Kodagu | ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ
ಮಡಿಕೇರಿ: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ಒಂದು ತಿಂಗಳಿನಿಂದ 7 ಜಾನುವಾರುಗಳನ್ನು ಮತ್ತು ಬೆಸಗೂರು ಗ್ರಾಮದಲ್ಲಿ ಒಂದೇ ದಿನ 3 ಹಸುಗಳನ್ನು ಬಲಿ ಪಡೆದ ಹುಲಿ ಇಂದು ಬಂಧಿಯಾಗಿದೆ. ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಠಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗಿನಿಂದಲೇ ಡ್ರೋನ್ ಕ್ಯಾಮೆರಾ ಬಳಸಿ ಆರ್.ಆರ್.ಟಿ ಸಿಬ್ಬಂದಿಗಳ ಮೂಲಕ ಹುಲಿಯ ಚಲನವಲನ ಪತ್ತೆ ಮಾಡಲು ಕೂಂಬಿಂಗ್ ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಸಾಕಾನೆ ಶಿಬಿರದಿಂದ ಮಹೇಂದ್ರ ಹಾಗೂ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರದಿಂದ ಭೀಮ ಆನೆಯನ್ನು ಬಳಸಿಕೊಳ್ಳಲಾಗಿತ್ತು. ಗ್ರಾಮಸ್ಥರ ತೋಟಗಳು ಹಾಗೂ ಕೀರೆಹೊಳೆಯ ಸುತ್ತಮುತ್ತಲಿನಲ್ಲಿ ಡ್ರೋನ್ ಕ್ಯಾಮರಾ ಬಳಸಿ ಹುಲಿಯ ಚಲನವಲನ ಪತ್ತೆ ಕಾರ್ಯಾಚರಣೆ ನಡೆಸಲಾಯಿತು. ಕೀರೆಹೊಳೆಯ ದಡದಲ್ಲಿ ಬಿದಿರಿನ ಬುಡದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿ ಸಂಜೆ 6 ಗಂಟೆಯ ಸಮಯದಲ್ಲಿ ಜಾನುವಾರುಗಳ ಕಳೇಬರವಿದ್ದ ಕಡೆಗೆ ಬರುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯಿತು. ಆದರೆ ಹುಲಿ ಸುಮಾರು 4 ಗಂಟೆಗಳ ಕಾಲ ನಿದ್ದೆಗೆ ಜಾರಿತು. ಡ್ರೋನ್ ಕ್ಯಾಮರಗಳ ಮೂಲಕ ಎಷ್ಟೇ ಪ್ರಯತ್ನ ಪಟ್ಟರೂರು ಮಲಗಿದ್ದ ಹುಲಿಯನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗಲಿಲ್ಲ. ಮತ್ತೆ ಡ್ರೋನ್ ಕ್ಯಾಮರಾದ ಸೂಚನೆಯನ್ನು ಆಧರಿಸಿ, ಭೀಮ ಹಾಗೂ ಮಹೇಂದ್ರ ಸಾಕಾನೆಗಳೊಂದಿಗೆ ಕಾರ್ಯಾಚರಣೆ ತಂಡ ಹುಲಿ ಮಲಗಿದ್ದಲ್ಲಿಗೆ ತೆರಳಿತು. ಅರವಳಿಕೆ ತಜ್ಞ ಡಾ.ರಮೇಶ್ ಅವರು ಹುಲಿಗೆ ಡಾಟ್ ಮಾಡುವ ಮೂಲಕ ಸುಮಾರು 6 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಯಿತು. ಬಂಧಿಯಾದ ಹುಲಿಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ವಿರಾಜಪೇಟೆ ಎ.ಸಿ.ಎಫ್ ತಾಸಿಂ ಬಾನು, ತಿತಿಮತಿ ಎ.ಸಿ.ಎಫ್ ಗೋಪಾಲ್, ವಿರಾಜಪೇಟೆ ಆರ್ ಎಫ್ ಓ ಶಿವರಾಂ, ತಿತಿಮತಿ ಹಾಗೂ ಪೊನ್ನಂಪೇಟೆ ಆರ್ ಎಫ್ ಒ ಗಂಗಾಧರ್, ಕುಟ್ಟ, ಶ್ರೀಮಂಗಲ, ತಿತಿಮತಿ, ಪೊನ್ನಂಪೇಟೆ, ವಿರಾಜಪೇಟೆ ಡಿ ಆರ್ ಎಫ್ ಒ, ಗಳು, ಶಾರ್ಫ್ ಶೂಟರ್ ಗಳಾದ ರಂಜನ್, ರಮೇಶ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಮ ನಿರ್ದೇಶಿತ ಪ್ರತಿನಿಧಿ ಬೋಸ್ ಮಾದಪ್ಪ, ಡ್ರೋನ್ ನಿರ್ವಾಹಕ ಚಕ್ಕೇರ ತಮ್ಮಯ್ಯ, ತಿತಿಮತಿ ಆನೆ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು, ಪೊನ್ನಂಪೇಟೆ, ತಿತಿಮತಿ, ವಿರಾಜಪೇಟೆ ಆರ್ ಆರ್ ಟಿ ಸಿಬ್ಬಂದಿಗಳು, ಅರಣ್ಯ ಪಾಲಕರು ಮತ್ತಿರರು ಕಾರ್ಯಾಚರಣೆ ನಡೆಸಿ ಹುಲಿಯನ್ನು ಕ್ಷಿಪ್ರಗತಿಯಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಶಾಸಕರ ಶ್ಲಾಘನೆ ಅರಣ್ಯ ಇಲಾಖೆಯ ಯಶಸ್ವೀ ಕಾರ್ಯಾಚರಣೆ ಕುರಿತು ಶ್ಲಾಘನೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹುಲಿ ಸೆರೆ ಹಿಡಿದು ಸ್ಥಳಾಂತರಿಸುತ್ತಿರುವ ವಿಷಯ ತಿಳಿದು ವಿಧಾನಸೌಧದಿಂದ ಮೆಟ್ರೋ ಮೂಲಕ ಕೆಂಗೇರಿಗೆ ತೆರಳಿ ಪರಿಶೀಲಿಸಿದರು. ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಹುಲಿ ಸೆರೆ ಹಿಡಿದು ಜನರ ಸಮಸ್ಯೆಗೆ ಸ್ಪಂದಿಸಿದ ಅರಣ್ಯ ಇಲಾಖಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಬಾಕಿ 35 ಸಾವಿರ ಕೋಟಿ ರೂ. ಹಣ ಬಿಡುಗಡೆಗೆ ಒತ್ತಾಯಿಸಿ ಮಾ.5 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ
ಸಿಎಂ ಸಿದ್ದರಾಮಯ್ಯ ಅರ್ಧಗಂಟೆ ಸಭೆ ನಡೆಸಿದೆ ಗುತ್ತಿಗೆದಾರರ ಸಮಸ್ಯೆ ಬಹುತೇಖ ಇತ್ಯರ್ಥ: ಆರ್.ಮಂಜುನಾಥ್
ಮಾದಕ ವಸ್ತುಗಳ ವಿಷಯದಲ್ಲಿ ಕರ್ನಾಟಕ ಮತ್ತೊಂದು ಪಂಜಾಬ್ ಆಗಲು ಬಿಡುವುದಿಲ್ಲ: ಡಾ.ಜಿ. ಪರಮೇಶ್ವರ್
ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯವನ್ನು ಮಾದಕ ವಸ್ತುಗಳ ವಿಷಯದಲ್ಲಿ ಕರ್ನಾಟಕವನ್ನು ಮತ್ತೊಂದು ಪಂಜಾಬ್ ರಾಜ್ಯ ಆಗಲು ನಾವು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್ ಫೌಂಡೇಶನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾಸ್ಥ್ಯ ಭಾರತ, ಶ್ರೇಷ್ಠ ಭಾರತ, ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಶೆ ಸಮಾಜಕ್ಕೆ ಸಾರ್ವಜನಿಕರೂ ಕೂಡ ಆಸ್ಪದ ನೀಡಬಾರದು. ಎಲ್ಲರೂ ಒಗ್ಗೂಡಿ ಮಾದಕ ದ್ರವ್ಯ ಮುಕ್ತ ಕರ್ನಾಟಕ ಕಟ್ಟಬೇಕಿದೆ ಎಂದು ಕರೆ ನೀಡಿದರು. ನಶಾ ಮುಕ್ತ ರಾಜ್ಯವನ್ನು ಕಟ್ಟಬೇಕಾದರೆ ಮೊದಲು ನಮ್ಮ ಕಾಲೇಜುಗಳು ನಶಾ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಿವಿ ಕೈಗೊಂಡಿರುವ ಅಭಿಯಾನ ಮಹತ್ವಪೂರ್ಣವಾಗಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹವಿದೆ. ಕರ್ನಾಟಕ ಸಂಪೂರ್ಣ ನಶಾ ಮುಕ್ತಗೊಳಿಸಲು ರಾಜ್ಯ ಸರಕಾರ ಈಗಾಗಲೇ ಗಂಭೀರ ಚಿಂತನೆ ನಡೆಸಿದೆ. ಸರಕಾರದ ಮಟ್ಟದಲ್ಲಿ ಇದನ್ನು ನಿಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರಿಗೂ ಸೂಚನೆ ನೀಡಲಾಗುವುದು ಎಂದರು. ರಾಜ್ಯದ ಬಹುದೊಡ್ಡ ಹಾಗೂ ಪ್ರತಿಷ್ಠಿತ ಆರೋಗ್ಯ ವಿಶ್ವವಿದ್ಯಾಲವಾಗಿರುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಅಡಿಯಲ್ಲಿ ಸುಮಾರು 1500 ಆರೋಗ್ಯ ವಿಜ್ಞಾನಗಳ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆ. ಮಾದಕ ವಸ್ತು ವಿರೋಧಿ ಸಮಿತಿಗಳನ್ನು ರಚಿಸುವಂತೆ ವಿಶ್ವವಿದ್ಯಾಲಯ ಈ ಎಲ್ಲ ಕಾಲೇಜಿಗಳಿಗೆ ಸೂಚನೆ ನೀಡಬೇಕು. ಇದನ್ನು ಗಂಭೀರವಾಗಿ ಪರಿಗಣಿಸದ ಕಾಲೇಜುಗಳ ಪರವಾನಿಗೆಗಳನ್ನು ರದ್ದುಗೊಳಿಸಬೇಕು ಎಂದು ಅವರು ಸೂಚಿಸಿದರು. ರಾಜ್ಯದಲ್ಲಿ ನೂರಾರು ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿಯಾಗುತ್ತಲೇ ಇದೆ. ಹೀಗೆ ಜಪ್ತಿಯಾಗುವ ಮಾದಕ ವಸ್ತುಗಳನ್ನು ಸುಟ್ಟು ಹಾಕುವ ಮೂಲಕ ನಾಶಪಡಿಸಲಾಗುತ್ತಿದೆ. ಆದರೂ ಮತ್ತೆ ಅಷ್ಟೇ ಪ್ರಮಾಣದ ಮಾದಕ ವಸ್ತುಗಳು ರಾಜ್ಯವನ್ನು ಪ್ರವೇಶಿಸುತ್ತಿರುವುದು ಆತಂಕ ಹುಟ್ಟಿಸಿದೆ. ವಿದೇಶಿ ವಿದ್ಯಾರ್ಥಿಗಳ ಸೋಗಿನಲ್ಲಿ ಬಂದು ಮಾದಕ ವಸ್ತುಗಳ ಮಾರಾಟ ಮಾಡುವವರ ಮೇಲೆ ಸರಕಾರ ಕಣ್ಣಿಟ್ಟಿದೆ ಎಂದು ಮಾಹಿತಿ ನೀಡಿದರು. ಇದರ ಜೊತೆ ಜೊತೆಗೇ ಮಾದಕ ವಸ್ತುಗಳ ಸೇವನೆಯನ್ನು ತಡೆಯುವ ಮನಸ್ಥಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿದೆ. ಅಂತಹ ಕೆಲಸವನ್ನು ರಾಜೀವ್ ಗಾಂಧಿ ವಿವಿ ಮಾಡುತ್ತಿದೆ. ನಶಾ ಮುಕ್ತ ಕ್ಯಾಂಪಸ್ ನಿರ್ಮಿಸುವ ವಿವಿಯ ಸಮಾಜಮುಖಿ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕವಿ, ಅಂಕಣಕಾರ ಕೋ.ಶಿ. ಕಾರಂತ ನಿಧನ
ಕುಂದಾಪುರ, ಫೆ.11: ಹಿರಿಯ ಸಾಹಿತಿ, ಲೇಖಕ ಹಾಗೂ ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ಇಂದು ಸಂಜೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಾರಂತ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ಸಮೀಪದ ಕೋಣಿಯವರಾದ ಶಿವಾನಂದ ಕಾರಂತರು 1946ರ ಆಗಸ್ಟ್ 30ರಂದು ಜನಿಸಿದ್ದರು. ಲೇಖಕ, ಸಾಹಿತಿಯಾಗಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅವರು ಸಕ್ರಿಯರಾಗಿದ್ದರು. ಕುಂದಾಪುರದ 'ಕುಂದಪ್ರಭ' ಪತ್ರಿಕೆಯಲ್ಲಿ ಅವರು 3 ದಶಕಗಳ ಕಾಲ ಅಂಕಣಕಾರರಾಗಿ ಜನಪ್ರಿಯರಾಗಿದ್ದರು. ಗಂಗೊಳ್ಳಿ ಎಸ್.ವಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರ ಬಳಿಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಭಾಷಣಕಾರರಾಗಿ, ನಾಟಕ ನಿರ್ದೇಶಕ ರಾಗಿಯೂ ಗುರುತಿಸಿಕೊಂಡಿದ್ದರು. ಇಲ್ಲಿಯವರೆಗೆ 10ಕ್ಕೂ ಹೆಚ್ಚುಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ರಮುಖವಾದವುಗಳು ಅಪ್ರಮೇಯ, ಅನಾಮಿಕ, ಅನಿಮಿಷ, ಅರಿವಿನ ಆನಂದ, ಸಂಜೆಗತ್ತಲಲ್ಲಿ ಬಕುಳವೃಕ್ಷ, ಕಲ್ಪನೆಯ ಕಡಲು, ಹಳೆ ತಲೆಮಾರಿನವರು ಮೊದಲಾ ದವು. 2023ರಲ್ಲಿ ಗಂಗೊಳ್ಳಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಾರಂತರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಸ ಕಿರಣ್ ಕುಮಾರ್ ಕೊಡ್ಗಿ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಂತಾಪ ವ್ಯಕ್ತಪಡಿಸಿದ್ದಾರೆ.
ಭೀಮಣ್ಣ ಖಂಡ್ರೆಗೆ ಮರಣೋತ್ತರ ʼಕರ್ನಾಟಕ ರತ್ನʼ ಕೊಡಬೇಕು: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬುಧವಾರ ನಗರದ ಖಾಸಗಿ ಹೊಟೇಲ್ನಲ್ಲಿ ಹಮ್ಮಿಕೊಂಡಿದ್ದ ಭೀಮಣ್ಣ ಖಂಡ್ರೆ ನುಡಿನಮನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಫೆ.14 ರಂದು ಅರಮನೆ ಮೈದಾನ ಗಾಯಿತ್ರಿ ವಿಹಾರದಲ್ಲಿ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಭೀಮಣ್ಣ ಖಂಡ್ರೆ ಅವರು ಶಾಸಕರಾಗಿ ಮತ್ತು ಸಚಿವರಾಗಿ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣಕ್ಕೆ ಗುದ್ದಲಿಪೂಜೆ ನೇರವೆರಿಸಿದ್ದರು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಾರಣ ಬ್ರಿಟಿಷರು ಅವರ ಸಂಪತ್ತನ್ನು ಜಪ್ತಿ ಮಾಡಿದ್ದರು. ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ತು ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ದೇಶ ದ್ರೋಹಿಗಳು ಇಂದು ದೇಶ ಭಕ್ತರು ಎಂದು ಹೊಗಳಿಸಿಕೊಳ್ಳುತ್ತಿದ್ದಾರೆ, ಇದು ದುರಂತ ಎಂದು ಅವರು ತಿಳಿಸಿದರು. ಸೋಷಿಯಲ್ ಮೀಡಿಯದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷಕ್ಕೆ ಅದೇ ಸೋಷಿಯಲ್ ಮೀಡಿಯ ಇಂದು ಬಿಜೆಪಿ ಪಕ್ಷವನ್ನು ತೆಗುಳುತ್ತಿದೆ. ನೆಹರೂರವರ ಆಡಳಿತದಲ್ಲಿ ಬೆಂಗಳೂರಿನಲ್ಲಿ ಹಲವಾರು ಕಾರ್ಖಾನೆ ಸಂಸ್ಥೆಗಳು ಪ್ರಾರಂಭಿಸಿ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದರು. ಸಾರ್ವಕರ್, ಗೋಡ್ಸೆ ರವರಿಗೆ ಭಾರತ ರತ್ನ ಕೊಡುವ ಯೋಚನೆ ಮಾಡುತ್ತಿದ್ದಾರೆ ಎಂಬುದು ದುರಂತ. ಇಂದಿನ ಯುವಕರಿಗೆ ಕಾಂಗ್ರೆಸ್ ಪಕ್ಷದ ಸಾಧನೆ, ಯೋಜನೆಗಳನ್ನು ತಿಳಿಸಬೇಕು ಎಂದು ರಾಮಲಿಂಗಾರೆಡ್ಡಿ ಕರೆ ನೀಡಿದರು. ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ವಕ್ತಾರ ಲಕ್ಷ್ಮಣ್, ಮಾಜಿ ಮಹಾಪೌರ ಜೆ.ಹುಚ್ಚಪ್ಪ, ಮಾಜಿ ಉಪಮಹಾಪೌರ ಬಿ.ಎಸ್.ಪುಟ್ಟರಾಜು, ಬಿಎಚಿಟಿಸಿ ನಿಗಮದ ಅಧ್ಯಕ್ಷ ವಿ.ಎಸ್.ಆರಾಧ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾ ನ ಸಮಿತಿ ನಗರ ಅಧ್ಯಕ್ಷ ಜಿ.ಕೃಷ್ಣಪ್ಪ, ಮಾಜಿ ಪಾಲಿಕೆ ಸದಸ್ಯ ಬಿ.ಟಿ.ಶ್ರೀನಿವಾಸಮೂರ್ತಿ, ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಿಕ್ಲು ಶಿವ ಕೊಲೆ ಪ್ರಕರಣ: ನಾಪತ್ತೆಯಾಗಿರುವ ಶಾಸಕ ಬೈರತಿ ಬಸವರಾಜು ವಿರುದ್ಧ ಈಗ ಸಿಐಡಿಯಿಂದ ಲುಕೌಟ್ ನೋಟಿಸ್
ಬೆಂಗಳೂರು: ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಅವರ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದಾರೆ.ಬೈರತಿ ಬಸವರಾಜು ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಬೈರತಿ ಬಸವರಾಜು ಅವರು ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿದ್ದು, ಸಿಐಡಿ ಪೊಲೀಸ್ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧೆಡೆ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಈ ಮಧ್ಯೆ ಬೈರತಿ ಬಸವರಾಜು ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅವರ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ತಂಗಿರುವ ಮಾಹಿತಿ ''ಬೈರತಿ ಬಸವರಾಜು ಅವರು ಮಹಾರಾಷ್ಟ್ರದ ಪ್ರತಿಷ್ಠಿತ ಹೋಟೆಲ್ನಲ್ಲಿ ತಂಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಬಂಧಿಸುವ ಉದ್ದೇಶಕ್ಕೆ ವಿಶೇಷ ತಂಡಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದೇವೆ. ಅವರು ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಲುಕ್ಔಟ್ ನೋಟಿಸ್ ಸಹ ಜಾರಿ ಮಾಡಿದ್ದೇವೆ. ದೇಶದ ಎಲ್ಲಾವಿಮಾನ ನಿಲ್ದಾಣಗಳಿಗೆ ಬೈರತಿ ಬಸವರಾಜು ಅವರ ಬಗ್ಗೆ ಫೋಟೊ ಸಮೇತ ಮಾಹಿತಿ ರವಾನಿಸಿದ್ದೇವೆ,'' ಎಂದು ಸಿಐಡಿ ಮೂಲಗಳು ತಿಳಿಸಿವೆ.ರೌಡಿ ಬಿಕ್ಲುಶಿವ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ''ಕೊಲೆ ಪ್ರಕರಣ ಸಂಬಂಧ ಬೈರತಿ ಬಸವರಾಜು ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅವರಾಗಿಯೇ ಬಂದು ಪೊಲೀಸರಿಗೆ ಶರಣಾದರೆ ಒಳ್ಳೆಯದು. ಇಲ್ಲವಾದರೆ ಪೊಲೀಸರು ಬಂಧಿಸುತ್ತಾರೆ,'' ಎಂದು ಹೇಳಿದ್ದಾರೆ.ಬೈರತಿ ಬಸವರಾಜು, 2025ರ ಡಿಸೆಂಬರ್ನಲ್ಲೂ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆಗಲೂ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಸಿಐಡಿ ಪೊಲೀಸರು ಬೈರತಿ ಬಸವರಾಜುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದರು. ಆಗಲೂ ಬೈರತಿ ಬಸವರಾಜು ತಲೆಮರೆಸಿಕೊಂಡಿದ್ದರು. ಬಳಿಕ ಅವರು ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿದಾಗ ಹೈಕೋರ್ಟ್, 'ಶಾಸಕರ ವಿರುದ್ಧ ಬಲವಂತದ ಕ್ರಮ ಬೇಡ' ಎಂದು ಸೂಚಿಸಿ ಅಂತಿಮ ಆದೇಶ ಕಾಯ್ದಿರಿಸಿತ್ತು. ಕೊಲೆಯಾದ ಬಿಕ್ಲು ಶಿವು ಯಾರು? ಬಿಕ್ಲು ಶಿವು ಆಲಿಯಾಸ್ ಶಿವಕುಮಾರ್ ಬೆಂಗಳೂರಿನ ಹಲಸೂರು ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ರೌಡಿ ಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ. ಶಿವಕುಮಾರ್ ವಿರುದ್ದ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ 11 ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. 2025 ಜುಲೈ 15 ರಂದು ರಾತ್ರಿ ಮನೆಯ ಮುಂದೆ ನಿಂತಿದ್ದ ವೇಳೆ 8ರಿಂದ 12 ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರನ್ನು ಕೊಚ್ಚಿ ಹತ್ಯೆ ಮಾಡಿದ್ದರು. ಅವರ ತಾಯಿ ವಿಜಯಲಕ್ಷ್ಮೀ ಅವರ ಎದುರೇ ಈ ಹತ್ಯೆ ನಡೆದಿತ್ತು. ದುಷ್ಕೃತ್ಯದ ವಿಡಿಯೋಗಳು ಕೂಡಾ ಬಹಿರಂಗಗೊಂಡಿದ್ದವು. ಶಾಸಕ ಬೈರತಿ ಬಸವರಾಜ ಕುಮ್ಮಕ್ಕಿನಿಂದಲೇ ಈ ಕೊಲೆ ನಡೆದಿದೆ ಎಂದು ಬಿಕ್ಲು ಶಿವು ತಾಯಿ ವಿಜಯಲಕ್ಷ್ಮಿ ಅವರು ಆರೋಪಿಸಿದ್ದಾರೆ.
ಮಸಾಜ್ ಸಲೂನ್ ಪ್ರಕರಣ: ಚಿತ್ರನಟ ಸಾಧು ಕೋಕಿಲ, ಮಂಡ್ಯ ರಮೇಶ್ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಮೈಸೂರಿನ ಮಸಾಜ್ ಸಲೂನ್ವೊಂದರ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹಾಲಿ ಅಧ್ಯಕ್ಷರೂ ಆದ ನಟ ಸಾಧು ಕೋಕಿಲ ಹಾಗೂ ನಟ ಮಂಡ್ಯ ರಮೇಶ್ ವಿರುದ್ಧದ ಎಫ್ಐಆರ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣಾ ಪೊಲೀಸರು 2017ರಲ್ಲಿ ದಾಖಲಿಸಿರುವ ಎಫ್ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ 3ನೇ ಹೆಚ್ಚುವರಿ ಜೆಎಂಎಫ್ಸಿ ಕೋರ್ಟ್ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್ 2019ರಲ್ಲಿಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿಧಿದ್ದ ನ್ಯಾಯಪೀಠ ಬುಧವಾರ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಪ್ರಕರಣವೇನು? ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಗುಮಾನಿ ಮೇರೆಗೆ 2017ರ ಡಿ.20ರಂದು ಮೈಸೂರಿನ ಸ್ವಾಮಿ ಆರ್ಕೇಡ್ ಕಟ್ಟಡದಲ್ಲಿದ್ದ ಲೈಕ್ ಟ್ರೆಂಡ್ ಫ್ಯಾಮಿಲಿ ಸಲೂನ್ ಮೇಲೆ ಸರಸ್ವತಿಪುರಂ ಠಾಣಾ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಸಲೂನ್ನಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಸಲೂನ್ ಮಾಲೀಕ ರಾಜೇಶ್ ಇದ್ದರು. ಮಹಿಳೆಯನ್ನು ವಿಚಾರಣೆ ನಡೆಸಿದಾಗ, ''ಸಲೂನ್ ಭೇಟಿ ನೀಡುವ ಗ್ರಾಹಕರ ದೇಹದ ಎಲ್ಲಾ ಭಾಗಗಳಿಗೆ ಮಸಾಜ್ ಮಾಡುವಂತೆ ರಮೇಶ್ ನನಗೆ ಹೇಳುತ್ತಿದ್ದರು. ನಟ ಸಾಧು ಕೋಕಿಲ ಸಹ ಸಲೂನ್ಗೆ ಬರುತ್ತಿದ್ದರು. ಅವರ ದೇಹದ ಎಲ್ಲಾ ಭಾಗಗಳಿಧಿಗೂ ನಾನು ಮಸಾಜ್ ಮಾಡಿದೆ,'' ಎಂದು ಹೇಳಿಕೆ ನೀಡಿದ್ದರು.ಆ ಕುರಿತು ತನಿಖೆ ನಡೆಸಿದ್ದ ಪೊಲೀಸರು, ಸಾಧು ಕೋಕಿಲ ವಿರುದ್ಧ ಐಪಿಸಿ ಸೆಕ್ಷನ್ 354 ಅನ್ವಯ ಮಹಿಳೆಯ ಘನತೆಗೆ ಧಕ್ಕೆ ತಂದ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೈಕೋರ್ಟ್ ಮೆಟ್ಟಿಲೇರಿದ ಸಾಧು ಕೋಕಿಲ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದಾರೆ.ಅರ್ಜಿದಾರರ ಪರ ವಕೀಲರು, ಸಲೂನ್ನ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ಸಾಧು ಕೋಕಿಲ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ. ಅಧೀನ ನ್ಯಾಯಾಲಯದ ಮುಂದೆ ನೀಡಿದ ಈ ಹೇಳಿಕೆಯಲ್ಲಿ ಮಹಿಳೆಯು ಈ ಆರೋಪ ಮಾಡಿಲ್ಲ. ಆಕೆ ತಿಳಿಸಿದ ದಿನಾಂಕದಂದು ಅರ್ಜಿದಾರರು ಸಲೂನ್ಗೆ ಭೇಟಿಯೇ ನೀಡಿರಲಿಲ್ಲ. ಆದರೂ, ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಅರ್ಜಿದಾರರಿಗೆ ತೇಜೋವಧೆಯಾಗುತ್ತಿದೆ. ಹಾಗಾಗಿ, ಪ್ರಕರಣ ಹಾಗೂ ಆ ಕುರಿತ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು, ಎಂದು ಕೋರಿದ್ದರು. ಈ ಮನವಿಯನ್ನು ಈಗ ಹೈಕೋರ್ಟ್ ಪುರಸ್ಕರಿಸಿದೆ.
ಸಬ್ಸಿಡಿ ಬೇಕಾ? ಬೇಡವಾ? ಕನ್ನಡ ಚಿತ್ರರಂಗದಲ್ಲಿ ಬಿಸಿಬಿಸಿ ಚರ್ಚೆ - ಚೇತನ್ ನಾಡಿಗೇರ್ ಬರಹ
ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಗುಣಮಟ್ಟದ ಚಿತ್ರಗಳಿಗೆ ಪ್ರತೀ ವರ್ಷ ಸರ್ಕಾರ ನೀಡುವ 10 ಲಕ್ಷ ರೂ. ಸಬ್ಸಿಡಿ ಕುರಿತು ಮತ್ತೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಅವರು ಸಹ ಸಬ್ಸಿಡಿ ಬೇಕೇ ಬೇಕು ಎಂದು ಕೆಲವು ಸಂದರ್ಶನಗಳಲ್ಲಿ ಒತ್ತಿ ಹೇಳುತ್ತಲೇ ಬಂದಿದ್ದಾರೆ. ಇಷ್ಟಕ್ಕೂ ಸಬ್ಸಿಡಿಯ ಕುರಿತು ಈಗೇಕೆ
ರಾಹುಲ್ ಗಾಂಧಿ ಗಂಭೀರ ಆರೋಪಗಳಿಗೆ ನಿರ್ಮಲಾ ಸೀತಾರಾಮನ್ ತಿರುಗೇಟು: ಇಡೀ ದಿನ ಸಂಸತ್ತಿನಲ್ಲಿ ನಡೆದದ್ದೇನು?
Indian Parliment Session On Budget- ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಆಡಳಿತಾರೂಢ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ರಾಹುಲ್ ಗಾಂಧಿ ಅವರ ಪ್ರಧಾನಿ ಮೋದಿ ಅವರು ಭಾರತವನ್ನು ಮಾರಾಟಕ್ಕಿಟ್ಟಿದ್ದೀರಿ ಎಂಬ ಆರೋಪ ಬಿಜೆಪಿಗರನ್ನು ಕೆರಳಿಸಿದೆ. ಇದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು ಆದಿಯಾಗಿ ಅನೇಕ ಸಚಿವರು, ಬಿಜೆಪಿ ಸಂಸದರು ತಿರುಗೇಟು ನೀಡಿದ್ದಾರೆ. ಇನ್ನು ಎಪ್ಸ್ಟೀನ್ ಭೇಟಿಯನ್ನು ಉಲ್ಲೇಖಿಸಿರುವುದಕ್ಕೆ ರಾಹುಲ್ ಗಾಂಧಿ ಅವರು ಆಧಾರ ರಹಿತ ಆರೋಪಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತ್ಯಾರೋಪ ಮಾಡಿದ್ದಾರೆ.
US India Space:ಬೆಂಗಳೂರಿನಲ್ಲಿ ನಡೆದ ಯುಎಸ್-ಇಂಡಿಯಾ ಸ್ಪೇಸ್ ಬಿಸಿನೆಸ್ ಫೋರಂನಲ್ಲಿ ಅಮೆರಿಕ ಮತ್ತು ಭಾರತದ ಹಿರಿಯ ಅಧಿಕಾರಿಗಳು ಹಾಗೂ ಉದ್ಯಮ ನಾಯಕರು ಭಾಗವಹಿಸಿದ್ದರು. ವಾಣಿಜ್ಯ ಅಂತರಿಕ್ಷ ಸಹಕಾರವನ್ನು ಹೆಚ್ಚಿಸುವುದು, ನೀತಿಗಳನ್ನು ಹೊಂದಾಣಿಕೆ ಮಾಡುವುದು ಮತ್ತು ಎರಡು ದೇಶಗಳ ಕಂಪನಿಗಳ ನಡುವೆ ಸಂಯುಕ್ತ ಯೋಜನೆಗಳನ್ನು ಪರಿಶೀಲಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಈ ಕಾರ್ಯಕ್ರಮದಲ್ಲಿ 14 ಕಂಪನಿಗಳ 23 ಹಿರಿಯ
ಕಲಬುರಗಿ| ಎಸ್ ಐಆರ್ ವಿರುದ್ಧ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಪ್ರತಿಭಟನೆ
ಕಲಬುರಗಿ: ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕೇಂದ್ರ ಸರಕಾರದ ಕರಾಳ ಎಸ್.ಐ.ಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ ಅದರ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು. ಎಸ್.ಐ.ಆರ್ ಪ್ರಕ್ರಿಯೆಯಿಂದ ಬಡವರು, ಕಾರ್ಮಿಕರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮತದಾನದ ಹಕ್ಕಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗವು ಈಗಾಗಲೇ 12 ರಾಜ್ಯಗಳಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಕೈಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕಲಾಗಿದೆ ಎಂದು ದೂರಿದರು. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಎಸ್.ಐ.ಆರ್ ವಿರುದ್ಧ ಕಾನೂನು ಹೋರಾಟ ಆರಂಭಿಸಿರುವುದನ್ನು ಉಲ್ಲೇಖಿಸಿ ಕರ್ನಾಟಕ ಸರ್ಕಾರವೂ ಇದೇ ರೀತಿಯ ದೃಢ ನಿಲುವು ತಾಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಗೌರಮ್ಮ ಮಾಕಾ, ಸಂಚಾಲಕರಾದ ರೇಣುಕಾ ಸರಡಗಿ, ಶರಣು ಕಣ್ಣಿ, ಸುನಿತಾ ಕೊಳ್ಳೂರ, ಸುಗರಾ ಬೇಗಂ, ಕಲಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸರಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಶೇಖರಣೆ ಕೇಂದ್ರಕ್ಕೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಸಂಗ್ರಹ ಕಸಿ ಹಾಗೂ ಅಂಗಾಂಗ ಶೇಖರಣಾ ಘಟಕಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸಲು ಮತ್ತು ಈಗಾಗಲೇ ಇರುವ ಕೇಂದ್ರಗಳಿಗೆ ಹೆಚ್ಚಿನ ಉತ್ತೇಜನ ನೀಡಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್ ಫೌಂಡೇಶನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾಸ್ಥ್ಯ ಭಾರತ, ಶ್ರೇಷ್ಠ ಭಾರತ, ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ರಾಜೀವ್ ಗಾಂಧಿ ವಿವಿ ಕೈಗೊಂಡ ಕ್ರಮಗಳು ಮಹತ್ವಪೂರ್ಣವಾಗಿದ್ದು, ಇಂತಹ ಉದ್ದೇಶಗಳಿಗೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದರು. ಅಂಗಾಂಗ ದಾನದಲ್ಲಿ ನಾವು ದೇಶದಲ್ಲಿ ಮೂರನೆ ಸ್ಥಾನದಲ್ಲಿದ್ದೇವೆ. ಆದರೆ, ಇದು ಮತ್ತಷ್ಟು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಬಡಜನರಿಗೆ ಅನುಕೂಲ ಆಗಲು ಸರಕಾರದ ಮಟ್ಟದಲ್ಲಿಯೂ ಕ್ರಮ ವಹಿಸಲಾಗುವುದು. ಈಗಾಗಲೇ ನಾವು ಅಂಗಾಂಗ ದಾನ ಮಾಡಿದ ಕುಟುಂಬಕ್ಕೆ ಸನ್ಮಾನಿಸುವ ವಿನೂತನ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಇದರಿಂದ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಆಗಿದೆ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುಂದೆ ಪ್ರತಿ ವಿಶ್ವವಿದ್ಯಾಲಯದಲ್ಲಿ ‘ನಶಾ ಮುಕ್ತ ಕ್ಯಾಂಪಸ್' ಕಾರ್ಯಕ್ರಮ ಆಯೋಜಿಸಲಾಗುವುದು ಎಂದ ಅವರು, ಹೆಚ್ಚಿನ ಸಂದರ್ಭದಲ್ಲಿ ಮಾದಕ ವಸ್ತು ಬಳಕೆ ಗೆಳೆಯರ ಒತ್ತಾಯಕ್ಕೊ ಅಥವಾ ಚಿಕ್ಕವಯಸ್ಸಿನಲ್ಲಿನ ಕುತೂಹಲದಿಂದ ಸೇವಿಸುತ್ತಾರೆ. ಆನಂತರ, ಇದು ಚಟವಾಗಿ ಬದಲಾಗುತ್ತದೆ. ಆದರೆ, ಇದನ್ನು ಗಮನದಲ್ಲಿಟ್ಟುಕೊಂಡು ಜಾಗೃತಿ ಮೂಡಿಸಬೇಕಾಗಿದೆ. ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಮಾದಕ ವಸ್ತುಗಳ ವಿರುದ್ಧ ಬಹುದೊಡ್ಡ ಅಭಿಯಾನ ನಡೆಸಲಾಗಿತ್ತು. ಇದೇ ಮಾದರಿಯಲ್ಲಿಯೇ ಪ್ರತಿ ವಿಶ್ವವಿದ್ಯಾಲಯದಲ್ಲಿ ‘ನಶಾ ಮುಕ್ತ ಕ್ಯಾಂಪಸ್' ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು. ಇಂದಿನ ಕಾಲಘಟ್ಟದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಅತೀ ಅಗತ್ಯವಾಗಿದೆ. ಆದರೆ, ಇದೊಂದು ದೊಡ್ಡ ಸವಾಲು ಸಹ ಆಗಿದೆ. ಇನ್ನೊಂದೆಡೆ, ಮಾದಕ ವಸ್ತುಗಳ ಸೇವನೆಯಿಂದಾಗಿ ಯುವಕರೇ ಹೆಚ್ಚಾಗಿ ಜೀವ ಕಳೆದುಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ. ಮಾದಕ ವಸ್ತುಗಳ ಸೇವನೆ ಕಾರಣದಿಂದಾಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಕೇವಲ ಕಾನೂನು ರೂಪಿಸುವುದರಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಜನಜಾಗೃತಿಯು ಬಹಳ ಮುಖ್ಯ. ಪೋಷಕರು ಮಕ್ಕಳ ಕುರಿತು ಗಮನಹರಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದರು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಮಾದಕ ವಸ್ತುಗಳು ಮಾತ್ರವಲ್ಲದೆ, ಮದ್ಯ ಸೇವನೆ ಇತ್ತೀಚಿನ ದಿನಗಳಲ್ಲಿ ಶೋಕಿ, ಮೋಜು ಆಗಿದೆ. ಸಣ್ಣ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ, ವಿದ್ಯಾವಂತರೂ ಕೂಡ ಆಲ್ಕೋಹಾಲ್ ಸೇವನೆ ಮಾಡುವುದು ರೂಡಿಯಾಗಿದೆ. ಇದು ಕೂಡ ಮನುಷ್ಯನ ಶರೀರದ ಮೇಲೆ ಪರಿಣಾಮ ಬೀರಿ ಹಾನಿಯುಂಟುಮಾಡುತ್ತದೆ. ಸ್ಮರಣಶಕ್ತಿ ಕುಂಠಿತ, ರೋಗನಿರೋಧಕ ಶಕ್ತಿ ಕಡಿಮೆ ಮಾಡುವುದು ಸೇರಿದಂತೆ ಅನೇಕ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಇದರಿಂದ ಜಾಗೃತರಾಗಬೇಕು. ಒಟ್ಟಿನಲ್ಲಿ ಜನರಲ್ಲಿ ಕೆಟ್ಟ ಚಟಗಳ ಕುರಿತು ಜನ ಜಾಗೃತಿ ಮೂಡಿಸಬೇಕು ಎಂದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು. ಪ್ರತಿಯೊಬ್ಬರೂ ಕಾನೂನು ಪರಿಪಾಲಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಆರ್ಶದ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಸಿ.ಭಗವಾನ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಡಾ.ಬಿ.ಎಲ್.ಸುಜಾತಾ ರಾಥೋಡ್, ಎನ್ಸಿಬಿ ವಲಯ ನಿರ್ದೇಶಕ ಸಚಿನ್ ಘೋರ್ಪಡೆ ಸೇರಿದಂತೆ ಪ್ರಮುಖರಿದ್ದರು.
