ಉಡುಪಿ: ಕುರ್ಚಿಯಿಂದ ಕುಸಿದು ಬಿದ್ದು ಯುವಕ ಮೃತ್ಯು
ಕಾರ್ಕಳ, ಫೆ.20: ಮನೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಯರ್ಲಪಾಡಿ ಎಂಬಲ್ಲಿ ಫೆ.19ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಯರ್ಲಪಾಡಿ ಗ್ರಾಮದ ಹೇಮಲತಾ ಎಂಬವರ ಮಗ ಸುಹೇಶ್(22) ಎಂದು ಗುರುತಿಸಲಾಗಿದೆ. ಕಳೆದ 15 ದಿನಗಳಿಂದ ಕೆಮ್ಮು ವಿನಿಂದ ಬಳಲುತ್ತಿದ್ದ ಇವರು ಔಷಧಿ ಸೇವಿಸುತ್ತಿದ್ದರು. ಫೆ.19ರಂದು ಮಧ್ಯಾಹ್ನ ಮನೆಯ ಡೈನಿಂಗ್ ರೂಮ್ನ ಕುರ್ಚಿಯಲ್ಲಿ ಕುಳಿತು ಕೊಂಡಿದ್ದ ಸುಹೇಶ್, ಒಮ್ಮೆಲೆ ಬೊಬ್ಬೆ ಹಾಕುತ್ತಾ ಕೆಳಗೆ ಬಿದ್ದರೆನ್ನಲಾಗಿದೆ. ಬಳಿಕ ನರಳಾಡಿ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕಾರ್ಕಳದ ಖಾಸಗಿ ಆಸ್ಫತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಸುಹೇಶ್ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನಕಗಿರಿ | ಕಸಾಪ ಚಟುವಟಿಕೆಗಳು ಕ್ಷೀಣಿಸಿವೆ: ಶೇಖರಗೌಡ ಮಾಲಿಪಾಟೀಲ ಟೀಕೆ
ಕನಕಗಿರಿ: ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರ ದುರಾಡಳಿತ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯದಲ್ಲಿ ಕಸಾಪ ಚಟುವಟಿಕೆಗಳು ಕ್ಷೀಣಿಸಿವೆ ಎಂದು ಸಾಹಿತಿ ಹಾಗೂ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಗುಮಗೇರಾ ಆರೋಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ, ತಾಲ್ಲೂಕು ಘಟಕ ಕನಕಗಿರಿ ಹಾಗೂ ಪ್ರತಿಮಾ-ಸೃಷ್ಠಿ ಪ್ರಕಾಶನ ಸಹಯೋಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಕನಕಪ್ಪ ದಂಡಿನ ಅವರ ‘ಒಡಲೊಳಗಿನ ಭಾವ’ ಕವನ ಸಂಕಲನ ಬಿಡುಗಡೆ, ಸಾಧಕರ ಸನ್ಮಾನ ಮತ್ತು ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬೆಂಬಲಿಗರಿಗೆ ಮಾತ್ರ ಆದ್ಯತೆ ನೀಡಿ, ವಿರೋಧಿಗಳಿಗೆ ಅನ್ಯಾಯ ಮಾಡಲಾಗಿದೆ. ಇದರ ಪರಿಣಾಮವಾಗಿ ಅನೇಕ ಕಡೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿಲ್ಲ ಎಂದು ಹೇಳಿದರು. ಆಡಳಿತಾಧಿಕಾರಿ ಬಂದ ನಂತರ ಕಸಾಪಕ್ಕೆ ಪುನಃ ಶಕ್ತಿ ಬಂದಿದೆ ಎಂದು ಅಭಿಪ್ರಾಯಪಟ್ಟರು. ಭಾಷೆಯ ಬೆಳವಣಿಗೆಯಲ್ಲಿ ಕಸಾಪದ ಕೊಡುಗೆ ಅಪಾರವಾಗಿದ್ದು, ಶಿಕ್ಷಣ ಮತ್ತು ಸಾಹಿತ್ಯ ಪರಸ್ಪರ ಸಂಬಂಧ ಹೊಂದಿವೆ ಎಂದು ಹೇಳಿದರು. ಸಾಹಿತಿ ಅಲ್ಲಾಗಿರಿರಾಜ ಮಾತನಾಡಿ, ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಸಾಹಿತಿಯೂ ಆರ್ಥಿಕವಾಗಿ ಸದೃಢರಾಗಬೇಕು. ಪುಸ್ತಕ ಪ್ರಕಟಣೆಗೆ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗಬಾರದು ಎಂದರು. ಪ್ರತಿಯೊಂದು ಮನೆಯಲ್ಲೂ ಸಾಹಿತಿಗಳು ಬೆಳೆಯಬೇಕು. ಬಡತನ, ಶೋಷಣೆ, ದಲಿತ, ಬಂಡಾಯ ಮತ್ತು ಮಹಿಳಾ ವೇದನೆಗಳಂತಹ ಸಾಮಾಜಿಕ ಅಂಶಗಳು ಸಾಹಿತ್ಯದಲ್ಲಿ ಪ್ರತಿಫಲಿಸಬೇಕು ಎಂದು ಸಲಹೆ ನೀಡಿದರು. ನಿವೃತ್ತ ಪ್ರಾಂಶುಪಾಲ ಜಿ. ಅನಿಲಕುಮಾರ ಹಾಗೂ ಚಿಂತಕ ಡಿ.ಕೆ. ಮಾಳಿ ಮಾತನಾಡಿ, ಪಾಲಕರು ಮಕ್ಕಳನ್ನು ಟಿವಿ ಮತ್ತು ಮೊಬೈಲ್ಗಳಿಂದ ದೂರವಿಟ್ಟು ಪುಸ್ತಕ ಹಾಗೂ ಪತ್ರಿಕೆಗಳ ಓದಿಗೆ ಉತ್ತೇಜನ ನೀಡಬೇಕು. ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ ಪಾಲಕರ ಸಹಕಾರ ಅತ್ಯವಶ್ಯಕ ಎಂದರು. ಸಾಹಿತಿ ಅಜಮೀರ ನಂದಾಪುರ ಅವರು ಕೃತಿಯ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮೇಶ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಡಿ.ಎಂ.ಅರವಟಗಿಮಠ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಕವಿ ಕನಕಪ್ಪ ದಂಡೀನ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿದರು. ಪಟ್ಟಣ ಪಂಚಾಯತ್ ಅಧ್ಯಕ್ಷೆ ತನುಶ್ರೀ ಟಿಜೆ. ರಾಮಚಂದ್ರ, ಕಸಾಪ ಜಿಲ್ಲಾಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ , ಪಪಂ ಉಪಾಧ್ಯಕ್ಷ ಕಂಠಿರಂಗ ನಾಯಕ, ಪ್ರಮುಖ ಶರಣಬಸಪ್ಪ ಭತ್ತದ, ವಿರುಪಣ್ಣ ಕಲ್ಲೂರು, ಶಿವರೆಡ್ಡಿ ಖ್ಯಾಡೆದ, ಮಲ್ಲಿಕಾರ್ಜುನಗೌಡ, ವೆಂಕಟೇಶ ಕುಲಕರ್ಣಿ, ತಾ.ಪಂ ಮಾಜಿ ಅಧ್ಯಕ್ಷ ಬಸಂತಗೌಡ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ, ಜೆಸ್ಕಾಂ ನಿವೃತ್ತ ಅಧಿಕಾರಿ ಜಂಬಣ್ಣ ದಂಡಿನ, ತಾ.ಪಂ ಪ್ರಭಾರ ಇಒ ರಾಜಶೇಖರ , ಸಿಡಿಪಿಒ ವಿರೂಪಾಕ್ಷಯ್ಯ, ನೌಕರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್ಂ, ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಕನ್ನಡ ಜಾಗೃತಿ ಸಮಿತಿ ಸದಸ್ಯ ಈಶ್ವರ ಹಲಗಿ, ಆದರ್ಶ ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ ಇದ್ದರು. ಗಾಯಕ ಮೆಹಬೂಬ ಕಿಲ್ಲೇದಾರ ಅವರಿಂದ ಜನಪದ ಸಂಭ್ರಮ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಮೆಹಬೂಬಹುಸೇನ ಬೇವಿನಾಳ, ಮಂಜುನಾಥರೆಡ್ಡಿ ಮಾದಿನಾಳ, ಮಾರುತಿ ಪೂಜಾರ, ಯಂಕೋಬ ಸಂಕನಾಳ, ದುರಗಪ್ಪ ವಣಿಕೇರಿ, ಜಯಲಕ್ಷ್ಮೀ ವಾಲ್ಮೀಕಿ, ಛತ್ರಪ್ಪ ತಂಬೂರಿ, ಎಂ. ಬಿ.ಕುಕನೂರು, ಡಿ.ಕನಕಪ್ಪ, ಶಾಮೀದಸಾಬ ಲೈನದಾರ, ಮಲ್ಲಿಕಾರ್ಜುನ ಮಸಾರಿಕ್ಯಾಂಪ್ ಸಾಧಕರನ್ನು ಸನ್ಮಾನಿಸಲಾಯಿತು. ಪ್ರತಿಮಾ ಪ್ರಾರ್ಥಿಸಿದರು. ಭವಾನಿ ಸಂಗಡಿಗರು ನಾಡಗೀತೆ ಹಾಡಿದರು. ಬಾಲಾಜಿ ಸ್ವಾಗತಿಸಿದರು. ಪರಸಪ್ಪ ಹೊರಪೇಟೆ ವಂದಿಸಿದರು.
ಉಡುಪಿ : ಪೊಲೀಸ್ ಇಲಾಖೆಗೆ ಜೀಪು ಹಸ್ತಾಂತರ
ಉಡುಪಿ, ಫೆ.20: ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸಂಸ್ಥೆಯ ಸಿಎಸ್ಆರ್ ಅಡಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ವಾಹನವನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಈ ವಾಹನವನ್ನು ಕಾರವಾರ ರೀಜನಲ್ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ವಾಹನವನ್ನು ಹಸ್ತಾಂತರಿಸಿದರು.
ಕರ್ತವ್ಯ ನಿರತ ಖಾಸಗಿ ಬಸ್ ನಿರ್ವಾಹಕನ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ಮನವಿ
ಬಂಟ್ವಾಳ, ಫೆ.20: ಕರ್ತವ್ಯ ನಿರತ ಖಾಸಗಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ರಾಣಿ ಅಬ್ಬಕ್ಕ ಬಸ್ ವರ್ಕರ್ಸ್ ಯೂನಿಯನ್. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗೆ ಮನವಿ ಸಲ್ಲಿಸಿದೆ. ಹಲ್ಲೆಯಿಂದ ಗಾಯಗೊಂಡ ನಿರ್ವಾಹಕನನ್ನು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಸಂಘದ ಪದಾಧಿಕಾರಿಗಳು ಕರ್ತವ್ಯದಲ್ಲಿದ್ದ ನೌಕರರ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯವಾಗಿದೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ನೌಕರರ ಭದ್ರತೆ ಹಾಗೂ ಗೌರವ ಕಾಪಾಡುವ ನಿಟ್ಟಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ಮನವಿ ಮಾಡಿದ್ದಾರೆ.
Bengaluru | ಹಳಿ ತಪ್ಪಿದ ಚಾಲಕರಹಿತ ಮೆಟ್ರೋ ರೈಲು
ಬೆಂಗಳೂರು : ನಗರದ ಹಳದಿ ಮಾರ್ಗದಲ್ಲಿ ಸಂಚಾರ ಮಾಡುತ್ತಿರುವ ಚಾಲಕರಹಿತ ಮೆಟ್ರೋ ರೈಲು ಹಳಿ ತಪ್ಪಿದ ಘಟನೆ ಜ.15ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಹೆಬ್ಬಗೋಡಿ ಡಿಪೋದಲ್ಲಿ ಈ ಅವಘಡ ಸಂಭವಿಸಿದ್ದು, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಚಾಲಕರಹಿತ ರೈಲು ಹಳಿ ತಪ್ಪಿರುವುದು ತಿಳಿದುಬಂದಿದೆ. ಘಟನೆಯ ಕುರಿತಾಗಿ ರೈಲು ಆಪರೇಟರ್, ಡಿಪೋ ಕಂಟ್ರೋಲರ್ ಹಾಗೂ ಇತರ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಳಿ ತಪ್ಪಿದ ಪರಿಣಾಮ ಟ್ರ್ಯಾಕ್ ಸ್ಲೀಪರ್ಗಳು(ಹಳಿ ಆಧಾರಗಳು) ಹಾಗೂ ರೋಲಿಂಗ್ ಸ್ಟಾಕ್ ಘಟಕಗಳಿಗೆ ಹಾನಿಯಾಗಿದೆ.
ಮಂಗಳೂರು: ಹರ್ಷ ಶೋ ರೂಂನಲ್ಲಿ ಎಲ್ಜಿ ಬ್ರ್ಯಾಂಡ್ನ ನೂತನ ಬಿಡುಗಡೆ
ಮಂಗಳೂರು, ಫೆ.20: ನಗರದ ಫಳ್ನೀರ್ನಲ್ಲಿರುವ ಹರ್ಷ ಶೋ ರೂಂ ಮಳಿಗೆಯಲ್ಲಿ ಎಲ್ಜಿ ಬ್ರ್ಯಾಂಡ್ನ ನೂತನ ರೆಫ್ರಿಜರೇಟರ್, ಎಐ ತಂತ್ರಜ್ಞಾನದ ವಾಷಿಂಗ್ ಮೆಷಿನ್, ಡಿಷ್ವಾಶ್ ಉತ್ಪನ್ನಗಳನ್ನು ಶುಕ್ರವಾರ ಬಿಡುಗಡೆ ಗೊಳಿಸಲಾಯಿತು. ಎಲ್ಜಿ ಬ್ರಾಂಚ್ ಮ್ಯಾನೇಜರ್ ರಾಜ್ ವಿಜಯ್ ಕುಮಾರ್ ಮಾತನಾಡಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೊಂಡು ಎಲ್ಜಿ ನೂತನ 3 ಉತ್ಪನ್ನಗಳನ್ನು ತಯಾರಿಸಲಾಗಿದೆ. ಹರ್ಷ ಮತ್ತು ಎಲ್ಜಿ ಹಿಂದಿನಿಂದಲೂ ಉತ್ತಮ ಬಾಂಧವ್ಯವಿದ್ದು, ಈ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಹರ್ಷವಾಗುತ್ತದೆ. ಗ್ರಾಹಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಹರ್ಷದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಿದ್ದಾರ್ಥ ಪ್ರಭು ಮಾತನಾಡಿ ಹರ್ಷ ಸಂಸ್ಥೆಯು 39 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ನಿರತವಾಗಿದೆ. ಎಲ್ಜಿ ವಿಶ್ವದ ಉತ್ತಮ ದರ್ಜೆಯ ಉತ್ಪನ್ನವಾಗಿದ್ದು, ಕಳೆದ 29 ವರ್ಷದಿಂದ ಹರ್ಷದ ಜತೆ ಒಡನಾಟವಿರಿಸಿಕೊಂಡು ಬಂದಿದೆ. ಬಿಡುಗಡೆಯಾದ 3 ಉತ್ಪನ್ನಗಳು ಗ್ರಾಹಕರ ಮನಗೆಲ್ಲುವ ವಿಶ್ವಾಸವಿದೆ ಎಂದರು. ಎಲ್ಜಿ ಬ್ರ್ಯಾಂಚ್ ಮಾರ್ಕೆಟಿಂಗ್ ಮ್ಯಾನೇಜರ್ ಸುಕುಮಾರ್ ರೈ, ವಲಯ ಪ್ರಬಂಧಕ ರಕ್ಷಿತ್, ಶಾಖಾ ಪ್ರೊಡಕ್ಟ್ ತರಬೇತುದಾರ ರಾಜೇಶ್ ಶೆಟ್ಟಿ, ಶಾಖಾ ಮಾರ್ಕೆಟಿಂಗ್ ಸಮನ್ವಯಕಾರ ಲತೀಶ್, ಹರ್ಷ ಕ್ಲಸ್ಟರ್ ಮ್ಯಾನೇಜರ್ ರಿತೇಶ್, ಸ್ಟೋರ್ ಮ್ಯಾನೇಜರ್ ಸರಫತ್, ಫ್ಲೋರ್ ಮ್ಯಾನೇಜರ್ ಸುರೇಶ್ ಉಪಸ್ಥಿತರಿದ್ದರು. *ಎಲ್ಜಿ ರೆಫ್ರಿಜರೇಟರ್: ನೂತನ ರೆಫ್ರಿಜರೇಟರ್ ಎಲ್ಲಾ ವ ರ್ಗದ ಗ್ರಾಹಕರನ್ನು ಸೆಳೆಯಲಿದ್ದು, ಸುಲಭ ದರದಲ್ಲಿ ಲಭ್ಯವಾಗಲಿದೆ. 225 ಲೀಟರ್ ಸಾಮಥ್ಯ ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಇನ್ವರ್ಟರ್ ಕಂಪ್ರೆಸರ್, ಮಲ್ಟಿ ಏರ್ಫೋ ಕೂಲಿಂಗ್, ಅಟೋ ಸ್ಟಾ ರ್ಟ್ ಸಂಪರ್ಕ ಹೊಂದಿದೆ. *ಎಐ ಡಿಡಿ ವಾಷಿಂಗ್ ಮೆಷಿನ್: ಡೈರೆಕ್ಟರ್ ಡ್ರೈವ್ ಎಐ ತಂತ್ರಜ್ಞಾನ ಹೊಂದಿದೆ. ಸೆನ್ಸೆಬಲ್ ಸಿಸ್ಟಂ, 20 ಸಾವಿರ ಮಾದರಿ ವಾಷಿಂಗ್, 360 ಡಿಗ್ರಿ ಟರ್ಬೊ ವಾಷ್, ಸ್ಟೀಮ್, ಡಿಜಿಟಲ್ ಡಯಲ್, ಮೈಕ್ರೋಪ್ಲಾಸ್ಟಿಕ್ ಕೇರ್, 10ವರ್ಷದ ವಾರಂಟಿಯಿದೆ. *ಡಿಷ್ ವಾಷ್: 15 ಕಡೆಗಳಲ್ಲಿ ಸೆಟ್ಟಿಂಗ್ ವ್ಯವಸ್ಥೆ, 94 ವಸ್ತುಗಳನ್ನು ಏಕಕಾಲಕ್ಕೆ ಇಡಬಹುದು. ಡಿಡಿ ತಂತ್ರಜ್ಞಾನ, ಕ್ವಾಡ್ವಾಶ್, ಅಟೋ ಓಪನ್ ಡ್ರೈ, ಹೆಚ್ಚುವರಿ ರ್ಯಾಕ್ ಸಿಸ್ಟಂ, ಇನ್ವರ್ಟರ್ ಡೈರೆಕ್ಟ್ ಡ್ರೈವ್ ಮೋಟಾರ್ ಹೊಂದಿದೆ.
