ ಅಧ್ಯಯನ ಮಾಡಲು ನೀಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ. ಅದನ್ನು ಭೇದಿಸಲು ಆಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ, ಕೊನೆಗೆ ನೀಟ್ ಪರೀಕ್ಷೆ ಅಡಿಯಲ್ಲಿ ಬರುವ ಅಂಗವಿಕಲತೆಯ ಕೋಟಾ ಪಡೆದು ತಾನು ಡಾಕ್ಟರ್ ಆಗುವ ಕನಸನ್ನು ಈಡೇರಿಸಿಕೊಳ್ಳಲು ತನ್ನ ಕಾಲನ್ನು ಕತ್ತರಿಸಿಕೊಂಡಿದ್ದಾನೆ. ‘ನೀಟ್’ ಎಂಬ ಕೆಟ್ಟ ಪೆಡಂಭೂತದಿಂದ ಇದಕ್ಕಿಂತಲೂ ದೊಡ್ಡ ಮಟ್ಟದ ದುರ್ಘಟನೆ ತಮಿಳುನಾಡಿನಲ್ಲಿ ಸಂಭವಿಸಿತ್ತು. ಅರಿಯಲೂರು ಜಿಲ್ಲೆಯ ಕೂಳುಮೂರ್ ಊರಿನ 17 ವರ್ಷದ ಷಣ್ಮುಗಂ ಅನಿತಾ ಎಂಬ ದಲಿತ ಸಮುದಾಯಕ್ಕೆ ಸೇರಿದ ಹುಡುಗಿಯ ತಾಯಿ ಈಕೆ ಚಿಕ್ಕವಯಸ್ಸಿನಲ್ಲಿ ಇರುವಾಗಲೇ ತೀರಿಹೋಗಿದ್ದಳು, ಹಾಗಾಗಿ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಳು. ತಂದೆಯ ದಿನಗೂಲಿ ಮಾಡುವ ಅಸಂಘಟಿತ ಕಾರ್ಮಿಕ. ಈಕೆ ಬಡ ದಲಿತ ಕುಟುಂಬಕ್ಕೆ ಸೇರಿದವಳಾಗಿದ್ದಳು. ಇವರ ಮನೆಯಲ್ಲಿ ಶೌಚಾಲಯ ಸೌಲಭ್ಯವೂ ಇರಲಿಲ್ಲ ಅಂತಹ ಕಡುಬಡತನ. ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬಂದಿದ್ದ ಹುಡುಗಿ ಎರಡನೇ ವರ್ಷದ ಪಿಯುಸಿ ಪರೀಕ್ಷೆಯಲ್ಲಿ 1,200ಕ್ಕೆ 1176 ಅಂಕ ಗಳಿಸಿದ್ದಳು (ಅದರಲ್ಲಿ ಭೌತಶಾಸ್ತ್ರ ಮತ್ತು ಗಣಿತದಲ್ಲಿ ನೂರಕ್ಕೆ ನೂರರಷ್ಟು ಅಂಕಗಳಿಸಿದ್ದಳು). ಪಿಯುಸಿ ಪರೀಕ್ಷೆಯನ್ನು ‘ತಮಿಳುನಾಡು ಸ್ಟೇಟ್ ಬೋರ್ಡ್ ಎಕ್ಸಾಮಿನೇಷನ್’ ನಡೆಸುತ್ತದೆ. ಅನಿತಾ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದ ಕಾರಣ ‘ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ವತಿಯಿಂದ ಎರೋನಾಟಿಕಲ್ ಇಂಜಿನಿಯರಿಂಗ್ ಕೋರ್ಸ್ ಅಧ್ಯಯನ ಮಾಡಲು ಅವಕಾಶ ಬರುತ್ತದೆ. ಆದರೆ ಅನಿತಾ ಆ ಅವಕಾಶವನ್ನು ನಿರಾಕರಿಸುತ್ತಾಳೆ. ಕಾರಣ ಆಕೆಗಿದ್ದ ಗುರಿ ಡಾಕ್ಟರ್ ಆಗಬೇಕೆಂಬುವುದು. ಅನಿತಾ ಡಾಕ್ಟರ್ ಆಗಲೇಬೇಕೆಂಬ ಗುರಿ ಸಾಧಿಸಲು ಹಗಲಿರುಳು ಶ್ರಮಿಸಿದ್ದಳು. ನೀಟ್ ಪರೀಕ್ಷೆ ಬಂದ ಕಾರಣ, ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ಪಡೆಯಲು ನೀಟ್ ಪರೀಕ್ಷೆ ಕಡ್ಡಾಯ. ವೈದ್ಯಕೀಯ ಅಧ್ಯಯನಕ್ಕೆ ಅರ್ಹತೆ ಪಡೆಯಲು ನೀಟ್ ರ್ಯಾಂಕ್ ಮುಖ್ಯವಾಗುತ್ತದೆ, ಪಿಯುಸಿಯಲ್ಲಿ ಗಳಿಸಿದ ಅಂಕಗಳು ಪರಿಗಣನೆಗೆ ಬರುವುದಿಲ್ಲ. ಹಾಗಾಗಿ ಈಕೆ ನೀಟ್ ಪರೀಕ್ಷೆ ಬರೆಯುತ್ತಾಳೆ, ನೀಟ್ ಪರೀಕ್ಷೆಯಲ್ಲಿ 720 ಅಂಕಕ್ಕೆ 86 ಅಂಕ (ಶೇ. 12.33) ಗಳಿಸಿ ಫೇಲಾಗುತ್ತಾಳೆ. ನೀಟ್ ಮೂಲಕ ತನಗಾದ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಅನಿತಾ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾಳೆ. ಸುಪ್ರೀಂ ಕೋರ್ಟ್ ಮನವಿಯನ್ನು ವಜಾಗೊಳಿಸಿ, ನೀಟ್ ಆಧಾರದ ಮೇಲೆ ಮಾತ್ರ ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿತು. ಈ ತೀರ್ಪಿನಿಂದಾಗಿ ಅನಿತಾಳ ವೈದ್ಯಕೀಯ ಕನಸು ಛಿದ್ರಗೊಂಡಿತು, ಆಗ ತಮಿಳುನಾಡು ಸರಕಾರ ಏನೂ ಮಾಡಲು ಸಾಧ್ಯವಾಗಲಿಲ್ಲ, ಸುಪ್ರೀಂ ಕೋರ್ಟ್ ತೀರ್ಪು ಬಂದ 9ನೇ ದಿನಕ್ಕೆ ಅನಿತಾ ನೇಣಿಗೆ ಶರಣಾಗುತ್ತಾಳೆ. ಇದೇ ರೀತಿ, 2022ರಲ್ಲಿ ನೀಟ್ ಪರೀಕ್ಷೆಯ ಫಲಿತಾಂಶ ಬಂದಾಗ ತಮಿಳುನಾಡಿನಲ್ಲಿ ಲಕ್ಷಣ ಶ್ವೇತಾ ಎಂಬ ಹುಡುಗಿ ನೇಣು ಬಿಗಿದುಕೊಂಡು ಸಾಯುತ್ತಾಳೆ. ನೊಯ್ಡಾದಲ್ಲಿ 22 ವರ್ಷದ ಸಂಪದ ಸಿಂಗ್ ಎಂಬ ಹುಡುಗಿ 19ನೇ ಮಹಡಿಯಿಂದ ಬಿದ್ದು ಸಾಯುತ್ತಾಳೆ. ಈ ಸಾವು ನೋವುಗಳಿಗೆಲ್ಲ ನೇರ ಕಾರಣ ಮತ್ತು ಹೊಣೆ ಒಕ್ಕೂಟ ಸರಕಾರ, ಸುಪ್ರೀಂ ಕೋರ್ಟ್ ಮತ್ತು ದರಿದ್ರ ನೀಟ್ ಪರೀಕ್ಷಾ ಪದ್ಧತಿ. ಈ ಆತ್ಮಹತ್ಯೆ ಎಂಬುವುದು ಇಷ್ಟಕ್ಕೆ ನಿಂತಿಲ್ಲ, ‘ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೊ’ ನೀಡಿದ ಮಾಹಿತಿ ಪ್ರಕಾರ 2017ರಲ್ಲಿ 9,905 ವಿದ್ಯಾರ್ಥಿಗಳು, 2018ರಲ್ಲಿ 10,159 ವಿದ್ಯಾರ್ಥಿಗಳು, 2019ರಲ್ಲಿ 10,335 ವಿದ್ಯಾರ್ಥಿಗಳು, 2020ರಲ್ಲಿ 12,526 ವಿದ್ಯಾರ್ಥಿಗಳು, 2021ರಲ್ಲಿ 13,089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಡಿಯಾದಲ್ಲಿ ಪ್ರಜಾಪ್ರಭುತ್ವ ಇದೆ, ಸಂವಿಧಾನ ಇದೆ, ಒಕ್ಕೂಟ ಸರಕಾರ ಇದೆ, ರಾಜ್ಯ ಸರಕಾರಗಳಿವೆ, ನಾಗರಿಕ ಹಕ್ಕುಗಳ ಆ ರಕ್ಷಣೆ ಮಾಡುವ ಸಮಿತಿಗಳಿವೆ, ಸುಪ್ರೀಂ ಕೋರ್ಟ್ ಇದೆ, ಹೈಕೋರ್ಟ್ ಗಳಿವೆ ಆದರೆ ಏನು ಪ್ರಯೋಜನ? ನೀಟ್ ಪರೀಕ್ಷಾ ಪದ್ಧತಿ ಬರುವುದಕ್ಕಿಂತ ಮೊದಲು ಆಯಾ ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಅವುಗಳದ್ದೇ ಸ್ವಂತ ಪ್ರವೇಶ ಪರೀಕ್ಷೆಗಳಿದ್ದವು, ಉದಾಹರಣೆಗೆ ಎಐಐಎಂಎಸ್, ಜೆಐಪಿಎಂಇಆರ್, ಐಎಂಎಸ್: ಬಿಎಚ್ ಯು, ಕೆಎಂಸಿ ಮಣಿಪಾಲ್ ಮತ್ತು ಮಂಗಳೂರು, ಸಿಎಂಸಿ ವೆಲ್ಲೂರ್ ಈ ತರಹದ ವೈದ್ಯಕೀಯ ಕಾಲೇಜುಗಳು ಸ್ವತಃ ತಾವೇ ಪ್ರವೇಶ ಪರೀಕ್ಷೆ ನಡೆಸಿ ಮತ್ತು ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡುತ್ತಿತ್ತು ಮತ್ತು ಈ ವ್ಯವಸ್ಥೆಯಿಂದ ಹಿಂದುಳಿದ ಸಮುದಾಯದವರಿಗೆ ಮತ್ತು ಆಯಾ ರಾಜ್ಯದವರಿಗೆ ವೈದ್ಯಕೀಯ ಅಧ್ಯಯನ ಮಾಡಲು ಅವಕಾಶ ದೊರೆಯುತ್ತಿತ್ತು. ಹಾಗಾಗಿ ಈ ವ್ಯವಸ್ಥೆಯೇ ಉತ್ತಮವಾಗಿತ್ತು. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಸಮಯ 2012ರಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಎಂಬ ಪರಿಕಲ್ಪನೆಯನ್ನು ಮೊದಲಿಗೆ ಪರಿಚಯಿಸಲಾಯಿತು. ಆ ಸಮಯದಲ್ಲಿ ನೀಟ್ ಪರೀಕ್ಷೆ ಪದ್ಧತಿಯನ್ನು ಮೊದಲು ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳುನಾಡು ತೀವ್ರವಾಗಿ ವಿರೋಧಿಸಿತ್ತು. ತಮಿಳುನಾಡು ನೀಟ್ ಪದ್ಧತಿಯನ್ನು ವಿರೋಧಿಸಲು ಕಾರಣ-ದಕ್ಷಿಣ ಭಾರತದಲ್ಲಿ ಸಾಕಷ್ಟು ಸರಕಾರಿ ವೈದ್ಯಕೀಯ ಕಾಲೇಜುಗಳಿದ್ದವು, ಆಗ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸ್ವತಃ ಕಾಲೇಜುಗಳೇ ಮಾಡುವ ಪ್ರವೇಶ ಪರೀಕ್ಷೆ ಮತ್ತು ಪಿಯುಸಿ ಅಂಕಗಳ ಪರಿಗಣಿಸುವುದು ಮತ್ತು ಆ ರಾಜ್ಯದವರಿಗೆ ಮೀಸಲಾತಿ ಇದ್ದ ಕಾರಣ ಇವುಗಳಿಂದ ಸ್ಥಳೀಯರಿಗೆ ಮತ್ತು ಆ ರಾಜ್ಯದವರಿಗೆ ವೈದ್ಯಕೀಯ ಅಧ್ಯಯನ ಮಾಡಲು ಅವಕಾಶ ದೊರೆಯುತ್ತಿತ್ತು. ಆದರೆ ಉತ್ತರ ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಪ್ರಮಾಣ ಕಡಿಮೆ, ದಕ್ಷಿಣ ಭಾರತದಲ್ಲಿ ಇರುವ ಕಾಲೇಜುಗಳಿಗೆ ಉತ್ತರ ಭಾರತದ ವಿದ್ಯಾರ್ಥಿಗಳು ಪ್ರವೇಶ ಮಾಡಿಸಲು ಮತ್ತು ಶ್ರೀಮಂತರ ಮಕ್ಕಳಿಗೆ ಮಾತ್ರ ವೈದ್ಯಕೀಯ ಅಧ್ಯಯನ ಮಾಡಲಿಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಈ ವ್ಯವಸ್ಥೆ ಬಂದಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ- ದಕ್ಷಿಣ ಭಾರತದವರ ಮತ್ತು ಹಿಂದುಳಿದ ಸಮುದಾಯಗಳಿಗೆ ಸಿಗಬೇಕಾದ ಸೌಲಭ್ಯವೆಲ್ಲ ಕಿತ್ತು ಹಣ ಇರುವವರಿಗೆ ಮತ್ತು ಉತ್ತರ ಭಾರತದವರಿಗೆ ಕೊಡುವ ಹುನ್ನಾರವೇ ಈ ನೀಟ್ ಪರೀಕ್ಷಾ ಪದ್ಧತಿ. ನೀಟ್ ಪರೀಕ್ಷೆ ಆರಂಭವಾದಾಗ ಈ ಪರೀಕ್ಷಾ ಪದ್ಧತಿಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಹಾಕಲಾಯಿತು, ಸುಪ್ರೀಂ ಕೋರ್ಟ್ ಈ ಪದ್ಧತಿಯನ್ನು ವಜಾಗೊಳಿಸಿತು ನಂತರ ಅದೇ ಸುಪ್ರೀಂ ಕೋರ್ಟ್ 2016ರಲ್ಲಿ ನೀಟ್ ಪರೀಕ್ಷೆಗೆ ಅವಕಾಶ ಕೊಟ್ಟಿತು. ಈ ಕೆಟ್ಟ, ನೀಟ್ ವ್ಯವಸ್ಥೆಯಿಂದ ದಕ್ಷಿಣ ಭಾರತದ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಅಧ್ಯಯನ ಕೈತಪ್ಪಿ ವಂಚನೆಯಾಯಿತು, ಈ ವಂಚನೆ ಅತಿರೇಕಕ್ಕೆ ಹೋದಾಗ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಈ ನೀಟ್ ಪರೀಕ್ಷೆ ಬಂದ ಕಾರಣ ಸಾವಿರಾರು-ಲಕ್ಷಾಂತರ ಕೋಚಿಂಗ್ ಸೆಂಟರ್‌ಗಳು ಹುಟ್ಟಿಕೊಂಡವು, ದುಬಾರಿ ಬೆಲೆತೆತ್ತು ಕೋಚಿಂಗ್ ಸೆಂಟರ್‌ಗಳಿಗೆ ಸೇರಿದರೆ ಮಾತ್ರ ನೀಟ್ ಪರೀಕ್ಷೆ ಪಾಸಾಗಲಿಕ್ಕೆ ಸಾಧ್ಯ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಲಾಯಿತು. ಕೋಚಿಂಗ್ ಸೆಂಟರ್‌ಗೆ ಸೇರಲು ಲಕ್ಷಾಂತರ ರೂಪಾಯಿ ಬೇಕು. ಈ ಹಣ ಹೊಂದಿಸಲು ಹಿಂದುಳಿದ ಸಮುದಾಯಗಳಿಗೆ ಆಗದು. ಎಲ್ಲಾ ರಾಜ್ಯದ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮ ಒಂದೇ ರೀತಿ ಇರುವುದಿಲ್ಲ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರೂ ನೀಟ್ ಪರೀಕ್ಷೆ ಪಾಸ್ ಆಗುವುದು ಕಷ್ಟ ಸಾಧ್ಯ. ನೀಟ್ ಪರೀಕ್ಷೆ-ಹಲವು ಹಗರಣ 2024ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಹಗರಣ ನಡೆದಿತ್ತು ಮತ್ತು ಇಂಡಿಯಾದಾದ್ಯಂತ ಟೀಕೆಗೆ ಗುರಿಯಾಗಿತ್ತು. ನೀಟ್ ಪರೀಕ್ಷೆ ನಡೆಯುವ ಹಿಂದಿನ ದಿನ ಬಿಹಾರ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ದರೋಡೆಕೋರರು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದಾಗ ಪ್ರತಿಯೊಬ್ಬ ಆಕಾಂಕ್ಷಿಯಿಂದ 30ರಿಂದ 50 ಲಕ್ಷ ಹಣ ಪಡೆದಿದ್ದರು. ಸುಮಾರು ಆಕಾಂಕ್ಷಿಗಳು 718, 719 ಅಂಕಗಳನ್ನು ಗಳಿಸಿದ್ದರು, ಇದು ಗಣಿತಶಾಸ್ತ್ರದಲ್ಲಿ ಅಸಾಧ್ಯ. ಒಂದು ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ 45 ಪ್ರಶ್ನೆಗಳಿರುತ್ತವೆ. ಒಂದು ಪ್ರಶ್ನೆಗೆ ನಾಲ್ಕು ಅಂಕ, ಒಂದು ಪ್ರಶ್ನೆ ತಪ್ಪಾದರೆ ಋಣಾತ್ಮಕವಾಗಿ ಒಂದು ಅಂಕ ಕಡಿಮೆಯಾಗುತ್ತದೆ. ಹಾಗಾಗಿ 718, 719 ಅಂಕಗಳು ಗಳಿಸಲು ಸಾಧ್ಯವಿಲ್ಲ. 67 ವಿದ್ಯಾರ್ಥಿಗಳು 720 ಅಂಕಗಳನ್ನು ಗಳಿಸಿದ್ದರು. 2024ರಲ್ಲಿ ಸೋರಿಕೆಯಾದ ನೀಟ್ ಪ್ರಶ್ನೆ ಪತ್ರಿಕೆಯಿಂದ 155 ವಿದ್ಯಾರ್ಥಿಗಳು ಉಪಯೋಗ ಪಡೆದಿದ್ದಾರೆಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಆಗ 1,563 ವಿದ್ಯಾರ್ಥಿಗಳಿಗೆ ಮಾತ್ರ ನೀಟ್ ಮರುಪರೀಕ್ಷೆ ಮಾಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೂ ಮರುಪರೀಕ್ಷೆ ಮಾಡಿಲ್ಲ. ನೀಟ್ ಹಗರಣ ತನಿಖೆಯಾದಾಗ ಆ ಹಗರಣದ ಕಿಂಗ್ ಪಿನ್ ಮತ್ತು ಸ್ಕೂಲ್ ಪ್ರಿನ್ಸಿಪಾಲರನ್ನು ಸೇರಿ 49 ಜನ ಆರೋಪಿಗಳನ್ನು ಬಂಧಿಸಲಾಯಿತು ಮತ್ತೆ 26 ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಯಿತು. ನೀಟ್ ಕೋಚಿಂಗ್ ಸೆಂಟರ್‌ಗಳು ಹುಟ್ಟಿಕೊಂಡು ಜನರಿಗೆ ನಮ್ಮಲ್ಲಿ ಕೋಚಿಂಗ್ ಪಡೆದರೆ ಡಾಕ್ಟರ್ ಆಗುವುದು ಶೇ. ನೂರರಷ್ಟು ಖಚಿತ ಎಂದೂ, ಕೇವಲ ನೂರು ದಿನದಲ್ಲಿ ನೀಟ್ ಪರೀಕ್ಷೆ ಪಾಸ್ ಮಾಡಬಹುದೆಂದೂ ಸುಳ್ಳು ಹಬ್ಬಿಸುವುದು ಮತ್ತು ಎಲ್ಲರಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡುವುದು, ಈ ಕೋಚಿಂಗ್ ಸೆಂಟರ್‌ಗಳು ಜನರಿಗೆ ಮಂಕು ಬೂದಿ ಎರಚುತ್ತಿವೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಪ್ರಾಮಾಣಿಕತೆ, ಆಸಕ್ತಿ, ಕುತೂಹಲಕ್ಕೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬೆಲೆಯಿಲ್ಲ. ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿಸಿ ಕೇವಲ ರೆಡಿಮೇಡ್ ಪ್ರಶ್ನೆಗಳಿಗೆ ಯಾಂತ್ರಿಕವಾಗಿ ಉತ್ತರಿಸುವ, ತಂತ್ರಗಾರಿಕೆಗಷ್ಟೇ ಬೆಲೆ ಇಂತಹ ಅಪಮೌಲ್ಯಗಳನ್ನೇ ಕೋಚಿಂಗ್ ಸೆಂಟರ್‌ಗಳು ಕಲಿಸಿಕೊಡುವುದು. ಇಂತಹವುಗಳನ್ನೇ ಕಲಿಯಲು ಲಕ್ಷಾಂತರ ರೂ. ತೆರಬೇಕು. ಸಂವಿಧಾನದಲ್ಲಿ ಅಧಿಕೃತವಾಗಿ ಖಾಸಗೀಕರಣಕ್ಕೆ ಅವಕಾಶ ಸಿಕ್ಕ ಕಾರಣ, ಈ ಖಾಸಗೀಕರಣ ಎಂಬುದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಿತಿಮೀರಿದೆ. ಇದೇ ರೀತಿ ಮುಂದುವರಿದರೆ ಹಿಂದುಳಿದ ಸಮುದಾಯದವರ ಪಾಲಿಗೆ ವೈದ್ಯಕೀಯ ಶಿಕ್ಷಣ ಮರೀಚಿಕೆ! ನೀಟ್ ಪರೀಕ್ಷೆ ಇರುವುದೇ ಹಗರಣ ಮಾಡಲು ಮತ್ತು ವಂಚನೆ ಮಾಡಲು, ನೀಟ್ ಕೋಚಿಂಗ್ ಸೆಂಟರ್‌ಗಳು ಇರುವುದೇ ಲೂಟಿ ಮಾಡಲು. ದಕ್ಷಿಣ ಭಾರತೀಯ ವೈದ್ಯಕೀಯ ಆಕಾಂಕ್ಷಿಗಳ ಪ್ರಾಣಕ್ಕೆ ಕಂಟಕವಾದ ಈ ದರಿದ್ರ ವ್ಯವಸ್ಥೆಯನ್ನು ಕಿತ್ತೊಗೆದು ಮೊದಲಿದ್ದ ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ಮಾಡಿಕೊಡುತ್ತಿದ್ದ ವ್ಯವಸ್ಥೆಯೇ ಜಾರಿಯಾಗಲಿ. ಈ ಸಾವು ನೋವುಗಳು ನಿಲ್ಲಲಿ, ಈಗ ಆಗಿರುವ ಸಾವು ನೋವುಗಳಿಗೆ ನ್ಯಾಯ ಸಿಗಲಿ.

ವಾರ್ತಾ ಭಾರತಿ 18 Feb 2026 1:06 pm

ಬ್ಯಾಂಕ್ ಆಫ್ ಬರೋಡಾದಲ್ಲಿ ಐಟಿ ವೃತ್ತಿಪರರಿಗೆ ಉದ್ಯೋಗಾವಕಾಶ

ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಐಟಿ ವೃತ್ತಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಮ್ಯಾನೇಜರ್ ಮತ್ತು ಆಫೀಸರ್ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಇಲ್ಲಿದೆ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಬರೋಬ್ಬರಿ 418 ಮ್ಯಾನೇಜರ್ ಮತ್ತು ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಬ್ಯಾಂಕ್ ಆಫ್ ಬರೋಡ ಬಹು ವಿಶೇಷತೆಗಳಲ್ಲಿ (JAVA, MERN, ಕ್ಲೌಡ್, AI/ML, API, ನೆಟ್‌ವರ್ಕಿಂಗ್, ಡೇಟಾಬೇಸ್‌ಗಳು, ಡೇಟಾ ಸೈನ್ಸ್, ಫಿನಾಕಲ್, ಮೊಬೈಲ್ ಅಪ್ಲಿಕೇಶನ್‌ಗಳು) 418 ವೃತ್ತಿಪರರನ್ನು ನೇಮಿಸಿಕೊಳ್ಳುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ ಮತ್ತು ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಅಲ್ಲಿಸಬಹುದು. https://bankappsweb.bankofbaroda.bank.in/BOBRECRUITMENT_JAN_ITD2608724/ ಪ್ರಮುಖ ದಿನಾಂಕಗಳು • ಅಧಿಸೂಚನೆ ದಿನಾಂಕ: 30 ಜನವರಿ 2026 • ಆನ್ಲೈನ್ ಅರ್ಜಿ ಆರಂಭ: 30 ಜನವರಿ 2026 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಫೆಬ್ರವರಿ 2026 • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 19 ಫೆಬ್ರವರಿ 2026 • ವಿವರಗಳಿಗೆ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ಅರ್ಜಿ ಶುಲ್ಕ ಜನರಲ್/ಒಬಿಸಿ/ಇಡಬ್ಲ್ಯುಎಸ್:850 ರೂ. ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಮಹಿಳೆಯರು: 175 ರೂ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ವಯೋಮಿತಿ ಆಫೀಸರ್ (ಸ್ಕೇಲ್ 1) 22ರಿಂದ 32 ವರ್ಷ ಮ್ಯಾನೇಜರ್ (ಸ್ಕೇಲ್ 2) 24ರಿಂದ 34 ವರ್ಷ ಹಿರಿಯ ಮ್ಯಾನೇಜರ್ (ಸ್ಕೇಲ್ 3) 27ರಿಂದ 37 ವರ್ಷ ವಯೋಮಿತಿ ಸಡಲಿಕೆ- ಒಬಿಸಿ (ಎನ್ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ: 10ರಿಂದ 15 ವರ್ಷ (ನಿಯಮಾನುಸಾರ) ಒಟ್ಟು ಹುದ್ದೆಗಳು 418 ಹುದ್ದೆಗಳು ಹುದ್ದೆಯ ಹೆಸರು ಸೀನಿಯರ್ ಮ್ಯಾನೇಜರ್, ಮ್ಯಾನೇಜರ್ ಮತ್ತು ಆಫೀಸರ್ (ಐಟಿ ವಿಭಾಗ) • ಫುಲ್ ಸ್ಟ್ಯಾಕ್ ಡೆವಲಪರ್ಸ್ (JAVA, MERN) – ಅಧಿಕಾರಿ, ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕರು • ಕ್ಲೌಡ್ ಎಂಜಿನಿಯರ್ಸ್ – ಅಧಿಕಾರಿ, ವ್ಯವಸ್ಥಾಪಕರು • AI ಎಂಜಿನಿಯರ್ಸ್ (AI/GenAI/NLP/ML) – ಅಧಿಕಾರಿ, ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕರು • API ಡೆವಲಪರ್ಸ್ – ಅಧಿಕಾರಿ, ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕರು • ನೆಟ್‌ವರ್ಕ್ ಮತ್ತು ಸರ್ವರ್ ನಿರ್ವಾಹಕರು (Linux/Unix) • ಡೇಟಾಬೇಸ್ ನಿರ್ವಾಹಕರು (SQL, Oracle, PostgreSQL) • ಡೇಟಾ ಸೈಂಟಿಸ್ಟ್‌ಗಳು ಮತ್ತು ಡೇಟಾ ಎಂಜಿನಿಯರ್‌ಗಳು • ಫಿನಾಕಲ್ ಡೆವಲಪರ್‌ಗಳು • ಎಂಟರ್‌ಪ್ರೈಸ್ ಆರ್ಕಿಟೆಕ್ಟ್, ಸ್ಟೋರೇಜ್ ಮತ್ತು ಬ್ಯಾಕಪ್ ನಿರ್ವಾಹಕರು • ETL ಡೆವಲಪರ್‌ಗಳು, ಮೊಬೈಲ್ ಅಪ್ಲಿಕೇಶನ್ ಡೆವಲಪರ್‌ಗಳು ವಿದ್ಯಾರ್ಹತೆ ಅಭ್ಯರ್ಥಿಗಳು ಯುಜಿಸಿ ಅಥವಾ ಎಐಸಿಟಿಐ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ಪದವಿಗಳನ್ನು ಪೂರ್ಣಗೊಳಿಸಿರಬೇಕು ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್) ಅಥವಾ ಎಂ.ಇ/ಎಂ,ಟೆಕ್ (ಸಂಬಂಧಿತ ವಿಷಯಗಳಲ್ಲಿ) ಅಥವಾ ಎಂಸಿಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ವಿಶೇಷ ಸೂಚನೆ: ಆಯಾ ಹುದ್ದೆಗೆ ಸಂಬಂಧಿಸಿ ಕೆಲಸದ ಅನುಭವ ಇರಬೇಕು. ಆಯ್ಕೆ ಪ್ರಕ್ರಿಯೆ ಹಂತಗಳು: • ಅರ್ಜಿ ಪರಿಶೀಲನೆ • ಆನ್‌ಲೈನ್ ಪರೀಕ್ಷೆ (ರೀಸನಿಂಗ್, ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ವೃತ್ತಿಪರ ಜ್ಞಾನ) • ಸೈಕೋಮೆಟ್ರಿಕ್ ಪರೀಕ್ಷೆ • ಗುಂಪು ಚರ್ಚೆ / ವೈಯಕ್ತಿಕ ಸಂದರ್ಶನ ಆನ್‌ಲೈನ್ ಪರೀಕ್ಷೆ: • 150 ಪ್ರಶ್ನೆಗಳು, 225 ಅಂಕಗಳು, 150 ನಿಮಿಷಗಳು • ತಾರ್ಕಿಕತೆ, ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (ಅರ್ಹತಾ ಮಾತ್ರ) • ವೃತ್ತಿಪರ ಜ್ಞಾನ (ಕೋರ್ ಸ್ಕೋರಿಂಗ್ ವಿಭಾಗ) • ನಕಾರಾತ್ಮಕ ಅಂಕಗಳಿಲ್ಲ. ಅಗತ್ಯವಿರುವ ದಾಖಲೆಗಳು ಗುರುತಿನ ಪುರಾವೆ, ಶೈಕ್ಷಣಿಕ ಪ್ರಮಾಣಪತ್ರಗಳು, ಜಾತಿ/ಇಡಬ್ಲ್ಯೂಎಸ್/ಪಿಡಬ್ಲ್ಯೂಡಿ ಪ್ರಮಾಣಪತ್ರಗಳು, ಕೆಲಸದ ಅನುಭವ ಪುರಾವೆಗಳು, ಇತ್ಯಾದಿ. ಸೇವಾ ನಿಯಮಗಳು ಹುದ್ದೆ: ಭಾರತದಲ್ಲಿ ಎಲ್ಲಿಯಾದರೂ. ವೇತನ ಮಾಪಕಗಳು: • JMG/S-I: ₹48,480 – ₹85,920 • MMG/S-II: ₹64,820 – ₹93,960 • MMG/S-III: ₹85,920 – ₹1,05,280 ಪ್ರೊಬೇಷನ್: 12 ತಿಂಗಳುಗಳು. ಸರ್ವಿಸ್ ಬಾಂಡ್: 3 ವರ್ಷಗಳು ಅಥವಾ ₹5 ಲಕ್ಷ ಪರಿಹಾರ. ಸಾಲದ ಇತಿಹಾಸ: ಕನಿಷ್ಠ CIBIL ಸ್ಕೋರ್ 680.

ವಾರ್ತಾ ಭಾರತಿ 5 Feb 2026 5:02 pm

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ: ಸರಕಾರ ನೈತಿಕತೆಯನ್ನು ಮೆರೆಯಲಿ