ರಾಯಚೂರು| ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿ: ಮೂವರ ಸ್ಥಿತಿ ಗಂಭೀರ
ದೇವದುರ್ಗ: ದೇವದುರ್ಗ ಪಟ್ಟಣದ ಮುಷ್ಟೂರು ಕ್ರಾಸ್ ಬಳಿ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾಗಿದ್ದು ಮೂವರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಕ್ಕಲದೊಡ್ಡಿಯ ಸುದೀಪ್ ಹಾಗೂ ಅವರ ತಂದೆ ಸೂಗಯ್ಯ ಕಕ್ಕಲದೊಡ್ಡಿ ಗ್ರಾಮದ ಗಾಯಗೊಂಡ ಬೈಕ್ ಸವಾರರು ಎಂದು ಗುರುತಿಸಲಾಗಿದೆ. ಸಂಗಮೇಶ ಎಂಬುವವರು ಮುಷ್ಟೂರಿನಿಂದ ದೇವದುರ್ಗಕ್ಕೆ ಪ್ರಯಾಣಿಸುವ ವೇಳೆ ಬೈಕ್ ಗಳ ಮುಖಾಮುಖಿ ಡಿಕ್ಕಿ ಯಾಗಿದೆ. ಘಟನೆಯಲ್ಲಿ ಸಂಗಮೇಶ ತಲೆಗೆ ಪೆಟ್ಟುಬಿದ್ದು ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರ್ಕಝುಲ್ ಹುದಾ ಒಮಾನ್ ನಿಝ್ವಾ ಘಟಕ ಅಸ್ತಿತ್ವಕ್ಕೆ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನ್ ದೇಶದ ನಿಝ್ವಾ ಘಟಕವನ್ನು ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಮ್ ಅಬ್ದುಲ್ ರಶೀದ್ ಝೈನಿ ಅವರ ನೇತೃತ್ವದಲ್ಲಿ ಕರ್ಷ ಖಲಂದರ್ ಭಾಷಾ ಅವರ ನಿವಾಸದಲ್ಲಿ ರಚನೆ ಮಾಡಲಾಯಿತು. ನೂತನ ಸಮಿತಿಗೆ ಸಲಹೆಗಾರರಾಗಿ ಇಬ್ರಾಹಿಂ ಹಾಜಿ ಮಣಿಪುರ, ಮುಹಮ್ಮದ್ ಕಲ್ಮಿಂಜೆ ಹುದ್ ಹುದ್, ಗೌರವಾಧ್ಯಕ್ಷರಾಗಿ ಖಲಂದರ್ ಭಾಷಾ ತೀರ್ಥಹಳ್ಳಿ, ಅಧ್ಯಕ್ಷರಾಗಿ ಹುಸೈನ್ ತೀರ್ಥಹಳ್ಳಿ, ಪ್ರಧಾನ ಕಾರ್ಯದರ್ಶಿ ಯಾಗಿ ಸಿರಾಜ್ ಪದಿಂಜಾರ್, ಕೋಶಾಧಿಕಾರಿಯಾಗಿ ಆದಂ ಮದನಿ ಆತೂರು, ಉಪಾಧ್ಯಕ್ಷರಾಗಿ ಝಿಯಾದ್ ಮಣಿಪುರ, ಸಾದಿಖ್ ಕೈಕಂಬ ಕಾರ್ಯದರ್ಶಿಗಳಾಗಿ ರಮೀಝ್ ಕಟಪಾಡಿ, ಶರೀಫ್ ಮಾಚಾರ್, ಕಾರ್ಯಕಾರಿ ಸದಸ್ಯರಾಗಿ ಅಬೂಬಕರ್ ಅಳಕೆಮಜಲು, ಖಲೀಲ್ ರಹ್ಮಾನ್ ದಾವಣಗೆರೆ, ಫಯಾಝ್ ಮಲ್ಲೂರು, ಹನೀಫ್ ಕೆಸಿ ರೋಡ್, ಇಮ್ರಾನ್ ಕೈಕಂಬ, ತೌಫೀಖ್ ಸುರಲ್ಪಾಡಿ, ಹೈದರ್ ಬಹ್ಲಾ, ಬಶೀರ್ ಕಣ್ಣಂಗಾರ್, ಬಾಸಿತ್ ಸಜೀಪ, ಮನ್ಸೂರ್ ಅಡ್ಡೂರು, ಲತೀಫ್ ಜಾಲ್ಸೂರ್, ಆಸಿಫ್ ಕಣ್ಣಂಗಾರ್, ರಶೀದ್ ಮಂಜೇಶ್ವರ ಇವರನ್ನು ಆರಿಸಲಾಯಿತು. ಕಾರ್ಯಕ್ರಮದಲ್ಲಿ ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಸಮಿತಿ ಅಧ್ಯಕ್ಷ ಉಮರ್ ಸಖಾಫಿ ಎಡಪ್ಪಾಲ್ ಅಧ್ಯಕ್ಷತೆ ವಹಿಸಿದರು. ವರ್ಕಿಂಗ್ ಸೆಕ್ರೆಟರಿ ಎಂ.ಎಸ್. ಉಬೈದುಲ್ಲಾಹ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆಸಿಎಫ್ ನಿಝ್ವಾ ಝೋನ್ ಅಧ್ಯಕ್ಷ ಆದಂ ಮದನಿ ಆತೂರು ಉದ್ಘಾಟನೆ ಮಾಡಿದರು.
ಕೊಪ್ಪಳ| ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯೋರ್ವಳು ಮಗುವಿಗೆ ಜನ್ಮ ನೀಡಿದ ಪ್ರಕರಣ: ಅಮಾನತ್ತಾದ ಶಿಕ್ಷಕರ ಮರುನೇಮಕ
ಕುಕನೂರ: ವಸತಿ ನಿಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿದ್ದ ಇಬ್ಬರು ಶಿಕ್ಷಕರನ್ನು ಮರು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಮಹೇಶ್ವರ ವಿದ್ಯಾವರ್ಧಕ ಸಮಿತಿ(ರಿ) ಇಟಗಿ ಇದರ ಅಧೀನದಲ್ಲಿ ನಡೆಯುತ್ತಿರುವ ಮಹೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕರಾದ ಪ್ರಭಾಕರ ಮಂಡಲಿಕಪ್ಪ ಭಜಂತ್ರಿ ಹಾಗೂ ಯಂಕಪ್ಪ ರಾಮಪ್ಪ ಅವರನ್ನು ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯವರು ಅಮಾನತ್ತುಗೊಳಿಸಿದ್ದರು. ಈ ಕ್ರಮವನ್ನು ಕರ್ನಾಟಕ ಶಿಕ್ಷಣ ಅಧಿನಿಯಮದ ಪ್ರಕಾರ ಅನುಮೋದನೆಗಾಗಿ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ನಂತರ ಅಮಾನತ್ತುಗೊಂಡ ಶಿಕ್ಷಕರ ಮರು ನೇಮಕ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದೀಗ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅನುದಾನಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಗಳ ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1999ರ ನಿಯಮ 2(1)(ಡಿ) ಪ್ರಕಾರ ಆಡಳಿತ ಮಂಡಳಿಯೇ ಶಿಸ್ತು ಪ್ರಾಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಆಡಳಿತಾತ್ಮಕ ಕ್ರಮಗಳ ಬಳಿಕ ಶಿಕ್ಷಕರನ್ನು ಮರು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ಮುಂದುವರಿದಿರುವುದಾಗಿ ತಿಳಿದುಬಂದಿದೆ.
ಹೊಸದಿಲ್ಲಿ: ರಾಹುಲ್ ಮಂಕೂಟತ್ತಿಲ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರ ವಿರುದ್ಧ ತಾನು ಮಾನಹಾನಿಕಾರಕ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ವಕೀಲೆ ದೀಪಾ ಜೋಸೆಫ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪಾಲಕ್ಕಾಡ್ ಶಾಸಕರೂ ಆದ ರಾಹುಲ್ ಮಂಕೂಟತ್ತಿಲ್ ಅತ್ಯಾಚಾರ ಪ್ರಕರಣದ ಪ್ರಥಮ ದೂರುದಾರೆ ಸಂತ್ರಸ್ತೆಯೊಬ್ಬಳನ್ನು ಗುರಿಯಾಗಿಸಿಕೊಂಡು ತಾವು ಮಾಡಿದ್ದ ಫೇಸ್ಬುಕ್ ಪೋಸ್ಟ್ಗೆ ಸಂಬಂಧಿಸಿದಂತೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಿದ್ದು, ತನಗೆ ಬಂಧನದಿಂದ ರಕ್ಷಣೆ ನೀಡಬೇಕು ಎಂದು ದೀಪಾ ಜೋಸೆಫ್ ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ತಿರುವನಂತಪುರಂ ಸೈಬರ್ ಪೊಲೀಸರು ತಮ್ಮ ವಿರುದ್ಧ ಕೈಗೊಂಡಿದ್ದ ಕ್ರಮವನ್ನು ಪ್ರಶ್ನಿಸಿ ದೀಪಾ ಜೋಸೆಫ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ. ಜೋಯ್ ಮಲ್ಯ ಬಾಗ್ಚಿಯವರನ್ನೊಳಗೊಂಡ ನ್ಯಾಯಪೀಠ, ವಿಚಾರಣೆಯ ವೇಳೆ ಅವರನ್ನು ತರಾಟೆಗೆ ತೆಗೆದುಕೊಂಡಿತು. “ನೀವು ಇಂಥ ಭಾಷೆಯಲ್ಲಿ ಬರೆಯುವುದನ್ನು ನಿರೀಕ್ಷಿಸಲು ಸಾಧ್ಯವೇ? ನೀವೊಬ್ಬ ವಕೀಲರು,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ದೀಪಾ ಜೋಸೆಫ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ನೀವು ನಿಮ್ಮ ನಿಘಂಟಿನಲ್ಲಿರುವ ಒಂದಕ್ಷರವನ್ನೂ ಬಿಟ್ಟಿಲ್ಲ. ಅದಕ್ಕೆ ನೀವೀಗಲೂ ವಿಷಾದಪಡುತ್ತಿಲ್ಲ! ನೀವೇನು ಬರೆದಿದ್ದೀರಿ ಎಂದು ನಾವು ಸಾರ್ವಜನಿಕವಾಗಿ ಓದಿ ಹೇಳೋಣವೇ?” ಎಂದು ಅವರು ಪ್ರಶ್ನಿಸಿದರು. ನಾನು ಓರ್ವ ಮಹಿಳೆ ಎಂಬ ನೆಲೆಯಲ್ಲಿ ನನ್ನ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ದೀಪಾ ಜೋಸೆಫ್ ಪದೇಪದೇ ಮನವಿ ಮಾಡಿಕೊಂಡರೂ, “ಓರ್ವ ಮಹಿಳೆಯಾಗಿ ನೀವು ಮತ್ತೋರ್ವ ಮಹಿಳೆಯ ವಿರುದ್ಧ ಎಂಥ ಹೇಳಿಕೆಯನ್ನು ನೀಡಿದ್ದೀರಿ?” ಎಂದು ನ್ಯಾ. ಜೋಯ್ ಮಲ್ಯ ಬಾಗ್ಚಿ ಖಾರವಾಗಿ ಪ್ರಶ್ನಿಸಿದರು. ರಾಹುಲ್ ಮಂಕೂಟತ್ತಿಲ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ‘ಸೆಕ್ಸ್ ಬಾಂಬ್’ ಎಂದು ತಮ್ಮ ಫೇಸ್ಬುಕ್ನಲ್ಲಿ ನಿಂದಿಸಿದ್ದ ದೀಪಾ ಜೋಸೆಫ್, ಆಕೆ ರಾಹುಲ್ ಮಂಕೂಟತ್ತಿಲ್ ಅವರ ವಿಶ್ವಾಸಾರ್ಹತೆಯನ್ನು ಹಾಳುಗೆಡವುವ ಉದ್ದೇಶ ಹೊಂದಿದ್ದಳು ಎಂದು ಆರೋಪಿಸಿದ್ದರು. ಇದರೊಂದಿಗೆ ಅತ್ಯಾಚಾರ ಸಂತ್ರಸ್ತೆಯ ಚಾರಿತ್ರ್ಯ ಮತ್ತು ವೈವಾಹಿಕ ಸ್ಥಿತಿ ಕುರಿತು ಅಶ್ಲೀಲ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ, “ನಿನ್ನ ಖಾಸಗಿ ವಿಚಾರಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಾಗುವುದು” ಎಂದೂ ಆಕೆಗೆ ಬೆದರಿಕೆ ಒಡ್ಡಿದ್ದರು.
CBFC ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ; ವಾಪಸ್ ಪಡೆದ ‘ಜನನಾಯಗನ್’ ನಿರ್ಮಾಣ ಸಂಸ್ಥೆ
ಚೆನ್ನೈ: ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್ಸಿ) ಪ್ರಮಾಣೀಕರಣ ಪ್ರಕ್ರಿಯೆಯನ್ನು ಪ್ರಶ್ನಿಸಿ ತಾನು ಸಲ್ಲಿಸಿದ್ದ ಅರ್ಜಿಯನ್ನು ‘ಜನನಾಯಗನ್’ ಚಿತ್ರ ನಿರ್ಮಾಣ ಸಂಸ್ಥೆ ಮಂಗಳವಾರ ಮದ್ರಾಸ್ ಹೈಕೋರ್ಟ್ನಿಂದ ಹಿಂಪಡೆದಿದೆ. ಅರ್ಜಿಯನ್ನು ಹಿಂಪಡೆಯಲು ನ್ಯಾ. ಪಿ.ಟಿ. ಆಶಾ ಅವರು ನಿರ್ಮಾಣ ಸಂಸ್ಥೆಗೆ ಸೋಮವಾರ ಅವಕಾಶ ನೀಡಿದ್ದರು. ‘ಜನನಾಯಗನ್’ ನಿರ್ಮಾಪಕರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಪರಿಶೀಲನಾ ಸಮಿತಿಯೆದುರು ತಮ್ಮ ವಾದ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಚಲನಚಿತ್ರದ ಕೆಲವು ದೃಶ್ಯಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತವೆ ಎಂಬ ದೂರುಗಳನ್ನು ಉಲ್ಲೇಖಿಸಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಮೂಲತಃ ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ‘ಜನನಾಯಗನ್’ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನಿರಾಕರಿಸಿತ್ತು. ಸಮಿತಿಯಲ್ಲಿ ಸಶಸ್ತ್ರ ಪಡೆಗಳ ತಜ್ಞರು ಇಲ್ಲದಿರುವುದು ಮತ್ತೊಂದು ಕಾರಣವೆಂದು ಪ್ರಮಾಣಪತ್ರ ನಿರಾಕರಣೆಗೆ ಉಲ್ಲೇಖಿಸಲಾಗಿತ್ತು. ಪ್ರಮಾಣಪತ್ರ ಕೋರಿ ‘ಜನನಾಯಗನ್’ ಚಲನಚಿತ್ರ ನಿರ್ಮಾಣ ಸಂಸ್ಥೆಯು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ.ಟಿ. ಆಶಾ ನೇತೃತ್ವದ ಏಕಸದಸ್ಯ ಪೀಠ, ಜನವರಿ 9ರಂದೇ ಪ್ರಮಾಣಪತ್ರವನ್ನು ವಿತರಿಸುವಂತೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಆದೇಶಿಸಿತ್ತು. ಇದರ ಬೆನ್ನಿಗೇ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾ. ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತ್ತು. ‘ಜನನಾಯಗನ್’ ಚಿತ್ರ ನಿರ್ಮಾಣ ಸಂಸ್ಥೆಗೆ ತನ್ನ ರಿಟ್ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಮುಂದೆ ಹೊಸದಾಗಿ ವಿಚಾರಣೆ ನಡೆಸಲು ಅರ್ಜಿಯನ್ನು ಪಟ್ಟಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು.
ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಯ ಕಾಂಗ್ರೆಸ್ ಬೇಡಿಕೆಯನ್ನು ತಿರಸ್ಕರಿಸಿದ ಸಿಎಂ ಸ್ಟಾಲಿನ್
ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಅಧಿಕಾರ ಹಂಚಿಕೆಯ ಮಾತುಕತೆ ನೆನೆಗುದಿಗೆ ಬಿದ್ದಿರುವ ಹೊತ್ತಿನಲ್ಲೇ, ಬುಧವಾರ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಸಾಧ್ಯತೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಈ ಬೇಡಿಕೆಯು ಜಾತ್ಯತೀತ ಪ್ರಜಾಸತ್ತಾತ್ಮಕ ಮೈತ್ರಿಕೂಟದೊಳಗೆ ಬಿರುಕು ಮೂಡಿಸುವ ಉದ್ದೇಶಪೂರ್ವಕ ಪಿತೂರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಚೆನ್ನೈನಲ್ಲಿ ಆಯೋಜನೆಗೊಂಡಿದ್ದ India Today Conclave ನಲ್ಲಿ ಭಾಗವಹಿಸಿ ಮಾತನಾಡಿದ ಸ್ಟಾಲಿನ್, “ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರದ ಪರಿಕಲ್ಪನೆ ಕಾರ್ಯಸಾಧುವಲ್ಲ. ಇದನ್ನು ನಾವೂ ಬಲ್ಲೆವು, ಕಾಂಗ್ರೆಸ್ಗೂ ತಿಳಿದಿದೆ. ಮೈತ್ರಿಕೂಟದೊಳಗೆ ಗೊಂದಲ ಮತ್ತು ಬಿರುಕು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕೆಲವರಿದ್ದಾರೆ. ಇದು ಉದ್ದೇಶಪೂರ್ವಕ ಪಿತೂರಿಯಾಗಿದೆ. ಈ ಕುರಿತು ಡಿಎಂಕೆಯಾಗಲಿ ಅಥವಾ ಕಾಂಗ್ರೆಸ್ ಆಗಲಿ ತಲೆ ಕೆಡಿಸಿಕೊಂಡಿಲ್ಲ” ಎಂದು ಹೇಳಿದ್ದಾರೆ. ಜನವರಿ 28ರಂದು ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೋಳಿ ಕರುಣಾನಿಧಿ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡುವೆ ನಡೆದಿದ್ದ ಭೇಟಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈ ನಡುವೆ, ಫೆಬ್ರವರಿ 22ರಿಂದ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಡಿಎಂಕೆ ಪ್ರಕಟಿಸಿದೆ.
ಪ್ರತಿಭಟನೆ, ಕಠಿಣ ನಿಯಂತ್ರಣ ಕ್ರಮಕ್ಕೆ ಕ್ಷಮೆ ಯಾಚಿಸಿದ ಇರಾನ್ ಅಧ್ಯಕ್ಷ
ಜೆರುಸಲೇಂ, ಫೆ. 11: ದೇಶದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಮತ್ತು ಅದನ್ನು ನಿಯಂತ್ರಿಸಲು ಕೈಗೊಂಡ ಕಠಿಣ ಕ್ರಮಗಳಿಂದ ತೊಂದರೆಗೀಡಾದವರ ಕ್ಷಮೆ ಯಾಚಿಸುವುದಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಬುಧವಾರ ಹೇಳಿದ್ದಾರೆ. ಇರಾನ್ ತನ್ನ 1979ರ ಇಸ್ಲಾಮಿಕ್ ಕ್ರಾಂತಿಯ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಿದ ಸಂದರ್ಭ ದೇಶವನ್ನುದ್ದೇಶಿಸಿ ಮಾತನಾಡಿದ ಪೆಜೆಶ್ಕಿಯಾನ್, `ಪಾಶ್ಚಿಮಾತ್ಯರ ಷಡ್ಯಂತ್ರದಿಂದ ನಡೆದಿದ್ದ ದೇಶವ್ಯಾಪಿ ಪ್ರತಿಭಟನೆ ಮತ್ತು ಅದನ್ನು ನಿಯಂತ್ರಿಸಲು ಕೈಗೊಂಡ ಕಠಿಣ ಕ್ರಮಗಳ ಸಂದರ್ಭ ಜನರು ತೀವ್ರ ನೋವು, ದುಃಖ ಅನುಭವಿಸಿರುವುದು ತನಗೆ ತಿಳಿದಿದೆ. ಈ ಘಟನೆಗಳಲ್ಲಿ ಹಾನಿಗೊಳಗಾದ ಎಲ್ಲರಿಗೂ ಸಹಾಯ ಮಾಡಲು ನಾವು ಬಾಧ್ಯರಾಗಿದ್ದೇವೆ. ನಾವು ಜನರೊಂದಿಗೆ ಸಂಘರ್ಷ ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಇರಾನ್ ಪರಮಾಣು ಅಸ್ತ್ರವನ್ನು ಬಯಸುವುದಿಲ್ಲ ಮತ್ತು ಯಾವುದೇ ಪರಿಶೀಲನೆಗೆ ಸಿದ್ಧವಿದೆ ಎಂದು ಇದೇ ಸಂದರ್ಭ ಪೆಜೆಶ್ಕಿಯಾನ್ ಹೇಳಿರುವುದಾಗಿ ವರದಿಯಾಗಿದೆ.
ಕಲಬುರಗಿ| ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಿನ ಮೆರವಣಿಗೆ
ಕಲಬುರಗಿ: ಜೆಸಿಟಿಯು (JCTU) ಹಾಗೂ ಎಸ್ಕೆಎಂ (SKM) ರೈತ-ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸೂಪರ್ ಮಾರ್ಕೆಟ್ ಚೌಕ್ ಪೊಲೀಸ್ ಠಾಣೆಯಿಂದ ಜಗತ್ ಸರ್ಕಲ್ ವರೆಗೆ ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು. ಮೆರವಣಿಗೆಯ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳು ಮೊಳಗಿದವು. ಜಗತ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಲಾಯಿತು. ಅತಿವೃಷ್ಟಿಗೆ ಪರಿಹಾರ ತಕ್ಷಣ ನೀಡಬೇಕು, ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು, ತೊಗರಿಗೆ ಪ್ರೋತ್ಸಾಹಧನ ನೀಡಬೇಕು, 4 ಲೇಬರ್ ಕೋಡ್ಗಳನ್ನು ರದ್ದುಪಡಿಸಬೇಕು, ವಿ.ಬಿ.ಜಿ–ರಾಮಜಿ ಯೋಜನೆ ರದ್ದುಗೊಳಿಸಬೇಕು, ವಿದ್ಯುತ್ ಮಸೂದೆ ಹಾಗೂ ಬೀಜ ಮಸೂದೆ ಹಿಂಪಡೆಯಬೇಕು, ರೈತರ ಸಾಲ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಕೆಪಿಆರ್ಎಸ್ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಎಂ.ಬಿ. ಸಜ್ಜನ್, ಪ್ರಭುದೇವ ಯಳಸಂಗಿ, ವಿ.ಬಿ.ಜಿ–ರಾಮಜಿ, ಎಸ್.ಎಂ. ಶರ್ಮಾ, ಗೌರಮ್ಮ ಪಿ. ಪಾಟೀಲ್, ಜಾವೇದ ಮುಗಳಿ ಪತಕೆ, ನಾಗಯ್ಯ ಸ್ವಾಮಿ, ದಿಲೀಪ್ ಕುಮಾರ್ ನಾಗೂರೆ, ಸೆಖಮ್ಮ ಕುರಿ, ಮಂಜುಳಾ ಪೂಜಾರಿ, ಎಸ್.ಎಚ್. ಪತಕೆ, ನಾಗೇಂದ್ರಪ್ಪ ಥಂಬೆ, ಸಿದ್ದು ಎಸ್.ಎಲ್., ಕರೆಪ್ಪ ಕರಗೊಂಡ, ಪದ್ಮಿನಿ ಕಿರಣಗಿ, ಶಾಂತಾ ಸರಡಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚೆಂಡು ಮುಖಕ್ಕೆ ಬಡಿದು ಗಂಭೀರ ಗಾಯ: ಶಸ್ತ್ರಚಿಕಿತ್ಸೆಗೆ ಒಳಗಾದ ಬೆನ್ ಸ್ಟೋಕ್ಸ್
ಹೊಸದಿಲ್ಲಿ, ಫೆ. 11: ನೆಟ್ ಪ್ರಾಕ್ಟೀಸ್ ವೇಳೆ ಕ್ರಿಕೆಟ್ ಚೆಂಡು ಮುಖಕ್ಕೆ ಬಡಿದು ಗಂಭೀರ ಗಾಯಗೊಂಡ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವಿಚಾರವನ್ನು ಸ್ವತಃ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ. 34 ವರ್ಷದ ಆಲ್ರೌಂಡರ್ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಊದಿಕೊಂಡ ಹಾಗೂ ಮೂಗೇಟಿನಿಂದ ಕೂಡಿದ ಮುಖದ ಚಿತ್ರಗಳನ್ನು ಹಂಚಿಕೊಂಡಿದ್ದರು. ಮಂಗಳವಾರ ಆಸ್ಪತ್ರೆಯಿಂದ ಮತ್ತೊಂದು ಛಾಯಾಚಿತ್ರ ಹಂಚಿಕೊಂಡ ಅವರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ದೃಢಪಡಿಸಿದರು. ಗಾಯದ ಗಂಭೀರತೆಯನ್ನು ಉಲ್ಲೇಖಿಸಿದ ಸ್ಟೋಕ್ಸ್ ಅಭಿಮಾನಿಗಳಿಗೆ ಧೈರ್ಯ ತುಂಬಿದರು. ಚೆಂಡು ತಗುಲಿದಾಗ ಅವರು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುತ್ತಿರಲಿಲ್ಲ; ನೆಟ್ ಪಕ್ಕದಲ್ಲಿ ನಿಂತಿದ್ದರು ಎಂದು ವರದಿಯಾಗಿದೆ. ಆಸ್ಟ್ರೇಲಿಯ ವಿರುದ್ಧ ಆ್ಯಶಸ್ ಸರಣಿಯನ್ನು 1–4ರಿಂದ ಸೋತ ನಿರಾಶೆಯಲ್ಲಿರುವ ಸ್ಟೋಕ್ಸ್ಗೆ ಈ ಶಸ್ತ್ರಚಿಕಿತ್ಸೆ ಮತ್ತೊಂದು ಸವಾಲಾಗಿದೆ. ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆಯಿದ್ದರೂ ತಂಡವನ್ನು ಮುನ್ನಡೆಸುವ ಬಯಕೆಯನ್ನು ಪುನರುಚ್ಚರಿಸಿದ್ದಾರೆ. 2023ರ ವಿಶ್ವಕಪ್ ಬಳಿಕ ಸೀಮಿತ ಓವರ್ ಕ್ರಿಕೆಟ್ನಿಂದ ದೂರವಿರುವ ಅವರು, ಜೂನ್ 4ರಂದು ಲಾರ್ಡ್ಸ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ಗೆ ಮುನ್ನ ಡರ್ಹಾಮ್ ಪರ ಕೌಂಟಿ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಲಬುರಗಿ: ನದಿಗೆ ಹಾರಿ ಯುವಕ ಆತ್ಮಹತ್ಯೆ
ಕಲಬುರಗಿ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನಗರದ ಹೊರವಲಯದಲ್ಲಿರುವ ಕುರಿಕೋಟಾ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ನಗರದ ರೇವಣಸಿದ್ದೇಶ್ವರ ಕಾಲೋನಿಯ ನಿವಾಸಿ ಮಲ್ಲಿಕಾರ್ಜುನ ರಾಚಪ್ಪ ಪಾಟೀಲ್ (36) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಲ್ಲಿಕಾರ್ಜುನ್ ಪಾಟೀಲ್ ಸೋಮವಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಶೋಧ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ICC T20 ರ್ಯಾಂಕಿಂಗ್: ಸಿಕಂದರ್ ರಝಾ ವಿಶ್ವದ ನಂ.1 ಆಲ್ರೌಂಡರ್
ದುಬೈ, ಫೆ.11: ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಝಾ ಬುಧವಾರ ಬಿಡುಗಡೆಯಾದ ಪುರುಷರ ಟಿ-20 ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನವನ್ನು ವಶಪಡಿಸಿಕೊಂಡಿದ್ದು, ಪಾಕಿಸ್ತಾನದ ಸಯೀಮ್ ಅಯ್ಯೂಬ್ ನಂ.1 ಆಲ್ರೌಂಡರ್ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಝಿಂಬಾಬ್ವೆ ತಂಡವು ಒಮಾನ್ ವಿರುದ್ಧ ಸುಲಭ ಗೆಲುವು ದಾಖಲಿಸುವಲ್ಲಿ ರಝಾ ನೆರವಾಗಿದ್ದರು. ಆಲ್ರೌಂಡರ್ ರಝಾ ನಾಲ್ಕು ಓವರ್ಗಳಲ್ಲಿ 17 ರನ್ಗೆ ಒಂದು ವಿಕೆಟ್ ಪಡೆದಿದ್ದರು. ಗೆಲುವಿನ ರನ್ ದಾಖಲಿಸಿ ಝಿಂಬಾಬ್ವೆಗೆ ಎಂಟು ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು. ಅಮೆರಿಕ ವಿರುದ್ಧ ಟಿ-20 ವಿಶ್ವಕಪ್ ಪಂದ್ಯದಲ್ಲಿ 73 ರನ್ ಗಳಿಸಿದ್ದ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಸಾಹಿಬ್ಝದಾ ಫರ್ಹಾನ್ ಟಿ-20 ಬ್ಯಾಟರ್ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿದ್ದಾರೆ. ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಟಿ-20 ಬ್ಯಾಟರ್ಗಳ ಐಸಿಸಿ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಪ್ರಸಕ್ತ ವಿಶ್ವಕಪ್ನಲ್ಲಿ ಸತತ ಅರ್ಧಶತಕಗಳನ್ನು ಗಳಿಸಿರುವ ಕಿವೀಸ್ನ ಟಿಮ್ ಸೀಫರ್ಟ್ ಒಂದು ಸ್ಥಾನ ಮೇಲಕ್ಕೇರಿ ಎಂಟನೇ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಇಶಾನ್ ಕಿಶನ್ ಟಿ-20 ಬ್ಯಾಟರ್ಗಳ ಪಟ್ಟಿಯಲ್ಲಿ ಏಳು ಸ್ಥಾನಗಳ ಭಡ್ತಿ ಪಡೆದು 25ನೇ ರ್ಯಾಂಕಿಗೆ ತಲುಪಿದ್ದಾರೆ. ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಟಿ-20 ಬೌಲರ್ಗಳ ರ್ಯಾಂಕಿಂಗ್ನಲ್ಲಿ ಈಗಲೂ ಅಗ್ರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಅಬ್ರಾರ್ ಅಹ್ಮದ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಕಲಬುರಗಿ| ರಮಝಾನ್ ಪ್ರಯುಕ್ತ ಶಾಸಕರ ನೇತೃತ್ವದಲ್ಲಿ ಸಭೆ
ಕಲಬುರಗಿ: ರಮಝಾನ್ ಪ್ರಯುಕ್ತ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಮತ್ತು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಬುಧವಾರ ಐವನ್ ಎ ಶಾಹಿ ಅತಿಥಿಗೃಹದಲ್ಲಿ ಮಹಾನಗರ ಪಾಲಿಕೆ, ಜಿಎಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳ ವಿಶೇಷ ಸಭೆ ನಡೆಯಿತು. ರಮಝಾನ್ ಉಪವಾಸ ಬಿಡುವ ಸಂಜೆ ನಾಲ್ಕು ಗಂಟೆಯ ನಂತರ ನಗರ ಪ್ರಮುಖ ಪ್ರದೇಶಗಳಲ್ಲಿ ಜನದಟ್ಟಣೆ ಉಂಟಾಗುತ್ತದೆ. ಸೂಕ್ಷ್ಮ ಬಡಾವಣೆಗಳಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಮತ್ತು ಸಂಚಾರಕ್ಕೆ ವ್ಯತ್ಯಯ ಆಗದಂತೆ ಟ್ರಾಫಿಕ್ ವ್ಯವಸ್ಥೆ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು. ಮಹಾನಗರ ಪಾಲಿಕೆಯ ಮಹಾಪೌರಾದ ವರ್ಷಾ ಜಾನೆ, ಉಪ ಮೇಯರ್ ತೃಪ್ತಿ ಲಾಖೆ ಅವರ ಸಮ್ಮುಖದಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಉಪವಾಸದ ದಿನಗಳಲ್ಲಿ ನಿರಂತರ ವಿದ್ಯುತ್ ಸರಬರಾಜು, ರಾತ್ರಿ ವೇಳೆ ಬೀದಿ ದೀಪಗಳು, ನೀರಿನ ವ್ಯವಸ್ಥೆ, ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಾಂಗ್ರೆಸ್ ಮುಖಂಡ ಫರಾಜ್ ಉಲ್ ಇಸ್ಲಾಂ, ಪಾಲಿಕೆ ಸದಸ್ಯ ಸೈಯದ್ ಅಹ್ಮದ್, ಅಜ್ಮಲ್ ಗೋಲಾ ಸೇರಿದಂತೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
Punjab | ಮೊಹಾಲಿಯ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ
ಚಂಡಿಗಢ, ಫೆ. 11: ಪಂಜಾಬ್ ನ ಮೊಹಾಲಿಯ 16 ಖಾಸಗಿ ಶಾಲೆಗಳು ಬುಧವಾರ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿವೆ. ಈ ಎಲ್ಲಾ ಶಾಲೆಗಳ ಕ್ಯಾಂಪಸ್ಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆದರೆ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಯಿತು ಹಾಗೂ ಮಕ್ಕಳನ್ನು ಮನೆಗೆ ಹಿಂದಕ್ಕೆ ಕಳುಹಿಸಲಾಯಿತು. ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೋಷಕರಿಗೆ ಭರವಸೆ ನೀಡಲಾಯಿತು. ವೈಪಿಎಸ್ ಮೊಹಾಲಿ ಶಾಲೆ, ಲರ್ನಿಂಗ್ ಪಾತ್ಸ್ ಶಾಲೆ, ಮಾನವ್ ಮಂಗಲ್ ಶಾಲೆ, ಶಿವಾಲಿಕ್ ಪಬ್ಲಿಕ್ ಶಾಲೆ, ಪ್ಯಾರೆಗಾನ್ ಸೀನಿಯರ್ ಸೆಕೆಂಡರಿ ಶಾಲೆ ಹಾಗೂ ಇನ್ಫಿನಿಟ್ ಜೀಸಸ್ ಶಾಲೆ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿದ ಶಾಲೆಗಳಲ್ಲಿ ಸೇರಿವೆ. ಬಾಂಬ್ ಬೆದರಿಕೆಯ ಇಮೇಲ್ನ ಮೂಲವನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ. ಶಾಲೆಗಳ ಸುತ್ತಮುತ್ತ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಫ್ಯಾಕ್ಟ್ ಶೀಟ್ ನಲ್ಲಿ ಬದಲಾವಣೆ; ಪರಿಷ್ಕೃತ ಆವೃತ್ತಿಯಲ್ಲಿ ಏನೇನಿದೆ?
ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಫ್ಯಾಕ್ಟ್ ಶೀಟ್ ಅನ್ನು ಶ್ವೇತಭವನ ಸೋಮವಾರ ಬಿಡುಗಡೆ ಮಾಡಿತ್ತು. ಉಭಯ ದೇಶಗಳ ನಡುವೆ ಫೆಬ್ರುವರಿ 6ರಂದು ಮಧ್ಯಂತರ ಒಪ್ಪಂದದ ಚೌಕಟ್ಟು ರೂಪುಗೊಂಡಿದ್ದು, ಇದಾದ ಮೂರು ದಿನಗಳಲ್ಲೇ ಫ್ಯಾಕ್ಟ್ ಶೀಟ್ ಬಿಡುಗಡೆಯಾಗಿದೆ. ಫ್ಯಾಕ್ಟ್ ಶೀಟ್ನ ಆರಂಭಿಕ ಆವೃತ್ತಿಯು ಒಪ್ಪಂದದ ಪ್ರಮುಖ ನಿಯಮಗಳನ್ನು ಹೈಲೈಟ್ ಮಾಡಿತ್ತು. ಇದರಲ್ಲಿ ಭಾರತವು ಅಮೆರಿಕದ ಎಲ್ಲ ಕೈಗಾರಿಕಾ ಸರಕುಗಳು ಹಾಗೂ ಒಣ ಡಿಸ್ಟಿಲರ್ ಧಾನ್ಯಗಳು (DDGs), ಕೆಂಪು ಜೋಳ, ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, “ಕೆಲವು ದ್ವಿದಳ ಧಾನ್ಯಗಳು”, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಗಳು ಹಾಗೂ ಹೆಚ್ಚುವರಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಯುಎಸ್ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಮಂಗಳವಾರ (ಫೆಬ್ರವರಿ 10, 2026) ಹೊರಡಿಸಲಾದ ಪರಿಷ್ಕೃತ ಫ್ಯಾಕ್ಟ್ ಶೀಟ್ ದ್ವಿದಳ ಧಾನ್ಯಗಳ ಕುರಿತ ಉಲ್ಲೇಖವನ್ನು ತೆಗೆದುಹಾಕಿದ್ದು, ಭಾರತಕ್ಕೆ ಬಳಸಲಾದ “committed” ಪದವನ್ನು “intends” ಎಂದು ಬದಲಾಯಿಸಿದೆ. ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳು ಮತ್ತು ಸೊಲ್ಯೂಬಲ್ಸ್ ಜೊತೆಗೆ ಒಣಗಿದ ಧಾನ್ಯಗಳು (DDGs), ಕೆಂಪು ಜೋಳ, ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಗಳು ಹಾಗೂ ಹೆಚ್ಚುವರಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅಮೆರಿಕದ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ಇದರಲ್ಲಿದೆ. “ಭಾರತವು ಹೆಚ್ಚಿನ ಅಮೆರಿಕನ್ ಉತ್ಪನ್ನಗಳನ್ನು ಖರೀದಿಸಲು ಮತ್ತು 500 ಶತಕೋಟಿ ಡಾಲರ್ಗಿಂತ ಹೆಚ್ಚಿನ ಅಮೆರಿಕನ್ ಇಂಧನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕಲ್ಲಿದ್ದಲು ಹಾಗೂ ಇತರ ಉತ್ಪನ್ನಗಳನ್ನು ಖರೀದಿಸಲು ಉದ್ದೇಶಿಸಿದೆ” ಎಂದು ಪರಿಷ್ಕೃತ ಫ್ಯಾಕ್ಟ್ ಶೀಟ್ ಹೇಳಿದೆ. ವ್ಯಾಪಾರ ಒಪ್ಪಂದದ ಕುರಿತು ಕಳೆದ ವಾರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ಭಾರತವು ಅಮೆರಿಕದ ಉತ್ಪನ್ನಗಳಿಗೆ ಸುಂಕವನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡುವ ವಸ್ತುಗಳಲ್ಲಿ “ದ್ವಿದಳ ಧಾನ್ಯಗಳ” ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. “ಮುಂದಿನ 5 ವರ್ಷಗಳಲ್ಲಿ ಭಾರತವು 500 ಶತಕೋಟಿ ಡಾಲರ್ ಮೌಲ್ಯದ ಅಮೆರಿಕನ್ ಇಂಧನ ಉತ್ಪನ್ನಗಳು, ವಿಮಾನ ಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕೋಕಿಂಗ್ ಕಲ್ಲಿದ್ದಲನ್ನು ಖರೀದಿಸಲು ಉದ್ದೇಶಿಸಿದೆ” ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ಫ್ಯಾಕ್ಟ್ ಶೀಟ್ನಲ್ಲಿ ಆಗಿರುವ ಬದಲಾವಣೆಗಳೇನು? ದ್ವಿದಳ ಧಾನ್ಯಗಳ ಮೇಲಿನ ಸುಂಕಗಳು ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಫ್ಯಾಕ್ಟ್ ಶೀಟ್ನಲ್ಲಿ ಮಾಡಲಾದ ಪ್ರಮುಖ ಪರಿಷ್ಕರಣೆ ದ್ವಿದಳ ಧಾನ್ಯಗಳ ಮೇಲಿನ ಸುಂಕಗಳಿಗೆ ಸಂಬಂಧಿಸಿದೆ. ಆರಂಭಿಕ ಫ್ಯಾಕ್ಟ್ ಶೀಟ್ ನಲ್ಲಿ ಭಾರತವು ಅಮೆರಿಕದ ಕೆಲವು ದ್ವಿದಳ ಧಾನ್ಯಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಪರಿಷ್ಕೃತ ಪ್ಯಾರಾಗ್ರಾಫ್ನಲ್ಲಿ ದ್ವಿದಳ ಧಾನ್ಯಗಳ ಉಲ್ಲೇಖ ಇಲ್ಲ. ಕೃಷಿ ಆಮದುಗಳು, ವಿಶೇಷವಾಗಿ ದ್ವಿದಳ ಧಾನ್ಯಗಳು, ಭಾರತದ ಕೃಷಿ ವಲಯಕ್ಕೆ ಸೂಕ್ಷ್ಮವಾಗಿವೆ. ಭಾರತವು ವಿಶ್ವದ ಅತಿದೊಡ್ಡ ಉತ್ಪಾದಕ (ಜಾಗತಿಕ ಉತ್ಪಾದನೆಯ ಸುಮಾರು 25–28%) ಮತ್ತು ದ್ವಿದಳ ಧಾನ್ಯಗಳ ಪ್ರಮುಖ ಗ್ರಾಹಕವೂ ಆಗಿದೆ. ಕೆಲವು ತಿಂಗಳ ಹಿಂದೆ ವ್ಯಾಪಾರ ಮಾತುಕತೆಗಳಲ್ಲಿನ ಬಿಕ್ಕಟ್ಟಿನ ನಡುವೆ ಅಮೆರಿಕದ ಇಬ್ಬರು ಸೆನೆಟರ್ಗಳು ಟ್ರಂಪ್ ಗೆ ಪತ್ರ ಬರೆದು ಭಾರತವು ಅಮೆರಿಕದ ದ್ವಿದಳ ಧಾನ್ಯಗಳ ಮೇಲಿನ 30% ಆಮದು ಸುಂಕವನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು. ನವೆಂಬರ್ 1ರಿಂದ ಜಾರಿಗೆ ಬಂದ ಈ ಸುಂಕವನ್ನು ಕಳೆದ ವರ್ಷ ಟ್ರಂಪ್ ವಿಧಿಸಿದ್ದ 50% ಸುಂಕಗಳಿಗೆ ಪ್ರತೀಕಾರವಾಗಿ ನೋಡಲಾಗಿತ್ತು. ಆದಾಗ್ಯೂ, ಅದನ್ನು ಈಗ ವ್ಯಾಪಾರ ಒಪ್ಪಂದದ ಭಾಗವಾಗಿ 18%ಕ್ಕೆ ಇಳಿಸಲಾಗಿದೆ. 500 ಶತಕೋಟಿ ಡಾಲರ್ ಖರೀದಿ ಪ್ರಸ್ತಾವನೆ ಫ್ಯಾಕ್ಟ್ ಶೀಟ್ನಲ್ಲಿನ ಎರಡನೇ ಪ್ರಮುಖ ಬದಲಾವಣೆ ಅಮೆರಿಕದಿಂದ ಭಾರತದ ಪ್ರಸ್ತಾವಿತ ಸರಕುಗಳ ಖರೀದಿಗೆ ಸಂಬಂಧಿಸಿದೆ. ಹಿಂದಿನ ಆವೃತ್ತಿಯಲ್ಲಿ ಭಾರತವು ಐದು ವರ್ಷಗಳಲ್ಲಿ ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ಸರಕು ಮತ್ತು ಸೇವೆಗಳನ್ನು ಖರೀದಿಸಲು “ಬದ್ಧವಾಗಿದೆ” ಎಂದು ಹೇಳಲಾಗಿತ್ತು. ಪರಿಷ್ಕೃತ ಆವೃತ್ತಿಯಲ್ಲಿ “ಬದ್ಧ” ಎಂಬುದನ್ನು “ಉದ್ದೇಶ” ಎಂದು ಬದಲಾಯಿಸಲಾಗಿದೆ. ಹಿಂದಿನ ಫ್ಯಾಕ್ಟ್ ಶೀಟ್ನಲ್ಲಿ ಕೃಷಿ ಸರಕುಗಳ ಉಲ್ಲೇಖವಿದ್ದರೆ, ಪರಿಷ್ಕೃತ ಆವೃತ್ತಿಯಲ್ಲಿ “ಕೃಷಿ ಸರಕುಗಳು” ಎಂಬ ಉಲ್ಲೇಖವನ್ನು ತೆಗೆದುಹಾಕಲಾಗಿದೆ. ಡಿಜಿಟಲ್ ಸೇವೆಗಳು ಫ್ಯಾಕ್ಟ್ ಶೀಟ್ನಲ್ಲಿನ ಮತ್ತೊಂದು ಬದಲಾವಣೆ ಭಾರತದ ಡಿಜಿಟಲ್ ಸೇವಾ ತೆರಿಗೆ (DST)ಗೆ ಸಂಬಂಧಿಸಿದೆ. ಹಿಂದಿನ ಆವೃತ್ತಿಯಲ್ಲಿ ಭಾರತ ತನ್ನ ಡಿಜಿಟಲ್ ಸೇವಾ ತೆರಿಗೆಗಳನ್ನು “ತೆಗೆದುಹಾಕಲಾಗುತ್ತದೆ” ಎಂದು ಉಲ್ಲೇಖಿಸಲಾಗಿತ್ತು. ಭಾರತದ ಅಧಿಕೃತ ಹೇಳಿಕೆಯಲ್ಲಿ ಇದಕ್ಕೆ ಉಲ್ಲೇಖ ಇರದ ಕಾರಣ ಗೊಂದಲ ಉಂಟಾಗಿತ್ತು. ಈಗ ಶ್ವೇತಭವನ ತನ್ನ ಇತ್ತೀಚಿನ ಆವೃತ್ತಿಯಲ್ಲಿ ಡಿಜಿಟಲ್ ಸರ್ವಿಸ್ ಟ್ಯಾಕ್ಸ್ ತೆಗೆದುಹಾಕಲಾಗುತ್ತದೆ ಎಂಬ ವಾಕ್ಯವನ್ನು ಕೈಬಿಟ್ಟಿದೆ. ಭಾರತ-ಯುಎಸ್ ತಂತ್ರಜ್ಞಾನ ಸಹಯೋಗ ಹೊಸದಾಗಿ ಘೋಷಿಸಲಾದ ಮಧ್ಯಂತರ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳು ಡಿಜಿಟಲ್ ವ್ಯಾಪಾರ ಮತ್ತು ತಂತ್ರಜ್ಞಾನ ವಲಯದಲ್ಲಿ ಸಹಯೋಗವನ್ನು ಗಾಢಗೊಳಿಸಲು ಮಾರ್ಗಸೂಚಿ ರೂಪಿಸಿವೆ. ಗ್ರಾಫಿಕ್ಸ್ ಪ್ರಾಸೆಸಿಂಗ್ ಯೂನಿಟ್ಗಳು (GPUಗಳು) ಸೇರಿದಂತೆ ಪ್ರಮುಖ ತಂತ್ರಜ್ಞಾನ ಉತ್ಪನ್ನಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ಭಾರತ-ಯುಎಸ್ ವ್ಯಾಪಾರ ಪ್ರಮಾಣ USDA ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024ರಲ್ಲಿ ಭಾರತಕ್ಕೆ ಅಮೆರಿಕದ ಒಟ್ಟು ಕೃಷಿ ಮತ್ತು ಆಹಾರ ರಫ್ತುಗಳು 2.25 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ವಿಶೇಷವಾಗಿ ಬಾದಾಮಿ ಪ್ರಮುಖವಾಗಿವೆ. ಭಾರತವು 2024ರಲ್ಲಿ ಅಮೆರಿಕದಿಂದ 1.12 ಬಿಲಿಯನ್ ಡಾಲರ್ ಮೌಲ್ಯದ ಬೀಜಗಳನ್ನು ಆಮದು ಮಾಡಿಕೊಂಡಿದೆ. ಇತರ ಆಮದುಗಳಲ್ಲಿ ಎಥೆನಾಲ್, ಹತ್ತಿ, ದ್ವಿದಳ ಧಾನ್ಯಗಳು, ಸಸ್ಯಜನ್ಯ ತೈಲ, ತಾಜಾ ಹಣ್ಣು ಮತ್ತು ಸೋಯಾಬೀನ್ ಎಣ್ಣೆ ಸೇರಿವೆ. 2024ರಲ್ಲಿ ಅಮೆರಿಕಕ್ಕೆ ಭಾರತದ ಕೃಷಿ ಮತ್ತು ಆಹಾರ ರಫ್ತುಗಳು ಸುಮಾರು ಮೂರು ಪಟ್ಟು ಹೆಚ್ಚಾಗಿ 6.2 ಬಿಲಿಯನ್ ಡಾಲರ್ ಆಗಿವೆ. ಸಮುದ್ರ ಉತ್ಪನ್ನಗಳು, ಮಸಾಲೆಗಳು, ಅಕ್ಕಿ ಮತ್ತು ಡೈರಿ ಉತ್ಪನ್ನಗಳು ಇದರಲ್ಲಿ ಸೇರಿವೆ. ಇದು ಭಾರತವು ತನ್ನ ದೇಶೀಯ ಮಾರುಕಟ್ಟೆಯನ್ನು ಮತ್ತಷ್ಟು ತೆರೆಯುವ ವಿಷಯದಲ್ಲಿ ಜಾಗರೂಕತೆಯನ್ನು ವಹಿಸಿರುವುದನ್ನು ಸೂಚಿಸುತ್ತದೆ.
ಆಹಾರದಲ್ಲಿ ದೋಷ: ಅಸ್ವಸ್ಥಗೊಂಡಿದ್ದ ಎನ್ಐಟಿಕೆ ವಿದ್ಯಾರ್ಥಿಗಳ ಚೇತರಿಕೆ
ಮಂಗಳೂರು : ಆಹಾರ ಸೇವೆನೆಯಿಂದ ಅಸ್ವಸ್ಥಗೊಂಡಿದ್ದರೆನ್ನಳಾದ ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್ಐಟಕೆ ) ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಸುಮಾರು 50ಕ್ಕೂ ಅಧಿಕ ಮಂದಿಗೆ ಹೊಟ್ಟೆ ನೋವು, ವಾಂತಿ ಭೇದಿ ಸಮಸ್ಯೆ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಈ ಘಟನೆಯ ಪ್ರತಿಕ್ರಿಯೆ ನೀಡಿರುವ ಎನ್ಐಟಿಕೆ ಯಾರೂ ಗಾಬರಿಪಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಎನ್ಐಟಕೆಯಲ್ಲಿ ಫೆ.4ರಿಂದ 8ರಿಂದ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಎನ್ಐಟಿಕೆ ಆವರಣದಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಇಲ್ಲಿಗೆ ಹೊರಗಿನ ಫುಡ್ ಸ್ಟಾಲ್ ಗಳು ಬಂದಿದ್ದವು. ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳಲು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವಿದ್ಯಾರ್ಥಿಗಳು ಅಸ್ವಸ್ಥ ಗೊಳ್ಳಲು ಫುಡ್ ಸ್ಟಾಲ್ನ ಆಹಾರ, ಮೆಸ್ನ ಆಹಾರ ಅಥವಾ ನೀರು ಕಾರಣವೇ ಎನ್ನುವುದನ್ನು ಪತ್ತೆಹಚ್ಚಲು ಆಹಾರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಎನ್ಐಟಿಕೆ ಮೂಲಗಳು ತಿಳಿಸಿವೆ. ಆಹಾರ ಸೇವೆನೆಯಿಂದ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳ ಪೈಕಿ ಸುಮಾರು 50 ಮಂದಿ ಎನ್ಐಟಿಕೆ ಹೆಲ್ತ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಸೆಮಿಸ್ಟರ್ನ ವಿದ್ಯಾರ್ಥಿಗಳ ಪೈಕಿ ಕೆಲವರು ಇಂತಹ ಸಮಸ್ಯೆ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಎನ್ಐಟಕೆ ಸಂಸ್ಥೆಯ ವಿವಿಧ ವಸತಿಗೃಹಗಳಲ್ಲಿ ಸುಮಾರು 7,000 ವಿದ್ಯಾರ್ಥಿಗಳನ್ನು ನೆಲೆಸಿದ್ದಾರೆ. ವಿದ್ಯಾರ್ಥಿ ಸಂಘವು ವರ್ಷಪೂರ್ತಿ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. 2026ಜನವರಿ 31 ರಿಂದ ಫೆ.1ರ ತನಕ ಎಂಡೆವರ್ ಎಂಬ ಮೊದಲ ಕ್ರೀಡಾ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇದಾದ ನಂತರ, ಫೆಬ್ರವರಿ 4ರಿಂದ 8ರ ತನಕ ವಿರಾಸತ್ ಎಂಬ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿತ್ತು. ವಿರಾಸತ್ ಸಂದರ್ಭದಲ್ಲಿ, ವಿದ್ಯಾರ್ಥಿಗಳ ವಿನಂತಿಯ ಮೇರೆಗೆ ಹೊರಗಿನ ಮಾರಾಟಗಾರರಿಂದ ಫುಡ್ ಸ್ಟಾಲ್ ಗಳನ್ನು ಕ್ಯಾಂಪಸ್ನ ಸ್ಥಾಪಿಸಲು ಅನುಮತಿ ನೀಡಲಾಗಿತ್ತು. ಇಂತಹ ಕೆಲವು ಸ್ಟಾಲ್ಗಳಲ್ಲಿ ಆಹಾರ ಸೇವಿಸಿದವರ ಪೈಕಿ ಕೆಲವು ವಿದ್ಯಾರ್ಥಿಗಳಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಸಂಸ್ಥೆಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಕ್ಯಾಂಪಸ್ನಲ್ಲಿ ಕೆಲವು ಆಹಾರ ಮಳಿಗೆಗಳಲ್ಲಿ ಆಹಾರ ಸೇವಿಸಿರುವುದು ಈ ಸಮಸ್ಯೆಗೆ ಕಾರಣ ಎನ್ನುವ ಗುಮಾನಿ ವ್ಯಕ್ತವಾಗಿದೆ. ಮುನ್ನಚ್ಚೆರಿಕೆ ಕ್ರಮವಾಗಿ ಕ್ಯಾಂಸ್ನಲ್ಲಿರುವ ಎಲ್ಲಾ ನೀರಿನ ಫಿಲ್ಟರ್ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ಅವು ಉತ್ತಮ ಸ್ಥಿತಿಯಲ್ಲಿವೆ ಎಂದು ದೃಢಪಟ್ಟಿದೆ.ನೀರಿನ ಮಾದರಿಗಳನ್ನು ಬಾಹ್ಯ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, ನಿಖರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ವರದಿಗಳನ್ನು ನಿರೀಕ್ಷಿಸಲಾಗುತ್ತಿ ಎಂದು ಎನ್ಐಟಿಕೆ ಮೂಲಗಳು ತಿಳಿಸಿವೆ. ಎಲ್ಲಾ ವಸತಿಗೃಹ ಮೆಸ್ಗಳಿಗೆ ಅಡುಗೆ ಮತ್ತು ಕುಡಿಯುವ ನೀರಿಗಾಗಿ ಶುದ್ಧೀಕರಿಸಿದ ನೀರನ್ನೇ ಬಳಸುವಂತೆ ಸೂಚಿಸಲಾಗಿದೆ. ಮೆಸ್ಗಳಲ್ಲಿ ಆಹಾರ ತಯಾರಿಕೆಗೆ ನೇರವಾಗಿ ಟ್ಯಾಪ್ ನೀರನ್ನು ಬಳಸುವುದನ್ನು ಮತ್ತು ಕ್ಯಾಂಸ್ ನಲ್ಲಿ ನೇರವಾಗಿ ಟ್ಯಾಪ್ ನೀರನ್ನು ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೊರಗಿನ ಆಹಾರ, ಪನೀರ್ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಒಂದು ವಾರದವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಎನ್ಐಟಕೆ ಸಂಸ್ಥೆಯ ಕ್ಯಾಂಪಸ್ನಲ್ಲಿ ಮತ್ತು ವಸತಿ ಪ್ರದೇಶಗಳಲ್ಲಿಯೂ ಬಳಸುವ ನೀರು ಒಂದೇ ಆಗಿದೆ. ಅಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ವರದಿಯಾಗಿಲ್ಲ ಎಂದು ಎನ್ಐಟಿಕೆ ಸ್ಪಷ್ಟಪಡಿಸಿದೆ. ಸಂಸ್ಥೆಯು ಸ್ಥಳೀಯ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಂಪೂರ್ಣ ತನಿಖೆ ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭವಿಷ್ಯದಲ್ಲಿ ಕ್ಯಾಂಪಸ್ ಕಾರ್ಯಕ್ರಮಗಳಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಎನ್ಐಟಿಕೆ ತನ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಆರೋಗ್ಯ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಎನ್ಐಟಿಕೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಕಲಬುರಗಿ| ಪ್ರತ್ಯೇಕ ಮನೆಗಳ್ಳತನ ಪ್ರಕರಣ: 16.22 ಲಕ್ಷ ರೂ. ಮೌಲ್ಯದ ಸ್ವತ್ತು ವಶ; ಇಬ್ಬರು ಆರೋಪಿಗಳ ಬಂಧನ
ಕಲಬುರಗಿ: ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 16.22 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶರಣಪ್ಪ ಎಸ್.ಡಿ, ಪ್ರತ್ಯೇಕ ಪ್ರಕರಣಗಳಲ್ಲಿ ಪಂಚಶೀಲ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರಾಹುಲ್ ಸಿಂಗ್ ಸಾಗರಸಿಂಗ್ ಟಾಕ(19) ಹಾಗೂ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸದಾಲಾಪುರದ ಬಸವರಾಜ ಈರಪ್ಪ ಬಿರಾದಾರ(38) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಹೇಳಿದರು. ಕಳೆದ ಅಕ್ಟೋಬರ್ 27ರಂದು ಜೇವರ್ಗಿ ರಸ್ತೆಯ ಪಿಡಬ್ಲ್ಯುಡಿ ಕ್ವಾಟ್ರಸ್ ನಿವಾಸಿ ಹಾಗೂ ಪಿಡಬ್ಲ್ಯುಡಿ ಇಲಾಖೆಯ ಮ್ಯಾನೇಜರ್ ರಾಹುಲದೇವ ಧನ್ನ ಅವರು ತಮ್ಮ ಮನೆಯಲ್ಲಿ 170 ಗ್ರಾಂ ಬಂಗಾರದ ಆಭರಣಗಳು, 20 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 50 ಸಾವಿರ ನಗದು ಕಳ್ಳತನವಾಗಿರುವ ಬಗ್ಗೆ ಸ್ಟೇಷನ್ ಬಝಾರ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪಂಚಶೀಲ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರಾಹುಲ್ ಸಿಂಗ್ ಸಾಗರಸಿಂಗ್ ಟಾಕ ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ 2 ಲಕ್ಷ ನಗದು ಸೇರಿದಂತೆ 8.22 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಾ.ಶರಣಪ್ಪ ಎಸ್.ಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ್, ಸ್ಟೇಷನ್ ಬಝಾರ್ ಪಿಐ ಗುರುಲಿಂಗಪ್ಪಗೌಡ ಪಾಟೀಲ್ ಮತ್ತಿತ್ತರರು ಉಪಸ್ಥಿತರಿದ್ದರು.
ಅಮೆರಿಕ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್ಗಿಂತಲೂ ಕೆಟ್ಟದಾಗಿ ನಡೆಸಿಕೊಂಡಿದೆ: ಪಾಕ್ ರಕ್ಷಣಾ ಸಚಿವ ಆಸಿಫ್ ಆರೋಪ
ಇಸ್ಲಾಮಾಬಾದ್, ಫೆ. 11: ಅಮೆರಿಕ ಪಾಕಿಸ್ತಾನವನ್ನು ತನ್ನ ಕಾರ್ಯತಂತ್ರದ ಹಿತಾಸಕ್ತಿಗೆ ಬಳಸಿಕೊಂಡು ಬಳಿಕ ಟಾಯ್ಲೆಟ್ ಪೇಪರ್ಗಿಂತಲೂ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ಜಾವಾ ಆಸಿಫ್ ಬುಧವಾರ ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿದ ಅವರು, 1999ರ ಬಳಿಕ ಅಮೆರಿಕದೊಂದಿಗೆ ಮತ್ತೆ ನಿಲ್ಲುವ ಪಾಕಿಸ್ತಾನದ ನಿರ್ಧಾರವು, ವಿಶೇಷವಾಗಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ, ದೇಶಕ್ಕೆ ದೀರ್ಘಾವಧಿಯ ಹಾನಿಯನ್ನುಂಟು ಮಾಡಿದೆ ಎಂದರು. ಅಫ್ಘಾನಿಸ್ತಾನದ ಎರಡು ಯುದ್ಧಗಳಲ್ಲಿ ಪಾಕಿಸ್ತಾನದ ಪಾತ್ರವನ್ನು ‘ಪ್ರಮಾದ’ ಎಂದು ಬಣ್ಣಿಸಿದ ಆಸಿಫ್, ಪಾಕಿಸ್ತಾನವು ಇಂದು ಎದುರಿಸುತ್ತಿರುವ ಭಯೋತ್ಪಾದನೆ ಆ ಹಿಂದಿನ ನಿರ್ಧಾರಗಳ ಪರಿಣಾಮವಾಗಿದೆ ಎಂದು ಹೇಳಿದರು. 1999ರ ಬಳಿಕ, ವಿಶೇಷವಾಗಿ 2001ರ ಸೆಪ್ಟೆಂಬರ್ 11ರ ದಾಳಿಯ ಬಳಿಕದ ಅವಧಿಯಲ್ಲಿ ಅಮೆರಿಕದೊಂದಿಗೆ ಸಂಬಂಧ ಮರುಸ್ಥಾಪಿಸಿದ್ದಕ್ಕೆ ಪಾಕಿಸ್ತಾನ ಭಾರೀ ಬೆಲೆ ತೆರುತ್ತಿದೆ ಎಂದರು. ವಿದೇಶಿ ಘರ್ಷಣೆಯಲ್ಲಿ ಪಾಕಿಸ್ತಾನವನ್ನೂ ತಳ್ಳಲು ಈ ಹಿಂದಿನ ಮಿಲಿಟರಿ ಆಡಳಿತಗಾರರಾದ ಝಿಯಾ ಉಲ್ ಹಕ್ ಮತ್ತು ಪರ್ವೇಝ್ ಮುಷರ್ರಫ್ ಹೊಣೆಗಾರರು. ಈ ನಿರ್ಧಾರಗಳ ಪರಿಣಾಮವನ್ನು ಪಾಕಿಸ್ತಾನ ಈಗಲೂ ಅನುಭವಿಸುತ್ತಿದೆ. ಪಾಕಿಸ್ತಾನವನ್ನು ತಮಗೆ ಅಗತ್ಯವಿದ್ದಾಗ ಬಳಸಿಕೊಂಡು ಟಾಯ್ಲೆಟ್ ಪೇಪರ್ನಂತೆ ಬಿಸಾಡಲಾಗಿದೆ ಎಂದು ಖ್ವಾಜಾ ಆಸಿಫ್ ಆರೋಪಿಸಿದ್ದಾರೆ. 2001ರ ಬಳಿಕ ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಯುದ್ಧದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಅಮೆರಿಕದ ಪರ ವಹಿಸುವ ಮೂಲಕ ತಾಲಿಬಾನ್ ವಿರೋಧಿ ನಿಲುವು ತಳೆದಿತು. ಅಮೆರಿಕ ಈ ಪ್ರದೇಶದಿಂದ ಬಳಿಕ ನಿರ್ಗಮಿಸಿದರೂ, ಪಾಕಿಸ್ತಾನ ಹಲವು ವರ್ಷಗಳ ಹಿಂಸಾಚಾರ, ಹೆಚ್ಚುತ್ತಿರುವ ಉಗ್ರವಾದ ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಒಪ್ಪಂದ ಆಗದಿದ್ದರೆ ಕಠಿಣ ಕ್ರಮ: ಇರಾನ್ ಗೆ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, ಫೆ. 11: ಮಾತುಕತೆ ವಿಫಲಗೊಂಡರೆ ಅಮೆರಿಕಾ ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ‘ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಇರಾನ್ ಉತ್ಸುಕವಾಗಿದೆ. ಮಾತುಕತೆ ಯಶಸ್ವಿಯಾಗುತ್ತದೆ ಎಂದು ಆಶಿಸುತ್ತಿದ್ದೇವೆ. ಇದರ ಜೊತೆಗೆ ಪ್ರದೇಶದಲ್ಲಿ ಅಮೆರಿಕಾದ ಸಮರನೌಕೆಗಳ ಉಪಸ್ಥಿತಿಯನ್ನು ಹೆಚ್ಚಿಸುವ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ. ಪರಮಾಣು ಒಪ್ಪಂದದ ಬಗ್ಗೆ ಇರಾನ್ ಮತ್ತು ಅಮೆರಿಕಾ ನಡುವೆ ಪರೋಕ್ಷ ಮಾತುಕತೆ ಮುಂದುವರಿದಿದೆ. ‘ಒಪ್ಪಂದ ಮಾಡಿಕೊಳ್ಳದಿದ್ದರೆ ಅವರು ಮೂರ್ಖರಾಗುತ್ತಾರೆ. ಯಾವುದೇ ಒಪ್ಪಂದವು ಸಮಗ್ರವಾಗಿರಬೇಕು. ಪರಮಾಣು ಶಸ್ತ್ರಾಸ್ತ್ರ, ಕ್ಷಿಪಣಿಗಳ ಬಗ್ಗೆ ಒಪ್ಪಂದ ಆಗಬೇಕು. ಈ ಹಿಂದಿನ ಅಮೆರಿಕಾ ಆಡಳಿತವು ಇರಾನ್ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದ ಅತ್ಯಂತ ಮೂರ್ಖ ಮತ್ತು ಅಪ್ರಾಮಾಣಿಕ ಒಪ್ಪಂದವಾಗಿತ್ತು’ ಎಂದು ಟ್ರಂಪ್ ಟೀಕಿಸಿದ್ದಾರೆ. ಟ್ರಂಪ್ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಇರಾನ್, ತನ್ನ ಭೂಪ್ರದೇಶಗಳ ವಿರುದ್ಧ ಯಾವುದೇ ಬೆದರಿಕೆಗಳಿಗೆ ದೇಶದ ಸಶಸ್ತ್ರ ಪಡೆಗಳು ಹೆಚ್ಚು ಶಕ್ತಿಯುತ ಮತ್ತು ವ್ಯಾಪಕ ಪ್ರತಿಕ್ರಿಯೆ ನೀಡಲಿವೆ ಎಂದು ಹೇಳಿದೆ. ಜನತೆ ಒಗ್ಗಟ್ಟು ಮತ್ತು ತಾಳ್ಮೆಯನ್ನು ಪ್ರದರ್ಶಿಸುವಂತೆ ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಕರೆ ನೀಡಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಕಳೆದ ವಾರ ಮಸ್ಕತ್ನಲ್ಲಿ ನಡೆದ ಆರಂಭಿಕ ಸುತ್ತಿನ ಪರೋಕ್ಷ ಮಾತುಕತೆಗೆ ಇರಾನ್ನ ಅಧಿಕೃತ ಲಿಖಿತ ಪ್ರತಿಕ್ರಿಯೆಯೊಂದಿಗೆ ಉನ್ನತ ಅಧಿಕಾರಿ ಆಲಿ ಲಾರಿಜಾನಿ ಒಮಾನ್ಗೆ ಪ್ರಯಾಣಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮೂಡುಬಿದಿರೆ : ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 2 ಚಿನ್ನ ಮತ್ತು 1ಕಂಚಿನ ಪದಕ ಪಡೆದು ಸ್ಪೂತಿ೯ ವಿಶೇಷ ಮಕ್ಕಳ ಶಾಲೆಯ ವಿದ್ಯಾಥಿ೯ನಿ ಸಹಳಾ ಹಾಗೂ ತರಬೇತಿ ನೀಡಿರುವ ಶಿಕ್ಷಕಿ ಸುಚಿತ್ರಾ ಅವರನ್ನು ಸಂಸ್ಥೆಯ ವತಿಯಿಂದ ಬುಧವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಉದ್ಯಮಿ ನಂದಕುಮಾರ್ ಕುಡ್ವ, ವಿದ್ಯಾವಧ೯ಕ ಸಂಘದ ಟ್ರಸ್ಟಿ ಯುವರಾಜ್ ಜೈನ್ ಕಲ್ಲೋಳಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಎಸ್ ಡಿ ಎಂಸಿ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ರೋಡ್ರಿಗಸ್ ಸ್ವಾಗತಿಸಿದರು. ಶಿಕ್ಷಕಿ ಹಷಾ೯ ಸನ್ಮಾನಿತರನ್ನು ಪರಿಚಯಿಸಿದರು. ಸ್ಪೂತಿ೯ ಸಂಸ್ಥೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಶಮಿ೯ಳಾ ವಾಸ್ ಕಾಯ೯ಕ್ರಮ ನಿರೂಪಿಸಿದರು. ಸುಮನಾ ವಂದಿಸಿದರು. ಜೂನಿಯರ್ ವಿಭಾಗದಲ್ಲಿ ಶಾಟ್ ಪುಟ್ ಹಾಗೂ 4×100 ಮೀ ಮಿಕ್ಷೆಡ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ 2 ಚಿನ್ನದ ಪದಕ ಹಾಗೂ 200 ಮೀ ಓಟದಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಪಡೆದು ಬೆಳಿಗ್ಗೆ ಸಂಸ್ಥೆಗೆ ಆಗಮಿಸಿರುವ ಸಹಳಾ ಮತ್ತು ಸುಚಿತ್ರಾ ಅವರನ್ನು ಬ್ಯಾಂಡ್ ಮೂಲಕ ಸ್ವಾಗತಿಸಿ ಪುಷ್ಪಾಪ೯ಣೆ ಮಾಡಲಾಯಿತು.
