Koppala | ಬಳ್ಳಾರಿ ಘಟನೆಗೆ ದ್ವೇಷದ ರಾಜಕೀಯ, ತಾಳ್ಮೆಯ ಕೊರತೆಯೇ ಕಾರಣ : ಶಾಸಕ ಬಸವರಾಜ್ ರಾಯರಡ್ಡಿ
ಕೊಪ್ಪಳ : ಬಳ್ಳಾರಿಯಲ್ಲಿ ನಡೆದ ಘಟನೆಗೆ ಆವೇಶಭರಿತ, ತಾಳ್ಮೆ ಇಲ್ಲದ ದ್ವೇಷದ ರಾಜಕೀಯವೇ ನೇರ ಕಾರಣ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಆರೋಪಿಸಿದರು. ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭರತ್ ರೆಡ್ಡಿ ಇನ್ನೂ ಯುವಕ. ತಪ್ಪು ಮಾಡಿದ್ದರೆ ತಪ್ಪು ಮಾಡಬೇಡ ಎಂದು ಹೇಳಬೇಕಾಗಿತ್ತು. ಆದರೆ ಜನಾರ್ಧನ ರೆಡ್ಡಿ ಅವರು ಹಿರಿಯ ಅಣ್ಣನ ಸ್ಥಾನದಲ್ಲಿದ್ದುಕೊಂಡು ತಾಳ್ಮೆ ಪ್ರದರ್ಶಿಸಬೇಕಾಗಿತ್ತು. ನಾನು ತಪ್ಪು–ಒಪ್ಪು ವಿಚಾರಕ್ಕೆ ಹೋಗುವುದಿಲ್ಲ, ಆದರೆ ಹಿರಿಯರಾದವರು ಕಿರಿಯರಿಗೆ ಬುದ್ಧಿ ಹೇಳಬೇಕು. ಜನಾರ್ಧನ ರೆಡ್ಡಿ ವಯಸ್ಸಿನಲ್ಲಿ ಹಿರಿಯರಾಗಿರುವುದರಿಂದ ಅವರಿಗೆ ತಾಳ್ಮೆ ಇರಬೇಕಿತ್ತು. ಆದರೆ ಅವರು ತಾಳ್ಮೆ ತೋರದೆ ಪ್ರಚೋದನೆ ನೀಡಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಹೇಳಿದರು. ಜನಾರ್ಧನ ರೆಡ್ಡಿ ಅವರ ಕಡೆಯವರು ಹೀಗೆ ಏಕಾಏಕಿ ಬ್ಯಾನರ್ ಹರಿದು ಹಾಕಬಾರದಿತ್ತು. ಆ ಬ್ಯಾನರ್ ಇರುವುದು ಮುನ್ಸಿಪಾಲಿಟಿ ಜಾಗದಲ್ಲಿ, ಅದು ರೆಡ್ಡಿಯವರ ಖಾಸಗಿ ಜಾಗದಲ್ಲಿರಲಿಲ್ಲ. ಏಕಾಏಕಿ ಬ್ಯಾನರ್ ಹರಿದು ಹಾಕಿದ್ದರಿಂದ ಸಿಟ್ಟು ಉಂಟಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು. ಬ್ಯಾನರ್ ಹರಿದು ಹಾಕಿದ ತಕ್ಷಣ ದೂರು ನೀಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು ಎಂದು ಹೇಳಿದರು. ಈ ಘಟನೆಯಲ್ಲಿ ಫೈರಿಂಗ್ ನಡೆದಿದ್ದು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ. ಈ ಕುರಿತು ತನಿಖೆ ನಡೆಯಲಿದ್ದು, ಫೈರಿಂಗ್ ಯಾರಿಂದ ನಡೆದಿದೆ ಎಂಬುದರ ಕುರಿತು ವರದಿ ಹೊರಬೀಳಲಿದೆ ಎಂದು ತಿಳಿಸಿದರು. ಕೇಂದ್ರ ಸಚಿವ ವಿ. ಸೋಮಣ್ಣ ಅವರ ಮೇಲೆ ಹಲ್ಲೆ ಯತ್ನದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ರಾಜಕೀಯ ನಾಯಕರು ಆದರ್ಶಪ್ರಾಯರಾಗಬೇಕು. ಕಾನೂನನ್ನು ಗೌರವಿಸುವ ಮನೋಭಾವ ಇರಬೇಕು. ಪಕ್ಷಭೇದವಿಲ್ಲದೆ ಎಲ್ಲರೂ ಒಂದೇ ರೀತಿಯಲ್ಲಿ ವರ್ತಿಸಬೇಕು. ಸೋಮಣ್ಣ ಅವರ ಮೇಲಿನ ಹಲ್ಲೆ ಯತ್ನವನ್ನು ಬಳ್ಳಾರಿ ಘಟನೆಯೊಂದಿಗೆ ಹೋಲಿಕೆ ಮಾಡಬಾರದು. ಅದು ಒಂದು ಸಣ್ಣ ಘಟನೆ. ಆ ವಿಚಾರವನ್ನು ಸರಿಯಾಗಿ ಹ್ಯಾಂಡಲ್ ಮಾಡಿಕೊಳ್ಳಲು ಸೋಮಣ್ಣ ಅವರಿಗೆ ಆಗಿಲ್ಲ ಎಂದು ಹೇಳಿದರು. ನಾನು ರಾತ್ರಿ ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಮಾತನಾಡಿದ್ದೆ. ಎಲ್ಲವೂ ಸರಿ ಇತ್ತು, ಮತ್ತೆ ಯಾಕೆ ಚೇರ್ ಎತ್ತಿ ಗಲಾಟೆ ಮಾಡಲಾಯಿತು ಎಂದು ಪ್ರಶ್ನಿಸಿದ್ದೇನೆ. ಅದಕ್ಕೆ ಅವರು, ನಾನು ಏನೂ ಮಾಡಿಲ್ಲ, ನನ್ನ ಹೆಸರು ಇಲ್ಲದಿದ್ದಕ್ಕೆ ಊರಿನ ಹುಡುಗರು ಆ ರೀತಿ ಮಾಡಿದ್ದಾರೆ. ಸೋಮಣ್ಣ ಅವರು “ನೀವು ಏನು ಮಾಡ್ಕೊಳ್ತೀರೋ ಮಾಡ್ಕೊಳ್ಳಿ” ಅಂತ ಹೇಳಿದ್ರು, ಅದಕ್ಕೆ ನಮ್ಮವರು ಸಿಟ್ಟಿಗೆದ್ದು ಏನೋ ಮಾಡಿದ್ದಾರೆ ಎಂದು ಉತ್ತರಿಸಿದ್ದಾರೆ ಎಂದು ರಾಯರಡ್ಡಿ ಹೇಳಿದರು. ನಾನು ನಂತರ ಸೋಮಣ್ಣ ಅವರ ಜೊತೆಯೂ ಮಾತನಾಡಿದ್ದೇನೆ. ಅವರು ಅಸಹಾಯಕರಾಗಿದ್ದರು. ರೈಲ್ವೆ ಅಧಿಕಾರಿಗಳು ಬಹಳ ಗರ್ವದಿಂದ ಮಾತನಾಡುತ್ತಾರೆ, ಹೀಗೆ ಮಾತನಾಡಬಾರದು ಎಂದು ಹೇಳಿದ್ದಾರೆ ಎಂದು ಬಸವರಾಜ್ ರಾಯರಡ್ಡಿ ವಿವರಿಸಿದರು.
ಅರಸು ದಾಖಲೆ ಬ್ರೇಕ್ ಮಾಡಿದ ಸಿದ್ದರಾಮಯ್ಯ ಆಡಳಿತ ವೈಖರಿಯೇ ಬೇರೆ: ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು?
ಬೆಂಗಳೂರು: ಮುಖ್ಯಮಂತ್ರಿಯಾಗಿ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದು, ಮುಖ್ಯಮಂತ್ರಿಯಾಗಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 7 ವರ್ಷ 7 ತಿಂಗಳು 20 ದಿನಗಳ ಕಾಲ ದೇವರಾಜ ಅರಸು ಸಿಎಂ ಆಗಿದ್ದರು. ಇದೀಗ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಬ್ರೇಕ್ ಮಾಡಿದ್ದಾರೆ. ಅರಸು ದಾಖಲೆ ಬ್ರೇಕ್ ಮಾಡಿದ ಸಿದ್ದರಾಮಯ್ಯ ಅವರ ಕುರಿತು ಮಾಜಿ ಮುಖ್ಯಮಂತ್ರಿ
ವಾಷಿಂಗ್ಟನ್ನಲ್ಲಿ ನಡೆದ GOP ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿ ತಮ್ಮನ್ನು ಭೇಟಿಯಾಗಲು ಕೇಳಿದ್ದರು ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ರಾಹುಲ್ ಗಾಂಧಿ ಟ್ರಂಪ್ ಅವರ ಒತ್ತಡಕ್ಕೆ ಮೋದಿ ಶರಣಾಗಿದ್ದಾರೆ ಎಂದು ಟೀಕಿಸಿದ್ದಾರೆ. 1971ರ ಯುದ್ಧದಲ್ಲಿ ಇಂದಿರಾ ಗಾಂಧಿ ಅಮೆರಿಕದ ಒತ್ತಡಕ್ಕೆ ಮಣಿಯದೆ ಗಟ್ಟಿಯಾಗಿ ನಿಂತಿದ್ದರು ಎಂದು ರಾಹುಲ್ ಗಾಂಧಿ ಹೋಲಿಕೆ ಮಾಡಿದ್ದು, ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಥಾಣೆ: ಅಂಬರ್ನಾಥ್ ಪುರಸಭೆಯ ನಿಯಂತ್ರಣಕ್ಕಾಗಿ ನಡೆದ ರಾಜಕೀಯ ಬೆಳವಣಿಗೆ ಮಂಗಳವಾರ ಅಚ್ಚರಿಯ ತಿರುವು ಪಡೆದುಕೊಂಡಿದೆ. ಮಹಾಯುತಿ ಪಾಲುದಾರರಾದ ಬಿಜೆಪಿ ಮತ್ತು ಶಿವಸೇನೆ ನಡುವಿನ ಪೈಪೋಟಿಯ ನಡುವೆ, ಪರಸ್ಪರ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಪರೂಪದ ಮೈತ್ರಿಗೆ ಕೈಜೋಡಿಸಿ ಶಿವಸೇನೆಯನ್ನು ಅಧಿಕಾರದಿಂದ ಹೊರಗಿಡಲು ಮುಂದಾಗಿವೆ. ಡಿಸೆಂಬರ್ 20ರಂದು ನಡೆದ ಪುರಸಭೆ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 60 ಸದಸ್ಯರ ಮಂಡಳಿಯಲ್ಲಿ 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ ನಾಲ್ಕು ಸ್ಥಾನಗಳ ಕೊರತೆಯಿತ್ತು. ಬಿಜೆಪಿ 14 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 12 ಸ್ಥಾನಗಳನ್ನು ಗಳಿಸಿತು. ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳೂ ಆಯ್ಕೆಯಾಗಿದ್ದರು. ಈ ನಡುವೆ ನಡೆದ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಶಿವಸೇನೆಗೆ ಹಿನ್ನಡೆಯಾಗಿದ್ದು, ಅದರ ಅಭ್ಯರ್ಥಿ ಮನೀಶಾ ವಾಲೇಕರ್ ಬಿಜೆಪಿಯ ತೇಜಶ್ರೀ ಕಾರಂಜುಲೆ ಪಾಟೀಲ್ ಎದುರು ಸೋಲು ಕಂಡರು. ಇದರ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಅಜಿತ್ ಪವಾರ್ ಬಣದ ಎನ್ಸಿಪಿ ಸೇರಿಕೊಂಡು ‘ಅಂಬರ್ನಾಥ್ ವಿಕಾಸ್ ಅಘಾಡಿ’ ಎಂಬ ಹೊಸ ಮೈತ್ರಿಕೂಟವನ್ನು ರಚಿಸಿವೆ. ಈ ಅಘಾಡಿಯಲ್ಲಿ 14 ಬಿಜೆಪಿ ಸದಸ್ಯರು, 12 ಕಾಂಗ್ರೆಸ್ ಕೌನ್ಸಿಲರ್ಗಳು, ಎನ್ಸಿಪಿ (ಅಜಿತ್ ಪವಾರ್ ಬಣ)ದ ನಾಲ್ವರು ಹಾಗೂ ಒಬ್ಬ ಸ್ವತಂತ್ರ ಸದಸ್ಯ ಸೇರಿದ್ದು, ಒಟ್ಟು 32 ಸದಸ್ಯರ ಬೆಂಬಲ ದೊರೆತಿದೆ. ಇದರಿಂದ 60 ಸದಸ್ಯರ ಪುರಸಭೆಯಲ್ಲಿ ಬಹುಮತದ ಗಡಿ ದಾಟಲಾಗಿದೆ. ಬಿಜೆಪಿ ಕಾರ್ಪೊರೇಟರ್ ಅಭಿಜಿತ್ ಕಾರಂಜುಲೆ ಪಾಟೀಲ್ ಅವರನ್ನು ಅಘಾಡಿಯ ಗುಂಪು ನಾಯಕರಾಗಿ ನೇಮಿಸಲಾಗಿದೆ. ಅಭಿಜಿತ್ ಪಾಟೀಲ್ ಮಾತನಾಡಿ, ಶಿವಸೇನೆಯ ದೀರ್ಘ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಬೆದರಿಕೆಯ ಸಂಸ್ಕೃತಿ ಬೆಳೆದಿದೆ. ಅದರಿಂದ ಪುರಸಭೆಯನ್ನು ಮುಕ್ತಗೊಳಿಸಿ ಅಂಬರ್ನಾಥ್ ನಲ್ಲಿ ಅಭಿವೃದ್ಧಿಗೆ ಒತ್ತು ನೀಡುವುದು ನಮ್ಮ ಉದ್ದೇಶ ಎಂದು ಹೇಳಿದರು. ಈ ಗುರಿಯನ್ನೇ ಗಮನದಲ್ಲಿಟ್ಟುಕೊಂಡು ಮೈತ್ರಿ ರೂಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ಅಧ್ಯಕ್ಷ ಸ್ಥಾನವನ್ನು ವಶಪಡಿಸಿಕೊಂಡಿದ್ದರೂ, ಪುರಸಭೆಯನ್ನು ಸ್ವತಂತ್ರವಾಗಿ ನಡೆಸಲು ಅಗತ್ಯ ಸಂಖ್ಯಾಬಲ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅದರ ಫಲವಾಗಿ ಅಘಾಡಿ ರಚನೆಯಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ರಾಜಕೀಯ ಬೆಳವಣಿಗೆಯನ್ನು ಶಿವಸೇನೆ ತೀವ್ರವಾಗಿ ಟೀಕಿಸಿದೆ. ಅಂಬರ್ನಾಥ್ ಕ್ಷೇತ್ರದ ಶಿವಸೇನಾ ಶಾಸಕ ಬಾಲಾಜಿ ಕಿನಿಕರ್, “ಕೇಂದ್ರದಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ದ ಮಾತಾಡುವ ಬಿಜೆಪಿ, ಸ್ಥಳೀಯ ಮಟ್ಟದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಇದು ಅನೈತಿಕ ಹಾಗೂ ಅವಕಾಶವಾದಿ ರಾಜಕಾರಣ” ಎಂದು ಆರೋಪಿಸಿದ್ದಾರೆ. ಇತ್ತ ಕಾಂಗ್ರೆಸ್ ರಾಜ್ಯ ನಾಯಕತ್ವ, “ಇಲ್ಲಿಯವರೆಗೆ ಯಾವುದೇ ಔಪಚಾರಿಕ ನಿರ್ಧಾರ ಅಥವಾ ಪ್ರಸ್ತಾಪ ಬಂದಿಲ್ಲ” ಎಂದು ಹೇಳಿದೆ. ಅಂಬರ್ನಾಥ್ ನ ಕಾಂಗ್ರೆಸ್ ವಕ್ತಾರರು, ಬಿಜೆಪಿ ಅಥವಾ ಶಿಂಧೆ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅಥವಾ ಮತದಾನದಿಂದ ದೂರ ಉಳಿಯುವುದು ಸೇರಿದಂತೆ ಹಲವು ಆಯ್ಕೆಗಳು ನಮ್ಮ ಮುಂದೆ ಇದ್ದವು ಎಂದು ತಿಳಿಸಿದ್ದಾರೆ. ಈ ಬೆಳವಣಿಗೆ, ಮುಂಬೈ–ಥಾಣೆಯಂತಹ ಮಹಾನಗರ ಪ್ರದೇಶಗಳಲ್ಲಿ ಸ್ಥಳೀಯ ರಾಜಕಾರಣವು ರಾಜ್ಯ ಮಟ್ಟದ ಮೈತ್ರಿ ಸಮೀಕರಣಗಳಿಗೆ ಭಿನ್ನವಾಗಿ ಸಾಗುತ್ತಿರುವುದನ್ನು ಸ್ಪಷ್ಟಪಡಿಸಿದೆ.
ಮಂಗಳೂರು: ವಿನಯ ಹೆಗ್ಡೆಯವರಿಗೆ ರೆಡ್ ಕ್ರಾಸ್ ನಿಂದ ಶ್ರದ್ಧಾಂಜಲಿ
ಮಂಗಳೂರು: ಕರಾವಳಿ ಜಿಲ್ಲೆಯ ಶೈಕ್ಷಣಿಕ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ನಿಟ್ಟೆ ವಿನಯ ಹೆಗ್ಡೆಯವರ ಆದರ್ಶಯುತ ಬದುಕು ಸಮಾಜಕ್ಕೆ ಸದಾ ಪ್ರೇರಣಾದಾಯಿ. ಸಾಧನೆಯ ಜತೆಗೆ ತನ್ನ ಸರಳ ನಡವಳಿಕೆಯಿಂದ ಅವರು ಜನಮಾನಸದಲ್ಲಿ ಗೌರವದ ಸ್ಥಾನ ಪಡೆದಿದ್ದಾರೆ ಎಂದು ದ.ಕ. ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು. ಇತ್ತೀಚೆಗೆ ಅಗಲಿದ ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ ನಿಟ್ಟೆ ವಿನಯ ಹೆಗ್ಡೆಯವರಿಗೆ ದ.ಕ.ಜಿಲ್ಲಾ ರೆಡ್ ಕ್ರಾಸ್ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು. ದ.ಕ.ಜಿಲ್ಲಾ ರೆಡ್ ಕ್ರಾಸ್ ನ ಸಮಾಜ ಸೇವಾ ಕಾರ್ಯಗಳಿಗೆ ವಿನಯ ಹೆಗ್ಡೆ ನೀಡಿರು ಪ್ರೋತ್ಸಾಹ ಸದಾ ಸ್ಮರಣೀಯ ಎಂದು ಅವರು ಹೇಳಿದರು. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ದ.ಕ. ಜಿಲ್ಲಾ ರೆಡ್ ಕ್ರಾಸ್ ಸಮಿತಿಯ ಉಪಾಧ್ಯಕ್ಷ ಡಾ.ಸತೀಶ್ ರಾವ್, ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ, ನಿರ್ದೇಶಕರಾದ ಡಾ.ಸುಮನಾ .ಬಿ., ಪಿ.ಬಿ.ಹರೀಶ್ ರೈ ನುಡಿ ನಮನ ಸಲ್ಲಿಸಿದರು. ನಿಟ್ಟೆ ಪರಿಗಣಿತ ವಿ.ವಿ.ಯ ಯೂತ್ ರೆಡ್ ಕ್ರಾಸ್ ನ ನೋಡಲ್ ಅಧಿಕಾರಿ ಡಾ.ಶಂತನು ಸಹ , ರೆಡ್ ಕ್ರಾಸ್ ಜಿಲ್ಲಾ ಘಟಕದ ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕ ಗುರುದತ್ ನಾಯಕ್, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಕೋಳಿ, ಆಡುಗಳದ್ದೂ ಜೀವವಲ್ಲವೇ?: ಬೀದಿ ನಾಯಿ ಪ್ರಿಯರ ಅರ್ಜಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ
ಹೊಸದಿಲ್ಲಿ,ಜ.7: ಬೀದಿನಾಯಿ ಪ್ರಿಯರು ಮಂಡಿಸಿದ ವಾದಗಳನ್ನು ಬುಧವಾರ ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯವು,‘ಇತರ ಪ್ರಾಣಿಗಳ ಜೀವದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೋಳಿಗಳು ಮತ್ತು ಆಡುಗಳದ್ದೂ ಜೀವವಲ್ಲವೇ?’ಎಂದು ಕೇಳಿದೆ. ಬೀದಿನಾಯಿಗಳ ನಿರ್ವಹಣೆ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ‘ಎಲ್ಲ ಬೀದಿನಾಯಿಗಳನ್ನು ದೊಡ್ಡಿಗಳಲ್ಲಿ ಕೂಡಿಹಾಕುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾಯಿಗಳು ಇಲ್ಲದಿದ್ದರೆ ತ್ಯಾಜ್ಯ ಮತ್ತು ಕೋತಿಗಳ ಸಮಸ್ಯೆಯನ್ನು ನಾವು ಹೇಗೆ ಎದುರಿಸುತ್ತೇವೆ?’ ಎಂದು ಪ್ರಾಣಿ ಹಕ್ಕು ಕಾರ್ಯಕರ್ತನೋರ್ವ ನಿವೇದಿಸಿಕೊಂಡಾಗ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಕಳೆದ ವರ್ಷ ಬೀದಿನಾಯಿಗಳ ದಾಳಿಗೆ ತುತ್ತಾಗಿದ್ದ ಎಂಟರ ಹರೆಯದ ಬಾಲಕಿಯೋರ್ವಳ ತಂದೆ ವಿಚಾರಣೆ ವೇಳೆ ಉಪಸ್ಥಿತರಿದ್ದು,ಕಳೆದ ವರ್ಷ ಬೀದಿನಾಯಿಗಳು ಎಂಟರ ಹರೆಯದ ಮಗುವೊಂದನ್ನು ಕೊಂದ ಇನ್ನೊಂದು ಘಟನೆಯೂ ಸಂಭವಿಸಿತ್ತು. ಬೀದಿನಾಯಿಗಳ ಬಗ್ಗೆ ದೂರುಗಳನ್ನು ನೀಡಿದ್ದರೂ ನೋಯ್ಡಾ ಪ್ರಾಧಿಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ನಿವಾಸಿ ಕಲ್ಯಾಣ ಸಂಘಗಳು ತಮ್ಮ ಸೊಸೈಟಿಗಳನ್ನು ‘ನಾಯಿ ನಿಷೇಧಿತ ವಲಯಗಳು’ ಎಂದು ಘೋಷಿಸಲು ಅನುಮತಿ ನೀಡಬೇಕು ಎಂದೂ ಅವರು ವಾದಿಸಿದರು. ಪ್ರಕರಣದಲ್ಲಿ ಬೀದಿನಾಯಿ ಪ್ರಿಯರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ನಾಯಿಪ್ರಿಯರು ಮತ್ತು ಪರಿಸರ ಪ್ರಿಯರಾಗಿ ನಾವು ಇಲ್ಲಿದ್ದೇವೆ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ವೋಚ್ಚ ನ್ಯಾಯಾಲಯವು, ‘ಇತರ ಪ್ರಾಣಿಗಳ ಜೀವದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೋಳಿಗಳು ಮತ್ತು ಆಡುಗಳದ್ದೂ ಜೀವವಲ್ಲವೇ?’ಎಂದು ಪ್ರಶ್ನಿಸಿತು. ‘ನಾನು ಕೋಳಿ ತಿನ್ನುವುದನ್ನು ನಿಲ್ಲಿಸಿದ್ದೇನೆ. ಏಕೆಂದರೆ ಅವುಗಳನ್ನು ಕ್ರೂರ ರೀತಿಯಲ್ಲಿ ಪಂಜರಗಳಲ್ಲಿ ಇಡಲಾಗುತ್ತದೆ. ಒಂದು ಹುಲಿ ನರಭಕ್ಷಕ ಎಂದ ಮಾತ್ರಕ್ಕೆ ಎಲ್ಲ ಹುಲಿಗಳನ್ನು ಕೊಲ್ಲಬೇಕಿಲ್ಲ’ ಎಂದು ಸಿಬಲ್ ಉತ್ತರಿಸಿದರು. ವಿಶ್ವಾದ್ಯಂತ ಬೀದಿನಾಯಿಗಳ ಸೆರೆ ಹಿಡಿಯುವಿಕೆ, ಸಂತಾನಶಕ್ತಿ ಹರಣ, ಲಸಿಕೆ ಹಾಕುವಿಕೆ ಮತ್ತು ಬಿಡುಗಡೆಯ (ಸಿಎಸ್ವಿಆರ್) ಮಾದರಿಯನ್ನು ಅನುಸರಿಸಲಾಗುತ್ತಿದೆ. ಇದು ನಗರಗಳಲ್ಲಿ ನಾಯಿಗಳ ಸಂಖ್ಯೆಯನ್ನು ಬಹುತೇಕ ಶೂನ್ಯಕ್ಕೆ ಇಳಿಸಿದೆ ಮತ್ತು ಯಶಸ್ವಿಯಾಗಿದೆ ಎಂದು ಕಪಿಲ್ ಸಿಬಲ್ ಹೇಳಿದರು.
ಬಳ್ಳಾರಿಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇಮಕ
ಬಳ್ಳಾರಿ, ಜ.7: ಬಳ್ಳಾರಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸುಮನ್ ಡಿ. ಪೆನ್ನೇಕರ್ ನೇಮಕಗೊಂಡಿದ್ದಾರೆ. ಬಳ್ಳಾರಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅಮಾನತುಗೊಂಡಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು ಅವರ ಸ್ಥಾನಕ್ಕೆ ಸುಮನ್ ಡಿ. ಪೆನ್ನೇಕರ್ ರನ್ನು ನೇಮಿಸಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದವರಾದ ಸುಮನ್ ಡಿ. ಪೆನ್ನೇಕರ್, 2013ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರು ವೃತ್ತಿಯಿಂದ ವೈದ್ಯರೂ (BAMS) ಹೌದು. ಈ ಮೊದಲು ಬೆಂಗಳೂರು ನಗರದ ಡಿಸಿಪಿ (ಗುಪ್ತದಳ) ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಮನ್ ಡಿ. ಪೆನ್ನೇಕರ್ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ದಳದ (SIT) ಪ್ರಮುಖ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೊದಲ ಮಹಿಳಾ ಎಸ್ಪಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಹಿಂದೆ ಕೊಡಗು ಜಿಲ್ಲೆಯ ಎಸ್ಪಿಯಾಗಿ ಹಾಗೂ ಬೆಂಗಳೂರಿನ ಸಂಚಾರಿ ವಿಭಾಗದ ಡಿಸಿಪಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಬದಲಾಗಲಿದೆ JEE Advanced ಪರೀಕ್ಷಾ ವಿಧಾನ; ಹೇಗಿರಲಿದೆ ಪರೀಕ್ಷೆ?