ಗಾಝಾ ನಿವಾಸಿಗಳ ಮೇಲೆ ಇಸ್ರೇಲ್ ನಿಷೇಧಿತ ಅಧಿಕ-ತಾಪಮಾನದ ಥರ್ಮೋಬಾರಿಕ್ ವ್ಯಾಕ್ಯೂಮ್ ಬಾಂಬ್ ಬಳಸಿದೆ ಎಂದು Aljazeera ವರದಿ ಮಾಡಿದೆ. ಅ.2023 ರಿಂದ ಸುಮಾರು 2,842 ಜನರು ಕಣ್ಮರೆಯಾಗಿದ್ದಾರೆ ಎಂದು ಗಾಝಾ ನಾಗರಿಕ ರಕ್ಷಣಾ ತಂಡಗಳು ದಾಖಲಿಸಿವೆ ಎಂದು Aljazeera ನಡೆಸಿದ ತನಿಖಾ ವರದಿ ಹೇಳಿದೆ. ತನಿಖೆಯ ಪ್ರಕಾರ, ದಾಳಿ ನಡೆದ ಸ್ಥಳಗಳಲ್ಲಿ ಈ ಜನರು ಕಣ್ಮರೆಯಾಗಿದ್ದಾರೆ. ಕ್ಷಿಪಣಿ ದಾಳಿಯಲ್ಲಿ ಕಣ್ಮರೆಯಾದವರನ್ನು ಗುರುತಿಸಲು ತನಿಖೆಯು method of elimination ವಿಧಾನವನ್ನು ಬಳಸುತ್ತದೆ. ಗುರಿಯಿಟ್ಟ ಕಟ್ಟಡದೊಳಗೆ ಎಷ್ಟು ಜನರಿದ್ದಾರೆಂದು ತಂಡಗಳು ಮೊದಲು ನಿಖರವಾಗಿ ನಿರ್ಧರಿಸುತ್ತವೆ. ನಂತರ ಆ ಸಂಖ್ಯೆಯನ್ನು ಅಲ್ಲಿ ಪತ್ತೆಯಾದ ಶವಗಳೊಂದಿಗೆ ಹೋಲಿಸುತ್ತವೆ. ಒಂದು ಕುಟುಂಬವು ಐದು ಜನರು ಇದ್ದಾರೆ ಎಂದು ದೃಢಪಡಿಸಿದ್ದರೆ, ಅಲ್ಲಿ ಕೇವಲ ಮೂರು ಶವಗಳು ಕಂಡುಬಂದರೆ, ಸಮಗ್ರ ಹುಡುಕಾಟವು ಯಾವುದೇ ಅವಶೇಷಗಳನ್ನು ಪತ್ತೆಹಚ್ಚಲು ವಿಫಲವಾದ ನಂತರವೇ ಉಳಿದ ಎರಡು ಶವಗಳು ಆವಿಯಾಗಿವೆ ಎಂದು ವರ್ಗೀಕರಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಉಳಿದಿರುವ ಏಕೈಕ ಪುರಾವೆಗಳು ಗೋಡೆಗಳ ಮೇಲೆ ರಕ್ತದ ಗುರುತುಗಳು ಅಥವಾ ದೇಹದ ಸಣ್ಣ ತುಣುಕುಗಳಂತಹ ಕುರುಹುಗಳಾಗಿರುತ್ತವೆ ಎಂದು ಗಾಝಾ ನಾಗರಿಕ ರಕ್ಷಣಾ ವಕ್ತಾರ ಮಹಮೂದ್ ಬಸಲ್ ವಿವರಿಸಿದ್ದಾರೆ. ಥರ್ಮೋಬಾರಿಕ್ ಅಥವಾ ನಿರ್ವಾತ ಬಾಂಬ್ಗಳು ಎಂದರೇನು? ನಿರ್ವಾತ ಅಥವಾ ಏರೋಸಾಲ್ ಬಾಂಬ್ಗಳು ಎಂದೂ ಕರೆಯಲ್ಪಡುವ ಥರ್ಮೋಬಾರಿಕ್ ಅಥವಾ ಥರ್ಮಲ್ ಬಾಂಬ್ಗಳು ವಿಷಕಾರಿ ಪುಡಿ ಲೋಹಗಳು ಮತ್ತು ಸಾವಯವ ಪದಾರ್ಥಗಳನ್ನು ಒಳಗೊಂಡ ವಿವಿಧ ಇಂಧನಗಳಿಂದ ಕೂಡಿರುತ್ತವೆ. ಇದು ಸ್ಫೋಟಿಸಿದ ನಂತರ ಆಮ್ಲಜನಕದ ಸಹಾಯದಿಂದ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಳ್ಳುತ್ತದೆ. ಇದರಿಂದ ತೀವ್ರ ತಾಪಮಾನ ಮತ್ತು ಒತ್ತಡದ ಅಲೆಗಳು ಉಂಟಾಗುತ್ತವೆ. Aljazeera ಜೊತೆ ಮಾತನಾಡಿದ ರಷ್ಯಾದ ಮಿಲಿಟರಿ ತಜ್ಞ ವಾಸಿಲಿ ಫಟಿಗರೋವ್, ಈ ಶಸ್ತ್ರಾಸ್ತ್ರಗಳು ಕೇವಲ ಕೊಲ್ಲುವುದಲ್ಲ, ಅವು ವಸ್ತುವನ್ನೇ ಅಳಿಸಿಹಾಕುತ್ತವೆ ಎಂದು ಹೇಳಿದ್ದಾರೆ. ಥರ್ಮೋಬಾರಿಕ್ ಬಾಂಬ್ನಲ್ಲಿ ಎರಡು ಹಂತದ ಸ್ಫೋಟ ಉಂಟಾಗುತ್ತದೆ. ಮೊದಲ ಹಂತದಲ್ಲಿ ಇಂಧನ ಅಥವಾ ಸೂಕ್ಷ್ಮ ಕಣಗಳು ಗಾಳಿಯಲ್ಲಿ ಹರಡುತ್ತವೆ. ನಂತರ ಸ್ಫೋಟ ಸಂಭವಿಸುತ್ತದೆ. ಈ ಸ್ಫೋಟವು ಆಮ್ಲಜನಕದೊಂದಿಗೆ ಸೇರಿ ಬೆಂಕಿಯುಂಡೆಯಾಗಿ ಮಾರ್ಪಡುತ್ತದೆ. ಸ್ಫೋಟದ ತಾಪಮಾನವು 3,500 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಬಹುದು. ಹೆಚ್ಚು ಹೊತ್ತು ಉರಿಯುವಂತೆ ಮಾಡಲು ಅಲ್ಯೂಮಿನಿಯಂ, ಮೆಗ್ನೀಸಿಯಮ್ ಮತ್ತು ಟೈಟಾನಿಯಂ ಪುಡಿಗಳನ್ನು ರಾಸಾಯನಿಕ ಮಿಶ್ರಣಕ್ಕೆ ಸೇರಿಸಲಾಗುತ್ತದೆ. ಇದರಿಂದ ಸ್ಫೋಟದ ತಾಪಮಾನವು 2,500 ರಿಂದ 3,000 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚುತ್ತದೆ ಎಂದು ಫಟಿಗರೋವ್ ತಿಳಿಸಿದ್ದಾರೆ. ಈ ಶಾಖವು ಹೆಚ್ಚಾಗಿ TNT ಮತ್ತು ಅಲ್ಯೂಮಿನಿಯಂ ಪುಡಿಯ ಮಿಶ್ರಣದಿಂದ ಉತ್ಪತ್ತಿಯಾಗುತ್ತದೆ. ಇದನ್ನು ಟ್ರೈಟೋನಲ್ ಎಂದು ಕರೆಯಲಾಗುತ್ತದೆ. ಇದನ್ನು ಹೆಚ್ಚಾಗಿ MK-84 ನಂತಹ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳಲ್ಲಿ ಬಳಸಲಾಗುತ್ತದೆ. Aljazeera ವರದಿಯು ಗಾಝಾದಲ್ಲಿರುವ ಅಲ್-ತಾಬಿನ್ ಶಾಲೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದೆ. ಇಸ್ರೇಲಿ ದಾಳಿಯ ನಂತರ, ದಾಳಿಯ ಮೊದಲು ಸ್ಥಳದಲ್ಲಿದ್ದ ಜನರ ಶವಗಳನ್ನು ಕುಟುಂಬಗಳಿಗೆ ಹುಡುಕಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ. ಗಾಝಾದಲ್ಲಿರುವ ಪ್ಯಾಲೆಸ್ಟೀನಿಯನ್ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಡಾ. ಮುನೀರ್ ಅಲ್-ಬರ್ಷ್ ಅವರು, ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್ ಆಗಿದೆ. ದೇಹವು ಬೃಹತ್ ಒತ್ತಡ ಮತ್ತು ಆಕ್ಸಿಡೇಶನ್ ಸೇರಿ 3,000 ಡಿಗ್ರಿಗಿಂತ ಹೆಚ್ಚಿನ ಶಕ್ತಿಗೆ ಒಡ್ಡಿಕೊಂಡಾಗ ದ್ರವಗಳು ತಕ್ಷಣವೇ ಕುದಿಯುತ್ತವೆ. ಆಗ ಅಂಗಾಂಶಗಳು ಆವಿಯಾಗಿ ಬೂದಿಯಾಗುತ್ತವೆ ಎಂದು ತಿಳಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ವಿಶಾಲ ಪ್ರದೇಶದಲ್ಲಿ ದೊಡ್ಡ ಸ್ಫೋಟ ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಸ್ಫೋಟಕಗಳಂತೆ ಇಲ್ಲಿ ಸಹ ಅತಿಯಾದ ಒತ್ತಡದಿಂದ ಹಾನಿ ಉಂಟಾಗುತ್ತದೆ. ಗಾಝಾದಲ್ಲಿ ಬಳಸಲಾದ ಮೂರು ವಿಭಿನ್ನ ಯುಎಸ್ ನಿರ್ಮಿತ ಬಾಂಬ್ಗಳು MK-84 'ಹ್ಯಾಮರ್': 3,500 ಡಿಗ್ರಿ ಸೆಲ್ಸಿಯಸ್ ವರೆಗೆ ಶಾಖ ಉತ್ಪಾದಿಸುವ ಟ್ರೈಟೋನಲ್ನಿಂದ ತುಂಬಿದ ದೊಡ್ಡ ಬಾಂಬ್. BLU-109 ಬಂಕರ್ ಬಸ್ಟರ್: PBXN-109 ಸ್ಫೋಟಕ ಮಿಶ್ರಣವನ್ನು ಬಳಸಿಕೊಂಡು ಸ್ಫೋಟಗೊಳ್ಳುವ ಮೊದಲು ಸ್ವತಃ ನೆಲದೊಳಗೆ ಹೂತುಹೋಗುವ ಬಾಂಬ್. GBU-39: ಇದು ನಿಖರ-ನಿರ್ದೇಶಿತ ಬಾಂಬ್ ಆಗಿದ್ದು, ಕಟ್ಟಡವನ್ನು ಸಂಪೂರ್ಣವಾಗಿ ಧ್ವಂಸಗೊಳಿಸದೆ ಕೋಣೆಯೊಳಗಿನವರನ್ನು ಕೊಲ್ಲುವಂತೆ ವಿನ್ಯಾಸಗೊಳಿಸಲಾಗಿದೆ. ರಚನೆಗಳನ್ನು ಪುಡಿಮಾಡಲು ಬೃಹತ್ ಸ್ಫೋಟವನ್ನು ಅವಲಂಬಿಸುವ ಬದಲು, ಇದು AFX-757 ಎಂಬ ವಿಶೇಷ ಸ್ಫೋಟಕವನ್ನು ಬಳಸುತ್ತದೆ. ಮೊದಲಿಗೆ ಹೆಚ್ಚಿನ ತೀವ್ರತೆಯ ಒತ್ತಡದ ತರಂಗವು ಶ್ವಾಸಕೋಶದಂತಹ ಆಂತರಿಕ ಅಂಗಗಳನ್ನು ಛಿದ್ರಗೊಳಿಸುತ್ತದೆ. ನಂತರ ತಕ್ಷಣವೇ ಉಷ್ಣ ತರಂಗ ಬಂದು ಮಾನವ ಅಂಗಾಂಶವನ್ನು ಸುಡುವ ಸಾಮರ್ಥ್ಯವಿರುವ ತೀವ್ರ ಶಾಖವನ್ನು ಉಂಟುಮಾಡುತ್ತದೆ. ಅಲ್-ತಾಬಿನ್ ಶಾಲೆಯ ದಾಳಿಯಲ್ಲಿ GBU-39 ತುಣುಕುಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ. ಅವುಗಳನ್ನು ಎಲ್ಲಿ ಬಳಸಲಾಗಿದೆ? ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಸೈನ್ಯ ಥರ್ಮೋಬಾರಿಕ್ ಬಾಂಬ್ ಬಳಸಿತ್ತು. 1960ರ ದಶಕದಲ್ಲಿ ಅಮೆರಿಕ ವಿಯೆಟ್ನಾಂ ಯುದ್ಧದಲ್ಲಿ ಅವುಗಳನ್ನು ಬಳಸಿದಾಗ ಅವು ವ್ಯಾಪಕವಾಗಿ ಅಭಿವೃದ್ಧಿಪಡಿಸಲ್ಪಟ್ಟವು. 1960ರ ದಶಕದಿಂದಲೂ ರಷ್ಯಾ ಮತ್ತು ಪಾಶ್ಚಿಮಾತ್ಯ ಪಡೆಗಳು ಈ ಬಾಂಬ್ಗಳನ್ನು ಬಳಸುತ್ತಿವೆ. ಅಮೆರಿಕವು ಅವುಗಳನ್ನು ಅಫ್ಘಾನಿಸ್ತಾನದಲ್ಲಿ ಬಳಸಿತ್ತು. 2001ರಲ್ಲಿ ಟೋರಾ ಬೋರಾ ಪರ್ವತಗಳ ಗುಹೆಗಳಲ್ಲಿ ಅಡಗಿದ್ದ ಅಲ್-ಖೈದಾ ಪಡೆಗಳ ವಿರುದ್ಧ ಮತ್ತು 2017ರಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ. ರಷ್ಯಾವು ಸಣ್ಣ ಯುದ್ಧತಂತ್ರದ ಶಸ್ತ್ರಾಸ್ತ್ರಗಳಿಂದ ಹಿಡಿದು ಬೃಹತ್ ಬಾಂಬ್ಗಳವರೆಗೆ ಹಲವು ವ್ಯವಸ್ಥೆಗಳನ್ನು ಹೊಂದಿದೆ. ಡಾನ್ಬಾಸ್ ಪ್ರದೇಶದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಇದನ್ನು ಹಲವು ವರ್ಷಗಳಿಂದ ಬಳಸುತ್ತಿದ್ದಾರೆ ಎಂದು ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ನ ಹಿರಿಯ ವಿಶ್ಲೇಷಕ ಡಾ. ಮಾರ್ಕಸ್ ಹೆಲ್ಲಿಯರ್ ತಿಳಿಸಿದ್ದಾರೆ. 1999ರಲ್ಲಿ ಚೆಚೆನ್ಯಾ ಯುದ್ಧದಲ್ಲಿ ರಷ್ಯಾ ಅವುಗಳನ್ನು ಬಳಸಿದ್ದು, ಮಾನವ ಹಕ್ಕುಗಳ ಆಯೋಗ ಇದನ್ನು ಖಂಡಿಸಿತ್ತು. ಸಿರಿಯನ್ ಅಂತರ್ಯುದ್ಧದಲ್ಲಿ ಬಶರ್ ಅಲ್-ಅಸ್ಸಾದ್ ಆಡಳಿತವು ರಷ್ಯಾ ನಿರ್ಮಿತ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ವರದಿಯಾಗಿದೆ. 2022ರಲ್ಲಿ ಉಕ್ರೇನ್ ಯುದ್ಧದ ಆರಂಭದಲ್ಲಿ ರಷ್ಯಾ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ಉಕ್ರೇನಿಯನ್ ಸರ್ಕಾರ ಆರೋಪಿಸಿತ್ತು. ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ನಿಷೇಧಿಸಲಾಗಿದೆಯೇ? ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ನಿರ್ದಿಷ್ಟವಾಗಿ ನಿಷೇಧಿಸಲಾಗಿಲ್ಲ. ಆದರೆ ಅಂತರರಾಷ್ಟ್ರೀಯ ಮಾನವೀಯ ಕಾನೂನು ಈ ಶಸ್ತ್ರಾಸ್ತ್ರಗಳ ಬಳಕೆಯನ್ನು ಎರಡು ಪ್ರಮುಖ ತತ್ವಗಳ ಮೂಲಕ ನಿಯಂತ್ರಿಸುತ್ತದೆ: ವ್ಯತ್ಯಾಸ (Distinction) ಮತ್ತು ಅನುಪಾತ (Proportionality). ಈ ನಿಯಮಗಳ ಪ್ರಕಾರ, ಮಿಲಿಟರಿ ಪಡೆಗಳು ಬಾಂಬ್ ಬಳಸುವ ಮೊದಲು ನಾಗರಿಕರನ್ನು ಮಿಲಿಟರಿ ಗುರಿಗಳಿಂದ ಬೇರ್ಪಡಿಸುವ ಅಗತ್ಯವಿದೆ. ನೇರ ಮಿಲಿಟರಿ ಲಾಭಕ್ಕೆ ಹೋಲಿಸಿದರೆ ನಿರೀಕ್ಷಿತ ನಾಗರಿಕ ಸಾವುನೋವುಗಳು ವಿಪರೀತವಾಗಿರುವಲ್ಲಿ ದಾಳಿಗಳನ್ನು ನಡೆಸುವುದು ನಿಷೇಧಿಸಲಾಗಿದೆ. ಈ ಸ್ಫೋಟಕಗಳು ಬೃಹತ್ ಹಾಗೂ ನಿಯಂತ್ರಿಸಲಾಗದ ಸ್ಫೋಟವನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ, ಜನನಿಬಿಡ ಪ್ರದೇಶಗಳಲ್ಲಿ ಅವುಗಳ ಬಳಕೆಯ ಬಗ್ಗೆ ಮಾನವ ಹಕ್ಕುಗಳ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.
ಹೊಸದಿಲ್ಲಿ, ಫೆ. 20: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಬಳಿಕ, ಗುಜರಾತ್, ಲಕ್ಷದ್ವೀಪ ಮತ್ತು ಪುದುಚೇರಿಯ ಮತದಾರರ ಪಟ್ಟಿಗಳಿಂದ ಸುಮಾರು 69 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಚುನಾವಣಾ ಆಯೋಗವು ಶುಕ್ರವಾರ ಈ ಸಂಬಂಧಿ ಅಂಕಿಅಂಶಗಳನ್ನು ಬಿಡುಗಡೆ ಗೊಳಿಸಿದೆ. ಕಳೆದ ವರ್ಷದ ಅಕ್ಟೋಬರ್ 27ರಂದು ವಿಶೇಷ ತೀವ್ರ ಪರಿಷ್ಕರಣೆಯನ್ನು ಘೋಷಿಸಿದ ಬಳಿಕ, ಗುಜರಾತ್ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತದಾರರ ಸಂಖ್ಯೆ 5.19 ಕೋಟಿ ಆಗಿತ್ತು. ಪರಿಷ್ಕರಣೆಯ ಬಳಿಕ ಪ್ರಕಟಿಸಲಾದ ಅಂತಿಮ ಪಟ್ಟಿಗಳಲ್ಲಿ ಒಟ್ಟು ಮತದಾರರ ಸಂಖ್ಯೆ 4.50 ಕೋಟಿ ಆಗಿದೆ. ಅಂದರೆ ಮತದಾರರ ಸಂಖ್ಯೆ ಮೊದಲಿನ ಪಟ್ಟಿಗಿಂತ 68.9 ಲಕ್ಷ ಕಡಿಮೆ ಆಗಿದೆ. ಎಸ್ಐಆರ್ ಮೊದಲು, ಗುಜರಾತ್ ಮತದಾರರ ಪಟ್ಟಿಯಲ್ಲಿ 5.08 ಕೋಟಿ ಮತದಾರರಿದ್ದಿರು. ಈಗ ಪಟ್ಟಿಯು 4.40 ಕೋಟಿಗೆ ಇಳಿದಿದೆ. ಪಟ್ಟಿಯಿಂದ 68.12 ಲಕ್ಷ, ಅಂದರೆ 13.40 ಶೇಕಡ ಮತದಾರರು ಹೊರಬಿದ್ದಿದ್ದಾರೆ. ಲಕ್ಷದ್ವೀಪದಲ್ಲಿ, ಮೊದಲು 57,813 ಮತದಾರರಿದ್ದರು. ಈಗ ಅದು 57,607ಕ್ಕೆ ಇಳಿದಿದೆ. 206, ಅಂದರೆ 0.36 ಶೇಕಡ ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಚುನಾವಣೆಗೆ ಸಜ್ಜಾಗುತ್ತಿರುವ ಪುದುಚೇರಿಯಲ್ಲಿ, ಎಸ್ಐಆರ್ಗಿಂತ ಮೊದಲು 10.21 ಲಕ್ಷ ಮತದಾರರಿದ್ದರು. ಈಗ ಅದು 9.44 ಲಕ್ಷಕ್ಕೆ ಇಳಿದಿದೆ. 7.57 ಶೇಕಡ ಮತದಾರರು ಹೊರಬಿದ್ದಿದ್ದಾರೆ.
