ಗೋಕರ್ಣದ ಕಾಡಿನ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ, ಇಬ್ಬರು ಮಕ್ಕಳ ರಕ್ಷಣೆ
ಗೋಕರ್ಣ: ಗೋಕರ್ಣದ ರಾಮತೀರ್ಥ ಗುಡ್ಡದ ಮೇಲೆ ಕಾಡಿನ ಪ್ರದೇಶದೊಳಗೆ ಇರುವ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ದೇಶದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಘಟನೆ ಶನಿವಾರ ಬೆಳಕಿಗೆ ಬಂದಿದ್ದು, ಮಹಿಳೆಯ ವೀಸಾ ಅವಧಿ 2017ರಲ್ಲೇ ಮುಗಿದಿರುವುದು ಪತ್ತೆಯಾಗಿದೆ. ಪ್ರವಾಸಿಗರ ರಕ್ಷಣೆಗಾಗಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ, ಗುಡ್ಡದ ತುದಿಯಲ್ಲಿ ಯಾರೋ ಅಪರಿಚಿತರು ವಾಸವಿರುವ ಬಗ್ಗೆ ಅನುಮಾನ ಬಂದಿದೆ. ಗುಡ್ಡದ ತುದಿಯನ್ನು ತಲುಪಿದಾಗ, ಅಲ್ಲಿ ಗುಹೆಯ ಸ್ವರೂಪದ ಕುಟೀರದಲ್ಲಿ 40 ವರ್ಷ ವಯಸ್ಸಿನ ನೀನಾ ಕುಟಿನಾ ಎಂಬ ರಷ್ಯಾ ಮೂಲದ ಮಹಿಳೆ ತನ್ನ ಆರು ವರ್ಷದ ಮಗಳು ಪ್ರೇಮಾ ಮತ್ತು ನಾಲ್ಕು ವರ್ಷದ ಮಗಳು ಅಮಾ ಜೊತೆ ವಾಸವಿದ್ದಳು. ಪೊಲೀಸರ ವಿಚಾರಣೆ ವೇಳೆ, ನೀನಾ ತಾನು ದೇವರ ಪೂಜೆ ಮತ್ತು ಧ್ಯಾನದಲ್ಲಿ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾಳೆ. ಈ ಕಾರಣಕ್ಕಾಗಿ ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಕ್ಕೆ ಬಂದು ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡು ಪೂಜೆ ಹಾಗೂ ಧ್ಯಾನ ಮಾಡುತ್ತಿದ್ದೆ ಎಂದು ಹೇಳಿದ್ದಾಳೆ. ಅಪಾಯಕಾರಿ ಸ್ಥಳದಿಂದ ರಕ್ಷಣೆ ನೀನಾ ವಾಸವಿದ್ದ ರಾಮತೀರ್ಥ ಗುಡ್ಡವು ಭೂಕುಸಿತದ ಅಪಾಯವಿರುವ, ಹಾವುಗಳು ಸೇರಿದಂತೆ ವಿಷಕಾರಿ ಜಂತುಗಳಿರುವ ಅಪಾಯಕಾರಿ ಸ್ಥಳವಾಗಿದೆ. ಈ ಅಪಾಯಗಳ ಬಗ್ಗೆ ಪೊಲೀಸರು ನೀನಾಗೆ ಮನವರಿಕೆ ಮಾಡಿಕೊಟ್ಟರು ಮತ್ತು ತಕ್ಷಣವೇ ಮಕ್ಕಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದರು. ನಂತರ, ನೀನಾ ಕುಟಿನಾ ಮತ್ತು ಆಕೆಯ ಮಕ್ಕಳನ್ನು ಗುಹೆಯಿಂದ ಸುರಕ್ಷಿತವಾಗಿ ಕೆಳಗೆ ಕರೆತರಲಾಯಿತು. ಆಕೆಯ ಇಚ್ಛೆಯಂತೆ, ಅವರನ್ನು ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಎನ್.ಜಿ.ಓ. ಶಂಕರ ಪ್ರಸಾದ ಫೌಂಡೇಶನ್ಗೆ ಸಂಬಂಧಿಸಿದ ಸರಸ್ವತಿ ಸ್ವಾಮೀಜಿ ಆಶ್ರಮಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ನೀನಾಗೆ ಭದ್ರತೆ ಒದಗಿಸಿದ್ದರು. ಪಾಸ್ಪೋರ್ಟ್ ಮತ್ತು ವೀಸಾ ವಿಚಾರಣೆ ರಷ್ಯಾದ ನೀನಾ ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಭಾರತದಲ್ಲಿಯೇ ಉಳಿಯುವ ಉದ್ದೇಶದಿಂದ ತನ್ನ ಮತ್ತು ಮಕ್ಕಳ ಪಾಸ್ಪೋರ್ಟ್ ಹಾಗೂ ವೀಸಾ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಳು. ಇದರಿಂದಾಗಿ, ಮಹಿಳಾ ಪೊಲೀಸ್ ಅಧಿಕಾರಿಗಳು, ಯೋಗರತ್ನ ಸರಸ್ವತಿ ಸ್ವಾಮೀಜಿ (ಮಹಿಳಾ ಸ್ವಾಮೀಜಿ) ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜುಲೈ 9 ರಿಂದ ಮೂರು ದಿನಗಳ ಕಾಲ ಆಪ್ತ ಸಮಾಲೋಚನೆ ಮೂಲಕ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ನೀನಾ, ತಾನು ವಾಸವಿದ್ದ ಕಾಡಿನೊಳಗಿನ ಗುಹೆಯಲ್ಲಿ ಅಥವಾ ಸಮೀಪದ ಕಾಡಿನಲ್ಲಿ ತನ್ನ ಪಾಸ್ಪೋರ್ಟ್ ಮತ್ತು ವೀಸಾ ಎಲ್ಲೋ ಬಿದ್ದಿರಬಹುದು ಎಂದು ಹೇಳಿದ್ದಾಳೆ. ನಂತರ, ನೀನಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಸುರಕ್ಷಿತವಾಗಿ ಇಡಲಾಯಿತು. ವೀಸಾ ಅವಧಿ ಮೀರಿರುವುದು ಪತ್ತೆ, ರಷ್ಯಾಕ್ಕೆ ವಾಪಸಾತಿ ಗೋಕರ್ಣ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಗುಹೆಯ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ, ನೀನಾ ಕುಟಿನಾ ಅವರ ಪಾಸ್ಪೋರ್ಟ್ ಮತ್ತು ವೀಸಾ ಪತ್ತೆಯಾಯಿತು. ಪರಿಶೀಲನೆಯ ನಂತರ, ಅವರ ವೀಸಾ ಅವಧಿ ದಿನಾಂಕ 17-04-2017 ಕ್ಕೆ ಮುಕ್ತಾಯಗೊಂಡಿರುವುದು ಕಂಡುಬಂದಿದೆ. ಈ ಕುರಿತು ಎಫ್ಆರ್ಆರ್ಓ (Foreigners Regional Registration Office) ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ಪತ್ರ ವ್ಯವಹಾರ ನಡೆಸಲಾಗಿದೆ. ಅವಧಿ ಮೀರಿ ಭಾರತದಲ್ಲಿ ವಾಸವಿದ್ದ ರಷ್ಯಾ ಮೂಲದ ನೀನಾ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಅವರ ಮೂಲ ದೇಶವಾದ ರಷ್ಯಾಕ್ಕೆ ಮರಳಿ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜುಲೈ 14 ರಂದು ನೀನಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳನ್ನು ಮಹಿಳಾ ಪೊಲೀಸ್ ಅಧಿಕಾರಿಗಳ ರಕ್ಷಣೆಯಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿರುವ ಎಫ್ಆರ್ಆರ್ಓ ಕಚೇರಿಗೆ ಹಾಜರುಪಡಿಸಲು ಸಿದ್ಧತೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ನೈಸರ್ಗಿಕ ಅರಣ್ಯವನ್ನು ಎರಡಲುಗಿನ ಕತ್ತಿಯಿಂದ ನಾಶ ಮಾಡಿ, ಕಾರ್ಪೊರೇಟ್ಗಳಿಗೆ ಹರಿವಾಣದಲ್ಲಿರಿಸಿ ಒಪ್ಪಿಸುತ್ತಿರುವಾಗಲೇ, ಕಾಗದಪತ್ರಗಳಲ್ಲಿ ಅರಣ್ಯದ ಪ್ರಮಾಣ ಏರುತ್ತಿದೆ. ಈ ಡೇಟಾಗಳ ಸಾಚಾತನದ ಬಗ್ಗೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿರುವವರು (ಅವರಲ್ಲಿ ಕೆಲವರು ನಿವೃತ್ತ ಅರಣ್ಯಾಧಿಕಾರಿಗಳು, ಪರಿಸರ ಹೋರಾಟಗಾರರು) ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಶಿವಮೊಗ್ಗ: ಸಾಲದ ವಿಚಾರಕ್ಕೆ ದಂಪತಿಯ ನಡುವೆ ಜಗಳ; ಪತ್ನಿಯ ಮೂಗು ಕಚ್ಚಿ ತುಂಡರಿಸಿದ ಪತಿ
ಶಿವಮೊಗ್ಗ:ಸಾಲದ ವಿಚಾರಕ್ಕೆ ಗಂಡ- ಹೆಂಡತಿಯ ನಡುವೆ ಜಗಳ ನಡೆದು ಪತಿಯು ಪತ್ನಿಯ ಮೂಗನ್ನೇ ಹಲ್ಲಿನಿಂದ ಕಚ್ಚಿ ತುಂಡರಿಸಿದ ಘಟನೆ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದ ದಂಪತಿಯ ನಡುವೆ ಗಲಾಟೆ ನಡೆದಿದೆ. ಪತ್ನಿ ವಿದ್ಯಾ (30) ರ ಮೂಗಿನ ಮುಂಭಾಗ ಸಂಪೂರ್ಣ ತುಂಡಾಗಿದೆ. ವಿದ್ಯಾ ಅವರ ಪತಿ ವಿಜಯ್ ಈ ಕೃತ್ಯ ನಡೆಸಿದ್ದಾನೆ. ಗಾಯಗೊಂಡಿದ್ದ ವಿದ್ಯಾಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ವಿವಿರ: ಸಾಲದ ಕಂತು ಕಟ್ಟುವ ವಿಚಾರಕ್ಕೆ ದಂಪತಿಯ ನಡುವೆ ಜು.8 ರ ಮಧ್ಯಾಹ್ನ ಗಲಾಟೆಯಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ವಿಜಯ್ ಪತ್ನಿ ವಿದ್ಯಾಳನ್ನು ನಿಂದಿಸಿ, ಹಲ್ಲೆ ಮಾಡಿದ್ದಾನೆ. ಗಲಾಟೆ ವೇಳೆ ಕೆಳಗೆ ಬಿದ್ದ ಪತ್ನಿ ವಿದ್ಯಾಳ ಮೂಗು ಕಚ್ಚಿ ತುಂಡರಿಸಿದ್ದಾನೆ. ತಕ್ಷಣವೇ ಸ್ಥಳೀಯರು ಗಲಾಟೆ ಬಿಡಿಸಿ, ಆಸ್ಪತ್ರೆಗೆ ಕಳುಹಿಸಿದ್ದಾರೆ. ಚೆನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಇದೀಗ ಗಂಡ ವಿಜಯ್ ವಿರುದ್ಧವೇ ಪತ್ನಿ ವಿದ್ಯಾ ಠಾಣೆ ಮೆಟ್ಟಿಲೇರಿದ್ದಾರೆ. ಹಲ್ಲೆ ಸಂಬಂಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಮೆಡಿಕಲ್ ಲೀಗಲ್ ಕೇಸ್ ದಾಖಲಿಸಶಿವಮೊಗ್ಗ:ಸಾಲದ ವಿಚಾರಕ್ಕೆ ಗಂಡ- ಹೆಂಡತಿಯ ನಡುವೆ ಜಗಳಲಾಗಿದ್ದು, ಬಳಿಕ ಜಯನಗರ ಠಾಣೆಯಿಂದ ದೂರು ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಬೆಳ್ತಂಗಡಿ: ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬೆಳ್ತಂಗಡಿ; ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಶ್ರೀಧರ ವೆಂಕಟ ಕ್ರಷ್ಣ ಉಪಾಧ್ಯಯ ಹೊನ್ನಾವರ ಎಂಬಾತ ಬಂಧಿತ ಆರೋಪಿ. ಈತನ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಅ. ಕ್ರ. 510/2015 ಕಲಂ. 379 ಐಪಿಸಿ ಪ್ರಕರಣ ದಾಖಲಾಗಿತ್ತು. ಈತ ಕಳೆದ ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಜು11 ರಂದು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು ನಾಗೇಶ್ ಕದ್ರಿ, ಉಪ ನೀರಿಕ್ಷಕರು ಸಮರ್ಥ್ ರವರ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿ ವೃಷಭ ಮತ್ತು ಚರಣ್ ರಾಜ್ ರವರು ಮಂಗಳೂರು ನಿಂದ ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿದಿಸಲಾಗಿದೆ.
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರೇ ಹೃದ್ರೋಗ ತಜ್ಞ; ರೋಗಿಗಳಿಗೆ ಸಕಾಲಕ್ಕೆ ಸಿಗದ ವೈದ್ಯ ಸೇವೆ
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರು ಹೃದ್ರೋಗ ತಜ್ಞರು ಇದ್ದಾರೆ. ತುರ್ತು ಸಂದರ್ಭದಲ್ಲಿ ಹೃದಯಾಘಾತ ಆದವರನ್ನು ಖಾಸಗಿ ಇಲ್ಲವೇ ಮೈಸೂರು, ಬೆಂಗಳೂರಿಗೆ ಕರೆದೊಯ್ಯುವ ಅನಿವಾರ್ಯತೆ ಇದೆ. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ದೂರದ ಊರುಗಳಿಗೆ ಕರೆದುಕೊಂಡು ಹೋಗುವ ತನಕ ಆರೋಗ್ಯ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ.
ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ, ನಾಲ್ವರ ರಕ್ಷಣೆ
ದೆಹಲಿಯ ಸೀಲಾಮ್ಪುರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಆರು ಜನರು ಸಿಲುಕಿಕೊಂಡಿದ್ದಾರೆ. ಜನತಾ ಮಜ್ದೂರ್ ಕಾಲೋನಿಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ, ಈಗಾಗಲೇ ನಾಲ್ವರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಬೆಳಿಗ್ಗೆ 7 ಗಂಟೆಗೆ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ ಮತ್ತು ತನಿಖೆ ನಡೆಯುತ್ತಿದೆ.
ಲಾರ್ಡ್ಸ್ ಟೆಸ್ಟ್: ಗಿಲ್ ನಂತೆಯೇ ಔಟ್ ಆಗಿದ್ದ ಕೊಹ್ಲಿ!
ಲಾರ್ಡ್ಸ್: ಕ್ರಿಕೆಟ್ ನಲ್ಲಿ ಹಲವು ಕುತೂಲಾರಿ ಅಂಶಗಳು ಭಿನ್ನ ಕ್ಷಣಗಳ ನಡುವೆ ಸಂಬಂಧ ಕಲ್ಪಿಸುತ್ತವೆ. ಅತಿಥೇಯ ಇಂಗ್ಲೆಂಡ್ ತಂಡದ ವಿರುದ್ಧದ ಲಾರ್ಡ್ಸ್ ಟೆಸ್ಟ್ ನಲ್ಲಿ ಶುಕ್ರವಾರ ಶುಭ್ ಮನ್ ಗಿಲ್ ಕೇವಲ 16 ರನ್ ಗೆ ಔಟ್ ಆದರು. ಕ್ರಿಸ್ ವೋಕ್ಸ್ ಅವರ ಎಸೆತ, ಗಿಲ್ ಬ್ಯಾಟ್ ನ ತುದಿಗೆ ಸವರಿಕೊಂಡು ವಿಕೆಟ್ ಕೀಪರ್ ಕೈಸೇರಿತು. ಗಿಲ್ ಕ್ರೀಸ್ ನ ಹೊರಗೆ ಬ್ಯಾಟ್ ಮಾಡುವ ಇರಾದೆ ಹೊಂದಿದ್ದನ್ನು ಗಮನಿಸಿದ ಇಂಗ್ಲೆಂಡ್ ಈ ಸೊಗಸಾದ ತಂತ್ರ ಹೆಣೆದಿತ್ತು. ಇದು ಇತಿಹಾಸವನ್ನು ಪರಿಶೀಲಿಸುವ ವರೆಗೂ ಒಂದು ಸಾಮಾನ್ಯ ಘಟನೆ ಎನಿಸಿತ್ತು! ಹದಿಮೂರು ವರ್ಷಗಳ ಹಿಂದೆ ಅಂದರೆ 2011ರ ಸೆಪ್ಟೆಂಬರ್ ನಲ್ಲಿ, ಯುವ ಆಟಗಾರ ವಿರಾಟ್ ಕೊಹ್ಲಿ ಲಾರ್ಡ್ಸ್ ನಲ್ಲಿ ಪ್ರಥಮ ಏಕದಿನ ಪಂದ್ಯ ಆಡುತ್ತಿದ್ದರು. ಅವರು ಕೂಡಾ 16 ರನ್ ಗಳಿಸಿದ್ದಾಗ, ವಿಕೆಟ್ ಕೀಪರ್ ಹಿಡಿದ ಕ್ಯಾಚ್ ಗೆ ಬಲಿಯಾಗಿದ್ದರು. ಎರಡೂ ಹೊಡೆತಗಳು ತಿಂಗಳ 11ನೇ ದಿನದಂದು ನಡೆದಿತ್ತು ಎನ್ನುವುದು ಗಮನಾರ್ಹ. ಅಂತೆಯೇ ಇಬ್ಬರೂ ಆಟಗಾರರು 16 ರನ್ ಗಳಿಸಿದ್ದರು. ಇಬ್ಬರೂ ಆಟಗಾರರು ತಮ್ಮ ವೃತ್ತಿಜೀವನದ ವಿವಿಧ ಹಂತಗಳಲ್ಲಿದ್ದರು. ಇಬ್ಬರೂ ಒಂದೇ ತರದ ಚಪ್ಪಾಳೆಯನ್ನೂ ಸಂಪಾದಸಿದರು. ಕೊಹ್ಲಿ ಇಂಗ್ಲೆಂಡ್ ನಲ್ಲಿ ಆಗಷ್ಟೇ ವೃತ್ತಿಜೀವನ ಆರಂಭಿಸಿದ್ದರೆ, ಅತ್ಯುತ್ತಮ ಫಾರ್ಮ್ ನಲ್ಲಿರುವ ಗಿಲ್ ಲಾರ್ಡ್ಸ್ ನಲ್ಲಿ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಕೊಹ್ಲಿ ಏಕದಿನ ಪಂದ್ಯ ಆಡಿದ್ದರೆ, ಗಿಲ್ ಟೆಸ್ಟ್ ಪಂದ್ಯ ಆಡುತ್ತಿರುವುದು ಮಾತ್ರ ಭಿನ್ನ ಅಂಶ. ಆದರೂ ಎರಡೂ ಘಟನೆಗಳ ನಡುವಿನ ಸಾಮ್ಯತೆಯನ್ನು ಕಡೆಗಣಿಸುವಂತಿಲ್ಲ. ಇದಕ್ಕೂ ಮುನ್ನ ಜಸ್ ಪ್ರೀತ್ ಬೂಮ್ರಾ ಐದು ವಿಕೆಟ್ ಗೊಂಚಲು ಗಳಿಸುವ ಮೂಲಕ ಇಂಗ್ಲೆಂಡ್ ಇನಿಂಗ್ಸನ್ನು 387 ರನ್ ಗೆ ಮೊಟಕುಗೊಳಿಸಿದರು. ಜೋ ರೂಟ್ ಲಾರ್ಡ್ಸ್ ನಲ್ಲಿ ತಮ್ಮ ಎಂಟನೇ ಶತಕ ದಾಖಲಿಸಿದರೆ, ಜಿಮ್ಮಿ ಸ್ಮಿತ್ ಮತ್ತು ಬ್ರಿಂಡನ್ ಕಾರ್ಸ್ ಕೆಳಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ನೀಡಿದರು. ಇದಕ್ಕೆ ಉತ್ತರವಾಗಿ ಎರಡನೇ ದಿನದ ಅಂತಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದ್ದು, ಕೆ.ಎಲ್.ರಾಹುಲ್ ಅಜೇಯ 58 ರನ್ ಗಳಿಸಿದ್ದಾರೆ. ಜೈಸ್ವಾಲ್ ಹಾಗೂ ಕರುಣ್ ನಾಯರ್ ಉತ್ತಮವಾಗಿ ಬ್ಯಾಟಿಂಗ್ ಆರಂಭಿಸಿದರೂ, ಅದನ್ನು ಉಳಿಸಿಕೊಳ್ಳಲು ವಿಫಲರಾದರು. ಇಂಗ್ಲೆಂಡ್ ಹೆಣೆದ ಒಳ್ಳೆಯ ತಂತ್ರಕ್ಕೆ ಗಿಲ್ ವಿಕೆಟ್ ಒಪ್ಪಿಸಿದರು.
ಸ್ವದೇಶ್ ದರ್ಶನದಡಿ ಹಂಪಿ ಅಭಿವೃದ್ಧಿ ; ಟೆಂಡರ್ ಪೂರ್ಣ, ಶೀಘ್ರ ಕಾಮಗಾರಿ ಆರಂಭ
ಸ್ವದೇಶ್ ದರ್ಶನ್ 2.0 ಯೋಜನೆಯಡಿ ಹಂಪಿಯ ನೈಜತೆಗೆ ಧಕ್ಕೆ ಬಾರದಂತೆ ಒಟ್ಟಾರೆ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ದೇಗುಲಗಳ ಪುನರುಜ್ಜೀವನ, ಫೆನ್ಸಿಂಗ್, ವ್ಯಾಪಾರ ಮಳಿಗೆಗಳು, ವಿದ್ಯುತ್ ದೀಪ, ಮಕ್ಕಳಿಗೆ ಹಾಲುಣಿಸುವ ಕೇಂದ್ರ, ಕುಡಿಯುವ ನೀರಿನ ಸೌಕರ್ಯ ಒದಗಿಸುವುದು ಮತ್ತು ಮಯೂರ ಭುವನೇಶ್ವರಿ ದೇಗುಲ ಬಳಿ ಹಂಪಿ ಮತ್ತು ಇಡೀ ಜಿಲ್ಲೆಯ ಅಗತ್ಯ ಮಾಹಿತಿ ಒದಗಿಸುವ ವ್ಯಾಖ್ಯಾನ ಕೇಂದ್ರ (ಇಂಟರ್ಪ್ರಿಟೇಷನ್ ಸೆಂಟರ್) ಆರಂಭಿಸಲು ನಿರ್ಧರಿಸಲಾಗಿದೆ.
ಯುವಜನರೇ ಎಚ್ಚರ: ಹೃದಯಾಘಾತ ಆತಂಕ: ಕಾರ್ಡಿಯೋಫೋಬಿಯಾಕ್ಕೆ ದಾರಿ, ಇದರಿಂದ ರಕ್ಷಣೆ ಹೇಗೆ?
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೃದಯ ಸಂಬಂಧಿ ಸಾವುಗಳ ಬಗ್ಗೆ ಹೆಚ್ಚುತ್ತಿರುವ ಪ್ರಚಾರವು 'ಕಾರ್ಡಿಯೋ ಫೋಬಿಯಾ' ಎಂಬ ಆತಂಕಕ್ಕೆ ಕಾರಣವಾಗುತ್ತಿದೆ. ಇದು ಹೃದಯಾಘಾತದ ಭಯದಿಂದ ಉಂಟಾಗುವ ಮಾನಸಿಕ ಸ್ಥಿತಿಯಾಗಿದ್ದು, ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜ್ಞಾನಾತ್ಮಕ ವರ್ತನೆ ಚಿಕಿತ್ಸೆ, ಧ್ಯಾನ, ಮತ್ತು ಆರೋಗ್ಯಕರ ಜೀವನಶೈಲಿಯಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು.
ಜಾನಕಿ ಚಿತ್ರದ ಹೆಸರು ವಿ.ಜಾನಕಿ ಎಂದು ಬದಲಾಯಿಸಿದಲ್ಲಿ ಅನುಮತಿ: ನ್ಯಾಯಾಲಯಕ್ಕೆ ಸಿಬಿಎಫ್ಸಿ ಸ್ಪಷ್ಟನೆ
ತಿರುವನಂತಪುರಂ: ಸುರೇಶ್ ಗೋಪಿ ನಟಿಸಿರುವ ಜೆಎಸ್ಕೆ: ಜಾನಕಿ ವಸರ್ಸ್ ಸ್ಟೇಟ್ ಆಫ್ ಕೇರಳ ಚಿತ್ರದಲ್ಲಿ ಜಾನಕಿ ಹೆಸರನ್ನು ವಿ.ಜಾನಕಿ ಎಂದು ಬದಲಾಯಿಸಿದಲ್ಲಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಬಯಸಿರುವುದಾಗಿ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಕೇರಳ ಹೈಕೋರ್ಟ್ಗೆ ಸ್ಪಷ್ಟನೆ ನೀಡಿದೆ. ಸಿಬಿಎಫ್ಸಿ ಪರ ಹಾಜರಾದ ವಕೀಲ ಅಭಿನವ್ ಚಂದ್ರಚೂಡ್ ಚಿತ್ರದಲ್ಲಿ ಪ್ರಮುಖ ಪಾತ್ರದ ಹೆಸರು ಜಾನಕಿ ವಿದ್ಯಾಧರನ್' ಆದ್ದರಿಂದ ನಿರ್ಮಾಪಕರು ಚಿತ್ರದ ಶೀರ್ಷಿಕೆಯಲ್ಲಿ ಜಾನಕಿ ಹೆಸರನ್ನು ವಿ.ಜಾನಕಿ ಎಂದು ಬದಲಾಯಿಸಿದಲ್ಲಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಮಂಡಳಿ ಬಯಸಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಜಿಗಿದ ವಿದ್ಯುತ್ ಉತ್ಪಾದನೆ: ದಿನಕ್ಕೆ ಸರಾಸರಿ 1,600 ಮೆವ್ಯಾ ಹೆಚ್ಚಳ, ಹೊರ ರಾಜ್ಯಗಳಿಗೆ ಮಾರಾಟ
ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯು ಹೆಚ್ಚಾಗಿದೆ. ಸುಮಾರು 1,600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಇದರಿಂದ ಹೊರ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ. ಜಲ ವಿದ್ಯುತ್ ಉತ್ಪಾದನೆಯು ನಿರಂತರವಾಗಿದೆ. ಪವನ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2030ರ ವೇಳೆಗೆ 60 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಬೇಡಿಕೆಗಿಂತಲೂ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಸರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಬೆಳ್ಳಿ ಬೆಲೆ
ಹೈದರಾಬಾದ್: ಮಾರುಕಟ್ಟೆಯಲ್ಲಿ ಚಿನ್ನದ ಹೊಳಪಿನ ಛಾಯೆಯ ನಡುವೆಯೇ ಶುಕ್ರವಾರ ಬೆಳ್ಳಿ ಕೂಡ ಪ್ರತಿ ಕೆಜಿಗೆ 1,13,000 ರೂಪಾಯಿಗೆ ಏರಿ, ಇದುವರೆಗಿನ ಗರಿಷ್ಠ ಮಟ್ಟವನ್ನು ತಲುಪಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪಾಟ್ ಮಾರ್ಕೆಟ್ನಲ್ಲಿ ಬೆಳ್ಳಿ ಬೆಲೆ 13 ವರ್ಷದ ಗರಿಷ್ಠ ಮಟ್ಟವನ್ನು ತಲುಪಿ ಪ್ರತಿ ಔನ್ಸ್ಗೆ 37.8 ಡಾಲರ್ಗೆ ಏರಿದರೆ ಫ್ಯೂಚರ್ ಮಾರ್ಕೆಟ್ನಲ್ಲಿ 38.7 ಡಾಲರ್ ತಲುಪಿತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಾರ ಪ್ರತಿ ಸುಂಕವನ್ನು ಹೇರುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ವಹಿವಾಟು ಭೀತಿ ಬೆಲೆ ಏರಿಕೆಗೆ ಪ್ರಮುಖ ಕಾರಣ. ಸಾಗರೋತ್ತರ ಮಾರುಕಟೆಯ ಧನಾತ್ಮಕ ಸುಳಿವಿನ ಹಿನ್ನೆಲೆಯಲ್ಲಿ ಎಂಸಿಎಕ್ಸ್ ನಲ್ಲಿ ಬೆಳ್ಳಿ ಬೆಲೆ ಗರಿಷ್ಠ ಮಟ್ಟ ತಲುಪಿದೆ. ಜಾಗತಿಕ ವ್ಯಾಪಾರ ಸಂಘರ್ಷಗಳು ಸುರಕ್ಷಿತ ಆಸ್ತಿಗಳ ಬೇಡಿಕೆ ಹೆಚ್ಚಲು ಕಾರಣವಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಸಿಲ್ವರ್ ವಹಿವಾಟು 13 ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ಕಮೊಡಿಟೀಸ್ ವಿಭಾಗದ ಹಿರಿಯ ವಿಶ್ಲೇಷಕ ಸ್ಯಾಮ್ಯುಯೆಲ್ ಗಾಂಧಿ ಹೇಳುತ್ತಾರೆ. ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಕೆನಡಾದ ಆಮದಿನ ಮೇಲೆ ಟ್ರಂಪ್ ಶೇಕಡ 35ರಷ್ಟು ಮತ್ತು ಇತರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇಕಡ 15-20ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಚಿನ್ನದ ಬೆಲೆ ಕೂಡಾ ವಾರದ ಗರಿಷ್ಠ ಮಟ್ಟವನ್ನು ಶುಕ್ರವಾರ ದಾಖಲಿಸಿದ್ದು, 3,356 ಡಾಲರ್ಗೆ ಏರಿದೆ ಎಂಧು ಗಾಂಧಿ ವಿವರಿಸಿದ್ದಾರೆ. ಇದರ ಜತೆಗೆ ಬೆಳ್ಳಿಯ ಪೂರೈಕೆ ಕೂಡಾ ಬೇಡಿಕೆಗಿಂತ ಕಡಿಮೆ ಇದೆ. ಸತತ ಐದನೇ ವರ್ಷ ಬೆಳ್ಳಿಯ ಪೂರೈಕೆ ಕಡಿಮೆ ಇದ್ದು, ಹಸಿರು ಆರ್ಥಿಕತೆ ಅನ್ವಯಿಕೆಗಳ ಹಿನ್ನೆಲೆಯಲ್ಲಿ ಕೈಗಾರಿಕಾ ಬೇಡಿಕೆ 700 ದಶಲಕ್ಷ ಔನ್ಸ್ಗಿಂತಲೂ ಅಧಿಕವಾಗುವ ನಿರೀಕ್ಷೆ ಇದೆ ಎಂದು ವಿಶ್ಲೇಷಿಸಿದ್ದಾರೆ. ಕೈಗಾರಿಕಾ ಬೇಡಿಕೆ ಹೆಚ್ಚಿರುವುದು ಕೂಡಾ ಬೆಲೆ ಏರಿಕೆಗೆ ಪ್ರಮುಖ ಕಾರಣ. ಚೀನಾ ಜತೆಗಿನ ವ್ಯಾಪಾರ ವ್ಯಾಜ್ಯವನ್ನು ಟ್ರಂಪ್ ಬಗೆಹರಿಸಿಕೊಂಡ ಹಿನ್ನೆಲೆಯಲ್ಲಿ ಕೈಗಾರಿಕಾ ಬೇಡಿಕೆ ಹೆಚ್ಚುತ್ತಿದೆ ಎಂದು ಅಖಿಲ ಭಾರತ ಹರಳು ಮತ್ತು ಆಭರಣಗಳ ದೇಶೀಯ ಮಂಡಳಿಯ ಮುಖ್ಯಸ್ಥ ವಿಸಿ ಅವಿನಾಶ್ ಗುಪ್ತಾ ಅಭಿಪ್ರಾಯಪಡುತ್ತಾರೆ.
ಇಂಧನ ಪೂರೈಕೆ ಕಡಿತ ಅಹ್ಮದಾಬಾದ್ ವಿಮಾನ ದುರಂತಕ್ಕೆ ಕಾರಣ
ಹೊಸದಿಲ್ಲಿ: ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಜೂನ್ 12ರಂದು ಮೇಲೇರಿದ ಮೂರು ಸಕೆಂಡ್ಗಳಲ್ಲಿ ಏರ್ಇಂಡಿಯಾದ ಬೋಯಿಂಗ್ 787 ವಿಮಾನ ಎಐ 171ನ ಎರಡೂ ಎಂಜಿನ್ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡದ್ದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದುರಂತಕ್ಕೀಡಾದ 54,200 ಕೆಜಿ ವಿಮಾನ ಇಂಧನ ಸೇರಿದಂತೆ 213.4 ಟನ್ ತೂಕದ ವಿಮಾನ ಟೇಕಾಫ್ನ ಗರಿಷ್ಠ ತೂಕವನ್ನು ಹೊಂದಿದ್ದ ವಿಮಾನದ ಎಂಜಿನ್ನ ಫ್ಯಾನ್ ವೇಗ ಕುಸಿಯಲಾರಂಭಿಸಿದೆ. ವಿಮಾನ ನಿಲ್ದಾಣದ ಆವರಣ ಗೋಡೆಯನ್ನು ದಾಟುವ ಮುನ್ನವೇ ವಿಮಾನದ ಎತ್ತರ ಕುಸಿಯಲಾರಂಭಿಸಿತು. ಇದಕ್ಕೆ ಕಾರಣ: ಲಂಡನ್ಗೆ ತೆರಳುತ್ತಿದ್ದ ಡ್ರೀಮ್ಲೈನರ್ನ ಎಂಜಿನ್ 1 ಮತ್ತು 2ಗೆ ಇಂಧನ ಪೂರೈಕೆ ಸ್ಥಗಿತಗೊಂಡದ್ದು ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಹೇಳಲಾಗಿದೆ. ಇದು ಹೇಗೆ ಮತ್ತು ಏಕೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಇದೆಲ್ಲ ಕೇವಲ ಆರು ಸೆಕೆಂಡ್ಗಳಲ್ಲಿ ಸಂಭವಿಸಿದ್ದರಿಂದ 26 ಸೆಕೆಂಡ್ನಲ್ಲಿ ಪೈಲಟ್ ಮೇಡೇ ಮೇಡೇ ಮೇಡೇ ಸಂದೇಶವನ್ನು ರವಾನಿಸಿದ್ದಾಗಿ ವಿವರಿಸಲಾಗಿದೆ. ಅನಿರೀಕ್ಷಿತ ಇಂಧನ ಕಡಿತದಿಂದ ಇಬ್ಬರು ಪೈಲಟ್ಗಳು ಅಚ್ಚರಿಗೊಂಡರು. ಏಕೆ ಇಂಧನ ಸ್ಥಗಿತಗೊಂಡಿತು ಎಂದು ಒಬ್ಬರು ಪೈಲಟ್ ಇನ್ನೊಬ್ಬರ ಬಳಿ ಕೇಳುತ್ತಿರುವುದು ದಾಖಲಾಗಿದೆ. ಹಾಗೆ ಮಾಡಿಲ್ಲ ಎಂದು ಮತ್ತೊಬ್ಬ ಪೈಲಟ್ ಹೇಳಿದ್ದಾರೆ ಎಂಬುದಾಗಿ ವಿಮಾನ ದುರಂತ ತನಿಖಾ ತಂಡ (ಎಎಐಬಿ) ಶನಿವಾರ ಬಹಿರಂಗಪಡಿಸಿದೆ. ಇದರ ಪರಿಣಾಮವಾಗಿ ಎಂಜಿನ್ ಫ್ಯಾನ್ ತಿರುಗುವ ವೇಗ ಕುಸಿದಿದೆ. ನತದೃಷ್ಟ ವಿಮಾನ 2,13,401 ಕೆಜಿ ತೂಕ ಹೊಂದಿದ್ದು, ಇದು ಗರಿಷ್ಠ ಟೇಕಾಫ್ ತೂಕವಾದ 2,18,183 ಕೆಜಿಗೆ ಸನಿಹದಲ್ಲಿತ್ತ. ವಿಮಾನವು ಗರಿಷ್ಠ ದಾಖಲಾದ 180 ನಾಟ್ ವಾಯುವೇಗವನ್ನು ಹೊಂದಿತ್ತು. ಇದು ಗಾಳಿಯ ವೇಗ 08:08:42 ಯುಟಿಸಿ ಆಗಿತ್ತು. ಈ ಹಂತದಲ್ಲಿ ಎಂಜಿನ್ 1 ಮತ್ತು ಎಂಜಿನ್ 2 ಇಂಧನ ಕಟಾಫ್ ಸ್ವಿಚ್ಗಳು ಒಂದು ಸೆಕೆಂಡ್ನಲ್ಲಿ ರನ್ ಎಂದು ಇದ್ದಲ್ಲಿಂದ ಕಟಾಫ್ ಎಂದು ಸಂಕೇತ ತೋರಿಸಿತು. ಎನ್1 ಮತ್ತು ಎನ್2 ಎಂಜಿನ್ ವೇಗ ಇಂಧನ ಕಡಿತದಿಂದಾಗಿ ಕುಸಿತಗೊಂಡಿತು ಎಂದು ವಿವರಿಸಿದೆ.
