ಕಚೇರಿಯಲ್ಲಿ ಲೈಂಗಿಕ ಕಿರುಕುಳ ಆರೋಪ ಪ್ರಕರಣ : ಉದ್ಯೋಗಿಗಳಿಂದ ಅಧಿಕೃತ ದೂರು ದಾಖಲಾಗಿಲ್ಲ ಎಂದು ಟಿಸಿಎಸ್ ಸ್ಪಷ್ಟನೆ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯ ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಕಿರುಕುಳ ಮತ್ತು ಮತಾಂತರದ ಆರೋಪಗಳಿಗೆ ಸಂಬಂಧಿಸಿದಂತೆ ಕಂಪನಿಯು ಸ್ಪಷ್ಟನೆಯನ್ನು ನೀಡಿದೆ. ಈ ಕುರಿತು ಆಂತರಿಕ ತನಿಖೆ ನಡೆಸಿರುವ ಟಿಸಿಎಸ್, ತನ್ನ ಕಚೇರಿಯಲ್ಲಿ ಮತಾಂತರ ಅಥವಾ ಯಾವುದೇ ರೀತಿಯ ಕಿರುಕುಳಕ್ಕೆ ಸಂಬಂಧಿಸಿದ ಅಧಿಕೃತ ದೂರುಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಬನ್ನೇರುಘಟ್ಟ ಮೃಗಾಲಯಕ್ಕೆ 4 ಚೀತಾಗಳ ಆಗಮನ: ವಿಮಾನ ನಿಲ್ದಾಣದಲ್ಲಿ ಸಚಿವ ಈಶ್ವರ ಖಂಡ್ರೆ ಪರಿಶೀಲನೆ
ಬೆಂಗಳೂರು ಏ.18: ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಲಾದ 4 ಚೀತಾಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಕಲ್ಬುರ್ಗಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೈದರಾಬಾದ್ ಮಾರ್ಗವಾಗಿ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದ ಸಚಿವರು, ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿದರು. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಈ ಚೀತಾಗಳಿಗೆ ವಾತಾವರಣ ಹಾಗೂ ಹವಾಮಾನ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ, ಆರೋಗ್ಯ ಸಮಸ್ಯೆಗಳು ಎದುರಾಗದಂತೆ ಸೂಕ್ತ ನಿಗಾ ವಹಿಸಬೇಕು. ವನ್ಯಜೀವಿಗಳನ್ನು ಕ್ವಾರಂಟೈನಿನಲ್ಲಿ ಇರಿಸಿ, 30 ದಿನಗಳ ಕಾಲ ನಿಗದಿತ ಆಹಾರ ನೀಡಬೇಕು. ಈ ವಿದೇಶಿ ವನ್ಯಜೀವಿಗಳಿಗೆ ಯಾವುದೇ ಸೋಂಕು ಇದೆಯೇ ಎಂದು ಪರಿಶೀಲಿಸಬೇಕು. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸಾಗಿಸಬೇಕು ಎಂದು ಅಧಿಕಾರಿಗಳು ಮತ್ತು ಪಶುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ‘ಶಿವಂಗಿ’ ಎಂದು ಕರೆಯಲ್ಪಡುವ ಚೀತಾಗಳು ಇದ್ದವು. ಆದರೆ ರಾಜ್ಯದ ಕಾಡುಗಳಲ್ಲಿ ಇವು ಈಗ ನಾಮಾವಶೇಷವಾಗಿವೆ. ಹೀಗಾಗಿ ಮೃಗಾಲಯಗಳಲ್ಲಾದರೂ ಇವುಗಳನ್ನು ನೋಡುವ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಅವುಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಸೂಚನೆ ನೀಡಿದರು.
ಬಳ್ಳಾರಿಯಲ್ಲಿ ಅಖಿಲ ಭಾರತ 88ನೇ ಸಾಹಿತ್ಯ ಸಮ್ಮೇಳನಕ್ಕೆ ರಾಜಕೀಯ ಮೇಲಾಟ !
ಬಳ್ಳಾರಿ ಜಿಲ್ಲೆಯಲ್ಲಿ ನಡೆಯಬೇಕಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕೇವಲ ಘೋಷಣೆಗೆ ಸೀಮಿತವಾಗಿರುವುದು ಬೇಸರದ ಸಂಗತಿ. 1958ರಲ್ಲಿ ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ನಡೆದ 40ನೇ ಸಮ್ಮೇಳನದ ನಂತರ, ಸುಮಾರು ಆರೂವರೆ ದಶಕಗಳ ಸುದೀರ್ಘ ಕಾಯುವಿಕೆಯ ಫಲವಾಗಿ ಜಿಲ್ಲೆಗೆ ಈ ಅವಕಾಶ ಸಿಕ್ಕಿತ್ತು. ಜಿಲ್ಲೆಯ ಜನರ ಮತ್ತು ಸಂಘ-ಸಂಸ್ಥೆಗಳ ನಿರಂತರ ಹೋರಾಟದಿಂದಾಗಿ 87ನೇ ಸಮ್ಮೇಳನದಲ್ಲಿ ಈ ತೀರ್ಮಾನವನ್ನು ಅಧಿಕೃತವಾಗಿ ಕೈಗೊಳ್ಳಲಾಗಿತ್ತು.
ಒಂದೇ ದಿನ ಸರ್ವಋತು ಹವಾಮಾನಕ್ಕೆ ಸಾಕ್ಷಿಯಾದ ದೆಹಲಿ!
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸತತ ನಾಲ್ಕನೇ ದಿನ ತೀವ್ರ ಸೆಕೆಯ ವಾತಾವರಣ ಮುಂದುವರಿದಿದ್ದು, ಪ್ರಸಕ್ತ ಋತುವಿನಲ್ಲಿ ಇದೇ ಮೊದಲ ಬಾರಿಗೆ ತಾಪಮಾನ 41 ಡಿಗ್ರಿ ಸೆಲ್ಷಿಯಸ್ ತಲುಪಿದೆ. ಆದರೆ ಸಂಜೆ ಅನಿರೀಕ್ಷಿತ ಮಳೆ ಬಿದ್ದಿದ್ದು, ರಾತ್ರಿ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿದೆ. ಸಂಜೆ ವೇಳೆಗೆ ದೆಹಲಿ- ಎನ್ಸಿಆರ್ ಪ್ರದೇಶಗಳಲ್ಲಿ ಗುಡುಗು ಸಹಿತ ತೀವ್ರ ಮಳೆ, ರಭಸದ ಗಾಳಿ ಕಾರಣದಿಂದ ಪ್ರಮುಖ ಮಾರ್ಗಗಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಇದರಿಂದಾಗಿ ಪ್ರಯಾಣಿಕರು ಸಿಕ್ಕಿಹಾಕಿಕೊಂಡರು. ಆದರೆ ಶನಿವಾರ ಅಥವಾ ರವಿವಾರ ಮಳೆ ಅಥವಾ ಗಾಳಿ ಬಗ್ಗೆ ಐಎಂಡಿ ಯಾವುದೇ ಮುನ್ಸೂಚನೆ ನೀಡಿಲ್ಲ. ಗರಿಷ್ಠ ತಾಪಮಾನ ಶನಿವಾರ 39-41 ಡಿಗ್ರಿ ಸೆಲ್ಷಿಯಸ್ ಹಾಗೂ ರವಿವಾರ 40-42 ಡಿಗ್ರಿ ಇರುವ ನಿರೀಕ್ಷೆ ಇದೆ. ರವಿವಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಶುಕ್ರವಾರ ಬೆಳಿಗ್ಗೆ ತೇವಾಂಶದಿಂದ ಕೂಡಿದ್ದ ವಾತಾವರಣವಿದ್ದು, ನಗರದಲ್ಲಿ ಲಘು ಮಳೆಯಾಗಿದೆ. ಮಧ್ಯಾಹ್ನದ ವೇಳೆಗೆ ಆರ್ದ್ರತೆ ಹೆಚ್ಚಿದ್ದು, ತಾಪಮಾನವನ್ನು ವಾಡಿಕೆಗಿಂತ ಅಧಿಕಗೊಳಿಸಿದೆ. ಸಫ್ದರ್ಜಂಗ್ ಮಾಪನ ಕೇಂದ್ರದಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದ್ದು, ಇದು ವಾಡಿಕೆ ತಾಪಮಾನಕ್ಕಿಂತ 4 ಡಿಗ್ರಿಯಷ್ಟು ಅಧಿಕ. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಷಿಯಸ್ ಇದ್ದು, ಇದು ಕೂಡಾ ವಾಡಿಕೆಯ ಸರಾಸರಿಗಿಂತ ಅಧಿಕ. ಆದರೆ ಸಂಜೆ 4 ಗಂಟೆಯಿಂದ 6 ಗಂಟೆಯ ವೇಳೆಗೆ ಲಘು ಮಳೆಯ ಕಾರಣದಿಂದ ತಾಪಮಾನ ನಗರದ ವಿವಿಧೆಡೆಗಳಲ್ಲಿ 4-10 ಡಿಗ್ರಿವರೆಗೂ ಕುಸಿಯಿತು. ಇದರಿಂದ ಜನತೆ ನಿರಾಳವಾದರು. ಆದರೆ ಸಂಜೆ 5.30ರಿಂದ 8.30ರ ಅವಧಿಯಲ್ಲಿ ನಗರದಾದ್ಯಂತ ಭಾರಿ ಮಳೆ ಬಿದ್ದಿದ್ದು, ಸಫ್ದರ್ಜಂಗ್ ನಲ್ಲಿ 10.4 ಮಿಲಿಮೀಟರ್, ಪಾಲಂನಲ್ಲಿ 16 ಮಿಲಿಮೀಟರ್, ಪುಸಾದಲ್ಲಿ 8 ಮಿಲಿಮೀಟರ್, ಮಯೂರ ವಿಹಾರದಲ್ಲಿ 6.5 ಮಿಲಿಮೀಟರ್ ಮಳೆ ಬಿದ್ದಿದೆ. ಬಲವಾದ ಗಾಳಿ ಬೀಸುತ್ತಿದ್ದು, ರಾತ್ರಿ 8ರ ವೇಳೆಗೆ ಪಾಲಂನಲ್ಲಿ ಗಾಳಿಯ ವೇಗ ಗಂಟೆಗೆ 55 ಕಿಲೋಮೀಟರ್ ತಲುಪಿತ್ತು.
ಹಾರ್ಮುಝ್ ಜಲಸಂಧಿ ತೆರವು: ತೈಲ ವಹಿವಾಟುದಾರರಿಗೆ ಸಂತಸ
ಹೊಸದಿಲ್ಲಿ: ಜಾಗತಿಕ ವಾಣಿಜ್ಯ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸಿರುವುದು ಭಾರತದ ತೈಲ ಕಂಪನಿಗಳು, ರಸಗೊಬ್ಬರ ಉತ್ಪಾದಕರು ಮತ್ತು ರಫ್ತುದಾರರ ಸಂತಸಕ್ಕೆ ಕಾರಣವಾಗಿದೆ. ಹಾರ್ಮುಝ್ ಜಲಸಂಧಿ ದಾಟಲು 41 ಭಾರತ ಹಾಗೂ ವಿದೇಶಿ ಹಡಗುಗಳು ಭರ್ತಿಯಾಗಿ, ಅಗಲ ಕಿರಿದಾದ ಜಲಸಂಧಿಯನ್ನು ದಾಟಲು ಕಾಯುತ್ತಿವೆ. ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ಆರಂಭಿಸಿದ ಬಳಿಕ ಇರಾನ್ ಈ ಜಲಸಂಧಿಯಲ್ಲಿ ಸಂಚಾರ ನಿರ್ಬಂಧಗೊಳಿಸಿತ್ತು. ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಮುನ್ನ ಭಾರತದ ಕೃಷಿಕ್ಷೇತ್ರಕ್ಕೆ ಅಗತ್ಯವಾಗಿರುವ ರಸಗೊಬ್ಬರ ಹೊತ್ತಿರುವ 12ಕ್ಕೂ ಹೆಚ್ಚು ಹಡಗುಗಳು ಜಲಸಂಧಿ ದಾಟಲು ಕಾಯುತ್ತಿವೆ. ಹಾರ್ಮುಝ್ ಪಶ್ಚಿಮದಲ್ಲಿ ಕಾಯುತ್ತಿರುವ ಹಡಗುಗಳಲ್ಲಿ 15 ಭಾರತೀಯ ಹಡಗುಗಳಾಗಿದ್ದರೆ, ಉಳಿದ 26 ವಿದೇಶಿ ಹಡಗುಗಳಾಗಿವೆ. ಈ ಪೈಕಿ 10 ಕಚ್ಚಾ ತೈಲದ ಹಡಗುಗಳು, ನಾಲ್ಕು ಎಲ್ಪಿಜಿ ಟ್ಯಾಂಕರ್ಗಳು ಮತ್ತು ಮೂರು ಎಲ್ಎನ್ ಜಿ ಒಯ್ಯುವ ಹಡಗುಗಳು ಸೇರಿವೆ ಎಂದು ತಿಳಿದುಬಂದಿದೆ. ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದನ್ನು ಘೋಷಿಸಿದ ಬೆನ್ನಲ್ಲೇ ತೈಲ ಬೆಲೆ ಪ್ರತಿ ಬ್ಯಾರಲ್ ಗೆ 90 ಡಾಲರ್ ಗಿಂತ ಕೆಳಗಿಳಿದಿವೆ. ಬ್ರೆಂಟ್ ಫ್ಯೂಚರ್ಸ್ ಟ್ರೇಡಿಂಗ್ ಶೇಕಡ 11.5ರಷ್ಟು ಕುಸಿದು ಬ್ಯಾರಲ್ ಗೆ 87.9 ಡಾಲರ್ ಗಳಾಗಿವೆ. ತೈಲಬೆಲೆ ಇಳಿದಿರುವುದು ಸಾಗಾಣಿಕೆ ವೆಚ್ಚ ಕಡಿಮೆಯಾಗಲು ಕಾರಣವಾಗುತ್ತದೆ. ತೈಲ ಬೆಲೆ ಇಳಿಕೆಯಾಗಿರುವುದರ ಪರಿಣಾಮ ಅಂತರರಾಷ್ಟ್ರೀಯ ಸಾಗಾಣಿಕೆ ದರವೂ ಇಳಿಯುತ್ತದೆ. ಇದು ಎಲ್ಲ ವಲಯಗಳಿಗೆ ದೊಡ್ಡ ಲಾಭ ಎಂದು ಸಿಂಗಾಪುರ ಮೂಲದ ಶಿಪ್ಪಿಂಗ್ ಕಂಪನಿ ಎಕ್ಸಿಮ್ವಾಲಾ ಸೊಲ್ಯೂಶನ್ಸ್ ನಿರ್ದೇಶಕ ಡೇವ್ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ತೈಲ ಬೆಲೆ ಏರಿಕೆ ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ಪಶ್ಚಿಮ ಏಷ್ಯಾಗೆ ಈರುಳ್ಳಿ ರಫ್ತು ಬಹುತೇಕ ನಿಂತು ಹೋಗಿತ್ತು ಎಂದು ಪುಣೆ ಮೂಲದ ಸಂಗ್ಹಾರ್ ಎಕ್ಸ್ಪೋರ್ಟ್ಸ್ ಮಾಲೀಕ ಡ್ಯಾನಿಶ್ ಶಾ ಹೇಳಿದ್ದಾರೆ.
ತಾಪಮಾನ ಏರಿಕೆ, ಮತ್ಸ್ಯಕ್ಷಾಮದ ಆತಂಕ, ಅವಧಿಗೆ ಮುನ್ನವೇ ಲಂಗರು ಹಾಕುತ್ತಿವೆ ಬೋಟ್ಗಳು
ಕರಾವಳಿ ಭಾಗದಲ್ಲಿ ತಾಪಮಾನ ಏರಿಕೆ, ಸಮುದ್ರದ ಉಷ್ಣಾಂಶ ಹೆಚ್ಚಳ, ಮತ್ಸ್ಯಕ್ಷಾಮ ಹಾಗೂ ಇಂಧನ ಕೊರತೆಯಂತಹ ಸಾಲು ಸಾಲು ಸಮಸ್ಯೆಗಳಿಂದಾಗಿ ಮೀನುಗಾರಿಕಾ ವಲಯ ಇಂದು ತೀವ್ರ ಸಂಕಷ್ಟ ಎದುರಿಸುತ್ತಿದೆ. ಮುಂಗಾರು ನಿಷೇಧಕ್ಕೆ ಇನ್ನೂ ಕಾಲಾವಕಾಶವಿದ್ದರೂ, ಲಾಭದಾಯಕವಲ್ಲದ ಪರಿಸ್ಥಿತಿಯಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಂಗಳೂರು, ಮಲ್ಪೆ ಸೇರಿದಂತೆ ಪ್ರಮುಖ ಬಂದರುಗಳಲ್ಲಿ ಬಹುತೇಕ ಬೋಟ್ಗಳು ಈಗಾಗಲೇ ಮೀನುಗಾರಿಕೆ ಸ್ಥಗಿತಗೊಳಿಸಿ ಲಂಗರು ಹಾಕುತ್ತಿವೆ.
Karnataka Weather: ಏಪ್ರಿಲ್ 24ರವರೆಗೆ ಕರ್ನಾಟಕದ 25 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು
ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲ ಝಳ ತೀವ್ರಗೊಂಡಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಇಡೀ ರಾಜ್ಯದಲ್ಲೇ ಕಲಬುರಗಿ ಜಿಲ್ಲೆಯು ಗರಿಷ್ಠ 43.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸುವ ಮೂಲಕ ಅತ್ಯಂತ ಬಿಸಿಯಾದ ಪ್ರದೇಶವಾಗಿ ಹೊರಹೊಮ್ಮಿದೆ. ಉತ್ತರ ಒಳನಾಡಿನ ಹಲವೆಡೆ ಬಿಸಿಲು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, ಜನಜೀವನದ ಮೇಲೆ ಪರಿಣಾಮ
ಜಿಬಿಎ ಪಂಚ ನಗರ ಪಾಲಿಕೆಗಳ ಚುನಾವಣೆ ಸದ್ಯಕ್ಕಿಲ್ಲ; ಸೆ. 30 ರವರೆಗೆ ಪಾಲಿಕೆ ಚುನಾವಣೆಗೆ ಕಾಲಾವಧಿ ವಿಸ್ತರಿಸಲು ಕೋರಿಕೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವುದು ಸದ್ಯಕ್ಕೆ ಅನುಮಾನವಾಗಿ ಕಾಣುತ್ತಿದೆ. ಕಳೆದ ಐದೂವರೆ ವರ್ಷಗಳಿಂದಲೂ ವಿವಿಧ ನೆಪಗಳ ಮೂಲಕ ಚುನಾವಣೆಯನ್ನು ಮುಂದೂಡುತ್ತಾ ಬರಲಾಗುತ್ತಿದ್ದು, ಸದ್ಯದ ಬೆಳವಣಿಗೆಗಳು ಇದನ್ನು ಮತ್ತಷ್ಟು ವಿಳಂಬಗೊಳಿಸುವ ಮುನ್ಸೂಚನೆ ನೀಡುತ್ತಿವೆ.
ವಿದ್ಯಾರ್ಥಿಗೆ ಕಿರುಕುಳ : ಮೈಸೂರು ವಿವಿ ಕುಲಪತಿ ಪ್ರೊ.ಲೋಕನಾಥ್ ವಿರುದ್ಧ ಎಫ್ಐಆರ್ಗೆ ಸೂಚನೆ
ಮೈಸೂರು,ಎ.17: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಮೈಸೂರು ವಿವಿ ಕುಲಪತಿ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಮೈಸೂರು ವಿವಿಯ ಮಾನಸ ಗಂಗೋತ್ರಿಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕುಲಪತಿ ಸೇರಿ ಹಲವು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಆಯೋಗ ಆದೇಶಿಸಿದೆ. ಏನಿದು ಘಟನೆ : ಅರ್ಜಿದಾರ ಜಿ.ಎನ್.ಕಾರ್ತಿಕ್ ನೀಡಿದ ದೂರಿನ ಆಧಾರದ ಮೇಲೆ ಕುಲಪತಿ ಮತ್ತು ಪ್ರಾಧ್ಯಾಪಕರು ವಿದ್ಯಾರ್ಥಿಗೆ ಜಾತಿ ಆಧಾರಿತ ಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನ್ಯಾಯ ಕೇಳಲು ಹೋದ ವಿದ್ಯಾರ್ಥಿಗೆ ಅವಮಾನಕಾರಿ ವರ್ತನೆ, ಮಾನಸಿಕ ಹಿಂಸೆ, ಜೊತೆಗೆ ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ಆರೋಪಗಳು ಕೂಡ ದಾಖಲಾಗಿದೆ. ದೂರು ನೀಡಲು ಹೋದಾಗ ಪೊಲೀಸರು ಸಹ ಸರಿಯಾದ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪ ಕೂಡ ಹೊರಬಂದಿದೆ. ಆಯೋಗದ ಕಠಿಣ ಆದೇಶ : ಪ್ರೊ.ಎನ್.ಕೆ.ಲೋಕನಾಥ್ ಸೇರಿ ಡಾ.ಎಂ.ಸುರೇಶ್ ಬೆಂಜಮೀನ್, ಪ್ರೊ.ಆರ್.ಎಸ್.ಉಮಾಕಾಂತ್ ಹಾಗೂ ಅಶ್ವಥ್ ಪ್ರಸಾದ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆ ಅಡಿಯಲ್ಲಿ ತಕ್ಷಣ ಎಫ್ ಐಆರ್ ದಾಖಲಿಸಲು ಜಯಲಕ್ಷ್ಮೀಪುರಂ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಕಾಮಿಡಿಯನ್ ಫಾರೂಕಿ ಶೋಗೆ ವಿರೋಧ
ಬೆಂಗಳೂರು : ಬೆಂಗಳೂರಿನಲ್ಲಿ ಎ.18ರಂದು ನಡೆಯಲಿರುವ ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕಾರ್ಯಕ್ರಮಕ್ಕೆ ಕೆಲ ಸಂಘಟನೆಗಳಿಂದ ಆಕ್ಷೇಪ ಕೇಳಿಬಂದಿದ್ದು, ಕಾರ್ಯಕ್ರಮ ರದ್ದು ಪಡಿಸುವಂತೆ ಕೋರಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹಿಂದೂ ಜನಜಾಗೃತಿ ಸಮಿತಿ ಮನವಿ ಸಲ್ಲಿಸಿದೆ ಎಂದು ವರದಿಯಾಗಿದೆ. 2021ರಲ್ಲಿ ಇಂದೋರ್ನಲ್ಲಿ ಮುನಾವರ್ ಫಾರೂಕಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ಗಳಡಿ ಫಾರೂಕಿ ಮೇಲೆ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಸಂಬಂಧ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆಯಾದರೂ, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಮನವಿಯಲ್ಲಿ ಸಮಿತಿ ಹೇಳಿದೆ ಎನ್ನಲಾಗಿದೆ.
ಮುಸ್ಲಿಮ್ ನಾಯಕರ ಮೇಲಿನ ಕ್ರಮಕ್ಕೆ ಸಂಪುಟ ಸಭೆಯಲ್ಲಿ ಸಚಿವರ ಆಕ್ರೋಶ
ಬೆಂಗಳೂರು : ಮುಸ್ಲಿಮ್ ನಾಯಕರ ವಿರುದ್ಧದ ಶಿಸ್ತು ಕ್ರಮ ಮತ್ತು ಚುನಾವಣಾ ವೈಫಲ್ಯದ ವಿಚಾರ ವಿಧಾನಸೌಧದಲ್ಲಿ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸದ್ದು ಮಾಡಿದ್ದು, ಹಲವು ಸಚಿವರು ಏಕಾಏಕಿ ಕೈಗೊಂಡಿರುವ ಕ್ರಮಕ್ಕೆ ಗರಂ ಆದರು ಎಂದು ಗೊತ್ತಾಗಿದೆ. ವಿಧಾನ ಪರಿಷತ್ನ ಸದಸ್ಯರಾದ ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ವಿರುದ್ಧ ತೆಗೆದುಕೊಳ್ಳಲಾಗಿರುವ ಕಠಿಣ ಕ್ರಮದ ಬಗ್ಗೆ ಹಲವು ಸಚಿವರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಅದರಲ್ಲೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿ, ಮುಸ್ಲಿಮ್ ಸಮುದಾಯದ ಬೆಂಬಲವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಉಲ್ಲೇಖಿಸಿದರು ಎನ್ನಲಾಗಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹ ಅಬ್ದುಲ್ ಜಬ್ಬಾರ್ ಅವರ ಮೇಲೆ ಕೈಗೊಂಡ ಶಿಸ್ತು ಕ್ರಮದ ಕುರಿತು ಅಸಮಾಧಾನ ಹೊರಹಾಕಿದರು. ಈ ನಡುವೆ ಸಚಿವ ಝಮೀರ್ ಅಹ್ಮದ್ ಖಾನ್ ಅವರು, ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಆಗ ನಾನು ಕೇರಳ ಚುನಾವಣಾ ಪ್ರಚಾರದಲ್ಲಿದ್ದೆ ಎಂದು ತಮ್ಮ ಮೇಲಿನ ಆರೋಪಗಳಿಗೆ ಸಮಜಾಯಿಷಿ ನೀಡಿದರು ಎನ್ನಲಾಗಿದೆ. ‘ನನ್ನ-ಝಮೀರ್ ಮಧ್ಯೆ ಗಲಾಟೆ ನಡೆದಿಲ್ಲ’ : ಸಚಿವ ಸಂಪುಟ ಸಭೆಯಲ್ಲಿ ಗಲಾಟೆ ನಡೆದಿದೆ ಎಂದು ಪತ್ರಿಕೆಗಳಲ್ಲಿ ಬರೆಯಲಾಗಿದೆ. ಆದರೆ, ಅದು ಸುಳ್ಳು. ನನ್ನ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಮಧ್ಯೆ ಯಾವ ಗಲಾಟೆ ನಡೆದಿಲ್ಲ.ಝಮೀರ್ ನನ್ನ ಜತೆ ಮಾತನಾಡಿಲ್ಲ, ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗಿಲ್ಲ. ನನ್ನ ಕುಟುಂಬದ ಕೆಲಸದ ಹಿನ್ನೆಲೆಯಲ್ಲಿ ಸಂಪುಟ ಸಭೆ ಮುಗಿಸಿಕೊಂಡು ನಾನು ಹೋದೆ. ಅದರ ಹೊರತಾಗಿ ಬೇರೆ ಯಾವ ವಿಚಾರವೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಭೆಯಿಂದ ಹೊರಹೋದ ಡಿಕೆಶಿ : ಸಭೆಯಲ್ಲಿ ಮುಸ್ಲಿಮ್ ನಾಯಕರ ವಿಚಾರ ಸದ್ದು ಮಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಯಾರು ಏನು ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ ಎನ್ನುವುದಕ್ಕೆ ನನ್ನ ಬಳಿ ಎಲ್ಲ ದಾಖಲೆಗಳಿವೆ’ ಎಂದು ಉಲ್ಲೇಖಿಸಿದರು ಎನ್ನಲಾಗಿದೆ. ಆಗ ಕೆಲ ಸಚಿವರು ವಾದಿಸಲು ಮುಂದಾದ ಹಿನ್ನೆಲೆ ಅಸಮಾಧಾನಗೊಂಡ ಶಿವಕುಮಾರ್ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಭೆಯಿಂದ ಹೊರನಡೆದರು ಎಂದು ಮೂಲಗಳು ತಿಳಿಸಿವೆ.
IPL 2026 | ಶುಭಮನ್ ಗಿಲ್ ಅರ್ಧಶತಕ, ಮಿಂಚಿದ ರಬಾಡ, ಸಿರಾಜ್; ಕೆಕೆಆರ್ ವಿರುದ್ಧ ಗುಜರಾತ್ ಟೈಟಾನ್ಸ್ ಜಯಭೇರಿ
ಅಹ್ಮದಾಬಾದ್, ಎ.17: ನಾಯಕ ಶುಭಮನ್ ಗಿಲ್ ಅವರ ಅರ್ಧಶತಕ (86 ರನ್, 50 ಎಸೆತ, 8 ಬೌಂಡರಿ, 4 ಸಿಕ್ಸರ್), ವೇಗಿಗಳಾದ ಕಾಗಿಸೊ ರಬಾಡ (3-29) ಹಾಗೂ ಮುಹಮ್ಮದ್ ಸಿರಾಜ್ (2-23) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಐದು ವಿಕೆಟ್ ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಗುಜರಾತ್ ತಂಡವು ತಾನಾಡಿದ ಐದನೇ ಪಂದ್ಯದಲ್ಲಿ ಮೂರನೇ ಗೆಲುವು ದಾಖಲಿಸಿತು. ಮತ್ತೊಂದೆಡೆ ಕೆಕೆಆರ್ ತಂಡವು ಐದನೇ ಬಾರಿ ಸೋಲನುಭವಿಸಿ, ಗೆಲುವಿನ ಖಾತೆ ತೆರೆಯುವಲ್ಲಿ ಮತ್ತೊಮ್ಮೆ ವಿಫಲವಾಯಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 25ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 181 ರನ್ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 19.4 ಓವರ್ ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 181 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ಗಿಲ್ ಹಾಗೂ ಸಾಯಿ ಸುದರ್ಶನ್ (22 ರನ್, 16 ಎಸೆತ, 1 ಬೌಂಡರಿ, 2 ಸಿಕ್ಸರ್) 5.1 ಓವರ್ಗಳಲ್ಲಿ 57 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಸುದರ್ಶನ್ ಔಟಾದ ನಂತರ ಬಟ್ಲರ್ (25 ರನ್, 15 ಎಸೆತ, 2 ಬೌಂಡರಿ, 2 ಸಿಕ್ಸರ್) ಅವರೊಂದಿಗೆ ಎರಡನೇ ವಿಕೆಟ್ಗೆ 38 ರನ್ ಸೇರಿಸಿದ ಗಿಲ್ ಅವರು, ಸುಂದರ್ (13 ರನ್, 13 ಎಸೆತ) ಅವರೊಂದಿಗೆ ಮೂರನೇ ವಿಕೆಟ್ ಗೆ 46 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಗ್ಲೆನ್ ಫಿಲಿಪ್ಸ್ (19 ರನ್, 16 ಎಸೆತ) ಹಾಗೂ ರಾಹುಲ್ ಟೆವಾಟಿಯಾ (ಔಟಾಗದೆ 7 ರನ್, 6 ಎಸೆತ) ಎರಡು ಎಸೆತಗಳು ಬಾಕಿ ಇರುವಾಗಲೇ ರೋಚಕ ಗೆಲುವು ತಂದುಕೊಟ್ಟರು. ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿ (2-34) ಯಶಸ್ವಿ ಪ್ರದರ್ಶನ ನೀಡಿದರು. ಇದಕ್ಕೂ ಮೊದಲು ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಏಕಾಂಗಿ ಹೋರಾಟ (79 ರನ್, 46 ಎಸೆತ, 7 ಬೌಂಡರಿ, 4 ಸಿಕ್ಸರ್) ನೆರವಿನಿಂದ ಕೋಲ್ಕತಾ ತಂಡವು ನಿಗದಿತ 20 ಓವರ್ ಗಳಲ್ಲಿ 180 ರನ್ ಗಳಿಸಿ ಆಲೌಟ್ ಆಯಿತು. ಟಿಮ್ ಸೀಫರ್ಟ್ (19 ರನ್, 14 ಎಸೆತ) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ನಾಯಕ ರಹಾನೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡರು. ರಹಾನೆ ಇನಿಂಗ್ಸ್ನ ನಾಲ್ಕನೇ ಎಸೆತದಲ್ಲೇ ಮುಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ಎ. ರಘುವಂಶಿ (8 ರನ್, 4 ಎಸೆತ) ವಿಕೆಟ್ ಒಪ್ಪಿಸಿದಾಗ ಕೆಕೆಆರ್ ನಾಲ್ಕನೇ ಓವರ್ನಲ್ಲಿ 32 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆಗ ಕೆಕೆಆರ್ಗೆ ಆಸರೆಯಾದ ಗ್ರೀನ್ ಅವರು ರೋವ್ಮನ್ ಪೊವೆಲ್ (27 ರನ್, 20 ಎಸೆತ, 2 ಬೌಂಡರಿ, 2 ಸಿಕ್ಸರ್) ಅವರೊಂದಿಗೆ ನಾಲ್ಕನೇ ವಿಕೆಟ್ಗೆ 43 ಎಸೆತಗಳಲ್ಲಿ 55 ರನ್ ಜೊತೆಯಾಟದಲ್ಲಿ ಭಾಗಿಯಾದರು. ಪೊವೆಲ್ ಔಟಾದ ನಂತರ ಅನುಕೂಲ್ ರಾಯ್ (9 ರನ್) ಜೊತೆ ಕೈಜೋಡಿಸಿದ ಗ್ರೀನ್ ಅವರು ಆರನೇ ವಿಕೆಟ್ಗೆ ಕೇವಲ 23 ಎಸೆತಗಳಲ್ಲಿ 60 ರನ್ ಸೇರಿಸಿದರು. ರಿಂಕು ಸಿಂಗ್ (1 ರನ್), ರಮಣ್ದೀಪ್ ಸಿಂಗ್ (17 ರನ್, 8 ಎಸೆತ) ಹಾಗೂ ಸುನೀಲ್ ನರೇನ್ (0 ರನ್) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಗುಜರಾತ್ ತಂಡದ ಪರವಾಗಿ ವೇಗದ ಬೌಲರ್ಗಳಾದ ಕಾಗಿಸೊ ರಬಾಡ (3-29) ಹಾಗೂ ಮುಹಮ್ಮದ್ ಸಿರಾಜ್ (2-23) ಐದು ವಿಕೆಟ್ಗಳನ್ನು ಹಂಚಿಕೊಂಡರು. ಅಶೋಕ್ ಶರ್ಮಾ (2-45) ದುಬಾರಿ ಬೌಲರ್ ಎನಿಸಿಕೊಂಡರೂ ಎರಡು ವಿಕೆಟ್ಗಳನ್ನು ಪಡೆಯುವಲ್ಲಿ ಶಕ್ತರಾದರು. ಪ್ರಸಿದ್ಧ ಕೃಷ್ಣ (1-32) ಹಾಗೂ ರಾಸಿಕ್ ಖಾನ್ (1-44) ತಲಾ ಒಂದು ವಿಕೆಟ್ ಪಡೆದರು. ಈ ತನಕ ಒಂದೂ ಪಂದ್ಯವನ್ನು ಗೆಲ್ಲದ ಕೆಕೆಆರ್ ತಂಡವು ತನ್ನ ಅಗ್ರ ಸರದಿಯಲ್ಲಿ ಪ್ರಮುಖ ಬದಲಾವಣೆ ಮಾಡಿತು. ಫಿನ್ ಅಲೆನ್ ಅವರನ್ನು ಹೊರಗಿಟ್ಟು ನ್ಯೂಝಿಲ್ಯಾಂಡ್ನ ಇನ್ನೋರ್ವ ಆಟಗಾರ ಟಿಮ್ ಸೀಫರ್ಟ್ಗೆ ಅವಕಾಶ ನೀಡಿತು. ಗುಜರಾತ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದಿದ್ದ ತಂಡವನ್ನೇ ಕಣಕ್ಕಿಳಿಸಿತು. ಸಂಕ್ಷಿಪ್ತ ಸ್ಕೋರ್ ಕೋಲ್ಕತಾ ನೈಟ್ ರೈಡರ್ಸ್: 20 ಓವರ್ಗಳಲ್ಲಿ 180 ರನ್ಗೆ ಆಲೌಟ್ (ಕ್ಯಾಮರೂನ್ ಗ್ರೀನ್ 79, ಪೊವೆಲ್ 27, ಸೀಫರ್ಟ್ 19, ರಮಣ್ದೀಪ್ 17, ಕಾಗಿಸೊ ರಬಾಡ 3-29, ಮುಹಮ್ಮದ್ ಸಿರಾಜ್ 2-23, ಅಶೋಕ್ ಶರ್ಮಾ 2-45) ಗುಜರಾತ್ ಟೈಟಾನ್ಸ್: 19.4 ಓವರ್ಗಳಲ್ಲಿ 181/5 (ಶುಭಮನ್ ಗಿಲ್ 86, ಬಟ್ಲರ್ 25, ಸುದರ್ಶನ್ 22, ಚಕ್ರವರ್ತಿ 2-34)
ಹರಪನಹಳ್ಳಿ | ಬೈಕ್ ಕಳವು ಪ್ರಕರಣ : ಇಬ್ಬರ ಬಂಧನ, 16 ಬೈಕ್ ವಶ
ಹರಪನಹಳ್ಳಿ, ಎ.17: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಅರಸೀಕೆರೆ ಪೊಲೀಸರು, ಅವರಿಂದ 16 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಅರಸೀಕೆರೆ ಅಲ್ತಾಪ್ ಹಾಗೂ ಸಿಂಗ್ರಿಹಳ್ಳಿ ಗ್ರಾಮದ ಜಾಬೀರ್ ಮತ್ತು ಶಾಹೀದ್ ಬಂಧಿತ ಆರೋಪಿಗಳಾಗಿದ್ದಾರೆ. ಫೆಬ್ರವರಿ 1ರಂದು ಬೇವಿನಹಳ್ಳಿ ದೊಡ್ಡ ತಾಂಡ ಹಾಗೂ ಮಾರ್ಚ್ 31ರಂದು ಮಾದಿಹಳ್ಳಿ ಗ್ರಾಮಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಸುಮಾರು ₹6.65 ಲಕ್ಷ ಮೌಲ್ಯದ 16 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಬೈಕ್ಗಳಲ್ಲಿ ಅರಸೀಕೆರೆ ಠಾಣಾ ವ್ಯಾಪ್ತಿಯ 8, ರಾಣೇಬೆನ್ನೂರು 3, ದಾವಣಗೆರೆ 2 ಹಾಗೂ ಚಿಗಟೇರಿ, ಹಲುವಾಗಲು ಮತ್ತು ಹರಪನಹಳ್ಳಿ ಠಾಣಾ ವ್ಯಾಪ್ತಿಯ ತಲಾ ಒಂದರಂತೆ ವಾಹನಗಳು ಸೇರಿವೆ. ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ವಿಜಯನಗರ ಎಸ್ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಕ್ಕಿ ಜ್ವರ ದೃಢ; ಆರೋಗ್ಯ ಇಲಾಖೆ ಅಲರ್ಟ್! ಕೋಳಿ ಮಾಂಸ ತಿನ್ನುವವರಿಗೆ ಮಹತ್ವದ ಸೂಚನೆ
ಬೆಂಗಳೂರಿನ ಹೆಸರಘಟ್ಟದ ಮುತ್ಕೂರು ಗ್ರಾಮದಲ್ಲಿ ಹಕ್ಕಿಜ್ವರದೃಢಪಟ್ಟಿದ್ದು, ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ. ಸೋಂಕಿತ ಪ್ರದೇಶದ ಸುತ್ತ 10 ಕಿ.ಮೀ ಕಣ್ಗಾವಲು ವಲಯ ನಿರ್ಮಿಸಲಾಗಿದೆ. ಮೃತ ಹಕ್ಕಿಗಳಿಂದ ದೂರವಿರಲು ಮತ್ತು ಮಾಂಸ ಹಾಗೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವಂತೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆ ಇದರ ಪ್ರಮುಖ ಲಕ್ಷಣಗಳು.
‘ಸಂಪೂರ್ಣ ಮುಕ್ತ’ವಲ್ಲ ಹಾರ್ಮುಝ್ ಜಲಸಂಧಿ: ನಿಯಂತ್ರಿತ ಮಾರ್ಗ ಕಡ್ಡಾಯವೆಂದ ಇರಾನ್
ಟೆಹ್ರಾನ್/ಬೈರೂತ್, ಎ. 17: ಲೆಬನಾನ್ ಕದನ ವಿರಾಮದ 10 ದಿನಗಳ ಅವಧಿಯಲ್ಲಿ ಹಾರ್ಮುಝ್ ಜಲಸಂಧಿಯನ್ನು “ಸಂಪೂರ್ಣವಾಗಿ ಮುಕ್ತ” ಎಂದು ಘೋಷಿಸಿರುವ ಇರಾನ್, ಅದೇ ವೇಳೆ ನೌಕಾಸಂಚಾರಕ್ಕೆ ನಿಯಂತ್ರಿತ ಶರತ್ತು ವಿಧಿಸಿದೆ. ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳು “ಸಂಘಟಿತ ಮಾರ್ಗ”ವನ್ನು ಅನುಸರಿಸುವುದು ಕಡ್ಡಾಯ ಎಂದು ತಿಳಿಸಿದೆ. ಈ ಬಗ್ಗೆ Aljazeera ಗೆ ಪ್ರತಿಕ್ರಿಯಿಸಿದ ಮಿಲಿಟರಿ ಹಾಗೂ ರಾಜತಾಂತ್ರಿಕ ವಿಶ್ಲೇಷಕ ಅಲೆಕ್ಸಾಂಡ್ರು ಹುಡಿಸ್ಟಿಯನು, ಈ ಸಂಘಟಿತ ಮಾರ್ಗವು ಹಡಗುಗಳನ್ನು ಇರಾನ್ ನ ಪ್ರಾದೇಶಿಕ ಜಲಪ್ರದೇಶದೊಳಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದರಿಂದ ಟೆಹ್ರಾನ್ ಗೆ ಪರಿಸ್ಥಿತಿಯ ಮೇಲೆ ನೇರ ನಿಯಂತ್ರಣ ಇಟ್ಟುಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ಅವರು ವಿವರಿಸಿದರು. ““ಉಭಯ ಪಕ್ಷಗಳಲ್ಲಿ ನಂಬಿಕೆ ಕೊರತೆ ಇದೆ. ಹೀಗಾಗಿ ಒತ್ತಡ ಹೇರುವ ಮಾರ್ಗಗಳನ್ನು ಬಿಡಲು ಯಾರೂ ಸಿದ್ಧರಿಲ್ಲ,” ಎಂದು ಹುಡಿಸ್ಟಿಯನು ಹೇಳಿದರು. ಅಮೆರಿಕವೂ ತನ್ನ ದಿಗ್ಬಂಧನವನ್ನು ಮುಂದುವರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಾರ್ಮುಝ್ ಜಲಸಂಧಿಯಲ್ಲಿ ನೌಕಾಸಂಚಾರ ಪುನರಾರಂಭದ ಈ ಹಂತವನ್ನು ‘ವಿಶ್ವಾಸ ನಿರ್ಮಾಣ ಪ್ರಕ್ರಿಯೆ’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹಾರ್ಮುಝ್ ಜಲಸಂಧಿ ಪುನರಾರಂಭ: ಪಾಕಿಸ್ತಾನಕ್ಕೆ ಧನ್ಯವಾದ ತಿಳಿಸಿದ ಟ್ರಂಪ್
ಶೆಹಬಾಝ್ ಷರೀಫ್, ಅಸಿಮ್ ಮುನೀರ್ ಅದ್ಭುತ ವ್ಯಕ್ತಿಗಳು ಎಂದು ಪೋಸ್ಟ್
Kalaburagi | ವಿಶ್ವ ಕಾರ್ಮಿಕ ದಿನಾಚರಣೆಯನ್ನು ನಾಡಹಬ್ಬದಂತೆ ಆಚರಿಸಲು ಆಗ್ರಹ
ಕಲಬುರಗಿ: ವಿಶ್ವ ಕಾರ್ಮಿಕ ದಿನಾಚರಣೆಯನ್ನು ರಾಷ್ಟ್ರ ಹಾಗೂ ನಾಡ ಹಬ್ಬದ ಮಾದರಿಯಲ್ಲಿ ಸಾರ್ವತ್ರಿಕವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಮೇ 1ರಂದು ಆಚರಿಸುವ ವಿಶ್ವ ಕಾರ್ಮಿಕ ದಿನಾಚರಣೆ ಇನ್ನೂ ಕಾಟಾಚಾರದ ಮಟ್ಟದಲ್ಲೇ ಸೀಮಿತವಾಗಿದ್ದು, ಕಾರ್ಮಿಕರ ಹಕ್ಕುಗಳ ಈ ಮಹತ್ವದ ದಿನವನ್ನು ಎಲ್ಲಾ ವರ್ಗದ ಜನರನ್ನು ಒಳಗೊಂಡಂತೆ ಆಚರಿಸುವ ಅಗತ್ಯವಿದೆ ಎಂದು ಸಂಘಟನೆ ಮುಖಂಡರು ಒತ್ತಾಯಿಸಿದರು. ಆಗಸ್ಟ್ 15 ಮತ್ತು ಜನವರಿ 26ರಂತಹ ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ಕಾರ್ಮಿಕ ದಿನಾಚರಣೆಯನ್ನು ನಾಡಹಬ್ಬದ ರೀತಿಯಲ್ಲಿ ಭವ್ಯವಾಗಿ ಆಚರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮುಂದಿನ ಸಾಲಿನಿಂದಲೇ ರಾಜ್ಯಾದ್ಯಂತ ಈ ಆಚರಣೆಯನ್ನು ವ್ಯಾಪಕವಾಗಿ ಜಾರಿಗೊಳಿಸಿ, ಕರ್ನಾಟಕವನ್ನು ದೇಶಕ್ಕೆ ಮಾದರಿಯನ್ನಾಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಭೀಮರಾಯ ಕಂದಳ್ಳಿ, ರಾಜು ಜಮಾದಾರ್, ಮರೆಪ್ಪ ರೊಟ್ನಗಿ, ಶಿವಕುಮಾರ್ ಬೆಳಗೇರಿ, ಚಂದ್ರಕಾಂತ ತುಪ್ಪದಕರ್, ಅಣ್ಣಯ್ಯ ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವಮೊಗ್ಗ: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿರುವ ನ್ಯಾಯಾಲಯದ ತೀರ್ಪನ್ನು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ. ಈ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಮೂಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಬಲ ಮತ್ತು ಅಧಿಕಾರದ ಮದದಿಂದ ಕೊಲೆ ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದವರಿಗೆ ಈ ತೀರ್ಪು ತಕ್ಕ ಸಂದೇಶ ನೀಡಿದೆ. ಅಂದಿನ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಸಚಿವರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ನಾಚಿಕೆಗೇಡು. ಇಂತಹವರನ್ನು ಸಂಭಾಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ವಿನಯ್ ಕುಲಕರ್ಣಿ ಅವರು ಪ್ರಕರಣದ ಹಾದಿ ತಪ್ಪಿಸಲು ಪೊಲೀಸರನ್ನೇ ಬಳಸಿಕೊಂಡಿದ್ದಾರೆ. ಅಂದು ಈ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಯೊಬ್ಬರಿಗೆ ಸಿದ್ದರಾಮಯ್ಯ ಅವರು ಸಿಎಂ ಪದಕ ಕೊಡಿಸಿ ಗೌರವಿಸಿದ್ದರು. ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಒಳ್ಳೆಯ ಹೆಸರಿದೆ. ಆದರೆ, ಕಾಂಗ್ರೆಸ್ ಶಾಸಕರು ಮತ್ತು ಸಚಿವರು ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ಸಮವಸ್ತ್ರ ಹಾಕಿಕೊಂಡು ಏನೂ ಮಾಡಬಹುದು ಎಂಬ ಭ್ರಮೆಯಲ್ಲಿದ್ದ ಕೆಲವು ಅಧಿಕಾರಿಗಳಿಗೆ ಈ ತೀರ್ಪು ಆಘಾತ ತಂದಿದೆ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.
35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಸೆರೆ
ಮಂಗಳೂರು, ಎ.17: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ ಪೆರುವಾಯಿ ನಿವಾಸಿ ಅಬ್ಬಾಸ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಎ.16ರಂದು ಅಬ್ಬಾಸ್ ವಿದೇಶದಿಂದ ಹಿಂತಿರುಗುವಾಗ ಇಮಿಗ್ರೇಶನ್ ವಿಭಾಗದ ಸಹಕಾರದಿಂದ, ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಮೋಹನ ಮತ್ತು ವೆಂಕಪ್ಪದಸ್ತಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Aland | ಖಜೂರಿಯಲ್ಲಿ ಕೋರಣೇಶ್ವರ ಜಾತ್ರೆ: 93ನೇ ಮಹಾರಥೋತ್ಸವ ಅದ್ಧೂರಿ
ಆಳಂದ: ತಾಲೂಕಿನ ಖಜೂರಿ ಗ್ರಾಮದಲ್ಲಿ ಆರಾಧ್ಯ ದೈವ ಶ್ರೀ ಕೋರಣೇಶ್ವರ ವಿರಕ್ತ ಮಠದ ಶ್ರೀ ಕೋರಣೇಶ್ವರರ ಜಾತ್ರಾ ಮಹೋತ್ಸವವು ಅಪಾರ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದ ನಡುವೆ 93ನೇ ಮಹಾರಥೋತ್ಸವದೊಂದಿಗೆ ಅದ್ಧೂರಿಯಾಗಿ ನೆರವೇರಿತು. ಎ.11ರಿಂದ ಆರಂಭಗೊಂಡ ಜಾತ್ರೆ, ಎ.17ರಂದು ಮಹಾರಥೋತ್ಸವದೊಂದಿಗೆ ಭಕ್ತಿಭಾವದ ವಾತಾವರಣದಲ್ಲಿ ನಡೆಯಿತು. ಖಜೂರಿ ಸೇರಿದಂತೆ ನೆರೆಯ ಗ್ರಾಮಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಹರಕೆ ತೀರಿಸಿದರು. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಪಲ್ಲಕ್ಕಿ ಉತ್ಸವ, ಭವ್ಯ ಮೆರವಣಿಗೆ ಹಾಗೂ ಮಹಾರಥೋತ್ಸವ ನಡೆದವು. ಸಾಂಪ್ರದಾಯಿಕ ವಾದ್ಯಗಳು, ಡೊಳ್ಳು-ತಾಳಗಳ ನಾದ ಹಾಗೂ ವಿವಿಧ ಕಲಾತ್ಮಕ ಕುಣಿತಗಳು ಜಾತ್ರೆಗೆ ವಿಶೇಷ ರಂಗು ನೀಡಿದವು. ಪ್ರಯಾಗರಾಜ್ನ ನಾಗಾ ಸಾಧುಗಳ ಆಗಮನವೂ ಭಕ್ತರಲ್ಲಿ ವಿಶೇಷ ಆಸಕ್ತಿ ಮೂಡಿಸಿತು. ಗುರುಮಿಠಕಲ್ ಖಾಸಾಮಠದ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಪ್ರತಿದಿನ ಭಜನೆ, ದಾಸೋಹ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಏಪ್ರಿಲ್ 16ರಂದು ಮಹಾಪೂಜೆ, ಕುಂಭಕಳಶ ಹಾಗೂ ನಂದಿಕೋಲ ಮಹಾಪೂಜೆ ನೆರವೇರಿತು. ಎ.17ರಂದು ಬೆಳಗಿನ ಜಾವ ವಿಶೇಷ ಪೂಜೆಗಳ ಬಳಿಕ ರಥಕ್ಕೆ ಕಲಶಾರೋಹಣ ನಡೆದಿದ್ದು, ಸಂಜೆ ಭವ್ಯ ರಥೋತ್ಸವ ಭಕ್ತರ ಜಯಘೋಷಗಳ ನಡುವೆ ಅದ್ದೂರಿಯಾಗಿ ನೆರವೇರಿತು. ರಾತ್ರಿ ಗೀ-ಗೀ ಪದಗಳ ಸಾಂಸ್ಕೃತಿಕ ಕಾರ್ಯಕ್ರಮವೂ ಜನಮನ ಸೆಳೆಯಿತು. ಜಾತ್ರೆಯ ಕೊನೆಯ ದಿನವಾದ ಎ.18ರಂದು ಕುಸ್ತಿ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಲಕ್ಷ ದೀಪೋತ್ಸವದೊಂದಿಗೆ ಜಾತ್ರೆಗೆ ಭವ್ಯ ಸಮಾರೋಪ ನಡೆಯಲಿದೆ. ಈ ಮಹಾರಥೋತ್ಸವದಲ್ಲಿ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಈ ಮಹೋತ್ಸವದ ಯಶಸ್ಸಿಗೆ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಭೀಮರಾವ್ ಢಗೆ, ಉಪಾಧ್ಯಕ್ಷ ಕಬಸಪ್ಪ ಸುಲ್ತಾನಪೂರೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಶ್ರೀಶೈಲ ಎಸ್. ಬಂಗರಗೆ, ಅಶೋಕ ಬಿ. ಹೊಸಮನಿ, ಮಲ್ಲಣ್ಣಾ ಎನ್. ಹೆಬಳೆ, ತಿಪ್ಪಣಾ ಎಸ್. ಬಂಡೆ, ಶಿವಬಸಪ್ಪಾ ಆರ್. ಶಿವಶೆಟ್ಟಿ, ದಯಾನಂದ ಅಲ್ದಿ, ಮತ್ತು ಜಾತ್ರಾ ಕಮೀಟಿ ಅಧ್ಯಕ್ಷ ವಿಜಯಕುಮಾರ ಅಲ್ದಿ, ಮಹಾಂತೇಶ ಅಲ್ದಿ ಹಾಗೂ ಹಣಮಂತ ಸಾವಳೇಶ್ವರ ಸೇರಿದಂತೆ ಸಕಲ ಗ್ರಾಮದ ಭಕ್ತಾದಿಗಳು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮದ ಭಕ್ತಾದಿಗಳು ಅಪಾರ ಶ್ರಮವಹಿಸಿದರು.
ಕೋಲಾರ : ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಿ ವಾಪಸ್ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಮುಸ್ಲಿಂ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಶುಕ್ರವಾರ ಮಧ್ಯಾಹ್ನ ನಮಾಝ್ ಬಳಿಕ ನಗರದ ಟಿಪ್ಪು ಸುಲ್ತಾನ್ ರಸ್ತೆಯಲ್ಲಿನ ಬಿಲಾಲ್ ಮಸೀದಿ ಮುಂದೆ ಸೇರಿದ ಸಮುದಾಯದ ಮುಖಂಡರು, ಬಿತ್ತಿಪತ್ರ ಹಿಡಿದು, ನಸೀರ್ ಅಹ್ಮದ್ ಪರ ಘೋಷಣೆ ಕೂಗಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಪ್ಸರ್ ಮಾತನಾಡಿ, ‘ನಾವು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ; ನಮ್ಮ ಹಕ್ಕು ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ನಮ್ಮೆಲ್ಲರ ಮುಖಂಡ ನಸೀರ್ ವಿರುದ್ಧ ಕ್ರಮ ಕೈಗೊಂಡಿರುವುದು ಸರಿ ಅಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಅವರಿಗೆ ನ್ಯಾಯ ನೀಡುವಂತೆ ಮನವಿ ಮಾಡುತ್ತಿದ್ದೇವೆ’ ಎಂದರು. ನಸೀರ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದಾರೆ. ಕಾಂಗ್ರೆಸ್ನ ಕಷ್ಟಕಾಲದಲ್ಲೂ ಆಪತ್ಭಾಂದವರಾಗಿ ಕೆಲಸ ಮಾಡಿದ್ದಾರೆ. ಮತ್ತೆ ರಾಜಕೀಯ ಸ್ಥಾನಮಾನ ನೀಡಿ ಅವರನ್ನು ಗೌರವಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಸಂವಿಧಾನ ಉಳಿಸುವ ಏಕೈಕ ಪಕ್ಷ. ನಸೀರ್ ಆಗಲಿ, ಸಚಿವ ಝಮೀರ್ ಆಗಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಯಾವುದೇ ರೀತಿ ಮಾತನಾಡಿಲ್ಲ. ಝಮೀರ್ ಅವರು ಸ್ಟಾರ್ ಪ್ರಚಾರಕರಾಗಿ ಕೇರಳ ರಾಜ್ಯದಲ್ಲಿದ್ದರು ಎಂದು ತಿಳಿಸಿದರು. ಕೋಮುಲ್ ನಾಮಿನಿ ನಿರ್ದೇಶಕ ಶಂಷೀರ್ ಮಾತನಾಡಿ, ‘ನಾವೆಲ್ಲಾ ಕಾಂಗ್ರೆಸ್ ಜೊತೆಗೆ ಇದ್ದೇವೆ. ಈಗ ಉಂಟಾಗಿರುವ ತಪ್ಪುಗಳನ್ನು ತಿದ್ದಿಕೊಂಡರೆ ಪಕ್ಷಕ್ಕೆ ಮುಂದೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲ ಕಿಡಿಗೇಡಿಗಳು ಹೈಕಮಾಂಡ್ಗೆ ತಪ್ಪು ಸಂದೇಶ ನೀಡಿರುವ ಕಾರಣ ಈ ಸಮಸ್ಯೆ ಉದ್ಭವಿಸಿದೆ ಎಂದರು. ನಸೀರ್ ನಮ್ಮ ನಾಯಕರು. ಅವರಿಗೆ ಉಪಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದ ಜವಾಬ್ದಾರಿ ನೀಡಲಾಗಿತ್ತು, ಕೋರ್ ಕಮಿಟಿಯಲ್ಲಿದ್ದರು. ಅವರನ್ನು ಕೈಬಿಟ್ಟಿರುವುದು ತುಂಬಾ ನೋವುಂಟು ಮಾಡಿದೆ. ಕಾಂಗ್ರೆಸ್ ನಾವು ಕಟ್ಟಿ ಬೆಳೆಸಿದ ಪಕ್ಷ. ನಾವು ಪಕ್ಷದ ವಿರುದ್ಧ ನಿಂತಿಲ್ಲ. ಬದಲಾಗಿ ನಸೀರ್ ಅವರಿಗೆ ನ್ಯಾಯ ನೀಡುವಂತೆ ಕೇಳುತ್ತಿದ್ದೇವೆ ಎಂದು ತಿಳಿಸಿದರು. ಮುಖಂಡ ಸೈಫ್ ಮಾತನಾಡಿ, ‘ನಸೀರ್ ಹಾಗೂ ಜಮೀರ್ ಜೊತೆ ನಮ್ಮ ಸಮುದಾಯ ಗಟ್ಟಿಯಾಗಿ ನಿಂತಿದೆ. ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ನಸೀರ್ ಜೊತೆ ಇರುವುದಾಗಿ ಹೇಳಿದ್ದಾರೆ. ನಸೀರ್ ಅವರಿಗೆ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ನೀಡಲಾಗಿತ್ತು. ಮುಂದೆ ಧರ್ಮದ ಗುರುಗಳು ಹೇಳಿದಂತೆ ನಾವು ಕೇಳುತ್ತೇವೆ’ ಎಂದು ನುಡಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಮಾತನಾಡಿ ‘ರಾಜ್ಯದಲ್ಲಿ ಕಾಂಗ್ರೆಸ್ಗೆ ಶೇ 100ರಷ್ಟು ವೋಟ್ ಹಾಕಿರುವ ಯಾವುದಾದರೂ ಸಮುದಾಯ ಇದ್ದರೆ ಅದು ಮುಸ್ಲಿಂ ಸಮುದಾಯ. ಆದರೆ, ಈಗ ಈ ಸಮುದಾಯಕ್ಕೆ ಅನ್ಯಾಯ, ದ್ರೋಹ ಬಗೆಯುವ ರೀತಿಯ ವಾತಾವರಣ ನಿರ್ಮಾಣವಾಗಿದೆ. ಈಗ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅವರನ್ನು ಕೆಳಗಿಳಿಸಿರುವುದಕ್ಕೆ ಮುಸ್ಲಿಮರಿಗೆ ನೋವಾಗಿದೆ ಎಂದರು. ಈ ಸಂದರ್ಭದಲ್ಲಿ ಕುಡಾ ಅಧ್ಯಕ್ಷ ಹನೀಫ್ ಕಾಂಗ್ರೆಸ್ ಹಿರಿಯ ಮುಖಂಡರಾದ ಅಬ್ದುಲ್ ಖಯ್ಯುಂ, ಜಫರುಲ್ಲಾ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಫೈರೋಜ್ ಖಾನ್, ಸೈಫುಲ್ಲಾ, ಏಜಾಜ್, ಶಫಿ, ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ರಿದ್ ಯುವ ಮುಖಂಡರಾದ ಮನ್ಸೂರ್ ಅಲಿ, ಮೊಹಮ್ಮದ್ ನೂರ್, ಬಾಬರ್ , ಸಾಧೀಕ್, ರಿಯಾಜ್ ಗೋರು, ರೋಹಿದ್, ಸುಹೈಲ್, ಅರ್ಬಾಜ್, ಮುಂತಾದವರು ಉಪಸ್ಥಿತರಿದ್ದರು.
ಫಾದರ್ ಮಲ್ಲರ್ ಆಸ್ಪತ್ರೆ: ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆ
ಮಂಗಳೂರು: ಹೃದ್ರೋಗ ಸಂಬಂಧಿಸಿ ಬಳಲುತ್ತಿದ್ದ ಕಾಸರಗೋಡು ಮೂಲದ 46 ಹರೆಯದ ಮಹಿಳೆಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವು ವಿನೂತನ ಶೈಲಿಯ ಚಿಕಿತ್ಸೆಯ ನೀಡಿದ್ದಾರೆ. ರೋಗಿಯು ದೀರ್ಘ ಕಾಲದ ತೀವ್ರ ಉಸಿರಾಟದ ಸಮಸ್ಯೆ, ತೀಕ್ಷ್ಣ ಎದೆನೋವು, ನಿಶಕ್ತಿ, ದಣಿವು, ದೌರ್ಬಲ್ಯ, ರಕ್ತ ಚಲನವಲನ ಸಮಸ್ಯೆಯಿಂದ ಬಳಲುತಿದ್ದು, ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅಸಮರ್ಥಳಾಗಿದ್ದರು. ಅವರು ಫಾದರ್ ಮುಲ್ಲರ್ ಆಸ್ಪತ್ರೆಯ ಮುಖ್ಯ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ. ಎಚ್. ಪ್ರಭಾಕರ್ರನ್ನು ಭೇಟಿ ಮಾಡಿ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ವೈದ್ಯರು ತಪಾಸಣೆ ಒಳಪಡಿಸಿದಾಗ ರೋಗಿಯು ತೀವ್ರ ಹೃದ್ರೋಗಿ ಸಂಬಂಧಿ ಅಪರೂಪದ ‘‘ತಕಯಾಸು’’ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ರೋಗಿಗೆ ಹೃದಯದ ರಕ್ತನಾಳದಲ್ಲಿ ರಕ್ತ ಚಲನವಲನದ ಅಡ್ಡಿಯಾಗುತ್ತಿದ್ದು, ಹೃದಯದ ಕಾರ್ಯಕ್ಷಮತೆ ಕುಂಠಿತವಾಗುತ್ತಿತ್ತು. ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಮತ್ತು ಶಸ್ತ್ರ ಚಿಕಿತ್ಸೆಯ ಅಪಾಯ ಅತ್ಯಂತ ಗಂಭೀರವಾಗಿತ್ತು. ಈ ಸಮಸ್ಯೆಯನ್ನು ಪರಿಗಣಿಸಿ ಈ ಗಂಭೀರ ಕಾಯಿಲೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅರಿತು ತಕ್ಷಣ ವೈದ್ಯರು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ತಂಡವು 2 ವಿಭಿನ್ನ ದಿನಗಳ ಅವಧಿಯ 2 ಪ್ರತ್ಯೇಕ ಹಂತದಲ್ಲಿ ವಿನೂತನ ಶೈಲಿಯ ಜೀವ ಅಪಾಯಕಾರಿ ಕ್ಲಿಷ್ಟಕರ ‘‘ಅಂಜಿಯೋಪ್ಲಾಸ್ಟಿ’’ ಚಿಕಿತ್ಸೆಯನ್ನು ನೆರವೇರಿಸಿ ಸಾಮಾನ್ಯ ರಕ್ತ ಚಲನವಲನಕ್ಕೆ ಅನುವು ಮಾಡಿಕೊಟ್ಟರು. ರೋಗಿಯ ತೊಡೆಯಲ್ಲಿ ಸೂಕ್ಷ್ಮ ರಂದ್ರವನ್ನು ಕೊರೆದು ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸಿ, ಅದರ ಮೂಲಕ ವಿಶೇಷ ಕ್ಯಾಮರಾ ಮತ್ತು ಬೆಲೂನನ್ನು ಅಳವಡಿಸಿ, ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾ ಯಿತು. ಈ ಅಪರೂಪದ ಚಿಕಿತ್ಸೆಯಲ್ಲಿ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ. ಪ್ರದೀಪ್ ಪಿರೇರಾ, ಡಾ. ಜೋಸ್ಟಲ್ ಪಿಂಟೊ ಮತ್ತು ಡಾ. ಅಶೋಕ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಸಂಪೂರ್ಣವಾಗಿ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಡುಗಡೆಗೊಂಡು ತಮ್ಮ ನಿವಾಸದಲ್ಲಿ ಸಹಜ ಆರೋಗ್ಯ ಜೀವನ ನಡೆಸುತಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಡಾ. ಎಚ್. ಪ್ರಭಾಕರ್ರವರು ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಈ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯಲ್ಲಿ ಉತ್ತಮ ದರ್ಜೆಯ ಚಿಕಿತ್ಸೆ ನೀಡಿದ್ದು, ಮತ್ತು ಮಾರಣಾಂತಿಕ ಸಮಸ್ಯೆಯನ್ನು ಹೊಂದಿರುವ ರೋಗಿಗೆ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾ ವಿಧಾನಗಳಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ವಂ. ಫಾವುಸ್ಟಿನ್ ಲೂಕಸ್ ಲೋಬೋ ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಅಭಿನಂದಿಸಿದ್ದಾರೆ.
Kerala | ವಾಲ್ಪರೈ ಘಾಟ್ ರಸ್ತೆಯಲ್ಲಿ ಅಪಘಾತ: ಮಲಪ್ಪುರಂನ ಶಾಲೆಯ ಎಂಟು ಸಿಬ್ಬಂದಿ ಮೃತ್ಯು
ಮಲಪ್ಪುರಂ, ಎ.17: ತಮಿಳುನಾಡಿನ ವಾಲ್ಪರೈ ಘಾಟ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. 13ನೇ ಹೇರ್ ಪಿನ್ ತಿರುವಿನಲ್ಲಿ ಟೆಂಪೋ ಟ್ರಾವೆಲರ್ ನಿಯಂತ್ರಣ ತಪ್ಪಿ ರಸ್ತೆಯಿಂದ ಆಚೆಗೆ ಉರುಳಿ ಕಣಿವೆಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ. ಮೃತರು ಮಲಪ್ಪುರಂ ಜಿಲ್ಲೆಯ ಕೊಲತ್ತೂರು ಬಳಿಯ ಪಾಂಗು ಪ್ರದೇಶದಲ್ಲಿರುವ ಪರಮಲ್ ಎಎಲ್ಪಿ ಶಾಲೆ ಹಾಗೂ ಪಾಂಗು ಜಿಯುಪಿ ಶಾಲೆಗಳ ಸಿಬ್ಬಂದಿ ಮೃತಪಟ್ಟವರು ಎಂದು ತಿಳಿದು ಬಂದಿದೆ. ಒಟ್ಟು 13 ಮಂದಿ ಪ್ರಯಾಣಿಸುತ್ತಿದ್ದ ತಂಡದಲ್ಲಿ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಕುಟುಂಬ ಸದಸ್ಯರು ಹಾಗೂ ಚಾಲಕ ಸೇರಿದ್ದರು. ಪರಮಲ್ ಎಎಲ್ಪಿ ಶಾಲೆಯ ಸಿಬ್ಬಂದಿ ಈ ಪ್ರವಾಸವನ್ನು ಆಯೋಜಿಸಿದ್ದರೆ, ಜಿಯುಪಿ ಶಾಲೆಯ ಸಹೋದ್ಯೋಗಿಯೊಬ್ಬರು ಸಹ ಇವರೊಂದಿಗೆ ಸೇರಿಕೊಂಡಿದ್ದರು. ತಂಡವು ಶುಕ್ರವಾರ ಮುಂಜಾನೆ ವಾಲ್ಪರೈಗೆ ಪ್ರವಾಸಕ್ಕೆ ತೆರಳಿದ್ದು, ಸಂಜೆ ಸುಮಾರು 5.30ರ ವೇಳೆಗೆ ಪೊಲ್ಲಾಚಿಯಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರು ಪ್ರಯತ್ನಿಸುತ್ತಿದ್ದ ವಾಹನವು 13ನೇ ಹೇರ್ ಪಿನ್ ತಿರುವಿನಲ್ಲಿ ನಿಯಂತ್ರಣ ತಪ್ಪಿ 11ನೇ ಹೇರ್ ಪಿನ್ ತಿರುವಿನತ್ತ ಉರುಳಿ ಬಿದ್ದಿದೆ ಎನ್ನಲಾಗಿದೆ. ಮೃತರಲ್ಲಿ ಪುಲಮಂತೋಳೆ ಮೂಲದ ಪರಮಲ್ ಎಎಲ್ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅಜಿತಾ (54) ಸೇರಿದ್ದಾರೆ. ಪಾಂಗು ನಿವಾಸಿಗಳಾದ ರಮ್ಲಾ (52), ಸುಹರಾ (43), ಆಶಾ (41), ಮಜೀದ್ (43), ಶಾಲೆಯ ಅಡುಗೆ ಸಿಬ್ಬಂದಿ ಸಜಿತಾ (45), ಶಾಲಾ ಬಸ್ ಚಾಲಕ ನೌಶಾದ್ (39) ಹಾಗೂ ಮಜೀದ್ ಅವರ ಪತ್ನಿ ರುಖಿಯಾ (39) ಮೃತಪಟ್ಟ ಇತರರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಲ್ಲಿ ಪಾಂಗು ಜಿಯುಪಿ ಶಾಲೆಯ ಶಿಕ್ಷಕಿ ಶಕೀನಾ (37), ಸುಹರಾ ಅವರ ಪುತ್ರ ಹಿಶಾಮ್ (12), ಸಜಿತಾ ಅವರ ಪುತ್ರ ಶಹಾದಿನ್, ಶಕೀನಾ ಅವರ ಪುತ್ರ ಮಸ್ನೀನ್ (10) ಹಾಗೂ ಮೊಹಮ್ಮದ್ ಫಹಿಸ್ ಸೇರಿದ್ದಾರೆ. ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲ್ಲಾಚಿ–ವಾಲ್ಪರೈ ರಸ್ತೆಯ ಅರಣ್ಯ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದರಿಂದ ಸ್ಥಳೀಯರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ವಿಳಂಬವಾಯಿತು. ಗಾಯಾಳುಗಳನ್ನು ಮೊದಲಿಗೆ ಪೊಲ್ಲಾಚಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಪ್ರಸ್ತುತ ಒಬ್ಬರು ಪೊಲ್ಲಾಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದ ಮೂವರು ಕೊಯಮತ್ತೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಲಬುರಗಿಯಲ್ಲಿ 45.3 ಸೆಲ್ಸಿಯಸ್ ದಾಖಲೆಯ ಉಷ್ಣಾಂಶ ದಾಖಲು
ಕಲಬುರಗಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೀವ್ರ ಉಷ್ಣಾಂಶ ಮುಂದುವರಿದಿದ್ದು, ಕಲಬುರಗಿ ಜಿಲ್ಲೆಯ ಫರಹತಾಬಾದ್ ಹೋಬಳಿಯಲ್ಲಿ 45.3 ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ವರ್ಷದ ಬೇಸಿಗೆಯಲ್ಲಿಯೇ ಅತ್ಯಧಿಕವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಬುಧವಾರವೇ ಕಲಬುರಗಿ ತಾಲೂಕಿನ ಔರಾದ್ ಹೋಬಳಿಯಲ್ಲಿ 45 ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದರೆ ಇದೀಗ ಆ ದಾಖಲೆ ಫರಹತಾಬಾದ್ನಲ್ಲಿ ಮುರಿಯಲಾಗಿದೆ. ಕಲಬುರಗಿ, ರಾಯಚೂರು, ಬೀದರ್, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಹಲವೆಡೆ 42 ಸೆಲ್ಸಿಯಸ್ ನಿಂದ 45.3 ಸೆಲ್ಸಿಯಸ್ ನಡುವೆ ತಾಪಮಾನ ದಾಖಲಾಗಿದ್ದು, ಜನಜೀವನ ತೀವ್ರವಾಗಿ ಅಸ್ತವ್ಯಸ್ತವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಕೇಂದ್ರ (KSNDMC) ಮಾಹಿತಿ ಪ್ರಕಾರ, ಕಲಬುರಗಿಯಲ್ಲಿ 26 ಸ್ಥಳಗಳು, ರಾಯಚೂರಿನಲ್ಲಿ 23, ಬೀದರ್ನಲ್ಲಿ 17, ಯಾದಗಿರಿಯಲ್ಲಿ 13 ಮತ್ತು ವಿಜಯಪುರದಲ್ಲಿ 11 ಸ್ಥಳಗಳಲ್ಲಿ 42 ಸೆಲ್ಸಿಯಸ್ ಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದೆ. IMD ಮುನ್ಸೂಚನೆಯಂತೆ ಮುಂದಿನ ಐದು ದಿನಗಳವರೆಗೆ ತಾಪಮಾನದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ಬಿಸಿಲಿನಿಂದ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಭಾಲ್ಕಿ | ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ
ಪ್ರೀತಿ ಜಾಧವ್ ಶಾಲೆಗೆ ಪ್ರಥಮ
India GDP Decline: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಕುಸಿತ; ಟಾಪ್ 5 ರಿಂದ ಹೊರಕ್ಕೆ! ಮುಂಚೂಣಿ ರಾಷ್ಟ್ರಗಳಾವು?