Kalaburagi | ಜೀವ ರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ: ಡಾ.ಸಂಗಮೇಶ ಶೇರಿ
ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ
ಕರ್ನಾಟಕ ಬ್ಯಾಂಕಿನಿಂದ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ
ಉಡುಪಿ, ಫೆ.20: ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿ ವತಿಯಿಂದ ಬ್ಯಾಂಕಿನ 102ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಎನ್ಸಿಡಿ ವಿಭಾಗ ಮತ್ತು ಗಾಂಧಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ, ಉಡುಪಿಯ ಅಂಬಾಗಿಲಿನ ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿಯಲ್ಲಿ ಬುಧವಾರ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಬ್ಯಾಂಕಿನ ನಿರ್ದೇಶಕ ಬಾಲಕೃಷ್ಣ ಹಲಸೆ ಮಾತನಾಡಿ, ರಕ್ತದಾನದಂತಹ ಮಹಾನ್ ಕಾರ್ಯದಲ್ಲಿ ಅರ್ಹರು ಪಾಲ್ಗೊಳ್ಳುವುದರೊಂದಿಗೆ, ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗುವ ಸಾಮಾಜಿಕ ಕಾರ್ಯದಲ್ಲಿ ಬ್ಯಾಂಕಿನೊಂದಿಗೆ ಕೈ ಜೋಡಿಸಬೇಕು ಎಂದರು. ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ್ ಮಾತನಾಡಿ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಅತಿ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಸ್ವಯಂ ಪ್ರೇರಿತ ರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಗಾಂಧಿ ಆಸ್ಪತ್ರೆಯ ಮುಖ್ಯಸ್ಥ ಡಾ.ಹರಿಶ್ಚಂದ್ರ ಮಾತನಾಡಿ, ಜನಸಾಮಾನ್ಯ ರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಇದನ್ನು ಮೊದಲು ಹೋಗಲಾಡಿ ಸಬೇಕು. ಹೆಚ್ಚು ಜನರು ಸೇರುವ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ಮತ್ತು ವಲಯ ಮುಖ್ಯಸ್ಥ ರಮೇಶ್ ವೈದ್ಯ ಮಾತನಾಡಿ, ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಅಗತ್ಯವಿದ್ದಾಗ ನಾವು ನಂಬುವುದು ನಮ್ಮಲ್ಲಿರುವ ಉತ್ತಮವಾದ ಬ್ಲಡ್ ಬ್ಯಾಂಕ್ ವ್ಯವಸ್ಥೆಗಳನ್ನು. ರಕ್ತದಾನ ಮಾಡುವುದರಿಂದ ನಾವು ಇನ್ನೊಬ್ಬರ ಜೀವ ಉಳಿಯಲು ಕಾರಣರಾಗುತ್ತೇವೆ ಎಂದು ಹೇಳಿದರು. ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಕುಮಾರಿ ರಕ್ತದಾನ ಮಹತ್ವ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ, ಕರ್ನಾಟಕ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ಬ್ಯಾಂಕಿನ ಮುಖ್ಯ ಪ್ರಬಂದಕ ಸುಬ್ರಹ್ಮಣ್ಯ ಬಾರ್ವೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 50 ಮಂದಿ ರಕ್ತದಾನ ಮಾಡಿದರು. 56 ಮಂದಿ ಇಸಿಜಿ ಪರೀಕ್ಷೆ, 40 ಮಂದಿ ದಂತ ಪರೀಕ್ಷೆಗೆ, 67 ಜನರು ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆಗೆ ಒಳಗಾದರು.
ಉಡುಪಿ ಅಗ್ನಿಶಾಮಕ ದಳದ ಸತೀಶ್ಗೆ ಕೇಂದ್ರ ಗೃಹ ಮಂತ್ರಾಲಯದ ಪದಕ
ಉಡುಪಿ, ಫೆ.20: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕರಾಗಿ ಕರ್ತವ್ಯ ನಿರ್ವಸುತ್ತಿರುವ ಸತೀಶ್ ಅವರಿಗೆ, ಇಲಾಖೆಯು ಉತ್ತಮ ಹಾಗೂ ನಿಷ್ಠೆಯ ಸೇವೆಗಾಗಿ, ತುರ್ತು ಪರಿಸ್ಥಿತಿಯಲ್ಲಿ ಶ್ರೇಷ್ಠ ಕಾರ್ಯಕ್ಕಾಗಿ ಕೇಂದ್ರ ಸರಕಾರದ ಗೃಹ ಮಂತ್ರಾಲಯವು ನೀಡುವ ಪ್ರಶಸ್ತಿಯನ್ನು ಪಡೆದಿದ್ದಾರೆ. ಸತೀಶ್ ಅವರು ಈ ಪದಕವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಪಡೆದಿದ್ದಾರೆ. 2005ರಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಆರ್.ಎ. ಮುಂಡ್ಕೂರ್ ತರಬೇತಿ ವಿದ್ಯಾಲಯ ದಲ್ಲಿ ತರಬೇತಿ ಪಡೆದು 2006ರಲ್ಲಿ ಮೂಡಬಿದ್ರೆ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯಕ್ಕೆ ಸೇರ್ವಡೆಗೊಂಡರು. 2018ರಲ್ಲಿ ಮೈಸೂರು ಹೆಬ್ಬಾಳ ಅಗ್ನಿಶಾಮಕ ಠಾಣೆಗೆ ಪದೋನ್ನತಿ ವರ್ಗಾವಣೆ ಪಡೆದು ಪ್ರಸ್ತುತ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಜನರ ಪ್ರಾಣ ಹಾಗೂ ಆಸ್ತಿಗಳ ರಕ್ಷಣೆಗಾಗಿ ಹಲವು ಪುರಸ್ಕಾರಗಳು ಹಾಗೂ ಸೆಲ್ಯೂಟ್ದ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕೋರ್ಟ್ ಆದೇಶದ ಹೊರತಾಗಿಯೂ ಎಸ್ಐಟಿ ರಚಿಸಲು ವಿಫಲ; ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾತಿಗೆ ಹೈಕೋರ್ಟ್ ತಾಕೀತು
ಬೆಂಗಳೂರು : ನ್ಯಾಯಾಲಯ ಆದೇಶ ಹೊರಡಿಸಿ 5 ತಿಂಗಳು ಕಳೆದರೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್ ಉದ್ಯೋಗಿ ಶ್ರೀಧರ್ ಎಂಬುವರ ಸಾವಿನ ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಯ ಖುದ್ದು ಹಾಜರಾತಿಗೆ ನಿರ್ದೇಶಿಸಿದೆ. ಸಾರಾ ಫಾರ್ಮ್ಸ್ ಮ್ಯಾನೇಜರ್ ಹರೀಶ್ ಮುಗರೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಶ್ರೀಧರ್ ಸಾವಿನ ಪ್ರಕರಣದ ಮರು ತನಿಖೆ ಮಾಡಲು ರಾಜ್ಯ ಸರ್ಕಾರ 4 ವಾರದಲ್ಲಿ ಎಸ್ಐಟಿ ರಚನೆ ಮಾಡಬೇಕು. ತನಿಖೆ ಆರಂಭಿಸಿದ ದಿನದಿಂದ 4 ತಿಂಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಎಸ್ಐಟಿ ಅಂತಿಮ ವರದಿ ಸಲ್ಲಿಸಬೇಕು ಎಂದು 2025ರ ಸೆಪ್ಟೆಂಬರ್ 9ರಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಈವರೆಗೂ ಎಸ್ಐಟಿ ರಚನೆಯಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದ್ದರಿಂದ, ಈ ಕುರಿತು ವಿವರಣೆ ನೀಡಲು ಫೆಬ್ರವರಿ 21ರ (ಶನಿವಾರ) ಮಧ್ಯಾಹ್ನ 2.30ಕ್ಕೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ. ಪ್ರಕರಣವೇನು? ಅರ್ಜಿದಾರ ಹರೀಶ್ ಮುಗರೆ 2025ರ ಏಪ್ರಿಲ್ನಲ್ಲಿ ಹೈಕೊರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಗಂಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಫಾರ್ಮ್ನ ಉದ್ಯೋಗಿಯಾಗಿದ್ದ ಶ್ರೀಧರ್ ಮೇಲೆ 2022ರ ಡಿಸೆಂಬರ್ 17ರಂದು ಕೆಲವರು ಹಲ್ಲೆ ಮಾಡಿದ್ದರು. ಆಗ ನಾನು ಆತನಿಗೆ ಚಿಕಿತ್ಸೆ ನೀಡಿ, ಫಾರ್ಮ್ ಕರೆದೊಯ್ದು ಅಲ್ಲೇ ತಂಗಲು ಸೂಚಿಸಿದ್ದೆ. ಮರು ದಿನ ಡಿಸೆಂಬರ್ 18ರಂದು ಬೆಳಗ್ಗೆ 6.30ಕ್ಕೆ ಫಾರ್ಮ್ಗೆ ಹೋದಾಗ, ಯಾರೋ ಕೆಲ ಆರೋಪಿಗಳು ಫೆನ್ಸ್ ತುಂಡು ಮಾಡಿ, ಒಳಗೆ ಪ್ರವೇಶಿಸಿದ್ದರು. ಶ್ರೀಧರ್ ಅನ್ನು ಕೊಲೆಗೈದು ಫಾರ್ಮ್ ಮಧ್ಯದಲ್ಲಿ ಮೃತದೇಹ ಬಿಸಾಡಿದ್ದರು. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಗೆ ನಾನು ದೂರು ನೀಡಿದ್ದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 393 (ದರೋಡೆ) ಅಪರಾಧದಡಿಯಲ್ಲದೆ ಐಪಿಸಿ ಸೆಕ್ಷನ್ 323 ಅಡಿಯಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಅಪರಾಧ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದು ಗಂಭೀರ ಸ್ವರೂಪವಲ್ಲದ ಅಪರಾಧವಾಗಿದೆ. ಇನ್ನೂ ಪೊಲೀಸರಿಗೆ ದಾರಿ ತಪ್ಪಿಸಿದ ಆರೋಪದಲ್ಲಿ ನನ್ನ ವಿರುದ್ಧವೇ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ, ಶ್ರೀಧರ್ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಹರೀಶ್ ಮುಗರೆ ಅರ್ಜಿಯಲ್ಲಿ ಕೋರಿದ್ದರು. ಅರ್ಜಿಯನ್ನು 2025ರ ಸೆಪ್ಟೆಂಬರ್ 9ರಂದು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ, ಶ್ರೀಧರ್ ಸಾವು ಪ್ರಕರಣದ ಮರು ತನಿಖೆಗೆ ಎಸ್ಐಟಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ಪಾಲನೆಯಾಗಿಲ್ಲ ಎಂದು ಅರ್ಜಿದಾರರು ಶುಕ್ರವಾರ ನ್ಯಾಯಾಲಯದ ಗಮನಕ್ಕೆ ತಂದರು.
ಸರಳ ತ್ರಿಪದಿಗಳ ಮೂಲಕ ಸಮಾಜದ ಅಂಧಕಾರ ಸರಿಸಿದ ಕವಿ: ಎಂ.ಎ. ಗಫೂರ್
ಉಡುಪಿ: ಸರ್ವಜ್ಞ ಜಯಂತಿ
ಕಲಬುರಗಿ | ಮುರುಗೇಶ ನಿರಾಣಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್: ಡಾ.ಉಮೇಶ್ ಜಾಧವ್ ಅಭಿನಂದನೆ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ನಾಡಿನ ಹಿರಿಯ ಮುಖಂಡರಾದ ಮುರುಗೇಶ್ ನಿರಾಣಿ, ಪಿ.ಜಿ.ಆರ್ ಸಿಂಧ್ಯಾ ಮತ್ತು ಹೋರಾಟಗಾರ ಕೇದಾರ ಲಿಂಗಯ್ಯ ಹಿರೇಮಠ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿರುವುದಕ್ಕೆ ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅಭಿನಂದನೆ ಸಲ್ಲಿಸಿದ್ದಾರೆ. ಸಮಾಜಮುಖಿಯಾಗಿ ಕೆಲಸ ಮಾಡಿದ ಮೂವರು ಮಹನೀಯರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯವು ಗುರುತಿಸಿ ರಾಜ್ಯಪಾಲರು ಆದ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸಂತಸದ ಸಂಗತಿಯಾಗಿದೆ. ಮೂವರು ಕೂಡ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಪಾರ ಕೊಡುಗೆಯನ್ನು ನೀಡಿ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ ಎಂದರು. ಮುರುಗೇಶ್ ನಿರಾಣಿಯವರು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಸಚಿವರಾಗಿ ಮತ್ತು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಈ ಭಾಗಕ್ಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಮಾತ್ರವಲ್ಲ ಉದ್ಯಮಿಗಳಾಗಿ ರಾಷ್ಟ್ರ ಕಂಡ ಶ್ರೇಷ್ಠ ಕೈಗಾರಿಕೋದ್ಯಮಿಯಾಗಿ ಸಹಕಾರಿ ಸಂಘವನ್ನು ಬೆಳೆಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಡಾ. ಜಾಧವ್ ತಿಳಿಸಿದ್ದಾರೆ. ಮೂವರು ಗಣ್ಯರನ್ನು ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಶಿಕಾಂತ ಉಡಿಕೇರಿ ಅವರಿಗೂ ಕೂಡ ಅಭಿನಂದನೆ ಹಾಗೂ ಫೆ.24ರಂದು ನಡೆಯಲಿರುವ ವಿವಿಯ 43ನೇ ಘಟಿಕೋತ್ಸವ ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂಬುದಾಗಿ ಜಾಧವ್ ತಿಳಿಸಿದ್ದಾರೆ.
ಫೆ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಕಳಕ್ಕೆ ಭೇಟಿ
ಉಡುಪಿ, ಫೆ.20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.25ರಂದು ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ.25ರಂದು ಬೆಳಗ್ಗೆ 11ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ 11:30ಕ್ಕೆ ಕಾರ್ಕಳದ ತಾಲೂಕು ಕ್ರೀಡಾಂಗಣದ ಹೆಲಿಪ್ಯಾಡ್ನಲ್ಲಿ ಬಂದಿಳಿಯಲಿದ್ದಾರೆ. ಮೊದಲು ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಏಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಆಯೋಜಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡವನ್ನು ಕಾರ್ಕಳ ಕಾಬೆಟ್ಟು ನಲ್ಲಿ ಉದ್ಘಾಟಿಸಲಿದ್ದಾರೆ. ಬಳಿಕ ಕುಕ್ಕುಂದೂರು ಕಿಸಾನ್ ಸಭಾ ಟ್ರಸ್ಟ್ ಆಯೋಜಿಸಿರುವ ಟ್ರಸ್ಟ್ನ ಮಹಾತ್ಮಗಾಂಧಿ ವಸತಿ ಪ್ರೌಢ ಶಾಲೆಯಲ್ಲಿ ‘ಕಿಸಾನ್ ಸಭಾ ಸಭಾಂಗಣವನ್ನು ಉದ್ಘಾಟಸಲಿದ್ದಾರೆ. ಅಲ್ಲದೇ ಶಾಲೆಯ 35ನೇ ವರ್ಷದ ಸಮಾರಂಭದಲ್ಲೂ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಬಳಿಕ ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮುಖ್ಯಮಂತ್ರಿಗಳು ಸಂಜೆ 4ಗಂಟೆಗೆ ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕಲಬುರಗಿ | ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ
ಕಲಬುರಗಿ: “ಕರ್ನಾಟಕ ಒನ್” ಯೋಜನೆಯಡಿ ಒಂದೇ ಸೂರಿನಡಿ ಎಲ್ಲಾ ರೀತಿಯ ನಾಗರಿಕ ಸೇವೆ ಪೂರೈಸಲು 2025-26ನೇ ಸಾಲಿಗೆ ಕಲಬುರಗಿ ಜಿಲ್ಲೆಯ ಈ ಕೆಳಕಂಡ ತಾಲೂಕುಗಳಲ್ಲಿ ಫ್ರಾಂಚೈಸಿಗಳ ಮೂಲಕ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕರ್ನಾಟಕ ಒನ್ ಸ್ಥಾಪನೆಗಾಗಿ ಬಾಕಿಯಿರುವ ಕಲಬುರಗಿ ಜಿಲ್ಲೆಯ ಅಫಜಲಪುರ, ಚಿಂಚೋಳಿ, ಜೇವರ್ಗಿ, ಕಲಬುರಗಿ, ಕಾಳಗಿ, ಕಮಲಾಪುರ, ಸೇಡಂ ಹಾಗೂ ಶಹಾಬಾದ ತಾಲೂಕುಗಳಲ್ಲಿ ಫ್ರಾಂಚೈಸಿಗಳ ಮೂಲಕ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು https://www.karnatakaone.gov.in/Public/FrachiseeTerms ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ 2026ರ ಮಾರ್ಚ್ 2ರ ಸಂಜೆ 6 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಬೇರೆ ಯಾವುದೇ ರೂಪದಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ om-edcs@karnataka.gov.in ಹಾಗೂ ದೂರವಾಣಿ ಸಂಖ್ಯೆ 080-24410574 ಗೆ ಸರ್ಕಾರಿ ರಜೆಯನ್ನು ಹೊರತುಪಡಿಸಿ ಎಲ್ಲಾ ಕೆಲಸ ದಿನಗಳಂದು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.
ಕಾಂಗ್ರೆಸ್ನಲ್ಲಿ 'ಹಳೆ ಬೇರು-ಹೊಸ ಚಿಗುರು' ಸಂಘರ್ಷ: ರಾಹುಲ್ ಗಾಂಧಿ ನಾಯಕತ್ವಕ್ಕೆ ಹಿರಿಯರ ಬೆಂಬಲ ಅನಿವಾರ್ಯವೇ?