KEA ಸರ್ವರ್ ಡೌನ್: UGCET ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬ! ಅಭ್ಯರ್ಥಿಗಳು ಗಮನಿಸಿ, ಕೊನೆ ದಿನ ವಿಸ್ತರಣೆ..
ಬೆಂಗಳೂರು, ಜುಲೈ 12: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET or UGCET-25) ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ವಿವಿಧ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆಗೆ, ಆಪ್ಷನ್ ಆಯ್ಕೆಗೆ ಆಹ್ವಾನಿಸಲಾಗಿತ್ತು. ದಾಖಲೆ ಪರಿಶೀಲನೆಗೆ ದಿನಾಂಕ ಪ್ರಕಟಿಸಲಾಗಿತ್ತು. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸರ್ವರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಂಬಂಧ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.
Rain Alert: ಚಂಡಮಾರುತ ಪ್ರಸರಣ! ಇಂದಿನಿಂದ ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ ಆರ್ಭಟ, ಯೆಲ್ಲೋ ಅಲರ್ಟ್
ಬೆಂಗಳೂರು, ಜುಲೈ 12: ಕರ್ನಾಟಕದಾದ್ಯಂತ ಅಬ್ಬರಿಸಿದ್ದ ಮುಂಗಾರು ಮಳೆ ರಾಜ್ಯ ಕೆಲವು ಭಾಗಗಳಲ್ಲಿ ಮಾತ್ರವೇ ಮುಂದುವರಿದಿದೆ. ಇನ್ನೂ ಸಮುದ್ರ ಮೇಲ್ಮೈ ಹಾಗೂ ಉತ್ತರ ಭಾರತದ ಭೂಮಿ ಮೇಲ್ಮೈನಲ್ಲಿ ಉಂಟಾದ ವಾಯುಭಾರ ಕುಸಿತ, ಚಂಡಮಾರುತ ಪ್ರಸರಣದಿಂದಾಗಿ ವಿವಿಧೆಡೆ ಭಾರೀ ಮಳೆ ಆರ್ಭಟ ಕಂಡು ಬರಲಿದೆ. ನೆನ್ನೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ದಾಖಲಾಗಿದೆ. ಹವಾಮಾನ
ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 260 ಜನರು ಮೃತಪಟ್ಟಿದ್ದಾರೆ. ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಹಾಸ್ಟೆಲ್ ಮೇಲೆ ಬಿದ್ದಿದೆ. ತನಿಖಾ ವರದಿಯನ್ನು ಏರ್ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ ಬಿಡುಗಡೆ ಮಾಡಿದ್ದು, ಆಘಾತಕಾರಿ ಅಂಶಗಳು ಬಯಲಾಗಿವೆ. ಟೇಕ್ ಆಫ್ ಆದ ಮೂರು ಸೆಕೆಂಡುಗಳಲ್ಲಿ ಎರಡೂ ಇಂಜಿನ್ಗಳ ಇಂಧನ ಪೂರೈಕೆ ಸ್ಥಗಿತಗೊಂಡಿದೆ. ಪತನಕ್ಕೆ ತಾಂತ್ರಿಕ ದೋಷ ಅಥವಾ ಆಕಸ್ಮಿಕ ಕ್ರಿಯೆಯೇ ಕಾರಣವೆಂದು ಶಂಕಿಸಲಾಗಿದೆ. ಪ್ರಮುಖ ವಿವರ ಇಲ್ಲಿದೆ ನೋಡಿ
2026 ರಿಂದ ತೆಂಗಿನಕಾಯಿ ಬೆಲೆ ಇಳಿಮುಖ ಸಾಧ್ಯತೆ, ಕಾರಣಗಳೇನು ಗೊತ್ತಾ?
ತೆಂಗಿನಕಾಯಿ ಬೆಲೆ ಏರಿಕೆಯ ನಡುವೆ, ಕೃಷಿ ವಿಸ್ತರಣೆಗೆ ತೆಂಗು ಮಂಡಳಿ ಆರ್ಥಿಕ ನೆರವು ಹೆಚ್ಚಿಸಿದೆ. ಆದರೆ, 2026ರಲ್ಲಿ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ. ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಂಠಿತಗೊಂಡಿದ್ದು, ಕೇರಳದಲ್ಲಿ 8,000 ಹೆಕ್ಟೇರ್ ಪ್ರದೇಶದಲ್ಲಿ ಹೊಸ ಕೃಷಿಗೆ ಯೋಜನೆ ರೂಪಿಸಲಾಗಿದೆ.
ಯಲಹಂಕ ಉಪನಗರದಲ್ಲಿ ಕರ್ನಾಟಕ ಗೃಹ ಮಂಡಳಿಯ ಎರಡು ನಿವೇಶನಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. 178 ನಿವೇಶನಗಳ ಹಂಚಿಕೆಯಲ್ಲಿಯೂ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುವ ಸಾಧ್ಯತೆ ಇದೆ.
ʼಮೀಡಿಯಾ ವನ್ʼ ಸಂಪಾದಕರ ಕೈ ಕತ್ತರಿಸುವ ಬೆದರಿಕೆ ಹಾಕಿದ ಸಿಪಿಎಂ ಕಾರ್ಯಕರ್ತರು
ಕೇರಳದಲ್ಲಿ ಉಪಚುನಾವಣಾ ಫಲಿತಾಂಶವೊಂದು ಆಡಳಿತ ಪಕ್ಷ ಹಾಗು ವಿಪಕ್ಷಗಳ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುವ ಬದಲು ಬೇರೆಯೇ ರೂಪ ಪಡೆದುಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ವಿಚಿತ್ರ ಚರ್ಚೆ ಈಗ ದಾಳಿ ಮಾಡುವ, ಕಡಿಯುವ ಬೆದರಿಕೆಯವರೆಗೂ ಬಂದು ತಲುಪಿರುವುದು ವಿಪರ್ಯಾಸ. ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ಪಕ್ಷವು ಒಂದು ಕಡೆ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವ ಮಾತನಾಡುತ್ತಲೇ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ತನ್ನ ಪ್ರಯತ್ನಗಳನ್ನು ಅತ್ಯಂತ ಆಕ್ರಮಣಕಾರಿ ಶೈಲಿಯಲ್ಲಿ ಮುಂದುವರೆಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಬಿಜೆಪಿಯನ್ನು ಟೀಕಿಸುತ್ತಲೇ ಬಂದಿರುವ ಸಿಪಿಎಂ ಹಾಗು ಎಡರಂಗ ತಾನು ಆಡಳಿತ ನಡೆಸುವ ರಾಜ್ಯದಲ್ಲಿ ಮಾಡುತ್ತಿರುವುದೇನು ಎಂಬ ಗಂಭೀರ ಪ್ರಶ್ನೆಗೂ ಇದು ಕಾರಣವಾಗಿದೆ. ಇತ್ತೀಚೆಗೆ, ʼಮೀಡಿಯಾ ವನ್ʼ ಮಲಯಾಳಂ ನ್ಯೂಸ್ ಚಾನೆಲ್ ನ ಕಾರ್ಯನಿರ್ವಾಹಕ ಸಂಪಾದಕ ಸಿ. ದಾವೂದ್ ಅವರ ಕೈ ಕತ್ತರಿಸುವ ಬೆದರಿಕೆ ಹಾಕುವ ಮೂಲಕ ಸಿಪಿಎಂ ಕಾರ್ಯಕರ್ತರು ಆ ರಾಜ್ಯದಲ್ಲಿ ಆತಂಕ ಮೂಡಿಸಿದ್ದಾರೆ. ವಂಡೂರುನಲ್ಲಿ ಸಿಪಿಎಂ ಕಾರ್ಯಕರ್ತರು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ, ಪಕ್ಷದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿದರೆ, ಅವನ ಕೈಗಳನ್ನು ಕತ್ತರಿಸಲಾಗುವುದು ಎಂದು ಘೋಷಣೆಗಳನ್ನು ಕೂಗಿದ್ದಾರೆ. ಈ ಘಟನೆಯನ್ನು ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ (KUWJ) ತೀವ್ರವಾಗಿ ಖಂಡಿಸಿದೆ. ಮಾಧ್ಯಮ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಲೇ ಇನ್ನೊಂದೆಡೆ ಬೆದರಿಕೆ ಹಾಕುವುದು ಖಂಡನೀಯ ಎಂದು ಪತ್ರಕರ್ತರ ಒಕ್ಕೂಟವು ಹೇಳಿದೆ. ಮಾಧ್ಯಮದ ನಿಲುವುಗಳಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಮತ್ತು ಸತ್ಯವನ್ನು ಬಯಲಿಗೆಳೆಯಲು ಅನೇಕ ಮಾರ್ಗಗಳಿದ್ದರೂ, ಸಿಪಿಎಂನಂತಹ ಪಕ್ಷವೊಂದು ಪತ್ರಕರ್ತರನ್ನು ದೈಹಿಕವಾಗಿ ಬೆದರಿಸುವುದು ಸರಿಯಲ್ಲ ಎಂದು ಒಕ್ಕೂಟ ಹೇಳಿದೆ. ʼಮೀಡಿಯಾ ವನ್ʼ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕರೆ ನೀಡುವುದು ʼಮೀಡಿಯಾ ವನ್ʼ ಉದ್ಯೋಗಿಗಳಿಗೂ ಕಳವಳಕಾರಿಯಾಗಿದೆ ಎಂದೂ ಪತ್ರಕರ್ತರ ಒಕ್ಕೂಟ ಹೇಳಿದೆ. KUWJ ರಾಜ್ಯಾಧ್ಯಕ್ಷ ಕೆ.ಪಿ. ರೆಜಿ ಮತ್ತು ಪ್ರಧಾನ ಕಾರ್ಯದರ್ ಸುರೇಶ್ ಎಡಪ್ಪಾಲ್ ಅವರು ಸಿಪಿಎಂ ನಾಯಕತ್ವ ತನ್ನ ಕಾರ್ಯಕರ್ತರನ್ನು ನಿಯಂತ್ರಿಸಲು ಮತ್ತು ಸರಿಪಡಿಸಲು ಒತ್ತಾಯಿಸಿದ್ದು, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪತ್ರಕರ್ತರ ಒಕ್ಕೂಟದ ʼಮೀಡಿಯಾ ವನ್ʼ ಘಟಕವೂ ದಾವೂದ್ ಅವರಿಗೆ ನೀಡಿದ ಬೆದರಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇದು ಮಾಧ್ಯಮ ಸ್ವಾತಂತ್ರ್ಯದ ವಿರುದ್ಧದ ನಡೆಯಾಗಿದೆ ಎಂದು ಹೇಳಿದೆ. ತನ್ನ ಕಾರ್ಯನಿರ್ವಾಹಕ ಸಂಪಾದಕರಿಗೆ ಬೆದರಿಕೆ ಹಾಕಿರುವ ಕುರಿತು ʼಮೀಡಿಯಾ ವನ್ʼ ಚಾನೆಲ್ ರಾಜ್ಯ ಡಿಜಿಪಿ ಹಾಗೂ ಮಲಪ್ಪುರಂ ಎಸ್ಪಿಯವರಿಗೆ ದೂರು ದಾಖಲಿಸಿದೆ. ವಿಪಕ್ಷ ನಾಯಕ ವಿ ಡಿ ಸತೀಶನ್ ಸಹಿತ ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ನ ಹಲವಾರು ನಾಯಕರೂ ಸಿ ದಾವೂದ್ ವಿರುದ್ಧದ ಸಿಪಿಎಂ ಕಾರ್ಯಕರ್ತರಿಂದ ದಾಳಿ ಬೆದರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆಡಳಿತಾರೂಢ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ತಮ್ಮ ಪಕ್ಷದ ಕಾರ್ಯಕರ್ತರು ಕೈಕಡಿಯುವ ಬೆದರಿಕೆ ಹಾಕಿದ್ದನ್ನು ನಿರಾಕರಿಸಿದ್ದಾರೆ. ನಮ್ಮ ಪಕ್ಷದವರು ಆ ರೀತಿಯ ಬೆದರಿಕೆ ಹಾಕುವುದಿಲ್ಲ, ಹಾಗೆ ಬೆದರಿಕೆಯ ಘೋಷಣೆ ಕೂಗುವುದೂ ಸರಿಯಲ್ಲ . ಸಿಪಿಎಂ ಮಾಜಿ ಶಾಸಕರ ಮೇಲೆ ಸುಳ್ಳಾರೋಪ ಮಾಡಿರುವ ದಾವೂದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದೂ ಹೇಳಿದ್ದಾರೆ. ಜುಲೈ 8 ರಂದು ತಮ್ಮ ಹಾಗು ಚಾನಲ್ ವಿರುದ್ಧದ ಆರೋಪಗಳ ಬಗ್ಗೆ ಸಿ. ದಾವೂದ್, ಮಾತಾಡಿದ ಕಾರ್ಯಕ್ರಮದಲ್ಲಿ ಸಿಪಿಎಂ ಮಾಜಿ ಶಾಸಕ ಎನ್. ಕಣ್ಣನ್ ಅವರ ವಿಧಾನಸಭೆಯ ಭಾಷಣವನ್ನು ಉಲ್ಲೇಖಿಸಿ ಟೀಕಿಸಿದ್ದರು. ಅದರಿಂದ ಸಿಪಿಎಂ ನಾಯಕರು ಹಾಗು ಕಾರ್ಯಕರ್ತರು ಕೆರಳಿದ್ದಾರೆ. 1996 ರಿಂದ 2000 ರವರೆಗೆ ವಂಡೂರಿನ ಶಾಸಕರಾಗಿದ್ದ ಎನ್. ಕಣ್ಣನ್, 1999 ರ ಮಾರ್ಚ್ 23 ರಂದು ವಿಧಾನಸಭೆಯಲ್ಲಿ ಮಲಪ್ಪುರಂ ಜಿಲ್ಲೆಯ ತಾಲಿಬಾನೀಕರಣ ಬಗ್ಗೆ ಮಾಡಿದ ಹೇಳಿಕೆಯನ್ನು ದಾವೂದ್ ತಮ್ಮ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದರು. ಸಿಪಿಎಂ ಸ್ಥಳೀಯ ನಾಯಕರೊಬ್ಬರು ʼಮೀಡಿಯಾ ವನ್ʼ ಚಾನೆಲ್ ಕೋಮುವಾದಿ ಎಂದು ಮಾಡಿದ್ದ ಆರೋಪಗಳಿಗೆ ಪ್ರತ್ಯುತ್ತರವಾಗಿ ದಾವೂದ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ, ಈ ಭಾಷಣವು ಆಮೇಲೆ ಪಿಎಫೈ ಆದ ಈ ಹಿಂದಿನ ಎನ್ ಡಿ ಎಫ್ ಅಂದ್ರೆ ನ್ಯಾಷನಲ್ ಡೆವಲಪ್ ಮೆಂಟ್ ಫ್ರಂಟ್ ವಿರುದ್ಧವಾಗಿತ್ತು, ಮುಸ್ಲಿಮರ ವಿರುದ್ಧವಲ್ಲ ಎಂದು ಸಿಪಿಎಂ ಸಮರ್ಥಿಸಿಕೊಂಡಿದೆ. ದಾವೂದ್, ತಮ್ಮ ಸಂಪಾದಕೀಯ ವಿಡಿಯೋದಲ್ಲಿ, ಸಿಪಿಎಂ ನ ಇಸ್ಲಾಮೋಫೋಬಿಯಾವನ್ನು ಟೀಕಿಸಿದ್ದರು. ಕೇರಳದ ಆಡಳಿತ ಪಕ್ಷವು ಅದರ ಬಗ್ಗೆ ವಿಮರ್ಶಾತ್ಮಕ ನಿಲುವು ತೋರಿಸುವ ʼಮೀಡಿಯಾ ವನ್ʼ ಟಿವಿ ಸೇರಿದಂತೆ ಮುಸ್ಲಿಂ ಸಂಘಟನೆಗಳು ಮತ್ತು ಅವರ ಸಂಸ್ಥೆಗಳ ವಿರುದ್ಧ ದ್ವೇಷ ಹರಡುತ್ತಿದೆ ಎಂದು ಆರೋಪಿಸಿದ್ದರು. ಈ ಘಟನೆ ಮೂಲಕ , ಜಮಾತೇ ಇಸ್ಲಾಮಿ ಮತ್ತು ʼಮೀಡಿಯಾ ವನ್ʼ ವಿರುದ್ಧ ಇತ್ತೀಚಿಗೆ ಸಿಪಿಎಂ ಪಕ್ಷದ ನಿರಂತರ ದಾಳಿ ತಾರಕಕ್ಕೆರಿದೆ. ವಿಚಿತ್ರ ಅಂದ್ರೆ ಇದೇ ಜಮಾತೇ ಇಸ್ಲಾಮಿ ಹಿಂದ್ ಜೊತೆ ಸಿಪಿಎಂ ಉತ್ತಮ ಬಾಂಧವ್ಯ ಹೊಂದಿತ್ತು. ಜಮಾತ್ ಚುನಾವಣೆಗಳಲ್ಲಿ ಸಿಪಿಎಂ ಅನ್ನು ಬೆಂಬಲಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿಪಿಎಂ ಹಾಗು ಜಮಾತ್ ನಡುವಿನ ಸಂಬಂಧ ಬಿಗಡಾಯಿಸಿದೆ. ಜಮಾಅತೇ ಇಸ್ಲಾಮಿ ಹಿಂದ್ ಈಗ ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ಗಳ ಯುಡಿಎಫ್ ಅನ್ನು ಬೆಂಬಲಿಸುತ್ತಿದೆ. ಹಾಗಾಗಿ ಈಗ ಸಿಪಿಎಂ ಗೆ ಜಮಾತೆ ಇಸ್ಲಾಮಿ ಹಿಂದ್ ದಿಢೀರನೇ ಉಗ್ರ ಇಸ್ಲಾಮಿಕ್ ಸಂಘಟನೆಯಾಗಿ ಕಾಣಲು ಪ್ರಾರಂಭಿಸಿದೆ. ಇತ್ತೀಚಿಗೆ ನಡೆದ ನಿಲಂಬೂರ್ ಉಪಚುನಾವಣೆಯಲ್ಲೂ ಜಮಾಅತೆ ಇಸ್ಲಾಮಿ ಹಿಂದ್ ಮತ್ತೆ ಯುಡಿಎಫ್ ಅನ್ನೇ ಬೆಂಬಲಿಸಿತ್ತು. ಅಲ್ಲಿ ಸಿಪಿಎಂ ಗೆ ಸೋಲಾಯಿತು. ಆ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲೇ ಸಿಪಿಎಂ ಜಮಾತ್ ವಿರುದ್ಧ ದಾಳಿ ಶುರು ಮಾಡಿತ್ತು. ಅಲ್ಲಿ ಸೋಲಾದ ಬಳಿಕ ಈ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಮಾಅತ್ ಜೊತೆಗೆ ಅದರ ಸಂಸ್ಥೆಯೇ ನಡೆಸುವ ʼಮೀಡಿಯಾ ವನ್ʼ ಚಾನಲ್ ಕೂಡ ಸಿಪಿಎಂ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಕೇರಳದ ಸುನ್ನಿ ಸಂಘಟನೆಗಳಂತೆ ನಿಲಂಬೂರ್ ಕ್ಷೇತ್ರದಲ್ಲಾಗಲಿ, ಇಡೀ ಕೇರಳದಲ್ಲಾಗಲಿ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಷ್ಟು ದೊಡ್ಡ ಸಂಖ್ಯೆಯ ಸದಸ್ಯರು ಜಮಾತೆ ಇಸ್ಲಾಮಿ ಹಿಂದ್ ನಲ್ಲಿಲ್ಲ. ಆದರೆ ಜನಮನ್ನಣೆ ಪಡೆದಿರುವ ʼಮೀಡಿಯಾ ವನ್ʼ ಚಾನಲ್ ಹಾಗು ಸುಮಾರು ನಾಲ್ಕು ದಶಕಗಳಿಂದ ನಡೆಯುತ್ತಿರುವ ಮಾಧ್ಯಮಂ ದಿನಪತ್ರಿಕೆ ಆ ಸಂಘಟನೆ ಕೈಯಲ್ಲಿರುವುದರಿಂದ ಅದಕ್ಕೆ ರಾಜಕೀಯ ಪ್ರಭಾವ ಇದೆ. ವಿಶೇಷವಾಗಿ ʼಮೀಡಿಯಾ ವನ್ʼ ಚಾನಲ್ ನಲ್ಲಿ ಪ್ರತಿ ರಾತ್ರಿ ನಡೆಯುವ ಔಟ್ ಆಫ್ ಫೋಕಸ್ ಎಂಬ ಸಂಪಾದಕೀಯ ನಿಲುವು ಚರ್ಚಿಸುವ ಕಾರ್ಯಕ್ರಮ ಸಿಪಿಎಂ ನ ಸಿಟ್ಟಿಗೆ ಮೂಲವಾಗಿದೆ. ಈ ಕಾರ್ಯಕ್ರಮದ ಮೂಲಕ ʼಮೀಡಿಯಾ ವನ್ʼ ಕೇರಳದಲ್ಲಿ ಇಸ್ಲಾಮಿಸ್ಟ್ ಚಿಂತನೆಗಳನ್ನು ಹರಡುತ್ತಿದೆ, ಅದರಲ್ಲಿ ಸಿ ದಾವೂದ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಪಿಎಂ ನ ಕಾರ್ಯಕರ್ತರು, ಸ್ಥಳೀಯ ನಾಯಕರು ತೀವ್ರ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಸಿ. ದಾವೂದ್ ಅವರು ಬರಹಗಾರರಾಗಿದ್ದು, 'ಔಟ್ ಆಫ್ ಫೋಕಸ್' ಟಿವಿ ಕಾರ್ಯಕ್ರಮ ಮತ್ತು ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಷಯಗಳ ಕುರಿತು ಅವರ ತೀಕ್ಷ್ಣವಾದ ವಿಶ್ಲೇಷಣೆಗಳಿಗೆ ಹೆಸರುವಾಸಿಯಾಗಿದ್ದಾರೆ. ಈಗ ಅವರ ವಿರುದ್ಧದ ಸಿಪಿಎಂ ಕಾರ್ಯಕರ್ತರ ದ್ವೇಷ ಅವರ ಕೈ ಕತ್ತರಿಸುವ ಬೆದರಿಕೆವರೆಗೂ ಹೋಗಿ ತಲುಪಿದೆ ʼಮೀಡಿಯಾ ವನ್ʼ ಚಾನಲ್ ಈ ಹಿಂದೆ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿ ಅದರ ಪರವಾನಗಿ ನವೀಕರಿಸಲು ಮೋದಿ ಸರಕಾರ ನಿರಾಕರಿಸಿತ್ತು. ಆದರೆ ಚಾನಲ್ ವಿರುದ್ಧ ಮಾಡಿದ ಆರೋಪಗಳು ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಚಾನಲ್ ಗೆ ಪರವಾನಗಿ ಕೊಡಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿ ಚಾನಲ್ ಮರುಪ್ರಸಾರ ಶುರುವಾಯಿತು. ಈಗ ಅದೇ ಚಾನಲ್ ಕೇರಳದ ಆಡಳಿತಾರೂಢ ಸಿಪಿಎಂ ನ ದಾಳಿಗೆ ಗುರಿಯಾಗಿದೆ. ʼಮೀಡಿಯಾ ವನ್ʼ ಅಂದ್ರೆ ಇಸ್ಲಾಮಿಸ್ಟ್ ಚಾನಲ್ ಎಂದು ಸಿಪಿಎಂ ನವರು ದೊಡ್ಡ ಅಪಪ್ರಚಾರ ಅಭಿಯಾನವನ್ನೇ ನಡೆಸುತ್ತಿದ್ದಾರೆ. ಅದಕ್ಕೆ ವಿರುದ್ಧವಾಗಿ ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾದ್ಯಂತ ಸಿಪಿಎಂ ವಿರುದ್ಧ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಫಾಸ್ಟ್ಯಾಗ್ ಸ್ಟಿಕ್ಕರ್ ಅಂಟಿಸದ ವಾಹನಗಳಿಗೆ 'ಬ್ಲಾಕ್ ಲಿಸ್ಟ್' ಶಿಕ್ಷೆ!
FASTAG new rules - ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಲೀಸಾಗಿ ಸಂಚರಿಸಬೇಕಾದರೆ ನಿಮ್ಮ ವಾಹನಕ್ಕೆ ಫಾಸ್ಟ್ಯಾಗ್ ಇರುವುದು ಕಡ್ಡಾಯ. ಆದರೆ, ಕೆಲವರು ಫಾಸ್ಟ್ಯಾಗ್ ಇದ್ದರೂ ಅದನ್ನು ಸರಿಯಾಗಿ ವಾಹನಕ್ಕೆ ಅಂಟಿಸದೇ ಕೈಯಲ್ಲಿ ಹಿಡಿದು ಟೋಲ್ ಗೇಟ್ ದಾಟುತ್ತಿದ್ದಾರೆ. ಇಂತಹ ನಡವಳಿಕೆಗೆ ಕಡಿವಾಣ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈಗ ಕಠಿಣ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ, ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ವಾಹನದ ಮುಂಭಾಗದ ಗಾಜಿಗೆ ಅಂಟಿಸದ ವಾಹನಗಳನ್ನು 'ಕಪ್ಪುಪಟ್ಟಿ'ಗೆ (ಬ್ಲಾಕ್ಲಿಸ್ಟ್) ಸೇರಿಸಲಾಗುವುದು ಎಂದು ಪ್ರಾಧಿಕಾರ ಶುಕ್ರವಾರ ಎಚ್ಚರಿಸಿದೆ.
ʼಧರ್ಮಸ್ಥಳʼ ಪ್ರಕರಣದ ಕುರಿತು ಕಾನೂನು ಕ್ರಮ: ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ.
ಮಂಗಳೂರು: ʼಧರ್ಮಸ್ಥಳʼ ಪ್ರಕರಣದ ದೂರುದಾರ ಸಾಕ್ಷಿಯು ನೀಡಿರುವ ಅಸ್ಥಿಪಂಜರದ ಅವಶೇಷಗಳನ್ನು, ದೂರುದಾರರ ಪರ ವಕೀಲರು ಹಾಗೂ ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು ಜಿಲ್ಲೆಯ ಸಕ್ಷಮ ಪ್ರಾಧಿಕಾರವು ʼಧರ್ಮಸ್ಥಳʼ ಪ್ರಕರಣದಲ್ಲಿ ಸಾಕ್ಷಿಯ ರಕ್ಷಣೆಗೆ ಜು. 10ರಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಿದೆ. ಶುಕ್ರವಾರ ಸಾಕ್ಷಿ, ದೂರುದಾರ ಬೆಳ್ತಂಗಡಿಯ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ಸ್ವತಃ ತಾವೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದಾರೆ ಎಂದು ಎಸ್ಪಿಯವರು ಹೇಳಿಕೆ ನೀಡಿದ್ದಾರೆ. ಸಾಕ್ಷಿ, ದೂರುದಾರರ ಗುರುತಿನ ರಕ್ಷಣೆಯ ವಿಚಾರದಲ್ಲಿ, ಸಾಕ್ಷಿ, ದೂರುದಾರರನ್ನು ಪ್ರತಿನಿಧಿಸಿರುವ ವ್ಯಕ್ತಿಗಳು ಪತ್ರಿಕಾ ಪ್ರಕಟಣೆ ಹಾಗೂ ಎಫ್ಐಆರ್ ಪ್ರತಿಯನ್ನು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಮೂಲಕ, ಸಾಕ್ಷಿ, ದೂರುದಾರರ ವಯಸ್ಸು, ವೃತ್ತಿಯ ಸ್ಥಳ, ಚಹರೆ, ವೃತ್ತಿಯಲ್ಲಿದ್ದ ಅವಧಿ, ಸಮುದಾಯ ಮತ್ತಿತರ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ. ಇದರ ಆಧಾರದಲ್ಲಿ ಸ್ಥಳೀಯ ಅನೇಕರು ಸಾಕ್ಷಿ, ದೂರುದಾರರನ್ನು ಅಂದಾಜಿಸಿರುತ್ತಾರೆ. ಆದರೆ ಎಲ್ಲಾ ಅಧಿಕೃತ ಮೂಲಗಳಿಂದ ಸಾಕ್ಷಿ ದೂರುದಾರರ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಡಿಎಸ್ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ನಲ್ಲಿ ಚರ್ಚೆಯೇ ಆಗಿಲ್ಲ : ಎಚ್.ಎಂ.ರೇವಣ್ಣ
ಮೈಸೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಕೆಲವೊಂದಿಷ್ಟು ಗೊಂದಲಗಳು ಇತ್ತು. ಇವುಗಳನ್ನು ಈಗ ಹೈಕಮಾಂಡ್ ಬಗೆಹರಿಸಿದೆ. ಮುಖ್ಯಮಂತ್ರಿ ಕುರ್ಚಿಯ ವಿಚಾರದಲ್ಲಿ ನಾವು ಮಾಧ್ಯಮಗಳ ಮುಂದೆ ಮಾತನಾಡಬಾರದೆಂದು ಸೂಚನೆ ಇದೆ ಎಂದು ಅವರು ಹೇಳಿದರು. ಪ್ರತಿ ತಿಂಗಳು ಕೊಡಲು ಆಗಿಲ್ಲ: ಕೆಲವು ತೊಡಕುಗಳು ಇರುವ ಕಾರಣ ಪ್ರತೀ ತಿಂಗಳು ಗೃಹಲಕ್ಷ್ಮೀ ಹಣ ಕೊಡಲು ಆಗಿಲ್ಲ. ಹೀಗಾಗಿ ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮೀ ಹಣ ಕೊಡುತ್ತಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ನಿಶ್ಚಿತ : ನಿಶ್ಚಲಾನಂದನಾಥ ಸ್ವಾಮೀಜಿ
ಮಂಡ್ಯ : ಕಾಂಗ್ರೆಸ್ ಪಕ್ಷ 136 ಸ್ಥಾನ ಗಳಿಸಲು ಡಿ.ಕೆ.ಶಿವಕುಮಾರ್ ಸಾಕಷ್ಟು ಶ್ರಮಿಸಿದ್ದು, ಅವರು ಮುಖ್ಯಮಂತ್ರಿ ಆಗಬೇಕು ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಅವರು ಸಿಎಂ ಆಗುವುದು ನಿಶ್ಚಿತ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಸಿಎಂ ಆಗುವ ಹಂಬಲ ಇದ್ದೇ ಇರುತ್ತದೆ. ಅದೇ ರೀತಿ ನಾವು ಕೂಡ ಸಿಎಂ ಆಗಲಿ ಎಂದು ಬಯಸುತ್ತೇವೆ. ಡಿ.ಕೆ.ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ. ತಾಳ್ಮೆಯಿಂದ ಕಾಯ್ದು ಒಳ್ಳೆಯ ಸ್ಥಾನ ಪಡೆದುಕೊಳ್ಳುತ್ತಾರೆ ಎಂದರು. ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಚುನಾವಣೆಯಲ್ಲಿ ಬೆಂಬಲಿಸಿತ್ತು. ಮೈಸೂರು ಬಾಗದಲ್ಲಿ ಹೆಚ್ಚು ಒಲವು ತೋರಿದ್ದಕ್ಕಾಗಿ ಕಾಂಗ್ರೆಸ್ಗೆ ಹೆಚ್ಚು ಸೀಟುಗಳು ಬಂದವು. ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಅವರು ಪ್ರತಿಕ್ರಿಯಿಸಿದರು.
ಬೀದಿ ನಾಯಿಗಳಿಗೆ ‘ಚಿಕನ್ ರೈಸ್’; ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ 2.88 ಕೋಟಿ ರೂ. ವೆಚ್ಚ
ಬೆಂಗಳೂರು : ನಗರದಲ್ಲಿರುವ ಬೀದಿ ನಾಯಿಗಳಿಗೆ ‘ಚಿಕನ್ ರೈಸ್’ ನೀಡುವ ಯೋಜನೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು 2.88 ಕೋಟಿ ಖರ್ಚು ಮಾಡುತ್ತಿದ್ದು, ಇದಕ್ಕಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಣಿಯಾದ ಸಂಸ್ಥೆ ಮತ್ತು ಏಜೆನ್ಸಿಯಿಂದ ಟೆಂಡರ್ ಆಹ್ವಾನಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊರಡಿಸಿರುವ ಟೆಂಡರ್ ಪ್ರಕಾರ, ಪಶುಸಂಗೋಪನಾ ಇಲಾಖೆಯು ಎಂಟು ವಲಯಗಳಾದ ಪೂರ್ವ, ಪಶ್ಚಿಮ, ದಕ್ಷಿಣ, ಆರ್.ಆರ್ ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ, ಯಲಹಂಕ ಮತ್ತು ಮಹದೇವಪುರಗಳಲ್ಲಿ ಪ್ರತಿ ವಲಯಕ್ಕೆ 500 ನಾಯಿಗಳಿಗೆ ಪ್ರತಿದಿನ ಆಹಾರ ಸೇವೆಗಳನ್ನು ಒದಗಿಸಲು ನೋಂದಾಯಿತ ಸೇವಾ ಪೂರೈಕೆದಾರರಿಂದ ಪ್ರಸ್ತಾವಗಳನ್ನು ಆಹ್ವಾನಿಸಿದೆ. ನಗರದಾದ್ಯಂತ ಸುಮಾರು 5,000 ಬೀದಿ ನಾಯಿಗಳಿಗೆ ಪ್ರತಿದಿನ ‘ಚಿಕನ್ ರೈಸ್’ ವಿತರಿಸುವಂತಹ ಗುರಿಯನ್ನು ಹೊಂದಿದೆ. ಬಿಬಿಎಂಪಿ ಹೊಸ ಯೋಜನೆಯ ಮಾಹಿತಿ ಪ್ರಕಾರ ಪ್ರತಿಯೊಂದು ಬೀದಿ ನಾಯಿಗೆ ದಿವಸಕ್ಕೆ 22 ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಸಾರಿಗೆ ವೆಚ್ಚ ಸೇರಿದಂತೆ ಸುಮಾರು ವರ್ಷಕ್ಕೆ ಅಂದಾಜು ಸುಮಾರು 2.88 ಕೋಟಿ ರೂಪಾಯಿಗಳಷ್ಟು ವೆಚ್ಚ ತಗುಲುತ್ತದೆ. ಈ ಯೋಜನೆಯ ವ್ಯಾಪ್ತಿಗೆ ಸುಮಾರು 5,000 ಬೀದಿ ನಾಯಿಗಳನ್ನು ಒಳಪಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಾರ್ಡ್ಸ್ ಟೆಸ್ಟ್ 2025 - ಬುಮ್ರಾ ದಾಳಿಗೆ ಮುದುಡಿದ ಇಂಗ್ಲೆಂಡ್
ಲಂಡನ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಐದು ವಿಕೆಟ್ಗಳ ಸಾಧನೆಯಿಂದಾಗಿ ಭಾರತ ತಂಡವು ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಮೊತ್ತ ಗಳಿಸುವುದನ್ನು ತಡೆಯಿತು. ಜಾಮಿ ಸ್ಮಿತ್ ಮತ್ತು ಬ್ರೈಡನ್ ಕಾರ್ಸ್ ಅರ್ಧ ಶತಕ ಗಳಿಸಿದರೂ, ಇಂಗ್ಲೆಂಡ್ 387 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತವು ದಿನದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು, ಕೆ.ಎಲ್. ರಾಹುಲ್ ಮತ್ತು ಪಂತ್ ಕ್ರೀಸ್ನಲ್ಲಿದ್ದರು.