Ukraine | ರಶ್ಯ ದಾಳಿಯಲ್ಲಿ ಮೂವರು ಮಕ್ಕಳ ಸಹಿತ 4 ಮೃತ್ಯು
ಕೀವ್, ಫೆ. 11: ಉಕ್ರೇನ್ನ ಬೊಗೊಡುಖಿವ್ ನಗರದ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಅವರ ತಂದೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಉಕ್ರೇನ್ನ ಪೂರ್ವದಲ್ಲಿರುವ, ರಷ್ಯಾ ಗಡಿಭಾಗದ ಸನಿಹದಲ್ಲಿರುವ ಬೊಗೊಡುಖಿವ್ ನಗರದ ಖಾಸಗಿ ಮನೆಯೊಂದರ ಮೇಲೆ ಶತ್ರುಗಳ ಡ್ರೋನ್ ದಾಳಿಯಲ್ಲಿ ಒಂದು ವರ್ಷದ ಇಬ್ಬರು ಬಾಲಕರು ಮತ್ತು ಎರಡು ವರ್ಷದ ಬಾಲಕಿ ಹಾಗೂ ಈ ಮಕ್ಕಳ ತಂದೆ ಮೃತಪಟ್ಟಿದ್ದಾರೆ. ದಾಳಿಯಿಂದಾಗಿ ಮನೆ ಸಂಪೂರ್ಣ ಸುಟ್ಟುಹೋಗಿದ್ದು, ಕುಟುಂಬದ ಸದಸ್ಯರು ಅವಶೇಷಗಳಡಿ ಸಿಲುಕಿದ್ದರು. ಗಂಭೀರವಾಗಿ ಗಾಯಗೊಂಡಿರುವ ಮಕ್ಕಳ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಫೆ.15 ರಂದು ಉಳ್ಳಾಲ ತಾಲೂಕು ಮಟ್ಟದ ಉಲಮಾ- ಉಮರಾ ಸಂಗಮ
ಕೊಣಾಜೆ: ಜಮೀಯತುಲ್ ಫಲಹ್ ಉಳ್ಳಾಲ ತಾಲೂಕು ಘಟಕ, ದ.ಕ.ಜಿಲ್ಲಾ ವಕ್ಬ್ ಸಲಹಾ ಸಮಿತಿ, ದ.ಕ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಉಳ್ಳಾಲ ತಾಲೂಕು ಮಟ್ಟದ ಉಲಮಾ- ಉಮರಾ ಸಂಗಮ ಮತ್ತು ಜಮಾಅತ್ ಪ್ರತಿನಿಧಿಗಳ ಮಾಹಿತಿ ಕಾರ್ಯಾಗಾರ ಫೆ.15 ರಂದು ಕೊಣಾಜೆ ಕಂಬಳಪದವಿನ ಕೆ.ಎಂ.ಎಸ್ ಸಭಾಂಗಣದಲ್ಲಿ ನಡೆಯಲಿದೆ. ಅಶ್ರಫ್ ತಂಙಳ್ ಆದೂರು ದುವಾ ನೆರವೇರಿಸಲಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ರಹಿಮಾನ್ ಕೋಡಿಜಾಲ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಶ್ಪಾಕ್ ಅಹ್ಮದ್, ಶಾಹುಲ್ ಹಮೀದ್ ಕೆ.ಕೆ, ಬಿ ಇಬ್ರಾಹಿಂ, ಕಣಚೂರು ಮೋನು ಯು.ಕೆ, ಇಬ್ರಾಹಿಂ ಕೋಡಿಜಾಲ್, ಬಿ.ಜಿ.ಹನೀಫ್, ಅನೀಸ್ ಕೌಸರಿ, ಇಸ್ಮಾಯಿಲ್, ಇಸ್ಮಾಯಿಲ್, ಎಚ್ ಎನ್ ಹಮೀದ್, ನೌಷದ್, ಎಸ್ ಕೆ ಖಾದರ್, ಮಹಮ್ಮದ್ ಶಾಫಿ, ಎನ್ ಎಸ್ ನಾಸೀರ್, ಮಹಮ್ಮದ್ ಫಯಾಝ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Thailand | ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಒತ್ತೆಸೆರೆಯಲ್ಲಿರಿಸಿದ್ದ ಆರೋಪಿಯ ಬಂಧನ
ಬ್ಯಾಂಕಾಕ್, ಫೆ.11: ದಕ್ಷಿಣ ಥೈಲ್ಯಾಂಡ್ ನ ಹಾಟ್ಯಾಯಿ ನಗರದ ಶಾಲೆಯೊಂದರಲ್ಲಿ ಬುಧವಾರ ಗುಂಡಿನ ದಾಳಿ ನಡೆಸಿದ ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒತ್ತೆಸೆರೆಯಲ್ಲಿ ಇರಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. 18 ವರ್ಷದ ಯುವಕನೊಬ್ಬ ಬಂದೂಕು ಹಿಡಿದು ಸಾಂಕ್ಖ್ಲಾ ಪ್ರಾಂತದ ಶಾಲೆಯನ್ನು ಪ್ರವೇಶಿಸಿ ಹಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಸಂದರ್ಭ ಆರೋಪಿ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಹಾಗೂ ಓರ್ವ ಶಿಕ್ಷಕ ಗಾಯಗೊಂಡಿದ್ದಾರೆ. ಆರೋಪಿಯೂ ಗಾಯಗೊಂಡಿದ್ದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಯಡ್ರಾಮಿ| ಅನಧಿಕೃತ ಗೂಡಂಗಡಿ ತೆರವು ಕಾರ್ಯಾಚರಣೆ: ಪಟ್ಟಣ ಪಂಚಾಯತ್ ಅಧಿಕಾರಿಗಳ ವಿರುದ್ಧ ತಾರತಮ್ಯ ಆರೋಪ
ಯಡ್ರಾಮಿ: ಪಟ್ಟಣದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ತೆರವು ಮಾಡುವಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಬಾಲರಾಜ ಮಡಿವಾಳ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸರ್ದಾರ ಶರಣಗೌಡ ವೃತ್ತದವರೆಗೆ ಸರಕಾರಿ ಕಚೇರಿ ಮುಂಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ತೆರವುಗೊಳಿಸುವುದಾಗಿ ಪಟ್ಟಣ ಪಂಚಾಯತಿ ಧ್ವನಿವರ್ಧಕ ಮೂಲಕ ಪ್ರಕಟಣೆ ಹೊರಡಿಸಿತ್ತು. ಕಳೆದ ಗುರುವಾರ ಪ್ರೌಢಶಾಲೆ ಮುಂಭಾಗದಲ್ಲಿರುವ ಬಡವರ ಅಂಗಡಿಗಳನ್ನು ಮಾತ್ರ ತೆರವುಗೊಳಿಸಿ ಉಳಿದ ಅಂಗಡಿಗಳನ್ನು ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ತಾರತಮ್ಯ ನೀತಿ ಕೈಬಿಡಬೇಕು. ಜಿಲ್ಲಾಧಿಕಾರಿಗಳು ಸಮಗ್ರ ವರದಿ ತರಿಸಿಕೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಉಳಿದಿರುವ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸಿ, ಸ್ಥಳೀಯ ಆಡಳಿತದಿಂದ ಮಳಿಗೆ ನಿರ್ಮಿಸಿ ನಿಯಮಾನುಸಾರ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಯಡ್ರಾಮಿ ಬಂದ್ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಶಿವಶರಣ ಜಂಬೇರಾಳ, ಬಸವರಾಜ ಹೊರಗಿನಮಠ, ಶಿವಕುಮಾರ ಹೆಬ್ಬಾಳ, ಬಶೀರ್ ಮುಲ್ಲಾ, ರಾಜು ಹಡಪದ, ವಿರೇಶ ಹಡಪದ, ಪದ್ಮಾವತಿ, ಭರತ್ ದೊರೆ, ಮಡಿವಾಳಪ್ಪ, ಕಿರಣಕುಮಾರ ಹರನಾಳ, ಅಜ್ರುದ್ದಿನ್ ಮಳ್ಳಿಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿ| ಪಿಕಪ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತ್ಯು
ಉಪ್ಪಿನಂಗಡಿ: ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ಪಿಕಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಫೆ.11ರಂದು ನಡೆದಿದೆ. ಪಿಕಪ್ ವಾಹನದಲ್ಲಿ ಸೆಟ್ರಿಂಗ್ ಕೆಲಸದ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭ ಮೇಲ್ಭಾಗದ ರಸ್ತೆ ಯಿಂದ ವಾಹನ ಕೆಳಭಾಗದ ರಸ್ತೆಗೆ ಪಲ್ಟಿಯಾಗಿ ವಾಹನದಲ್ಲಿದ್ದ ಅಳಕ್ಕೆ ನಿವಾಸಿ ಹರಿಶ್ಚಂದ್ರ ಎಂಬವರ ಮಗ ಹೇಮಚಂದ್ರ (32) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಪಿಕಪ್ನಲ್ಲಿದ್ದ ಉಮ್ಮರಬ್ಬ (51) ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಹೇಮಚಂದ್ರ ಅವಿವಾಹಿತನಾಗಿದ್ದು, ಇವರೇ ಮನೆಗೆ ಆಧಾರ ಸ್ತಂಭವಾಗಿದ್ದರು. ಘಟನೆಯ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Canada | ಶಾಲೆ, ಶಾಲೆಯ ಬಳಿ ಗುಂಡಿನ ದಾಳಿಯಲ್ಲಿ 9 ಮೃತ್ಯು
25 ಮಂದಿಗೆ ಗಾಯ; ಶಂಕಿತ ಆರೋಪಿ ಆತ್ಮಹತ್ಯೆ
ಗಾಣಗಾಪುರದ ದತ್ತಾತ್ರೇಯ, ಭಾಗ್ಯವಂತಿ ದೇವಾಲಯಗಳ ಅಭಿವೃದ್ದಿಗೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಅಫಜಲಪುರ ತಾಲೂಕಿನ ಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವಾಲಯ ಹಾಗೂ ಘತ್ತರಗಿಯ ಭಾಗ್ಯವಂತಿ ದೇವಾಲಯ ಅಭಿವೃದ್ದಿಪಡಿಸಲು ರೂಪರೇಷಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವರ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಸುಮಾರು 500 ವರ್ಷಗಳ ಪರಂಪರೆ ಹೊಂದಿರುವ ಶ್ರೀ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಾಲಯ ಹಾಗೂ ಘತ್ತರಗಿಯ ಭಾಗ್ಯವಂತಿ ದೇವಾಲಯಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಭೀಮಾ ಮತ್ತು ಅಮರ್ಜಾ ನದಿಯ ಸಂಗಮವು ಇಲ್ಲಿನ ಧಾರ್ಮಿಕ ಶ್ರೇಷ್ಠತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಲ್ಲಿ ಈ ಎರಡೂ ಧಾರ್ಮಿಕ ಶ್ರದ್ದಾ ಕೇಂದ್ರಗಳ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಫಜಲಪುರ ಕ್ಷೇತ್ರದ ಶಾಸಕರಾದ ಎಂ.ವೈ ಪಾಟೀಲ್ ಅವರೊಂದಿಗೆ ಸಭೆ ನಡೆಸಿ, ತಜ್ಞರು ರೂಪಿಸಿರುವ ನೀಲನಕ್ಷೆಯನ್ನು ಅವಲೋಕಿಸಲಾಯಿತು ಎಂದು ಸಚಿವರು ವಿವರಿಸಿದ್ದಾರೆ.
ಸಂಪಾಜೆ ಗ್ರಾಪಂ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ
ಸುಳ್ಯ, ಫೆ.11: ಗ್ರಾಮಗಳ ಅಭಿವೃದ್ಧಿಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಪಂ ದೇಶಕ್ಕೆ ಮಾದರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. ಸಂಪಾಜೆ ಗ್ರಾಪಂ ವ್ಯಾಪ್ತಿಯಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ರ ವಿಶೇಷ ಮುತುವರ್ಜಿಯಿಂದ ಮುಖ್ಯಮಂತ್ರಿಯ ವಿಶೇಷ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರಿಟ್ ರಸ್ತೆಗಳು, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಎಂಎಲ್ಸಿ ಅನುದಾನ, ಜಿಪಂ, ಗ್ರಾಪಂ ಸ್ವಂತ ನಿಧಿಯಡಿ ಸುಮಾರು 15 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭ 500ಕ್ಕೂ ಅಧಿಕ ಫಲಾನುಭವಿಗಳಿಗೆ ಕೃಷಿ ಉಪಕರಣ, ಹೊಲಿಗೆ ಯಂತ್ರಗಳ ವಿತರಣೆ ಮತ್ತು ಗ್ರಂಥಾಲಯ, ಅಕ್ಷರ ದಾಸೋಹ ಕಟ್ಟಡ, ಅಂಗನವಾಡಿ, ವಿಸ್ತ್ರತ ಕಟ್ಟಡಗಳನ್ನೂ ಉದ್ಘಾಟಿಸಲಾಯಿತು. ಸಂಪಾಜೆ ಗ್ರಾಪಂ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ತಾಪಂ ಇಒ ರಾಜಣ್ಣ, ಸಂಪಾಜೆ ಪಿಡಿಒ ಸರಿತಾ ಓಲ್ಗಾ ಡಿಸೋಜ, ಜಿಪಂ ಸಹಾಯಕ ಕಾರ್ಯ ಕ್ರಮ ನಿರ್ವಾಹಕ ಇಂಜಿನಿಯರ್ ಫಯಾಝ ಅಹ್ಮದ್, ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಇಂಜಿನಿಯರ್ ಚೈತ್ರಾ ಮತ್ತಿತರರು ಭಾಗವಹಿಸಿದ್ದರು. ಸಂಪಾಜೆ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಸ್ವಾಗತಿಸಿದರ. ಉಪಾಧ್ಯಕ್ಷ ಎಸ್.ಕೆ. ಹನೀಫ್ ವಂದಿಸಿದರು.
ಪುಣೆ ಕಾಲೇಜಿನ ಆಹಾರೋತ್ಸವದಲ್ಲಿ ಬಾಂಗ್ಲಾದೇಶದ ಮಳಿಗೆ ಧ್ವಂಸಗೊಳಿಸಿದ ಬಿಜೆಪಿಯ ಯುವ ಘಟಕ
ಪುಣೆ, ಫೆ. 11: ಇಲ್ಲಿನ ಮಹಾರಾಷ್ಟ್ರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವರ್ಲ್ಡ್ ಪೀಸ್ ಯುನಿವರ್ಸಿಟಿಯ ಅಂತರರಾಷ್ಟ್ರೀಯ ಆಹಾರೋತ್ಸವದಲ್ಲಿ ಬಾಂಗ್ಲಾದೇಶದ ಆಹಾರದ ಮಳಿಗೆಯನ್ನು ಬಿಜೆಪಿಯ ಯುವ ಘಟಕದ ಸದಸ್ಯರು ಧ್ವಂಸಗೊಳಿಸಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾದ ಪುಣೆ ನಗರ ಮುಖ್ಯಸ್ಥ ದುಷ್ಯಂತ ಮೊಹೋಲ್ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಸಂಘಟನೆಯ ಸದಸ್ಯರು ಸ್ಟಾಲ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು, ಘೋಷಣೆಗಳನ್ನು ಕೂಗುತ್ತಿರುವುದು, ಸ್ಟಾಲ್ ಧ್ವಂಸಗೊಳಿಸುವುದು ಹಾಗೂ ಬಾಂಗ್ಲಾದೇಶದ ಬಾವುಟಕ್ಕೆ ಬೆಂಕಿ ಹಚ್ಚುತ್ತಿರುವುದು ಕಾಣಿಸಿದೆ. ಈ ಕಾರ್ಯಕ್ರಮದಲ್ಲಿ ಹಲವು ದೇಶಗಳ ಆಹಾರದ ಅಂಗಡಿಗಳು ಇದ್ದವು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದೇಶಿ ವಿದ್ಯಾರ್ಥಿಯೊಬ್ಬರು, ‘‘20ರಿಂದ 30 ಮಂದಿ ಇದ್ದ ಗುಂಪು ಸ್ಟಾಲ್ ಧ್ವಂಸಗೊಳಿಸಿತು. ನಾವು ಅದಕ್ಕಿಂತ ಮೊದಲು ಎಲ್ಲಾ ಬಾಂಗ್ಲಾದೇಶಿ ವಿದ್ಯಾರ್ಥಿಗಳಿಗೆ ಒಳಗೆ ಹೋಗುವಂತೆ ತಿಳಿಸಿದ್ದೆವು. ಆದರೆ ಓರ್ವ ವಿದ್ಯಾರ್ಥಿನಿ ಹೊರಗೆ ಉಳಿದಿದ್ದಳು. ಅವರು ಆಕೆಯ ಮೇಲೂ ದಾಳಿ ನಡೆಸಲು ಪ್ರಯತ್ನಿಸಿದರು’’ ಎಂದಿದ್ದಾರೆ. ವಿಧ್ವಂಸಕರು ಹೊರಗಿನವರು, ಸಂಸ್ಥೆಯವರಲ್ಲ ಎಂದು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಗಣೇಶ್ ಪೋಕಾಲೆ ತಿಳಿಸಿದ್ದಾರೆ. ಪೊಲೀಸರಿಗೆ ಈ ಘಟನೆ ಬಗ್ಗೆ ತಿಳಿದಿದೆ. ಅವರು ವಿಶ್ವವಿದ್ಯಾನಿಲಯದಿಂದ ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ದೇಶಮಾನೆ ತಿಳಿಸಿದ್ದಾರೆ.
Delhi | ಲಡ್ಡಿಗೆ ವಿಷ ಬೆರೆಸಿ ಮೂವರ ಹತ್ಯೆಗೈದ ಆರೋಪ; ಸ್ವಘೋಷಿತ ದೇವಮಾನವನ ಬಂಧನ
ಹೊಸದಿಲ್ಲಿ, ಫೆ. 11: ‘ಧನವರ್ಷ’ (ತತ್ಕ್ಷಣ ಹಣಕಾಸು ಲಾಭ)ದ ಆಮಿಷ ಒಡ್ಡಿ ಆಚರಣೆ ನಡೆಸುವ ಹೆಸರಿನಲ್ಲಿ ವಿಷ ಬೆರೆಸಿದ ಲಾಡುಗಳನ್ನು ನೀಡಿ ಮಹಿಳೆ ಸೇರಿದಂತೆ ಮೂವರನ್ನು ಹತ್ಯೆಗೈದ ಆರೋಪದಲ್ಲಿ ದಿಲ್ಲಿ ಪೊಲೀಸರು ಸ್ವಘೋಷಿತ ದೇವಮಾನವನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿ ಕಮರುದ್ದೀನ್ ಅಲಿಯಾಸ್ ಬಾಬಾ ಪ್ರಸ್ತುತ ಲೋನಿ ಹಾಗೂ ಫಿರೋಝಾಬಾದ್ (UP) ನಲ್ಲಿ ‘ತಾಂತ್ರಿಕ ಕೇಂದ್ರ’ ಎಂದು ಕರೆಯಲಾಗುವ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ವಿಚಾರಣೆ ಸಂದರ್ಭ, ಆರೋಪಿ ಅಮಾಯಕ ಜನರಿಗೆ ತಾಂತ್ರಿಕ ಆಚರಣೆಗಳ ಮೂಲಕ ‘ಧನವರ್ಷ’ದ ಆಮಿಷ ಒಡ್ಡುತ್ತಿದ್ದ ಎಂಬುದು ಬಹಿರಂಗವಾಗಿದೆ. ‘‘ಅವನು ಸಂತ್ರಸ್ತರ ಭರವಸೆಯನ್ನು ಗಳಿಸುತ್ತಿದ್ದ, ಅವರನ್ನು ಮಾನಸಿಕವಾಗಿ ಪ್ರಭಾವಿತಗೊಳಿಸುತ್ತಿದ್ದ, ಹಾಗೂ ಲಾಡಿನಲ್ಲಿ ವಿಷ ಬೆರೆಸಿ ನೀಡಿ ಹತ್ಯೆಗೈಯುತ್ತಿದ್ದ. ಅನಂತರ ಅವರಲ್ಲಿರುವ ನಗದು ಹಾಗೂ ಮೌಲ್ಯಯುತ ವಸ್ತುಗಳನ್ನು ಲೂಟಿ ಮಾಡುತ್ತಿದ್ದ’’ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪದೇಪದೇ ಅಪರಾಧ ಎಸಗುವ ವ್ಯಕ್ತಿ. ಈ ಹಿಂದೆ ಆತ ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಎರಡು ಹೇಯ ಅಪರಾಧಗಳಲ್ಲಿ ಭಾಗಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ. ಸಂತ್ರಸ್ತರ ವಾಹನಗಳನ್ನು ಪರಿಶೀಲಿಸಿದ ಸಂದರ್ಭ, ಅವುಗಳಲ್ಲಿ ಮೃತದೇಹಗಳು ಪತ್ತೆಯಾಗಿತ್ತು.
ನೀಲಹಳ್ಳಿ ಗ್ರಾಮದಲ್ಲಿ ಹೊಟೇಲ್ಗೆ ಬೆಂಕಿ ಹಚ್ಚಿದ ಪ್ರಕರಣ: 11 ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ
ಯಾದಗಿರಿ: ತಾಲೂಕಿನ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಹಳ್ಳಿ ಗ್ರಾಮದಲ್ಲಿ 2014ರಲ್ಲಿ ಹೊಟೇಲ್ ಹಾಗೂ ಕಿರಾಣಿ ಅಂಗಡಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳಿಗೆ ತಲಾ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 77 ಸಾವಿರ ರೂ. ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ದೇವಸ್ಥಾನಕ್ಕೆ ಸೇರಿದೆ ಎನ್ನಲಾದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಟೇಲ್ ಹಾಗೂ ಕಿರಾಣಿ ಅಂಗಡಿಗೆ 2014ರ ಮಾರ್ಚ್ 18ರಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಮಾರು 1.20 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ನಾಶಪಡಿಸಲಾಗಿತ್ತು. ಈ ಪ್ರಕರಣದಲ್ಲಿ ನೀಲಹಳ್ಳಿ ಗ್ರಾಮದ ನಿವಾಸಿಗಳಾದ ಶಂಕ್ರೆಪ್ಪಗೌಡ, ಶಾಂತುರೆಡ್ಡಿ ಪೊಲೀಸ್ ಪಾಟೀಲ್, ಬಸನಗೌಡ ಗಿರಿಯಪ್ಪನೋರು, ಚೆನ್ನರೆಡ್ಡಿ, ರೆಡ್ಡಪ್ಪ, ಬನ್ನಪ್ಪ, ಹನುಮಂತ, ಹುಸೇನಪ್ಪ, ಮಲ್ಲಪ್ಪ, ಮಾರಾಯ, ಹಾಗೂ ಭೀಮಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸರಕಾರದ ಪರವಾಗಿ ಪ್ರಧಾನ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.
ಕಾರು ಸಮೇತ ಕಾರ್ಮಿಕರಿಬ್ಬರು ನಾಪತ್ತೆ
ಅಜೆಕಾರು: ರಬ್ಬರ್ ಟ್ಯಾಪಿಂಗ್ ಕೃಷಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರಿಬ್ಬರು ಕಾರು ಸಮೇತ ನಾಪತ್ತೆಯಾಗಿರುವ ಘಟನೆ ವರಂಗ ಎಂಬಲ್ಲಿ ಫೆ.9ರಂದು ನಡೆದಿದೆ. ನಾಪತ್ತೆಯಾದವರನ್ನು ಕೇರಳದ ಸಾಬು ಕೆ.ಎಸ್.(44), ಕೇರಳ ಮತ್ತು ಮೊಹಮ್ಮದ್ ಅರಾಫತ್(41) ಎಂದು ಗುರುತಿಸಲಾಗಿದೆ. ಕಡ್ತಲದ ರಮೇಶ್ ಕುಮಾರ್ ಎಂಬವರು ಮಠದಬೆಟ್ಟುವಿನಿಂದ ರಬ್ಬರ್ ಟ್ಯಾಪಿಂಗ್ ಕೃಷಿ ಕೆಲಸಕ್ಕೆ ಇವರಿಬ್ಬರನ್ನು ಫೆ.9ರಂದು ಬೆಳಗ್ಗೆ ವರಂಗಕ್ಕೆ ಕೆಲಸಕ್ಕೆ ಕಾರಿನಲ್ಲಿ ಕಳುಹಿಸಿದ್ದರು. ಆದರೆ ಇವರು ಕೆಲಸಕ್ಕೆ ಹೋಗದೆ ವಾಹನ ಸಮೇತ ನಾಪತ್ತೆಯಾಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಫೆ,11: ಬಸ್ ಏಜೆಂಟರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.11ರಂದು ಬೆಳಗ್ಗೆ ಬನ್ನಂಜೆ ಗರಡಿ ರಸ್ತೆ ಎಂಬಲ್ಲಿ ನಡೆದಿದೆ. ಮೃತರನ್ನು ಬನ್ನಂಜೆ ಗರಡಿ ರಸ್ತೆ ನಿವಾಸಿ ರಾಜೇಶ್ ಶೆಣೈ(56) ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆ ಯಿಂದ ಬಳಲುತ್ತಿದ್ದ ಇವರು, ಬಸ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡ ಇವರು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದಕ ವಸ್ತು ಮಾರಾಟ ಪ್ರಕರಣ: ನಾಲ್ಕನೇ ಆರೋಪಿ ಬಂಧನ
ಮಣಿಪಾಲ, ಫೆ.11: ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಮಲ್ಲಪುರಂ ಮೂಲದ ಪ್ರಸ್ತುತ ಮಣಿಪಾಲದಲ್ಲಿ ವಾಸವಾಗಿರುವ ಅಜ್ಮಲ್(26) ಬಂಧಿತ ಆರೋಪಿ. 2025ರ ಆ.16ರಂದು ಮಣಿಪಾಲ ಈಶ್ವರ ನಗರದ ರೂಮ್ನಲ್ಲಿ ಗಾಂಜಾ ಹಾಗೂ ಎಲ್ಎಸ್ಡಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಆಪ್ಶಿನ್ ಮತ್ತು ಶಿವನಿಧಿ ಆಚಾರ್ಯ ಎಂಬವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ಮುಂದು ವರೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಧಿಸಿದ ಮತ್ತೋರ್ವ ಆರೋಪಿ ಕೇರಳ ಮೂಲದ ಮನೀಶ್ ಎಂಬಾತನನ್ನು 2025ರ ಆ.17ರಂದು ಬಂಧಿಸ ಲಾಗಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 4ನೇ ಆರೋಪಿ ಅಜ್ಮಲ್ನನ್ನು ಪೊಲೀಸರು 2026ರ ಫೆ.4ರಂದು ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ. ಈತನಿಂದ ಸುಮಾರು 1 ಲಕ್ಷ ರೂ. ಮೌಲ್ಯದ 2084 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಈತ ಗಾಂಜಾವನ್ನು ಸರಬರಾಜು ಮಾಡಿದ 5 ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು, ಇವರು ಗಾಂಜಾ ಸೇವಿಸಿದ ಬಗ್ಗೆ ದೃಢಪಟ್ಟಿದೆ. ಗಾಂಜಾ ಸೇವಿಸಿದ ಬಗ್ಗೆ ಈ ಐವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಫೆ.14: ಮಿಷನ್ ಆಸ್ಪತ್ರೆಯಲ್ಲಿ ನವಜಾತಶಿಶು ತೀವ್ರ ನಿಗಾ ಘಟಕ ಉದ್ಘಾಟನೆ
ಉಡುಪಿ: ಉಡುಪಿ ಸಿಎಸ್ಐ ಲೊಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ಪತ್ರೆಯಲ್ಲಿ ನವಜಾತ ಶಿಶು ತೀವ್ರ ನಿಗಾ ಘಟಕದ ಉದ್ಘಾಟನೆ ಫೆ.14ರಂದು ಮಧ್ಯಾಹ್ನ 3ಗಂಟೆಗೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಲಿದೆ. ಘಟಕವನ್ನು ಸಿಎಸ್ಐ-ಕೆಎಸ್ಡಿಯ ಬಿಷಪ್ ರೆವ.ಹೇಮಚಂದ್ರ ಕುಮಾರ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿ ಗಳಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್, ಮಕ್ಕಳ ತಜ್ಞರಾದ ಡಾ.ಗುರು ಪ್ರಸಾದ್ ಶೆಟ್ಟಿ ಹಾಗೂ ಡಾ.ಜನಾರ್ದನ್ ಪ್ರಭು ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ವಹಿಸಲಿ ರುವರು ಎಂದು ಪ್ರಕಟಣೆ ತಿಳಿಸಿದೆ.
ಅಕ್ರಮ ಮದ್ಯ, ಮಾದಕ ವಸ್ತುಗಳ ಸಾಗಾಣಿಕೆ ವಿರುದ್ಧ ಕ್ರಮ ಕೈಗೊಳ್ಳಿ; ಶರಣಪ್ಪ ಸಲದಾಪುರ
ಯಾದಗಿರಿ, ಫೆ.11: ಜಿಲ್ಲೆಯಲ್ಲಿ ಅಕ್ರಮ ಮದ್ಯ, ಮಾದಕ ವಸ್ತುಗಳ ಹಾಗೂ ಕಳ್ಳಭಟ್ಟಿ ಸಾರಾಯಿ ಸೇರಿದಂತೆ ಅಮಲು ತರುವ ಪದಾರ್ಥಗಳ ಅಕ್ರಮ ಮಾರಾಟ ಹಾಗೂ ಸಾಗಾಣಿಕೆ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶರಣಪ್ಪ ಸಲದಾಪುರ, ಜಿಲ್ಲೆಯಲ್ಲಿ ಅಕ್ರಮ ಮದ್ಯ, ಮಾದಕವಸ್ತುಗಳ ಸಾಗಾಣಿಕೆ, ಮಾರಾಟ ಹಾಗೂ ಕಳ್ಳಭಟ್ಟಿ ಸಾರಾಯಿ ಸೇರಿದಂತೆ ಜನರ ಜೀವಕ್ಕೆ ಅಪಾಯ ತರುವ ಅಮಲು ಪದಾರ್ಥಗಳ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಾನೂನಿನ ರೀತಿಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳು, ಕಳ್ಳಭಟ್ಟಿ ಸಾರಾಯಿ ಸೇರಿದಂತೆ ಅಮಲು ತರುವ ಪದಾರ್ಥಗಳು ವ್ಯಕ್ತಿಯ ಜೀವಕ್ಕೆ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ನಿಯಂತ್ರಣಾ ಕ್ರಮಗಳನ್ನು ಪ್ರಾಮಾಣಿಕವಾಗಿ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ, ಅಬಕಾರಿ ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
India Vs Namibia- ರಾತ್ರಿ ವೇಳೆ ಪಂದ್ಯ ನಿಗದಿಯಾದಾಗ ಹೊನಲು ಬೆಳಕಿನಲ್ಲೂ ತಾಲೀಮಿಗೆ ಅವಕಾಶ ನೀಡುವುದು ವಾಡಿಕೆ. ಆದರೆ ನಮೀಬಿಯಾ ನಾಯಕ ಜೆರಾಲ್ಡ್ ಎರಾಸ್ಮಸ್ ಅವರು ಭಾರತದ ವಿರುದ್ಧ ಪಂದ್ಯಕ್ಕೂ ಮುನ್ನ ನಮಗೆ ಫ್ಲಡ್ ಲೈಟಿನಡಿ ಅಭ್ಯಾಸ ನಡೆಸಲು ಅವಧಿಯನ್ನೇ ನಿಗದಿಪಡಿಸಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಭಾರತಕ್ಕೆ ಮಾತ್ರ 2 ಅವಧಿ ನಿಗದಿಗೊಳಿಸಲಾಗಿದೆ. ನಮಗೆ ಯಾಕಿಲ್ಲ? ಇದರಿಂದ ಭಾರತ ತಂಡಕ್ಕೆ ಅನ್ಯಾಯದ ಪ್ರಯೋಜನ ಆಗುವುದಿಲ್ಲವೇ ಎಂದು ಅವರು ನೇರವಾಗಿ ಐಸಿಸಿಯನ್ನೇ ಪ್ರಶ್ನಿಸಿದ್ದಾರೆ.
ಗುಜರಾತಿನ ಸೋಮನಾಥದಲ್ಲಿ 15,000 ಮತದಾರರನ್ನು ಪಟ್ಟಿಯಿಂದ ಅಳಿಸಲು ‘ಸಂಘಟಿತ’ ಪ್ರಯತ್ನ; ಮುಸ್ಲಿಂ ಮತದಾರರೇ ಟಾರ್ಗೆಟ್!