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ನಿಲ್ ಆಫ್ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (Council of Indian Institutes of Technology) ಐಐಟಿಗಳನ್ನು ರಾಷ್ಟ್ರೀಯ ಅಭಿವೃದ್ಧಿ, ತಂತ್ರಜ್ಞಾನ ನಾವೀನ್ಯತೆ ಮತ್ತು ಸಮಗ್ರ ಬೆಳವಣಿಗೆಯ ಸಂಸ್ಥೆಗಳಾಗಿ ಮರುಸ್ಥಾಪಿಸಲು ಮಹತ್ವಾಕಾಂಕ್ಷೆಯ ಸುಧಾರಣಾ ಮಾರ್ಗಸೂಚಿಯನ್ನು ಅನುಮೋದಿಸಿದೆ. ಆಗಸ್ಟ್ 2025ರಲ್ಲಿ ಐಐಟಿ ದೆಹಲಿಯಲ್ಲಿ ನಡೆದ ಐಐಟಿ ಕೌನ್ಸಿಲ್ನ 56 ನೇ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ಸಭೆ ಎಂಟೆಕ್ ಶಿಕ್ಷಣದಲ್ಲಿ ಸಮಗ್ರ ಸುಧಾರಣೆಗಳನ್ನು ಅನುಮೋದಿಸಿತು. ಇದು ಉದ್ಯಮ ಇಂಟರ್ನ್ಶಿಪ್ಗಳನ್ನು ಕಡ್ಡಾಯಗೊಳಿಸಿದ್ದು ಡ್ಯುಯಲ್-ಟ್ರ್ಯಾಕ್ ಎಂಟೆಕ್ ಕಾರ್ಯಕ್ರಮಗಳ ಪರಿಚಯವನ್ನು ಉತ್ತೇಜಿಸಿತು. ವಿದ್ಯಾರ್ಥಿಗಳ ಆಸಕ್ತಿಯನ್ನು ಪ್ರೋತ್ಸಾಹಿಸಲು ಮತ್ತು ವಿಕಸನಗೊಳ್ಳುತ್ತಿರುವ ಉದ್ಯಮದ ಅಗತ್ಯಗಳೊಂದಿಗೆ ತರಬೇತಿಯನ್ನು ಹೊಂದಿಸಲು ಬಹುಶಿಸ್ತೀಯ ಉತ್ಪನ್ನ ಆಧಾರಿತ ಎಂಟೆಕ್ ಕಾರ್ಯಕ್ರಮಗಳನ್ನು ವಿಸ್ತರಿಸಲು ಐಐಟಿಗಳಿಗೆ ಸೂಚಿಸಲಾಗಿದೆ. ಕೌನ್ಸಿಲ್ ಸಭೆಯಲ್ಲಿ JEE ಅಡ್ವಾನ್ಸ್ಡ್ ಪರೀಕ್ಷೆಯ ವಿಧಾನವನ್ನು ಬದಲಿಸುವ ಬಗ್ಗೆಯೂ ಮಹತ್ತರ ತೀರ್ಮಾನ ಕೈಗೊಳ್ಳಲಾಗಿದೆ. JEE Advanced ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಹೆಚ್ಚು ವಿದ್ಯಾರ್ಥಿ ಸ್ನೇಹಿಯಾಗಿ ಮತ್ತು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಪರೀಕ್ಷೆಯನ್ನು ನಡೆಸುವ ವಿಧಾನದಲ್ಲಿ ಪ್ರಮುಖ ಬದಲಾವಣೆಯನ್ನು ಐಐಟಿ ಕೌನ್ಸಿಲ್ ಪ್ರಸ್ತಾಪಿಸಿದೆ. ಅದೇನೆಂದರೆ ಅಭ್ಯರ್ಥಿಯ ಕಾರ್ಯಕ್ಷಮತೆಗೆ ಅನುಗುಣವಾಗಿ ನೈಜ ಸಮಯದಲ್ಲಿ ಪ್ರಶ್ನೆಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಅತೀ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾಗಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯವಾಗಿರುತ್ತದೆ. ಪರೀಕ್ಷೆ ಕಠಿಣ ಆಗಿರುವುದರಿಂದ ಹೆಚ್ಚಿನ ಒತ್ತಡವೂ ಇವರ ಮೇಲಿರುತ್ತದೆ. ಇದನ್ನು ಕಡಿಮೆ ಮಾಡಲು Adaptive Test ಎಂಬ ಹೊಸ ವಿಧಾನ ಕೈಗೊಳ್ಳಲಾಗುತ್ತಿದೆ. Adaptive Test ಹೇಗಿರುತ್ತದೆ ಅಂದರೆ ಪರೀಕ್ಷಾರ್ಥಿಯ ಉತ್ತರಗಳ ಆಧಾರದ ಮೇಲೆ ಮುಂದಿನ ಪ್ರಶ್ನೆಯನ್ನು ನೈಜ ಸಮಯದಲ್ಲಿ ಸರಿಹೊಂದಿಸುವ ಕ್ರಿಯಾತ್ಮಕ ಪರೀಕ್ಷೆಯಾಗಿದೆ. ಸರಳವಾಗಿ ವಿವರಿಸುವುದಾದರೆ ಮೊದಲು ಎಲ್ಲರಿಗೂ ಒಂದೇ ರೀತಿಯ ಪ್ರಶ್ನೆಗಳನ್ನು ನೀಡಲಾಗುತ್ತದೆ. ಅದಕ್ಕೆ ಸರಿಯುತ್ತರ ಕೊಟ್ಟ ಅಭ್ಯರ್ಥಿಗಳಿಗೆ ನಂತರ ಅದಕ್ಕಿಂತ ಸ್ವಲ್ಪ ಕಠಿಣ ಪ್ರಶ್ನೆಗಳನ್ನು ನೀಡಲಾಗುತ್ತದೆ. ತಪ್ಪು ಉತ್ತರ ಕೊಟ್ಟ ವಿದ್ಯಾರ್ಥಿಗಳಿಗೆ ನಂತರದ ಹಂತದಲ್ಲಿ ಸ್ವಲ್ಪ ಸುಲಭದ ಪ್ರಶ್ನೆಗಳನ್ನು ನೀಡಲಾಗುತ್ತದೆ. ಹೀಗೆ ಹಂತ ಹಂತವಾಗಿ ಪರೀಕ್ಷಾರ್ಥಿಗಳು ಕಠಿಣ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಹೋಗಬೇಕು. ಪರೀಕ್ಷಾರ್ಥಿಯ ಕಾರ್ಯಕ್ಷಮತೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ನೆೈಜ ಸಮಯದಲ್ಲಿ ಹೊಂದಿಸಲಾಗುತ್ತದೆ. ಪ್ರಮುಖ ಸಂಸ್ಥೆಗಳ ಅತ್ಯುನ್ನತ ಸಮನ್ವಯ ಸಂಸ್ಥೆಯಾಗಿರುವ ಕೌನ್ಸಿಲ್, ಈ ವರ್ಷದ ಮುಂದಿನ JEE ಅಡ್ವಾನ್ಸ್ಡ್ ಪರೀಕ್ಷೆಗೆ ಮುಂಚಿತವಾಗಿ ಕಾರ್ಯಕ್ಷಮತೆಯ ಕುರಿತು ಡೇಟಾವನ್ನು ಸಂಗ್ರಹಿಸಲು ಐಚ್ಛಿಕ ಅಡಾಪ್ಟಿವ್ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ನಡೆಸಬೇಕೆಂದು ಶಿಫಾರಸು ಮಾಡಿದೆ. ಫಲಿತಾಂಶಗಳ ಆಧಾರದ ಮೇಲೆ ಅಡಾಪ್ಟಿವ್ ಪರೀಕ್ಷೆ ಪರಿವರ್ತನೆಗಾಗಿ ನಿರ್ದಿಷ್ಟ ಸಮಯಾವಧಿಯೊಂದಿಗೆ ಹಂತ ಹಂತದ ಮಾರ್ಗಸೂಚಿಯನ್ನು ರೂಪಿಸಬಹುದು ಎಂದು ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ನಡೆಯುವ ಪರೀಕ್ಷೆಗೆ ಎರಡು ತಿಂಗಳ ಮೊದಲು ಉಚಿತ ಅಣಕು ಪರೀಕ್ಷೆಯನ್ನು ನಡೆಸಲು ಕೌನ್ಸಿಲ್ ಸೂಚಿಸಿದೆ. ಕಳೆದ ವರ್ಷ, 1.80 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 54,378 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಅಡಾಪ್ಟಿವ್ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕ್ಷಣಾರ್ಧದಲ್ಲಿ ರಚಿಸಲಾಗುತ್ತದೆ.ಇಲ್ಲಿ ವಿವಿಧ ಹಂತಗಳಲ್ಲಿ ಪ್ರಶ್ನೆಗಳಿರುತ್ತವೆ. ಸರಳ ಪ್ರಶ್ನೆಗಳೊಂದಿಗೆ ಪರೀಕ್ಷೆ ಶುರುವಾಗುತ್ತದೆ. ವಿದ್ಯಾರ್ಥಿಯು ಇವುಗಳನ್ನು ಪರಿಹರಿಸುತ್ತಾ ಹೋದಂತೆ, ಕಠಿಣ ಪ್ರಶ್ನೆಗಳನ್ನು ಪರಿಹರಿಸಬೇಕಾಗುತ್ತದೆ . ಸ್ವಲ್ಪ ಸಮಯದ ನಂತರ, ವಿದ್ಯಾರ್ಥಿಯು ಪ್ರಶ್ನೆಗಳನ್ನು ಪರಿಹರಿಸಬಹುದಾದ ಪ್ರಶ್ನೆಗಳ ಮಟ್ಟವನ್ನು ಅಂದರೆ ಅದು ಎಷ್ಟು ಕಠಿಣವಾದದದು ಅಥವಾ ಕಷ್ಟವಾದದ್ದು ಎಂಬುದನ್ನು ನೀವು ಗುರುತಿಸಬಹುದು ಎಂದು ಐಐಟಿ ಕಾನ್ಪುರದ ನಿರ್ದೇಶಕ ಪ್ರೊಫೆಸರ್ ಮನೀಂದ್ರ ಅಗರ್ವಾಲ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ ನಾವು ಯೋಗ್ಯತಾ ಆಧಾರಿತ ಪ್ರಶ್ನೆಗಳ ಅಂಶವನ್ನು ತಂದರೆ, ಅದು ತರಬೇತಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.ಇದು ಸಹಜ ಬುದ್ಧಿವಂತಿಕೆಯೊಂದಿಗೆ ಸಂಬಂಧ ಹೊಂದಿದೆ. ತರಬೇತಿಯು ವಿದ್ಯಾರ್ಥಿಗಳಿಗೆ ಬುದ್ಧಿಮತ್ತೆಯನ್ನು ಉತ್ತಮವಾಗಿ ಬಳಸಲು ಮಾತ್ರ ತರಬೇತಿ ನೀಡುತ್ತದೆ. ಅದು ಆ ಬುದ್ಧಿಮತ್ತೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಗರ್ವಾಲ್ ಹೇಳಿದ್ದಾರೆ. ವಿದ್ಯಾರ್ಥಿಯ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸುವಂತೆ ಸೂಚನೆ ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಪರಿಹರಿಸಲು ಐಐಟಿಗಳಲ್ಲಿ ಸಮರ್ಪಿತ ಮಾನಸಿಕ ಆರೋಗ್ಯ ಕೇಡರ್ಗಳನ್ನು ರಚಿಸಲು ಕೌನ್ಸಿಲ್ ಶಿಫಾರಸು ಮಾಡಿದೆ. ಇದರಲ್ಲಿ ಕ್ಯಾಂಪಸ್ಗಳಲ್ಲಿ ದೀರ್ಘಕಾಲೀನ, ರಚನಾತ್ಮಕ ಮಾನಸಿಕ ಆರೋಗ್ಯ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಸಲಹೆಗಾರರು, ಮನಶ್ಶಾಸ್ತ್ರಜ್ಞರು ಮತ್ತು ಮನೋವೈದ್ಯರಿಗೆ ಮಂಜೂರಾದ ಹುದ್ದೆಗಳು ಸೇರಿವೆ. AI ಆಧಾರಿತ ಉಪನ್ಯಾಸಗಳು ಮತ್ತು ಅಧ್ಯಯನ ಸಾಮಗ್ರಿಗಳ ನೈಜ-ಸಮಯದ ಅನುವಾದದಿಂದ ಬೆಂಬಲಿತವಾದ ಭಾರತೀಯ ಭಾಷೆಗಳಲ್ಲಿ ಬೋಧನೆಯನ್ನು ವಿಸ್ತರಿಸಲು ಕೌನ್ಸಿಲ್ IIT ಗಳನ್ನು ಒತ್ತಾಯಿಸಿದೆ. ಅದೇ ವೇಳೆ ಲಿಂಗ ಸಮಾನತೆ, ಗ್ರಾಮೀಣ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು 2047ರ ವೇಳೆಗೆ ವ್ಯಾಪಕವಾದ ಸಂಪರ್ಕ ಉಪಕ್ರಮಗಳ ಕಡೆಗೆ ಕೆಲಸ ಮಾಡಲು ಸಂಸ್ಥೆಗಳಿಗೆ ಸೂಚಿಸಿದೆ. ಮಾನಸಿಕ ಒತ್ತಡದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಐಐಟಿಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡುತ್ತಿದ್ದು ಇದನ್ನು ಪರಿಹರಿಸಲು ಕೌನ್ಸಿಲ್ ಮಾನಸಿಕ ಆರೋಗ್ಯ ವೃತ್ತಿಪರರ ನಿಯೋಜನೆಯನ್ನು ಕೋರಿತ್ತು. 3,000 ರಿಂದ 18,000 ವಿದ್ಯಾರ್ಥಿಗಳನ್ನು ಹೊಂದಿರುವ ಐಐಟಿಗಳಲ್ಲಿ ಸುಸ್ಥಿರ ಮತ್ತು ದೀರ್ಘಕಾಲೀನ ಪರಿಹಾರವನ್ನು ಸೃಷ್ಟಿಸಲು, ಅಧ್ಯಾಪಕರು, ಕುಟುಂಬಗಳು ಮಾನಸಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಹುದ್ದೆಗಳ ಸರಿಯಾದ ರಚನೆ ಮತ್ತು ಕೇಡರ್ ಅನ್ನು ರಚಿಸಬೇಕು. ಐಐಟಿಗಳಲ್ಲಿ ಸಲಹೆಗಾರರಿಂದ ಹಿಡಿದು ಮನಶ್ಶಾಸ್ತ್ರಜ್ಞರು ಮತ್ತು ಮನೋವೈದ್ಯರವರೆಗಿನ ಹುದ್ದೆಗಳನ್ನು ರಚಿಸಬೇಕಾಗಿದೆ ಎಂದು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ. ಹುದ್ದೆಗಳನ್ನು ನಿಯಮಿತ ಅಥವಾ ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಬಹುದು ಎಂದು ಕೌನ್ಸಿಲ್ ಸೂಚಿಸಿದೆ. ಬಡ್ತಿ ಮತ್ತು ಗುಣಮಟ್ಟದ ಮೌಲ್ಯಮಾಪನಕ್ಕೆ ಮಾರ್ಗಗಳನ್ನು ಒಳಗೊಂಡಂತೆ ಐಐಟಿಗಳಲ್ಲಿ ಈ ಹುದ್ದೆಗಳಿಗೆ ಸರಿಯಾದ ರಚನೆಯನ್ನು ವ್ಯಾಖ್ಯಾನಿಸಲು ಅದು ಐಐಟಿ ಗಾಂಧಿನಗರವನ್ನು ಕೇಳಿದೆ. ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ಐಐಟಿಗಳಲ್ಲಿ ಮಾನಸಿಕ ಯೋಗಕ್ಷೇಮವು ಬಹಳ ಗಂಭೀರವಾದ ಕಾಳಜಿಯಾಗಿದೆ. ಈಗ ಐಐಟಿಗಳಲ್ಲಿ ಅಂತಹ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ನಿರ್ವಹಿಸಲು ಮನಶ್ಶಾಸ್ತ್ರಜ್ಞರನ್ನು ನಿಯಮಿತವಾಗಿ ನೇಮಿಸಿಕೊಳ್ಳಲಾಗುತ್ತದೆ. ಪ್ರತಿ ಐಐಟಿ ತನ್ನದೇ ಆದ ಕಾರ್ಯವಿಧಾನವನ್ನು ಹೊಂದಿದೆ. ಕೆಲವು ಐಐಟಿಗಳು 500 ವಿದ್ಯಾರ್ಥಿಗಳಿಗೆ ಒಬ್ಬ ಸಲಹೆಗಾರರನ್ನು ಹೊಂದಿದ್ದರೆ ಕೆಲವು ಕಡೆ ವಿದ್ಯಾರ್ಥಿಗಳಿಗೆ ಒಬ್ಬ ಸಲಹೆಗಾರರನ್ನು ಹೊಂದಿರಬಹುದು. ಕೆಲವು ಸಂಸ್ಥೆಗಳು ನಿಗದಿತ ಸಂಖ್ಯೆಯ ಸಲಹೆಗಾರರನ್ನು ಹೊಂದಿವೆ. ಕ್ಲಿನಿಕಲ್ ಕೌನ್ಸೆಲಿಂಗ್ ಮತ್ತು ವೈದ್ಯಕೀಯ ಹಸ್ತಕ್ಷೇಪ ಸೇರಿದಂತೆ ವಿವಿಧ ಹಂತದ ಹಸ್ತಕ್ಷೇಪವೂ ಇದೆ. ಮುಂದಿನ ಐಐಟಿ ಕೌನ್ಸಿಲ್ ಸಭೆಯಲ್ಲಿ ಇದನ್ನು ಮಂಡಿಸಲಾಗುವುದು. ಐಐಟಿಗಳು ಈ ಕುರಿತು ಶಿಫಾರಸನ್ನು ರಚಿಸುವ ಗುರಿಯನ್ನು ಹೊಂದಿವೆ ಎಂದು ಐಐಟಿ ಗಾಂಧಿನಗರ ನಿರ್ದೇಶಕ ಪ್ರೊ.ರಜತ್ ಮೂನಾ ಹೇಳಿದ್ದಾರೆ. ಎಂಜಿನಿಯರಿಂಗ್ ಶಿಕ್ಷಣದ ಪ್ರಮುಖ ಭಾಗವಾಗಲಿದೆ AI ಕೃತಕ ಬುದ್ಧಿಮತ್ತೆಯ ಪರಿವರ್ತನಾತ್ಮಕ ಪರಿಣಾಮವನ್ನು ಗುರುತಿಸಿದ ಕೌನ್ಸಿಲ್, ಪಠ್ಯಕ್ರಮ, ಶಿಕ್ಷಣಶಾಸ್ತ್ರ ಮತ್ತು ಸಂಶೋಧನೆಯಾದ್ಯಂತ AI ಮತ್ತು ಮೆಶೀನ್ ಲರ್ನಿಂಗ್ ಪ್ರಮುಖ ಸಾಮರ್ಥ್ಯಗಳಾಗಿ ಸಂಯೋಜಿಸಲು IIT ಗಳಿಗೆ ನಿರ್ದೇಶನ ನೀಡಿತು. ಈ ಪರಿವರ್ತನೆಗೆ ಮಾರ್ಗದರ್ಶನ ನೀಡಲು ಪ್ರತಿ IIT ಸಂಸ್ಥೆ AI ಕಾರ್ಯಪಡೆಯನ್ನು ಸ್ಥಾಪಿಸಲಿದೆ.
ಸಕ್ಕರೆ ಮುಕ್ತ ಎರಿಥ್ರಿಟಾಲ್ ಸೇವನೆ ಬಗ್ಗೆ ಮಧುಮೇಹ ತಜ್ಞರು ಎಚ್ಚರಿಸಿರುವುದೇಕೆ?
ಸಕ್ಕರೆ-ಮುಕ್ತ ಎರಿಥ್ರಿಟಾಲ್ ಹೊಂದಿರುವ ಡಯಟ್ ಪಾನೀಯಗಳು, ಪ್ರೊಟೀನ್ ಬಾರ್ಗಳು ಮತ್ತು ಡೆಸರ್ಟ್ಗಳ ಸೇವನೆ ವಿರುದ್ಧ ಮಧುಮೇಹ ತಜ್ಞರು ಎಚ್ಚರಿಕೆ ನೀಡಿರುವುದೇಕೆ? ಎರಿಥ್ರಿಟಾಲ್ ಎನ್ನುವುದು ಒಂದು ಸಕ್ಕರೆ ಆಲ್ಕೋಹಾಲ್ (ಪಾಲಿಯೋಲ್) ಆಗಿದ್ದು, ಅನೇಕ ಆಹಾರಗಳಲ್ಲಿ ಕಡಿಮೆ ಕ್ಯಾಲರಿ ಸಿಹಿಯಾಗಿ ಬಳಸಲಾಗುತ್ತದೆ. ನೈಸರ್ಗಿಕವಾಗಿಯೂ ಹಣ್ಣುಗಳಲ್ಲಿರುತ್ತದೆ. ಆದರೆ ಗ್ಲುಕೋಸ್ ಹುದುಗಿಸುವ ಮೂಲಕ ವಾಣಿಜ್ಯ ರೂಪದಲ್ಲಿ ತಯಾರಿಸಲಾಗುತ್ತದೆ. ಅನೇಕ ಸಕ್ಕರೆ ಮುಕ್ತ ಆಹಾರಗಳಲ್ಲಿ ಇದನ್ನು ಬಳಸಲಾಗುತ್ತದೆ. ಆದರೆ ತಜ್ಞರು ಇದರ ಬಳಕೆಯ ಬಗ್ಗೆ ಎಚ್ಚರಿಸುತ್ತಿರುವುದೇಕೆ? ಎರಿಥ್ರಿಟಾಲ್ ಅನ್ನು ಸಾಮಾನ್ಯವಾಗಿ ಡಯಟ್ ಪಾನೀಯ, ಪ್ರೊಟೀನ್ ಬಾರ್ಗಳು ಮತ್ತು ‘ಶೂನ್ಯ ಸಕ್ಕರೆ’ ಡೆಸರ್ಟ್ಗಳಲ್ಲಿ ಬಳಸಲಾಗುತ್ತದೆ. ಸಕ್ಕರೆಯಂತೆ ರುಚಿಯಿದ್ದರೂ ಕ್ಯಾಲರಿಗಳನ್ನು ಹೆಚ್ಚಿಸುವುದಿಲ್ಲ. ಹೀಗಾಗಿ ರಕ್ತದಲ್ಲಿ ಸಕ್ಕರೆಯನ್ನು ಕಾಪಾಡಬೇಕಾದವರು ಅಥವಾ ತೂಕ ಇಳಿಸಬೇಕೆಂದವರು ಇದರ ಉತ್ಪನ್ನಗಳನ್ನು ಸೇವಿಸುತ್ತಾರೆ. ಆದರೆ ಹೊಸ ಸಂಶೋಧನೆಯೊಂದು ಹೇಳಿರುವಂತೆ ದೊಡ್ಡ ಪ್ರಮಾಣದಲ್ಲಿ ರಕ್ತದಲ್ಲಿ ಎರಿಥ್ರಿಟಾಲ್ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತರಬಹುದು. ತಜ್ಞರ ಪ್ರಕಾರ ಅಪರೂಪಕ್ಕೆ ಬಳಸಿದರೆ ವಿಷಕಾರಿಯಲ್ಲ. ಆದರೆ ನಿಯಮಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗಬಹುದು. ಸಕ್ಕರೆ ಆಲ್ಕೋಹಾಲ್ ಅನ್ನು ಅತಿಯಾಗಿ ಸೇವಿಸಿದರೆ ಕರುಳಿನಲ್ಲಿ ಸೂಕ್ತವಾಗಿ ಹೀರಿಕೊಳ್ಳದೆ ಇರುವುದರಿಂದ ಹೊಟ್ಟೆ ಉಬ್ಬರಿಸಬಹುದು, ಗ್ಯಾಸ್ ತುಂಬವುದು ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಅವು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯದ ಸಮತೋಲನಕ್ಕೆ ಹಾನಿ ಮಾಡಬಹುದು. ಹೀಗಾಗಿ ಜೀರ್ಣಕ್ರಿಯೆಗೆ ಹಾನಿಯಾಗಬಹುದು ಮತ್ತು ಚಯಾಪಚಯ ಕೆಲಸವನ್ನು ನಿಧಾನಗೊಳಿಸಬಹುದು. ಅದರಿಂದ ಕಾಲಕ್ರಮೇಣ ತೂಕ ನಷ್ಟದ ಬದಲಿಗೆ ತೂಕ ಹೆಚ್ಚಾಗಬಹುದು. ಎರಿಥ್ರಿಟಾಲ್ನಿಂದ ಹೃದಯರೋಗದ ಅಪಾಯವೇಕೆ? ತಜ್ಞರು ಹೇಳುವ ಪ್ರಕಾರ ನಮ್ಮ ದೇಹಗಳು ಸಹಜವಾಗಿ ಸಣ್ಣ ಪ್ರಮಾಣದಲ್ಲಿ ಎರಿಥ್ರಿಟಾಲ್ ಉತ್ಪಾದಿಸುತ್ತವೆ. ಆದರೆ ಸಂಸ್ಕರಿತ ಆಹಾರ ಅಥವಾ ಸಿಹಿಯ ಮೂಲಕ ಅದನ್ನು ಸೇವಿಸಿದಾಗ ರಕ್ತದ ಮಟ್ಟ ಹೆಚ್ಚಾಗುತ್ತದೆ. ಎರಿಥ್ರಿಟಾಲ್ನಿಂದ ರಕ್ತ ಹೆಪ್ಪುಗಟ್ಟಲು ನೆರವಾಗುವ ಪ್ಲೇಟ್ಲೆಟ್ಗಳನ್ನು ಹೆಚ್ಚು ಅಂಟಿಕೊಳ್ಳುವಂತೆ ಮಾಡಬಹುದಾಗಿದ್ದು, ರಕ್ತ ಹೆಪ್ಪುಗಟ್ಟುವುದು ಹೆಚ್ಚಾಗುವ ಅಪಾಯವಿದೆ. ಅದರಿಂದಾಗಿ ರಕ್ತನಾಳಗಳನ್ನು ಬ್ಲಾಕ್ ಮಾಡಬಹುದು. ಹಾಗೆ ಹೃದಯ ಸಂಬಂಧಿ ರೋಗ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಲಿದೆ. ಈಗಾಗಲೇ ಅದರ ಅಪಾಯವಿರುವವರ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಹಾಗಿದ್ದರೂ ಮಧುಮೇಹಿಗಳಿಗೆ ಸಕ್ಕರೆಗಿಂತ ಸುರಕ್ಷಿತವೆ? ಸಕ್ಕರೆ ಮಾಡುವಂತೆ ಎರಿಥ್ರಿಟಾಲ್ ಗ್ಲುಕೋಸ್ ಅಥವಾ ಇನ್ಸುಲಿನ್ ಪ್ರಮಾಣವನ್ನು ಏರಿಸುವುದಿಲ್ಲ. ಆದರೆ ಮಧುಮೇಹಿಗಳಿಗೆ ಹೃದಯ ರೋಗದ ಅಪಾಯ ಹೆಚ್ಚಿಸುತ್ತದೆ. ಸಿಹಿಯು ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಹೆಚ್ಚು ಮಾಡುತ್ತಿದ್ದಲ್ಲಿ, ಅದನ್ನು ಬಳಸದೆ ಇರುವುದು ಉತ್ತಮ. ಅದಕ್ಕೆ ಬದಲಾಗಿ ಸಿಹಿಯ ನೈಸರ್ಗಿಕ ಪರ್ಯಾಯಗಳಾಗಿರುವ ಸ್ಟಿವಿಯ ಅಥವಾ ಮಾಂಕ್ ಫ್ರುಟ್ ಸಕ್ಕರೆಗಳನ್ನು ಬಳಸಬಹುದು. ಅದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ. ಮುಖ್ಯವಾಗಿ ಸಿಹಿ ರುಚಿಯ ಆಹಾರಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತವೆ. ಸಿಹಿಯನ್ನು ಸುರಕ್ಷಿತವಾಗಿ ಹೇಗೆ ಬಳಸಬಹುದು? ಆರೋಗ್ಯಕರವೆಂದರೆ ಸಿಹಿ ತಿನ್ನುವುದು ಕಡಿಮೆ ಮಾಡುವುದು. ಅಲ್ಟ್ರಾ-ಪ್ರೊಸೆಸ್ಡ್ ಸಕ್ಕರೆ ಮುಕ್ತ ತಿನಿಸುಗಳನ್ನು ಕನಿಷ್ಠ ಪ್ರಮಾಣದಲ್ಲಿ ಸೇವಿಸಬೇಕು. ಬದಲಾಗಿ ಹಣ್ಣುಗಳಿಂದ ಸಿಹಿ ಸೇವಿಸಬಹುದು. ಅವುಗಳಿಂದ ಫೈಬರ್, ಆಂಟಿ ಆಕ್ಸಿಡಂಟ್ಗಳು ಮತ್ತು ವಿಟಮಿನ್ಗಳು ಸಿಗುತ್ತವೆ. ದೇಹಕ್ಕೆ ಜಲಸಂಚಯನ ಚೆನ್ನಾಗಿರಬೇಕು, ನಿದ್ರೆ ಚೆನ್ನಾಗಿ ಮಾಡಬೇಕು. ಸಕ್ಕರೆ ಮುಕ್ತ ಎಂದ ಮಾತ್ರಕ್ಕೆ ಅಪಾಯ ಮುಕ್ತ ಎಂದುಕೊಳ್ಳಬಾರದು. ಲೇಬಲ್ಗಳನ್ನು ಓದಬೇಕು. ಏನೇ ಸೇವಿಸಿದರೂ ಹದದಲ್ಲಿ ತಿನ್ನಬೇಕು. ಉತ್ತಮ ಸಿಹಿಯೆಂದರೆ ಸಮತೋಲನವೇ ವಿನಾ ರಾಸಾಯನಿಕ ಪರ್ಯಾಯವಲ್ಲ. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್
ಭಾರತೀಯ ರೈಲ್ವೆಯಿಂದ 22,000 ಲೆವೆಲ್-1(ಗ್ರೂಪ್ ಡಿ) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ
22,000 ಲೆವೆಲ್ 1 ಹುದ್ದೆಗಳ ನೇಮಕಾತಿಯಲ್ಲಿ ಪಾಯಿಂಟ್ಮೆನ್, ಸಹಾಯಕರು, ಟ್ರ್ಯಾಕ್ ನಿರ್ವಹಣೆದಾರರು ಮತ್ತು ವಿವಿಧ ತಾಂತ್ರಿಕ ವಿಭಾಗಗಳಿಗೆ ಭರ್ತಿ ಮಾಡಲಾಗುತ್ತದೆ. ಭಾರತೀಯ ರೈಲ್ವೆ ಮತ್ತೊಮ್ಮೆ ದೇಶದ ಅತಿದೊಡ್ಡ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಸೂಚನೆ ಸಂಖ್ಯೆ CEN 09/2025 ಅಡಿಯಲ್ಲಿ ಒಟ್ಟು 22,000 ಲೆವೆಲ್-1 ಹುದ್ದೆಗಳನ್ನು ಘೋಷಿಸಿದೆ. ಸುಮಾರು 22,000 ಲೆವೆಲ್-1 (ಗ್ರೂಪ್ ಡಿ) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆ 2026ರ ಜನವರಿ 21ರಿಂದ ಫೆಬ್ರವರಿ 20ರವರೆಗೆ ಆನ್ಲೈನ್ ಮೂಲಕ ನಡೆಯಲಿದೆ. ಈ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾದವರು/ ಐಟಿಐ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು, ಆಯ್ಕೆ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ದೈಹಿಕ ದಕ್ಷತೆ ಪರೀಕ್ಷೆ ಇರಲಿದೆ. 22,000 ಲೆವೆಲ್ 1 ಹುದ್ದೆಗಳ ನೇಮಕಾತಿಯಲ್ಲಿ ಪಾಯಿಂಟ್ಮೆನ್, ಸಹಾಯಕರು, ಟ್ರ್ಯಾಕ್ ನಿರ್ವಹಣೆದಾರರು (ಗ್ರೇಡ್ IV) ಮತ್ತು ವಿವಿಧ ತಾಂತ್ರಿಕ ವಿಭಾಗಗಳಿಗೆ (ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪ್ರಮುಖ ವಿವರಗಳು: * ಹುದ್ದೆಗಳ ಸಂಖ್ಯೆ : ಸುಮಾರು 22,000 ಲೆವೆಲ್-1 (ಗ್ರೂಪ್ ಡಿ) ಹುದ್ದೆಗಳು. * ಹುದ್ದೆಗಳ ವಿಧ : ಪಾಯಿಂಟ್ಮೆನ್, ಟ್ರ್ಯಾಕ್ ನಿರ್ವಹಣೆದಾರರು, ಸಹಾಯಕರು (ಸಿಗ್ನಲ್, ಟೆಲಿಕಾಂ, etc.). * ಅರ್ಜಿ ಸಲ್ಲಿಕೆ ದಿನಾಂಕ : ಜನವರಿ 21, 2026 ರಿಂದ ಫೆಬ್ರವರಿ 20, 2026. * ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ. * ಅರ್ಹತೆ : 10ನೇ ತರಗತಿ/ಐಟಿಐ ಉತ್ತೀರ್ಣ. * ಆಯ್ಕೆ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ. ಪ್ರಮುಖ ದಿನಾಂಕಗಳು * ನೋಟಿಸ್ ಬಿಡುಗಡೆ ಡಿಸೆಂಬರ್ 23, 2025 * ವಿವರವಾದ ಅಧಿಸೂಚನೆ: ಜನವರಿ 20, 2026 * ಆನ್ಲೈನ್ ಅರ್ಜಿ ಆರಂಭ: ಜನವರಿ 21, 2026 * ಕೊನೆಯ ದಿನಾಂಕ: ಫೆಬ್ರವರಿ 20, 2026 (ರಾತ್ರಿ 11:59) ಶೈಕ್ಷಣಿಕ ಅರ್ಹತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು. ತಾಂತ್ರಿಕ ಹುದ್ದೆಗಳಿಗೆ ಐಟಿಐ ಪ್ರಮಾಣಪತ್ರ ಅಥವಾ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (ಎನ್ಎಸಿ) ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಬಹುದು. ವಯಸ್ಸಿನ ಮಿತಿ 2026 ಜನವರಿ 1ರಂತೆ ಅಭ್ಯರ್ಥಿಗಳು 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು. ಸರಕಾರಿ ನಿಯಮಗಳ ಪ್ರಕಾರ ಮೀಸಲು ವರ್ಗಗಳಿಗೆ (ಒಬಿಸಿಗೆ 3 ವರ್ಷಗಳು ಮತ್ತು ಎಸ್ಸಿ/ಎಸ್ಟಿಗೆ 5 ವರ್ಷಗಳು) ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ. ಆಯ್ಕೆ ಪ್ರಕ್ರಿಯೆ ಹೇಗೆ? ರೈಲ್ವೆ ಪಾರದರ್ಶಕ ಮತ್ತು ಬಹು-ಹಂತದ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಸಾಮಾನ್ಯ ವಿಜ್ಞಾನ, ಗಣಿತ, ತಾರ್ಕಿಕತೆ ಮತ್ತು ಸಾಮಾನ್ಯ ಅರಿವನ್ನು ಒಳಗೊಂಡ 100 ಪ್ರಶ್ನೆಗಳನ್ನು ಒಳಗೊಂಡ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರುತ್ತದೆ. ದೈಹಿಕ ದಕ್ಷತೆ ಪರೀಕ್ಷೆ (CBT)ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ದೈಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ (ಉದಾ. 35 ಕೆಜಿ ತೂಕದೊಂದಿಗೆ ಓಡುವುದು ಮತ್ತು ಪುರುಷರಿಗೆ 1000 ಮೀಟರ್ ಓಟವನ್ನು ಪೂರ್ಣಗೊಳಿಸುವುದು). ಅಂತಿಮವಾಗಿ, ಯಶಸ್ವಿ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಮತ್ತು ಆರೋಗ್ಯ ತಪಾಸಣೆಗೆ ಒಳಗಾಗುತ್ತಾರೆ. ಸಂಬಳ ಮತ್ತು ಭತ್ಯೆಗಳು ಆಯ್ಕೆಯಾದ ಅಭ್ಯರ್ಥಿಗಳು 7ನೇ ವೇತನ ಆಯೋಗದ ವೇತನ ಮ್ಯಾಟ್ರಿಕ್ಸ್ನ ಹಂತ 1ರ ಪ್ರಕಾರ ವೇತನವನ್ನು ಪಡೆಯುತ್ತಾರೆ. ಆರಂಭಿಕ ಮೂಲ ವೇತನವು 18,000ರೂ. ಆಗಿರುತ್ತದೆ. ಇದರಲ್ಲಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಇತರ ರೈಲ್ವೆ ಸೌಲಭ್ಯಗಳು ಸೇರಿವೆ. ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ನಲ್ಲಿರುತ್ತದೆ. ಅಭ್ಯರ್ಥಿಗಳು www.rrbapply.gov.in ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ 500 ರೂ. (ಸಿಬಿಟಿಯಲ್ಲಿ ಹಾಜರಾದ ನಂತರ 400 ರೂ. ಮರುಪಾವತಿಸಲಾಗುತ್ತದೆ), ಎಸ್ಸಿ/ಎಸ್ಟಿ, ಮಹಿಳೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಶುಲ್ಕ 250 ರೂ.ಆಗಿದೆ.
ಜ.9ರಿಂದ 11ರವರೆಗೆ ಮಂಗಳೂರಿನಲ್ಲಿ ‘ಹಕ್ಕಿ ಹಬ್ಬ’
ಮಂಗಳೂರು, ಜ.7: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜ.9ರಿಂದ 11ರವರೆಗೆ ಮಂಗಳೂರಿನಲ್ಲಿ 12ನೇ ಆವೃತ್ತಿಯ ‘ಹಕ್ಕಿ ಹಬ್ಬ’ವನ್ನು(ಬರ್ಡ್ ಫೆಸ್ಟಿವಲ್) ಆಯೋಜಿಸಿದೆ. ಬುಧವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ಯುವಜನರಲ್ಲಿ ವಿವಿಧ ಪಕ್ಷಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ. ಹಲವು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಈ ಹಿಂದೆ 2018ರಲ್ಲಿ ರಮಾನಾಥ ರೈ ಅರಣ್ಯ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಹಕ್ಕಿಹಬ್ಬ ಆಯೋಜಿಸಲಾಗಿತ್ತು. ಈ ವರ್ಷದ ಉತ್ಸವದ ಉದ್ಘಾಟನೆಯು ಪಿಲಿಕುಲದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಈ ವರ್ಷದ ಹಕ್ಕಿ ಹಬ್ಬದ ಲಾಂಛನ ಜಿಲ್ಲೆಯ ಕರಾವಳಿಯಲ್ಲಿ ಕಂಡುಬರುವ ‘ಬಿಳಿ ಹೊಟ್ಟೆಯ ಕಡಲ ಹದ್ದು’ ಆಗಿರುತ್ತದೆ ಎಂದು ತಿಳಿಸಿದರು. 250 ಮಂದಿ ಭಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೊನಿ ಎಸ್. ಮರಿಯಪ್ಪ ಮಾತನಾಡಿ, ಹಕ್ಕಿ ಹಬ್ಬವು ಪಕ್ಷಿ ಪ್ರೇಮಿಗಳಿಗೆ ಮಾಹಿತಿ ಮತ್ತು ಜ್ಞಾನ ವಿನಿಮಯದ ವೇದಿಕೆಯಾಗಿದೆ. ನಗರದ ನಾಲ್ಕು ಕಾಲೇಜುಗಳ 180 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆಯಾಗಿ ಪಕ್ಷಿ ತಜ್ಞರು ಸೇರಿದಂತೆ ಸುಮಾರು 250 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿವಿಧ ಪರಿಸರ ವ್ಯವಸ್ಥೆಗಳಲ್ಲಿ ಒಟ್ಟು 12 ಪಕ್ಷಿ ವೀಕ್ಷಣಾ ಪಥಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. 420 ಪ್ರಭೇದಗಳು ಪ್ರತಿದಿನ ನಾಲ್ಕು ಪಕ್ಷಿ ವೀಕ್ಷಣಾ ಅವಧಿಗಳಿರುತ್ತವೆ. ಪಾಲ್ಗೊಳ್ಳುವವರನ್ನು 10 ತಂಡಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ತಂಡವು ಗುರುತಿಸಲಾದ ಎಲ್ಲಾ ಪಥಗಳನ್ನು ಸಂದರ್ಶಿಸಲಿದೆ. ಪ್ರತೀ ಅವಧಿಯ ಆನಂತರ ತಜ್ಞರೊಂದಿಗೆ ಸಂವಾದ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ವಲಸೆ ಹಕ್ಕಿಗಳು ಸೇರಿದಂತೆ ಒಟ್ಟು 420 ಪಕ್ಷಿ ಪ್ರಭೇದಗಳು ದಾಖಲಾಗಿವೆ ಎಂದು ಆ್ಯಂಟೊನಿ ಮರಿಯಪ್ಪ ತಿಳಿಸಿದರು. ಜಾಗೃತಿ ಕಾರ್ಯಕ್ರಮಗಳು ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಶಾಲೆಟ್ ಪಿಂಟೋ ಮಾತನಾಡಿ, ಮಂಡಳಿಯು ಶಾಲೆಗಳಲ್ಲಿ ಹಾವು ಕಡಿತ ತಡೆಗಟ್ಟುವಿಕೆ, ಹಾವುಗಳ ಸಂರಕ್ಷಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ಪುನಶ್ಚೇತನಗೊಳಿಸಲು ಬಯಸಿದ್ದೇನೆ. ಪ್ರಸಕ್ತ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಚಾರಣ ಪಥಗಳನ್ನು ಮತ್ತೆ ಮಂಡಳಿಯ ವ್ಯಾಪ್ತಿಗೆ ತರುವ ಉದ್ದೇಶವಿದೆ ಎಂದು ಅವರು ಹೇಳಿದರು. ರಾಜ್ಯದ 40 ಚಾರಣ ಪಥಗಳಲ್ಲಿ ಆರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಪ್ರಕೃತಿ ತಜ್ಞ ರಾಹುಲ್, ಸಿಬಂದಿ ಲಾವಣ್ಯಾ ಉಪಸ್ಥಿತರಿದ್ದರು.
ವಿಟಮಿನ್ ಡಿ ಪೂರಕಗಳ ಅಧಿಕ ಸೇವನೆಯಿಂದ ಕಿಡ್ನಿ ಮತ್ತು ಹೃದಯಕ್ಕೆ ಸಮಸ್ಯೆ ಇದೆಯೆ?