ಮೂರನೇ ಭಾಷೆಯ ಕಡ್ಡಾಯ ಪರೀಕ್ಷೆ ರದ್ದುಗೊಳಿಸಲು ಚೇತನ್ ಅಹಿಂಸಾ ಆಗ್ರಹ
ಬೆಂಗಳೂರು : ರಾಜ್ಯ ಶಿಕ್ಷಣ ಪಠ್ಯಕ್ರಮದಲ್ಲಿ 9 ಮತ್ತು 10ನೇ ತರಗತಿಗೆ ಮೂರನೇ ಭಾಷೆಯ ಕಡ್ಡಾಯ ಪರೀಕ್ಷೆಯನ್ನು ರದ್ದು ಮಾಡಿ, ಎರಡು ಭಾಷೆ ಪರೀಕ್ಷೆ ಮಾತ್ರ ಕಡ್ಡಾಯ ಮಾಡಬೇಕು ಎಂದು ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ. ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಕನ್ನಡ ಮೊದಲು ಬಳಗದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಎಸ್ಸಿ, ಐಸಿಎಸ್ಸಿ ಬೋರ್ಡಿನ 9 ಮತ್ತು 10ನೆ ತರಗತಿ ವಿದ್ಯಾರ್ಥಿಗಳು ಎರಡು ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಆದರೆ, ರಾಜ್ಯದ ಎಸೆಸೆಲ್ಸಿ ಬೋರ್ಡಿನ ಮಕ್ಕಳ ಮೇಲೆ ಮೂರನೇ ಭಾಷೆಯನ್ನು ಹೇರಿಕೆ ಮಾಡಿ ತಾರತಮ್ಯ ಮಾಡಲಾಗುತ್ತಿದೆ ಎಂದರು. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರಿಗೆ ಸರಕಾರ ಸಹಾಯ ಮಾಡುವುದು ಬಿಟ್ಟು, ಮೂರನೇ ಭಾಷೆಯ ಹೊರೆಯನ್ನು ಹೇರುತ್ತಿದೆ. ಐಸಿಎಸ್ಸಿ, ಸಿಬಿಎಸ್ಸಿ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಓದುವ 9 ಮತ್ತು 10ನೆ ತರಗತಿ ಮಕ್ಕಳಿಗೆ ಮೂರನೇ ಭಾಷೆಯನ್ನು ಆಯ್ಕೆಯಾಗಿ ಇಡಬೇಕು ಅಥವಾ ಸರ್ಟಿಫಿಕೇಟ್ ಪರೀಕ್ಷೆಯಂತಿಡಬೇಕು. ಈ ಕುರಿತು ಸರಕಾರ ಎಚ್ಚೆತ್ತು ಶಿಕ್ಷಣದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಚೇತನ್ ಒತ್ತಾಯಿಸಿದರು. ರೈತ ಹೋರಾಟಗಾರ ಜೆ.ಎಂ.ವೀರಸಂಗಯ್ಯ ಮಾತನಾಡಿ, ರಾಜ್ಯದಲ್ಲಿ ಮೂರನೆ ಭಾಷೆ ಯಾವುದು ಇರಬೇಕೆಂದು ಸರಿಯಾಗಿ ಆಯ್ಕೆ ಮಾಡಿಕೊಳ್ಳದೆ, ಹಿಂದಿಯನ್ನು ಹೇರಿಕೊಂಡಿದ್ದೇವೆ. ದಕ್ಷಿಣ ಕರ್ನಾಟಕವನ್ನು ಹೊರತುಪಡಿಸಿ, ಬಹುತೇಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದು ಭಾಷೆ ಮಾತ್ರ ಬರುತ್ತದೆ. ಅಂತಹವರ ಮೇಲೆ ಮೂರನೇ ಭಾಷೆಯನ್ನು ಹೇರಿ ಬೌದ್ಧಿಕವಾಗಿ ಕುಸಿಯುವಂತೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಅಧ್ಯಕ್ಷೆ ಸಾರಿಕಾ ಶೋಭಾ, ಕಾರ್ಮಿಕ ಸೇನೆಯ ಅಧ್ಯಕ್ಷ ಆರ್.ಎಂ.ಎನ್. ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿರಾ ಶಾಲೆಯಲ್ಲಿ ಮಂತ್ರಿಮಂಡಲದ ಪದಗ್ರಹಣ
ಉಳ್ಳಾಲ : ಹಿರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭ ಶುಕ್ರವಾರ ನಡೆಯಿತು. ವಿದ್ಯಾರ್ಥಿ ನಾಯಕ ಬಾರಿಝ್ ಅಲಿ, ಉಪ ನಾಯಕಿ ರಿಹಾನ ಮೊಹಮ್ಮದ್ ಅಶ್ರಫ್ ಹಾಗೂ ವಿವಿಧ ವಿಭಾಗಗಳ ಮಂತ್ರಿ ಉಸ್ತುವಾರಿ ಮಂತ್ರಿ , ಸಹಾಯಕ ಮಂತ್ರಿಗಳನ್ನು ಒಳಗೊಂಡ ತಂಡವು ಅತಿಥಿಗಳನ್ನು ಸಭಾಂಗಣಕ್ಕೆ ಕರೆತಂದರು. ಕಾರ್ಯಕ್ರಮ ದಲ್ಲಿ ಶಾಂತಿ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಅಬ್ದುಲ್ ಕರೀಂ, ಶಾಲಾ ಸಂಚಾಲಕ ಅಬ್ದುಲ್ ರಹಮಾನ್ ,ಹಿರಾ ವಿಮೆನ್ಸ್ ಕಾಲೇಜಿನ ಸಂಚಾಲಕ ರಹಮತುಲ್ಲಾ ಆಡಳಿತಾಧಿಕಾರಿ ಜಾಕಿರ್ ಹುಸೇನ್ ರಕ್ಷಕ ಶಿಕ್ಷಕ ಸಂಘದ ಸದಸ್ಯ ಇಫ್ತಿಖಾರ್ ಅಹಮದ್ ಶಾಲಾ ಮುಖ್ಯ ಶಿಕ್ಷಕ ರೀನಾ ವೇಗಸ್, ಆಯಿಷಾ ಅಫ್ರಿನ್ ಉಪಸ್ಥಿತರಿದ್ದರು. ಶಾಲಾ ನಾಯಕರು ಪ್ರಮಾಣವಚನ ಸ್ವೀಕರಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು.
ಇರಾನ್ಗೆ ಪ್ರಯಾಣಿಸಬೇಡಿ: ಅಮೆರಿಕ ಪ್ರಜೆಗಳಿಗೆ ಸಲಹೆ
ವಾಷಿಂಗ್ಟನ್: ಇರಾನಿನ ಆಡಳಿತವು ಒಡ್ಡಿದ `ತೀವ್ರ ಅಪಾಯಗಳನ್ನು' ಉಲ್ಲೇಖಿಸಿ, ಇರಾನಿಗೆ ಎಲ್ಲಾ ಪ್ರಯಾಣಗಳನ್ನು ತಪ್ಪಿಸಲು ಅಮೆರಿಕದ ನಾಗರಿಕರನ್ನು, ವಿಶೇಷವಾಗಿ ಇರಾನಿಯನ್-ಅಮೆರಿಕನ್ನರನ್ನು ಆಗ್ರಹಿಸಿ ಅಮೆರಿಕದ ವಿದೇಶಾಂಗ ಇಲಾಖೆ ಹೊಸ ಸಲಹೆಯನ್ನು ಜಾರಿಗೊಳಿಸಿದೆ. ಇರಾನ್ ಉಭಯ ರಾಷ್ಟ್ರೀಯತೆಯನ್ನು ಮಾನ್ಯ ಮಾಡುವುದಿಲ್ಲ ಮತ್ತು ಬಂಧಿತ ಅಮೆರಿಕನ್ ನಾಗರಿಕರಿಗೆ ಕಾನ್ಸುಲರ್ ಸೇವೆಯನ್ನು ನಿರಾಕರಿಸುತ್ತಿದೆ. ಬಾಂಬ್ ದಾಳಿ ನಿಂತಿದ್ದರೂ, ಇರಾನಿಗೆ ಪ್ರಯಾಣಿಸುವುದು ಸುರಕ್ಷಿತ ಎಂದು ಅರ್ಥೈಸುವಂತಿಲ್ಲ. ಖಂಡಿತಾ ಸುರಕ್ಷಿತವಲ್ಲ ಎಂದು ವಿದೇಶಾಂಗ ಇಲಾಖೆ ಒತ್ತಿಹೇಳಿದ್ದು, ಇರಾನ್ಗೆ ಪ್ರಯಾಣಿಸುವುದರಿಂದ ಆಗಬಹುದಾಗ ಅಪಾಯಗಳ ಮಾಹಿತಿ ನೀಡುವ ಹೊಸ ವೆಬ್ಸೈಟ್ ಒಂದನ್ನು ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಂಭಾಪುರಿ ಸ್ವಾಮೀಜಿ ಹೇಳಿಕೆ ರಾಜಕೀಯ ಪ್ರೇರಿತ : ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ಅಹಿಂದ ವರ್ಗಗಳು ಜನಾಭಿಪ್ರಾಯ ಪಡೆದು ಅಧಿಕಾರ ಪಡೆದ ಹಲವು ಸಂದರ್ಭಗಳಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯು ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ, ರಂಭಾಪುರಿ ಶ್ರೀಗಳು ಯಾವ ಸಾಮಾಜಿಕ ರಚನೆಯ ಭಾಗವಾಗಿ ಮಾತನಾಡುತ್ತಿದ್ದಾರೆ ಎಂಬುದನ್ನು ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದಾಸೋಹದ ಕಲ್ಪನೆಗೆ ಹತ್ತಿರವಾಗಿರುವ ಮಠವೊಂದರ ಮಠಾಧಿಪತಿಯಾಗಿದ್ದೂ ಸಹ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ರಂಭಾಪುರಿ ಶ್ರೀಗಳ ಮಾತುಗಳು ಹೆಚ್ಚು ರಾಜಕೀಯ ಪ್ರೇರಿತವಾಗಿವೆ ಮತ್ತು ಶೂನ್ಯಮಟ್ಟದ ಜನಪರತೆಯ ನಿಲುವಿನ ಸಂಕೇತವಾಗಿದೆ ಎಂದು ಹೇಳಿದ್ದಾರೆ. ನಮಗೆ ತಿಳಿದಂತೆ ಬಿಜೆಪಿ ಮತ್ತು ಬಂಡವಾಳಶಾಹಿ ಮನಸ್ಸುಗಳು ರೈತ ಪರವಾದ ಭೂ ಸುಧಾರಣೆ ಕಾಯ್ದೆಯಿಂದ ಹಿಡಿದು, ಅನ್ನಭಾಗ್ಯ ಯೋಜನೆಯ ವರೆಗೆ ಎಲ್ಲವನ್ನೂ ಕೂಡ ವಿರೋಧಿಸಿಕೊಂಡೇ ಬಂದಿವೆ. ಇನ್ನು ಸಾಮಾಜಿಕ ನ್ಯಾಯದ ಪರವಾಗಿರುವ ಮೀಸಲಾತಿಗೆ ಸಂಬಂಧಿಸಿದಂತೆಯೂ ಇರುವ ಇವರ ನಿಲುವುಗಳು ಎಂತವು ಎಂಬುದಕ್ಕೆ ಮಂಡಲ್ ವರದಿಯ ನಿರಾಕರಣೆಯ ಕಾಲದಿಂದಲೂ ಇರುವ ಇವರ ವಿರೋಧಿ ನಿಲುವನ್ನೆ ನಾವು ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದು ಮಹದೇವಪ್ಪ ತಿಳಿಸಿದ್ದಾರೆ. ರಾಜಕಾರಣದಲ್ಲಿ ಧರ್ಮ ಪ್ರವೇಶ ಮಾಡಬಾರದು ಎಂಬ ಆಶಯ ಗೊತ್ತಿದ್ದಾಗಲೂ ಸಹ ಈಗಾಗಲೇ ಸಾಮಾಜಿಕ ವ್ಯವಸ್ಥೆಯ ಅಸ್ತಿತ್ವದ ಭಾಗವಾಗಿ ಧರ್ಮ ಪ್ರವೇಶ ಮಾಡಿಯಾಗಿದೆ. ಆದರೆ ಕನಿಷ್ಠ ಪಕ್ಷ ಅದು ಆರೋಗ್ಯಕರವಾಗಿ ಇರುವ ರೀತಿಯಲ್ಲಿ ರಂಭಾಪುರಿ ಶ್ರೀಗಳು ಎಚ್ಚರ ವಹಿಸಬೇಕೆಂದು ನಾನು ಆಶಿಸುವೆ ಎಂದು ಅವರು ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೊರೋನ ನಂತರದ ಸಂದರ್ಭದಲ್ಲಿ, ದುಡಿಮೆ ಇಲ್ಲದೇ ಬದುಕಿಲ್ಲದೇ ಜನರು ಅನುಭವಿಸಿದ್ದ ಆ ಮಹಾಕಷ್ಟದ ಅರಿವು ಶ್ರೀಗಳಿಗೆ ಇದ್ದಿದ್ದರೆ ಅವರು ಖಂಡಿತಾ ಬಿಜೆಪಿಯವರ ರೀತಿಯಲ್ಲಿ ಹೀಗೆ ಅಸೂಕ್ಷ್ಮದ ಮಾತನ್ನು ಆಡುತ್ತಿರಲಿಲ್ಲ ಎಂದು ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕವಾಗಿ ಮಾರ್ಗದರ್ಶಿ ಸ್ತರದಲ್ಲಿ ಇರುವ ಶ್ರೀಗಳು ಬಡವರ ವಿಷಯದಲ್ಲಿ ಆತುರವಾಗಿ ಮಾತನಾಡದೇ ಹೃದಯ ಬಳಸಿ ಇಲ್ಲವೇ ಮಠಗಳ ಮೂಲ ತಿಳುವಳಿಕೆಯನ್ನು ಬಳಸಿ ಮಾತನಾಡಿದರೆ ಹೆಚ್ಚು ಅರ್ಥಪೂರ್ಣ ಎಂದು ಅವರು ಸಲಹೆ ನೀಡಿದ್ದಾರೆ.
ಹಜ್ ಯಾತ್ರೆ-2026 | ವೃತ್ತಿಪರರಿಗಾಗಿ 20 ದಿನಗಳ ಹಜ್ ಪ್ಯಾಕೇಜ್ : ಝುಲ್ಫಿಖಾರ್ ಅಹ್ಮದ್ ಖಾನ್
ಬೆಂಗಳೂರು : ಪವಿತ್ರ ಹಜ್ ಯಾತ್ರೆಯ ಅವಧಿಯು 40 ದಿನಗಳದ್ದು ಆಗಿರುತ್ತದೆ. ಇದೇ ಮೊದಲ ಬಾರಿಗೆ ಭಾರತೀಯ ಹಜ್ ಸಮಿತಿಯು ವೃತ್ತಿಪರರಿಗಾಗಿ 2026ನೆ ಸಾಲಿನ ಹಜ್ ಯಾತ್ರೆ ವೇಳೆ 20 ದಿನಗಳ ಹಜ್ ಪ್ಯಾಕೇಜ್ ಅನ್ನು ಪರಿಚಯಿಸುತ್ತಿದೆ ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಖಾರ್ ಅಹ್ಮದ್ ಖಾನ್ ತಿಳಿಸಿದರು. ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್ಆರ್ ಐ, ಸಾಫ್ಟ್ ವೇರ್ ಇಂಜಿನಿಯರ್ಗಳು ಸೇರಿದಂತೆ ವೃತ್ತಿಪರರಿಗಾಗಿ 20 ದಿನಗಳ ಹಜ್ ಯಾತ್ರೆಯ ಪ್ಯಾಕೇಜ್ ಆರಂಭಿಸಲಾಗುತ್ತಿದೆ. ಭಾರತೀಯ ಹಜ್ ಸಮಿತಿ ನಡೆಸುವ ಖುರ್ರಾ(ಲಾಟರಿ) ಪ್ರಕ್ರಿಯೆ ಸಂದರ್ಭದಲ್ಲಿ ಯಾತ್ರಿಗಳಿಗೆ 20 ಅಥವಾ 40 ದಿನಗಳ ಆಯ್ಕೆ ಮುಂದಿರಿಸಲಾಗುತ್ತದೆ ಎಂದು ಹೇಳಿದರು. 20 ದಿನಗಳ ಪ್ಯಾಕೇಜ್ಗೆ ಆಯ್ಕೆಯಾದವರು ನೇರವಾಗಿ 40 ದಿನಗಳ ಪ್ಯಾಕೇಜ್ ಅಡಿಯಲ್ಲಿ ಬರುತ್ತಾರೆ. ಕೇಂದ್ರ ಸರಕಾರವು ಮೀನಾದಲ್ಲಿ ಭಾರತೀಯ ಹಜ್ ಯಾತ್ರಿಕರು ತಂಗಲು ಅಗತ್ಯವಿರುವ ವ್ಯವಸ್ಥೆ ಮಾಡಬೇಕಿರುವ ಹಿನ್ನೆಲೆಯಲ್ಲಿ 2026ನೆ ಸಾಲಿನ ಹಜ್ ಯಾತ್ರೆಗಾಗಿ ಶೀಘ್ರವೇ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಅವರು ತಿಳಿಸಿದರು. ಜು.7ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜು.31 ಕೊನೆಯ ದಿನವಾಗಿದೆ. ಆಸಕ್ತರು ಭಾರತೀಯ ಹಜ್ ಸಮಿತಿಯ ವೆಬ್ಸೈಟ್ https://hajcommittee.gov.in ಅಥವಾ Haj Suvidha App ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಖುರ್ರಾ(ಲಾಟರಿ)ದಲ್ಲಿ ಹಜ್ ಯಾತ್ರೆಗೆ ಆಯ್ಕೆಯಾಗುವವರು ಮೊದಲ ಕಂತಿನ ರೂಪದಲ್ಲಿ 1.50 ಲಕ್ಷ ರೂ.ಗಳನ್ನು ಜಮೆ ಮಾಡಬೇಕು ಎಂದು ಅವರು ತಿಳಿಸಿದರು. ಅಝಿಝಿಯಾದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಈ ಬಾರಿ ಕೇಂದ್ರ ಸರಕಾರ ಹಾಗೂ ಸೌದಿ ಅರೇಬಿಯಾ ಸರಕಾರದ ಸಹಕಾರದೊಂದಿಗೆ ಅಝಿಝಿಯಾದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಝುಲ್ಫಿಖಾರ್ ಅಹ್ಮದ್ ಖಾನ್ ಹೇಳಿದರು. ಭಾರತೀಯ ಹಜ್ ಸಮಿತಿಯ ಖುರ್ರಾದಲ್ಲಿ ಆಯ್ಕೆಯಾಗಿ ಹಜ್ ಯಾತ್ರೆಗೆ ಹೋಗುವವರಿಗೆ ಈ ಬಾರಿ ಕೇಂದ್ರ ಸರಕಾರವು ಮಕ್ಕಾ, ಮದೀನಾ ಹಾಗೂ ಮೀನಾದಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಿದೆ. ಹಜ್ ಯಾತ್ರೆ ಹಾಗೂ ಊಟಕ್ಕಾಗಿ ಎಷ್ಟು ಹಣ ಭರಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ಅವರು ತಿಳಿಸಿದರು. 2025ನೆ ಸಾಲಿನಲ್ಲಿ ರಾಜ್ಯ ಹಜ್ ಸಮಿತಿಯಿಂದ ಯಾತ್ರೆಗೆ ತೆರಳುವವರಿಗೆ 3.30 ಲಕ್ಷ ರೂ.ನಿಗದಿ ಪಡಿಸಲಾಗಿತ್ತು. 2026ನೆ ಸಾಲಿನ ಹಜ್ ಯಾತ್ರೆಗೆ ಎಷ್ಟು ಹಣ ಭರಿಸಬೇಕು ಎಂಬುದರ ಕುರಿತು ಕೇಂದ್ರ ಸರಕಾರ ಇನ್ನೂ ನಿರ್ಧರಿಸಿಲ್ಲ. ಹಜ್ ಯಾತ್ರೆ ಕೈಗೊಳ್ಳಲು ಬಯಸುವವರಿಗೆ ಶೀಘ್ರವೇ ಪಾಸ್ಪೋರ್ಟ್ಗಳು ಲಭ್ಯವಾಗುವಂತೆ ಮಾಡಲು ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು. ಹಜ್ ಯಾತ್ರೆಗೆ ಹೋಗುವವರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ರಾಜ್ಯ ಹಜ್ ಸಮಿತಿ ಕಚೇರಿಗೆ ಮಾಹಿತಿ ನೀಡಿದರೆ, ಆದಷ್ಟು ಬೇಗ ಅವರಿಗೆ ಪಾಸ್ಪೋರ್ಟ್ ಕಚೇರಿಯಲ್ಲಿ ಭೇಟಿಗೆ ಅವಕಾಶ ಕಲ್ಪಿಸಿ, ಪಾಸ್ಪೋರ್ಟ್ ತ್ವರಿತವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಪಾಸ್ಪೋರ್ಟ್ ಹೊಂದಿದ್ದರೆ ಅದರ ಅವಧಿಯು 2026ರ ಡಿ.31ರವರೆಗೆ ಇರಬೇಕು ಎಂದು ಝುಲ್ಫಿಖಾರ್ ಅಹ್ಮದ್ ಖಾನ್ ತಿಳಿಸಿದರು. 65 ವರ್ಷ ಮೇಲ್ಪಟ್ಟವರ ಮೀಸಲಾತಿ ವರ್ಗದಲ್ಲಿ ಪ್ರಯಾಣ ಬೆಳೆಸುವವರ ಜೊತೆಗೆ ಹೋಗುವವರು 60 ವರ್ಷಕ್ಕಿಂತ ಕಡಿಮೆ ಇರಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳು ಮಾತ್ರ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಮೆಹರಮ್ ಕೋಟದಲ್ಲಿ 45 ವರ್ಷ ಮೇಲ್ಪಟ್ಟ ಮಹಿಳೆಯರು ಸಂಗಾತಿ(ಮೆಹರಮ್)ಯಿಲ್ಲದೆ ಹಜ್ ಯಾತ್ರೆಗೆ ತೆರಳಬಹುದಾಗಿದೆ ಎಂದು ಅವರು ಹೇಳಿದರು. ಹಜ್ಯಾತ್ರೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ ಹಾಗೂ ಪಾಸ್ಪೋರ್ಟ್ ಇದ್ದರೆ ಸಾಕು. ಯಾರಿಗಾದರೂ ಅರ್ಜಿ ಸಲ್ಲಿಸಲು ಸಮಸ್ಯೆ ಆಗುತ್ತಿದ್ದರೆ ಅವರು ನಮ್ಮ ಕಚೇರಿಯ ಈ ಮೊಬೈಲ್ ಸಂಖ್ಯೆಗಳಾದ 7892189162, 9483503132 ಅನ್ನು ಕಚೇರಿಯ ಕೆಲಸದ ವೇಳೆ(ಬೆಳಗ್ಗೆ 10 ರಿಂದ ಸಂಜೆ 5 ಗಂಟೆ) ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಝುಲ್ಫಿಖಾರ್ ಅಹ್ಮದ್ ಖಾನ್ ತಿಳಿಸಿದರು.
ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್: ಪುರುಷರ ಸಿಂಗಲ್ಸ್ನಲ್ಲಿ ಆಕಾಶ್ಗೆ ಪ್ರಶಸ್ತಿ
ಮಂಗಳೂರು: ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್ನ ಪುರುಷರ ಸಿಂಗಲ್ಸ್ನಲ್ಲಿ ಆಕಾಶ್ .ಕೆ.ಜೆ ಪ್ರಶಸ್ತಿ ಜಯಿಸಿದ್ದಾರೆ. ಕರ್ನಾಟಕ ಸ್ಟೇಟ್ ಟೇಬಲ್ ಟೆನಿಸ್ ಆಸೋಸಿಯೆಶನ್ (ಕೆಟಿಟಿಎ) ಮತ್ತು ದ.ಕ. ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಶನ್ (ಡಿಕೆಟಿಟಿಎ) ಆಶ್ರಯದಲ್ಲಿ ನಗರದ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್ ಎರಡನೇ ದಿನವಾಗಿರುವ ಶುಕ್ರವಾರ ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ಆಕಾಶ್ ಕೆ.ಜೆ ಅವರು ಅನಿರ್ಬಾನ್ ರಾಯ್ ಚೌದರಿ ಅವರನ್ನು 11-7, 11-3, 11-9, 11-3 ಅಂತರದಿಂದ ಸೋಲಿಸಿ ಟ್ರೋಫಿ ಎತ್ತಿದರು. ಆಕಾಶ್ ಕೆ.ಜೆ. ಸೆಮಿಫೈನಲ್ನಲ್ಲಿ ಯಶ್ವಂತ್ ಪಿ ಅವರನ್ನು 11-7, 11-4, 12-10, 10-12, 11-3 ಅಂತರದಲ್ಲಿ ಮಣಿಸಿ ಮತ್ತು ಅನಿರ್ಬಾನ್ ರಾಯ್ ಚೌದರಿ ಅವರು ಶ್ರೀಕಾಂತ್ ಕಶ್ಯಪ್ರನ್ನು 11-9, 11-5, 11-7,11-8 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯ ಸುತ್ತು ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಶ್ರೀಕಾಂತ್ ಕಶ್ಯಪ್ ಅವರು 11-7, 11-6, 13-1 ರಲ್ಲಿ ವಿಭಾಸ್ ವಿಜಿಯನ್ನು ಸೋಲಿಸಿದರು. ಅನಿರ್ಬನ್ ರಾಯ್ಚೌಧರಿ ಅವರು ಅಭಿನವ್ ಕೆ ಮೂರ್ತಿ ಅವರನ್ನು 13-11, 11-6, 9-11, 7-11, 11-6 ಸೆಟ್ಗಳಿಂದ , ಆಕಾಶ್ ಕೆಜೆ 12-10, 11-7, 11-4 ರಲ್ಲಿ ಅಥರ್ವ ನವರಂಗರನ್ನು ಮತ್ತು ಯಶವಂತ.ಪಿ ಅವರು ವರುಣ್ ಬಿ ಕಶ್ಯಪ್ರನ್ನು 13-11, 6-11, 13-11, 15-1 ರಿಂದ ಸೋಲಿಸಿ ಮುಂದಿನ ಹಂತ ತಲುಪಿದ್ದರು * ಅಂಡರ್ -17 ಬಾಲಕಿಯರ ಸಿಂಗಲ್ಸ್ : ಫೈನಲ್ನಲ್ಲಿ ಹಿಯಾ ಸಿಂಗ್ ಅವರು ತನಿಷ್ಕಾ ಕಪಿಲ್ ಕಾಲಭೈರವ್ರನ್ನು 10-12, 11-8, 11-7, 11-4 ಅಂತರದಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು. ಸೆಮಿಫೈನಲ್ನಲ್ಲಿ ತನಿಷ್ಕಾ ಕಪಿಲ್ ಕಾಲಭೈರವ್ ಅವರು ಹಿಮಾಂಶಿ ಚೌಧರಿ ಅವರನ್ನು 11-8, 11-7, 10-12, 8-11, 11-8 ಮತ್ತು ಹಿಯಾ ಸಿಂಗ್ ಅವರು ಕೈರಾ ಬಾಳಿಗಾರನ್ನು 11-7, 9-11, 11-4, 11-4 ರಿಂದ ಸೋಲಿಸಿ ಅಂತಿಮ ಹಂತ ತಲುಪಿದ್ದರು. ಅಂಡರ್17 ಬಾಲಕರ ಸಿಂಗಲ್ಸ್ : ವಿಜೇತರು: ಅಥರ್ವ ನವರಂಗ ಫೈನಲ್ನಲ್ಲಿ ಅಥರ್ವ ನವರಂಗ ಅವರು ಅರ್ನವ್.ಎನ್ ಅವರನ್ನು 1-11, 11-7, 11-6, 11-5 ಅಂತರದಲ್ಲಿ ಮಣಿಸಿ ಪ್ರಶಸ್ತಿ ಬಾಚಿಕೊಂಡರು. ಸೆಮಿಫೈನಲ್ನಲ್ಲಿ ಅಥರ್ವ ನವರಂಗ ಅವರು ಸಿದ್ದಾಂತ್ ಧರಿವಾಲ್ರನ್ನು 11-9, 11-3, 11-5 ರಲ್ಲಿ ಸೋಲಿಸಿ, ಅರ್ನವ್.ಎನ್ ಅವರು ಗೌರವ್ ಗೌಡರನ್ನು 11-5, 11-6, 8-11, 11-9 ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಶುಕ್ರವಾರ ಟೂರ್ನಮೆಂಟ್ನ ಸಮಾರಂಭದಲ್ಲಿ ಸಂತ ತೆರೆಸಾ ಸ್ಕೂಲ್ನ ಪ್ರಾಂಶುಪಾಲೆ ಸಿಸ್ಟರ್ ಲೌರ್ಡೆಸ್, ಪಾಂಡೇಶ್ವರ ಪಿಎಸ್ಐ ಮಾರುತಿ ಪಿ, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪಿಇಡಿ ಸುಶ್ಮಾ ಕೆ.ಆರ್ ಮತ್ತು ಎನ್ಎಂಪಿಎ ಮಾಜಿ ಎಇಇ ಪಿ.ಸಿ.ಚಾಕೊ ಮುಖ್ಯ ಅತಿಥಿಯಾಗಿದ್ದರು.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸರಕಾರಿ ವಿದ್ಯಾಸಾಗರ್ ವಿಶ್ವವಿದ್ಯಾಲಯ ವಿವಾದವೊಂದಕ್ಕೆ ಸಿಲುಕಿಕೊಂಡಿದ್ದು, ತನ್ನ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರರು ಎಂದು ಸಂಬೋಧಿಸಿರುವುದರಿಂದ, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದೆ. ಈ ಪ್ರಮಾದದ ವಿರುದ್ಧ ತೀವ್ರ ಸ್ವರೂಪದ ರಾಜಕೀಯ ಟೀಕೆ ವ್ಯಕ್ತವಾಗಿದ್ದು, ಇದರಿಂದಾಗಿ, ಅದು ಮುದ್ರಣ ದೋಷದಿಂದಾಗಿರುವ ತಪ್ಪು ಎಂದು ವಿಶ್ವವಿದ್ಯಾಲಯ ಸಾರ್ವಜನಿಕ ಕ್ಷಮಾಪಣೆ ಬಿಡುಗಡೆ ಮಾಡಿ, ಸಮಜಾಯಿಷಿ ನೀಡಿದೆ. ಈ ದೋಷಪೂರಿತ ಉಲ್ಲೇಖವು ಬಿಎ ಆನರ್ಸ್ ನ ಆರನೇ ಸೆಮಿಸ್ಟರ್ ನ ಬಂಗಾಳಿ ಭಾಷೆಯಲ್ಲಿನ ಇತಿಹಾಸ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ 12ನೇ ಪ್ರಶ್ನೆಯಲ್ಲಿ ಕಂಡು ಬಂದಿದ್ದು, ಈ ಪ್ರಶ್ನೆಯಲ್ಲಿ ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಉಗ್ರರಿಂದ ಹತರಾದ ಮಿಡ್ನಾಪುರ್ ನ ಮೂವರು ಜಿಲ್ಲಾಧಿಕಾರಿಗಳನ್ನು ಹೆಸರಿಸಿ ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ನಂತರ, ಈ ತಪ್ಪನ್ನು ಒಪ್ಪಿಕೊಂಡಿರುವ ವಿಶ್ವವಿದ್ಯಾಲಯ, ಈ ಪ್ರಮಾದ ಕರಡು ಪ್ರತಿ ಪರಿಶೀಲನೆಯ ವೇಳೆ ಆಗಿರುವ ಲೋಪ ಎಂದು ಸ್ಪಷ್ಟೀಕರಣ ನೀಡಿದೆ. ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಉಪ ಕುಲಪತಿ ದೀಪಕ್ ಕಾರ್, “ಇದು ಮುದ್ರಣ ದೋಷವಾಗಿದ್ದು, ಕರಡು ಪ್ರತಿ ಪರಿಶೀಲನೆಯ ವೇಳೆ ಗಮನಿಸದೆ ಇರುವುದರಿಂದ ಆಗಿರುವ ಪ್ರಮಾದವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ದೋಷಪೂರಿತ ಪ್ರಶ್ನೆಯನ್ನು ಖಂಡಿಸಿರುವ ಶಿಕ್ಷಣ ತಜ್ಞ ಪಬಿತ್ರ ಸರ್ಕಾರ್, “ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ ಯುವಕರನ್ನು ವಸಾಹತು ಆಡಳಿತಗಾರರಂತೆ ಈ ಸ್ವತಂತ್ರ ಭಾರತದಲ್ಲಿ ‘ಉಗ್ರರು’ ಎಂದು ಸಂಬೋಧಿಸುವುದು ಊಹಿಸಲೂ ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳ ವಿಧಾನಸಭಾ ನಾಯಕ ಸುವೇಂದು ಅಧಿಕಾರಿ, “ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರರು ಎಂದು ಸಂಬೋಧಿಸಿರುವುದು ಸಂಪೂರ್ಣ ಅತಿರೇಕದ ಕ್ರಮ” ಎಂದು ವಾಗ್ದಾಳಿ ನಡೆಸಿದ್ದಾರೆ.
ಏರ್ ಇಂಡಿಯಾ ವಿಮಾನ ದುರಂತ ; ವರದಿ ಶೀಘ್ರದಲ್ಲೇ ಸಲ್ಲಿಕೆಯಾಗುವ ನಿರೀಕ್ಷೆ: ನಾಗರಿಕ ವಿಮಾನ ಯಾನ ಸಚಿವ
ಮುಂಬೈ: ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ಡ್ರೀಮ್ ಲೈನರ್ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ದಳದ ವರದಿ ಅತಿ ಶೀಘ್ರದಲ್ಲೇ ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎಂದು ನಾಗರಿಕ ವಿಮಾನ ಸಚಿವ ಕೆ.ರಾಮ್ ಮೋಹನ್ ನಾಯ್ಡು ತಿಳಿಸಿದ್ದು ಈ ಸಂಬಂಧ ಪಾರದರ್ಶನ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಕುರಿತು ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ರಾಮ್ ಮೋಹನ್ ನಾಯ್ಡು, “ಅತಿ ಶೀಘ್ರದಲ್ಲೇ ನಾವು ಈ ಕುರಿತು ಕೆಲಸ ಮಾಡುತ್ತಿದ್ದೇವೆ. ಇದು ವಿಮಾನ ಅಪಘಾತ ತನಿಖಾ ದಳದ ಜವಾಬ್ದಾರಿಯಾಗಿದ್ದು, ಅವರು ತಮ್ಮ ಕೆಲಸ ಮಾಡಲಿ” ಎಂದು ಹೇಳಿದ್ದಾರೆ. ನಾವು ತನಿಖೆಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಖಾತರಿಪಡಿಸಲಿದ್ದೇವೆ ಎಂದೂ ಅವರು ಆಶ್ವಾಸನೆ ನೀಡಿದ್ದಾರೆ. ಜೂನ್ 12ರಂದು ಅಹಮದಾಬಾದ್ ನಿಂದ ಲಂಡನ್ ಗಾಟ್ವಿಕ್ ಗೆ ಟೇಕಾಫ್ ಮಾಡಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನವು ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್ ಹೊರವಲಯದಲ್ಲಿನ ವೈದ್ಯಕೀಯ ಕಾಲೇಜಿನ ವಸತಿ ನಿಲಯವೊಂದರ ಮೇಲೆ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 242 ಮಂದಿ ಪ್ರಯಾಣಿಕರ ಪೈಕಿ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದರು. ಅಲ್ಲದೆ, ಆ ಪ್ರದೇಶದಲ್ಲಿದ್ದ ಜನರೂ ಸೇರಿದಂತೆ ಸುಮಾರು 260 ಮಂದಿ ಮೃತಪಟ್ಟಿದ್ದರು.
'ಶಾಂತಿಯ ತವರು' ಮೈಸೂರಿನಲ್ಲಿ ಹೆಚ್ಚುತ್ತಿರುವ ಅಪರಾಧಗಳು - ಸಿಎಂ ತವರಿನಲ್ಲಿ ಹಾಡಹಗಲೇ ರೌಡಿಗಳ ಅಟ್ಟಹಾಸ
ಮೈಸೂರು ನಗರವು ಅಪರಾಧ ಕೃತ್ಯಗಳಿಂದ ತತ್ತರಿಸುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸರಣಿ ಕೊಲೆಗಳು, ದರೋಡೆಗಳು ಮತ್ತು ಮಹಿಳೆಯರ ಮೇಲಿನ ಹಲ್ಲೆಗಳು ಜನರ ನಿದ್ದೆಗೆಡಿಸಿವೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕ ಮೂಡಿಸಿದೆ, ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ.