ರೂಪಾಯಿ ಮೌಲ್ಯ ಕುಸಿತ ಮತ್ತು ಜಿಡಿಪಿ ಮೂಲ ವರ್ಷದ ಪರಿಷ್ಕರಣೆಯಿಂದಾಗಿ ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನು ಕಳೆದುಕೊಂಡು 6ನೇ ಸ್ಥಾನಕ್ಕೆ ಕುಸಿದಿದೆ ಎಂದು ಐಎಂಎಫ್ ವರದಿ ತಿಳಿಸಿದೆ. ಪ್ರಸ್ತುತ ಬ್ರಿಟನ್ 5ನೇ ಸ್ಥಾನಕ್ಕೇರಿದ್ದು, 2026-27ರ ವೇಳೆಗೆ ಭಾರತದ ಜಿಡಿಪಿ 4.15 ಲಕ್ಷ ಕೋಟಿ ಡಾಲರ್ ತಲುಪುವ ಅಂದಾಜಿದೆ. ನೊಮಿನಲ್ ಜಿಡಿಪಿ ಇಳಿಕೆ ಈ ಪಲ್ಲಟಕ್ಕೆ ಪ್ರಮುಖ ಕಾರಣವಾಗಿದೆ.
Aurad | ಸುಂಕನಾಳ್ ಜೆಜೆಎಂ ಪೈಪ್ಲೈನ್ ಕಾಮಗಾರಿ ಕಳಪೆ ಆರೋಪ : ಕ್ರಮಕ್ಕೆ ಆಗ್ರಹ
ಔರಾದ್: ತಾಲೂಕಿನ ಚಿಕ್ಲಿ (ಜೆ) ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಕನಾಳ್ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಪೈಪ್ಲೈನ್ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಗ್ರಾಮದ ಮುಖಂಡ ಸುರ್ಯಕಾಂತ್ ಮಾಲೆ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ, ಪಕ್ಕದ ಉಜನಿ ಗ್ರಾಮದ ಕೊಳವೆಬಾವಿಯಿಂದ ಸುಮಾರು 3 ಕಿ.ಮೀ ದೂರದವರೆಗೆ ಅಳವಡಿಸಿರುವ HDPE ಪೈಪ್ಗಳು ಕಳಪೆ ಗುಣಮಟ್ಟದ್ದಾಗಿದ್ದು, ಪದೇ ಪದೇ ಒಡೆದು ಗ್ರಾಮಕ್ಕೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ದೂರಿದ್ದಾರೆ. ಕಾಮಗಾರಿಗೆ ಬಳಸಿದ ಪೈಪ್ಗಳನ್ನು ಬದಲಾಯಿಸಿ ಹೊಸದಾಗಿ ಅಳವಡಿಸಬೇಕು ಹಾಗೂ ಸರಬರಾಜು ಮಾಡಿದ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದೇ ವೇಳೆ ಸಹಾಯಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳ ನಿರ್ಲಕ್ಷ್ಯದಿಂದ ಸರ್ಕಾರದ ಮಹತ್ವದ ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಆರೋಪಿಸಿ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಬೇಸಿಗೆ ಕಾಲದಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮುಂಬೈ: ಹಲವಾರು ಮಹಿಳೆಯರನ್ನು ಲೈಂಗಿಕ ಮತ್ತು ಆರ್ಥಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಅಶೋಕ್ ಖಾರಟ್ ಅವರ ಆಪ್ತ ಜಿತೇಂದ್ರ ಶೆಲ್ಕೆ, ಮುಂಬೈ–ನಾಗ್ಪುರ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ನಿಗೂಢವಾಗಿ ಮೃತಪಟ್ಟಿದ್ದಾರೆ. ಜಿತೇಂದ್ರ ಶೆಲ್ಕೆ ಅವರು ದೇವಮಾನವ ಅಶೋಕ್ ಖಾರಟ್ ನೇತೃತ್ವದ ಶಿವಾನಿಕ್ ಟ್ರಸ್ಟ್ ನ ಉಪಾಧ್ಯಕ್ಷರಾಗಿದ್ದು, ಅಶೋಕ್ ಖಾರಟ್ ರಾಜಕೀಯ, ವ್ಯವಹಾರ ಹಾಗೂ ಅಧಿಕಾರಶಾಹಿ ವಲಯದಲ್ಲಿ ಹೊಂದಿದ್ದ ಸಂಪರ್ಕಗಳ ಕುರಿತು ಹಲವು ವಿವರಗಳನ್ನು ಬಲ್ಲವರಾಗಿದ್ದರು. ಹೀಗಾಗಿ ಅವರು ಅನೇಕ ಅಸಹ್ಯ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದರು ಹಾಗೂ ಮಹಾರಾಷ್ಟ್ರದ ಹಲವು ಉನ್ನತ ವ್ಯಕ್ತಿಗಳನ್ನು ಬಯಲು ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ಸಾವಿನ ಕುರಿತು ವಿರೋಧ ಪಕ್ಷಗಳು ಸಂಶಯ ವ್ಯಕ್ತಪಡಿಸಿವೆ. ಕುತೂಹಲಕರ ಸಂಗತಿಯೆಂದರೆ, ಮೂರು ದಿನಗಳ ಹಿಂದಷ್ಟೇ ಶೆಲ್ಕೆ ಅವರನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿತ್ತು. ಹೀಗಾಗಿ ಅವರದ್ದು ಅಪಘಾತವೋ ಅಥವಾ ಅಶೋಕ್ ಖಾರಟ್ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ನಡೆಸಿರುವ ವ್ಯವಸ್ಥಿತ ಪಿತೂರಿಯೋ ಎಂಬ ಶಂಕೆ ವ್ಯಕ್ತವಾಗಿದೆ. ಮುಂಬೈ–ನಾಗ್ಪುರ ಸಮೃದ್ಧಿ ಮಾರ್ಗದಲ್ಲಿ ಜಿತೇಂದ್ರ ಶೆಲ್ಕೆ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಜಿತೇಂದ್ರ ಶೆಲ್ಕೆ (50), ಪತ್ನಿ ಅನುರಾಧ (45) ಹಾಗೂ ಪುತ್ರ ಸುಚಿತ್ (14) ಸ್ಥಳದಲ್ಲಿಯೇ ಮೃತಪಟ್ಟರು. ಈ ಕುರಿತು ಪ್ರತಿಕ್ರಿಯಿಸಿದ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್, ತನಿಖಾ ಸಂಸ್ಥೆಗಳು ಅಶೋಕ್ ಖಾರಟ್ ಪ್ರಕರಣವನ್ನು ಭೇದಿಸುವ ಸನಿಹದಲ್ಲಿದ್ದು, ಈ ಹಂತದಲ್ಲಿ ಜಿತೇಂದ್ರ ಶೆಲ್ಕೆ ಸಾವು ಸಂಭವಿಸಿರುವುದು ತುಂಬಾ ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ. ಜಿತೇಂದ್ರ ಶೆಲ್ಕೆ, ಅಶೋಕ್ ಖಾರಟ್ ಹಾಗೂ ಈ ಕುಖ್ಯಾತ ಪ್ರಕರಣದಲ್ಲಿ ಭಾಗಿಯಾಗಿರುವ ಗಣ್ಯ ವ್ಯಕ್ತಿಗಳ ನಡುವಿನ ಕೊಂಡಿಯಾಗಿದ್ದರು. ಈ ಆಯಾಮದಲ್ಲಿ ಜಿತೇಂದ್ರ ಶೆಲ್ಕೆ ಅವರ ಮೃತ್ಯು ಗಮನಾರ್ಹವಾಗಿದೆ ಎಂದು ಶಿವಸೇನೆ (ಉದ್ಧವ್ ಬಣ) ನಾಯಕಿ ಸುಷ್ಮಾ ಅಂಧಾರೆ ಅಭಿಪ್ರಾಯಪಟ್ಟಿದ್ದಾರೆ.
ಹುಲಸೂರು | ಎ.20ರಂದು ಬಸವಣ್ಣ ಜಯಂತಿ: ತಹಶೀಲ್ದಾರ್ ಶಿವಾನಂದ್ ಮೇತ್ರೆ ಮಾಹಿತಿ
ಹುಲಸೂರ್ : ಸಾಂಸ್ಕೃತಿಕ ನಾಯಕ ಬಸವಣ್ಣನವರ 893ನೇ ಜಯಂತಿಯನ್ನು ಎ.20ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಶೀಲ್ದಾರ್ ಶಿವಾನಂದ್ ಮೇತ್ರೆ ತಿಳಿಸಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತದ ವತಿಯಿಂದ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಅಂದು ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವ ಜಯಂತಿ ಆಚರಿಸಲು ಸೂಚನೆ ನೀಡಲಾಗಿದೆ. ತಾಲೂಕು ಕೇಂದ್ರದ ಮುಖ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತಿ ಪ್ರತಿನಿಧಿಗಳು, ರಾಜಕೀಯ ಮುಖಂಡರು, ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಅವರು ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8:30ಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಬೆಳಿಗ್ಗೆ 9 ಗಂಟೆಗೆ ಅಲ್ಲಮಪ್ರಭು ಶೂನ್ಯಪೀಠದಿಂದ ಪ್ರತಿಮೆ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಮೆರವಣಿಗೆಯು ಲಕ್ಷ್ಮೀ ಚೌಕ್, ಗಾಂಧಿ ವೃತ್ತ, ಬಸವಣ್ಣ ವೃತ್ತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಮಾಪ್ತಿಯಾಗಲಿದೆ. ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ಸಮಸ್ಯೆಗಳ ಕುರಿತು ಚರ್ಚೆ ನಡೆದಿದ್ದು, ಒಳರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಆರಂಭಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ. ಈ ಸಭೆಯಲ್ಲಿ ಉಪತಹಶೀಲ್ದಾರ್ ಸುನೀಲಕುಮಾರ್ ಸಜ್ಜನಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನಯಕುಮಾರ್ ಮುಖಂಡರಾದ ರಣಜೀತ್ ಗಾಯಕವಾಡ್, ಸುನೀಲಕುಮಾರ್ ಕಾಡಾದಿ, ಅರವಿಂದ್ ಹರಪಲ್ಲೆ, ಶಿವರಾಜ್ ಖಪಲೆ, ಸಂದೀಪ್ ಬಿರಾದಾರ್, ಶಿವರಾಜ್ ಚಾಕೋತೆ, ಮಾಂತೇಶ ಇಲ್ಲಾಮಲ್ಲೆ, ಸಿದ್ದು ಪಾರಶೆಟ್ಟೆ, ಮಾಹದೇವ್ ಕವಟೆ, ಗಣೇಶ್ ಚಿಲ್ಲರ್ಗೆ ಹಾಗೂ ವಿರೇಶ್ ವಡ್ಡೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಷೇತ್ರ ಪುನರ್ ವಿಂಗಡಣೆ: ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಯಾವ ಬದಲಾವಣೆ ಆಗಲಿದೆ?
ಲೋಕಸಭೆಯಲ್ಲಿ ಮೂರು ಮಸೂದೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕ್ಷೇತ್ರ ಪುನರ್ ವಿಂಗಡಣೆಯಿಂದ ಯಾವುದೇ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಸಣ್ಣ ಅಥವಾ ದೊಡ್ಡ, ಉತ್ತರ ಅಥವಾ ದಕ್ಷಿಣ, ಪೂರ್ವ ಅಥವಾ ಪಶ್ಚಿಮದ ಯಾವುದೇ ರಾಜ್ಯಗಳ ಬಗ್ಗೆ ತಾರತಮ್ಯ ಮಾಡುವುದಿಲ್ಲ ಎಂದಿದ್ದಾರೆ. ದಕ್ಷಿಣ ರಾಜ್ಯಗಳಿಂದ ಹೆಚ್ಚುತ್ತಿರುವ ಕಳವಳಗಳನ್ನು ಶಮನಗೊಳಿಸಲು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯಲ್ಲಿ ಈ ಪ್ರದೇಶಕ್ಕೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಲೋಕಸಭೆಗೆ ಭರವಸೆ ನೀಡಿದರು. ಚೆನ್ನೈನಲ್ಲಿ ಡಿಎಂಕೆ ನೇತೃತ್ವದಲ್ಲಿ ಪ್ರಬಲ ಪ್ರತಿಭಟನೆಗಳು ನಡೆದಾಗಲೂ, ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಮತ್ತು ಪ್ರಸ್ತಾವಿತ ಮಸೂದೆಯ ಪ್ರತಿಗಳನ್ನು ಸುಟ್ಟುಹಾಕುತ್ತಿದ್ದಾಗಲೂ ಈ ಭರವಸೆ ಬಂದಿತು. ಸದನವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ದಕ್ಷಿಣ ಪ್ರಾತಿನಿಧ್ಯ ಕಳೆದುಕೊಳ್ಳುವ ಭಯ ಸಂಪೂರ್ಣವಾಗಿ ಸುಳ್ಳು ಎಂದರು. ವಾಸ್ತವವಾಗಿ ಈ ಪ್ರಕ್ರಿಯೆಯು ಸ್ಥಾನಗಳು ಮತ್ತು ಪ್ರಭಾವ ಎರಡನ್ನೂ ವಿಸ್ತರಿಸುತ್ತದೆ ಎಂದು ಪ್ರತಿಪಾದಿಸಿದರು. ಸ್ಥಾನಗಳ ಸಂಖ್ಯೆ ಹೆಚ್ಚಾಗುತ್ತದೆ, ಅಧಿಕಾರ ಬೆಳೆಯುತ್ತದೆ ಎಂದು ಶಾ ಹೇಳಿ, ದಕ್ಷಿಣದ ಐದು ರಾಜ್ಯಗಳ ಲೋಕಸಭಾ ಪ್ರಾತಿನಿಧ್ಯವು ಪ್ರಸ್ತುತ 129 ಸ್ಥಾನಗಳಿಂದ 195 ಕ್ಕೆ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಅವುಗಳ ಒಟ್ಟಾರೆ ಪಾಲು 23.76% ರಿಂದ ಸುಮಾರು 24% ಕ್ಕೆ ಏರುತ್ತದೆ ಎಂದು ವಿವರಿಸಿದರು. ಹೀಗೆ ಮಾಡಿದಾಗ ಕರ್ನಾಟಕದ ಸ್ಥಾನಗಳು 28 ರಿಂದ 42 ಕ್ಕೆ, ಆಂಧ್ರಪ್ರದೇಶ 25 ರಿಂದ 38 ಕ್ಕೆ, ತೆಲಂಗಾಣ 17 ರಿಂದ 26 ಕ್ಕೆ, ತಮಿಳುನಾಡಿನ ಸ್ಥಾನಗಳು 39 ರಿಂದ 59 ಕ್ಕೆ ಮತ್ತು ಕೇರಳ 20 ರಿಂದ 30 ಕ್ಕೆ ಏರುತ್ತವೆ ಎಂದು ಅವರು ಹೇಳಿದರು. ಕ್ಷೇತ್ರ ಪುನರ್ ವಿಂಗಡಣೆಯ ನಂತರ ದಕ್ಷಿಣ ರಾಜ್ಯಗಳಲ್ಲಿನ ಸೀಟುಗಳ ಸಂಖ್ಯೆ ಕರ್ನಾಟಕ ಕರ್ನಾಟಕವು ಪ್ರಸ್ತುತ 28 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಸದನದ ಬಲದ 5.15% ರಷ್ಟಿದೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರ, ರಾಜ್ಯವು ತನ್ನ ಸ್ಥಾನಗಳ ಸಂಖ್ಯೆಯನ್ನು 42 ಕ್ಕೆ ಏರಿಸುವ ನಿರೀಕ್ಷೆಯಿದೆ. ಅದರ ಒಟ್ಟಾರೆ ಪಾಲು 5.14% ಕ್ಕೆ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ. ಆಂಧ್ರಪ್ರದೇಶ ಆಂಧ್ರಪ್ರದೇಶವು ಪ್ರಸ್ತುತ 25 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಕೆಳಮನೆಯ 4.60% ರಷ್ಟಿದೆ. ಪ್ರಸ್ತಾವಿತ ವಿಸ್ತರಣೆಯ ನಂತರ, ಅದರ ಸ್ಥಾನಗಳ ಸಂಖ್ಯೆ 38 ಸ್ಥಾನಗಳಿಗೆ ಹೆಚ್ಚಾಗುವ ಸಾಧ್ಯತೆಯಿದೆ, ಅದರ ಪಾಲು ಸುಮಾರು 0.05 ಶೇಕಡಾ ಅಂಕಗಳಿಂದ ಸ್ವಲ್ಪ ಹೆಚ್ಚಾಗುತ್ತದೆ. ತೆಲಂಗಾಣ ತೆಲಂಗಾಣವು ಪ್ರಸ್ತುತ ಲೋಕಸಭೆಯಲ್ಲಿ 17 ಸ್ಥಾನಗಳನ್ನು ಹೊಂದಿದೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರ, ಅದರ ಬಲ 26 ಸ್ಥಾನಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಸದನದಲ್ಲಿ ಅದರ ಪಾಲು 3.13% ರಿಂದ 3.18% ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ತಮಿಳುನಾಡು ಲೋಕಸಭೆಗೆ ಅತಿ ಹೆಚ್ಚು ಕೊಡುಗೆ ನೀಡುವ ದೇಶಗಳಲ್ಲಿ ಒಂದಾದ ತಮಿಳುನಾಡು, ಪ್ರಸ್ತುತ 39 ಸಂಸದರನ್ನು ಹೊಂದಿದೆ, ಅವರ ಪಾಲು 7.18%. ಕ್ಷೇತ್ರ ಪುನರ್ ವಿಂಗಡಣೆಯ ನಂತರ, ಅದರ ಸ್ಥಾನಗಳ ಸಂಖ್ಯೆ ಗಮನಾರ್ಹವಾಗಿ 59 ಕ್ಕೆ ಏರಬಹುದು, ಇದರಿಂದಾಗಿ ಅದರ ಪಾಲು ಸ್ವಲ್ಪ ಹೆಚ್ಚಾಗುತ್ತದೆ. ಕೇರಳ ಕೇರಳವು ಪ್ರಸ್ತುತ ಲೋಕಸಭೆಗೆ 20 ಸಂಸದರನ್ನು ಆಯ್ಕೆ ಮಾಡುತ್ತದೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರ ಈ ಸಂಖ್ಯೆ 30 ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ಸದನದಲ್ಲಿ ಅದರ ಪಾಲು ಬಹುತೇಕ ಬದಲಾಗದೆ ಉಳಿಯುವ ಸಾಧ್ಯತೆಯಿದೆ; ಇದು 3.68% ರಿಂದ 3.67% ಕ್ಕೆ ಸ್ವಲ್ಪ ಇಳಿಯುತ್ತದೆ. ಒಟ್ಟಾರೆಯಾಗಿ, 543 ಸದಸ್ಯರ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳು 129 ಸಂಸದರನ್ನು ಹೊಂದಿದ್ದು, ಒಟ್ಟು ಸಂಸದರಲ್ಲಿ 23.75% ಅನ್ನು ಪ್ರತಿನಿಧಿಸುತ್ತವೆ ಎಂದು ಶಾ ಹೇಳಿದ್ದಾರೆ. ಇದರಿಂದ ಲೋಕಸಭೆಯಲ್ಲಿ 195 ಸ್ಥಾನಗಳು ಮತ್ತು ಪ್ರಾತಿನಿಧ್ಯ 23.9% ಕ್ಕೆ ಹೆಚ್ಚಾಗುತ್ತದೆ. ದಕ್ಷಿಣದ ಪ್ರಾತಿನಿಧ್ಯವು ಮೇಲಕ್ಕೆ ಹೋಗುತ್ತಿದೆ, ಕೆಳಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ ಅವರು. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾ, ನಾನು, ಗೃಹ ಸಚಿವ, ಮಸೂದೆಯನ್ನು ಜಾರಿಗೆ ತಂದ ಸಚಿವ ಅಮಿತ್ ಶಾ, ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದರು. ಡಿಲಿಮಿಟೇಷನ್ ಮಸೂದೆಯಲ್ಲಿ ದಕ್ಷಿಣ ರಾಜ್ಯಗಳ ಪಾಲಿನ ಸಂಖ್ಯೆಗಳನ್ನು ಎಲ್ಲಿ ಉಲ್ಲೇಖಿಸಲಾಗಿದೆ ಎಂದು ಕೇಳಿದಾಗ, ಕೆಜಿ (ಕಿಂಡರ್ಗಾರ್ಟನ್) ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವಷ್ಟು ಸರಳ ಭಾಷೆಯಲ್ಲಿ ಅದನ್ನು ವಿವರಿಸುವುದಾಗಿ ಶಾ ಹೇಳಿದರು. ಈ ನಡುವೆ, ಸರ್ಕಾರ ಜಾತಿ ಜನಗಣತಿ ನಡೆಸಲು ಬಯಸುವುದಿಲ್ಲ ಎಂಬ ನಿರೂಪಣೆ ನಿಜವಲ್ಲ ಎಂದು ಶಾ ಹೇಳಿದ್ದಾರೆ. ಜನಗಣತಿಯಲ್ಲಿ ಎರಡು ಭಾಗಗಳಿವೆ ಎಂದು ಪ್ರಕ್ರಿಯೆಯ ಪರಿಚಯವಿರುವ ಜನರಿಗೆ ತಿಳಿದಿದೆ. ಮೊದಲನೆಯದ್ದು ಮನೆಗಳನ್ನು ಎಣಿಸುವುದು ಮತ್ತು ನಂತರ ಜನರ ಎಣಿಕೆ. ಜನಗಣತಿಯ ಎರಡನೇ ಭಾಗ ನಡೆಸಿದಾಗ, ಜಾತಿ ಜನಗಣತಿ ನಡೆಯುತ್ತದೆ ಎಂದು ಅವರು ಹೇಳಿದರು. ವಿಧಾನಸಭೆ ಚುನಾವಣೆಯ ಮಧ್ಯದಲ್ಲಿ ಮಸೂದೆಗಳನ್ನು ತರಲಾಗುತ್ತಿದ್ದರೂ, ಸಂಸತ್ತು ಅವುಗಳನ್ನು ಅನುಮೋದಿಸುವವರೆಗೆ ಮತ್ತು ರಾಷ್ಟ್ರಪತಿಗಳು ಸಹಿ ಮಾಡುವವರೆಗೆ ಅವುಗಳನ್ನು ಜಾರಿಗೆ ತರಲಾಗುವುದಿಲ್ಲ ಎಂದು ಗೃಹ ಸಚಿವರು ಹೇಳಿದರು. ಆದ್ದರಿಂದ ಅಖಿಲೇಶ್ ಯಾದವ್ ಚಿಂತಿಸಬಾರದು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ ಹೇಳಿದ್ದಾರೆ. ಸರ್ಕಾರ ಹೇಳಿದ್ದೇನು? ಒಟ್ಟು ಸಂಸದರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಪ್ರತಿ ರಾಜ್ಯದ ಶೇಕಡಾವಾರು ಸ್ಥಾನಗಳ ಪಾಲು ಬಹುತೇಕ ಬದಲಾಗದೆ ಉಳಿದಿದೆ ಎಂದು ಗೃಹ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ. ದಕ್ಷಿಣ ರಾಜ್ಯಗಳು ಪ್ರಸ್ತುತ 543 ಸ್ಥಾನಗಳಲ್ಲಿ 129 ಸ್ಥಾನಗಳನ್ನು (23.76%) ಹೊಂದಿವೆ. ಪ್ರಸ್ತಾವಿತ ವಿಸ್ತರಣೆಯ ನಂತರ ಅದು 816 ಸ್ಥಾನಗಳಲ್ಲಿ 195 ಕ್ಕೆ (23.87%) ಏರುತ್ತದೆ. ಉಳಿದ 621 ಸ್ಥಾನಗಳು (ಸದನದ ಸುಮಾರು 76%) ಇತರ ರಾಜ್ಯಗಳಿಗೆ, ಮುಖ್ಯವಾಗಿ ಉತ್ತರಕ್ಕೆ ಹೋಗುತ್ತವೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರವೂ ದಕ್ಷಿಣದ ಒಟ್ಟಾರೆ ಪಾಲು ಸರಿಸುಮಾರು 24% ರಷ್ಟಿದೆ ಎಂದು ಇದು ತೋರಿಸುತ್ತದೆ ಎಂದು ಸರ್ಕಾರ ಹೇಳುತ್ತದೆ. ಸರ್ಕಾರದ ಯೋಜನೆ ಅಮಿತ್ ಶಾ ಅವರ ಹೇಳಿಕೆಯ ಪ್ರಕಾರ, ಯಾವುದೇ ರಾಜ್ಯ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಕಡಿಮೆ ಪ್ರಾತಿನಿಧ್ಯವನ್ನು ಎದುರಿಸುವುದಿಲ್ಲ. ಸೀಟು ಹೆಚ್ಚಳವು ಏಕರೂಪದ ಅನುಪಾತದ ಮಾದರಿಯನ್ನು ಅನುಸರಿಸುತ್ತದೆ. ಈ ಪ್ರಕ್ರಿಯೆ ಅದರ ಪಠ್ಯದಲ್ಲಿ ಬದಲಾವಣೆಗಳಿಲ್ಲದೆ ಅಸ್ತಿತ್ವದಲ್ಲಿರುವ ಕಾನೂನನ್ನು ಆಧರಿಸಿರುತ್ತದೆ. ಅನುಷ್ಠಾನವು 2029 ರ ನಂತರ ಮಾತ್ರ ನಡೆಯಲಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪ್ರಸ್ತುತ ಚುನಾವಣೆಗಳು ಪರಿಣಾಮ ಬೀರುವುದಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯು ಸಾಂವಿಧಾನಿಕವಾಗಿ ಅಗತ್ಯವಿದೆ. ಸಂಸತ್ತಿನ ಮತ್ತು ರಾಷ್ಟ್ರಪತಿಗಳ ಅನುಮೋದನೆಯ ನಂತರ ಮಾತ್ರ ಜಾರಿಗೆ ಬರುತ್ತದೆ ಎಂದು ಸರ್ಕಾರ ಹೇಳಿದೆ. ಭಾರತವು ಸ್ವಾತಂತ್ರ್ಯದ ನಂತರ ಕೇವಲ ಮೂರು ಬಾರಿ, 1951, 1961 ಮತ್ತು 1971 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯನ್ನು ನಡೆಸಿದೆ. ಜನಸಂಖ್ಯಾ ನಿಯಂತ್ರಣ ಪ್ರಯತ್ನಗಳನ್ನು ರಾಜಕೀಯ ಪ್ರಾತಿನಿಧ್ಯದೊಂದಿಗೆ ಸಮತೋಲನಗೊಳಿಸಲು ಈ ಪ್ರಕ್ರಿಯೆಯನ್ನು ದಶಕಗಳಿಂದ ಸ್ಥಗಿತಗೊಳಿಸಲಾಗಿತ್ತು.
ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ 'ಗೆರಿಮಾಂಡರಿಂಗ್' ಎಂದ ವಿಪಕ್ಷ: ಏನಿದು Gerrymandering? ಇದರ ಅರ್ಥವೇನು?
