ಡೇವಿಡ್ ಮಿಲ್ಲರ್ | Photo Credit ; PTI ಹೊಸದಿಲ್ಲಿ, ಎ.9: ರನ್ ಚೇಸ್ ವೇಳೆ ಬ್ಯಾಟಿಂಗ್ ಮಾಡುವುದು ಕ್ರಿಕೆಟಿನ ಅತ್ಯಂತ ಕಠಿಣ ಗುರಿಗಳ ಪೈಕಿ ಒಂದಾಗಿದೆ. ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ವಿಶ್ವಶ್ರೇಷ್ಠ ಎಂದು ಪರಿಗಣಿಸಲಾಗುತ. ರನ್ ಚೇಸ್ ವೇಳೆ ಮನಸ್ಸಿನಲ್ಲಿ ಬರುವ ಮೊದಲ ಹೆಸರು ‘ಚೇಸ್ಮಾಸ್ಟರ್’ ವಿರಾಟ್ ಕೊಹ್ಲಿ. ಚೇಸಿಂಗ್ ವೇಳೆ ಭಾರತದ ದಿಗ್ಗಜ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ರನ್ಗಳ ರಾಶಿ ಹಾಕಿದ್ದಾರೆ. ಇದಕ್ಕೆ ಐಪಿಎಲ್ ಕೂಡ ಹೊರತಾಗಿಲ್ಲ. ಈ ಲೀಗ್ನಲ್ಲಿ ಕೊಹ್ಲಿ 125 ಇನಿಂಗ್ಸ್ಗಳ ಪೈಕಿ 4,027 ರನ್ ಗಳಿಸಿದ್ದಾರೆ. ಆದರೆ ಚೇಸಿಂಗ್ನಲ್ಲಿ ಉತ್ತಮ ಸರಾಸರಿಯ ವಿಚಾರದಲ್ಲಿ ಕೊಹ್ಲಿ 231 ಬ್ಯಾಟರ್ಗಳ ಪೈಕಿ ಟಾಪ್-5ರಲ್ಲೂ ಸ್ಥಾನ ಪಡೆದಿಲ್ಲ. ಆರ್ಸಿಬಿಯ ಸ್ಟಾರ್ ಬ್ಯಾಟರ್ 41.51ರ ಸರಾಸರಿಯಲ್ಲಿ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ಡೇವಿಡ್ ಮಿಲ್ಲರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಮಿಲ್ಲರ್ 67 ಇನಿಂಗ್ಸ್ಗಳಲ್ಲಿ 49.08ರ ಸರಾಸರಿಯಲ್ಲಿ, 142.54ರ ಸ್ಟ್ರೈಕ್ರೇಟ್ನಲ್ಲಿ 12 ಅರ್ಧಶತಕ ಹಾಗೂ ಒಂದು ಶತಕದ ಸಹಿತ ಒಟ್ಟು 1,816 ರನ್ ಗಳಿಸಿದ್ದಾರೆ. ಮಿಲ್ಲರ್ ಅವರ ಡೆಲ್ಲಿ ಕ್ಯಾಪಿಟಲ್ಸ್ ಸಹ ಆಟಗಾರ ಕೆ.ಎಲ್.ರಾಹುಲ್ ಗುಜರಾತ್ ವಿರುದ್ಧ 92 ರನ್ ಗಳಿಸಿದ್ದು ವ್ಯರ್ಥವಾಗಿದ್ದರೂ, 66 ಇನಿಂಗ್ಸ್ಗಳಲ್ಲಿ 47.92ರ ಸರಾಸರಿಯಲ್ಲಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರಾಹುಲ್ 138.22ರ ಸ್ಟ್ರೈಕ್ರೇಟ್ನಲ್ಲಿ 25 ಅರ್ಧಶತಕಗಳ ಸಹಿತ ಒಟ್ಟು 2,636 ರನ್ ಗಳಿಸಿದ್ದಾರೆ. ಕೊಹ್ಲಿ ಅವರ ಆರ್ಸಿಬಿಯ ಸಹ ಆಟಗಾರ ಫಿಲ್ ಸಾಲ್ಟ್ ಕೇವಲ 16 ಇನಿಂಗ್ಸ್ನಲ್ಲಿ 46.92ರ ಸರಾಸರಿಯೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಾಲ್ಟ್ ಅವರು ಎಂಟು ಅರ್ಧಶತಕಗಳ ಸಹಿತ 178.04ರ ಸರಾಸರಿಯಲ್ಲಿ ಒಟ್ಟು 657 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ಮಾಜಿ ಬ್ಯಾಟರ್ ಲೆಂಡ್ಲ್ ಸಿಮೊನ್ಸ್ 46.22ರ ಸರಾಸರಿಯಲ್ಲಿ 