ವಿಟಮಿನ್ ಡಿ ಪೂರಕಗಳನ್ನು ಸ್ವಯಂ ಔಷಧ ಮತ್ತು ದೊಡ್ಡ ಪ್ರಮಾಣದಲ್ಲಿ ದೀರ್ಘ ಕಾಲ ಸೇವಿಸುವುದರಿಂದ ಗಂಭೀರ ಪರಿಣಾಮಗಳಾಗಬಹುದು. ವಿಟಮಿನ್ ಡಿ ಪೂರಕಗಳನ್ನು ಸೇವಿಸುವುದರಿಂದ ಹೃದಯ ಮತ್ತು ಕಿಡ್ನಿಗೆ (ಮೂತ್ರಪಿಂಡ) ಹಾನಿಯಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ತಜ್ಞರು ಏನು ಹೇಳುತ್ತಾರೆ? ತಜ್ಞರ ಪ್ರಕಾರ ಸ್ವಯಂ ಔಷಧಿ ತೆಗೆದುಕೊಳ್ಳುವುದು ಮತ್ತು ದೊಡ್ಡ ಪ್ರಮಾಣದಲ್ಲಿ ದೀರ್ಘ ಕಾಲ ಸೇವಿಸುವುದರಿಂದ ಗಂಭೀರ ಪರಿಣಾಮಗಳಾಗಬಹುದು. ಫೂರಕ ಔಷಧಗಳನ್ನು ವೈದ್ಯರ ಸಲಹೆಯಲ್ಲಿಯೇ ಸೇವಿಸಬೇಕು. ತಜ್ಞರ ಪ್ರಕಾರ, ವಿಟಮಿನ್ ಡಿ ಕೊಬ್ಬು ಕರಗುವ ವಿಟಮಿನ್ ಹೊಂದಿದೆ. ಅಂದರೆ ದೇಹ ಹೆಚ್ಚುವರಿ ಪ್ರಮಾಣವನ್ನು ಅಷ್ಟು ಬೇಗನೇ ಹೊರ ಹಾಕುವುದಿಲ್ಲ. ಕಾಲಾನುಸಾರ ಇದು ವಿಷಕಾರಿ ಅಂಶಗಳನ್ನು ಹೆಚ್ಚಿಸಬಹುದು. ಇದರಿಂದ ಗಂಭೀರ ಕಿಡ್ನಿ ವೈಫಲ್ಯ, ಅಸಹಜವಾದ ಹೃದಯಬಡಿತ, ವಾಕರಿಕೆ, ವಾಂತಿ ಮತ್ತು ನಿರ್ಜಲೀಕರಣದ ಸಮಸ್ಯೆ ಕಾಡಬಹುದು. ವಿಟಮಿನ್ ಡಿ ಕೊರತೆ ಸಾಮಾನ್ಯ ಸಮಸ್ಯೆ ಪೂರಕ ಔಷಧಿ ಸೇವನೆ ದೊಡ್ಡ ಸಮಸ್ಯೆಯಲ್ಲ. ವೈದ್ಯರ ಮೇಲ್ವಿಚಾರಣೆ ಇಲ್ಲದೆ ಸೇವಿಸುವುದು ತಪ್ಪು. ವಿಟಮಿನ್ ಡಿ ಕೊರತೆ ವ್ಯಾಪಕವಾಗಿರುವಾಗ ನಿತ್ಯವೂ ಅಧಿಕ ಡೋಸ್ನ ಪೂರಕ ಔಷಧಿ ಸೇವನೆ ಒಳಿತು ಎಂದು ಭಾವಿಸುತ್ತಾರೆ. ವಾಸ್ತವದಲ್ಲಿ ವಿಟಮಿನ್ ಡಿ ಹಾರ್ಮೋನ್ ರೀತಿಯಲ್ಲಿ ಕೆಲಸಮಾಡುತ್ತದೆಯೇ ವಿನಾ ವಿಟಮಿನ್ ರೀತಿಯಲ್ಲಿ ಅಲ್ಲ. ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಏರಿಸಬಹುದು. ಅದರಿಂದ ಕಿಡ್ನಿಗೆ ಹಾನಿ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಯಾವ ಸೂಚನೆಗಳಿಗೆ ಜಾಗರೂಕತೆ ವಹಿಸಬೇಕು? ಪದೇಪದೆ ವಾಕರಿಕೆ, ವಾಂತಿ, ಹಸಿವೆ ಇಲ್ಲದಿರುವುದು, ಅತಿಯಾದ ಬಾಯಾರಿಕೆ, ಸುಸ್ತು ಮತ್ತು ಹೃದಯದ ಅತಿಯಾದ ಸ್ಪಂದನೆಯಂತಹ ಸೂಚನೆಗಳಿಗೆ ಜಾಗರೂಕರಾಗಬೇಕು. ಗಂಭೀರ ಪ್ರಕರಣಗಳಲ್ಲಿ ಮೂತ್ರ ಕಡಿಮೆಯಾಗಬಹುದು, ಹೃದಯದ ಗತಿಯಲ್ಲಿ ಹಠಾತ್ ಏರಬಹುದು. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಕಾಣಬೇಕು. ವಿಟಮಿನ್ ಡಿ ವಿಷ ಹೃದಯಕ್ಕೆ ಹೇಗೆ ಸಮಸ್ಯೆ ಒಡ್ಡುತ್ತದೆ? ವಿಟಮಿನ್ ಡಿ ವಿಷದಿಂದ ಆಗುವ ಅಧಿಕ ಕ್ಯಾಲ್ಸಿಯಂ ಮಟ್ಟಗಳು ಹೃದಯದ ವಿದ್ಯುತ್ ಸಂಚಾರ ವ್ಯವಸ್ಥೆಗೆ ತೊಂದರೆ ಒಡ್ಡಬಹುದು. ಅದರಿಂದ ಹೃದಯದ ಅತಿ ಸ್ಪಂದನೆ, ಅನಿಯಮಿತ ಹೃದಯಬಡಿತ, ಅಥವಾ ಅತ್ಯಧಿಕ ವೇಗ ಮತ್ತು ಅತಿ ಕಡಿಮೆ ಹೃದಯದ ದರಗಳನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ವೈದ್ಯರನ್ನು ಕಾಣದೆ ಇದ್ದರೆ ಅಪಾಯಕಾರಿಯಾಗಿ ಪರಿಣಮಿಸಬಹುದು. ವಿಟಮಿನ್ ಡಿ ಅತಿ ಸೇವನೆಯಿಂದ ಯಾರಿಗೆ ಹೆಚ್ಚು ಅಪಾಯ? ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು, ಹೃದಯದ ಅನಾರೋಗ್ಯದಿಂದ ಬಳಲುತ್ತಿರುವವರು ದೀರ್ಘ ಸಮಯ ರಕ್ತದ ಪರೀಕ್ಷೆ ಇಲ್ಲದೆ ವಾರ ಅಥವಾ ಮಾಸಿಕವಾಗಿ ಹೈಡೋಸ್ ವಿಟಮಿನ್ ಡಿ ಪೂರಕಗಳನ್ನು ಸೇವಿಸಬಾರದು. ಯುವಕರು ಮತ್ತು ಆರೋಗ್ಯಕರ ಮಂದಿಗೂ ಸಮಸ್ಯೆಯಾಗಬಹುದು. ವಿಟಮಿನ್ ಡಿ ಸುರಕ್ಷಿತವಾಗಿ ಸೇವನೆ ಹೇಗೆ? ರಕ್ತ ಪರೀಕ್ಷೆಯಿಂದ ವಿಟಮಿನ್ ಡಿ ಪೂರಕ ಬೇಕೇ ಇಲ್ಲವೆ ಎನ್ನುವುದು ತಿಳಿಯುತ್ತದೆ. ಪ್ರತಿ ವ್ಯಕ್ತಿಗಳಿಗೆ ಭಿನ್ನವಾಗಿ ಡೋಸ್ ಮತ್ತು ಅವಧಿಯನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ನಿಗದಿಪಡಿಸಬೇಕು. ಅಗತ್ಯಕ್ಕಿಂತ ಹೆಚ್ಚು ಸೇವನೆಯಿಂದ ಹೆಚ್ಚುವರಿ ಲಾಭವಾಗದು, ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್
ಗುರುಗ್ರಹದ ಚಂದ್ರನಲ್ಲಿ ಅನ್ಯಗ್ರಹದ ಜೀವಿಗಳು ಇವೆಯೆ? ಹೊಸ ಅಧ್ಯಯನ ಏನು ಹೇಳುತ್ತದೆ?
ಯುರೋಪವನ್ನು ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳಿಗೆ ಇದೀಗ ಗುರುಗ್ರಹದ ಈ ಚಂದ್ರನ ಕುರಿತಂತೆ ಹೊಸ ವಿಷಯ ತಿಳಿದು ಬಂದಿದೆ. ಗುರು ಗ್ರಹದ ಚಂದ್ರನಾದ ಯುರೋಪದ ಹಿಮದ ಕವಚದ ಅಡಿಯಲ್ಲಿ ಭೂಮಿಗಿಂತಲೂ ವಿಶಾಲವಾದ ಸಾಗರ ಅಡಗಿದೆ. ಆದರೆ ಸಾಗರದ ಅಡಿಯಲ್ಲಿ ಜೀವರಾಶಿ ಇದೆಯೇ ಅಥವಾ ಮೌನ ಪ್ರಪಂಚ ಅಡಗಿದೆಯೇ ಎನ್ನುವುದು ಈವರೆಗೂ ನಿಗೂಢವಾದ ವಿಷಯವಾಗಿತ್ತು. ಇದೀಗ ಹೊಸ ಅಧ್ಯಯನ ಆ ಕುರಿತ ರಹಸ್ಯವನ್ನು ಬಹಿರಂಗಡಪಡಿಸಿದೆ. ಭೂಮಿಯ ಸಮುದ್ರಗಳನ್ನೆಲ್ಲ ಸಂಯೋಜಿಸಿದರೆ ಸಿಗುವುದಕ್ಕಿಂತ ಬೃಹತ್ ಗಾತ್ರದ ಸಾಗರವನ್ನು ಅಡಗಿಸಿಕೊಂಡ ದಪ್ಪನೆಯ ಮಂಜುಗಡ್ಡೆಯಿಂದ ಮುಚ್ಚಿಕೊಂಡ ಜಗತ್ತನ್ನು ಊಹಿಸಿ ನೋಡಿ. ಅದೇ ಗುರು ಗ್ರಹದ ಚಂದ್ರ ಯುರೋಪ. ನಮ್ಮ ಸೌರ ವ್ಯವಸ್ಥೆಯಲ್ಲಿ ಅನ್ಯಗ್ರಹದ ಜೀವಿಯನ್ನು ಕಾಣುವ ಸಾಧ್ಯತೆ ಹೆಚ್ಚಿರುವ ಜಾಗ ಎನ್ನುವ ಹಿರಿಮೆಯನ್ನು ಯುರೋಪ ಹೊಂದಿದೆ. ಆದರೆ ಇತ್ತೀಚೆಗಿನ ಅಧ್ಯಯನವೊಂದು ಕಂಡುಕೊಂಡಿರುವ ಪ್ರಕಾರ ಯುರೋಪದ ಸಾಗರದಡಿ ಜೀವ ವ್ಯವಸ್ಥೆ ಇರುವ ಸಾಧ್ಯತೆ ಅತಿ ಕಡಿಮೆಯಿದೆ. ಬಹುಶಃ ಖಾಲಿ ಸಮುದ್ರವನ್ನು ಕಾಣಬಹುದು. ಅನ್ಯಗ್ರಹಜೀವಿಗಳನ್ನು ಕಾಣುವ ಕನಸು ಯುರೋಪದ ಸಮುದ್ರದ ನೆಲದಲ್ಲಿ ವಿಚಿತ್ರ ಜೀವಿಗಳು ಹರಿದಾಡುತ್ತಿರಬಹುದು ಎಂದು ವಿಜ್ಞಾನಿಗಳು ಕನಸು ಕಂಡಿದ್ದರು. ಭೂಮಿಯ ಆಳ ಸಾಗರದಲ್ಲಿ ಕಂಡುಬಂದಿರುವಂತಹ ಪರಿಸರ ಯುರೋಪದಲ್ಲಿ ಇರಬಹುದು ಎಂದು ಊಹಿಸಲಾಗಿತ್ತು. ಸಾಗರದ ಕಿರುದ್ವಾರಗಳು ಸೂರ್ಯನ ಬೆಳಕು ಇಲ್ಲದೆಯೇ ಜೀವಕ್ಕೆ ಆಹಾರವನ್ನು ನೀಡುವ ಶಾಖ ಮತ್ತು ರಾಸಾಯನಿಕಗಳನ್ನು ಹೊರಹಾಕುತ್ತವೆ. ಹೀಗಾಗಿ ಜೀವಪರಿಸರವಿರುವ ಸಾಧ್ಯತೆಯನ್ನು ಅಂದಾಜಿಸಲಾಗಿತ್ತು. ಆದರೆ ಹೊಸ ಲೆಕ್ಕಾಚಾರಗಳು ಯುರೋಪಾದ ಕಲ್ಲಿನ ತಳವು ಬಹುಶಃ ಭೌಗೋಳಿಕವಾಗಿ ಮೃತಪಟ್ಟಿದೆ ಎಂದು ತೋರಿಸುತ್ತಿದೆ. ಗುರುವಿನ ಗುರುತ್ವಾಕರ್ಷಣೆಗೆ ಹೆಚ್ಚು ಬಲವಿಲ್ಲ ಸೇಂಟ್ ಲೂಯಿಸ್ನ ವಾಷಿಂಗ್ಟನ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಪೌಲ್ ಬೈರನ್ ನೇತೃತ್ವದಲ್ಲಿ ವಿಜ್ಞಾನಿಗಳ ತಂಡವು ಗುರುವಿನ ಚಂದ್ರನ ಅಂತರಂಗವನ್ನು ಹುಡುಕಾಡಿದೆ. ಯುರೋಪದ ಮಧ್ಯಭಾಗವು ಶತಕೋಟಿ ವರ್ಷಗಳ ಹಿಂದೆ ತಣ್ಣಗಾಗಿದೆ. ಗುರುವಿನ ಗುರುತ್ವಾಕರ್ಷಣೆ ಬಲ ಹೆಚ್ಚು ಪ್ರಬಲವಾಗಿಲ್ಲ. ಹೀಗಾಗಿ ಆಂತರಿಕ ಸ್ಫೋಟಗಳಿಗೆ ಸಾಕಷ್ಟು ಬಲವಿಲ್ಲ. ಗುರುವಿನ ಸಮೀಪವಿರುವ ಚಂದ್ರ ಲೋ ಜ್ವಾಲಾಮುಖಿಗಳನ್ನು ಹೊರಹೊಮ್ಮಿಸಿತ್ತು. ಆದರೆ ಯುರೋಪದಲ್ಲಿ ಸ್ಥಿರವಾದ ಕಕ್ಷೆಯಿರುವುದು ಸೌಮ್ಯವಾದ ಶಾಖವಿರುವುದಕ್ಕೆ ಸಾಕ್ಷಿಯಾಗಿದೆ. ಇದು ಸಾಗರವನ್ನು ದ್ರವ ರೂಪದಲ್ಲಿರಿಸಲು ಸಾಕಾಗುತ್ತದೆ. ಆದರೆ ಸಮುದ್ರದ ನೆಲವನ್ನು ಮುರಿಯುವಷ್ಟು ಗಟ್ಟಿಯಿಲ್ಲ. ಏಕೆ ಮೌನವಾದ ಸಾಗರದಂಡೆಯಿದೆ? ಭೂಮಿಯಲ್ಲಿ ಸಮುದ್ರದ ಅಡಿಯಲ್ಲಿರುವ ಜೀವಿಗಳು ಟೆಕ್ಟಾನಿಕ್ (ಭೂಮಿಯ ಚಿಪ್ಪಿನ ವಿರೂಪಗಳ)ಚಟುವಟಿಕೆಯಿಂದ ಶಕ್ತಿಯನ್ನು ಪಡೆಯುತ್ತವೆ. ಹೊಸ ಬಂಡೆಗಳು ಬಿರುಕು ಬಿಡುವುದು ಅಥವಾ ಬಿಸಿನೀರಿನ ಝರಿಗಳಿಲ್ಲದೆ (ನದಿ ನೀರು ಮತ್ತು ಸಮುದ್ರದ ಉಪ್ಪಿನ ಮಿಶ್ರಣದ ಪರಿಣಾಮವಾಗಿ ಸಮುದ್ರದಲ್ಲಿ ರೂಪುಗೊಳ್ಳುವ ಶುದ್ಧೀಕರಿಸಿದ ನೀರಿನ ದ್ರವ್ಯರಾಶಿ) ಸೂಕ್ಷ್ಮ ಜೀವಿಗಳಿಗೆ ರಾಸಾಯನಿಕ ಇಂಧನ ಸಾಕಷ್ಟು ದೊರೆಯುವುದಿಲ್ಲ. ಹೀಗಾಗಿ ಸಂಕೀರ್ಣ ಜೀವ ಸ್ವರೂಪ ಕಂಡುಬರಲು ಸಾಧ್ಯವೇ ಇಲ್ಲ. ಸಮುದ್ರದ ಅಡಿಗೆ ಸಬ್ಮೆರೀನ್ ಕಳುಹಿಸಿದರೂ ಏನೂ ನಡೆಯುವುದಿಲ್ಲ. ಯಾವುದೇ ಮುರಿತ, ಜ್ವಾಲಾಮುಖಿಗಳು, ನೀರ್ಗುಳ್ಳೆ ಬರುವ ದ್ವಾರಗಳು ಇರುವುದಿಲ್ಲ. ಸಾಗರ ವಿಶಾಲವಾಗಿ ಉಪ್ಪುಮಯವಾಗಿರಬಹುದು. ಆದರೆ ಅದರ ನೆಲ ಖಾಲಿ ಬಯಲಾಗಿರಬಹುದು. ನಾಸಾದ ಹೊಸ ಅಧ್ಯಯನದ ಮೇಲೆ ಭರವಸೆ ಹಾಗೆಂದು ಯುರೋಪದಲ್ಲಿ ಜೀವಪರಿಸರವಿಲ್ಲ ಎಂದು ಈಗಲೇ ನಿರ್ಧರಿಸಿಬಿಡುವುದು ಬೇಡ. ನಾಸಾದ ಯುರೋಪ ಕ್ಲಿಪ್ಪರ್ ಮಿಷನ್ 2031ರಿಂದ ಯುರೋಪದ ಸಮೀಪದಲ್ಲಿ ಹಾದು ಹೋಗಲಿದೆ. ಅದರಿಂದಾಗಿ ಸಮೀಪದ ಫೋಟೋಗಳು ಸಿಗಲಿವೆ. ಅದರಲ್ಲಿ ಹಿಮ ಮತ್ತು ಸಾಗರದ ವಿವರಗಳೂ ಲಭಿಸಬಹುದು. ಆ ಫೋಟೋಗಳು ವಿಜ್ಞಾನಿಗಳು ಹೇಳಿರುವುದನ್ನು ದೃಢಪಡಿಸಬಹುದು ಅಥವಾ ಸುಳ್ಳು ಎಂದೂ ಹೇಳಬಹುದು. ಯುರೋಪದ ಆಳದಲ್ಲಿ ಜೀವ ಪರಿಸರವಿಲ್ಲದೆ ಇದ್ದರೂ, ಬ್ರಹ್ಮಾಂಡದ ಬೇರೆ ಗ್ರಹಗಳಲ್ಲಿ ಜೀವಿಗಳು ಇರಬಹುದು ಎಂದು ಬೈರನ್ ಅಭಿಪ್ರಾಯಪಡುತ್ತಾರೆ. ಹೊಸ ಅನ್ವೇಷಣೆಗಳಲ್ಲಿ ಹೊಸ ವಿಷಯಗಳು ತಿಳಿಯಬಹುದು.
Donald Trump: ನರೇಂದ್ರ ಮೋದಿ ಸರ್, ಪ್ಲೀಸ್ ಮಾತನಾಡಬೇಕು ಅಂತಿದ್ದಾರೆ: ಡೊನಾಲ್ಡ್ ಟ್ರಂಪ್
ಅಮೆರಿಕಾ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ವ್ಯಂಗ್ಯವಾದ ಹೇಳಿಕೆಗಳನ್ನು ಕೊಡುವುದನ್ನು ಮುಂದುವರಿಸಿದ್ದಾರೆ. ಭಾರತ ಹಾಗೂ ರಷ್ಯಾದ ನಡುವಿನ ತೈಲ ಒಪ್ಪಂದವು ಡೊನಾಲ್ಡ್ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದೆ. ಈಚೆಗೆ ನಾನು ಭಾರತದ ವಿಚಾರದಲ್ಲಿ ಸಂತೋಷವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಸಂತೋಷಪಡಿಸಬೇಕು ಎಂದು ಹೇಳಿದ್ದು
ಅಮೆರಿಕ ವಿಧಿಸುತ್ತಿರುವ ಸುಂಕಗಳಿಂದ ಮೋದಿಗೆ ಅಸಮಾಧಾನ: ಡೊನಾಲ್ಡ್ ಟ್ರಂಪ್
ಹೊಸದಿಲ್ಲಿ/ವಾಷಿಂಗ್ಟನ್: ರಷ್ಯಾದ ತೈಲ ಖರೀದಿಗೆ ಸಂಬಂಧಿಸಿ ಅಮೆರಿಕ ಭಾರತದ ಮೇಲೆ ವಿಧಿಸಿರುವ ಸುಂಕಗಳ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಗ್ಗೆ ‘ಅಷ್ಟು ಸಂತೋಷವಾಗಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಂಗಳವಾರ ಹೌಸ್ ಜಿಒಪಿ ಸದಸ್ಯರ ರಿಟ್ರೀಟ್ನಲ್ಲಿ ಮಾತನಾಡಿದ ಟ್ರಂಪ್, ಅಮೆರಿಕ ವಿಧಿಸಿರುವ ಸುಂಕಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದರು. ‘‘ಪ್ರಧಾನಿ ಮೋದಿ ನನ್ನನ್ನು ಭೇಟಿಯಾಗಲು ಬಂದಿದ್ದರು. ‘ಸರ್, ದಯವಿಟ್ಟು ನಾನು ನಿಮ್ಮನ್ನು ಭೇಟಿ ಮಾಡಬಹುದೇ’ ಎಂದು ಕೇಳಿದರು. ನನಗೆ ಅವರೊಂದಿಗೆ ಉತ್ತಮ ಸಂಬಂಧವಿದೆ. ಆದರೆ ಅವರು ನನ್ನ ಬಗ್ಗೆ ಅಷ್ಟು ಸಂತೋಷವಾಗಿಲ್ಲ. ಕಾರಣ, ಅವರು ಈಗ ಬಹಳಷ್ಟು ಸುಂಕಗಳನ್ನು ಪಾವತಿಸುತ್ತಿದ್ದಾರೆ. ಭಾರತ ತೈಲ ಉತ್ಪಾದಿಸುವುದಿಲ್ಲ. ಆದರೆ ರಷ್ಯಾದಿಂದ ತೈಲ ಖರೀದಿಯನ್ನು ಈಗ ಗಣನೀಯವಾಗಿ ಕಡಿಮೆ ಮಾಡಿದೆ’’ ಎಂದು ಟ್ರಂಪ್ ಹೇಳಿದರು. ಭಾರತದ ಮೇಲೆ ಅಮೆರಿಕ ಶೇ.50ರಷ್ಟು ಸುಂಕಗಳನ್ನು ವಿಧಿಸಿದ್ದು, ಅದರಲ್ಲಿ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ ಶೇ.25ರಷ್ಟು ಹೆಚ್ಚುವರಿ ಸುಂಕವೂ ಸೇರಿದೆ ಎಂದು ಟ್ರಂಪ್ ವಿವರಿಸಿದರು.
ವೆನೆಜುವೆಲಾದ ಮೇಲೆ ಮಿಲಿಟರಿ ದಾಳಿ ನಡೆಸಿ ಅಧಿಕಾರ ವಹಿಸಿಕೊಂಡಿರುವ ಅಮೆರಿಕಾ, ದೇಶದ ತೈಲ ನಿಕ್ಷೇಪಗಳ ಮೇಲೆ ನಿಯಂತ್ರಣ ಸಾಧಿಸಿದೆ. ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ದೇಶಗಳೊಂದಿಗೆ ಸಂಬಂಧ ಕಡಿದುಕೊಳ್ಳುವಂತೆ ವೆನುಜುವೆಲಾಗೆ ಆದೇಶಿಸಿದ್ದು, ಅಮೆರಿಕಾದೊಂದಿಗೆ ಮಾತ್ರ ಪಾಲುದಾರಿಕೆ ಮಾಡಿಕೊಳ್ಳಲು ಸೂಚಿಸಿದೆ. ಅಷ್ಷೇ ಅಲ್ಲದೆ, ವೆನುಜುವೆಲಾದಿಂದ ಅಮೆರಿಕಾಗೆ 50 ಮಿಲಿಯನ್ ಬ್ಯಾರೆಲ್ ಉತ್ತಮ ಗುಣಮಟ್ಟದ ತೈಲ ಪೂರೈಕೆಯಾಗಲಿದೆ ಎಂದು ಟ್ರಂಪ್ ಹೇಳಿದ್ದು, ಈ ಮೂಲಕ ವೆನೆಜುವೆಲಾದ ಸಂಪತ್ತಿನ ಮೇಲೆ ಹತೋಟಿ ಸಾಧಿಸಲು ಮುಂದಾಗಿದೆ.ಆದ್ರೆ ಟ್ರಂಪ್ ನ ಈ ಹೊಸ ಆದೇಶಕ್ಕೆ ಚೀನಾ, ರಷ್ಯಾ ಹಾಗೂ ಇರಾನ್ ಪ್ರತಿಕ್ರಿಯೆ ಹೇಗಿರಲಿದೆ ಎಂಬ ನೋಡಬೇಕಿದೆ.
ಸೇಡಂ | ತಹಶೀಲ್ದಾರ್ ಕಚೇರಿ ಸಹಿತ ವಿವಿಧ ಸರಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಸೇಡಂ: ನಗರದ ಬಿಇಓ ಕಚೇರಿ, ತಹಶೀಲ್ದಾರ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಇಲ್ಲಿನ ವಿವಿಧ ಸರಕಾರಿ ಇಲಾಖೆಗಳ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ನಾಲ್ಕು ತಂಡಗಳು ಬುಧವಾರ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿವೆ. ಬೆಂಗಳೂರು ಲೋಕಾಯುಕ್ತ ಬಿ.ಎಸ್.ಪಾಟೀಲ್, ಡಿವೈಎಸ್ಪಿಯವರ ಆದೇಶದಂತೆ ಡಾ.ಬಸವರಾಜ ಮಗದೂಡ ಅವರ ನೇತೃತ್ವದಲ್ಲಿ ಬೆಳಗ್ಗೆ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿ, ಪೊಲೀಸರು, ಸಿಬ್ಬಂದಿಯವರು ಇದ್ದರು.
Delhi| ತುರ್ಕಮನ್ ಗೇಟ್ ಬಳಿ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ: ಐವರ ಬಂಧನ
ಹೊಸದಿಲ್ಲಿ: ಹಳೆಯ ದಿಲ್ಲಿಯ ತುರ್ಕಮನ್ ಗೇಟ್ ಪ್ರದೇಶದಲ್ಲಿನ ಮಸೀದಿ ಬಳಿ ನ್ಯಾಯಾಲಯದ ಆದೇಶದಂತೆ ನಡೆಯುತ್ತಿದ್ದ ಅತಿಕ್ರಮಣ ವಿರೋಧಿ ತೆರವು ಕಾರ್ಯಾಚರಣೆಯ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಬುಧವಾರ ಐವರನ್ನು ಬಂಧಿಸಿದ್ದಾರೆ. ಪ್ರಕರಣದ ಹಿಂದೆ ದೊಡ್ಡ ಪಿತೂರಿ ಇದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ತನಿಖೆಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾ ನದ್ವಿ ಸ್ಥಳದಲ್ಲಿದ್ದು ಜನಸಮೂಹವನ್ನು ಪ್ರಚೋದಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. “ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಿತೂರಿಯ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ,” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಮಧುರ್ ವರ್ಮಾ ಹೇಳಿದ್ದಾರೆ. ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸೈಯದ್ ಫೈಝ್ ಇಲಾಹಿ ಮಸೀದಿ ಹಾಗೂ ಹತ್ತಿರದ ಸ್ಮಶಾನದ ಪಕ್ಕದ ಭೂಮಿಯಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕೆಲವರು ಪೊಲೀಸರ ಮೇಲೆ ಕಲ್ಲುಗಳು ಮತ್ತು ಗಾಜಿನ ಬಾಟಲಿಗಳನ್ನು ಎಸೆದಿದ್ದಾರೆ. ಈ ಘಟನೆಯಲ್ಲಿ ಐವರು ಪೊಲೀಸರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿ ವದಂತಿಗಳನ್ನು ಹರಡುವ ಹಾಗೂ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ವೀಡಿಯೊಗಳು ಮತ್ತು ಪೋಸ್ಟ್ಗಳನ್ನು ಹಂಚಿಕೊಂಡಿರುವುದರಿಂದ ದಿಲ್ಲಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀ ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನಿಧ್ಯದ ಸೇವೆಗೆ ಒಂದು ವರ್ಷದ ಸಂಭ್ರಮ
ಧರ್ಮಸ್ಥಳ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ನೂತನ 'ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್' ಸೇವೆಯ ಒಂದು ವರ್ಷ ಪೂರೈಸಿದೆ. ಅಪಾರ ಭಕ್ತಗಣಕ್ಕೆ ಕಳೆದೊಂದು ವರ್ಷದಿಂದ ಸೇವೆ ನೀಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಕ್ತರ ಅನುಕೂಲಕ್ಕಾಗಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಅತ್ಯಾಧುನಿಕ ತಂತ್ರಜ್ಞಾದೊಂದಿಗೆ ನಿರ್ಮಿಸಲ್ಪಟ್ಟಿದೆ. ಕಳೆದ
ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಸೀಸನ್-5 | ಕಂದಕ್ ವಾರಿಯರ್ಸ್ ಚಾಂಪಿಯನ್
ಮಂಗಳೂರು : ದಿ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗರೆ ಸ್ಮರಣಾರ್ಥ ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಸೀಸನ್-5 ಫೈನಲ್ ಪಂದ್ಯದಲ್ಲಿ ಕಂದಕ್ ವಾರಿಯರ್ಸ್ ತಂಡ ಕಂದಕ್ ನೈಟ್ ರೈಡರ್ಸ್ ತಂಡವನ್ನು ಭರ್ಜರಿಯಾಗಿ ಜಯ ಗಳಿಸುವುದರ ಮೂಲಕ ಪ್ರಥಮ ಪ್ರಶಸ್ತಿ ಮುಡಿಗೇರಿಸಿತು. ಕಂದಕ್ ವಾರಿಯರ್ಸ್ ತಂಡವು ಕಳೆದೆ ಎರಡು ಬಾರಿ ರನ್ನರ್ ಆಗಿತ್ತು ಈ ಬಾರಿ ಪ್ರಶಸ್ತಿ ಗಳಿಸುವಲ್ಲಿ ಯಶಸ್ವಿಯಾಯಿತು. ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿ ವಾರಿಯರ್ಸ್ ತಂಡ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್ ರೌಂಡರ್ ಆಟಗಾರ ಜಾಫರ್ ಸಾಧಿಕ್ ಉತ್ತಮ ದಾಂಡಿಗ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಫೈನಲ್ ಪಂದ್ಯದಲ್ಲಿ ಕಠಿಣ ದಾಳಿ ಸಂಘಟಿಸಿದ ವಾರಿಯರ್ಸ್ ತಂಡದ ನಾಯಕ ಝಾಹೀರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಜೂನಿಯರ್ ವಿಭಾಗದಲ್ಲಿ ಪ್ರಥಮ ಬಾರಿ ಫೈನಲ್ ಧಾವಿಸಿದ ಕಂದಕ್ ಸೂಪರ್ ಕಿಂಗ್ಸ್ ಚಾಂಪಿಯನ್ ಹಾಗೂ ರನ್ನರ್ ಆಗಿ ಕಂದಕ್ ಯುನೈಟೆಡ್, ಸೀನಿಯರ್ ವಿಭಾಗದಲ್ಲಿ ದ್ವೀತಿಯ ಬಾರಿ ಫೈನಲ್ ಪ್ರವೇಶಿಸಿ ಕಳೆದ ಬಾರಿಯ ಎದುರಾಳಿಯನ್ನು ಮತ್ತೆ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿತು. ಹತ್ತು ದಿನಗಳ ವಿಜೃಂಭಣೆಯಿಂದ ಕಣ್ತುಂಬಿ ಜನರಿಗೆ ಮೆರಗು ನೀಡಿದ ಜಿ.ಪಿ.ಎಲ್ ಜನವರಿ 4ರಂದು ತೆರೆಗೊಂಡಿತು. ಪ್ರಶಸ್ತಿ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಮೂಲಕ ಮಂಗಳೂರಿನ ಪ್ರತಿಷ್ಠಿತ ಅಂಡರ್ ಆರ್ಮ್ ಕ್ರಿಕೆಟ್ ನಲ್ಲಿ ಹೊಯಿಗೆ ಬಜಾರ್ ಕ್ಲಬ್ ನ ಸದಸ್ಯತ್ವ ಹೊಂದಿದ ರಿಲಯನ್ಸ್ ಕಾಟಿಪಳ್ಳ ತಂಡದಲ್ಲಿ ಆಡುತ್ತಿರುವ ಅನೀಶ್, ಶ್ರೇಯಾಸ್ ಸ್ಥಳೀಯ ಯುವ ಪ್ರತಿಭೆ ಪ್ರದೀಪ್ ಯು ಎಂ, ಉಳ್ಳಾಲ ಸ್ಪೋರ್ಟಿಂಗ್ ಇದರ ಅದ್ಯಕ್ಷರಾದ ಸಿದ್ದೀಕ್ ಉಳ್ಳಾಲ್, ಅಂಡರ್ ಆರ್ಮ್ ಕ್ರಿಕೆಟ್ ನ ವೀಕ್ಷಕ ವಿವರಣೆಗಾರ ಕಬೀರ್, ಎಂ. ಗಫೂರ್ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಂ.ಎ.ಗಪೂರ್, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಗಲ್ಲಿ ಪ್ರೀಮಿಯರ್ ಲೀಗ್ ಸ್ಥಾಪಕಧ್ಯಕ್ಷರು ಮತ್ತು ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಅಶ್ವ ಡೆವೆಲಪ್ಮರ್ಸ್ ಸುಧಿನ್ ಕುಮಾರ್, ಇಂಜಿನಿಯರ್ ಅಶ್ವಿನ್, ಬುರ್ಖಾ ಫ್ಯಾಷನ್ ಮಾಲಕರಾದ ಎಸ್ ಎಂ ರಿಯಾಝ್, ಅಲ್ಟ್ರಾ ಮೈರೆನ್ ಅಫ್ತಾಬ್ ಬೋಳಾರ್, ಡಿ ಲೈಟ್ ಇನ್ ವೆಸ್ಟ್ಮೆಂಟ್ ಶಮೀರ್ ಕಂದಕ್, ಅನಿವಾಸಿ ಉದ್ಯಮಿ ಶರೀಫ್ ಕಂದಕ್, ಸನ್ಮಾರ್ಗ ಪತ್ರಿಕೆಯ ಮೊಶಿನ್, ಡೈಕಿನ್ ಫೀಶರೀಸ್ ಮಾಲಕರಾದ ಬಿ ಇದ್ದಿನ್ ಕುಂಙಿ, ತಂಡದ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯಾಗಿ ಕಬೀರ್ ಕುದ್ರೋಳಿ ಮತ್ತು ರಾಬಿನ್ ಎಮ್ಮೆಕರೆ ನಿರ್ವಹಿಸಿದರು. ಟೂರ್ನಿಯ ಉದ್ದಕ್ಕೂ ಅಂಪೈರ್ ಆಗಿ ಅಶ್ವಿನ್, ಅನಿಶ್, ಶ್ರೇಯಾಸ್, ಹರ್ಷಿಲ್ ಇವರೊಂದಿಗೆ ವೀಕ್ಷಕ ವಿವರಣೆಗಾರ ರಾಗಿ ರಫೀಕ್ ಬೆಂಗ್ರೆ, ಕಬೀರ್ ಕುದ್ರೋಳಿ, ರಾಬಿನ್ ಮತ್ತು ಜಿಪಿಎಲ್ ನ ಸಿಬ್ಬಂದಿಯಾಗಿ ಸಹಕರಿಸಿದ ಕಮಿಟಿ ಸದಸ್ಯರಿಗೆ ಗೌರವಿಸಲಾಯಿತು.
ಕೆಎಸ್ಸಾರ್ಟಿಸಿ ಬಸ್ಗೆ ಕಲ್ಲೆಸೆತ ಪ್ರಕರಣ: ಪೊಲೀಸ್ ವಿಚಾರಣೆ ಬಳಿಕ ಬಿಡುಗಡೆಗೊಂಡ ವ್ಯಕ್ತಿ ಆತ್ಮಹತ್ಯೆ
ಕಾಸರಗೋಡು: ನಿಲ್ಲಿಸದೆ ತೆರಳಿದ್ದ ಕೆಎಸ್ಆರ್ಟಿಸಿ ಬಸ್ಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉಪ್ಪಳ ಸಮೀಪದ ಮಣ್ಣಂಗುಳಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಮಣ್ಣಂಕುಝಿ ನಿವಾಸಿ ಹಮೀದ್ ಅಲಿ (65) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ತಲಪಾಡಿಯಲ್ಲಿ ಮಂಗಳೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ಕಲ್ಲೆಸೆತ ನಡೆದಿತ್ತು. ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಕಲ್ಲೆಸೆತ ಕರ್ನಾಟಕ ಗಡಿಯ ತಲಪಾಡಿಯಲ್ಲಿ ನಡೆದಿರುವುದು ದೃಢವಾದ ಹಿನ್ನೆಲೆಯಲ್ಲಿ ಉಳ್ಳಾಲ ಠಾಣಾ ಪೊಲೀಸರು ಹಮೀದ್ ಅಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದರು. ರಾತ್ರಿ ತಲಪಾಡಿ ಗಡಿಯಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಬಂದ ಎರಡು ಕೆಎಸ್ಆರ್ಟಿಸಿ ಬಸ್ಗಳು ನಿಲ್ಲಿಸದ ಕಾರಣ ಕಲ್ಲೆಸೆದಿರುವುದಾಗಿ ಹೇಳಲಾಗಿದೆ. ಬುಧವಾರ ಬೆಳಿಗ್ಗೆ ಮಲಪ್ಪುರಂನಲ್ಲಿ ವಾಸವಿರುವ ಪತ್ನಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದರು. ಪರಿಶೀಲನೆ ವೇಳೆ ಹಮೀದ್ ಅಲಿ ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ಅಸಹಜ ಮರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜನಾರ್ದನ ರೆಡ್ಡಿ ಮನೆಯ ಮೇಲೂ ಗನ್ಮ್ಯಾನ್ ಇದ್ದರು ಎಂಬುದಕ್ಕೆ ಭರತ್ ರೆಡ್ಡಿ ಬೆಂಬಲಿಗರು ಸಾಕ್ಷಿ ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಜನಾರ್ದನ ರೆಡ್ಡಿ ಕಡೆಯಿಂದಲೂ ಗುಂಡು ಹಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ಜ.10ರಂದು ಸಿದ್ದಲಿಂಗೇಶ್ವರ ಪ್ರಕಾಶನದಿಂದ 105 ಕೃತಿಗಳ ಲೋಕಾರ್ಪಣೆ: ಡಾ. ಬಸವರಾಜ್ ಕೊನೇಕ್
ಕಲಬುರಗಿ: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ 49ನೇ ವಾರ್ಷಿಕೋತ್ಸವದ ಅಂಗವಾಗಿ ಜನವರಿ 10ರಂದು ಬೆಳಗ್ಗೆ 10.30ಕ್ಕೆ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ 105 ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಾಶಕ ಡಾ. ಬಸವರಾಜ್ ಕೊನೇಕ್ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಉಡಿಕೇರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಮನಿ ಕೃತಿಗಳನ್ನು ಲೋಕಾರ್ಪಣೆ ಮಾಡುವರು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಭಾಗವಹಿಸಲಿದ್ದು, ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ. ಲಿಂಗಪ್ಪ ಗೋನಾಳ ಅವರು ಕೃತಿಗಳ ಕುರಿತು ಮಾತನಾಡಲಿದ್ದಾರೆ. ಪ್ರೊ. ಶಿವರಾಜ್ ಪಾಟೀಲ್ ಪ್ರಸ್ತಾವಿಕ ನುಡಿಗಳನ್ನಾಡುವರು. ಸಾಹಿತಿ ಡಾ. ಜಯದೇವಿ ಗಾಯಕವಾಡ ಗೌರವ ಉಪಸ್ಥಿತರಿರಲಿದ್ದು, ಡಾ. ಬಸವರಾಜ್ ಕೊನೇಕ್ ಅಧ್ಯಕ್ಷತೆ ವಹಿಸುವರು. ಪ್ರಕಾಶನದ ಸಲಹಾ ಸಮಿತಿಯ ಸದಸ್ಯ ಗವಿಸಿದ್ದಪ್ಪ ಪಾಟೀಲ್ ಮಾತನಾಡಿ, 25 ಜನಪ್ರಿಯ ಮಾಲೆಗಳು, 9 ಸಾಹಿತ್ಯ ಕೃತಿಗಳು ಹಾಗೂ 71 ಪಠ್ಯಪುಸ್ತಕಗಳು ಬಿಡುಗಡೆಯಾಗಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ವಾಮಿರಾವ್ ಕುಲಕರ್ಣಿ, ಪ್ರೊ. ಶಿವರಾಜ್ ಪಾಟೀಲ್, ಡಾ. ಚಿ.ಸಿ. ನಿಂಗಣ್ಣ, ಡಾ. ಶರಣಬಸಪ್ಪ ವಡ್ಡನಕೇರಿ, ಸಿದ್ಧಲಿಂಗ ಕೊನೇಕ್ ಹಾಗೂ ಶರಣಬಸವ ಕೊನೇಕ್ ಉಪಸ್ಥಿತರಿದ್ದರು.
