ವನ್ಯಜೀವಿಗಳಿಗೆ ಬದುಕುವ ಹಕ್ಕಿಲ್ಲವೇ?
ರಾಜ್ಯದಲ್ಲಿ ಇತ್ತೀಚೆಗೆ ಹುಲಿ, ಆನೆ, ಚಿರತೆಗಳು ಜನವಸತಿ ಪ್ರದೇಶಗಳಿಗೆ ಬಂದು ಕುರಿ, ಕೋಳಿಗಳನ್ನು ತಿನ್ನುತ್ತಿರುವ, ಕೆಲವು ಕಡೆ ಜನರ ಮೇಲೂ ದಾಳಿ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ವನ್ಯಜೀವಿಗಳು ಹಾಗೂ ಮನುಷ್ಯರ ಸಂಘರ್ಷ ಈಗ ಸಾಮಾನ್ಯ ಸಂಗತಿಯಾಗಿದೆ. ಇತ್ತೀಚೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಮಾನ ನಿಲ್ದಾಣದ ಆವರಣದಲ್ಲಿ ರಾತ್ರಿ ಚಿರತೆ ಕಾಣಿಸಿಕೊಂಡ ದೃಶ್ಯ ಕ್ಯಾಮರಾ ಸೆರೆ ಹಿಡಿದು ಆತಂಕವನ್ನು ಉಂಟು ಮಾಡಿತ್ತು. ಬಿಳಿಗಿರಿ ರಂಗನ ಬೆಟ್ಟದಲ್ಲಿ ಹುಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಆನೆಗಳು ಆಗಾಗ ಹಾಸನ ಜಿಲ್ಲೆಯ ಕೆಲವೆಡೆ ಕಾಣಿಸಿಕೊಂಡು ಕೆಲವರ ಮೇಲೆ ದಾಳಿ ಮಾಡಿದ ಘಟನೆಗಳು ಸಾಮಾನ್ಯವಾಗಿ ವರದಿಯಾಗುತ್ತಿವೆ. ಇದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣವನ್ನು ಹುಡುಕಲು ಹೊರಟರೆ ಹಲವಾರು ವಾಸ್ತವ ಸಂಗತಿಗಳು ಬೆಳಕಿಗೆ ಬರುತ್ತವೆ. ಶತಮಾನಗಳಿಂದ ನಾಡಿನಲ್ಲಿರುವ ಮನುಷ್ಯರು ಹಾಗೂ ಕಾಡಿನಲ್ಲಿರುವ ಪ್ರಾಣಿಗಳು ಸಹಬಾಳ್ವೆ ನಡೆಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಷ್ಟೇ ಅಲ್ಲ. ಅರಣ್ಯ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡ ಜನರಿಗೂ ಹಾಗೂ ಪ್ರಾಣಿಗಳಿಗೂ ಸಂಘರ್ಷ ನಡೆದ ಉದಾಹರಣೆಗಳು ತುಂಬಾ ವಿರಳ. ಆದರೆ ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿಗಳು ಹಾಗೂ ಮನುಷ್ಯರ ನಡುವೆ ಯಾಕೆ ಸಂಘರ್ಷ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಪರಿಹಾರದ ದಾರಿ ಗೋಚರಿಸಬಹುದು. ವನ್ಯಜೀವಿಗಳ ಜೊತೆಗೆ ಮಾನವನ ಸಂಘರ್ಷದ ಮೂಲವನ್ನು ಕಂಡು ಹಿಡಿಯಲು ಹೊರಟರೆ ಆರೋಪಿಯ ಸಾಲಿನಲ್ಲಿ ಮನುಷ್ಯರೇ ಮೊದಲು ನಿಲ್ಲಬೇಕಾಗುತ್ತದೆ. ಈ ಭೂಮಿ ಮನುಷ್ಯರಿಗೆ ಮಾತ್ರವಲ್ಲ ವಿವಿಧ ಪ್ರಾಣಿಗಳಿಗೂ ಆಸರೆ ನೀಡಿದೆ. ಲಕ್ಷೋಪಲಕ್ಷ ಜೀವ ಜಂತುಗಳು ಇಲ್ಲಿವೆ. ಅವುಗಳಿಂದ ಪರಿಸರಕ್ಕೆ ಯಾವುದೇ ಹಾನಿಯಾಗಿಲ್ಲ. ಸಹ ಜೀವಿಗಳನ್ನು ಅವುಗಳು ದ್ವೇಷಿಸಿಲ್ಲ. ಆದರೆ ಮನುಷ್ಯನ ಸಂಪತ್ತಿನ ದಾಹ ಇಂದಿನ ಈ ಸ್ಥಿತಿಗೆ ಕಾರಣವಾಗಿದೆ. ತಾನು ವಾಸಿಸುವ ಪ್ರದೇಶಕ್ಕೆ ತೃಪ್ತನಾಗದೆ, ಪ್ರಾಣಿಗಳು ವಾಸಿಸುವ ಪ್ರದೇಶಕ್ಕೆ ನುಗ್ಗಿ ಕೃಷಿ, ಮನೆ, ರೆಸಾರ್ಟ್, ಹೋಮ್ ಸ್ಟೇಗಳನ್ನು ಮಾಡಿಕೊಂಡ ಮನುಷ್ಯ ಅವುಗಳ ಸಹಜ ಜೀವನದ ಪ್ರದೇಶವನ್ನು ಆಕ್ರಮಿಸಿರುತ್ತಿರುವುದರಿಂದ ಈ ಘರ್ಷಣೆ ನಡೆಯುತ್ತಿದೆ. ಹುಲಿಗಳಿಗೆ ಅವುಗಳದೇ ಆದ ನಿರ್ದಿಷ್ಟ ಪ್ರದೇಶವಿದೆ. ಆನೆಗಳು ಓಡಾಡಲು ಅವುಗಳದೇ ಆದ ನಿಸರ್ಗ ಸಹಜ ಕಾರಿಡಾರುಗಳಿವೆ. ಈಗ ಇವೆಲ್ಲವನ್ನೂ ಆಕ್ರಮಿಸಿಕೊಂಡ ಮನುಷ್ಯ ಅವುಗಳ ಸಹಜ ಬದುಕಿಗೆ, ನೆಮ್ಮದಿಗೆ ಧಕ್ಕೆ ಉಂಟು ಮಾಡಿದ್ದಾನೆ. ಹೀಗಾಗಿ ಈ ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ನಿತ್ಯದ ಸಂಗತಿಯಾಗಿದೆ. ನಾವು ಇಂಥ ಪ್ರಶ್ನೆಗಳು ಎದುರಾದಾಗ ಮನುಷ್ಯ ಕೇಂದ್ರಿತ ಪರಿಕಲ್ಪನೆಯ ದೃಷ್ಟಿಯಿಂದ ನೋಡುತ್ತೇವೆ. ಆದರೆ ಜೀವ ಕೇಂದ್ರಿತ ದೃಷ್ಟಿಯಿಂದ ಪರಿಹಾರವನ್ನು ಹುಡುಕಲು ಹೊರಟರೆ ದಾರಿ ಕಾಣಬಹುದು. ವನ್ಯಜೀವಿಗಳು ನಾಡಿನ ಜನವಸತಿ ಪ್ರದೇಶಗಳಿಗೆ ಬರುವ ಸಮಸ್ಯೆಗೆ ಇನ್ನೊಂದು ಕಾರಣವೂ ಇದೆ. ಕಾಡಿನಲ್ಲಿ ಅವುಗಳಿಗೆ ಸಾಕಾಗುವಷ್ಟು ಆಹಾರ ಹಾಗೂ ನೀರು ಸಿಗುತ್ತಿಲ್ಲ. ಹೀಗಾಗಿ ಅವುಗಳು ಆಹಾರ ಮತ್ತು ನೀರಿಗಾಗಿ ಜನ ವಸತಿ ಪ್ರದೇಶಗಳಿಗೆ ನುಗ್ಗುತ್ತವೆ. ಜಾಗತೀಕರಣದ ಶಕೆ ಆರಂಭವಾದ ನಂತರ ಮನುಷ್ಯರ ಅಭಿವೃದ್ಧಿಯ ಹೆಸರಿನ ನಾನಾ ಚಟುವಟಿಕೆಗಳು ನಿಧಾನವಾಗಿ ಕಾಡನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿವೆ. ಭೂಗರ್ಭವನ್ನು ಭೇದಿಸಿ ಗಣಿಗಾರಿಕೆ ಮಾಡಿ ಕೋಟ್ಯಂತರ ರೂಪಾಯಿ ಮೊತ್ತದ ಖನಿಜ ಸಂಪತ್ತನ್ನು ದೋಚುವ ಲೂಟಿಕೋರರು ನಮ್ಮ ಶಾಸನ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದನವನ್ನು ತಮ್ಮ ಹಿತಾಸಕ್ತಿಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮನುಷ್ಯರಂತೆ ವನ್ಯ ಜೀವಿಗಳಿಗೆ ಶಾಸನ ಸಭೆಗಳಲ್ಲಿ ಪ್ರತಿನಿಧಿಗಳಿಲ್ಲ. ಅವುಗಳ ಪರವಾಗಿ ವಾದಿಸುವವರಿಲ್ಲ. ಹೀಗಾಗಿ ಪ್ರಾಣಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಮನುಷ್ಯರು ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ಕರ್ನಾಟಕ ಸರಕಾರದ ಅರಣ್ಯ ಇಲಾಖೆ ಇತ್ತೀಚೆಗೆ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ವನ್ಯಜೀವಿಗಳ ಚಟುವಟಿಕೆಗಳನ್ನು ಗಮನಿಸಲು ಅರಣ್ಯದ ಅಂಚಿನಲ್ಲಿರುವ ಹಳ್ಳಿಗಳಲ್ಲಿ ಎಐ ಕ್ಯಾಮರಾ ಹಾಗೂ ಕ್ಯಾಮರಾ ಟ್ರ್ಯಾಪ್ ಅಳವಡಿಸಿ ನಿಗಾ ವಹಿಸಲಾಗುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿ ಗಡಿ ಪ್ರದೇಶದಲ್ಲಿ ಗಸ್ತು ನಡೆಸುವುದು ಕೂಡ ಅರಣ್ಯ ಇಲಾಖೆಯ ಉಪಕ್ರಮವಾಗಿದೆ. ವನ್ಯಜೀವಿಗಳ ಇರುವಿಕೆಯ ಬಗ್ಗೆ ಸ್ಥಳೀಯ ನಾಗರಿಕರಿಗೆ ಮುನ್ನೆಚ್ಚರಿಕೆ ನೀಡುವುದು, ಪ್ರಾಣಿಗಳ ಧ್ವನಿಯನ್ನು ಗುರುತಿಸಿ ಅವುಗಳಂತೆ ಸದ್ದು ಮಾಡಿ ವಾಪಸ್ ಅರಣ್ಯಕ್ಕೆ ಓಡಿಸುವುದು ಇದರ ಉದ್ದೇಶವಾಗಿದೆ. ಆದರೆ ಇದಿಷ್ಟರಿಂದಲೇ ಈ ಸಮಸ್ಯೆ ನಿವಾರಣೆಯಾಗುವುದಿಲ್ಲ. ಈ ಎಲ್ಲ ಕ್ರಮಗಳ ಜೊತೆಗೆ ವನ್ಯಜೀವಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ.ಕಾಡಿನಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಕಾಡಿನ ಒಳಗೆ ಹಲವಾರು ಕಡೆ ಕೆರೆಗಳನ್ನು ನಿರ್ಮಾಣ ಮಾಡಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆದರೆ ಅರಣ್ಯದಲ್ಲಿ ಹಲವಾರು ವರ್ಷಗಳಿಂದ ಬದುಕನ್ನು ಕಟ್ಟಿಕೊಂಡಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಅರಣ್ಯ ಇಲಾಖೆಯ ಯೋಜನೆ ಅಷ್ಟೊಂದು ಪ್ರಯೋಜನಕಾರಿಯಾದುದಲ್ಲ. ಕಾಡಿನಲ್ಲೇ ಜನಿಸಿ, ಅಲ್ಲೇ ಬದುಕನ್ನು ಕಟ್ಟಿಕೊಂಡ ಜನರನ್ನು ಬಲವಂತವಾಗಿ ಹೊರಗೆ ಹಾಕಿದರೆ ಅವರು ಬೇರೆಡೆಗೆ ಹೋಗಿ ಬದುಕನ್ನು ಕಟ್ಟಿಕೊಳ್ಳುವುದು ಸುಲಭದ ಸಂಗತಿಯಲ್ಲ. ಸರಕಾರ ಕೊಡಬಹುದಾದ ಪರಿಹಾರ ಅವರಿಗೆ ನೆಮ್ಮದಿ ತರುವುದಿಲ್ಲ. ಅದರ ಬದಲಿಗೆ ಅರಣ್ಯ ಪ್ರದೇಶದಲ್ಲೇ ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಈ ಭೂಮಿ ಕೇವಲ ಮನುಷ್ಯರಿಗೆ ಸೇರಿದ್ದಲ್ಲ. ಇದರ ಮೇಲೆ ಆನೆ, ಹುಲಿ, ಚಿರತೆಗಳು ಸೇರಿ ಸಕಲ ಪ್ರಾಣಿ, ಪಕ್ಷಿಗಳಿಗೂ ಹಕ್ಕಿದೆ ಎಂಬುದನ್ನು ಮರೆಯಬಾರದು. ಪ್ರಾಣಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ. ಕಾರಣ ಈ ಸಮಸ್ಯೆಗೆ ಮಾನವೀಯ ಪರಿಹಾರೋಪಾಯಗಳನ್ನು ರೂಪಿಸಬೇಕಾಗಿದೆ. ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಹೆಸರಿನ ವಿನಾಶಕಾರಿ ಕಾರ್ಯಗಳಿಂದಾಗಿ ಪ್ರಾಣಿ ಪಕ್ಷಿಗಳಿಗೆ ಮಾತ್ರವಲ್ಲ ಸಕಲ ಜೀವಿಗಳಿಗೂ ಭೂಮಿ ಅಸಹನೀಯವಾಗತೊಡಗಿದೆ. ಕಾಡಿನಲ್ಲಿ ಇರುವವರನ್ನು ಅಲ್ಲಿಂದ ಎತ್ತಂಗಡಿ ಮಾಡಿಸದೆ ಅವರನ್ನೂ ಒಳಗೊಂಡು ಈ ಅತ್ಯಂತ ಜಟಿಲ ಹಾಗೂ ಸೂಕ್ಷ್ಮ ಪ್ರಶ್ನೆಯನ್ನು ವೈಜ್ಞಾನಿಕವಾಗಿ ಪರಿಹರಿಸುವ ದಿಕ್ಕಿನಲ್ಲಿ ಚಿಂತನೆ ನಡೆಯಬೇಕಾಗಿದೆ. ಇನ್ನೊಂದೆಡೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇನ್ನೊಂದು ಸಮಸ್ಯೆಗೆ ದಾರಿ ಮಾಡಿಕೊಟ್ಟಂತಾಗಿದೆ. ಇಂಥ ಸಂದರ್ಭಗಳಲ್ಲಿ ಹೆಚ್ಚಾಗಿರುವ ಹುಲಿಗಳನ್ನು ಬೇರೆ ಪ್ರದೇಶಗಳಿಗೆ, ರಾಜ್ಯಗಳಿಗೆ ಸ್ಥಳಾಂತರ ಮಾಡುವುದು ಸೂಕ್ತವಾದ ಕ್ರಮವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕಾಗಿದೆ. ನಮ್ಮ ಅರಣ್ಯ ಪ್ರದೇಶಗಳನ್ನು ರೆಸಾರ್ಟ್, ಹೋಮ್ ಸ್ಟೇ, ಅಕ್ರಮ ಗಣಿಗಾರಿಕೆ ಹಾಗೂ ಇತರ ಚಟುವಟಿಕೆಗಳಿಂದ ಮುಕ್ತಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಸಫಾರಿಯನ್ನು ಸ್ಥಗಿತಗೊಳಿಸಿರುವುದು ಸೂಕ್ತ ಕ್ರಮವಾಗಿದೆ. ವನ್ಯಜೀವಿಗಳು ಅವುಗಳಷ್ಟಕ್ಕೆ ಬದುಕಲು ಸರಕಾರ ಅವಕಾಶ ನೀಡಲಿ.
ಜಾಗತಿಕ ಯುದ್ಧಕ್ಕೆ ತಳ್ಳುತ್ತಿರುವವರು ಯಾರು?
ಜಗತ್ತು ಜಾಗತಿಕ ಯುದ್ಧದ ಹೊಸ್ತಿಲಲ್ಲಿದೆ. ವೆನೆಝುವೆಲಾದ ಮೇಲೆ ಅಂತರ್ರಾಷ್ಟ್ರೀಯ ಒಪ್ಪಂದಗಳು, ವಿಶ್ವ ಸಂಸ್ಥೆಯ ನಿಯಮಗಳು, ಅಂತರ್ರಾಷ್ಟ್ರೀಯ ನಿಯಮಗಳು...ಎಲ್ಲವನ್ನೂ ಉಲ್ಲಂಘಿಸುತ್ತಾ ದಿಗ್ಬಂಧನಗಳು, ಸೇನಾತ್ಮಕ ಸುತ್ತುವರಿಯುವಿಕೆಗಳು, ಬೆದರಿಕೆಗಳನ್ನೆಲ್ಲಾ ಮಾಡುತ್ತಾ ಅತಿಕ್ರಮಣ ಮಾಡಿದ್ದಲ್ಲದೇ ಅಧ್ಯಕ್ಷ ಮಡುರೊ ಹಾಗೂ ಅವರ ಬಾಳ ಸಂಗಾತಿಯನ್ನು ಅಪಹರಿಸಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿ ನ್ಯಾಯವಿಚಾರಣೆಯ ಹೆಸರಿನಲ್ಲಿ ಬಂಧನದಲ್ಲಿಟ್ಟಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಮೊನ್ನೆ ರಶ್ಯದ ಧ್ವಜವಿದ್ದ ತೈಲ ಹಡಗುಗಳನ್ನು ಅಂತರ್ರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ಅಮೆರಿಕ ವಶಪಡಿಸಿಕೊಂಡಿದೆ. ಅವುಗಳ ಮೇಲೆ ಬಹಳ ಹಿಂದೆಯೇ ಅಮೆರಿಕ ನಿರ್ಬಂಧ ಹೇರಿತ್ತು. ಆ ತೈಲ ಟ್ಯಾಂಕರುಗಳುಳ್ಳ ಹಡಗುಗಳು ವೆನೆಝುವೆಲಾಗೆ ಸೇರಿದ್ದು, ವೆನೆಝುವೆಲಾ ತನ್ನ ಸುಪರ್ದಿಯಲ್ಲಿಯೇ ತೈಲ ಮಾರಾಟ ಮಾಡಬೇಕು... ತನಗೇ ವೆನೆಝುವೆಲಾದ ತೈಲ ಮಾರಬೇಕು.. ಇತ್ಯಾದಿ ಸಮರ್ಥನೆಗಳನ್ನು ತನ್ನ ಈ ಕೃತ್ಯಗಳಿಗೆ ನೀಡುತ್ತಿದೆ. ಇದನ್ನು ರಶ್ಯ ಹಾಗೂ ಚೀನಾ ತೀವ್ರವಾಗಿ ವಿರೋಧಿಸಿವೆ. ರಶ್ಯ ತನ್ನ ನೌಕಾಪಡೆಗಳನ್ನು ಅಂತರ್ರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ನಿಯೋಜಿಸುತ್ತಿದೆ. ಚೀನಾ ಕೂಡ ಸೇನಾತ್ಮಕ ಕ್ರಮಗಳಿಗೆ ಮುಂದಾಗುವ ಸೂಚನೆಗಳಿವೆ. ಈ ಎಲ್ಲಾ ಬೆಳವಣಿಗೆಗಳಿಗೆ ಟ್ರಂಪ್ ಮಾತ್ರ ಕಾರಣವೆಂಬ ವಿಶ್ಲೇಷಣೆಗಳೇ ಹೆಚ್ಚಾಗಿ ಬರುತ್ತಿವೆ. ರಶ್ಯ, ಚೀನಾಗಳು ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಅಮೆರಿಕದ ನಡೆಗಳಿಗೆ ಆರ್ಥಿಕವಾಗಿ ಮಾತ್ರವಲ್ಲದೇ ಸೇನಾತ್ಮಕ ತಡೆಗಳನ್ನು ಒಡ್ಡಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ಅಮೆರಿಕ ಆಳುವ ವರ್ಗವಾದ ಭಾರೀ ಕಾರ್ಪೊರೇಟುಗಳಿಗೆ ಜಾಗತಿಕ ಲೂಟಿಗೆ ಹಲವಾರು ಅಡೆತಡೆಗಳು ಬಲವಾಗುತ್ತಾ ಹೋಗುತ್ತಿವೆ. ಅಮೆರಿಕ ಕೂಟದ ಜಾಗತಿಕ ಹಿಡಿತಗಳೂ ದಿನೇ ದಿನೇ ಕ್ಷಯಿಸುತ್ತಾ ಹೋಗುತ್ತಿವೆ. ಡಾಲರಿನ ಹಿಡಿತ ಅಂತರ್ರಾಷ್ಟ್ರೀಯ ಆರ್ಥಿಕ ವ್ಯವಹಾರಗಳಲ್ಲಿ ಕುಸಿಯುತ್ತಾ ಚೀನಾದ ಯುವಾನ್, ರಶ್ಯದ ರೂಬಲ್, ಜಪಾನಿನ ಯೆನ್, ಯೂರೋಪಿನ ಯೂರೋಗಳಂತಹ ಕರೆನ್ಸಿ ವ್ಯವಸ್ಥೆಗಳು ಜಾಗತಿಕ ಮಾರುಕಟ್ಟೆಯನ್ನು ವ್ಯಾಪಿಸತೊಡಗಿವೆ. ಇಂಡಿಯಾದ ರೂಪಾಯಿ ಕೂಡ ಜಾಗತಿಕ ಕರೆನ್ಸಿಯಾಗಿ ಘೋಷಿತವಾಗಿದೆ. ಇನ್ನೊಂದೆಡೆ ಡಾಲರಿನೆದುರು ಇಂಡಿಯಾದ ರೂಪಾಯಿ ಮೌಲ್ಯ ಹಿಂದೆಂದೂ ಇಲ್ಲದಷ್ಟು ಕುಸಿತ ಕಾಣುತ್ತಾ ಹೋಗುತ್ತಿದೆ. ಇದು ಬೇರೊಂದು ವಿಚಾರ. ಅಮೆರಿಕದಲ್ಲಿ ಬಡತನದ ಮಟ್ಟ, ನಿರುದ್ಯೋಗಮಟ್ಟ, ವಸತಿಹೀನತೆ, ತಲಾದಾಯ ಮಟ್ಟ ಭಾರೀ ಕುಸಿತದಲ್ಲಿ ಸಾಗುತ್ತಿದೆ. ಅಮೆರಿಕದ ಆರ್ಥಿಕ ಬೆಳವಣಿಗೆ ಶೇ. 2ನ್ನು ಮೀರದೇ ಬಹಳ ವರ್ಷಗಳಾಗಿವೆ. ಆದರೆ ಅಮೆರಿಕ ಜಿಡಿಪಿ ದರ ಕಳೆದ ವರ್ಷ ಶೇ. 4.3 ಎಂದು ಹೇಳಿಕೊಂಡಿದೆ. ಆದರೆ ಜಿಡಿಪಿ ಬೆಳವಣಿಗೆ ಸರಾಸರಿ ಜನರ ಆದಾಯವನ್ನು ಪ್ರತಿನಿಧಿಸುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಅಮೆರಿಕದ ಕೆಲವೇ ಭಾರೀ ಕಾರ್ಪೊರೇಟುಗಳು ಹೆಚ್ಚು ಹೆಚ್ಚು ಏಕಸ್ವಾಮ್ಯವಾಗುತ್ತಾ ಅಮೆರಿಕ ಆಸ್ತಿ ಹಾಗೂ ಆದಾಯಗಳನ್ನು ನಿಯಂತ್ರಿಸತೊಡಗಿವೆ. ಅದರಲ್ಲಿ ಎಲಾನ್ ಮಸ್ಕ್ನ ಆರ್ಥಿಕ ಸಾಮ್ರಾಜ್ಯ ಕೂಡ ಒಂದು. ವೆನೆಝುವೆಲಾದ ಮೇಲಿನ ಅತಿಕ್ರಮಣಗಳನ್ನು ಎಲಾನ್ ಮಸ್ಕ್ ಬಹಿರಂಗವಾಗಿಯೇ ಸಮರ್ಥಿಸಿ ತನ್ನ ಸ್ಟಾರ್ ಲಿಂಕ್ಸ್ ಉಪಗ್ರಹ ಆಧಾರಿತ ಅಂತರ್ಜಾಲವನ್ನು ವೆನೆಝುವೆಲಾಕ್ಕೆ ವಿಸ್ತರಿಸುವ ಮಾತನಾಡಿರುವುದನ್ನು ನಾವಿಲ್ಲಿ ಗಮನಿಸಬಹುದು. ಅಮೆರಿಕದ ಭಾರೀ ಜಾಗತಿಕ ಕಾರ್ಪೊರೇಟುಗಳು ಚುನಾವಣೆಯನ್ನು ನಿರ್ವಹಿಸಿ ಸ್ವತಹ ಕಾರ್ಪೊರೇಟಾಗಿರುವ ಡೊನಾಲ್ಡ್ ಟ್ರಂಪ್ರನ್ನು ಮತ್ತೆ ಅಧಿಕಾರಕ್ಕೆ ತಂದಿರುವುದು ಎಂಬುದನ್ನು ನಾವಿಲ್ಲಿ ಗ್ರಹಿಸಬೇಕು. ಟ್ರಂಪ್ ಅಮೆರಿಕದ ಜನಸಾಮಾನ್ಯರನ್ನು ಯಾಮಾರಿಸುವ ‘‘ಇನ್ನು ಮುಂದೆ ಯುದ್ಧಕ್ಕಿಳಿಯುವುದಿಲ್ಲ....’’, ‘‘ಅಮೆರಿಕ ಅಮೆರಿಕದವರಿಗಾಗಿ....’’, ಅಮೆರಿಕ ಇನ್ನು ಮುಂದೆ ವಿಶ್ವದ ಪೊಲೀಸ್ ಕೆಲಸ ಮಾಡುವುದಿಲ್ಲ....’’ ಹೀಗೆಲ್ಲಾ ಎರಡಲುಗಿನ ಕತ್ತಿಯ ತರಹದ ಭರವಸೆಗಳನ್ನು ತನ್ನ ಚುನಾವಣಾ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದರು. ಯುದ್ಧ ಹಾಗೂ ಜಾಗತಿಕವಾಗಿ ನೇರ ಹಾಗೂ ಅಪ್ರತ್ಯಕ್ಷ ಸೇನಾತ್ಮಕ ತೊಡಗುವಿಕೆಗಳು ಅಮೆರಿಕದ ಭಾರೀ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನಿವಾರ್ಯವಾಗಿದೆ ಎಂಬುದು ಸಾಬೀತಾಗುತ್ತಲೇ ಬರುತ್ತಿದೆ. ಹಾಗಾಗಿ ಅಮೆರಿಕದ ಆಳುವ ವರ್ಗದ ಹಿತಾಸಕ್ತಿ ಮೇಲಾಟಗಳಿಗಾಗಿ ನಡೆಯುತ್ತಿರುವ ಈ ಎಲ್ಲಾ ಘರ್ಷಣೆಗಳು ಜಾಗತಿಕ ಯುದ್ಧದತ್ತ ಅಮೆರಿಕವನ್ನು ಎಳೆದುಕೊಂಡು ಹೋಗುತ್ತಿದೆ. ಅವರುಗಳೇ ರೂಪಿಸಿಕೊಂಡಿದ್ದ ಜಾಗತಿಕ ವ್ಯವಸ್ಥೆಯನ್ನು ಅವರುಗಳೇ ಉಲ್ಲಂಘಿಸಬೇಕಾದಂತಹ ಬಿಕ್ಕಟ್ಟು ಅವರದಾಗಿದೆ. ಇವೆಲ್ಲಾ ಅಮೆರಿಕದ ಜನಸಾಮಾನ್ಯರನ್ನೂ ಸೇರಿದಂತೆ ಜಾಗತಿಕ ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತದೆ. ಜಗತ್ತನ್ನು ಭಾರೀ ಅಪಾಯಗಳಿಗೆ ದೂಡುತ್ತಿದೆ. ಅಮೆರಿಕ ಆಳುವ ವರ್ಗದ ಈ ಎಲ್ಲಾ ದುರಾಕ್ರಮಣಕಾರಿ ನಡೆಗಳನ್ನು ತಡೆಯುವಲ್ಲಿ ಅಲ್ಲಿನ ಜನಸಾಮಾನ್ಯರ ಕರ್ತವ್ಯ ಹೆಚ್ಚಾಗಿದೆ. ಅಮೆರಿಕದ ಆಳುವ ವರ್ಗದ ಇಂತಹ ಜಾಗತಿಕ ವಿರೋಧಿ ನಡೆಗಳ ವಿರುದ್ಧ ಜಾಗತಿಕ ಜನಸಾಮಾನ್ಯರು ಒಗ್ಗೂಡಿ ನಿಲ್ಲುವ ಕರ್ತವ್ಯವೂ ಇದೆ. ಇಂಡಿಯಾದ ಜನಸಾಮಾನ್ಯರು ಇಂಡಿಯಾ ಸರಕಾರ ಅಮೆರಿಕದ ಆಳುವ ವರ್ಗದ ನಡೆಗಳನ್ನು ಸ್ಪಷ್ಟವಾಗಿ ಖಂಡಿಸದೆ ಅಮೆರಿಕದ ಪರವಾಗಿ ವರ್ತಿಸುವುದನ್ನು ವಿರೋಧಿಸಬೇಕು. ಹಾಗೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಡಿಯಾದ ಸರಕಾರವನ್ನು ತನ್ನ ಅಡಿಯಾಳಂತೆ ಪದೇ ಪದೇ ಬಿಂಬಿಸುತ್ತಿರುವುದನ್ನು ಖಂಡಿಸುವಂತೆ ಜನಸಾಮಾನ್ಯರು ಒಗ್ಗೂಡಿ ಒತ್ತಾಯ ಹೇರಬೇಕು.
ಕುಂದಾಪುರ, ಸಿದ್ದಾಪುರಗಳಲ್ಲಿ ಸತತ ಅಗ್ನಿ ದುರಂತಗಳು | ನಗರದಲ್ಲಿ ಅಗ್ನಿಶಾಮಕ ವಾಹನಗಳ ಅಗತ್ಯ: ಚರ್ಚೆ ಮುನ್ನೆಲೆಗೆ
ಕುಂದಾಪುರ : ಒಂದು ವಾರದಲ್ಲಿ ಕುಂದಾಪುರ ಮತ್ತು ಸಿದ್ದಾಪುರಗಳಲ್ಲಿ ಸಂಭವಿಸಿದ ಎರಡು ಭೀಕರ ಅಗ್ನಿ ದುರಂತಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಬೂದಿಯಾದ ಬಳಿಕ ಇಂಥ ಆಕಸ್ಮಿಕ ಅಗ್ನಿ ಅವಘಡಗಳ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಹಾಗೂ ಸುಲಭದಲ್ಲಿ ಲಭ್ಯವಾಗಬೇಕಿರುವ ಅಗ್ನಿ ಶಾಮಕ ವಾಹನಗಳ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಪ್ರಸಕ್ತ ಕುಂದಾಪುರದ ಅಗ್ನಿಶಾಮಕ ದಳ ಕಚೇರಿ ನಗರದ ಹೊರವಲಯ ವಾದ ಕೋಣೆಯಲ್ಲಿದ್ದು ಆಕಸ್ಮಿಕ ಅಗ್ನಿ ಅವಘಡಗಳ ಸಂದರ್ಭಗಳಲ್ಲಿ ತುರ್ತು ಸೇವೆಗೆ ಅನುಕೂಲವಾಗಲು ಕುಂದಾಪುರ ನಗರ ಕೇಂದ್ರದಲ್ಲಿ ಅಗ್ನಿ ಶಾಮಕ ವಾಹನ ನಿಲ್ಲಲು ವ್ಯವಸ್ಥೆ ಮಾಡಿಕೊಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಮುಂಚೂಣಿಗೆ ಬಂದಿದೆ. ಡಿ.29ರ ಬೆಳಗಿನ ಜಾವ ಕುಂದಾಪುರದ ಕೇಂದ್ರವಾದ ರಥಬೀದಿಯಲ್ಲಿ ನಡೆದ ಬಾರೀ ಅಗ್ನಿ ಅನಾಹುತ ನಾಲ್ಕಾರು ಅಂಗಡಿಗಳನ್ನು ಸುಟ್ಟು ಭಸ್ಮ ಮಾಡಿದ್ದಲ್ಲದೆ, ಕೋಟ್ಯಂತರ ರೂ.ಗಳ ಹಾನಿ ಸಂಭವಿಸಿದೆ. 20 ವರ್ಷಗಳಲ್ಲಿ ಇಂತಹ ಘೋರ ದುರಂತ ಕಂಡಿಲ್ಲ ಎಂಬುದು ನಗರದ ಹಳೆ ತಲೆಮಾರಿನ ಹಲವರ ಅಭಿಪ್ರಾಯವಾಗಿದೆ. ಇದಾದ ಎರಡು ದಿನಗಳ ಬಳಿಕ ಸಿದ್ದಾಪುರದ ಜನ್ಸಾಲೆಯ ತೆಂಗಿನ ಎಣ್ಣೆಮಿಲ್ ನಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಡೀ ಮಿಲ್ ಸುಟ್ಟು ಹೋಗಿದ್ದು, ಐದು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಮಾಹಿತಿ ಇದೆ. ಇದಲ್ಲದೆ ಕೆಲ ದಿನಗಳ ಹಿಂದೆ ಕೋಟೇಶ್ವರ ಗ್ರಾಪಂ ಬಳಿ ಎಸ್ ಎಲ್ಆರ್ಎಂ ಘಟಕದಲ್ಲೂ ಇದೇ ರೀತಿ ಬೆಂಕಿ ಅವಘಡ ಸಂಭವಿಸಿತ್ತು. ಕಳೆದ ವರ್ಷ ಗಂಗೊಳ್ಳಿಯಲ್ಲಿ ಬೋಟ್ ಅಗ್ನಿ ದುರಂತ, ಒಂದಷ್ಟು ವರ್ಷಗಳ ಹಿಂದೆ ಕುಂದಾಪುರ ನಗರದೊಳಗೆ ಮುಖ್ಯರಸ್ತೆಯಲ್ಲಿದ್ದ ಬೃಹತ್ ವಾಣಿಜ್ಯ ಮಳಿಗೆಗೆ ಬಿದ್ದ ಬೆಂಕಿ ಅನಾಹುತಗಳು ದೊಡ್ಡ ಮಟ್ಟದಲ್ಲಿ ದುರಂತವನ್ನು ಸೃಷ್ಟಿಸಿ ಅಪಾರ ನಷ್ಟಕ್ಕೆ ಕಾರಣವಾಗಿದ್ದವು. ಆಗ್ಗಾಗೆ ನದಿ-ಸಮುದ್ರಗಳಲ್ಲಿ ನಡೆಯುವ ದೋಣಿ ದುರಂತ, ಮಾನವ ಜೀವ ಹಾನಿ ಮೊದಲಾದ ಅವಘಡಗಳ ವೇಳೆ ಆ ಸಮಯಕ್ಕೆ ಅಗತ್ಯವಾಗಿ ಬೇಕಾದ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಅಲಭ್ಯತೆ ಹಲವಷ್ಟು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿವೆ. ನಗರದಿಂದ ಬಹುದೂರ! ಪ್ರಸಕ್ತ ಕುಂದಾಪುರದ ಅಗ್ನಿ ಶಾಮಕ ಠಾಣೆಯಿರುವುದು ಕುಂದಾಪುರ ಪೇಟೆಯಿಂದ ನಾಲ್ಕಾರು ಕಿ.ಮೀ. ದೂರದ ಕೋಣಿ ಎಂಬಲ್ಲಿ ಇಲ್ಲಿಂದ ಮುಖ್ಯ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ಇಕ್ಕಟ್ಟಾದ ಹಾಗೂ ಜನನಿಬಿಡ, ವಾಹನ ನಿಬಿಡ ರಸ್ತೆ ಅಡ್ಡಿ ಯಾಗುತ್ತಿದೆ. ಕೋಣಿಯಿಂದ ಕಟ್ಕೆರೆ ಮೂಲಕ ಸಾಗಿ ಕೋಟೇಶ್ವರಕ್ಕೆ ಬರುವ ರಸ್ತೆ ಹೊಂಡಗುಂಡಿಗಳಿಂದ ಕೂಡಿದೆ. ಠಾಣೆಯಿಂದ ಅನತಿ ದೂರದಲ್ಲಿರುವ ಕುಂದಾ ಪುರ- ಸಿದ್ದಾಪುರ ರಾಜ್ಯ ಹೆದ್ದಾರಿ ಕೂಡ ಹೆಸರಿಗೆ ಹೆದ್ದಾರಿಯಾಗಿದ್ದು, ಬಹಳಷ್ಟು ಒತ್ತಡದ ಹಾಗೂ ಇಕ್ಕಾಟದ ರಸ್ತೆಯಾಗಿದೆ. ಅಗ್ನಿಶಾಮಕ ವಾಹನ ಬರಲು ವಿಳಂಬವಾಗುವುದನ್ನು ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಒಂದಾದರೂ ವಾಹನ ತುರ್ತು ಅವಶ್ಯಕ್ಕೆ ದೊರೆತಲ್ಲಿ ಕೋಟೇಶ್ವರ ಕುಂದಾಪುರ ನಗರಗಳ ನಡುವೆ ಸಂಭವಿಸುವ ಅಗ್ನಿದುರಂತದ ತುರ್ತು ಶಮನಕ್ಕೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಗೂ ಜನಪ್ರತಿನಿಧಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದು ಭಾಗ್ಯ, ಇದು ಭಾಗ್ಯ, ಇದು ‘ಬಿಟ್ಟಿ ಭಾಗ್ಯ’ವಯ್ಯ!
ದೇಶದಲ್ಲಿ ಶೇ. 60-70 ಇರುವ ಬಡ ಮತ್ತು ಮಧ್ಯಮ ವರ್ಗದ ಜನಸಮುದಾಯಗಳಿಗೆ ಯಾವುದೇ ಸರಕಾರಿ ಸವಲತ್ತು, ಸಬ್ಸಿಡಿ ನೀಡಿದಾಗ ಅದು ‘ಬಿಟ್ಟಿ ಭಾಗ್ಯ’ ಎಂದು ಹೀಗಳೆಯುವವರಿಗೆ, ಹೀಗೆ ಬಲಾಢ್ಯ ಕಾರ್ಪೊರೇಟ್ಗಳ ಲಾಬಿಯ ಒತ್ತಡಕ್ಕೆ ಮಣಿದು, ಸರಕಾರಗಳು ಮಂಡಿಯೂರಿ ಸಬ್ಸಿಡಿ ನೀಡುವುದು/ಮುಂದುವರಿಸುವುದು ಏನನ್ನಿಸುತ್ತದೆ? ಭಾರತ ಸರಕಾರವು ದೇಶದ ಒಳಗೆ ಉತ್ಪಾದನೆ ಹೆಚ್ಚಳ ಹಾಗೂ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಆರಂಭಿಸಿದ ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್ಐ) ಯೋಜನೆಯ ಕುರಿತು ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಂ ರಾಜನ್ ಅವರು 2023ರಲ್ಲಿ ನೀಡಿದ ಕಾರ್ಣಿಕದ ‘ನುಡಿ’ಯೊಂದು ಈಗ ಅವರ ಮುಂಗಾಣ್ಕೆ ಎಷ್ಟು ನಿಖರವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತಿದೆ. 2021-22ನೇ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರಕಾರವು 14 ಕ್ಷೇತ್ರಗಳಿಗೆ 1.97 ಲಕ್ಷ ಕೋಟಿ ರೂ.ಗಳ ಗಾತ್ರದ ಪಿಎಲ್ಐ ಸಬ್ಸಿಡಿಯನ್ನು ಒದಗಿಸಲು ಬಜೆಟರಿ ಅನುದಾನವನ್ನು ಪ್ರಕಟಿಸಿತ್ತು. ಈ ಯೋಜನೆಯಡಿ ಭಾರತದಲ್ಲಿ ಉತ್ಪಾದನೆ ಆದ ಸರಕುಗಳಿಗೆ ಶೇ. 4-6 ಪ್ರೋತ್ಸಾಹಧನ ಸಿಗುತ್ತದೆ. (ಗಮನಿಸಿ: ಈ ಬಗ್ಗೆ 23 ಸೆಪ್ಟಂಬರ್, 2023ರಂದು ಪ್ರಕಟಗೊಂಡ ಪಿಟ್ಕಾಯಣದಲ್ಲಿ ವಿವರವಾಗಿ ಹೇಳಲಾಗಿದೆ.) ಈ ಯೋಜನೆಯ ಸ್ವರೂಪದ ಬಗ್ಗೆ 2023ರಲ್ಲಿ ಟೀಕೆ ಮಾಡಿದ್ದ ರಘುರಾಂ ರಾಜನ್ ಅವರು, ಮೊಬೈಲ್ ಫೋನಿನ ಪ್ರಮುಖ ಬಿಡಿಭಾಗಗಳಾದ PCBA, ಡಿಸ್ಪ್ಲೇ, ಕ್ಯಾಮರಾ, ಬ್ಯಾಟರಿ, ಸೆಮಿಕಂಡಕ್ಟರ್... ಇವು ಯಾವುವೂ ಭಾರತದಲ್ಲಿ ಉತ್ಪಾದನೆ ಆಗುವುದಿಲ್ಲ. ಇಲ್ಲಿ ಏನಿದ್ದರೂ ಅವುಗಳ ಅಸೆಂಬ್ಲಿ-ಫಿನಿಷಿಂಗ್-ಟೆಸ್ಟಿಂಗ್ ನಡೆಯುತ್ತದೆ. ಅಂತಿಮವಾಗಿ ಒಂದು ಮೊಬೈಲ್ ಫೋನಿನ ಉತ್ಪಾದನಾ ವೆಚ್ಚದ ಮೇಲೆ ಇಲ್ಲಿ ನಡೆಯುವ ವ್ಯಾಲ್ಯೂ ಎಡಿಷನ್ ಕೇವಲ ಶೇ. 4 ಮಾತ್ರ. ಅದಕ್ಕೆ ಶೇ. 4-6 ಸಬ್ಸಿಡಿಯನ್ನು ಸರಕಾರ ನೀಡುವುದಿದ್ದರೆ, ಯಾರು ತಾನೇ ಬೇಡ ಎನ್ನುತ್ತಾರೆ? ಇವು ಆರಂಭದಲ್ಲಿ ಸ್ವಲ್ಪ ಉದ್ಯೋಗ ಸೃಷ್ಟಿ ಮಾಡಬಹುದಾದರೂ, ಕೌಶಲ ವೃದ್ಧಿ ಮಾಡುವುದಿಲ್ಲ. ಅಂತಿಮವಾಗಿ ಐದು ವರ್ಷ ಮುಗಿಯುವ ಹೊತ್ತಿಗೆ ಅಕಸ್ಮಾತ್ ಪಿಎಲ್ಐ ನಿಲ್ಲಿಸಿದರೆ, ಈ ಕಂಪೆನಿಗಳು ಇಲ್ಲಿಯೇ ಮುಂದುವರಿಯುವ ಗ್ಯಾರಂಟಿಯೂ ಇಲ್ಲ. ಇದು ಸಮಸ್ಯೆಯ ಒಂದು ಮುಖವಾದರೆ, ಇನ್ನೊಂದೆಡೆ ಬಿಡಿ ಭಾಗಗಳ ಆಮದು ಪ್ರಮಾಣ ತೀವ್ರವಾಗಿ ಹೆಚ್ಚಲಿದ್ದು, ಇದು ನಮ್ಮ ಆಮದು-ರಫ್ತು ಅಸಮತೋಲನಕ್ಕೆ ಕಾರಣ ಆಗಬಹುದು ಎಂದೆಲ್ಲ ವಿವರಿಸಿದ್ದರು. ರಘುರಾಂ ರಾಜನ್ ಅವರು ಹೇಳಿದ ಮಾತುಗಳು ಇಂದು ಬಹುತೇಕ ಸತ್ಯವಾಗುವ ಹಂತದಲ್ಲಿ ಇವೆ. ಪಿಎಲ್ಐ ಯೋಜನೆಯ ಉದ್ದೇಶಿತ ಐದು ವರ್ಷಗಳು 2025-26ಕ್ಕೆ ಪೂರ್ಣಗೊಳ್ಳಲಿದ್ದು, ಆ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಕಳೆದ ವಾರ ಬ್ಯುಸಿನೆಸ್ ಲೈನ್ ಪತ್ರಿಕೆಯು ಸ್ಮಾರ್ಟ್ಫೋನ್ ಉದ್ಯಮದ ಮೂಲಗಳನ್ನು ಆಧರಿಸಿ, ಕೆಲವು ಬೆಳವಣಿಗೆಗಳನ್ನು ವರದಿ ಮಾಡಿತ್ತು. ಆ ವರದಿಯ ಪ್ರಕಾರ, ಬೃಹತ್ ಇಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರಕ್ಕೆ ನೀಡಲಾಗಿರುವ ಪಿಎಲ್ಐ ಸಬ್ಸಿಡಿ ಯೋಜನೆ ಇನ್ನು ಮೂರು ತಿಂಗಳಲ್ಲಿ ಅಂತ್ಯಕಾಣಲಿದ್ದು, ಸರಕಾರದ ಕಡೆಯಿಂದ ಆ ಯೋಜನೆಯನ್ನು ಮುಂದುವರಿಸುವ ಯಾವುದೇ ಸೂಚನೆ ಇಲ್ಲಿಯ ತನಕ ಬಂದಿಲ್ಲ. ಹಾಗಾಗಿ ಮೊಬೈಲ್ ಫೋನ್ ಉದ್ಯಮ ವಲಯ ಕಳವಳಗೊಂಡಿದೆ. ಸರಕಾರ ಒಂದೋ ಪಿಎಲ್ಐ ಅನ್ನು ವಿಸ್ತರಿಸಬೇಕು ಇಲ್ಲವೇ ಅಂತಹದೇ ಬೇರೆ ಬೆಂಬಲ ಮೆಕ್ಯಾನಿಸಂ ಒಂದನ್ನು ಯೋಜಿಸಿ ಪ್ರಕಟಿಸಬೇಕು. ಈಗಿರುವ ವೇಗದಲ್ಲಿ ಬೆಳವಣಿಗೆಯನ್ನು ಉಳಿಸಿಕೊಳ್ಳಲು, ಈ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಸಿಗಬೇಕಾದುದು ಅಗತ್ಯ ಎಂದು ಮೊಬೈಲ್ ಫೋನ್ ಇಂಡಸ್ಟ್ರಿ ಮೂಲಗಳು ಹೇಳಿವೆ. 2030ರ ಒಳಗಡೆ ಉದ್ದೇಶಿತ 45 ಲಕ್ಷ ಕೋಟಿ ರೂ.ಗಳ ಮಾರಾಟದ ಗುರಿಯನ್ನು ಸಾಧಿಸಬೇಕಿದ್ದರೆ, ಪಿಎಲ್ಐ ಬೆಂಬಲ ಉದ್ಯಮಕ್ಕೆ ಅನಿವಾರ್ಯ. 2025ರ ಹೊತ್ತಿಗೆ ಈ ಉದ್ಯಮ 1.61ಲಕ್ಷ ಕೋಟಿ ರೂ.ಗಳ ಹೂಡಿಕೆ ಭರವಸೆಯನ್ನು ಭಾರತಕ್ಕೆ ತಂದಿದೆಯಲ್ಲದೇ ಈಗಾಗಲೇ 1.76 ಲಕ್ಷ ಕೋಟಿ ರೂ.ಗಳ ಹೂಡಿಕೆ ಆಗಿದೆ. ಮೊಬೈಲ್ ಫೋನ್ ಒಂದೇ ಕ್ಷೇತ್ರದಲ್ಲಿ, 5.45 ಲಕ್ಷ ಕೋಟಿ ರೂ.ಗಳ ಉತ್ಪಾದನೆ ಸಾಧಿಸಲಾಗಿದೆ. ಫಾಕ್ಸ್ಕಾನ್, ಪೆಗಾಟ್ರಾನ್ನಂತಹ ಪ್ರಮುಖ ಆ್ಯಪಲ್ ಫೋನ್ ಬಿಡಿಭಾಗಗಳ ಸರಬರಾಜುದಾರರು ಭಾರತದಲ್ಲಿ ಅಂಗಡಿ ತೆರೆದಿದ್ದಾರೆ. ಮೊಬೈಲ್ ಫೋನ್ ಉತ್ಪಾದಕರಿಗೆ ಪಿಎಲ್ಐ ಮಾತ್ರವಲ್ಲದೇ ತೆರಿಗೆ ರಜೆ, ಕಡಿಮೆ ಬೆಲೆಗೆ ಭೂಮಿಯಂತಹ ಹಲವು ಬೇರೆ ಭಾಗ್ಯಗಳೂ ಇವೆ. ಕರ್ನಾಟಕ ಸೇರಿದಂತೆ, ರಾಜ್ಯಸರಕಾರಗಳು ಇವರಿಗೆಲ್ಲ ಕೆಂಪುಹಾಸಿನ ಸ್ವಾಗತ ಕೋರಲು ಅತ್ಯುತ್ಸಾಹ ತೋರಿಸುತ್ತಿವೆ. ಹಾಗಾಗಿ ಬಹುರಾಷ್ಟ್ರೀಯ ಮೊಬೈಲ್ ಉತ್ಪಾದಕ ಕಂಪೆನಿಗಳಿಗೆ ಇಲ್ಲಿ ಹೂಡಿಕೆ ಆಕರ್ಷಕ ಅನ್ನಿಸುವುದು ಸಹಜ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು, ಪಿಎಲ್ಐ ಮುಂದುವರಿಕೆಯ (ಪಿಎಲ್ಐ 2.0) ಕುರಿತು ಸಂಬಂಧಿತರೊಂದಿಗೆ ಮಾತುಕತೆ ನಡೆಸಿದ್ದೇವೆ. ಇಲ್ಲಿಯ ತನಕ ಆ ಕ್ಷೇತ್ರಕ್ಕೆ 14,900 ಕೊಟಿ ರೂ.ಗಳ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂಬ ಬಗ್ಗೆ ಕೂಡ ಪತ್ರಿಕೆ ವರದಿ ಮಾಡಿದ್ದು, ಅದರ ಅರ್ಥ- ಸರಕಾರ ಕೂಡ, ಈ ಹೊಸ ಸಬ್ಸಿಡಿ ಚಕ್ರವ್ಯೆಹದಲ್ಲಿ ಸಿಕ್ಕಿಹಾಕಿಕೊಳ್ಳಲು ಸಿದ್ಧವಾಗುತ್ತಿರುವಂತಿದೆ. ಆರಂಭದಲ್ಲಿ ಭಾರತ ಸರಕಾರದ ಉದ್ದೇಶ ಇದ್ದುದು, ಐದು ವರ್ಷಗಳಲ್ಲಿ 30 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಕೈಗಾರಿಕಾ ಉತ್ಪಾದನೆ ಮತ್ತು 60 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ. ಆದರೆ, 2025ರ ಮಾರ್ಚ್ ಹೊತ್ತಿಗೆ ಈ ಯೋಜನೆ ಉದ್ದೇಶಿತ ಗುರಿ ತಲುಪಿಲ್ಲ ಎಂಬುದನ್ನು ಸರಕಾರವೇ ಸಂಸತ್ತಿನಲ್ಲಿ ಬಹಿರಂಗಪಡಿಸಿಕೊಂಡಿದೆ. ಉತ್ಪಾದನೆಯಲ್ಲಿ 16.5 ಲಕ್ಷ ಕೋಟಿ ರೂ.ಗಳ ಹೆಚ್ಚಳ ಆಗಿದ್ದರೆ, 12 ಲಕ್ಷ (ನೇರ ಮತ್ತು ಪರೋಕ್ಷ ಒಟ್ಟು ಸೇರಿ) ಉದ್ಯೋಗಗಳು ಸೃಷ್ಟಿ ಆಗಿವೆ (ಆಧಾರ: ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 2,625. ದಿನಾಂಕ: 5 ಆಗಸ್ಟ್, 2025). ಅಂದರೆ ಸರಕಾರದ ಉದ್ದೇಶಿತ ಗುರಿಯ ಶೇ. 50 ಕೂಡ ಸಾಧನೆ ಆಗಿಲ್ಲ. ಸದ್ಯಕ್ಕೆ ದೇಶದ ರಫ್ತಿನ ಗಮನಾರ್ಹ ಭಾಗವನ್ನು ಆವರಿಸಿಕೊಂಡಿರುವ ಮೊಬೈಲ್ ಫೋನ್ ರಫ್ತು 2021-22ರಲ್ಲಿ 22,850 ಕೋಟಿ ರೂ. ಇದ್ದುದು ಈಗ 2024-25ರಲ್ಲಿ 2 ಲಕ್ಷ ಕೋಟಿ ರೂ. ಗಾತ್ರವನ್ನು ದಾಟಿದೆ; ಮೊಬೈಲ್ ಉತ್ಪಾದನೆಯ ಪ್ರಮಾಣ 2.14 ಲಕ್ಷ ಕೋಟಿ ರೂ. (2021-22) ಇದ್ದಲ್ಲಿಂದ 5.25 ಲಕ್ಷ ಕೋಟಿ ರೂ.ಗೆ ತಲುಪಿದೆ. 2023ರಲ್ಲಿ ರಘುರಾಂ ರಾಜನ್ ಅವರು ಹೇಳಿದ್ದು ಇದನ್ನೇ. ಶೇ. 4 ವ್ಯಾಲ್ಯೂ ಎಡಿಷನ್ ಮಾಡಿದ್ದಕ್ಕೆ ಶೇ. 4-6 ಸಬ್ಸಿಡಿ ನೀಡುವುದಾದರೆ, ಕಂಪೆನಿಗಳು ನಾ ಮುಂದು-ತಾ ಮುಂದು ಎಂದು ಬರುತ್ತವೆ, ಆದರೆ ಸಬ್ಸಿಡಿ ನಿಲ್ಲಿಸಿದ ದಿನ ಅವರು ಇಲ್ಲಿ ಉಳಿಯುವ ಸಾಧ್ಯತೆಗಳಿಲ್ಲ ಎಂದು. ಒಂದು ವೇಳೆ ಸಬ್ಸಿಡಿ ನಿಲ್ಲಿಸಿ, ಕಂಪೆನಿಗಳು ಇಲ್ಲಿಂದ ಗುಳೆ ಹೋದರೆ, ಇಲ್ಲಿ ಕೇವಲ ‘ಸ್ಕ್ರೂಡ್ರೈವರ್’ ಬಳಸುವ ತಾಂತ್ರಿಕ ಕೌಶಲ ಕಲಿತಿರುವ ಕೆಲಸಗಾರರು ಅತಂತ್ರರಾಗಬಹುದು. ಇದು ದೇಶದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ ವೃದ್ಧಿಗೆ ಯಾವ ರೀತಿಯಲ್ಲೂ ಸಹಾಯಕ ಅಲ್ಲ ಎಂಬ ಕಳಕಳಿ ಅವರದಾಗಿತ್ತು. ಈಗ ಪಿಎಲ್ಐ ಮುಂದುವರಿಸಲು ನಡೆದಿರುವ ಲಾಬಿಯನ್ನು ಗಮನಿಸಿದರೆ, ರಘುರಾಂ ರಾಜನ್ ಅವರ ಮುಂಗಾಣ್ಕೆ ಎಷ್ಟು ಮಹತ್ವದ್ದೆಂಬುದು ಸ್ಪಷ್ಟವಾಗುತ್ತದೆ. ಅಂದಿನ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು ರಘುರಾಂ ರಾಜನ್ ಅವರ ಆ ನಿಲುವನ್ನು ಕಟುವಾಗಿ ಖಂಡಿಸಿದ್ದರು. ‘‘ಅವರ ತೀರ್ಮಾನವೇನೂ ಭಯಂಕರ ರಾಕೆಟ್ ಸಯನ್ಸ್ ಅಲ್ಲ. ಆದರೆ ಅದಕ್ಕೆ ಅವರು ಬಳಸಿರುವುದು ತಪ್ಪು ಅಂಕಿ-ಸಂಖ್ಯೆಗಳನ್ನು, ಪ್ರಶ್ನಾರ್ಹ ವಿಶ್ಲೇಷಣೆಗಳನ್ನು ಹಾಗೂ ಗುರುತು ಬಹಿರಂಗಪಡಿಸದ ಉದ್ಯಮ ಪರಿಣತರನ್ನು. ಇದು ನೈತಿಕ ದಿವಾಳಿತನದ ಪ್ರತೀಕ. ಅವರಿಗೆ ಇಲೆಕ್ಟ್ರಾನಿಕ್ಸ್ ಉತ್ಪಾದನೆ, ಸರಬರಾಜು ಸರಪಣಿಯ ಬಗ್ಗೆ ಏನೂ ಅರಿವಿಲ್ಲದಿರುವುದು ಮಾತ್ರವಲ್ಲದೆ, ಕಡೆಗೆ ಅರ್ಥಶಾಸ್ತ್ರದ ಅರಿವೂ ಇಲ್ಲದಿರುವುದನ್ನು ಅವರ ಟೀಕೆ ತೋರಿಸುತ್ತದೆ’’ ಎಂದು ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ರಘುರಾಂ ರಾಜನ್ ಅವರನ್ನು ಸಚಿವರು ಟೀಕಿಸಿದ್ದರು. (ಆಧಾರ: ಬ್ಯುಸಿನೆಸ್ ಸ್ಟಾಂಡರ್ಡ್ 15 ಜೂನ್, 2023). ಈ ಹಿನ್ನೆಲೆಯಲ್ಲಿ ಸರಕಾರ ಈಗ ಮೊಬೈಲ್ ಉತ್ಪಾದಕರ ಲಾಬಿಗೆ ಮಣಿದು ಅವರಿಗೆ ಮತ್ತಷ್ಟು ಪಿಎಲ್ಐ ಸಬ್ಸಿಡಿಗಳನ್ನು ನೀಡಲಿದೆಯೋ ಅಥವಾ ನೈಜ ಉತ್ಪಾದನಾ ಕ್ಷೇತ್ರಗಳತ್ತ ಗಮನ ಹರಿಸಿ, ನಿಜಕ್ಕೂ ಆತ್ಮನಿರ್ಭರ ಆಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ. ದೇಶದಲ್ಲಿ ಶೇ. 60-70 ಇರುವ ಬಡ ಮತ್ತು ಮಧ್ಯಮ ವರ್ಗದ ಜನಸಮುದಾಯಗಳಿಗೆ ಯಾವುದೇ ಸರಕಾರಿ ಸವಲತ್ತು, ಸಬ್ಸಿಡಿ ನೀಡಿದಾಗ ಅದು ‘ಬಿಟ್ಟಿ ಭಾಗ್ಯ’ ಎಂದು ಹೀಗಳೆಯುವವರಿಗೆ, ಹೀಗೆ ಬಲಾಢ್ಯ ಕಾರ್ಪೊರೇಟ್ಗಳ ಲಾಬಿಯ ಒತ್ತಡಕ್ಕೆ ಮಣಿದು, ಸರಕಾರಗಳು ಮಂಡಿಯೂರಿ ಸಬ್ಸಿಡಿ ನೀಡುವುದು/ಮುಂದುವರಿಸುವುದು ಏನನ್ನಿಸುತ್ತದೆ? ಪಿಎಲ್ಐ ಮುಂದುವರಿಸುವುದಿದ್ದರೆ, ಈ ವರ್ಷದ ಬಜೆಟ್ ವೇಳೆ ಹಣಕಾಸು ಸಚಿವರು ಆ ಬಗ್ಗೆ ಬಜೆಟರಿ ಅನುದಾನವನ್ನು ಪ್ರಕಟಿಸಬೇಕಿರುತ್ತದೆ. ‘ಬಿಟ್ಟಿ ಭಾಗ್ಯ’ ಎಂದು ಮೂದಲಿಸುವವರ ಪ್ರತಿಕ್ರಿಯೆ ಆಗ ಹೇಗಿರಲಿದೆ?!