ಫೆಬ್ರವರಿ ಮೊದಲ ವಾರದಲ್ಲಿ ಗುಜರಾತ್ ನಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು ಫಾರ್ಮ್–7 ಅರ್ಜಿಗಳನ್ನು ಬಹು ಸಂಖ್ಯೆಯಲ್ಲಿ ಸಲ್ಲಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡುವೆ ಹಲವಾರು ಮತದಾರರು ತಮ್ಮ ಹೆಸರುಗಳು, ಫೋನ್ ನಂಬರ್ ಮತ್ತು ಮತದಾರರ ಫೋಟೋ ಗುರುತಿನ ಚೀಟಿ (EPIC) ಸಂಖ್ಯೆಗಳನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸುಳ್ಳು ಹಕ್ಕುಗಳನ್ನು ಸಲ್ಲಿಸಲು ಸಹಿಗಳನ್ನು ನಕಲಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ನೂರಾರು ಫಾರ್ಮ್–7ಗಳಿಗೆ ಸಹಿ ಹಾಕಲು ಕೇಳಲಾಗಿದೆ. ಈ ಫಾರ್ಮ್ಗಳು ಹೆಸರುಗಳನ್ನು ಸೇರಿಸಲು ಇರುವವು, ಅಳಿಸಲು ಅಲ್ಲ ಎಂದು ನಮಗೆ ಹೇಳಲಾಗಿತ್ತು ಎಂದು ಅಲ್ಲಿನ ಮತದಾರರು ಹೇಳಿರುವುದಾಗಿ ‘The Hindu’ ವರದಿ ಮಾಡಿತ್ತು. ಆಡಳಿತಾರೂಢ ಬಿಜೆಪಿ ಮೊದಲೇ ಟೈಪ್ ಮಾಡಿರುವ ಫಾರ್ಮ್ ಗಳನ್ನು ಸಾಮೂಹಿಕವಾಗಿ ಸಲ್ಲಿಸುವ ಮೂಲಕ ವಿರೋಧ ಪಕ್ಷಗಳು ಮತ್ತು ಅಲ್ಪಸಂಖ್ಯಾತರ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ಈ ಪ್ರಕ್ರಿಯೆಯನ್ನು ಸಂಘಟಿಸಲಾಗಿದೆ ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (AAP) ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸಿವೆ. ಆಕ್ಷೇಪಣೆ ಸಲ್ಲಿಸಿದವರ ಹೆಸರುಗಳು ಮತ್ತು ಸಹಿಗಳು ಕೈಬರಹದಲ್ಲಿ ಕಾಣಿಸಿಕೊಂಡಿದ್ದರೂ ಬೃಹತ್ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದು ರಾಜ್ಯಾದ್ಯಂತ ಲಕ್ಷಾಂತರ ಹೆಸರುಗಳನ್ನು ಅಳಿಸಲು ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ. ಫಾರ್ಮ್ಗಳಲ್ಲಿ ಪಟ್ಟಿ ಮಾಡಲಾದ ಹಲವು ಮೊಬೈಲ್ ಸಂಖ್ಯೆಗಳು ಆಕ್ಷೇಪಣೆದಾರರಿಗೆ ಸೇರಿಲ್ಲ. ಈ ಸಂಖ್ಯೆಗಳು ಸಂಬಂಧವಿಲ್ಲದ ಜನರಿಗೆ ಸೇರಿವೆ. ಹೆಚ್ಚಾಗಿ ಇತರ ರಾಜ್ಯಗಳಿಂದ ಬಂದವು ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೂ ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿದ್ದು, SIR ಪ್ರಕ್ರಿಯೆ ಪಾರದರ್ಶಕ ಪ್ರಕ್ರಿಯೆಯಾಗಿದೆ. ಅರ್ಜಿಗಳನ್ನು ಸಲ್ಲಿಸುವಲ್ಲಿ ಪಕ್ಷ ಅಥವಾ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಹೇಳಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಒಂದು ಕ್ಷೇತ್ರದಲ್ಲಿ ಯಾವುದೇ ನೋಂದಾಯಿತ ಮತದಾರರು ಫಾರ್ಮ್–7 ಆಕ್ಷೇಪಣೆಯನ್ನು ಸಲ್ಲಿಸಬಹುದು. ಒಬ್ಬ ವ್ಯಕ್ತಿಯು ಸಲ್ಲಿಸಬಹುದಾದ ಆಕ್ಷೇಪಣೆಗಳ ಸಂಖ್ಯೆಯ ಮೇಲೆ ಯಾವುದೇ ಮಿತಿಯಿಲ್ಲದಿದ್ದರೂ, ಒಬ್ಬ ವ್ಯಕ್ತಿಯು ಐದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ದುರುಪಯೋಗವನ್ನು ತಡೆಗಟ್ಟಲು ಚುನಾವಣಾ ನೋಂದಣಿ ಅಧಿಕಾರಿಯಿಂದ ಕಡ್ಡಾಯ ಪರಿಶೀಲನೆ ಅಗತ್ಯವಿರುತ್ತದೆ. ಮುಸ್ಲಿಂ ಮತದಾರರೇ ಗುರಿ ಕಳೆದ ತಿಂಗಳು ಗುಜರಾತ್ನ ಸೋಮನಾಥ ವಿಧಾನಸಭಾ ಕ್ಷೇತ್ರದಲ್ಲಿ 15,663 ಮತದಾರರನ್ನು ಅಳಿಸಲು ಭಾರೀ ಪ್ರಮಾಣದಲ್ಲಿ ಫಾರ್ಮ್ ಗಳನ್ನು ಸಲ್ಲಿಸಲಾಗಿತ್ತು. ಈ ಕುರಿತು ನ್ಯೂಸ್ಲಾಂಡ್ರಿ ವರದಿ ಪ್ರಕಾರ ದಾಖಲೆಗಳ ಪ್ರಕಾರ ಮತದಾರರ ಪಟ್ಟಿಯಲ್ಲಿ ಅಳಿಸಲು ಗುರಿಯಾಗಿದ್ದವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂದು ಹೇಳಲಾಗಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಈ ಸ್ಥಾನದಲ್ಲಿ ಭಾರೀ ಪೈಪೋಟಿ ನಡೆದಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ವಿಮಲ್ಭಾಯ್ ಚುಡಾಸ್ಮಾ ಬಿಜೆಪಿಯ ಮಾನ್ಸಿಂಗ್ ಪರ್ಮಾರ್ ಅವರನ್ನು ಕೇವಲ 922 ಮತಗಳಿಂದ ಸೋಲಿಸಿದ್ದರು. ಚುನಾವಣಾ ಆಯೋಗದ ದತ್ತಾಂಶ ಪ್ರಕಾರ ಒಟ್ಟು 2.6 ಲಕ್ಷ ಮತದಾರರಿದ್ದು, ಇವರಲ್ಲಿ ಮುಸ್ಲಿಮರು 50,000 ಕ್ಕೂ ಹೆಚ್ಚು ಇದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅಂದಾಜಿಸಿದ್ದಾರೆ. 15,663 ಫಾರ್ಮ್–7 ಅರ್ಜಿಗಳಲ್ಲಿ ಹೆಚ್ಚಿನವು ಮೊದಲೇ ಭರ್ತಿ ಮಾಡಿರುವವುಗಳಾಗಿದ್ದು, ಇವುಗಳನ್ನು 269 ಜನರು ಸಲ್ಲಿಸಿದ್ದಾರೆ. ಮತದಾರರ ಅಳಿಸುವಿಕೆಯನ್ನು ವಿನಂತಿಸಲು ಫಾರ್ಮ್–7 ಅನ್ನು ಬಳಸಲಾಗುತ್ತದೆ. ಇದು ಆಕ್ಷೇಪಣೆ ಸಲ್ಲಿಸಿದವರು ಮತ್ತು ಸೇರ್ಪಡೆಯನ್ನು ಪ್ರಶ್ನಿಸಲಾಗುತ್ತಿರುವ ಮತದಾರರ ವಿವರಗಳನ್ನು ಒಳಗೊಂಡಿರುತ್ತದೆ. ಹೆಸರು, ಮೊಬೈಲ್ ಸಂಖ್ಯೆ, ಕ್ಷೇತ್ರ, EPIC ಸಂಖ್ಯೆ ಮತ್ತು ಬೂತ್ ಸಂಖ್ಯೆಯಂತಹ ಮತದಾರರ ವಿವರಗಳನ್ನು ಇಂಗ್ಲಿಷ್ನಲ್ಲಿ ಮುದ್ರಿಸಿದ್ದರೆ, ಆಕ್ಷೇಪಣೆ ಸಲ್ಲಿಸುವವರ ವಿವರಗಳನ್ನು ಗುಜರಾತಿಯಲ್ಲಿ ಕೈಬರಹದಲ್ಲಿ ಬರೆಯಲಾಗಿದೆ. ಉದಾಹರಣೆಗೆ, ಒಂದು ಫಾರ್ಮ್ನಲ್ಲಿ ಆಕ್ಷೇಪಣೆ ಸಲ್ಲಿಸಿದವರ ಹೆಸರು ವಿಶ್ವವಾದಿಯ ಭಾರತ್ಭಾಯಿ ನರಸಿಭಾಯಿ. ಅವರ EPIC ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಗುಜರಾತಿಯಲ್ಲಿ ಕೈಬರಹದಲ್ಲಿ ಬರೆಯಲಾಗಿದೆ. ಮತದಾರರಾದ ನಸಿಂಬೆನ್ ಚೌಹಾಣ್ ಅವರ ವಿವರಗಳು ಇಂಗ್ಲಿಷ್ನಲ್ಲಿ ಡಿಜಿಟಲ್ ರೀತಿಯಲ್ಲಿ ಮುದ್ರಿಸಲಾಗಿದೆ. 269 ಆಕ್ಷೇಪಣೆ ಸಲ್ಲಿಸಿದವರಲ್ಲಿ ಪ್ರತಿಯೊಬ್ಬರೂ 50 ಅಥವಾ ಅದಕ್ಕಿಂತ ಹೆಚ್ಚು ಫಾರ್ಮ್–7 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಚುನಾವಣಾ ಆಯೋಗದ ಕೈಪಿಡಿಯು ಹೆಚ್ಚಿನ ಸಂಖ್ಯೆಯಲ್ಲಿ ಫಾರ್ಮ್–7 ಅರ್ಜಿಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿದ್ದರೂ ಇದು ಸಂಭವಿಸಿದೆ. ಬೂತ್ ಮಟ್ಟದ ಏಜೆಂಟ್ (BLA) ಸಹ ದಿನಕ್ಕೆ 10 ಫಾರ್ಮ್–7ಗಳನ್ನು ಮಾತ್ರ ಸಲ್ಲಿಸಬಹುದು. ಈ ಫಾರ್ಮ್ಗಳನ್ನು ಒಂದೇ ದಿನದಲ್ಲಿ ಬೃಹತ್ ಪ್ರಮಾಣದಲ್ಲಿ ಸಲ್ಲಿಸಲಾಯಿತೇ ಎಂಬುದು ಸ್ಪಷ್ಟವಾಗಿಲ್ಲ ಎಂದು newslaundry.com ವರದಿಯಲ್ಲಿ ಹೇಳಲಾಗಿದೆ. ಈ ಆಕ್ಷೇಪಣೆ ಸಲ್ಲಿಸಿದವರಲ್ಲಿ ಕೆಲವರು ಬಿಜೆಪಿ ಸದಸ್ಯರಾಗಿದ್ದಾರೆ. ಅವರಲ್ಲಿ ಸೋಮನಾಥ ಬಿಜೆಪಿ ಮಹಿಳಾ ವಿಭಾಗದ ಅಧ್ಯಕ್ಷೆ ಮಂಜುಲಾಬೆನ್ ಸುಯಾನಿ ಹಾಗೂ ವೆರಾವಲ್ ಮತ್ತು ಪಟನ್ ಪಟ್ಟಣಗಳ 29 ಬಿಜೆಪಿ ಕೌನ್ಸಿಲರ್ಗಳು ಸೇರಿದ್ದಾರೆ. ಈ 269 ಆಕ್ಷೇಪಣೆ ಸಲ್ಲಿಸಿದವರಲ್ಲಿ ಆರು ಜನರು ಈ ಫಾರ್ಮ್ಗಳನ್ನು ಭರ್ತಿ ಮಾಡಿಲ್ಲ ಎಂದು ಹೇಳಿ ತಮ್ಮ ಹೆಸರು, ಫೋನ್ ಸಂಖ್ಯೆಗಳು ಮತ್ತು EPIC ಸಂಖ್ಯೆಗಳನ್ನು ವಂಚನೆಯಿಂದ ಬಳಸಲಾಗಿದೆ ಎಂದು ಆರೋಪಿಸಿ ಅಫಿಡವಿಟ್ ಸಲ್ಲಿಸಿದ್ದಾರೆ. ಮತದಾರರನ್ನು ತೆಗೆದುಹಾಕಲು ಕೋರುವ ಕಾರಣಗಳಲ್ಲಿ ‘ಗೈರುಹಾಜರಿ’ ಮತ್ತು ‘ಶಾಶ್ವತ ಸ್ಥಳಾಂತರ’ ಕಾರಣಗಳಿವೆ. ಕೆಲವು ಫಾರ್ಮ್–7 ಅರ್ಜಿಗಳಲ್ಲಿ ‘ಭಾರತೀಯ ನಾಗರಿಕರಲ್ಲ’ ಎಂಬ ಕಾರಣವನ್ನೂ ಉಲ್ಲೇಖಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಫಾರ್ಮ್–7 ಸಲ್ಲಿಸಿದರೆ ಚುನಾವಣಾ ನೋಂದಣಿ ಅಧಿಕಾರಿ ಮತ್ತು ಹೆಚ್ಚುವರಿ ಚುನಾವಣಾ ನೋಂದಣಿ ಅಧಿಕಾರಿಗಳಿಂದ ವೈಯಕ್ತಿಕ ಪರಿಶೀಲನೆಗೊಳಗಾಗಬೇಕು. ಪರಿಶೀಲನಾ ಪ್ರಕ್ರಿಯೆಯನ್ನು ಸುಗಮಗೊಳಿಸಲು 6 AERO ಗಳನ್ನು ನಿಯೋಜಿಸಲಾಗಿದೆ ಎಂದು ಸೋಮನಾಥ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ (DEO) ವಿಎನ್ ಉಪಾಧ್ಯಾಯ ತಿಳಿಸಿದ್ದಾರೆ. ಯಾವುದೇ ಹೆಸರನ್ನು ಅಳಿಸಲಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ನ್ಯೂಸ್ಲಾಂಡ್ರಿ ವರದಿ ಹೇಳಿದೆ. ಚುನಾವಣಾ ಆಯೋಗದ ಲೆಕ್ಕ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಹೆಸರು ಸೇರ್ಪಡೆಗಾಗಿ 6.88 ಲಕ್ಷ ಅರ್ಜಿಗಳು ಹಾಗೂ ಅಳಿಸುವಿಕೆಗಾಗಿ 9.88 ಲಕ್ಷ ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು 2026 ಜನವರಿ 29ರಂದು ‘the hindu’ ವರದಿ ಉಲ್ಲೇಖಿಸಿದೆ. ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿ (CEO) ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಎಸ್ಐಆರ್ನ ಎಣಿಕೆ ಹಂತ ಪೂರ್ಣಗೊಂಡ ನಂತರ ಡಿಸೆಂಬರ್ 19ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜನವರಿ 28ರ ಹೊತ್ತಿಗೆ ಹೆಸರು ಸೇರ್ಪಡೆಗಾಗಿ 6.88 ಲಕ್ಷ ಫಾರ್ಮ್–6 ಮತ್ತು 6A ಸ್ವೀಕರಿಸಿದ್ದರೆ, ಪಟ್ಟಿಯಿಂದ ಅಳಿಸುವಿಕೆಗಾಗಿ 9.88 ಲಕ್ಷ ಫಾರ್ಮ್–7 ಸಲ್ಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. SIR ಪ್ರಕ್ರಿಯೆ ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಗಮನಾರ್ಹವಾಗಿ ಕಡಿತಗೊಳಿಸಿದೆ. ಪರಿಷ್ಕರಣೆ ವೇಳೆ ಒಟ್ಟು 73.73 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದ್ದು, ಕರಡು ಪಟ್ಟಿಯಲ್ಲಿದ್ದ ಮತದಾರರ ಸಂಖ್ಯೆ 5.08 ಕೋಟಿಯಿಂದ 4.34 ಕೋಟಿಗೆ ಇಳಿಕೆಯಾಗಿದೆ. ತೆಗೆದುಹಾಕಲಾದ 73,73,327 ಮತದಾರರಲ್ಲಿ 18,07,278 ಜನರು ಸಾವನ್ನಪ್ಪಿದ್ದಾರೆ, 9,69,662 ಜನರು ಗೈರುಹಾಜರಾಗಿದ್ದಾರೆ, 40,25,553 ಜನರು ಗುಜರಾತ್ನಿಂದ ವಲಸೆ ಹೋಗಿದ್ದಾರೆ, 3,81,470 ಜನರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದಲ್ಲದೆ 1,89,364 ಮತದಾರರನ್ನು ಇತರ ಕಾರಣಗಳಿಗೆ ಅಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏನಿದು ಫಾರ್ಮ್–7? ಮರಣ, ಡ್ಯುಪ್ಲಿಕೇಷನ್ ಅಥವಾ ನಿವಾಸ ಸ್ಥಳಾಂತರದಂತಹ ನಿರ್ದಿಷ್ಟ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಇನ್ನೊಬ್ಬ ವ್ಯಕ್ತಿಯ ಅಥವಾ ಸ್ವಂತ ಹೆಸರನ್ನು ಸೇರಿಸುವುದನ್ನು ಆಕ್ಷೇಪಿಸಲು ಫಾರ್ಮ್–7 ಅನ್ನು ಬಳಸಲಾಗುತ್ತದೆ. ವಯಸ್ಸು, ಪೌರತ್ವ ಅಥವಾ ತಪ್ಪು ಪ್ರಾತಿನಿಧ್ಯದಿಂದಾಗಿ ಅನರ್ಹರಾಗಿರುವ ಮತದಾರರನ್ನು ಆಕ್ಷೇಪಿಸಲು ಸಹ ಇದನ್ನು ಬಳಸಬಹುದು. 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ರೂಪಿಸಲಾದ 1960ರ ಮತದಾರರ ನೋಂದಣಿ ನಿಯಮಗಳ ಸೆಕ್ಷನ್ 13(2) ಪ್ರಕಾರ, ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಪ್ರತಿಯೊಂದು ಆಕ್ಷೇಪಣೆಯೂ ಫಾರ್ಮ್–7 ರಲ್ಲಿರಬೇಕು ಹಾಗೂ ಆ ಪಟ್ಟಿಯಲ್ಲಿ ಈಗಾಗಲೇ ಹೆಸರು ಹೊಂದಿರುವ ವ್ಯಕ್ತಿಯೇ ಅದನ್ನು ಸಲ್ಲಿಸಬೇಕು. ಬೂತ್ ಮಟ್ಟದ ಅಧಿಕಾರಿಗಳು (BLO) ಸಹ ಆಕ್ಷೇಪಣೆ ಸಲ್ಲಿಸಬಹುದು. 2022ರಲ್ಲಿ ಚುನಾವಣಾ ಆಯೋಗವು ಕ್ಷೇತ್ರದ ಯಾವುದೇ ಮತದಾರರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಫಾರ್ಮ್–7 ಅನ್ನು ತಿದ್ದುಪಡಿ ಮಾಡಿತ್ತು. ಆದರೆ ದುರುಪಯೋಗವನ್ನು ತಡೆಯಲು ಒಬ್ಬ ವ್ಯಕ್ತಿ ಐದಕ್ಕಿಂತ ಹೆಚ್ಚು ಆಕ್ಷೇಪಣೆ ಸಲ್ಲಿಸಿದರೆ ಚುನಾವಣಾ ನೋಂದಣಿ ಅಧಿಕಾರಿ ಕಡ್ಡಾಯ ಪರಿಶೀಲನೆ ನಡೆಸಬೇಕು. ಫಾರ್ಮ್–7 ಅರ್ಜಿಯನ್ನು ಸ್ವೀಕರಿಸಿದ ನಂತರ BLO ಮತದಾರರ ವಿಳಾಸ ಮತ್ತು ಅರ್ಹತೆಯ ಭೌತಿಕ ಪರಿಶೀಲನೆ ನಡೆಸಬೇಕು. ವ್ಯಕ್ತಿ ಮೃತರಾಗಿದ್ದರೆ ಮೂವರು ನೆರೆಹೊರೆಯವರ ದೃಢೀಕರಣ ಸಹಿ ಹಾಗೂ ಮರಣ ಪ್ರಮಾಣಪತ್ರ ಅಗತ್ಯ. ಮತದಾರ ಗೈರುಹಾಜರಾಗಿದ್ದರೆ ವ್ಯಕ್ತಿ ಸ್ಥಳಾಂತರಗೊಂಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಮೂರು ಭೌತಿಕ ಭೇಟಿಗಳು ಅಗತ್ಯ. ನಂತರ ಸಂಬಂಧಪಟ್ಟ ಮತದಾರರಿಗೆ ವಿಚಾರಣೆಗಾಗಿ ನೋಟಿಸ್ ನೀಡಲಾಗುತ್ತದೆ. ನವೀಕರಿಸಿದ ಪಟ್ಟಿಯ ಪ್ರಕಟಣೆಯ 15 ದಿನಗಳೊಳಗೆ ಚುನಾವಣಾ ನೋಂದಣಿ ಅಧಿಕಾರಿಯ ನಿರ್ಧಾರದ ವಿರುದ್ಧ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಮೇಲ್ಮನವಿ ಸಲ್ಲಿಸಬಹುದು. ಪ್ರಸ್ತುತ ನಡೆಯುತ್ತಿರುವ SIR ನಲ್ಲಿ ಏನೆಲ್ಲಾ ಆಗಿದೆ? ಚುನಾವಣಾ ಆಯೋಗದ ಪ್ರಕಾರ SIR ಎರಡನೇ ಹಂತ ಆರಂಭವಾದ ಬಳಿಕ 50.94 ಕೋಟಿಗೂ ಹೆಚ್ಚು ಎಣಿಕೆ ನಮೂನೆಗಳನ್ನು ವಿತರಿಸಲಾಗಿದೆ. ಈ ಹಂತದಲ್ಲಿ ಸೇರಿಸಲಾದ ಸುಮಾರು 51 ಕೋಟಿ ಮತದಾರರಲ್ಲಿ 99.94% ಜನರನ್ನು ಇದು ಒಳಗೊಂಡಿದೆ. ಎಸ್ಐಆರ್ ಪ್ರಸ್ತುತ ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪುದುಚೇರಿ, ಅಂಡಮಾನ್–ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಗಳಲ್ಲಿ ನಡೆಯುತ್ತಿದೆ. ಚುನಾವಣಾ ಆಯೋಗ ಪ್ರಕಟಿಸಿದ ಕರಡು ಪಟ್ಟಿಯ ಪ್ರಕಾರ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಕರಡು ಪಟ್ಟಿಯಿಂದ 6.5 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಪರಿಷ್ಕರಣೆಗೆ ಮೊದಲು 51 ಕೋಟಿ ಮತದಾರರಿದ್ದು, ಕರಡು ಪಟ್ಟಿಯ ನಂತರ ಈ ಸಂಖ್ಯೆ 44.4 ಕೋಟಿಗೆ ಇಳಿಕೆಯಾಗಿದೆ. ತೆಗೆದುಹಾಕಲಾದ ಹೆಸರುಗಳನ್ನು ‘ASD’ ವರ್ಗದಲ್ಲಿ — ಗೈರುಹಾಜರಿ (Absent), ಸ್ಥಳಾಂತರ (Shifted) ಮತ್ತು ಮೃತ/ನಕಲು (Dead/Duplicate) ಎಂದು ವರ್ಗೀಕರಿಸಲಾಗಿದೆ. ಉತ್ತರ ಪ್ರದೇಶದಲ್ಲಿ 2.89 ಕೋಟಿ, ತಮಿಳುನಾಡಿನಲ್ಲಿ 97 ಲಕ್ಷ ಮತ್ತು ಗುಜರಾತ್ನಲ್ಲಿ 74 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ವರದಿಯಾಗಿದೆ.
ಕೋಟೆಕಾರ್: ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ
ಮಂಗಳೂರು : ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇದರ ಸ್ಕೂಲ್ ಆಫ್ ಬಿಸಿನೆಸ್ ಆಂಡ್ ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗವು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಮಂಗಳವಾರ ಕೊಟೇಕಾರ್ನ ಎಐಎಂಐಟಿ ಕ್ಯಾಂಪಸ್ನ ಆರ್ಥರ್ ಶೆನಾಯ್ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕೆಸಿಸಿಐ ಅಧ್ಯಕ್ಷ ಪಿ. ಬಿ. ಅಹ್ಮದ್ ಮುದಸ್ಸರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು. ಎಐಎಂಐಟಿ ನಿರ್ದೇಶಕ ಡಾ. ಕಿರಣ್ ಕೊಥಾ ಎಸ್.ಜೆ. ಅವರು ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ. ರಜನಿ ಸುರೇಶ್ ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿರು. ಸಾಂತಾ ಕ್ಲಾರಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದ ಸಂಯೋಜನೆಯಲ್ಲಿ ಡಾ. ಸ್ವಪ್ನಾ ರೋಸ್ ಪ್ರಮುಖ ಪಾತ್ರ ವಹಿಸಿದ್ದರು. ವಿದ್ಯಾರ್ಥಿ ಸಂಯೋಜಕ ರಿಯೋನಾ ತೆರೇಸಾ ತ್ರಿಂದಾದೆ ಸ್ವಾಗತಿಸಿದರು, ಜಿಲ್ಸನ್ ಹ್ಯಾನ್ಸನ್ ಮಚಾದೊ ವಂದಿಸಿದರು. ರೆನಿಶಾ ಲೋಬೊ ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಿಕ ಗೋಷ್ಠಿಗಳಲ್ಲಿ ಉದ್ಯಮಿ ಪ್ರೀತಿ ನಾಯಕ್, ಕೆವಿಪಿ ಬಿಸಿನೆಸ್ ಸೊಲ್ಯೂಷನ್ಸ್ನ ಅಜಯ್ ಪ್ರಭು ಹಾಗೂ ರೋಹನ್ ಕಾರ್ಪೊರೇಶನ್ ನಿರ್ದೇಶಕ ಡಿಯೋನ್ ಮೊಂತೇರೊ ಪಯಣದ ಸ್ಫೂರ್ತಿದಾಯಕ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ‘ಮೆಂಟರ್ಪಿಚ್’ ಸಂವಾದದಲ್ಲಿ ವಾತಿಕಾ ಪೈ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಉದ್ಯಮಿಗಳಾದ ಥೋಬಿಸ್ಮನ್ ಥಾಮಸ್,ಜೋಯಲ್ ಪಿಂಟೊ,ಐಶ್ವರ್ಯ ಫ್ರಾನ್ಸಿಸ್, ಮನೋಜ್ ಕುಮಾರ್, ಗ್ವೆನ್ ಡಿಸೋಜ,ಮುಹಮ್ಮದ್ ತೈಸೀರ್ ಮತ್ತು ಆಕಾಶ್ ಎಂ.ಜೆ. ತಮ್ಮ ಉದ್ಯಮ ಯೋಜನೆಗಳನ್ನು ಮಂಡಿಸಿದರು. ಬೆಳಗ್ಗಿನ ಸಂಜೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮ ಮುಖಂಡರು, ಅಧ್ಯಾಪಕರು ಹಾಗೂ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು.
ಫೆ.12ರಂದು ದ.ಕ.ಜಿಲ್ಲಾದ್ಯಂತ ರಸ್ತೆತಡೆ, ಪ್ರತಿಭಟನಾ ಸಭೆ: ಸಿಐಟಿಯು
ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ
ಪೂರ್ವ - ಪಶ್ಚಿಮ ಕರಾವಳಿ ಸಂಪರ್ಕಿಸುವ ಕೈಗಾರಿಕಾ ಕಾರಿಡಾರ್ಗೆ ರಾಜ್ಯಸಭೆಯಲ್ಲಿ ಒತ್ತಾಯಿಸಿದ ಎಚ್ಡಿ ದೇವೇಗೌಡ
ಹೈದರಾಬಾದ್ - ಬೆಂಗಳೂರು, ಚೆನ್ನೈ - ಬೆಂಗಳೂರು ಕೈಗಾರಿಕಾ ಕಾರಿಡಾರ್ ಅನ್ನು ಮಂಗಳೂರಿನವರೆಗೂ ವಿಸ್ತರಣೆ ಮಾಡುವಂತೆ ರಾಜ್ಯಸಭೆಯಲ್ಲಿ ಎಚ್ಡಿ ದೇವೇಗೌಡ ಒತ್ತಾಯಿಸಿದ್ದಾರೆ. ಈ ಕಾರಿಡಾರ್ ನಿರ್ಮಾಣವಾದರೆ ಪೂರ್ವ - ಪಶ್ಚಿಮ ಕರಾವಳಿ ಸಂಪರ್ಕಿಸಿ ಉದ್ಯಮ ಕ್ಷೇತ್ರ ಹಾಗೂ ರಾಜ್ಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.
ಬಿಜೆಪಿ ನಾಯಕನಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನದ ಸೌಲಭ್ಯ ಹಿಂಪಡೆದ ಸರಕಾರ
ಬೆಂಗಳೂರು: ಬಿಜೆಪಿ ನಾಯಕ ಹಾಗೂ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ.ಬಿ.ಡಿ.ಭೂಕಾಂತ್ ಅವರಿಗೆ ರಾಜ್ಯ ಸರಕಾರ ಕಲ್ಪಿಸಿದ್ದ ರಾಜ್ಯ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವ ಸೌಲಭ್ಯವನ್ನು ಹಿಂಪಡೆದು ಆದೇಶಿಸಲಾಗಿದೆ. ರಾಜ್ಯ ಸರಕಾರವು ಇತ್ತೀಚೆಗಷ್ಟೇ 54 ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವ ಸೌಲಭ್ಯಗಳನ್ನು ಒದಗಿಸಿ ಹೊರಡಿಸಿತ್ತು. ಇದರಲ್ಲಿ, ಶಿವಮೊಗ್ಗ ಜಿಲ್ಲೆಯ ಬಿಜೆಪಿ ನಾಯಕ ಡಾ.ಬಿ.ಡಿ.ಭೂಕಾಂತ್ ಹೆಸರು ಕಾಣಿಸಿಕೊಂಡಿದ್ದು, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಭೂಕಾಂತ್ ಕಾಂಗ್ರೆಸ್ ಪಕ್ಷದವರಲ್ಲ. ಅವರು ಸರಕಾರದ ಯಾವುದೆ ನಿಗಮ, ಮಂಡಳಿಗೆ ಅಧ್ಯಕ್ಷರಲ್ಲ. ಬದಲಾಗಿ, ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಕ್ಕೆ ಅಧ್ಯಕ್ಷರಾಗಿದ್ದಾರೆ. ಮತ್ತೆ ಯಾವ ಕಾರಣಕ್ಕೆ ಅವರಿಗೆ ರಾಜ್ಯ ಸಚಿವ ಸ್ಥಾನಮಾನದ ಸೌಲಭ್ಯ ಕಲ್ಪಿಸಲಾಯಿತು ಎಂದು ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೇರಿದಂತೆ ಪ್ರಮುಖ ನಾಯಕರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೆ, ರಾಜ್ಯ ಸರಕಾರವು ಭೂಕಾಂತ್ ಅವರಿಗೆ ನೀಡಿದ್ದ ಸೌಲಭ್ಯವನ್ನು ಹಿಂಪಡೆದು ಆದೇಶ ಹೊರಡಿಸಿದೆ.
AI: ಭಾರತಕ್ಕೆ ಎಐ ಬೆದರಿಕೆ, ಅವಕಾಶಗಳು ಎರಡನ್ನೂ ತರುತ್ತಿವೆ: ರಾಹುಲ್ ಗಾಂಧಿ
AI: ವಿಶ್ವವೇ ಈಗ ಕೃತಕ ಬುದ್ಧಿಮತ್ತೆಯ ಚರ್ಚೆಯ ವಿಷಯದಲ್ಲಿ ಮಗ್ನವಾಗಿದೆ. ಇದೀಗ ಎಐಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ವೊಂದನ್ನು ಮಾಡಿದ್ದಾರೆ. AI ಕ್ರಾಂತಿ ಇಲ್ಲಿದೆ - ಬೆದರಿಕೆಗಳು ಮತ್ತು ಅವಕಾಶಗಳು ಎರಡನ್ನೂ ತರುತ್ತಿವೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಸಾಲಿಗ್ರಾಮ: ಏಕಬಳಕೆ ಪಾಸ್ಟಿಕ್ ವಸ್ತುಗಳ ಬಳಕೆ, ಮಾರಾಟ ನಿಷೇಧ
ಉಡುಪಿ, ಫೆ.11: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ, ಸರಕಾರದ ಆದೇಶದಂತೆ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ, ಮಾರಾಟ, ಸಂಗ್ರಹಣೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಹಾಗೂ ಉದ್ದಿಮೆದಾರರು ಈ ಆದೇಶವನ್ನು ಪಾಲಿಸ ಬೇಕು. ತಪ್ಪಿದ್ದಲ್ಲಿ ನಿಗದಿತ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸಮಾರಂಭಗಳ ತ್ಯಾಜ್ಯ ವಿಲೇವಾರಿ: ಪೂರ್ವಾನುಮತಿ ಕಡ್ಡಾಯ
ಉಡುಪಿ, ಫೆ.11: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ದಿನನಿತ್ಯದ ತ್ಯಾಜ್ಯ ಹೊರತು ಪಡಿಸಿ ಸಾರ್ವಜ ನಿಕ ಸಭೆ, ಸಮಾರಂಭ, ಗೃಹ ಪ್ರವೇಶ, ಮದುವೆ, ಕ್ರೀಡಾಕೂಟ ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮ ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಗೆ ಮುಂಚಿತ ವಾಗಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸುವಂತೆ ಹಾಗೂ ಕಾರ್ಯಕ್ರಮಗಳಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ವಿಚಾರ | ಮುಂಜಾಗ್ರತೆ ಪರಿಶೀಲಿಸಿ ಐಪಿಎಲ್ಗೆ ಅನುಮತಿ : ಡಾ.ಜಿ.ಪರಮೇಶ್ವರ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು ವಿಚಾರ ಸಂಬಂಧ ನಿ.ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರ ಆಯೋಗದ ವರದಿ ಆಧರಿಸಿ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತ ನ್ಯಾ. ಕುನ್ಹಾ ಸಮಿತಿಯು ನೀಡಿದ ವರದಿಯಲ್ಲಿನ ಶಿಫಾರಸುಗಳು ಅನುಷ್ಠಾನವಾಗಿದೆಯೇ ಎಂಬುದರ ಕುರಿತು ಪರಿಶೀಲಿಸಲಾಗುವುದು. ಇದಕ್ಕಾಗಿಯೇ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಅಲ್ಪಾವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದರೆ ಮಾತ್ರ ಅನುಮತಿ ನೀಡುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಅದೇ ರೀತಿ, ಕಾಲ್ತುಳಿತದಲ್ಲಿ ಅಮಾನತು ಆಗಿದ್ದ ಪೊಲೀಸ್ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಬಂದೂಕು ಹಿಡಿದು ನೃತ್ಯ ಮಾಡಿರುವ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಯಾವುದೇ ಪಕ್ಷದವರಾಗಿದ್ದರೂ ಅದು ನಂತರದ ವಿಷಯ. ಕಾನೂನು ಬಾಹಿರ ಕೃತ್ಯ ಮಾಡಿದ್ದರೆ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ, ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜು ಅವರ ಅರ್ಜಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನಿ ನಿರಾಕರಿಸಿ ಎರಡು ದಿನಗಳ ಹಿಂದೆಯಷ್ಟೇ ಆದೇಶ ನೀಡಿದೆ. ಇನ್ನು ಮುಂದೆ ಅವರನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತದೆ. ಅವರಾಗಿಯೇ ಬಂದು ಶರಣಾದರೆ ಒಳ್ಳೆಯದು ಇಲ್ಲವಾದರೆ, ಪೊಲೀಸರು ಬಂಧಿಸಿ ಕರೆ ತರುತ್ತಾರೆ ಎಂದು ಹೇಳಿದರು.
ಮಣಿಪಾಲ: ಡಿಸಿ ಕಚೇರಿ ಸಂಕೀರ್ಣದಲ್ಲಿ ಖಾದಿ ಉಡುಪುಗಳ ಮಾರಾಟ ಮಳಿಗೆ
ಉಡುಪಿ, ಫೆ.11: ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರಕಾರಿ ನೌಕರರು ಸ್ವಯಂ ಪ್ರೇರಣೆ ಯಿಂದ ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವ ಕುರಿತು ಸರಕಾರ ಹೊರಡಿಸಿರುವ ಸುತ್ತೋಲೆ ಅಂಗವಾಗಿ ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದ ಆವರಣದಲ್ಲಿ ದಾವಣಗೆರೆಯ ಶ್ರೀಭಾರತಾಂಬೆ ಮಹಿಳಾ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಂಘ ತಯಾರಿಸಿದ ಖಾದಿ ಉಡುಪುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ. ಈ ಮಳಿಗೆಗೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಭೇಟಿ ನೀಡಿ, ಪ್ರದರ್ಶಿಸಲ್ಪಟ್ಟ ಉಡುಪುಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ವಿದ್ಯಾ, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಯು.ಆನಂದ ಜತ್ತನ್, ಕಾರ್ಯದರ್ಶಿ ನಿರ್ಮಲಾ ಮತ್ತಿತರರು ಉಪಸ್ಥಿತರಿದ್ದರು.
ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿಗಾ ವಹಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ
ಮಂಗಳೂರು: ಬದುಕು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಂಡು ಅರಿವು ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ನಿರ್ದೇಶನ ನೀಡಿದರು. ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಡೆ ಕಾಯ್ದೆ ತಂತ್ರ ವಿಧಾನಗಳ ಕಾಯ್ದೆ ಅನುಷ್ಠಾನದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಪಿಸಿಪಿಎನ್ಡಿಟಿ ಕಾಯ್ದೆಯನ್ನು ಉಲ್ಲಂಘಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು. ಜಿಲ್ಲೆಯ ಪ್ರತಿಯೊಂದು ಸರಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ನರ್ಸಿಂಗ್ ಹೋಮ್ಗಳಲ್ಲಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಸರಕಾರಿ ಮತ್ತು ಖಾಸಗಿ ನರ್ಸಿಂಗ್ ಹೋಮ್ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ಪಿಸಿಪಿಎನ್ಡಿಟಿ ಕಾಯ್ದೆಯಡಿ ಲಿಂಗ ಪರೀಕ್ಷೆ ಮಾಡಲಾಗುವುದಿಲ್ಲ ಮತ್ತು ಶಿಕ್ಷಾರ್ಹ ಅಪರಾಧ ಎಂದು ಸ್ಥಳೀಯ ಭಾಷೆಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು ಎಂದು ತಿಪ್ಪೆಸ್ವಾಮಿ ಸೂಚಿಸಿದರು. ಜಿಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ಕಡ್ಡಾಯವಾಗಿ ನೋಂದಾಯಿಸಿಕೊಂಡು ಫಾರ್ಮ್ ಎಫ್ನಲ್ಲಿ ದಾಖಲೆಗಳನ್ನು ನಿರ್ವಹಿಸಬೇಕು. ಗರ್ಭಪಾತ ಅಥವಾ ಲಿಂಗ ಪರೀಕ್ಷೆಗೆ ಪ್ರೇರೇಪಿಸುವ ಆಸ್ಪತ್ರೆಗಳ ವಿರುದ್ಧ ದೂರು ನೀಡುವ ಮಾಹಿತಿದಾರರಿಗೆ ಸರಕಾರದಿಂದ 1 ಲಕ್ಷ ರೂ. ನೀಡಲಾಗುತ್ತದೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಪ್ಪೆಸ್ವಾಮಿ ಹೇಳಿದರು. ಮಕ್ಕಳ ಮಾರಾಟ ಮಾಡಿದ್ದಲ್ಲಿ 2020ರ ಸೆಕ್ಷನ್ 18ರ ಪ್ರಕಾರ ದಂಡ ವಿಧಿಸಬಹುದು. ಗರ್ಭಿಣಿಯರು ಸ್ಕ್ಯಾನಿಂಗ್ಗೆ ಬರುವಾಗ ತಾಯಿ ಕಾರ್ಡ್ ಪಡೆದುಕೊಂಡಲ್ಲಿ ಮಾತ್ರ ಜನನ ಪ್ರಮಾಣ ಪತ್ರ ನೀಡುವ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಅವರು ಸೂಚಿಸಿದರು. ಪಿಸಿಪಿಎನ್ಡಿಟಿ ಕಾಯ್ದೆ ಉಲ್ಲಂಘನೆಯಡಿ ಮಾರ್ಚ್ 2025ರಿಂದ ಜನವರಿ 2026ರವರೆಗೆ 69 ನೋಟಿಸುಗಳನ್ನು ನೀಡಲಾಗಿದೆ. ದ.ಕ.ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸಂಸ್ಥೆಯನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದಾಗ ಪಿಸಿಪಿಎನ್ಡಿಟಿ ಕಾನೂನು ಮತ್ತು ಕಾಯ್ದೆ ಅನುಷ್ಠಾನ ಮಾಡುವಲ್ಲಿ ನ್ಯೂನ್ಯತೆಗಳು ಕಂಡು ಬಂದಾಗ ಅಂತಹ ಸ್ಕ್ಯಾನಿಂಗ್ ಸಂಸ್ಥೆ ಗಳಿಗೆ ನೋಟಿಸ್ ನೀಡಿ ಸರಿಪಡಿಸಲಾಗುತ್ತಿದೆ. ಫಾರ್ಮ್ ಎಫ್ ಅಕ್ರಮಗಳು ಕಂಡು ಬಂದಿರುವುದಿಲ್ಲ. ಫಾರ್ಮ್ ಎಫ್ಗಳನ್ನು ಕಾಲಕಾಲಕ್ಕೆ ಆಡಿಟ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಪಾ ಪ್ರಭು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಮಟ್ಟದಲ್ಲಿ ಪಿಸಿಪಿಎನ್ಡಿಟಿ ಕಾಯ್ದೆ ಮತ್ತು ಕಾನೂನಿನ ಕುರಿತು ಸಂಸ್ಥೆಯ ಮಾಲಕರಿಗೆ ರೇಡಿಯೋಲಜಿಸ್ಟ್, ಗೈನಕಾಲಜಿಸ್ಟ್ಗಳಿಗೆ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಆರೋಗ್ಯ ಕಾರ್ಯಕರ್ತರಿಗೆ ಪಿಸಿಪಿಎನ್ಡಿಟಿ ಕಾಯ್ದೆ ಮತ್ತು ಕಾನೂನಿನ ಕುರಿತು ಮಾಹಿತಿ ನೀಡಲಾಗುತ್ತಿದೆ. ಲಿಂಗಾನುಪಾತ ಕಡಿಮೆ ಹಾಗೂ ಹೆಚ್ಚಿರುವ ಗ್ರಾಮಗಳನ್ನು ಗುರುತಿಸಿ ಲಿಂಗಾನುಪಾತ ಕುಸಿತಕ್ಕೆ ಕಾರಣ ಕಂಡುಹಿಡಿಯಲು ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗದಿಂದ ಅಧ್ಯಯನ ನಡೆಸಲು ಕ್ರಮಕೈಗೊಳ್ಳಾಗುತ್ತಿದೆ ಎಂದು ಡಾ. ದೀಪಾ ಪ್ರಭು ಹೇಳಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ. ಅಮೃತಾ ಭಂಡಾರಿ, ಜಿಲ್ಲಾ ತಪಾಸಣಾ ಮೇಲ್ವಿಚಾರಣಾ ಸಮಿತಿಯ ಸದಸ್ಯೆ ಡಾ.ಸುಂದರಿ, ಡಾ.ಅನಿತ್ರಾಜ್, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಡಾ.ನಂಜೇಶ್ ಕುಮಾರ್, ಡಾ.ಚಿದಾನಂದ ಮೂರ್ತಿ, ವಸಂತ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.
