SENSEX
NIFTY
GOLD
USD/INR

Weather

16    C
... ...View News by News Source

ವಿವಾದಾತ್ಮಕ ಹೇಳಿಕೆಗಳಿಗೆ ಬಲಿಯಾದ ಮೇಲ್ಮನೆ ಕಲಾಪ | ಪ್ರಧಾನಿ ಕುರಿತ ಮಾತಿಗೆ ನಸೀರ್ ಅಹ್ಮದ್ ವಿಷಾದ: ‘ಪಾಕಿಸ್ತಾನ ನಾಲಿಗೆ’ ಪದಬಳಕೆಗೆ ಸಿ.ಟಿ.ರವಿ ಬದ್ಧ

ಬೆಂಗಳೂರು : ಪ್ರಧಾನಿ ಮೋದಿ ಕುರಿತಾದ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಹೇಳಿಕೆ ಹಾಗೂ ಟೀಕಿಸುವ ಭರದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಬಳಸಿದ ವಿವಾದಾತ್ಮಕ ಪದಬಳಕೆ ವಿಚಾರ ಮೇಲ್ಮನೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಗದ್ದಲ-ಕೋಲಾಹಲ ಉಂಟಾಗಿ ವಾಕ್ಸಮರಕ್ಕೆ ಕಾರಣವಾಯಿತು. ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ(ಫೆ.2) ಮೇಲ್ಮನೆ ಕಲಾಪದಲ್ಲಿ ಕೇಂದ್ರ ಸರಕಾರದ ಧೋರಣೆ ಬಗ್ಗೆ ಪ್ರಸ್ತಾಪಿಸಿದ್ದರು. ಈ ವೇಳೆ ನಸೀರ್ ಅಹ್ಮದ್ ಅವರು ‘ಪ್ರಧಾನಿ ಮೋದಿ ದೇಶದ್ರೋಹಿ’ ಎಂದು ಹರಿಹಾಯ್ದಿದ್ದರು. ಇದನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ನಸೀರ್ ಅಹ್ಮದ್ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆ ಮಂಗಳವಾರಕ್ಕೆ ಕಲಾಪ ಮುಂದೂಡಲಾಗಿತ್ತು. ಬೆಳಗ್ಗೆ ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಮತ್ತೆ ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ಸಂವಿಧಾನಿಕ ಹುದ್ದೆಯಲ್ಲಿರುವ ದೇಶದ ಪ್ರಧಾನಿ ಮೋದಿಯವರಿಗೆ ಬಳಸಿದ ಮಾತು ಈ ದೇಶದ ನಾಲಿಗೆ ಆಗಿರಲು ಸಾಧ್ಯವಿಲ್ಲ. ಇದು ಯಾವುದೋ ಪಾಕಿಸ್ತಾನದ ನಾಲಿಗೆ ಆಗಿರಬೇಕು. ಆ ನಾಲಿಗೆ ಯಾವುದೆಂದು ಪತ್ತೆ ಹಚ್ಚಿ ಎಂದು ವಾಗ್ದಾಳಿ ನಡೆಸಿದರು. ಇತರೆ ಸದಸ್ಯರು ಇದಕ್ಕೆ ಅನುಮೋದಿಸಿ ನಸೀರ್ ಅಹ್ಮದ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಧಾನಿಗೆ ದೇಶದ್ರೋಹಿ ಎಂದಿದ್ದಕ್ಕೆ ಸದನದ ಬೇಷರತ್ ಕ್ಷಮೆ ಕೇಳುವಂತೆ ನಸೀರ್ ಅಹ್ಮದ್‍ಗೆ ಸೂಚಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಸಿ.ಟಿ.ರವಿ ಬಳಸಿದ ‘ಪಾಕಿಸ್ತಾನ ನಾಲಿಗೆ’ ಪದಬಳಕೆಗೆ ತೀವ್ರವಾಗಿ ಖಂಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, ‘ಪಾಕಿಸ್ತಾನದ ನಾಲಿಗೆ’ ಎಂದು ಸಿ.ಟಿ.ರವಿ ಹೇಳುತ್ತಾರೆ. ಮೊದಲು ಅವರನ್ನು ಸದನದಿಂದ ಹೊರಹಾಕಿ ಎಂದು ಆಗ್ರಹಿಸಿದರು. ಆಗ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿದ್ದಾಯ್ತು, ಇದೀಗ ಪ್ರಧಾನಿ ಬಗ್ಗೆ ನಿಂದಿಸುತ್ತಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸದನದಿಂದ ಹೊರಹಾಕುವಂತೆ ಒತ್ತಾಯಿಸಿದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು. ಒಂದು ಗಂಟೆ ಬಳಿಕ ಸದನ ಆರಂಭವಾದಾಗಲೂ ನಸೀರ್ ಅಹ್ಮದ್ ಕ್ಷಮೆಯಾಚನೆಗೆ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ‘ಸಿ.ಟಿ.ರವಿ ಅವರು ನಮ್ಮ ಸದಸ್ಯರ ಕುರಿತು ಪಾಕಿಸ್ತಾನದ ನಾಲಿಗೆ ಎಂದು ಹೀಯಾಳಿಸಿದ್ದಾರೆ. ಇವರು ಪದೇ ಪದೇ ಯಾಕೆ ನಮಗೆ ಪಾಕಿಸ್ತಾನದ ಹೆಸರು ಹೇಳುತ್ತಾರೆ. ನಾವು ಭಾರತ ದೇಶದವರು. ಇಲ್ಲೆ ಹುಟ್ಟಿ, ಇಲ್ಲೆ ಸಾಯುತ್ತೇವೆ. ನಾವು ಭಾರತದ ದೇಶಭಕ್ತರು. ಈ ದೇಶದ ಹಕ್ಕು, ಗೌರವ ನಮಗೂ ಇದೆ. ಕೂಡಲೇ ಸಿ.ಟಿ.ರವಿ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮ ಆಗಬೇಕೆಂದು ಸಭಾಪತಿಯವರಿಗೆ ದೂರು ನೀಡಿದ್ದೇವೆ ಎಂದರು. ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ದೂರಿಗೆ ಪ್ರತಿದೂರು ಆಗಬಾರದು. ಮೊದಲು ನಸೀರ್ ಅಹ್ಮದ್ ಅವರು ಕ್ಷಮೆಯಾಚಿಸಬೇಕು. ನಮ್ಮ ಸದಸ್ಯರು ನೇರವಾಗಿ ಯಾರ ಬಗ್ಗೆಯೂ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ತಮ್ಮ ಹೇಳಿಕೆಯಲ್ಲಿ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಕ್ಷಮೆಯಾಚಿಸುವುದಿಲ್ಲ’ ಎಂದು ಸಿ.ಟಿ.ರವಿ ಸಮರ್ಥಿಸಿಕೊಂಡರು. ಈ ವೇಳೆ ಉಭಯ ಪಕ್ಷಗಳ ನಡುವೆ ಮಾತಿನ ಜಟಾಪಟಿ ಮುಂದುವರೆಯಿತು. ನಸೀರ್ ಅಹ್ಮದ್ ಹಾಗೂ ಸಿ.ಟಿ.ರವಿ ಇಬ್ಬರು ವಿಷಾದ ವ್ಯಕ್ತಪಡಿಸುವಂತೆ ಸಭಾಪತಿ ಹೊರಟ್ಟಿ ಅವರು ಸೂಚನೆ ನೀಡಿದರು. ಬಳಿಕ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, ‘ಕರ್ನಾಟಕಕ್ಕೆ ಕೇಂದ್ರ ಸರಕಾರ ಮಾಡಿರುವ ಅನ್ಯಾಯವನ್ನು ಖಂಡಿಸುವ ಭರದಲ್ಲಿ ಪ್ರಧಾನಿ ಮೋದಿ ಅವರನ್ನು ದ್ರೋಹಿ ಎಂದು ಕರೆದಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೇಳುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ‘ವಿಷಾದ ಬೇಡ. ಕ್ಷಮೆ ಎನ್ನಬೇಕು’ ಎಂದು ಆಗ್ರಹಿಸಿದರು. ಇದರಿಂದ ಸಿಟ್ಟಾದ ಸಭಾಪತಿ ವಿಷಾದವೆಂದರೆ ಕ್ಷಮೆ ಎಂದರ್ಥವಲ್ಲವೇ? ಎಂದು ಪ್ರಶ್ನಿಸಿ, ಸಿ.ಟಿ.ರವಿಗೆ ವಿಷಾದ ವ್ಯಕ್ತಪಡಿಸುವಂತೆ ಹೇಳಿದರು. ‘ದೂರು ಕೊಟ್ಟವರನ್ನು, ಆಪಾದಿತನನ್ನು ಒಂದೇ ತಕ್ಕಡಿಗೆ ಹಾಕುತ್ತೀರಾ? ಎಂದರೆ ನಿಮ್ಮ ಮಾತಿಗೆ ನಾನು ಬದ್ಧ. ಭಾರತೀಯ ನಾಲಿಗೆ ಈ ರೀತಿ ಮಾತನಾಡಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದೇನೆ. ನಾಲಿಗೆ ಯಾರದ್ದು ಪತ್ತೆ ಹಚ್ಚಿ ಎಂದು ಪೀಠಕ್ಕೆ ನಾನು ಮನವಿ ಮಾಡಿದ್ದೇನೆ ಅಷ್ಟೇ. ಹೀಗಾಗಿ ಕ್ಷಮೆಯಾಚಿಸಲಾರೆ’ ಎಂದು ಸಿ.ಟಿ.ರವಿ ಪುನರುಚ್ಚಸಿದರು. ಇದರಿಂದ ಪರಸ್ಪರ ವಾಗ್ವಾದ, ಆರೋಪ-ಪ್ರತ್ಯಾರೋಪ ಹೆಚ್ಚಾಗುತ್ತಿದ್ದಂತೆ ಸದನವನ್ನು ಮತ್ತೆ ಮುಂದೂಡಲಾಯಿತು.

ವಾರ್ತಾ ಭಾರತಿ 4 Feb 2026 1:07 am

ಗಂಗಾವತಿ–ಕಂಪ್ಲಿ ನಡುವೆ ತುಂಗಭದ್ರಾ ನದಿಗೆ ನೂತನ ಸೇತುವೆ: ಮಣ್ಣಿನ ಪರೀಕ್ಷೆ ಆರಂಭ

ಬಳ್ಳಾರಿ : ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಗಂಗಾವತಿ–ಕಂಪ್ಲಿ ಸಂಪರ್ಕಿಸುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಸೇತುವೆ ಕಾಮಗಾರಿಗಾಗಿ ಮಣ್ಣಿನ ಪರೀಕ್ಷೆ (ಸಾಯಿಲ್ ಟೆಸ್ಟಿಂಗ್) ಪ್ರಕ್ರಿಯೆ ಆರಂಭವಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಹಳೆಯ ಸೇತುವೆ ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚು ನೀರು ಬಿಡುಗಡೆಗೊಂಡಾಗಲೆಲ್ಲ ಮುಳುಗಡೆಯಾಗುತ್ತದೆ. ಪರಿಣಾಮವಾಗಿ ಗಂಗಾವತಿ–ಕಂಪ್ಲಿ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ನೂತನ ಸೇತುವೆ ನಿರ್ಮಾಣಕ್ಕಾಗಿ ಅಂದಾಜು ₹110 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧಪಡಿಸುವ ಪ್ರಕ್ರಿಯೆಯ ಭಾಗವಾಗಿ ಮಣ್ಣಿನ ಪರೀಕ್ಷೆ ಹಾಗೂ ಸರ್ವೆ ಕಾರ್ಯಗಳು ಆರಂಭಗೊಂಡಿವೆ. ಹೊಸ ಸೇತುವೆಯನ್ನು ಹಳೆಯ ಸೇತುವೆಗಿಂತ ಸುಮಾರು 42 ಅಡಿ ಹೆಚ್ಚು ಎತ್ತರದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಇದರಿಂದ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗದೇ ನಿರಂತರ ಸಂಚಾರ ಸಾಧ್ಯವಾಗಲಿದೆ. ಈ ಮಹತ್ವದ ಯೋಜನೆಯ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಸ್ಥಳೀಯ ಶಾಸಕ ಜೆ.ಎನ್. ಗಣೇಶ ಅವರು ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದು, ಇದರ ಫಲವಾಗಿ ಕ್ಷೇತ್ರದ ಜನರ ಬಹುದಿನಗಳ ಕನಸು ನನಸಾಗುವ ಹಂತಕ್ಕೆ ಬಂದಿದೆ.

ವಾರ್ತಾ ಭಾರತಿ 4 Feb 2026 12:52 am

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲೂ ‘ಆ್ಯಂಬುಲೆನ್ಸ್’ ಸೇವೆ: ಉಳ್ಳಾಲ ಮೀನುಗಾರರ ಹೊಸ ಪ್ರಯತ್ನ

ಮಂಗಳೂರು, ಫೆ. 3: ರಸ್ತೆ ಅಪಘಾತಗಳು ಅಥವಾ ತುರ್ತು ಆರೋಗ್ಯ ಸಮಸ್ಯೆಗಳ ಸಂದರ್ಭ ಆ್ಯಂಬುಲೆನ್ಸ್‌ಗಳು ಸೈರನ್ ಮೊಳಗಿಸುತ್ತಾ ಧಾವಿಸಿ ಜೀವ ರಕ್ಷಣೆ ಮಾಡುವ ದೃಶ್ಯ ಸಾಮಾನ್ಯ. ಆದರೆ ಸಮುದ್ರ ಮಧ್ಯೆ ಅನಾಹುತ ಸಂಭವಿಸಿದಾಗ ಗಾಯಾಳುಗಳನ್ನು ತಕ್ಷಣ ದಡಕ್ಕೆ ತಲುಪಿಸುವ ವ್ಯವಸ್ಥೆಯ ಕೊರತೆಯಿಂದ ಅನೇಕ ಜೀವಹಾನಿ ಗಳು ಸಂಭವಿಸುತ್ತಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ ಮಂಗಳೂರಿನ ಉಳ್ಳಾಲದ ಮೀನುಗಾರರು ರಾಜ್ಯದಲ್ಲೇ ಮೊದಲ ಬಾರಿಗೆ ‘ಬೋಟ್ ಆ್ಯಂಬುಲೆನ್ಸ್’ ಸೇವೆ ಆರಂಭಿಸಿ ಗಮನ ಸೆಳೆದಿದ್ದಾರೆ. ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ ಟ್ ಮೀನುಗಾರರ ಸಂಘದ ವತಿಯಿಂದ ಈ ತುರ್ತು ಬೋಟ್ ಸೇವೆ ಆರಂಭಗೊಂಡಿದೆ. ಸಮುದ್ರದಲ್ಲಿ ದೋಣಿ ಮಗುಚುವುದು, ಬೆಂಕಿ ಅವಘಡಗಳು ಸಂಭವಿಸುವುದು ಅಥವಾ ಮೀನುಗಾರರಿಗೆ ಹಠಾತ್ ಅನಾರೋಗ್ಯ ಉಂಟಾಗುವ ಸಂದರ್ಭಗಳಲ್ಲಿ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ದಡಕ್ಕೆ ತಲುಪಿಸುವುದು ಇದರ ಉದ್ದೇಶ. ಕರಾವಳಿ ಭಾಗದಲ್ಲಿ ಸೀ ಆ್ಯಂಬುಲೆನ್ಸ್ ಅಗತ್ಯವಿದೆ ಎಂಬ ಬೇಡಿಕೆ ದಶಕಗಳಿಂದ ಕೇಳಿಬರುತ್ತಿದ್ದರೂ, ತಾಂತ್ರಿಕ ಹಾಗೂ ಆರ್ಥಿಕ ಕಾರಣಗಳಿಂದ ಸರ್ಕಾರದ ಯೋಜನೆ ಜಾರಿಯಾಗಿರಲಿಲ್ಲ. ಸರ್ಕಾರದ ನೆರವಿಗೆ ಕಾಯದೆ ಮೀನುಗಾರರೇ ಒಗ್ಗೂಡಿ ಈ ಸೇವೆಯನ್ನು ಆರಂಭಿಸಿರುವುದು ವಿಶೇಷವಾಗಿದೆ. ವಿಶೇಷ ವಿನ್ಯಾಸದಲ್ಲಿ ಸಿದ್ಧಪಡಿಸಿದ ಬೋಟ್‌ ನಲ್ಲಿ ಸೈರನ್, ಕೆಂಪು ಎಚ್ಚರಿಕೆ ದೀಪಗಳು, ಸ್ಟ್ರೆಚರ್, ಆಮ್ಲಜನಕ ಸಿಲಿಂಡರ್, ಪ್ರಥಮ ಚಿಕಿತ್ಸಾ ಕಿಟ್ ಹಾಗೂ ಲೈಫ್ ಜಾಕೆಟ್‌ ಗಳನ್ನು ಅಳವಡಿಸಲಾಗಿದೆ. ಸೈರನ್ ಶಬ್ದ ಕೇಳುತ್ತಿದ್ದಂತೆಯೇ ಇತರೆ ದೋಣಿಗಳು ದಾರಿ ಬಿಡುವಂತೆ ವ್ಯವಸ್ಥೆ ಮಾಡಲಾಗಿದೆ. ಮೈಕ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆಯೂ ಇದ್ದು, ತೀರ ಪ್ರದೇಶದವರೊಂದಿಗೆ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಿದೆ. ಸೇವೆಯ ನಿರ್ವಹಣೆಗೆ ಮೂವರು ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರು ಸಮುದ್ರದ ಕಠಿಣ ಪರಿಸ್ಥಿತಿಗಳಲ್ಲೂ ಈಜಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ದೋಣಿಗಳು ಮಗುಚಿದ ಸಂದರ್ಭಗಳಲ್ಲಿ ಉಸಿರಾಟದ ತೊಂದರೆಯಿಂದ ಸಂಭವಿಸುವ ಸಾವುಗಳನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೋಟ್‌ ನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಶೀಘ್ರವಾಗಿ ದಡಕ್ಕೆ ತಲುಪಿಸಲು ಸಾಧ್ಯವಾಗುತ್ತಿದೆ. ಪ್ರಸ್ತುತ ಒಂದು ಬೋಟ್ ಆ್ಯಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಆರ್ಥಿಕ ನೆರವು ದೊರೆತಲ್ಲಿ ಇನ್ನಷ್ಟು ಆಧುನಿಕ ಉಪಕರಣಗಳನ್ನು ಅಳವಡಿಸಿ ಜಿಲ್ಲೆಯಾದ್ಯಂತ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಮೀನುಗಾರರ ಸಂಘ ಹೊಂದಿದೆ. ಕರಾವಳಿ ಭಾಗದ ಜೀವ ರಕ್ಷಣೆಯಲ್ಲಿ ಈ ಪ್ರಯತ್ನ ಮಾದರಿಯಾಗಿದೆ.  

ವಾರ್ತಾ ಭಾರತಿ 4 Feb 2026 12:28 am

ಕನಕಗಿರಿ ಉತ್ಸವಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆ: ಡಿಸಿ ಸುರೇಶ್ ಇಟ್ನಾಳ

ಕನಕಗಿರಿ : ಐತಿಹಾಸಿಕ ಪ್ರಸಿದ್ಧಿಯ ಕನಕಗಿರಿ ಉತ್ಸವದ ಆಚರಣೆಗೆ ಸರ್ಕಾರ ಈಗಾಗಲೇ 3 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಮಂಜೂರು ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ತಿಳಿಸಿದ್ದಾರೆ. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕನಕಗಿರಿಯ ಕಲಾತ್ಮಕ ಕೆತ್ತನೆಯ ವೆಂಕಟಚಲಪತಿ ಬಾವಿಯನ್ನು ರಾಜ್ಯ ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು. ಬಾವಿಯ ಸಂರಕ್ಷಣೆಗೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಜೊತೆಗೆ, ಬಾವಿಯಲ್ಲಿ ಮದುವೆ ಪೂರ್ವ ವಿಡಿಯೋ ಚಿತ್ರೀಕರಣ ನಡೆಸುವವರಿಂದ ನಿಗದಿತ ಶುಲ್ಕ ವಸೂಲಿಸಲಾಗುವುದು ಎಂದರು. ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಅಕ್ರಮವಾಗಿ ಮರಳು ಸಾಗಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಕಲಕೇರಿ ರಸ್ತೆಯಲ್ಲಿರುವ ನವ ಗ್ರಾಮ ಯೋಜನೆಯ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಆನೆಗೊಂದಿ ಉತ್ಸವದ ಆಚರಣೆಗೆ ಸಂಬಂಧಿಸಿ ಸರ್ಕಾರ ಕೆಲವು ಸ್ಪಷ್ಟನೆಗಳನ್ನು ಕೇಳಿರುವುದಾಗಿ ತಿಳಿಸಿದ ಅವರು, ಅದಕ್ಕೆ ಅಗತ್ಯ ಉತ್ತರವನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ವಾರ್ತಾ ಭಾರತಿ 4 Feb 2026 12:23 am

ಯಾದಗಿರಿ | ರೈಲ್ವೆ ಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ನಿರ್ಲಕ್ಷ್ಯ ನಿಲ್ಲಿಸಬೇಕು: ಕರವೇ ಆಗ್ರಹ

ಯಾದಗಿರಿ : 2012ರಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ರೈಲ್ವೆ ಇಲಾಖೆಯಲ್ಲಿ ನೌಕರಿಗೆ ಸೇರಿದ ಸಿಬ್ಬಂದಿಯ ಬಡ್ತಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದೇ ಘೋರ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ಎನ್.ಭೀಮುನಾಯಕ ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಬೇರೆ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಿದ್ದರೂ ಕನ್ನಡಕ್ಕೆ ಮಾತ್ರ ತಾತ್ಸಾರ ತೋರಿಸಲಾಗುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರವೇ ವತಿಯಿಂದ ಈ ಹಿಂದೆ ಹಲವು ಬಾರಿ ಹೋರಾಟ ನಡೆಸಿದರೂ, ಆಗ ನೀಡಿದ ಭರವಸೆಗಳು ಇನ್ನೂ ಭರವಸೆಯಲ್ಲಿಯೇ ಉಳಿದಿವೆ. ಕನ್ನಡದಲ್ಲಿ ಪರೀಕ್ಷೆ ಬರೆದು ನೌಕರಿ ಪಡೆದ ಸಿಬ್ಬಂದಿಗೆ ಬಡ್ತಿ ಪರೀಕ್ಷೆಯನ್ನು ಮಾತ್ರ ಆಂಗ್ಲ ಅಥವಾ ಹಿಂದಿಯಲ್ಲಿ ಬರೆಯಬೇಕೆಂಬ ಹೇರಿಕೆ ಮಾಡಿರುವುದು ರೈಲ್ವೆ ಇಲಾಖೆಯ ಕುಚೋದ್ಯದ ಕ್ರಮ ಎಂದು ಟೀಕಿಸಿದರು. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನೇಮಕಾತಿ ಅಧಿಸೂಚನೆಯಲ್ಲಿ ಕನ್ನಡದಲ್ಲೂ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಿಸಿ, ನಂತರ ಅದನ್ನು ಹಿಂಪಡೆದು ಪರೀಕ್ಷೆ ನಡೆಸಿರುವುದು ನಾಚಿಕೆಗೇಡು ಸಂಗತಿ ಎಂದು ಅವರು ಹೇಳಿದರು. ಇದಕ್ಕೆ ಇಲಾಖೆ ನೀಡುತ್ತಿರುವ “ಕಂಪ್ಯೂಟರ್ ವ್ಯವಸ್ಥೆ ಇಲ್ಲ” ಎಂಬ ಕಾರಣ ಬಾಲಿಷ ಹಾಗೂ ಕೇವಲ ಸಬೂಬು ಮಾತ್ರ ಎಂದು ಆರೋಪಿಸಿದರು. ಇಂತಹ ಕಾರಣಗಳನ್ನು ಬಿಟ್ಟು ಕೂಡಲೇ ಕನ್ನಡದಲ್ಲಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪದೇಪದೇ ನಡೆಯುತ್ತಿರುವ ಈ ಅನ್ಯಾಯದ ಬಗ್ಗೆ ರಾಜ್ಯದ ಸಂಸದರು, ಕೇಂದ್ರ ಸಚಿವರು ಗಂಭೀರವಾಗಿ ಗಮನ ಹರಿಸಬೇಕು. ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಬೇಕು ಎಂದು ಮನವಿ ಮಾಡಿದರು. ಕನ್ನಡದಲ್ಲಿ ಪರೀಕ್ಷೆ ಬರೆದು ಹುದ್ದೆ ಪಡೆದು 14 ವರ್ಷಗಳು ಕಳೆದರೂ ಬಡ್ತಿ ಪರೀಕ್ಷೆಗಳು ಕನ್ನಡದಲ್ಲಿ ನಡೆಯದಿರುವುದು ಅತ್ಯಂತ ನಾಚಿಕೆಗೇಡು ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸದಿದ್ದರೆ ಹೋರಾಟ ತೀವ್ರಗೊಳಿಸಿ ರೈಲ್ವೆ ಇಲಾಖೆ ಪರೀಕ್ಷೆಗಳಿಗೆ ಅಡ್ಡಿಪಡಿಸುವ ಹೋರಾಟ ನಡೆಸಲಾಗುವುದು ಎಂದು ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾಜ ಪಾಟೀಲ್ ಹಾಗೂ ಪ್ರಕಾಶ ಪಾಟೀಲ್ ಜೈಗ್ರಾಮ್ ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 4 Feb 2026 12:15 am

ಟಿ-20 ವಿಶ್ವಕಪ್| ಇಶಾನ್ ಕಿಶನ್‌ಗೆ ತೆರೆದ ಅವಕಾಶದ ಬಾಗಿಲು

ಹೊಸದಿಲ್ಲಿ, ಫೆ.3: ಮುಖ್ಯಕೋಚ್ ಗೌತಮ್ ಗಂಭೀರ್ ನೇತೃತ್ವದ ನೂತನ ಆಡಳಿತ ಮಂಡಳಿಯು ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಸ್ವಲ್ಪ ಪರಿವರ್ತನೆ ಮಾಡಿದ್ದರೂ ಟಿ-20 ಕ್ರಿಕೆಟ್ ತಂಡದಲ್ಲಿ ಹೆಚ್ಚು ಬದಲಾವಣೆಗೆ ಮುಂದಾಗಿಲ್ಲ. 2024ರ ಜೂನ್ನಲ್ಲಿ ಬ್ರಿಡ್ಜ್ಟೌನ್ನಲ್ಲಿ ಭಾರತವು ಟಿ-20 ವಿಶ್ವಕಪ್ ಎತ್ತಿ ಹಿಡಿದ ನಂತರ ಉತ್ತಮ ದಾಖಲೆ ಕಾಯ್ದುಕೊಂಡಿದೆ. ಶ್ರೀಲಂಕಾದ ಜೊತೆ 2026ರ ಟಿ-20 ವಿಶ್ವಕಪ್ ಆತಿಥ್ಯವಹಿಸಿರುವ ಭಾರತ ತಂಡವು ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ. ಸಂಜು ಸ್ಯಾಮ್ಸನ್ ಅವರ ಫಾರ್ಮ್ ಭಾರತದ ಟಿ-20 ತಂಡದ ಆಯ್ಕೆಯಲ್ಲಿ ಗೊಂದಲ ಉಂಟು ಮಾಡಿದ್ದು, ಭಾರತದ ಆಡುವ 11ರ ಬಳಗದಲ್ಲಿ ಸ್ಯಾಮ್ಸನ್ ಸ್ಥಾನ ಅಲುಗಾಡುತ್ತಿದೆ. ಭಾರತ ತಂಡವು ಮೇಲ್ನೋಟಕ್ಕೆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನೆಚ್ಚಿನ ತಂಡವಾಗಿ ಕಂಡುಬರುತ್ತಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿಹಿಡಿದ ನಂತರ ಭಾರತ ತಂಡವು ಆಡಿರುವ 41 ಟಿ-20 ಪಂದ್ಯಗಳ ಪೈಕಿ 33ರಲ್ಲಿ ಜಯ ಸಾಧಿಸಿದ್ದು, ಕೇವಲ ಆರರಲ್ಲಿ ಸೋತಿದೆ. ಇತ್ತೀಚೆಗೆ ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ದ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ. ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜ ಟಿ-20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಹೊಸ ಆಟಗಾರರು ಸ್ಥಾನ ಪಡೆದಿದ್ದಾರೆ. 2025ರ ಡಿ.20ರದು ವಿಶ್ವಕಪ್ಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಅಭಿಷೇಕ್ ಶರ್ಮಾ ಅಗ್ರ ಸರದಿಯಲ್ಲಿದ್ದು, ತಿಲಕ್ ವರ್ಮಾ, ಶಿವಂ ದುಬೆ ಹಾಗೂ ರಿಂಕು ಸಿಂಗ್ ಮಧ್ಯಮ ಸರದಿಯಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಆಲ್ರೌಂಡರ್ ಸ್ಥಾನ ತುಂಬಲಿದ್ದಾರೆ. ಜಸ್ಪ್ರಿತ್ ಬುಮ್ರಾ ಹಾಗೂ ಅರ್ಷದೀಪ ಸಿಂಗ್ ಬೌಲಿಂಗ್ ದಾಳಿಯ ನೇತೃತ್ವ ವಹಿಸಲಿದ್ದಾರೆ. ಶುಭಮನ್ ಗಿಲ್ರನ್ನು ಕೈಬಿಡುವ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸ್ಯಾಮ್ಸನ್ಸ್‌ಗೆ ಅಭಿಷೇಕ್ರೊಂದಿಗೆ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ನೀಡಲಾಗಿತ್ತು. ಸ್ಯಾಮ್ಸನ್ 2024ರ ಅಕ್ಟೋಬರ್‌ನಿಂದ 2025ರ ಫೆಬ್ರವರಿಯ ತನಕ 12 ಇನ್ನಿಂಗ್ಸ್‌ಗಳಲ್ಲಿ 37.91ರ ಸರಾಸರಿಯಲ್ಲಿ ಒಟ್ಟು 417 ರನ್ ಗಳಿಸಿದ್ದು, ಇದರಲ್ಲಿ ಮೂರು ಶತಕಗಳಿವೆ. ಆ ಮೂರೂ ಶತಕಗಳನ್ನು 190ರ ಸ್ಟ್ರೈಕ್ರೇಟ್‌ನಲ್ಲಿ ದಾಖಲಿಸಿದ್ದರು. 2025ರ ಸೆಪ್ಟಂಬರ್‌ನಲ್ಲಿ ಏಶ್ಯ ಕಪ್ ವೇಳೆ ಸ್ಯಾಮ್ಸನ್ ಅವರು ಆರಂಭಿಕನ ಸ್ಥಾನ ಕಳೆದುಕೊಂಡರು. 3ನೇ ಹಾಗೂ 5ನೇ ಕ್ರಮಾಂಕಕಕ್ಕೆ ತಳ್ಳಲ್ಪಟ್ಟರು. ವಿಶ್ವಕಪ್ ತಂಡವನ್ನು ಪ್ರಕಟಿಸುವ ಸಲುವಾಗಿ ಅಗ್ರ ಸ್ಥಾನಕ್ಕೆ ಮರಳುವ ಮೊದಲು ಐದು ಇನಿಂಗ್ಸ್ಗಳಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 22 ಎಸೆತಗಳಲ್ಲಿ 37 ರನ್ ಗಳಿಸಿ ಮೊದಲಿನ ಫಾಮ್‌ಗೆ ಮರಳುವ ಸುಳಿವು ನೀಡಿದ್ದರು. ಗಿಲ್ರನ್ನು ಕೈಬಿಟ್ಟು ಸ್ಯಾಮ್ಸನ್ ಕೈಹಿಡಿದ ಟೀಮ್ ಮ್ಯಾನೇಜ್ಮೆಂಟ್ ಅಭಿಷೇಕ್ ಜೊತೆ ಇನಿಂಗ್ಸ್ ಆರಂಭಿಸುವ ಹೆಚ್ಚುವರಿ ಜವಾಬ್ದಾರಿಯನ್ನು ಸ್ಯಾಮ್ಸನ್‌ಗೆ ವಹಿಸಿತು. ಸ್ವದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಕಿವೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಸ್ಯಾಮ್ಸನ್ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಭಾರತದ ಟಿ-20 ಬತ್ತಳಿಕೆಯಲ್ಲಿ ದೊಡ್ಡ ಬಿರುಕು ಕಂಡುಬಂದಿದೆ. ಸ್ಯಾಮ್ಸನ್ ಐದು ಇನಿಂಗ್ಸ್‌ಗಳಲ್ಲಿ 9.2ರ ಸರಾಸರಿಯಲ್ಲಿ 10,6, 0,24 ಹಾಗೂ 6 ರನ್ ಗಳಿಸಿದ್ದರು. ಸ್ವದೇಶದ ಪಿಚ್‌ನಲ್ಲಿ ಸ್ಪೆಷಲಿಸ್ಟ್ ಅಗ್ರ ಸರದಿಯ ಬ್ಯಾಟರ್ ಆಗಿ ಸ್ಯಾಮ್ಸನ್ ನೀರಸ ಪ್ರದರ್ಶನ ನೀಡಿದ್ದರು. ತಿಲಕ್ ವರ್ಮಾ ಗಾಯಗೊಂಡ ಕಾರಣ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ರಾಯ್ಪುರದಲ್ಲಿ 32 ಎಸೆತಗಳಲ್ಲಿ 76 ರನ್, ಗುವಾಹಟಿಯಲ್ಲಿ 28 ರನ್, ಸರಣಿಯ ಕೊನೆಯ ಪಂದ್ಯದಲ್ಲಿ 43 ಎಸೆತಗಳಲ್ಲಿ 103 ರನ್ ಗಳಿಸಿದ್ದರು. 53.75ರ ಸರಾಸರಿಯಲ್ಲಿ 231.19ರ ಸ್ಟ್ರೈಕ್ರೇಟ್‌ನಲ್ಲಿ ಒಟ್ಟು 215 ರನ್ ಗಳಿಸಿದ್ದರು. ಕಿಶನ್ ಭಾರತದ ಅಗ್ರ ಸರದಿಯನ್ನು ಬಲಿಷ್ಠಗೊಳಿಸಿದ್ದಲ್ಲದೆ ಅಗ್ರ ಕ್ರಮಾಂಕದಲ್ಲಿ ಸ್ಯಾಮ್ಸನ್ ಸ್ಥಾನಕ್ಕೆ ನೇರ ಸವಾಲು ಒಡ್ಡಿದ್ದಾರೆ. ತಿಲಕ್ ವರ್ಮಾ ಗಾಯದಿಂದ ಚೇತರಿಸಿಕೊಂಡು ಆಡುವ 11ರ ಬಳಗಕ್ಕೆ ವಾಪಸಾದರೆ ಕಿಶನ್ ದೊಡ್ಡ ತಲೆನೋವಾಗಬಹುದು. ಎಡಗೈ ಬ್ಯಾಟರ್ ಕಿಶನ್‌ರನ್ನು ಕೈಬಿಡುವುದು ಸುಲಭದ ಮಾತಲ್ಲ. ಸ್ಯಾಮ್ಸನ್ ಭಾರತದ ಪರ ಒಟ್ಟು 57 ಟಿ-20 ಪಂದ್ಯಗಳನ್ನು ಆಡಿದ್ದಾರೆ. 2024ರ ಟಿ-20 ವಿಶ್ವಕಪ್ ನಂತರ 33 ಪಂದ್ಯಗಳನ್ನಾಡಿದ್ದಾರೆ. ಭಾರತ ತಂಡವು ಫೆ.7ರಂದು ಅಮೆರಿಕದ ವಿರುದ್ಧ ಮುಂಬೈನಲ್ಲಿ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ಟೀಮ್ ಮ್ಯಾನೇಜ್ಮೆಂಟ್ ಸ್ಯಾಮ್ಸನ್ರನ್ನು ಹಿಂದಿನ ದಾಖಲೆಯನ್ನು ನೋಡಿ ಉಳಿಸಿಕೊಳ್ಳಲಿದೆಯೇ, ಇಶಾನ್ ಕಿಶನ್ ಅವರ ಈಗಿನ ಫಾರ್ಮ್ ಕಡೆಗಣಿಸಲಿದೆಯೇ?ಎಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ.