ಬಳ್ಳಾರಿ ಗಲಾಟೆ : ಐಜಿಪಿ ವರ್ಗಾವಣೆ, ನೂತನ ಎಸ್ಪಿ ನೇಮಕ
ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆಗೊಂಡಿದ್ದು, ಡಾ. ಪಿ.ಎಸ್.ಹರ್ಷ ನೂತನ ಐಜಿಪಿಯಾಗಿ ನೇಮಕಗೊಂಡಿದ್ದಾರೆ. ಗಲಾಟೆ ಸಂಬಂಧ ಆರು ಪ್ರಕರಣಗಳಿಗೆ ಪ್ರತ್ಯೇಕ ತನಿಖಾಧಿಕಾರಿಗಳನ್ನು ನೇಮಿಸಲಾಗಿದ್ದು, 26 ಜನರನ್ನು ಬಂಧಿಸಲಾಗಿದೆ.
Video: ಮುಸ್ಲಿಮರ ನಿರ್ಮೂಲನೆಗಾಗಿ ನರಮೇಧಕ್ಕೆ ಸಿದ್ಧತೆ ನಡೆದಿದೆ: ಬಿಜೆಪಿ ಮೇಲೆ ಪ್ರಕಾಶ್ ರಾಜ್ ಗಂಭೀರ ಆರೋಪ
ಹೈದರಾಬಾದ್: ಭಾರತದಲ್ಲಿ 'ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ನಿರ್ಮೂಲನೆ ಮಾಡುವ' ಪ್ರಯತ್ನ ನಡೆಯುತ್ತಿದೆ. ಅವರ ನರಮೇಧಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಪಂಚಭಾಷಾ ಮತ್ತು ಬಿಜೆಪಿ ಆಡಳಿತ ವಿಮರ್ಶಕ ಪ್ರಕಾಶ್ ರಾಜ್ ಅವರು ಆರೋಪಿಸಿದ್ದಾರೆ. ಬಿಜೆಪಿ ಜೊತೆಗೆ ನ್ಯಾಯಾಲಯಗಳ ಬಗ್ಗೆ ಅವರ ನೀಡಿರುವ ಸ್ಪೋಟಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ಬೆಂಬಲಿಗರು ನಟನ ಹೇಳಿಕೆ ಖಂಡಿಸಿದ್ದಾರೆ.
Ration Card: 4.50 ಲಕ್ಷ ಬಿಪಿಎಲ್ ಕಾರ್ಡ್ದಾರರಿಗೆ ಶಾಕ್: 110 ಕೋಟಿ ರೂಪಾಯಿ ಉಳಿಸಿದ ಸರ್ಕಾರ
ಕರ್ನಾಟಕ ಸರ್ಕಾರವು ಕೆಲವು ನಿರ್ದಿಷ್ಟ ಪಡಿತರ ಚೀಟಿದಾರರಿಗೆ (Ration Card) ಶಾಕ್ ನೀಡುವ ಮೂಲಕ ಕೋಟ್ಯಾಂತರ ರೂಪಾಯಿ ಹಣ ಉಳಿತಾಯ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಹಣ ಖರ್ಚಾಗುತ್ತಿರುವುದರಿಂದ ವಿವಿಧ ಆದಾಯ ಮೂಲಗಳ ಪರಿಶೀಲನೆ ಹಾಗೂ ವೆಚ್ಚವನ್ನು ಕಡಿತ ಮಾಡುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿತ್ತು. ಇದೀಗ ಬಿಪಿಎಲ್ ಪಡಿತರ
HONNAVARA | ಮರಕ್ಕೆ ಢಿಕ್ಕಿ ಹೊಡೆದು ಕಾರು ಬೆಂಕಿಗಾಹುತಿ: ಇಬ್ಬರು ಸಜೀವ ದಹನ
ಕಾರವಾರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಉರುಳಿಬಿದ್ದು ಹೊತ್ತಿ ಉರಿದ ಪರಿಣಾಮ ಇಬ್ಬರು ಸಜೀವ ದಹನಗೊಂಡ ಭೀಕರ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ರಭಸವಾಗಿ ಢಿಕ್ಕಿ ಹೊಡೆದು, ನಂತರ ಸಮೀಪದ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದರ ನಂಬರ್ ಪ್ಲೇಟ್ ಕೂಡ ನಾಶವಾಗಿದೆ. ಈ ಕಾರಣದಿಂದಾಗಿ ಕಾರು ಮತ್ತು ಮೃತರ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಮೂಲಗಳ ಪ್ರಕಾರ, ಮೃತರನ್ನು ಸಿದ್ದಾಪುರದವರೆಂದು ಶಂಕಿಸಲಾಗಿದ್ದು, ಈ ಕುರಿತು ಅವರ ಸಂಬಂಧಿಕರಿಗೆ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಮಹಿಳೆಯರು ಸಾಧನೆ ಮಾಡಲು ಕಷ್ಟ, ಅಸಾಧ್ಯವಂತೂ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಿಳೆಯರ ಸಾಧನೆಯ ಬಗ್ಗೆ ಮಾತನಾಡಿದರು. ಗ್ರಾಮೀಣ ಭಾಗದಿಂದ ಬಂದ ತಮ್ಮ ಅನುಭವ ಹಂಚಿಕೊಂಡರು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಮಹಿಳೆಯರ ಪರಿಸ್ಥಿತಿ ಸುಧಾರಿಸಿದೆ. ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಶೈಕ್ಷಣಿಕವಾಗಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
CHIKKAMAGALURU | ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಆರೋಪ: ತಂದೆ, ಅಜ್ಜಿ ಸಹಿತ ಹಲವರ ಬಂಧನ
ಮಂಗಳೂರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ
ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಗಲಭೆಗಳ ಹಿಂದಿನ ಪಿತೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಉಮರ್ ಖಾಲಿದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ, ಅವರನ್ನು ಬೆಂಬಲಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಬುಧವಾರ ಸಣ್ಣ ಕವಿತೆಯನ್ನು ಬರೆದು ಹಂಚಿಕೊಂಡಿದ್ದಾರೆ. “ನೀವು ಎದ್ದು ನಿಲ್ಲುವಿರಿ, ಉಮರ್ ಖಾಲಿದ್” ಎಂಬ ಶೀರ್ಷಿಕೆಯೊಂದಿಗೆ ಅವರು ಸಾಮಾಜಿಕ ಜಾಲತಾಣ Xನಲ್ಲಿ ಕವಿತೆಯನ್ನು ಹಂಚಿಕೊಂಡಿದ್ದಾರೆ. ಕವಿತೆಯಲ್ಲಿ, “ನೀವು ನನ್ನನ್ನು ಇತಿಹಾಸದಲ್ಲಿ ನಿಮ್ಮ ಕಹಿ, ತಿರುಚಿದ ಸುಳ್ಳುಗಳಿಂದ ಬರೆಯಬಹುದು; ನನ್ನನ್ನು ಮಣ್ಣಿನಲ್ಲಿ ತುಳಿಯಬಹುದು; ಆದರೂ ಧೂಳಿನಂತೆ ನಾನು ಎದ್ದು ನಿಲ್ಲುತ್ತೇನೆ. ನಿಮ್ಮ ಮಾತುಗಳಿಂದ ನನ್ನ ಮೇಲೆ ದಾಳಿ ಮಾಡಬಹುದು, ನಿಮ್ಮ ಕಣ್ಣುಗಳಿಂದ ನನ್ನನ್ನು ಕತ್ತರಿಸಬಹುದು, ನಿಮ್ಮ ದ್ವೇಷದಿಂದ ನನ್ನನ್ನು ಕೊಲ್ಲಬಹುದು; ಆದರೂ ಗಾಳಿಯಂತೆ ನಾನು ಎದ್ದು ನಿಲ್ಲುತ್ತೇನೆ” ಎಂದು ಅವರು ಉಲ್ಲೇಖಿಸಿದ್ದಾರೆ. 2020ರ ಈಶಾನ್ಯ ದಿಲ್ಲಿ ಗಲಭೆಗಳ ಹಿಂದಿನ 'ಪಿತೂರಿ' ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನಿರಾಕರಿಸಿದೆ. ಇದೇ ಪ್ರಕರಣದಲ್ಲಿ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮುಹಮ್ಮದ್ ಸಲೀಮ್ ಖಾನ್ ಹಾಗೂ ಶಾದಾಬ್ ಅಹ್ಮದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಕುಂದಾಪುರ | ಟಿಪ್ಪರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು
ಕುಂದಾಪುರ: ಮರಳು ಸಾಗಾಟ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಂಗಳೂರು ರಾಷ್ಟ್ರೀಯ ಹೆದ್ದಾರಿ-66ರ ಡಿವೈಡರ್ ಬಳಿ ಬುಧವಾರ ನಡೆದಿದೆ. ಮೂಲತಃ ಆಲೂರಿನವರಾದ ಪ್ರಸಕ್ತ ಕೋಟೇಶ್ವರದ ಅಂಕದಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕೃಷ್ಣಮೂರ್ತಿ ಅಡಿಗ (57) ಮೃತಪಟ್ಟವರು. ಅವರು ಅಡುಗೆ ಕೆಲಸ ಮಾಡಿಕೊಂಡಿದ್ದರು. ವಾರದ ಹಿಂದೆ ಖರೀದಿಸಿದ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಮನೆಯಿಂದ ಹೊರಟವರು ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ತಿರುವು ಪಡೆದಾಗ ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಕೃಷ್ಣಮೂರ್ತಿಯವರ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಟಿಪ್ಪರ್ ಚಾಲಕ ಶಶಾಂಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಸಂಚಾರ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
SHIVAMOGGA | ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಕಳೇಬರ ಪತ್ತೆ
ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬೆ ವಲಯದ ಗಂಗೆಗಿರಿ ಸರ್ವೇ ನಂಬರ್ 15 ರ ಶಿರಗುಳ ಮೀಸಲು ಅರಣ್ಯದಲ್ಲಿ ಹುಲಿಯ ಕಳೇಬ ಪತ್ತೆಯಾಗಿದೆ. ಜ.6ರಂದು ಬೆಳಗ್ಗೆ ಹುಲಿ ಗಣತಿಗೆ ತೆರಳಿದ್ದ ಸಿಬ್ಬಂದಿ ಹುಲಿಯ ಕಳೇಬರವನ್ನು ಕಂಡಿದ್ದಾರೆ. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪುಲ್ಕಿತ್ ಮೀನ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸತ್ತಿರುವುದು 8ರಿಂದ 10 ವರ್ಷ ಪ್ರಾಯದ ಗಂಡು ಹುಲಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಮಯಾನುಸಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.8 ರಿಂದ 10 ವರ್ಷದ ಗಂಡು ಹುಲಿಯಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಧಿಕಾರಿಗಳೂ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹುಲಿಯ ಮುಂಗಾಲಿಗೆ, ಕುತ್ತಿಗೆ ಭಾಗದಲ್ಲಿ ಇನ್ನೊಂದು ಹುಲಿ ಹೊಡೆದಿರುವ ಉಗುರಿನ ಗುರುತುಗಳು ಪತ್ತೆಯಾಗಿವೆ. ಎರಡು ಬಲಿಷ್ಠ ಹುಲಿಗಳು ಕಾದಾಟದಲ್ಲಿ ಈ ಹುಲಿ ಸತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಪಶುವೈದ್ಯಾಧಿಕಾರಿ ಸಚಿನ್ ನಾಯಕ್ ಮತ್ತು ಶಿವಕುಮಾರ್ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ. ಸ್ಥಳದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೀಶ್ವರ ಸ್ವಾಮಿ, ವಲಯ ಅರಣ್ಯಾಧಿಕಾರಿ ಗೌರವ, ಹುಲಿ ಸಂರಕ್ಷಣ ಪ್ರಾಧಿಕಾರದ ಪ್ರತಿನಿಧಿ ವೀರೇಶ್ ಜಿ., ವೈಲ್ಡ್ ಕೇರ್ ಸಂಸ್ಥೆಯ ಅಧ್ಯಕ್ಷ ಮಧು ಮೂಗುತಿಹಳ್ಳಿ, ಒನ್ ಅರ್ಥ್ ಸಂಸ್ಥೆಯ ಮುಖಂಡ ಭರತ್ ಸಿ.ವಿ., ಸ್ಥಳೀಯ ಪ್ರತಿನಿಧಿಗಳು ಗ್ರಾಮಸ್ಥರು ಮರಣೋತ್ತರ ಪಂಚನಾಮೆ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಹುಲಿಯ ಕಳೇಬರವನ್ನು ಸುಡಲಾಯಿತು.
Union Budget 2026: ಫೆಬ್ರವರಿ 1 ಭಾನುವಾರ ಕೇಂದ್ರ ಬಜೆಟ್ ಮಂಡನೆ ಆಗುತ್ತಾ, ದಿನಾಂಕ ಬದಲಾಗುತ್ತಾ?
ನವದೆಹಲಿ: ದೇಶದ ಅತಿದೊಡ್ಡ ದೇಶೀಯ ಹಣಕಾಸು ಘೋಷಣೆಗಳಲ್ಲಿ ಕೇಂದ್ರ ಬಜೆಟ್ ಮಂಡನೆ (Union Budget 2026-2027) ಸಹ ಒಂದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಹಣಕಾಸು ವರ್ಷದ ಬಜೆಟ್ ಅನ್ನು ಮುಂದಿನ ತಿಂಗಳ ಫೆಬ್ರವರಿ 1ರಂದು ಮಂಡಿಸುವ ಸಾಧ್ಯತೆ ಇದೆ. ಇದು ಅವರು ಮಂಡಿಸುತ್ತಿರುವ ಸತತ ಒಂಬತ್ತನೇ ಕೇಂದ್ರ ಬಜೆಟ್ ಆಗಲಿದೆ. ಬಜೆಟ್
ಸಂಪಾದಕೀಯ | ಅಕ್ರಮ ಬಂಧನದಲ್ಲಿ ನ್ಯಾಯ ದೇವತೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹಾಸನ : ಹಣಕಾಸು ವಿಷಯವಾಗಿ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ರಿಂದ ಮಾರಣಾಂತಿಕ ಹಲ್ಲೆ
ಹಾಸನದಲ್ಲಿ ಹಣಕಾಸಿನ ವಿವಾದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರಿಂದ ಮಾರಣಾಂತಿಕ ಹಲ್ಲೆಗೊಳಗಾದ ಶಶಿಧರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಲಾಗಿದ್ದು, ಗಾಯಾಳುವಿನ ಎರಡು ಕಾಲು ಮುರಿದಿದ್ದು, ತೀವ್ರ ಗಾಯಗಳಾಗಿವೆ. ಹತ್ತು ವರ್ಷಗಳ ಹಿಂದಿನ ಹಣಕಾಸಿನ ವ್ಯವಹಾರವೇ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮವಿಲ್ಲ..!
ಬೆಂಗಳೂರು : ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಮುರಿಯುವ ಮೂಲಕ ದೀರ್ಘಾವಧಿ ಸರಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಆದರೆ, ಈ ಮಹತ್ವದ ಸಾಧನೆಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಯಾವುದೇ ರೀತಿಯ ಸಂಭ್ರಮ ಕಂಡುಬಂದಿಲ್ಲ. ಕಾಂಗ್ರೆಸ್ ಪಕ್ಷದ ಕಚೇರಿಗಳಲ್ಲಿ ಕನಿಷ್ಠ ಒಂದು ಬ್ಯಾನರ್ ಕೂಡ ಕಾಣಿಸಲಿಲ್ಲ. ಸಿಹಿ ಹಂಚುವ ಮೂಲಕ ಸಂತಸ ಹಂಚಿಕೊಳ್ಳುವ ಪ್ರಯತ್ನವೂ ನಡೆದಿಲ್ಲ. ಇದಕ್ಕೂ ಮುನ್ನ ಅತಿಹೆಚ್ಚು 16 ಬಾರಿ ಆಯವ್ಯಯ (ಬಜೆಟ್) ಮಂಡಿಸಿದ ದಾಖಲೆಯನ್ನೂ ಸಿದ್ದರಾಮಯ್ಯ ಹೊಂದಿದ್ದು, 2026–27ನೇ ಸಾಲಿನಲ್ಲಿ ತಮ್ಮ 17ನೇ ಬಜೆಟ್ ಮಂಡಿಸುವ ನಿರೀಕ್ಷೆಯಲ್ಲಿದ್ದಾರೆ. ಅರಸು ದಾಖಲೆ ಸರಿಗಟ್ಟಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳು ರಾಜ್ಯದ ವಿವಿಧೆಡೆ ಸಾಲು–ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಿಸಿದ್ದಾರೆ. ನೆಲಮಂಗಲದಲ್ಲಿ 10 ಸಾವಿರ ಜನರಿಗೆ ನಾಟಿಕೋಳಿ ಊಟವನ್ನು ಅಭಿಮಾನಿಗಳು ಆಯೋಜಿಸಿದ್ದರು. ಸಿದ್ದರಾಮಯ್ಯರ ತವರು ಜಿಲ್ಲೆ ಮೈಸೂರು, ಕಲಬುರಗಿ, ವಿಜಯಪುರ, ಹಾಸನ ಸೇರಿದಂತೆ ಹಲವೆಡೆ ರಕ್ತದಾನ ಶಿಬಿರಗಳು ನಡೆದವು. ಆದರೆ, ಪಕ್ಷದ ಮಟ್ಟದಲ್ಲಿ ಯಾವುದೇ ಸಂಭ್ರಮ ಕಂಡುಬರಲಿಲ್ಲ. ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಉಳಿದುಕೊಂಡಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಹುತೇಕ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ತಂಗಿದ್ದು, ಕೆಪಿಸಿಸಿ ಕಚೇರಿಯಲ್ಲೂ ಸಂಭ್ರಮದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಡಿಕೆಶಿ ಬಣದಲ್ಲಿ ಮೌನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದ ಡಿಕೆಶಿ ಬೆಂಬಲಿಗರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು ಜ.6 ಅಥವಾ 9ರಂದು ಡಿ.ಕೆ.ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವುದು “ನೂರಕ್ಕೆ 200ರಷ್ಟು ಖಚಿತ” ಎಂದು ಹೇಳಿದ್ದರು. ಆದರೆ, ಆ ಹೇಳಿಕೆ ಸುಳ್ಳಾಗಿದ್ದು, ನಾಯಕತ್ವ ಬದಲಾವಣೆಯ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಅಂಬೇಡ್ಕರ್ ಆಶಯಗಳನ್ನು ಪಾಲಿಸುವ ದೊಡ್ಡ ನಾಯಕ “ನಾಲ್ಕು ದಶಕಗಳ ನನ್ನ ಹಾಗೂ ಸಿದ್ದರಾಮಯ್ಯ ಅವರ ಒಡನಾಟದಲ್ಲಿ ಜನಸೇವೆಯ ವಿಚಾರದಲ್ಲಿ ಅವರು ಪ್ರಾಮಾಣಿಕ ನಾಯಕ ಎಂಬುದು ನನಗೆ ಸ್ಪಷ್ಟವಾಗಿದೆ. ಜನರ ತೆರಿಗೆ ಹಣವನ್ನು ಎಲ್ಲ ಕ್ಷೇತ್ರಗಳಿಗೂ ಪರಿಣಾಮಕಾರಿಯಾಗಿ ಬಳಸಿ, ತಾವೊಬ್ಬ ಸಮರ್ಥ ಆಡಳಿತಗಾರ ಎಂಬುದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ರೈತಾಪಿ ಕುಟುಂಬದಿಂದ ಬಂದು ರಾಜಕೀಯದ ಏಳು–ಬೀಳುಗಳನ್ನು ಕಂಡು, ಇಂದು ರಾಜ್ಯದ ಮೇರು ನಾಯಕರ ಸಾಲಿಗೆ ಸೇರ್ಪಡೆಯಾಗಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿಯಾಗಿರುವುದು ನನಗೆ ವೈಯಕ್ತಿಕವಾಗಿ ಅತ್ಯಂತ ಸಂತೋಷ ತಂದಿದೆ. ಶೋಷಿತ ವರ್ಗಗಳನ್ನು ಸಂಘಟಿಸುವ ಮೂಲಕವೇ ರಾಜಕೀಯ ಅಧಿಕಾರ ಸಾಧಿಸಬೇಕೆಂಬ ಅಂಬೇಡ್ಕರ್ ಆಶಯಗಳಿಗೆ ಅನುಗುಣವಾಗಿ ಜನಾಧಿಕಾರ ಪಡೆದ ನಾಯಕ ಸಿದ್ದರಾಮಯ್ಯ ಎಂಬುದು ನಿರ್ವಿವಾದ ಸತ್ಯ.” — ಡಾ. ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ಭಾರತ ಹಾಗೂ ಇಸ್ರೇಲ್ ಉಭಯದೇಶಗಳಿಗೂ ಭದ್ರತಾ ಸವಾಲಾಗಿರುವುದು ಭಯೋತ್ಪಾದಕ ಸಂಘಟನೆಗಳು. ಈಗ ಆ ಎರಡು ಭಯೋತ್ಪಾದಕ ಸಂಘಟನೆಗಳ ನಾಯಕರು ಒಂದೆಡೆ ಸೇರಿರುವುದು ಅಮೆರಿಕಾಗೂ ಸವಾಲಾಗುವ ಪರಿಸ್ಥಿತಿ ಎದುರಾಗಬಹುದು. ಪಾಕಿಸ್ತಾನದ ಗುಜ್ರಾನ್ವಾಲಾದಲ್ಲಿ ಹಮಾಸ್ ಮತ್ತು ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಗಳ ನಾಯಕರು ಭೇಟಿಯಾಗಿದ್ದಾರೆ.ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್-ಹಮಾಸ್ ಕದನ ವಿರಾಮ ಒಪ್ಪಂದದ ಬಳಿಕ ಗಾಜದಲ್ಲಿ ಹಮಾಸ್ ನಿಶ್ಶಸ್ತ್ರಿಕರಣ ಮಾಡಿ ಗಾಜದಲ್ಲಿ ಸ್ಥಿರೀಕರಣ ಪಡೆಗೆ ಪಾಕಿಸ್ತಾನ ಸೇನೆಯನ್ನು ಕಳುಹಿಸುವ ವರದಿಯಾದ ಬೆನ್ನಲ್ಲೆ ಈ ಭೇಟಿಯು ಉಭಯ ಸಂಘಟನೆಗಳ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತಿರುವುದನ್ನು ಸೂಚಿಸುತ್ತಿದ್ದು, ಅಮೆರಿಕಾದ ಆಲೋಚನೆಗೆ ಸೆಡ್ಡು ಹೊಡೆಯುವ ತಂತ್ರಗಾರಿಕೆ ರೂಪಿಸಿದೆ ಎನ್ನುವ ಅನುಮಾನಗಳು ಮೂಡಿದೆ.
ಹಿರಿಯ ವೈದ್ಯ ಡಾ.ಟೀಕೆ ಮಹಮೂದ್ ನಿಧನ
ಮಂಗಳೂರು, ಡಿ.7: ಹಿರಿಯ ವೈದ್ಯ ಡಾ.ಟೀಕೆ ಮಹಮೂದ್(82) ಬುಧವಾರ ಮುಂಜಾನೆ ಬೆಳಗ್ಗೆ ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದೀರ್ಘ ಕಾಲ ಬೆಂಗಳೂರಿನಲ್ಲಿ ವೃತ್ತಿಜೀವನ ನಡೆಸಿದ್ದ ಅವರು ಬಳಿಕ ಮಂಗಳೂರಿಗೆ ಮರಳಿದ್ದರು. ಇವರು ಮಂಗಳೂರು ಮತ್ತು ಬೆಂಗಳೂರಿನ ಪ್ರಸಿದ್ಧ ಇಂಟೀರಿಯರ್ ಡೆಕರೇಶನ್ ಸಂಸ್ಥೆಯ ದಿವಂಗತ ಅಬ್ದುಲ್ ರಹೀಮ್ ಟೀಕೆ ಮತ್ತು ಉಮರ್ ಟೀಕೆ ಅವರ ಹಿರಿಯ ಸಹೋದರ. ಮಯ್ಯತ್ ಫಳ್ನೀರ್ ನ ಲ್ಲಿರುವ ಬಾಮ್ ಸನ್ ರೆಸಿಡೆನ್ಸಿಯಲ್ಲಿದೆ. ಇಂದು(ಜ.7) ಮಗ್ರಿಬ್ ನಮಾಝ್ ಬಳಿಕ ಜೋಕಟ್ಟೆ ಈದ್ಗಾ ಮಸೀದಿಯ ವಠಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Bangladeshದ ಮನವಿಗೆ ICC ತಿರಸ್ಕಾರ; ಭಾರತದಿಂದ ಪಂದ್ಯ ಸ್ಥಳಾಂತರಕ್ಕೆ ನಿರಾಕರಣೆ
ಹೊಸದಿಲ್ಲಿ,ಜ.7: ಮುಂಬರುವ ಐಸಿಸಿ ಟಿ20 ವಿಶ್ವಕಪ್–2026ರಲ್ಲಿ ಭಾರತದಲ್ಲಿ ನಡೆಯಲಿರುವ ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಸಲ್ಲಿಸಿದ್ದ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ ಎಂದು ವರದಿಗಳು ತಿಳಿಸಿವೆ. ಮಂಗಳವಾರ ನಡೆದ ವರ್ಚುವಲ್ ಸಭೆಯಲ್ಲಿ, ಜಯ್ ಶಾ ನೇತೃತ್ವದ ಐಸಿಸಿ ಆಡಳಿತ ಮಂಡಳಿ, ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಬಿಸಿಬಿಯ ಮನವಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಬಾಂಗ್ಲಾದೇಶದ ಹಿರಿಯ ಪುರುಷರ ರಾಷ್ಟ್ರೀಯ ತಂಡವು ಭಾರತಕ್ಕೆ ಪ್ರಯಾಣಿಸಲೇಬೇಕು. ಇಲ್ಲವಾದಲ್ಲಿ ಅಂಕಗಳನ್ನು ಕಳೆದುಕೊಳ್ಳುವ ಅಪಾಯ ಎದುರಾಗಲಿದೆ ಎಂದು ಐಸಿಸಿ ಬಿಸಿಬಿಗೆ ಸ್ಪಷ್ಟಪಡಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ANI ವರದಿ ಮಾಡಿದೆ. ವರ್ಚುವಲ್ ಸಭೆಯ ತೀರ್ಮಾನ ಕುರಿತು ಐಸಿಸಿ ಅಥವಾ ಬಿಸಿಬಿ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಟಿ20 ವಿಶ್ವಕಪ್–2026ರಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಸಾಧ್ಯತೆ ಕುರಿತು ಪರಿಗಣಿಸುವಂತೆ ಬಿಸಿಬಿ ಪತ್ರ ಬರೆದ ನಂತರವೇ ಈ ವರ್ಚುವಲ್ ಸಭೆ ಆಯೋಜಿಸಲಾಗಿತ್ತು ಎಂದು ESPNcricinfo ವರದಿ ತಿಳಿಸಿದೆ. ಈ ನಡುವೆ, ಈ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ವೇಗಿ ಮುಸ್ತಾಫಿಝುರ್ರೆಹಮಾನ್ ಅವರನ್ನು ಬಿಡುಗಡೆ ಮಾಡಿರುವುದಕ್ಕೆ ಬಿಸಿಬಿ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಷೇಧಿಸುವ ನಿರ್ಧಾರವನ್ನೂ ಕೈಗೊಂಡಿದೆ ಎಂದು ವರದಿಯಾಗಿದೆ. ಟಿ20 ವಿಶ್ವಕಪ್–2026ನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಫೆಬ್ರವರಿ 7ರಿಂದ ಮಾರ್ಚ್ 8ರವರೆಗೆ ಆಯೋಜಿಸಲಿವೆ. ಗ್ರೂಪ್ ‘ಸಿ’ಯಲ್ಲಿ ಸ್ಥಾನ ಪಡೆದಿರುವ ಬಾಂಗ್ಲಾದೇಶ, ಫೆಬ್ರವರಿ 7ರಂದು ವೆಸ್ಟ್ ಇಂಡೀಸ್ ವಿರುದ್ಧ, ಫೆಬ್ರವರಿ 9ರಂದು ಇಟಲಿ ವಿರುದ್ಧ ಹಾಗೂ ಫೆಬ್ರವರಿ 14ರಂದು ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದಲ್ಲಿ ಸತತ ಮೂರು ಪಂದ್ಯಗಳನ್ನು ಆಡಲಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತ ಏರಿಕೆ| ಇಂದಿನ ದರವೆಷ್ಟಿದೆ?
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿರುವುದೂ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹೊಸದಿಲ್ಲಿ: ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ರೂಪಾಯಿ ದೌರ್ಬಲ್ಯದಿಂದ ಬೆಳ್ಳಿ ಮತ್ತು ಚಿನ್ನದ ಬೆಲೆ ಸತತ ಏರಿಕೆ ಕಂಡಿವೆ. ಹೂಡಿಕೆದಾರರು ಸುರಕ್ಷಿತ ಆಸ್ತಿಗಳತ್ತ ಮುಖ ಮಾಡುತ್ತಿರುವ ಕಾರಣದಿಂದ ಚಿನ್ನದ ಬೆಲೆ ಇಂದೂ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ವಿಶೇಷವಾಗಿ ಅಮೆರಿಕ-ವೆನೆಜುವೆಲಾ ನಡುವಿನ ರಾಜಕೀಯ ಬೆಳವಣಿಗೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟುಮಾಡಿ ನೇರವಾಗಿ ಚಿನ್ನದ ದರದ ಮೇಲೆ ಪರಿಣಾಮವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿರುವುದೂ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಸೋಮವಾರದಿಂದ ಸತತ ಏರಿಕೆಯಲ್ಲಿರುವ ಚಿನ್ನ ಬುಧವಾರವೂ ಸ್ವಲ್ಪ ಹೆಚ್ಚಳವಾಗಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಸತತ ಏರಿಕೆಯ ಕಾರಣದಿಂದ ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದಂತೆ ಚಿನ್ನದ ದರದಲ್ಲಿ ಗ್ರಾಂ ಒಂದಕ್ಕೆ ಕನಿಷ್ಠ 500ರಿಂದ 1000ರೂ.ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಬುಧವಾರ ಜನವರಿ 7 ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 13,948 (+66) ರೂ.ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,785 (+60) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,461 (+49) ರೂ. ಬೆಲೆಗೆ ತಲುಪಿದೆ. ಕರ್ನಾಟಕದಲ್ಲಿ ಚಿನ್ನದ ದರವೆಷ್ಟು? ಕರ್ನಾಟಕದಲ್ಲಿ ಬುಧವಾರ ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 13,883 ರೂ.ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,726 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,413 ರೂ. ಬೆಲೆಗೆ ತಲುಪಿದೆ. ಈ ನಡುವೆ ಬೆಂಗಳೂರಿನಲ್ಲಿ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,38,830 ರೂ., 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,27,260 ರೂ. ಮತ್ತು ಬೆಳ್ಳಿ ಬೆಲೆ 1 ಕೆಜಿಗೆ 2,57,900 ರೂ.ಗೆ ತಲುಪಿದೆ. ವಿವಿಧ ನಗರಗಳಲ್ಲಿ ಒಂದು ಗ್ರಾಂ 22 ಕ್ಯಾರಟ್ ಚಿನ್ನದ (ಆಭರಣ) ಬೆಲೆ ಚೆನ್ನೈ 12,831 ರೂ. ಮುಂಬೈ 12,726 ರೂ. ದೆಹಲಿ 12,741 ರೂ. ಕೋಲ್ಕತ್ತಾ 12,726 ರೂ. ಹೈದರಾಬಾದ್ 12,726 ರೂ. ಕೇರಳ 12,726 ರೂ. ಪುಣೆ 12,726 ರೂ. ವಡೋದರಾ 12,731 ರೂ. ಅಹಮದಾಬಾದ್ 12,731 ರೂ. ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ: ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 263ರೂ. ಆಗಿದೆ. ಮಂಗಳವಾರ ಬೆಲೆ 253 ರೂ.ಆಗಿದ್ದು ಬುಧವಾರಕ್ಕಾಗುವಾಗ ಬರೋಬ್ಬರಿ 10 ರೂ. ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ಇಂದು 2,104 ರೂ. ಇದೆ. ಮಂಗಳವಾರ 2,024 ರೂ. ಆಗಿದ್ದು,100 ರೂ. ಏರಿಕೆ ಕಂಡಿದೆ. ಒಟ್ಟಾಗಿ ಬೆಳ್ಳಿ ಬೆಲೆ 1 ಕೆಜಿಗೆ 2,57,900 ರೂ.ಗೆ ತಲುಪಿದೆ.