ನಾಟಕ: ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ ಮೂಲ: ಕಂದಗಲ್ಲ ಹನುಮಂತರಾಯರ ಮಹಾಭಾರತ ಕುರಿತ ನಾಟಕಗಳು ರಂಗರೂಪ/ನಿರ್ದೇಶನ: ಪ್ರಕಾಶ ಗರುಡ ರಂಗವಿನ್ಯಾಸ: ಶ್ವೇತಾರಾಣಿ ಎಚ್.ಕೆ. ವಸ್ತ್ರವಿನ್ಯಾಸ: ರಜನಿ ಗರುಡ ಬೆಳಕಿನ ವಿನ್ಯಾಸ: ಮಧು ಮಳವಳ್ಳಿ ಪ್ರಸ್ತುತಿ: ರೆಪರ್ಟರಿ ಕಲಾವಿದರು, ರಂಗಾಯಣ, ಧಾರವಾಡ ರಂಗದ ಮೇಲೆ: ಅಕ್ಕಮ್ಮಾ ದೇವರಮನಿ, ಹನುಮಂತ ರಾಯ್ಕರ, ರೋಹನ್ ದೇಸಾಯಿ, ವಿನೋದ ದಂಡಿನ, ದುಂಡೇಶ ಹಿರೇಮಠ, ಗೋಪಾಲ ಉಣಕಲ್, ಸುನೀಲ ಲಗಳಿ, ಕೃಷ್ಣ ಹೂಗಾರ, ಪವನ ದೇಶಪಾಂಡೆ, ಇಂದು ಡಿ., ರೇಖಾ ಹೊಂಗಲ, ಕೀರ್ತಿ ಸಿಂದೋಗಿ, ಯೋಗೇಶ ಬಗಲಿ. ರಾಜು ತಾಳಿಕೋಟಿ ಅವರ ದೊಡ್ಡ ಕನಸು ಈಡೇರಿದೆ. ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರು ನಿಧನರಾಗುವ ಮೊದಲು ‘ಕರ್ನಾಟಕದ ಷೇಕ್ಸ್ಪಿಯರ್’ ಎಂದೇ ಖ್ಯಾತರಾಗಿದ್ದ ಕಂದಗಲ್ಲ ಹನುಮಂತರಾಯರ ನಾಟಕಗಳನ್ನು ತಮ್ಮ ರಂಗಾಯಣದ ಮೂಲಕ ಪ್ರದರ್ಶಿಸಬೇಕೆಂದು ಕನಸು ಕಂಡಿದ್ದರು. ಆದರೆ ಅಕಾಲಿಕವಾಗಿ ನಿಧನರಾದರು. ಅವರ ಕನಸು ಕಮರಲಿಲ್ಲ. ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ನೇತೃತ್ವದಲ್ಲಿ, ಪ್ರಕಾಶ ಗರುಡ ಅವರು ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’ ನಾಟಕವನ್ನು ರಂಗಕ್ಕೇರಿಸಿದ್ದಾರೆ. ಈಮೂಲಕ ರಾಜು ತಾಳಿಕೋಟಿ ಅವರಿಗೆ ಗೌರವ ಸಲ್ಲಿಸಿದಂತಾಗಿದೆ. ರಾಜು ತಾಳಿಕೋಟಿ ಅವರು ಡಿ. ದುರ್ಗಾದಾಸ್ ಅವರ ಶಿಷ್ಯರು. ದುರ್ಗಾದಾಸ್ (ನೀನಾಸಂ ಪದವೀಧರೆಯಾಗಿದ್ದ ಹನುಮಕ್ಕ ಅವರ ತಂದೆ) ಅವರು ಕಂದಗಲ್ಲ ಹನುಮಂತರಾಯರ ಶಿಷ್ಯರು. ಹೇಗೆಂದರೆ ಕಂದಗಲ್ಲರು ಕಟ್ಟಿದ ಅರವಿಂದ ಸಂಗೀತ ನಾಟಕ ಮಂಡಳಿಯಲ್ಲಿದ್ದರು. ಕಂದಗಲ್ಲರ ‘ಚಿತ್ರಾಂಗದ’ ನಾಟಕದಲ್ಲಿ ಅರ್ಜುನನ ಪಾತ್ರಕ್ಕೆ ದುರ್ಗಾದಾಸ್ ಹೆಸರುವಾಸಿಯಾಗಿದ್ದರು. ಹೀಗಿದ್ದಾಗ ರಾಜು ತಾಳಿಕೋಟಿ ಅವರ ಕಂದಗಲ್ಲರ ನಾಟಕಗಳನ್ನು ಪ್ರದರ್ಶಿಸಬೇಕೆಂಬ ತಮ್ಮ ಕನಸನ್ನು ಪ್ರಕಾಶ ಗರುಡ ಅವರಿಗೆ ಹೇಳಿದರು. ಈ ಪ್ರಕಾಶ ಗರುಡ ಅವರು ದತ್ತಾತ್ರೇಯ ನಾಟಕ ಮಂಡಳಿ ಕಟ್ಟಿದ್ದ ಗರುಡ ಸದಾಶಿವರಾಯರು ಮೊಮ್ಮಗ. ಹೀಗೆ ಈ ನಾಟಕದ ಮೂಲಕ ರಂಗ ಪರಂಪರೆ ಬೆಳೆಯಿತು. ಈ ನಾಟಕವು ಮೈಸೂರು ರಂಗಾಯಣದಲ್ಲಿ ಕಳೆದ ವಾರ (ಡಿಸೆಂಬರ್ 28) ಬಹುರೂಪಿಗೆ ಮುನ್ನುಡಿಯಾಗಿ ಪ್ರದರ್ಶನಗೊಂಡಿತು. ಮೂರೂವರೆ ಗಂಟೆಗಳ ಈ ನಾಟಕವು ಹಿಡಿದಿಟ್ಟಿತು. ಇದಕ್ಕೆ ಕಂದಗಲ್ಲ ಹನುಮಂತರಾಯರ ನಾಟಕಗಳ ಸಮಕಾಲೀನತೆ, ರಾಘವ ಕಮ್ಮಾರ ಅವರ ಸಂಗೀತ ಪೂರಕವಾಗಿದ್ದವು. ಕಂಠಪಾಠ ಮಾಡಿದ ಉದ್ದುದ್ದದ ಸಂಭಾಷಣೆಗಳನ್ನು ಕಲಾವಿದರು ಹೇಳುವಾಗ ಅಲ್ಲಲ್ಲಿ ಎಡವಿದರೂ ಸರಿಪಡಿಸಿಕೊಂಡರು. ಇದಕ್ಕೆ ಕಾರಣ; ಕಂದಗಲ್ಲರ ಅದ್ಭುತ ಸಂಭಾಷಣೆ. ಕಬ್ಬಿಣದ ಕಡಲೆ ಎಂದೇ ಜನಪ್ರಿಯ. ಇಂಥ ಸಂಭಾಷಣೆಗಳನ್ನು ನಿಧಾನವಾಗಿ, ಮನ ಮುಟ್ಟುವ ಹಾಗೆ ಕಲಾವಿದರು ಹೇಳಬಹುದಿತ್ತು. ಆದರೆ ಸಂಭಾಷಣೆ ಒಪ್ಪಿಸುವ ಭರದಲ್ಲಿದ್ದರು. ಅದರಲ್ಲೂ ಗೋಪಾಲ ಉಣಕಲ್ ಅವರು ದ್ರೌಪದಿ ತಂದೆ ದ್ರುಪದರಾಜ, ದುಶ್ಯಾಸನ, ಕೀಚಕ ಹಾಗೂ ಕಲಿ ಪಾತ್ರಗಳನ್ನು ನಿರ್ವಹಿಸಿ ನ್ಯಾಯ ಒದಗಿಸಿದರು. ಕೃಷ್ಣನ ಪಾತ್ರಕ್ಕೆ ಅಕ್ಕಮ್ಮಾ ಒಪ್ಪಿದ್ದಾರೆ. ಆದರೆ ಸಂಭಾಷಣೆಗಳನ್ನು ಕೊಂಚ ನಿಧಾನವಾಗಿ ಹೇಳಬೇಕಾದ ಅಗತ್ಯವಿದೆ. ಶಕುನಿ ಪಾತ್ರಕ್ಕೆ ವಿನೋದ ದಂಡಿನ ಇನ್ನಷ್ಟು ಜೀವ ತುಂಬಬೇಕಿತ್ತು. ಕೃಷ್ಣ-ಶಕುನಿಯರ ಸಂಭಾಷಣೆ ಇನ್ನಷ್ಟು ಮನ ಮುಟ್ಟಬೇಕಿತ್ತು. ಸೈರಂಧ್ರಿ ಹಾಗೂ ದ್ರೌಪದಿ ಪಾತ್ರಕ್ಕೆ ಜೀವ ತುಂಬಿದವರು ರೇಖಾ ಹೊಂಗಲ. ಹೀಗೆಯೇ ಕುಂತಿ, ಭಾನುಮತಿ, ಉತ್ತರೆ ಪಾತ್ರಕ್ಕೆ ಬಣ್ಣ ಹಚ್ಚಿದ ಇಂದು ಬಗಲಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದರು. ಒಟ್ಟಾರೆ ನಾಟಕ ಇನ್ನಷ್ಟು ಕಳೆಕಟ್ಟಬೇಕಿತ್ತು. ಏಕೆಂದರೆ ಬಳ್ಳಾರಿ ಜಿಲ್ಲೆಯಲ್ಲಿ ಕಂದಗಲ್ಲರ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ ಮೊದಲಾದವರು ತಮ್ಮ ಭಾವಪೂರ್ಣ ಅಭಿನಯ ಹಾಗೂ ಸಶಕ್ತ ಸಂಭಾಷಣೆಗಳಿಂದ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಇಂದಿಗೂ ಬಳ್ಳಾರಿ ಜಿಲ್ಲೆಯಲ್ಲಿ ‘ರಕ್ತರಾತ್ರಿ’ ನಾಟಕವಾಡುವ ಕಲಾವಿದರು ಸಂಭಾಷಣೆ ಹೇಳುವಾಗ ತಪ್ಪಿದರೆ ಪ್ರೇಕ್ಷಕರು ಎದ್ದು ನಿಂತು ‘ಸಂಭಾಷಣೆ ತಪ್ಪಿದ್ರಿ’ ಎಂದು ಹೇಳುತ್ತಾರೆ. ಇದಕ್ಕೆಲ್ಲ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ ಕಾರಣರು. ವೀರಣ್ಣ ಅವರು ‘ರಕ್ತರಾತ್ರಿ’ ನಾಟಕದ ಶಕುನಿ ಪಾತ್ರದಿಂದ ಪ್ರಸಿದ್ಧರಾಗಿದ್ದರು. ಭಾಷೆಯ ಮೇಲಿನ ಅವರ ಹಿಡಿತ, ಪ್ರಬುದ್ಧ ಅಭಿನಯ ಅದ್ಭುತವಾಗಿರುತ್ತಿತ್ತು. ಅವರು ಹೇಳುತ್ತಿದ್ದ ಶಕುನಿಯ ಮಾತು ಹೀಗಿದೆ- ‘‘ಈ ಶಕುನಿಯ ಎದೆ ಹುತ್ತದೊಳ್ ಅಡಗಿರುವ ಭೇದನೀತಿಯೆಂಬ ನಾಗಿಣಿಯ ಪೂತ್ಕಾರಕ್ಕೆ ಜಾತಿಗಳ ಝಳ ಹೊಡೆದು ಕಮರುವವು ಕೋಮಲ ಕರುಳ ಸೌಹಾರ್ದ ಸೂತ್ರಗಳು. ಮನುಷ್ಯತ್ವ ಮಣ್ಣುಗೂಡಿ ಸುರಶಿಲ್ಪಿ ವಿಶ್ವಕರ್ಮನ ಕೈಯ ಕುಂಚ ಕಠೋರ ಕುಠಾರಿಯಾಗುವುದು ಕೋಮು-ಜಾತಿಯ ಜಗಳದ ಘರ್ಜನೆಯಲ್ಲಿ. ಸರಸ್ವತಿಯ ತಂಬೂರಿ ಬಿರಿದು ಭೈರವ ಭೇರಿಯಾಗುವುದು ಕುಲಾಭಿಮಾನದ ಕಿಡಿಯಲಿ. ಅತಿ ತೀವ್ರವಾಗಿದೆ ಜಾತಿದ್ವೇಷ. ಇದರದೊಂದು ಕಿಡಿ ಬಗೆದು ನಿರ್ಮಿಸುವೆ ಕಾಳಾನಲ ಕಡಲನ್ನೇ ಕರ್ಣ-ಅಶ್ವತ್ಥಾಮರ ಮಧ್ಯದಲಿ. ಅಶ್ವತ್ಥಾಮನು ಪಾಂಡವರಿಗೆ ಪ್ರತಿಕಾಳಯಮ. ಅಶ್ವತ್ಥಾಮನನ್ನು ಯುದ್ಧಭೂಮಿಯಿಂದ ದೂರೀಕರಿಸದಿದ್ದರೆ ದಾರಿ ಕಾಣದು ಈ ಶಕುನಿಯ ಕಾರಸ್ಥಾನದ ಕಣ್ಣಿಗೆ ಅಶ್ವತ್ಥಾಮನ ಉರಿಗಣ್ಣು. ಸುರಸೇನಾಧಿಪತಿ ಷಣ್ಮುಖಸ್ವಾಮಿಯ ಕ್ಷಾತ್ರ ರಸಾಯನವೇ ತುಂಬಿ ತುಳುಕಾಡುತ್ತಿದೆ ಅಶ್ವತ್ಥಾಮನ ಎದೆಯೊಳು. ದುರ್ಯೋಧನನ ದಂಡಾಧಿಪತಿಯ ಪಟ್ಟವನ್ನು ಅಶ್ವತ್ಥಾಮನಿಗೆ ಕಟ್ಟಿದರೆ ಉಳಿಗಾಲವಿಲ್ಲ ಪಾಂಡವರಿಗೆ ಮತ್ ಅಳಿಗಾಲವಿಲ್ಲ ಆ ಕುರುಡನ ಕುನ್ನಿಗಳಿಗೆ. ಆದ್ದರಿಂದ ಹೂಡಿ ಹೊಡೆಯುವೆ ದುರ್ಯೋಧನನ ಎದೆಗೆ ಎರಡು ಬಾಣಗಳನ್ನು. ಗರತಿಯಾದ ಭಾನುಮತಿಯ ಶೀಲದ ಬಗ್ಗೆ ಸಂಶಯದ ಬಾಣ. ಇನ್ನೊಂದು; ಜಾತಿದ್ವೇಷದ ರಾಮಬಾಣ...’’ ಹೀಗೆ ಹೇಳಿ ವಿಕಟವಾಗಿ ನಕ್ಕು, ಕಣ್ಣು ತಿರುಗಿಸುತ್ತಿದ್ದರು ಬೆಳಗಲ್ಲು ವೀರಣ್ಣ. ಈಮೂಲಕ ಅವರು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಅವರ ಪುತ್ರ ಪ್ರಕಾಶ ಅವರು ಕೃಷ್ಣನ ಪಾತ್ರಕ್ಕೆ ಪ್ರಸಿದ್ಧರು. ಇವರಿಬ್ಬರು ‘ರಕ್ತರಾತ್ರಿ’ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದನ್ನು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದನ್ನು ನೋಡಿರುವೆ. ಹೀಗೆಯೇ ಭೀಷ್ಮನ ಪಾತ್ರಕ್ಕೆ ಹಂದಿಗನೂರು ಸಿದ್ರಾಮಪ್ಪ ಪ್ರಸಿದ್ಧರಾಗಿದ್ದರು. ಹೀಗೆ ಹೇಳಲು ಕಾರಣ; ಕಲಾವಿದರು ಸಂಭಾಷಣೆ ಹೇಳಿದ ಪರಿ ಮುಖ್ಯವಾಗುತ್ತದೆ. ಧಾರವಾಡ ರಂಗಾಯಣದ ಕಲಾವಿದರು ಹೇಳಿದ ಅಷ್ಟೂ ಸಂಭಾಷಣೆಗಳಲ್ಲಿ ಯಾವುದೂ ಮನದಲ್ಲಿ ಉಳಿಯಲಿಲ್ಲ. ಉಳಿಯಬೇಕಿತ್ತು ಎನ್ನುವ ವ್ಯಥೆಯಿದೆ. ಇದಕ್ಕಾಗಿ ಹೆಚ್ಚಿನ ತರಬೇತಿ ಅಗತ್ಯವಿತ್ತೇನೋ? ಆಗಿನ ಹಾಗೆ ಆಳೆತ್ತರದ ನಟರ ಕೊರತೆ, ಕಂಚಿನ ಕಂಠದಿಂದ ಅಸ್ಖಲಿತವಾಗಿ ಸಂಭಾಷಣೆ ಹೇಳುವ ನಟರ ಕೊರತೆಯ ಕಾರಣಕ್ಕೆ ಕಂದಗಲ್ಲರ ನಾಟಕಗಳನ್ನು ಪ್ರದರ್ಶಿಸುವ ಸಾಹಸಕ್ಕೆ ಅನೇಕರು ಕೈಹಾಕುವುದಿಲ್ಲ. ಇಂಥ ಸಂದರ್ಭದಲ್ಲಿ ಧಾರವಾಡ ರಂಗಾಯಣದ ಕಲಾವಿದರ ಪ್ರಯತ್ನ ದೊಡ್ಡದು. ಅವರು ಇನ್ನಷ್ಟು ಶ್ರಮವಹಿಸಿದರೆ ನಾಟಕ ಇನ್ನಷ್ಟು ಯಶಸ್ವಿಯಾಗುತ್ತದೆ. ಇದನ್ನು ಹೇಳಲು ಕಾರಣವಿದೆ; ಕೆರೂರಿನ ಅದೃಶ್ಯಪ್ಪ ಮಾನ್ವಿ ಅವರು ಭೀಮನ ಪಾತ್ರದಿಂದ ಜನಪ್ರಿಯರಾಗಿದ್ದರು. ಕಂದಗಲ್ಲರು ಅದೃಶ್ಯಪ್ಪ ಮಾನ್ವಿ ಅವರನ್ನು ನೋಡಿರಲಿಲ್ಲ. ಆದರೆ ಅವರನ್ನು ಉದ್ದೇಶಿಸಿಯೇ ಬರೆದರೇನೋ ಎನ್ನುವ ಹಾಗೆ ಪ್ರೇಕ್ಷಕರು ಮಾತನಾಡಿಕೊಂಡರು. ಮತ್ತೆ ಧಾರವಾಡ ರಂಗಾಯಣದ ಕಂದಗಲ್ಲರ ಕುರಿತ ನಾಟಕದತ್ತ ಹೊರಳುವೆ. ಈ ನಾಟಕಕ್ಕೆ ರಾಘವ ಕಮ್ಮಾರ ಗಾಯನ ಚೆನ್ನಾಗಿತ್ತು. ಆದರೆ ಅವರ ಸಂಗೀತ ಅಬ್ಬರವಾಗಿತ್ತು. ಇದನ್ನು ಮೆಲೊಡಿ ಮಾಡಬೇಕಿತ್ತು. ಇಷ್ಟನ್ನು ಹೊರತುಪಡಿಸಿದರೆ ನಾಟಕ ಚೆನ್ನಾಗಿದೆ. ಸಮಕಾಲೀನವಾಗುವ, ಸರ್ವಕಾಲಕ್ಕೂ ಸಲ್ಲುವ ಕಂದಗಲ್ಲರ ನಾಟಕಗಳನ್ನು ಒಟ್ಟುಗೂಡಿಸಿ ಪ್ರಕಾಶ ಗರುಡ ಅವರು ನಿರ್ದೇಶಿಸಿದ್ದು ಸಾಹಸವೇ ಸರಿ. ಈಗಲೂ ಕಂದಗಲ್ಲರ ನಾಟಕಗಳಾಡುವ ಅಗತ್ಯವೇನಿದೆ ಎಂದು ಕೇಳುವವರಿಗೆ ಅವು ಸಮಕಾಲೀನವಾಗುತ್ತವೆಂಬ ಉತ್ತರ ಕೊಡಬಹುದು. ಅದರಲ್ಲೂ ‘ಟಂಗ್ ಟ್ವಿಸ್ಟ್’ ಎನ್ನುವ ಮಾದರಿಯಲ್ಲಿರುವ ಕಂದಗಲ್ಲರ ನಾಟಕದ ಸಂಭಾಷಣೆಗಳು ಕಲಾವಿದರಿಗೆ ಸವಾಲು. ಇನ್ನು ನಾಟಕದ ಕುರಿತು; ಮಹಾಭಾರತ ಆಧರಿಸಿ ಕಂದಗಲ್ಲರು ದ್ರೌಪದಿ, ಸ್ವಯಂವರ, ಅಕ್ಷಯಾಂಬರ, ಬಾಣಸಿಗ ಭೀಮ, ನರವೀರ ಪಾರ್ಥ, ದೈವದುರಂತ ಕರ್ಣ, ಕುರುಕ್ಷೇತ್ರ, ಚಿತ್ರಾಂಗದ ಹಾಗೂ ಜಗನ್ಮಾಯ ನಾಟಕಗಳನ್ನು ರಚಿಸಿದ್ದಾರೆ. ಇದರಲ್ಲಿ ಏಳು ನಾಟಕಗಳನ್ನು ಕುಮಾರವ್ಯಾಸನ ‘ಕರ್ನಾಟಕ ಭಾರತ ಕಥಾಮಂಜರಿ’ ಕಾವ್ಯ ಆಧರಿಸಿ ನಾಟಕಗಳನ್ನು ರಚಿಸಿದ್ದಾರೆ. ಪ್ರಕಾಶ ಗರುಡ ಅವರು ಹೇಳುವಂತೆ ‘‘ಕಂಪನಿ ರಂಗಭೂಮಿಗೆ ಹೊಂದುವಂತೆ ತಮ್ಮದೇ ವಿಶಿಷ್ಟ ಭಾಷಾಶೈಲಿಯನ್ನು ಬಳಕೆ ಮಾಡಿದ್ದಾರೆ. ಆಗಿನ ಪ್ರೇಕ್ಷಕ ಮಾತ್ರ ಅವರ ನಾಟಕದ ಮುಕ್ತ ಛಂದಸ್ಸಿನ ಸಂಭಾಷಣೆಗೆ, ನವೀನ ಶೈಲಿಗೆ ಆಕರ್ಷಿತನಾಗಿದ್ದ. ಹೀಗಾಗಿ ಅವರ ನಾಟಕಗಳು ಈಗಲೂ ಜನಮಾನಸದಲ್ಲಿವೆ. ಪ್ರಸ್ತುತ ರಂಗರೂಪದಲ್ಲಿ ಕಂದಗಲ್ಲರು ’ಕರ್ನಾಟಕ ಭಾರತ ಕಥಾಮಂಜರಿ’ ಆಧರಿಸಿ ಬರೆದ ಏಳು ನಾಟಕಗಳಲ್ಲಿಯ ಪ್ರಮುಖ ದೃಶ್ಯಗಳನ್ನು ಜೋಡಣೆ ಮಾಡಿ ಒಟ್ಟು ಮಹಾಭಾರತದ ಕಥಾನಕದ ನಾಟ್ಯ ಚಿತ್ರಣ ನೀಡಲು ಪ್ರಯತ್ನಿಸಲಾಗಿದೆ. ಕುರುಕ್ಷೇತ್ರ ಯುದ್ಧದ ನಂತರ ಬರುವ ಪ್ರಸಂಗಗಳಾದ ಚಿತ್ರಾಂಗದ ಮತ್ತು ಜಗನ್ಮಾಯ (ಶ್ರೀಕೃಷ್ಣ ಗಾರುಡಿ) ನಾಟಕಗಳನ್ನು ಈ ರಂಗರೂಪದಲ್ಲಿ ಸೇರಿಸಿಲ್ಲ. ಈ ರಂಗರೂಪವು ಕಂದಗಲ್ಲರು ಮಹಾಭಾರತ ಕಥಾನಕವನ್ನು ಕುರಿತು ರಚಿಸಿದ ಏಳು ಕಂಪನಿ ನಾಟಕಗಳ ಹೃಸ್ವರೂಪವಾಗಿದ್ದರೂ ಕಥಾಸಂವಿಧಾನಕ್ಕೆ ಒಂದು ತಾರ್ಕಿಕ ಜೋಡಣೆ ನೀಡಲು ಪ್ರಯತ್ನಿಸಲಾಗಿದೆ. ಜಾತಿ-ಕುಲ ತಾರತಮ್ಯ, ರಾಷ್ಟ್ರೀಯತೆ, ದೇಸಿಯತೆ, ಖಾದಿ, ಮನುಕುಲಕ್ಕೆ ಮಾರಕವಾದ ವಿನಾಶಕಾರಿ ಯುದ್ಧ, ದಾಯಾದಿ ಮತ್ಸರ, ದ್ವೇಷರಾಜಕಾರಣ ಇವು ಸಮಕಾಲೀನ ವಿಷಯಗಳಾಗಿದ್ದು, ಕಂಪನಿ ನಾಟಕದ ಚೌಕಟ್ಟಿನಲ್ಲಿ ಮಹಾಭಾರತದ ಕಥೆಯಲ್ಲಿ ಬರುವ ಪಾತ್ರಗಳ ಮೂಲಕ ಮುಖಾಮುಖಿಯಾಗಿದ್ದಾರೆ’’ ಎನ್ನುವ ಮೂಲಕ ನಾಟಕದ ಕುರಿತು ಚಿತ್ರಣ ನೀಡಿದ್ದಾರೆ. ಮಹಾತ್ಮಾ ಗಾಂಧೀಜಿ ಕರೆ ಕೊಟ್ಟ ಖಾದಿ ಬಟ್ಟೆಯ ಮಹತ್ವವನ್ನು ಸಾರುವ ಕುರಿತು ‘ಅಕ್ಷಯಾಂಬರ’ ನಾಟಕದಲ್ಲಿ ಕಂದಗಲ್ಲರು ನೇರವಾಗಿ ಹೇಳಲಿಲ್ಲ. ಹೇಳಿದ್ದರೆ ಬ್ರಿಟಿಷರಿಂದ ಪರವಾನಗಿ ಸಿಗುತ್ತಿರಲಿಲ್ಲ ಜೊತೆಗೆ ಬಂಧನವಾಗುವ ಭೀತಿಯಿತ್ತು. ಇದಕ್ಕಾಗಿ ಅವರು ಪೌರಾಣಿಕ ನಾಟಕದ ಮೊರೆ ಹೋದರು. ನೂಲುವ ಚರಕವನ್ನು ಶ್ರೀಕೃಷ್ಣನ ಸುದರ್ಶನ ಚಕ್ರಕ್ಕೂ ಖಾದಿ ಬಟ್ಟೆಯನ್ನು ದ್ರೌಪದಿಯ ಮಾನ ಕಾಯ್ದ ಅಕ್ಷಯಾಂಬರಕ್ಕೂ ಹೋಲಿಸಿ ಬರೆದದ್ದು ಅವರ ವಿಶೇಷ. ಹೀಗೆಯೇ ಉಳಿದ ನಾಟಕಗಳೂ ವಿಶೇಷವೇ.