ವಾರ್ತಾ ಭಾರತಿ 4 Feb 2026 12:12 am

ಯಾದಗಿರಿ | ಪಂಚ ಗ್ಯಾರಂಟಿ ಮೂಲಕ ಕಾಂಗ್ರೆಸ್ ಜನಮನ ಗೆದ್ದಿದೆ: ಟಿ.ಸುದಾಮ

ಯಾದಗಿರಿ : ಕಾಂಗ್ರೆಸ್ ಪಕ್ಷ ಬಡವರಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಎಲ್ಲಾ ಜನಾಂಗಗಳ ಪ್ರೀತಿಗೆ ಪಾತ್ರವಾಗಿದೆ. ಕಾಂಗ್ರೆಸ್ ಸರಕಾರ ದುರ್ಬಲರು, ಬಡವರು, ಕಾರ್ಮಿಕರು, ಮಹಿಳೆಯರು ಹಾಗೂ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷರೂ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಟಿ.ಸುದಾಮ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ (ಎಸ್.ಸಿ) ಜಿಲ್ಲಾ ಪದಾಧಿಕಾರಿಗಳು ಹಾಗೂ ಬ್ಲಾಕ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ನಮಗೆ ಉಸಿರಾಡುವ ಅವಕಾಶ ನೀಡಿದೆ. ಆದ್ದರಿಂದ ಪಕ್ಷವನ್ನು ಬೂತ್ ಮಟ್ಟದಿಂದಲೇ ಬಲಪಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ನೀಲಕಂಠ ಬಡಿಗೇರ ಮಾತನಾಡಿ, ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಮಾತ್ರ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಮುಂದುವರಿದ ಜನಾಂಗಗಳನ್ನು ಸಮಾನವಾಗಿ ನಡೆಸಿಕೊಂಡು ಹೋಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು. ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ನೀಲಕಂಠ ಬಡಿಗೇರ, ಹಿರಿಯ ಮುಖಂಡರಾದ ಮಲ್ಲಣ್ಣ ದಾಸನಕೇರಿ, ಜಿಲ್ಲಾ ವಕ್ತಾರ ಹಣಮಂತ ಲಿಂಗೇರಿ, ಕಾಶಪ್ಪ ಚಿನ್ನಾಕಾರ, ಭಾಸ್ಕರ ರಾಮಸಮುದ್ರ, ವಿರುಪಾಕ್ಷಿ ಕೆಂಭಾವಿ, ಮರೆಪ್ಪ ಸುರಪುರ, ದೊಡ್ಡಪ್ಪ ಹುಂಡೇಕಲ್, ಭೀಮರಾಯ ಕಾಂಗ್ರೆಸ್, ಮುಖಂಡರಾದ ಸಾಯಬಣ್ಣ ಕಾವಲಿ, ಚಂದ್ರಕಾಂತ ಮಾಸ್ಟರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Feb 2026 12:07 am

ವಿರಳ ಖನಿಜಗಳ ಸಂಗ್ರಹಕ್ಕಾಗಿ 12 ಶತಕೋಟಿ ಡಾಲರ್ ನಿಧಿ ಮೀಸಲಿಟ್ಟ ಅಮೆರಿಕ

ವಾಶಿಂಗ್ಟನ್, ಫೆ.3: ಅತ್ಯಂತ ವಿರಳವಾಗಿ ಲಭ್ಯವಿರುವ ಖನಿಜಗಳನ್ನು ವ್ಯೂಹಾತ್ಮಕವಾಗಿ ಸಂಗ್ರಹಿಸಿಡುವುದಕ್ಕಾಗಿ ಟ್ರಂಪ್ ಆಡಳಿತವು ಸುಮಾರು 12 ಶತಕೋಟಿ ಡಾಲರ್ ಹಣವನ್ನು ಮೀಸಲಿಡಲಿದೆ. ವಿರಳ ಖನಿಜ ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯಕ್ಕೆ ಪ್ರತಿಸ್ಪರ್ಧೆ ಒಡ್ಡುವ ಉದ್ದೇಶದಿಂದ ಟ್ರಂಪ್ ಆಡಳಿತ ಈ ನಡೆಯನ್ನಿರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ‘ಪ್ರಾಜೆಕ್ಟ್ ವಾಲ್ಟ್’ ಎಂದು ಹೆಸರಿಡಲಾದ ಈ ಯೋಜನೆಗೆ ಆರಂಭಿಕವಾಗಿ ಅಮೆರಿಕದ ಆಮದು-ರಫ್ತು ಬ್ಯಾಂಕ್‌ ನಿಂದ 10 ಶತಕೋಟಿ ಡಾಲರ್ ಸಾಲದ ಮೂಲಕ ನೆರವು ನೀಡಲಾಗುವುದು. ಈ ಸಂಗ್ರಹದಲ್ಲಿ ಇರಿಸಲಾಗುವ ವಿರಳ ಖನಿಜಗಳು ಪೂರೈಕೆ ಸರಪಣಿಯಲ್ಲಿ ವ್ಯತ್ಯಯಗಳು ಉಂಟಾದಾಗ ಆಟೋಮೊಬೈಲ್, ಇಲೆಕ್ಟ್ರಾನಿಕ್ಸ್ ಹಾಗೂ ಮತ್ತಿತರ ವಲಯಗಳ ಉತ್ಪಾದಕರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಈ ಮೀಸಲು ಸಂಗ್ರಹ ನೆರವಾಗಲಿದೆ ಎಂದು ಅವು ತಿಳಿಸಿವೆ. ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ಶೇ.50ಕ್ಕಿಂತಲೂ ಅಧಿಕ ಸುಂಕ ಹೇರಿದ ಸಂದರ್ಭ ಚೀನಾ ಸರ್ಕಾರವು ಅಮೆರಿಕದಲ್ಲಿ ಜೆಟ್ ಎಂಜಿನ್‌ ಗಳು, ರಾಡಾರ್ ವ್ಯವಸ್ಥೆಗಳು, ಇಲೆಕ್ಟ್ರಿಕ್ ವಾಹನಗಳು, ಲ್ಯಾಪ್‌ ಟಾಪ್‌ ಗಳು ಹಾಗೂ ಫೋನ್‌ ಗಳ ಉತ್ಪಾದನೆಗೆ ಬೇಕಾದ ವಿರಳ ಖನಿಜಗಳ ರಫ್ತನ್ನು ನಿಬಂಧಿಸಿತ್ತು. ಜಗತ್ತಿನಲ್ಲಿ ಲಭ್ಯವಿರುವ ವಿರಳ ಖನಿಜಗಳ ಪೈಕಿ ಶೇ.70ರಷ್ಟು ಚೀನಾದ ಬಳಿಯಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಶೇ.90ರಷ್ಟು ವಿರಳ ಖನಿಜಗಳ ಪರಿಷ್ಕರಣೆಯನ್ನು ಚೀನಾವೇ ನಡೆಸುತ್ತಿದೆ.

ವಾರ್ತಾ ಭಾರತಿ 4 Feb 2026 12:06 am

ಯಾದಗಿರಿ | ಶೇಂಗಾ ದರ ಹಠಾತ್ ಕುಸಿತ: ಎಪಿಎಂಸಿ ಯಾರ್ಡ್‌ನಲ್ಲಿ ರೈತರ ಪ್ರತಿಭಟನೆ

ಯಾದಗಿರಿ: ಶೇಂಗಾ ದರ ಹಠಾತ್ ಕುಸಿತಗೊಂಡ ಪರಿಣಾಮ ನಗರದ ಎಪಿಎಂಸಿ ಯಾರ್ಡ್‌ನ ಅಡತ್ ಅಂಗಡಿಗಳ ಮುಂದೆ ಹಾಗೂ ಎಪಿಎಂಸಿ ಕಚೇರಿ ಎದುರು ಹತ್ತಾರು ಹಳ್ಳಿಗಳ ರೈತರು ಮಂಗಳವಾರ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೊನ್ನೆ ತನಕ ಗರಿಷ್ಠ ದರದಲ್ಲಿ ಶೇಂಗಾ ಮಾರಾಟವಾಗುತ್ತಿದ್ದರೆ, ನಿನ್ನೆ ಹಾಗೂ ಇಂದು ಏಕಾಏಕಿ ಪ್ರತಿ ಕ್ವಿಂಟಾಲ್‌ಗೆ ಕೇವಲ 5 ರಿಂದ 6 ಸಾವಿರ ರೂ. ದರ ನಿಗದಿಯಾಗಿರುವುದು ರೈತರ ಅಸಮಾಧಾನಕ್ಕೆ ಕಾರಣವಾಯಿತು. ಇದರಿಂದ ಶೇಂಗಾ ಮಾರಾಟಕ್ಕೆ ಬಂದಿದ್ದ ನೂರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಶಿ ಮಾಡಿಕೊಂಡು ಯಾರ್ಡ್‌ಗೆ ತಂದ ಶೇಂಗಾ ಬೆಳೆಗೆ ಸರಿಯಾದ ದರ ನಿಗದಿಯಾಗದೆ ರೈತರು ತೀವ್ರ ಸಂಕಷ್ಟ ಅನುಭವಿಸಿದರು. ವಿವಿಧ ಅಡತ್ ಅಂಗಡಿಗಳ ಮುಂದೆ ರಾಶಿಗಟ್ಟಲೇ ಶೇಂಗಾ ಬೀಜಗಳನ್ನು ಇಳಿಸಿದ ರೈತರು, ಉತ್ತಮ ದರ ಇಲ್ಲದ ಕಾರಣ ತಲೆ ಮೇಲೆ ಕೈ ಇಟ್ಟುಕೊಂಡು ಅಸಹಾಯಕತೆ ವ್ಯಕ್ತಪಡಿಸಿದರು. ಸಾಲ ಮಾಡಿ ಶೇಂಗಾ ಬೆಳೆದಿದ್ದೇವೆ. ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಸಾಲ ತೀರಿಸಬೇಕೆಂದುಕೊಂಡಿದ್ದೆವು. ಆದರೆ ಹೀಗೆ ಏಕಾಏಕಿ ದರ ಇಳಿಸಿದರೆ ನಮಗೆ ಸಾವೇ ಗತಿ ಎಂದು ಅನೇಕ ರೈತರು ಕಣ್ಣೀರಿಟ್ಟರು. ಕಳೆದ ಎರಡು ದಿನಗಳಿಂದ ಬಳಿಚಕ್ರ, ಟೋಕಾಪುರ, ರಾಮಸಮುದ್ರ, ಕಾಳೆಬೆಳಗುಂದಿ, ಕಿಲ್ಲನಕೇರಾ, ನಾಗರಬಂಡಿ, ಗೌಡಗೇರಾ ಸೇರಿದಂತೆ ಹಲವು ಗ್ರಾಮಗಳಿಂದ ನೂರಾರು ರೈತರು ಶೇಂಗಾ ರಾಶಿಗಳನ್ನು ತಂದು ಅಡತ್ ಅಂಗಡಿಗಳ ಮುಂದೆ ಇಳಿಸಿದ್ದಾರೆ. ವ್ಯಾಪಾರಿಗಳು ಬಂದು ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದರು. ಆದರೆ ಖರೀದಿದಾರರು ಬಾರದ ಕಾರಣ ಹಾಗೂ ಕಡಿಮೆ ದರ ನಿಗದಿಯಾಗಿರುವ ಸುದ್ದಿ ತಿಳಿದು ರೈತರು ಆಕ್ರೋಶಗೊಂಡರು. ನಂತರ ರೈತರು ಎಪಿಎಂಸಿ ಕಚೇರಿಗೆ ತೆರಳಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ ಕಾರ್ಯದರ್ಶಿ ಸುರಪುರ ಕಚೇರಿಗೆ ತೆರಳಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಧಾರಣಿ ಹೆಚ್ಚಳ–ಇಳಿಕೆಯ ಕಾರಣದಿಂದ ದರದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.

ವಾರ್ತಾ ಭಾರತಿ 4 Feb 2026 12:00 am

Mumbai | ಎರಡು ವಿಮಾನಗಳ ನಡುವೆ ಢಿಕ್ಕಿ

ಮುಂಬೈ, ಫೆ. 3: ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಎರಡು ಪ್ರಯಾಣಿಕ ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆ ಸಂಭವಿಸುವ ಸಂದರ್ಭದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು.ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಕೊಯಂಬತ್ತೂರಿಗೆ ಹಿಂದಿರುಗಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಹಾಗೂ ಹೈದರಾಬಾದ್‌ ನಿಂದ ಆಗಮಿಸಿದ ಬಳಿಕ ನಿಲುಗಡೆ ಸ್ಥಳಕ್ಕೆ ಚಲಿಸುತ್ತಿದ್ದ ಇಂಡಿಗೋ ವಿಮಾನದ ನಡುವೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. “ಎರಡೂ ವಿಮಾನಗಳ ರೆಕ್ಕೆಗಳು ಢಿಕ್ಕಿಯಾಗಿವೆ. ಇದರಿಂದ ನಮ್ಮ ವಿಮಾನಕ್ಕೆ ಹಾನಿ ಸಂಭವಿಸಿದೆ,” ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.

ವಾರ್ತಾ ಭಾರತಿ 3 Feb 2026 11:56 pm

ಚೋರ್ಲಾಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣ | ಅಧಿಕೃತ ದೂರು ದಾಖಲಾಗಿಲ್ಲ : ಜಿಲ್ಲಾ ವರಿಷ್ಠಾಧಿಕಾರಿ ಸ್ಪಷ್ಟನೆ

ಬೆಳಗಾವಿ : ಜಿಲ್ಲೆಯ ಚೋರ್ಲಾಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿ, ಈಗಾಗಲೇ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಂಗಳವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ. ಬಾಯಿ ಮಾತಿನಲ್ಲಿ ಹೇಳಿದ ಹೇಳಿಕೆಗಳೆಲ್ಲವೂ ನಿಜ ಎಂದು ನಂಬಲಾಗುವುದಿಲ್ಲ. ಸಂಬಂಧಿಸಿದ ವ್ಯಕ್ತಿ ಬಂದು ದೂರು ನೀಡಿದರೆ ಮಾತ್ರ ಪರಿಶೀಲನೆ ನಡೆಸಲಾಗುವುದು ಎಂದರು. ಅವರು ಹೊರಹರಟಿಯಲ್ಲಿ ತಿಳಿಸಿದಂತೆ, ಘಟನೆಯನ್ನು ನೋಡಿದ್ದೇವೆ ಎಂದು ಹೇಳುವವರು ಬಂದು ದೂರು ನೀಡಬೇಕು. ಇತರರ ಬಾಯಿಯಿಂದ ಕೇಳಿ ತನಿಖೆ ನಡೆಸಲು ಸಾಧ್ಯವಿಲ್ಲ. ಯಾವುದೇ ಪ್ರಾಥಮಿಕ ಪರಿಶೀಲನೆ ದೂರು ಬಂದ ಮೇಲೆ ಮಾತ್ರ ಸಾಧ್ಯ ಎಂದು ವಿವರಿಸಿದರು. ಮಹಾರಾಷ್ಟ್ರ ಸರಕಾರದ ವಿಶೇಷ ತನಿಖಾ ತಂಡ ರಚನೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಏಕೆ ವಿಶೇಷ ತನಿಖಾ ತಂಡ ರಚಿಸಿದೆ ಎಂಬುದಕ್ಕೆ ಮಹಾರಾಷ್ಟ್ರ ಸರಕಾರವೇ ವಿವರಣೆ ನೀಡಬೇಕು. ಈವರೆಗೆ ನಮ್ಮ ಅಧಿಕಾರಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಹಣದ ಬಗ್ಗೆ ಮಹಾರಾಷ್ಟ್ರದ ಅಧಿಕಾರಿಗಳು ನೀಡಿದ ಮಾಹಿತಿ ಅಪೂರ್ಣವಾಗಿದೆ. ಹೆಚ್ಚಿನ ಮಾಹಿತಿ ಬೇಕಾದಷ್ಟರಷ್ಟೇ ನಾವು ಉತ್ತರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 3 Feb 2026 11:50 pm

ತೈಲ ಖರೀದಿ ನಿಲ್ಲಿಸುವ ಬಗ್ಗೆ ಭಾರತದಿಂದ ಸಂದೇಶ ಬಂದಿಲ್ಲ: ರಶ್ಯ ಸ್ಪಷ್ಟನೆ

ಮಾಸ್ಕೊ, ಫೆ.3: ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿರುವುದಾಗಿ ಭಾರತವು ತನಗೆ ತಿಳಿಸಿಲ್ಲವೆಂದು ರಶ್ಯನ್ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಭಾರತ-ಅಮೆರಿಕ ನಡುವೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದದ ಭಾಗವಾಗಿ ಭಾರತವು ರಶ್ಯದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಲಿದೆಯೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಕ್ರೆಮ್ಲಿನ್ ಈ ಸ್ಪಷ್ಟನೆ ನೀಡಿದೆ. ‘‘ಈ ವಿಚಾರವಾಗಿ (ರಶ್ಯದಿಂದ ತೈಲ ಖರೀದಿ ಸ್ಥಗಿತ) ಈತನಕ ಹೊಸದಿಲ್ಲಿಯು ಯಾವುದೇ ಹೇಳಿಕೆ ನೀಡಿರುವುದನ್ನು ನಾವು ಕೇಳಿಲ್ಲ’’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಾಸ್ಕೊದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘‘ಭಾರತ-ಅಮೆರಿಕ ದ್ವಿಪಕ್ಷೀಯ ಬಾಂಧವ್ಯಗಳನ್ನು ನಾವು ಗೌರವಿಸುತ್ತೇವೆ. ಆದರೆ ರಶ್ಯ ಹಾಗೂ ಭಾರತ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಬೆಳವಣಿಗೆಗೂ ನಾವು ನೀಡುತ್ತಿರುವ ಮಹತ್ವವೇನೂ ಕಡಿಮೆಯಿಲ್ಲ’’ ಎಂದರು. ಭಾರತ-ರಶ್ಯ ಬಾಂಧವ್ಯವು ನಮಗೆ ಮಹತ್ವದ ವಿಷಯವಾಗಿದೆ. ದಿಲ್ಲಿ ಜೊತೆ ದ್ವಿಪಕ್ಷೀಯ ಬಾಂಧವ್ಯಗಳನ್ನು ಮುಂದಕ್ಕೊಯ್ಯುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದರು. ಭಾರತ ಹಾಗೂ ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟಿರುವುದಾಗಿ ಸೋಮವಾರ ಟ್ರಂಪ್ ಘೋಷಿಸಿದ್ದರು. ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿದ್ದಕ್ಕಾಗಿ ಭಾರತವು ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.50ರಿಂದ ಶೇ.20ಕ್ಕೆ ಇಳಿಸಿರುವುದಾಗಿ ಅವರು ಪ್ರಕಟಿಸಿದ್ದರು. ರಶ್ಯದಿಂದ ತೈಲ ಖರೀದಿ ನಿಲ್ಲಿಸಲು ಹಾಗೂ ಅಮೆರಿಕ ಮತ್ತು ವೆನೆಝುವೆಲಾದಿಂದ ಅಧಿಕ ತೈಲವನ್ನು ಭಾರತ ಒಪ್ಪಿಕೊಂಡಿದೆ ಎಂದು ಟ್ರಂಪ್ ಅವರು ‘ಎಕ್ಸ್’ನಲ್ಲಿ ಪ್ರಸಾರ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದರು. ಉಕ್ರೇನ್ ವಿರುದ್ಧ ರಶ್ಯವು ಆಕ್ರಮಣ ನಡೆಸಿದ ಬಳಿಕ ರಶ್ಯದ ತೈಲ ಪೂರೈಕೆಗೆ ಯುರೋಪಿಯನ್ ರಾಷ್ಟ್ರಗಳು ನಿರ್ಬಂಧ ವಿಧಿಸಿದ್ದವು. ಈ ಸನ್ನಿವೇಶದ ಲಾಭವನ್ನು ಪಡೆದ ಭಾರತವು ಕಡಿಮೆ ದರದಲ್ಲಿ ರಶ್ಯನ್ ತೈಲವನ್ನು ಖರೀದಿಸತೊಡಗಿತ್ತು.

ವಾರ್ತಾ ಭಾರತಿ 3 Feb 2026 11:49 pm

ಯಾದಗಿರಿ | ದೇವಿಕೇರಾ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ

ಯಾದಗಿರಿ : ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾದ ಸರಕಾರಿ ಭೂಮಿಯನ್ನು ತಕ್ಷಣವೇ ರದ್ದುಪಡಿಸಿ, ಬೇರೆ ಯೋಗ್ಯ ಸ್ಥಳದಲ್ಲಿ ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ದೇವಿಕೇರಾ ಗ್ರಾಮದ ಸರಕಾರಿ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿದೆ. ಈ ಭೂಮಿ ಊರಿಗೆ ಅತೀ ಸಮೀಪದಲ್ಲಿದ್ದು, ಅಕ್ಕಪಕ್ಕದಲ್ಲಿ ವಸತಿ ಮನೆಗಳಿರುವುದರಿಂದ ಇಲ್ಲಿ ಶವ ಸಂಸ್ಕಾರ ನಡೆಸುವುದು ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸ್ಥಳ ಸ್ಮಶಾನಕ್ಕೆ ಸೂಕ್ತವಲ್ಲದೆ, ಸರ್ವ ಜನಾಂಗದವರಿಂದಲೂ ವಿರೋಧ ವ್ಯಕ್ತವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್, ಗೋಪಾಲ ತೆಳಗೇರಿ, ಭೀಮಣ್ಣ ಕಮತಗಿ, ಸೈದಪ್ಪ ಕೂಯಿಲೂರ್, ಮಲ್ಲಪ್ಪ ಬೆವಿನಗಿಡಿ, ಯಕಂಪ್ಪ ಹೊಸಮನಿ, ಶರಣಪ್ಪ ಪೂಜಾರಿ, ಮಲ್ಲಪ ಯಮನೂರ, ವೆಂಕಟೇಶ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Feb 2026 11:46 pm

Belagavi | ಅಪರಿಚಿತ ವಾಹನ ಢಿಕ್ಕಿ; ಬೈಕ್‌ನಲ್ಲಿದ್ದ ಮೂವರು ಮೃತ್ಯು

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಸಮೀಪ ಸೋಮವಾರ ರಾತ್ರಿ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೂವರು ಸಾವನ್ನಪಿರುವುದು ವರದಿಯಾಗಿದೆ. ಮೊರಬ್ ಗ್ರಾಮದ ನಿವಾಸಿ ಗಜಾನನ ಮಹಾದೇವ ವಡೆಯರ್ ಹಾಗೂ ಮುಗಳಖೋಡ ಗ್ರಾಮದ ನಿವಾಸಿ ಮಹಾದೇವ ಮಲ್ಲಪ್ಪ ಗೋಲಭಾವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಮಾಳಪ್ಪ ಮಲ್ಲಪ್ಪ ಗೋಲಭಾವಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನದ ಚಾಲಕ ವಾಹನ ಸಮೇತ ಪರಾರಿಯಾಗಿದ್ದು, ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ವಾರ್ತಾ ಭಾರತಿ 3 Feb 2026 11:45 pm

WPL 2026- ಜೆಮಿಮಾ ಆರ್ಭಟಕ್ಕೆ ಗುಜರಾತ್ ಜೈಂಟ್ಸ್ ಧೂಳೀಪಟ; ಫೈನಲ್ ನಲ್ಲಿ RCBಗೆ ಸವಾಲಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್!

Delhi Capitals Vs Gujarat Giants- ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ನಲ್ಲಿ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜ್ಸ್ ಬೆಂಗಳೂರು ತಂಡವನ್ನು ಎದುರಿಸುವ ತಂಡ ಯಾವುದೆಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಮಂಗಳವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೆಮಿಮಾ ರೋಡ್ರಿಗಸ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿಜಯ ಕರ್ನಾಟಕ 3 Feb 2026 11:44 pm

ಪುತ್ತೂರು| ಯುವತಿಗೆ ವಂಚನೆ ಪ್ರಕರಣ: ಸಂತ್ರಸ್ತೆಗೆ ಬೆಂಬಲವಾಗಿದ್ದ ಪ್ರತಿಭಾ ಕುಳಾಯಿಗೆ ಪೊಲೀಸ್ ನೋಟಿಸ್

ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ ರಾವ್‌ರ ಪುತ್ರ ಶ್ರೀಕೃಷ್ಣ ರಾವ್ ಎಂಬಾತ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಮಗು ಮಾಡಿದ ಪ್ರಕರಣದಲ್ಲಿ ಸಂತ್ರಸ್ತೆಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಗೆ ಪುತ್ತೂರು ನಗರ ಠಾಣೆಯ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈ ಸಂಬಂಧ ʼವಾರ್ತಾಭಾರತಿʼ ಪ್ರತಿಭಾ ಕುಳಾಯಿಯವರನ್ನು ಸಂಪರ್ಕಿಸಿ ಮಾತನಾಡಿದ್ದು, ‘‘ನನ್ನ ವಿರುದ್ಧ ಪಿ.ಜಿ.ಜಗನ್ನಿವಾಸ ರಾವ್ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿರುತ್ತಾರೆ. ಈ ದೂರು ಅರ್ಜಿಯನ್ನು ಅಧೀಕ್ಷರು ವಿಚಾರಣೆಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಕಳುಹಿಸಿದ್ದು, ವಿಚಾರಣೆಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ನೊಟಿಸ್ ನಲ್ಲಿ ತಿಳಿಸಲಾಗಿದೆ’’ ಎಂದು ತಿಳಿಸಿದ್ದಾರೆ. ‘‘ಪಿ.ಜಿ. ಜಗನ್ನಿವಾಸ ರಾವ್ ಎಂಬಾತ ಈ ಮೊದಲೂ ನನ್ನ ಮೇಲೆ ವಿನಾಕಾರಣ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾನೆ. ಆತನ ಕೇಸುಗಳಿಗೆ ಹೆದರುವುದಿಲ್ಲ. ಸಂತ್ರಸ್ತ ವಿದ್ಯಾರ್ಥಿನಿಯ ಮಗುವಿಗೆ ಫೆ.15 ಅಥವಾ 16ರಂದು ಕಲ್ಲಡ್ಕದಲ್ಲಿ ನಾಮಕರಣ ಸಮಾರಂಭ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’’ ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.

ವಾರ್ತಾ ಭಾರತಿ 3 Feb 2026 11:42 pm

ಬೀದರ್ | ಎಸ್‌ಐಆರ್‌ನಿಂದ ರಕ್ತರಹಿತ ನರಮೇಧ : ಪರಕಾಲ ಪ್ರಭಾಕರ್

ಎಸ್‌ಐಆರ್ ಚಿಂತನ-ಮಂಥನ ಸಮಾವೇಶ

ವಾರ್ತಾ ಭಾರತಿ 3 Feb 2026 11:41 pm

ಕನಕಗಿರಿ | ಬಂಗಾರದ ಆಮಿಷವೊಡ್ಡಿ ವಂಚನೆ: ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಕನಕಗಿರಿ : ಬಂಗಾರದ ನಿಧಿ ಸಿಕ್ಕಿದೆ ಎಂಬ ಆಮಿಷಕ್ಕೆ ಬಲಿಯಾಗಿ ವ್ಯಕ್ತಿಯೊಬ್ಬ ತನ್ನ ಒಂದು ಎಕರೆ ಹೊಲ ಹಾಗೂ ಒಂದು ನಿವೇಶನ ಮಾರಾಟದಿಂದ ಬಂದ ಹಣವನ್ನು ನೀಡಿ ವಂಚನೆಗೆ ಒಳಗಾದ ಘಟನೆ ಸಮೀಪದ ವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಮೋಚಿಗೇರ ಓಣಿಯ ರವಿ ಬಂಗಾಳಿಮರದ ಎಂಬುವರಿಗೆ, ಗಂಗಾವತಿಯ ಸುರೇಶ ಯಲ್ಲಪ್ಪ ಕನಕಗಿರಿ ಎಂಬವರ ಮೂಲಕ ವಿಠಲಾಪುರ ಗ್ರಾಮದ ಐದು ಜನರೊಂದಿಗೆ ಕಳೆದ 3–4 ವರ್ಷಗಳಿಂದ ಪರಿಚಯವಾಗಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಆರೋಪಿತರು ರವಿ ಅವರ ಮನೆಗೆ ಬಂದು, “ನಮ್ಮ ಮನೆಯಲ್ಲಿ ಬಂಗಾರದ ನಿಧಿ ಸಿಕ್ಕಿದೆ” ಎಂದು ಹೇಳಿ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಬಂಗಾರದ ನಾಣ್ಯಗಳನ್ನು ತೋರಿಸಿದ್ದರು. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಹೇಳಿದ್ದರು. ಕಡಿಮೆ ಬೆಲೆಗೆ ಬಂಗಾರ ಸಿಗುತ್ತದೆ ಎಂಬ ನಂಬಿಕೆಯಿಂದ ಬಂಗಾರದ ಆಮಿಷಕ್ಕೆ ಬಲಿಯಾದ ರವಿ ಅವರು, ತಮ್ಮ ಒಂದು ಎಕರೆ ಹೊಲ ಮತ್ತು ಒಂದು ನಿವೇಶನ ಮಾರಾಟದಿಂದ ಬಂದ ಒಟ್ಟು 48 ಲಕ್ಷ ರೂ. ಹಣವನ್ನು ಅಳಿಯ ರಮೇಶನ ಮೂಲಕ ನಗದು ಹಾಗೂ ಫೋನ್‌ಪೇ ಮೂಲಕ ಲೋಕೇಶನಿಗೆ ನೀಡಿದ್ದಾರೆ. ಆರೋಪಿತರು ಹಣ ಪಡೆದ ನಂತರ, ಈ ಬಟ್ಟೆ ಗಂಟಿನೊಳಗೆ ಬಂಗಾರ ಇದೆ. 21 ದಿನಗಳ ಕಾಲ ಪೂಜೆ ಮಾಡಿ ನಂತರ ಮಾತ್ರ ಗಂಟು ತೆಗೆಯಬೇಕು. ಇಲ್ಲದಿದ್ದರೆ ಬಂಗಾರ ಬೂದಿಯಾಗುತ್ತದೆ ಎಂದು ಸೂಚಿಸಿದ್ದರು. 21 ದಿನಗಳ ಬಳಿಕ ಗಂಟು ತೆರೆದು ನೋಡಿದಾಗ, ಅದರೊಳಗೆ ಖೊಟ್ಟಿ ನಾಣ್ಯಗಳು ಹಾಗೂ ಕಲ್ಲುಗಳು ಮಾತ್ರ ಇರುವುದು ಕಂಡು ಬಂದಿದ್ದು, ಇದರಿಂದ ತಮಗೆ ಮೋಸವಾಗಿರುವುದು ದೃಢಪಟ್ಟಿದೆ. ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಗ, ಆರೋಪಿತರು ಹಣದ ಭದ್ರತೆಗಾಗಿ ಶಾಂತಮ್ಮ ಅವರ ಹೆಸರಿನಲ್ಲಿರುವ ಎರಡು ಎಕರೆ ಹೊಲ ಹಾಗೂ 25 ಲಕ್ಷ ರೂ. ನಗದು ನೀಡಿ, ಉಳಿದ 23 ಲಕ್ಷ ರೂ. ಕೊಡಿ ಅಂತಾ ಕೇಳಿದರೆ ಜಾತಿ ನಿಂದನೆ ಮಾಡಿ ರಮೇಶ ಕಳ್ಳಿಮನಿ ಹಾಗೂ ರಮೇಶ ಹುಲ್ಲೂರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ವಿಠಲಾಪುರ ಗ್ರಾಮದ ಶಂಕರಗೌಡ ಆದಾಪುರ, ಶಾಂತಮ್ಮ ಆದಾಪುರ, ಹನುಮಂತಗೌಡ, ಸಣ್ಣ ವಿರೂಪಾಕ್ಷಗೌಡ ಹಾಗೂ ದೊಡ್ಡ ವಿರೂಪಾಕ್ಷಗೌಡ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Feb 2026 11:34 pm

ಅರೇಬಿಯನ್ ಸಮುದ್ರದಲ್ಲಿ ಇರಾನಿನ ಡ್ರೋನ್ ಹೊಡೆದುರುಳಿಸಿದ ಅಮೆರಿಕ ಸೇನೆ

ವಾಷಿಂಗ್ಟನ್/ಅರೇಬಿಯನ್ ಸಮುದ್ರ, ಫೆ.3: ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ‘ಅಬ್ರಹಾಂ ಲಿಂಕನ್’ ವಿಮಾನವಾಹಕ ನೌಕೆಯ ಸಮೀಪಕ್ಕೆ ಬರುತ್ತಿದ್ದ ಇರಾನಿನ ಡ್ರೋನ್ ಅನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಂಗಳವಾರ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇರಾನ್ ನ ‘ಶಹೀದ್–139’ ಮಾದರಿಯ ಡ್ರೋನ್ ನೌಕೆಯ ದಿಕ್ಕಿನಲ್ಲಿ ಹಾರುತ್ತಿದ್ದ ವೇಳೆ ಅಮೆರಿಕದ ಎಫ್–35 ಯುದ್ಧವಿಮಾನ ಅದನ್ನು ನಾಶಪಡಿಸಿತು ಎಂದು ತಿಳಿದು ಬಂದಿದೆ. ಭದ್ರತಾ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಈ ವಾರದ ಕೊನೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ನಡೆಯಲಿರುವ ಹಿನ್ನೆಲೆಯಲ್ಲಿ, ಆ ಪ್ರದೇಶದಲ್ಲಿ ಅಮೆರಿಕ ಸೇನಾ ಬಲವನ್ನು ಹೆಚ್ಚಿಸುತ್ತಿದೆ. ಅದೇ ಸಂದರ್ಭದಲ್ಲಿ ಈ ಘಟನೆ ಸಂಭವಿಸಿರುವುದು ಗಮನಾರ್ಹವಾಗಿದೆ. ಘಟನೆ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ವಾರ್ತಾ ಭಾರತಿ 3 Feb 2026 11:33 pm

ಮಂಗಗಳಿಗೆ ಪಾಠ ಕಲಿಸಲು ಕರಡಿ ವೇಷ ಹಾಕುವ ವ್ಯಕ್ತಿ, ಇಲ್ಲಿದೆ ನೋಡಿ ವಿಚಿತ್ರ ಗೆಟಪ್ | Sircilla District

ಮಂಗಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಅದರಲ್ಲೂ ರೈತರು ತಮ್ಮ ಅರ್ಧ ಬೆಳೆಯನ್ನೇ ಈ ರೀತಿಯಾಗಿ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಇದರ ಜೊತೆಗೆ ಜನರ ಮೇಲೆ ಮಂಗಗಳ ದಾಳಿ ಬೇರೆ ಭಯ ಹುಟ್ಟಿಸುತ್ತಿದೆ. ಇದು ಒಂದು ಜಾಗದ ಸಮಸ್ಯೆ ಅಲ್ಲ, ಇಡೀ ಇಂಡಿಯಾದಲ್ಲಿ ಈ ರೀತಿಯ ಸಮಸ್ಯೆ ರೈತರನ್ನು ಕಾಡುತ್ತಲೇ ಇದೆ. ಅದರಲ್ಲೂ ತೋಟಗಾರಿಕಾ ಬೆಳೆಗಳು ಇದ್ದರೆ

ಒನ್ ಇ೦ಡಿಯ 3 Feb 2026 11:31 pm

Iran ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗೆ ಅಮೆರಿಕ, ಇಸ್ರೇಲ್ ಕುಮ್ಮಕ್ಕು: ಖಾಮಿನೈ ಆರೋಪ

ಟೆಹರಾನ್, ಫೆ.3: ಇರಾನ್‌ ನಲ್ಲಿ ಭುಗಿಲೆದ್ದ ಆಡಳಿತ ವಿರೋಧಿ ಪ್ರತಿಭಟನೆಗೆ ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಕುಮ್ಮಕ್ಕು ನೀಡಿವೆ ಎಂದು ಇರಾನ್‌ ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಅವರು ಸೋಮವಾರ ಆಪಾದಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ನೆರವು ಬರುತ್ತಿದೆ’ ಎಂದು ಘೋಷಿಸುವ ಮೂಲಕ ಪ್ರತಿಭಟನಕಾರರನ್ನು ಪ್ರಚೋದಿಸಿದ್ದರು ಎಂದು ಅವರು ಹೇಳಿದ್ದಾರೆ. ಬೆಲೆ ಏರಿಕೆ ವಿರುದ್ಧ ಅಂಗಡಿಮಾಲಕರು ಹಾಗೂ ವರ್ತಕರು ನಡೆಸಿದ್ದ ಪ್ರತಿಭಟನೆ ಸಮಂಜಸವಾದುದಾಗಿತ್ತು. ಆದರೆ ಆಡಳಿತದ ಪತನಕ್ಕೆ ಆಗ್ರಹಿಸಿದವರು ದೇಶದ್ರೋಹಿಗಳೆಂದು ಖಾಮಿನೈ ಬಣ್ಣಿಸಿದರು. ಇರಾನ್‌ ನಲ್ಲಿ ಬಂಡಾಯವೆಬ್ಬಿಸುವ ಅಮೆರಿಕ ಹಾಗೂ ಇಸ್ರೇಲ್ ನ ಪ್ರಯತ್ನ ವಿಫಲಗೊಂಡಿದೆ ಎಂದರು.