ಅಬಕಾರಿ ಇಲಾಖೆ ಎನ್ನುವುದೇ ಒಂದು ದೊಡ್ಡ ಹಗರಣ. ಸರಕಾರವೇ ಮದ್ಯದ ವಿರುದ್ಧ ಜಾಹೀರಾತುಗಳನ್ನು ನೀಡುತ್ತಾ ಮಗದೊಂದೆಡೆ ಅದನ್ನು ಜನರಿಗೆ ಪೂರೈಸುವುದಕ್ಕಾಗಿ ವಿಶೇಷ ಇಲಾಖೆಯೊಂದನ್ನು ಸ್ಥಾಪಿಸುವುದು ಹಗರಣವಲ್ಲದೆ ಇನ್ನೇನು? ಮದ್ಯ ಸೇವನೆಯು ಸಮಾಜದ ದಿಕ್ಕು ಕೆಡಿಸುತ್ತದೆ ಮತ್ತು ಅದು ಕುಟುಂಬದ ನೆಮ್ಮದಿಯನ್ನು ಸರ್ವನಾಶ ಮಾಡುತ್ತದೆ ಎನ್ನುವುದನ್ನು ಸರಕಾರ ಒಪ್ಪಿಕೊಳ್ಳುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮಧ್ಯಮ ಮತ್ತು ಕೆಳವರ್ಗ ಆರ್ಥಿಕವಾಗಿ ಹಿಂದುಳಿಯಲು ಮದ್ಯ ವ್ಯಸನ ಬಹುಮುಖ್ಯ ಕಾರಣ ಎನ್ನುವುದನ್ನು ಎಲ್ಲ ರಾಜಕೀಯ ನಾಯಕರೂ ಸಾರ್ವಜನಿಕ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಹಾಗೆಯೇ ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಮೇಲೆತ್ತುವ ಉದ್ದೇಶದಿಂದಲೇ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ. ಆದರೆ ಅದೇ ಸರಕಾರ ಗಲ್ಲಿಗಲ್ಲಿಗಳಲ್ಲಿ ಮದ್ಯದಂಗಡಿ ಸ್ಥಾಪಿಸಲು ಲೈಸನ್ಸ್ ಗಳನ್ನು ನೀಡುತ್ತಿವೆ. ರಾಜ್ಯದಲ್ಲಿ ಅತ್ಯಧಿಕ ಮದ್ಯ ಮಾರಾಟ ಮಾಡುವುದಕ್ಕೆ ಇಲಾಖೆಗೆ ನಿರ್ದಿಷ್ಟ ಗುರಿಯನ್ನು ವಿಧಿಸುತ್ತಿದೆ. ನಾಡಿನ ಅಭಿವೃದ್ಧಿಗೆ ಮದ್ಯ ಮಾರಕ ಎನ್ನುತ್ತಲೇ ಮತ್ತೊಂದೆಡೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಹಣಕ್ಕಾಗಿ ಮದ್ಯ ಮಾರಾಟ ಅನಿವಾರ್ಯ ಎಂದು ಸರಕಾರ ಸ್ಪಷ್ಟನೆ ನೀಡುತ್ತದೆ. ರಾಜ್ಯಕ್ಕೆ ಸಲ್ಲಬೇಕಾದ ಹಣವನ್ನು ನೀಡಲು ಕೇಂದ್ರ ಸರಕಾರ ಸತಾಯಿಸತೊಡಗಿದ ದಿನಗಳಿಂದ ರಾಜ್ಯ ಸರಕಾರಗಳು ಹಣಕ್ಕಾಗಿ ಅಬಕಾರಿ ಇಲಾಖೆಯನ್ನೇ ನೆಚ್ಚಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರಕಾರಕ್ಕೆ ಹಣದ ಅಗತ್ಯವಿದೆ. ಈ ಯೋಜನೆಗಳನ್ನು ವಿಫಲಗೊಳಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವಾಗ, ಯಾವ ದಾರಿಯಲ್ಲಾದರೂ ಸರಿ, ಯೋಜನೆಗಳನ್ನು ಗುರಿ ಮುಟ್ಟಿಸುತ್ತೇವೆ ಎಂದು ರಾಜ್ಯ ಸರಕಾರ ಹೊರಟಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಹೆಚ್ಚಿಸುವುದಲ್ಲದೆ ಸರಕಾರಕ್ಕೆ ಬೇರೆ ದಾರಿ ಕಾಣುತ್ತಿಲ್ಲ. ಈ ಕಾರಣಕ್ಕಾಗಿ ರಾಜ್ಯದಲ್ಲಿ ಮದ್ಯದ ಮಳೆ ಸುರಿಯತೊಡಗಿದೆ. ಇದರ ಜೊತೆ ಜೊತೆಗೇ ಹಣದ ಹೊಳೆಯೂ ಹರಿಯುತ್ತಿದೆ. ಈ ಹೊಳೆಗೆ ಕಟ್ಟೆ ಕಟ್ಟಿ ಅದನ್ನು ತಮ್ಮ ತೋಟಕ್ಕೆ ಹರಿಸಲು ಅಧಿಕಾರಿಗಳು, ರಾಜಕಾರಣಿಗಳು ತಾಮುಂದು ನಾ ಮುಂದು ಎಂದು ಹೊರಟಿದ್ದಾರೆ. ಅಬಕಾರಿ ಇಲಾಖೆಯ ಭ್ರಷ್ಟಾಚಾರ ಈ ಕಾರಣಕ್ಕಾಗಿ ಸದ್ಯ ಸುದ್ದಿಯಲ್ಲಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ಬಿಜೆಪಿ ನಾಯಕರು ಗದ್ದಲ ಎಬ್ಬಿಸುತ್ತಿದ್ದಾರೆ. ಅಬಕಾರಿ ಸಚಿವ ತಿಮ್ಮಾಪುರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಸಿಎಲ್-೭ ಮದ್ಯದಂಗಡಿ ಪರವಾನಿಗೆಗಾಗಿ ಅಬಕಾರಿ ಉಪಾಯುಕ್ತರೊಬ್ಬರು ೨೫ ಲಕ್ಷ ರೂಪಾಯಿ ಲಂಚ ಬೇಡಿಕೆಯಿಟ್ಟಿರುವುದು ಲೋಕಾಯುಕ್ತ ಮೆಟ್ಟಿಲೇರಿದೆ. ಇದರ ಬೆನ್ನಿಗೇ ಮಂಡ್ಯದಲ್ಲಿ ಬಾರ್ ಲೈಸನ್ಸ್ ನೀಡಲು ಹಣ ವಸೂಲಿ ಆರೋಪಕ್ಕೆ ಸಂಬಂಧಿಸಿ ಜಿಲ್ಲಾ ಉಪ ಆಯುಕ್ತ ನಾಗಶಯನ ಅವರನ್ನು ಸರಕಾರವೇ ಅಮಾನತುಗೊಳಿಸಿದೆ. ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಹಿಂದೆ, ಸಚಿವ ಆರ್. ಬಿ. ತಿಮ್ಮಾಪುರ್ ಮತ್ತು ಅವರ ಪುತ್ರನ ಹೆಸರೂ ಕೇಳಿ ಬರುತ್ತಿವೆ. ಕೆಲವು ಆಡಿಯೊಗಳಲ್ಲಿ ಸಚಿವರ ಹೆಸರು ಪ್ರಸ್ತಾಪವಾಗಿದೆ ಎನ್ನುವುದನ್ನು ಮುಂದಿಟ್ಟುಕೊಂಡು ಕೆಲವರು ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ ಎಂದು ಮದ್ಯ ಮಾರಾಟಗಾರರ ಸಂಘವೇ ಆರೋಪಿಸಿರುವುದರಿಂದ ಗಂಭೀರ ತನಿಖೆ ನಡೆಯುವ ಅಗತ್ಯವಂತೂ ಇದೆ. ಆದರೆ ಈ ಲಂಚ ಪ್ರಕರಣಗಳಲ್ಲಿ ಸಚಿವರು ಅಧಿಕೃತವಾಗಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಲೋಕಾಯುಕ್ತರು ತನಿಖೆಯ ಸಂದರ್ಭದಲ್ಲಿ ಸಚಿವರ ಹೆಸರನ್ನು ಸೇರಿಸಿದ್ದೇ ಆದರೆ ಅವರು ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿಯಾಗಬಹುದು. ಬರೇ ಊಹಾಪೋಹದ ಆಧಾರದಲ್ಲಿ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವುದಕ್ಕೆ ಅರ್ಥವಿಲ್ಲ. ಇಷ್ಟಾದರೂ ಅಬಕಾರಿ ಇಲಾಖೆಯಲ್ಲಿ ಹೆಚ್ಚಿರುವ ಭ್ರಷ್ಟಾಚಾರದ ಹೊಣೆಯನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ವಹಿಸಿಕೊಳ್ಳಬೇಕಾಗುತ್ತದೆ. ಸಂಪೂರ್ಣ ಮದ್ಯ ನಿಷೇಧ ಮಾಡಬೇಕಾದ ಸರಕಾರವೇ ಇಂದು ಅಬಕಾರಿ ಹಗರಣಗಳಲ್ಲಿ ಸಿಲುಕಿಕೊಳ್ಳುವುದು ಆಧುನಿಕ ‘ಅರಸು’ ಎಂದು ಗುರುತಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವ ಕಾರಣಕ್ಕೂ ಶೋಭೆಯಲ್ಲ. ಸಚಿವರನ್ನು ಬೆಂಬಲಿಸುತ್ತಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ‘‘ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ನಡೆದಾಗ ಯಾರೂ ರಾಜೀನಾಮೆ ನೀಡಿರಲಿಲ್ಲ. ಹಾಗಾಗಿ ತಿಮ್ಮಾಪುರ್ ರಾಜೀನಾಮೆ ನೀಡವುದಿಲ್ಲ’’ ಎಂದಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಸಚಿವರನ್ನು ರಕ್ಷಿಸುವುದಕ್ಕಾಗುವುದಿಲ್ಲ. ಹಿಂದೆ ಬಿಜೆಪಿ ಅಕ್ರಮ, ಭ್ರಷ್ಟಾಚಾರ ನಡೆಸಿತು ಎನ್ನುವ ಕಾರಣಕ್ಕಾಗಿಯೇ ಮತದಾರರು ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸನ್ನು ಭರ್ಜರಿಯಾಗಿ ಬೆಂಬಲಿಸಿ ಅಧಿಕಾರಕ್ಕೇರಿಸಿರುವುದು. ಬಿಜೆಪಿ ಸಚಿವರು ರಾಜೀನಾಮೆ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ತಿಮ್ಮಾಪುರ್ ಕೂಡ ರಾಜೀನಾಮೆ ನೀಡುವ ಅಗತ್ಯವಿಲ್ಲ ಎನ್ನುವ ವಾದ ಪರೋಕ್ಷವಾಗಿ ತಿಮ್ಮಾಪುರ್ ಅವರು ಅಕ್ರಮದಲ್ಲಿ ಶಾಮೀಲಾಗಿರುವುದನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಪ್ಪಿಕೊಂಡಂತೆ. ಸಚಿವ ತಿಮ್ಮಾಪುರ್ ಅವರು ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ದಾಖಲೆಗಳಿಲ್ಲ. ಆದುದರಿಂದ, ಅವರು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಬಹುದೇ ಹೊರತು, ಬಿಜೆಪಿ ಸರಕಾರವನ್ನು ತಮ್ಮ ಸರಕಾರಕ್ಕೆ ಮಾದರಿಯಾಗಿ ಬಳಸಿಕೊಳ್ಳಬಾರದು. ಹಾಗೆಯೇ ಬಿಜೆಪಿಯವರಿಗೆ ನರೇಗಾ ಚರ್ಚೆಯಾಗುವುದು ಬೇಕಾಗಿಲ್ಲ ಆ ಕಾರಣದಿಂದಲೇ, ಅಬಕಾರಿ ಹಗರಣಗಳ ಹೆಸರಿನಲ್ಲಿ ಗದ್ದಲ ಎಬ್ಬಿಸುತ್ತಿದ್ದಾರೆ ಎಂದೂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಮದ್ಯ ಮಾರಾಟದ ನೇರ ಬಲಿಪಶುಗಳು ನರೇಗಾ ಕಾರ್ಮಿಕರು ಎನ್ನುವುದು ಡಿಕೆಶಿ ಅವರಿಗೆ ತಿಳಿಯದೇ ಇರುವುದೇನೂ ಅಲ್ಲ. ಮಹಾತ್ಮ್ಮಾಗಾಂಧೀಜಿಯವರೂ ಮದ್ಯ ನಿಷೇಧವನ್ನು ಬಯಸಿದ್ದರು. ಗಾಂಧೀಜಿಯನ್ನು ಕಾಂಗ್ರೆಸ್ ಗೌರವಿಸುವುದು ನಿಜವೇ ಆಗಿದ್ದರೆ ರಾಜ್ಯದಲ್ಲಿ ಹಂತ ಹಂತವಾಗಿ ಮದ್ಯ ನಿಷೇಧ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ವ್ಯತಿರಿಕ್ತವಾದುದು ನಡೆಯುತ್ತಿದೆ. ರಾಜ್ಯದಲ್ಲಿ ಮದ್ಯದ ಹೊಳೆ ಹರಿಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರೋಪಿಸುತ್ತಿದ್ದಾರೆ. ಒಂದು ವೇಳೆ ನಾಳೆ ಬಿಜೆಪಿ ಅಧಿಕಾರಕ್ಕೆ ಬಂದರೂ ಇದೇ ಮುಂದುವರಿಯುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ, ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಎಲ್ಲಿಂದ ಹೊಂದಿಸುವುದು ಎನ್ನುವುದು ಮುಖ್ಯಮಂತ್ರಿಯ ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ವಿರೋಧ ಪಕ್ಷ ವು ಆಡಳಿತ ಪಕ್ಷಕ್ಕೆ ನೆರವಾಗಬೇಕು. ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆ ಬಿಜೆಪಿ ನಾಯಕರು ಮೊದಲು ಮಾತನಾಡಬೇಕು. ರಾಜ್ಯಕ್ಕೆ ಸಲ್ಲಬೇಕಾದ ಹಣವನ್ನು ಪಾವತಿಸಲು ಕೇಂದ್ರಕ್ಕೆ ಒತ್ತಡ ಹೇರಲು ಬಿಜೆಪಿ ಸಂಸದರು ಮುಂದಿನ ಸಾಲಿನಲ್ಲಿ ನಿಲ್ಲಬೇಕು. ರಾಜ್ಯಕ್ಕೆ ಸಿಗಬೇಕಾದ ಹಣವನ್ನು ಸಿಗುವಂತೆ ಮಾಡಿ, ಬಳಿಕ ರಾಜ್ಯ ಸರಕಾರಕ್ಕೆ ‘ಹಂತಹಂತವಾಗಿ ಮದ್ಯ ನಿಷೇಧ ಮಾಡಲು’ ಒತ್ತಡ ಹೇರಬೇಕು. ಆದರೆ ರಾಜ್ಯಕ್ಕೆ ಬರಬೇಕಾದ ಹಣದ ವಿಷಯದಲ್ಲಿ ಮೌನ ತಾಳಿ, ಗ್ಯಾರಂಟಿ ಯೋಜನೆಗಳ ಬಗ್ಗೆ ವಿಷ ಕಾರಿದರೆ ಅದು ಬಿಜೆಪಿಗೇ ತಿರುಗುಬಾಣವಾದೀತು.

ವಾರ್ತಾ ಭಾರತಿ 5 Feb 2026 9:09 am

ವಿವಾಹವನ್ನು ತೊರೆದು ಹೊರಬರಬೇಕಾಗಿ ಬಂತು: Epstein files ಕುರಿತು ಮೆಲಿಂಡಾ ಗೇಟ್ಸ್ ಪ್ರತಿಕ್ರಿಯೆ

Source: Wild Card with Rachel Martin and NPR ಜೆಫ್ರಿ ಎಪ್‌ಸ್ಟೀನ್‌ ನ ಇತ್ತೀಚಿನ ಫೈಲ್‌ ಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಲ್ ಗೇಟ್ಸ್ ಅವರ ಮಾಜಿ ಪತ್ನಿ ಮೆಲಿಂಡಾ ಗೇಟ್ಸ್, ವಿವಾಹ ತೊರೆಯಬೇಕಾಗಿ ಬಂದಿರುವ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಹೊಸದಿಲ್ಲಿ: ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರ ಮಾಜಿ ಪತ್ನಿ ಮೆಲಿಂಡಾ ಗೇಟ್ಸ್, ಜೆಫ್ರಿ ಎಪ್‌ಸ್ಟೀನ್ ಫೈಲ್‌ ಗಳಲ್ಲಿ ಮಾಜಿ ಪತಿಯ ಹೆಸರು ಬಂದಿರುವ ಕುರಿತಂತೆ ಮೌನ ಮುರಿದಿದ್ದಾರೆ. ರಷ್ಯಾದ ಹುಡುಗಿಯರಿಂದ ಲೈಂಗಿಕವಾಗಿ ಹರಡುವ ರೋಗ ತಗುಲಿರುವುದು ಪತ್ತೆಯಾದ ನಂತರ ಮಾಜಿ ಪತಿ ಬಿಲ್ ಗೇಟ್ಸ್ ರಹಸ್ಯವಾಗಿ ತನಗೆ ಔಷಧಿ ನೀಡಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ. NPR ಜೊತೆಗಿನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಲೈಂಗಿಕ ಅಪರಾಧಿಯೊಂದಿಗೆ ಬಿಲ್ ಗೇಟ್ಸ್‌ನ ಸಂಪರ್ಕವು ತಮ್ಮ 27 ವರ್ಷಗಳ ದಾಂಪತ್ಯದ ಅಂತ್ಯಕ್ಕೆ ಕಾರಣವಾಗಿರಬಹುದು ಎಂದೂ ಅವರು ತಿಳಿಸಿದ್ದಾರೆ. “ನನಗೆ ವೈಯಕ್ತಿಕವಾಗಿ ಇಂತಹ ವಿವರಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ನನ್ನ ವಿವಾಹದಲ್ಲಿನ ಅತಿ ನೋವಿನ ಸಮಯವನ್ನು ಈ ವಿಷಯಗಳು ನೆನಪಿಸುತ್ತವೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ, ತನ್ನ ಪತಿಯೂ ಸೇರಿದಂತೆ ಎಪ್‌ಸ್ಟೀನ್ ಫೈಲ್‌ ಗಳಲ್ಲಿ ಭಾಗಿಯಾಗಿರುವ ಇತರರು ತಮ್ಮ ನಡೆ-ನುಡಿಗಳ ಬಗ್ಗೆ ಸಾರ್ವಜನಿಕವಾಗಿ ಉತ್ತರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. “ನಾನಲ್ಲ, ಅವರು ಈ ಬಗ್ಗೆ ಉತ್ತರಿಸಬೇಕಿದೆ,” ಎಂದು 61 ವರ್ಷದ ಮೆಲಿಂಡಾ ಒತ್ತಾಯಿಸಿದ್ದಾರೆ. “ಬಹಳ ದುಃಖದ ವಿಚಾರ,” ಎಂದು ಸಂಪೂರ್ಣ ಅಧ್ಯಾಯದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. “ನಂಬಲಾಗದ, ಇದು ಬೇಸರದ ವಿಷಯ. ನಾನು ನನ್ನ ವಿವಾಹವನ್ನು ತೊರೆದು ಹೋದೆ. ನಾನು ವಿವಾಹದಿಂದ ಹೊರಬರಬೇಕಾಗಿ ಬಂತು. ನನ್ನ ವಿವಾಹವನ್ನು ತೊರೆಯಬೇಕು ಎಂದು ಬಯಸಿದ್ದೆ. ನಂತರ ಫೌಂಡೇಶನ್ ಅನ್ನೂ ಬಿಡಬೇಕೆಂದು ಭಾವಿಸಿದೆ. ಇದು ಬಹಳ ದುಃಖಕರ ಎನ್ನುವುದು ಸತ್ಯ,” ಎಂದು ಮೆಲಿಂಡಾ ಅವರು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ. ಉದ್ಯಮಿ ಹಾಗೂ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಆಗಿರುವ ಎಲಾನ್ ಮಸ್ಕ್ ಅವರು ಪಾಡ್‌ಕಾಸ್ಟ್‌ನ ಒಂದು ಭಾಗವನ್ನು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ವಾವ್’ ಎಂದು ಬರೆದಿದ್ದಾರೆ. “ತಾನು ಈ ಜಂಜಾಟದಿಂದ ಹೊರಬರಲು ಸಾಧ್ಯವಾಗಿದೆ, ಆದರೆ ಎಪ್‌ಸ್ಟೀನ್‌ ನಲ್ಲಿ ಉಲ್ಲೇಖಿಸಲ್ಪಟ್ಟ ಯುವತಿಯರಿಗೆ ನ್ಯಾಯ ದೊರಕಬೇಕು,” ಎಂದು ಮೆಲಿಂಡಾ ಆಶಿಸಿದ್ದಾರೆ. ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲ್ ಗೇಟ್ಸ್ ಅವರ ಹೆಸರು ಎಪ್‌ಸ್ಟೀನ್ ಫೈಲ್‌ ಗಳಲ್ಲಿ ಉಲ್ಲೇಖಗೊಂಡಿದೆ. ಅಮೆರಿಕದ ನ್ಯಾಯ ಇಲಾಖೆ ಬಿಡುಗಡೆ ಮಾಡಿರುವ ಎಪ್‌ಸ್ಟೀನ್‌ ಗೆ ಸಂಬಂಧಿಸಿದ 3.5 ಲಕ್ಷ ಪುಟಗಳ ಇತ್ತೀಚಿನ ದಾಖಲೆಗಳಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಫೈಲ್‌ ನಲ್ಲಿ ಲೈಂಗಿಕ ಅಪರಾಧಿಯಾಗಿರುವ ಎಪ್‌ಸ್ಟೀನ್ ಅವರು ಬಿಲ್ ಗೇಟ್ಸ್ ಕುರಿತು ಉಲ್ಲೇಖಿಸಿದ್ದಾರೆ. “ರಷ್ಯಾದ ಹುಡುಗಿಯ ಜೊತೆಗಿನ ಲೈಂಗಿಕತೆಯ ಪರಿಣಾಮವಾಗಿ STD ಚಿಕಿತ್ಸೆಗಾಗಿ ಆಂಟಿಬಯಾಟಿಕ್ಸ್ ಬೇಕು ಎಂದು ಕೇಳಿದ್ದರು,” ಎಂದು ಫೈಲ್‌ನಲ್ಲಿ ವಿವರಿಸಲಾಗಿದೆ. “ಕಳೆದ ಕೆಲವು ವಾರಗಳಲ್ಲಿ ನಾನು ಮೆಲಿಂಡಾ ಮತ್ತು ಬಿಲ್ ನಡುವಿನ ವೈವಾಹಿಕ ವಿವಾದದಲ್ಲಿ ಸಿಲುಕಿಕೊಂಡಿದ್ದೇನೆ,” ಎಂದು ಎಪ್‌ಸ್ಟೀನ್ 2013ರ ಜುಲೈ 18ರಂದು ಬರೆದಿದ್ದಾರೆ. “ಬಿಲ್ ಅವರಿಗೆ ಔಷಧಿಗಳನ್ನು ನೀಡಲು ನೆರವಾಗುವುದರಿಂದ ತೊಡಗಿ, ರಷ್ಯಾದ ಯುವತಿಯ ಜೊತೆಗಿನ ಲೈಂಗಿಕತೆಯ ಪರಿಣಾಮ, ವಿವಾಹಿತ ಮಹಿಳೆಯರ ಜೊತೆಗಿನ ಅವರ ಅಕ್ರಮ ಸಂಬಂಧಗಳನ್ನು ಸುಗಮಗೊಳಿಸುವವರೆಗೂ, ನೈತಿಕ ವೈಫಲ್ಯವನ್ನು ಒಪ್ಪಿಕೊಂಡು ಕ್ಷಮೆ ಕೇಳಿ ನನ್ನ ಜೀವನವನ್ನು ಮುಂದುವರಿಸಲು ನೆರವಾದ ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಋಣಿಯಾಗಿದ್ದೇನೆ,” ಎಂದು ಅವರ ಇಮೇಲ್‌ ನಲ್ಲಿ ವಿವರಗಳಿದ್ದವು. ಗೇಟ್ಸ್‌ಗೆ ಬರೆದ ಪ್ರತ್ಯೇಕ ಇಮೇಲ್‌ ನಲ್ಲಿ, “ಬಿಲ್ ಗೇಟ್ಸ್ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಲು ತಮ್ಮ ಕೃತ್ಯಗಳನ್ನು ‘ಮುಚ್ಚಿಡಲು’ ಪ್ರಯತ್ನಿಸುತ್ತಿದ್ದಾರೆ ಮತ್ತು ತಮ್ಮ ಪತ್ನಿ ಮೆಲಿಂಡಾ ಗೇಟ್ಸ್ ಅವರಿಗೆ ರಹಸ್ಯವಾಗಿ ಔಷಧಿಗಳನ್ನು ನೀಡುತ್ತಿದ್ದಾರೆ,” ಎಂದು ಆರೋಪಿಸಲಾಗಿದೆ. ಆದರೆ ಬಿಲ್ ಗೇಟ್ಸ್ ಅವರು ಎಪ್‌ಸ್ಟೀನ್‌ನ ಎಲ್ಲಾ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ. “ಎಲ್ಲವೂ ಅಸಂಬಂಧ ಮತ್ತು ಸಂಪೂರ್ಣ ಸುಳ್ಳು,” ಎಂದು ಅವರ ವಕ್ತಾರ ಹೇಳಿದ್ದಾರೆ. “ಬಿಲ್ ಗೇಟ್ಸ್ ಅವರನ್ನು ಸಿಲುಕಿಸಿ ಕುಖ್ಯಾತಿಗೊಳಿಸುವ ತನ್ನ ಪ್ರಯತ್ನ ವಿಫಲವಾಗಿರುವುದಕ್ಕಾಗಿ ಎಪ್‌ಸ್ಟೀನ್ ಹತಾಶೆ ವ್ಯಕ್ತಪಡಿಸಿರುವುದನ್ನು ಈ ದಾಖಲೆಗಳು ತೋರಿಸುತ್ತಿವೆ,” ಎಂದು ವಕ್ತಾರರು ಹೇಳಿದ್ದಾರೆ. ಜೆಪಿ ಮಾರ್ಗನ್ ಚೇಸ್ ಜೊತೆ ಆರಂಭಿಸಿದ ಚಾರಿಟೇಬಲ್ ನಿಧಿಗೆ ಬಿಲ್ ಗೇಟ್ಸ್ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ, ಬಿಲ್ ಗೇಟ್ಸ್ ಮತ್ತು ರಷ್ಯಾದ ಬ್ರಿಡ್ಜ್ ಆಟಗಾರ್ತಿ ಮಿಲಾ ಆಂಟೊನೋವಾ ನಡುವಿನ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಎಪ್‌ಸ್ಟೀನ್ ಬೆದರಿಕೆ ಹಾಕಿದ್ದರು ಎಂದು ಈ ಹಿಂದೆ ದಿ ವಾಲ್ ಸ್ಟ್ರೀಟ್ ಜರ್ನಲ್‌ ನಲ್ಲಿ ವರದಿಯಾಗಿತ್ತು. ಬಿಲ್ ಗೇಟ್ಸ್ ಪದೇಪದೆ ಎಪ್‌ಸ್ಟೀನ್ ಜೊತೆ ತಮ್ಮ ಸಂಬಂಧ ದತ್ತಿನಿಧಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದ್ದಾರೆ. ಆದರೆ ನ್ಯಾಯ ಇಲಾಖೆ ಬಿಡುಗಡೆ ಮಾಡಿದ ವಿವರಗಳಲ್ಲಿ 2013ರ ಜುಲೈ 17 ಮತ್ತು 18ರ ನಡುವೆ ಎಪ್‌ಸ್ಟೀನ್ ಮತ್ತು ಬಿಲ್ ಗೇಟ್ಸ್ ನಡುವೆ ಕನಿಷ್ಠ ಏಳು ಇಮೇಲ್ ವ್ಯವಹಾರಗಳು ನಡೆದಿದ್ದವು.

ವಾರ್ತಾ ಭಾರತಿ 4 Feb 2026 8:02 pm

ಲೋಕಾಯುಕ್ತ ಶಕ್ತಿಯುತವಾಗಲಿ

ನಮ್ಮ ವ್ಯವಸ್ಥೆ, ಆಡಳಿತ, ಸರಕಾರ, ಜನಜೀವನ ಎಲ್ಲವೂ ಇಪ್ಪತ್ತೊಂದನೆಯ ಶತಮಾನದಲ್ಲಿ ಕಾಲು ಶತಮಾನ ಕಳೆದರೂ ದುರಸ್ತಿಗೊಂಡಿಲ್ಲವಷ್ಟೇ ಅಲ್ಲ ಆ ಸೂಚನೆಗಳೂ ಕಾಣುತ್ತಿಲ್ಲ ! ಮೇಲ್ನೋಟದ ವ್ಯವಸ್ಥೆಯಲ್ಲಿ ಎಲ್ಲವೂ ಇದೆ. ಲಂಚ, ಭ್ರಷ್ಟಾಚಾರ ನಿರ್ಮೂಲಕ್ಕೆ ಒಂದು ಲೋಕಾಯುಕ್ತವೂ ಇದೆ. ಅದು ಶುದ್ಧವಾಗಿದ್ದಾಗ ಮುಖ್ಯಮಂತ್ರಿಯೊಬ್ಬರ ಹುದ್ದೆ ಕಸಿದುಕೊಂಡು 2011ರಲ್ಲಿ ಜೈಲಿಗೂ ಅಟ್ಟಿತ್ತು! ನಂತರ ಅದನ್ನು ದುರ್ಬಲಗೊಳಿಸಲಾಯಿತು. ರಾಜಕಾರಣದ ಕೊಬ್ಬು ಹೆಚ್ಚುತ್ತಲೇ ಇದೆ. ಆದರೂ ಪ್ರಜಾಪ್ರಭುತ್ವದಲ್ಲಿ ದಕ್ಷತೆ, ಪ್ರಾಮಾಣಿಕತೆ ಸಾವಿಗೀಡಾಗದೆ ಉಸಿರಾಡುವಂತೆ ಪ್ರಾಮಾಣಿಕ, ದಕ್ಷ ಶಕ್ತಿಗಳು ಕೆಲಸ ಮಾಡುತ್ತಿರುತ್ತವೆ. ಕೋಮುವಾದದ ಕಲೆಗಳನ್ನು ಒರೆಸಿ ಅಸಮಾನತೆಯತ್ತ ಕೆಂಗಣ್ಣು ಹರಿಸುವ ಶಕ್ತಿಗಳು ಕಾಣಿಸಿದಾಗ ನೆಮ್ಮದಿಯ ಮಿಂಚುಗಣ್ಣು ಹೊಳೆಯುತ್ತದೆ. ಹಾಗೊಬ್ಬರು ಈಗ ಕಾಣಿಸಿದ್ದಾರೆ. ಉಪಲೋಕಾಯುಕ್ತ ಬಿ. ವೀರಪ್ಪ. ಈ ವೀರಪ್ಪ ಕೆಲ ದಿನಗಳ ಹಿಂದೆ ಟ್ರಾನ್ಸ್ ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ ಆಂಡ್ ಲೋಕಲ್ ಸರ್ಕಲ್ಸ್ ಪ್ರಕಟಿಸಿದ (2019ರ ದತ್ತಾಂಶ) ಕರ್ನಾಟಕದಲ್ಲಿ ಶೇ. 63 ಭ್ರಷ್ಟಾಚಾರ ಇದೆ ಎಂಬ ಅಂಶವನ್ನು ಹೇಳಿದಾಗ ಮತ್ತೆ ಕೆಸರೆರಚಾಟ ಪ್ರಾರಂಭವಾಗಿ ಸಿಎಂ-ಡಿಸಿಎಂ ಕುರ್ಚಿ ಕದನ ಎರಡು ದಿನ ತೆರೆಗೇ ಸರಿದು ಹೋಗಿತ್ತು! ವೀರಪ್ಪನವರು ಇದು ನನ್ನ ಸ್ವಂತ ಅಭಿಪ್ರಾಯವಲ್ಲ ಎಂದು ಮತ್ತೆ ಹೇಳಿದರು. ಆ ನಂತರ ರಾಜಕಾರಣಿಗಳು ವೀರಪ್ಪನವರನ್ನು ಮರೆತು ಸ್ವಂತ ವಿಚಾರಗಳಲ್ಲಿ ಮಗ್ನರಾಗಿದ್ದರು. ವೀರಪ್ಪ ಬಹಳ ಮುಖ್ಯ ಮಾತೊಂದನ್ನು ಆಡಿದ್ದರು. ಈ ಭ್ರಷ್ಟತೆ ಶಾಲೆ-ಆಸ್ಪತ್ರೆಗಳಂತಹ ಮೂಲಗಳಲ್ಲಿ ಇರಬಾರದು, ಅಲ್ಲಿ ಭ್ರಷ್ಟಾಚಾರ ನಿರ್ಮೂಲವಾಗಲು ಕ್ರಮ ಕೈಗೊಂಡಿದ್ದೇನೆಂದು ಹೇಳುತ್ತ ಸಮಾಜ ಸುಧಾರಣೆ ಮತ್ತು ಭ್ರಷ್ಟಾಚಾರ ನಿರ್ಮೂಲ ಒಟ್ಟಿಗೆ ಆಗಬೇಕು ಎಂದೂ ಹೇಳಿದ್ದರು. ಸರಕಾರಿ ಶಾಲೆ, ಆಸ್ಪತ್ರೆಗಳು ಬಡವರ ಮೂಲಗಳು. ಅಲ್ಲಿಯೂ ಭ್ರಷ್ಟತೆ ಗೂಡುಕಟ್ಟಿಕೊಂಡರೆ ಕೆಳ ವರ್ಗಗಳ ಬದುಕೇ ನರಕವಲ್ಲವೇ? ಮಹಿಳೆಯರೂ ಭ್ರಷ್ಟಾಚಾರದಲ್ಲಿ ಭಾಗಿಗಳಾಗುತ್ತಿದ್ದಾರೆಂದು ನೋವಿನಿಂದ ಹೇಳಿದರು. ಆಗ ಹಿರಿಯ ವಕೀಲ ಎಂ.ಟಿ. ನಾಣಯ್ಯ ಪ್ರತೀ ಇಲಾಖೆಗೆ ಪ್ರತ್ಯೇಕ ಲೋಕಾಯುಕ್ತ ತೆರೆಯಬೇಕಾಗುತ್ತದೆ ಎಂದು ಭ್ರಷ್ಟತೆಯ ಆಳದ ಬಹುದೊಡ್ಡ ಬಲೂನಿಗೆ ಪಿನ್ನು ಚುಚ್ಚಿದರು. ಬಿ. ವೀರಪ್ಪನವರ ವಿಶೇಷ ಆಸಕ್ತಿ ಬರೀ ಹೇಳಿಕೆ ಆಗಿರಲಿಲ್ಲ. ಅವರಿಗೆ ಭ್ರಷ್ಟಾಚಾರದ ನಿಜವಾದ ಆಳ ತಿಳಿಯಲು ಮನಸ್ಸಾಗಿ ತಮ್ಮ ಹುಟ್ಟು ತಾಲೂಕಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ 25 ಗ್ರಾಮ ಪಂಚಾಯತ್‌ಗಳನ್ನು ಕೆದಕಿದರು, ಕಡತಗಳನ್ನು ತಿರುವಿದರು. ಪಿಡಿಒಗಳಿಗೆ ಕ್ಲಾಸ್ ಟೀಚರ್ ಬೆತ್ತ ಪ್ರಹಾರದಂತೆ ಬೆನ್ನಟ್ಟಿದರು. ಸತತ 3 ದಿನ ಕಡತಗಳನ್ನು ಪರಿಶೀಲಿಸಿದರು. ಕಾಲುಬುಡದ ಕಸದ ರಾಶಿ ಹುಡುಕಿದರು; ಸಿಕ್ಕೇ ಬಿಟ್ಟಿತು. ಕೊಳವೆ ಬಾವಿ, ರಸ್ತೆ, ಚರಂಡಿ, ಬೀದಿದೀಪ, ಸ್ವಚ್ಚತೆ ಅನುದಾನ ಪರಿಶೀಲಿಸಿದರು. ತಾಳೆಯಾಗಲೇ ಇಲ್ಲ! ಸಮರ್ಪಕ ಮಾಹಿತಿಯೇ ಇಲ್ಲ. ಬೋರ್‌ವೆಲ್ ದುರಸ್ತಿ ಹೆಸರಿನಲ್ಲಿ 68 ಲಕ್ಷ ರೂ. ದುರ್ಬಳಕೆ. ರಸ್ತೆ ಕಾಮಗಾರಿ ಆಗದೆ ಹಣ ಬಿಡುಗಡೆ. ಕುರಿ, ಮೇಕೆ ಶೆಡ್‌ಗಳ ಹಣ ಬಡವರಿಗೆ ಮುಟ್ಟಿಲ್ಲ, ಬದಲಿಗೆ ಶ್ರೀಮಂತರ ಪಾಲಿಗೆ ಹೋಗಿದೆ! ಒಳಚರಂಡಿ ಹೆಸರಿನಲ್ಲಿ ಅನುದಾನ ದುರ್ಬಳಕೆಯಾಗಿದೆ. ಬಲ್ಬ್‌ಗಳಿಗೆ ದುಬಾರಿ ಬಿಲ್-ಕಳಪೆ ಗುಣಮಟ್ಟ. 3 ಲಕ್ಷ ರೂ. ರಸ್ತೆ ನಿರ್ಮಾಣಕ್ಕೆ ಬಿಲ್ ಆಗಿದೆ-ರಸ್ತೆಯೇ ಇಲ್ಲ! ಚರಂಡಿಗೆ ಹಣ ಪಾವತಿಯಾಗಿದೆ-ತೆಗೆದೇ ಇಲ್ಲ ! ಎಲ್ಲಾ ಪಿಡಿಒಗಳು ಪೊಗದಸ್ತಾಗಿ ಮೇಯ್ದಿದ್ದಾರೆ! ಗ್ರಾಮೀಣ ಮಂತ್ರಿ ಪ್ರಿಯಾಂಕ್ ಖರ್ಗೆಯವರು ಅಪ್ಪಿತಪ್ಪಿಯೂ ರಾಜ್ಯದಲ್ಲಿ ಒಂದೇ ಒಂದು ದಿನವೂ ಹೀಗೆ ಸುತ್ತಿ ಪರಿಶೀಲಿಸಿ ಕ್ರಮ ಕೈಗೊಂಡಿಲ್ಲ. ಇದೆಲ್ಲ ಇರಲಿ. ಇಂತಹ ಅಭಿವೃದ್ದಿ ಕನಸು ಕಂಡು ಟಿ.ಪಿ., ಝಡ್‌ಪಿ ರೂಪಿಸಿದ್ದ ಅಬ್ದುಲ್ ನಝೀರ್‌ಸಾಬ್ ಅಕಸ್ಮಾತ್ ಬದುಕಿ ಇದನ್ನು ವೀಕ್ಷಿಸಿದ್ದರೆ? ನಾನು ಹೇಳಲಾರೆ. ಈ ಶೋಧನೆ ನಡೆದದ್ದು ಪ್ರಕಟವಾಗಿದ್ದು, ಡಿಸೆಂಬರ್ ತಿಂಗಳ ಅಂತ್ಯದಲ್ಲಿ! ಈಗ 25 ಗ್ರಾಮಪಂಚಾಯತ್‌ಗಳ ಪಿಡಿಒಗಳು, ಬಿಲ್ ಕಲೆಕ್ಟರ್‌ಗಳು, ಕಾರ್ಯದರ್ಶಿಗಳು, ಟಿ.ಪಿ. ನಿರ್ವಹಣಾಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ. ಬಹುತೇಕ ಪತ್ರಿಕೆಗಳು ಇದನ್ನು ಸುದ್ದಿಯಾಗಿ ಪ್ರಕಟಿಸಿಯೇ ಇಲ್ಲ. ಇಲೆಕ್ಟ್ರಾನಿಕ್ ಮಾಧ್ಯಮ ಇತ್ತ ತಲೆ ಹಾಕಿಲ್ಲ. ನಮ್ಮ ರಾಜ್ಯದಲ್ಲಿ ಕಾಲು ಶತಮಾನದ ಭ್ರಷ್ಟಾಚಾರದ ಫಸಲನ್ನು ಎಷ್ಟು ದೇಶ ದ್ರೋಹಿಗಳು ಮೇಯ್ದಿದ್ದಾರೆ, ನುಂಗಿದ್ದಾರೆ, ಕಟಾವು ಮಾಡಿದ್ದಾರೆ, ಬಣವೆ ಹಾಕಿದ್ದಾರೆ-ಒಂದು ಅಂದಾಜು ಸಿಗುತ್ತದೆಯೇ? ಕೋಮು ದ್ವೇಷ ರಾಜ್ಯವನ್ನು ಒಂದು ರೀತಿಯಲ್ಲಿ ಸುಡುತ್ತಿದ್ದರೆ ಈ ಭ್ರಷ್ಟತೆ ನಾಗರ ವಿಷದಂತೆ ಹರಡಿದೆ. ಇದನ್ನು ತಹಬದಿಗೆ ತರುವವರು ಯಾರು? ಬರೀ ಗ್ರಾಮಪಂಚಾಯತ್‌ಗಳಷ್ಟರ ಹುಲ್ಲು ಬಣವೆ ಮೇವಿನ ರುಚಿಯೇ ಇಷ್ಟಾದರೆ ಇನ್ನು ಇಡೀ ವ್ಯವಸ್ಥೆ, ಇಲಾಖೆಗಳು, ಸಂಸ್ಥೆಗಳು, ಶಾಖೆಗಳು, ಪಕ್ಷಗಳು, ಕಚೇರಿಗಳು, ಅನುದಾನಗಳು, ಬಜೆಟ್ ಮಂಜೂರಾತಿಗಳು ಹೇಗಿದ್ದಾವು? ಇಷ್ಟೊಂದು ಕೊಳೆ ಅಂಟಿರುವ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ? ಒಂದು ಪಕ್ಷ ಬೇಡವಾದರೆ, ಮತ್ತೊಂದು ಪಕ್ಷ ಪ್ರಾಮಾಣಿಕವಾಗಿರಬೇಕಲ್ಲವೇ? ಎಲ್ಲರೂ ಹೀಗೆಯೇ ಆದರೆ ಕೆಳವರ್ಗ, ಒಬಿಸಿಗಳು, ಅಹಿಂದ- ನಾಳೆ ಏನಾದಾರು? ಜಾತಿ ಎಂದೂ ನಾಶವಾಗುವ ಸೂಚನೆ ಸಿಗದ ಈ ದೇಶದಲ್ಲಿ, ಕರ್ನಾಟಕದಲ್ಲಿ ನಾಳಿನ ದಿನಗಳು ಹೇಗಿದ್ದಾವು? ನಮ್ಮ ರಾಜಕಾರಣಿಗಳಿಗೆ ಸೂಕ್ಷ್ಮ ಸಂವೇದನೆ ಯಾಕೆ ನಾಶವಾಗಿದೆ? ಉಪಲೋಕಾಯುಕ್ತ ಬಿ. ವೀರಪ್ಪನವರು ಒಳ್ಳೆ ಕೆಲಸ ಮಾಡಿ ತೋರಿಸಿದ್ದಾರೆ. ಅವರನ್ನು ಸರಕಾರ ಪ್ರೋತ್ಸಾಹಿಸಿ ತಮ್ಮ ಪ್ರಾಮಾಣಿಕತೆಯ ದಾರಿಗಳನ್ನು ತೋರಿಸಬೇಕಾಗಿದೆ. ಕರ್ನಾಟಕದ ರಾಜಕಾರಣದ ದಿಕ್ಕುದೆಸೆಗಳನ್ನು ಸರಿಪಡಿಸುವುದು ಯಾರ ಕೈಲಿದೆ? ಸರಕಾರವೇ ಮಾಡಬೇಕು. ಅದು ಪ್ರಾಮಾಣಿಕವಾಗಿದ್ದರೆ, ರಾಜ್ಯವೂ ಪ್ರಾಮಾಣಿಕವಾಗಿರುತ್ತದೆ. ಜಾತ್ಯತೀತ ನಿಲುವಿನ ರಕ್ಷಣೆಯೊಂದೇ ಸಾಲದು. ಸಮಾಜವನ್ನು ಪ್ರೀತಿಸಬೇಕು. ಅಂದರೆ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಶಕ್ತಿಯನ್ನು ಲೋಕಾಯುಕ್ತಕ್ಕೆ ಪುನಃ ನೀಡಬೇಕು. 2022ರಲ್ಲಿ ಹೈಕೋರ್ಟ್ ಲೋಕಾಯುಕ್ತಕ್ಕೆ ಪುನಃ ಶಕ್ತಿ ಕೊಡಿ ಎಂದು ಹೇಳಿದೆ. ಆದರೆ ಕೊಟ್ಟಿಲ್ಲ. ಅದಕ್ಕೆ ಹೆಚ್ಚಿನ ಶಕ್ತಿ ನೀಡಬೇಕು. ಯಾರೇ ಮುಖ್ಯಮಂತ್ರಿ ಆಗಲಿ ಅದನ್ನು ಮಾಡಬೇಕು. ಮಾಡಿಯಾರೇ? ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿಯಬಲ್ಲರೇ?