ಕಾಂಗ್ರೆಸ್ ಪಕ್ಷದ ಹಳೆಯ ನಾಯಕರು ಮತ್ತು ರಾಹುಲ್ ಗಾಂಧಿ ಅವರ ನಡುವಿನ ಸಂಬಂಧ ಇಂದಿಗೂ ಒಂದು ದೊಡ್ಡ ಪ್ರಶ್ನೆಯಾಗಿದೆ. ಚುನಾವಣೆಗಳಲ್ಲಿ ಪಕ್ಷಕ್ಕೆ ಸೋಲಾದಾಗ ಅಥವಾ ಪಕ್ಷದ ಒಳಗೆ ಗೊಂದಲ ಉಂಟಾದಾಗ, ಹಿರಿಯರು ರಾಹುಲ್ ಅವರ ನಾಯಕತ್ವವನ್ನು ಪೂರ್ತಿಯಾಗಿ ಒಪ್ಪಿಕೊಳ್ಳುತ್ತಾರೆಯೇ? ಎಂಬ ಚರ್ಚೆ ಶುರುವಾಗುತ್ತದೆ. ಇದು ಕೇವಲ ಒಬ್ಬರನ್ನೊಬ್ಬರು ವಿರೋಧಿಸುವ ವಿಷಯವಲ್ಲ; ಬದಲಾಗಿ ಹಿರಿಯರ ಅನುಭವ ಮತ್ತು ಹೊಸಬರ
ಗೂಡ್ಸ್ ವಾಹನ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
ಬ್ರಹ್ಮಾವರ, ಫೆ.20: ಗೂಡ್ಸ್ ವಾಹನವೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಆರೂರು ಕ್ರಾಸ್ (ಕುಂಜಾಲು) ಎಂಬಲ್ಲಿ ಫೆ.20ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಆರೂರಿನ ಶೇಖರ್ ಟಿ.ಕುಲಾಲ್ ಎಂದು ಗುರುತಿಸಲಾಗಿದೆ. ಆರೂರು ಮುಖ್ಯ ರಸ್ತೆಯನ್ನು ದಾಟಿ ಡಿವೈಡರ್ ಪಾಸ್ ಮಾಡುತ್ತಿದ್ದ ಸ್ಕೂಟರ್ಗೆ ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶೇಖರ್ ಕುಲಾಲ್ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ | ನಾಟಕ ನೋಡುವುದರಿಂದ ಯೋಚನಾ ಲಹರಿ ಬದಲಾವಣೆ : ಅರುಂಧತಿ ನಾಗ್
ಕಲಬುರಗಿ: ರಂಗಭೂಮಿಯ ಚಟುವಟಿಕೆಗಳು ಮುಖ್ಯ ನಗರಗಳಿಗೆ ಸೀಮಿತವಾಗಿರುವ ಇಂದಿನ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಳ್ಳುತ್ತಿರುವುದು ಹಾಗೂ ಅದಕ್ಕೆ ರಂಗಶಂಕರ ಸಹಯೋಗ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಮತ್ತು ರಂಗಶಂಕರ ಸಹಯೋಗದಲ್ಲಿ ಫೆ.21ರಿಂದ 28ರವರೆಗೆ ನಡೆಯಲಿರುವ ‘ಕಲಬುರಗಿ ನಾಟಕೋತ್ಸವ-26’ ಪೂರ್ವತಯಾರಿ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಂಗಭೂಮಿ ಬದುಕಿನ ಪ್ರತಿರೂಪವಾಗಿದ್ದು, ನಾಟಕ ವೀಕ್ಷಣೆ ಮನುಷ್ಯರ ಚಿಂತನಾ ಲಹರಿಯನ್ನು ಬದಲಿಸುತ್ತದೆ. ರಂಗಶಂಕರಕ್ಕೆ ಈಗ 21 ವರ್ಷ ಪೂರ್ಣಗೊಂಡಿದ್ದು, ತಾವು ಹವ್ಯಾಸಿ ರಂಗಕರ್ಮಿಯಾಗಿ 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ನಾಟಕೋತ್ಸವ ವೈಯಕ್ತಿಕವಾಗಿ ಮಹತ್ವದ್ದಾಗಿದೆ ಎಂದು ಹೇಳಿದರು. ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿರುವುದಾಗಿ ತಿಳಿಸಿದ ಅವರು, ಬೆಂಗಳೂರಿನ ಅತ್ಯುತ್ತಮ ಕಲಾತಂಡಗಳು ಹಾಗೂ ಹಿಂದಿ ನಾಟಕಗಳು ಸಹ ಇಲ್ಲಿ ಪ್ರದರ್ಶನಗೊಳ್ಳಲಿವೆ. ರಾಷ್ಟ್ರೀಯ ಮಟ್ಟದ ರಂಗಾನುಭವವನ್ನು ಇಲ್ಲಿನ ಜನರಿಗೆ ನೀಡುವುದು ಉದ್ದೇಶ ಎಂದು ತಿಳಿಸಿದರು. ತಮ್ಮ ರಂಗಭೂಮಿ ಪಯಣದ ಆರಂಭದಲ್ಲಿ ಶಂಕರ್ ನಾಗ್ ಅವರೊಂದಿಗೆ ಕಂಡ ಅನುಭವಗಳನ್ನು ಸ್ಮರಿಸಿ, ಮೊಬೈಲ್ ಮತ್ತು ಟಿವಿ ಬಿಟ್ಟು ಜನರು ನಾಟಕ ವೀಕ್ಷಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಕಲಬುರಗಿಯ ಸರ್ವತೋಮುಖ ಅಭಿವೃದ್ಧಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ. ಈ ನಾಟಕೋತ್ಸವದ ಜೊತೆಗೆ ಮುಂದಿನ ದಿನಗಳಲ್ಲಿ ಚಲನಚಿತ್ರೋತ್ಸವ ಮತ್ತು ಸಾಹಿತ್ಯೋತ್ಸವಗಳನ್ನೂ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ತಿಳಿಸಿದರು. ಪ್ರತಿದಿನ ಸಂಜೆ 7 ಗಂಟೆಗೆ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಅದಕ್ಕೂ ಮೊದಲು ಬೀದಿನಾಟಕ, ಜಾನಪದ ಗೀತೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮುಖ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ. ಒಂದು ನಾಟಕಕ್ಕೆ 100 ರೂ. ಟಿಕೆಟ್ ನಿಗದಿಪಡಿಸಲಾಗಿದ್ದು, ಆನ್ಲೈನ್ ಹಾಗೂ ಸ್ಥಳದಲ್ಲಿಯೇ ಲಭ್ಯವಿರುತ್ತದೆ. ಮಕ್ಕಳಿಗಾಗಿ ಕಲಬುರಗಿ ರಂಗಾಯಣದಲ್ಲಿ ವಿಶೇಷ ನಾಟಕಗಳನ್ನು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಂಗಶಂಕರದ ಹಿರಿಯ ಸದಸ್ಯ ಸುರೇಂದ್ರನಾಥ ಅವರು, ರಾಜ್ಯ ಹಾಗೂ ಇತರೆ ಭಾಷೆಗಳ ಅತ್ಯುತ್ತಮ ನಾಟಕಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳ ಕಾಲ ನಾಟಕೋತ್ಸವವನ್ನು ನಿರಂತರವಾಗಿ ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದ್ದು, ಕಲಬುರಗಿಯಲ್ಲಿ ರಂಗಸಂಸ್ಕೃತಿ ಬೆಳೆಸುವ ಉದ್ದೇಶವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರು ಹಾಗೂ ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಉಪಸ್ಥಿತರಿದ್ದರು.
ಇರಾನ್ ಮೇಲೆ ದಾಳಿಗೆ ತನ್ನ ಸೇನಾನೆಲೆ ಬಳಸಲು ಅಮೆರಿಕಕ್ಕೆ ಅನುಮತಿ ನಿರಾಕರಿಸಿದ ಬ್ರಿಟನ್
ಲಂಡನ್, ಫೆ.20: ಇರಾನ್ ಮೇಲಿನ ಯಾವುದೇ ಸಂಭಾವ್ಯ ದಾಳಿಗೆ ತನ್ನ ಪ್ರಮುಖ ಮಿಲಿಟರಿ ನೆಲೆಯನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡುವುದನ್ನು ಬ್ರಿಟನ್ ಸರಕಾರ ತಡೆಹಿಡಿದಿರುವುದಾಗಿ ವರದಿಯಾಗಿದೆ. ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಯುತ್ತಿರುವಂತೆಯೇ ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಬಲವನ್ನು ಹೆಚ್ಚಿಸುವ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ಮೇಲೆ ಒತ್ತಡ ತೀವ್ರಗೊಳಿಸುತ್ತಿದ್ದಾರೆ. ಇರಾನ್ ಮೇಲಿನ ಅಮೆರಿಕದ ಯಾವುದೇ ದಾಳಿಯಲ್ಲಿ ಹಿಂದೂ ಮಹಾಸಾಗರದಲ್ಲಿರುವ ಆಯಕಟ್ಟಿನ ಸೇನಾನೆಲೆ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಟ್ರಂಪ್ ಬುಧವಾರ ಹೇಳಿದ್ದರು. ಆದರೆ ಇಂತಹ ದಾಳಿಗೆ ತನ್ನ ಮಿಲಿಟರಿ ನೆಲೆಯನ್ನು ಬಳಸಲು ಬ್ರಿಟನ್ ಅನುಮತಿ ನೀಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ `ಇಂಡಿಯಾ ಟುಡೆ' ವರದಿ ಮಾಡಿದೆ. ನೈಋತ್ಯ ಇಂಗ್ಲೆಂಡಿನ ಸ್ವಿಂಡನ್ ನಗರದ ಬಳಿಯ ಫೇರ್ಫೋರ್ಡ್ ವಾಯುನೆಲೆಯ ಮೂಲಕ ಅಮೆರಿಕದ ದೀರ್ಘಶ್ರೇಣಿಯ ಬಾಂಬರ್ ವಿಮಾನಗಳ ಕಾರ್ಯಾಚರಣೆಗೆ ಬ್ರಿಟನ್ ಸರಕಾರ ಅನುಮತಿ ನಿರಾಕರಿಸಿದೆ. ಅನುಮತಿ ನೀಡಿದರೆ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ.
ಫೆ.22ರಂದು ಅಭಯಹಸ್ತ ಟ್ರಸ್ಟ್ನ 300ನೇ ರಕ್ತದಾನ ಶಿಬಿರ
ಉಡುಪಿ, ಫೆ.20: ಜಿಲ್ಲೆ ಕೊರೋನಾದಿಂದ ಬಸವಳಿದು ರೋಗಿಗಳ ಜೀವ ಉಳಿಸಲು ರಕ್ತದ ಕೊರತೆ ಉಂಟಾದಾಗ, ತುರ್ತು ರಕ್ತದಾನಕ್ಕಾಗಿ ವಾಟ್ಸಪ್ ಗ್ರೂಪ್ ಮೂಲಕ ಹುಟ್ಟಿಕೊಂಡ ಸಂಸ್ಥೆ ಅಭಯಹಸ್ತ ಬೆಳೆದು ಇದೀಗ 300ನೇ ರಕ್ತದಾನ ಶಿಬಿರಕ್ಕೆ ಮುಂದಾಗಿದೆ ಎಂದು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ ತಿಳಿಸಿದ್ದಾರೆ. ಅಭಯಹಸ್ತ ಟ್ರಸ್ಟ್ನ 300ನೇ ರಕ್ತದಾನ ಶಿಬಿರ ‘ಹೆಗ್ಗುರುತು-300’ ಕುರಿತು ಮಾಹಿತಿ ನೀಡಲು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಕ್ತದಾನ ಶಿಬಿರ ಫೆ.22ರಂದು ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಹಾಲ್ನಲ್ಲಿ ನಡೆಯಲಿದೆ ಎಂದರು. ಜಿಲ್ಲೆಯಲ್ಲಿ 1000ಕ್ಕೂ ಅಧಿಕ ರಕ್ತದಾನ ಶಿಬಿರ ನಡೆಸಿರುವ ಮೊಗವೀರ ಯುವ ವೇದಿಕೆಯನ್ನು ಹೊರತು ಪಡಿಸಿದರೆ ಅತ್ಯಧಿಕ ರಕ್ತದಾನ ಶಿಬಿರ ನಡೆಸಿದ ಹೆಗ್ಗಳಿಕೆ ನಮ್ಮ ಟ್ರಸ್ಟ್ಗಿದೆ ಎಂದ ಸತೀಶ್ ಸಾಲ್ಯಾನ್, ಈ ಬಾರಿ 200ರಿಂದ 30 ಯುನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು. ತುರ್ತು ಸಂದರ್ಭದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಮೂರ್ತರೂಪಕ್ಕೆ ಬಂದ ನಮ್ಮ ಟ್ರಸ್ಟ್, ಕೊರೋನಾದ ವಿಷಮ ಪರಿಸ್ಥಿತಿಯಲ್ಲಿ ಉಡುಪಿ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿದ್ದ ರಕ್ತದ ಕೊರತೆಯನ್ನು ನೀಗಿಸುವ ಪ್ರಯತ್ನ ನಡೆಸಿತ್ತು. 2020ರ ಮೇ 9ರಂದು ಮೊದಲ ರಕ್ತದಾನ ಶಿಬಿರ ನಡೆಸಿದ ಟ್ರಸ್ಟ್ ಕಳೆದ ಆರು ವರ್ಷಗಳ ಅವಧಿಯಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆಸಿದ ರಕ್ತದಾನ ಶಿಬಿರಗಳಲ್ಲಿ 40,000ಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸಿ ಸಾವಿರಾರು ಜೀವನಗಳನ್ನು ಉಳಿಸಿದ ಧನ್ಯತೆಯನ್ನು ಹೊಂದಿದೆ ಎಂದರು. ಟ್ರಸ್ಟ್ ಉಡುಪಿ ಮಾತಞ್ರವಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಹಾಗೂ ದುಬಾಯಿಗಳಲ್ಲೂ ರಕ್ತದಾನ ಶಿಬಿರ ಹಾಗೂ ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿವಿದ ಆಸ್ಪತ್ರೆಗಳಿಗೆ ತುರ್ತು ರಕ್ತವನ್ನು ಪೂರೈಕೆ ಮಾಡಿದೆ ಎಂದರು. ಒಂದು ವರ್ಷದ ಅವಧಿಯಲ್ಲಿ (2023) ನಾವು 8000 ಯುನಿಟ್ ರಕ್ತ ಸಂಗ್ರಹಿಸಿ ರಾಜ್ಯ ಆರೋಗ್ಯ ಇಲಾಖೆಯಿಂದ ಸನ್ಮಾನಿತರಾಗಿದ್ದೇವೆ ಎಂದು ಸಾಲ್ಯಾನ್ ತಿಳಿಸಿದರು. 300ನೇ ರಕ್ತದಾನ ಶಿಬಿರ ಬೆಳಗ್ಗೆ 8:30ರಿಂದ ಅಪರಾಹ್ನ 1:00ಗಂಟೆಯ ವರೆಗೆ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಲಿದ್ದಾರೆ. ಟ್ರಸ್ಟ್ನ ಪ್ರದಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಐಟಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ, ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್, ಕೆಎಂಸಿಯ ರಕ್ತ ಕೇಂದ್ರದ ಮುಖ್ಯಸ್ಥ ಡಾ.ಗಣೇಶ್ ಮೋಹನ್ ಹಾಗೂ ಇತರರು ಉಪಸ್ಥಿತರಿರಲಿದ್ದಾರೆ. 11:00ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಇತರರು ಪಾಲ್ಗೊಳ್ಳಲಿದ್ದು, ರಕ್ತದಾನಿಗಳಿಗೆ ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರಗಳನ್ನು ವಿತರಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಹರಿಪ್ರಸಾದ್, ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಶರತ್ ಕಾಂಚನ್ ಹಾನಗಲ್ಲು ಉಪಸ್ಥಿತರಿದ್ದರು.
ಫೆ.22ರಿಂದ ಸುಮನಸಾ ಕೊಡವೂರು ‘ರಂಗಹಬ್ಬ-14’ ನಾಟಕೋತ್ಸವ
ಉಡುಪಿ, ಫೆ.20: ಉಡುಪಿಯ ಪ್ರಮುಖ ರಂಗ ತಂಡಗಳಲ್ಲೊಂದಾದ ಸುಮನಸಾ ಕೊಡವೂರು ಇವರ 14ನೇ ವರ್ಷದ ನಾಟಕೋತ್ಸವ ‘ರಂಗ ಹಬ್ಬ-14’ ಇದೇ ಫೆ.22ರಿಂದ 28ರವರೆಗೆ ವೈವಿದ್ಯಮಯ ನಾಟಕಗಳ ಪ್ರಸ್ತುತಿ ಯೊಂದಿಗೆ ನಡೆಯಲಿದೆ ಎಂದು ಸುಮನಸಾದ ಗೌರವಾಧ್ಯಕ್ಷ ಎಂ. ಎಸ್.ಭಟ್ ತಿಳಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಉಡುಪಿ ನಗರಸಭೆ ಹಾಗೂ ಸಂಸ್ಕೃತಿ ನಿರ್ದೇಶನಾಲಯ ಹೊಸದಿಲ್ಲಿ ಇವರ ಸಹಯೋಗದೊಂದಿಗೆ ಈ ಬಾರಿಯ ನಾಟಕೋತ್ಸವ ನಡೆಯಲಿದೆ ಎಂದರು. ನಾಟಕೋತ್ಸವ ಎಂದಿನಂತೆ ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕ್ನ ಬಯಲು ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 6:30ಕ್ಕೆ ಪ್ರಾರಂಭಗೊಳ್ಳಲಿದೆ. ಈ ಬಾರಿಯ ರಂಗಹಬ್ಬವನ್ನು ತುಳು ರಂಗಭೂಮಿಯ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರರಂಗದ ಹಿರಿಯ ನಟ ಡಾ.ಪಿ. ಸಂಜೀವ ದಂಡೇಕೇರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಯಮಿ ಗಳಾದ ಮುಂಬಯಿಯ ಸೂರ್ಯಕಾಂತ್ ಜೆ.ಸುವರ್ಣ, ನಾಗರಾಜ್ ಸುವರ್ಣ, ರವೀಂದ್ರ ಕೆ.ಶೆಟ್ಟಿ, ರತ್ನಾಕರ್ ಅಮೀನ್, ಸಂತೋಷ್ ಉದ್ಯಾವರ ಉಪಸ್ಥಿತರಿರುವರು ಎಂದರು. ಪ್ರತಿದಿನದ ನಾಟಕದ ಸಂದರ್ಭದಲ್ಲಿ ಜಿಲ್ಲೆಯ ಓರ್ವ ರಂಗ ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೇ ಅದೃಷ್ಟದ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್ ಕೊಡುಗೆ ನೀಡಲಾಗುತ್ತದೆ. ಪ್ರತಿದಿನವೂ ವಿಭಿನ್ನ ಅಭಿವ್ಯಕ್ತಿಯ ನಾಟಕಗಳನ್ನು ಪ್ರಸ್ತುತ ಪಡಿಲಾಗುತ್ತದೆ ಎಂದು ಎಂ.ಎಸ್.ಭಟ್ ತಿಳಿಸಿದರು. ಫೆ.22ರಂದು ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಕನ್ನಡ ನಾಟಕ ‘ಸಾಹೇಬರು ಬರುತ್ತಾರೆ’ ಪ್ರದರ್ಶಿಸಲಿದೆ. ಹಿರಿಯ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ ಸನ್ಮಾನಗೊಳ್ಳಲಿದ್ದಾರೆ. 23ರಂದು ಸುಮನತಾ ಕೊಡವೂರು ತಂಡದ ಪ್ರಶಸ್ತಿ ವಿಜೇತ ತುಳು ನಾಟಕ ‘ಯೇಸ’ ಪ್ರದರ್ಶನಗೊಳ್ಳಲಿದೆ. ಸಾಧಕ ಕೃಷ್ಣಪ್ಪ ಮಲ್ಪೆ ಇವರು ಸನ್ಮಾನಗೊಳ್ಳಲಿದ್ದಾರೆ. ಫೆ.24ರಂದು ಶಿವಮೊಗ್ಗದ ಸಹ್ಯಾದ್ರಿ ಕಲಾತಂಡದ ಕನ್ನಡ ನಾಟಕ ‘ಜೋಕುಮಾರ ಸ್ವಾಮಿ’ ಪ್ರದರ್ಶನಗೊಳ್ಳಲಿದ್ದು, ರಮೇಶ್ ಕೆ.ಪುತ್ತೂರು ಸನ್ಮಾನಗೊಳ್ಳಲಿದ್ದಾರೆ. 25ರಂದು ಸುಮನಸಾ ಕೊಡವೂರು ಇವರಿಂದ ಕನ್ನಡ ಯಕ್ಷ ನಾಟಕ ‘ಮೈಂದ ದ್ವಿವಿದ ಕಾಳಗ’ ನಡೆಯಲಿದ್ದು, ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ ಅವರನ್ನು ಸನ್ಮಾನ ಸ್ವೀಕರಿಸಲಿದ್ದಾರೆ. ಫೆ.26ರಂದು ಪಾಂಡಿಚೇರಿಯ ಆದಿಶಕ್ತಿ ಥಿಯೇಟರ್ ‘ಎ ಉಮೆನ್ ಆರ್ ನಾಟ್ ಟು ಬಿ’ ಇಂಗ್ಲೀಷ್ ನಾಟಕ ಪ್ರಸ್ತುತ ಪಡಿಸಲಿದ್ದಾರೆ. ಅಂದು ಕುಸುಮಾ ಕಾಮತ್ ಅವರನ್ನು ಸನ್ಮಾನಿಸಲಾಗುತ್ತದೆ. 27ರಂದು ಸುಮನಸಾ ಕೊಡವೂರು ತಂಡದ ಪ್ರಶಸ್ತಿ ವಿಜೇತ ಕನ್ನಡ ನಾಟಕ ‘ಈದಿ’ ಪ್ರದರ್ಶನ ಗೊಳ್ಳಲಿದೆ. ರಮೇಶ್ ಕೆ.ಪಣಿಯಾಡಿ ಅವರನ್ನು ರಂಗಸಾಧಕರಾಗಿ ಅಭಿನಂದಿಸಲಾಗುವುದು ಎಂದರು. ಕೊನೆಯ ದಿನವಾದ ಫೆ.28ರಂದು ಮೈಸೂರಿನ ರಂಗವಲ್ಲಿ ತಂಡ ‘ಪರಮೇಶಿ ಪ್ರೇಮ ಪ್ರಸಂಗ’ ನಾಟಕವನ್ನು ಪ್ರದರ್ಶಿಸಲಿದೆ. ಅಂದು ಯಕ್ಷಗುರು ಯು.ದುಗ್ಗಪ್ಪ ಅವರ ನೆನಪಿನಲ್ಲಿ ನೀಡುವ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷ ಗಾನ ಗುರುಗಳಾದ ಬಿ.ಕೃಷ್ಣಸ್ವಾಮಿ ಜೋಷಿ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಭಟ್ ವಿವರಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಹರಿಯಪ್ಪ ಕೋಟ್ಯಾನ್ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಪ್ರಮೋದ್ ಮಧ್ವರಾಜ್, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಉದ್ಯಮಿ ಮಹಮ್ಮದ್ ಮೌಲಾ, ಜನಾರ್ದನ ಕೊಡವೂರು ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ವಿನಯಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್, ಸಂಚಾಲಕ ಭಾಸ್ಕರ್ ಪಾಲನ್ ಹಾಗೂ ನಿರ್ದೇಶಕ ದಿವಾಕರ್ ಕಟೀಲ್ ಉಪಸ್ಥಿತರಿದ್ದರು.
