ನನ್ನ ಖಾಸಗಿ ಸಂಭಾಷಣೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಬಿ.ಆರ್. ಪಾಟೀಲ್
ಬೆಂಗಳೂರು: ಸಿದ್ದರಾಯ್ಯ ಅವರು ಲಕ್ಕಿ ಲಾಟರಿ ಹೊಡೆದು ಸಿಎಂ ಆದರು ಎಂಬ ತಮ್ಮ ಹೇಳಿಕೆ ಬಗ್ಗೆ ಆಳಂದ ಕ್ಷೇತ್ರದ ಶಾಸಕ ಬಿ. ಆರ್ ಪಾಟೀಲ್ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ನನ್ನ ಖಾಸಗಿ ಸಂಭಾಷಣೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕೆ. ಆರ್ ಪೇಟೆಯಲ್ಲಿ ಸ್ನೇಹಿತರೊಬ್ಬರ ಜೊತೆ ಮಾತನಾಡುವಾಗ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದೆ. ಸಿದ್ದರಾಯ್ಯ ಅವರು ಲಕ್ಕಿ ಲಾಟರಿ ಎದ್ದು ಸಿಎಂ ಆದರು ಅಂತ ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ತಿರುಚಿ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಎಂದರು. ಸಿದ್ದರಾಮಯ್ಯ ಅವರಿಗೆ ನಾನೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಸಿದ್ದು ಅನ್ನೋದು ಸಂಪೂರ್ಣ ತಪ್ಪು. ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವಾಗ ನಾನೂ ಹೋಗಿದ್ದೆ. ಸಿದ್ದರಾಮಯ್ಯ ಅವರು ಈ ಸಲ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡೋದು ಬೇಡ ಅಂತಿದ್ರು. ಆದರೆ ನಾನೇ ಭೇಟಿ ಮಾಡುವಂತೆಒತ್ತಾಯ ಮಾಡಿದಾಗ ಹೋಗಿದ್ದಾರೆ ಎಂದು ಹೇಳಿದರು. ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ನಾವು 9 ಮಂದಿ ಶಾಕರು ಜೆಡಿಎಸ್ ಬಿಟ್ಟು ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದೇವೆ. ಕಾಂಗ್ರೆಸ್ ಕೂಡ ಅವರಿಗಿರುವ ಜನ ಬೆಂಬಲ ನೋಡಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ ಹೊರತು ನಾವು ಹೇಳಿದ್ದರಿಂದ ಮಾಡಿಲ್ಲ. ನನಗಂತೂ ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ಈ ಮಧ್ಯೆ ನಮ್ಮ ನಡುವಿನ ಆತ್ಮೀಯ ಸಂಬಂಧವನ್ನು ಹಾಳು ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.