SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

...

ಗ್ರಾಮ ಪಂಚಾಯಿತಿ ತೆರಿಗೆ ಸಂಗ್ರಹ ಶೇ.71.39ರಷ್ಟು ಪ್ರಗತಿ : ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ Priyank Kharge ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 2025-26ನೆ ಸಾಲಿನಲ್ಲಿ ಫೆ. 18ರವರೆಗೆ ಶೇ.71.39ರಷ್ಟು ತೆರಿಗೆ ಸಂಗ್ರಹವಾಗಿದ್ದು, ಈ ವರ್ಷಾಂತ್ಯಕ್ಕೆ ಗುರಿ ತಲುಪುವ ಸಾಧ್ಯತೆಗಳು ನಿಚ್ಛಳವಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರು ಅವರು, ಪ್ರಸಕ್ತ ಸಾಲಿನ ಬಾಕಿಯನ್ನು ಮಾರ್ಚ್ ಅಂತ್ಯದೊಳಗೆ ವಸೂಲಾತಿ ಮಾಡಿ ಪ್ರಗತಿ ಸಾಧಿಸಲಾಗುವುದು. ಹಿಂದಿನ ಸಾಲುಗಳ ತೆರಿಗೆ ಬಾಕಿ 3352.4 ಕೋಟಿ ರೂ.ಗಳಿದ್ದು ಆಸ್ತಿ ವರ್ಗೀಕರಣವಾರು ತೆರಿಗೆ ಬಾಕಿ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ 5 ವರ್ಷಗಳಲ್ಲಿ ತೆರಿಗೆ ಬೇಡಿಕೆ ದ್ವಿಗುಣವಾಗಿದ್ದು, ತೆರಿಗೆ ವಸೂಲಾತಿಯ ಮೊತ್ತ ಕೂಡ ಹೆಚ್ಚಳವಾಗಿದೆ. ಆದುದರಿಂದ, 2024-25ನೆ ಸಾಲಿನಲ್ಲಿ ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಆಂದೋಲನಗಳನ್ನು ವಿನೂತನವಾಗಿ ಹಮ್ಮಿಕೊಂಡು ಮಾಹಿತಿ, ಶಿಕ್ಷಣ, ಸಂವಹನದ  ಮೂಲಕ ಹಾಗೂ ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಮ್, ಫೇಸ್ ಬುಕ್, ಎಕ್ಸ್-ಘಿ, ವೃತ್ತ ಪತ್ರಿಕೆಗಳು ಇತರೆ ಮಾಧ್ಯಮಗಳ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿ ಬಗ್ಗೆ, ವಿನಾಯಿತಿಗಳ ಬಗ್ಗೆ ಸಾಕಷ್ಟು ಪ್ರಚಾರಗಳನ್ನು ಮಾಡಿ, ತೆರಿಗೆ ವಸೂಲಾತಿ ಹೆಚ್ಚಳಕ್ಕೆ ಕ್ರಮವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ವಿಜಯನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 137 ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿರುವ ‘ವಿಶೇಷ ತೆರಿಗೆ ವಸೂಲಾತಿ ಅಭಿಯಾನ’ದಲ್ಲಿ ಒಟ್ಟು 3.07 ಕೋಟಿ ರೂ. ಗಳಷ್ಟು ತೆರಿಗೆ ವಸೂಲಾತಿ ಮಾಡಲಾಗಿದೆ. ಯಾದಗಿರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 122 ಗ್ರಾಮ ಪಂಚಾಯತಿಗಳಲ್ಲಿ ‘ಒಂದು ದಿನ ಆಸ್ತಿ ತೆರಿಗೆ ಅಭಿಯಾನ’ದಲ್ಲಿ ಒಟ್ಟು 3.12 ಕೋಟಿ ರೂ.ಗಳಷ್ಟು ತೆರಿಗೆಯನ್ನು ವಸೂಲಾತಿ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ತಾವಿರುವಲ್ಲಿಯೆ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಗಾಗಿ ಫೋನ್ ಪೆ, ಗೂಗಲ್ ಪೆ, , ಇಲಾಖೆಯ ‘ಬಾಪೂಜಿ ಸೇವಾ ಕೇಂದ್ರ’ಗಳ ಮೂಲಕ ತೆರಿಗೆ ಪಾವತಿ ಬಗ್ಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಆಸ್ತಿ ತೆರಿಗೆ ಸಂಬಂಧ ಪಾವತಿಸಬೇಕಾದ ತೆರಿಗೆಯ ವಿವರಗಳನ್ನು ವೀಕ್ಷಿಸಲು ಪಂಚಮಿತ್ರ ತಂತ್ರಾಂಶದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಗಳನ್ನು ನಿಡಿದ್ದಾರೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ವಾಸಿಸುವ ಜನರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಇತ್ಯಾದಿ ನಾಗರಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ, ಗ್ರಾಮ ಪಂಚಾಯಿತಿಗಳಿಗೆ ಇದು ಆರ್ಥಿಕವಾಗಿ ಹೊರೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸರಕಾರ ದೃಢನಿರ್ಧಾರ ತೆಗೆದುಕೊಂಡು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತಂದು, ಪ್ರಕರಣ 199ಬಿ ಹಾಗೂ 199ಸಿ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ತಿದ್ದುಪಡಿಯನ್ನು 2025ನೆ ಸಾಲಿನ ಎ.7ರಂದು ಅಧಿಸೂಚಿಸಲಾಗಿದೆ. ಅದರನ್ವಯ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು-2025 ಅನ್ನು ರೂಪಿಸಲಾಗಿದೆ. ಈ ನಿಯಮಗಳು 2025ನೆ ಸಾಲಿನ ಅ.17ರಿಂದ ಜಾರಿಗೆ ಬಂದಿದ್ದು, ತನ್ಮೂಲಕ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸಲು ಹಲವಾರು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇ-ಸ್ವತ್ತು ನಿಯಮಗಳನ್ವಯ 2.0 ತಂತ್ರಾಂಶವನ್ನು ಮಾರ್ಪಾಡು ಮಾಡಲಾಗಿದ್ದು ಕೆಲವು ತಾಂತ್ರಿಕ ತೊಡಕಗಳು ಉಂಟಾಗಿರುವುದು ಗಮನಕ್ಕೆ ಬಂದಿದೆ, ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದಿನ ಸಾಲುಗಳಿಗೆ ಹೋಲಿಸಿದರೆ ತೆರಿಗೆ ಬೇಡಿಕೆ ಮೊತ್ತ ಹಾಗೂ ವಸೂಲಾತಿ ಮೊತ್ತ ಹೆಚ್ಚಾಗಿದೆ ಎಂಬ ಅವರು ಮಾಹಿತಿ ನೀಡಿದ್ದಾರೆ. ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು, ಅದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಹಾಗೂ ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯಿತಿಗಳ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ‘ರಾಜ್ಯದ ಗ್ರಾ.ಪಂ.ವ್ಯಾಪ್ತಿಯಲ್ಲಿ 3 ವರ್ಷಗಳ ತೆರಿಗೆ ಬಾಕಿ ಹಾಗೂ ಸಂಗ್ರಹದ ವಿವರಗಳು: 2023-24ನೆ ಸಾಲಿನಲ್ಲಿ 1377.10 ಕೋಟಿ ರೂ. ತೆರಿಗೆ ಪೈಕಿ 764.20 ಕೋಟಿ ರೂ.ಸಂಗ್ರಹಿಸಲಾಗಿದ್ದು, 612.90 ಕೋಟಿ ರೂ.ಬಾಕಿಯಿದೆ. 2024-25ನೆ ಸಾಲಿನಲ್ಲಿ 1582.50 ಕೋಟಿ ರೂ.ತೆರಿಗೆ ಪೈಕಿ 1270.50 ಕೋಟಿ ರೂ.ಸಂಗ್ರಹಿಸಲಾಗಿದ್ದು, 312 ಕೋಟಿ ರೂ.ಬಾಕಿಯಿದೆ. 2025-26ನೆ ಸಾಲಿನಲ್ಲಿ(ಫೆ.18ರವರೆಗೆ) 1623.40 ಕೋಟಿ ರೂ.ತೆರಿಗೆ ಪೈಕಿ 1159.10 ಕೋಟಿ ರೂ.ಸಂಗ್ರಹಿಸಲಾಗಿದ್ದು, 464.30 ಕೋಟಿ ರೂ.ಬಾಕಿಯಿದೆ’ -ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವ

ವಾರ್ತಾ ಭಾರತಿ 19 Feb 2026 7:06 pm

ಬೆಂಗಳೂರಿನಲ್ಲಿ ‘ಹ್ಯುಮಾನಿಟಿ-ಫಸ್ಟ್ ಎಐ ಸಿಟಿ’ ನಿರ್ಮಾಣ ಯೋಜನೆ ಪ್ರಕಟಿಸಿದ Bharat1.AI

Image credits: Bharat1. AI ಬೆಂಗಳೂರು,ಫೆ.17: ಬೆಂಗಳೂರು ಮೂಲದ ಕೃತಕ ಬುದ್ಧಿಮತ್ತೆ (ಎಐ) ಮೂಲಸೌಕರ್ಯ ಕಂಪೆನಿ ಭಾರತ1.ಎಐ ನಗರದಲ್ಲಿ ‘ಹ್ಯುಮಾನಿಟಿ-ಫಸ್ಟ್ ಎಐ ಸಿಟಿ’ಯನ್ನು ನಿರ್ಮಿಸುವುದಾಗಿ ಮಂಗಳವಾರ ಪ್ರಕಟಿಸಿದೆ. ಇದು ವಾಸ್ತವಿಕ ಪರಿಸರಗಳಲ್ಲಿ ಮೂಲಭೂತ ಸ್ವಯಂ ಕ್ರಿಯಾಶೀಲ ಮತ್ತು ಭೌತಿಕ ಎಐ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಲು ವಿನ್ಯಾಸಗೊಳಿಸಲಾದ ನಗರ ಮಟ್ಟದ ಸಂಶೋಧನಾ ಮತ್ತು ಮೂಲಸೌಕರ್ಯ ಉಪಕ್ರಮವಾಗಿದೆ. ಮೊದಲ ಹಂತವು ಬಿ1 ಎ1 ಸೂಪರ್‌ಪಾರ್ಕ್ ಮೂಲಕ ರೂಪುಗೊಳ್ಳಲಿದೆ. ಬೆಂಗಳೂರಿನ ಸರ್ಜಾಪುರದಲ್ಲಿ ಐದು ಲಕ್ಷ ಚದರಡಿ ವಿಸ್ತೀರ್ಣದ ಎಐ ಸಂಶೋಧನೆ ಮತ್ತು ನವೀನತೆ ಕ್ಯಾಂಪಸ್ ನಿರ್ಮಾಣಗೊಳ್ಳಲಿದ್ದು, ಎಐ ಮಾಡೆಲ್ ಟ್ರೇನಿಂಗ್, ಫೈನ್ ಟ್ಯೂನಿಂಗ್ ಮತ್ತು ಇನ್ಫರನ್ಸ್ ಕಾರ್ಯಗಳನ್ನು ಸುಗಮವಾಗಿ ನಡೆಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಈ ವರ್ಷದ ಅಂತ್ಯದ ವೇಳೆಗೆ ಎಐ ಸ್ಟಾರ್ಟ್‌ಅಪ್‌ಗಳು, ವಿವಿಗಳು, ಎಐ ಸಂಶೋಧನಾ ಲ್ಯಾಬ್‌ಗಳು ಮತ್ತು ದೊಡ್ಡ ಜಾಗತಿಕ ಮತ್ತು ಭಾರತೀಯ ಕಂಪನಿಗಳ 10,000ಕ್ಕೂ ಅಧಿಕ ಎಐ ಸಂಶೋಧಕರು ಮತ್ತು ಎಐ ಆವಿಷ್ಕಾರಿಗಳಿಗೆ ‘ಪ್ಲಗ್ ಆ್ಯಂಡ್ ಪ್ಲೇ’ ಸ್ಥಳಾವಕಾಶವನ್ನು ಒದಗಿಸಲಿದೆ ಎಂದು ಸಂಸ್ಥೆಯು ಎಐ ಶೃಂಗಸಭೆಯಲ್ಲಿ ಪ್ರಕಟಿಸಿದೆ. ಈ ಸೂಪರ್‌ಪಾರ್ಕ್ ಐರಾವತ ಸಂಶೋಧನಾ ಪ್ರತಿಷ್ಠಾನ (ಐಐಟಿ ಕಾನ್ಪುರ), ಸ್ಪಾರ್ಕ್(ಸುರಕ್ಷತೆ,ಗೋಪ್ಯತೆ ಮತ್ತು ಎಐ ಸಂಶೋಧನಾ ಕೇಂದ್ರ,ಐಐಎಸ್‌ಸಿ),ವಾಧ್ವಾನಿ ಸ್ಕೂಲ್ ಆಫ್ ಎಐ ಆ್ಯಂಡ್ ಇಂಟಲಿಜೆಂಟ್ ಸಿಸ್ಟಮ್ಸ್ (ಐಐಟಿ ಕಾನ್ಪುರ),ಬಿಟ್ಸ್ ಪಿಲಾನಿ, ಐಎಸ್‌ಪಿಐರ್‌ಟಿ ಫೌಂಡೇಷನ್ ಮತ್ತು ಐಐಟಿ ರೋಪಾರ್ ಸೇರಿದಂತೆ ಪ್ರಮುಖ ಭಾರತೀಯ ಸಂಸ್ಥೆಗಳನ್ನು ಆರಂಭಿಕ ಮೂಲಭೂತ ಪಾಲುದಾರರನ್ನಾಗಿಸಿ ಒಂದೇ ವೇದಿಕೆಯಲ್ಲಿ ಸೇರಿಸಲಿದೆ ಎಂದು ಕಂಪೆನಿಯು ತಿಳಿಸಿದೆ.

ವಾರ್ತಾ ಭಾರತಿ 18 Feb 2026 12:07 am