ವಾರ್ತಾ ಭಾರತಿ 21 Jan 2026 12:08 pm

ಕರಾವಳಿ ನಿರ್ದಿಗಂತ ನಾಟಕೋತ್ಸವ ಮಾನವತೆಯ ಅಂತಃಕರಣ ತಟ್ಟಿದ ಮಕ್ಕಳ ನಾಟಕಗಳು

ಮಕ್ಕಳ ರಂಗಭೂಮಿ ಈ ವರೆಗೆ ಸಾಲು ಸಾಲು ರಂಜಕವಾದ ಮತ್ತು ಭ್ರಮಾತ್ಮಕ ಜಗತ್ತನ್ನು ಹೊಂದಿರುವ ಫ್ಯಾಂಟಸಿ ಕಥೆಗಳನ್ನು ಅದ್ಭುತವೆಂಬಂತೆ ರಂಗದಮೇಲೆ ತಂದಿದೆ. ಆದರೆ ಕಳೆದೊಂದು ದಶಕದಿಂದ ಮಕ್ಕಳ ರಂಗಭೂಮಿಯಲ್ಲಿ ಕಟ್ಟಲ್ಪಟ್ಟ ಹೊಸ ವ್ಯಾಖ್ಯಾನಗಳು ಮತ್ತು ಹೊಸ ಪ್ರಯೋಗಗಳು ಮಕ್ಕಳ ರಂಗಭೂಮಿಯ ವ್ಯಾಕರಣವನ್ನು ಬದಲಾಯಿಸಿ ಬಿಟ್ಟಿದೆ. ಹಾಗಾಗಿಯೇ ಭ್ರಮಾತ್ಮಕವಾದ ಫ್ಯಾಂಟಸಿ ಕಥೆಗಳಿಂದ ಮಕ್ಕಳ ರಂಗಭೂಮಿ ತನ್ನ ಮಗ್ಗುಲನ್ನು ಬದಲಾಯಿಸಿದ್ದು, ವಾಸ್ತವವಾದಿ ಕಥೆಗಳ ಮೂಲಕ ರಮ್ಯತೆಯ ಜಗತ್ತಿನಾಚೆಗೆ ಜಿಗಿದು ಬಂಡಾಯದ ಕ್ರಿಯೆಗಳ ಮೂಲಕ ವರ್ತಮಾನದ ವೈರುಧ್ಯಗಳಿಗೆ ಧ್ವನಿಯಾಗುವ ಸಾಹಸವನ್ನು ಮಾಡುತ್ತಿದೆ. ಮಾಡಬೇಕು ಕೂಡಾ. ಏಕೆಂದರೆ ಶಿಕ್ಷಣದಲ್ಲಿ ರಂಗಭೂಮಿಯನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಈ ಹೊತ್ತಿನಲ್ಲಿ ಈ ರೀತಿಯ ಜಿಗಿಯುವಿಕೆ ಅನಿವಾರ್ಯವೇ ಆಗಿದೆ ಮತ್ತು ಅದು ಶೈಕ್ಷಣಿಕ ಕ್ರಿಯೆಯೇ ಆಗಿದೆ. ಕರಾವಳಿ ನಿರ್ದಿಗಂತ ಆಯೋಜಿಸಿದ ಮೂರು ಮಕ್ಕಳ ನಾಟಕಗಳು ಈ ನೆಲೆಯಲ್ಲಿ ಸ್ವಲ್ಪ ಸಿಹಿ ಮತ್ತು ಸ್ವಲ್ಪ ಕಹಿ. ನಾಟಕ: ಮೃಗ ಮತ್ತು ಸುಂದರಿ ರಚನೆ: ಗಜಾನನ ಶರ್ಮಾ ನಿರ್ದೇಶನ: ಬಿಂದು ರಕ್ಷಿದಿ ಪ್ರಸ್ತುತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರೂರು ಬ್ರಹ್ಮಾವರ ‘‘ಸಾವಿನೂರಿಗೆ ಸಾಗೋ ಮುನ್ನ ಸಂತೆಲೊಂದು ಆಡೋ ಆಟ, ಅದು ನಾಟಕ ಥೇಟ’’ ಎಂಬ ಹಾಡಿನೊಂದಿಗೆ ಆರಂಭವಾದ ನಾಟಕ ‘ಮೃಗ ಮತ್ತು ಸುಂದರಿ’. ಮಕ್ಕಳ ಕಥೆಗಳಲ್ಲಿ ಬರುವ ಮೃಗಗಳು ಮತ್ತು ರಾಕ್ಷಸರು ಯಾವಾಗಲೂ ಒಳ್ಳೆಯ ಅಂತಃಕರಣವನ್ನೇ ಹೊಂದಿರುತ್ತಾರೆ. ಪುಣ್ಯಕೋಟಿ ಕಥೆಯಲ್ಲಿ ಬರುವ ಅರ್ಬುದನೆಂಬ ವ್ಯಾಘ್ರದ ಕಣ್ಣಲ್ಲಿ ನೀರು ಕಂಡವರು ನಾವು. ಮೃಗ ಮತ್ತು ಸುಂದರಿ ನಾಟಕ ಮೂಲತಃ ಒಂದು ಫ್ಯಾಂಟಸಿ ಕಥನ. ರಂಜನೆ ಮತ್ತು ಭ್ರಮಾತ್ಮಕ ಕ್ರಿಯೆಗಳೇ. ಆದರೆ ಬ್ರೆಖ್ಟಿಯನ್ ನಾಟಕ ತಂತ್ರವನ್ನು ನಿರ್ದೇಶಕರು ನಾಟಕದುದ್ದಕ್ಕೂ ಬಳಸಿಕೊಂಡ ಪರಿಣಾಮವಾಗಿ ರಮ್ಯತೆಯ ಜಗತ್ತನ್ನು ಮೀರಿ ನಾಟಕ ವಾಸ್ತವವಾದಿ ನೆಲೆಗಟ್ಟನ್ನು ಪಡೆದುಕೊಳ್ಳುತ್ತದೆ. ಬಹಳ ಪ್ರಜ್ಞಾಪೂರ್ವಕವಾದ ರಂಗಕ್ರಿಯೆಗಳು ಮತ್ತು ಲವಲವಿಕೆಯ ರಂಗಭಾಷೆಯ ಮೂಲಕ ಅರಿವಿನ ದಾರಿಯನ್ನು ಕಂಡುಕೊಳ್ಳುತ್ತದೆ. ಪಟ್ಟಣದ ಧನಿಕ ಶೆಟ್ಟಿಯೊಬ್ಬ ತನ್ನ ಹಡಗು ಸಮುದ್ರದಲ್ಲಿ ಮುಳುಗಿಹೋದ ಕಾರಣಕ್ಕಾಗಿ ಸಿರಿ ಸಂಪತ್ತಿನಿಂದ ಕೂಡಿದ ತನ್ನ ಮನೆಯನ್ನು ಬಿಟ್ಟು ಮೂವರು ಹೆಣ್ಣು ಮಕ್ಕಳೊಂದಿಗೆ ಹಳ್ಳಿಗೆ ಬಂದು ನೆಲೆಸುತ್ತಾನೆ. ಹಡಗು ಮುಳುಗಿದ್ದು ಯಾರೋ ದುಷ್ಟರು ಹಬ್ಬಿಸಿದ ಸುಳ್ಳುಸುದ್ದಿ ಎಂದು ತಿಳಿದಾಗ ಮತ್ತೆ ಪಟ್ಟಣಕ್ಕೆ ಹೋಗಿ ಬರೋ ದಾರಿಯಲ್ಲಿ ಒಂದು ಭೀಕರ ಮೃಗದ ಆಕ್ರಮಣಕ್ಕೆ ಒಳಗಾಗುತ್ತಾನೆ. ಬೇಡಿಕೊಂಡ ನಂತರದಲ್ಲಿ ಒಂದು ಶಾಂತಿಯುತ ಒಪ್ಪಂದದ ಮೇರೆಗೆ ಹಿಂದಿರುಗುತ್ತಾನೆ. ಮೂವರು ಮಕ್ಕಳಲ್ಲಿ ಕೊನೆಯವಳಾದ ಸುಂದರಿ ಮಾತ್ರ, ಆಗಿರುವ ಒಪ್ಪಂದದಂತೆ ಮೃಗದ ಬಳಿ ಹೋಗಲು ಬಯಸುತ್ತಾಳೆ. ಆದರೆ ಎಣಿಸಿದಂತೆ ಮೃಗ ಕ್ರೂರವಾಗಿರುವುದಿಲ್ಲ. ಹಾಗಾಗಿ ಸುಂದರಿಯೂ ಮೃಗದೊಂದಿಗೆ ಯಾವುದೇ ತೊಂದರೆಗೆ ಒಳಗಾಗದೆ ಬದುಕುತ್ತಾಳೆ. ಕೆಲವು ದಿನಗಳ ಬಳಿಕ ಮನೆಗೆ ಬಂದ ಸುಂದರಿಗೆ ಮನುಷ್ಯರಿಗಿಂತ ಮೃಗವೇ ವಾಸಿ ಎಂದು ಎಣಿಸಿ ಮತ್ತೆ ಮೃಗದ ಬಳಿಗೆ ಬರುತ್ತಾಳೆ. ಅಷ್ಟು ಹೊತ್ತಿಗೆ ಮೃಗ ಸುಂದರಿಯ ಕಾಣದೆ ಬಳಲಿರುತ್ತದೆ. ಕೊನೆಗೆ ಸುಂದರಿ ಮೃಗದೊಂದಿಗೆ ಸ್ನೇಹಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ಶಾಪಗ್ರಸ್ತ ರಾಜಕುಮಾರ ಮೃಗದ ವೇಷ ಕಳಚಿ ಮನುಷ್ಯನಾಗಿ ಕಾಣಿಸಿಕೊಳ್ಳುತ್ತಾನೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ವಸತಿ ಶಾಲೆಯಲ್ಲಿ ಕಲಿಯುವ ಬೇರೆ ಬೇರೆ ವಯಸ್ಸಿನ ಇಪ್ಪತ್ತಮೂರು ಮಕ್ಕಳು ಅಭಿನಯಿಸಿದ ಈ ನಾಟಕ ತನ್ನ ಬಿಗಿಯಾದ ಸಂಭಾಷಣೆ, ಶಕ್ತಿಯುತ ಆಂಗಿಕ ಮತ್ತು ಸ್ಪಷ್ಟವಾದ ವಾಚಿಕದಿಂದ ಉತ್ತಮವಾಗಿಯೇ ರಂಗದ ಮೇಲೆ ಪ್ರದರ್ಶನವನ್ನು ಕಂಡಿತು. ಕಥೆಯನ್ನು ಅರ್ಥಮಾಡಿಕೊಳ್ಳಲು ಕಥೆಗಾರನ ತಂತ್ರವನ್ನು ಬಳಸಿದ ನಿರ್ದೇಶಕರು ಕಥೆಗಾರನನ್ನು ಕಥೆ ಮತ್ತು ಪ್ರೇಕ್ಷಕರಿಗೆ ಸೇತುವೆಯಾಗಿ ಮಾತ್ರ ಬಳಸಿಕೊಳ್ಳದೆ ನಾಟಕದೊಳಗೆ ಪ್ರವೇಶಿಕೆ ಕೊಡುವುದರ ಮೂಲಕ ನಾಟಕದ ಪ್ರಸ್ತುತಿಗೆ ಹೊಸ ಆಯಾಮವನ್ನು ಕೊಡುತ್ತಾರೆ. ರಂಗದ ಮೇಲಿರುವ ವೇಷ ಬಳಿದ ಹತ್ತಕ್ಕೂ ಮೇಲ್ಪಟ್ಟ ಕಬ್ಬಿಣದ ಟ್ರಂಕುಗಳೇ ವಿವಿಧ ವಿನ್ಯಾಸ ಪಡೆದು ರಂಗದ ಮೇಲೆ ನಿಲ್ಲುವುದು, ಪಾತ್ರಧಾರಿಗಳೇ ವಿವಿಧ ಬಣ್ಣ ಮತ್ತು ಆಕಾರದ ವಿವಿಧ ಹೂವುಗಳಾಗಿ ಕಾಣುವುದು ನಾಟಕದ ಸೌಂದರ್ಯವನ್ನು ಹೆಚ್ಚಿಸುತ್ತದೆ. ವಸ್ತ್ರವಿನ್ಯಾಸದಲ್ಲಿ ಬಳಸಿದ ಬಣ್ಣಗಳು, ಬೆಳಕು, ಕಚಗುಳಿ ಇಡುವ ಹಾಡುಗಳು ಮತ್ತು ಲವಲವಿಕೆಯ ತೊಡಗಿಸಿಕೊಳ್ಳುವಿಕೆ ಎಲ್ಲವೂ ಸೇರಿ ನಾಟಕವನ್ನು ವರ್ಣಮಯವಾಗಿಸುತ್ತದೆ. ನಾಟಕ ಮನರಂಜನೆಯ ಮಾಧ್ಯಮ ಮಾತ್ರ ಅಲ್ಲ ಅದು ಅರಿವಿನ ದಾರಿಯಾಗಬೇಕು ಎಂಬುದನ್ನು ಮತ್ತೆ ಮತ್ತೆ ನೆನಪಿಸಿದ ನಾಟಕವಿದು. ಕಥೆಗಾರನಿಂದ ಸಮಾನತೆಯ ಪಾಠ ಮಾಡುವುದರ ಮೂಲಕ ಆರಂಭವಾದ ನಾಟಕ, ಮೃಗಗಳಿಗಿಂತ ಮೃಗರೂಪದ ಮನುಷ್ಯರು ಹೆಚ್ಚು ಅಪಾಯಕಾರಿಯಾದವರು, ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಪ್ರೀತಿಯ ಸೌಂದರ್ಯ ಬಹಳ ಮುಖ್ಯವಾದುದು ಎಂಬ ಅರಿವನ್ನು ಮಕ್ಕಳ ಭಾವಕೋಶಗಳಲ್ಲಿ ಬಿತ್ತುತ್ತದೆ. ನಾಟಕ: ಕ್ಯೂರಿಯಸ್ ರಚನೆ : ವರದರಾಜ್ ಬಿರ್ತಿ ನಿರ್ದೇಶನ: ರೋಹಿತ್ ಎಸ್. ಬೈಕಾಡಿ ಪ್ರಸ್ತುತಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆ ಮನುಷ್ಯ ಜೀವನದ ಕಷ್ಟಕಾರ್ಪಣ್ಯಗಳನ್ನು ಕಡಿಮೆ ಮಾಡೋದೊಂದೇ ವಿಜ್ಞಾನದ ಪರಮ ಗುರಿ. ಗೆಲಿಲಿಯೋ ನಿಂದ ತೊಡಗಿ ಜಗತ್ತಿನ ಎಲ್ಲಾ ದಾರ್ಶನಿಕರು ತಮ್ಮ ವಿಜ್ಞಾನದ ಹುಡುಕಾಟದ ದಾರಿಯಲ್ಲಿ ಕಂಡುಕೊಂಡು ಪ್ರತಿಪಾದಿಸಿದ ತತ್ವವಿದು. ಈ ಪ್ರತಿಯೊಂದು ಹುಡುಕಾಟದ ಹಿಂದೆ ನೋವಿನ ಎಳೆಗಳ ಹಲವು ಕಥನಗಳಿವೆ. ಸತ್ಯದ ಅನ್ವೇಷಣೆಯ ದಾರಿಯನ್ನು ಹಲವರು ಹಲವು ರೀತಿಯಲ್ಲಿ ದಾಟಿಹೋಗಿರಬಹುದು. ಆದರೆ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನದಲ್ಲಿ ಎರಡು ನೊಬೆಲ್ ಬಹುಮಾನ ಪಡೆದ ಮೇರಿಕ್ಯೂರಿ ಸಾಗಿದ ದಾರಿ ವಿಜ್ಞಾನ ಲೋಕದ ಚರಿತ್ರೆಯಲ್ಲಿ ಇನ್ನೂ ಹಸಿ ಹಸಿಯಾಗಿಯೇ ಇದೆ. ಈ ಹಸಿಯಾದ ಸಾವಿನ ಹುಡುಕಾಟದ ದಾರಿಯ ಚಿತ್ರಣವನ್ನು ಕಟ್ಟಿಕೊಡುವ ನಾಟಕ ‘ಕ್ಯೂರಿಯಸ್’ ಹೆಣ್ಣಾಗಿರುವ ಕಾರಣಕ್ಕಾಗಿ ಉನ್ನತ ವಿದ್ಯಾಭ್ಯಾಸದಿಂದ ವಂಚಿತಳಾಗಿ, ವಿಜ್ಞಾನದಲ್ಲಿ ಸ್ವಂತ ಅಧ್ಯಯನವನ್ನು ಕೈಗೊಂಡು ವಿಕಿರಣಶೀಲ ಪೊಲೋನಿಯಂ ಮತ್ತು ರೇಡಿಯಂ ಎಂಬ ಎರಡು ಧಾತುಗಳನ್ನು ಆವರ್ತಕ ಕೋಷ್ಟಕದಲ್ಲಿ ಸೇರಿಸುವ ವರೆಗಿನ ಅವಳ ಹೋರಾಟ ಮತ್ತು ಅದರ ದೀರ್ಘಕಾಲಿಕ ಪರಿಣಾಮದಿಂದ ಬೋನ್ ಮ್ಯಾರೋ ಅಪ್ಲೇಸಿಯಾ ರೋಗಕ್ಕೆ ತುತ್ತಾಗುವ ಕಥಾನಕವೇ ನಾಟಕದ ಕಥಾವಸ್ತು. ಮನುಕುಲಕ್ಕೆ ಒಳಿತಾಗಲಿ ಎಂಬ ಘೋಷ ವಾಕ್ಯದೊಂದಿಗೆ ರಂಗವೇರಿದ ನಾಟಕ ತನ್ನ ಬತ್ತಳಿಕೆಯಲ್ಲಿ ರಾಷ್ಟ್ರಮಟ್ಟಕ್ಕೇರಿದ ಪ್ರಭಾವಳಿಗಳನ್ನು ಸಹಜವಾಗಿಯೇ ಹೊಂದಿತ್ತು. ಅತಿ ದೊಡ್ಡ ವೇದಿಕೆಯಲ್ಲಿ ತಮಗೆ ಬೇಕಾದಷ್ಟೇ ಭಾಗವನ್ನು ಬಳಸಿಕೊಂಡು ಆತ್ಮವಿಶ್ವಾಸಭರಿತ ಎಂಟು ಮಕ್ಕಳಿಂದ ರಂಗದ ಮೇಲೆ ಪ್ರಸ್ತುತಗೊಂಡ ಕೇವಲ ಮೂವತ್ತು ನಿಮಿಷಗಳ ನಾಟಕವಿದು. ವಿಜ್ಞಾನದ ವಸ್ತುವನ್ನು ರಂಗದ ಮೇಲೆ ತರುವಾಗ ನಿರ್ದೇಶಕರು ವಿನ್ಯಾಸಗೊಳಿಸಿದ ವಿಭಿನ್ನ ತಂತ್ರಗಾರಿಕೆ ನಾಟಕದ ಶಕ್ತಿ. ಹುಡುಕಾಟದ ಪ್ರತಿಮೆಗಳಾಗಿ ಬಳಸಲ್ಪಟ್ಟ ಪ್ರಶ್ನಾ ದಂಡಗಳು, ಸರ್ಚ್ ಲೈಟ್‌ಗಳು ಮತ್ತು ಬಣ್ಣದ ರಿಬ್ಬನ್‌ಗಳು ಹೆಚ್ಚು ವಾಚ್ಯವೇ ಇರುವ ಕಥಾ ನಿರೂಪಣೆಯ ವಿನ್ಯಾಸವನ್ನು ಹೊಂದಿರುವ ಈ ವಿಜ್ಞಾನದ ನಾಟಕವನ್ನು ನಾಟಕೀಕರಣಗೊಳಿಸಿವೆ. ದೇಸೀ ಮತ್ತು ವೆಸ್ಟರ್ನ್ ರಿದಂಗಳ ಹದವಾದ ಮಿಶ್ರಣವಿರುವ ಈ ನಾಟಕ ಕೇವಲ ಮೇರಿಕ್ಯೂರಿಯಲ್ಲಿಗೇ ಕೊನೆಗೊಳ್ಳದೆ ಮಹಿಳಾ ವಿಜ್ಞಾನಿಗಳ ಪೆರೇಡ್‌ನ್ನು ರಂಗಕ್ಕೆ ತರುತ್ತದೆ. ವಿಜ್ಞಾನದ ಅತಿ ಸಂಕೀರ್ಣವಾದ ವಿಷಯವನ್ನು ರಂಗದ ಮೇಲೆ ತರುವಾಗ ವಿಷಯದ ಆಳವಾದ ಅಧ್ಯಯನದ ಅಗತ್ಯವಿರುತ್ತದೆ. ಈ ಸವಾಲನ್ನು ನಿರ್ದೇಶಕರು ಶಕ್ತಿಯುತವಾಗಿಯೇ ದಾಟಿದ್ದಾರೆ. ಆದರೆ ವಿಷಯದ ಸಂಕೀರ್ಣತೆಯನ್ನು ಇನ್ನಷ್ಟು ತಿಳಿಗೊಳಿಸುವ ಸಲುವಾಗಿ ಮತ್ತಷ್ಟು ವಿಷಯದ ಅಗತ್ಯತೆ ಬೇಕಿತ್ತು ಎಂದು ಅನಿಸಿದ್ದು ಮಾತ್ರ ಸತ್ಯ. ನಾಟಕ: ಕುಣಿ ಕುಣಿ ನವಿಲೆ ರಚನೆ: ಎಚ್.ಎಸ್. ವೆಂಕಟೇಶ್ ಮೂರ್ತಿ ನಿರ್ದೇಶನ: ರೋಹಿತ್ ಎಸ್. ಬೈಕಾಡಿ ವೆಂಕಟೇಶ್ ಮೂರ್ತಿಯವರು ಬಹಳ ಹಿಂದೆಯೇ ಬರೆದ ಪ್ರಖರ ರಾಜಕೀಯ ವಿಡಂಬನಾತ್ಮಕ ನಾಟಕವಿದು. ಒಂದು ಕಾಡಿನಲ್ಲಿರುವ ಹುಲಿ, ತೋಳ, ನವಿಲು, ಹೆಗ್ಗಣ ಇತ್ಯಾದಿ ಪ್ರಾಣಿಗಳನ್ನಿಟ್ಟುಕೊಂಡು ರಾಜಕೀಯ ನಾಯಕರು ಮತ್ತು ಅಧಿಕಾರಿ ವ್ಯವಸ್ಥೆ ಹೇಗೆ ವರ್ತಿಸುತ್ತವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಚುರುಕಾದ ಸಂಭಾಷಣೆ, ನವಿರಾದ ಹಾಸ್ಯ ಮತ್ತು ಮೊನಚಾದ ವಿಡಂಬನೆಗಳು ಮೂಲ ನಾಟಕದಲ್ಲೇ ಅಂತರ್ಗತವಾಗಿವೆ ಮತ್ತು ಪ್ರಸ್ತುತ ರಾಜಕಾರಣಕ್ಕೆ ಅದನ್ನು ವಿಸ್ತರಿಸುವ ವಿಪುಲ ಸಾಧ್ಯತೆಗಳನ್ನು ರಂಗದ ಮೇಲೆ ಸಾಧ್ಯವಾಗಿಸುವ ರಂಗನಾಟಕವಿದು. ಈ ನಾಟಕದ ಭಾಷೆ ಮತ್ತು ಫ್ರೌಢತೆಯಿಂದಾಗಿ ಇದು ಬರೀ ಮಕ್ಕಳು ಅಭಿನಯಿಸುವ ನಾಟಕವಾಗಿಲ್ಲ, ಬದಲಾಗಿ ದೊಡ್ಡವರು ಮಕ್ಕಳಿಗಾಗಿ ಅಭಿನಯಿಸಿ ತೋರಿಸುವ ನಾಟಕವಾಗುವ ಸಾಧ್ಯತೆಗಳೇ ಹೆಚ್ಚು ಇದೆ. ಒಂದು ವೇಳೆ ಮಕ್ಕಳೇ ಅಭಿನಯಿಸುವುದಾದರೂ ಮಕ್ಕಳ ವಯಸ್ಸಿನ ಪ್ರೌಢಿಮೆಯನ್ನೂ ಈ ನಾಟಕ ಬಯಸುತ್ತದೆ ಎಂಬುದು ಸತ್ಯ. ಹೀಗಿದ್ದೂ ನಿರ್ದೇಶಕರು ತೀರಾ ಎಳೆ ಮಕ್ಕಳಿಂದ ಈ ನಾಟಕ ಮಾಡುವ ಧೈರ್ಯ ಮಾಡಿರುವುದಕ್ಕೆ ಅಭಿನಂದನೆಗಳು. ಆರಂಭದ ದೃಶ್ಯಗಳು ಈ ಎಲ್ಲಾ ಸವಾಲುಗಳನ್ನು ಮೀರಿ ರಂಗದ ಮೇಲೆ ತೆರೆದುಕೊಳ್ಳುತ್ತವೆ. ನಾಟಕದ ಮೂಲ ಪಠ್ಯದಲ್ಲಿರುವ ರಾಜಕೀಯ ವಿಡಂಬನೆಯನ್ನು ಈ ಕಾಲದಲ್ಲಿ ನಿಂತು ನೋಡಿಕೊಳ್ಳುವಲ್ಲಿ ಮತ್ತು ಕಾಣಿಸಿಕೊಳ್ಳುವಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಬಹುಪಾಲು ಹೆಣ್ಣು ಮಕ್ಕಳೇ ಇರುವ ಈ ತಂಡದಲ್ಲಿ ನಾಟಕದಲ್ಲಿ ಬರುವ ಗಂಡುಪ್ರಾಣಿಗಳ ಪಾತ್ರವನ್ನು ಗಂಡಿನ ಕೊರತೆ ಇಲ್ಲದಂತೆ ನಿಭಾಯಿಸಿದ್ದಾರೆ. ಹಾಗಾಗಿ ನಾಟಕ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗುತ್ತದೆ. ಆದರೆ ರಂಗದಲ್ಲಿ ಮೇಲಿನಿಂದ ಕೆಳಗಿನವರೆಗೆ ಇಳಿಬಿಟ್ಟ ನೀಳವಾದ ಮೂರು ಆಯಾಮವನ್ನು ನೀಡುವ ದಟ್ಟವಾದ ಕಾಡಿನ ಚಿತ್ರಣ ಹಳೆಯ ಪರದೆಯ ನಾಟಕದ ನೋಟವನ್ನು ನೀಡಿ, ಇಡೀ ನಾಟಕದ ನಟರ ರಂಗ ಚಲನೆಗಳನ್ನು ಗೌಣವಾಗಿಸಿದ ಸಾಧ್ಯತೆಗಳೇ ಹೆಚ್ಚಿವೆ. ಮಕ್ಕಳ ತಲೆಯ ಮೇಲೆ ಕೂರಿಸಿದ ಹುಲಿ, ತೋಳ, ನವಿಲುಗಳ ಶಿರೋ ಭೂಷಣಗಳು ನಾಟಕದ ಅದ್ದೂರಿತನಕ್ಕೆ ಸಾಕ್ಷಿಯಾದುವೇ ಹೊರತು ಪಾತ್ರಗಳ ಸೂಕ್ಷ್ಮತೆಗೆ ಧಕ್ಕೆಯಾದಂತೆ ಭಾಸವಾಗುತ್ತದೆ. ರಂಗದ ಮೇಲೆ ನಿರ್ದೇಶಕರ ರಂಗವಿನ್ಯಾಸ ಮತ್ತು ಶ್ರಮ ವ್ಯಕ್ತವಾಗುತ್ತದೆಯೇ ಹೊರತು ಮಕ್ಕಳಲ್ಲ. ಹಾಗಾಗಿ ಮಕ್ಕಳ ನಾಟಕವಾಗಿ ಇದು ಇನ್ನೂ ಹೆಚ್ಚು ಪರಿಪೂರ್ಣತೆಯನ್ನು ಪಡೆಯಬೇಕಾದರೆ ಹೆಚ್ಚಿನ ಅಭ್ಯಾಸವನ್ನು ಬೇಡುತ್ತದೆ. ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಮೂರು ನಾಟಕಗಳು ಮಕ್ಕಳ ರಂಗಭೂಮಿಯ ಕುರಿತಾದ ಗಂಭೀರ ಯೋಚನೆಗಳನ್ನು ಮತ್ತೆ ಹುಟ್ಟು ಹಾಕಿವೆ. ಮಕ್ಕಳ ನಾಟಕ ವೆಂದರೆ ಅದು ಹೇಗಿರಬೇಕು? ಯಾವ ವಸ್ತು ಮಕ್ಕಳ ನಾಟಕವಾಗಬಲ್ಲುದು? ವಸ್ತುವಿನ ಆಯ್ಕೆ ಮತ್ತು ಮಕ್ಕಳ ವಯೋಮಾನ ಇವುಗಳ ನಡುವೆ ಸಾಂಗತ್ಯ ಅಗತ್ಯವೇ? ಮಕ್ಕಳ ನಾಟಕದ ಮಕ್ಕಳೇ ಧರಿಸುವ ಮುಖವಾಡದಂತಹ ರಂಗಪರಿಕರಗಳ ಬಣ್ಣ ಗಾತ್ರ ಹೇಗಿರಬೇಕು? ಮಕ್ಕಳ ನಾಟಕದ ಪ್ರದರ್ಶನವೇ ಮುಖ್ಯವಾಗಿ ಅದ್ದೂರಿತನ ರಂಗದಲ್ಲಿ ಮೇಳೈಸಿ ಮಕ್ಕಳ ರಂಗಭೂಮಿಯ ನಾಟಕ ಕಟ್ಟುವ ಪ್ರಕ್ರಿಯೆ ಮಸುಕಾಗುತ್ತಿದೆಯೇ? ಪ್ರದರ್ಶನಾಧಾರಿತ ನಾಟಕಗಳು ನಿರ್ದೇಶಕರು ಮತ್ತು ವಿನ್ಯಾಸವನ್ನು ಗೆಲ್ಲಿಸುವ ನೆಪದಲ್ಲಿ ಮಕ್ಕಳನ್ನು ಗೆಲ್ಲಿಸಬಲ್ಲುವುದಾಗಿದ್ದರೆ? ಏಕೆಂದರೆ ಈ ಮೂರೂ ನಾಟಕಗಳು ಮಕ್ಕಳ ರಂಗಭೂಮಿಯ ಪ್ರಧಾನ ಭಾಗವಾದ ರಂಗಸಂಗೀತದಲ್ಲಿ ಮಕ್ಕಳನ್ನು ದುಡಿಸಿಕೊಂಡಿಲ್ಲ. ಮಕ್ಕಳ ನಾಟಕಗಳಿಗೆ ಮಕ್ಕಳೇ ಹಾಡಿ, ಸಂಗೀತವಾದ್ಯಗಳನ್ನು ನುಡಿಸುವುದಿದ್ದರೆ ನಿಜಾರ್ಥದಲ್ಲಿ ಮಕ್ಕಳ ಗೆಲುವಿಗೆ ದಾರಿಯಾಗುತ್ತಿತ್ತು. ಪ್ರದರ್ಶನದಲ್ಲೂ ವೇದಿಕೆಯ ಕೆಳಗೆ ಕುಳಿತು ಸಂಗೀತ ಮತ್ತು ಸಂಗೀತವಾದ್ಯಗಳ ಮೂಲಕ ಮಕ್ಕಳನ್ನು ನಿರ್ದೇಶಕರು ಮತ್ತು ಅವರ ತಂಡ ನಿಯಂತ್ರಿಸುತ್ತಿರುವುದು ಇವತ್ತಿನ ಮಕ್ಕಳ ರಂಗಭೂಮಿಯ ಸೋಲು ಎಂದು ಯಾಕೆ ಭಾವಿಸಬಾರದು?

ವಾರ್ತಾ ಭಾರತಿ 20 Jan 2026 4:26 pm

ಅಮೆರಿಕದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆಗೆ ಒಳಗಾದ ಭಾರತೀಯ ಸಂಜಯ್ ಕೌಶಿಕ್ ಯಾರು?