ವಾರ್ತಾ ಭಾರತಿ 3 Feb 2026 11:27 pm

ಇರಾನ್ ಆಡಳಿತ ವಿರುದ್ಧ ಫೆ.14ರಂದು ವಿಶ್ವದಾದ್ಯಂತ ಪ್ರತಿಭಟನೆಗೆ ರೆಝಾ ಪಹ್ಲವಿ ಕರೆ

ಟೆಹರಾನ್, ಫೆ.3: ಇರಾನ್‌ ನಲ್ಲಿ ವ್ಯಾಪಕವಾಗಿರುವ ಪ್ರಜಾಪ್ರಭುತ್ವ ಪರ ಚಳವಳಿಯನ್ನು ಬೆಂಬಲಿಸಿ ಫೆಬ್ರವರಿ 14ರಂದು ಜಾಗತಿಕವಾಗಿ ಇರಾನ್ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವಂತೆ ಇರಾನ್‌ ನ ಪದಚ್ಯುತ ದೊರೆ ದಿವಂಗತ ಶಾ ಮೊಹಮ್ಮದ್ ರೆಝಾ ಪಹ್ಲವಿ ಅವರ ಪುತ್ರ ರೆಝಾ ಪಹ್ಲವಿ ಅವರು ಮಂಗಳವಾರ ಕರೆ ನೀಡಿದ್ದಾರೆ. ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ನೆಲೆಸಿರುವ ಇರಾನಿ ಜನತೆ ರಸ್ತೆಗಿಳಿಯುವಂತೆ ಅವರು ಕರೆ ನೀಡಿದ್ದಾರೆ. ‘ಸೂರ್ಯ ಮತ್ತು ಸಿಂಹ’ದ (ಶಾ ರಾಜಪ್ರಭುತ್ವ ಕಾಲದ ಇರಾನ್‌ ನ ರಾಷ್ಟ್ರೀಯ ಚಿಹ್ನೆ) ಕ್ರಾಂತಿಯ ಜೊತೆ ಏಕತೆಯನ್ನು ಸಾರುವ ಜಾಗತಿಕ ಕ್ರಿಯಾ ದಿನವಾಗಿರುವುದೆಂದು ಅವರು ಅಮೆರಿಕದಲ್ಲಿ ನೆಲೆಸಿರುವ ಶಾ ಅವರು ಬಣ್ಣಿಸಿದ್ದಾರೆ. ಜರ್ಮನಿಯ ಮ್ಯೂನಿಕ್, ಅಮೆರಿಕದ ಲಾಸ್ ಏಂಜಲೀಸ್ ಹಾಗೂ ಕೆನಡದ ಟೊರಾಂಟೊ ನಗರಗಳು ಪ್ರಮುಖ ಪ್ರತಿಭಟನಾ ಕೇಂದ್ರಗಳಾಗಿವೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Feb 2026 11:24 pm

ಕನಕಗಿರಿ | ಶಾಲಾ ಮಕ್ಕಳು, ಪ.ಪಂ. ಸದಸ್ಯ ಸೇರಿ 8 ಮಂದಿಗೆ ಹುಚ್ಚು ನಾಯಿ ಕಡಿತ

ಕನಕಗಿರಿ : ಪಟ್ಟಣದ 2ನೇ ವಾರ್ಡ್‌ನ ಗೌಡರ್ ಓಣಿಯಲ್ಲಿ ಹುಚ್ಚು ನಾಯಿ ದಾಳಿ ನಡೆಸಿದ ಪರಿಣಾಮ 8 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಗೌಡರ್ ಓಣಿಯ ನಿವಾಸಿ ಹಾಗೂ ಪ.ಪಂ ಸದಸ್ಯರಾದ ಶರಣೇಗೌಡ ಪಾಟೀಲ್ ಅವರಿಗೆ ಬೆಳಿಗ್ಗೆ ಮೊದಲು ಹುಚ್ಚು ನಾಯಿ ಕಡಿದಿದೆ. ನಂತರ ಪೌರ ಕಾರ್ಮಿಕ ಬಸವರಾಜ, 3 ವರ್ಷದ ಬಾಲಕಿ ಯುವನ್, ನಂದೀಶ (5), ವೀರೇಶ (25), 9ನೇ ವಾರ್ಡ್ ನಿವಾಸಿ ನಾಫಿಜಾನ್ (14) ಸೇರಿದಂತೆ ಇನ್ನಿತರರಿಗೆ ದಾಳಿ ನಡೆಸಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ನಾಫಿಜಾನ್‌ಗೆ ನಾಯಿ ಕಡಿದಿದೆ ಎನ್ನಲಾಗಿದೆ. ಇದೇ ವೇಳೆ ಬಸವಂತಪ್ಪ ಸೇರಿದಂತೆ ಇನ್ನೂ ಕೆಲವರಿಗೆ ನಾಯಿ ದಾಳಿ ಮಾಡಿದ್ದು, ಎಲ್ಲರೂ ಗಾಯಗೊಂಡಿದ್ದಾರೆ. ಹುಚ್ಚು ನಾಯಿ 2ನೇ ವಾರ್ಡ್‌ನ ಸಚ್ಚಿದಾನಂದ ಮಠ, ಬಸ್ ನಿಲ್ದಾಣ ರಸ್ತೆ ಹಾಗೂ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಭೀತಿ ಸೃಷ್ಟಿಸಿತ್ತು. ನಂತರ ಯುವಕರ ಗುಂಪೊಂದು ನಾಯಿಯನ್ನು ಬೆನ್ನಟ್ಟಿ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡ ಎಲ್ಲಾ ವ್ಯಕ್ತಿಗಳನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವಾರ್ತಾ ಭಾರತಿ 3 Feb 2026 11:20 pm

Canada | ವಸತಿ ಪ್ರದೇಶದಲ್ಲಿ ಶೂಟೌಟ್ ಘಟನೆ; ಮೂವರು ಭಾರತೀಯರ ಬಂಧನ

ಟೊರಾಂಟೊ, ಫೆ.3: ಕೆನಡಾದ ಸರ್ರೆ ರಾಜ್ಯದಲ್ಲಿರುವ ಕ್ರಿಸೆಂಟ್ ಬೀಚ್‌ನ ವಸತಿ ಪ್ರದೇಶವೊಂದರಲ್ಲಿ ಜ. 31ರ ತಡರಾತ್ರಿ ನಡೆದ ಶೂಟೌಟ್ ಘಟನೆಗೆ ಸಂಬಂಧಿಸಿ ಮೂವರು ಭಾರತೀಯ ಮೂಲದ ವ್ಯಕ್ತಿಗಳನ್ನು ಕೆನಡಿಯನ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸರ್ರೆ ಪೊಲೀಸರು ಹೇಳಿಕೆ ನೀಡಿದ್ದು ಆರೋಪಿಗಳ ವಿರುದ್ಧ ಕೆನಡಿಯನ್ ಕ್ರಿಮಿನಲ್ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಕ್ರಿಸೆಂಟ್ ಬೀಚ್ ರಸ್ತೆಯ ವಸತಿ ಪ್ರದೇಶದಲ್ಲಿ ಗುಂಡು ಹಾರಾಟ ನಡೆದಿರುವ ಬಗ್ಗೆ ವರದಿಯಾದ ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಬಂಧಿತ ಆರೋಪಿಗಳನ್ನು ಹರಜೋತ್ ಸಿಂಗ್ (21), ತರಣ್ವೀರ್ ಸಿಂಗ್ (19) ಹಾಗೂ ದಯಾಜೀತ್ (21) ಎಂದು ಗುರುತಿಸಲಾಗಿದೆ. ಈ ಶೂಟೌಟ್ ಪ್ರಕರಣದ ಆರೋಪಿಗಳ ಬಗ್ಗೆ ಸುಳಿವು ನೀಡುವ ವ್ಯಕ್ತಿಗಳಿಗೆ ಸರ್ರೆ ಸುಲಿಗೆ ವಿರೋಧಿ ನಿಧಿಯಿಂದ ಬಹುಮಾನ ಘೋಷಿಸಲಾಗಿತ್ತು ಎಂದು ಸರ್ರೆ ರಾಜ್ಯ ಪೊಲೀಸರ ಹೇಳಿಕೆ ತಿಳಿಸಿದೆ.

ವಾರ್ತಾ ಭಾರತಿ 3 Feb 2026 11:19 pm

ಅಕ್ರಮ ವಿದೇಶಿಯರಿಂದ ರಾಷ್ಟ್ರದ ಭದ್ರತೆಗೆ ಅಪಾಯ : ಹೈಕೋರ್ಟ್ ಕಳವಳ

ಬೆಂಗಳೂರು : ಅಧಿಕೃತ ವೀಸಾ ಹಾಗೂ ಪಾಸ್‌ಪೋರ್ಟ್‌ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಕುರಿತ ವಿವರ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದ್ದು, ಬಿಡುಗಡೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ನೈಜಿರಿಯಾ ಪ್ರಜೆಗಳಾದ (ಸದ್ಯ ಕೋಗಿಲು ಲೇ ಔಟ್‌ ವಿಳಾಸ ಹೊಂದಿರುವ) ಇಮೆಕಾ ಜೇಮ್ಸ್‌ ಐವೊಬಾ ಹಾಗೂ ವುಡೆರಿಕ್‌ ಫಿಡೆಲಿಸ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (ಎಫ್‌ಆರ್‌ಆರ್‌ಒ) ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂಥದನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ ಎಂದು ಪ್ರಶ್ನಿಸಿತು. ಅಲ್ಲದೆ, ಮಾನ್ಯತೆ ಹೊಂದಿರುವ ವೀಸಾ ಇಲ್ಲದೆ ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿರುವ ಕುರಿತ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಎಫ್‌ಆರ್‌ಆರ್‌ಒ ಪರ ಹಾಜರಾಗಿದ್ದ ಉಪ ಸಾಲಿಸಿಟರ್‌ ಜನರಲ್‌ ಎಚ್‌.ಶಾಂತಿಭೂಷಣ್‌ ಅವರು, ಅರ್ಜಿದಾರರು 2015ರಲ್ಲಿ ಭಾರತಕ್ಕೆ ವ್ಯಾಪಾರ ವೀಸಾದಲ್ಲಿ ಬಂದಿದ್ದಾರೆ ಮತ್ತು ವಿಭಿನ್ನ ವೀಸಾಗಳಲ್ಲಿ ಉಳಿದುಕೊಂಡಿದ್ದಾರೆ. ಇಮೆಕಾ ಜೇಮ್ಸ್‌, ಸೋಗು ಹಾಕಿಕೊಂಡು ಮತ್ತೊಬ್ಬರ ಹೆಸರಿನಲ್ಲಿ ಅನುಮತಿಸಲಾದ ವೀಸಾ ಹೊಂದಿ ಗಡುವನ್ನು ಮೀರಿ ನಗರದಲ್ಲಿ ಉಳಿದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಮುಂದುವರಿದು, ಅರ್ಜಿದಾರರ ವಿರುದ್ಧ ಈಗಾಗಲೇ ಮಾದಕ ದ್ರವ್ಯ ನಿಗ್ರಹ ಕಾಯ್ದೆ (ಎನ್‌ಡಿಪಿಎಸ್‌) ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿರುದ್ಧ 400 ಗ್ರಾಂ ಎಂಡಿಎಂಎ ಮತ್ತು ಕೊಕೇನ್ ಮಾರಾಟ ಮಾಡಿದ ಆರೋಪವಿದೆ. ಆದರೆ, ಅವರು ಭಾರತದ ಸಂವಿಧಾನದ ಅಡಿಯಲ್ಲಿ ನೈಜೀರಿಯನ್ ಪ್ರಜೆಗಳಾಗಿ ತಮ್ಮ ಹಕ್ಕು ಉಲ್ಲಂಘನೆಯಾಗಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು. ಅರ್ಜಿದಾರರು ಮಾತ್ರವಲ್ಲದೆ ಸಾಕಷ್ಟು ವಿದೇಶಿಯರು ಅಧಿಕೃತ ವೀಸಾ ಇಲ್ಲದೆ ನಗರದಲ್ಲಿ ಉಳಿದುಕೊಂಡಿದ್ದಾರೆ ಮತ್ತು ತನಿಖೆಗೆ ಅಗತ್ಯವಿರುವ ಅವಧಿಯನ್ನು ಮೀರಿದ್ದಾರೆ. ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ನಿಯಮಗಳ ಪ್ರಕಾರ, ದೇಶದೊಳಗೆ ಪ್ರವೇಶಿಸುವ ವಿದೇಶಿ ಪ್ರಜೆ 14 ದಿನಗಳ ಒಳಗಾಗಿ ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಆದರೆ, ಈ ಅರ್ಜಿದಾರರು ಇಂದಿಗೂ ತಮ್ಮನ್ನು ನೋಂದಣಿ ಮಾಡಿಸಿಕೊಂಡಿಲ್ಲ. ಎಫ್ಆರ್‌ಆರ್‌ಒ ನೋಂದಣಿ ಇಲ್ಲದೆ ನಗರದಲ್ಲಿ ಉಳಿದುಕೊಂಡಿರುವ ಈ ವಿದೇಶಿ ಪ್ರಜೆಗಳನ್ನು ನಿಭಾಯಿಸುವಲ್ಲಿ ರಾಜ್ಯದ ಕಡೆಯಿಂದಲೂ ಕರ್ತವ್ಯ ಲೋಪವಾಗಿದೆ ಎಂದರು.

ವಾರ್ತಾ ಭಾರತಿ 3 Feb 2026 11:18 pm

ಫೆ.5: ಮನರೇಗಾ ಬಚಾವೋ ಸಂಗ್ರಾಮ್ ಕಾಂಗ್ರೆಸ್ ಪಾದಯಾತ್ರೆ

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರ ವತಿಯಿಂದ ಫೆ.5ರಂದು ಸಂಜೆ 4 ಗಂಟೆಗೆ ಮನರೇಗಾ ಬಚಾವೋ ಸಂಗ್ರಾಮ್ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರಿಂದ ಪಾದಯಾತ್ರೆ ನಡೆಯಲುದೆ. ನಗರದ ಬಲ್ಮಠದಲ್ಲಿರುವ ಶಾಂತಿನಿಲಯ ಹಾಲ್ ಬಳಿಯಿರುವ ಮೈದಾನದಿಂದ ಹೊರಟು ಮಂಗಳೂರು ಮಹಾನಗರ ಪಾಲಿಕೆ ಎದುರುಗಡೆಯಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆ ವರೆಗೆ ಈ ಪಾದಯಾತ್ರೆನಡೆಯಲಿದೆ. ಪಕ್ಷದ ನಾಯಕರು, ಪದಾಧಿಕಾರಿಗಳು, ಮಾಜಿ ಕಾರ್ಪೊರೇಟರ್ ಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾಜಿ ಶಾಸಕ ಜೆ. ಆರ್. ಲೋಬೊ ಅವರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ವಾರ್ತಾ ಭಾರತಿ 3 Feb 2026 11:16 pm

ಉಕ್ರೇನ್‌ ನಲ್ಲಿ ರಶ್ಯದಿಂದ ಭೀಕರ ಕ್ಷಿಪಣಿ ದಾಳಿ; 5 ಪ್ರಾಂತ್ಯಗಳನ್ನು ಗುರಿಯಿರಿಸಿ ಆಕ್ರಮಣ, ಹಲವು ಕಟ್ಟಡಗಳಿಗೆ ಹಾನಿ

ಕೀವ್, ಫೆ.3: ರಶ್ಯ ಸೇನೆ ಸೋಮವಾರ ತಡರಾತ್ರಿಯಿಂದ ಉಕ್ರೇನ್ ವಿರುದ್ಧ 450 ದೀರ್ಘ ವ್ಯಾಪ್ತಿಯ ಡ್ರೋನ್‌ ಗಳು ಹಾಗೂ 79 ಕ್ಷಿಪಣಿಗಳಿಂದ ದಾಳಿ ನಡೆಸಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮಂಗಳವಾರ ತಿಳಿಸಿದ್ದಾರೆ. ಉಭಯ ದೇಶಗಳ ನಡುವೆ ಕದನವನ್ನು ನಿಲ್ಲಿಸುವ ಪ್ರಯತ್ನವಾಗಿ ಯುಎಇನ ಅಬುಧಾಬಿಯಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ಆರಂಭಗೊಳ್ಳಲಿರುವ ಮುನ್ನಾ ದಿನ ಈ ದಾಳಿ ನಡೆದಿದೆ. ಉಕ್ರೇನ್‌ ನ ಐದು ಪ್ರಾಂತಗಳನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡು ರಶ್ಯವು ಈ ದಾಳಿಗಳನ್ನು ನಡೆಸಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ದಾಳಿಯಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. 2022ರ ಫೆಬ್ರವರಿ 24ರಿಂದ ಉಕ್ರೇನ್ ಮೇಲೆ ರಶ್ಯವು ನಡೆಸುತ್ತಿರುವ ಪೂರ್ಣ ಪ್ರಮಾಣದ ಆಕ್ರಮಣವನ್ನು ಕೊನೆಗೊಳಿಸಲು ಆ ದೇಶದ ಮೇಲೆ ಹೆಚ್ಚು ಒತ್ತಡವನ್ನು ಹೇರುವಂತೆ ಹಾಗೂ ಅಧಿಕ ಪ್ರಮಾಣದಲ್ಲಿ ರಕ್ಷಣಾ ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಝೆಲೆನ್ಸ್ಕಿ ಅವರು ಮಿತ್ರ ರಾಷ್ಟ್ರಗಳನ್ನು ಆಗ್ರಹಿಸಿದರು. ರಾಜಧಾನಿ ಕೀವ್‌ ನಲ್ಲಿ ರಶ್ಯವು ಕ್ಷಿಪಣಿ ಹಾಗೂ ಡ್ರೋನ್‌ ಗಳಿಂದ ನಡೆಸಿದ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ ಹಾಗೂ ಐದು ವಸತಿ ಕಟ್ಟಡಗಳು, ಶಿಶುವಿಹಾರ ಕೇಂದ್ರ ಹಾಗೂ ರಾಜಧಾನಿಯ ವಿವಿಧ ಭಾಗಗಳಲ್ಲಿರುವ ಗ್ಯಾಸ್‌ ಸ್ಟೇಷನ್‌ ಗಳು ಅಗ್ನಿಗಾಹುತಿಯಾಗಿವೆ. ಆಗ್ನೇಯ ಪ್ರಾಂತವಾದ ಖಾರ್ಕಿವ್ ಹಾಗೂ ದಕ್ಷಿಣ ಒಡೆಸ್ಸಾ ಪ್ರಾಂತದ ಮೇಲೆ ರಶ್ಯ ದಾಳಿ ನಡೆಸಿದ್ದು ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ವಾರ್ತಾ ಭಾರತಿ 3 Feb 2026 11:10 pm

ನೇರ ನೇಮಕಾತಿಗಳಲ್ಲಿ ಗರಿಷ್ಠ ವಯೋಮಿತಿ ಐದು ವರ್ಷ ಸಡಿಲಿಕೆ

ಬೆಂಗಳೂರು : ಸರಕಾರಿ ಹುದ್ದೆಗಳ ನೇರ ನೇಮಕಾತಿಗಳಲ್ಲಿ ಅಭ್ಯರ್ಥಿಗಳಿಗೆ ನಿಗಧಿಪಡಿಸಿದ ಗರಿಷ್ಠ ವಯೋಮಿತಿಯನ್ನು ಐದು ವರ್ಷಗಳ ಅವಧಿಗೆ ಸಡಿಲಿಕೆ ಮಾಡಿ ರಾಜ್ಯ ಸರಕಾರವು ಆದೇಶವನ್ನು ಹೊರಡಿಸಿದೆ. 2027ರ ಡಿ.31ರ ವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳ ಅನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯಲ್ಲಿ ಐದು ವರ್ಷಗಳ ಸಡಲಿಕೆಯನ್ನು ನೀಡಿ ಆದೇಶಿಸಲಾಗಿದೆ. ಈ ಹಿಂದೆ ಸರಕಾರಿ ಹುದ್ದೆಗಳ ನೇರ ನೇಮಕಾತಿಗಳಲ್ಲಿ ಮೂರು ವರ್ಷಗಳ ಸಡಲಿಕೆಯನ್ನು ನೀಡಿ ಆದೇಶಿಸಲಾಗಿತ್ತು. ಈ ಆದೇಶವನ್ನು ಹಿಂಪಡೆಯಲಾಗಿದ್ದು, ಉದ್ಯೋಗಾಕಾಂಕ್ಷಿಗಳು, ಜನಪ್ರತಿನಿದಿಗಳು ಮತ್ತು ಸಂಘ-ಸಂಸ್ಥೆಗಳ ಮನವಿಯಂತೆ ಗರಿಷ್ಟ ವಯೋಮಿತಿಯಲ್ಲಿ ಐದು ವರ್ಷಗಳ ವರೆಗೆ ವಿಸ್ತರಣೆ ಮಾಡಲಾಗಿದೆ.

ವಾರ್ತಾ ಭಾರತಿ 3 Feb 2026 11:09 pm

ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ವಿಶೇಷ ಅನುದಾನ ನೀಡುವಂತೆ ಮನವಿ

ಮಂಗಳೂರು: ಕಾರ್ಕಳದಲ್ಲಿ ಸುಮಾರು 800 ವರ್ಷಗಳಿಗೂ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿ ಒಂದು ಐತಿಹಾಸಿಕ ಇತಿಹಾಸವಾಗಿದೆ. ಇಂತಹ ಅದ್ಭುತ ಶಿಲಾಮೂರ್ತಿಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ 2027ರ ಫೆಬ್ರವರಿಯಲ್ಲಿ ನಡೆಯಲಿದೆ. ಈ ಧಾರ್ಮಿಕ ನೆಲೆಯ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಅತ್ಯಂತ ಅದ್ದೂರಿಯಲ್ಲಿ ನಡೆಸಲು ಕಾರ್ಕಳ ಭಗವಾನ್ ಶ್ರಿ ಬಾಹುಬಲಿ ಸ್ವಾಮಿ ಮಹಾಮಸ್ತಾಕಾಭಿಷೇಕ ಸಮಿತಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕಾರ್ಕಳ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಅನುದಾನವನ್ನು ಕರ್ನಾಟಕ ಸರಕಾರದ ವತಿಯಿಂದ ಬಿಡುಗಡೆಗೊಳಿಸುವ ಬಗ್ಗೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್  ಅವರಿಗೆ ಸಮಿತಿಯ‌ ಕಾರ್ಯಾಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಬೆಂಗಳೂರಿನಲ್ಲಿ ಮಂಗಳವಾರ ಮನವಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ವೃಷಭ ದೇವ ಅಧಿಕಾರಿ ವರಂಗ ಇವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Feb 2026 11:07 pm

ವಕೀಲ ಮೋಹನ್ ಕಾತರಕಿ ಸೇರಿ 5 ಮಂದಿಗೆ ಗಡಿನಾಡು ಚೇತನ ಪ್ರಶಸ್ತಿ : ಸೋಮಣ್ಣ ಬೇವಿನಮರದ

ಬೆಂಗಳೂರು : ಕರ್ನಾಟಕ ಗಡಿ ಅಭಿವೃದ್ಧಿ ಪ್ರದೇಶ ಪ್ರಾಧಿಕಾರದ ವತಿಯಿಂದ ನೀಡಲಾಗುವ ‘ಗಡಿನಾಡು ಚೇತನ ಪ್ರಶಸ್ತಿ’ಗೆ ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲ ಮೋಹನ್ ಕಾತರಕಿ ಸೇರಿದಂತೆ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಯದೇವಿ ತಾಯಿ ಲಿಗಾಡೆ ಹೆಸರಿನ ಪ್ರಶಸ್ತಿಗೆ ಮೋಹನ್ ಕಾತರಕಿ, ಚನ್ನಬಸವ ಪಟ್ಟದ್ದೇವರ ಹೆಸರಿನ ಪ್ರಶಸ್ತಿಗೆ ರಾಯಚೂರಿನ ಹೋರಾಟಗಾರ ಮಲ್ಲನಗೌಡ ಇಂದುಪುರ, ಫ.ಗು.ಹಳಕಟ್ಟಿ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ವಿಜಯಪುರದ ನಾಗೇಶ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಕಯ್ಯಾರ ಕಿಞ್ಞಣ್ಣ ರೈ ಹೆಸರಿನ ಪ್ರಶಸ್ತಿಗೆ ಕಾಸರಗೋಡಿನ ನಿವೃತ್ತ ಶಿಕ್ಷಕ ಎನ್.ಚನಿಯಪ್ಪ ನಾಯ್ಡು, ಬೆಳವಡಿ ಮಲ್ಲಮ್ಮ ಹೆಸರಿನ ಪ್ರಶಸ್ತಿಗೆ ಮಸ್ಕತ್‍ನಲ್ಲಿ ಕನ್ನಡ ಸಂಘ ನಡೆಸುತ್ತಿರುವ ಶಾಲೆಯಲ್ಲಿ ಕನ್ನಡ ಪಾಠ ಮಾಡುತ್ತಿರುವ ಶಿಕ್ಷಕಿಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ವಾರ್ತಾ ಭಾರತಿ 3 Feb 2026 11:06 pm

ಉಚಿತ ಭಾರೀ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಪಿಎಂ-ಎಜೆಎವೈ ಯೋಜನೆ ಅಡಿ ಕೆಎಸ್ಸಾರ್ಟಿಸಿಯ ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಹಾಗೂ ಹೊಳಲ್ಕೆರೆ ತರಬೇತಿ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ ಆಯೋಜಿಸಲಾಗಿದ್ದು, ತರಬೇತಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಹತ್ತಿರದ ತರಬೇತಿ ಕೇಂದ್ರದಲ್ಲಿ ನೇರವಾಗಿ ಅಥವಾ ksrtcjobs.karnataka.gov.in  ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟದೊಂದಿಗೆ ಭಾರೀ ವಾಹನ ತರಬೇತಿ ನೀಡಲಾಗುತ್ತದೆ. ಒಂದು ತಿಂಗಳ ತರಬೇತಿ ಇದಾಗಿದ್ದು, ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಉಚಿತ ಪರವಾನಗಿಯನ್ನೂ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಳವಳ್ಳಿ(77609 90137), ಹಾಸನ (77609 90533), ಹೊಳಲ್ಕೆರೆ (70190 72560), ಮಾಲೂರು (77609 94432) ಮತ್ತು ಚಿಕ್ಕಮಗಳೂರು(96060 37746) ಕೆಎಸ್ಸಾರ್ಟಿಸಿ ಘಟಕಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 3 Feb 2026 11:01 pm

Australiaದಲ್ಲಿ ಗಾಂಧೀಜಿಯ ಕಂಚಿನ ಪ್ರತಿಮೆ ಅಪಹರಣ

ಮೆಲ್ಬೋರ್ನ್, ಫೆ.3: ನಗರದ ರೋವ್ವಿಲ್ಲೆ ಪ್ರದೇಶದಲ್ಲಿರುವ ಆಸ್ಟ್ರೇಲಿಯನ್ ಭಾರತೀಯರ ಸಮುದಾಯ ಕೇಂದ್ರದಲ್ಲಿ ಮಹಾತ್ಮಾ ಗಾಂಧೀಜಿಯವರ ಕಂಚಿನ ಪ್ರತಿಮೆಯನ್ನು ಅಪಹರಿಸಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಗಾಂಧೀಜಿಯವರ ಪ್ರತಿಮೆಯ ಕಳ್ಳತನ ಘಟನೆ ಆಸ್ಟ್ರೇಲಿಯಾದ ಭಾರತೀಯ ಸಮುದಾಯದಲ್ಲಿ ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ ಸರ್ಕಾರವು ಈ ಬಗ್ಗೆ ಆಸ್ಟ್ರೇಲಿಯಾದ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದೆ. ಪ್ರತಿಮೆಯನ್ನು ಪತ್ತೆಹಚ್ಚಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಈ ಕೃತ್ಯ ಎಸಗಿದವರನ್ನು ಗುರುತಿಸುವಂತೆ ಆಗ್ರಹಿಸಿದೆ. ಈ ಕಂಚಿನ ಗಾಂಧೀಜಿ ಪ್ರತಿಮೆಯನ್ನು ಹೊಸದಿಲ್ಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ 2021ರ ನವೆಂಬರ್ 12ರಂದು ಆಸ್ಟ್ರೇಲಿಯಾಗೆ ಉಡುಗೊರೆಯಾಗಿ ನೀಡಿತ್ತು. 2021ರ ನವೆಂಬರ್ 12ರಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮೊರಿಸನ್ ಅದನ್ನು ಉದ್ಘಾಟಿಸಿದ್ದರು.

ವಾರ್ತಾ ಭಾರತಿ 3 Feb 2026 11:00 pm

ಕಲಬುರಗಿ | ಫೆ.8ರಂದು ʼವಿಶ್ವಾಮಿತ್ರʼ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ : ಅಸಗೋಡು ಜಯಸಿಂಹ

ಕಲಬುರಗಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಫೆ.8 ರಂದು ಬೆಳಗ್ಗೆ 11 ಗಂಟೆಗೆ ನಗರದ ಊದನೂರ ರಸ್ತೆಯ ಜಯತೀರ್ಥ ಕಲ್ಯಾಣ ಮಂಟಪದಲ್ಲಿ 2024-25ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ಮೊದಲ ಮೂರು ಸ್ಥಾನ ಪಡೆದು ತೇರ್ಗಡೆಯಾದ ಕಲಬುರಗಿ ಮತ್ತು ಬೆಳಗಾವಿ ವಿಭಾಗದ 61 ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಕ್ರಮವಾಗಿ 15 ಸಾವಿರ, 10 ಸಾವಿರ ಮತ್ತು 5 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕಗಳನ್ನು ನೀಡಲಾಗುವುದು ಎಂದರು. ಹಾವೇರಿ, ಗದಗ, ಧಾರವಾಡ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಶಿರಸಿ, ಉತ್ತರ ಕನ್ನಡ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ಬೀದರ್, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುತ್ತಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರು, ಇತರ ಜನಪ್ರತಿನಿಧಿಗಳು, ವಿಪ್ರ ಮುಖಂಡರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರು ಭಾಗವಹಿಸಲಿದ್ದಾರೆ ಎಂದರು. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕ್ರೀಡೆ ಮತ್ತು ಉದ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ, ಈ ಸಮುದಾಯ ಆರ್ಥಿಕವಾಗಿ ಸದೃಢವಾಗಿಲ್ಲ. ನಮ್ಮ ನಿಗಮದಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ನಗದು ಬಹುಮಾನ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಯೋಜನೆಯಡಿಯಲ್ಲಿ ಸಹಾಯಧನ ನೀಡಲಾಗುತ್ತಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಕೃಷ್ಣಾಜಿ ಕುಲಕರ್ಣಿ, ಶ್ರೀಪಾದ ಜೋಶಿ, ಪ್ರಮೋದ ದೇಶಪಾಂಡೆ, ಗುರುರಾಜ ಕುಲಕರ್ಣಿ, ವೆಂಕೋಬಾ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಪ್ರಶಾಂತ ಕೊರವಿ, ನಾಗುಬಾಯಿ ದೊಡ್ಡಮನಿ ಇತರರಿದ್ದರು.

ವಾರ್ತಾ ಭಾರತಿ 3 Feb 2026 10:57 pm

ಕಲಬುರಗಿ | ʼರಾಷ್ಟ್ರಕೂಟʼ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ

ಕಲಬುರಗಿ : ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜಮಾರ್ಗ’ ನೀಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ದಿಕ್ಕು ತೋರಿದ ನೃಪತುಂಗ ಅಮೋಘವರ್ಷರ ಆಡಳಿತದ ‘ರಾಷ್ಟ್ರಕೂಟ’ ವಂಶದ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನವನ್ನು ಸ್ಥಾಪಿಸಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತ, ನಟ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಸೇಡಂ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಕನ್ನಡಕ್ಕೆ ಅಪಾರ ಕೀರ್ತಿ ತಂದುಕೊಟ್ಟ ಶ್ರೀವಿಜಯನ ‘ಕವಿರಾಜಮಾರ್ಗ’ ಕೃತಿಯು ಕನ್ನಡ ಸಾಹಿತ್ಯ ಹಾಗೂ ಇತಿಹಾಸ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಎಂದು ಹೇಳಿದ್ದಾರೆ. ಕನ್ನಡವನ್ನು ವಿಶ್ವಮಾನ್ಯತೆಯ ಹಂತಕ್ಕೆ ತಲುಪಿಸುವಲ್ಲಿ ಈ ಗ್ರಂಥದ ಪಾತ್ರ ಅತ್ಯಂತ ಮಹತ್ವದ್ದಾಗಿರುವುದರಿಂದ, ರಾಷ್ಟ್ರಕೂಟ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸುವುದು ಕನ್ನಡದ ಸಾರಸ್ವತ ಲೋಕಕ್ಕೆ ದೊಡ್ಡ ಉತ್ತೇಜನವಾಗಲಿದೆ ಎಂದು ತಿಳಿಸಿದ್ದಾರೆ. ಕಾವ್ಯ ಕ್ಷೇತ್ರಕ್ಕೆ ‘ರಾಜಮಾರ್ಗ’ವನ್ನು ನಿರ್ಮಿಸಿದ ರಾಷ್ಟ್ರಕೂಟರ ಹೆಸರಿನಲ್ಲಿ ಸರ್ಕಾರ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಸಾಹಿತ್ಯ, ಸಂಶೋಧನೆ, ಇತಿಹಾಸ ಅಧ್ಯಯನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ರೂಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ, ಕನ್ನಡ ಸಾಹಿತ್ಯದ ಮೊದಲ ಲಾಕ್ಷಣಿಕ ಗ್ರಂಥ ಎಂಬ ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ‘ರಾಷ್ಟ್ರಕೂಟ’ ಹೆಸರಿನಲ್ಲಿ ಸಾಹಿತ್ಯ–ಇತಿಹಾಸ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ, ರಾಷ್ಟ್ರಕೂಟರ ಆಡಳಿತ ಕಾಲದ ರಾಜಧಾನಿಯಾಗಿದ್ದ ಮಳಖೇಡ (ಮಾನ್ಯಖೇಟ)ವನ್ನು ವಿಶ್ವಮಾನ್ಯತೆಯ ಮಟ್ಟಕ್ಕೆ ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರವನ್ನು ಕೋರಿದ್ದಾರೆ.

