Tamil Nadu | ಎಲ್ಪಿಜಿ ಕೊರತೆ: ಉಪಾಹಾರ ಗೃಹಗಳಿಗೆ ವಿದ್ಯುತ್ ಸಬ್ಸಿಡಿ ಘೋಷಣೆ
ಚೆನ್ನೈ, ಮಾ.15: ಜಾಗತಿಕ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ಪರಿಣಾಮ ರಾಜ್ಯದಲ್ಲಿ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ವಿದ್ಯುತ್ ಅಡುಗೆ ಸಾಧನಗಳಿಗೆ ಮಾರ್ಪಡುವ ಉಪಾಹಾರ ಗೃಹಗಳಿಗೆ ತಮಿಳುನಾಡು ಸರಕಾರ ಸಬ್ಸಿಡಿ ನೀಡಲು ಮುಂದಾಗಿದೆ. ಹೆಚ್ಚುವರಿ ವಿದ್ಯುತ್ ಬಳಕೆಗೆ ಪ್ರತಿಯೂನಿಟ್ ಗೆ 2 ರೂ. ಸಬ್ಸಿಡಿ ನೀಡುವುದಾಗಿ ಶನಿವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ಚೆನ್ನೈನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಿರು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಕೈಗೊಳ್ಳಲಾಗಿರುವ ಕ್ರಮಗಳ ಪೈಕಿ ವಿದ್ಯುತ್ ಅಡುಗೆ ಸಾಧನಗಳ ಖರೀದಿಗೆ ಆರ್ಥಿಕ ನೆರವು ನೀಡುವ ವ್ಯವಸ್ಥೆಯೂ ಸೇರಿದೆ. ಜೊತೆಗೆ, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಂತಹ ಅಗತ್ಯ ಸೇವಾ ಸಂಸ್ಥೆಗಳಿಗೆ ವಾಣಿಜ್ಯ ಅಡುಗೆ ಅನಿಲವನ್ನು ನ್ಯಾಯಸಮ್ಮತವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಇಂಧನ ಕೊರತೆಯಿಂದ ತೊಂದರೆಗೀಡಾಗಿರುವ ವಾಣಿಜ್ಯ ಉಪಾಹಾರ ಗೃಹಗಳು ಮತ್ತು ಸಂಬಂಧಿತ ಕ್ಷೇತ್ರಗಳಿಂದ ಹಾಲಿನ ಬೇಡಿಕೆ ಕುಸಿಯುವ ಸಾಧ್ಯತೆಯಿರುವುದರಿಂದ, ರಾಜ್ಯ ಮಾಲಕತ್ವದ ‘ಆವಿನ್’ ಡೈರಿ ಬ್ರ್ಯಾಂಡ್ ಮೂಲಕ ಹಾಲು ಖರೀದಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ರೆಸ್ಟೋರೆಂಟ್ ಗಳು, ಕ್ಲೌಡ್ ಕಿಚನ್ ಗಳು, ಟೀ ಅಂಗಡಿಗಳು ಸೇರಿದಂತೆ ಸಮಾನ ಸ್ವರೂಪದ ಎಲ್ಲಾ ಸಂಸ್ಥೆಗಳಿಗೆ ವಿದ್ಯುತ್ ಸಬ್ಸಿಡಿ ಅನ್ವಯವಾಗಲಿದೆ. ವಾಣಿಜ್ಯ ಹೋಟೆಲ್ ಪರವಾನಗಿ ಹೊಂದಿದ್ದರೂ ಅಥವಾ ಹೊಂದಿರದಿದ್ದರೂ ಈ ಸೌಲಭ್ಯ ಲಭ್ಯವಾಗಲಿದೆ. ಈ ಅವಧಿಯಲ್ಲಿ ಹಲವು ಸಾಲ ಹಾಗೂ ಸಬ್ಸಿಡಿ ಯೋಜನೆಗಳನ್ನೂ ಪ್ರಕಟಿಸಲಾಗಿದೆ. ನಿರುದ್ಯೋಗಿ ಯುವಕರ ಉದ್ಯೋಗ ಸೃಜನ ಯೋಜನೆಯಡಿ ವ್ಯಾಪಾರಗಳಿಗೆ 3.75 ಲಕ್ಷ ರೂ.ವರೆಗೆ ಶೇ.25ರಷ್ಟು ಸಬ್ಸಿಡಿ ದೊರೆಯಲಿದೆ. ಅನ್ನಾಳ್ ಅಂಬೇಡ್ಕರ್ ಬಿಸಿನೆಸ್ ಚಾಂಪಿಯನ್ಸ್ ಯೋಜನೆಯಡಿ ಶೇ.35ರಷ್ಟು ಸಬ್ಸಿಡಿಯೊಂದಿಗೆ ಪಡೆಯುವ ಸಾಲಗಳಿಗೆ ಗರಿಷ್ಠ 1 ಕೋಟಿ ರೂ.ವರೆಗೆ ಸಬ್ಸಿಡಿ ದೊರೆಯಲಿದೆ. ಇದೇ ವೇಳೆ, ತಮಿಳುನಾಡು ಮಹಿಳಾ ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ.ವರೆಗೆ ಸಾಲಗಳಿಗೆ ಶೇ.25ರಷ್ಟು ಸಬ್ಸಿಡಿ (ಗರಿಷ್ಠ 2 ಲಕ್ಷ ರೂ. ಮಿತಿ) ನೀಡಲಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವೇ ಈ ಕ್ರಮಗಳಿಗೆ ಕಾರಣವಾಗಿದೆ ಎಂದು ಸರಕಾರ ತಿಳಿಸಿದೆ.
BCCI ಪ್ರಶಸ್ತಿ ಪ್ರದಾನ ಸಮಾರಂಭ | ರಾಹುಲ್ ದ್ರಾವಿಡ್, ಬಿನ್ನಿ, ಮಿಥಾಲಿ ರಾಜ್ ಗೆ ಜೀವಮಾನ ಸಾಧನೆ ಗೌರವ
ಹೊಸದಿಲ್ಲಿ: ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಹಾಗೂ ಮಿಥಾಲಿ ರಾಜ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರವಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಮೂವರು ತಮ್ಮ ದೀರ್ಘಕಾಲದ ಸೇವೆ ಮತ್ತು ಸಾಧನೆಗಾಗಿ ಸನ್ಮಾನಿತರಾದರು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ 10,000 ಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಭಾರತದ ಅತ್ಯಂತ ಪ್ರಮುಖ ಬ್ಯಾಟರ್ ಗಳಲ್ಲಿ ಒಬ್ಬರು. ಟೆಸ್ಟ್ ನಲ್ಲಿ 13,288 ಮತ್ತು ಏಕದಿನದಲ್ಲಿ 10,899 ರನ್ಗಳನ್ನು ಗಳಿಸಿರುವ ಅವರು, ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. 1996ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪ್ರವೇಶಿಸಿದ ಅವರು 2012ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ದ್ರಾವಿಡ್ ತರಬೇತುದಾರರಾಗಿ ಸೇವೆ ಸಲ್ಲಿಸಿ, ಭಾರತ ‘ಎ’ ಮತ್ತು ಅಂಡರ್–19 ತಂಡಗಳನ್ನು ಮುನ್ನಡೆಸಿದರು. 2018ರಲ್ಲಿ ಅಂಡರ್–19 ವಿಶ್ವಕಪ್ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದು, 2021ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. 2024ರ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಅವರ ಅವಧಿ ಅಂತ್ಯಗೊಂಡಿತು. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ, ಆ ಟೂರ್ನಿಯಲ್ಲಿ 18 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. 1985ರ ವಿಶ್ವ ಚಾಂಪಿಯನ್ ಶಿಪ್ ಆಫ್ ಕ್ರಿಕೆಟ್ ನಲ್ಲೂ ಅವರು ಗಮನಾರ್ಹ ಪ್ರದರ್ಶನ ನೀಡಿದ್ದರು. ನಂತರ ಅಂಡರ್–19 ತಂಡದ ಕೋಚ್ ಹಾಗೂ ರಾಷ್ಟ್ರೀಯ ತಂಡದ ಆಯ್ಕೆದಾರರಾಗಿ ಸೇವೆ ಸಲ್ಲಿಸಿದ ಅವರು, 2022ರಲ್ಲಿ ಬಿಸಿಸಿಐ ಅಧ್ಯಕ್ಷರಾದರು. ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್ ನ ಪ್ರಮುಖ ಮುಖವಾಗಿದ್ದು, ದೀರ್ಘಕಾಲ ತಂಡವನ್ನು ಮುನ್ನಡೆಸಿ ಅನೇಕ ಸಾಧನೆಗಳನ್ನು ನಿರ್ಮಿಸಿದ್ದಾರೆ. ಮಹಿಳಾ ಕ್ರಿಕೆಟ್ಗೆ ಜಾಗತಿಕ ಮಟ್ಟದಲ್ಲಿ ಗುರುತು ತಂದುಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಭಾರತೀಯ ಕ್ರಿಕೆಟ್ಗೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಬಳ್ಳಾರಿ | ಬುರ್ಖಾ ಧರಿಸಿ ಮನೆ ದರೋಡೆ ವದಂತಿ ಸುಳ್ಳು: ಪೊಲೀಸರ ತನಿಖೆಯಲ್ಲಿ ಸತ್ಯ ಬಹಿರಂಗ
ಬಳ್ಳಾರಿ: ರಮಝಾನ್ ಮಾಸದ ನಿಮಿತ್ತ ದಾನ ಕೇಳುವ ನೆಪದಲ್ಲಿ ಬುರ್ಖಾ ಧರಿಸಿಕೊಂಡ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಮನೆಗೆ ನುಗ್ಗಿ ಮಹಿಳೆಯನ್ನು ಬೆದರಿಸಿ ಬಂಗಾರ–ಬೆಳ್ಳಿ ಆಭರಣಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆಗೆ ಬಂದಿತ್ತು. ಈ ಕುರಿತು ಪೊಲೀಸರು ತಕ್ಷಣ ತನಿಖೆ ನಡೆಸಿ ಪ್ರಕರಣದ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ. ಮಾ.13, 2026ರಂದು ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹುಸೇನ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಹರಡಿತ್ತು. ಮಾಹಿತಿ ದೊರಕುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗಾಂಧಿನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗೆ ತಕ್ಷಣ ತನಿಖೆ ನಡೆಸುವಂತೆ ಸೂಚಿಸಿದ್ದರು. ಇದನ್ವಯ ಪೊಲೀಸ್ ಇನ್ಸ್ಪೆಕ್ಟರ್ ರವಿಚಂದ್ರನ್ ಅವರ ನೇತೃತ್ವದಲ್ಲಿ ಡಿಬಿ ಪಿಎಸ್ಐ ಕೆ. ವಿರೂಪಾಕ್ಷಪ್ಪ ಹಾಗೂ ಸಿಬ್ಬಂದಿಗಳಾದ ಜಯರಾಮ್, ನಾರಾಯಣ, ರಾಮದಾಸ್, ತಿಮ್ಮಪ್ಪ ಮತ್ತು ಕಾಳಿಂಗಪ್ಪ ಅವರ ತಂಡ ತನಿಖೆ ಆರಂಭಿಸಿತು. ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದಾಗ ದಾನ ಕೇಳುವ ನೆಪದಲ್ಲಿ ಯಾರೂ ಮನೆಗೆ ನುಗ್ಗಿ ಆಭರಣಗಳನ್ನು ಕಿತ್ತುಕೊಂಡು ಹೋಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಇದು ಕುಟುಂಬದ ಒಳಗಿನ ವಿಷಯಕ್ಕೆ ಸಂಬಂಧಿಸಿದ ಘಟನೆ ಎಂಬುದು ಸ್ಪಷ್ಟವಾಗಿದ್ದು, ಈ ಕುರಿತು ಹರಿದಾಡುತ್ತಿರುವ ವದಂತಿಗಳು ಸತ್ಯವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಸುಳ್ಳು ವದಂತಿಗಳನ್ನು ನಂಬಬಾರದು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಮಾಹಿತಿ ಕಂಡುಬಂದಲ್ಲಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ (112) ಗೆ ಮಾಹಿತಿ ನೀಡುವಂತೆ ಗಾಂಧಿನಗರ ಪೊಲೀಸರು ಮನವಿ ಮಾಡಿದ್ದಾರೆ.
Robin Uthappa: ಭಾರತದ ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ ಅವರು ಅಚ್ಚರಿ ಭವಿಷ್ಯವಾಣಿ ನುಡಿದಿದ್ದಾರೆ. 2026ರ ಐಪಿಎಲ್ ಟೂರ್ನಿಯೇ ಎಂ.ಎಸ್.ಧೋನಿ ಅವರ ಕೊನೆಯ ಐಪಿಎಲ್ ಸೀಸನ್ ಆಗಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ನಾಯಕತ್ವದ ಬದಲಾವಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಧೋನಿ ಅವರ ಪ್ರತಿಯೊಂದು ಐಪಿಎಲ್ ಸೀಸನ್ ಕೂಡ ಅಭಿಮಾನಿಗಳಿಗೆ ಭಾವನಾತ್ಮಕವಾಗಿರುತ್ತದೆ.
Kalaburagi | ʼಮುಂಗನಸುʼ ಕೃತಿ ವರ್ತಮಾನದ ತಲ್ಲಣಗಳ ಪ್ರತಿಬಿಂಬ: ಡಾ. ಚಿದಾನಂದ ಚಿಕ್ಕಮಠ
ಕಲಬುರಗಿ: ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಿರಿಯ ಸಾಹಿತಿ ರೇವಣಸಿದ್ಧಪ್ಪ ದುಕಾನ ಅವರು ರಚಿಸಿದ “ಮುಂಗನಸು” ಕವನ ಸಂಕಲನದ ಜನಾರ್ಪಣೆ ಕಾರ್ಯಕ್ರಮ ರವಿವಾರ ಸಂಜೆ ನಗರದ ಕಲಾಮಂಡಳದಲ್ಲಿ ನೆರವೇರಿತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಅವರು ಕೃತಿಯನ್ನು ಜನಾರ್ಪಣೆಗೊಳಿಸಿದರು. ಕೃತಿ ಕುರಿತು ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಚಿದಾನಂದ ಚಿಕ್ಕಮಠ ಅವರು, “ಮುಂಗನಸು” ಕವನ ಸಂಕಲನವು ವರ್ತಮಾನದ ಹಲವು ತಲ್ಲಣಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಕೃತಿಯಲ್ಲಿರುವ ಅನೇಕ ಕವಿತೆಗಳು ಇಂದಿನ ಕಲುಷಿತ ಪರಿಸರದ ಬಗ್ಗೆ ಕಳಕಳಿ ವ್ಯಕ್ತಪಡಿಸುವುದರ ಜೊತೆಗೆ ಸಾಮರಸ್ಯ, ಹಸಿವು, ಪ್ರೀತಿ, ತಂದೆ–ತಾಯಿ ಹಾಗೂ ಗುರುವಿನ ಆಶೀರ್ವಾದಗಳ ಮಹತ್ವವನ್ನು ಕವಿತೆಗಳ ಮೂಲಕ ಲೇಖಕರು ಅಭಿವ್ಯಕ್ತಿಸಿದ್ದಾರೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ವಿಜಯಕುಮಾರ ಪರುತೆ ವಹಿಸಿದ್ದರು. ಮಡಿವಾಳಪ್ಪ ಹಣಮಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಬಸವರಾಜ ಗೌನಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಾಹಿತಿ ಮತ್ತು ಸಂಘಟಕರಾದ ಬಿ.ಎಚ್. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪ್ರಸಾದ ದುಕಾನ ಸಭಿಕರನ್ನು ಸ್ವಾಗತಿಸಿದರು. ರೇವಣಸಿದ್ಧಯ್ಯ ನರನಾಳ ವಂದಿಸಿದರು. ಡಾ.ಶ್ವೇತಾ ಗುರುಪ್ರಸಾದ ದುಕಾನ ನಿರೂಪಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ.ಹಣಮಂತರಾವ ದೊಡ್ಡಮನಿ, ಡಾ.ಗವಿಸಿದ್ಧಪ್ಪ ಪಾಟೀಲ್, ಡಾ.ಟಿ.ಗುರುಬಸಪ್ಪ, ಡಾ.ಕಾಶಿನಾಥ ಬಿರಾದಾರ, ಡಾ.ಎಸ್.ಎಸ್.ಗುಬ್ಬಿ, ಎಚ್.ಎಸ್.ಕೌಂಟೆ, ವಿಜಯಕುಮಾರ್ ಹಂಚಿನಾಳ, ಶ್ರೀಶೈಲ ಬೋನಾಳ, ಬಸವರಾಜ ಗಾಣೂರೆ, ರವೀಂದ್ರರೆಡ್ಡಿ, ಶ್ರೀಶೈಲ ಮದಾನೆ, ಡಾ.ನಾಗಪ್ಪ ಗೋಗಿ, ಸಿದ್ದರಾಮಯ್ಯಮಠ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಒಳಮೀಸಲಾತಿ ಜಾರಿ ಮಾಡುವಂತೆ ಅಹಿಂದ ಚಳುವಳಿ ಒತ್ತಾಯ
ಬೆಂಗಳೂರು : ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿರುವ ವರದಿಯಲ್ಲಿ ಮಾಡಲ್ಪಟ್ಟಿರುವ ಶಿಫಾರಸ್ಸುಗಳಂತೆಯೇ 101 ಜಾತಿಗಳಿಗೆ ಮೀಸಲಾತಿ ಪ್ರಮಾಣಗಳನ್ನು ವರ್ಗೀಕರಣ ಮಾಡಬೇಕು ಎಂದು ಅಹಿಂದ ಚಳುವಳಿಯ ರಾಜ್ಯ ಸಂಚಾಲಕ ಎಸ್. ಮೂರ್ತಿ ಒತ್ತಾಯಿಸಿದ್ದಾರೆ. ಶನಿವಾರ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ರಾಜ್ಯದಲ್ಲಿ ಸಂಪೂರ್ಣ ಒಳಮೀಸಲಾತಿ ಅನುಷ್ಠಾ ನ ಮಾಡಿದ ನಂತರವೇ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡಬೇಕು. ನೇರ ನೇಮಕಾತಿ ಜೊತಗೆ ಮುಂಬಡ್ತಿ, ಬ್ಯಾಕ್ಲಾಗ್ಗಳಿಗೂ ಒಳಮೀಸಲಾತಿಯನ್ನು ಅಳವಡಿಸಬೇಕು ಎಂದಿದ್ದಾರೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ನೀಡಿರುವ ಒಟ್ಟು ಮೀಸಲಾತಿಯನ್ನೂ ಬೆರಳೆಣಿಕೆ ಜಾತಿಯವರು ಮಾತ್ರ ಪಡೆದು, ಅಭಿವೃದ್ಧಿ ಹೊಂದುತ್ತಿದ್ದಾರೆ. ಉಳಿದ ಜಾತಿಗಳು ಮತ್ತಷ್ಟು ಹಿಂದುಳಿಯುತ್ತಿವೆ. ಅದಕ್ಕಾಗಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡಿ ಎಂದು ರಾಜ್ಯದ ಮಾದಿಗ ಸಮಾಜ ಕಳೆದ 30 ವರ್ಷಗಳಿಂದ ಸತತ ಹೋರಾಟಗಳನ್ನು ರಾಜ್ಯದಲ್ಲಿ ಮಾಡಿದೆ ಎಂದು ಅವರು ವಿವರಿಸಿದ್ದಾರೆ.
ಮಧ್ಯಪ್ರದೇಶ | LPG ದರ ಏರಿಕೆ ಕುರಿತು ಪ್ರಧಾನಿಯನ್ನು ಅಣಕಿಸಿ ವೀಡಿಯೊ ಪೋಸ್ಟ್ : ಸರಕಾರಿ ಶಾಲೆ ಶಿಕ್ಷಕನ ಅಮಾನತು
ಭೋಪಾಲ, ಮಾ. 15: ಎಲ್ಪಿಜಿ ಸಿಲಿಂಡರ್ನ ಬೆಲೆ ಏರಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಹಾಕಿದ ಮಧ್ಯಪ್ರದೇಶದ ಸರಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೊಹ್ರಿ ಬ್ಲಾಕ್ನ ಸರಕಾರಿ ಶಾಲೆಯ ಶಿಕ್ಷಕ ಸಾಕೇತ್ ಪುರೋಹಿತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಂತೆ ಮಾತನಾಡುತ್ತಾ, ಏರುತ್ತಿರುವ ಎಲ್ಪಿಜಿ ಸಿಲಿಂಡರ್ ಬೆಲೆ ಹಾಗೂ ಅವುಗಳ ಕೊರತೆಯನ್ನು ಉಲ್ಲೇಖಿಸಿದ್ದರು. ಈ ಕುರಿತು ಪಿಛೋರೆ ವಿಧಾನ ಸಭಾ ಕ್ಷೇತ್ರ ಬಿಜೆಪಿ ಶಾಸಕ ಪ್ರೀತಮ್ ಲೋದಿ ಅವರು ಶಿವಪುರಿ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ)ಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಡಿಇಒ ಆರೋಪದ ಕುರಿತು ತನಿಖೆ ನಡೆಸಿದ್ದಾರೆ. ಅನಂತರ ಸಾಕೇತ್ ಪುರೋಹಿತ್ ಅವರನ್ನು ಶುಕ್ರವಾರ ಅಮಾನತುಗೊಳಿಸಿದ್ದಾರೆ. ಅಮಾನತು ಆದೇಶದಲ್ಲಿ ಡಿಇಒ ಸಾಕೇತ್ ಪುರೋಹಿತ್ ಅವರು ಪೋಸ್ಟ್ ಮಾಡಿದ ವೀಡಿಯೊ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ. ಸರಕಾರಿ ನಿಯಮಗಳಿಗೆ ಅನುಸಾರವಾಗಿ ಮಧ್ಯಪ್ರದೇಶ ನಾಗರಿಕ ಸೇವೆಗಳ ಕಾಯ್ದೆ, 1965ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ತನ್ನ ವಿರುದ್ಧದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಸಾಕೇತ್ ಪುರೋಹಿತ್, ತನಗೆ ನೋಟಿಸು ನೀಡದೆ, ತನ್ನ ಮಾತುಗಳನ್ನು ಆಲಿಸದೆ ಏಕಪಕ್ಷೀಯವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಹಾಗೂ ವ್ಯತ್ಯಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸುವ 58 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು.
ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ವಾಹನ ಢಿಕ್ಕಿಯಾಗಿ ಚಿರತೆ ಮೃತ್ಯು
ಬೆಂಗಳೂರು : ಬೆಂಗಳೂರು ಹೊರವಲಯದ ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಮೃತಪಟ್ಟಿರುವ ಘಟನೆ ರವಿವಾರ ಬೆಳಗಿನ ಜಾವ ವರದಿಯಾಗಿದೆ. ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ರವಿವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಚಿರತೆ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಮೂರು ವರ್ಷದ ಹೆಣ್ಣು ಚಿರತೆ ಎಂದು ಗುರುತಿಸಲಾಗಿದೆ. ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕಗ್ಗಲೀಪುರ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಮೃತ ಚಿರತೆಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಯ ಕಚೇರಿಗೆ ಸಾಗಿಸಲಾಗಿದೆ.
ಗುಜರಾತ್ | ಮರ್ಯಾದೆಗೇಡು ಹತ್ಯೆ : ದಂಪತಿಯನ್ನು ಹತ್ಯೆಗೈದ ಯುವತಿಯ ತಂದೆ, ಸೋದರ ಸಂಬಂಧಿ
ಹೊಸದಿಲ್ಲಿ, ಮಾ. 15: ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾದ ದಂಪತಿಯನ್ನು ಯುವತಿಯ ತಂದೆ ಹಾಗೂ ಆತನ ಸೋದರ ಅಳಿಯ ಹತ್ಯೆಗೈದಿದ್ದಾರೆ ಎಂದು ಹೇಳಲಾದ ಘಟನೆ ಗುಜರಾತ್ನ ರಾಜ್ಕೋಟ್ನ ಜಿಲ್ಲೆಯ ಕಛ್ನಿಂದ ವರದಿಯಾಗಿದೆ. ಫೆಬ್ರವರಿ 3ರಂದು ನಾಪತ್ತೆಯಾಗಿದ್ದ ನವೀನ್ ರಾಬರಿ (24) ಹಾಗೂ ನಾಥಿ ಆಲಿಯಾಸ್ ಸೋನು ರಾಬರಿ ಅವರ ಮೃತದೇಹಗಳನ್ನು ಪೊಲೀಸರು ನಖತ್ರಾಣ ತಾಲೂಕಿನ ಖಂಭ್ಲಾ ಗ್ರಾಮದ ಸಮೀಪದ ಬಾವಿಯೊಂದರಲ್ಲಿ ಶುಕ್ರವಾರ ರಾತ್ರಿ ಪತ್ತೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೋನು ತಂದೆ ವಂಕ ಆಲಿಯಾಸ್ ರಾಜಾ ರಾಬರಿ ಹಾಗೂ ಅವರ ಸೋದರಳಿಯ ಸೋಮ ಆಲಿಯಾಸ್ ಪ್ರಭಾತ್ ರಾಬರಿಯವರನ್ನು ಬಂಧಿಸಿದ್ದಾರೆ. ಅವರ ತಾಯಿ ಹಿಮಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಮುದಾಯದಲ್ಲಿ ತಮಗೆ ತೀವ್ರ ಅವಮಾನ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ದಂಪತಿಯನ್ನು ಹತ್ಯೆಗೈಯಲು ವಂಕ ಹಾಗೂ ಸೋಮ ಪಿತೂರಿ ನಡೆಸಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಸೋನುವನ್ನು ಭೇಟಿಯಾಗಲು ತೆರಳಿದ್ದ ನವೀನ್ ಫೆ. 3ರಂದು ನಾಪತ್ತೆಯಾಗಿದ್ದರು. ನವೀನ್ ಹಿಂದಿರುಗದೇ ಇದ್ದಾಗ, ಅವರ ಕುಟುಂಬ ಶೋಧ ಕಾರ್ಯಾಚರಣೆ ಆರಂಭಿಸಿತು. ಸೋನುವಿನ ತಂದೆಯನ್ನು ಸಂಪರ್ಕಿಸಿತು. ಆಗ ಅವರು, ತಮ್ಮ ಮಗಳು ಮನೆಯಲ್ಲಿ ಇಲ್ಲ ಎಂದು ತಿಳಿಸಿದರು. ದಂಪತಿ ಕೆಲವೇ ದಿನಗಳಲ್ಲಿ ಹಿಂದಿರುಗಬಹುದು ಎಂದು ಕೂಡ ಅವರು ತಿಳಿಸಿದರು. ನವೀನ್ನ ದ್ವಿಚಕ್ರ ವಾಹನ ಕೋಟ್ದಾ ಗ್ರಾಮದ ಕ್ರಿಕೆಟ್ ಮೈದಾನದಲ್ಲಿ ನಿಲ್ಲಿಸಿರುವುದನ್ನು ಅವರ ಕುಟುಂಬ ಪತ್ತೆ ಹಚ್ಚಿತ್ತು. ಅನಂತರ ನವೀನ್ ಸಹೋದರ ರಾಹುಲ್ ನಖತ್ರಾನಾ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 5ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕಚ್ (ಪಶ್ಚಿಮ) ಡಿಎಸ್ಪಿ ವಿಕಾಸ್ ಸುಂದಾ, ‘‘ಮರ್ಯಾದೆಗೇಡು ಹತ್ಯೆ ಶಂಕೆಯಿಂದ ನಾವು ಯುವತಿಯ ಕುಟುಂಬದ ಮೇಲೆ ನಿಗಾ ವಹಿಸುವುದನ್ನು ಮುಂದುವರಿಸಿದ್ದೇವೆ. ಗುಪ್ತಚರ ಮಾಹಿತಿ ಹಾಗೂ ಶಂಕಿತ ವ್ಯಕ್ತಿಯ ವಿಚಾರಣೆಯ ಸಂದರ್ಭ ಸಿಕ್ಕಿದ ಮಾಹಿತಿಯ ಆಧಾರದಲ್ಲಿ ಶವಗಳನ್ನು ಬಾವಿಯಲ್ಲಿ ಎಸೆಯಲಾಗಿದೆ ಎಂಬುದು ನಮಗೆ ತಿಳಿದು ಬಂದಿದೆ’’ ಎಂದಿದ್ದರು. ಶುಕ್ರವಾರ ಪೊಲೀಸರ ತಂಡ, ಅಗ್ನಿ ಶಾಮಕ ದಳದ ಸಿಬ್ಬಂದಿ, ವಿಧಿವಿಜ್ಞಾನ ತಜ್ಞರು ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದರು. ವಂಕಾ ಹಾಗೂ ಆತನ ಸಹಚರರು ನವೀನ್ ಹಾಗೂ ಸೋನು ಅವರು ಕುತ್ತಿಗೆ ಹಿಸುಕಿ ಕೊಂದಿದ್ದಾರೆ. ಸಾಕ್ಷ್ಯ ನಾಶ ಮಾಡಲು ಮೃತದೇಹಗಳನ್ನು ಬಾವಿಗೆ ಎಸೆದಿದ್ದಾರೆ ಎಂದು ಹೇಳಲಾಗಿದೆ. ಮೃತದೇಹಗಳು ಕೊಳೆತಿದ್ದರೂ ರಾಹುಲ್ ಬಟ್ಟೆಗಳ ಮೂಲಕ ನವೀನ್ ಮೃತದೇಹವನ್ನು ಗುರುತು ಹಿಡಿದಿದ್ದಾನೆ. ಇನ್ನೊಂದು ಮೃತದೇಹವನ್ನು ಅನಂತರ ಸೋನು ಅವರದ್ದೆಂದು ದೃಢಪಡಿಸಲಾಯಿತು.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 23ನೇ ವರ್ಷದ ಇಫ್ತಾರ್ ಕೂಟ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಕೃಷಿ ಸಿರಿ ಆವರಣದಲ್ಲಿ 23ನೇ ವರ್ಷದ ಇಫ್ತಾರ್ ಕೂಟವನ್ನು ಶನಿವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಸೇರಿ ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಮಝಾನ್ ಸಂದೇಶ ನೀಡಿದ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರಿ ಅವರು, ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಇಫ್ತಾರ್ನಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ ವಾಗಿವೆ. ಇವು ವಿಭಿನ್ನ ಧರ್ಮಗಳ ನಡುವೆ ಪರಸ್ಪರ ಗೌರವ ಹಾಗೂ ಸಾಮರಸ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಪವಿತ್ರ ರಮಝಾನ್ ತಿಂಗಳಲ್ಲಿ ಆಚರಿಸಲಾಗುವ ಉಪವಾಸವು ದೇಹವನ್ನು ಮಾತ್ರವಲ್ಲದೆ ಹೃದಯವನ್ನೂ ಶುದ್ಧಗೊಳಿಸಿ ಮಾನವೀಯತೆ, ಕರುಣೆ ಮತ್ತು ದಯೆಯ ಗುಣಗಳನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎ. ಗಫೂರ್, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ ಆಳ್ವ, ಬಿಲ್ಡರ್ ಮುಸ್ತಫಾ, ಎನ್.ಎಸ್. ಸೈಫುದ್ದೀನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಬಳ್ಳಾರಿ | ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪ : ಆರೋಪಿ ಬಂಧನ
ಬಳ್ಳಾರಿ: ಚೀಟಿ ವ್ಯವಹಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಬ್ರೂಸ್ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜ.8, 2026ರಂದು ಬಳ್ಳಾರಿ ನಗರದ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026ರಡಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 316(2), 318(4) ಹಾಗೂ ಬಡ್ಸ್ ಕಾಯ್ದೆ (BUDS Act-2019) ಕಲಂ 21(3) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಚೀಟಿ ವ್ಯವಹಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮೋಸ ಮಾಡಲಾಗಿದೆ ಎಂಬ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಬ್ರೂಸ್ಪೇಟೆ ಪೊಲೀಸ್ ಠಾಣೆಯ ಪಿ.ಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ನಡೆಸಲಾಗಿದ್ದು, ಪಿಎಸ್ಐ ರಮೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ತನಿಖೆಯ ವೇಳೆ ಮಾ.13ರಂದು ಸುಮಾರು 50 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ನಾಗಭೂಷಣ ಎಂದು ಗುರುತಿಸಲಾಗಿದ್ದು, ಬಳ್ಳಾರಿ ನಗರದ ದೇವಿನಗರ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿಯ ವಿಚಾರಣೆಯಲ್ಲಿ ಚೀಟಿ ವ್ಯವಹಾರದಿಂದ ಸಂಗ್ರಹಿಸಿದ ಸುಮಾರು 310 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಬಳ್ಳಾರಿ ನಗರದ ಮುನ್ಸಿಪಲ್ ಮೈದಾನ ಸಮೀಪ ಅಡಗಿಸಿದ್ದಾಗಿ ತಿಳಿಸಿದ್ದರಿಂದ ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಮೊಬೈಲ್ ಫೋನ್, KA-34/ES-2152 ಸಂಖ್ಯೆಯ ಬೈಕ್ ಹಾಗೂ KA-34/ES-0427 ಸಂಖ್ಯೆಯ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಮಾ.14ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಂದೂರು ಕಟ್ಟಡ ನಿರ್ಮಾಣ ಕಾರ್ಮಿಕರ 8ನೇ ವಾರ್ಷಿಕ ಮಹಾಸಭೆ | ಯುದ್ದ ಜನತೆಯ ಶತ್ರು: ಬಾಲಕೃಷ್ಣ ಶೆಟ್ಟಿ
ಬೈಂದೂರು: ಯುದ್ಧವನ್ನು ಧರ್ಮಾಧಾರಿತವಾಗಿ ಬೆಂಬಲಿಸುವುದು ಬಹಳ ಅಪಾಯಕಾರಿ ಎಲ್ಲಾ ರೀತಿಯ ಯುದ್ಧ ಗಳು ಎಲ್ಲಾ ಧರ್ಮದ ಜನರ ಬದುಕನ್ನು ಹಾಳು ಮಾಡುತ್ತದೆ. ಯುದ್ಧದ ಪರಿಣಾಮವಾಗಿ ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಆದುದರಿಂದ ಯುದ್ಧವನ್ನು ಮತಧರ್ಮ ಮರೆತು ವಿರೋಧಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆದ ಬೈಂದೂರು ಕಟ್ಟಡ ನಿರ್ಮಾಣ ಕಾರ್ಮಿಕರ 8ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಸೇವಾ ಕೇಂದ್ರ ಹಾಗೂ ಉಚಿತ ಆರೋಗ್ಯ ತಪಾಸಣಾ ಹೆಸರಿನಲ್ಲಿ ಕಲ್ಯಾಣ ಮಂಡಳಿಯ ಹಣ ಖಾಸಗೀಯವರ ಪಾಲಾಗುವಂತೆ ಮಾಡುತ್ತಿದೆ ಇದು ಕಾರ್ಮಿಕರ ಹಣ ಭ್ರಷ್ಟಾಚಾರ ನಡೆಸಲು ಅನುಕೂಲವಾಗಿದೆ ಎಂದವರು ಆರೋಪಿಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್ಗಳು ರಾಜ್ಯ ಸರ್ಕಾರ ಜಾರಿ ಮಾಡಿದರೆ ಬಹುತೇಕ ಸೌಲಭ್ಯಗಳಿಂದ ಕಟ್ಟಡ ಕಾರ್ಮಿಕರು ಹಾಗೂ ಸಂಘಟಿತ ಕಾರ್ಮಿ ಕರು ವಂಚಿತರಾಗುತ್ತಾರೆ. ಇದರ ಭಾಗವಾಗಿಯೇ ಬಂದ ಸೆಸ್ 50 ಲಕ್ಷಕ್ಕೆ ಏರಿಸಿರುವುದು ಸೌಲಭ್ಯ ಕಸಿಯುವ ಪ್ರಯತ್ನ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಕೌಶಲ್ಯ ತರಬೇತಿ ಹೆಸರಿನಲ್ಲಿ ರೂ 600 ಕೋಟಿ ಹಾಗೂ ಶ್ರಮಿಕ ಶಾಲೆಗಳ ಹೆಸರಿನಲ್ಲಿ 3000 ಕೋಟಿ ಹಾಗೂ ಕಿಟ್ ಗಳ ಖರೀದಿ ಹಾಗೂ ತಾತ್ಕಾಲಿಕ ವಸತಿ ಹೆಸರಿನಲ್ಲಿ 200ಕ್ಕೂ ಅಧಿಕ ಕೋಟಿ ಕಲ್ಯಾಣ ಮಂಡಳಿ ಹಣವನ್ನು ಲೂಟಿ ಹೊಡೆಯಲು ರಾಜ್ಯ ಬಜೆಟ್ ನಲ್ಲಿ ಘೋಷಿಸಿದೆ ಆದರೆ ಕಾರ್ಮಿ ಕರ ಮಕ್ಕಳ ಶೈಕ್ಷಣಿಕ ಧನಸಹಾಯ ಎರಡು ವರ್ಷಗಳಿಂದ ಖಾತೆಗೆ ಜಮೆ ಮಾಡದೇ ವಂಚಿಸಿದೆ ಇದು ನೈಜ ಕಾರ್ಮಿಕರಿಗೆ ಮಾಡಿದ ಮೋಸ ಇದರ ವಿರುದ್ಧ ಅಧಿವೇಶನಕ್ಕೂ ಮುಂಚಿತವಾಗಿ ರಾಜ್ಯದ ಎಲ್ಲಾ ಶಾಸಕರಿಗೂ ಮನವಿ ನೀಡಲು ಕಟ್ಟಡ ಕಾರ್ಮಿಕರ ರಾಜ್ಯ ಸಮಿತಿ ಕರೆ ನೀಡಿದೆ ಎಪ್ರಿಲ್ 20 ರಂದು ಮಂಡಳಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಹೇಳಿದರು. ವಾರ್ಷಿಕ ಮಹಾಸಭೆ ಅಧ್ಯಕ್ಷತೆ ಸಂಘದ ಅಧ್ಯಕ್ಷರಾದ ರಾಜೀವ ಪಡುಕೋಣೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ವರದಿ ಮತ್ತು ಲೆಕ್ಕ ಪತ್ರ ಮೇಲೆ ಚರ್ಚೆ ನಡೆಸಿ ಅಂಗೀಕಾರ ಮಾಡಲಾಯಿತು. ಜನವಾದಿ ಮಹಿಳಾ ಸಂಘಟನೆಯ ಶೋಭಾ ಕೆರೆಮನೆ ಮಹಾಸಭೆಗೆ ಶುಭಕೋರಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಮುಖಂಡರಾದ ಶ್ರೀಧರ ಉಪ್ಪುಂದ, ಮಂಜು ಪೂಜಾರಿ, ಅಮ್ಮಯ್ಯ ಪೂಜಾರಿ, ನಾಗರತ್ನ ನಾಡ, ಪದ್ಮಾವತಿ, ವಿಜಯ ಬಿ., ರಾಮ ಕಂಬದಕೋಣೆ, ಉದಯ ಗಾಣಿಗ, ರೋನಿ ವಿನೋದ್ ನಜ್ರತ್, ಅಣ್ಣಪ್ಪ ದೇವಾಡಿಗ, ಶಾಂತಾ ಪೂಜಾರಿ, ಲಕ್ಷ್ಮಣ ದೇವಾಡಿಗ ಇದ್ದರು. ಮಹಾಸಭೆಯಲ್ಲಿ ಹೊಸ ಸಮಿತಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರಾಜೀವ ಪಡುಕೋಣೆ, ಪ್ರಧಾನ ಕಾರ್ಯದರ್ಶಿ ಯಾಗಿ ಗಣೇಶ್ ತೊಂಡೆಮಕ್ಕಿ, ಕೋಶಾಧಿಕಾರಿಯಾಗಿ ಗೋಪಾಲ ಕೃಷ್ಣ ದೇವಾಡಿಗ ಸೇರಿದಂತೆ 19 ಮಂದಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಆಯ್ಕೆಯಾಯಿತು. ನಾಗರತ್ನ ಪಡುವರಿ ಸ್ವಾಗತಿಸಿದರು. ಶ್ರದ್ಧಾಂಜಲಿ ಠರಾವು ಮರ್ಲ ದೇವಾಡಿಗ ಮಾಡಿದರು. ಗೋಪಾಲಕೃಷ್ಣ ದೇವಾಡಿಗ ಅತಿಥಿಗಳನ್ನು ಗೌರವಿಸಿ, ಗಣೇಶ್ ತೊಂಡೆಮಕ್ಕಿ ವಂದಿಸಿದರು.