11 ಇನಿಂಗ್ಸ್ಗಳಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳ ಸಹಿತ ಒಟ್ಟು 416 ರನ್ ಗಳಿಸಿದ್ದಾರೆ. ಸಾಯಿ ಸುದರ್ಶನ್ 22 ಇನಿಂಗ್ಸ್ಗಳಲ್ಲಿ 45.40ರ ಸರಾಸರಿಯಲ್ಲಿ 141.43ರ ಸ್ಟ್ರೈಕ್ರೇಟ್ನಲ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳ ಸಹಿತ ಒಟ್ಟು 908 ರನ್ ಗಳಿಸಿದ್ದಾರೆ.
Photo Credit : @DDNewslive ಹೊಸದಿಲ್ಲಿ, ಎ.9: ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚು ಸಹಿತ ಒಟ್ಟು 10 ಪದಕಗಳನ್ನು ಗೆದ್ದಿರುವ ಭಾರತೀಯ ಮಹಿಳಾ ತಂಡವು 2026ರ ಆವೃತ್ತಿಯ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಮುಖ್ಯ ಕೋಚ್ ಸ್ಯಾಂಟಿಯಾಗೊ ನೀವಾ ಮಾರ್ಗದರ್ಶನದಲ್ಲಿ ಮಹಿಳೆಯರ ತಂಡದ ಪ್ರತಿ ಸದಸ್ಯನೂ ಪದಕದೊಂದಿಗೆ ಸ್ವದೇಶಕ್ಕೆ ವಾಪಸಾಗಿದ್ದಾರೆ. ಈ ಮೂಲಕ ಉಪಖಂಡದ ಸ್ಪರ್ಧಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದ ಬಾಕ್ಸಿಂಗ್ ಒಕ್ಕೂಟದ ಅಧ್ಯಕ್ಷ ಅಜಯ್ ಸಿಂಗ್ ಉಪಸ್ಥಿತಿಯಲ್ಲಿ ಮೀನಾಕ್ಷಿ ಹೂಡಾ (48 ಕೆಜಿ)ಮಂಗೋಲಿಯದ ನೊಮುಂದಾರಿ ಅವರನ್ನು 5-0 ಅಂತರದಿಂದ ಮಣಿಸಿ ದಿನದ ಮೊದಲ ಚಿನ್ನದ ಪದಕ ತನ್ನದಾಗಿಸಿಕೊಂಡರು. ಪ್ರೀತಿ ಪವಾರ್(54ಕೆಜಿ)ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ್ದು, ಮೂರು ಬಾರಿಯ ವಿಶ್ವ ಚಾಂಪಿಯನ್ ಹಾಗೂ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಚೈನೀಸ್ ತೈಪೆಯ ಹುಯಾಂಗ್ ಸಿಯಾವೊ-ವೆನ್ರನ್ನು 5-0 ಒಮ್ಮತದ ತೀರ್ಪಿನಲ್ಲಿ ಸೋಲುಣಿಸಿ ಅಗ್ರ ಸ್ಥಾನ ಪಡೆದರು. ಪ್ರಿಯಾ(60 ಕೆಜಿ)ಫೈನಲ್ನಲ್ಲಿ ಉತ್ತರ ಕೊರಿಯಾದ ವನ್ ಯುನ್-ಗಿಯೊಂಗ್ರನ್ನು 3-0 ಅಂತರದಿಂದ ಮಣಿಸಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟರು. ಅರುಂಧತಿ ಚೌಧರಿ(70 ಕೆಜಿ)ಕಝಕ್ಸ್ತಾನದ ಬಕಿತ್ ಸೆಡಿಶ್ರನ್ನು 4-1 ಅಂತರದಿಂದ ಮಣಿಸಿ ಗಮನ ಸೆಳೆದರು. ಭಾರತವು ತನ್ನ ಪದಕದ ಖಾತೆಗೆ ಇನ್ನೂ ಎರಡು ಬೆಳ್ಳಿ ಪದಕಗಳನ್ನು ಜಮೆ ಮಾಡಿತು. ಜಾಸ್ಮಿನ್ ಲಾಂಬೋರಿಯಾ (57ಕೆಜಿ)ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಫೈನಲ್ನಲ್ಲಿ ಥಾಯ್ಲೆಂಡ್ನ ಪುನ್ರವೀ ರುಯೆನ್ರೋಸ್ ವಿರುದ್ಧ 0-5 ಅಂತರದಿಂದ ಸೋಲನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಲಿಫಿಯಾನ್ ಪಠಾಣ್(80+ಕೆಜಿ)ಕೂಡ ಕಝಕ್ಸ್ತಾನದ ದಿನಾ ಇಸ್ಲಾಮ್ಬೆಕೋವಾ ವಿರುದ್ಧ 0-5 ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಪ್ರಸಕ್ತ ಚಾಂಪಿಯನ್ಶಿಪ್ನಲ್ಲಿ ಎಲ್ಲ ದೇಶಗಳಿಗಿಂತ ಹೆಚ್ಚು ಪದಕಗಳನ್ನು(16)ದೃಢಪಡಿಸಿರುವ ಭಾರತವು ಪಂದ್ಯಾವಳಿಯಲ್ಲಿ ಶ್ರೇಷ್ಠ ಸಾಧನೆ ಮಾಡಲು ಎದುರು ನೋಡುತ್ತಿದೆ. ಶುಕ್ರವಾರ ಇನ್ನಿಬ್ಬರು ಪುರುಷರ ಬಾಕ್ಸರ್ಗಳು ಫೈನಲ್ನಲ್ಲಿ ಸೆಣಸಾಡಲಿದ್ದಾರೆ.
ಟಿ-20 ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಜಪಾನಿನ ನೂತನ ಸ್ಟೇಡಿಯಂ ಆತಿಥ್ಯ
ಸಾಂದರ್ಭಿಕ ಚಿತ್ರ | Photo Credit :freepik ಟೋಕಿಯೊ, ಎ.9: ಈ ವರ್ಷದ ಏಶ್ಯನ್ ಗೇಮ್ಸ್ಗಾಗಿ ನಿರ್ಮಿಸಲಾಗಿರುವ ಜಪಾನಿನ ಹೊಸ ಕ್ರಿಕೆಟ್ ಕ್ರೀಡಾಂಗಣವು ಮುಂದಿನ ತಿಂಗಳು ಮೊದಲ ಬಾರಿ ಪುರುಷರ ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲಿದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ತಿಳಿಸಿದೆ. ಬೇಸ್ಬಾಲ್ ಅಭಿಮಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಜಪಾನ್ನಲ್ಲಿ ಸೆಪ್ಟಂಬರ್ 19ರಿಂದ ಅಕ್ಟೋಬರ್ 4ರ ತನಕ ನಗೋಯಾ ಹಾಗೂ ಐಚಿ ಪ್ರದೇಶದಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ಗಾಗಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲಾಗಿದೆ. ನಗೋಯಾ ಹೊರವಲಯದ ನಿಶಿನ್ನಲ್ಲಿರುವ ಹೊಸ ಮೈದಾನವು ಮೇ 8ರಿಂದ 18ರ ವರೆಗೆ 2028ರ ಪುರುಷರ ಟಿ-20 ವಿಶ್ವಕಪ್ಗಾಗಿ ಪೂರ್ವ ಏಶ್ಯ-ಪೆಸಿಫಿಕ್ ಅರ್ಹತಾ ಪಂದ್ಯಗಳನ್ನು ಆಯೋಜಿಸಲಿದೆ. ಅತಿದೊಡ್ಡ ಪೂರ್ವ ಏಶ್ಯ-ಫೆಸಿಫಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಒಂಭತ್ತು ತಂಡಗಳು ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೆ ಅರ್ಹತೆ ಪಡೆಯಲು ಹೋರಾಡಲಿವೆ. ಟೋಕಿಯೊದಿಂದ ಸುಮಾರು 100 ಕಿ.ಮೀ.