ಕಲಬುರಗಿ | ಸಾಧನೆ ಬಯಸಿದ್ದವರಿಗೆ ಕೆಲಸ ಚಿಕ್ಕದು, ದೊಡ್ಡದು ಎಂಬ ಭೇದವಿರಲ್ಲ: ಡಿಸಿ ಬಿ.ಫೌಝಿಯಾ ತರನ್ನುಮ್
ಕಲಬುರಗಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ನೋಡಲ್ ಹಾಗೂ ಕಲಬುರಗಿ ಜಿಲ್ಲೆಯ ಸರಕಾರಿ ಹಾಗು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಕೌಶಲ್ಯ ಸ್ಪರ್ಧೆ ಹಾಗು ಕ್ರೀಡಾಕೂಟಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಉದ್ಘಾಟಿಸಿ ಮಾತನಾಡುತ್ತಾ, ಐ.ಟಿ.ಐ.ಕೋರ್ಸುಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಯಾವುದೇ ಕೆಲಸ ಚಿಕ್ಕದು ದೊಡ್ಡದಲ್ಲ, ಮನಸ್ಸಿಟ್ಟು ಮಾಡಿದರೆ ಎಂತಹ ಸಾಧನೆಯನ್ನು ಬೇಕಾದರು ಮಾಡಬಹುದೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಚಾರ್ಯರರಾದ ಮುರಳಿಧರ ರತ್ನಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಜಿಲ್ಲೆಯ ಸರಕಾರಿ ಹಾಗು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಪ್ರತೀ ವರ್ಷ ಜಿಲ್ಲಾ ಮಟ್ಟದ ಕ್ರೀಡೆ ಹಾಗು ಕೌಶಲ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಇಂತಹ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಪಾರಿತೋಷಕ ವಿತರಣೆಗೆ ಕೇಳಿಕೊಂಡಾಗ ತಮ್ಮ ಬಿಡುವಿಲ್ಲದ ಕೆಲಸದ ಜೊತೆಗೂ ನಮ್ಮ ಸಮಾರಂಭಕ್ಕೆ ಆಗಮಿಸಿ ನಮಗೆಲ್ಲರಿಗೂ ಸ್ಪೂರ್ತಿಯಾಗಿ ಐ.ಟಿ.ಐ. ಮಕ್ಕಳಿಗೆ ಹುರಿದುಂಬಿಸಿದ್ದಕ್ಕೆ ಈ ವೇದಿಕೆ ಮೂಲಕ ಅವರನ್ನು ಗೌರವಿಸುತ್ತೇನೆ ಎಂದು ಹೇಳಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಆಡಳಿತಾಧಿಕಾರಿ ಸುರೇಶ ವಗ್ಗೆ, ಉಪನಿರ್ದೇಶಕ ಡಾ.ರುಬಿನಾ ಪರ್ವೀನ, ಪ್ರಾಚಾರ್ಯ ಶಕೀಲ ಅನ್ಸಾರಿ ಸೇರಿದಂತೆ ಸಿಬ್ಬಂದಿಯವರು ಹಾಗೂ ತರಬೇತಿದಾರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ತರಬೇತಿ ಅಧಿಕಾರಿ ಭಾರತಿ ಮಹಾದೇವಪ್ಪ ಅವರು ಸ್ವಾಗತಿಸಿದರು. ಪಾರಿತೋಷಕ ವಿತರಣೆಯನ್ನು ಬಸನಗೌಡ ಪಾಟೀಲ ಅವರು ನಡೆಸಿಕೊಟ್ಟರು. ಲೋಕೇಶ ಬೇಲೂರ ವಂದಿಸಿದರು. ವಿಜಯಕುಮಾರ ಮೇಳಕುಂದಿ ನಿರೂಪಿಸಿದರು.
ಚಿಕ್ಕಮಗಳೂರು-ಹಾಸನ ರೈಲ್ವೆ ಯೋಜನೆ ಶೀಘ್ರ ಪೂರ್ಣ : ಕೇಂದ್ರ ಸಚಿವ ಸೋಮಣ್ಣ
ಚಿಕ್ಕಮಗಳೂರು : ಚಿಕ್ಕಮಗಳೂರು-ಹಾಸನ ರೈಲ್ವೆ ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಶುಕ್ರವಾರ ನಗರದ ರೈಲು ನಿಲ್ದಾಣದಲ್ಲಿ ತಿರುಪತಿ-ಚಿಕ್ಕಮಗಳೂರು ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ರೈಲು ನಿಲ್ದಾಣದಲ್ಲಿ 22 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಸಕಲೇಶಪುರ ರೈಲ್ವೆ ಯೋಜನೆಯನ್ನು 26 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹಾಸನ ರೈಲು ನಿಲ್ದಾಣದಲ್ಲಿ 23 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು. ಅರಸೀಕೆರೆ-ಹಾಸನ ದ್ವಿಪಥ ರೈಲು ಹಳಿ ನಿರ್ಮಾಣಕ್ಕೆ 750 ಕೋಟಿ ರೂ. ಅನುದಾನ ಖರ್ಚು ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 187 ಕೋಟಿ ರೂ. ವೆಚ್ಚದಲ್ಲಿ ಚಿಕ್ಕ ಬಾಣಾವರ-ಹಾಸನ ರೈಲು ಮಾರ್ಗದ ವಿದ್ಯುಧೀಕರಣ ಮಾಡಲಾಗಿದೆ. ಚಿಕ್ಕಮಗಳೂರು, ಬೀರೂರು ರೈಲು ನಿಲ್ದಾಣಗಳಲ್ಲಿ ಡಬಲ್ ಕ್ರಾಸಿಂಗ್ಗೆ 70 ಕೋಟಿ ರೂ. ಹಾಗೂ ಮೇಲ್ಸೇತುವೆ ಕಾಮಗಾರಿಗೆ 70 ಕೋಟಿ ರೂ. ಅನುದಾನ ಮಂಜೂರು ಮಾಡಲಾಗುತ್ತಿದೆ. ಬೀರೂರು, ಅಜ್ಜಂಪುರ, ನಾಗಮಂಗಲ ಆರ್ಯುಪಿಗೆ ತಲಾ 50 ಕೋಟಿ ರೂ. ಅನುದಾನ ನೀಡಲಾಗಿದೆ. 63 ಕಿ.ಮೀ. ಉದ್ದದ ಬೀರೂರು-ಶಿವಮೊಗ್ಗ ದ್ವಿಪಥ ರೈಲು ಮಾರ್ಗ ಹಾಗೂ 333 ಕಿ.ಮೀ. ಉದ್ದದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗಕ್ಕೆ ಸರ್ವೇ ಕಾರ್ಯವನ್ನೂ ಆರಂಭಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಸದ್ಯ 644 ಕೆಳಸೇತುವೆ, ಮೇಲ್ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ರಾಜ್ಯದಲ್ಲಿನ ರೈಲ್ವೆ ಯೋಜನೆಗಳಿಗಾಗಿ ಕೇಂದ್ರ ಸರಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಈಗಾಗಲೇ 10 ವಂದೇ ಮಾತರಂ ರೈಲುಗಳು ಸಂಚಾರ ಆರಂಭಿಸಿವೆ. 1,981 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಇನ್ನೂ 65 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಸಾವಿರ ಕೋಟಿ ರೂ. ಖರ್ಚು ಮಾಡಲಾಗುವುದು ಎಂದರು. ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸಂಚಾರ ಆರಂಭಿಸಬೇಕೆಂಬುದು ಜಿಲ್ಲೆಯ ಜನರ ದಶಕಗಳ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಪ್ರಧಾನಿ ಮೋದಿ ಅವರು ಚಿಕ್ಕಮಗಳೂರು ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಹೇಳಿದರು. ಚಿಕ್ಕಮಗಳೂರು-ತಿರುಪತಿ ನಡುವೆ ವಾರದಲ್ಲಿ ಮೂರು ದಿನ ರೈಲು ಸಂಚರಿಸಲು ಕ್ರಮ ವಹಿಸಬೇಕೆಂಬ ಬೇಡಿಕೆ ಇದೆ. ಆದರೆ, ಒಮ್ಮೆ ಒಂದು ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಿದರೆ 36 ಸಾವಿರ ರೂ. ಖರ್ಚು ಬರುತ್ತದೆ. ಹೀಗೆ ಖರ್ಚಾಗುವ ಹಣ ಮತ್ತೆ ಇಲಾಖೆಗೆ ಬರಬೇಕು. ಆಗ ಮಾತ್ರ ರೈಲು ಸಂಚಾರವನ್ನು ಹೆಚ್ಚು ಹೆಚ್ಚು ಮಾಡಲು ಸಾಧ್ಯ. ಆದರೆ, ಚಿಕ್ಕಮಗಳೂರಿನಲ್ಲಿ ಎಷ್ಟು ಮಂದಿ ತಿರುಪತಿಗೆ ಹೋಗಿ ಬರುತ್ತಾರೆ ಎಂಬುದನ್ನು ಮೊದಲು ಮಾಹಿತಿ ಸಂಗ್ರಹಿಸಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ವಿ.ಪ. ಸದಸ್ಯ ಸಿ.ಟಿ.ರವಿ ರವಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ವಿ.ಪ. ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಮಾಜಿ ಶಾಸಕ ಡಿ.ಎಸ್.ಸುರೇಶ್, ದೀಪಕ್ ದೊಡ್ಡಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಮುಖಂಡರಾದ ಕಲ್ಮುರುಡಪ್ಪ, ಎಸ್ಪಿ ಡಾ.ವಿಕ್ರಮ್ ಅಮಟೆ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ‘ಗುರು ದತ್ತಾತ್ರೇಯ’ ನಾಮಕರಣಕ್ಕೆ ಪ್ರಸ್ತಾವ ಚಿಕ್ಕಮಗಳೂರು-ತಿರುಪತಿ ರೈಲಿಗೆ ‘ಗುರು ದತ್ತಾತ್ರೇಯ’ ನಾಮಕರಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಚರ್ಚಿಸಿ ಕ್ರಮ ವಹಿಸಲಾಗುವುದು. ಶಿವಮೊಗ್ಗ-ಶೃಂಗೇರಿ ರೈಲು ಮಾರ್ಗದ ಸರ್ವೇಗೆ ಅನುದಾನ ಮೀಸಲಿಟ್ಟಿದ್ದು, ಶೃಂಗೇರಿ-ಉಡುಪಿ-ಕೊಲ್ಲೂರು ರೈಲ್ವೆ ಯೋಜನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ಮೋದಿ ಸರಕಾರದ ಅವಧಿಯಲ್ಲೇ ಹಾಸನ-ಚಿಕ್ಕಮಗಳೂರು ರೈಲ್ವೆ ಯೋಜನೆ ಪೂರ್ಣಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಚಿಕ್ಕಮಗಳೂರಿನ ಜನರಿಗೆ ಲಾಟರಿ ಹೊಡೆಯಲಿದೆ. ಕೇಂದ್ರ ಸರಕಾರದ ರೈಲ್ವೆ ಯೋಜನೆಗಳ ಸಮರ್ಪಕ, ಶೀಘ್ರ ಜಾರಿಗೆ ರಾಜ್ಯ ಸರಕಾರದ ಸಹಕಾರ ಅತ್ಯಗತ್ಯ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಲೇಬೇಕು. ರಾಜ್ಯ ಸರಕಾರದ ಸಹಕಾರದಿಂದಾಗಿ ಚಿಕ್ಕಮಗಳೂರು-ಹಾಸನ ರೈಲ್ವೆ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಲು ಸಾಧ್ಯವಾಗಿದೆ. ವಿ.ಸೋಮಣ್ಣ, ಕೇಂದ್ರ ಸಚಿವ
ಮಂಗಳೂರು| ವಿಚಾರಣಾಧೀನ ಕೈದಿಗೆ ಮಾದಕ ವಸ್ತು ಪೂರೈಕೆ ಆರೋಪ: ಮಹಿಳೆಯ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಜು.11: ದ.ಕ. ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮುಹಮ್ಮದ್ ಅಸ್ಕರ್ ಎಂಬಾತನಿಗೆ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡಿದ ಆರೋಪದ ಮೇರೆಗೆ ಮಹಿಳೆಯೊಬ್ಬರ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.10ರಂದು ಮಧ್ಯಾಹ್ನ 12:15ಕ್ಕೆ ಸಂದರ್ಶಕಿಯಾಗಿ ರಮ್ಸೂನಾ ಎಂಬಾಕೆ ಬಂದಿದ್ದು, ಆಕೆ ಮುಹಮ್ಮದ್ ಅಸ್ಕರ್ಗೆ ನೀಡಲು ಬೇಕರಿ ತಿಂಡಿಗಳನ್ನು ಕೊಂಡೊಯ್ದಿದ್ದಳು ಎನ್ನಲಾಗಿದೆ. ಈ ಸಂದರ್ಭ ಕರ್ತವ್ಯದಲ್ಲಿದ್ದ ಸಿಬ್ಬಂದಿ ಪರಿಶೀಲಿಸಿದಾಗ 5 ಸಣ್ಣ ಪೊಟ್ಟಣಗಳು ಕಂಡು ಬಂದಿದೆ. ಈ ಬಗ್ಗೆ ಸಿಬ್ಬಂದಿ ಆಕೆಯನ್ನು ವಿಚಾರಿಸಿದಾಗ ಹೊಸಂಗಡಿಯ ಹುಸೇನ್ ಎಂಬಾತ ಕೆಲವು ಪೊಟ್ಟಣಗಳನ್ನು ಕೊಡುತ್ತಾನೆ. ಅದನ್ನು ತಂದು ಕೊಡಬೇಕು ಎಂದು ಮುಹಮ್ಮದ್ ಅಸ್ಕರ್ ಈ ಹಿಂದೆ ತಿಳಿಸಿದ್ದ, ಅದರಂತೆ ತಾನು ತಂದಿರುವುದಾಗಿ ಹೇಳಿದ್ದಾಳೆ. ಈ ಬಗ್ಗೆ ಜೈಲು ಅಧೀಕ್ಷಕ ಶರಣ ಬಸಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಪಾಕ್ ಉಗ್ರರು ನೇಪಾಳದ ಮೂಲಕ ಭಾರತಕ್ಕೆ ನುಸುಳಲು ಸಂಚು: ಸುನಿಲ್ ಬಹದ್ದೂರ್ ಥಾಪಾ
ಪಾಕಿಸ್ತಾನ ಮೂಲದ ಲಷ್ಕರೆ ತಯ್ಬಾ ಮತ್ತು ಜೈಷೆ ಮೊಹಮ್ಮದ್ ಉಗ್ರರು ಭಾರತಕ್ಕೆ ನುಸುಳಲು ನೇಪಾಳವನ್ನು ಬಳಸುತ್ತಿದ್ದಾರೆ ಎಂದು ನೇಪಾಳ ಅಧ್ಯಕ್ಷರ ಸಲಹೆಗಾರರು ಎಚ್ಚರಿಸಿದ್ದಾರೆ. ಭಾರತದಲ್ಲಿನ ಉಗ್ರರ ದಾಳಿಗಳು ನೇಪಾಳದ ಮೇಲೂ ಪರಿಣಾಮ ಬೀರುತ್ತವೆ. ಭಯೋತ್ಪಾದನೆಗೆ ಹಣ ವರ್ಗಾವಣೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಗಡಿಗಳಲ್ಲಿ ಜಂಟಿ ಗಸ್ತು ಹೆಚ್ಚಿಸಬೇಕು. ಭಾರತ ಮತ್ತು ನೇಪಾಳದ ನಡುವಿನ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಕಾಮಗಾರಿ | ರೈತರ ಒಪ್ಪಿಗೆ, 8.32 ಎಕರೆ ಭೂಮಿ ಸ್ವಾಧೀನ : ಶಾಸಕ ಗೋಪಾಲಕೃಷ್ಣ
ಸಾಗರ : ಶರಾವತಿ ಪಂಪ್ಡ್ ಸ್ಟೋರೇಜ್ ಕಾಮಗಾರಿಗೆ ಸ್ಥಳೀಯ ರೈತರು ಒಪ್ಪಿಕೊಂಡಿದ್ದು, ಭೂಮಿ ಬಿಟ್ಟುಕೊಡಲು ಒಪ್ಪಿದ್ದಾರೆ. ಪಂಪ್ಡ್ ಸ್ಟೋರೇಜ್ಗಾಗಿ ರೈತರ 8.32 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಶರಾವತಿ ಅಂತರ್ಗತ ಭೂ ವಿದ್ಯುತ್ ಯೋಜನೆ ವ್ಯಾಪ್ತಿಗೆ ಬರುವ ಹೆನ್ನಿ ಭಾಗದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ರೈತರ ಅಹವಾಲು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಪಂಪ್ಡ್ ಸ್ಟೋರೇಜ್ನಿಂದ ದೊಡ್ಡ ಪ್ರಮಾಣದ ಕಾಡು ನಾಶವಾಗುತ್ತದೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ 11 ರೈತ ಕುಟುಂಬಗಳ 8.32 ಎಕರೆ ಕೃಷಿಭೂಮಿ ಜೊತೆಗೆ 54 ಹೆಕ್ಟೇರ್ ಅರಣ್ಯಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ. ರೈತರು ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ. ರೈತರ ಪರವಾಗಿ ನಾವಿದ್ದೇವೆ. ಸುಮಾರು 2 ಸಾವಿರ ಮೆ.ವ್ಯಾ. ವಿದ್ಯುತ್ ಯೋಜನೆಯಡಿ ಅಣೆಕಟ್ಟು ನಿರ್ಮಿಸದೆ ಉತ್ಪಾದನೆ ಮಾಡುವ ಅಪರೂಪದ ಯೋಜನೆ ಇದಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಪಂಪ್ಡ್ ಸ್ಟೋರೇಜ್ಗೆ ಸಂಬಂಧಪಟ್ಟಂತೆ ಸ್ಥಾನಿಕ ರೈತರ ಜೊತೆ ಸಭೆ ನಡೆಸಲಾಗಿದೆ. ಕಾನೂನು ಪ್ರಕಾರವೇ ಎಲ್ಲ ಚಟುವಟಿಕೆ ನಡೆಯುತ್ತಿದ್ದು, ಪರಿಸರ ನಾಶ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ರೈತರು ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದಕ್ಕೆ ಪೂರಕವಾಗಿ ಸ್ಪಂದಿಸುತ್ತೇವೆ. ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ರೈತರಿಗೆ ಎಲ್ಲ ರೀತಿಯ ಸಹಾಯ ನೀಡಲಾಗುತ್ತದೆ. ರೈತರಿಗೆ ಪರ್ಯಾಯ ಭೂಮಿ ಕೊಡುವ ಜೊತೆಗೆ ಉದ್ಯೋಗ ನೀಡುವ ಬಗ್ಗೆಯೂ ಗಮನ ಹರಿಸಲಾಗುತ್ತದೆ ಎಂದರು. ಸಭೆಯಲ್ಲಿ ಪ್ರೊಬೇಷನರಿ ಜಿಲ್ಲಾಧಿಕಾರಿ ನಾಗೇಂದ್ರ ಕುಮಾರ್, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಅರಣ್ಯ ಇಲಾಖೆಯ ರವಿಕುಮಾರ್ ಇತರರು ಉಪಸ್ಥಿತರಿದ್ದರು. ‘ಪರಿಸರ ವಿರೋಧಿ ಯೋಜನೆ’ ಶರಾವತಿ ಪಂಪ್ಡ್ ಸ್ಟೋರೇಜ್ ಪರಿಸರ ವಿರೋಧಿ ಯೋಜನೆಯಾಗಿದೆ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನ ಸಲ್ಲದು ಎಂದು ಪರಿಸರವಾದಿ ಅಖಿಲೇಶ್ ಚಿಪ್ಳಿ ಒತ್ತಾಯಿಸಿದ್ದಾರೆ. ಸಭೆ ನಡೆಯುವುದಕ್ಕೆ ಮೊದಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸ್ಥಳಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆ ದೊಡ್ಡ ಭ್ರಷ್ಟಾಚಾರದಿಂದ ಕೂಡಿದೆ. ರಾಜ್ಯದ ಜನರ ತೆರಿಗೆ ಹಣ ಅಪವ್ಯಯವಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಬೇರೆಬೇರೆ ಮಾರ್ಗವಿದೆ. ಆದರೆ, ಹಣ ಹೊಡೆಯಲಿಕ್ಕಾಗಿಯೇ ಈ ಯೋಜನೆ ಅನುಷ್ಠಾನಕ್ಕೆ ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಕೇಂದ್ರ ಸರಕಾರದ ಯಾವ ಇಲಾಖೆಯ ಅನುಮತಿಯೂ ಈತನಕ ಯೋಜನೆಗೆ ಸಿಕ್ಕಿಲ್ಲ. ಯೋಜನೆ ಹೆಸರಿನಲ್ಲಿ ರೈತರನ್ನು ನಿರ್ದಯವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಯೋಜನೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು. ಸುಮಾರು 8,644 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಮುಂದಿನ ಪೀಳಿಗೆ ವಿದ್ಯುತ್ ಸಮಸ್ಯೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಯೋಜನೆ ಮಂಜೂರು ಮಾಡಿದ್ದಾರೆ. ಅರಣ್ಯ ನಾಶವಾದರೆ ಅದಕ್ಕೆ ಪರ್ಯಾಯ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಹೆದ್ದಾರಿ ಸೇರಿದಂತೆ ಬೇರೆಬೇರೆ ಯೋಜನೆ ಸಂದರ್ಭದಲ್ಲಿ ಅಲ್ಪಸ್ವಲ್ಪ ಅರಣ್ಯ ನಾಶವಾಗುತ್ತದೆ. ಅಂದಮಾತ್ರಕ್ಕೆ ಉತ್ತಮ ಯೋಜನೆ ಕೈಬಿಡಲು ಸಾಧ್ಯವಿಲ್ಲ. ಭೂಮಿ ಬಿಟ್ಟುಕೊಡುವ ರೈತರಿಗೆ ಸೂಕ್ತ ಪರಿಹಾರದ ಜೊತೆಗೆ ಕುಟುಂಬಕ್ಕೊಂದು ಉದ್ಯೋಗವನ್ನು ಕೊಡುವ ಭರವಸೆ ನೀಡಿದ್ದೇವೆ. ಅತಿ ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಗೋಪಾಲಕೃಷ್ಣ ಬೇಳೂರು, ಶಾಸಕ
ಅಸ್ಥಿಪಂಜರ ಪೊಲೀಸರಿಗೆ ಹಸ್ತಾಂತರ: ʼಧರ್ಮಸ್ಥಳ ದೂರುದಾರʼನ ಪರ ವಕೀಲರ ಹೇಳಿಕೆ
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಹೇಳಲಾಗಿರುವಂತೆ ಹೂತು ಹಾಕಿದ್ದ ಅಸ್ಥಿಪಂಜರವೊಂದನ್ನು ಸಾಕ್ಷಿಯಾಗಿ ಹೊರತೆಗೆಯಲಾಗಿದ್ದು, ಅದನ್ನು ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಾನೂನು ಪ್ರಕಾರ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ನ್ಯಾಯಾಧೀಶರ ಎದುರು ಹೇಳಿಕೆ ನೀಡಲಾಗಿದೆ ಎಂದು ʼಧರ್ಮಸ್ಥಳ ದೂರುದಾರʼರ ಪರ ವಕೀಲ ಪವನ್ ದೇಶಪಾಂಡೆ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಆರೋಪ ಮಾಡಿರುವ ದೂರುದಾರನನ್ನು ಜು.11ರಂದು ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಪವನ್ ದೇಶಪಾಂಡೆ, ಹೆಣಗಳನ್ನು ಹೂತು ಹಾಕಿರುವ ಜಾಗಗಳನ್ನು ಸ್ಪಷ್ಟವಾಗಿ ದೂರುದಾರನು ಗುರುತಿಸಿ ತೋರಿಸಲು ಸಿದ್ಧನಿದ್ದಾನೆ. ಈ ಬಗ್ಗೆ ಪೊಲೀಸರು ಯಾವಾಗ ಬೇಕಾದರೂ ದಿನ ನಿಗದಿಪಡಿಸಿದ್ದರೂ ನಾವು ದೂರುದಾರನೊಂದಿಗೆ ಬಂದು ಸಹಕರಿಸಲಿದ್ದೇವೆ. ಘಟನೆಯ ಬಗ್ಗೆ ಮಾಹಿತಿಗಳನ್ನು ನೀಡಲಾಗಿದೆ. ಸಾಕ್ಷ್ಯ ನಾಶವಾಗುವ ಆತಂಕವೂ ಇದ್ದು, ಸಾಧ್ಯವಾದಷ್ಟು ವೇಗವಾಗಿ ಇಲ್ಲಿ ಹೇಳಿಕೆ ನೀಡಿರುವ ವ್ಯಕ್ತಿ ಹೂತು ಹಾಕಿರುವ ಮೃತದೇಹಗಳನ್ನು ಹೊರತೆಗೆಯಲು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು ಎಂದು ಅವರು ಹೇಳಿದ್ದಾರೆ. ಇಡೀ ಪ್ರಕರಣದ ಆರೋಪಿ ಯಾರು ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಈ ಬಗ್ಗೆ ನ್ಯಾಯಾಲಯಕ್ಕೆ ನೀಡಲಾಗಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅದನ್ನು ನಮಗೆ ನೀಡಿಲ್ಲ. ಅದು ನ್ಯಾಯಾಲಯದಲ್ಲಿ ಮತ್ತು ತನಿಖಾಧಿಕಾರಿಯವರ ಬಳಿ ಇದೆ ಎಂದು ಪ್ರತಿಕ್ರಿಯಿಸಿದರು. ನ್ಯಾಯಾಲಯಲಯದಲ್ಲಿ ಹೇಳಿಕೆ ನೀಡಿರುವ ದೂರುದಾರನನ್ನು ಪೊಲೀಸರು ಬಂಧಿಸಿಲ್ಲ ಹಾಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿಲ್ಲ. ಅವರು ನಮ್ಮೊಂದಿಗೆ ಇರುತ್ತಾರೆ. ಪೊಲೀಸರು ಯಾವಾಗ ಹಾಜರಾಗಲು ಸೂಚಿಸುತ್ತಾರೋ ಆಗ ಅವರನ್ನು ಹಾಜರುಪಡಿಸಲಾಗುವುದು ಎಂದು ವಕೀಲ ಪವನ್ ದೇಶಪಾಂಡೆ ಹೇಳಿದರು.
ಎಸ್ಸಿಪಿ, ಟಿಎಸ್ಪಿ ಅನುದಾನ ಬಳಸದೆ ನಿರ್ಲಕ್ಷ್ಯ ವಹಿಸಿದಲ್ಲಿ ಕಾನೂನು ಕ್ರಮ: ಜಿಲ್ಲಾಧಿಕಾರಿ ನಿತೀಶ್ ಕೆ.
ರಾಯಚೂರು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿನ ಮಟ್ಟದಲ್ಲಿದ್ದು, ಈ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಸದ್ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜು.9ರ ಗುರುವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ 2025ರ ಜೂನ್ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಸೌಲಭ್ಯಗಳನ್ನು ಒದಗಿಸಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಿ ಪಟ್ಟಿ ಮಾಡಬೇಕು. ಅರ್ಜಿಗಳನ್ನು ಆಹ್ವಾನಿಸಿದ್ದಲ್ಲಿ ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಕೈಗೊಂಡು ಪಟ್ಟಿ ಸಿದ್ಧಪಡಿಸಬೇಕು. ಫಲಾನುಭವಿಗಳಿಗೆ ಆದಷ್ಟು ಶೀಘ್ರವೇ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ರೈತರಿಗೆ ರೇಷ್ಮೆ ಬೆಳೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು. ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಕುರಿತು ಅವರಿಗೆ ಮನವರಿಕೆ ಮಾಡಬೇಕು. ರೇಷ್ಮೆ ಬೆಳೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿರೇಶ್ ನಾಯಕ, ಪಂಚಾಯತ್ ರಾಜ್ ಇಂಜನಿಯರ ವಿಭಾಗದ ಸಹಾಯಕ ಅಭಿಯಂತರರಾದ ಚಂದ್ರಕಲಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧಿಕಾರಿ ರಾಜೇಂದ್ರ ಜಲ್ದಾರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರವಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.
OYO: ಗಂಡ ಬಂದಿದ್ದಕ್ಕೆ ಓಯೋ ರೂಂನಿಂದ ಇದ್ದ ಸ್ಥಿತಿಯಲ್ಲೇ ಕಾಂಪೌಂಡ್ ಹಾರಿ ಓಡಿದ ಪತ್ನಿ
ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆ ಅನ್ನೋ ಮಾತು ಹಲವರ ಬಾಯಲ್ಲಿ ಆಗಾಗ ಬರುತ್ತಿರುತ್ತೆ. ಇನ್ನು ಅಕ್ರಮ ಸಂಬಂಧ ಪ್ರಕರಣಗಳು ಕೂಡ ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಫುಲ್ ವೈರಲ್ ಆಗಿದೆ. ವಿವಾಹಿತ ಮಹಿಳೆಯೊಬ್ಬರು ಅರೆಬರೆ ಬಟ್ಟೆಯಲ್ಲೇ, ಕೈಯಲ್ಲಿ ತನ್ನ ಚಪ್ಪಲಿ ಹಿಡಿದು ಓಯೋ (OYO) ರೂಂನಿಂದ ಓಡಿ ಹೋಗುತ್ತಾ ಕಾಂಪೌಂಡ್ ಹಾರಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಅಭಿಯಾನ ವ್ಯಾಪಕವಾಗಬೇಕು: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ಮಳೆ ಕೊಯ್ಲಿನ ಬಗ್ಗೆ ಜಾಗೃತಿಯೊಂದಿಗೆ ಜಿಲ್ಲೆಯಲ್ಲಿ ಪ್ರತಿ ಮನೆ ಮನೆಗಳಲ್ಲೂ ಜಲ ಸಂರಕ್ಷಣೆ ಯ ಬಗ್ಗೆ ಅಭಿಯಾನ ನಡೆಸಬೇಕಾದ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಸೇವಾ ಯೋಜನೆಯ ಅಂಗವಾಗಿ ಅರಿವು ಕೇಂದ್ರ ,ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟ್ ಚಿಕ್ಕಮಗಳೂರು ಇದರ ವತಿಯಿಂದ ಶುಕ್ರವಾರ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ಮಂಗಳೂರು ಪ್ರೆಸ್ ಕ್ಲಬ್ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತರ ಸಂಘದ ಸಹಯೋಗದೊಂದಿಗೆ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಮಳೆನೀರು ಕೊಯ್ಲು ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲೂ ಜಲ ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕೆಲಸಗಳಿಗೆ ಜಿಲ್ಲೆಯ ಎಲ್ಲಾ ವರ್ಗದ ಜನರ ಬೆಂಬಲವಿದೆ. ಕೇಂದ್ರ ಸರಕಾರದ ಸೌರ ಶಕ್ತಿ ಬಳಕೆಯ ಸೂರ್ಯ ಗರ್ ಸೌರಶಕ್ತಿ ಯೋಜನೆಯ ಪ್ರಯೋಜನವನ್ನು ಜನರು ಪಡೆದುಕೊಳ್ಳ ಬೇಕೆಂದು ಮನವಿ ಮಾಡಿದರು. ಸಮಾರಂಭದಲ್ಲಿ ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಅರಿವು ಕೇಂದ್ರದ ನಿರ್ದೇಶಕ ಡಾ.ಯು. ಪಿ.ಶಿವಾನಂದ,ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟ್ ಚಿಕ್ಕಮಗಳೂರು ಇದರ ನಿರ್ದೇಶಕ ಮೈಕೆಲ್ ಬ್ಯಾಪ್ಟಿಸ್ಟ್ ,ರೈನ್ ಕ್ಯಾಚರ್ಸ್ ನಿರ್ದೇಶಕ ಮನೋಜ್ ಸ್ಯಾಮ್ಯುಯೆಲ್ ಬ್ಯಾಪ್ಟಿಸ್ಟ್ , ರೇನ್ವಾಟರ್ ಹಾರ್ವೆಸ್ಟಿಂಗ್ ಪಾಲುದಾರ ಲಿನ್ಫೋರ್ಡ್ ಪಿಂಟೊ ,ರೋಟರಿ ಅಸಿಸ್ಟೆಂಟ್ ಗವರ್ನರ್ ಚೆನ್ನಗಿರಿ ಗೌಡ,ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಕಾರ್ಯದರ್ಶಿವಿಕಾಸ್ ಕೋಟ್ಯಾನ್,ಜಿಲ್ಲಾಧ್ಯಕ್ಷ ಪಬ್ಲಿಕ್ ಇಮೇಜ್ ಡಾ.ಶಿವಪ್ರಸಾದ್, ರೋಟರಿ ಕ್ಲಬ್ ಸಹಾಯಕ ಗವರ್ನರ್ ಚಿನ್ನ ಗಿರಿ ಗೌಡ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರೊ. ರವಿಶಂಕರ್ ರಾವ್, ಜಿಲ್ಲಾ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ, ರೋಟರಿ ಕ್ಲಬ್ ಝೋನಲ್ ಲೆಫ್ಟಿನೆಂಟ್ ರವಿ ಜಲನ್, ಉಪಾಧ್ಯಕ್ಷ ರವೀಂದ್ರ ಬಿಎನ್, ಖಜಾಂಚಿ ರಾಜೇಶ್ ಸೀತಾರಾಮ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ನಿವೃತ್ತ ಸಿಬ್ಬಂದಿ ಚಂಚಲಾಕ್ಷಿ ಯವರಿಗೆ ರೋಟರಿ ಮಂಗಳೂರು ಸೆಂಟ್ರಲ್ ವತಿಯಿಂದ ಸನ್ಮಾನಿಸಲಾಯಿತು.
