‘ಭೀಮಣ್ಣ ಖಂಡ್ರೆ ಪ್ರಶಸ್ತಿ’ಗೆ ರಾಮು ಪಾಟೀಲ್ ಆಯ್ಕೆ : ಶಿವಾನಂದ ತಗಡೂರು
ಬೆಂಗಳೂರು : ಸ್ವಾತಂತ್ರ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೆಸರಿನಲ್ಲಿ ಅವರ ಪುತ್ರ, ಸಚಿವ ಈಶ್ವರ ಖಂಡ್ರೆ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 3 ಲಕ್ಷ ರೂ.ದತ್ತಿ ನಿಧಿ ಸ್ಥಾಪನೆ ಮಾಡಿದ್ದು, ಮೊದಲ ಪ್ರಶಸ್ತಿಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಸಹಾಯಕ ಸ್ಥಾನಿಕ ಸಂಪಾದಕ ರಾಮು ಪಾಟೀಲ್ರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಕಲಬುರ್ಗಿ ಜಿಲ್ಲೆ ಸೇಡಂನ ರಾಮು ಪಾಟೀಲ್ 1997ರಲ್ಲಿ ಪತ್ರಿಕೋದ್ಯಮ ಪ್ರವೇಶ ಮಾಡಿದರು. ವೀಕ್ ಪತ್ರಿಕೆ, ಮಸ್ಕತ್ ಡೈಲಿಯಲ್ಲಿ ಸೇವೆ ಸಲ್ಲಿಸಿ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮುಖ್ಯ ವರದಿಗಾರರಾಗಿ ಸೇರ್ಪಡೆಗೊಂಡರು. ಸತತ 25 ವರ್ಷಗಳ ವೃತ್ತಿ ಸೇವೆ ಮಾಡಿರುವ ಅವರು ಈಗಲೂ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ನ ಸಹಾಯಕ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೀದರ್ನಲ್ಲಿ ಎ.11 ಮತ್ತು 12ರಂದು ನಡೆಯಲಿರುವ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಲಿಂಗಸುಗೂರು ಸಿದ್ರಾಮಪ್ಪ ಪ್ರಶಸ್ತಿ : ಲಿಂಗಸುಗೂರು ಸಿದ್ರಾಮಪ್ಪ ಹೆಸರಿನಲ್ಲಿ ಹೊಸದಾಗಿ ಅವರು ಪುತ್ರ ಶಿವರಾಜ ಕೆಂಭಾವಿ ಸ್ಥಾಪನೆ ಮಾಡಿರುವ ಪ್ರಶಸ್ತಿಗೆ ಹಾಸನ ಜಿಲ್ಲೆ ಹಾಸನವಾಣಿ ಪತ್ರಿಕೆ ಬೇಲೂರು ತಾಲೂಕು ವರದಿಗಾರರಾದ ಭಾರತಿಗೌಡ ಮತ್ತು ವಿಜಯಪುರ ಜಿಲ್ಲೆ ಸುವರ್ಣ ನ್ಯೂಸ್ ಟಿವಿ ಜಿಲ್ಲಾ ವರದಿಗಾರರಾದ ಷಡಾಕ್ಷರಿ ಬಸವರಾಜು ಕಂಪೂನವರ(ಷಡಾಕ್ಷರಿ ಬಿ.ಕಂಪೂನವರ) ಅವರು ಆಯ್ಕೆ ಯಾಗಿದ್ದಾರೆ.
ಫಿಡೆ ಚೆಸ್ ಕ್ಯಾಂಡಿಡೇಡ್ಸ್ ಟೂರ್ನಿ: ಫ್ಯಾಬಿಯಾನೊಗೆ ಸೋಲಿನ ಕಹಿ ಉಣಿಸಿದ ಸಿಂದಾರೋವ್
ಚೆನ್ನೈ: ಉಜ್ಬೇಕಿಸ್ತಾನದ 20ರ ವಯಸ್ಸಿನ ಆಟಗಾರ ಜಾವೋಖಿರ್ ಸಿಂದಾರೋವ್ ಬುಧವಾರ ಸೈಪ್ರಸ್ ನಲ್ಲಿ ನಡೆದ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ವಿಶ್ವದ ನಂ.3ನೇ ಆಟಗಾರ ಫ್ಯಾಬಿಯಾನೊ ಕರುವಾನಾರನ್ನು ಸೋಲಿಸಿ ಆಘಾತ ನೀಡಿದರು. ವಿಶ್ವದ ನಂ.11ನೇ ಆಟಗಾರನಾಗಿರುವ ಸಿಂದಾರೋವ್ ನಾಲ್ಕು ಸುತ್ತುಗಳ ಪಂದ್ಯಗಳ ನಂತರ 3.5 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ‘‘ನಾನು ಕರುವಾನಾ ವಿರುದ್ಧ ಉತ್ತಮ ಆಟ ಆಡಿದೆ. ನನ್ನ ಅವಕಾಶದ ಬಗ್ಗೆ ನನಗೆ ವಿಶ್ವಾಸವಿತ್ತು. ಆದರೆ ಆಟದ ಮಧ್ಯದಲ್ಲಿ ಕೆಲವು ತಪ್ಪುಗಳನ್ನು ಮಾಡಿರಬಹುದು’’ ಎಂದು ಸಿಂದಾರೋವ್ ಅವರು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉಜ್ಬೇಕಿಸ್ತಾನವು ಫಿಡೆ ವರ್ಲ್ಡ್ ರ್ಯಾಪಿಡ್ ಹಾಗೂ ಬ್ರಿಟ್ಜ್ ಹಾಗೂ ಗ್ರ್ಯಾಂಡ್ ಸ್ವಿಸ್ನಂತಹ ಪ್ರಮುಖ ಟೂರ್ನಿಗಳನ್ನು ಆಯೋಜಿಸಲು ಆರಂಭಿಸಿರುವ ಸಮಯದಲ್ಲಿ ಸಿಂದಾರೋವ್ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ‘‘ಕಳೆದ ಎರಡರಿಂದ ಮೂರು ವರ್ಷಗಳಲ್ಲಿ ಸರಕಾರದ ಬೆಂಬಲ ನಿಜವಾಗಿಯೂ ಉತ್ತಮವಾಗಿತ್ತು. ಸರಕಾರವು ಅತ್ಯುತ್ತಮ ತರಬೇತುದಾರರೊಂದಿಗೆ ಕೆಲಸ ಮಾಡುವ ಅವಕಾಶಗಳನ್ನು ಸೃಷ್ಟಿಸಿದೆ. ಈ ಟೂರ್ನಿಯು ನಮಗೆ ಕಲಿಯಲು ಹಾಗೂ ಉತ್ತಮವಾಗಿ ಪ್ರದರ್ಶನ ನೀಡಲು ನೆರವಾಗುತ್ತದೆ. ಒಲಿಂಪಿಯಾಡ್ಗಗಿ ನಾವು ಬಲಿಷ್ಠ ತಂಡವನ್ನು ಹೊಂದಿದ್ದೇವೆ’’ಎಂದು ಸಿಂದಾರೋವ್ ಹೇಳಿದ್ದಾರೆ. ಪ್ರಸಕ್ತ ಟೂರ್ನಿಯ ಮೂರನೇ ಸುತ್ತಿನಲ್ಲಿ ಕಪ್ಪುಕಾಯಿಗಳಿಂದ ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದರನ್ನು ಸೋಲಿಸಿದ್ದ ಸಿಂದಾರೋವ್ ಎಲ್ಲರ ಗಮನ ಸೆಳೆದಿದ್ದರು. ಗರಿಷ್ಠ ರ್ಯಾಂಕಿನ ಆಟಗಾರ ಕರುವಾನಾ ವಿರುದ್ಧದ ಪಂದ್ಯದಲ್ಲೂ ಅದೇ ಹಿಡಿತವನ್ನು ಕಾಯ್ದುಕೊಂಡರು. ‘‘ನಾನು 3.5 ಅಂಕ ಗಳಿಸುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ಆದರೆ ನಾನು ಚೆನ್ನಾಗಿ ತಯಾರಿ ನಡೆಸಿದ್ದೆ. ಉಳಿದ ಸುತ್ತುಗಳಲ್ಲಿ ಪೂರ್ಣ ಏಕಾಗ್ರತೆಯೊಂದಿಗೆ ಆಡಬೇಕಾಗಿದೆ’’ ಎಂದು ಸಿಂದಾರೋವ್ ಹೇಳಿದ್ದಾರೆ. ಸಿಂದಾರೋವ್ 2025ರ ಫಿಡೆ ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ತಮ್ಮದೇ ದೇಶದ ಯಾಕುಬ್ಬೋವ್ ಹಾಗೂ ಫೈನಲ್ನಲ್ಲಿ ಚೀನಾದ ವೀ ಯಿ ಅವರನ್ನು ಸೋಲಿಸಿದ ನಂತರ 2026ರ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದರು. ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಜಯಶಾಲಿಯಾಗುವ ಆಟಗಾರ ವಿಶ್ವ ಚಾಂಪಿಯನ್ ಡಿ.ಗುಕೇಶ್ರನ್ನು ಎದುರಿಸಲಿದ್ದಾರೆ.
ಕೆಪಿಸಿಎಲ್ನಲ್ಲಿ 233 ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ : ಗೌರವ್ ಗುಪ್ತ
ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್)ದಲ್ಲಿ ಭರ್ತಿ ಮಾಡಲಾಗುತ್ತಿರುವ 622 ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿ ಕೌನ್ಸ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ತಿಳಿಸಿದ್ದಾರೆ. ಗುರುವಾರ ನಡೆದ ಕೌನ್ಸಿಲಿಂಗ್ ನಲ್ಲಿ ಆಯ್ಕೆಯಾದ 20 ಸಹಾಯಕ ಇಂಜಿನಿಯರ್ (ಸಿವಿಲ್), 38 ಸಹಾಯಕ ಇಂಜಿನಿಯರ್ (ಇಲೆಕ್ಟ್ರಿಕಲ್), 20 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್), 27 ಸಹಾಯಕ ಇಂಜಿನಿಯರ್ (ಇನ್ ಸ್ಟ್ರುಮೆಂಟೇಷನ್), 13 ಕಿರಿಯ ಎಂಜಿನಿಯರ್ (ಸಿವಿಲ್), 61 ಸಹಾಯಕ ಇಂಜಿನಿಯರ್ (ಇಲೆಕ್ಟ್ರಿಕಲ್), 41 ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್), 2 ಕೆಮಿಸ್ಟ್ ಹಾಗೂ 11 ಕೆಮಿಕಲ್ ಸೂಪರ್ ವೈಸರ್ ಹುದ್ದೆಗಳ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಉಳಿದ ಹುದ್ದೆಗಳಿಗೆ ದಾಖಲೆಗಳ ನೈಜತೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಬಳಿಕ ನೇಮಕಾತಿ ಆದೇಶ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ, ಇಂಧನ ಸಚಿವರ ಸಹಕಾರದಿಂದ ಕೆಪಿಸಿಎಲ್ನಲ್ಲಿ ಈ ನೇಮಕಾತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. 233 ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ. ನಿಗಮಕ್ಕೆ ನೇಮಕಗೊಂಡಿರುವ ಯುವ ಇಂಜಿನಿಯರ್ ಗಳು ತಮ್ಮ ಕೌಶಲ್ಯದಿಂದ ಕೆಪಿಸಿಎಲ್ನ ಪ್ರತಿಷ್ಟೇ ಹೆಚ್ಚಿಸಬೇಕು. ನೀವು ಬಂದಿರುವುದರಿಂದ ನಿಗಮದಲ್ಲಿ ಉತ್ತಮ ಬದಲಾವಣೆಗಳಾಗಬೇಕು ಎಂದು ಅವರು ಕರೆ ನೀಡಿದರು. ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ವಿದ್ಯುತ್ ಉತ್ಪಾದನೆಯಲ್ಲಿ ನಿಗಮನನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯವ ಪ್ರಯತ್ನ ನಿಮ್ಮಿಂದ ಆಗಬೇಕು. ಹೊಸದಾಗಿ ನೇಮಕಗೊಂಡಿರುವವರಿಗೆ ಉನ್ನತ ಹುದ್ದೆಗೇರಲು ಸಾಕಷ್ಟು ಅವಕಾಶಗಳಿದ್ದು, ನಿಗಮದಿಂದ ನೀವೇನು ಪಡೆದಿದ್ದೀರಿ ಎಂಬುದಕ್ಕಿಂತ ನಿಗಮಕ್ಕೆ ನಿಮ್ಮ ಕೊಡುಗೆ ಮುಖ್ಯವಾಗುತ್ತದೆ ಎಂಬುದನ್ನು ತಿಳಿದು ಕೆಲಸ ಮಾಡಬೇಕು ಎಂದು ಗೌರವ್ ಗುಪ್ತ ಸಲಹೆ ಮಾಡಿದರು. ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಎಂ.ಆರ್.ಗಂಗಾಧರ್, ಮಾನವ ಸಂಪನ್ಮೂಲ ನಿರ್ದೇಶಕಿ ರೇಖಾ ಟಿ., ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಡಾ.ಆಶಾ ಎಸ್. ಮತ್ತಿತರರು ಇದ್ದರು.
ಬ್ರಿಟಿಷರು, ಅಂಬೇಡ್ಕರ್ ಸಹಾಯದಿಂದ ಬುದ್ಧ ಮತ್ತೆ ಪ್ರಚಲಿತಕ್ಕೆ ಬಂದ : ಮೂಡ್ನಾಕೂಡು ಚಿನ್ನಸ್ವಾಮಿ
ಮೈಸೂರು : ಬ್ರಿಟಿಷರು ಮತ್ತು ಅಂಬೇಡ್ಕರ್ ಅವರ ಸಹಾಯದಿಂದ ಭಾರತದಲ್ಲಿ ಬುದ್ದ ಮತ್ತೆ ಪ್ರಚಲಿತಕ್ಕೆ ಬಂದ ಎಂದು ಚಿಂತಕ ಹಾಗೂ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಇನ್ಸ್ಟ್ಟಿಟ್ಯೂಟ್ ಅಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಗುರುವಾರ ಲಡಾಯಿ ಪ್ರಕಾಶನ ಗದಗ, ದಲಿತ ಸಂಘರ್ಷ ಸಮಿತಿ ಮೈಸೂರು, ಮೈಸೂರು ವಿವಿ ಸಂಶೋಧಕ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಉಳುಮೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರ ಬುದ್ಧ ಧಮ್ಮ ಮತ್ತು ಸಮಾಜ ಸುಧಾರಕರು ಹಾಗೂ ಬುದ್ಧ ಧಮ್ಮ ಮತ್ತು ಮಹಿಳೆ ಪುಸ್ತಕ ಬಿಡುಗಡೆಗೊಳಿಸಿ ನಂತರ ಅವರು ಮಾತನಾಡಿದರು. ಬುದ್ಧನ ನಂತರ ಬೌದ್ಧ ಧಮ್ಮ ಸಾವಿರ ವರ್ಷಗಳ ಭಾರತದ ಪ್ರಮುಖ ಧರ್ಮವಾಗಿತ್ತು. ಬೌದ್ಧ ಧಮ್ಮ ನಾಶವನ್ನು ಮುಸಲ್ಮಾನರ ಮೇಲೆ ಹಾಕಲಾಯಿತು. ಆದರೆ ಬ್ರಾಹ್ಮಣ ವಾದದ ಹಗೆತನ ಮತ್ತು ಹಿಂಸಾತ್ಮಕ ರಾಜಕಾರಣ ಅದನ್ನು ನಾಶ ಮಾಡಲು ಪ್ರಯತ್ನಿಸಿತು ಎಂದು ಹೇಳಿದರು. ಬೌದ್ಧ ಧಮ್ಮ ವೈಜ್ಞಾನಿಕವಾದದ್ದು, ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇಂದು ಪ್ರಪಂಚದ ಅನೇಕ ಕಡೆ ಯುದ್ಧ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬುದ್ಧ ಪ್ರಸ್ತುತನಾಗುತ್ತಾನೆ. ಅದಕ್ಕಾಗಿಯೇ ಎಲ್ಲರಿಗೂ ಬುದ್ಧ ಬೇಕು ಎಂದರು. ಬಸವಣ್ಣ ಅವರು ಮತ್ತೊಂದು ಧರ್ಮವನ್ನು ಹುಟ್ಟು ಹಾಕಿದರಾದರೂ ಅವರು ಸಹ ಬುದ್ಧ ತತ್ವವನ್ನೇ ಅನುಸರಿಸಿದ್ದಾರೆ. ಕಳಬೇಡ ಕೊಲಬೇಡ, ಹುಸಿಯ ನುಡಿಯಲೂ ಬೇಡ ಎಂದು ಬಸವಣ್ಣ ಅವರು ಹೇಳಿರುವುದು ಬುದ್ಧನ ಪರಿಕಲ್ಪನೆಯಲ್ಲೇ, ವಚನಕಾರರಿಗೂ ಬುದ್ಧ ಧಮ್ಮ ಸಿಕ್ಕಿತ್ತು ಎನ್ನುವುದಕ್ಕೆ ಅವರ ಬರವಣಿಗೆಗಳೇ ಸಾಕ್ಷಿ ಎಂದು ಎಂದು ಹೇಳಿದರು. ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಚ.ಹ.ರಘುನಾಥ್ ಪುಸ್ತಕ ಪರಿಚಯ ಮಾಡಿಕೊಟ್ಟರು, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮುಖ್ಯ ಅತಿಥಿಗಳಾಗಿದ್ದರು.ಕುಮಾರ್ ಆರ್.ಕೀರ್ತಿ ಎಸ್.ಬೈಂದೂರು, ದೀಪಾ ಬುದ್ಧೆ ಪುಸ್ತಕ ಓದಿನ ಅನುಭವ ಹಂಚಿಕೊಂಡರು. ಲೇಖಕಿ ಡಾ.ಎಚ್.ಎಸ್.ಅನುಪಮಾ, ಲಡಾಯಿ ಪ್ತಕಾಶನದ ಬಸವರಾಜ ಸೂಳಿಭಾವಿ, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ದಲಿತ ವಿದ್ಯಾರ್ಥಿ ಒಕ್ಕೂಟದ ಗಜೇಂದ್ರ ಚಿನ್ನಸ್ವಾಮಿ ಉಪಸ್ಥಿತರಿದ್ದರು. ಲೇಖಕ ಅವಿನಾಶ್ ಟಿಜಿಎಸ್ ಸ್ವಾಗತಿಸಿದರು.
ಕುಕನೂರು | ಮಠದ ಜಮೀನಿನಲ್ಲಿ ಸರಕಾರಿ ಕಟ್ಟಡ ನಿರ್ಮಾಣಕ್ಕೆ ವಿರೋಧ : ಭಕ್ತರ ಆಕ್ರೋಶ
ಕುಕನೂರು : ಪಟ್ಟಣದ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಗುದ್ನೇಶ್ವರ ಮಠದ ರುದ್ರಮುನೀಶ್ವರ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಹುಬ್ಬಳ್ಳಿ-ಧಾರವಾಡ ಭಾಗದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಪಟ್ಟಣದ ಗುದ್ನೇಪ್ಪನ ಮಠದ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಕ್ತರು ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಗದಗ ಜಿಲ್ಲೆಯ ನೀಲಗುಂದ ಗ್ರಾಮದ ಭಕ್ತರಾದ ಬಸಪ್ಪ ಪೂಜಾರ್ ಹಾಗೂ ಪ್ರಭು ಅಂಗಡಿ ಮಾತನಾಡಿ, 2023ರಲ್ಲಿ ಸರ್ವೇ ನಂ.78ರಲ್ಲಿ ಇರುವ ಮಠದ 26 ಎಕರೆ ಭೂಮಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಆದೇಶ ಮಾಡಲಾಗಿದೆ ಎಂದು ಆರೋಪಿಸಿದರು. ಈ ಕ್ರಮದ ವಿರುದ್ಧ 18 ಸೇವಾದಾರರು ನ್ಯಾಯಾಲಯದ ಮೊರೆ ಹೋಗಿದ್ದು, ಭೂ ನ್ಯಾಯಮಂಡಳಿ 40 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಆದೇಶ ನೀಡಿದೆ. ಪ್ರಕರಣ ಧಾರವಾಡ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಪ್ರಸ್ತುತ ಸ್ಟೇ ಆದೇಶ ಜಾರಿಯಲ್ಲಿದೆ ಎಂದರು. ಇದಾದ ಬಳಿಕವೂ ಮತ್ತೆ 17 ಎಕರೆ ಭೂಮಿಯಲ್ಲಿ ಕಾಮಗಾರಿಗಳಿಗೆ ಅನುಮತಿ ಪಡೆಯಲಾಗಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಪ್ರಭು ಅಂಗಡಿ ಮಾತನಾಡಿ, ಶಾಸಕರು ಐದು ವರ್ಷಕ್ಕೊಮ್ಮೆ ಬದಲಾಗುತ್ತಾರೆ; ಆದರೆ ಭಕ್ತರು ಶಾಶ್ವತ. ನ್ಯಾಯಾಲಯದ ಅಂತಿಮ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಆದರೆ ತೀರ್ಪು ಬರುವ ಮೊದಲು ಯಾವುದೇ ಕಾಮಗಾರಿಗಳು ನಡೆಯಬಾರದು,” ಎಂದು ಹೇಳಿದರು. ಮಠದ ಭೂಮಿಯನ್ನು ಧಾರ್ಮಿಕ ಉದ್ದೇಶಗಳಿಗೆ ಮೀಸಲಿಟ್ಟಿರುವುದರಿಂದ ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದಿಲ್ಲ. “ಪ್ರಾಣ ಕೊಡುತ್ತೇವೆ, ಭೂಮಿ ಕೊಡುವುದಿಲ್ಲ,” ಎಂದು ಭಕ್ತರು ಎಚ್ಚರಿಕೆ ನೀಡಿದರು. ಈಗಾಗಲೇ ಮಠದ 214 ಎಕರೆ ಭೂಮಿಯಲ್ಲಿ ನವೋದಯ ಶಾಲೆ, ಐಟಿಐ ಕಾಲೇಜು, ಮುರಾರ್ಜಿ ಶಾಲೆ, ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣಗೊಂಡಿವೆ. ಉಳಿದ ಭೂಮಿಯಲ್ಲಿಯೂ ಕಟ್ಟಡ ನಿರ್ಮಾಣ ಮಾಡಿದರೆ ಜಾತ್ರೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತದೆ ಎಂದು ಹೇಳಿದರು. ಗ್ರಾಮದಲ್ಲಿ ಅನಗತ್ಯ ಭೂ ಮತ್ತು ಮನೆಗಳ ಸರ್ವೇ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಲಾಗುತ್ತಿದೆ ಎಂದು ದೂರಿದರು. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು. ಇಲ್ಲವಾದಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಸರ್ಕಾರ ಮತ್ತು ಜಿಲ್ಲಾ ಆಡಳಿತವೇ ಹೊಣೆ ಎಂದು ಭಕ್ತರು ಎಚ್ಚರಿಸಿದರು. ಬಳಿಕ ಭಕ್ತರು ಕುಕನೂರು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಇರಾನ್ ಮೇಲಿನ ದಾಳಿ ಹಾರ್ಮುಝ್ ತಡೆಗೆ ಮೂಲ ಕಾರಣ: ಚೀನಾ
ಬೀಜಿಂಗ್: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಗಳು ಹಾರ್ಮುಝ್ ಜಲಸಂಧಿಯಲ್ಲಿನ ತಡೆಗೆ ಮೂಲ ಕಾರಣವಾಗಿದೆ ಎಂದು ಚೀನಾ ಗುರುವಾರ ಹೇಳಿದೆ. ಜಲಸಂಧಿ ಮುಚ್ಚುವಿಕೆಯಿಂದ ಬಾಧಿತ ರಾಷ್ಟ್ರಗಳು ಜಲಸಂಧಿಯನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ʼಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ನ ಕಾನೂನುಬಾಹಿರ ಮಿಲಿಟರಿ ಕಾರ್ಯಾಚರಣೆಗಳು ಹಾರ್ಮುಝ್ ಜಲಸಂಧಿಯ ಮೂಲಕ ಸಂಚರಣೆಗೆ ಅಡ್ಡಿಯಾಗಲು ಮೂಲ ಕಾರಣವಾಗಿದೆ. ಕದನ ವಿರಾಮವನ್ನು ಸಾಧಿಸುವ ಮೂಲಕ ಮತ್ತು ಗಲ್ಫ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಗೊಂಡರೆ ಮಾತ್ರ ಅಂತಾರಾಷ್ಟ್ರೀಯ ಹಡಗು ಮಾರ್ಗಗಳಲ್ಲಿ ಸುಗಮ ಸಂಚಾರದ ಹರಿವನ್ನು ಮೂಲಭೂತವಾಗಿ ಖಚಿತಪಡಿಸಿಕೊಳ್ಳಬಹುದು. ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯಲು ಮತ್ತು ಜಾಗತಿಕ ಆರ್ಥಿಕತೆ ಮತ್ತು ಇಂಧನ ಭದ್ರತೆಯ ಮೇಲೆ ಪ್ರಾದೇಶಿಕ ಪ್ರಕ್ಷುಬ್ಧತೆಯ ಮತ್ತಷ್ಟು ಪರಿಣಾಮಗಳನ್ನು ತಡೆಗಟ್ಟಲು ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು' ಎಂದು ಹೇಳಿರುವುದಾಗಿ ವರದಿಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಮೂರು ಪ್ರತ್ಯೇಕ ಅಪಘಾತಗಳು; ನವವಿವಾಹಿತೆ ಸಹಿತ ಇಬ್ಬರ ಮೃತ್ಯು, ಹಲವರಿಗೆ ಗಾಯ
ಚಿಕ್ಕಬಳ್ಳಾಪುರ : ತಾಲೂಕಿನಲ್ಲಿ ವಿವಿಧೆಡೆ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನವವಿವಾಹಿತೆ ಸೇರಿ ಇಬ್ಬರು ಮೃತಪಟ್ಟಿದ್ದು,ಹಲವರು ಗಾಯಗೊಂಡಿದ್ದಾರೆ ಹಲವು ವಾಹನಗಳು ಜಖಂಗೊಂಡಿರುವುದಾಗಿ ವರದಿಯಾಗಿದೆ. ಜಾತ್ರೆಗೆ ತೆರಳುವಾಗ ಭೀಕರ ಅಪಘಾತ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಶೆಟ್ಟಿಗೆರೆ ಗೇಟ್ ಬಳಿ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ನವವಿವಾಹಿತೆ ರಕ್ಷಿತಾ ರೆಡ್ಡಿ (23) ಹಾಗೂ ಪವನ್ ಕುಮಾರ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಗಂಭೀರವಾಗಿ ಗಾಯಗೊಂಡಿರುವ ರಾಜಶೇಖರ್ ರೆಡ್ಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದ ರಕ್ಷಿತಾ ಮತ್ತು ರಾಜಶೇಖರ್ ಬೆಂಗಳೂರಿನಲ್ಲಿ ವಾಸವಿದ್ದು, ಜಾತ್ರೆಗೆ ಅನಂತಪುರಕ್ಕೆ ತೆರಳುವಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಲಾರಿಯ ಹಿಂಭಾಗಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೈಪಾಸ್ ರಸ್ತೆಯಲ್ಲಿ ಸರಣಿ ಅಪಘಾತ: ನಗರದ ಬೈಪಾಸ್ ರಸ್ತೆಯಲ್ಲಿ ಬೆಳಗಿನ ಜಾವ ಎರಡು ಕಾರು,ಎರಡು ಲಾರಿ ಹಾಗೂ ಒಂದು ಸಿಮೆಂಟ್ ಟ್ಯಾಂಕರ್ ನಡುವೆ ಸರಣಿ ಅಪಘಾತ ಸಂಭವಿಸಿದೆ.ಲಾರಿಯ ಟೈಯರ್ ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ಅಡ್ಡವಾಗಿ ನಿಂತಿತ್ತು.ಬಳಿಕ ಸಿಮೆಂಟ್ ಟ್ಯಾಂಕರ್ ಸೇರಿದಂತೆ ಇನ್ನಿತರ ವಾಹನಗಳು ಒಂದರ ಹಿಂದೆ ಒಂದಾಗಿ ಡಿಕ್ಕಿ ಹೊಡೆದವು.ಟ್ಯಾಂಕರ್ ಹಳ್ಳಕ್ಕೆ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡರೂ,ಸ್ಥಳೀಯರು ತಕ್ಷಣವೇ ಬೆಂಕಿಯನ್ನು ನಂದಿಸಿದರು.ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸದಿದ್ದರೂ,ಸಣ್ಣಪುಟ್ಟ ಗಾಯಗಳು ಉಂಟಾಗಿದೆ.ಈ ಅಪಘಾತದಿಂದ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಬಳಿಕ ಸಂಚಾರಿ ಪೊಲೀಸರು ಸಂಚಾರವನ್ನು ನಿಯಂತ್ರಿಸಿದರು. ಒಲ್ವೊ ಬಸ್-ಟಿಪ್ಪರ್ ಢಿಕ್ಕಿ : ತಾಲೂಕಿನ ಬಂಡಹಳ್ಳಿ ಕ್ರಾಸ್ ಬಳಿ ಖಾಸಗಿ ಒಲ್ವೊ ಬಸ್ ಹಾಗೂ ಟಿಪ್ಪರ್ ನಡುವೆ ಮತ್ತೊಂದು ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಟಿಪ್ಪರ್ ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಬಸ್ಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಟಿಪ್ಪರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಪೆರೇಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕುಕನೂರು | ಗ್ರಾಮ-1 ಯೋಜನೆಗೆ ಅರ್ಜಿ ಆಹ್ವಾನ
ಕುಕನೂರು : ತಾಲೂಕಿನ ಮಂಗಳೂರು, ಭಾನಾಪುರ ಹಾಗೂ ಕುದರಿಮೋತಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆ ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಗ್ರೇಡ್-2 ಇಂದ ಗ್ರೇಡ್-1ಕ್ಕೆ ನವೀಕರಿಸಲಾದ ಹಾಗೂ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಹೊಸ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಆಯಾ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತರು ಏಪ್ರಿಲ್ 15ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
200ನೇ IPL ಪಂದ್ಯವನ್ನಾಡಿದ 11ನೇ ಆಟಗಾರ ಅಜಿಂಕ್ಯ ರಹಾನೆ
ಕೋಲ್ಕತಾ: ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ತನ್ನ 200ನೇ ಐಪಿಎಲ್ ಪಂದ್ಯವನ್ನಾಡಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ 200 ಪಂದ್ಯಗಳನ್ನಾಡಿದ 11ನೇ ಆಟಗಾರ ಎನಿಸಿಕೊಂಡರು. ಸಿಎಸ್ಕೆ ತಂಡದ ಎಂ.ಎಸ್. ಧೋನಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು(278)ಆಡಿದ್ದಾರೆ. ಆ ನಂತರ ರೋಹಿತ್ ಶರ್ಮಾ(273 ಪಂದ್ಯಗಳು) ಹಾಗೂ ವಿರಾಟ್ ಕೊಹ್ಲಿ(269 ಪಂದ್ಯಗಳು)ಅವರಿದ್ದಾರೆ. ರಹಾನೆ ಐಪಿಎಲ್ ನಲ್ಲಿ 30.72ರ ಸರಾಸರಿಯಲ್ಲಿ ಆರು ವಿವಿಧ ತಂಡಗಳಾದ-ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ರೈಸಿಂಗ್ ಪುಣೆ ಸೂಪರ್ಜಯಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪರವಾಗಿ ಒಟ್ಟು 5,099 ರನ್ ಗಳಿಸಿದ್ದಾರೆ. ►ಐಪಿಎಲ್ ನಲ್ಲಿ 200, ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರು: ಎಂ.ಎಸ್.ಧೋನಿ-278 ಪಂದ್ಯಗಳು ರೋಹಿತ್ ಶರ್ಮಾ-273 ಪಂದ್ಯಗಳು ವಿರಾಟ್ ಕೊಹ್ಲಿ-268 ಪಂದ್ಯಗಳು ದಿನೇಶ್ ಕಾರ್ತಿಕ್-257 ಪಂದ್ಯಗಳು ರವೀಂದ್ರ ಜಡೇಜ-255 ಪಂದ್ಯಗಳು ಶಿಖರ್ ಧವನ್-222 ಪಂದ್ಯಗಳು ಆರ್.ಅಶ್ವಿನ್-221 ಪಂದ್ಯಗಳು ಸುರೇಶ್ ರೈನಾ-205 ಪಂದ್ಯಗಳು ರಾಬಿನ್ ಉತ್ತಪ್ಪ-205 ಪಂದ್ಯಗಳು ಅಂಬಟಿ ರಾಯುಡು-204 ಪಂದ್ಯಗಳು ಅಜಿಂಕ್ಯ ರಹಾನೆ-200 ಪಂದ್ಯಗಳು
Chamarajanagar | ಪ್ರೇಮಿಗಳಿಬ್ಬರು ಆತ್ಮಹತ್ಯೆ
ಚಾಮರಾಜನಗರ: ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತ್ನ ಗೇರಟ್ಟಿ ಗ್ರಾಮದಲ್ಲಿ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಮೀಪ ಇರುವ ಪೊನ್ನಾಚಿ ಗ್ರಾಮಪಂಚಾಯತ್ ವ್ಯಾಪ್ತಿಯ ಗೇರಟ್ಟಿ ಗ್ರಾಮದ ನಕ್ಕುಂದಿ ಗ್ರಾಮದ ನಾಗೇಂದ್ರ (21), ಪಾಲಾರ್ ಗ್ರಾಮದ ನದಿಯಾ (19) ನೇಣಿಗೆ ಶರಣಾಗಿರುವ ಪ್ರೇಮಿಗಳಾಗಿದ್ದಾರೆ. ಮೃತ ನಕ್ಕುಂದಿ ನಾಗೇಂದ್ರ, ಮತ್ತು ಪಾಲಾರ್ ಗ್ರಾಮದ ನದಿಯಾ ಮೂರು ದಿನಗಳಿಂದ ಪೊನ್ನಾಚಿ ಗ್ರಾಮದಲ್ಲಿ ನಡೆಯುತ್ತಿದ್ದ ಹಬ್ಬಕ್ಕೆ ಆಗಮಿಸಿದ್ದು, ನಾಗೇಂದ್ರನ ಅಜ್ಜ ಶಿವಮಾದಯ್ಯ ಅವರ ಮನೆಯಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ ಇನ್ನೂ ನದಿಯಾ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪೋಷಕರು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ಎರಡು ದಿನಗಳ ಹಿಂದೆ ದೂರನ್ನು ನೀಡಿದ್ದರು. ಇದರ ನಡುವೆ ನದಿಯಾ ಕೂಡ ಆತ್ಮ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮಹದೇಶ್ವರಬೆಟ್ಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಎ.4ರಂದು ಯಲಬುರ್ಗಾ ನೂತನ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆ
ಯಲಬುರ್ಗಾ : ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣವನ್ನು ಏಪ್ರಿಲ್ 4, 2026ರಂದು ಶನಿವಾರ ಉದ್ಘಾಟಿಸಲಾಗುವುದು ಎಂದು ನ್ಯಾಯಾಧೀಶರಾದ ಜೆ. ರಂಗಸ್ವಾಮಿ ತಿಳಿಸಿದ್ದಾರೆ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಆಧುನಿಕ ನ್ಯಾಯಾಲಯ ಕಟ್ಟಡವನ್ನು ಕಾನೂನು ಸಚಿವ ಎಚ್. ಕೆ. ಪಾಟೀಲ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ನಂತರ ಯಲಬುರ್ಗಾ ತಾಲೂಕು ವಕೀಲ ಸಂಘದ ಅಧ್ಯಕ್ಷ ಸುಭಾಷ್ ಹೊಂಬಳ ಮಾತನಾಡಿ, “ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡಕ್ಕೆ ಶ್ರಮಿಸಿದ ಶಾಸಕ ಬಸವರಾಜ್ ರಾಯರೆಡ್ಡಿ ಅವರಿಗೆ ಧನ್ಯವಾದಗಳು” ಎಂದು ಹೇಳಿದರು. ಈ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರಿಗಾಗಿ ಪ್ರತ್ಯೇಕ ಕಟ್ಟಡವಿಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಅದನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಎಂ.ಎಸ್. ನಾಯ್ಕರ್, ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಈಟಿ, ಹಸನ್ ಸಾಬ್ ನದಾಫ್, ಬಸವರಾಜ್ ಆರ್ ತುರಕಾಣಿ, ಶ್ರೀಮತಿ ಅಕ್ಕಮಹಾದೇವಿ ಎಂ. ಪಾಟೀಲ್, ಶರಣಯ್ಯ ಶಶಿಮಠ, ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕ ವಕೀಲರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಕೀಲ ಸಂಘದ ಉಪಾಧ್ಯಕ್ಷರಾದ ಎಂ ಎಸ್ ನಾಯ್ಕರ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಈಟಿ, ಹಸನ್ ಸಾಬ್ ನದಾಫ್, ಬಸವರಾಜ್ ಆರ್ ತುರಕಾಣಿ, ಶ್ರೀಮತಿ ಅಕ್ಕಮಹಾದೇವಿ ಎಂ ಪಾಟೀಲ್ ಶರಣಯ್ಯ ಶಶಿ ಮಠ. ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ವಕೀಲರ ಸಂಘದ ಪದಾಧಿಕಾರಿಗಳಾದ, ಹಿರಿಯ ವಕೀಲರಾದ ಬಿ.ಎಂ. ಶಿರೂರ, ಉಮೇಶ ಮೆಣಸಗೇರಿ, ಪಿ.ಎಸ್. ಬೇಲೇರಿ, ಸಿ.ಪಿ.ಪಾಟೀಲ, ಪಿ.ಎಸ್. ಹಿರೇಮಠ,, ಇಂದ್ರಾ ಉಳ್ಳಾಗಡ್ಡಿ, ಉಮಾ ಕಲ್ಲೂರ, ಸಾವಿತ್ರಿ ಗೊಲ್ಲರ, ಲಕ್ಷ್ಮಿ, ಜೆ.ರಂಗಸ್ವಾಮಿ, ನಾಯಕ, ಜ್ಯೋತಿ ಹಾಲಕೇರಿ, ಎಂ.ಎಸ್.ಪಾಟೀಲ ಸೇರಿದಂತೆ ಇತರರು ಇದ್ದರು.