ವಾರ್ತಾ ಭಾರತಿ 3 Feb 2026 10:54 pm

ಕಲಬುರಗಿ | ಶೋಷಿತರ ಪರವಿರುವ ಯುಜಿಸಿ ಕಾಯ್ದೆ ಜಾರಿ ಮಾಡಿ : ಅರ್ಜುನ್ ಭದ್ರೆ ಆಗ್ರಹ

ಕಲಬುರಗಿ : ಶೋಷಿತ ವರ್ಗಗಳ ವಿದ್ಯಾರ್ಥಿಗಳ ರಕ್ಷಣೆಗೆ ತರಲಾಗಿರುವ ಯುಜಿಸಿ ಹೊಸ ಕಾಯ್ದೆಯನ್ನು ಯಾವುದೇ ವಿಳಂಬವಿಲ್ಲದೆ ದೇಶಾದ್ಯಂತ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಆಗ್ರಹಿಸಿದರು. ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ, ಅವಮಾನ ಹಾಗೂ ಮಾನಸಿಕ ಹಿಂಸೆ ತಡೆಯಲು ಯುಜಿಸಿ ಹೊಸ ಕಾಯ್ದೆ ರೂಪಿಸಿರುವುದು ಸ್ವಾಗತಾರ್ಹ ಎಂದರು. ಆದರೆ ಈ ಕಾಯ್ದೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ತಕ್ಷಣವೇ ತಡೆಯಾಜ್ಞೆ ತೆರವುಗೊಳಿಸಿ ಕಾಯ್ದೆ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. 2016ರಲ್ಲಿ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಹಾಗೂ 2019ರಲ್ಲಿ ಮುಂಬೈನ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಯಲ್ ಜಾತಿ ಭೇದದ ಅವಮಾನದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ದೇಶದ ಮನಸ್ಸನ್ನು ಕಲುಷಿತಗೊಳಿಸಿದ್ದವು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಯುಜಿಸಿ ಹೊಸ ನಿಯಮಗಳು ಅತ್ಯಂತ ಅಗತ್ಯವಾಗಿವೆ ಎಂದರು. ಯುಜಿಸಿಯ ಹೊಸ ಕಾಯ್ದೆಯಡಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಮಾನ ಅವಕಾಶ ಕೇಂದ್ರ (EOC) ಸ್ಥಾಪನೆ ಮಾಡಿ, ಅದರಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದ ಮಹಿಳೆ ಹಾಗೂ ಅಂಗವಿಕಲರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಶೋಷಿತ ಸಮುದಾಯದ ವಿದ್ಯಾರ್ಥಿಗಳ ಮೇಲೆ ಜಾತಿ ಆಧಾರಿತ ತಾರತಮ್ಯ ನಡೆದರೆ, ಈ ಕೇಂದ್ರವು ವರದಿ ಸಲ್ಲಿಸಲಿದೆ. ಅದರ ಆಧಾರದಲ್ಲಿ ತಪ್ಪಿತಸ್ಥ ವಿದ್ಯಾರ್ಥಿಗಳು ಅಥವಾ ಬೋಧಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅವರು ವಿವರಿಸಿದರು. ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಮೇಲ್ವರ್ಗದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿರುವುದನ್ನು ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ ಎಂದ ಅವರು, ಯುಜಿಸಿ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಶಕ್ತಿಗಳ ಹಿಂದೆ ಕೇಂದ್ರ ಸರ್ಕಾರ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪಿತೂರಿಯಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಫೆ.8ರಂದು ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಮಹೇಶ್ ಕೋಕಿಲೆ, ಸೂರ್ಯಕಾಂತ ಆಜಾದಪುರ, ಸುಭಾಷ್ ಕಲ್ಮೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Feb 2026 10:50 pm

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ! 2026 ರ ಕ್ರಿಕೆಟ್ ಋತುವಿಗೆ Willow by Cricbuzzನಲ್ಲಿ ಹಲವು ಅಪ್ ಡೇಟ್

ಇದು ಕ್ರಿಕೆಟ್ ಅಭಿಮಾನಿಗಳು ಖುಷಿಪಡುವ ಸುದ್ದಿ! 2026ರ ಕ್ರಿಕೆಟ್ ಋತುವನ್ನು ಮತ್ತಷ್ಟು ರೋಚಕವಾಗಿಸಲು ವಿಲ್ಲೋ ಬೈ ಕ್ರಿಕ್ ಬಝ್(Willow ಮತ್ತು Cricbuzz) ಹಲವು ನವ ನವೀನ ಅಪ್ಡೇಟ್ ಗಳನ್ನು ಪರಿಚಯಿಸಿದೆ. ಅದರಲ್ಲೂ ವಿಶೇಷವಾಗಿ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸಿದೆ. ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ವಿಲ್ಲೋ ಬೈ ಕ್ರಿಕ್ ಬಝ್ ಹೊಸತನದೊಂದಿಗೆ ಅಭಿಮಾನಿಗಳ ಮುಂದೆ ಬಂದಿದೆ.ಮೊದಲ ಬಾರಿಗೆ ಅಮೆರಿಕದಲ್ಲಿ T20 ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ಯೂಟ್ಯೂಬ್ ನಲ್ಲಿ ವೀಕ್ಷಿಸುವ ಅವಕಾಶ ಸಿಗಲಿದೆ. ಫೆಬ್ರವರಿ 7 ರಂದು ನಡೆಯುವ ಅಮೆರಿಕದ ಮೊದಲ ಪಂದ್ಯ ಅಂದರೆ ಭಾರತ Vs ಅಮೆರಿಕ ಪಂದ್ಯವನ್ನು ಬೆಳಿಗ್ಗೆ 8:30ಕ್ಕೆ(ET) ಯೂಟ್ಯೂಬ್(YouTube)ನಲ್ಲಿ ಉಚಿತವಾಗಿ ಕಣ್ತುಂಬಿಕೊಳ್ಳಬಹುದು. ಇದು ಐಸಿಸಿ ವಿಶ್ವಕಪ್ ಪಂದ್ಯಗಳನ್ನು ಅಮೆರಿಕ ಮತ್ತು ಕೆನಡಾಗಳಲ್ಲಿ ಉಚಿತವಾಗಿ ವೀಕ್ಷಿಸಲು ಸಿಗುವ ಮೊದಲ ಅವಕಾಶವಾಗಿದೆ. ಅಮೆರಿಕದ ನಾಲ್ಕು ಪಂದ್ಯಗಳನ್ನು ಯೂಟ್ಯೂಬ್ ನಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ವಿಲ್ಲೋ ಮತ್ತು ಕ್ರಿಕ್ ಬಝ್ ವೆಬ್‌ಸೈಟ್‌ಗಳಲ್ಲೂ ಈ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶವಿದೆ. ಇಷ್ಟೇ ಅಲ್ಲದೆ ಜಂಬೋ ಮೀಡಿಯಾ(Jomboy Media) ಜೊತೆಗೂಡಿ , ವಿಲ್ಲೋ ಒಂದು ವಿಶೇಷವಾದ ಟೆಲಿಕಾಸ್ಟ್ ಅನ್ನು ಸಹ ಪರಿಚಯಿಸಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಜಂಬೋ ಮೀಡಿಯಾದ ಈ ವಿಶೇಷ ಟೆಲಿಕಾಸ್ಟ್ ಲಭ್ಯವಿರುತ್ತದೆ. ಇದು ಪ್ರಮುಖ ಪಂದ್ಯಗಳನ್ನು ಇನ್ನಷ್ಟು ವಿಶೇಷವಾಗಿ, ಆಸಕ್ತಿದಾಯಕವಾಗಿ ವೀಕ್ಷಿಸಲು ನೆರವಾಗಲಿದೆ. ಅಮೆರಿಕದ ನಾಲ್ಕು ಪಂದ್ಯಗಳಲ್ಲದೆ ಐಸಿಸಿ ಟಿ20 ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ವಿಲ್ಲೋನ ನ ಲೀನಿಯರ್ ಚಾನೆಲ್‌ನಲ್ಲಿ ವೀಕ್ಷಿಸಬಹುದು. ಯೂಟ್ಯೂಬ್ ಟಿವಿಯ ಯ ' ಪ್ಯಾಕೇಜ್ ಮೂಲಕ ಮತ್ತು ವಿಲ್ಲೋ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ವಿಲ್ಲೋ ಪ್ರೈಮ್ ಟೈಂ ಚಾನಲ್ ಮೂಲಕವೂ ಎಲ್ಲಾ ಪಂದ್ಯಗಳನ್ನು ನೋಡಬಹುದು.ವಿಲ್ಲೋ ಬೈ ಕ್ರಿಕ್ ಬಝ್ ತನ್ನ ವೆಬ್‌ಸೈಟ್, ಮೊಬೈಲ್ ಆಪ್‌ಗಳು ಮತ್ತು ಕನೆಕ್ಟೆಡ್ ಟಿವಿ ಆಪ್‌ಗಳಲ್ಲಿ ಸಂಪೂರ್ಣ ಹೊಸ ಉತ್ಪನ್ನ ಅನುಭವವನ್ನು ನೀಡುತ್ತಿದೆ. ಇದು ವೇಗವಾಗಿದ್ದು, ಉತ್ತಮ ಗುಣಮಟ್ಟದ ವಿಡಿಯೋವನ್ನು ನೀಡುತ್ತದೆ. ಅಭಿಮಾನಿಗಳು ಲೈವ್ ಪಂದ್ಯಗಳು, ರಿಪ್ಲೇಗಳು ಮತ್ತು ಹೈಲೈಟ್‌ಗಳನ್ನು ಸುಲಭವಾಗಿ ಪಡೆಯಲು ಇದು ಸಹಾಯ ಮಾಡುತ್ತದೆ.ಈ ಬಗ್ಗೆ ಮಾತನಾಡಿರುವ ವಿಲ್ಲೋ ಬೈ ಕ್ರಿಕ್ ಬಝ್ ನ ಮುಖ್ಯ ನಿರ್ವಾಹಕ ಅಧಿಕಾರಿ (COO) ಟಾಡ್ ಮೈಯರ್ಸ್, ಐಸಿಸಿ ಪುರುಷರ ಟಿ20 ವಿಶ್ವಕಪ್ ಅಮೆರಿಕದಲ್ಲಿ ಕ್ರಿಕೆಟ್ ಬಹು ದೊಡ್ಡ ಮಟ್ಟಕ್ಕೆ ಬೆಳೆಯಲು ಉತ್ತಮ ಅವಕಾಶ ನೀಡುತ್ತದೆ, ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಪ್ರಮುಖ ಐಸಿಸಿ ವಿಶ್ವಕಪ್ ಪಂದ್ಯಗಳನ್ನು ನೋಡಲು ಹತ್ತು ವರ್ಷಗಳ ಹಿಂದೆ 100 ಡಾಲರ್‌ಗಳಿಗಿಂತ ಹೆಚ್ಚು ಹಣವನ್ನು ಪಾವತಿಸಬೇಕಿತ್ತು. ನಾವು ಈ ಕ್ರೀಡೆಯನ್ನು ಕೈಗೆಟುಕುವ ಮಾಸಿಕ ಚಂದಾದಾರಿಕೆಗೆ ತಂದು ನಿಲ್ಲಿಸಿದ್ದೇವೆ. ಈಗ ವರ್ಷದ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಕೆಲವು ಉಚಿತವಾಗಿ ನೀಡುವುದರ ಜೊತೆಗೆ ಹೊಸ ಕ್ರಿಯೇಟರ್-ಲೀಡ್ ಪ್ರೋಗ್ರಾಮಿಂಗ್ ಮತ್ತು ಅಭಿಮಾನಿಗಳು ಇಂದು ಆಟವನ್ನು ಹೇಗೆ ವೀಕ್ಷಿಸುತ್ತಾರೆ ಎಂಬುದಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ ವೀಕ್ಷಣೆ ಅನುಭವವನ್ನು ನೀಡುವ ಮೂಲಕ ಮುಂದಿನ ಹೆಜ್ಜೆ ಇಡುತ್ತಿದ್ದೇವೆ. ಎಂದಿದ್ದಾರೆ. ಯೂಟ್ಯೂಬ್ ನಲ್ಲಿ ಉಚಿತವಾಗಿ ಟಿ20 ವಿಶ್ವಕಪ್ ಯುಎಸ್ಎ ಕ್ರಿಕೆಟ್ ಪಂದ್ಯಗಳನ್ನು ತರಲು ವಿಲ್ಲೋ ಬೈ ಕ್ರಿಕ್ ಬಝ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದು ನಮಗೆ ಸಂತೋಷ ತಂದಿದೆ. ಇದು ನಮ್ಮ ದೊಡ್ಡ ಅಭಿಮಾನಿ ಬಳಗಕ್ಕೆ ಮುಖ್ಯ ಲೈವ್‌ಸ್ಟ್ರೀಮ್ ಮತ್ತು ಒಳಗೊಂಡ ಪರ್ಯಾಯ ಕ್ರಿಯೇಟರ್-ಲೀಡ್ ಲೈವ್‌ಸ್ಟ್ರೀಮ್ ಎರಡರಲ್ಲೂ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ಎಂದು ಯೂಟ್ಯೂಬ್ ನ ಪಾಲುದಾರಿಕೆಗಳ ವ್ಯವಸ್ಥಾಪಕ ಮಾರ್ಕ್ ಹ್ಯಾಟ್‌ಫೀಲ್ಡ್ ಹೇಳಿದ್ದಾರೆ. ಇರುವ ಮತ್ತು ಹೊಸ ಕ್ರಿಕೆಟ್ ಅಭಿಮಾನಿಗಳಿಗೆ ಯೂಟ್ಯೂಬ್ ಕ್ರಿಯೇಟರ್ ಸಮುದಾಯ ಮಾತ್ರ ನೀಡಬಲ್ಲ ಅನನ್ಯ ದೃಷ್ಟಿಕೋನಗಳೊಂದಿಗೆ ಲೈವ್ ಕಾಮೆಂಟರಿ ಕೇಳುವ ಅವಕಾಶ ಸಿಗುತ್ತದೆ. ಟೆಲಿಕಾಸ್ಟ್ ಹೊಸ ವೀಕ್ಷಣೆ ಅನುಭವ ಮೊದಲ ಬಾರಿಗೆ, ವಿಲ್ಲೋ ಬೈ ಕ್ರಿಕ್ ಬಝ್ ಐಸಿಸಿ ಪುರುಷರ T20 ವಿಶ್ವಕಪ್‌ಗಾಗಿ ಕ್ರಿಯೇಟರ್-ಲೀಡ್ ಪರ್ಯಾಯ ಟೆಲಿಕಾಸ್ಟ್ ಅನ್ನು ಪರಿಚಯಿಸುತ್ತಿದೆ. ಇದು ಅಭಿಮಾನಿಗಳಿಗೆ ಎರಡು ಪ್ರಮುಖ ಪಂದ್ಯಗಳನ್ನು ವೀಕ್ಷಿಸಲು ಒಂದು ಧೈರ್ಯಶಾಲಿ ಹೊಸ ಮಾರ್ಗವನ್ನು ನೀಡುತ್ತದೆ. ಜಂಬೋ ಮೀಡಿಯಾ ಸಹಯೋಗದೊಂದಿಗೆ ನಿರ್ಮಿಸಲಾದ ಈ ಪರ್ಯಾಯ ಟೆಲಿಕಾಸ್ಟ್, ಅಮೆರಿಕ vs ಇಂಡಿಯಾ ಮತ್ತು USA vs ಪಾಕಿಸ್ತಾನ ಪಂದ್ಯಗಳಿಗೆ ಲಭ್ಯವಿರುತ್ತದೆ. ಇದು ಹೆಚ್ಚು ಸಂಭಾಷಣಾತ್ಮಕ, ವ್ಯಕ್ತಿತ್ವ-ಆಧಾರಿತ ವಿಧಾನವನ್ನು ಹೊಂದಿರುತ್ತದೆ. ಇದು ಲೈವ್ ಪ್ರತಿಕ್ರಿಯೆ, ಕಥೆ ಹೇಳುವಿಕೆ ಮತ್ತು ತಜ್ಞರ ಕ್ರಿಕೆಟ್ ದೃಷ್ಟಿಕೋನವನ್ನು ಸಾಂಪ್ರದಾಯಿಕ ಪ್ರಸಾರದೊಂದಿಗೆ ಬೆರೆಸುತ್ತದೆ.ಈ ಪರ್ಯಾಯ ಟೆಲಿಕಾಸ್ಟ್‌ನಲ್ಲಿ ಜಿಮ್ಮಿ 'ಜೋಂಬಾಯ್' ಓ'ಬ್ರಿಯಾನ್, ಮಾಜಿ ಇಂಗ್ಲೆಂಡ್ ಅಂತರಾಷ್ಟ್ರೀಯ ಆಟಗಾರ ಮತ್ತು 2019ರ ಕ್ರಿಕೆಟ್ ವಿಶ್ವಕಪ್ ವಿಜೇತ ಲಿಯಾಮ್ ಪ್ಲಂಕೆಟ್ ಮತ್ತು ವಿಶ್ಲೇಷಕ ಹಾಗೂ ಕಂಟೆಂಟ್ ಕ್ರಿಯೇಟರ್ ಆಡಮ್ ಬ್ಯಾನನ್ ಭಾಗವಹಿಸಲಿದ್ದಾರೆ. ಇವರು ಹಾಸ್ಯ, ಒಳನೋಟ ಮತ್ತು ಪಂದ್ಯದ ನೈಜ ಸಮಯದ ಪ್ರತಿಕ್ರಿಯೆಯನ್ನು ನೀಡಲಿದ್ದಾರೆ.ನಾನು COVID ಸಮಯದಲ್ಲಿ ಕ್ರಿಕೆಟ್ ಅನ್ನು ಕಂಡುಹಿಡಿದಿದ್ದೇನೆ ಮತ್ತು ತಕ್ಷಣವೇ ಪ್ರೀತಿಸಿದೆ, ಎಂದು ಜಂಬೋ ಮೀಡಿಯಾ ಸಂಸ್ಥಾಪಕ ಜಿಮ್ಮಿ 'ಜೋಂಬಾಯ್' ಓ'ಬ್ರಿಯಾನ್ ಹೇಳಿದ್ದಾರೆ. ನಾವು ಅಮೆರಿಕದಲ್ಲಿ ಬೇಸ್‌ಬಾಲ್‌ನ ಹಿರಿಯ ಸಹೋದರನಿಗೆ ಹೊಸ ಅಭಿಮಾನಿಗಳನ್ನು ಸೃಷ್ಟಿಸಲು ಉತ್ಸುಕರಾಗಿದ್ದೇವೆ.2017 ರಲ್ಲಿ ನ್ಯೂಯಾರ್ಕ್‌ನಲ್ಲಿ ಸ್ಥಾಪಿತವಾದ ಜಂಬೋ ಮೀಡಿಯಾ, ಪ್ರಮುಖ ಕ್ರಿಯೇಟರ್- ಲೀಡ್ ಕ್ರೀಡಾ ಮಾಧ್ಯಮ ಕಂಪನಿಯಾಗಿದೆ. ಇದು ವೈರಲ್ 'ಬ್ರೇಕ್‌ಡೌನ್ಸ್' ವಿಡಿಯೋ ಸರಣಿ, ಅಮೆರಿಕಾದಲ್ಲಿನ ಮೂರು ಅತಿದೊಡ್ಡ ಬೇಸ್‌ಬಾಲ್ ಪಾಡ್‌ಕಾಸ್ಟ್‌ಗಳಿಗೆ ನೆಲೆಯಾಗಿದೆ. 35 ಮಿಲಿಯನ್‌ಗಿಂತಲೂ ಹೆಚ್ಚು ಜನರ ಸಮುದಾಯದ ಬೆಂಬಲದೊಂದಿಗೆ, ಕಂಪನಿಯ ಕ್ರಿಯೇಟರ್‌ಗಳು ಮತ್ತು ಚಾನೆಲ್‌ಗಳು ಕ್ರೀಡೆಯ ಅತಿದೊಡ್ಡ ಕ್ಷಣಗಳನ್ನು ಆಸ್ವಾದಿಸಲು ಪ್ರಮುಖ ತಾಣಗಳಾಗಿವೆ. ಕಳೆದ ವರ್ಷವಷ್ಟೇ, MLB ಕಂಪನಿಯಲ್ಲಿ ಅಲ್ಪಸಂಖ್ಯಾತ ಪಾಲನ್ನು ಪಡೆದುಕೊಂಡಿತು. ಇದು ವೃತ್ತಿಪರ ಕ್ರೀಡಾ ಲೀಗ್‌ಗಳು ಕ್ರಿಯೇಟರ್-ಲೀಡ್ ಮಾಧ್ಯಮ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡ ಮೊದಲ ಉದಾಹರಣೆಯಾಗಿದೆ.ಜಿಮ್ಮಿ ಓ'ಬ್ರಿಯಾನ್ ಅವರ ಕ್ರಿಕೆಟ್ ಮೇಲಿನ ಪ್ರೀತಿ - ಇತ್ತೀಚಿನ ವರ್ಷಗಳಲ್ಲಿ ಬೆಳೆದಿದ್ದು ಮತ್ತು 2024ರ ICC T20 ವಿಶ್ವಕಪ್‌ನಲ್ಲಿ ಅವರ ಕಾಮೆಂಟರಿ ಪಾತ್ರದಿಂದ ಹೆಚ್ಚಾಗಿದ್ದು - ಈ ಕ್ಷೇತ್ರದಲ್ಲಿ ಕಂಪನಿಯ ಬೆಳವಣಿಗೆಗೆ ಕಾರಣವಾಗಿದೆ. ಇದು 'That's Cricket' ಪಾಡ್‌ಕಾಸ್ಟ್ ಮತ್ತು ಯೂಟ್ಯೂಬ್ ಚಾನೆಲ್ (ಪ್ಲಂಕೆಟ್ ಮತ್ತು ಬ್ಯಾನನ್ ಜೊತೆ), ಆರಂಭಿಕರಿಗಾಗಿ ಮಾರ್ಗದರ್ಶಿಗಳು ಮತ್ತು ಬೇಸ್‌ಬಾಲ್ ಅಭಿಮಾನಿಗಳನ್ನು ಕ್ರಿಕೆಟ್‌ಗೆ ಸಂಪರ್ಕಿಸುವ ಕ್ರಾಸ್-ಸ್ಪೋರ್ಟ್ ಕಂಟೆಂಟ್ ಅನ್ನು ಒಳಗೊಂಡಿದೆ. ಅಭಿಮಾನಿಗಳು 2 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ Jomboy Media ಯೂಟ್ಯೂಬ್ ಚಾನೆಲ್‌ನಲ್ಲಿ ಪರ್ಯಾಯ ಟೆಲಿಕಾಸ್ಟ್ ಅನ್ನು ವೀಕ್ಷಿಸಬಹುದು. ಅಮೆರಿಕ ಪಂದ್ಯ ವೀಕ್ಷಣೆಯ ಅವಕಾಶ ವಿಸ್ತರಣೆ ಅಮೆರಿಕಾದಲ್ಲಿ ಕ್ರಿಕೆಟ್‌ನ ವ್ಯಾಪ್ತಿ ನಿರಂತರವಾಗಿ ವಿಸ್ತರಿಸುತ್ತಿದೆ. ಬೆಳೆಯುತ್ತಿರುವ ವಲಸೆಗಾರರ ಪ್ರೇಕ್ಷಕರು, ಹೆಚ್ಚುತ್ತಿರುವ ದೇಶೀಯ ಭಾಗವಹಿಸುವಿಕೆ ಮತ್ತು LA28 ರಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಮರಳುವ ಮೊದಲು ಮುಖ್ಯವಾಹಿನಿಯ ಗೋಚರತೆ ಇದಕ್ಕೆ ಕಾರಣವಾಗಿದೆ. ವಿಲ್ಲೋ ಬೈ ಕ್ರಿಕ್ ಬಝ್ ನ ವಿಶ್ವಕಪ್ ಕವರೇಜ್, ಪ್ರೀಮಿಯಂ ಟೆಲಿವಿಷನ್ ವಿತರಣೆಯನ್ನು ಉಚಿತ ಡಿಜಿಟಲ್ ಪ್ರವೇಶ ಮತ್ತು ಹೊಸ ಪ್ರೋಗ್ರಾಮಿಂಗ್ ಫಾರ್ಮ್ಯಾಟ್‌ಗಳೊಂದಿಗೆ ಸಂಯೋಜಿಸುವ ಮೂಲಕ ಈ ವೇಗವನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸಮರ್ಪಿತ ಅಭಿಮಾನಿಗಳು ಮತ್ತು ಹೊಸ ಪ್ರೇಕ್ಷಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಅದರ ವಿಶ್ವಕಪ್ ಕವರೇಜ್‌ನ ಭಾಗವಾಗಿ, ವಿಲ್ಲೋ ಬೈ ಕ್ರಿಕ್ ಬಝ್ ಅಮೆರಿಕದಲ್ಲಿ ಖಚಿತವಾಗಿರುವ ಎಲ್ಲಾ ನಾಲ್ಕು USA ಪಂದ್ಯಗಳನ್ನು ಪ್ರೀಮಿಯಂ ಮತ್ತು ಉಚಿತ ಪ್ಲಾಟ್‌ಫಾರ್ಮ್‌ಗಳ ಮಿಶ್ರಣದಲ್ಲಿ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುತ್ತದೆ.USA ಪಂದ್ಯಗಳು - ಭಾರತದ ವಿರುದ್ಧ (ಫೆಬ್ರವರಿ 7, ಬೆಳಿಗ್ಗೆ 8:30 ET), ಪಾಕಿಸ್ತಾನದ ವಿರುದ್ಧ (ಫೆಬ್ರವರಿ 10, ಬೆಳಿಗ್ಗೆ 8:30 ET), ನೆದರ್ಲ್ಯಾಂಡ್ಸ್ ವಿರುದ್ಧ (ಫೆಬ್ರವರಿ 13, ಬೆಳಿಗ್ಗೆ 8:30 ET) ಮತ್ತು ನಮೀಬಿಯಾ ವಿರುದ್ಧ (ಫೆಬ್ರವರಿ 15, ಬೆಳಿಗ್ಗೆ 4:30 ET) - ಈ ಕೆಳಗಿನವುಗಳಲ್ಲಿ ವಿತರಿಸಲಾಗುವುದು:- Willow TV (ಇಂಗ್ಲಿಷ್ ಭಾಷೆ)- Willow 2 (ಹಿಂದಿ ಭಾಷೆ)- Willow Sports, ಕಂಪನಿಯ ಉಚಿತ ಜಾಹೀರಾತು-ಆಧಾರಿತ ಸ್ಟ್ರೀಮಿಂಗ್ (FAST) ಚಾನೆಲ್- ವಿಲ್ಲೋ ಬೈ ಕ್ರಿಕ್ ಬಝ್ ನ ವೆಬ್‌ಸೈಟ್ ಮತ್ತು ಆಪ್- Cricbuzz ನ ವೆಬ್‌ಸೈಟ್ ಮತ್ತು ಆಪ್- ವಿಲ್ಲೋ ಬೈ ಕ್ರಿಕ್ ಬಝ್ ನ ಯೂಟ್ಯೂಬ್ ಚಾನೆಲ್- ವಿಲ್ಲೋ ಬೈ ಕ್ರಿಕ್ ಬಝ್ ನ DTC ಸ್ಟ್ರೀಮಿಂಗ್ ಸೇವೆ (ಚಂದಾದಾರಿಕೆ ಆಧಾರಿತ)ಸಂಪೂರ್ಣ ವಿಶ್ವಕಪ್ ಮತ್ತು ಹೆಚ್ಚಿನದನ್ನು ವೀಕ್ಷಿಸಲು, ಅಭಿಮಾನಿಗಳು ನೇರವಾಗಿ ವಿಲ್ಲೋ ಬೈ ಕ್ರಿಕ್ ಬಝ್ ಗೆ ಚಂದಾದಾರರಾಗಬಹುದು ಅಥವಾ Amazon, ಯೂಟ್ಯೂಬ್ Primetime Channels, Triller TV ಮತ್ತು FloSports ಮೂಲಕ ಚಂದಾದಾರರಾಗಬಹುದು. ಸಂಪೂರ್ಣ ಟೂರ್ನಮೆಂಟ್‌ನಲ್ಲಿ, ICC ಪುರುಷರ T20 ವಿಶ್ವಕಪ್‌ನ ಎಲ್ಲಾ 55 ಪಂದ್ಯಗಳು Willow TV ಮತ್ತು Willow ವೆಬ್‌ಸೈಟ್ ಮತ್ತು ಆಪ್‌ಗಳಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತವೆ. ಹಿಂದಿ ಭಾಷೆಯ ಕವರೇಜ್ Willow 2 ನಲ್ಲಿ ಲಭ್ಯವಿರುತ್ತದೆ. ವಿಲ್ಲೋ ಬೈ ಕ್ರಿಕ್ ಬಝ್ ಬಗ್ಗೆ ವಿಲ್ಲೋ ಬೈ ಕ್ರಿಕ್ ಬಝ್ ಅಮೆರಿಕ ಮತ್ತು ಕೆನಡಾದಲ್ಲಿ ಕ್ರಿಕೆಟ್‌ಗೆ ಪ್ರಮುಖ ತಾಣವಾಗಿದೆ. ಇದು ಲಭ್ಯವಿರುವ ಅತ್ಯಂತ ಸಮಗ್ರ ಲೈವ್, ಸ್ಟ್ರೀಮಿಂಗ್ ಮತ್ತು ಆನ್-ಡಿಮ್ಯಾಂಡ್ ಕ್ರಿಕೆಟ್ ಕವರೇಜ್ ಅನ್ನು ಹೊಂದಿದೆ. ಕ್ರಿಕೆಟ್ ಅನ್ನು ಜಾಗತಿಕವಾಗಿ ಪ್ರವೇಶಿಸುವಂತೆ ಮಾಡುವ ತನ್ನ ಧ್ಯೇಯದಿಂದ ಮಾರ್ಗದರ್ಶನ ಪಡೆದು, ವಿಲ್ಲೋ ಬೈ ಕ್ರಿಕ್ ಬಝ್ ಕ್ರಿಕೆಟ್‌ನ ಶ್ರೀಮಂತ ಪರಂಪರೆಯನ್ನು ನವೀನ ಪ್ರಸಾರದೊಂದಿಗೆ ಸಂಯೋಜಿಸಿ, ಅಪ್ರತಿಮ ವೀಕ್ಷಣೆ ಅನುಭವವನ್ನು ನೀಡುತ್ತದೆ. ಶ್ರೇಷ್ಠತೆ ಮತ್ತು ನಾವೀನ್ಯತೆಗೆ ಸಮರ್ಪಿತವಾಗಿರುವ ವಿಲ್ಲೋ ಬೈ ಕ್ರಿಕ್ ಬಝ್, ಕ್ರಿಕೆಟ್ ಉತ್ಸಾಹಿಗಳಿಗೆ HD-ಗುಣಮಟ್ಟದ ಲೈವ್ ಸ್ಟ್ರೀಮಿಂಗ್ ಮತ್ತು ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ಪ್ರಮುಖ ಕ್ರಿಕೆಟ್ ಮಂಡಳಿಗಳು ಮತ್ತು ಪಂದ್ಯಾವಳಿಗಳಿಂದ ವ್ಯಾಪಕ ಕವರೇಜ್ ನೀಡುತ್ತದೆ.ವಿಲ್ಲೋ ಬೈ ಕ್ರಿಕ್ ಬಝ್ ನ ಟಿವಿ ನೆಟ್‌ವರ್ಕ್ DISH, Sling, Fios, Spectrum, Xfinity, Optimum, DIRECTV, DIRECTV Stream, Fubo ಮತ್ತು Yupp TV ನಂತಹ ಉನ್ನತ ಪೂರೈಕೆದಾರರ ಮೂಲಕವೂ ಲಭ್ಯವಿದೆ. ಇದು Apple TV, Roku, Samsung Smart TVs, Amazon Fire TV, Xbox One, Android TV, Chromecast, Google TV ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಎಲ್ಲಾ ಪ್ರಮುಖ CTV ಸಾಧನಗಳಲ್ಲಿ ಲಭ್ಯವಿರುವ ಮೀಸಲಾದ ಸ್ಟ್ರೀಮಿಂಗ್ ಅಪ್ಲಿಕೇಶನ್ ಅನ್ನು ಸಹ ನೀಡುತ್ತದೆ. ಇದು ಅಭಿಮಾನಿಗಳು ಆಟದ ಯಾವುದೇ ಕ್ಷಣವನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸುತ್ತದೆ. www.willow.tv ನಲ್ಲಿ ಅದ್ಬುತ ಕ್ರಿಕೆಟ್ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ವಿಜಯ ಕರ್ನಾಟಕ 3 Feb 2026 10:43 pm

ದಿನಕ್ಕೆ ಕನಿಷ್ಠ 400 ರೂಪಾಯಿ ವೇತನ ನಮ್ಮ ಬೇಡಿಕೆ, ಮನರೇಗಾ ಮರುಜಾರಿಯಾಗಲಿ: ಸಿದ್ದರಾಮಯ್ಯ

ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರೂ.ಗಳ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಗೊಳಿಸಿ, ಮನರೇಗಾ ಯೋಜನೆ ಮರುಜಾರಿಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. ಮಹಾತ್ಮ ಗಾಂಧಿ ಹೆಸರು ತೆಗೆದುಹಾಕಿ ಅವರಿಗೆ ಪುನಃ ಅವಮಾನ ಮಾಡಬಾರದು. ಈ

ಒನ್ ಇ೦ಡಿಯ 3 Feb 2026 10:33 pm

ದಿಲ್ಲಿ| ಉದ್ಯಮಿಯನ್ನು ಥಳಿಸಿ ಹತ್ಯೆ ಮಾಡಿದ ಫುಡ್ ಡೆಲಿವರಿ ಬಾಯ್‌ಗಳು

ಹೊಸದಿಲ್ಲಿ, ಫೆ. 3: ದಿಲ್ಲಿಯ ಕನ್ನಾಟ್ಪ್ಲೇಸ್‌ನಲ್ಲಿ ಮೂವರು ಆಹಾರ ವಿತರಣೆ ಕಂಪೆನಿಯ ಡೆಲಿವರಿಬಾಯ್‌ಗಳು 36 ವರ್ಷದ ಉದ್ಯಮಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯು ಜನವರಿ 3ರ ರಾತ್ರಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತ ಶಿವಮ್ ಗುಪ್ತ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿ ಜನವರಿ 19ರಂದು ಕೊನೆಯುಸಿರೆಳೆದಿದ್ದಾರೆ. ಗುಪ್ತ ಪಾರ್ಟಿಯೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಗುಪ್ತ ಮತ್ತು ಮೂವರು ಆಕ್ರಮಣಕಾರಿಗಳ ನಡುವೆ ವಾದ-ವಿವಾದ ತಲೆದೋರಿದ ಬಳಿಕ ಅವರು ಹೆಲ್ಮೆಟ್‌ಗಳಿಂದ ಗುಪ್ತರ ತಲೆಗೆ ಹೊಡೆದರು ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ದುಷ್ಕರ್ಮಿಗಳು ಪಾದಚಾರಿ ಮಾರ್ಗದಲ್ಲಿ ಉದ್ಯಮಿಯನ್ನು ಬಿಟ್ಟು ಹೋಗಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇ ಆರೋಪಿಗಾಗಿ ಶೋಧ ನಡೆಯುತ್ತಿದೆ.

ವಾರ್ತಾ ಭಾರತಿ 3 Feb 2026 10:32 pm

ನ್ಯೂಸ್‌ಪ್ರಿಂಟ್‌ ಕೊರತೆ| ಇಂಡಿಯನ್ ನ್ಯೂಸ್‌ಪೇಪರ್‌ ಸೊಸೈಟಿ ಕಳವಳ

ಹೊಸದಿಲ್ಲಿ, ಜ. 3: ದೇಶವನ್ನು ಬಾಧಿಸುತ್ತಿರುವ ನ್ಯೂಸ್‌ಪ್ರಿಂಟ್‌ ಕೊರತೆಯ ಬಗ್ಗೆ ಇಂಡಿಯನ್ ನ್ಯೂಸ್‌ಪೇಪರ್‌ ಸೊಸೈಟಿ (ಐಎನ್ಎಸ್) ಗಂಭೀರ ಕಳವಳ ವ್ಯಕ್ತಪಡಿಸಿದೆ. ಪತ್ರಿಕೆಗಳ ಮುದ್ರಣದಲ್ಲಿ ಬಳಸುವ ಕಾಗದದ ಕೊರತೆಯ ಹಿನ್ನೆಲೆಯಲ್ಲಿ ಪ್ರಕಾಶಕರು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ ಎಂದು ಅದು ಹೇಳಿದೆ. ಭಾರತದ ವಾರ್ಷಿಕ ನ್ಯೂಸ್‌ಪ್ರಿಂಟ್‌ ಬಳಕೆ ಸುಮಾರು 12 ಲಕ್ಷ ಟನ್ ಆಗಿದ್ದು, ದೇಶಿ ಕಾರ್ಖಾನೆಗಳು ಈ ಬೇಡಿಕೆಯ ಸುಮಾರು 40 ಶೇಕಡವನ್ನು ಮಾತ್ರ ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ. ಈ ಬೇಡಿಕೆ-ಪೂರೈಕೆ ಕೊರತೆಯು 20 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಉಳಿದುಕೊಂಡು ಬಂದಿದೆ ಹಾಗೂ ಈ ಅವಧಿಯಲ್ಲಿ ದೇಶಿ ನ್ಯೂಸ್‌ಪ್ರಿಂಟ್‌ ಉತ್ಪಾದನೆ ಸಾಮರ್ಥ್ಯವನ್ನು ವಿಸ್ತರಿಸಲು ಯಾವುದೇ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಐಎನ್ಎಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಇದರಿಂದಾಗಿ, ನ್ಯೂಸ್‌ಪ್ರಿಂಟ್‌ನ ನಿರಂತರ ಪೂರೈಕೆಗಾಗಿ ಆಮದಿಗೆ ಮೊರೆಹೋಗುವುದನ್ನು ಬಿಟ್ಟು ಮಾರ್ಗ ಭಾರತೀಯ ಪತ್ರಿಕಾ ಪ್ರಕಾಶಕರಿಗಿಲ್ಲ. ಮಾಹಿತಿಯ ಅಬಾಧಿತ ಹರಿವಿಗೆ ಇದು ಅಗತ್ಯವಾಗಿದೆ ಎಂದು ಐಎನ್ಎಸ್ ಹೇಳಿದೆ.