ಫೆ. 1 ರಿಂದ ಸಿಗರೇಟ್, ಪಾನ್ ಮಸಾಲಾ ದುಬಾರಿ ಏಕೆ?
ಸಾಂದರ್ಭಿಕ ಚಿತ್ರ | Photo Credit : freepik 2026 ಫೆಬ್ರವರಿ 1 ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ, ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ. ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಇದೇ ರೀತಿಯ ಉತ್ಪನ್ನಗಳ ಮೇಲೆ ಶೇ. 40 ರಷ್ಟು ಜಿಎಸ್ಟಿ ದರ, ಬೀಡಿ ಮೇಲೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಲಾಗುತ್ತದೆ ಎಂದು ಸರ್ಕಾರಿ ಅಧಿಸೂಚನೆ ತಿಳಿಸಿದೆ. ಇದರ ಜೊತೆಗೆ, ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು. ಇತರ ತಂಬಾಕು ಉತ್ಪನ್ನಗಳಿಗೆ ಅಂದರೆ ಹುಕ್ಕಾ ಮೇಲೆ ಶೇಕಡಾ 33 ಅಬಕಾರಿ ಸುಂಕ, ಏಕರೂಪದ ತಂಬಾಕು, ಜಗಿಯುವ ತಂಬಾಕು ಮತ್ತು ನಶ್ಯಕ್ಕೆ ಶೇಕಡಾ 60.5 ರಷ್ಟು ಸುಂಕ ಅನ್ವಯಿಸಲಾಗಿದೆ. ಜಗಿಯುವ ತಂಬಾಕು ಮತ್ತು ಜರ್ದಾ ಸುಗಂಧಭರಿತ ತಂಬಾಕಿಗೆ ಸುಂಕ ದರವು ಶೇಕಡಾ 82 ರಷ್ಟು ಹೆಚ್ಚಾಗಲಿದೆ. ಪೈಪ್ ಮತ್ತು ಸಿಗರೇಟ್ಗಳಿಗೆ ಬಳಸುವ ಮಿಶ್ರಣಗಳಿಗೆ ಶೇಕಡಾ 279 ರಷ್ಟು ಸುಂಕ ಅನ್ವಯವಾಗಲಿದೆ. ಹೊಸ ನಿಯಮಗಳು ಹೊಗೆರಹಿತ ತಂಬಾಕಿಗೆ ಸಾಮರ್ಥ್ಯ ಆಧಾರಿತ ಸುಂಕವನ್ನು ಸಹ ನಿರ್ದಿಷ್ಟಪಡಿಸುತ್ತವೆ. ಜಗಿಯುವ ತಂಬಾಕು ಮತ್ತು ಗುಟ್ಕಾ ತಯಾರಕರಿಗೆ, ಸುಂಕವು ಈಗ ಕಾರ್ಖಾನೆಯಲ್ಲಿನ ಪ್ಯಾಕಿಂಗ್ ಯಂತ್ರಗಳ ವೇಗ ಮತ್ತು ಉತ್ಪನ್ನಗಳ ಸಂಖ್ಯೆಗೆ ನೇರವಾಗಿ ಸಂಬಂಧಿಸಿದೆ. ತೆರಿಗೆಯು ಪ್ರತಿ ಯಂತ್ರಕ್ಕೆ ಗರಿಷ್ಠ ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿದೆ. ಉದಾಹರಣೆಗೆ, 8 ರೂ. ಚಿಲ್ಲರೆ ಬೆಲೆಯೊಂದಿಗೆ ನಿಮಿಷಕ್ಕೆ 500 ಪೌಚ್ಗಳ ವೇಗದಲ್ಲಿ ಗುಟ್ಕಾ ಉತ್ಪಾದಿಸುವ ಯಂತ್ರವು ಮಾಸಿಕ 3.28 ಕೋಟಿ ರೂ.ಗಳ ಸುಂಕವನ್ನು ಹೊಂದಿರುತ್ತದೆ. ನಿಮಿಷಕ್ಕೆ 1,500 ಪೌಚ್ಗಳಿಗಿಂತ ಹೆಚ್ಚು ಕಾರ್ಯನಿರ್ವಹಿಸುವ ಯಂತ್ರಗಳಿಗೆ, ಗುಟ್ಕಾಗೆ (0.92 × S) / 450 ನಂತಹ ನಿರ್ದಿಷ್ಟ ಸೂತ್ರಗಳನ್ನು ಬಳಸಿಕೊಂಡು ಸುಂಕಗಳನ್ನು ಲೆಕ್ಕಹಾಕಲಾಗುತ್ತದೆ. ಇಲ್ಲಿ ‘S’ ಎಂಬುದು ಯಂತ್ರದ ವೇಗವಾಗಿದೆ. ಬೇಕಿದೆ ಕಟ್ಟುನಿಟ್ಟಾದ ಕಣ್ಗಾವಲು ತೆರಿಗೆ ವಂಚನೆಯನ್ನು ತಡೆಯಲು ತಯಾರಕರು ಎಲ್ಲಾ ಪ್ಯಾಕಿಂಗ್ ಪ್ರದೇಶಗಳನ್ನು ಒಳಗೊಳ್ಳುವಂತೆ ಸಿಸಿಟಿವಿ ವ್ಯವಸ್ಥೆಗಳನ್ನು ಸ್ಥಾಪಿಸಬೇಕು ಮತ್ತು 48 ತಿಂಗಳುಗಳವರೆಗೆ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು ಎಂದು ಸಚಿವಾಲಯ ಹೇಳಿದೆ. ಎಲ್ಲಾ ತಯಾರಕರು 2026 ಫೆಬ್ರವರಿ 7ರೊಳಗೆ ತಮ್ಮ ಉತ್ಪಾದನಾ ಅಂಶಗಳು ಮತ್ತು ಯಂತ್ರದ ತಾಂತ್ರಿಕ ವಿಶೇಷಣಗಳನ್ನು ವಿವರಿಸುವ ವಿವರವಾದ ಘೋಷಣೆಯನ್ನು (ಫಾರ್ಮ್ CE DEC-01) ಸಲ್ಲಿಸಬೇಕು. ಯಂತ್ರದ ವೇಗ ಮತ್ತು ಗೇರ್ಬಾಕ್ಸ್ ಅನುಪಾತಗಳನ್ನು ಫಾರ್ಮ್ CE CCE-01 ಬಳಸಿ ಚಾರ್ಟರ್ಡ್ ಎಂಜಿನಿಯರ್ ಪ್ರಮಾಣೀಕರಿಸಬೇಕು. ಸುಂಕವನ್ನು ಮುಂಚಿತವಾಗಿ ಪಾವತಿಸದೆ ಯಾವುದೇ ಅಧಿಸೂಚಿತ ತಂಬಾಕು ಸರಕುಗಳನ್ನು ರಫ್ತು ಮಾಡಲಾಗುವುದಿಲ್ಲ. ಪಾನ್ ಮಸಾಲಾ ತಯಾರಿಕೆ ಮತ್ತು ತಂಬಾಕಿನ ಮೇಲಿನ ಅಬಕಾರಿ ಸುಂಕದ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಸಂಸತ್ತು 2025 ಡಿಸೆಂಬರ್ನಲ್ಲಿ ಅನುಮೋದಿಸಿತ್ತು. ತಂಬಾಕು ಉತ್ಪನ್ನಗಳು ಮತ್ತು ಅವುಗಳ ಉತ್ಪಾದನೆಯ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ನಂತರ ಈ ಸುಂಕ ಹೆಚ್ಚಳ ಮಾಡಲಾಗಿದೆ. ವಿಶೇಷವಾಗಿ ಉದ್ದದ ಸಿಗರೇಟ್ಗಳು ಮತ್ತು ಫಿಲ್ಟರ್ ಸಿಗರೇಟ್ಗಳು ದುಬಾರಿ ಆಗಲಿವೆ. ಯಾಕೆಂದರೆ ತಯಾರಕರು ಹೆಚ್ಚುವರಿ ತೆರಿಗೆ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲಿದ್ದಾರೆ. ಜಿಎಸ್ಟಿ ಪರಿಹಾರ ಸೆಸ್ ಅವಧಿ ಮುಗಿದ ನಂತರ ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕಗಳನ್ನು ಪರಿಷ್ಕರಿಸುವ ಗುರಿಯನ್ನು ಹೊಂದಿರುವ ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ಅನ್ನು ಸಂಸತ್ತು ಅಂಗೀಕರಿಸಿತ್ತು. 2017ರಲ್ಲಿ ಜಿಎಸ್ಟಿ ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಸರ್ಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದ ಪ್ರಮುಖ ಪರಿಷ್ಕರಣೆಯನ್ನು ಪ್ರಕಟಿಸಿದೆ. ಇದು ಜಿಎಸ್ಟಿಯ ಜೊತೆಗೆ ಪ್ರತ್ಯೇಕ ಅಬಕಾರಿ ತೆರಿಗೆಯನ್ನು ಮರಳಿ ತರುತ್ತದೆ. ಏನೇನು ಬದಲಾಗಲಿದೆ? ಇಲ್ಲಿಯವರೆಗೆ, ಸಿಗರೇಟ್ಗೆ ಜಿಎಸ್ಟಿ ಮತ್ತು ಮೌಲ್ಯಾಧಾರಿತ ತೆರಿಗೆ ಮೂಲಕ ತೆರಿಗೆ ವಿಧಿಸಲಾಗುತ್ತಿತ್ತು. ಫೆಬ್ರವರಿ 1ರಿಂದ, ಕೇಂದ್ರ ಸರ್ಕಾರ ಸಿಗರೇಟು ಯಾವ ರೀತಿಯದ್ದು ಎಂಬುದರ ಮೇಲೆ ನಿರ್ದಿಷ್ಟ ಅಬಕಾರಿ ಸುಂಕವನ್ನು ವಿಧಿಸಲಿದೆ. ಸಿಗರೇಟ್ ಫಿಲ್ಟರ್ಡ್ ಅಥವಾ ನಾನ್-ಫಿಲ್ಟರ್ಡ್ ಆಗಿದೆಯೇ?, ಸಿಗರೇಟಿನ ಉದ್ದ (ಮಿಲ್ಲಿಮೀಟರ್ಗಳಲ್ಲಿ) ಆಧರಿಸಿ ಈ ಸುಂಕ ವಿಧಿಸಲಾಗುತ್ತದೆ. ಸಿಗರೇಟು ಯಾವ ಕೆಟಗರಿಗೆ ಸೇರಿದ್ದು ಎಂಬುದರ ಮೇಲೆ 1,000 ಸಿಗರೇಟುಗಳಿಗೆ ಅಬಕಾರಿ ಸುಂಕ 2,050 ರೂ.ವಿನಿಂದ 8,500 ರೂ. ಆಗಲಿದೆ. ಸರಳವಾಗಿ ಹೇಳುವುದಾದರೆ, ಸಿಗರೇಟ್ ಉದ್ದವಾದಷ್ಟೂ ತೆರಿಗೆ ಹೆಚ್ಚಾಗುತ್ತದೆ. ಇದರ ಲೆಕ್ಕಾಚಾರ ಹೀಗಿದೆ ಸಣ್ಣದು, ಫಿಲ್ಟರ್ ಇಲ್ಲದ ಸಿಗರೇಟ್ಗಳು (65 ಮಿಮೀ ವರೆಗೆ): ಪ್ರತಿ ಸಿಗರೇಟಿಗೆ ಸುಮಾರು 2.05 ರೂ. ಸಣ್ಣದು, ಫಿಲ್ಟರ್ ಸಿಗರೇಟ್ಗಳು (65 ಮಿಮೀ ವರೆಗೆ): ಪ್ರತಿ ಸಿಗರೇಟಿಗೆ ಸುಮಾರು 2.10 ರೂ. ಮಧ್ಯಮ-ಉದ್ದದ ಸಿಗರೇಟ್ಗಳು (65–70 ಮಿಮೀ): ಪ್ರತಿ ಸಿಗರೇಟಿಗೆ ಸುಮಾರು 3.6 ರೂ.ದಿಂದ 4 ರೂ. ಉದ್ದ, ಪ್ರೀಮಿಯಂ ಸಿಗರೇಟ್ಗಳು (70–75 ಮಿಮೀ): ಪ್ರತಿ ಸಿಗರೇಟಿಗೆ ಸುಮಾರು 5.4 ರೂ. 1,000 ಸಿಗರೇಟಿಗೆ 8,500 ರೂ. ಹೆಚ್ಚಿನ ಸುಂಕವನ್ನು ಹೊಂದಿರುವ “ಇತರ” ಕೆಟಗರಿಯೂ ಇದೆ. ಆದರೆ ಇದು ಅಸಾಮಾನ್ಯ ಅಥವಾ ಪ್ರಮಾಣಿತವಲ್ಲದ ವಿನ್ಯಾಸಗಳಿಗೆ ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಜನಪ್ರಿಯ ಬ್ರ್ಯಾಂಡ್ಗಳು ಈ ಸ್ಲ್ಯಾಬ್ಗೆ ಬರುವುದಿಲ್ಲ. ಬೆಲೆ ಏರಿಕೆ ಹೇಗೆ? ಸಿಗರೇಟ್ ಕಂಪನಿಗಳು ಬೆಲೆ ಏರಿಕೆಗೆ ಕೆಲವು ಆಯ್ಕೆಗಳನ್ನು ಹೊಂದಿವೆ. ಆದರೆ ಪ್ರತಿಕ್ರಿಯೆ ಏಕರೂಪವಾಗಿರುವುದಿಲ್ಲ. ಸಮೂಹ-ಮಾರುಕಟ್ಟೆ ಬ್ರ್ಯಾಂಡ್ಗಳಲ್ಲಿ ಮಾರಾಟದ ಪ್ರಮಾಣವನ್ನು ರಕ್ಷಿಸಲು ಕಂಪನಿಗಳು ಹೆಚ್ಚಳದ ಒಂದು ಭಾಗವನ್ನು ಬಳಸಿಕೊಳ್ಳಬಹುದು. ಕೆಲವು ಕಂಪನಿಗಳು ಹಂತ ಹಂತವಾಗಿ ಏರಿಕೆಗಳನ್ನು ಮಾಡಬಹುದು. ಯಾವ ಸಿಗರೇಟ್ಗಳು ದುಬಾರಿ? ಉದ್ದವಾದ, ಪ್ರೀಮಿಯಂ ಸಿಗರೇಟ್ಗಳಿಗೆ ಅತ್ಯಧಿಕ ತೆರಿಗೆ ವಿಧಿಸಲಾಗುತ್ತದೆ. ಇದು ಭಾರತದಲ್ಲಿ ಮಾರಾಟವಾಗುವ ಗೋಲ್ಡ್ ಫ್ಲೇಕ್ ಪ್ರೀಮಿಯಂ, ರೆಡ್ & ವೈಟ್ ಕಿಂಗ್ ಸೈಜ್, ಕ್ಲಾಸಿಕ್ & ಮಾರ್ಲ್ಬೊರೊ ಸಿಗರೇಟುಗಳು, ನೇವಿ ಕಟ್ ಮತ್ತು ಇದೇ ರೀತಿಯ ಉದ್ದವಾದ ಸಿಗರೇಟುಗಳು, ಐಸ್ ಬರ್ಸ್ಟ್ನಂತಹ ಸುವಾಸನೆಯ ಸಿಗರೇಟುಗಳು ಸಹ 70–75 ಎಂಎಂ ಫಿಲ್ಟರ್ ವರ್ಗದ ಅಡಿಯಲ್ಲಿ ಬರುತ್ತವೆ. ಚಿಕ್ಕ ಸಿಗರೇಟ್ಗಳು, ಮಿನಿ ಮತ್ತು ಸ್ಟಬ್ಬಿ ನಾನ್-ಫಿಲ್ಟರ್ ಸಿಗರೇಟಿನ ದರವೂ ತುಸು ಹೆಚ್ಚಾಗಲಿದೆ. ಸಿಗರೇಟ್ಗಳ ಮೇಲಿನ ಜಿಎಸ್ಟಿ ಮತ್ತು ತೆರಿಗೆ ಹೊಸ ಅಬಕಾರಿ ಸುಂಕವು ಜಿಎಸ್ಟಿಯ ಮೇಲೆ ಅನ್ವಯಿಸುತ್ತದೆ. ಉತ್ಪನ್ನವನ್ನು ಅವಲಂಬಿಸಿ ಇದು 18% ಅಥವಾ 40% ಇರಲಿದೆ. ಅದೇ ಸಮಯದಲ್ಲಿ, ಸರ್ಕಾರವು ತಂಬಾಕಿನ ಮೇಲಿನ ಜಿಎಸ್ಟಿ ಪರಿಹಾರ ಸೆಸ್ ಅನ್ನು ಹಿಂತೆಗೆದುಕೊಂಡಿದೆ. ಈ ಬದಲಾವಣೆಯ ನಂತರವೂ, ಭಾರತದಲ್ಲಿ ಸಿಗರೇಟ್ಗಳ ಮೇಲಿನ ಒಟ್ಟು ತೆರಿಗೆಗಳು ಚಿಲ್ಲರೆ ಬೆಲೆಯ ಸರಿಸುಮಾರು 53% ರಷ್ಟಿದೆ. ಇದು ಧೂಮಪಾನವನ್ನು ನಿರುತ್ಸಾಹಗೊಳಿಸುವ ಗುರಿಯನ್ನು ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆಯ 75% ಮಾನದಂಡಕ್ಕಿಂತ ಇನ್ನೂ ಕಡಿಮೆಯಾಗಿದೆ. ತೆರಿಗೆ ಅನ್ವಯವಾದಾಗ ಸಿಗರೇಟಿನ ಬೆಲೆ ಎಷ್ಟಾಗುತ್ತದೆ? ಸರಳವಾಗಿ ಹೇಳುವುದಾದರೆ, ಹೊಸ ತೆರಿಗೆ ನಿಯಮಗಳು ಜಾರಿಗೆ ಬಂದ ನಂತರ, ಹೆಚ್ಚಿನ ತೆರಿಗೆಗಳಿಂದಾಗಿ ಸಿಗರೇಟ್ ದುಬಾರಿಯಾಗುತ್ತದೆ. ಜಿಎಸ್ಟಿಯನ್ನು ಶೇಕಡಾ 40ಕ್ಕೆ ನಿಗದಿಪಡಿಸಿದಾಗ, ಮೊದಲು 18 ರೂ. ಇದ್ದ ಸಿಗರೇಟಿನ ಬೆಲೆ 19.70 ರೂ.ಗೆ ಏರುತ್ತದೆ. ಇದರ ಜೊತೆಗೆ, ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುತ್ತದೆ. ಈ ಅಬಕಾರಿ ಸುಂಕವನ್ನು ಸಾಧಾರಣವಾಗಿ ಇರಿಸಿದರೂ, ಪ್ರತಿ ಸಿಗರೇಟಿಗೆ ಸುಮಾರು 1 ರೂ.ದಿಂದ 2 ರೂ. ಇದ್ದರೂ, ಅಂತಿಮ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಪರಿಣಾಮವಾಗಿ, ಫೆಬ್ರವರಿ 1ರ ನಂತರ ಒಂದು ಸಿಗರೇಟಿನ ಬೆಲೆ ಸರಿಸುಮಾರು 21 ರೂ.ದಿಂದ 22 ರೂ.ವರೆಗೆ ಇರಲಿದೆ. ಸರ್ಕಾರದಿಂದ ಈ ಕ್ರಮ ಯಾಕೆ? ತಂಬಾಕು ವಲಯದಲ್ಲಿ ತೆರಿಗೆ ವಂಚನೆಯನ್ನು ತಡೆಯುವುದು, ಸರ್ಕಾರದ ಆದಾಯವನ್ನು ಹೆಚ್ಚಿಸುವುದು, ತಂಬಾಕು ಸಂಬಂಧಿತ ಕಾಯಿಲೆಗಳಿಗೆ, ವಿಶೇಷವಾಗಿ ಕ್ಯಾನ್ಸರ್ಗೆ ಸಂಬಂಧಿಸಿದ ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು ಸುಂಕಗಳನ್ನು ಏರಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಸಿಗರೇಟ್ ಕಂಪನಿಗಳ ಪ್ರತಿಕ್ರಿಯೆ ಏನು? ಫೆಬ್ರವರಿ 1ರಿಂದ ಸಿಗರೇಟ್ಗಳ ಮೇಲಿನ ಪ್ರಸ್ತಾವಿತ ಅಬಕಾರಿ ಸುಂಕ ಹೆಚ್ಚಳದ ಒಟ್ಟಾರೆ ಪರಿಣಾಮವು revenue neutral ಆಗಿರುತ್ತದೆ. ಏಕೆಂದರೆ ಇದು ಅಕ್ರಮ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಭಾರತದ ತಂಬಾಕು ಕಂಪನಿಗಳು ಹೇಳಿವೆ. ಈ ನಡುವೆ, ಐಟಿಸಿ, ಗಾಡ್ಫ್ರೇ ಫಿಲಿಪ್ಸ್ ಇಂಡಿಯಾ ಮತ್ತು ವಿಎಸ್ಟಿ ಇಂಡಸ್ಟ್ರೀಸ್ನಂತಹ ಪ್ರಮುಖ ಸಿಗರೇಟ್ ತಯಾರಕರ ಪ್ರತಿನಿಧಿ ಸಂಸ್ಥೆಯಾದ ಟಿಐಐ, ತೆರಿಗೆ ಹೆಚ್ಚಳವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ವಿನಂತಿಸಿದೆ. ಈ ರೀತಿಯ ಹೆಚ್ಚಳವು ಲಕ್ಷಾಂತರ ರೈತರು, ಎಂಎಸ್ಎಂಇಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಉದ್ಯಮಗಳಿಗೆ ಅಪಾರ ಕಷ್ಟ ಮತ್ತು ನಷ್ಟವನ್ನು ಉಂಟುಮಾಡುತ್ತದೆ. ಇದು ಅಕ್ರಮ ಉದ್ಯಮಕ್ಕೆ ರಹದಾರಿಯಾಗಿದ್ದು ರಾಷ್ಟ್ರೀಯ ಉದ್ಯಮಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಟಿಐಐ ಹೇಳಿಕೆಯಲ್ಲಿ ತಿಳಿಸಿದೆ. ದೇಶದಲ್ಲಿ ಪ್ರತಿ ಮೂರು ಕಾನೂನುಬದ್ಧ ಸಿಗರೇಟ್ಗಳಿಗೆ ಒಂದು ಕಳ್ಳಸಾಗಣೆ/ಅಕ್ರಮ ಸಿಗರೇಟ್ ಮಾರಾಟವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ತೆರಿಗೆ ಹೆಚ್ಚಳವು “ಕಾನೂನುಬಾಹಿರ ಮತ್ತು ಅಕ್ರಮ ಚಟುವಟಿಕೆ”ಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಸಮಾಜವಿರೋಧಿ ಚಟುವಟಿಕೆಯನ್ನು ಉತ್ತೇಜಿಸುವುದರ ಜೊತೆಗೆ ಸರ್ಕಾರದ ಖಜಾನೆಯನ್ನು ಕಸಿದುಕೊಳ್ಳುತ್ತದೆ ಎಂದು ಉದ್ಯಮ ಸಂಸ್ಥೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
2017ರಿಂದ 2023ರವರೆಗಿನ ವಿಪತ್ತು ನಿರ್ವಹಣೆ ಹಣಕಾಸಿನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದ ರಾಜ್ಯ ಸರಕಾರ