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ (ಚಾನಲ್) ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಬಗ್ಗೆ ನಿಲುವು ತಿಳಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಪೀಠ ಸೂಚಿಸಿತು. ಅದಕ್ಕೆ ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಪ್ರತಿಕ್ರಿಯಿಸಿ, ಅರ್ಜಿಯಲ್ಲಿ ಕೋರಲಾದ ಮನವಿ ಕುರಿತು ಯಾವ ಕ್ರಮ ಕೈಗೊಳಲಾಗುವುದು ಎಂಬ ಬಗ್ಗೆ ಸೋಮವಾರದೊಳಗೆ ತಿಳಿಸಲಾಗುವುದು ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಎಪ್ರಿಲ್ 6ಕ್ಕೆ ಮುಂದೂಡಿತು. ಸುದ್ದಿ ವಾಹಿನಿಗಳು ಗ್ರಾಫಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಅನಿಮೇಷನ್ಗಳನ್ನು ಬಳಸಿಕೊಂಡು ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಅಪರಾಧದ ದೃಶ್ಯವನ್ನು ಮರುಸೃಷ್ಟಿಸುತ್ತಿವೆ ಮತ್ತು ವಿಚಾರಣಾ ನ್ಯಾಯಾಲಯವು ದಾಖಲಿಸಿದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ನಡೆಸುತ್ತಿವೆ. ಇದು 2024 ರಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ನ್ಯಾಯಾಲಯವು ಹೊರಡಿಸಿದ ತಡೆಯಾಜ್ಞೆಯ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಲ್ಲದೆ, ಸುದ್ದಿವಾಹಿನಿಗಳು ಉದ್ದೇಶಪೂರ್ವಕವಾಗಿ ವಿಚಾರಣೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ. ಇದು ಸಂವಿಧಾನದ ಕಲಂ 14 ಮತ್ತು ಕಲಂ 21 ರ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳನ್ನು ಉಲ್ಲಂಘನೆಯಾಗಿದೆ. ಆದ್ದರಿಂದ ಈ ಸಂಬಂಧ 2026ರ ಜನವರಿ 16ರಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿದ ದೂರು ಪರಿಗಣಿಸಬೇಕು ಹಾಗೂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ ತಿಂಗಳಾಂತ್ಯದಿಂದ ಶುರುವಾಗಿದೆ. ಹಲವಾರು ತಂಡಗಳ ಪೈಕಿ ಈಗಾಗಲೇ ಒಟ್ಟು ಹತ್ತು ತಂಡಗಳು ಕಣಕ್ಕಿಳಿದು ಶೌರ್ಯ ಪ್ರದರ್ಶಿಸಿವೆ. ಅದರಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB) ಸೇರಿ ವಿವಿಧ ತಂಡಗಳು ಗೆಲುವು ತಮ್ಮದಾಗಿಸಿಕೊಂಡಿವೆ. ಆದರೆ ಉಳಿದ ತಂಡಗಳು ಮೊದಲ ಗೆಲುವಿಗೆ ತವಕಿಸುತ್ತಿವೆ. ಗೆದ್ದ ತಂಡಗಳ ಸೇರಿದಂತೆ ಯಾವ ಕ್ರಿಕೆಟ್ ತಂಡಗಳು ಆರೇಂಜ್
ತುಂಬಾ ತಡವಾಗುವ ಮುನ್ನ ಒಪ್ಪಂದಕ್ಕೆ ಬನ್ನಿ: ದಾಳಿಯ ವಿಡಿಯೋ ಹಂಚಿಕೊಂಡು ಇರಾನ್ ಗೆ ಟ್ರಂಪ್ ಎಚ್ಚರಿಕೆ
ಟೆಹ್ರಾನ್–ಕರಾಜ್ ಸೇತುವೆ ಮೇಲೆ ದಾಳಿ; ಇಬ್ಬರು ಮೃತ್ಯು
ಹಟ್ಟಿ ಚಿನ್ನದ ಗಣಿಯಲ್ಲಿ ಲಿಫ್ಟ್ ಶಾರ್ಟ್ ಸರ್ಕ್ಯೂಟ್ : 2200 ಅಡಿ ಕೆಳಗೆ ಸಿಲುಕಿದ 8 ಕಾರ್ಮಿಕರು
ಹಟ್ಟಿ : ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸೆಂಟ್ರಲ್ ಶಾಪ್ ಲಿಫ್ಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಿಫ್ಟ್ ಏಕಾಏಕಿ ಸ್ಥಗಿತಗೊಂಡ ಪರಿಣಾಮ 8 ಕಾರ್ಮಿಕರು ಸುಮಾರು 2 ಗಂಟೆ 30 ನಿಮಿಷಗಳ ಕಾಲ ಒಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ಬುಧವಾರ ರಾತ್ರಿ 11:30ರ ಸುಮಾರಿಗೆ ಗಣಿಗೆ ಇಳಿಯುತ್ತಿದ್ದ ವೇಳೆ ಕೇಜ್ 2200 ಅಡಿ ಆಳದಲ್ಲಿ ನಿಂತುಹೋಯಿತು. ಲಿಫ್ಟ್ನ ಕೆಳಭಾಗದಲ್ಲಿ 6 ಜನ ಮತ್ತು ಮೇಲ್ಭಾಗದಲ್ಲಿ 2 ಜನ ಸೇರಿ ಒಟ್ಟು 8 ಕಾರ್ಮಿಕರು ಸಿಲುಕಿಕೊಂಡಿದ್ದರು. ಲಿಫ್ಟ್ ಒಳಗೆ ಆಮ್ಲಜನಕ ಕೊರತೆಯಿಂದ ಮೂವರು ಕಾರ್ಮಿಕರು ಮೂರ್ಚೆ ಹೋಗಿದ್ದು, ಇತರರು ಉಸಿರಾಟದ ತೊಂದರೆ ಅನುಭವಿಸಿದರು. ಕುಡಿಯುವ ನೀರಿನ ಕೊರತೆಯಿಂದ ಕೆಲವರು ತಲೆ ಸುತ್ತಿನಿಂದ ಬಳಲಿದರು ಎಂದು ತಿಳಿದುಬಂದಿದೆ. ಘಟನೆ ತಿಳಿದ ತಕ್ಷಣ ಎಲೆಕ್ಟ್ರಿಕಲ್ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶಾರ್ಟ್ ಸರ್ಕ್ಯೂಟ್ ದುರಸ್ತಿ ಮಾಡಿ ಲಿಫ್ಟ್ ಅನ್ನು ಪುನಃ ಕಾರ್ಯಾಚರಣೆಗೆ ತಂದರು. ಬಳಿಕ ಸಿಲುಕಿದ್ದ ಕಾರ್ಮಿಕರನ್ನು ಮೇಲಕ್ಕೆ ಕರೆತಂದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫಿ ಹಾಗೂ ಇತರ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆಗೆ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದು, ಗಣಿಯಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಆಡಳಿತಕ್ಕೆ ಆಗ್ರಹಿಸಿದ್ದಾರೆ.
CAPF ಮಸೂದೆ 2026 ವಿರುದ್ಧ ನಿವೃತ್ತ ಅಧಿಕಾರಿಗಳೇಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಏನಿದು ವಿವಾದ?
ರಾಜ್ಯಸಭೆಯಲ್ಲಿ ಮಂಡಿಸಲಾದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಾಮಾನ್ಯ ಆಡಳಿತ) ಮಸೂದೆ, 2026 (CAPF), ಮಹತ್ವದ ಚರ್ಚೆಗೆ ನಾಂದಿ ಹಾಡಿದೆ. ಪ್ರಸ್ತಾವಿತ ಶಾಸನವು CAPF ಗಳಲ್ಲಿ ಹಿರಿಯ ನಾಯಕತ್ವದ ಸ್ಥಾನಗಳಲ್ಲಿ ಗಣನೀಯ ಪಾಲನ್ನು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಗಳಿಗೆ ನಿಯೋಜನೆಯ ಮೇಲೆ ಮೀಸಲಿಡಲು ಪ್ರಯತ್ನಿಸುತ್ತದೆ. ಮಸೂದೆಯಡಿಯಲ್ಲಿ, ಇನ್ಸ್ಪೆಕ್ಟರ್ ಜನರಲ್ (IG) ಹುದ್ದೆಗಳಲ್ಲಿ 50%, ಹೆಚ್ಚುವರಿ ಮಹಾನಿರ್ದೇಶಕ (ADG) ಹುದ್ದೆಗಳಲ್ಲಿ ಕನಿಷ್ಠ 67% ಮತ್ತು ಎಲ್ಲಾ ವಿಶೇಷ DG ಮತ್ತು ಮಹಾನಿರ್ದೇಶಕ (DG) ಹುದ್ದೆಗಳನ್ನು ಐಪಿಎಸ್ ಅಧಿಕಾರಿಗಳು ತುಂಬುತ್ತಾರೆ. ►ಸುಪ್ರೀಂ ಕೋರ್ಟ್ ತೀರ್ಪು ಮತ್ತು ಸರ್ಕಾರದ ಪ್ರತಿಕ್ರಿಯೆ ಮೇ 23, 2025 ರಂದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನ ನಂತರ ಈ ಶಾಸನವು ಜಾರಿಗೆ ಬಂದಿದೆ. ಇದು CAPF ಗ್ರೂಪ್ A ಅಧಿಕಾರಿಗಳನ್ನು ಸಂಘಟಿತ ಗುಂಪು A ಸೇವೆಗಳು (OGAS) ಎಂದು ಗುರುತಿಸಿ, ಅವರನ್ನು IAS, IPS ಮತ್ತು IFS ಗೆ ಸಮನಾಗಿರುತ್ತದೆ. ►ನ್ಯಾಯಾಲಯವು ಸರ್ಕಾರಕ್ಕೆ ನೀಡಿರುವ ನಿರ್ದೇಶನಗಳು CAPF ಗಳಲ್ಲಿ ಐಪಿಎಸ್ ನಿಯೋಜನೆಯನ್ನು ಎರಡು ವರ್ಷಗಳಲ್ಲಿ ಕ್ರಮೇಣ ಕಡಿಮೆ ಮಾಡಿ ಆರು ತಿಂಗಳೊಳಗೆ ಕೇಡರ್ ರಿವ್ಯೂ ನಡೆಸುವುದು ಆದಾಗ್ಯೂ, ಗೃಹ ಸಚಿವಾಲಯ (MHA) ಈ ತೀರ್ಪನ್ನು ಪ್ರಶ್ನಿಸಿದ್ದು, 2025 ಅಕ್ಟೋಬರ್ 28ರಂದು ಅದರ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಯಿತು. ತೀರ್ಪು ಅಂತಿಮವಾಯಿತು. ಇದರ ಹೊರತಾಗಿಯೂ ಐಪಿಎಸ್ ನೇಮಕಾತಿಗಳು ಮುಂದುವರೆದವು ಎಂದು ವರದಿಯಾಗಿದೆ. ಈ ಬಗ್ಗೆ ನಿವೃತ್ತ CAPF ಅಧಿಕಾರಿಗಳು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. 2026 ಮಾರ್ಚ್ 9ರಂದು ಗೃಹ ಸಚಿವಾಲಯಸೂಕ್ತ ಶಾಸನಬದ್ಧ ಮತ್ತು ನಿಯಂತ್ರಕ ಹಸ್ತಕ್ಷೇಪ ವನ್ನು ಪರಿಗಣಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತು. ಒಂದು ದಿನದ ನಂತರ, ಕೇಂದ್ರ ಸಚಿವ ಸಂಪುಟವು ಸಿಎಪಿಎಫ್ ಮಸೂದೆ, 2026 ಅನ್ನು ಅನುಮೋದಿಸಿತು. ►ನಿವೃತ್ತ ಸಿಎಪಿಎಫ್ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವುದೇಕೆ? ಸುಪ್ರೀಂ ಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಮತ್ತು ಶಾಸನವನ್ನು ವ್ಯಾಪಕ ಸಮಾಲೋಚನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿ ನಿವೃತ್ತ ಸಿಎಪಿಎಫ್ ಅಧಿಕಾರಿಗಳು ಮಸೂದೆಯನ್ನು ವಿರೋಧಿಸಿದ್ದಾರೆ. ಮಾಜಿ ಐಜಿಗಳು ಮತ್ತು ಎಡಿಜಿಗಳು ಸೇರಿದಂತೆ ಹಿರಿಯ ನಿವೃತ್ತ ಸೈನಿಕರು, ಕಾಲಮಿತಿಯ ಬಡ್ತಿಗಳು ಮತ್ತು ಪಿಂಚಣಿ ಪ್ರಯೋಜನಗಳಂತಹ ಸುಧಾರಣೆಗಳಲ್ಲಿನ ವಿಳಂಬವು ನೈತಿಕತೆಯನ್ನು ಹಾಳು ಮಾಡುತ್ತಿದೆ ಎಂದು ವಾದಿಸುತ್ತಾರೆ. ಸಮ್ಮೇಳನವೊಂದರಲ್ಲಿ ಮಾತನಾಡಿದ ಮಾಜಿ ಸಿಆರ್ಪಿಎಫ್ ಎಡಿಜಿ ಎಚ್ಆರ್ ಸಿಂಗ್, ದೀರ್ಘ ಕಾನೂನು ಹೋರಾಟದ ನಂತರ, ನೀಡಲಾದ ತೀರ್ಪು ನ್ಯಾಯಯುತವಾಗಿತ್ತು. ಅದು ಸಿಎಪಿಎಫ್ ಸಿಬ್ಬಂದಿಯ ಕಳವಳಗಳನ್ನು ಪರಿಹರಿಸಿದೆ. ಪ್ರಶ್ನೆಯೆಂದರೆ, ಅದರ ಅನುಷ್ಠಾನದಲ್ಲಿ ಇನ್ನೂ ವಿಳಂಬ ಏಕೆ? ಎಂದು ಕೇಳಿದ್ದಾರೆ. ಕಾನೂನಿನ ಮೂಲಕ ತೀರ್ಪನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು. ►ಸಂಸತ್ತಿನ ಪರಿಶೀಲನೆಗೆ ಬೇಡಿಕೆ ಮಸೂದೆಯನ್ನು ವಿವರವಾದ ಪರಿಶೀಲನೆಗೆ ಒಳಪಡಿಸಬೇಕು ಎಂದು ಸಿಂಗ್ ಹೇಳಿದ್ದಾರೆ. ಇದು ಸಾವಿರಾರು ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ಮಹತ್ವದ ವಿಷಯವಾಗಿದೆ. ಇದನ್ನು ಸಂಸದೀಯ ಸ್ಥಾಯಿ ಸಮಿತಿಗೆ ಉಲ್ಲೇಖಿಸಬೇಕು ಮತ್ತು ಅಭಿಪ್ರಾಯಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ. ಇತರ ನಿವೃತ್ತ ಸೈನಿಕರು ಕೂಡಾ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತಾವಿತ ಕಾನೂನು CAPF ಗಳೊಳಗಿನ ಕಮಾಂಡ್ ರಚನೆ, ಸೇವಾ ಪರಿಸ್ಥಿತಿಗಳು ಮತ್ತು ನಾಯಕತ್ವದ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು ಎಂದು ವಾದಿಸುತ್ತಾರೆ. ►ಪ್ರಮುಖ ಕಾಳಜಿಗಳು: ಬಡ್ತಿಗಳು, ನೈತಿಕತೆ ಮತ್ತು ನ್ಯಾಯಸಮ್ಮತತೆ ಸಿಎಪಿಎಫ್ ಅಧಿಕಾರಿಗಳಲ್ಲಿ ವೃತ್ತಿಜೀವನದ ನಿಶ್ಚಲತೆಯು ಒಂದು ಪ್ರಮುಖ ಕಾಳಜಿಯಾಗಿದೆ. ಸೀಮಿತ ಬಡ್ತಿ ಅವಕಾಶಗಳು ಮತ್ತು ನಿರ್ಬಂಧಿತ ನೇಮಕಾತಿ ನಿಯಮಗಳು ಅಡಚಣೆಗಳನ್ನು ಸೃಷ್ಟಿಸಿವೆ ಅಂತಾರೆ ನಿವೃತ್ತ ಯೋಧರು. ಒಬ್ಬ ಅಧಿಕಾರಿಗೆ ಬಡ್ತಿ ನೀಡಿದಾಗ, ಅದು ಸರಪಳಿ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. ಕಾನ್ಸ್ಟೆಬಲ್ಗಳು ಮತ್ತು ಇತರ ಸಿಬ್ಬಂದಿಗಳು ಸಹ ಮೇಲ್ದರ್ಜೆಗೆ ಹೋಗುತ್ತಾರೆ. ಪಿಂಚಣಿಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು ಪ್ರಯೋಜನಗಳನ್ನು ನಿರಾಕರಿಸುವುದು ನೈತಿಕತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದು ಸಿಂಗ್ ಹೇಳಿದ್ದಾರೆ. ►ಐಪಿಎಸ್ ನಿಯೋಜನೆಯ ಕುರಿತು ಚರ್ಚೆ ಪ್ರಸ್ತುತ, ಸಿಎಪಿಎಫ್ಗಳಲ್ಲಿ ಹಿರಿಯ ಹುದ್ದೆಗಳಲ್ಲಿ ಐಪಿಎಸ್ ಅಧಿಕಾರಿಗಳು ಗಮನಾರ್ಹ ಪಾಲನ್ನು ಹೊಂದಿದ್ದಾರೆ. ಇದು ಅಸಮತೋಲನವನ್ನು ಸೃಷ್ಟಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ವಾದಿಸುತ್ತಾರೆ. ಸುಮಾರು 20% ಡಿಐಜಿ ಹುದ್ದೆಗಳು ಮತ್ತು 50% ಐಜಿ ಹುದ್ದೆಗಳು ಹೊರಗಿನಿಂದ ಬರುವ ಅಧಿಕಾರಿಗಳಿಗೆ ಮೀಸಲಾಗಿವೆ ಎಂದ ಸಿಂಗ್, ಸಿಎಪಿಎಫ್ ಅಧಿಕಾರಿಗಳು ಇತರ ಸೇವೆಗಳಲ್ಲಿಯೂ ಅವಕಾಶಗಳನ್ನು ಪಡೆಯುವ ಪರಸ್ಪರ ವ್ಯವಸ್ಥೆಯನ್ನು ಸೂಚಿಸಿದ್ದಾರೆ. ಮಾಜಿ ಬಿಎಸ್ಎಫ್ ಎಡಿಜಿ ಎಸ್ ಕೆ ಸೂದ್ ಪ್ರಸ್ತಾವಿತ ಮಸೂದೆಯನ್ನು ದುರದೃಷ್ಟಕರ ಎಂದು ಹೇಳಿದ್ದಾರೆ. ಇದು ಸುಪ್ರೀಂ ಕೋರ್ಟ್ನ ತೀರ್ಪನ್ನು ದುರ್ಬಲಗೊಳಿಸಬಹುದು. ಐಪಿಎಸ್ ಅಧಿಕಾರಿಗಳು ಸಮರ್ಥರಾಗಿದ್ದರೂ, ಸಿಎಪಿಎಫ್ ಸಿಬ್ಬಂದಿ ಈ ಪಡೆಗಳು ನಿರ್ವಹಿಸುವ ನಿರ್ದಿಷ್ಟ ಪಾತ್ರಗಳಿಗೆ ಹೆಚ್ಚು ಸೂಕ್ತರು ಎಂದು ಹೇಳಿದ್ದಾರೆ. ಮಾಜಿ ಐಜಿ ವಿಕಾಶ್ ಚಂದ್ರ ಅವರು, ಸರ್ಕಾರವನ್ನು ಸಂಪರ್ಕಿಸಲು ನಮಗೆ ನೇರ ಮಾರ್ಗವಿಲ್ಲ. ನಾವು ನಮ್ಮ ಯೌವನದಲ್ಲಿ ಸಿಎಪಿಎಫ್ಗಳಲ್ಲಿ ಸೇವೆ ಸಲ್ಲಿಸಿದ್ದೇವೆ, ಆದರೆ ಉನ್ನತ ಹುದ್ದೆಗಳಿಗೆ ಪ್ರವೇಶಿಸಲಾಗದೇ ಉಳಿದೆವು ಎಂದಿದ್ದಾರೆ. ►ಸಿಎಪಿಎಫ್ ಎಂದರೇನು? ಸಿಎಪಿಎಫ್ಗಳಲ್ಲಿ ಸಿಆರ್ಪಿಎಫ್, ಬಿಎಸ್ಎಫ್, ಸಿಐಎಸ್ಎಫ್, ಐಟಿಬಿಪಿ ಮತ್ತು ಆಂತರಿಕ ಭದ್ರತೆ, ಗಡಿ ರಕ್ಷಣೆ ಮತ್ತು ಭಯೋತ್ಪಾದನಾ ನಿಗ್ರಹಕ್ಕೆ ಜವಾಬ್ದಾರರಾಗಿರುವ ಇತರ ಪಡೆಗಳು ಸೇರಿವೆ. ಅವರು ಸುಮಾರು 10 ಲಕ್ಷ ಸಿಬ್ಬಂದಿ ಮತ್ತು ಸುಮಾರು 13,000 ಗ್ರೂಪ್ ಎ ಅಧಿಕಾರಿಗಳನ್ನು ಹೊಂದಿದ್ದಾರೆ. ಆದಾಗ್ಯೂ, ಸಂಸತ್ತು ಇತ್ತೀಚೆಗೆ ವಿವಿಧ ಶ್ರೇಣಿಗಳಲ್ಲಿ ಸುಮಾರು 93,000 ಖಾಲಿ ಹುದ್ದೆಗಳನ್ನು ಗುರುತಿಸಿದೆ, ಇದು ಅಸ್ತಿತ್ವದಲ್ಲಿರುವ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸಿಎಪಿಎಫ್ ಮಸೂದೆ 2026 ಸಾಂಸ್ಥಿಕ ಸ್ವಾಯತ್ತತೆ, ನ್ಯಾಯಸಮ್ಮತತೆ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಐಪಿಎಸ್ ನಾಯಕತ್ವವು ಉತ್ತಮ ಸಮನ್ವಯವನ್ನು ಖಚಿತಪಡಿಸುತ್ತದೆ ಎಂದು ಸರ್ಕಾರ ವಾದಿಸಿದರೆ, ಮಸೂದೆಯು ವೃತ್ತಿಪರ ಪರಿಣತಿಯ ಮೇಲೆ ಅಧಿಕಾರಶಾಹಿ ನಿಯಂತ್ರಣಕ್ಕೆ ಆದ್ಯತೆ ನೀಡುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ.
ಭುವನೇಶ್ವರ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ ಪ್ರಕರಣದ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಮೇಲ್ವಿಚಾರಣೆ ಮಾಡಬೇಕೆಂದು ಒರಿಸ್ಸಾ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಸಾವಿತ್ರಿ ರಾಥೋ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಗಮನಿಸಿ ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದರು. “ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆದರೆ ಆರೋಪಗಳ ಸ್ವರೂಪ ಹಾಗೂ ಘಟನೆಯನ್ನು ವೀಡಿಯೊಗ್ರಾಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಆದ್ದರಿಂದ ಡಿಎಸ್ಪಿ ದರ್ಜೆಗೆ ಕಡಿಮೆಯಿಲ್ಲದ ಹಿರಿಯ ಅಧಿಕಾರಿ ತನಿಖೆಯನ್ನು ಮೇಲ್ವಿಚಾರಣೆ ಮಾಡುವುದು ಸೂಕ್ತ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಘಟನೆ ಈ ವರ್ಷದ ಜನವರಿ ಆರಂಭದಲ್ಲಿ ನಡೆದಿದೆ. ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಗುಂಪೊಂದು ಬಟ್ಟೆಗಳನ್ನು ಕಳಚಿ, ಕಾಲುಗಳನ್ನು ಹಗ್ಗದಿಂದ ಕಟ್ಟಿ, ಬೆತ್ತಲೆಯಾಗಿ ಬೀದಿಯಲ್ಲಿ ಎಳೆದು ‘ಜೈ ಶ್ರೀ ರಾಮ್’ ಎಂದು ಹೇಳಲು ಒತ್ತಾಯಿಸಿದ ಆರೋಪ ಕೇಳಿಬಂದಿದೆ. ಘಟನೆಯ ವೀಡಿಯೊವನ್ನು ಬಹಲ್ದಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಇನ್ಚಾರ್ಜ್ಗೆ ಕಳುಹಿಸಲಾಗಿದ್ದು, ಜನವರಿ 3ರಂದು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದೆ. ಮರುದಿನ ಜನವರಿ 4ರ ವೇಳೆಗೆ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯ ತಂದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ಅಥವಾ ವಿಶೇಷ ತನಿಖಾ ತಂಡ (ಎಸ್ಐಟಿ)ಗೆ ವರ್ಗಾಯಿಸುವಂತೆ ಕೋರಿದರು. ಅರ್ಜಿಯಲ್ಲಿ ಅರ್ಜಿಯ ಪ್ರಕಾರ, ಬಿಎನ್ಎಸ್ ಕಲಂ 126(2), 296, 117(2), 133, 351(3), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರೊಂದಿಗೆ, ಕಲಂ 111 (ಸಂಘಟಿತ ಅಪರಾಧ), 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳು), 302 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪದಗಳ ಬಳಕೆ), 117(4) (ಐದು ಅಥವಾ ಹೆಚ್ಚು ಮಂದಿಯ ಗುಂಪಿನಿಂದ ಉಂಟಾದ ಗಂಭೀರ ಹಾನಿ)ಗಳನ್ನು ಸೇರಿಸಬೇಕಾಗಿತ್ತು ಎಂದು ಅರ್ಜಿದಾರರು ವಾದಿಸಿದರು. ರಾಜ್ಯ ಮತ್ತು ಪೊಲೀಸ್ ಅಧಿಕಾರಿಗಳ ಪರ ವಕೀಲರು, ಹಲ್ಲೆಗೆ ಒಳಗಾದ ವ್ಯಕ್ತಿಗೆ ಉಂಟಾದ ಗಾಯಗಳು ಸಣ್ಣ ಸ್ವರೂಪದ್ದಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಉಳಿದ ಆರೋಪಿಗಳನ್ನು ಬಂಧಿಸುವ ಕಾರ್ಯ ಮುಂದುವರಿದಿದ್ದು, ಪ್ರಕರಣ ತನಿಖೆಯಲ್ಲಿದೆ ಎಂದರು. ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿದ ನ್ಯಾಯಾಲಯ, ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ಖಚಿತಪಡಿಸಲು ಹಿರಿಯ ಪೊಲೀಸ್ ಅಧಿಕಾರಿಯ ಮೇಲ್ವಿಚಾರಣೆ ಅಗತ್ಯವೆಂದು ಹೇಳಿ, ಅದಕ್ಕೆ ಅನುಗುಣವಾಗಿ ಆದೇಶ ನೀಡಿತು. ಅರ್ಜಿದಾರರ ಪರ ವಕೀಲ ಪಿ.ಆರ್. ಛಟೋಯ್ ವಾದ ಮಂಡಿಸಿದರು. ರಾಜ್ಯ ಮತ್ತು ಪೊಲೀಸ್ ಅಧಿಕಾರಿಗಳ ಪರ ವಕೀಲ ಸಾರಥಿ ಜ್ಯೋತಿ ಮೊಹಂತಿ ಹಾಜರಿದ್ದರು.
ಎಚ್.ಡಿ.ಕುಮಾರಸ್ವಾಮಿ-ಎಂ.ಚಂದ್ರಶೇಖರ್ ಪ್ರಕರಣದಲ್ಲಿ ಮಧ್ಯಸ್ಥಿಕೆದಾರರ ನೇಮಕಾತಿ : ಹೈಕೋರ್ಟ್
ಬೆಂಗಳೂರು : ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ (ಎಸ್ಐಟಿ) ಮುಖ್ಯಸ್ಥ ಎಂ.ಚಂದ್ರಶೇಖರ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥಪಡಿಸಲು ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಪೀಠ, ಈ ಹಿಂದೆ ನ್ಯಾಯಾಲಯ ನೀಡಿದ್ದ ಸಲಹೆಯಂತೆ ಪ್ರಕರಣವನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಿಕೆದಾರರನ್ನು ನೇಮಕ ಮಾಡಲು ಎಚ್.ಡಿ. ಕುಮಾರಸ್ವಾಮಿ ಹಾಗೂ ದೂರುದಾರ ಚಂದ್ರಶೇಖರ್ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ನ್ಯಾಯಾಲಯವೇ ಸೂಕ್ತ ಮಧ್ಯಸ್ಥಿಕೆದಾರರ ನೇಮಕ ಮಾಡಲಿದೆ. ಜತೆಗೆ, ಮಧ್ಯಸ್ಥಿಕೆದಾರರ ಮುಂದೆ ಅರ್ಜಿದಾರರು ಹಾಗೂ ದೂರುದಾರರು ಮಾತುಕತೆ ನಡೆಸಲು ಹಾಜರಾಗಬೇಕಾದ ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿತು. ಪ್ರಕರಣವೇನು? ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ ಮುಖ್ಯಸ್ಥರಾದ ಎಂ. ಚಂದ್ರಶೇಖರ್ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದೆ) ಆರೋಪದಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣವನ್ನು ನಗರದ 42ನೇ ಎಸಿಎಂಎಂ ನ್ಯಾಯಾಲು ವಿಚಾರಣೆ ನಡೆಸುತ್ತಿದೆ. ಇದರಿಂದ, ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಕೊರತೆ : ಕೊಟ್ಟೂರಿನಲ್ಲಿ ಗ್ರಾಹಕರ ಪರದಾಟ
ಕೊಟ್ಟೂರು (ವಿಜಯನಗರ): ಪಟ್ಟಣದ ಶ್ರೀ ವೆಂಕಟಸಾಯಿ ಗ್ಯಾಸ್ ಕಂಪನಿಯಲ್ಲಿ ಗ್ಯಾಸ್ ಸಿಲಿಂಡರ್ ಸಮಯಕ್ಕೆ ಸಿಗದೆ ಗ್ರಾಹಕರು ಬೇಸರಗೊಂಡು ಮನೆಗೆ ಹಿಂತಿರುಗಿದ ಘಟನೆ ಗುರುವಾರ ನಡೆದಿದೆ. ಗ್ಯಾಸ್ ಸಿಲಿಂಡರ್ ಪಡೆಯಲು ದಿನಪೂರ್ತಿ ಕರೆ ಮಾಡಿದರೂ ಬುಕ್ಕಿಂಗ್ ಆಗದೇ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಏಜೆನ್ಸಿ ಕಚೇರಿಗೆ ತೆರಳಿ ವಿಚಾರಿಸಿದಾಗ “ಸಂಜೆ, ರಾತ್ರಿ ಅಥವಾ ಮುಂಜಾನೆ ಕರೆ ಮಾಡಿ” ಎಂದು ಸೂಚನೆ ನೀಡಲಾಗುತ್ತಿದೆ. ಆದರೆ ಆ ಸಮಯದಲ್ಲೂ ಕರೆ ಮಾಡಿದರೂ ಬುಕ್ಕಿಂಗ್ ಆಗದೇ, “ಸರ್ವರ್ ಬ್ಯುಸಿ” ಎಂಬ ಸಂದೇಶ ಮಾತ್ರ ಬರುತ್ತಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಬುಕ್ಕಿಂಗ್ ಮೆಸೇಜ್ ತೋರಿಸಿದಾಗಲೂ, ರೆಫರೆನ್ಸ್ ಐಡಿ ಇಲ್ಲದಿದ್ದರೆ ಬುಕ್ಕಿಂಗ್ ಆಗಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಜನರಲ್ಲಿ ಮತ್ತಷ್ಟು ಗೊಂದಲ ಮತ್ತು ಆತಂಕ ಉಂಟಾಗಿದೆ. ಈ ಕುರಿತು ರೈತರ ಸಂಘದ ಮುಖಂಡ ಜಯಪ್ರಕಾಶ್ ಮಾತನಾಡಿ, “ಒಂದು ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್ ಗಳಿಗೆ ಮಾತ್ರ ಮಿತಿ ಇರುತ್ತದೆ. ಅದಕ್ಕಿಂತ ಹೆಚ್ಚಾದರೆ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ಬುಕ್ಕಿಂಗ್ ಆಗುವುದಿಲ್ಲ. ಸರ್ವರ್ ಸಮಸ್ಯೆಯಿಂದಲೂ ವಿಳಂಬವಾಗುತ್ತದೆ. ಸಾಧ್ಯವಾದರೆ ಸಂಜೆ ಅಥವಾ ಮುಂಜಾನೆ ಕರೆ ಮಾಡಿದರೆ ಬುಕ್ಕಿಂಗ್ ಆಗುವ ಸಾಧ್ಯತೆ ಇದೆ” ಎಂದು ಹೇಳಿದರು.
ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟ
ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಧಿಸೂಚನೆ ಪ್ರಕಟವಾದ 30 ದಿನಗಳಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಜಿಬಿಎ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಹಲವಾರು ಕಟ್ಟಡ ನಿರ್ಮಾಣದಾರರ ಸಂಕಷ್ಟವನ್ನು ಪರಿಗಣಿಸಿ, ಕಟ್ಟಡ ನಿರ್ಮಾಣಗಳಲ್ಲಿನ ಉಲ್ಲಂಘನೆ ಮಿತಿಯನ್ನು ಹಾಲಿ ಇರುವ ಶೇ.5 ರಿಂದ ಶೇ.15ಕ್ಕೆ ಹೆಚ್ಚಿಸಲು ಸರಕಾರವು ಮಹತ್ವಪೂರ್ಣವಾದ ಮತ್ತು ಜನಪರವಾದ ನಿರ್ಧಾರವನ್ನು ಕೈಗೊಂಡಿದೆ ಎಂದಿದ್ದಾರೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಭೂಮಿಯ ಅತೀವವಾದ ಬೆಲೆಯಿಂದ ಮತ್ತು ಹಲವು ಅನಿವಾರ್ಯ ಕಾರಣಗಳಿಂದ ನಿವೇಶನ ಮಾಲಕರು ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಕಡಿಮೆ ನಡುಜಾಗಗಳನ್ನು ಬಿಟ್ಟು ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿ ಸಂಕಷ್ಟ ಅನುಭವಿಸುತ್ತಿರುವುದು ಕಂಡು ಬಂದಿರುತ್ತದೆ. ಕಾರಣ ಹಾಲಿ ನಿಯಮಗಳಲ್ಲಿ ಶೇ.5ರಷ್ಟು ಉಲ್ಲಂಘನೆಗಳನ್ನು ಮಾತ್ರ ಸಕ್ರಮಗೊಳಿಸಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ. ಆದುದರಿಂದ ವಾಸ್ತವಿಕ ಅಂಶಗಳನ್ನು ಮನಗಂಡು ಜನರ ಸಂಕಷ್ಟಕ್ಕೆ ಪರಿಹಾರ ನೀಡಲು ಕಟ್ಟಡ ಉಪವಿಧಿಗಳು 2003 ರ ಉಪವಿಧಿ 6ಕ್ಕೆ ತಿದ್ದುಪಡಿ ತಂದು, ಕಟ್ಟಡಗಳ ಉಲ್ಲಂಘನೆ ಮಿತಿಯನ್ನು ಶೇ.5 ರ ಬದಲಾಗಿ ಶೇ.15 ರವರೆಗೆ ಹೆಚ್ಚಿಸಿ, ಅದಕ್ಕೆ ದಂಡ ಪಾವತಿಸಿಕೊಂಡು ಕ್ರಮಬದ್ದಗೊಳಿಸಲು ಸರಕಾರವು ತೀರ್ಮಾನಿಸಿರುತ್ತದೆ. ಅದರಂತೆ ಬೆಂಗಳೂರು ನಗರದ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರಲು ಎಲ್ಲ 5 ನಗರ ಪಾಲಿಕೆಗಳಿಂದ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ. ಈ ಅಧಿಸೂಚನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಂತರ್ಜಾಲ https://updates.bbmpgov.in/public ರಲ್ಲಿ ವೀಕ್ಷಿಸಬಹುದಾಗಿದೆ. ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ಆಯಾ ನಗರಪಾಲಿಕೆ ಕಛೇರಿಗಳ ವಿಳಾಸಕ್ಕೆ ಕಳುಹಿಸಬಹುದಾಗಿದೆ.
IPL 2026 | ಕೋಲ್ಕತ್ತದ ವಿರುದ್ಧ ಹೈದರಾಬಾದ್ಗೆ ಭರ್ಜರಿ ಜಯ
ಕೋಲ್ಕತ್ತಾ : ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಹೈದರಾಬಾದ್ ತಂಡವು 65 ರನ್ಗಳ ಜಯಗಳಿಸಿದೆ
ಎಲ್ಲ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ನೀತಿ ಜಾರಿಯಲ್ಲಿದೆ : ಮಧುಬಂಗಾರಪ್ಪ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುಷಿಪಡಿಸಲು ಬಿಜೆಪಿಯವರು ಹಿಂದಿ ಪರವಾಗಿ ಮಾತನಾಡುವುದು ಸರಿಯಲ್ಲ. ಏಕೆಂದರೆ ಬಹುತೇಕ ಎಲ್ಲ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ನೀತಿ ಜಾರಿಯಲ್ಲಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಟೀಕೆ ಟಿಪ್ಪಣಿ ಮಾಡುತ್ತಾರೆಂದು ಉತ್ತರ ಕೊಡಲು ಆಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಆಳಿದವರಾಗಿದ್ದು, ಅವರಿಗೆ ಗೌರವ ಕೊಡುತ್ತೇವೆ. ಆದರೆ ಬಿಜೆಪಿಯವರೇ ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ ಎಂದರು. ರಾಜ್ಯದ ತೆರಿಗೆ ಸಂಗ್ರಹ ಕುರಿತಂತೆ ಬಿಜೆಪಿಯವರು ಮಾತನಾಡುವುದಿಲ್ಲ. ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ 2ನೆ ಸ್ಥಾನದಲ್ಲಿದೆ. ಬರಗಾಲ ಬಂದಾಗಲೂ ಬಿಜೆಪಿಯವರು ಮಾತನಾಡುವುದಿಲ್ಲ. ಆದರೆ ಈಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಿಕ್ಷಣ ಸಚಿವರಿಗೆ ಶಿಕ್ಷಣವಿಲ್ಲ ಎಂದು ಟೀಕಿಸಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಅವರು ಹಿಂದಿ ಮಾತನಾಡುವುದನ್ನು ನೋಡಿ, ನಾವು ರಾಜ್ಯದಲ್ಲಿ ತೃತೀಯ ಭಾಷೆ ಹಿಂದಿ ವಿಚಾರದಲ್ಲಿ ಗ್ರೇಡಿಂಗ್ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿದರು. ಗ್ರಾಮೀಣ ಭಾಗದಲ್ಲಿ ತೃತೀಯ ಭಾಷೆ ಹೇರಿಕೆಯಾಗಿದೆ. ಕೆಲವು ಕಡೆ ಕನ್ನಡ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಕಲಿಯುತ್ತಿದ್ದಾರೆ. ನಮ್ಮ ಕನ್ನಡಿಗರು ಹೊಟ್ಟೆಪಾಡಿಗಾಗಿ ಹಿಂದಿ ಬೋಧನೆ ಮಾಡುತ್ತಿದ್ದಾರೆ. ಅಂಥವರಿಗೆ ಯಾವುದೇ ಒತ್ತಡ ಆಗಬಾರದು. ಅಲ್ಲದೆ ಯಾವುದೇ ಭಾಷೆ ವಿರುದ್ಧ ನಾವಿಲ್ಲ. ಈಗ ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು ಎಂದು ಅವರು ತಿಳಿಸಿದರು.
ಇಂಡೋನೇಶ್ಯದಲ್ಲಿ ಪ್ರಬಲ ಭೂಕಂಪ: ಓರ್ವ ಮೃತ್ಯು; ಕಟ್ಟಡಗಳಿಗೆ ಹಾನಿ
ಜಕಾರ್ತ: ಗುರುವಾರ ಇಂಡೋನೇಶ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಸುಲವೆಸಿ ಮತ್ತು ಮಲುಕು ದ್ವೀಪ ಸಮೂಹಗಳ ನಡುವೆ ಮೊಲುಕ್ಕಾ ಸಮುದ್ರದ 35 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಉತ್ತರ ಸುಲಾವೆಸಿ ಪ್ರಾಂತದ ಮನಾಡೊ ನಗರದಲ್ಲಿ ಕಟ್ಟಡವೊಂದು ಕುಸಿದುಬಿದ್ದು ಓರ್ವ ಸಾವನ್ನಪ್ಪಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ. ಸಮುದ್ರದಲ್ಲಿ 2.5 ಅಡಿ ಎತ್ತರದ ಅಲೆಗಳು ಕಾಣಿಸಿಕೊಂಡಿದ್ದು ಆರಂಭದಲ್ಲಿ ತ್ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಬಳಿಕ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ | ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಶ್ಯ
ಮಾಸ್ಕೊ: ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ರಶ್ಯ ಗುರುವಾರ ಘೋಷಿಸಿದೆ. ಈ ಮಧ್ಯೆ, ಸಂಭಾವ್ಯ ಕದನ ವಿರಾಮಕ್ಕೆ 4 ಷರತ್ತುಗಳನ್ನು ಇರಾನ್ ಪ್ರಸ್ತಾವಿಸಿರುವುದಾಗಿ ವರದಿಯಾಗಿದೆ. ಆಕ್ರಮಣ ಮತ್ತು ದಾಳಿಗಳ ಸಂಪೂರ್ಣ ಮತ್ತು ನಿರ್ಣಾಯಕ ನಿಲುಗಡೆ, ಆಕ್ರಮಣ ಅಥವಾ ಯುದ್ಧದ ಪುನರಾರಂಭವನ್ನು ತಡೆಗಟ್ಟಲು ವಸ್ತಿನಿಷ್ಠ ಮತ್ತು ವಿಶ್ವಾಸಾರ್ಹ ಖಾತರಿ ಒದಗಿಸುವುದು, ವಸ್ತು ಮತ್ತು ನೈತಿಕ ಹಾನಿಗಳಿಗೆ ಸಂಪೂರ್ಣ ಪರಿಹಾರ, ಅಂತರರಾಷ್ಟ್ರೀಯ ಕಡಲ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶಕ್ಕಾಗಿ ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ನ ಅಧಿಕಾರ ವ್ಯಾಪ್ತಿಯನ್ನು ಗೌರವಿಸಬೇಕು ಎಂದು ರಶ್ಯಕ್ಕೆ ಇರಾನ್ನ ರಾಯಭಾರಿ ಆಗ್ರಹಿಸಿರುವುದಾಗಿ ರಶ್ಯದ ಸುದ್ದಿಸಂಸ್ಥೆ ತಾಸ್ ವರದಿ ಮಾಡಿದೆ.
ರಾಜ್ಯಸಭಾ ಉಪನಾಯಕ ಸ್ಥಾನದಿಂದ ವಜಾ; ಎಮೋಜಿಯೊಂದಿಗೆ ವೀಡಿಯೊ ಪೋಸ್ಟ್ ಮಾಡಿದ ರಾಘವ್ ಚಡ್ಡಾ!
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ಉಪ ನಾಯಕ ಸ್ಥಾನದಿಂದ ಸಂಸದ ರಾಘವ್ ಚಡ್ಡಾ ಅವರನ್ನು ವಜಾಗೊಳಿಸಿದ ಬಳಿಕ, ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚುವ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಚಡ್ಡಾ ಹಂಚಿಕೊಂಡ ವೀಡಿಯೊದಲ್ಲಿ ರಾಜ್ಯಸಭೆಯಲ್ಲಿ ಅವರು ಮಾತನಾಡಿದ ವಿವಿಧ ವಿಷಯಗಳು ಕಾಣಿಸುತ್ತವೆ. ವಾಯು ಮಾಲಿನ್ಯ, ಏರಿಕೆಯಾಗುತ್ತಿರುವ ವಿಮಾನ ದರಗಳು, ಕಾರ್ಮಿಕರ ಹಕ್ಕುಗಳು ಹಾಗೂ ಮೊಬೈಲ್ ಪ್ರಿಪೇಯ್ಡ್ ಯೋಜನೆಗಳ 28 ದಿನಗಳ ಮಾನ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ವೀಡಿಯೊಗೆ ಯಾವುದೇ ಶೀರ್ಷಿಕೆ ನೀಡದೇ, ʼದುಷ್ಟ ಕಣ್ಣಿನಿಂದ ರಕ್ಷಿಸುತ್ತದೆʼ ಎಂದು ನಂಬುವ ಚಿಹ್ನೆಯಿರುವ ಎಮೋಜಿಯನ್ನು ಮಾತ್ರ ಬಳಸಿರುವುದು ಗಮನ ಸೆಳೆದಿದೆ. ಇದಕ್ಕೂ ಮೊದಲು, AAP ಪಕ್ಷವು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದು, ಚಡ್ಡಾ ಅವರನ್ನು ಉಪ ನಾಯಕ ಸ್ಥಾನದಿಂದ ವಜಾಗೊಳಿಸುವಂತೆ ಕೋರಿತ್ತು. ಅವರ ಬದಲಿಗೆ ಪಂಜಾಬ್ ನ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಿಸಲು ಶಿಫಾರಸು ಮಾಡಲಾಗಿತ್ತು. ಪತ್ರದಲ್ಲಿ ಚಡ್ಡಾ ಅವರಿಗೆ ಪಕ್ಷದ ಕೋಟಾದಡಿ ಮಾತನಾಡಲು ಸಮಯ ನೀಡಬಾರದು ಎಂಬುದೂ ಉಲ್ಲೇಖವಾಗಿತ್ತು. ಈ ಕ್ರಮದಿಂದ ಪಕ್ಷದೊಳಗಿನ ಭಿನ್ನಮತಗಳ ಬಗ್ಗೆ ಊಹಾಪೋಹಗಳು ಹುಟ್ಟಿವೆ. ಆದರೆ, AAP ನಾಯಕತ್ವವು ಇದನ್ನು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದೆ. ಇತ್ತೀಚಿನ ದಿನಗಳಲ್ಲಿ ಚಡ್ಡಾ ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೇ ಇರುವುದೂ ಗಮನ ಸೆಳೆದಿತ್ತು. ಒಮ್ಮೆ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಎಂದು ಪರಿಗಣಿಸಲ್ಪಟ್ಟಿದ್ದ ಅವರು, ಪಂಜಾಬ್ ಮತ್ತು ದಿಲ್ಲಿಯಲ್ಲಿ ಪಕ್ಷದ ಪ್ರಮುಖ ಮುಖವಾಗಿದ್ದರು. ಮಾರ್ಚ್ 2024ರಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಬಂಧಿತರಾದಾಗ, ಚಡ್ಡಾ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೈಲು ಅವಧಿಯಲ್ಲಿಯೂ ಅವರು ದೂರವಿದ್ದರು ಮತ್ತು ಬಿಡುಗಡೆ ನಂತರ ಕೆಲವೇ ದಿನಗಳ ಬಳಿಕ ಅವರನ್ನು ಭೇಟಿ ಮಾಡಿದ್ದರು. ಇತ್ತೀಚೆಗೆ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಇತರ ನಾಯಕರಿಗೆ ನ್ಯಾಯಾಲಯ ಪರಿಹಾರ ನೀಡಿದಾಗಲೂ ಚಡ್ಡಾ ಮೌನವಾಗಿದ್ದರು. ಜಂತರ್ ಮಂತರ್ನಲ್ಲಿ ನಡೆದ ಪತ್ರಿಕಾಗೋಷ್ಠಿ ಮತ್ತು ರ್ಯಾಲಿಗೂ ಅವರು ಹಾಜರಾಗಿರಲಿಲ್ಲ. ಆದರೂ, ಚಡ್ಡಾ ಸಂಸತ್ತಿನಲ್ಲಿ ಸಕ್ರಿಯವಾಗಿದ್ದು, ವಿವಿಧ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಯುವ ಸಮೂಹದಲ್ಲಿ ಜನಪ್ರಿಯ ಮುಖವಾಗಿರುವ ಅವರು, ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ರಾಜ್ಯಸಭೆಯ ಹಣಕಾಸು ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ. ಉಪ ನಾಯಕ ಸ್ಥಾನಕ್ಕೆ ನೇಮಕಗೊಂಡ ಅಶೋಕ್ ಮಿತ್ತಲ್, ಈ ಬದಲಾವಣೆಯನ್ನು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದ್ದಾರೆ. “ನಮ್ಮ ಪಕ್ಷದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಸಿಗುತ್ತದೆ,” ಎಂದಿದ್ದಾರೆ. ಪ್ರಸ್ತುತ ಎಎಪಿಗೆ ರಾಜ್ಯಸಭೆಯಲ್ಲಿ 10 ಸದಸ್ಯರಿದ್ದು, ಪಂಜಾಬ್ ನಿಂದ 7 ಮತ್ತು ದಿಲ್ಲಿಯಿಂದ 3 ಮಂದಿ ಇದ್ದಾರೆ.
ನಮ್ಮದು ಮಹಾತ್ಮ ಗಾಂಧಿಯವರ ಹಿಂದುತ್ವ, ಬಿಜೆಪಿಯವರದ್ದು ಗೋಡ್ಸೆಯ ಹಿಂದುತ್ವ: ಸಿಎಂ ಸಿದ್ದರಾಮಯ್ಯ
ದಾವಣಗೆರೆ : ಕಾಂಗ್ರೆಸ್ ಪಕ್ಷ ಸರ್ವ ಧರ್ಮ, ಸಕಲ ಜಾತಿಯವರನ್ನೂ ಜೊತೆಗೆ ಕರೆದುಕೊಂಡು ಹೋಗುವ ಪಕ್ಷವಾಗಿದ್ದು, ಮಹಾತ್ಮ ಗಾಂಧಿ ಹೇಳುವ ಹಿಂದುತ್ವವನ್ನು, ಅಧ್ಯಾತ್ಮವನ್ನು ಪಾಲಿಸುವ ಪಕ್ಷ. ಬಿಜೆಪಿ ನಾಥೂರಾಮ್ ಗೋಡ್ಸೆಯ ಹಿಂದುತ್ವದಲ್ಲಿ ನಂಬಿಕೆ ಇರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಂಬಂಧ ಕ್ಷೇತ್ರದಲ್ಲಿ ರೋಡ್ಶೋ ನಡೆಸಿ ಮಾತನಾಡಿದರು. ನನ್ನ ಹೆಸರಲ್ಲೇ ಶಿವ, ರಾಮ ಇದ್ದಾರೆ. ನಾನು ಹಿಂದೂ ಅಲ್ಲವಾ ? ನಮ್ಮ ಜೊತೆಗಿರುವ ಈಶ್ವರ್ ಖಂಡ್ರೆಯವರು ಹಿಂದೂ ಅಲ್ವಾ? ಎಂ.ಸಿ.ಸುಧಾಕರ್ ಅವರು ಹಿಂದೂ ಅಲ್ವಾ ಎಂದು ಪ್ರಶ್ನಿಸಿದರು. ಗೋಡ್ಸೆಯ ಹಿಂದುತ್ವ ಹೇಳಿಕೊಂಡು ಅಧಿಕಾರಕ್ಕೆ ಬರುವುದು, ಆಮೇಲೆ ಜನರನ್ನು ಮರೆತು , ಅಭಿವೃದ್ಧಿ ಮರೆತು ಹಣ ಲೂಟಿ ಹೊಡೆಯುತ್ತಾ ಕೂತರು. ಇದಕ್ಕೆ ಹಿಂದುತ್ವವನ್ನು ಬಳಸಿಕೊಳ್ಳುವುದು ಬಿಜೆಪಿಗೆ ರೂಢಿ ಆಗಿದೆ ಎಂದು ಟೀಕಿಸಿದರು. ನಾವು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರು ಸೇರಿ ಎಲ್ಲಾ ಶ್ರಮಿಕ ವರ್ಗಗಳ ಸಾಲ ಮನ್ನಾ ಮಾಡಿ ಜನರಿಗೆ ನೆರವಾದೆವು. ಆದರೆ, ಯಡಿಯೂರಪ್ಪ ಅವರಿಗೆ ಸಾಲ ಮನ್ನಾ ಮಾಡಿ ಎಂದರೆ, ನಮ್ಮಲ್ಲಿ ಹಣ ಮುದ್ರಿಸುವ ಮೆಷಿನ್ ಇಲ್ಲ ಎಂದು ಉಡಾಫೆಯಿಂದ ಅಧಿಕಾರ ಮುಗಿಸಿದರು. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ 29000 ಕೋಟಿ ಗುತ್ತಿಗೆದಾರರ ಹಣ ಬಾಕಿ ಉಳಿಸಿ ಹೋದರು. ಇದರಲ್ಲಿ 23 ಸಾವಿರ ಕೋಟಿ ತೀರಿಸಿದ್ದೀವಿ. ಉಳಿದದ್ದನ್ನೂ ತೀರಿಸ್ತೀವಿ ಎಂದರು. ನಾವು ನುಡಿದಂತೆ ನಡೆದು ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹನ್ನೆರಡು ವರ್ಷದಲ್ಲಿ ತಾವೇ ಹೇಳಿದ್ದರಲ್ಲಿ ಒಂದನ್ನೂ ಜಾರಿ ಮಾಡಲಿಲ್ಲ. ಕೇವಲ ಅದಾನಿ ಮತ್ತು ಅಂಬಾನಿ ಇಬ್ಬರಿಗೆ ಮಾತ್ರ ಲಾಭ ಮಾಡಿಕೊಟ್ಟಿದ್ದನ್ನು ವಿವರಿಸಿದರು. ಹೀಗಾಗಿ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು, ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ಸಮರ್ಥ್ ಶಾಮನೂರು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ: ಟೆಕ್ಕಿ ಯುವತಿ ಆತ್ಮಹತ್ಯೆ
ಹೈದರಾಬಾದ್: ಹೆಚ್ಚುವರಿ ವರದಕ್ಷಿಣೆ ತರುವಂತೆ ಪತಿಯ ಕಿರುಕುಳದಿದ ನೊಂದ ಬಿಹಾರದ 26 ವರ್ಷ ವಯಸ್ಸಿನ ಸಾಫ್ಟ್ವೇರ್ ಎಂಜಿನಿಯರ್ ಯುವತಿಯೊಬ್ಬರು, ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನ ಸೈಬರಾಬಾದ್ ಪ್ರದೇಶದಲ್ಲಿ ನಡೆದಿದೆ. ಇಶಿತಾ ಯಾದವ್ ಅವರು ಬುಧವಾರ ಸಂಜೆ ತನ್ನ ಅಪಾರ್ಟ್ಮೆಂಟ್ನ ಹಾಲ್ನಲ್ಲಿರುವ ಫ್ಯಾನ್ ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ ಮೂಲದ ಇಶಿತಾ ಹಾಗೂ ಮಧ್ಯಪ್ರದೇಶದ ನೀರಜ್ ಅವರಿಗೆ 2020ರಲ್ಲಿ ಸಾಮಾಜಿಕ ಜಾಲತಾಣವೊಂದರ ಮೂಲಕ ಪರಸ್ಪರ ಪರಿಚಯವಾಗಿತ್ತು. ಐದು ವರ್ಷಗಳ ಕಾಲ ಪ್ರೇಮ ಸಂಬಂಧ ಹೊಂದಿದ್ದ ಅವರು ಫೆಬ್ರವರಿ 20ರಂದು ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಪಾಟ್ನಾದಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ದಂಪತಿಯು ಹೈದರಾಬಾದ್ ಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಅವರು ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಹೆಚ್ಚುವರಿ ವರದಕ್ಷಿಣೆಯನ್ನು ತರುವಂತೆ ನೀರಜ್ ಪತ್ನಿ ಇಶಿತಾಳ ಮೇಲೆ ಒತ್ತಡ ಹೇರತೊಡಗಿದ ಬಳಿಕ ದಂಪತಿಯ ನಡುವೆ ಭಿನ್ನಾಭಿಪ್ರಾಯ ಬೆಳೆಯಿತೆಂದು ಮೃತಳ ಪಾಲಕರು ತಿಳಿಸಿದ್ದಾರೆ. ಅಲ್ಲದೆ ತಾನು ಇತ್ತೀಚೆಗೆ ಆರಂಭಿಸಿದ ಸ್ಟಾರ್ಟ್ಅಪ್ ಕಂಪೆನಿಯಲ್ಲಿ ಹಣ ಹೂಡುವಂತೆಯೂ ಇಶಿತಾಳನ್ನು ನೀರಜ್ ಬಲವಂತಪಡಿಸುತ್ತಿದ್ದನೆಂದು ಅವರು ಆಪಾದಿಸಿದ್ದಾರೆ. ಇಶಿತಾಳ ಪಾಲಕರ ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ
ಮುಂಬೈ: ದೇಶಾದ್ಯಂತ ಇಂದು ಏಪ್ರಿಲ್ 2ರಂದು ವಿಶ್ವ ಜಲ ದಿನ 2026 (World Water Day 2026) ಆಚರಿಸಲಾಗುತ್ತದೆ. ಈ ಪ್ರಯುಕ್ತ ರಿಲಯನ್ಸ್ ಫೌಂಡೇಷನ್ ವಿಶೇಷ ಅಭಿಯಾನ ಆರಂಭಿಸಿದ್ದು, ರಾಷ್ಟ್ರವ್ಯಾಪಿ Water4Life ಅಭಿಯಾನ ಆರಂಭಿಸಿದೆ. ಸಾವಿರಾರು ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದು, ಪ್ರಾಕೃತಿಕವಾಗಿ ನಮಗೆ ದೊರೆತ ಅದೆಷ್ಟೋ ಅತ್ಯಮೂಲ್ಯ ಜಲಮೂಲಗಳನ್ನು ಸಂರಕ್ಷಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಮಹತ್ವದ
ರಾಯ್ಪುರ: ಎನ್ಸಿಪಿ ಪಕ್ಷದ ಖಜಾಂಚಿ ರಾಮಾವತಾರ್ ಜಗ್ಗಿ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಚತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ದೋಷಿಯೆಂದು ಪರಿಗಣಿಸಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ಅಜಿತ್ ಜೋಗಿ ಚತ್ತೀಸ್ಗಡದ ಮುಖ್ಯಮಂತ್ರಿಯಾಗಿದ್ದಾಗ, 2003ರ ಜೂನ್ 4ರಂದು ರಾಮಾವತಾರ್ ಜಗ್ಗಿ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಎನ್ಸಿಪಿ ಪಕ್ಷದ ಬೃಹತ್ ರ್ಯಾಲಿಗೆ ಮುಂಚಿತವಾಗಿ ಜಗ್ಗಿ ಅವರು ಅಮಿತ್ ಜೋಗಿ ಹತ್ಯೆ ಸಂಚಿನ ರೂವಾರಿಯೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು. 2007ರ ಮೇ 31ರಂದು ಪ್ರಕರಣಕ್ಕೆ ಸಂಬಂಧಿಸಿ 28 ಮಂದಿಯನ್ನು ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿತ್ತು, ಆದರೆ ಅಮಿತ್ ಜೋಗಿ ಅವರನ್ನು ದೋಷಮುಕ್ತಗೊಳಿಸಿತ್ತು. ಅಮಿತ್ ಜೋಗಿ ಅವರ ದೋಷಮುಕ್ತಿಯನ್ನು ಪ್ರಶ್ನಿಸಿ ಸಿಬಿಐ 2011ರಲ್ಲಿ ಚತ್ತೀಸ್ ಗಡ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಆದರೆ ವಿಳಂಬವಾದ ಹಿನ್ನೆಲೆಯಲ್ಲಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಕುರಿತು ಚತ್ತೀಸ್ಗಡ ಸರಕಾರ ಹಾಗೂ ರಾಮಾವತಾರ್ ಜಗ್ಗಿ ಅವರ ಪುತ್ರ ಸತೀಶ್ ಜಗ್ಗಿ ಅವರ ಮನವಿಯನ್ನು ಕೂಡಾ ನ್ಯಾಯಾಲಯ ತಿರಸ್ಕರಿಸಿತ್ತು. ತರುವಾಯ ಸಿಬಿಐ, ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನ ಮೆಟ್ಟಲೇರಿತ್ತು. ನವೆಂಬರ್ ನಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಕರಣವನ್ನು ಹೈಕೋರ್ಟ್ ನ ಪ್ರಸ್ತಾವನೆಗೆ ಮರಳಿ ಒಪ್ಪಿಸಿದ್ದು, ಸಿಬಿಐ ಅರ್ಜಿಯನ್ನು ಹೊಸದಾಗಿ ಪರಿಗಣಿಸುವಂತೆ ನಿರ್ದೇಶಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಗಣನೀಯವಾದ ವಿಳಂಬದ ಬಳಿಕ ಸಿಬಿಐ ಅರ್ಜಿಯನ್ನು ಸಲ್ಲಿಸಿದೆಯಾದರೂ, ಅಮಿತ್ ಜೋಗಿ ವಿರುದ್ಧ ಹೊರಿಸಲಾದ ದುರಾಳಿ ರಾಜಕೀಯ ಪಕ್ಷದ ನಾಯಕನ ಕೊಲೆ ಸಂಚಿನ ಆರೋಪ ಕೂಡಾ ಅತ್ಯಂತ ಗುರುತರವಾದುದಾಗಿದೆ ಎಂದು ಅಭಿಪ್ರಾಯಿಸಿತು. ಚತ್ತೀಸ್ಗಡ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ವರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಗುರುವಾರ ನೀಡಿದ ಆದೇಶದಲ್ಲಿ ಅಮಿತ್ ಜೋಗಿ ಅವರ ದೋಷಮುಕ್ತಿಯನ್ನು ತಳ್ಳಿಹಾಕಿತು ಹಾಗೂ ಶರಣಾಗುವಂತೆ ಅವರಿಗೆ ಆದೇಶಿಸಿತ್ತು. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಜೋಗಿ ಅವರು, ಸಾಮಾಜಿಕ ಜಾಲತಾಣವೊಂದರಲ್ಲಿ ನೀಡಿದ ಹೇಳಿಕೆಯಲ್ಲಿ, ತನಗೆ ಘೋರ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ‘‘ ನನ್ನ ವಿರುದ್ಧದ ಸಿಬಿಐ ಮನವಿಯನ್ನು ಹೈಕೋರ್ಟ್ ,ಕೇವಲ 30 ನಿಮಿಷಗಳ ಆಲಿಕೆಯಲ್ಲಿ ಪುರಸ್ಕರಿಸಿತು. ನನಗೆೆ ಅಹವಾಲನ್ನು ಮಂಡಿಸಲೂ ಅವಕಾಶ ನೀಡಲಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯನಗರ | ಡಿವೈಎಸ್ಪಿ ಸಂತೋಷ್ ಚೌವ್ಹಾಣ್, ಪಿಎಸ್ಐ ಕೋದಂಡಪಾಣಿ ಅವರಿಗೆ ಮುಖ್ಯಮಂತ್ರಿ ಪದಕ
ಹೊಸಪೇಟೆ/ವಿಜಯನಗರ: ಹರಪನಹಳ್ಳಿ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಹಾಗೂ ಟಿಬಿ ಡ್ಯಾಂ ಪೊಲೀಸ್ ಠಾಣೆಯ ಪಿಎಸ್ಐ ಕೋದಂಡಪಾಣಿ ಅವರಿಗೆ ರಾಜ್ಯ ಸರ್ಕಾರವು ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದ್ದು, ಪೊಲೀಸ್ ಇಲಾಖೆಯಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಅಧಿಕಾರಿಗಳ ಕಾರ್ಯಕ್ಷಮತೆಗೆ ಇದು ಮತ್ತೊಂದು ಗುರುತಾಗಿದೆ. ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಅವರು ಕರ್ತವ್ಯ ನಿರ್ವಹಣೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೆರೆದಿದ್ದು, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದೇ ರೀತಿ, ಪಿಎಸ್ಐ ಕೋದಂಡಪಾಣಿ ಅವರು ಟಿಬಿ ಡ್ಯಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿಸ್ತಿನ ಆಡಳಿತ, ತ್ವರಿತ ಕ್ರಮ ಮತ್ತು ಜನಸಾಮಾನ್ಯರೊಂದಿಗೆ ಸ್ನೇಹಪೂರ್ಣ ಸಂಪರ್ಕ ಸಾಧಿಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ.