ಲೋಕಸಭೆಯಲ್ಲಿ ಸ್ಥಾನಗಳನ್ನು ಹೆಚ್ಚಿಸಲು ಭಾರತದ ಚುನಾವಣಾ ನಕ್ಷೆಯನ್ನು ಪುನರ್ರಚಿಸಲು ಸಂಬಂಧಿಸಿದ ಮೂರು ಮಸೂದೆಗಳನ್ನು ಚರ್ಚಿಸಲು ಈ ವಾರ ಸಂಸತ್ತು ವಿಶೇಷ ಅಧಿವೇಶನವನ್ನು ಕರೆದಿದೆ. ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸಿದರೂ, ಅದನ್ನು ಕ್ಷೇತ್ರ ಪುನರ್ವಿಂಗಡಣೆ ಜೊತೆ ಜೋಡಿಸಿದ್ದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ನಾವು ಮಹಿಳಾ ಮೀಸಲಾತಿಯನ್ನು ಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026, ಡಿಲಿಮಿಟೇಶನ್ ಮಸೂದೆ 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ 2026 ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಗೆ ತಿಳಿಸಿದರು. ಈ ವೇಳೆ ಡಿಲಿಮಿಟೇಶನ್ ಪ್ರಕ್ರಿಯೆಯ ಹಿಂದಿರುವ ಸರ್ಕಾರದ ನಿಜವಾದ ಉದ್ದೇಶ ರಾಜಕೀಯ ಲಾಭಕ್ಕಾಗಿ ಗೆರಿಮಾಂಡರಿಂಗ್ ಎಂದು ಗೊಗೊಯ್ ಹೇಳಿದ್ದಾರೆ. ಗೆರಿಮಾಂಡರಿಂಗ್ ಎಂಬ ಈ ಪದದ ಅರ್ಥ ಪ್ರಾತಿನಿಧ್ಯವನ್ನು ಬದಲಿಸಲು ಮತ್ತು ಅನ್ಯಾಯದ ರಾಜಕೀಯ ಪ್ರಯೋಜನವನ್ನು ಪಡೆಯಲು ಚುನಾವಣಾ ಕ್ಷೇತ್ರಗಳನ್ನು ಕುಶಲತೆಯಿಂದ ನಿರ್ವಹಿಸುವುದು. ಸರಳವಾಗಿ ಹೇಳುವುದಾದರೆ, ಗೆರಿಮಾಂಡರಿಂಗ್ ಎಂದರೆ ಮತದಾರರನ್ನು ನ್ಯಾಯಯುತವಾಗಿ ಪ್ರತಿನಿಧಿಸಲು ಅಲ್ಲ, ಬದಲಿಗೆ ಯಾರು ಗೆಲ್ಲುತ್ತಾರೆ ಎಂಬುದನ್ನು ಮೊದಲೇ ನಿರ್ಧರಿಸಲು ಚುನಾವಣಾ ಕ್ಷೇತ್ರಗಳ ಗಡಿಗಳನ್ನು ರೂಪಿಸುವುದು. ಈ ಆರೋಪವನ್ನು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. ಆದರೂ, ವಿರೋಧ ಪಕ್ಷಗಳು ಏಕೆ ಮನವರಿಕೆ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಏನು ಭರವಸೆ ನೀಡಿದೆ? ಮಸೂದೆಗಳು ನಿಜವಾಗಿ ಏನು ಹೇಳುತ್ತವೆ ಎಂಬುದನ್ನು ನೋಡೋಣ. ಲೋಕಸಭೆಯ ಸಂಖ್ಯೆಯನ್ನು ಕೊನೆಯದಾಗಿ 1970ರ ದಶಕದಲ್ಲಿ 543ಕ್ಕೆ ನವೀಕರಿಸಲಾಯಿತು. ನಂತರ ಎರಡು ಬಾರಿ 25 ವರ್ಷಗಳ ಕಾಲ ಮುಂದೂಡಲಾಯಿತು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಂತಹ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳು ಸಂಸತ್ತಿನಲ್ಲಿ ಇನ್ನಷ್ಟು ಪಾಲನ್ನು ಪಡೆಯುತ್ತವೆ ಎಂಬ ಭಯ ಯಾವಾಗಲೂ ಇತ್ತು. ತಮ್ಮ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಹೆಚ್ಚು ಪ್ರಗತಿಪರವಾಗಿರುವ ದಕ್ಷಿಣ ರಾಜ್ಯಗಳು ಕಡಿಮೆ ಸ್ಥಾನ ಪಾಲನ್ನು ಪಡೆಯುತ್ತವೆ. ಅದಕ್ಕಾಗಿಯೇ ಒಟ್ಟು ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯನ್ನು ಐದು ದಶಕಗಳಿಂದ ತಳ್ಳಲಾಗಿದೆ. ಮಹಿಳಾ ಕೋಟಾವನ್ನು ಸರಿಹೊಂದಿಸಲು ಸಾಧ್ಯವಾಗುವಂತೆ ದೊಡ್ಡ ಸದನವನ್ನು ರಚಿಸಲು ಸರ್ಕಾರ ಈಗ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಮಹಿಳಾ ಕೋಟಾ ಕಾನೂನನ್ನು ಈಗಾಗಲೇ 2023ರಲ್ಲಿ ಅಂಗೀಕರಿಸಲಾಗಿತ್ತು, ಆದರೆ ಅದರ ಅನುಷ್ಠಾನವನ್ನು ಮುಂದಿನ ಜನಗಣತಿ ಮತ್ತು ಡಿಲಿಮಿಟೇಶನ್ ಗೆ ಲಿಂಕ್ ಮಾಡಲಾಗಿದೆ. ಸಂವಿಧಾನದ ಪ್ರಕಾರ, ಆ ವರ್ಷದ ನಂತರದ ಇತ್ತೀಚಿನ ಜನಗಣತಿಯ ಪ್ರಕಾರ 2026ರ ನಂತರ ರಾಷ್ಟ್ರವ್ಯಾಪಿ ಡಿಲಿಮಿಟೇಶನ್ ನಡೆಯಬೇಕಿದೆ. 10 ವರ್ಷದ ಆವರ್ತ ಪ್ರಕಾರ ಅದು 2031ರ ಜನಗಣತಿಯಾಗುತ್ತಿತ್ತು. 2021ರ ಜನಗಣತಿ ಕೋವಿಡ್ ಮತ್ತು ಕೆಲವು ವಿವರಿಸಲಾಗದ ಕಾರಣಗಳಿಂದ ವಿಳಂಬವಾಯಿತು ಮತ್ತು ಈಗಷ್ಟೇ ಪ್ರಾರಂಭವಾಗಿದೆ. ಅಂದರೆ 2031ಕ್ಕಿಂತ ಬೇಗ ನಾವು ಹೊಸ ಜನಗಣತಿಯನ್ನು ಹೊಂದಬಹುದು. ಆದರೆ ಈಗ ಸರ್ಕಾರವು ಕ್ಷೇತ್ರ ಮರುವಿಂಗಡಣೆಗೆ 2011ರ ಜನಗಣತಿಯನ್ನು ಬಳಸಲು ಅಧಿಕಾರವನ್ನು ಬಯಸುತ್ತದೆ. ಕಾರ್ಯಾಂಗವು ಭವಿಷ್ಯದ ಜನಗಣತಿ ದತ್ತಾಂಶವನ್ನು ಆಯ್ಕೆ ಮಾಡಲು ಅವಕಾಶ ನೀಡುವ ಮೂಲಕ, ಈ ಮಸೂದೆಗಳು ಸಂಖ್ಯಾಶಾಸ್ತ್ರೀಯ ಪ್ರಕ್ರಿಯೆಯನ್ನು ರಾಜಕೀಯ ಸಾಧನವಾಗಿ ಪರಿವರ್ತಿಸುತ್ತವೆ. ಹಾಗಾಗಿ ಉತ್ತರದ ಜನಸಂಖ್ಯಾ ಪ್ರಮಾಣವು ತಮ್ಮ ಸ್ಥಾನ ಪಾಲನ್ನು ಹೆಚ್ಚಿಸಿಕೊಳ್ಳುತ್ತದೆ ಎಂಬ ದಕ್ಷಿಣದ ಭಯವನ್ನು ಇದು ನಿಜವಾಗಿಸುತ್ತದೆ. ಸರ್ಕಾರದ ‘ಗ್ಯಾರಂಟಿ’ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳ ಭಯವನ್ನು ನಿವಾರಿಸಲು ರಾಜ್ಯವಾರು ಸೀಟುಗಳ ವಿಂಗಡಣೆಯನ್ನು ಮಂಡಿಸಿದರು. ಈ ದತ್ತಾಂಶವು ದಕ್ಷಿಣ ರಾಜ್ಯಗಳು ಸೀಟುಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳುತ್ತದೆ. ಎಲ್ಲಾ ರಾಜ್ಯಗಳು 50%ರಷ್ಟು ಹೆಚ್ಚಳವನ್ನು ಪಡೆಯುತ್ತವೆ. ಆದ್ದರಿಂದ ಯಾರ ಪಾಲಿನಲ್ಲಿಯೂ ಯಾವುದೇ ಬದಲಾವಣೆಯಿಲ್ಲ. ದಕ್ಷಿಣದ ಅನುಪಾತದ ಪಾಲು ಸ್ಥಿರವಾಗಿ ಉಳಿಯುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಯಾರಿಗೂ ಅನ್ಯಾಯವಾಗುವುದಿಲ್ಲ” ಎಂದು “ಖಾತರಿ” ನೀಡಿದ್ದು, ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಆದರೆ ಇವು ಸಂಸತ್ತಿನಲ್ಲಿ ಮಾಡಲಾದ ರಾಜಕೀಯ ಬದ್ಧತೆಗಳಾಗಿವೆ. ಮಸೂದೆಗಳಲ್ಲಿ ಇದು ಇಲ್ಲ. ಅಮಿತ್ ಶಾ ಭರವಸೆ ನೀಡಿದ ಈ ಸೂತ್ರವು ಬದಲಾಗದ ಸಾಂವಿಧಾನಿಕ ಅಥವಾ ಶಾಸನಾತ್ಮಕ ರಕ್ಷಣೆಯಾಗಿ ಕ್ರೋಡೀಕರಿಸಲ್ಪಟ್ಟಿಲ್ಲವಾದ್ದರಿಂದ, ಸರಳ ಸಂಸತ್ತಿನ ಬಹುಮತದಿಂದ ಇದನ್ನು ಸುಲಭವಾಗಿ ತಿರಸ್ಕರಿಸಬಹುದು ಅಥವಾ ಬದಲಾಯಿಸಬಹುದು. ಇದು ಅಲ್ಪಾವಧಿಯ ನಂತರವೂ ಉಳಿಯುತ್ತದೆ ಎಂಬುದಕ್ಕೆ ಯಾವುದೇ ಖಾತರಿ ನೀಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಶುಕ್ರವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ಮಸೂದೆಗಳು ನಿಜವಾಗಿ ಏನು ಹೇಳುತ್ತವೆ? ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026 ಲೋಕಸಭಾ ಸ್ಥಾನಗಳ ಮಿತಿಯನ್ನು 550ರಿಂದ 850ಕ್ಕೆ ಏರಿಸಿದೆ. ಇದರಲ್ಲಿ ರಾಜ್ಯಗಳಿಂದ 815 ಸದಸ್ಯರವರೆಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರವರೆಗೆ ಏರಿಕೆಯಾಗುತ್ತದೆ. ಅಂದರೆ ಸಂಖ್ಯೆಗಳು ಗರಿಷ್ಠ 850ಕ್ಕೆ ಏರಬಹುದು. 50% ಸ್ಥಿರ ಹೆಚ್ಚಳಕ್ಕೆ ಸರಿಹೊಂದಿಸಲು, ಈ ಅಂಕಿ ಅಂಶವು ಈಗ 816 ಸ್ಥಾನಗಳಿಗೆ ತಲುಪಲಿದೆ ಎಂದು ಶಾ ಹೇಳಿದ್ದಾರೆ. ಹೆಚ್ಚಾಗಿ, ಮಸೂದೆಗಳು ಡಿಲಿಮಿಟೇಶನ್ ಅನ್ನು ಇತ್ತೀಚಿನ ಜನಗಣತಿಗೆ ಜೋಡಿಸಿದ ಅಸ್ತಿತ್ವದಲ್ಲಿರುವ ಸಾಂವಿಧಾನಿಕ ನಿಯಮವನ್ನು ತೆಗೆದುಹಾಕುತ್ತವೆ. ಲೋಕಸಭೆಯಲ್ಲಿ ಸರಳ ಬಹುಮತದೊಂದಿಗೆ ಸರ್ಕಾರವು ಡಿಲಿಮಿಟೇಶನ್ ಅನ್ನು ಯಾವಾಗ ನಡೆಸಬೇಕು ಮತ್ತು ಅದಕ್ಕಾಗಿ ಯಾವ ಜನಗಣತಿಯನ್ನು ಬಳಸಬೇಕು ಎಂಬುದನ್ನು ನಿರ್ಧರಿಸಬಹುದು ಎಂದು ಹೊಸ ಮಸೂದೆ ಹೇಳುತ್ತದೆ. ಪ್ರಸ್ತುತ ಸರ್ಕಾರ ಏನು ಹೇಳಿದರೂ, ಇದು ನಿಜವಾದ ಮಸೂದೆಯಲ್ಲಿನ ದೀರ್ಘಕಾಲೀನ ನಿಯಮವಾಗಿದೆ. ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಯಿತು? ಪ್ರಸ್ತುತ ಸರ್ಕಾರದ ಅಡಿಯಲ್ಲಿ ಈಗಾಗಲೇ ಅಸ್ಸಾಂ (2023) ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ (2022)ದಲ್ಲಿ ಸೀಮಿತ ಕ್ಷೇತ್ರ ಪುನರ್ವಿಂಗಡಣೆಯನ್ನು ಕೈಗೊಳ್ಳಲಾಗಿದೆ. ಇದು ಕ್ಷೇತ್ರಗಳ ಗಡಿಗಳನ್ನು ಮಾತ್ರ ಬದಲಾಯಿಸಬಹುದು, ಒಟ್ಟು ಸಂಖ್ಯೆಯನ್ನು ಅಲ್ಲ, ಏಕೆಂದರೆ 1970ರ ದಶಕದಿಂದ ಸಂಖ್ಯೆಯನ್ನು ಸ್ಥಗಿತಗೊಳಿಸಲಾಗಿದೆ. ಅಸ್ಸಾಂನಲ್ಲಿ 2023ರ ಕ್ಷೇತ್ರ ವಿಂಗಡಣೆಯ ನಂತರ, ಚಿಕ್ಕ ವಿಧಾನಸಭಾ ಕ್ಷೇತ್ರವು ರಾಜ್ಯದ ಸರಾಸರಿ ಮತದಾರರಲ್ಲಿ ಕೇವಲ 50%ನ್ನು ಹೊಂದಿದೆ ಎಂದು ತೋರಿಸಿದೆ. ಇದು 63%ರ ಪೂರ್ವ ಕ್ಷೇತ್ರ ವಿಂಗಡಣೆಯ ಅಂಕಿ ಅಂಶಕ್ಕಿಂತ ಕೆಟ್ಟದಾಗಿದೆ. ಸಂಸದೀಯ ಕ್ಷೇತ್ರಗಳಿಗೂ ಇದೇ ರೀತಿಯ ಪ್ರವೃತ್ತಿಗಳು ಕಂಡುಬಂದವು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ಕ್ಷೇತ್ರಗಳನ್ನು ಸಮಾನತೆಗೆ ಹತ್ತಿರ ತರಲಿಲ್ಲ, ಬದಲಿಗೆ ಅವುಗಳಲ್ಲಿ ಕೆಲವು ಇನ್ನಷ್ಟು ಅಸಮಾನತೆಯನ್ನು ಉಂಟುಮಾಡಿತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ ನಡೆಸಲಾದ 2008ರ ಕ್ಷೇತ್ರ ವಿಂಗಡಣೆಯು ಮತದಾರರ ಎಣಿಕೆಯಲ್ಲಿಯೂ ವ್ಯತ್ಯಾಸಗಳನ್ನು ತೋರಿಸಿತು. ಆದ್ದರಿಂದ ಅದು ಅಪೂರ್ಣವಾಗಿತ್ತು. ಆದರೆ ಹೆಚ್ಚಿನ ದೊಡ್ಡ ರಾಜ್ಯಗಳಲ್ಲಿ, 2008ರ ನಂತರ ಕ್ಷೇತ್ರಗಳ ನಡುವಿನ ವ್ಯತ್ಯಾಸ ಕಡಿಮೆಯಾಯಿತು. ಅಂದರೆ ಕ್ಷೇತ್ರಗಳು ಹೆಚ್ಚು ಸಮಾನವಾದವು. ವಿವಿಧ ಸಮುದಾಯಗಳು, ಧರ್ಮಗಳು, ಬೆಂಬಲ ಗುಂಪುಗಳು ವಿವಿಧ ಸ್ಥಾನಗಳಲ್ಲಿ ಹೇಗೆ ವಿಭಜನೆಯಾಗುತ್ತವೆ ಎಂಬುದರ ಬಗ್ಗೆ ನಿಜವಾದ ಭಯಗಳಿವೆ. ಅಸ್ಸಾಂನಲ್ಲಿ, ಸಮಾನ ಪ್ರಾತಿನಿಧ್ಯವೇ ತತ್ವವಾಗಿದ್ದರೆ, ಪ್ರತಿ ಲೋಕಸಭಾ ಸ್ಥಾನವು ಸರಿಸುಮಾರು 17.5 ಲಕ್ಷ ಮತದಾರರನ್ನು ಹೊಂದಿರಬೇಕಿತ್ತು. ಬದಲಾಗಿ, ಮುಸ್ಲಿಂ ಬಹುಸಂಖ್ಯಾತ ಧುಬ್ರಿ ಕ್ಷೇತ್ರದಲ್ಲಿ ಸುಮಾರು 10 ಲಕ್ಷ ಹೆಚ್ಚುವರಿ ಮತದಾರರಿದ್ದರು. ಅಂದರೆ ಧುಬ್ರಿಯಲ್ಲಿ ಚಲಾಯಿಸಲಾದ ಮತವು ರಾಜ್ಯದ ಬೇರೆಡೆ ಇರುವ ಮತಕ್ಕಿಂತ ಕಡಿಮೆ ಮೌಲ್ಯದ್ದಾಗಿದೆ. ಧುಬ್ರಿಗೆ ಹೆಚ್ಚುವರಿ ಮತದಾರರನ್ನು ನೆರೆಯ ಬಾರ್ಪೇಟಾದಿಂದ ಸೇರಿಸಲಾಗಿತ್ತು; ಅಲ್ಲಿಂದ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ತೆಗೆದುಹಾಕಲಾಯಿತು. ಇದು ಬಾರ್ಪೇಟಾವನ್ನು ರಾತ್ರೋರಾತ್ರಿ ಹಿಂದೂ ಬಹುಸಂಖ್ಯಾತ ಕ್ಷೇತ್ರವನ್ನಾಗಿ ಪರಿವರ್ತಿಸಿತು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೊದಲ ಬಾರಿಗೆ ಅದನ್ನು ಗೆದ್ದುಕೊಂಡಿತು. “ಡಿಲಿಮಿಟೇಶನ್ ಭವಿಷ್ಯದಲ್ಲಿಯೂ ಹಿಂದೂ ಬಹುಸಂಖ್ಯಾತರಿಗೆ ಬಾರ್ಪೇಟಾ ಲೋಕಸಭಾ ಸ್ಥಾನವನ್ನು ಭದ್ರಪಡಿಸಿದೆ” ಎಂದು ಎನ್ಡಿಎ ಜೊತೆ ಮೈತ್ರಿ ಹೊಂದಿರುವ ವಿದ್ಯಾರ್ಥಿ ಸಂಘದ ನಾಯಕರೊಬ್ಬರು ಆಗ ಹೇಳಿದ್ದರು. ಇಲ್ಲಿಯೇ ‘gerrymandering’ ಎಂಬ ಪದ ಪ್ರಸ್ತುತವಾಗುತ್ತದೆ. ಈ ಪದ ಹುಟ್ಟಿಕೊಂಡಿದ್ದು ಹೇಗೆ? 1812ರಲ್ಲಿ ಅಮೆರಿಕದ ಪತ್ರಿಕೆ ಬೋಸ್ಟನ್ ಗೆಜೆಟ್ ಗವರ್ನರ್ ಎಲ್ಬ್ರಿಡ್ಜ್ ಗೆರ್ರಿ ನೇತೃತ್ವದಲ್ಲಿ ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷಕ್ಕೆ ಪ್ರಯೋಜನವಾಗುವಂತೆ ಪುನರ್ರಚಿಸಲಾದ ಮ್ಯಾಸಚೂಸೆಟ್ಸ್ ಚುನಾವಣಾ ನಕ್ಷೆಯ ರಾಜಕೀಯ ವ್ಯಂಗ್ಯಚಿತ್ರವನ್ನು ಪ್ರಕಟಿಸಿದಾಗ ‘Gerrymandering’ ಎಂಬ ಪದ ಹುಟ್ಟಿಕೊಂಡಿತು. ನಕ್ಷೆಯ ಆಕಾರವು ಪೌರಾಣಿಕ ಸಲಾಮಾಂಡರ್ ಎಂಬ ಹಲ್ಲಿಯಂತಹ ಉಭಯಚರ ಪ್ರಾಣಿಯನ್ನು ಹೋಲುತ್ತಿತ್ತು. ಬೋಸ್ಟನ್ ನ ಔತಣಕೂಟದಲ್ಲಿ ಒಬ್ಬ ಕವಿ ಗವರ್ನರ್ ಹೆಸರನ್ನು ‘ಸಲಾಮಾಂಡರ್’ ಜೊತೆ ಸೇರಿಸಿ ಈ ಪದವನ್ನು ರಚಿಸಿದರು. ಇದು 1848ರ ಹೊತ್ತಿಗೆ ನಿಘಂಟುಗಳಲ್ಲಿ ಸೇರಿತು. ವಿರೋಧ ಪಕ್ಷವು ಎರಡು ವಿಭಿನ್ನ ರೀತಿಯ ಗೆರಿಮಾಂಡರಿಂಗ್ ಅನ್ನು ಎತ್ತಿ ತೋರಿಸಿದೆ. ಇವುಗಳನ್ನು ಪ್ರಸ್ತುತ ಭಾರತೀಯ ಶಾಸಕಾಂಗ ಚೌಕಟ್ಟಿನೊಳಗೆ ಶಸ್ತ್ರಾಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಅವರು ವಾದಿಸುತ್ತಾರೆ. ಮೊದಲನೆಯದು, ವಿರೋಧ ಪಕ್ಷಕ್ಕೆ ಒಲವು ತೋರುವ ಮತದಾರರನ್ನು ಸಾಧ್ಯವಾದಷ್ಟು ಕಡಿಮೆ ಕ್ಷೇತ್ರಗಳಿಗೆ ಕೇಂದ್ರೀಕರಿಸುವುದು. ಇದರಿಂದ ಅವರು ಆ ಕ್ಷೇತ್ರಗಳನ್ನು ದೊಡ್ಡ ಅಂತರದಿಂದ ಗೆಲ್ಲಬಹುದು, ಆದರೆ ಒಟ್ಟಾರೆ ಪ್ರಭಾವ ಕಡಿಮೆಯಾಗುತ್ತದೆ. ಎರಡನೆಯದು, ವಿರೋಧ ಪಕ್ಷದ ಮತದಾರರನ್ನು ಅನೇಕ ಕ್ಷೇತ್ರಗಳಲ್ಲಿ ತೆಳುವಾಗಿ ಚದುರಿಸುವುದು, ಇದರಿಂದ ಅವರು ಯಾವುದರಲ್ಲೂ ಬಹುಮತವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ದೀರ್ಘಕಾಲೀನ ಪ್ರಶ್ನೆಗಳು: ‘ಜನಸಂಖ್ಯೆ ಮಾತ್ರ ಆಧಾರವಾಗಿರಬಾರದು’ ಭಾರತದ ಡಿಲಿಮಿಟೇಶನ್ ಕಾನೂನು ಪ್ರತಿ ಕ್ಷೇತ್ರಕ್ಕೆ ಸಮಾನ ಮತದಾರರನ್ನು ಕಡ್ಡಾಯಗೊಳಿಸುವುದಿಲ್ಲ. ಅದು ಅಂದಾಜು ಜನಸಂಖ್ಯಾ ಸಮಾನತೆಯನ್ನು ಮಾತ್ರ ಒತ್ತಾಯಿಸುತ್ತದೆ. ಒಟ್ಟು ಜನಸಂಖ್ಯೆ ಮತ್ತು ಮತದಾರರ ಸಂಖ್ಯೆಯ ನಡುವಿನ ಈ ತಾಂತ್ರಿಕ ಅಂತರದಲ್ಲಿ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾದಾಗ ಅಥವಾ ಕಡಿಮೆಯಾದಾಗ ತಿರುಚುವಿಕೆ ಸಾಧ್ಯವಾಗುತ್ತದೆ. ಸರ್ಕಾರದ ಭರವಸೆಗಳು ಕೆಲವು ಭಯಗಳನ್ನು ನಿವಾರಿಸಲು ಪ್ರಯತ್ನಿಸುತ್ತವೆ. ಆದರೆ ಅವು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಡಿಲಿಮಿಟೇಶನ್ ಆಯೋಗವು ಯಾವುದೇ ರಾಜಕೀಯ ಲೆಕ್ಕಾಚಾರವಿಲ್ಲದೆ ಗಡಿಗಳನ್ನು ನಿರ್ಧರಿಸುತ್ತದೆ ಎಂಬ ಊಹೆಯ ಮೇಲೆ ನಿಂತಿವೆ. ಮಸೂದೆಗಳು ಅಂತಹ ಭಯಗಳನ್ನು ಪರಿಹರಿಸಲು ಯಾವುದೇ ಕಾನೂನುಬದ್ಧ ವ್ಯವಸ್ಥೆಯನ್ನು ಒದಗಿಸುವುದಿಲ್ಲ. ಭವಿಷ್ಯದ ಡಿಲಿಮಿಟೇಶನ್ ಯಾವಾಗ ಮತ್ತು ಯಾವ ದತ್ತಾಂಶದ ಆಧಾರದ ಮೇಲೆ ನಡೆಯಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಅವು ಸರ್ಕಾರಕ್ಕೆ ನೀಡುತ್ತವೆ. “ಸರ್ಕಾರವು ಮಹಿಳಾ ಮೀಸಲಾತಿಯನ್ನು ಬಯಸಿದರೆ, ಅವರು ಅದನ್ನು 2023ರಲ್ಲೇ ಜಾರಿಗೆ ತರಬಹುದಿತ್ತು” ಎಂದು ತರೂರ್ ಹೇಳಿದ್ದಾರೆ. ಮೂರು ವರ್ಷಗಳ ಹಿಂದೆ ಸರ್ವಪಕ್ಷಗಳ ಬೆಂಬಲದೊಂದಿಗೆ ಕೋಟಾವನ್ನು ಈಗಾಗಲೇ ಅನುಮೋದಿಸಲಾಗಿದೆ. “ನಾವು ಕೇವಲ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸುತ್ತೇವೆ, ಡಿಲಿಮಿಟೇಶನ್ ಅನ್ನು ಅಲ್ಲ” ಎಂದು ಅವರು ಹೇಳಿದರು. “ನೀವು ಡಿಲಿಮಿಟೇಶನ್ ಮಾಡುತ್ತಿರುವ ರೀತಿ, ನೀವು ಯೋಚಿಸದೆ ಮಾಡಿದ ಡಿಮಾನಿಟೈಸೇಶನ್ ನೋಡಿದರೆ ನಮಗೆ ಈ ರಾಜಕೀಯ ಡಿಲಿಮಿಟೇಶನ್ ಬೇಡ. ಸೂತ್ರ ಏನಾಗಿರಬೇಕು ಎಂಬುದರ ಕುರಿತು ದೊಡ್ಡ ಚರ್ಚೆ ನಡೆಯಬೇಕು. ಜನಸಂಖ್ಯೆ ಮಾತ್ರ ಆಧಾರವಾಗಿರಲು ಸಾಧ್ಯವಿಲ್ಲ. ದಕ್ಷಿಣ, ಈಶಾನ್ಯ, ಸಣ್ಣ ರಾಜ್ಯಗಳೊಂದಿಗೆ ಮಾತನಾಡಿ. ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ವಿವರವಾದ ಚರ್ಚೆ ಅಗತ್ಯವಿದೆ. ಆದರೆ ಈಗ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕು. ನಾವು ಅದನ್ನು ಬೆಂಬಲಿಸುತ್ತೇವೆ” ಎಂದು ಕೇರಳದ ಸಂಸದ ತರೂರ್ ಹೇಳಿದ್ದಾರೆ.
Aurad | ವಲಸೆ ತಡೆಯಲು ನರೇಗಾ ಯೋಜನೆಯಡಿ ಕೆಲಸ : ಶಿವಕುಮಾರ್ ಘಾಟೆ
ಔರಾದ್: ಬೇಸಿಗೆ ಕಾಲದಲ್ಲಿ ಗ್ರಾಮೀಣ ಜನರು ಉದ್ಯೋಗಕ್ಕಾಗಿ ಹೊರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸಲು ಗ್ರಾಮ ಮಟ್ಟದಲ್ಲೇ ನರೇಗಾ ಯೋಜನೆಯಡಿ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ತಿಳಿಸಿದ್ದಾರೆ. ತಾಲೂಕಿನ ಜೋಜನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋರ್ಗಿ ಗ್ರಾಮದಲ್ಲಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಡೆದ ರೋಜ್ಗಾರ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಗಂಡು ಹಾಗೂ ಹೆಣ್ಣು ಕಾರ್ಮಿಕರಿಗೆ ಸಮಾನವಾಗಿ ದಿನಕ್ಕೆ ₹370 ಕೂಲಿ ನೀಡಲಾಗುತ್ತಿದ್ದು, ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಅರ್ಹ ಕುಟುಂಬಕ್ಕೆ 100 ದಿನಗಳ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು. ಕಾರ್ಮಿಕರು ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗಳ ಲಾಭ ಪಡೆಯಬೇಕು ಎಂದು ಅವರು ಸಲಹೆ ನೀಡಿದರು. ಜೊತೆಗೆ NMMS ಮೂಲಕ ಹಾಜರಾತಿಯನ್ನು ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ದಾಖಲಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಜೋಜನಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನರಸಿಂಗ್ ಮಾನೆ ಮಾತನಾಡಿ, ಅರ್ಹ ಕುಟುಂಬಗಳಿಗೆ ನರೇಗಾ ಅಡಿಯಲ್ಲಿ ಉದ್ಯೋಗ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಪಂ ಐಇಸಿ ಸಂಯೋಜಕ ಅಂಬಾದಾಸ್ ಪಾಟೀಲ್, ಡಿಇಒ ನಾಗನಾಥ್ ಕುಂಟೆ, ತಾಂತ್ರಿಕ ಸಹಾಯಕ ಅಮರ್, ಚಂದ್ರಕಾಂತ್ ಪಾಟೀಲ್ ಹಾಗೂ ಉಮಾಕಾಂತ್ ವಿಳಾಸಪೂರೆ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಯವರು ಹಾಜರಿದ್ದರು.
Bidar | ಎ.22ರಂದು ಡಾ.ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಆಚರಣೆ : ಸಚಿವ ಈಶ್ವರ್ ಖಂಡ್ರೆ
ಬೀದರ್: ಎ.22ರಂದು ಡಾ.ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೃತ ಮಹೋತ್ಸವದ ಅಂಗವಾಗಿ 75 ದಿನಗಳ ಸರಣಿ ಸನ್ಮಾನ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅದರಂತೆ ಎ.14ರಂದು 75 ಸೈನಿಕರಿಗೆ, 15ರಂದು 75 ರೈತರಿಗೆ, 16ರಂದು 75 ಶಿಕ್ಷಕರಿಗೆ, 17ರಂದು ವಿವಿಧ ಕ್ಷೇತ್ರಗಳ 75 ಸಾಧಕರಿಗೆ, 18ರಂದು 75 ಸ್ವಚ್ಛತಾ ಕಾರ್ಮಿಕರಿಗೆ ಹಾಗೂ 19ರಂದು 75 ಬಸವತತ್ವ ಪ್ರಸಾರಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದಿವೆ ಎಂದು ಅವರು ಹೇಳಿದರು. ಎ.20ರಂದು ಬಸವಣ್ಣನವರ ಜಯಂತಿ, 21ರಂದು ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ವಚನ ಜಾತ್ರೆಯ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು. ಏಪ್ರಿಲ್ 22ರಂದು ಬೆಳಿಗ್ಗೆ 9 ಗಂಟೆಗೆ ಅಮೃತ ಮಹೋತ್ಸವ ಕಾರ್ಯಕ್ರಮ ಆರಂಭವಾಗಲಿದ್ದು, ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟನೆ ಮಾಡಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ. ಭಾಲ್ಕಿ ಮಠದ ಗುರುಬಸವ ಪಟ್ಟದೇವರು ಮಾತನಾಡಿ, ಬಸವಲಿಂಗ ಪಟ್ಟದೇವರ ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳು ಗಡಿ ಭಾಗದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಶಿಧರ್ ಕೋಸಂಬೆ, ಬಾಬು ವಾಲಿ, ಬಸವರಾಜ್ ಧನ್ನೂರ್ ಹಾಗೂ ಶಕುಂತಲಾ ಬೇಲ್ದಾಳೆ ಸೇರಿದಂತೆ ಇತರರು ಇದ್ದರು.
Bidar | ಡಾ.ಅಂಬೇಡ್ಕರ್ ಮೂರ್ತಿ ತೆರವಿಗಾಗಿ ವಿರೋಧಿಸಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ
ಬೀದರ್: ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ತೆರವುಗೊಳಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ದಲಿತ ಸಮುದಾಯದವರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ ಸುಮಾರು 25 ವರ್ಷಗಳಿಂದ ಅಸ್ತಿತ್ವದಲ್ಲಿರುವ ಅಂಬೇಡ್ಕರ್ ಪ್ರತಿಮೆ ಇರುವ ವೃತ್ತವನ್ನು ತಾಲೂಕು ಆಡಳಿತ ತೆರವುಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ. ಗ್ರಾಮಸ್ಥರ ಪ್ರಕಾರ, ಅದೇ ಪ್ರದೇಶದಲ್ಲಿ ಇತ್ತೀಚೆಗೆ ಬಸವೇಶ್ವರ ಮತ್ತು ಶಿವಾಜಿ ಮೂರ್ತಿಗಳನ್ನು ರಸ್ತೆ ಮೇಲೆಯೇ ಸ್ಥಾಪಿಸಲಾಗಿತ್ತು. ನಂತರ ಅವುಗಳನ್ನು ಆಡಳಿತ ತೆರವುಗೊಳಿಸಿದ ಬಳಿಕ, ಇತರ ಸಮುದಾಯದವರು ಅಂಬೇಡ್ಕರ್ ಮೂರ್ತಿಯನ್ನೂ ತೆರವುಗೊಳಿಸಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದಲಿತ ಮುಖಂಡರು, ಅಂಬೇಡ್ಕರ್ ಪ್ರತಿಮೆ ಹಲವು ವರ್ಷಗಳಿಂದ ಇದ್ದು ಪಂಚಾಯತ್ ದಾಖಲೆಗಳಲ್ಲಿಯೂ ಇರಬಹುದು ಎಂದು ಹೇಳಿ, ಯಾವುದೇ ಕಾರಣಕ್ಕೂ ತೆರವುಗೊಳಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಇದರಿಂದ ಭಾಲ್ಕಿ–ಹುಲಸೂರ್–ಬಸವಕಲ್ಯಾಣ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮಹಿಳಾ ಮೀಸಲು ಮಸೂದೆಗೆ ವೀರಶೈವ ಲಿಂಗಾಯತ ಯುವ ನಾಯಕಿ ನಾರಾ ವೈಜಯಂತಿ ರೆಡ್ಡಿ ಸ್ವಾಗತ ಸೂಚಿಸಿದ್ದಾರೆ. ಶುಕ್ರವಾರ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಮಹಿಳೆಯರ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಮೀಸಲಾತಿ ವಿಚಾರ ಹೊಸದಲ್ಲ ಎಂದು ಹೇಳಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಗಾಂಧಿಯವರ ಪ್ರಯತ್ನದಿಂದ ಮಹಿಳಾ ಮೀಸಲು ಮಸೂದೆ ಮೊದಲ ಬಾರಿಗೆ ಚರ್ಚೆಗೆ ಬಂದಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಅವರು 2010ರಲ್ಲಿ ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಮಂಡಿಸಲಾದರೂ ಲೋಕಸಭೆಯಲ್ಲಿ ಒಮ್ಮತ ಕೊರತೆ ಮತ್ತು ಕೆಲವು ಪಕ್ಷಗಳ ವಿರೋಧದಿಂದ ಅದು ಜಾರಿಯಾಗದೆ ಉಳಿಯಿತು ಎಂದು ತಿಳಿಸಿದ್ದಾರೆ. ಆದರೆ ಈಗ ಕೇಂದ್ರ ಸರ್ಕಾರ ಕೈಗೊಳ್ಳಲು ಯೋಚಿಸುತ್ತಿರುವ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜನಸಂಖ್ಯೆ ಆಧಾರಿತ ಪುನರ್ವಿಂಗಡಣೆಯಿಂದ ಉತ್ತರ ಭಾರತದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣ ರಾಜ್ಯಗಳಿಗೆ ಇದು ದಂಡನೆಯಂತಾಗಬಹುದು,” ಎಂದು ಅವರು ಹೇಳಿದ್ದಾರೆ. ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಹಿನ್ನಡೆಯಾಗದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಾಪ ಜಮೀರ್ ಅಹ್ಮದ್ ನನ್ನ ಜತೆ ಮಾತನಾಡಿಲ್ಲ; ರಾಜೀನಾಮೆ ಗಲಾಟೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಸಚಿವ ಜಮೀರ್ ಅಹ್ಮದ್ ಜೊತೆ ಸಂಪುಟ ಸಭೆಯಲ್ಲಿ ಯಾವುದೇ ಗಲಾಟೆಯಾಗಿಲ್ಲ ಹಾಗೂ ಅವರ ರಾಜೀನಾಮೆ ವದಂತಿ ಸುಳ್ಳು ಎಂದು ಡಿಕೆ ಶಿವಕುಮಾರ್ ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಗುರಿಯಾಗಿಸುತ್ತಿಲ್ಲ, ಬದಲಿಗೆ ರಕ್ಷಣೆ ಮಾಡುತ್ತಿದೆ ಎಂದಿರುವ ಅವರು, ಜಮೀರ್ ಸೇರಿದಂತೆ ಅಲ್ಪಸಂಖ್ಯಾತ ನಾಯಕರ ಒಪ್ಪಿಗೆ ಪಡೆದೇ ಟಿಕೆಟ್ ಹಂಚಿಕೆ ಮಾಡಲಾಗಿದೆ. ಹೈಕಮಾಂಡ್ ವರದಿ ಆಧರಿಸಿಯೇ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.