ಮಂಗಳೂರು| ಆರೋಪಿಗಳ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು, ಜು.11: ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಆಮಿಷವೊಡ್ಡಿ ಮಂಗಳೂರಿ ನಲ್ಲಿ 300 ಮಂದಿ ಉದ್ಯೋಗ ಆಕಾಂಕ್ಷಿಗಳಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ವಿರುದ್ಧ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ನಗರದ ಬೆಂದೂರ್ವೆಲ್ನಲ್ಲಿ ಹೈರ್ಗ್ಲೋ ಎಲಿಗೆಂಟ್ ಓವರ್ಸೀಸ್ ಇಂಟರ್ನ್ಯಾಷನಲ್ ಪ್ರೈ.ಲಿ. ಎಂಬ ಹೆಸರಿನ ಕಚೇರಿಯನ್ನು ತೆರದು ವಿದೇಶದಲ್ಲಿ ಉದ್ಯೋಗ ವೀಸಾ ಕೊಡಿಸುವುದಾಗಿ ಜಾಹೀರಾತುಗಳನ್ನು ನೀಡಿ ವಂಚನೆ ಮಾಡಿದ ಪ್ರಕರಣದಲ್ಲಿ ಮಹಾರಾಷ್ಟ್ರದ ನವಿ ಮುಂಬೈಯ ಕೋಪರಕೈರಾನೆ ನಿವಾಸಿ ದಿಲ್ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಮತ್ತು ಥಾಣೆ ದೊಂಬಿವಿಲಿಯ ಸಾಹುಕಾರಿ ಕಿಶೋರ್ ಕುಮಾರ್ ಯಾನೆ ಅನಿಲ್ ಪಾಟೀಲ್ (34) ಎಂಬವರನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆರೋಪಿಗಳ ವಿರುದ್ಧ ಈಗಾಗಲೇ ನಗರದ ಬಂದರ್ ಮತ್ತು ನವಿ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡು ಪ್ರಕರಣಗಳು ದಾಖಲಾಗಿರುವುದರಿಂದ ಆರೋಪಿಗಳ ವಿರುದ್ಧ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. *ಕೆ-ಕೋಕಾ ಕಾಯ್ದೆಯಡಿ ಪೊಲೀಸರಿಗೆ ವಿಶೇಷ ಅಧಿಕಾರವೂ ಸಿಗುವುದರಿಂದ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟ. ಎರಡು ಪ್ರಕರಣಗಳಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧವೂ ಕೆ-ಕೋಕಾ ಕಾಯ್ದೆಯನ್ನು ಜಾರಿಗೊಳಿಸಲು ಅವಕಾಶವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಹಿರಿಯಡ್ಕ: ಟಾಸ್ಕ್ ಹೆಸರಿನಲ್ಲಿ 3.60ಲಕ್ಷ ರೂ. ಆನ್ಲೈನ್ ವಂಚನೆ; ಪ್ರಕರಣ ದಾಖಲು
ಹಿರಿಯಡ್ಕ, ಜು.11: ಟಾಸ್ಕ್ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರ್ಡೂರು ಗ್ರಾಮದ ಶ್ವೇತಾ ಡಿ.(26) ಎಂಬವರಿಗೆ ಜು.6ರಂದು ಮೊಬೈಲ್ಗೆ ಸಂದೇಶ ಬಂದಿದ್ದು, ಟಾಸ್ಕ್ ಮಾಡಿದ್ದಲ್ಲಿ ಹೆಚ್ಚು ಹಣ ಬರುವು ದಾಗಿ ನಂಬಿಸಲಾಗಿತ್ತು. ಅದರಂತೆ ಆಕೆ ವಿವಿಧ ಹಂತಗಳಲ್ಲಿ ಆರೋಪಿ ಗಳು ಸೂಚಿಸಿದ ಖಾತೆಗೆ ಒಟ್ಟು 3,60,800ರೂ. ಹಣವನ್ನು ಹಾಕಿದ್ದರು. ಆದರೆ ಆರೋಪಿಗಳು ಆಕೆಗೆ ಯಾವುದೇ ಹಣ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
ಕುಂದಾಪುರ: ಉತ್ತರ ಪ್ರದೇಶದ ಮಹಿಳೆ ನಾಪತ್ತೆ
ಕುಂದಾಪುರ, ಜೂ.11: ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೋಟೇಶ್ವರದಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಉತ್ತರ ಪ್ರದೇಶ ಮೂಲದ ಕೋಟೇಶ್ವರ ಬಾಡಿಗೆ ಮನೆ ನಿವಾಸಿ ಮಹದೇವ ಎಂಬವರ ಪತ್ನಿ ಅಂಜಲಿ(28) ಎಂದು ಗುರುತಿಸಲಾಗಿದೆ. ಜು.7ರಂದು ಇವರ ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಇಬ್ಬರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿರತೆ ಹಲ್ಲಿನ ವಿವಾದ | ಕೇಂದ್ರ ಸಚಿವ ಸುರೇಶ ಗೋಪಿ ವಿರುದ್ಧ ತನಿಖೆ
ತಿರುವನಂತಪುರ: ಕೇಂದ್ರ ಸಚಿವ ಹಾಗೂ ಕೇರಳದ ಬಿಜೆಪಿ ಸಂಸದ ಅವರ ಬಳಿ ಚಿರತೆ ಹಲ್ಲು ಇದೆ ಎಂಬ ಆರೋಪ ಕುರಿತಂತೆ ಅರಣ್ಯ ಇಲಾಖೆಯು ತನಿಖೆಯನ್ನು ಆರಂಭಿಸಿದೆ. ಚಿರತೆ ಹಲ್ಲನ್ನು ಹೊಂದಿದ್ದಕ್ಕಾಗಿ ಮಲಯಾಳಂ ರ್ಯಾಪರ್, ‘ವೇಡನ್’ ಎಂದೇ ಜನಪ್ರಿಯರಾಗಿರುವ ಹಿರನ್ ದಾಸ್ ಮುರಳಿ ವಿರುದ್ಧ ಅರಣ್ಯ ಇಲಾಖೆಯು ಕಳೆದ ಎಪ್ರಿಲ್ ನಲ್ಲಿ ಪ್ರಕರಣ ದಾಖಲಿಸಿದ ಬಳಿಕ ಚಿರತೆ ಹಲ್ಲು ಅಳವಡಿಸಿದ ಸರವನ್ನು ಧರಿಸಿದ್ದ ಗೋಪಿ ಅವರ ಚಿತ್ರವು ವಿವಾದಕ್ಕೆ ಗುರಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರೋರ್ವರು ಗೋಪಿ ವಿರುದ್ಧವೂ ಕ್ರಮವನ್ನು ಕೋರಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ವಿಚಾರಣೆಯನ್ನು ಆರಂಭಿಸಿರುವ ಅರಣ್ಯ ಇಲಾಖೆಯು ವಿವರವಾದ ಹೇಳಿಕೆಗಳನ್ನು ನೀಡುವಂತೆ ಮತ್ತು ಆರೋಪಕ್ಕೆ ಪುರಾವೆಯನ್ನು ಒದಗಿಸುವಂತೆ ದೂರುದಾರರಿಗೆ ಸೂಚಿಸಿದೆ. ಗೋಪಿ ಹೇಳಿಕೆಯನ್ನೂ ಶೀಘ್ರವೇ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ. ಚಿರತೆಯನ್ನು ವನ್ಯಜೀವಿ(ರಕ್ಷಣೆ) ಕಾಯ್ದೆಯ ಅನುಸೂಚಿ 1ರಡಿ ಪಟ್ಟಿ ಮಾಡಲಾಗಿದ್ದು, ಅದರ ಹಲ್ಲನ್ನು ಹೊಂದಿರುವುದು ಅಪರಾಧವಾಗಿದೆ.
ರಾಯಚೂರು | ವಿಶ್ವ ಜನಸಂಖ್ಯಾ ದಿನಾಚರಣೆ: ಜನಜಾಗೃತಿ ಜಾಥಾಕ್ಕೆ ಡಿಎಚ್ಓ ಡಾ.ಸುರೇಂದ್ರ ಬಾಬು ಚಾಲನೆ
ರಾಯಚೂರು: ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ನಗರದಲ್ಲಿ ಶುಕ್ರವಾರ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಚಾಲನೆ ನೀಡಿದರು. ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು ಎಂಬ ಘೋಷವಾಕ್ಯದೊಡನೆ ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಟುಂಬ ಕಲ್ಯಾಣ ವಿಭಾಗ ರಾಯಚೂರು, ರಿಮ್ಸ್ ಭೋಧಕ ಆಸ್ಪತ್ರೆ, ಎಸ್.ಕೆ.ಇ. ಪ್ಯಾರಾ ಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಬಳಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಖದಿಂದ ಸಂಸಾರ ನಡೆಸಲು ಎರಡು ಮಕ್ಕಳು ಸಾಕು. ಇದರಿಂದ ಗುಣಮಟ್ಟದ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಕೊಡಲು ಸಾಧ್ಯವಾಗುತ್ತದೆ. ಜೊತೆಗೆ ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು. ಜನಜಾಗೃತಿ ಜಾಥಾವು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಶುರುವಾಗಿ ಭಗತ್ಸಿಂಗ್ ವೃತ್ತದ ಮಾರ್ಗವಾಗಿ ತಿನ್ಕಂದಿಲ್, ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಮೂಲಕ ಮಹಾವಿರ ವೃತ್ತದವರೆಗೆ ಸಾಗಿತು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ, ರಿಮ್ಸ್ ಕಾಲೇಜಿನ ಪ್ರಾಚಾರ್ಯ ಡಾ.ರಾಹುಲ್, ಜಿಲ್ಲಾ ವಿಬಿಡಿಸಿ ಅಧಿಕಾರಿ ಡಾ.ಚಂದ್ರಶೇಖರಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಡಿ.ಶಾಕೀರ್, ಡಾ.ಗಣೇಶ್, ರಾಯಚೂರು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್ ಸೇರಿದಂತೆ ಆಶಾ ಕಾರ್ಯಕರ್ತರು ಇದ್ದರು.
ಟಿಕೆಟ್ ರದ್ದತಿಯಿಂದ 5 ವರ್ಷಗಳಲ್ಲಿ 700 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದ ದಕ್ಷಿಣ ರೈಲ್ವೆ !
ಹೈದರಾಬಾದ್: 2021ರಿಂದ 2025ರ ನಡುವೆ ದಕ್ಷಿಣ ಕೇಂದ್ರೀಯ ರೈಲ್ವೆ ವಲಯ ಕೇವಲ ಮುಂಗಡ ಟಿಕೆಟ್ ರದ್ದತಿಯೊಂದರಿಂದಲೇ ಸುಮಾರು 698 ಕೋಟಿ ರೂ.ಗೂ ಹೆಚ್ಚು ಆದಾಯವನ್ನು ಗಳಿಸಿರುವುದು ಆರ್ಟಿಐ ಮಾಹಿತಿಯಲ್ಲಿ ಬೆಳಕಿಗೆ ಬಂದಿದೆ. ಈ ಪೈಕಿ 2024ನೇ ವರ್ಷವೊಂದರಲ್ಲೇ ಮುಂಗಡ ಟಿಕೆಟ್ ರದ್ದತಿಯ ಶುಲ್ಕವಾಗಿ 198 ಕೋಟಿ ರೂ. ಆದಾಯವನ್ನು ಗಳಿಸಿದೆ ಎಂದು ವರದಿಯಾಗಿದೆ. ಈ ಅಂಕಿ-ಸಂಖ್ಯೆಯು ದಕ್ಷಿಣ ಕೇಂದ್ರೀಯ ರೈಲ್ವೆಯ ವಾರ್ಷಿಕ ಆದಾಯದ ಪೈಕಿ ಶೇ. 3.5ರಷ್ಟು ಆದಾಯದ ಉಡುಗೊರೆಯನ್ನು ಮುಂಗಡ ಟಿಕೆಟ್ ರದ್ದತಿಯೊಂದೇ ನೀಡಿರುವುದನ್ನು ತೋರಿಸುತ್ತಿದೆ. ಈ ಮೊತ್ತ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಮೂಲಗಳು, ಜುಲೈ 1ರಿಂದ ಮುಂಗಡ ಟಿಕೆಟ್ ರದ್ದತಿಯ ಶುಲ್ಕವನ್ನು ಹೆಚ್ಚುವರಿ ಪರಿಷ್ಕರಣೆ ಮಾಡಿಲಾಗಿದೆ ಎಂದು ಹೇಳಿವೆ. ನಿಯಮಗಳ ಪ್ರಕಾರ, ರೈಲು ಹೊರಡುವ ನಿಗದಿತ ಸಮಯಕ್ಕೆ 12 ರಿಂದ 48 ಗಂಟೆಗಳ ಮೊದಲು ಮುಂಗಡ ಟಿಕೆಟ್ ರದ್ದುಗೊಳಿಸಿದರೆ, ರೈಲ್ವೆ ಟಿಕೆಟ್ ದರದ ಶೇ. 25ರಷ್ಟು ಶುಲ್ಕವನ್ನು ರದ್ದುಗೊಳಿಸಲಾಗುತ್ತದೆ. ಒಂದು ವೇಳೆ 4 ಗಂಟೆಯಿಂದ 12 ಗಂಟೆಯೊಳಗೇನಾದರೂ ಮುಂಗಡ ಟಿಕೆಟ್ ಅನ್ನು ರದ್ದುಗೊಳಿಸಿದರೆ, ಈ ಶುಲ್ಕದ ಪ್ರಮಾಣ ಶೇ.50ಕ್ಕೆ ಏರಿಕೆಯಾಗುತ್ತದೆ. ವೇಟಿಂಗ್ ಲಿಸ್ಟ್ ಟಿಕೆಟ್ಗಳ ಸಂದರ್ಭದಲ್ಲಿ ಕ್ಲೆರಿಕಲ್ ಶುಲ್ಕವಾಗಿ 60ರೂ.ಗಳನ್ನು ಕಡಿತಗೊಳಿಸಲಾಗುತ್ತದೆ. ಆರ್ಟಿಐ ಮಾಹಿತಿ ಪ್ರಕಾರ, 2024ರಲ್ಲಿ ದಕ್ಷಿಣ ಕೇಂದ್ರೀಯ ರೈಲ್ವೆ ವಲಯದಲ್ಲಿ ಪ್ರಯಾಣಿಸುವ 1.4 ಕೋಟಿ ಪ್ರಯಾಣಿಕರು ತಮ್ಮ ಖಚಿತಗೊಂಡ ಮುಂಗಡ ಟಿಕೆಟ್ಗಳನ್ನು ರದ್ದುಗೊಳಿಸಿದ್ದು, ಈ ಪೈಕಿ ಕಾಯುವಿಕೆ ಸರದಿಯಲ್ಲಿರುವ ಪ್ರಯಾಣಿಕರ ಸಂಖ್ಯೆಯೇ 65 ಲಕ್ಷದಷ್ಟಿದೆ ಎಂದು ಹೇಳಲಾಗಿದೆ. ಈ ರದ್ದತಿಯ ಪೈಕಿ ಸಿಕಂದರಾಬಾದ್ ವಲಯದಲ್ಲಿ ಅತ್ಯಧಿಕ ಪ್ರಮಾಣದ ಟಿಕೆಟ್ ರದ್ದತಿಯಾಗಿದೆ. ವಾಸ್ತವವಾಗಿ, ಕಳೆದ ನಾಲ್ಕು ವರ್ಷಗಳಲ್ಲಿ ಟಿಕೆಟ್ ರದ್ದುಗೊಳಿಸುವ ವೇಟಿಂಗ್-ಲಿಸ್ಟ್ನಲ್ಲಿರುವ ಪ್ರಯಾಣಿಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬುದು ಆರ್ಟಿಐ ಮಾಹಿತಿಯಲ್ಲಿ ಬಯಲಾಗಿದೆ. 2021ರಲ್ಲಿ 15.96 ಲಕ್ಷ ಪ್ರಯಾಣಿಕರು ತಮ್ಮ ಮುಂಗಡ ಟಿಕೆಟ್ ಗಳನ್ನು ರದ್ದುಗೊಳಿಸಿದ್ದರೆ, ಈ ಪ್ರಮಾಣ 2024ರಲ್ಲಿ 65.62 ಲಕ್ಷಕ್ಕೆ ಏರಿಕೆಯಾಗಿದೆ. 2025ರ ಜನವರಿಯಿಂದ ಮೇ ತಿಂಗಳ ಮಧ್ಯವೊಂದರಲ್ಲೇ ವೇಟಿಂಗ್-ಲಿಸ್ಟ್ನಲ್ಲಿದ್ದ 31.52 ಲಕ್ಷ ಪ್ರಯಾಣಿಕರು ತಮ್ಮ ಮುಂಗಡ ರೈಲು ಟಿಕೆಟ್ ಗಳನ್ನು ರದ್ದುಗೊಳಿಸಿದ್ದಾರೆ. “ಇದಕ್ಕೆ ಪ್ರತಿಯಾಗಿ, 2021ರಿಂದ ಮೇ 2025ರ ನಡುವೆ ಪ್ರಯಾಣಿಕರಿಗೆ 2,900 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಮರುಪಾವತಿ ಮಾಡಲಾಗಿದೆ. 2024ನೇ ವರ್ಷವೊಂದರಲ್ಲೇ ದಕ್ಷಿಣ ಕೇಂದ್ರೀಯ ರೈಲ್ವೆ ವಲಯವು 871.37 ಕೋಟಿ ರೂ. ಅನ್ನು ಮರುಪಾವತಿ ಮಾಡಿದೆ” ಎಂದು ಮಾಹಿತಿ ಹಕ್ಕು ಅರ್ಜಿಗೆ ದೊರೆತಿರುವ ಉತ್ತರದಲ್ಲಿ ಬಹಿರಂಗವಾಗಿದೆ. ಇದೇ ವೇಳೆ, ದಕ್ಷಿಣ ಕೇಂದ್ರ ರೈಲ್ವೆ ವಲಯವು ಪ್ರಯಾಣಿಕರ ರೈಲು ಪ್ರಯಾಣದಿಂದ 5,710 ಕೋಟಿ ರೂ. ಆದಾಯ ಗಳಿಸಿದೆ” ಎಂಬ ಸಂಗತಿಯೂ ಬಯಲಾಗಿದೆ.
ಸಿಎ ಅಂತಿಮ ಪರೀಕ್ಷೆ: ಇಂದ್ರಾಳಿಯ ಮುಹಮ್ಮದ್ ನಾಹೀದ್ ಉತ್ತೀರ್ಣ
ಉಡುಪಿ : ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಇಂದ್ರಾಳಿಯ ಮುಹಮ್ಮದ್ ನಾಹೀದ್ ಉತ್ತೀರ್ಣರಾಗಿದ್ದಾರೆ. ಉಡುಪಿ ತ್ರಿಷಾ ಕಾಲೇಜಿನ ವಿದ್ಯಾರ್ಥಿ ಯಾಗಿರುವ ಇವರು, ಹೈದರಬಾದಿನ ಅರ್ನ್ಸ್ಟ್ ಆ್ಯಂಡ್ ಯಂಗ್ ಎಲ್ಎಲ್ಪಿಯಲ್ಲಿ ತರಬೇತಿ ಪಡೆದಿದ್ದಾರೆ. ಇವರು ಮೇಗರ್ವಳ್ಳಿ ಮುಹಮ್ಮದ್ ಅಲಿ ಹಾಗೂ ಇಫ್ತಿಕಾರ್ ಬಾನು ದಂಪತಿ ಪುತ್ರ.
ಸುಳ್ಯ| ಜ್ವರದ ಹಿನ್ನೆಲೆ ಆಸ್ಪತ್ರೆಗೆ ಬಂದ ಶಾಲಾ ಬಾಲಕಿಗೆ ಗರ್ಭಿಣಿ ಎಂದು ವರದಿ
ಸುಳ್ಯ: ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಶಾಲಾ ಬಾಲಕಿಗೆ ವೈದ್ಯಾಧಿಕಾರಿ ಯೊಬ್ಬರು ಗರ್ಭಿಣಿ ಎಂದು ವರದಿ ನೀಡಿ ಎಡವಟ್ಟು ಮಾಡಿಕೊಂಡ ಘಟನೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ವೈದ್ಯಾಧಿಕಾರಿಯು ಈ ವಿಚಾರವನ್ನು ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರರಿಗೆ ಹೇಳಿದ್ದು, ಈ ಸುಳ್ಳು ಮಾಹಿತಿ ಸಾರ್ವಜನಿಕವಾಗಿ ಹರಡಿದ ಕಾರಣ ನಮ್ಮ ಕುಟುಂಬಕ್ಕೆ ಭಾರೀ ಮಾನಸಿಕ ನೋವನ್ನುಂಟು ಮಾಡಿದೆ. ನನ್ನ ಮಗಳು ಈಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಬಾಲಕಿಯ ಹೆತ್ತವರು ದಾಖಲೆಯೊಂದಿಗೆ ದೂರು ನೀಡಿದ್ದಾರೆ. ಶಾಲೆಯ ಸಹಪಾಠಿಗಳು, ಶಿಕ್ಷಕರು ಮತ್ತು ಸ್ಥಳೀಯರು ಈ ಕುರಿತು ಮಾತು ಮಾತಿನಲ್ಲಿ ಬಾಲಕಿಯನ್ನು ಮಾನಹಾನಿ ಮಾಡುತ್ತಿದ್ದಾರೆ. ಅಪ್ರಾಪ್ತ ಮಗಳಿಗೆ ತಪ್ಪು ವೈದ್ಯಕೀಯ ಮಾಹಿತಿ ನೀಡುವುದು ಹಾಗೂ ಅವಳ ಖಾಸಗಿ ಮಾಹಿತಿಯನ್ನು ಅನಧಿಕೃತವಾಗಿ ಬಹಿರಂಗಪಡಿಸುವುದು ಪೋಕ್ಸೋ ಕಾಯಿದೆ ಹಾಗೂ ಐ.ಪಿ.ಸಿ. ಸೆಕ್ಷನ್ ಗಳ ಅಡಿಯಲ್ಲಿ ಗಂಭೀರ ಅಪರಾಧವಾಗಿರುತ್ತದೆ. ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯ ಹಿನ್ನೆಲೆ: ಕಡಬ ತಾಲೂಕಿಗೆ ಒಳಪಟ್ಟ ಗ್ರಾಮವೊಂದರ 13 ವರ್ಷದ ಬಾಲಕಿಯನ್ನು ಜ್ವರದ ಹಿನ್ನೆಲೆ ಆಕೆಯ ಹೆತ್ತವರು ಚಿಕಿತ್ಸೆಗಾಗಿ ಜುಲೈ 1 ರಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿನ ಕರ್ತವ್ಯನಿರತ ವೈದ್ಯಾಧಿಕಾರಿ ಡಾ. ಮಂಜುನಾಥ್ ಅವರು ಬಾಲಕಿಯನ್ನು ತಪಾಸಣೆ ಮಾಡಿ ಮೂತ್ರ ಮತ್ತು ರಕ್ತ ಪರೀಕ್ಷೆಗೆ ಲ್ಯಾಬ್ ಸ್ಲಿಪ್ ನೀಡಿದ್ದರು. ತಪಾಸಣೆಯ ನಂತರ ಹೊರ ರೋಗಿಗಳ ದಾಖಲಾತಿಯಲ್ಲಿ ಯುಪಿಟಿ ಪಾಸಿಟಿವ್ (ಗರ್ಭಿಣಿ) ಎಂದು ಬರೆದಿದ್ದು ಇನ್ನಷ್ಟು ತಪಾಸಣೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಈ ವರದಿಯಿಂದ ತಬ್ಬಿಬ್ಬುಗೊಂಡ ಹೆತ್ತವರು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಪರೀಕ್ಷೆ ಮಾಡಿಸಿದಾಗ ಮಗಳು ಗರ್ಭಿಣಿಯಾಗಿಲ್ಲ ಎಂಬ ವರದಿ ಲಭಿಸಿತ್ತು. ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಅಲ್ಲಿಯ ವೈದ್ಯರೂ ಕೂಡಾ ಗರ್ಭಧಾರಣೆಯ ಕುರಿತು ಯಾವುದೇ ದೃಢೀಕರಣ ನೀಡಿಲ್ಲ ಎಂದು ತಿಳಿದುಬಂದಿದೆ. ದೂರಿನ ಬೆನ್ನಲ್ಲೇ ಪರಿಶೀಲನೆಗೆ ಬಂದ ಅಧಿಕಾರಿಗಳ ತಂಡ:- ದೂರಿನ ಗಂಭೀರತೆ ಅರಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ಅವರು ತನಿಖೆಗಾಗಿ ತಂಡವನ್ನು ರಚಿಸಿ ಪಂಜಕ್ಕೆ ಕಳುಹಿಸಿದ್ದು, ಜುಲೈ10 ರಂದು ಮಾಹಿತಿ ಸಂಗ್ರಹಿಸಿದ್ದಾರೆ. ಆರ್.ಸಿ.ಎಚ್ ( ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗದ ಡಾ ರಾಜೇಶ್, ಜಿಲ್ಲಾ ಕ್ಷಯ ರೋಗ ನಿವಾರಣಾಧಿಕಾರಿ ಡಾ. ದಿಲ್ಷಾದ್ , ಜಿಲ್ಲಾ ಶುಶ್ರೂಷಣಾಧಿಕಾರಿ ಜೆಸಿ ಕೆ.ವಿ , ತಾಲೂಕು ಆರೋಗ್ಯಾಧಿಕಾರಿ ತ್ರಿಮೂರ್ತಿ ತಂಡದಲ್ಲಿದ್ದರು. ಪೊಲೀಸರಿಗೂ ದೂರು:- ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ದಲಿತ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಕೇಸು ದಾಖಲಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಡಾ. ಮಂಜುನಾಥ್ ಕೊಯಿಲಕ್ಕೆ ವರ್ಗಾವಣೆ ಕಳೆದ 13 ವರ್ಷಗಳಿಂದ ಪಂಜ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಮಂಜುನಾಥ್ ಸಿ. ಅವರು ಕಡಬ ತಾಲೂಕಿನ ಕೊಯಿಲ ಸರಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ : ಕೆ.ಎಸ್.ಈಶ್ವರಪ್ಪಗೆ ತಾತ್ಕಾಲಿಕ ರಿಲೀಫ್
ಬೆಂಗಳೂರು : ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣ ರದ್ದು ಕೋರಿ ಕೆ.ಎಸ್.ಈಶ್ವರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿದೆ. ಇದಕ್ಕೂ ಮುನ್ನ ಅರ್ಜಿದಾರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಪ್ರಾಥಮಿಕ ತನಿಖೆ ನಡೆಸದೇ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಬಂಧನದ ಭೀತಿ ಇದೆ ಎಂದು ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆವರೆಗೆ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿ ಆದೇಶಿದೆ.
ರಾಯಚೂರು | ರಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯ ಆರೋಪ
ರಾಯಚೂರು: ತೀವ್ರ ರಕ್ತಸ್ರಾವದಿಂದ ಬಾಣಂತಿಯೊರ್ವರು ಮೃತಪಟ್ಟಿರುವ ಘಟನೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತrನ್ನು ಸಿರವಾರ ತಾಲ್ಲೂಕು ಬಲ್ಲಟಗಿ ಗ್ರಾಮದ ನಿವಾಸಿ ಶಿವಗಂಗಮ್ಮ ಗಂಗಾಧರ (25) ಎಂದು ಗುರುತಿಸಲಾಗಿದೆ. ಶಿವಗಂಗಮ್ಮರನ್ನು ಬುಧವಾರ ಮಾನ್ವಿ ತಾಲ್ಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಲ್ಲೂಕು ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡಿದ್ದರು ಎನ್ನಲಾಗಿದೆ. ಆ ಬಳಿಕ ಆಕೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಆಕೆಯನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮೃತಳ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದ ಶಿವಗಂಗಮ್ಮ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾre.
ಬಿಹಾರ ಚುನಾವಣೆಯಲ್ಲಿ ವಂಚನೆ ಎಸಗಲು ಬಿಜೆಪಿ, ಚುನಾವಣಾ ಆಯೋಗ ಸಂಚು: ರಾಹುಲ್ ಗಾಂಧಿ ಆರೋಪ
ಭುವನೇಶ್ವರ: ಬಿಜೆಪಿ ಹಾಗೂ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಈ ವರ್ಷಾಂತ್ಯದ ವೇಳೆಗೆ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಂಚನೆಯೆಸಗಲು ಅವು ಸಂಚು ಹೂಡಿದೆಯೆಂದು ಆಪಾದಿಸಿದರು. ಒಡಿಶಾದ ಬಿಜೆಪಿ ಸರಕಾರವು ಬಡವರ ಸಂಪತ್ತನ್ನು ಲೂಟಿಗೈಯುತ್ತಿದೆ ಹಾಗೂ ರಾಜ್ಯದಲ್ಲಿ ಬೃಹತ್ ಕಾರ್ಪೋರೇಟ್ ಗಳಿಗೆ ಬೆಂಬಲವನ್ನು ನೀಡುತ್ತಿದೆಯೆಂದು ಹೇಳಿದರು. ಭುವನೇಶ್ವರದ ಬಾರಾಮುಂಡಾ ಮೈದಾನದಲ್ಲಿ ನಡೆದ ಸಂವಿಧಾನ ಬಚಾವೋ ಸಮಾವೇಶ (ಸಂವಿಧಾನ ರಕ್ಷಿಸಿ)ವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಬಿಜೆಪಿಯು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆಯೆಂದು ಹೇಳಿದರು. ಬಿಹಾರದಲ್ಲಿ ಬಿಜೆಪಿಯು ‘ಚುನಾವ್ ಚೋರಿ’ (ಚುನಾವಣಾ ಕಳ್ಳತನ) ನಡೆಸಲು ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿದೆಯೆಂದು ರಾಹುಲ್ ಆಪಾದಿಸಿದರು. ‘‘ ಮಹಾರಾಷ್ಟ್ರದಲ್ಲಿ ಚುನಾವಣಾ ಕಳ್ಳತನ ನಡೆಸಿದಂತೆ, ಬಿಹಾರದಲ್ಲೂ ಚುನಾವಣೆಯನ್ನು ‘ಅಪಹರಿಸಲು’ ಸಂಚು ನಡೆಯುತ್ತಿದೆ’’ ಎಂದವರು ಹೇಳಿದರು. ಬಿಹಾರದಲ್ಲಿ ಚುನಾವಣಾ ಕಳ್ಳತನಕ್ಕಾಗಿ ಚುನಾವಣಾ ಆಯೋಗವು ಹೊಸ ಸಂಚನ್ನು ಹೂಡಿದೆ. ಅದು ಸ್ವತಂತ್ರವಾಗಿ ಕಾರ್ಯಾಚರಿಸುವ ಬದಲು ಬಿಜೆಪಿಯ ಏಜೆಂಟ್ ನಂತೆ ಕೆಲಸ ಮಾಡುತ್ತಿದೆ ಎಂದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವೆಸಗಲು ಒಂದು ಕೋಟಿ ಮತದಾರರನ್ನು ಹೊಸತಾಗಿ ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಬಿಹಾರದಲ್ಲಿಯೂ ಅಂತಹದೇ ಪ್ರಯತ್ನವನ್ನು ನಡೆಸಲಾಗುತ್ತಿದೆ. ಆದಾಗ್ಯೂ ಬಿಹಾರದಲ್ಲಿ ಚುನಾವಣಾ ಆಯೋಗವು ಚುನಾವಣಾ ಅಕ್ರಮವನ್ನು ಎಸಗುವುದಕ್ಕೆ ನಾವು ಆಸ್ಪದ ನೀಡುವುದಿಲ್ಲ’’ಎಂದರು. ಪಿಎಂ ಫಸಲ್ ಬಿಮಾ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ರಾಹುಲ್ ತರಾಟೆಗೆ ತೆಗೆದುಕೊಂಡರು. ಫಸಲ್ ಬಿಮಾ ಯೋಜನೆಗಾಗಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಮತ್ತು ಈ ಯೋಜನೆಯ ಮೂಲಕ ಸರಕಾರವು ಮೂರ್ನಾಲ್ಕು ಬೃಹತ್ ಕಂಪೆನಿಗಳಿಗೆ ದಾರಿ ಮಾಡಿಕೊಟ್ಟಿವೆ ಎಂದವರು ಆಪಾದಿಸಿದರು. ಒಡಿಶಾದಲ್ಲಿ ಜಗನ್ನಾಥ ರಥಯಾತ್ರೆಯನ್ನು ಲಕ್ಷಾಂತರ ಜನರು ವೀಕ್ಷಿಸಿ,ಅದರೊಂದಿಗೆ ಸಾಗಿದರು. ಆಗೊಂದು ನಾಟಕ ನಡೆಯಿತು. ಆದಾನಿ ಹಾಗೂ ಅವರ ಕುಟುಂಬಕ್ಕಾಗಿ ರಥಗಳನ್ನು ನಿಲ್ಲಿಸಲಾಯಿತು. ಒಡಿಶಾ ಸರಕಾರದ ಕುರಿತು ಎಲ್ಲವನ್ನೂ ಅರಿತುಕೊಳ್ಳಲು ಈ ನಿದರ್ಶನವೊಂದೇ ಸಾಕು ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರು.
ರಾಯಚೂರು | ಜು.13ರಂದು ಪಂಡಿತ ಪಂಚಾಕ್ಷರಿ ಗವಾಯಿಗಳ ಪುಣ್ಯದಿನಾಚರಣೆ
ರಾಯಚೂರು: ನಗರದ ಗಣದಿನ್ನಿ ಕಲ್ಯಾಣ ಮಂಟಪದಲ್ಲಿ ಜು.13ರಂದು ಬೆಳಿಗ್ಗೆ 9ಗಂಟೆಗೆ ಪಂಡಿತ ಪಂಚಾಕ್ಷರಿ ಗಾವಾಯಿಗಳ ಸಂಸ್ಥೆಯಿಂದ ಪಂಡಿತ ಪಂಚಾಕ್ಷರಿ ಗವಾಯಿಗಳ ಪುಣ್ಯ ದಿನಾಚರಣೆ ಮತ್ತು 45ನೇ ವರ್ಷದ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸೂಗೂರೇಶ ಅಸ್ಕಿಹಾಳ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ಕಿಲ್ಲೆಬೃಹನ್ಮಠದ ಶ್ರೀ ಶಾಂತಮಲ್ಲಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯರು, ಗಬ್ಬೂರಿನ ಶ್ರೀಬೂದಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜ, ಸಂಸದ ಜಿ.ಕುಮಾರನಾಯಕ, ನಗರದ ಶಾಸಕ ಡಾ.ಶಿವರಾಜಪಾಟೀಲ್, ಬಸನಗೌಡ ದದ್ದಲ್, ವೀರಶೈವ ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರು, ಕೆಓಎಪ್ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಆಗಮಿಸಲಿದ್ದಾರೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಗದಗ ವೀರೇಶ್ವರ ಆಶ್ರಮದ ಶ್ರೀ ಕಲ್ಲಯ್ಯ ಅಜ್ಜ ಅವರಿಗೆ ತುಲಾಭಾರ ನೆರವೇರಿಸಲಾಗುತ್ತಿದೆ. ಸಂಗೀತಾ ಸಮ್ಮೇಳನದಲ್ಲಿ ವಿಶ್ವನಾಥ ನಾಕೋಡ್, ಪುಣೆಯ ನಾಗೇಶ ಅಡಗಾಂವಕರ್, ಕೃತಿಕಾ ಜಂಗಿನಮಠ, ಕೊಲ್ಕತ್ತಾದ ಪ್ರಣಮಿತ ರಾಯ್, ಕಾರ್ತಿಕೇಯ ಜಂಗಿನಮಠ ವಿಜಯಪುರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಜಿಲ್ಲೆಯ ಅನೇಕ ಸಂಗೀತ ಕಲಾವಿದರಿಂದಲೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಪಂಡಿತ ಡಾ.ನರಸಿಂಹಲು ವಡವಾಟಿ, ಇಬ್ರಾಹಿಂ ಜಿ., ವೆಂಕಟೇಶ ಆಲ್ಕೋಡ, ಸುಧಾಕರ ಅಸ್ಕಿಹಾಳ, ವಿಜಯಕುಮಾರ ದಿನ್ನಿ, ಎಂ.ಸುಭಾಷ ಅಸ್ಕಿಹಾಳ, ರಾಘವೇಂದ್ರ ಆಶಾಪೂರ ಪತ್ರಿಕಾಗೋಷ್ಠಿಯಲ್ಲಿದ್ದರು
ಹುತಾತ್ಮರ ದಿನಕ್ಕೆ ಮುನ್ನ ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ:ಕಾಶ್ಮೀರದ ಮುಖ್ಯ ಧರ್ಮಗುರು
ಶ್ರೀನಗರ: ತನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಮತ್ತು ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿಲ್ಲ ಎಂದು ಕಾಶ್ಮೀರದ ಮುಖ್ಯ ಧರ್ಮಗುರು ಹಾಗೂ ಹುರಿಯತ್ ಕಾನ್ಫರೆನ್ಸ್ ನಾಯಕ ಮಿರ್ವೈಝ್ ಉಮರ್ ಫಾರೂಕ್ ಅವರು ಶುಕ್ರವಾರ ಹೇಳಿದ್ದಾರೆ. ಜು.13ರ ಕಾಶ್ಮೀರ ಹುತಾತ್ಮರ ದಿನವನ್ನು ತನ್ನ ಪ್ರವಚನದಲ್ಲಿ ಉಲ್ಲೇಖಿಸಬಹುದು ಎಂಬ ಭಯದಿಂದ ಅಧಿಕಾರಿಗಳು ಈ ಕ್ರಮವನ್ನು ಕೈಗೊಂಡಿದ್ದಾರೆ ಎಂದು ಫಾರೂಕ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. 1931ರಲ್ಲಿ ಶ್ರೀನಗರ ಕೇಂದ್ರ ಕಾರಾಗೃಹದ ಹೊರಗೆ ಡೋಗ್ರಾ ಆಡಳಿತಗಾರ ಹರಿ ಸಿಂಗ್ ಅವರ ಸಶಸ್ತ್ರ ಪಡೆಗಳ ಗುಂಡಿಗೆ ಬಲಿಯಾಗಿದ್ದ 22 ಜನರ ಗೌರವಾರ್ಥ ಜು.13ನ್ನು ಹುತಾತ್ಮರ ದಿನ ಎಂದು ಗುರುತಿಸಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಆಗಸ್ಟ್ 2019ರಲ್ಲಿ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರ ಹುತಾತ್ಮರ ದಿನವನ್ನು ಸಾರ್ವಜನಿಕ ರಜಾದಿನಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಜೊತೆಗೆ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್(ಎನ್ಸಿ)ನ ಸ್ಥಾಪಕ ಶೇಖ್ ಅಬ್ದುಲ್ಲಾ ಅವರ ಜನನ ಮತ್ತು ಮರಣ ದಿನಗಳಿಗೆ ನೀಡಲಾಗುತ್ತಿದ್ದ ರಜೆಗಳನ್ನೂ ರದ್ದುಗೊಳಿಸಲಾಗಿತ್ತು. 22 ಹುತಾತ್ಮರು ಮತ್ತು ನಂತರದ ಎಲ್ಲ ಹುತಾತ್ಮರ ತ್ಯಾಗಗಳು ಕಾಶ್ಮೀರದ ಸಾಮೂಹಿಕ ಸ್ಮರಣೆಯಲ್ಲಿ ಕೆತ್ತಲ್ಪಟ್ಟಿವೆ ಮತ್ತು ನಿರ್ಬಂಧಗಳು ಹಾಗೂ ನಿಷೇಧಗಳ ಮೂಲಕ ಅವುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಎಕ್ಸ್ ಪೋಸ್ಟ್ ನಲ್ಲಿ ಹೇಳಿರುವ ಫಾರೂಕ್,‘ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ತನ್ನ ಹುತಾತ್ಮರ ಬಲಿದಾನಗಳನ್ನು ಯಾವುದೇ ಕ್ರಿಯಾಶೀಲ ದೇಶವು ಮರೆಯಲು ಸಾಧ್ಯವಿಲ್ಲ’ ಎಂದಿದ್ದಾರೆ. ನಿರ್ಬಂಧಗಳನ್ನು ರದ್ದುಗೊಳಿಸುವಂತೆ ಮತ್ತು ಜು.13ರ ಹುತಾತ್ಮರಿಗೆ ಶಾಂತಿಯುತವಾಗಿ ಶ್ರದ್ಧಾಂಜಲಿಗಳನ್ನು ಸಲ್ಲಿಸಲು ಕಾಶ್ಮೀರದ ನಿವಾಸಿಗಳಿಗೆ ಅವಕಾಶ ನೀಡುವಂತೆ ಅಧಿಕಾರಿಗಳನ್ನು ಅವರು ಆಗ್ರಹಿಸಿದ್ದಾರೆ. ಜು.13ನ್ನು ಹುತಾತ್ಮರ ದಿನವಾಗಿ ಅಧಿಕೃತ ಆಚರಣೆಯನ್ನು ಪುನರಾರಂಭಿಸುವಂತೆ ಎನ್ಸಿ ಮತ್ತು ಪಿಡಿಪಿ ಸೇರಿದಂತೆ ಜಮ್ಮುಕಾಶ್ಮೀರದ ಹಲವಾರು ಪ್ರಾದೇಶಿಕ ಪಕ್ಷಗಳು ಗುರುವಾರ ಆಗ್ರಹಿಸಿದ್ದವು. ಜು.13 ಮತ್ತು ಶೇಖ್ ಅಬ್ದುಲ್ಲಾರ ಜನ್ಮದಿನವನ್ನು ಅಧಿಕೃತ ರಜಾದಿನಗಳನ್ನಾಗಿ ಮರುಸೇರ್ಪಡೆಗೊಳಿಸುವಂತೆ ಕೋರಿ ಜಮ್ಮುಕಾಶ್ಮೀರದ ಎನ್ಸಿ ಸರಕಾರವೂ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರಿಗೆ ಪತ್ರವನ್ನು ಬರೆದಿದೆ ಎಂದು ಪಕ್ಷದ ವಕ್ತಾರ ಇಮ್ರಾನ್ ನಬಿ ಸುದ್ದಿಸಂಸ್ಥೆಗೆ ತಿಳಿಸಿದರು. ಜೊತೆಗೆ,ಜು.13ರಂದು ಹುತಾತ್ಮರನ್ನು ದಫನ ಮಾಡಲಾಗಿರುವ ಹಳೆಯ ನಗರದಲ್ಲಿಯ ಖಬರಸ್ತಾನಕ್ಕೆ ಭೇಟಿ ನೀಡಲು ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಾಗರ್ ನೇತೃತ್ವದ ನಿಯೋಗಕ್ಕೆ ಅವಕಾಶ ನೀಡುವಂತೆಯೂ ಎನ್ಸಿ ಕೋರಿಕೊಂಡಿದೆ ಎಂದರು.