ಗಾಂಧೀಜಿಗೆ ಅಪಮಾನ ಮಾಡಿದ್ದೇ ಕಾಂಗ್ರೆಸ್: ಗೋವಿಂದ ಕಾರಜೋಳ ಆರೋಪ
ಬೆಂಗಳೂರು: ನರೇಗಾದಡಿ ಜಾರಿಗೆ ತಂದಿರುವ ವಿನೂತನ ತಂತ್ರಜ್ಞಾನ ಹಾಗೂ ಪಾರದರ್ಶಕ ವ್ಯವಸ್ಥೆಗಳು ಕಾಂಗ್ರೆಸ್ಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದೆ ಭ್ರಷ್ಟಾಚಾರದ ಮೂಲಕ ಖಜಾನೆಯಿಂದ ಹಣ ಎತ್ತಿಕೊಂಡು ಹೋಗಲಾಗುತ್ತಿತ್ತು. ಈಗ ಅದು ಸಾಧ್ಯವಾಗದಂತಾಗಿದೆ. ಅದೇ ಕಾಂಗ್ರೆಸ್ ನಾಯಕರ ಹೊಟ್ಟೆ ಉರಿಯ ಕಾರಣ,” ಎಂದು ಟೀಕಿಸಿದರು. ಗಾಂಧಿ ಹೆಸರನ್ನು ಅಳಿಸಿದವರು ಯಾರು ಎಂಬುದಕ್ಕೆ ಉದಾಹರಣೆ ನೀಡಿದ ಕಾರಜೋಳ, “ರಾಜ್ಯದಲ್ಲಿ 25 ಯೋಜನೆಗಳಿಗೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಹೆಸರು ಇಡಲಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ 55ಕ್ಕೆ ರಾಜೀವ್ ಗಾಂಧಿ, 21ಕ್ಕೆ ಇಂದಿರಾ ಗಾಂಧಿ ಹಾಗೂ 22ಕ್ಕೆ ನೆಹರೂ ಹೆಸರು ಇವೆ,” ಎಂದು ಹೇಳಿದರು. “ಪ್ರತಿಯೊಂದು ಕ್ರೀಡಾಕೂಟಕ್ಕೂ ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಇಂದಿರಾ ಗಾಂಧಿ ಹೆಸರು ಇಟ್ಟುಕೊಂಡು ಜನರಿಗೆ ಮೋಸ ಮಾಡಲಾಗಿದೆ. ನಿಜವಾದ ಮಹಾತ್ಮ ಗಾಂಧಿಯನ್ನು ಮರೆಸಿದವರು ಇವರೇ,” ಎಂದು ಅವರು ಆರೋಪಿಸಿದರು. ನರೇಗಾ ಯೋಜನೆಯಡಿ ಈಗ ಎಲ್ಲ ವರ್ಗದವರಿಗೂ ಅವಕಾಶ ನೀಡಲಾಗಿದೆ. ಯಾರು ಬೇಕಾದರೂ ಕೆಲಸಕ್ಕೆ ಬರಬಹುದು. ಹಾಗೆಂದು ಶ್ರೀಮಂತ ವರ್ಗದವರು ಕೂಲಿ ಕೆಲಸಕ್ಕೆ ಬರುವುದಿಲ್ಲ ಎಂದರು. “ಗಾಂಧೀಜಿಗೆ ಅಪಮಾನ ಮಾಡಿದ ಕಾಂಗ್ರೆಸ್, ಡಾ. ಅಂಬೇಡ್ಕರರಿಗೂ ಅಪಮಾನ ಮಾಡಿದೆ. ಅಂಬೇಡ್ಕರ್ ನಿಧನರಾದಾಗ ಅವರ ಸಮಾಧಿಗೆ ಆರಡಿ ಜಾಗವನ್ನೂ ನೀಡಲಿಲ್ಲ. ಅಪಾರ ಪಾಂಡಿತ್ಯ ಮತ್ತು ಜ್ಞಾನ ಹೊಂದಿದ್ದ ಅಂಬೇಡ್ಕರ್ ಅವರಿಗೆ ಜೀವಿತಾವಧಿಯಲ್ಲಿ ಭಾರತರತ್ನ ನೀಡಲಿಲ್ಲ. ಅವರ ಕುಟುಂಬದವರಿಗೆ ಮಾತ್ರ ಸೌಲಭ್ಯ ಒದಗಿಸಿದರು. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಗೌರವ ನೀಡದ ವಿಚಾರವನ್ನು ಜನರಿಗೆ ತಿಳಿಸಬೇಕಾಗಿದೆ,” ಎಂದು ಹೇಳಿದರು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೆಸರನ್ನು ಯಾವುದೇ ಸಂಸ್ಥೆ ಅಥವಾ ಯೋಜನೆಗೆ ಇಟ್ಟುಕೊಂಡಿಲ್ಲ. ಸರ್ಕಾರದ ಹೆಸರಿನಲ್ಲೇ ಎಲ್ಲ ಯೋಜನೆಗಳು ನಡೆಯುತ್ತಿವೆ. ಆದರೆ ಐದು ವಿಮಾನ ನಿಲ್ದಾಣಗಳು, ಬಂದರುಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಹೆಸರು ಇಡಲಾಗಿದೆ. ಇಂತಹವರು ಮಹಾತ್ಮ ಗಾಂಧಿಯ ಬಗ್ಗೆ ಮಾತನಾಡುವ ನೈತಿಕತೆ ಹೊಂದಿರುವರೇ? ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಅವರು ‘ವಿಕಸಿತ ಭಾರತ’ ಗುರಿಗೆ ಪೂರಕವಾಗಿ ವಿಬಿ–ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದ್ದು, ಭ್ರಷ್ಟಾಚಾರ ತಡೆ, ಆಸ್ತಿ ನಿರ್ಮಾಣ ಹಾಗೂ ಗ್ರಾಮೀಣ ಪ್ರದೇಶದ ನಿಜವಾದ ಬಡವರಿಗೆ ಕೂಲಿ ಕೆಲಸ ಒದಗಿಸಲು ಇದು ಸಹಕಾರಿಯಾಗಲಿದೆ. ಹಿಂದೆ ನರೇಗಾದಲ್ಲಿ ಯಾವುದೇ ಹೊಣೆಗಾರಿಕೆ ಇರಲಿಲ್ಲ. ಈಗ ಲೆಕ್ಕ ನೀಡಬೇಕಾಗಿದೆ. ಅದೇ ಕಾಂಗ್ರೆಸ್ನ ಅಸಮಾಧಾನದ ಮೂಲ ಎಂದು ಕಾರಜೋಳ ಹೇಳಿದರು.
ದುಬಾರೆಗೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್!
ಮಡಿಕೇರಿ ಜಿಲ್ಲೆಯ ದುಬಾರೆ ಪ್ರವಾಸಿ ತಾಣದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. 7.2 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ನಂಜರಾಯಪಟ್ಟಣ ಮಾರ್ಗವಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ಹಿಂದೆ ನದಿ ದಾಟುವಾಗ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ದೋಣಿಗಳ ಬಳಕೆಯಿಂದಾಗುತ್ತಿದ್ದ ಜಲಮಾಲಿನ್ಯಕ್ಕೂ ಪರಿಹಾರ ಸಿಗಲಿದೆ. ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ.
ಸಾಲಿಗ್ರಾಮ ಡಿವೈನ್ ಪಾರ್ಕ್ ಸ್ಥಾಪಕ ಎ.ಚಂದ್ರಶೇಖರ್ ನಿಧನ
ಬ್ರಹ್ಮಾವರ: ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸಾರಕ್ಕಾಗಿ ಸಾಲಿಗ್ರಾಮದಲ್ಲಿ ಡಿವೈನ್ ಪಾರ್ಕ್ ಸ್ಥಾಪಿಸಿದ್ದ ಡಾ.ಎ.ಚಂದ್ರಶೇಖರ್ ಉಡುಪ (75) ಹೃದಯಾಘಾತದಿಂದ ಜ.7ರಂದು ಬೆಳಗಿನ ಜಾವ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಡಿವೈನ್ ಪಾರ್ಕ್ ಮೂಲಕ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಇವರು ವೃತ್ತಿಯಲ್ಲಿ ವೈದ್ಯರಾಗಿದ್ದರು. ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಾಗ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಅನಂತರ ಡಿವೈನ್ ಪಾರ್ಕ್ ಎಂಬ ಸಂಸ್ಥೆಯನ್ನು ಆರೋಗ್ಯ ಮತ್ತು ಅಧ್ಯಾತ್ಮದ ನೆಲೆಯಲ್ಲಿ ಪ್ರಾರಂಭಿಸಿದ್ದರು. ಇವರಿಗೆ ದೇಶ-ವಿದೇಶಗಳಲ್ಲಿ ಲಕ್ಷಾಂತರ ಮಂದಿ ಅನುಯಾಯಿಗಳಿದ್ದಾರೆ. ಡಿವೈನ್ ಪಾರ್ಕ್ ನ ಸಹಸಂಸ್ಥೆಯಾಗಿ ಎಸ್ಎಚ್ಆರ್ಎಫ್ (ಯೋಗಬನ) ಸ್ಥಾಪಿಸಿದ ಇವರು ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಕಿತ್ಸಕ ಕ್ರಮವನ್ನೂ ಮುನ್ನೆಲೆಗೆ ತಂದಿದ್ದರು. ಇಂದು ಸಂಜೆ 4ರ ತನಕ ಡಿವೈನ್ ಪಾರ್ಕ್ ನ ಜ್ಞಾನ ಮಂದಿರದಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಅಂತಿಮ ವಿಧಿ ವಿಧಾನ ನೆರವೇರಲಿದೆ ಎಂದು ಡಿವೈನ್ ಪಾರ್ಕ್ ಪ್ರಕಟನೆಯಲ್ಲಿ ತಿಳಿಸಿದೆ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾಕಷ್ಟು ಸೌಕರ್ಯಗಳೊಂದಿಗೆ ಬಿಆರ್ಟಿಎಸ್ ಯೋಜನೆಯಡಿ ಚಿಗರಿ ಬಸ್ಗಳು (Chigari Bus) ತ್ವರಿತ ಸೇವೆ ನೀಡುತ್ತಿದ್ದವು. ವರ್ಷಗಳಿಂದಲೂ ಈ ಬಸ್ಗಳಿಗೆ ಬಿಡಿ ಭಾಗಗಳು ಸಿಗದೇ ಮೂಲೆ ಸೇರುತ್ತಿವೆ. ಒಟ್ಟು ಬಸ್ಗಳಲ್ಲಿ ಅರ್ಧಕ್ಕಿಂತ ಅಧಿಕ ಬಸ್ಗಳು ದುರಸ್ತಿ ಎದುರು ನೋಡುತ್ತಿವೆ. ಇದೆಲ್ಲ ಗಮನಿಸಿದರೆ ಚಿಗರಿ ಬಸ್ ಯೋಜನೆಯು ಅವನತಿಯ ಹಾದಿ ಹಿಡಿಯುತ್ತಿದೆ ಎಂದನಿಸುತ್ತದೆ. ಸಂಚಾರಕ್ಕೆ
ಮಹಿಳೆ ಮನೆಯ ನಾಲ್ಕು ಗೋಡೆಗಳನ್ನು ದಾಟಿ ಸಮಾಜವೆಂಬ ಮಹಾಸಾಗರಕ್ಕೆ ಧುಮುಕಿ ಶತಮಾನಗಳೇ ಉರುಳಿದ್ದು, ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಆಕೆ ನಿರ್ವವಹಿಸುತ್ತಿರುವ ಪಾತ್ರ ಅನುಕರಣೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಜಯ ಕರ್ನಾಟಕ ಡಿಜಿಟಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಕ್ತಿ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಆಧುನಿಕ ಮಹಿಳೆಯರ ಸಾಮರ್ಥ್ಯವನ್ನು ಕೊಂಡಾಡಿದರು. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಜ,9: ಬಂಟರ ಮಾತೃ ಸಂಘದಿಂದ ವಿನಯ ಹೆಗ್ಡೆಯವರಿಗೆ ಶ್ರದ್ದಾಂಜಲಿ ಸಭೆ
ಮಂಗಳೂರು, ಜ.7: ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಇತ್ತೀಚೆಗೆ ನಿಧನರಾದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆಯವರಿಗೆ ಶ್ರದ್ದಾಂಜಲಿ ಸಭೆ ಮತ್ತು ಪ್ರಾರ್ಥನಾ ಸಭೆ ಜ.9ರಂದು ಸಂಜೆ ಐದಕ್ಕೆ ಬಂಟ್ಸ್ ಹಾಸ್ಟೆಲ್ ಶ್ರೀರಾಮಕೃಷ್ಣ ಕಾಲೇಜು ಬಳಿಯಿರುವ ಶ್ರೀಮತಿ ಗೀತಾ ಎಸ್.ಎಂ. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಡಾ.ವಿನಯ ಹೆಗ್ಡೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಗ್ರಾಮೀಣ ಪ್ರದೇಶವಾಗಿದ್ದ ನಿಟ್ಟೆಯನ್ನು ಅಂತಾರಾಷ್ಟ್ರ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿದ ಶಿಕ್ಷಣ ತಜ್ಞರು. ನಿಟ್ಟೆ ಯುನಿವರ್ಸಿಟಿ ರೂವಾರಿಯಾಗಿದ್ದ ಅವರು ದಕ್ಷ ಆಡಳಿತಗಾರರಾಗಿದ್ದರು. ಅವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ.ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.
Gold Rate Jan 7: ಸತತ 5ನೇ ದಿನವೂ ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ, ಎಷ್ಟಿದೆ ಚಿನ್ನ &ಬೆಳ್ಳಿ ಬೆಲೆ
Gold Rate Jan 7: ಬಂಗಾರ ಪ್ರಿಯರಿಗೆ ಬುಧವಾರವೂ ಶಾಕ್ ಮುಂದುವರಿದಿದೆ. ಬುಧವಾರವೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಬಂಗಾರ ಖರೀದಿ ಮಾಡಬೇಕು ಎಂದು ನಿರೀಕ್ಷೆ ಮಾಡುತ್ತಿದ್ದ ಬಂಗಾರ ಪ್ರಿಯರಿಗೆ ಆಘಾತ ಎದುರಾಗಿದೆ. ವಿಶ್ವದಾದ್ಯಂತ ಭೌಗೋಳಿಕ ಹಾಗೂ ರಾಜಕೀಯ ಅಸ್ತಿರತೆ ಸೃಷ್ಟಿಯಾಗಿರುವುದು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಬುಧವಾರ ಜನವರಿ 7ರಂದು ಚಿನ್ನ ಮತ್ತು ಬೆಳ್ಳಿಯ
Venezuela ಮೇಲೆ America ದಾಳಿ| ಗಂಭೀರ ಕಳವಳ ವ್ಯಕ್ತಪಡಿಸಿದ ಭಾರತ
ಜನರ ಸುರಕ್ಷತೆಗೆ ಆದ್ಯತೆ ನೀಡುವಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಗ್ರಹ
ಪಾಕಿಸ್ತಾನದ ISI ಗೂಢಚಾರಿಕೆ ಸಂಸ್ಥೆಯು ಈಗ ಅಪ್ರಾಪ್ತ ಮಕ್ಕಳನ್ನು ಗುರಿಯಾಗಿಸಿಕೊಂಡಿದೆ. ಪಂಜಾಬ್ನಲ್ಲಿ 15 ವರ್ಷದ ಬಾಲಕನೊಬ್ಬನನ್ನು ISI ಗಾಗಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮೋಸಗೊಳಗಾದ ಈ ಬಾಲಕ, ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದನು. ಇದು ದೇಶದ ಭದ್ರತೆಗೆ ಗಂಭೀರ ಎಚ್ಚರಿಕೆಯಾಗಿದ್ದು ಮಕ್ಕಳು ಹಾಗೂ ಅವರು ಬಳಸುವ ಸಾಮಾಜಿಕ ಜಾಲತಾಣಗಳು ಒಟ್ಟುವ ಅಪಾಯಗಳ ಬಗ್ಗೆ ಆತಂಕ ಹೆಚ್ಚಿಸುತ್ತಿದ್ದು, ಅವರ ಮೇಲಿನ ನಿಗಾ ಅವಶ್ಯಕ ಎಂಬುದನ್ನು ಮತ್ತೊಮ್ಮೆ ಎಚ್ಚರಿಸುವಂತಿದೆ.
ಚಾಮರಾಜನಗರ | ಸರಕಾರಿ ಬಸ್ - ಲಾರಿ ಮುಖಾಮುಖಿ ಢಿಕ್ಕಿ: ಓರ್ವ ಚಾಲಕ ಮೃತ್ಯು
20 ಪ್ರಯಾಣಿಕರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
MLC Election: ವಿಧಾನ ಪರಿಷತ್ ಚುನಾವಣೆ; 3 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ: ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದ್ದೇನು?
ಬೆಂಗಳೂರು: ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ ಈ ವರ್ಷ ನಡೆಯಲಿದ್ದು, ಒಟ್ಟು ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧವಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಮವಾರ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ,
Philippines ಕರಾವಳಿಯಲ್ಲಿ 6.4 ತೀವ್ರತೆಯ ಭೂಕಂಪ
ಮನಿಲಾ: ದಕ್ಷಿಣ ಫಿಲಿಪೈನ್ಸ್ ಕರಾವಳಿಯಲ್ಲಿ ಬುಧವಾರ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ(United States Geological Survey)ತಿಳಿಸಿದೆ. 6.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮಿಂಡಾನಾವೊ ದ್ವೀಪದ ಸ್ಯಾಂಟಿಯಾಗೊ ಪಟ್ಟಣದ ಪೂರ್ವಕ್ಕೆ ಸುಮಾರು 27 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇದೆ ಎಂದು ತಿಳಿಸಿದೆ. ಅಧಿಕಾರಿಗಳು ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ. ಸಾವು ನೋವುಗಳ ಬಗ್ಗೆಯೂ ತಕ್ಷಣಕ್ಕೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಅಕ್ಟೋಬರ್ ಆರಂಭದಲ್ಲಿ ಪೂರ್ವ ಮಿಂಡಾನಾವೊದಲ್ಲಿ 7.4 ಮತ್ತು 6.7 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿ ಕನಿಷ್ಠ 8 ಜನರು ಮೃತಪಟ್ಟಿದ್ದರು.
ಸಾಮಂತರಾಗಿ ಅಥವಾ ಸರ್ವನಾಶವಾಗಿ!: ನವ ಹಿಟ್ಲರ್ ಟ್ರಂಪ್ನ ಹೊಸ ಯುದ್ಧ ಘೋಷಣೆಯೇ?
ಇಂದು ವೆನೆಝುವೆಲಾ, ನಾಳೆ ಮೆಕ್ಸಿಕೊ, ಇರಾನ್... ನಂತರ..ಭಾರತವೇ?
Bus Accident: ಆಂಧ್ರಪ್ರದೇಶ ಮತ್ತೊಂದು ಬಸ್ ಬೆಂಕಿ ಅವಘಡ
ಆಂಧ್ರಪ್ರದೇಶ: ದೇಶದಲ್ಲಿ ಮತ್ತೊಂದು ಬಸ್ ಬೆಂಕಿ ಅವಘಡ ಸಂಭವಿಸಿದ್ದು, ಖಾಸಗಿ ಬಸ್ ಬೆಂಕಿಗೆ ಸಂಪೂರ್ಣವಾಗಿ ಭಸ್ಮವಾಗಿದೆ. ನೆರೆಯ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಕೊವ್ವುರು ಗ್ರಾಮ ಸೇತುವೆ ಬಳಿ ಟ್ರಾವೆಲ್ಸ್ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣ ಬಸ್ ಸುಟ್ಟು ಕರಕಲಾಗಿದೆ. ಈ ಬಸ್ ಖಮ್ಮಂನಿಂದ ವಿಶಾಖಪಟ್ಟಣ ಮಾರ್ಗವಾಗಿ ಸಂಚರಿಸುತ್ತಿತ್ತು ಎಂದು ಹೇಳಲಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ
ಬಂಟ್ವಾಳ: 'ಮುಈನುಸ್ಸುನ್ನ ನೀಡುವ 2ನೇ 'ಫಿದಾಕ್ ಅವಾರ್ಡ್'ಗೆ ತೋಕೆ ಕಾಮಿಲ್ ಸಖಾಫಿ ಆಯ್ಕೆ
ಬಂಟ್ವಾಳ: ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ದಅವಾ ಕಾಲೇಜಿನ ವಿದ್ಯಾರ್ಥಿ ಸಂಘಟನೆ 'ಮುಈನುಸ್ಸುನ್ನ' ವತಿಯಿಂದ ನೀಡುವ 2ನೇ ವರ್ಷದ 'ಫಿದಾಕ್ ಅವಾರ್ಡ್- 2025-26'ಗೆ ಸುನ್ನಿ ವಿದ್ವಾಂಸ ಟಿ.ಎಂ.ಮುಹಿಯುದ್ದೀನ್ ಕಾಮಿಲ್ ಸಖಾಫಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 25,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸುನ್ನಿ ಆಶಯ, ಆದರ್ಶಗಳ ಪ್ರಸರಣಕ್ಕಾಗಿ ಬೋಧನೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೆಜಿಎನ್ ದಅವಾ ಕಾಲೇಜಿನ 'ಪ್ರಾಂಶುಪಾಲ ಸೈಯದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಬರಹಗಾರ ಎಸ್.ಪಿ.ಹಂಝ ಸಖಾಫಿ ಹಾಗೂ ಎ.ಕೆ.ನಂದಾವರ ಅವರನ್ನೊಳಗೊಂಡ ಸಮಿತಿಯು ಅವರನ್ನು ಆಯ್ಕೆ ಮಾಡಿದೆ ಎಂದು ಪ್ರಕಟನೆ ತಿಳಿಸಿದೆ. ಜ.12ರಂದು ನಡೆಯುವ ಕೆಜಿಎನ್ ದಅ್ ವಾ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕೋತ್ಸವ 'ಫಿದಾಕ್ ' ಕಾರ್ಯಕ್ರಮದಲ್ಲಿ ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಟಿ.ಎಂ.ಮುಹಿಯುದ್ದೀನ್ ಕಾಮಿಲ್ ಸಖಾಫಿಯವರು ಮರ್ಹೂಂ ಎನ್.ಎಂ.ಉಸ್ತಾದರ ದರ್ಸ್ ಶಿಷ್ಯ. ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಯಲ್ಲಿ ಕಾಮಿಲ್ ಸಖಾಫಿ ಪದವಿ ಪಡೆದು ವಿವಿಧ ಮೊಹಲ್ಲಾಗಳಲ್ಲಿ ಮುದರ್ರಿಸ್ ಆಗಿ ಕಾರ್ಯನಿರ್ವಹಿಸಿದ್ದ ಅವರು, ಪ್ರಸಕ್ತ ನಚ್ಚಬೆಟ್ಟು ದಾರುಲ್ ಮುಸ್ತಫಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಅತ್ತಫ್ಹೀಮ್ ಫೀ ಮಸಾಇಲಿತ್ತಹ್ ಕೀಮ್, ನಸ್ಖುಲ್ ವಿಜಾಹ್ ಫೀ ಫಸ್ಖಿನ್ನಿಕಾಹ್, ತಫ್ರೀಹುಲ್ ಫುವಾದ್ ಬಿ ಅದಿಲ್ಲತಿಲ್ ಇಹ್ತಿಫಾಲಿ ಬಿಲ್ ಮೀಲಾದ್, ಅಲ್ ಕೌಲುಸ್ಸಯ್ಯಿತ್ ಫೀ ಸ್ವಲಾತಿನ್ನಿಸಾಇ ಅಲಲ್ ಮಯ್ಯಿತ್, ಅಲ್ ಬುರ್ಹಾನುಲ್ ಅಖ್ ವಮ್ ಫೀ ಅದಿಲ್ಲತಿ ಸ್ಸವಾದಿಲ್ ಅಅ್ಲಮ್ (ನಾಲ್ಕು ಭಾಗಗಳು), ಕಷ್ಫುಶ್ಶುಬ್ ಹಾತ್ ಅಮ್ಮಾ ಯತ ಅಲ್ಲಖು ಬಿಲ್ ಅಮ್ ವಾತ್, ತಹ್ವೀಲುಲ್ ಇನ್ಸ್ ಅನ್ ತಹ್ವೀಲಿಲ್ ಜಿನ್ನ್ ಮುಂತಾದ ಏಳು ಅರಬಿ ಗ್ರಂಥಗಳನ್ನು ರಚಿಸಿರುವ ಅವರು, ರಸ್ಮುಲ್ ಉಸ್ಮಾನಿ: ಸಂಶಯಗಳಿಗೆ ಉತ್ತರ, ರಸ್ಮುಲ್ ಉಸ್ಮಾನಿ: ಶಿಥಿಲ ತಂತ್ರಗಳಿಗೆ ಸಬಲ ಮಂತ್ರಗಳು, ತರಾವೀಹ್: ಒಂದು ಸಮಗ್ರ ಅಧ್ಯಯನ, ಮದ್ಸ್ ಹಬ್ ಮತ್ತು ತಖ್ಲೀದ್, ನಮಾಝ್ ಬಳಿಕ ಸಾಮೂಹಿಕ ಪ್ರಾರ್ಥನೆ, ತರೀಖತ್: ಸತ್ಯಾನ್ವೇಷಿಗಳಿಗೊಂದು ಕೈಪಿಡಿ, ಶೈಖ್ ಜೀಲಾನಿ ಮತ್ತು ರಾತೀಬ್, ಗೋರಿಗಳ ಸುತ್ತಮುತ್ತ, ಉರೂಸ್ ಆಚರಣೆ ಇಸ್ಲಾಮಿನಲ್ಲಿ, ಪವಿತ್ರ ಕುರ್ ಆನಿನ ಕೊನೆಯ ಅಮ್ಮ ಕಾಂಡದ ವ್ಯಾಖ್ಯಾನ ಹಾಗೂ ಎ.ಪಿ.ಉಸ್ತಾದರ ಹಜ್ ಕೃತಿಯ ಕನ್ನಡಾನುವಾದ ಮುಂತಾದ 11 ಕನ್ನಡ ಕೃತಿಗಳು, ರಸ್ಮುಲ್ ಉಸ್ಮಾನಿ ಸತ್ಯವುಂ ಮಿಥ್ಯವುಂ ಎಂಬ ಮಲಯಾಳಂ ಕೃತಿಯನ್ನೂ ರಚಿಸಿದ್ದಾರೆ.
ನಾನೇ ಗ್ರೇಟ್... ಜಗತ್ತೇ ನನ್ನ ಮುಂದೆ ಮಂಡಿಯೂರಿ ನಿಲ್ಲುತ್ತದೆ ಎಂಬ ಭ್ರಮೆಯಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನೆಡಿ ಸೆಂಟರ್ನಲ್ಲಿ ಭಾಷಣ ಮಾಡಿದ್ದು, ವೆನೆಜುವೆಲಾದ ಅಧ್ಯಕ್ಷ ಮಡೂರೊ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ.ಈ ವೇಳೆ ಭಾರತದ ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರೋನ್ ಬಗ್ಗೆಯೂ ಅವರು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ಆಡಳಿತದ ಸಾಧನೆಗಳು ಮತ್ತು ಅಮೆರಿಕಾದ ಜಾಗತಿಕ ಪ್ರಾಬಲ್ಯವನ್ನು ಎತ್ತಿ ತೋರಿಸುವ ಭರದಲ್ಲಿ ಸಂಚಲನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
Delhi| ಮಸೀದಿ ಬಳಿ ತೆರವು ಕಾರ್ಯಾಚರಣೆ: ಪೊಲೀಸರ ಮೇಲೆ ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ
ಹೊಸದಿಲ್ಲಿ: ಹಳೆ ದಿಲ್ಲಿಯಲ್ಲಿ ಮಸೀದಿಯ ಬಳಿ ಅತಿಕ್ರಮಣ ತೆರವುಗೊಳಿಸಲು ಬುಧವಾರ ಮುಂಜಾನೆ ನಡೆಸಲಾಗುತ್ತಿದ್ದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಕೆಲಕಾಲ ಉದ್ವಿಗ್ನತೆ ಉಂಟಾಯಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿಲ್ಲಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ತುರ್ಕಮನ್ ಗೇಟ್ ಪ್ರದೇಶದ ಫೈಝ್-ಎ-ಇಲಾಹಿ ಮಸೀದಿಯ ಬಳಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ನಾಲ್ಕರಿಂದ ಐದು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅತಿಕ್ರಮಣ ವಿರೋಧಿ ಕ್ರಮದ ಭಾಗವಾಗಿ 17 ಬುಲ್ಡೋಝರ್ಗಳನ್ನು ನಿಯೋಜಿಸಲಾಗಿದೆ. ರಾಮಲೀಲಾ ಮೈದಾನದಲ್ಲಿರುವ ಮಸೀದಿ ಹಾಗೂ ಸ್ಮಶಾನಕ್ಕೆ ಹೊಂದಿಕೊಂಡಿರುವ ಭೂಮಿಯಿಂದ ಅತಿಕ್ರಮಣಗಳನ್ನು ತೆರವುಗೊಳಿಸುವ ಎಂಸಿಡಿ ನಿರ್ಧಾರವನ್ನು ಪ್ರಶ್ನಿಸಿ, ಸೈಯದ್ ಇಲಾಹಿ ಮಸೀದಿಯ ವ್ಯವಸ್ಥಾಪನಾ ಸಮಿತಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ದಿಲ್ಲಿ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದ್ದರೂ ತೆರವು ಕಾರ್ಯ ಮುಂದುವರಿದಿದೆ. ತೆರವು ಕಾರ್ಯಾಚರಣೆಗೆ ವಿರೋಧವಾಗಿ ಸ್ಥಳೀಯ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ತಡೆಯಲು ಪ್ರದೇಶದಲ್ಲಿ ಹಾಗೂ ಸುತ್ತಮುತ್ತ ಸಾಕಷ್ಟು ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಅತಿಕ್ರಮಣ ತೆರವು ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಎಂಸಿಡಿ ತೆರವು ಕಾರ್ಯ ನಡೆಸುತ್ತಿದೆ. ಭದ್ರತೆಗಾಗಿ ನಾವು ನಮ್ಮ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಕಾರ್ಯಾಚರಣೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆರಂಭವಾಯಿತು. ಹೈಕೋರ್ಟ್ ಆದೇಶದಂತೆ ಅತಿಕ್ರಮಿತ ಭೂಮಿಯಲ್ಲಿ ಎಂಸಿಡಿ ತೆರವು ಕಾರ್ಯ ನಡೆಸಿದೆ. ರಾತ್ರಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಜನರನ್ನು ತಡೆಯಲು ಬಲವನ್ನು ಬಳಸಲಾಗಿದೆ,” ಎಂದು ಪೊಲೀಸ್ ಅಧಿಕಾರಿ ವಲ್ಸನ್ ಹೇಳಿದ್ದಾರೆ. “ಒಟ್ಟಾರೆ ಪ್ರಕ್ರಿಯೆ ಸುಗಮವಾಗಿತ್ತು. ನಾಲ್ಕರಿಂದ ಐದು ಅಧಿಕಾರಿಗಳಿಗೆ ಸಣ್ಣ ಗಾಯಗಳಾಗಿವೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ಬಾಡಿ ಕ್ಯಾಮೆರಾ ದೃಶ್ಯಗಳು ಲಭ್ಯವಾದ ನಂತರ ದುಷ್ಕರ್ಮಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಹೇಳಿದರು. ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟದ ಮೂಲಕ ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂದು ಕೇಂದ್ರ ವಲಯದ ಜಂಟಿ ಪೊಲೀಸ್ ಆಯುಕ್ತ ಮಧುರ್ ವರ್ಮಾ ತಿಳಿಸಿದ್ದಾರೆ. “ಕನಿಷ್ಠ ಬಲಪ್ರಯೋಗದೊಂದಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ಉಲ್ಬಣಗೊಳ್ಳದೆ ಸಾಮಾನ್ಯ ಸ್ಥಿತಿಗೆ ಮರಳುವಂತೆ ಖಚಿತಪಡಿಸಲಾಗಿದೆ,” ಎಂದು ಹೇಳಿದರು. ತೆರವು ಕಾರ್ಯಾಚರಣೆ ಸುಗಮವಾಗಿ ನಡೆಯಲು ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. “ಇಡೀ ಪ್ರದೇಶವನ್ನು 9 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದನ್ನು ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಗೆ ಒಪ್ಪಿಸಲಾಗಿದೆ. ಎಲ್ಲ ಸೂಕ್ಷ್ಮ ಸ್ಥಳಗಳಲ್ಲಿ ಸಮರ್ಪಕ ಪೊಲೀಸ್ ನಿಯೋಜನೆ ಮಾಡಲಾಗಿದೆ,” ಎಂದು ವರ್ಮಾ ವಿವರಿಸಿದರು. ಶಾಂತಿಯನ್ನು ಕಾಪಾಡಿಕೊಳ್ಳಲು ಹಾಗೂ ಯಾವುದೇ ಅಹಿತಕರ ಘಟನೆ ತಡೆಯಲು ಕಾರ್ಯಾಚರಣೆಗೆ ಮುನ್ನ ಸ್ಥಳೀಯರೊಂದಿಗೆ ಹಲವು ಸಮನ್ವಯ ಸಭೆಗಳನ್ನು ನಡೆಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಜಾತಿ ಸರ್ಟಿಫಿಕೇಟ್ಗಳಿಗೆ ಬಲಿಯಾದ ಮುಗ್ಧ ಜೇನುಕುರುಬರು