ಬೆಂಗಳೂರು : ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರವು 2017-18ರಿಂದ 2022-23ರವರೆಗೆ ಬಿಡುಗಡೆಯಾಗಿದ್ದ ಒಟ್ಟು 19,644.78 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಹಣಕಾಸಿನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಹೆಚ್ಚಿನ ಮೌಲ್ಯದ ಹಣಕಾಸಿನ ವಹಿವಾಟುಗಳನ್ನು ನಡೆಸುತ್ತಿದ್ದರೂ ಸಹ ಹಣಕಾಸು ದಾಖಲೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿಲ್ಲ. ಅಲ್ಲದೇ ಹಣಕಾಸು ಔಚಿತ್ಯದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ. 2025ರ ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ಲೆಕ್ಕ ಪರಿಶೋಧನೆ ವರದಿಯು, ಕರ್ನಾಟಕದ ವಿಪತ್ತು ನಿರ್ವಹಣೆಯಲ್ಲಿನ ಹಣಕಾಸಿನ ದುರಾಡಳಿತವನ್ನು ಅನಾವರಣಗೊಳಿಸಿದೆ. ಈ ವರದಿಯ ಪ್ರತಿಯು he-file.inಗೆ ಲಭ್ಯವಾಗಿದೆ. 2017-18ರಿಂದ 2022-23ರವರೆಗಿನ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಎಸಗಿರುವ ಲೋಪ ಮತ್ತು ಉಲ್ಲಂಘನೆಗಳ ಪಟ್ಟಿಯನ್ನು ವರದಿಯಲ್ಲಿ ಒದಗಿಸಿದೆ. ಅಲ್ಲದೇ ಈ ಆರೂ ವರ್ಷಗಳಲ್ಲಿ ವಿಪತ್ತು ನಿರ್ವಹಣೆಗೆ ಸ್ವೀಕರಿಸಿರುವ ಅನುದಾನ, ಬಿಡುಗಡೆಯಾದ ಅನುದಾನ, ಮಾಡಿರುವ ವೆಚ್ಚದ ಕುರಿತು ಆರ್ಥಿಕ ದಾಖಲೆಗಳನ್ನು ಸಿಎಜಿಗೆ ಕಂದಾಯ ಇಲಾಖೆಯು ಒದಗಿಸಿರಲಿಲ್ಲ. ‘ನಿಗದಿತ ಆರ್ಥಿಕ ದಾಖಲೆಗಳ ಅನುಪಸ್ಥಿತಿಯಲ್ಲಿ ಲೆಕ್ಕ ಪರಿಶೋಧನೆಗೆ ಲಭ್ಯವಿರುವ ಆರ್ಥಿಕ ಹೇಳಿಕೆಗಳಲ್ಲಿ ಸ್ವೀಕೃತಿಗಳು ಮತ್ತು ಖರ್ಚುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಲೆಕ್ಕಪರಿಶೋಧನೆಗೆ ಸಾಧ್ಯವಾಗಲಿಲ್ಲ,’ ಎಂದು ಸಿಎಜಿಯು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ. ವಿಪತ್ತು ನಿರ್ವಹಣೆಗೆ ಸ್ವೀಕೃತವಾದ ಅನುದಾನವೆಷ್ಟು?: 2017-18ರಲ್ಲಿ ವಿಪತ್ತು ನಿರ್ವಹಣೆಯ ಖಾತೆಯಲ್ಲಿ ಆರಂಭಿಕ ಶಿಲ್ಕಿನ ರೂಪದಲ್ಲಿ 1235.52 ಕೋಟಿ ರೂ. ಇತ್ತು. ಎನ್ಡಿಆರ್ಎಫ್ನಿಂದ 913.04 ಕೋಟಿ ರೂ., ಎಸ್ಡಿಆರ್ಎಫ್ಗೆ ಕೇಂದ್ರ ಸರಕಾರವು 228.75 ಕೋಟಿ ರೂ., ರಾಜ್ಯ ಸರಕಾರವು 76.25 ಕೋಟಿ, ರಾಜ್ಯದಿಂದ ಹೆಚ್ಚುವರಿ ಅನುದಾನದ ರೂಪದಲ್ಲಿ 37.19 ಕೋಟಿ ರೂ. ಇತ್ತು. ಈ ಪೈಕಿ ಒಟ್ಟು 2,490.75 ಕೋಟಿ ರೂ. ಬಿಡುಗಡೆಯಾಗಿತ್ತು. ಇದರಲ್ಲಿ ಶೇ.97ರಷ್ಟು ಅಂದರೇ 2,411.61 ಕೋಟಿ ರೂ. ವೆಚ್ಚ ಮಾಡಿತ್ತು. 2018-19ರಲ್ಲಿ ಎನ್ಡಿಆರ್ಎಫ್ನಿಂದ 959.84 ಕೋಟಿ ರೂ. ಅನುದಾನ ಸ್ವೀಕೃತವಾಗಿತ್ತು. ಕೇಂದ್ರ ಸರಕಾರವು ಎಸ್ಡಿಆರ್ಎಫ್ಗೆ 288,.00 ಕೋಟಿ ರೂ.., ರಾಜ್ಯ ಸರಕಾರವು 32.00 ಕೋಟಿ ರೂ. ಅನುದಾನ ನೀಡಿತ್ತು. ಅಲ್ಲದೇ ರಾಜ್ಯ ಸರಕಾರವು ಹೆಚ್ಚುವರಿಯಾಗಿ 400 ಕೋಟಿ ರೂ. ಅನುದಾನ ಒದಗಿಸಿತ್ತು. ಇದರಲ್ಲಿ ಒಟ್ಟು 1,679.84 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಪೈಕಿ 1,207.22 ಕೋಟಿ ರೂ. ವೆಚ್ಚವಾಗಿತ್ತು. 2019-20ರಲ್ಲಿ ಆರಂಭಿಕ ಶಿಲ್ಕಿನಲ್ಲಿ 434.62 ಕೋಟಿ ರೂ. ಇತ್ತು. ಎನ್ಡಿಆರ್ಎಫ್ನಿಂದ2,744.26 ಕೋಟಿ ರೂ., ಎಸ್ಡಿಆರ್ಎಫ್ಗೆ ಕೇಂದ್ರ ಸರಕಾರವು 204.00 ಕೋಟಿ, ರಾಜ್ಯ ಸರಕಾರವು 132.00 ಕೋಟಿ ರೂ. ನೀಡಿತ್ತು. ಅಲ್ಲದೇ ರಾಜ್ಯ ಸರಕಾರವು ಹೆಚ್ಚುವರಿಯಾಗಿ 1,500 ಕೋಟಿ ರೂ. ಒದಗಿಸಿತ್ತು. ಈ ಪೈಕಿ 5,014.88 ಕೋಟಿ ರೂ. ಬಿಡುಗಡೆಯಾಗಿದ್ದರೇ ಇದರಲ್ಲಿ 4,899.52 ಕೋಟಿ ರೂ. ವೆಚ್ಚವಾಗಿತ್ತು. 2020-21ರಲ್ಲಿ ಎನ್ಡಿಆರ್ಎಫ್ನಿಂದ 577.84 ಕೋಟಿ ರೂ. ಅನುದಾನ ಸ್ವೀಕೃತವಾಗಿದ್ದರೇ ಎಸ್ಡಿಆರ್ಎಫ್ಗೆ ಕೇಂದ್ರ ಸರಕಾರವು 632.40 ಕೋಟಿ ರೂ., ರಾಜ್ಯ ಸರಕಾರವು 210.80 ಕೋಟಿ ರೂ. ನೀಡಿತ್ತು. ಎಸ್ಡಿಎಂಎಫ್ಗೆ ಕೇಂದ್ರ ಸರಕಾರವು 158.20 ಕೊಟಿ ರೂ., ರಾಜ್ಯ ಸರಕಾರವು 52.60 ಕೋಟಿ ರೂ. ನೀಡಿತ್ತು. ಅಲ್ಲದೇ ರಾಜ್ಯ ಸರಕಾರವು ಇದೇ ಅವಧಿಗೆ ಹೆಚ್ಚುವರಿಯಾಗಿ 608.13 ಕೋಟಿ ರೂ. ನೀಡಿತ್ತು. ಇದರಲ್ಲಿ ಬಿಡುಗಡೆಯಾಗಿದ್ದ 2,239.97 ಕೋಟಿ ರೂ. ಪೈಕಿ 2,238.37 ಕೋಟಿ ರೂ. ವೆಚ್ಚವಾಗಿತ್ತು. 2021-22ರಲ್ಲಿ ಎನ್ಡಿಆರ್ಎಫ್ನಿಂದ 1,734.3 ಕೋಟಿ ರೂ. ಅನುದಾನ ಸ್ವೀಕೃತವಾಗಿದ್ದರೇ ಎಸ್ಡಿಆರ್ಎಫ್ಗೆ ಭಾರತ ಸರಕಾರವು 632.40 ಕೋಟಿ, ರಾಜ್ಯ ಸರಕಾರವು 210.80 ಕೋಟಿ ರೂ.., ಎಸ್ಡಿಎಂಎಫ್ಗೆ ಕೇಂದ್ರ ಸರಕಾರವು 158.20 ಕೋಟಿ, ರಾಜ್ಯ ಸರಕಾರವು 52.60 ಕೋಟಿ ರೂ. ನೀಡಿತ್ತು. ಅಲ್ಲದೆ ಇದೇ ವರ್ಷಕ್ಕೆ ರಾಜ್ಯ ಸರಕಾರವು 2,426.27 ಕೋಟಿ ರೂ. ಹೆಚ್ಚುವರಿಯಾಗಿ ನೀಡಿತ್ತು. ಬಿಡುಗಡೆಯಾಗಿದ್ದ 5,214.57 ಕೋಟಿ ರೂ. ಪೈಕಿ 5,003.75 ಕೋಟಿ ರೂ. ವೆಚ್ಚವಾಗಿತ್ತು. 2022-23ರಲ್ಲಿ ಎನ್ಡಿಆರ್ಎಫ್ನಿಂದ 939.83 ಕೋಟಿ ರೂ., ಎಸ್ಡಿಆರ್ಎಫ್ ನಿಧಿಗೆ ಕೇಂದ್ರ ಸರಕಾರವು 664.00 ಕೋಟಿ, ರಾಜ್ಯ ಸರಕಾರವು 221.33 ಕೋಟಿ ರೂ. ನೀಡಿತ್ತು. ಎಸ್ಡಿಎಂಎಫ್ಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಹಣ ಬಿಡುಗಡೆ ಮಾಡಿರಲಿಲ್ಲ. ಬದಲಿಗೆ ಹೆಚ್ಚುವರಿಯಾಗಿ 1,179.61 ಕೋಟಿ ರೂ. ಒದಗಿಸಿತ್ತು. ಬಿಡುಗಡೆಯಾಗಿದ್ದ 3,004.77 ಕೋಟಿ ರೂ. ಪೈಕಿ 2,939.41 ಕೋಟಿ ರೂ. ವೆಚ್ಚ ಮಾಡಿತ್ತು. ಒಟ್ಟಾರೆಯಾಗಿ ಎನ್ಡಿಆರ್ಎಫ್ನಿಂದ ಈ ಆರೂ ವರ್ಷಗಳಲ್ಲಿ 7,869.11 ಕೋಟಿ ರೂ. ಅನುದಾನ ಸ್ವೀಕೃತವಾಗಿತ್ತು. ಎಸ್ಡಿಆರ್ಎಫ್ ನಿಧಿಗೆ ಕೇಂದ್ರ ಸರಕಾರವು 2,649.55 ಕೋಟಿ ರೂ.., ರಾಜ್ಯ ಸರಕಾರವು 883.18 ಕೋಟಿ ರೂ., ಎಸ್ಡಿಎಂಎಫ್ಗೆ ಕೇಂದ್ರ ಸರಕಾರವು 316.40 ಕೋಟಿ, ರಾಜ್ಯ ಸರಕಾರವು 105.20 ಕೋಟಿ ರೂ. ನೀಡಿತ್ತು. ರಾಜ್ಯ ಸರಕಾರವು ಹೆಚ್ಚುವರಿಯಾಗಿ ಒಟ್ಟು 6,151.20 ಕೋಟಿ ರೂ. ಅನುದಾನ ಒದಗಿಸಿತ್ತು. ಒಟ್ಟು ಬಿಡುಗಡೆಯಾಗಿದ್ದ 19,644.78 ಕೋಟಿ ರೂ. ಪೈಕಿ 18,699.88 ಕೋಟಿ ರೂ. ವೆಚ್ಚ ಮಾಡಿತ್ತು ಎಂದು ಸಿಎಜಿಯು ತನ್ನ ವರದಿಯಲ್ಲಿ ಪಟ್ಟಿ ನೀಡಿದೆ. ಬಿಡುಗಡೆಯಾಗದ 210.80 ಕೋಟಿ ರೂ.: ಎಸ್ಡಿಎಂಎಫ್ ಅಡಿಯಲ್ಲಿ ರಾಜ್ಯ ಸರಕಾರವು (2020-21) ಭಾರತ ಸರಕಾರದಿಂದ ಮಾರ್ಗಸೂಚಿಗಳನ್ನು ಸ್ವೀಕರಿಸುವವರೆಗೆ ಅನುದಾನ ಬಳಸದಂತೆ ಸೂಚನೆ ನೀಡಿತ್ತು. ಮತ್ತು ಜಿಲ್ಲಾ ಕಚೇರಿಗಳಿಗೆ 184.50 ಕೋಟಿ ರೂ.ಗಳನ್ನು (ಲಭ್ಯವಿದ್ದ 210.80 ಕೋಟಿ ರೂ.) ಬಿಡುಗಡೆ ಮಾಡಿತ್ತು. 2021-22ಕ್ಕೆ ಸಂಬಂಧಿಸಿ ಒಟ್ಟು 210.80 ಕೋಟಿ ರೂ.ಗಳ ನಿಧಿಯನ್ನು ಅನುಷ್ಠಾನ ಏಜೆನ್ಸಿಗಳಿಗೆ ಬಿಡುಗಡೆಯನ್ನೇ ಮಾಡಿರಲಿಲ್ಲ. ಬದಲಿಗೆ ರಾಜ್ಯ ಸರಕಾರವು ತನ್ನಲ್ಲೇ ಉಳಿಸಿಕೊಂಡಿತ್ತು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಇದಲ್ಲದೇ 2022-23ನೇ ಸಾಲಿನಲ್ಲಿ ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಭಾರತ ಸರಕಾರದ ಪಾಲು 166.05 ಕೋಟಿ ರೂ. ಮತ್ತು ರಾಜ್ಯ ಸರಕಾರದ ಪಾಲು 55.35 ಕೋಟಿ ರೂ. ಸೇರಿ ಒಟ್ಟು 221.40 ಕೋಟಿ ರೂ. ಗಳನ್ನು ಎಸ್ಡಿಎಂಎಫ್ ಅಡಿಯಲ್ಲಿ ಒದಗಿಸಬೇಕಿತ್ತು. ಆದರೂ ಭಾರತ ಸರಕಾರದಿಂದ ಮೀಸಲಿಟ್ಟ ಮೊತ್ತವನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ರಾಜ್ಯ ಸರಕಾರವೂ ತನ್ನ ಹೊಂದಾಣಿಕೆ ಪಾಲನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಒಟ್ಟು 421.60 ಕೋಟಿ ರೂ. ನಿಧಿಯ ಲಭ್ಯತೆ ಇದ್ದರೂ ಸಹ ವಿವಿಧ ವಿಪತ್ತುಗಳನ್ನು ಶಮನಗೊಳಿಸುವ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ. ಖಾತೆಯಲ್ಲಿ ವ್ಯತ್ಯಾಸಗಳು ಪತ್ತೆ 2017-18ರಿಂದ 2022-23ರವರೆಗಿನ ಆರಂಭಿಕ ಶಿಲ್ಕು, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಎಸ್ಡಿಎಂಎಫ್, ರಾಜ್ಯದಿಂದ ಹೆಚ್ಚುವರಿಯಾಗಿ ಒದಗಿಸಿದ್ದ ಅನುದಾನದ ರಸೀದಿಗಳು, ವೆಚ್ಚದಲ್ಲಿ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳನ್ನು ಸಿಎಜಿಯು ಪತ್ತೆ ಹಚ್ಚಿದೆ. ಇದರ ಪ್ರಕಾರ 2019-20ರ ಅವಧಿಯಲ್ಲಿ ಸಿಡಿಎಂ-ಎಟಿಐಗೆ 4.19 ಕೋಟಿ ರೂ. ವರ್ಗಾವಣೆ ಮಾಡಬೇಕಿತ್ತು. ಆದರೆ ಇಲಾಖೆಯು 0.13 ಕೋಟಿ ರೂ. ಕಡಿಮೆ ಮಾಡಿ ಕೇವಲ 4.06 ಕೋಟಿ ರೂ.ವರ್ಗಾವಣೆ ಮಾಡಿತ್ತು. ಅದೇ ರೀತಿ 2021-22ರಲ್ಲಿ ಸಿಡಿಎಂ-ಎಟಿಐಗೆ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತೋರಿಸಿದ್ದರೂ ಹಣವನ್ನು ವಾಸ್ತವಿಕವಾಗಿ ವರ್ಗಾಯಿಸಿರಲೇ ಇಲ್ಲ. ಅಲ್ಲದೇ ಹಣಕಾಸಿನ ಅಂಕಿ ಅಂಶಗಳನ್ನು ನಿಯತಕಾಲಿಕವಾಗಿ ಹೊಂದಾಣಿಕೆಯನ್ನೂ ಮಾಡಲಿಲ್ಲ. ‘ಜಿಲ್ಲೆಗಳು ಅಥವಾ ಏಜೆನ್ಸಿಗಳು ಬಿಡುಗಡೆಯಾದ ಅನುದಾನವನ್ನು ಸೆಳೆದುಕೊಳ್ಳದಿರುವುದರಿಂದ ಅಥವಾ ಕೈ ತಪ್ಪಿ ಹೋಗಿರುವುದರಿಂದ ಅಂಕಿ ಅಂಶಗಳೊಂದಿಗೆ ವ್ಯತ್ಯಾಸದ ಸಾಧ್ಯತೆಯಿದೆ’ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಬಿಸಿಲನಾಡಿನಲ್ಲಿ ಎಗ್ಗಿಲ್ಲದೆ ಬೆಳೆದ ಕೋನೊಕಾರ್ಪಸ್
ಬಿಸಿಲ ನಾಡು ರಾಯಚೂರನ್ನು ಹಸಿರು ನಗರವನ್ನಾಗಿ ಮಾಡುವ ಸಂಘ ಸಂಸ್ಥೆಗಳು, ಅನೇಕ ಪರಿಸರ ಪ್ರೇಮಿಗಳು ಗಿಡಗಳನ್ನು ಹಾಕಿ ಪೋಷಣೆ ಮಾಡುತ್ತಿದ್ದರೆ, ಪಾಲಿಕೆ ಮಾತ್ರ ತನಗರಿವಿಲ್ಲದೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೋನೋಕಾರ್ಪಸ್ ಗಿಡಗಳನ್ನು ಪೋಷಣೆ ಮಾಡಲು ಹೊರಟಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು, ಗಿಡಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ. ಆದರೆ ಗಿಡ ಮರಗಳು ಹಾನಿಯನ್ನೂ ಉಂಟು ಮಾಡುತ್ತವೆ.ಅಂತಹ ಸಾಲಿನಲ್ಲಿ ಕೊನೊಕಾರ್ಪಸ್ ಗಿಡಗಳು ಒಂದಾಗಿವೆ. ಕೊನೊಕಾರ್ಪಸ್ ಮರಗಳು (ದುಬೈ ಗಿಡ) ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಮತ್ತು ಇತರ ಗಿಡ ಮರಗಳಿಗೆ ಹಾನಿಕಾರಕ ಎಂದು ತೆಲಂಗಾಣ, ಗುಜರಾತ್ ಹಾಗೂ ಕರ್ನಾಟಕ ರಾಜ್ಯದ ಯಾದಗಿರಿಯಲ್ಲಿ ನಿಷೇಧಿಸಲಾಗಿದೆ. ನೀರಿಲ್ಲದೆ ಬೆಳೆಯುವ ಕೊನೊಕಾರ್ಪಸ್ ಮರಗಳು ಸುಂದರವಾಗಿ ಕಾಣುವುದರಿಂದ ಇವುಗಳನ್ನು ರಾಯಚೂರಿನ ಲಿಂಗಸುಗೂರು, ಮಂತ್ರಾಲಯ ರಸ್ತೆಯ ಮಧ್ಯದ ವಿಭಜಕದಲ್ಲಿ ಬೆಳೆಸಲಾಗಿದೆ. ಈ ಹಿಂದೆ ನಗರಸಭೆ ಇದ್ದಾಗ ಪ್ರತಿ ದಿನ ಡಿವೈಡರ್ ಮಧ್ಯೆ ಅನೇಕ ಬಗೆಯ ಅಲಂಕಾರಿಕ ಸಸಿಗಳನ್ನು ನೆಟ್ಟು ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರುಣಿಸಿ ಪೋಷಣೆ ಮಾಡಲಾಗುತ್ತಿತ್ತು. ಆದರೆ ಈಗ ಅದೇ ಜಾಗದಲ್ಲಿ ಕೋನೊಕಾರ್ಪಸ್ ಮರಗಳು ಬಹಳ ಎತ್ತರಕ್ಕೆ ಬೆಳೆದಿವೆ. ಬೇರುಗಳನ್ನು ತುಂಬಾ ಆಳಕ್ಕಿಳಿಸುವ ಈ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲವನ್ನು ಹೀರಿಕೊಳ್ಳುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತದೆ. ಈ ಮರಗಳು ಕಠಿಣ ಪರಿಸ್ಥಿತಿಗಳಲ್ಲಿಯೂ ಬೆಳೆಯುತ್ತವೆ ಮತ್ತು ವರ್ಷವಿಡೀ ಹಸಿರಾಗಿರುತ್ತವೆ. ಇವು ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಮತ್ತು ಮರುಭೂಮಿಯಲ್ಲಿ ಮರಳಿನ ಬಿರುಗಾಳಿ ತಡೆಯಲು ಸಹಾಯ ಮಾಡುತ್ತವೆ ಎಂದು ವರದಿಗಳು ತಿಳಿಸಿವೆ. ಪರಿಸರವಾದಿಗಳ ಪ್ರಕಾರ ಗುಜರಾತಿನ ಕರಾವಳಿ ಮತ್ತು ಕಛ್ನಂತಹ ಶುಷ್ಕ ಜಿಲ್ಲೆಗಳಲ್ಲಿ ಈ ಮರಗಳು ವ್ಯಾಪಕವಾಗಿ ಬೆಳೆದಿವೆ. ಈ ಮರವು ವರ್ಷವಿಡೀ ಕಡು ಹಸಿರು ಎಲೆಗಳಿಗೆ ಹೆಸರುವಾಸಿಯಾಗಿದೆ. ಎಂತಹ ಕಠಿಣ ವಾತಾವರಣವನ್ನೂ ಇವು ತಡೆದುಕೊಳ್ಳುತ್ತವೆ. ಇವು ತೀವ್ರ ಲವಣಾಂಶವಿರುವ ಪ್ರದೇಶಗಳಲ್ಲಿಯೂ ಬೆಳೆಯಬಲ್ಲದು. ಹಸಿರೀಕರಣದ ಹೆಸರಿನಲ್ಲಿ ಎಡವಟ್ಟು: ಬಿಸಿಲನಾಡು ಎಂಬ ಅಪಖ್ಯಾತಿಗೆ ಗುರಿಯಾದ ರಾಯಚೂರು ಜಿಲ್ಲೆಯಲ್ಲಿ ಬೇಸಿಗೆಯ ವೇಳೆ ತಾಪಮಾನ 40ರಿಂದ 45 ಡಿಗ್ರಿವರೆಗೆ ದಾಖಲಾದ ಇತಿಹಾಸ ಇದೆ. ಹೀಗಾಗಿ ಕೆಲ ವರ್ಷಗಳಿಂದ ಗ್ರೀನ್ ರಾಯಚೂರು, ಸೂರ್ಯೋದಯ ವಾಕಿಂಗ್ ಕ್ಲಬ್, ವನಸಿರಿ ಫೌಂಡೇಶನ್, ರಾಯಚೂರು ಹಸಿರುಬಳಗ ಎಂಬ ಸಂಘ ಸಂಸ್ಥೆಗಳು, ಈರಣ್ಣ ಕೋಸಗಿ ಎಂಬವರು ಸಸಿಗಳನ್ನು ನೆಟ್ಟು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಆದರೆ ಇವೆಲ್ಲದರ ನಡುವೆ ಕೋನೊಕಾರ್ಪಸ್ ಗಿಡಗಳನ್ನು ಬೆಳೆಸಲು ಪಾಲಿಕೆ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತಿರುವ ಅನೇಕ ಸಂಘ ಸಂಸ್ಥೆಗಳು ತಮ್ಮದೇ ಆದ ಪರಿಶ್ರಮ ವಹಿಸಿ ರಾಯಚೂರನ್ನು ಸ್ವಚ್ಛ ಹಸಿರುನಗರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಆದರೆ ಮಾನವ ವಿರೋಧಿಯಾಗಿರುವ ಕೊನೊಕಾರ್ಪಸ್ ಗಿಡಗಳನ್ನು ಎಲ್ಲೆಡೆ ಬೆಳೆಸಿದ್ದು ಆಶ್ಚರ್ಯವಾಗಿದೆ. ದುಬೈ ಗಿಡ ಅಂತಲೂ ಕರೆಯಲ್ಪಡವ ಈ ಸಸ್ಯ, ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗುವುದಲ್ಲದೆ, ಮನುಷ್ಯರಿಗೆ ಆಸ್ತಮಾ, ಉಸಿರಾಟದ ಸಮಸ್ಯೆಗಳನ್ನು ತಂದಿಡುತ್ತದೆ ಅನ್ನುವುದು ವರದಿಗಳಲ್ಲಿ ಬಹಿರಂಗವಾಗಿದೆ. ಕಡಿಮೆ ನೀರಿನಲ್ಲಿ ಹಚ್ಚ ಹಸಿರಾಗಿ ಕಂಗೊಳಿಸುವ ಈ ಗಿಡದ ನಿರ್ವಹಣೆ ಕೂಡ ಸುಲಭವಾಗಿರುವುದರಿಂದ ಪಾಲಿಕೆ ಇದನ್ನು ನೆಟ್ಟು ಪೋಷಿಸುತ್ತಿರುವುದು ಸರಿಯಲ್ಲ, ಕೂಡಲೇ ಇದನ್ನು ತೆರವುಗೊಳಿಸಬೇಕು. - ಸುರೇಶ್ ಜಾನೆಕಲ್ ಸಾಮಾಜಿಕ ಕಾರ್ಯಕರ್ತರು, ರಾಯಚೂರು ಆರೋಗ್ಯ ಸಮಸ್ಯೆ: ಈ ಮರದ ಬೇರುಗಳು ಆಳಕ್ಕೆ ಹೋಗಿ ಸಂವಹನ ಕೇಬಲ್ಗಳು, ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್ಗಳನ್ನು ಹಾನಿಗೊಳಿಸುತ್ತವೆ ಎಂಬ ದೂರುಗಳು ಕೇಳಿಬಂದಿವೆ. ಈ ಮರಗಳು ಹೂಬಿಡುವ ಋತುಗಳಲ್ಲಿ ಪರಾಗವನ್ನು ಬಿಡುಗಡೆ ಮಾಡುತ್ತವೆ. ಇದು ಅಸ್ತಮಾ, ರಿನಿಟಿಸ್ ಮತ್ತು ಇತರ ಅಲರ್ಜಿಯ ಪ್ರತಿಕ್ರಿಯೆಗಳಂತಹ ಉಸಿರಾಟದ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಗರದ ಹಲವೆಡೆ ಬೆಳೆಸಿರುವ ಕೋನೊಕಾರ್ಪಸ್ ಗಿಡಗಳ ಬೆಳವಣಿಗೆಗೆ ನಿಯಂತ್ರಣ ಹಾಕಬೇಕು. ಸರಕಾರ ನೇಮಿಸಿದ ಪರಿಸರ ತಜ್ಞರ ಸಮಿತಿಯು, ಕೊನೊಕಾರ್ಪಸ್ ಮರದ ಪ್ರಭೇದವನ್ನು ನಿಷೇಧಿಸಲು ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಿದ್ದು ಇಲ್ಲಿ ಗಮನಿಸಬೇಕು. ಈ ಭಾಗದ ಜನರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡದೆ ಪಾಲಿಕೆ ಇವುಗಳನ್ನು ತೆರವುಗೊಳಿಸಿ ಪರಿಸರ ಸ್ನೇಹಿ ಗಿಡಗಳನ್ನು ಬೆಳೆಸಬೇಕು. -ರಾಜೇಂದ್ರ ಶಿವಾಳೆ ‘ಗ್ರೀನ್ ರಾಯಚೂರು’ ಸಂಸ್ಥೆಯ ಸಹ ಸಂಚಾಲಕ ವಿವಿಧೆಡೆ ನಿಷೇಧ: ತೆಲಂಗಾಣ, ಗುಜರಾತ್ ಹಾಗೂ ಕರ್ನಾಟಕದ ಯಾದಗಿರಿಗಳಲ್ಲಿ ಈ ಮರಗಳನ್ನು ನಿಷೇಧಿಸಲಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಹಾಕಿದ ಗಿಡಗಳನ್ನು ಕಿತ್ತುಹಾಕಲಾಗುತ್ತಿದೆ. ಆದರೆ ರಾಯಚೂರಿನಲ್ಲಿ ಮಾತ್ರ ಇವುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ದುರ್ದೈವದ ಸಂಗತಿ.
ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತೀಯ ಅನ್ನುವುದು ಏನೂ ಇಲ್ಲ ಎಂದು ಹೇಳಿದ ಗೋಳ್ವಾಲ್ಕರ್ ಇದರ ಬದಲಿಗೆ ಮನುಸ್ಮತಿಯನ್ನು ಆಧರಿಸಿದ ಸಂವಿಧಾನವನ್ನು ತರಬೇಕೆಂದು ಪ್ರತಿಪಾದಿಸಿದರು.ಆದರೆ ಒಮ್ಮ್ಮೆಲೇ ಇದನ್ನು ಮಾಡಲಾಗುವುದಿಲ್ಲ ಅವಸರ ಮಾಡಿದರೆ ದಲಿತ, ಹಿಂದುಳಿದ ಸಮುದಾಯಗಳ ಶೇಕಡ 90ರಷ್ಟು ಜನರು ತಿರುಗಿ ಬೀಳುತ್ತಾರೆ ಎಂಬುದನ್ನು ಅರಿತ ಇವರು ಅದಕ್ಕೆ ಕಾಲ ಪಕ್ವಗೊಳಿಸಲು ಒಂದೊಂದಾಗಿ ಹೆಜ್ಜೆ ಇಡುತ್ತ್ತಾ ಬಂದಿದ್ದಾರೆ. ಕೇಂದ್ರದಲ್ಲಿ 11 ವರ್ಷಗಳ ಹಿಂದೆ ಇವರು ಅಧಿಕಾರಕ್ಕೆ ಬಂದರು. ಆವಾಗಿನಿಂದ ಮಾಡುತ್ತ ಬಂದ ಅವಾಂತರಗಳೆಲ್ಲ ಅನಿರೀಕ್ಷಿತ ಆಗಿರಲಿಲ್ಲ. ಆದರೆ ಆ ದಿಕ್ಕಿನತ್ತ ಸಾಗಿದ ದಾರಿ ಮತ್ತು ಸಂದರ್ಭ ಮಾತ್ರ ನಿರೀಕ್ಷಿತವಾಗಿರಲಿಲ್ಲ. ಒಂದೊಂದಾಗಿ ಮುಗಿಸುತ್ತ ಬಂದರು. ಕೊನೆಗೆ ಈಗ ಉಳಿದಿರುವುದು ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ.ಇದೇ ಇವರ ನಿಜವಾದ ಟಾರ್ಗೆಟ್. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ) ಎಂಬ ಹೆಸರನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ_-ಜಿ ರಾಮ್ ಜಿ) ಎಂದು ಬದಲಿಸಲು ಹೊರಟ ಕೇಂದ್ರದ ಕ್ರಮ ದುರುದ್ದೇಶದಿಂದ ಕೂಡಿದ ರಾಜಕೀಯ ಕ್ರಮ ಮಾತ್ರವಲ್ಲ ಅಂತಿಮವಾಗಿ ಈ ಯೋಜನೆಯನ್ನು ಸಮಾಧಿ ಮಾಡುವುದಾಗಿದೆ. ಅವಕಾಶ ವಂಚಿತರು ಮತ್ತು ಬಡವರಿಗಾಗಿ ಹಿಂದಿನ ಸರಕಾರಗಳು ರೂಪಿಸಿದ ಯಾವ ಯೋಜನೆಯನ್ನೂ ಇವರು ಉಳಿಯಗೊಡುವುದಿಲ್ಲ. ಅಧಿಕಾರಕ್ಕೆ ಬಂದ ಹನ್ನೊಂದು ವರ್ಷಗಳಲ್ಲಿ ಯಾವುದೇ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗದಿದ್ದರೂ ಇರುವ ಯೋಜನೆಗಳ, ಊರುಗಳ, ಬಡಾವಣೆಗಳ ಹೆಸರುಗಳನ್ನು ಬದಲಿಸುವುದು ಇವರ ದುರುದ್ದೇಶ ಪೂರಿತ ಚಾಳಿ. ಆದರೆ ಎಂನರೇಗಾದ ಹೆಸರನ್ನು ಬದಲಿಸುವ ಹಿಂದೆ ಗಾಂಧೀಜಿ ಬಗೆಗಿನ ದ್ವೇಷ ಮಾತ್ರವಲ್ಲ ಹಿಂದಿನ ಸರಕಾರಗಳು ವಿಶೇಷವಾಗಿ ಯುಪಿಎ(1) ರೂಪಿಸಿ ಜಾರಿಗೆ ತಂದುದನ್ನೆಲ್ಲ ಮುಗಿಸುವುದಾಗಿದೆ. ಸ್ವಾತಂತ್ರ್ಯಾನಂತರ ನೆಹರೂ ಕಾಲದಿಂದ ರೂಪುಗೊಂಡದ್ದನ್ನೆಲ್ಲ ಹೊಸಕಿ ಹಾಕುತ್ತ ಬಂದರು. ಎಲ್ಲವೂ ತಮ್ಮ ಕಾಲದಲ್ಲೇ ಶುರುವಾಯಿತು ಎಂದು ದಾಖಲಿಸುವುದು ಇವರ ಮಸಲತ್ತಾಗಿದೆ. ಉದಾಹರಣೆಗೆ ಯೋಜನಾ ಆಯೋಗದ ಹೆಸರನ್ನೇ ಬದಲಿಸಿದರು. ಈಗಿರುವ ಸಂಸತ್ ಭವನಕ್ಕೆ ಬದಲಿಯಾಗಿ ಹೊಸ ಸಂಸತ್ ಭವನವನ್ನೇ ನಿರ್ಮಿಸಿದರು. ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ, ಆಗುತ್ತಿದೆ. ಬಾಬರಿ ಮಸೀದಿ ನೆಲಸಮಗೊಳಿಸಿದ್ದನ್ನು ನ್ಯಾಯಾಲಯವನ್ನು ಮಣಿಸಿ ನ್ಯಾಯ ಸಮ್ಮತಗೊಳಿಸಿದರು.ಆಗಿನಿಂದ ಒಂದೊಂದಾಗಿ ನಾಗಪುರದಲ್ಲಿ ರೂಪುಗೊಂಡ ಕಾರ್ಯ ಸೂಚಿಗಳನ್ನು ಜಾರಿಗೊಳಿಸುತ್ತಲೇ ಇದ್ದಾರೆ. ಈಗ ಇವರ ಮುಂದಿನ ತಕ್ಷಣದ ಗುರಿ ಸಂವಿಧಾನ. ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಸಂವಿಧಾನ ಕಾರಣ ಎಂದು ಸಂಘ ಪರಿವಾರ ಹೇಳುತ್ತಲೇ ಬಂದಿದೆ.ಅದನ್ನು ಹಿಂದೂ ವಿರೋಧಿ ಎಂದು ದೂಷಿಸುತ್ತಲೇ ಬಂದಿದೆ. ಇದೆಲ್ಲ ಇತ್ತೀಚೆಗೆ ರೂಪುಗೊಂಡ ಯೋಜನೆಗಳಲ್ಲ. 1992ರ ಅಕ್ಟೋಬರ್ 13-14ರಂದು ನಡೆದ ವಿಶ್ವ ಹಿಂದೂ ಪರಿಷತ್ನ ಸಂತ ಮಂಡಳಿಯ ಸಭೆಯಲ್ಲಿ ಕೈಗೊಂಡ ತೀರ್ಮಾನವಿದು. ಇದಕ್ಕಾಗಿ ಸ್ವಾಮಿ ಮುಕ್ತಾನಂದ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಪ್ರಸಕ್ತ ಸಂವಿಧಾನವನ್ನು ಟೀಕಿಸುವ ಮತ್ತು ಹಿಂದುತ್ವ ಆಧಾರದಲ್ಲಿ ಹೊಸ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿತ್ತು. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಹಾಗೂ ಸಂಘಟನೆಗಳು ಎಚ್ಚರಗೊಳ್ಳಲೇ ಇಲ್ಲ. ಎಡಪಂಥೀಯ ಪಕ್ಷಗಳು ಹಾಗೂ ಸಂಘಟನೆಗಳು ವಿರೋಧಿಸಿದರೂ ಪ್ರಯೋಜನ ಆಗಲಿಲ್ಲ. ಚುನಾವಣಾ ರಾಜಕೀಯದಲ್ಲಿ ಅವರು ಪ್ರಬಲರಾಗುತ್ತ ಬಂದರು. ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಪ್ರಸಕ್ತ ಸಂವಿಧಾನದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮತ ನಿರಪೇಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ. ಆದ್ದರಿಂದ ಶ್ರೇಣೀಕೃತ ಜಾತಿ ಪದ್ಧ್ದತಿಯನ್ನು ಮರು ಸ್ಥಾಪಿಸಲು ಅದಕ್ಕೆ ಮನುಸ್ಮತಿ ಆಧಾರದಲ್ಲಿ ಕಾನೂನಿನ ಸ್ವರೂಪ ಕೊಡಲು ತಮ್ಮದೇ ಆದ ಹೊಸ ಸಂವಿಧಾನ ಇವರಿಗೆ ಬೇಕಾಗಿದೆ. ತಮ್ಮ ಗುರಿಯನ್ನು ಇವರು ಬಚ್ಚಿಟ್ಟುಕೊಂಡಿಲ್ಲ.ಹೇಳುತ್ತಲೇ ಬಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊದಲ ಸರ ಸಂಘಚಾಲಕ ಕೇಶವ ಬಲರಾಮ ಹೆಡ್ಗೆವಾರ್ ಅವರಿಗಿಂತ ಸಂಘಕ್ಕೆ ಸ್ಪಷ್ಟವಾದ, ನಿರ್ದಿಷ್ಟವಾದ ಸೈದ್ಧಾಂತಿಕ ಪ್ರಣಾಳಿಕೆ ನೀಡಿದವರು ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ . ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತೀಯ ಅನ್ನುವುದು ಏನೂ ಇಲ್ಲ ಎಂದು ಹೇಳಿದ ಗೋಳ್ವಾಲ್ಕರ್ ಇದರ ಬದಲಿಗೆ ಮನುಸ್ಮತಿಯನ್ನು ಆಧರಿಸಿದ ಸಂವಿಧಾನವನ್ನು ತರಬೇಕೆಂದು ಪ್ರತಿಪಾದಿಸಿದರು.ಆದರೆ ಒಮ್ಮ್ಮೆಲೇ ಇದನ್ನು ಮಾಡಲಾಗುವುದಿಲ,್ಲ ಅವಸರ ಮಾಡಿದರೆ ದಲಿತ ,ಹಿಂದುಳಿದ ಸಮುದಾಯಗಳ ಶೇಕಡ 90ರಷ್ಟು ಜನರು ತಿರುಗಿ ಬೀಳುತ್ತಾರೆ ಎಂಬುದನ್ನು ಅರಿತ ಇವರು ಅದಕ್ಕೆ ಕಾಲ ಪಕ್ವಗೊಳಿಸಲು ಒಂದೊಂದಾಗಿ ಹೆಜ್ಜೆ ಇಡುತ್ತ ಬಂದಿದ್ದಾರೆ.ಈಗ ನಿಧಾನವಾಗಿ ಸಂವಿಧಾನದ ಬಳಿ ಬರುತ್ತಿದ್ದಾರೆ. ಇವರ ಅಂತಿಮ ಗುರಿ ಸಂವಿಧಾನ ವಾಗಿದೆ.ಅದಕ್ಕೆ ಈಗ ಅಪಾಯ ಎದುರಾಗಿದೆ. ಅಸ್ಪಶ್ಯತೆ,ಶ್ರೇಣೀಕೃತ ಜಾತಿ ಪದ್ಧ್ದತಿ, ಸತಿ ಸಹಗಮನ ಪದ್ಧ್ದತಿಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳೆಂದು ಹಿಂದೊಮ್ಮೆ ಪುರಿ ಶಂಕರಾಚಾರ್ಯರು ಹೇಳಿದಾಗ ಅದನ್ನು ಸಮರ್ಥಿಸಿದ ವಿಶ್ವ ಹಿಂದೂ ಪರಿಷತ್ನ ಅಖಿಲ ಭಾರತ ಕಾರ್ಯದರ್ಶಿಯಾಗಿದ್ದ ಅಶೋಕ ಸಿಂಘಾಲರು ನಮ್ಮ ಧಾರ್ಮಿಕ ಆಚಾರ್ಯರು ಉಪದೇಶ ಮಾಡಿದ ಧರ್ಮವನ್ನೇ ನಾವು ಕಾನೂನಿಂತೆ ಪಾಲಿಸುತ್ತೇವೆ ಎಂದು ಹೇಳಿದ್ದರು. ಸಿಂಘಾಲ್,ಗೋಳ್ವ್ವಾಲ್ಕರ್ ನಂತರವೂ ಸಂಘ ಪರಿವಾರ ಇದೇ ನಿಲುವಿಗೆ ಬದ್ಧವಾಗಿದೆ. ಈಗ ತಮಗೆ ಅನುಕೂಲಕರವಾಗಿ ವಾತಾವರಣವನ್ನು ಹೇಗೆ ಬದಲಿಸಿಕೊಂಡಿದ್ದಾರೆ ಅಂದರೆ ಗಾಂಧೀಜಿ, ಜವಾಹರಲಾಲ್ ನೆಹರೂ ಅವರನ್ನು ದ್ವೇಷಿಸುವ, ಹೊಲಸು ಭಾಷೆಯಲ್ಲಿ ಬೈಯುವ ಬಹುದೊಡ್ಡ ಬೆಂಬಲಿಗೆ ವರ್ಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಹೀಗೆ ಒಂದೊಂದಾಗಿ ಜಾರಿಗೆ ತರುತ್ತಾರೆ. ಯಾವುದಕ್ಕೂ ಅವಸರ ಮಾಡುವುದಿಲ್ಲ. ಹೀಗೆ ಮಾಡುತ್ತ ಹೋಗಿ ಕೊನೆಗೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಭಾರತದ ಸಂವಿಧಾನವನ್ನು ಬದಲಿಸಲು ಕೈ ಹಾಕುತ್ತಾರೆ. ಮೊದಲು ಯಾರಾರಿಂದಲೋ ಸಂವಿಧಾನದ ವಿರುದ್ಧ ಹೇಳಿಕೆ ನೀಡಿಸುತ್ತಾರೆ.ಅದಕ್ಕೆ ಬರುವ ಪ್ರತಿಕ್ರಿಯೆಯನ್ನು ಗಮನಿಸಿ ಮುಂದಿನ ಹೆಜ್ಜೆ ಇಡುತ್ತಾರೆ. ಈಗ ಗುರಿಯತ್ತ ಎಷ್ಟು ಸಮೀಪಿಸಿದ್ದಾರೆ ಎಂದರೆ ದೇಶದ ರಾಜಧಾನಿ ದಿಲ್ಲಿಯಲ್ಲಿ ಸಂಸತ್ ಭವನದ ಸಮೀಪದಲ್ಲೇ ಹಾಡಹಗಲೇ ಸಂವಿಧಾನಕ್ಕೆ ಅಗ್ನಿಸ್ಪರ್ಶ ಮಾಡಿ ದಕ್ಕಿಸಿಕೊಂಡರು. ಇವರೇ ಸೃಷ್ಟಿಸಿದ ಭಕ್ತರ ಮೂಲಕ ಇದನ್ನೆಲ್ಲ ಮಾಡಿಸಿ ಇದಕ್ಕೆ ಬರುವ ಪ್ರತಿಕ್ರಿಯೆಯನ್ನು ಅವಲೋಕಿಸಿ ಮುಂದಿನ ಕ್ರಮವನ್ನು ರೂಪಿಸುತ್ತಾರೆ. ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುವುದು ಉಳಿದ ಪಕ್ಷಗಳಂತಲ್ಲ. ಬಿಜೆಪಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಸೂತ್ರದ ಗೊಂಬೆಯಂತೆ ಕುಣಿಯುವ ಪಕ್ಷ.ಸಮಾನತೆ ಹಾಗೂ ಪ್ರಜಾಪ್ರಭುತ್ವ ಎಂಬ ಪದಗಳು ಬಿಜೆಪಿಗೆ ಅಪಥ್ಯ. ಅದೇ ರೀತಿ ಸಂವಿಧಾನ ಕೂಡ. ಸಂವಿಧಾನದ ಪ್ರಕಾರ ಮಹಿಳೆ ,ಪುರುಷ ಎಲ್ಲರೂ ಸಮಾನರು.ಮನುಸ್ಮತಿಯಲ್ಲಿ ನಂಬಿಕೆ ಇಟ್ಟವರಿಗೆ ಸಂವಿಧಾನ ಇಷ್ಟ ವಾಗುವುದಿಲ್ಲ. ಹೀಗಾಗಿ ಅದನ್ನು ಬದಲಿಸುವ ಬಹುದೊಡ್ಡ ಷಡ್ಯಂತ್ರ ರೂಪುಗೊಂಡಿದೆ.ಅದರ ಭಾಗವಾಗಿ ಸಾಂವಿಧಾನಿಕ ಸಂಸ್ಥೆಗಳಾದ ಚುನಾವಣಾ ಆಯೋಗ,ನ್ಯಾಯಾಂಗ ಮೊದಲಾದವುಗಳನ್ನು ಮುಗಿಸಿದ ನಂತರ ಇವರ ಕೊನೆಯ ಗುರಿ ಸಂವಿಧಾನ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ.ಇದು ಎಲ್ಲಿಗೆ ಹೋಗಿ ತಲುಪುವುದೋ ಗೊತ್ತಿಲ್ಲ. ಬಹುತ್ವ ಭಾರತವನ್ನು ಯಾದವೀ ಕಲಹದ ಬೆಂಕಿಗೆ ತಳ್ಳುವ ದಿಕ್ಕಿನತ್ತ ಸಾಗುತ್ತಿದ್ದಾರೆ. ಸಂವಿಧಾನವನ್ನು ನಾಶ ಮಾಡಲು ಹೊರಟವರಿಗೆ ರಾಜಕೀಯ ಅಧಿಕಾರ ಸಿಕ್ಕಿರುವುದರಿಂದ ಅವರ ಸಾಮರ್ಥ್ಯ ಹೆಚ್ಚಾಗುತ್ತಲೇ ಬಂತು.ಚುನಾವಣೆ ಬಂದಾಗ ಸರಿಯಾದ ಸಂಯುಕ್ತ ಪ್ರತಿರೋಧ ರೂಪಿಸಲಾಗದ ಪ್ರತಿಪಕ್ಷಗಳು ಕೂಡ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯದ ಹೊಣೆಯನ್ನು ಹೊರಬೇಕಾಗಿದೆ.ರಾಜಕೀಯ ಅಧಿಕಾರ ಅವರಿಗೆ ಎಂದೂ ಸಿಗದಂತೆ ಎಚ್ಚರ ವಹಿಸಿದ್ದರೆ ಇದನ್ನು ತಪ್ಪಿಸಬಹುದಾಗಿತ್ತು.ಈಗ ಕಾಲ ಮಿಂಚಿ ಹೋಗಿದೆ.ತಮ್ಮ ವಿಧ್ವ್ವಂಸಕಾರಿ ಚಟುವಟಿಕೆಗಳನ್ನು ಬೆಂಬಲಿಸುವ ಬಹುದೊಡ್ಡ ಬೆಂಬಲಿಗರ ಪಡೆಯನ್ನೇ ಇವರು ಸೃಷ್ಟಿಸಿಕೊಂಡಿದ್ದಾರೆ. ಇದನ್ನು ತಡೆಯಬೇಕಾದ ದೇಶದ ಯುವಜನರನ್ನು ಜಾತಿ,ಧರ್ಮದ ಹೆಸರಿನಲ್ಲಿ ವಿಭಜಿಸಿದ್ದಾರೆ. ನಮ್ಮಂಥವರು ಏನೇ ಬರೆದರೂ ಅವಾಚ್ಯ ಭಾಷೆಯಲ್ಲಿ ಬೆದರಿಕೆಯ ಕರೆಗಳು ಬರುತ್ತವೆ. ಇವರೇನು ಮಾಡುತ್ತಾರೆ ಎಂದು ನಿರ್ಲಕ್ಷಿಸಬಹುದು.ಆದರೆ ಡಾ.ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸ್ಸಾರೆ, ಡಾ. ಎಂ.ಎಂ ಕಲಬುರರ್ಗಿ, ಗೌರಿ ಲಂಕೇಶ್ ನೆನಪಿಗೆ ಬರುತ್ತಾರೆ.ಜೀವ ತೆಗೆಯುತ್ತಾರೆ ಎಂದು ಬರೆಯದಿರಲಾಗುವುದಿಲ್ಲ. ಮುಂದೇನು? ಬಹುತ್ವ ಭಾರತದ ಉಳಿವಿನ ದಾರಿ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮುಂದೆ ಸಾಗುವುದೊಂದೇ ಉಳಿದ ದಾರಿಯಾಗಿದೆ. ಇವರಿಗೆ ಪೂರಕವಾಗಿ ಜಾಗತಿಕವಾಗಿ ನವ ಉದಾರೀಕರಣದ ಆರ್ಥಿಕ ನೀತಿ ಬಂದಿದೆ.ಆರೋಗ್ಯ, ಶಿಕ್ಷಣ, ಸೇರಿ ಎಲ್ಲವನ್ನೂ ಖಾಸಗಿ ತಿಮಿಂಗಿಲಗಳ ಬಾಯಿಗೆ ಹಾಕುವ ಮಸಲತ್ತುಗಳು ನಿತ್ಯವೂ ನಡೆಯುತ್ತಿವೆ.ಇದನ್ನು ವಿರೋಧಿಸಬೇಕಾದವರು ಹಿಂದೂ,_ ಮುಸ್ಲಿಮ್, ಕ್ರೈಸ್ತ ,ಜಾತಿ,ಮತಗಳಲ್ಲಿ ಮುಳುಗಿಹೋಗಿದ್ದಾರೆ. ಈ ಕಾರ್ಗತ್ತಲು ಕವಿದಿರುವ ಕಾಲದಲ್ಲೂ ಭರವಸೆಯ ಬೆಳಕಿಗಾಗಿ ಕಾಯುವುದೊಂದೇ ಉಳಿದ ದಾರಿಯಾಗಿದೆ.