ನಾಪತ್ತೆ, ಪೋಕ್ಸೋ ಪ್ರಕರಣಗಳ ತಡೆಗೆ ಅಗತ್ಯ ಕ್ರಮ : ಎನ್.ಎಚ್.ಕೋನರಡ್ಡಿ
ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಾಪತ್ತೆ ಪ್ರಕರಣಗಳು, ಪೋಕ್ಸೋ ಪ್ರಕರಣಗಳು ಕಂಡುಬಂದಿದ್ದು, ಅವುಗಳನ್ನು ತಡೆಗಟ್ಟುವ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ ಎಂದು ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎನ್.ಎಚ್.ಕೋನರಡ್ಡಿ ತಿಳಿಸಿದರು. ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಇದೇ ಮೊಟ್ಟಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಸಭೆ ನಡೆಸಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮೊದಲನೆಯ ಹಾಗೂ ಅತ್ಯಂತ ಮಹತ್ವದ ಸಭೆ ಇದಾಗಿದೆ, ಮುಖ್ಯವಾಗಿ ನಾಪತ್ತೆ ಪ್ರಕರಣಗಳು, ಪೋಕ್ಸೋ, ಮಕ್ಕಳ ಅಪಹರಣ, ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕರ ನೇಮಕಾತಿ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು. ಅಲ್ಲದೇ, ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳನ್ನು ಪಡೆದುಕೊಳ್ಳುವ ಬಗ್ಗೆ, ತೆರೆದ ಮನೆ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಬಗ್ಗೆ, ಅಪಹರಣ ಪ್ರಕರಣಗಳಲ್ಲಿ ಪೋಲೀಸರು ಶೀಘ್ರವಾಗಿ ಪತ್ತೆ ಮಾಡುವ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಯಿತು ಎಂದು ಕೋನರೆಡ್ಡಿ ತಿಳಿಸಿದರು. ಇಲ್ಲಿ ಚರ್ಚಿಸಲಾದ ವಿಷಯಗಳ ಗಂಭೀರತೆ ಕುರಿತು ಕುರಿತು ಸರಕಾರದ ಗಮನಕ್ಕೆ ತರಲಾಗುವುದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿಯೂ ಸಭೆ ನಡೆಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿನ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು. ಗೃಹಲಕ್ಷ್ಮೀ ಯೋಜನೆಯ ಅನುಷ್ಠಾ ನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಜ್ಯ ಸರಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಿದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಇಲಾಖೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ, ಈ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಅಗತ್ಯವಾದ ಸಲಹೆಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಕೋನರೆಡ್ಡಿ ತಿಳಿಸಿದರು. ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಕೆ, ಬಾಲ ವಿಕಾಸ ಮಂದಿರ, ಅನಾಥಾಶ್ರಮಗಳು ಈ ಇಲಾಖೆಯ ವ್ಯಾಪ್ತಿಗೆ ಬರುತ್ತವೆ, ಈ ಕುರಿತು ಸಮಗ್ರವಾಗಿ ಚರ್ಚಿಸಿ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಲಿದೆ, ಜಿಲ್ಲೆಯಲ್ಲಿ 104 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಕಾಣೆಯಾದವರ ಪತ್ತೆ ಪ್ರಕರಣಗಳಲ್ಲಿ ಒಂದು ಪ್ರಕರಣ ಮಾತ್ರ ಬಾಕಿ ಇದೆ. ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಾಲಾ ಶಿಕ್ಷಣ ಇಲಾಖೆಯು ಜಂಟಿಯಾಗಿ ಶಾಲಾ, ಕಾಲೇಜುಗಳಲ್ಲಿ ಕಾಣೆಯಾದವರ ಕುರಿತು ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಎಚ್.ಎ.ಇಕ್ಬಾಲ್ ಹುಸೇನ್, ಉದಯ್ ಗರುಡಾಚಾರ್, ಕೊತ್ತೂರು ಜಿ.ಮಂಜುನಾಥ್, ಕರೆಮ್ಮ ನಾಯ್ಕ, ಶರಣಗೌಡ ಕಂದಕೂರು, ಡಾ.ಚಂದ್ರಶೇಖರ ಬಸವರಾಜ ಪಾಟೀಲ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು.
ಮಾನ್ವಿ | ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾರಾಟ : ಅಧಿಕಾರಿಗಳಿಂದ ದಾಳಿ
ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ವಾರ್ಡ್ ನಂ25 ರಲ್ಲಿ ಬರುವ ಇಸ್ಲಾಂ ನಗರದ ಖಾಲಿ ನಿವೇಶನದಲ್ಲಿ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ನಡೆಯುತ್ತಿರುವ ಖಚಿತ ಮಾಹಿತಿಯ ಮೇರೆಗೆ ಗುರುವಾರ ಮಾನ್ವಿ ತಾಲೂಕು ಆಹಾರ ನಿರೀಕ್ಷಕ ದೇವರಾಜ ಆಹಾರ ಸುರಕ್ಷತಾ ಅಧಿಕಾರಿ ಗುರುರಾಜ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಆಕಸ್ಮಿಕವಾಗಿ ಜಂಟಿ ದಾಳಿ ನಡೆಸಿ ಕಲಬೆರಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸ್ಥಳದಲ್ಲಿ ಆಹಾರ ಪಧಾರ್ಥಗಳನ್ನು ಕಲಬೆರಕೆ ಮಾಡುವುದಕ್ಕೆ ಬಳಸುತ್ತಿದ್ದ ರಾಸಾಯನಿಕ ಬಣ್ಣ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಹಾಗೂ ಕಲಬೆರಕೆ ಮಾಡಲಾದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡು ಅಗತ್ಯ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಮಾನ್ವಿ ತಾಲೂಕು ಆಹಾರ ನಿರೀಕ್ಷಕ ದೇವರಾಜ ಮಾತನಾಡಿದರು. ದಾಳಿಯಲ್ಲಿ ಪುರಸಭೆ ಆಹಾರ ನಿರೀಕ್ಷಕ ಮಹೇಶಕುಮಾರ ಹಾಗೂ ಸಿಬ್ಬಂದಿಗಳು ಇದ್ದರು.
ಮುಂಗಾರು ಹಂಗಾಮಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ
ಉಡುಪಿ, ಜು.11:ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ನ್ನು ಅಭಿವೃದ್ದಿ ಪಡಿಸಲಾಗಿದ್ದು, ಇಲಾಖೆಯ ಫ್ರೂಟ್ಸ್ ತಂತ್ರಾಂಶದ ಎಫ್ಐಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್ನಿಂದ ‘ಮುಂಗಾರು ರೈತರ ಬೆಳೆ ಸಮೀಕ್ಷೆ 2025’ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಂಡು, ‘ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ’ ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ, ಜನರೇಟ್ ಓಟಿಪಿ ಆಯ್ಕೆಯನ್ನು ಮಾಡಬೇಕು. ನಂತರದಲ್ಲಿ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಓಟಿಪಿಯನ್ನು ದಾಖಲಿಸಬೇಕು. ರೈತರ ಎಫ್ಐಡಿ ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿ ಡೌನ್ಲೋಡ್ ಆಗುತ್ತದೆ. ಮುಂದಿನ ಹಂತದಲ್ಲಿ ಸರ್ವೆ ನಂಬರ್, ಹಿಸ್ಸಾ, ಮಾಲಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಬೇಕು. ಒಂದು ವೇಳೆ ರೈತರು ಎಫ್.ಐ.ಡಿ ಸಂಖ್ಯೆಯನ್ನು ಹೊಂದಿಲ್ಲದಿದ್ದಲ್ಲಿ ಹತ್ತಿರದ ಕೃಷಿ ಅಥವಾ ತೋಟಗಾರಿಕ ಇಲಾಖೆಗಳ ಕಛೇರಿಗಳನ್ನು ಸಂಪರ್ಕಿಸಿ, ಎಫ್.ಐ.ಡಿ ಸಂಖ್ಯೆಯನ್ನು ಮಾಡಿಸಿಕೊಳ್ಳ ಬೇಕು. ಬೆಳೆ ಸಮೀಕ್ಷೆ ಮಾಹಿತಿ ಯನ್ನು ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆವಿಮೆ ಯೋಜನೆ ಅನುಷ್ಠಾನ, ಋತುಮಾನ ವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುವುದು. ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷ ಗಳಿಗೆ ಆಸ್ಪದವಿಲ್ಲದಂತೆ ತಾವೇ ದಾಖಲಿಸಲು ಸರಕಾರದಿಂದ ಅವಕಾಶ ಕಲ್ಪಿಸಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಜಿಲ್ಲೆಯ ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆ್ಯಪ್ನಲ್ಲಿ ತಮ್ಮ ಜಮೀನಿನ ಸರ್ವೆ ನಂಬರ್ವಾರು ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ ಮುಂಗಾರು-2025ರ ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಒಡಿಶಾ ನವ ದಂಪತಿಯನ್ನು ಎತ್ತುಗಳಂತೆ ನೊಗಕ್ಕೆ ಕಟ್ಟಿ ಹೊಲ ಉಳುವಂತೆ ಬಲವಂತ : ವೀಡಿಯೊ ವೈರಲ್
ಒಡಿಶಾ ನವ ದಂಪತಿಯನ್ನು ಎತ್ತುಗಳಂತೆ ನೊಗಕ್ಕೆ ಕಟ್ಟಿ ಹೊಲ ಉಳುವಂತೆ ಬಲವಂತ : ವೀಡಿಯೊ ವೈರಲ್ ಭುವನೇಶ್ವರ : ಒಡಿಶಾದಲ್ಲಿ ಸ್ಥಳೀಯ ಸಾಮಾಜಿಕ ರೂಢಿಗೆ ವಿರುದ್ಧವಾಗಿ ವಿವಾಹವಾದ ಜೋಡಿಯನ್ನು ಗುಂಪೊಂದು ಎತ್ತುಗಳಂತೆ ನೊಗಕ್ಕೆ ಕಟ್ಟಿ ಹೊಲವನ್ನು ಉಳುವಂತೆ ಬಲವಂತ ಮಾಡಿದೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಡಿಶಾದ ರಾಯಗಡ ಜಿಲ್ಲೆಯ ಕಂಜಮಝಿರಾ ಗ್ರಾಮದಲ್ಲಿ ಇತ್ತೀಚೆಗೆ ಜೋಡಿಯೊಂದು ಪ್ರೀತಿಸಿ ವಿವಾಹವಾಗಿತ್ತು. ಯುವತಿ ಮತ್ತು ಯುವಕ ಹತ್ತಿರದ ಸಂಬಂಧಿಕರಾಗಿದ್ದರು. ಇದಕ್ಕೆ ಕೆಲವು ಗ್ರಾಮಸ್ಥರು ವಿರೋಧವನ್ನು ವ್ಯಕ್ತಪಡಿಸಿದ್ದರು. ಸ್ಥಳೀಯ ಪದ್ಧತಿಗಳ ಪ್ರಕಾರ ಅಂತಹ ಮದುವೆಯನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ನವ ದಂಪತಿಗೆ ಶಿಕ್ಷೆಯನ್ನು ವಿಧಿಸುವ ಸಲುವಾಗಿ ಅವರನ್ನು ಬಲವಂತವಾಗಿ ಮರದ ನೊಗಕ್ಕೆ ಕಟ್ಟಿ ಹೊಲದಲ್ಲಿ ಎಳೆದುಕೊಂಡು ಹೋಗಲಾಗಿದೆ. ಇಬ್ಬರು ನವ ದಂಪತಿಗೆ ಕೋಲಿನಿಂದ ಹೊಡೆಯುತ್ತಿರುವುದು ಕೂಡ ವೀಡಿಯೊದಲ್ಲಿ ಸೆರೆಯಾಗಿದೆ. ಸಾರ್ವಜನಿಕವಾಗಿ ಶಿಕ್ಷೆಯನ್ನು ವಿಧಿಸಿದ ಬಳಿಕ ದಂಪತಿಯನ್ನು ಗ್ರಾಮದ ದೇವಾಲಯಕ್ಕೆ ಕರೆದೊಯ್ದು ಅವರ ಪಾಪವನ್ನು ಶುದ್ದೀಕರಿಸಲು ಶುದ್ಧೀಕರಣ ವಿಧಿಗಳನ್ನು ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಎಸ್. ಸ್ವಾತಿ ಕುಮಾರ್ ಪ್ರತಿಕ್ರಿಯಿಸಿ, ಪೊಲೀಸರ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿದೆ. ಪ್ರಕರಣ ದಾಖಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. When culture becomes vulture ! A scene from Rayagada district of #Odisha ! A boy n girl who love each other are forced to plough in public just like bullocks as punishment ! It's inhuman indeed ! should be stopped @Ashok_Kashmir @irfhabib @BabelePiyush @amityadavbharat pic.twitter.com/4w2hNaMGy5 — Amiya_Pandav ଅମିୟ ପାଣ୍ଡଵ Write n Fight (@AmiyaPandav) July 11, 2025
ಕಲಬುರಗಿ | ಬುದ್ಧ, ಧಮ್ಮ ಪುಸ್ತಕಗಳ ಮೆರವಣಿಗೆ
ಕಲಬುರಗಿ: ಬಸವ ನಗರದ ರಾಹುಲ್ ಯುವಕ ಸಂಘದಿಂದ ವರ್ಷಾ ವಾಸ ನಿಮಿತ್ತ ಬುದ್ಧನ ಮೂಲ ಬೋಧನೆ ಉಳ್ಳ ತ್ರಿಪಿಠಕ ಪುಸ್ತಕ ಮತ್ತು ಬಾಬಾಸಾಹೇಬರು ಬರೆದ ಬುದ್ಧ ಮತ್ತು ಆತನ ಧಮ್ಮ ಪುಸ್ತಕಗಳು ಉಪಾಸಕರು ತಲೆಯ ಮೇಲೆ ಇಟ್ಟುಕೊಂಡು ಮೆರವಣಿಗೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಸೂರ್ಯಕಾಂತ ನಿಂಬಾಳ್ಕರ್, ಗುರುಪೂರ್ಣಿಮೆಯ ಮಹತ್ವ ತಿಳಿಸಿದರು. ನಂತರ ಈ ದಿನದ ಮತ್ತು ತ್ರಿಪಿಠಕಗಳ ಬಗ್ಗೆ ಹಣಮಂತ ಭೋಧನಕರ್ ಹೇಳಿದರು. ಕಾರ್ಯಕ್ರಮದಲ್ಲಿ ಸಿದ್ದರಾಮ ಬೆಳಕೋಟಿ, ವಿಷ್ಣು ಹುಮನಾಬಾದ, ಅಶೋಕ್ ಹಿರೋಳಿ, ದೆವೇಂದ್ರ ಸಿನ್ನೂರ, ಸಂಘದ ಅಧ್ಯಕ್ಷ ಶಶಿಕಾಂತ, ಅಂಬರಾಯ ಹಡಗಿಲ್, ಸಂಜು ಟಿ.ಮಾಲೆ, ರೇಣುಕಾ ಹೋಳಕರ್, ಮಧುಮತಿ ಕಾಂಬಳೆ, ಸರಸ್ವತಿ ಸಿನೂರ್, ಜಯಶ್ರೀ ಬೆಣ್ಣೂರ, ರಮಾಬಾಯಿ ನಾಟೇಕರ್, ಕಸ್ತೂರಿಬಾಯಿ ಬಿಲಗುಂದಿ, ಬಾಬುರಾವ್ ಕಾಂಬಳೆ ಉಪಸ್ಥಿತರಿದ್ದರು. ಮಹೇಶ್ ಬೆಡ್ಜಿರ್ಗಿ ನಿರೂಪಿಸಿದರು, ವಂದರ್ಪರ್ಪಣೆ ಶಿವಕುಮಾರ್ ನಂದಿ ಮಾಡಿದರು.
ಜೂನ್ನಲ್ಲಿ 20 ಔಷಧ ಪರವಾನಿಗೆ ರದ್ದು, 133 ಔಷಧ ಪರವಾನಿಗೆ ಅಮಾನತು
ಬೆಂಗಳೂರು : ಔಷಧ ಆಡಳಿತ ಅಮಲುಜಾರಿ ವಿಭಾಗದ ಅಧಿಕಾರಿಗಳು ಜೂನ್ ತಿಂಗಳಿನಲ್ಲಿ ರಾಜ್ಯದ 2,544 ಔಷಧಿ ಮಳಿಗೆಗಳ ಪರಿವೀಕ್ಷಣೆಯನ್ನು ಕೈಗೊಂಡು ಸರಕಾರಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ 133 ಔಷಧ ಪರವಾನಿಗೆಗಳನ್ನು ಅಮಾನತುಗೊಳಿಸಿದ್ದಾರೆ. 20 ಔಷಧ ಪರವಾನಿಗೆಗಳನ್ನು ರದ್ದುಗೊಳಿಸಿದ್ದಾರೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಹೇಳಿದ್ದಾರೆ. ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಬೆಂಗಳೂರು, ಹುಬ್ಬಳ್ಳಿ ಬಳ್ಳಾರಿಗಳಲ್ಲಿರುವ ಔಷಧ ಪರೀಕ್ಷಾ ಪ್ರಯೋಗಾಲಯಗಳ ಒಟ್ಟು 1,333 ಔಷಧ ಮಾದರಿಗಳನ್ನು ವಿಶ್ಲೇಷಿಸಿದ್ದು, ಅವುಗಳಲ್ಲಿ 1,292 ಉತ್ತಮ ಗುಣಮಟ್ಟದೆಂದು, 41 ಔಷಧ ಮಾದರಿಗಳು ಕಳಪೆ ಗುಣಮಟ್ಟದೆಂದು ಘೋಷಿಸಲಾಗಿದೆ. ಸುಮಾರು 40,48,436 ರೂ. ಮೌಲ್ಯದ ಕಳಪೆ ಗುಣಮಟ್ಟದ ಔಷಧಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಔಷಧ ಆಡಳಿತ ಅಮಲುಜಾರಿ ಅಧಿಕಾರಿಗಳು ಔಷಧ ಮತ್ತು ಕಾಂತಿವರ್ಧಕ ಅಧಿನಿಮಯ-1940 ಮತ್ತು ಅದರಡಿಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ ಸಂಸ್ಥೆಗಳ ವಿರುದ್ಧ ಎಪ್ರಿಲ್ನಿಂದ ಜೂನ್ರವರೆಗೆ ಒಟ್ಟು 81 ಮೊಕದ್ದಮೆಗಳನ್ನು ನ್ಯಾಯಾಲಯಗಳಲ್ಲಿ ದಾಖಲಿಸಿದ್ದಾರೆ. ಒಟ್ಟು 233 ಔಷಧ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಒಳಪಡುವ ರಕ್ತ ಕೇಂದ್ರಗಳ ಮೇಲೆ ವಿಶೇಷ ಕಾರ್ಯಚಾರಣೆ ಜರುಗಿಸಲಾಗಿದ್ದು, ಒಟ್ಟು 122 ರಕ್ತ ಕೇಂದ್ರಗಳಲ್ಲಿ ಪರಿವೀಕ್ಷಣೆ ಮಾಡಲಾಗಿದೆ. ನೂನ್ಯತೆಗಳು ಕಂಡು ಬಂದ 44 ರಕ್ತ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಔಷಧ ಆಡಳಿತ ವಿಭಾಗದಲ್ಲಿ 26 ಸೇವೆಗಳನ್ನು ಸಕಾಲದಡಿಯಲ್ಲಿ ಒದಗಿಸಲಾಗುತ್ತಿದ್ದು, ಜೂನ್ನಲ್ಲಿ ಒಟ್ಟು 1,439 ಅರ್ಜಿಗಳನ್ನು ಸ್ವೀಕರಿಸಿದ್ದು, ಹಿಂದಿನ ಬಾಕಿ ಅರ್ಜಿಗಳು ಸೇರಿ ಒಟ್ಟು 1,012 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರನ್ವಯ ಆಹಾರದ ಸುರಕ್ಷತೆ, ಗುಣಮಟ್ಟ, ನೈರ್ಮಲ್ಯತೆಯ ಕುರಿತಂತೆ ರಾಜ್ಯಾದ್ಯಂತ 1,557 ಬೀದಿ ಬದಿ ವ್ಯಾಪಾರ ಘಟಕಗಳನ್ನು ಪರಿವೀಕ್ಷಿಸಿ, ಲೋಪಗಳು ಕಂಡುಬಂದಿರುವ 406 ಘಟಕಗಳಿಗೆ ನೋಟಿಸ್ಗಳನ್ನು ಜಾರಿ ಮಾಡಲಾಗಿದೆ. ಸ್ಥಳದಲ್ಲೇ 44,500 ರೂ.ಗಳ ದಂಡವನ್ನು ವಿಧಿಸಲಾಗಿದೆ. ಇದಲ್ಲದೆ 866 ಬೀದಿ ಬದಿಯ ವ್ಯಾಪಾರ ಘಟಕಗಳಿಗೆ ಉಚಿತ ನೊಂದಣಿಯನ್ನು ಮಾಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ರಾಜ್ಯಾದ್ಯಂತ 184 ಬಸ್ ನಿಲ್ದಾಣಗಳಲ್ಲಿನ 871 ಆಹಾರ ಮಳಿಗೆಗಳಿಗೆ ಪರಿವೀಕ್ಷಿಸಿ, ಲೋಪಗಳು ಕಂಡುಬಂದಿರುವ 216 ಘಟಕಗಳಿಗೆ ನೋಟಿಸ್ಗಳನ್ನು ಜಾರಿ ಮಾಡಲಾಗಿದೆ. ಸ್ಥಳದಲ್ಲೇ 55 ಸಾವಿರ ರೂ.ಗಳ ದಂಡವನ್ನು ವಿಧಿಸಲಾಗಿದೆ. 95 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ 604 ಅಂಗನವಾಡಿ ಕೇಂದ್ರಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದ್ದು, 541 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಅಲ್ಲದೆ ಒಟ್ಟು 903 ಅಂಗನವಾಡಿ ಕೇಂದ್ರಗಳಿಗೆ ಉಚಿತ ನೊಂದಣಿ ಒದಗಿಸಲಾಗಿದೆ. 720 ಹೋಟೆಲ್, ರೆಸ್ಟೋರೆಂಟ್ಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದ್ದು, ಲೋಪಗಳು ಕಂಡುಬಂದಿರುವ 183 ಘಟಕಗಳಿಗೆ ನೋಟಿಸ್ಗಳನ್ನು ಜಾರಿ ಮಾಡಲಾಗಿದೆ. ಸ್ಥಳದಲ್ಲೇ 21,500 ರೂ.ಗಳ ದಂಡವನ್ನು ವಿಧಿಸಲಾಗಿದೆ. 234 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹೈರಿಸ್ಕ್ ಆಹಾರ ಉದ್ದಿಮೆಗಳ ವರ್ಗದಡಿ ಬರುವ 1,492 ಆಹಾರ ಉದ್ದಿಮೆಗಳನ್ನು ತಪಾಸಣೆ ಮಾಡಲಾಗಿದ್ದು, ಅವುಗಳಲ್ಲಿ ಲೋಪ ಕಂಡುಬಂದಿರುವ 415 ಉದ್ದಿಮೆಗಳಿಗೆ ನೋಟಿಸ್ಗಳನ್ನು ನೀಡಲಾಗಿದೆ. ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶಗಳನ್ವಯ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಹೇಳಿದ್ದಾರೆ.
ಕಲಬುರಗಿ | ಜಾತಿನಿಂದನೆ, ಜೀವ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಕಲಬುರಗಿ: ಜೇವರ್ಗಿ ತಾಲೂಕಿನ ಕೂಟನೂರ ಗ್ರಾಮದಲ್ಲಿ ಸವರ್ಣಿಯರು ದಲಿತರ ಮೇಲೆ ಹಲ್ಲೆ ಹಾಗೂ ಜಾತಿನಿಂದನೆ ಮತ್ತು ಜೀವ ಬೆದರಿಕೆ ಹಾಕಿರುವ ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರಾದ ಭೀಮರಾಯ ನಗನೂರ ಹಾಗೂ ಮಲ್ಲಣ್ಣ ಕೊಡಚಿ ಆಗ್ರಹಿಸಿದ್ದಾರೆ. ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕೂಟನೂರ ಗ್ರಾಮದ ಶರಣಪ್ಪ ಬಡಿಗೇರ ಎಂಬುವವರ ಮೇಲೆ ಅದೇ ಗ್ರಾಮದ ಸವರ್ಣಿಯರಾದ ಶ್ರೀಶೈಲ ಸಿದ್ರಾಮಪ್ಪ, ಬೈಲಪ್ಪ ಸಿದ್ರಾಮಪ್ಪ, ಸಿದ್ರಾಮಪ್ಪ ಭಾಗಪ್ಪ ಎಂಬುವವರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಅದಲ್ಲದೆ ಜಾತಿ ನಿಂದನೆ ಮಾಡಿ ಶರಣಪ್ಪ ಬಡಿಗೇರ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಅಲ್ಲಿನ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಹಲ್ಲೆ ಮಾಡಿದವರನ್ನ ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಈ ಘಟನೆಯಲ್ಲಿ ವಿಳಂಬ ನೀತಿ ಅನುಸರಿಸಿದರೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗುರಣ್ಣ ಐನಾಪೂರ, ಭಾಗಣ್ಣ ಸಿದ್ದಾಳ, ಸಿದ್ದಪ್ಪ ಆಲೂರ, ಶ್ರೀಹರಿ ಕರಕಳ್ಳಿ, ರವಿ ಕುರಳಗೇರಾ, ಸಿದ್ದು ಕೆರೂರ, ಮಾಪಣ್ಣ ಕಟ್ಟಿ, ವಿಶ್ವರಾಧ್ಯ ಗಂವ್ಹಾರ, ಸಿದ್ದುಶರ್ಮಾ, ಶಿವಶರಣಪ್ಪ ಹೊಸ್ಮನಿ ಸೇರಿದಂತೆ ಇತರರು ಇದ್ದರು.
ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಜು.11: ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.11ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಪಿತ್ರೋಡಿ ನಿವಾಸಿ ನೀಲಾಧರ ಜಿ.ತಿಂಗಳಾಯ(51) ಎಂದು ಗುರುತಿಸಲಾಗಿದೆ. ಇವರು ಸೇರಿದಂತೆ ಸುಮಾರು 24 ಮಂದಿ ಮೀನುಗಾರರು ಮಲ್ಪೆ ಬಂದರಿನಿಂದ ಅರಬ್ಬೀ ಸಮುದ್ರಕ್ಕೆ ದೋಣಿ ಯಲ್ಲಿ ಹೋಗಿ ಬಲೆ ಹಾಕಲು ತಯಾರಿ ಮಾಡುತ್ತಿದ್ದು, ಈ ವೇಳೆ ಒಮ್ಮಲೆ ಬಂದ ಸುಳಿಗಾಳಿಗೆ ದೋಣಿ ಸಿಕ್ಕಿ ಹಾಕಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ನೀಲಾಧರ ತಿಂಗಳಾಯ ಸಮುದ್ರದ ನೀರಿನಲ್ಲಿದ್ದ ಮೀನಿನ ಬಲೆಗೆ ಸಿಲುಕಿ ಹಾಕಿಕೊಂಡರು. ಉಳಿದ ಮೀನುಗಾರರು ಅವರನ್ನು ಬಲೆಯಿಂದ ಬಿಡಿಸಿ ದಡಕ್ಕೆ ತಂದು ನೋಡಿದಾಗ, ಅವರು ಮೃತಪಟ್ಟಿ ರುವುದು ಕಂಡುಬಂದಿದೆ. ಉಳಿದ ಮೀನುಗಾರರು ಈಜಿಕೊಂಡು ದಡಕ್ಕೆ ಬಂದು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಹಾರಕ್ಕೆ ಒತ್ತಾಯ: ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುವ ವೇಳೆ ಮೃತಪಟ್ಟ ಕುಟುಂಬಗಳಿಗೆ ತಲಾ ಕನಿಷ್ಟ 15ಲಕ್ಷ ರೂ. ಪರಿಹಾರ ನೀಡಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕ ಸಂಘ(ಸಿಐಟಿಯು) ಆಗ್ರಹಿಸಿದೆ. ಮೀನುಗಾರರಿಗೆ ತೆರಳುವ ಕಾರ್ಮಿಕರಿಗೆ ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಹಾಗೂ ಸರಕಾರ ಸೂಕ್ತ ಮಾಹಿತಿ, ಸೂಚನೆಗಳನ್ನು ನೀಡಬೇಕು. ಕರಾವಳಿ ಕಾವಲು ಪಡೆ ಗಸ್ತು ಮಳೆಗಾಲದ ಸಮಯದಲ್ಲಿ ನಾಡದೋಣಿಗಳ ಹೆಚ್ಚಿನ ಗಮನ ಕೊಡಬೇಕು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ತಿರುವನಂತಪುರಮ್: ಕೇರಳದ ಕಾಂಗ್ರೆಸ್ ನೇತೃತ್ದದ ಯುಡಿಎಫ್ ನಾಯಕರ ಪೈಕಿ ತಾನು ಮುಖ್ಯಮಂತ್ರಿ ಹುದ್ದೆಯ ನೆಚ್ಚಿನ ಆಯ್ಕೆಯಾಗಿದ್ದೇನೆ ಎನ್ನುವುದನ್ನು ತೋರಿಸುವ ಸಮೀಕ್ಷೆಯೊಂದನ್ನು ಕಾಂಗ್ರೆಸ್ ಕ್ರಿಯಾ ಸಮಿತಿ ಸದಸ್ಯ ಶಶಿ ತರೂರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ಹಿರಿಯ ನಾಯಕ ಕೆ. ಮುರಳೀಧರನ್, ‘‘ತಾನು ಯಾವ ಪಕ್ಷಕ್ಕೆ ಸೇರಿದ್ದೇನೆ ಎನ್ನುವುದನ್ನು ಅವರು ಮೊದಲು ನಿರ್ಧರಿಸಬೇಕು’’ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ‘‘ಸಮೀಕ್ಷೆಯಲ್ಲಿ ಬೇರೆಯವರು ಮುಂದಿದ್ದರೂ, 2026ರ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದರೆ ಯುಡಿಎಫ್ನವರೇ ಮುಖ್ಯಮಂತ್ರಿಯಾಗುತ್ತಾರೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುರಳೀಧರನ್ ಹೇಳಿದರು. ‘‘ನಮ್ಮ ಗುರಿ ಚುನಾವಣೆಯನ್ನು ಗೆಲ್ಲುವುದು. ಇಂಥ ಅನಗತ್ಯ ವಿವಾದಗಳಲ್ಲಿ ನಮಗೆ ಆಸಕ್ತಿಯಿಲ್ಲ’’ ಎಂದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ತಿರುವನಂತಪುರಮ್ ಸಂಸದ ಶಶಿ ತರೂರ್ ನೀಡಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರು ಮತ್ತು ಪಕ್ಷದ ಕೇಂದ್ರೀಯ ನಾಯಕತ್ವದ ನಡುವಿನ ಬಿರುಕು ಹೆಚ್ಚುತ್ತಿದೆ.