ಸಾಂದರ್ಭಿಕ ಚಿತ್ರ | Photo Credit : freepik ವಿಮಾನದ ಬಿಡಿಭಾಗಗಳನ್ನು ಒರೆಗಾನ್‌ನಿಂದ ರಷ್ಯಾಕ್ಕೆ ಅಕ್ರಮವಾಗಿ ರಫ್ತು ಮಾಡಲು ಯತ್ನಿಸಿದ್ದಕ್ಕಾಗಿ ಭಾರತ ಮೂಲದ ಏವಿಯೇಷನ್ ಎಕ್ಸಿಕ್ಯೂಟಿವ್ ಸಂಜಯ್ ಕೌಶಿಕ್ ಅವರಿಗೆ ಅಮೆರಿಕದ ಫೆಡರಲ್ ಜೈಲಿನಲ್ಲಿ 30 ತಿಂಗಳ ಶಿಕ್ಷೆ ವಿಧಿಸಲಾಗಿದೆ. ಸಂಜಯ್ ಅವರ ಈ ಯೋಜನೆ ಸಂಭಾವ್ಯ ಮಿಲಿಟರಿ ಬಳಕೆಯೊಂದಿಗೆ ನಿರ್ಬಂಧಿತ ವಾಯುಯಾನ ತಂತ್ರಜ್ಞಾನವನ್ನು ರಫ್ತು ಮಾಡುವ ಹಾಗೂ ಅಮೆರಿಕದ ರಫ್ತು ನಿಯಂತ್ರಣ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವ ಪ್ರಯತ್ನವನ್ನು ಒಳಗೊಂಡಿತ್ತು ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. 2024ರಲ್ಲಿ ಫ್ಲೋರಿಡಾದಲ್ಲಿ ಬಂಧನಕ್ಕೊಳಗಾಗಿದ್ದ ಸಂಜಯ್ ಕೌಶಿಕ್ ತಪ್ಪೊಪ್ಪಿಕೊಂಡಿದ್ದಾರೆ. ಸಂಜಯ್ ಕೌಶಿಕ್ ಯಾರು? ಸಂಜಯ್ ಕೌಶಿಕ್ (58) ಭಾರತ ಮೂಲದ ಏವಿಯೇಷನ್ ಎಕ್ಸಿಕ್ಯೂಟಿವ್ ಮತ್ತು ಅರೆಜೊ ಏವಿಯೇಷನ್‌ನ ವ್ಯವಸ್ಥಾಪಕ ಪಾಲುದಾರ. ಜಾಗತಿಕ ವಾಯುಯಾನ ಪೂರೈಕೆ ವಿಭಾಗದಲ್ಲಿ ಕೆಲಸ ಮಾಡಿದ್ದ ಸಂಜಯ್, ನಾಗರಿಕ ಮತ್ತು ಮಿಲಿಟರಿ ವೇದಿಕೆಗಳಲ್ಲಿ ಬಳಸುವ ವಿಮಾನ ಘಟಕಗಳೊಂದಿಗೆ ಕಾರ್ಯನಿರ್ವಹಿಸಿದ್ದರು. ರಫ್ತು ಅನುಸರಣೆ ನಿಯಮಗಳ ಕುರಿತು ಅವರಿಗೆ ತಿಳಿದಿದ್ದರೂ, ಲಾಭಕ್ಕಾಗಿ ಅವುಗಳನ್ನು ನಿರ್ಲಕ್ಷಿಸಿದ ಅನುಭವಿ ಉದ್ಯಮಿ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ರಫ್ತು ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೆಡರಲ್ ನ್ಯಾಯಾಲಯವು ಅವರಿಗೆ 30 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅಮೆರಿಕದಲ್ಲಿ ಬಂಧಿಸಿದ್ದೇಕೆ? ಸಂಜಯ್ ರಷ್ಯಾಕ್ಕೆ ನಿರ್ಬಂಧಿತ ವಿಮಾನದ ಉಪಕರಣಗಳನ್ನು ರಫ್ತು ಮಾಡುವ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೂಕ್ಷ್ಮ ವಿಮಾನ ಭಾಗಗಳ ಅಂತಿಮ ಗಮ್ಯಸ್ಥಾನ ಮತ್ತು ಅಂತಿಮ ಬಳಕೆದಾರರನ್ನು ತಪ್ಪಾಗಿ ಹೇಳುವ ಮೂಲಕ ರಾಷ್ಟ್ರೀಯ ಭದ್ರತಾ ಸುರಕ್ಷತಾ ಕ್ರಮಗಳನ್ನು ತಪ್ಪಿಸಲು ಅವರು ಯತ್ನಿಸಿದ್ದರು ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಕ್ರಿಮಿನಲ್ ದೂರು ಮತ್ತು ಬಂಧನ ವಾರಂಟ್ ಹೊರಡಿಸಿದ ನಂತರ 2024 ಅಕ್ಟೋಬರ್ 17ರಂದು ಫ್ಲೋರಿಡಾದ ಮಿಯಾಮಿಯಲ್ಲಿ ಅವರನ್ನು ಬಂಧಿಸಲಾಯಿತು. ಬಂಧನದಲ್ಲಿದ್ದ ಸಂಜಯ್ 2025 ಅಕ್ಟೋಬರ್‌ನಲ್ಲಿ ತಪ್ಪೊಪ್ಪಿಕೊಂಡರು. ವಿಮಾನದ ಯಾವೆಲ್ಲ ಬಿಡಿಭಾಗಗಳು ಇದ್ದವು? ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕ ಅಂಶವೆಂದರೆ Attitude and Heading Reference System (AHRS). ಈ ಸಾಧನವು ವಿಮಾನ ನ್ಯಾವಿಗೇಷನ್ ಮತ್ತು ಹಾರಾಟ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಾಗರಿಕ ಹಾಗೂ ಮಿಲಿಟರಿ ವಿಮಾನಗಳಲ್ಲಿ ಬಳಸಲಾಗುತ್ತದೆ. ರಷ್ಯಾದಂತಹ ನಿರ್ಬಂಧಿತ ದೇಶಗಳಿಗೆ ಇಂತಹ ಉಪಕರಣಗಳನ್ನು ರವಾನಿಸುವ ಮೊದಲು ಅಮೆರಿಕ ಕಾನೂನಿನಂತೆ ವಿಶೇಷ ರಫ್ತು ಅನುಮತಿಯ ಅಗತ್ಯವಿದೆ. ಈ ಪರವಾನಗಿಯನ್ನು ಪಡೆಯಲು, ಕೌಶಿಕ್ ಮತ್ತು ಅವರ ಸಹಚರರು ಕೌಶಿಕ್ ಅವರ ಭಾರತೀಯ ಕಂಪನಿಯೇ ಅಂತಿಮ ಖರೀದಿದಾರ ಎಂದು, ಹಾಗೂ ಆ ಘಟಕವನ್ನು ನಾಗರಿಕ ಹೆಲಿಕಾಪ್ಟರ್‌ನಲ್ಲಿ ಬಳಸಲಾಗುತ್ತದೆ ಎಂದು ಸುಳ್ಳು ಹೇಳಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಅದನ್ನು ರಷ್ಯಾಕ್ಕೆ ಸಾಗಿಸಲು ಉದ್ದೇಶಿಸಿದ್ದರು. ಫೆಡರಲ್ ಅಧಿಕಾರಿಗಳು ಅಮೆರಿಕದಿಂದ ಹೊರಡುವ ಮೊದಲು ಅವರನ್ನು ಸೆರೆಹಿಡಿದರು. ಈ ಪ್ರಕರಣವು ಗಂಭೀರ ರಾಷ್ಟ್ರೀಯ ಭದ್ರತಾ ಅಪಾಯಗಳನ್ನು ಒಳಗೊಂಡಿದೆ. ಯುಎಸ್ ರಫ್ತು ನಿಯಂತ್ರಣ ಕಾನೂನುಗಳನ್ನು ತಪ್ಪಿಸಲು ಯೋಜನೆ ರೂಪಿಸುವವರ ಮೇಲೆ—ವಿಶೇಷವಾಗಿ ಮಿಲಿಟರಿಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಒಳಗೊಂಡಿರುವಾಗ—ಪೂರ್ಣ ಪ್ರಮಾಣದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ರಾಷ್ಟ್ರೀಯ ಭದ್ರತೆಯ ಸಹಾಯಕ ಅಟಾರ್ನಿ ಜನರಲ್ ಜಾನ್ ಎ. ಐಸೆನ್‌ಬರ್ಗ್ ಹೇಳಿದ್ದಾರೆ. ತೀರ್ಪಿನಲ್ಲಿ ಯಾವುದೇ ಲೋಪವಾಗಿರಲಿಲ್ಲ. ಇದು ಪುನರಾವರ್ತಿತ ವಹಿವಾಟುಗಳು, ಗಣನೀಯ ಲಾಭಗಳು ಮತ್ತು ನಿಷೇಧಿತ ರಷ್ಯಾದ ಘಟಕಗಳನ್ನು ಒಳಗೊಂಡ ವಿದೇಶಿ ಸಹ ಪಿತೂರಿಗಾರರೊಂದಿಗೆ ಸಮನ್ವಯದ ಲೆಕ್ಕಾಚಾರದ ಯೋಜನೆಯಾಗಿತ್ತು ಎಂದು ಯುಎಸ್ ಅಟಾರ್ನಿ ಸ್ಕಾಟ್ ಇ. ಬ್ರಾಡ್‌ಫೋರ್ಡ್ ಹೇಳಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಪಿತೂರಿ 2023 ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಯಿತು. ಸಂಜಯ್ ಕೌಶಿಕ್ ಮತ್ತು ಅವರ ಸಹಚರರು ಒರೆಗಾನ್ ಮೂಲದ ಪೂರೈಕೆದಾರರಿಂದ ಪದೇಪದೇ ವಿಮಾನದ ಬಿಡಿಭಾಗಗಳನ್ನು ಖರೀದಿಸಿದ್ದರು. ಅಂತಿಮ ಬಳಕೆದಾರ ಮತ್ತು ಉಪಕರಣದ ಉದ್ದೇಶಿತ ಬಳಕೆಯ ಕುರಿತು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ರಫ್ತು ಪೂರ್ಣಗೊಳ್ಳುವ ಮೊದಲು ಯುಎಸ್ ಸರ್ಕಾರ ಮಧ್ಯಪ್ರವೇಶಿಸಿತು. ಈ ಸಾಗಣೆ ಅಮೆರಿಕವನ್ನು ತೊರೆಯುವ ಮೊದಲುಲೇ ನಿರ್ಬಂಧಿಸಲಾಯಿತು. ಸಂಜಯ್ ಕೌಶಿಕ್‌ಗೆ ಯಾವ ಶಿಕ್ಷೆ ವಿಧಿಸಲಾಗಿದೆ? 2024 ನವೆಂಬರ್ 20ರಂದು ಪೋರ್ಟ್‌ಲ್ಯಾಂಡ್‌ನಲ್ಲಿ ಫೆಡರಲ್ ಗ್ರ್ಯಾಂಡ್ ಜ್ಯೂರಿ, ರಫ್ತು ನಿಯಂತ್ರಣ ಸುಧಾರಣಾ ಕಾಯ್ದೆ ಮತ್ತು ರಫ್ತು ಆಡಳಿತ ನಿಯಮಗಳನ್ನು ಉಲ್ಲಂಘಿಸಿ ಪಿತೂರಿ ನಡೆಸಿದ ಹಾಗೂ ಉತ್ಪನ್ನಗಳನ್ನು ರಫ್ತು ಮಾಡಲು ಯತ್ನಿಸಿದ ಮೂರು ಆರೋಪಗಳನ್ನು ಕೌಶಿಕ್ ವಿರುದ್ಧ ಹೊರಿಸಿತು. ಒರೆಗಾನ್‌ನಿಂದ ಭಾರತ ಮೂಲಕ ರಷ್ಯಾಕ್ಕೆ ನ್ಯಾವಿಗೇಷನ್ ಮತ್ತು ಹಾರಾಟ ನಿಯಂತ್ರಣ ವ್ಯವಸ್ಥೆಯನ್ನು ಅಕ್ರಮವಾಗಿ ರಫ್ತು ಮಾಡಲು ಅವರು ಪ್ರಯತ್ನಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ರಫ್ತಿಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂಬುದೂ ದೋಷಾರೋಪಣೆಯಲ್ಲಿದೆ. ರಷ್ಯಾದಲ್ಲಿ ನಾಗರಿಕ ಮತ್ತು ಮಿಲಿಟರಿ—ಎರಡೂ ಅಪ್ಲಿಕೇಶನ್‌ಗಳೊಂದಿಗೆ ರಫ್ತು-ನಿಯಂತ್ರಿತ ವಿಮಾನದ ಬಿಡಿಭಾಗಗಳನ್ನು ಮಾರಾಟ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ 2025 ಅಕ್ಟೋಬರ್ 9ರಂದು ಕೌಶಿಕ್ ತಪ್ಪೊಪ್ಪಿಕೊಂಡರು. ಆರೋಪ ಸಾಬೀತಾದ ನಂತರ 2026 ಜನವರಿ 15ರಂದು ಕೌಶಿಕ್ ಅವರಿಗೆ 30 ತಿಂಗಳ ಜೈಲು ಶಿಕ್ಷೆ ಹಾಗೂ 36 ತಿಂಗಳ ಮೇಲ್ವಿಚಾರಣೆಯ ಬಿಡುಗಡೆ ವಿಧಿಸಲಾಯಿತು. ಅವರ ಮೇಲೆ ಹೊರಿಸಲಾದ ಪ್ರತಿಯೊಂದು ಆರೋಪವೂ ಗರಿಷ್ಠ 20 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ಡಾಲರ್‌ಗಿಂತ ಹೆಚ್ಚಿನ ದಂಡ ವಿಧಿಸಬಹುದಾದ ಸಂಭಾವ್ಯ ಶಿಕ್ಷೆಯನ್ನು ಹೊಂದಿತ್ತು. ಈ ಪ್ರಕರಣ ಏಕೆ ಮುಖ್ಯವಾಗಿದೆ? ಹೆಚ್ಚುತ್ತಿರುವ ಜಾಗತಿಕ ಉದ್ವಿಗ್ನತೆ ಮತ್ತು ರಷ್ಯಾದ ಮೇಲಿನ ನಿರ್ಬಂಧಗಳ ನಡುವೆ ಈ ಪ್ರಕರಣವು ಯುಎಸ್ ರಫ್ತು ನಿಯಂತ್ರಣ ಕಾನೂನುಗಳ ಕಟ್ಟುನಿಟ್ಟಿನ ಜಾರಿಯನ್ನು ಎತ್ತಿ ತೋರಿಸುತ್ತದೆ. ವಾಯುಯಾನದಂತಹ ಸೂಕ್ಷ್ಮ ವಲಯಗಳಲ್ಲಿ ಕಾರ್ಯನಿರ್ವಹಿಸುವ ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಇದು ಬಲವಾದ ಎಚ್ಚರಿಕೆಯ ಸಂಕೇತವಾಗಿದೆ. ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನಗಳು—ರಾಷ್ಟ್ರೀಯತೆಯನ್ನು ಲೆಕ್ಕಿಸದೆ—ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಯುಎಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 20 Jan 2026 9:33 am

ವನ್ಯಜೀವಿಗಳಿಗೆ ಬದುಕುವ ಹಕ್ಕಿಲ್ಲವೇ?

ರಾಜ್ಯದಲ್ಲಿ ಇತ್ತೀಚೆಗೆ ಹುಲಿ, ಆನೆ, ಚಿರತೆಗಳು ಜನವಸತಿ ಪ್ರದೇಶಗಳಿಗೆ ಬಂದು ಕುರಿ, ಕೋಳಿಗಳನ್ನು ತಿನ್ನುತ್ತಿರುವ, ಕೆಲವು ಕಡೆ ಜನರ ಮೇಲೂ ದಾಳಿ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ವನ್ಯಜೀವಿಗಳು ಹಾಗೂ ಮನುಷ್ಯರ ಸಂಘರ್ಷ ಈಗ ಸಾಮಾನ್ಯ ಸಂಗತಿಯಾಗಿದೆ. ಇತ್ತೀಚೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಮಾನ ನಿಲ್ದಾಣದ ಆವರಣದಲ್ಲಿ ರಾತ್ರಿ ಚಿರತೆ ಕಾಣಿಸಿಕೊಂಡ ದೃಶ್ಯ ಕ್ಯಾಮರಾ ಸೆರೆ ಹಿಡಿದು ಆತಂಕವನ್ನು ಉಂಟು ಮಾಡಿತ್ತು. ಬಿಳಿಗಿರಿ ರಂಗನ ಬೆಟ್ಟದಲ್ಲಿ ಹುಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಆನೆಗಳು ಆಗಾಗ ಹಾಸನ ಜಿಲ್ಲೆಯ ಕೆಲವೆಡೆ ಕಾಣಿಸಿಕೊಂಡು ಕೆಲವರ ಮೇಲೆ ದಾಳಿ ಮಾಡಿದ ಘಟನೆಗಳು ಸಾಮಾನ್ಯವಾಗಿ ವರದಿಯಾಗುತ್ತಿವೆ. ಇದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣವನ್ನು ಹುಡುಕಲು ಹೊರಟರೆ ಹಲವಾರು ವಾಸ್ತವ ಸಂಗತಿಗಳು ಬೆಳಕಿಗೆ ಬರುತ್ತವೆ. ಶತಮಾನಗಳಿಂದ ನಾಡಿನಲ್ಲಿರುವ ಮನುಷ್ಯರು ಹಾಗೂ ಕಾಡಿನಲ್ಲಿರುವ ಪ್ರಾಣಿಗಳು ಸಹಬಾಳ್ವೆ ನಡೆಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಷ್ಟೇ ಅಲ್ಲ. ಅರಣ್ಯ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡ ಜನರಿಗೂ ಹಾಗೂ ಪ್ರಾಣಿಗಳಿಗೂ ಸಂಘರ್ಷ ನಡೆದ ಉದಾಹರಣೆಗಳು ತುಂಬಾ ವಿರಳ. ಆದರೆ ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿಗಳು ಹಾಗೂ ಮನುಷ್ಯರ ನಡುವೆ ಯಾಕೆ ಸಂಘರ್ಷ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಪರಿಹಾರದ ದಾರಿ ಗೋಚರಿಸಬಹುದು. ವನ್ಯಜೀವಿಗಳ ಜೊತೆಗೆ ಮಾನವನ ಸಂಘರ್ಷದ ಮೂಲವನ್ನು ಕಂಡು ಹಿಡಿಯಲು ಹೊರಟರೆ ಆರೋಪಿಯ ಸಾಲಿನಲ್ಲಿ ಮನುಷ್ಯರೇ ಮೊದಲು ನಿಲ್ಲಬೇಕಾಗುತ್ತದೆ. ಈ ಭೂಮಿ ಮನುಷ್ಯರಿಗೆ ಮಾತ್ರವಲ್ಲ ವಿವಿಧ ಪ್ರಾಣಿಗಳಿಗೂ ಆಸರೆ ನೀಡಿದೆ. ಲಕ್ಷೋಪಲಕ್ಷ ಜೀವ ಜಂತುಗಳು ಇಲ್ಲಿವೆ. ಅವುಗಳಿಂದ ಪರಿಸರಕ್ಕೆ ಯಾವುದೇ ಹಾನಿಯಾಗಿಲ್ಲ. ಸಹ ಜೀವಿಗಳನ್ನು ಅವುಗಳು ದ್ವೇಷಿಸಿಲ್ಲ. ಆದರೆ ಮನುಷ್ಯನ ಸಂಪತ್ತಿನ ದಾಹ ಇಂದಿನ ಈ ಸ್ಥಿತಿಗೆ ಕಾರಣವಾಗಿದೆ. ತಾನು ವಾಸಿಸುವ ಪ್ರದೇಶಕ್ಕೆ ತೃಪ್ತನಾಗದೆ, ಪ್ರಾಣಿಗಳು ವಾಸಿಸುವ ಪ್ರದೇಶಕ್ಕೆ ನುಗ್ಗಿ ಕೃಷಿ, ಮನೆ, ರೆಸಾರ್ಟ್, ಹೋಮ್ ಸ್ಟೇಗಳನ್ನು ಮಾಡಿಕೊಂಡ ಮನುಷ್ಯ ಅವುಗಳ ಸಹಜ ಜೀವನದ ಪ್ರದೇಶವನ್ನು ಆಕ್ರಮಿಸಿರುತ್ತಿರುವುದರಿಂದ ಈ ಘರ್ಷಣೆ ನಡೆಯುತ್ತಿದೆ. ಹುಲಿಗಳಿಗೆ ಅವುಗಳದೇ ಆದ ನಿರ್ದಿಷ್ಟ ಪ್ರದೇಶವಿದೆ. ಆನೆಗಳು ಓಡಾಡಲು ಅವುಗಳದೇ ಆದ ನಿಸರ್ಗ ಸಹಜ ಕಾರಿಡಾರುಗಳಿವೆ. ಈಗ ಇವೆಲ್ಲವನ್ನೂ ಆಕ್ರಮಿಸಿಕೊಂಡ ಮನುಷ್ಯ ಅವುಗಳ ಸಹಜ ಬದುಕಿಗೆ, ನೆಮ್ಮದಿಗೆ ಧಕ್ಕೆ ಉಂಟು ಮಾಡಿದ್ದಾನೆ. ಹೀಗಾಗಿ ಈ ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ನಿತ್ಯದ ಸಂಗತಿಯಾಗಿದೆ. ನಾವು ಇಂಥ ಪ್ರಶ್ನೆಗಳು ಎದುರಾದಾಗ ಮನುಷ್ಯ ಕೇಂದ್ರಿತ ಪರಿಕಲ್ಪನೆಯ ದೃಷ್ಟಿಯಿಂದ ನೋಡುತ್ತೇವೆ. ಆದರೆ ಜೀವ ಕೇಂದ್ರಿತ ದೃಷ್ಟಿಯಿಂದ ಪರಿಹಾರವನ್ನು ಹುಡುಕಲು ಹೊರಟರೆ ದಾರಿ ಕಾಣಬಹುದು. ವನ್ಯಜೀವಿಗಳು ನಾಡಿನ ಜನವಸತಿ ಪ್ರದೇಶಗಳಿಗೆ ಬರುವ ಸಮಸ್ಯೆಗೆ ಇನ್ನೊಂದು ಕಾರಣವೂ ಇದೆ. ಕಾಡಿನಲ್ಲಿ ಅವುಗಳಿಗೆ ಸಾಕಾಗುವಷ್ಟು ಆಹಾರ ಹಾಗೂ ನೀರು ಸಿಗುತ್ತಿಲ್ಲ. ಹೀಗಾಗಿ ಅವುಗಳು ಆಹಾರ ಮತ್ತು ನೀರಿಗಾಗಿ ಜನ ವಸತಿ ಪ್ರದೇಶಗಳಿಗೆ ನುಗ್ಗುತ್ತವೆ. ಜಾಗತೀಕರಣದ ಶಕೆ ಆರಂಭವಾದ ನಂತರ ಮನುಷ್ಯರ ಅಭಿವೃದ್ಧಿಯ ಹೆಸರಿನ ನಾನಾ ಚಟುವಟಿಕೆಗಳು ನಿಧಾನವಾಗಿ ಕಾಡನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿವೆ. ಭೂಗರ್ಭವನ್ನು ಭೇದಿಸಿ ಗಣಿಗಾರಿಕೆ ಮಾಡಿ ಕೋಟ್ಯಂತರ ರೂಪಾಯಿ ಮೊತ್ತದ ಖನಿಜ ಸಂಪತ್ತನ್ನು ದೋಚುವ ಲೂಟಿಕೋರರು ನಮ್ಮ ಶಾಸನ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದನವನ್ನು ತಮ್ಮ ಹಿತಾಸಕ್ತಿಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮನುಷ್ಯರಂತೆ ವನ್ಯ ಜೀವಿಗಳಿಗೆ ಶಾಸನ ಸಭೆಗಳಲ್ಲಿ ಪ್ರತಿನಿಧಿಗಳಿಲ್ಲ. ಅವುಗಳ ಪರವಾಗಿ ವಾದಿಸುವವರಿಲ್ಲ. ಹೀಗಾಗಿ ಪ್ರಾಣಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಮನುಷ್ಯರು ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ಕರ್ನಾಟಕ ಸರಕಾರದ ಅರಣ್ಯ ಇಲಾಖೆ ಇತ್ತೀಚೆಗೆ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ವನ್ಯಜೀವಿಗಳ ಚಟುವಟಿಕೆಗಳನ್ನು ಗಮನಿಸಲು ಅರಣ್ಯದ ಅಂಚಿನಲ್ಲಿರುವ ಹಳ್ಳಿಗಳಲ್ಲಿ ಎಐ ಕ್ಯಾಮರಾ ಹಾಗೂ ಕ್ಯಾಮರಾ ಟ್ರ್ಯಾಪ್ ಅಳವಡಿಸಿ ನಿಗಾ ವಹಿಸಲಾಗುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿ ಗಡಿ ಪ್ರದೇಶದಲ್ಲಿ ಗಸ್ತು ನಡೆಸುವುದು ಕೂಡ ಅರಣ್ಯ ಇಲಾಖೆಯ ಉಪಕ್ರಮವಾಗಿದೆ. ವನ್ಯಜೀವಿಗಳ ಇರುವಿಕೆಯ ಬಗ್ಗೆ ಸ್ಥಳೀಯ ನಾಗರಿಕರಿಗೆ ಮುನ್ನೆಚ್ಚರಿಕೆ ನೀಡುವುದು, ಪ್ರಾಣಿಗಳ ಧ್ವನಿಯನ್ನು ಗುರುತಿಸಿ ಅವುಗಳಂತೆ ಸದ್ದು ಮಾಡಿ ವಾಪಸ್ ಅರಣ್ಯಕ್ಕೆ ಓಡಿಸುವುದು ಇದರ ಉದ್ದೇಶವಾಗಿದೆ. ಆದರೆ ಇದಿಷ್ಟರಿಂದಲೇ ಈ ಸಮಸ್ಯೆ ನಿವಾರಣೆಯಾಗುವುದಿಲ್ಲ. ಈ ಎಲ್ಲ ಕ್ರಮಗಳ ಜೊತೆಗೆ ವನ್ಯಜೀವಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ.ಕಾಡಿನಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಕಾಡಿನ ಒಳಗೆ ಹಲವಾರು ಕಡೆ ಕೆರೆಗಳನ್ನು ನಿರ್ಮಾಣ ಮಾಡಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆದರೆ ಅರಣ್ಯದಲ್ಲಿ ಹಲವಾರು ವರ್ಷಗಳಿಂದ ಬದುಕನ್ನು ಕಟ್ಟಿಕೊಂಡಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಅರಣ್ಯ ಇಲಾಖೆಯ ಯೋಜನೆ ಅಷ್ಟೊಂದು ಪ್ರಯೋಜನಕಾರಿಯಾದುದಲ್ಲ. ಕಾಡಿನಲ್ಲೇ ಜನಿಸಿ, ಅಲ್ಲೇ ಬದುಕನ್ನು ಕಟ್ಟಿಕೊಂಡ ಜನರನ್ನು ಬಲವಂತವಾಗಿ ಹೊರಗೆ ಹಾಕಿದರೆ ಅವರು ಬೇರೆಡೆಗೆ ಹೋಗಿ ಬದುಕನ್ನು ಕಟ್ಟಿಕೊಳ್ಳುವುದು ಸುಲಭದ ಸಂಗತಿಯಲ್ಲ. ಸರಕಾರ ಕೊಡಬಹುದಾದ ಪರಿಹಾರ ಅವರಿಗೆ ನೆಮ್ಮದಿ ತರುವುದಿಲ್ಲ. ಅದರ ಬದಲಿಗೆ ಅರಣ್ಯ ಪ್ರದೇಶದಲ್ಲೇ ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಈ ಭೂಮಿ ಕೇವಲ ಮನುಷ್ಯರಿಗೆ ಸೇರಿದ್ದಲ್ಲ. ಇದರ ಮೇಲೆ ಆನೆ, ಹುಲಿ, ಚಿರತೆಗಳು ಸೇರಿ ಸಕಲ ಪ್ರಾಣಿ, ಪಕ್ಷಿಗಳಿಗೂ ಹಕ್ಕಿದೆ ಎಂಬುದನ್ನು ಮರೆಯಬಾರದು. ಪ್ರಾಣಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ. ಕಾರಣ ಈ ಸಮಸ್ಯೆಗೆ ಮಾನವೀಯ ಪರಿಹಾರೋಪಾಯಗಳನ್ನು ರೂಪಿಸಬೇಕಾಗಿದೆ. ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಹೆಸರಿನ ವಿನಾಶಕಾರಿ ಕಾರ್ಯಗಳಿಂದಾಗಿ ಪ್ರಾಣಿ ಪಕ್ಷಿಗಳಿಗೆ ಮಾತ್ರವಲ್ಲ ಸಕಲ ಜೀವಿಗಳಿಗೂ ಭೂಮಿ ಅಸಹನೀಯವಾಗತೊಡಗಿದೆ. ಕಾಡಿನಲ್ಲಿ ಇರುವವರನ್ನು ಅಲ್ಲಿಂದ ಎತ್ತಂಗಡಿ ಮಾಡಿಸದೆ ಅವರನ್ನೂ ಒಳಗೊಂಡು ಈ ಅತ್ಯಂತ ಜಟಿಲ ಹಾಗೂ ಸೂಕ್ಷ್ಮ ಪ್ರಶ್ನೆಯನ್ನು ವೈಜ್ಞಾನಿಕವಾಗಿ ಪರಿಹರಿಸುವ ದಿಕ್ಕಿನಲ್ಲಿ ಚಿಂತನೆ ನಡೆಯಬೇಕಾಗಿದೆ. ಇನ್ನೊಂದೆಡೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇನ್ನೊಂದು ಸಮಸ್ಯೆಗೆ ದಾರಿ ಮಾಡಿಕೊಟ್ಟಂತಾಗಿದೆ. ಇಂಥ ಸಂದರ್ಭಗಳಲ್ಲಿ ಹೆಚ್ಚಾಗಿರುವ ಹುಲಿಗಳನ್ನು ಬೇರೆ ಪ್ರದೇಶಗಳಿಗೆ, ರಾಜ್ಯಗಳಿಗೆ ಸ್ಥಳಾಂತರ ಮಾಡುವುದು ಸೂಕ್ತವಾದ ಕ್ರಮವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕಾಗಿದೆ. ನಮ್ಮ ಅರಣ್ಯ ಪ್ರದೇಶಗಳನ್ನು ರೆಸಾರ್ಟ್, ಹೋಮ್ ಸ್ಟೇ, ಅಕ್ರಮ ಗಣಿಗಾರಿಕೆ ಹಾಗೂ ಇತರ ಚಟುವಟಿಕೆಗಳಿಂದ ಮುಕ್ತಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಸಫಾರಿಯನ್ನು ಸ್ಥಗಿತಗೊಳಿಸಿರುವುದು ಸೂಕ್ತ ಕ್ರಮವಾಗಿದೆ. ವನ್ಯಜೀವಿಗಳು ಅವುಗಳಷ್ಟಕ್ಕೆ ಬದುಕಲು ಸರಕಾರ ಅವಕಾಶ ನೀಡಲಿ.

ವಾರ್ತಾ ಭಾರತಿ 13 Jan 2026 8:30 am

ಜಾಗತಿಕ ಯುದ್ಧಕ್ಕೆ ತಳ್ಳುತ್ತಿರುವವರು ಯಾರು?

ಜಗತ್ತು ಜಾಗತಿಕ ಯುದ್ಧದ ಹೊಸ್ತಿಲಲ್ಲಿದೆ. ವೆನೆಝುವೆಲಾದ ಮೇಲೆ ಅಂತರ್‌ರಾಷ್ಟ್ರೀಯ ಒಪ್ಪಂದಗಳು, ವಿಶ್ವ ಸಂಸ್ಥೆಯ ನಿಯಮಗಳು, ಅಂತರ್‌ರಾಷ್ಟ್ರೀಯ ನಿಯಮಗಳು...ಎಲ್ಲವನ್ನೂ ಉಲ್ಲಂಘಿಸುತ್ತಾ ದಿಗ್ಬಂಧನಗಳು, ಸೇನಾತ್ಮಕ ಸುತ್ತುವರಿಯುವಿಕೆಗಳು, ಬೆದರಿಕೆಗಳನ್ನೆಲ್ಲಾ ಮಾಡುತ್ತಾ ಅತಿಕ್ರಮಣ ಮಾಡಿದ್ದಲ್ಲದೇ ಅಧ್ಯಕ್ಷ ಮಡುರೊ ಹಾಗೂ ಅವರ ಬಾಳ ಸಂಗಾತಿಯನ್ನು ಅಪಹರಿಸಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿ ನ್ಯಾಯವಿಚಾರಣೆಯ ಹೆಸರಿನಲ್ಲಿ ಬಂಧನದಲ್ಲಿಟ್ಟಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಮೊನ್ನೆ ರಶ್ಯದ ಧ್ವಜವಿದ್ದ ತೈಲ ಹಡಗುಗಳನ್ನು ಅಂತರ್‌ರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ಅಮೆರಿಕ ವಶಪಡಿಸಿಕೊಂಡಿದೆ. ಅವುಗಳ ಮೇಲೆ ಬಹಳ ಹಿಂದೆಯೇ ಅಮೆರಿಕ ನಿರ್ಬಂಧ ಹೇರಿತ್ತು. ಆ ತೈಲ ಟ್ಯಾಂಕರುಗಳುಳ್ಳ ಹಡಗುಗಳು ವೆನೆಝುವೆಲಾಗೆ ಸೇರಿದ್ದು, ವೆನೆಝುವೆಲಾ ತನ್ನ ಸುಪರ್ದಿಯಲ್ಲಿಯೇ ತೈಲ ಮಾರಾಟ ಮಾಡಬೇಕು... ತನಗೇ ವೆನೆಝುವೆಲಾದ ತೈಲ ಮಾರಬೇಕು.. ಇತ್ಯಾದಿ ಸಮರ್ಥನೆಗಳನ್ನು ತನ್ನ ಈ ಕೃತ್ಯಗಳಿಗೆ ನೀಡುತ್ತಿದೆ. ಇದನ್ನು ರಶ್ಯ ಹಾಗೂ ಚೀನಾ ತೀವ್ರವಾಗಿ ವಿರೋಧಿಸಿವೆ. ರಶ್ಯ ತನ್ನ ನೌಕಾಪಡೆಗಳನ್ನು ಅಂತರ್‌ರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ನಿಯೋಜಿಸುತ್ತಿದೆ. ಚೀನಾ ಕೂಡ ಸೇನಾತ್ಮಕ ಕ್ರಮಗಳಿಗೆ ಮುಂದಾಗುವ ಸೂಚನೆಗಳಿವೆ. ಈ ಎಲ್ಲಾ ಬೆಳವಣಿಗೆಗಳಿಗೆ ಟ್ರಂಪ್ ಮಾತ್ರ ಕಾರಣವೆಂಬ ವಿಶ್ಲೇಷಣೆಗಳೇ ಹೆಚ್ಚಾಗಿ ಬರುತ್ತಿವೆ. ರಶ್ಯ, ಚೀನಾಗಳು ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಅಮೆರಿಕದ ನಡೆಗಳಿಗೆ ಆರ್ಥಿಕವಾಗಿ ಮಾತ್ರವಲ್ಲದೇ ಸೇನಾತ್ಮಕ ತಡೆಗಳನ್ನು ಒಡ್ಡಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ಅಮೆರಿಕ ಆಳುವ ವರ್ಗವಾದ ಭಾರೀ ಕಾರ್ಪೊರೇಟುಗಳಿಗೆ ಜಾಗತಿಕ ಲೂಟಿಗೆ ಹಲವಾರು ಅಡೆತಡೆಗಳು ಬಲವಾಗುತ್ತಾ ಹೋಗುತ್ತಿವೆ. ಅಮೆರಿಕ ಕೂಟದ ಜಾಗತಿಕ ಹಿಡಿತಗಳೂ ದಿನೇ ದಿನೇ ಕ್ಷಯಿಸುತ್ತಾ ಹೋಗುತ್ತಿವೆ. ಡಾಲರಿನ ಹಿಡಿತ ಅಂತರ್‌ರಾಷ್ಟ್ರೀಯ ಆರ್ಥಿಕ ವ್ಯವಹಾರಗಳಲ್ಲಿ ಕುಸಿಯುತ್ತಾ ಚೀನಾದ ಯುವಾನ್, ರಶ್ಯದ ರೂಬಲ್, ಜಪಾನಿನ ಯೆನ್, ಯೂರೋಪಿನ ಯೂರೋಗಳಂತಹ ಕರೆನ್ಸಿ ವ್ಯವಸ್ಥೆಗಳು ಜಾಗತಿಕ ಮಾರುಕಟ್ಟೆಯನ್ನು ವ್ಯಾಪಿಸತೊಡಗಿವೆ. ಇಂಡಿಯಾದ ರೂಪಾಯಿ ಕೂಡ ಜಾಗತಿಕ ಕರೆನ್ಸಿಯಾಗಿ ಘೋಷಿತವಾಗಿದೆ. ಇನ್ನೊಂದೆಡೆ ಡಾಲರಿನೆದುರು ಇಂಡಿಯಾದ ರೂಪಾಯಿ ಮೌಲ್ಯ ಹಿಂದೆಂದೂ ಇಲ್ಲದಷ್ಟು ಕುಸಿತ ಕಾಣುತ್ತಾ ಹೋಗುತ್ತಿದೆ. ಇದು ಬೇರೊಂದು ವಿಚಾರ. ಅಮೆರಿಕದಲ್ಲಿ ಬಡತನದ ಮಟ್ಟ, ನಿರುದ್ಯೋಗಮಟ್ಟ, ವಸತಿಹೀನತೆ, ತಲಾದಾಯ ಮಟ್ಟ ಭಾರೀ ಕುಸಿತದಲ್ಲಿ ಸಾಗುತ್ತಿದೆ. ಅಮೆರಿಕದ ಆರ್ಥಿಕ ಬೆಳವಣಿಗೆ ಶೇ. 2ನ್ನು ಮೀರದೇ ಬಹಳ ವರ್ಷಗಳಾಗಿವೆ. ಆದರೆ ಅಮೆರಿಕ ಜಿಡಿಪಿ ದರ ಕಳೆದ ವರ್ಷ ಶೇ. 4.3 ಎಂದು ಹೇಳಿಕೊಂಡಿದೆ. ಆದರೆ ಜಿಡಿಪಿ ಬೆಳವಣಿಗೆ ಸರಾಸರಿ ಜನರ ಆದಾಯವನ್ನು ಪ್ರತಿನಿಧಿಸುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಅಮೆರಿಕದ ಕೆಲವೇ ಭಾರೀ ಕಾರ್ಪೊರೇಟುಗಳು ಹೆಚ್ಚು ಹೆಚ್ಚು ಏಕಸ್ವಾಮ್ಯವಾಗುತ್ತಾ ಅಮೆರಿಕ ಆಸ್ತಿ ಹಾಗೂ ಆದಾಯಗಳನ್ನು ನಿಯಂತ್ರಿಸತೊಡಗಿವೆ. ಅದರಲ್ಲಿ ಎಲಾನ್ ಮಸ್ಕ್‌ನ ಆರ್ಥಿಕ ಸಾಮ್ರಾಜ್ಯ ಕೂಡ ಒಂದು. ವೆನೆಝುವೆಲಾದ ಮೇಲಿನ ಅತಿಕ್ರಮಣಗಳನ್ನು ಎಲಾನ್ ಮಸ್ಕ್ ಬಹಿರಂಗವಾಗಿಯೇ ಸಮರ್ಥಿಸಿ ತನ್ನ ಸ್ಟಾರ್ ಲಿಂಕ್ಸ್ ಉಪಗ್ರಹ ಆಧಾರಿತ ಅಂತರ್ಜಾಲವನ್ನು ವೆನೆಝುವೆಲಾಕ್ಕೆ ವಿಸ್ತರಿಸುವ ಮಾತನಾಡಿರುವುದನ್ನು ನಾವಿಲ್ಲಿ ಗಮನಿಸಬಹುದು. ಅಮೆರಿಕದ ಭಾರೀ ಜಾಗತಿಕ ಕಾರ್ಪೊರೇಟುಗಳು ಚುನಾವಣೆಯನ್ನು ನಿರ್ವಹಿಸಿ ಸ್ವತಹ ಕಾರ್ಪೊರೇಟಾಗಿರುವ ಡೊನಾಲ್ಡ್ ಟ್ರಂಪ್‌ರನ್ನು ಮತ್ತೆ ಅಧಿಕಾರಕ್ಕೆ ತಂದಿರುವುದು ಎಂಬುದನ್ನು ನಾವಿಲ್ಲಿ ಗ್ರಹಿಸಬೇಕು. ಟ್ರಂಪ್ ಅಮೆರಿಕದ ಜನಸಾಮಾನ್ಯರನ್ನು ಯಾಮಾರಿಸುವ ‘‘ಇನ್ನು ಮುಂದೆ ಯುದ್ಧಕ್ಕಿಳಿಯುವುದಿಲ್ಲ....’’, ‘‘ಅಮೆರಿಕ ಅಮೆರಿಕದವರಿಗಾಗಿ....’’, ಅಮೆರಿಕ ಇನ್ನು ಮುಂದೆ ವಿಶ್ವದ ಪೊಲೀಸ್ ಕೆಲಸ ಮಾಡುವುದಿಲ್ಲ....’’ ಹೀಗೆಲ್ಲಾ ಎರಡಲುಗಿನ ಕತ್ತಿಯ ತರಹದ ಭರವಸೆಗಳನ್ನು ತನ್ನ ಚುನಾವಣಾ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದರು. ಯುದ್ಧ ಹಾಗೂ ಜಾಗತಿಕವಾಗಿ ನೇರ ಹಾಗೂ ಅಪ್ರತ್ಯಕ್ಷ ಸೇನಾತ್ಮಕ ತೊಡಗುವಿಕೆಗಳು ಅಮೆರಿಕದ ಭಾರೀ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನಿವಾರ್ಯವಾಗಿದೆ ಎಂಬುದು ಸಾಬೀತಾಗುತ್ತಲೇ ಬರುತ್ತಿದೆ. ಹಾಗಾಗಿ ಅಮೆರಿಕದ ಆಳುವ ವರ್ಗದ ಹಿತಾಸಕ್ತಿ ಮೇಲಾಟಗಳಿಗಾಗಿ ನಡೆಯುತ್ತಿರುವ ಈ ಎಲ್ಲಾ ಘರ್ಷಣೆಗಳು ಜಾಗತಿಕ ಯುದ್ಧದತ್ತ ಅಮೆರಿಕವನ್ನು ಎಳೆದುಕೊಂಡು ಹೋಗುತ್ತಿದೆ. ಅವರುಗಳೇ ರೂಪಿಸಿಕೊಂಡಿದ್ದ ಜಾಗತಿಕ ವ್ಯವಸ್ಥೆಯನ್ನು ಅವರುಗಳೇ ಉಲ್ಲಂಘಿಸಬೇಕಾದಂತಹ ಬಿಕ್ಕಟ್ಟು ಅವರದಾಗಿದೆ. ಇವೆಲ್ಲಾ ಅಮೆರಿಕದ ಜನಸಾಮಾನ್ಯರನ್ನೂ ಸೇರಿದಂತೆ ಜಾಗತಿಕ ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತದೆ. ಜಗತ್ತನ್ನು ಭಾರೀ ಅಪಾಯಗಳಿಗೆ ದೂಡುತ್ತಿದೆ. ಅಮೆರಿಕ ಆಳುವ ವರ್ಗದ ಈ ಎಲ್ಲಾ ದುರಾಕ್ರಮಣಕಾರಿ ನಡೆಗಳನ್ನು ತಡೆಯುವಲ್ಲಿ ಅಲ್ಲಿನ ಜನಸಾಮಾನ್ಯರ ಕರ್ತವ್ಯ ಹೆಚ್ಚಾಗಿದೆ. ಅಮೆರಿಕದ ಆಳುವ ವರ್ಗದ ಇಂತಹ ಜಾಗತಿಕ ವಿರೋಧಿ ನಡೆಗಳ ವಿರುದ್ಧ ಜಾಗತಿಕ ಜನಸಾಮಾನ್ಯರು ಒಗ್ಗೂಡಿ ನಿಲ್ಲುವ ಕರ್ತವ್ಯವೂ ಇದೆ. ಇಂಡಿಯಾದ ಜನಸಾಮಾನ್ಯರು ಇಂಡಿಯಾ ಸರಕಾರ ಅಮೆರಿಕದ ಆಳುವ ವರ್ಗದ ನಡೆಗಳನ್ನು ಸ್ಪಷ್ಟವಾಗಿ ಖಂಡಿಸದೆ ಅಮೆರಿಕದ ಪರವಾಗಿ ವರ್ತಿಸುವುದನ್ನು ವಿರೋಧಿಸಬೇಕು. ಹಾಗೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಡಿಯಾದ ಸರಕಾರವನ್ನು ತನ್ನ ಅಡಿಯಾಳಂತೆ ಪದೇ ಪದೇ ಬಿಂಬಿಸುತ್ತಿರುವುದನ್ನು ಖಂಡಿಸುವಂತೆ ಜನಸಾಮಾನ್ಯರು ಒಗ್ಗೂಡಿ ಒತ್ತಾಯ ಹೇರಬೇಕು.