ಪಾಮ್ಬೀಚ್ ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರು ಮರುನಾಮಕರಣಕ್ಕೆ ನಿರ್ಧಾರ
ನ್ಯೂಯಾರ್ಕ್, ಫೆ.19: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೌರವಾರ್ಥವಾಗಿ ಫ್ಲೋರಿಡಾ ಸಂಸದರು ಪಾಮ್ಬೀಚ್ ವಿಮಾನ ನಿಲ್ದಾಣವನ್ನು `ಡೊನಾಲ್ಡ್ ಜೆ. ಟ್ರಂಪ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಮರುನಾಮಕರಣ ಮಾಡಲು ನಿರ್ಧರಿಸಿರುವಂತೆಯೇ ಈ ಹೆಸರನ್ನು ಟ್ರೇಡ್ಮಾರ್ಕ್ ಮಾಡಲು ಟ್ರಂಪ್ ಅವರ ವಕೀಲರು ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ. ಪಾಮ್ ಬೀಚ್ ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರು ಮರುನಾಮಕರಣ ಮಾಡುವ ಮಸೂದೆಯನ್ನು ಗುರುವಾರ ರಾಜ್ಯದ ಸಂಸತ್ತಿನಲ್ಲಿ ಅಂಗೀಕರಿಸಲಾಗಿದ್ದು ಮಸೂದೆಗೆ ಗವರ್ನರ್ ಸಹಿ ಹಾಕುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವುದನ್ನು ಫೆಡರಲ್ ವಾಯುಯಾನ ಪ್ರಾಧಿಕಾರ ಅನುಮೋದಿಸಬೇಕಿದೆ. ಈ ಮಧ್ಯೆ, ಅಮೆರಿಕದ ಪೇಟೆಂಟ್ ಮತ್ತು ಟ್ರೇಡ್ಮಾರ್ಕ್ ಕಚೇರಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ `ಡಿಜೆಟಿ(ಡೊನಾಲ್ಡ್ ಜೆ.ಟ್ರಂಪ್) ಎಂಬ ಹೆಸರನ್ನೂ ಟ್ರೇಡ್ಮಾರ್ಕ್ ಮಾಡಲು ಕೋರಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್ ಅವರ ಕುಟುಂಬದ ವ್ಯವಹಾರಗಳ ಪ್ರತಿನಿಧಿ `ಅತ್ಯಂತ ಗುರುತಿಸಲ್ಪಟ್ಟಿರುವ ಜಾಗತಿಕ ಬ್ರ್ಯಾಂಡ್(ಟ್ರಂಪ್)ನ ವಾಣಿಜ್ಯ ದುರ್ಬಳಕೆಯನ್ನು ತಪ್ಪಿಸುವ ಉದ್ದೇಶದ ಕ್ರಮ ಇದಾಗಿದೆ' ಎಂದು ಹೇಳಿದ್ದಾರೆ.
ಉಡುಪಿ| ಆಸ್ತಿ ತೆರಿಗೆ ವಂಚನೆ ಪ್ರಕರಣ: ಮಹಿಳೆ ಸಹಿತ ಇಬ್ಬರ ಬಂಧನ
ಉಡುಪಿ, ಫೆ.20: ಉಡುಪಿ ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಗರಸಭೆ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲಿನಿ ಹಾಗೂ ಬ್ಯಾಂಕ್ ಸಿಬ್ಬಂದಿ ಗಣೇಶ್ ಎಂದು ಗುರುತಿಸಲಾಗಿದೆ. ಆನಂದ ಸುವರ್ಣ ಎಂಬವರು ಕಲ್ಮಾಡಿಯಲ್ಲಿ ರುವ ತನ್ನ ಕಟ್ಟಡಕ್ಕೆ ಸಂಬಂಧಪಟ್ಟಂತೆ 2025ರ ಅ.16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು 34,730 ರೂ. ಹಣವನ್ನು ನಗರಸಭೆ ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿ ಕೊಂಡಿರುವ ಶಾಲಿನಿ ಎಂಬಾಕೆಗೆ ನೀಡಿದ್ದು, ಅದಕ್ಕೆ ಶಾಲಿನಿ ತೆರಿಗೆ ಸ್ವೀಕೃತಿ ಆದ ಬಗ್ಗೆ ಸ್ವೀಕೃತಿಯನ್ನು ನೀಡಿದ್ದರು. ಇತ್ತೀಚೆಗೆ ಆನಂದ ಸುವರ್ಣ ಆಸ್ತಿ ತೆರಿಗೆ ಪೋರ್ಟಲ್ನಲ್ಲಿ ತೆರಿಗೆ ಪಾವತಿಯಾದ ಬಗ್ಗೆ ತಪಾಸಣೆ ನಡೆಸಿದಾಗ ತೆರಿಗೆ ಪಾವತಿ ಆಗದೇ ಪೆಂಡಿಂಗ್ ಇರುವ ಬಗ್ಗೆ ತಿಳಿದು ಬಂತು. ಈ ವಿಚಾರವನ್ನು ಆನಂದ ಸುವರ್ಣ ಪೌರಾಯುಕ್ತರ ಗಮನಕ್ಕೆ ತಂದಿದ್ದು, ಅವರು ಕೂಡ ಪರಿಶೀಲಿಸಿದಾಗ ಪೆಂಡಿಂಗ್ ಇರುವುದು ಕಂಡು ಬಂದಿದೆ. ನಂತರ ಕಚೇರಿಯಲ್ಲಿ ಕೆಲಸವನ್ನು ಮಾಡಿಕೊಂಡಿರುವ ಶಾಲಿನಿ ಅವರನ್ನು ಕರೆದು ವಿಚಾರಿಸಿದಾಗ ಆಕೆ ತಪ್ಪು ಒಪ್ಪಿಕೊಂಡಿದ್ದು, 2026ರ ಫೆ.16ರಂದು ಆಕೆ ಆನಂದ ಸುವರ್ಣ ರವರ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ಒಟ್ಟು 35,213ರೂ. ಭರಿಸಿದ್ದಳು. ಶಾಲಿನಿ, ಆನಂದ ಸುವರ್ಣ ನೀಡಿದ ತೆರಿಗೆ ಹಣವನ್ನು ಸರಕಾರಕ್ಕೆ ಕಟ್ಟದೇ ಚಲನ್ನಲ್ಲಿ ಯೂನಿಯನ್ ಬ್ಯಾಂಕ್ನ ಮೊಹರನ್ನು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಇನ್ನಿತರರೊಂದಿಗೆ ಸೇರಿ ಸರಕಾರಕ್ಕೆ ವಂಚನೆ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲಾ ಒಂದೇ ಎತ್ತರ, ಹೆಲ್ಮೆಟ್ ತೆಗೆದರೆ ಅವರ ತಲೆ ಮೇಲೆ ಬಿಲಿಯಡ್ರ್ಸ್ ಆಡಬಹುದು: ಚೀನೀ ಸೈನಿಕರ ಬಗ್ಗೆ ಟ್ರಂಪ್ ಹೇಳಿಕೆ
ವಾಷಿಂಗ್ಟನ್, ಫೆ.20: ಗುರುವಾರ ವಾಷಿಂಗ್ಟನ್ನಲ್ಲಿ ನಡೆದ ಶಾಂತಿ ಮಂಡಳಿ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹಿಂದಿನ ಚೀನಾ ಭೇಟಿಯನ್ನು ನೆನಪಿಸಿಕೊಂಡು ಚೀನೀ ಅಧ್ಯಕ್ಷರು ತನ್ನನ್ನು ಅತ್ಯುತ್ತಮವಾಗಿ ಸತ್ಕರಿಸಿದ್ದರು ಎಂದು ಸ್ಮರಿಸಿಕೊಂಡರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಬಾರಿ ನಾನು ಚೀನಾಕ್ಕೆ ಹೋಗಿದ್ದಾಗ ಅಧ್ಯಕ್ಷ ಕ್ಸಿ ಜಿಂಪಿಂಗ್ ಉತ್ತಮವಾಗಿ ಸತ್ಕರಿಸಿದರು. ಯೋಧರಿಂದ ಗೌರವ ವಂದನೆ ಕಾರ್ಯಕ್ರಮ ಏರ್ಪಡಿಸಿದ್ದರು. ಇದು ಬಹಳ ಅದ್ಭುತವಾಗಿತ್ತು. ಒಂದೇ ಎತ್ತರದ ಅನೇಕ ಸೈನಿಕರನ್ನು ನಾನು ಅದುವರೆಗೆ ನೋಡಿರಲಿಲ್ಲ. ಅವರು ತಮ್ಮ ಹೆಲ್ಮೆಟ್ಗಳನ್ನು ಕೆಳಗಿಳಿಸಿದರೆ ಅವರ ತಲೆಯ ಮೇಲೆ ಬಿಲಿಯಡ್ರ್ಸ್ ಆಡಬಹುದು ಎಂದು ನಾನು ಹೇಳಿದೆ. ಇದು ಬಹಳ ಅದ್ಭುತ ವಿಷಯ' ಎಂದು ಗುರುವಾರದ ಸಭೆಯಲ್ಲಿ ಟ್ರಂಪ್ ಹೇಳಿದಾಗ ಸಭೆ ನಗೆಗಡಲಲ್ಲಿ ಮುಳುಗಿತ್ತು ಎಂದು ವರದಿಯಾಗಿದೆ. ಶಾಂತಿ ಮಂಡಳಿಯಲ್ಲಿ ಚೀನಾ ಮತ್ತು ರಶ್ಯ ಇರಬೇಕೆಂಬುದು ನಮ್ಮ ಆಶಯ. ಅವರನ್ನೂ ಆಹ್ವಾನಿಸಿದ್ದೇವೆ ಎಂದ ಟ್ರಂಪ್ `ಯುದ್ಧದಿಂದ ಜರ್ಝರಿತಗೊಂಡ ಗಾಝಾದಲ್ಲಿ ಶಾಂತಿ ಮರುಸ್ಥಾಪಿಸಲಾಗುವುದು. ನಾವು ಗಾಝಾಕ್ಕೆ ನೆರವಾಗಲಿದ್ದೇವೆ. ಅದನ್ನು ಸರಿಪಡಿಸುತ್ತೇವೆ ಮತ್ತು ಯಶಸ್ವಿಗೊಳಿಸುತ್ತೇವೆ. ಈ ಉಪಕ್ರಮಕ್ಕೆ ಅಮೆರಿಕ 10 ಶತಕೋಟಿ ಡಾಲರ್ ದೇಣಿಗೆ ನೀಡುತ್ತದೆ' ಎಂದು ಘೋಷಿಸಿದರು. ಗಾಝಾ ಮರು ನಿರ್ಮಾಣ ಉಪಕ್ರಮಗಳಿಗೆ ಖತರ್, ಸೌದಿ ಅರೆಬಿಯಾ ಮತ್ತು ಯುಎಇ ಸೇರಿದಂತೆ ಹಲವು ದೇಶಗಳು ತಲಾ 1 ಶತಕೋಟಿ ಡಾಲರ್ ದೇಣಿಗೆ ನೀಡಲು ಒಪ್ಪಿಕೊಂಡಿವೆ ಎಂದು ಶ್ವೇತಭವನ ಹೇಳಿದೆ.
ಕಾಂಗ್ರೆಸ್ ಸರಕಾರದ ಒಳಜಗಳದಿಂದ ಜನರು ಬೇಸತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ
ಲಿಂಗಸುಗೂರು: ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಹಾಗೂ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಸಚಿವರ ಹೇಳಿಕೆ ಆಕ್ಷೇಪಾರ್ಹವಾಗಿದೆ. “ರಾಜ್ಯದಲ್ಲಿ ಹಿಂದೆ ಭ್ರಷ್ಟಾಚಾರ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ” ಎಂಬ ಹೇಳಿಕೆಯ ಮೂಲಕ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದರು. ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಲ್ಲ. ಟಿಎಸ್ಪಿ ಹಾಗೂ ಎಸ್ಸಿ/ಎಸ್ಟಿ ಮೀಸಲು ನಿಧಿಗಳನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದೊಳಗಿನ ಕೆಲ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿ, ಒಳಜಗಳ ಮತ್ತು ಗುಂಪು ರಾಜಕೀಯ ಮುಂದುವರಿದರೆ ಜನರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯ
ಹೊಸದಿಲ್ಲಿ, ಫೆ.20: ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಫೆ.15ರಂದು ನಡೆದಿದ್ದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿದ್ದವು. ಪ್ರಸಕ್ತ ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಜಿಯೋ ಹಾಟ್ಸ್ಟಾರ್ನಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ. ಭಾರತದ ಅಧಿಕೃತ ಪ್ರಸಾರ ಹಾಗೂ ಡಿಜಿಟಲ್ ಪಾಲುದಾರ ಜಿಯೋಸ್ಟಾರ್ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೆ ಜಿಯೋ ಹಾಟ್ಸ್ಟಾರ್ನಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಬರೋಬ್ಬರಿ 163 ಮಿಲಿಯನ್(16.30 ಕೋಟಿ)ವೀಕ್ಷಣೆ ಕಂಡಿದೆ. ಇದು ಯಾವುದೇ ಟಿ-20 ವಿಶ್ವಕಪ್ ಪಂದ್ಯಕ್ಕಿಂತಲೂ ಅತಿ ಹೆಚ್ಚಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 2024ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಫೈನಲ್ನ ಡಿಜಿಟಲ್ ವೀಕ್ಷಕರ ಸಂಖ್ಯೆಯನ್ನು ಸಹ ಇದು ಮೀರಿಸಿದೆ. 2024ರ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳ ಮುಖಾಮುಖಿಗೆ ಹೋಲಿಸಿದರೆ, 2026ರ ಈ ಪಂದ್ಯವು ಶೇ.56ರಷ್ಟು ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ. ಮೊಬೈಲ್ನಲ್ಲಿ ಇದು ಯಾವುದೆ ಐಸಿಸಿ ಟಿ-20 ಲೀಗ್ ಹಂತದ ಪಂದ್ಯಕ್ಕಿಂತಲೂ ಅತಿ ಹೆಚ್ಚು ವೀಕ್ಷಣೆ ಕಂಡಿದೆ. ಇದು ಹಿಂದಿನ ಭಾರತ-ಪಾಕಿಸ್ತಾನ ಮುಖಾಮುಖಿಗಿಂತ 1.2ಪಟ್ಟು ಹೆಚ್ಚಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪೈಪೋಟಿಯು ಸಾಕಷ್ಟು ಜನಪ್ರಿಯತೆ ಹೊಂದಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಪಂದ್ಯವು ಭಾರೀ ಗಮನ ಸೆಳೆದಿದ್ದು, 20 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ. ಇದು ಹಿಂದಿನ ಟಿ-20 ವಿಶ್ವಕಪ್ ಪಂದ್ಯಕ್ಕಿಂತ ಶೇ.42ರಷ್ಟು ಹೆಚ್ಚಾಗಿದೆ. ಇತ್ತೀಚೆಗೆ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 61 ರನ್ಗಳ ಅಂತರದಿಂದ ಜಯ ಸಾಧಿಸುವ ಮೂಲಕ ಭಾರತ ತಂಡ ಪ್ರಾಬಲ್ಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 7 ವಿಕೆಟ್ಗಳ ನಷ್ಟಕ್ಕೆ 175 ರನ್ ಗಳಿಸಿತ್ತು. ಇಶಾನ್ ಕಿಶನ್ 77 ರನ್ ಗಳಿಸಿದ್ದರು. ಗೆಲ್ಲಲು 176 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡವು ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ಬೌಲಿಂಗ್ ದಾಳಿಗೆ ತತ್ತರಿಸಿ 114 ರನ್ಗೆ ಆಲೌಟಾಯಿತು. ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟು 9 ಬಾರಿ ಮುಖಾಮುಖಿಯಾಗಿದ್ದು, ಕೇವಲ ಒಂದು ಬಾರಿ ಮಾತ್ರ ಪಾಕಿಸ್ತಾನ ಪಂದ್ಯವನ್ನು ಗೆದ್ದಿತ್ತು. ಭಾರತ ಹಾಗೂ ಪಾಕಿಸ್ತಾನ ಪಂದ್ಯವು ಟೆಲಿವಿಷನ್ ರೇಟಿಂಗ್ನಲ್ಲಿ(ಟಿವಿಆರ್)ಶೇ.71ರಷ್ಟು ಏರಿಕೆ ಕಂಡಿದೆ. ಇದು 2021ರ ನಂತರ ಟಿವಿಯಲ್ಲಿ ಅತ್ಯಂತ ಹೆಚ್ಚು ರೇಟಿಂಗ್ ಪಡೆದ ಟಿ-20 ಪಂದ್ಯವಾಗಿದೆ. ‘‘ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಅಭೂತಪೂರ್ವ ವೀಕ್ಷಕರ ಸಂಖ್ಯೆ ಹಾಗೂ ಭಾಗವಹಿಸುವಿಕೆಯ ಸಂಖ್ಯೆಯು ಐಸಿಸಿ ಪುರುಷರ ಟಿ-20 ವಿಶ್ವಕಪ್ನ ಕುರಿತು ಅಭಿಮಾನಿಗಳು ಹೊಂದಿರುವ ಗೀಳಿಗೆ ಮತ್ತಷ್ಟು ಪುರಾವೆಯಾಗಿದೆ’’ಎಂದು ಜಿಯೋಸ್ಟಾರ್ನ ಕ್ರೀಡಾವಿಭಾಗದ ಮುಖ್ಯಸ್ಥ ಸಿದ್ದಾರ್ಥ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಅಫ್ಘಾನಿಸ್ತಾನಕ್ಕೆ ವಿದಾಯ ಕೋರಿದ ಕೋಚ್ ಜೋನಾಥನ್ ಟ್ರಾಟ್
ಹೊಸದಿಲ್ಲಿ, ಫೆ.20: ಅಫ್ಘಾನಿಸ್ತಾನ ಕ್ರಿಕೆಟ್ ತಂಡ 2026ರ ಟಿ-20 ವಿಶ್ವಕಪ್ನಲ್ಲಿ ಕೊನೆಯ ಗ್ರೂಪ್ ಹಂತದ ಪಂದ್ಯ ಆಡಿದ ನಂತರ ನಿರ್ಗಮನ ಕೋಚ್ ಜೋನಾಥನ್ ಟ್ರಾಟ್, ಅಫ್ಘಾನ್ ತಂಡದೊಂದಿಗೆ ಕಳೆದ ತನ್ನ ಅವಧಿಯನ್ನು ನೆನಪಿಸಿಕೊಂಡರು. ಭವಿಷ್ಯದ ಕೋಚಿಂಗ್ ಅವಕಾಶಗಳ ಬಗ್ಗೆ ತನ್ನ ಯೋಚನೆಗಳನ್ನು ಹಂಚಿಕೊಂಡರು. ಚೆನ್ನೈನಲ್ಲಿ ಗುರುವಾರ ಕೆನಡಾ ತಂಡದ ವಿರುದ್ಧ 82 ರನ್ಗಳ ಅಂತರದಿಂದ ಗೆದ್ದ ಹೊರತಾಗಿಯೂ ಅಫ್ಘಾನಿಸ್ತಾನ ತಂಡವು ಪಂದ್ಯಾವಳಿಯಿಂದ ನಿರ್ಗಮಿಸಿದೆ. ಟ್ರಾಟ್ 2022ರಲ್ಲಿ ಅಫ್ಘಾನ್ ತಂಡದ ಕೋಚ್ ಹುದ್ದೆ ವಹಿಸಿಕೊಂಡ ನಂತರ ಆಟಗಾರರೊಂದಿಗೆ ಮುಕ್ತವಾಗಿ ಬೆರೆತಿದ್ದರು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟ್ರಾಟ್ ತರಬೇತಿಯಡಿಯಲ್ಲಿ ಅಫ್ಘಾನಿಸ್ತಾನ ತಂಡ ಅತ್ಯಂತ ಮಹತ್ವದ ಸಾಧನೆಯನ್ನು ಮಾಡಿದೆ. 2024ರಲ್ಲಿ ಮೊದಲ ಬಾರಿ ಟಿ-20 ವಿಶ್ವಕಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದು ಹಾಗೂ ಅಗ್ರ ರ್ಯಾಂಕಿನ ತಂಡಗಳ ವಿರುದ್ದ ಐತಿಹಾಸಿಕ ಗೆಲುವು ಇದರಲ್ಲಿ ಸೇರಿದೆ. ಈ ಎಲ್ಲ ಮೈಲಿಗಲ್ಲುಗಳು ದೇಶದ ಜಾಗತಿಕ ಕ್ರಿಕೆಟ್ ಘನತೆಯನ್ನು ಬಲಗೊಳಿಸಿದೆ. ‘‘ಅಫ್ಘಾನಿಸ್ತಾನ ತಂಡಕ್ಕೆ ಕೋಚಿಂಗ್ ನೀಡುವುದು ನನ್ನ ಯೋಜನೆಯ ಭಾಗವಾಗಿರಲಿಲ್ಲ. ಗ್ರಹಾಂ ಥೋರ್ಪೆ ಕೋಚ್ ಆಗಬೇಕಾಗಿತ್ತು. ದುರದೃಷ್ಟವಶಾತ್ ಅವರು ಕೋಚ್ ಆಗಲಿಲ್ಲ. ಆಗ ನನಗೆ ಈ ಹುದ್ದೆಯನ್ನು ನೀಡಲಾಯಿತು. ಅದನ್ನು ನಾನು ಸಂತೋಷದಿಂದ ಸ್ವೀಕರಿಸಿದ್ದೆೆ. ಕೋಚ್ ಆಗಿ ನನ್ನ ಬೆಳವಣಿಗೆಯಲ್ಲಿ ಗ್ರಹಾಂ ಪ್ರಮುಖ ಪಾತ್ರವಹಿಸಿದ್ದಾರೆ. ಇಸಿಬಿಯಲ್ಲಿ ನನಗೆ ಅವಕಾಶ ನೀಡಿದ್ದರು. ಕೋಚ್ ಆಗಿ ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು’’ ಎಂದು ಟ್ರಾಟ್ ಹೇಳಿದರು.