ಪಶ್ಚಿಮ ಏಶ್ಯ ಸಂಘರ್ಷ | ಬಹರೈನ್, ಸೌದಿ ಅರೇಬಿಯದ ಎಫ್1 ರೇಸ್ಗಳು ರದ್ದು
ಮನಾಮ, ಮಾ. 15: ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದಿಂದ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಬಹರೈನ್ ಮತ್ತು ಸೌದಿ ಅರೇಬಿಯದಲ್ಲಿ ನಡೆಯಬೇಕಾಗಿದ್ದ ಫಾರ್ಮುಲಾ ವನ್ ರೇಸ್ಗಳನ್ನು ರದ್ದುಗೊಳಿಸಲಾಗಿದೆ ಎಂದು ಮೋಟರ್ಸ್ಪೋರ್ಟ್ನ ಆಡಳಿತ ಮಂಡಳಿ ಎಫ್ಐಎ ಶನಿವಾರ ಘೋಷಿಸಿದೆ. ‘‘ಮಧ್ಯಪ್ರಾಚ್ಯ ವಲಯದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ಎಪ್ರಿಲ್ನಲ್ಲಿ ನಡೆಯಬೇಕಾಗಿದ್ದ ಬಹರೈನ್ ಮತ್ತು ಸೌದಿ ಗ್ರ್ಯಾನ್ ಪ್ರಿ ಪಂದ್ಯಾವಳಿಗಳನ್ನು ರದ್ದುಗೊಳಿಸಲು ಇಂದು ನಿರ್ಧರಿಸಲಾಗಿದೆ’’ ಎಂದು ಅಂತರ್ರಾಷ್ಟ್ರೀಯ ಆಟೊಮೊಬೈಲ್ ಫೆಡರೇಶನ್ (ಎಫ್ಐಎ) ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ಹಲವಾರು ಪರ್ಯಾಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತಾದರೂ, ಈ ಎಪ್ರಿಲ್ನಲ್ಲಿ ಯಾವುದೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳದಿರಲು ಅಂತಿಮವಾಗಿ ನಿರ್ಧರಿಸಲಾಯಿತು. ಫಾರ್ಮುಲಾ ವನ್ ಗ್ರೂಪ್, ಸ್ಥಳೀಯ ಪ್ರಾಯೋಜಕರು ಮತ್ತು ವಲಯದಲ್ಲಿರುವ ನಮ್ಮ ಸದಸ್ಯ ಕ್ಲಬ್ಗಳೊಂದಿಗೆ ಸುದೀರ್ಘ ಸಮಾಲೋಚನೆಗಳನ್ನು ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು’’ ಎಂದು ಎಫ್ಐಎ ಹೇಳಿದೆ. ಈ ಋತುವಿನ ನಾಲ್ಕನೇ ಗ್ರ್ಯಾನ್ ಪ್ರಿ ಬಹರೈನ್ನಲ್ಲಿ ಎಪ್ರಿಲ್ 10ರಿಂದ 12ರವರೆಗೆ ನಡೆಯಬೇಕಾಗಿತ್ತು. ಒಂದು ವಾರದ ಬಳಿಕ ಸೌದಿ ಗ್ರ್ಯಾನ್ ಪ್ರಿ ನಡೆಯಬೇಕಾಗಿತ್ತು
ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತ್ಯು
ಬೈರುತ್, ಮಾ.15: ದಕ್ಷಿಣ ಲೆಬನಾನ್ನ ಹಲವೆಡೆ ಶನಿವಾರ ತಡರಾತ್ರಿಯಿಂದ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು, ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕರಾವಳಿ ನಗರವಾದ ಸಿಡಾನ್ನ ಉತ್ತರದ ಜಿಲ್ಲೆಯಲ್ಲಿ ವಸತಿ ಕಟ್ಟಡದ ಅಪಾರ್ಟ್ಮೆಂಟ್ ಮೇಲೆ ಶನಿವಾರ ತಡರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಸಿಡಾನ್ನ ಸಮೀಪದ ಅಲ್-ಖತ್ರಾನಿ ಗ್ರಾಮದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಲೆಬನಾನ್ನ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ(ಎನ್ಎನ್ಎ) ವರದಿ ಮಾಡಿದೆ. ಲೆಬನಾನ್ನಾದ್ಯಂತ ಹಿಜ್ಬುಲ್ಲಾಗಳ ಮೂಲಸೌಕರ್ಯಗಳನ್ನು ಗುರಿಯಾಗಿಸಿದ ದಾಳಿ ಮುಂದುವರಿಯಲಿದೆ. ಬೈರುತ್ನಲ್ಲಿ ಹಿಜ್ಬುಲ್ಲಾದ ರದ್ವಾನ್ ಪಡೆಯ ಕಮಾಂಡ್ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ರವಿವಾರ ಹೇಳಿದೆ. ಈ ಮಧ್ಯೆ, ಇಸ್ರೇಲ್ ಜೊತೆ ಮಾತುಕತೆ ನಡೆಸಲು ನಿಯೋಗವನ್ನು ರಚಿಸಿ ಇಸ್ರೇಲ್ಗೆ ಆಹ್ವಾನ ನೀಡಲಾಗಿದೆ. ಆದರೆ ಅವರಿಂದ ಪ್ರತ್ಯುತ್ತರ ಬಂದಿಲ್ಲ ಎಂದು ಲೆಬನಾನ್ ಸರಕಾರದ ಮೂಲಗಳು ಹೇಳಿವೆ. ಲೆಬನಾನ್ ಮತ್ತು ಇಸ್ರೇಲ್ ನಡುವೆ ನೇರ ಮಾತುಕತೆ ನಡೆಯಬೇಕು. ಇಲ್ಲದಿದ್ದರೆ ಲೆಬನಾನ್ನ ಅವ್ಯವಸ್ಥೆಯ ಪ್ರಪಾತಕ್ಕೆ ಕುಸಿಯಲಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಎಚ್ಚರಿಕೆ ನೀಡಿದ್ದು ಪ್ಯಾರಿಸ್ನಲ್ಲಿ ಮಾತುಕತೆಯನ್ನು ಆಯೋಜಿಸಲು ಸಿದ್ಧ ಎಂದು ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
RCB Yash Dayal Marriage: ಇನ್ನೂ ಕೆಲವೇ ದಿನಗಳಲ್ಲಿ ಐಪಿಎಲ್ 2026 ಹಬ್ಬ ಆರಂಭವಾಗಲಿದೆ. ಇದಕ್ಕೂ ಮುನ್ನಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬೌಲರ್ ಯಶ್ ದಯಾಳ್ ಅವರು ಕಂಟೆಂಟ್ ಕ್ರಿಯೇಟರ್ ಶ್ವೇತಾ ಪುಂಡಿರ್ ಅವರೊಂದಿಗೆ ಸದ್ದಿಲ್ಲದೆ ದಾಂಪತ್ಯೆ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಫೆಬ್ರವರಿ 4, 2026ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ
Telangana| ಮದುವೆ ನಿಲ್ಲಿಸಿದ ವಧುವಿಗೆ ತನ್ನ ಎಚ್ಐವಿ ಸೋಂಕಿತ ರಕ್ತ ಚುಚ್ಚಿದ ವರ!
ಹೈದರಾಬಾದ್: ತನಗೆ ಎಚ್ಐವಿ ಸೋಂಕಿದೆ ಎಂದು ತಿಳಿದು ತನ್ನ ಮದುವೆ ಯೋಜನೆಯನ್ನು ರದ್ದುಗೊಳಿಸಿದ ಸಂಬಂಧಿಕ ವಧುವಿಗೆ ವರನೊಬ್ಬ ತನ್ನದೇ ಎಚ್ಐವಿ ಸೋಂಕಿತ ರಕ್ತ ಹೊಂದಿರುವ ಸಿರಿಂಜ್ ಚುಚ್ಚಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮನೋಹರ್ (24) ಎಂಬ ವರ ಸಿರಿಂಜ್ ಒಂದನ್ನು ಖರೀದಿಸಿ, ಅದಕ್ಕೆ ತನ್ನದೇ ಎಚ್ಐವಿ ಸೋಂಕಿತ ರಕ್ತವನ್ನು ತುಂಬಿದ್ದಾನೆ. ಬಳಿಕ, ಮಾರ್ಚ್ 11ರಂದು ವಧುವಿನ ಮನೆಗೆ ತೆರಳಿ, ಆಕೆಯ ತೋಳಿಗೆ ಆ ಸಿರಿಂಜ್ ಚುಚ್ಚಿದ್ದಾನೆ ಎಂದು ಹೇಳಲಾಗಿದೆ. ವಧು ಕೂಡ ಎಚ್ಐವಿ ಸೋಂಕಿತಳಾದರೆ, ಆಕೆಯ ಪೋಷಕರಿಗೆ ಬೇರೆ ಪರ್ಯಾಯವಿಲ್ಲದೆ ಆಕೆ ತನ್ನನ್ನು ವಿವಾಹವಾಗಲು ಅನುಮತಿ ನೀಡುತ್ತಾರೆ ಎಂದು ಆರೋಪಿ ಮನೋಹರ್ ಭಾವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಪೋಚರಂ ಐಟಿ ಕಾರಿಡಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೋಹರ್ ಹಾಗೂ ಯುವತಿಯ ಕುಟುಂಬ ಅಣ್ಣೋಜಿಗುಡದ ರಾಜೀವ್ ಗೃಹ ಕಲ್ಪ ಕಾಲನಿಯ ನಿವಾಸಿಗಳಾಗಿದ್ದಾರೆ. ಐಟಿ ಕಂಪನಿಯೊಂದರಲ್ಲಿ ಮನೋಹರ್ ಟ್ರಾನ್ಸ್ಪೋರ್ಟ್ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೋಹರ್ ತಾಯಿ ಹಾಗೂ ತಂದೆ ಇಬ್ಬರೂ ಎಚ್ಐವಿ ಸೋಂಕಿತರಾಗಿದ್ದರು. ಮನೋಹರ್ ತಂದೆ ಏಡ್ಸ್ ನಿಂದ ಸುಮಾರು 19 ವರ್ಷಗಳ ಹಿಂದೆ ಮೃತಪಟ್ಟಿದ್ದರು ಎಂದು ಮೇದಿಪಲ್ಲಿ ಸಹಾಯಕ ಪೊಲೀಸ್ ಆಯುಕ್ತ ಮೋಹನ್ ಕುಮಾರ್ ತಿಳಿಸಿದ್ದಾರೆ. ಮನೋಹರ್ ಹಾಗೂ ಯುವತಿಯ ಕುಟುಂಬದವರು ಅವರಿಬ್ಬರಿಗೂ ಮದುವೆ ಮಾಡುವ ಯೋಜನೆ ಹೊಂದಿದ್ದರು. ಮನೋಹರ್ ಪೋಷಕರಿಬ್ಬರಿಗೂ ಎಚ್ಐವಿ ಸೋಂಕು ಇರುವುದರಿಂದ, ಆತನಿಗೆ ಪರೀಕ್ಷೆಗೊಳಗಾಗುವಂತೆ ಯುವತಿಯ ಕುಟುಂಬದವರು ಸೂಚಿಸಿದ್ದರು. ಪರೀಕ್ಷೆಗೆ ಒಳಗಾದ ಮನೋಹರ್ಗೆ ಎಚ್ಐವಿ ಸೋಂಕು ಇರುವುದು ದೃಢಪಟ್ಟರೆ, ಯುವತಿಗೆ ಎಚ್ಐವಿ ಸೋಂಕು ಇಲ್ಲದಿರುವುದು ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ. ಬಳಿಕ, ಯುವತಿಯ ಪೋಷಕರು ತಮ್ಮ ಪುತ್ರಿಯನ್ನು ಆತನಿಗೆ ಮದುವೆ ಮಾಡಿಕೊಡಲು ನಿರಾಕರಿಸಿದರು. ಆಗ, ಯುವತಿಯೂ ಎಚ್ಐವಿ ಸೋಂಕಿಗೆ ಒಳಗಾದರೆ, ಅವರು ಯಾವುದೇ ಪರ್ಯಾಯವಿಲ್ಲದೆ ಮದುವೆಗೆ ಒಪ್ಪುತ್ತಾರೆ ಎಂದು ಮನೋಹರ್ ಭಾವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಕುರಿತು ತಕ್ಷಣವೇ ತನ್ನ ಕುಟುಂಬದವರಿಗೆ ತಿಳಿಸಲು ಯುವತಿ ಹಿಂಜರಿದಳು. ಆದರೆ, ಮರುದಿನ ಆಕೆಗೆ ಜ್ವರ ಕಾಣಿಸಿಕೊಂಡಿತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ, ತೋಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ವೈದ್ಯರು ಗಮನಿಸಿ ಪ್ರಶ್ನಿಸಿದರು. ಆಗ ಆಕೆ ಮನೋಹರ್ ತನ್ನ ಮೇಲೆ ಬಲವಂತವಾಗಿ ರಕ್ತದ ಸಿರಿಂಜ್ ಚುಚ್ಚಿದ ಘಟನೆವನ್ನು ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮನೋಹರ್ ವಿರುದ್ಧ ಹತ್ಯೆ ಯತ್ನದ ಆರೋಪ ಹೊರಿಸಲಾಗಿದ್ದು, ಮಾರ್ಚ್ 13ರಂದು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಕದನ ವಿರಾಮ ಮಾಡಿಕೊಳ್ಳುವುದಿಲ್ಲ, ಆತ್ಮರಕ್ಷಣೆಗೆ ಬದ್ಧ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ
ಟೆಹ್ರಾನ್: ಅಮೆರಿಕದೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆಯೂ ಕದನ ವಿರಾಮವನ್ನು ಬಯಸುವುದಿಲ್ಲ ಮತ್ತು ಯಾವುದೇ ಮಾತುಕತೆಗೂ ಮುಂದಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. ಅಮೆರಿಕದ ‘CBS ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅಬ್ಬಾಸ್ ಅರಘ್ಚಿ ಅವರು, “ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ನಿರಂತರವಾಗಿ ಮುಂದುವರಿಸಲಿದೆ. ನಾವು ಎಂದಿಗೂ ಕದನ ವಿರಾಮವನ್ನು ಕೇಳಿಲ್ಲ. ಮಾತುಕತೆಗೂ ಮುಂದಾಗಿಲ್ಲ. ಅಗತ್ಯವಿರುವಷ್ಟು ಕಾಲ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ. ಈಗಲೂ ಅದನ್ನೇ ಮಾಡುತ್ತಿದ್ದೇವೆ. ಈ ಯುದ್ಧವು ಯಾವುದೇ ವಿಜಯವಿಲ್ಲದ, ಕಾನೂನುಬಾಹಿರ ಸಂಘರ್ಷ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರ್ಥಮಾಡಿಕೊಳ್ಳುವವರೆಗೂ ನಾವು ಇದನ್ನು ಮುಂದುವರಿಸುತ್ತೇವೆ,” ಎಂದು ಹೇಳಿದರು. “ಅಧ್ಯಕ್ಷ ಟ್ರಂಪ್ ಮನರಂಜನೆಗಾಗಿ ಯುದ್ಧ ನಡೆಸುತ್ತಿರುವಂತಿದೆ. ಇದರ ಪರಿಣಾಮವಾಗಿ ನಿರಪರಾಧಿ ಜನರು ಸಾವಿಗೀಡಾಗುತ್ತಿದ್ದಾರೆ. ಇದು, ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕ ಹಡಗುಗಳನ್ನು ಗುರಿಯಾಗಿಸುವ ಕ್ರಮಗಳನ್ನು ಆಯ್ಕೆ ಮಾಡಿಕೊಂಡ ಯುದ್ಧ”, ಎಂದು ಆರೋಪಿಸಿದರು.
ವಿಜಯನಗರ | ಗ್ಯಾಸ್ ಪೈಪ್ಲೈನ್ ಕಾಮಗಾರಿಯಿಂದ 88 ವರ್ಷದ ಹಗರಿ ಸೇತುವೆಯಲ್ಲಿ ಬಿರುಕು : ಸಾರ್ವಜನಿಕರಲ್ಲಿ ಆತಂಕ
ವಿಜಯನಗರ / ಹಗರಿಬೊಮ್ಮನಹಳ್ಳಿ: ಪಟ್ಟಣದ ಹಗರಿ ನದಿಯ ಮೇಲಿರುವ ಐತಿಹಾಸಿಕ ಹಗರಿ ಸೇತುವೆಯಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಸುವ ಕಾಮಗಾರಿಯ ವೇಳೆ ಹಲವು ಕಡೆ ಬಿರುಕುಗಳು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುಮಾರು 275 ಮೀಟರ್ ಉದ್ದದ ಈ ಸೇತುವೆಯನ್ನು ಮದ್ರಾಸ್ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದ ಗೋಪಾಲರೆಡ್ಡಿ ಅವರು 1938ರಲ್ಲಿ ಉದ್ಘಾಟಿಸಿದ್ದರು. ಆಗಿನಿಂದಲೂ ಸುಮಾರು 88 ವರ್ಷಗಳಿಂದ ಈ ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿ ಸೇವೆ ಸಲ್ಲಿಸುತ್ತಿತ್ತು. ಪ್ರತಿದಿನ ಸಾವಿರಾರು ವಾಹನಗಳು ಇದೇ ಸೇತುವೆ ಮೂಲಕ ಸಂಚರಿಸುತ್ತಿದ್ದವು. ಇತ್ತೀಚೆಗೆ ಗ್ಯಾಸ್ ಪೈಪ್ಲೈನ್ ಅಳವಡಿಸುವ ಕಾಮಗಾರಿ ಕೈಗೊಂಡಿದ್ದು, ಈ ವೇಳೆ ಸೇತುವೆಯ ಗೋಡೆ ಹಾಗೂ ಅಡಿಪಾಯ ಭಾಗಗಳಲ್ಲಿ ಹಲವು ಕಡೆ ಬಿರುಕುಗಳು ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಸೇತುವೆಯ ಸ್ಥಿರತೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಸೇತುವೆಯ ಎರಡೂ ಬದಿಗಳಲ್ಲಿ ತಡೆಗಳನ್ನು ನಿರ್ಮಿಸಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೂಗಲ್ ಮ್ಯಾಪ್ನಲ್ಲಿಯೂ ಇದೇ ಮಾರ್ಗ ತೋರಿಸಲಾಗುತ್ತಿರುವುದರಿಂದ ಜನರು ಇದೇ ಸೇತುವೆಯನ್ನು ಅವಲಂಬಿಸಿಕೊಂಡಿದ್ದರು. ಸ್ಥಳೀಯರು ಹಾಗೂ ಸಾರ್ವಜನಿಕರು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೇತುವೆಯ ಸ್ಥಿತಿಯನ್ನು ತಕ್ಷಣ ಪರಿಶೀಲಿಸಿ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಲವು ದಶಕಗಳಿಂದ ಜನರಿಗೆ ಸೇವೆ ಸಲ್ಲಿಸುತ್ತಿರುವ ಈ ಐತಿಹಾಸಿಕ ಸೇತುವೆಯನ್ನು ಸಂರಕ್ಷಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಯಾವುದೇ ಉಪಕ್ರಮಗಳಿಗೆ ಸ್ವಾಗತ: ಇರಾನ್
ಟೆಹ್ರಾನ್, ಮಾ.15: ಯುದ್ಧದ ಸಂಪೂರ್ಣ ಅಂತ್ಯಕ್ಕೆ ಕಾರಣವಾಗುವ ಯಾವುದೇ ಉಪಕ್ರಮವನ್ನು ಇರಾನ್ ಸ್ವಾಗತಿಸುತ್ತದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ರವಿವಾರ ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಇರಾನ್ ವಿವಿಧ ಗಲ್ಫ್ ದೇಶಗಳೊಂದಿಗೆ ಸಂವಹನ ನಡೆಸುತ್ತಿದೆ ಮತ್ತು ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧಕ್ಕೆ ಸಂಪೂರ್ಣ ಅಂತ್ಯವನ್ನು ಖಾತರಿಪಡಿಸುವ ಯಾವುದೇ ಉಪಕ್ರಮವನ್ನು ಸ್ವಾಗತಿಸುತ್ತದೆ. ಪ್ರಾದೇಶಿಕ ಸ್ಥಿರತೆಗೆ ಇರಾನ್ನ ಬದ್ಧತೆಯ ಪ್ರತೀಕವಾಗಿ ಶಾಂತಿ ಪ್ರಸ್ತಾಪವನ್ನು ಮುಂದಿರಿಸಿರುವುದಾಗಿ ಅರಾಘ್ಚಿ ಪ್ರತಿಪಾದಿಸಿದ್ದಾರೆ. ಇರಾನ್ ಈ ಪ್ರದೇಶದಲ್ಲಿ ನಾಗರಿಕ ಸ್ಥಳಗಳ ಮೇಲೆ ಪ್ರಹಾರ ಮಾಡಿದೆ ಎಂಬ ಆರೋಪವನ್ನು ತಿರಸ್ಕರಿಸಿದ ಅವರು, ಕೆಲವು ಅರಬ್ ರಾಷ್ಟ್ರಗಳಲ್ಲಿ ನಾಗರಿಕ ಗುರಿಗಳ ಮೇಲಿನ ದಾಳಿಗಳ ಹಿಂದೆ ಇಸ್ರೇಲ್ ಇರುವ ಸಾಧ್ಯತೆಯಿದೆ. ಇಂತಹ ದಾಳಿಗಳಿಗೆ ಹೊಣೆಗಾರಿಕೆಯನ್ನು ಗುರುತಿಸಲು ನೆರೆಹೊರೆಯವರೊಂದಿಗೆ ಸಮಿತಿಯನ್ನು ರಚಿಸಲು ಇರಾನ್ ಸಿದ್ಧವಿದೆ ಎಂದು ಹೇಳಿದ್ದಾರೆ.
ಹೊಟೇಲ್ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು
ಶಿರ್ವ, ಮಾ.15: ದುಬೈಯಿಂದ ಬಂದು ಶಿರ್ವದ ಹೊಟೇಲ್ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಮಾ.14ರಂದು ಬೆಳಗ್ಗೆ ನಡೆದಿದೆ. ಮೃತರನ್ನು ರೋಬರ್ಟ್ ಫೆರ್ನಾಂಡಿಸ್(73) ಎಂದು ಗುರುತಿಸಲಾಗಿದೆ. ಇವರು ಮತ್ತು ಇವರ ಪತ್ನಿ ದುಬಾಯಿ ದೇಶದಲ್ಲಿ ವಾಸ ಮಾಡಿಕೊಂಡಿದ್ದು, ಜ.26ರಂದು ವಿದೇಶದಿಂದ ಊರಿಗೆ ಬಂದಿದ್ದರು. ಮಾ.3ರಿಂದ ಶಿರ್ವ ಗ್ರಾಮದ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಇವರ ಪೈಕಿ, ರೋಬರ್ಟ್ ತೀವ್ರವಾಗಿ ಅಸ್ವಸ್ಥಗೊಂಡು ಉಡುಪಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಗೆ ಬೆದರಿಸಿ 14 ಲಕ್ಷ ರೂ. ಪಡೆದ ಯುವಕ: ಪ್ರಕರಣ ದಾಖಲು
ಉಡುಪಿ, ಮಾ.15: ಯುವತಿಗೆ ಬೆದರಿಸಿ 14ಲಕ್ಷ ರೂ. ಹಣ ಪಡೆದು ಕೊಂಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಪಳ್ಳಿಯ ಮಹಿಮಾ(22) ಎಂಬವರಿಗೆ ಶರತ್ ಎಂಬಾತ ಬೇರೆ ಬೇರೆ ಸಮಸ್ಯೆಗಳನ್ನು ಹೇಳಿಕೊಂಡು ಹಣವನ್ನು ಪಡೆದುಕೊಳ್ಳುತ್ತಿದ್ದನು. ಮಹಿಮಾ ಹಣವನ್ನು ವಾಪಸ್ಸು ಕೇಳಿದಾಗ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದು, 2026ರ ಫೆಬ್ರವರಿಯಲ್ಲಿ ಶರತ್ ಕರೆ ಮಾಡಿ ತಂದೆಗೆ ಹುಷಾರಿಲ್ಲ 15,00,000ರೂ. ಹಣ ಕೊಡುವಂತೆ ಕೇಳಿದ್ದನು. ಅದಕ್ಕೆ ಶರತ್, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಎನ್ನಲಾಗಿದೆ. ಇದರಿಂದ ಭೀತಿಗೊಂಡ ಮಹಿಮಾ ಆತನಿಗೆ 14 ಲಕ್ಷ ರೂ. ಹಣವನ್ನು ಒತ್ತಾಯಪೂರ್ವಕವಾಗಿ ನೀಡಿದ್ದರು.
ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ | ಕಾಯುತ್ತಿರುವ ಸಾವಿರಕ್ಕೂ ಹೆಚ್ಚಿನ ಹಡಗುಗಳು; ಇಂಧನ ಮಾರುಕಟ್ಟೆ ಆತಂಕದಲ್ಲಿ
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆಯೇ ಜಾಗತಿಕ ವಾಣಿಜ್ಯಕ್ಕೆ ಅತ್ಯಂತ ಪ್ರಮುಖವಾದ ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಜಲಮಾರ್ಗವನ್ನು ದಾಟಲು ಸುಮಾರು 1,000 ಹಡಗುಗಳು ಕಾಯುತ್ತಿದ್ದು, ಇವುಗಳಲ್ಲಿ 200ಕ್ಕೂ ಹೆಚ್ಚು ತೈಲ ಟ್ಯಾಂಕರ್ ಗಳಿರುವುದು ಜಾಗತಿಕ ಇಂಧನ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು Aljazeera ವರದಿ ಮಾಡಿದೆ. ತೈಲ ಸರಬರಾಜಿನ ಅಡಚಣೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಬೆಲೆಗಳು ಏರಿಕೆಯಾಗುತ್ತಿದ್ದು, ಅನೇಕ ದೇಶಗಳಲ್ಲಿ ಇಂಧನ ವೆಚ್ಚಗಳು ಹೆಚ್ಚಾಗುತ್ತಿವೆ. ಇರಾನ್ ಮಿಲಿಟರಿಯ ಬಿಗಿ ನಿಯಂತ್ರಣ ಹಾರ್ಮುಝ್ ಜಲಸಂಧಿಯ ಮೇಲಿರುವುದರಿಂದ ತೈಲ ಟ್ಯಾಂಕರ್ ಗಳು ಈ ದಾರಿಯಲ್ಲಿ ಸಾಗಲು ಹಿಂದೇಟು ಹಾಕುತ್ತಿವೆ. ಜಲಸಂಧಿಯ ಪ್ರವೇಶದ್ವಾರವನ್ನು ತಲುಪಲು ಅಥವಾ ಅದನ್ನು ದಾಟಲು ಯತ್ನಿಸುವ ಹಡಗುಗಳಿಗೆ ಇರಾನ್ ಮಿಲಿಟರಿಯಿಂದ ನಿರಂತರ ಬೆದರಿಕೆಗಳು ಎದುರಾಗುತ್ತಿವೆ. ಕೆಲವು ದಿನಗಳ ಹಿಂದೆ ಒಂದು ಹಡಗು ಈ ಪ್ರದೇಶದಲ್ಲಿ ಬೆಂಕಿಗಾಹುತಿಯಾಗಿರುವುದು ಕಂಡುಬಂದಿತ್ತು. ಆ ದಾಳಿ ಇರಾನ್ ನಡೆಸಿದೆಯೇ ಎಂಬುದು ಸ್ಪಷ್ಟವಾಗದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಅದು ಇರಾನ್ ನಡೆಸಿರಬಹುದು ಎನ್ನಲಾಗಿದೆ. ಈ ನಡುವೆ, ಅಮೆರಿಕ ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ಹಡಗುಗಳಿಗೆ ಜಲಮಾರ್ಗವನ್ನು ಬಳಸಲು ಅವಕಾಶ ನೀಡುವುದಿಲ್ಲ ಎಂದು ಇರಾನ್ ಘೋಷಿಸಿದೆ. ಆದರೆ ಅಮರಿಕಕ್ಕೆ ಸಂಬಂಧಿಸದ ಹಡಗುಗಳೂ ದಾಳಿಗೆ ಗುರಿಯಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇತ್ತೀಚೆಗೆ ಥಾಯ್ಲೆಂಡ್ ಧ್ವಜ ಹೊಂದಿದ್ದ ಒಂದು ಹಡಗು ಜಲಸಂಧಿಯನ್ನು ದಾಟಲು ಯತ್ನಿಸಿದಾಗ ಅದರ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗುರಿಯಾಗಿಸಲಾಗಿತ್ತು. ದಾಳಿಯಿಂದ ಹಡಗು ಗಂಭೀರವಾಗಿ ಹಾನಿಗೊಂಡಿದ್ದು, ಸುಮಾರು 20 ಸಿಬ್ಬಂದಿಯನ್ನು ಒಮಾನಿನ ನೌಕಾಪಡೆ ರಕ್ಷಿಸಿದೆ. ಇನ್ನೂ ಮೂವರು ಸಿಬ್ಬಂದಿ ಸಮುದ್ರದಲ್ಲಿ ಕಾಣೆಯಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಬೆಳವಣಿಗೆಗಳು ಜಾಗತಿಕ ವಾಣಿಜ್ಯ ಮಾರ್ಗಗಳ ಭದ್ರತೆ ಹಾಗೂ ಇಂಧನ ಸರಬರಾಜಿನ ಸ್ಥಿರತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿವೆ.
ಉಡುಪಿ, ಮಾ.15: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಎಂ.ಲಕ್ಷ್ಮೀನಾರಾಯಣ ರಾವ್(58) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮಹಾರಾಷ್ಟ್ರ ರಾಜ್ಯದ ಪೂನಾದಲ್ಲಿರುವ ತನ್ನ ಮಗಳ ಮನೆಯಲ್ಲಿದ್ದ ಇವರು, ಕುಸಿದು ಬಿದ್ದು ಕೊನೆಯುಸಿರೆಳೆದಿ ದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ಕಲಾವಿದರು, ಸಾಹಿತಿಗಳು, ಪತ್ರಕರ್ತರು ಸದಾ ವಿರೋಧಪಕ್ಷವಾಗಿ ಇರಬೇಕು : ಪ್ರಕಾಶ್ ರಾಜ್
ಡಾ.ನಟರಾಜ್ ಹುಳಿಯಾರ್ ರಚಿತ ‘ಪಿ.ಲಂಕೇಶ್ ಅವರ ಟೀಕೆ ಟಿಪ್ಪಣಿ’ 3 ಭಾಗಗಳ ಪುಸ್ತಕ, ಲಂಕೇಶ್ ಕತೆಗಳ ಧ್ವನಿಸುರುಳಿ ಲೋಕಾರ್ಪಣೆ
ವಸತಿ ಗೃಹದಲ್ಲಿ ವ್ಯಕ್ತಿ ಆತ್ಮಹತ್ಯೆ
ಉಡುಪಿ, ಮಾ.15; ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಸನಿಹದ ವಸತಿ ಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ. ಮೃತರನ್ನು ಪೂತ್ತೂರು ನೆಲ್ಯಾಡಿ ನಿವಾಸಿ ಜಿನ್ಸನ್ ಪಿ.ಎಂ. ಎಂದು ಗುರುತಿಸಲಾಗಿದೆ. ವೈಯಕ್ತಿಕ ಕಾರಣದಿಂದ ಮನನೊಂದ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಪೋಲಿಸ್ ಠಾಣೆಯ ಠಾಣಾಧಿಕಾರಿ ಭರತೇಶ್, ಎಸ್ಸೈ ನಾರಾಯಣ, ಎಎಸ್ಸೈ ವಿಜಯ್ ಘಟನಾ ಸ್ಥಳದಲ್ಲಿದ್ದು, ಮಹಜರು ಪ್ರಕ್ರಿಯೆ ನಡೆಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.
ಅರಾವಳಿ ಬೆಟ್ಟಗಳನ್ನು ವ್ಯಾಖ್ಯಾನಿಸಲು ರಚಿತ ತಜ್ಞರ ಸಮಿತಿಯ 10 ಸದಸ್ಯರ ಹೆಸರುಗಳಿಗೆ ಪರಿಸರ ಸಚಿವಾಲಯದ ಅನುಮೋದನೆ
ಹೊಸದಿಲ್ಲಿ,ಮಾ.15: ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಿಗೆ ಏಕರೂಪ ವ್ಯಾಖ್ಯಾನವನ್ನು ನೀಡುವ ಕಾರ್ಯವನ್ನು ವಹಿಸಲಾಗಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿಯ (ಸಿಇಸಿ) 10 ಸದಸ್ಯರ ಉನ್ನತಾಧಿಕಾರ ತಜ್ಞ ಸಮಿತಿಗೆ ತನ್ನ ಆಕ್ಷೇಪವಿಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉನ್ನತಾಧಿಕಾರ ತಜ್ಞ ಸಮಿತಿಗೆ ಸೂಚಿಸಲಾಗಿರುವ ಹೆಸರುಗಳನ್ನು ಅನುಮೋದಿಸಿದೆ. ಸಮಿತಿಯು ಭಾರತೀಯ ಅರಣ್ಯ ಸಮೀಕ್ಷೆ (ಎಫ್ಎಸ್), ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) ಮತ್ತು ಭಾರತೀಯ ಸಮೀಕ್ಷೆಯ ಹಾಲಿ ಮತ್ತು ನಿವೃತ್ತ ಅಧಿಕಾರಿಗಳನ್ನು ಒಳಗೊಂಡಿದೆ. ಈ ಹಂತದಲ್ಲಿ ಸಮಿತಿಯಲ್ಲಿ ಸೇರ್ಪಡೆಗೆ ಯಾವುದೇ ಹೆಚ್ಚುವರಿ ಹೆಸರುಗಳನ್ನು ತಾನು ಸೂಚಿಸುವುದಿಲ್ಲ ಎಂದು ಸಚಿವಾಲಯವು ಅಫಿಡವಿತ್ನಲ್ಲಿ ತಿಳಿಸಿದೆ. ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ ಮಹಾ ನಿರ್ದೇಶಕಿ ಕಂಚನ ದೇವಿ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. 1991ರ ಮಧ್ಯಪ್ರದೇಶ ಕೇಡರ್ನ ಐಎಫ್ಎಸ್ ಅಧಿಕಾರಿಯಾಗಿರುವ ದೇವಿ ಅರಣ್ಯ ಶಿಕ್ಷಣ ಮತ್ತು ಸಂಶೋಧನೆ, ವನ್ಯಜೀವಿ ಮತ್ತು ಅರಣ್ಯ ನೀತಿ ಹಾಗೂ ಸಾಂಸ್ಥಿಕ ನಾಯಕತ್ವದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ ಎಂದು ಸಿಇಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ತಿಳಿಸಿದೆ. ಸಚಿವಾಲಯವು ತನ್ನ ಅಫಿಡವಿತ್ನಲ್ಲಿ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಿಗೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ಸಮಾಲೋಚನೆ ಸೇರಿದಂತೆ ಸಂಬಂಧಿತ ಕ್ಷೇತ್ರಗಳ ವಿಷಯ ತಜ್ಞರ ಗುಂಪಿನಿಂದ ಸಮಗ್ರ ಮತ್ತು ವಿಶ್ಲೇಷಣಾತ್ಮಕ ಪರಿಶೀಲನೆಯ ಅಗತ್ಯವಿದೆ ಎಂದು ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯವು ಫೆ.26ರಂದು ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳನ್ನು ವ್ಯಾಖ್ಯಾನಿಸುವ ಸಮಿತಿಗೆ ವಿಷಯ ತಜ್ಞರ ಹೆಸರುಗಳನ್ನು ಸೂಚಿಸುವಂತೆ ಪರಿಸರ ಸಚಿವಾಲಯ ಮತ್ತು ಸಂಬಂಧಿಸಿದ ಇತರರಿಗೆ ಸೂಚಿಸಿತ್ತು ಮತ್ತು ಈ ಪ್ರದೇಶದಲ್ಲಿ ಕಾನೂನುಬದ್ಧ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿತ್ತು.
ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಣಿಪಾಲ, ಮಾ.15: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಮುಖ್ಯ ರಸ್ತೆ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಸಂಪೂರ್ಣ ಹದಗೆಟ್ಟು ಈ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳಿಗೆ ಹಾಗೂ ದಿನಂಪ್ರತಿ ಸಂಚರಿಸುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯ ಮೂಲಕ 40 ಲಕ್ಷ ಅನುದಾನ ಒದಗಿಸಿ, ಸ್ಥಳೀಯ ಕಂಪೆನಿಗಳ ಸಿಎಸ್ಆರ್ ಅನುದಾನದ ಮೂಲಕ ಒಟ್ಟು 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗಿದೆ ಎಂದರು. ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಮಟ್ಟಾರು ವಸಂತ ಕಿಣಿ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಕಲ್ಪನಾ ಸುಧಾಮ, ನರಸಿಂಹ ನಾಯಕ್, ಟಿ.ಜಿ.ಹೆಗ್ಡೆ, ಹರೀಶ್ ಶೆಟ್ಟಿ, ಜಿಲ್ಲಾ ಸಣ್ಣಾ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳಾದ ವಿಶ್ವನಾಥ ಭಟ್, ಚಿತ್ರ ರಂಜನ್ ಭಟ್, ವಲ್ಲಭ್ ಭಟ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಕೃಷ್ಣ ಕುಲಾಲ್, ಸದಾನಂದ ಪ್ರಭು, ನಿತಿನ್ ಪೈ, ಪೃಥ್ವಿರಾಜ್ ಹಾಗೂ ವಿವಿಧ ಕಂಪೆನಿಗಳ ಪ್ರಮುಖರು ಉಪಸ್ಥಿತರಿದ್ದರು.
ಬಂಟಕಲ್ಲು ಶಾಲಾ ಶತ ಸಂಭ್ರಮ: ಶಾಲೆಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ
ಶಿರ್ವ, ಮಾ.15: ನೂರು ಸಂವತ್ಸರಗಳನ್ನು ಕಂಡ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿ.ಪ್ರಾ. ಶಾಲೆಯ ಶತ ಸಂಭ್ರಮದ ಶುಭಾವಸರದಲ್ಲಿ ಸುಮಾರು 5ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾದ ನೂತನ ಕಾಂಕ್ರಿಟ್ ರಸ್ತೆಯನ್ನು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ರವಿವಾರ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಅಂದಿನ ಹಿರಿಯರು ಮಕ್ಕಳ ಭವಿಷ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಊರಿ ಗೊಂದು ದೇವಾಲಯ ಮತ್ತು ವಿದ್ಯಾಲಯವನ್ನು ಅತ್ಯಂತ ಕಷ್ಟಕರ ಸನ್ನಿವೇಶದಲ್ಲೂ ಪ್ರಾರಂಭಿಸಿದ್ದು ಅವರ ದೂರ ದೃಷ್ಠಿತ್ವವನ್ನು ಸೂಚಿಸುತ್ತದೆ. ಈಗ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳು ನಡೆಯು ತ್ತಿದ್ದು, ಕ್ಷೇತ್ರದ ಕನ್ನಡ ಶಾಲೆಗಳ ಬಗ್ಗೆ ವಿಧಾನ ಸಭೆಯಲ್ಲೂ, ಶಿಕ್ಷಣ ಸಚಿವರಿಗೂ ವೈಯುಕ್ತಿಕವಾಗಿ ಗಮನಕ್ಕೆ ತರಲಾಗಿದೆ. ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗುತ್ತಿಗೆದಾರ ಸುನಿಲ್ ಅವರನ್ನು ಸನ್ಮಾನಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಶತಮಾನೋತ್ಸವ ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್, ಶತಮಾನೋತ್ಸವ ಸಮಿತಿ ಗೌರವ ಅಧ್ಯಕ್ಷ ದಾಮೋದರ ಅಚಾರ್ಯ ಪೊದಮಲೆ, ಉಪಾಧ್ಯಕ್ಷ ದಿನೇಶ ದೇವಾಡಿಗ,ಉಮೇಶ್ ರಾವ್, ಅನಂತರಾಮ ವಾಗ್ಲೆ, ಮಂಜುಳಾ ಆಚಾರ್ಯ, ಅರುಂದತಿ ಪ್ರಭು, ಶ್ರೀಕಾಂತ್ ಭಟ್, ರಾಘವೇಂದ್ರ ನಾಯಕ್ ಪಾಲಮೆ, ಡಾ.ವಿಠಲ್ ನಾಯಕ್ ಮೊದಲಾದವರು ಉಪಸ್ಥಿತ ರಿದ್ದರು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ನಿರೂಪಿಸಿದರು.
LPG ಸಿಲಿಂಡರ್ ಸಮಸ್ಯೆಯಾದ್ರೆ ಕಾಲ್ ಮಾಡಿ; ಸಹಾಯವಾಣಿ ಆರಂಭಿಸಿದ ಕರ್ನಾಟಕ ಆಹಾರ ಇಲಾಖೆ
ಎಲ್ಪಿಸಿ ಸಿಲಿಂಡರ್ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಇಲಾಖೆಯು ಸಹಾಯವಾಣಿ ಆರಂಭಿಸಿದೆ. ನಾಗರೀಕರು ಯಾವುದೇ ದೂರುಗಳಿದ್ದರೂ ಕರೆ ಮಾಡಿ ಸಲ್ಲಿಕೆ ಮಾಡಬಹುದು ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಿಳಿದ್ದಾರೆ. ದುಪಟ್ಟು ಬೆಲೆಗೆ ಸಿಲಿಂಡರ್ ಮಾರಾಟ ಮಾಡಿದ್ರೆ ಕ್ರಮ ಕೈಗೊಳ್ಳಲು ಆಹಾರ ಇಲಾಖೆಯು ಮುಂದಾಗಿದೆ. ಇನ್ನು ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ 11 ಲಕ್ಷ ಗೃಹಬಳಕೆಯ, 20 ಸಾವಿರ ವಾಣಿಜ್ಯ ಬಳಕೆಯ ಸಿಲಿಂಡರ್ ಹಂಚಿಕೆ ಮಾಡಲಾಗಿದೆ.
ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ಫೈನಲ್ | ಮೆಡ್ವೆಡೆವ್- ಸಿನ್ನರ್ ಮುಖಾಮುಖಿ
ಇಂಡಿಯನ್ ವೆಲ್ಸ್ (ಕ್ಯಾಲಿಫೋರ್ನಿಯ), ಮಾ. 15: ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಶನಿವಾರ ರಶ್ಯದ ಡನೀಲ್ ಮೆಡ್ವೆಡೆವ್ ಸ್ಪೇನ್ನ ಅಗ್ರ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಝ್ಗೆ ವರ್ಷದ ಮೊದಲ ಸೋಲುಣಿಸಿ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ್ದಾರೆ. ಫೈನಲ್ನಲ್ಲಿ ಅವರು ಇಟಲಿಯ ಎರಡನೇ ಶ್ರೇಯಾಂಕದ ಜನ್ನಿಕ್ ಸಿನ್ನರ್ರನ್ನು ಎದುರಿಸಲಿದ್ದಾರೆ. ಸೆಮಿಫೈನಲ್ನಲ್ಲಿ 11ನೇ ಶ್ರೇಯಾಂಕದ ಮೆಡ್ವೆಡೆವ್, ಕಾರ್ಲೋಸ್ ಅಲ್ಕರಾಝ್ರನ್ನು 6-3, 7-6(3) ಸೆಟ್ಗಳಿಂದ ಸೋಲಿಸಿದರು. ಈ ವರ್ಷ ಈ ಪಂದ್ಯಕ್ಕೆ ಮುನ್ನ, ಅಲ್ಕರಾಝ್ ನಿರಂತರವಾಗಿ 16 ಪಂದ್ಯಗಳನ್ನು ಗೆದ್ದಿದ್ದರು. ಈ ಅವಧಿಯಲ್ಲಿ ಅವರು ಆಸ್ಟ್ರೇಲಿಯನ್ ಓಪನ್ ಮತ್ತು ಖತರ್ ಓಪನ್ ಪ್ರಶಸ್ತಿಗಳನ್ನು ತನ್ನ ಮುಡಿಗೆ ಏರಿಸಿಕೊಂಡಿದ್ದರು. ಆದರೆ, ಅಲ್ಕರಾಝ್-ಸಿನ್ನರ್ ಫೈನಲ್ ಸಾಧ್ಯತೆಯನ್ನು ಮೆಡ್ವೆಡೆವ್ ತಳ್ಳಿಹಾಕಿದರು. ಅಲ್ಕರಾಝ್ ವಿರುದ್ಧದ ಕೊನೆಯ ನಾಲ್ಕು ಮುಖಾಮುಖಿಗಳಲ್ಲಿ ಮೆಡ್ವೆಡೆವ್ ಸೋಲನುಭವಿಸಿದ್ದರು. ಇದರಲ್ಲಿ 2024ರಲ್ಲಿ ಇಂಡಿಯನ್ ವೆಲ್ಸ್ ಫೈನಲ್ನಲ್ಲಿ ಅನುಭವಿಸಿದ ಸೋಲು ಕೂಡ ಸೇರಿದೆ. 2023ರ ಯುಎಸ್ ಓಪನ್ ಸೆಮಿಫೈನಲ್ ಬಳಿಕ, ಇದು ಅಲ್ಕರಾಝ್ ವಿರುದ್ಧ ಮೆಡ್ವೆಡೆವ್ರ ಮೊದಲ ಗೆಲುವಾಗಿದೆ. ಇನ್ನೊಂದು ಸೆಮಿಫೈನಲ್ನಲ್ಲಿ, ಜನ್ನಿಕ್ ಸಿನ್ನರ್ ಜರ್ಮನಿಯ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ರನ್ನು 6-2, 6-4 ಸೆಟ್ಗಳಿಂದ ಪರಾಭವಗೊಳಿಸಿದರು. ಸಿನ್ನರ್, ಝ್ವೆರೆವ್ರನ್ನು ಬೇಗನೇ, ಅಂದರೆ ಒಂದು ಗಂಟೆ 23 ನಿಮಿಷಗಳಲ್ಲಿ ಮಣಿಸಿದರು. ಝ್ವೆರೆವ್ ವಿರುದ್ಧ ಸಿನ್ನರ್ ಆರು ಏಸ್ಗಳನ್ನು ಸಿಡಿಸಿದರು. ಈ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಮೆಡ್ವೆಡೆವ್ ಮತ್ತು ಸಿನ್ನರ್ ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಈವರೆಗೆ, ಮೆಡ್ವೆಡೆವ್ ಆಗಲಿ, ಸಿನ್ನರ್ ಆಗಲಿ ಒಂದು ಸೆಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಮೆಡ್ವೆಡೆವ್ ವಿರುದ್ಧದ ಕೊನೆಯ ಮೂರು ಪಂದ್ಯಗಳನ್ನು ಸಿನ್ನರ್ ಗೆದ್ದಿದ್ದಾರೆ. ಅದರಲ್ಲಿ, 2024ರ ಯುಎಸ್ ಓಪನ್ ಕ್ವಾರ್ಟರ್ಫೈನಲ್ ಸೇರಿದೆ. ಟೌನ್ಸೆಂಡ್, ಸಿನಿಯಕೋವ ಜೋಡಿಗೆ ಮಹಿಳೆಯರ ಡಬಲ್ಸ್ ಪ್ರಶಸ್ತಿ ಆ್ಯಂಡ್ರಿಯೋಝಿ, ಮ್ಯಾನುಯೆಲ್ ಜೋಡಿಗೆ ಪುರುಷರ ಡಬಲ್ಸ್ ಪ್ರಶಸ್ತಿ ಬೆಲಿಂಡಾ, ಫ್ಲಾವಿಯೊ ಜೋಡಿಗೆ ಮಿಶ್ರ ಡಬಲ್ಸ್ ಕಿಕರ್/ಇಂಡಿಯನ್ ವೆಲ್ಸ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಟೇಲರ್ ಟೌನ್ಸೆಂಡ್ ಮತ್ತು ಕ್ಯಾಟರೀನಾ ಸಿನಿಯಕೋವ ಜೋಡಿ ಗೆದ್ದಿದೆ. ಶನಿವಾರ ನಡೆದ ಫೈನಲ್ನಲ್ಲಿ ಈ ಜೋಡಿಯು ಆನಾ ಡನಿಲಿನಾ ಮತ್ತು ಅಲೆಕ್ಸಾಂಡ್ರಾ ಕ್ರೂನಿಕ್ ಜೋಡಿಯನ್ನು 7-6 (4), 6-4 ಸೆಟ್ಗಳಿಂದ ಪರಾಭವಗೊಳಿಸಿದೆ. ಇದು ಇಂಡಿಯನ್ ವೆಲ್ಸ್ನಲ್ಲಿ ಟೌನ್ಸೆಂಡ್ರ ಮೊದಲ ಮತ್ತು ಸಿನಿಯಕೋವರ ಎರಡನೇ ಪ್ರಶಸ್ತಿಯಾಗಿದೆ. 2023ರಲ್ಲಿ, ಸಿನಿಯಕೋವ ತನ್ನ ದೀರ್ಘಕಾಲೀನ ಜೋಡಿ ಬಾರ್ಬರಾ ಕ್ರೆಜ್ಸಿಕೋವ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು. ಶನಿವಾರ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೈಡೊ ಆ್ಯಂಡ್ರಿಯೋಝಿ ಮತ್ತು ಮ್ಯಾನುಯೆಲ್ ಗಿನಾರ್ಡ್ ಜೋಡಿ ಗೆದ್ದಿದೆ. ಈ ಜೋಡಿಯು ಆರ್ತರ್ ರಿಂಡರ್ನೆಕ್ ಮತ್ತು ವ್ಯಾಲೆಂಟಿನ್ ವಷೆರೊಟ್ ಜೋಡಿಯನ್ನು 7-6(3), 6-3 ಸೆಟ್ಗಳಿಂದ ಮಣಿಸಿದೆ. ಮಿಶ್ರ ಡಬಲ್ಸ್ನಲ್ಲಿ, ಬೆಲಿಂಡಾ ಬೆನ್ಸಿಕ್ ಮತ್ತು ಫ್ಲಾವಿಯೊ ಕೊಬೊಲಿ ಜೋಡಿಯು ಪ್ರಶಸ್ತಿ ಪಡೆದಿದೆ. ಫೈನಲ್ನಲ್ಲಿ ಈ ಜೋಡಿಯು ಅಗ್ರ ಶ್ರೇಯಾಂಕದ ಗ್ಯಾಬ್ರಿಯೆಲಾ ಡಬ್ರೊವ್ಸ್ಕಿ ಮತ್ತು ಲಾಯ್ಡ್ ಗ್ಲಾಸ್ಪೂಲ್ ಜೋಡಿಯನ್ನು 6-3, 2-6, 10-7 ಸೆಟ್ಗಳಿಂದ ಸೋಲಿಸಿದೆ.
Kalaburagi | ಹಳೆಯ ಗೆಳೆಯರ ಸಮ್ಮಿಲನ : ಸಾಧಕರಿಗೆ ಅಭಿನಂದನೆ
ಕಲಬುರಗಿ: ಆಧುನಿಕ ಜೀವನದ ಧಾವಂತದಲ್ಲಿ ಮಾನವ ಸಂಬಂಧಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದಿನ ಸ್ನೇಹವನ್ನು ಉಳಿಸಿಕೊಂಡು ಗೆಳೆಯರ ಸಾಧನೆಗಳನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸುವುದು ಅಪರೂಪದ ಸಂಗತಿಯಾಗಿದೆ ಎಂದು ಪತ್ರಾಗಾರ ಇಲಾಖೆ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಹೇಳಿದರು. ನಗರದ ನೂತನ ವಿದ್ಯಾಲಯದ ಸಭಾಭವನದಲ್ಲಿ ಹಳೆ ವಿದ್ಯಾರ್ಥಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಾಧಕರಿಗೆ ಸ್ನೇಹಿತರು ಹಮ್ಮಿಕೊಂಡ ಅಭಿನಂದನಾ ಸಮಾರಂಭವು ಇಂದಿನ ಸಮಾಜದಲ್ಲಿ ಸ್ನೇಹ ಮತ್ತು ಸಂಬಂಧಗಳಿಗೆ ಹೊಸ ಅರ್ಥ ನೀಡಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ವಿದ್ಯಾಲಯದ ಪ್ರಾಂಶುಪಾಲ ಡಾ.ದಯಾನಂದ ಶಾಸ್ತ್ರಿ ವಹಿಸಿದ್ದರು. ಸುಭಾಷ್ ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ–ಕಲಬುರಗಿ ಹಾಗೂ ನೂತನ ವಿದ್ಯಾಲಯದ ನಿರ್ದೇಶಕರಾದ ಡಾ.ಗೋವಿಂದ್ ರಾಜ್ ಪೂಜಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಗ್ರಂಥಪಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಪರಮಾನಂದ ಹಂಗರಗಿ ಹಾಗೂ ಜಿಲ್ಲಾಮಟ್ಟದ ಜ್ಯೋತಿಬಾ ಫುಲೆ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ ಡಿ.ಜಾಧವ, ಜ್ನ್ಯಾನ ಜ್ಯೋತಿ ಮತ್ತು ಕಲ್ಯಾಣ ಕರ್ನಾಟಕ ಪ್ರಾಂತ್ಯದ ಶ್ರೇಷ್ಠ ವಿದ್ಯಾಲಯ ಪ್ರಶಸ್ತಿ ಪಡೆದ ಎ.ಕೆ.ಆರ್. ದೇವಿ ಕಾಲೇಜಿನ ಪ್ರಾಂಶುಪಾಲ ವಿದ್ಯಾಸಾಗರ್ ದೇಶಮುಖ ಅವರನ್ನು ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ನೀಷಾದ ಮತ್ತು ನಿನಾದ ಮುಡಬಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಡಾ.ಎನ್.ಎಸ್.ಕುಲಕರ್ಣಿ ಸ್ವಾಗತಿಸಿದರು, ಶಿಕ್ಷಕ ಶಂಕರ ಬಿರಾದಾರ ಹಾಗೂ ಬಸವರಾಜ ಭಾಗಾ ಕಾರ್ಯಕ್ರಮ ನಿರೂಪಣೆ ನಡೆಸಿದರು. ದಾನಪ್ಪ ವಗ್ಗಿ ವಂದಿಸಿದರು. ಡಾ. ಲಿಂಗಾಬಸವ ಪಾಟೀಲ, ಗುಂಡೂರಾವ. ಹುಮನಾಬಾದ, ಶಿವಕುಮಾರ ಪಾಟೀಲ, ಎಂ ಬಿ ರಾಜ್ , ನಾಗೇಂದ್ರ ಪೂಜಾರಿ, ಸೂರ್ಯಕಾಂತ ಉಮಾಪುರೆ, ಜಿತೇಂದ್ರ ಬೆಳಗುಂದಿ, ಮಹೇಂದ್ರ ಅಯ್ಯಳಕರ್, ರಾಜೇಶ್ ರಾಸೂರ್, ಸಂಜೀವಕುಮಾರ ಜೋಗ, ಶರಣು ಜೇವರ್ಗಿ ಉಪಸ್ಥಿತರಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸರ್ಫರಾಝ್ ಅಹ್ಮದ್
ಕರಾಚಿ, ಮಾ. 15: ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ಕೀಪರ್-ಬ್ಯಾಟರ್ ಸರ್ಫರಾಝ್ ಅಹ್ಮದ್ ರವಿವಾರ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಎರಡು ಪ್ರಮುಖ ಐಸಿಸಿ ಪಂದ್ಯಾವಳಿಗಳ ಫೈನಲ್ಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಗೆದ್ದಿರುವ ಪಾಕಿಸ್ತಾನ ತಂಡದ ಏಕೈಕ ನಾಯಕನಾಗಿದ್ದಾರೆ. ಮೂವತ್ತೊಂಭತ್ತು ವರ್ಷದ ಸರ್ಫರಾಜ್ ಪಾಕಿಸ್ತಾನದ ಪರವಾಗಿ ಕೊನೆಯದಾಗಿ 2023 ಡಿಸೆಂಬರ್ನಲ್ಲಿ ಪರ್ತ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸರ್ಫರಾಜ್ ತನ್ನ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ. ಅವರನ್ನು ಪಾಕಿಸ್ತಾನಿ ಟೆಸ್ಟ್ ತಂಡದ ಪ್ರಧಾನ ಕೋಚ್ ಆಗಿ ಪಿಸಿಬಿಯು ನೇಮಿಸುವ ಸಾಧ್ಯತೆಯಿದೆ ಎಂದು ಮೂಲವೊಂದು ತಿಳಿಸಿದೆ. ವಿಕೆಟ್ಕೀಪರ್-ಬ್ಯಾಟರ್ ಸರ್ಫರಾಝ್ ಅಹ್ಮದ್ 54 ಟೆಸ್ಟ್ಗಳು, 117 ಏಕದಿನ ಪಂದ್ಯಗಳು ಮತ್ತು 61 ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಎಲ್ಲಾ ಮೂರು ಮಾದರಿಗಳ ಕ್ರಿಕೆಟ್ನಲ್ಲಿ 100 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ.
IPL ಬಳಿಕ 8 ತಂಡಗಳ ಟಿ20 ಮುಂಬೈ ಲೀಗ್ : ಈ ಬಾರಿ 3 ತಂಡಗಳ ಮಹಿಳಾ ಲೀಗ್ಗೂ ಚಾಲನೆ
ಮುಂಬೈ, ಮಾ. 15: ಎಂಟು ತಂಡಗಳನ್ನು ಒಳಗೊಂಡ ಟಿ20 ಮುಂಬೈ ಲೀಗ್ನ ಪುರುಷರ ಪಂದ್ಯಾವಳಿಯು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಕ್ತಾಯದ ಬಳಿಕ ನಡೆಯಲಿದೆ. ಅದೇ ವೇಳೆ, ಇದೇ ಮೊದಲ ಬಾರಿಗೆ ಮೂರು ತಂಡಗಳನ್ನು ಒಳಗೊಂಡ ಮಹಿಳಾ ಲೀಗ್ ಕೂಡ ಜೊತೆ ಜೊತೆಯಾಗಿ ನಡೆಯಲಿದೆ. ಹಲವು ವರ್ಷಗಳ ಸ್ಥಾಗಿತ್ಯದ ಬಳಿಕ, ಪಂದ್ಯಾವಳಿಯು ಕಳೆದ ವರ್ಷ ತನ್ನ ಮೂರನೇ ಆವೃತ್ತಿಯನ್ನು ಕಂಡಿತ್ತು. ಕಳೆದ ವರ್ಷ, ಐಪಿಎಲ್ ಮುಕ್ತಾಯದ ಬಳಿಕ ಈ ಪಂದ್ಯಾವಳಿ ನಡೆದಿತ್ತು. ಮುಂಬೈಯ ಆಟಗಾರರ ಬೆಳವಣಿಗೆಗೆ ಈ ಪಂದ್ಯಾವಳಿಯು ಅಗತ್ಯವಾಗಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮುಂಬೈ ಆಟಗಾರ ರೋಹಿತ್ ಶರ್ಮಾ ಲೀಗ್ನ್ನು ಘೋಷಿಸುತ್ತಾ ಹೇಳಿದರು. ಈ ಋತುವಿನಲ್ಲಿ ಮಹಿಳಾ ಲೀಗ್ ಕೂಡ ಆರಂಭಗೊಳ್ಳುತ್ತಿರುವುದು ಮುಂಬೈ ಕ್ರಿಕೆಟ್ನ ಒಂದು ಮಹತ್ವದ ಹೆಗ್ಗುರುತಾಗಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದರು.