ವಾರ್ತಾ ಭಾರತಿ 10 Jan 2026 12:32 pm

ಕುಂದಾಪುರ, ಸಿದ್ದಾಪುರಗಳಲ್ಲಿ ಸತತ ಅಗ್ನಿ ದುರಂತಗಳು | ನಗರದಲ್ಲಿ ಅಗ್ನಿಶಾಮಕ ವಾಹನಗಳ ಅಗತ್ಯ: ಚರ್ಚೆ ಮುನ್ನೆಲೆಗೆ

ಕುಂದಾಪುರ : ಒಂದು ವಾರದಲ್ಲಿ ಕುಂದಾಪುರ ಮತ್ತು ಸಿದ್ದಾಪುರಗಳಲ್ಲಿ ಸಂಭವಿಸಿದ ಎರಡು ಭೀಕರ ಅಗ್ನಿ ದುರಂತಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಬೂದಿಯಾದ ಬಳಿಕ ಇಂಥ ಆಕಸ್ಮಿಕ ಅಗ್ನಿ ಅವಘಡಗಳ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಹಾಗೂ ಸುಲಭದಲ್ಲಿ ಲಭ್ಯವಾಗಬೇಕಿರುವ ಅಗ್ನಿ ಶಾಮಕ ವಾಹನಗಳ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಪ್ರಸಕ್ತ ಕುಂದಾಪುರದ ಅಗ್ನಿಶಾಮಕ ದಳ ಕಚೇರಿ ನಗರದ ಹೊರವಲಯ ವಾದ ಕೋಣೆಯಲ್ಲಿದ್ದು ಆಕಸ್ಮಿಕ ಅಗ್ನಿ ಅವಘಡಗಳ ಸಂದರ್ಭಗಳಲ್ಲಿ ತುರ್ತು ಸೇವೆಗೆ ಅನುಕೂಲವಾಗಲು ಕುಂದಾಪುರ ನಗರ ಕೇಂದ್ರದಲ್ಲಿ ಅಗ್ನಿ ಶಾಮಕ ವಾಹನ ನಿಲ್ಲಲು ವ್ಯವಸ್ಥೆ ಮಾಡಿಕೊಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಮುಂಚೂಣಿಗೆ ಬಂದಿದೆ. ಡಿ.29ರ ಬೆಳಗಿನ ಜಾವ ಕುಂದಾಪುರದ ಕೇಂದ್ರವಾದ ರಥಬೀದಿಯಲ್ಲಿ ನಡೆದ ಬಾರೀ ಅಗ್ನಿ ಅನಾಹುತ ನಾಲ್ಕಾರು ಅಂಗಡಿಗಳನ್ನು ಸುಟ್ಟು ಭಸ್ಮ ಮಾಡಿದ್ದಲ್ಲದೆ, ಕೋಟ್ಯಂತರ ರೂ.ಗಳ ಹಾನಿ ಸಂಭವಿಸಿದೆ. 20 ವರ್ಷಗಳಲ್ಲಿ ಇಂತಹ ಘೋರ ದುರಂತ ಕಂಡಿಲ್ಲ ಎಂಬುದು ನಗರದ ಹಳೆ ತಲೆಮಾರಿನ ಹಲವರ ಅಭಿಪ್ರಾಯವಾಗಿದೆ. ಇದಾದ ಎರಡು ದಿನಗಳ ಬಳಿಕ ಸಿದ್ದಾಪುರದ ಜನ್ಸಾಲೆಯ ತೆಂಗಿನ ಎಣ್ಣೆಮಿಲ್ ನಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಡೀ ಮಿಲ್ ಸುಟ್ಟು ಹೋಗಿದ್ದು, ಐದು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಮಾಹಿತಿ ಇದೆ. ಇದಲ್ಲದೆ ಕೆಲ ದಿನಗಳ ಹಿಂದೆ ಕೋಟೇಶ್ವರ ಗ್ರಾಪಂ ಬಳಿ ಎಸ್ ಎಲ್‌ಆರ್‌ಎಂ ಘಟಕದಲ್ಲೂ ಇದೇ ರೀತಿ ಬೆಂಕಿ ಅವಘಡ ಸಂಭವಿಸಿತ್ತು. ಕಳೆದ ವರ್ಷ ಗಂಗೊಳ್ಳಿಯಲ್ಲಿ ಬೋಟ್ ಅಗ್ನಿ ದುರಂತ, ಒಂದಷ್ಟು ವರ್ಷಗಳ ಹಿಂದೆ ಕುಂದಾಪುರ ನಗರದೊಳಗೆ ಮುಖ್ಯರಸ್ತೆಯಲ್ಲಿದ್ದ ಬೃಹತ್ ವಾಣಿಜ್ಯ ಮಳಿಗೆಗೆ ಬಿದ್ದ ಬೆಂಕಿ ಅನಾಹುತಗಳು ದೊಡ್ಡ ಮಟ್ಟದಲ್ಲಿ ದುರಂತವನ್ನು ಸೃಷ್ಟಿಸಿ ಅಪಾರ ನಷ್ಟಕ್ಕೆ ಕಾರಣವಾಗಿದ್ದವು. ಆಗ್ಗಾಗೆ ನದಿ-ಸಮುದ್ರಗಳಲ್ಲಿ ನಡೆಯುವ ದೋಣಿ ದುರಂತ, ಮಾನವ ಜೀವ ಹಾನಿ ಮೊದಲಾದ ಅವಘಡಗಳ ವೇಳೆ ಆ ಸಮಯಕ್ಕೆ ಅಗತ್ಯವಾಗಿ ಬೇಕಾದ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಅಲಭ್ಯತೆ ಹಲವಷ್ಟು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿವೆ. ನಗರದಿಂದ ಬಹುದೂರ!  ಪ್ರಸಕ್ತ ಕುಂದಾಪುರದ ಅಗ್ನಿ ಶಾಮಕ ಠಾಣೆಯಿರುವುದು ಕುಂದಾಪುರ ಪೇಟೆಯಿಂದ ನಾಲ್ಕಾರು ಕಿ.ಮೀ. ದೂರದ ಕೋಣಿ ಎಂಬಲ್ಲಿ ಇಲ್ಲಿಂದ ಮುಖ್ಯ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ಇಕ್ಕಟ್ಟಾದ ಹಾಗೂ ಜನನಿಬಿಡ, ವಾಹನ ನಿಬಿಡ ರಸ್ತೆ ಅಡ್ಡಿ ಯಾಗುತ್ತಿದೆ. ಕೋಣಿಯಿಂದ ಕಟ್ಕೆರೆ ಮೂಲಕ ಸಾಗಿ ಕೋಟೇಶ್ವರಕ್ಕೆ ಬರುವ ರಸ್ತೆ ಹೊಂಡಗುಂಡಿಗಳಿಂದ ಕೂಡಿದೆ. ಠಾಣೆಯಿಂದ ಅನತಿ ದೂರದಲ್ಲಿರುವ ಕುಂದಾ ಪುರ- ಸಿದ್ದಾಪುರ ರಾಜ್ಯ ಹೆದ್ದಾರಿ ಕೂಡ ಹೆಸರಿಗೆ ಹೆದ್ದಾರಿಯಾಗಿದ್ದು, ಬಹಳಷ್ಟು ಒತ್ತಡದ ಹಾಗೂ ಇಕ್ಕಾಟದ ರಸ್ತೆಯಾಗಿದೆ. ಅಗ್ನಿಶಾಮಕ ವಾಹನ ಬರಲು ವಿಳಂಬವಾಗುವುದನ್ನು ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಒಂದಾದರೂ ವಾಹನ ತುರ್ತು ಅವಶ್ಯಕ್ಕೆ ದೊರೆತಲ್ಲಿ ಕೋಟೇಶ್ವರ ಕುಂದಾಪುರ ನಗರಗಳ ನಡುವೆ ಸಂಭವಿಸುವ ಅಗ್ನಿದುರಂತದ ತುರ್ತು ಶಮನಕ್ಕೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಗೂ ಜನಪ್ರತಿನಿಧಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 4 Jan 2026 2:58 pm

ಇದು ಭಾಗ್ಯ, ಇದು ಭಾಗ್ಯ, ಇದು ‘ಬಿಟ್ಟಿ ಭಾಗ್ಯ’ವಯ್ಯ!

ದೇಶದಲ್ಲಿ ಶೇ. 60-70 ಇರುವ ಬಡ ಮತ್ತು ಮಧ್ಯಮ ವರ್ಗದ ಜನಸಮುದಾಯಗಳಿಗೆ ಯಾವುದೇ ಸರಕಾರಿ ಸವಲತ್ತು, ಸಬ್ಸಿಡಿ ನೀಡಿದಾಗ ಅದು ‘ಬಿಟ್ಟಿ ಭಾಗ್ಯ’ ಎಂದು ಹೀಗಳೆಯುವವರಿಗೆ, ಹೀಗೆ ಬಲಾಢ್ಯ ಕಾರ್ಪೊರೇಟ್‌ಗಳ ಲಾಬಿಯ ಒತ್ತಡಕ್ಕೆ ಮಣಿದು, ಸರಕಾರಗಳು ಮಂಡಿಯೂರಿ ಸಬ್ಸಿಡಿ ನೀಡುವುದು/ಮುಂದುವರಿಸುವುದು ಏನನ್ನಿಸುತ್ತದೆ? ಭಾರತ ಸರಕಾರವು ದೇಶದ ಒಳಗೆ ಉತ್ಪಾದನೆ ಹೆಚ್ಚಳ ಹಾಗೂ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಆರಂಭಿಸಿದ ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆಯ ಕುರಿತು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಂ ರಾಜನ್ ಅವರು 2023ರಲ್ಲಿ ನೀಡಿದ ಕಾರ್ಣಿಕದ ‘ನುಡಿ’ಯೊಂದು ಈಗ ಅವರ ಮುಂಗಾಣ್ಕೆ ಎಷ್ಟು ನಿಖರವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತಿದೆ. 2021-22ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರಕಾರವು 14 ಕ್ಷೇತ್ರಗಳಿಗೆ 1.97 ಲಕ್ಷ ಕೋಟಿ ರೂ.ಗಳ ಗಾತ್ರದ ಪಿಎಲ್‌ಐ ಸಬ್ಸಿಡಿಯನ್ನು ಒದಗಿಸಲು ಬಜೆಟರಿ ಅನುದಾನವನ್ನು ಪ್ರಕಟಿಸಿತ್ತು. ಈ ಯೋಜನೆಯಡಿ ಭಾರತದಲ್ಲಿ ಉತ್ಪಾದನೆ ಆದ ಸರಕುಗಳಿಗೆ ಶೇ. 4-6 ಪ್ರೋತ್ಸಾಹಧನ ಸಿಗುತ್ತದೆ. (ಗಮನಿಸಿ: ಈ ಬಗ್ಗೆ 23 ಸೆಪ್ಟಂಬರ್, 2023ರಂದು ಪ್ರಕಟಗೊಂಡ ಪಿಟ್ಕಾಯಣದಲ್ಲಿ ವಿವರವಾಗಿ ಹೇಳಲಾಗಿದೆ.) ಈ ಯೋಜನೆಯ ಸ್ವರೂಪದ ಬಗ್ಗೆ 2023ರಲ್ಲಿ ಟೀಕೆ ಮಾಡಿದ್ದ ರಘುರಾಂ ರಾಜನ್ ಅವರು, ಮೊಬೈಲ್ ಫೋನಿನ ಪ್ರಮುಖ ಬಿಡಿಭಾಗಗಳಾದ PCBA, ಡಿಸ್‌ಪ್ಲೇ, ಕ್ಯಾಮರಾ, ಬ್ಯಾಟರಿ, ಸೆಮಿಕಂಡಕ್ಟರ್... ಇವು ಯಾವುವೂ ಭಾರತದಲ್ಲಿ ಉತ್ಪಾದನೆ ಆಗುವುದಿಲ್ಲ. ಇಲ್ಲಿ ಏನಿದ್ದರೂ ಅವುಗಳ ಅಸೆಂಬ್ಲಿ-ಫಿನಿಷಿಂಗ್-ಟೆಸ್ಟಿಂಗ್ ನಡೆಯುತ್ತದೆ. ಅಂತಿಮವಾಗಿ ಒಂದು ಮೊಬೈಲ್ ಫೋನಿನ ಉತ್ಪಾದನಾ ವೆಚ್ಚದ ಮೇಲೆ ಇಲ್ಲಿ ನಡೆಯುವ ವ್ಯಾಲ್ಯೂ ಎಡಿಷನ್ ಕೇವಲ ಶೇ. 4 ಮಾತ್ರ. ಅದಕ್ಕೆ ಶೇ. 4-6 ಸಬ್ಸಿಡಿಯನ್ನು ಸರಕಾರ ನೀಡುವುದಿದ್ದರೆ, ಯಾರು ತಾನೇ ಬೇಡ ಎನ್ನುತ್ತಾರೆ? ಇವು ಆರಂಭದಲ್ಲಿ ಸ್ವಲ್ಪ ಉದ್ಯೋಗ ಸೃಷ್ಟಿ ಮಾಡಬಹುದಾದರೂ, ಕೌಶಲ ವೃದ್ಧಿ ಮಾಡುವುದಿಲ್ಲ. ಅಂತಿಮವಾಗಿ ಐದು ವರ್ಷ ಮುಗಿಯುವ ಹೊತ್ತಿಗೆ ಅಕಸ್ಮಾತ್ ಪಿಎಲ್‌ಐ ನಿಲ್ಲಿಸಿದರೆ, ಈ ಕಂಪೆನಿಗಳು ಇಲ್ಲಿಯೇ ಮುಂದುವರಿಯುವ ಗ್ಯಾರಂಟಿಯೂ ಇಲ್ಲ. ಇದು ಸಮಸ್ಯೆಯ ಒಂದು ಮುಖವಾದರೆ, ಇನ್ನೊಂದೆಡೆ ಬಿಡಿ ಭಾಗಗಳ ಆಮದು ಪ್ರಮಾಣ ತೀವ್ರವಾಗಿ ಹೆಚ್ಚಲಿದ್ದು, ಇದು ನಮ್ಮ ಆಮದು-ರಫ್ತು ಅಸಮತೋಲನಕ್ಕೆ ಕಾರಣ ಆಗಬಹುದು ಎಂದೆಲ್ಲ ವಿವರಿಸಿದ್ದರು. ರಘುರಾಂ ರಾಜನ್ ಅವರು ಹೇಳಿದ ಮಾತುಗಳು ಇಂದು ಬಹುತೇಕ ಸತ್ಯವಾಗುವ ಹಂತದಲ್ಲಿ ಇವೆ. ಪಿಎಲ್‌ಐ ಯೋಜನೆಯ ಉದ್ದೇಶಿತ ಐದು ವರ್ಷಗಳು 2025-26ಕ್ಕೆ ಪೂರ್ಣಗೊಳ್ಳಲಿದ್ದು, ಆ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಕಳೆದ ವಾರ ಬ್ಯುಸಿನೆಸ್ ಲೈನ್ ಪತ್ರಿಕೆಯು ಸ್ಮಾರ್ಟ್‌ಫೋನ್ ಉದ್ಯಮದ ಮೂಲಗಳನ್ನು ಆಧರಿಸಿ, ಕೆಲವು ಬೆಳವಣಿಗೆಗಳನ್ನು ವರದಿ ಮಾಡಿತ್ತು. ಆ ವರದಿಯ ಪ್ರಕಾರ, ಬೃಹತ್ ಇಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರಕ್ಕೆ ನೀಡಲಾಗಿರುವ ಪಿಎಲ್‌ಐ ಸಬ್ಸಿಡಿ ಯೋಜನೆ ಇನ್ನು ಮೂರು ತಿಂಗಳಲ್ಲಿ ಅಂತ್ಯಕಾಣಲಿದ್ದು, ಸರಕಾರದ ಕಡೆಯಿಂದ ಆ ಯೋಜನೆಯನ್ನು ಮುಂದುವರಿಸುವ ಯಾವುದೇ ಸೂಚನೆ ಇಲ್ಲಿಯ ತನಕ ಬಂದಿಲ್ಲ. ಹಾಗಾಗಿ ಮೊಬೈಲ್ ಫೋನ್ ಉದ್ಯಮ ವಲಯ ಕಳವಳಗೊಂಡಿದೆ. ಸರಕಾರ ಒಂದೋ ಪಿಎಲ್‌ಐ ಅನ್ನು ವಿಸ್ತರಿಸಬೇಕು ಇಲ್ಲವೇ ಅಂತಹದೇ ಬೇರೆ ಬೆಂಬಲ ಮೆಕ್ಯಾನಿಸಂ ಒಂದನ್ನು ಯೋಜಿಸಿ ಪ್ರಕಟಿಸಬೇಕು. ಈಗಿರುವ ವೇಗದಲ್ಲಿ ಬೆಳವಣಿಗೆಯನ್ನು ಉಳಿಸಿಕೊಳ್ಳಲು, ಈ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಸಿಗಬೇಕಾದುದು ಅಗತ್ಯ ಎಂದು ಮೊಬೈಲ್ ಫೋನ್ ಇಂಡಸ್ಟ್ರಿ ಮೂಲಗಳು ಹೇಳಿವೆ. 2030ರ ಒಳಗಡೆ ಉದ್ದೇಶಿತ 45 ಲಕ್ಷ ಕೋಟಿ ರೂ.ಗಳ ಮಾರಾಟದ ಗುರಿಯನ್ನು ಸಾಧಿಸಬೇಕಿದ್ದರೆ, ಪಿಎಲ್‌ಐ ಬೆಂಬಲ ಉದ್ಯಮಕ್ಕೆ ಅನಿವಾರ್ಯ. 2025ರ ಹೊತ್ತಿಗೆ ಈ ಉದ್ಯಮ 1.61ಲಕ್ಷ ಕೋಟಿ ರೂ.ಗಳ ಹೂಡಿಕೆ ಭರವಸೆಯನ್ನು ಭಾರತಕ್ಕೆ ತಂದಿದೆಯಲ್ಲದೇ ಈಗಾಗಲೇ 1.76 ಲಕ್ಷ ಕೋಟಿ ರೂ.ಗಳ ಹೂಡಿಕೆ ಆಗಿದೆ. ಮೊಬೈಲ್ ಫೋನ್ ಒಂದೇ ಕ್ಷೇತ್ರದಲ್ಲಿ, 5.45 ಲಕ್ಷ ಕೋಟಿ ರೂ.ಗಳ ಉತ್ಪಾದನೆ ಸಾಧಿಸಲಾಗಿದೆ. ಫಾಕ್ಸ್‌ಕಾನ್, ಪೆಗಾಟ್ರಾನ್‌ನಂತಹ ಪ್ರಮುಖ ಆ್ಯಪಲ್ ಫೋನ್ ಬಿಡಿಭಾಗಗಳ ಸರಬರಾಜುದಾರರು ಭಾರತದಲ್ಲಿ ಅಂಗಡಿ ತೆರೆದಿದ್ದಾರೆ. ಮೊಬೈಲ್ ಫೋನ್ ಉತ್ಪಾದಕರಿಗೆ ಪಿಎಲ್‌ಐ ಮಾತ್ರವಲ್ಲದೇ ತೆರಿಗೆ ರಜೆ, ಕಡಿಮೆ ಬೆಲೆಗೆ ಭೂಮಿಯಂತಹ ಹಲವು ಬೇರೆ ಭಾಗ್ಯಗಳೂ ಇವೆ. ಕರ್ನಾಟಕ ಸೇರಿದಂತೆ, ರಾಜ್ಯಸರಕಾರಗಳು ಇವರಿಗೆಲ್ಲ ಕೆಂಪುಹಾಸಿನ ಸ್ವಾಗತ ಕೋರಲು ಅತ್ಯುತ್ಸಾಹ ತೋರಿಸುತ್ತಿವೆ. ಹಾಗಾಗಿ ಬಹುರಾಷ್ಟ್ರೀಯ ಮೊಬೈಲ್ ಉತ್ಪಾದಕ ಕಂಪೆನಿಗಳಿಗೆ ಇಲ್ಲಿ ಹೂಡಿಕೆ ಆಕರ್ಷಕ ಅನ್ನಿಸುವುದು ಸಹಜ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು, ಪಿಎಲ್‌ಐ ಮುಂದುವರಿಕೆಯ (ಪಿಎಲ್‌ಐ 2.0) ಕುರಿತು ಸಂಬಂಧಿತರೊಂದಿಗೆ ಮಾತುಕತೆ ನಡೆಸಿದ್ದೇವೆ. ಇಲ್ಲಿಯ ತನಕ ಆ ಕ್ಷೇತ್ರಕ್ಕೆ 14,900 ಕೊಟಿ ರೂ.ಗಳ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂಬ ಬಗ್ಗೆ ಕೂಡ ಪತ್ರಿಕೆ ವರದಿ ಮಾಡಿದ್ದು, ಅದರ ಅರ್ಥ- ಸರಕಾರ ಕೂಡ, ಈ ಹೊಸ ಸಬ್ಸಿಡಿ ಚಕ್ರವ್ಯೆಹದಲ್ಲಿ ಸಿಕ್ಕಿಹಾಕಿಕೊಳ್ಳಲು ಸಿದ್ಧವಾಗುತ್ತಿರುವಂತಿದೆ. ಆರಂಭದಲ್ಲಿ ಭಾರತ ಸರಕಾರದ ಉದ್ದೇಶ ಇದ್ದುದು, ಐದು ವರ್ಷಗಳಲ್ಲಿ 30 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಕೈಗಾರಿಕಾ ಉತ್ಪಾದನೆ ಮತ್ತು 60 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ. ಆದರೆ, 2025ರ ಮಾರ್ಚ್ ಹೊತ್ತಿಗೆ ಈ ಯೋಜನೆ ಉದ್ದೇಶಿತ ಗುರಿ ತಲುಪಿಲ್ಲ ಎಂಬುದನ್ನು ಸರಕಾರವೇ ಸಂಸತ್ತಿನಲ್ಲಿ ಬಹಿರಂಗಪಡಿಸಿಕೊಂಡಿದೆ. ಉತ್ಪಾದನೆಯಲ್ಲಿ 16.5 ಲಕ್ಷ ಕೋಟಿ ರೂ.ಗಳ ಹೆಚ್ಚಳ ಆಗಿದ್ದರೆ, 12 ಲಕ್ಷ (ನೇರ ಮತ್ತು ಪರೋಕ್ಷ ಒಟ್ಟು ಸೇರಿ) ಉದ್ಯೋಗಗಳು ಸೃಷ್ಟಿ ಆಗಿವೆ (ಆಧಾರ: ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 2,625. ದಿನಾಂಕ: 5 ಆಗಸ್ಟ್, 2025). ಅಂದರೆ ಸರಕಾರದ ಉದ್ದೇಶಿತ ಗುರಿಯ ಶೇ. 50 ಕೂಡ ಸಾಧನೆ ಆಗಿಲ್ಲ. ಸದ್ಯಕ್ಕೆ ದೇಶದ ರಫ್ತಿನ ಗಮನಾರ್ಹ ಭಾಗವನ್ನು ಆವರಿಸಿಕೊಂಡಿರುವ ಮೊಬೈಲ್ ಫೋನ್ ರಫ್ತು 2021-22ರಲ್ಲಿ 22,850 ಕೋಟಿ ರೂ. ಇದ್ದುದು ಈಗ 2024-25ರಲ್ಲಿ 2 ಲಕ್ಷ ಕೋಟಿ ರೂ. ಗಾತ್ರವನ್ನು ದಾಟಿದೆ; ಮೊಬೈಲ್ ಉತ್ಪಾದನೆಯ ಪ್ರಮಾಣ 2.14 ಲಕ್ಷ ಕೋಟಿ ರೂ. (2021-22) ಇದ್ದಲ್ಲಿಂದ 5.25 ಲಕ್ಷ ಕೋಟಿ ರೂ.ಗೆ ತಲುಪಿದೆ. 2023ರಲ್ಲಿ ರಘುರಾಂ ರಾಜನ್ ಅವರು ಹೇಳಿದ್ದು ಇದನ್ನೇ. ಶೇ. 4 ವ್ಯಾಲ್ಯೂ ಎಡಿಷನ್ ಮಾಡಿದ್ದಕ್ಕೆ ಶೇ. 4-6 ಸಬ್ಸಿಡಿ ನೀಡುವುದಾದರೆ, ಕಂಪೆನಿಗಳು ನಾ ಮುಂದು-ತಾ ಮುಂದು ಎಂದು ಬರುತ್ತವೆ, ಆದರೆ ಸಬ್ಸಿಡಿ ನಿಲ್ಲಿಸಿದ ದಿನ ಅವರು ಇಲ್ಲಿ ಉಳಿಯುವ ಸಾಧ್ಯತೆಗಳಿಲ್ಲ ಎಂದು. ಒಂದು ವೇಳೆ ಸಬ್ಸಿಡಿ ನಿಲ್ಲಿಸಿ, ಕಂಪೆನಿಗಳು ಇಲ್ಲಿಂದ ಗುಳೆ ಹೋದರೆ, ಇಲ್ಲಿ ಕೇವಲ ‘ಸ್ಕ್ರೂಡ್ರೈವರ್’ ಬಳಸುವ ತಾಂತ್ರಿಕ ಕೌಶಲ ಕಲಿತಿರುವ ಕೆಲಸಗಾರರು ಅತಂತ್ರರಾಗಬಹುದು. ಇದು ದೇಶದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ ವೃದ್ಧಿಗೆ ಯಾವ ರೀತಿಯಲ್ಲೂ ಸಹಾಯಕ ಅಲ್ಲ ಎಂಬ ಕಳಕಳಿ ಅವರದಾಗಿತ್ತು. ಈಗ ಪಿಎಲ್‌ಐ ಮುಂದುವರಿಸಲು ನಡೆದಿರುವ ಲಾಬಿಯನ್ನು ಗಮನಿಸಿದರೆ, ರಘುರಾಂ ರಾಜನ್ ಅವರ ಮುಂಗಾಣ್ಕೆ ಎಷ್ಟು ಮಹತ್ವದ್ದೆಂಬುದು ಸ್ಪಷ್ಟವಾಗುತ್ತದೆ. ಅಂದಿನ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು ರಘುರಾಂ ರಾಜನ್ ಅವರ ಆ ನಿಲುವನ್ನು ಕಟುವಾಗಿ ಖಂಡಿಸಿದ್ದರು. ‘‘ಅವರ ತೀರ್ಮಾನವೇನೂ ಭಯಂಕರ ರಾಕೆಟ್ ಸಯನ್ಸ್ ಅಲ್ಲ. ಆದರೆ ಅದಕ್ಕೆ ಅವರು ಬಳಸಿರುವುದು ತಪ್ಪು ಅಂಕಿ-ಸಂಖ್ಯೆಗಳನ್ನು, ಪ್ರಶ್ನಾರ್ಹ ವಿಶ್ಲೇಷಣೆಗಳನ್ನು ಹಾಗೂ ಗುರುತು ಬಹಿರಂಗಪಡಿಸದ ಉದ್ಯಮ ಪರಿಣತರನ್ನು. ಇದು ನೈತಿಕ ದಿವಾಳಿತನದ ಪ್ರತೀಕ. ಅವರಿಗೆ ಇಲೆಕ್ಟ್ರಾನಿಕ್ಸ್ ಉತ್ಪಾದನೆ, ಸರಬರಾಜು ಸರಪಣಿಯ ಬಗ್ಗೆ ಏನೂ ಅರಿವಿಲ್ಲದಿರುವುದು ಮಾತ್ರವಲ್ಲದೆ, ಕಡೆಗೆ ಅರ್ಥಶಾಸ್ತ್ರದ ಅರಿವೂ ಇಲ್ಲದಿರುವುದನ್ನು ಅವರ ಟೀಕೆ ತೋರಿಸುತ್ತದೆ’’ ಎಂದು ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ರಘುರಾಂ ರಾಜನ್ ಅವರನ್ನು ಸಚಿವರು ಟೀಕಿಸಿದ್ದರು. (ಆಧಾರ: ಬ್ಯುಸಿನೆಸ್ ಸ್ಟಾಂಡರ್ಡ್ 15 ಜೂನ್, 2023). ಈ ಹಿನ್ನೆಲೆಯಲ್ಲಿ ಸರಕಾರ ಈಗ ಮೊಬೈಲ್ ಉತ್ಪಾದಕರ ಲಾಬಿಗೆ ಮಣಿದು ಅವರಿಗೆ ಮತ್ತಷ್ಟು ಪಿಎಲ್‌ಐ ಸಬ್ಸಿಡಿಗಳನ್ನು ನೀಡಲಿದೆಯೋ ಅಥವಾ ನೈಜ ಉತ್ಪಾದನಾ ಕ್ಷೇತ್ರಗಳತ್ತ ಗಮನ ಹರಿಸಿ, ನಿಜಕ್ಕೂ ಆತ್ಮನಿರ್ಭರ ಆಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ. ದೇಶದಲ್ಲಿ ಶೇ. 60-70 ಇರುವ ಬಡ ಮತ್ತು ಮಧ್ಯಮ ವರ್ಗದ ಜನಸಮುದಾಯಗಳಿಗೆ ಯಾವುದೇ ಸರಕಾರಿ ಸವಲತ್ತು, ಸಬ್ಸಿಡಿ ನೀಡಿದಾಗ ಅದು ‘ಬಿಟ್ಟಿ ಭಾಗ್ಯ’ ಎಂದು ಹೀಗಳೆಯುವವರಿಗೆ, ಹೀಗೆ ಬಲಾಢ್ಯ ಕಾರ್ಪೊರೇಟ್‌ಗಳ ಲಾಬಿಯ ಒತ್ತಡಕ್ಕೆ ಮಣಿದು, ಸರಕಾರಗಳು ಮಂಡಿಯೂರಿ ಸಬ್ಸಿಡಿ ನೀಡುವುದು/ಮುಂದುವರಿಸುವುದು ಏನನ್ನಿಸುತ್ತದೆ? ಪಿಎಲ್‌ಐ ಮುಂದುವರಿಸುವುದಿದ್ದರೆ, ಈ ವರ್ಷದ ಬಜೆಟ್ ವೇಳೆ ಹಣಕಾಸು ಸಚಿವರು ಆ ಬಗ್ಗೆ ಬಜೆಟರಿ ಅನುದಾನವನ್ನು ಪ್ರಕಟಿಸಬೇಕಿರುತ್ತದೆ. ‘ಬಿಟ್ಟಿ ಭಾಗ್ಯ’ ಎಂದು ಮೂದಲಿಸುವವರ ಪ್ರತಿಕ್ರಿಯೆ ಆಗ ಹೇಗಿರಲಿದೆ?!