ಕಾಡುಕುರುಬ, ಜೇನುಕುರುಬ, ಬೆಟ್ಟಕುರುಬ ಎಂಬ ಕಾಡು ಮತ್ತು ಕಾಡಂಚಿನಲ್ಲೇ ಬದುಕಿರುವ ಅಪ್ಪಟ ಆದಿವಾಸಿ ಸಮುದಾಯಗಳ ಹೆಸರಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ನಕಲಿ ಜಾತಿ ಸರ್ಟಿಫಿಕೇಟ್ಗಳನ್ನು ನಗರವಾಸಿಗಳು ಪಡೆದು, ಶಿಕ್ಷಣದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಸೀಟು ಪಡೆದವರು, ಉದ್ಯೋಗದಲ್ಲಿ ಗೆಝೆಟೆಡ್ ಮತ್ತು ನಾನ್ ಗೆಝೆಟೆಡ್ ಹುದ್ದೆಗಳನ್ನು ಗಿಟ್ಟಿಸಿ ಈ ಅಮಾಯಕ ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬರಿಗೆ ದಕ್ಕಬೇಕಾದುದನ್ನು ಅಮಾನುಷವಾಗಿ ಕಸಿದವರ ಮೇಲೆ ಸರಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ! ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ ಎಂದಾಗಲೆಲ್ಲ ನನ್ನ ಕಣ್ಣ ಮುಂದೆ ಹಾದುಹೋಗುವುದು ನಾಗರಹೊಳೆ, ಕಾಕನಕೋಟೆ, ಕೊಡಗು ಮತ್ತು ಚಾಮರಾಜನಗರಗಳಲ್ಲಿ ನಾನು ನಿರಂತರ ಸುತ್ತಾಡಿದ ಹಾಡಿಗಳು, ಬಡತನದಲ್ಲೂ ತಮ್ಮ ಗುಡಿಸಲುಗಳನ್ನು ಶುಭ್ರವಾಗಿ ಇಟ್ಟುಕೊಂಡ ಕಾಡಂಚಿನ ಕುಟುಂಬಗಳು, ಅವರು ಪ್ರೀತಿಯಿಂದ ಬಡಿಸಿದ ಮೀನು ಸಾರು, ಮುದ್ದೆ ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಕಣ್ಣಿಗೆ ರಾಚುವ ಅಪೌಷ್ಟಿಕತೆ, ರಕ್ತ ಹೀನತೆಯಿಂದ ನರಳುವಂತಿರುವ ಕಡುಕಪ್ಪನೆಯ ಮನುಷ್ಯ ಆಕೃತಿಗಳು! ಸುಮಾರು ಎರಡು ದಶಕಗಳಿಂದಲೂ ನನಗೆ ಜೇನು ಕುರುಬ ಸಮುದಾಯದ ನಿಕಟ ಸಂಪರ್ಕವಿದೆ. ಜೇನುಕುರುಬರ ಚಿಕ್ಕಣ್ಣ, ಸುರೇಶ, ವಿನೋದ ಮುಂತಾದ ಅನೇಕ ಅಪ್ಪಟ ಆದಿವಾಸಿ ಮುಖಚರ್ಯೆಯ ಹುಡುಗರು, ಸಣ್ಣಪುಟ್ಟ ಸಾಲಸೋಲ, ಸಹಾಯಗಳಿಗಾಗಿ ನಮ್ಮ ಕಚೇರಿಗೆ ಬರುತ್ತಾರೆ. ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇವರಿಗೆ ಒಂದಷ್ಟು ಸವಲತ್ತುಗಳೂ ದೊರಕಿವೆ. ನಮ್ಮೆಲ್ಲರ ಪ್ರಯತ್ನದಿಂದ ನಮ್ಮ ಜೇನುಕುರುಬ ಚಿಕ್ಕಣ್ಣ ಕರ್ನಾಟಕ ಸರಕಾರದ, ಅರಣ್ಯ ಇಲಾಖೆಯ ವನ್ಯಜೀವಿ ಮಂಡಲಿಯ ಸದಸ್ಯ ಮತ್ತು ಸ್ಥಾಯಿ ಸಮಿತಿಯ ಸದಸ್ಯರೂ ಆಗಿದ್ದಾರೆ. ವನ್ಯಜೀವಿ ಮಂಡಲಿಯ ಅಧ್ಯಕ್ಷರು ಮುಖ್ಯಮಂತ್ರಿಯೇ ಆಗಿರುತ್ತಾರೆ ಎನ್ನುವುದು ಗಮನಾರ್ಹ! ಎಷ್ಟೇ ಬೇಡವೆಂದರೂ ಈ ಜೇನುಕುರುಬ ಹುಡುಗರಾದ ವಿನೋದ, ಸುರೇಶ ಪ್ರೀತಿಯಿಂದ ತಂದುಕೊಡುವ ಕಾಡಜೇನು, ಕಳಲೆ, ನೆಲ್ಲಿಕಾಯಿಗಳು ನನ್ನನ್ನು ಮೂಖನಾಗಿಸುತ್ತವೆ. ಭಾರತ ಸರಕಾರ ‘ಆದಿಮ ಬುಡಕಟ್ಟು’ (primitive tribe)ಎಂದು ಗುರುತಿಸಿರುವ ಜೇನುಕುರುಬರು ಶತಶತಮಾನಗಳಿಂದಲೂ ಕಾಡನ್ನೇ ನಂಬಿ ಇಂದಿಗೂ ದಟ್ಟ ಕಾಡಿನ ನಡುವೆಯೇ ಬದುಕುವ ಅಪಾರ ಇಚ್ಛೆಯುಳ್ಳವರಾಗಿದ್ದಾರೆ. ಕಾಡಿನ ನಡುವೆಯ ನಿರಂತರ ಅನುಸಂಧಾನದಲ್ಲಿ ಅವರದೇ ಆದ ಆಚರಣೆ, ನಂಬಿಕೆ, ದೈವದ ಪರಿಕಲ್ಪನೆ, ಕೊಂತ ಪೂಜೆ, ಆತ್ಮ ಮತ್ತು ಗಾಳಿಯನ್ನು ಕರೆಯುವ ವಿಧಾನಗಳು ಅತ್ಯಂತ ವಿಶಿಷ್ಟವಾಗಿವೆ. ಇವರು ವಾಸಿಸುವ ಕಾಡಿನ ವಾಸಸ್ಥಳ ಮತ್ತು ಸೀಮೆಯ ಕುರಿತ ಆದಿಮ ನಂಬಿಕೆಗಳಿಗೆ ಇವರನ್ನು ಒಕ್ಕಲೆಬ್ಬಿಸುವ ಸರಕಾರದ ಅಮಾನುಷ ಕ್ರಮಗಳು ಆಗಾಗ ಧಕ್ಕೆಯನ್ನುಂಟು ಮಾಡುತ್ತಿವೆ. ನಗರೀಕರಣದ ಲವಲೇಶವೂ ಗೊತ್ತಿಲ್ಲದ ಈ ಬುಡಕಟ್ಟು ಇಂದಿಗೂ ಕಾಡನ್ನೇ ನಂಬಿ ಆಹಾರ ಸಂಗ್ರಹಣೆಯ ಮೂಲಕವೇ ತನ್ನ ಬದುಕನ್ನು ಕಟ್ಟಿಕೊಳ್ಳುವ ಹಂತದಲ್ಲೇ ಇದೆ ಎಂಬುದು ನಿಜಕ್ಕೂ ಆತಂಕ ಮೂಡಿಸುವಂತಹದ್ದು. ಕಾಡಿನಲ್ಲಿ ಬದುಕಲು ಬಿಡದ ಸರಕಾರಗಳ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಇಂದಿಗೂ ಜೇನಿಗಾಗಿ ಅಲೆಯುತ್ತಾ ಅರಣ್ಯದ ಕಿರು ಉತ್ಪನ್ನಗಳನ್ನು ಸಂಗ್ರಹಿಸುತ್ತಾ ಹೇಗೋ ಬದುಕುಳಿಯುತ್ತಿದ್ದಾರೆ. ಕರ್ನಾಟಕದ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಸ್ವಲ್ಪ ಮಟ್ಟಿಗೆ ಹಾಸನ ಜಿಲ್ಲೆಗಳಲ್ಲಿ ಜೇನುಕುರುಬರ ಹಾಡಿಗಳಿವೆ. ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ, ಹುಣಸೂರು, ನಂಜನಗೂಡು ಮತ್ತು ಹೆಗ್ಗಡದೇವನ ಕೋಟೆಗಳಲ್ಲಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಹಾಸನ ಜೆಲ್ಲೆಯ ಅರಕಲಗೂಡು ಮತ್ತು ಸಕಲೇಶಪುರ, ಕೊಡಗಿನ ವಿರಾಜಪೇಟೆ, ಸೋಮವಾರಪೇಟೆಗಳಲ್ಲಿ ಇವರು ವಾಸಿಸುತ್ತಿದ್ದಾರೆ. ಮೂಲ ನಿವಾಸಿ ಬುಡಕಟ್ಟು ಸಮುದಾಯವೆಂದೇ ಪರಿಗಣಿಸಲಾದ ಜೇನುಕುರುಬ ಸಮುದಾಯವನ್ನು ಅತ್ಯಂತ ದುರ್ಬಲ ಬುಡಕಟ್ಟು ಗುಂಪಿಗೂ ಸೇರಿಸಲಾಗಿದೆ (PVTG) ಕರ್ನಾಟಕದಲ್ಲಿ ಒಟ್ಟಾರೆ 80,000ದಿಂದ ಒಂದು ಲಕ್ಷ ಜನಸಂಖ್ಯೆಯನ್ನು ಹೊಂದಿರಬಹುದಾದ ಈ ಸಮುದಾಯವು ಬಂಡಿಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅಂದರೆ ತಮ್ಮ ತಲಾಂತರಗಳಿಂದಲೂ ಜೀವಿಸುತ್ತಾ, ಅಲ್ಲೇ ಸಿಗುವ ಉತ್ಪನ್ನಗಳನ್ನೇ ಜೀವನಕ್ಕಾಗಿ ಅವಲಂಬಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುತ್ತಾರೆ. ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ ಎನ್ನಲಾಗುವ ಈ ಸಮುದಾಯದ ಮೂಲ ಕಸುಬು ಬೇಟೆಯಾಡುವುದು, ಜೇನು ಸಂಗ್ರಹಿಸುವುದು, ಗೆಡ್ಡೆಗೆಣಸುಗಳನ್ನು ಅಗೆದು ಆಹಾರವನ್ನಾಗಿ ಸೇವಿಸುತ್ತಾ ಕಾಲಾಂತರಗಳಿಂದಲೂ ಬದುಕಿರುವುದು, ಈ ಸಮುದಾಯ ಅತಿಹೆಚ್ಚು ಕಾಡನ್ನೇ ನಂಬಿ ಕಾಡಲ್ಲೇ ಸದಾ ಬದುಕುವುದರಿಂದ ಆನೆಯ ತುಳಿತಕ್ಕೆ, ಹುಲಿ ಚಿರತೆಗಳ ದಾಳಿಗೆ ಸಿಕ್ಕಿ ಅತಿಹೆಚ್ಚು ಸಾವುನೋವಿಗೆ ಈಡಾಗಿದ್ದಾರೆ. ಅಂತೆಯೇ ಎಸ್ಟೇಟ್ಗಳ ಮಾಲಕರಿಂದ ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಜೇನುಕುರುಬರು ಅನುಭವಿಸಿದ ಚಿತ್ರಹಿಂಸೆಗಳು ಒಂದೆರಡಲ್ಲ, 2010ರಲ್ಲಿ ಎಚ್. ಡಿ. ಕೋಟೆಯ ಜಿ.ಎಂ. ಹಳ್ಳಿ ಹಾಡಿಯ ರಾಜು ಮೊದಲು ಗುಂಡಿನ ದಾಳಿಗೆ ಬಲಿಯಾದ, 2011 ರ ಹುಣಸೆಕುಪ್ಪೆ ಹಾಡಿಯ ಭೀಮಸೇನ ಹಾಗೂ ಅವನ ತಮ್ಮನ ಮೇಲಾದ ಗುಂಡಿನ ದಾಳಿ, 2021- 22ರಲ್ಲಿ ಹೊಸಹಳ್ಳಿ ಕರಿಯಪ್ಪನ ಲಾಕಪ್ ಡೆತ್ ಪ್ರಕರಣಗಳು ಈ ಸಮುದಾಯದವರು ಮುಖ್ಯವಾಹಿನಿಗೆ ಬರಲು ಅಡ್ಡಿಯಾಗುತ್ತಿವೆ. ಜೇನುಕುರುಬರು ಒಂದು ಕಾಲದಲ್ಲಿ ಕುಮ್ರಿ ಬೇಸಾಯವನ್ನೂ ಮಾಡುತ್ತಿದ್ದರಂತೆ. ಜೇನುಹುಳದ ಹಾರುವಿಕೆಯ ಗತಿಯನ್ನು ಗುರುತಿಸಿ ಜೇನು ಇರುವ ದಿಕ್ಕನ್ನು ಕಂಡುಕೊಳ್ಳುತ್ತಾರೆ. ಗಾಳಿಯಲ್ಲಿ ಬರುವ ಕಾಡುಪ್ರಾಣಿಗಳ ವಾಸನೆಯನ್ನೇ ಹಿಡಿದು ಬೇಟೆ ಮಾಡಬೇಕಾದ ಪ್ರಾಣಿಯ ಇರುವಿಕೆಯನ್ನು ಗುರುತಿಸುತ್ತಾರೆ. ಹೀಗೆ ಕಾಡಿನ ಅತಿಸೂಕ್ಷ್ಮ ಚಲನವಲನಗಳನ್ನು ತಮ್ಮ ಸಾಂಪ್ರದಾಯಿಕ ಜ್ಞಾನದಿಂದ ಅರಿಯುವ ಸೂಕ್ಷ್ಮಮತಿಗಳಿವರು. ಒಂದು ಕಾಲದಲ್ಲಿ ಕಾಡನ್ನೇ ಆಳುವ ರಾಜರಂತಿದ್ದವರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ! ಕಾಡನ್ನು ರಕ್ಷಿಸುವ ನೆಪದಲ್ಲಿ ಸರಕಾರಗಳಿಂದ ಹಲವು ಕಾಯ್ದೆ ಮತ್ತು ಕಾನೂನುಗಳನ್ನು ಇವರ ಮೇಲೆ ಅಮಾನುಷವಾಗಿ ಹೇರಲಾಯಿತು, ಉದಾಹರಣೆಗೆ 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ ಬಂದ ನಂತರ ಈ ಸಮುದಾಯವು ಮೂರು ವರ್ಗಗಳಾಗಿ ಹರಿದು ಹಂಚಿಹೋಗಿದೆ, ಉದಾಹರಣೆಗೆ: 1) 1972ರಲ್ಲಿ ಕಾಡಿನಿಂದ ಹೊರದೂಡಲ್ಪಟ್ಟ ಶೇ.60 ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ ಸಮುದಾಯವು ಅರಣ್ಯದಿಂದ ಹೊರಬಂದು ಅರಣ್ಯದ ಅಂಚಿನಲ್ಲಿ ಮತ್ತು ನಾಗರಿಕ ಸಮಾಜದ ಒಡನಾಟದಲ್ಲೇ ಹೊರಗಿನವರಾಗಿಯೇ ಬದುಕು ಕಟ್ಟಿಕೊಂಡಿದೆ. 2) 2006ರ ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಮಾನ್ಯ ಮಾಡುವ ಅರಣ್ಯಕ್ಕೂ ಈ ಕಾಯ್ದೆ ಜಾರಿಯಾದ ನಂತರ ಶೇ. ಹತ್ತರಷ್ಟು ಜನರನ್ನು ಪುನರ್ವಸತಿ ಹೆಸರಿನಲ್ಲಿ ನಾಗಪುರದ ಏಳು ಬ್ಲಾಕ್ಗಳಿಗೆ ಸ್ಥಳಾಂತರಿಸಲಾಯಿತು. ಶೆಟ್ಟಳ್ಳಿ, ಲಕ್ಕಪಟ್ಣ, ಹೆಬ್ಬಾಳ ಹಾಗೂ ಎಚ್.ಡಿ. ಕೋಟೆ ತಾಲೂಕಿನ ಬಸವನಗಿರಿ ಹಾಡಿ ಮತ್ತು ಸೊಳ್ಳೆಪುರ ಹಾಡಿಗಳಲ್ಲಿ ಪುನರ್ವಸತಿ ಹೆಸರಿನಲ್ಲಿ ಇವರನ್ನು ಸ್ಥಳಾಂತರಿಸಲಾಯಿತು. 3. ಈಗಲೂ ಕೂಡ ಅರಣ್ಯದಲ್ಲೇ ವಾಸಿಸುತ್ತಿರುವ ಈ ಸಮುದಾಯ ಅರಣ್ಯ ಹಕ್ಕು ಕಾಯ್ದೆ 2006ರ ಕನಸು ಕಟ್ಟಿಕೊಂಡೇ ಬದುಕನ್ನು ಕಳೆಯುತ್ತಿದೆ! ಶೇ.30ರಷ್ಟು ಈ ಸಮುದಾಯ ಇಂದಿಗೂ ಕೂಡ ತನ್ನತನವನ್ನು ಬಿಡದೆ ಕಾಡಿನಲ್ಲಿಯೇ ಜೀವಿಸಲು ಹೆಣಗಾಡುತ್ತಿದೆ. ಜೇನು ಕುರುಬ ಸಮುದಾಯವು ಇಂದು ನಿಜಕ್ಕೂ ಕೆರೆಯಿಂದ ಹೊರ ಹಾಕಿದ ಮೀನಿನಂತೆ ಜೀವಿಸುತ್ತಿದೆ, ಅತ್ತ ಕಾಡೂ ಇಲ್ಲ ಇತ್ತ ನಾಡೂ ಇಲ್ಲ. ಜೀವನ ನಿರ್ವಹಿಸಲು ವಿಧಿಯಿಲ್ಲದೆ ಕಾಫಿ ಮತ್ತು ಟೀ ಎಸ್ಟೇಟ್ಗಳಲ್ಲಿ ಕೂಲಿ ಮಾಡುತ್ತಾ ಕಾಫಿ ತೋಟದ ಮಾಲಕರ ಲೈನ್ ಮನೆಗಳಲ್ಲಿ ಜೀತದಾಳುಗಳಾಗಿ ದುಡಿದು ಜೀವನ ನಿರ್ವಹಿಸುತ್ತಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರಲೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರು. ಇವೆಲ್ಲ ಕಾಗದದ ಮೇಲೆ ಮಾತ್ರ ಇವೆ! ಇವು ಯಾವುವೂ ಇಂದಿಗೂ ಅನುಷ್ಠಾನಕ್ಕೆ ಬರಲಿಲ್ಲ. ಈ ಸಮುದಾಯಗಳಿಗಾಗಿ ಮೀಸಲಿಟ್ಟ ಕೋಟಿಗಟ್ಟಲೆ ಹಣವನ್ನು ಅಧಿಕಾರಿಗಳು, ರಾಜಕಾರಣಿಗಳು, ಬ್ರೋಕರ್ಗಳು ತಿಂದು ನೀರು ಕುಡಿದಿದ್ದಾರೆಯೇ ಹೊರತು ಈ ನತದೃಷ್ಟ ಸಮುದಾಯಕ್ಕೆ ಒಂದು ಬಿಡಿಗಾಸೂ ಸಿಕ್ಕಿಲ್ಲ! ಈ ಕಾರಣದಿಂದಲೇ ಇವರ ಬದುಕುಗಳು ಇನ್ನೂ ಹೀಗೇ ನಿರ್ಗತಿಕವಾಗಿಯೇ ಇವೆ, ಅಂತೆಯೇ ಜೇನು ಕುರುಬ ಸಮುದಾಯದಲ್ಲಿ ಒಬ್ಬ ಡಾಕ್ಟರ್ ಆಗಲಿ, ಒಬ್ಬ ವಕೀಲರಾಗಲಿ, ಉನ್ನತ ಹುದ್ದೆಯಲ್ಲಿರುವ ಒಬ್ಬ ಅಧಿಕಾರಿಯಾಗಲಿ ಕಾಣಸಿಗಲ್ಲ! ಸರಕಾರದ ಉನ್ನತ ಹುದ್ದೆಗಳನ್ನು ಇವರ ಹೆಸರಲ್ಲಿ ನಕಲಿ ಸರ್ಟಿಫಿಕೇಟ್ ಪಡೆದ ನಗರವಾಸಿಗಳು ಕಸಿದು ಅನುಭವಿಸುತ್ತಿದ್ದಾರೆ. ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬರನ್ನು ಮೈಸೂರು ದಸರಾದ ಆನೆ ಮಾವುತ ಮತ್ತು ಕಾವಡಿಗಳನ್ನಾಗಿ ಮಾತ್ರ ಬಳಸಿಕೊಂಡು ಸರಕಾರ ಇವರ ಶ್ರಮದಲ್ಲಿ ವಿಶ್ವದಾದ್ಯಂತ ಖ್ಯಾತಿ ಪಡೆಯುತ್ತಿದೆ! ಇಂದಿಗೂ ಭೂತಗನ್ನಡಿ ಹಾಕಿ ಹುಡುಕಿದರೂ ಅರಣ್ಯ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಈ ಸಮುದಾಯದವರು ಒಬ್ಬರೂ ಇಲ್ಲ. ಗ್ರೂಪ್ ‘ಡಿ’ಯಲ್ಲಿ ಹಾಗೂ ಆಶ್ರಮ ಶಾಲೆಗಳಲ್ಲಿ ತಾತ್ಕಾಲಿಕ ಅಡುಗೆಯವರಾಗಿ, ಅಡುಗೆ ಸಹಾಯಕರಾಗಿ ಮತ್ತು ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ದಿನಗೂಲಿ ನೌಕರರನ್ನಾಗಿ ಇವರನ್ನು ನೋಡಲು ಮಾತ್ರ ಸಾಧ್ಯ!. ನಕಲಿ ಸರ್ಟಿಫಿಕೇಟ್ ಗಳ ಮತ್ತು ಪ್ರಭಾವಿ, ಸಂಘಟಿತ ‘ಆದಿವಾಸಿ’ ಪಟ್ಟಿಯಲ್ಲಿರುವ ಬಲಿಷ್ಠರ ಪೈಪೋಟಿಯಲ್ಲಿ ಜೇನುಕುರುಬರು ನೌಕರಿ ಪಡೆದುಕೊಳ್ಳುವುದು ಮರೀಚಿಕೆಯಾಗಿಯೇ ಉಳಿದಿದೆ. ಕಾಡುಕುರುಬ, ಜೇನುಕುರುಬ, ಬೆಟ್ಟಕುರುಬ ಎಂಬ ಕಾಡು ಮತ್ತು ಕಾಡಂಚಿನಲ್ಲೇ ಬದುಕಿರುವ ಅಪ್ಪಟ ಆದಿವಾಸಿ ಸಮುದಾಯಗಳ ಹೆಸರಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ನಕಲಿ ಜಾತಿ ಸರ್ಟಿಫಿಕೇಟ್ಗಳನ್ನು ನಗರವಾಸಿಗಳು ಪಡೆದು, ಶಿಕ್ಷಣದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಸೀಟು ಪಡೆದವರು, ಉದ್ಯೋಗದಲ್ಲಿ ಗೆಝೆಟೆಡ್ ಮತ್ತು ನಾನ್ ಗೆಝೆಟೆಡ್ ಹುದ್ದೆಗಳನ್ನು ಗಿಟ್ಟಿಸಿ ಈ ಅಮಾಯಕ ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬರಿಗೆ ದಕ್ಕಬೇಕಾದುದನ್ನು ಅಮಾನುಷವಾಗಿ ಕಸಿದವರ ಮೇಲೆ ಸರಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ! ಸದಾ ಇಂತಹ ಕಟ್ಟಕಡೆಯ ಸಮುದಾಯಗಳ ಕುರಿತು ವೇದಿಕೆಗಳ ಮೇಲೆ ಮಾತನಾಡುವ, ‘ಸಾಮಾಜಿಕ ನ್ಯಾಯದ ಹರಿಕಾರ’ರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ಈ ‘ಸಾಮಾಜಿಕ ಅನ್ಯಾಯ’ ಕಾಣದಿರುವುದು ನಿಜಕ್ಕೂ ಸೋಜಿಗ..!!
ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಿಡಿಗೇಡಿಯೊರ್ವ ಸ್ನಾನಗೃಹಗಳಿಗೆ ಇಣುಕಿ ಪರಾರಿಯಾಗುತ್ತಿರುವ ಘಟನೆ ಕಳೆದೆರಡು ದಿನಗಳಿಂದ ನಡೆಯುತ್ತಿದೆ. ಪಾಂಡೇಶ್ವರ ನಿರಾಡಿಜಡ್ಡು ಪ್ರದೇಶದ ಸೋಮವಾರ ಒಂದು ಮನೆಯಲ್ಲಿ ಸಂಜೆ ಹೊತ್ತಿನಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಸ್ನಾನಗೃಹದ ಹೆಂಚು ತೆಗೆದು ಮೊಬೈಲ್ ಮೂಲಕ ವಿಡಿಯೋ ತೆಗೆಯಲು ಮುಂದಾಗಿದ್ದ. ಇದನ್ನು ಗಮನಿಸಿದ ಮಹಿಳೆ ಜೋರಾಗಿ ಬೊಬ್ಬೆ ಹಾಕಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಮಧ್ಯೆ ಮಂಗಳವಾರ ಪಾಂಡೇಶ್ವರ ಮುಖ್ಯ ರಸ್ತೆ ಸಮೀಪವಿರುವ ಮನೆಯೊಂದರಲ್ಲಿ ಮಹಿಳೆ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೋರ್ವ ಕಿಟಕಿಯಲ್ಲಿ ಇಣುಕಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಕೋಟ ಪೋಲಿಸರು, ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದ್ದರು ಎನ್ನಲಾಗಿದೆ. ಕಿಡಿಗೇಡಿಯ ಈ ದುಷ್ಕೃತ್ಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವಂತೆ ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ಸಮಸ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಟ ಠಾಣಾ ಪೊಲೀಸರು ಕಿಡಿಗೇಡಿಯ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
ಹೊನ್ನಾವರ ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಬಳಿ ಕಾರು ಪಲ್ಟಿ; ಕಾರಿನಲ್ಲಿದ್ದ ಇಬ್ಬರು ಸಜೀವ ದಹನ
ಹೊನ್ನಾವರ ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದು ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದು, ಗುರುತು ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ತಡರಾತ್ರಿ ನಡೆದ ಈ ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಕೊಲ್ಲುವ ಸಂಚು; ಕೇಂದ್ರ ಸರ್ಕಾರದಿಂದ ಜನಾರ್ದನ ರೆಡ್ಡಿ Z+ ಸೆಕ್ಯೂರಿಟಿ ಪಡೆಯಲಿ: ಡಿ ಕೆ ಶಿವಕುಮಾರ್ ತಿರುಗೇಟು
ಬಳ್ಳಾರಿ: ಜನಾರ್ದನ ರೆಡ್ಡಿ ಅವರು ತಮ್ಮನ್ನು ಕೊಲ್ಲುವ ಸಂಚು ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಝಡ್ ಕೆಟಗೆರಿ ಭದ್ರತೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಭದ್ರತೆಯನ್ನು ಯಾರು ನೀಡಬೇಕು ಎಂದು ನನಗೆ ಗೊತ್ತಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಈ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ತಿಳಿಯಿತು. ಝಡ್ ಕೆಟಗರಿ ಭದ್ರತೆ ಬೇಕಾಗಿರುವವರು ಕೇಂದ್ರ
ಚುನಾವಣಾ ಆಯೋಗದ ಸಂದೇಹಾಸ್ಪದ ಸಾಫ್ಟ್ವೇರ್ : ಪ.ಬಂಗಾಳ, ಮಧ್ಯಪ್ರದೇಶದ 3.66 ಕೋಟಿ ಮತದಾರರ ಹಕ್ಕು ಅಪಾಯದಲ್ಲಿ
ಹೊಸದಿಲ್ಲಿ, ಜ.6: ಭಾರತದ ಚುನಾವಣಾ ಆಯೋಗವು ಯಾವುದೇ ಲಿಖಿತ ಸೂಚನೆಗಳು, ಅಧಿಕೃತ ಕಾರ್ಯವಿಧಾನಗಳು ಮತ್ತು ಕೈಪಿಡಿಗಳಿಲ್ಲದೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಬಳಸಿದ ಪರೀಕ್ಷಿ ಸಲ್ಪಡದ ಸಾಫ್ಟ್ವೇರ್ ಪಶ್ಚಿಮ ಬಂಗಾಳದಲ್ಲಿ 1.31 ಕೋಟಿ ಮತ್ತು ಮಧ್ಯಪ್ರದೇಶದಲ್ಲಿ 2.35 ಕೋಟಿ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸುವ ಮೂಲಕ ಅವರ ಮತದಾನದ ಹಕ್ಕನ್ನು ಅಪಾಯದಲ್ಲಿ ಸಿಲುಕಿಸಿದೆ ಎಂದು reporters-collective.in ತನ್ನ ತನಿಖಾ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಚು.ಆಯೋಗ ಈ ಅನುಮಾನಾಸ್ಪದ ಮತದಾರರನ್ನು ‘ತಾರ್ಕಿಕ ವ್ಯತ್ಯಾಸಗಳನ್ನು’ ಹೊಂದಿರುವ ಪ್ರಕರಣಗಳು ಎಂದು ಕರೆದಿದೆ. ಡಿಸೆಂಬರ್ ಪೂರ್ವಾರ್ಧದಲ್ಲಿ ಸಿದ್ಧಪಡಿಸಲಾದ ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳ ಶಂಕಿತ ಮತದಾರ ಪಟ್ಟಿಯ ಸಾರಾಂಶ ‘ರಿಪೋರ್ಟರ್ಸ್ ಕಲೆಕ್ಟಿವ್’ಗೆ ಲಭ್ಯವಾಗಿದೆ. ಈ ದಾಖಲೆಗಳಲ್ಲಿನ ದತ್ತಾಂಶಗಳನ್ನು ಮೊದಲ ಬಾರಿಗೆ ಬಹಿರಂಗಗೊಳಿಸಲಾಗುತ್ತಿದೆ. ಚುನಾವಣಾ ಆಯೋಗ ಎಸ್ಐಆರ್ ನಡೆಯುತ್ತಿರುವ ಎಲ್ಲ 12 ರಾಜ್ಯಗಳ ಮತದಾರರ ಪಟ್ಟಿಗಳ ಇಂತಹ ವಿವರಗಳನ್ನು ಸಾರ್ವಜನಿಕ ಪರಿಶೀಲನೆಗೆ ಅಲಭ್ಯವಾಗಿಸಿದೆ. ಮತದಾರರನ್ನು ಶಂಕಿತರು ಎಂದು ಗುರುತಿಸಲು ಬಳಸಲಾದ ಸಾಫ್ಟ್ ವೇರ್ 20 ವರ್ಷಗಳಿಗೂ ಹಳೆಯ ಮತ್ತು ಸ್ಪಷ್ಟವಲ್ಲದ ಮತದಾರರ ಪಟ್ಟಿಗಳ ಡಿಜಿಟಲೀಕರಣವನ್ನು ಅವಲಂಬಿಸಿತ್ತು. ಡಿಜಿಟಲೀಕರಣವನ್ನು 12 ರಾಜ್ಯಗಳಲ್ಲಿ ತರಾತುರಿಯಿಂದ ನಡೆಸಲಾಗಿತ್ತು. ಪ್ರತಿಯೊಂದು ರಾಜ್ಯದಲ್ಲಿಯೂ ಈ ಡಿಜಿಟಲೀಕರಣದ ಗುಣಮಟ್ಟವನ್ನು ಪರಿಶೀಲಿಸಲು ವಿವರವಾದ ಪರೀಕ್ಷೆಗಳನ್ನು ನಡೆಸಲಾಗಿರಲಿಲ್ಲ. ಇದು ಸಾಫ್ಟ್ ವೇರ್ ಮತದಾರರನ್ನು ಅನುಮಾನಾಸ್ಪದರೆಂದು ತಪ್ಪಾಗಿ ಗುರುತಿಸಲು ಕಾರಣವಾಗಿರಬಹುದು ಎಂದು ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೋರ್ವರು ‘ರಿಪೋರ್ಟರ್ಸ್ ಕಲೆಕ್ಟಿವ್’ಗೆ ದೃಢಪಡಿಸಿದ್ದಾರೆ. ವಯಸ್ಸಿನ ಅಸಮಾನತೆ, ಹೆಸರುಗಳ ವ್ಯತ್ಯಾಸ, ಒಂದೇ ಕುಟುಂಬಕ್ಕೆ ಹೆಚ್ಚು ಮತದಾರರ ದಾಖಲೆಗಳಿರುವುದು ಮುಂತಾದವುಗಳನ್ನು ಸಾಫ್ಟ್ವೇರ್ ‘ತಾರ್ಕಿಕ ವ್ಯತ್ಯಾಸಗಳು’ ಎಂದು ಗುರುತಿಸಿದೆ. ಮತದಾರರ ಹಕ್ಕುಗಳ ಬಗ್ಗೆ ಸಂದೇಹಗಳು ಉದ್ಭವಿಸಿದಾಗ ಕ್ಷೇತ್ರ ಮಟ್ಟದಲ್ಲಿ ಚುನಾವಣಾಧಿಕಾರಿಗಳು ಔಪಚಾರಿಕ ವಿಚಾರಣೆಯ ಮೂಲಕ ಪರಿಹರಿಸಬೇಕು ಎಂದು ಚುನಾವಣಾ ಆಯೋಗದ ನಿಯಮಗಳು ಹೇಳುತ್ತವೆ. ತಮ್ಮ ಹಕ್ಕುಗಳ ಬಗ್ಗೆ ಕಂಪ್ಯೂಟರ್ ವ್ಯಕ್ತಪಡಿಸಿರುವ ಸಂದೇಹಗಳನ್ನು ಎದುರಿಸಲು ಮತದಾರರು ಯಾವ ಪುರಾವೆಗಳನ್ನು ಒದಗಿಸಬೇಕು ಎನ್ನುವುದನ್ನು ಚುನಾವಣಾ ಆಯೋಗ ಲಿಖಿತವಾಗಿ ಸೂಚಿಸಿರಲಿಲ್ಲ. ಸಾಫ್ಟ್ವೇರ್ ಗುರುತಿಸಿದ ಅನುಮಾನಾಸ್ಪದ ಮತದಾರರ ಅಭೂತಪೂರ್ವ ಪ್ರಮಾಣದಿಂದ ದಿಗ್ಭ್ರಮೆಗೊಂಡ ಚುನಾವಣಾ ಆಯೋಗ ಆರಂಭದಲ್ಲಿ ಅನುಮಾನಾಸ್ಪದರು ಎಂದು ಗುರುತಿಸಲ್ಪಟ್ಟ ಕೋಟ್ಯಂತರ ಮತದಾರರನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ರಾಜ್ಯಗಳಾದ್ಯಂತ ಎಸ್ಐಆರ್ ನಡುವೆಯೇ ಕೈಬಿಟ್ಟಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ಹೇಳಿದೆ. ಚುನಾವಣಾ ಆಯೋಗ ಕನಿಷ್ಠ ಒಂದು ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಸಾಫ್ಟ್ವೇರ್ ಅನ್ನು ಪದೇ ಪದೇ ಪರಿಷ್ಕರಿಸಿತ್ತು ಎನ್ನುವುದನ್ನು ‘ರಿಪೋರ್ಟರ್ಸ್ ಕಲೆಕ್ಟಿವ್’ ದೃಢಪಡಿಸಿಕೊಂಡಿದೆ. ಇದು ಕ್ರಮೇಣ ಅನುಮಾನಾಸ್ಪದ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಿತ್ತು. ಈ ನಡುವೆ ಯಾವುದೇ ಸ್ಥಾಪಿತ ಕಾರ್ಯವಿಧಾನದ ಬದಲು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ) ಮತ್ತು ಕ್ಷೇತ್ರ ಮಟ್ಟದ ಚುನಾವಣಾಧಿಕಾರಿಗಳಿಗೆ ಬಿಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ ಮಧ್ಯದ ವೇಳೆಗೆ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ 1.31 ಕೋಟಿ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸಲಾಗಿದ್ದು, ಜ.2ರ ವೇಳೆಗೆ ಈ ಸಂಖ್ಯೆ 95 ಲಕ್ಷಕ್ಕೆ ಇಳಿದಿದೆ. ಆದರೆ ಸಾಫ್ಟ್ವೇರ್ ಶಂಕಿತರೆಂದು ಗುರುತಿಸಿದ್ದ ಈ ಪ್ರಕರಣಗಳನ್ನು ಹೇಗೆ ಪರಿಹರಿಸಲಾಗಿದೆ ಎನ್ನುವುದನ್ನು ವಿವರಿಸಲು ಇಸಿ ಯಾವುದೇ ವರದಿಗಳನ್ನು ಬಿಡುಗಡೆಗೊಳಿಸಿಲ್ಲ. ಭಾರತದಲ್ಲಿ ಚುನಾವಣಾ ಆಯೋಗವು ಸ್ಥಾಪಿತ ಕಾರ್ಯವಿಧಾನಗಳಿಲ್ಲದೆ, ಅಪಾರದರ್ಶಕ ಅಲ್ಗಾರಿದಮ್ಗಳ ಮೂಲಕ ಅಸ್ತಿತ್ವದಲ್ಲಿರುವ ಕೋಟ್ಯಂತರ ಮತದಾರರ ಹಕ್ಕುಗಳ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿರುವುದು ಇದೇ ಮೊದಲು. ಇದು ಮತದಾನದ ಹಕ್ಕು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ತನ್ನ ವರದಿಯಲ್ಲಿ ಹೇಳಿದೆ. ಪಶ್ಚಿಮ ಬಂಗಾಳದ ಒಟ್ಟು ಮತದಾರರ ಪೈಕಿ ಶೇ.17.11ರಷ್ಟು ಮತ್ತು ಮಧ್ಯಪ್ರದೇಶದಲ್ಲಿ ಶೇ.41.22ರಷ್ಟು ಜನರು ಸಂಶಯದ ಸುಳಿಗೆ ಸಿಲುಕಿದ್ದಾರೆ. ಎಸ್ಐಆರ್ ಭಾಗವಾಗಿ ಮತ ದಾರರ ನೋಂದಣಿ ನಡೆಯುತ್ತಿರುವ ಇತರ 10 ರಾಜ್ಯಗಳಲ್ಲಿಯೂ ಕೋಟ್ಯಂತರ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸಲಾಗಿದೆ ಎಂದು ಸ್ವತಂತ್ರ ಮೂಲಗಳು ದೃಢಪಡಿಸಿವೆ.