ಬಿಡದಿ ರೆಸಾರ್ಟ್ನಲ್ಲಿರುವ ಒಡಿಶಾದ ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷಕ್ಕೆ ಯತ್ನ: ಇಬ್ಬರು ವಶಕ್ಕೆ
ಬೆಂಗಳೂರು : ರಾಜ್ಯಸಭಾ ಚುನಾವಣೆ ಹಿನ್ನೆಲೆ ಬಿಡದಿ ವಂಡರ್ಲಾ ರೆಸಾರ್ಟ್ನಲ್ಲಿರುವ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಅಡ್ಡ ಮತದಾನಕ್ಕಾಗಿ ತಲಾ 5 ಕೋಟಿ ರೂ. ಲಂಚದ ಆಮಿಷ ನೀಡಲು ಯತ್ನಿಸಿದ್ದ ಆರೋಪದಡಿ ಖಾಲಿ ಚೆಕ್ ಸಮೇತ ಇಬ್ಬರನ್ನು ಬಿಡದಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಮಾ.15ರ ರವಿವಾರ ಬೆಳಗ್ಗೆ ಒಡಿಶಾದಿಂದ ಮೂವರು ವ್ಯಕ್ತಿಗಳು, ಓರ್ವ ಸ್ಥಳೀಯ ವ್ಯಕ್ತಿ ಜೊತೆ ಸೇರಿ ರೆಸಾರ್ಟ್ನಲ್ಲಿರುವ ಶಾಸಕರ ಖರೀದಿಗೆ ಯತ್ನಿಸಿದ್ದು, ಈ ವಿಷಯ ತಿಳಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನು ಹಿಡಿದಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡರು ನೀಡಿದ ದೂರಿನ ಮೇರೆಗೆ ಬಿಡದಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳಲ್ಲಿ ಓರ್ವನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಪರಾಜಿತ ಲೋಕಸಭಾ ಅಭ್ಯರ್ಥಿಯಾಗಿರುವ ಮೂರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಬಂಧಿತರ ಬಳಿ ಖಾಲಿ ಚೆಕ್ಗಳು ಸಹ ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ಆಡಳಿತಾರೂಢ ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿಯ ಪರವಾಗಿ ಅಡ್ಡಮತದಾನದ ಆತಂಕ ಹಿನ್ನೆಲೆಯಲ್ಲಿ ಮಾ.12ರಂದು ಒಡಿಶಾದಿಂದ 14 ಕಾಂಗ್ರೆಸ್ ಶಾಸಕರು ರಾಮನಗರದ ಬಿಡದಿಯಲ್ಲಿರುವ ವಂಡರ್ಲಾ ರೆಸಾರ್ಟ್ಗೆ ಬಂದು ವಾಸ್ತವ್ಯ ಹೂಡಿದ್ದರು.
ನಿನ್ನ ಹಣೆಗೆ ಗುಂಡಿಕ್ಕುತ್ತೇವೆ : ಗಾಯಕ ಬಾದಶಾಹ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಜೀವ ಬೆದರಿಕೆ
ಹೊಸದಿಲ್ಲಿ,ಮಾ.15: ತನ್ನ ನೂತನ ಹಾಡು ‘ಟಟೀರಿ’ಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಕುರಿತು ಆಕ್ಷೇಪಾರ್ಹ ಸಾಹಿತ್ಯ ಬಳಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಗಾಯಕ-ರ್ಯಾಪರ್ ಬಾದಶಾಹ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೀವ ಬೆದರಿಕೆಯನ್ನೊಡ್ಡಿದೆ. ಬಿಷ್ಣೋಯಿ ಗ್ಯಾಂಗ್ ಸದಸ್ಯರು ‘ನಿನ್ನ ಹಣೆಗೆ ಗುಂಡಿಕ್ಕುವುದಾಗಿ’ ಫೇಸ್ಬುಕ್ ಪೋಸ್ಟ್ನಲ್ಲಿ ಬಾದಶಾಹ್ಗೆ ಬೆದರಿಕೆ ಹಾಕಿದ್ದಾರೆ. ‘ಗಾಯಕ ಬಾದಶಾಹ್, ನೀವು ಹರ್ಯಾಣದ ಸಂಸ್ಕೃತಿಯನ್ನು ನಾಶಗೊಳಿಸಲು ಪ್ರಯತ್ನಿಸಿದ್ದೀರಿ. 2024ರಲ್ಲಿ ನಿಮ್ಮ ಕ್ಲಬ್ನಲ್ಲಿ ನಾವು ನಿಮಗೆ ಟ್ರೇಲರ್ ತೋರಿಸಿದ್ದೆವು; ಮುಂದಿನ ಸಲ ನೇರವಾಗಿ ನಿಮ್ಮ ಹಣೆಗೇ ಗುಂಡು ಹಾರಿಸುತ್ತೇವೆ’ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. 2024ರಲ್ಲಿ ಚಂಡೀಗಡದಲ್ಲಿ ಬಾದಶಾಹ್ ಒಡೆತನದ ‘ಸೆವಿಲ್ಲೆ ಬಾರ್ ಆ್ಯಂಡ್ ಲೌಂಜ್’ನ ಹೊರಗೆ ಸ್ಫೋಟ ಸಂಭವಿಸಿತ್ತು. ಲಾರೆನ್ಸ್ ಬಿಷ್ಣೋಯಿ ಜೊತೆ ಗುರುತಿಸಿಕೊಂಡಿರುವ ಕೆನಡಾ ಮೂಲದ ಗೋಲ್ಡಿ ಬ್ರಾರ್ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದ. ಫೇಸ್ಬುಕ್ ಪೋಸ್ಟ್ನಲ್ಲಿ ಬಿಷ್ಣಯಿ ಗ್ಯಾಂಗಿನ ಸದಸ್ಯರೆನ್ನಲಾಗಿರುವ ರಣದೀಪ್ ಮಲ್ಲಿಕ್ ಮತ್ತು ಅನಿಲ್ ಪಂಡಿತ್ ಅವರು ಇತ್ತೀಚಿಗೆ ಪಾಣಿಪತ್ನಲ್ಲಿ ವೆಸ್ಟರ್ನ್ ಯೂನಿಯನ್ ಕಚೇರಿಯ ಹೊರಗೆ ನಡೆದಿದ್ದ ಗುಂಡು ಹಾರಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಬಾದಶಾಹ್ ಅವರ ಇತ್ತೀಚಿನ ಹರ್ಯಾಣ್ವಿ ಹಾಡು ‘ಟಟೀರಿ’ ಆಕ್ಷೇಪಾರ್ಹ ಸಾಹಿತ್ಯ ಮತ್ತು ದೃಶ್ಯಗಳನ್ನು ಒಳಗೊಂಡಿದೆ ಎನ್ನಲಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಪಂಚಕುಲಾ ನಿವಾಸಿಯೋರ್ವರ ದೂರಿನ ಮೇರೆಗೆ ಬಾದಶಾಹ್ ವಿರುದ್ಧ ಪ್ರಕರಣವೂ ದಾಖಲಾಗಿದೆ. ಈ ಹಾಡು ಬಾದಶಾಹ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡ ಬೆನ್ನಲ್ಲೇ ವೈರಲ್ ಆಗಿತ್ತು. ಕಳೆದ ವಾರ ಕ್ಷಮೆ ಯಾಚಿಸಿದ್ದ ಬಾದಶಾಹ್, ಈ ಹಾಡಿನಿಂದ ಯಾರಿಗೂ ನೋವನ್ನುಂಟು ಮಾಡಲು ತಾನೆಂದಿಗೂ ಉದ್ದೇಶಿಸಿರಲಿಲ್ಲ ಎಂದು ಹೇಳಿದ್ದರು.
ಜೇವರ್ಗಿ| ಚಿರತೆ ಹೆಜ್ಜೆಗುರುತುಗಳು ಪತ್ತೆ : ಗ್ರಾಮಸ್ಥರಲ್ಲಿ ಆತಂಕ
ಕಲಬುರಗಿ: ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ತಡರಾತ್ರಿ ಗ್ರಾಮಕ್ಕೆ ನುಗ್ಗಿದ ಚಿರತೆ ಒಂದು ನಾಯಿಯ ಮೇಲೆ ದಾಳಿ ನಡೆಸಿದ ಪರಿಣಾಮ ಸ್ಥಳೀಯರು ಭಯಭೀತರಾಗಿದ್ದಾರೆ. ಘಟನೆಯ ನಂತರ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಚಿರತೆಯ ಹೆಜ್ಜೆಗುರುತುಗಳು ಪತ್ತೆಯಾಗಿದ್ದು, ನಾಯಿಯ ಮೇಲೆ ದಾಳಿ ನಡೆಸಿದ್ದು ಚಿರತೆಯೇ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಉಂಟಾಗಿದ್ದು,ಕೂಡಲೇ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರ ಭದ್ರತೆ ಕಲ್ಪಿಸಬೇಕೆಂದು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಬಾರಾಮತಿ ಉಪ ಚುನಾವಣೆ: ಸುನೇತ್ರಾ ಪವಾರ್ ಅವಿರೋಧ ಆಯ್ಕೆ ಸಾಧ್ಯತೆ
ಮುಂಬೈ: ಮಹಾರಾಷ್ಟ್ರದ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಮತದಾನ ನಿಗದಿಯಾಗಿದೆ. ಇದೇ ದಿನ ಅಹಿಲ್ಯಾನಗರ್ ಜಿಲ್ಲೆಯ ರಾಹುರಿ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದೆ. ಆ ಕ್ಷೇತ್ರ ಬಿಜೆಪಿ ಶಾಸಕ ಶಿವಾಜಿ ಕರ್ದಿಲೆ ಅವರ ನಿಧನದಿಂದ ಖಾಲಿಯಾಗಿದೆ. ಎನ್ಸಿಪಿ ಅಧ್ಯಕ್ಷರಾಗಿದ್ದ ಹಾಗೂ ಬಾರಾಮತಿ ಕ್ಷೇತ್ರದ ಎಂಟು ಬಾರಿ ಶಾಸಕರಾಗಿದ್ದ ಅಜಿತ್ ಪವಾರ್ (66) ಜನವರಿ 28ರಂದು ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ನಿಧನದ ಬಳಿಕ ಮೂರೇ ದಿನಗಳಲ್ಲಿ ಸುನೇತ್ರಾ ಪವಾರ್ ಅವರನ್ನು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ನಂತರ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಯಿತು. ಫೆಬ್ರವರಿ 26ರಂದು ಎನ್ಸಿಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೂ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಸುನೇತ್ರಾ ಪವಾರ್ ಪ್ರಸ್ತುತ ವಿಧಾನಸಭೆ ಅಥವಾ ವಿಧಾನ ಪರಿಷತ್ ಯಾವುದೇ ಸದನದ ಸದಸ್ಯೆಯಾಗಿಲ್ಲ. ಸಂವಿಧಾನಾತ್ಮಕವಾಗಿ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ಆರು ತಿಂಗಳೊಳಗೆ ಯಾವುದೇ ಒಂದು ಸದನಕ್ಕೆ ಅವರು ಆಯ್ಕೆಯಾಗಬೇಕು. ಈ ಹಿನ್ನೆಲೆಯಲ್ಲಿ ಬಾರಾಮತಿ ಉಪ ಚುನಾವಣೆ ಅವರಿಗೆ ಪ್ರಮುಖವಾಗಿದ್ದು, ಅವಿರೋಧ ಆಯ್ಕೆಯ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಲಯಗಳು ವಿಶ್ಲೇಷಿಸಿವೆ. ಇದೇ ವೇಳೆ, ತಮ್ಮ ರಾಜ್ಯಸಭಾ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಲಬುರಗಿ | ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪಂದ್ಯಾಟ : ಗುಲ್ಬರ್ಗಾ ವಿವಿಯ ಹ್ಯಾಂಡ್ಬಾಲ್ ತಂಡ ಭಾಗಿ
ಕಲಬುರಗಿ: ತಮಿಳುನಾಡಿನ ವೆಲ್ಲೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಸಂಸ್ಥೆಯಲ್ಲಿ ಮಾ.17 ರಿಂದ ಮಾ. 21ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಹ್ಯಾಂಡ್ಬಾಲ್ ಪುರುಷ ಕ್ರೀಡಾ ಪಂದ್ಯಾಟದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಹ್ಯಾಂಡ್ಬಾಲ್ ತಂಡ ಭಾಗವಹಿಸಲಿದೆ. ತಂಡದ ನಾಯಕ ಪ್ರಕಾಶ ಹಾಗೂ ಸದಸ್ಯರಾದ ಪ್ರಜ್ವಲ್, ಆದತ್ಯ, ಸೋಹಾಂ, ಸನಿಕುಮಾರ, ನಿತೀನ್, ಪ್ರಜ್ವಲ್, ಅಮೋಘ ಸಿದ್ದ, ಆಷಿಪ್ ಶಹಾ, ಮಾದೇಶ, ಶಿವರಾಜ ಕಾರ್ತಿಕ ಭಾಗವಹಿಸಲಿದ್ದಾರೆ. ತಂಡದ ವ್ಯವಸ್ಥಾಪಕ/ತರಬೇತಿದಾರರಾಗಿ ಎಂಜೆಪಿ ಆರ್ಟ್ಸ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಡಾ. ಮಧುಸೂದನ ರೆಡ್ಡಿ ತೆರಳುವರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಹನುಮಂತ ಎಸ್. ಜಂಗೆ, ಯೋಗ ತಾಂತ್ರಿಕ ಸಹಾಯಕ ಡಾ. ಚಂದ್ರಕಾoತ ಬಿರಾದಾರ, ಪ್ರಶಾಂತ್ ಕುಮಾರ್ ಡಿ, ಅರುಣ್ ಕುಮಾರ್ ಎಚ್ ಅವರು ತಂಡಕ್ಕೆ ಶುಭ ಹಾರೈಸಿದ್ದಾರೆ.
ಹೋರಾಟಗಾರರ ಬಂಧನದ ವಿವರ ಕೇಳಿದ ದಿಲ್ಲಿ ಹೈಕೋರ್ಟ್; ಸಿಸಿಟಿವಿ ದೃಶ್ಯ ಸಂರಕ್ಷಣೆಗೂ ಸೂಚನೆ
ಹೊಸದಿಲ್ಲಿ: ಕಳೆದ ವಾರ ಹೋರಾಟಗಾರರನ್ನು ಯಾವ ಸನ್ನಿವೇಶದಲ್ಲಿ ಹಾಗೂ ಯಾವ ಕಾನೂನುಬದ್ಧ ಅಧಿಕಾರದಡಿ ಬಂಧಿಸಲಾಗಿದೆ ಎಂಬುದನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ರವಿವಾರ ದಿಲ್ಲಿ ಹೈಕೋರ್ಟ್ ಸೂಚಿಸಿದೆ. ರವಿವಾರ ನಡೆದ ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಹಾಗೂ ರವೀಂದರ್ ದುಡೇಜಾರನ್ನೊಳಗೊಂಡ ನ್ಯಾಯಪೀಠ, ಹೋರಾಟಗಾರರನ್ನು ಕರೆದೊಯ್ಯುವ ಸಂದರ್ಭದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು. ವಿಶೇಷ ಘಟಕ ಕಚೇರಿಯ ಸಿಸಿಟಿವಿ ದೃಶ್ಯಾವಳಿ ಕುರಿತು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಹೇಳಿದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು. ಬಂಧಿತರನ್ನೆಲ್ಲ ಬಿಡುಗಡೆ ಮಾಡಲಾಗಿದೆ ಎಂದು ದಿಲ್ಲಿ ಪೊಲೀಸರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣ ಅಷ್ಟು ಸರಳವಾಗಿಲ್ಲ ಎಂದು ಹೇಳಿ, ಎಫ್ಐಆರ್ ಗೋಪ್ಯವಾಗಿರುತ್ತದೆ ಎಂಬ ವಾದವನ್ನೂ ಮಂಡಿಸಿದರು. ಬಂಧಿತರ ಪೈಕಿ ಒಬ್ಬರು ಇನ್ನೂ ಬಿಡುಗಡೆಯಾಗಿಲ್ಲ ಎಂಬ ಆರೋಪದ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ಮಾರ್ಚ್ 27ಕ್ಕೆ ಪಟ್ಟಿ ಮಾಡಿತು. ಆದರೆ, ಎಲ್ಲ ಹೋರಾಟಗಾರರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಪುನರುಚ್ಚರಿಸಿದರು. ಈ ವೇಳೆ, “ನೀವು ಅವರನ್ನು ಪತ್ತೆಹಚ್ಚಬೇಕು” ಎಂದು ನ್ಯಾಯಪೀಠ ದಿಲ್ಲಿ ಪೊಲೀಸರಿಗೆ ಸೂಚಿಸಿತು. ದಯಾಳ್ ಸಿಂಗ್ ಕಾಲೇಜು ಮತ್ತು ವಿಜಯನಗರ ಪ್ರದೇಶಗಳಿಂದ ಸುಮಾರು ಹತ್ತು ಮಂದಿ ಹೋರಾಟಗಾರರನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ವಕೀಲರು ಆರೋಪಿಸಿದರು. ಅರ್ಜಿದಾರರಾದ ಸಾಗರಿಕಾ ರಜೋರಾ ಅವರ ಸಹೋದರಿ ಲಕ್ಷಿತಾ ರಜೋರಾರನ್ನು ಸಾಮಾನ್ಯ ಉಡುಪಿನಲ್ಲೇ ಪೊಲೀಸರು ಕರೆದೊಯ್ದಿದ್ದಾರೆ ಎಂದು ವಕೀಲ ಶಾರೂಖ್ ಅಲಮ್ ದೂರಿದರು. ಅರ್ಜಿದಾರ ಎಹ್ಸಾನುಲ್ ಹಕ್ ಪರವಾಗಿ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವ್ಸ್ ಹಾಜರಾಗಿ, “ಪರಿಸ್ಥಿತಿ ಕಳವಳಕಾರಿಯಾಗಿದೆ. ಎಲ್ಲ ಎಫ್ಐಆರ್ ಪ್ರತಿಗಳನ್ನು ನಮಗೆ ನೀಡುವಂತೆ ಪೊಲೀಸರಿಗೆ ಸೂಚಿಸಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ತಳ್ಳಿ ಹಾಕಿದ ಪೊಲೀಸರು, ಎಫ್ಐಆರ್ ಗೋಪ್ಯ ಸ್ವರೂಪ ಹೊಂದಿದೆ ಎಂದು ಪ್ರತಿವಾದ ಮಂಡಿಸಿದರು.
ಯಡ್ರಾಮಿ | ಮಾಗಣಗೇರಿ ಶಾಲೆಗೆ ಡಿಜಿಟಲ್ ಬೋರ್ಡ್ ಹಸ್ತಾಂತರ
ಯಡ್ರಾಮಿ: ಮಕ್ಕಳಲ್ಲಿ ಸಮಯಪ್ರಜ್ಞೆ ಇರಬೇಕು. ಅಂದಿನ ಪಾಠವನ್ನು ಅಂದೇ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಳ್ಳಬೇಕು. ಉತ್ತಮ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ದೆ ಮತ್ತು ನಿಷ್ಠೆಯಿಂದ ಕಲಿಯಬೇಕು. ಆಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಯುವಾ ಬೆಂಗಳೂರು ಟ್ರಸ್ಟ್ ಸಂಸ್ಥಾಪಕ ಜಿ.ಕಿರಣ್ ಸಾಗರ್ ತಿಳಿಸಿದರು. ತಾಲೂಕಿನ ಮಾಗಣಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಯುವಾ ಬೆಂಗಳೂರು ಟ್ರಸ್ಟ್ ಹಾಗೂ ಡೈರಿ ಡೇ ಐಸ್ಕ್ರೀಮ್ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿಜಿಟಲ್ ಬೋರ್ಡ್ನ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯುವಾ ಬೆಂಗಳೂರು ಟ್ರಸ್ಟ್ ನ ಅಧ್ಯಕ್ಷ ಬಿ.ವಿ. ಸುನಿಲ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಇಂದಿನ ಸ್ಪರ್ಧಾ ಯುಗದಲ್ಲಿ ನಗರ ಪ್ರದೇಶದಲ್ಲಿ ಕಲಿತ ಮಕ್ಕಳೊಂದಿಗೆ ಉನ್ನತ ಶಿಕ್ಷಣ ಉದ್ಯೋಗಗಳಿಗಾಗಿ ಸ್ಪರ್ಧೆ ಎದುರಿಸುವುದು ಕಷ್ಟಕರವಾಗಿದೆ. ಮಕ್ಕಳು ಕಲಿಕೆಯಲ್ಲಿ ಶಿಸ್ತು, ಸಮಯ ಪ್ರಜ್ಞೆಯಂತಹ ಗುಣಗಳನ್ನು ರೂಢಿಸಿಕೊಂಡು ಆತ್ಮವಿಶ್ವಾಸದಿಂದ ಕಲಿಯಬೇಕು ಎಂದು ಅವರು ತಿಳಿಸಿದರು. ಪ್ರಭಾರಿ ಮುಖ್ಯಶಿಕ್ಷಕ ಡಿ.ಸಿ.ಜಮಾದಾರ ಮಾತನಾಡಿದರು. ಈ ವೇಳೆ ಶಾಲೆಯ ಮಕ್ಕಳು ಹಾಗೂ ಶಾಲೆ ಶಿಕ್ಷಕರು ಸೇರಿದಂತೆ ಇತರಿದ್ದರು.
ಸರಕಾರದ ನೀತಿಯು ದೇಶದಲ್ಲಿ ಇಂಧನ ಕೊರತೆಯನ್ನು ಸೃಷ್ಟಿಸುತ್ತಿದೆ: ಯಾಸ್ಮಿನ್ ಇಸ್ಲಾಂ ಆರೋಪ
ಹೊಸದಿಲ್ಲಿ: ವುಮೆನ್ ಇಂಡಿಯಾ ಮೂವ್ಮೆಂಟ್ನ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅವರು ಸರ್ಕಾರದ ನೀತಿಗಳು ಮತ್ತು ನಿಯಂತ್ರಣದ ವೈಫಲ್ಯಗಳು ದೇಶದಲ್ಲಿ ಇಂಧನ ಕೊರತೆಯನ್ನು ಉಂಟುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಸಾಮಾನ್ಯ ಜನರು ಆರ್ಥಿಕ ಸಂಕಷ್ಟ ಮತ್ತು ಹಸಿವಿನತ್ತ ತಳ್ಳಲ್ಪಡುತ್ತಿದ್ದಾರೆ ಎಂದು ಅವರು ಹೇಳಿದರು. ಅಡುಗೆ ಅನಿಲ ಸೇರಿದಂತೆ ಅಗತ್ಯ ಇಂಧನಗಳನ್ನು ಪಡೆಯುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿರುವುದು ಸಾಮಾನ್ಯ ನಾಗರಿಕರ ದಿನನಿತ್ಯದ ಜೀವನವನ್ನು ನೇರವಾಗಿ ಪ್ರಭಾವಿತಗೊಳಿಸುತ್ತಿದೆ, ಇದು ತಪ್ಪಿಸಿಕೊಳ್ಳಲಾಗದ ಸಂಕಷ್ಟವಲ್ಲ; ಬದಲಾಗಿ ಆಡಳಿತ ಮತ್ತು ನಿಯಂತ್ರಣದಲ್ಲಿ ಇರುವ ಗಂಭೀರ ಕೊರತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಇಸ್ರೇಲ್–ಇರಾನ್ ಸಂಘರ್ಷದ ಕುರಿತು ಉಲ್ಲೇಖಿಸಿದ ಯಾಸ್ಮಿನ್ ಇಸ್ಲಾಂ ಅವರು, ಅಡುಗೆ ಅನಿಲ ಸೇರಿದಂತೆ ಇತರೆ ಇಂಧನಗಳ ಅಕ್ರಮ ಮಾರುಕಟ್ಟೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಹೇಳಿದರು. “ಭಾರತದ ಇಂಧನ ಭದ್ರತೆ ಬಲವಾಗಿದೆ” ಹಾಗೂ “ದೇಶಕ್ಕೆ ಅಗತ್ಯವಾದ ಅನಿಲದ ದೊಡ್ಡ ಭಾಗವನ್ನು ದೇಶದಲ್ಲೇ ಉತ್ಪಾದಿಸಲಾ ಗುತ್ತಿದೆ” ಎಂಬ ಸರ್ಕಾರದ ಹೇಳಿಕೆಗಳು ಈಗಿನ ಬೆಲೆ ಏರಿಕೆ ಮತ್ತು ಲಭ್ಯತೆಯ ಕೊರತೆಯ ವಾಸ್ತವಿಕತೆಗೆ ಸಂಪೂರ್ಣವಾಗಿ ವಿರುದ್ಧವಾಗಿವೆ. ಇಂತಹ ಹೇಳಿಕೆಗಳು ಪೊಳ್ಳು ಮಾತುಗಳಂತೆ ಕಾಣಿಸುತ್ತಿವೆ ಎಂದು ಅವರು ಟೀಕಿಸಿದರು. ಇದು ಜನರಿಗೆ ಆಗುತ್ತಿರುವ ಅನ್ಯಾಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಂತಹ ಪಾರದರ್ಶಕ ಮತ್ತು ಜನಪರ ಇಂಧನ ವಿತರಣಾ ವ್ಯವಸ್ಥೆಯನ್ನು ಸರ್ಕಾರ ತಕ್ಷಣ ಯೋಜಿಸಬೇಕು. ಜೊತೆಗೆ ಅಕ್ರಮ ಮಾರುಕಟ್ಟೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Kalaburagi | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಕಲಬುರಗಿ: ನಗರದ ದರಿಯಾಪುರ ಬಡಾವಣೆಯಲ್ಲಿರುವ ಶ್ರೀ ಚಂದ್ರಶೇಖರ್ ಡಿ.ಪಾಟೀಲ್ ರೇವೂರ್ ಸ್ಮಾರಕ ಔಷಧ ಭವನದಲ್ಲಿ ಸಂಪೂರ್ಣೇಶ್ವರಿ ಮಹಿಳಾ ಸಬಲೀಕರಣ ಒಕ್ಕೂಟದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಮಾಜ ಸೇವಕಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕರ್ನಾಟಕ ಬಿಜೆಪಿ ವಕ್ತಾರ ಡಾ.ಸುಧಾ ಆರ್.ಹಾಲಕಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಹತ್ತರ ಸಾಧನೆಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ “ಸಂಪೂರ್ಣೇಶ್ವರಿ ಸ್ಫೂರ್ತಿದಾಯಕ ಮಹಿಳಾ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಅದರಂತೆಯೇ ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ಮೇಯರ್ ತೃಪ್ತಿ ಎಸ್. ಲಾಖೆ, ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ, ಡಾ. ಸ್ನೇಹಾ ಕೆ., ಕವಿತಾ ಚೌಹಾಣ್, ಡಾ. ಶ್ವೇತಾ ನಿಧಿ, ಅಮೂಲ್ಯ ಶೆಟ್ಟಿ, ಸ್ನೇಹಲ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
LPG ಬುಕಿಂಗ್ 77 ಲಕ್ಷಕ್ಕೆ ಇಳಿಕೆ; ಭೀತಿ ಕುಂಠಿತ: ಕೇಂದ್ರ ಸರಕಾರ
ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಪೂರೈಕೆ ಸ್ಥಿರವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದ್ದ LPG ಬುಕಿಂಗ್ ಪ್ರಮಾಣವು 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದ ಜನರಲ್ಲಿ ಉಂಟಾಗಿದ್ದ ಭೀತಿ ಕುಂಠಿತವಾಗುತ್ತಿರುವ ಸೂಚನೆ ದೊರೆತಿದೆ ಎಂದು ಕೇಂದ್ರ ಹೇಳಿದೆ. ಮಧ್ಯಪ್ರಾಚ್ಯ ಪರಿಸ್ಥಿತಿಯ ಬಗ್ಗೆ ದೈನಂದಿನ ಮಾಹಿತಿ ಹಂಚಿಕೊಳ್ಳುತ್ತಿರುವ ಕೇಂದ್ರ, ಆನ್ಲೈನ್ ಮೂಲಕ LPG ಬುಕ್ಕಿಂಗ್ ಪ್ರಮಾಣವು ಶೇ. 84ರಿಂದ ಶೇ. 87ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಅನಿಲ ವಿತರಣಾ ಕಂಪೆನಿಗಳು ಡಿಜಿಟಲ್ ಬುಕ್ಕಿಂಗ್ ಗೆ ಉತ್ತೇಜನ ನೀಡಿರುವುದು ಹಾಗೂ ಡೀಲರ್ ಗಳ ಬಳಿ ಜನರು ಗುಂಪುಗೂಡಿ ಖರೀದಿಸುವ ಪ್ರವೃತ್ತಿ ಕಡಿಮೆಯಾಗಿರುವುದರಿಂದ ಈ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಿದೆ. ದೇಶದ ಎಲ್ಲಾ ತೈಲ ಸಂಸ್ಕರಣಾ ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಪ್ರಮಾಣದ ಕಚ್ಚಾ ತೈಲದ ಸಂಗ್ರಹ ಲಭ್ಯವಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದು, ದೇಶೀಯ ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ಆಮದು ಅಗತ್ಯವಿಲ್ಲ ಎಂದೂ ತಿಳಿಸಿದೆ. LPG ಚಿಲ್ಲರೆ ಮಾರುಕಟ್ಟೆಗಳಲ್ಲಿ ಸಿಲಿಂಡರ್ ಕೊರತೆ ಕಂಡುಬಂದಿಲ್ಲ ಎಂದು ತೈಲ ಮಾರುಕಟ್ಟೆ ಕಂಪೆನಿಗಳು ತಿಳಿಸಿವೆ. ಪೆಟ್ರೋಲ್, ಡೀಸೆಲ್ ಹಾಗೂ LPGಯ ಪೂರೈಕೆಯನ್ನು ಪ್ರತಿದಿನ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಅವು ಹೇಳಿವೆ.
ಶಹಾಬಾದ್ | ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್ಪಿವಿ ಲಸಿಕೆ ಪರಿಣಾಮಕಾರಿ: ಡಾ.ವೀರನಾಥ ಕನಕ
ಶಹಾಬಾದ್: ಆರೋಗ್ಯವಂತ ರಾಷ್ಟ್ರದ ಉದಯ ಆರೋಗ್ಯವಂತ ಮಹಿಳೆಯರಿಂದ ಆರಂಭವಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್.ಪಿ.ವಿ ಲಸಿಕೆ ಸಹಕಾರಿಯಾಗಿದ್ದು, ಹೆಣ್ಣುಮಕ್ಕಳ ಸದೃಢ ಆರೋಗ್ಯ ರಕ್ಷಣೆಗಾಗಿ ಈ ಲಸಿಕಾ ಅಭಿಯಾನ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವೀರನಾಥ ಕನಕ ಹೇಳಿದರು. ಅವರು ರವಿವಾರ ನಗರದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹೆಚ್.ಪಿ.ವಿ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಗರ್ಭಕಂಠ ಸೇರಿದಂತೆ ಹಲವು ವಿಧದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಹೆಚ್.ಪಿ.ವಿ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಪ್ರಸ್ತುತ ಈ ಲಸಿಕೆಯನ್ನು 14 ವರ್ಷ ಪೂರ್ಣಗೊಂಡು 15 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಂಕರ ರಾಠೋಡ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಈ ಲಸಿಕೆ ಪರಿಣಾಮಕಾರಿಯಾಗಿದೆ. ಲಸಿಕೆ ಪಡೆದವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಅಥವಾ ಅಡ್ಡಪರಿಣಾಮಗಳಿಲ್ಲ. ಈ ಕುರಿತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಯೂಸುಫ್ ನಾಕೇದಾರ, ಸಂಜಯ ರಾಠೋಡ ಸೇರಿದಂತೆ ಆರೋಗ್ಯ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ 15 ವರ್ಷದೊಳಗಿನ ಹೆಣ್ಣುಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತೆಲಂಗಾಣ | ನೂರು ಬೀದಿನಾಯಿಗಳಿಗೆ ವಿಷಪ್ರಾಶನ : ಸರಪಂಚ್ ವಿರುದ್ಧ ಪ್ರಕರಣ ದಾಖಲು
ಹೈದರಾಬಾದ್,ಮಾ.15: ಬೀದಿನಾಯಿಗಳ ವಿರುದ್ಧ ಹಿಂಸೆಯ ಮತ್ತೊಂದು ನಿದರ್ಶನವು ಬೆಳಕಿಗೆ ಬಂದಿದೆ. ಮಂಚಿರ್ಯಾಲ್ ಜಿಲ್ಲೆಯ ಕಿಸ್ಟಾಪುರ ಗ್ರಾಮದಲ್ಲಿ ಮಾ.7 ಮತ್ತು 8ರ ನಡುವಿನ ರಾತ್ರಿ ಸುಮಾರು ನೂರು ಬೀದಿನಾಯಿಗಳಿಗೆ ವಿಷವುಣಿಸಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟ್ರೇ ಆ್ಯನಿಮಲ್ ಫೌಂಡೇಷನ್ ಆಫ್ ಇಂಡಿಯಾದ ಗೌತಮ್ ಎನ್ನುವವರು ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಸರಪಂಚ್ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಬೀದಿನಾಯಿಗಳನ್ನು ಕೊಲ್ಲಲು ಇಬ್ಬರು ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದರು. ನಾಯಿಗಳಿಗೆ ವಿಷದ ಚುಚ್ಚುಮದ್ದು ನೀಡಿ ಬಳಿಕ ಅವುಗಳನ್ನು ನದಿಯೊಂದರ ಬಳಿ ಎಸೆಯಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು ಸರಪಂಚ್ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿರುದ್ಧ ಬಿಎನ್ಎಸ್ನ ಸಂಬಂಧಿತ ಕಲಂಗಳು ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜ.2026 ಮತ್ತು ಡಿ.2025ರಲ್ಲಿ ತೆಲಂಗಾಣದ ವಿಭಿನ್ನ ಭಾಗಗಳಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆಯ ಹಲವಾರು ಘಟನೆಗಳು ವರದಿಯಾಗಿದ್ದವು. ಕಳೆದ ವರ್ಷದ ಡಿಸೆಂಬರ್ನಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಮುನ್ನ ಗ್ರಾಮಸ್ಥರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೆಲವು ಅಭ್ಯರ್ಥಿಗಳು ಈ ಹತ್ಯೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಚಿತ್ರದುರ್ಗದ ಚಳ್ಳಕೆರೆ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾಗಿದ್ದರು. ಈ ಪೈಕಿ ಇಬ್ಬರಿಗೆ ಕೆಲ ದಿನಗಳ ಬಳಿಕ ಮದುವೆ ನಿಶ್ಚಯವಾಗಿತ್ತು. ಮೃತರು ಅಮರೇಶ್ (29), ಮಂಜುನಾಥ್ (32) ಹಾಗೂ ಸಚಿನ್ (30) ಎಂದು ಗುರುತಿಸಲಾಗಿದೆ.