ವಿಜಯನಗರ | ಪೊಲೀಸ್ ಧ್ವಜ ದಿನಾಚರಣೆ : ಶೌರ್ಯ, ತ್ಯಾಗ ಮತ್ತು ನಂಬಿಕೆಯ ಪ್ರತೀಕ : ಸಲೀಂ ಪಾಷಾ
ವಿಜಯನಗರ (ಹೊಸಪೇಟೆ) : ಪೊಲೀಸರ ಶೌರ್ಯ, ತ್ಯಾಗ ಮತ್ತು ಸಾರ್ವಜನಿಕರು ಅವರ ಮೇಲಿಟ್ಟ ನಂಬಿಕೆಯ ಪ್ರತೀಕ ದಿನವೇ ಪೊಲೀಸ್ ಧ್ವಜ ದಿನಾಚರಣೆ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಶ ಹೇಳಿದರು. ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯ ಕಾಯ್ದೆಯನ್ನು 1963ರಲ್ಲಿ ಅಂಗೀಕರಿಸಿ, 1965ರ ಎ.2ರಂದು ಜಾರಿಗೆ ತರಲಾಯಿತು. ಈ ಕಾಯ್ದೆಯು ಇಲಾಖೆಗೆ ಸಂಘಟನೆ ಹಾಗೂ ಕಾನೂನು ಜಾರಿಗೆ ಅಧಿಕಾರ ನೀಡಿದ ಮಹತ್ವದ ಘಟ್ಟವಾಗಿದೆ. ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿವರ್ಷ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಪೊಲೀಸರ ಸೇವೆಯನ್ನು ಶ್ಲಾಘಿಸಿದ ಅವರು, ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರವಾಗುವಂತೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ಅಗತ್ಯ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದು, ಕರ್ತವ್ಯದ ಒತ್ತಡವನ್ನು ಮನೆಗೆ ಕೊಂಡೊಯ್ಯದೇ ಕುಟುಂಬದೊಂದಿಗೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶ್ರೀಹರಿ ಬಾಬು, ಸಂತೋಷ್ ಚೌವ್ಹಾಣ್ ಹಾಗೂ ಕೋದಂಡ ಪಾಣಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, 2025-26ನೇ ಸಾಲಿನಲ್ಲಿ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು. ಸಿಬ್ಬಂದಿಗಳಿಗಾಗಿ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರಗಳು, ಆರೋಗ್ಯ ಭಾಗ್ಯ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು. ಆರೋಗ್ಯ ಭಾಗ್ಯ ಯೋಜನೆಯಡಿ 2025 ಎ.1ರಿಂದ ಈವರೆಗೆ 268 ಮಂದಿ (ಸಿಬ್ಬಂದಿ ಮತ್ತು ಕುಟುಂಬದವರು) ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸ್ ಕಲ್ಯಾಣ ನಿಧಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ 1.25 ಲಕ್ಷ ರೂ., ಕನ್ನಡಕ ಖರೀದಿಗೆ 71,540ರೂ., ಮರಣೋತ್ತರ ಸಹಾಯಧನವಾಗಿ 60 ಸಾವಿರ ರೂ. ಸೇರಿದಂತೆ ಒಟ್ಟು 12.61 ಲಕ್ಷ ರೂ. ನೆರವು ನೀಡಲಾಗಿದೆ. ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೂ ಆರೋಗ್ಯ ಹಾಗೂ ಕಲ್ಯಾಣ ಕಾರ್ಯಕ್ರಮಗಳಡಿ ನೆರವು ಒದಗಿಸಲಾಗಿದ್ದು, 32 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಿಗೆ 2.36 ಲಕ್ಷ ರೂ. ಧನಸಹಾಯ ನೀಡಲಾಗಿದೆ ಎಂದು ವಿವರಿಸಿದರು. ಧ್ವಜ ಮಾರಾಟದಿಂದ 26.82 ಲಕ್ಷ ರೂ. ಸಂಗ್ರಹ : 2025ರ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಧ್ವಜ ಮಾರಾಟದಿಂದ 26,82,600 ರೂ. ಸಂಗ್ರಹವಾಗಿದ್ದು, ಅದರಲ್ಲಿ 50% ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಉಳಿದ 50% ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಆರು ತುಕಡಿಗಳಿಂದ ಆಕರ್ಷಕ ಪೆರೇಡ್ ನಡೆಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಪೊಲೀಸ್ ಉಪಾಧೀಕ್ಷಕ ಡಾ. ಮಂಜುನಾಥ್ ವಂದಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಕೋರ್ಟ್ ಮೊರೆ ಹೋದ ನುವಾನ್ ತುಷಾರ; ಕಾರಣವೇನು?
ಕೊಲಂಬೊ: ತನಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡಲು ನಿರಾಕ್ಷೇಪಣೆ ಪ್ರಮಾಣಪತ್ರ (ಎನ್ಒಸಿ) ನೀಡಲು ನಿರಾಕರಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ಸಿ) ವಿರುದ್ಧ ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ನುವಾನ್ ತುಷಾರ ಕೊಲಂಬೊ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ತನ್ನ ನೂತನ ಹಾಗೂ ಕಠಿಣ ದೈಹಿಕ ಕ್ಷಮತೆ ನಿಯಮಗಳ ಅಡಿಯಲ್ಲಿ ತುಷಾರಗೆ ನಿರಾಕ್ಷೇಪಣೆ ಪ್ರಮಾಣಪತ್ರವನ್ನು ನೀಡಲು ಶ್ರೀಲಂಕಾ ಕ್ರಿಕೆಟ್ ನಿರಾಕರಿಸಿತ್ತು. ಶ್ರೀಲಂಕಾ ಕ್ರಿಕೆಟ್ನೊಂದಿಗಿನ ತನ್ನ ಗುತ್ತಿಗೆಯು 2026 ಮಾರ್ಚ್ 31ರಂದು ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ತಾನು ಉದ್ದೇಶಿಸಿದ್ದೆ ಎಂದು ತುಷಾರ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ. ಹಾಗಾಗಿ, ಎಸ್ಎಲ್ಸಿಯು ನೂತನ ದೈಹಿಕ ಕ್ಷಮತೆ ನಿಯಮಗಳನ್ನು ತನಗೆ ಅನ್ವಯಿಸಿರುವುದು ಸರಿಯಲ್ಲ ಹಾಗೂ ಅದು ತನ್ನ ಜೀವನೋಪಾಯಕ್ಕೆ ನೀಡಿದ ಹೊಡೆತವಾಗಿದೆ ಎಂದು ಅವರು ಆರೋಪಿಸಿದ್ದಾರೆ. ತುಷಾರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾಗಿದ್ದಾರೆ. ಐಪಿಎಲ್ ನಿಂದ ಹೊರಬಿದ್ದಿರುವುದರಿಂದ ತನ್ನ ಆದಾಯ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಮೊಕದ್ದಮೆಯಲ್ಲಿ, ಎಸ್ಎಲ್ಸಿ ಅಧ್ಯಕ್ಷ ಶಮ್ಮಿ ಸಿಲ್ವ, ಕಾರ್ಯದರ್ಶಿ ಬಂಡುಲಾ ದಿಸ್ಸನಾಯಕೆ, ಖಜಾಂಚಿ ಸುಜೀವ ಗೋದಲಿಯಡ್ಡ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆ್ಯಶ್ಲೇ ಡಿ ಸಿಲ್ವರನ್ನು ಪ್ರತಿವಾದಿಗಳಾಗಿ ಮಾಡಲಾಗಿದೆ. ತುಷಾರ ಅವರ ಮೊಕದ್ದಮೆಯ ವಿಚಾರಣೆಯು ಎಪ್ರಿಲ್ 9ರಂದು ನಡೆಯಲಿದೆ. ಅದಕ್ಕಿಂತ ಮೊದಲು ಈಸ್ಟರ್ ವಾರಾಂತ್ಯದಲ್ಲಿ ನ್ಯಾಯಾಲಯಗಳು ಮುಚ್ಚಿರುತ್ತವೆ. ಅದೂ ಅಲ್ಲದೆ, ಅರ್ಜಿಯು ಒಂದೇ ವಿಚಾರಣೆಯಲ್ಲಿ ಇತ್ಯರ್ಥಗೊಳ್ಳುವ ಸಾಧ್ಯತೆ ಅತ್ಯಲ್ಪ. ಹಾಗಾಗಿ, ಈ ಬಾರಿಯ ಐಪಿಎಲ್ನಲ್ಲಿ ತುಷಾರ ಆಡುವ ಸಾಧ್ಯತೆಯೂ ಅತ್ಯಲ್ಪ.
ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ದಕ್ಷಿಣ ಆಫ್ರಿಕಾದ ಬ್ಯಾಟರ್ ಡುಸೆನ್ ನಿವೃತ್ತಿ
ಡರ್ಬನ್: ದಕ್ಷಿಣ ಆಫ್ರಿಕಾದ ಸೀಮಿತ ಓವರ್ ಕ್ರಿಕೆಟ್ ತಂಡದ ಪ್ರಸಿದ್ಧ ಬ್ಯಾಟರ್ ರಾಸಿ ವಾನ್ಡೆರ್ ಡುಸೆನ್ ಅವರು ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವುದಾಗಿ ಗುರುವಾರ ಪ್ರಕಟಿಸಿದ್ದಾರೆ. 35ರ ಹರೆಯದ ಡುಸೆನ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ನಿವೃತ್ತಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ಹಾಗೂ ಗೌರವದ ವಿಷಯವಾಗಿತ್ತು ಎಂದಿದ್ದಾರೆ. ಡುಸೆನ್ ಝಿಂಬಾಬ್ವೆ ವಿರುದ್ಧ 29ನೇ ವಯಸ್ಸಿನಲ್ಲಿ ಟಿ-20 ಕ್ರಿಕೆಟಿಗೆ ಕಾಲಿಟ್ಟಿದ್ದರು. ಆ ನಂತರ ದೇಶೀಯ ಹಾಗೂ ಜಾಗತಿಕ ಟಿ-20 ಲೀಗ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2019ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ನಂತರ ಡುಸೆನ್ ಅವರು 18 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ಹೆಚ್ಚು ಮಿಂಚಿರುವ ಡುಸೆನ್, 2019ರ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾದ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದಕ್ಷಿಣ ಆಫ್ರಿಕಾದ ಮಧ್ಯಮ ಸರದಿಯಲ್ಲಿ ಬ್ಯಾಟಿಂಗ್ ಶಕ್ತಿಯಾಗಿದ್ದ ಡುಸೆನ್ ಅವರು 71 ಏಕದಿನ ಪಂದ್ಯಗಳಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ ಆರು ಶತಕ ಹಾಗೂ 17 ಅರ್ಧಶತಕಗಳ ಸಹಿತ ಒಟ್ಟು 2,657 ರನ್ ಗಳಿಸಿದ್ದಾರೆ. ಎಬಿಡಿ ವಿಲಿಯರ್ಸ್ ನಂತರ ಗರಿಷ್ಠ ಸರಾಸರಿ ಹೊಂದಿರುವ ಎರಡನೇ ಬ್ಯಾಟರ್ ಆಗಿದ್ದಾರೆ. ಡುಸೆನ್ ಅವರು 18 ಟೆಸ್ಟ್ ಪಂದ್ಯಗಳಲ್ಲಿ ಆರು ಅರ್ಧಶತಕಗಳ ಸಹಿತ ಒಟ್ಟು 905 ರನ್ ಗಳಿಸಿದ್ದಾರೆ. 57 ಟಿ-20 ಪಂದ್ಯಗಳಲ್ಲಿ 10 ಅರ್ಧಶತಕಗಳ ಸಹಿತ ಒಟ್ಟು 1,406 ರನ್ ಕಲೆ ಹಾಕಿದ್ದಾರೆ. ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರೂ ದೇಶೀಯ ಕ್ರಿಕೆಟ್ ನಲ್ಲಿ ಲಯನ್ಸ್ ತಂಡದ ಪರ ಆಡುವುದನ್ನು ಮುಂದುವರಿಸಲಿದ್ದು, ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಲಿದ್ದಾರೆ. ‘‘ದಕ್ಷಿಣ ಆಫ್ರಿಕಾ ತಂಡದ ಜೆರ್ಸಿಯನ್ನು ಧರಿಸಿ ಆಡುವ ಸಮಯ ಮುಗಿದಿದೆ. ಆದರೆ ನನ್ನ ಕ್ರಿಕೆಟ್ ಪಯಣ ಇಲ್ಲಿಗೆ ನಿಂತಿಲ್ಲ. ನನ್ನ ನೆಚ್ಚಿನ ಲಯನ್ಸ್ ತಂಡದ ಪರ ಆಡುವುದನ್ನು ಮುಂದುವರಿಸುವೆ. ದಕ್ಷಿಣ ಆಫ್ರಿಕಾದ ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಮಾರ್ಗದರ್ಶನ ಹಾಗೂ ಸಲಹೆ ನೀಡುವ ಮೂಲಕ ಸುಂದರ ಕ್ರೀಡೆಗೆ ಮರಳಿ ಕೊಡುಗೆ ನೀಡಲು ಬದ್ಧನಾಗಿದ್ದೇನೆ. ನಾನು ದಕ್ಷಿಣ ಆಫ್ರಿಕಾವನ್ನು, ಕ್ರಿಕೆಟನ್ನು ಇಷ್ಟಪಡುವೆ. ಎಲ್ಲರಿಗೂ ಧನ್ಯವಾದಗಳು’’ಎಂದು ಡುಸೆನ್ ಹೇಳಿದ್ದಾರೆ.
ಕಾವೂರು: ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
ಕಾವೂರು: ಮೀನು ಹಿಡಿಯಲು ಹೋಗಿ ದೋಣಿ ಮಗುಚಿ ನದಿಯಲ್ಲಿ ನಾಪತ್ತೆಯಾಗಿದ್ದ ರಾಯಲ್ (27) ಎಂಬಾತನ ಮೃತದೇಹವು ಗುರುವಾರ ಪತ್ತೆಯಾಗಿದೆ. ಘಟನೆ ನಡೆದ 24 ಗಂಟೆಯ ಬಳಿ ದೋಣಿ ಮುಳುಗಿದ ಸ್ಥಳದಲ್ಲೇ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅದನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದು ಬಂದಿದೆ. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬುಧವಾರ ದೋಣಿಯೊಂದರಲ್ಲಿ ಮೀನು ಹಿಡಿಯಲು ಫಲ್ಗುಣಿ ನದಿಗೆ ತೆರಳಿದ್ದ ವೇಳೆ ದೋಣಿ ಮಗುಚಿ ಇಬ್ಬರು ಯುವಕರು ನೀರು ಪಾಲಾಗಿದ್ದು, ಓರ್ವ ಈಜಿ ದಡ ಸೇರಿದ್ದ. ನೀರು ಪಾಲಾಗಿದ್ದ ಇಬ್ಬರ ಪೈಕಿ ಕುಂಜತ್ತಬೈಲು ನಿವಾಸಿ ಗಣೇಶ್ ಅವರ ಮೃತದೇಹ ಬುಧವಾರ ಮಧ್ಯಾಹ್ನ ನದಿಯಲ್ಲಿ ಪತ್ತೆಯಾಗಿತ್ತು. ರಾಯಲ್ ಅವರ ಮೃಹದೇಹ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕದಳ ಮತ್ತು ಸ್ಥಳೀಯ ಈಜು ತಜ್ಞರ ತಂಡ ಸತತ ಹುಡುಕಾಟ ನಡೆಸಿ ರಾತ್ರಿ ಕಾರ್ಯಾಚರಣೆ ಸ್ಥಗಿತ ಗೊಳಿಸಿತ್ತು. ಇಂದು ಬೆಳಗ್ಗೆ ರಾಯಲ್ ಅವರ ಮೃತದೇಹ ದೋಣಿ ಮುಳುಗಿದ್ದ ಸ್ಥಳದಲ್ಲೇ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಪನಹಳ್ಳಿ | ಅದ್ದೂರಿಯಿಂದ ಜರುಗಿದ ಕೋಲಶಾಂತೆಶ್ವರ ರಥೋತ್ಸವ
ಹರಪನಹಳ್ಳಿ: ಪಂಚಗಣಾಧೀಶರಲ್ಲಿ ಒಬ್ಬರಾದ ಅರಸೀಕೆರೆ ಶ್ರೀ ಕೋಲಶಾಂತೆಶ್ವರ ರಥೋತ್ಸವವು ಗುರುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಅರಸೀಕೆರೆಯ ಹೃದಯ ಭಾಗದಲ್ಲಿ ನಿರ್ಮಿಸಲಾದ ಆಕರ್ಷಕ ರಥವನ್ನು ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟಗಳು, ದೇವಾನುದೇವತೆಗಳ ಭಾವಚಿತ್ರಗಳು, ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪಮಾಲೆಗಳೊಂದಿಗೆ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ಭಜನೆ ಹಾಗೂ ವಾದ್ಯಗಳ ಮಧ್ಯೆ ಕೋಲಶಾಂತೇಶ್ವರ ದೇವಸ್ಥಾನಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ಶ್ರೀ ಕೋಲಶಾಂತೆಶ್ವರ ಮಠದ ಶಾಂತ ಲಿಂಗ ದೇಶೀಕೇಂದ್ರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ರಥಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನೆರವೇರಿದ ಕೂಡಲೇ ಭರ್ಜರಿ ಜಯಘೋಷಗಳ ನಡುವೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಭಕ್ತರು ಹರಕೆ ತೀರಿಸಲು ರಥದ ಮೇಲೆ ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀ ಕೋಲಶಾಂತೆಶ್ವರ ಮಠದ ಶಾಂತ ಲಿಂಗ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಸಂಸದ ವೈ. ದೇವೇಂದ್ರಪ್ಪ, ಬಿಡಿಸಿಸಿ ನಿರ್ದೇಶಕ ವೈ.ಡಿ. ಅಣ್ಣಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದರು.
ಪಶ್ಚಿಮ ಏಶ್ಯಾ ಸಂಘರ್ಷ ಹಿನ್ನೆಲೆ 40 ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ ಮಾಡಿದ ಕೇಂದ್ರ ಸರಕಾರ
ಹೊಸದಿಲ್ಲಿ: ಪಶ್ಚಿಮ ಏಶ್ಯಾ ಸಂಘರ್ಷದಿಂದಾಗಿ ಉಂಟಾಗಿರುವ ಪೂರೈಕೆ ಅಡಚಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಗುರುವಾರ ಸುಮಾರು 40 ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಜೂ.30ರವರೆಗೆ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ದೇಶೀಯ ಕೈಗಾರಿಕೆಗಳಿಗೆ ಪ್ರಮುಖ ಪೆಟ್ರೋಕೆಮಿಕಲ್ ಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಉತ್ಪಾದನಾ ವಲಯದ ವೆಚ್ಚಗಳನ್ನು ತಗ್ಗಿಸಲು ಮತ್ತು ದೇಶದಲ್ಲಿ ಪೂರೈಕೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ತಾತ್ಕಾಲಿಕ ಕ್ರಮವಾಗಿ ಈ ವಿನಾಯಿತಿಯನ್ನು ಘೋಷಿಸಲಾಗಿದೆ ಎಂದು ವಿತ್ತ ಸಚಿವಾಲಯವು ತಿಳಿಸಿದೆ. ವಿನಾಯಿತಿ ಘೋಷಿಸಲ್ಪಟ್ಟಿರುವ ಉತ್ಪನ್ನಗಳಲ್ಲಿ ಪಾಲಿಪ್ರೊಪಿಲೀನ್, ಪಾಲಿಸ್ಟೈರೀನ್,ಪಾಲಿಯಾಲ್ಸ್,ಪಾಲಿಬ್ಯುಟಾಡೀನ್ ಮತ್ತು ಅನಹೈಡ್ರಸ್ ಅಮೋನಿಯಾ ಸೇರಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲ ಮತ್ತು ಈಥೇನ್ ಬಳಸಿ ಕೆಲವು ಪೆಟ್ರೋಕೆಮಿಕಲ್ ಉತ್ಪನ್ನಗಳು ಸ್ಥಳೀಯವಾಗಿ ತಯಾರಾಗುತ್ತಿದ್ದರೂ ಭಾರತವು ಪ್ರಮುಖವಾಗಿ ಆಮದುಗಳ ಮೇಲೆಯೇ ಅವಲಂಬಿತವಾಗಿದೆ. ಗುರುವಾರ ಘೋಷಿಸಲಾದ ವಿನಾಯಿತಿಯಿಂದ ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧಿ, ರಾಸಾಯನಿಕಗಳು, ವಾಹನ ಬಿಡಿಭಾಗಗಳು ಮತ್ತು ಇತರ ತಯಾರಿಕಾ ಕ್ಷೇತ್ರಗಳಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕಲಬುರಗಿ | ಸಿದ್ಧಗಂಗಾ ಮಠದ ಶ್ರೀಗೆ ಮರಣೋತ್ತರ ಭಾರತ ರತ್ನ ನೀಡಿ : ಡಾ.ಕೇದಾರಲಿಂಗಯ್ಯ ಹಿರೇಮಠ
ಕಲಬುರಗಿ: ತ್ರಿವಿಧ ದಾಸೋಹಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಬೇಕು ಎಂದು ರೈತ ಪರ ಚಳವಳಿಗಾರ ಡಾ. ಕೇದಾರಲಿಂಗಯ್ಯ ಹಿರೇಮಠ ಅವರು ಒತ್ತಾಯಿಸಿದರು. ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಸಿದ್ಧಿಯಗಂಗಾ ಪ್ರಶಸ್ತಿ’ ಪ್ರದಾನಿಸಿ ಮಾತನಾಡಿದ ಅವರು, ಬಡವರು ಹಾಗೂ ನಿರ್ಗತಿಕ ಮಕ್ಕಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡಿದ ಮಹಾ ದಾಸೋಹ ಮೂರ್ತಿಗೆ ಭಾರತ ರತ್ನ ನೀಡಿದರೆ ಸರ್ಕಾರದ ಗೌರವ ಹೆಚ್ಚುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಾತಿ-ಮತ ಭೇದವಿಲ್ಲದೆ ಸಮಾನತೆಯಿಂದ ಸೇವೆ ಸಲ್ಲಿಸಿದ ಡಾ. ಶಿವಕುಮಾರ ಮಹಾಸ್ವಾಮಿಗಳು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದ್ದಾರೆ ಎಂದು ಹೇಳಿದರು. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಮಾತನಾಡಿ, ಮಾನವೀಯತೆ ಮತ್ತು ದಾಸೋಹ ಸೇವೆಗೆ ಆದ್ಯತೆ ನೀಡಿದ ಮಹಾನ್ ಸಂತರಿಗೆ ಭಾರತ ರತ್ನ ಘೋಷಿಸುವಂತೆ ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಾಗರೆಡ್ಡಿ ಪಾಟೀಲ ಕರದಾಳ, ಡಾ. ಶರಣು ಬಿ. ಗದ್ದುಗೆ, ಅಣವೀರ ಇಂಗಿನಶೆಟ್ಟಿ, ಗುರುಪಾದಪ್ಪ ಮಾಟೂರ, ನಾಗರಾಜ ಜಮದರಖಾನಿ, ಗೌರಿ ಚಿಚಕೋಟಿ, ಬಸವರಾಜ ಪಟೇದ್, ಸುನೀಲ ಮಾನ್ಪಡೆ, ಮಂದಾಗಿನಿ ಪಿ. ಅವರಿಗೆ ‘ಸಿದ್ಧಿಯಗಂಗಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಅದ್ದೂರಿಯಿಂದ ಜರುಗಿದ ಶಹಾಬಾದ್ ಶರಣಬಸವೇಶ್ವರ ರಥೋತ್ಸವ
ಶಹಾಬಾದ್: ನಗರದಲ್ಲಿ ಗುರುವಾರ ಮಹಾದಾಸೋಹಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ ಅತ್ಯಂತ ವೈಭವ ಹಾಗೂ ಶ್ರದ್ಧಾ ಭಕ್ತಿಯಿಂದ ಜರುಗಿತು. ಸಾವಿರಾರು ಭಕ್ತರು ಈ ಧಾರ್ಮಿಕ ಮಹೋತ್ಸವಕ್ಕೆ ಸಾಕ್ಷಿಯಾದರು. ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ರಥೋತ್ಸವದ ನಿಮಿತ್ತ ಬೆಳಗ್ಗೆಯಿಂದಲೇ ಭರದ ಸಿದ್ಧತೆ ಕೈಗೊಳ್ಳಲಾಗಿತ್ತು. ತೇರಿಗೆ ಹೂವು-ತಳಿರು ತೋರಣಗಳು ಹಾಗೂ ಬಣ್ಣ ಬಣ್ಣದ ಪರಾರಿಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದವು. ಮಧ್ಯಾಹ್ನ ಅಡವಿತಾತರ ಗದ್ದುಗೆಯಿಂದ ದೇವಾಲಯದವರೆಗೆ ನಂದಿಕೋಲು ಉತ್ಸವ ನಡೆಯಿತು. ಸಾಯಂಕಾಲ ಅಪಾರ ಸಂಖ್ಯೆಯ ಭಕ್ತರು ಭಕ್ತಿ ಭಾವದಿಂದ ರಥವನ್ನು ಎಳೆದರು. ರಥ ಮುಂದಕ್ಕೆ ಸಾಗುತ್ತಿದ್ದಂತೆ “ಶರಣಬಸವೇಶ್ವರ ಮಹಾರಾಜ ಕಿ ಜೈ” ಎಂಬ ಘೋಷಣೆಗಳು ಮೊಳಗಿದವು. ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾತ್ರಿ ಗೀಗೀ ಪದಗಳ ಕಾರ್ಯಕ್ರಮ ಜರುಗಿದ್ದು, ಜಾತ್ರೆಗೆ ಆಗಮಿಸಿದ ಭಕ್ತರಿಗೆ ವೀರಶೈವ ಯುವಕ ಮಂಡಳಿಯಿಂದ ದಾಸೋಹ ಸೇವೆ ನೀಡಲಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸ್ ಠಾಣೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಲಬುರಗಿ | ಸೈಬರ್ ವಂಚನೆ, ಮಾದಕ ಜಾಲ ವಿರುದ್ಧ ತಂತ್ರಜ್ಞಾನ ಬಳಕೆ ಅಗತ್ಯ: ಇಸ್ಮಾಯಿಲ್ ಶರೀಫ್
ಕಲಬುರಗಿ : ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಮಾದಕ ದ್ರವ್ಯ ಜಾಲದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ಪೊಲೀಸ್ ಇಲಾಖೆ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಮೊಹಮ್ಮದ್ ಇಸ್ಮಾಯಿಲ್ ಷರೀಫ್ ಹೇಳಿದರು. ಗುರುವಾರ ನಗರದ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ‘ಮನೆ ಮನೆಗೆ ಪೊಲೀಸ್’ ಯೋಜನೆಯಡಿ ನಿಖರ ದತ್ತಾಂಶ ಸಂಗ್ರಹಿಸುವುದು ಹಾಗೂ ಅಪರಾಧಿಗಳ ಪತ್ತೆಗೆ ‘ಹೂ ಈಸ್ ಹೂ’ ಡೈರಿಗಳನ್ನು ನಿರ್ವಹಿಸುವುದು ಅಗತ್ಯವೆಂದು ಹೇಳಿದರು. ಪೊಲೀಸ್ ಸಿಬ್ಬಂದಿಗಳು ಆರ್ಥಿಕ ಭದ್ರತೆಗಾಗಿ ಉಳಿತಾಯದ ಕಡೆಗೆ ಹಾಗೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ಹಾಗೂ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆಯುತ್ತಿರುವುದು ಗಂಭೀರ ಆತಂಕಕಾರಿ ಸಂಗತಿ ಎಂದು ಹೇಳಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸಲು ಸ್ವಾಗತಿಸಿ ಮಾತನಾಡಿ, 1965ರ ಏಪ್ರಿಲ್ 2ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. 1984ರಿಂದ ಪೊಲೀಸ್ ಧ್ವಜ ದಿನ ಮತ್ತು ಪೊಲೀಸ್ ಕಲ್ಯಾಣ ದಿನಗಳನ್ನು ಒಂದಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿ ಸೇವೆಯ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಬೇಕು ಎಂದು ಅಭಿಪ್ರಾಯಪಟ್ಟರು. ಅತ್ಯುತ್ತಮ ಸೇವೆ ಸಲ್ಲಿಸಿದ 153 ಸಿಬ್ಬಂದಿಗಳಿಗೆ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ ಹಾಗೂ ‘ಡಿಜಿ ಕಮೆಂಡೇಶನ್ ಡಿಸ್ಕ್’ ನೀಡಲಾಗುತ್ತದೆ. ಇದರಲ್ಲಿ ಜಿಲ್ಲೆಯ ಐದು ಜನರಿಗೆ ಚಿನ್ನದ ಪದಕ ಲಭಿಸಿದೆ. ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಶೈಕ್ಷಣಿಕ ಧನಸಹಾಯ ಮತ್ತು ಆರೋಗ್ಯ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ 30,000 ರೂ. ನಿಂದ 50,000 ರೂ. ವರೆಗೆ ಶೈಕ್ಷಣಿಕ ಧನಸಹಾಯ ವಿತರಿಸಲಾಯಿತು. ನಿವೃತ್ತ ಸಿಬ್ಬಂದಿಗಳಿಗೆ ವೈದ್ಯಕೀಯ ನೆರವು ನೀಡಲಾಯಿತು. ಕರ್ತವ್ಯ ನಿರ್ವಹಣೆಯಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದ ಶಿವಪುತ್ರಪ್ಪ ಅಣ್ಣಾರಾವ್ ಶಳಗೆ ಅವರ ಕುಟುಂಬಕ್ಕೆ ಪೊಲೀಸ್ ಇಲಾಖೆ ವತಿಯಿಂದ ಸಂಗ್ರಹಿಸಿದ 9 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಪೊಲೀಸ್ ತುಕಡಿಗಳ ಪಥಸಂಚಲನ ನಡೆಯಿತು. ಪರೇಡ್ ಕಮಾಂಡರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಎಂಟು ತುಕಡಿಗಳು ಶಿಸ್ತಿನ ಪ್ರದರ್ಶನ ನೀಡಿದವು. ಮಹಿಳಾ ಪೊಲೀಸ್ ತುಕಡಿ ಸೇರಿದಂತೆ ಹಲವು ಘಟಕಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದವು. ಕಾರ್ಯಕ್ರಮದಲ್ಲಿ ಈಶಾನ್ಯ ವಲಯ ಪೊಲೀಸ್ ಉಪಮಹಾನಿರೀಕ್ಷಕ ಶಾಂತನು ಸಿನ್ಹಾ, ಆಂತರಿಕ ಭದ್ತತೆಯ ಗುಪ್ತ ವಾರ್ತೆಯ ಎಸ್.ಪಿ. ಎ.ಆರ್.ಕರ್ನಲ್, ಜಿಲ್ಲಾ ಉಪ ಪೊಲೀಸ್ ಆಯುಕ್ತ ಪ್ರವೀಣ್ ಎಚ್. ನಾಯಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಜಿಲ್ಲಾ ಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಶರಣಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಿವೃತ್ತ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ನನ್ನನ್ನು ಅಭ್ಯರ್ಥಿ, ಅವರ ತಂದೆ-ತಾಯಿ ಪ್ರಚಾರಕ್ಕೆ ಕರೆದೇ ಇಲ್ಲ : MLC ಅಬ್ದುಲ್ ಜಬ್ಬಾರ್
ನಮ್ಮ ಅವಶ್ಯಕತೆ ಇಲ್ಲ ಅಂತ ಬಿಟ್ಟಿದ್ದಾರಾ ಗೊತ್ತಿಲ್ಲ ಎಂದ ದಾವಣಗೆರೆಯ ಹಿರಿಯ ಕೈ ನಾಯಕ
5 ವರ್ಷಗಳಲ್ಲಿ ವಿದೇಶಗಳಲ್ಲಿ ದಿನಂಪ್ರತಿ ಸರಾಸರಿ 20 ಭಾರತೀಯ ಉದ್ಯೋಗಿಗಳು ಮೃತ್ಯು
► 2021ರಿಂದ 2025ರ ನಡುವೆ ಒಟ್ಟು 37,740 ಭಾರತೀಯ ಕಾರ್ಮಿಕರು ಮೃತ್ಯು► ಗಲ್ಫ್ ಪ್ರಾಂತಗಳಲ್ಲಿ ಅತ್ಯಧಿಕ ಸಾವಿನ ಪ್ರಕರಣಗಳು
ಎಲ್ಪಿಜಿ ಕೊರತೆ, ಬೆಲೆ ಏರಿಕೆ ವಿರುದ್ಧ ಆಟೋ ರಾಜಕನ್ಮಾರ್ ಯೂನಿಯನ್ನಿಂದ ಮನವಿ
ಮಂಗಳೂರು, ಎ.2: ದ.ಕ. ಜಿಲ್ಲೆಯಲ್ಲಿ ಆಟೋ ರಿಕ್ಷಾಗಳಿಗೆ ಎಲ್ಪಿಜಿ ಅನಿಲದ ತೀವ್ರ ಕೊರತೆ ಮತ್ತು ಅನಿಯಂತ್ರಿತ ಬೆಲೆ ಏರಿಕೆಯನ್ನು ಖಂಡಿಸಿ ಆಟೋ ರಾಜಕನ್ಮಾರ್ ಯೂನಿಯನ್ (ರಿ)ನ ಪದಾಧಿಕಾರಿಗಳು ದ.ಕ. ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಎಲ್ಪಿಜಿ ಅನಿಲದ ಬೆಲೆ ಶೇ.50ರಿಂದ 60ರಷ್ಟು ಏರಿಕೆಯಾಗಿದೆ. ಇದರಿಂದ ಆಟೋ ಚಾಲಕರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ. ಬೆಲೆ ಏರಿಕೆಯನ್ನು ತಕ್ಷಣ ನಿಯಂತ್ರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅನಿಲ ಪಂಪ್ಗಳಲ್ಲಿ ಸರಿಯಾದ ಸರಬರಾಜು ಇಲ್ಲದೆ ಚಾಲಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಗಿದೆ. ಇದರಿಂದ ದಿನದ ದುಡಿಮೆಯೂ ಇಲ್ಲದೆ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅವರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆಯಲ್ಲದೆ, ಸಮಸ್ಯೆಗಳು ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಯೂನಿಯನ್ ಎಚ್ಚರಿಸಿದೆ. ಮನವಿ ಸಲ್ಲಿಸುವ ಸಂದರ್ಭ ಯೂನಿಯನ್ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ., ಪ್ರಧಾನ ಕಾರ್ಯದರ್ಶಿ ಶಫೀಕ್ ಬೋಳಿಯಾರ್, ಪದಾಧಿಕಾರಿಗಳಾದ ಶಖೀಕ್ ಸಾಲೆತ್ತೂರು, ಸಿದ್ದೀಕ್ ಕೊಡಕ್ಕಲ್, ಇಕ್ಬಾಲ್ ಮಾಡೂರು, ಸಿರಾಜ್ ಇರಾ ಉಪಸ್ಥಿತರಿದ್ದರು.
ಮಾನ್ವಿ | ಕನ್ನಡ ಸಾಹಿತ್ಯ ಪರಿಷತ್ತಿಗೆ 25 ಸಾವಿರ ರೂ. ಸ್ಮರಣಾರ್ಥ ದೇಣಿಗೆ ನೀಡಿದ ಪ್ರಾಧ್ಯಾಪಕ
ಮಾನ್ವಿ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ದಿವಂಗತ ಸೈಯದ್ ಇಕ್ಬಾಲ್ ಅಹ್ಮದ್ ಅವರ ಸ್ಮರಣಾರ್ಥವಾಗಿ ಪಟ್ಟಣದ ಬಾಷುಮಿಯಾ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸೈಯದ್ ಮುಜೀಬ್ ಅಹ್ಮದ್ ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿಗೆ 25 ಸಾವಿರ ರೂ. ದೇಣಿಗೆಯನ್ನು ಬುಧವಾರ ನೀಡಿದರು. ಪಟ್ಟಣದ ಗ್ಯಾಲಕ್ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಿನಿಧಿ ದೇಣಿಗೆ ಮೊತ್ತದ ಡಿಡಿಯನ್ನು ಸ್ವೀಕರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ನೀರಮಾನ್ವಿ, ಸೈಯದ್ ಮುಜೀಬ್ ಅಹ್ಮದ್ ಅವರು ತಮ್ಮ ಚಿಕ್ಕಪ್ಪ ಸೈಯದ್ ಇಕ್ಬಾಲ್ ಅಹ್ಮದ್ ಅವರ ನೆನಪಿನಲ್ಲಿ ದತ್ತಿ ಸ್ಥಾಪಿಸಿರುವುದು ಶ್ಲಾಘನೀಯ ಎಂದರು. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಸೈಯದ್ ಇಕ್ಬಾಲ್ ಅಹ್ಮದ್ ಅವರು ಜಾತ್ಯತೀತ ಮನೋಭಾವ ಹೊಂದಿದ್ದು, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವ ಗುಣ ಹೊಂದಿದ್ದರು. ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಸೈಯದ್ ಮುಜೀಬ್ ಅಹ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೈಯದ್ ಇಕ್ಬಾಲ್ ಅಹ್ಮದ್ ಅವರ ಸಹೋದರ ಸೈಯದ್ ಹುಸೇನ್ ಸಾಹೇಬ್ ಸೇರಿದಂತೆ ಕಸಾಪದ ಪದಾಧಿಕಾರಿಗಳು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದು, ಅವರ ವ್ಯಕ್ತಿತ್ವವನ್ನು ಸ್ಮರಿಸಿದರು.