ವಾರ್ತಾ ಭಾರತಿ 3 Jan 2026 10:37 am

ಕಂದಗಲ್ಲ ಭಾರತಕ್ಕೆ ನಮಸ್ಕಾರ

ನಾಟಕ: ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್  ಕಂದಗಲ್ಲ ಭಾರತ ಮೂಲ: ಕಂದಗಲ್ಲ ಹನುಮಂತರಾಯರ ಮಹಾಭಾರತ ಕುರಿತ ನಾಟಕಗಳು ರಂಗರೂಪ/ನಿರ್ದೇಶನ: ಪ್ರಕಾಶ ಗರುಡ ರಂಗವಿನ್ಯಾಸ: ಶ್ವೇತಾರಾಣಿ ಎಚ್.ಕೆ. ವಸ್ತ್ರವಿನ್ಯಾಸ: ರಜನಿ ಗರುಡ ಬೆಳಕಿನ ವಿನ್ಯಾಸ: ಮಧು ಮಳವಳ್ಳಿ ಪ್ರಸ್ತುತಿ: ರೆಪರ್ಟರಿ ಕಲಾವಿದರು, ರಂಗಾಯಣ, ಧಾರವಾಡ ರಂಗದ ಮೇಲೆ: ಅಕ್ಕಮ್ಮಾ ದೇವರಮನಿ, ಹನುಮಂತ ರಾಯ್ಕರ, ರೋಹನ್ ದೇಸಾಯಿ, ವಿನೋದ ದಂಡಿನ, ದುಂಡೇಶ ಹಿರೇಮಠ, ಗೋಪಾಲ ಉಣಕಲ್, ಸುನೀಲ ಲಗಳಿ, ಕೃಷ್ಣ ಹೂಗಾರ, ಪವನ ದೇಶಪಾಂಡೆ, ಇಂದು ಡಿ., ರೇಖಾ ಹೊಂಗಲ, ಕೀರ್ತಿ ಸಿಂದೋಗಿ, ಯೋಗೇಶ ಬಗಲಿ. ರಾಜು ತಾಳಿಕೋಟಿ ಅವರ ದೊಡ್ಡ ಕನಸು ಈಡೇರಿದೆ. ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರು ನಿಧನರಾಗುವ ಮೊದಲು ‘ಕರ್ನಾಟಕದ ಷೇಕ್ಸ್‌ಪಿಯರ್’ ಎಂದೇ ಖ್ಯಾತರಾಗಿದ್ದ ಕಂದಗಲ್ಲ ಹನುಮಂತರಾಯರ ನಾಟಕಗಳನ್ನು ತಮ್ಮ ರಂಗಾಯಣದ ಮೂಲಕ ಪ್ರದರ್ಶಿಸಬೇಕೆಂದು ಕನಸು ಕಂಡಿದ್ದರು. ಆದರೆ ಅಕಾಲಿಕವಾಗಿ ನಿಧನರಾದರು. ಅವರ ಕನಸು ಕಮರಲಿಲ್ಲ. ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ನೇತೃತ್ವದಲ್ಲಿ, ಪ್ರಕಾಶ ಗರುಡ ಅವರು ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’ ನಾಟಕವನ್ನು ರಂಗಕ್ಕೇರಿಸಿದ್ದಾರೆ. ಈಮೂಲಕ ರಾಜು ತಾಳಿಕೋಟಿ ಅವರಿಗೆ ಗೌರವ ಸಲ್ಲಿಸಿದಂತಾಗಿದೆ. ರಾಜು ತಾಳಿಕೋಟಿ ಅವರು ಡಿ. ದುರ್ಗಾದಾಸ್ ಅವರ ಶಿಷ್ಯರು. ದುರ್ಗಾದಾಸ್ (ನೀನಾಸಂ ಪದವೀಧರೆಯಾಗಿದ್ದ ಹನುಮಕ್ಕ ಅವರ ತಂದೆ) ಅವರು ಕಂದಗಲ್ಲ ಹನುಮಂತರಾಯರ ಶಿಷ್ಯರು. ಹೇಗೆಂದರೆ ಕಂದಗಲ್ಲರು ಕಟ್ಟಿದ ಅರವಿಂದ ಸಂಗೀತ ನಾಟಕ ಮಂಡಳಿಯಲ್ಲಿದ್ದರು. ಕಂದಗಲ್ಲರ ‘ಚಿತ್ರಾಂಗದ’ ನಾಟಕದಲ್ಲಿ ಅರ್ಜುನನ ಪಾತ್ರಕ್ಕೆ ದುರ್ಗಾದಾಸ್ ಹೆಸರುವಾಸಿಯಾಗಿದ್ದರು. ಹೀಗಿದ್ದಾಗ ರಾಜು ತಾಳಿಕೋಟಿ ಅವರ ಕಂದಗಲ್ಲರ ನಾಟಕಗಳನ್ನು ಪ್ರದರ್ಶಿಸಬೇಕೆಂಬ ತಮ್ಮ ಕನಸನ್ನು ಪ್ರಕಾಶ ಗರುಡ ಅವರಿಗೆ ಹೇಳಿದರು. ಈ ಪ್ರಕಾಶ ಗರುಡ ಅವರು ದತ್ತಾತ್ರೇಯ ನಾಟಕ ಮಂಡಳಿ ಕಟ್ಟಿದ್ದ ಗರುಡ ಸದಾಶಿವರಾಯರು ಮೊಮ್ಮಗ. ಹೀಗೆ ಈ ನಾಟಕದ ಮೂಲಕ ರಂಗ ಪರಂಪರೆ ಬೆಳೆಯಿತು. ಈ ನಾಟಕವು ಮೈಸೂರು ರಂಗಾಯಣದಲ್ಲಿ ಕಳೆದ ವಾರ (ಡಿಸೆಂಬರ್ 28) ಬಹುರೂಪಿಗೆ ಮುನ್ನುಡಿಯಾಗಿ ಪ್ರದರ್ಶನಗೊಂಡಿತು. ಮೂರೂವರೆ ಗಂಟೆಗಳ ಈ ನಾಟಕವು ಹಿಡಿದಿಟ್ಟಿತು. ಇದಕ್ಕೆ ಕಂದಗಲ್ಲ ಹನುಮಂತರಾಯರ ನಾಟಕಗಳ ಸಮಕಾಲೀನತೆ, ರಾಘವ ಕಮ್ಮಾರ ಅವರ ಸಂಗೀತ ಪೂರಕವಾಗಿದ್ದವು. ಕಂಠಪಾಠ ಮಾಡಿದ ಉದ್ದುದ್ದದ ಸಂಭಾಷಣೆಗಳನ್ನು ಕಲಾವಿದರು ಹೇಳುವಾಗ ಅಲ್ಲಲ್ಲಿ ಎಡವಿದರೂ ಸರಿಪಡಿಸಿಕೊಂಡರು. ಇದಕ್ಕೆ ಕಾರಣ; ಕಂದಗಲ್ಲರ ಅದ್ಭುತ ಸಂಭಾಷಣೆ. ಕಬ್ಬಿಣದ ಕಡಲೆ ಎಂದೇ ಜನಪ್ರಿಯ. ಇಂಥ ಸಂಭಾಷಣೆಗಳನ್ನು ನಿಧಾನವಾಗಿ, ಮನ ಮುಟ್ಟುವ ಹಾಗೆ ಕಲಾವಿದರು ಹೇಳಬಹುದಿತ್ತು. ಆದರೆ ಸಂಭಾಷಣೆ ಒಪ್ಪಿಸುವ ಭರದಲ್ಲಿದ್ದರು. ಅದರಲ್ಲೂ ಗೋಪಾಲ ಉಣಕಲ್ ಅವರು ದ್ರೌಪದಿ ತಂದೆ ದ್ರುಪದರಾಜ, ದುಶ್ಯಾಸನ, ಕೀಚಕ ಹಾಗೂ ಕಲಿ ಪಾತ್ರಗಳನ್ನು ನಿರ್ವಹಿಸಿ ನ್ಯಾಯ ಒದಗಿಸಿದರು. ಕೃಷ್ಣನ ಪಾತ್ರಕ್ಕೆ ಅಕ್ಕಮ್ಮಾ ಒಪ್ಪಿದ್ದಾರೆ. ಆದರೆ ಸಂಭಾಷಣೆಗಳನ್ನು ಕೊಂಚ ನಿಧಾನವಾಗಿ ಹೇಳಬೇಕಾದ ಅಗತ್ಯವಿದೆ. ಶಕುನಿ ಪಾತ್ರಕ್ಕೆ ವಿನೋದ ದಂಡಿನ ಇನ್ನಷ್ಟು ಜೀವ ತುಂಬಬೇಕಿತ್ತು. ಕೃಷ್ಣ-ಶಕುನಿಯರ ಸಂಭಾಷಣೆ ಇನ್ನಷ್ಟು ಮನ ಮುಟ್ಟಬೇಕಿತ್ತು. ಸೈರಂಧ್ರಿ ಹಾಗೂ ದ್ರೌಪದಿ ಪಾತ್ರಕ್ಕೆ ಜೀವ ತುಂಬಿದವರು ರೇಖಾ ಹೊಂಗಲ. ಹೀಗೆಯೇ ಕುಂತಿ, ಭಾನುಮತಿ, ಉತ್ತರೆ ಪಾತ್ರಕ್ಕೆ ಬಣ್ಣ ಹಚ್ಚಿದ ಇಂದು ಬಗಲಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದರು. ಒಟ್ಟಾರೆ ನಾಟಕ ಇನ್ನಷ್ಟು ಕಳೆಕಟ್ಟಬೇಕಿತ್ತು. ಏಕೆಂದರೆ ಬಳ್ಳಾರಿ ಜಿಲ್ಲೆಯಲ್ಲಿ ಕಂದಗಲ್ಲರ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ ಮೊದಲಾದವರು ತಮ್ಮ ಭಾವಪೂರ್ಣ ಅಭಿನಯ ಹಾಗೂ ಸಶಕ್ತ ಸಂಭಾಷಣೆಗಳಿಂದ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಇಂದಿಗೂ ಬಳ್ಳಾರಿ ಜಿಲ್ಲೆಯಲ್ಲಿ ‘ರಕ್ತರಾತ್ರಿ’ ನಾಟಕವಾಡುವ ಕಲಾವಿದರು ಸಂಭಾಷಣೆ ಹೇಳುವಾಗ ತಪ್ಪಿದರೆ ಪ್ರೇಕ್ಷಕರು ಎದ್ದು ನಿಂತು ‘ಸಂಭಾಷಣೆ ತಪ್ಪಿದ್ರಿ’ ಎಂದು ಹೇಳುತ್ತಾರೆ. ಇದಕ್ಕೆಲ್ಲ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ ಕಾರಣರು. ವೀರಣ್ಣ ಅವರು ‘ರಕ್ತರಾತ್ರಿ’ ನಾಟಕದ ಶಕುನಿ ಪಾತ್ರದಿಂದ ಪ್ರಸಿದ್ಧರಾಗಿದ್ದರು. ಭಾಷೆಯ ಮೇಲಿನ ಅವರ ಹಿಡಿತ, ಪ್ರಬುದ್ಧ ಅಭಿನಯ ಅದ್ಭುತವಾಗಿರುತ್ತಿತ್ತು. ಅವರು ಹೇಳುತ್ತಿದ್ದ ಶಕುನಿಯ ಮಾತು ಹೀಗಿದೆ- ‘‘ಈ ಶಕುನಿಯ ಎದೆ ಹುತ್ತದೊಳ್ ಅಡಗಿರುವ ಭೇದನೀತಿಯೆಂಬ ನಾಗಿಣಿಯ ಪೂತ್ಕಾರಕ್ಕೆ ಜಾತಿಗಳ ಝಳ ಹೊಡೆದು ಕಮರುವವು ಕೋಮಲ ಕರುಳ ಸೌಹಾರ್ದ ಸೂತ್ರಗಳು. ಮನುಷ್ಯತ್ವ ಮಣ್ಣುಗೂಡಿ ಸುರಶಿಲ್ಪಿ ವಿಶ್ವಕರ್ಮನ ಕೈಯ ಕುಂಚ ಕಠೋರ ಕುಠಾರಿಯಾಗುವುದು ಕೋಮು-ಜಾತಿಯ ಜಗಳದ ಘರ್ಜನೆಯಲ್ಲಿ. ಸರಸ್ವತಿಯ ತಂಬೂರಿ ಬಿರಿದು ಭೈರವ ಭೇರಿಯಾಗುವುದು ಕುಲಾಭಿಮಾನದ ಕಿಡಿಯಲಿ. ಅತಿ ತೀವ್ರವಾಗಿದೆ ಜಾತಿದ್ವೇಷ. ಇದರದೊಂದು ಕಿಡಿ ಬಗೆದು ನಿರ್ಮಿಸುವೆ ಕಾಳಾನಲ ಕಡಲನ್ನೇ ಕರ್ಣ-ಅಶ್ವತ್ಥಾಮರ ಮಧ್ಯದಲಿ. ಅಶ್ವತ್ಥಾಮನು ಪಾಂಡವರಿಗೆ ಪ್ರತಿಕಾಳಯಮ. ಅಶ್ವತ್ಥಾಮನನ್ನು ಯುದ್ಧಭೂಮಿಯಿಂದ ದೂರೀಕರಿಸದಿದ್ದರೆ ದಾರಿ ಕಾಣದು ಈ ಶಕುನಿಯ ಕಾರಸ್ಥಾನದ ಕಣ್ಣಿಗೆ ಅಶ್ವತ್ಥಾಮನ ಉರಿಗಣ್ಣು. ಸುರಸೇನಾಧಿಪತಿ ಷಣ್ಮುಖಸ್ವಾಮಿಯ ಕ್ಷಾತ್ರ ರಸಾಯನವೇ ತುಂಬಿ ತುಳುಕಾಡುತ್ತಿದೆ ಅಶ್ವತ್ಥಾಮನ ಎದೆಯೊಳು. ದುರ್ಯೋಧನನ ದಂಡಾಧಿಪತಿಯ ಪಟ್ಟವನ್ನು ಅಶ್ವತ್ಥಾಮನಿಗೆ ಕಟ್ಟಿದರೆ ಉಳಿಗಾಲವಿಲ್ಲ ಪಾಂಡವರಿಗೆ ಮತ್ ಅಳಿಗಾಲವಿಲ್ಲ ಆ ಕುರುಡನ ಕುನ್ನಿಗಳಿಗೆ. ಆದ್ದರಿಂದ ಹೂಡಿ ಹೊಡೆಯುವೆ ದುರ್ಯೋಧನನ ಎದೆಗೆ ಎರಡು ಬಾಣಗಳನ್ನು. ಗರತಿಯಾದ ಭಾನುಮತಿಯ ಶೀಲದ ಬಗ್ಗೆ ಸಂಶಯದ ಬಾಣ. ಇನ್ನೊಂದು; ಜಾತಿದ್ವೇಷದ ರಾಮಬಾಣ...’’ ಹೀಗೆ ಹೇಳಿ ವಿಕಟವಾಗಿ ನಕ್ಕು, ಕಣ್ಣು ತಿರುಗಿಸುತ್ತಿದ್ದರು ಬೆಳಗಲ್ಲು ವೀರಣ್ಣ. ಈಮೂಲಕ ಅವರು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಅವರ ಪುತ್ರ ಪ್ರಕಾಶ ಅವರು ಕೃಷ್ಣನ ಪಾತ್ರಕ್ಕೆ ಪ್ರಸಿದ್ಧರು. ಇವರಿಬ್ಬರು ‘ರಕ್ತರಾತ್ರಿ’ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದನ್ನು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದನ್ನು ನೋಡಿರುವೆ. ಹೀಗೆಯೇ ಭೀಷ್ಮನ ಪಾತ್ರಕ್ಕೆ ಹಂದಿಗನೂರು ಸಿದ್ರಾಮಪ್ಪ ಪ್ರಸಿದ್ಧರಾಗಿದ್ದರು. ಹೀಗೆ ಹೇಳಲು ಕಾರಣ; ಕಲಾವಿದರು ಸಂಭಾಷಣೆ ಹೇಳಿದ ಪರಿ ಮುಖ್ಯವಾಗುತ್ತದೆ. ಧಾರವಾಡ ರಂಗಾಯಣದ ಕಲಾವಿದರು ಹೇಳಿದ ಅಷ್ಟೂ ಸಂಭಾಷಣೆಗಳಲ್ಲಿ ಯಾವುದೂ ಮನದಲ್ಲಿ ಉಳಿಯಲಿಲ್ಲ. ಉಳಿಯಬೇಕಿತ್ತು ಎನ್ನುವ ವ್ಯಥೆಯಿದೆ. ಇದಕ್ಕಾಗಿ ಹೆಚ್ಚಿನ ತರಬೇತಿ ಅಗತ್ಯವಿತ್ತೇನೋ? ಆಗಿನ ಹಾಗೆ ಆಳೆತ್ತರದ ನಟರ ಕೊರತೆ, ಕಂಚಿನ ಕಂಠದಿಂದ ಅಸ್ಖಲಿತವಾಗಿ ಸಂಭಾಷಣೆ ಹೇಳುವ ನಟರ ಕೊರತೆಯ ಕಾರಣಕ್ಕೆ ಕಂದಗಲ್ಲರ ನಾಟಕಗಳನ್ನು ಪ್ರದರ್ಶಿಸುವ ಸಾಹಸಕ್ಕೆ ಅನೇಕರು ಕೈಹಾಕುವುದಿಲ್ಲ. ಇಂಥ ಸಂದರ್ಭದಲ್ಲಿ ಧಾರವಾಡ ರಂಗಾಯಣದ ಕಲಾವಿದರ ಪ್ರಯತ್ನ ದೊಡ್ಡದು. ಅವರು ಇನ್ನಷ್ಟು ಶ್ರಮವಹಿಸಿದರೆ ನಾಟಕ ಇನ್ನಷ್ಟು ಯಶಸ್ವಿಯಾಗುತ್ತದೆ. ಇದನ್ನು ಹೇಳಲು ಕಾರಣವಿದೆ; ಕೆರೂರಿನ ಅದೃಶ್ಯಪ್ಪ ಮಾನ್ವಿ ಅವರು ಭೀಮನ ಪಾತ್ರದಿಂದ ಜನಪ್ರಿಯರಾಗಿದ್ದರು. ಕಂದಗಲ್ಲರು ಅದೃಶ್ಯಪ್ಪ ಮಾನ್ವಿ ಅವರನ್ನು ನೋಡಿರಲಿಲ್ಲ. ಆದರೆ ಅವರನ್ನು ಉದ್ದೇಶಿಸಿಯೇ ಬರೆದರೇನೋ ಎನ್ನುವ ಹಾಗೆ ಪ್ರೇಕ್ಷಕರು ಮಾತನಾಡಿಕೊಂಡರು. ಮತ್ತೆ ಧಾರವಾಡ ರಂಗಾಯಣದ ಕಂದಗಲ್ಲರ ಕುರಿತ ನಾಟಕದತ್ತ ಹೊರಳುವೆ. ಈ ನಾಟಕಕ್ಕೆ ರಾಘವ ಕಮ್ಮಾರ ಗಾಯನ ಚೆನ್ನಾಗಿತ್ತು. ಆದರೆ ಅವರ ಸಂಗೀತ ಅಬ್ಬರವಾಗಿತ್ತು. ಇದನ್ನು ಮೆಲೊಡಿ ಮಾಡಬೇಕಿತ್ತು. ಇಷ್ಟನ್ನು ಹೊರತುಪಡಿಸಿದರೆ ನಾಟಕ ಚೆನ್ನಾಗಿದೆ. ಸಮಕಾಲೀನವಾಗುವ, ಸರ್ವಕಾಲಕ್ಕೂ ಸಲ್ಲುವ ಕಂದಗಲ್ಲರ ನಾಟಕಗಳನ್ನು ಒಟ್ಟುಗೂಡಿಸಿ ಪ್ರಕಾಶ ಗರುಡ ಅವರು ನಿರ್ದೇಶಿಸಿದ್ದು ಸಾಹಸವೇ ಸರಿ. ಈಗಲೂ ಕಂದಗಲ್ಲರ ನಾಟಕಗಳಾಡುವ ಅಗತ್ಯವೇನಿದೆ ಎಂದು ಕೇಳುವವರಿಗೆ ಅವು ಸಮಕಾಲೀನವಾಗುತ್ತವೆಂಬ ಉತ್ತರ ಕೊಡಬಹುದು. ಅದರಲ್ಲೂ ‘ಟಂಗ್ ಟ್ವಿಸ್ಟ್’ ಎನ್ನುವ ಮಾದರಿಯಲ್ಲಿರುವ ಕಂದಗಲ್ಲರ ನಾಟಕದ ಸಂಭಾಷಣೆಗಳು ಕಲಾವಿದರಿಗೆ ಸವಾಲು. ಇನ್ನು ನಾಟಕದ ಕುರಿತು; ಮಹಾಭಾರತ ಆಧರಿಸಿ ಕಂದಗಲ್ಲರು ದ್ರೌಪದಿ, ಸ್ವಯಂವರ, ಅಕ್ಷಯಾಂಬರ, ಬಾಣಸಿಗ ಭೀಮ, ನರವೀರ ಪಾರ್ಥ, ದೈವದುರಂತ ಕರ್ಣ, ಕುರುಕ್ಷೇತ್ರ, ಚಿತ್ರಾಂಗದ ಹಾಗೂ ಜಗನ್ಮಾಯ ನಾಟಕಗಳನ್ನು ರಚಿಸಿದ್ದಾರೆ. ಇದರಲ್ಲಿ ಏಳು ನಾಟಕಗಳನ್ನು ಕುಮಾರವ್ಯಾಸನ ‘ಕರ್ನಾಟಕ ಭಾರತ ಕಥಾಮಂಜರಿ’ ಕಾವ್ಯ ಆಧರಿಸಿ ನಾಟಕಗಳನ್ನು ರಚಿಸಿದ್ದಾರೆ. ಪ್ರಕಾಶ ಗರುಡ ಅವರು ಹೇಳುವಂತೆ ‘‘ಕಂಪನಿ ರಂಗಭೂಮಿಗೆ ಹೊಂದುವಂತೆ ತಮ್ಮದೇ ವಿಶಿಷ್ಟ ಭಾಷಾಶೈಲಿಯನ್ನು ಬಳಕೆ ಮಾಡಿದ್ದಾರೆ. ಆಗಿನ ಪ್ರೇಕ್ಷಕ ಮಾತ್ರ ಅವರ ನಾಟಕದ ಮುಕ್ತ ಛಂದಸ್ಸಿನ ಸಂಭಾಷಣೆಗೆ, ನವೀನ ಶೈಲಿಗೆ ಆಕರ್ಷಿತನಾಗಿದ್ದ. ಹೀಗಾಗಿ ಅವರ ನಾಟಕಗಳು ಈಗಲೂ ಜನಮಾನಸದಲ್ಲಿವೆ. ಪ್ರಸ್ತುತ ರಂಗರೂಪದಲ್ಲಿ ಕಂದಗಲ್ಲರು ’ಕರ್ನಾಟಕ ಭಾರತ ಕಥಾಮಂಜರಿ’ ಆಧರಿಸಿ ಬರೆದ ಏಳು ನಾಟಕಗಳಲ್ಲಿಯ ಪ್ರಮುಖ ದೃಶ್ಯಗಳನ್ನು ಜೋಡಣೆ ಮಾಡಿ ಒಟ್ಟು ಮಹಾಭಾರತದ ಕಥಾನಕದ ನಾಟ್ಯ ಚಿತ್ರಣ ನೀಡಲು ಪ್ರಯತ್ನಿಸಲಾಗಿದೆ. ಕುರುಕ್ಷೇತ್ರ ಯುದ್ಧದ ನಂತರ ಬರುವ ಪ್ರಸಂಗಗಳಾದ ಚಿತ್ರಾಂಗದ ಮತ್ತು ಜಗನ್ಮಾಯ (ಶ್ರೀಕೃಷ್ಣ ಗಾರುಡಿ) ನಾಟಕಗಳನ್ನು ಈ ರಂಗರೂಪದಲ್ಲಿ ಸೇರಿಸಿಲ್ಲ. ಈ ರಂಗರೂಪವು ಕಂದಗಲ್ಲರು ಮಹಾಭಾರತ ಕಥಾನಕವನ್ನು ಕುರಿತು ರಚಿಸಿದ ಏಳು ಕಂಪನಿ ನಾಟಕಗಳ ಹೃಸ್ವರೂಪವಾಗಿದ್ದರೂ ಕಥಾಸಂವಿಧಾನಕ್ಕೆ ಒಂದು ತಾರ್ಕಿಕ ಜೋಡಣೆ ನೀಡಲು ಪ್ರಯತ್ನಿಸಲಾಗಿದೆ. ಜಾತಿ-ಕುಲ ತಾರತಮ್ಯ, ರಾಷ್ಟ್ರೀಯತೆ, ದೇಸಿಯತೆ, ಖಾದಿ, ಮನುಕುಲಕ್ಕೆ ಮಾರಕವಾದ ವಿನಾಶಕಾರಿ ಯುದ್ಧ, ದಾಯಾದಿ ಮತ್ಸರ, ದ್ವೇಷರಾಜಕಾರಣ ಇವು ಸಮಕಾಲೀನ ವಿಷಯಗಳಾಗಿದ್ದು, ಕಂಪನಿ ನಾಟಕದ ಚೌಕಟ್ಟಿನಲ್ಲಿ ಮಹಾಭಾರತದ ಕಥೆಯಲ್ಲಿ ಬರುವ ಪಾತ್ರಗಳ ಮೂಲಕ ಮುಖಾಮುಖಿಯಾಗಿದ್ದಾರೆ’’ ಎನ್ನುವ ಮೂಲಕ ನಾಟಕದ ಕುರಿತು ಚಿತ್ರಣ ನೀಡಿದ್ದಾರೆ. ಮಹಾತ್ಮಾ ಗಾಂಧೀಜಿ ಕರೆ ಕೊಟ್ಟ ಖಾದಿ ಬಟ್ಟೆಯ ಮಹತ್ವವನ್ನು ಸಾರುವ ಕುರಿತು ‘ಅಕ್ಷಯಾಂಬರ’ ನಾಟಕದಲ್ಲಿ ಕಂದಗಲ್ಲರು ನೇರವಾಗಿ ಹೇಳಲಿಲ್ಲ. ಹೇಳಿದ್ದರೆ ಬ್ರಿಟಿಷರಿಂದ ಪರವಾನಗಿ ಸಿಗುತ್ತಿರಲಿಲ್ಲ ಜೊತೆಗೆ ಬಂಧನವಾಗುವ ಭೀತಿಯಿತ್ತು. ಇದಕ್ಕಾಗಿ ಅವರು ಪೌರಾಣಿಕ ನಾಟಕದ ಮೊರೆ ಹೋದರು. ನೂಲುವ ಚರಕವನ್ನು ಶ್ರೀಕೃಷ್ಣನ ಸುದರ್ಶನ ಚಕ್ರಕ್ಕೂ ಖಾದಿ ಬಟ್ಟೆಯನ್ನು ದ್ರೌಪದಿಯ ಮಾನ ಕಾಯ್ದ ಅಕ್ಷಯಾಂಬರಕ್ಕೂ ಹೋಲಿಸಿ ಬರೆದದ್ದು ಅವರ ವಿಶೇಷ. ಹೀಗೆಯೇ ಉಳಿದ ನಾಟಕಗಳೂ ವಿಶೇಷವೇ.

ವಾರ್ತಾ ಭಾರತಿ 2 Jan 2026 6:05 pm

ಹೆಜಮಾಡಿಯ ಕನ್ನಡ ಶಾಲೆಯಿಂದ ಅಮೆರಿಕದಲ್ಲಿ ಐಟಿ ನಾಯಕತ್ವದವರೆಗೆ; ಅಮೆರಿಕದ ಬಾರ್ನ್ಸ್ ಏರೋಸ್ಪೇಸ್ CIO ಇಮ್ತಿಯಾಝ್ ಇಕ್ಬಾಲ್ ಅವರ ಸ್ಪೂರ್ತಿದಾಯಕ ಪಯಣ

 PC: siliconindia ಮಂಗಳೂರು : ಹೆಜಮಾಡಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಒಂದು ತರಗತಿಯಲ್ಲಿ ಮೊಳಕೆಯೊಡೆದ ಕನಸು, ಇಂದು ಅಮೆರಿಕದ ಜಾಗತಿಕ ಏರೋಸ್ಪೇಸ್ ಸಂಸ್ಥೆಯಲ್ಲಿ ನನಸಾಗಿದೆ. ಸೀಮಿತ ಆದಾಯದ ಕುಟುಂಬ, ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಾಗಿದ್ದ ದಿನಗಳು ಮತ್ತು ಸಣ್ಣ ಹಳ್ಳಿಯ ವಾತಾವರಣ. ಇವೆಲ್ಲವನ್ನೂ ದಾಟಿ, ಶಿಕ್ಷಣದ ಮೇಲಿನ ಅಚಲ ನಂಬಿಕೆ ಮತ್ತು ನಿರಂತರ ಪರಿಶ್ರಮದ ಮೂಲಕ ಮುಂದೆ ಸಾಗಿದವರು ಇಮ್ತಿಯಾಝ್ ಇಕ್ಬಾಲ್. ಅವರ ಬದುಕಿನ ಪಯಣ ಕೇವಲ ವೈಯಕ್ತಿಕ ಸಾಧನೆಯ ಕಥೆಯಲ್ಲ; ಅದು ಕನ್ನಡ ಮಾಧ್ಯಮ ಹಾಗೂ ಹಳ್ಳಿ ಹಿನ್ನೆಲೆ ಜಾಗತಿಕ ವೇದಿಕೆಯಲ್ಲಿ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸುವ ಸ್ಪೂರ್ತಿದಾಯಕ ಪಯಣ. ಉಡುಪಿ ಜಿಲ್ಲೆಯ ಹೆಜಮಾಡಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಇಮ್ತಿಯಾಝ್ ಇಕ್ಬಾಲ್ ಇಂದು ಅಮೆರಿಕದ ಜಾಗತಿಕ ಏರೋಸ್ಪೇಸ್ ಸಂಸ್ಥೆಯೊಂದರ ಮುಖ್ಯ ಮಾಹಿತಿ ಅಧಿಕಾರಿ (CIO). ಹೆಜಮಾಡಿಯಂತಹ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವರು, ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಐವರು ಸಹೋದರಿಯರಿರುವ ದೊಡ್ಡ ಕುಟುಂಬದಲ್ಲಿ, ಚಿಕ್ಕ ಮನೆಯಲ್ಲಿ ಅವರ ಬಾಲ್ಯ ಕಳೆಯಿತು. ತಂದೆ ಟ್ರಕ್ ಚಾಲಕ; ತಾಯಿ ಮಣಿ ತಯಾರಿಸುವ ಕೆಲಸ ಮಾಡುತ್ತಿದ್ದರು. ಆದಾಯ ಸೀಮಿತವಾಗಿದ್ದರೂ, ಮಕ್ಕಳ ಶಿಕ್ಷಣದ ವಿಚಾರದಲ್ಲಿ ಕುಟುಂಬ ಯಾವತ್ತೂ ರಾಜಿಮಾಡಲಿಲ್ಲ. ಇಮ್ತಿಯಾಝ್ ಅವರ ಹೆತ್ತವರಿಗೆ ಶಿಕ್ಷಣವೇ ಬದುಕನ್ನು ಬದಲಾಯಿಸಬಲ್ಲ ಏಕೈಕ ದಾರಿ ಎಂಬ ಅಚಲ ನಿರ್ಧಾರವಿತ್ತು. ಅದನ್ನೇ ಮಕ್ಕಳಿಗೆ ಹೇಳಿ ಕೊಟ್ಟಿದ್ದರು.ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದ ಕೆಲ ಅಪರೂಪದ ಶಿಕ್ಷಕರ ಮಾರ್ಗದರ್ಶನ ಇಮ್ತಿಯಾಝ್ ಅವರಿಗೆ ದೊರಕಿತು. ಅವರ ಬೋಧನೆ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ; ಜೀವನದ ದಿಕ್ಕನ್ನೇ ರೂಪಿಸುವಂತಿತ್ತು. ಆ ಪ್ರಭಾವವೇ ಇಮ್ತಿಯಾಝ್ ಅವರಲ್ಲಿ ಶಿಸ್ತು, ಪರಿಶ್ರಮ ಮತ್ತು ಕಲಿಕೆಯ ಮೇಲಿನ ಅಚಲ ನಂಬಿಕೆಯನ್ನು ಬೆಳೆಸಿತು. ಪ್ರೌಢಶಾಲೆಯ ನಂತರ, ಪಕ್ಕದ ಮುಲ್ಕಿಯ ವಿಜಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣಕ್ಕೆ ಸೇರಿದಾಗ ಅವರ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿತು. ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಒಮ್ಮೆಲೇ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ. ಈ ಬದಲಾವಣೆ ಸುಲಭವಿರಲಿಲ್ಲ. ಮೊದಲ ವರ್ಷ ಪಠ್ಯಪುಸ್ತಕಗಳ ಪ್ರತಿಯೊಂದು ಸಾಲನ್ನು ಅರ್ಥಮಾಡಿಕೊಳ್ಳಲು ನಿಯಮಿತವಾಗಿ ನಿಘಂಟು ನೋಡಿಕೊಂಡೇ ಇರಬೇಕಿತ್ತು. ಆವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದ್ದ ಇಮ್ತಿಯಾಝ್ ಇಕ್ಬಾಲ್ ಅವರಿಗೆ ಒಂದೇ ವಿಷಯವನ್ನು ಅರ್ಥೈಸಿಕೊಳ್ಳಲು ಇಂಗ್ಲಿಷ್ ಮಾಧ್ಯಮ ಹಿನ್ನೆಲೆಯ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಶ್ರಮ ಬೇಕಾಗುತ್ತಿತ್ತು. ಆತ್ಮವಿಶ್ವಾಸ ಕುಸಿಯುವ ಕ್ಷಣಗಳೂ ಎದುರಾದವು. ಆದರೆ ಹಿಂದೆ ಸರಿಯುವ ಪ್ರಶ್ನೆಯೇ ಇರಲಿಲ್ಲ. ಜಾಗತಿಕ ಭಾಷೆಯಾಗಿ ಇಂಗ್ಲಿಷ್ ನ ಬೆಳವಣಿಗೆಯಾಗುತ್ತಿರುವ ಬಗ್ಗೆ ಅಧ್ಯಾಪಕರು ಹೇಳಿದ ಕಿವಿಮಾತುಗಳು ಆತ್ಮವಿಶ್ವಾಸ ತುಂಬಿದವು. ಪಿಯುಸಿಯ ಎರಡನೇ ವರ್ಷದ ಹೊತ್ತಿಗೆ, ಇಂಗ್ಲಿಷ್ ಭಾಷೆಯ ಮೇಲಿನ ಭಯ ನಿಧಾನವಾಗಿ ಆತ್ಮವಿಶ್ವಾಸವಾಗಿ ಬದಲಾಯಿತು. ಈ ಹಂತದಲ್ಲಿ ಅವರು ದೌರ್ಬಲ್ಯವನ್ನು ಮರೆಮಾಚುವುದಕ್ಕಿಂತ ಅದನ್ನು ಗುರುತಿಸಿ ಎದುರಿಸಿದರೆ ಮುಂದಿನ ದಾರಿ ತೆರೆದುಕೊಳ್ಳುತ್ತದೆ ಎಂಬ ಪಾಠ ಕಲಿತರು. ಕಾಲೇಜಿನಲ್ಲಿ ಶಿಕ್ಷಕರು ಉದ್ದೇಶಪೂರ್ವಕವಾಗಿ ಇಂಗ್ಲಿಷ್‌ ನಲ್ಲೇ ಸಂವಹನ ನಡೆಸುತ್ತಿದ್ದರು. ಆ ಒತ್ತಡವೇ ವಿದ್ಯಾರ್ಥಿ ಜೀವನದಲ್ಲಿ ಬದಲಾವಣೆಯನ್ನು ಸ್ವೀಕರಿಸಲು ನೆರವಾಯಿತು ಎಂದು ಅವರು ಸ್ಮರಿಸಿಕೊಳ್ಳುತ್ತಾರೆ. ಪಿಯುಸಿಯ ನಂತರ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದ ಅವರು, ಅತ್ಯುನ್ನತ ಪಲಿತಾಂಶ ಗಳಿಸಿದರು. ಪದವಿ ಪಡೆದ ತಕ್ಷಣ, ಅವರು NITK ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಆದರೆ ಅವರ ದೃಷ್ಟಿ ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ; ಉದ್ಯಮ ಕ್ಷೇತ್ರದತ್ತವೂ ಅವರ ದೃಷ್ಟಿ ನೆಟ್ಟಿತ್ತು. ಅದರ ಭಾಗವಾಗಿ ಒಮಾನ್ ನ ಮಸ್ಕತ್‌ಗೆ ತೆರಳಿ ಸೌದ್ ಬಹ್ವಾನ್ ಗ್ರೂಪ್‌ನಲ್ಲಿ ವೃತ್ತಿ ಆರಂಭಿಸಿದರು. ಅಲ್ಲಿ ಸಾಫ್ಟ್‌ ವೇರ್ ಇಂಜಿನಿಯರಿಂಗ್‌ ನಿಂದ ಹಿಡಿದು ಯೋಜನಾ ನಿರ್ವಹಣೆವರೆಗೆ ವಿವಿಧ ಹುದ್ದೆಗಳನ್ನು ಕಾರ್ಯನಿರ್ವಹಿಸಿದರು. ನಂತರ ದುಬೈಗೆ ತೆರಳಿ HSBC ಬ್ಯಾಂಕ್‌ ನಲ್ಲಿ ಹಿರಿಯ ಐಟಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. 1998ರಲ್ಲಿ ಅಮೆರಿಕದಿಂದ ಬಂದ ಅವಕಾಶ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಅಮೆರಿಕಕ್ಕೆ ತೆರಳಿದ ಅವರು ಸ್ವಿಝರ್‌ಲ್ಯಾಂಡ್ ಮೂಲದ ಸುಗಂಧ ಉದ್ಯಮ ಗಿವಾಡಾನ್ ಕಂಪೆನಿಯಲ್ಲಿ ಐಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ನಂತರ ಯುಕೆ ಮೂಲದ ವೈದ್ಯಕೀಯ ಸಾಧನಗಳ ಕಂಪೆನಿಯಾದ ಸ್ಮಿತ್ ಮತ್ತು ನೆಫ್ಯೂನಲ್ಲಿ ಐಟಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿ ಓಹಿಯೋದ ಸಿನ್ಸಿನಾಟಿಯಲ್ಲಿರುವ ಕ್ಸೇವಿಯರ್ ವಿಶ್ವವಿದ್ಯಾಲಯದಿಂದ ಇಂಟರ್ನ್ಯಾಷನಲ್ ಬಿಸಿನೆಸ್ ನಲ್ಲಿ MBA ಪದವಿಯನ್ನು ಪಡೆದರು. ಮುಂದೆ ಕಾರ್ನಿಂಗ್ ಲೈಫ್ ಸೈನ್ಸಸ್‌ನಲ್ಲಿ ಮುಖ್ಯ ಮಾಹಿತಿ ಅಧಿಕಾರಿ (CIO) ಹುದ್ದೆ ವಹಿಸಿಕೊಂಡ ಅವರು, ನಂತರ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಮರ್ಕ್ಯುರಿ ಕಂಪೆನಿಯಲ್ಲಿ ಸುಮಾರು ಐದು ವರ್ಷಗಳ ಕಾಲ CIO ಆಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಅವರು ಬಾರ್ನ್ಸ್ ಏರೋಸ್ಪೇಸ್ ಸಂಸ್ಥೆಯ ಮುಖ್ಯ ಮಾಹಿತಿ ಅಧಿಕಾರಿ ಆಗಿದ್ದು, ವಿಮಾನ ಎಂಜಿನ್ ಭಾಗಗಳ ತಯಾರಿಕೆ ಹಾಗೂ ಜಾಗತಿಕ ಪೂರೈಕೆ ವ್ಯವಸ್ಥೆಗಳ ತಂತ್ರಜ್ಞಾನ ನೇತೃತ್ವ ಅವರ ಹೊಣೆಗಾರಿಕೆಯ ಕೇಂದ್ರವಾಗಿದೆ.  ಮಂಗಳೂರೊಂದು 'ಮಿನಿ ಜಗತ್ತು' ಪ್ರಪಂಚದ ಅನೇಕ ದೇಶಗಳು ಮತ್ತು ನಗರಗಳಲ್ಲಿ ಕೆಲಸ ಮಾಡಿದ ಅನುಭವದ ಬಳಿಕವೂ, ಮಂಗಳೂರು ಹಾಗೂ ಕರಾವಳಿ ಕರ್ನಾಟಕವನ್ನು ವಿದ್ಯಾರ್ಥಿಗಳು ಬೆಳೆಯಲು ವಿಶ್ವದ ಅತ್ಯುತ್ತಮ ಪ್ರದೇಶಗಳಲ್ಲೊಂದು ಎಂದು ಇಮ್ತಿಯಾಝ್ ಇಕ್ಬಾಲ್ ಅಭಿಪ್ರಾಯಪಡುತ್ತಾರೆ. ಇಲ್ಲಿ ಶಿಕ್ಷಣವು ಕೇವಲ ಶಾಲೆ–ಕಾಲೇಜುಗಳಿಗೆ ಸೀಮಿತವಾಗಿಲ್ಲ; ಅದು ದೈನಂದಿನ ಸಂಭಾಷಣೆಯ ಭಾಗವಾಗಿದೆ. ಇದೇ ಈ ಪ್ರದೇಶದ ಅತಿದೊಡ್ಡ ಶಕ್ತಿ ಎಂದು ಅವರು ಹೇಳುತ್ತಾರೆ. 1970ರ ದಶಕದಲ್ಲಿ ಅವರು ಬೆಳೆಯುತ್ತಿದ್ದ ಕಾಲಕ್ಕೆ ಹೋಲಿಸಿದರೆ, ಇಂದು ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳು, ಆರೋಗ್ಯ ಸೇವೆಗಳ ಸುಧಾರಣೆ ಮತ್ತು ಜೀವನಮಟ್ಟದ ಏರಿಕೆ ಕಂಡು ಬರುತ್ತದೆ. ಬಹುಭಾಷಾ ಮತ್ತು ಬಹುಸಾಂಸ್ಕೃತಿಕ ವಾತಾವರಣವು ಮಂಗಳೂರಿನ ಜನರನ್ನು ಜಾಗತಿಕ ವೇದಿಕೆಗೆ ಸಹಜವಾಗಿ ಸಿದ್ಧಪಡಿಸುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಮಹತ್ವದ ಕೊರತೆ ಇನ್ನೂ ಉಳಿದಿದೆ ಎಂದು ಅವರು ಸೂಚಿಸುತ್ತಾರೆ. ಸೇವಾ ವಲಯ, ಐಟಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದರೂ, ಕೈಗಾರಿಕಾ ಮತ್ತು ಉತ್ಪಾದನಾ ಅಭಿವೃದ್ಧಿ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ. ಇದು ಮಂಗಳೂರಿಗೆ ಮಾತ್ರವಲ್ಲ; ಭಾರತದಾದ್ಯಂತ ವ್ಯಾಪಕವಾಗಿ ಕಂಡುಬರುವ ಸಮಸ್ಯೆಯಾಗಿದೆ ಎಂದು ಅವರು ಇಮ್ತಿಯಾಝ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಪ್ರದೇಶದ ಭವಿಷ್ಯವನ್ನು ಬಲಪಡಿಸಬೇಕಾದರೆ, ಉತ್ಪಾದನಾ ಕೈಗಾರಿಕೆಗಳನ್ನು ಇಲ್ಲಿಗೆ ಆಕರ್ಷಿಸುವ ಅಗತ್ಯವಿದೆ ಎಂದು ಅವರು ಉಲ್ಲೇಖಿಸಿದರು. ಒಂದೇ ಉತ್ಪನ್ನದ ಮೇಲೆ ಕೇಂದ್ರೀಕರಿಸಿ, ಸ್ಥಳೀಯ ಜನರಿಗೆ ಉದ್ಯೋಗ ಒದಗಿಸುತ್ತಾ, ಜಾಗತಿಕ ಮಾರುಕಟ್ಟೆಗೆ ಪೂರೈಕೆ ಮಾಡುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕಂಪೆನಿಗಳೂ ಇಡೀ ಪ್ರದೇಶದ ಆರ್ಥಿಕ ಮಟ್ಟವನ್ನು ಮೇಲಕ್ಕೆತ್ತಬಲ್ಲವು ಎಂದು ಇಮ್ತಿಯಾಝ್ ಇಕ್ಬಾಲ್ ಸಲಹೆ ನೀಡಿದರು.  AI ಬಗ್ಗೆ ಭಯ ಬೇಡ, ಅದೊಂದು ಹೊಸ ಅವಕಾಶ ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್‌ನ್ನು ಭಯಪಡುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಮ್ತಿಯಾಝ್ ಇಕ್ಬಾಲ್ ಅವರ ನಿಲುವು ಭಿನ್ನವಾಗಿದೆ. AI ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂಬ ಆತಂಕವನ್ನು ಅವರು ಅತಿರೇಕವೆಂದು ನೋಡುತ್ತಾರೆ. ತಂತ್ರಜ್ಞಾನವು ಮಾನವ ಶ್ರಮವನ್ನು ಸಂಪೂರ್ಣವಾಗಿ ಬದಲಾಯಿಸುವುದಿಲ್ಲ; ಬದಲಾಗಿ ಮಾನವರು ತಮ್ಮ ಸಮಯ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚು ಮೌಲ್ಯಯುತ ಕಾರ್ಯಗಳಿಗೆ ಬಳಸಲು ಅವಕಾಶ ಮಾಡಿಕೊಡುತ್ತದೆ ಎಂಬುದು ಅವರ ಅಭಿಪ್ರಾಯ. 1970ರ ದಶಕದಿಂದ ಇಂದಿನವರೆಗೆ ಜಾಗತಿಕ ಆರ್ಥಿಕತೆಯ ಬೆಳವಣಿಗೆಯನ್ನು ಗಮನಿಸಿದರೆ, ತಂತ್ರಜ್ಞಾನವೇ ಆ ಬೆಳವಣಿಗೆಯ ಪ್ರಮುಖ ವಾಹಕ ಎಂದು ಅವರು ಹೇಳುತ್ತಾರೆ. ಯಂತ್ರಗಳು ಪುನರಾವರ್ತಿತ ಮತ್ತು ಸರಳ ಕೆಲಸಗಳನ್ನು ನಿರ್ವಹಿಸಿದಾಗ, ಮಾನವರು ಸೃಜನಶೀಲತೆ ಮತ್ತು ಮಾನವೀಯ ತೀರ್ಪು ಅಗತ್ಯವಿರುವ ಕ್ಷೇತ್ರಗಳಲ್ಲಿ ತಮ್ಮ ಶಕ್ತಿಯನ್ನು ಬಳಸಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ. ಈ ಹಿನ್ನೆಲೆಯಲ್ಲೇ, ಯುವಜನರು ಕೃತಕ ಬುದ್ಧಿಮತ್ತೆಯನ್ನು ಎದುರಾಳಿಯಾಗಿ ಅಲ್ಲ, ಸಾಧನವಾಗಿ ನೋಡಬೇಕು ಎಂದು ಅವರು ಸಲಹೆ ನೀಡುತ್ತಾರೆ. “ಯಂತ್ರದಿಂದ ಮಾಡಬಹುದಾದ ಕೆಲಸವನ್ನು ಯಂತ್ರಕ್ಕೆ ಬಿಡಿ; ಯಂತ್ರದಿಂದ ಸಾಧ್ಯವಾಗದ ಮಾನವ ತೀರ್ಮಾನ ಮತ್ತು ಚಿಂತನೆಯ ಅಗತ್ಯವಿರುವ ಕ್ಷೇತ್ರಗಳಲ್ಲಿ ನಿಮ್ಮ ಶಕ್ತಿಯನ್ನು ಹೂಡಿ” ಎಂಬುದು ಅವರ ಸ್ಪಷ್ಟೋಕ್ತಿ.  ಭಾಷಾ ಮಾಧ್ಯಮದ ಹಿಂಜರಿಕೆ ಬೇಡ ಕನ್ನಡ ಮಾಧ್ಯಮ ಅಥವಾ ಪ್ರಾದೇಶಿಕ ಭಾಷಾ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಕಡಿಮೆ ಮಟ್ಟದವರೆಂದು ಕಾಣುವ ಪ್ರವೃತ್ತಿಯನ್ನು ಇಮ್ತಿಯಾಝ್ ಇಕ್ಬಾಲ್ ಸ್ಪಷ್ಟವಾಗಿ ತಳ್ಳಿಹಾಕುತ್ತಾರೆ. ಅವರ ಪ್ರಕಾರ, ಭಾಷೆಗೆ ಯಶಸ್ಸಿನ ಅಡೆತಡೆಯಲ್ಲ; ಅದು ವ್ಯಕ್ತಿಯ ಶಕ್ತಿಯಾಗಬಹುದು. ಕನ್ನಡ ಮಾಧ್ಯಮದಲ್ಲಿ ಓದಿರುವುದನ್ನು ದೌರ್ಬಲ್ಯವೆಂದು ಎಂದಿಗೂ ನೋಡಬಾರದು ಎಂದು ಅವರು ಹೇಳುತ್ತಾರೆ. ಭಾಷೆ ಕೇವಲ ಸಂವಹನದ ಸಾಧನ; ಒಬ್ಬ ವಿದ್ಯಾರ್ಥಿ ಯಾವ ಭಾಷಾ ಮಾಧ್ಯಮದಿಂದ ಬಂದಿದ್ದಾನೆ ಎಂಬುದು ಮುಖ್ಯವಲ್ಲ ಎಂಬುದು ಅವರ ಅಭಿಪ್ರಾಯ. ತಾವು ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿ, ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾದ ಅನುಭವವನ್ನು ನೆನಪಿಸಿಕೊಂಡು ಮಾತನಾಡುವ ಅವರು, ಪ್ರಾರಂಭದಲ್ಲಿ ಅದು ಕಷ್ಟಕರವಾಗಿದ್ದರೂ, ಆ ಹೋರಾಟವೇ ತಮ್ಮ ದೃಢಸಂಕಲ್ಪವನ್ನು ಗಟ್ಟಿಗೊಳಿಸಿತು ಎಂದು ಹೇಳುತ್ತಾರೆ. ತಮ್ಮ ದೌರ್ಬಲ್ಯವನ್ನು ಗುರುತಿಸಿ ಅದನ್ನು ಎದುರಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ ಎಂದು ಅವರು ಒತ್ತಿ ಹೇಳುತ್ತಾರೆ. ಬಹುಭಾಷಾ ಪರಿಸರದಲ್ಲಿ ಬೆಳೆಯುವುದೇ ಒಂದು ದೊಡ್ಡ ಬಲ ಎಂದು ಅವರು ನಂಬುತ್ತಾರೆ. ಕರಾವಳಿ ಕರ್ನಾಟಕದಂತಹ ಪ್ರದೇಶಗಳಲ್ಲಿ ಮಕ್ಕಳು ಸಹಜವಾಗಿಯೇ ಕನ್ನಡ, ತುಳು, ಕೊಂಕಣಿ, ಬ್ಯಾರಿ ಸೇರಿದಂತೆ ಹಲವು ಭಾಷೆಗಳಲ್ಲಿ ಮಾತನಾಡುತ್ತಾ ಬೆಳೆಯುತ್ತಾರೆ. ಇದು ಕೇವಲ ಭಾಷಾ ಕೌಶಲ್ಯವಲ್ಲ; ಇದು ವಿಭಿನ್ನ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ರೂಪಿಸುತ್ತದೆ. ಜಾಗತಿಕ ವೇದಿಕೆಯಲ್ಲಿ ಯಶಸ್ವಿಯಾಗಲು ಈ ಗುಣ ಬಹಳ ಮುಖ್ಯ ಎಂದು ಇಮ್ತಿಯಾಝ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇಮ್ತಿಯಾಝ್ ಇಕ್ಬಾಲ್ ಅವರ ಮಾತಿನಲ್ಲಿ, ಜೀವನದಲ್ಲಿ ಮುಖ್ಯವಾದುದು ನೀವು ಯಾವ ಭಾಷೆಯಲ್ಲಿ ಓದಿದ್ದೀರಿ ಎಂಬುದಲ್ಲ; ನೀವು ಎಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿದ್ದೀರೋ ಅದು. ಗಮ್ಯಸ್ಥಾನದ ಸ್ಪಷ್ಟತೆ ಇದ್ದರೆ, ಭಾಷೆ, ಮಾಧ್ಯಮ ಮತ್ತು ಪರಿಸ್ಥಿತಿಗಳು ಅಡೆತಡೆಗಳಾಗಿ ಅಲ್ಲ, ಕಲಿಕೆಯ ಹಂತಗಳಾಗಿ ರೂಪುಗೊಳ್ಳುತ್ತವೆ. ನಿಮ್ಮ ಹಿನ್ನೆಲೆಯ ಬಗ್ಗೆ ಕೀಳರಿಮೆಯಿಂದ ನೋಡುವ ಅಗತ್ಯವಿಲ್ಲ. ಅದು ನಿಮ್ಮ ಶಕ್ತಿ. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು, ಗುರಿಯ ಮೇಲೆ ದೃಢವಾಗಿ ಗಮನಹರಿಸಿದರೆ, ಪ್ರಾದೇಶಿಕ ಭಾಷಾ ಶಾಲೆಯೂ ಜಾಗತಿಕ ವೇದಿಕೆಗೆ ಹೋಗುವ ದಾರಿಯಾಗಬಹುದು ಎಂದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅವರು ಯಶಸ್ಸಿನ ಸಂದೇಶ ನೀಡುತ್ತಾರೆ.