ವಾರ್ತಾ ಭಾರತಿ 3 Feb 2026 10:29 pm

ಫೆಲೆಸ್ತೀನ್ ಪರ ಭಿತ್ತಿಪತ್ರ| ಭಾರತವನ್ನು ತೊರೆಯುವಂತೆ ಬ್ರಿಟಿಷ್‌ ಪ್ರಜೆಗಳಿಗೆ ನೋಟಿಸ್

ಜೈಪುರ, ಫೆ. 3: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯಾ ಯುದ್ಧಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ ಎಂಬ ಆರೋಪದಲ್ಲಿ, ಭಾರತ ತೊರೆಯುವಂತೆ ಇಬ್ಬರು ಬ್ರಿಟಿಷ್ ರಾಷ್ಟ್ರೀಯರಿಗೆ ರಾಜಸ್ಥಾನ ಪೊಲೀಸ್‌ನ ಕ್ರಿಮಿನಲ್ ಇನ್ವೆಸ್ಟಿಗೇಶನ್ ಟೀಮ್ (ಸಿಐಡಿ) ನೋಟಿಸ್‌ಗಳನ್ನು ನೀಡಿದೆ. ‘‘ಫ್ರೀ ಫೆಲೆಸ್ತೀನ್, ಬಾಯ್ಕಾಟ್ ಇಸ್ರೇಲ್’’ (ಫೆಲೆಸ್ತೀನ್‌ಗೆ ಸ್ವಾತಂತ್ರ್ಯ ಕೊಡಿ, ಇಸ್ರೇಲನ್ನು ಬಹಿಷ್ಕರಿಸಿ) ಮುಂತಾದ ಘೋಷಣೆಗಳು ಭಿತ್ತಿಪತ್ರಗಳಲ್ಲಿದ್ದವು. ಈ ಇಬ್ಬರು ಬ್ರಿಟಿಷ್ ರಾಷ್ಟ್ರೀಯರು ಪ್ರವಾಸಿ ವೀಸಾಗಳಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಅವರ ಕೃತ್ಯಗಳು, ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದ ವೀಸಾ ಶರತ್ತುಗಳನ್ನು ಉಲ್ಲಂಘಿಸುತ್ತವೆ ಎಂದು ಸಿಐಡಿ ಹೇಳಿಕೊಂಡಿದೆ.

ವಾರ್ತಾ ಭಾರತಿ 3 Feb 2026 10:25 pm

ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

ಮಲ್ಪೆ, ಫೆ.3: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ಅಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ನಾಗಲಿಂಗಮ್ (51) ಎಂಬವರು ಇಮ್ಯಾನುವೆಲ್ ಕಿರಣ ಎಂಬವರ ರಾಯಲ್ ಫಿಶರಿಶ್ ಎಂಬ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿ ಕೊಂಡಿದ್ದು, ಜ.31ರಂದು ರಾತ್ರಿ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ಮಧ್ಯೆ ಬೋಟು ಹೋಗುತ್ತಿರುವಾಗ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Feb 2026 10:21 pm

ಮಹಿಳೆಯ ಚಿನ್ನದ ಸರ ಅಪಹರಣ: ಪ್ರಕರಣ ದಾಖಲು

ಗಂಗೊಳ್ಳಿ, ಫೆ.3: ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪರಿಚಿತರು ಅಪಹರಿಸಿ ಪರಾರಿಯಾಗಿರುವ ಘಟನೆ ತ್ರಾಸಿ ಗ್ರಾಮದ ಸಣ್ಣಕುಂಬ್ರಿ ಬಳಿ ಫೆ.3ರಂದು ಬೆಳಗ್ಗೆ ನಡೆದಿದೆ. ತ್ರಾಸಿ ಕುಂಬಿ ನಿವಾಸಿ ಸೀತಾ(83) ಎಂಬವರು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದು, ಆಗ ಅಪರಿಚಿತ ವ್ಯಕ್ತಿ ಸೀತಾ ಅವರ ಹಿಂದಿನಿಂದ ಬಂದು ಜೀವ ಬೇದರಿಕೆ ಹಾಕಿ ಬಲಾತ್ಕಾರವಾಗಿ ಅವರ ಕುತ್ತಿಗೆಗೆ ಕೈ ಹಾಕಿ 22.470 ಗ್ರಾಂ ತೂಕದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿರುವುದಾಗಿ ದೂರ ಲಾಗದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Feb 2026 10:19 pm

ವಿದ್ಯುತ್ ಕಂಬಕ್ಕೆ ಸ್ಕೂಟರ್ ಢಿಕ್ಕಿ: ಲೈನ್‌ಮೆನ್ ಮೃತ್ಯು

ಹಿರಿಯಡ್ಕ, ಫೆ.3: ಸ್ಕೂಟರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಲೈನ್‌ಮೆನ್ ಮೃತಪಟ್ಟ ಘಟನೆ ಆತ್ರಾಡಿ ಪರೀಕ ಬೊಬ್ಬು ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಮೃತರನ್ನು ಅಥಣಿ ಮೂಲದ ಮಣಿಪಾಲದಲ್ಲಿ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಕಾಸ್ ಟೋಗು ರಾಠೋಡ್ (28) ಎಂದು ಗುರುತಿಸ ಲಾಗಿದೆ. ಇವರು ಡಿ.26ರಂದು ರಾತ್ರಿ ಬೈಕಿನಲ್ಲಿ ಬುಕ್ಕಿಗಡ್ಡೆಯಿಂದ ಮಣಿಪಾಲಕ್ಕೆ ಕರ್ತವ್ಯಕ್ಕೆ ತೆರಳುತ್ತಿದ್ದು, ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯ ಗೊಂಡಿದ್ದ ವಿಕಾಸ್, ಫೆ.3ರಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Feb 2026 10:13 pm

ಅಪ್ರಾಪ್ತ ಸ್ಕೂಟರ್ ಸವಾರಿ: ಮಾಲಕಿ ವಿರುದ್ಧ ಪ್ರಕರಣ

ಮಣಿಪಾಲ, ಫೆ.3: ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಸವಾರಿ ಮಾಡಲು ಸ್ಕೂಟರ್ ನೀಡಿದ ಮಾಲಕಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರ್ಕಳ ಜಂಕ್ಷನ್ ಬಳಿ ಫೆ.2ರಂದು ಸಂಜೆ ವೇಳೆ ಹೆರ್ಗಾ ಕಡೆಯಿಂದ ಪರ್ಕಳ ಕಡೆಗೆ ಅಡ್ಡಾದಿಡ್ಡಿಯಾಗಿ ಅಜಾಗರೂ ಕತೆಯಿಂದ ಸವಾರಿ ಮಾಡಿ ಕೊಂಡು ಬರುತ್ತಿದ್ದ ಸ್ಕೂಟರ್‌ನ್ನು ಮಣಿಪಾಲ ಪೊಲೀಸರು ನಿಲ್ಲಿಸಿದ್ದು, ಸ್ಕೂಟರ್ ಸವಾರಿ ಮಾಡಿದ ಬಾಲಕನ ಶ್ರೇಯಸ್(16) ಎಂದು ತಿಳಿದು ಬಂದಿದೆ. ಅಪ್ರಾಪ್ತ ವಯಸ್ಕನಾಗಿರುವ ಶ್ರೇಯಸ್‌ಗೆ ಸೂಕ್ತ ಚಾಲನಾ ಅನುಜ್ಞಾ ಪತ್ರ ಇಲ್ಲದಿದ್ದರೂ ಆತನಿಗೆ ಸ್ಕೂಟರ್ ಸವಾರಿ ಮಾಡಲು ಸ್ಕೂಟರ್ ನೀಡಿದ ಮಾಲಕಿ ಉಷಾ(45) ವಿರುದ್ಧ ಕಾನೂನು ಕ್ರಮಕ್ಕಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಾರ್ತಾ ಭಾರತಿ 3 Feb 2026 10:09 pm

ಗಂಗೊಳ್ಳಿ: ಮರಳು ದಿಬ್ಬದ ಸಮಸ್ಯೆ; ಮೀನುಗಾರರು ಹೈರಾಣ!

ಗಂಗೊಳ್ಳಿ (ಕುಂದಾಪುರ), ಫೆ.3: ಕೋಡಿ ಗಂಗೊಳ್ಳಿ ಅಳಿವೆ ಬಾಗಿಲಿನ ‘ಡ್ರೆಜ್ಜಿಂಗ್’ (ಹೂಳೆತ್ತುವಿಕೆ) ಕಾಮಗಾರಿ ಹೆಸರಿನಲ್ಲಿ ಹೂಳು ತೆಗೆಯಲು ಆಳುವ ಸರಕಾರಗಳು ಕೋಟ್ಯಂತರ ರೂಪಾಯಿ ಹಣ ವಿನಿಯೋಗಿಸಿದರೂ ಕೂಡ ಗಂಗೊಳ್ಳಿ ಬಂದರನ್ನು ಬಳಸುವ ಮೀನುಗಾರರ ಬದುಕು ಇನ್ನೂ ಅತಂತ್ರವಾಗಿಯೇ ಉಳಿದಿದೆ. ಬಂದರಿನ ಅಳಿವೆ ಬಾಗಿಲಿನಲ್ಲಿರುವ ಮರಳು ದಿಬ್ಬಗಳ ನಡುವೆ ಬೋಟ್ ಚಲಾಯಿಸುವುದು, ಪ್ರತಿದಿನ ಸಮುದ್ರ ಹಾಗೂ ಪ್ರಕೃತಿಯೊಂದಿಗೆ ಸೆಣಸುತ್ತಾ ಬದುಕುವ ಮೀನುಗಾರರಿಗೂ ಕಠಿಣ ಸಾಹಸ ಎನ್ನಬಹುದು. ಹಲವು ಬಾರಿ ಇಲ್ಲಿ ಪ್ರಾಣಾಪಾಯದ ಸನ್ನಿವೇಶವೂ ಸೃಷ್ಟಿಯಾದದ್ದಿದೆ. ಹೀಗಾಗಿ ಇಲ್ಲಿ ವ್ಯವಸ್ಥೆಯ ವಿರುದ್ಧ ಆಕ್ರೋಶವೂ ಕೇಳಿಬರುತ್ತಿದೆ. ಅಳಿವೆಬಾಗಿಲಿನ ಹೂಳಿನ ಸಮಸ್ಯೆ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದ ಪ್ರಮುಖ ಮೀನುಗಾರಿಕಾ ಕೇಂದ್ರವಾದ ಗಂಗೊಳ್ಳಿ ಮತ್ತು ಕೋಡಿ ಅಳಿವೆ ಬಾಗಿಲಿನಲ್ಲಿ ಮೀನುಗಾರರಿಗೆ ಪ್ರಮುಖ ತಲೆನೋವಾಗಿದೆ. ಹೂಳಿನ ಸಮಸ್ಯೆ -ಹೂಳೆತ್ತುವ ಬೇಡಿಕೆ- ಕುರಿತಂತೆ ಮೀನುಗಾರರು ಹಲವು ವರ್ಷಗಳಿಂದ ಸರಕಾರಗಳ ಗಮನ ಸೆಳೆಯುತಿದ್ದಾರೆ. ಆದರೆ ಅದು ಮೀನುಗಾರರ ಬೇಡಿಕೆಯಾಗಿಯೇ ಉಳಿದುಕೊಂಡಿದೆ. ಮರಳು ದಿಬ್ಬಗಳ ತೆರವಿಗೆ ಕಾಮಗಾರಿ ಹೆಸರಿನಲ್ಲಿ ಕೋಟಿ ಕೋಟಿ ಸುರಿದರೂ ಹೂಳು ಸಮಸ್ಯೆಗೆ ಮಾತ್ರ ಇದುವರೆಗೆ ಮುಕ್ತಿ ದೊರಕಿಲ್ಲ. ಕಳೆದ ವರ್ಷ ಮೀನುಗಾರರ ಸತತ ಪ್ರತಿಭಟನೆಗೆ ಮಣಿದ ಸರಕಾರ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಡ್ರೆಜ್ಜಿಂಗ್ (ಹೂಳು ತೆಗೆಯುವ ಕಾಮಗಾರಿ) ನಡೆಸಿತ್ತು. ಡ್ರೆಜ್ಜಿಂಗ್ ಮೂಲಕ ಎತ್ತಿದ ಹೂಳನ್ನು ಸಮುದ್ರದ ಆಳಕ್ಕೆ ಸಾಗಿಸುವ ಬದಲು, ಅಳಿವೆ ಬಾಗಿಲಿನ ಆಸುಪಾಸಿನಲ್ಲೇ ಸುರಿಯಲಾಗಿತ್ತು. ಪರಿಣಾಮವಾಗಿ, ಕಡಲ ಅಲೆಗಳ ಅಬ್ಬರಕ್ಕೆ ಆ ಮರಳು ಮತ್ತೆ ಅಳಿವೆಗೆ ಬಂದು ಸೇರಿದ್ದು, ಪರಿಸ್ಥಿತಿ ಮೊದಲಿಗಿಂತಲೂ ಗಂಭೀರವಾಗಿದೆ. ಬ್ರೇಕ್ ವಾಟರ್ ಮುಳುವಾಯಿತೇ?: ಸ್ಥಳೀಯ ಮೀನುಗಾರರ ಪ್ರಕಾರ, ಅಳಿವೆಯಲ್ಲಿ ವೈಜ್ಞಾನಿಕವಾಗಿ ನಡೆಸದ ಬ್ರೇಕ್‌ವಾಟರ್ (ತಡೆಗೋಡೆ) ಕಾಮಗಾರಿಯೇ ಈ ಹೂಳು ತುಂಬಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ನದಿ ನೀರು ಸರಾಗವಾಗಿ ಸಮುದ್ರ ಸೇರಲು ಅಡ್ಡಿಯಾಗುತ್ತಿದ್ದು, ಪಂಚಗಂಗಾವಳಿ ನದಿಯ ನೀರು ತಂದ ಹೂಳು ಸಂಗಮ ಸ್ಥಾನದಲ್ಲೇ ಶೇಖರಣೆಯಾಗುತ್ತಿದೆ. ಪ್ರಸ್ತುತ ಅಳಿವೆಯ ಪಂಚಗಂಗಾವಳಿ ಸಂಗಮ ಸ್ಥಾನದಿಂದ ಹಿನ್ನೀರುವರೆಗೆ ಬೃಹತ್ ಮರಳು ದಿಬ್ಬ ರಚನೆಯಾಗಿದೆ. ಇದು ಮೀನುಗಾರಿಕೆಗಾಗಿ ಬಂದರಿನಿಂದ ತೆರಳುವ ಬೋಟ್‌ಗಳ ಸಂಚಾರಕ್ಕೆ ವಿಪರೀತ ಅಡ್ಡಿಯಾಗುತ್ತಿದೆ. ಅನೇಕ ಬೋಟ್‌ಗಳು ಮರಳು ದಿಬ್ಬಕ್ಕೆ ಸಿಲುಕಿ ಹಾನಿಗೊಂಡಿವೆ. ಮೀನುಗಾರಿಕೆ ಮುಗಿಸಿ ಬರುವ ಬೋಟುಗಳು ಅಪಾಯಕ್ಕೆ ಸಿಲುಕುವ ಹಲವು ನಿದರ್ಶನಗಳು ಇಲ್ಲಿದೆ. ಕೋಟ್ಯಂತರ ರೂ. ತೆರಿಗೆ ಪಾವತಿಸುವ ಮೀನುಗಾರಿಕಾ ವಲಯಕ್ಕೆ ಕನಿಷ್ಠ ಸಂಚಾರ ವ್ಯವಸ್ಥೆಯನ್ನೂ ಕಲ್ಪಿಸಿ ಕೊಟ್ಟಿಲ್ಲ. ಹೂಳು ತೆಗೆಯುವ ಹೆಸರಿನಲ್ಲಿ ಹಣ ಲೂಟಿ ಮಾಡುವುದನ್ನು ನಿಲ್ಲಿಸಿ, ನುರಿತ ತಜ್ಞರಿಂದ ಸರ್ವೆ ಮಾಡಿಸಿ, ಶಾಶ್ವತವಾಗಿ ಹೂಳು ತೆಗೆಯುವ ತಂತ್ರಜ್ಞಾನ ಬಳಸಿ ಎಂಬುದು ಕೋಡಿ- ಗಂಗೊಳ್ಳಿ ಮೀನುಗಾರರ ಒಕ್ಕೊರಲ ಒತ್ತಾಯವಾಗಿದೆ. ಒಂದು ವೇಳೆ ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಮುದ್ರಕ್ಕಿಳಿಯುವ ಬದಲು ಬೋಟ್‌ ಗಳನ್ನು ದಡದಲ್ಲೇ ನಿಲ್ಲಿಸಿ ಪ್ರತಿಭಟಿಸುವ ಎಚ್ಚರಿಕೆಯನ್ನು ಮೀನುಗಾರ ಮುಖಂಡರಾದ ನಾಗರಾಜ್ ಕಾಂಚನ್ ಮತ್ತು ಸುನಿಲ್ ಪೂಜಾರಿ ಕೋಡಿ ನೀಡಿದ್ದಾರೆ. ಕೋಡಿ ಜೆಟ್ಟಿಯಲ್ಲಿ 50ಕ್ಕೂ ಮಿಕ್ಕಿ ಮೀನುಗಾರಿಕಾ ಬೋಟ್‌ಗಳಿದ್ದು, ನೂರಾರು ಯಾಂತ್ರೀಕೃತ ನಾಡದೋಣಿಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಕೋಡಿ-ಗಂಗೊಳ್ಳಿ ಅಳಿವೆಯಲ್ಲಿ ಹೂಳು ದಿಗ್ಬಂಧನದ ಕಾರಣ ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾಣದಿಂದ ಕೋಟ, ಪಡುಕರೆ, ಮಣೂರು, ಕುಂದಾಪುರ ತಾಲೂಕಿನ ಬೀಜಾಡಿ, ಗೋಪಾಡಿ, ಕೋಟೇಶ್ವರ ಹಳೆಅಳಿವೆ ಭಾಗದ ಮೀನುಗಾರರ ಕೇಂದ್ರ ಸ್ಥಾನವಾಗಿರುವ ಕೋಡಿ ಜೆಟ್ಟಿಯಲ್ಲಿ ಬೋಟ್ ನಿಲುಗಡೆಗೂ ಸಂಕಷ್ಟ ಎದುರಾಗಿದೆ. ಪ್ರವಾಸೋದ್ಯಮಕ್ಕೂ ಹೊಡೆತ: ಅಳಿವೆ ಪ್ರದೇಶಗಳಲ್ಲಿ ಹೂಳು ತುಂಬಿರುವುದರಿಂದ ಮೀನುಗಾರಿಕಾ ಬೋಟ್‌ ಗಳಿಗೆ ಮಾತ್ರವಲ್ಲದೆ, ಪ್ರವಾಸಿ ಬೋಟ್‌ಗಳ ಸಂಚಾರಕ್ಕೂ ಇಲ್ಲಿ ಸಂಚಕಾರ ಬಂದಿದೆ. ಅವುಗಳ ಇಲ್ಲಿ ತಮ್ಮ ಸಂಚಾರವನ್ನೇ ಸ್ಥಗಿತಗೊಳಿಸಿವೆ. ಇದರಿಂದ ಪ್ರವಾಸೋದ್ಯಕ್ಕೆ ಮಾತ್ರವಲ್ಲದೇ ಸ್ಥಳೀಯ ವ್ಯಾಪಾರಸ್ಥರಿಗೂ ಆರ್ಥಿಕ ಹೊಡೆತ ಬಿದ್ದಿದೆ ಎನ್ನಲಾಗಿದೆ.

ವಾರ್ತಾ ಭಾರತಿ 3 Feb 2026 10:04 pm

ಚಿಂಚೋಳಿ | ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮುಖ್ಯ : ಕರುಣೇಶ್ವರ ಶಿವಾಚಾರ್ಯ

ಚಿಂಚೋಳಿ : ತಾಲೂಕಿನ ನೀಡಗುಂದಾ ಗ್ರಾಮದ ಶ್ರೀ ಕಂಚಾಳಕುಂಟಿ ನಂದಿ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ 17ನೇ ಶಾಲಾ ವಾರ್ಷಿಕೋತ್ಸವ ಹಾಗೂ ‘ತಾಯಂದಿರ ಕೈ ತುತ್ತಿನ ಊಟ’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಭಾನುವಾರ ಉದ್ಘಾಟಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಷ.ಬ್ರ. ಕರುಣೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ತಂದೆ-ತಾಯಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿ ಗರ್ಭಧಾರಣೆಯ ಹಂತದಿಂದಲೇ ಮಗುವಿನ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳು ಪ್ರೌಢಾವಸ್ಥೆಗೆ ತಲುಪುವವರೆಗೂ ಪೋಷಕರು ಅವರೊಂದಿಗೆ ಆಪ್ತರಾಗಿರಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳಿಗೆ ಸಾತ್ವಿಕ ನಡವಳಿಕೆ, ಪೌಷ್ಟಿಕ ಆಹಾರ ಹಾಗೂ ಉತ್ತಮ ಸಂಸ್ಕಾರಗಳನ್ನು ನೀಡುವ ಮೂಲಕ ಸರಿಯಾದ ಜೀವನ ಮಾರ್ಗವನ್ನು ತೋರಿಸಿಕೊಡಬೇಕು. ಬಾಲ್ಯದಲ್ಲಿ ಮಕ್ಕಳು ತಪ್ಪು ದಾರಿಗೆ ಹೋಗದಂತೆ ತಡೆಯುವುದು ಪೋಷಕರ ಜವಾಬ್ದಾರಿ. ಪ್ರೌಢಾವಸ್ಥೆಯಲ್ಲಿ ಪೋಷಕರು ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಂಚಾಳಕುಂಟಿ ಬಸವೇಶ್ವರ ವಿದ್ಯಾಸಂಸ್ಥೆಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಪ್ರೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಾಬು ಎಸ್. ಕುಂಬಾರ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಎಲ್. ಹೂವಿನಭಾವಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರೇಣುಕಾ ಹಾಷನಪಲ್ಲ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶರಣು ಅಮಿತ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುಕುಂದ ದೇಶಪಾಂಡೆ ಸೇರಿದಂತೆ ಜಗನಾಥ್ ಎಸ್.ಕುಂಬಾರ, ರವಿ ಕೊಂಡಪಳ್ಳಿ, ಪ್ರಕಾಶ, ಸಿದ್ದೆಗೌಡ, ಶಾಲೆಯ ಮುಖ್ಯ ಶಿಕ್ಷಕರಾದ ವೀರಶೆಟ್ಟಿ ಮೊಳಕೇರಿ, ಕರೆಪ್ಪ ಪೂಜಾರಿ, ಸದಾನಂದ ಗುತ್ತೇದಾರ, ಮರೆಪ್ಪ ಗೌತಮ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 3 Feb 2026 10:03 pm

2 ವಾರಗಳಲ್ಲಿ ಅಂಬಾಗಿಲು, ಬಲಾಯಿಪಾದೆಯಲ್ಲಿ ಸಿಗ್ನಲ್‌ಲೈಟ್ ಅಳವಡಿಕೆ

ಉಡುಪಿ, ಫೆ.3: ಅಂಬಾಗಿಲು ಮತ್ತು ಉದ್ಯಾವರ ಬಲಾಯಿಪಾದೆಯ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಮಂಗಳವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಈ ಎರಡು ಜಂಕ್ಷನ್‌ಗಳಲ್ಲಿ ಇನ್ನೂ ಎರಡು ವಾರಗಳಲ್ಲಿ ಸಿಗ್ನಲ್ ಲೈಟ್ ಸಿದ್ಧವಾಗಲಿದೆ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಪರಿಸರದ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Feb 2026 10:00 pm

HD ಕುಮಾರಸ್ವಾಮಿ ಸತತ ಪ್ರಯತ್ನದ ಫಲ : ಅಬಕಾರಿ ಸುಂಕ ವಾಪಸ್ ಪಡೆದ ಕೇಂದ್ರ ಸರ್ಕಾರ

Excise duty waived off : ತಂಬಾಕಿನ ಮೇಲಿದ್ದ ಅಬಕಾರಿ ಸುಂಕ ಶೇ. 18ರಷ್ಟನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಕುಮಾರಸ್ವಾಮಿಯವರ ಪ್ರಯತ್ನದ ಫಲವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಭೂಮಿಯಲ್ಲಿನ ಅಪರೂಪದ ಖನಿಜಗಳನ್ನು ಹೊರತೆಗೆದು ಬಳಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವಿಜಯ ಕರ್ನಾಟಕ 3 Feb 2026 9:59 pm

ಡಾಲರ್ ಎದುರು ರೂಪಾಯಿ ಮೌಲ್ಯ ಅಲ್ಪ ಹೆಚ್ಚಳ

ಮುಂಬೈ, ಫೆ. 3: ಮಂಗಳವಾರದ ವ್ಯವಹಾರದಲ್ಲಿ ಭಾರತೀಯ ರೂಪಾಯಿಯು ಅಮೆರಿಕದ ಡಾಲರ್ ವಿರುದ್ಧ 119 ಪೈಸೆ ಹೆಚ್ಚಿಸಿಕೊಂಡು 90.30 ರೂ.ಗೆ ಏರಿಕೆಯಾಗಿದೆ. ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಸುಂಕವನ್ನು ಅಮೆರಿಕವು 50 ಶೇಕಡದಿಂದ 18 ಶೇಕಡಕ್ಕೆ ಇಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. 18 ಶೇಕಡ ಸುಂಕವು ಪರಿಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ಫಾರೆಕ್ಸ್ (ವಿದೇಶಿ ವಿನಿಮಯ) ವ್ಯಾಪಾರಿಗಳು ಹೇಳುತ್ತಾರೆ. ಇದು ಭಾರತದ ಸ್ಥಿತಿಯನ್ನು ಸುಧಾರಿಸುತ್ತದೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ (ಎಫ್ಐಐ) ಭಾರತೀಯ ಮಾರುಕಟ್ಟೆಯ ಬಾಗಿಲನ್ನು ಮತ್ತೆ ತೆರೆಯುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಇಂಟರ್‌ಬ್ಯಾಂಕ್ ಫಾರೀನ್ ಎಕ್ಸ್‌ಚೇಂಜ್ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ರೂಪಾಯಿ ವ್ಯವಹಾರ ಡಾಲರ್‌ಗೆ 90.30ಯಲ್ಲಿ ಆರಂಭಗೊಂಡಿತು. ಹಿಂದಿನ ದಿನದ ವ್ಯವಹಾರ ಮುಕ್ತಾಯಕ್ಕೆ ರೂಪಾಯಿ ಬೆಲೆಯು ಡಾಲರ್‌ಗೆ 91.49 ಆಗಿತ್ತು.

ವಾರ್ತಾ ಭಾರತಿ 3 Feb 2026 9:59 pm

ನಿಟ್ಟೆ: ಫೆ.5ರಿಂದ ಐಸಿಇಟಿಇ-2026 ಬಹುಸಮ್ಮೇಳನ

ನಿಟ್ಟೆ, ಫೆ.3: ನಿಟ್ಟೆ ಡೀಮ್ಡ್ ವಿವಿಯ ಸಹ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ‘ಐಸಿಇಟಿಇ-2026 ಬಹುಸಮ್ಮೇಳನ’ ಫೆಬ್ರವರಿ 5 ರಿಂದ 7ರವರೆಗೆ ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಬಹುಸಮ್ಮೇಳನವನ್ನು ಗೋವಾದ ರಾಷ್ಟ್ರೀಯ ಓಶನೋಗ್ರಾಫಿ ಸಂಸ್ಥೆಯ (ಎನ್‌ಐಒ) ನಿರ್ದೇಶಕ ಡಾ.ಸುನಿಲ್‌ ಕುಮಾರ್ ಸಿಂಗ್ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿಟ್ಟೆ ವಿವಿಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಪಾನಿನ ಕೊಯೋಟೊ ರಿತ್ಸುಮೇಕಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಉಪ ಡೀನ್ ಪ್ರೊ. ಯಸುಹಿರೋ ಶಿಯೋಮಿ, ದಕ್ಷಿಣ ಕೊರಿಯಾದ ಕುನ್ಸಾನ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಆ್ಯಂಡ್ ಸಾಪ್ಟ್‌ವೇರ್ ಪ್ರಾಧ್ಯಾಪಕ ಡಾ.ಇನ್ ಹೋ ರಾ, ಈಜಿಪ್ಟ್‌ನ ಕೈರೋದ ಅಲ್-ಅಝರ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಹೆಶಂ ನಬೀಲ್, ಮಲೇಷಿಯಾದ ಯುನಿವರ್ಸಿಟಿ ಟೆಕ್ನೋಲೋಜಿ ಮಲೇಷಿಯಾದ ಸಹಪ್ರಾಧ್ಯಾಪಕ ಡಾ. ಮೊಹಮ್ಮದ್ ಇಬ್ರಾಹಿಂ ಭಾಗವಹಿಸಲಿದ್ದಾರೆ. ಐಸಿಇಟಿಇ-2026 ಬಹುಸಮ್ಮೇಳನವು ನಿಟ್ಟೆ-ಬಯೋ 2026, ಸಿಟಿಸಿಎಸ್ 2026, ಎಐಡಿಇ 2026, ಅರೀವ್ 2026, ವಿಸ್ಪೈಸ್ 2026, ಎಸ್‌ಎಂಇ 2026 ಮತ್ತು ಎಂಎಸ್‌ಎಂಎಟಿ 2026 ಎಂಬ ಏಳು ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಒಳಗೊಂಡಿದೆ. ಈ ಸಮ್ಮೇಳನದಲ್ಲಿ ಭಾರತ ಅಲ್ಲದೇ ಜಪಾನ್, ದಕ್ಷಿಣ ಕೊರಿಯಾ, ಈಜಿಪ್ಟ್, ಮಲೇಷಿಯಾ ಮೊದಲಾದ ದೇಶಗಳಿಂದ ಗಣ್ಯ ವಿದ್ವಾಂಸರು ಮತ್ತು ಸಂಶೋಧಕರು ತಮ್ಮ ಪರಿಣಿತ ಕ್ಷೇತ್ರಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಸುಮಾರು 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನಾ ಲೇಖನ ಗಳನ್ನು ಮಂಡಿಸಲಿದ್ದಾರೆ. ಕೃತಕ ಬುದ್ಧಿಮತ್ತೆ, ಎಂಜಿನಿಯರಿಂಗ್, ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಇತ್ತೀಚಿನ ಸಂಶೋಧನಾ ಟ್ರೆಂಡ್ ಗಳ ಕುರಿತು ಆಳವಾದ ಚರ್ಚೆ ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Feb 2026 9:58 pm

ಹೃದಯ ಚಿಕಿತ್ಸೆಯಲ್ಲಿ ಟಿಎಂವಿಆರ್ ಯಶಸ್ವಿ: ಕೆಎಂಸಿ ವೈದ್ಯರ ಸಾಧನೆ

ಉಡುಪಿ, ಫೆ.3: ಮಹಾರಾಷ್ಟ್ರದ 72 ವರ್ಷದ ಪುರುಷ ರೋಗಿಯೊಬ್ಬರ ಮೇಲೆ ಮಣಿಪಾಲ ಕೆಎಂಸಿಯ ಹೃದ್ರೋಗ ಚಿಕಿತ್ಸಾ ತಜ್ಞ ವೈದ್ಯರು ಅತ್ಯಾಧುನಿಕ ವಾಲ್ವ್-ಇನ್-ವಾಲ್ವ್ (ಟಿಎಂವಿಆರ್) ಕಾರ್ಯವಿಧಾನದಲ್ಲಿ ಯಶಸ್ವ ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಹೊಸ ವಿಕ್ರಮ ಸಾಧಿಸಲಾಯಿತು. ದಕ್ಷಿಣ ಕರ್ನಾಟಕದಲ್ಲಿ ನಡೆದ ಮೊತ್ತಮೊದಲ ಟ್ರಾನ್ಸ್ ಕ್ಯಾಥಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್ (ಟಿಎಂವಿಆರ್) ಶಸ್ತ್ರಚಿಕಿತ್ಸೆ ಇದಾಗಿದ್ದು, ಇದನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಹೃದಯ ಚಿಕಿತ್ಸೆಯಲ್ಲಿ ಇದು ವಿನೂತನ ಸಾಧನೆ ಎನಿಸಿಕೊಂಡಿದೆ. ಈ ಮೂಲಕ ಸಂಕೀರ್ಣವಾದ ಮಿಟ್ರಲ್ ವಾಲ್ವ್ ಕಾಯಿಲೆ ಇರುವ ಹೃದಯ ರೋಗಿಗಳಿಗೆ ಹೊಸ ಭರವಸೆಯ ಆಶಾಕಿರಣವನ್ನುಇ ನೀಡಿದೆ. ಡಾ.ಟಾಮ್ ದೇವಾಸಿಯಾ, ಡಾ. ಮೋನಿಕಾ ಜವಾಂಜಲ್ ಮತ್ತು ಡಾ. ಹರೇಶ್ ಮೆಹ್ತಾ (ಮುಂಬೈ) ನೇತೃತ್ವದ ಹೃದ್ರೋಗ ಚಿಕಿತ್ಸಾ ತಂಡವು ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಸರ್ಜರಿ ಬಳಿಕ ರೋಗಿಯಲ್ಲಿ ಹೊಸ ಕವಾಟವನ್ನು ಯಶಸ್ವಿಯಾಗಿ ಅಳವಡಿಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯಲ್ಲಿ ತ್ವರಿತ ಸುಧಾರಣೆ ಕಂಡುಬಂದಿದ್ದು, ಮೂರು ದಿನಗಳ ಬಳಿಕ ರೋಗಿಯನ್ನು ಬಿಡುಗಡೆ ಮಾಡಲಾಯಿತು ಎಂದು ಕೆಎಂಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಹಾರಾಷ್ಟ್ರದ 72 ವರ್ಷ ಪ್ರಾಯದ ರೋಗಿ ಸುಮಾರು ಒಂದು ದಶಕದ ಹಿಂದೆ ತೆರೆದ ಹೃದಯ ಮಿಟ್ರಲ್ ಕವಾಟ ಬದಲಿ ಚಿಕಿತ್ಸೆಗೆ ಒಳಗಾಗಿದ್ದರು. ಅವರುತೀವ್ರ ಉಸಿರಾಟದ ತೊಂದರೆ ಮತ್ತು ಆಯಾಸದಿಂದ ಬಳಲುತ್ತಿದ್ದರು. ಇದು ಅವರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ನೀಡುತ್ತಿತ್ತು. ವಯಸ್ಸು ಮತ್ತು ಸಂಬಂಧಿತ ಆರೋಗ್ಯ ಅಂಶಗಳಿಂದಾಗಿ ಪುನರಾವರ್ತಿತ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯವಿದೆ ಎಂದು ಪರಿಗಣಿಸಲಾಗಿತ್ತು. ಚಿಕಿತ್ಸೆಯ ಕುರಿತು ವಿವರಿಸಿದ ಕೆಎಂಸಿಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಟಾಮ್ ದೇವಾಸಿಯಾ, ಪುನರಾವರ್ತಿತ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯವಿರುವ ವಯಸ್ಸಾದ ರೋಗಿಗಳಿಗೆ ಟಿಎಂವಿಆರ್ ಒಂದು ಪ್ರಮುಖ ಬದಲಿ ಚಿಕಿತ್ಸೆಯಾಗಿದೆ. ವಿಫಲವಾದ ಬಯೋಪ್ರೊಸ್ಥೆಟಿಕ್ ಮಿಟ್ರಲ್ ಕವಾಟಗಳು, ತೀವ್ರವಾದ ಮಿಟ್ರಲ್ ರಿಗರ್ಗಿಟೇಶನ್, ಉಸಿರಾಟದ ತೊಂದರೆ, ಪುನರಾವರ್ತಿತ ಹೃದಯ ವೈಫಲ್ಯದ ಲಕ್ಷಣಗಳು ಅಥವಾ ಈಗಾಗಲೇ ಹಿಂದಿನ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುರಕ್ಷಿತವಾಗಿ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗದ ರೋಗಿಗಳಿಗೆ ಈ ಕನಿಷ್ಠ ಅಪಾಯದ ಚಿಕಿತ್ಸಾ ವಿಧಾನವು ವಿಶೇಷ ಪ್ರಯೋಜನಕಾರಿಯಾಗಿದೆ ಎಂದರು. ತೊಡೆಸಂದಿಯಲ್ಲಿ ಸಣ್ಣ ಪಂಕ್ಚರ್ ಮೂಲಕ ಹೃದಯವನ್ನು ಪ್ರವೇಶಿಸುವ ಮೂಲಕ, ನಾವು ಎದೆಯನ್ನು ಮತ್ತೆ ತೆರೆಯುವುದನ್ನು ತಪ್ಪಿಸುತ್ತೇವೆ. ಇದು ನೋವು, ರಕ್ತದ ನಷ್ಟ, ಸೋಂಕಿನ ಅಪಾಯ ಮತ್ತು ಚೇತರಿಕೆಯ ಸಮಯ ವನ್ನು ಗಮನೀಯವಾಗಿ ಕಡಿಮೆ ಮಾಡುತ್ತದೆ. ಹೆಚ್ಚಿನ ರೋಗಿಗಳು ಅದೇ ದಿನ ಕುಳಿತುಕೊಳ್ಳಬಹುದು, ಮರುದಿನ ನಡೆಯಬಹುದು ಮತ್ತು ಉಸಿರಾಟ ಮತ್ತು ಶಕ್ತಿಯ ಮಟ್ಟದಲ್ಲಿ ತಕ್ಷಣದ ಸುಧಾರಣೆಯೊಂದಿಗೆ ಕೆಲವೇ ದಿನಗಳಲ್ಲಿ ಮನೆಗೆ ಮರಳಬಹುದು ಎಂದು ಡಾ.ಟಾಮ್ ತಿಳಿಸಿದರು. ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಕೆಎಂಸಿಯ ಕ್ಯಾತ್ ಲ್ಯಾಬ್ ಮತ್ತು ಐಸಿಯು ತಂಡಗಳ ಜೊತೆಗೆ ಹೃದಯ ಶಸ್ತ್ರಚಿಕಿತ್ಸಕರು, ಹೃದಯ ಅರಿವಳಿಕೆ ತಜ್ಞರು, ಹೃದಯ ಸಂಬಂಧಿ ತಂತ್ರಜ್ಞರು ಸೇರಿದಂತೆ ಸಮಗ್ರ ವೈದ್ಯಕೀಯ ತಂಡದ ಬೆಂಬಲ ಮಹತ್ವದ್ದು ಎಂದರು. ಕೆಎಂಸಿ ವೈದ್ಯರ ಸಾಧನೆಯನ್ನು ಶ್ಲಾಘಿಸಿದ ಮಾಹೆ ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಸುಧಾಕರ್ ಕಂಟಿಪುಡಿ, ಟಿಎಂವಿಆರ್ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ದಕ್ಷಿಣ ಕರ್ನಾಟಕದ ಮೊದಲ ಆಸ್ಪತ್ರೆ ನಮ್ಮದಾಗಿದ್ದು, ಅನುಭವಿ ತಜ್ಞರು, ಅತ್ಯಾಧುನಿಕ ಕ್ಯಾತ್‌ಲ್ಯಾಬ್ ಮೂಲ ಸೌಕರ್ಯ ಮತ್ತು ಸುರಕ್ಷಿತ ಹಾಗೂ ಸೂಕ್ತವಾದ ಚಿಕಿತ್ಸೆಗೆ ಅಗತ್ಯವಾದ ಬಹುಶಿಸ್ತೀಯ ಹೃದಯ ಚಿಕಿತ್ಸಕರ ತಂಡದಿಂದ ಇದು ಸಾಧ್ಯವಾಗಿದೆ ಎಂದರು.