’ಕುರಿಗಾಹಿ ಸಿಎಂ ಆಗಿದ್ದು ಹಲವರ ಕಣ್ಣು ಕೆಂಪಾಗಲು ಕಾರಣ’ : ಸಿಎಂ ಹೂಡಿದ ಜಾತಿ ಅಸ್ತ್ರದ ಗುರಿ ಯಾರತ್ತ?
CM Siddaramaiah on Social Justice : ಕುರಿ ಕಾಯುವವನು ರಾಜ್ಯದ ಮುಖ್ಯಮಂತ್ರಿ ಆಗಿ ಬಿಟ್ಟನಲ್ಲಾ ಎನ್ನುವ ಅಸಹನೆ, ಅಸೂಯೆ ಕೆಲವರಲ್ಲಿ ಕುದಿಯುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಯಾರನ್ನು ಟಾರ್ಗೆಟ್ ಮಾಡಿ ಈ ಹೇಳಿಕೆಯನ್ನು ನೀಡಿದ್ದಾರೆ ಎನ್ನುವ ಕುತೂಹಲವಂತೂ ಇದೆ. ಇದನ್ನು, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಟಾರ್ಗೆಟ್ ಮಾಡಿ ಸಿದ್ದರಾಮಯ್ಯ ಹೇಳಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಪಾಕಿಸ್ತಾನದ ಮಾಜಿ ಆಟಗಾರರ ನಿಂದನೆ: ಶಾದಾಬ್ ಖಾನ್ಗೆ ಛೀಮಾರಿ ಹಾಕಿದ ಪಿಸಿಬಿ
ಕರಾಚಿ, ಫೆ.20: ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ವೇಳೆ ಮಾಜಿ ಆಟಗಾರರನ್ನು ನಿಂದಿಸಿದ ಶಾದಾಬ್ ಖಾನ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ತನ್ನ ಆಯ್ಕೆಯನ್ನು ಟೀಕಿಸಿದ್ದ ಮಾಜಿ ಆಟಗಾರರ ಬಗ್ಗೆ ಆಲ್ರೌಂಡರ್ ಖಾನ್ ನೀಡಿದ್ದ ಹೇಳಿಕೆ ಬಗ್ಗೆ ಕ್ರಿಕೆಟ್ ಮಂಡಳಿ ಅಸಮಾಧಾನಗೊಂಡಿದೆ. ಕೊಲಂಬೊದಲ್ಲಿ ಬುಧವಾರ ನಡೆದ ನಮೀಬಿಯಾ ತಂಡ ವಿರುದ್ಧ ಪಾಕಿಸ್ತಾನ ತಂಡವು 102 ರನ್ಗಳ ಅಂತರದಿಂದ ಜಯಶಾಲಿಯಾಗಲು ಪ್ರಮುಖ ಪಾತ್ರವಹಿಸಿದ ನಂತರ ತನ್ನ ಟೀಕಾಕಾರರ ಕುರಿತು ಶಾದಾಬ್ ಖಾನ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ‘‘ಮಾಜಿ ಆಟಗಾರರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರು(ಮಾಜಿ ಆಟಗಾರರು)ಲೆಜೆಂಡ್ಗಳು, ಆದರೆ ಅವರು ನಾವು ಸಾಧಿಸಿದ್ದನ್ನು ಸಾಧಿಸಿಲ್ಲ. ನಾವು ವಿಶ್ವಕಪ್ನಲ್ಲಿ ಭಾರತವನ್ನು ಮಣಿಸಿದ್ದೆವು’’ ಎಂದು ನಮೀಬಿಯಾ ವಿರುದ್ದ 22 ಎಸೆತಗಳಲ್ಲಿ 36 ರನ್ ಹಾಗೂ 13 ರನ್ಗೆ ಮೂರು ವಿಕೆಟ್ಗಳನ್ನು ಪಡೆದಿದ್ದ ಶಾದಾಬ್ ಹೇಳಿದ್ದಾರೆ. ‘‘ಬುಧವಾರ ರಾತ್ರಿ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾದಾಬ್ ಮಿತಿಯನ್ನು ಮೀರಿದ್ದಾರೆ. ಮಾವ ಸಕ್ಲೇನ್ ಮುಷ್ತಾಕ್ ಸಹಿತ ಎಲ್ಲ ಮಾಜಿ ಆಟಗಾರರ ಬಗ್ಗೆ ಶಾದಾಬ್ಗೆ ಚೆನ್ನಾಗಿ ಗೊತ್ತಿದೆ. ಸಕ್ಲೇನ್ ಮುಷ್ತಾಕ್ ಗೌರವಾನ್ವಿತ ಹಾಗೂ ಪಾಕಿಸ್ತಾನದ ಶ್ರೇಷ್ಠ ಆಟಗಾರನಾಗಿದ್ದಾರೆ. ಶಾದಾಬ್ ಎಲ್ಲರಿಗೂ ಗೌರವ ನೀಡಬೇಕಾಗಿತ್ತು. ಇಂತಹ ಭಾಷೆ ಬಳಸಬಾರದಿತ್ತು’’ಎಂದು ಟೀಮ್ ಮ್ಯಾನೇಜರ್ ನವೀದ್ ಚೀಮಾ ಹೇಳಿಕೆಯನ್ನು ಉಲ್ಲೇಖಿಸಿ ‘ಟೆಲಿಕಾಮ್ ಏಶ್ಯ ಸ್ಪೋರ್ಟ್ಸ್’ ವರದಿ ಮಾಡಿದೆ. ಪಾಕಿಸ್ತಾನ ತಂಡವು ಶನಿವಾರ ಕೊಲಂಬೊದಲ್ಲಿ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಆನಂತರ ಫೆ.24ರಂದು ಪಲ್ಲೆಕೆಲೆಯಲ್ಲಿ ಇಂಗ್ಲೆಂಡ್ ತಂಡ ಹಾಗೂ ನಾಲ್ಕು ದಿನಗಳ ನಂತರ ಅದೇ ಮೈದಾನದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಸೆಣಸಾಡಲಿದೆ.
Bhadravathi | ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಪೊಲೀಸ್ ಸಿಬ್ಬಂದಿಯೇ ಕಾರಣ; ಆರೋಪ
AIಯಿಂದ ಉದ್ಯೋಗಗಳ ಮೇಲೆ ಮಾರಕ ಪರಿಣಾಮ: ಐಎಮ್ಎಫ್ ಆಡಳಿತ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜಿಯೇವ ಎಚ್ಚರಿಕೆ
ಹೊಸದಿಲ್ಲಿ, ಫೆ.20: ಕೃತಕ ಬುದ್ಧಿಮತ್ತೆಯು ಜಾಗತಿಕ ಬೆಳವಣಿಗೆಯನ್ನು 0.8 ಶೇಕಡದಷ್ಟು ಹೆಚ್ಚಿಸಬಹುದು ಹಾಗೂ ವಿಕಸಿತ ಭಾರತ ಗುರಿಯನ್ನು ತಲುಪಲು ಭಾರತಕ್ಕೆ ಸಹಾಯ ಮಾಡಬಹುದು ಎಂದು ಅಂತರ್ರಾಷ್ಟ್ರೀಯ ಹಣಕಾಸು ನಿಧಿ (ಐಎಮ್ಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜಿಯೇವ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅದೇ ವೇಳೆ, ಉದ್ಯೋಗ ಕಡಿತ ಮತ್ತು ಆರ್ಥಿಕ ಅಸ್ಥಿರತೆಯ ದೊಡ್ಡ ಅಪಾಯವನ್ನೂ ಅದು ಒಡ್ಡಿದೆ ಎಂದು ಅವರು ಹೇಳಿದ್ದಾರೆ. ಎಐ ಇಂಪ್ಯಾಕ್ಟ್ ಶೃಂಗ ಸಭೆಯಲ್ಲಿ ಮಾತನಾಡಿದ ಕ್ರಿಸ್ಟಲೀನಾ ಜಾರ್ಜಿಯೇವ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು, ಅದರ ನಕಾರಾತ್ಮಕ ಪರಿಣಾಮಗಳಿಗೆ ‘‘ಸಿಹಿ ಲೇಪನ’’ ಮಾಡುವುದರ ವಿರುದ್ಧ ಎಚ್ಚರಿಕೆಯನ್ನೂ ನೀಡಿದರು. ಈ ತಂತ್ರಜ್ಞಾನವನ್ನು ‘‘ಒಳಿತಿನ ಸಾಧನ ಅಥವಾ ಕೆಡುಕಿನ ಸಾಧನ’’ವಾಗಿ ನಿರ್ಮಿಸಿ ನಿಭಾಯಿಸುವ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ‘‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜಾಗತಿಕ ಬೆಳವಣಿಗೆಯನ್ನು ಬಹುತೇಕ ಒಂದು ಶೇಕಡದಷ್ಟು ಹೆಚ್ಚಿಸಬಹುದು. ಅಂದರೆ ಸುಮಾರು 0.8 ಶೇಕಡದಷ್ಟು. ಅಂದರೆ ಜಗತ್ತು ಕೋವಿಡ್ ಸಾಂಕ್ರಾಮಿಕಕ್ಕಿಂತ ಮೊದಲು ಬೆಳೆದಿರುವುದಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತದೆ. ಇದು ಹೆಚ್ಚಿನ ಅವಕಾಶಗಳು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಭಾರತವು ಈ ವೇಗದಲ್ಲಿ ಬೆಳೆಯುವುದನ್ನು ನಾವು ನಿರೀಕ್ಷಿಸುತ್ತೇವೆ. ಆಗ ಭಾರತದ ‘ವಿಕಸಿತ ಭಾರತ’ ಕನಸು ಸಾಧ್ಯವಾಗುತ್ತದೆ. ‘‘ಎಐ ಬಗ್ಗೆ ನಾನು ತುಂಬಾ ಆಶಾವಾದಿಯಾಗಿದ್ದೇನೆ. ಆದರೆ, ಅದು ಗಮನಾರ್ಹ ಪ್ರಮಾಣದಲ್ಲಿ ಅಪಾಯವನ್ನು ತರುತ್ತದೆ ಎನ್ನುವುದೂ ನನಗೆ ಗೊತ್ತು’’ ಎಂದರು. ‘‘ಮೊದಲನೆಯದಾಗಿ, ದೇಶಗಳು ಮತ್ತು ಜಗತ್ತಿನ ನ್ಯಾಯಪರತೆಯನ್ನು ಕಡಿಮೆಗೊಳಿಸುವ ಅಪಾಯದೊಂದಿಗೆ ಅದು ಬರುತ್ತಿದೆ. ಯಾಕೆಂದರೆ, ಕೆಲವೇ ದೇಶಗಳಲ್ಲಿ ಈ ತಂತ್ರಜ್ಞಾನ ಇರುತ್ತದೆ. ಈ ತಂತ್ರಜ್ಞಾನ ಇರದ ದೇಶಗಳು ಆರ್ಥಿಕ ಅಸ್ಥಿರತೆಯ ಅಪಾಯವನ್ನು ಎದುರಿಸುತ್ತಿವೆ. ಯಾಕೆಂದರೆ, ಕೃತಕ ಬುದ್ಧಿಮತ್ತೆಯು ಆರ್ಥಿಕ ಮಾರುಕಟ್ಟೆಗಳಲ್ಲಿ ದಾಂಧಲೆ ನಡೆಸಬಹುದು’’ ಎಂದು ಕ್ರಿಸ್ಟೀನಾ ಹೇಳಿದರು. 40-60 ಶೇಕಡಾ ಉದ್ಯೋಗ ನಾಶ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಉದ್ಯೋಗಗಳನ್ನು ನಾಶಪಡಿಸುವ ಅಪಾಯದೊಂದಿಗೆ ಬರುತ್ತಿದೆ ಹಾಗೂ ನೂತನ ಕೃತಕ ಬುದ್ಧಿಮತ್ತೆ ಆರ್ಥಿಕತೆಯಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಜನರಿಗೆ ಹೇಗೆ ಸಹಾಯ ಮಾಡುವುದು ಎನ್ನುವ ಯೋಚನೆ ಇಲ್ಲಿಲ್ಲ ಎಂದು ಕ್ರಿಸ್ಟಲೀನಾ ಹೇಳಿದರು. ‘‘ಈ ಅಪಾಯವು ಅಗಾಧವಾಗಿದೆ ಎನ್ನುವುದನ್ನು ನಾವು ಲೆಕ್ಕಹಾಕಿದ್ದೇವೆ. ಉದ್ಯೋಗ ಮಾರುಕಟ್ಟೆಯ ಮೇಲೆ ಕೃತಕ ಬುದ್ಧಿಮತ್ತೆಯು ಸುನಾಮಿಯಂತೆ ಎರಗುತ್ತದೆ ಎನ್ನುವುದನ್ನು ನಾವು ಬಲ್ಲೆವು. ಜಾಗತಿಕವಾಗಿ, 40 ಶೇಕಡ ಉದ್ಯೋಗಗಳ ಮೇಲೆ ಎಐ ಪರಿಣಾಮ ಬೀರುತ್ತದೆ. ಕೆಲವು ಉದ್ಯೋಗಗಳು ಸುಲಲಿತಗೊಳ್ಳುತ್ತವೆ ಮತ್ತು ಇತರ ಉದ್ಯೋಗಗಳು ಕಳೆದುಹೋಗುತ್ತವೆ. ಅಭಿವೃದ್ಧಿಶೀಲ ದೇಶಗಳಲ್ಲಿ 40 ಶೇಕಡ ಮತ್ತು ಅಭಿವೃದ್ಧಿಹೊಂದಿದ ದೇಶಗಳಲ್ಲಿ 60 ಶೇಕಡ ಉದ್ಯೋಗಗಳು ನಾಶವಾಗಲಿವೆ. ಇದು ತುಂಬಾ ಕಡಿಮೆ ಅವಧಿಯಲ್ಲಿ ಸಂಭವಿಸುತ್ತದೆ’’ ಎಂದು ಕ್ರಿಸ್ಟೀನಾ ಹೇಳಿದರು.
Raichur | ಮಾನ್ವಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಭೇದನೆ: ಎಎಸ್ಐ ಹುಸೇನ್ ಸಾಬ್ ಸೇರಿ ಪೊಲೀಸರಿಗೆ ಎಸ್ಪಿ ಪ್ರಶಂಸೆ
ರಾಯಚೂರು: ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ, ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿದ ಹಿನ್ನೆಲೆಯಲ್ಲಿ ಎಎಸ್ಐ ಹುಸೇನ್ ಸಾಬ್ ಸೇರಿ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಅಭಿನಂದನಾ ಪತ್ರ ನೀಡಿ ಪ್ರಶಂಸಿಸಿದ್ದಾರೆ. ಇತ್ತಿಚೆಗೆ ನಡೆದಿದ್ದ ಕೊಲೆ ಪ್ರಕರಣಗಳ ಆರೋಪಿಗಳ ತ್ವರಿತಗತಿಯಲ್ಲಿ ಪತ್ತೆ, ಕಾಣೆಯಾದ ಪ್ರಕರಣಗಳಲ್ಲಿಯೂ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು. ಡಕಾಯಿತ ಪ್ರಕರಣದಲ್ಲಿ ಆರೋಪಿಗಳ ನಿಖರ ಮಾಹಿತಿ ಸಂಗ್ರಹಿಸಿ ಕಿಯಾ ಕಾರು, 2 ಮೊಬೈಲ್ ಗಳು ಹಾಗೂ 23,200 ರೂ. ನಗದು ಹಾಗೂ ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸರ ಸಮಯಪ್ರಜ್ಞೆ, ಸೇವಾ ಅನುಭವ ಮತ್ತು ಸಾರ್ವಜನಿಕ ಭದ್ರತೆಗೆ ನೀಡಿದ ಕೊಡುಗೆಯನ್ನು ಮೆಚ್ಚಿ ಎಸ್ಪಿ ಅವರು ಈ ಗೌರವ ಸಲ್ಲಿಸಿದ್ದಾರೆ.