ವಾರ್ತಾ ಭಾರತಿ 29 Dec 2025 9:55 am

2017ರಿಂದ 2023ರವರೆಗಿನ ವಿಪತ್ತು ನಿರ್ವಹಣೆ ಹಣಕಾಸಿನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದ ರಾಜ್ಯ ಸರಕಾರ

ಬೆಂಗಳೂರು : ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರವು 2017-18ರಿಂದ 2022-23ರವರೆಗೆ ಬಿಡುಗಡೆಯಾಗಿದ್ದ ಒಟ್ಟು 19,644.78 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಹಣಕಾಸಿನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಹೆಚ್ಚಿನ ಮೌಲ್ಯದ ಹಣಕಾಸಿನ ವಹಿವಾಟುಗಳನ್ನು ನಡೆಸುತ್ತಿದ್ದರೂ ಸಹ ಹಣಕಾಸು ದಾಖಲೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿಲ್ಲ. ಅಲ್ಲದೇ ಹಣಕಾಸು ಔಚಿತ್ಯದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ. 2025ರ ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ಲೆಕ್ಕ ಪರಿಶೋಧನೆ ವರದಿಯು, ಕರ್ನಾಟಕದ ವಿಪತ್ತು ನಿರ್ವಹಣೆಯಲ್ಲಿನ ಹಣಕಾಸಿನ ದುರಾಡಳಿತವನ್ನು ಅನಾವರಣಗೊಳಿಸಿದೆ. ಈ ವರದಿಯ ಪ್ರತಿಯು he-file.inಗೆ ಲಭ್ಯವಾಗಿದೆ. 2017-18ರಿಂದ 2022-23ರವರೆಗಿನ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಎಸಗಿರುವ ಲೋಪ ಮತ್ತು ಉಲ್ಲಂಘನೆಗಳ ಪಟ್ಟಿಯನ್ನು ವರದಿಯಲ್ಲಿ ಒದಗಿಸಿದೆ. ಅಲ್ಲದೇ ಈ ಆರೂ ವರ್ಷಗಳಲ್ಲಿ ವಿಪತ್ತು ನಿರ್ವಹಣೆಗೆ ಸ್ವೀಕರಿಸಿರುವ ಅನುದಾನ, ಬಿಡುಗಡೆಯಾದ ಅನುದಾನ, ಮಾಡಿರುವ ವೆಚ್ಚದ ಕುರಿತು ಆರ್ಥಿಕ ದಾಖಲೆಗಳನ್ನು ಸಿಎಜಿಗೆ ಕಂದಾಯ ಇಲಾಖೆಯು ಒದಗಿಸಿರಲಿಲ್ಲ. ‘ನಿಗದಿತ ಆರ್ಥಿಕ ದಾಖಲೆಗಳ ಅನುಪಸ್ಥಿತಿಯಲ್ಲಿ ಲೆಕ್ಕ ಪರಿಶೋಧನೆಗೆ ಲಭ್ಯವಿರುವ ಆರ್ಥಿಕ ಹೇಳಿಕೆಗಳಲ್ಲಿ ಸ್ವೀಕೃತಿಗಳು ಮತ್ತು ಖರ್ಚುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಲೆಕ್ಕಪರಿಶೋಧನೆಗೆ ಸಾಧ್ಯವಾಗಲಿಲ್ಲ,’ ಎಂದು ಸಿಎಜಿಯು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ. ವಿಪತ್ತು ನಿರ್ವಹಣೆಗೆ ಸ್ವೀಕೃತವಾದ ಅನುದಾನವೆಷ್ಟು?: 2017-18ರಲ್ಲಿ ವಿಪತ್ತು ನಿರ್ವಹಣೆಯ ಖಾತೆಯಲ್ಲಿ ಆರಂಭಿಕ ಶಿಲ್ಕಿನ ರೂಪದಲ್ಲಿ 1235.52 ಕೋಟಿ ರೂ. ಇತ್ತು. ಎನ್‌ಡಿಆರ್‌ಎಫ್‌ನಿಂದ 913.04 ಕೋಟಿ ರೂ., ಎಸ್‌ಡಿಆರ್‌ಎಫ್‌ಗೆ ಕೇಂದ್ರ ಸರಕಾರವು 228.75 ಕೋಟಿ ರೂ., ರಾಜ್ಯ ಸರಕಾರವು 76.25 ಕೋಟಿ, ರಾಜ್ಯದಿಂದ ಹೆಚ್ಚುವರಿ ಅನುದಾನದ ರೂಪದಲ್ಲಿ 37.19 ಕೋಟಿ ರೂ. ಇತ್ತು. ಈ ಪೈಕಿ ಒಟ್ಟು 2,490.75 ಕೋಟಿ ರೂ. ಬಿಡುಗಡೆಯಾಗಿತ್ತು. ಇದರಲ್ಲಿ ಶೇ.97ರಷ್ಟು ಅಂದರೇ 2,411.61 ಕೋಟಿ ರೂ. ವೆಚ್ಚ ಮಾಡಿತ್ತು. 2018-19ರಲ್ಲಿ ಎನ್‌ಡಿಆರ್‌ಎಫ್‌ನಿಂದ 959.84 ಕೋಟಿ ರೂ. ಅನುದಾನ ಸ್ವೀಕೃತವಾಗಿತ್ತು. ಕೇಂದ್ರ ಸರಕಾರವು ಎಸ್‌ಡಿಆರ್‌ಎಫ್‌ಗೆ 288,.00 ಕೋಟಿ ರೂ.., ರಾಜ್ಯ ಸರಕಾರವು 32.00 ಕೋಟಿ ರೂ. ಅನುದಾನ ನೀಡಿತ್ತು. ಅಲ್ಲದೇ ರಾಜ್ಯ ಸರಕಾರವು ಹೆಚ್ಚುವರಿಯಾಗಿ 400 ಕೋಟಿ ರೂ. ಅನುದಾನ ಒದಗಿಸಿತ್ತು. ಇದರಲ್ಲಿ ಒಟ್ಟು 1,679.84 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಪೈಕಿ 1,207.22 ಕೋಟಿ ರೂ. ವೆಚ್ಚವಾಗಿತ್ತು. 2019-20ರಲ್ಲಿ ಆರಂಭಿಕ ಶಿಲ್ಕಿನಲ್ಲಿ 434.62 ಕೋಟಿ ರೂ. ಇತ್ತು. ಎನ್‌ಡಿಆರ್‌ಎಫ್‌ನಿಂದ2,744.26 ಕೋಟಿ ರೂ., ಎಸ್‌ಡಿಆರ್‌ಎಫ್‌ಗೆ ಕೇಂದ್ರ ಸರಕಾರವು 204.00 ಕೋಟಿ, ರಾಜ್ಯ ಸರಕಾರವು 132.00 ಕೋಟಿ ರೂ. ನೀಡಿತ್ತು. ಅಲ್ಲದೇ ರಾಜ್ಯ ಸರಕಾರವು ಹೆಚ್ಚುವರಿಯಾಗಿ 1,500 ಕೋಟಿ ರೂ. ಒದಗಿಸಿತ್ತು. ಈ ಪೈಕಿ 5,014.88 ಕೋಟಿ ರೂ. ಬಿಡುಗಡೆಯಾಗಿದ್ದರೇ ಇದರಲ್ಲಿ 4,899.52 ಕೋಟಿ ರೂ. ವೆಚ್ಚವಾಗಿತ್ತು. 2020-21ರಲ್ಲಿ ಎನ್‌ಡಿಆರ್‌ಎಫ್‌ನಿಂದ 577.84 ಕೋಟಿ ರೂ. ಅನುದಾನ ಸ್ವೀಕೃತವಾಗಿದ್ದರೇ ಎಸ್‌ಡಿಆರ್‌ಎಫ್‌ಗೆ ಕೇಂದ್ರ ಸರಕಾರವು 632.40 ಕೋಟಿ ರೂ., ರಾಜ್ಯ ಸರಕಾರವು 210.80 ಕೋಟಿ ರೂ. ನೀಡಿತ್ತು. ಎಸ್‌ಡಿಎಂಎಫ್‌ಗೆ ಕೇಂದ್ರ ಸರಕಾರವು 158.20 ಕೊಟಿ ರೂ., ರಾಜ್ಯ ಸರಕಾರವು 52.60 ಕೋಟಿ ರೂ. ನೀಡಿತ್ತು. ಅಲ್ಲದೇ ರಾಜ್ಯ ಸರಕಾರವು ಇದೇ ಅವಧಿಗೆ ಹೆಚ್ಚುವರಿಯಾಗಿ 608.13 ಕೋಟಿ ರೂ. ನೀಡಿತ್ತು. ಇದರಲ್ಲಿ ಬಿಡುಗಡೆಯಾಗಿದ್ದ 2,239.97 ಕೋಟಿ ರೂ. ಪೈಕಿ 2,238.37 ಕೋಟಿ ರೂ. ವೆಚ್ಚವಾಗಿತ್ತು. 2021-22ರಲ್ಲಿ ಎನ್‌ಡಿಆರ್‌ಎಫ್‌ನಿಂದ 1,734.3 ಕೋಟಿ ರೂ. ಅನುದಾನ ಸ್ವೀಕೃತವಾಗಿದ್ದರೇ ಎಸ್‌ಡಿಆರ್‌ಎಫ್‌ಗೆ ಭಾರತ ಸರಕಾರವು 632.40 ಕೋಟಿ, ರಾಜ್ಯ ಸರಕಾರವು 210.80 ಕೋಟಿ ರೂ.., ಎಸ್‌ಡಿಎಂಎಫ್‌ಗೆ ಕೇಂದ್ರ ಸರಕಾರವು 158.20 ಕೋಟಿ, ರಾಜ್ಯ ಸರಕಾರವು 52.60 ಕೋಟಿ ರೂ. ನೀಡಿತ್ತು. ಅಲ್ಲದೆ ಇದೇ ವರ್ಷಕ್ಕೆ ರಾಜ್ಯ ಸರಕಾರವು 2,426.27 ಕೋಟಿ ರೂ. ಹೆಚ್ಚುವರಿಯಾಗಿ ನೀಡಿತ್ತು. ಬಿಡುಗಡೆಯಾಗಿದ್ದ 5,214.57 ಕೋಟಿ ರೂ. ಪೈಕಿ 5,003.75 ಕೋಟಿ ರೂ. ವೆಚ್ಚವಾಗಿತ್ತು. 2022-23ರಲ್ಲಿ ಎನ್‌ಡಿಆರ್‌ಎಫ್‌ನಿಂದ 939.83 ಕೋಟಿ ರೂ., ಎಸ್‌ಡಿಆರ್‌ಎಫ್ ನಿಧಿಗೆ ಕೇಂದ್ರ ಸರಕಾರವು 664.00 ಕೋಟಿ, ರಾಜ್ಯ ಸರಕಾರವು 221.33 ಕೋಟಿ ರೂ. ನೀಡಿತ್ತು. ಎಸ್‌ಡಿಎಂಎಫ್‌ಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಹಣ ಬಿಡುಗಡೆ ಮಾಡಿರಲಿಲ್ಲ. ಬದಲಿಗೆ ಹೆಚ್ಚುವರಿಯಾಗಿ 1,179.61 ಕೋಟಿ ರೂ. ಒದಗಿಸಿತ್ತು. ಬಿಡುಗಡೆಯಾಗಿದ್ದ 3,004.77 ಕೋಟಿ ರೂ. ಪೈಕಿ 2,939.41 ಕೋಟಿ ರೂ. ವೆಚ್ಚ ಮಾಡಿತ್ತು. ಒಟ್ಟಾರೆಯಾಗಿ ಎನ್‌ಡಿಆರ್‌ಎಫ್‌ನಿಂದ ಈ ಆರೂ ವರ್ಷಗಳಲ್ಲಿ 7,869.11 ಕೋಟಿ ರೂ. ಅನುದಾನ ಸ್ವೀಕೃತವಾಗಿತ್ತು. ಎಸ್‌ಡಿಆರ್‌ಎಫ್ ನಿಧಿಗೆ ಕೇಂದ್ರ ಸರಕಾರವು 2,649.55 ಕೋಟಿ ರೂ.., ರಾಜ್ಯ ಸರಕಾರವು 883.18 ಕೋಟಿ ರೂ., ಎಸ್ಡಿಎಂಎಫ್ಗೆ ಕೇಂದ್ರ ಸರಕಾರವು 316.40 ಕೋಟಿ, ರಾಜ್ಯ ಸರಕಾರವು 105.20 ಕೋಟಿ ರೂ. ನೀಡಿತ್ತು. ರಾಜ್ಯ ಸರಕಾರವು ಹೆಚ್ಚುವರಿಯಾಗಿ ಒಟ್ಟು 6,151.20 ಕೋಟಿ ರೂ. ಅನುದಾನ ಒದಗಿಸಿತ್ತು. ಒಟ್ಟು ಬಿಡುಗಡೆಯಾಗಿದ್ದ 19,644.78 ಕೋಟಿ ರೂ. ಪೈಕಿ 18,699.88 ಕೋಟಿ ರೂ. ವೆಚ್ಚ ಮಾಡಿತ್ತು ಎಂದು ಸಿಎಜಿಯು ತನ್ನ ವರದಿಯಲ್ಲಿ ಪಟ್ಟಿ ನೀಡಿದೆ. ಬಿಡುಗಡೆಯಾಗದ 210.80 ಕೋಟಿ ರೂ.: ಎಸ್‌ಡಿಎಂಎಫ್ ಅಡಿಯಲ್ಲಿ ರಾಜ್ಯ ಸರಕಾರವು (2020-21) ಭಾರತ ಸರಕಾರದಿಂದ ಮಾರ್ಗಸೂಚಿಗಳನ್ನು ಸ್ವೀಕರಿಸುವವರೆಗೆ ಅನುದಾನ ಬಳಸದಂತೆ ಸೂಚನೆ ನೀಡಿತ್ತು. ಮತ್ತು ಜಿಲ್ಲಾ ಕಚೇರಿಗಳಿಗೆ 184.50 ಕೋಟಿ ರೂ.ಗಳನ್ನು (ಲಭ್ಯವಿದ್ದ 210.80 ಕೋಟಿ ರೂ.) ಬಿಡುಗಡೆ ಮಾಡಿತ್ತು. 2021-22ಕ್ಕೆ ಸಂಬಂಧಿಸಿ ಒಟ್ಟು 210.80 ಕೋಟಿ ರೂ.ಗಳ ನಿಧಿಯನ್ನು ಅನುಷ್ಠಾನ ಏಜೆನ್ಸಿಗಳಿಗೆ ಬಿಡುಗಡೆಯನ್ನೇ ಮಾಡಿರಲಿಲ್ಲ. ಬದಲಿಗೆ ರಾಜ್ಯ ಸರಕಾರವು ತನ್ನಲ್ಲೇ ಉಳಿಸಿಕೊಂಡಿತ್ತು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಇದಲ್ಲದೇ 2022-23ನೇ ಸಾಲಿನಲ್ಲಿ ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಭಾರತ ಸರಕಾರದ ಪಾಲು 166.05 ಕೋಟಿ ರೂ. ಮತ್ತು ರಾಜ್ಯ ಸರಕಾರದ ಪಾಲು 55.35 ಕೋಟಿ ರೂ. ಸೇರಿ ಒಟ್ಟು 221.40 ಕೋಟಿ ರೂ. ಗಳನ್ನು ಎಸ್ಡಿಎಂಎಫ್ ಅಡಿಯಲ್ಲಿ ಒದಗಿಸಬೇಕಿತ್ತು. ಆದರೂ ಭಾರತ ಸರಕಾರದಿಂದ ಮೀಸಲಿಟ್ಟ ಮೊತ್ತವನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ರಾಜ್ಯ ಸರಕಾರವೂ ತನ್ನ ಹೊಂದಾಣಿಕೆ ಪಾಲನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಒಟ್ಟು 421.60 ಕೋಟಿ ರೂ. ನಿಧಿಯ ಲಭ್ಯತೆ ಇದ್ದರೂ ಸಹ ವಿವಿಧ ವಿಪತ್ತುಗಳನ್ನು ಶಮನಗೊಳಿಸುವ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ. ಖಾತೆಯಲ್ಲಿ ವ್ಯತ್ಯಾಸಗಳು ಪತ್ತೆ 2017-18ರಿಂದ 2022-23ರವರೆಗಿನ ಆರಂಭಿಕ ಶಿಲ್ಕು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಎಸ್‌ಡಿಎಂಎಫ್, ರಾಜ್ಯದಿಂದ ಹೆಚ್ಚುವರಿಯಾಗಿ ಒದಗಿಸಿದ್ದ ಅನುದಾನದ ರಸೀದಿಗಳು, ವೆಚ್ಚದಲ್ಲಿ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳನ್ನು ಸಿಎಜಿಯು ಪತ್ತೆ ಹಚ್ಚಿದೆ. ಇದರ ಪ್ರಕಾರ 2019-20ರ ಅವಧಿಯಲ್ಲಿ ಸಿಡಿಎಂ-ಎಟಿಐಗೆ 4.19 ಕೋಟಿ ರೂ. ವರ್ಗಾವಣೆ ಮಾಡಬೇಕಿತ್ತು. ಆದರೆ ಇಲಾಖೆಯು 0.13 ಕೋಟಿ ರೂ. ಕಡಿಮೆ ಮಾಡಿ ಕೇವಲ 4.06 ಕೋಟಿ ರೂ.ವರ್ಗಾವಣೆ ಮಾಡಿತ್ತು. ಅದೇ ರೀತಿ 2021-22ರಲ್ಲಿ ಸಿಡಿಎಂ-ಎಟಿಐಗೆ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತೋರಿಸಿದ್ದರೂ ಹಣವನ್ನು ವಾಸ್ತವಿಕವಾಗಿ ವರ್ಗಾಯಿಸಿರಲೇ ಇಲ್ಲ. ಅಲ್ಲದೇ ಹಣಕಾಸಿನ ಅಂಕಿ ಅಂಶಗಳನ್ನು ನಿಯತಕಾಲಿಕವಾಗಿ ಹೊಂದಾಣಿಕೆಯನ್ನೂ ಮಾಡಲಿಲ್ಲ. ‘ಜಿಲ್ಲೆಗಳು ಅಥವಾ ಏಜೆನ್ಸಿಗಳು ಬಿಡುಗಡೆಯಾದ ಅನುದಾನವನ್ನು ಸೆಳೆದುಕೊಳ್ಳದಿರುವುದರಿಂದ ಅಥವಾ ಕೈ ತಪ್ಪಿ ಹೋಗಿರುವುದರಿಂದ ಅಂಕಿ ಅಂಶಗಳೊಂದಿಗೆ ವ್ಯತ್ಯಾಸದ ಸಾಧ್ಯತೆಯಿದೆ’ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ವಾರ್ತಾ ಭಾರತಿ 27 Dec 2025 9:35 am

ಬಿಸಿಲನಾಡಿನಲ್ಲಿ ಎಗ್ಗಿಲ್ಲದೆ ಬೆಳೆದ ಕೋನೊಕಾರ್ಪಸ್

ಬಿಸಿಲ ನಾಡು ರಾಯಚೂರನ್ನು ಹಸಿರು ನಗರವನ್ನಾಗಿ ಮಾಡುವ ಸಂಘ ಸಂಸ್ಥೆಗಳು, ಅನೇಕ ಪರಿಸರ ಪ್ರೇಮಿಗಳು ಗಿಡಗಳನ್ನು ಹಾಕಿ ಪೋಷಣೆ ಮಾಡುತ್ತಿದ್ದರೆ, ಪಾಲಿಕೆ ಮಾತ್ರ ತನಗರಿವಿಲ್ಲದೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೋನೋಕಾರ್ಪಸ್ ಗಿಡಗಳನ್ನು ಪೋಷಣೆ ಮಾಡಲು ಹೊರಟಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು, ಗಿಡಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ. ಆದರೆ ಗಿಡ ಮರಗಳು ಹಾನಿಯನ್ನೂ ಉಂಟು ಮಾಡುತ್ತವೆ.ಅಂತಹ ಸಾಲಿನಲ್ಲಿ ಕೊನೊಕಾರ್ಪಸ್ ಗಿಡಗಳು ಒಂದಾಗಿವೆ. ಕೊನೊಕಾರ್ಪಸ್ ಮರಗಳು (ದುಬೈ ಗಿಡ) ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಮತ್ತು ಇತರ ಗಿಡ ಮರಗಳಿಗೆ ಹಾನಿಕಾರಕ ಎಂದು ತೆಲಂಗಾಣ, ಗುಜರಾತ್ ಹಾಗೂ ಕರ್ನಾಟಕ ರಾಜ್ಯದ ಯಾದಗಿರಿಯಲ್ಲಿ ನಿಷೇಧಿಸಲಾಗಿದೆ. ನೀರಿಲ್ಲದೆ ಬೆಳೆಯುವ ಕೊನೊಕಾರ್ಪಸ್ ಮರಗಳು ಸುಂದರವಾಗಿ ಕಾಣುವುದರಿಂದ ಇವುಗಳನ್ನು ರಾಯಚೂರಿನ ಲಿಂಗಸುಗೂರು, ಮಂತ್ರಾಲಯ ರಸ್ತೆಯ ಮಧ್ಯದ ವಿಭಜಕದಲ್ಲಿ ಬೆಳೆಸಲಾಗಿದೆ. ಈ ಹಿಂದೆ ನಗರಸಭೆ ಇದ್ದಾಗ ಪ್ರತಿ ದಿನ ಡಿವೈಡರ್ ಮಧ್ಯೆ ಅನೇಕ ಬಗೆಯ ಅಲಂಕಾರಿಕ ಸಸಿಗಳನ್ನು ನೆಟ್ಟು ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರುಣಿಸಿ ಪೋಷಣೆ ಮಾಡಲಾಗುತ್ತಿತ್ತು. ಆದರೆ ಈಗ ಅದೇ ಜಾಗದಲ್ಲಿ ಕೋನೊಕಾರ್ಪಸ್ ಮರಗಳು ಬಹಳ ಎತ್ತರಕ್ಕೆ ಬೆಳೆದಿವೆ. ಬೇರುಗಳನ್ನು ತುಂಬಾ ಆಳಕ್ಕಿಳಿಸುವ ಈ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲವನ್ನು ಹೀರಿಕೊಳ್ಳುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತದೆ. ಈ ಮರಗಳು ಕಠಿಣ ಪರಿಸ್ಥಿತಿಗಳಲ್ಲಿಯೂ ಬೆಳೆಯುತ್ತವೆ ಮತ್ತು ವರ್ಷವಿಡೀ ಹಸಿರಾಗಿರುತ್ತವೆ. ಇವು ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಮತ್ತು ಮರುಭೂಮಿಯಲ್ಲಿ ಮರಳಿನ ಬಿರುಗಾಳಿ ತಡೆಯಲು ಸಹಾಯ ಮಾಡುತ್ತವೆ ಎಂದು ವರದಿಗಳು ತಿಳಿಸಿವೆ. ಪರಿಸರವಾದಿಗಳ ಪ್ರಕಾರ ಗುಜರಾತಿನ ಕರಾವಳಿ ಮತ್ತು ಕಛ್‌ನಂತಹ ಶುಷ್ಕ ಜಿಲ್ಲೆಗಳಲ್ಲಿ ಈ ಮರಗಳು ವ್ಯಾಪಕವಾಗಿ ಬೆಳೆದಿವೆ. ಈ ಮರವು ವರ್ಷವಿಡೀ ಕಡು ಹಸಿರು ಎಲೆಗಳಿಗೆ ಹೆಸರುವಾಸಿಯಾಗಿದೆ. ಎಂತಹ ಕಠಿಣ ವಾತಾವರಣವನ್ನೂ ಇವು ತಡೆದುಕೊಳ್ಳುತ್ತವೆ. ಇವು ತೀವ್ರ ಲವಣಾಂಶವಿರುವ ಪ್ರದೇಶಗಳಲ್ಲಿಯೂ ಬೆಳೆಯಬಲ್ಲದು. ಹಸಿರೀಕರಣದ ಹೆಸರಿನಲ್ಲಿ ಎಡವಟ್ಟು: ಬಿಸಿಲನಾಡು ಎಂಬ ಅಪಖ್ಯಾತಿಗೆ ಗುರಿಯಾದ ರಾಯಚೂರು ಜಿಲ್ಲೆಯಲ್ಲಿ ಬೇಸಿಗೆಯ ವೇಳೆ ತಾಪಮಾನ 40ರಿಂದ 45 ಡಿಗ್ರಿವರೆಗೆ ದಾಖಲಾದ ಇತಿಹಾಸ ಇದೆ. ಹೀಗಾಗಿ ಕೆಲ ವರ್ಷಗಳಿಂದ ಗ್ರೀನ್ ರಾಯಚೂರು, ಸೂರ್ಯೋದಯ ವಾಕಿಂಗ್ ಕ್ಲಬ್, ವನಸಿರಿ ಫೌಂಡೇಶನ್, ರಾಯಚೂರು ಹಸಿರುಬಳಗ ಎಂಬ ಸಂಘ ಸಂಸ್ಥೆಗಳು, ಈರಣ್ಣ ಕೋಸಗಿ ಎಂಬವರು ಸಸಿಗಳನ್ನು ನೆಟ್ಟು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಆದರೆ ಇವೆಲ್ಲದರ ನಡುವೆ ಕೋನೊಕಾರ್ಪಸ್ ಗಿಡಗಳನ್ನು ಬೆಳೆಸಲು ಪಾಲಿಕೆ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತಿರುವ ಅನೇಕ ಸಂಘ ಸಂಸ್ಥೆಗಳು ತಮ್ಮದೇ ಆದ ಪರಿಶ್ರಮ ವಹಿಸಿ ರಾಯಚೂರನ್ನು ಸ್ವಚ್ಛ ಹಸಿರುನಗರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಆದರೆ ಮಾನವ ವಿರೋಧಿಯಾಗಿರುವ ಕೊನೊಕಾರ್ಪಸ್ ಗಿಡಗಳನ್ನು ಎಲ್ಲೆಡೆ ಬೆಳೆಸಿದ್ದು ಆಶ್ಚರ್ಯವಾಗಿದೆ. ದುಬೈ ಗಿಡ ಅಂತಲೂ ಕರೆಯಲ್ಪಡವ ಈ ಸಸ್ಯ, ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗುವುದಲ್ಲದೆ, ಮನುಷ್ಯರಿಗೆ ಆಸ್ತಮಾ, ಉಸಿರಾಟದ ಸಮಸ್ಯೆಗಳನ್ನು ತಂದಿಡುತ್ತದೆ ಅನ್ನುವುದು ವರದಿಗಳಲ್ಲಿ ಬಹಿರಂಗವಾಗಿದೆ. ಕಡಿಮೆ ನೀರಿನಲ್ಲಿ ಹಚ್ಚ ಹಸಿರಾಗಿ ಕಂಗೊಳಿಸುವ ಈ ಗಿಡದ ನಿರ್ವಹಣೆ ಕೂಡ ಸುಲಭವಾಗಿರುವುದರಿಂದ ಪಾಲಿಕೆ ಇದನ್ನು ನೆಟ್ಟು ಪೋಷಿಸುತ್ತಿರುವುದು ಸರಿಯಲ್ಲ, ಕೂಡಲೇ ಇದನ್ನು ತೆರವುಗೊಳಿಸಬೇಕು. - ಸುರೇಶ್ ಜಾನೆಕಲ್ ಸಾಮಾಜಿಕ ಕಾರ್ಯಕರ್ತರು, ರಾಯಚೂರು ಆರೋಗ್ಯ ಸಮಸ್ಯೆ: ಈ ಮರದ ಬೇರುಗಳು ಆಳಕ್ಕೆ ಹೋಗಿ ಸಂವಹನ ಕೇಬಲ್‌ಗಳು, ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಗಳನ್ನು ಹಾನಿಗೊಳಿಸುತ್ತವೆ ಎಂಬ ದೂರುಗಳು ಕೇಳಿಬಂದಿವೆ. ಈ ಮರಗಳು ಹೂಬಿಡುವ ಋತುಗಳಲ್ಲಿ ಪರಾಗವನ್ನು ಬಿಡುಗಡೆ ಮಾಡುತ್ತವೆ. ಇದು ಅಸ್ತಮಾ, ರಿನಿಟಿಸ್ ಮತ್ತು ಇತರ ಅಲರ್ಜಿಯ ಪ್ರತಿಕ್ರಿಯೆಗಳಂತಹ ಉಸಿರಾಟದ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಗರದ ಹಲವೆಡೆ ಬೆಳೆಸಿರುವ ಕೋನೊಕಾರ್ಪಸ್ ಗಿಡಗಳ ಬೆಳವಣಿಗೆಗೆ ನಿಯಂತ್ರಣ ಹಾಕಬೇಕು. ಸರಕಾರ ನೇಮಿಸಿದ ಪರಿಸರ ತಜ್ಞರ ಸಮಿತಿಯು, ಕೊನೊಕಾರ್ಪಸ್ ಮರದ ಪ್ರಭೇದವನ್ನು ನಿಷೇಧಿಸಲು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದ್ದು ಇಲ್ಲಿ ಗಮನಿಸಬೇಕು. ಈ ಭಾಗದ ಜನರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡದೆ ಪಾಲಿಕೆ ಇವುಗಳನ್ನು ತೆರವುಗೊಳಿಸಿ ಪರಿಸರ ಸ್ನೇಹಿ ಗಿಡಗಳನ್ನು ಬೆಳೆಸಬೇಕು. -ರಾಜೇಂದ್ರ ಶಿವಾಳೆ ‘ಗ್ರೀನ್ ರಾಯಚೂರು’ ಸಂಸ್ಥೆಯ ಸಹ ಸಂಚಾಲಕ ವಿವಿಧೆಡೆ ನಿಷೇಧ: ತೆಲಂಗಾಣ, ಗುಜರಾತ್ ಹಾಗೂ ಕರ್ನಾಟಕದ ಯಾದಗಿರಿಗಳಲ್ಲಿ ಈ ಮರಗಳನ್ನು ನಿಷೇಧಿಸಲಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಹಾಕಿದ ಗಿಡಗಳನ್ನು ಕಿತ್ತುಹಾಕಲಾಗುತ್ತಿದೆ. ಆದರೆ ರಾಯಚೂರಿನಲ್ಲಿ ಮಾತ್ರ ಇವುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ದುರ್ದೈವದ ಸಂಗತಿ.