Rashmika Mandanna: ಕೊಡಗಿನ ಬೆಡಗಿ, ‘ಕಿರಿಕ್ ಪಾರ್ಟಿ’ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ, ಅ.03ರಂದು ತಮ್ಮ ಬಹುದಿನಗಳ ಸ್ನೇಹಿತ ಟಾಲಿವುಡ್ ನಟ ವಿಜಯ್ ದೇವರಕೊಂಡ ಜತೆ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡರು. ಇತ್ತೀಚೆಗೆ, ನಟಿ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಶ್ಮಿಕಾ, ಟ್ರೋಲ್ಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ. ‘ದಿ ಗರ್ಲ್ಫ್ರೆಂಡ್’ ಚಿತ್ರಕ್ಕೆ ಉತ್ತಮ […] The post ಇದೇ ಕಾರಣಕ್ಕೆ ಸಂದರ್ಶನಕ್ಕೆ ಹೋಗಲು ಭಯ! ವಿವಾದಕ್ಕೆ ಗುರಿಯಾದ ಹೇಳಿಕೆಗೆ ನಟಿ ರಶ್ಮಿಕಾ ಪ್ರತಿಕ್ರಿಯೆ | Rashmika Mandanna first appeared on ವಿಜಯವಾಣಿ .
ಸುಂಟಿಕೊಪ್ಪ : ಬಡಾವಣೆಗಳಿಗೆ ಮೂಲಸೌಕರ್ಯ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಗ್ರಾಮಸ್ಥರು ಒತ್ತಾಯಿಸಿದರು. ಇಲ್ಲಿನ ಶ್ರೀ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ 2025-26ನೇ ಸಾಲಿನ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಸರಮಾಲೆಯೇ ಹರಿದುಬಂದಿತ್ತು. ಗ್ರಾಮಸ್ಥರಾದ ಸೂಫಿ, ಇಬ್ರಾಹಿಂ, ಕೆ.ಎ.ಲತೀಫ್, ರಜಾಕ್, ದಿನೇಶ್, ಉದಯಕುಮಾರ್, ಡೇವಿಡ್ ಜಾನ್ಸನ್, ಮಮತಾ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥ ಇಬ್ರಾಹಿಂ ಮಾತನಾಡಿ, […] The post ಗ್ರಾಮಸ್ಥರಿಂದ ದೂರಿನ ಸುರಿಮಳೆ first appeared on ವಿಜಯವಾಣಿ .
ಕಲೆ, ಸಾಹಿತ್ಯ ಸಂಸ್ಕೃತಿ ಸದಾ ಜೀವಂತ
ವಿರಾಜಪೇಟೆ : ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮನುಜನ ಹುಟ್ಟಿನಿಂದ ಬಂದಿರುವ ಬಳುವಳಿಯಾಗಿದೆ. ಇವುಗಳು ಮರೆಯಾಗುವುದಿಲ್ಲ. ಕಲೆಯನ್ನು ಪ್ರೋತ್ಸಾಹಿಸುವ ಮನಸ್ಸುಗಳು ಇದ್ದಲ್ಲಿ ಕಲೆಗೆ ಜೀವ ಬರುತ್ತದೆ ಎಂದು ಹವ್ಯಾಸಿ ಛಾಯಾಗ್ರಹಕ ಮತ್ತು ಕಲಾವಿದ ಜುನೈಶ್ ಕಣ್ಣೂರು ಹೇಳಿದರು. ಸಾಧಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ, ಚಿತ್ರಕಲೆ ಕಲಾವಿದರಾದ ಸಾಧಿಕ್ ಹಂಸ ಅವರು ಆಯೋಜಿಸಿದ್ದ ಕಲಾ ಉತ್ಸವ ಕೊಡಗು 9ನೇ ವರ್ಷದ ಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಲೆ ನಿಂತ ನೀರಲ್ಲ, ಬದಲಿಗೆ ಹರಿಯುವ ನದಿಯಂತೆ, ಎಲ್ಲ ಮನಸ್ಸುಗಳಲ್ಲಿ ಕಲೆ […] The post ಕಲೆ, ಸಾಹಿತ್ಯ ಸಂಸ್ಕೃತಿ ಸದಾ ಜೀವಂತ first appeared on ವಿಜಯವಾಣಿ .
ನಾಡು-ನುಡಿ ಶ್ರೀಮಂತಿಕೆ ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿ
ವಿರಾಜಪೇಟೆ :ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಿಂದಲೇ ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಲೇಖಕ ಹಾಗೂ ವಿರಾಜಪೇಟೆ ಉಪ ಖಜಾನೆಯ ಅಧೀಕ್ಷಕ ಗಣೇಶ್ ನಿಲುವಾಗಿಲು ಹೇಳಿದರು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಕನ್ನಡ ಭಾಷಾ ವಿಭಾಗದ ವತಿಯಿಂದ ಕರುನಾಡ ಸಂಭ್ರಮ 2025ರ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದಬೇಕು. ಪುಸ್ತಕಗಳನ್ನು ಓದುವುದರ ಮೂಲಕ ಇತರರಿಗೆ […] The post ನಾಡು-ನುಡಿ ಶ್ರೀಮಂತಿಕೆ ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿ first appeared on ವಿಜಯವಾಣಿ .
ಕರಾಟೆಯಲ್ಲಿ ಸಂತ ಮೇರಿಸ್ ಮಕ್ಕಳ ಸಾಧನೆ
ಸುಂಟಿಕೊಪ್ಪ: ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 17 ವರ್ಷದ ವಯೋಮಿತಿಯ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಂತ ಮೇರಿಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಜೀವಿಕಾ ಪ್ರಥಮ ಸ್ಥಾನ ಪಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಜೀವಿಕಾ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ನೈಜ ಅವಕಾಶವನ್ನು ಪಡೆಯುವ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜೀವಿಕಾ ಅವರ ತಂದೆ ರಾಜ್ ಕುಮಾರ್ ಅವರು ಭಾರತೀಯ ಸೇನೆಯಲ್ಲಿ ಯೋಧರಾಗಿದ್ದು, ತಾಯಿ ಲಕ್ಷ್ಮೀ ಮಡಿಕೇರಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಶುಶ್ರೂಷಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ರೀತಿ 10ನೇ […] The post ಕರಾಟೆಯಲ್ಲಿ ಸಂತ ಮೇರಿಸ್ ಮಕ್ಕಳ ಸಾಧನೆ first appeared on ವಿಜಯವಾಣಿ .
ಪಾಕ್ನ ISI ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಪತ್ತೆ: 10 ಜನರ ಬಂಧನ!
ಪಂಜಾಬ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಅನ್ನು ಪತ್ತೆಹಚ್ಚಿ 10 ಜನರನ್ನು ಬಂಧಿಸಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಆರೋಪಿಗಳಿಂದ ಪೊಲೀಸ್ ತಂಡಗಳು ಚೀನಾದ ಹ್ಯಾಂಡ್ ಗ್ರೆನೇಡ್ ಅನ್ನು ಸಹ ವಶಪಡಿಸಿಕೊಂಡಿವೆ. ಪಂಜಾಬ್ನಲ್ಲಿ ಅಶಾಂತಿ ಸೃಷ್ಟಿಸಲು ಗ್ರೆನೇಡ್ ದಾಳಿ ನಡೆಸಲು ಆರೋಪಿಗಳು ಪಾಕಿಸ್ತಾನ ಮೂಲದ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಪಕ್ಷಾಂತರ; 4 ವರ್ಷದ ಬಳಿಕ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ […] The post ಪಾಕ್ನ ISI ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಪತ್ತೆ: 10 ಜನರ ಬಂಧನ! first appeared on ವಿಜಯವಾಣಿ .
ಕೋಲ್ಕತ್ತಾ: 2021ರಲ್ಲಿ ಬಿಜೆಪಿಯಿಂದ ಗೆದ್ದು ಒಂದು ತಿಂಗಳಲ್ಲೇ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದ ಸಿಎಂ ಮಮತಾ ಬ್ಯಾನರ್ಜಿಯವರ ಆಪ್ತ ಮುಕುಲ್ ರಾಯ್(Mukul Roy) ಅವರ ಪಶ್ಚಿಮ ಬಂಗಾಳ ವಿಧಾನಸಭೆ ಸದಸ್ಯತ್ವವನ್ನು ನಾಲ್ಕು ವರ್ಷಗಳ ಬಳಿಕ ಇಂದು(ನ. 13) ಕೋಲ್ಕತ್ತಾ ಹೈಕೋರ್ಟ್ ರದ್ದು ಮಾಡಿದೆ ಎಂದು ವರದಿಯಾಗಿದೆ. ನಾಡಿಯಾ ಜಿಲ್ಲೆಯ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ರಾಯ್, ಚುನಾವಣೆಯ ನಡೆದ ಒಂದು ತಿಂಗಳೊಳಗೆ ತಮ್ಮ ಹಿಂದಿನ ಪಕ್ಷವಾದ ತೃಣಮೂಲ ಕಾಂಗ್ರೆಸ್ […] The post ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಪಕ್ಷಾಂತರ; 4 ವರ್ಷದ ಬಳಿಕ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ ಹೈಕೋರ್ಟ್| Mukul Roy first appeared on ವಿಜಯವಾಣಿ .
ಮಕ್ಕಳಿಗೆ ನ್ಯೂಮೇನಿಯಾ ಬಂದಾಗ ಏನು ತಿನ್ನಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.. | Pneumonia
ಬೆಂಗಳೂರು: ನ್ಯೂಮೋನಿಯಾ (Pneumonia) ಎಂಬುದು ಶ್ವಾಸಕೋಶಗಳ ಒಂದು ಅಥವಾ ಎರಡೂ ಬದಿಗಳಲ್ಲಿ ಉಂಟಾಗುವ ಸೋಂಕು. ಇದು ಶ್ವಾಸಕೋಶಗಳಲ್ಲಿರುವ ಗಾಳಿ ಚೀಲಗಳು (ಅಲ್ವಿಯೋಲಿ) ದ್ರವ ಅಥವಾ ಕೀವುಗಳಿಂದ ತುಂಬುವುದರಿಂದ ಸಂಭವಿಸುತ್ತದೆ. ಇದರಿಂದ ಉಸಿರಾಟದಲ್ಲಿ ತೊಂದರೆಯಾಗುತ್ತದೆ ಮತ್ತು ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ. ಇದು ಸೌಮ್ಯದಿಂದ ತೀವ್ರವಾಗಿ ಇರಬಹುದು, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವವರಲ್ಲಿ ಅಪಾಯಕಾರಿ. ಮಕ್ಕಳಿಗೆ ನ್ಯೂಮೋನಿಯಾ ಬಂದಾಗ ಆಹಾರ ಕ್ರಮ ನ್ಯೂಮೋನಿಯಾ ಮಕ್ಕಳಲ್ಲಿ ಬಂದಾಗ, ಆರೋಗ್ಯಕ್ಕೆ ಸಹಾಯವಾಗುವ ಆಹಾರವನ್ನು ನೀಡುವುದು ಮುಖ್ಯ. ಇದು […] The post ಮಕ್ಕಳಿಗೆ ನ್ಯೂಮೇನಿಯಾ ಬಂದಾಗ ಏನು ತಿನ್ನಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.. | Pneumonia first appeared on ವಿಜಯವಾಣಿ .
ಚೆನ್ನೈ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ತಮಿಳುನಾಡಿನ ಸರ್ಕಾರಿ ಸಿಬ್ಬಂದಿ, ಶಿಕ್ಷಕರು ಹಾಗೂ ಪಿಂಚಣಿದಾರರಿಗೆ ಇಂದು(ನ. 13) ಸಿಎಂ ಎಂ.ಕೆ.ಸ್ಟಾಲಿನ್(M K Stalin) ಶೇ. 3ರಷ್ಟು ತುಟ್ಟಿಭತ್ಯೆ(ಡಿಎ) ಹೆಚ್ಚಳವನ್ನು ಘೋಷಣೆ ಮಾಡಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಸ್ಟಾಲಿನ್, ಸರ್ಕಾರಿ ಸಿಬ್ಬಂದಿ ಮತ್ತು ಶಿಕ್ಷಕರು ತಳಮಟ್ಟದಲ್ಲಿ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮತ್ತು ಹಣಕಾಸಿನ ಒತ್ತಡಗಳ ಹೊರತಾಗಿಯೂ ರಾಜ್ಯವು ಅವರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: […] The post ತಮಿಳುನಾಡಿನ ಸರ್ಕಾರಿ ಸಿಬ್ಬಂದಿ, ಶಿಕ್ಷಕರಿಗೆ ಶೇ. 3ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿದ ಸಿಎಂ ಎಂ.ಕೆ.ಸ್ಟಾಲಿನ್| M K Stalin first appeared on ವಿಜಯವಾಣಿ .
Vastu tips: ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಉತ್ತಮವಾಗಿ ನಡೆಸಲು ಅಥವಾ ಲಾಭಗಳಿಸುವ ಸಲುವಾಗಿ ಅನೇಕ ರೀತಿಯ ವಸ್ತುಗಳನ್ನು ತಮ್ಮ ಅಂಗಡಿಯಲ್ಲಿ ಇಡಲು ಬಯಸುತ್ತಾರೆ. ಕೆಲವರು ಕುಬೇರನ ಚಿತ್ರ, ಲಕ್ಷ್ಮೀ ಫೋಟೋ, ಆಮೆ, ನಿಂಬೆಹಣ್ಣನ್ನು ಇಟ್ಟುಕೊಳ್ಳುತ್ತಾರೆ. ಇದರಿಂದ ಅಭಿವೃದ್ಧಿಯನ್ನು ಹೊಂದಬಹುದು ಎಂದು ಯೋಚಿಸಿರುತ್ತಾರೆ. ಅಂದಹಾಗೇ, ವಾಸ್ತು ಪ್ರಕಾರ, ಅಂಗಡಿಯ ಮುಂದೆ ಕೆಲವು ವಸ್ತುಗಳು ಅಥವಾ ತಪ್ಪು ವಸ್ತುಗಳು ಇದ್ದರೆ, ಲಕ್ಷ್ಮಿ ನಿಮ್ಮ ಅಂಗಡಿಯನ್ನು ಎಂದಿಗೂ ಪ್ರವೇಶಿಸುವುದಿಲ್ಲ ಎಂದು ಹೇಳುತ್ತದೆ. ಇದರಿಂದಾಗಿ, ವ್ಯವಹಾರಗಳು ನಿಧಾನಗೊಳ್ಳುತ್ತವೆ. ಅಲ್ಲದೇ, ಆರ್ಥಿಕ ನಷ್ಟಗಳು ಸಂಭವಿಸಲು […] The post ನಿಮ್ಮ ಅಂಗಡಿಯ ಮುಂದೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ! ಇದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು.. Vastu tips first appeared on ವಿಜಯವಾಣಿ .
ಜಿಲ್ಲಾ ಮಟ್ಟದ ‘ಅಖಿಲ ಭಾರತ ಸಹಕಾರ ಸಪ್ತಾಹ’ನ.14ರಿಂದ
ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಮಾಹಿತಿ ನ.16ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ವಿಜಯವಾಣಿ ಸುದ್ದಿಜಾಲ ಉಡುಪಿ ಕರ್ನಾಟಕ ರಾಜ್ಯ ಸಹಕಾರ ಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರಿಗಳ ಸಹಕಾರದಲ್ಲಿ ನ.14ರಿಂದ ನ.20ರ ವರೆಗೆ ಉಡುಪಿ ಜಿಲ್ಲಾದ್ಯಂತ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹಆರಂಭಗೊಳ್ಳಲಿದೆ. ನ.16ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ […] The post ಜಿಲ್ಲಾ ಮಟ್ಟದ ‘ಅಖಿಲ ಭಾರತ ಸಹಕಾರ ಸಪ್ತಾಹ’ ನ.14ರಿಂದ first appeared on ವಿಜಯವಾಣಿ .
ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿ
ಹುಕ್ಕೇರಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಶಾಲೆಯಲ್ಲಿ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕೆಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು. ಪಟ್ಟಣದ ಎಸ್.ಕೆ ಪಬ್ಲಿಕ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಬೌದ್ಧಿಕ ಬೆಳವಣಿಗೆಗೆ ಶಾರೀರಿಕ ಕ್ಷಮತೆ ಅವಶ್ಯ. ಮೊಬೈಲ್, ಟಿವಿ ಹಾವಳಿಯಲ್ಲಿ ಮಕ್ಕಳ ಕ್ರಿಯಾಶೀಲತೆ ಹಾಳಾಗುತ್ತಿದ್ದು, ಪಾಲಕರು ಮಕ್ಕಳ ಆಟೋಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಪಿಂಟು […] The post ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿ first appeared on ವಿಜಯವಾಣಿ .
ಚಿಕ್ಕೋಡಿ: ಹಿರಿಯರು ಕಟ್ಟಿ ಬೆಳೆಸಿದ ಬಿಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರ ಹಿತಾಸಕ್ತಿಗಾಗಿ ಹೊಸ ಯೋಜನೆ ಜಾರಿಗೆ ತಂದು ಸಹಕಾರ ಕ್ಷೇತ್ರ ಬಲಪಡಿಸುವುದೇ ನನ್ನ ಧ್ಯೇಯವಾಗಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ತಾಲೂಕಿನ ಯಕ್ಸಂಬಾ ಶ್ರೀ ಬೀರೇಶ್ವರ ಕಚೇರಿ ಆವರಣದಲ್ಲಿ ನೂತನವಾಗಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಹಾಗೂ ಜಿಲ್ಲೆಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯ ಸದಸ್ಯರಿಂದ ಬುಧವಾರ ಸನ್ಮಾನ […] The post ಬಿಡಿಸಿಸಿ ಪ್ರಗತಿಗೆ ಪ್ರಯತ್ನ first appeared on ವಿಜಯವಾಣಿ .