ಕುಂದಾಪುರ: ವಿದ್ಯಾರ್ಥಿ ಆತ್ಮಹತ್ಯೆ
ಕುಂದಾಪುರ: ಮನೆಯಲ್ಲಿ ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ನಗರದ ಮಂಗಲಪಾಂಡೆ ರಸ್ತೆಯಲ್ಲಿ ಗುರುವಾರ ನಡೆದಿದೆ. ಮಂಗಲಪಾಂಡೆ ರಸ್ತೆ ನಿವಾಸಿ ಕೌಶಿಕ್ ಬಾಯರಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಕುಂದಾಪುರ ಬೋರ್ಡ್ ಹೈಸ್ಕೂಲ್ನಲ್ಲಿ 9ನೇ ತರಗತಿ ಓದುತ್ತಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ರಾಯಚೂರು | ಮುಖ್ಯಮಂತ್ರಿ ಪದಕಕ್ಕೆ ಡಿವೈಎಸ್ಪಿ ಶಾಂತವೀರ ಆಯ್ಕೆ
ರಾಯಚೂರು: ರಾಯಚೂರು ಡಿವೈಎಸ್ಪಿ ಶಾಂತವೀರ ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಸಾಧಕ ಪೊಲೀಸ್ ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ರಾಜ್ಯದ ಐದು ಜನ ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಐದು ಜನರಲ್ಲಿ ಡಿವೈಎಸ್ಪಿ ಶಾಂತವೀರ ಒಬ್ಬರಾಗಿದ್ದಾರೆ. ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಆಯ್ಕೆಯಾದ ಶಾಂತವೀರರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅರುಣಾಂಗ್ಷುಗಿರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಹರೀಶ ಅಭಿನಂದಿಸಿದ್ದಾರೆ.
GST: ಕಾಂಗ್ರೆಸ್ ಜನರ ಪರವೋ ಅಥವಾ ಹೆಚ್ಚಿನ ತೆರಿಗೆ ದರದ ಪರವೋ? ಮಾಜಿ ಸಿಎಂ ನೇರ ಪ್ರಶ್ನೆ
ಬೆಂಗಳೂರು: ಕೇಂದ್ರ ಸರ್ಕಾರದಿಂದ 10,000 ಕೋಟಿ ರೂಪಾಯಿ ಸರಕು ಸೇವಾ ತೆರಿಗೆ (ಜಿಎಸ್ಟಿ) ಯಿಂದ ಬರಬೇಕು ಎಂದು ಸುಳ್ಳು ಹೇಳಿದ್ದಾರೆ. ಪ್ರತಿ ತಿಂಗಳು ಜಿಎಸ್ ಟಿ ಯಿಂದ ಪಾಲು ರಾಜ್ಯಕ್ಕೆ ಬರುವುದು ಬರುತ್ತದೆ. ಕಾಂಗ್ರೆಸ್ ಜಿಎಸ್ ಟಿ ಕಡಿಮೆ ಮಾಡಿರುವುದನ್ನು ಒಪ್ಪಿ ಜನರ ಪರ ಇದಿಯಾ ಅಥವಾ ಹೆಚ್ಚಿನ ದರದ ಪರ ಇದಿಯಾ? ಎನ್ನುವುದನ್ನು ತಿಳಿಸಲಿ ಎಂದು
ಉಡುಪಿ, ಎ.2: ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ನಿವಾಸಿ ದೇವದಾಸ್ ಪೂಜಾರಿ (75) ಎಂಬ ವೃದ್ಧರು 2024ರ ಡಿಸೆಂಬರ್ 1ರಂದು ಸಂಜೆ 4 ಗಂಟೆಯ ಸುಮಾರಿಗೆ ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ| ಗಡಿಪಾರು ಆದೇಶದ ಆರೋಪಿಯ ಬಂಧನ
ಉಡುಪಿ, ಎ.2: ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಹೊರಜಿಲ್ಲೆಗೆ ಗಡಿಪಾರು ಆದೇಶ ಪಡೆದು, ಆದೇಶದ ಪ್ರತಿ ಜಾರಿ ಮಾಡಲು ಬಂದ ಪೊಲೀಸರನ್ನು ಯಾಮಾರಿಸಿ ಓಡಿ ಹೋಗಿದ್ದ ಫೈಝಲ್ ಎಂಬ ಆರೋಪಿಯನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೊರ ಜಿಲ್ಲೆಗೆ ಗಡಿಪಾರು ಆದೇಶವನ್ನು ಜಾರಿ ಮಾಡಲು ಹೋದ ವೇಳೆ ಆರೋಪಿ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿರು ವುದನ್ನು ಖಚಿತಪಡಿಸಿಕೊಂಡು ಮಲ್ಪೆ ಪೊಲೀಸರು ಪಡುತೋನ್ಸೆ ಗ್ರಾಮದ ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಹೋದಾಗ, ಆರೋಪಿ ತಾನು ಕುಳಿತಿದ್ದ ಕಾರನ್ನು ಒಮ್ಮೆಗೆ ಹಿಮ್ಮುಖವಾಗಿ ಚಲಾಯಿಸಿ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಓಡಿ ಹೋಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಕಾರು ಜಖಂಗೊಂಡಿದ್ದು, ಆತನ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಆತ ಬಿಟ್ಟು ಹೋದ ಕಾರಿನ ಮಹಜರು ಪ್ರಕ್ರಿಯೆ ನಡೆಸುವಾಗ ಅದರಲ್ಲಿ ಮಾದಕ ವಸ್ತು ಗಾಂಜಾ 173.42 ಗ್ರಾಮ್ (ಮೌಲ್ಯ ಅಂದಾಜು 8,000ರೂ.) ಪತ್ತೆಯಾಗಿತ್ತು. ಇದರೊಂದಿಗೆ ದೊರೆತ ಎರಡು ಮೊಬೈಲ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಆರೋಪಿ ಫೈಝಲ್ ಮತ್ತೊಬ್ಬ ಆರೋಪಿ ಯೊಂದಿಗೆ ಸೇರಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟು ಕೊಂಡು ಮಾರಾಟ ಮಾಡಲು ಕಾಯುತ್ತಿದ್ದುದಾಗಿ ತಿಳಿದುಬಂದಿತ್ತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೇಲಿನ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾರ್ಕಳದ ಬಂಗ್ಲಗುಡ್ಡೆ ಕಸಬ ನಿವಾಸಿ ಫೈಝಲ್ನ್ನು ಕಾರ್ಕಳ ಪೊಲೀಸ್ ಉಪನಿರೀಕ್ಷಕರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ಭಾರತದ ರಕ್ಷಣಾ ಸಾಮಾಗ್ರಿಗಳ ರಫ್ತು 38,424 ಕೋಟಿ ರೂ.ಗೆ ಏರಿಕೆ
ಕಳೆದ ಸಾಲಿಗಿಂತ ಶೇ.62ರಷ್ಟು ಬೆಳವಣಿಗೆ
ತಂದೆ ಮಾಡಿರುವ ಆರೋಪಗಳನ್ನು ಬೆಂಬಲಿಸೊಲ್ಲ, ಕಪಿಲ್-ಧೋನಿಯ ಕ್ಷಮೆ ಯಾಚಿಸುವೆ ಎಂದ ಯುವರಾಜ್ ಸಿಂಗ್: ಏನಿದು ವಿವಾದ?
ತನ್ನ ಕ್ರಿಕೆಟ್ ವೃತ್ತಿಜೀವನವನ್ನು ಕಪಿಲ್ ದೇವ್ ಮತ್ತು ತನ್ನ ಮಗನ ವೃತ್ತಿ ಜೀವನವನ್ನು ಮಹೇಂದ್ರ ಸಿಂಗ್ ಧೋನಿ ಹಾಳುಗೆಡವಿದ್ದರು ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದರು. ತಂದೆಯ ಈ ಹೇಳಿಕೆಗೆ ಯುವರಾಜ್ ಸಿಂಗ್ ಅವರು ಕಪಿಲ್ ಮತ್ತು ಧೋನಿ ಅವರ ಕ್ಷಮೆ ಯಾಚಿಸಿದ್ದಾರೆ. ಸ್ಪೋರ್ಟ್ಸ್ ತಕ್ ನ ಪಾಡ್ ಕಾಸ್ಟ್ ನ ಟೀಸರ್ ನಲ್ಲಿ ಯುವರಾಜ್ ಸಿಂಗ್ ಈ ಅವರು ಈ ಬಗ್ಗೆ ಮಾತನಾಡಿದ್ದು, ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಅವರ ಕ್ಷಮೆಯಾಚಿಸಲು ನಾನು ಬಯಸುತ್ತೇನೆ. ಈ ರೀತಿ ಮಾತನಾಡುವುದು ಸರಿಯಿಲ್ಲ.'' ಎಂದು ನಾನು ಅಪ್ಪನಿಗೆ ಹೇಳಿರುವುದಾಗಿ ಹೇಳಿಕೆ ನೀಡಿದ್ದಾರೆ. ಏನು ಹೇಳಿದ್ದರು ಯೋಗರಾಜ್? ಮೊದಲಿನಿಂದಲೂ ಭಾರತ ತಂಡದ ಅವರು ಕಿಡಿಕಾರುತ್ತಲೇ ಇದ್ದಾರೆ. ಯುವರಾಜ್ ಸಿಂಗ್ ಅವರು ಭಾರತ ತಂಡದಿಂದ ಹೊರಬೀಳಲು ಧೋನಿಯೇ ಕಾರಣ. ಧೋನಿಯಿಂದಾಗಿಯೇ ಯುವಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಹಾಳಾಯಿತು ಎಂದು ಬಹಳಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೆಗಳನ್ನು ನೀಡಿದ್ದರು. ಆದರೆ ಈ ಎಲ್ಲಾ ಹೇಳಿಕೆಗಳನ್ನು ಯುವರಾಜ್ ಸಿಂಗ್ ಅವರು ಅಲ್ಲಗೆಳೆಯುತ್ತಾ ಬಂದಿದ್ದರು. ಇನ್ನು ಭಾರತ ಕ್ರಿಕೆಟ್ ನ ದಂತಕೆತೆಗಳನ್ನು ಮಾಡಿದ್ದರು. 1980 ರ ದಶಕದ ಆರಂಭದಲ್ಲಿ ಭಾರತ ತಂಡ ಮಾಜಿ ನಾಯಕ ಕಪಿಲ್ ದೇವ್ ಅವರು ತಮ್ಮ ವೃತ್ತಿಜೀವನವನ್ನು ಹಾಳು ಮಾಡಿದ್ದರು. ಅವರು ನನಗೆ ಬೆದರಿಕೆ ಹಾಕಿದ್ದರಿಂದ ಅವರನ್ನು ಎದುರಿಸಲು ಒಮ್ಮೆ ಪಿಸ್ತೂಲ್ನೊಂದಿಗೆ ಅವರ ಮನೆಗೆ ಹೋಗಿದ್ದೆ ಎಂದು ಯೋಗರಾಜ್ ಹೇಳಿದ್ದರು. ಈ ಬಗ್ಗೆ ಕಪಿಲ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ `ಯಾರು ಯೋಗರಾಜ್?' ಎಂದು ಮರು ಪ್ರಶ್ನೆ ಹಾಕಿದ್ದರು. ಆ ಪ್ರಶ್ನೆಯನ್ನು ಅವರು ನಿರ್ಲಕ್ಷಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದೀಗ ತಂದೆಯ ಈ ಆರೋಪಿಗಳ ಬಗ್ಗೆ ಯುವರಾಜ್ ಸಿಂಗ್ ಅವರು ಮಾತನಾಡಿದ್ದು, ಯುವರಾಜ್ ಸಿಂಗ್ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಅವರ ಕ್ಷಮೆಯಾಚಿಸಿದ್ದಾರೆ.ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಸಂಚಿಕೆಯು ಯುವರಾಜ್ ಅವರ ಮೊದಲ ವಿವರವಾದ ಪಾಡ್ಕ್ಯಾಸ್ಟ್ನಲ್ಲಿ ಕಾಣಿಸಿಕೊಳ್ಳಲಿದೆ. ಎರಡು ನಿಮಿಷಗಳ ಟೀಸರ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ರಿಷಭ್ ಪಂತ್ ಮತ್ತು ಹದಿಹರೆಯದ ಪ್ರತಿಭೆ ವೈಭವ್ ಸೂರ್ಯವಂಶಿ ಸೇರಿದಂತೆ ಹಲವಾರು ಕ್ರಿಕೆಟ್ ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ. ವೈಟ್ ಬಾಲ್ ಸ್ಪೆಷಲಿಸ್ಟ್ ಯುವಿ ಭಾರತ ತಂಡ 2008ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಯುವರಾಜ್ ಸಿಂಗ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಭಾರತದ ವೈಟ್ ಬಾಲ್ ಕ್ರಿಕೆಟ್ ಸ್ಪೆಷಲಿಸ್ಟ್ ಆಗಿದ್ದ ಅವರು 304 ಏಕದಿನ ಪಂದ್ಯಗಳಿಂದ 36.55 ಸರಾಸರಿಯಲ್ಲಿ 8701 ರನ್ ಕಲೆ ಹಾಕಿದ್ದರು. ಅದರಲ್ಲಿ 14 ಶತಕ ಮತ್ತು 52 ಅರ್ಧಶತಕಗಳಿದ್ದವು. 111 ವಿಕೆಟ್ ಪಡೆದಿದ್ದರು. ಇನ್ನು 58 ಟಿ20 ಪಂದ್ಯಗಳಿಂದ 28.02 ಸರಾಸರಿಯಲ್ಲಿ 1177 ರನ್ ಪೇರಿಸಿದ್ದರು. 28 ವಿಕೆಟ್ ಗಳನ್ನೂ ಪಡೆದಿದ್ದರು. ಇದರೊಂದಿಗೆ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅವರು 1900 ರನ್ ಮತ್ತು 9 ವಿಕೆಟ್ ಗಳಿಸಿದ್ದರು. 2019ರಲ್ಲಿ ಅವರು ಹೇಳಿದ್ದರು. ಇದೀಗ ಮೆಂಟರ್ ಆಗಿ ಯುವ ಕ್ರಿಕೆಟಿಗರನ್ನು ತರಬೇತುಗೊಳಿಸುವ ಕಾರ್ಯದಲ್ಲಿ ಮುಗ್ನರಾಗಿದ್ದಾರೆ.
Kalaburagi | ಮಾರಕಾಸ್ತ್ರಗಳಿಂದ ಕೊಚ್ಚಿ ವಕೀಲನ ಕೊಲೆ
ಕಲಬುರಗಿ: ಹಳೆಯ ಜೇವರ್ಗಿ ರಸ್ತೆಯಲ್ಲಿ ಗುರುವಾರ ಸಂಜೆ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಖಾಸಗಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಹಾಗೂ ವಕೀಲನಾಗಿದ್ದ ಅನಿಲ್ ರಾಠೋಡ್ (45) ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸೇರಿದಂತೆ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಆಯುಕ್ತ ಶರಣಪ್ಪ ಎಸ್.ಡಿ ಅವರು, ಹರಿತವಾದ ಆಯುಧಗಳಿಂದ ಅನಿಲ್ ರಾಠೋಡ್ ಅವರನ್ನು ಕೊಲೆ ಮಾಡಲಾಗಿದೆ. ಅವರು ಖಾಸಗಿ ಫೈನಾನ್ಸ್ ಜೊತೆಗೆ ವಕೀಲ ವೃತ್ತಿಯಲ್ಲಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಎಸಿಪಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ EWS ಕೋಟಾ| ಶಾಲಾ ದಾಖಲಾತಿಗೆ ಕರಡು ನಿಯಮ ರಚನೆ: ಸುಪ್ರೀಂಕೋರ್ಟ್ ಗೆ ಕೇಂದ್ರದ ಅಫಿಡವಿಟ್
ಹೊಸದಿಲ್ಲಿ: ಶಿಕ್ಷಣದ ಹಕ್ಕು ಕಾಯ್ದೆ (RTE)ಯಡಿ ಆರ್ಥಿಕವಾಗಿ ದುರ್ಬಲ ವರ್ಗಗಳ ಹಾಗೂ ಅವಕಾಶವಂಚಿತ ಸಮುದಾಯಗಳ ಮಕ್ಕಳನ್ನು ಆಸುಪಾಸಿನ ಶಾಲೆಗಳಿಗೆ ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದ ಕರಡು ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯನ್ನು ತಾನು ನಡೆಸುತ್ತಿರುವುದಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಬುಧವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಕರಡು ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯನ್ನು ಅಂತಿಮಗೊಳಿಸಲು 3-4 ತಿಂಗಳುಗಳು ತಗಲಬಹುದು. ಹೀಗಾಗಿ ಸುಪ್ರೀಂಕೋರ್ಟ್ ನ ಆದೇಶದ ಅನುಸರಣೆಗೆ ನೀಡಲಾದ ಕಾಲಾವಕಾಶವನ್ನು ನಾಲ್ಕು ತಿಂಗಳಿಗೆ ವಿಸ್ತರಿಸಬೇಕೆಂದು ಕೇಂದ್ರ ಸರಕಾರ ಸೂಚಿಸಿತ್ತು. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು (ಡಿಒಎಸ್ಇಎಲ್) ಆರ್ಟಿಇ ಕಾಯ್ದೆಯ ಸೆಕ್ಷನ್ 1(12)(ಸಿ)ಯ ನಿಯಮಾವಳಿಗಳ ಅನುಷ್ಠಾನದ ಕುರಿತ ಕರಡು ನಿಯಮಗಳನ್ನು ರೂಪಿಸಲು ಫೆಬ್ರವರಿಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಖಾಸಗಿ ಶಾಲೆಗಳಲ್ಲಿ ಪ್ರವೇಶಮಟ್ಟದ ಶೇ.25ರಷ್ಟು ಸೀಟುಗಳನ್ನು ದುರ್ಬಲ ವರ್ಗಗಳು ಹಾಗೂ ಅವಕಾಶವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೀಸಲಿಡುವುದಕ್ಕೆ ಈ ಸೆಕ್ಷನ್ ಅವಕಾಶ ನೀಡುತ್ತದೆ. RTE ಕಾಯ್ದೆಯ ಸೆಕ್ಷನ್ 12(1)(ಸಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿಲ್ಲವೆಂದು ಸುಪ್ರೀಂಕೋರ್ಟ್ ಜನವರಿಯಲ್ಲಿ ಕಟುವಾಗಿ ಪ್ರತಿಕ್ರಿಯಿಸಿತ್ತು. ಸೂಕ್ತವಾದ ಅನುಷ್ಠಾನ ನಿಯಮಗಳು ಇಲ್ಲದೆ ಇದ್ದಲ್ಲಿ ಸೆಕ್ಷನ್ 12(1)(ಸಿ)ಯಡಿ ಶಾಸನಾತ್ಮಕ ನೀತಿಯು ಕೇವಲ ನಿರ್ಜೀವ ಪತ್ರವಾಗಿರುವುದು ಎಂದು ಅದು ಅಸಮಾಧಾನ ವ್ಯಕ್ತಪಡಿಸಿತ್ತು.
ಅಮೆರಿಕ ʼಶಾಶ್ವತ ಅವಮಾನ' ಎದುರಿಸುವವರೆಗೂ ಯುದ್ಧ ಮುಂದುವರಿಕೆ: ಇರಾನ್
ಟೆಹ್ರಾನ್: ಅಮೆರಿಕವು ವಿಷಾದ, ಶರಣಾಗತಿ ಮತ್ತು ಶಾಶ್ವತ ಅವಮಾನ ಎದುರಿಸುವವರೆಗೂ ಸಂಘರ್ಷವು ಮುಂದುವರಿಯುತ್ತದೆ ಎಂದು ಇರಾನ್ನ ಮಿಲಿಟರಿ ಗುರುವಾರ ಹೇಳಿದೆ. ಇರಾನ್ನ ಕ್ಷಿಪಣಿ ಸಾಮರ್ಥ್ಯಗಳು, ನೌಕಾ ಬಲ ಮತ್ತು ಮಿಲಿಟರಿ ನಾಯಕತ್ವವು ತೀವ್ರವಾಗಿ ಬಲಗುಂದಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿರುವ ಇರಾನ್ ಮಿಲಿಟರಿ, ಇರಾನ್ನ ಮಿಲಿಟರಿ ಸಾಮರ್ಥ್ಯ, ಶಸ್ತ್ರಾಸ್ತ್ರಗಳ ಕುರಿತ ಅಮೆರಿಕದ ಗುಪ್ತಚರ ವರದಿ ಅಪೂರ್ಣವಾಗಿದೆ ಎಂದು ಟೀಕಿಸಿದೆ. ಇರಾನ್ನ ವಿಶಾಲವಾದ, ಅಗಾಧ ಕಾರ್ಯತಂತ್ರದ ಸಾಮರ್ಥ್ಯದ ಬಗ್ಗೆ ಅಮೆರಿಕಕ್ಕೆ ತಿಳಿದಿಲ್ಲ. ನಮ್ಮ ಕಾರ್ಯತಂತ್ರದ ಕ್ಷಿಪಣಿ ಉತ್ಪಾದನಾ ತಾಣಗಳು, ದೀರ್ಘ ಶ್ರೇಣಿಯ ದಾಳಿ ಡ್ರೋನ್ಗಳು, ಆಧುನಿಕ ವಾಯುರಕ್ಷಣಾ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಯುದ್ಧೋಪಕರಣ ಅಥವಾ ವಿಶೇಷ ಸಾಧನಗಳನ್ನು ನಾಶಪಡಿಸಿದ್ದೀರಿ ಎಂದು ಭಾವಿಸಬೇಡಿ. ನಮ್ಮ ಗೌರವಾನ್ವಿತ, ಪ್ರೀತಿಯ, ಮುಸ್ಲಿಂ ರಾಷ್ಟ್ರದ ವಿರುದ್ಧ ನೀವು ಪ್ರಾರಂಭಿಸಿದ ಆಕ್ರಮಣಕ್ಕೆ ನೀವು ಬೆಲೆ ಪಾವತಿಸಲೇಬೇಕು. ನೀವು ಈಗಾಗಲೇ ಪಡೆದಿರುವ ತೀವ್ರವಾದ ಹೊಡೆತಗಳ ಮುಂದುವರಿಕೆಯಾಗಿ ನಮ್ಮಿಂದ ಇನ್ನಷ್ಟು ವಿನಾಶಕಾರೀ ದಾಳಿಗಳನ್ನು ನಿರೀಕ್ಷಿಸಿ' ಎಂದು ಟ್ರಂಪ್ ಅವರನ್ನು ಉಲ್ಲೇಖಿಸಿದ ಹೇಳಿಕೆ ತಿಳಿಸಿದೆ.
ಅಸ್ಸಾಮ್ ನಲ್ಲಿ ಕಾರ್ಪೊರೇಟ್ ಕಂಪೆನಿಗಳಿಗಾಗಿ ‘ಜಮೀನು ATM’: ರಾಹುಲ್ ಗಾಂಧಿ
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ಅವರು ಭಾರತದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದಾರೆ’’ ಎಂದು ಆರೋಪಿಸಿದರು. ಅದೇ ವೇಳೆ, ಬಿಜೆಪಿ ನಾಯಕತ್ವವು ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಜಮೀನುಗಳನ್ನು ಬೃಹತ್ ಕಾರ್ಪೊರೇಟ್ ಕಂಪೆನಿಗಳಿಗೆ ವರ್ಗಾಯಿಸುತ್ತಿದೆ ಎಂಬುದಾಗಿಯೂ ಆರೋಪಿಸಿದರು. ಬೊಕಾಜನ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದ ರಾಹುಲ್, ಹಿಮಂತ ಶರ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಸೇರಿಕೊಂಡು ಅಸ್ಸಾಮ್ ನಲ್ಲಿ ‘‘ಜಮೀನು ಎಟಿಎಮ್’ಒಂದನ್ನು ರಚಿಸಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಮೂರು ಬೃಹತ್ ಕಾರ್ಪೊರೇಟ್ ಕಂಪೆನಿಗಳಿಗೆ ಒಟ್ಟು 98,400 ಬಿಗಾ (ಸುಮಾರು 61,000 ಎಕರೆ) ಭೂಮಿಯನ್ನು ಹಸ್ತಾಂತರಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ‘‘ಈ ಜಮೀನುಗಳನ್ನು ಜನರಿಂದ ಕಸಿದುಕೊಳ್ಳಲಾಗಿದೆ. ನರೇಂದ್ರ ಮೋದಿ, ಅಮಿತ್ ಶಾ ಮತ್ತು ಹಿಮಂತ ಬಿಸ್ವ ಶರ್ಮ ಅಸ್ಸಾಮ್ನಲ್ಲಿ ಜಮೀನು ಎಟಿಎಮ್ ಒಂದನ್ನು ಸ್ಥಾಪಿಸಿದ್ದಾರೆ. ಅವರು ಜನರಿಂದ ಜಮೀನುಗಳನ್ನು ಕಸಿದುಕೊಂಡು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಕೊಡುತ್ತಾರೆ’’ ಎಂದು ಅವರು ಹೇಳಿದರು.
Jordan | ಅಲ್-ಅಝ್ರಾಕ್ ನೆಲೆಯಲ್ಲಿ ಅಮೆರಿಕದ ಯುದ್ಧ ವಿಮಾನಗಳ ಮೇಲೆ ಡ್ರೋನ್ ದಾಳಿ: ಇರಾನ್
ಅಮ್ಮಾನ್: ಜೋರ್ಡಾನ್ ನ ಅಲ್-ಅಝ್ರಾಕ್ ಮಿಲಿಟರಿ ನೆಲೆಯಲ್ಲಿ ಅಮೆರಿಕದ ಯುದ್ಧ ವಿಮಾನಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ ಎಂದು Aljazeera ವರದಿ ಮಾಡಿದೆ. ಈ ದಾಳಿ ಅಮೆರಿಕದ ಮಿಲಿಟರಿ ನೆಲೆಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ನಡೆದದ್ದು ಎಂದು ಇರಾನ್ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಅಮೆರಿಕ ಅಥವಾ ಜೋರ್ಡಾನ್ ಸರ್ಕಾರಗಳಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಹಾನಿ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಈ ಘಟನೆ ನಡೆದಿದೆ.
ಮುಕ್ಕಾ: ಬಿಷಪ್ರಿಂದ ಶಿಷ್ಯರ ಪಾದ ತೊಳೆದು ಪವಿತ್ರ ಗುರುವಾರ ಆಚರಣೆ
ಮಂಗಳೂರು: ಈಸ್ಟರ್ ಹಬ್ಬದ ಮುನ್ನಾದಿನದ ಪವಿತ್ರ ಗುರುವಾರ ಬಿಷಪ್ ಅತಿ ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಮುಕ್ಕ ಹೋಲಿ ಸ್ಪಿರಿಟ್ ಚರ್ಚ್ ನಲ್ಲಿ ಏಸು ಕ್ರಿಸ್ತರ ಕೊನೆಯ ಭೋಜನದ ಸ್ಮರಣೆಯ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಏಸು ಕ್ರಿಸ್ತರು ತನ್ನ 12 ಜನ ಶಿಷ್ಯರ ಪಾದ ತೊಳೆದ ಸೇವೆಯ ಸ್ಮರಣಾರ್ಥ ಬಿಷಪ್ ಅವರು 12 ಮಂದಿ ಕ್ರೈಸ್ತ ವಿಶ್ವಾಸಿಗಳ ಪಾದಗಳನ್ನು ತೊಳೆದರು.
ಪೂರ್ಣಪ್ರಜ್ಞ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧೆ ಪ್ರಜ್ಞಾ -2026
ಉಡುಪಿ, ಎ.2: ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇದೇ ಎ.6 ಮತ್ತು 7ರಂದು ರಾಜ್ಯಮಟ್ಟದ ಎರಡು ದಿನಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉತ್ಸವ ‘ಪ್ರಜ್ಞಾ- 2026’ ನಡೆಯಲಿದೆ. ಇದರಲ್ಲಿ ಸುಮಾರು 33 ಶೈಕ್ಷಣಿಕ ಹಾಗೂ 6 ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ರಾಜ್ಯದ ವಿವಿಧ ಕಾಲೇಜುಗಳಿಂದ ಸ್ಪರ್ಧಿಗಳು ಆಗಮಿಸಲಿದ್ದು ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ವಿವಿಧ ಕಾಲೇಜುಗಳ ನಡುವಿನ ಸಾಮರಸ್ಯಕ್ಕೆ ಪ್ರಜ್ಞಾ -2026 ಪೂರಕವಾಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು ಎಲ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸುದೀಪ್ ರೈ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ: ಎಸ್ಪಿಗೆ ಕರವೇ ಮನವಿ
ಉಡುಪಿ, ಎ.2: ದ.ಕ ಜಿಲ್ಲೆಯ ನೆಲ್ಯಾಡಿ ಮೂಲದ ಸುದೀಪ್ ರೈ ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತರಾಗಿದ್ದು ಈ ಸಾವಿನ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಉಡುಪಿ ಜಿಲ್ಲಾ ಘಟಕ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕ ರ ವೇ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಯಂತೆ ಕಾಣುತ್ತಿದ್ದರೂ ಈ ಸಾವಿನ ಬಗ್ಗೆ ಹಲವಾರು ಊಹಾಪೋಹಗಳು ಕೇಳಿ ಬರುತ್ತಿದೆ. ಸುದೀಪ್ ರನ್ನು ಮೊದಲು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ನಾನು 3 ದಿನ ಸತತ ಸುದೀಪ್ನ ಸಂಪರ್ಕದಲ್ಲಿದ್ದೆ ಎಂದರು. ಈ ಸಂದರ್ಭದಲ್ಲಿ ಕ ರ ವೇ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಮಹಿಳಾ ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಿಲ್ಲಾ ಘಟಕದ ಉಪಾಧ್ಯಕ್ಷ ಅಲ್ಫೊನ್ಸೋ ಮೆನೆಜಸ್, ಸಲಹೆಗಾರ ಸವಿತಾ ಹಾಗೂ ಸಂಘಟನೆಯ ಪ್ರಮುಖರಾದ ನಾಗರಾಜ್, ಧರ್ಮ ಮತ್ತು ಪಾಂಡು ಉಪಸ್ಥಿತರಿದ್ದರು.
No shortage of LPG : ದೇಶದಲ್ಲಿ ಗ್ಯಾಸ್ ಸಮಸ್ಯೆ ಇದೆ ಎನ್ನುವುದು ಸುಳ್ಳು. LPGಯಲ್ಲಿ ಕೊರತೆಯಿದೆ ಎನ್ನುವ ವಿಷಯವನ್ನು ಅತಿಶಯಗೊಳಿಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯ ಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಹೇಳಿದ್ದಾರೆ. ಪಶ್ಚಿಮ ಏಷ್ಯಾ ಮತ್ತು ಭಾರತ ಸರ್ಕಾರದ ಕ್ರಮಕ್ಕೆ, ಕಾಂಗ್ರೆಸ್ ಪಾರ್ಟಿಯ ನಿಲುವಿಗೆ ವಿರುದ್ದವಾದ ಹೇಳಿಕೆ ಕಾಂಗ್ರೆಸ್ ನಾಯಕರಿಂದ ಬಂದಿದೆ.