ಬ್ರಿಡ್ಜ್ ಟು ಬೆಂಗಳೂರು: ವಿವಿಧ ದೇಶಗಳ ರಾಯಭಾರಿಗಳು ಹಾಗೂ ರಾಜತಾಂತ್ರಿಕರೊಂದಿಗೆ ಸಂವಾದ ಕಾರ್ಯಕ್ರಮ
ಬೆಂಗಳೂರು ಸಂಚಾರ ನಿಯಂತ್ರಣ ಕೇಂದ್ರಕ್ಕೆ ನಾಸಿಹ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭೇಟಿ
ಬೆಂಗಳೂರು : ಬೆಂಗಳೂರಿನ ಫ್ರೆಜರ್ ಟೌನ್ನಲ್ಲಿರುವ ನಾಸಿಹ್ ಪಬ್ಲಿಕ್ ಶಾಲೆಯ 10ನೆ ತರಗತಿಯ ವಿದ್ಯಾರ್ಥಿಗಳು ಶುಕ್ರವಾರ ಬೆಂಗಳೂರು ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯ, ನಿಯಂತ್ರಣ ಕೇಂದ್ರ ಮತ್ತು ಸಂಚಾರ ಪೊಲೀಸ್ ಉದ್ಯಾನವನಕ್ಕೆ ಭೇಟಿ ನೀಡಿದರು. ಬೆಂಗಳೂರಿನಲ್ಲಿ ಸಂಚಾರ ಪೊಲೀಸರ ಇತಿಹಾಸ ಮತ್ತು ವಿಕಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು. ಪ್ರಮುಖ ರಸ್ತೆ ಸುರಕ್ಷತಾ ನಿಯಮಗಳನ್ನು ಅರ್ಥಮಾಡಿಕೊಂಡ ವಿದ್ಯಾರ್ಥಿಗಳು, ರಸ್ತೆಗಳಲ್ಲಿ ಜವಾಬ್ದಾರಿಯುತ ನಡವಳಿಕೆಯ ಬಗ್ಗೆ ಪ್ರಾಯೋಗಿಕ ಅರಿವನ್ನು ಪಡೆದರು. ಫ್ರೇಜರ್ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಶಾಲೆಗಳಿದ್ದು, ಈ ಪೈಕಿ ನಮ್ಮ ಶಾಲೆಯನ್ನು ಈ ಭೇಟಿಗಾಗಿ ಆಯ್ಕೆ ಮಾಡಿದ್ದಕ್ಕಾಗಿ ಫ್ರೇಜರ್ ಟೌನ್ನ ಸಂಚಾರ ಪೊಲೀಸ್ ನಿರೀಕ್ಷಕ ಮುಹಮ್ಮದ್ ವಸೀಮ್ ಮತ್ತು ಅವರ ಸಹಾಯಕರಿಗೆ ಶಾಲೆಯ ಮುಖ್ಯಸ್ಥ ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳ ಫಲಿತಾಂಶ ಪ್ರಕಟ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ 2025-26ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳ ಪಲಿತಾಂಶ ಪ್ರಕಟಿಸಿದೆ. ರಾಜ್ಯಾದ್ಯಂತ 13 ಕೇಂದ್ರದಲ್ಲಿ ಜ.30ರಿಂದ ಫೆ.1ರ ವರೆಗೆ ಏಕಕಾಲದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳನ್ನು 996 ಅಭ್ಯರ್ಥಿಗಳು ತೆಗೆದುಕೊಂಡಿದ್ದು, ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡ ಒಟ್ಟು 449 ಅಭ್ಯರ್ಥಿಗಳಲ್ಲಿ ಪರೀಕ್ಷೆಗೆ ಹಾಜರಾದವರು 414 ಅಭ್ಯರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ 339 ಒಟ್ಟು ಶೇ. 81.88ರಷ್ಟು ಫಲಿತಾಂಶ ಬಂದಿದೆ. ಅರ್ಚನಾ ಬಸವರಾಜ ಬಿರಾದಾರ ಪ್ರಥಮ ರ್ಯಾಂಕ್, ಶ್ರೇಯಸ್ ರಾಜು ಗುರುವ, ದ್ವಿತೀಯ ರ್ಯಾಂಕ್, ಅಥರ್ವ ಮಡಿವಾಳೇಶ್ವರ ಹಲಕಿ ತೃತೀಯ ರ್ಯಾಂಕ್ ಪಡೆದಿದ್ದಾರೆ. ಕಾವ ಪರೀಕ್ಷೆಯನ್ನು ತೆಗೆದುಕೊಂಡವರು ಒಟ್ಟು 417 ಅಭ್ಯರ್ಥಿಗಳು, ಅದರಲ್ಲಿ ಪರೀಕ್ಷೆಗೆ ಹಾಜರಾದವರು 367 ಅಭ್ಯರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ 253 ಶೇ.68.94ರಷ್ಟು ಫಲಿತಾಂಶ ಬಂದಿದೆ. ರಾಮು ಎಂ.ಎಸ್ ಪ್ರಥಮ ರ್ಯಾಂಕ್, ರಘುವೀರ್ ಎಂ.ಎನ್. ದ್ವಿತೀಯ ರ್ಯಾಂಕ್, ಧನ್ಯ ಎಚ್.ಯು. ತೃತೀಯ ರ್ಯಾಂಕ್ ಪಡೆದಿದ್ದಾರೆ. ಜಾಣ ಪರೀಕ್ಷೆಯನ್ನು ತೆಗೆದುಕೊಂಡವರು ಒಟ್ಟು 41 ಅಭ್ಯರ್ಥಿಗಳು, ಅದರಲ್ಲಿ ಪರೀಕ್ಷೆಗೆ ಹಾಜರಾದವರು 30 ಅಭ್ಯರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ 22 ಶೇ.73.33ರಷ್ಟು ಫಲಿತಾಂಶ ಬಂದಿದೆ. ನಿಕಿತಾ ಹನಮಂತ ದೊಡ್ಡಗೌಡರ ಪ್ರಥಮ ರ್ಯಾಂಕ್, ತನ್ವೀರ್ ನ.ಮುಜಾವರ್ ದ್ವಿತೀಯ ರ್ಯಾಂಕ್, ವೈಷ್ಣವಿ ಯಲ್ಲಪ್ಪ ಚೂರಿ ಮಾತನವರ ತೃತೀಯ ರ್ಯಾಂಕ್ ಪಡೆದಿದ್ದಾರೆ. ರತ್ನ ಪರೀಕ್ಷೆಯನ್ನು ತೆಗೆದುಕೊಂಡವರು ಒಟ್ಟು 87 ಅಭ್ಯರ್ಥಿಗಳು, ಪರೀಕ್ಷೆಗೆ ಹಾಜರಾದವರು 52 ಅಭ್ಯರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ 40 ಶೇ.76.92ರಷ್ಟು ಫಲಿತಾಂಶ ಬಂದಿದ್ದು, ಪೂರ್ಣಿಮಾ ಪ್ರಕಾಶ ಮಾತನವರ ಪ್ರಥಮ ರ್ಯಾಂಕ್, ನಿತ್ಯಾ ಹರೀಶ ಕಟ್ಟಿ ದ್ವಿತೀಯ ರ್ಯಾಂಕ್, ಅಂಕಿತಾ ಲಹರಿ ಎಂ.ಎನ್. ತೃತೀಯ ರ್ಯಾಂಕ್ ಪಡೆದಿದ್ದಾರೆ. ಫಲಿತಾಂಶವನ್ನು www.kasapa.in ವೆಬ್ಸೈಟ್ ಮೂಲಕ ಪಡೆದು ಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ: 080-26612991, 22423867, 26623584ಕ್ಕೆ ಸಂಪರ್ಕಿಸಬಹುದು ಎಂದು ಪರಿಷತ್ ಆಡಳಿತಾಧಿಕಾರಿ ಕೆ.ಎ.ದಯಾನಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಇಂದು (ಏ.17-ಶುಕ್ರವಾರ) ಮಹಿಳಾ ಮೀಸಲಾತಿಗೆ ಸಂಬಂಧಿಸಿದ ನಾರಿಶಕ್ತಿ ವಂದನ್ ಮಸೂದೆಗೆ ಸೋಲುಂಟಾಗಿದೆ. ಮಹತ್ವಾಕಾಂಕ್ಷಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಕ್ಷೇತ್ರ ಪುನರ್ವಿಂಗಡಣೆ ಕನಸು ಕೂಡ ಭಗ್ನವಾಗಿದೆ. ಈ ಮಧ್ಯೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಲು ಕಾಂಗ್ರೆಸ್ ಕಾರಣ ಎಂದು ಕರ್ನಾಟಕ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾಡಿರುವ ಎಕ್ಸ್ ಪೋಸ್ಟ್ ಗಮನ ಸೆಳೆದಿದೆ.
ಪ್ರೊ.ರಾಜಪ್ಪ ದಳವಾಯಿ ಅಧ್ಯಕ್ಷತೆಯಲ್ಲಿ ಪುಸ್ತಕ ಆಯ್ಕೆ ಸಮಿತಿ ರಚನೆ
ಬೆಂಗಳೂರು : ರಾಜ್ಯ ಸರಕಾರವು ಸಾಹಿತಿ ಪ್ರೊ. ರಾಜಪ್ಪ ದಳವಾಯಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಸಮಿತಿಯಲ್ಲಿ ರೇವಣ್ಣ ಬಿದರಿಗೇರಿ, ಟಿ. ಗುರುರಾಜ್, ಡಾ. ವಿನಯ ಒಕ್ಕುಂದ, ಡಾ. ಅರಣ್ ಜೋಳದ ಕೂಡ್ಲಗಿ, ವಿ.ಎಲ್ ನರಸಿಂಹಮೂರ್ತಿ, ವಿಜಯಲಕ್ಷ್ಮೀ ಆರ್.ಜೆ., ಮೀನಾಕ್ಷಿ ಬಾಳಿ, ನಾಗೇಶ್ ಹೆಗಡೆ, ಪ್ರೊ. ಶೌಕತ್ ಅಜೀಂ, ಡಾ. ವಿನಾಯಕ ಕಮತದ, ಸಿ. ಮರಿಸ್ವಾಮಿ, ಡಿ.ಎನ್. ಗುರುಪ್ರಸಾದ್, ಡಾ. ಶಾಂತರಾಜು ಎಚ್.ವಿ. ಸಮಿತಿಯ ಸದಸ್ಯರಾಗಿದ್ದಾರೆ. ರಾಜ್ಯದ ವಿಶ್ವವಿದ್ಯಾಲಯಗಳ ಪ್ರಸಾರಂಗಗಳ ನಿರ್ದೇಶಕರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಅಥವಾ ಅವರಿಂದ ನಾಮನಿರ್ದೇಶನಗೊಂಡ ಪ್ರಾಧಿಕಾರದ ಒಬ್ಬ ಸದಸ್ಯ, ಕನ್ನಡ ಸಾಹಿತ್ಯ ಪರಿಷತ್ತು ಅಥವಾ ಅವರಿಂದ ನಾಮನಿರ್ದೇಶನಗೊಂಡ ಒಬ್ಬ ಸದಸ್ಯ, ಕರ್ನಾಟಕ ವಿಜ್ಞಾನ ಪರಿಷತ್ನ ಅಧ್ಯಕ್ಷ ಅಥವಾ ಅವರಿಂದ ನಾಮನಿರ್ದೇಶನಗೊಂಡ ಒಬ್ಬ ಸದಸ್ಯ, ಪ್ರಕಾಶಕರ ಸಂಘದ ಪ್ರತಿನಿಧಿ ಸಮಿತಿಯ ಸದಸ್ಯರಾಗಿತ್ತಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಮಿತಿಯ ಅಧಿಕಾರವಧಿ ಎರಡು ವರ್ಷಗಳು ಅಥವಾ ಮುಂದಿನ ಸಮಿತಿ ಅಸ್ತಿತ್ವಕ್ಕೆ ಬರುವವರೆಗೆ ಇರಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಉಡುಪಿ: ನಾಗರಮಠ ಮರಳುಗಾರಿಕೆ ವಿರುದ್ಧದ ಹೋರಾಟ 3ನೇ ದಿನಕ್ಕೆ
ಉಡುಪಿ, ಎ.17: ನಾಗರಮಠದಲ್ಲಿ ಅವೈಜ್ಞಾನಿಕ ಹಾಗೂ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಅಲ್ಲಿನ ಕೃಷಿಕರು ಹಾಗೂ ಸಂತ್ರಸ್ಥರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಇಂದು ಎರಡನೇ ದಿನವನ್ನು ಪೂರ್ಣಗೊಳಿಸಿದೆ. ಬ್ರಹ್ಮಾವರ ತಾಲೂಕು ಹೊಸಾಳ ಗ್ರಾಮದ ನಾಗರಮಠದ ಸೀತಾನದಿಯ ದಂಡೆಯಲ್ಲಿ ಕಳೆದ 15ದಿನಗಳಿಂದ ನಡೆಯುತ್ತಿರುವ ಮರಳುಗಾರಿಕೆಯಿಂದ ಪರಿಸರದ 100ಕ್ಕೂ ಅಧಿಕ ಕುಟುಂಬಗಳು, ಕೃಷಿಭೂಮಿ ಸಮಸ್ಯೆಯನ್ನು ಎದುರಿಸುತ್ತಿವೆ. ನಾಗರಮಠದಲ್ಲಿ ಮೂರು ದಿನಗಳ ಕಾಲ ಮರಳುಗಾರಿಕೆ ಪ್ರದೇಶದಲ್ಲಿ ಧರಣಿ ನಡೆಸಿದ ಸಂತ್ರಸ್ಥರು ಗುರುವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲು ಮುಂದಾಗಿದ್ದಾರೆ. ಬೆಂಗಳೂರಿಗೆ ತೆರಳಿದ್ದ ಜಿಲ್ಲಾಧಿಕಾರಿ ಸ್ವರೂಪಾ ಅವರು ಇಂದು ಕಚೇರಿಗೆ ಆಗಮಿಸಿದ್ದರೂ, ಧರಣಿ ನಿರತರನ್ನು ನಿರ್ಲಕ್ಷಿಸಿ ಅವರ ಸಮಸ್ಯೆಗಳನ್ನು ಆಲಿಸದೇ ಹೋಗಿರುವುದು ಧರಣಿನಿರತರಲ್ಲಿ ಅಸಮಧಾನವನ್ನು ಮೂಡಿಸಿದೆ. ಇಂದು ಇಡೀ ದಿನದಲ್ಲಿ ಯಾವುದೇ ಅಧಿಕಾರಿ ಧರಣಿ ಸ್ಥಳಕ್ಕೆ ಆಗಮಿಸಿ ತಮ್ಮ ಅಹವಾಲು ಆಲಿಸಿಲ್ಲ ಎಂದು ಪ್ರತಿಭಟನಕಾರರು ತಿಳಿಸಿದರು. ನೂರಾರು ಮಂದಿ ಪೊಲೀಸರ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆಯ ವೇಳೆ ಗುತ್ತಿಗೆದಾರರಿಗೆ ಸಂಪೂರ್ಣ ಭದ್ರತೆ ಒದಗಿಸಿರುವ ಜಿಲ್ಲಾಧಿಕಾರಿಗಳು, ಇದರಿಂದ ಸಂಕಷ್ಟಕ್ಕೊಳಗಾಗಿರುವ, ತಲೆತಲಾಂತರದಿಂದ ಬಂದಿರುವ ಕೃಷಿಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಕೃಷಿಕರು ಹಾಗೂ ಗ್ರಾಮಸ್ಥರ ಅಹವಾಲುಗಳನ್ನು ಕೇಳುವುದಕ್ಕೆ ನಿರಾಕರಿಸುತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು. ಇಡೀ ವ್ಯವಸ್ಥೆ ದುಡ್ಡಿದ್ದವರ ಪರವಾಗಿ ನಿಂತು, ಮರಳುಗಾರಿಕೆ ವಿರೋಧಿಸುತ್ತಿರುವ ಬಡಜನರ, ಕೃಷಿಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಸತಾಯಿಸುತ್ತಿದೆ. ಅವೈಜ್ಞಾನಿಕ, ಅಕ್ರಮ ಮರಳುಗಾರಿಕೆಯಿಂದ ಗ್ರಾಮದ ಜನತೆ ಇಂದು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದರು. ಎ.16ರಿಂದ 23ರವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತುಕೊಳ್ಳಲು ಅನುಮತಿಯನ್ನು ಕೋರಿ ಮನವಿ ಸಲ್ಲಿಸಿದ್ದರೂ, ಧರಣಿ ನಡೆಸಲು ನೀವು ಪ್ರತಿದಿನ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿ ಪೊಲೀಸರು ತಮ್ಮನ್ನು ಸತಾಯಿಸುತಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಚಂದ್ರ ಕಾಂಚನ್ ದೂರಿದ್ದಾರೆ. ಪ್ರತಿಭಟನೆ ನಡೆಸದಂತೆ ತಮ್ಮನ್ನು ತಡೆಯುವ ಪ್ರಯತ್ನ ನಡೆದಿದ್ದು, ಆದರೆ ಏನೇ ಇದ್ದರೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದವರು ಹೇಳಿದರು.
Bihar | ಮುಖ್ಯಮಂತ್ರಿ ಸಾಮ್ರಾಟ್ ಚೌಧರಿಗೆ ಜೀವ ಬೆದರಿಕೆ: ಗುಜರಾತ್ ನಿಂದ ವ್ಯಕ್ತಿಯೊಬ್ಬನ ಬಂಧನ
ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಚುನಾಯಿತರಾಗಿರುವ ಸಾಮ್ರಾಟ್ ಚೌಧರಿಗೆ ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ಗುಜರಾತ್ನಿಂದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಿಹಾರದ ಬಂಕಾ ಜಿಲ್ಲೆಯ ನಿವಾಸಿ ಶೇಖರ್ ಯಾದವ್ (32) ಎಂದು ಗುರುತಿಸಲಾಗಿದೆ. ತನ್ನ ಮೊಬೈಲ್ ಫೋನ್ ಬಳಸಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಕರೆ ಮಾಡಿದ ಆರೋಪಿಯು, ಅವರನ್ನು ಹತ್ಯೆಗೈಯುವ ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು, ಮುಂಗೇರ್ ಜಿಲ್ಲೆಯ ಸಂಗ್ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮುಂಗೇರ್ ಜಿಲ್ಲೆಯ ತಾರಾಪುರ ವಿಧಾನಸಭಾ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಬೆದರಿಕೆ ಕರೆ ಬಂದ ಬೆನ್ನಿಗೇ, ಬಿಹಾರ ಮತ್ತು ಗುಜರಾತ್ ಪೊಲೀಸರು ಆರೋಪಿಯ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಆತನ ವಾಸ್ತವ್ಯ ಗುಜರಾತ್ನ ಸಾನಂದ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಅಲ್ಲಿಂದ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಗುಜರಾತ್ನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ ಪೊಲೀಸರು ಆರೋಪಿಯನ್ನು ಬಿಹಾರ ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ಸದ್ಯ ಆತನನ್ನು ವಿಚಾರಣೆಗಾಗಿ ಟ್ರಾನ್ಸಿಟ್ ರಿಮ್ಯಾಂಡ್ ಮೇಲೆ ಬಿಹಾರಕ್ಕೆ ಕರೆತರಲಾಗುತ್ತಿದೆ. ಬೆದರಿಕೆ ಕರೆ ಹಿಂದಿನ ಕಾರಣವನ್ನು ಇನ್ನೂ ಪತ್ತೆಹಚ್ಚಬೇಕಿದೆ ಎಂದು ರಾಜ್ಯ ಪೊಲೀಸ್ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಆತ ಇಲ್ಲಿಗೆ ತಲುಪಿದ ಬಳಿಕ ಆತನನ್ನು ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಕಾರ್ಮಿಕ ಹೋರಾಟಗಳ ಮೇಲಿನ ದಮನ ಖಂಡಿಸಿ ಎ.17ಕ್ಕೆ ದೇಶವ್ಯಾಪಿ ಪ್ರತಿಭಟನೆ : ಸಿಐಟಿಯು ಕರೆ
ಬೆಂಗಳೂರು : ಉತ್ತರ ಪ್ರದೇಶ ಮತ್ತು ಹರಿಯಾಣದ ಬಿಜೆಪಿ ಸರಕಾರಗಳು ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್ ಮತ್ತು ದಿಲ್ಲಿಯಲ್ಲಿ ಕಾರ್ಮಿಕರ ಹೋರಾಟಗಳ ಮೇಲೆ ನಡೆಸುತ್ತಿರುವ ಕ್ರೂರ ದಮನವನ್ನು ಖಂಡಿಸಿ ಭಾರತೀಯ ಟ್ರೇಡ್ ಯೂನಿಯನ್ ಕೇಂದ್ರ(ಸಿಐಟಿಯು) ಎಪ್ರಿಲ್ 17ರಂದು ದೇಶದ ಎಲ್ಲ ಕೈಗಾರಿಕಾ ಘಟಕಗಳು, ಕಾರ್ಖಾನೆ ದ್ವಾರಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲು ಕರೆ ನೀಡಿದೆ. ಶುಕ್ರವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮೀ ಮಾತನಾಡಿ, ಇದು ಕೇವಲ ಕೈಗಾರಿಕಾ ವಿವಾದವಲ್ಲ-ಇದು ನೇರ ವರ್ಗ ಸಂಘರ್ಷದ ಧೈರ್ಯಶಾಲಿ ಅಭಿವ್ಯಕ್ತಿ, ಇಲ್ಲಿ ಸರಕಾರದ ಯಂತ್ರಾಂಗವು ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ಕಾರ್ಮಿಕರ ಹಕ್ಕುಗಳನ್ನು ತೀವ್ರತರವಾಗಿ ಕುಗ್ಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎನ್ಸಿಆರ್, ಹರಿಯಾಣ, ರಾಜಸ್ಥಾನ, ಗುಜರಾತ್, ಬಿಹಾರ ಮತ್ತು ಇತರ ಕೈಗಾರಿಕಾ ಕೇಂದ್ರಗಳ ಕಾರ್ಮಿಕರು ಶಾಶ್ವತ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕ ವ್ಯವಸ್ಥೆ, ಅತಿ ಕಡಿಮೆ ವೇತನ, ಅಮಾನವೀಯ ಕೆಲಸದ ಪರಿಸ್ಥಿತಿಗಳು, ಕಾರ್ಮಿಕ ವಿರೋಧಿ ಲೇಬರ್ ಕೋಡ್ಗಳು ಮತ್ತು ಸರಕಾರದ ದಮನದ ವಿರುದ್ಧ ಏಕೀಕೃತ ಹೋರಾಟ ನಡೆಸುತ್ತಿದ್ದಾರೆ ಎಂದು ವರಲಕ್ಷ್ಮೀ ತಿಳಿಸಿದರು. ದಿಲ್ಲಿಯ ಶಕ್ತಿ ಕೇಂದ್ರದಲ್ಲಿ ಗುತ್ತಿಗೆ ಕಾರ್ಮಿಕರ ನಿರ್ದಯ ಶೋಷಣೆಯಿದೆ. ಅಲ್ಲಿ ಬಹುಪಾಲು ಗುತ್ತಿಗೆ ಕಾರ್ಮಿಕರಿದ್ದಾರೆ. ತಿಂಗಳಿಗೆ 10,000-12,000 ವೇತನ, 10-13 ಗಂಟೆಗಳ ಕೆಲಸದ ದಿನ. ಡಬಲ್ ಓವರ್ಟೈಮ್ ಇಲ್ಲ, ವಾರದ ವಿಶ್ರಾಂತಿ ಇಲ್ಲ, ಇಎಸ್ಐ, ಪಿಎಫ್, ಬೋನಸ್, ಉದ್ಯೋಗ ಭದ್ರತೆ ಮತ್ತು ಮೂಲಭೂತ ಸುರಕ್ಷತೆಗಳಿಲ್ಲದೆ ಅವರನ್ನು ಬಳಕೆ ಮಾಡಬಹುದಾದ ಕಾರ್ಮಿಕರಂತೆ ಕಾಣಲಾಗುತ್ತಿದೆ. ಖಾಯಂ ಕಾರ್ಮಿಕರ ಸಮಾನ ಹಕ್ಕುಗಳನ್ನು ನಿರಾಕರಿಸಲಾಗಿದೆ. ಲೇಬರ್ ಕೋಡ್ಗಳು ಈ ಶೋಷಣೆಯನ್ನು ಕಾನೂನುಬದ್ಧಗೊಳಿಸುವ ಸಾಧನಗಳಾಗಿವೆ ಎಂದು ವರಲಕ್ಷ್ಮೀ ತಿಳಿಸಿದರು. ಕಾರ್ಮಿಕರ ಕೆಲಸದ ಸಮಯವನ್ನು ವಿಸ್ತರಿಸಿ, ಹಕ್ಕುಗಳನ್ನು ದುರ್ಬಲಗೊಳಿಸಿ, ಒಪ್ಪಂದ ವ್ಯವಸ್ಥೆಯನ್ನು ಬಲಪಡಿಸುತ್ತಿವೆ. ಜಾಗತಿಕ ಯುದ್ಧದಿಂದ ಪ್ರೇರಿತ ಬೆಲೆ ಏರಿಕೆಯ ಪರಿಣಾಮ ಸಂಕಷ್ಟ ಹೆಚ್ಚಾಗಿದೆ. ಎಲ್ಪಿಜಿ ಬೆಲೆಗಳು 1 ಕೆ.ಜಿ. ಸಿಲಿಂಡರ್ಗೆ 70ರಿಂದ 400-600ರವರೆಗೆ ಏರಿಕೆಯಾಗಿದೆ. ಆಹಾರ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಿವೆ. ಕಾರ್ಮಿಕರು, ವಿಶೇಷವಾಗಿ ವಲಸೆ ಕಾರ್ಮಿಕರು, ಬದುಕಿನ ಅಂಚಿನಲ್ಲಿದ್ದಾರೆ ಎಂದು ವರಲಕ್ಷ್ಮೀ ತಿಳಿಸಿದರು. ಈ ಸಮಸ್ಯೆಗಳನ್ನು ಪರಿಹರಿಸುವ ಬದಲು, ಬಿಜೆಪಿ ಸರಕಾರಗಳು ದಮನ ಮತ್ತು ತಪ್ಪು ಪ್ರಚಾರವನ್ನು ಆರಿಸಿಕೊಂಡಿವೆ. 300-400ಕ್ಕೂ ಹೆಚ್ಚು ಕಾರ್ಮಿಕರನ್ನು ಬಂಧಿಸಲಾಗಿದೆ; ಅವರ ಮನೆಗಳು ಮತ್ತು ಹಳ್ಳಿಗಳ ಮೇಲೆ ದಾಳಿ ನಡೆಸಲಾಗಿದೆ; ಕುಟುಂಬಗಳನ್ನು ಭೀತಿಗೊಳಿಸಲಾಗಿದೆ. ಟ್ರೇಡ್ ಯೂನಿಯನ್ ನಾಯಕರು, ವಿಶೇಷವಾಗಿ ಸಿಐಟಿಯು ನಾಯಕರು, ಅನಧಿಕೃತವಾಗಿ ಬಂಧಿಸಲ್ಪಟ್ಟಿದ್ದಾರೆ. ಮಹಿಳಾ ಕಾರ್ಮಿಕರ ಮೇಲೆ ಕ್ರೂರ ಹಲ್ಲೆಗಳು ನಡೆದಿವೆ ಎಂದು ವರಲಕ್ಷ್ಮೀ ಖಂಡಿಸಿದರು. 2014ರಿಂದ ಕನಿಷ್ಠ ವೇತನ ಪರಿಷ್ಕರಣೆ ಇಲ್ಲದಿರುವುದು, ಬೆಲೆ ಏರಿಕೆ ಮತ್ತು ಟ್ರೇಡ್ ಯೂನಿಯನ್ ಚಟುವಟಿಕೆಗಳ ದಮನದ ಫಲವಾಗಿದೆ. ಈಗ ಕಾರ್ಮಿಕರು ಮೌನವನ್ನು ಮುರಿದು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ. ಸಿಐಟಿಯು ಹೋರಾಟದಲ್ಲಿರುವ ಕಾರ್ಮಿಕರೊಂದಿಗೆ ದೃಢವಾಗಿ ನಿಂತಿದ್ದು, ಬಂಧಿತರನ್ನು ತಕ್ಷಣ ಮತ್ತು ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆ ಮಾಡಬೇಕು, ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ದಮನವನ್ನು ನಿಲ್ಲಿಸಬೇಕು ಮತ್ತು ಅನಧಿಕೃತ ಬಂಧನಗಳನ್ನು ರದ್ದುಗೊಳಿಸಬೇಕು ಎಂದು ವರಲಕ್ಷ್ಮೀ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರು ಭಾಗವಹಿಸಿದ್ದರು.
ಕೇಂದ್ರ ಸರಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಸಿಎಂ ಮಾನ್ ಆರೋಪ
ಚಂಡಿಗಢ, ಎ. 17: ರಾಜ್ಯ ಸಚಿವ ಸಂಜೀವ್ ಅರೋರಾ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಶುಕ್ರವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಜಾಪ್ರಭುತ್ವ ಕೊಲೆಯಾಗುತ್ತಿದೆ ಮತ್ತು ಬಿಜೆಪಿಯೇತರ ಸರಕಾರಗಳಿಗೆ ಮಾತ್ರ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕೇಂದ್ರ ಸರಕಾರ ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐಯಂತಹ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂಬುದನ್ನು ಈ ದಾಳಿಗಳು ತೋರಿಸುತ್ತವೆ ಎಂದಿದ್ದಾರೆ. ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ ಮಿತ್ತಲ್ ಅವರ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು ಎಂದಿದ್ದಾರೆ. “35ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಸೇರಿದಂತೆ ಮಿತ್ತಲ್ ಅವರ ಲವ್ಲಿ ವೃತ್ತಿಪರ ವಿಶ್ವವಿದ್ಯಾನಿಲಯದಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರು ಆಪ್ನ ರಾಜ್ಯಸಭಾ ಸದಸ್ಯರಾಗಿದ್ದುದರಿಂದ ಇದ್ದಕ್ಕಿದ್ದಂತೆ ಕಳಂಕಿತರಾದರು” ಎಂದು ಮಾನ್ ಹೇಳಿದರು. ಪಂಜಾಬ್ ನ ಎಲ್ಲಾ 117 ವಿಧಾನಸಭಾ ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅದು ED ಕ್ರಮ, ಆದಾಯ ತೆರಿಗೆ ಇಲಾಖೆಯ ನೋಟಿಸ್ ಮತ್ತು ಬೆದರಿಕೆಯನ್ನು ಅವಲಂಬಿಸುತ್ತಿದೆ ಎಂದು ಅವರು ಆರೋಪಿಸಿದರು. ಈ ಪರಿಸ್ಥಿತಿಯಲ್ಲಿ ಅವರನ್ನು ಬೆದರಿಸಲು ಬಿಜೆಪಿ ED ಯನ್ನು ಕಳುಹಿಸುತ್ತಿದೆ. ಇದರಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಥವಾ ಅವರ “ವಾಷಿಂಗ್ ಮೆಷಿನ್” ಮೂಲಕ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಇದು ಅಪಾಯಕಾರಿ ಪ್ರವೃತ್ತಿ ಎಂದು ಮಾನ್ ಹೇಳಿದ್ದಾರೆ.
ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಮೇಲೆ ಗುಂಡಿನ ದಾಳಿ ಪ್ರಕರಣ: ಆರೋಪಿ ಬಂಧನ
ಲಕ್ನೋ, ಎ. 17: ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈಯಲ್ಲಿರುವ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಉತ್ತರಪ್ರದೇಶ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಹಾಗೂ ಮುಂಬೈ ಪೊಲೀಸ್ನ ಕ್ರೈಮ್ ಬ್ರಾಂಚ್ ಆಗ್ರಾದಲ್ಲಿ ಗುರುವಾರ ಬಂಧಿಸಿದೆ. ಆರೋಪಿಯನ್ನು ಪ್ರದೀಪ್ ಕುಮಾರ್ ಅಲಿಯಾಸ್ ಗಾಥ್ ಎಂದು ಗುರುತಿಸಲಾಗಿದೆ. ಈತನನ್ನು ಆಗ್ರಾದ ಬಾಹ್ ಪೊಲೀಸ್ ಠಾಣಾ ವ್ಯಾಪ್ತಿಯ ಆಗ್ರಾ–ಎಟಾ ರಸ್ತೆಯ ಛಾಡಮಿ ಮಠ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಮುಂಬೈಯ ಜುಹು ಪ್ರದೇಶದಲ್ಲಿರುವ ರೋಹಿತ್ ಶೆಟ್ಟಿ ಅವರ ನಿವಾಸ ‘ರೋಹಿತ್ ಟವರ್’ ಮೇಲೆ 2026 ಫೆಬ್ರವರಿ 1ರಂದು ರಾತ್ರಿ ಗುಂಡಿನ ದಾಳಿ ನಡೆಸಲಾಗಿತ್ತು. ಹಣ ಸುಲಿಗೆ ಮಾಡಲು ಮತ್ತು ಚಿತ್ರೋದ್ಯಮ ಹಾಗೂ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ಕುಖ್ಯಾತ ಶುಭಂ ಲೋಂಕರ್ ತಂಡದ ಆಣತಿಯಂತೆ ಈ ದಾಳಿ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಪುರಾ ಬುಡಕಟ್ಟು ಮಂಡಳಿ ಚುನಾವಣೆ | ಟಿಪ್ರಾ ಮೋಥಾ ಪಕ್ಷಕ್ಕೆ ಅಭೂತಪೂರ್ವ ಜಯ
ಅಗರ್ತಲ, ಎ. 17: ತ್ರಿಪುರಾ ಬುಡಕಟ್ಟು ಪ್ರದೇಶ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ)ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪ್ರದ್ಯೋತ್ ದೇಬಬರ್ಮ ನೇತೃತ್ವದ ಟಿಪ್ರಾ ಮೋಥಾ ಪಕ್ಷ (ಟಿಎಂಪಿ) ಅಭೂತಪೂರ್ವ ಜಯ ಸಾಧಿಸಿದೆ ಎಂದು ರಾಜ್ಯ ಚುನಾವಣಾ ಆಯೋಗ (ಎಸ್ಇಸಿ) ತಿಳಿಸಿದೆ. ಟಿಪ್ರಾ ಮೋಥಾ ಪಕ್ಷವು 28 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಅದು ತಿಳಿಸಿದೆ. ಸತತ ಎರಡನೇ ಬಾರಿ ಜಯ ಸಾಧಿಸಿರುವ ಈ ಪಕ್ಷವು ‘ಗ್ರೇಟರ್ ಟಿಪ್ರಾಲ್ಯಾಂಡ್’ ಬೇಡಿಕೆಯನ್ನು ಮುಂದಿಟ್ಟುಕೊಂಡಿದ್ದು, 2002ರಲ್ಲಿ ಮಾಜಿ ರಾಜಮನೆತನದ ವಂಶಸ್ಥರು ಇದನ್ನು ಸ್ಥಾಪಿಸಿದ್ದರು. ರಾಜ್ಯದ ಬುಡಕಟ್ಟು ಜನರ ಮೇಲೆ ಬಲವಾದ ಹಿಡಿತವನ್ನು ಮರುಸ್ಥಾಪಿಸಿದೆ.
ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆ; ಬೆಸ್ಕಾಂ, ಸೆಸ್ಕ್ ಬೆಲೆ ಏರಿಕೆ! ಮೆಸ್ಕಾಂ, ಜೆಸ್ಕಾಂ ಸೇರಿ ಹಲವೆಡೆ ಇಳಿಕೆ
ಕರ್ನಾಟಕದಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗಿದೆ. ಬೆಸ್ಕಾಂ, ಸೆಸ್ಕ್ ದರ ಏರಿಕೆಯಾಗಿದ್ದು, ಮೆಸ್ಕಾಂ ಸೇರಿದಂತೆ ಹಲವೆಡೆ ದರ ಇಳಿಕೆಯಾಗಿದೆ. ಈ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.
ಬೆಸ್ಕಾಂ: ಪ್ರತಿ ಯುನಿಟ್ಗೆ 56 ಪೈಸೆ ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್ ಸಿ ಅನುಮತಿ
ಬೆಂಗಳೂರು, ಎ.17: 2024-25ನೆ ಆರ್ಥಿಕ ವರ್ಷದಲ್ಲಿ ಉಂಟಾದ ಆದಾಯ ಕೊರತೆಯನ್ನು ನೀಗಿಸಲು ಪ್ರತಿ ಯುನಿಟ್ಗೆ 56 ಪೈಸೆಯನ್ನು ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಕೆಇಆರ್ಸಿ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ. 2024-25ನೆ ಆರ್ಥಿಕ ವರ್ಷದಲ್ಲಿ ವಿದ್ಯುತ್ ಮಾರಾಟದಿಂದ ಬೆಸ್ಕಾಂಗೆಎ 2,068 ಕೋಟಿ ರೂ.ಗಳ ಆದಾಯ ಕೊರತೆ ಎದುರಾಗಿತ್ತು. ಅದನ್ನು ಸರಿದೂಗಿಸಲು ಕೆಇಆರ್ಸಿ ಬೆಸ್ಕಾಂಗೆ ಅನುಮತಿ ನೀಡಿದೆ ಎನ್ನಲಾಗಿದೆ.