ಪುಟ್ಬಾಲ್ ಪಂದ್ಯಾಟ| ಮಂಗಳೂರು ಯುನೈಟೆಡ್ ಹಾಗೂ ಅಝಾರಿಯಾ ತಂಡಕ್ಕೆ ಪ್ರಶಸ್ತಿ
ಮಂಗಳೂರು, ಫೆ.11: ಸುಮಾರು ಒಂದು ತಿಂಗಳ ಕಾಲ ಮಂಗಳೂರು ಸ್ಮಾರ್ಟ್ ಸಿಟಿ ಟರ್ಫ್ ಗ್ರೌಂಡ್ನಲ್ಲಿ ನಡೆದ 2025-26 ಸಾಲಿನ ಅಹ್ಮದ್ ಮಾಸ್ಟರ್ ಸ್ಮಾರಕ ಎ ಡಿವಿಷನ್ ಪಂದ್ಯಾವಳಿಯ ಪ್ರಥಮ ಪ್ರಶಸ್ತಿಯನ್ನು ಮಂಗಳೂರು ಯುನೃಟೆಡ್ ತಂಡ ಗೆದ್ದುಕೊಂಡಿತು. ಲೀಗ್ ಹಂತದಲ್ಲಿ ಆಡಿದ ಎಲ್ಲಾ 6 ಪಂದ್ಯ ಹಾಗೂ ಸೂಪರ್ ಹಂತದ 3 ಪಂದ್ಯವನ್ನು ಜಯಿಸಿದ ತಂಡ ಅಜೇಯ ರಾಗಿ ಪ್ರಶಸ್ತಿಗೆ ಭಾಜನವಾಯಿತು. ಕಳೆದ ವರ್ಷದ ಚಾಂಪಿಯನ್ ದೇರಳಕಟ್ಟೆಯ ಯೆನೆಪೋಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಈ ವೇಳೆ ನಡೆದ ಪಳ್ಳಿ ಜಯರಾಮ ಶೆಟ್ಟಿ ಸ್ಮಾರಕ ಬಿ ಡಿವಿಷನ್ ಪಂದ್ಯಾಟದಲ್ಲಿ ಮಂಗಳೂರು ಕಂದಕದ ಅಝಾರಿಯ ಫುಟ್ಬಾಲ್ ಕ್ಲಬ್ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿತು. ಲೀಗ್ ಹಂತದಲ್ಲಿ ತಾನು ಆಡಿದ 4 ಪಂದ್ಯಗಳಲ್ಲಿ 3 ಜಯ ಹಾಗೂ ಒಂದು ಡ್ರಾ ದೊಂದಿಗೆ ಒಟ್ಟು 10 ಅಂಕಗಳಿಸಿ ಸೂಪರ್ ಲೀಗ್ ಹಂತ ತಲುಪಿತ್ತು. ಸೂಪರ್ ಲೀಗ್ ಹಂತದಲ್ಲಿ 2 ಜಯ ಹಾಗೂ 1 ಸೋಲಿನೊಂದಿಗೆ 6 ಅಂಕಗಳಿಸಿ ಗೋಲ್ ವ್ಯತ್ಯಾಸದ ಆಧಾರದಲ್ಲಿ ಪ್ರಶಸ್ತಿ ಪಡೆದುಕೊಂಡಿತು. ಈ ವಿಭಾಗದಲ್ಲಿ ಮಂಗಳೂರಿನ ಕಸ್ಬಾ ಬ್ರದರ್ಸ್ ತಂಡ ದ್ವೀತೀಯ ಪ್ರಶಸ್ತಿ ಪಡೆದು ಕೊಂಡಿತು. ಈ ಎರಡೂ ತಂಡ ಮುಂದಿನ ಎ ಡಿವಿಷನ್ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿತು. *ಸಮಾರೋಪ ಕಾರ್ಯಮ್ರಮದಲ್ಲಿ ಮಾಜಿ ಫುಟ್ಬಾಲ್ ಆಟಗಾರ, ಮಂಗಳೂರು ಯುನಿವರ್ಸಿಟಿ ಹಾಕಿ ಹಾಗೂ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ ಸದ್ಯ ಆಸ್ಟೇಲಿಯಾದಲ್ಲಿ ವಾಸಿಸುವ ವೃಟಸ್ ಸಾಲ್ಡಾನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು. ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಎ.ಕೆ. ಸಾಜಿದ್, ನೋಬರ್ಟ್ ಸಾಲ್ದಾನ, ಖಾಲಿದ್ ಕಂದಕ್, ಫಯಾಝ್ ಅಥಿತಿಗಳಾಗಿ ಭಾಗವಹಿಸಿದರು. ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲ್ಲಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಫುಟ್ಬಾಲ್ ಸಂಸ್ಥೆಯ ಸದಸ್ಯ ವಿಜಯ ಸುವರ್ಣ, ದ.ಕ.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಬಿ.ಬಿ. ಥಾಮಸ್, ಖಜಾಂಚಿ ಫಿರೋಝ್ ಉಳ್ಳಾಲ, ಸದಸ್ಯರಾದ ಅನಿಲ್ ಪಿ.ವಿ, ಅಬ್ದುಲ್ ಲತೀಫ್, ಆರಿಫ್ ಉಚ್ಚಿಲ, ಉಮೇಶ್ ಉಚ್ಚಿಲ, ಅರುಣ್ ಡಿಸೋಜ, ಆನಂದ ಶೆಟ್ಟಿ, ಪಂದ್ಯಾವಳಿಯ ಸಂಚಾಲಕ ಅಷ್ಫಾಕ್, ಸದಸ್ಯರಾದ ಅಶ್ರಫ್ ಕೆ.ಎಂ, ರೆಫರಿಗಳಾದ ತಮೀಮ್ ಉಳ್ಳಾಲ, ಜಂಷೀರ್ ಮಂಜೇಶ್ವರ, ಅಝ್ಮಲ್, ಅನ್ಸಾರ್ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಹುಸೇನ್ ಬೋಳಾರ್ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡಿ: ಡಿಎಂಕೆ ಆಗ್ರಹ
ಹೊಸದಿಲ್ಲಿ, ಫೆ.10: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕೆಂದು ರಾಜ್ಯಸಭೆಯ ಡಿಎಂಕೆ ಸಂಸದ ಪಿ. ವಿಲ್ಸನ್ ಅವರು ಬುಧವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳ ಹಿತಾಸಕ್ತಿಗಳ ಸಂರಕ್ಷಣೆಯ ದೃಷ್ಟಿಯಿಂದ ಆಯೋಗದ ತನಿಖೆ ಹಾಗೂ ಅನುಷ್ಠಾನದ ಅಧಿಕಾರಗಳನ್ನು ಬಲಪಡಿಸಬೇಕೆಂದು ಅವರು ಹೇಳಿದ್ದಾರೆ. ರಾಜ್ಯಸಭಾ ಕಲಾಪದ ವೇಳೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಲ್ಸನ್ ಅವರು, ‘‘ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧದ ದಾಳಿಗಳು ಕಳವಳಕಾರಿ ರೀತಿಯಲ್ಲಿ ಉಲ್ಬಣಿಸಿರುವುದಕ್ಕೆ ಭಾರತ ಸಾಕ್ಷಿಯಾಗಿದೆ. ಗುಂಪು ಥಳಿತ, ಕ್ರೈಸ್ತ ಧರ್ಮಗುರುಗಳ ಮೇಲೆ ದಾಳಿಗಳು, ಚರ್ಚ್ಗಳು ಹಾಗೂ ಮಸೀದಿಗಳ ವ್ಯವಸ್ಥಿತ ಧ್ವಂಸ ವ್ಯಾಪಕವಾಗಿ ನಡೆಯುತ್ತಿದೆ’’ ಎಂದರು. ಕೆಲವು ರಾಜ್ಯಗಳಲ್ಲಂತೂ ಮತಾಂತರ ವಿರೋಧಿ ಕಾನೂನುಗಳ ದುರ್ಬಳಕೆ ಹೆಚ್ಚುತ್ತಿದೆ. ಅಪ್ರಾಪ್ತರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂದು ವಿಲ್ಸನ್ ಆಪಾದಿಸಿದರು. 2020ರಿಂದೀಚೆಗೆ ಮತಾಂತರ ವಿರೋಧಿ ಕಾನೂನಿನಡಿ 400 ಪ್ರಕರಣಗಳು ದಾಖಲಾಗಿದ್ದು, 1200 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಸಂಸದ ವಿಲ್ಸನ್ ಸದನದಲ್ಲಿ ಹೇಳಿದ್ದೇನು? ಸಂವಿಧಾನವು ಭರವಸೆ ನೀಡಿರುವ ಸಮಾನತೆ, ಜಾತ್ಯತೀತತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಅಂತರಾಳಕ್ಕೆ ಅವರು (ಕೋಮುವಾದಿಗಳು) ಹೊಡೆತ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಸಾಂಸ್ಥಿಕ ಸಂರಕ್ಷಣೆಯ ತುರ್ತು ಅಗತ್ಯವಿರುವ ಸಂದರ್ಭದಲ್ಲಿ ನ್ಯಾಯದ ಕಾವಲುಗಾರನಾಗಿರಬೇಕಾದ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು ಕೇವಲ ಖಾಲಿಯಾದ ಕಚೇರಿ ಕಟ್ಟಡವಾಗಿಬಿಟ್ಟಿದೆ ಎಂದರು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳು 11 ತಿಂಗಳಿಗೂ ಅಧಿಕ ಸಮಯದಿಂದ, ಅವುಗಳಲ್ಲಿ ಕೆಲವಂತೂ 3 ವರ್ಷಗಳಿಗೂ ಅಧಿಕ ಸಮಯದಿಂದ ಖಾಲಿ ಬಿದ್ದಿವೆ ಎಂದರು. ಅಲ್ಪಸಂಖ್ಯಾತರ ವಿರುದ್ಧದ ಕೋಮು ತಾರತಮ್ಯ, ಕಡೆಗಣನೆ, ಹಿಂಸಾಚಾರ ಇವೆಲ್ಲಾ ಪಿಡುಗುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವಲ್ಲಿ ಆಯೋಗವು ವಿಫಲವಾಗಿದೆ. ವಿಳಂಬವಿಲ್ಲದೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕಾಗಿದೆ.
Epstein files | ಅನಿಲ್ ಅಂಬಾನಿ ಹೆಸರಿದ್ದರೂ ಅವರೇಕೆ ಜೈಲಿನಲ್ಲಿಲ್ಲ?: ರಾಹುಲ್ ಗಾಂಧಿ
ಹೊಸದಿಲ್ಲಿ, ಫೆ.11: ಎಪ್ಸ್ಟೀನ್ ಕಡತಗಳಲ್ಲಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಹೆಸರು ಕಾಣಿಸಿಕೊಂಡಿದ್ದರೂ ಅವರೇಕೆ ಜೈಲಿನಲ್ಲಿಲ್ಲ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಸಂಸತ್ತಿನಲ್ಲಿ ಪ್ರಶ್ನಿಸಿದರು. ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ರಾಹುಲ್, ಅಂಬಾನಿಯನ್ನು ಎಪ್ಸ್ಟೀನ್ ಗೆ ಪರಿಚಯಿಸಿದವರು ಯಾರು ಎಂಬುದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ತಿಳಿದಿದೆ ಎಂದು ಪ್ರತಿಪಾದಿಸಿದರು. ಕೇಂದ್ರ ಮುಂಗಡಪತ್ರ ಕುರಿತು ಭಾಷಣದ ಬಳಿಕ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಆರೋಪಗಳನ್ನು ಪುನರುಚ್ಚರಿಸಿದರು. ಪ್ರಧಾನಿ ನರೇಂದ್ರ ಮೋದಿ ‘ನೇರ ಒತ್ತಡ’ದಡಿ ಇದ್ದಾರೆ ಎಂದರು. “ನಾನು ಡೇಟಾವನ್ನು ದೃಢೀಕರಿಸುತ್ತೇನೆ ಎಂದು ಹೇಳಿದ್ದೇನೆ. ಅಮೆರಿಕದ ನ್ಯಾಯ ಇಲಾಖೆಯು ಬಿಡುಗಡೆಗೊಳಿಸಿರುವ ಎಪ್ಸ್ಟೀನ್ ಕಡತಗಳಲ್ಲಿ ಪುರಿ ಮತ್ತು ಅಂಬಾನಿಯವರ ಹೆಸರು ಉಲ್ಲೇಖಿಸಲಾಗಿದೆ. ಅದಾನಿ ವಿರುದ್ಧ ನಡೆಯುತ್ತಿರುವ ಪ್ರಕರಣವೊಂದರಲ್ಲಿ ಸಮನ್ಸ್ ಹೊರಡಿಸಲಾಗಿದೆ. ಭಾರತ ಸರ್ಕಾರ ಕಳೆದ 18 ತಿಂಗಳುಗಳಿಂದಲೂ ಅದಕ್ಕೆ ಪ್ರತಿಕ್ರಿಯಿಸಿಲ್ಲ. ಪ್ರಧಾನಿಯವರ ಮೇಲೆ ನೇರ ಒತ್ತಡವಿದೆ. ಮುಖ್ಯ ವಿಷಯವೆಂದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ಯಾವುದೇ ಪ್ರಧಾನಿ ಇದನ್ನು ಮಾಡುವುದಿಲ್ಲ. ಡೇಟಾ, ರೈತರು, ಇಂಧನ ಭದ್ರತೆ ಮತ್ತು ರಕ್ಷಣೆಯ ವಿಷಯದಲ್ಲಿ ಈಗ ನಡೆದಿರುವುದನ್ನು ಸಾಮಾನ್ಯ ಪರಿಸ್ಥಿತಿಯಲ್ಲಿ ಯಾವುದೇ ಪ್ರಧಾನಿ ಮಾಡುವುದಿಲ್ಲ. ಏನಾದರೂ ಒತ್ತಡದಲ್ಲಿ ಸಿಲುಕಿದ್ದರೆ ಮಾತ್ರ ಯಾರಾದರೂ ಇದನ್ನು ಮಾಡುತ್ತಾರೆ,” ಎಂದು ರಾಹುಲ್ ಸುದ್ದಿಗಾರರಿಗೆ ತಿಳಿಸಿದರು. ಜ.31ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಎಪ್ಸ್ಟೀನ್ ಕಡತಗಳ ಭಾಗವೆನ್ನಲಾದ ಇಮೇಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 2017ರ ಇಸ್ರೇಲ್ ಭೇಟಿಯ ಉಲ್ಲೇಖಗಳನ್ನು ಬಲವಾಗಿ ತಳ್ಳಿಹಾಕಿದ್ದರು ಮತ್ತು ಅವು ಶಿಕ್ಷೆಗೊಳಗಾದ ಅಪರಾಧಿಯ “ಅಸಂಬದ್ಧ, ಅರ್ಥಹೀನ ವಿಚಾರಗಳು” ಎಂದು ಬಣ್ಣಿಸಿದ್ದರು. “ಎಪ್ಸ್ಟೀನ್ ಕಡತದಲ್ಲಿನ ಇಮೇಲ್ ಸಂದೇಶದಲ್ಲಿ ಪ್ರಧಾನಿ ಮತ್ತು ಅವರ ಇಸ್ರೇಲ್ ಭೇಟಿಯ ಉಲ್ಲೇಖವಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ. ಜುಲೈ 2017ರಲ್ಲಿ ಇಸ್ರೇಲ್ಗೆ ಪ್ರಧಾನಿಯವರ ಅಧಿಕೃತ ಭೇಟಿಯ ಅಂಶವೊಂದನ್ನು ಬಿಟ್ಟು ಉಳಿದ ಉಲ್ಲೇಖಗಳು ಶಿಕ್ಷೆಗೊಳಗಾದ ಅಪರಾಧಿಯ ಅಸಂಬದ್ಧ ಆಲೋಚನೆಗಳಾಗಿದ್ದು, ಅವು ಸಂಪೂರ್ಣ ತಿರಸ್ಕಾರಕ್ಕೆ ಅರ್ಹವಾಗಿವೆ,” ಎಂದು ಜೈಸ್ವಾಲ್ ಹೇಳಿದ್ದರು.
ದಾನಿಗಳ ನೆರವಿನಿಂದ 8ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ
ಬೈಂದೂರು, ಫೆ.11: ಶಿರೂರಿನಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ದಾನಿಗಳ ನೆರವಿನಿಂದ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸುವ ಮೂಲಕ ಸಮಾಜಮುಖಿ ಕಳಕಳಿಯೊಂದಿಗೆ ಸಾಮರಸ್ಯ ಬಾಂಧವ್ಯ ಮೆರೆಯ ಲಾಯಿತು. ಶಿರೂರಿನ ಮುದ್ರಮಕ್ಕಿ ಮಹಾಸತಿ ದೇವಸ್ಥಾನ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮನೆಗಳಿರುವ ಈ ಭಾಗ ದಲ್ಲಿ ಸಮರ್ಪಕ ರಸ್ತೆಗಳಿರಲಿಲ್ಲ. ರೈಲ್ವೆ ಹಳಿಯ ಪಕ್ಕದಲ್ಲಿರುವ ಕಾರಣ ತಾಂತ್ರಿಕ ಸಮಸ್ಯೆ ಮತ್ತು ಸರಕಾರದ ಅನುದಾನ ಕೂಡ ಬಳಸುವ ಅವಕಾಶ ಇರಲಿಲ್ಲ. ಕಳೆದ ಹಲವು ವರ್ಷಗಳಿಂದ ನಿರಂತರ ಪ್ರಯತ್ನದಲ್ಲಿರುವ ಇಲ್ಲಿನ ಸ್ಥಳೀಯರು ಶಿರೂರು ಅಸೋಸಿಯೇಷನ್ ಹಾಗೂ ದಾನಿಗಳ ಮೂಲಕ ಮನವಿ ನೀಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಶಿರೂರು ಅಸೋಸಿಯೇಷನ್ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ 8 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಬಹುವರ್ಷದ ಬೇಡಿಕೆ ಈಡೇರಿರುವ ಜೊತೆಗೆ ಪರಸ್ಪರ ಸಾಮರಸ್ಯದ ಬಾಂಧವ್ಯ ವೃದ್ಧಿಯಾಗಲಿದೆ. ಗುದ್ದಲಿ ಪೂಜೆ ಸಂದರ್ಭದಲ್ಲಿ ಕೃಷ್ಣ ಬಿಲ್ಲವ ದುಬೈ ಸದಸ್ಯರು ಶಿರೂರು ಅಸೋಸಿಯೇಷನ್, ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್ ಮುಹ್ಮದ್, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ, ಗ್ರಾಪಂ ಸದಸ್ಯ ಲಿಂಗಪ್ಪ ಮೇಸ್ತ, ಅರುಣ್ ಕುಮಾರ್ ಶಿರೂರು, ಎಚ್.ಎಸ್.ಸಿದ್ದಿಕ್, ರವೀಂದ್ರ ಶೆಟ್ಟಿ ಪಟೇಲ್, ಮಾಮ್ದು ಇಬ್ರಾಹಿಂ, ಇರ್ಫಾನ್, ಫಾರೂಕ್ ಮೊದಲಾದವರು ಹಾಜರಿದ್ದರು. ಅನುಮತಿಗೆ 2 ವರ್ಷದ ಪ್ರಯತ್ನ ರಸ್ತೆ ನಿರ್ಮಾಣಕ್ಕೆ ದಾನಿಗಳು ಮುಂದಾದರೂ ಕೂಡ ರೈಲ್ವೆ ಮಾರ್ಗ ಇರುವ ಕಾರಣ ಅನುಮತಿ ದೊರೆತಿರಲಿಲ್ಲ. ಹೀಗಾಗಿ ಈ ಭಾಗದ ಗ್ರಾ.ಪಂ ಸದಸ್ಯರು, ಅಸೋಸಿಯೇಷನ್ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಸ್ಥಳೀಯ ಮುಂದಾಳುಗಳು ನಿರಂತರವಾಗಿ ಎರಡು ವರ್ಷದ ಪ್ರಯತ್ನದ ಮೂಲಕ ರೈಲ್ವೆ ಇಲಾಖೆ ನಿರಪೇಕ್ಷಣಾ ಪತ್ರ ಪಡೆಯಬೇಕಾಯಿತು. ಬಳಿಕ ರೈಲ್ವೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡಿದ್ದಾರೆ.
ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾಗೆ ಸನ್ಮಾನ
ಕಾಪು, ಫೆ.11: ಬಿಗ್ಬಾಸ್ ಕನ್ನಡ ಸಿಸನ್-12 ರಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ರಕ್ಷಿತಾ ಶೆಟ್ಟಿ ಅವರನ್ನು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ರಕ್ಷಿತಾರವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕಾರದ ಪುರಂದರ ತಿಂಗಳಾಯ, ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ, ಸಿಬ್ಬಂದಿ ವೈಷ್ಣವಿ, ನದೀಮ್ ಕೆ.ಟಿ. ಉಪಸ್ಥಿತರಿದ್ದರು.
ವೈರಲ್ ವೀಡಿಯೋಗೆ ವಂದೇ ಭಾರತ್ ವೇಗದಲ್ಲಿ ತೆರಳಿದ ಬಿಜೆಪಿ ಸಚಿವರು ಎಂದ ಜನರು
ಹೈಕಾಡಿಯ ನವೀಕೃತ ಮಸೀದಿ ಉದ್ಘಾಟನೆ- ಸಾರ್ವಜನಿಕ ಸಂದರ್ಶನ
ಬ್ರಹ್ಮಾವರ, ಫೆ.11: ಬ್ರಹ್ಮಾವರ ತಾಲೂಕಿನ ಹೈಕಾಡಿಯ ನವೀಕೃತ ಮಸೀದಿಯ ಉದ್ಘಾಟನೆಯು ಇತ್ತೀಚೆಗೆ ನಡೆಯಿತು. ಮಸೀದಿಯನ್ನು ಉದ್ಘಾಟಿಸಿದ ಉಡುಪಿಯ ಸೈಮ್ ಗ್ರೂಪ್ನ ನಿರ್ದೇಶಕ ಜಿ.ಇಮ್ತಿಯಾಝ್ ಮಾತನಾಡಿ, ಜಾತಿ ಧರ್ಮಗಳ ನಡುವೆ ಉತ್ತಮ ಬಾಂಧವ್ಯ, ಸಾಮರಸ್ಯ, ಸಮುದಾಯದ ಬೆಳವಣಿಗೆಯಲ್ಲಿ ಧಾರ್ಮಿಕ ಕೇಂದ್ರವಾಗಿ ಮಸೀದಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಸಾರ್ವಜನಿಕರಿಗೆ ಮಸೀದಿ ಸಂದರ್ಶನಕ್ಕೆ ಅವಕಾಶ ಮಾಡಿಕೊಡ ಲಾಯಿತು. ಸಾರ್ವಜನಿಕ ಪ್ರವಚನ ನೀಡಿದ ಕರ್ನಾಟಕ ರಾಜ್ಯ ಜಮಾಆತೇ ಇಸ್ಲಾಮೀ ಹಿಂದ್ನ ಕಾರ್ಯದರ್ಶಿ ಅಕ್ಬರ್ ಅಲಿ ಮಾತನಾಡಿ, ಧಾರ್ಮಿಕ ಕೇಂದ್ರಗಳು ಕೇವಲ ಆರಾಧನೆಗೆ ಸೀಮಿತವಾಗಿರದೇ ಸಾಮಾಜಿಕ ಚಟುವಟಿಕೆಗಳು ನಡೆಯುವಂತಾಗಬೇಕು. ಆ ಭಾಗದ ಜನರ ಬೇಡಿಕೆಗಳನ್ನು ಈಡೇರಿಸುವ ಕೇಂದ್ರಗಳಾಗಿ ಮಾರ್ಪಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಹೈಕಾಡಿ ಜಿ.ಕೆ.ಶೆಟ್ಟಿ, ಪುರೋಹಿತ ಬಾಲಕೃಷ್ಣ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಜಮಾಆತಿನ ಹಿರಿಯ ಉಪಾಧ್ಯಕ್ಷ ಖಾಜಿ ಶಬ್ಬೀರ್ ಸಾಹೇಬ್, ಖಜಾಂಚಿ ಮೊಯಿದಿನ್ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಎಂ.ಅಸ್ಲಾಂ ಹೈಕಾಡಿ ವಹಿಸಿದ್ದರು. ವೇದಿಕೆಯಲ್ಲಿ ಆವರ್ಸೆ ಗ್ರಾಪಂ ಅಧ್ಯಕ್ಷ ದಿವಾಕರ ಗಾಣಿಗ, ಗ್ರಾಪಂನ ಉಪಾಧ್ಯಕ್ಷ ಸಮೀನ ಬಾನು, ಗ್ರಾಪಂನ ಸದಸ್ಯ ಸಂತೋಷ ಶೆಟ್ಟಿ ಕೊಣ್ಣೆಮಕ್ಕಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಎಂ.ಎ.ಮೌಲಾ, ಉಡುಪಿ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಡಾ.ಶಹನವಾಝ್, ಮೀಫ್ ಸಂಸ್ಥೆಯ ಗೌರವಾಧ್ಯಕ್ಷ ಶಬ್ಬೀ ಅಹ್ಮದ್ ಖಾಜಿ, ಉದ್ಯಮಿ ಯಾಸೀನ್ ಕೋಡಿಬೆಂಗ್ರೆ, ಕಾರ್ಯದರ್ಶಿ ಬಿ.ಜಾಫರ್ ಸಾದಿಕ್ ಮುಂತಾದವರು ಉಪಸ್ಥಿತರಿದ್ದರು. ಮೌಲಾನ ಬಿಲಾಲ್ ಕಿರಾತ್ ಪಠಿಸಿದರು. ಮುಸ್ಲಿಂ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಸಮದ್ ಸ್ವಾಗತಿಸಿದರು. ಜಮಾತ್ ಸದಸ್ಯ ಅಜ್ಮಲ್ ವಂದಿಸಿದರು. ಮಾಜಿ ಅಧ್ಯಕ್ಷ ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.
ವಂದೇ ಮಾತರಂ ಗೀತೆಗೆ ಬುನಾದಿ ಹಾಕಿದ ಪಕ್ಷ ನಮ್ಮದು: ಡಿಸಿಎಂ ಡಿ.ಕೆ. ಶಿವಕುಮಾರ್
ಹೊಸದಿಲ್ಲಿ: ವಂದೇ ಮಾತರಂ ಗೀತೆಗೆ ಬುನಾದಿ ಹಾಕಿದ ಪಕ್ಷ ನಮ್ಮದು. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು. ಈ ದೇಶದ ಸೇವೆ ಮಾಡಿದ ಪಕ್ಷ ನಮ್ಮದು. ಈಗ ಬಿಜೆಪಿ, ಬೇರೆಯವರು ನಮ್ಮನ್ನು ಅನುಸರಿಸುತ್ತಿದ್ದಾರೆ. ಅದೇ ಸಂತೋಷ ನಮಗೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಬುಧವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ರಾಷ್ಟ್ರಗೀತೆಗೆ ನೀಡುವ ಗೌರವವನ್ನು ವಂದೇ ಮಾತರಂಗೂ ನೀಡಬೇಕು ಹಾಗೂ ಇದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುವಾಗ ಪ್ರತಿಹಂತದಲ್ಲೂ ವಂದೇ ಮಾತರಂ ಗೀತೆ ಹಾಡುತ್ತೇವೆ. ನಾವು ವಂದೇ ಮಾತರಂ ಗೀತೆಗೆ ಗೌರವ ನೀಡುತ್ತೇವೆ. ಅದನ್ನು ಅನುಸರಿಸುತ್ತೇವೆ ಎಂದು ಹೇಳಿದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಹಾಡನ್ನು ರಾಜ್ಯಗೀತೆಯಾಗಿ ಕಡ್ಡಾಯ ಮಾಡಿದ್ದೇವೆ. ಅದರಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಇದೆಯಲ್ಲ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಏನೇನು ಹೇಳಬೇಕು, ಯಾವ ಧರ್ಮ ಹೇಳಬೇಕು ಎಂಬುದೆಲ್ಲ ಹೇಳಿದ್ದೇವಲ್ಲ. ಹಿಂದೂ, ಕ್ರೈಸ್ತ, ಮುಸಲ್ಮಾನ ಎಂದು ಹಾಡಿನಲ್ಲಿಯೆ ಇದೆ. ಅಂತಹ ರಾಜ್ಯ, ಭೂಮಿಯಲ್ಲಿ ಬೆಳೆದವರು ನಾವು ಎಂದು ಶಿವಕುಮಾರ್ ತಿಳಿಸಿದರು. ಈಗ ಎರಡು ರಾಷ್ಟ್ರಗೀತೆಗಳಾಗುತ್ತವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಆನಂತರ ಮಾತನಾಡೋಣ ಎಂದರು. ಸ್ವಲ್ಪ ನಿಧಾನವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಿದ್ದೇನೆ. ನಾವುಗಳು ಏನು ಮಾತನಾಡಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು ಎಂದು ಹೇಳಿದರು. ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಕಾಂಗ್ರೆಸ್ ಕಚೇರಿಗೆ ಹೋಗಿ ಬಂದಿದ್ದೇನೆ ಅಷ್ಟೇ. ಇನ್ನು ಅಸ್ಸಾಂ ಚುನಾವಣೆ ಜಂಜಾಟದಲ್ಲಿ ಇದ್ದೇನೆ. ವಿಭಿನ್ನ ರೀತಿಯಲ್ಲಿ ಬೇರೆ, ಬೇರೆ ವಿಚಾರ ಚರ್ಚೆ ಯಾಕೆ. ಇದರ ಬಗ್ಗೆ ನಾನು ಮುಂದೆ ಮಾತನಾಡುತ್ತೇನೆ. ಇದಕ್ಕೆ ಸಮಯ ಉತ್ತರ ನೀಡಲಿದೆ ಎಂದರು.
ದೇವಾಲಯಗಳು ದೇವರ ಅಸ್ತಿತ್ವದ ಪವಿತ್ರ ಸ್ಥಳ: ವಂ.ಜೆರಾಲ್ಡ್ ಲೋಬೊ
ಮಲ್ಪೆ, ಫೆ.11: ದೇವಾಲಯಗಳು ದೇವರ ಅಸ್ತಿತ್ವದ ಪವಿತ್ರ ಸ್ಥಳವಾಗಿದ್ದು ಇದರ ಪಾವಿತ್ರ್ಯತೆಯನ್ನು ಪ್ರತಿ ಯೊಬ್ಬರೂ ಕಾಪಾಡಬೇಕು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ. ತೊಟ್ಟಂ ಸಂತ ಅನ್ನಮ್ಮನವರ ಚಾಪೆಲ್ನ್ನು ಬುಧವಾರ ಉದ್ಘಾಟಿಸಿ ಆಶೀರ್ವಚನ ನೆರವೇರಿಸಿ ಪವಿತ್ರ ಬಲಿಪೂಜೆಯಲ್ಲಿ ಸಂದೇಶ ನೀಡಿದರು. ದೇವಾಲಯಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ವಿಶೇಷವಾದ ಮಹತ್ವವಿದ್ದು ದೇವರಿಗೆ ಸ್ತುತಿ ಮತ್ತು ಆರಾಧನೆ ಸಲ್ಲಿಸಲು ದೇವಾಲಯ ಸಹಕಾರಿಯಾಗುತ್ತದೆ. ಕಟ್ಟಡಗಳಿಗಿಂತಲೂ ನಮಗೆ ಅತ್ಯಾವಶ್ಯಕವಾದುದು ಆಂತರಿಕ ನಂಬಿಕೆ, ದೇವರಿಗಿರುವ ಗೌರವ ಮತ್ತು ಬಡವರನ್ನು ಗೌರವಿಸುವ ಜೀವನ ಶೈಲಿ. ಒಳಗಿನ ಭಕ್ತಿ ಇಲ್ಲದ ಹೊರಗಿನ ಆಚರಣೆಗಳಿಗೆ ಯಾವುದೇ ಅರ್ಥವಿಲ್ಲ ಎಂದರು. ಈ ದೇವಾಲಯವು ಪ್ರಾರ್ಥನೆಗೆ, ದೈವಿಕ ಅನುಭವಕ್ಕೆ ಮತ್ತು ಪರಮಾತ್ಮ ನೊಂದಿಗೆ ಸಂಪರ್ಕ ಸಾಧಿಸಲು ಒಂದು ಪವಿತ್ರ ಸ್ಥಳವಾಗಿರುತ್ತದೆ. ಕಲ್ಲಿನಿಂದ ನಿರ್ಮಿತ ಕಟ್ಟಡಗಳು ನಾಶವಾಗಬಹುದು. ಆದರೆ ನಮ್ಮೊಳಗಿನ ಜೀವಂತ ದೇವಾಲಯ ಸದಾಕಾಲ ಉಳಿಯುತ್ತದೆ ಎಂದು ಅವರು ತಿಳಿಸಿದರು. ಬಲಿಪೂಜೆಯ ಬಳಿಕ ಜಪಸರ ಪ್ರಾರ್ಥನೆ ನಡೆದು ತದನಂತರ ಕಿರು ದೇವಾಲಯದಿಂದ ಮುಖ್ಯ ದೇವಾಲಯದ ವರೆಗೆ ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಯಿತು. ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮದ ನಿರ್ವಹಣೆಯನ್ನು ವಂ.ವಿಲ್ಸನ್ ಡಿಸೋಜ ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಚಾಪೆಲ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ, ಆರ್ಕಿಟೆಕ್ಚರ್ ಹಾಗೂ ಸಹಕರಿಸಿದ ವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ, ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಅವರನ್ನು ಚರ್ಚಿನ ಪರವಾಗಿ ಗೌರವಿಸಲಾಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಕುಲಪತಿಗಳಾದ ವಂ.ಸ್ಟೀಫನ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ, ಕ್ರೈಸ್ತ ಅಭಿವೃದ್ದಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್, ಸಮನ್ವಯ ಸರ್ವಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ದಾಯ್ಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಪ್ರಮುಖ ದಾನಿ ಓಸ್ವಲ್ಡ್ ವಾಸ್, ಪೀರ್ಟ ಆಂಡ್ರೂ ಡಿಸೋಜ, ಚರ್ಚ್ ಪಾಲನಾ ಸಮಿತಿಯ 20 ಆಯೋಗಗಳ ಸಂಚಾಲಕ ಶಾಂತಿ ಫೆರ್ನಾಂಡಿಸ್, ವಾಜ್ ಕುಟುಂಬದ ಪರವಾಗಿ ಕ್ಲಿಫರ್ಡ್ ಲೀನಾ ವಾಜ್ ಮತ್ತು ಕುಟುಂಬದವರು ಉಪಸ್ಥಿತರಿದ್ದರು. ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಸ್ವಾಗತಿಸಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್ ವಂದಿಸಿದರು. ಉಪಾಧ್ಯಕ್ಷ ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.