ಮುಂಭಡ್ತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಈಗಲೂ ವಂಚನೆ
371 ಜೆ ಕಾಯ್ದೆ ಜಾರಿಗೊಂಡು 10 ವರ್ಷಗಳಾದರೂ ಖಾಲಿ ಇರುವ ಹುದ್ದೆಗಳ ಪ್ರೆಕಿ ಶೇ.80ರಷ್ಟು ಭರ್ತಿಯಾಗಿಲ್ಲ
ಮಕ್ಕಳ ಶೈಕ್ಷಣಿಕ ಪ್ರವಾಸ ಅವಧಿ ವಿಸ್ತರಣೆಗೆ ಆಕ್ಷೇಪ; ಪರೀಕ್ಷೆಯೋ? ಪ್ರವಾಸವೋ? ಗೊಂದಲ
ಬೆಳಗಾವಿ ಅಧಿವೇಶನದಿಂದಾಗಿ ಶೈಕ್ಷಣಿಕ ಪ್ರವಾಸಕ್ಕೆ ಜನವರಿ 21ರ ವರೆಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಪ್ರವಾಸವೋ? ಪರೀಕ್ಷೆಯೋ? ಎಂಬ ಗೊಂದಲದಲ್ಲಿದ್ದಾರೆ. ಪರೀಕ್ಷೆ ಸಿದ್ಧತೆ ನಡುವೆ ಪ್ರವಾಸ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಮರ್ ಖಾಲಿದ್ ಜಾಮೀನು ನಿರಾಕರಣೆಯಿಂದ ನಿಜಕ್ಕೂ ಅನ್ಯಾಯವಾಗಿರುವುದು ನಮ್ಮ ನ್ಯಾಯ ವ್ಯವಸ್ಥೆಗೆ. ಎಲ್ಲೆಡೆ ನ್ಯಾಯದ ಬಾಗಿಲು ಮುಚ್ಚಿದಾಗ ‘ಸುಪ್ರೀಂಕೋರ್ಟ್ಗೆ ಹೋಗಿಯಾದರೂ ನ್ಯಾಯವನ್ನು ಪಡೆಯುತ್ತೇನೆ’ ಎಂಬ ಶ್ರೀಸಾಮಾನ್ಯನೊಬ್ಬನ ಆತ್ಮವಿಶ್ವಾಸ, ನಂಬಿಕೆಯ ಬೆನ್ನು ಮೂಳೆಯನ್ನು ಉಮರ್ ಖಾಲಿದ್ಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶ ಮುರಿದು ಹಾಕಿದೆ. ಒಂದೆಡೆ ಈ ದೇಶದಲ್ಲಿ ವಿಚಾರಣೆಯ ಹೆಸರಿನಲ್ಲಿ ಕೊಳೆಯುತ್ತಿರುವ ನೂರಾರು ವಿಚಾರಣಾಧೀನ ಕೈದಿಗಳ ಬಗ್ಗೆ ಕಳವಳ ವ್ಯಕ್ತಪಡಿಸುವ ಸುಪ್ರೀಂಕೋರ್ಟ್, ಉಮರ್ ಖಾಲಿದ್ ವಿಷಯದಲ್ಲಿ ಮಾತ್ರ ‘ದೀರ್ಘ ಕಾಲದ ಜೈಲು ವಾಸವು ಜಾಮೀನು ಪಡೆಯಲು ಸಂಪೂರ್ಣ ಅರ್ಹತೆಯಾಗುವುದಿಲ್ಲ’’ ಎಂದು ಷರಾ ಬರೆದಿದೆ. 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಆದರೆ ಅವರ ಸಹವರ್ತಿಗಳಾಗಿರುವ ಇತರ ಐದು ಮಂದಿಗೆ ಶರತ್ತುಗಳ ಜೊತೆಗೆ ಜಾಮೀನು ಮಂಜೂರು ಮಾಡಿದೆ. ಜಾಮೀನಿಗೆ ವಿಧಿಸಿರುವ ಕಠಿಣ ನಿಯಮಗಳು ಅವರ ಪಾಲಿಗೆ ಹೊರ ಜಗತ್ತನ್ನೂ ಜೈಲಾಗಿಯೇ ಪರಿವರ್ತಿಸಿದೆ. ಸಾಮಾಜಿಕ ಅಥವಾ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಅವರ ಎಲ್ಲಾ ಹಕ್ಕುಗಳಿಗೆ ಕತ್ತರಿ ಹಾಕಲಾಗಿದೆ ಮಾತ್ರವಲ್ಲ, ಅವರ ಪ್ರತಿ ಹೆಜ್ಜೆಗಳ ಮೇಲೂ ಕಣ್ಣಿಡುವುದಕ್ಕೆ ನ್ಯಾಯಾಲಯ ಸೂಚನೆ ನೀಡಿದೆ. ಯಾವುದೇ ಭಯೋತ್ವ್ವಾದನಾ ಕೃತ್ಯಗಳಲ್ಲಿ ನೇರವಾಗಿ ಭಾಗವಹಿಸಿದ ಆರೋಪ ಉಮರ್ ಖಾಲಿದ್ ಮೇಲಾಗಲಿ, ಶರ್ಜೀಲ್ ಇಮಾಮ್ ಮೇಲಾಗಲಿ ಇಲ್ಲ. ಉಮರ್ ಖಾಲಿದ್ ಮೇಲಿರುವ ಆರೋಪಗಳ ವಿಚಾರಣೆಯೇ ಕಳೆದ ಐದು ವರ್ಷಗಳಲ್ಲಿ ನಡೆದಿಲ್ಲ. ಹೀಗಿರುವಾಗ, ಯುಎಪಿಎ ಕಾಯ್ದೆಯನ್ನು ಮುಂದಿಟ್ಟುಕೊಂಡು ಐದು ವರ್ಷಗಳ ದೀರ್ಘ ಸೆರೆಮನೆವಾಸದ ಬಳಿಕವೂ ಈ ಜಾಮೀನು ನಿರಾಕರಣೆ ಎಷ್ಟರಮಟ್ಟಿಗೆ ನ್ಯಾಯಯುತವಾಗಿದೆ ಎಂದು ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ದಿಲ್ಲಿ ಗಲಭೆಗೆ ಪೂರ್ವದಲ್ಲಿ ಬಿಜೆಪಿ ನಾಯಕನೊಬ್ಬ ‘‘ಗೋಲಿ ಮಾರೋ ಸಾಲೋಂಕೋ’ ಎಂದು ಬಹಿರಂಗ ಕರೆ ನೀಡಿರುವುದು ದಿಲ್ಲಿ ಪೊಲೀಸರಿಗೆ ಪ್ರಚೋದನೆ ಎಂದು ಅನ್ನಿಸಿಲ್ಲ. ಆದರೆ ಯಾವುದೇ ಹಿಂಸಾತ್ಮಕ ಅಥವಾ ಪ್ರಚೋದನಾತ್ಮಕ ಹೇಳಿಕೆಗಳನ್ನು ತನ್ನ ಭಾಷಣದಲ್ಲಿ ನೀಡಿರದೇ ಇದ್ದರೂ ಉಮರ್ ಖಾಲಿದ್ರ ಮಾತುಗಳಲ್ಲಿ ಭಯೋತ್ಪಾದನೆಯ ‘ವಿಧಾನ’ಗಳು ಸುಪ್ರೀಂಕೋರ್ಟ್ಗೆ ಗೋಚರಿಸಿರುವುದು ಹೇಗೆ ಎಂದು ಹಿರಿಯ ನ್ಯಾಯವಾದಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.ಶರ್ಜೀಲ್ ಇಮಾಮ್ ರಸ್ತೆ ತಡೆ, ಚಕ್ಕಜಾಂಗೆ ಕರೆ ನೀಡಿರುವುದನ್ನು ಭಯೋತ್ಪಾದನಾ ಕೃತ್ಯವಾಗಿ ಸುಪ್ರೀಂಕೋರ್ಟ್ ಭಾವಿಸುತ್ತದೆ. ಆದರೆ ಈ ದೇಶದ ಹಲವು ಹೋರಾಟಗಳಲ್ಲಿ ರಸ್ತೆ ತಡೆಯನ್ನು ಒಂದು ಅಸ್ತ್ರವಾಗಿ ಬಳಸುತ್ತಾ ಬಂದಿದ್ದಾರೆ. ಈ ದೇಶದ ರೈತ ಹೋರಾಟಗಳು ರಸ್ತೆ ತಡೆಗಳ ಮೂಲಕ ಹಲವು ಬಾರಿ ನಡೆದಿವೆ. ರಸ್ತೆ ತಡೆಗೆ ಕರೆ ನೀಡಿರುವುದು ಭಯೋತ್ಪಾದನಾ ಚಟುವಟಿಕೆಯಾಗಿ ಸುಪ್ರೀಂಕೋರ್ಟ್ಗೆ ಕಂಡ ಬಗೆಯಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ರಸ್ತೆ ತಡೆಗಳನ್ನು ‘ಭಯೋತ್ಪಾದನಾ ಕೃತ್ಯ’ಗಳಾಗಿ ನ್ಯಾಯಾಲಯ ಪರಿಭಾವಿಸುವ ಸಾಧ್ಯತೆಗಳಿವೆಯೇ ಎಂದು ಆತಂಕಪಡುವಂತಾಗಿದೆ. ಜಾಮೀನು ನಿರಾಕರಣೆಗೆ ಸುಪ್ರೀಂಕೋರ್ಟ್ ಮಂಡಿಸಿರುವ ತರ್ಕವನ್ನು, ಮುಂದಿನ ದಿನಗಳಲ್ಲಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧದ ಎಲ್ಲ ಪ್ರತಿಭಟನೆಗಳ ವಿರುದ್ಧ, ಪ್ರತಿಭಟನಾಕಾರರ ವಿರುದ್ಧ ಅನ್ವಯಿಸಬಹುದಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹತ್ತು ಹಲವು ವಿರೋಧಾಭಾಸಗಳಿರುವುದನ್ನು ಕಾನೂನು ತಜ್ಞರು ಎತ್ತಿ ತೋರಿಸಿದ್ದಾರೆ. ವಿಚಾರಣೆ ಯಾಕೆ ವಿಳಂಬವಾಗುತ್ತಿದೆ ಎನ್ನುವುದನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಸಿದ್ಧವಿರಲಿಲ್ಲ. ಒಂದೆಡೆ ದೀರ್ಘಕಾಲ ವಶದಲ್ಲಿಟ್ಟಿರುವುದನ್ನು ತಪ್ಪು ಎಂದು ಹೇಳುತ್ತಲೇ, ಅದರ ಆಧಾರದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದೂ ಹೇಳುತ್ತದೆ. ವಿಚಾರಣೆಯೇ ನಡೆಯದ ಪ್ರಕರಣದಲ್ಲಿ, ಖಾಲಿದ್ರನ್ನು ಯಾವ ಆಧಾರದಲ್ಲಿ ಪ್ರಮುಖ ಆರೋಪಿಯೆಂದು ಭಾವಿಸುತ್ತದೆ ಎನ್ನುವುದೂ ಸ್ಪಷ್ಟವಿಲ್ಲ. ಒಂದು ರೀತಿಯಲ್ಲಿ ವಿಚಾರಣೆ ನಡೆಯುವ ಮುನ್ನವೇ ಉಮರ್ ಖಾಲಿದ್ರನ್ನು ನ್ಯಾಯಾಲಯ ಅಪರಾಧಿಯೆಂದು ಘೋಷಿಸಿದೆ. ‘ರಹಸ್ಯ ಸಾಕ್ಷ್ಯದ ಪರಿಶೀಲನೆ ಒಂದು ವರ್ಷದ ಒಳಗೆ ನಡೆಯದೇ ಇದ್ದಲ್ಲಿ ಮತ್ತೆ ಜಾಮೀನು ಅರ್ಜಿ ಹಾಕಬಹುದು’’ ಇದು ಸುಪ್ರೀಂ ಕೋರ್ಟ್ ಉಮರ್ ಖಾಲಿದ್ಗೆ ತೋರಿಸಿದ ಬಹುದೊಡ್ಡ ಕೃಪೆ. ಮೋದಿ ಸರಕಾರ ವರ್ಷಗಳ ಹಿಂದೆ ನ್ಯಾಯ ದೇವತೆಯ ಕಣ್ಣ ಪಟ್ಟಿಯನ್ನು ಬಿಚ್ಚಿತು. ತ್ವರಿತ ನ್ಯಾಯದ ಸಂಕೇತವಾಗಿದ್ದ ಖಡ್ಗವನ್ನು ಕಿತ್ತುಕೊಂಡು ನ್ಯಾಯ ದೇವತೆಯ ಕೈಗೆ ಪುಸ್ತಕವನ್ನು ನೀಡಿತು. ಇದೀಗ ನ್ಯಾಯ ದೇವತೆಯ ಕೈಯಲ್ಲಿರುವ ಆ ಪುಸ್ತಕ ನಿಜಕ್ಕೂ ಸಂವಿಧಾನದ ಪುಸ್ತಕ ಹೌದೇ ಎಂದು ಜನಸಾಮಾನ್ಯರು ಅನುಮಾನಿಸುವಂತಾಗಿದೆ. ಯಾವುದೇ ಜಾತಿ, ಧರ್ಮ, ವರ್ಗಗಳನ್ನು ನೋಡದೆ ನ್ಯಾಯ ನೀಡಬೇಕು ಎನ್ನುವ ಕಾರಣಕ್ಕಾಗಿ ಸಾಂಕೇತಿಕವಾಗಿ ನ್ಯಾಯದೇವತೆಯ ಕಣ್ಣಿಗೆ ಪಟ್ಟಿಕಟ್ಟಲಾಗಿತ್ತು. ಇದೀಗ ನ್ಯಾಯದೇವತೆಗೆ ತನ್ನೆದುರು ನಿಂತಿರುವ ಉಮರ್ ಖಾಲಿದ್ರ ಧರ್ಮ ಸ್ಪಷ್ಟವಾಗಿ ಕಾಣುತ್ತಿರುವ ಕಾರಣಕ್ಕೇ ನ್ಯಾಯ ವಿಳಂಬವಾಗುತ್ತಿದೆಯೇ ಎಂದು ಜನರು ಅನುಮಾನ ಪಡುವಂತಾಗಿದೆ. ಒಂದು ರೀತಿಯಲ್ಲಿ ಕಳೆದ ಐದು ವರ್ಷಗಳಿಂದ ಯುಎಪಿಎ ಕಾಯ್ದೆಯ ಹೆಸರಿನಲ್ಲಿ ಉವರ್ ಖಾಲಿದ್ ಮೂಲಕ ನಮ್ಮ ನ್ಯಾಯವ್ಯವಸ್ಥೆಯೇ ‘ಅಕ್ರಮ ಬಂಧನ’ದಲ್ಲಿದೆ ಎಂದು ಕಾನೂನು ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಈ ದೇಶದಲ್ಲಿ ಜಾಮೀನು ಮಂಜೂರಾಗಿದ್ದರೂ 5,000ಕ್ಕೂ ಅಧಿಕ ವಿಚಾರಣಾಧೀನ ಕೈದಿಗಳು ಶರತ್ತುಗಳನ್ನು ಪೂರೈಸಲಾಗದೆ ಜೈಲುಗಳಲ್ಲೇ ಕೊಳೆಯುತ್ತಿದ್ದಾರೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಲಕ್ಷಾಂತರ ವಿಚಾರಣಾಧೀನ ಕೈದಿಗಳು ಅಪರಾಧ ಸಾಬೀತಾಗದಿದ್ದರೂ ಪರೋಕ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಕುರಿತಂತೆ ಸುಪ್ರೀಂಕೋರ್ಟ್ ಹಲವು ಬಾರಿ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಆದರೆ ಉಮರ್ ಖಾಲಿದ್ರ ಪ್ರಕರಣ ಬಂದಾಗ ಸುಪ್ರೀಂಕೋರ್ಟ್ನ ಕಣ್ಣೇಕೆ ಕುರುಡಾಯಿತು? ಉಮರ್ ಖಾಲಿದ್ರ ವಿಷಯದಲ್ಲಿ ದಿಲ್ಲಿ ಪೊಲೀಸರ ಆಮೆಗತಿ ತನಿಖೆ ಕಾನೂನಿನ ವೈಫಲ್ಯವೆನ್ನುವುದು ಸುಪ್ರೀಂಕೋರ್ಟ್ಗೆ ಅರ್ಥವಾಗಿಲ್ಲವೆ? ಪೊಲೀಸರ ಪೂರ್ವಾಗ್ರಹ ಪೀಡಿತ ತನಿಖೆಗೆ ಬಲಿಯಾಗಿ ಅಕ್ರಮ ಬಂಧನದಲ್ಲಿ ಐದು ವರ್ಷ ಕಳೆದಿರುವ ನ್ಯಾಯ ದೇವತೆಗೆ ನ್ಯಾಯ ನೀಡುವವರು ಯಾರು? ಈ ಪ್ರಶ್ನೆಗೆ ಉತ್ತರ ಯಾರಲ್ಲಿದೆ?
ಚುನಾವಣೆ ಹಿನ್ನೆಲೆ: ಮಹಿಳೆಯರಿಗೆ ರೂ. 10 ಸಾವಿರ ನೀಡಿ ಓಲೈಕೆಗೆ ಮುಂದಾದ ಅಸ್ಸಾಂ ಸರ್ಕಾರ!
ಗುವಾಹತಿ: ಸದ್ಯದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಅಸ್ಸಾಂನಲ್ಲಿ ಹಿಮಾಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಮಹಿಳೆಯರ ಸ್ವಯಂ-ಉದ್ಯೋಗ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದೆ. ರಾಜ್ಯದ 35 ಜಿಲ್ಲೆಗಳಲ್ಲಿನ ಎಲ್ಲ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ತಲಾ 10,000 ರೂ. ವಿತರಿಸಲು ಸರ್ಕಾರ ಮುಂದಾಗಿದ್ದು, ಚುನಾವಣೆ ಹಿನ್ನೆಲೆ 40 ಲಕ್ಷ ಫಲಾನುಭವಿಗಳ ಗುರಿ ತಲುಪುವ ನಿಟ್ಟಿನಲ್ಲಿ ದಾಪುಗಾಲು ಹಾಕಿದೆ. ಮುಖ್ಯಮಂತ್ರಿಗಳ ಮಹಿಳಾ ಉದ್ಯಮಿತ ಅಭಿಯಾನ (ಎಂಎಂಯುಎ) ಯೋಜನೆಯಡಿ ಈಗಾಗಲೇ 15 ಲಕ್ಷ ಮಹಿಳೆಯರು 10,000 ರೂ. ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕಳೆದ ವರ್ಷದ ಏಪ್ರಿಲ್ 1ರಂದು ಘೋಷಿಸಲಾದ ಈ ಯೋಜನೆಯಡಿ ಆರಂಭದಲ್ಲಿ 32 ಲಕ್ಷ ಮಹಿಳೆಯರಿಗೆ ನೆರವು ನೀಡುವ ಉದ್ದೇಶವಿತ್ತು. ನಂತರ ಕಳೆದ ವರ್ಷದ ಬಜೆಟ್ನಲ್ಲಿ ಈ ಗುರಿಯನ್ನು 40 ಲಕ್ಷಕ್ಕೆ ವಿಸ್ತರಿಸಲಾಯಿತು. ಇದುವರೆಗೆ ಎಂಟು ಲಕ್ಷ ಮಹಿಳೆಯರು ‘ಲಕ್ಷಾಧಿಪತಿ’ ಸ್ಥಾನಮಾನ ಪಡೆದಿದ್ದು, ಕುಟುಂಬಗಳ ಆದಾಯ ಹೆಚ್ಚುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. “ನಾರಿ ಶಕ್ತಿಯ ಸಬಲೀಕರಣ ಮತ್ತು ಅವರ ಕನಸುಗಳು ನನಸಾಗುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರೂಪತರ್ ಬಳಿಕ ಬೊಕ್ಕಾಹಾತ್ನಲ್ಲಿ 27 ಸಾವಿರಕ್ಕೂ ಅಧಿಕ ಸಹೋದರಿಯರು ತಲಾ 10,000 ನೆರವು ಪಡೆದಿದ್ದಾರೆ. 15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಸಶಕ್ತರಾಗಿದ್ದು, 40 ಲಕ್ಷ ಲಕ್ಷಾಧಿಪತಿಗಳನ್ನು ರೂಪಿಸುವ ಗುರಿಗೆ ನಾವು ಸನಿಹದಲ್ಲಿದ್ದೇವೆ,” ಎಂದು ಮುಖ್ಯಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ವೆನೆಝುವೆಲಾದಿಂದ ಅಮೆರಿಕಕ್ಕೆ ಮಾರುಕಟ್ಟೆ ದರದಲ್ಲಿ 50 ದಶಲಕ್ಷ ಬ್ಯಾರಲ್ ತೈಲ: ಟ್ರಂಪ್
ವಾಷಿಂಗ್ಟನ್: ವೆನೆಝುವೆಲಾ ಮಧ್ಯಂತರ ಸರ್ಕಾರ 30 ರಿಂದ 50 ದಶಲಕ್ಷ ಬ್ಯಾರಲ್ ಉತ್ತಮ ಗುಣಮಟ್ಟದ ತೈಲವನ್ನು ಅಮೆರಿಕಕ್ಕೆ ಮಾರಾಟ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ನಲ್ಲಿ ಪ್ರಕಟಿಸಿದ್ದಾರೆ. ಈ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸುವಂತೆ ಇಂಧನ ಕಾರ್ಯದರ್ಶಿ ಕ್ರಿಸ್ ರಿಟ್ ಅವರಿಗೆ ಸೂಚಿಸಿದ್ದೇನೆ ಎಂದು ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಟ್ರಂಪ್ ಬಹಿರಂಗಪಡಿಸಿದ್ದಾರೆ. ದಾಸ್ತಾನು ಹಡಗುಗಳ ಮೂಲಕ ಇದನ್ನು ತರಲಾಗುತ್ತದೆ. ನೇರವಾಗಿ ಅಮೆರಿಕದ ಅನ್ಲೋಡಿಂಗ್ ಡಾಕ್ ಗಳಿಗೆ ತರಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷರಾಗಿ ಹಣವನ್ನು ತಾವೇ ನಿಯಂತ್ರಿಸಲಿದ್ದೇವೆ ಎಂದು ಹೇಳಿಕೊಂಡಿರುವ ಅವರು, ವೆನೆಝುವೆಲಾ ಮತ್ತು ಅಮೆರಿಕದ ಜನತೆಯ ಪ್ರಯೋಜನಕ್ಕಾಗಿ ಇದನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ವೆನೆಝುವೆಲಾಗೆ ಸಂಬಂಧಿಸಿದಂತೆ ಶ್ವೇತಭವನ ರವಿವಾರ ಓವಲ್ ಆಫೀಸ್ ನಲ್ಲಿ ತೈಲ ಕಂಪನಿ ಮುಖ್ಯಸ್ಥರ ಸಭೆ ಆಯೋಜಿಸಿದೆ. ಎಕ್ಸಾನ್, ಚೆರ್ವಾನ್ ಮತ್ತು ಕೊಂಕೊಫಿಲಿಪ್ಸ್ ಕಂಪನಿಗಳ ಮುಖ್ಯಸ್ಥರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ರವಿವಾರ ಕೇಂದ್ರ ಬಜೆಟ್ ಮಂಡನೆಗೆ ಸಜ್ಜು
ಹೊಸದಿಲ್ಲಿ: ಮುಂದಿನ ಹಣಕಾಸು ವರ್ಷದ ಕೇಂದ್ರ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗುವ ನಿರೀಕ್ಷೆಯಿದ್ದು, ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರವಿವಾರ ಬಜೆಟ್ ಮಂಡನೆಯಾಗುತ್ತಿದೆ. ರಾಷ್ಟ್ರಪತಿ ಭಾಷಣದೊಂದಿಗೆ ಬಜೆಟ್ ಅಧಿವೇಶನ ಜನವರಿ 28ರಂದು ಆರಂಭವಾಗಲಿದೆ. ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ಬುಧವಾರ ಕೈಗೊಳ್ಳಲಿದ್ದು, ಫೆಬ್ರವರಿ 1ರಂದೇ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಮುಂದುವರಿಸಲಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರ 2017ರಿಂದೀಚೆಗೆ ಫೆಬ್ರವರಿ 1ರಂದು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸುತ್ತಾ ಬಂದಿದೆ. ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿ ಈ ಸಂಪ್ರದಾಯವನ್ನು ಆರಂಭಿಸಿದ್ದು, ಆ ಬಳಿಕ ಸರ್ಕಾರ ಇದನ್ನೇ ಮುಂದುವರಿಸಿಕೊಂಡು ಬಂದಿದೆ. 2017ಕ್ಕೆ ಮುನ್ನ ಫೆಬ್ರವರಿ 28ರಂದು ಬಜೆಟ್ ಮಂಡನೆಯಾಗುತ್ತಿತ್ತು. ಈ ಬಾರಿ ಫೆಬ್ರವರಿ 1 ರವಿವಾರವಾಗಿದ್ದು, ಇದು ಗುರು ರವಿದಾಸ್ ಅವರ ಜಯಂತಿಯ ದಿನವೂ ಆಗಿದೆ. ಇದು ನಿರ್ಬಂಧಿತ ರಜಾದಿನ. ರಜಾದಿನವಾಗಿದ್ದರಿಂದ ಸರ್ಕಾರಿ ಕಚೇರಿಗಳು ಮತ್ತು ಷೇರು ಮಾರುಕಟ್ಟೆ ಮುಚ್ಚಿರುತ್ತದೆ. ಜನವರಿ 29ರಂದು ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸಲಾಗುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಬಳಿಕ ಜನವರಿ 30 ಮತ್ತು 31 ರಜಾದಿನವಾಗಿರುತ್ತದೆ. ಮೊದಲ ಹಂತದಲ್ಲಿ ಬಜೆಟ್ ಅಧಿವೇಶನ ಮೂರು ವಾರಗಳ ಕಾಲ ನಡೆಯಲಿದ್ದು, ಎರಡನೇ ಭಾಗ ನಾಲ್ಕು ವಾರ ನಡೆಯುತ್ತದೆ.
ಮಧ್ಯಕರ್ನಾಟಕದಲ್ಲಿ ದಾಖಲೆ ಚಳಿ; ಮುಂದಿನ ನಾಲ್ಕು ದಿನ ಇನ್ನೂ ಕನಿಷ್ಠ ತಾಪಮಾನ
ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ವರ್ಷ ದಾಖಲೆಯ ಚಳಿ ಕಂಡುಬಂದಿದೆ. ಮುಂದಿನ ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನ 10-11 ಡಿಗ್ರಿ ಸೆಲ್ಸಿಯಸ್ಗೆ ತಲುಪುವ ಸಾಧ್ಯತೆಯಿದೆ. ಹವಾಮಾನದಲ್ಲಿನ ಈ ವಿಚಿತ್ರ ಬದಲಾವಣೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಕಾಫಿ ದರ ಕುಸಿತಕ್ಕೆ ಬೆಳೆಗಾರ ಕಂಗಾಲು
ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೋಬಸ್ಟಾ ಕಾಫಿ ಫಸಲು ಬಂದಿದೆ. ಆದರೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇಂಡೋನೇಷ್ಯಾ, ವಿಯೆಟ್ನಾಂ, ಬ್ರೆಜಿಲ್ನಿಂದ ಕಾಫಿ ಬೀಜಗಳ ಪೂರೈಕೆ ಹೆಚ್ಚಾಗಿದೆ. ಇದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ. ಕಳೆದ ವರ್ಷ 13 ಸಾವಿರ ರೂ. ಇದ್ದ 50 ಕೆಜಿ ರೋಬಸ್ಟಾ ಚೆರಿ ಚೀಲದ ಬೆಲೆ ಈಗ 9300 ರೂ.ಗೆ ಇಳಿದಿದೆ. ಇದು ತೋಟ ನಿರ್ವಹಣೆಗೆ ಸಮಸ್ಯೆಯಾಗಿದೆ.
ಗೃಹಲಕ್ಷ್ಮಿ 24ನೇ ಕಂತಿನ ಹಣ ಜಮಾ: ನಿಮ್ಮ ಖಾತೆಗೆ ಬಂದಿದ್ಯಾ? ಬರದಿದ್ದರೆ ಹೀಗೆ ಮಾಡಿ
ರಾಜ್ಯದ ಲಕ್ಷಾಂತರ ಮಹಿಳೆಯರು ಕಳೆದ ಕೆಲ ದಿನಗಳಿಂದ ಕಾಯುತ್ತಿದ್ದ ಸಿಹಿ ಸುದ್ದಿ ಕೊನೆಗೂ ಸಿಕ್ಕಿದೆ. ಪ್ರತಿ ತಿಂಗಳು ತಪ್ಪದೇ ಬರುವ 2,000 ರೂಪಾಯಿಗಳ ‘ಗೃಹಲಕ್ಷ್ಮಿ’ ಹಣದ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಇದೀಗ ಹೊಸ ವರ್ಷದ (2026) ಆರಂಭದಲ್ಲೇ ರಾಜ್ಯ ಸರ್ಕಾರ ಯಜಮಾನಿಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ಚುರುಕುಗೊಂಡಿದೆ. ಈಗಾಗಲೇ ಹಲವರ ಮೊಬೈಲ್ಗೆ ‘Credited’ ಎಂಬ ಮೆಸೇಜ್ ಕೂಡ ಬಂದಿದೆ. ಹಾಗಾದರೆ, ನಿಮ್ಮ ಖಾತೆಗೆ ಹಣ ಬಂದಿದೆಯಾ? ... Read more The post ಗೃಹಲಕ್ಷ್ಮಿ 24ನೇ ಕಂತಿನ ಹಣ ಜಮಾ: ನಿಮ್ಮ ಖಾತೆಗೆ ಬಂದಿದ್ಯಾ? ಬರದಿದ್ದರೆ ಹೀಗೆ ಮಾಡಿ appeared first on Karnataka Times .
ಸಂಪಾದಕೀಯ | ಅರಣ್ಯ ಭೂಮಿ ಗುತ್ತಿಗೆ ನೀಡುವುದು ಬೇಡ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉದ್ಯಮಿಗಳು ವೃತ್ತಿಪರ ಚಿಂತಕರಾಗಬೇಕು: ಯಝ್ದಿನಿ ಫಿರೋಝ್
ಬಿಸಿಸಿಐ ಯುವ ಘಟಕಕ್ಕೆ ಚಾಲನೆ
ಮೈಸೂರು ವಿವಿ ಬಲವರ್ಧನೆಗೆ ವಿಶೇಷ ಆದ್ಯತೆ : ಸಿಎಂ ಸಿದ್ದರಾಮಯ್ಯ
ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಅಭಿನಂದನಾ ಕಾರ್ಯಕ್ರಮ
ಬಿಸಿಸಿಐ ಯುವ ಘಟಕಕ್ಕೆ ಚಾಲನೆ| ಉದ್ಯಮಿಗಳು ವೃತ್ತಿಪರ ಚಿಂತಕರಾಗಬೇಕು: ಯಝ್ದಿನಿ ಫಿರೋಝ್
ಮಂಗಳೂರು: ಜಗತ್ತು ಕೇವಲ ಕಠಿಣ ಪರಿಶ್ರಮಕ್ಕೆ ಮಾತ್ರವಲ್ಲದೆ ವೃತ್ತಿಪರ ಚಿಂತಕರಿಗೆ ತಮ್ಮ ದುಡಿಮೆಗೆ ಪ್ರತಿಫಲ ನೀಡುತ್ತದೆ. ಉದ್ಯಮಿಗಳು ವೃತ್ತಿಪರ ಚಿಂತಕರಾಗಿರುವುದು ಅಗತ್ಯ ಎಂದು ಖ್ಯಾತ ಉದ್ಯಮಿ ಯಝ್ದಿನಿ ಫಿರೋಝ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಓಶಿಯನ್ ಪರ್ಲ್ನಲ್ಲಿ ಮಂಗಳವಾರ ನಡೆದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಯುವ ವಿಭಾಗ - ಬಿಸಿಸಿಐ ಯೂತ್ ವಿಂಗ್ನ ಚಾಲನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಬ್ಯಾರಿ ಸಮುದಾಯದ ಉದ್ಯಮಿಗಳಿಗೆ ಭಾರತದಲ್ಲಿ ಮುಸ್ಲಿಮರನ್ನು ವ್ಯಾಪಾರ ಮತ್ತು ಉದ್ಯಮದಲ್ಲಿ ಮುನ್ನಡೆಸುವ ಸಾಮರ್ಥ್ಯ ಇದೆ ಎಂದು ಅವರು ಹೇಳಿದರು. ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಸಿಸಿಐ ಯುವ ವಿಭಾಗಕ್ಕೆ ಸಂಯೋಜಕರಾಗಿ ಝೀಶನ್ ರಮ್ಲಾನ್, ಅಸ್ಸರ್ ರಝಾಕ್, ಅಯಾನ್ ಹಾರಿಸ್ ಮತ್ತು ಮುಹಮ್ಮದ್ ಶಹಬಾಝ್ ಇದೇ ಸಂದರ್ಭದಲ್ಲಿ ನೇಮಕಗೊಂಡರು. ಈ ಸಂದರ್ಭ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ ಎ ಗಫೂರ್ ಮತ್ತು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಲಾಯಿತು. ಬದ್ರುದ್ದೀನ್ ಪಣಂಬೂರು ಕಿರಾಅತ್ ಪಠಿಸಿದರು. ಈ ಕಾರ್ಯಕ್ರಮದ ಮೂಲಕ ಬ್ಯಾರಿ ಸಮುದಾಯದ ಮುಖಂಡರು, ವೃತ್ತಿಪರರು ಮತ್ತು ಒಟ್ಟು ಸೇರಿ ಉದ್ಯಮಶೀಲತೆ, ಸಮುದಾಯದ ಬೆಳವಣಿಗೆ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ವ್ಯಾಪಾರದ ಪಾತ್ರದ ಕುರಿತು ಚರ್ಚಿಸಿದರು. ಬಿಸಿಸಿಐ ಕಾರ್ಯದರ್ಶಿ ನಿಸಾರ್ ಫಕೀರ್ ಮುಹಮ್ಮದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೋಶಾಧಿಕಾರಿ ಮನ್ಸೂರ್ ಅಹ್ಮದ್ ವಂದಿಸಿದರು.
Chitradurga | ಮರಕ್ಕೆ ಬೊಲೆರೊ ವಾಹನ ಢಿಕ್ಕಿ; ನಾಲ್ವರು ಕಾರ್ಮಿಕರು ಮೃತ್ಯು
ಚಿತ್ರದುರ್ಗ : ಮರಕ್ಕೆ ಬೊಲೆರೊ ವಾಹನ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ನಡೆದಿರುವುದು ವರದಿಯಾಗಿದೆ. ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಮೃತರು. ಇನ್ನುಳಿದ ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಕಾಶಿಪಟ್ಣ | ದಾರುನ್ನೂರ್ ನಲ್ಲಿ ಮಸೀದಿ ನಿರ್ಮಾಣದ ದಾನಿಯ ಪುತ್ರನಿಗೆ ಸನ್ಮಾನ
ದಾರುನ್ನೂರ್, ಜ.6: ಕಾಶಿಪಟ್ಣದ ದಾರುನ್ನೂರ್ ವಿದ್ಯಾ ಸಂಸ್ಥೆಯ ಆವರಣದಲ್ಲಿರುವ ಬಹರುನ್ನೂರ್ ಜುಮ್ಮಾ ಮಸೀದಿಯನ್ನು ನಿರ್ಮಿಸಿದ ದಾನಿ, UAE ಪ್ರಜೆ ಶೈಖ್ ಅಬ್ದುಲ್ ಬಾರಿ ಅವರ ಪುತ್ರ ಖಾಲಿದ್ ಅಲ್ ಝುಬೈರ್ ಬಿನ್ ಅಬ್ದುಲ್ ಬಾರಿ ಅವರನ್ನು ದಾರುನ್ನೂರ್ ಕೇಂದ್ರ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚೆಗೆ ದಾರುನ್ನೂರ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ದಾರುನ್ನೂರ್ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಗೌರವ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ದಾರುನ್ನೂರ್ UAE ರಾಷ್ಟ್ರೀಯ ಸಮಿತಿಯ ನೇತಾರ ಶಂಶುದ್ದೀನ್ ಒಳಪಟ್ಟಣಂ, ದುಬೈ ಸಮಿತಿಯ ಅಧ್ಯಕ್ಷ ಶಂಶುದ್ದೀನ್ ಕಲ್ಕರ್ ಹಾಗೂ UAE ಕೋರ್ ಕಮಿಟಿ ಮುಖ್ಯಸ್ಥ ರಫೀಕ್ ಸುರತ್ಕಲ್ ಅವರನ್ನು ಸಹ ಗೌರವಿಸಲಾಯಿತು. ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಕೋಶಾಧಿಕಾರಿ ಡಿ.ಎ. ಉಸ್ಮಾನ್ (ಏರ್ ಇಂಡಿಯಾ), ಉಪಾಧ್ಯಕ್ಷರಾದ ಅಬ್ದುಲ್ ಸಮದ್ ಹಾಜಿ, ಪಿ.ಟಿ.ಏ. ಅಧ್ಯಕ್ಷ ಫಕೀರಬ್ಬ ಮಾಸ್ಟರ್, ಸದರ್ ಮುದರ್ರಿಸ್ ಹುಸೈನ್ ರಹ್ಮಾನಿ, ವ್ಯವಸ್ಥಾಪಕ ಅಬ್ದುಲ್ ಹಕೀಮ್, ಅರಬಿಕ್ ವಿಭಾಗದ ಮುಖ್ಯಸ್ಥ ರವೂಫ್ ಹುದವಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Venezuela ಆಯ್ತು, ಈಗ ಗ್ರೀನ್ ಲ್ಯಾಂಡ್ ಮೇಲೆ ಡೊನಾಲ್ಡ್ ಟ್ರಂಪ್ ಕಣ್ಣು?