ದೂರದಲ್ಲಿರುವ ಸ್ಯಾನೊದಲ್ಲಿರುವ ಜಪಾನ್ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಚೇರಿಯ ಮೈದಾನದಲ್ಲೂ ಪಂದ್ಯಗಳು ನಡೆಯಲಿವೆ. ಪೂರ್ವ ಏಶ್ಯ-ಪೆಸಿಫಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಆತಿಥೇಯ ಜಪಾನ್ ಜೊತೆಗೆ ಕುಕ್ ದ್ವೀಪಗಳು, ಫಿಜಿ, ಇಂಡೋನೇಶ್ಯ, ಪಪುವಾ ನ್ಯೂ ಗಿನಿ, ಫಿಲಿಪ್ಪೈನ್ಸ್, ದಕ್ಷಿಣ ಕೊರಿಯಾ, ಸಮೋವಾ ಹಾಗೂ ವನವಾಟು ತಂಡಗಳು ಭಾಗವಹಿಸಲಿವೆ.
ನಿಧಾನಗತಿಯ ಬೌಲಿಂಗ್| ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ಗೆ 12 ಲಕ್ಷ ರೂ.ದಂಡ
Photo Credit : PTI ಹೊಸದಿಲ್ಲಿ,ಎ.9: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಐಪಿಎಲ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವುದಕ್ಕೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಗುಜರಾತ್ ತಂಡವು ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಒಂದು ರನ್ನಿಂದ ರೋಚಕ ಜಯ ದಾಖಲಿಸಿತ್ತು. ಈ ಮೂಲಕ ಈ ವರ್ಷದ ಐಪಿಎಲ್ನಲ್ಲಿ ಮೊದಲ ಗೆಲುವು ಪಡೆದಿತ್ತು. ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಟಾಟಾ ಐಪಿಎಲ್ ಟೂರ್ನಿಯ 14ನೇ ಪಂದ್ಯದ ವೇಳೆ ಗುಜರಾತ್ ಟೈಟಾನ್ಸ್ ತಂಡವು ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ನಂತರ ಆ ತಂಡದ ನಾಯಕ ಶುಭಮನ್ ಗಿಲ್ಗೆ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ 2.22ರ ಅಡಿಯಲ್ಲಿ ಈ ವರ್ಷ ಗುಜರಾತ್ ತಂಡ ಎಸಗಿರುವ ಮೊದಲ ತಪ್ಪು ಇದಾಗಿದೆ. ಹೀಗಾಗಿ ಗಿಲ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಸಲಹೆಗಾರ ಹೇಳಿದ್ದಾರೆ. ಗೆಲ್ಲಲು 210 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಕೇವಲ ಒಂದು ರನ್ ಅಂತರದಿಂದ ಸೋಲನುಭವಿಸಿತು. ಗುಜರಾತ್ ಟೈಟಾನ್ಸ್ ತಂಡವು ಲಕ್ನೊದಲ್ಲಿ ರವಿವಾರ ನಡೆಯಲಿರುವ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಎದುರಿಸಲಿದೆ. ಶನಿವಾರ ಚೆನ್ನೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಖಾಮುಖಿಯಾಗಲಿದೆ.