ಲಿಂಗಸುಗೂರು | ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಲು ಆಗ್ರಹಿಸಿ ಎ.13ರಂದು ಬೃಹತ್ ಸಮಾವೇಶ
ಲಿಂಗಸುಗೂರು : ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಲು ಆಗ್ರಹಿಸಿ ಎ.13 ರಂದು ರಾಯಚೂರಿನಲ್ಲಿ ಬೃಹತ್ ಕಾರ್ಮಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟಿ.ಯು.ಸಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ತಿಳಿಸಿದರು. ಲಿಂಗಸುಗೂರು ಪಟ್ಟಣದಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಕರ್ನಾಟಕದ ಕಾರ್ಮಿಕರಿಗೆ ಕೊಟ್ಟ ಮಾತನ್ನು ತಪ್ಪಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದು ಹೇಳಿತ್ತು. ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾದರೂ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಮುಂದಾಗುತ್ತಿಲ್ಲ. ಕಳೆದ 10-20 ವರ್ಷಗಳಿಂದ ಖಾಯಂ ಸ್ವರೂಪದಲ್ಲಿ ಕೆಲಸ ಮಾಡುತ್ತಿರುವ ನೀರಾವರಿ, ಶಿಕ್ಷಣ, ಜಿಲ್ಲಾ ಪಂಚಾಯತ್ ರಾಜ್, ಗಣಿ, ಕಂದಾಯ, ಕೃಷಿ, ಸಾರಿಗೆ, ಮಹಿಳಾ ಮತ್ತು ಮಕ್ಕಳ, ಪೌರಾಸೇವೆ, ಆರೋಗ್ಯ, ವೈದ್ಯಕೀಯ ವಿಜ್ಞಾನ ಮುಂತಾದ ಇಲಾಖೆಯ ಕಾರ್ಮಿಕರನ್ನು ಕಾನೂನುಬಾಹೀರವಾಗಿ ದುಡಿಸಲಾಗುತ್ತಿದೆ ಎಂದು ಆರೋಪಿಸಿದರು. ಹೊಸ ಕಾರ್ಮಿಕ ಕಾಯ್ದೆಗಳು ಭಾರತದ ಕಾರ್ಮಿಕ ವರ್ಗಕ್ಕೆ ಮರಣ ಶಾಸನಗಳಾಗಿವೆ. ಇವುಗಳ ರದ್ಧತಿಗಾಗಿ ಹೋರಾಡಬೇಕು. ಹಾಗೆಯೇ, ಗುತ್ತಿಗೆ ಕಾರ್ಮಿಕ ಪದ್ದತಿಯ (ರದ್ಧತಿ ಹಾಗೂ ನಿಯಂತ್ರಣ) ಕಾಯ್ದೆ 1970 ಸೆಕ್ಷನ್ 10ರ ಪ್ರಕಾರ ಕಾರ್ಮಿಕರ ಖಾಯಂಗೊಳಿಸಲು ಅವಕಾಶ ಕಲ್ಪಿಸಿದರೂ, ರಾಜ್ಯ ಸರಕಾರವು ಕಾನೂನು ಬಾಹೀರವಾಗಿ ಈ ಪದ್ದತಿಯನ್ನು ಮುಂದುವರೆಸಿದೆ. ಇದನ್ನು ಕಿತ್ತಿ ಹಾಕುವ ಗಟ್ಟಿಮುಟ್ಟಾದ ಚಳುವಳಿ ಕಟ್ಟಿ ಎಂದರು. ಇದೇ ವೇಳೆ ಹಳೆಯ ಜಿಲ್ಲಾ ಸಮಿತಿಯನ್ನು ವಿಸರ್ಜಿಸಿ, 17 ಸದಸ್ಯ ಬಲದ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಟಿಯುಸಿಐನ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಕಾಂ.ಜಿ.ಅಡವಿರಾವ್ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಕಾಂ.ಡಿ.ಕೆ. ಲಿಂಗಸೂಗೂರು, ಜಿಲ್ಲಾ ಉಪಾಧ್ಯಕ್ಷರಾಗಿ ಕಾಂ.ಜಿ ತಿಪ್ಪರಾಜ್(1), ಕಾಂ.ದೇವಮ್ಮ ಈಚನಾಳ(2), ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕಾಂ.ಸಿದ್ದಪ್ಪಗೌಡ ಗಿಲ್ಲೆಸಗೂರು(1), ಕಾಂ.ಬಸವರಾಜ ಹಿರೆಹೆಸರೂರು(2), ಜಿಲ್ಲಾ ಖಜಂಚಿಯಾಗಿ ಕಾಂ.ಹನುಮಂತಪ್ಪ ಬೂದಿವಾಳ ಹಾಗೆಯೇ ಜಿಲ್ಲಾ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಕಾಂ.ನಸ್ರಿನಾ, ಕಾಂ.ರಂಗನಾಥ ಮಸ್ಕಿ, ಕಾಂ.ಹೆಚ್. ಆರ್. ಹೊಸಮನಿ, ಕಾಂ.ಮಾಬುಸಾಬ ಸಿಂಧನೂರು, ಕಾಂ.ಖಜಾಸಾಬ್ ಕವಿತಾಳ, ಕಾಂ.ಮಲ್ಲೇಶ್ ಎಮ್ಮಡಗಿ, ಕಾಂ.ರಮೇಶ್ ವಿಂಡ್ ಪವರ್, ಕಾಂ.ಹುಲುಗಪ್ಪ ಬಳ್ಳಾರಿ ಹಾಗೂ ಕಾಂ.ದುರುಗಪ್ಪ ಸಿಂಧನೂರು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಂ.ಗಂಗಾಧರ, ರಾಜ್ಯ ಉಪಾಧ್ಯಕ್ಷರಾದ ಟಿಯುಸಿಐ, ಆದೇಶ ನಗನೂರು ಸೇರಿ ಇತರರು ಇದ್ದರು.
ಕಾಂತಾವರ ಕನ್ನಡ ಸಂಘದ ವತಿಯಿಂದ ಮುದ್ದಣ ಕಾವ್ಯ, ದತ್ತಿ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಆಳ ತಲುಪಿರಬಹುದು. ಆದರೆ ಅವರಲ್ಲಿರಬೇಕಾದ ಜ್ಞಾನ ದಾಹ, ಸಾಂಸ್ಕೃತಿಕ ಕಾಳಜಿ, ಚಿಂತನೆಯ ಕೊರತೆ ಇಂದು ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ಚಿಂತನೆಯ ಲೇಖಕರು ಬೆಳೆದಾಗ ಕನ್ನಡವೂ ಬೆಳೆಯಲು ಉಳಿಯಲು ಸಾಧ್ಯ ಎಂದು ಮೈಸೂರಿನ ಲೇಖಕ, ಕವಿ ಪ್ರೊ. ಡಿ.ಎ.ಶಂಕರ್ ಹೇಳಿದರು. ಅವರು ಕಾಂತಾವರ ಕನ್ನಡ ಸಂಘದ ವತಿಯಿಂದ ಕನ್ನಡ ಭವನದ ಆವರಣದಲ್ಲಿ ರವಿವಾರ ಜರಗಿದ ಮುದ್ದಣ ಸಾಹಿತ್ಯೋತ್ಸವ 2026 ಪ್ರಶಸ್ತಿ ಪ್ರದಾನ, ವಾರ್ಷಿಕ ದತ್ತಿ ಪ್ರಶಸ್ತಿ ಗಳ ಪ್ರದಾನ, ನಾಡಿಗೆ ನಮಸ್ಕಾರ ಮಾಲಿಕೆಯ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುದ್ದಣ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಹಸ್ರಾರು ವರ್ಷಗಳಿಂದ ನಾಡಿನಲ್ಲಿ ಕಾವ್ಯ ಕೃಷಿ ಸಮೃದ್ಧವಾಗಿದೆ. ಮನುಷ್ಯನ ಅಂತರಂಗದ ಕ್ಷೋಭೆಗಳು ಮತ್ತು ಹೇಳಲಾಗದ್ದನ್ನು ವ್ಯಕ್ತಪಡಿಸುವ ವೇದಿಕೆಯಾಗಿ ಕಾವ್ಯ ನೆರವಾಗುತ್ತದೆ. ಕಾಂತಾವರದಲ್ಲಿ ನಾಡು ನುಡಿ ಸೇವೆಯಲ್ಲಿ ನೀನಾಸಂ ಮಾದರಿಯಲ್ಲಿ ಕಾಂತಾವರವನ್ನು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸಿದ ಮೊಗಸಾಲೆಯವರ ಸಾಧನೆ ಶ್ಲಾಘನೀಯ ಎಂದರು. ಪ್ರಶಸ್ತಿ ಪ್ರದಾನ: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಲೇಖಕ, ಕವಿ ಪ್ರೊ. ಡಿ.ಎ.ಶಂಕರ್ ಅವರ ಇರುವೆಯಂತೆ ನನ್ನೊಡನೆ ಹಸ್ತಪ್ರತಿಗೆ ನಗದು ಪುರ ಸ್ಕಾರ ಸಹಿತ 46ನೇ ವರ್ಷದ 2025 ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ಪ್ರಕಟಿತ ಕೃತಿಯನ್ನು ಅವರು ಬಿಡುಗಡೆ ಮಾಡಿ ಮಾತೃಭಾಷೆಯ ಜತೆಗೆ ಕನ್ನಡ ಪ್ರೀತಿ ಬೆಳೆಸುವ ಉಳಿಸುವ ಕೆಲಸ ಎಲ್ಲರಿಂದಾಗಬೇಕು. ಕನ್ನಡ ಶಾಲೆಗಳ ಅವನತಿ ಸ್ಥಿತಿ ಅಸಹನೀಯವಾಗಿದೆ ಎಂದರು. ಸಮಾರಂಭವನ್ನು ಉದ್ಘಾಟಿಸಿದ ಪ್ರೊ. ಟಿ.ಎಲ್ಲಪ್ಪ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾವಹಾರಿಕ, ಶೈಕ್ಷಣಿಕ ಬೆಳವಣಿಗೆಯ ಜತೆ ಸಾಹಿತ್ಯ ರಂಗದಲ್ಲಿ ಗ್ರಾಮೀಣ ನೆಲೆಯಲ್ಲಿ ಕನ್ನಡವನ್ನು ಕಟ್ಟಿಬೆಳೆಸುವುದಕ್ಕೆ ಕಾಂತಾವರ ಮಾದರಿಯಾಗಿದೆ. ಭಾಷೆ, ಜಾತಿ, ರಾಜಕೀಯ ಇನ್ನಿತರ ಮಡಿವಂತಿಕೆಯ ಹಂಗಿಲ್ಲದೇ ಮೌಲಿಕವಾಗಿ ಪ್ರಶಸ್ತಿಗಳ ಮೂಲಕ ಸಾಧಕರಿಗೆ ಮನ್ನಣೆ ನೀಡುತ್ತಿರುವ ಕನ್ನಡ ಸಂಘ ಮೌಲಿಕತೆಗೆ ನಿದರ್ಶನವಾಗಿದೆ ಎಂದರು. ಸುವರ್ಣ ಸಂಭ್ರಮದಲ್ಲಿರುವ ಕಾಂತಾವರ ಕನ್ನಡ ಸಂಘದಲ್ಲಿ ಗಮಕಿ ಸತೀಶ್ ಕುಮಾರ್ಕೆಮ್ಮಣ್ಣು ಅವರು ಸ್ಥಾಪಿಸಿ ರುವ ದತ್ತಿನಿಧಿಯ 'ಗಮಕಕಲಾ ಪ್ರವಚನ' ಪ್ರಶಸ್ತಿಯನ್ನು ಮುಳಿಯ ಶಂಕರ ಭಟ್ಟ, ಗಮಕಿ ಶ್ರೀಮತಿ ಯಾಮಿನಿ ಭಟ್ ಉಡುಪಿ ಅವರ ದತ್ತಿನಿಧಿಯ 'ಗಮಕ ಕಲಾ ವಾಚನ' ಪ್ರಶಸ್ತಿಯನ್ನು ಪದ್ಯಾಣ ಗಣಪತಿ ಭಟ್, ಕಾರ್ಕಳದ ಶಿಲ್ಪಿ ದಿ. ಕೆ.ಶಾಮರಾಯ ಆಚಾರ್ಯ ಅವರ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಯನ್ನು ಪಿ. ದಾಮೋದರ ಆಚಾರ್ಯ ಕಾರ್ಕಳ , ಕನ್ನಡ ಸಂಘದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ವಾರ್ಷಿಕ ಗೌರವ ಪ್ರಶಸ್ತಿಯನ್ನು ಶಕುಂತಳಾ ಭಟ್ ಅವರಿಗೆ ನಗದು ಗೌರವ ಸಹಿತ ಪ್ರದಾನ ಮಾಡಲಾಯಿತು. ಗೀತಾ ದೇವಾಡಿಗ, ಪ್ರೇಮಕಾಂತಿ, ಚೇತನ ಮತ್ತು ಜ್ಯೋತಿ ಸಮ್ಮಾನ ಪತ್ರ ವಾಚನದಲ್ಲಿ ಸಹಕರಿಸಿದರು. ಡಾ . ನಾ. ಮೊಗಸಾಲೆ ಅವರ ಸಮಗ್ರ ಕಾವ್ಯದ ಅಧ್ಯಯನ ನಡೆಸಿ ಮಹಾ ಪ್ರಬಂಧ ರೂಪಿಸಿದ ಡಾ. ಚಂದ್ರ ನಾಯಕ್ ಪಿ.ಆರ್. ಅವರು ಪ್ರತಿಯನ್ನು ಕನ್ನಡ ಸಂಘಕ್ಕೆ ನೀಡಿ ಸಂಘದ ಗೌರವ ಸಮ್ಮಾನ ಸ್ವೀಕರಿಸಿದರು. ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಈವರೆಗಿನ ಕೃತಿ ಪ್ರಕಟಣೆಯನ್ನು 378ಕ್ಕೆ ತಲುಪುವಂತೆ ಕನ್ನಡ ವಿ.ವಿ. ಹಂಪಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎ. ಸುಬ್ಬಣ್ಣ ರೈ ಈ ಬಾರಿ 9 ಕೃತಿಗಳ ಲೊಕಾರ್ಪಣೆಯನ್ನು ನೆರವೇರಿಸಿದರು. ಗ್ರಂಥಮಾಲೆಯ ಪ್ರಕಟಣೆ ಒಂದು ಮಾದರಿ ಸಾಧನೆಯಾಗಿದ್ದು ಕೃತಿಯಲ್ಲಿನ ಸಾಧಕರ ಬದುಕಿನ ಹಾದಿ ಇತರರಿಗೂ ಮಾರ್ಗದರ್ಶಿ ಎಂದರು. ಗ್ರಂಥ ಮಾಲೆಯ ಸಂಪಾದಕ ಬಿ. ಜನಾರ್ಧನ ಭಟ್ ಸಕಾಲಿಕ ಮಾತುಗಳನ್ನಾಡಿದರು. ಮಾಲಿಕೆಯ ಸಾಧಕರು, ಕೃತಿಕಾರರು, ಪ್ರಾಯೋಜಕರನ್ನು ಗೌರವಿಸಲಾಯಿತು. ಸಂಘದ ಸುವರ್ಣ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ ಉಡುಪಿ, ಗೌರವ ಕಾರ್ಯಾಧ್ಯಕ್ಷ ಕೆ. ಶ್ರೀಪತಿ ಭಟ್ ಶುಭ ಹಾರೈಸಿದರು. ಸಂಘದ ಜತೆ ಕಾರ್ಯದರ್ಶಿ ಸದಾನಂದ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಡಾ. ನಾ. ಮೊಗಸಾಲೆ ಸ್ವಾಗತಿಸಿ ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು.
ಬೀದರ್ ನಲ್ಲಿ ಗುಡುಗು ಸಹಿತ ಭಾರಿ ಮಳೆ
ಬೀದರ್: ಜಿಲ್ಲೆಯ ಹಲವು ಕಡೆಗಳಲ್ಲಿ ರವಿವಾರ ಸಾಯಂಕಾಲ ಗುಡುಗು–ಮಿಂಚು ಸಹಿತ ಭಾರಿ ಮಳೆಯಾಗಿದೆ. ಭಾಲ್ಕಿ, ಖಾನಾಪುರ್, ಮುಚಳಂಬ್, ಮೊರಂಬಿ, ಉಚ್ಚಾ, ರಾಚಪ್ಪಗೌಡಗಾಂವ್, ಬ್ಯಾಲಹಳ್ಳಿ ಹಾಗೂ ಗೋರ್ಟಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ದಿನಪೂರ್ತಿ ತೀವ್ರ ಬಿಸಿಲು ಮತ್ತು ಉಷ್ಣತೆಯ ವಾತಾವರಣ ಇದ್ದು, ಸಾಯಂಕಾಲ ವೇಳೆಗೆ ಕತ್ತಲೆ ಕವಿದಂತೆ ಮೋಡಗಳು ಆವರಿಸಿಕೊಂಡು ಗುಡುಗು–ಮಿಂಚಿನೊಂದಿಗೆ ಭಾರೀ ಮಳೆ ಸುರಿಯಿತು. ರೈತರ ಹೊಲಗಳಲ್ಲಿ ಜೋಳದ ರಾಶಿ ಇನ್ನೂ ಮಾಡದಿರುವುದರಿಂದ ಈ ಮಳೆಯಿಂದ ಜೋಳ ಹಾಳಾಗುವ ಭೀತಿ ರೈತರಲ್ಲಿ ಮೂಡಿದೆ. ಅಲ್ಲದೆ, ಈ ಅಕಾಲಿಕ ಮಳೆಯಿಂದ ಮಾವಿನಕಾಯಿ ಬೆಳೆಗಾರರಿಗೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
IPL 2026 RCB: ಆರ್ಸಿಬಿ ಫ್ಯಾನ್ಸ್ಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ರೆ ಮೆಟ್ರೋ ಪ್ರಯಾಣ ಉಚಿತ? ವರದಿ
IPL 2026 RCB: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ ಹಬ್ಬ ಇನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಮತ್ತು ಆರ್ಸಿಬಿ ಮ್ಯಾನೇಜ್ಮೆಂಟ್ ನಡುವೆ ಮಹತ್ವದ ಮಾತುಕತೆ ನಡೆಯುತ್ತಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ಹೊಂದಿರುವವರಿಗೆ ಉಚಿತ ಮೆಟ್ರೋ ಪ್ರಯಾಣದ ಸೌಲಭ್ಯ ನೀಡುವ ಬಗ್ಗೆ ಚರ್ಚೆ
ಕೊಟ್ಟೂರು | ಹುಚ್ಚು ನಾಯಿ ಕಡಿತ : 13 ಜನರಿಗೆ ಗಾಯ
ಕೊಟ್ಟೂರು: ಪಟ್ಟಣದಲ್ಲಿ ಶನಿವಾರ ಹುಚ್ಚು ನಾಯಿಯ ಕಡಿತದಿಂದ 13 ಜನರು ಗಾಯಗೊಂಡಿರುವ ಘಟನೆ ಜನರಲ್ಲಿ ಆತಂಕ ಉಂಟುಮಾಡಿದೆ. ಗಾಯಗೊಂಡ ಎಲ್ಲರೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಸಾರ್ವಜನಿಕರು ಆ ಹುಚ್ಚು ನಾಯಿಯನ್ನು ಹೊಡೆದು ಸಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಟ್ಟಣದ ಕುಂಬಾರ ಓಣಿ, ಅಗಡೇರ ಓಣಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿಕ್ಕಮಕ್ಕಳು ಮತ್ತು ಹಿರಿಯರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ಪಟ್ಟಣದಾದ್ಯಂತ ಬೀದಿ ನಾಯಿಗಳ ಹಾವಳಿ ವಿಪರೀತವಾಗಿ ಹೆಚ್ಚಾಗಿದ್ದು, ಮಕ್ಕಳು ಹಾಗೂ ವೃದ್ಧರು ರಸ್ತೆಗಳಲ್ಲಿ ಸುಗಮವಾಗಿ ಸಂಚರಿಸಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ನಡು ರಸ್ತೆಗಳಲ್ಲೇ 15 ರಿಂದ 20 ನಾಯಿಗಳು ಗುಂಪಾಗಿ ಓಡಾಡುತ್ತ ಪಾದಚಾರಿಗಳು ಹಾಗೂ ವಾಹನಗಳನ್ನು ಹಿಂಬಾಲಿಸುತ್ತಿವೆ. ಇದರಿಂದ ಸವಾರರು ಬಿದ್ದು ಕೈಕಾಲುಗಳಿಗೆ ಗಾಯಗಳಾಗಿರುವ ಘಟನೆಗಳು ಹಲವು ಬಾರಿ ನಡೆದಿದ್ದರೂ ಸ್ಥಳೀಯ ಆಡಳಿತ ಈ ಬಗ್ಗೆ ನಿರ್ಲಕ್ಷ ತೋರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆ ಈಗಲಾದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳ ನಡೆ ದಾರಿ ತಪ್ಪುತ್ತಿದೆ ಎಂದು ಕಾಂಗ್ರೆಸ್ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ನೀಡಿದರು. ಇದು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಶಾಸಕರು ಸ್ವಾಮೀಜಿಗಳ ಕ್ಷಮೆ ಕೇಳಿದ್ದಾರೆ. ಮಠ ಅಥವಾ ಸ್ವಾಮೀಜಿಗಳ ಸರಿ ಇಲ್ಲವೆಂದಿಲ್ಲ. ಬಾಲಗಂಗಾಧರ ನಾಥ ಸ್ವಾಮೀಜಿಗಳ ಉದಾಹರಣ ನೀಡುತ್ತಾ ಮಾತಿನ ಬರದಲ್ಲಿ ಹೇಳಿದೆ ಎಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.
ವಿಜಯನಗರ | ಅಸಮಾನತೆಯ ಬದುಕಿಗೆ ವಿದಾಯ ಹೇಳಿ : ಮಹಾಂತೇಶ ಆರಾಧ್ಯಮಠ
ವಿಜಯನಗರ (ಹೊಸಪೇಟೆ): ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇವರ ಸಹಯೋಗದಲ್ಲಿ ಹೊಸೂರಿನ ಹೊಸೂರಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ 2025–26ನೇ ಶೈಕ್ಷಣಿಕ ವರ್ಷದ ‘ವಿಶೇಷ ಶಿಬಿರ’ದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ಮಾ.9ರಿಂದ ಮಾ.15ರವರೆಗೆ ನಡೆದ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ವಿಜಯನಗರ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಶಿಬಿರಾಧ್ಯಕ್ಷರಾದ ಮಹಾಂತೇಶ ಎನ್. ಆರಾಧ್ಯಮಠ ಮಾತನಾಡಿ, ಈ ಏಳು ದಿನಗಳಲ್ಲಿ ಶಿಬಿರಾರ್ಥಿಗಳು ಸಲ್ಲಿಸಿದ ಸೇವೆ ಮತ್ತು ಚರ್ಚಿಸಿದ ವಿಷಯಗಳು ಬದುಕಿನ ಪಾಠಗಳಾಗಬೇಕು. ಶಿಬಿರದ ಬಳಿಕ ಅಸಮಾನತೆಯ ಬದುಕಿಗೆ ವಿದಾಯ ಹೇಳಿ ಸಮಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಮಾರೋಪ ಭಾಷಣ ಮಾಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜಕ ಡಾ. ಕುಮಾರ ಅವರು, ರಾಷ್ಟ್ರೀಯ ಸೇವಾ ಯೋಜನೆ ತರಗತಿಯಲ್ಲಿ ಕಲಿಯಲಾಗದ ಅನೇಕ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಸೇವಾಭಾವ ಮತ್ತು ಅರ್ಪಣ ಮನೋಭಾವವನ್ನು ಬೆಳೆಸುತ್ತದೆ. ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಯುವಕರು ಜಾಗೃತರಾಗಿರಬೇಕು ಎಂದು ಹೇಳಿದರು. ವಿಜಯನಗರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎನ್. ಮಲ್ಲಿಕಾರ್ಜುನ ಮೆಟ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ವಿಶೇಷ ಶಿಬಿರಗಳು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಹೊಸೂರಿನ ಸುದರ್ಶನ ನಾಯಕ ಹಾಗೂ ಡಾ. ರವಿ ಕಿರಣ ಡಿ. ಭಾಗವಹಿಸಿದ್ದರು. ಎನ್ಎಸ್ಎಸ್ ಘಟಕದ ಸಂಯೋಜಕರಾದ ಡಾ. ಗಾದೆಪ್ಪ ಮತ್ತು ವೀರೇಶ್ ಟಿ.ಎಂ. ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಗುಂಪಿನ ಶಿಬಿರಾರ್ಥಿಗಳು ಕಾರ್ಯಕ್ರಮವನ್ನು ನಿರ್ವಹಿಸಿದರು.
Yadgiri | ಸಾಮಾಜಿಕ ಬಹಿಷ್ಕಾರ ಆರೋಪ : ಮನನೊಂದು ಮಹಿಳೆ ನದಿಗೆ ಹಾರಿ ಆತ್ಮಹತ್ಯೆ
ಯಾದಗಿರಿ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಮಹಿಳೆಯೊಬ್ಬರು ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಜೋಳದಡಗಿ ಬ್ರಿಡ್ಜ್–ಕಂ–ಬ್ಯಾರೇಜ್ ಬಳಿ ನಡೆದಿದೆ. ಯಾದಗಿರಿ ನಗರದ ಹೊರವಲಯದ ಗಿರಿನಗರ ನಿವಾಸಿ ಕಮಲಮ್ಮ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಈ ಕುರಿತು ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ : ಕಮಲಮ್ಮ ಸಿಳ್ಳೆ ಕ್ಯಾತ ಸಮುದಾಯಕ್ಕೆ ಸೇರಿದವರು. ಅವರ ಪುತ್ರ ಎರ್ರಿಸ್ವಾಮಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ತಮ್ಮದೇ ಸಮುದಾಯದ ಮುಖಂಡರು ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದಾರೆ ಎನ್ನಲಾಗಿದೆ. ಮೀನುಗಾರಿಕೆ ನಡೆಸುವುದು ಹಾಗೂ ಮೀನು ಮಾರಾಟ ಮಾಡಲು ಕೂಡ ಅವಕಾಶ ನೀಡದೆ ಮುಖಂಡರು ನಿರ್ಬಂಧ ಹೇರಿದ್ದರು. ಇದರಿಂದ ಮನನೊಂದು ಕಮಲಮ್ಮ ಮಗಳ ಊರಾದ ಜೋಳದಡಗಿ ಗ್ರಾಮಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಮುನ್ನ ಬ್ಯಾರೇಜ್ ಮೇಲೆಯೇ ತಮ್ಮ ಮಾಂಗಲ್ಯ ಸರ ತೆಗೆದಿಟ್ಟಿರುವುದು ಗಮನಕ್ಕೆ ಬಂದಿದೆ. ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಂದು ಮಧ್ಯಾಹ್ನ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಸತ್ಯಾಧಾರಿತ ಪತ್ರಿಕೋದ್ಯಮ ಸಮಾಜಕ್ಕೆ ಅತ್ಯಗತ್ಯ: ಪ್ರೊ.ಜಯಪ್ರಕಾಶ್ ಶೆಟ್ಟಿ
ಹಿರಿಯಡ್ಕ, ಮಾ.15: ಇಂದಿನ ಯುಗದಲ್ಲಿ ಡಿಜಿಟಲ್ ಮಾಧ್ಯಮಗಳು ಮಾಹಿತಿ ಪ್ರಸರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯುತವಾಗಿ ಹಾಗೂ ನೈತಿಕತೆಯಿಂದ ಮಾಧ್ಯಮ ಗಳನ್ನು ಬಳಸಬೇಕು ಎಂದು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯಪ್ರಕಾಶ್ ಶೆಟ್ಟಿ ಎಚ್. ಹೇಳಿದ್ದಾರೆ. ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ, ಎನ್ಎಸ್ಎಸ್, ಕನ್ನಡ ವಿಭಾಗ ಹಾಗೂ ಮಾಸ್ ಮೀಡಿಯಾ ಫೌಂಡೇಶನ್ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಪ್ರಸ್ತುತ ವಿದ್ಯಮಾನಗಳಲ್ಲಿ ಡಿಜಿಟಲ್ ಮಾಧ್ಯಮದ ಪಾತ್ರದ ಕುರಿತ ಮಾಧ್ಯಮ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಇಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸುಳ್ಳು ಸುದ್ದಿಗಳ ಸಮಸ್ಯೆ ಹೆಚ್ಚಾಗುತ್ತಿದೆ. ಜನರಿಗೆ ಸತ್ಯವಾದ ಮಾಹಿತಿ ಅಗತ್ಯವಿದ್ದರೂ ಕೆಲವು ಮಾಧ್ಯಮಗಳು ಅದನ್ನು ಸರಿಯಾಗಿ ನೀಡುವುದಿಲ್ಲ ಎಂಬ ಗೊಂದಲದ ಪರಿಸ್ಥಿತಿ ನಿರ್ಮಾಣ ವಾಗಿದೆ. ಸುಳ್ಳು ಸುದ್ದಿಗಳನ್ನು ಸೃಷ್ಟಿಸದೇ, ಸತ್ಯವನ್ನು ಪರಿಶೀಲಿಸಿ ಸುದ್ದಿ ನೀಡುವ ಮಾಧ್ಯಮಗಳು ಸಮಾಜಕ್ಕೆ ಅತ್ಯಂತ ಅಗತ್ಯ. ಆದರೆ ಟಿಆಪಿರ್ಗಾಗಿ ನಾಟಕೀಯತೆ ಹೆಚ್ಚುತ್ತಿರುವ ಕಾಲದಲ್ಲಿ ಜನಪರ ಮಾಧ್ಯಮಗಳು ಉಳಿಯುವುದು ಕಷ್ಟಕರವಾಗುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಈದಿನ.ಕಾಮ್ ಕೇಂದ್ರ ಸಂಯೋಜಕ ಸಂತೋಷ್ ಎಚ್.ಎಂ., ಡಿಜಿಟಲ್ ಮಾಧ್ಯಮಗಳ ವೇಗ, ವ್ಯಾಪ್ತಿ ಮತ್ತು ಪ್ರಭಾವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಕನ್ನಡ ವಿಭಾಗ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ಸೌಮ್ಯಲತಾ, ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ಎನ್ಎಸ್ಎಸ್ ಯೋಜನಾಧಿ ಕಾರಿ ನಂದೀಶ್ ಕುಮಾರ್ ಕೆ.ಸಿ., ಈ ದಿನ.ಕಾಮ್ ಉಡುಪಿ ಜಿಲ್ಲಾ ವರದಿಗಾರ ಶಾರೂಕ್ ತೀರ್ಥಹಳ್ಳಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಮಹಾದೇವ ಸ್ವಾಗತಿಸಿದರು. ದೇವಿಕಾ ಪದ್ಮಶಾಲಿ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ವಂದಿಸಿದರು.
ಸಮಯ, ಶಿಸ್ತು ಯಶಸ್ಸಿನ ಕೀಲಿಕೈಗಳು: ಡಾ.ರಾಘವೇಂದ್ರ ರಾವ್
ಶಿರ್ವ, ಮಾ.15: ವಿದ್ಯಾರ್ಥಿಗಳು ಸ್ವಯಂಚಾಲಿತ ವ್ಯವಸ್ಥೇಗಳನ್ನು ಒಳಗೊಂಡ ನವೀನ ಯೋಜನೆಗಳನ್ನು ಅಭಿವೃದ್ದಿಪಡಿಸಲು ಮುಂದಾಗ ಬೇಕು. ಕೈಗಾರಿಕಾ ಭೇಟಿ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಅವರನ್ನು ಉದ್ಯಮಶೀಲರಾಗಿಸಬೇಕು. ಸಮಯ ಮತ್ತು ಶಿಸ್ತು ಯಶಸ್ಸಿನ ಕೀಲಿಕೈಗಳಾಗಿವೆ ಎಂದು ಬೆಂಗಳೂರಿನ ಪ್ರತಿಷ್ಠಿತ ಕಂಪೆನಿ ಡಿಸಿ ಎಕ್ಸ್ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ರಾಘವೇಂದ್ರ ರಾವ್ ಹೇಳಿದ್ದಾರೆ. ಬಂಟಕಲ್ನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ನಿರಾಮಯ ಕಾಲೇಜ್ ಆಫ್ ನರ್ಸಿಂಗ್ ಮತ್ತು ನಿರಾಮಯ ಕಾಲೇಜ್ ಆಫ್ ಹೆಲೈಡ್ ಹೆಲ್ತ್ ಸೈನ್ಸ್ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಕ್ರವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. ತೀರ್ಥಹಳ್ಳಿಯ ಬಾಳಗಾರು ಅಕ್ಷೋಭ್ಯ ಮಹಾಸಂಸ್ಥಾನ ಮಠದ ಕಿರಿಯ ಯತಿ ಶ್ರೀಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಆಧ್ಯಾತ್ಮಿಕತೆ ಮತ್ತು ಆಧುನಿಕ ವಿಜ್ಞಾನವು ಮೂಲಭೂತವಾಗಿ ಪರಸ್ಪರ ಸಂಬಂಧ ವನ್ನು ಹೊಂದಿದೆ. ಭವಿಷ್ಯದ ತಾಂತ್ರಿಕ ಪ್ರಗತಿಗಾಗಿ ಸಾಂಪ್ರದಾಯಿಕ ಜ್ಞಾನವನ್ನು ಪರಿಹರಿಸಲು ವೈಜ್ಞಾನಿಕ ಸಮಸ್ಯೆಗಳಾಗಿ ಧ್ವನಿ - ಪ್ರೇರಿತ ಹವಾಮಾನ ಕುಶಲತೆ ಮತ್ತು ಲೋಹಶಾಸ್ತ್ರ ಸೇರಿದಂತೆ ಪ್ರಾಚೀನ ಸಾಧನೆ ಗಳನ್ನು ಅಧ್ಯಯನ ಮಾಡಬೇಕು ಎಂದರು ಅಂತಿಮ ವರ್ಷದ ಉತ್ತಮ ಸಾಧಕ ವಿದ್ಯಾರ್ಥಿಗಳಿಗೆ ಕೊಡುವ ಶ್ರೀಮಧ್ವ ವಾದಿರಾಜ ಪ್ರಶಸ್ತಿಯನ್ನು ವಿದ್ಯುನ್ಮಾಮ ಮತ್ತು ಸಂವಹನ ವಿಭಾಗದ ಅನ್ನಪೂರ್ಣ ಶೆಣೈ, ಗಣಕ ಯಂತ್ರ ವಿಭಾಗದ ನತಾಶ ಲೊಬೋ ಮತ್ತು ಆರ್ಟಿಫೀಶಿ ಯಲ್ ಇಂಟಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ನಾಗೇಂದ್ರ ಪೈ, ಗಣಕ ಯಂತ್ರ ವಿಭಾಗದ ಸಾತ್ವಿಕ್ ಭಟ್ ಅವರಿಗೆ ಪ್ರದಾನ ಮಾಡಲಾಯಿತು. ಉಡುಪಿ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿವೇತನ ಹಾಗೂ ದ್ವಿತೀಯ ಮತ್ತು ತೃತೀಯ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಹಯವದನ ಪ್ರಶಸ್ತಿಯನ್ನು ನೀಡಲಾಯಿತು. ಡಾಕ್ಟರೇಟ್ ಪದವಿ ಪಡೆದುಕೊಂಡ ಅಧ್ಯಾಪಕರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ, ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ.ರಾಧಾಕೃಷ್ಣ ಎಸ್. ಐತಾಳ್, ಆಡಳಿತ ಸಲಹಾ ಮಂಡಳಿಯ ಸದಸ್ಯರಾದ ಎಚ್.ವಿ.ಗೌತಮ, ಸುಂದರ್ ಮಡಾಕ್ಷಿರ, ಹರೀಶ್ ಬೆಳ್ಮಣ್, ಶ್ಯಾಮ್ ಸುಂದರ್, ಸಂಸ್ಥೆಯ ಡೀನ್ಗಳಾದ ಡಾ.ಸುದರ್ಶನ್ ರಾವ್, ಡಾ.ಸಚಿನ್ ಭಟ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ದೀಪಿಕಾ ಬಿವಿ, ವಿದ್ಯಾರ್ಥಿ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಸ್ವಾಗತಿಸಿದರು. ಎಸ್ಎಂವಿಐಟಿಎಂ ಪ್ರಾಂಶುಪಾಲ ಡಾ.ನಾಗರಾಜ್ ಭಟ್ ಹಾಗೂ ನಿರಾಮಯ ಕಾಲೇಜ್ ಆಫ್ ಹೆಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲ ಶಿವಶಂಕರ್ ಪೈ ವರದಿ ಮಂಡಿಸಿದರು. ನಿರಾಮಯ ಕಾಲೇಜ್ ಆಫ್ ನರ್ಸಿಂಗ್ನ ಪ್ರಾಂಶುಪಾಲೆ ರೋಶನಿ ರೊಡ್ರಿಗಸ್ ಮತ್ತು ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಸಚಿನ್ ಪ್ರಭು ಅತಿಥಿಗಳನ್ನು ಪರಿಚಯಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ರಾಜ ಯತೀಶ್ ಯಾದವ್, ಶೈಕ್ಷಣಿಕ ಡೀನ್ ಡಾ.ಸುದರ್ಶನ್ ರಾವ್ ಮತ್ತು ರಿಸರ್ಚ್ ಡೀನ್ ಡಾ.ಸಚಿನ್ ಭಟ್ ವಿದ್ಯಾರ್ಥಿ ವೇತನವನ್ನು ಪಡೆದವರ ವಿವರವನ್ನು ವಾಚಿಸಿದರು. ಪ್ರಾಧ್ಯಾಪಕ ಸುಧೀರ್ ಮತ್ತು ಪ್ರಾಧ್ಯಾಪಕಿ ಕಾವ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ವಾಡಿ | ಅಡುಗೆ ಅನಿಲ ಸರಬರಾಜು ವ್ಯತ್ಯಯ ಹಿನ್ನೆಲೆ : ಎಲ್ಪಿಜಿಗಾಗಿ ಮುಗಿಬಿದ್ದ ಜನ
ವಾಡಿ : ಪಟ್ಟಣದಲ್ಲಿ ಪ್ರಸ್ತುತ ಎಲ್ಪಿಜಿ ಸಿಲಿಂಡರ್ ಕೊರತೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಅಭಾವ ಉಂಟಾಗಬಹುದು ಎಂಬ ಭೀತಿಯಿಂದ ಪಟ್ಟಣದ ಗುರು ಗ್ಯಾಸ್ ಏಜೆನ್ಸಿ ಮಳಿಗೆ ಮುಂದೆ ರವಿವಾರ ನೂರಾರು ಗ್ರಾಹಕರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ಸಿಲಿಂಡರ್ ಖರೀದಿಗೆ ಮುಗಿಬಿದ್ದರು. ಭೀತಿಯಿಂದ ಸಾವಿರಾರು ಜನರು ಒಟ್ಟೊಟ್ಟಿಗೆ ಬುಕ್ಕಿಂಗ್ ಮಾಡುತ್ತಿರುವುದರಿಂದ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ತಕ್ಷಣ ಬುಕ್ಕಿಂಗ್ ಆಗದ ಕಾರಣ ಗ್ರಾಹಕರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಹೋಟೆಲ್ ಮಾಲಕರು ಕೂಡ ಈ ಕುರಿತು ಭಾರಿ ಆತಂಕದಲ್ಲಿದ್ದಾರೆ. ಒಂದು ವೇಳೆ ಅವಶ್ಯಕತೆಗೆ ಅನುಗುಣವಾಗಿ ಅಡುಗೆ ಅನಿಲ (ಎಲ್ಪಿಜಿ) ದೊರೆಯದಿದ್ದರೆ, ಹೋಟೆಲ್ನಲ್ಲಿ ತಯಾರಿಸುವ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರ ಮೇಲೂ ಆರ್ಥಿಕ ಹೊರೆ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇತ್ತೀಚೆಗೆ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನಮ್ ಅವರು ಎಲ್ಪಿಜಿ ಸಿಲಿಂಡರ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಕಟಣೆ ನೀಡಿದರೂ, ಜನರಲ್ಲಿ ಇನ್ನೂ ಭೀತಿ ನಿವಾರಣೆಯಾಗಿಲ್ಲ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
Bengaluru | ವಿಶೇಷ ಪೂಜೆ ನೆಪದಲ್ಲಿ ಐಟಿ ಅಧಿಕಾರಿಗೆ ವಂಚನೆ: ಗಿಳಿಶಾಸ್ತ್ರ ಹೇಳುವವನ ಬಂಧನ
ಬೆಂಗಳೂರು : ವೃತ್ತಿಯಲ್ಲಿ ಮುಂಭಡ್ತಿ ಹಾಗೂ ಉತ್ತಮ ಸ್ಥಳಕ್ಕೆ ವರ್ಗಾವಣೆಗಾಗಿ ವಿಶೇಷ ಪೂಜೆ ಮಾಡುವುದಾಗಿ ನಂಬಿಸಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರಿಂದ ಲಕ್ಷಾಂತರ ರೂ. ಚಿನ್ನಾಭರಣ ಪಡೆದು ವಂಚಿಸಿದ್ದ ಪ್ರಕರಣದಡಿ ನಕಲಿ ಗಿಳಿಶಾಸ್ತ್ರ ಹೇಳುವವನನ್ನು ಇಲ್ಲಿನ ಭಾರತೀನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಶೇಖರ್(33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ನಗರದಲ್ಲಿರುವ ಆದಾಯ ತೆರಿಗೆ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸತ್ಯನಾರಾಯಣ ಎಂಬುವರಿಂದ 35 ಲಕ್ಷ ರೂ. ಮೌಲ್ಯದ 194 ಗ್ರಾಂ ಬಂಗಾರ, 1.3 ಕೆ.ಜಿ. ಬೆಳ್ಳಿಯ ವಸ್ತುಗಳು ಪಡೆದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈತ ಭವಿಷ್ಯ, ಗಿಳಿಶಾಸ್ತ್ರ ಹೇಳುವ ನೆಪದಲ್ಲಿ ಸಾಕಷ್ಟು ಮಂದಿಗೆ ಇದೇ ರೀತಿ ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ವಂಚನೆ ಮಾಡುತ್ತಿದ್ದ ಹಣ, ಚಿನ್ನಾಭರಣವನ್ನು ಯಾರಿಗೆ ನೀಡುತ್ತಿದ್ದ ಎಂಬ ತನಿಖೆಯಿಂದ ತಿಳಿಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ವಿವರ: ಐಟಿ ಅಧಿಕಾರಿ ಸತ್ಯನಾರಾಯಣ ಅವರು 2025ರ ಡಿಸೆಂಬರ್ನಲ್ಲಿ ಭಾರತೀನಗರ ಸರ್ಕಲ್ ರಸ್ತೆಯಲ್ಲಿ ಹೋಗುವಾಗ ಗಿಳಿಶಾಸ್ತ್ರ ಹೇಳುವ ಶೇಖರ್, ದೂರುದಾರರನ್ನು ಕಂಡು ‘ನಿಮ್ಮ ಮುಖ ನೋಡಿ ಭವಿಷ್ಯ ಹೇಳುತ್ತೇನೆ, ನಿಮಗೆ ಒಳ್ಳೆಯದಾಗುತ್ತದೆ’ ಎಂದು ನಂಬಿಸಿದ್ದ. ಬಳಿಕ ಜೀವನ ಸುಧಾರಣೆಗಾಗಿ ದೊಡ್ಡ ಪೂಜೆ ಮಾಡಿಸಬೇಕೆಂದು ಹೇಳಿ, ಮೊದಲು 50 ಸಾವಿರ ರೂ. ಪಡೆದು ಪೂಜೆ ಮಾಡಿದ್ದಾನೆ. ನಂತರ ವೃತ್ತಿಯಲ್ಲಿ ಮುಂಭಡ್ತಿ, ಉತ್ತಮ ಸ್ಥಳಕ್ಕೆ ವರ್ಗಾವಣೆ ಆಗಬೇಕೆಂದರೆ ದೊಡ್ಡ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯಲ್ಲಿದ್ದ ಚಿನ್ನಾಭರಣವನ್ನು ತರುವಂತೆ ಹೇಳಿ, 194 ಗ್ರಾಂ ಬಂಗಾರ, 1.3 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ಸತ್ಯನಾರಾಯಣ ಅವರಿಂದ ಪಡೆದು ಆರೋಪಿ ಅಲ್ಲಿಂದ ಪರಾರಿಯಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಫಜಲಪುರ | ದೇಶದ ಏಕತೆಯೇ ಜಗತ್ತಿಗೆ ಮಾದರಿ: ಶಾಸಕ ಎಂ.ವೈ.ಪಾಟೀಲ್
ಅಫಜಲಪುರ : ನಮ್ಮ ದೇಶವು ವಿವಿಧ ಜಾತಿ, ಧರ್ಮ ಮತ್ತು ಸಂಸ್ಕೃತಿಗಳ ಸಮನ್ವಯದಿಂದ ಕೂಡಿದ ದೇಶವಾಗಿದ್ದರೂ, ಸಮಾಜದಲ್ಲಿ ಎಲ್ಲರೂ ಒಂದಾಗಿ ಬದುಕುತ್ತಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು. ತಾಲೂಕಿನ ಅಂಕಲಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಹನುಮಾನ ಮಂದಿರ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತರೆ ದೇಶಗಳಿಗಿಂತ ನಮ್ಮ ಭಾರತ ದೇಶದಲ್ಲಿ ದೇವಾಲಯಗಳು ಹಾಗೂ ದೇವರ ಆರಾಧನೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ವಿಶ್ವದಲ್ಲೇ ಭಾರತ ದೇಶ ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಶೇ.80 ರಷ್ಟು ಜನರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಜೀವನದಲ್ಲಿಯೇ ನಾವು ದೇವರನ್ನು ಕಾಣುತ್ತೇವೆ ಎಂದು ಹೇಳಿದರು. ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವುದು ತಾಯಿಯ ಮಹತ್ತರ ಜವಾಬ್ದಾರಿಯಾಗಿದೆ. ಮಗುವಿನ ಮೊದಲ ಗುರು ತಾಯಿಯೇ ಆಗಿದ್ದು, ತಾಯಿ ನೀಡುವ ಸಂಸ್ಕಾರಗಳೇ ಸಮಾಜದ ಭವಿಷ್ಯವನ್ನು ರೂಪಿಸುತ್ತವೆ. ಉತ್ತಮ ಸಂಸ್ಕಾರಗಳಿಂದಲೇ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಈಗಾಗಲೇ ಭಾರತ ದೇಶ ಯೋಗ ಹಾಗೂ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಷೇತ್ರಗಳಲ್ಲಿ ನಂಬರ್ ಒನ್ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಿದ್ದ ಶ್ರೀ ವಿಶ್ವರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿ, ಕರ್ಮ ಎಂಬುದು ಮಹಾತ್ಮರಿಗೂ ತಪ್ಪಿಲ್ಲ. ಮನುಷ್ಯನು ಸದಾ ಸತ್ಕರ್ಮಗಳನ್ನು ಮಾಡುವ ಮೂಲಕ ಜೀವನವನ್ನು ಶ್ರೇಷ್ಠವಾಗಿಸಿಕೊಳ್ಳಬೇಕು ಎಂದು ಹೇಳಿದರು. ಬಡದಾಳ ತೇರಿನ ಮಠದ ಡಾ. ಅಭಿನವ ಶ್ರೀ ಚನ್ನಮಲ್ಲ ಶಿವಾಚಾರ್ಯರು ಆಶೀರ್ವಚನ ನೀಡಿ, ಸಂಸ್ಕಾರವಂತ ಮಕ್ಕಳನ್ನು ರೂಪಿಸುವುದು ತಾಯಂದಿರ ಮಹತ್ತರ ಜವಾಬ್ದಾರಿಯಾಗಿದೆ. ನಿತ್ಯ ಲಿಂಗ ಪೂಜೆ ಹಾಗೂ ಗುರುಗಳ ಪುರಾಣ ಮತ್ತು ಪ್ರವಚನಗಳನ್ನು ಆಲಿಸುವುದರಿಂದ ಸುವಿಚಾರಗಳು ಬೆಳೆಯುತ್ತವೆ ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಮನ್ಯು ಶಿವಾಚಾರ್ಯರು, ಶಶಿಧರ ದೇವರು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ, ಜಿಪಂ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡ, ಲಕ್ಷ್ಮೀ ಪಾಟೀಲ, ಡಾ.ಬಸವಣ್ಣಪ್ಪ ಪಾಟೀಲ, ಶರಣು ಪಡಶೆಟ್ಟಿ, ಪ್ರಭು ಕಲಶೆಟ್ಟಿ, ಸೂರ್ಯಕಾಂತ ಪಡಶೆಟ್ಟಿ, ಗ್ರಾಮ ಸಹಾಯಕರ ಸಂಘದ ತಾಲೂಕು ಅಧ್ಯಕ್ಷ ಅಣ್ಣಾರಾಯ ಜಮಾದಾರ, ಯಲ್ಲಣ್ಣಗೌಡ ಧಣ್ಣೂರ, ಎಸ್.ಎಸ್. ಪಾಟೀಲ, ಹಣಮಂತ್ರಾಯ ಕುಂಬಾರ, ಮಲ್ಲಿಕಾರ್ಜುನ ಪಡಶೆಟ್ಟಿ, ಭೀಮಾಶಂಕರ ಕುಂಬಾರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ತಾಯಂದಿರು ಉಪಸ್ಥಿತಿರಿದ್ದರು.
Sedam | ಗುಂಡೇಪಲ್ಲಿ ಶ್ರೀ ಸೋಮೇಶ್ವರ ಸಿದ್ದ ಸಂಸ್ಥಾನ ಜಾತ್ರಾ ಮಹೋತ್ಸವ
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ 'ಗೌರವ ಶ್ರೀರಕ್ಷೆ' ಸತ್ಕಾರ
Sedam | ರಸ್ತೆ ಸುಧಾರಣೆ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಡಿಗಲ್ಲು
ಸೇಡಂ: ಇಂದಿರಾ ಗಾಂಧಿ ಅವರಿಂದ ಹಿಡಿದು ಸಿಎಂ ಸಿದ್ದರಾಮಯ್ಯವರ ನೇತೃತ್ವದ ಕಾಂಗ್ರೆಸ್ ಸರ್ಕಾರಗಳು ಕೇವಲ ಬಡಜನರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ರಾಜ್ಯದ ಅಭಿವೃದ್ಧಿಯತ್ತ ಕೂಡ ಗಮನಹರಿಸುತ್ತಿರುವ ಏಕೈಕ ಪಕ್ಷ ನಮ್ಮ ಕಾಂಗ್ರೆಸ್ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು. ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ 2025-26 ಸಾಲಿನ ಮುಖ್ಯಮಂತ್ರಿರವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಾತಿಯಾದ ರಾಜ್ಯ ಹೆದ್ದಾರಿ 15 ರ ಸೇಡಂ ಪಟ್ಟಣದ ಕೋಡ್ಲಾ ಕ್ರಾಸ್ ನಿಂದ ಕೋಡ್ಲಾ ಗ್ರಾಮದ ರಸ್ತೆ ಸುಧಾರಣೆ ಅಂದಾಜು 500 ಲಕ್ಷಗಳ ಕಾಮಗಾರಿ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಮಾತನಾಡಿದರು. ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿಯಾಗಲ್ಲ ಎಂದು ವಿರೋಧ ಪಕ್ಷದವರು ಹೇಳ್ತಾರೆ, ಆದರೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಬಡಜನರಿಗಾಗಿ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ಈಗಲು ನೀಡುತ್ತಾ ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಕೂಡ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು. ವಿರೋಧ ಪಕ್ಷದವರು ಸಿದ್ದರಾಮಯ್ಯ ನವರ ಸರ್ಕಾರ ಸಾಲದ ಸುಳಿಯಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಸಾಲದ ಮಿತಿಯಲ್ಲಿದ್ದೇವೆ ಹೊರತು, ಸಾಲದ ಸುಳಿಯಲ್ಲಿಲ್ಲ, ಬದಲಾಗಿ ಸಾಮಾನ್ಯ ಜನರ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದೇವೆ ಎಂದರು. 20 ವರ್ಷಗಳ ಕಾಲ ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ನೀಡುತ್ತೇನೆ,ಕಳೆದ ಬಾರಿ ಅಧಿಕಾರದಲ್ಲಿದ್ದ ಶಾಸಕರು ಈ ಕ್ಷೇತ್ರಕ್ಕೆ ಏನೆಲ್ಲ ಕೊಡುಗೆ ನೀಡಿದ್ದಾರೆ ಎಂಬುದು ಕೆಲಸಗಳ ಪಟ್ಟಿ ನೀಡಲು ಹೇಳಿ ನಿಜವಾದ ಅಭಿವೃದ್ಧಿ ತಿಳಿಯಲಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ಇ.ಓ ಚೆನ್ನಪ್ಪ ರಾಯಣ್ಣವರ್, ಕಾಂಗ್ರೆಸ್ ಮುಖಂಡರಾದ ಮಹಾಂತಪ್ಪ ಸಂಗಾವಿ, ಕೃಷಿ ಸಮಾಜದ ರಾಜ್ಯ ಸಮಿತಿ ಸದಸ್ಯರಾದ ಬಸವರಾಜ ಪಾಟೀಲ್ ಉಡಗಿ, ಸೇಡಂ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಮುಧೋಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರವೀಂದ್ರ ನಂದಿಗಾಮ್, ಸತೀಶರೆಡ್ಡಿ ಪಾಟೀಲ್ ಪಾಟೀಲ್ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ಮನಳ್ಳಿ, ರವಿ ಸಾಹುಕಾರ್ ತಂಬಾಕೆ, ಶಂಭುರೆಡ್ಡಿ ಮದನಿ, ರಾಜು ಪಾಟೀಲ್ ಬೆನಕನಳ್ಳಿ, ಸತೀಶ ಪೂಜಾರಿ, ಜೈಭೀಮ್ ಉಡಗಿ ಸೇರಿದಂತೆ ಹಲವರಿದ್ದರು.
ಅಫಜಲಪುರ| ಶಾಸಕ ಎಂ.ವೈ. ಪಾಟೀಲ್ ಸಮ್ಮುಖದಲ್ಲೇ ಪುತ್ರ ಅರುಣಕುಮಾರ ಪಾಟೀಲ್ ವಿರುದ್ಧ ಮಾಲಿಕಯ್ಯ ಗುತ್ತೇದಾರ್ ವಾಗ್ದಾಳಿ
ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ವಿರುದ್ಧ ಹೈಕಮಾಂಡ್ ಗೆ ದೂರು
ಪ್ರತಿಷ್ಟಿತ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಎಪ್ಸ್ಟೀನ್ ಸಂಪರ್ಕ ಹೊಂದಿದ ಧನಿಕರು: ಯಾರೆಲ್ಲಾ? ಲಿಸ್ಟ್ ಇಲ್ಲಿದೆ…
ಪ್ರತಿಷ್ಟಿತ ಫೋರ್ಬ್ಸ್ ಬಿಡುಗಡೆ ಮಾಡಿದ 40ನೇ ವಾರ್ಷಿಕ ‘ವರ್ಲ್ಡ್ಸ್ ಬಿಲಿಯನೇರ್ ಪಟ್ಟಿ’ಯಲ್ಲಿ ಒಟ್ಟು 3,428 ಬಿಲಿಯನೇರ್ಗಳ ಹೆಸರುಗಳಿವೆ. ಆ ಪೈಕಿ ಹಲವರ ಹೆಸರು ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಸಂಬಂಧಿತ ದಾಖಲೆಗಳಲ್ಲಿ ಉಲ್ಲೇಖಗೊಂಡಿವೆ. ಬಿಲ್ ಗೇಟ್ಸ್, ರಿಚರ್ಡ್ ಬ್ರಾನ್ಸನ್, ಸೆರ್ಗೆ ಬ್ರಿನ್ ಮುಂತಾದವರ ಹೆಸರುಗಳು ಫೋರ್ಬ್ಸ್ ಪಟ್ಟಿಯಲ್ಲಿವೆ. ಹಾಗೇ, ಎಪ್ಸ್ಟೀನ್ ಫೈಲ್ಸ್ನಲ್ಲೂ ತಳುಕು ಹಾಕಿಕೊಂಡಿವೆ.
ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್ ರಾಜಕಾರಣಿಗಳ ನಿಧನದ ಬಳಿಕ ತೆರವಾಗಿದ್ದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿದೆ. ಈ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸುವುದು ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ ಪಾಲಿಗೆ ದೊಡ್ಡ ಸವಾಲಾಗಿದೆ. ಕಾಂಗ್ರೆಸ್ಗೆ ಕುಟುಂಬ ರಾಜಕಾರಣ ಹಾಗೂ ಕುಟುಂಬದೊಳಿಗೆ ಪೈಟ್ ಸಮಸ್ಯೆಯಾದರೆ, ಬಿಜೆಪಿಗೆ ದಾವಣಗೆರೆಯಲ್ಲಿ ನಾಯಕರ ನಡುವಿನ ಭಿನ್ನಮತ ಸವಾಲಾಗಿದೆ. ಎರಡು ಕ್ಷೇತ್ರಗಳಿಂದ ಬಿಜೆಪಿ ಕಾಂಗ್ರೆಸ್ ಹಾಗೂ ಇತರೆ ಸೇರಿ 13 ಸಂಭಾವ್ಯರಿದ್ದಾರೆ.
ವಿಜಯನಗರ | ಜಿಲ್ಲೆಯಲ್ಲಿ ಅಡುಗೆ ಅನಿಲದ ಕೊರತೆ ಇಲ್ಲ : ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ
ವಿಜಯನಗರ (ಹೊಸಪೇಟೆ) : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಅಡುಗೆ ಅನಿಲ (ಎಲ್ಪಿಜಿ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಸುಳ್ಳು ಸುದ್ದಿಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ. ದೇಶಾದ್ಯಂತ ಎಲ್ಪಿಜಿ ಉತ್ಪಾದನೆ ಹಾಗೂ ಬಾಟಲಿಂಗ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ಸಾಕಷ್ಟು ಪ್ರಮಾಣದ ದಾಸ್ತಾನು ಲಭ್ಯವಿದೆ. ಆದರೆ ಹೆಚ್ಚಿನ ಗ್ರಾಹಕರು ಏಕಕಾಲದಲ್ಲಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಸರ್ವರ್ ಮೇಲೆ ಒತ್ತಡ ಉಂಟಾಗಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಅವರು ಸ್ಪಷ್ಟಪಡಿಸಿದರು. ಗ್ರಾಹಕರು ಒಂದು ಸಿಲಿಂಡರ್ ಪಡೆದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡಲು 25 ದಿನಗಳ ಕಾಲಾವಕಾಶವಿರುತ್ತದೆ ಎಂದು ತಿಳಿಸಿದರು. ಎಲ್ಪಿಜಿ ಬುಕ್ಕಿಂಗ್ಗಾಗಿ IVRS, ಮಿಸ್ಡ್ ಕಾಲ್ ಮಾತ್ರವಲ್ಲದೆ WhatsApp, ಮೊಬೈಲ್ ಆಪ್ ಹಾಗೂ PhonePe, Paytm ಸೇರಿದಂತೆ ಪಾವತಿ ಅಪ್ಲಿಕೇಶನ್ಗಳ ಮೂಲಕವೂ ಬುಕ್ಕಿಂಗ್ ಮಾಡಬಹುದು. ಯಾವುದೇ ದೂರುಗಳು ಅಥವಾ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಂಬಂಧಿತ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆಗಳು ಹೊಸಪೇಟೆ – 8088691626, 9036780356, ಕೂಡ್ಲಿಗಿ – 6362014425, 6361378138, ಹರಪನಹಳ್ಳಿ – 8123823075, ಹಗರಿಬೊಮ್ಮನಹಳ್ಳಿ – 8277353807, 9071280287, ಹೂವಿನಹಡಗಲಿ – 7337745586, 8197130384, ಕೊಟ್ಟೂರು – 9945730678, ಜಿಲ್ಲಾ ಆಹಾರ ಉಪ ನಿರ್ದೇಶಕರ ಕಚೇರಿ – 6366533476. ಗೃಹಬಳಕೆಯ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಅಥವಾ ಅನಧಿಕೃತವಾಗಿ ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಮೇಲ್ಕಂಡ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಮೇಲುಕೋಟೆ ವೈರಮುಡಿ ಉತ್ಸವ ಮಾರ್ಚ್ 23ರಿಂದ ಆರಂಭ: ಚೆಲುವ ನಾರಾಯಣನ ಕೈಂಕರ್ಯಕ್ಕೆ ಸಕಲ ಸಿದ್ಧತೆ
ಮಂಡ್ಯ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕೇಂದ್ರವಾದ ಮೇಲುಕೋಟೆಯಲ್ಲಿ ಈ ವರ್ಷದ ವಿಶ್ವಪ್ರಸಿದ್ಧ ಶ್ರೀ ಚೆಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಸಾಂಪ್ರದಾಯಿಕ ಕೈಂಕರ್ಯಗಳಿಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವವು ಈ ವರ್ಷ ಮಾರ್ಚ್ 23 ರಿಂದ ಪ್ರಾರಂಭವಾಗಿ ಏಪ್ರಿಲ್ 4 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ಉತ್ಸವದ ಅತ್ಯಂತ ಪ್ರಮುಖ
ಹರಪನಹಳ್ಳಿ | ಆಸ್ತಿಗಾಗಿ ಅಣ್ಣನನ್ನು ಕೊಂದು ಅಪಘಾತವೆಂದು ಬಿಂಬಿಸಿದ ತಮ್ಮ !
ಇಬ್ಬರು ಆರೋಪಿಗಳ ಬಂಧನ
Kalaburagi | ಪುಸ್ತಕ ಪ್ರಾಧಿಕಾರದ ಚಿತ್ತ ಗ್ರಾಮೀಣ ಭಾಗದತ್ತ: ಬಿ.ಎಚ್.ನಿರಗುಡಿ
ನನ್ನ ನೆಚ್ಚಿನ ಪುಸ್ತಕ ವಿಶೇಷ ಉಪನ್ಯಾಸ ಕಾರ್ಯಕ್ರಮ
LPG ಸಿಲಿಂಡರ್ ಅಭಾವ ನೀಗಿಸಲು ಕೇಂದ್ರಕ್ಕೆ ಒತ್ತಾಯ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಎಲ್ಪಿಜಿ ಅಭಾವವನ್ನು ನೀಗಿಸಲು ಹೊರದೇಶದಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಎಲ್ ಪಿ ಜಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ವಿಧಾನಮಂಡಲದಲ್ಲಿ ಸರಕಾರದ ವತಿಯಿಂದ ಈ ಬಗ್ಗೆ ಈಗಾಗಲೇ ಉತ್ತರ ನೀಡಲಾಗಿದೆ.. ಆಹಾರಕ್ಕಾಗಿ ಹೋಟೆಲ್ ಗಳ ಮೇಲೆ ಅವಲಂಬಿತರಾಗುವ ಜನಸಂಖ್ಯೆ ಸಾಕಷ್ಟಿದೆ. ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ, ಜನಜೀವನ ಅಸ್ತವ್ಯಸ್ಥವಾಗುತ್ತದೆ. ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿಯವರು ಎಲ್ ಪಿ ಜಿ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿರ್ವಹಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು. ಕರ್ನಾಟಕದಲ್ಲಿ ಮಾತ್ರ ಎಲ್ ಪಿ ಜಿ ಪೂರೈಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಬಿಜೆಪಿಯ ನಾಯಕರು ಟೀಕಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯ ಬಿಜೆಪಿಯವರು ಮಾತನಾಡುವ ಬದಲು, ಎಲ್ ಪಿ ಜಿ ಹೆಚ್ಚಿನ ಸರಬರಾಜಿಗೆ ಕ್ರಮ ವಹಿಸಲಿ ಎಂದು ತಿಳಿಸಿದರು.
Raichur | ಚಲಿಸುತ್ತಿದ್ದ ಬೈಕ್ಗೆ ಕಾಡು ಹಂದಿ ಢಿಕ್ಕಿ : ಇಬ್ಬರಿಗೆ ಗಂಭೀರ ಗಾಯ
ರಾಯಚೂರು: ಯುಗಾದಿ ಹಬ್ಬದ ಹಿನ್ನೆಲೆ ಶ್ರೀಶೈಲಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಸವಾರರಿಬ್ಬರಿಗೆ ಕಾಡು ಹಂದಿ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಸಮೀಪದ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಗಾಯಗೊಂಡವರನ್ನು ದುಳ್ಳಯ್ಯ(28) ಶಂಕರ್ (27) ಎಂದು ಗುರುತಿಸಲಾಗಿದೆ. ಇವರು ರಾಯಚೂರು ತಾಲೂಕಿನ ಉಂಡ್ರಾಳ ದೊಡ್ಡಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ರಸ್ತೆ ದಾಟುತ್ತಿದ್ದ ಕಾಡುಹಂದಿಗೆ ಬೈಕ್ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ತೀವ್ರತೆಗೆ ಇಬ್ಬರು ಸವಾರರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಪ್ರಯಾಣಿಕರು ಗಾಯಾಳುಗಳನ್ನು ರಕ್ಷಿಸಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Karnataka Election: ಪಂಚರಾಜ್ಯಗಳ ಜೊತೆ ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾಚಣೆ ದಿನಾಂಕ ಘೋಷಣೆ
Karnataka Elections 2026: ಭಾರತೀಯ ಚುನಾವಣಾ ಆಯೋಗವು ಇಂದು (ಮಾರ್ಚ್ 15) ಮಹತ್ವದ ಪತ್ರಿಕಾಗೋಷ್ಠಿ ನಡೆಸಿ ದೇಶದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆ ದಿನಾಂಕಗಳನ್ನು ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿಧಾನಸಭಾ ಚುನಾವಣೆ 2026
Kerala: ಕೇರಳಂ ವಿಧಾನಸಭೆ ಚುನಾವಣೆ 2026: ಎಲ್ಡಿಎಫ್–ಯುಡಿಎಫ್ ನಡುವೆ ಪೈಪೋಟಿ, ಹೇಗಿದೆ ರಾಜಕೀಯ ಕಣ
Kerala Assembly Election 2026: ಕೇರಳಂ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈ ಬಾರಿ ಕೇರಳಂನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಇದೇ ಸಂದರ್ಭದಲ್ಲಿ ಕಳೆದ ಎರಡು ಅವಧಿಯಿಂದಲೂ ಅಧಿಕಾರದಲ್ಲಿ ಇರುವ ಎಡ ಪ್ರಜಾಸತ್ತಾತ್ಮಕ ರಂಗ (LDF) ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದರೆ, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಈ ಬಾರಿ ಅಧಿಕಾರಕ್ಕೇರುವ ತವಕದಲ್ಲಿದೆ. ಕಾಂಗ್ರೆಸ್
ದಾಳಿಯ ನಡುವೆಯೂ ಇರಾನ್ ನ ಖಾರ್ಗ್ ದ್ವೀಪದಲ್ಲಿ ತೈಲ ಲೋಡಿಂಗ್ ಮುಂದುವರಿಕೆ: ವರದಿ
ಟೆಹ್ರಾನ್: ಅಮೆರಿಕವು ಇರಾನ್ ನ ಖಾರ್ಗ್ ದ್ವೀಪದಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ ಎರಡು ದಿನಗಳ ಬಳಿಕವೂ, ಅಲ್ಲಿನ ತೈಲ ಸಾಗಣೆ ಚಟುವಟಿಕೆಗಳು ಸ್ಥಗಿತವಾಗದೆ ಮುಂದುವರಿದಿದೆ ಎಂದು Aljazeera ವರದಿ ಮಾಡಿದೆ. ಒಂದು ಟ್ಯಾಂಕರ್ ತೈಲವನ್ನು ಲೋಡ್ ಮಾಡುತ್ತಿರುವುದು ಕಂಡುಬಂದಿದ್ದು, ನೌಕೆ-ಟ್ರ್ಯಾಕಿಂಗ್ ವೇದಿಕೆ ‘ಟ್ಯಾಂಕರ್ ಟ್ರಾಕರ್ಸ್’ ಈ ಮಾಹಿತಿಯನ್ನು ನೀಡಿದೆ. ಅದೇ ವೇಳೆ, ಲಂಗರು ಹಾಕುವ ಪ್ರದೇಶದಲ್ಲಿ ಇನ್ನೂ ಏಳು ಟ್ಯಾಂಕರ್ ಗಳು ಇರುವುದಾಗಿ ಟ್ರಾಕರ್ಸ್ ತಿಳಿಸಿದೆ. ಉಪಗ್ರಹ ಚಿತ್ರಣಗಳ ಪ್ರಕಾರ, ಈ ಟ್ಯಾಂಕರ್ ಗಳಲ್ಲಿ ಐದು ಈಗಾಗಲೇ ಇಂಧನ ತೈಲವನ್ನು ಲೋಡ್ ಮಾಡಿಕೊಂಡಿದ್ದು, ಉಳಿದ ಎರಡು ಟ್ಯಾಂಕರ್ ಗಳು ಲೋಡಿಂಗ್ ಪ್ರಕ್ರಿಯೆಗೆ ಕಾಯುತ್ತಿವೆ ಎಂದು ತಿಳಿದುಬಂದಿದೆ. ಈ ಟ್ಯಾಂಕರ್ಗಳು ಯಾರಿಗೆ ಸೇರಿವೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.