ವಾರ್ತಾ ಭಾರತಿ 26 Dec 2025 2:24 pm

ಇವರ ಮುಂದಿನ ಗುರಿ ಸಂವಿಧಾನ ನಾಶ

ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತೀಯ ಅನ್ನುವುದು ಏನೂ ಇಲ್ಲ ಎಂದು ಹೇಳಿದ ಗೋಳ್ವಾಲ್ಕರ್ ಇದರ ಬದಲಿಗೆ ಮನುಸ್ಮತಿಯನ್ನು ಆಧರಿಸಿದ ಸಂವಿಧಾನವನ್ನು ತರಬೇಕೆಂದು ಪ್ರತಿಪಾದಿಸಿದರು.ಆದರೆ ಒಮ್ಮ್ಮೆಲೇ ಇದನ್ನು ಮಾಡಲಾಗುವುದಿಲ್ಲ ಅವಸರ ಮಾಡಿದರೆ ದಲಿತ, ಹಿಂದುಳಿದ ಸಮುದಾಯಗಳ ಶೇಕಡ 90ರಷ್ಟು ಜನರು ತಿರುಗಿ ಬೀಳುತ್ತಾರೆ ಎಂಬುದನ್ನು ಅರಿತ ಇವರು ಅದಕ್ಕೆ ಕಾಲ ಪಕ್ವಗೊಳಿಸಲು ಒಂದೊಂದಾಗಿ ಹೆಜ್ಜೆ ಇಡುತ್ತ್ತಾ ಬಂದಿದ್ದಾರೆ. ಕೇಂದ್ರದಲ್ಲಿ 11 ವರ್ಷಗಳ ಹಿಂದೆ ಇವರು ಅಧಿಕಾರಕ್ಕೆ ಬಂದರು. ಆವಾಗಿನಿಂದ ಮಾಡುತ್ತ ಬಂದ ಅವಾಂತರಗಳೆಲ್ಲ ಅನಿರೀಕ್ಷಿತ ಆಗಿರಲಿಲ್ಲ. ಆದರೆ ಆ ದಿಕ್ಕಿನತ್ತ ಸಾಗಿದ ದಾರಿ ಮತ್ತು ಸಂದರ್ಭ ಮಾತ್ರ ನಿರೀಕ್ಷಿತವಾಗಿರಲಿಲ್ಲ. ಒಂದೊಂದಾಗಿ ಮುಗಿಸುತ್ತ ಬಂದರು. ಕೊನೆಗೆ ಈಗ ಉಳಿದಿರುವುದು ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ.ಇದೇ ಇವರ ನಿಜವಾದ ಟಾರ್ಗೆಟ್. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ) ಎಂಬ ಹೆಸರನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ_-ಜಿ ರಾಮ್ ಜಿ) ಎಂದು ಬದಲಿಸಲು ಹೊರಟ ಕೇಂದ್ರದ ಕ್ರಮ ದುರುದ್ದೇಶದಿಂದ ಕೂಡಿದ ರಾಜಕೀಯ ಕ್ರಮ ಮಾತ್ರವಲ್ಲ ಅಂತಿಮವಾಗಿ ಈ ಯೋಜನೆಯನ್ನು ಸಮಾಧಿ ಮಾಡುವುದಾಗಿದೆ. ಅವಕಾಶ ವಂಚಿತರು ಮತ್ತು ಬಡವರಿಗಾಗಿ ಹಿಂದಿನ ಸರಕಾರಗಳು ರೂಪಿಸಿದ ಯಾವ ಯೋಜನೆಯನ್ನೂ ಇವರು ಉಳಿಯಗೊಡುವುದಿಲ್ಲ. ಅಧಿಕಾರಕ್ಕೆ ಬಂದ ಹನ್ನೊಂದು ವರ್ಷಗಳಲ್ಲಿ ಯಾವುದೇ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗದಿದ್ದರೂ ಇರುವ ಯೋಜನೆಗಳ, ಊರುಗಳ, ಬಡಾವಣೆಗಳ ಹೆಸರುಗಳನ್ನು ಬದಲಿಸುವುದು ಇವರ ದುರುದ್ದೇಶ ಪೂರಿತ ಚಾಳಿ. ಆದರೆ ಎಂನರೇಗಾದ ಹೆಸರನ್ನು ಬದಲಿಸುವ ಹಿಂದೆ ಗಾಂಧೀಜಿ ಬಗೆಗಿನ ದ್ವೇಷ ಮಾತ್ರವಲ್ಲ ಹಿಂದಿನ ಸರಕಾರಗಳು ವಿಶೇಷವಾಗಿ ಯುಪಿಎ(1) ರೂಪಿಸಿ ಜಾರಿಗೆ ತಂದುದನ್ನೆಲ್ಲ ಮುಗಿಸುವುದಾಗಿದೆ. ಸ್ವಾತಂತ್ರ್ಯಾನಂತರ ನೆಹರೂ ಕಾಲದಿಂದ ರೂಪುಗೊಂಡದ್ದನ್ನೆಲ್ಲ ಹೊಸಕಿ ಹಾಕುತ್ತ ಬಂದರು. ಎಲ್ಲವೂ ತಮ್ಮ ಕಾಲದಲ್ಲೇ ಶುರುವಾಯಿತು ಎಂದು ದಾಖಲಿಸುವುದು ಇವರ ಮಸಲತ್ತಾಗಿದೆ. ಉದಾಹರಣೆಗೆ ಯೋಜನಾ ಆಯೋಗದ ಹೆಸರನ್ನೇ ಬದಲಿಸಿದರು. ಈಗಿರುವ ಸಂಸತ್ ಭವನಕ್ಕೆ ಬದಲಿಯಾಗಿ ಹೊಸ ಸಂಸತ್ ಭವನವನ್ನೇ ನಿರ್ಮಿಸಿದರು. ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ, ಆಗುತ್ತಿದೆ. ಬಾಬರಿ ಮಸೀದಿ ನೆಲಸಮಗೊಳಿಸಿದ್ದನ್ನು ನ್ಯಾಯಾಲಯವನ್ನು ಮಣಿಸಿ ನ್ಯಾಯ ಸಮ್ಮತಗೊಳಿಸಿದರು.ಆಗಿನಿಂದ ಒಂದೊಂದಾಗಿ ನಾಗಪುರದಲ್ಲಿ ರೂಪುಗೊಂಡ ಕಾರ್ಯ ಸೂಚಿಗಳನ್ನು ಜಾರಿಗೊಳಿಸುತ್ತಲೇ ಇದ್ದಾರೆ. ಈಗ ಇವರ ಮುಂದಿನ ತಕ್ಷಣದ ಗುರಿ ಸಂವಿಧಾನ. ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಸಂವಿಧಾನ ಕಾರಣ ಎಂದು ಸಂಘ ಪರಿವಾರ ಹೇಳುತ್ತಲೇ ಬಂದಿದೆ.ಅದನ್ನು ಹಿಂದೂ ವಿರೋಧಿ ಎಂದು ದೂಷಿಸುತ್ತಲೇ ಬಂದಿದೆ. ಇದೆಲ್ಲ ಇತ್ತೀಚೆಗೆ ರೂಪುಗೊಂಡ ಯೋಜನೆಗಳಲ್ಲ. 1992ರ ಅಕ್ಟೋಬರ್ 13-14ರಂದು ನಡೆದ ವಿಶ್ವ ಹಿಂದೂ ಪರಿಷತ್‌ನ ಸಂತ ಮಂಡಳಿಯ ಸಭೆಯಲ್ಲಿ ಕೈಗೊಂಡ ತೀರ್ಮಾನವಿದು. ಇದಕ್ಕಾಗಿ ಸ್ವಾಮಿ ಮುಕ್ತಾನಂದ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಪ್ರಸಕ್ತ ಸಂವಿಧಾನವನ್ನು ಟೀಕಿಸುವ ಮತ್ತು ಹಿಂದುತ್ವ ಆಧಾರದಲ್ಲಿ ಹೊಸ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿತ್ತು. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಹಾಗೂ ಸಂಘಟನೆಗಳು ಎಚ್ಚರಗೊಳ್ಳಲೇ ಇಲ್ಲ. ಎಡಪಂಥೀಯ ಪಕ್ಷಗಳು ಹಾಗೂ ಸಂಘಟನೆಗಳು ವಿರೋಧಿಸಿದರೂ ಪ್ರಯೋಜನ ಆಗಲಿಲ್ಲ. ಚುನಾವಣಾ ರಾಜಕೀಯದಲ್ಲಿ ಅವರು ಪ್ರಬಲರಾಗುತ್ತ ಬಂದರು. ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಪ್ರಸಕ್ತ ಸಂವಿಧಾನದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮತ ನಿರಪೇಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ. ಆದ್ದರಿಂದ ಶ್ರೇಣೀಕೃತ ಜಾತಿ ಪದ್ಧ್ದತಿಯನ್ನು ಮರು ಸ್ಥಾಪಿಸಲು ಅದಕ್ಕೆ ಮನುಸ್ಮತಿ ಆಧಾರದಲ್ಲಿ ಕಾನೂನಿನ ಸ್ವರೂಪ ಕೊಡಲು ತಮ್ಮದೇ ಆದ ಹೊಸ ಸಂವಿಧಾನ ಇವರಿಗೆ ಬೇಕಾಗಿದೆ. ತಮ್ಮ ಗುರಿಯನ್ನು ಇವರು ಬಚ್ಚಿಟ್ಟುಕೊಂಡಿಲ್ಲ.ಹೇಳುತ್ತಲೇ ಬಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊದಲ ಸರ ಸಂಘಚಾಲಕ ಕೇಶವ ಬಲರಾಮ ಹೆಡ್ಗೆವಾರ್ ಅವರಿಗಿಂತ ಸಂಘಕ್ಕೆ ಸ್ಪಷ್ಟವಾದ, ನಿರ್ದಿಷ್ಟವಾದ ಸೈದ್ಧಾಂತಿಕ ಪ್ರಣಾಳಿಕೆ ನೀಡಿದವರು ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ . ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತೀಯ ಅನ್ನುವುದು ಏನೂ ಇಲ್ಲ ಎಂದು ಹೇಳಿದ ಗೋಳ್ವಾಲ್ಕರ್ ಇದರ ಬದಲಿಗೆ ಮನುಸ್ಮತಿಯನ್ನು ಆಧರಿಸಿದ ಸಂವಿಧಾನವನ್ನು ತರಬೇಕೆಂದು ಪ್ರತಿಪಾದಿಸಿದರು.ಆದರೆ ಒಮ್ಮ್ಮೆಲೇ ಇದನ್ನು ಮಾಡಲಾಗುವುದಿಲ,್ಲ ಅವಸರ ಮಾಡಿದರೆ ದಲಿತ ,ಹಿಂದುಳಿದ ಸಮುದಾಯಗಳ ಶೇಕಡ 90ರಷ್ಟು ಜನರು ತಿರುಗಿ ಬೀಳುತ್ತಾರೆ ಎಂಬುದನ್ನು ಅರಿತ ಇವರು ಅದಕ್ಕೆ ಕಾಲ ಪಕ್ವಗೊಳಿಸಲು ಒಂದೊಂದಾಗಿ ಹೆಜ್ಜೆ ಇಡುತ್ತ ಬಂದಿದ್ದಾರೆ.ಈಗ ನಿಧಾನವಾಗಿ ಸಂವಿಧಾನದ ಬಳಿ ಬರುತ್ತಿದ್ದಾರೆ. ಇವರ ಅಂತಿಮ ಗುರಿ ಸಂವಿಧಾನ ವಾಗಿದೆ.ಅದಕ್ಕೆ ಈಗ ಅಪಾಯ ಎದುರಾಗಿದೆ. ಅಸ್ಪಶ್ಯತೆ,ಶ್ರೇಣೀಕೃತ ಜಾತಿ ಪದ್ಧ್ದತಿ, ಸತಿ ಸಹಗಮನ ಪದ್ಧ್ದತಿಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳೆಂದು ಹಿಂದೊಮ್ಮೆ ಪುರಿ ಶಂಕರಾಚಾರ್ಯರು ಹೇಳಿದಾಗ ಅದನ್ನು ಸಮರ್ಥಿಸಿದ ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತ ಕಾರ್ಯದರ್ಶಿಯಾಗಿದ್ದ ಅಶೋಕ ಸಿಂಘಾಲರು ನಮ್ಮ ಧಾರ್ಮಿಕ ಆಚಾರ್ಯರು ಉಪದೇಶ ಮಾಡಿದ ಧರ್ಮವನ್ನೇ ನಾವು ಕಾನೂನಿಂತೆ ಪಾಲಿಸುತ್ತೇವೆ ಎಂದು ಹೇಳಿದ್ದರು. ಸಿಂಘಾಲ್,ಗೋಳ್ವ್ವಾಲ್ಕರ್ ನಂತರವೂ ಸಂಘ ಪರಿವಾರ ಇದೇ ನಿಲುವಿಗೆ ಬದ್ಧವಾಗಿದೆ. ಈಗ ತಮಗೆ ಅನುಕೂಲಕರವಾಗಿ ವಾತಾವರಣವನ್ನು ಹೇಗೆ ಬದಲಿಸಿಕೊಂಡಿದ್ದಾರೆ ಅಂದರೆ ಗಾಂಧೀಜಿ, ಜವಾಹರಲಾಲ್ ನೆಹರೂ ಅವರನ್ನು ದ್ವೇಷಿಸುವ, ಹೊಲಸು ಭಾಷೆಯಲ್ಲಿ ಬೈಯುವ ಬಹುದೊಡ್ಡ ಬೆಂಬಲಿಗೆ ವರ್ಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಹೀಗೆ ಒಂದೊಂದಾಗಿ ಜಾರಿಗೆ ತರುತ್ತಾರೆ. ಯಾವುದಕ್ಕೂ ಅವಸರ ಮಾಡುವುದಿಲ್ಲ. ಹೀಗೆ ಮಾಡುತ್ತ ಹೋಗಿ ಕೊನೆಗೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಭಾರತದ ಸಂವಿಧಾನವನ್ನು ಬದಲಿಸಲು ಕೈ ಹಾಕುತ್ತಾರೆ. ಮೊದಲು ಯಾರಾರಿಂದಲೋ ಸಂವಿಧಾನದ ವಿರುದ್ಧ ಹೇಳಿಕೆ ನೀಡಿಸುತ್ತಾರೆ.ಅದಕ್ಕೆ ಬರುವ ಪ್ರತಿಕ್ರಿಯೆಯನ್ನು ಗಮನಿಸಿ ಮುಂದಿನ ಹೆಜ್ಜೆ ಇಡುತ್ತಾರೆ. ಈಗ ಗುರಿಯತ್ತ ಎಷ್ಟು ಸಮೀಪಿಸಿದ್ದಾರೆ ಎಂದರೆ ದೇಶದ ರಾಜಧಾನಿ ದಿಲ್ಲಿಯಲ್ಲಿ ಸಂಸತ್ ಭವನದ ಸಮೀಪದಲ್ಲೇ ಹಾಡಹಗಲೇ ಸಂವಿಧಾನಕ್ಕೆ ಅಗ್ನಿಸ್ಪರ್ಶ ಮಾಡಿ ದಕ್ಕಿಸಿಕೊಂಡರು. ಇವರೇ ಸೃಷ್ಟಿಸಿದ ಭಕ್ತರ ಮೂಲಕ ಇದನ್ನೆಲ್ಲ ಮಾಡಿಸಿ ಇದಕ್ಕೆ ಬರುವ ಪ್ರತಿಕ್ರಿಯೆಯನ್ನು ಅವಲೋಕಿಸಿ ಮುಂದಿನ ಕ್ರಮವನ್ನು ರೂಪಿಸುತ್ತಾರೆ. ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುವುದು ಉಳಿದ ಪಕ್ಷಗಳಂತಲ್ಲ. ಬಿಜೆಪಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಸೂತ್ರದ ಗೊಂಬೆಯಂತೆ ಕುಣಿಯುವ ಪಕ್ಷ.ಸಮಾನತೆ ಹಾಗೂ ಪ್ರಜಾಪ್ರಭುತ್ವ ಎಂಬ ಪದಗಳು ಬಿಜೆಪಿಗೆ ಅಪಥ್ಯ. ಅದೇ ರೀತಿ ಸಂವಿಧಾನ ಕೂಡ. ಸಂವಿಧಾನದ ಪ್ರಕಾರ ಮಹಿಳೆ ,ಪುರುಷ ಎಲ್ಲರೂ ಸಮಾನರು.ಮನುಸ್ಮತಿಯಲ್ಲಿ ನಂಬಿಕೆ ಇಟ್ಟವರಿಗೆ ಸಂವಿಧಾನ ಇಷ್ಟ ವಾಗುವುದಿಲ್ಲ. ಹೀಗಾಗಿ ಅದನ್ನು ಬದಲಿಸುವ ಬಹುದೊಡ್ಡ ಷಡ್ಯಂತ್ರ ರೂಪುಗೊಂಡಿದೆ.ಅದರ ಭಾಗವಾಗಿ ಸಾಂವಿಧಾನಿಕ ಸಂಸ್ಥೆಗಳಾದ ಚುನಾವಣಾ ಆಯೋಗ,ನ್ಯಾಯಾಂಗ ಮೊದಲಾದವುಗಳನ್ನು ಮುಗಿಸಿದ ನಂತರ ಇವರ ಕೊನೆಯ ಗುರಿ ಸಂವಿಧಾನ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ.ಇದು ಎಲ್ಲಿಗೆ ಹೋಗಿ ತಲುಪುವುದೋ ಗೊತ್ತಿಲ್ಲ. ಬಹುತ್ವ ಭಾರತವನ್ನು ಯಾದವೀ ಕಲಹದ ಬೆಂಕಿಗೆ ತಳ್ಳುವ ದಿಕ್ಕಿನತ್ತ ಸಾಗುತ್ತಿದ್ದಾರೆ. ಸಂವಿಧಾನವನ್ನು ನಾಶ ಮಾಡಲು ಹೊರಟವರಿಗೆ ರಾಜಕೀಯ ಅಧಿಕಾರ ಸಿಕ್ಕಿರುವುದರಿಂದ ಅವರ ಸಾಮರ್ಥ್ಯ ಹೆಚ್ಚಾಗುತ್ತಲೇ ಬಂತು.ಚುನಾವಣೆ ಬಂದಾಗ ಸರಿಯಾದ ಸಂಯುಕ್ತ ಪ್ರತಿರೋಧ ರೂಪಿಸಲಾಗದ ಪ್ರತಿಪಕ್ಷಗಳು ಕೂಡ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯದ ಹೊಣೆಯನ್ನು ಹೊರಬೇಕಾಗಿದೆ.ರಾಜಕೀಯ ಅಧಿಕಾರ ಅವರಿಗೆ ಎಂದೂ ಸಿಗದಂತೆ ಎಚ್ಚರ ವಹಿಸಿದ್ದರೆ ಇದನ್ನು ತಪ್ಪಿಸಬಹುದಾಗಿತ್ತು.ಈಗ ಕಾಲ ಮಿಂಚಿ ಹೋಗಿದೆ.ತಮ್ಮ ವಿಧ್ವ್ವಂಸಕಾರಿ ಚಟುವಟಿಕೆಗಳನ್ನು ಬೆಂಬಲಿಸುವ ಬಹುದೊಡ್ಡ ಬೆಂಬಲಿಗರ ಪಡೆಯನ್ನೇ ಇವರು ಸೃಷ್ಟಿಸಿಕೊಂಡಿದ್ದಾರೆ. ಇದನ್ನು ತಡೆಯಬೇಕಾದ ದೇಶದ ಯುವಜನರನ್ನು ಜಾತಿ,ಧರ್ಮದ ಹೆಸರಿನಲ್ಲಿ ವಿಭಜಿಸಿದ್ದಾರೆ. ನಮ್ಮಂಥವರು ಏನೇ ಬರೆದರೂ ಅವಾಚ್ಯ ಭಾಷೆಯಲ್ಲಿ ಬೆದರಿಕೆಯ ಕರೆಗಳು ಬರುತ್ತವೆ. ಇವರೇನು ಮಾಡುತ್ತಾರೆ ಎಂದು ನಿರ್ಲಕ್ಷಿಸಬಹುದು.ಆದರೆ ಡಾ.ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸ್ಸಾರೆ, ಡಾ. ಎಂ.ಎಂ ಕಲಬುರರ್ಗಿ, ಗೌರಿ ಲಂಕೇಶ್ ನೆನಪಿಗೆ ಬರುತ್ತಾರೆ.ಜೀವ ತೆಗೆಯುತ್ತಾರೆ ಎಂದು ಬರೆಯದಿರಲಾಗುವುದಿಲ್ಲ. ಮುಂದೇನು? ಬಹುತ್ವ ಭಾರತದ ಉಳಿವಿನ ದಾರಿ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮುಂದೆ ಸಾಗುವುದೊಂದೇ ಉಳಿದ ದಾರಿಯಾಗಿದೆ. ಇವರಿಗೆ ಪೂರಕವಾಗಿ ಜಾಗತಿಕವಾಗಿ ನವ ಉದಾರೀಕರಣದ ಆರ್ಥಿಕ ನೀತಿ ಬಂದಿದೆ.ಆರೋಗ್ಯ, ಶಿಕ್ಷಣ, ಸೇರಿ ಎಲ್ಲವನ್ನೂ ಖಾಸಗಿ ತಿಮಿಂಗಿಲಗಳ ಬಾಯಿಗೆ ಹಾಕುವ ಮಸಲತ್ತುಗಳು ನಿತ್ಯವೂ ನಡೆಯುತ್ತಿವೆ.ಇದನ್ನು ವಿರೋಧಿಸಬೇಕಾದವರು ಹಿಂದೂ,_ ಮುಸ್ಲಿಮ್, ಕ್ರೈಸ್ತ ,ಜಾತಿ,ಮತಗಳಲ್ಲಿ ಮುಳುಗಿಹೋಗಿದ್ದಾರೆ. ಈ ಕಾರ್ಗತ್ತಲು ಕವಿದಿರುವ ಕಾಲದಲ್ಲೂ ಭರವಸೆಯ ಬೆಳಕಿಗಾಗಿ ಕಾಯುವುದೊಂದೇ ಉಳಿದ ದಾರಿಯಾಗಿದೆ.

ವಾರ್ತಾ ಭಾರತಿ 22 Dec 2025 2:01 pm

ಇದೇ ಕಾರಣಕ್ಕೆ ಸಂದರ್ಶನಕ್ಕೆ ಹೋಗಲು ಭಯ! ವಿವಾದಕ್ಕೆ ಗುರಿಯಾದ ಹೇಳಿಕೆಗೆ ನಟಿ ರಶ್ಮಿಕಾ ಪ್ರತಿಕ್ರಿಯೆ | Rashmika Mandanna

Rashmika Mandanna: ಕೊಡಗಿನ ಬೆಡಗಿ, ‘ಕಿರಿಕ್ ಪಾರ್ಟಿ’ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಸ್ಟಾರ್​ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ, ಅ.03ರಂದು ತಮ್ಮ ಬಹುದಿನಗಳ ಸ್ನೇಹಿತ ಟಾಲಿವುಡ್​ ನಟ ವಿಜಯ್ ದೇವರಕೊಂಡ ಜತೆ ಸದ್ದಿಲ್ಲದೇ ಎಂಗೇಜ್​ಮೆಂಟ್​ ಮಾಡಿಕೊಂಡರು. ಇತ್ತೀಚೆಗೆ, ನಟಿ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಶ್ಮಿಕಾ, ಟ್ರೋಲ್​ಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ. ‘ದಿ ಗರ್ಲ್‌ಫ್ರೆಂಡ್’ ಚಿತ್ರಕ್ಕೆ ಉತ್ತಮ […] The post ಇದೇ ಕಾರಣಕ್ಕೆ ಸಂದರ್ಶನಕ್ಕೆ ಹೋಗಲು ಭಯ! ವಿವಾದಕ್ಕೆ ಗುರಿಯಾದ ಹೇಳಿಕೆಗೆ ನಟಿ ರಶ್ಮಿಕಾ ಪ್ರತಿಕ್ರಿಯೆ | Rashmika Mandanna first appeared on ವಿಜಯವಾಣಿ .

ವಿಜಯವಾಣಿ 13 Nov 2025 7:40 pm

ಗ್ರಾಮಸ್ಥರಿಂದ ದೂರಿನ ಸುರಿಮಳೆ

ಸುಂಟಿಕೊಪ್ಪ : ಬಡಾವಣೆಗಳಿಗೆ ಮೂಲಸೌಕರ್ಯ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಗ್ರಾಮಸ್ಥರು ಒತ್ತಾಯಿಸಿದರು. ಇಲ್ಲಿನ ಶ್ರೀ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ 2025-26ನೇ ಸಾಲಿನ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಸರಮಾಲೆಯೇ ಹರಿದುಬಂದಿತ್ತು. ಗ್ರಾಮಸ್ಥರಾದ ಸೂಫಿ, ಇಬ್ರಾಹಿಂ, ಕೆ.ಎ.ಲತೀಫ್, ರಜಾಕ್, ದಿನೇಶ್, ಉದಯಕುಮಾರ್, ಡೇವಿಡ್ ಜಾನ್ಸನ್, ಮಮತಾ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥ ಇಬ್ರಾಹಿಂ ಮಾತನಾಡಿ, […] The post ಗ್ರಾಮಸ್ಥರಿಂದ ದೂರಿನ ಸುರಿಮಳೆ first appeared on ವಿಜಯವಾಣಿ .

ವಿಜಯವಾಣಿ 13 Nov 2025 7:28 pm

ಕಲೆ, ಸಾಹಿತ್ಯ ಸಂಸ್ಕೃತಿ ಸದಾ ಜೀವಂತ

ವಿರಾಜಪೇಟೆ : ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮನುಜನ ಹುಟ್ಟಿನಿಂದ ಬಂದಿರುವ ಬಳುವಳಿಯಾಗಿದೆ. ಇವುಗಳು ಮರೆಯಾಗುವುದಿಲ್ಲ. ಕಲೆಯನ್ನು ಪ್ರೋತ್ಸಾಹಿಸುವ ಮನಸ್ಸುಗಳು ಇದ್ದಲ್ಲಿ ಕಲೆಗೆ ಜೀವ ಬರುತ್ತದೆ ಎಂದು ಹವ್ಯಾಸಿ ಛಾಯಾಗ್ರಹಕ ಮತ್ತು ಕಲಾವಿದ ಜುನೈಶ್ ಕಣ್ಣೂರು ಹೇಳಿದರು. ಸಾಧಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ, ಚಿತ್ರಕಲೆ ಕಲಾವಿದರಾದ ಸಾಧಿಕ್ ಹಂಸ ಅವರು ಆಯೋಜಿಸಿದ್ದ ಕಲಾ ಉತ್ಸವ ಕೊಡಗು 9ನೇ ವರ್ಷದ ಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಲೆ ನಿಂತ ನೀರಲ್ಲ, ಬದಲಿಗೆ ಹರಿಯುವ ನದಿಯಂತೆ, ಎಲ್ಲ ಮನಸ್ಸುಗಳಲ್ಲಿ ಕಲೆ […] The post ಕಲೆ, ಸಾಹಿತ್ಯ ಸಂಸ್ಕೃತಿ ಸದಾ ಜೀವಂತ first appeared on ವಿಜಯವಾಣಿ .

ವಿಜಯವಾಣಿ 13 Nov 2025 7:25 pm

ನಾಡು-ನುಡಿ ಶ್ರೀಮಂತಿಕೆ ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿ

ವಿರಾಜಪೇಟೆ :ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಿಂದಲೇ ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಲೇಖಕ ಹಾಗೂ ವಿರಾಜಪೇಟೆ ಉಪ ಖಜಾನೆಯ ಅಧೀಕ್ಷಕ ಗಣೇಶ್ ನಿಲುವಾಗಿಲು ಹೇಳಿದರು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಕನ್ನಡ ಭಾಷಾ ವಿಭಾಗದ ವತಿಯಿಂದ ಕರುನಾಡ ಸಂಭ್ರಮ 2025ರ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದಬೇಕು. ಪುಸ್ತಕಗಳನ್ನು ಓದುವುದರ ಮೂಲಕ ಇತರರಿಗೆ […] The post ನಾಡು-ನುಡಿ ಶ್ರೀಮಂತಿಕೆ ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿ first appeared on ವಿಜಯವಾಣಿ .

ವಿಜಯವಾಣಿ 13 Nov 2025 7:22 pm

ಕಬ್ಬಿನ ಬಾಕಿ ಬಿಲ್ ಪಾವತಿ ಮತ್ತು ದರ ಏರಿಕೆ ಹೋರಾಟ : 30ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚಿ ರೈತರ ಆಕ್ರೋಶ| Sugar cane

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿನ(Sugar cane) ಬಾಕಿ ಬಿಲ್ ಪಾವತಿ ಮತ್ತು ದರ ಏರಿಕೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರ ಹೋರಾಟ ತೀವ್ರವಾಗಿದ್ದು, ಇಂದು(ನ. 13) ಸಂಜೆ ಮುಧೋಳ ತಾಲೂಕಿನ ಸೈದಾರಪುರ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ತುಂಬಿಕೊಂಡು ನಿಂತಿದ್ದ 30ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿರುವ 13 ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಬಿಲ್ ಪಾವತಿ, ಪ್ರತಿ ಟನ್ ಕಬ್ಬಿಗೆ​ 3,500 ರೂ. ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆಯ […] The post ಕಬ್ಬಿನ ಬಾಕಿ ಬಿಲ್ ಪಾವತಿ ಮತ್ತು ದರ ಏರಿಕೆ ಹೋರಾಟ : 30ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚಿ ರೈತರ ಆಕ್ರೋಶ| Sugar cane first appeared on ವಿಜಯವಾಣಿ .

ವಿಜಯವಾಣಿ 13 Nov 2025 7:13 pm

ಪಾಕ್​ನ ISI ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಪತ್ತೆ: 10 ಜನರ ಬಂಧನ!

ಪಂಜಾಬ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಅನ್ನು ಪತ್ತೆಹಚ್ಚಿ 10 ಜನರನ್ನು ಬಂಧಿಸಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಆರೋಪಿಗಳಿಂದ ಪೊಲೀಸ್ ತಂಡಗಳು ಚೀನಾದ ಹ್ಯಾಂಡ್ ಗ್ರೆನೇಡ್ ಅನ್ನು ಸಹ ವಶಪಡಿಸಿಕೊಂಡಿವೆ. ಪಂಜಾಬ್‌ನಲ್ಲಿ ಅಶಾಂತಿ ಸೃಷ್ಟಿಸಲು ಗ್ರೆನೇಡ್ ದಾಳಿ ನಡೆಸಲು ಆರೋಪಿಗಳು ಪಾಕಿಸ್ತಾನ ಮೂಲದ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಪಕ್ಷಾಂತರ; 4 ವರ್ಷದ ಬಳಿಕ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ […] The post ಪಾಕ್​ನ ISI ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಪತ್ತೆ: 10 ಜನರ ಬಂಧನ! first appeared on ವಿಜಯವಾಣಿ .

ವಿಜಯವಾಣಿ 13 Nov 2025 6:49 pm

ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಪಕ್ಷಾಂತರ; 4 ವರ್ಷದ ಬಳಿಕ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ ಹೈಕೋರ್ಟ್​| Mukul Roy

ಕೋಲ್ಕತ್ತಾ: 2021ರಲ್ಲಿ ಬಿಜೆಪಿಯಿಂದ ಗೆದ್ದು ಒಂದು ತಿಂಗಳಲ್ಲೇ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದ ಸಿಎಂ ಮಮತಾ ಬ್ಯಾನರ್ಜಿಯವರ ಆಪ್ತ ಮುಕುಲ್ ರಾಯ್(Mukul Roy) ಅವರ ಪಶ್ಚಿಮ ಬಂಗಾಳ ವಿಧಾನಸಭೆ ಸದಸ್ಯತ್ವವನ್ನು ನಾಲ್ಕು ವರ್ಷಗಳ ಬಳಿಕ ಇಂದು(ನ. 13) ಕೋಲ್ಕತ್ತಾ ಹೈಕೋರ್ಟ್ ರದ್ದು ಮಾಡಿದೆ ಎಂದು ವರದಿಯಾಗಿದೆ. ನಾಡಿಯಾ ಜಿಲ್ಲೆಯ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ರಾಯ್, ಚುನಾವಣೆಯ ನಡೆದ ಒಂದು ತಿಂಗಳೊಳಗೆ ತಮ್ಮ ಹಿಂದಿನ ಪಕ್ಷವಾದ ತೃಣಮೂಲ ಕಾಂಗ್ರೆಸ್‌ […] The post ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಪಕ್ಷಾಂತರ; 4 ವರ್ಷದ ಬಳಿಕ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ ಹೈಕೋರ್ಟ್​| Mukul Roy first appeared on ವಿಜಯವಾಣಿ .

ವಿಜಯವಾಣಿ 13 Nov 2025 6:38 pm

ಮಕ್ಕಳಿಗೆ ನ್ಯೂಮೇನಿಯಾ ಬಂದಾಗ ಏನು ತಿನ್ನಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.. | Pneumonia

ಬೆಂಗಳೂರು: ನ್ಯೂಮೋನಿಯಾ (Pneumonia) ಎಂಬುದು ಶ್ವಾಸಕೋಶಗಳ ಒಂದು ಅಥವಾ ಎರಡೂ ಬದಿಗಳಲ್ಲಿ ಉಂಟಾಗುವ ಸೋಂಕು. ಇದು ಶ್ವಾಸಕೋಶಗಳಲ್ಲಿರುವ ಗಾಳಿ ಚೀಲಗಳು (ಅಲ್ವಿಯೋಲಿ) ದ್ರವ ಅಥವಾ ಕೀವುಗಳಿಂದ ತುಂಬುವುದರಿಂದ ಸಂಭವಿಸುತ್ತದೆ. ಇದರಿಂದ ಉಸಿರಾಟದಲ್ಲಿ ತೊಂದರೆಯಾಗುತ್ತದೆ ಮತ್ತು ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ. ಇದು ಸೌಮ್ಯದಿಂದ ತೀವ್ರವಾಗಿ ಇರಬಹುದು, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವವರಲ್ಲಿ ಅಪಾಯಕಾರಿ. ಮಕ್ಕಳಿಗೆ ನ್ಯೂಮೋನಿಯಾ ಬಂದಾಗ ಆಹಾರ ಕ್ರಮ ನ್ಯೂಮೋನಿಯಾ ಮಕ್ಕಳಲ್ಲಿ ಬಂದಾಗ, ಆರೋಗ್ಯಕ್ಕೆ ಸಹಾಯವಾಗುವ ಆಹಾರವನ್ನು ನೀಡುವುದು ಮುಖ್ಯ. ಇದು […] The post ಮಕ್ಕಳಿಗೆ ನ್ಯೂಮೇನಿಯಾ ಬಂದಾಗ ಏನು ತಿನ್ನಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.. | Pneumonia first appeared on ವಿಜಯವಾಣಿ .

ವಿಜಯವಾಣಿ 13 Nov 2025 5:53 pm

ತಮಿಳುನಾಡಿನ ಸರ್ಕಾರಿ ಸಿಬ್ಬಂದಿ, ಶಿಕ್ಷಕರಿಗೆ ಶೇ. 3ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿದ ಸಿಎಂ ಎಂ.ಕೆ.ಸ್ಟಾಲಿನ್| M K Stalin

ಚೆನ್ನೈ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ತಮಿಳುನಾಡಿನ ಸರ್ಕಾರಿ ಸಿಬ್ಬಂದಿ, ಶಿಕ್ಷಕರು ಹಾಗೂ ಪಿಂಚಣಿದಾರರಿಗೆ ಇಂದು(ನ. 13) ಸಿಎಂ ಎಂ.ಕೆ.ಸ್ಟಾಲಿನ್(M K Stalin) ಶೇ. 3ರಷ್ಟು ತುಟ್ಟಿಭತ್ಯೆ(ಡಿಎ) ಹೆಚ್ಚಳವನ್ನು ಘೋಷಣೆ ಮಾಡಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಸ್ಟಾಲಿನ್, ಸರ್ಕಾರಿ ಸಿಬ್ಬಂದಿ ಮತ್ತು ಶಿಕ್ಷಕರು ತಳಮಟ್ಟದಲ್ಲಿ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮತ್ತು ಹಣಕಾಸಿನ ಒತ್ತಡಗಳ ಹೊರತಾಗಿಯೂ ರಾಜ್ಯವು ಅವರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: […] The post ತಮಿಳುನಾಡಿನ ಸರ್ಕಾರಿ ಸಿಬ್ಬಂದಿ, ಶಿಕ್ಷಕರಿಗೆ ಶೇ. 3ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿದ ಸಿಎಂ ಎಂ.ಕೆ.ಸ್ಟಾಲಿನ್| M K Stalin first appeared on ವಿಜಯವಾಣಿ .

ವಿಜಯವಾಣಿ 13 Nov 2025 5:53 pm

ನಿಮ್ಮ ಅಂಗಡಿಯ ಮುಂದೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ! ಇದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು.. Vastu tips

Vastu tips: ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಉತ್ತಮವಾಗಿ ನಡೆಸಲು ಅಥವಾ ಲಾಭಗಳಿಸುವ ಸಲುವಾಗಿ ಅನೇಕ ರೀತಿಯ ವಸ್ತುಗಳನ್ನು ತಮ್ಮ ಅಂಗಡಿಯಲ್ಲಿ ಇಡಲು ಬಯಸುತ್ತಾರೆ. ಕೆಲವರು ಕುಬೇರನ ಚಿತ್ರ, ಲಕ್ಷ್ಮೀ ಫೋಟೋ, ಆಮೆ, ನಿಂಬೆಹಣ್ಣನ್ನು ಇಟ್ಟುಕೊಳ್ಳುತ್ತಾರೆ. ಇದರಿಂದ ಅಭಿವೃದ್ಧಿಯನ್ನು ಹೊಂದಬಹುದು ಎಂದು ಯೋಚಿಸಿರುತ್ತಾರೆ. ಅಂದಹಾಗೇ, ವಾಸ್ತು ಪ್ರಕಾರ, ಅಂಗಡಿಯ ಮುಂದೆ ಕೆಲವು ವಸ್ತುಗಳು ಅಥವಾ ತಪ್ಪು ವಸ್ತುಗಳು ಇದ್ದರೆ, ಲಕ್ಷ್ಮಿ ನಿಮ್ಮ ಅಂಗಡಿಯನ್ನು ಎಂದಿಗೂ ಪ್ರವೇಶಿಸುವುದಿಲ್ಲ ಎಂದು ಹೇಳುತ್ತದೆ. ಇದರಿಂದಾಗಿ, ವ್ಯವಹಾರಗಳು ನಿಧಾನಗೊಳ್ಳುತ್ತವೆ. ಅಲ್ಲದೇ, ಆರ್ಥಿಕ ನಷ್ಟಗಳು ಸಂಭವಿಸಲು […] The post ನಿಮ್ಮ ಅಂಗಡಿಯ ಮುಂದೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ! ಇದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು.. Vastu tips first appeared on ವಿಜಯವಾಣಿ .

ವಿಜಯವಾಣಿ 13 Nov 2025 5:46 pm

ಜಿಲ್ಲಾ ಮಟ್ಟದ ‘ಅಖಿಲ ಭಾರತ ಸಹಕಾರ ಸಪ್ತಾಹ’ನ.14ರಿಂದ

ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಮಾಹಿತಿ ನ.16ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ವಿಜಯವಾಣಿ ಸುದ್ದಿಜಾಲ ಉಡುಪಿ ಕರ್ನಾಟಕ ರಾಜ್ಯ ಸಹಕಾರ ಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ ಸಹಕಾರ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರಿಗಳ ಸಹಕಾರದಲ್ಲಿ ನ.14ರಿಂದ ನ.20ರ ವರೆಗೆ ಉಡುಪಿ ಜಿಲ್ಲಾದ್ಯಂತ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹಆರಂಭಗೊಳ್ಳಲಿದೆ. ನ.16ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ ಅಧ್ಯಕ್ಷ ಬಿ.ಜಯಕರ್​ ಶೆಟ್ಟಿ […] The post ಜಿಲ್ಲಾ ಮಟ್ಟದ ‘ಅಖಿಲ ಭಾರತ ಸಹಕಾರ ಸಪ್ತಾಹ’ ನ.14ರಿಂದ first appeared on ವಿಜಯವಾಣಿ .

ವಿಜಯವಾಣಿ 13 Nov 2025 5:30 pm

ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿ

ಹುಕ್ಕೇರಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಶಾಲೆಯಲ್ಲಿ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕೆಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು. ಪಟ್ಟಣದ ಎಸ್.ಕೆ ಪಬ್ಲಿಕ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಬೌದ್ಧಿಕ ಬೆಳವಣಿಗೆಗೆ ಶಾರೀರಿಕ ಕ್ಷಮತೆ ಅವಶ್ಯ. ಮೊಬೈಲ್, ಟಿವಿ ಹಾವಳಿಯಲ್ಲಿ ಮಕ್ಕಳ ಕ್ರಿಯಾಶೀಲತೆ ಹಾಳಾಗುತ್ತಿದ್ದು, ಪಾಲಕರು ಮಕ್ಕಳ ಆಟೋಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಪಿಂಟು […] The post ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿ first appeared on ವಿಜಯವಾಣಿ .

ವಿಜಯವಾಣಿ 13 Nov 2025 5:10 pm