ತೈಲ ಸಂಪದ್ಭರಿತ ವೆನೆಜುಝುಲಾ ಮೇಲೆ ದಾಳಿ ನಡೆಸಿದ ನಂತರ, ಅಮೆರಿಕ ಈಗ ಗ್ರೀನ್ ಲ್ಯಾಂಡ್ ಮೇಲೂ ಕಣ್ಣು ಹಾಕಿದೆ. ವಿಶ್ವದ ಅತ್ಯಂತ ದೊಡ್ಡ ದ್ವೀಪವಾಗಿರುವ ಗ್ರೀನ್ ಲ್ಯಾಂಡ್ ಡೆನ್ಮಾರ್ಕ್ನ ಸ್ವಾಯತ್ತ ಪ್ರದೇಶವಾಗಿದ್ದು, ಭೌಗೋಳಿಕವಾಗಿ ಉತ್ತರ ಅಮೆರಿಕಕ್ಕೆ ಹತ್ತಿರದಲ್ಲಿದೆ. ಇದೇ ಕಾರಣದಿಂದ ಅಮೆರಿಕ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಜನವರಿ 4ರಂದು ಡೆನ್ಮಾರ್ಕ್ ಪ್ರಧಾನಮಂತ್ರಿ ಅಮೆರಿಕಕ್ಕೆ “ಬೆದರಿಕೆ ಹಾಕುವುದನ್ನು ನಿಲ್ಲಿಸಿ” ಎಂದು ಕರೆ ನೀಡಿದ್ದರೂ, ಕೇವಲ 57,000 ಜನಸಂಖ್ಯೆಯ ಗ್ರೀನ್ ಲ್ಯಾಂಡ್ ಯುನೈಟೆಡ್ ಸ್ಟೇಟ್ಸ್ನ ಭಾಗವಾಗಬೇಕು ಎಂಬ ತನ್ನ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದರು. “ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ನಮಗೆ ಗ್ರೀನ್ ಲ್ಯಾಂಡ್ ಅಗತ್ಯವಿದೆ. ಡೆನ್ಮಾರ್ಕ್ಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. 20 ದಿನಗಳಲ್ಲಿ ಗ್ರೀನ್ ಲ್ಯಾಂಡ್ ಬಗ್ಗೆ ಮಾತನಾಡೋಣ” ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ಹೇಳಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಅವರು, “ನಮಗೆ ಗ್ರೀನ್ ಲ್ಯಾಂಡ್ ಬೇಕು, ರಕ್ಷಣೆಗಾಗಿ ನಮಗೆ ಅದು ಬೇಕು” ಎಂದು ಹೇಳಿದ್ದರು. ►ಅಮೆರಿಕದ ಉಪಸ್ಥಿತಿ ಏನು? ವಾಯುವ್ಯ ಗ್ರೀನ್ ಲ್ಯಾಂಡ್ ನಲ್ಲಿರುವ ಪಿಟುಫಿಕ್ ಬಾಹ್ಯಾಕಾಶ ನೆಲೆಯಲ್ಲಿ ಅಮೆರಿಕ ತನ್ನ ಉಪಸ್ಥಿತಿಯನ್ನು ಕಾಯ್ದುಕೊಂಡಿದೆ. 1951ರಲ್ಲಿ ಅಮೆರಿಕ ಮತ್ತು ಡೆನ್ಮಾರ್ಕ್ ನಡುವೆ ನಡೆದ ಒಪ್ಪಂದವು, ಡೆನ್ಮಾರ್ಕ್ ಮತ್ತು ಗ್ರೀನ್ ಲ್ಯಾಂಡ್ ಸೂಚನೆ ನೀಡುವವರೆಗೆ, ಗ್ರೀನ್ ಲ್ಯಾಂಡ್ ನಲ್ಲಿ ಮುಕ್ತವಾಗಿ ಸಂಚರಿಸುವ ಮತ್ತು ಮಿಲಿಟರಿ ನೆಲೆಗಳನ್ನು ನಿರ್ಮಿಸುವ ಹಕ್ಕನ್ನು ಅಮೆರಿಕಕ್ಕೆ ನೀಡಿತ್ತು. ರಷ್ಯಾದ ನೌಕಾಪಡೆಯ ಹಡಗುಗಳು ಮತ್ತು ಪರಮಾಣು ಜಲಾಂತರ್ಗಾಮಿ ನೌಕೆಗಳು ಬಳಸುವ ದ್ವೀಪ–ಐಸ್ಲ್ಯಾಂಡ್–ಬ್ರಿಟನ್ ನಡುವಿನ ನೀರನ್ನು ವೀಕ್ಷಿಸಲು ರಡಾರ್ ಗಳನ್ನು ಸ್ಥಾಪಿಸುವುದು ಸೇರಿದಂತೆ, ಆರ್ಕ್ಟಿಕ್ ದ್ವೀಪದಲ್ಲಿ ತನ್ನ ಅಸ್ತಿತ್ವದಲ್ಲಿರುವ ಮಿಲಿಟರಿ ಉಪಸ್ಥಿತಿಯನ್ನು ವಿಸ್ತರಿಸಲು ಅಮೆರಿಕ ಆಸಕ್ತಿ ವ್ಯಕ್ತಪಡಿಸಿದೆ. ಆರ್ಕ್ಟಿಕ್ ನೀರಿನಲ್ಲಿ ಹೆಚ್ಚಿನ ಚೀನೀ ಸಾಗಣೆ ರಷ್ಯಾ ಬಳಿಯ ಪೆಸಿಫಿಕ್ ಆರ್ಕ್ಟಿಕ್ ಮತ್ತು ಉತ್ತರ ಸಮುದ್ರ ಮಾರ್ಗದಲ್ಲಿದೆ ಎಂದು ದತ್ತಾಂಶ ತೋರಿಸುತ್ತದೆ. ಆರ್ಕ್ಟಿಕ್ ನಲ್ಲಿ ಹೆಚ್ಚಿನ ರಷ್ಯಾದ ಸಾಗಣೆ ರಷ್ಯಾದ ಸ್ವಂತ ಕರಾವಳಿಯ ಸುತ್ತಲೂ ಇರುತ್ತದೆ. ಆದರೆ ವಿಶ್ಲೇಷಕರು, ರಷ್ಯಾದ ಜಲಾಂತರ್ಗಾಮಿ ನೌಕೆಗಳು ಹೆಚ್ಚಾಗಿ ಗ್ರೀನ್ ಲ್ಯಾಂಡ್, ಐಸ್ಲ್ಯಾಂಡ್ ಮತ್ತು ಯುಕೆ ನಡುವಿನ ನೀರಿನಲ್ಲಿ ಸಂಚರಿಸುತ್ತವೆ ಎಂದು ಹೇಳುತ್ತಾರೆ. ►ಖನಿಜ, ತೈಲ ಮತ್ತು ನೈಸರ್ಗಿಕ ಅನಿಲ ಸಂಪತ್ತು ಡ್ಯಾನಿಶ್ ರಾಜಧಾನಿ ಕೋಪನ್ ಹ್ಯಾಗನ್ ಗಿಂತ ನ್ಯೂಯಾರ್ಕ್ ಗೆ ಹತ್ತಿರದಲ್ಲಿರುವ ಈ ದ್ವೀಪದ ರಾಜಧಾನಿ ನೂಕ್ ಅಪಾರ ಖನಿಜ, ತೈಲ ಮತ್ತು ನೈಸರ್ಗಿಕ ಅನಿಲ ಸಂಪತ್ತನ್ನು ಹೊಂದಿದೆ. ಆದರೆ ಅಭಿವೃದ್ಧಿ ನಿಧಾನವಾಗಿದ್ದು, ಗಣಿಗಾರಿಕೆ ಕ್ಷೇತ್ರದಲ್ಲಿ ಅಮೆರಿಕದ ಹೂಡಿಕೆ ಬಹಳ ಸೀಮಿತವಾಗಿದೆ. ಡೆನ್ಮಾರ್ಕ್ ಮತ್ತು ಗ್ರೀನ್ ಲ್ಯಾಂಡ್ ಭೂವೈಜ್ಞಾನಿಕ ಸಮೀಕ್ಷೆ–2023ರ ಪ್ರಕಾರ, ಯುರೋಪಿಯನ್ ಆಯೋಗ “ನಿರ್ಣಾಯಕ ಕಚ್ಚಾ ವಸ್ತುಗಳು” ಎಂದು ಪರಿಗಣಿಸಿರುವ 34 ಖನಿಜಗಳ ಪೈಕಿ 25 ಖನಿಜಗಳು ಈ ದ್ವೀಪದಲ್ಲಿ ಕಂಡುಬಂದಿವೆ. ಇದರಲ್ಲಿ ಗ್ರ್ಯಾಫೈಟ್, ಲಿಥಿಯಂ ಹಾಗೂ ವಿದ್ಯುತ್ ವಾಹನಗಳಲ್ಲಿ (EV) ಬಳಸುವ ಅಪರೂಪದ ಅಂಶಗಳು ಸೇರಿವೆ. ಆದರೆ ಪರಿಸರ ಕಾರಣಗಳಿಂದ ಗ್ರೀನ್ ಲ್ಯಾಂಡ್ ತೈಲ ಮತ್ತು ನೈಸರ್ಗಿಕ ಅನಿಲ ಹೊರತೆಗೆಯುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಇಲ್ಲಿನ ಆರ್ಥಿಕತೆ ಮುಖ್ಯವಾಗಿ ಮೀನುಗಾರಿಕೆಗೆ ಅವಲಂಬಿತವಾಗಿದೆ. ರಫ್ತುಗಳಲ್ಲಿ ಮೀನುಗಾರಿಕೆಯ ಪಾಲು ಶೇಕಡಾ 95ಕ್ಕಿಂತ ಹೆಚ್ಚಾಗಿದೆ. ಜೊತೆಗೆ, ಡೆನ್ಮಾರ್ಕ್ನಿಂದ ದೊರೆಯುವ ವಾರ್ಷಿಕ ಸಬ್ಸಿಡಿಗಳ ಮೇಲೆ ಗ್ರೀನ್ ಲ್ಯಾಂಡ್ ಅವಲಂಬಿತವಾಗಿದ್ದು, ದ್ವೀಪದ ಸಾರ್ವಜನಿಕ ಬಜೆಟ್ನ ಸರಿಸುಮಾರು ಅರ್ಧದಷ್ಟು ಭಾಗವನ್ನು ಇದು ಒಳಗೊಂಡಿದೆ. ►ಗ್ರೀನ್ ಲ್ಯಾಂಡ್ ನ ಸ್ಥಿತಿ ಡೆನ್ಮಾರ್ಕ್ನ ಹಿಂದಿನ ವಸಾಹತು ದ್ವೀಪವಾದ ಗ್ರೀನ್ ಲ್ಯಾಂಡ್ 1953ರಲ್ಲಿ ನಾರ್ಡಿಕ್ ಸಾಮ್ರಾಜ್ಯಕ್ಕೆ ಸೇರಿದ್ದು, ಡ್ಯಾನಿಶ್ ಸಂವಿಧಾನಕ್ಕೆ ಒಳಪಟ್ಟಿದೆ. ಅಂದರೆ ದ್ವೀಪದ ಕಾನೂನು ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ ಸಂವಿಧಾನಾತ್ಮಕ ತಿದ್ದುಪಡಿ ಅಗತ್ಯವಿರುತ್ತದೆ. 2009ರಲ್ಲಿ ಗ್ರೀನ್ ಲ್ಯಾಂಡ್ ಗೆ ವ್ಯಾಪಕ ಸ್ವ-ಆಡಳಿತ ಸ್ವಾಯತ್ತತೆ ನೀಡಲಾಗಿದ್ದು, ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಡೆನ್ಮಾರ್ಕ್ ನಿಂದ ಸ್ವಾತಂತ್ರ್ಯ ಘೋಷಿಸುವ ಹಕ್ಕೂ ಇದರಲ್ಲಿ ಸೇರಿದೆ. ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಗ್ರೀನ್ ಲ್ಯಾಂಡ್ ನಿವಾಸಿಗಳ ಮೇಲೆ ನಡೆದ ಐತಿಹಾಸಿಕ ದೌರ್ಜನ್ಯಗಳ ಬಹಿರಂಗಪಡಿಸುವಿಕೆಯ ನಂತರ, ಗ್ರೀನ್ ಲ್ಯಾಂಡ್ ಮತ್ತು ಡೆನ್ಮಾರ್ಕ್ ನಡುವಿನ ಸಂಬಂಧಗಳು ಹದಗೆಟ್ಟಿವೆ. ಆದರೆ ಟ್ರಂಪ್ ತೋರಿಸಿರುವ ಆಸಕ್ತಿಯು ಗ್ರೀನ್ ಲ್ಯಾಂಡ್ ನೊಂದಿಗಿನ ಸಂಬಂಧವನ್ನು ಸುಧಾರಿಸಲು ಡೆನ್ಮಾರ್ಕ್ ಅನ್ನು ಪ್ರೇರೇಪಿಸಿದೆ. ಗ್ರೀನ್ ಲ್ಯಾಂಡ್ ನ 57,000 ನಿವಾಸಿಗಳಲ್ಲಿ ಬಹುಪಾಲು ಜನರು ಸ್ವಾತಂತ್ರ್ಯವನ್ನು ಬೆಂಬಲಿಸುತ್ತಾರೆ ಎಂದು ಸಮೀಕ್ಷೆಗಳು ತೋರಿಸುತ್ತವೆ. ಆದರೆ ಡೆನ್ಮಾರ್ಕ್ನಿಂದ ತಕ್ಷಣ ಸ್ವಾತಂತ್ರ್ಯ ಪಡೆದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಆತಂಕವೂ ಇಲ್ಲಿನ ಜನರಲ್ಲಿ ಇದೆ. ►ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಕಣ್ಣಿಟ್ಟಿದ್ದು ಇದೇ ಮೊದಲಲ್ಲ ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಆಸಕ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ ಡೆನ್ಮಾರ್ಕ್ ನಿಂದ ದ್ವೀಪವನ್ನು ಖರೀದಿಸುವ ಆಸಕ್ತಿಯನ್ನು ಅವರು ವ್ಯಕ್ತಪಡಿಸಿದ್ದರು, ಆದರೆ ಅದನ್ನು ತಿರಸ್ಕರಿಸಲಾಗಿತ್ತು. ಈಗಿನ ಹೇಳಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಗುರಿಯಾಗಿವೆ. ಗ್ರೀನ್ ಲ್ಯಾಂಡ್ ಪ್ರಧಾನಿ ಜೆನ್ಸ್–ಫ್ರೆಡೆರಿಕ್ ನೀಲ್ಸನ್, “ಈಗ ಇದು ಸಾಕು. ಯಾವುದೇ ಒತ್ತಡವಿಲ್ಲ. ಯಾವುದೇ ಆಕ್ಷೇಪಣೆಗಳಿಲ್ಲ. ಸ್ವಾಧೀನದ ಕಲ್ಪನೆಗಳಿಲ್ಲ. ನಾವು ಸಂವಾದಕ್ಕೂ ಚರ್ಚೆಗೂ ಮುಕ್ತರಾಗಿದ್ದೇವೆ. ಆದರೆ ಎಲ್ಲವೂ ಸರಿಯಾದ ಮಾರ್ಗಗಳ ಮೂಲಕ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ನೀಡುತ್ತಲೇ ನಡೆಯಬೇಕು” ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಟ್ರಂಪ್ ಹೇಳಿಕೆಗಳಿಗೆ ಡೆನ್ಮಾರ್ಕ್ ಕಠಿಣ ಪ್ರತಿಕ್ರಿಯೆ ನೀಡಿದೆ. “ಅಮೆರಿಕ ಗ್ರೀನ್ ಲ್ಯಾಂಡ್ ಅನ್ನು ನಿಯಂತ್ರಿಸಬೇಕು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಬೆದರಿಕೆ ಹಾಕುವುದನ್ನು ಅಮೆರಿಕ ನಿಲ್ಲಿಸಬೇಕು” ಎಂದು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಜನವರಿ 4ರಂದು ಹೇಳಿದ್ದಾರೆ. ಗ್ರೀನ್ ಲ್ಯಾಂಡ್ ಮತ್ತು ಡೆನ್ಮಾರ್ಕ್ಗೆ ಯುರೋಪಿಯನ್ ನಾಯಕರು ಜಂಟಿ ಹೇಳಿಕೆಯ ಮೂಲಕ ಬೆಂಬಲ ವ್ಯಕ್ತಪಡಿಸಿದ್ದು, ಆ ಪ್ರದೇಶದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಡೆನ್ಮಾರ್ಕ್ ಮತ್ತು ಗ್ರೀನ್ ಲ್ಯಾಂಡ್ಗಳ ಜವಾಬ್ದಾರಿ ಎಂದು ತಿಳಿಸಿದ್ದಾರೆ. ಗ್ರೀನ್ ಲ್ಯಾಂಡ್ ಅಲ್ಲಿನ ಜನರಿಗೆ ಸೇರಿದ್ದು ಎಂದು ಪ್ರತಿಪಾದಿಸಿದ ಫ್ರಾನ್ಸ್, ಜರ್ಮನಿ, ಇಟಲಿ, ಪೋಲೆಂಡ್, ಸ್ಪೇನ್, ಬ್ರಿಟನ್ ಮತ್ತು ಡೆನ್ಮಾರ್ಕ್ ನಾಯಕರು, ಗ್ರೀನ್ ಲ್ಯಾಂಡ್ ಮತ್ತು ಡೆನ್ಮಾರ್ಕ್ಗೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಅವರಿಗೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಹಾಪುರ | ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಮುಂದಾದರೆ ಕಠಿಣ ಕ್ರಮ: ಶರಣಪ್ಪ ಸಲಾದಪುರ
ಶಹಾಪುರ : ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಅಧಿಕೃತ ಆದೇಶ ಹೊರಡಿಸುವ ಮೂಲಕ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ಇದರ ಭಾಗವಾಗಿ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮ ಪಂಚಾಯಿತಿಯಲ್ಲಿ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು. ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಆಯೋಜಿಸಿದ್ದ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಗ್ರಾಮಗಳ ಕಿರಾಣಿ ಅಂಗಡಿ, ಪಾನ್ಶಾಪ್ಗಳಲ್ಲಿ ಅಕ್ರಮ ಮದ್ಯ ಮಾರಾಟ ಅತಿಯಾಗಿ ನಡೆಯುತ್ತಿದೆ. ಸುಲಭವಾಗಿ ಮದ್ಯ ದೊರಕುತ್ತಿರುವುದರಿಂದ ಸಮಾಜದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಕುಟುಂಬಗಳ ಮನಶಾಂತಿ ಮತ್ತು ನೆಮ್ಮದಿ ಭಂಗವಾಗುತ್ತಿದೆ ಎಂದು ಅವರು ಹೇಳಿದರು. ಹಳ್ಳಿಗಳಲ್ಲಿ ಸಿಗುವ ಮದ್ಯ ಅಸಲಿಯೇ ಅಥವಾ ನಕಲಿಯೇ ಎಂಬುದು ಗೊತ್ತಿಲ್ಲ. ಇದರಿಂದ ಮದ್ಯ ಸೇವಿಸುವ ವ್ಯಕ್ತಿಯ ಜೊತೆಗೆ ಆತನ ಕುಟುಂಬವೂ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದೆ. ಹೀಗಾಗಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಯಬೇಕು. ಇದಕ್ಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಗ್ರಾಮಗಳಲ್ಲಿ ಮದ್ಯ ಸೇವನೆಯಿಂದ ಅನೇಕ ಯುವಕರು ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪರವಾನಗಿ ಇರುವ ಸ್ಥಳಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿದೆ. ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡಲು ಯಾವುದೇ ಹಕ್ಕು ಬಾರ್ ಮಾಲೀಕರಿಗೆ ಇಲ್ಲ. ಇದನ್ನು ಉಲ್ಲಂಘಿಸಿದರೆ ಅಂತಹ ಬಾರ್ ಮಾಲೀಕರ ವಿರುದ್ಧ ಅಬಕಾರಿ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ಮದ್ಯಪಾನ ಮುಕ್ತ ಗ್ರಾಮ ಅಭಿಯಾನಕ್ಕೆ ಸಹಕಾರ ನೀಡಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಹಾಗೂ ಗ್ರಾಮ ಪಂಚಾಯತ್ ಮುಖಂಡರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಆರೋಗ್ಯವೇ ಪ್ರತಿಯೊಬ್ಬನಿಗೂ ಅತಿ ಮುಖ್ಯ. ಒಮ್ಮೆ ದುಶ್ಚಟಗಳಿಗೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟಕರ. ಆದ್ದರಿಂದ ಯುವಕರು ಹಾಗೂ ಸಾರ್ವಜನಿಕರು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಮದ್ಯಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಪ್ರಜ್ಞಾವಂತರು ಹಾಗೂ ಮಹಿಳೆಯರು ಮದ್ಯಪಾನ ಮುಕ್ತ ಗ್ರಾಮ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಮದ್ಯವ್ಯಾಸನಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲು ಕೆಕೆಆರ್ಡಿಬಿ ಅನುದಾನದಲ್ಲಿ ಒಂದು ಕೋಟಿ ರೂ. ಒದಗಿಸಲಾಗುವುದು ಎಂದು ಸಚಿವರು ಘೋಷಿಸಿದರು. ಈ ಸಂದರ್ಭದಲ್ಲಿ 2024–25ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಉಕ್ಕಿನಾಳ ಗ್ರಾಮದಿಂದ ಯಲ್ಲಮ್ಮ ಗುಡಿಗೆ ಹೋಗುವ ರಸ್ತೆ (ಯಡ್ರಾಮಿ ಗಡಿಭಾಗ), 2025–26ನೇ ಸಾಲಿನ ಕೆಕೆಆರ್ಡಿಬಿ ಮೈಕ್ರೋ ಯೋಜನೆಯಡಿ ಉಕ್ಕಿನಾಳ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನ ಜಾರಿಗೊಳಿಸಲಾಗುವುದು. ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮದ್ಯ ಸೇವಿಸುವವರನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ತಿಳಿವಳಿಕೆ ನೀಡುವ ಮೂಲಕ ತಪ್ಪು ದಾರಿಗೆ ಹೋಗದಂತೆ ತಡೆಯಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಜನರು ಸ್ವಯಂಪ್ರೇರಿತರಾಗಿ ಕಡಿವಾಣ ಹಾಕಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಡಿಒ ಮಡಿವಾಳಪ್ಪ ಮುದ್ನೂರು, ಗ್ರಾಮ ಪಂಚಾಯತ್ ಅಧ್ಯಕ್ಷ ಗೇನುಸಿಂಗ್ ರಾಠೋಡ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ದೀರ್ಘಾವಧಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ ಸಿದ್ದರಾಮಯ್ಯ; ಹಳೆಯ ಫೊಟೋಗಳನ್ನು ನೋಡಿ...
Delete Edit Delete Edit
2ನೇ ಮದುವೆಗೆ ಸಿದ್ಧತೆ, ಭಾರತದ ಸ್ಟಾರ್ ಕ್ರಿಕೆಟರ್ ಬಾಳಲ್ಲಿ ತಂಗಾಳಿ...
2ನೇ ಮದುವೆ.. 3ನೇ ಮದುವೆ... ಹೀಗೆ ದುಡ್ಡು ಇದ್ದವರಿಗೆ ಪದೇ ಪದೇ ಮದುವೆ ಆಗುತ್ತಲೇ ಇರುತ್ತೆ ಎಂದು ಜನಸಾಮಾನ್ಯರು ಗೊಣಗುತ್ತಲೇ ಇರುತ್ತಾರೆ. ಅದರಲ್ಲೂ ಡಿವೋರ್ಸ್ &ಮದುವೆ ಸಂಬಂಧ ಮುರಿದುಕೊಳ್ಳುವ ರೂಢಿ ದುಡ್ಡು ಇದ್ದವರಿಗೆ ಜಾಸ್ತಿ ಅನ್ನೋ ಮಾತು ಇದೆ. ಈ ಎಲ್ಲಾ ಚರ್ಚೆಗಳ ನಡುವೆ ಮದುವೆ ಹಂತಕ್ಕೆ ಹೋಗಿ ಸಂಬಂಧ ಕಡಿದುಕೊಂಡ ಜೋಡಿಗಳು ಕೆಲ ದಿನಗಳ
Kerala | Abu Dhabiಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಸಹೋದರರು, ಮಹಿಳೆ ಮೃತ್ಯು
ಪೋಷಕರ ಸ್ಥಿತಿ ಗಂಭೀರ
ಜಗತ್ತಿನ ಅತಿದೊಡ್ಡ ದ್ವೀಪದ ಮೇಲೆ ಟ್ರಂಪ್ ಕಣ್ಣು, ಯುರೋಪ್ ನೆಲದಲ್ಲಿ ಭಯ ಶುರು! Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದಾದ ನಂತರ ಒಂದೊಂದು ವಿವಾದ ಮೈಮೇಲೆ ಹಾಕಿಕೊಂಡು, ಇಡೀ ಜಗತ್ತಿನಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಅದರಲ್ಲೂ ವೆನಿಜುಯೆಲಾ ಘಟನೆ ನಂತರ ಇಡೀ ಪ್ರಪಂಚಕ್ಕೆ ಟ್ರಂಪ್ ಅವರ ಕ್ಷಣಕ್ಷಣದ ನಿರ್ಧಾರದ ಬಗ್ಗೆಯೂ ಕುತೂಹಲ ಮೂಡುವ ರೀತಿ ಮಾಡಿದೆ. ಯಾವ ಕ್ಷಣದಲ್ಲಿ ಅಮೆರಿಕ ಮತ್ತೊಂದು ದೇಶದ ಮೇಲೆ ಎರಗುತ್ತೋ? ಎಂಬ ಚರ್ಚೆ ಕೂಡ
ಈಗ ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು! ಅತ್ಯಂತ ವಿರಳ ಖನಿಜಗಳ ನಿಧಿಯ ಮೇಲೆ ಕಣ್ಣು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ ಲ್ಯಾಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಡೆನ್ಮಾರ್ಕ್ ಸ್ವಾಯತ್ತ ಪ್ರದೇಶವಾದ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಐರೋಪ್ಯ ಒಕ್ಕೂಟದ ಹಲವು ದೇಶಗಳು ಈ ನಡೆಯನ್ನು ಖಂಡಿಸಿವೆ. ಗ್ರೀನ್ ಲ್ಯಾಂಡ್ ಅದರ ಜನರಿಗೆ ಸೇರಿದ್ದು ಎಂದು ಯುರೋಪಿಯನ್ ನಾಯಕರು ಹೇಳಿದ್ದಾರೆ. ಆರ್ಕ್ಟಿಕ್ ಪ್ರದೇಶದ ಕಾರ್ಯತಂತ್ರದ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ.
ಬೀದರ್ | ಜೆಸ್ಕಾಂ ಇಂಜಿನಿಯರ್ ರನ್ನು ಅಮಾನತುಗೊಳಿಸಲು ಒತ್ತಾಯಿಸಿ ಧರಣಿ
ಬೀದರ್ : ಜಿಲ್ಲೆಯ ಜೆಸ್ಕಾಂ ಅಧೀಕ್ಷಕ ಇಂಜಿನಿಯರ್ ವೀರಭದ್ರಪ್ಪ ಶಾಲಿಮನಿ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ್ ಪಾಟೀಲ್ ಅವರು ಗುತ್ತಿಗೆದಾರರೊಂದಿಗೆ ಕೈಜೋಡಿಸಿ ಸರ್ಕಾರದ ಕೋಟ್ಯಾಂತರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು. ಜೊತೆಗೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರ ಪರವಾನಗಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ವತಿಯಿಂದ ಮಂಗಳವಾರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು. ನಗರದ ಜೆಸ್ಕಾಂ ಕಚೇರಿ ಎದುರು ನಡೆದ ಧರಣಿಯಲ್ಲಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ, ಜೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿಕೊಂಡು ಬೀದರ್ ತಾಲೂಕಿನ ಖಾಸಗಿ ಲೇಔಟ್ ಮಾಲೀಕರಿಂದ ವಿದ್ಯುತ್ ಕಂಬಗಳ ಅಳವಡಿಕೆಗೆ ಚಲನ್ ಮುಖಾಂತರ ಹಣ ಪಾವತಿ ಪಡೆದಿದ್ದರೂ, ಖಾಸಗಿ ಕಂಬ ಹಾಗೂ ಟ್ರಾನ್ಸ್ಫಾರ್ಮರ್ (ಟಿ.ಸಿ) ಅಳವಡಿಸದೇ, ಸರ್ಕಾರದ ಕಂಬಗಳು ಹಾಗೂ ಸರ್ಕಾರಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಿ ಸರ್ಕಾರದ ಕೋಟ್ಯಾಂತರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಮೇಲಾಧಿಕಾರಿಗಳೂ ಈ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಜೊತೆಗೆ ಅಕ್ರಮದಲ್ಲಿ ಭಾಗಿಯಾದ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಉಪಾಧ್ಯಕ್ಷ ಮಹೇಂದ್ರಕುಮಾರ್ ಹೊಸಮನಿ, ಗುರು ನೇಮತಾಬಾದ್, ರಾಜಕುಮಾರ್ ಗುಮ್ಮೆ, ಶಿವಕುಮಾರ್, ಆಕಾಶ್ ತ್ರಿಮೂಖೆ, ಧನರಾಜ್ ಮೇತ್ರೆ ಸೇರಿದಂತೆ ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು.
ಬೀದರ್ | ವಿಬಿ-ಜಿ ರಾಮ್ ಜಿ ಯೋಜನೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
ಬೀದರ್ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮನರೇಗಾ ಕಾಯ್ದೆಯ ಹಕ್ಕುಸ್ವರೂಪವನ್ನು ತೆಗೆದುಹಾಕಿ, ಕೇವಲ ಸರ್ಕಾರದ ಆಣತಿಯ ಯೋಜನೆಯಾಗಿ ಬದಲಾಯಿಸಿರುವುದನ್ನು ಖಂಡಿಸಿ, ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ, ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿದ್ದು, ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರು ಹಾಗೂ ಬಡ ರೈತರು ತಮ್ಮ ಜೀವನೋಪಾಯಕ್ಕಾಗಿ ಈ ಕಾಯ್ದೆಯ ಮೇಲೆ ಅವಲಂಬಿತರಾಗಿದ್ದರು ಎಂದು ತಿಳಿಸಲಾಗಿದೆ. ಆದರೆ 2025ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯನ್ನು ರದ್ದುಗೊಳಿಸಿ, ಸರ್ಕಾರದ ಆಣತಿಯಂತೆ ನಡೆಯುವ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಆರೋಪಿಸಲಾಗಿದೆ. ಈ ಹೊಸ ಕಾಯ್ದೆಯಿಂದ ಕೃಷಿ ಋತುವಿನಲ್ಲಿ 60 ದಿನಗಳ ಕೆಲಸ ನಿರ್ಬಂಧಿತವಾಗಿದ್ದು, 125 ದಿನಗಳ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೂಲಿಕಾರರು ಕೆಲಸದಿಂದ ವಂಚಿತರಾಗುವಂತಾಗಿದೆ ಎಂದು ದೂರಲಾಗಿದೆ. ಜೊತೆಗೆ, ಯಂತ್ರ ಬಳಕೆ ಮತ್ತು ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸುವ ಅಂಶಗಳು ಈ ಯೋಜನೆಯಲ್ಲಿ ಸೇರಿರುವುದರಿಂದ, ಕೂಲಿಕಾರರಿಗೆ ಕೆಲಸದ ದಿನಗಳು ಕಡಿಮೆಯಾಗುವ ಹಾಗೂ ಗುತ್ತಿಗೆದಾರರಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಹೊಸ ಕಾಯ್ದೆಯಡಿ ಹಣಕಾಸಿನ ಭಾರವನ್ನು ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರ ಅನುಪಾತದಲ್ಲಿ ಭರಿಸಬೇಕು ಎನ್ನಲಾಗಿದ್ದು, ಕೇಂದ್ರ ಸರ್ಕಾರ ಸೂಚಿಸುವ ಕೆಲಸಗಳನ್ನು ಮಾತ್ರ ಮಾಡಬೇಕಾದ ಪರಿಸ್ಥಿತಿ ಇದೆ. ಇವೆಲ್ಲವನ್ನು ಗಮನಿಸಿದರೆ ಕೃಷಿ ಹಾಗೂ ಗ್ರಾಮೀಣ ಕೂಲಿಕಾರರನ್ನು ಉದ್ಯೋಗದಿಂದ ಹೊರಗಿಡುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಸಂಘ ಆರೋಪಿಸಿದೆ. ಆದ್ದರಿಂದ 2025ರ ಕಾಯ್ದೆ ಬದಲಾವಣೆ ಕೈಬಿಟ್ಟು, ಹಳೆಯ ಮನರೇಗಾ ಕಾಯ್ದೆಯನ್ನೇ ಮುಂದುವರಿಸಬೇಕು ಎಂದು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘವು ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಇಸಾಮೋದ್ದಿನ್ ಮೀರಾಸಾಬ್, ಕಾರ್ಯದರ್ಶಿ ಅಂಬುಬಾಯಿ ಮಾಳಗೆ, ಸಹ ಕಾರ್ಯದರ್ಶಿ ದೇವಾನಂದ ಗಾಯಕವಾಡ್, ಹುಮನಾಬಾದ್ ತಾಲೂಕು ಅಧ್ಯಕ್ಷ ಸೂರ್ಯಕಾಂತ್, ಮುಖಂಡರಾದ ಲಖನ್ ಮಹಾಜನ್, ಪ್ರಭು, ಕಾಸಿಬಾಯಿ ಹುಣಸಗೇರಾ, ಕಂಟೆಪ್ಪಾ, ಶ್ರೀಮಂತ್, ಶಶಿಕಲಾ, ಹುಸೈನ್, ಗಣಪತಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕಸಬಾ ಬೆಂಗರೆಯ ನೌಮಾನ್ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದಿಂದ ಹಲವು ಬಾರಿ ವಾರೆಂಟ್ ಹೊರಡಿಸಿದರೂ ಹಾಜರಾಗದೆ ಕಳೆದ 5 ವರ್ಷದಿಂದ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಬೈಂದೂರು, ಎಸ್ಸೈ ಮಲ್ಲಿಕಾರ್ಜುನ ಬಿರಾದಾರ್ರ ಮಾರ್ಗದರ್ಶನಂತೆ ಹೆಡ್ಕಾನ್ಸ್ಟೇಬಲ್ ಬಾಲಕೃಷ್ಣ, ಕಾನ್ಸ್ಟೇಬಲ್ಗಳಾದ ಚಂದ್ರಶೇಖರ, ರಾಘವೇಂದ್ರ ಎಚ್.ಎಂ. ಮಂಗಳವಾರ ಉಪ್ಪಳ ಸಮೀಪದ ಕೈಕಂಬ ಎಂಬಲ್ಲಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ
ಮೈಸೂರು: ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಿಹಿಸುದ್ದಿ ನೀಡಿದ್ದಾರೆ. ವಿಧಾನ ಪರಿಷತ್ನ ನೂತನ ಸದಸ್ಯ ಕೆ.ಶಿವಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಿವೃತ್ತ ನೌಕರರ ಪಿಂಚಣಿ ನೀಡಲು ಅನುದಾನ ಬಿಡುಗಡೆ ಜೊತೆಗೆ ಮೈಸೂರು ವಿವಿ ಸರಿಪಡಿಸಲು ವಿಶೇಷ ಗಮನ
ಶುಭಮನ್ ಗಿಲ್ ಅಥವಾ ಅಭಿಷೇಕ್ ಶರ್ಮಾ? ಯಾರು ಶ್ರೇಷ್ಠ ಎಂದು ಕೇಳಿದ್ದಕ್ಕೆ ಯುವರಾಜ್ ಸಿಂಗ್ ಅಚ್ಚರಿಯ ಉತ್ತರ!
Yuvraj Singh On Shubman Gill And Abhishek Sharma- ಯಾವುದೇ ಗುರುವಿನಲ್ಲಿ ನಿಮ್ಮ ಇಬ್ಬರು ಶಿಷ್ಯಂದಿರಲ್ಲಿ ಯಾರು ಶ್ರೇಷ್ಠ ಎಂದು ಪ್ರಶ್ನಿಸಿದರೆ ಉತ್ತರಿಸುವುದು ಕಷ್ಟ. ಇನ್ನು ಯುವರಾಜ್ ಸಿಂಗ್ ಗಂತೂ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರು ಇಬ್ಬರು ಕಣ್ಣುಗಳಿದ್ದಂತೆ. ಆದರೂ ಈ ಪ್ರಶ್ನೆಗೆ ಯುವರಾಜ್ ಸಿಂಗ್ ಅವರು ಬಹಳ ಜಾಣ್ಮೆಯಿಂದ ಉತ್ತರ ನೀಡಿದ್ದಾರೆ. ಇಬ್ಬರು ಶಿಷ್ಯಂದಿರ ಪ್ಲಸ್ ಪಾಯಿಂಟ್ ಗಳನ್ನು ವಿವರಿಸಿದ್ದಾರೆ. ಇಬ್ಬರಲ್ಲಿ ಶುಭಮನ್ ಗಿಲ್ ಯಾಕೆ ಒಂದು ಹೆಜ್ಜೆ ಮುಂದಿದ್ದಾರೆ ಎಂಬುದನ್ನೂ ವಿವರಿಸಿದ್ದಾರೆ.

25 C