Yadgiri | ಮೂಢನಂಬಿಕೆಯಿಂದ ದೂರವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ಮಹಿಳೆಯರಿಗೆ ಭಾರತಿ ದರ್ಶನಾಪುರ ಸಲಹೆ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಬಹುಜನರನ್ನು ಆಳುವ ಜನರನ್ನಾಗಿಸುವುದೇ ನನ್ನ ಚಳವಳಿಯ ಗುರಿ: ಕಾನ್ಶೀರಾಮ್
ಇಂದು ಕಾನ್ಶೀರಾಮ್ ಜನ್ಮದಿನ
ಭಾರತವು LPG ಆಮದಿನ ಮೇಲೆ ಅವಲಂಬಿತವಾದದ್ದು ಹೇಗೆ?
ರಿಫೈನಿಂಗ್ ಸಾಮರ್ಥ್ಯವನ್ನು ವಿಸ್ತರಿಸುವುದು ಮತ್ತು ಇತರ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಹೊರತಾಗಿಯೂ ಎಲ್ಪಿಜಿ ಭಾರತದ ಇಂಧನ ಭದ್ರತೆಯಲ್ಲಿ ದುರ್ಬಲ ಕೊಂಡಿಯಾಗಿ ಉಳಿದಿದೆ. ಭಾರತದಲ್ಲಿ ತೀವ್ರವಾದ ಅಡುಗೆ ಅನಿಲ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಈ ಬಿಕ್ಕಟ್ಟು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಮೇಲಿನ ದೇಶದ ಭಾರೀ ಅವಲಂಬನೆಯನ್ನು ಬಹಿರಂಗಪಡಿಸುತ್ತದೆ. ರಿಫೈನಿಂಗ್ ಸಾಮರ್ಥ್ಯವನ್ನು ವಿಸ್ತರಿಸುವುದು ಮತ್ತು ಇತರ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಹೊರತಾಗಿಯೂ ಎಲ್ಪಿಜಿ ಭಾರತದ ಇಂಧನ ಭದ್ರತೆಯಲ್ಲಿ ದುರ್ಬಲ ಕೊಂಡಿಯಾಗಿ ಉಳಿದಿದೆ. ರಫ್ತು ಮೇಲೆ ಅವಲಂಬನೆ ಶೇ 60ರಷ್ಟು ಎಲ್ಪಿಜಿ ಸರಬಾರಜು ಆಮದು ಮಾಡಿಕೊಳ್ಳಲಾಗುತ್ತಿದ್ದು, ಭಾರತದ ಅತಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನವಾಗಿದೆ. 1998-99ರ 1,722 TMT ಗೆ ಹೋಲಿಸಿದಲ್ಲಿ ಆಮದು 2024-25ರಲ್ಲಿ 20,667 TMT ರಷ್ಟು ಅಂದರೆ, 12 ಪಟ್ಟು ಹೆಚ್ಚಾಗಿದೆ. ವೆಚ್ಚದ ವಿಚಾರದಲ್ಲಿ ಲೆಕ್ಕ ಹಾಕಿದರೆ ಎಲ್ಪಿಜಿ ಆಮದುಗಳು 1998-99 ರಲ್ಲಿನ 1,274 ಕೋಟಿ ರೂ.ಗಳಿಂದ 2024-25ರಲ್ಲಿ 1.06 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಅಂದರೆ ಪೆಟ್ರೋಲಿಯಂ ಆಮದು ವೆಚ್ಚಗಳು ಶೇ 53ರಷ್ಟು ಹೆಚ್ಚಾಗಿದೆ. ಭಾರತ ಈಗ ರಫ್ತು ಮಾಡುವಂತಹ ಡೀಸೆಲ್ ಮತ್ತು ಪೆಟ್ರೋಲ್ಗಳಂತಲ್ಲದೆ, ಗೃಹಬಳಕೆಯ ಕಾರಣದಿಂದ ಎಲ್ಪಿಜಿ ಆಮದುಗಳು ಏರಿವೆ. ಬೇಡಿಕೆ ಚಾಲಿತ ಉದ್ಯಮ ಎಲ್ಪಿಜಿ ಬಳಕೆ 1998-99 ಮತ್ತು 2023-24 ನಡುವೆ ಐದು ಪಟ್ಟು ಹೆಚ್ಚಾಗಿದೆ. ನಗರೀಕರಣ ಮತ್ತು ಮಧ್ಯಮ ವರ್ಗದ ಜನರ ನಡುವೆ ಬಳಕೆಯ ಪ್ರಮಾಣ ಹೆಚ್ಚಾಗಿರುವುದು ಮುಖ್ಯ ಕಾರಣವಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಂತಹ (PMUY) ಯೋಜನೆಗಳ ಪರಿಣಾಮವಾಗಿ ಉಚಿತ/ಸಬ್ಸಿಡಿಯ ಎಲ್ಪಿಜಿ ಕನೆಕ್ಷನ್ಗಳನ್ನು ಗ್ರಾಮೀಣ ಮನೆಗಳಿಗೆ ನೀಡಲಾಗಿತ್ತು. PMUY ಯೋಜನೆ ಆರಂಭಿಸಿದ ನಂತರ 2016-17 ರಲ್ಲಿ ಎಲ್ಪಿಜಿ ಬಳಕೆ ಶೇ 10.1 ರಷ್ಟು ಏರಿಕೆಯಾಗಿತ್ತು. 2024ರಲ್ಲಿ ಭಾರತದಲ್ಲಿ 33.37 ಕೋಟಿ ಎಲ್ಪಿಜಿ ಗ್ರಾಹಕರಿದ್ದರು. ಅವುಗಳಲ್ಲಿ 10.56 ಕೋಟಿ ಗ್ರಾಹಕರು PMUY ಫಲಾನುಭವಿಗಳಾಗಿದ್ದರು. ಉತ್ಪಾದನೆಗೆ ಇರುವ ಅಡಚಣೆಗಳು ಗೃಹೋಪಯೋಗಿ ಎಲ್ಪಿಜಿ ಬಳಕೆಯು 25 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಬೇಡಿಕೆಯು ಬೆಳವಣಿಗೆಗಿಂತ ಕಡಿಮೆಯೇ ಇತ್ತು. ಆದರೆ 2017-18ರಿಂದ ಸಂಸ್ಕರಣಾಗಾರಗಳ ವಿಸ್ತರಣೆಯ ಹೊರತಾಗಿಯೂ ಉತ್ಪಾದನೆಯು ವಾರ್ಷಿಕವಾಗಿ 13,000 TMT ನಷ್ಟೇ ಸ್ಥಗಿತಗೊಂಡಿದೆ. ಸಂಸ್ಕರಣಾಗಾರದ ಉತ್ಪಾದನೆಯಲ್ಲಿ ಎಲ್ಪಿಜಿ ಪಾಲು 1998-99ರಲ್ಲಿ ಶೇ 5.2ರಷ್ಟಿದ್ದುದು 2024-25ರಲ್ಲಿ ಶೇ 4.2ರಷ್ಟಕ್ಕೆ ಇಳಿದಿದೆ. ಪೆಟ್ರೋಲ್ನ ಪಾಲು ದುಪ್ಪಟ್ಟಾಗಿದೆ. ಭಾರತ ಸ್ವತಃ ಉತ್ಪಾದನೆಯನ್ನು ಕಡಿಮೆ ಮಾಡಿ ಆಮದು ಮೇಲೆ ಹೆಚ್ಚು ಅವಲಂಬನೆಗೊಂಡಿದೆ. ಭೌಗೋಳಿಕ ರಾಜಕೀಯ ಸಮಸ್ಯೆ ಭಾರತಕ್ಕೆ ಬರುವ ಶೇ 90ರಷ್ಟು ಎಲ್ಪಿಜಿ ಆಮದುಗಳು ಹಾರ್ಮುಝ್ ಜಲಸಂಧಿಯ ಮೂಲಕ ಬರುತ್ತದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಈ ಸಾಗಾಟ ಹಾದಿ ಸ್ಥಗಿತಗೊಂಡಿದೆ. ರಸ್ತೆ ಸ್ಥಗಿತಗೊಂಡ ಕಾರಣ ಭಾರತದ ಶೇ 54ರಷ್ಟು ಎಲ್ಪಿಜಿ ಸರಬರಾಜು ರಾತ್ರೋರಾತ್ರಿ ನಿಂತು ಹೋಗಿದೆ. ಹೀಗಾಗಿ ಕೊರತೆ ಕಾಣಿಸಿಕೊಂಡಿದೆ. ಭಾರತ ರಷ್ಯಾದಿಂದ ತೈಲ ಸರಬಾರಜು ಬದಲಾಗಿ ಬೇರೆಡೆಯಿಂದ ಹೆಚ್ಚು ತೈಲ ಸರಬರಾಜಿಗೆ ಪ್ರಯತ್ನಿಸಿದೆ. ಆದರೆ ಎಲ್ಪಿಜಿಗೆ ಹೆಚ್ಚು ಪರ್ಯಾಯಗಳಿಲ್ಲ. ತುರ್ತು ಕ್ರಮವಾಗಿ ಗೃಹಬಳಕೆಯ ಎಲ್ಪಿಜಿ ಉತ್ಪಾದನೆಯಲ್ಲಿ ಶೇ 25ರಷ್ಟು ಏರಿಸಲಾಗಿದೆ. ಪ್ರೊಪೇನ್, ಬ್ಯುಟೇನ್ ಮತ್ತು ಪೆಟ್ರೋಕೆಮಿಕಲ್ ಹರಿವುಗಳನ್ನು ಎಲ್ಪಿಜಿಗೆ ಪರಿವರ್ತಿಸಲಾಗುತ್ತಿದೆ. ದೀರ್ಘ ಬುಕಿಂಗ್ ಮಧ್ಯಂತರಗಳನ್ನು ಘೋಷಿಸಲಾಗಿದೆ. ನಗರಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 45 ದಿನಗಳನ್ನು ಘೋಷಿಸಲಾಗಿದೆ. ವಾಣಿಜ್ಯ ಬಳಕೆದಾರರಿಗೆ ಪರ್ಯಾಯ ಇಂಧನಗಳಾದ ಸೀಮೆಎಣ್ಣೆ, ಬಯೋಮಾಸ್ ಮತ್ತು ಕಲ್ಲಿದ್ದಲು ಬಳಕೆಗೆ ಸೂಚಿಸಲಾಗಿದೆ. ಎಲ್ಪಿಜಿ ಕುರಿತಂತೆ ಕಳವಳವೇಕೆ? ಗೃಹೋಪಯೋಗಿ ಸರಬರಾಜುಗಳಿಗೆ ಈವರೆಗೂ ತೊಂದರೆಯಾಗಿಲ್ಲ. ಆದರೆ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರು ತೀವ್ರ ಕೊರತೆ ಎದುರಿಸುತ್ತಿದ್ದಾರೆ. ಆತಂಕದಿಂದ ಬುಕಿಂಗ್ ಮಾಡುವುದು ಮತ್ತು ಕಾಳಸಂತೆಯ ಮಾರಾಟ ಬಿಕ್ಕಟ್ಟಿಗೆ ಕಾರಣವಾಗಿದೆ. ಭಾರತದ ಎಲ್ಪಿಜಿ ಅವಲಂಬನೆಯು ರಚನಾತ್ಮಕ ಅಸಮತೋಲನವನ್ನು ಎತ್ತಿ ತೋರಿಸುತ್ತದೆ. ಕಚ್ಚಾ ಮತ್ತು ಸಂಸ್ಕರಿಸಿದ ಇಂಧನಗಳ ಬಳಕೆಯನ್ನು ವೈವಿಧ್ಯಮಯ ಮೂಲಗಳಿಗೆ ವಿಸ್ತರಿಸಲಾಗಿದ್ದರೂ, ಎಲ್ಪಿಜಿ ಸರಬರಾಜಿಗೆ ಹಾರ್ಮುಝ್ ಜಲಸಂಧಿಯನ್ನೇ ಹೆಚ್ಚು ಆಶ್ರಯಿಸಲಾಗುತ್ತಿದೆ. ಹೊಸ ದೇಶೀಯ ಉತ್ಪಾದನಾ ತಂತ್ರಗಳು ಅಥವಾ ಪರ್ಯಾಯ ಪೂರೈಕೆ ಸರಪಳಿಗಳಿಲ್ಲದೆ, ಎಲ್ಪಿಜಿ ಭಾರತಕ್ಕೆ ದೊಡ್ಡ ಚಿಂತೆಯ ವಿಚಾರವಾಗಿ ಪರಿಣಮಿಸಲಿದೆ.
ಅಧಿಕ ಪ್ರೊಟೀನ್ ಆಹಾರ ಸೇವನೆ ಕಿಡ್ನಿಗೆ ಅಪಾಯಕಾರಿಯೇ?; ವೈದ್ಯರು ಹೇಳುವುದೇನು?
ಪ್ರೊಟೀನ್ ಆಹಾರಗಳು ಕಿಡ್ನಿಗೆ ಹೇಗೆ ತೊಂದರೆ ಕೊಡುತ್ತವೆ ಎನ್ನುವ ಬಗ್ಗೆ ನೆಫ್ರೊಲಜಿಸ್ಟ್ ಡಾ ವಿನಾಯಕ್ ಉಕಿರ್ಡೆ ಎಚ್ಚರಿಕೆ ನೀಡಿದ್ದಾರೆ. ವೈದ್ಯರು ಸಾಮಾನ್ಯವಾಗಿ ದೈನಂದಿನ ಪ್ರೊಟೀನ್ ಸೇವನೆಯನ್ನು ಮೇಲ್ವಿಚಾರಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಹೀಗೆ ಪ್ರೊಟೀನ್ ಸೇವನೆಯಿಂದ ದೈನಂದಿನ ಹಸಿವೆಯ ಹಂಬಲವನ್ನು ನಿಗ್ರಹಿಸಬಹುದು. ಅಲ್ಲದೆ, ಹಸಿವೆಯನ್ನು ನೀಗಿಸುವ ತಕ್ಷಣದ ಪ್ರಯೋಜನಗಳಿಂದ ಹಿಡಿದು ಸ್ನಾಯು ಮತ್ತು ಮೂಳೆ ಆರೋಗ್ಯ ಸುಧಾರಿಸುವಂತಹ ದೀರ್ಘಕಾಲೀನ ಆರೋಗ್ಯದವರೆಗೆ ದೇಹಕ್ಕೆ ಪ್ರೊಟೀನ್ ಅತ್ಯಗತ್ಯವಾಗಿದೆ. ಆದರೆ ಕೆಲವು ಆರೋಗ್ಯ ತಜ್ಞರ ಪ್ರಕಾರ, ಪ್ರೊಟೀನ್ ಅಗತ್ಯವನ್ನು ತಪ್ಪಾಗಿ ಭಾವಿಸಿಕೊಂಡು ಅತಿಯಾಗಿ ಪ್ರೊಟೀನ್ ಸೇವಿಸುವುದು, ಪ್ರೊಟೀನ್ ಆಹಾರವನ್ನು ಮಾತ್ರ ಸೇವಿಸಿ ಇತರ ಪೋಷಕಾಂಶಗಳನ್ನು ನಿರ್ಲಕ್ಷಿಸಿದಲ್ಲಿ ಹೆಚ್ಚು ಪ್ರೊಟೀನ್ಗಳಿಂದ ಮೂತ್ರಪಿಂಡಗಳಿಗೆ ಒತ್ತಡವನ್ನುಂಟುಮಾಡುವ ಸಾಧ್ಯತೆಯಿದೆ. ಪ್ರೊಟೀನ್ ಆಹಾರಗಳು ಕಿಡ್ನಿಗೆ ಹೇಗೆ ತೊಂದರೆ ಕೊಡುತ್ತವೆ ಎನ್ನುವ ಬಗ್ಗೆ ನೆಫ್ರೊಲಜಿಸ್ಟ್ ಡಾ ವಿನಾಯಕ್ ಉಕಿರ್ಡೆ ಎಚ್ಚರಿಕೆ ನೀಡಿದ್ದಾರೆ. ಅಧಿಕ ಪ್ರೊಟೀನ್ ಮತ್ತು ಶೂನ್ಯ ಕಾರ್ಬೋಹೈಡ್ರೇಟ್ ಸೇವನೆಯ ಪ್ರವೃತ್ತಿ ದೇಹದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ. ಪ್ರೊಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಅಪಾಯ “ನಾವು ಪ್ರೊಟೀನ್ ಸೇವನೆ ಮಾಡಿದಾಗ ದೇಹವು ಅದನ್ನು ಅಮಿನೋ ಆಮ್ಲಗಳಾಗಿ ಪರಿವರ್ತಿಸುತ್ತದೆ. ಹೀಗೆ ಯೂರಿಯ ಮತ್ತು ಕ್ರಿಯೇಟಿನೈನ್ನಂತಹ ಸಾರಜನಕ ತ್ಯಾಜ್ಯ ಉತ್ಪನ್ನಗಳ ರಚನೆಗೆ ಕಾರಣವಾಗುತ್ತದೆ. ಈ ತ್ಯಾಜ್ಯಗಳನ್ನು ಮೂತ್ರಪಿಂಡಗಳು ಫಿಲ್ಟರ್ ಮಾಡಿ ಹೊರ ಹಾಕಲು ಸಹಾಯ ಮಾಡುತ್ತದೆ. ಅಧಿಕ ಪ್ರೊಟೀನ್ ಆಹಾರ ಈ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ” ಎನ್ನುತ್ತಾರೆ ವಿನಾಯಕ್. “ಅಧಿಕ ಪ್ರೊಟೀನ್ ಆಹಾರವು ಮೂತ್ರಪಿಂಡಗಳ ಮೇಲೆ ತುಂಬಾ ಹೊರೆಯಾಗುತ್ತದೆ. ಇದರಿಂದಾಗಿ ಗ್ಲೊಮೆರುಲರ್ ಹೈಪರ್ಫಿಲ್ಟರೇಶನ್ ಎನ್ನುವ ಸ್ಥಿತಿಗೆ ಕಾರಣವಾಗುತ್ತದೆ. ಕಿಡ್ನಿ ಅತಿಯಾಗಿ ಕೆಲಸ ಮಾಡಿ ಫಿಲ್ಟರ್ ಮಾಡುತ್ತದೆ. ಮೂತ್ರಪಿಂಡಗಳ ಕೆಲಸದ ಹೊರೆ ಹೆಚ್ಚಾಗುವುದಲ್ಲದೆ, ರಕ್ತದಿಂದ ತ್ಯಾಜ್ಯ ಉತ್ಪನ್ನಗಳನ್ನು ತೆಗೆದು ಹಾಕಲು ಅವು ಸಾಮಾನ್ಯಕ್ಕಿಂತ ಹೆಚ್ಚಿನ ದರದಲ್ಲಿ ಕಾರ್ಯನಿರ್ವಹಿಸುತ್ತವೆ. ಹೀಗೆ ಹೊರೆ ಹೆಚ್ಚಾಗಿ ಕಾಲಕ್ರಮೇಣ ಮೂತ್ರಪಿಂಡಗಳ ಕಾರ್ಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ” ಎಂದು ಅವರು ಹೇಳಿದ್ದಾರೆ. ಶೂನ್ಯ ಕಾರ್ಬೋ ಅಪಾಯಕಾರಿ ಮುಖ್ಯವಾಗಿ ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ ಅಂಶ ಕಡಿಮೆ ಇರುವ ಆಹಾರಗಳು ಅಪಾಯಕಾರಿಯಾಗಿ ಪರಿಣಮಿಸಬಹುದು. ಹೆಚ್ಚಿನ ಪ್ರೊಟೀನ್ ದ್ರವ ನಷ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಪ್ರೊಟೀನ್ ಸೇವನೆಯ ಸಂದರ್ಭದಲ್ಲಿ ಹೆಚ್ಚು ದ್ರವ ಸೇವನೆ ಅಗತ್ಯ. ನಿರ್ಜಲೀಕರಣವು ಮೂತ್ರಪಿಂಡದ ಸಮಸ್ಯೆಗಳನ್ನು ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಇನ್ನಷ್ಟು ಹದೆಗೆಡಿಸುತ್ತದೆ” ಎಂದು ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಅವರು ಹೆಸರಿಸಿದರು. ರೆಡ್ ಮೀಟ್ ಮತ್ತು ಸಂಸ್ಕರಿಸಿದ ಮಾಂಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಆಮ್ಲೀಯತೆಯ ಮಟ್ಟ ಹೆಚ್ಚಾಗುವುದರಿಂದ ಮೂತ್ರಪಿಂಡದ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ದೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವಂತಹ, ಈಗಾಗಲೇ ದುರ್ಬಲ ಮೂತ್ರಪಿಂಡದ ಕಾರ್ಯ ಹೊಂದಿರುವ ರೋಗಿಗಳಿಗೆ, ಪ್ರೊಟೀನ್ ಸೇವನೆ ಮಾಡುವುದು ಅಪಾಯಕಾರಿಯಾಗಿ ಪರಿಣಮಿಸಬಹುದು. ಹಾಗಿದ್ದರೆ ಎಷ್ಟು ಪ್ರಮಾಣದಲ್ಲಿ ಪ್ರೊಟೀನ್ ಸೇವಿಸಬೇಕು? ವಯಸ್ಕರಿಗೆ ದಿನಕ್ಕೆ ದೇಹದ ತೂಕದ ಪ್ರತಿ ಕಿಲೋಗ್ರಾಂಗೆ 0.8 ರಿಂದ 1 ಗ್ರಾಂ ಪ್ರೊಟೀನ್ ಸಾಕಾಗುತ್ತದೆ. ಹೀಗಾಗಿ ಅತಿಯಾದ ಶಿಸ್ತಿನ ಆಹಾರದ ಅಗತ್ಯ ದೇಹಕ್ಕೆ ಇಲ್ಲ. ಯಾವ ವಿಧದ ಆಹಾರ ಅಂದರೆ, ಕಾರ್ಬೋಹೈಡ್ರೇಟ್ ಸಮೃದ್ಧ ಅಥವಾ ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರದಲ್ಲಿ ಯಾವುದು ಉತ್ತಮ ಎನ್ನುವುದನ್ನು ಆಧರಿಸಿ ಎಲ್ಲಾ ಆಹಾರಗಳನ್ನು ಸೇವಿಸಬೇಕು. ಅಂದರೆ ಕಾರ್ಬೋಹೈಡ್ರೇಟ್ಗಳು, ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್ ಮತ್ತು ಸಾಕಷ್ಟು ಹಣ್ಣು- ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಕು ಎನ್ನುತ್ತಾರೆ ವಿನಾಯಕ್. ಮುಖ್ಯವಾಗಿ ಆಹಾರ ಕ್ರಮದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅಲ್ಲದೆ, ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂದು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ಮೂತ್ರಪಿಂಡದ ಕಾರ್ಯ ಪರೀಕ್ಷೆಗಳಿಗೆ ಒಳಗಾಗಬೇಕು. ಕೃಪೆ: ಹಿಂದೂಸ್ತಾನ್ ಟೈಮ್ಸ್
Raichur | ಸಂಗೀತ ಕೇವಲ ಕಲೆಯಲ್ಲ, ಅದು ನೆಮ್ಮದಿಯ ಬದುಕಿಗೆ ಸಹಕಾರಿ ಸಾಧನ : ಸಚಿವ ಎನ್.ಎಸ್.ಬೋಸರಾಜು
ರಾಜ್ಯಮಟ್ಟದ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
AI ವೆಚ್ಚ ದುಬಾರಿ ಹಿನ್ನೆಲೆ: ಶೇ 20ರಷ್ಟು ಉದ್ಯೋಗಿಗಳನ್ನು ವಜಾ ಮಾಡಲಿರುವ Meta
AI ಚಾಲಿತ ಮೂಲಸೌಕರ್ಯ ವ್ಯವಸ್ಥೆಯ ವೆಚ್ಚಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊರೆಯಾಗಿರುವ ಶೇ 20ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ಸಂಸ್ಥೆ ಯೋಜಿಸುತ್ತಿದೆ. ಮೆಟಾ ಕಂಪನಿಯು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ಯೋಜಿಸುತ್ತಿದೆ ಎಂದು ʼರಾಯಿಟರ್ಸ್ʼ ವರದಿ ಮಾಡಿದೆ. ಮೆಟಾ ಕಂಪನಿಯ ಕೃತಕ ಬುದ್ಧಿಮತ್ತೆ (AI) ಚಾಲಿತ ಮೂಲಸೌಕರ್ಯ ವ್ಯವಸ್ಥೆಯ ವೆಚ್ಚಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊರೆಯಾಗಿರುವ ಶೇ 20ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ಸಂಸ್ಥೆ ಯೋಜಿಸುತ್ತಿದೆ. ಉದ್ಯೋಗಿಗಳನ್ನು ತೆಗೆದು ಹಾಕಿದ ಮೇಲೆ AI ಚಾಲಿತ ವ್ಯವಸ್ಥೆಯನ್ನು ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಲು ನೇಮಿಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ. ಮೆಟಾ ಸಂಸ್ಥೆ ಉದ್ಯೋಗ ಕಡಿತಕ್ಕೆ ಯಾವುದೇ ದಿನ ನಿಗದಿಪಡಿಸಿಲ್ಲ ಅಥವಾ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಆದರೆ ಉದ್ಯೋಗ ಕಡಿತಕ್ಕೆ ಯೋಜನೆ ರೂಪಿಸುವಂತೆ ಮೆಟಾ ಉನ್ನತ ಮಟ್ಟದ ಸಿಬ್ಬಂದಿಗಳಿಗೆ ಸೂಚಿಸಿದೆ. ಉದ್ಯೋಗ ಕಡಿತ ಮಾಡುವ ಅಧಿಕಾರ ಹೊಂದಿರುವವರು ತಮ್ಮ ಹೆಸರು ಹೇಳಲಿಚ್ಛಿಸದೆ ಅನಾಮಧೇಯವಾಗಿ ವಿವರ ನೀಡಿರುವುದಾಗಿ ʼರಾಯಿಟರ್ಸ್ʼ ವರದಿ ಮಾಡಿದೆ. “ಸೈದ್ಧಾಂತಿಕ ವಿಧಾನಗಳ ಕುರಿತಂತಹ ಊಹಾತ್ಮಕ ವರದಿಯಾಗಿದೆ” ಎಂದು ಮೆಟಾ ವಕ್ತಾರ ಆ್ಯಂಡಿ ಸ್ಟೋನ್ ವಜಾ ಯೋಜನೆಯ ಕುರಿತ ಪ್ರಶ್ನೆಯನ್ನು ತಳ್ಳಿ ಹಾಕಿದ್ದಾರೆ. ಮೆಟಾ ಶೇ 20ರಷ್ಟು ಮಂದಿಯನ್ನು ತೆಗೆದು ಹಾಕುವುದು ನಿಜವಾದಲ್ಲಿ, 2022 ಮತ್ತು 203ರ ನಂತರದ ಅತಿದೊಡ್ಡ ಮರುರಚನೆಯಾಗುತ್ತದೆ. ಆ ಎರಡು ವರ್ಷವನ್ನು ಅದು ‘ದಕ್ಷತೆಯ ವರ್ಷ’ ಎಂದು ಕರೆದುಕೊಂಡಿತ್ತು. ಕಳೆದ ಡಿಸೆಂಬರ್ 31ರೊಳಗೆ ಮೆಟಾ 79,000 ಮಂದಿಯನ್ನು ನೇಮಿಸಿಕೊಂಡಿತ್ತು. ಕಂಪನಿಯು 2022ರಲ್ಲಿ 11,000 ಸಿಬ್ಬಂದಿಯನ್ನು ಅಂದರೆ ಶೇ 13ರಷ್ಟು ಜನರನ್ನು ವಜಾಗೊಳಿಸಿದೆ. ನಾಲ್ಕು ತಿಂಗಳ ನಂತರ ಅದು ಮತ್ತೆ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಕಳೆದೊಂದು ವರ್ಷದಿಂದ ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್ ಮೆಟಾವನ್ನು ಜನರೇಟಿವ್ AI ಕಡೆಗೆ ಕೊಂಡೊಯ್ಯುವ ಕಡೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಜನರೇಟಿವ್ AI ಕಡೆಗೆ ಗಮನ ಹೊರಳಿಸಲು ಕಂಪನಿ ದೊಡ್ಡ ಪ್ರಮಾಣದ ವೇತನವನ್ನು ನೀಡಿ ತಜ್ಞರನ್ನು ನೇಮಿಸಿಕೊಳ್ಳುತ್ತಿದೆ. ನಾಲ್ಕು ವರ್ಷಗಳಲ್ಲಿ ಲಕ್ಷಾಂತರ ವೇತನವನ್ನು ನೀಡಿ ಸಿಬ್ಬಂದಿಗಳನ್ನು ನೇಮಿಸಿಕೊಂಡಿದೆ. ಪ್ರಮುಖ AI ಸಂಶೋಧಕರನ್ನು ತನ್ನ ತೆಕ್ಕೆಗೆ ಎಳೆದುಕೊಮಡಿದೆ. ಒಟ್ಟಿನಲ್ಲಿ ಹೊಸ ಸೂಪರ್ ಇಂಟೆಲಿಜೆನ್ಸ್ ತಂಡವನ್ನು ಕಟ್ಟಿದೆ. 2028ರ ವೇಳೆಗೆ ಡೇಟಾ ಸೆಂಟರ್ಗಳನ್ನು ನಿರ್ಮಿಸಲು 600 ಬಿಲಿಯನ್ ಡಾಲರ್ಗಳಷ್ಟು ಹೂಡಿಕೆ ಮಾಡಲು ಕಂಪನಿ ಯೋಜಿಸಿದೆ. ಮಾರ್ಚ್ ಎರಡನೇ ವಾರದ ಆರಂಭದಲ್ಲಿ ಮೆಟಾ ಎಐ ಏಜೆಂಟ್ಗಳಿಗಾಗಿ ನಿರ್ಮಿಸಲಾದ ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಮೋಲ್ಟ್ ಬುಕ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಮೆಟಾ ಚೀನೀ AI ಸ್ಟಾರ್ಟಪ್ ಮನುಸ್ ಅನ್ನು ಖರೀದಿಸಲು ಕನಿಷ್ಠ 2 ಬಿಲಿಯನ್ ಡಾಲರ್ ವೆಚ್ಚ ಮಾಡುತ್ತಿದೆ ಎಂದು ರಾಯ್ಟರ್ಸ್ ಹಿಂದೆ ವರದಿ ಮಾಡಿತ್ತು. ದೊಡ್ಡ ತಂಡಗಳ ಬದಲಾಗಿ ಒಬ್ಬ ಅತಿ ಪ್ರತಿಭಾವಂತ ಒಬ್ಬ ವ್ಯಕ್ತಿಯಿಂದ ಕೆಲಸ ಮಾಡುವ ಪ್ರಾಜೆಕ್ಟ್ಗಳತ್ತ ಗಮನಹರಿಸುವುದಾಗಿ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ. ಹೀಗೆ ದೊಡ್ಡ ತಂಡಗಳನ್ನು ತೆಗೆದು ಪ್ರತಿಭಾವಂತರನ್ನು ಮಾತ್ರ ಉಳಿಸಿಕೊಳ್ಳುವುದು ಕಳೆದೊಂದು ವರ್ಷಗಳಿಂದ ಅಮೆರಿಕದ ಬಹುತೇಕ ತಂತ್ರಜ್ಞಾನ ಕಂಪನಿಗಳಲ್ಲಿ ಕಂಡುಬಂದಿರುವ ಬೆಳವಣಿಗೆಯಾಗಿದೆ. ಜನವರಿಯಲ್ಲಿ ಅಮೆಝಾನ್ ಶೇ 10ರಷ್ಟು ಅಂದರೆ 16,000 ಉದ್ಯೋಗಿಗಳನ್ನು ವಜಾ ಮಾಡಿತ್ತು. ಕಳೆದ ತಿಂಗಳು ಫಿನ್ಟೆಕ್ ಕಂಪನಿ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದು ಹಾಕಿತ್ತು. AI ಸಾಧನಗಳು ಮತ್ತು ಅವುಗಳ ಬೆಳೆಯುತ್ತಿರುವ ಸಾಮರ್ಥ್ಯದಿಂದಾಗಿ ಕಂಪನಿಗಳು ಸಣ್ಣ ತಂಡಗಳಿಂದ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ಸಂಸ್ಥೆಗಳು ಹೇಳಿವೆ. ಕಳೆದ ವರ್ಷ ಮೆಟಾ ಸಂಸ್ಥೆಯ ಲ್ಲಾಮಾ 4 ಮಾಡೆಲ್ಗಳು ಯಶಸ್ಸು ಕಂಡಿರಲಿಲ್ಲ. ಹೀಗೆ ಕಂಡುಬಂದ ಹಿನ್ನಡೆಯಿಂದಾಗಿ ಬೆಹಮೂತ್ ಎನ್ನುವ ತನ್ನ ದೊಡ್ಡ ಆವೃತ್ತಿಯ ಮಾಡೆಲ್ ಅನ್ನು ಬಿಡುಗಡೆಯೇ ಮಾಡಿರಲಿಲ್ಲ. ಇದೀಗ ತನ್ನ ಸೂಪರ್ಇಂಟೆಲಿಜೆನ್ಸ್ ತಂಡವನ್ನು ಕಟ್ಟಿ ಹೊಸ ಮಾಡೆಲ್ ಅವಕಾಡೊ ಆವೃತ್ತಿಯನ್ನು ತರಲು ಪ್ರಯತ್ನಿಸುತ್ತಿದೆ. ಆದರೆ ಈ ಮಾಡೆಲ್ ಕೂಡ ಹಿನ್ನಡೆ ಎದುರಿಸುತ್ತಿದೆ ಎನ್ನುವ ಸುದ್ದಿ ಹರಡಿದೆ.
ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದು, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ ಭೇಟಿ ನೀಡಿದ್ದಾರೆ.
Kalaburagi | ಎ.7ರಿಂದ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ: ಸುಜಾತಾ ಜಂಗಮಶೆಟ್ಟಿ
ಕಲಬುರಗಿ : 'ಮಕ್ಕಳ ಸಾಂಸ್ಕೃತಿಕ ಸಂವೇದನೆ ಚುರುಕುಗೊಳಿಸಲು ಹಾಗೂ ರಂಗ ಸಂಸ್ಕೃತಿ ಪರಿಚಯಿಸಲು ಎ.7ರಿಂದ ಮೇ 8ರವರೆಗೆ 'ಮಕ್ಕಳ ಹಬ್ಬ-2026' ಬೇಸಿಗೆ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ' ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷದಿಂದ 16 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. 150 ಮಕ್ಕಳಿಗೆ ಮಾತ್ರ ಪ್ರವೇಶಕ್ಕಾಗಿ ಅವಕಾಶ ಇದೆ. ಅರ್ಜಿ ಶುಲ್ಕ 100 ರೂ., ಪ್ರವೇಶ ಶುಲ್ಕ 2,000 ರೂ. ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಎ.5 ಕೊನೆಯ ದಿನವಾಗಿದೆ' ಎಂದು ತಿಳಿಸಿದರು. ಮಕ್ಕಳ ಸಾಂಸ್ಕೃತಿಕ ಸಂವೇದನೆ ಚುರುಕುಗೊಳಿಸಲು ಈ ಶಿಬಿರದಲ್ಲಿ ನಡೆಯುವ ಕಲಾ ಚಟುವಟಿಕೆಗಳು ಪೂರಕವಾಗಿರುತ್ತವೆ. ಮಕ್ಕಳಿಗೆ ನಾಟಕ ತರಬೇತಿ ನೀಡಲಾಗುತ್ತದೆ. ಜನಪದ ಕಲಾ ಪ್ರಕಾರಗಳ ಪ್ರಾತ್ಯಕ್ಷಿಕೆ ಮತ್ತು ತರಬೇತಿ, ಕರಕುಶಲ ವಸ್ತುಗಳ ತಯಾರಿಕೆ, ಮಕ್ಕಳಿಂದಲೇ ಸಾಹಿತ್ಯ ರಚನೆ, ಕಥೆ, ಕವನ, ಹನಿಗವನ ವಾಚನ ಹಾಗೂ ಇತ್ಯಾದಿ ಚಟುವಟಿಕೆಗಳೊಂದಿಗೆ ಅವರ ವ್ಯಕ್ತಿತ್ವ ವಿಕಸನ, ಸೃಜನಶೀಲ ಧ್ವನಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದೇ ರಂಗ ತರಬೇತಿ ಶಿಬಿರದ ಮುಖ್ಯ ಉದ್ದೇಶವಾಗಿದೆ' ಎಂದು ವಿವರಿಸಿದರು. 'ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಸಂವಾದ, ಮಕ್ಕಳಿಗಾಗಿಯೇ ಸಿದ್ಧಪಡಿಸಲಾದ ಕೆಲವು ಅಪರೂಪದ ಕಿರುಚಿತ್ರ ಪ್ರದರ್ಶನ ಇರಲಿದೆ. ಅಪರೂಪದ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಲಾಗುವುದು. ಶಿಬಿರದ ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು' ಎಂದರು. ಹೆಚ್ಚಿನ ಮಾಹಿತಿಗಾಗಿ 8553220141, 7353906888 ಸಂಪರ್ಕಿಸಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಿಬಿರದ ಸಂಚಾಲಕ ರಾಜಕುಮಾರ ಎಸ್.ಕೆ, ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ ಹಾಜರಿದ್ದರು.
ನಾಳೆ(ಮಾ.16) ʼಎಸ್ಐಆರ್ʼ ಕುರಿತು ಸರ್ವ ಸಮುದಾಯಗಳ ರಾಜ್ಯಮಟ್ಟದ ಸಮಾಲೋಚನಾ ಸಭೆ
ಬೆಂಗಳೂರು : ರಾಜ್ಯದ ಎಲ್ಲ ಪ್ರಗತಿಪರ ಸಂಘಟನೆಗಳು ಹಾಗೂ ಸರ್ವ ಪಕ್ಷಗಳ ಸಹಯೋಗದಲ್ಲಿ ‘ಎಸ್ಐಆರ್ ಷಡ್ಯಂತ್ರವನ್ನು ಹಿಮ್ಮೆಟ್ಟಿಸಲು ಕೈಗೊಳ್ಳಬೇಕಾದ ಕ್ರಮಗಳೇನು?’ ಎಂಬ ವಿಷಯದ ಕುರಿತು ನಾಳೆ(ಮಾ.16) ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದಲ್ಲಿರುವ ಶಾಸಕರ ಭವನ-2 ರಲ್ಲಿ ರಾಜ್ಯ ಮಟ್ಟದ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ರವಿವಾರ ಈ ಕುರಿತು ಮಾಚಿ ಸಚಿವೆ ಬಿ.ಟಿ.ಲಲಿತಾ ನಾಯಕ್, ರೈತ ಮುಖಂಡ ಜೆ.ಎಂ.ವೀರಸಂಗಯ್ಯ, ಹಿರಿಯ ದಸಂಸ ಹೋರಾಟಗಾರ ಎನ್.ವೆಂಕಟೇಶ್ ಜಂಟಿ ಪತ್ರಿಕ ಹೇಳಿಕೆ ನೀಡಿದ್ದಾರೆ. ಈ ಸಮಾಲೋಚನೆಯಲ್ಲಿ ಚುನಾವಣಾ ಪ್ರಕ್ರಿಯೆಯ ತಜ್ಞರಾದ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ದೇವಸಹಾಯಂ, ಪ್ರಖರ ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ್, ಪ್ರಸಿದ್ಧ ಜನಪರ ನೀತಿನಿರೂಪಕ ನಿಖಿಲ್ ಡೇ ಸೇರಿದಂತೆ ಎಲ್ಲ ಭಾದಿತ ಸಮುದಾಯಗಳು, ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪುಣೆ: ಇಫ್ತಾರ್ಗಾಗಿ ಸೇರಿದ್ದ ಗುಂಪಿಗೆ ದುಷ್ಕರ್ಮಿಗಳಿಂದ ಥಳಿತ
100 ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲು
Kalaburagi | ಎಸೆಸೆಲ್ಸಿ ವಿದ್ಯಾರ್ಥಿನಿಯರಿಬ್ಬರು ನಾಪತ್ತೆ : ಪ್ರಕರಣ ದಾಖಲು
ಕಲಬುರಗಿ: ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ನಗರದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಸಂತೋಷ ಕಾಲನಿಯ ನಿವಾಸಿ ಅಜೀತ್ ಅವರ ಪುತ್ರಿ, ಎಸೆಸೆಲ್ಸಿ ಹಾಲ್ಟಿಕೆಟ್ ತರಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾಳೆ. ಆದರೆ ಬಳಿಕ ಮನೆಗೆ ಮರಳದೇ ಕಾಣೆಯಾಗಿದ್ದಾಳೆ. ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಇನ್ನೂ ಸ್ಟೇಷನ್ ಬಝಾರ್ ಪ್ರದೇಶದ ಸುಜಾತಾ ಅವರ ಪುತ್ರಿ, ಎಸೆಸೆಲ್ಸಿ ವಿದ್ಯಾರ್ಥಿನಿ, ರಾತ್ರೋರಾತ್ರಿ ಮನೆಯಿಂದ ನಾಪತ್ತೆಯಾಗಿರುವುದಾಗಿ ಪೋಷಕರು ದೂರು ನೀಡಿದ್ದಾರೆ. ಈ ಕುರಿತು ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ʼಅನ್ನದ ತಟ್ಟೆʼ ಸಮತೋಲನವಾಗಿರಲಿ; ಅದರಿಂದಲೇ ಹೃದಯರೋಗದ ಅಪಾಯಕ್ಕೆ ಕಡಿವಾಣ
ಆಹಾರದ ಆಯ್ಕೆಗಳು ನಿಧಾನವಾಗಿ ಉರಿಯೂತ, ಇನ್ಸುಲಿನ್ ಪ್ರತಿರೋಧ, ಒಳಾಂಗಗಳಲ್ಲಿ ಕೊಬ್ಬು ಸಂಚಯ ಮತ್ತು ಅಪಧಮನಿಯ ಆರೋಗ್ಯದ ಮೇಲೆ ಪ್ರಭಾವ ಬೀರಿ ಎಚ್ಚರಿಕೆಯ ಚಿಹ್ನೆಗಳನ್ನು ಕೊಡುತ್ತಿರಬಹುದು. ಭಾರತದಲ್ಲಿ ಹೃದ್ರೋಗ ಬಹಳ ಸಾಮಾನ್ಯವೆನಿಸಿದೆ. 2020ರಲ್ಲಿ ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯ ನಡೆಸಿದ ಅಧ್ಯಯನದ ಪ್ರಕಾರ ಪಾಶ್ಚಾತ್ಯ ಜನಸಂಖ್ಯೆಯನ್ನು ಹೃದಯ ರೋಗ ಕಾಡುವ ದಶಕಗಳ ಮೊದಲೇ ಭಾರತೀಯರಲ್ಲಿ ಹೃದಯರಕ್ತನಾಳಕ್ಕೆ ಸಂಬಂಧಿಸಿದ ರೋಗಗಳು (CVD) ಕಂಡುಬಂದಿವೆ. ಭಾರತೀಯರ ಮಟ್ಟಿಗೆ ಬಹಳ ಸಣ್ಣ ವಯಸ್ಸಿನಲ್ಲಿಯೇ ಸಮಸ್ಯೆ ಕಂಡುಬರುತ್ತಿದೆ ಮತ್ತು ಸಾವಿನ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಭಾರತೀಯರಲ್ಲಿ ಪರಿಧಮನಿ ಕಾಯಿಲೆ ಪ್ರಮಾಣವೂ ಹೆಚ್ಚಿದೆ ಮತ್ತು ಸಾಂಪ್ರದಾಯಿಕ ಅಪಾಯ ಗುರುತಿಸುವಿಕೆಯಲ್ಲಿ ಇದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹೃದಯದ ರೋಗದ ಬೇರುಗಳು ಚಿಕ್ಕಂದಿನಲ್ಲೇ ಅಭ್ಯಾಸ ಮಾಡಿಕೊಂಡು ಬಂದ ಶಿಸ್ತಿನ ಆಹಾರ ಅಭ್ಯಾಸದಲ್ಲಿದೆ. ಸಣ್ಣ ಆದರೆ ಪದೇಪದೆ ಮಾಡಿಕೊಂಡ ಆಹಾರದ ಆಯ್ಕೆಗಳು ನಿಧಾನವಾಗಿ ಉರಿಯೂತ, ಇನ್ಸುಲಿನ್ ಪ್ರತಿರೋಧ, ಒಳಾಂಗಗಳಲ್ಲಿ ಕೊಬ್ಬು ಸಂಚಯ ಮತ್ತು ಅಪಧಮನಿಯ ಆರೋಗ್ಯದ ಮೇಲೆ ಪ್ರಭಾವ ಬೀರಿ ಎಚ್ಚರಿಕೆಯ ಚಿಹ್ನೆಗಳನ್ನು ಕೊಡುತ್ತಿರಬಹುದು. ಇದೀಗ ಹೊಸದಿಲ್ಲಿಯ ಮಧುಮೇಹ ತಜ್ಞರಾಗಿರುವ ಡಾ. ಬೃಜ್ಮೋಹನ್ ಅರೋರ ಇತ್ತೀಚೆಗೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಐದು ಪ್ರಮುಖ ಆಹಾರ ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ. “ನಿಮಗೆ ಎಂದಿಗೂ ಹಠಾತ್ ಹೃದಯಾಘಾತ ಆಗದೆ ಇದ್ದರೆ, ನೀವು ನಿಮ್ಮ ಆಹಾರದಿಂದ ಈ ಐದು ತಪ್ಪುಗಳನ್ನು ತೆಗೆದು ಹಾಕಬೇಕು. ಈ ಐದು ತಪ್ಪುಗಳು ನಿಮ್ಮ ಹೃದಯದ ಆರೋಗ್ಯವನ್ನು ನಿಧಾನವಾಗಿ ಒಳಗಿನಿಂದ ಹದಗೆಡಿಸುತ್ತದೆ. ಈ ಚಿಹ್ನೆಗಳೇ ಕಾಲಕ್ರಮೇಣ ಹೃದಯಾಘಾತವಾಗಿ ಬದಲಾಗುತ್ತದೆ” ಎನ್ನುತ್ತಾರೆ ಬೃಜ್ಮೋಹನ್. ಅವರು ಹೇಳಿರುವ ಪ್ರಕಾರ, ಬಹುತೇಕ ಹೃದಯಾಘಾತಗಳು ಹೃದಯದಲ್ಲಿ ಆರಂಭವಾಗುವುದಿಲ್ಲ ಬದಲಾಗಿ ಅಡುಗೆ ಮನೆಯಲ್ಲಿ ಆರಂಭವಾಗುತ್ತದೆ. ಹೀಗಾಗಿ ಮುಖ್ಯವಾಗಿ ಈ ಕೆಳಗಿನ ಆಹಾರ ತ್ಯಜಿಸಬೇಕು. * ಬೀಜದ ಎಣ್ಣೆಗಳು * ಅತಿಸಂಸ್ಕರಿತ/ಪಾಕೆಟ್ ಆಹಾರಗಳು * ಸಕ್ಕರೆ ಪಾನೀಯಗಳು * ಸಂಸ್ಕರಿತ ಧಾನ್ಯಗಳು (ಬ್ರೆಡ್, ಪಾಸ್ತಾ, ಬಿಳಿ ಹಿಟ್ಟು) * ಸಂಸ್ಕರಿತ ಮಾಂಸಗಳು ಇವು ಮೌನವಾಗಿ ಇನ್ಸುಲಿನ್ ಪ್ರತಿರೋಧ, ಉರಿಯೂತ, ಒಳಾಂಗಗಳ ಕೊಬ್ಬು ಮತ್ತು ಅಪಧಮನಿಯ ಆರೋಗ್ಯವನ್ನು ಹಾಳುಮಾಡುತ್ತವೆ. ಚಯಾಪಚಯವನ್ನು ಸರಿಪಡಿಸಿದರೆ ಅಪಾಯ ಕಡಿಮೆಯಾಗುತ್ತದೆ. ಈ ಬಗ್ಗೆ ಇತರ ವೈದ್ಯರು ಹೇಳುವುದೇನು? ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ ಜಗದೀಶ್ ಹೀರೇಮಠ್ ಪ್ರಕಾರ, “ಆಹಾರ ಪದ್ಧತಿಯನ್ನು ಹೃದಯ ರಕ್ತನಾಳದ ರೋಗಕ್ಕೆ ಜೋಡಿಸುವ ವೈಜ್ಞಾನಿಕ ಪುರಾವೆಗಳು ಪ್ರಬಲವಾಗಿವೆ. ಆದರೆ ಅಪಾಯವು ಪ್ರತ್ಯೇಕವಾಗಿ ಒಂದು ಆಹಾರಕ್ಕಿಂತ ಹೆಚ್ಚಾಗಿ ಆಹಾರ ಪದ್ಧತಿಯಿಂದ ಬರುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು. ದೊಡ್ಡ ಜನಸಂಖ್ಯಾ ಅಧ್ಯಯನಗಳು ಮತ್ತು ವಿಶ್ಲೇಷಣೆಗಳು ಸಂಸ್ಕರಿತ ಮಾಂಸ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳ ಅಧಿಕ ಸೇವನೆಯಿಂದ ಸ್ಯಾಚುರೇಟೆಡ್ ಕೊಬ್ಬುಗಳು, ಸೋಡಿಯಂ, ಸಂರಕ್ಷಕಗಳು ಸಂಚಯವಾಗುತ್ತವೆ ಮತ್ತು ಚಯಾಪಚಯ ಕ್ರಿಯೆಗೆ ಧಕ್ಕೆ ತರುವ ತ್ವರಿತ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆಗೆ ಕಾರಣವಾಗಿ ಹೃದ್ರೋಗದ ಅಪಾಯ ಹೆಚ್ಚಿಸುತ್ತವೆ.” ಬಹಳಷ್ಟು ಚಿಕಿತ್ಸಾತ್ಮಕ ದತ್ತಾಂಶಗಳು ಹೇಳಿರುವ ಪ್ರಕಾರ ಸ್ಯಾಚುರೇಟೆಡ್ ಕೊಬ್ಬುಗಳನ್ನು ಸ್ಯಾಚುರೇಟೆಡ್ ಅಲ್ಲದ ಕೊಬ್ಬಿನೊಂದಿಗೆ ಬದಲಿಸುವುದರಿಂದ ಮಿತವಾಗಿ ಸೇವಿಸಿದಾಗ ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಹೃದಯರಕ್ತನಾಳದ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ಈ ಎಣ್ಣೆಗಳನ್ನು ಪದೇಪದೆ ಬಿಸಿ ಮಾಡಿದಾಗ ಅಥವಾ ಅತಿಸಂಸ್ಕರಿತ ಆಹಾರಗಳ ಜೊತೆ ಸೇವಿಸಿದಾಗ ಸಮಸ್ಯೆ ಉಂಟಾಗುತ್ತದೆ. ಕೃಪೆ: indianexpress.com
ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ 731 ಹುದ್ದೆಗಳಿಗೆ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?
ಕಂಪನಿಯು ಅನನುಭವಿ ಪದವೀಧರರಿಗೆ ಮತ್ತು ಅನುಭವಿ ವೃತ್ತಿಪರರಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಪ್ರತಿಷ್ಠಿತ ಸಾರ್ವಜನಿಕ ವಲಯದ ಇಂಧನ ಕಂಪನಿಯಾಗಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದೆ. ಕಂಪನಿಯು ಅನನುಭವಿ ಪದವೀಧರರಿಗೆ ಮತ್ತು ಅನುಭವಿ ಪದವೀಧರರಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಜ್ಯೂನಿಯರ್ ಎಕ್ಸಿಕ್ಯೂಟಿವ್ಗಳು, ಎಂಜಿನಿಯರ್ಗಳು, ಅಧಿಕಾರಿಗಳು ಮತ್ತು ಇತರ ಹಲವು ಹುದ್ದೆಗಳು ಸೇರಿದಂತೆ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ 700ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://www.hindustanpetroleum.com/job-openings ಪ್ರಮುಖ ದಿನಾಂಕಗಳು ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 2026 ಫೆಬ್ರವರಿ 25 ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 2026 ಮಾರ್ಚ್ 25 ►ಹುದ್ದೆಗಳ ವಿವರ ಒಟ್ಟು 731 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಗ್ರಾಜುವೇಟ್ ಎಂಜಿನಿಯರ್ಗಳು, ಡಿಪ್ಲೊಮಾ ಎಂಜಿನಿಯರ್ಗಳು, ಕ್ವಾಲಿಟಿ ಕಂಟ್ರೋಲ್, ಅಗ್ನಿ ಮತ್ತು ಶಾಮಕ, ಹಣಕಾಸು, ಮಾನವ ಸಂಪನ್ಮೂಲಗಳು, ಮಾಹಿತಿ ವ್ಯವಸ್ಥೆಗಳು, ಹಿಂದಿ ಅಧಿಕಾರಿ, ಕಿರಿಯ ಎಕ್ಸಿಕ್ಯೂಟಿವ್ ಸಹಾಯಕ ಮೊದಲಾದ ಸ್ಥಾನಗಳಿಗೆ ಅನನುಭವಿ ಹೊಸ ಪದವೀಧರರು ಬೇಕಾಗಿದ್ದಾರೆ. ಸುರಕ್ಷಾ ಅಧಿಕಾರಿ, ಸೇಲ್ಸ್, ಮಾನವ ಸಂಪನ್ಮೂಲ ಕಾನೂನು, ಬಯೊಫ್ಯೂಯಲ್, ಸೈಬರ್ ತಜ್ಞರು, ಕಂಪನಿ ಸೆಕ್ರೆಟರಿ ಮತ್ತು ಪ್ರಾಜೆಕ್ಟ್ ವಲಯಕ್ಕೆ ಅನುಭವಿ ವೃತ್ತಿಪರರು ಬೇಕಾಗಿದ್ದಾರೆ. ►ಶೈಕ್ಷಣಿಕ ಅರ್ಹತೆ ಏನು? ಅರ್ಹತೆಗೆ ಸಂಬಂಧಿಸಿದಂತೆ, ಪ್ರತಿ ಹುದ್ದೆಗೆ ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಇವುಗಳಲ್ಲಿ 3 ವರ್ಷಗಳ ಪದವಿಪೂರ್ವ ಪದವಿ, ಪೂರ್ಣ ಸಮಯದ ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ, ಅಗ್ನಿಶಾಮಕ ಮತ್ತು ಸುರಕ್ಷತಾ ಡಿಪ್ಲೊಮಾ ಹೊಂದಿರುವ ವಿಜ್ಞಾನ ಪದವೀಧರ, ಎಂಬಿಎ, ಚಾರ್ಟರ್ಡ್ ಅಕೌಂಟೆಂಟ್, ವೆಚ್ಚ ಲೆಕ್ಕಪತ್ರಗಾರ, ಕಾನೂನು ಪದವೀಧರ ಮತ್ತು ಇತರ ಸಂಬಂಧಿತ ಪದವಿಗಳು ಸೇರಿವೆ. ಕೆಲವು ಉದ್ಯೋಗಗಳಿಗೆ ವೃತ್ತಿಪರ ಅನುಭವವನ್ನೂ ಕೇಳಲಾಗಿದೆ. ಅಧಿಕೃತ ಜಾಹೀರಾತನ್ನು ಸೂಕ್ತವಾಗಿ ಗಮನಿಸಿ ಅರ್ಜಿ ಸಲ್ಲಿಸಬೇಕಿದೆ. ►ವಯಸ್ಸಿನ ಮಿತಿ ಮತ್ತು ವೇತನ ಎಷ್ಟು? ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ ಹುದ್ದೆಯನ್ನು ಅವಲಂಬಿಸಿ 25 ರಿಂದ 43 ವರ್ಷಗಳು. ಕೆಲವು ಹುದ್ದೆಗಳಿಗೆ ಆರಂಭಿಕ ವೇತನವು ತಿಂಗಳಿಗೆ 30,000 ರೂ. ರಿಂದ 280,000 ರೂ. ವರೆಗೆ ಇರಲಿದೆ. ಸೀನಿಯರ್ ಸೈಬರ್ ಸೆಕ್ಯುರಿಟಿ ಸ್ಟ್ರಾಟೆಜಿಸ್ಟ್ನಂತಹ ಉನ್ನತ ಹುದ್ದೆಗಳು 50 ರಿಂದ 60 ಲಕ್ಷ ರೂ. ವರೆಗಿನ ವಾರ್ಷಿಕ ಪ್ಯಾಕೇಜ್ಗಳನ್ನು ಹೊಂದಿವೆ. ಮೊದಲ ಹಂತವು ಲಿಖಿತ ಪರೀಕ್ಷೆ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುತ್ತದೆ. ಇದರ ನಂತರ ಅಂತಿಮ ಗುಂಪಿನಲ್ಲಿ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ. ►ಅರ್ಜಿ ಸಲ್ಲಿಸುವ ಪ್ರಕ್ರಿಯೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ, ಅವರು “ನಮ್ಮ ಪ್ರಸ್ತುತ ಉದ್ಯೋಗಗಳು” ವಿಭಾಗಕ್ಕೆ ಹೋಗಿ “ಅಧಿಕಾರಿಗಳ ನೇಮಕಾತಿ 2026” ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ನಂತರ ಅಭ್ಯರ್ಥಿಗಳು ತಮ್ಮ ಮೂಲ ಮಾಹಿತಿಯನ್ನು ಒದಗಿಸುವ ಮೂಲಕ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಲಾಗಿನ್ ಆದ ನಂತರ, ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ವರ್ಗ, ಲಿಂಗ ಮತ್ತು ವಿಳಾಸದಂತಹ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ. ಮುಂದಿನ ಹಂತದಲ್ಲಿ, ನಿಮ್ಮ ಪಾಸ್ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ನೀವು ಅಪ್ಲೋಡ್ ಮಾಡಬೇಕಾಗುತ್ತದೆ. ಇದರ ನಂತರ, ನಿಮ್ಮ ವರ್ಗಕ್ಕೆ ಅನುಗುಣವಾಗಿ ನೀವು ಆನ್ಲೈನ್ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕು ಮತ್ತು ಫಾರ್ಮ್ ಅನ್ನು ಸಲ್ಲಿಸಬೇಕು.
Kalaburagi | ಪೊಲೀಸ್ ಪೇದೆಯಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ : ಆರೋಪ
ಪ್ರಕರಣ ದಾಖಲು
ವಿಮರ್ಶಾತ್ಮಕ ಯುದ್ಧ ವರದಿಗಳ ಮೇಲೆ ಬಿತ್ತು ಟ್ರಂಪ್ ಕಣ್ಣು; ಸುದ್ದಿ ಸಂಸ್ಥೆಗಳಿಗೆ ಪರವಾನಗಿ ರದ್ದು ಬೆದರಿಕೆ
‘ಮಧ್ಯಪ್ರಾಚ್ಯ ಯುದ್ಧ ತೀವ್ರಗೊಳ್ಳುತ್ತಿದೆ’ ಅನ್ನಬೇಡಿ, ‘ಇರಾನ್ ಹೆಚ್ಚು ಹತಾಶವಾಗಿದೆ’ ಎಂದು ವರದಿ ಮಾಡಿ ಎಂದ ಅಮೆರಿಕ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: 8 ಹಂತಗಳಿಂದ 2ಕ್ಕೆ ಇಳಿಕೆ, ಕಾರಣ ಏನು?
West Bengal Assembly Election 2026: ಭಾರತೀಯ ಚುನಾವಣಾ ಆಯೋಗವು ಇಂದು (ಮಾರ್ಚ್ 15) ಮಹತ್ವದ ಸುದ್ದಿಗೋಷ್ಠಿ ನಡೆಸಿ, ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಿದೆ. ಇದರೊಂದಿಗೆ ಇಂದಿನಿಂದಲೇ ಈ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ 294 ವಿಧಾನಸಭಾ ಸ್ಥಾನಗಳಿಗೆ ಎರಡು
ರಾಯಚೂರು | ಆಲಮಟ್ಟಿ ಡ್ಯಾಂ ಎತ್ತರಿಕರಣಕ್ಕೆ ಬಜೆಟ್ನಲ್ಲಿ ಸಕಾರಾತ್ಮಕ ಸ್ಪಂದನೆ : ಮುಜಾಹಿದ್ ಮರ್ಚೆಡ್
ರಾಯಚೂರು: ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ರಾಯಚೂರು ಜಿಲ್ಲಾ ಘಟಕದ ವತಿಯಿಂದ ಶನಿವಾರ “ರೈತರಿಗೆ ಶರಣರಿಂದ ಹಿತನುಡಿ, ಕೃಷಿ ತಂತ್ರಜ್ಞರಿಂದ ಸಲಹೆ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣೆ” ಶಿಬಿರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವು ಜಿಲ್ಲಾ ಅಧ್ಯಕ್ಷ ಇಂದ್ರಜೀತ್ ಯಾದವ್ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷ ಮುಜಾಹಿದ್ ಮರ್ಚೆಡ್ ಅವರ ನೇತೃತ್ವದಲ್ಲಿ ನಡೆಯಿತು. ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶ್ರೀ ಶ್ರೀ ಶಾಂತಮಲ್ಲ ಶಿವಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಎತ್ತಿನ ಬಂಡಿ ಚಾಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಶಾಂತಗೌಡ ಚನ್ನಪಟ್ಟಣ, ಲಕ್ಷ್ಮಿಕಾಂತ ಎ. ಪಾಟೀಲ್, ಇಂದ್ರಜೀತ್ ಯಾದವ್ ಹಾಗೂ ಮುಜಾಹಿದ್ ಮರ್ಚೆಡ್ ಹಾರ ಹಾಕಿ ಗೌರವ ಸಲ್ಲಿಸಿದರು. ನಂತರ ಮೆರವಣಿಗೆಯ ಮೂಲಕ ರಂಗಮಂದಿರಕ್ಕೆ ತೆರಳಲಾಯಿತು. ಕಾರ್ಯಕ್ರಮದಲ್ಲಿ ಶ್ರೀದೇವಿ ಆರ್. ನಾಯಕ್ ಹಾಗೂ ರೂಪ ಶ್ರೀನಿವಾಸ ನಾಯಕ ಜ್ಯೋತಿ ಬೆಳಗಿಸಿದರು. ಮಲ್ಲಿಕಾರ್ಜುನ ಪಾಟೀಲ್ ಮತ್ತು ಮಹಾದೇವ ಯಾದವ್ ನೇಗಿಲ ಪೂಜೆ ನೆರವೇರಿಸಿದರು. ಆನಂದ ಕುಮಾರ್ ಮಡಿವಾಳರ್ ಹಾಗೂ ಸುರೇಶ್ ಪೂಜಾರಿ ಚೌಧರಿ ಚರಣಸಿಂಗ್ ಮತ್ತು ನಂಜುಂಡಸ್ವಾಮಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಇಂದ್ರಜೀತ್ ಯಾದವ್, ರೈತರ ಶ್ರಮದಿಂದಲೇ ಸಮಾಜಕ್ಕೆ ಅನ್ನ ಸಿಗುತ್ತದೆ. ರೈತರಿಗೆ ಸೂಕ್ತ ಬೆಂಬಲ ದೊರೆತಾಗ ಮಾತ್ರ ಅವರ ಬದುಕು ಸುಧಾರಿಸುತ್ತದೆ ಎಂದು ಹೇಳಿದರು. ಮುಜಾಹಿದ್ ಮರ್ಚೆಡ್ ಮಾತನಾಡಿ, ಕೃಷ್ಣ ಮೇಲ್ದಂಡೆ ಯೋಜನೆ (ಯುಕೆಪಿ-3) ಅನುಷ್ಠಾನಗೊಳ್ಳಲು ಆಲಮಟ್ಟಿ ಜಲಾಶಯವನ್ನು ಸುಮಾರು 17 ಅಡಿ ಎತ್ತರಿಸುವ ಅಗತ್ಯವಿದೆ. ಇದಕ್ಕಾಗಿ ಫೆಬ್ರವರಿ 9ರಂದು “ರೈತರ ನಡೆ ಆಲಮಟ್ಟಿ ಕಡೆ” ಹೋರಾಟ ಹಮ್ಮಿಕೊಳ್ಳಲಾಗಿತ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ಆಲಮಟ್ಟಿ ಡ್ಯಾಂ ಎತ್ತರಿಕರಣದಿಂದ ಮುಳುಗಡೆಯಾಗುವ ಭೂಮಿಗೆ ಪ್ರತಿ ಎಕರೆಗೆ 30ರಿಂದ 40 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವುದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಹೇಳಿದರು. ಯೋಜನೆ ಸಂಪೂರ್ಣವಾಗಿ ಜಾರಿಯಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಭಾಸಾರಥಿ ದೇವರಾಜ ಯಲಿ ಸೇರಿದಂತೆ ವಿವಿಧ ಮುಖಂಡರು ಹಾಗೂ ರೈತರನ್ನು ಸನ್ಮಾನಿಸಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

25 C