ವಾರ್ತಾ ಭಾರತಿ 3 Feb 2026 9:56 pm

ನನ್ನ ಕ್ಷೇತ್ರದ 40 ಸಾವಿರ ಮತದಾರರು ಹೆಸರು ಅಳಿಸಲಾಗಿದೆ: ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತಾ, ಫೆ. 2: ನನ್ನ ಕ್ಷೇತ್ರವೊಂದರಲ್ಲೇ 40 ಸಾವಿರ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ‘‘ನನ್ನ ಕ್ಷೇತ್ರದಲ್ಲಿ 40 ಸಾವಿರ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಅಳಿಸಲಾಗಿದೆ. ಬಿಜೆಪಿ ಮನಸ್ಥಿತಿ ಹೊಂದಿರುವ ಸೀಮಾ ಖನ್ನಾ ಎಂಬ ವ್ಯಕ್ತಿ ಚುನಾವಣಾ ಆಯೋಗದ ಕಚೇರಿಯಲ್ಲಿ ಕುಳಿತುಕೊಂಡು ಹೆಸರುಗಳನ್ನು ಅಳಿಸುತ್ತಿದ್ದಾರೆ. ಕೊಲೆಗಾರನಿಗೆ ಕೂಡ ತನ್ನನ್ನು ಸಮರ್ಥಿಸಿಕೊಳ್ಳಲು ಒಂದು ಅವಕಾಶ ಸಿಗುತ್ತದೆ’’ ಎಂದು ಹೇಳಿದ್ದಾರೆ. ‘‘ಸೀಮಾ ಖನ್ನಾ ಅವರ ಏಜೆನ್ಸಿ ಇದನ್ನು ಮಾಡಿದೆ. ಅವರಿಗೆ ಅದನ್ನು ಮಾಡಲು ಯಾವುದೇ ಅಧಿಕಾರ ಇಲ್ಲ. ಇದು ಕಾನೂನು ಬಾಹಿರ. 58 ಲಕ್ಷ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಅಳಿಸಲಾಗಿದೆ’’ ಎಂದು ಅವರು ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಹೇಳಿಕೆಯನ್ನು ಪುನರುಚ್ಛರಿಸಿದರು. ‘‘ತಳಮಟ್ಟದ ವೀಕ್ಷಕ’’ರನ್ನು ಕಾನೂನು ಬಾಹಿರವಾಗಿ ನಿಯೋಜಿಸಿರುವುದಕ್ಕೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ‘‘ತಳಮಟ್ಟದ ವೀಕ್ಷಕ’’ ರಿಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಯಾವುದೇ ಸ್ಥಾನ ಇಲ್ಲ. ಅವರು ಹಿಂಬಾಗಿಲಿನಿಂದ ನೇಮಕರಾದ ಬಿಜೆಪಿಯ ವ್ಯಕ್ತಿಗಳು ಎಂದರು. ತಾರ್ಕಿಕ ವ್ಯತ್ಯಾಸದ ಹೆಸರಿನಲ್ಲಿ ಆಯೋಗ ಹೆಸರುಗಳನ್ನು ಅಳಿಸುತ್ತಿದೆ ಎಂದು ಹೇಳಿದ ಅವರು, ನೋಬೆಲ್ ಗೌರವಾನ್ವಿತ ಅಮರ್ತ್ಯ ಸೇನ್ ಅವರನ್ನೂ ಕೂಡ ಅವರ ತಾಯಿಯ ಪ್ರಾಯದ ಕುರಿತಂತೆ ಹಾಜರಾಗಲು ಸೂಚಿಸಲಾಗಿತ್ತು ಎಂದರು. ‘‘ನಮ್ಮೊಂದಿಗೆ ರಾಜಕೀಯವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಹೋರಾಡಲು ನಾನು ಅವರಿಗೆ ಸವಾಲು ಹಾಕುತ್ತೇನೆ. ನಮ್ಮ ಪಕ್ಷ ಬಲಿಷ್ಠವಾಗಿದೆ, ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿದೆ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ವಾರ್ತಾ ಭಾರತಿ 3 Feb 2026 9:54 pm

ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಪಟ್ಟು; ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್‌ನಿಂದ ಅಹೋರಾತ್ರಿ ಧರಣಿ

ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಲಂಚ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ನಡುವೆ ನಿಯಮ 69 ರಡಿ ನಡೆದ ಚರ್ಚೆಗೆ ಉತ್ತರ ನೀಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ರಾಜೀನಾಮೆ ನೀಡಲು ನಾನೇನು ತಪ್ಪು ಮಾಡಿದ್ದೇನೆ, ರಾಜೀನಾಮೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ವಿಪಕ್ಷಗಳ ಸದಸ್ಯರ ಬೇಡಿಕೆಯನ್ನು ನಿರಾಕರಿಸಿದರು. ಇದರಿಂದ ಕೆರಳಿದ ವಿಪಕ್ಷ ನಾಯಕ ಆರ್. ಅಶೋಕ್, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆಯ ನಡೆಯುತ್ತಿದೆ. ಈ ಸರಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ-ಮರ್ಯಾದೆ ಇದ್ದರೆ ಈ ಕೂಡಲೇ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ ಸದನದ ಕಾರ್ಯ ಕಲಾಪ ಪೂರ್ಣಗೊಳಿಸಿದ ಸ್ಪೀಕರ್ ಯು.ಟಿ.ಖಾದರ್ ಅವರು ಸದನವನ್ನು ನಾಳೆ (ಫೆ.4)ಗೆ ಮುಂದೂಡಿದರು. ಕೂಡಲೇ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದರು. ರಾಜ್ಯ ಸರಕಾರ, ಅಬಕಾರಿ ಸಚಿವ ತಿಮ್ಮಾಪುರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸಚಿವ ತಿಮ್ಮಾಪುರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ವಿಪಕ್ಷ ನಾಯಕ ಆರ್. ಅಶೋಕ್, ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, ಹಿರಿಯ ಸದಸ್ಯರಾದ ಆರಗ ಜ್ಞಾನೇಂದ್ರ, ಸುರೇಶ್ ಕುಮಾರ್, ಜೆಡಿಎಸ್ ನ ಸುರೇಶ್ ಬಾಬು ಸೇರಿದಂತೆ ಇನ್ನಿತರರು ಸಾಥ್ ನೀಡಿದರು.

ವಾರ್ತಾ ಭಾರತಿ 3 Feb 2026 9:50 pm

ಪರಮಾಣು ಕ್ಷಿಪಣಿ ಒಳಗೆ ಇಂಧನದ ಬದಲು ನೀರು, ಚೀನಾ ಸೇನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು... China Military

ಚೀನಾ ದೈತ್ಯವಾಗಿ ಬೆಳೆದಿರುವ ಹಾಗೂ ಅಮೆರಿಕಗೆ ಪೈಪೋಟಿ ಕೊಡುತ್ತಿರುವ ಬೃಹತ್ ದೇಶವಾಗಿದೆ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಳ್ಳುತ್ತದೆ. ಅದರಲ್ಲೂ ಚೀನಾ ದೇಶದ ಈ ಬೆಳವಣಿಗೆ ಹಿಂದೆ ಕ್ಸಿ ಜಿನ್‌ಪಿಂಗ್ ತಂತ್ರ ಹಾಗೂ ಪ್ರತಿತಂತ್ರ ಕೆಲಸ ಮಾಡಿದೆ. ಆದರೆ ಇಷ್ಟು ಒಳ್ಳೆಯ ಹೆಸರು ಮಾಡಿ ಇಡೀ ಚೀನಾ ಜನತೆಯ ಮನಸ್ಸು ಗೆದ್ದ ಅಧ್ಯಕ್ಷನ ಆಪ್ತನೇ ದೊಡ್ಡ ಭ್ರಷ್ಟಾಚಾರಿ ಎಂದರೆ

ಒನ್ ಇ೦ಡಿಯ 3 Feb 2026 9:47 pm

Rotterdam ಓಪನ್ ಟೆನಿಸ್ ಟೂರ್ನಿ| ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಅಲಭ್ಯ

ಪ್ಯಾರಿಸ್, ಫೆ.3: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ಈ ವರ್ಷ ನಡೆಯಲಿರುವ ಎಟಿಪಿ 500 ಟೆನಿಸ್ ಟೂರ್ನಿ ಎಬಿನ್ ಅಂಬ್ರೊ(ರೋಟರ್ಡಮ್)ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ವೃತ್ತಿಜೀವನದಲ್ಲಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಸ್ಪೇನ್ ಆಟಗಾರ ಅಲ್ಕರಾಝ್ ವಿಶ್ರಾಂತಿ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಅಲ್ಕರಾಝ್ 2025ರಲ್ಲಿ ರೋಟರ್ಡಮ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಫೈನಲ್ ಪಂದ್ಯದಲ್ಲಿ ಅಲೆಕ್ಸ್ ಡಿ ಮಿನೌರ್ ವಿರುದ್ಧ ಮೂರು ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ ನಂತರ ಅಲ್ಕರಾಝ್ ತನ್ನ ಚೊಚ್ಚಲ ಎಟಿಪಿ ಟ್ರೋಫಿ ಗೆದ್ದಿದ್ದರು. ‘‘ಕಾರ್ಲೊಸ್ ಅಲ್ಕರಾಝ್ ರೊಟರ್ಡಮ್ನಲ್ಲಿ ತನ್ನ ಪ್ರಶಸ್ತಿ ಉಳಿಸಿಕೊಳ್ಳಲು ಟೆನಿಸ್ ಅಂಗಣಕ್ಕೆ ಮರಳುವುದಿಲ್ಲ. ಕಳೆದ ಎರಡು ವಾರಗಳಿಂದ ಬಿಡುವಿಲ್ಲದ ಟೆನಿಸ್ ಆಡಿರುವ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅಲ್ಕರಾಝ್ ಸಕ್ರಿಯ ಟೆನಿಸ್‌ಗೆ ಮರಳಲು ಇನ್ನಷ್ಟು ಸಮಯದ ಅಗತ್ಯವಿದೆ. ಕಾರ್ಲೊಸ್ ಬೇಗನೆ ಚೇತರಿಸಿಕೊಳ್ಳಲಿ’’ ಎಂದು ಎಬಿಎನ್ ಅಮ್ರೊ ಓಪನ್ನ ಆಯೋಜಕರು ಸೋಮವಾರ ತಿಳಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್‌ನಲ್ಲಿ 10 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು 2-6, 6-2, 6-3, 7-5 ಸೆಟ್ಗಳ ಅಂತರದಿಂದ ಮಣಿಸಿದ ಅಲ್ಕರಾಝ್ ಮೊದಲ ಬಾರಿ ಮೆಲ್ಬರ್ನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

ವಾರ್ತಾ ಭಾರತಿ 3 Feb 2026 9:45 pm

Belagavi | ಹೊಸ ವಂಟಮೂರಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ : 12 ಆರೋಪಿಗಳು ತಪ್ಪಿತಸ್ಥರು; ಶಿಕ್ಷೆಯ ಪ್ರಮಾಣ ನಾಳೆ ಪ್ರಕಟ

ಬೆಳಗಾವಿ : ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದ ಅಮಾನವೀಯ ಪ್ರಕರಣದಲ್ಲಿ 12 ಆರೋಪಿಗಳು ತಪ್ಪಿತಸ್ಥರು ಎಂದು ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು. 2023ರ ಡಿಸೆಂಬರ್ 11ರಂದು ನಡೆದ ಈ ಪ್ರಕರಣ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿತ್ತು. ಪ್ರೀತಿಸಿದ ಯುವತಿಯೊಂದಿಗೆ ಯುವಕ ಮನೆಬಿಟ್ಟು ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಆತನ ಕುಟುಂಬದ ಮೇಲೆ ಕೋಪಗೊಂಡ ಯುವತಿಯ ಕುಟುಂಬಸ್ಥರು, ಯುವಕನ ತಾಯಿಯನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು.  ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಒಬ್ಬ ಬಾಲಾಪರಾಧಿ ಸೇರಿ 13 ಜನ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು, 12 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಆರೋಪಿ ಕುರಿತು ವಿಚಾರಣೆ ಇನ್ನೂ ಬಾಕಿ ಇದೆ. ಈ ಪ್ರಕರಣದಲ್ಲಿ ಆರು ಪುರುಷರು ಹಾಗೂ ಆರು ಮಹಿಳೆಯರು ಸೇರಿ 12 ಮಂದಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ. ಪ್ರಕರಣದ ಬಳಿಕ ರಾಷ್ಟ್ರೀಯ ಹಾಗೂ ರಾಜ್ಯ ಮಹಿಳಾ ಆಯೋಗಗಳು ಮತ್ತು ಸತ್ಯಸಂಶೋಧನಾ ಸಮಿತಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದವು.

ವಾರ್ತಾ ಭಾರತಿ 3 Feb 2026 9:38 pm

India–US Trade Deal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಏನೇನಿದೆ? ರಷ್ಯಾದ ಪ್ರತಿಕ್ರಿಯೆ ಏನು?

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ. ಭಾರತದೊಂದಿಗೆ ಇರುವ ಹೊಸ ವ್ಯಾಪಾರ ಒಪ್ಪಂದದಲ್ಲಿ ಕಡಿಮೆ ಪ್ರತಿಸುಂಕಗಳು ಮತ್ತು ವಿಸ್ತೃತ ಮಾರುಕಟ್ಟೆ ಪ್ರವೇಶವಿದೆ. ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಮತ್ತು ಅಮೆರಿಕನ್ ಸರಕುಗಳ ಆಮದುಗಳನ್ನು ತೀವ್ರವಾಗಿ ಹೆಚ್ಚಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಒಪ್ಪಂದದ ಸುಂಕ ಕಡಿತದ ಭಾಗವನ್ನು ಭಾರತ ದೃಢಪಡಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಂದವನ್ನು “ವಿನ್–ವಿನ್” ವ್ಯಾಪಾರ ಒಪ್ಪಂದ ಎಂದು ಬಣ್ಣಿಸಿದ್ದಾರೆ. ಸೋಮವಾರ ದೂರವಾಣಿ ಕರೆಯ ನಂತರ ಟ್ರಂಪ್ ಮತ್ತು ಪ್ರಧಾನಿ ಮೋದಿ ಭಾರತ–ಯುಎಸ್ ವ್ಯಾಪಾರ ಒಪ್ಪಂದದ ಘೋಷಣೆ ಮಾಡಿದರು. ►ಸುಂಕ ಕಡಿತ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ದೂರವಾಣಿ ಸಂಭಾಷಣೆಯ ನಂತರ ಭಾರತೀಯ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇಕಡ 18ಕ್ಕೆ ಇಳಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹೊಸ ದರವು ಹಿಂದಿನ 25% ಪ್ರತಿಸುಂಕವನ್ನು ಬದಲಾಯಿಸುತ್ತದೆ. “ನನ್ನ ಆತ್ಮೀಯ ಸ್ನೇಹಿತ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಇಂದು ಮಾತನಾಡಿ ಸಂತೋಷವಾಯಿತು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ಶೇಕಡ 25ರ ಬದಲು ಶೇಕಡ 18ರಷ್ಟು ಸುಂಕವನ್ನು ಹೊಂದುತ್ತಿರುವುದು ಸಂತೋಷ ತಂದಿದೆ. ಈ ಅದ್ಭುತ ಘೋಷಣೆಗಾಗಿ ಭಾರತದ 140 ಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. “ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡಿದಾಗ, ಅದು ನಮ್ಮ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಇದರಿಂದ ಹೆಚ್ಚು ಅವಕಾಶಗಳು ದೊರೆಯುತ್ತವೆ” ಎಂದಿದ್ದಾರೆ ಮೋದಿ. ಟ್ರಂಪ್ ನಾಯಕತ್ವವನ್ನು ಶ್ಲಾಘಿಸಿದ ಅವರು, “ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವವು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ. ಪಾಲುದಾರಿಕೆಯನ್ನು ‘ಅಭೂತಪೂರ್ವ ಮಟ್ಟಕ್ಕೆ’ ಕೊಂಡೊಯ್ಯಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ ಮೋದಿ. ಮೋದಿಯವರ ಸಾಮಾಜಿಕ ಮಾಧ್ಯಮ ಪೋಸ್ಟ್ ಸುಂಕ ವಿನಾಯಿತಿಯನ್ನು ದೃಢಪಡಿಸಿದರೂ, ಒಪ್ಪಂದದಲ್ಲಿ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ ಬದ್ಧತೆಗಳು ಅಥವಾ ಅಮೆರಿಕದ ಸರಕುಗಳ ಮೇಲಿನ ಶೂನ್ಯ ಸುಂಕಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಿಲ್ಲ. ಸ್ವಲ್ಪ ಸಮಯದ ನಂತರ ಅಶ್ವಿನಿ ವೈಷ್ಣವ್ ಅವರು ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮವಾಗಿದೆ ಎಂದು X ನಲ್ಲಿ ದೃಢಪಡಿಸಿದ್ದು, ಇದು ಎರಡೂ ದೇಶಗಳ ನಾಗರಿಕರು ಮತ್ತು ಕೈಗಾರಿಕೆಗಳಿಗೆ ಪ್ರಯೋಜನ ನೀಡುವ “ವಿನ್–ವಿನ್” ಒಪ್ಪಂದ ಎಂದಿದ್ದಾರೆ. ►ಭಾರತ–ಯುಎಸ್ ವ್ಯಾಪಾರ ಒಪ್ಪಂದ: ಪ್ರಕಟಣೆಗಳ ಅನುಕ್ರಮ ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ರಾತ್ರಿ 9:16ಕ್ಕೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಫೋನ್ ಕರೆಯ ಬಗ್ಗೆ ಮೊದಲು ಉಲ್ಲೇಖಿಸಿದರು. ಇದಾಗಿ ಒಂದು ಗಂಟೆಯ ನಂತರ ಟ್ರೂತ್ ಸೋಷಿಯಲ್‌ನಲ್ಲಿ ಟ್ರಂಪ್ ಅವರ ದೀರ್ಘ ಪೋಸ್ಟ್ ಬಂತು. ಸುಮಾರು ಎರಡು ಗಂಟೆಗಳ ನಂತರ ಮೋದಿ ಈ ಒಪ್ಪಂದ ಬಗ್ಗೆ ಪೋಸ್ಟ್ ಮಾಡಿದ್ದರು. ಟ್ರಂಪ್ ಮೋದಿ ಅವರನ್ನು ಉತ್ತಮ ಸ್ನೇಹಿತ ಎಂದು ಪರಿಗಣಿಸುತ್ತಾರೆ. ವ್ಯಾಪಾರ ಒಪ್ಪಂದದ ಸುದ್ದಿಯನ್ನು ಪ್ರಮುಖ ಉತ್ತೇಜನ ಎಂದು ಹೇಳಿದ ಗೋರ್, ಎರಡೂ ದೇಶಗಳ ನಡುವಿನ ಸಂಬಂಧವು “ಅಪರಿಮಿತ ಸಾಮರ್ಥ್ಯ” ಹೊಂದಿದೆ ಎಂದಿದ್ದಾರೆ. ►ಒಪ್ಪಂದದ ಬಗ್ಗೆ ಟ್ರಂಪ್ ಹೇಳಿದ್ದೇನು? ಒಪ್ಪಂದದ ಬಗ್ಗೆ ತಮ್ಮ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಒಪ್ಪಂದವು ಸುಂಕ ಕಡಿತವನ್ನು ಮೀರಿದೆ ಎಂದು ಹೇಳಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ ಭಾರತವು ಅಮೆರಿಕ ಸರಕುಗಳ ಮೇಲಿನ ತನ್ನ ಸುಂಕಗಳು ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸುತ್ತದೆ. 500 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಅಮೆರಿಕನ್ ಇಂಧನ, ತಂತ್ರಜ್ಞಾನ, ಕೃಷಿ ಉತ್ಪನ್ನಗಳು, ಕಲ್ಲಿದ್ದಲು ಮತ್ತು ಇತರ ಸರಕುಗಳನ್ನು ಖರೀದಿಸಲು ಬದ್ಧವಾಗಿರುತ್ತದೆ. “ಮೋದಿ ಅವರೊಂದಿಗೆ ಮಾತನಾಡುವುದು ಗೌರವ ಸಂಗತಿ. ಅವರು ನನ್ನ ಶ್ರೇಷ್ಠ ಸ್ನೇಹಿತರಲ್ಲಿ ಒಬ್ಬರು ಮತ್ತು ಪ್ರಭಾವಿ ಹಾಗೂ ಗೌರವಾನ್ವಿತ ನಾಯಕ. ಪ್ರಧಾನಿ ಮೋದಿ ಮತ್ತು ನಾನು ಕೈಗೆತ್ತಿಕೊಳ್ಳುವ ಕೆಲಸಗಳನ್ನು ಪೂರ್ಣಗೊಳಿಸುವ ಇಬ್ಬರು ಪ್ರಮುಖ ಜಾಗತಿಕ ನಾಯಕರು” ಎಂದು ಟ್ರಂಪ್ ಹೇಳಿದ್ದಾರೆ. ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಮತ್ತು ಬದಲಿಗೆ ಅಮೆರಿಕ ಹಾಗೂ ಸಂಭಾವ್ಯವಾಗಿ ವೆನೆಝುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದೆ. ಈ ಕ್ರಮವನ್ನು ರಷ್ಯಾ–ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನವೆಂದು ಟ್ರಂಪ್ ಹೇಳಿದ್ದಾರೆ. “ಪ್ರಧಾನಿ ಮೋದಿಯವರೊಂದಿಗಿನ ಸ್ನೇಹ ಮತ್ತು ಗೌರವದಿಂದ ಹಾಗೂ ಅವರ ಕೋರಿಕೆಯ ಮೇರೆಗೆ, ತಕ್ಷಣವೇ ಜಾರಿಗೆ ಬರುವಂತೆ ನಾವು ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿದ್ದೇವೆ. ಆ ಮೂಲಕ ಅಮೆರಿಕ ಕಡಿಮೆ ಪ್ರತಿಸುಂಕವನ್ನು ವಿಧಿಸುತ್ತದೆ; ಅದನ್ನು 25%ರಿಂದ 18%ಕ್ಕೆ ಇಳಿಸುತ್ತದೆ” ಎಂದು ಟ್ರಂಪ್ ಬರೆದಿದ್ದಾರೆ. ಭಾರತವು ಅಮೆರಿಕದಿಂದ ಖರೀದಿಗೆ ಹೆಚ್ಚಿನ ಮಟ್ಟದಲ್ಲಿ ಬದ್ಧವಾಗಿದೆ. ಇದರಲ್ಲಿ 500 ಶತಕೋಟಿ ಡಾಲರ್ ಗೂ ಹೆಚ್ಚು ಅಮೆರಿಕ ಸರಕುಗಳು ಮತ್ತು ಇಂಧನವೂ ಸೇರಿದೆ ಎಂದು ಟ್ರಂಪ್ ಹೇಳಿದ್ದಾರೆ. ►ಒಪ್ಪಂದವನ್ನು ಸ್ವಾಗತಿಸಿದ ಅಮೆರಿಕ ಅಧಿಕಾರಿಗಳು ಈ ಒಪ್ಪಂದವನ್ನು ಸ್ವಾಗತಿಸಿದ ಅಮೆರಿಕದ ಆರ್ಥಿಕ ವ್ಯವಹಾರಗಳ ಅಧೀನ ಕಾರ್ಯದರ್ಶಿ ಜಾಕೋಬ್ ಹೆಲ್ಬರ್ಗ್, ಇದು ಕೈಗಾರಿಕಾ ಸಹಯೋಗವನ್ನು ದೃಢವಾಗಿರಿಸುತ್ತದೆ. ನಿರ್ಣಾಯಕ ಖನಿಜಗಳು ಮತ್ತು ತಂತ್ರಜ್ಞಾನ ಸಹಕಾರ ಸೇರಿದಂತೆ ನಿರ್ದಿಷ್ಟ ಜಂಟಿ ಯೋಜನೆಗಳಿಗೆ ಆವೇಗವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ. ►ಭಾರತ–ಯುಎಸ್ ವ್ಯಾಪಾರ ವಿವಾದ ಮತ್ತು ಉದ್ವಿಗ್ನತೆ ಕಳೆದ ವರ್ಷದಲ್ಲಿ ಅಮೆರಿಕ ಮತ್ತು ಭಾರತ ಆರು ಔಪಚಾರಿಕ ಸುತ್ತಿನ ಮಾತುಕತೆಗಳು ಹಾಗೂ ಬಹು ಅನೌಪಚಾರಿಕ ಸಮಾಲೋಚನೆಗಳನ್ನು ನಡೆಸಿವೆ. ಡಿಸೆಂಬರ್ 2025ರಲ್ಲಿ ಅಮೆರಿಕದ ನಿಯೋಗ ಭಾರತಕ್ಕೆ ಭೇಟಿ ನೀಡಿತು. ಅಮೆರಿಕ ಭಾರತೀಯ ಸರಕುಗಳ ಮೇಲೆ 50% ಸುಂಕಗಳನ್ನು ವಿಧಿಸಿದ ನಂತರ ವ್ಯಾಪಾರ ಸಂಬಂಧಗಳು ಒತ್ತಡಕ್ಕೆ ಒಳಗಾದವು. ಇದರಲ್ಲಿ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ 25% ದಂಡದ ರೂಪದ ಸುಂಕ ಸೇರಿತ್ತು. ವಲಸೆ ನಿಯಮಗಳು, ರಷ್ಯಾದೊಂದಿಗಿನ ರಕ್ಷಣಾ ಮತ್ತು ಇಂಧನ ಸಂಬಂಧಗಳು ಹಾಗೂ ಭಾರತ–ಪಾಕಿಸ್ತಾನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವ ಬಗ್ಗೆ ಟ್ರಂಪ್ ಅವರ ಹಿಂದಿನ ಹೇಳಿಕೆಗಳಿಂದ ಉಭಯ ದೇಶಗಳ ನಡುವಣ ಸಂಬಂಧದಲ್ಲಿ ಬಿರುಕು ಮೂಡಿತ್ತು. ►ಪಿಯೂಷ್ ಗೋಯಲ್ ಹೇಳಿದ್ದೇನು? ಮಂಗಳವಾರ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ನಿಕಟ ವೈಯಕ್ತಿಕ ಸಂಬಂಧದಿಂದಾಗಿ ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದಿದ್ದಾರೆ. ರೈತರು, ಎಂಎಸ್‌ಎಂಇಗಳು ಮತ್ತು ಕೈಗಾರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಇದು ಪ್ರಯೋಜನ ನೀಡುತ್ತದೆ ಎಂದಿದ್ದಾರೆ. ಅಮೆರಿಕವು ಭಾರತಕ್ಕಿಂತ ಮುಂಚಿತವಾಗಿ ವ್ಯಾಪಾರ ಒಪ್ಪಂದವನ್ನು ಸಾರ್ವಜನಿಕವಾಗಿ ಘೋಷಿಸಿದ್ದರ ಬಗ್ಗೆಯೂ ಮಾತನಾಡಿದ ಗೋಯಲ್, ಈ ಅನುಕ್ರಮವು ಒಪ್ಪಂದದ ಕಾರ್ಯವಿಧಾನಕ್ಕೆ ಸಂಬಂಧಿಸಿದೆ ಎಂದಿದ್ದಾರೆ. “ಅಮೆರಿಕ ಮೊದಲು ಟ್ವೀಟ್ ಮಾಡಿದೆ ಏಕೆಂದರೆ ಅವರು ಕಡಿಮೆ ಮಾಡಬೇಕಾದ ಪ್ರತಿಸುಂಕಗಳನ್ನು ವಿಧಿಸಿದ್ದರು. ಭಾರತೀಯ ರಫ್ತುಗಳ ಮೇಲಿನ ಸುಂಕಗಳನ್ನು ಸುಮಾರು 50%ರಿಂದ ಸುಮಾರು 18%ಕ್ಕೆ ಕಡಿತಗೊಳಿಸಲಾಗಿದೆ. ಅಮೆರಿಕ ಪ್ರತಿಸುಂಕಗಳನ್ನು ಅನ್ವಯಿಸಿದಾಗ ಮತ್ತು ಅವರು ಅವುಗಳನ್ನು ಹಿಂದಕ್ಕೆ ಪಡೆಯಬೇಕಾದಾಗ, ಈ ಮಾಹಿತಿಯು ಅಮೆರಿಕದಿಂದ ಮಾತ್ರ ಬರುತ್ತದೆ. ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಔಪಚಾರಿಕ ಮತ್ತು ಜಂಟಿ ಪ್ರಕಟಣೆಗಳನ್ನು ಪ್ರಕಟಿಸಲಾಗುವುದು” ಎಂದಿದ್ದಾರೆ. ಒಪ್ಪಂದವು ಭಾರತ ಮತ್ತು ಅಮೆರಿಕ ತಂಡಗಳ ನಡುವಿನ ತಿಂಗಳುಗಳ ಮಾತುಕತೆಗಳ ಫಲಿತಾಂಶವಾಗಿದೆ. ಇದು ಬಲವಾದ ದೇಶ ಎಂಬ ಭಾರತದ ಸ್ಥಾನವನ್ನು ಬಲಪಡಿಸಿದೆ. “ಇಂದು ಪ್ರತಿಯೊಬ್ಬ ಭಾರತೀಯನೂ ಮೋದಿ ಜಿ ಅವರನ್ನು ಅಭಿನಂದಿಸುತ್ತಿದ್ದಾರೆ. ಅವರು ಈಗಾಗಲೇ ಪ್ರಬಲ ರಾಷ್ಟ್ರಕ್ಕೆ ಬಲವನ್ನು ಸೇರಿಸುವ ಅತ್ಯಂತ ಬಲವಾದ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ” ಎಂದಿದ್ದಾರೆ. ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗಿದೆ ಎಂಬ ವಿರೋಧ ಪಕ್ಷದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಗೋಯಲ್, ಒಪ್ಪಂದದಲ್ಲಿ ಕೃಷಿ ಮತ್ತು ಹೈನುಗಾರಿಕೆಯಂತಹ ಪ್ರಮುಖ ಸೂಕ್ಷ್ಮ ವಲಯಗಳನ್ನು ರಕ್ಷಿಸಲಾಗಿದೆ ಎಂದು ಒತ್ತಿ ಹೇಳಿದ್ದಾರೆ. “ಈ ಒಪ್ಪಂದವು ಮಹಿಳೆಯರು, ರೈತರು ಮತ್ತು ಸಣ್ಣ ವ್ಯವಹಾರಗಳಿಗೆ ಗಮನಾರ್ಹ ಬೆಂಬಲ ನೀಡುತ್ತದೆ. ನಮ್ಮ ಸಹೋದರಿಯರು ಮತ್ತು ರೈತರಿಗೆ ಸಹಾಯ ಮಾಡುತ್ತದೆ. ಎಂಎಸ್‌ಎಂಇಗಳು, ಐಟಿ, ಜವಳಿ ಮತ್ತು ಚರ್ಮದ ಸರಕುಗಳ ವಲಯಗಳು ಅಪಾರ ಪ್ರಯೋಜನ ಪಡೆಯುತ್ತವೆ” ಎಂದಿದ್ದಾರೆ. ►ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ ಎಂದ ಟ್ರಂಪ್; ರಷ್ಯಾದ ಪ್ರತಿಕ್ರಿಯೆ ಸೋಮವಾರ ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದವನ್ನು ಘೋಷಿಸಿದ ನಂತರ ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಕ್ರೆಮ್ಲಿನ್ ಮಂಗಳವಾರ ಪ್ರತಿಕ್ರಿಯಿಸಿದ್ದು, ಭಾರತದಿಂದ ಅಂತಹ ಯಾವುದೇ ರೀತಿಯ ಸುದ್ದಿ ಬಂದಿಲ್ಲ ಎಂದು ಹೇಳಿದೆ. ಭಾರತವು ಒಪ್ಪಂದದಲ್ಲಿ ಸುಂಕ ಕಡಿತ ಭಾಗವನ್ನು ದೃಢಪಡಿಸಿದೆ. ಆದರೆ ಮಾಸ್ಕೋದಿಂದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಯಾವುದೇ ವಿಷಯಗಳನ್ನು ಹೇಳಿಲ್ಲ. “ಈ ವಿಷಯದ ಬಗ್ಗೆ ಭಾರತದಿಂದ ಯಾವುದೇ ಹೇಳಿಕೆಗಳನ್ನು ನಾವು ಕೇಳಿಲ್ಲ” ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ವರದಿಗಾರರಿಗೆ ತಿಳಿಸಿದ್ದಾರೆ ಎಂದು ಎಎಫ್‌ಪಿ ಉಲ್ಲೇಖಿಸಿದೆ. “ನಾವು ಅಮೆರಿಕ–ಭಾರತೀಯ ದ್ವಿಪಕ್ಷೀಯ ಸಂಬಂಧಗಳನ್ನು ಗೌರವಿಸುತ್ತೇವೆ. ಆದರೆ ರಷ್ಯಾ ಮತ್ತು ಭಾರತದ ನಡುವಿನ ಮುಂದುವರಿದ ಕಾರ್ಯತಂತ್ರದ ಪಾಲುದಾರಿಕೆಯ ಅಭಿವೃದ್ಧಿಗೆ ನಾವು ಕಡಿಮೆ ಪ್ರಾಮುಖ್ಯತೆ ನೀಡುವುದಿಲ್ಲ. ಇದು ನಮಗೆ ಅತ್ಯಂತ ಮುಖ್ಯವಾದ ವಿಷಯ. ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾವು ಉದ್ದೇಶಿಸಿದ್ದೇವೆ” ಎಂದು ಪೆಸ್ಕೋವ್ ಹೇಳಿದ್ದಾರೆ.