IPL- 2026| ರಾಜಸ್ಥಾನ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲಿಗೆ ಬೌಲರ್ಗಳು ಕಾರಣ: ಹಾರ್ದಿಕ್ ಪಾಂಡ್ಯ
PC | ndtv ಗುವಾಹಟಿ, ಎ. 8: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು ಸೋತಿರುವುದಕ್ಕೆ ಬೌಲರ್ಗಳು ಕಾರಣ ಎಂದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ತಂಡದ ಬೌಲರ್ಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ನಿರ್ವಹಣೆಯ ಮಟ್ಟವನ್ನು ಹೆಚ್ಚಿಸುವ ಅಗತ್ಯವಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು 27 ರನ್ಗಳಿಂದ ಸೋತ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅಮೋಘ ಫಾರ್ಮ್ನಲ್ಲಿದ್ದು, ಮುಂಬೈ ಬೌಲರ್ಗಳನ್ನು ಚಿಂದಿ ಉಡಾಯಿಸಿದ್ದಾರೆ. ತಲಾ 11 ಓವರ್ಗಳ ಇನಿಂಗ್ಸ್ನ ಪಂದ್ಯದಲ್ಲಿ ಜೈಸ್ವಾಲ್ 32 ಎಸೆತಗಳಲ್ಲಿ 77 ರನ್ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್ಗಳನ್ನು ಸಿಡಿಸಿದರು. ರಾಜಸ್ಥಾನ ರಾಯಲ್ಸ್ 11 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ 150 ರನ್ ಗಳಿಸಿತು. ಗೆಲ್ಲಲು ಹನ್ನೊಂದು ಓವರ್ಗಳಲ್ಲಿ 151 ರನ್ಗಳನ್ನು ಗಳಿಸುವ ಗುರಿಯನ್ನು ಪಡೆದ ಮುಂಬೈ ಇಂಡಿಯನ್ಸ್ಗೆ 9 ವಿಕೆಟ್ಗಳ ನಷ್ಟಕ್ಕೆ 123 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಮುಂಬೈ ಇಂಡಿಯನ್ಸ್ ಆರಂಭಿಕರಾದ ರಯಾನ್ ರಿಕಲ್ಟನ್ (8) ಮತ್ತು ರೋಹಿತ್ ಶರ್ಮಾ (5) ರನ್ಗಳನ್ನು ಕೂಡಿಸುವಲ್ಲಿ ವಿಫಲರಾದರು. ಸೂರ್ಯಕುಮಾರ್ ಯಾದವ್ ಕೇವಲ 6 ರನ್ಗಳ ದೇಣಿಗೆ ನೀಡಿದರು. ತಿಲಕ್ ವರ್ಮಾ 14 ಮತ್ತು ನಾಯಕ ಹಾರ್ದಿಕ್ ಪಾಂಡ್ಯ 9 ರನ್ಗಳನ್ನು ಗಳಿಸಿದರು. ತಂಡಕ್ಕೆ ಆಧಾರವನ್ನು ಒದಗಿಸಿದ್ದು ನಮನ್ ಧೀರ್ (13 ಎಸೆತಗಳಲ್ಲಿ 25 ರನ್) ಮತ್ತು ಶರ್ಫೇನ್ ರುದರ್ಫೋರ್ಡ್ (8 ಎಸೆತಗಳಲ್ಲಿ 25 ರನ್). ಉಳಿದ ಬ್ಯಾಟರ್ಗಳು ವಿಫಲವಾದರು. ರಾಜಸ್ಥಾನ ರಾಯಲ್ಸ್ ಪರವಾಗಿ ನ್ಯಾಂಡ್ರಿ ಬರ್ಗರ್, ಸಂದೀಪ್ ಶರ್ಮಾ ಮತ್ತು ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ಗಳನ್ನು ಉರುಳಿಸಿದರು. ಯಶಸ್ವಿ ಜೈಸ್ವಾಲ್ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. ಇದು ಮುಂಬೈ ಇಂಡಿಯನ್ಸ್ನ ಸತತ ಎರಡನೇ ಸೋಲಾಗಿದೆ. ಈ ಪಂದ್ಯದಲ್ಲಿ ಬ್ಯಾಟರ್ಗಳ ತಪ್ಪಿಲ್ಲ ಎಂದು ಹೇಳಿದ ಹಾರ್ದಿಕ್ ಪಾಂಡ್ಯ, ಬೌಲರ್ಗಳು ತಮ್ಮ ಯೋಜನೆಗಳನ್ನು ಜಾರಿಗೊಳಿಸಲು ವಿಫಲರಾದರು ಎಂದು ದೂರಿದರು. ಮುಂಬೈ ಇಂಡಿಯನ್ಸ್ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೋಲ್ಟ್, ಶಾರ್ದುಲ್ ಠಾಕೂರ್ ಮತ್ತು ದೀಪಕ್ ಚಾಹರ್ ದುಬಾರಿಯಾದರು.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಚುನಾವಣೆಯಲ್ಲಿ ಅಕ್ರಮ: ತನಿಖಾ ಸಮಿತಿ ವರದಿ
ಢಾಕಾ, ಎ. 8: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಗೆ ಕಳೆದ ವರ್ಷದ ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ, ಪಕ್ಷಪಾತ ಮತ್ತು ಬಲವಂತ ನಡೆದಿರುವ ಬಗ್ಗೆ ಬಾಂಗ್ಲಾದೇಶ ಸರಕಾರದ ತನಿಖಾ ಸಮಿತಿಯೊಂದು ಪುರಾವೆಗಳನ್ನು ಸಂಗ್ರಹಿಸಿದೆ. ಮಾಜಿ ನ್ಯಾಯಾಧೀಶ ಎ.ಕೆ.ಎಮ್. ಅಸಾದುಝಮಾನ್ ನೇತೃತ್ವದ ಐವರು ಸದಸ್ಯರ ಸಮಿತಿಯೊಂದು ತನ್ನ ವರದಿಯನ್ನು ರವಿವಾರ ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಿದೆ. ಬಿಸಿಬಿಯ ಉನ್ನತ ಅಧಿಕಾರಿಗಳು ತನಿಖೆಗೆ ಸಹಕಾರ ನೀಡಿಲ್ಲ ಎಂಬುದಾಗಿಯೂ ಸಮಿತಿ ಆರೋಪಿಸಿದೆ. ಬಿಸಿಬಿ ಅಧಿಕಾರಿಗಳು ಮತ್ತು ಕ್ರೀಡಾ ಸಚಿವಾಲಯದಲ್ಲಿರುವ ವ್ಯಕ್ತಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ನಡೆದ ಅವ್ಯವಹಾರಗಳಲ್ಲಿ ಶಾಮೀಲಾಗಿದ್ದಾರೆ ಎಂದು ಸಮಿತಿ ಹೇಳಿದೆ. ಎನ್ಎಸ್ಸಿ ಕ್ರೀಡಾ ನಿರ್ದೇಶಕ ಮುಹಮ್ಮದ್ ಅಮೀನುಲ್ ಎಹಸಾನ್ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಸರಕಾರದ ವರದಿಯನ್ನು ಓದಿ ಹೇಳಿದರು. ಅಮೀನುಲ್ ನೇತೃತ್ವದ ಬಿಸಿಬಿ ಮಂಡಳಿಯನ್ನು ವಿಸರ್ಜಿಸಲು ಸಾಕಷ್ಟು ಆಧಾರಗಳಿವೆ ಎಂದು ಎಹಸಾನ್ ಹೇಳಿದರು. ಹನ್ನೊಂದು ಸದಸ್ಯರ ನೂತನ ವಿಶೇಷ ಸಮಿತಿಯೊಂದು ಮುಂದಿನ ಮೂರು ತಿಂಗಳ ಕಾಲ ಬಿಸಿಬಿಯ ಆಡಳಿತವನ್ನು ನೋಡಿಕೊಳ್ಳುತ್ತದೆ ಎಂದು ಅವರು ಪ್ರಕಟಿಸಿದರು. ನೂತನ ವಿಶೇಷ ಸಮಿತಿಯ ಅಧ್ಯಕ್ಷರಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ರನ್ನು ನೇಮಿಸಲಾಗಿದೆ. ಹಿಂದಿನ ಅಧ್ಯಕ್ಷ ಅಮೀನುಲ್ ಬಿಸಿಬಿ ಅಧ್ಯಕ್ಷರಾಗಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಾಗಿ ಚುನಾವಣೆ ನಡೆಯುವ ನಾಲ್ಕು ವಾರಗಳ ಮೊದಲು ತಮೀಮ್ ಆರೋಪಿಸಿದ್ದರು.
ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್| 10ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಭಾರತೀಯ ಜೋಡಿ
ಪಾಲಕ್ , ಮುಕೇಶ್ ನೆಲವಳ್ಳಿ | Photo Credit : X ಗ್ರೆನಾಡ, ಎ. 7: ಸ್ಪೇನ್ನ ಗ್ರೆನಾಡದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಮಂಗಳವಾರ ಭಾರತದ ಪಾಲಕ್ ಮತ್ತು ಮುಕೇಶ್ ನೆಲವಳ್ಳಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ನೂತನ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಭಾರತೀಯ ಜೋಡಿಯು ಒಟ್ಟು 487.7 ಅಂಕಗಳನ್ನು ಗಳಿಸಿ ಅಗ್ರ ಸ್ಥಾನ ಪಡೆಯಿತು. ಇದು ಜೂನಿಯರ್ ವಿಶ್ವ ದಾಖಲೆಯೂ ಆಗಿದೆ. ಫೈನಲ್ನಲ್ಲಿ ಪಾಲಕ್ 243.0 ಅಂಕಗಳನ್ನು ಗಳಿಸಿದರೆ, ಮುಕೇಶ್ 244.7 ಅಂಕಗಳನ್ನು ತನ್ನದಾಗಿಸಿಕೊಂಡರು. ಅರ್ಹತಾ ಸುತ್ತಿನಲ್ಲಿಯೂ ಈ ಜೋಡಿಯು ಅತ್ಯುತ್ತಮ ನಿರ್ವಹಣೆಯನ್ನು ನೀಡಿತು. 581-17x ಅಂಕದೊಂದಿಗೆ ಪದಕ ಸುತ್ತಿಗೆ ಸೇರ್ಪಡೆಗೊಂಡಿತು. ಅರ್ಹತಾ ಸುತ್ತಿನಲ್ಲಿ ಪಾಲಕ್ ಮತ್ತು ಮುಕೇಶ್ ಎರಡನೇ ಸ್ಥಾನದಲ್ಲಿದ್ದರು. ಚೀನಾವು 586-23x ಅಂಕದೊಂದಿಗೆ ಅಗ್ರ ಸ್ಥಾನದಲ್ಲಿತ್ತು. ಫೈನಲ್ನಲ್ಲಿ, ಚೀನಾದ ಕಿಯನ್ಕ್ಸುನ್ ಯಾವೊ ಮತ್ತು ಕಾಯ್ ಹು 484.8 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, ಹಂಗೇರಿಯ ವೆರೋನಿಕಾ ಮೇಜರ್ ಮತ್ತು ಅಕೋಸ್ ಕರೋಲಿ ನೇಗಿ 414.9 ಅಂಕಗಳೊಂದಿಗೆ ಕಂಚು ಪಡೆದರು.

33 C