ಡಾ.ಬಿ.ಆರ್.ಅಂಬೇಡ್ಕರ್ ಬದುಕು, ಬರಹದ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ
ಉಡುಪಿ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸ್ಥಳೀಯ ದಲಿತ, ಕನ್ನಡ ಪರ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದೆ. ಸ್ಪರ್ಧೆಯು ಎಪ್ರಿಲ್ 12ರಂದು ಬೆಳಿಗ್ಗೆ 9 ಗಂಟೆಗೆ ಕುಷ್ಟಗಿ ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಶಾಲೆಯಲ್ಲಿ ನಡೆಯಲಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ಹಾಗೂ ವಿದ್ಯಾರ್ಹತೆಯ ನಿರ್ಬಂಧ ಇರುವುದಿಲ್ಲ. ಎಲ್ಲ ಆಸಕ್ತರಿಗೂ ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ರಾಜ್ಯದ ಯಾವುದೇ ಜಿಲ್ಲೆಗಳ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡಿನ ನಕಲು ಪ್ರತಿ ಒದಗಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮೊದಲ ಸುತ್ತಿನಲ್ಲಿ 50 ಅಂಕಗಳ ಬಹು ಆಯ್ಕೆ ಮಾದರಿಯ ಸುತ್ತು. ಈ ಸುತ್ತಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಮೊದಲ 12 ಅಭ್ಯರ್ಥಿಗಳು ಎರಡನೇ ಸುತ್ತಿಗೆ ಆಯ್ಕೆಯಾಗುತ್ತಾರೆ. ಈ 12 ಅಭ್ಯರ್ಥಿಗಳನ್ನು 6 ತಂಡಗಳಾಗಿ ವಿಂಗಡಿಸಿ ಎರಡನೇ ಹಂತದ ಮೌಖಿಕ ಸುತ್ತು ನಡೆಸಲಾಗುವುದು. ವಿಜೇತ ತಂಡಗಳಿಗೆ 50 ಸಾವಿರ ರೂ. ಪ್ರಥಮ ಬಹುಮಾನ, 30 ಸಾವಿರ ರೂ. ದ್ವಿತೀಯ ಬಹುಮಾನ ಹಾಗೂ 20 ಸಾವಿರ ರೂ.ಗಳ ತೃತೀಯ ಬಹುಮಾನ ನೀಡಲಾಗುವುದು. ರಸಪ್ರಶ್ನೆ ಸ್ಪರ್ಧೆಯ ಪಠ್ಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಶಿಕ್ಷಣ, ರಾಷ್ಟ್ರೀಯ ಹೋರಾಟ, ಭಾರತ ಸಂವಿಧಾನ ರಚನೆ, ಶಿಕ್ಷಣ, ಸಂಘಟನೆ, ಹೋರಾಟ ತತ್ವಗಳು, ಚಿಂತನೆಗಳು, ಮೀಸಲಾತಿ, ಮಹಿಳಾ ಹಕ್ಕುಗಳು, ಜಾಗತಿಕ ಮಹಾನಾಯಕರಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರಸ್ತುತ ದಿನಮಾನ. ಆಸಕ್ತರು ಎಪ್ರಿಲ್ 11ರ ಒಳಗೆ ಈ ಕೆಳಗಿನ ಮೊಬೈಲ್ ನಂಬರುಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಎಸ್. ಎಸ್. ತೆಮಿಳಾಳ: -9740421421, ಶ್ರೀನಿವಾಸ ದೇಸಾಯಿ-9845808941, ಸುರೇಶ್ ಅಂಕೋಲಿ- 9901797951, ಅಮರೇಗೌಡ-9902180043 ಅಥವಾ ಭರಮಪ್ಪ ಪಿ-9731799080 ಮೂಲಕ ಹೆಸರು ನೊಂದಾಯಿಸಿ ಕೊಳ್ಳಬಹುದು ಎಂದು ಕುಷ್ಟಗಿ ವೃತ್ತದ ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸದಿಲ್ಲಿ: ಸಾಮಾಜಿಕ-ರಾಜಕೀಯ ವಿಶ್ಲೇಷಕಿ, ಹಿಂದುತ್ವವಾದಿ ಲೇಖಕಿ ಮಧು ಕೀಶ್ವರ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ʼಎಕ್ಸ್ʼ ಪೋಸ್ಟ್ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಪೋಸ್ಟ್ ನಲ್ಲಿ ಅವರು ಮೋದಿ ವಿರುದ್ಧ ರಾಜಿ ಮಾಡಿಕೊಂಡಿದ್ದಾರೆ, ಪ್ರಭಾವಕ್ಕೊಳಗಾಗಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಮೋದಿಯವರು ರಾಜಿ ಮಾಡಿಕೊಂಡಿದ್ದಾರೆ. ಅದರಿಂದ ಅವರು ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಪ್ರಧಾನಿ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ವ್ಯಕ್ತಿಯಿಂದ ಈ ಬಹಿರಂಗ ಮಾಹಿತಿ ಲಭಿಸಿದೆ. ಗೂಗಲ್ ಹುಡುಕಾಟ ಮಾಡಬಲ್ಲ ಯಾರಾದರೂ ಮಾಹಿತಿಗಳನ್ನು ಪರಿಶೀಲಿಸಬಹುದು,” ಎಂದು ಕೀಶ್ವರ್ ಹೇಳಿದ್ದಾರೆ. 2014 ರಲ್ಲಿ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕದ ಘಟನೆಯನ್ನು ಉಲ್ಲೇಖಿಸಿ, ಅಂದಿನ ಕ್ಯಾಬಿನೆಟ್ ಕಾರ್ಯದರ್ಶಿ ಅಜಿತ್ ಕುಮಾರ್ ಸೇಠ್ ಮತ್ತು ಮೋದಿ ನಡುವೆ ನಡೆದಿದೆ ಎನ್ನಲಾದ ಘಟನೆಯೊಂದನ್ನು ಅವರು ವಿವರಿಸಿದ್ದಾರೆ. “ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ, ಅಜಿತ್ ಕುಮಾರ್ ಸೇಠ್ ದೊಡ್ಡ ದಪ್ಪ ಫೈಲ್ ಹಿಡಿದು ಭೇಟಿ ನೀಡಿದರು,” ಎಂದು ಅವರು ಹೇಳಿದ್ದಾರೆ. ಸೇಠ್ ಅವರು “ಡಾ. ಸಾಹೇಬ್ ಈ ಫೈಲ್ ಅನ್ನು ಎಚ್ಚರಿಕೆಯಿಂದ ನೋಡುವಂತೆ ಹೇಳಿದ್ದಾರೆ, ಎಂದರು. “ಇದು ನಿಮಗೆ ಹೇಗೆ ತಲುಪಿತು?”ಎಂದು ಮೋದಿ ಆಶ್ಚರ್ಯದಿಂದ ಕೇಳಿದರು. ಅದಕ್ಕೆ ಸೇಠ್ “ಪಿಎಂಒದಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ, ಎಲ್ಲಾ ಪ್ರಮುಖ ಫೈಲ್ ಗಳು ನನ್ನ ಬಳಿಗೆ ಬರುತ್ತವೆ, ಎಂದು ಪ್ರತಿಕ್ರಿಯಿಸಿದರು. ಫೈಲ್ ನಲ್ಲಿದ್ದ ವಿಷಯಗಳನ್ನು ನೋಡಿ ಮೋದಿ “ಮಸುಕಾದರು” ಹಾಗೂ “ನಡುಗುತ್ತಿರುವಂತೆ ಕಂಡರು.” ಬಳಿಕ ಅವರು ಫೈಲ್ ಅನ್ನು ಹಿಂತಿರುಗಿಸಿದರು ಎಂದು ಮಧು ಕೀಶ್ವರ್ ಹೇಳಿದ್ದಾರೆ. ಈ ಘಟನೆಯ ನಂತರ ಸೇಠ್ ಅವರಿಗೆ ವಿಸ್ತರಣೆ ನೀಡಲಾಗಿದ್ದು, ಅವರನ್ನು ಮೋದಿ ಸರಕಾರದ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಮುಂದುವರಿಸಲಾಯಿತು ಎಂದು ಕೀಶ್ವರ್ ಅವರು ತಿಳಿಸಿದ್ದಾರೆ. “2014ರಲ್ಲಿ ಮೋದಿ ಅವರು ಸೇಠ್ ಅವರಿಗೆ ಮತ್ತಷ್ಟು ವಿಸ್ತರಣೆ ನೀಡಿದರು. ಅವರು ಜೂನ್ 2015ರವರೆಗೆ ಸೇವೆ ಸಲ್ಲಿಸಿದರು,” ಎಂದು ಅವರು ಉಲ್ಲೇಖಿಸಿದ್ದಾರೆ. “ಇದರರ್ಥ, ಮೋದಿ ಪಿಎಂಒದಲ್ಲಿನ ಕೆಲಸಗಳು ಮತ್ತು ನಿರ್ಧಾರಗಳು ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಅವರಿಗೆ ತಿಳಿದಿತ್ತು,” ಎಂದು ಕೀಶ್ವರ್ ಆರೋಪಿಸಿದ್ದಾರೆ. ನಿವೃತ್ತಿಯ ನಂತರವೂ ಸೇಠ್ ಅವರಿಗೆ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ (PESB) ಅಧ್ಯಕ್ಷ ಸ್ಥಾನ ನೀಡಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. “ಜಗತ್ತಿನಲ್ಲಿ ಯಾವ ಪ್ರಧಾನಿಯೂ ತಮ್ಮ ರಾಜಕೀಯ ವಿರೋಧಿಗಳ ವಿಶ್ವಾಸಾರ್ಹ ಅಧಿಕಾರಿಯನ್ನು ತಮ್ಮದೇ ಪಿಎಂಒ ಮುಖ್ಯಸ್ಥನನ್ನಾಗಿ ನೇಮಿಸಿದ ಉದಾಹರಣೆ ಇದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ. 'ಈ 56 ಇಂಚಿನ ಮಹಾಮಾನವ್' ಅವರು ತಮ್ಮ ವಿರುದ್ಧ ವಿದೇಶಿ ಖಾತೆಗಳ ಆರೋಪ ಮಾಡಿದ ಸೋನಿಯಾ, ರಾಬರ್ಟ್ ವಾದ್ರಾ, ಚಿದಂಬರಂ ಮತ್ತು ಇತರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆ ಧೈರ್ಯವನ್ನೂ ಮಾಡಲಿಲ್ಲ. ಇದು ರಾಜಿ ಮಾಡಿಕೊಂಡಿರುವುದಕ್ಕೆ ಸೂಚನೆಯೇ ಎಂದು ಅವರು ಹೇಳಿದ್ದಾರೆ. “ಭಾರತ ಮತ್ತು ವಿದೇಶಗಳಲ್ಲಿ ಮಹಾಮಾನವ್ ಅವರ ಈ 'ಕರಾಳ' ಕಾರ್ಯಗಳ ಮಾಹಿತಿ ಸೋನಿಯಾ ಅವರಲ್ಲದೆ ಹಲವರಿಗಿದೆ. ಅದಕ್ಕಾಗಿಯೇ ಮೋದಿ ಭಾರತದ ಅತ್ಯಂತ ಅಸುರಕ್ಷಿತ ರಾಜಕಾರಣಿಗಳಲ್ಲಿ ಒಬ್ಬರು,” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. “ಇತರ ರಾಜಕಾರಣಿಗಳಂತೆ ಅಲ್ಲ, ಈ ‘56 ಇಂಚಿನ’ ನಾಯಕ ತಾನೇ ತುಂಬಾ ಪವಿತ್ರ ವ್ಯಕ್ತಿ ಎಂದು ಜನರಿಗೆ ತೋರಿಸಲು ಹೆಚ್ಚು ಪ್ರಯತ್ನಿಸುತ್ತಾರೆ. ಅದರಿಂದ ಅವರು ಭಾಷಣ ಮಾಡುವಾಗ ತುಂಬಾ ಜೋರಾಗಿ, ಭಾವೋದ್ರಿಕ್ತವಾಗಿ ಮಾತನಾಡುತ್ತಾರೆ,” ಎಂದು ಅವರು ಹೇಳಿದ್ದಾರೆ. 2014ರ ಚುನಾವಣಾ ಪ್ರಚಾರದ ಸಂದರ್ಭವನ್ನು ನೆನೆದು, ತಮ್ಮ ಮತ್ತು ಮೋದಿ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯೊಂದನ್ನು ಅವರು ಹಂಚಿಕೊಂಡಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭ ಮೋದಿಯವರು 56 ಇಂಚಿನ ಎದೆ ಎಂದು ತಮ್ಮ ಚುನಾವಣಾ ಭಾಷಣಗಳಲ್ಲಿ ಹೇಳಿಕೊಂಡಿದ್ದರು. “ನರೇಂದ್ರ ಭಾಯಿ, ‘56 ಇಂಚು’ ಎಂಬ ಮಾತು ಬಳಸಬೇಡಿ. ಇದು ಅಸಭ್ಯವಾಗಿ ಕಾಣುತ್ತದೆ, ಎಂದು ಮೋದಿಯವರಿಗೆ ತಾನು ಹೇಳಿದ್ದಾಗಿ ಮಧು ಕೀಶ್ವರ್ ಹೇಳಿದ್ದಾರೆ. ಆಗ ಪ್ರತಿಕ್ರಿಯಿಸಿದ ಮೋದಿ, “ಸಾಮಾನ್ಯ ಜನರು ಇದನ್ನು ಇಷ್ಟಪಡುತ್ತಾರೆ, ಮಧು ಜಿ. ನಿಮ್ಮಂತಹ ಬುದ್ಧಿಜೀವಿಗಳು ಮಾತ್ರ ಅತ್ಯಾಧುನಿಕ ಭಾಷೆ ಬಯಸುತ್ತಾರೆ, ಮೋದಿ ಹೇಳಿದ್ದಾಗಿ ಮಧು ಕೀಶ್ವರ್ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. “ಮೋದಿ ಜಿ ಅವರು ಅಸಭ್ಯ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದಾರೆ. ನೀವು ನಿಮ್ಮ ಸುಳ್ಳು ಆರೋಪಗಳಿಂದ ನನ್ನನ್ನು ಕೆರಳಿಸಿದಷ್ಟು, ನಿಮ್ಮ 56 ಇಂಚಿನ ಹೃದಯ ಸಾಮ್ರಾಟ್ ಬಗ್ಗೆ ಇನ್ನಷ್ಟು ವಿಷಯಗಳು ಹೊರಬರುತ್ತವೆ,” ಎಂದು ಕೀಶ್ವರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. Update on Modi being heavily compromised & therefore effete. This revealing information came to me from someone who has great deal of inside information about PM.Basic facts can be checked by anyone who knows how to do Google search.The day Modi ji took charge as PM, Dr… — Madhu Purnima Kishwar (@madhukishwar) April 2, 2026
ಉಡುಪಿಯಲ್ಲಿ ಪೊಲೀಸ್ ಧ್ವಜ ದಿನಾಚರಣೆ
ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಇಂದು ನಗರದ ಮಿಷನ್ ಕಂಪೌಂಡ್ ಬಳಿಯ ಪೊಲೀಸ್ ಕವಾಯತು ಚಂದು ಮೈದಾನದಲ್ಲಿ ಆಚರಿಸಲಾಯಿತು. ನಿವೃತ್ತ ಮಹಿಳಾ ಪೊಲೀಸ್ ನಿರೀಕ್ಷಕಿ ಸುಜಾತ ಸಾಲಿಯಾನ್ ಅವರು ಪೊಲೀಸ್ ಧ್ವಜ ದಿನಾಚರಣೆಯ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಧ್ವಜ ದಿನಾಚರಣೆಯು ಪೊಲೀಸ್ ಇಲಾಖೆಯ ಮಹತ್ವದ ದಿನವಾಗಿದೆ. ಕರ್ನಾಟಕ ಪೊಲೀಸ್ ಪಡೆಯು ಅಧಿಕೃತವಾಗಿ ರಚನೆಯಾದ ನೆನಪಿಗಾಗಿ ಈ ದಿನವನ್ನು ರಾಜ್ಯದ ಎಲ್ಲೆಡೆ ಆಚರಿಸಲಾಗುತ್ತಿದೆ. ಈ ಧ್ವಜವು ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ ಹಾಗೂ ರಕ್ಷಣೆಯ ಸಂಕೇತವಾಗಿದೆ ಎಂದರು. ಪ್ರತೀ ವರ್ಷ ಪೊಲೀಸ್ ಧ್ವಜ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡುವುದರೊಂದಿಗೆ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ ಎಂದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಹೆಗ್ಗಳಿಕೆ ಕರ್ನಾಟಕ ಪೊಲೀಸರಿಗಿದೆ. ಕರ್ನಾಟಕ ಪೊಲೀಸ್ ಇಲಾಖೆ ಯಲ್ಲಿಯೂ ಉಡುಪಿ ಜಿಲ್ಲೆಯ ಪೊಲೀಸರು ಮೊದಲನೇ ಸ್ಥಾನದಲ್ಲಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು. ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆರೋಗ್ಯ ರಕ್ಷಣೆ ಯೋಜನೆಯನ್ನು ಪ್ರಾರಂಭಿಸಿದ್ದು, ಯೋಜನೆ ಯಡಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ 1.5 ಲಕ್ಷ ರೂ., ತುರ್ತು ಸಂದರ್ಭದಲ್ಲಿ 3 ಲಕ್ಷ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು ಮೂರು ಮಂದಿ ನಿವೃತ್ತ ಪೊಲೀಸ್ ಸಿಬ್ಬಂದಿಗಳು ಈ ಯೋಜನೆಯ ಪ್ರಯೋಜನ ಪಡೆದಿರುವುದಾಗಿ ಎಸ್ಪಿ ತಿಳಿಸಿದರು. ಪ್ರತೀ ವರ್ಷ ಸುಮಾರು 13 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಮಂಜೂರು ಆಗುತ್ತಿದ್ದು, ಇನ್ನೂ ಹೆಚ್ಚಿನ ಮೊತ್ತ ಮಂಜೂರಾತಿಗಾಗಿ ಅನುದಾನದ ಕೊರತೆ ಇದ್ದು, ಪ್ರಧಾನ ಕಛೇರಿಗೆ 15 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಪ್ರಸಕ್ತ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿವೃತ್ತರ ಕಲ್ಯಾಣ ಖಾತೆಯಿಂದ 13,08,050 ರೂ.ಗಳ ವೈದ್ಯಕೀಯ ಧನ ಸಹಾಯ ನೀಡಲಾಗಿದೆ. ಯಾವುದೇ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಹವಾಲುಗಳಿದ್ದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯನ್ನು ಸಂಪರ್ಕಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಥಸಂಚಲನದ ನೇತೃತ್ವವನ್ನು ಡಿಎಆರ್ನ ಆರ್ಪಿಐ ರವಿಕುಮಾರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೈದ್ಯಕೀಯ ಧನ ಸಹಾಯವನ್ನು ವಿತರಿಸಲಾಯಿತು. ಡಿಎಆರ್ನ ಯೋಗೀಶ್ ನಾಯ್ಕ್ ಅವರು ಕಾರ್ಯಕ್ರಮ ನಿರೂಪಿಸಿದರೆ, ಎಎಸ್ಪಿ ಸುಧಾಕರ್ ನಾಯಕ್ ವಂದಿಸಿದರು.
ಹಾರ್ಮುಝ್ ಜಲಸಂಧಿಯನ್ನು ತೆರೆಯುವ ಕುರಿತ ಚರ್ಚೆಗೆ ಭಾರತಕ್ಕೆ ಬ್ರಿಟನ್ ಆಹ್ವಾನ
ಲಂಡನ್: ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ ಮುಚ್ಚಿರುವ ಹಾರ್ಮುಝ್ ಜಲಸಂಧಿಯನ್ನು ತೆರೆಯುವ ಕುರಿತ ಚರ್ಚೆಗೆ ಬ್ರಿಟನ್ ಗುರುವಾರ ಭಾರತವನ್ನು ಆಹ್ವಾನಿಸಿದೆ. ಈ ಬೆಳವಣಿಗೆಯನ್ನು ಖಚಿತಪಡಿಸಿರುವ ಭಾರತದ ವಿದೇಶ ವ್ಯವಹಾರಗಳ ಸಚಿವಾಲಯವು, ಈ ಸಭೆಯಲ್ಲಿ ವಿದೇಶ ಕಾರ್ಯದರ್ಶಿ ಭಾಗವಹಿಸುತ್ತಾರೆ ಎಂದು ಹೇಳಿದೆ. ಭಾರತವು ತನ್ನ ಕಚ್ಚಾತೈಲ ಅವಶ್ಯಕತೆಯ ಸುಮಾರು 88 ಶೇಕಡದಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ಅರ್ಧದಷ್ಟನ್ನು ಪಶ್ಚಿಮ ಏಶ್ಯದಿಂದ ಪಡೆದುಕೊಳ್ಳಲಾಗುತ್ತಿದೆ. ಈ ಪೈಕಿ ಹೆಚ್ಚಿನ ತೈಲವು ಹಾರ್ಮುಝ್ ಜಲಸಂಧಿಯ ಮೂಲಕವೇ ಹಾದು ಹೋಗುತ್ತದೆ. ಭಾರತವು ತನ್ನ ಎಲ್ಪಿಜಿ ಬಳಕೆಯ ಸುಮಾರು 60 ಶೇಕಡಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಆಮದು ಮಾಡಿಕೊಳ್ಳುವ ಅನಿಲದ ಸುಮಾರು 90 ಶೇಕಡ ಹಾರ್ಮುಝ್ ಜಲಸಂಧಿಯ ಮೂಲಕ ಬರುತ್ತದೆ. ಬ್ರಿಟಿಶ್ ವಿದೇಶ ಕಾರ್ಯದರ್ಶಿ ಯವೆಟ್ ಕೂಪರ್ ಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಾರೆ. ಫ್ರಾನ್ಸ್, ಜರ್ಮನಿ, ಇಟಲಿ, ಕೆನಡ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೇರಿದಂತೆ ಸುಮಾರು 25 ದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದರೆ, ಅಮೆರಿಕವು ಈ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಹೋರ್ಮುಝ್ ಜಲಸಂಧಿಗೆ ಪ್ರವೇಶವನ್ನು ಪಡೆಯುವುದು ಅದನ್ನು ಅವಲಂಬಿಸಿರುವ ದೇಶಗಳ ಜವಾಬ್ದಾರಿಯಾಗಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಒಂದು ದಿನದ ಬಳಿಕ ಬೆಳವಣಿಗೆ ನಡೆದಿದೆ. ಈ ದಾರಿಯು ‘‘ಸಹಜವಾಗಿಯೇ’’ ಮರುತೆರೆದುಕೊಳ್ಳಬಹುದು ಎಂಬುದಾಗಿ ಟ್ರಂಪ್ ಹೇಳಿದ್ದರು ಹಾಗೂ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಇತರ ದೇಶಗಳನ್ನು ಒತ್ತಾಯಿಸಿದ್ದರು.
Bagalkote By Election: ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಯು ಚುರುಕು ಪಡೆದುಕೊಂಡಿದೆ. ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭೆ ಚುನಾವಣಾ ಕಣವು ರಂಗೇರಿದ್ದು, ಎರಡೂ ಕ್ಷೇತ್ರಗಳ ಉಪ ಚುನಾವಣೆಯು ಒಂದೊಂದು ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ) ಅವರ ನಿಧನದಿಂದ ತೆರವಾದ ಸ್ಥಾನಕ್ಕಾಗಿ ಈ
ಮೂಡುಬಿದಿರೆ: ಸಾವಿರ ಕಂಬದ ಬಸದಿಯಲ್ಲಿ ಕಿರಿಯ ರಥೋತ್ಸವ
ಮೂಡುಬಿದಿರೆ: ಮನುಷ್ಯನ ಮನಸ್ಸನ್ನು ನಿರ್ಮಲಗೊಳಿಸಲು ಯೋಗ, ಧ್ಯಾನ, ಜಪ ಹಾಗೂ ತಪಸ್ಸು ಅತಿ ಅಗತ್ಯವಾಗಿದ್ದು, ಸಸ್ಯಾಹಾರ ಹಾಗೂ ಸಾತ್ವಿಕ ಆಹಾರದ ನಿಯಮಿತ ಸೇವನೆಯಿಂದ ಶರೀರದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು. ಸಾವಿರ ಕಂಬದ ಬಸದಿಯಲ್ಲಿ ಬುಧವಾರ ರಾತ್ರಿ ನಡೆದ ಭಗವಾನ್ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ-ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಬಸದಿಗಳ ಮೊಕ್ತೇಸರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್ , ಸುದೀಶ್, ಆದರ್ಶ್, ಪ್ರಮುಖರಾದ ಹೇಮರಾಜ್, ಪ್ರವೀಣ್ ಚಂದ್ರ, ಪ್ರದೀಪ್ ಚಂದ್ರ ರಂಜನ್ ಪೊವಣಿ ಉಪಸ್ಥಿತರಿದ್ದರು. ಬಳಿಕ ಭಗವಾನ್ ಚಂದ್ರಪ್ರಭ ಸ್ವಾಮಿಯ ಕಿರಿಯ ರಥೋತ್ಸವ ಹಾಗೂ 108 ಕಲಶಗಳ ಅಭಿಷೇಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಎ.3ರಿಂದ ಮಂಗಳೂರಿನಲ್ಲಿ ಸಿಐಟಿಯು ರಾಜ್ಯ ಸಂಘಟನಾ ಸಭೆ
ಮಂಗಳೂರು, ಎ.2: ದೇಶದ ಬಲಿಷ್ಠ ಕೇಂದ್ರ ಕಾರ್ಮಿಕ ಸಂಘಟನೆಯಾದ ಸಿಐಟಿಯು ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವು ಎ.3,4,5ರಂದು ನಗರದ ಸಂದೇಶ ಸಂಸ್ಥೆಯಲ್ಲಿ ಜರುಗಲಿದೆ. ಆ ಹಿನ್ನೆಲೆಯಲ್ಲಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿಗಳಾದ ಕೆ.ಎನ್. ಉಮೇಶ್, ರಾಷ್ಟ್ರೀಯ ಉಪಾಧ್ಯಕ್ಷರಾದ ಮೀನಾಕ್ಷಿ ಸುಂದರಂ, ಎಸ್. ವರಲಕ್ಷ್ಮಿ, ರಾಜ್ಯದ ಕಾರ್ಮಿಕ ಚಳುವಳಿಯ ನಾಯಕ ವಿಜೆಕೆ ನಾಯರ್, ರಾಜ್ಯದ ನಾಯಕರಾದ ಕೆ.ಮಹಾಂತೇಶ್, ಸೈಯ್ಯದ್ ಮುಜೀಬ್, ಪ್ರತಾಪ್ ಸಿಂಹ, ಬಾಲಕೃಷ್ಣ ಶೆಟ್ಟಿ, ಸುನಂದಾ, ಮಾಲಿನಿ ಮೇಸ್ತಾ, ಗೋಪಾಲಗೌಡ, ಎಂ.ಬಿ. ನಾಡಗೌಡ, ಬಿವಿ ರಾಘವೇಂದ್ರ, ಆರ್ಎಸ್ ಬಸವರಾಜ್, ಸತ್ಯಬಾಬು, ಶಾಂತ ಘಂಟೆ, ಕುಮಾರಿ ಸಿ.,ಧರ್ಮೇಶ್, ಮಹೇಶ್ ಪತ್ತಾರ್ ಮಂಗಳೂರಿಗೆ ಆಗಮಿಸಲಿದ್ದಾರೆ. ಎ.4ರಂದು ಬೆಳಗ್ಗೆ 10ಕ್ಕೆ ನಂತೂರಿನಲ್ಲಿರುವ ಸಂದೇಶ ಪ್ರತಿಷ್ಠಾನದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ: ಹೈಕೋರ್ಟ್ ವಿಚಾರಣೆಗೆ ಹಾಜರಾದ ಸೌಮ್ಯ ರೆಡ್ಡಿ; ಜಡ್ಜ್ ಮುಂದೆ ಹೇಳಿದ್ದೇನು?
2023 ರ ವಿಧಾನಸಭಾ ಚುನಾವಣೆ ಫಲಿತಾಂಶ ಕುರಿತಂತೆ ಜಯನಗರ ಕ್ಷೇತ್ರದಲ್ಲಿ ಮತ ಮರು ಎಣಿಕೆಯಾಗಬೇಕು ಎಂಬ ಅರ್ಜಿಯನ್ನು ಗುರುವಾರ ಹೈಕೋರ್ಟ್ ವಿಚಾರಣೆ ನಡೆಸಿದೆ. ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಯವರು ಕೋರ್ಟ್ಗೆ ಹಾಜರಾಗಿ ವಕೀಲರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಪ್ರಕ್ರಿಯೆ ಸಂಪೂರ್ಣ ಕಾನೂನು ಬಾಹಿರವಾಗಿದ್ದು, ಮರು ಎಣಿಕೆ ಮಾಡಬೇಕು ಎಂದು ನ್ಯಾಯಾಧೀಶರ ಮುಂದೆ ಹೇಳಿದರು.
ಕಟಪಾಡಿ: ಎ.4ಕ್ಕೆ ಮಿಷನ್ ಆಸ್ಪತ್ರೆಯ ಆರೋಗ್ಯ ಕೇಂದ್ರ ಉದ್ಘಾಟನೆ
ಉಡುಪಿ, ಎ.2: ಉಡುಪಿಯ ಪ್ರಸಿದ್ಧ ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಪೂರ್ಣ ಪ್ರಮಾಣದ ಮೊದಲ ಆರೋಗ್ಯ ಕೇಂದ್ರ (ಪಾಲಿ ಕ್ಲಿನಿಕ್) ಕಟಪಾಡಿಯ ಬಸ್ ನಿಲ್ದಾಣದ ಬಳಿಯಲ್ಲಿ ಎ.4ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಉಡುಪಿ ಮಿಷನ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಶಿಲ್ ಜತ್ತನ್ನ ತಿಳಿಸಿದ್ದಾರೆ. ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ಡಾ.ಜತ್ತನ್ನ, ಕಟಪಾಡಿ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ಸೇವೆ, ಎಕ್ಸರೇ ಯುನಿಟ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಲಭ್ಯವಿರುತ್ತದೆ. ಇಲ್ಲಿ ಖಾಯಂ ವೈದ್ಯರೊಂದಿಗೆ ಮಿಷನ್ ಆಸ್ಪತ್ರೆಯ ಎಲ್ಲಾ ವಿಭಾಗಗಳ ತಜ್ಞ ವೈದ್ಯರ ಸೇವೆಯೂ ಲಭ್ಯವಿರುತ್ತದೆ ಎಂದರು. ಹೊಸ ಆರೋಗ್ಯ ಕೇಂದ್ರದಿಂದ ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಸುಲಭವಾಗಿ ಎಲ್ಲಾ ವಿಧದ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ಕೈಗೆಟುಕುವ ದರದೊಂದಿಗೆ ಮಾನವೀಯ ಆರೋಗ್ಯ ಸೇವೆಗಳನ್ನು ಒದಗಿ ಸುವ ಉದ್ದೇಶದಿಂದ ಈ ಪಾಲಿಕ್ಲಿನಿಕ್ನ್ನು ಪ್ರಾರಂಭಿಸಲಾಗುತ್ತಿದ್ದು, ಇದರ ಯಶಸ್ಸಿನ ಆಧಾರದ ಮೇಲೆ ಇನ್ನಷ್ಟು ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸುವ ಯೋಜನೆಯನ್ನು ಹಾಕಿ ಕೊಳ್ಳಲಾಗಿದೆ ಎಂದರು. ಕಟಪಾಡಿ ಆರೋಗ್ಯ ಕೇಂದ್ರವನ್ನು ಸಿ.ಎಸ್.ಐ-ಕರ್ನಾಟಕ ದಕ್ಷಿಣ ಧರ್ಮ ಪ್ರಾಂತದ (ಕೆಎಸ್ಡಿ) ಬಿಷಪ್ ಆಗಿರುವ ರೈಟ್ ರೆ.ಹೇಮಚಂದ್ರ ಕುಮಾರ್ ಲೋಕಾರ್ಪಣೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ಫಾದರ್ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ವಂ. ಫೌಸ್ಟಿನ್ ಲೂಕಸ್ ಲೋಬೋ, ಕಟಪಾಡಿಯ ಹಿರಿಯ ವೈದ್ಯ ಡಾ.ಎ.ರವೀಂದ್ರನಾಥ ಶೆಟ್ಟಿ, ಕಟಪಾಡಿ ಗ್ರಾಪಂನ ಮಾಜಿ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಕಟಪಾಡಿಯ ಉದ್ಯಮಿ ಇಕ್ಬಾಲ್ ಶಂಸುದ್ದೀನ್, ಕ್ರಿಶ್ಚಿಯನ್ ಡೆವಲಪ್ಮೆಂಟ್ ಕಾರ್ಪೊರೇಶನ್ನ ನಿರ್ದೇಶಕ ಪ್ರಶಾಂತ್ ಜತನ್ನ, ಸಿಎಸ್ಐ-ಕೆಎಸ್ಡಿ ರೆ.ಖಜಾಂಚಿ ಐವಾನ್ ಡಿ ಸೋನ್ಸ್ ಹಾಗೂ ಇತರರು ಭಾಗವಹಿಸಲಿದ್ದಾರೆ. ಕಳೆದೊಂದು ಶತಮಾನದಿಂದ ಉಡುಪಿಯ ಜನತೆಗೆ ವೈದ್ಯಕೀಯ ಸೇವೆ ಯನ್ನು ನೀಡುತ್ತಿರುವ ಲೊಂಬಾರ್ಡ್ ಮಿಷನ್ ಆಸ್ಪತ್ರೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಜನತೆಗೆ ನೀಡುತ್ತಾ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸು ತ್ತದೆ. ಕಟಪಾಡಿ ಆರೋಗ್ಯ ಕೇಂದ್ರವು ಪ್ರಾಥಮಿಕ ಆರೋಗ್ಯ ಸೇವೆಗಳ ಅಗತ್ಯಗಳನ್ನು ಪೂರೈಸಲು, ರೋಗ ಬರದಂತೆ ತಡೆಗಟ್ಟುವ ಆರೈಕೆಯನ್ನು ಉತ್ತೇಜಿಸಲು ಹಾಗೂ ಗ್ರಾಮೀಣ ಸಮುದಾಯಗಳನ್ನು ವಿಶೇಷ ವೈದ್ಯಕೀಯ ಸೇವೆಗಳೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಿಷನ್ ಆಸ್ಪತ್ರೆಯ ರೋಹಿ ರತ್ನಾಕರ್, ಲೀನಾ ಪ್ರಭಾವತಿ, ಕಾವ್ಯಶ್ರೀ ಶೆಟ್ಟಿ ಉಪಸ್ಥಿತರಿದ್ದರು.
ಆಳಂದ | 12ನೇ ದಿನಕ್ಕೆ ಕಾಲಿಟ್ಟ ಕಿಸಾನಸಭಾ ಧರಣಿ : ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ
ಆಳಂದ: ರೈತಪರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಕಿಸಾನಸಭಾ ತಾಲೂಕು ಘಟಕದ ಆಶ್ರಯದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಆರಂಭಗೊoಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ 12ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಗಾರರ ಉತ್ಸಾಹ ಇನ್ನಷ್ಟು ಹೆಚ್ಚುತ್ತಿರುವುದು ಗಮನಸೆಳೆಯುತ್ತಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ದೃಢಸಂಕಲ್ಪದೊಂದಿಗೆ ಆರಂಭವಾದ ಈ ಧರಣಿ ದಿನದಿಂದ ದಿನಕ್ಕೆ ಮುಂದುವರೆಯುತ್ತಿದ್ದು, ವಿವಿಧ ಗ್ರಾಮಗಳಿಂದ ರೈತರು ಆಗಮಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಕ್ಷೇತ್ರದ ಮೂಲಭೂತ ಸಮಸ್ಯೆಗಳಾದ ನೀರಾವರಿ, ರಸ್ತೆ, ವಿದ್ಯುತ್, ಸಾಲಮನ್ನಾ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಇದರ ಮಧ್ಯೆ, ಕ್ಷೇತ್ರದ ಶಾಸಕರಿಗೆ ಹಾಗೂ ಸಂಬಂಧಿಸಿದ ಕೆಲವು ಅಧಿಕಾರಿಗಳಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ದೊರಕದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರಲ್ಲಿ ಅಸಮಾಧಾನ ಹೆಚ್ಚಾಗಿದೆ. ಸರ್ಕಾರ ಹಾಗೂ ಆಡಳಿತ ಯಂತ್ರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಕಿಸಾನಸಭಾ ಮುಖಂಡ ಮೌಲಾ ಮುಲ್ಲಾ ಅವರು, “ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ವಿಷಾದನೀಯ. ನಾವು ಸಲ್ಲಿಸಿದ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಅಗತ್ಯವಿದ್ದರೆ ತಾಲೂಕು ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಹೋರಾಟ ವಿಸ್ತರಿಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು. ಧರಣಿ ಸ್ಥಳದಲ್ಲಿ ಪ್ರತಿದಿನವೂ ರೈತರು ಸೇರಿ ತಮ್ಮ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದು, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮುಂದುವರಿಸುತ್ತಿದ್ದಾರೆ. “ನಮ್ಮ ಹೊಲಕ್ಕೆ ನಮ್ಮ ರಸ್ತೆ”, “ಪ್ರತಿ ಹೊಲಕ್ಕೆ ನೀರು” ಎಂಬ ಘೋಷಣೆಗಳು ಧರಣಿ ಸ್ಥಳದಲ್ಲಿ ಮೊಳಗುತ್ತಿದ್ದು, ರೈತರ ಒಗ್ಗಟ್ಟು ಸ್ಪಷ್ಟವಾಗಿ ಕಾಣಿಸುತ್ತಿದೆ. ಹೋರಾಟ ಇನ್ನಷ್ಟು ವ್ಯಾಪಕವಾಗುವ ಸೂಚನೆಗಳು ಕಂಡುಬರುತ್ತಿವೆ. ಸರ್ಕಾರ ಶೀಘ್ರದಲ್ಲೇ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದಿದ್ದರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಕಿಸಾನಸಭಾ ರಾಜ್ಯ ಮುಖಂಡ ಮೌಲಾ ಮುಲ್ಲಾ, ಕಿಸಾನಸಭಾ ತಾಲೂಕು ಗೌರವ ಅಧ್ಯಕ್ಷ ಚಂದ್ರಕಾAತ ಖೋಬ್ರೆ, ಅಧ್ಯಕ್ಷ ಧರ್ಮಣ್ಣಾ ಪೂಜಾರಿ, ಉಪಾಧ್ಯಕ್ಷ ಮಹಾದೇವ ಎಂ. ಮಂಟಕಿ, ಕಲ್ಯಾಣಿ ಅವಟೆ ತಡೋಳಾ, ರಮೇಶ ಪಡಸಾವಳಿ, ಸಂಚಾಲಕ ಮಹಾದೇವ ಜಿಡ್ಡೆ, ಸೈಫಾನಸಾಬ ಪಡಸಾವಳಿ, ಮಹಿಬೂಬಸಾಬ ಹಿರೋಳಿ, ಭಾಷಾಸಾಬ ಯಳಸಂಗಿ ಮತ್ತಿತರರು ಇದ್ದರು.