ವಾರ್ತಾ ಭಾರತಿ 3 Feb 2026 9:33 pm

ಕಾಸರಗೋಡು| ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹಕ್ಕೆ ಕೇಂದ್ರ ಸಾರಿಗೆ ಸಚಿವಾಲಯ ತಡೆ

ಕಾಸರಗೋಡು: ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್  ಸಂಗ್ರಹಕ್ಕೆ ಕೇಂದ್ರ ಸಾರಿಗೆ ಸಚಿವಾಲಯ ತಡೆ ನೀಡಿದೆ. ಮುಂದಿನ 24 ಗಂಟೆಯೊಳಗೆ ಟೋಲ್ ಗೇಟ್ ಮುಚ್ಚಲಾಗುವುದು ಎಂದು ಭರವಸೆ ನೀಡಿದ್ದಾರೆ. ಟೋಲ್  ಸಂಗ್ರಹಿಸುವ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹೋರಾಟ ನಡೆದಿತ್ತು. ಹೋರಾಟ ಸಮಿತಿ ರಚಿಸಿ ಪ್ರತಿಭಟನೆ ಜೊತೆಗೆ ಕಾನೂನು ಹೋರಾಟವೂ ನಡೆದಿತ್ತು. ಶುಲ್ಕ ಸಂಗ್ರಹ ಸ್ಥಗಿತಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಒಂದು ಟೋಲ್ ಗೇಟ್ ನಿಂದ 60 ಕಿ. ಮೀ ಅಂತರ ಇರಬೇಕೆಂಬ ಕೇಂದ್ರ ಸಾರಿಗೆ ಸಚಿವಾಲಯದ ನಿರ್ದೇಶನ ಉಲ್ಲಂಘಿಸಿ ಕೇವಲ 23 ಕಿ.ಮೀ ದೂರದ ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿತ್ತು. ಇದರಿಂದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಬಿಜೆಪಿ ಹೊರತು ಉಳಿದ ಪಕ್ಷಗಳು, ಸಂಘಟನೆಗಳ ನೇತೃತ್ವದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸುತ್ತಾ ಬಂದಿತ್ತು. ಹೋರಾಟವು ಹಿಂಸಾತ್ಮಕ ರೂಪು ಪಡೆದಿತ್ತು. ಟೋಲ್ ಗೇಟ್ ಮೇಲೆ ದಾಳಿ ನಡೆದು, ಕ್ಯಾಮರಾ, ಬ್ಯಾರಿಕೇಡ್, ಗಾಜುಗಳನ್ನು ಸೇರಿದಂತೆ ಹಲವು ರೀತಿಯ ನಷ್ಟಕ್ಕೂ ಕಾರಣವಾಗಿತ್ತು. ಶಾಸಕರು ಅಹೋ ರಾತ್ರಿ ಧರಣಿ ನಡೆಸಿದ್ದರು. ಪರಿಸ್ಥಿತಿ ದಿನ ಕಳೆದಂತೆ ವಿಕೋಪಕ್ಕೆ ತೆರಳುತ್ತಿತ್ತು. ಕೊನೆಗೂ ಪೊಲೀಸರು ಧರಣಿ ನಡೆಸುತ್ತಿದ್ದ ಚಪ್ಪರವನ್ನು ತೆರವುಗೊಳಿಸಿ ಶಾಸಕ ಎ.ಕೆ.ಎಂ ಅಶ್ರಫ್ ಸೇರಿದಂತೆ ಹೋರಾಟ ಸಮಿತಿ ಮುಖಂಡರನ್ನು ಬಂಧಿಸಿದ್ದರು. ಸಿಪಿಎಂ ಮುಖಂಡ ಸಿ.ಎ ಝುಬೈರ್, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಪ್ರಭು, ಅಶ್ರಫ್ ಕಾರ್ಲೆ ಮೊದಲಾದವರು ಹೋರಾಟದ ಮುಂಚೂಣಿಯಲ್ಲಿದ್ದರು. ಟೋಲ್  ಸಂಗ್ರಹ ರದ್ದು ಪಡಿಸುವ ಕೇಂದ್ರ ಸಾರಿಗೆ ಸಚಿವಾಲಯದ ತೀರ್ಮಾನವನ್ನು ಹೋರಾಟ ಸಮಿತಿ ಕುಂಬಳೆ ಯಲ್ಲಿ ವಿಜಯೋತ್ಸವ ನಡೆಸಿತು. ಹೋರಾಟ ಸಮಿತಿ ಕಳೆದ ಎರಡು ತಿಂಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸಂದ ಜಯ ಎಂದು ಶಾಸಕ ಎ.ಕೆ.ಎಂ ಅಶ್ರಫ್ ಹಾಗೂ ಸಿ. ಎ ಝುಬೈರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದು, ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಅಭಿನಂದಿಸಿದ್ದಾರೆ. 

ವಾರ್ತಾ ಭಾರತಿ 3 Feb 2026 9:33 pm

ವಂಚನೆ ಪ್ರಕರಣ| ಶಾದಿ ಡಾಟ್ ಕಾಂ ಸಂಸ್ಥಾಪಕ ಅನುಪಮ್ ಮಿತ್ತಲ್‌ಗೆ ಸುಪ್ರೀಂ ರಕ್ಷಣೆ

ಹೊಸದಿಲ್ಲಿ, ಫೆ. 2: ಪ್ರಸಿದ್ಧ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಶಾದಿ ಡಾಟ್ ಕಾಂ ವಿರುದ್ಧ ದಾಖಲಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥಾಪಕ ಅನುಪಮ್ ಮಿತ್ತಲ್ ಹಾಗೂ ಇತರ ಇಬ್ಬರಿಗೆ ಸುಪ್ರೀಂ ಕೋರ್ಟ್ ಮಂಗಳವಾರ 2 ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿದೆ. ಮಿತ್ತಲ್ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿ ತೆಲಂಗಾಣ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠ ಬದಿಗಿರಿಸಿದೆ. ಅಲ್ಲದೆ, ಈ ಪ್ರಕರಣವನ್ನು ಹೊಸ ಪರಿಶೀಲನೆಗೆ ಮತ್ತೆ ಉಚ್ಚ ನ್ಯಾಯಾಲಯಕ್ಕೆ ಕಳುಹಿಸಿದೆ. ಮಧ್ಯಂತರ ಜಾಮೀನಿಗೆ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಕೂಡ ಸುಪ್ರೀಂ ಕೋರ್ಟ್ ಮಿತ್ತಲ್‌ಗೆ ತಿಳಿಸಿದೆ. ತೆಲಂಗಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಿತ್ತಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಶಾದಿ ಡಾಟ್ ಕಾಂನಲ್ಲಿ ನಕಲಿ ವ್ಯಕ್ತಿ ವಿವರ ಬಳಸಿ ವ್ಯಕ್ತಿಯೋರ್ವ ತನಗೆ 11 ಲಕ್ಷ ರೂ. ವಂಚಿಸಿದ್ದಾನೆ. ಶಾದಿ ಡಾಟ್ ಕಾಂ ಬಳಕೆದಾರರ ವಿವರಗಳನ್ನು ಸರಿಯಾಗಿ ಪರಿಶೀಲಿಸಲು ವಿಫಲವಾಗಿದೆ ಎಂದು ಹೈದರಾಬಾದ್‌ನ ಮಹಿಳೆಯೋರ್ವರ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Feb 2026 9:29 pm

ಖಾಸಗಿ ಸುದ್ದಿವಾಹಿನಿಯಲ್ಲಿ ಧರ್ಮಸ್ಥಳ ಪ್ರಕರಣದ ಚರ್ಚೆ ವೇಳೆ ಹಲ್ಲೆಗೆ ಯತ್ನ: ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ, ಕಿರಿಕ್ ಕೀರ್ತಿ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು : ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಧರ್ಮಸ್ಥಳ ಪ್ರಕರಣ ಸಂಬಂಧ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. 2025ರ ಅಕ್ಟೋಬರ್ 9ರಂದು ಈ ಘಟನೆ ನಡೆದಿದೆ. ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಎಂಬುವರು ನೀಡಿದ ದೂರಿನನ್ವಯ ಎಸ್.ಜೆ ಪಾರ್ಕ್ ಠಾಣೆಯಲ್ಲಿ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ಯಾನೆ ಕೀರ್ತಿ ಶಂಕರಘಟ್ಟ ವಿರುದ್ಧ ಬಿಎನ್‍ಎಸ್ ಸೆಕ್ಷನ್ 352, 251(2), 351(3), 3(5)ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿವರ : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು 13 ವರ್ಷಗಳಾಗಿದ್ದ ಹಿನ್ನೆಲೆ 2025ರ ಅಕ್ಟೋಬರ್ 9ರಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಮತ್ತು ವಸಂತ್ ಗಿಳಿಯಾರ್ ಭಾಗವಹಿಸಿದ್ದರು. ಈ ಚರ್ಚೆ ವೇಳೆ ವಾಗ್ವಾದ ನಡೆದಿತ್ತು. ಕಾರ್ಯಕ್ರಮ ಮುಗಿದು ಮನೆಗೆ ತೆರಳುವ ವೇಳೆ, ವಸಂತ್ ಗಿಳಿಯಾರ್ ತಮ್ಮ ಸಹಚರರನ್ನು ಸುದ್ದಿ ವಾಹಿನಿಯ ಕಚೇರಿಗೆ ಕರೆಸಿಕೊಂಡು ಹರೀಶ್ ಮತ್ತು ಇತರರೊಂದಿಗೆ ದಾಂಧಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ವಸಂತ್ ಗಿಳಿಯಾರ್ ಅವರ ಸಹವರ್ತಿ ಪುನೀತ್ ಕೆರೆಹಳ್ಳಿಯ ಹಿಂಬಾಲಕರು ಮತ್ತು ಇನ್ನಿತರರು ಸುದ್ದಿ ವಾಹಿನಿಯ ಕಚೇರಿಗೆ ಬಂದು ಹರೀಶ್ ಭೈರಪ್ಪ ಅವರೊಂದಿಗೆ ಗಲಾಟೆ ನಡೆಸಿ ಅಶ್ಲೀಲವಾಗಿ ಬೈದು, ಹಲ್ಲೆಗೆ ಮುಂದಾಗಿ ಪ್ರಾಣ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಂದು ಈ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಧಾವಿಸಿ, ಆರೋಪಿಗಳನ್ನು ಪೊಲೀಸ್ ಠಾಣೆಗೆ ಒಯ್ದಿದ್ದರು. ಇನ್ನು, ಈ ಸಂಬಂಧ ಮೂವರ ವಿರುದ್ಧವೂ ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಅವರು ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್‍ನಲ್ಲೇ ದೂರು ನೀಡಿದ್ದರು. ಆದರೆ, ಇದೀಗ ಎಫ್‍ಐಆರ್ ದಾಖಲಾಗಿದೆ.

ವಾರ್ತಾ ಭಾರತಿ 3 Feb 2026 9:19 pm

ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ; ಜವಾಬ್ದಾರಿಯಿಂದ ಹಿಂದೆ ಸರಿದ ಅಣ್ಣಾಮಲೈ

6 ಕ್ಷೇತ್ರಗಳಿಗೆ ಸೀಮಿತವಾಗಿ ಉಸ್ತುವಾರಿ ನೀಡಿರುವುದಕ್ಕೆ ಅಸಮಾಧಾನ?

ವಾರ್ತಾ ಭಾರತಿ 3 Feb 2026 9:11 pm

ಯುದ್ಧ ರಂಗದಾಚೆ: ನಿವೃತ್ತಿಯ ನಂತರವೂ ಜನರಲ್ ಎಂ ಎಂ ನರವಣೆಯವರ ನಿಲ್ಲದ ಕದನ

Manoj Mukund Naravane- ಯಾರು ಈ ಮನೋಜ್ ಮುಕುಂದ್ ನರವಣೆ? ಯಾಕೆ ಇದ್ದಕ್ಕಿದ್ದಂತೆ ಎಲ್ಲರೂ ಅವರು ಬರೆದಿರುವ ಪುಸ್ತಕದ ಕುರಿತು ಚರ್ಚಿಸಲು ಆರಂಭಿಸಿದ್ದಾರೆ? ಈ ಪ್ರಶ್ನೆಯ ಕುರಿತೇ ಭಾರತದ ಸಂಸತ್ತು ಇತ್ತೀಚೆಗೆ ಭಾರೀ ಚರ್ಚೆಯಲ್ಲಿ ತೊಡಗಿದೆ. ಈ ಕಥೆಯನ್ನು ನಾವು ಪ್ರಸ್ತುತ ಲೇಖನದಲ್ಲಿ ಸರಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಯಾಕೆಂದರೆ ಈ ವಿಚಾರ ರಾಷ್ಟ್ರೀಯ ಭದ್ರತೆ, ಮಿಲಿಟರಿ ರಹಸ್ಯಗಳು, ಮತ್ತು ಪ್ರಭಾವಿ ವ್ಯಕ್ತಿಗಳು ರಹಸ್ಯ ವಿಚಾರಗಳ ಕುರಿತು ಬರೆಯಲು ಮುಂದಾಗುವುದರ ಪರಿಣಾಮವೇನು ಎನ್ನುವುದನ್ನು ಒಳಗೊಂಡಿದೆ.

ವಿಜಯ ಕರ್ನಾಟಕ 3 Feb 2026 9:11 pm

ರಾಜೀನಾಮೆ ನೀಡಲು ನಾನೇನು ತಪ್ಪು ಮಾಡಿದ್ದೇನೆ : ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ

ಬೆಂಗಳೂರು : ‘ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶದಿಂದಲೇ ಯಾವುದೇ ಸಾಕ್ಷಿ, ಆಧಾರಗಳಿಲ್ಲದೆ ಆರೋಪ ಮಾಡುವುದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದೂ ಇಲ್ಲ. ರಾಜೀನಾಮೆ ನೀಡಲು ನಾನೇನು ತಪ್ಪು ಮಾಡಿದ್ದೇನೆ. ಹೀಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು. ಮಂಗಳವಾರ ವಿಧಾನಸಭೆಯಲ್ಲಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ನಿಯಮ 69ರಡಿಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರ ನೀಡಿದ ಅವರು, ಬಿಜೆಪಿ ಅವಧಿಯಲ್ಲಿ ಶಾಸಕರ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆಯಾಗಿತ್ತು. ಆಗ ಯಾರು ರಾಜೀನಾಮೆ ನೀಡಿದರು. ಬಿಜೆಪಿ ಅವಧಿಯಲ್ಲಿ ಹೊರಬಂದ ಹಗರಣ ಬಗ್ಗೆ ನನ್ನ ಬಳಿಯೂ ದಾಖಲೆಗಳಿವೆ ಎಂದು ತಿರುಗೇಟು ನೀಡಿದರು. ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಅಕ್ರಮ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದ ಆರ್.ಬಿ.ತಿಮ್ಮಾಪುರ, ನನ್ನ ವಿರುದ್ಧ ಲಂಚದ ಆರೋಪ ಮಾಡಿರುವ ಆಡಿಯೋ ಮಾಡಿದ ವ್ಯಕ್ತಿ ಸಿಎಲ್-7 ಪರವಾನಗೆಗೆ ಅರ್ಜಿ ಸಲ್ಲಿಸಿದ್ದು, ಆತ ಸಲ್ಲಿಸಿರುವ ದಾಖಲೆಗಳೇ ಸಮರ್ಪಕವಾಗಿಲ್ಲ. ಹೀಗಾಗಿ ಬ್ಲಾಕ್‍ಮೇಲ್ ಪ್ರಯತ್ನ ಮಾಡಿದ್ದಾರೆ ಎಂದು ವಿವರಣೆ ನೀಡಿದರು. ನಾನು ದಲಿತ ಸಮುದಾಯಕ್ಕೆ ಸೇರಿದ್ದೇನೆಂದು ನನ್ನ ಸ್ಥಾನ ಉಳಿಸಿಕೊಳ್ಳಲು ಬಳಸಿಕೊಳ್ಳಲು ಹೋಗುವುದಿಲ್ಲ. ಆದರೆ, ನಾನು ಯಾವುದೇ ರೀತಿಯಲ್ಲಿಯೂ ತಪ್ಪು ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ 1314 ಪರವಾನಗೆ ನೀಡಿದ್ದಾರೆ. ಆದರೆ, ನನ್ನ ಅವಧಿಯಲ್ಲಿ 1,195 ಮದ್ಯದಂಗಡಿಗಳ ಪರವಾನಗೆ ನೀಡಲಾಗಿದೆ ಎಂದು ಅವರು ವಿವರ ನೀಡಿದರು.

ವಾರ್ತಾ ಭಾರತಿ 3 Feb 2026 9:09 pm

ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಯಿಂದ ಕಳವು ಪ್ರಕರಣ: ಆರೋಪಿ ಸೆರೆ

ಕುಂದಾಪುರ, ಫೆ.3: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಅಂಗಡಿಯಿಂದ ಚಿನ್ನದ ಸರವು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಕಜೆಕಾರ್ ಗ್ರಾಮದ ಬಡಗ ನಿವಾಸಿ ರಮೇಶ(42) ಬಂಧಿತ ಆರೋಪಿ. ಜ.27ರಂದು ಸಂಜೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯ ಇರುವ ಎಸ್‌ಪಿಜಿ ಗೋಲ್ಡ್ ಆ್ಯಂಡ್ ಡೈಮಂಡ್ ಅಂಗಡಿಗೆ ಬಂದ ಅಪರಿಚಿತ ವ್ಯಕ್ತಿ ಚಿನ್ನವನ್ನು ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿಯ ಕೆಲಸದವರ ಕಣ್ಣು ತಪ್ಪಿಸಿ ಸುಮಾರು 9 ಗ್ರಾಮ ತೂಕದ 125000 ರೂ. ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ, ಚಿನ್ನದ ಅಂಗಡಿಯಿಂದ ಕಳ್ಳತನ ಮಾಡಿದ ಚಿನ್ನದ ಚೈನ್ ಮತ್ತು ಆತನ ವಶದಲ್ಲಿದ್ದ 33000ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಂತೆ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಜಯರಾಮ್ ಡಿ.ಗೌಡ ನೇತೃತ್ವದಲ್ಲಿ ಠಾಣಾ ಎಸ್ಸೈಗಳಾದ ನಂಜಾನಾಯ್ಕ್ ಎನ್., ಪುಷ್ಪ ಹಾಗೂ ಸಿಬ್ಬಂದಿ ಸಂತೋಷ, ಮಹಾಬಲ ಶೆಟ್ಟಿಗಾರ, ಪ್ರೀನ್ಸ್, ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ, ಲೋಹಿತ್, ಚಂದ್ರಶೆಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ವಾರ್ತಾ ಭಾರತಿ 3 Feb 2026 9:03 pm

ಅದಾನಿ ಫೌಂಡೇಶನ್‌ನಿಂದ ಪಡುಬಿದ್ರಿ ಗ್ರಾಪಂಗೆ ಕಸ ನಿರ್ವಹಣಾ ವಾಹನ ಹಸ್ತಾಂತರ

ಉಡುಪಿ, ಫೆ.3: ಅದಾನಿ ಪವರ್ ಲಿಮಿಟೆಡ್ ಉಡುಪಿ, ಅದಾನಿ ಫೌಂಡೇಶನ್‌ನ ಸಹಯೋಗದಲ್ಲಿ ಸಿಎಸ್‌ಆರ್ ಕಾರ್ಯಕ್ರಮದ ಭಾಗವಾಗಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಉಪಕ್ರಮದ ಅಡಿಯಲ್ಲಿ ಪಡುಬಿದ್ರಿ ಗ್ರಾಪಂಗೆ 14 ಲಕ್ಷ ರೂ. ವೆಚ್ಚದಲ್ಲಿ ವಿಶೇಷವಾಗಿ ವಿನ್ಯಾಸ ಗೊಳಿಸಿದ ಕಸದ ಸಂಗ್ರಹಣಾ ವಾಹನವನ್ನು ಹಸ್ತಾಂತರಿಸಲಾಯಿತು. ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಅನುಕೂಲವಾಗುವ ಹೈಡ್ರಾಲಿಕ್ ಡೆಕ್ ಹೊಂದಿರುವ ಈ ವಾಹನದ ಕೀಲಿ ಯನ್ನು ಅದಾನಿ ಗ್ರೂಪ್‌ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಅವರಿಗೆ ಗ್ರಾಪಂ ಕಚೇರಿ ಆವರಣದಲ್ಲಿ ಅಧಿಕೃತವಾಗಿ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಕಿಶೋರ್ ಆಳ್ವ, ಉಡುಪಿ ತಾಪ ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪಡುಬಿದ್ರೆ ಸಹಿತ ಏಳು ಗ್ರಾಪಂಗಳಿಗೆ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಾತ್ರ ಮೀಸಲಾದ ವಿಶೇಷ ಸಿಎಸ್‌ಆರ್ ಅನುದಾನವನ್ನು ಅದಾನಿ ಗ್ರೂಪ್ ನೀಡಿರುವುದಾಗಿ ತಿಳಿಸಿದರು. ಜೊತೆಗೆ ಶಿಕ್ಷಣ, ಆರೋಗ್ಯ, ಗ್ರಾಮೀಣ ಕ್ರೀಡೆಗಳ ಉತ್ತೇಜನ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿಯೂ ಆದಾನಿ ಸಂಸ್ಥೆಯ ಸಿಎಸ್‌ಆರ್ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದರು. ಈವರೆಗೆ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಾತ್ರ ಅದಾನಿ ಫೌಂಡೇಶನ್ ವತಿಯಿಂದ 1.92 ಕೋಟಿ ರೂ. ಮೊತ್ತದ ಸಿಎಸ್‌ಆರ್ ಅನುದಾನವನ್ನು ವೆಚ್ಚ ಮಾಡಲಾ ಗಿದೆ ಎಂದು ಅವರು ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ, ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ ಹಾಗೂ ಸದಸ್ಯರಾದ ರವಿ ಶೆಟ್ಟಿ, ಜ್ಯೋತಿ ಮೆನನ್, ಸುನಂದಾ, ಮುಬೀನಾ, ಶೋಭಾ ಶೆಟ್ಟಿ, ಸಂದೇಶ್, ಅಶೋಕ್, ಹರೀಶ್ ಶೆಟ್ಟಿ, ನವೀನ್ ಶೆಟ್ಟಿ, ಸುಜಾತಾ ಆಚಾರ್ಯ, ಶಶಿ ಹಾಗೂ ನಿಯಾಝ್, ಅದಾನಿ ಪವರ್ ಲಿಮಿಟೆಡ್ ಉಡುಪಿ ತಾಪ ವಿದ್ಯುತ್ ಸ್ಥಾವರದ ಪರವಾಗಿ ಸಹಾಯಕ ಮಹಾಪ್ರಬಂಧಕ ರವಿ ಆರ್. ಜೇರೆ ಹಾಗೂ ಆದಾನಿ ಫೌಂಡೇಶನ್‌ನ ಅನುದೀಪ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Feb 2026 9:00 pm

ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದರೆ ಸದನದ ಹೊರಗೆ ಕಳುಹಿಸುತ್ತೇನೆ: ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ಸದನದ ಕರ್ಯಕಲಾಪಗಳಿಗೆ ಪದೇ ಪದೇ ಅಡ್ಡಿಪಡಿಸಿದರೆ, ತಮ್ಮ ಆಸನಗಳಲ್ಲಿ ಕುಳಿತುಕೊಂಡೆ ಮಾತನಾಡುತ್ತಿದ್ದರೆ, ಅಂತಹವರ ಹೆಸರನ್ನು ಸೂಚಿಸಿ, ಸದನದ ಹೊರಗೆ ಕಳುಹಿಸಬೇಕಾಗುತ್ತದೆ. ಅದಕ್ಕೆ ಆಡಳಿತ ಪಕ್ಷದವರು ಇರಲಿ, ವಿಪಕ್ಷದವರೆ ಇರಲಿ. ಅದಕ್ಕೆ ಅವಕಾಶ ನೀಡಬೇಡಿ ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದ ಪ್ರಸಂಗ ನಡೆಯಿತು. ಮಂಗಳವಾರ ವಿಧಾನಸಭೆಯಲ್ಲಿ ವಿಜಿ ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಿ, ಮನರೇಗಾ ಪುನಃ ಸ್ಥಾಪಿಸಬೇಕು ಎಂದು ಸರಕಾರದ ವತಿಯಿಂದ ಮಂಡನೆ ಮಾಡಿದ ನಿರ್ಣಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಬಿಜೆಪಿ ಸದಸ್ಯರು ಪದೇ ಪದೇ ಮಧ್ಯಪ್ರವೇಶ ಮಾಡಿ ಅಡ್ಡಿಪಡಿಸುತ್ತಿದ್ದರಿಂದ ಅವರು ಈ ಮೇಲಿನಂತೆ ಎಚ್ಚರಿಕೆ ನೀಡಿದರು. ನಂತರ ಮಾತನಾಡಿದ ಮುಖ್ಯಮಂತ್ರಿ, ಸದನ ನಡೆಯಬೇಕಾದರೆ ಪರಸ್ಪರ ಸಹಕಾರ ಇರಬೇಕು. ನಾನು ಮಾತನಾಡುವಾಗ ಪದೇ ಪದೇ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ. ಇದೇ ಪ್ರವೃತ್ತಿ ಮುಂದುವರೆಸಿದರೆ ನೀವು ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ವಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯ ರಾಜೇಶ್ ನಾಯಕ್ ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ಸ್ಪೀಕರ್, ರಾಜೇಶ್ ನಾಯಕ್ ನಿಮಗೆ ಪದೇ ಪದೇ ಹೇಳುತ್ತಿದ್ದೇನೆ. ಒಂದು ಬಾರಿ ನಾನು ನಿಮ್ಮನ್ನು ಹೆಸರಿಸಿದರೆ, ಸದನದ ಹೊರಗೆ ಕಳುಹಿಸಬೇಕಾಗುತ್ತದೆ ಎಚ್ಚರಿಕೆ ಅಂದರು. ಅಲ್ಲದೇ, ವಿಪಕ್ಷ ನಾಯಕ ಅಶೋಕ್ ಅವರನ್ನು ನಿಮ್ಮ ಸದಸ್ಯರನ್ನು ನಿಯಂತ್ರಣದಲ್ಲಿರಿಸಿ ಎಂದರು.

ವಾರ್ತಾ ಭಾರತಿ 3 Feb 2026 8:59 pm

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತ ತಪಾಸಣೆ : 3 ಸ್ಮಾರ್ಟ್ ಫೋನ್‌, 2 ಏರ್‌ಬಡ್ಸ್ ಪತ್ತೆ

ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ನಡೆಸಿದ ಅನಿರೀಕ್ಷಿತ ತಪಾಸಣೆ ವೇಳೆ 3 ಸ್ಮಾರ್ಟ್ ಫೋನ್‌ಗಳು ಹಾಗೂ 2 ಏರ್‌ಬಡ್ಸ್ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಜೈಲಿನ ವಿಚಾರಣಾಧೀನ ಕೈದಿಗಳಾದ ಶ್ರೀನಿವಾಸ ಗಣೇಶ್, ಪ್ರದೀಪ್ ಅಲಿಯಾಸ್ ದಾಸರಹಳ್ಳಿ ಪ್ರದೀಪ್ ಹಾಗೂ ದಿನೇಶ್ ಅಲಿಯಾಸ್ ಡಿಯೋ ದಿನಿ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜೈಲಿನ ವಾರ್ಡನ್ ಬಸವರಾಜ, ಅಧೀಕ್ಷಕ ರಾಕೇಶ್ ಸೇರಿದಂತೆ 42 ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕಳೆದ ಜ.28ರಂದು ಬ್ಯಾರಕ್ ಸಂಖ್ಯೆ 11ರಿಂದ 13ರವರೆಗೆ ಅನಿರೀಕ್ಷಿತ ತಪಾಸಣೆ ನಡೆಸಿದ ವೇಳೆ, ಈ ಮೂವರು ಕೈದಿಗಳು ಜೈಲಿನ ಶೌಚಾಲಯದಲ್ಲಿ ಸ್ಮಾರ್ಟ್ ಫೋನ್ ಮತ್ತು ಏರ್‌ಬಡ್ಸ್‌ಗಳನ್ನು ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Feb 2026 8:57 pm

ಧರ್ಮಸ್ಥಳ ಅಸಹಜ ಸಾವು ಪ್ರಕರಣ; ಕೈಗೊಳ್ಳುವ ಕ್ರಮಗಳ ಕುರಿತು ಸರಕಾರದ ವಿವರಣೆ ಕೇಳಿದ ಹೈಕೋರ್ಟ್

ಬೆಂಗಳೂರು : ಧರ್ಮಸ್ಥಳದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಇದೇ ವೇಳೆ, ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಿನ ವಸ್ತುಸ್ಥಿತಿ, ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಲಾಗುವ ಕ್ರಮಗಳ ಕುರಿತು 2 ವಾರಗಳಲ್ಲಿ ವಿವರಣೆ ನೀಡುವಂತೆ ಸರಕಾರಕ್ಕೆ ನಿರ್ದೇಶಿಸಿದೆ. ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಇದು 74 ಅಸಹಜ ಸಾವು ಪ್ರಕರಣಗಳ ವಿಚಾರವಾಗಿದೆ. ಯಾವ ಪ್ರಕರಣ ಯಾವ ಹಂತದಲ್ಲಿದೆ, ಈವರೆಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು 1 ವಾರದಲ್ಲಿ ನ್ಯಾಯಾಲಯಕ್ಕೆ ಸಂಪೂರ್ಣ ವಿವರ ಒದಗಿಸಲಾಗುವುದು ಎಂದು ತಿಳಿಸಿದರು. ಅರ್ಜಿದಾರರ ಪರ ವಕೀಲ ಎಸ್.ಬಾಲನ್ ಅವರು, ಎಲ್ಲ 74 ಪ್ರಕರಣಗಳೂ ತನಿಖೆ ಮತ್ತು ವಿಚಾರಣೆಗೊಳಪಡಿಸಬೇಕಾದ ಪ್ರಕರಣಗಳಾಗಿವೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೊದಲು ಸರಕಾರದಿಂದ ಮಾಹಿತಿ ಬರಲಿ ಎಂದು ಹೇಳಿತಲ್ಲದೆ, ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಪ್ರಕರಣಗಳ ಈಗಿನ ವಸ್ತುಸ್ಥಿತಿ, ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕೆಂದಿರುವ ಕ್ರಮಗಳ ಕುರಿತು 2 ವಾರಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿತು. ಇದೇ ವೇಳೆ, ಅರ್ಜಿಯಲ್ಲಿ ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂಬ ವಿಚಾರವನ್ನು ಸರಕಾರದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

ವಾರ್ತಾ ಭಾರತಿ 3 Feb 2026 8:56 pm

KSRTC: ಪರಿಶಿಷ್ಟ ಜಾತಿಯವರಿಗೆ ಉಚಿತ ವಾಹನ ಚಾಲನಾ ತರಬೇತಿ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ

ಬೆಂಗಳೂರು: ಪರಿಶಿಷ್ಟ ಜಾತಿಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪಿಎಂ-ಎಜೆಎವೈ ಯೋಜನೆಯಡಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ ಹಾಗೂ ಚಾಲನಾ ಪರವಾನಗಿ ನೀಡಲು ನಿಗಮ ಮುಂದಾಗಿದೆ. ಎಲ್ಲೆಲ್ಲಿ ತರಬೇತಿ? ಈ ಉಚಿತ

ಒನ್ ಇ೦ಡಿಯ 3 Feb 2026 8:40 pm

ಕಣಚೂರು| ನಸೀಮಾ ಫರೀದ್ ಸ್ಮಾರಕ 11ನೇ ಉಪನ್ಯಾಸ

► ಎರಡು ದಿನಗಳ ಉಚಿತ ಕಾರ್ಯಾಗಾರ

ವಾರ್ತಾ ಭಾರತಿ 3 Feb 2026 8:37 pm

ಮಹಾರಾಷ್ಟ್ರ| ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಪುತ್ರಿಯನ್ನೇ ಕೊಂದ ತಂದೆ !

ಮುಂಬೈ, ಫೆ. 2: ಮಹಾರಾಷ್ಟ್ರದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಮಕ್ಕಳ ನಿಯಮದಿಂದ ಹೊರಬರಲು ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳಲ್ಲಿ ಒಬ್ಬರನ್ನು ಹತ್ಯೆಗೈದಿದ್ದಾನೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರು ಗ್ರಾಮದ ನಿವಾಸಿ ಪಾಂಡುರಂಗ ಕೊಂಡ್ಮಂಗಲೆ (28)ತನ್ನ 6 ವರ್ಷದ ಪುತ್ರಿಯನ್ನು ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯ ಕಾಲುವೆಯೊಂದಕ್ಕೆ ತಳ್ಳಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪಾಂಡುರಂಗ ಹಾಗೂ ಗ್ರಾಮದ ಸರಪಂಚ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಲಾಗಿದೆ ಎಂದು ನಿಝಾಮಾಬಾದ್ ಪೊಲೀಸರು ಮಂಗಳವಾರ ಪ್ರಕಟಿಸಿದ್ದಾರೆ. ಬಾಲಕಿಯ ಮೃತದೇಹ ಯೆಡಪಳ್ಳಿಯಲ್ಲಿರುವ ನಿಝಾಮ್ ಸಾಗರ್ ಕಾಲುವೆಯಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾಗಿತ್ತು. ತನಿಖೆಯಲ್ಲಿ ಆಕೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕೆರೂರು ಗ್ರಾಮದ ನಿವಾಸಿ ಪ್ರಾಚಿ (6) ಎಂದು ಗುರುತಿಸಲಾಗಿತ್ತು ಎಂದು ನಿಝಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ ತಂದೆ ಪಾಂಡುರಂಗ ಕೊಡ್ಮಂಗಲೆಯನ್ನು ಬಂಧಿಸಿದ್ದರು. ಪ್ರಾಚಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ ಎಂದು ಆತ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ. ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗಿ ಬಾಲಕಿಯನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡ. ಕೆರೂರು ಗ್ರಾಮದಲ್ಲಿ ಕ್ಷೌರದ ಅಂಗಡಿ ನಡೆಸುತ್ತಿದ್ದ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯ ಸ್ಪರ್ಧಿಸಲು ಉತ್ಸುಕನಾಗಿದ್ದ. ಆತನಿಗೆ 3 ವರ್ಷದ ಪುತ್ರ ಹಾಗೂ 6 ವರ್ಷದ ಅವಳಿ ಪುತ್ರಿಯರು ಇದ್ದರು. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಸ್ಫರ್ದಿಸುವಂತಿಲ್ಲ. ಈ ನಿಯಮದ ಕಾರಣಕ್ಕೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಆತ ಅನರ್ಹನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪಾಂಡುರಂಗ ತನ್ನ ಗೆಳೆಯ ಹಾಗೂ ಗ್ರಾಮದ ಸರಪಂಚ ಗಣೇಶ್ ಶಿಂಧೆಯೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದ್ದ. ಆರಂಭದಲ್ಲಿ ಪಾಂಡುರಂಗ ಪುತ್ರಿಯನ್ನು ದತ್ತು ನೀಡಲು ಚಿಂತಿಸಿದ್ದ. ಆದರೆ, ಇದರಿಂದ ಆತನ ಉದ್ದೇಶ ಈಡೇರುವಂತಿರಲಿಲ್ಲ. ಯಾಕೆಂದರೆ, ಜನನ ಪ್ರಮಾಣ ಪತ್ರದಲ್ಲಿ ಪ್ರಾಚಿ ಆತನ ಪುತ್ರಿ ಎಂದು ನೋಂದಣಿಯಾಗಿತ್ತು. ಪ್ರಾಚಿಯನ್ನು ತ್ಯಜಿಸುವ ಕುರಿತು ಕೂಡ ಪಾಂಡುರಂಗ ಯೋಚಿಸಿದ್ದ. ಆದರೆ, ಆಕೆ ಹಿಂದಿರುಗಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಆತ ಚಿಂತಿತನಾಗಿದ್ದ. ಅನಂತರ ಆತ ಪ್ರಾಚಿಯನ್ನು ಹತ್ಯೆಗೈದು, ಅಪಘಾತವೆಂದು ಬಿಂಬಿಸಲು ನಿರ್ಧರಿಸಿದ ಎಂದು ಪೊಲೀಸರು ಹೇಳಿದ್ದಾರೆ.