ಪಜೀರು: ಬಾಲಕಿ ನಾಪತ್ತೆ; ಲುಕ್ ಔಟ್ ನೋಟಿಸ್ ಜಾರಿ
ಕೊಣಾಜೆ: ಪಜೀರು ಗ್ರಾಮದ ಅಡ್ಕ ಎಂಬಲ್ಲಿಯ ತನ್ನ ಮನೆಯಿಂದ ಗೆಳೆಯರೊಂದಿಗೆ ಜಾತ್ರೆಗೆಂದು ತೆರಳಿದ್ದ ಬಾಲಕಿಯೊರ್ವಳು ನಾಪತ್ತೆಯಾಗಿದ್ದು, ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಪಜೀರು ಅಡ್ಕದ ಜಗದೀಶ್ ಎಂಬವರ ಪುತ್ರಿ ಚೈತನ್ಯ (16) ಎಂಬಾಕೆ ನಾಪತ್ತೆಯಾದ ಬಾಲಕಿ. ಈಕೆ ಹರೇಕಳ ರಾಮಕೃಷ್ಣ ಹೈಸ್ಕೂಲ್ ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದು, ಪರೀಕ್ಷೆ ಮುಗಿಸಿ ಮನೆಯಲ್ಲಿ ಇದ್ದಳು. ಎ.12 ರಂದು ಬೆಳಿಗ್ಗೆ ಮನೆಯಲ್ಲಿ ಗೆಳೆಯರೊಂದಿಗೆ ಪೊಳಲಿ ಜಾತ್ರೆಗೆಂದು ತೆರಳಿದ್ದು, ಬಳಿಕ ರಾತ್ರಿಯವರೆಗೂ ಮನೆಗೆ ಬಾರದೆ ಇದ್ದುದರಿಂದ ಮನೆಯವರು ಆತಂಕಗೊಂಡು ಗೆಳೆಯರು ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ. ಬಳಿಕ ಮನೆಯವರು ಕೊಣಾಜೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
‘ನಾರಿ ಶಕ್ತಿ’ಯನ್ನು ಮುಳ್ಳಿನ ತಂತಿಯಲ್ಲಿ ಸುತ್ತಿಟ್ಟ ಪ್ರಧಾನಿ: ತರೂರ್
ಹೊಸದಿಲ್ಲಿ, ಎ. 17: ಮಹಿಳಾ ಮೀಸಲಾತಿ ಕಾನೂನಿಗೆ ತಿದ್ದುಪಡಿ ತರುವ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ರಚಿಸುವ ಉದ್ದೇಶದ ಮಸೂದೆಗಳ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಶುಕ್ರವಾರ ಕಿಡಿಗಾರಿದರು. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯನ್ನು ಪರಸ್ಪರ ಜೋಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ‘ನಾರಿ ಶಕ್ತಿ’ಯನ್ನು ಮುಳ್ಳಿನ ತಂತಿಯಲ್ಲಿ ಸುತ್ತಿಟ್ಟಿದ್ದಾರೆ ಎಂದು ಲೋಕಸಭೆಯಲ್ಲಿ ಮಾತನಾಡಿದ ಅವರು ಹೇಳಿದರು. ಮಹಿಳಾ ಮೀಸಲಾತಿಗೆ ವಿಶಾಲ ವ್ಯಾಪ್ತಿಯ ರಾಜಕೀಯ ಒಮ್ಮತದ ಅಗತ್ಯವಿದೆ ಎನ್ನುವುದನ್ನು ಒಪ್ಪಿಕೊಂಡ ಅವರು, ಕ್ಷೇತ್ರ ಪುನರ್ವಿಂಗಡಣೆಯು ಮತ್ತೊಂದು ‘‘ರಾಜಕೀಯ ನೋಟು ರದ್ದತಿ’’ಯಾಗಬಹುದು ಎಂದು ಎಚ್ಚರಿಸಿದರು. ‘‘ಸಾಂಕೇತಿಕತೆಯ ಸಮಯ ಮುಗಿದಿದೆ ಹಾಗೂ ಸಮಾನ ಭಾಗೀದಾರಿಕೆಯ ಕಾಲ ಆರಂಭವಾಗಬೇಕು ಎನ್ನುವುದನ್ನು ಈ ಸದನದಲ್ಲಿರುವ ಪ್ರತಿಯೊಂದು ಪ್ರಮುಖ ರಾಜಕೀಯ ಪಕ್ಷವೂ ಅನುಮೋದಿಸುತ್ತದೆ. ಆದರೂ, ನಮ್ಮ ಮುಂದೆ ಇರುವ ಈ ಮಸೂದೆಗಳಿಂದ ನಾನು ವಿಚಲಿತನಾಗಿದ್ದೇನೆ’’ ಎಂದರು. ‘‘ಸರಕಾರವು ‘ನಾರಿ ಶಕ್ತಿ’ ಎನ್ನುವ ನ್ಯಾಯವನ್ನು ಮಹಿಳೆಯರಿಗೆ ಉಡುಗೊರೆಯಾಗಿ ನೀಡುತ್ತಿದೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ, ಅವರು ಅದನ್ನು ಮುಳ್ಳಿನ ತಂತಿಯಿಂದ ಸುತ್ತಿಟ್ಟಿದ್ದಾರೆ. ಮಹಿಳಾ ಮೀಸಲಾತಿಯ ಜಾರಿಯನ್ನು ಸಂಸತ್ನ ವಿಸ್ತರಣೆಯೊಂದಿಗೆ ಜೋಡಿಸಿದ್ದಾರೆ’’ ಎಂದು ಅವರು ಹೇಳಿದರು.
ಸಂವಿಧಾನದ ಬದಲಿಗೆ ಮನುವಾದಕ್ಕೆ ಪ್ರಾಶಸ್ತ್ಯ: ರಾಹುಲ್ ಗಾಂಧಿ
ಹೊಸದಿಲ್ಲಿ, ಎ. 17: ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸರ್ಕಾರವು ‘‘ಸಂವಿಧಾನದ ಬದಲಿಗೆ ಮನುವಾದಕ್ಕೆ ಪ್ರಾಶಸ್ತ್ಯ ನೀಡುತ್ತಿದೆ’’ ಎಂದು ಆರೋಪಿಸಿದರು. ಜಾತಿ ಗಣತಿ ಕುರಿತ ಸರ್ಕಾರದ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತಾಪಿತ ಕಾನೂನಿನ ಉದ್ದೇಶ ಮತ್ತು ರಚನೆ ಎರಡನ್ನೂ ಪ್ರಶ್ನಿಸಿದರು. ‘‘ಸರ್ಕಾರವು ಸಂವಿಧಾನದ ಬದಲಿಗೆ ಮನುವಾದಕ್ಕೆ ಪ್ರಾಶಸ್ತ್ಯ ನೀಡುತ್ತಿದೆ. ಜಾತಿ ಗಣತಿ ಆರಂಭವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳುತ್ತಾರೆ. ಮನೆಗಳಿಗೆ ಜಾತಿ ಇಲ್ಲ ಎಂದು ಅವರು ಎರಡು ಬಾರಿ ಹೇಳಿದ್ದಾರೆ. ಇಲ್ಲಿರುವ ಪ್ರಶ್ನೆ ಎಂದರೆ, ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪ್ರಾತಿನಿಧ್ಯಕ್ಕೆ ಜಾತಿ ಗಣತಿಯನ್ನು ಬಳಸಲಾಗುವುದೇ ಎನ್ನುವುದು. ಶಾಸನಸಭೆಗಳಲ್ಲಿ ಪ್ರಾತಿನಿಧ್ಯಕ್ಕೂ ಜಾತಿ ಗಣತಿಗೂ ಮುಂದಿನ 15 ವರ್ಷಗಳ ಕಾಲ ಯಾವುದೇ ನಂಟು ಇರುವುದಿಲ್ಲ ಎಂಬ ಸೂಚನೆಯನ್ನು ಈಗ ನೀಡಲಾಗುತ್ತಿದೆ,’’ ಎಂದು ರಾಹುಲ್ ಹೇಳಿದರು. ‘‘ಸರ್ಕಾರ ಈಗ ಮಾಡುತ್ತಿರುವುದು ರಾಷ್ಟ್ರ ವಿರೋಧಿ ಕೃತ್ಯಕ್ಕೆ ಸಮವಾಗಿದೆ. ಈ ಮಸೂದೆಗಳು ಅಂಗೀಕಾರವಾಗಲು ನಾವು ಬಿಡುವುದಿಲ್ಲ. ಇವುಗಳನ್ನು ಸೋಲಿಸಲು ಇಡೀ ಪ್ರತಿಪಕ್ಷ ಒಂದಾಗಿ ನಿಲ್ಲಲಿದೆ,’’ ಎಂದು ಅವರು ಹೇಳಿದರು.
ಬಿ.ಸಿ.ರೋಡ್ - ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ 64 ಕೋಟಿ ರೂ. ಮಂಜೂರು: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ. ರೋಡ್ನಿಂದ ಪುಂಜಾಲಕಟ್ಟೆವರೆಗಿನ ಹೆದ್ದಾರಿ ನಿರ್ವಹಣೆ, ಬಿ.ಸಿ. ರೋಡ್ ಜಂಕ್ಷನ್ನಿಂದ ಗಾಣದಪಡ್ಪು ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ಕೇಂದ್ರ ಸರ್ಕಾರವು ಒಟ್ಟು 64 ಕೋಟಿ ರೂ. ಮಂಜೂರು ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಕಾಮಗಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿರುವ ಸಂಸದರು, ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ. ರೋಡ್ನಿಂದ ಪುಂಜಾಲಕಟ್ಟೆವರೆಗಿನ ಸುಮಾರು 20 ಕಿಮೀ. ಹೆದ್ದಾರಿಯ ನಿರ್ವಹಣೆ ಕಾಮಗಾರಿಗಳಿಗಾಗಿ ಒಟ್ಟು 34.53 ಕೋಟಿ ರೂ.ಗಳ ಅನುದಾನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಜೂರು ಮಾಡಿದೆ. ಜತೆಗೆ, ಬಿ.ಸಿ. ರೋಡ್ ಜಂಕ್ಷನ್ನಿಂದ ಬಂಟ್ವಾಳ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಶ್ರೀ ನಾರಾಯಣಗುರು ಮಂದಿರದವರೆಗಿನ ರಸ್ತೆ ಸದ್ಯ ಅಗಲೀಕರಣಕ್ಕೆ ಬಾಕಿಯಿದೆ. ಈ ಭಾಗದ ಹೆದ್ದಾರಿಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸು ವುದಕ್ಕೆ ಒಟ್ಟು 22.59 ಕೋಟಿ ರೂ.ಗಳ ಅನುದಾನ ದೊರೆತಿದೆ ಎಂದು ಚೌಟ ಹೇಳಿದ್ದಾರೆ. 73 ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ. ರೋಡ್ ಜಂಕ್ಷನ್, ಚಾರ್ಮಾಡಿ ಘಾಟಿಯಲ್ಲಿ ರಸ್ತೆಗಳ ನಿರ್ವಹಣೆ ಕಾಮಗಾರಿ ಗಾಗಿ 6.92 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಜಿಲ್ಲೆಯ ಈ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ನಮ್ಮ ಭಾಗದ ಸುಗಮ ಸಂಚಾರ ಹಾಗೂ ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡಲಿದೆ. ಮೂಲಸೌಕರ್ಯದ ಈ ಅಭಿವೃದ್ಧಿಯು ‘ವಿಕಸಿತ ದಕ್ಷಿಣ ಕನ್ನಡ’ ನಿರ್ಮಾಣದ ಮೂಲಕ ’ವಿಕಸಿತ ಭಾರತ’ದ ಸಂಕಲ್ಪ ಸಾಕಾರಗೊಳಿಸುವ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಚೌಟ ಹೇಳಿದ್ದಾರೆ. ದಕ್ಷಿಣ ಕನ್ನಡದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕೆಲಸಗಳಿಗೆ ಹಾಗೂ ಕೆಲವು ಕಡೆ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದಕ್ಕೆ ಕೇಂದ್ರ ಸರಕಾರದಿಂದ ಸೂಕ್ತ ಅನುದಾನ ದೊರೆಯುತ್ತಿರುವುದರಿಂದ ಜಿಲ್ಲೆಯಲ್ಲಿ ವಾಹನಗಳು ಹಾಗೂ ಸರಕು ವಾಹನಗಳ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ನಮ್ಮ ಜಿಲ್ಲೆಯ ಹೆದ್ದಾರಿಗಳ ಅಭಿವೃದ್ಧಿ ಕೆಲಸಗಳಿಗೆ ಸೂಕ್ತ ಅನುದಾನ ಮಂಜೂರು ಮಾಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಚೌಟ ಹೇಳಿದ್ದಾರೆ. ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ಹೆದ್ದಾರಿಯನ್ನು ಕೂಡ ಸುಮಾರು 613.665 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ. ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಯಾದ 73ರಲ್ಲಿ ಬಿ.ಸಿ ರೋಡ್ನಿಂದ ಪೂಂಜಾಲಕಟ್ಟೆ ವರೆಗೆ ಹೆದ್ದಾರಿ ನಿರ್ವಹಣೆಗೆ ಈಗ ಅನುದಾನ ಮಂಜೂರಾದ ಹಿನ್ನಲೆ ಶೀಘ್ರದಲ್ಲೇ ಕಾಮಗಾರಿ ಕೂಡ ಆರಂಭವಾಗಲಿದೆ. ಬಿ.ಸಿ. ರೋಡ್ ಜಂಕ್ಷನ್ ಬಳಿಯ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೂ ಚಾಲನೆ ದೊರೆಯಲಿದೆ. ಆ ಮೂಲಕ, ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಜಾಲ ಮತ್ತಷ್ಟು ಉತನ್ನತೀಕರಣಗೊಳ್ಳುವ ಕಾರ್ಯ ನಿರಂತರ ಪ್ರಗತಿಯಲ್ಲಿದೆ ಎಂದು ಸಂಸದ ಚೌಟ ತಿಳಿಸಿದ್ದಾರೆ.
ಮೈಸೂರಿನ ಮನೆಯೊಳಗೆ ಬಂದ ಚಿರತೆ: ಎರಡು ಗಂಟೆಗಳ ಕಾಲ ಮಂಚದ ಕೆಳಗಿದ್ದ ಚಿರತೆ ಸೆರೆ
ಮೈಸೂರು : ಮೈಸೂರಿನ ಹೃದಯ ಭಾಗದ ಸಿದ್ಧಾರ್ಥನಗರದ ಮನೆಯೊಳಗೇ ಚಿರತೆ ಬಂದಿರುವುದು ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಎರಡು ಗಂಟೆಗಳ ಕಾಲ ಮನೆ ಹೊಕ್ಕಿ ಕುಳಿತ ಚಿರತೆ ಮನೆಯವರಿಗೆ ಯಾವುದೇ ತೊಂದರೆ ಮಾಡಿಲ್ಲ. ಮಂಚದ ಮೇಲೆ ವಯಸ್ಸಾದ ವೃದ್ಧೆ ಮಲಗಿದ್ದರೆ, ಮಂಚದ ಕೆಳಗೆ ಚಿರತೆ ಮಲಗಿದೆ. ವೃದ್ಧೆಯೊಂದಿಗೆ ಮನೆಯಲ್ಲಿ ಅಳಿಯ ಸುರೇಶ್, ಮಗಳು, ಮನೆಗೆಸಲದ ಮಹಿಳೆ ಇದ್ದರು. ಸದ್ಯ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಮೈಸೂರು ನಗರದ ಸಿದ್ಧಾರ್ಥನಗರದ ಆಸುಪಾಸಿನಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆಯವರು ಸೂಚನೆ ನೀಡಿದ್ದಾರೆ. ಆ ಕಾರಣಕ್ಕಾಗಿ ಜನರು ಮನೆಯ ಬಾಗಿಲು ತೆಗೆಯದೆ ಒಳಗೇ ಇದ್ದರು. ಆದರೆ, ಸುರೇಶ್ ಎಂಬುವರು ಬೆಳಗ್ಗೆ 5 ರಿಂದ 10 ನಿಮಿಷ ಮನೆಯ ಮೇನ್ ಡೋರ್ ತೆಗೆದು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿರತೆ ಮನೆಯನ್ನು ಹೊಕ್ಕಿ ಮಂಚದ ಕೆಳಗೆ ಸೇರಿಕೊಂಡಿದೆ. ಆದರೆ, ಮನೆಯೊಳಗೇ ಚಿರತೆ ಇರುವ ಸುಳಿವೇ ಇಲ್ಲದೆ ಮನೆ ಮಂದಿ ಎಂದಿನಂತೆ ಕೆಲಸ ಕಾರ್ಯ, ಊಟ ಉಪಚಾರದಲ್ಲಿ ತೊಡಗಿಕೊಂಡಿದ್ದಾರೆ. ಮನೆ ಕೆಲಸದ ಮಹಿಳೆ ಬಂದು ಸುರೇಶ್ ಅವರ ಅತ್ತೆ ವೃದ್ಧ ಮಹಿಳೆ ಶೈಲಜಾ ಅವರ ಕಾಲಿಗೆ ಔಷಧಿ ಹಚ್ಚಿ ಹೋಗಿದ್ದಾರೆ. ಆಗಲೂ ಚಿರತೆ ಸುಳಿವು ಸಿಕ್ಕಿಲ್ಲ. ಎರಡು ಗಂಟೆ ಕಳೆದ ಬಳಿಕ ಮಂಚದ ಕೆಳಗೆ ಚಿರತೆ ಇರುವುದನ್ನು ಗಮನಿಸಿ ತಕ್ಷಣ ವೃದ್ಧ ಮಹಿಳೆಯನ್ನು ಹೊರಗೆ ಎತ್ತಿಕೊಂಡು ಬಂದು ನಂತರ ರೂಂ ಬಾಗಿಲು ಹಾಕಿ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಮನೆಯಲ್ಲಿದ್ದು ಯಾರಿಗೂ ತೊಂದರೆ ಮಾಡದ ಚಿರತೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್, ಸಮಾಜವಾದಿ ಪಕ್ಷವನ್ನು ‘ಗೋಸುಂಬೆ’ಗೆ ಹೋಲಿಸಿದ ಮಾಯಾವತಿ
ಹೊಸದಿಲ್ಲಿ, ಎ. 17: ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಶುಕ್ರವಾರ ಹರಿಹಾಯ್ದ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ, ಜಾತಿ ಮತ್ತು ಮಹಿಳಾ ಮೀಸಲಾತಿ ವಿಷಯಗಳಲ್ಲಿ ಅವುಗಳ ನಿಲುವುಗಳನ್ನು ‘‘ಗೋಸುಂಬೆ’’ಗೆ ಹೋಲಿಸಿದ್ದಾರೆ. ನಾರಿ ಶಕ್ತಿ ವಂದನ್ ಅಧಿನಿಯಮ, 2023 ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತ ಮಸೂದೆಗಳ ಮೇಲೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವ ನಡುವೆ ಅವರು ಈ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿಗಳು (ಎಸ್ಸಿ), ಪರಿಶಿಷ್ಟ ಪಂಗಡಗಳು (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಐತಿಹಾಸಿಕವಾಗಿ ವಿಫಲವಾಗಿದೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಮಾಯಾವತಿ ಆರೋಪಿಸಿದ್ದಾರೆ. ‘‘ದೇಶದ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಸಾಂವಿಧಾನಿಕ/ಕಾನೂನು ಹಕ್ಕುಗಳು ಮುಂತಾದ ವಿಷಯಗಳಲ್ಲಿ ಕಾಂಗ್ರೆಸ್ ತನ್ನ ಬಣ್ಣವನ್ನು ಗೋಸುಂಬೆಯಂತೆ ಬದಲಾಯಿಸುತ್ತದೆ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ಯಾವುದೇ ಕ್ಷೇತ್ರದಲ್ಲಿ ಈ ವರ್ಗಗಳ ಮೀಸಲಾತಿಯನ್ನು ಜಾರಿಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಈಗ ಅದು ಮಹಿಳಾ ಮೀಸಲಾತಿಯಲ್ಲಿ ಈ ವರ್ಗಗಳಿಗೆ ಮೀಸಲಾತಿ ನೀಡುವ ಬಗ್ಗೆ ಮಾತನಾಡುತ್ತಿದೆ’’ ಎಂದರು. ಅದೇ ರೀತಿ, ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಸಮಾಜವಾದಿ ಪಕ್ಷವು ಜಾತಿ ಸಂಬಂಧಿ ನೀತಿಗಳನ್ನು ಜಾರಿಗೆ ತರುವಲ್ಲಿ ಸ್ಪಷ್ಟತೆಯನ್ನು ಹೊಂದಿರಲಿಲ್ಲ ಎಂಬುದಾಗಿಯೂ ಮಾಯಾವತಿ ಆರೋಪಿಸಿದರು.
ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ವೇತನಸಹಿತ 'ಋತುಸ್ರಾವ ರಜೆ' ನೀತಿ ಕಟ್ಟುನಿಟ್ಟಿನ ಜಾರಿಗೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ರಾಜ್ಯದ ಎಲ್ಲಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಸಿಹಿಸುದ್ದಿ ನೀಡಲಿದ್ದು, 'ವೇತನಸಹಿತ ಋತುಸ್ರಾವ ರಜೆ' ನೀತಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗುರುವಾರ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ನಿರ್ದೇಶನದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ದಿಟ್ಟ ಹೆಜ್ಜೆ ಇಟ್ಟಿದೆ. ಮಹಿಳಾ ಉದ್ಯೋಗಿಗಳ
ಬಿಜೆಪಿ ಷಡ್ಯಂತ್ರದಿಂದ ವಿನಯ್ ಕುಲಕರ್ಣಿಗೆ ಸಂಕಷ್ಟ : ಡಿ.ಕೆ.ಶಿವಕುಮಾರ್
ಹೊಸದಿಲ್ಲಿ : ಬಿಜೆಪಿ ಷಡ್ಯಂತ್ರದಿಂದ ಶಾಸಕ ವಿನಯ್ ಕುಲಕರ್ಣಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ರಾಜಕಾರಣದಲ್ಲಿ ಇಂತಹ ಹೋರಾಟ ಮಾಡಲೇಬೇಕು, ಅವರು ಹೋರಾಟ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಶುಕ್ರವಾರ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ. ಇಲ್ಲಿ ದೊಡ್ಡ ಒಳಸಂಚು ನಡೆದಿದೆ. ಬಿ ರಿಪೋರ್ಟ್ ಸಲ್ಲಿಕೆ ವೇಳೆ ಸಿಬಿಐ ತನಿಖೆ ನಡೆಸಿ ಕಿರುಕುಳ ನೀಡಲಾಗಿದೆ. ಒಳಸಂಚಿನಲ್ಲಿ ವಿನಯ್ ಕುಲಕರ್ಣಿ ಅವರನ್ನೂ ಸಿಲುಕಿಸಲಾಗಿದೆ ಎಂದು ಹೇಳಿದರು. ಮೇಲ್ಮನವಿಗೆ ಇನ್ನು 30 ದಿನಗಳ ಕಾಲಾವಕಾಶವಿದ್ದು, ನಾನು ಅವರ ಕುಟುಂಬದ ಜತೆ ಚರ್ಚೆ ಮಾಡಿದ್ದೇನೆ. ನನಗೆ ಇವತ್ತಿಗೂ ಅವರ ಮೇಲೆ ನಂಬಿಕೆ ಇದೆ. ಶಿಕ್ಷೆ ಪ್ರಕಟಣೆ ಬಗ್ಗೆ ಗೌರವ ನೀಡಬೇಕು. ನನ್ನ ಪ್ರಕಾರ ಅವರು ತಪ್ಪು ಮಾಡಿಲ್ಲ. ಅವರ ಕುಟುಂಬದ ಜತೆ ನಾನು ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಶಿವಕುಮಾರ್ ಹೇಳಿದರು. ನನ್ನ ವಿಚಾರದಲ್ಲೂ ಅನೇಕ ಸಂಚು ನಡೆಯಿತು. ನಾನು ಸಾಕಷ್ಟು ಅನುಭವಿಸಿದೆ. ಕೊನೆಗೆ ನನಗೆ ನ್ಯಾಯ ಸಿಕ್ಕಿದ್ದು ಸುಪ್ರೀಂ ಕೋರ್ಟ್ ನಲ್ಲಿ. ಈ ಪ್ರಕರಣದಲ್ಲೂ ಮೇಲಿನ ಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಮಂಗಳೂರು ಧರ್ಮಪ್ರಾಂತ್ಯ: 2026ನೇ ಸಾಲಿನ ಧರ್ಮಗುರುಗಳ ವರ್ಗಾವಣೆ, ನೂತನ ನೇಮಕಾತಿ ಪ್ರಕಟ
ಮಂಗಳೂರು, ಎ.17: ಮಂಗಳೂರು ಧರ್ಮಪ್ರಾಂತ್ಯವು 2026ನೇ ಸಾಲಿನ ಧರ್ಮಗುರುಗಳ ಸಮಗ್ರ ವರ್ಗಾವಣೆ ಮತ್ತು ನೂತನ ಪಾಲನಾ ಜವಾಬ್ದಾರಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 62 ಧರ್ಮಗುರುಗಳನ್ನು ವಿವಿಧ ಪಾಲನಾ ಕೇಂದ್ರಗಳಿಗೆ ಮತ್ತು ಧರ್ಮಪ್ರಾಂತ್ಯದ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಈ ನೇಮಕಾತಿಗಳು 2026ರ ಮೇ ಮತ್ತು ಜೂನ್ ತಿಂಗಳ ನಡುವೆ ಜಾರಿಗೆ ಬರಲಿವೆ. ಈ ಪಟ್ಟಿಯಲ್ಲಿ ವಚನಬದ್ಧ ಪಾಲನಾ ಸೇವೆಗಾಗಿ ಚರ್ಚ್ಗಳ ಧರ್ಮಗುರುಗಳು ಸಹಾಯಕ ಧರ್ಮಗುರುಗಳು, ಆಡಳಿತಾಧಿಕಾರಿಗಳು ಮತ್ತು ಧರ್ಮಪ್ರಾಂತ್ಯದ ವಿವಿಧ ಸಂಸ್ಥೆಗಳ ನಿರ್ದೇಶಕರ ನೇಮಕಾತಿಗಳನ್ನು ಮಾಡಲಾಗಿದೆ. ಇತ್ತೀಚೆಗಷ್ಟೇ ದೀಕ್ಷೆ ಪಡೆದ ಐವರು ನೂತನ ಧರ್ಮಗುರುಗಳಿಗೆ ವಿವಿಧ ಚರ್ಚ್ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಮೊದಲ ಪಾಲನಾ ಜವಾಬ್ದಾರಿಯನ್ನು ನೀಡಲಾಗಿದೆ. ಅವರ ವಿವರ ಇಂತಿವೆ.. ವಂ. ಅವಿಲ್ ಸಾಂತುಮಯೋರ್ (ಎಂಜೆಲೋರ್ ಚರ್ಚ್), ವಂ. ಜೀವನ್ ಡಿ ಸೋಜ ( ಬಿಜೈ ಚರ್ಚ್), ವಂ. ಲೋಯ್ಡ್ ರೋಹನ್ ಡಿ ಸೋಜ ( ಕುಲಶೇಖರ್ -ಕೋರ್ಡೆಲ್) , ವಂ. ಜೊಯೆಲ್ ಮೊಂತೇರೋ(ಬೆಂದೂರು ಚರ್ಚ್), ವಂ. ಡೆನ್ಜಿಲ್ ರೊಡ್ರಿಗಸ್( ಉರ್ವಾ ಚರ್ಚ್), ಈ ವಾರ್ಷಿಕ ವರ್ಗಾವಣೆ ಪ್ರಕ್ರಿಯೆಯು ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಆಧ್ಯಾತ್ಮಿಕಯತೆಯನ್ನು ಬಲಪಡಿಸಲು ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಪ್ರಕಟನೆ ತಿಳಿಸಿದೆ.
ದಕ್ಷಿಣ ಆಫ್ರಿಕಾದ ಮಾಡೆಲ್ ಫೋಟೋಗೆ ಲೈಕ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ
Virat Kohli: ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಗೆ ಸಂಭ್ರಮದ ರಸದೌತಣ ಬಡಿಸುತ್ತಿದ್ದಾರೆ. ಮತ್ತೊಂದೆಡೆ, ಈ ನಡುವೆಯೇ ಅವರು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ 'ಲೈಕ್' ವಿವಾದಕ್ಕೆ ಸಿಲುಕಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಮಾಡೆಲ್ ಲಿಜ್ಲಾಜ್ ಎಂಬುವವರ ಇನ್ಸ್ಟಾಗ್ರಾಮ್
ಹಕ್ಕಿಜ್ವರ ದೃಢ : ಹೆಸರಘಟ್ಟದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರ ‘ನಿಷೇಧಿತ ಪ್ರದೇಶ’ವೆಂದು ಘೋಷಣೆ
ಬೆಂಗಳೂರು : ನಗರದ ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ದೃಢಪಟ್ಟಿದ್ದು, ಈ ಸ್ಥಳವನ್ನು ಒಂದು ವರ್ಷದ ವರೆಗೆ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಮುತ್ಕೂರು ಗ್ರಾಮವನ್ನು(3ಕಿ.ಮೀ. ವ್ಯಾಪ್ತಿ) ಎಚ್5ಎನ್1 ಸೋಂಕಿತ ವಲಯ ಮತ್ತು ಸುತ್ತಲಿನ 10ಕಿ.ಮೀ. ಪ್ರದೇಶವನ್ನು ಕಣ್ಗಾವಲು ವಲಯ ಎಂದು ಆರೋಗ್ಯ ಇಲಾಖೆಯು ಘೋಷಿಸಿದೆ. ಶುಕ್ರವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟನೆ ಹೊರಡಿಸಿದ್ದು, ರಾಜ್ಯ, ಜಿಲ್ಲಾ ಮತ್ತು ಪಿಎಚ್ಸಿಆರ್ ಆರ್ಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಎ.15ರಂದು 7,444 ಕೋಳಿಗಳು, 14 ಸಾವಿರಕ್ಕೂ ಅಧಿಕ ಮೊಟ್ಟೆಗಳು, 2,250 ಕೆ.ಜಿ. ಕೋಳಿ ಆಹಾರವನ್ನು ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ಕಲ್ಲಿಂಗ್ ಮಾಡಿ ವಿಲೇವಾರಿ ಮಾಡಲಾಗಿದೆ. ಇದರಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ, ಒಸೆಲ್ಟಾಮಿವಿರ್ ಔಷಧದೊಂದಿಗೆ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದಿದ್ದಾರೆ. ಆರೋಗ್ಯ ಇಲಾಖೆ ಕಣ್ಗಾವಲು ಪ್ರಗತಿಯಲ್ಲಿದ್ದು, 3 ಕಿ.ಮೀ. ವ್ಯಾಪ್ತಿ ವಲಯದಲ್ಲಿ ಒಟ್ಟು 3,422 ಜನಸಂಖ್ಯೆಯ ಎರಡು ಗ್ರಾಮಗಳಿದ್ದು, 3 ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 22,395 ಜನಸಂಖ್ಯೆ ಇರುವ 17 ಗ್ರಾಮಗಳು ಇವೆ. ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ದಿನನಿತ್ಯ ಮನೆಮನೆ ಭೇಟಿ ನೀಡಿ ಮುಂದಿನ ಹತ್ತು ದಿನಗಳ ಕಾಲ ಜ್ವರ ಕಣ್ಗಾವಲು ನಡೆಸಲಾಗುವುದು. ಶಂಕಿತ ಪ್ರಕರಣಗಳನ್ನು ತಕ್ಷಣ ವರದಿ ಮಾಡಲು ಆಸ್ಪತ್ರೆಗಳಿಗೆ ಸೂಚಿಸಲಾಗಿದ್ದು, ಪಿಪಿಇ ಕಿಟ್, ಮಾಸ್ಕ್, ಒಸೆಲ್ಟಾಮಿವಿರ್, ವಿಟಿಎಂ ಮತ್ತು ಗಂಟಲು ಸ್ವಾಬ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯ ಇರಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಭಯ ಬೇಡ, ಜಾಗರೂಕತೆ ಮುಖ್ಯ : ‘ಈವರೆಗೆ ಯಾವುದೇ ಮನುಷ್ಯರಲ್ಲಿ ಈ ರೋಗ ವರದಿಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ಆದರೆ ಜಾಗರೂಕರಾಗಿರಬೇಕು. ಅನಾರೋಗ್ಯ, ಸತ್ತ ಹಕ್ಕಿಗಳ ಸಂಪರ್ಕದಿಂದ ದೂರ ಇರಬೇಕು. ಯಾವುದೇ ರೀತಿಯ ಅನುಮಾನ ಕಂಡುಬಂದರೆ ತಕ್ಷಣ ಪಶುಸಂಗೋಪನೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸರಿಯಾಗಿ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬೇಕು. ಆರೋಗ್ಯ ಇಲಾಖೆ ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ’ -ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಮಹಿಳಾ ಮೀಸಲಾತಿಗೆ ಸೋಲು: 30 ವರ್ಷದ ಹಿಂದಿನ ವಿದ್ಯಮಾನವನ್ನು ಸ್ಮರಿಸಿಕೊಂಡ HD ಕುಮಾರಸ್ವಾಮಿ
Women Reservation Bill and HD Kumaraswamy : ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ತೆಗೆದುಕೊಂಡ ನಿಲುವು ಎಲ್ಲಾ ದಕ್ಷಿಣದ ರಾಜ್ಯಗಳ ಅಭಿಪ್ರಾಯವಲ್ಲ.ಇಂದು ನಾವು ಯಾವ ಮಸೂದೆಯ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆಯೋ ಅದನ್ನು ಮುಕ್ತವಾಗಿ ಬೆಂಬಲಿಸಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಶ್ಲಾಘಿಸಿ, ನಾಯ್ಡು ಅವರಿಗೇನು ರಾಷ್ಟ್ರಪ್ರೇಮ ಇಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
T20 ಕ್ರಿಕೆಟ್ ನಲ್ಲಿ 100ನೇ ಅರ್ಧಶತಕ: ಬಾಬರ್ ಆಝಮ್ ಸಾಧನೆ
ಕರಾಚಿ, ಎ.17: ಪೇಶಾವರ ಝಲ್ಮಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವೆ ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ 2026ರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪಂದ್ಯದಲ್ಲಿ ಬಾಬರ್ ಆಝಮ್ ಐತಿಹಾಸಿಕ ಮೈಲಿಗಲ್ಲು ತಲುಪಿದರು. ಪೇಶಾವರ ತಂಡವು ಎಂಟು ವಿಕೆಟ್ ಗಳಿಂದ ಜಯ ಸಾಧಿಸಿತು. ಕ್ವೆಟ್ಟಾ ತಂಡವನ್ನು 20 ಓವರ್ಗಳಲ್ಲಿ 154 ರನ್ಗೆ ನಿಯಂತ್ರಿಸಿದ ಪೇಶಾವರ ತಂಡವು 18.3 ಓವರ್ಗಳಲ್ಲಿ ಗುರಿ ತಲುಪಿತು. ನಾಯಕ ಬಾಬರ್ ಆಝಮ್ 51 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿ ತಂಡದ ರನ್ ಚೇಸ್ ಗೆ ಬಲ ತುಂಬಿದರು. ಈ ಇನಿಂಗ್ಸ್ ಮೂಲಕ ಬಾಬರ್ ಅವರು ಟಿ-20 ಕ್ರಿಕೆಟ್ನಲ್ಲಿ 100 ಅರ್ಧಶತಕಗಳನ್ನು ಸಿಡಿಸಿದ ಪಾಕಿಸ್ತಾನದ ಮೊದಲ ಹಾಗೂ ವಿಶ್ವದ ನಾಲ್ಕನೇ ಆಟಗಾರನಾದರು. ಇದರೊಂದಿಗೆ ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ ಹಾಗೂ ಜೋಸ್ ಬಟ್ಲರ್ ಅವರಿದ್ದ ವಿಶೇಷ ಗುಂಪಿಗೆ ಸೇರ್ಪಡೆಯಾದರು. ಬಾಬರ್ ಟಿ-20 ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಫಿಫ್ಟಿ ಪ್ಲಸ್ ಸ್ಕೋರ್ (111) ಗಳಿಸಿ ಕ್ರಿಸ್ ಗೇಲ್ (110) ದಾಖಲೆಯನ್ನು ಮುರಿದರು.