ಬೈಂದೂರು: ಬಿಜೆಪಿಯಿಂದ ಗ್ರಾಪಂಗಳ ಎದುರು ಪ್ರತಿಭಟನೆ
ಬೈಂದೂರು, ಎ.2:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ನಲ್ಲಿ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ ಹಾಗೂ ರಾಜ್ಯ ಸರಕಾರದ ಮಲತಾಯಿ ಧೋರಣೆ ವಿರೋಧಿಸಿ ಬಿಜೆಪಿ ಬೈಂದೂರು ಮಂಡಲದ ವತಿ ಯಿಂದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ನೇತೃತ್ವದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತ್ ಕಚೇರಿಗಳ ಎದುರುಗಡೆ ಗುರುವಾರ ಪ್ರತಿಭಟನೆ ನಡೆಸಿ, ಪಿಡಿಒ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹಾಗೂ ಮಂಡಲ ಅಧ್ಯಕ್ಷರಾದ ಅನಿತಾ ಆರ್.ಕೆ ಅವರ ಮುಂದಾಳತ್ವದಲ್ಲಿ ಎಲ್ಲ ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಬಿಜೆಪಿ ಕಾರ್ಯಕರ್ತರು, ಪ್ರಮು ಖರು, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಜಮಾಯಿಸಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಅಭಿವೃದ್ಧಿಯನ್ನು ಶೂನ್ಯಕ್ಕೆ ಇಳಿಸಿದ ರಾಜ್ಯ ಸರಕಾರದ ಆಡಳಿತ ಪ್ರಸ್ತುತ ದುಸ್ಥಿತಿಗೆ ಬಂದು ತಲುಪಿದೆ. ಜನರ ಕನಿಷ್ಠ ಅಭಿವೃದ್ಧಿ ಬೇಡಿಕೆ, ಗ್ರಾಮದ ಕನಿಷ್ಠ ಮೂಲಭೂತ ಸಮಸ್ಯೆಗಳು ಈಡೇರದೆ ಜನಾಕ್ರೋಶ ಸ್ಫೋಟಗೊಳ್ಳುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕಿದೆ ಎಂದು ಪ್ರತಿಭಟನಕಾರರು ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ರಾಜ್ಯ ಸರಕಾರ ಅಭಿವೃದ್ಧಿ ಯನ್ನು ಸಂಪೂರ್ಣ ಮರೆತಿದೆ. ಬಜೆಟ್ನಲ್ಲಿ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರಾಜ್ಯ ಸರಕಾರದ ಜನ ವಿರೋಧಿ ಧೋರಣೆ ಖಂಡಿಸಿ, ಜನ ಸಾಮಾನ್ಯರ ರಸ್ತೆ ಅಭಿವೃದ್ಧಿ ಬೇಡಿಕೆ, 9/11 ಖಾತೆ, ವಸತಿ ಯೋಜನೆಯಡಿ ಮನೆ ಸೌಲಭ್ಯ ರೇಷನ್ ಕಾರ್ಡ, ವಿವಿಧ ನೀರಾವರಿ ಸೌಲಭ್ಯಗಳು, ಕೃಷಿ ಹಾಗೂ ತೋಟಗಾರಿಕೆ ಸೌಲಭ್ಯ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಜನ ಸಾಮಾನ್ಯರಿಗೆ ಸೌಲಭ್ಯಗಳು ಸಿಗದ ಬಗ್ಗೆ ಪ್ರತಿಭಟನೆ ನಡೆಸಲಾಗಿದೆ ಎಂದರು. ಕ್ಷೇತ್ರದ ಶಾಸಕನಾಗಿ ಜನರ ಕಷ್ಟಗಳಿಗೆ ಶಕ್ತಿ ಮೀರಿ ಸ್ಪಂದಿಸಿದರೂ, ತ್ರಿಸ್ತರದ ಪಂಚಾಯತ್ ರಾಜ್ ವ್ಯವಸ್ಥೆಯ ಯಾವ ಹಂತಕ್ಕೂ ಪ್ರತಿನಿಧಿಗಳೂ ಇಲ್ಲದೇ ಚುನಾವಣೆಗಳನ್ನೂ ಮುಂದೂಡುವುದರೊಂದಿಗೆ ಗ್ರಾಮೀಣ ಜನರರಿಗೆ ಸರಕಾರ ದ್ರೋಹವೆಸಗುತ್ತಿದೆ. ಯಾವುದೇ ಸರಕಾರ ಬಂದರೂ ಅಭಿವೃದ್ಧಿ ಅನ್ನುವುದು ನಿಧಾನ ಗತಿ ಪಡೆದು ಕೊಳ್ಳಬಹುದು. ಆದರೆ ಸಂಪೂರ್ಣ ನಿಂತ ಉದಾಹರಣೆ ಇಲ್ಲ. ಪ್ರಸ್ತುತ ರಾಜ್ಯ ಸರಕಾರದಲ್ಲಿ ಅಭಿವೃದ್ಧಿ ಶೂನ್ಯ ಹಂತಕ್ಕೆ ಇಳಿದು ಆಡಳಿತ ದುಸ್ಥಿತಿಗೆ ಬಂದು ತಲುಪಿದೆ ಎಂದು ಆರೋಪಿಸಿದರು. ಬರೇ ಜನರ ಖಾತೆಗೆ ಹಣ ಜಮೆ ಮಾಡುವುದು ಒಂದೇ ಸರಕಾರದ ಕಾಳಜಿ ಆಗದೇ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ, ಗ್ರಾಮೀಣ ಭಾಗದ ಕನಿಷ್ಠ ಅಭಿವೃದ್ಧಿ ಬೇಡಿಕೆಗಳಿಗೆ ತನ್ನ ವಿವಿಧ ಇಲಾಖೆಗಳ ಮೂಲಕ ಸ್ಪಂದಿಸುವಂತಾಗಬೇಕು ಎಂದವರು ಹೇಳಿದರು. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ 39 ಗ್ರಾಮ ಪಂಚಾ ಯತ್ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ಪ್ರತಿಭಟನೆಯನ್ನು ಹಮ್ಮಿ ಕೊಂಡು ರಾಜ್ಯ ಸರಕಾರದ ಜನ ವಿರೋಧಿ ನೀತಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. ದಿನ ನಿತ್ಯ ಜನಸಾಮಾನ್ಯರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ನಿವಾರಣೆ ಹಾಗೂ ಅಭಿವೃದ್ದಿ ಬೇಡಿಕೆಗಳಿಗೆ ಹಕ್ಕೊತ್ತಾಯ ಮಂಡಿಸಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕುಂದಾಪುರ| ಉಡುಪಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ
ಕುಂದಾಪುರ, ಎ.2: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಸಹಯೋಗದೊಂದಿಗೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ- 2026ನ್ನು ಗುರುವಾರ ಆಯೋಜಿಸಲಾಗಿತ್ತು. ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ, ಉದ್ಯೋಗದಾತರೇ ಉದ್ಯೋಗಾಕಾಂಕ್ಷಿಗಳ ಬಳಿಗೆ ಬಂದಾಗ ಅದರ ಸಂಪೂರ್ಣ ಪ್ರಯೋಜವನ್ನು ಪಡೆದು ಕೊಳ್ಳಬೇಕು. ಉದ್ಯೋಗ ಮೇಳಕ್ಕೆ ಬಂದ ಕೆಲವರಿಗೆ ಕೆಲಸ ಸಿಕ್ಕಿದರೂ, ಅದು ಒಳ್ಳೆಯ ಬೆಳವಣಿಗೆ. ಉದ್ಯೋಗ ಮೇಳದ ಪ್ರಯೋಜವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಬೇಕೆಂಬ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಉದ್ಯೋಗ ಸೃಷ್ಟಿಸುವ ಸಂಸ್ಥೆಗಳು ಉದ್ಯೋಗ ಮೇಳಕ್ಕೆ ಸಹಕಾರ ನೀಡುತ್ತಿರು ವುದು ಖುಷಿಯ ವಿಷಯ. ಈ ಉದ್ಯೋಗ ಮೇಳದ ಫಲಿತಾಂಶ ಹೆಚ್ಚಾಗ ಬೇಕು, ನಮ್ಮೂರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಬೇಕು ಎಂದರು. ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮುಖ್ಯ ಯೋಜನಾಧಿಕಾರಿ ಉದಯ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕ ವಿಜಯ ಕುಮಾರ್, ಕುಂದಾಪುರ ತಾಪಂ ಇಒ ಮಹೇಶ ಕೆ.ಜಿ., ಬೈಂದೂರು ತಾಪಂನ ಇಒ ರಾಮದಾಸ, ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಶಾಂತಾರಾಮ ಪ್ರಭು, ಆಡಳಿತ ಮಂಡಳಿ ಕಾರ್ಯದರ್ಶಿ ಯು.ಎಸ್.ಶೆಣೈ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ. ಗೊಂಡ, ತಾಲೂಕು ಸಂಜೀವಿನ ಒಕ್ಕೂಟದ ಮೈತ್ರಿ ಭಟ್ ಮೊದಲಾದವರು ಉಪಸ್ಥಿತರಿದ್ದರು. ಪಿಡಿಒ ಸತೀಶ್ ವಡ್ಡರ್ಸೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರೇಡಿಯೋ ಕುಂದಾಪ್ರದ ಜ್ಯೋತಿ ಸಾಲಿಗ್ರಾಮ ವಂದಿಸಿದರು. 3 ಸಾವಿರ ಆಕಾಂಕ್ಷಿಗಳು, 80 ಕಂಪೆನಿಗಳು ಉದ್ಯೋಗ ಮೇಳದಲ್ಲಿ ಸುಮಾರು 20 ವಲಯಗಳಿಂದ 80ಕ್ಕೂ ಮಿಕ್ಕಿ ಕಂಪೆನಿಗಳು ಪಾಲ್ಗೊಂಡಿದ್ದು, 3 ಸಾವಿರಕ್ಕೂ ಮಿಕ್ಕಿ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಂಡರು. ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ ಸ್ಥಳದಲ್ಲೇ ಅರ್ಹತಾ ಹಾಗೂ ನೇಮಕಾತಿ ಪತ್ರ ವಿತರಿಸಲಾಯಿತು.
ಸೇಡಂ | ಎ.4ರಂದು ಕೋಡ್ಲಾದಲ್ಲಿ ಶಿವಯೋಗಿಶ್ವರ ರಥೋತ್ಸವ
ಸೇಡಂ: ಕೋಡ್ಲಾ ಗ್ರಾಮದ ಶ್ರೀ ಉರಿಲಿಂಗಪೆದ್ದಿಶ್ವರ ಮಹಾಸಂಸ್ಥಾನ ಮಠದ ಶ್ರೀ ಶಿವಯೋಗೀಶ್ವರರ 78ನೇ ಪುಣ್ಯಸ್ಮರಣೆ ಹಾಗೂ 46ನೇ ಜಾತ್ರೋತ್ಸವ ನಾಳೆ (ಎ.4ರಂದು) ನಡೆಯಲಿದೆ ಎಂದು ಕೋಡ್ಲಾ- ಮೈಸೂರು ಶ್ರೀ ಉರಿಲಿಂಗ ಪೆದ್ದೀಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಜ್ಞಾನಪ್ರಕಾಶ ಮಹಾಸ್ವಾಮೀಜಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಅವರು, ಜಾತ್ರೆ ನಿಮಿತ್ತ ಗುರುವಾರದಿಂದ ಎ.4ರವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೋಡ್ಲಾ ಶಂಭುಲಿಂಗೇಶ್ವರ ವಿರಕ್ತ ಮಠದ ಶ್ರೀ ಶಂಭುಲಿಂಗೇಶ್ವರ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವನಾಗಿದೇವ ಸ್ವಾಮೀಜಿ ಉಪಸ್ಥಿತಿಯಲ್ಲಿ ಶುಕ್ರವಾರ ಮಧ್ಯಾಹ್ನ 2ಕ್ಕೆ ವಚನಗೋಷ್ಠಿ, ಕವಿಗೋಷ್ಠಿ ನಡೆಯಲಿದೆ ಎಂದರು. ಚಿತ್ರದುರ್ಗದ ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಸಿದ್ಧರಾಮ ಶಿವಯೋಗಿ ಸ್ವಾಮೀಜಿ, ಶ್ರೀ ಮಹಾದೇವ, ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮುಡಬಿ ಗುಂಡೇರಾವ್, ತಿಪ್ಪಯ್ಯ ದೇವನೂರ ಭಾಗವಹಿಸಲಿದ್ದಾರೆ. ಸಂಜೆ 5.15ಕ್ಕೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಬಸವೇಶ್ವರ ಮೂರ್ತಿಯಿಂದ ಉರಿಲಿಂಗ ಪೆದ್ದೀಶ್ವರ ಮಠದವರೆಗೆ ಶ್ರೀ ಶಿವಯೋಗೀಶ್ವರ ಭವ್ಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಎ.4ರಂದು ಸಂಜೆ 6.30ಕ್ಕೆ ಗುರಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಕುಂಭಮೇಳ, ಪಲ್ಲಕ್ಕಿ ಮೆರವಣಿಗೆ, ಭಜನೆ, ಪುರವಂತರ ಸೇವೆಯೊಂದಿಗೆ ಭವ್ಯ ರಥೋತ್ಸವ ಜರುಗಲಿದ್ದು. 7.15ಕ್ಕೆ ಶರಣ ತತ್ವ ದರ್ಶನ ಹಾಗೂ ಸಮಾನತೆ ಸಮಾವೇಶ ನಡೆಯಲಿದೆ. ಭಾಲ್ಕಿಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಪ್ರಸಾದ ಅಬ್ಬಯ್ಯ ಸೇರಿ ಹಲವರು ಭಾಗಿಯಾಗಲಿದ್ದಾರೆ. ರಾತ್ರಿ 8.30ಕ್ಕೆ ಸಾಣೆಹಳ್ಳಿಯ ಶಿವಕುಮಾರ ಕಲಾ ಸಂಘ ಅಭಿನಯದ ಶರಣ ಉರಿಲಿಂಗ ಪೆದ್ದಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತರಿಂದ ‘ಪವಿತ್ರ ಗುರುವಾರ’ ಆಚರಣೆ
ಉಡುಪಿ, ಎ.2: ಯೇಸು ಕ್ರಿಸ್ತರು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೈಸ್ತ ಧರ್ಮಸಭೆಯ ಉಗಮದ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥಸ್ಡೇ)ವನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತರು ಇಂದು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು. ಉಡುಪಿ ಧರ್ಮಪ್ರಾಂತದ ಪ್ರಧಾನ ಧಾರ್ಮಿಕ ಕಾರ್ಯಕ್ರಮವು ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ನಲ್ಲಿ ಉಡುಪಿ ಧರ್ಮಪ್ರಾಂತದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಜರಗಿತು. ಧರ್ಮಾಧ್ಯಕ್ಷರು 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಕ್ಯಾಥೆಡ್ರಲಿನ ಪ್ರಧಾನ ಧರ್ಮಗುರು ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೋಜಾ, ಧರ್ಮಪ್ರಾಂತದ ಸಂಪದ ಸಂಸ್ಥೆಯ ನಿರ್ದೇಶಕರಾದ ವಂ. ರೆಜಿನಾಲ್ಡ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು. ಪವಿತ್ರ ಗುರುವಾರದ ಅಂಗವಾಗಿ ಜಿಲ್ಲೆಯ ವಿವಿಧ ಚರ್ಚ್ಗಳಲ್ಲಿ ಪರಮ ಪ್ರಸಾದ ಸಂಸ್ಕಾರ, ಗುರು ದೀಕ್ಷೆಯ ಸಂಸ್ಕಾರ, ಸೇವೆಯ ಸಂಸ್ಕಾರದ ಸ್ಮರಣೆಯೊಂದಿಗೆ ವಿಶೇಷ ಪ್ರಾರ್ಥನೆ, ಬಲಿಪೂಜೆ, ಆರಾಧನೆಗಳು ಜರುಗಿದವು. ಪವಿತ್ರ ಗುರುವಾರದ ಬಳಿಕ ಶುಕ್ರವಾರದಂದು ಯೇಸು ಸ್ವಾಮಿಯನ್ನು ಶಿಲುಬೆಗೇರಿಸಿದ್ದು ಶುಕ್ರವಾರವನ್ನು ಕ್ರೈಸ್ತರು ಶುಭ ಶುಕ್ರವಾರವಾಗಿ ಆಚರಿಸಿ ಧ್ಯಾನ, ಉಪವಾಸ ಹಾಗೂ ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸುವ ಮೂಲಕ ಆಚರಿಸಲಿದ್ದಾರೆ. ತೊಟ್ಟಂ ಚರ್ಚಿನಲ್ಲಿ ವಿಶಿಷ್ಠ ಆಚರಣೆ: ಮಲ್ಪೆ ತೊಟ್ಟಂನ ಸಂತ ಅನ್ನಮ್ಮ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ಗುರುವಾರವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತದಲ್ಲಿ ಪ್ರಸ್ತುತ ವರ್ಷವನ್ನು ಬಡವರ ವರ್ಷವಾಗಿ ಆಚರಿಸಲಾಗುತ್ತಿದ್ದು ತೊಟ್ಟಂ ಚರ್ಚ್ ವ್ಯಾಪ್ತಿಯ 12 ಮಂದಿ ವಿಶಿಷ್ಠ ವ್ಯಕ್ತಿಗಳನ್ನು ಗುರುತಿಸಿ ಅವರುಗಳ ಪಾದಗಳನ್ನು ಚರ್ಚಿನ ಧರ್ಮಗುರುಗಳಾದ ವಂ. ಡೆನಿಸ್ ಡೆಸಾ ಅವರು ತೊಳೆದು ಯೇಸು ಸ್ವಾಮಿ ತೋರಿದ ಸರಳತೆಯ ಸಂದೇಶವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಲವೀನಾ ಫರ್ನಾಂಡಿಸ್, 20 ಆಯೋಗಗಳ ಸಂಚಾಲಕಿ ಶಾಂತಿ ಫರ್ನಾಂಡಿಸ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಆರು ವರ್ಷಗಳಲ್ಲಿ ಭಾರತದ ಐದು ಅತ್ಯಂತ ಶ್ರೀಮಂತ ಕುಟುಂಬಗಳ ಸಂಪತ್ತು ಶೇ.400ರಷ್ಟು ಏರಿಕೆ: ಅಧ್ಯಯನ ವರದಿ
ʼದೇಶದ ಶೇ.1ರಷ್ಟು ಅತ್ಯಂತ ಶ್ರೀಮಂತರು ಶೇ.40ರಷ್ಟು ರಾಷ್ಟ್ರೀಯ ಸಂಪತ್ತಿನ ಮೇಲೆ ನಿಯಂತ್ರಣ ಹೊಂದಿದ್ದಾರೆʼ
ಹನುಮ ಜಯಂತಿ ಮುನ್ನವೇ ಅಯೋಧ್ಯೆಗೆ ಗೌತಮ್ ಅದಾನಿ ಭೇಟಿ: ಪ್ರಾಚೀನ ಗುರುಕುಲಕ್ಕೆ AI ಲ್ಯಾಬ್ ಘೋಷಣೆ
ಹನುಮ ಜಯಂತಿ ಮುನ್ನಾದಿನ ಬುಧವಾರ ದೇಶದ ಶ್ರೀಮಂತ ವ್ಯಕ್ತಿ, ಉದ್ಯಮಿ ಮತ್ತು ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ಅವರು ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮ ದೇಗುಲಕ್ಕೆ ಭೇಟಿ ನೀಡಿದರು. ಆಧ್ಯಾತ್ಮಿಕ ಭಕ್ತಿಯನ್ನು ಭಾರತದ ಸಾಂಸ್ಕೃತಿಕ ನಿರಂತರತೆಯನ್ನು ಕಣ್ತುಂಬಿಕೊಂಡರು. ವಿಶೇಷ ಪೂಜೆ ಸಲ್ಲಿಸಿದರು. ಗೌತಮ್ ಅದಾನಿ ಅವರೊಂದಿಗೆ ಪತ್ನಿ ಪ್ರೀತಿ ಅದಾನಿ, ಮಗ ಕರಣ್ ಅದಾನಿ ಮತ್ತು
ಮದುವೆ ಆಗಬೇಕೆಂದು ಷರತ್ತು ಹಾಕಿ ಆರೋಪಿ 22 ದಿನ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್
ಮದುವೆ ಆಗುತ್ತೇನೆ ಎಂದು ನಂಬಿಸಿ ದೈಹಿಕ ಸಂಬಂಧ ಹೊಂದಿದ ಕೇಸ್ನಲ್ಲಿ ಆರೋಪಿಗೆ ಮದುವೆ ಆಗಬೇಕು ಎಂಬ ಷರತ್ತು ವಿಧಿಸಿದ 20 ದಿನಗಳ ಜಾಮೀನು ನೀಡಿದೆ. ಆರೋಪಿ ಬಿಡುಗಡೆಗೆ ಕಾರಾಗೃಹಕ್ಕೆ ಆದೇಶ ನೀಡಿದ್ದು, ಮದುವೆಯಾದ ಬಳಿಕ ಪ್ರಮಾಣ ಪತ್ರ ಸಲ್ಲಿಸಲು ಆರೋಪಿಗೆ ಸೂಚನೆ ನೀಡಿದೆ.
Raichur | ಜಮಾಅತೆ ಇಸ್ಲಾಂ ಹಿಂದ್ ವತಿಯಿಂದ ಎ.4 ರಂದು ಈದ್ ಸೌಹಾರ್ದ ಕೂಟ ಆಯೋಜನೆ
ರಾಯಚೂರು: ಜಮಾಅತೆ ಇಸ್ಲಾಂ ಎ ಹಿಂದ್ ಜಿಲ್ಲಾ ಘಟಕದಿಂದ ಎ.4 ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಂಜೆ 7.30ಕ್ಕೆ ಈದ್ ಸೌಹಾರ್ದ ಕೂಟವನ್ನು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಂ ಹಿಂದ್ ಜಿಲ್ಲಾ ಸಂಚಾಲಕ ಸಲೀಂ ಪಾಷಾ ಹೇಳಿದರು. ಅವರು ಗುರುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಮುಸ್ಲಿಮರಿಗೆ ರಂಮಝಾನ್ ಪವಿತ್ರವಾದುದು. ಒಂದು ತಿಂಗಳ ಉಪವಾಸ ಮಾಡಿ ಶವ್ವಲ್ ಒಂದರಂದು ಹಬ್ಬ ಆಚರಿಸಿದ್ದು, ಇದರ ಮಹತ್ವ ಎಲ್ಲರಿಗೂ ತಿಳಿಸಲು ಸೌಹಾರ್ದ ಕೂಟ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ, ಮೆಥೊಡಿಸ್ಟ್ ಚರ್ಚ್ನ ಜಿಲ್ಲಾ ವ್ಯವಸ್ಥಾಪಕ ರೆವೆಡೆಂಡ್ ಫಾದರ್ ಆರ್.ಸ್ಯಾಮ್ವೆಲ್, ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ್, ಸಂಸದ ಜಿ.ಕುಮಾರನಾಯಕ, ಶಾಸಕ ಡಾ.ಶಿವರಾಜ ಪಾಟೀಲ್ ಆಗಮಿಸಲಿದ್ದಾರೆ. ಕಾಂಗ್ರೆಸ್ ಮುಖಂಡರುಗಳಾದ ಮುಹಮ್ಮದ್ ಶಾಲಂ, ಡಾ.ರಝಾಕ್ ಉಸ್ತಾದ್, ಡಾ.ಜೆ.ಸಾಜಿದ್ ಸಮೀರ್, ಬಸವ ಕೇಂದ್ರ ನಾಗನಗೌಡ ಹರವಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಶೀರುದ್ದೀನ್, ಕೆ.ಅಸ್ಲಂ ಪಾಷಾ ಆಗಮಿಸಲಿದ್ದಾರೆ ಎಂದರು. ಜಮಾಅತೆ ಇಸ್ಲಾಂ ಹಿಂದ್ ನ ಹಾಮೀದ್ ಮುಹಮ್ಮದ್ ಖಾನ್ ವಿಶೇಷ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಂ ಹಿಂದ್ ಮುಹಮ್ಮದ್ ಕುಂಞಿ ವಹಿಸಲಿದ್ದಾರೆ. ಎಲ್ಲ ಸಮೂದಾಯ ಜನರು ಸೌಹಾರ್ದ ಕೂಟದಲ್ಲಿ ಬಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಂ ಹಿಂದ್ ಜಿಲ್ಲಾಧ್ಯಕ್ಷ ಮುಹಮ್ಮದ್ ಅಸೀಮುದ್ದೀನ್ ಅಖ್ತರ್, ಅಬ್ದುಸ್ಸಮದ್ ಪಾಷಾ, ನಜೀರ್ ಅಹ್ಮದ್, ಅಬ್ದುಲ್ ರಹಿಂ ಇದ್ದರು.
ಬೆಂಗಳೂರು ತುಮಕೂರು ಅರಸೀಕೆರೆ ಹೊಸ ರೈಲಿನ ವೇಳಾಪಟ್ಟಿ ಬಿಡುಗಡೆ; 28 ನಿಲ್ದಾಣಗಳು; ಸಾವಿರಾರು ಪ್ರಯಾಣಿಕರಿಗೆ ಅನುಕೂಲ
ಬೆಂಗಳೂರು - ಅರಸೀಕೆರೆ ನಿಲ್ದಾಣದ ನಡುವೆ ಹೊಸ ಮೆಮು ರೈಲು ಓಡಿಸಲು ನಿರ್ಧರಿಸಲಾಗಿದೆ. ಈ ರೈಲಿನ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮಾರ್ಗ ಮಧ್ಯೆ 26 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಭಾನುವಾರ ಹೊರತುಪಡಿಸಿ ನಿತ್ಯ ಈ ರೈಲು ಸಂಚಾರ ನಡೆಸಲಿದೆ. ಇದರಿಂದ ತುಮಕೂರು, ಹಾಸನ ಜಿಲ್ಲೆಯ ವಿವಿಧ ಗ್ರಾಮಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಬೆಂಗಳೂರು : ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಆರೋಪಿಗೆ ಸಂತ್ರಸ್ತೆಯನ್ನು ಮದುವೆಯಾಗಬೇಕೆಂಬ ಷರತ್ತಿನೊಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ. ಮಹದೇವ ಅಲಿಯಾಸ್ ಮಾದೇವ ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ಆರೋಪಿಗೆ ಏಪ್ರಿಲ್ 2ರಿಂದ ಏಪ್ರಿಲ್ 24ರ ವರೆಗೆ ಜಾಮೀನು ನೀಡಲು ಆದೇಶಿಸಿದೆ. ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಏಪ್ರಿಲ್ 24ರೊಳಗೆ ಸಂತ್ರಸ್ತೆಯನ್ನು ವಿವಾಹವಾಗಬೇಕು. ಆನಂತರ, ಮದುವೆ ನೋಂದಾಯಿಸಿದ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿರುವ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಆರೋಪಿಯ ವಿರುದ್ಧ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾರೆಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ಸದ್ಯ ಅರ್ಜಿದಾರರು ಮತ್ತು ದೂರುದಾರರು ಮಾತುಕತೆ ನಡೆಸಿ ರಾಜಿ ಮಾಡಿಕೊಂಡಿದ್ದು, ಆರೋಪಿಯು ಸಂತ್ರಸ್ತೆಯನ್ನು ವಿವಾಹವಾಗಲು ಸಿದ್ಧರಿದ್ದಾರೆ. ವಿವಾಹಕ್ಕೆ ಇಬ್ಬರೂ ಒಪ್ಪಿದ್ದಾರೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ವಿಚಿತ್ರ ಸಂಗತಿಗಳನ್ನು ಗಮನಿಸಿದ ನಂತರ ಆರೋಪಿ, ಸಂತ್ರಸ್ತೆಯನ್ನು ಮದುವೆ ಆಗಬೇಕಿರುವುದರಿಂದ ಆತನಿಗೆ ಮಧ್ಯಂತರ ಜಾಮೀನು ನೀಡುವುದು ಸೂಕ್ತವೆಂಬ ತೀರ್ಮಾನಕ್ಕೆ ಬರಲಾಗಿದೆ. ಆದ್ದರಿಂದ, ಆತನನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ಆದೇಶಿಸಿತು.
ಗಲ್ಫ್ ನಲ್ಲಿರುವ ಅಮೆರಿಕದ ಕೈಗಾರಿಕೆಗಳ ಮೇಲೆ ದಾಳಿ | ‘ಈ ದಾಳಿ ಕೇವಲ ಎಚ್ಚರಿಕೆ ಮಾತ್ರ’ ಎಂದ ಇರಾನ್
ಟೆಹ್ರಾನ್ /ಅಬುಧಾಬಿ: ಗಲ್ಫ್ ಪ್ರದೇಶದಲ್ಲಿನ ಯುಎಸ್ ಗೆ ಸಂಬಂಧಿಸಿದ ಕೈಗಾರಿಕಾ ಸೌಲಭ್ಯಗಳ ಮೇಲೆ ನಡೆಸಿದ ಇತ್ತೀಚಿನ ದಾಳಿಗಳು ‘ಒಂದು ಎಚ್ಚರಿಕೆ’ ಎಂದು ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ ಎಂದು aljazeera.com ವರದಿ ಮಾಡಿದೆ. ಇರಾನ್ ಮಾಧ್ಯಮಗಳು ಪ್ರಸಾರ ಮಾಡಿದ ಹೇಳಿಕೆಯ ಪ್ರಕಾರ, ವಾರಾಂತ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯಲ್ಲಿರುವ ಉಕ್ಕಿನ ಘಟಕಗಳು ಹಾಗೂ ಬಹ್ರೇನ್ ನ ಅಲ್ಯೂಮಿನಿಯಂ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು IRGC ತಿಳಿಸಿದೆ. “ಈ ದಾಳಿಗಳು ಕೇವಲ ಎಚ್ಚರಿಕೆ ಮಾತ್ರ. ಇರಾನ್ ನ ಕೈಗಾರಿಕೆಗಳ ಮೇಲೆ ದಾಳಿ ಮರುಕಳಿಸಿದರೆ, ಮುಂದಿನ ಪ್ರತಿಕ್ರಿಯೆ ಇನ್ನಷ್ಟು ಕಠಿಣವಾಗಿರುತ್ತದೆ,” ಎಂದು IRGC ಎಚ್ಚರಿಸಿದೆ. “ಆಕ್ರಮಣಕಾರಿ ಆಡಳಿತದ ಪ್ರಮುಖ ಮೂಲಸೌಕರ್ಯಗಳು ಹಾಗೂ ಈ ಪ್ರದೇಶದಲ್ಲಿನ ಅಮೇರಿಕನ್ ಆರ್ಥಿಕ ಹಿತಾಸಕ್ತಿಗಳನ್ನೇ ಗುರಿಯಾಗಿಸಲಾಗುವುದು,” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಯುದ್ಧ ಆರಂಭವಾದ ಬಳಿಕ ಗಲ್ಫ್ ಪ್ರದೇಶದಲ್ಲಿನ ಅಮೆರಿಕಕ್ಕೆ ಸಂಬಂಧಿಸಿದ ಅಥವಾ ಅದರ ಮಾಲೀಕತ್ವದ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ IRGC ಹಲವು ಬಾರಿ ಎಚ್ಚರಿಕೆ ನೀಡಿದ್ದು, ಇತ್ತೀಚಿನ ದಾಳಿಗಳು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಸೂಚನೆ ನೀಡಿವೆ.
ಹಾರ್ಮುಜ್ ಜಲಸಂಧಿ ತೆರೆಸುವ 35 ದೇಶಗಳ ಪ್ರಯತ್ನಕ್ಕೆ ಕೈಜೋಡಿಸುವ ಯುಕೆ ಮನವಿಗೆ ಭಾರತ ಓಕೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಇರಾನ್ ಮುಚ್ಚಿರುವ ಹಾರ್ಮುಜ್ ಜಲಸಂಧಿಯನ್ನು ತೆರೆಸಲು ಜಾಗತಿಕ ಪ್ರಯತ್ನ ಆರಂಭವಾಗಿದ್ದು, ಈ ಪ್ರಯತ್ನಕ್ಕೆ ಯುಕೆ ಮನವಿ ಮೇರೆಗೆ ಭಾರತ ಕೂಡ ಕೈಜೋಡಿಸಿದೆ. ಒಟ್ಟು 35 ದೇಶಗಳು ಇಂತದ್ದೊಂದು ಪ್ರಯತ್ನವನ್ನು ಆರಂಭಿಸಿದ್ದು, ಇದರಲ್ಲಿ ಭಾರತ ಕೂಡ ಮುಖ್ಯ ಪಾತ್ರನಿರ್ವಹಿಸಲಿದೆ. ಇಂದು (ಏ.2-ಗುರುವಾರ) ಸಂಜೆ ನಡೆಯಲಿರುವ ಸಭೆಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ. ಹಾರ್ಮುಜ್ ತೆರೆಸುವ ಜಾಗತಿಕ ಪ್ರಯತ್ನಕ್ಕೆ ಜಯ ಸಿಗುತ್ತಾ? ಇಲ್ಲಿದೆ ಮಾಹಿತಿ.