ಮಣಿಪಾಲ: ಬಿವಿಟಿಯಲ್ಲಿ 10 ದಿನಗಳ ಹೊಲಿಗೆ ತರಬೇತಿ ಪ್ರಾರಂಭ
ಮಣಿಪಾಲ, ಫೆ.11: ಮಣಿಪಾಲ ಐಡೆಂಟಿಟಿ ಮತ್ತು ಪೇಮೆಂಟ್ ಸೆಲ್ಯೂಷನ್ಸ್, ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಇವರ ಪ್ರಾಯೋಜಕತ್ವ ದಲ್ಲಿ 10 ದಿನಗಳ ಫ್ಯಾಷನ್ ಬ್ಲೌಸ್ ಮತ್ತು ವಿನ್ಯಾಸಗಳ ತರಬೇತಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಪ್ರಾರಂಭಗೊಂಡಿದೆ. ತರಬೇತಿಯನ್ನು ಮಣಿಪಾಲ ಗ್ರೂಪ್ನ ಸೀನಿಯರ್ ಮ್ಯಾನೇಜರ್ ಹಾಗೂ ಸಿಎಸ್ಆರ್ ಟೀಂ ಲೀಡರ್ ಆದ ರೂಪಶ್ರೀ ಗಿಡಕ್ಕೆ ನೀರೆರೆಯುವ ಮೂಲಕ ಸಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತರಬೇತಿಯಲ್ಲಿ ಕೌಶಲ್ಯ ಹೆಚ್ಚಿಸಿಕೊಂಡು ಶಿಬಿರಾರ್ಥಿಗಳು ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸುವಂತೆ ಕರೆನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಮಾತನಾಡಿ, ಪ್ರತಿಯೊಬ್ಬರು ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಹಣಕಾಸಿನ ನಿರ್ವಹಣೆ ಇವುಗಳಲ್ಲಿ ಪ್ರಾಮಾಣಿಕವಾಗಿದ್ದರೆ ಜೀವನದಲ್ಲಿ ಯಶಸ್ಸನ್ನು ಹೊಂದಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ್ ಪೈ ಮಾತನಾಡಿ, ಶಿಬಿರಾರ್ಥಿಗಳು ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಸೇವೆಯನ್ನೊದಗಿಸುವ ಕೌಶಲವನ್ನು ಕರಗತ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಬಿವಿಟಿಯ ಮುಖ್ಯ ವ್ಯವಸ್ಥಾಪಕ ಮನೋಹರ ಕಟಗೇರಿ ಸ್ವಾಗತಿಸಿದರು. ಬಿವಿಟಿ ಹಣಕಾಸಿನ ವ್ಯವಸ್ಥಾಪಕ ಕೃಷ್ಣದಾದ್ ವಂದಿಸಿದರು. ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ತರಬೇತುದಾರರಾದ ಮುಕ್ತಾ ಶ್ರೀನಿವಾಸ ಭಟ್ ವೇದಿಕೆಯಲ್ಲಿ ಉಪಸ್ಥಿತ ರಿದ್ದರು. 10ದಿನಗಳ ತರಬೇತಿಯಲ್ಲಿ 25ಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದಾರೆ.
ನಿಟ್ಟೆ ವಿದ್ಯಾಸಂಸ್ಥೆ: ಪ್ರತಿಭಾವಂತ ಕ್ರೀಡಾಪಟುಗಳಿಗೆ ಉಚಿತ ಕ್ರೀಡಾ ತರಬೇತಿ, ಶಿಕ್ಷಣಕ್ಕೂ ಅವಕಾಶ
ನಿಟ್ಟೆ, ಫೆ.11: 2026-2027ನೇ ಶೈಕ್ಷಣಿಕ ಸಾಲಿನಲ್ಲಿ ನಿಟ್ಟೆ ವಿದ್ಯಾಸಂಸ್ಥೆ ಯಲ್ಲಿ ಪ್ರೌಢಶಾಲೆ(ಕನ್ನಡ ಮತ್ತು ಆಂಗ್ಲ ಮಾಧ್ಯಮ) ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾಭ್ಯಾಸವನ್ನು ಕ್ರೀಡಾಕ್ಷೇತ್ರದಲ್ಲಿ ತರಬೇತಿಯೊಂದಿಗೆ ಉಚಿತವಾಗಿ ಪಡೆಯಲು ಬಯಸುವ ಪ್ರತಿಭಾವಂತ ಕ್ರೀಡಾಪಟುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಮ್ಮ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಬಾಸ್ಕೆಟ್ಬಾಲ್, ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್, ವೈಟ್ಲಿಫ್ಟಿಂಗ್ ಮತ್ತು ಅಥ್ಲೆಟಿಕ್ನಲ್ಲಿ ವಿಶೇಷ ಸಾಧನೆ ಮಾಡಿದ ಕ್ರೀಡಾಪಟುಗಳು ತಮ್ಮ ಸಂಪೂರ್ಣ ವಿವರಗಳನ್ನು ಪ್ರಮಾಣಪತ್ರದ ಪ್ರತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಮಾರ್ಚ್ 07 ರೊಳಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ವಿಳಾಸ: ದಿ ಡೈರೆಕ್ಟರ್, ಕ್ಯಾಂಪಸ್ ಮೇಂಟೆನೆನ್ಸ್ ಆ್ಯಂಡ್ ಡೆವಲಪ್ ಮೆಂಟ್, ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್, ನಿಟ್ಟೆ ಇಲ್ಲಿಗೆ ನಿಗದಿತ ತಾರೀಕಿ ನೊಳಗೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9482132079 ಅಥವಾ 9964319830ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಒಮನ್ನಲ್ಲಿ ಅಪಘಾತಕ್ಕೆ ಕಾಪು ಯುವಕ ಬಲಿ
ಉಡುಪಿ, ಫೆ.11: ಕಳೆದ ರವಿವಾರ ಕೊಲ್ಲಿ ರಾಷ್ಟ್ರವಾದ ಒಮನ್ನಲ್ಲಿ ನಡೆದ ಅಪಘಾತವೊಂದರಲ್ಲಿ ಕಾಪು ತಾಲೂಕಿನ ಯುವಕರೊಬ್ಬರು ಮೃತ ಪಟ್ಟಿದ್ದಾರೆ. ಕಾಂಜರಕಟ್ಟೆಯ ಚೇತನ್ ಕುಲಾಲ್ (26) ಮೃತ ಯುವಕ. ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ನ 2016ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಚೇತನ್ ಕುಲಾಲ್ ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು, ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದಿದ್ದ ಚೇತನ್, ತಂಗಿಯನ್ನು ಅಗಲಿದ್ದಾರೆ. ಚೇತನ್ ಅಕಾಲಿಕ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ವಿದ್ಯಾಪೋಷಕ್ ಕುಟುಂಬ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ಗೆ ಒಪ್ಪಿಗೆ ಇಲ್ಲ: ಕೇಂದ್ರ ಅರಣ್ಯ ಪರಿಸರ ಸಚಿವ ಭೂಪೇಂದ್ರ ಯಾದವ್ ಸ್ಪಷ್ಟನೆ
ಭಾರೀ ವಿರೋಧಕ್ಕೆ ಕಾರಣವಾಗಿದ್ದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿಲ್ಲ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಸ್ಪಷ್ಟಪಡಿಸಿದ್ದಾರೆ. ಶರಾವತಿ, ಕಾವೇರಿ, ಬೇಡ್ತಿ, ಅಘನಾಶಿನಿ, ಕಾಳಿ ಕಣಿವೆಗಳ ಅರಣ್ಯ, ಜೀವವೈವಿಧ್ಯ ಅತಿ ಅಮೂಲ್ಯ. ಹೀಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವನ್ಯಜೀವಿ ಮಂಡಳಿಯಿಂದ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
ಇನ್ನು ಮುಂದೆ ʼವಂದೇ ಮಾತರಂʼನ 6 ಚರಣಗಳನ್ನು ಹಾಡುವುದು ಕಡ್ಡಾಯ; ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಲ್ಲೇನಿದೆ?
ʼವಂದೇ ಮಾತರಂʼ ಇತಿಹಾಸ ಏನು?; ಇಲ್ಲಿದೆ ಸಂಪೂರ್ಣ ಮಾಹಿತಿ...
Belagavi | ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಗಳು ಪತ್ತೆ!
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಸಮೀಪ ಮಲಪ್ರಭಾ ನದಿಯಲ್ಲಿ ಮೂರು ಬೈಕ್ಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ನದಿಯಲ್ಲಿ ಬೈಕ್ಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಬೈಲಹೊಂಗಲ ಪೊಲೀಸ್ ಠಾಣೆಯ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ನದಿ ನೀರಿನಿಂದ ಬೈಕ್ಗಳನ್ನು ಹೊರತೆಗೆದರು. KA25 G-1459, KA24 J-7907 ಎಂಬ ಸಂಖ್ಯೆಯ ಎರಡು ಬೈಕ್ ಪತ್ತೆಯಾಗಿದೆ. ಮತ್ತೊಂದು ಬೈಕ್ನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ ಎಂದು ತಿಳಿದುಬಂದಿದೆ. ದುಷ್ಕರ್ಮಿಗಳು ಸೇತುವೆ ಮೇಲಿಂದ ಬೈಕ್ಗಳನ್ನು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಬೈಕ್ಗಳನ್ನು ಕದ್ದು, ಕಳ್ಳತನ ಅಥವಾ ಇತರೆ ಅಪರಾಧ ಚಟುವಟಿಕೆಗಳಿಗೆ ಬಳಸಿಕೊಂಡು ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ನದಿಗೆ ಎಸೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ಗಳ ಮಾಲಕರ ಪತ್ತೆ ಹಾಗೂ ಪ್ರಕರಣದ ಹಿನ್ನಲೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಂಪ್ಲಿ ಉತ್ಸವಕ್ಕೆ ಸಿದ್ಧಗೊಂಡ ಕಂಪ್ಲಿ ನಗರಿ : ಮದುವಣಗಿತ್ತಿಯಂತೆ ವಿದ್ಯುತ್ ದೀಪಗಳ ಅಲಂಕಾರ
ಬಳ್ಳಾರಿ : ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎನ್ನುವ ಪ್ರತೀತಿ ಹೊಂದಿರುವ ಐತಿಹಾಸಿಕ ಕಂಪ್ಲಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಕುಮಾರ ರಾಮನ ನಾಡಿನಲ್ಲಿ ಎರಡನೇ ಬಾರಿಗೆ ಕಂಪ್ಲಿ ಉತ್ಸವದ ಸಿದ್ಧತೆಗಳು ಗರಿಗೆದರಿದ್ದು, ಕಂಪ್ಲಿ ನಗರದುದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಗಮನ ಸೆಳೆಯುವ ಜೊತೆಗೆ ಕಂಪ್ಲಿ ಉತ್ಸವಕ್ಕೆ ಮೆರಗು ನೀಡಿದೆ. ಪ್ರಾಚೀನ ಕಾಲದಲ್ಲಿ ಹಂಪಿ ಸ್ಥಾಪನೆಗೆ ಸ್ಪೂರ್ತಿಯಾಗಿದ್ದ ಕಂಪ್ಲಿಯು ಮೊದಲಿಗೆ ತಾಲೂಕು ಕೇಂದ್ರವಾಗಿತ್ತು. ನಂತರ ಹೊಸಪೇಟೆಯ ತಾಲೂಕು ವ್ಯಾಪ್ತಿಯಲ್ಲಿ ಕಂಪ್ಲಿ ಪಟ್ಟಣವಾಗಿತ್ತು. ಆದರೆ, ಈಗ ಮತ್ತೆ ಕಂಪ್ಲಿ ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದೆ. ಹಿನ್ನೆಲೆ : ತುಂಗಭದ್ರಾ ನದಿ ತೀರದಲ್ಲಿರುವ ಕಂಪ್ಲಿಗೆ ತನ್ನದೇ ಆದ ಇತಿಹಾಸವೂ ಇದೆ. 18ನೇ ಶತಮಾನದ ಆರಂಭದಲ್ಲಿ ಪ್ರಬಲ ಹಿಂದೂ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಗಂಡುಗಲಿ ಕುಮಾರರಾಮನ ವೀರಭೂಮಿ ಇದು, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸ್ಫೂರ್ತಿಯಾದ ಐತಿಹಾಸಿಕ ತಾಣ. 1327ರಲ್ಲಿ ತುಘಲಕ್ ಸೈನ್ಯದ ವಿರುದ್ಧದ ಕದನದಲ್ಲಿ ಜೌಹರ್ ಆಚರಿಸಿದ ಇತಿಹಾಸ ಹೊಂದಿದೆ. ಕುಮಾರರಾಮನು ಕಂಪ್ಲಿ ಸಾಮ್ರಾಜ್ಯದ ಅಪ್ರತಿಮ ವೀರನಾಗಿದ್ದು, ದೆಹಲಿ ಸುಲ್ತಾನರ ವಿರುದ್ಧ ಹೋರಾಡಿದ ಐತಿಹಾಸಿಕ ವ್ಯಕ್ತಿ. ಕಂಪ್ಲಿ ಸಾಮ್ರಾಜ್ಯದ ಪತನದ ನಂತರ, ಅದರ ಅವಶೇಷಗಳ ಮೇಲೆ 1336ರಲ್ಲಿ ವಿಜಯನಗರ ಸಾಮ್ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಕಂಪ್ಲಿಯಲ್ಲಿ ಸೋಮೇಶ್ವರ ದೇವಾಲಯ (ಕುಮಾರರಾಮನ ಆರಾಧ್ಯದೈವ) ಮತ್ತು ಹಂಪಿಯ ಹೇಮಕೂಟ ಬೆಟ್ಟದ ಮೇಲಿರುವ ಶಿವ ದೇವಾಲಯಗಳನ್ನು ಕಂಪ್ಲಿ ಅರಸರು ನಿರ್ಮಿಸಿದ್ದಾರೆ. ಕಂಪ್ಲಿಯು 1886ರಲ್ಲೇ ಪುರಸಭೆಯನ್ನು ಹೊಂದಿದ್ದ ಬಳ್ಳಾರಿ ಜಿಲ್ಲೆಯ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ. ಕಂಪ್ಲಿಯು ಕೇವಲ ಒಂದು ಪಟ್ಟಣವಲ್ಲದೆ, ವಿಜಯನಗರ ಸಾಮ್ರಾಜ್ಯದ ಪೂರ್ವಜ ಸಂಸ್ಕೃತಿಯನ್ನು ಪ್ರತಿನಿಧಿಸುವ, ಗಂಡುಗಲಿ ಕುಮಾರರಾಮನ ವೀರಗಾಥೆಗಳನ್ನು ಹೊತ್ತಿರುವ ಪ್ರಮುಖ ಚರಿತ್ರಿಕ ಕ್ಷೇತ್ರವಾಗಿದೆ.
ಫಲ್ಗುಣಿ ನದಿಯ ನೀರು ಕುಲುಷಿತ- ಜಲಚರಗಳ ಸಾವು; ಸಮಗ್ರ ತನಿಖೆಗೆ ನಾಗರಿಕ ಹೋರಾಟ ಸಮಿತಿ ಆಗ್ರಹ
ಮಂಗಳೂರು, ಫೆ.11: ಫಲ್ಗುಣಿ ನದಿಯ ಹಿನ್ನೀರು ಆಗಿರುವ ಕೂಳೂರು, ರಾಯಿಕಟ್ಟೆ ಹಳ್ಳದಲ್ಲಿ ನೀರು ಮಲಿನ ಗೊಂಡು ದುರ್ವಾಸನೆ ಬೀರುತ್ತಿದ್ದು, ಮೀನು, ಏಡಿ ಸಹಿತ ಜಲಚರಗಳು ಸತ್ತು ತೇಲುತ್ತಿವೆ. ಇದರಿಂದಾಗಿ ದಟ್ಟ ಜನವಸತಿ ಇರುವ ಸುತ್ತಲ ಪ್ರದೇಶದಲ್ಲಿ ಅಸಹನೀಯ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಒಂದು ವಾರದಿಂದ ಗ್ರಾಮಸ್ಥರು ಈ ಕುರಿತು ದೂರುತ್ತಿದ್ದರೂ ಯಾವುದೇ ನಿರ್ಣಾಯಕ ಕ್ರಮಗಳು ಕೈಗೊಂಡಿರುವುದಿಲ್ಲ ಎಂದು ಆರೋಪಿಸಿರುವ ಸುರತ್ಕಲ್ ನಾಗರಿಕ ಹೋರಾಟ ಸಮಿತಿ, ಜಿಲ್ಲಾಡಳಿತವನ್ನು ತನಿಖೆಗೆ ಆಗ್ರಹಿಸಿದೆ. ಪಲ್ಗುಣಿ ನದಿಯಲ್ಲಿ ಇಂತಹ ಗಂಭೀರ ಮಾಲಿನ್ಯಕ್ಕೆ ಬೈಕಂಪಾಡಿ ಕೈಗಾರಿಕಾ ವಲಯ ಸೇರಿದಂತೆ ಸುತ್ತಲಿನ ಹಲವು ಕೈಗಾರಿಕೆಗಳು ತಮ್ಮ ಘಟಕಗಳಿಂದ ಶುದ್ದೀಕರಿಸದ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಹರಿಸುತ್ತಿರುವುದು ಕಾರಣ ಎಂದೂ ಹೋರಾಟ ಸಮಿತಿ ಆರೋಪಿಸಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ನದಿ ಹಾಗು ಹಳ್ಳದಲ್ಲಿ ನೀರು ಸಹಜ ಸ್ಥಿತಿಗೆ ಬರಲು ತಕ್ಷಣದಿಂದಲೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಫಲ್ಗುಣಿ ನದಿಯಲ್ಲಿ ಮರವೂರು ಸೇತುವೆ ವರಗೆ ಹಾಗು ಅದನ್ನು ಸೇರುವ ಕೂಳೂರು ಹಳ್ಳದಲ್ಲಿ ನೀರು ಮಲಿನ ಗೊಂಡಿದೆ. ಇದರಿಂದ ಮೀನು ಸಹಿತ ಜಲಚರಗಳು ಸಾಯುತ್ತಿವೆ. ನೀರು ಕೊಳೆತು ದುರ್ಗಂಧ ಬೀರುತ್ತಿದೆ. ಈ ಕುರಿತು ಗ್ರಾಮಸ್ಥರ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, ತಣ್ಣೀರು ಬಾವಿಯಲ್ಲಿ ಸೇತುವೆ ಕಾಮಗಾರಿ ಗಾಗಿ ಸ್ಮಾರ್ಟ್ ಸಿಟಿಯವರು ನದಿಗೆ ಅಡ್ಡಲಾಗಿ ಮಣ್ಣುತುಂಬಿಸಿರುವುದರಿಂದ ನೀರಿನ ಹರಿವು ನಿಂತು ಈ ಸ್ಥಿತಿ ಉಂಟಾಗಿದೆ ಎಂಬ ಹೇಳಿಕೆ ನೀಡಿದೆ. ಸಮಸ್ಯೆ ಇದಕ್ಕಿಂತ ಗಂಭೀರ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಎಸ್ಇಝಡ್ಗೆ ತೆರಳುವ ರಸ್ತೆಯಲ್ಲಿರುವ ವಿವಿಧ ಕೈಗಾರಿಕಾ ಘಟಕಗಳ ಭಾಗದಿಂದ ಫಲ್ಗುಣಿ ನದಿಯನ್ನು ಸಂಪರ್ಕಿಸುವ ತೋಕೂರು, ಕುಡಂಬೂರು ಹಳ್ಳಕ್ಕೆ ಕೈಗಾರಿಕಾ ಮಾಲಿನ್ಯ ಸೇರುತ್ತಿದೆ. ನೀರು ಕಪ್ಪಾಗಿರುವುದು ಮೇಲ್ನೋಟಕ್ಕೇ ಗೋಚರಿಸುತ್ತಿದೆ. ಇದು ಹಲವು ವರ್ಷಗಳ ವಿದ್ಯಾಮಾನವಾಗಿದ್ದು, ಸಾಕಷ್ಟು ಬಾರಿ ಈ ಕುರಿತು ಸಾಕ್ಷ್ಯ ಸಮೇತವಾಗಿ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರುಗಳನ್ನು ನೀಡಿದ್ದರೂ ಕಠಿಣ ಕ್ರಮ ಗಳನ್ನು ಕೈಗೊಂಡಿಲ್ಲ. ಚೆನ್ನೈ ಹಸಿರು ಪೀಠ ಈ ಕುರಿತು ಸುಮೊಟೊ ದೂರುಗಳನ್ನು ದಾಖಲಿಸಿಕೊಂಡಿದ್ದು, ಹಸಿರು ಪೀಠದ ಕಣ್ಣಿಗೆ ಮಣ್ಣೆರೆಚುವ ತೋರಿಕೆಯ ಕ್ರಮಗಳನ್ನಷ್ಟೆ ಜರುಗಿಸಲಾಗುತ್ತಿದೆ. ಮಾರಕ ಮಾಲಿನ್ಯ ಹರಿಸಿ ಪಲ್ಗುಣಿ ನದಿಯನ್ನು ನಿಸ್ತೇಜಗೊಳಿಸುತ್ತಿರುವ ಕೈಗಾರಿಕೆಗಳ ಮೇಲೆ ಯಾವುದೆ ಕ್ರಮಗಳನ್ನು ಜರುಗಿಸಲಾಗಿಲ್ಲ ಎಂದು ಹೋರಾಟ ಸಮಿತಿ ಆರೋಪಿಸಿಎ. ಫಲ್ಗುಣಿ ನದಿ ಹಾಗು ಅದನ್ನು ಸೇರುವ ಶಾಖೆಗಳಲ್ಲಿ ಈ ಬಾರಿ ಗಂಭೀರವಾದ ಮಾಲಿನ್ಯಕ್ಕೆ ಕಾರಣವಾದ ಅಂಶ ಗಳನ್ನು ಪತ್ತೆ ಹಚ್ಚಿ, ತನಿಖೆ ನಡೆಸಬೇಕು. ಪರಿಸರ ನಿಯಮ ಉಲ್ಲಂಘಿಸುವ, ಅಗತ್ಯಕ್ಕೆ ತಕ್ಕುದಾದ ಶುದ್ದೀಕರಣ ಘಟಕ ಹೊಂದದ, ಪಲ್ಗುಣಿ ನದಿಗೆ ಮಾಲಿನ್ಯ ಹರಿಸುವ ಕೈಗಾರಿಕೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ನಾಗರಿಕ ಹೋರಾಟ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಎಂದಿನಂತೆ ತೇಪೆ ಹಚ್ಚುವ ಯತ್ನಗಳಿಗೆ ಸೀಮಿತಗೊಂಡಲ್ಲಿ ಸ್ಥಳೀಯರನ್ನು ಒಳಗೊಂಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮುತ್ತಿಗೆ ಸಹಿತ ತೀವ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಪ್ರಕಟನೆಯ ಮೂಲಕ ಎಚ್ಚರಿಸಿದೆ.
ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ 8 ಮಂದಿ ವಿದೇಶಿ ಪ್ರಜೆಗಳು ಪೊಲೀಸ್ ವಶಕ್ಕೆ
ಬೆಂಗಳೂರು: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದ ಮಹಿಳೆ ಸೇರಿ 8 ಮಂದಿ ವಿದೇಶಿ ಪ್ರಜೆಗಳನ್ನು ಇಲ್ಲಿನ ಸಂಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಕ್ಯಾಮರೂನ್ನ ಐವರು ಹಾಗೂ ಸುಡಾನ್ನ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಮಾರು ನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಈ ವಿದೇಶಿ ಪ್ರಜೆಗಳು, ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಈ ಹಿಂದೆ ನಗರದ ಗಡಿಭಾಗದಲ್ಲಿ ವಾಸವಾಗಿದ್ದ ಆರೋಪಿಗಳು, ಇತ್ತೀಚೆಗೆ ಸಂಜಯನಗರದ ಭೂಪಸಂದ್ರಕ್ಕೆ ಬಂದು ವಾಸವಾಗಿದ್ದರು. ಕೆಲ ದಿನಗಳಿಂದ ನಡೆಯುತ್ತಿರುವ ಅಕ್ರಮ ವಾಸಿಗಳ ಬಗ್ಗೆ ನಗರದೆಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ಈ ವೇಳೆ ಮಂಗಳವಾರ(ಫೆ.10)ದ ಕಾರ್ಯಾಚರಣೆ ವೇಳೆ ಎಂಟು ಮಂದಿ ಪತ್ತೆಯಾಗಿದ್ದು, ಎಲ್ಲರನ್ನೂ ಪ್ರಾದೇಶಿಕ ವಿದೇಶಿ ನೋಂದಣಿ ಕಚೇರಿಗೆ ಹಾಜರುಪಡಿಸಲಾಗುತ್ತದೆ. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, ಅವರ ದೇಶಕ್ಕೆ ವಾಪಸ್ ಕಳುಹಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಬರಿಮಲೆ ಚಿನ್ನದ ಧ್ವಜಸ್ತಂಭ ಪ್ರತಿಷ್ಠಾಪನೆಯಲ್ಲಿಅಕ್ರಮ; ತನಿಖೆ ಆರಂಭಿಸಿದ ರಾಜ್ಯ ವಿಜಿಲೆನ್ಸ್ ವಿಶೇಷ ತಂಡ
2017 ರಲ್ಲಿ ಹೊಸ ದೇವಾಲಯ ಧ್ವಜ ಸ್ತಂಭ ಸ್ಥಾಪನೆಗೆ ಸಂಬಂಧಿಸಿದಂತೆ ಚಿನ್ನ ಮತ್ತು ನಗದು ದುರುಪಯೋಗದ ಆರೋಪದ ಬಗ್ಗೆ ತನಿಖೆ ನಡೆಸಲು ಸಮರ್ಥ ಅಧಿಕಾರಿಗಳ ತಂಡವನ್ನು ರಚಿಸುವಂತೆ ಕೇರಳ ಹೈಕೋರ್ಟ್ ಸೋಮವಾರ (ಫೆಬ್ರವರಿ 9) ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಅದರಂತೆ ಇಂದಿನಿಂದ ವಿಜಿಲೆನ್ಸ್ ತಂಡದಿಂದ ತನಿಖೆ ಆರಂಭಿಸಲಾಗಿದೆ.
Mysore Sandal Brand: ಮೈಸೂರು ಸ್ಯಾಂಡಲ್ ಉತ್ಪನ್ನ: ನಟಿ ತಮನ್ನಾ ಭಾಟಿಯಾ ಆಯ್ಕೆಗೆ ಇದೇ ಕಾರಣ: ಸಚಿವ ಎಂ.ಬಿ ಪಾಟೀಲ್
Mysore Sandal Brand Ambassador: ಮೈಸೂರು ಸ್ಯಾಂಡಲ್ ಉತ್ಪನ್ನಗಳ ರಾಯಭಾರಿಯನ್ನಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಉತ್ಪನ್ನಗಳ ರಾಯಭಾರಿಯನ್ನಾಗಿ ಯಾಕೆ ಆಯ್ಕೆ ಎನ್ನುವ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮನ್ನಾ ಭಾಟಿಯಾ
ಯಾದಗಿರಿ | ನೂತನ ಶಾದಿಮಹಲ್ ಕಟ್ಟಡ ಉದ್ಘಾಟಿಸಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ: ಶಾಸಕನಾಗಿ ಆಯ್ಕೆಯಾದ ನಂತರ ಮತಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳ ಮಾಹಿತಿ ಪಡೆದು ಸರ್ಕಾರದ ವಿವಿಧ ಇಲಾಖೆಗಳಿಂದ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಲ್ಲ ವರ್ಗದ ಜನರಿಗೆ ಅನುಕೂಲತೆ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ನಗರದ ಜಿಲ್ಲಾ ಆಯುಷ್ ಆಸ್ಪತ್ರೆ ಹಿಂಭಾಗದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಯೋಜನೆಯಡಿ ಜಿಲ್ಲಾ ವಕ್ಸ್ ಸಲಹಾ ಸಮಿತಿ ನಿರ್ಮಿತಿ ಕೇಂದ್ರದಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನೂತನ ಶಾದಿಮಹಲ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕಾಮಗಾರಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಸರಕಾರದಿಂದ 50 ಲಕ್ಷ ರೂ. ಅನುದಾನ ಬಿಡುಗಡೆ ನಂತರ ಪೂರ್ಣಗೊಂಡಿದೆ. ಈ ಭಾಗದಲ್ಲಿರುವ ಅಲ್ಪಸಂಖ್ಯಾತ ಬಡ ಕುಟುಂಬಗಳು ಶುಭ ಕಾರ್ಯಗಳಿಗೆ ಇದರ ಲಾಭ ಪಡೆಯುವುದರ ಜತೆಗೆ ಸರಿಯಾಗಿ ನಿರ್ವಹಣೆ ಮಾಡಿ, ಸ್ವಚ್ಛತೆಗೆ ಆದ್ಯತೆ ನೀಡಿದಾಗ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಶಾದಿಮಹಲ್ ಕಟ್ಟಡಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿಕೊಡಬೇಕು ಎಂದು ಮಾಡಿರುವ ಮನವಿಗೆ ಶೀಘ್ರವೇ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಪಂಚ ಗ್ಯಾರಂಟಿಗಳ ಸೌಲಭ್ಯಗಳು ಜನರಿಗೆ ತಲುಪಿಸಲಾಗಿದೆ. ಅಲ್ಲದೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು. ಮುಸ್ಲಿಂ ಸಮಾಜದ ಕಾರ್ಯದರ್ಶಿ ಆಫೀಜ್ ಪಟೇಲ್ ಮಾತನಾಡಿ, ಶಾಸಕರ ಬಳಿಗೆ ಜನರು ನೇರವಾಗಿ ಕುಂದು ಭೇಟಿಯಾಗಿ ಕೊರತೆ ತಿಳಿಸುತ್ತಿದ್ದಾರೆ. ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಪರಿಹಾರ ಸೂಚಿಸುತ್ತಿದ್ದಾರೆ. ನಗರಕ್ಕೆ ಹೊಸ ಕಾಯಕಲ್ಪ ನೀಡುವ ಹಲವಾರು ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು. ವೇದಿಕೆ ಮೇಲೆ ಯುಡಾ ಅಧ್ಯಕ್ಷ ಬಾಬುರಾವ್ ಕಾಡೂರ್, ಅಲ್ಪಸಂಖ್ಯಾತ ಇಲಾಖೆ ಜಿಲ್ಲಾ ಅಧಿಕಾರಿ ಭಾಗ್ಯಶ್ರೀ ಕುಂಬಾರ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ನಿಲೋಫರ್ ಬಾದಲ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ, ಸಲೀಂ ಹುಂಡೇಕಾರ, ಮಹ್ಮದ್ ಅನ್ಸಾರುದ್ದೀನ್, ನಾಸೀರ್ ಅಹ್ಮದ್ ಉಪಸ್ಥಿತರಿದ್ದರು.
ಸುರಪುರ| ಗವಿಸ್ವಾಮಿ ಹತ್ಯೆ ಪ್ರಕರಣ: ಪತ್ನಿ, ಪ್ರಿಯಕರನ ಬಂಧನ
ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ನಡೆದ ಹಾಲಬಾವಿ ಗ್ರಾಮದ ಗವಿಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ನೀಲಮ್ಮ ಹಾಗೂ ಆಕೆಯ ಪ್ರಿಯಕರ ಮೌನೇಶ್ ರುಕ್ಮಾಪುರನನ್ನು ಸುರಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜನವರಿ 29ರ ರಾತ್ರಿ ಗವಿಸ್ವಾಮಿ ತನ್ನ ಪತ್ನಿ ನೀಲಮ್ಮನ ತವರು ಗ್ರಾಮವಾದ ಮಾಚಗುಂಡಾಳದ ಮನೆಗೆ ಬಂದಿದ್ದ, ಬೆಳಿಗ್ಗೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದ ಗವಿಸ್ವಾಮಿಯನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ. 7ರಂದು ಗವಿಸ್ವಾಮಿ ಮೃತಪಟ್ಟಿದ್ದಾನೆ. ಈ ಕುರಿತು ಗವಿಸ್ವಾಮಿ ಅಣ್ಣ ಬಸಯ್ಯಸ್ವಾಮಿ ಸುರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ನೀಲಮ್ಮ ಹಾಗೂ ಮೌನೇಶನನ್ನು ಬಂಧಿಸಿದ್ದಾರೆ.
ಆರೋಗ್ಯದ ನೆಲೆಯಲ್ಲಿ ಸೋನಂ ವಾಂಗ್ಚುಕ್ ಬಿಡುಗಡೆ ಮಾಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ವಿಜ್ಞಾನಿ ಹಾಗೂ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿಲ್ಲ ಎಂದು ಬುಧವಾರ ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಸೋನಂ ವಾಂಗ್ಚುಕ್ ಅವರನ್ನು ಬಂಧನವಾದ ದಿನದಿಂದ ಇದುವರೆಗೆ 24 ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರು ಆರೋಗ್ಯಕರವಾಗಿದ್ದು, ಯಾವುದೇ ಕಳವಳ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸೋನಂ ವಾಂಗ್ಚುಕ್ ಅವರ ಬಂಧನದ ಆದೇಶವನ್ನು ಯಾವ ನೆಲೆಯಲ್ಲಿ ಹೊರಡಿಸಲಾಯಿತು, ಅದು ಈಗಲೂ ಹೇಗೆ ಮುಂದುವರಿದಿದೆ ಹಾಗೂ ಆರೋಗ್ಯದ ನೆಲೆಯಲ್ಲಿ ಅವರನ್ನು ಯಾಕೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾ. ಅರವಿಂದ್ ಕುಮಾರ್ ಹಾಗೂ ನ್ಯಾ. ಪಿ.ಬಿ. ವರಾಳೆ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ವಿವರಿಸಿದರು. “ನಾವು ಅವರ ಆರೋಗ್ಯವನ್ನು ನಿಯಮಿತವಾಗಿ 24 ಬಾರಿ ಪರೀಕ್ಷಿಸಿದ್ದೇವೆ. ಅವರು ಆರೋಗ್ಯಕರವಾಗಿದ್ದಾರೆ. ಅವರಿಗೆ ಸ್ವಲ್ಪ ಜೀರ್ಣ ಸಮಸ್ಯೆ ಇತ್ತು. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾವುದೂ ಕಳವಳಕಾರಿಯಾಗಿಲ್ಲ. ನಾವು ಈ ರೀತಿಯ ವಿನಾಯಿತಿ ನೀಡಲು ಸಾಧ್ಯವಿಲ್ಲ” ಎಂದು ಅವರು ವಾದಿಸಿದರು. “ಯಾವ ನೆಲೆಯಲ್ಲಿ ಬಂಧನದ ಆದೇಶ ಹೊರಡಿಸಲಾಯಿತು, ಅದು ಮುಂದುವರಿಯಲಿದೆ. ಅವರನ್ನು ಆರೋಗ್ಯದ ನೆಲೆಯಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಅದು ಅಪೇಕ್ಷಣೀಯವೂ ಅಲ್ಲ. ನಾವು ತೀವ್ರ ಕಾಳಜಿ ವಹಿಸಿದ್ದೇವೆ” ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆ್ಯಂಗ್ಮೊ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ: ಸಾಧು ಕೋಕಿಲ, ಮಂಡ್ಯ ರಮೇಶ್ ವಿರುದ್ಧದ ಪ್ರಕರಣ ರದ್ದು
ಏನಿದು ಪ್ರಕರಣ?