ಫಾದರ್ ಮುಲ್ಲರ್ ವೈದ್ಯಕೀಯ, ಅಲೈಡ್ ಹೆಲ್ತ್ , ಫಿಸಿಯೋಥೆರಪಿ ಕಾಲೇಜುಗಳ ಪದವಿ ಪ್ರದಾನ ಸಮಾರಂಭ
518 ಪದವೀಧರರು ಆರೋಗ್ಯ ಸೇವೆಯ ಪ್ರತಿಜ್ಞೆ
ಸಂವರ್ಧಿತ ಯುರೇನಿಯಂ ದಾಸ್ತಾನು ಹಸ್ತಾಂತರಿಸಲು ಇರಾನ್ ಒಪ್ಪಿಕೊಂಡಿದೆ: ಟ್ರಂಪ್ ಪ್ರತಿಪಾದನೆ
ವಾಶಿಂಗ್ಟನ್, ಎ.17: ಅಮೆರಿಕ ಮತ್ತು ಇರಾನ್ ಎರಡನೇ ಸುತ್ತಿನ ನೇರ ಮಾತುಕತೆಗೆ ಸಿದ್ಧಗೊಳ್ಳುತ್ತಿರುವಂತೆಯೇ, ಇರಾನ್ ತನ್ನ ಸಂವರ್ಧಿತ ಯುರೇನಿಯಂ ದಾಸ್ತಾನನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಸುಮಾರು 6 ವಾರಗಳ ಸಂಘರ್ಷದ ಬಳಿಕ ಎರಡೂ ದೇಶಗಳು ಶಾಂತಿ ಒಪ್ಪಂದಕ್ಕೆ ನಿಕಟವಾಗಿವೆ ಎಂದು ಅವರು ಹೇಳಿದ್ದಾರೆ. ‘ಸಂವರ್ಧಿತ ಯುರೇನಿಯಂ ಅನ್ನು ನಮಗೆ ಹಿಂತಿರುಗಿಸಲು ಅವರು ಒಪ್ಪಿಕೊಂಡಿದ್ದಾರೆ’ ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ತಿಳಿಸಿದ್ದಾರೆ. ಸಂವರ್ಧಿತ ಯುರೇನಿಯಂ ಅನ್ನು ಪರಮಾಣು ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಬಳಸಬಹುದು ಎಂದು ಅಮೆರಿಕ ಹೇಳಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿಲ್ಲ ಎಂಬುದನ್ನು ಖಚಿತಪಡಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಅವರು ಪರಮಾಣು ಶಸ್ತ್ರಾಸ್ತ್ರ ಹೊಂದಿದರೆ ಭಾರೀ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಇರಾನ್ ಅದನ್ನು ಹೊಂದದೆ ಇರುವುದು ಮುಖ್ಯವಾಗಿದೆ ಮತ್ತು ಅದಕ್ಕೆ ಅವರು ಒಪ್ಪಿದ್ದಾರೆ ಎಂದು ಟ್ರಂಪ್ ಹೇಳಿದರು. ‘ನಮ್ಮ ಬಿ-2 ಬಾಂಬರ್ ಗಳ ದಾಳಿಯಿಂದಾಗಿ ಭೂಗತದಲ್ಲಿರುವ ಪರಮಾಣು ವಸ್ತುವನ್ನು ನಮಗೆ ಮರಳಿ ನೀಡಲು ಅವರು ಒಪ್ಪಿಕೊಂಡಿದ್ದಾರೆ. ಇರಾನ್ನೊಂದಿಗೆ ಹಲವು ಒಪ್ಪಂದಗಳು ಸಾಧ್ಯವಾಗುತ್ತವೆ ಮತ್ತು ಧನಾತ್ಮಕ ಬೆಳವಣಿಗೆ ಕಾಣಬಹುದು’ ಎಂದು ಅವರು ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಗೆ ಸೋಲು | ಉಳಿದೆರಡು ವಿಧೇಯಕವನ್ನು ಮತಕ್ಕೆ ಹಾಕದಿರಲು ನಿರ್ಧರಿಸಿದ ಸರಕಾರ
ಹೊಸದಿಲ್ಲಿ: ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು ಹಿನ್ನೆಲೆಯಲ್ಲಿ ಉಳಿದೆರಡು ವಿಧೇಯಕವನ್ನು ಮತಕ್ಕೆ ಹಾಕದಿರಲು ಸರಕಾರ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು, ವಿರೋಧ ಪಕ್ಷವು ಇಂತಹ ಐತಿಹಾಸಿಕ ಮಸೂದೆಯನ್ನು ಬೆಂಬಲಿಸದ ಕಾರಣ ಮಸೂದೆ ವಿಫಲವಾಯಿತು ಎಂದು ಹೇಳಿದ್ದಾರೆ. ಇತರ ಎರಡು ಮಸೂದೆಗಳನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದರು. ಮಹಿಳಾ ಮೀಸಲಾತಿ ಮಸೂದೆಗೆ ಸೋಲಿನ ಹಿನ್ನೆಲೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಯನ್ನು ಮುಂದುವರಿಸದಿರಲು ಸರಕಾರ ನಿರ್ಧರಿಸಿದೆ.
ಜೀವಾವಧಿ ಶಿಕ್ಷೆ | ಶಾಸಕ ಸ್ಥಾನದಿಂದ ವಿನಯ್ ಕುಲಕರ್ಣಿ ಅನರ್ಹ
ಬೆಂಗಳೂರು : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಕಾಯ್ದೆಯನ್ವಯ ಶಾಸಕ ಸ್ಥಾನದಿಂದ ವಿನಯ್ ಕುಲಕರ್ಣಿ ಅನರ್ಹರಾಗಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪಿನ ಪ್ರತಿ ಬಂದ ಕೂಡಲೇ ವಿಧಾನಸಭೆಯ ಕಾರ್ಯದರ್ಶಿ ನಿಯಮದಂತೆ ಶಾಸಕರ ಅನರ್ಹತೆ ಕುರಿತು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ. ಧಾರವಾಡ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿನಯ್ ಕುಲಕರ್ಣಿ, ಒಮ್ಮೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಜನಪ್ರತಿನಿಧಿಗಳ ಕಾಯ್ದೆ-1951, ಸೆಕ್ಷನ್ 8(3)ರಂತೆ ಅಪರಾಧ ಪ್ರಕರಣದಲ್ಲಿ ಯಾವುದೇ ಜನಪ್ರತಿನಿಧಿಗಳು ಕನಿಷ್ಠ 2 ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾದರೆ ಅವರು ಶಾಸಕ ಸ್ಥಾನದಿಂದ ಅನರ್ಹರಾಗಲಿದ್ದಾರೆ. ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕಾಯ್ದೆಯಂತೆ ಈ ಅನರ್ಹತೆಯು ಶಿಕ್ಷೆಯ ಅವಧಿ ಮುಕ್ತಾಯದ ವರೆಗೆ ಮತ್ತು ಶಿಕ್ಷೆ ಅವಧಿ ಮುಗಿದ ಬಳಿಕ ಆರು ವರ್ಷಗಳ ವರೆಗೆ ಮುಂದುವರಿಯಲಿದೆ. ಅಲ್ಲಿಯ ವರೆಗೆ ವಿನಯ್ ಕುಲಕರ್ಣಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ವಿನಯ್ ಕುಲಕರ್ಣಿ ಈ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು. ಒಂದು ವೇಳೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ, ವಿನಯ್ ಕುಲಕರ್ಣಿ ಅನರ್ಹತೆ ರದ್ದಾಗಲಿದೆ.
ಕೇಂದ್ರ ಸರ್ಕಾರಕ್ಕೆ ಬಿಗ್ ಶಾಕ್: ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಮಸೂದೆಗಳು ವಿಫಲ
ನವದೆಹಲಿ: ಕೇಂದ್ರ ಎನ್ಡಿಎ ಸರ್ಕಾರಕ್ಕೆ ಲೋಕಸಭೆಯಲ್ಲಿ ಭಾರೀ ಮುಖಭಂಗವಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮತ್ತು ಮಹಿಳಾ ಮೀಸಲಾತಿ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಶುಕ್ರವಾರ ಸಂಜೆ ಲೋಕಸಭೆಯಲ್ಲಿ ನಡೆದ ಬಹುಮತ ಪರೀಕ್ಷೆಯಲ್ಲಿ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿವೆ. ಸಾಂವಿಧಾನಿಕ ತಿದ್ದುಪಡಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಮೂರನೇ ಎರಡರಷ್ಟು ಬಹುಮತವನ್ನು ಕಲೆಹಾಕುವಲ್ಲಿ ಆಡಳಿತಾರೂಢ ಮೈತ್ರಿಕೂಟ ವಿಫಲವಾದ ಹಿನ್ನೆಲೆಯಲ್ಲಿ ಈ
Manipur | ಮಕ್ಕಳ ಸಾವುಗಳ ವಿರುದ್ಧ ಪ್ರತಿಭಟನೆ; ಪೋಲಿಸರು–ಪ್ರತಿಭಟನಾಕಾರರ ನಡುವೆ ಘರ್ಷಣೆ
ಇಂಫಾಲ, ಎ. 17: ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಇತ್ತೀಚಿನ ದಾಳಿಯ ವಿರುದ್ಧ ಪಂಜಿನ ಮೆರವಣಿಗೆ ಹಾಗೂ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಿದ ಆದೇಶವನ್ನು ಉಲ್ಲಂಘಿಸಿ, ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದವು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಎ. 7ರಂದು ವಿಷ್ಣುಪುರದ ಟ್ರೋಂಗ್ಲಾಬಿ ಪ್ರದೇಶದಲ್ಲಿ ಪ್ರಕ್ಷೇಪಕ (ಪ್ರಾಜೆಕ್ಟೈಲ್ ಅಥವಾ ಕ್ಷಿಪಣಿಯಂತಹ ಸಾಧನ) ಮನೆಯೊಂದಕ್ಕೆ ಅಪ್ಪಳಿಸಿದ ಪರಿಣಾಮ, ನಿದ್ರೆಯಲ್ಲಿದ್ದ ಐದು ವರ್ಷದ ಬಾಲಕ ಹಾಗೂ ಐದು ತಿಂಗಳ ಹೆಣ್ಣುಮಗು ಮೃತಪಟ್ಟಿದ್ದರು. ಶಂಕಿತ ಕುಕಿ ಉಗ್ರರು ಸಮೀಪದ ಬೆಟ್ಟದಿಂದ ಪ್ರಕ್ಷೇಪಕವನ್ನು ಉಡಾಯಿಸಿದ್ದರು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಘಟನೆ ನಡೆದ ಗ್ರಾಮವು ಚುರಾಚಂದಪುರದ ಬೆಟ್ಟ ಪ್ರದೇಶಗಳ ಸಮೀಪದಲ್ಲಿದ್ದು, ಮೇ 2023ರಲ್ಲಿ ಮಣಿಪುರದಲ್ಲಿ ಮೈತೆಯಿ ಮತ್ತು ಕುಕಿ-ರೆ-ಹಮರ್ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗಳು ಆರಂಭವಾದಾಗಿನಿಂದ ಉದ್ವಿಗ್ನತೆಗೆ ಸಾಕ್ಷಿಯಾಗಿದೆ. ಎ. 7ರಂದು ನಡೆದ ದಾಳಿಯಲ್ಲಿ ತನ್ನ ಸಮುದಾಯದ ಜನರು ಭಾಗಿಯಾಗಿದ್ದರು ಎನ್ನುವುದನ್ನು ಕುಕಿ ಸಂಘಟನೆ ‘ದಿ ಇಂಡಿಜಿನಿಯಸ್ ಟ್ರೈಬಲ್ ಲೀಡರ್ಸ್ ಫೋರಮ್’ ತಿರಸ್ಕರಿಸಿದೆ. ಮೈತೆಯಿ ಸಮುದಾಯದ ಮೇಲೆ ಪರಿಣಾಮ ಬೀರುವ ಯಾವುದೇ ಅಹಿತಕರ ಘಟನೆಗೆ ಸೂಕ್ತ ತನಿಖೆ ನಡೆಸದೆ ಕುಕಿ-ರೆಗಳನ್ನು ಹೊಣೆಯಾಗಿಸಬಾರದು ಎಂದು ಅದು ಹೇಳಿದೆ.
ಕಾರ್ಕಳ| ಅನುಮಾನಾಸ್ಪದ ವ್ಯಕ್ತಿಗಳಿಬ್ಬರ ಬಂಧನ
ಕಾರ್ಕಳ, ಎ.17: ಕಾರ್ಕಳ ಬಸ್ ನಿಲ್ದಾಣದ ಹೂವಿನ ಅಂಗಡಿಯ ಎದುರುಗಡೆ ಎ.16ರಂದು ರಾತ್ರಿ ವೇಳೆ ಮುಖವನ್ನು ಬಟ್ಟೆಯಿಂದ ಸುತ್ತಿ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಹನುಮಪ್ಪ(29) ಹಾಗೂ ಕನಕಗಿರಿ ತಾಲೂಕಿನ ಮರಿಯಪ್ಪ(32) ಬಂಧಿತ ಆರೋಪಿಗಳು. ಇವರು ಅಪರಾಧ ಕೃತ್ಯ ಎಸಗುವ ಇರಾದೆಯಿಂದ ತಿರುಗಾಡುತ್ತಿರುವ ಬಗ್ಗೆ ಸಂಶಯಗೊಂಡ ಪೊಲೀಸರು, ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಎ.17: ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೈಲೂರು ಎಂಬಲ್ಲಿ ನಡೆದಿದೆ. ಉಡುಪಿ ಬೈಲೂರು ನಿವಾಸಿ ಮೀನಾಕ್ಷಿ ಕುಥೆಥೂರ್(75) ಎಂದು ಗುರುತಿಸಲಾಗಿದೆ. ಇವರು ಎ.15ರಂದು ಬೆಳಿಗ್ಗೆ ದೇವರ ಮನೆಯಲ್ಲಿ ದೀಪಾ ಹಚ್ಚುತ್ತಿರುವಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಗುಲಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಎ.16ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.18ರಂದು ಅವೈಜ್ಞಾನಿಕ ಕ್ಷೇತ್ರ ಮರುವಿಂಗಡಣೆ ಖಂಡಿಸಿ ಪ್ರತಿಭಟನೆ
ಉಡುಪಿ, ಎ.18: ಕೇಂದ್ರ ಬಿಜೆಪಿ ಸರಕಾರದ ಅವೈಜ್ಞಾನಿಕ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಎ.18ರಂದು ಬೆಳಗ್ಗೆ 10ಗಂಟೆಗೆ ಬ್ರಹ್ಮಗಿರಿ ಸರ್ಕಲ್ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಕೇಂದ್ರದ ಬಿಜೆಪಿ ಸರಕಾರ ದೇಶಾದ್ಯಂತ ಕೈಗೊಳ್ಳಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಅತ್ಯಂತ ಅವೈಜ್ಞಾನಿಕ, ಅಸಂವಿಧಾನಿಕ ಹಾಗೂ ಅಸಮತೋಲನದಿಂದ ಕೂಡಿದೆ. ವಿರೋಧ ಪಕ್ಷಗಳ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ದಕ್ಷಿಣ ಭಾರತದ ರಾಜ್ಯಗಳಿಗೆ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುವ ಈ ಏಕಪಕ್ಷೀಯ ಹಾಗೂ ಸರ್ವಾಧಿಕಾರಿ ಧೋರಣೆ ತೀವ್ರ ಖಂಡನೀಯ. ಇದನ್ನು ವಿರೋಧಿಸಿ ಉಡುಪಿ ಬ್ರಹ್ಮಗಿರಿ ಕಾಂಗ್ರೆಸ್ ಭವನದಿಂದ ಪಾದಯಾತ್ರೆ ಮೂಲಕ ಬ್ರಹ್ಮಗಿರಿ ಸರ್ಕಲ್ಗೆ ತೆರಳಿ ಪ್ರತಿಭಟನೆ ನಡೆಸಲಾಗು ವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೂ ಅಗೆತ ಕಾಮಗಾರಿ ಕೈಗೊಳ್ಳದಂತೆ ಮೆಸ್ಕಾಂನಿಂದ ಸೂಚನೆ
ಉಡುಪಿ, ಎ.17: ಕಾರ್ಕಳ ತಾಲೂಕಿನ ಎಣ್ಣೆಹೊಳೆ ವಿದ್ಯುತ್ ಮಾರ್ಗ ದಿಂದ ಬೈಲೂರು ವಿದ್ಯುತ್ ಕೇಂದ್ರದವರೆಗೆ ವಿದ್ಯುತ್ ಪ್ರಸರಣ ಮಾರ್ಗವು ಹಾದು ಹೋಗುವ ಗ್ರಾಮಗಳ ಪ್ರದೇಶಗಳಲ್ಲಿ ಭೂ-ಅಗೆತ ಕಾಮಗಾರಿ ಗಳನ್ನು ಅಥವಾ ವಿದ್ಯುತ್ ಪ್ರಸರಣ ಮಾರ್ಗದ ಕೆಳಭಾಗದಲ್ಲಿ ಯಾವುದೇ ತರಹದ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ನಿಯಮಿತ(ಮೆಸ್ಕಾಂ) ಸಾರ್ವಜನಿಕರಿಗೆ ಸೂಚನೆ ನೀಡಿದೆ. ಹಾಲಿ ಇರುವ 33 ಕೆ.ವಿ ಎಣ್ಣೆಹೊಳೆ ವಿದ್ಯುತ್ ಮಾರ್ಗದಿಂದ 33/11 ಕೆ.ವಿ ಬೈಲೂರು ವಿದ್ಯುತ್ ಕೇಂದ್ರದವರೆಗೆ, 33 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಈ 33 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗವು ಬೈಲೂರು ಕಾರ್ಕಳ ಮುಖ್ಯರಸ್ತೆಯ ಎಡಭಾಗದಲ್ಲಿ ಬೈಲೂರು ಪೇಟೆಯ ಟ್ರಿನಿಟಿ ಕಾಂಪ್ಲೆಕ್ಸ್ನಿಂದ ಎರ್ಲಪಾಡಿ ತಿರುವಿನವರೆಗೆ, ಎರ್ಲಪಾಡಿ ತಿರುವಿನಿಂದ ಬೈಲೂರು 33 ಕೆ.ವಿ ವಿದ್ಯುತ್ ಕೇಂದ್ರದ ವರೆಗೆ ಸುಮಾರು 1.5 ಕಿ.ಮೀ.ನಷ್ಟು ಭೂಗತ ಕೇಬಲ್ ಮೂಲಕ ಹಾದು ಹೋಗಿದೆ. ಎ.20ರ ನಂತರದ ಯಾವುದೇ ದಿನದಿಂದ ಈ ಪ್ರಸರಣ ಮಾರ್ಗದಲ್ಲಿ ವಿದ್ಯುತ್ ಹಾಯಿಸಲು ಉದ್ದೇಶಿಸಲಾಗಿದೆ. ಈ ವಿದ್ಯುತ್ ಪ್ರಸರಣ ಮಾರ್ಗವು ಹಾದು ಹೋಗುವ ಗ್ರಾಮಗಳ ಪ್ರದೇಶಗಳಲ್ಲಿ ವಾಸಿಸುವವರು ಭೂ-ಅಗೆತ ಕಾಮಗಾರಿಗಳನ್ನು ಮಾಡುವುದಾಗಲೀ ಅಥವಾ ವಿದ್ಯುತ್ ಪ್ರಸರಣ ಮಾರ್ಗದ ಕೆಳಭಾಗದಲ್ಲಿ ಯಾವುದೇ ತರಹದ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಈ ಸೂಚನೆಗಳನ್ನು ಉಲ್ಲಂಘಿಸಿದರೆ ಅದರಿಂದ ಉಂಟಾಗಬಹುದಾದ ಕಷ್ಟ ನಷ್ಟಗಳಿಗೆ ಅವರು ಗಳೇ ಜವಾಬ್ದಾರರಾಗಿರುತ್ತಾರೆಯೇ ಹೊರತು ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ನಿಯಮಿತ(ಮೆಸ್ಕಾಂ) ಅಲ್ಲ. ಜೊತೆಗೆ ವಿದ್ಯುಚ್ಛಕ್ತಿ ಕಾಯಿದೆ 2003ರ ಅನ್ವಯ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂಬುವು ದನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ನಿಗಮದ ಉಪ ನಿಯಂತ್ರಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಜನಗಣತಿ ಹಿನ್ನೆಲೆ ಶಿಕ್ಷಕರ ಅರ್ಹತಾ ಪರೀಕ್ಷೆ ಮುಂದೂಡಿಕೆ
ಬೆಂಗಳೂರು : ಪ್ರಸ್ತುತ ನಡೆಸಲಾಗುತ್ತಿರುವ 2027ರ ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಬಹುತೇಕ ಶಿಕ್ಷಕರನ್ನು ನಿಯೋಜಿಸಲಾಗಿದೆ. ಹೀಗಾಗಿ ಸರಕಾರಿ ಪ್ರೌಢಶಾಲಾ ಸಹಶಿಕ್ಷಕ ವೃಂದದಿಂದ ಸರಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದ ಹುದ್ದೆಗೆ ಭಡ್ತಿ ನೀಡಲು ನಡೆಸುವ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದೆ. ಅರ್ಹತಾ ಪರೀಕ್ಷೆಯನ್ನು ಎ.21ರಿಂದ ಎ.24ರವರೆಗೆ ರಾಜ್ಯದ ಶೈಕ್ಷಣಿಕ ವಿಭಾಗೀಯ ಕೇಂದ್ರಗಳಲ್ಲಿ ನಡೆಸಲು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದುದರಿಂದ ಶಿಕ್ಷಕರ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಐಎಸ್ಒ ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದ ಬೆಂಗಳೂರು ಜಲಮಂಡಳಿ
ಬೆಂಗಳೂರು : ಬೆಂಗಳೂರು ಜಲಮಂಡಳಿ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಎಸ್ಒ ಪ್ರಮಾಣಪತ್ರವನ್ನು ಪಡೆದ ದೇಶದ ಮೊದಲ ಜಲ ಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎ.14ರಂದು ಬ್ಯೂರೋ ವೆರಿಟಾಸ್ ಅಧಿಕೃತವಾಗಿ ಐಎಸ್ಒ ಪ್ರತಿಷ್ಠಿತ ಪ್ರಮಾಣಪತ್ರವನ್ನು ನೀಡಿದೆ. ಮಂಡಳಿಯ ಅತ್ಯುತ್ತಮ ಇಂಧನ ನಿರ್ವಹಣಾ ವ್ಯವಸ್ಥೆಗಳನ್ನು ಔಪಚಾರಿಕವಾಗಿ ಗುರುತಿಸಿದೆ. ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಸ್ಥಳಗಳಲ್ಲಿರುವ ತನ್ನ ಬೃಹತ್ ನೀರು ಸರಬರಾಜು ಪಂಪಿಂಗ್ ಸ್ಟೇಷನ್ಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸುತ್ತಿರುವುದಕ್ಕಾಗಿ ಬೆಂಗಳೂರು ಜಲಮಂಡಳಿಗೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗಿದೆ. ಇದಲ್ಲದೆ, ಈ ಪ್ರಮಾಣಪತ್ರವು ಕಾವೇರಿ ಭವನದಲ್ಲಿರುವ ಪ್ರಧಾನ ಕಚೇರಿಯ ಪ್ರಮುಖ ಪೂರಕ ಕಾರ್ಯಗಳನ್ನು ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಮಾಡುವ ಒಟ್ಟಾರೆ ಪ್ರಕ್ರಿಯೆಯನ್ನು ಒಳಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಲೋಕಸಭೆಯಲ್ಲಿ ಸೋಲು; ವಿರೋಧಿ ಮತಗಳೆಷ್ಟು?
ಭಾರೀ ನಿರೀಕ್ಷೆ ಮೂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಹೌದು, ಇಂದು (ಏ.17-ಶುಕ್ರವಾರ) ಲೋಕಸಭೆಯಲ್ಲಿ ಮಹತ್ವದ ಮೂರು ಮಸೂದೆಗನ್ನು ಮತಕ್ಕೆ ಹಾಕಿದಾಗ, ಮಸೂದೆ ಪರ 278 ಮತ್ತು ಮಸೂದೆ ವಿರುದ್ಧ 211 ಮತಗಳು ಚಲಾವಣೆಯಾಗಿವೆ. ಮೋದಿ ಸರ್ಕಾರ ಮಸೂದೆ ಅಂಗೀಕಾರಕ್ಕೆ ಬೇಕಾದ ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಈ ಐತಿಹಾಸಿಕ ಮಸೂದೆಗಳು ಅಂಗೀಕಾರವಾಗಲು 352 ಮತಗಳ ಅವಶ್ಯಕತೆ ಇತ್ತು. ಇಲ್ಲಿದೆ ಮಾಹಿತಿ.
Parliament Special Session | ಮಹಿಳಾ ಮೀಸಲಾತಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಸೋಲು
ಹೊಸದಿಲ್ಲಿ: ಎರಡು ದಿನಗಳಿಂದ ನಡೆಯುತ್ತಿರುವ ಲೋಕಸಭಾ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಿದ್ದ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆ ಮತ ವಿಭಜನೆಯಲ್ಲಿ 278-211 ಅಂತರದಲ್ಲಿ ಸೋಲನುಭವಿಸಿದೆ. ಸಾಂವಿಧಾನಿಕ ತಿದ್ದುಪಡಿಯಾದ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಮೂರನೆ ಎರಡರಷ್ಟು ಅರ್ಥಾತ್ 360 ಸದಸ್ಯರ ಬೆಂಬಲದ ಅಗತ್ಯವಿತ್ತು. ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಬಳಿ 297 ಸದಸ್ಯರ ಬಲವಿದ್ದರೆ, ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟದ ಬಳಿ 234 ಸದಸ್ಯರ ಬಲವಿತ್ತು. ಮತ ವಿಭಜನೆಯ ವೇಳೆ ಸದನದಲ್ಲಿ ಒಟ್ಟು 489 ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಮೀಸಲಾತಿ ಮಸೂದೆ ಕುರಿತು ನಡೆದ ಸುದೀರ್ಘ ಚರ್ಚೆಯ ಬಳಿಕ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತಗಳನ್ನು ಮತ ವಿಭಜನೆಗೆ ಹಾಕಿದರು. ಮತ ವಿಭಜನೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ 278-211 ಅಂತರದಲ್ಲಿ ಪರಾಭವಗೊಂಡಿತು. ಇದಕ್ಕೂ ಮುನ್ನ, ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಸುದೀರ್ಘ ಉತ್ತರ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ವಿರೋಧ ಪಕ್ಷಗಳು ಮಹಿಳೆಯರ ವಿರೋಧಿಗಳು” ಎಂದು ಆರೋಪಿಸಿದರು. ಈ ಮಸೂದೆಯನ್ನು ಮೋದಿ ಸರಕಾರ ಮಂಡಿಸಿರುವುದರಿಂದಷ್ಟೇ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದೂ ಅವರು ದೂರಿದರು.
ʼTrekkingʼ ಗೆ ನೇಚರ್ ಗೈಡ್ ಕಡ್ಡಾಯ : ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಕಡ್ಡಾಯ ಮಾಡಲಾಗಿದ್ದು, ಇವರು ಇಲ್ಲದಿದ್ದಲ್ಲಿ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಶುಕ್ರವಾರ ನಗರದ ತಮ್ಮ ಕಚೇರಿಯಲ್ಲಿ ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ಓಪಿ) ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚಾರಣಕ್ಕೆ ಬರುವವರು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಒಂದೊಮ್ಮೆ ಯಾವುದೇ ದಿನ ಒಬ್ಬರೇ ಚಾರಣಿಗರು ನೋಂದಾಯಿಸಿದ್ದರೂ ಗೈಡ್ ಸೌಲಭ್ಯ ಕಲ್ಪಿಸಲಾಗುವುದು.ಆದರೆ, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದರು. ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ಕೇರಳದಿಂದ ಚಾರಣಕ್ಕೆ ಬಂದಿದ್ದ ಮಹಿಳೆ ನಾಪತ್ತೆಯಾಗಿ ಕಾಡಿನಲ್ಲಿ 3 ದಿನ ಕಳೆಯುವಂತಾದ ಹಾಗೂ ಅರಣ್ಯ ವ್ಯಾಪ್ತಿಗೊಳಪಡದ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿ ಶವವಾಗಿ ಬಾಲಕಿ ಪತ್ತೆಯಾದ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಗಾಗಿ ಈ ಎಸ್ಓಪಿ ರೂಪಿಸಲು ಸೂಚಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದರು. ಮುಂದೆ ಪ್ರತಿಯೊಂದು ಚಾರಣಪಥದಲ್ಲೂ ನೇಚರ್ ಗೈಡ್ಗಳಿಗೆ ಜಿಪಿಎಸ್ ಅಳವಡಿಸಿದ ವಾಕಿ ಟಾಕಿಯನ್ನು ಕಡ್ಡಾಯವಾಗಿ ನೀಡಲಾಗುವುದು. ಅದೇ ರೀತಿ ಪ್ರತಿಯೊಬ್ಬ ಚಾರಣಿಗರ ಮೊಬೈಲ್ಗೆ ಚಾರಣಪಥದ ನಕ್ಷೆ ಸಹಿತ ಆಪ್ ಅನ್ನು ಅಳವಡಿಸಲಾಗುವುದು. ಅಕಸ್ಮಾತ್ ಯಾರೇ ಚಾರಣಿಗರು ದಾರಿ ತಪ್ಪಿದರೆ ಅವರ ಶೋಧಕ್ಕೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು. ಚಾರಣ ಆರಂಭಕ್ಕೂ ಮುನ್ನ ಮೂಲ ನೆಲೆಯಲ್ಲಿ ಚಾರಣಿಗರಿಗೆ ಸಂಕ್ಷಿಪ್ತವಾಗಿ ಚಾರಣದ ದೂರ, ಅವಧಿ ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗುವುದು. ಅದೇ ರೀತಿ ವನ್ಯಜೀವಿಗಳು ಎದುರಾದರೆ ಏನು ಮಾಡಬೇಕು ಎಂದೂ ತಿಳಿಸಲಾಗುವುದು. ಹೆಚ್ಚು ಶಬ್ದ ಮಾಡುವ ಯಾವುದೇ ಸಾಧನಗಳಿಗೆ, ಹರಿತವಾದ ಲೋಹದ ವಸ್ತು, ಆಯುಧಗಳನ್ನು ತೆಗೆದುಕೊಂಡು ಹೋಗಲು ಮತ್ತು ಕ್ಯಾಂಪ್ ಫೈರ್ ಮಾಡಲು ಚಾರಣ ಪಥದಲ್ಲಿ ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಚಾರಣಿಗರಿಗೆ ಮೂಲ ನೆಲೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಚಾರಣ ಪಥದಲ್ಲಿ ಬೇಸ್ ಕ್ಯಾಂಪ್ ಗೆ ಹೋಗುವ ಮಾರ್ಗಸೂಚಿ, ಬಾಣದಾಕಾರದ ಗುರುತು ಹಾಕಲಾಗುವುದು. ಮಾರ್ಗಮಧ್ಯೆ ವಿರಮಿಸಿಕೊಳ್ಳಲು ವಿಶ್ರಾಂತಿ ತಾಣ ಮಾಡಲಾಗುವುದು ಎಂದರು. ಬೇಸ್ ಕ್ಯಾಂಪ್, ವಿಶ್ರಾಂತಿ ತಾಣಗಳಲ್ಲಿ ಕಡ್ಡಾಯವಾಗಿ ಚಾರಣಿಗರ ಎಣಿಕೆ ಮಾಡಬೇಕು. ಪ್ರತಿ ಅರ್ಧಗಂಟೆಗೊಮ್ಮೆ ತಮ್ಮ ವಾಕಿ ಟಾಕಿ ಮೂಲಕ ಬೇಸ್ ಕ್ಯಾಂಪ್ ನೊಂದಿಗೆ ಸಂವಹನ ನಡೆಸಬೇಕು. ಚಾರಣಿಗರ ಜವಾಬ್ದಾರಿ ಹೊರುವಂತೆ ಅವರಿಗೆ ಹೊಣೆಗಾರಿಕೆ ನೀಡಲಾಗುವುದು. ಚಾರಣ ಆರಂಭವಾದ ಒಂದು ಗಂಟೆಯೊಳಗೆ ವಾಕಿ ಟಾಕಿ ಸಂವಹನ ಗೈಡ್ ಕಡೆಯಿಂದ ನಡೆಯದಿದ್ದರೆ ಬೇಸ್ ಕ್ಯಾಂಪ್ ಸಿಬ್ಬಂದಿಯೇ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಾರೆ ಎಂದೂ ಅವರು ವಿವರಿಸಿದರು. ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಅವರ ಪಾಲಕರ, ಪೋಷಕರ ಅನುಮತಿ ಪತ್ರ ಕಡ್ಡಾಯ. ಅದೇ ರೀತಿ ಹಿರಿಯ ನಾಗರಿಕರು ಚಾರಣ ಕೈಗೊಳ್ಳಲು ತಮ್ಮ ದೈಹಿಕ ಸಾಮಥ್ರ್ಯ ಮತ್ತು ಸದೃಢತೆಯ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ ಎಂದ ಅವರು, ಯಾವುದೇ ಚಾರಣಿಗರಿಗೆ ಆರೋಗ್ಯ ಸಮಸ್ಯೆ ಕಂಡುಬಂದರೆ ಆರೈಕೆಗಾಗಿ ಗೈಡ್ ತಮ್ಮ ಜೊತೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರ ಹಾಗೂ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Yadgiri | ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ
ವೇತನ ಹೆಚ್ಚಳ ಸೇರಿ 22 ಬೇಡಿಕೆಗಳಿಗೆ ಒತ್ತಾಯ
Yadgiri | ಅರ್ಥಪೂರ್ಣವಾಗಿ ಭಗವಾನ್ ಬುದ್ಧ ಅವರ ಜಯಂತಿ ಆಚರಣೆಗೆ ನಿರ್ಧಾರ
ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇ 1ರಂದು ಭಗವಾನ್ ಬುದ್ಧ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮವನ್ನು ನಗರದ ಲುಂಬಿನಿ ವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲು ತೀರ್ಮಾನಿಸಲಾಗಿದ್ದು, ಭಗವಾನ್ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಗುವುದು. ಅದೇ ದಿನ ಬೆಳಿಗ್ಗೆ 9 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಚೌಕ್ನಿಂದ ಲುಂಬಿನಿ ವನದವರೆಗೆ ಮೆರವಣಿಗೆ ನಡೆಯಲಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವೇದಿಕೆ ವ್ಯವಸ್ಥೆ, ಆಸನ, ಶಿಷ್ಟಾಚಾರ, ಆಮಂತ್ರಣ ಪತ್ರಿಕೆ ವಿತರಣೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳಿಸಲು ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಸೇವಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಗೌರವ ಹಾಗೂ ಬುದ್ಧ ವಂದನೆ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಡಾ. ರವೀಂದ್ರನಾಥ ಹೊಸಮನಿ ಸೇರಿದಂತೆ ವಿಶೇಷ ಉಪನ್ಯಾಸಕರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಲಾಗಿದೆ. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರ ದೇವಿ ಮಠಪತಿ ಸ್ವಾಗತಿಸಿದರು. ಸಾಮಾಜದ ಮುಖಂಡರಾದ ಮರೆಪ್ಪ ಚಟ್ಟೇರಕರ್, ಬಾಬುರಾವ್ ಬುತಾಳೆ, ಡಾ. ಭಗವಂತ ಅನ್ವರ್, ನೀಲಕಂಠ ಬಡಿಗೇರ, ಮರೆಯಪ್ಪ ಬುಕ್ಕಲ್, ರಾಹುಲ್ ಹುಲಿಮನಿ, ವೆಂಕಟೇಶ್ ಹೊಸಳ್ಳಿ, ಚಂದ್ರು ಚಲವಾದಿ, ಕಾಶಿನಾಥ್ ನಾಟೇಕರ್, ಶರಣು ನಾಟೇಕರ್, ಸುರೇಶ ಬೊಮ್ಮನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಲ್ಪೆಯಿಂದ ಉಡುಪಿವರೆಗೆ ಭೀಮಯಾನ ರ್ಯಾಲಿ
ಮಲ್ಪೆ, ಎ.17: ಅಂಬೇಡ್ಕರ್ ಯುವಸೇನೆ, ದಸಂಸ, ಎಸ್.ಸಿ.ಎಸ್.ಟಿ ಗುತ್ತಿಗೆದಾರರ ಸಂಘ ಮತ್ತು ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘಗಳ ಆಶ್ರಯದಲ್ಲಿ ಡಾ.ಭೀಮರಾವ್ ರಾಮ್ಜೀ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಭೀಮಯಾನ ರ್ಯಾಲಿಯನ್ನು ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಲ್ಪೆಯ ವಡಭಾಂಡೇಶ್ವರದಿಂದ ಆರಂಭಗೊಂಡ ಈ ಭೀಮಯಾನ ವಾಹನ ರ್ಯಾಲಿಯನ್ನು ಜನಪರ ಹೋರಾಟ ಗಾರ ಜಯನ್ ಮಲ್ಪೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಸಮಾಜ ಸೇವಕ ಶಶಿಧರ್, ಮಲ್ಪೆ ಠಾಣಾಧಿಕಾರಿ ಅನಿಲ್ ಕುಮಾರ್, ಬಾಲಕೃಷ್ಣ, ನಿವೃತ್ತ ಪ್ರಾಂಶುಪಾಲೆ ಜಗದೀಶ್ ಪರ್ಕಳ, ಹರೀಶ್ ಸಲ್ಯಾನ್ ಮುಖ್ಯ ಅತಿಥಿಗಳಾಗಿದ್ದರು. ಮಲ್ಪೆಯಿಂದ ಆರಂಭಗೊಂಡ ರ್ಯಾಲಿಯು ಉಡುಪಿ ನಗರದ ಬೀದಿ ಬೀದಿಯಲ್ಲಿ ಸಂಚರಿಸಿ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಸಮಾಪ್ತಿ ಗೊಂಡಿತ್ತು. ಅಂಬೇಡ್ಕರ್ರವರ ಭಾವಚಿತ್ರವನ್ನು ಸಿಂಗಾರಗೊಂಡ ರಥದ ಜೊತೆಗೆ ಚೆಂಡೆ, ನಾಸಿಕ್ಬ್ಯಾಂಡ್, ವಿಧ ಬಗೆಯ ಟ್ಯಾಬ್ಲೋ ವಾಹನಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ವಾಸುದೇವ ಮುದ್ದೂರು, ಎಸ್.ಸಿ.ಎಸ್.ಟಿ. ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು, ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘದ ಈಶ್ವರ ಮತ್ತು ಶಿವಕುಮಾರ್ ಪರ್ಕಳ ಉಪಸ್ಥಿತರಿದ್ದರು. ದಲಿತ ಮುಖಂಡರಾದ ದಯಾಕರ ಮಲ್ಪೆ, ಪ್ರಸಾದ್ ನೆರ್ಗಿ, ಸುಶೀಲ್ ಕೊಡವೂರು, ಸಂತೋಷ್ ಕಪ್ಪೆಟ್ಟು, ಕಮಲಾಕ್ಷ ಚೇರ್ಕಾಡಿ, ನಾರಾಯಣ ಪರ್ಕಳ, ಪ್ರವೀಣ್ ಕದ್ರಿಪದವು, ಉಮೇಶ್ ಬೈಂದೂರು, ಭಾಸ್ಕರ್ ನಾಯ್ಕ, ಆನಂದ ಬೆಳ್ಳಾರೆ, ರಾಮ ನಾಯ್ಕ, ಲಕ್ಷ್ಮಣ ಬೈಂದೂರು, ರಾಮ ಮೈಯಾಡಿ, ನವೀನ ಬನ್ನಂಜೆ ಮೊದಲಾದವರು ಪಾಲ್ಗೊಂಡಿದ್ದರು. ಸಮರೋಪ ಸಮಾರಂಭದಲ್ಲಿ ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ಮಾಜಿ ನಗರಸಭೆ ಸದಸ್ಯೆ ಅಮೃತ ಕೃಷ್ಣಮೂರ್ತಿ, ಪ್ರಮುಖ ರಾದ ಶೇಖರ ಪೂಜಾರಿ, ರಾಘವೇಂದ್ರ ನಾಯ್ಕ ಮೊದಲಾದವರು ಭಾಗವಹಿಸಿದ್ದರು. ದಯಾಕರ ಸ್ವಾಗತಿಸಿದರು. ಸುಕೇಶ್ ನಿಟ್ಟೂರು ವಂದಿಸಿದರು.