ಸತ್ಯ-ಅಸತ್ಯದ ಅರಿವು ಮೂಡಿಸಿದ ಸಂತ ಕನಕ
ಉಪನ್ಯಾಸಕಿ ನಾಗರತ್ನಾ ಹೆಗಡೆ ಅನಿಸಿಕೆ ಕನಕದಾಸ ಜಯಂತಿ ಕಾರ್ಯಕ್ರಮ ವಿಜಯವಾಣಿ ಸುದ್ದಿಜಾಲ ಉಡುಪಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿದರು. ಸಮಾಜದಲ್ಲಿ ಶಾಂತಿ, ಸಮಾನತೆ, ಭ್ರಾತೃತ್ವ ಸಾರಲು ಜೀವನ ಮುಡಿಪಾಗಿಟ್ಟಿದ್ದರು. ಜೀವಿತಾವಧಿಯಲ್ಲಿ ಉಡುಪಿಗೂ ಆಗಮಿಸಿದ್ದ ಕನಕದಾಸ, ಹಳ್ಳಿ ಹಳ್ಳಿಗೆ ಸಂಚರಿಸಿ ಜನರಿಗೆ ಸತ್ಯ-ಅಸತ್ಯದ ಅರಿವು ಮೂಡಿಸಿದ್ದರು ಎಂದು ಉಪನ್ಯಾಸಕಿ ನಾಗರತ್ನಾ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು. ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಆಯೋಜಿಸಿದ್ದ ಕನಕದಾಸ […] The post ಸತ್ಯ-ಅಸತ್ಯದ ಅರಿವು ಮೂಡಿಸಿದ ಸಂತ ಕನಕ first appeared on ವಿಜಯವಾಣಿ .
ಗುಡ್ಡಾಪುರ ದಾನಮ್ಮದೇವಿ ಜಾತ್ರೆ 18ರಿಂದ
ಅಥಣಿ: ಸಮೀಪದ ಗುಡ್ಡಾಪುರ ದಾನಮ್ಮ ದೇವಿಯ ಕಾರ್ತಿಕಮಾಸದ ಜಾತ್ರಾ ಮಹೋತ್ಸವ ನ.18ರಿಂದ 20ರ ವರೆಗೆ ಜರುಗಲಿದೆ. ನ.18ರಂದು ಬೆಳಗ್ಗೆ 11 ಗಂಟೆಗೆ ಮಹಾಪ್ರಸಾದ ದಾಸೋಹ ಸೇವೆಯ ಪೂಜೆ ಕಾರ್ಯಕ್ರಮ ಜರುಗಲಿದೆ. ಗುಡ್ಡಾಪುರ ಹಿರೇಮಠ ಸಂಸ್ಥಾನದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮತ್ತು ಗೌಡಗಾಂವದ ಡಾ.ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನ.19ರಂದು ಸಂಜೆ 7ರಿಂದ 9 ಗಂಟೆಯವೆರಗೆ ಕಾರ್ತಿಕ ದೀಪೋತ್ಸವ ಪೂಜೆ ಮತ್ತು ದಾನಮ್ಮ ದೇವಿ ಪಲ್ಲಕ್ಕಿ ಉತ್ಸವವು ನಡೆಯಲಿದೆ. ಗುರುಪಾದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮನಗೂಳಿಯ […] The post ಗುಡ್ಡಾಪುರ ದಾನಮ್ಮದೇವಿ ಜಾತ್ರೆ 18ರಿಂದ first appeared on ವಿಜಯವಾಣಿ .
ಶಮಿಯಂತಹ ಬೌಲರ್ ಅಪರೂಪ ಆದರೆ…ನಾಯಕ ಶುಭಮಾನ್ ಗಿಲ್ ಹೇಳಿಕೆ ವೈರಲ್! Shubman Gill
ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಶುಕ್ರವಾರದಿಂದ ಕೋಲ್ಕತದ ಈಡನ್ ಗಾರ್ಡನ್ಸ್ನಲ್ಲಿ ಆರಂಭವಾಗಲಿದೆ. ತಂಡಕ್ಕೆ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡದಿದ್ದಕ್ಕೆ ಈಗಾಗಲೇ ಭಾರಿ ಟೀಕೆಗಳು ಎದುರಾಗಿವೆ. ಇದೇ ವಿಚಾರವಾಗಿ ನಾಯಕ ಶುಭಮಾನ್ ಗಿಲ್ ( Shubman Gill ) ಪಂದ್ಯದ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದರು. ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿರುವ ಶಮಿ, ಮತ್ತೆ ತಂಡಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಸದ್ಯ ಫಿಟ್ ಆಗಿದ್ದು […] The post ಶಮಿಯಂತಹ ಬೌಲರ್ ಅಪರೂಪ ಆದರೆ… ನಾಯಕ ಶುಭಮಾನ್ ಗಿಲ್ ಹೇಳಿಕೆ ವೈರಲ್! Shubman Gill first appeared on ವಿಜಯವಾಣಿ .
ರಾಯಬಾಗ: ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಚಾರ ಸುಗಮವಾಗುವುದರಿಂದ ಆರ್ಥಿಕ ಪ್ರಗತಿಯ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ರಾಯಬಾಗ-ಜಲಾಲಪುರ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಹಾಗೂ ಜಿಪಂ ಅನುದಾನದಲ್ಲಿ ತಾಲೂಕಿನ ಬಾವನಸೌಂದತ್ತಿ ಮತ್ತು ಸೌಂದತ್ತಿವಾಡಿಗಳಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮಗುವಿನ ಕಲಿಕೆಗೆ ಮೊದಲ ಹೆಜ್ಜೆಯಾದ ಅಂಗನವಾಡಿ ಕೇಂದ್ರಗಳನ್ನು ಸುಂದರವಾಗಿ ನಿರ್ಮಿಸಲಾಗಿದ್ದು, ಸಿಬ್ಬಂದಿ ಮಗುವಿನ ಕಲಿಕೆಗೆ ಪೂರಕ ವಾತಾವರಣ […] The post ರಸ್ತೆ ಸುಧಾರಣೆಯಿಂದ ಅಭಿವೃದ್ಧಿ first appeared on ವಿಜಯವಾಣಿ .
ಸಂಕೇಶ್ವರ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಶಾಲಾ-ಕಾಲೇಜು ಮಟ್ಟದಲ್ಲಿ ಗುರುತಿಸಿ ಬೆಳೆಸಿದ್ದೆ ಆದಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು. ಸಮೀಪದ ನಿಡಸೋಸಿ ಎಸ್ಎನ್ಜೆಪಿಎನ್ಎಂಎಸ್ ಟ್ರಸ್ಟ್ನ ಬಿಸಿಎ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಪ್ರತಿಭಾ ಶೋಧ ಆಹ್ವಾನ 1.0 ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಅವಕಾಶ ಸದುಪಯೋಗಪಡೆದುಕೊಂಡು ಯಶಸ್ಸಿನ ಪಥದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ […] The post ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಲಿ first appeared on ವಿಜಯವಾಣಿ .
Kick start morning: ಬೆಳಗಿನ ಆರಂಭವು ಇಡೀ ದಿನವನ್ನು ಕಳೆಯಲು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ನಮ್ಮ ಬೆಳಿಗ್ಗೆ ಹೇಗೆ ಪ್ರಾರಂಭವಾಗುತ್ತದೆಯೋ, ಅದು ಇಡೀ ದಿನವನ್ನು ನಿರ್ಧರಿಸುತ್ತದೆ. ಹಾಗೆಯೇ, ಕೆಲವರು ಬೆಳಿಗ್ಗೆ ಚಹಾ, ಕಾಫಿಯೊಂದಿಗೆ ಪ್ರಾರಂಭಿಸಿದರೆ, ಇನ್ನೂ ಕೆಲವರು ಆರೋಗ್ಯಕರ ಹಣ್ಣಿನ ರಸದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ನಟಿ ಅಮೃತಾ ಫಡ್ನವೀಸ್ ತಮ್ಮ ಬೆಳಗ್ಗೆಯನ್ನು ಅರಿಶಿನ ಮತ್ತು ಕರಿಮೆಣಸಿನ ನೀರಿನೊಂದಿಗೆ ದಿನವನ್ನು ಪ್ರಾರಂಭಿಸುವುದಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಇವರು ಬೆಳಿಗ್ಗೆ ಖಾಲಿ […] The post ಅರಿಶಿಣ ನೀರು ಮತ್ತು ಮೆಣಸಿನ ನೀರಿನಿಂದ ದಿನ ಪ್ರಾರಂಭಿಸುತ್ತಾರಂತೆ ಮಹಾರಾಷ್ಟ್ರ ಸಿಎಂ ಪತ್ನಿ…! ಕಾರಣವೇನು..? Kick start morning first appeared on ವಿಜಯವಾಣಿ .
ನ. 16ರಂದು ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅವಕಾಶ; ಷರತ್ತು ವಿಧಿಸಿ ಹೈಕೋರ್ಟ್ ಆದೇಶ| RSS
ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಫಥಸಂಚಲನಕ್ಕೆ ನ. 16ರಂದು ಷರತ್ತು ಬದ್ದ ಅವಕಾಶ ನೀಡಿ ಕಲಬುರಗಿ ಹೈಕೋರ್ಟ್ ಪೀಠ ಆದೇಶ ನೀಡಿದೆ. ಚಿತ್ತಾಪುರದಲ್ಲಿ ನ. 02ರಂದು ನಡೆಸಲು ಉದ್ದೇಶಿಸಲಾಗಿದ್ದ ಆರೆಸ್ಸೆಸ್ ಪಥಸಂಚಲನಕ್ಕೆ ತಹಸೀಲ್ದಾರ್ ಅವಕಾಶ ನೀಡಿರಲಿಲ್ಲ. ತಹಶೀಲ್ದಾರ್ ಆದೇಶ ಪ್ರಶ್ನಿಸಿ ಅಶೋಕ ಪಾಟೀಲ್ ಎಂಬುವರು ಹೈಕೋರ್ಟ್ ಮೋರೆ ಹೋಗಿದ್ದರು. ಅಲ್ಲದೇ ಅಂದೇ ಅವಕಾಶ ನೀಡಲು ಇತರೆ ಸಂಘಟನೆಗಳು ಕೋರಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಶಾಂತಿ […] The post ನ. 16ರಂದು ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅವಕಾಶ; ಷರತ್ತು ವಿಧಿಸಿ ಹೈಕೋರ್ಟ್ ಆದೇಶ| RSS first appeared on ವಿಜಯವಾಣಿ .
ಕಾಲುಗಳನ್ನು ಅಡ್ಡ ಹಾಕಿ ಮಲಗುವುದರಿಂದ ನಿಮ್ಮ ಜೀವಿತಾವಧಿ ಕಡಿಮೆಯಾಗುತ್ತದೆಯೇ? | Legs Crossed
ಬೆಂಗಳೂರು: ಹಿಂದು ಧರ್ಮದಲ್ಲಿ ಕಾಲುಗಳನ್ನು ಅಡ್ಡಹಾಕಿ(Legs Crossed) ಮಲಗುವುದು ಮತ್ತು ಅಡ್ಡಹಾಕಿ ಕುಳಿತುಕೊಳ್ಳವುದು ಸಾಮಾನ್ಯವಾಗಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಶಾಸ್ತ್ರಗಳಿಂದಲೂ ಮತ್ತು ದೃಷ್ಠಿಯಿಂದಲೂ ಇದನ್ನು ಅಶುಭ ಎಂದೇ ನಂಬಲಾಗಿದೆ. ಆದಾಗ್ಯೂ, ಕಾಲುಗಳನ್ನಜು ಅಡ್ಡ ಹಾಕಿ ಮಲಗುವುದು ಮತ್ತು ಕುಳಿತುಕೊಳ್ಳುವುದು ಸರಿಯೋ ಅಥವಾ ತಪ್ಪೋ ಎಂಬುದು ನೋಡೋಣ.. ಪುರಾಣಗಳ ಪ್ರಕಾರ, ಭಗವಂತ ಶ್ರೀಕೃಷ್ಣನೂ ತನ್ನ ಪಾದದ ಮೇಲೆ ಒಂದು ರತ್ನವನ್ನು ಧರಿಸಿದ್ದನು.ಅದು ಯಾವಗಲೂ ಹೊಳೆಯುತ್ತಿತ್ತು. ಒಂದು ದಿನ ಶ್ರೀಕೃಷ್ಣನು ಕಾಡಿನಲ್ಲಿ ಕಾಲುಗಳನ್ನು ಅಡ್ಡ-ಹಾಕಿ ಮಲಗಿಕೊಂಡಿದ್ದನು. ಭೇಟೆಗಾನೊಬ್ಬನಿಗೆ ಪಾದದ […] The post ಕಾಲುಗಳನ್ನು ಅಡ್ಡ ಹಾಕಿ ಮಲಗುವುದರಿಂದ ನಿಮ್ಮ ಜೀವಿತಾವಧಿ ಕಡಿಮೆಯಾಗುತ್ತದೆಯೇ? | Legs Crossed first appeared on ವಿಜಯವಾಣಿ .
ಕಪ್ಪು ಶಿಲೀಂಧ್ರ ಹೊಂದಿರುವ ಈರುಳ್ಳಿಯನ್ನು ಎಸೆಯಬೇಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ! Black Fungus Onions
Black Fungus Onions : ಈರುಳ್ಳಿಯ ಹೊರಪದರದಲ್ಲಿ ಕಪ್ಪು ಪುಡಿಯಂತಹ ವಸ್ತುವಿರುವುದನ್ನು ನೀವು ನೋಡಿದ್ದೀರಾ? ಈ ಕಣಗಳು ಕೊಳಕಲ್ಲ. ಇದು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲ್ಪಡುವ ಒಂದು ರೀತಿಯ ಶಿಲೀಂಧ್ರವಾಗಿದೆ. ಇತ್ತೀಚಿಗೆ ಮಾರಕಟ್ಟೆಯಲ್ಲಿ ಸಿಗುವಂತಹ ಎಲ್ಲಾ ಈರುಳ್ಳಿಗಳೂ ಕೂಡಾ ಈ ಕಪ್ಪು ಕಣವನ್ನು ಹೊಂದಿರುತ್ತವೆ, ಈ ಬಗ್ಗೆ ವೈದ್ಯರೊಬ್ಬರು ಮಾಡಿದ ಪೋಸ್ಟ್ ಆಹಾರ ಸುರಕ್ಷತಾ ಪದ್ಧತಿಗಳ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ ಎಂದರೆ ತಪ್ಪಾಗದು. ಡಾ. ನಂದಿತಾ ಅಯ್ಯರ್ ತಮ್ಮ ಎಕ್ಸ್ ಖಾತೆಯಲ್ಲಿ ಕಪ್ಪು ಶಿಲೀಂಧ್ರವನ್ನು ಹೊಂದದೆ […] The post ಕಪ್ಪು ಶಿಲೀಂಧ್ರ ಹೊಂದಿರುವ ಈರುಳ್ಳಿಯನ್ನು ಎಸೆಯಬೇಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ! Black Fungus Onions first appeared on ವಿಜಯವಾಣಿ .
ಮುಂಬರುವ ಐಪಿಎಲ್ ಸೀಸನಗೂ ಮುನ್ನವೇ KKR ದೊಡ್ಡ ನಿರ್ಧಾರ: ಚಾಂಪಿಯನ್ ತಂಡ ಸೇರಿದ ಶೇನ್ ವ್ಯಾಟ್ಸನ್!
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್ಗೂ ಮುನ್ನ ಕೋಲ್ಕತ ನೈಟ್ ರೈಡರ್ಸ್ ( KKR ) ತಂಡ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೇನೆಂದರೆ, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅವರನ್ನು ತಮ್ಮ ತಂಡದ ಸಹಾಯಕ ಕೋಚ್ ಆಗಿ ಚಾಂಪಿಯನ್ ತಂಡ ನೇಮಕ ಮಾಡಿದೆ. ಅಂದಹಾಗೆ, ವ್ಯಾಟ್ಸನ್ ಅವರು ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ವೇಗಿ ಮತ್ತು ಉತ್ತಮ ಬ್ಯಾಟ್ಸಮನ್ ಕೂಡ. ಇವರು ಕೆಕೆಆರ್ ಮುಖ್ಯ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. […] The post ಮುಂಬರುವ ಐಪಿಎಲ್ ಸೀಸನಗೂ ಮುನ್ನವೇ KKR ದೊಡ್ಡ ನಿರ್ಧಾರ: ಚಾಂಪಿಯನ್ ತಂಡ ಸೇರಿದ ಶೇನ್ ವ್ಯಾಟ್ಸನ್! first appeared on ವಿಜಯವಾಣಿ .
ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆದರೆ ಏನಾಗುತ್ತದೆ ಗೊತ್ತಾ? cold water
cold water: ನಾವೆಲ್ಲರೂ ಬೆಳಿಗ್ಗೆ ಎದ್ದ ತಕ್ಷಣ ಖ ತೊಳೆಯುವ ಅಭ್ಯಾಸವನ್ನು ಹೊಂದಿದ್ದೇವೆ. ಇದು ಕೇವಲ ಅಭ್ಯಾಸವಲ್ಲ, ಇದರ ಹಿಂದೆ ನಮ್ಮ ಚರ್ಮ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯ ಅದ್ಭುತ ಪ್ರಯೋಜನಗಳಿವೆ. ತಣ್ಣೀರಿನಿಂದ ಮುಖ ತೊಳೆಯುವುದರಿಂದಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ತಣ್ಣೀರು ನಿಮ್ಮ ಮುಖಕ್ಕೆ ತಗುಲಿದ ತಕ್ಷಣ, ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ನರಗಳು ಉತ್ತೇಜಿತವಾಗುತ್ತವೆ. ಇದು ಬೇಗನೆ ಅರೆನಿದ್ರಾವಸ್ಥೆಯನ್ನು ನಿವಾರಿಸುತ್ತದೆ, ತಕ್ಷಣ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ಹರ್ಷಚಿತ್ತದಿಂದ ಇರಲು ಸಹಾಯ ಮಾಡುತ್ತದೆ. ತಣ್ಣೀರು ಚರ್ಮದ […] The post ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆದರೆ ಏನಾಗುತ್ತದೆ ಗೊತ್ತಾ? cold water first appeared on ವಿಜಯವಾಣಿ .
ದೇಶದ ಅರ್ಧದಷ್ಟು ಜನರು ನನ್ನನ್ನು ಕೊಲ್ಲಲು ಬಯಸಿದ್ದರು: ನಟಿ ಅದಾ ಶರ್ಮಾ ಶಾಕಿಂಗ್ ಹೇಳಿಕೆ! Adah Sharma
ಮುಂಬೈ: 2015ರಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್ನಲ್ಲಿ ‘ರಣವಿಕ್ರಮ’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಯವಾದ ನಟಿ ಯಾರೆಂದರೆ ಅವರೇ ಹಾಟ್ ಬ್ಯೂಟಿ ಅದಾ ಶರ್ಮಾ ( Adah Sharma ). ನೀಳ ಮೈಮಾಟ ಮತ್ತು ಹಾಲಿನ ಬಣ್ಣದ ಚೆಲುವೆಯನ್ನು ಅಷ್ಟೇ ಪ್ರೀತಿಯಿಂದ ನಮ್ಮ ಕನ್ನಡಿಗರು ಸ್ವಾಗತಿಸಿದರು. ಆ ಎರಡು ಸಿನಿಮಾಗಳ ಬಳಿಕ ಅದಾ ಅವರು ಮತ್ತೆ ಕನ್ನಡಕ್ಕೆ ವಾಪಾಸ್ಸಾಗಲೇ ಇಲ್ಲ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ತೊಡಗಿಸಿಕೊಂಡರಾದರೂ, ಬೆರಳಣಿಕೆ […] The post ದೇಶದ ಅರ್ಧದಷ್ಟು ಜನರು ನನ್ನನ್ನು ಕೊಲ್ಲಲು ಬಯಸಿದ್ದರು: ನಟಿ ಅದಾ ಶರ್ಮಾ ಶಾಕಿಂಗ್ ಹೇಳಿಕೆ! Adah Sharma first appeared on ವಿಜಯವಾಣಿ .
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ 12 ಮಂದಿಯ ಸಾವಿಗೆ ಕಾರಣವಾದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಂಕಿತ ಉಗ್ರರ ಜೊತೆಗಿನ ಸಂಬಂಧ ಹೊಂದಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ(Al-Falah University) ಹಣಕಾಸು ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯಕ್ಕೆ(ED) ಆದೇಶಿಸಿದೆ ಎಂದು ವರದಿಯಾಗಿದೆ. ನ. 10ರಂದು ನಡೆಸಿದ ಸ್ಫೋಟದ ಪಿತೂರಿಯನ್ನು ಅದೇ ವಿವಿಯಲ್ಲಿ ರೂಪಿಸಲಾಗಿತ್ತು ಎಂದು ಆರೋಪಿಸಲಾಗಿದೆ.ಕೇಂದ್ರವು ಈಗ ಅಲ್ ಫಲಾಹ್ ವಿಶ್ವವಿದ್ಯಾಲಯದ ಖಾತೆಗಳ ವಿಧಿವಿಜ್ಞಾನ ಲೆಕ್ಕಪರಿಶೋಧನೆಯನ್ನು ಕೋರಿದ್ದು, ಜೊತೆಗೆ ಆರ್ಥಿಕ ಅಪರಾಧಗಳ ವಿಭಾಗಕ್ಕೆ […] The post ದೆಹಲಿ ಕಾರು ಸ್ಫೋಟ; ಅಲ್-ಫಲಾಹ್ ವಿವಿಯ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ| Al-Falah University first appeared on ವಿಜಯವಾಣಿ .
personality test: ಮುಖದ ಲಕ್ಷಣಗಳು ವ್ಯಕ್ತಿಯ ಸ್ವಭಾವ, ಆಲೋಚನೆ ಮತ್ತು ಅದೃಷ್ಟಕ್ಕೆ ಸಂಬಂಧಿಸಿವೆ. ಅದೇ ರೀತಿ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಣೆಯ ಆಕಾರವು ವ್ಯಕ್ತಿಯ ಬುದ್ಧಿವಂತಿಕೆ, ಅದೃಷ್ಟ ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಹಣೆಯ ಆಕಾರವು ವ್ಯಕ್ತಿತ್ವದ ಬಗ್ಗೆ ಏನು ಬಹಿರಂಗಪಡಿಸುತ್ತದೆ ಎಂಬುದನ್ನು ತಿಳಿಯಿರಿ…. ಸಣ್ಣ ಹಣೆ: ಸಣ್ಣ ಅಥವಾ ಕಿರಿದಾದ ಹಣೆಯನ್ನು ಹೊಂದಿರುವವರು ಬೇಗನೆ ಪ್ರತಿಕ್ರಿಯಿಸುವ ಮತ್ತು ಭಾವನಾತ್ಮಕವಾಗಿರುತ್ತಾರೆ. ಅವರು ಇತರರ ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಸಂಬಂಧಗಳಲ್ಲಿ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುತ್ತಾರೆ. ಅವರು ಸೂಕ್ಷ್ಮತೆ ಮತ್ತು ಸ್ನೇಹವನ್ನು […] The post ನಿಮ್ಮ ಹಣೆಯ ಆಕಾರವು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ! ನಿಮ್ಮ ಅದೃಷ್ಟದ ರಹಸ್ಯ ತಿಳಿದುಕೊಳ್ಳಿ… personality test first appeared on ವಿಜಯವಾಣಿ .
ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂ: ಇದು ನಮಗೆ ಸಿಕ್ಕ ನ್ಯಾಯ: DK ಶಿವಕುಮಾರ್
ಬೆಂಗಳೂರು: ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು, ನ್ಯಾಯ ಪೀಠದಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ” ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ಮೇಕೆದಾಟು ಯೋಜನೆ ಡಿಪಿಆರ್ ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಇದರಿಂದ ತಮಿಳುನಾಡಿಗೆ ಹಿನ್ನಡೆಯಾಗಿದೆಯಲ್ಲಾ ಎಂದು ಕೇಳಿದಾಗ, “ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕ ನಂತರ ವಿವರವಾಗಿ ಮಾತನಾಡುತ್ತೇನೆ. ಇದು ಯಾವುದೇ ರೀತಿಯ ಹಿನ್ನಡೆಯಲ್ಲ. ಬದಲಿಗೆ ನ್ಯಾಯ […] The post ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂ: ಇದು ನಮಗೆ ಸಿಕ್ಕ ನ್ಯಾಯ: DK ಶಿವಕುಮಾರ್ first appeared on ವಿಜಯವಾಣಿ .
ದೇಹವನ್ನು ಫಿಟ್ ಆಗಿರಿಸಲು ಈ ಆಹಾರಗಳನ್ನು ಸೇವಿಸಿರಿ! Fitness food
Fitness food: ಇಂದಿನ ದಿನಗಳಲ್ಲಿ ಜನರು ಫಿಟ್ ಆಗಿರಲು ಬಯಸುತ್ತಾರೆ. ಹಾಗಾಗಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೂ, ಫಿಟ್ ಆಗಿರಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಚಿಕಿತ್ಸೆಗೆ ಒಳಗಾಗುತ್ತಾರೆ. ಹಾಗಾಗಿ ದೇಹವನ್ನು ಫಿಟ್ ಆಗಿರಲು ಬಯಸುವವರು ಈ ರೀತಿಯ ಆಹಾರಗಳನ್ನು ಸೇವಿಸುವುದರಿಂದ ಫಿಟ್ ಆಗಿರಬಹುದು. 1. ಓಟ್ಸ್ ಸ್ಮೂಥಿ ಬೇಕಾಗುವ ಪದಾರ್ಥಗಳು * 1 ಕಪ್ ಓಟ್ಸ್ (ರಾತ್ರಿ ನೆನಸಿಡಿ) * 1 ಬಾಳೆಹಣ್ಣು * 1 ಕಪ್ ಸ್ಟ್ರಾಬೆರಿ, ಬ್ಲೂಬೆರಿ ಹಣ್ಣು * 1 […] The post ದೇಹವನ್ನು ಫಿಟ್ ಆಗಿರಿಸಲು ಈ ಆಹಾರಗಳನ್ನು ಸೇವಿಸಿರಿ! Fitness food first appeared on ವಿಜಯವಾಣಿ .

21 C