ಪರಮಾಣು ಸೌಲಭ್ಯಗಳ ಹಾನಿಗೆ ಅಮೆರಿಕ ಪರಿಹಾರ ನೀಡಬೇಕು: ಪರಮಾಣು ಮಾತುಕತೆ ಮುಂದುವರಿಸಲು ಇರಾನ್ ಷರತ್ತು
ಟೆಹ್ರಾನ್: ಯಾವುದೇ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಖಾತರಿ ಪಡಿಸಿದರೆ ಮತ್ತು ಕಳೆದ ತಿಂಗಳು ಅಮೆರಿಕ ನಡೆಸಿದ ದಾಳಿಯಿಂದ ತನ್ನ ಪರಮಾಣು ಮೂಲಸೌಕರ್ಯಗಳಿಗೆ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಒಪ್ಪಿದರೆ ಮಾತ್ರ ಪರಮಾಣು ಮಾತುಕತೆ ಮುಂದುವರಿಸಬಹುದು ಎಂದು ಇರಾನ್ ಶುಕ್ರವಾರ ಸ್ಪಷ್ಟಪಡಿಸಿದೆ. `ರಾಜತಾಂತ್ರಿಕ ಮಾರ್ಗ ಮುಚ್ಚಿಲ್ಲ. ಆದರೆ ಇದು ದ್ವಿಮುಖ ರಸ್ತೆಯಾಗಿದೆ. ಅಮೆರಿಕವು ತನ್ನ ಕಾರ್ಯಗಳಿಗೆ, ವಿಶೇಷವಾಗಿ ಅಂತರಾಷ್ಟ್ರೀಯ ಪರಮಾಣು ಸಂಸ್ಥೆ(ಐಎಇಎ)ಯ ಮೇಲ್ವಿಚಾರಣೆಯಲ್ಲಿರುವ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿದ ದಾಳಿಗೆ, ಜವಾಬ್ದಾರಿಯನ್ನು ತೋರಿಸಬೇಕು ಎಂದು ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಆಗ್ರಹಿಸಿದ್ದಾರೆ. ಜೂನ್ 13ರಿಂದ 25ರವರೆಗೆ ನಡೆದ ವೈಮಾನಿಕ ದಾಳಿಯಲ್ಲಿ ಇರಾನಿನ ಪರಮಾಣು ಕಾರ್ಯಕ್ರಮಗಳು ನಾಶಗೊಂಡಿವೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದನೆಯನ್ನು ತಿರಸ್ಕರಿಸಿದ ಅವರು `ಪರಮಾಣು ಕಾರ್ಯಕ್ರಮಗಳು ನಾಶಗೊಂಡಿಲ್ಲ, ಆದರೆ ಕೆಲ ತಿಂಗಳು ವಿಳಂಬಗೊಂಡಿರಬಹುದು' ಎಂಬ ಐಎಇಎ ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ ಅವರ ಹೇಳಿಕೆಯನ್ನು ಉಲ್ಲೇಖಿಸಿದರು. ಅಮೆರಿಕದ ದಾಳಿಯ ಬಳಿಕ ನಮ್ಮ ಶಾಂತಿಯುತ ಪರಮಾಣು ಕಾರ್ಯಕ್ರಮಗಳಿಗೆ ತೀವ್ರ ಹಾನಿಯಾಗಿದ್ದು ಹಾನಿಯ ಪ್ರಮಾಣವನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ಇದಕ್ಕೆ ಪರಿಹಾರ ಪಡೆಯಲು ನಮಗೆ ಹಕ್ಕು ಇದೆ. ಇಂಧನ, ವೈದ್ಯಕೀಯ ಮತ್ತು ಕೃಷಿ ಅಗತ್ಯಗಳಿಗೆ ಪೂರಕವಾದ ಶಾಂತಿಯುತ ಪರಮಾಣು ಕಾರ್ಯಕ್ರಮವನ್ನು ಒಂದು ರಾಷ್ಟ್ರ ತ್ಯಜಿಸುತ್ತದೆ ಎಂಬ ಕಲ್ಪನೆಯೇ ತಪ್ಪು ಲೆಕ್ಕಾಚಾರವಾಗಿದೆ. ವೈಜ್ಞಾನಿಕ ಪ್ರಗತಿಯನ್ನು ಸಾಧಿಸಿದ ಜನರ ಇಚ್ಛಾಶಕ್ತಿಯನ್ನು ಬಾಂಬ್ ಗಳಿಂದ ನಾಶಪಡಿಸಲು ಆಗುವುದಿಲ್ಲ. ಇರಾನಿನ ಪರಮಾಣು ಕಾರ್ಯಕ್ರಮಗಳು ಐಎಇಎ ಮೇಲ್ವಿಚಾರಣೆ ಹಾಗೂ ಅಂತರಾಷ್ಟ್ರೀಯ ಕಾನೂನು ಚೌಕಟ್ಟಿನಡಿಯೇ ಉಳಿಯುತ್ತದೆ ಎಂದು ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಯುರೇನಿಯಂ ಪುಷ್ಟೀಕರಣ(ಸಮೃದ್ಧಿಗೊಳಿಸುವುದು) ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅರಾಘ್ಚಿ `ಇರಾನ್ `ಪರಮಾಣು ಪ್ರಸರಣ ತಡೆ ಒಪ್ಪಂದ(ಎನ್ಪಿಟಿ)ದಡಿ ತನ್ನ ಹಕ್ಕುಗಳ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ನಮ್ಮ ಪರಮಾಣು ಕಾರ್ಯಕ್ರಮಗಳು ನಾಗರಿಕ ಉದ್ದೇಶವನ್ನು ಹೊಂದಿವೆ. ಈ ಕುರಿತ ವಿವರದ ಬಗ್ಗೆ ಚರ್ಚೆ ನಡೆಸಬಹುದು. ಆದರೆ ಯುರೇನಿಯಂ ಪುಷ್ಟೀಕರಣದ ಸಿದ್ಧಾಂತವು ಹಕ್ಕು ಮತ್ತು ಅವಶ್ಯಕತೆಯಾಗಿದೆ' ಎಂದರು. ಎನ್ಪಿಟಿಯಿಂದ ಹಿಂದೆ ಸರಿಯುವ ಉದ್ದೇಶ ಇರಾನಿಗೆ ಇಲ್ಲ ಎಂದು ಅವರು ಇದೇ ಸಂದರ್ಭ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ. ► ಅಂತರಾಷ್ಟ್ರೀಯ ಕಾನೂನಿನ ಮೇಲೆ ದಾಳಿ ಜಾಗತಿಕ ಪ್ರಸರಣ ನಿರೋಧ ವ್ಯವಸ್ಥೆಯು ನಿಜವಾಗಿಯೂ ಅಪಾಯದಲ್ಲಿದೆ. ಐಎಇಎ ಮೇಲ್ವಿಚಾರಣೆಯಡಿ ಇರುವ ಪರಮಾಣು ಸೌಲಭ್ಯಗಳ ಮೇಲಿನ ದಾಳಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಖಂಡಿಸದೆ ಇರುವುದು ಅಂತರಾಷ್ಟ್ರೀಯ ಕಾನೂನಿನ ಮೇಲಿನ ದಾಳಿಗೆ ಸಮವಾಗಿದೆ ಎಂದು ಅರಾಘ್ಚಿ ಖಂಡಿಸಿದ್ದಾರೆ. ಮಧ್ಯವರ್ತಿ ದೇಶಗಳ ಮೂಲಕ ರಾಜತಾಂತ್ರಿಕ ಮಾರ್ಗಗಳು ಈಗಲೂ ತೆರೆದಿದೆ. ಮಿತ್ರರಾಷ್ಟ್ರಗಳು ಅಥವಾ ಮಧ್ಯವರ್ತಿ ದೇಶಗಳ ಮೂಲಕ ಚರ್ಚೆ ನಡೆಯುತ್ತಿದೆ. ಇರಾನ್ ಯಾವತ್ತೂ ಮಾತುಕತೆಯನ್ನು ಗೌರವಿಸುತ್ತದೆ ಮತ್ತು ಯಾವತ್ತೂ ಈ ತತ್ವವನ್ನು ಉಲ್ಲಂಘಿಸಿಲ್ಲ ಎಂದವರು ದೃಢಪಡಿಸಿದ್ದಾರೆ.
ದೆಹಲಿಯ ಎನ್ಸಿಆರ್ನಲ್ಲಿ ಭೂಕಂಪನ; ಈ ವಾರದಲ್ಲಿ ಎರಡನೇ ಬಾರಿ ಕಂಪನ!
ದೆಹಲಿಯಲ್ಲಿ ಭೂಕಂಪನದ ಅನುಭವವಾಗಿದ್ದು, ಹರಿಯಾಣದ ಝಜ್ಜರ್ನಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ಎರಡು ದಿನಗಳಲ್ಲಿ ಇದು ಎರಡನೇ ಭೂಕಂಪವಾಗಿದ್ದು, ದೆಹಲಿ-ಎನ್ಸಿಆರ್ನಲ್ಲಿ ಕಂಪನ ಉಂಟಾಗಿದೆ. ಜುಲೈ 10 ರಂದು 4.4 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಮತ್ತು ಜನರು ಭಯಭೀತರಾಗಿದ್ದರು. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ ಅಳೆಯಲಾಗುತ್ತದೆ ಮತ್ತು 5 ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪಗಳು ಹಾನಿಯನ್ನುಂಟುಮಾಡುತ್ತವೆ.
ಬೆಂಗಳೂರು : ರಾಜ್ಯ ಸಚಿವ ಸಂಪುಟ ಸಭೆಯನ್ನು ಜು.17ರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಕರೆಯಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಚರ್ಚೆ ಆಗಲಿದೆ
ಎಂಎಲ್ಎ ಹಾಸ್ಟೆಲ್ ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ಪ್ರಕರಣ ದಾಖಲು
ಮುಂಬೈ: ಹಳಸಿದ ಆಹಾರ ಪೂರೈಸಿರುವುದಕ್ಕೆ ಸಂಬಂಧಿಸಿ ಎಂಎಲ್ಎ ಹಾಸ್ಟೆಲ್ ಕ್ಯಾಂಟೀನ್ನ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಚರ್ಚ್ಗೇಟ್ನಲ್ಲಿರುವ ಆಕಾಶವಾಣಿ ಎಂಎಲ್ಎ ಹಾಸ್ಟೆಲ್ನ ಸಿಬ್ಬಂದಿ ಯೋಗೇಶ್ ಕುಟ್ರನ್ ಅವರ ಕೆನ್ನೆಗೆ ಗಾಯಕ್ವಾಡ್ ಬಾರಿಸುತ್ತಿರುವುದು ಮಂಗಳವಾರ ಬೆಳಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಗಾಯಕ್ವಾಡ್ ಅವರು ಮಂಗಳವಾರ ರಾತ್ರಿ ಕ್ಯಾಂಟೀನ್ನಿಂದ ಊಟಕ್ಕೆ ಆರ್ಡರ್ ಮಾಡಿದ್ದರು. ಆದರೆ, ತನ್ನ ಕೊಠಡಿಗೆ ಪೂರೈಸಲಾದ ಅನ್ನ ಹಾಗೂ ಬೆಳೆ ಸಾರು ಹಳಸಿರುವುದು ಹಾಗೂ ದುರ್ವಾಸನೆ ಬರುತ್ತಿರುವುದು ಕಂಡು ಬಂತು. ಇದರಿಂದ ಆಕ್ರೋಶಿತರಾದ ಅವರು ಕ್ಯಾಂಟೀನ್ ಗೆ ನುಗ್ಗಿದರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಿಬ್ಬಂದಿಯ ಕೆನ್ನೆಗೆ ಬಾರಿಸಿದರು ಎಂದು ಮೂಲಗಳು ತಿಳಿಸಿವೆ. ಈ ಘಟನೆಯ ಬಳಿಕ ಗಾಯಕ್ವಾಡ್, ‘‘ಈ ಶೆಟ್ಟಿಗಳು ಬಹುಕಾಲದಿಂದ ನಮ್ಮ ಪ್ರಾಣದೊಂದಿಗೆ ಆಟವಾಡುತ್ತಿದ್ದಾರೆ. ಇಂದು ಅವರು ನನ್ನ ಪ್ರಾಣದೊಂದಿಗೆ ಆಟವಾಡಲು ಪ್ರಯತ್ನಿಸಿದರು. ನನ್ನ ಹೊಟ್ಟೆ ಸರಿ ಇಲ್ಲ. ನಾನು ಇದರಿಂದ ಕಳೆದ 20 ವರ್ಷಗಳಿಂದ ಬೇಸತ್ತಿದ್ದೇನೆ. ಸಣ್ಣದೊಂದು ತಪ್ಪು ಕೂಡ ನನಗೆ ಹೊಟ್ಟೆ ನೋವು ಉಂಟು ಮಾಡಬಹುದು’’ ಎಂದು ಅವರು ಹೇಳಿದ್ದರು.
ಸಂವಿಧಾನದಿಂದ ಜಾತ್ಯತೀತತೆ, ಸಾಮಾಜವಾದ ಕೈಬಿಡಲು ಬಿಜೆಪಿ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ
ಭುವನೇಶ್ವರ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದಿಂದ ಜಾತ್ಯಾತೀತತೆ ಹಾಗೂ ಸಮಾಜವಾದವನ್ನು ಕೈಬಿಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ. ಇಲ್ಲಿ ಪಕ್ಷದ ‘‘ಸಂವಿಧಾನ ಬಚಾವೊ ಸಮಾವೇಶ’’ದಲ್ಲಿ ಮಾತನಾಡಿದ ಅವರು, ದೇಶದ ದಲಿತರು, ಬುಡಕಟ್ಟು ಜನರು ಹಾಗೂ ಯುವಕರು ಬಿಜೆಪಿ ಆಡಳಿತದ ಅಡಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕಲಿಯಲೇಬೇಕು ಎಂದಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಬೆಂಬಲಿಗರು ದಲಿತರು ಹಾಗೂ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಖರ್ಗೆ ಅವರು ಪ್ರತಿಪಾದಿಸಿದರು. ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್ ಸರಕಾರ ದೇಶದಲ್ಲಿ 160 ಸಾರ್ವಜನಿಕ ವಲಯದ ಕಂಪೆನಿಗಳನ್ನು ಸ್ಥಾಪಿಸಿದೆ. ಆದರೆ, ಬಿಜೆಪಿ ಅದರಲ್ಲಿ 23ನ್ನು ಖಾಸಗೀಕರಣಗೊಳಿಸಿದೆ ಎಂದರು.
ಗುರುಮಠಕಲ್ ಮತಕ್ಷೇತ್ರದ ಪಿಹೆಚ್ಸಿ, ಸಿಹೆಚ್ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ
ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ದಾಖಲಾದ ಗರ್ಭೀಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಶೇಕಡವಾರು 8,9 ಹೀಗೆ 10ರೊಳಗೆ ಇರುವುದನ್ನು ಕಂಡು ಶಾಸಕ ಶರಣಗೌಡ ಕಂದಕೂರ ಕಳವಳ ವ್ಯಕ್ತಪಡಿಸಿದರು. ಗುರುಮಠಕಲ್ ಮತಕ್ಷೇತ್ರದ ಪಿಹೆಚ್ಸಿ, ಸಿಹೆಚ್ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿದರು. ಔಷಧಿನೇ ಇಲ್ಲದಿದ್ದರೆ ಆಸ್ಪತ್ರೆ ಹೇಗೆ ನಡುಸುತ್ತೀರಿ : ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಕೆಲವು ಕಡೆ ತಜ್ಞ ವೈದ್ಯರಿಲ್ಲ, ವೈದ್ಯರಿದ್ದರೂ ಒಬ್ಬೊರಿಗೆ ಹಲವು ಆಸ್ಪತ್ರೆಗಳು ಪ್ರಭಾರ ಇರುವುದರಿಂದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಯಾವುದೇ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವಿಲ್ಲವೆಂದು ಜನರು ದೂರಿದರೆ, ನಾಯಿ ಕಡಿತಕ್ಕೆ ಕಳೆದ 6 ತಿಂಗಳಿಂದ ಲಸಿಕೆ ಲಭ್ಯವಿಲ್ಲ, 4 ತಿಂಗಳಿಂದ ಐವಿ ಪ್ಲೂಡ್ಸ್ ಸರಬರಾಜಿಲ್ಲ, ಕೆಲವೊಂದು ಔಷಧಿಗಳು ಆಸ್ಪತ್ರೆಯ ನಿರ್ವಹಣಾ ವೆಚ್ಚದಲ್ಲಿ ಖರೀದಿ ಮಾಡುತ್ತೇವೆ ಹೀಗೆ ಸಾಲು ಸಾಲು ಸಮಸ್ಯೆಗಳು ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ಕಂಡು ಬಂದವು. ಕಂಡು ಬಂದ ಹಲವು ದೃಶ್ಯಗಳನ್ನು ಕಂಡು ದಂಗಾದ ಶಾಸಕ ಇದೇ ರೀತಿ ಆಸ್ಪತ್ರೆಗಳಲ್ಲಿ ಔಷಧಿನೇ ಇಲ್ಲದಿದ್ದರೆ ಆಸ್ಪತ್ರೆ ಹೇಗೆ ನಡುಸುತ್ತೀರಿ ಎಂದು ಡಿಹೆಚ್ಒ ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಸೇರಿದಂತೆ ಹಲವು ಮೇಲಾಧಿಕಾರಿಗಳಿಗೆ ಸ್ಥಳದಿಂದಲೇ ಪೋನ್ ಸಂಪರ್ಕ ಮಾಡಿ ವಿಷಯದ ತೀವ್ರತೆ ಮತ್ತು ಸಮಸ್ಯೆಗಳ ಪರಿಹರಿಸುವಂತೆ ಕೋರಿದರು. ಕೋಟಗೇರಾ ಆಸ್ಪತ್ರೆಗೆ ಭೇಟಿ : ಮತಕ್ಷೇತ್ರದ ಕೋಟಗೇರಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟಾಫ್ ನರ್ಸ್ಗಳ ವರ್ತನೆ, ಫಾರ್ಮಾಸಿಸ್ಟ್ ನಿರ್ಲಕ್ಷ್ಯ ಕಂಡು ಕೆರಳಿದ ಶಾಸಕರು ಕೂಡಲೇ ಇಬ್ಬರಿಗೆ ನೊಟಿಸ್ ನೀಡುವಂತೆ ಸೂಚಿಸಿದರು. ಗಾಜರಕೋಟ್ ಆಸ್ಪತ್ರೆಗೆ ಭೇಟಿ : ಮತಕ್ಷೇತ್ರದ ಗಾಜರಕೋಟ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಯಿ ಕಡಿತ ಲಸಿಕೆ, ಐವಿ ಪ್ಲೂಡ್ಸ್ ಕೊರತೆ ಗಮನಕ್ಕೆ ಬಂದಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಡಿಹೆಚ್ಒಗೆ ಸೂಚನೆ ನೀಡಿದರು. ಗುರುಮಠಕಲ್ ಆಸ್ಪತ್ರೆಗೆ ಭೇಟಿ : ಗುರುಮಠಕಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ರಿಜಿಸ್ಟರ್ನಲ್ಲಿ ಗರ್ಭೀಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು. ಜನರು ಆಸ್ಪತ್ರೆ ಅವ್ಯವಸ್ಥೆ ಕುರಿತು ಹಲವು ದೂರುಗಳು ಬರುತ್ತಿದ್ದು, ಎಚ್ಚರದಿಂದ ಇರಿ, ಆಸ್ಪತ್ರೆಗೆ ಬಡವರು ಬರುತ್ತಾರೆ. ಅವರನ್ನು ಮಾನವೀಯತೆ ಇಂದ ಕಾಣಿ, ನರ್ಸ್ಗಳು ಜನರೊಡನೆ ಸೌಜನ್ಯದಿಂದ ವರ್ತಿಸದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. ನಂತರ ಸೈದಾಪುರ ಆಸ್ಪತ್ರೆ, ಮಲ್ಹಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. 9 ಆ ರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ ಗುರುಮಠಕಲ್ ಮತಕ್ಷೇತ್ರದ ಬಂದಳ್ಳಿ, ಬೆಳಗುಂದಿ, ಅಚ್ಚೋಲಾ, ಸೈದಾಪುರ, ಮಾಧ್ವಾರ, ಅಜಲಾಪೂರ, ವಂಕಸಂಬ್ರ, ಮೊಗದಂಪೂರ, ಕಂದಕೂರ ಹೀಗೆ 9 ಗ್ರಾಮಗಳಲ್ಲಿ ತಲಾ 65 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಈ ಎಲ್ಲಾ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. -ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್ ಎಲ್ಲಾ ಆಸ್ಪತ್ರೆಗಳಿಗೆ ಆರ್ಒ ಪ್ಲಾಂಟ್ ಗುರುಮಠಕಲ್ ಮತಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ ಸಿಸಿ ರಸ್ತೆ, ಕಾಂಪೌಂಡ್, ಮೂಲಸೌಕರ್ಯ ಜೊತೆಗೆ ಆರ್ಒ ಪ್ಲಾಂಟ್ಗಳನ್ನು ನಿರ್ಮಿಸಿಕೊಡಲಾಗುವುದು, ಅವಶ್ಯಕತೆ ಇರುವ ಆಸ್ಪತ್ರೆಗಳ ಪಟ್ಟಿ ಮಾಡಿ ಕೊಡಬೇಕು, ಎಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಕೆಕೆಆರ್ಡಿಬಿಯಿಂದ ಸಾಕಷ್ಟು ಅನುದಾನ ನೀಡುವುದಾಗಿ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಗುಜರಾತ್ ಸೇತುವೆ ಕುಸಿತ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಇನ್ನೂ ಇಬ್ಬರು ನಾಪತ್ತೆ
ವಡೋದರ: ಗುಜರಾತ್ ನ ವಡೋದರ ಜಿಲ್ಲೆಯಲ್ಲಿರುವ ಮಹಿಸಾಗರ ನದಿ ಮೇಲಿನ ಸೇತುವೆ ಕುಸಿತದಿಂದ ಸಂಭವಿಸಿರುವ ಸಾವಿನ ಸಂಖ್ಯೆ ಶುಕ್ರವಾರ 19ಕ್ಕೆ ಏರಿದೆ. ಸೇತುವೆ ಕುಸಿದ ಮೂರು ದಿನಗಳ ಬಳಿಕವೂ ಇಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ‘‘ಈವರೆಗೆ ನಾವು 18 ಮೃತದೇಹಗಳನ್ನು ನದಿಯಿಂದ ಮೇಲೆ ತೆಗೆದಿದ್ದೇವೆ. ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐವರ ಪೈಕಿ ಒಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯವನ್ನು ನಾವು ಈಗಲೂ ನಡೆಸುತ್ತಿದ್ದೇವೆ’’ ಎಂದು ವಡೋದರ ಜಿಲ್ಲಾಧಿಕಾರಿ ಅನಿಲ್ ದಮೆಲಿಯ ‘ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದರು. ‘‘ಗಂಭೀರ’’ ಸೇತುವೆಯ ಒಂದು ಭಾಗವು ಬುಧವಾರ ಬೆಳಗ್ಗೆ 7:30ಕ್ಕೆ ಕುಸಿದಿದೆ. ಆಗ ಎರಡು ಲಾರಿಗಳು, ಒಂದು ಕಾರು, ಪಿಕಪ್ ವ್ಯಾನ್ ಮತ್ತು ಒಂದು ಆಟೊ ರಿಕ್ಷಾ ನದಿಗೆ ಬಿದ್ದಿವೆ. ಆನಂದ್ ಮತ್ತು ವಡೋದರ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯನ್ನು 1985ರಲ್ಲಿ ನಿರ್ಮಿಸಲಾಗಿತ್ತು. ಆರು ಪಥಗಳ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕವನ್ನು ತಪ್ಪಿಸುವುದಕ್ಕಾಗಿ ಲಾರಿಗಳು ಈ ಸೇತುವೆಯನ್ನು ಹೆಚ್ಚಾಗಿ ಬಳಸುತ್ತಿದ್ದವು. ಈ ಸೇತುವೆಯು ಸಂಚಾರಕ್ಕೆ ಸೂಕ್ತವಾಗಿಲ್ಲ ಎನ್ನುವುದು ಗೊತ್ತಿದ್ದರೂ ಆಡಳಿತವು ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ನೀಡಿತ್ತು. ಈ ಸೇತುವೆಯು ಈ ವರ್ಷದ ಕೊನೆಯವರೆಗೂ ಬಾಳಿಕೆ ಬರಲಿಕ್ಕಿಲ್ಲ ಎಂಬುದಾಗಿ ರಸ್ತೆಗಳು ಮತ್ತು ಸೇತುವೆ ನಿರ್ಮಾಣ ವಿಭಾಗದ ಅಧಿಕಾರಿಯೊಬ್ಬರು ಎರಡೂವರೆ ವರ್ಷಗಳ ಹಿಂದೆಯೇ ಹೇಳಿರುವ ಫೋನ್ ಸಂಭಾಷಣೆಯೊಂದು ವೈರಲ್ ಆಗಿದೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರೆ ಪಟೇಲ್ ಸೇತುವೆ ಕುಸಿತದ ಬಗ್ಗೆ ವಿವರವಾದ ತನಿಖೆಗೆ ಆದೇಶ ನೀಡಿದ್ದಾರೆ. ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯ ನಾಲ್ವರು ಇಂಜಿನಿಯರ್ ಗಳನ್ನು ಗುರುವಾರ ಅಮಾನತುಗೊಳಿಸಲಾಗಿದೆ.
ಉತ್ತರಪ್ರದೇಶ: ದೇವಸ್ಥಾನ ಪ್ರವೇಶಿಸಿದ ದಲಿತ ಯುವಕನಿಗೆ ಅರ್ಚಕನಿಂದ ಹಲ್ಲೆ
ಲಕ್ನೋ: ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿರುವ ಲೋದೇಶ್ವರ್ ಮಹಾದೇವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ತನ್ನನ್ನು ಅಲ್ಲಿನ ಅರ್ಚಕ ತಡೆದಿದ್ದಾರೆ ಎಂದು ದಲಿತ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಅರ್ಚಕನು ತನ್ನ ಕುಟುಂಬ ಸದಸ್ಯರೊಂದಿಗೆ ನನ್ನ ಮೇಲೆ ಹಲ್ಲೆ ನಡೆಸಿದ್ದು, ಜಾತಿನಿಂದನೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಹಲ್ಲೆಗೊಳಗಾದ ಶೈಲೇಂದ್ರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ರಾಮನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಅನಿಲ್ ಕುಮಾರ್ ಪಾಂಡೆ ಶುಕ್ರವಾರ ಹೇಳಿದರು. ದೇವಸ್ಥಾನದ ಒಳಗೆ ನಡೆದ ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಮತ್ತು ಅರ್ಚಕನ ಹೇಳಿಕೆಯನ್ನು ಪಡೆದ ಬಳಿಕ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಅರ್ಚಕ ಆದಿತ್ಯ ತಿವಾರಿ, ಅವರ ಕುಟುಂಬ ಸದಸ್ಯರಾದ ಅಖಿಲ್ ತಿವಾರಿ ಮತ್ತು ಶುಭಮ್ ತಿವಾರಿ ನಾನು ದೇವಸ್ಥಾನದ ಒಳಗೆ ಹೋಗುವುದನ್ನು ತಡೆದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶೈಲೇಂದ್ರ ಆರೋಪಿಸಿದ್ದಾರೆ. ಅದನ್ನು ನಾನು ಪ್ರಶ್ನಿಸಿದಾಗ ಅವರು ನನ್ನ ವಿರುದ್ಧ ಜಾತಿನಿಂದನೈಗೈದರು ಹಾಗೂ ಪಾತ್ರೆ ಮತ್ತು ಗಂಟೆಯಿಂದ ಹೊಡೆದರು ಎಂದು ಸಂತ್ರಸ್ತ ದೂರಿದ್ದಾರೆ. ಗಾಯಗೊಂಡ ಶೈಲೇಂದ್ರರನ್ನು ಮೊದಲು ರಾಮನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತು ಹಾಗೂ ಬಳಿಕ ಅಲ್ಲಿಂದ ಬಾರಾಬಂಕಿಯ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಯಿತು. ಇದಕ್ಕೆ ಪ್ರತಿದೂರು ಸಲ್ಲಿಸಿರುವ ಅರ್ಚಕ ಆದಿತ್ಯ ತಿವಾರಿ, ಶೈಲೇಂದ್ರ ನನ್ನ ಸೊಸೆಗೆ ಲೈಂಗಿಕ ಪೀಡನೆ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ‘‘ನನ್ನ ಮಗ ಮತ್ತು ಸೊಸೆ ದೇವಸ್ಥಾನದ ಒಳಗೆ ಪ್ರಾರ್ಥಿಸುತ್ತಿದ್ದರು. ಆಗ ಶೈಲೇಂದ್ರ ನನ್ನ ಸೊಸೆಗೆ ಲೈಂಗಿಕ ಪೀಡನೆ ನೀಡಲು ಆರಂಭಿಸಿದನು. ಅದನ್ನು ನನ್ನ ಮಗ ವಿರೋಧಿಸಿದಾಗ, ಶೈಲೇಂದ್ರ ನಮಗೆಲ್ಲ ಹೊಡೆದು ನಿಂದಿಸಿದನು’’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಹೇಳಿಕೊಂಡಿದ್ದಾರೆ.
ಭಾರತದ ಜನಸಂಖ್ಯೆ ಮಹತ್ವಪೂರ್ಣ ಘಟ್ಟದಲ್ಲಿದೆ, ಬಿಕ್ಕಟ್ಟಿನಲ್ಲಲ್ಲ: ಎನ್ಜಿಒ
ಹೊಸದಿಲ್ಲಿ: ಅಧಿಕ ಜನಸಂಖ್ಯೆ ಅಥವಾ ಫಲವತ್ತತೆ ಕುಸಿತದ ಕುರಿತು ಭೀತಿಯಿಂದ ಪ್ರೇರಿತ ಚರ್ಚೆಗಳಿಂದ ದೂರವಿರುವಂತೆ ಆಗ್ರಹಿಸಿರುವ ಎನ್ಜಿಒ ಪಾಪ್ಯುಲೇಷನ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ),ಬದಲಿಗೆ ವಿಶೇಷವಾಗಿ ಮಹಿಳೆಯರು,ಯುವಜನರು ಮತ್ತು ವೃದ್ಧರಿಗೆ ಘನತೆ, ಹಕ್ಕುಗಳು ಮತ್ತು ಅವಕಾಶಗಳ ಮೇಲೆ ಕೇಂದ್ರೀಕೃತ ನೀತಿಗಳಿಗೆ ಕರೆ ನೀಡಿದೆ. ವಿಶ್ವ ಜನಸಂಖ್ಯಾ ದಿನವಾದ ಶುಕ್ರವಾರ ಹೊರಡಿಸಿರುವ ಹೇಳಿಕೆಯಲ್ಲಿ ಪಿಎಫ್ಐ,ಭಾರತದ ಜನಸಂಖ್ಯಾ ಸವಾಲುಗಳು ಸಂಖ್ಯೆಗಳ ಕುರಿತು ಅಲ್ಲ,ಆದರೆ ನ್ಯಾಯ,ಸಮಾನತೆ ಮತ್ತು ಮಾನವ ಸಾಮರ್ಥ್ಯದಲ್ಲಿ ಹೂಡಿಕೆಯ ಕುರಿತಾಗಿವೆ ಎಂದು ಪ್ರತಿಪಾದಿಸಿದೆ. ಭಾರತೀಯ ಜನಸಂಖ್ಯೆಯು ಬಿಕ್ಕಟ್ಟಲ್ಲ,ಅದು ಮಹತ್ವಪೂರ್ಣ ಘಟ್ಟದಲ್ಲಿದೆ ಎಂದು ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೇಳಿದ ಪಿಎಫ್ಐನ ಕಾರ್ಯಕಾರಿ ನಿರ್ದೇಶಕಿ ಪೂನಂ ಮುತ್ರೇಜಾ ಅವರು,‘‘ನಾವು ‘ಅತಿಯಾದ ಜನಸಂಖ್ಯೆ’ ಮತ್ತು ‘ಜನಸಂಖ್ಯೆ ಕುಸಿತ’ ಭೀತಿಗಳ ನಡುವೆ ಓಲಾಡುತ್ತಿರುವುದನ್ನು ನಿಲ್ಲಿಸಬೇಕು ಮತ್ತು ನಿಜವಾಗಿಯೂ ಮುಖ್ಯವಿಷಯಗಳಾದ ಲಿಂಗ ಸಮಾನತೆ,ಸಂತಾನೋತ್ಪತ್ತಿ ಸ್ವಾಯತ್ತತೆ ಮತ್ತು ಎಲ್ಲರನ್ನೂ ಒಳಗೊಂಡ ಸಾರ್ವಜನಿಕ ಹೂಡಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ಎಂದರು.
ಗುವಾಹಟಿ: ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಅಸ್ಸಾಮಿ ಬದಲಿಗೆ ಬಂಗಾಳಿ ಎಂದು ಬರೆದರೆ ರಾಜ್ಯದಲ್ಲಿಯ ‘ವಿದೇಶಿಯರ’ ಸಂಖ್ಯೆಯನ್ನು ಗುರುತಿಸಲು ಸರಕಾರಕ್ಕೆ ಸಾಧ್ಯವಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರತಿ ಜನಗಣತಿಯ ಮುನ್ನ ಈ ಭಾಷೆ ಅಥವಾ ಆ ಭಾಷೆ ಎಂದು ಪಟ್ಟಿ ಮಾಡುವ ಬಗ್ಗೆ ಬೆದರಿಕೆಗಳಿಂದ ಯಾರೂ ಪ್ರಭಾವಿತರಾಗುವುದಿಲ್ಲ. ಹೆಚ್ಚಿನ ಜನರು ಅಸ್ಸಾಮಿ ಮಾತನಾಡದಿದ್ದರೆ ಆ ಭಾಷೆಯು ನಶಿಸುತ್ತದೆ ಎಂದು ಅವರನ್ನು ನಂಬಿಸಲಾಗಿದೆ. ಆದರೆ ಅಸ್ಸಾಮಿ ಭಾಷೆಯು ಅದು ಇರುವಲ್ಲಿಯೇ ಉಳಿಯುತ್ತದೆ ಎಂದು ಹೇಳಿದರು. ಜನಗಣತಿಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡುವುದು ಅಪರಾಧವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ವಿದ್ಯಾರ್ಥಿ ನಾಯಕ ಮೈನುದ್ದೀನ್ ಅಲಿ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಹೊರಬಿದ್ದಿದೆ. ರಾಜ್ಯದಲ್ಲಿ ತೆರವು ಕಾರ್ಯಾಚರಣೆಗಳ ವಿರುದ್ಧ ಬುಧವಾರ ಪ್ರತಿಭಟನೆ ಸಂದರ್ಭದಲ್ಲಿ ಅಲಿ ಜನಗಣತಿ ದಾಖಲೆಗಳಲ್ಲಿ ಅಸ್ಸಾಮಿ ಭಾಷೆಯನ್ನು ನಮೂದಿಸದಂತೆ ಬಂಗಾಳಿ ಮೂಲದ ಮುಸ್ಲಿಮರನ್ನು ಆಗ್ರಹಿಸಿದ್ದರು. ‘ನಾವು ಬಂಗಾಳಿ ಮುಸ್ಲಿಮರು, ಈ ಜನಗಣತಿಯಲ್ಲಿ ಅಸ್ಸಾಮಿಯನ್ನು ನಮ್ಮ ಮಾತೃಭಾಷೆಯಾಗಿ ಬರೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ನಾವು ಅಸ್ಸಾಮಿ ಭಾಷೆಯನ್ನು ತೆಗೆದುಹಾಕುತ್ತೇವೆ. ಅಸ್ಸಾಮಿ ಭಾಷೆ ಮತ್ತು ಅಸ್ಸಾಮಿ ಸಮುದಾಯ ಅಲ್ಪಸಂಖ್ಯಾಕರಾಗಲಿದ್ದಾರೆ’ ಎಂದು ಆಲ್ ಬೋಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಮೈನಾರಿಟಿ ಸ್ಟುಡೆಂಟ್ಸ್ ಯೂನಿಯನ್ ನಾಯಕ ಅಲಿ ಹೇಳಿದ್ದರು. ಅಲಿ ಹೇಳಿಕೆಯನ್ನು ಅಸ್ಸಾಂ ಸಾಹಿತ್ಯ ಸಭಾ ಮತ್ತು ಆಲ್ ಅಸ್ಸಾಂ ಸ್ಟುಡೆಂಟ್ಸ್ ಯೂನಿಯನ್ ನಂತಹ ಗುಂಪುಗಳು ತೀವ್ರವಾಗಿ ವಿರೋಧಿಸಿದ್ದವು. ಅಲಿ ಭಾಷಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅವು ಆರೋಪಿಸಿದ್ದವು. ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಅಸ್ಸಾಮಿ ಶಾಶ್ವತ ರಾಜ್ಯಭಾಷೆಯಾಗಿದೆ ಎಂದು ಒತ್ತಿ ಹೇಳಿದ ಶರ್ಮಾ,ಜನಗಣತಿಯಲ್ಲಿ ಬಂಗಾಳಿ ಎಂದು ನಮೂದಿಸುವುದು ರಾಜ್ಯದಲ್ಲಿಯ ವಿದೇಶಿಯರ ಸಂಖ್ಯೆಯನ್ನು ಪ್ರಮಾಣೀಕರಿಸುತ್ತದೆ ಅಷ್ಟೇ,ಅದರಿಂದ ಅಸ್ಸಾಮಿ ಭಾಷೆಯ ಸ್ಥಾನಮಾನಕ್ಕೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂದು ತಿಳಿಸಿದರು. ಭಾಷೆಯನ್ನು ಬ್ಲ್ಯಾಕ್ಮೇಲ್ಗೆ ಸಾಧನವಾಗಿ ಬಳಸಲು ಸಾಧ್ಯವಿಲ್ಲ ಎಂದ ಅವರು,ಜನಗಣತಿಯ ಫಲಿತಾಂಶ ಏನೇ ಆಗಿದ್ದರೂ ತೆರವು ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಹೇಳಿದರು. ವಿದ್ಯಾರ್ಥಿ ಒಕ್ಕೂಟವು ಅಲಿಯವರನ್ನು ಅಮಾನತುಗೊಳಿಸಿದ್ದು,ಅವರ ವಿರುದ್ಧ ಪೋಲಿಸ್ ಪ್ರಕರಣ ದಾಖಲಾಗಿದೆ. ಅಸ್ಸಾಮಿನಲ್ಲಿ ರಾಷ್ಟ್ರಿಯತೆಯನ್ನು ನಿರ್ಧರಿಸಲು ಅಥವಾ ಶಂಕಿಸಲು ಮುಖ್ಯ ಮಾನದಂಡ ವ್ಯಕ್ತಿಯ ಭಾಷೆ ಎನ್ನುವುದನ್ನು ಶರ್ಮಾರ ಹೇಳಿಕೆಯು ಬಹಿರಂಗಗೊಳಿಸಿದೆ. ಇದು ಜನಾಂಗೀಯ ವಾದವಾಗಿದೆ, ಭಾಷೆ ಮತ್ತು ಭಾಷೆ ಗುರುತಿನ ಆಧಾರದಲ್ಲಿ ತಾರತಮ್ಯವಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗುವಾಹಟಿ ಉಚ್ಚ ನ್ಯಾಯಾಲಯದ ವಕೀಲ ವಲಿಯುಲ್ಲಾ ಲಸ್ಕರ್ ಹೇಳಿದರು.