ಭೂ ದಾಖಲೆ ಸ್ಕ್ಯಾನಿಂಗ್ ಪ್ರಕ್ರಿಯೆ : ಅಸಡ್ಡೆ ತೋರುತ್ತಿರುವ ತಹಶಿಲ್ದಾರ್ಗಳ ವಿರುದ್ಧ ಕೃಷ್ಣಭೈರೇಗೌಡ ಗರಂ
ಬೆಂಗಳೂರು : ಭೂ ಸುರಕ್ಷಾ ಯೋಜನೆ ಸಂಬಂಧ ದಿನಕ್ಕೆ ಸರಾಸರಿ 12,000 ಪುಟ ಸ್ಕ್ಯಾನ್ ಮಾಡಬೇಕು ಎಂಬುದು ಗುರಿ. ಆದರೆ, ಕೆಲ ತಾಲೂಕುಗಳಲ್ಲಿ ಸ್ಕ್ಯಾನಿಂಗ್ 8,000 ಪುಟ ದಾಟುತ್ತಿಲ್ಲ ಎಂದು ತಹಶೀಲ್ದಾರ್ ಗಳ ವಿರುದ್ಧ ಕಂದಾಯ ಸಚಿವ ಕೃಷ್ಣಭೈರೇಗೌಡ ಗರಂ ಆಗಿದ್ದಾರೆ. ಶುಕ್ರವಾರ ವಿಕಾಸಸೌಧದಿಂದ ವಿಡಿಯೊ ಸಂವಾದದ ಮೂಲಕ ನಡೆದ ರಾಜ್ಯದ ಎಲ್ಲ ತಹಶೀಲ್ದಾರ್ ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು ಹಾಗೂ ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸ್ಕ್ಯಾನಿಂಗ್ ಕೆಲಸ ಸಂಪೂರ್ಣ ಮುಗಿದಿದೆ. ಆದರೆ, ಬೆಂಗಳೂರು ನಗರ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ ಮೈಸೂರಿನ ಇತರೆ ತಾಲೂಕಿನಲ್ಲಿ ಈ ಕೆಲಸ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ಬೆಳ್ತಂಗಡಿ, ಮೂಡಬಿದರೆ, ಪುತ್ತೂರು ಚಳ್ಳಕೆರೆ, ಕಂಪ್ಲಿ, ಸಿರಗುಪ್ಪ ಸೇರಿ 60 ತಾಲೂಕುಗಳಲ್ಲಿ ಗುರಿಯನ್ನೂ ಮೀರಿ ದಿನಕ್ಕೆ 20,000 ಪುಟ ಸ್ಕ್ಯಾನ್ ಮಾಡುತ್ತಿದ್ದಾರೆ. ಹೊನ್ನಾವರದಲ್ಲಿ ದಿನಕ್ಕೆ 40,000 ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಹೀಗೆ ಬೇರೆ ತಾಲೂಕಿನಲ್ಲಿ ಸಾಧ್ಯವಾದದ್ದು ಇತರರಿಂದ ಏಕೆ ಸಾಧ್ಯವಿಲ್ಲ. ಈ ಸಂಬಂಧ ನಾಲ್ಕೂ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರು ಕಡಿಮೆ ಸ್ಕ್ಯಾನ್ ಆಗುತ್ತಿರುವ ತಾಲೂಕುಗಳ ಮೇಲೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು. ಭೂ ದಾಖಲೆಗಳಿಗಾಗಿ ಜನ ನಮ್ಮ ಕಚೇರಿಗೆ ಬರಬೇಡಿ ಎಂದು ತಹಶೀಲ್ದಾರರು ಜನರಲ್ಲಿ ಅರಿವು ಮೂಡಿಸಿ. ಜನ ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಕಡಿಮೆಯಾದರೆ, ಅಧಿಕಾರಿಗಳ ಕೆಲಸದ ಒತ್ತಡ, ಮಧ್ಯವರ್ತಿಗಳ ಹಾವಳಿಯೂ ಕಡಿಮೆ ಆಗಲಿದೆ. ಅದೇ ರೀತಿ, ಕುಟುಂಬದ ವ್ಯಾಜ್ಯಗಳಿಲ್ಲದ ಆಸ್ತಿಗಳನ್ನು ಸಾಧ್ಯವಾದಷ್ಚು ಶೀಘ್ರದಲ್ಲಿ ಫೌತಿಖಾತೆ ಮಾಡಬೇಕು ಎಂದೂ ಸಚಿವರು ಉಲ್ಲೇಖಿಸಿದರು. ಆಲೂರು, ನಂಜನಗೂಡು ಯಲಹಂಕ, ಚಿಟಗುಪ್ಪ, ಯಳಂದೂರು, ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಳ್ಳೆಗಾಲ, ಜೇವರ್ಗಿ, ಹನೂರು ತಾಲೂಕುಗಳಲ್ಲಿ ಕಂದಾಯ ಗ್ರಾಮಗಳ ನೋಂದಾಣಿ ಕಡಿಮೆ ಆಗಿದೆ. ಇದು ಬಡವರ ಕೆಲಸ, ಗಂಭೀರವಾಗಿ ಮಾಡಬೇಕು. ಕೆಲವರು ಎಷ್ಟೇ ಕಷ್ಟ ಇದ್ದರೂ ಸ್ಪರ್ಧೆಗೆ ಬಿದ್ದು ಕೆಲಸ ಮಾಡಿದ್ದಾರೆ. ಆದರೆ, ಬೇರೆಯವರು ಸರಿಯಾಗಿ ಮಾಡುತ್ತಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಾಕೀತು ಮಾಡಿದರು. ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ಪ್ರಭಾರಿ) ರಿತ್ವಿಕ್ ಪಾಂಡೆ, ಕಂದಾಯ ಆಯುಕ್ತ ಮೀನಾ ನಾಗರಾಜ್, ಸರ್ವೇ ಆಯುಕ್ತ ವೆಂಕಟರಾಜು ಸೇರಿದಂತೆ ಪ್ರಮುಖರಿದ್ದರು.
ಪರವಾನಿಗೆ ಭೂಮಾಪಕರ ಮುಷ್ಕರ: ತಕ್ಷಣ ಕ್ರಮಕ್ಕೆ ಸಿಎಂಗೆ ಮನವಿ
ಉಡುಪಿ, ಎ.17: ಕಳೆದ 40 ದಿನಗಳಿಂದ ನಡೆಯುತ್ತಿರುವ ಪರವಾನಿಗೆ ಭೂಮಾಪಕರ ಮುಷ್ಕರದಿಂದ ಕಂದಾಯ ಇಲಾಖೆಗೆ ಸಂಬಂಧಿತ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು ಈ ಬಗ್ಗೆ ರಾಜ್ಯ ಸರಕಾರ ತಕ್ಷಣ ಕ್ರಮವಹಿಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ರಾಜ್ಯದಾದ್ಯಂತ ಪರವಾನಿಗೆ ಭೂಮಾಪಕರು ಕಳೆದ 40 ದಿನಗಳಿಂದ ಮುಷ್ಕರದಲ್ಲಿ ತೊಡಗಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಗಳು ಉಂಟಾಗಿವೆ. ಭೂಮಾಪನ, ಸರ್ವೇ, ಪಹಣಿ ತಿದ್ದುಪಡಿ, ಹದ್ದುಬಸ್ತು, ಖಾತೆ ಬದಲಾವಣೆ ಸೇರಿದಂತೆ ಜಮೀನು ಸಂಬಂಧಿತ ಅನೇಕ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದರಿಂದ ರೈತರು, ಬಡಜನರು, ಮನೆ ನಿರ್ಮಾಣಕ್ಕೆ ಸಾಲ ಪಡೆಯುವವರು ಹಾಗೂ ಸಾಮಾನ್ಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಾದ್ಯಂತ ಸುಮಾರು 6,000 ಪರವಾನಿಗೆ ಭೂಮಾಪಕರು, ಉಡುಪಿ ಜಿಲ್ಲೆಯಲ್ಲಿ 118 ಮಂದಿ ಹಾಗೂ ಉಡುಪಿ ತಾಲೂಕಿನಲ್ಲಿ 22 ಮುಷ್ಕರದಲ್ಲಿ ನಿರತರಾಗಿದ್ದಾರೆ. ಸಾರ್ವಜನಿಕರು ದಿನನಿತ್ಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಭೂಮಾಪನ ಅರ್ಜಿಗಳ ವಿಲೇವಾರಿ ಬಾಕಿ ಇದ್ದು ವಿಶೇಷವಾಗಿ ಉಡುಪಿ ತಾಲೂಕಿನಲ್ಲಿ 350ಕ್ಕೂ ಅಧಿಕ ಭೂಮಾಪನ ಅರ್ಜಿಗಳು ಬಾಕಿಯಾಗಿದೆ. ರೈತರು, ಜಮೀನು ಖರೀದಿ/ಮಾರಾಟ ಮಾಡುವವರು, ವಾರಸುದಾರಿಕೆ ದಾಖಲೆ ಮಾಡಿಸಿಕೊಳ್ಳುವವರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳು ಆರ್ಥಿಕ ಮತ್ತು ಆಡಳಿತಾತ್ಮಕ ತೊಂದರೆ ಅನುಭವಿಸುತ್ತಿದ್ದಾರೆ. ಆದುದರಿಂದ, ಈ ಗಂಭೀರ ಸಮಸ್ಯೆಯನ್ನು ತಕ್ಷಣ ಪರಿಗಣಿಸಿ ಪರವಾನಿಗೆ ಭೂಮಾಪಕರೊಂದಿಗೆ ಮಾತುಕತೆ ನಡೆಸಿ, ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಿ, ಮುಷ್ಕರವನ್ನು ಶೀಘ್ರ ಅಂತ್ಯಗೊಳಿಸುವಂತೆ ಕ್ರಮ ಕೈಗೊಳ್ಳ ಬೇಕು. ಹಾಗೆಯೇ ಸಾರ್ವಜನಿಕ ಹಿತದೃಷ್ಟಿಯಿಂದ ಭೂಮಾಪನ ಸೇವೆಗಳು ಮರುಪ್ರಾರಂಭವಾಗುವಂತೆ ತುರ್ತು ಮಧ್ಯ ಪ್ರವೇಶ ಮಾಡಿ ಜನರ ಸಂಕಷ್ಟ ನಿವಾರಿಸಬೇಕು ಎಂದು ಯಶ್ ಪಾಲ್ ಸುವರ್ಣ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪಾಡ್ದನ ಕಲಾವಿದೆ ಸಿಂಧು ಗುಜರನ್ಗೆ ತುಳು ಪಾಡ್ದನ ಪ್ರಶಸ್ತಿ ಪ್ರದಾನ
ಉಡುಪಿ, ಎ.17: ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ಬ್ರಹ್ಮಗಿರಿ ಪ್ರಧಾನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಜನಪದ ಅಕಾಡೆಮಿ ಪ್ರಶಸ್ತಿ ವಿಜೇತ ಪಾಡ್ದನ ಕಲಾವಿದೆ ಸಿಂಧು ಗುಜರನ್ ಮೂಲ್ಕಿ ಅವರಿಗೆ 10ಸಾವಿರ ನಗದು, ಅಕ್ಕಿ ಮುಡಿ ಸಹಿತ ತುಳು ಪಾಡ್ದನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾರಂಭವನ್ನು ಉದ್ಘಾಟಿಸಿದ ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ ಮಾತನಾಡಿ, ತುಳುನಾಡು ದೈವಾರಾಧನೆ, ನಾಗಾರಾಧನೆಯ ಮೂಲ ನೆಲೆಯಾಗಿದ್ದು, ನಮ್ಮ ಮಣ್ಣಿನ ಮೂಲ ಸಂಸ್ಕೃತಿಯನ್ನು ತಿಳಿದುಕೊಳ್ಳ ಬೇಕಾದರೆ ತುಳು ಪಾಡ್ದನಗಳನ್ನು ಅಧ್ಯಯನ ಮಾಡಬೇಕು. ಜನಪದರಿಂದ ಬಾಯ್ದೆರೆಯಾಗಿ ಬಂದಿರುವ ಪಾಡ್ದನಗಳು ತುಳುವರ ಮಹಾಕಾವ್ಯಗಳಾಗಿವೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ದೆಂದೂರು ದಯಾನಂದ ಕೆ.ಶೆಟ್ಟಿ ಬರೆದಿರುವ ಬನ್ನಂಜೆ ಕಲ್ಕುಡ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ತುಳು ಭಾಷೆ, ಆರಾಧನೆ, ಸಂಪ್ರದಾಯ, ಆಚಾರ ವಿಚಾರಗಳನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ತುಳುಕೂಟ ಹಮ್ಮಿಕೊಳ್ಳುತ್ತಾ ಬಂದಿದೆ. ಹಿರಿಯರನ್ನು ಗುರುತಿಸಿ ಪಾಡ್ದನ ಪುರಸ್ಕಾರ ನೀಡುವ ಹೊಸ ಸಂಪ್ರದಾಯವನ್ನು 5ವರ್ಷಗಳಿಂದ ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಮಡಿರುವುದು ಇತರರಿಗೆ ಮಾದರಿಯೆನಿಸಿದೆ ಎಂದರು. ಹೃದಯಂ ಫೌಂಡೇಶನ್ ಮುಖ್ಯಸ್ಥ ಸುಭಾಷ್ ಸಾಲಿಯಾನ್, ಉದ್ಯಮಿ ಚೇತನ್ ಕುಮಾರ್ ಶೆಟ್ಟಿ, ಜಯಂಟ್ಸ್ ಸಂಸ್ಥೆಯ ಕೇಂದ್ರೀಯ ಸಮಿತಿ ಸದಸ್ಯ ದಿನಕರ್ ಅಮೀನ್, ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಗೌರವಾಧ್ಯಕ್ಷೆ ದೀಪಾ ಚೇತನ್ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗುಣವತಿ ದಯಾನಂದ ಶೆಟ್ಟಿ, ಕೋಶಾಧಿಕಾರಿ ಇಶಾನಿ ಶೆಟ್ಟಿ, ಅಶೋಕ್ ಅಲೆವೂರು, ಎಸ್.ಎನ್.ಶೆಟ್ಟಿ, ವಸಂತ ಶೆಟ್ಟಿ ಮುಂಬಯಿ, ರಾಮ್ ವಿ.ಕುಂದರ್, ಉಷಾ ಶೆಟ್ಟಿ ಮುಗ್ಗೇರಿ, ನಾಗೇಶ್ ಶೆಟ್ಟಿ ದೆಂದೂರು, ಯಶೋಧ ಶೆಟ್ಟಿ ಪಾಂಗಾಳ, ಯಶೋಧ ಕೇಶವ್, ಗಂಗಾಧರ ಕಿದಿಯೂರ್, ನಾಟಿ ವೈದ್ಯ ಪದ್ಮನಾಭ್ ಆರ್.ಕೋಟ್ಯಾನ್, ಡಯಾನ ಸುಪ್ರಿಯ ಉಪಸ್ಥಿತರಿದ್ದರು. ಇದೇ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಅಧ್ಯಕ್ಷ ದಯಾನಂದ್ ಕೆ.ಶೆಟ್ಟಿ ದೆಂದೂರು ಸ್ವಾಗತಿಸಿದರು. ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.
ಎ. 22ರಂದು ಉದ್ಯೋಗಾವಕಾಶ: ನೇರ ಸಂದರ್ಶನ
ಮಂಗಳೂರು: ಮೈ ಜಿ ಪ್ಯೂಚರ್ ಕಂಪೆನಿ ಹಾಗೂ ಅಕ್ಷಯ ಪಾತ್ರಾ ಪೌಂಡೇಶನ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಬ್ಯುಸಿನೆಸ್ ಮ್ಯಾನೇಜರ್, ಕ್ಯಾಟಗರಿ ಬ್ಯುಸಿನೆಸ್ ಮ್ಯಾನೇಜರ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಶೋ ರೂಮ್ ಸೇಲ್ಸ್, ಕಸ್ಟಮರ್ ಸರ್ವೀಸ್/ಡಿಲೈಟ್ ಎಕ್ಸಿಕ್ಯೂಟಿವ್, ಎಕ್ಸಿಕ್ಯೂಟಿವ್ ಡಿಸ್ಪಾಚ್ ಹಾಗೂ ಡ್ರೈವರ್, ಪ್ರೊಡಕ್ಷನ್ ಹೆಲ್ಪರ್ ಮತ್ತು ಅಡುಗೆ ಕೆಲಸಗಾರರು (ಕುಕ್) ಹುದ್ದೆಗಳಿಗೆ ನೇರ ಸಂದರ್ಶನವನ್ನು ಎ.22 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1-30 ರವರೆಗೆ ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಸಂದರ್ಶನದಲ್ಲಿ ಎಸ್ಎಸ್ಎಲ್ಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೀವಾವಧಿ ಶಿಕ್ಷೆಗೆ ಗುರಿಯಾದ ಕರ್ನಾಟಕದ ರಾಜಕಾರಣಿಗಳಿವರು; ಶಾಸಕ ಸ್ಥಾನದಿಂದ ಆಜೀವ ಸಜೆಗೆ ವಿನಯ್ ಕುಲಕರ್ಣಿ ಮೊದಲು!
ಅಧಿಕಾರದಲ್ಲಿದ್ದಾಗ ಜೀವಾವಧಿ ಶಿಕ್ಷೆಗೆ ಗುರಿಯಾದ ಕರ್ನಾಟಕ ಮೊದಲಿಗರು ವಿನಯ್ ಕುಲಕರ್ಣಿ. ರಾಜ್ಯದಲ್ಲಿ ಇಬ್ಬರು ಜನಪ್ರತಿನಿಧಿಗಳಿಗೆ ಈವರೆಗೂ ಜೀವಾವಧಿ ಶಿಕ್ಷೆಯಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಒಬ್ಬರಾಗದರೇ, ಈಗ ಕೊಲೆ ಪ್ರಕರಣದಲ್ಲಿ ವಿನಯ್. ಇನ್ನೂ ಪ್ರಮುಖ ರಾಜಕಾರಣಿಗಳ ಪೈಕಿ ಯಾರಿಗೆಲ್ಲಾ ಜೈಲು ಶಿಕ್ಷೆಯಾಗಿದೆ? ಯಾರೆಲ್ಲಾ ಜಾಮೀನಿನ ಮೇಲಿದ್ದಾರೆ? ಈ ಬಗ್ಗೆ ವಿವರ ಇಲ್ಲಿದೆ.
Kerala | ಫ್ರೈಡ್ ರೈಸ್ ನಲ್ಲಿ ಕಡಿಮೆ ಚಿಕನ್ ತುಂಡು: ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಗ್ರಾಹಕ!
ಅಲಪ್ಪುಳ: ಫ್ರೈಡ್ ರೈಸ್ ನಲ್ಲಿ ಕಡಿಮೆ ಚಿಕನ್ ತುಂಡುಗಳಿವೆ ಎಂದು ಆರೋಪಿಸಿ ಗ್ರಾಹಕರೊಬ್ಬರು ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸಿ, ಅಲ್ಲಿನ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಹರಿಪಾಡ್ ನಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ ಹರಿಪಾಡ್ ನ ‘ಚಿಕನ್ ಚಿಕಾಗೊ’ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಪಿಕಪ್ ವ್ಯಾನ್ ನಲ್ಲಿ ರೆಸ್ಟೋರೆಂಟ್ ಗೆ ಆಗಮಿಸಿದ ಆರೋಪಿಯು ಚಿಕನ್ ಫ್ರೈಡ್ ರೈಸ್ ಗೆ ಆರ್ಡರ್ ಮಾಡಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಚಿಕನ್ ಫ್ರೈಡ್ ರೈಸ್ ನಲ್ಲಿ ಕಡಿಮೆ ಚಿಕನ್ ತುಂಡುಗಳಿವೆ ಎಂದು ಆತ ರೆಸ್ಟೋರೆಂಟ್ ಸಿಬ್ಬಂದಿಗಳೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ತಕ್ಷಣವೇ ಮಧ್ಯಪ್ರವೇಶಿಸಿದ ರೆಸ್ಟೋರೆಂಟ್ ನ ವ್ಯವಸ್ಥಾಪಕರು, ಮತ್ತಷ್ಟು ಚಿಕನ್ ತುಂಡುಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಆದರೆ, ಕೋಪೋದ್ರಿಕ್ತನಾಗಿರುವ ಆರೋಪಿಯು ಆಹಾರದ ತಟ್ಟೆಯನ್ನು ಮೇಜಿನಿಂದ ಕೆಳಗೆಸೆದಿದ್ದಾನೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ಬಳಿಕ ನಗದು ಕೌಂಟರ್ ಬಳಿಗೆ ತೆರಳಿದ ಆರೋಪಿಯು ಮಹಿಳಾ ಸಿಬ್ಬಂದಿಯೊಬ್ಬರನ್ನು ನಿಂದಿಸಿ, ಅವರ ಕಾಲರ್ ಹಿಡಿದಿದ್ದಾನೆ. ಅಲ್ಲಿದ್ದ ಕಂಪ್ಯೂಟರ್ ಅನ್ನು ಹಾನಿಗೊಳಿಸಿದ ಆರೋಪಿಯು, ಆಕೆಯನ್ನು ರೆಸ್ಟೋರೆಂಟ್ ನಿಂದ ಹೊರಗೆಳೆದುಕೊಂಡು ಹೋಗಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಿಂದ ತಮಗೆ 35,000 ರೂ. ನಷ್ಟವಾಗಿದೆ ಎಂದು ರೆಸ್ಟೋರೆಂಟ್ ಸಿಬ್ಬಂದಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮಹಿಳಾ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಗುರುತಿಸುವ ಪ್ರಯತ್ನಗಳಿಗೆ ಚಾಲನೆ ನೀಡಲಾಗಿದೆ.
ಬೆಂಗಳೂರು : ನಗರದ ಮಹದೇವಪುರದ ಮಹೀಂದ್ರಾ ಕಾರು ಶೋರೂಂನಲ್ಲಿ ಮದ್ಯ ಅಮಲಿನಲ್ಲಿ ಬಂದ ವ್ಯಕ್ತಿಯೊಬ್ಬನಿಗೆ ಸಿಬ್ಬಂದಿ ಕಾರನ್ನು ಟೆಸ್ಟ್ ಡ್ರೈವ್ಗೆ ನೀಡಿ ಎಡವಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ. ಎಪ್ರಿಲ್ 12ರಂದು ಮಹದೇವಪುರದ ವಿಜ್ಞೇಶ್ವರ ನಗರದಲ್ಲಿರುವ ಮಹೀಂದ್ರಾ ಕಾರು ಶೋರೂಂನಲ್ಲಿ ಕುಡಿದು ಬಂದಿದ್ದ ಅಭಿಲಾಶ್ ಎಂಬಾತನಿಗೆ ಸಿಬ್ಬಂದಿ ವಾಹನವನ್ನು ಟೆಸ್ಟ್ ಡ್ರೈವ್ ನೀಡಿದ್ದು, ಆತ ಮನಸೋ ಇಚ್ಛೆ ಕಾರು ಚಲಾಯಿಸಿ ನಾಲ್ಕು ಕಾರುಗಳಿಗೆ ಗುದ್ದಿ ಜಖಂಗೊಳಿಸಿದ್ದಾನೆ. ಘಟನೆಯಲ್ಲಿ ರಮೇಶ್ ಎಂಬುವರ ಕಾರಿಗೆ ಗುದ್ದಿದ ರಭಸಕ್ಕೆ ಅವರ ಕಾಲು ಮುರಿದಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ರಮೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದ ನಂತರ, ಸ್ಥಳೀಯರು ಅಭಿಲಾಶ್ನನ್ನು ಹಿಡಿದು ಥಳಿಸಿದ್ದಾರೆ. ಸದ್ಯ, ಅಭಿಲಾಶ್ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆ ಸಂಬಂಧ ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬ್ರಿಡ್ಜ್ ಟು ಬೆಂಗಳೂರು 2026: ವಿಶ್ವದ ಜೊತೆ ಪಾಲುದಾರಿಕೆ ಹೊಂದಲು ಕರ್ನಾಟಕವು ಸನ್ನದ್ದ
ಬ್ರಿಡ್ಜ್ ಟು ಬೆಂಗಳೂರು 2026 ರ ಯಶಸ್ವಿ ಆತಿಥ್ಯದೊಂದಿಗೆ, ಕರ್ನಾಟಕವು ನಾವೀನ್ಯತೆ, ಹೂಡಿಕೆ ಮತ್ತು ಸಹಯೋಗಕ್ಕಾಗಿ ವಿಶ್ವಾಸಾರ್ಹ ಜಾಗತಿಕ ಪಾಲುದಾರನಾಗಿ ತನ್ನ ಸ್ಥಾನವನ್ನು ಬಲಪಡಿಸುವುದನ್ನು ಮುಂದುವರೆಸಿದೆ. ರಾಜತಾಂತ್ರಿಕರ ಜೊತೆಗಿನ ಸಂವಾದ ಕಾರ್ಯಕ್ರಮವು ಕರ್ನಾಟಕ ಮತ್ತು ಅದರ ಜಾಗತಿಕ ಪಾಲುದಾರರ ನಡುವಣ ಸಮಾನ ಬದ್ಧತೆಯನ್ನು ಬಲಪಡಿಸಿದೆ. ಸಂವಾದ ಕಾರ್ಯಕ್ರಮವನ್ನು ಮೀರಿ ಸಹ-ಸೃಷ್ಟಿ, ಸಹ-ಅಭಿವೃದ್ಧಿ ಮತ್ತು ನೈಜ ಫಲಿತಾಂಶಗಳ ನಿಟ್ಟಿನತ್ತ ಸಾಗಲು ಜಾಗತಿಕ ಪಾಲುದಾರರು, ರಾಜತಾಂತ್ರಿಕರು ನಾವೀನ್ಯತೆ ಪಾಲುದಾರರನ್ನು ಬೆಂಗಳೂರು ಟೆಕ್ ಶೃಂಗಸಭೆ 2026 ರಲ್ಲಿ ಭಾಗವಹಿಸಲು ಮತ್ತು ಜಾಗತಿಕ ನಾವೀನ್ಯತೆ ಮೈತ್ರಿಕೂಟ (ಜಿಐಎ) ವೇದಿಕೆಯ ಮೂಲಕ ಕರ್ನಾಟಕದ ಪರಿಸರ ವ್ಯವಸ್ಥೆಯ ಜೊತೆಗೆ ತೊಡಗಿಸಿಕೊಳ್ಳಲು ಆಹ್ವಾನಿಸಲಾಗಿದೆ.
ಹೊರ್ಮುಜ್ ಜಲಸಂಧಿ ಕೊನೆಗೂ ಮುಕ್ತ: LPG ಸಮಸ್ಯೆಯಲ್ಲಿ ಬೆಂದವರಿಗೆ ಆಶಾ ಕಿರಣ
LPG Good News: ಇರಾನ್, ಲೆಬನಾನ್ನಲ್ಲಿ ಜಾರಿಗೆ ಬಂದ ಯುದ್ಧ ವಿರಾಮದ ಬಳಿಕ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಾರ್ಮುಝ್ ಮಾರ್ಗವನ್ನು ಮತ್ತೆ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ತೆರೆಯಲಾಗಿದೆ ಎಂದು ತಿಳಿಸಿದೆ. ಇದರಿಂದ ಇಂಧನ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ದೊಡ್ಡ ಮಟ್ಟದ ಸಮಾಧಾನ ತಂದಿದೆ. ಅದರಲ್ಲೂ ಎಲ್ಪಿಜಿ ಬಳಕೆದಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಂತಾಗಿದೆ. ಈಗ ಲೆಬನಾನ್
ಹಿಝ್ಬುಲ್ಲಾ ವಿರುದ್ಧದ ಸೇನಾ ಕಾರ್ಯಾಚರಣೆ ಇನ್ನೂ ಮುಕ್ತಾಯಗೊಂಡಿಲ್ಲ: ಇಸ್ರೇಲ್
ಟೆಲ್ ಅವೀವ್: ಲೆಬನಾನ್ ನಲ್ಲಿ 10 ದಿನಗಳ ಕದನ ವಿರಾಮ ಜಾರಿಗೆ ಬಂದ ಬೆನ್ನಿಗೇ, ಹಿಝ್ಬುಲ್ಲಾ ಸಂಘಟನೆಯ ವಿರುದ್ಧದ ಸೇನಾ ಕಾರ್ಯಾಚರಣೆ ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಝ್ ಹೇಳಿದ್ದಾರೆ. ಇದಕ್ಕೂ ಮುನ್ನ ಇಸ್ರೇಲ್ ಮತ್ತು ಲೆಬನಾನ್ ನಡುವೆ ಅಮೆರಿಕ ಬೆಂಬಲಿತ ಕದನ ವಿರಾಮ ಜಾರಿಗೆ ಬಂದಿತ್ತು. ಇದರಿಂದ ಸೇನಾ ಸಂಘರ್ಷದ ಮುಂದುವರಿಕೆಯನ್ನು ತಡೆಯಬಹುದು ಎಂಬ ಆಶಾಭಾವನೆ ವ್ಯಕ್ತವಾಗಿತ್ತು. ಇದರ ಬೆನ್ನಿಗೇ ಕಟ್ಝ್ ಅವರ ಈ ಹೇಳಿಕೆ ಹೊರಬಿದ್ದಿದೆ. ಅಮೆರಿಕ ಬೆಂಬಲಿತ ಕದನ ವಿರಾಮವನ್ನು ಸ್ವಾಗತಿಸಿದ್ದ ಲೆಬನಾನ್ ಅಧ್ಯಕ್ಷ ಔನ್, ಇಸ್ರೇಲ್ ನೊಂದಿಗೆ ಕದನ ವಿರಾಮದ ಸಂಧಾನ ಮಾತುಕತೆಗಳಿಗೆ ಇದು ಮೊದಲ ಹಂತವಾಗಿದೆ ಎಂದು ಹೇಳಿದ್ದರು. ಈ ಕದನ ವಿರಾಮವನ್ನು ರಷ್ಯವೂ ಸ್ವಾಗತಿಸಿತ್ತು. ಇದರ ಬೆನ್ನಿಗೇ ಹಿಝ್ಬುಲ್ಲಾ ಸಂಘಟನೆ ವಿರುದ್ಧದ ಸೇನಾ ಕಾರ್ಯಾಚರಣೆ ಮುಕ್ತಾಯಗೊಂಡಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಝ್ ನೀಡಿರುವ ಹೇಳಿಕೆಯಿಂದ ಕದನ ವಿರಾಮದ ಕುರಿತು ಅನಿಶ್ಚಿತತೆ ಮೂಡಿದೆ.

26 C