Bagalkote-Davangere by-election; ಗ್ಯಾರಂಟಿ ಯೋಜನೆಯ ಹಣ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು : ಬಾಗಲಕೋಟೆ ಮತ್ತು ದಾವಣೆಗೆರೆ ವಿಧಾನಸಭೆ ಉಪಚುನಾವಣೆ ಮುಗಿಯುವವರೆಗೆ ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳಿಗೆ ನಗದು ಬಿಡುಗಡೆ ಮಾಡದಂತೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ ಗ್ಯಾರಂಟಿ ಯೋಜನೆಗಳ ಭಾಗವಾಗಿ ನಗದು ಬಿಡುಗಡೆಯನ್ನು ಕಳೆದ ಆರೇಳು ತಿಂಗಳಿಂದ ತಡೆಹಿಡಿಯಲಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಉಪ ಚುನಾವಣೆಯನ್ನು ಕೇಂದ್ರೀಕರಿಸಿ ಏಕಕಾಲಕ್ಕೆ ಬಾಕಿ ಪಾವತಿಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ದಾವಣಗೆರೆ ದಕ್ಷಿಣ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಗೌತಮ್ ಕುಮಾರ್ ಯು. ಜೈನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಉಪ ಚುನಾವಣೆ ಮುಗಿಯುವವರೆಗೆ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆಗೆ ತಡೆ ನೀಡಬೇಕು ಅಥವಾ ಹಣ ಬಿಡುಗಡೆಯನ್ನು ಮುಂದೂಡಲು ನಿರ್ದೇಶಿಸಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಲು ನಿರಾಕರಿಸಿತು. ಪ್ರಕರಣದಲ್ಲಿ ನ್ಯಾಯಾಲಯ ಮಾಡುವ ಯಾವುದೇ ಆದೇಶವು ಅಂತಿಮವಾಗಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಹಾನಿ ಮಾಡಲಿದೆ. ರಾಜ್ಯ ಸರಕಾರ ನೀತಿ ಜಾರಿಗೊಳಿಸಿದ್ದು, ಅದನ್ನು ಮುಂದುವರಿಸುತ್ತಿದೆ ಎಂದು ಮೌಖಿಕವಾಗಿ ನುಡಿದ ನ್ಯಾಯಪೀಠ, ಅರ್ಜಿ ಸಂಬಂಧ ಕೇಂದ್ರ ಸರಕಾರ, ರಾಜ್ಯ ಸರಕಾರ, ಕೇಂದ್ರ ಚುನಾವಣಾ ಆಯೋಗ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ರಾಜ್ಯ ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಚುನಾವಣಾ ಆಯೋಗವು ಶಕ್ತಿಯುತವಾಗಿದ್ದು, ಕಾನೂನಿನ ಅನ್ವಯ ಅವರು ಕ್ರಮಕೈಗೊಳ್ಳಲಿದ್ದಾರೆ. ಆರು ತಿಂಗಳಿಂದ ಗ್ಯಾರಂಟಿ ಯೋಜನೆಗಳ ಹಣ ನೀಡಲಾಗಿಲ್ಲ ಎಂಬುದಕ್ಕೆ ದಾಖಲೆ ಸಲ್ಲಿಸಬೇಕು. ಹಣ ನೀಡಿರುವ ದಾಖಲೆ ನಾವು ತೋರಿಸಿದರೆ ಅರ್ಜಿದಾರರಿಗೆ ದಂಡ ವಿಧಿಸಬೇಕು. ಫೆಬ್ರವರಿವರೆಗೆ ಎಲ್ಲವನ್ನೂ ವಿತರಿಸಿರುವುದಕ್ಕೆ ದಾಖಲೆ ಸಲ್ಲಿಸುತ್ತೇನೆ. ಒಂದೆರಡು ತಿಂಗಳು ವಿಳಂಬವಾಗಿರಬಹುದು. ಚುನಾವಣಾ ಆಯೋಗವು ಹಲ್ಲಿಲ್ಲದ ಹಾವಲ್ಲ. ನಾವು ನಿಯಮ ಉಲ್ಲಂಘಿಸಿದರೆ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದರು. ಮುಂದುವರಿದು, ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಯುವನಿಧಿ ಫಲಾನುಭವಿಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಇದು 2,500-4,000 ಇರಬೇಕು. ಬಾಗಲಕೋಟೆ, ದಾವಣಗೆರೆ ಮತ್ತು ಇನ್ನೊಂದು ಜಿಲ್ಲೆ ಸೇರಿ ಮೂರು ಜಿಲ್ಲೆಗಳಿಂದ 58 ಸಾವಿರ ಗೃಹ ಲಕ್ಷ್ಮಿ ಫಲಾನುಭವಿಗಳಿದ್ದಾರೆ. ಫಲಾನುಭವಿಗಳನ್ನು ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮುನ್ನ ಪತ್ತೆ ಮಾಡಿದ್ದರೆ ಅದನ್ನು ಮುಂದುವರಿಸಬಹುದು ಎಂಬುದು ನಿಯಮವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ಸರಕಾರ ಸರಿಯಾಗಿ ಜಾರಿಗೊಳಿಸಿಲ್ಲ. ಆರು ತಿಂಗಳಿಂದ ಅನ್ನಭಾಗ್ಯ ನೀಡಲಾಗಿಲ್ಲ. ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ನೀಡುವುದೇ ಅಥವಾ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಮೊದಲೇ ನೀಡುವುದೇ ಎಂಬುದು ಇಲ್ಲಿನ ವಿಷಯವಾಗಿದೆ. ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವುದಕ್ಕೂ ಮುನ್ನ ಸರಕಾರ ಆಯೋಗದಿಂದ ಅನುಮತಿ ಪಡೆದಿಲ್ಲ. ಉಪ ಚುನಾವಣೆ ಮುಗಿಯುವವರೆಗೆ ಹಣ ಬಿಡುಗಡೆ ಮಾಡಬಾರದು ಎಂಬುದು ನಮ್ಮ ಮನವಿಯಾಗಿದೆ ಎಂದರು. ಉಚಿತ ಉಡುಗೊರೆಗಳು ದೇಶದ ಬೆಳವಣಿಗೆಗೆ ಮಾರಕ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಾರ್ಚ್ 23ರಂದು ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಅದು ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ಬಿಡುಗಡೆ ಮಾಡಲಾಗಿದೆ. ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಆಯೋಗದ ಅನುಮತಿ ಪಡೆದು, ಬಿಡುಗಡೆ ಮಾಡಲಿ. ಆರು ತಿಂಗಳಿಂದ ಅನ್ನ ಭಾಗ್ಯ ನೀಡಲಾಗಿಲ್ಲ. ನೀತಿ ಸಂಹಿತೆ ಜಾರಿಯಾದ ಬಳಿಕ ಫಲಾನುಭವಿಗಳ ಸಂಖ್ಯೆಯನ್ನು ಸರಕಾರ ಹೆಚ್ಚಿಸಿದೆ. ಬಾಗಲಕೋಟೆಯಲ್ಲಿ 2026ರ ಜನವರಿಯಲ್ಲಿ 3,75,268 ಇದ್ದ ಫಲಾನುಭವಿಗಳ ಸಂಖ್ಯೆ ಮಾರ್ಚ್ 25ಕ್ಕೆ 3,76,001ಕ್ಕೆ ಏರಿಕೆಯಾಗಿದೆ ಎಂದು ಅರುಣ್ ಶ್ಯಾಮ್ ನ್ಯಾಯಪೀಠಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಎಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿತಲ್ಲದೆ, ಮಧ್ಯಂತರ ತಡೆ ನೀಡಲು ನಿರಾಕರಿಸಿ, ಅರ್ಜಿ ವಿಚಾರಣೆ ಮುಂದೂಡಿತು.
‘ತೆರೆದಷ್ಟೂ ಅರಿವು’ ಕೃತಿ ವಿ.ಎಂ.ಇನಾಂದಾರ್ ಪ್ರಶಸ್ತಿಗೆ ಆಯ್ಕೆ
ಉಡುಪಿ, ಎ.2: ಕನ್ನಡದ ಖ್ಯಾತ ವಿಮರ್ಶಕರಾಗಿದ್ದ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡಲಾಗುವ ‘ಇನಾಂದಾರ್ ವಿಮರ್ಶಾ ಪ್ರಶಸ್ತಿ’ಗೆ ಪ್ರಸಿದ್ಧ ಲೇಖಕಿ, ವಿಮರ್ಶಕಿ ಡಾ. ಗೀತಾ ವಸಂತ ಇವರ ‘ತೆರೆದಷ್ಟೂ ಅರಿವು’ ವಿಮರ್ಶಾ ಕೃತಿ 2025ರ ಸಾಲಿಗೆ ಆಯ್ಕೆಯಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ಎ.15ರಂದು ನಡೆಯುವ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವ ಸಮಾ ರಂಭದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ಡಾ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗೀತಾ ವಸಂತ ಮೂಲತ: ಉತ್ತರಕನ್ನಡದ ಕಾಡನಡುವಿನ ಕಾಟೀಮನೆ ಯವರು. ಶಿರಸಿಯಲ್ಲಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ‘ಸ್ವಾತಂತ್ರ್ಯೋತ್ತರ ಕನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಹಾಗೂ ‘ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪ’ ಪ್ರಬಂಧಕ್ಕೆ ಡಿ.ಲಿಟ್ ಪದವಿ ಪಡೆದಿದ್ದಾರೆ. ಕಾವ್ಯ, ಸಣ್ಣಕಥೆ, ವಿಮರ್ಶೆ, ಮಹಿಳಾ ಅಧ್ಯಯನ, ಸಂಸ್ಕೃತಿ ಅಧ್ಯಯನ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಗೀತಾ ವಸಂತರ ‘ಹೊಸಿಲಾಚೆ ಹೊಸ ಹೆಜ್ಜೆ’ ಮೊದಲ ಕವನ ಸಂಕಲನ. ಬಳಿಕ ‘ಚೌಕಟ್ಟಿನಾಚೆಯವರು’ ಕಥಾ ಸಂಕಲನ, ‘ಬೆಳಕಿನ ಬೀಜ’, ‘ಹೊಸ ದಿಗಂತ ಹೊಸದಾರಿ’, ‘ಬೀಜ ದೊಳಗಣ ವೃಕ್ಷ’, ‘ಅಕ್ಷರದಾಹ’, ‘ತೆರೆದಷ್ಟೂ ಅರಿವು’ ಮುಂತಾದವು ಅವರ ವಿಮರ್ಶಾ ಕೃತಿಗಳು. ಬೇಂದ್ರೆ ಕಾವ್ಯದ ಅವಧೂತ ಪ್ರಜ್ಞೆ, ತುಮಕೂರು ಜಿಲ್ಲೆಯ ಮಹಿಳಾ ಲೇಖಲೋಕ, ಕರ್ನಾಟಕದ ಸಂಸ್ಕೃತಿ ಹಾಗೂ ಸಾಹಿತ್ಯದ ಮೇಲೆ ಅವಧೂತ ಪರಂಪರೆಗಳ ಪ್ರಭಾವ’ ಇವು ಅವರ ಸಂಶೋಧನಾ ಕೃತಿಗಳು. ‘ಅವಳ ಅರಿವು’, ‘ಕನ್ನಡಕ್ಕೊಬ್ಬರೇ ಗೋಕಾಕರು’, ‘ಕಂಡವರಿಗಷ್ಟೆ’, ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಲಕ್ಷಿತ ಲೋಕದ ಸಂಕಥನ’ ಇವು ಸಂಪಾದಿತ ಕೃತಿಗಳು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಡಾ. ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪುರಸ್ಕಾರ, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಉಡುಪಿ:ಎಸ್ಡಿಎಂ ಆಯುರ್ವೇದ ಕಾಲೇಜಿನಲ್ಲಿ ಕ್ರೀಡಾ ವಿಚಾರಗೋಷ್ಠಿ
ಉಡುಪಿ, ಎ.2: ಕುತ್ಪಾಡಿಯಲ್ಲಿರುವ ಎಸ್ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾ ವಿಭಾಗವು ಆಂತರಿಕ ಗುಣಮಟ್ಟ ಕ್ಷಮತೆ ಘಟಕದ ಸಹಯೋಗದಲ್ಲಿ ಕ್ರೀಡೆಯ ಕುರಿತಂತೆ ರಾಷ್ಟ್ರೀಯ ಮಟ್ಟದ ಮುಂದುವರೆದ ವೈದ್ಯಕೀಯ ಶಿಕ್ಷಣ ವಿಚಾರಗೋಷ್ಠಿಯೊಂದನ್ನು ಇತ್ತೀಚೆಗೆ ಆಯೋಜಿಸಿತ್ತು. ಇದರಲ್ಲಿ ಭಾಗವಿಸಿದ ವಿದ್ಯಾರ್ಥಿಗಳು, ಅಧ್ಯಾಪಕರು, ಆರೋಗ್ಯ ವೃತ್ತಿಪರರು ಹಾಗೂ ಕ್ರೀಡಾ ಆಸಕ್ತರು, ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ದೃಷ್ಟಿಕೋನಗಳ ಸಮನ್ವಯದ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಂಭವಿಸುವ ರೋಗ ಮತ್ತು ಗಾಯಗಳಿಗೆ ಸಮಗ್ರ ಚಿಕಿತ್ಸೆ ವಿಧಾನಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ಉಪ ಪ್ರಾಂಶುಪಾಲ ಡಾ.ನಿರಂಜನ್ ರಾವ್ ಮತ್ತು ಡಾ. ನಾಗರಾಜ್ ಎಸ್., ವೈದ್ಯಕೀಯ ಅಧೀಕ್ಷಕ ಡಾ.ಜಯಕೃಷ್ಣ ನಾಯಕ್, ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ., ಸ್ನಾತಕ ವಿಭಾಗ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್, ಸ್ನಾತಕೋತ್ತರ ವಿಭಾಗದ ಸಹಾಯಕ ಡೀನ್ ಡಾ. ರಾಜಲಕ್ಷ್ಮಿ, ಹಾಗೂ ಕ್ರೀಡಾ ವಿಭಾಗದ ಸಹಾಯಕ ಡೀನ್ ಡಾ. ಸುಧೀಂದ್ರ ಮೊಹೆರರ್ ಮತ್ತು ಡಾ. ಮೊಹಮ್ಮದ್ ಫೈಸಲ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಡಾ. ನಿರಂಜನ್ ರಾವ್ ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡಾ ವೈದ್ಯಕೀಯ ಕ್ಷೇತ್ರದಲ್ಲಿ ಆಯುರ್ವೇದ ಪಂಚಕರ್ಮ ಹಾಗೂ ಭೌತಚಿಕಿತ್ಸೆಯ (ಫಿಸಿಯೊಥೆರಾಪಿಯ) ಮಹತ್ವವನ್ನು ಒತ್ತಿ ಹೇಳಿದರು. ಇದರ ಅಂಗವಾಗಿ ಕ್ರೀಡೆ ಮತ್ತು ದೈಹಿಕ ಕ್ಷಮತೆಯ ಅಗತ್ಯತೆಗಳು ಎಂಬ ವಿಷಯದ ಕುರಿತು ಮೂಡುಬಿದಿರೆ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ.ಮಧು ಜಿ.ಆರ್ ವಿಶೇಷ ಉಪನ್ಯಾಸ ನೀಡಿದರು. ಸಂಸ್ಥೆಯ ಶಲ್ಯಾತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆರ್. ನಾಯರ್ ತಜ್ಞ ಅವರು ಕ್ರೀಡೆಯಿಂದ ಉಂಟಾಗುವ ಗಾಯಗಳು ಹಾಗು ಅದರ ಆಯುರ್ವೇದೀಯ ಪರಿಹಾರೋಪಾಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಡಾ. ಮೊಹಮ್ಮದ್ ಫೈಸಲ್ ಸ್ವಾಗತಿಸಿ, ಡಾ. ಮೇಘನಾ ಕಾರ್ಯಕ್ರಮ ನಿರೂಪಿಸಿದರು. ಡಾ. ಸುಶ್ಮಿತಾ ವಂದಿಸಿದರು.
ಎಂಜಿಎಂನಲ್ಲಿ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ: ಬ್ರಹ್ಮಾವರ ಎಸ್ಎಂಎಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಉಡುಪಿ, ಎ.2: ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ವತಿಯಿಂದ ‘ಬಿಯಾಂಡ್ ದ ಸ್ಕೃಾಲ್’ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ಬ್ರಹ್ಮಾವರ ಎಸ್ಎಂಎಸ್ ಕಾಲೇಜು ಅಗ್ರಸ್ಥಾನ ಪಡೆಯುವ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಚಾಂಪಿಯನ್ ಟ್ರೋಫಿ ಹಾಗೂ 10,000ರೂ. ನಗದು ಬಹುಮಾನವನ್ನು ಗೆದ್ದುಕೊಂಡಿತು. ಶೃಂಗೇರಿಯ ಶ್ರೀಜಗದ್ಗುರು ಚಂದ್ರಶೇಖರ ಭಾರತಿ ಸ್ಮಾರಕ ಕಾಲೇಜು ರನ್ನರ್ ಅಪ್ ಸ್ಥಾನ ಪಡೆದು ಟ್ರೋಫಿ ಹಾಗೂ 5,000ರೂ.ನಗದು ಪಡೆಯಿತು. ಉತ್ಸವದ ಪ್ರತಿ ಸ್ಪರ್ಧೆಗಳ ವಿಜೇತರಿಗೆ ಪ್ರತ್ಯೇಕ ಟ್ರೋಫಿ ಹಾಗೂ 1,000ರೂ. ನಗದು ಬಹುಮಾನವನ್ನೂ ರನ್ನರ್ ಅಪ್ಗೆ ಟ್ರೋಫಿ ಮತ್ತು 500ರೂ. ನಗದು ನೀಡಿ ಪುರಸ್ಕರಿಸಲಾಯಿತು. ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆಟೋಮೊಬೈಲ್ ಅಭಿಮಾನಿ ನಿರೀಕ್ಷಿತ್ ಹೆಬ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ರಾದ ಡಾ. ದೇವಿದಾಸ್ ಎಸ್. ನಾಯಕ್ ವಹಿಸಿದ್ದರು. ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಂಶು ಪಾಲರಾದ ಪ್ರೊ. ವನಿತಾ ಮಯ್ಯ, ಉಪಪ್ರಾಂಶುಪಾಲ ಡಾ.ಎಂ. ವಿಶ್ವನಾಥ್ ಪೈ ಹಾಗೂ ಸಂಯೋಜಕಿ ಡಾ.ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು. ಅಲ್ಲದೇ ಕಾರ್ಯಕ್ರವ ಸಂಯೋಜಕರಾದ ಯಾಸಿನ್ ಮನ್ನಾ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಪ್ರತಿನಿಧಿ ನಂದನ್ ಕುಂದರ್ ಮತ್ತು ಧೀರಜ್ ಉಪಸ್ಥಿತರಿದ್ದರು.
ಉಡುಪಿ, ಎ.2: ಕರ್ನಾಟಕ ಸರಕಾರ 2021ರಿಂದ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾ ಯತ್ ಚುನಾವಣೆಗಳನ್ನು ನಡೆಸದಿರುವುದರಿಂದಲೇ 15ನೇ ಹಣಕಾಸು ಆಯೋಗದ ಮಾರ್ಗಸೂಚಿ ಯಂತೆ ರಾಜ್ಯ ಸರಕಾರಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೇ ರಾಜ್ಯದಲ್ಲಿ ಸಮರ್ಪಕ ಚುನಾಯಿತ ಸ್ಥಳೀಯಾಡಳಿತ ಸಂಸ್ಥೆಗಳು ಅಧಿಕಾರದಲ್ಲಿದ್ದರೆ ಮಾತ್ರ ಅನುದಾನ ಬಿಡುಗಡೆ ಮಾಡಲು ಅವಕಾಶವಿದೆ ಎಂದು ಕೇಂದ್ರದ ಪಂಚಾಯತ್ರಾಜ್ ರಾಜೀವ್ ರಂಜನ್ ಸಿಂಗ್ ಲೋಕಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 2020-2021ರಿಂದ 2024-25ರ ಅವಧಿಗೆ ಸಂಬಂಧಿಸಿದ 15ನೇ ಹಣಕಾಸು ಆಯೋಗದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನದ ಎಲ್ಲಾ ಕಂತುಗಳನ್ನು ಕರ್ನಾಟಕದ ಅರ್ಹ ಗ್ರಾಮ ಪಂಚಾಯತ್ಗಳಿಗೆ ಬಿಡುಗಡೆ ಮಾಡ ಲಾಗಿದೆ. ಆದರೆ ಕರ್ನಾಟಕ ರಾಜ್ಯ ಸರಕಾರ ಕೇಂದ್ರದಿಂದ ಬಿಡುಗಡೆ ಯಾದ ಹಣವನ್ನು ಪಂಚಾಯತ್ಗಳಿಗೆ ವಿಳಂಬವಾಗಿ ಹಾಗೂ ಅಪೂರ್ಣ ವಾಗಿ ವರ್ಗಾವಣೆ ಮಾಡಿರುವುದರಿಂದ ಮತ್ತು ವಿಳಂಬ ವರ್ಗಾವಣೆಗೆ ಸಂಬಂಧಿಸಿದ ದಂಡ ಬಡ್ಡಿಯನ್ನು ಬಿಡುಗಡೆ ಮಾಡದಿರುವುದರ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಸಚಿವರು ಸಂಸದ ಕೋಟ ಲಿಖಿತವಾಗಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. 15ನೇ ಹಣಕಾಸಿನ ಆಯೋಗದ ಮಾರ್ಗಸೂಚಿ ಪ್ಯಾರಾ 5(ಎ)(11)ರಂತೆ ಚುನಾಯಿತ ನಗರ ಸ್ಥಳೀಯ ಸಂಸ್ಥೆಗಳು ಅಸ್ತಿತ್ವದಲ್ಲಿದ್ದರೆ ಮಾತ್ರ ಅನುದಾನವನ್ನು ಪಡೆಯುವ ಅರ್ಹತೆ ಹೊಂದಿರುತ್ತವೆ. ಆದರೆ ಕರ್ನಾಟಕ ರಾಜ್ಯದಲ್ಲಿ 2021ರ ಫೆಬ್ರವರಿ ತಿಂಗಳಿನಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ಗಳಲ್ಲಿ ಚುನಾಯಿತ ಆಡಳಿತ ಸದಸ್ಯರಿಲ್ಲ. ಆದ್ದರಿಂದ ಈ ಸಂಸ್ಥೆಗಳು 2025-26ನೇ ಸಾಲಿನ ಅನುದಾನವನ್ನು ಪಡೆಯಲು ಅನರ್ಹ ವಾಗಿವೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಂಸದರ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. 15ನೇ ಹಣಕಾಸು ಆಯೋಗದ ಮಾರ್ಗಸೂಚಿಯಂತೆ ಪ್ರತಿ ಹಣಕಾಸು ವರ್ಷದಲ್ಲಿ ಎರಡು ಕಂತುಗಳ ಮೂಲಕ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಹಾಗೆ ಬಿಡುಗಡೆ ಮಾಡಿದ ಕಂತುಗಳಿಗೆ ನಿಗದಿತ ನಮೂನೆ ಯಲ್ಲಿ ಅನುದಾನ ವರ್ಗಾವಣೆ ಪ್ರಮಾಣ ಪತ್ರ (ಗ್ರ್ಯಾಂಟ್ ಟ್ರಾನ್ಸಫರ್ ಸರ್ಟಿಫಿಕೇಟ್) ವನ್ನು ರಾಜ್ಯ ಸರಕಾರಗಳು ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿದೆ ಎಂದು ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಲಿಖಿತವಾಗಿ ತಿಳಿಸಿದ್ದಾರೆ. ಕೇಂದ್ರ ಸರಕಾರ, ಕರ್ನಾಟಕ ರಾಜ್ಯ ಸರಕಾರಕ್ಕೆ 15ನೇ ಹಣಕಾಸು ಆಯೋಗದ ಹಣ ಪಾವತಿ ಮಾಡಿಲ್ಲವೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಂಸದ ಕೋಟ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೇಂದ್ರ ಸಚಿವಾಲಯ ಲಿಖಿತ ಉತ್ತರ ನೀಡಿದೆ ಎಂದು ಕೋಟ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Yadgir | ಪೊಲೀಸರು ದೈಹಿಕ–ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು : ಅರುಣಕುಮಾರ್ ಕೊಳೂರ
ಯಾದಗಿರಿ : ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದು ನಿವೃತ್ತ ಪೊಲೀಸ್ ಅಧಿಕ್ಷಕರು ಅರುಣಕುಮಾರ್ ಕೊಳೂರ ಸಲಹೆ ನೀಡಿದರು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಪೊಲೀಸರು 24 ಗಂಟೆಗಳ ಕಾಲ ಒತ್ತಡದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕುಟುಂಬ ಜೀವನ ಸಮತೋಲನದಲ್ಲಿಟ್ಟು, ಆರೋಗ್ಯದ ಕಡೆ ಗಮನ ಹರಿಸಿದರೆ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇಂದಿನ ತಾಂತ್ರಿಕ ಯುಗದಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚುತ್ತಿರುವುದರಿಂದ, ಪೊಲೀಸ್ ಸಿಬ್ಬಂದಿಗಳು ಕೂಡ ತಮ್ಮ ಕಾರ್ಯವಿಧಾನದಲ್ಲಿ ಬದಲಾವಣೆ ತರಬೇಕು. ಯಾವುದೇ ಸಂದರ್ಭದಲ್ಲೂ ತಾಳ್ಮೆ ಹಾಗೂ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು ಅಗತ್ಯ. ಠಾಣೆಗೆ ಬರುವ ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗೆ ಸಹನೆಯಿಂದ ನಡೆದುಕೊಳ್ಳುವುದರಿಂದ ಇಲಾಖೆಯ ಗೌರವ ಹೆಚ್ಚುತ್ತದೆ ಹಾಗೂ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್.ಪಿ ಅವರು ಪೊಲೀಸ್ ಧ್ವಜ ದಿನಾಚರಣೆಯ ಮಹತ್ವ ವಿವರಿಸಿದರು. ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ 1965ರ ಏಪ್ರಿಲ್ 2ರಂದು ಜಾರಿಗೆ ಬಂದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಕ್ಷೇಮ ನಿಧಿ ಸಂಗ್ರಹಿಸಲಾಗುತ್ತಿದ್ದು, ಅದನ್ನು ನಿವೃತ್ತ ಹಾಗೂ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ ಎಂದರು. 2025-26ನೇ ಸಾಲಿನಲ್ಲಿ ಪೊಲೀಸ್ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕಾಗಿ 10 ಲಕ್ಷ ರೂ. ಪ್ರೋತ್ಸಾಹಧನ, ಕನ್ನಡಕಕ್ಕಾಗಿ 1.35 ಲಕ್ಷ ರೂ. ಸಹಾಯಧನ ನೀಡಲಾಗಿದೆ. ನಿವೃತ್ತ ಸಿಬ್ಬಂದಿಗಳಿಗೆ ವೈದ್ಯಕೀಯ ನೆರವಾಗಿ 9.45 ಲಕ್ಷ ರೂ. ಮಂಜೂರು ಮಾಡಲಾಗಿದ್ದು, 21 ಮಂದಿಗೆ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ನಿವೃತ್ತ ಪಿಎಸ್ಐಗಳಾದ ದೇವೇಂದ್ರಪ್ಪ ಧೂಳಖೇಡ, ಶಿವಕಾಂತ, ಭೀಮರಾಯ, ನಾನಾಗೌಡ ಹಾಗೂ ಇತರರನ್ನು ಸನ್ಮಾನಿಸಲಾಯಿತು. ಪೆರೇಡ್ ಕಮಾಂಡರ್ ಲಚ್ಛಪ್ಪ ಚವ್ಹಾಣ ನೇತೃತ್ವದಲ್ಲಿ ನಡೆದ ಕವಾಯತು ಎಲ್ಲರ ಗಮನ ಸೆಳೆಯಿತು.
By-election | ಪ್ರತಿ ಹಳ್ಳಿಗೆ 5 ರಿಂದ 10 ಲಕ್ಷ ರೂ.ಹಣ ಹಂಚುತ್ತಿರುವ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ ಆರೋಪ
ಬೆಂಗಳೂರು : ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿಗೂ ಮೊದಲು ಒಂದೊಂದು ಹಳ್ಳಿಗೆ 5 ರಿಂದ 10 ಲಕ್ಷ ರೂ.ಹಣ ಹಂಚುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಗುರುವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ ವೀರಣ್ಣ ಚರಂತಿಮಠರನ್ನು ಗೆಲ್ಲಿಸಲು ಜನರು ತೀರ್ಮಾನ ಮಾಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮರು ಬಿಜೆಪಿಯ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರಲ್ಲಿ ಸಾದಿಕ್ ಪೈಲ್ವಾನರನ್ನು ಕಾಂಗ್ರೆಸ್ಸಿನವರು ತಪ್ಪು ದಾರಿಗೆ ಎಳೆದ ಭಾವನೆ ಇದೆ. ಮುಸ್ಲಿಮರು ಅಲ್ಲಿ ಮತ ಹಾಕದೇ ಇರಲು ತೀರ್ಮಾನಕ್ಕೆ ಬಂದಿದ್ದಾರೆ. ಎಸ್ಡಿಪಿಐ ಅಭ್ಯರ್ಥಿಯೂ ಕಣದಲ್ಲಿದ್ದಾರೆ. ಮುಹಮ್ಮದ್ ನಲಪಾಡ್ ಮುಸ್ಲಿಮರನ್ನೇ ನಿಂದಿಸಿದ್ದಾರೆ. ಇದರಿಂದ ಮುಸ್ಲಿಮರು ಮತ್ತಷ್ಟು ಕೋಪಗೊಂಡಿದ್ದಾರೆ. ಇವೆಲ್ಲವೂ ಕಾಂಗ್ರೆಸ್ಸಿನ ಸೋಲಿಗೆ ಕಾರಣ ಆಗಬಹುದೆಂದು ಅವರು ವಿಶ್ಲೇಷಿಸಿದರು. ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗಿದೆ. ಕಚ್ಚಾ ತೈಲಕ್ಕಾಗಿ ನಾವು ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿದ್ದೇವೆ. ಆದುದರಿಂದ ಅವುಗಳ ಬೆಲೆಯಲ್ಲಿ ಏರಿಕೆ ಆಗಬಹುದು. ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಬೆಲೆಗಳನ್ನು ಏರಿಸುತ್ತಲೇ ಇದೆ. ಇವರ ಜನವಿರೋಧಿ ನೀತಿಗಳಿಗೆ ಬಿಜೆಪಿಯನ್ನು ಟ್ಯಾಗ್ ಮಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು. ಬಾಗಲಕೋಟೆಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಖಚಿತ. ಹಳ್ಳಿಗಳಲ್ಲಿ ಸೋಲು ಖಚಿತವೆಂದು ಗೊತ್ತಾದ ಬಳಿಕ ಸಿಎಂ 5 ದಿನ ಅಲ್ಲೇ ಠಿಕಾಣಿ ಹೂಡಿದ್ದಾರೆ. ಕೆಲವೆಡೆ ರಸ್ತೆಗಳನ್ನು ಕೆಂಪುಮಣ್ಣಿನಿಂದ ಮುಚ್ಚಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರು ಸಿಗುತ್ತಿಲ್ಲ. ಆದುದರಿಂದ ಸರಕಾರಿ ನೌಕರರು, ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
Davanagere By Election: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ಸಿಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿದ್ದು, ಬಿಜೆಪಿಯವರ ಸುಳ್ಳುಗಳ ನಡುವೆಯೂ ಜನ ನಮ್ಮನ್ನು ನಂಬಿದ್ದಾರೆ.
Yadgir | ಚಟ್ನಳ್ಳಿ ಗ್ರಾಮದಲ್ಲಿ ಕೋಟಿ ಬಸವೇಶ್ವರರ ರಥೋತ್ಸವ ಸಂಭ್ರಮ
ಯಾದಗಿರಿ : ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಶ್ರೀ ಕೋಟಿ ಬಸವೇಶ್ವರರ ರಥೋತ್ಸವ ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಜರುಗಿತು. ಗುರುವಾರ ಸಂಜೆ 6:30ಕ್ಕೆ ರಥೋತ್ಸವಕ್ಕೆ ದೋರನಹಳ್ಳಿ ಹಿರೇಮಠದ ಶ್ರೀ ಅಭಿನವ ಮಹಾಂತ ಶಿವಾಚಾರ್ಯರು ಚಾಲನೆ ನೀಡಿದರು. ಜಾತ್ರೆ ನಿಮಿತ್ತ ದೇವಸ್ಥಾನದ ಆವರಣ ಭಕ್ತರಿಂದ ಗಿಜಿಗುಡುತ್ತಿತ್ತು. ಸುತ್ತಮುತ್ತಲಿನ ಸಾವಿರಾರು ಭಕ್ತರ ಸಮೂಹದ ಮಧ್ಯೆ ರಥೋತ್ಸವ ಆರಂಭವಾಗುತ್ತಿದ್ದಂತೆ “ಕೋಟಿ ಬಸವೇಶ್ವರ ಮಹಾರಾಜ ಕೀ ಜೈ” ಎಂಬ ಘೋಷಣೆಗಳು ಮೊಳಗಿದವು. ಭಕ್ತರು ರಥದ ಮೇಲೆ ಕಾರಿಕಾ, ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆದು ಭಕ್ತಿ ಸಲ್ಲಿಸಿದರು. ದೋರನಹಳ್ಳಿ ಹಿರೇಮಠದ ಪೀಠಾಧಿಪತಿ ಶ್ರೀಶ್ರೀ ಅಭಿನವ ಮಹಾಂತ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ದೇವಸ್ಥಾನದಲ್ಲಿ ಶ್ರೀ ಕೋಟಿ ಬಸವೇಶ್ವರರ ಗದ್ದುಗೆಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ದೇವಸ್ಥಾನದಲ್ಲಿ ಪುರುವಂತಿಕೆ ಸೇವೆ ಹಾಗೂ ತಾನಾರತಿ ಉತ್ಸವ ನಡೆಯಿತು. ಕಳೆದ 11 ದಿನಗಳಿಂದ ಪ್ರತಿದಿನ ರಾತ್ರಿ ದೋರನಹಳ್ಳಿಯ ಗುಡ್ಡದಲ್ಲಿ ಶ್ರೀ ಮಹಾಂತೇಶ್ವರ ಪುರಾಣ ಪ್ರವಚನ ಹಾಗೂ ದಾಸೋಹ ಕಾರ್ಯಕ್ರಮಗಳು ನಡೆದಿದ್ದು, ಬುಧವಾರ ರಾತ್ರಿ ವಿವಿಧ ಮಠಾಧೀಶರಿಂದ ಧರ್ಮಸಭೆ ಆಯೋಜಿಸಲಾಯಿತು. ಜಾತ್ರೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಮದ್ದು ಸುಡುವ ಪ್ರದರ್ಶನ ಆಕರ್ಷಣೆ : ರಥೋತ್ಸವಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಮದ್ದು ಸುಡುವ ಪ್ರದರ್ಶನ ನಡೆಸಲಾಗಿದ್ದು, ಇದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸಾವಿರಾರು ಯುವಕರು ಈ ಪ್ರದರ್ಶನವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

24 C