ಬೀದರ್| ಹುಮನಾಬಾದ್ನಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೈಕ್ ರ್ಯಾಲಿ
ಹುಮನಾಬಾದ್ : ಫೆ.12 ರಂದು ನಡೆಯುವ ದೇಶವ್ಯಾಪಿ ಮುಷ್ಕರದ ಪೂರ್ವಭಾವಿಯಾಗಿ ಹುಮನಾಬಾದ್ ಪಟ್ಟಣದಲ್ಲಿ ಕಾರ್ಮಿಕ ಸಂಘಟನೆಗಳಿಂದ ಬುಧವಾರ ಬೈಕ್ ರ್ಯಾಲಿ ನಡೆಯಿತು. ಬೈಕ್ ರ್ಯಾಲಿಯು ಮುಂಜಾನೆ ಸುಮಾರು 11 ಗಂಟೆಗೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಮುಷ್ಕರದ ಬಗ್ಗೆ ಪ್ರಚಾರ ನಡೆಸಲಾಯಿತು. ರ್ಯಾಲಿಯಲ್ಲಿ ಕೇಂದ್ರ ಸರಕಾರದ ಧೋರಣೆ ವಿರುದ್ಧ ಘೋಷಣೆಗಳು ಕೂಗಲಾಯಿತು. ರ್ಯಾಲಿಯ ಕೊನೆಯಲ್ಲಿ ಬಸವರಾಜ್ ಮಾಳಗೆ ಅವರು ಮಾತನಾಡಿ, ಲೂಟಿ ಹೊಡೆದು ಹೊರದೇಶಕ್ಕೆ ಓಡಿ ಹೋದವರನ್ನು ಬಿಟ್ಟ ಕೇಂದ್ರ ಸರಕಾರ ಹಂತ ಹಂತವಾಗಿ ಕಾರ್ಮಿಕರಿಗೆ ತೊಂದರೆ ನೀಡುತ್ತದೆ. ಎಲ್ಲ ಕ್ಷೇತ್ರದಲ್ಲಿ ಖಾಸಗಿಕರಣ ಮಾಡುತ್ತಿದೆ. ಆದ್ದರಿಂದ ಕೂಲಿ ಕಾರ್ಮಿಕರೆಲ್ಲ ಕುಳಿತು ಅವರಿಗೆ ಎಚ್ಚರಿಸುವುದಕ್ಕಾಗಿ ಈ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಫೆ.12ರ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಭವಾನಿ ಮಂದಿರದ ಆವರಣದಲ್ಲಿ ಎಲ್ಲರೂ ಸೇರುತ್ತಿದ್ದೇವೆ. ಮುಷ್ಕರದಲ್ಲಿ ತಾಲೂಕಿನ ರೈತರು, ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ದುಡಿಯುವ ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಯಿತು. ರೇಖಾ ಅವರು ಮಾತನಾಡಿ, ಮೊದಲು ಕಾರ್ಮಿಕ ಸಂಹಿತೆಯಲ್ಲಿ 29 ಕೋಡ್ ಗಳಿದ್ದವು. ನಂತರ ಅವುಗಳನ್ನು 19 ಮಾಡಲಾಯಿತು. ಇವಾಗ ಆ ಕೋಡ್ ಗಳು 4ಕ್ಕೆ ತಂದು ನಿಲ್ಲಿಸಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು. ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಗೌಸುದ್ದಿನ್ ಅವರು ಮಾತನಾಡಿ, ಈ ದೇಶವ್ಯಾಪಿ ಮುಷ್ಕರಕ್ಕೆ ಕಾರ್ಮಿಕರು, ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಮಹಿಳೆಯರು, ಪುರುಷರು ಎಲ್ಲರೂ ಬೆಂಬಲ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ರ್ಯಾಲಿಯಲ್ಲಿ ಶಶಿಕಾಂತ್ ಡಾಂಗೆ, ಪ್ರಭು, ಸಂತೋಷ್, ರೇಷ್ಮಾ, ಜಗದೇವಿ, ಜೇಮ್ಸ್ ಹಾಗೂ ಈಶ್ವರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೈಗಾರಿಕಾ ಕಾರಿಡಾರ್; ಬೆಂಗಳೂರಿನಿಂದ ಮಂಗಳೂರಿಗೆ ವಿಸ್ತರಿಸಲು ಹೆಚ್.ಡಿ. ದೇವೇಗೌಡ ಸಲಹೆ
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿರುವ 2026-2027ನೇ ಸಾಲಿನ ಕೇಂದ್ರದ ಆಯ-ವ್ಯಯವು (Union Budget) ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರಶಂಸಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು, ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಎರಡು ಪ್ರಮುಖ ಹಾಗೂ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಬುಧವಾರ ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ
ರಾಯಚೂರು| 12 ಗಂಟೆ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
ರಾಯಚೂರು: ರೈತರಿಗೆ ನಿರಂತರವಾಗಿ 12 ಗಂಟೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಕುರಿತು ಹಾಗೂ ವಿದ್ಯುತ್ ಟ್ರಾನ್ಸ್ ಫಾರ್ಮರ್ 48ಗಂಟೆಗಳ ಒಳಗಾಗಿ ಒದಗಿಸಿಕೊಡಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ನೆಸ್ ಘಟಕದ ವತಿಯಿಂದ ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು. ರೈತರ ಜಮೀನುಗಳಿಗೆ ಸರಿಯಾದ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಟ್ರಾನ್ಸ್ ಫಾರ್ಮರ್ ಗಾಗಿ ಅರ್ಜಿ ಹಾಕಿದರೂ ವಿಳಂಬ ಮಾಡಲಾಗುತ್ತಿದೆ. 48 ಗಂಟೆಗಳ ಒಳಗೆ ಟಿಸಿ ಒದಗಿಸಿಕೊಡುವಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ರೈತರ ಹೊಲಗಳ ಮಧ್ಯಗಳಲ್ಲಿ ಕಂಬಗಳು ಬಂದಿದ್ದು, ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಸರ್ವೆ ನಡೆಸಿ ಅವುಗಳನ್ನು ಬದಿಗೆ ಅಳವಡಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಯ ಎಲ್ಲಾ ಗ್ರಾಹಕರ ಮೀಟರ್ಗಳಿಗೆ ಸೀಲ್ ಹಾಕಬೇಕು, ಯಾವುದೇ ಕಾರಣಕ್ಕೂ ಮೀಟರ್ ರೀಡರ್ ಅನ್ನು ತೆಗೆಯಬಾರದು, ಹಾಗೇನಾದರೂ ತೆಗೆದಲ್ಲಿ ಮೀಟರ್ ರೀಡರ್ ಅದನ್ನು ತನ್ನ ಸ್ವಂತ ಖರ್ಚಿನಿಂದ ಬದಲಾಯಿಸಿ ಕೊಡಬೇಕು ಎಂದು ಆದೇಶ ಹೊರಡಿಸಬೇಕು. ಆರ್.ಆರ್. ನಂಬರು ತೆಗೆದು ಹಾಕಬೇಕು. 2023ರಲ್ಲಿ ಹೊಸದಾಗಿ ನೀಡಿರುವ ಆರ್.ಆರ್.ನಂಬರಿಗೆ ಸಮಯಕ್ಕೆ ಸರಿಯಾಗಿ ಪಾವತಿಸಲಾಗುತ್ತಿದೆ. ಈಗಿರುವ ಆರ್.ಆರ್. ನಂಬರ್ ಸಂಪರ್ಕ ಕಡಿತಗೊಳಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದು ಇದನ್ನು ತಕ್ಷಣವೇ ಬಗೆಹರಿಸಬೇಕು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಬಿಚ್ಚಾಲಿ, ನರಸಿಂಗ್ ರಾವ್ ಕುಲಕರ್ಣಿ, ನರಸಪ್ರ ಹೊಕ್ರಾಣಿ, ಜಿಲ್ಲಾ ಗೌರವಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಕಾರ್ಯಾಧ್ಯಕ್ಷ ಕೆ.ವೀರೇಶ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗೆ ರೈತ ಸಂಘಟನೆಗಳು ಕರೆ ನೀಡಿದ್ದೇಕೆ?
ಕಳೆದ ವಾರ ಸಹಿ ಹಾಕಲಾದ ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (SKM) ಸೇರಿದಂತೆ ವಿವಿಧ ರೈತ ಸಂಘಗಳು ಗುರುವಾರ (ಫೆಬ್ರವರಿ 12)ರಂದು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿವೆ. ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದವು ಭಾರತೀಯ ಕೃಷಿ, ಹೈನುಗಾರಿಕೆ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ನೇರ ಬೆದರಿಕೆಯಾಗಿದೆ ಎಂದು ರೈತರ ಒಕ್ಕೂಟ ಹೇಳಿದೆ. ಭಾರತೀಯ ಮಾರುಕಟ್ಟೆಗಳನ್ನು ಅಮೆರಿಕದ ಕೃಷಿ ಉತ್ಪನ್ನಗಳಿಗೆ ತೆರೆಯಲಾಗುವುದರಿಂದ, ಭಾರತೀಯ ರೈತರ ವೆಚ್ಚದಲ್ಲಿ ಅಮೆರಿಕದ ಕೃಷಿ ವ್ಯವಹಾರ ನಿಗಮಗಳಿಗೆ ಲಾಭವಾಗುತ್ತದೆ ಎಂದು ರೈತರು ಹೇಳಿದ್ದಾರೆ. ಭಾರತವು ಅಮೆರಿಕದ ಎಲ್ಲ ಕೈಗಾರಿಕಾ ಸರಕುಗಳು ಹಾಗೂ ವ್ಯಾಪಕ ಶ್ರೇಣಿಯ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ಚೌಕಟ್ಟು ಹೇಳುತ್ತದೆ. ಇವುಗಳಲ್ಲಿ ಪಶು ಆಹಾರವಾಗಿ ಬಳಸುವ ಎಥೆನಾಲ್ ಉತ್ಪಾದನೆಯ ಉಪಉತ್ಪನ್ನವಾದ ಒಣ ಡಿಸ್ಟಿಲರ್ಗಳ ಧಾನ್ಯಗಳು (DDGs), ಪಶು ಆಹಾರವಾಗಿ ಬಳಸುವ ಕೆಂಪು ಜೋಳ, ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಗಳು ಸೇರಿವೆ. ಕೃಷಿ ಮತ್ತು ಹೈನುಗಾರಿಕೆಯನ್ನು ಮುಕ್ತ ವ್ಯಾಪಾರ ಒಪ್ಪಂದಗಳ (FTA) ಹೊರಗೆ ಇಡಲಾಗುವುದು ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಪದೇ ಪದೇ ನೀಡಿದ ಭರವಸೆಗಳಿಗೆ ಈ ಚೌಕಟ್ಟು ನೇರ ವಿರುದ್ಧವಾಗಿದೆ ಎಂದು ರೈತ ಸಂಘಗಳು ವಾದಿಸುತ್ತವೆ. ನ್ಯೂಝಿಲೆಂಡ್, ಯುರೋಪಿಯನ್ ಒಕ್ಕೂಟ (EU) ಮತ್ತು ಯುಕೆ ಜೊತೆ ಸಹಿ ಹಾಕಲಾದ ಇತರ ಇತ್ತೀಚಿನ ಮುಕ್ತ ವ್ಯಾಪಾರ ಒಪ್ಪಂದಗಳ ನಿಬಂಧನೆಗಳನ್ನೂ ರೈತ ಸಂಘಗಳು ಸೂಚಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ಸುಂಕಗಳನ್ನು ಪರಿಚಯಿಸುವ ಮೊದಲು ಇದ್ದ ಅವಧಿಗೆ ಹೋಲಿಸಿದರೆ, ಅಮೆರಿಕಕ್ಕೆ ಪ್ರವೇಶಿಸುವ ಭಾರತೀಯ ಸರಕುಗಳ ಮೇಲಿನ ಸುಂಕಗಳು 18% ಕ್ಕೆ ಏರಿವೆ. ಹೆಚ್ಚುವರಿಯಾಗಿ, ಈ ಹಿಂದೆ 30 ರಿಂದ 150% ರಷ್ಟಿದ್ದ ಅಮೆರಿಕದ ಕೃಷಿ ಉತ್ಪನ್ನಗಳ ಮೇಲಿನ ಭಾರತದ ಸುಂಕಗಳನ್ನು ಶೂನ್ಯಕ್ಕೆ ಇಳಿಸಲಾಗುತ್ತಿದೆ. ಅಂತಹ ವ್ಯವಸ್ಥೆ ಅಸಮಾನವಾಗಿದೆ ಎಂದು ರೈತರು ವಾದಿಸುತ್ತಾರೆ. ಭಾರತೀಯ ರೈತರಲ್ಲಿ ಶೇ. 86 ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಾಗಿರುವುದರಿಂದ (ಕ್ರಮವಾಗಿ ಒಂದರಿಂದ ಎರಡು ಹೆಕ್ಟೇರ್ಗಿಂತ ಕಡಿಮೆ ಹಾಗೂ ಒಂದು ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವವರು), ಅವರಿಗೆ ಇದು ತೊಂದರೆಯನ್ನುಂಟು ಮಾಡುತ್ತದೆ. ಈ ಒಪ್ಪಂದವು ಭಾರತವು ತನ್ನ ಆಹಾರಕ್ಕಾಗಿ ವಿದೇಶಿ ಕಂಪನಿಗಳ ಮೇಲೆ ಅವಲಂಬಿತವಾಗುವಂತೆ ಮಾಡಬಹುದು, ಇದರಿಂದ ಸ್ಥಳೀಯ ರೈತರು ಮತ್ತು ಪರಿಸರಕ್ಕೆ ಹಾನಿಯಾಗಬಹುದು ಎಂದು SKM ನ ರಾಷ್ಟ್ರೀಯ ಸಮನ್ವಯ ಸಮಿತಿ ಸದಸ್ಯ ಡಾ. ದರ್ಶನ್ ಪಾಲ್ ಹೇಳಿದ್ದಾರೆ. ಡೈರಿ, ಪಶು ಆಹಾರ ಮತ್ತು GM ಬೆಳೆಗಳ ಬಗ್ಗೆ ಕಳವಳ ರೈತರು ಎತ್ತಿರುವ ಪ್ರಮುಖ ಕಾಳಜಿಗಳಲ್ಲಿ ಒಂದು ಸುಂಕ ರಹಿತ ಅಡೆತಡೆಗಳನ್ನು ಕಡಿಮೆ ಮಾಡುವುದು. ಇದು ಅಮೆರಿಕದ ಹಾಲು ಮತ್ತು ಡೈರಿ ಉತ್ಪನ್ನಗಳ ಆಮದುಗಳನ್ನು ಸುಗಮಗೊಳಿಸುತ್ತದೆ. “ಮಾಂಸ ಮತ್ತು ಪ್ರಾಣಿಗಳ ಉಪಉತ್ಪನ್ನಗಳಿಂದ ಪೋಷಿಸುವ ಪ್ರಾಣಿಗಳಿಂದ ಪಡೆಯುವ ಹಾಲಿನ ಮೇಲಿನ ಹಿಂದಿನ ನಿರ್ಬಂಧಗಳು ಸುರಕ್ಷತಾ ಕ್ರಮಗಳಾಗಿ ಕಾರ್ಯನಿರ್ವಹಿಸಿದ್ದವು. ಈ ರಕ್ಷಣೆಗಳನ್ನು ಈಗ ದುರ್ಬಲಗೊಳಿಸಲಾಗುತ್ತಿದೆ. ಇದು ಲಕ್ಷಾಂತರ ಗ್ರಾಮೀಣ ಕುಟುಂಬಗಳನ್ನು ಬೆಂಬಲಿಸುವ ಭಾರತದ ವಿಶಾಲ ಡೈರಿ ವಲಯಕ್ಕೆ ನೇರ ಬೆದರಿಕೆಯನ್ನು ಒಡ್ಡುತ್ತದೆ” ಎಂದು ಪಾಲ್ ಹೇಳಿದ್ದಾರೆ. ಭಾರತೀಯ ಕೋಳಿ, ಡೈರಿ ಮತ್ತು ಜಲಚರ ಉದ್ಯಮಗಳ ಕೆಲವರು ಅಗ್ಗದ ಮತ್ತು ಬಹುಶಃ ಉತ್ತಮ ಗುಣಮಟ್ಟದ ಪಶುಸಂಗೋಪನೆಯಲ್ಲಿ ಬಳಸುವ ಸಾಲ್ಯೂಬಲ್ಸ್ ಜೊತೆಗೆ ಒಣಗಿದ ಧಾನ್ಯಗಳ (DDGS) ಹೆಚ್ಚಿದ ಲಭ್ಯತೆಯಿಂದ ಭಾರತವು ಪ್ರಯೋಜನ ಪಡೆಯಬಹುದು ಎಂದು ಹೇಳುತ್ತಾರೆ. ವರದಿಗಳ ಪ್ರಕಾರ, ರಿಯಾಯಿತಿಗಳು ಕೋಟಾ ಆಧಾರಿತವಾಗಿರಬಹುದು, ಇದು ಕೇವಲ ಸಣ್ಣ ಪ್ರಮಾಣದ DDGS ಗಳನ್ನು ಮಾತ್ರ ಒಳಗೊಂಡಿರುತ್ತದೆ. ಆದಾಗ್ಯೂ, DDGS ಅನ್ನು ಜೆನೆಟಿಕಲಿ ಮಾರ್ಪಡಿಸಿದ (GM) ಜೋಳದಿಂದ ಪಡೆಯಲಾಗಿದೆ, ಇದನ್ನು ಭಾರತ ಇಲ್ಲಿಯವರೆಗೆ ವಿರೋಧಿಸಿದೆ. ಭಾರತದ ಪಶು ಆಹಾರ ಮಾರುಕಟ್ಟೆಯ ಮೇಲಿನ ನಿಯಂತ್ರಣವನ್ನು ಅಮೆರಿಕದ ನಿಗಮಗಳು ಏಕಸ್ವಾಮ್ಯಗೊಳಿಸಬಹುದು ಎಂದು ರೈತ ಸಂಘಗಳು ಕಳವಳ ವ್ಯಕ್ತಪಡಿಸಿವೆ. ಈ ಒಪ್ಪಂದವು ಜೆನೆಟಿಕಲಿ ಮಾರ್ಪಡಿಸಿದ ಆಹಾರಗಳು ಮತ್ತು ಬೀಜಗಳ ಆಮದಿಗೆ ಬಾಗಿಲು ತೆರೆಯುತ್ತದೆ. ಇದು ಮಣ್ಣಿನ ಫಲವತ್ತತೆ, ಜೀವವೈವಿಧ್ಯತೆ ಮತ್ತು ದೇಶೀಯ ಬೀಜ ವ್ಯವಸ್ಥೆಗಳಿಗೆ ಹಾನಿ ಉಂಟುಮಾಡಬಹುದು. ಇವು ಏಕದಳ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಬಹುದು. ಸೋಯಾಬೀನ್ ರೈತರು ಹಾಗೂ ಸಂಸ್ಕರಣಾ ಉದ್ಯಮದಲ್ಲಿರುವವರು ಮುಖ್ಯವಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ನಷ್ಟ ಅನುಭವಿಸಬಹುದು ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ. ಸೋಯಾಬೀನ್ ಎಣ್ಣೆ, ಎಥೆನಾಲ್, ಸೇಬು, ಅನಾನಸ್ ಮತ್ತು ತೆಂಗಿನಕಾಯಿ ಸೇರಿದಂತೆ ತಾಜಾ ಹಣ್ಣುಗಳು ಹಾಗೂ ಗೋಡಂಬಿ ಸೇರಿದಂತೆ ಒಣ ಹಣ್ಣುಗಳ ಜೊತೆಗೆ ಅಮೆರಿಕದ ಗೋಧಿಯ ಆಮದು ಕೂಡ ರೈತರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳು ಹೆಚ್ಚು ಹಾನಿಗೊಳಗಾಗುವ ನಿರೀಕ್ಷೆಯಿದೆ. ಕೃಷಿ ಬೆಳವಣಿಗೆ 3.1% ಕ್ಕೆ ನಿಧಾನವಾಗುತ್ತಿದೆ, ಕನಿಷ್ಠ ಬೆಂಬಲ ಬೆಲೆಗಳು ಹೆಚ್ಚಾಗಿ ಬೆಳೆಗಳ ವೆಚ್ಚಕ್ಕಿಂತ ಕಡಿಮೆ ಇರುತ್ತವೆ, ರೈತರ ಸಾಲ ಹೆಚ್ಚಾಗುತ್ತಿದೆ. ಭಾರತದ ಕೃಷಿ ಈಗಾಗಲೇ ಒತ್ತಡದಲ್ಲಿರುವ ಸಮಯದಲ್ಲಿ ಈ ಒಪ್ಪಂದಗಳು ಬಂದಿವೆ ಎಂದು ರೈತ ನಾಯಕರು ಹೇಳಿದ್ದಾರೆ. “ಭಾರತ–ನ್ಯೂಝಿಲೆಂಡ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಭಾರತವು ಸೇಬುಗಳ ಮೇಲೆ ಕೋಟಾ ಆಧಾರಿತ ಸುಂಕ ರಿಯಾಯಿತಿಗಳನ್ನು ನೀಡಲು ಒಪ್ಪಿಕೊಂಡಿದೆ. ಭಾರತದ ಸೇಬುಗಳ ಮೇಲಿನ ಆಮದು ಸುಂಕ ಸುಮಾರು 50% ಆಗಿದ್ದು, ಒಪ್ಪಂದದ ಅಡಿಯಲ್ಲಿ ನಿರ್ದಿಷ್ಟ ಕೋಟಾದೊಳಗೆ ಆಮದು ಮಾಡಿಕೊಳ್ಳುವ ನ್ಯೂಜಿಲೆಂಡ್ ಸೇಬುಗಳು 25% ರಿಯಾಯಿತಿ ಸುಂಕವನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ, ಜನವರಿಯಲ್ಲಿ ಸಹಿ ಹಾಕಲಾದ ಭಾರತ–ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬರುವ ಮೊದಲು ಸಂಸತ್ತಿನ ಹಾಗೂ ಯುರೋಪಿಯನ್ ಒಕ್ಕೂಟದ ಅನುಮೋದನೆ ಅಗತ್ಯವಿರುತ್ತದೆ. ಯುರೋಪಿಯನ್ ಒಕ್ಕೂಟದ ಸೇಬುಗಳನ್ನು ವಾರ್ಷಿಕ ಕೋಟಾದ ಅಡಿಯಲ್ಲಿ 20% ರಿಯಾಯಿತಿ ಸುಂಕದಲ್ಲಿ ಭಾರತಕ್ಕೆ ಅನುಮತಿಸಲಾಗುತ್ತದೆ” ಎಂದು ಕೃಷಿ ನೀತಿ ತಜ್ಞ ದೇವಿಂದರ್ ಶರ್ಮಾ ವಿವರಿಸಿದ್ದಾರೆ. “ಅಮೆರಿಕ–ಭಾರತ ವ್ಯಾಪಾರ ಒಪ್ಪಂದವು ಸೇಬುಗಳ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಿದರೆ, ಅನೇಕ ಸೇಬು ರೈತರಿಗೆ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶಕ್ಕೆ ಹೊಡೆತ ನೀಡಬಹುದು. ಅಂತಹ ಸುಂಕ ಕಡಿತವು ಬೆಲೆ ರಕ್ಷಣೆಯನ್ನು ನೇರವಾಗಿ ದುರ್ಬಲಗೊಳಿಸಿ, ಸ್ಥಳೀಯ ಮಾರುಕಟ್ಟೆಗಳಲ್ಲಿ ಅಗ್ಗದ ಆಮದುಗಳ ಹೆಚ್ಚಳಕ್ಕೆ ಕಾರಣವಾಗಬಹುದು” ಎಂದು ಶರ್ಮಾ ಹೇಳಿದ್ದಾರೆ. ಸೇಬು ರೈತರು ವಲಯದ ಮೇಲೆ ಪರಿಣಾಮ ಬೀರಿರುವ ಅನಿರೀಕ್ಷಿತ ಹವಾಮಾನ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಡಚಣೆಗಳನ್ನೂ ಉಲ್ಲೇಖಿಸಿದ್ದಾರೆ. “ಭಾರತ–ಯುಎಸ್ ವ್ಯಾಪಾರ ಚೌಕಟ್ಟಿನ ಹೊರತಾಗಿ, ಭಾರತವು ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಕಚ್ಚಾ ಹತ್ತಿಯ ಮೇಲಿನ ಆಮದು ಸುಂಕವನ್ನು 11% ರಿಂದ ಶೂನ್ಯಕ್ಕೆ ಇಳಿಸಿತ್ತು. ಈ ಅವಧಿಯಲ್ಲಿ ಸುಮಾರು 30 ಲಕ್ಷ ಬೇಲ್ಗಳ (510 ಮಿಲಿಯನ್ ಕೆಜಿ) ಹೆಚ್ಚುವರಿ ಆಮದು ವರದಿಯಾಗಿದೆ. ದೇಶೀಯ ಕಚ್ಚಾ ಹತ್ತಿಯ ಬೆಲೆಗಳು ಕ್ವಿಂಟಾಲ್ಗೆ ₹1,000 ರಷ್ಟು ಕಡಿಮೆಯಾಗಿ ₹1,500 ಕ್ಕೆ ಇಳಿದವು. ಇದು ತಾತ್ಕಾಲಿಕ ಕ್ರಮವಾಗಿದ್ದು ಯಾವುದೇ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿಲ್ಲ. ಆದರೆ ಆಮದು ಉದಾರೀಕರಣದ ದೊಡ್ಡ ಪರಿಣಾಮವನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಶರ್ಮಾ ಹೇಳಿದ್ದಾರೆ. ರೈತರ ಯೋಜನೆ ಏನು? ಸಂಸದೀಯ ಚರ್ಚೆಯಿಲ್ಲದೆ “ರಾಷ್ಟ್ರವಿರೋಧಿ” ವ್ಯಾಪಾರ ಒಪ್ಪಂದವನ್ನು ಮಂಡಿಸುವುದನ್ನು ವಿರೋಧಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು, ಕೃಷಿ ಕಾರ್ಮಿಕರ ಸಂಘಗಳು, ಕಾರ್ಮಿಕ ಸಂಘಗಳು ಮತ್ತು ಸಾಮೂಹಿಕ ಸಂಘಟನೆಗಳಿಗೆ ಮನವಿ ಮಾಡಿದೆ. ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರವು ಒಪ್ಪಂದಕ್ಕೆ ಸಾಮೂಹಿಕ ಪ್ರತಿಕ್ರಿಯೆಯಾಗಿದ್ದು, ವಿಶಾಲವಾದ ಕೃಷಿ ಬಿಕ್ಕಟ್ಟಿನ ವಿರುದ್ಧ ಹೋರಾಟ ನಡೆಸುವುದೇ ಉದ್ದೇಶವಾಗಿದೆ. ರೈತ ಸಂಘಗಳು ಬಲವಾದ ನೆಲೆಯನ್ನು ಹೊಂದಿರುವ ಪಂಜಾಬ್ನಲ್ಲಿ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದು ರೈತ ನಾಯಕರು ತಿಳಿಸಿದ್ದಾರೆ. ಪ್ರಸ್ತುತ ರೂಪದಲ್ಲಿ ಸಹಿ ಹಾಕಲಾಗುತ್ತಿರುವ ಒಪ್ಪಂದವು ಭಾರತದಾದ್ಯಂತ ದೊಡ್ಡ ಪ್ರಮಾಣದ ಮತ್ತು ನಿರಂತರ ಪ್ರತಿಭಟನೆಗಳನ್ನು ಪ್ರಚೋದಿಸಬಹುದು ಎಂದು SKM ಎಚ್ಚರಿಸಿದೆ. ಅಮೆರಿಕನ್ ಧಾನ್ಯ ಭಾರತ ಪ್ರವೇಶಿಸಿದರೆ ಇಲ್ಲಿನ ರೈತರು ಬದುಕುಳಿಯುವುದಿಲ್ಲ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ವಿರುದ್ಧ ಕಳೆದ ಶುಕ್ರವಾರ ಜಿಂದ್ ನಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಒಪ್ಪಂದವು ದೊಡ್ಡ ವಿದೇಶಿ ಕೃಷಿ ಕಾರ್ಪೊರೇಟ್ಗಳಿಗೆ ಪ್ರಯೋಜನವನ್ನು ನೀಡುತ್ತದೆ. ದೇಶದ ಸಣ್ಣ ಮತ್ತು ಅತಿಸಣ್ಣ ರೈತರು ಅಂತಿಮವಾಗಿ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಭಾರತದಲ್ಲಿ ವಿದೇಶಿ ಕೃಷಿಗೆ ಮುಕ್ತ ಪ್ರವೇಶ ನೀಡಿದರೆ ಅದರ ಪರಿಣಾಮಗಳು ಭಾರತೀಯ ಕೃಷಿಗೆ ಹಾನಿಕಾರಕವಾಗುತ್ತವೆ. “ನಾವು ಮಾರ್ಚ್ 23 ರಂದು ಕುರುಕ್ಷೇತ್ರದಲ್ಲಿ ದೊಡ್ಡ ಆಂದೋಲನವನ್ನು ಯೋಜಿಸುತ್ತಿದ್ದೇವೆ” ಎಂದು ರೈತ ಮುಖಂಡರು ಹೇಳಿದ್ದಾರೆ. ದ್ವಿದಳ ಧಾನ್ಯಗಳು, ಸೋಯಾಬೀನ್, ಡೈರಿ ಉತ್ಪನ್ನಗಳು, ಕೋಳಿ ಸಾಕಣೆ ಉತ್ಪನ್ನಗಳು ಮತ್ತು ಇತರ ಹಲವಾರು ಉತ್ಪನ್ನಗಳು ಸೇರಿದಂತೆ ₹45 ಲಕ್ಷ ಕೋಟಿ ಮೌಲ್ಯದ ಸರಕುಗಳು ಈಗ ಅಮೆರಿಕದಿಂದ ಭಾರತಕ್ಕೆ ಬರಲಿವೆ ಎಂದು ರೈತ ನಾಯಕ ಗುರ್ನಾಮ್ ಸಿಂಗ್ ಚಾರುಣಿ ಹೇಳಿದ್ದಾರೆ. ಅಮೆರಿಕವು ಭಾರತ ಸರ್ಕಾರವನ್ನು ಬೆದರಿಸಿದ್ದು, ಪ್ರಧಾನಿ ಮೋದಿ ಒತ್ತಡಕ್ಕೆ ಮಣಿದರು ಎಂದು ಅವರು ಆರೋಪಿಸಿದ್ದಾರೆ. ಅಮೆರಿಕದ ಭೂಪ್ರದೇಶ ಭಾರತಕ್ಕಿಂತ ಏಳು ಪಟ್ಟು ದೊಡ್ಡದಾದರೂ ಅದರ ಜನಸಂಖ್ಯೆ ನಾಲ್ಕು ಪಟ್ಟು ಕಡಿಮೆ. ಭಾರತದಲ್ಲಿ 82% ರೈತರು 2.5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ಆದರೆ ಅಮೆರಿಕದಲ್ಲಿ ಸಣ್ಣ ರೈತರೂ ಸಾವಿರಾರು ಎಕರೆಗಳನ್ನು ಹೊಂದಿದ್ದಾರೆ. ಅಮೆರಿಕದ ರೈತರು ಉದ್ಯಮಿಗಳಂತೆ ಕಾರ್ಯನಿರ್ವಹಿಸುತ್ತಾರೆ. ಅವರು ಭಾರತವನ್ನು ಪ್ರವೇಶಿಸಿದರೆ ಕಾರ್ಪೊರೇಟ್ ವ್ಯವಸ್ಥೆಯು ಪ್ರಾಬಲ್ಯ ಸಾಧಿಸಿ ಸ್ಥಳೀಯ ರೈತರು ನಾಶವಾಗುತ್ತಾರೆ. ಅಮೆರಿಕನ್ ಧಾನ್ಯ ತೆರಿಗೆರಹಿತವಾಗಿ ಭಾರತ ಪ್ರವೇಶಿಸಿದರೆ ಭಾರತೀಯ ರೈತರು ಬದುಕುಳಿಯುವುದಿಲ್ಲ ಎಂದು ಚಾರುಣಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ರೈತರ ವಿಶ್ವಾಸವನ್ನು ಕಳೆದುಕೊಂಡಿದೆ: ಟಿಕಾಯತ್ ಭಾರತ–ಯುಎಸ್ ದ್ವಿಪಕ್ಷೀಯ ಒಪ್ಪಂದದ ವಿರುದ್ಧ ಭಾರತೀಯ ಕಿಸಾನ್ ಯೂನಿಯನ್ (BKU) ಎಲ್ಲಾ ಗ್ರಾಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಕೃತಿಗಳನ್ನು ಸುಡುವುದು ಸೇರಿದಂತೆ ಸರಣಿ ಪ್ರತಿಭಟನೆಗಳನ್ನು ಘೋಷಿಸಿದೆ. ಮಂಗಳವಾರ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ BKU ನಾಯಕ ರಾಕೇಶ್ ಟಿಕಾಯತ್, ಕೇಂದ್ರ ಸರ್ಕಾರವು ರೈತರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದಿದ್ದಾರೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದಗಳು ರೈತರ ಮೇಲೆ ದೂರಗಾಮಿ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಹೇಳಿದ್ದಾರೆ. ಯುಎಸ್ ಮತ್ತು ಯುರೋಪಿಯನ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದಗಳ ನಿಜವಾದ ಪಠ್ಯಗಳು ಇನ್ನೂ ಸಾರ್ವಜನಿಕವಾಗಿಲ್ಲ; ಅವುಗಳ ವಿವರಗಳನ್ನು ಮರೆಮಾಡಲಾಗಿದೆ. ಭಾರತವು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದೊಂದಿಗಿನ ಒಪ್ಪಂದಗಳಿಂದ ಸಂಪೂರ್ಣವಾಗಿ ಹಿಂದೆ ಸರಿಯಬೇಕು ಅಥವಾ ಕನಿಷ್ಠ ಕೃಷಿಗೆ ಸಂಬಂಧಿಸಿದ ಎಲ್ಲಾ ನಿಬಂಧನೆಗಳನ್ನು ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದರು. ಪಶು ಆಹಾರವಾಗಿ ಬಳಸುವ ಜೈವಿಕ ಇಂಧನ ಉತ್ಪಾದನೆಯ ಉಪಉತ್ಪನ್ನವಾದ ಸೊಲ್ಯೂಬಲ್ಸ್ ಜೊತೆಗೆ ಡ್ರೈ ಡಿಸ್ಟಿಲರ್ಸ್ ಧಾನ್ಯಗಳ (DDGs) ಆಮದು ಭಾರತದಲ್ಲಿ ಪಶು ಆಹಾರ ಮತ್ತು ಮೇವಿಗಾಗಿ ಬಳಸುವ ಮೆಕ್ಕೆಜೋಳ, ಜೋಳ ಮತ್ತು ಸೋಯಾಬೀನ್ ಬೆಳೆಗಳ ದೇಶೀಯ ಬೆಲೆಗಳನ್ನು ತೀವ್ರವಾಗಿ ಕುಸಿಯುವಂತೆ ಮಾಡಬಹುದು. ಅಮೆರಿಕದಿಂದ ಸೋಯಾಬೀನ್ ಎಣ್ಣೆಯ ಆಮದು ಸೋಯಾಬೀನ್ ಕೃಷಿ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ; ಇದು ಈಗಾಗಲೇ ₹5,328 ಕನಿಷ್ಠ ಬೆಂಬಲ ಬೆಲೆ (MSP) ಗಿಂತ ಕಡಿಮೆಯಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ರಾಜಸ್ಥಾನದ ಸೋಯಾಬೀನ್ ರೈತರು ಈಗಾಗಲೇ ತೀವ್ರ ಬೆಲೆ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಒಪ್ಪಂದವು ಅವರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು ಎಂದು ಟಿಕಾಯತ್ ಹೇಳಿದ್ದಾರೆ.
Usman Tariq Controversial Bowling Style- ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆಯಲ್ಲೇ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯನ್ನು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅಣಕವಾಡಿದ್ದು ಸುದ್ದಿಯಾಗಿತ್ತು. ಅಮೆರಿಕ ವಿರುದ್ಧ ಪಂದ್ಯದಲ್ಲಿ ಅವರು 3 ವಿಕೆಟ್ ಪಡೆದ ಬಳಿಕವಂತೂ ಅವರು ಚಕಿಂಗ ಮಾಡುತ್ತಿದ್ದಾರೆ ಎಂಬ ಆರೋಪ ಬಲವಾಗಿದೆ. ಅದರಲ್ಲೂ ನಿಂತು ಚೆಂಡೆಸೆವ ಅವರ ಬೌಲಿಂಗ್ ಶೈಲಿ ತೀವ್ರ ವಿವಾದಕ್ಕೀಡಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಅಭಿಪ್ರಾಯ ಬಹಳ ಮಹತ್ವ ಪಡೆದಿದೆ.
ಹಾಸನದ ಹೆತ್ತೂರು ಶಾಲೆ ಹಳೆ ವಿದ್ಯಾರ್ಥಿಗಳು ಸದ್ಯ, ಸವಿ ಸವಿ ನೆನಪು ಸಾವಿರ ನೆನಪು ಎನ್ನುತ್ತಾ ತಾವು ಜೀವನದಲ್ಲಿ ಎತ್ತರ ಬೆಳೆದು ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರಲು ಬೇಕಾದ ಅಕ್ಷರ ಹಾಗೂ ಮೌಲ್ಯದ ಅಡಿಪಾಯ ಹಾಕಿದ ಶಾಲೆ ಹಾಗೂ ಅವರ ಶಿಕ್ಷಕರನ್ನು ವಂದನೆ ತಿಳಿಸುವ ಗುರುವಂದನಾ ಕಾರ್ಯಕ್ರಮದೊಂದಿಗೆ ತಮ್ಮ ಹಳೆಯ ಸ್ನೇಹಿತರನ್ನು ಮತ್ತೆ ಹಲವು ವರ್ಷಗಳ ನಂತರ ನೋಡಿ ಹಿಂದಿನ ನೆನಪುಗಳನ್ನು ಇಂದು ಮೆಲುಕು ಹಾಕಲು ಗುರುವಂದನಾ ಹಾಗೂ ಸ್ನೇಹ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ವೇಳೆ, ಹಲವು ಸವಿ ನೆನಪುಗಳನ್ನು ಮೆಲಕು ಹಾಕುವ ಜೊತೆಗೆ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಆದರೆ ಇದನ್ನು ಮಾಡಲು ಅವರ ಶ್ರಮ ಹಾಗೂ ಅದಕ್ಕೆ ಸಂದ ಸುಂದರ ಸವಿ ನೆನಪಿನ ಫಲವನ್ನು ಈ ಕುರಿತ ಸಂಕ್ಷಿಪ್ತ ಲೇಖನ ಇಲ್ಲಿದೆ.

17 C