ಲಾರ್ಡ್ಸ್ ಟೆಸ್ಟ್ - ಡಬ್ಬಾ ಕ್ವಾಲಿಟಿ ಚೆಂಡು ಕೊಟ್ಟಿದ್ದಕ್ಕೆ ಅಂಪೈರ್ ವಿರುದ್ಧ ತಿರುಗಿಬಿದ್ದ ಭಾರತೀಯ ಬೌಲರ್ಸ್!
ಲಂಡನ್ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಬೌಲರ್ಗಳು ಕಳಪೆ ಗುಣಮಟ್ಟದ ಚೆಂಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಾಯಕ ಶುಬ್ಮನ್ ಗಿಲ್ ಅಂಪೈರ್ ಜೊತೆ ವಾದಕ್ಕಿಳಿದು, ಚೆಂಡನ್ನು ಕಿತ್ತುಕೊಂಡರು. ಬೌಲರ್ಗಳು ನೀಡಿದ ಚೆಂಡು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ವಾದಿಸಿದರು. ಅಂಪೈರ್ ಆರಂಭದಲ್ಲಿ ಒಪ್ಪದಿದ್ದರೂ, ನಂತರ ಚೆಂಡು ಬದಲಾಯಿಸಲು ಸಮ್ಮತಿಸಿದರು. ಈ ಘಟನೆಯಿಂದಾಗಿ ಪಂದ್ಯದಲ್ಲಿ ಕೆಲಕಾಲ ಗೊಂದಲ ಉಂಟಾಯಿತು.
ಮಹಾರಾಷ್ಟ್ರ | ಸಚಿವ ಸಂಜಯ್ ಶಿರ್ಸಾತ್ ಕೊಠಡಿಯಲ್ಲಿದ್ದ ಬ್ಯಾಗ್ನಲ್ಲಿ ನೋಟಿನ ಕಂತೆಗಳು ಪತ್ತೆ : ವೀಡಿಯೊ ವೈರಲ್
ಮುಂಬೈ: ಬಿಜೆಪಿ ನೇತೃತ್ವದ ಮಹಾಯುತಿ ಸರಕಾರ ಮತ್ತೊಂದು ವಿವಾದಕ್ಕೆ ಸಿಲುಕಿದೆ. ರಾಜ್ಯ ಸಾಮಾಜಿಕ ನ್ಯಾಯ ಸಚಿವ ಸಂಜಯ್ ಶಿರ್ಸಾತ್ ಅವರ ಬಳಿಯಿದ್ದ ಬ್ಯಾಗ್ನಲ್ಲಿ ನೋಟಿನ ಕಂತೆಗಳಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೊವನ್ನು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹಂಚಿಕೊಂಡಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಸಂಜಯ್ ರಾವತ್, ನನಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಗ್ಗೆ ಕನಿಕರವಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. “ತಮ್ಮ ವಿಶ್ವಾಸಾರ್ಹತೆ ಚೂರುಚೂರಾಗುತ್ತಿರುವುದನ್ನು ಅವರು ಇನ್ನೆಷ್ಟು ಬಾರಿ ಸುಮ್ಮನೆ ನೋಡುತ್ತಾ ಕೂರುತ್ತಾರೆ? ಇದರ ಮತ್ತೊಂದು ಹೆಸರು ಅಸಹಾಯಕತೆ. ಫಡ್ನವಿಸ್, ಈ ರೋಚಕ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನೋಡಬೇಕಿದೆ. ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಈ ವಿಡಿಯೊ ಸಾಕಷ್ಟು ಹೇಳುತ್ತಿದೆ” ಎಂದು ಸಂಜಯ್ ರಾವತ್ ಹೇಳಿದರು. ಆದರೆ, ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಶಿವಸೇನೆಯ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರಾವಳಿ ಜಿಲ್ಲೆಗಳಲ್ಲಿ ಹತ್ತು ದಿನಗಳವರೆಗೂ ಬಿಟ್ಟು ಬಿಟ್ಟು ಮಳೆ ಮುಂದುವರಿಯುವ ಸಾಧ್ಯತೆ : ಹವಾಮಾನ ಇಲಾಖೆ
ಬೆಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ(ಜು.12) ಹತ್ತು ದಿನಗಳವರೆಗೂ ಬಿಟ್ಟು ಬಿಟ್ಟು ಮಳೆ ಮುಂದುವರಿಯುವ ಲಕ್ಷಣಗಳಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ಮಾಹಿತಿ ನೀಡಿದೆ. ದಕ್ಷಿಣ ಕನ್ನಡದ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಉತ್ತರ ಕನ್ನಡ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಲೆನಾಡು ಭಾಗಗಳಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿದ್ದು, ಜು.16ರಿಂದ ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ದಾವಣಗೆರೆ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಚಿತ್ರದುರ್ಗ ಅಲ್ಲಲ್ಲಿ ಮೋಡದ ವಾತಾವರಣ ಇರಲಿದೆ. ಜು.16ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಮುಂಗಾರು ಮಾರುತಗಳು ಶ್ರೀಲಂಕಾ ಕರಾವಳಿ ಮೂಲಕ ಸಾಗಿಬಂದು ತಮಿಳುನಾಡು ಕರಾವಳಿಗೆ ನುಗ್ಗುತ್ತಿವೆ. ಹೀಗಾಗಿ ತಮಿಳುನಾಡು ಭಾಗದಿಂದ ಬರುತ್ತಿರುವ ಮೋಡಗಳಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ) ತಂಡವು 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂ.4ರಂದು ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದೆ. ಶುಕ್ರವಾರ ಸಂಜೆ ವಿಧಾನಸೌಧದಲ್ಲಿರುವ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನ್ಯಾ.ಜಾನ್ ಮೈಕೆಲ್ ಡಿ.ಕುನ್ಹಾ, ಎರಡು ಸಂಪುಟಗಳಲ್ಲಿರುವ ವಿಚಾರಣಾ ಆಯೋಗದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಿದರು. ಜು.17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯಲ್ಲಿನ ಶಿಫಾರಸ್ಸುಗಳ ಕುರಿತು ಚರ್ಚೆ ನಡೆಸಿ, ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದಾಗಿ 11 ಮಂದಿ ಮೃತಪಟ್ಟಿದ್ದರು. ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ನಗರ ಪೊಲೀಸ್ ಆಯುಕ್ತ, ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿತ್ತು. ಅಲ್ಲದೇ, ಗುಪ್ತಚರ ವಿಭಾಗದ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ದುರಂತಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರಿಯಲ್ ತನಿಖೆ ಹಾಗೂ ನ್ಯಾ.ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗದಿಂದ ನ್ಯಾಯಾಂಗ ತನಿಖೆಗೆ ಆದೇಶಿಸಿ ವರದಿ ನೀಡುವಂತೆ ಸೂಚಿಸಿತ್ತು. ವರದಿ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಅಂಜುಮ್ ಪರ್ವೇಝ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದು ಏನು?: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್.ಸಿ.ಬಿ ಆಟಗಾರರಿಗೆ ಸನ್ಮಾನ ನಡೆದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಆಯೋಜನೆ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಕ್ರೀಡಾಂಗಣ ಪ್ರವೇಶಕ್ಕೆ ಉಚಿತ ಅವಕಾಶ ಕಲ್ಪಿಸಿದ್ದರಿಂದ ನಿರೀಕ್ಷೆಗೂ ಮೀರಿ ಲಕ್ಷಾಂತರ ಜನರು ಜಮಾಯಿಸಿದ್ದರು. ಕ್ಷಣಾರ್ಧದಲ್ಲೆ ಕ್ರೀಡಾಂಗಣ ತುಂಬಿದ್ದರಿಂದ ಭದ್ರತಾ ಸಿಬ್ಬಂದಿ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಿದರು. ಈ ವೇಳೆ ಕ್ರೀಡಾಂಗಣದ ಹೊರಭಾಗದಲ್ಲಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಪೊಲೀಸರ ನಿಯಂತ್ರಣವನ್ನೂ ಲೆಕ್ಕಿಸದೆ ಪ್ರವೇಶ ದ್ವಾರಗಳ ಮೇಲೆ ಹತ್ತಿ ಒಳಗೆ ನುಗ್ಗಲು ಯತ್ನಿಸಿದಾಗ 12ನೆ ಸಂಖ್ಯೆಯ ಪ್ರವೇಶ ದ್ವಾರದ ಬೃಹದಾಕಾರದ ಗೇಟ್ ಕುಸಿದು ಬಿತ್ತು. ಆಗ ಸ್ಥಳದಲ್ಲಿಯೆ ಇದ್ದ ವ್ಯಕ್ತಿಯೊಬ್ಬ ಮೃತಪಟ್ಟ. ಏಕಾಏಕಿ ಸಂಭವಿಸಿದ ಕಾಲ್ತುಳಿತದಿಂದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸರಕಾರವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚನೆ ಮಾಡಿತ್ತು. ಇವತ್ತು ಅವರು ನನಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಎರಡು ಸಂಪುಟಗಳುಳ್ಳ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ನಾನು ವರದಿಯನ್ನು ಪೂರ್ಣವಾಗಿ ಓದಲು ಆಗಿಲ್ಲ. ಜು.17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡಿಸಿ, ವಿಚಾರಣಾ ಆಯೋಗ ಏನೇನು ಶಿಫಾರಸ್ಸುಗಳನ್ನು ಮಾಡಿದೆ ಎಂಬುದನ್ನು ನೋಡಿ, ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತೇವೆ. -ಸಿದ್ದರಾಮಯ್ಯ, ಮುಖ್ಯಮಂತ್ರಿ
ಮದುವೆ ಮಾಡಿಸದಿದ್ದರೆ ಯುವಕನಿಗೆ ಗುಂಡು ಹೊಡೆಯುತ್ತೇನೆ: ಭೂಗತ ಆರೋಪಿ ಕಲಿ ಯೋಗೀಶ್ನಿಂದ ಬೆದರಿಕೆ ಕರೆ
ಉಡುಪಿ, ಜು.11: ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಆರೋಪಿ ಶ್ರೀಕೃಷ್ಣ ಜೆ ರಾವ್ ಅನ್ಯಾಯಕ್ಕೆ ಒಳಗಾದ ಯುವತಿಯನ್ನು ಮದುವೆಯಾಗದಿದ್ದರೆ ನಾವೇ ಆತನಿಗೆ ಗುಂಡು ಹೊಡೆಯುತ್ತೇವೆ ಎಂದು ಭೂಗತ ಆರೋಪಿ ಕಲಿ ಯೋಗೀಶ್ ಎಂದು ಹೇಳಿಕೊಂಡು ಉಡುಪಿಯ ಖಾಸಗಿ ಸುದ್ದಿವಾಹಿನಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಬೆದರಿಕೆಯೊಡ್ಡಿರುವ ಬಗ್ಗೆ ವರದಿಯಾಗಿದೆ. ವಿದೇಶದಿಂದ ಇಂಟರ್ನೆಟ್ ಕರೆ ಮಾಡಿದ ಆತ, ಬಿಜೆಪಿ ಮುಖಂಡನ ಮಗ ವಿಶ್ವಕರ್ಮ ಸಮುದಾಯದ ಯುವತಿಯನ್ನು ಗರ್ಭವತಿಯನ್ನಾಗಿಸಿ ಅನ್ಯಾಯ ಮಾಡಿರುವ ಬಗ್ಗೆ ನನಗೆ ದೂರು ಬಂದಿದೆ. ಈಗ ಆತ ಜೈಲಿನಲ್ಲಿದ್ದಾನೆ. ಬಿಜೆಪಿ, ಹಿಂದುತ್ವ ಸಂಘಟನೆಯ ಯಾರೂ ಕೂಡ ಯುವತಿಗೆ ಬೆಂಬಲ ನೀಡಿಲ್ಲ. ಆಕೆ ಹಿಂದು ಅಲ್ಲವೇ? ಆಕೆಯ ಬಳಿ ಹಣ ಇಲ್ಲದಂತೆ ಇವರು ಆಕೆಯನ್ನು ಬಿಟ್ಟುಬಿಟ್ಟಿರುವುದು ಸರಿಯಲ್ಲ ಎಂದು ತಿಳಿಸಿದ್ದಾನೆ. ವಿಶ್ವಕರ್ಮ ಸಮುದಾಯ ಕೂಡ ಆಕೆಯ ಪರವಾಗಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಸುಮ್ಮನೆ ಕುಳಿತಿದೆ. ಈ ವಿಚಾರದಲ್ಲಿ ಹಿಂದುತ್ವ ಸಂಘಟನೆ ಹಾಗೂ ಬಿಜೆಪಿ ಮುಖಂಡರು ಮಾಡಿರುವುದು ತಪ್ಪು. ಇವರು ಬಡ ಕುಟುಂಬಗಳಿಗೆ ಅನ್ಯಾಯ ಆಗಿರುವಾಗ ಆಕೆಗೆ ಬೆಂಬಲವಾಗಿ ನಿಲ್ಲುವ ಬದಲು ಹಣ ಇರುವವರ ಪರವಾಗಿ ನಿಂತಿರುವುದು ಸರಿಯಲ್ಲ ಎಂದು ಕಲಿ ಯೋಗೀಶ್ ಹೇಳಿದ್ದಾನೆ ಎನ್ನಲಾಗಿದೆ. ಎರಡು ಕಡೆಯವರು ಕುಳಿತು ಮಾತುಕತೆ ಮಾಡಿ ಅವರಿಬ್ಬರಿಗೆ ಮದುವೆ ಮಾಡಿಸಬೇಕು. ಈ ರೀತಿ ಅನ್ಯಾಯ ಮಾಡಿದ ಹುಡುಗನಿಗೆ ಮುಂದೆ ಯಾರು ಹೆಣ್ಣು ಕೊಡುತ್ತಾರೆ. ಇದನ್ನು ಇವರು ಅರ್ಥ ಮಾಡಬೇಕು. ಹಿಂದುತ್ವ ಸಂಘಟನೆ, ಬಿಜೆಪಿ ಮುಖಂಡರು, ಶಾಸಕರು, ಸಂಸದರು ಯುವತಿಯ ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಆತ ಹೊರಗಡೆ ಬಂದರೆ ನಾವೇ ಗುಂಡು ಹೊಡೆಯುತ್ತೇವೆ. ಅಂತವರು ಬದುಕುವುದೇ ಬೇಡ ಎಂದು ತಿಳಿಸಿರುವುದು ಆಡಿಯೋದಲ್ಲಿ ಕೇಳಿಬಂದಿದೆ.
ತಾಯಿ ಪುಷ್ಪಾ ಜೊತೆ 'ರಾಕಿ ಭಾಯ್' ಯಶ್ ಮನಸ್ತಾಪ ಮಾಡಿಕೊಂಡ್ರಾ? ಕೊನೆಗೂ ಅಮ್ಮನಿಂದಲೇ ಸಿಕ್ತು ರಿಯಾಕ್ಷನ್!
Yash Mother Pushpa Arun Kumar: 'ರಾಕಿ ಭಾಯ್' ಯಶ್ ಹಾಗೂ ತಾಯಿ ಪುಷ್ಪಾ ಅರುಣ್ ಕುಮಾರ್ ನಡುವೆ ಮನಸ್ತಾಪದ ವದಂತಿ ಹಬ್ಬಿದೆ. ಪುಷ್ಪಾ ಅವರು ನಿರ್ಮಿಸಿರುವ 'ಕೊತ್ತಲವಾಡಿ' ಸಿನಿಮಾ ಬಗ್ಗೆ ಯಶ್ ಪ್ರಚಾರ ಮಾಡದಿರುವುದು ಚರ್ಚೆಗೆ ಕಾರಣವಾಗಿತ್ತು. ಆದರೆ 'ವಿಜಯ ಕರ್ನಾಟಕ' ವೆಬ್ಗೆ ನೀಡಿದ ಸಂದರ್ಶನದಲ್ಲಿ ಪುಷ್ಪಾ ಅವರು ಆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
Operation Baam : ಬಲೂಚಿಸ್ತಾನ ಹೋರಾಟಕ್ಕೆ ಹೊಸ ಮುನ್ನುಡಿ - ಅಕ್ಷರಶಃ ಪಾಕಿಸ್ತಾನದ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್
BLF Fresh attack on Pakistan : ತನ್ನೊಳಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗದೇ, ಪಾಕಿಸ್ತಾನವು ಭಾರತಕ್ಕೆ ಬುದ್ದಿ ಹೇಳಲು ಬರುತ್ತಿದೆ. ಪಾಕಿಸ್ತಾನಕ್ಕೆ ಇತ್ತೀಚಿನ ದಿನಗಳಲ್ಲು ಮುಗ್ಗಲ ಮುಳ್ಳಾಗಿರುವ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್, ಪಾಕಿಸ್ತಾನದ ಮಿಲಿಟರಿ ಮತ್ತು ಸರ್ಕಾರೀ ಕಚೇರಿಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ.
ಕಲಬುರಗಿ | ಜು.13ರಂದು ವಿಭಾಗ ಮಟ್ಟದ ಓಬಿಸಿ ಸಮುದಾಯದ ವಿಚಾರಗೋಷ್ಠಿ : ಅವ್ವಣ್ಣ ಮ್ಯಾಕೇರಿ
ಕಲಬುರಗಿ: ಕೇಂದ್ರ ಸರ್ಕಾರವು ಸುಮಾರು 95 ವರ್ಷಗಳ ನಂತರ ನಡೆಸುತ್ತಿರುವ ಜಾತಿ ಜನಗಣತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇದೇ 13 ರಂದು ಬೆಳಗ್ಗೆ 11 ಗಂಟೆಗೆ ನಗರದ ಚಂದ್ರಶೇಖರ ಪಾಟೀಲ್ ವಸತಿ ನಿಲಯದ ಸ್ಯಾಕ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಕಲಬುರಗಿ ವಿಭಾಗ ಮಟ್ಟದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಎಲ್ಲ ಹಿಂದುಳಿದ ವರ್ಗಗಳ ಸಮುದಾಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ವಿಚಾರಗೋಷ್ಟಿಗೆ ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಇನ್ ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ಕುಮಾರ, ಮೈಸೂರು ಸಂಸ್ಥಾನದ ಮಹಾರಾಜ, ಸಂಸದ ಯದುವೀರ್ ಒಡೆಯರ್, ಸಮಾಜ ಸೇವಕ ವಾದಿರಾಜ್ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವಿಚಾರಗೋಷ್ಠಿಗೆ ಸುಮಾರು 2 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಈ ಗೋಷ್ಠಿ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷದ ಹಿಂದುಳಿದ ಘಟಕಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎಂದರು. ಶರಣಪ್ಪ ತಳವಾರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಅಶೋಕ ಬಗಲಿ, ಸಂಜಯ ಮಿಸ್ಕಿನ್, ಲಿಂಗರಾಜ ಬಿರಾದಾರ, ದಿಲೀಪ ಪಾಟೀಲ್, ಹಣಮಂತರಾವ ಹೂಗಾರ, ದೇವೇಂದ್ರ ದೇಸಾಯಿ ಕಲ್ಲೂರ, ಮಲ್ಲಿಕಾರ್ಜುನ ಎಮ್ಮೆನೂರ, ರೇವಣಸಿದ್ಧ ಸಂಕಾನಿ ಮತ್ತಿತರರು ಇದ್ದರು.
ವಕೀಲರ ಉಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸಲು ನಿರಾಕರಿಸಿದ ನ್ಯಾಯಾಲಯ: 'ಧರ್ಮಸ್ಥಳ ದೂರುದಾರ'ನ ಪರ ವಕೀಲರ ಹೇಳಿಕೆ
ಮಂಗಳೂರು : ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಆರೋಪ ಮಾಡಿರುವ ದೂರುದಾರರನ್ನು ಜು.11ರಂದು ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ವಕೀಲರ ಉಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸಲು ನ್ಯಾಯಾಲಯ ನಿರಾಕರಿಸಿತು ಎಂದು ದೂರುದಾರನ ಪರ ವಕೀಲರು ಹೇಳಿಕೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ವಕೀಲರಾದ ಓಜಸ್ವಿ ಗೌಡ ಹಾಗು ಸಚಿನ್ ದೇಶಪಾಂಡೆ ಅವರು, ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಪ್ರಕರಣದ ದೂರುದಾರರಿಗೆ witness protection scheme 2018 ರ ಅಡಿಯಲ್ಲಿ ಸೂಕ್ತ ರಕ್ಷಣೆ ನೀಡಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಜುಲೈ 10, 2025 ರ ಸಂಜೆ ನಮಗೆ ಸಂದೇಶ ಕಳುಹಿಸಿದ್ದರು. ದೂರುದಾರರು, ರಕ್ಷಣೆ ನೀಡುವಂತೆ ನೀಡಿದ್ದ ಕೋರಿಕೆಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ, ದಕ್ಷಿಣ ಕನ್ನಡದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ದೂರುದಾರರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಬಿಎನ್ಎಸ್ಎಸ್ನ ಸೆಕ್ಷನ್ 183 (ಸಿಆರ್ಪಿಸಿಯ ಸೆಕ್ಷನ್ 164) ಅಡಿಯಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ದೂರುದಾರರನ್ನು ನ್ಯಾಯಾಲಯವನ್ನು ಕರೆದೊಯ್ಯಲಾಯಿತು. ದೂರುದಾರ ತಾನು ಅನಕ್ಷರಸ್ಥ ಮತ್ತು ನ್ಯಾಯಾಲಯಕ್ಕೆ ಇದುವರೆಗೆ ಹೋಗಿರದಿದ್ದುದರಿಂದ ತನಗೆ ತೊಂದರೆಯಾಗಬಹುದು ಎಂದು ಹೇಳಿಕೆ ನೀಡುವಾಗ ನಮ್ಮಲ್ಲಿ ಒಬ್ಬರು ವಕೀಲರು ನ್ಯಾಯಾಲಯದಲ್ಲಿ ತನ್ನ ಜೊತೆ ಹಾಜರಿರಬೇಕು ಎಂದು ಸೂಚಿಸಿದ್ದರು. ಈ ಕುರಿತು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೆವು. ಆದರೆ, ದೂರುದಾರರ ಜೊತೆ ವಕೀಲರು ಹಾಜರಿರುವುದಕ್ಕೆ ನ್ಯಾಯಾಲಯವು ಒಪ್ಪಲಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ದೂರುದಾರನ ಹೇಳಿಕೆಗಳ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಿತು ಎಂದು ದೂರುದಾರನ ಪರ ವಕೀಲರಾದ ಓಜಸ್ವಿ ಗೌಡ ಹಾಗು ಸಚಿನ್ ದೇಶಪಾಂಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
148 ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲನೆ
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಎಸಿ ವೋಲ್ವೋ ಸೇರಿದಂತೆ 6,900 ಬಸ್ಗಳಿದ್ದು, ಈಗ 148 ಎಲೆಕ್ಟ್ರಿಕ್ ಬಸ್ಗಳು ಸೇರ್ಪಡೆಯಾಗುತ್ತಿದೆ. ಈಗ ಒಟ್ಟು 7,048 ಬಸ್ಗಳನ್ನು ಬಿಎಂಟಿಸಿ ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಬಸ್ಗಳು 12 ವರ್ಷಗಳ ಕಾಲ ನಗರದಲ್ಲಿ ಸಂಚಾರ ಮಾಡಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಶುಕ್ರವಾರ ಇಲ್ಲಿನ ಶಾಂತಿನಗರದಲ್ಲಿ 148 ಹೊಸ ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಸ್ಗಳಿಗೆ ಕಂಡಕ್ಟರ್ ಬಿಎಂಟಿಸಿ ನಿಗಮದಿಂದ ನೇಮಕ ಮಾಡಿದರೆ, ಡ್ರೈವರ್ಗಳು ಎಲೆಕ್ಟ್ರಿಕ್ ಬಸ್ ಕಂಪೆನಿಯಿಂದ ಕೆಲಸ ಮಾಡಲಿದ್ದಾರೆ. ಈ 148 ಬಸ್ಗಳು ನಗರದ 30 ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ ಎಂದು ಅವರು ಮಾಹಿತಿ ನೀಡಿದರು. ದಿನನಿತ್ಯ ಉದ್ಯೋಗಕ್ಕೆ ಹೋಗುವವರಿಗೆ ಪೀಕ್ಅವರ್ ಗಳಲ್ಲಿ ತಡವಾಗುತ್ತದೆ. ಹೀಗಾಗಿ ದೂರ ಪ್ರಯಾಣ ಇರುವ ಕಡೆಗಳಲ್ಲಿ ವೇಗದೂತ ಎಕ್ಸ್ ಪ್ರೆಸ್ ಸೇವೆಯನ್ನು ಪರಿಚಯಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಕನಿಷ್ಟ 20 ನಿಮಿಷ ಸಮಯ ಉಳಿತಾಯವಾಗುತ್ತಿದೆ. ಪ್ರಸ್ತುತ 44 ಬಸ್ಗಳು ಹಾಗೂ 348 ಸುತ್ತುವಳಿಗಳನ್ನು ಹೊಂದಿದೆ. ಇದಕ್ಕೆ ಇತರ ಬಸ್ಗಳದ್ದೆ ದರ ಇದೆ ಎಂದು ಅವರು ಮಾಹಿತಿ ನೀಡಿದರು. ಸಂಸ್ಥೆಯಲ್ಲಿರುವ ಡಿಸೇಲ್ ಬಸ್ಗಳ ನಿರ್ವಹಣೆಗಾಗಿ ಒಂದು ದಿನಕ್ಕೆ 77 ಸಾವಿರ ಲೀಟರ್ ಡಿಸೇಲ್ ಬೇಕಾಗುತ್ತದೆ. ಇದರಿಂದ ನಗರದಲ್ಲಿ ಹೆಚ್ಚು ಮಾಲಿನ್ಯವಾಗುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಬಸ್ಗಳಾದ ಎಲೆಕ್ಟ್ರಿಕ್ ಬಸ್ಗಳು ನಗರದಲ್ಲಿ ಸಂಚರಿಸುವಂತೆ ಮಾಡಿ, ಮಾಲಿನ್ಯ ಕಡಿಮೆಯಾಗುತ್ತದೆ. ಇನ್ನು ಮೂರು ವರ್ಷದೊಳಗೆ ನಗರದಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕಲ್ ಬಸ್ ಹೊಂದಿರುವ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಸಚಿವರು ಹೇಳಿದರು. ಎಲೆಕ್ಟ್ರಿಕ್ ಬಸ್ಗಳ ವಿಶೇಷತೆಗಳು •ಬಹುತೇಕ ಶೂನ್ಯ ಹೊರ ಸೂಸುವಿಕೆ ಹಾಗೂ ಪರಿಸರ ಸ್ನೇಹಿ ಬಸ್ಗಳು. •12ಮೀ ಉದ್ದ, 400ಮಿಮೀ ಎತ್ತರ ಹವಾನಿಯಂತ್ರಿತವಲ್ಲದ ವಿದ್ಯುತ್ ಚಾಲಿತ ಬಸ್ಗಳಾಗಿವೆ. •ಒಂದು ಭಾರಿ ಚಾರ್ಜ್ಗೆ 200 ಕಿ.ಮೀ ಚಲಿಸುತ್ತವೆ. • 148 ಬಸ್ಗಳು ಘಟಕ-4 ಜಯನಗರದಿಂದ ಸಂಚರಿಸಲಿವೆ. •ಒಂದು ಕಿ.ಮೀ. ಗೆ 41.1 ಪೈಸೆ ರೂ. ಗುತ್ತಿಗೆ ಆಧಾರದಲ್ಲಿ ಈ 148 ಬಸ್ಗಳು ಸಂಚಾರ ಮಾಡಲಿವೆ. •30 ಮಾರ್ಗಗಳಲ್ಲಿ ಸಂಚಾರ ಮಾಡಲಿವೆ.
ಅಕ್ರಮ ಮದ್ಯ ಮಾರಾಟ: ಸ್ಕೂಟರ್ ಸಹಿತ ಆರೋಪಿ ಬಂಧನ
ಬ್ರಹ್ಮಾವರ, ಜು.11: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಜು.11ರಂದು ವಾರಂಬಳ್ಳಿ ಗ್ರಾಮದ ಕುಂಜಾಲ್ ಜಂಕ್ಷನ್ ಬಳಿ ಬಂಧಿಸಿದ್ದಾರೆ. ಹಂದಾಡಿ ಗ್ರಾಮದ ಉಮೇಶ ಪೂಜಾರಿ(49) ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಬ್ರಹ್ಮಾವರದ ವೈನ್ಶಾಪ್ನಿಂದ ಖರೀದಿಸಿ ಯಾವುದೇ ಪರವಾನಿಗೆ ಇಲ್ಲದೇ ಹೆಚ್ಚಿನ ಬೆಲೆಗೆ ಸ್ಕೂಟರ್ ಮೇಲೆ ಮದ್ಯದ ಚೀಲವನ್ನು ಇಟ್ಟು ಮದ್ಯ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೇರುಘಟ್ಟ ಉದ್ಯಾನದಲ್ಲಿ 3 ಹುಲಿ ಮರಿಗಳ ಸಾವು
ಚಾಮರಾಜನಗರದಲ್ಲಿ ನಾಲ್ಕು ಹುಲಿಗಳು ಮತ್ತು ಒಂದು ಚಿರತೆ ಸಾವನ್ನಪ್ಪಿದ ಬೆನ್ನಲ್ಲೇ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಹುಲಿ ಮರಿಗಳು ಮೃತಪಟ್ಟಿರುವುದು ವರದಿಯಾಗಿದೆ. ತಾಯಿ ಹಾಲುಣಿಸದ ಕಾರಣ ಮರಿಗಳು ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದಲ್ಲದೆ, ಹಸುವಿಗೆ ವಿಷ ಹಾಕಿ ಹುಲಿಗಳನ್ನು ಕೊಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ, ಇದು ರಾಜ್ಯದಲ್ಲಿ ಹುಲಿಗಳ ಸಾವಿನ ಬಗ್ಗೆ ಕಳವಳ ಮೂಡಿಸಿದೆ.
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 10 ಶಾಲಾ ವಾಹನಗಳ ಜಪ್ತಿ
ಬೆಂಗಳೂರು : ಬೆಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ಹಾಗೂ ಆರ್ಟಿಓ ಅಧಿಕಾರಿಗಳ ಸಹಯೋಗದೊಂದಿಗೆ ಶುಕ್ರವಾರ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ 10 ಶಾಲಾ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಜು.11ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯ ವರೆಗೆ ಉತ್ತರ ಸಂಚಾರ ವಿಭಾಗದಲ್ಲಿ ಶಾಲಾ ವಾಹನಗಳ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿ, ಅಧಿಕ ಮಕ್ಕಳನ್ನು ಕರೆದೊಯ್ಯುವುದು, ಮದ್ಯಸೇವನೆ ಮಾಡಿ ವಾಹನ ಚಾಲನೆ ಸೇರಿದಂತೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಬಗ್ಗೆ ಒಟ್ಟು 771 ವಾಹನಗಳನ್ನು ತಪಾಸಣೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ 6 ಡಿಡಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಸಂಚಾರ ಪೊಲೀಸರು 10 ವಾಹನಗಳನ್ನು ಜಪ್ತಿ ಮಾಡಿ, ಆರ್ಟಿಓ ಅವರಿಂದ ನೋಟಿಸ್ ನೀಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತೆ ಸಿರಿಗೌರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ | ಜನಸಂಖ್ಯೆ ನಿಯಂತ್ರಿಸುವುದು ಅತಿ ದೊಡ್ಡ ಸವಾಲು : ಡಾ.ಮೈತ್ರಾದೇವಿ
ಕಲಬುರಗಿ : ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪ್ರಾಧ್ಯಪಕಿ ಡಾ.ಮೈತ್ರಾದೇವಿ ಹಳೆಮನಿ ಹೇಳಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಚ್ಕೆಇಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವ ಜನ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ, ಜನಕಲ್ಯಾಣ ಎಡ್ಜುಕೇಷನ್ ಆಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಹಾಗೂ ಯುತ್ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಜಾಗತಿಕವಾಗಿ ಗರ್ಭಿಣಿ ಮಹಿಳೆಯರಲ್ಲಿ ಅನಾರೋಗ್ಯ ಮತ್ತು ಸಾವಿಗೆ ಪ್ರಮುಖ ಕಾರಣವಾಗಿರುವ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಜನಸಂಖ್ಯಾ ದಿನದ ಗುರಿಯಾಗಿದೆ. ಕುಟುಂಬ ಯೋಜನೆ, ಲಿಂಗ ಸಮಾನತೆ, ತಾಯಿ ಮತ್ತು ಮಕ್ಕಳ ಆರೋಗ್ಯ, ಬಡತನ, ಮಾನವ ಹಕ್ಕುಗಳು, ಲೈಂಗಿಕ ಶಿಕ್ಷಣ, ಗರ್ಭನಿರೋಧಕ ಬಳಕೆ ಮತ್ತು ಹದಿಹರೆಯದ ಗರ್ಭಧಾರಣೆಯಂತಹ ವಿಷಯಗಳ ಕುರಿತು ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಈ ದಿನವು ಜನರನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು. ಜನಕಲ್ಯಾಣ ಎಡ್ಜುಕೇಷನ್ ಆಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷರಾದ ಸುರೇಶ್ ಎಸ್ ಕಾನೇಕರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಉಷಾದೇವಿ ಪಾಟೀಲ್ ವಹಿಸಿದ್ದರು. ಕಲಬುರಗಿ ಯೂತ್ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ದೇವರಾಜ್ ಕನ್ನಡಗಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪತ್ರಿಕಾ ಮಾಧ್ಯಮದ ಸಂಚಾಲಕ ಐ ಕೆ ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಉಪನ್ಯಾಸಕಿ ಝೈಭಾ ಅಕ್ತರ ಕಾರ್ಯಕ್ರಮ ನಿರೂಪಿಸಿದರು, ಜಾನಕಿ ಟಿ. ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಸಿದ್ದಮ್ಮ ಹಾಗೂ ಭಾಗ್ಯಜ್ಯೋತಿ ಪ್ರಾರ್ಥಿಸಿದರು, ಜವೇರಿಯಾ ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ ಸೊಸೈಟಿಯಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ
ಉಡುಪಿ, ಜು.11: ಉಡುಪಿ ಜಿಲ್ಲಾ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ಅಧಿಕಾರ ದುರುಪಯೋಗ, ಭ್ರಷ್ಟಚಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಸೊಸೈಟಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಶೇಖರ್ ಹೆಜ್ಮಾಡಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸ ಲಾತಿ ನೀಡದೆ ವಂಚಿಸಲಾಗಿದೆ. ಲಕ್ಷಾಂತರ ರೂ. ಹಣ ಪಡೆದು ನೇರ ನೇಮ ಕಾತಿ ಮಾಡಿಕೊಳ್ಳಲಾಗಿದೆ. ಅಧ್ಯಯನದ ಹೆಸರಿನಲ್ಲಿ ಪ್ರವಾಸಿ ತಾಣಗಳಿಗೆ ಪ್ರವಾಸ ಕೈಗೊಳ್ಳಲಾಗಿದೆ. ಈ ಕುರಿತು ರಾಜ್ಯಪಾಲರಿಗೂ, ಎಸ್ಪಿಯವರಿಗೂ ದೂರು ನೀಡಲಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಸದಸ್ಯರಾದ ರತ್ನಾಕರ್ ಕೋಟ್ಯಾನ್, ಉಮಾ ನಾಥ್ ಪಡುಬಿದ್ರಿ, ಲೀಲಾಧರ ಪಿ. ಉಪಸ್ಥಿತರಿದ್ದರು.