ವಾರ್ತಾ ಭಾರತಿ 3 Feb 2026 8:27 pm

ತ್ಯಾಜ್ಯಗಳ ಬ್ಲ್ಯಾಕ್‌ಸ್ಪಾಟ್‌ನಲ್ಲಿ ಅರಳುತ್ತಿರುವ ಹೂವುಗಳು: ಬೀಡಿನಗುಡ್ಡೆ ಮೈದಾನದ ಬಳಿ ಉದ್ಯಾನವನ ನಿರ್ಮಾಣ

ಉಡುಪಿ, ಫೆ.3: ಉಡುಪಿ ನಗರವನ್ನು ಸುಂದರ ನಗರವಾಗಿಸುವ ಪ್ರಯತ್ನದ ಅಂಗವಾಗಿ ನಗರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಇರುವ ಬ್ಲ್ಯಾಕ್‌ಸ್ಪಾಟ್‌ಗಳನ್ನು ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ಅಂಥ ಕಡೆಗಳಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡುವ ಕಾಯಕಕ್ಕೆ ನಗರಸಭೆ ಮುಂದಾಗಿದೆ. ಉಡುಪಿ ನಗರಸಭೆಯ ಎಸ್.ಬಿ.ಎಂ 2.0ರ ಐಇಸಿ ಘಟಕದ ಇಂಟರ್ ಪರ್ಸನಲ್ ಕಮ್ಯೂನಿಕೇಶನ್ ಸ್ಕಿಲ್ ಉಪ ಘಟಕದಡಿ ನೇಮಕಗೊಂಡ 24 ಮಂದಿ ಕಮ್ಯೂನಿಟಿ ಮೊಬಿಲೈಸರ್‌ಗಳು ಪೌರಾಯುಕ್ತರ ಮಾರ್ಗದರ್ಶನದಲ್ಲಿ ಉಡುಪಿ ನಗರಸಭೆಯ ಆರೋಗ್ಯ ನಿರೀಕ್ಷರು ಮತ್ತು ಸೂಪರ್‌ವೈಸರ್‌ಗಳ ಸಹಯೋಗದೊಂದಿಗೆ, ಉಡುಪಿ ನಗರವನ್ನು ಸ್ವಚ್ಛವಾಗಿರಿಸುವ ಕಾಯಕದಲ್ಲಿ ಇದೀಗ ನಿರಂತರತೊಡಗಿಸಿಕೊಂಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಗರವಿಭಾಗದ ಕಮ್ಯೂನಿಟಿ ಮೊಬಿಲೈಸರ್‌ಗಳು ಬೀಡಿನಗುಡ್ಡೆ ಮೈದಾನದ ಹತ್ತಿರದ ಬ್ಲಾಕ್‌ಸ್ಟಾಟ್ (ತ್ಯಾಜ್ಯ ವಿಶೇಷವಾಗಿ ಸಂಗ್ರಹಗೊಳ್ಳುವ ಪ್ರದೇಶ) ನಲ್ಲಿ ಸುಂದರ ಗಾರ್ಡನ್ ನಿರ್ಮಿಸಿ ಅಲ್ಲಿ ಮತ್ತೆ ಕಸದ ರಾಶಿ ಬೀಳದಂತೆ ಬ್ಯಾನರ್ ಅಳವಡಿಸಿದ್ದಾರೆ. ಇದು ನಗರದಲ್ಲಿ ಬ್ಲ್ಯಾಕ್‌ಸ್ಪಾಟ್‌ಗಳೆಂದು ಗುರುತಿಸಲ್ಪಟ್ಟ ಜಾಗದಲ್ಲಿ ಮುಂದುವರಿಯಲಿದೆ. ಕಸಗಳನ್ನು ತೆಗೆದು ಅದನ್ನು ಜನರು ವಿಹರಿಸುವ ಪಾರ್ಕ್ ಮಾಡುವ ಕಾರ್ಯ ನಿರಂತರ ನಡೆಯಲಿದೆ. ನಗರಸಭೆಯ ಕಮ್ಯೂನಿಟಿ ಮೊಬಿಲೈಸರ್‌ಗಳ ಈ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಉಡುಪಿ ಜಿಲ್ಲೆ ಸ್ವಚ್ಛ ಜಿಲ್ಲೆಯಾಗಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ನಗರಸಭೆಯ ಪರಿಸರ ಇಂಜಿನಿಯರ್ ರವಿಪ್ರಕಾಶ್, ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸಾರ್ವಜನಿ ಕರು ಹಾಕುವ ಕಸವನ್ನು ವಿಲೇವಾರಿ ಮಾಡುವುದರಿಂದ ಅಲ್ಲಿ ಮತ್ತೆ ಮತ್ತೆ ಕಸದ ರಾಶಿ ಬೀಳುತ್ತಲೇ ಇರುತ್ತದೆ ಹೊರತು ಕಸ ಕಡಿಮೆಯಾಗುವುದಿಲ್ಲ. ಆದ್ದರಿಂದ ಸ್ವಚ್ಛ ಉಡುಪಿ ಪರಿಕಲ್ಪನೆಗೆ ತ್ಯಾಜ್ಯ ವಿಲೇವಾರಿ ಮಾಡುವು ದೊಂದೇ ಪರಿಹಾರವಲ್ಲ. ಅಲ್ಲದೇ ಕಸ ಹಾಕಿದವರಿಗೆ ದಂಡ ವಿಧಿಸುವುದು ಕೂಡಾ ನಿರಂತರವಾಗಿ ಸಾಧ್ಯವಾ ಗುವುದಿಲ್ಲ ಎಂದರು. ಆದ್ದರಿಂದ ತ್ಯಾಜ್ಯ ರಾಶಿ ಇರುವ ಪ್ರದೇಶದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಿ ಆ ಪ್ರದೇಶವನ್ನು ಸುಂದರ ಪ್ರದೇಶವಾಗಿ ಮಾರ್ಪಾಡು ಮಾಡಿ ಉದ್ಯಾನವನ ನಿರ್ಮಿಸಿ ಬ್ಯಾನರ್ ಹಾಕುವ ಮೂಲಕ ಬ್ಲ್ಯಾಕ್‌ಸ್ಪಾಟ್‌ಗಳನ್ನೇ ನಿರ್ಮೂಲನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಇದೇ ರೀತಿ ಬ್ಲಾಕ್‌ಸ್ಪಾಟ್‌ಗಳನ್ನು ಬ್ಯೂಟಿಫಿಕೇಶನ್ ಮಾಡುವ ಉದ್ದೇಶವನ್ನು ನಗರಸಭೆ ಹೊಂದಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಆರೋಗ್ಯ ನಿರೀಕ್ಷಕ ಸತೀಶ್, ಪ್ರಕಾಶ್ ಪ್ರಭು, ಹರೀಶ್ ಬಿಲ್ಲವ ಹಾಗೂ ಸಿಟಿ ಭಾಗದ ಸೂಪರ್‌ವೈಸರ್‌ಗಳು, ಕಮ್ಯೂನಿಟಿ ಮೊಬಿಲೈಸರ್‌ಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Feb 2026 8:17 pm

Chitradurga | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಪೊಕ್ಸೊ ಕಾಯ್ದೆಯಡಿ ಶಿಕ್ಷಕನ ಬಂಧನ

ಚಿತ್ರದುರ್ಗ : ತಾಲೂಕಿನ ಖಾಸಗಿ ಶಾಲೆಯೊಂದರ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಕನೋರ್ವನನ್ನು ಭರಮಸಾಗರ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ವರದಿಯಾಗಿದೆ. ರಂಗಣ್ಣ (55) ಆರೋಪಿ ಶಿಕ್ಷಕನಾಗಿದ್ದು, ಈತನ ವಿರುದ್ಧ ಮಕ್ಕಳ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯು ನೀಡಿದ ದೂರಿನ ಮೇರೆಗೆ ಪೊಲೀಸರು ಫೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಷ್ಠಿತ ಮಠವೊಂದಕ್ಕೆ ಸೇರಿದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ರಂಗಣ್ಣ, ಶಾಲೆಯ ಸುಮಾರು 6 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಡಳಿತ ಮಂಡಳಿಯಿಂದಲೇ ದೂರು: ಶಾಲೆಯ ಆಡಳಿತ ಸಮಿತಿಯು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಭರಮಸಾಗರ ಪೊಲೀಸ್ ಠಾಣೆಗೆ ತೆರಳಿ ಶಿಕ್ಷಕ ರಂಗಣ್ಣನ ವಿರುದ್ಧ ಅಧಿಕೃತವಾಗಿ ದೂರು ನೀಡಿದೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಸಂತ್ರಸ್ತ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ವಾರ್ತಾ ಭಾರತಿ 3 Feb 2026 8:17 pm

ಮಣಿಪುರದಲ್ಲಿ ಹೊಸ ಬೆಳವಣಿಗೆ; ಬಿಜೆಪಿ ಹಿರಿಯ ನಾಯಕ ಯುನ್ಮಮ್ ಖೇಮಚಂದ್ ಗೆ ಒಲಿದ ಸಿಎಂ ಪಟ್ಟ!

ಒಂದು ವರ್ಷದ ರಾಷ್ಚ್ರಪತಿ ಆಡಳಿತದ ಬಳಿಕ ಮಣಿಪುರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಪಕ್ಷದ ಹಿರಿಯ ಮುಖಂಡ ಯುನ್ಮಮ್ ಖೇಮಚಂದ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಿಂಸಾಚಾರ ಮತ್ತು ಜನಾಂಗೀಯ ಸಂಘರ್ಷದ ಬಳಿಕ ಕಳೆದ ವರ್ಷ ಎನ್ ಪಿಪಿ ಪಕ್ಷವು ಬೆಂಬಲ ಹಿಂಪಡೆದುಕೊಂಡ ಕಾರಣ ಸರ್ಕಾರ ಬಿದ್ದು ಹೋಗಿತ್ತು. ಇದೀಗ ಬಿಜೆಪಿ ಹಲವು ಪಕ್ಷಗಳು ಬೆಂಬಲ ನೀಡಿದ್ದರಿಂದ ಸರ್ಕಾರ ರಚನೆ ಸಾಧ್ಯವಾಗಿದೆ. ಒಂದು ವರ್ಷದಲ್ಲಿ ಬಳಿಕ ನಡೆಯುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಖೇಮಚಂದ್ ಅವರ ಮುಂದಿದೆ.

ವಿಜಯ ಕರ್ನಾಟಕ 3 Feb 2026 8:15 pm

ಫೆ.5ರಂದು ಮಲ್ಪೆ ಬಂದರಿನಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಉಡುಪಿ, ಫೆ.3: ಮೀನುಗಾರಿಕೆ ಇಲಾಖೆ ಉಡುಪಿ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ, ಕರಾವಳಿ ಕಾವಲು ಪೊಲೀಸ್, ಮಲ್ಪೆ ಮೀನುಗಾರರ ಸಂಘ, ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಕನ್ನಿ ಪಾರ್ಟಿ ಮೀನುಗಾರರ ಸಂಘ ಮಲ್ಪೆ, ಕೆನರಾ ಬ್ಯಾಂಕ್ ಹಾಗೂ ಮಲ್ಪೆ ಬಂದರಿನ ಎಲ್ಲಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವೊಂದು ಫೆ.5ರಂದು ಬೆಳಗ್ಗೆ 9:30ಕ್ಕೆ ಮಲ್ಪೆ ಬಂದರಿನಲ್ಲಿರುವ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 3 Feb 2026 8:03 pm

ಕರಾವಳಿಗೆ ವಂದೇ ಭಾರತ್, ಹಳಿ ದ್ವಿಪಥಕ್ಕೆ ಬೇಡಿಕೆ: ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಕೋಟ

ಉಡುಪಿ, ಫೆ.3: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಹೊಸದಿಲ್ಲಿಯ ಅವರ ರೈಲ್ವೆ ಸಚಿವಾಲಯದ ಕಚೇರಿಯಲ್ಲಿ ಭೇಟಿ ಮಾಡಿದ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರು- ಮಂಗಳೂರು ವಂದೇ ಭಾರತ್ ರೈಲನ್ನು ಉಡುಪಿ ಮೂಲಕ ಉತ್ತರ ಕನ್ನಡದ ಕಾರವಾರದವರೆಗೆ ವಿಸ್ತರಿಸಬೇಕಾದ ಅಗತ್ಯವನ್ನು ವಿವರಿಸಿ ಮನವಿ ಸಲ್ಲಿಸಿದರು. ಪ್ರತಿದಿನ ಉತ್ತರ ಕನ್ನಡ, ಕುಂದಾಪುರ, ಉಡುಪಿ, ಮಂಗಳೂರಿನಿಂದ 600ಕ್ಕೂ ಹೆಚ್ಚು ಬಸ್‌ಗಳು ಮತ್ತು ಇತರ ಖಾಸಗಿ ವಾಹನಗಳು ರಾಜಧಾನಿ ಬೆಂಗಳೂರು ತಲುಪುತ್ತಿದ್ದು, ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಲು ಕರಾವಳಿಗೆ ವಂದೇಭಾರತ್ ರೈಲನ್ನು ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ. ಇದರೊಂದಿಗೆ, ಮಂಗಳೂರಿನಿಂದ ಮುಂಬೈವರೆಗಿನ ಕೊಂಕಣ ರೈಲ್ವೆಯ 734 ಕಿ.ಮೀ. ಉದ್ದದ ರೈಲ್ವೆ ಹಳಿಯನ್ನು ದ್ವಿಪಥಗೊಳಿಸುವ ಮೂಲಕ ಹೆಚ್ಚುವರಿ ರೈಲ್ವೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕೂಡಲೇ ಸರ್ವೆ ನಡೆಸಲು ಹಣ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ. ಹಲವು ವಷರ್ಗಳಿಂದ ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿ ಜಿಲ್ಲೆಗಳ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆಯ ಕೊರತೆ ಇದ್ದು, ಇದೀಗ ನರೇಂದ್ರ ಮೋದಿ ಸರಕಾರದ ತುರ್ತು ಕ್ರಮಗಳಿಂದ ಸಾಕಷ್ಟು ಪ್ರಗತಿ ಕಂಡು ಬರುತ್ತಿದ್ದು, ಇನ್ನೂ ಹೊಸ ರೈಲುಗಳ ಅಗತ್ಯವಿರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ನೆರವು ನೀಡಬೇಕೆಂದು ರೈಲ್ವೆ ಸಚಿವರಲ್ಲಿ ಸಂಸದ ಕೋಟ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 3 Feb 2026 7:59 pm

Saudi Arabia | ಅಲಿಫ್ ಇಂಟರ್ನ್ಯಾಷನಲ್ ಸ್ಕೂಲ್; ‘ಬುಕ್ ಬ್ಲೂಮ್–500’ ಸೃಜನಶೀಲ ಬರವಣಿಗೆ ಕಾರ್ಯಕ್ರಮಕ್ಕೆ ಗಿನ್ನೆಸ್ ವಿಶ್ವ ದಾಖಲೆ ಗೌರವ

ರಿಯಾದ್ (ಸೌದಿ ಅರೇಬಿಯಾ), ಫೆ. 3: ಅಲಿಫ್ ಇಂಟರ್ನ್ಯಾಷನಲ್ ಶಾಲೆ ಆಯೋಜಿಸಿದ್ದ ‘ಬುಕ್ ಬ್ಲೂಮ್–500’ ಸೃಜನಶೀಲ ಬರವಣಿಗೆ ಕಾರ್ಯಕ್ರಮ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಒಂದೇ ವೇದಿಕೆಯಲ್ಲಿ 506 ವಿದ್ಯಾರ್ಥಿಗಳು ರಚಿಸಿದ ಪುಸ್ತಕಗಳ ಅನಾವರಣ ನಡೆದಿರುವುದು ಈ ಸಾಧನೆಯ ಪ್ರಮುಖ ಅಂಶವಾಗಿದೆ. ಕಾರ್ಯಕ್ರಮದ ಸ್ಥಳದಲ್ಲಿದ್ದ ಗಿನ್ನೆಸ್ ವಿಶ್ವ ದಾಖಲೆ ಅಧಿಕಾರಿ ದಾಖಲೆಯನ್ನು ಅಧಿಕೃತವಾಗಿ ದೃಢಪಡಿಸಿ ಶಾಲೆಗೆ ಪ್ರಮಾಣಪತ್ರ ವಿತರಿಸಿದರು. 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡ ಈ ಕಾರ್ಯಕ್ರಮದ ಮೂಲಕ ಹತ್ತು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳು ಪ್ರಕಟಗೊಂಡಿದ್ದು, ಇಂಗ್ಲಿಷ್, ಅರೇಬಿಕ್, ಹಿಂದಿ, ಉರ್ದು, ಮಲಯಾಳಂ, ಕನ್ನಡ ಹಾಗೂ ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಪುಸ್ತಕಗಳು ರಚಿಸಲ್ಪಟ್ಟಿವೆ. ಕಾರ್ಯಕ್ರಮವನ್ನು ಪ್ರಮುಖ ಮಾಧ್ಯಮ ವಿಶ್ಲೇಷಕ ಹಾಗೂ ಅರಬ್ ನ್ಯೂಸ್ ಮುಖ್ಯ ಮಾಜಿ ಸಂಪಾದಕ ಉಸ್ತಾದ್ಝ್ ಖಾಲಿದ್ ಅಲ್ ಮಯೀನಾ ಉದ್ಘಾಟಿಸಿದರು. ಮುಂದಿನ ಪೀಳಿಗೆಯ ಸಾಹಿತ್ಯ ಪ್ರತಿಭೆಯನ್ನು ಬೆಳೆಸುವಲ್ಲಿ ಶಾಲೆಯ ಪ್ರಯತ್ನ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು. ಸಮುದಾಯ, ಶಿಕ್ಷಣ ಹಾಗೂ ವ್ಯವಹಾರ ವಲಯಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲಿಫ್ ಗ್ರೂಪ್ ಆಫ್ ಸ್ಕೂಲ್ಸ್ ಅಧ್ಯಕ್ಷ ಉಸ್ತಾದ್ ಅಲಿ ಅಬ್ದುರಹ್ಮಾನ್, ಸಿಇಒ ಲುಕ್ಮಾನ್ ಅಹ್ಮದ್ ಮತ್ತು ಪ್ರಾಂಶುಪಾಲ ಮೊಹಮ್ಮದ್ ಮುಸ್ತಫಾ ಸಭೆಯನ್ನುದ್ದೇಶಿಸಿ ಮಾತನಾಡಿ, ನೂರಾರು ಯುವ ಲೇಖಕರನ್ನು ಸಮಾಜಕ್ಕೆ ಪರಿಚಯಿಸುವ ಅವಕಾಶ ದೊರೆತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕ ಅಬ್ದುಲ್ ನಾಸರ್ ಹಾಜಿ (ಸ್ಟ್ರಾಂಗ್‌ಲೈಟ್) ಹಾಗೂ ಅಲಿಫ್ ಗ್ಲೋಬಲ್ ಸ್ಕೂಲ್ ನಿರ್ದೇಶಕ ಮೊಹಮ್ಮದ್ ಅಹ್ಮದ್ ಉಪಸ್ಥಿತರಿದ್ದರು. ‘A school with a smile’ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿರುವ ‘ಓದಿ ಮತ್ತು ಆನಂದಿಸಿ’ ಕಾರ್ಯಕ್ರಮವನ್ನು ಪ್ರಾಂಶುಪಾಲ ಮೊಹಮ್ಮದ್ ಮುಸ್ತಫಾ ಉಲ್ಲೇಖಿಸಿದರು. ವಿದ್ಯಾರ್ಥಿಗಳ ಚಿಂತನೆ ಚುರುಕುಗೊಳಿಸಲು, ಭಾಷಾ ಪಾಂಡಿತ್ಯ ವೃದ್ಧಿಸಲು ಹಾಗೂ ಭಾವನಾತ್ಮಕ ಬುದ್ಧಿವಂತಿಕೆಯನ್ನು ಬಲಪಡಿಸಲು ಪುಸ್ತಕಗಳು ನೆರವಾಗುತ್ತವೆ ಎಂದು ಸಿಇಒ ಲುಕ್ಮಾನ್ ಅಹ್ಮದ್ ಹೇಳಿದರು. ಶಾಲಾ ಆಡಳಿತಾಧಿಕಾರಿ ಅಲಿ ಬುಖಾರಿ, ಮುಖ್ಯೋಪಾಧ್ಯಾಯ ನೌಶಾದ್ ನಲಕತ್ ಹಾಗೂ ಸಂಯೋಜಕ ಸುಂದಸ್ ಸಬೀರ್ ಚೌಧರಿ ಕಾರ್ಯಕ್ರಮದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.    

ವಾರ್ತಾ ಭಾರತಿ 3 Feb 2026 7:51 pm

ಕರ್ನಾಟಕದ ಕೊಡಗಿನಂತಿದೆ ಮೇಘಾಲಯ: ರಾಜ್ಯಪಾಲ ಸಿ.ಎಚ್. ವಿಜಯಶಂಕರ್

► ರಾಜ್ಯಪಾಲರೊಂದಿಗೆ ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ಸಂವಾದ ► ಮೇಘಾಲಯದ ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ

ವಾರ್ತಾ ಭಾರತಿ 3 Feb 2026 7:47 pm

ಟ್ರಂಪ್ ತೆರಿಗೆ ಕಡಿಮೆ ಮಾಡಿ ನಮಗೇನೂ ಮಹದುಪಕಾರ ಮಾಡಿಲ್ಲ: ರಂಗಸ್ವಾಮಿ ಮೂಕನಹಳ್ಳಿ

ಭಾರತ-ಯುರೋಪ್ ಹಾಗೂ ಅರಬ್ ಲೀಗ್ ನಡುವಿನ ವ್ಯಾಪಾರ ಒಪ್ಪಂದಗಳ ಬೆಳವಣಿಗೆಯ ನಡುವೆ ಅಮೆರಿಕ ಕೂಡ ಎಚ್ಚೆತ್ತುಕೊಂಡಿದ್ದು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಘೋಷಿಸಿದ್ದಾರೆ ಡೊನಾಲ್ಡ್ ಟ್ರಂಪ್. ಈ ಒಪ್ಪಂದದ ಭಾಗವಾಗಿ ಭಾರತ ಮೇಲಿನ ದುಬಾರಿ ಆಮದು ಸುಂಕವನ್ನು ಕಡಿತಗೊಳಿಸಲಾಗಿದ್ದು, ಶೇ.25ರಷ್ಟಿದ್ದ ಸುಂಕವನ್ನು ಶೇ.18ಕ್ಕೆ ಇಳಿಸಲಾಗಿದೆ. ಈ ನಿರ್ಧಾರದಿಂದ ಭಾರತ-ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳು ಮತ್ತಷ್ಟು ಬಲವಾಗುವ ನಿರೀಕ್ಷೆ ವ್ಯಕ್ತವಾಗಿದ್ದು,

ಒನ್ ಇ೦ಡಿಯ 3 Feb 2026 7:46 pm

ರಾಯಚೂರು ಜಿಲ್ಲಾ ಉತ್ಸವಕ್ಕೆ ಸಕಲ ಸಿದ್ಧತೆ, 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ನಿತೀಶ್ ಕೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಂದ ಉತ್ಸವಕ್ಕೆ ಚಾಲನೆ

ವಾರ್ತಾ ಭಾರತಿ 3 Feb 2026 7:34 pm

Manipur | ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಂದಿನ ಮುಖ್ಯಮಂತ್ರಿ ಯುಮ್ನಮ್ ಖೇಮ್ಚಂದ್ ಸಿಂಗ್

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ

ವಾರ್ತಾ ಭಾರತಿ 3 Feb 2026 7:30 pm

Bengaluru | ತೆರಿಗೆ ಬಾಕಿ ಪಾವತಿಸದ ಏಳು ಸಾವಿರ ಆಸ್ತಿಗಳ ಹರಾಜಿಗೆ ಕ್ರಮ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆಗಳಲ್ಲಿ ಸುಮಾರು 7 ಸಾವಿರ ಆಸ್ತಿ ಮಾಲಕರು ಒಟ್ಟು 437ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿಯನ್ನು ಉಳಿಸಿಕೊಂಡಿದಿದ್ದು, ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಹರಾಜು ಹಾಕಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತಿಳಿಸಿದೆ. ಈ ಸಂಬಂಧ ಪ್ರಾಧಿಕಾರವು ಪ್ರಕಟನೆ ಹೊರಡಿಸಿದ್ದು, ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲಕರಿಗೆ ನೋಟಿಸ್‍ಗಳನ್ನು ಕಳುಹಿಸಲಾಗಿದೆ. ಆದರೂ ಅವರು ತೆರಿಗೆ ಪಾವತಿಸದೆ ಇರುವುದರಿಂದ, ಮುಂದಿನ ಕ್ರಮವಾಗಿ ಜಪ್ತಿ ಆದೇಶಗಳನ್ನು ಹೊರಡಿಸಲಾಗಿದೆ. ಜಪ್ತಿ ಆದೇಶಗಳ ಹೊರಡಿಸಿದ ಬಳಿಕವೂ ತೆರಿಗೆ ಪಾವತಿ ಆಗದಿರುವ ಹಿನ್ನೆಲೆಯಲ್ಲಿ, ಕೊನೆಯ ಕ್ರಮವಾಗಿ ಫೆ.17ರಂದು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಹರಾಜಿಗೆ ಸಂಬಂಧಿಸಿದ ನೋಟಿಸ್‍ಗಳ ಪಟ್ಟಿಯನ್ನು ವೆಬ್‍ಸೈಟ್‍ನಲ್ಲಿ ಆನ್‍ಲೈನ್‍ನಲ್ಲಿ ಪ್ರಕಟಿಸಲಾಗಿದೆ. ಸಂಬಂಧಿತ ಆಸ್ತಿ ಮಾಲಕರು ತಕ್ಷಣವೇ https://BBMPTax.karnataka.gov.in   ಮೂಲಕ ಆನ್‍ಲೈನ್ ಪಾವತಿ ಮಾಡಿದಲ್ಲಿ, ಹರಾಜು ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಬಹುದು ಎಂದು ಪ್ರಾಧಿಕಾರವು ಹೇಳಿದೆ.

ವಾರ್ತಾ ಭಾರತಿ 3 Feb 2026 7:22 pm

ಮಾದಕ ವಸ್ತು ಸೇವನೆ ಆರೋಪ: ನಾಲ್ವರ ಬಂಧನ

ಮಂಗಳೂರು, ಫೆ.3: ಸಾರ್ವಜನಿಕ ಸ್ಥಳದಲ್ಲಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಫೆ.2ರಂದು ಕಾವೂರು ಜಂಕ್ಷನ್ ಹತ್ತಿರ ಪಂಜಿಮೊಗರು ಉರುಂದಾಡಿ ಕ್ರಾಸ್ ನಿವಾಸಿ ಶೈಲೇಶ್ (39) ಮತ್ತು ನಗರದ ಮರಕಡ ಜಂಕ್ಷನ್ ಬಳಿ ಯೆಯ್ಯಾಡಿ ಪದವು ನಿವಾಸಿ ವಿನ್ಯಾಸ್ (18) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕೂಳೂರು ಸಾರ್ವಜನಿಕ ಸ್ಥಳದಲ್ಲಿ ಪುಲೇಶ್ವರ ಭೂಯಿಯಾನ್ (22) ಮತ್ತು ನಗರದ ಕೆ.ಎಸ್.ರಾವ್ ರೋಡ್ ಸಮೀಪ ಕದ್ರಿ ಮುಂಡನ ಕ್ರಾಸ್ ರಸ್ತೆ ನಿವಾಸಿ ಚಂದನ್ ಸಿ. (26) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವಾರ್ತಾ ಭಾರತಿ 3 Feb 2026 7:21 pm

ಫೆ.7: ’ಸಮಸ್ತ ಆದರ್ಶ ಹಾದಿಯ ನೆರಳು ವೃಕ್ಷಗಳು’ಗ್ರಂಥ ಬಿಡುಗಡೆ

ಮಂಗಳೂರು, ಫೆ.3: 1926ರಿಂದ 2026 ತನಕ ಸಮಸ್ತಕ್ಕೆ ನೇತೃತ್ವ ವಹಿಸಿದ ನಾಯಕರ ಬಗ್ಗೆ, ಸಮಸ್ತದ ಉಗಮ, ಇತಿಹಾಸ, ಬೆಳವಣಿಗೆ, ಮುಶಾವರ ಸದಸ್ಯರ ವಿವರಣೆ, ಪ್ರಮುಖ ತೀರ್ಮಾನಗಳು, ಹಾಲಿ ಮುಶಾವರ ಸದಸ್ಯರ ಪರಿಚಯ, ವಿವಿಧ ಪೋಷಕ ಸಂಘಟನೆಗಳ ಇತಿಹಾಸ ಇತ್ಯಾದಿ ವಿಷಯಗಳನ್ನು ಒಳಗೊಂಡ 1000 ಪುಟಗಳ ’ಸಮಸ್ತ ಆದರ್ಶ ಹಾದಿಯ ನೆರಳು ವೃಕ್ಷಗಳು’ಗ್ರಂಥದ ಬಿಡುಗಡೆ ಕಾರ್ಯಕ್ರಮವು ಫೆ.7ರಂದು ಸಮಸ್ತ ಶತಮಾನೋತ್ಸವ ಸಮ್ಮೇಳನದ ವೇದಿಕೆಯಲ್ಲಿ ನಡೆಯಲಿದೆ. ಮಲ್ಲೂರಿನ ಉದ್ದಬೆಟ್ಟು ನಿವಾಸಿ, ದಾರುಸ್ಸಲಾಂ ವಿದ್ಯಾರ್ಥಿ ಶವಿಲ್ ಅತೀ ಸಣ್ಣ ವಯಸ್ಸಿನಲ್ಲೇ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಪುಸ್ತಕ ರಚನೆಗಾಗಿ ಶ್ರಮಿಸಿದ್ದ ಶವಿಲ್ ಕಲಿಕೆಯ ಬಿಡುವಿನ ಅವಧಿಯಲ್ಲಿ ಅನೇಕ ಧಾರ್ಮಿಕ ಪುಸ್ತಕಗಳನ್ನು ಅಭ್ಯಸಿಸಿ ಈ ಬೃಹತ್ ಗ್ರಂಥ ರಚಿಸಿದ್ದಾರೆ. ದಾರುಸ್ಸಲಾಂ ಅಲ್ ಬಯಾನ್ ಸಮಿತಿ ಪ್ರಕಟಿಸಿರುವ ಈ ಗ್ರಂಥವನ್ನು ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ಬಿಡುಗಡೆಗೊಳಿಸಲಿದ್ದಾರೆ.

ವಾರ್ತಾ ಭಾರತಿ 3 Feb 2026 7:20 pm

Tamil Nadu : ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್ ಶಾಕ್ - ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ

Annamalai Resigned as Election Incharge : ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ದೊಡ್ಡ ಶಾಕ್ ಎದುರಾಗಿದೆ. ಆರು ಜಿಲ್ಲೆಗಳ ಚುನಾವಣಾ ಉಸ್ತುವಾರಿಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.

ವಿಜಯ ಕರ್ನಾಟಕ 3 Feb 2026 7:19 pm

ಕೆಎಸ್‍ಡಿಎಲ್ | ಜನವರಿಯಲ್ಲಿ ಸಾರ್ವಕಾಲಿಕ ದಾಖಲೆಯ ಉತ್ಪಾದನೆ; 4,894 ಟನ್ ಸೋಪ್ ಉತ್ಪಾದನೆ

ಬೆಂಗಳೂರು : ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಈ ವರ್ಷದ ಜನವರಿಯಲ್ಲಿ ಒಟ್ಟು 4,894 ಮೆಟ್ರಿಕ್ ಟನ್ ಸೋಪ್ ಉತ್ಪನ್ನ ಉತ್ಪಾದನೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮಂಗಳವಾರ ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜನವರಿ ತಿಂಗಳಲ್ಲಿ ಸಾಬೂನು ವಿಭಾಗದಲ್ಲಿ 3,798 ಟನ್, ಮಾರ್ಜಕಗಳ ವಿಭಾಗದಲ್ಲಿ 941ಟನ್ ಮತ್ತು ಕಾಸ್ಮೆಟಿಕ್ಸ್ ವಿಭಾಗದಲ್ಲಿ 155 ಟನ್ ಉತ್ಪಾದನೆ ನಡೆದಿದೆ ಎಂದು ಹೇಳಿದ್ದಾರೆ. ಕೆಎಸ್‍ಡಿಎಲ್ ಈ ಹಿಂದೆ 2020ರ ಸೆಪ್ಟೆಂಬರ್‍ನಲ್ಲಿ 3,113 ಟನ್, 2021ರ ನವೆಂಬರ್‍ನಲ್ಲಿ 2,744 ಟನ್, 2022ರ ಸೆಪ್ಟೆಂಬರ್‍ನಲ್ಲಿ 3,650 ಟನ್, 2023ರ ನವೆಂಬರ್‍ನಲ್ಲಿ 4,144 ಟನ್, 2025ರ ಮಾರ್ಚ್‍ನಲ್ಲಿ 4,486 ಟನ್, 2025ರ ಡಿಸೆಂಬರ್‍ನಲ್ಲಿ 4,735 ಟನ್ ಉತ್ಪಾದನೆ ಮೂಲಕ ದಾಖಲೆ ನಿರ್ಮಿಸಿತ್ತು ಎಂದು ಅವರು ತಿಳಿಸಿದ್ದಾರೆ. ಉತ್ತರ ಭಾರತ ಮತ್ತು ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮತ್ತು ಬ್ರ್ಯಾಂಡಿಂಗ್ ಬಲವರ್ಧನೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಮೂರು ಪಾಳಿಗಳಲ್ಲಿ ನಿರಂತರ ಮತ್ತು ಗುಣಮಟ್ಟದ ಉತ್ಪಾದನಾ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ. ಸಂಸ್ಥೆಯ ವತಿಯಿಂದ ಈಗ 45ಕ್ಕೂ ಹೆಚ್ಚು ಉತ್ಪನ್ನಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ಪನ್ನಗಳನ್ನು ಪರಿಚಯಿಸಲಾಗುವುದು. ಸಂಸ್ಥೆಯ ವಹಿವಾಟನ್ನು 2030ರ ವೇಳೆಗೆ 5ಸಾವಿರ ಕೋಟಿ ರೂ.ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಕೆಎಸ್‍ಡಿಎಲ್ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎಸ್. ನಾಡಗೌಡ ತಿಳಿಸಿದ್ದಾರೆ. ಹೆಚ್ಚುವರಿ ಸಿಬ್ಬಂದಿಯ ನೇಮಕವಾಗಲಿ ಅಥವಾ ಹೊಸ ಯಂತ್ರೋಪಕರಣಗಳ ಖರೀದಿಯನ್ನೂ ಮಾಡದೆ, ಹಾಲಿ ಇರುವ ವ್ಯವಸ್ಥಯಿಂದಲೇ ಇಷ್ಟು ದಾಖಲೆ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಇದಕ್ಮೆ ಶ್ರಮಿಸಿದ ಎಲ್ಲ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ಕೆಎಸ್‍ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Feb 2026 7:19 pm

ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್ ಪುರಂವರೆಗೆ ರಿಂಗ್‌ ರಸ್ತೆ ಅಭಿವೃದ್ಧಿಗೆ ಜಿಬಿಎ ಮಾಸ್ಟರ್‌ ಪ್ಲ್ಯಾನ್‌: ಇಬ್ಲೂರು ಬಳಿ ಹೆಚ್ಚುವರಿ ಫ್ಲೈಓವರ್

ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಬ್ಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್. ಪುರಂ ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

ವಿಜಯ ಕರ್ನಾಟಕ 3 Feb 2026 7:15 pm

T20 World Cup- ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್? ಹೀಗಿದೆ ಸಂಭಾವ್ಯ ಭಾರತ ಪ್ಲೇಯಿಂಗ್ ಇಲೆವೆನ್

India Vs USA ICC World CupT20 Match- ವಿಶ್ವ ಚುಟುಕು ಕ್ರಿಕೆಟ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡವು ಅಮೆರಿಕ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಭಾರತ ಪ್ಲೇಯಿಂಗ್ ಇಲೆವೆನ್ ನಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುದು ಬಹಳ ಕುತೂಹಲ ಕೆರಳಿಸಿರುವ ಸಂಗತಿಯಗಿದೆ. ತಿಲಕ್ ವರ್ಮಾ ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದರಿಂದ ಪೈಪೋಟಿ ಹೆಚ್ಚಾಗಿದೆ. ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಇಬ್ಬರಲ್ಲೊಬ್ಬರು ಸ್ಥಾನ ಬಿಟ್ಟುಕೊಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ವಿಜಯ ಕರ್ನಾಟಕ 3 Feb 2026 7:05 pm