ಆರೋಗ್ಯ ಇಲಾಖೆಯಿಂದ ಮಹತ್ವದ ಹೆಜ್ಜೆ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಸಿಗಲಿದೆ ಚಾಲನೆ
ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಚಾಲನೆ ಸಿಗಲಿದೆ. ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ ಆರೋಗ್ಯ ಇಲಾಖೆ ಇತಿಹಾಸದಲ್ಲಿ ಈ ಹಿಂದೆ ಎಂದೂ ಕಾಣದ ವೇಗದಲ್ಲಿ ನೇಮಕಾತಿ ಆದೇಶವನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತಾಗಿ ಮಾತನಾಡಿದ ಅವರು ವಿವರಗಳನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಗಳು ಸ್ಥಗಿತ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು : ಕೃಷ್ಣ ಡಯಾಗ್ನಸ್ಟಿಕ್ಸ್ ಕಂಪೆನಿ ವತಿಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ಎಂಆರ್ಐ ಹಾಗೂ ಸಿಟಿ ಸ್ಕ್ಯಾನ್ಗಳು ಸ್ಥಗಿತಗೊಂಡಿರುವ ವಿಚಾರದಲ್ಲಿ ವಿರೋಧ ಪಕ್ಷದವರು ಸತ್ಯಕ್ಕೆ ದೂರವಾದ ಆಪಾದನೆಗಳನ್ನು ಮಾಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಹಣ ಕೊಟ್ಟಿಲ್ಲ ಎಂದು ಆ ಕಂಪನಿಯವರು ಪತ್ರ ಬರೆದಿದ್ದಕ್ಕೆ, ವಿಪಕ್ಷಗಳು ಇದನ್ನ ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ ಎಂದು ಹೇಳಿದರು. ಸರಕಾರಕ್ಕೆ ಹಣಕಾಸಿನ ಕೊರತೆ ಇದೆ, ಆರೋಗ್ಯ ಇಲಾಖೆಗೆ ಪಾಶ್ರ್ವವಾಯು ಆಗಿದೆ ಹೀಗೆ ಏನೇನೋ ಟೀಕೆಗಳನ್ನು ಮಾಡುತ್ತಿದ್ದಾರೆ. ನಾನು ಅವರ ಹಾಗೆ ಟೀಕೆಗಳನ್ನು ಮಾಡಲು ಹೋಗುವುದಿಲ್ಲ. ಕೆಲಸ ಮಾಡುವುದು ನಮ್ಮ ಕರ್ತವ್ಯ. ಜನರಿಗೆ ಸಮಸ್ಯೆ ಆಗಬಾರದು ಎಂಬುದು ನಮ್ಮ ಉದ್ದೇಶ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಖಾಸಗಿ ಕಂಪೆನಿ ಬರೆದ ಪತ್ರಕ್ಕೆ ಇವರ ವಿಪಕ್ಷಗಳ ಪ್ರತಿಕ್ರಿಯೆ ನೋಡಿದರೆ ಏನೆನ್ನಬೇಕು ಎಂಬುದೇ ಅರ್ಥವಾಗುವುದಿಲ್ಲ. ಮೊದಲು ಇದಕ್ಕೊಂದು ವ್ಯವಸ್ಥೆಯೆ ಇರಲಿಲ್ಲ. ಕಂಪೆನಿಯವರು ಹೇಳಿದ್ದೆ ಲೆಕ್ಕ. ನಾವು ಇದಕ್ಕೊಂದು ವ್ಯವಸ್ಥೆ, ನಿಯಮವನ್ನು ತಂದ ನಂತರ ಸ್ಕ್ಯಾನಿಂಗ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಾ ಬಂತು. ಇದು ಯಾವುದನ್ನೂ ತಿಳಿಯದೆ ವಿಪಕ್ಷಗಳು ಕಂಪೆನಿಯ ಪರವಾಗಿ ವಕಾಲುತ್ತು ವಹಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಕಂಪೆನಿಯಿಂದ ಸರಕಾರಕ್ಕೆ ಸಾಕಷ್ಟು ನಷ್ಟವಾಗಿದೆ ಎಂಬುದನ್ನು ವಿಪಕ್ಷಗಳು ಅರ್ಥೈಸಿಕೊಂಡಿಲ್ಲ. ಕಂಪೆನಿಯವರು ಏನೆ ಹೇಳಲಿ. ನಮ್ಮ ಉದ್ದೇಶ ಜನರಿಗೆ ಸಮಸ್ಯೆ ಆಗಬಾರದು. ಸರಕಾರದ ಹಣ ದುರುಪಯೋಗ ಆಗಲು ಅವಕಾಶ ನೀಡಬಾರದು. 2019 ರಿಂದ ಹಿಂಬಾಕಿ ಹಣ 143 ಕೋಟಿ ರೂ.ಕೊಡಿ ಎಂದು ಕಂಪೆನಿಯವರು ಕೇಳಿದ್ದಾರೆ. ನಾವು ಅಷ್ಟು ಕೊಡೋಕೆ ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. 2019 ರಿಂದ ಪ್ರತಿ ವರ್ಷ ಶೇ.5 ಹೆಚ್ಚುವರಿ ಹಣ ನೀಡಬೇಕು ಎಂದು ಕೇಳಿದ್ದಾರೆ. ಅದನ್ನು ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ರಾಜ್ಯದ 13 ಆಸ್ಪತ್ರೆಗಳಲ್ಲಿ ಮಾತ್ರ ಇದರಿಂದ ಸಮಸ್ಯೆ ಆಗಿದೆ. ಹೆಚ್ಚಿನ ಆಸ್ಪತ್ರೆಗಳಿಗೆ ನಾವು ಪರ್ಯಾಯ ವ್ಯವಸ್ಥೆ ತಕ್ಷಣ ಮಾಡಿದ್ದೇವೆ. ಉಳಿದ ಆಸ್ಪತ್ರೆಗಳಲ್ಲಿ ನಾಳೆ ಹೊತ್ತಿಗೆ ಪರ್ಯಾಯ ವ್ಯವಸ್ಥೆ ಆಗುತ್ತದೆ. ಇನ್ನು ಮುಂದೆ ಈ ಕಂಪೆನಿ ಜೊತೆ ಒಡಂಬಡಿಕೆ ಆದರೂ ಸ್ಥಳೀಯ ಮಟ್ಟದ ಆಸ್ಪತ್ರೆಗಳ ಜೊತೆಗೂ ಸಹಭಾಗಿತ್ವ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಹಳೆಯ ಸ್ಕ್ಯಾನ್ಗಳ ದೃಢೀಕರಣ ಮಾಡಿದರೆ ಮಾತ್ರ ನಾವು ದುಡ್ಡು ಕೊಡುತ್ತೇವೆ ಎಂದು ಹೇಳಿದ್ದೇವೆ. ಎಳು ಸರಕಾರಿ ಆಸ್ಪತ್ರೆಗಳಲ್ಲಿ ಎಂಆರ್ ಐ ಹಾಗೂ ಮೂರು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ಗಳಿಗೆ ಟೆಂಡರ್ ಕರೆಯಲಾಗಿದೆ. ಇಲಾಖೆ ವತಿಯಿಂದ ಸದ್ಯದಲ್ಲೇ ಯಂತ್ರ ಪೂರೈಕೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಇದಕ್ಕೊಂದು ನಿಯಮ ಮಾಡಿದ್ದರಿಂದ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 200 ಕೋಟಿ ರೂ.ಗಳನ್ನು ಎಂಆರ್ ಐ, ಸಿಟಿ ಸ್ಕ್ಯಾನ್ಗಳಲ್ಲಿ ಉಳಿಸಿದ್ದೇನೆ. ಸರಕಾರದ ಹಣ ಉಳಿಸಿದ್ದಕ್ಕೆ ವಿರೋಧ ಪಕ್ಷದವರು ನಮಗೆ ಧನ್ಯವಾದ ಹೇಳಬೇಕು. ವೃಥಾ ಟೀಕೆ ಮಾಡಬಾರದು ಎಂದು ಅವರು ಹೇಳಿದರು. ಕೇಂದ್ರದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್ಎಚ್ಎಂ)ದಡಿ ಸರಿಯಾದ ಸಮಯಕ್ಕೆ ಅನುದಾನ ಬರದಿದ್ದರೂ ಆರೋಗ್ಯ ಇಲಾಖೆ ಎಲ್ಲ ಯೋಜನೆಗಳಿಗೂ ಹಣ ನೀಡುತ್ತಿದೆ. ನಮ್ಮ ಇಲಾಖೆಗೆಪಾರ್ಶ್ವವಾಯು ಆಗಿಲ್ಲ. ಆರೋಗ್ಯದಿಂದಲೆ ಇದೆ ಇದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ರಾಜ್ಯ ಸರಕಾರವು ಯುವಜನತೆಗೆ ನೀಡಿದ್ದ ‘ಉದ್ಯೋಗ ಗ್ಯಾರಂಟಿ’ಯನ್ನು ‘ಅಭಯ ಹಸ್ತ’ದ ಮೂಲಕ ಸಾಕಾರಗೊಳಿಸಿದೆ. ಕಲ್ಯಾಣ ಕರ್ನಾಟಕ ಭಾಗದ 320 ಅಭ್ಯರ್ಥಿಗಳಿಗೆ ಹಾಗೂ ರಾಜ್ಯದ ಇತರ ವೃಂದಗಳ 650 ವಿವಿಧ ಅರೆ ವೈದ್ಯಕೀಯ ಖಾಯಂ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆ.21ರಂದು ಬೆಳಗ್ಗೆ 11 ಗಂಟೆಗೆ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಲಿದ್ದಾರೆ. -ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
Yadgiri | ದ್ವಿತೀಯ ಪಿಯುಸಿ ಪರೀಕ್ಷೆ-1; ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ; ಡಿಸಿ ಹರ್ಷಲ್ ಭೋಯರ್
ಯಾದಗಿರಿ: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ನ್ನು ನಕಲುಮುಕ್ತ ಹಾಗೂ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯುವ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 20 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಶಹಾಪೂರದಲ್ಲಿ 5, ಸುರಪುರದಲ್ಲಿ 4, ಯಾದಗಿರಿಯಲ್ಲಿ 7, ಗುರುಮಿಠಕಲ್ನಲ್ಲಿ 2, ಕೆಂಭಾವಿಯಲ್ಲಿ 1 ಹಾಗೂ ಹುಣಸಗಿಯಲ್ಲಿ 1 ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 11,760 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 105 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರವೇಶ ಪತ್ರಗಳನ್ನು ಆನ್ಲೈನ್ ಮೂಲಕ ಕಾಲೇಜುಗಳಿಗೆ ವಿತರಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸಂಪೂರ್ಣ ಜವಾಬ್ದಾರಿ ಹೊತ್ತು, ನಿಯಮಾನುಸಾರ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಬೇಕು. ಸೂಕ್ಷ್ಮ ಕೇಂದ್ರಗಳಲ್ಲಿ ವಿಶೇಷ ಕಟ್ಟೆಚ್ಚರ ವಹಿಸಬೇಕು. ನಕಲು ಅಥವಾ ಸಾಮೂಹಿಕ ನಕಲು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ವದಂತಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬಾರದು. ಇಂತಹ ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆಗಳ ಭದ್ರತೆ ಕುರಿತು ಸಂಬಂಧಿತ ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು. ಪರೀಕ್ಷೆ ಸಿಸಿಟಿವಿ ಕಣ್ಗಾವಲು ಮತ್ತು ವೆಬ್ಕಾಸ್ಟಿಂಗ್ ಮೂಲಕ ನಡೆಸಲಾಗುತ್ತದೆ. ಪರೀಕ್ಷಾ ಕೊಠಡಿಗಳೊಳಗೆ ಮೊಬೈಲ್, ಪೆನ್ ಡ್ರೈವ್, ಇಯರ್ಫೋನ್, ಮೈಕ್ರೋಫೋನ್, ಬ್ಲೂಟೂತ್ ಸಾಧನ, ಕೈಗಡಿಯಾರ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಮೊಬೈಲ್ ಬಳಕೆ ಮತ್ತು ಫೋಟೋಗ್ರಫಿಗೆ ಸಂಪೂರ್ಣ ನಿಷೇಧವಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ನಿರಂತರ ವಿದ್ಯುತ್, ಸಿಸಿಟಿವಿ ಹಾಗೂ ವಾಹನ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸೂಚಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಕೆ. ಶಂಕರ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಉಪನಿರ್ದೇಶಕ ಪಂಡಿತರಾವ್ ಪವಾರ್ ಸ್ವಾಗತಿಸಿದರು.
ChatGPT, Geminiಗೆ ಸೆಡ್ಡು ಹೊಡೆದ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪೆನಿಯ Sarvam AIಯ ವಿಶೇಷತೆಗಳೇನು?
ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಬೆಂಗಳೂರಿನ ನವೋದ್ಯಮ ‘Sarvam AI’ ಜಾಗತಿಕ ತಂತ್ರಜ್ಞಾನ ದಿಗ್ಗಜರ ಗಮನ ಸೆಳೆದಿದೆ. 2026ರ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸರ್ವಂ AIಯ ಕೆಲಸವನ್ನು ಶ್ಲಾಘಿಸಿದರು. “ನಾನು ಪ್ರತೀ ಬಾರಿ ಭಾರತಕ್ಕೆ ಭೇಟಿ ನೀಡಿದಾಗಲೂ ಸಾಫ್ಟ್ವೇರ್ ಡೆವಲಪರ್ ಗಳ ಶಕ್ತಿಗೆ ಬೆರಗಾಗುತ್ತೇನೆ. ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿದೆ. ಸರ್ವಂ ಸ್ಥಳೀಯ AI ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಾಡಿದ ಕೆಲಸದಲ್ಲಿ ನನಗೆ ಯಾವುದೇ ಅಡೆತಡೆಗಳು ಕಾಣುತ್ತಿಲ್ಲ. ಅದು ತುಂಬಾ ಉತ್ತಮ ಸ್ಥಾನದಲ್ಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಪಿಚೈ ಹೇಳಿದ್ದಾರೆ. ►ಭಾರತದ ಸರ್ವಂ AI 2023ರ ಆಗಸ್ಟ್ನಲ್ಲಿ ವಿವೇಕ್ ರಾಘವನ್ ಮತ್ತು ಪ್ರತ್ಯುಷ್ ಕುಮಾರ್ ಅವರು ಸರ್ವಂ ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಿದರು. ತನ್ನ ಸರ್ವಂ AI ಮಾದರಿಯು ಚಿತ್ರ ಶೀರ್ಷಿಕೆ, ದೃಶ್ಯ ಪಠ್ಯ ಗುರುತಿಸುವಿಕೆ, ಚಾರ್ಟ್ ವ್ಯಾಖ್ಯಾನ ಮತ್ತು ಸಂಕೀರ್ಣ ಟೇಬಲ್ ಪಾರ್ಸಿಂಗ್ ಸೇರಿದಂತೆ ಹಲವಾರು ದೃಶ್ಯ ತಿಳುವಳಿಕೆ ಕಾರ್ಯಗಳಿಗೆ ಸಮರ್ಥವಾಗಿದೆ ಎಂದು ಸರ್ವಂ ತನ್ನ ಬ್ಲಾಗ್ ಪೋಸ್ಟ್ನಲ್ಲಿ ವಿವರಿಸಿದೆ. ವಿವೇಕ್ ರಾಘವನ್ ಅವರು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಅನುಭವ ಹೊಂದಿದ್ದಾರೆ. ಪ್ರತ್ಯುಷ್ ಕುಮಾರ್ ಭಾರತೀಯ ಭಾಷೆಗಳಲ್ಲಿ ದೇಶದ ಓಪನ್ ಸೋರ್ಸ್ AI ಪ್ರಯತ್ನಗಳನ್ನು ಮುನ್ನಡೆಸಿದ್ದಾರೆ ಎಂದು ವೆಬ್ಸೈಟ್ ತಿಳಿಸಿದೆ. ಭೌತಿಕ ದಾಖಲೆಗಳು, ಸ್ಕ್ಯಾನ್ ಮಾಡಿದ ಆರ್ಕೈವ್ಗಳು ಮತ್ತು ಐತಿಹಾಸಿಕ ಸಂಗ್ರಹಗಳಲ್ಲಿ ಹುದುಗಿರುವ ವಿಷಯಗಳನ್ನು ಅನ್ಲಾಕ್ ಮಾಡುವುದು ಕಂಪೆನಿಯ ಗುರಿಗಳಲ್ಲಿ ಒಂದಾಗಿದೆ. ಸರ್ವಂ AI, ChatGPT ಮತ್ತು Gemini ನಂತಹ ಜಾಗತಿಕ AI ಮಾದರಿಗಳಲ್ಲಿನ ಪ್ರಮುಖ ದೋಷವನ್ನು ಪರಿಹರಿಸಲು ಮುಂದಾಗಿದೆ. ChatGPT ಅಥವಾ Gemini ಸಾಮಾನ್ಯವಾಗಿ ಭಾರತೀಯ ಭಾಷೆಗಳನ್ನು ಎರಡನೇ ದರ್ಜೆಯಲ್ಲಿ ಪರಿಗಣಿಸುವುದರಿಂದ ಪ್ರಾದೇಶಿಕ ಲಿಪಿಗಳಲ್ಲಿ ನಿಖರತೆ ಕಡಿಮೆಯಾಗುತ್ತದೆ. ಇದನ್ನು ಪರಿಹರಿಸಲು ಸರ್ವಂ ಒಂದು ಉನ್ನತ ಕಾರ್ಯಕ್ಷಮತೆಯ “3B state-space model” ನಿರ್ಮಿಸಿದೆ. ಸರ್ವಂ AI ಮಾದರಿಯು ವಿವಿಧ ಹಣಕಾಸು ದಾಖಲೆಗಳು, ಸಾಹಿತ್ಯ, ಪತ್ರಿಕೆಗಳು ಹಾಗೂ ಐತಿಹಾಸಿಕ ಪಠ್ಯಗಳನ್ನು ಒಳಗೊಂಡ 22 ಅಧಿಕೃತ ಭಾರತೀಯ ಭಾಷೆಗಳ ಉತ್ತಮ ಗುಣಮಟ್ಟದ ಡೇಟಾಸೆಟ್ಗಳ ಮೇಲೆ ತರಬೇತಿ ಪಡೆದಿದೆ ಎಂದು ಕಂಪೆನಿ ಹೇಳಿದೆ. ಹೆಚ್ಚುವರಿಯಾಗಿ, ಸರ್ವಂ ಕೇವಲ 294MB ಗಾತ್ರದ ಧ್ವನಿ ಗುರುತಿಸುವಿಕೆ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದು ಪ್ರಮಾಣಿತ ಸ್ಮಾರ್ಟ್ಫೋನ್ನಲ್ಲಿ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಈ ಉಪಕರಣವು 10 ವಿಭಿನ್ನ ಭಾರತೀಯ ಭಾಷೆಗಳನ್ನು ಗುರುತಿಸಬಲ್ಲದು. ಅತ್ಯಂತ ಪ್ರಭಾವಶಾಲಿ ಅಂಶವೆಂದರೆ, ಯಾವ ಭಾಷೆಯನ್ನು ಮಾತನಾಡಲಾಗುತ್ತಿದೆ ಎಂಬುದನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಸಾಮರ್ಥ್ಯ. ಹೀಗಾಗಿ ಬಳಕೆದಾರರು ತಮ್ಮ ಸೆಟ್ಟಿಂಗ್ ಗಳನ್ನು ಹಸ್ತಚಾಲಿತವಾಗಿ ಬದಲಾಯಿಸಬೇಕಾಗಿಲ್ಲ. ಉನ್ನತ ಮಟ್ಟದ ಸ್ಮಾರ್ಟ್ಫೋನ್ನಲ್ಲಿ (ಸ್ನಾಪ್ಡ್ರಾಗನ್ 8 ಜೆನ್ 3 ಚಿಪ್ನಂತಹ) ಕಾರ್ಯನಿರ್ವಹಿಸುವಾಗ, ಇದು ಮನುಷ್ಯ ಮಾತನಾಡುವುದಕ್ಕಿಂತ 8.5 ಪಟ್ಟು ವೇಗವಾಗಿ ಮಾತನ್ನು ಪ್ರಕ್ರಿಯೆಗೊಳಿಸಬಹುದು. ಮೊದಲ ಪದವನ್ನು ನೀಡಲು ಇದು 0.3 ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದರ ಧ್ವನಿ ಸಂಶ್ಲೇಷಣೆ ಮಾದರಿಯು ಸುಮಾರು 60MB ಗಾತ್ರ ಹೊಂದಿದ್ದು 24 ಮಿಲಿಯನ್ ನಿಯತಾಂಕಗಳನ್ನು ಒಳಗೊಂಡಿದೆ. ಪ್ರಮಾಣಿತ ಮಾನದಂಡದಲ್ಲಿ ಸರಾಸರಿ ಅಕ್ಷರ ದೋಷ ದರ 0.0173 ಅನ್ನು ಸಾಧಿಸಿದೆ. ಇದರಿಂದ ಸಂಶ್ಲೇಷಿತ ಧ್ವನಿ ಉದ್ದೇಶಿತ ಪಠ್ಯಕ್ಕೆ ಅತ್ಯಂತ ಸಮೀಪವಾಗಿ ಹೊಂದಿಕೆಯಾಗುತ್ತದೆ ಎಂಬುದು ಸೂಚಿಸುತ್ತದೆ. ಕಸ್ಟಮ್ ಧ್ವನಿ ಕ್ಲೋನಿಂಗ್ ಸೌಲಭ್ಯವೂ ಇದರಲ್ಲಿ ಲಭ್ಯ. ಸುಮಾರು ಒಂದು ಗಂಟೆಯ ಆಡಿಯೊ ಡೇಟಾವನ್ನು ಬಳಸಿ ಹೊಸ ಧ್ವನಿಯನ್ನು ಸೇರಿಸಬಹುದು ಮತ್ತು ಅದೇ 60MB ಮಾದರಿ ಫೈಲ್ನಲ್ಲಿ ನಿಯೋಜಿಸಬಹುದು. ಅನುವಾದ ಮಾದರಿಯು 150 ಮಿಲಿಯನ್ ನಿಯತಾಂಕಗಳನ್ನು ಬಳಸುತ್ತದೆ. ಇದು ಫೋನ್ನಲ್ಲಿ ಕೇವಲ 334MB ಜಾಗವನ್ನು ಮಾತ್ರ ತೆಗೆದುಕೊಳ್ಳುತ್ತದೆ. ಮಧ್ಯಂತರ ಭಾಷೆಯ ಮೂಲಕ ರೂಟಿಂಗ್ ಮಾಡದೆ 10 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ಸೇರಿ 110 ಭಾಷಾ ಜೋಡಿಗಳಲ್ಲಿ ದ್ವಿಮುಖ ಅನುವಾದವನ್ನು ನಿರ್ವಹಿಸುತ್ತದೆ. ►Gemini ಮತ್ತು ChatGPTಯಿಂದ ಹೇಗೆ ಭಿನ್ನ? Gemini ಮತ್ತು ChatGPT ಇಂಗ್ಲಿಷ್ಗೆ ಆದ್ಯತೆ ನೀಡಿ ಉಳಿದ ಭಾಷೆಗಳನ್ನು ಎರಡನೇ ದರ್ಜೆಯಲ್ಲಿ ಪರಿಗಣಿಸುತ್ತವೆ. ಸರ್ವಂ AI 22 ಭಾರತೀಯ ಭಾಷೆಗಳ ಮೇಲೆ ತರಬೇತಿ ಪಡೆದಿರುವುದರಿಂದ ಪ್ರಾದೇಶಿಕ ಲಿಪಿಗಳಿಗೆ ಹೆಚ್ಚಿನ ನಿಖರತೆಯನ್ನು ಒದಗಿಸುತ್ತದೆ. ಇತರ ಮಾದರಿಗಳು ದಾಖಲೆಗಳು ಅಥವಾ ಚಿತ್ರಗಳಿಂದ ಪಠ್ಯವನ್ನು ಹೊರತೆಗೆಯಲು ಮಾತ್ರ ಸಮರ್ಥವಾಗಿದ್ದರೆ, ಸರ್ವಂ AI ದೃಶ್ಯದ ಅಂಶಗಳನ್ನು ಸಹ ಅರ್ಥೈಸಿ ಹೆಚ್ಚುವರಿ ತಿಳುವಳಿಕೆ ಒದಗಿಸುತ್ತದೆ. ಇದು ಭಾರತೀಯ ಭಾಷೆಗಳಿಗೆ ದೊಡ್ಡ ಪ್ರಮಾಣದ ಇಂಡಿಕ್ OCR ಮಾನದಂಡದೊಂದಿಗೆ ಸಂಕೀರ್ಣ ದಾಖಲೆಗಳಲ್ಲಿಯೂ ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ►ಸರ್ವಂ AI ಮಾದರಿ ಲಭ್ಯತೆ 2026ರ ಫೆಬ್ರವರಿ ತಿಂಗಳಲ್ಲಿ ಡಾಕ್ಯುಮೆಂಟ್ ಇಂಟೆಲಿಜೆನ್ಸ್ API ಮತ್ತು ಸರ್ವಂ ವಿಷನ್ ಅನ್ನು ಉಚಿತವಾಗಿ ಬಳಸಬಹುದು. ಸರ್ವಂ ವಿಷನ್ ಬಳಕೆದಾರರಿಗೆ ದೊಡ್ಡ ಪ್ರಮಾಣದಲ್ಲಿ ಅನ್ವೇಷಣೆ ಮತ್ತು ಅಭಿವೃದ್ಧಿಗೆ ಅವಕಾಶ ಒದಗಿಸುತ್ತದೆ. ►ಸರ್ವಂ AI: ಪ್ರಮುಖ ಲಕ್ಷಣಗಳು ಮಲ್ಟಿಮೋಡಲ್ ವಿಷನ್-ಲ್ಯಾಂಗ್ವೇಜ್: ಚಿತ್ರಗಳು ಮತ್ತು ಪಠ್ಯಗಳನ್ನು ಒಟ್ಟಿಗೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ಚಿತ್ರ ಶೀರ್ಷಿಕೆ, ಚಾರ್ಟ್ ಅಥವಾ ಟೇಬಲ್ ವ್ಯಾಖ್ಯಾನವನ್ನು ಸುಲಭಗೊಳಿಸುತ್ತದೆ. ಡಾಕ್ಯುಮೆಂಟ್ ತಿಳುವಳಿಕೆ (ಭಾರತೀಯ ಭಾಷೆಗಳ ಕೇಂದ್ರೀಕರಣ): ಹಳೆಯ ಐತಿಹಾಸಿಕ ಪಠ್ಯ ಅಥವಾ ಮಸುಕಾದ ಸ್ಕ್ಯಾನ್ ದಾಖಲೆಗಳನ್ನೂ 22 ಭಾರತೀಯ ಭಾಷೆಗಳಲ್ಲಿ ನಿಖರವಾಗಿ ಡಿಜಿಟಲೀಕರಣಗೊಳಿಸುವ ಸಾಮರ್ಥ್ಯ. ಚಾರ್ಟ್ ಮತ್ತು ಡೇಟಾ ವ್ಯಾಖ್ಯಾನ: ಕೇವಲ ಪಠ್ಯ ಓದುವುದಷ್ಟೇ ಅಲ್ಲ; ದಾಖಲೆಯೊಳಗಿನ ಚಾರ್ಟ್ಗಳು, ಡೇಟಾ ಮತ್ತು ಇತರ ದೃಶ್ಯ ಅಂಶಗಳನ್ನು ವಿಶ್ಲೇಷಿಸಿ ಸಾರಾಂಶ ನೀಡುತ್ತದೆ. ಬಹುಭಾಷಾ ದೃಶ್ಯ ಅರಿವು: ಒಂದೇ ದಾಖಲೆಯಲ್ಲಿ ಬಹು ಭಾಷೆಗಳ ದೃಶ್ಯ ಅಂಶಗಳನ್ನು ಅರ್ಥೈಸುವ ಸಾಮರ್ಥ್ಯ. ಪ್ರಮುಖ ಕಾರ್ಯಕ್ಷಮತೆ: ಇಂಗ್ಲಿಷ್ನಲ್ಲಿ ವಿಶ್ವದ ಅತ್ಯುತ್ತಮ ಮಾದರಿಗಳ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಜೊತೆಗೆ ಭಾರತೀಯ ಭಾಷೆಗಳ ನಿಖರತೆಗೆ “ಸರ್ವಂ ಇಂಡಿಕ್ OCR ಬೆಂಚ್” ಎಂಬ ಮಾನದಂಡವನ್ನು ಸ್ಥಾಪಿಸಿದೆ. ಪ್ರವೇಶಿಸಬಹುದಾದ API : ಫೆಬ್ರವರಿ 2026ರಿಂದ ದಾಖಲೆ-ಓದುವ APIಗಳು ವ್ಯವಹಾರ ಬಳಕೆಗೆ ಸಿದ್ಧವಾಗಿದ್ದು, ಪ್ರಸ್ತುತ ಉಚಿತವಾಗಿ ಪರೀಕ್ಷಿಸಲು ಲಭ್ಯ. ‘AI for All from India’ ಎಂಬ ಟ್ಯಾಗ್ಲೈನ್ನೊಂದಿಗೆ, ಭಾರತದಲ್ಲಿ ಎಲ್ಲರಿಗೂ AI ಪ್ರವೇಶಿಸಬಹುದಾದ ಭವಿಷ್ಯ ನಿರ್ಮಿಸುವುದೇ ಸರ್ವಂ ಗುರಿಯಾಗಿದೆ. “ನಮ್ಮ ಕಾಲದ ಪ್ರಮುಖ ತಾಂತ್ರಿಕ ಬದಲಾವಣೆಯನ್ನು ಭಾರತ ವಿಶ್ವಾಸ ಮತ್ತು ನಿಯಂತ್ರಣದೊಂದಿಗೆ ಸ್ವೀಕರಿಸಬೇಕೆಂದು ನಾವು ಬಯಸುತ್ತೇವೆ. ಮೂಲಭೂತ ಘಟಕಗಳನ್ನು ನಿರ್ಮಿಸಿ ಅವುಗಳನ್ನು ದೇಶದ ವಿಶಿಷ್ಟ ಅಗತ್ಯಗಳಿಗೆ ಅನ್ವಯಿಸುವುದು ನಮ್ಮ ಮಹತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ AI ವೇದಿಕೆಯನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿ, ನಿಯೋಜಿಸಿ ಮತ್ತು ನಿರ್ವಹಿಸುತ್ತಿದ್ದೇವೆ” ಎಂದು ಸ್ಟಾರ್ಟ್ಅಪ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಭಾರತೀಯ ಭಾಷೆಗಳು ಮತ್ತು ಬಳಕೆಯ ಸಂದರ್ಭಗಳಿಗೆ ಜನರೇಟಿವ್ AI ಪರಿಹಾರಗಳನ್ನು ರಚಿಸಲು Qualcomm ಜೊತೆ ಸಹಯೋಗ ಮಾಡಲಾಗಿದೆ. ಕಾರು ಫಲಕಗಳಿಗೆ AI ತಂತ್ರಜ್ಞಾನವನ್ನು ತರಲು ಜರ್ಮನ್ ಸಂಸ್ಥೆ ಬಾಷ್ ಜೊತೆಗೆ ಸಹ ಪಾಲುದಾರಿಕೆ ಘೋಷಿಸಲಾಗಿದೆ.
ಹೆಣ್ಣು ಮಕ್ಕಳ ಕೈಗೆ ಸೌಲಭ್ಯ ನೀಡಿದರೆ ಅದು ಕುಟುಂಬಕ್ಕೆ ಬಳಕೆ: ಡಾ. ಶರಣ ಬಸವ ಪಾಟೀಲ
ಸ್ವಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ವಸ್ತು ಪ್ರದರ್ಶನ ‘ಸರಸ್ ಮೇಳ’ಕ್ಕೆ ಚಾಲನೆ
Abhishek Sharma Poor Form- ಭಾರತ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಇದೀಗ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ 2 ಅರ್ಧಶತಕ ಗಳಿಸಿದರೂ ಅವರು ತಮ್ಮ ಕೊನೆಯ 8 ಪಂದ್ಯಗಳಲ್ಲಿ 5 ಬಾರಿ ಶೂನ್ಯಕ್ಕೆ ಔಟಾಗಿರುವುದು ಭಾರತ ತಂಡಕ್ಕೆ ಕಳವಳದ ಸಂಗತಿಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಕಣಕ್ಕಿಳಿವ ಅವಕಾಶ ಸಿಗುತ್ತದೋ ಇಲ್ಲವೇ ಎಂಬ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಹೊಸದಿಲ್ಲಿ: ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆಯುತ್ತಿರುವುದು ದುರದೃಷ್ಟಕರವಾಗಿದೆ ಎಂದು ಶುಕ್ರವಾರ ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ನೆರವು ನೀಡಲು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಕಲ್ಕತ್ತಾ ಹೈಕೋರ್ಟ್ಗೆ ಸೂಚಿಸಿದೆ. ನ್ಯಾಯಾಂಗ ಅಧಿಕಾರಿಗಳು ಹಕ್ಕುದಾರಿಕೆ ಹಾಗೂ ಆಕ್ಷೇಪಗಳ ಕುರಿತು ಪರಿಶೀಲಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ಪರಸ್ಪರ ಆರೋಪ ಮತ್ತು ಪ್ರತ್ಯಾರೋಪದ ದುರದೃಷ್ಟಕರ ಪರಿಸ್ಥಿತಿ ಉದ್ಭವವಾಗಿದ್ದು, ಇದು ಎರಡು ಸಾಂವಿಧಾನಿಕ ಅಂಗಗಳ ನಡುವಿನ ವಿಶ್ವಾಸದ ಕೊರತೆಯನ್ನು ಸೂಚಿಸುತ್ತಿದೆ. ಅದು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ವಿಶ್ವಾಸದ ಕೊರತೆಯಾಗಿದೆ. ಇದೀಗ ಈ ಪ್ರಕ್ರಿಯೆಯು ವ್ಯತ್ಯಾಸ ಪಟ್ಟಿಗೆ ಸೇರ್ಪಡೆಯಾಗಿರುವ ಜನರ ಹಕ್ಕುದಾರಿಕೆ ಹಾಗೂ ಆಕ್ಷೇಪಗಳ ಹಂತದಲ್ಲಿ ಸಿಲುಕಿಕೊಂಡಿದೆ” ಎಂದು ಅಭಿಪ್ರಾಯಪಟ್ಟರು. “ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಜಿಲ್ಲಾ ನ್ಯಾಯಾಧೀಶರ ದರ್ಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲಿ ಮತ್ತು ಮಾಜಿ ನ್ಯಾಯಾಂಗ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ” ಎಂದು ಕಲ್ಕತ್ತಾ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಸಾಮಾನ್ಯ ಸನ್ನಿವೇಶಗಳ ಕಾರಣಕ್ಕೆ ನಾವು ಅಸಾಮಾನ್ಯ ಆದೇಶವನ್ನು ಹೊರಡಿಸಬೇಕಾಗಿ ಬಂದಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿತು. ನ್ಯಾಯಾಂಗ ಅಧಿಕಾರಿಗಳ ಯೋಜನೆಯ ಸೂಕ್ಷ್ಮ ವಿವರಗಳನ್ನು ಅಂತಿಮಗೊಳಿಸಲು ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರೊಂದಿಗೆ ನಾಳೆ (ಶನಿವಾರ) ರಾಜ್ಯ ಚುನಾವಣಾ ಆಯೋಗ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರು ಹಾಗೂ ಇನ್ನಿತರ ಉನ್ನತ ಅಧಿಕಾರಿಗಳು ಸಭೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. “ಎಸ್ಡಿಒ ಮತ್ತು ಎಸ್ಡಿಎಂ ಕರ್ತವ್ಯವನ್ನು ನಿರ್ವಹಿಸಲು ಎ ಗುಂಪಿನ ಅಧಿಕಾರಿಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಬಾಧ್ಯತೆಯಾಗಿದೆ. ಇಆರ್ಒ ಮತ್ತು ಎಇಆರ್ಒ ಕರ್ತವ್ಯವನ್ನು ನಿರ್ವಹಿಸಲು ರಾಜ್ಯ ಸರ್ಕಾರ ಒದಗಿಸಿರುವ ಅಧಿಕಾರಿಗಳ ದರ್ಜೆಯ ಬಗ್ಗೆ ವಾದಿ-ಪ್ರತಿವಾದಿಗಳ ನಡುವೆ ವ್ಯಾಜ್ಯವಿದೆ. ಇದೀಗ ರಾಜ್ಯ ಸರ್ಕಾರ ಒದಗಿಸಿರುವ, ಭಾರತೀಯ ಚುನಾವಣಾ ಆಯೋಗ ನಿಯೋಜಿಸಿರುವ ಅಧಿಕಾರಿಗಳ ಸ್ಥಾನಮಾನ ಮತ್ತು ದರ್ಜೆಯನ್ನು ನಿರ್ಧರಿಸುವುದು ನ್ಯಾಯಾಲಯಕ್ಕೆ ಅಸಾಧ್ಯ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಸಲ್ಲಿಸಲಾದ ದಾಖಲೆಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಮತಪಟ್ಟಿಗೆ ಆಗುವ ಸೇರ್ಪಡೆ ಅಥವಾ ತೆಗೆದುಹಾಕುವಿಕೆಯ ನೈಜತೆಯನ್ನು ನಿರ್ಧರಿಸುವಲ್ಲಿ ನ್ಯಾಯಪರತೆಯನ್ನು ಖಾತರಿಗೊಳಿಸಲು, ಎಡಿಜೆ ಅಥವಾ ಜಿಲ್ಲಾ ನ್ಯಾಯಾಧೀಶರ ದರ್ಜೆಯ ಕೆಲವು ಹಾಲಿ ನ್ಯಾಯಾಂಗ ಅಧಿಕಾರಿಗಳೊಂದಿಗೆ ಕೆಲವು ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನು ಬಿಡುಗಡೆಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡದೆ ಬೇರೆ ಆಯ್ಕೆಯೇ ಉಳಿದಿಲ್ಲ. ಈ ನ್ಯಾಯಾಧೀಶರು ಪ್ರತಿ ಜಿಲ್ಲೆಯಲ್ಲೂ ತಾರ್ಕಿಕ ವ್ಯತ್ಯಾಸ ಪಟ್ಟಿಯಲ್ಲಿರುವ ಹಕ್ಕುದಾರಿಕೆಯನ್ನು ವಿಲೇವಾರಿ ಮಾಡುವ ಅಥವಾ ಮರುಪರಿಶೀಲನೆ ಮಾಡುವ ಕೆಲಸದಲ್ಲಿ ನೆರವು ಒದಗಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ನ್ಯಾಯಾಂಗ ಅಧಿಕಾರಿಗಳು ಮಧ್ಯಪ್ರವೇಶಿಸಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ನಾವು ರಾಜ್ಯ ಸರ್ಕಾರದ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ, ಇದು ರಾಜ್ಯ ಸರ್ಕಾರದ ಸಹಕಾರದ ಮಟ್ಟವೆ? ಫೆಬ್ರವರಿ 9ರ ಆದೇಶಕ್ಕೆ ನೀವು ಫೆಬ್ರವರಿ 17ರಂದು ಪ್ರತಿಕ್ರಿಯೆ ಸಲ್ಲಿಸಿದ್ದೀರಿ. ರಾಜ್ಯ ಸರ್ಕಾರವು ಅಧಿಕಾರಿಗಳನ್ನು ಪರಿಶೀಲಿಸುತ್ತಿದೆ ಎಂದು ನೀವು ಹೇಳುತ್ತಿದ್ದೀರಿ. ಯಾವ ರೀತಿ ಪರಿಶೀಲಿಸುತ್ತಿದ್ದೀರಿ? ನೀವು 8,500 ಅಧಿಕಾರಿಗಳನ್ನು ರವಾನಿಸಲಾಗಿದೆ ಎಂದು ಬರೆಯಬೇಕಿತ್ತು. ನಾವು ಸೂಕ್ಷ್ಮ ವೀಕ್ಷಕರಲ್ಲ. ಇದನ್ನು ನೋಡಿ ನಮಗೆ ಬೇಸರವಾಗಿದೆ. ರಾಜ್ಯ ಸರ್ಕಾರಗಳು ಸಹಕಾರ ನೀಡುತ್ತವೆ ಎಂದು ನಾವು ಭಾವಿಸಿದ್ದೆವು. ನಮಗೆ ಖಾಸಗಿ ವಿವರಣೆಗಳ ಅಗತ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಬಿಜೆಪಿ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿರುಸಿನ ತಯಾರಿ ನಡೆಸುತ್ತಿವೆ. ಈ ನಡುವೆ, ಮತಪಟ್ಟಿಗಳನ್ನು ಪರಿಷ್ಕರಿಸುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನವನ್ನು ನೈಜ ಮತದಾರರನ್ನು ಕೈಬಿಡಲು ಬಳಸಿಕೊಳ್ಳಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಹತ್ವ ಪಡೆದುಕೊಂಡಿದೆ. ಸೌಜನ್ಯ: ndtv.com
ಮಲ್ಪೆ: ಮೀನಿನ ವ್ಯಾಪಾರಿಯ ಮುಖಕ್ಕೆ ಖಾರದ ಪುಡಿ ಎರಚಿ ಚಿನ್ನದ ಸರ ಸುಲಿಗೆ
ಮಲ್ಪೆ, ಫೆ.20: ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ ಮುಖಕ್ಕೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ಚಿನ್ನದ ಸರ ಸುಲಿಗೆ ಮಾಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ 4.30ರ ಸುಮಾರಿಗೆ ನಡೆದಿದೆ. ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದ ಎಂಬವರು ಫೆ.20ರಂದು ಬೆಳಗಿನ ಜಾವ ಬಂದರಿಗೆ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಅವರು ಬೆಳಗ್ಗೆ 4.30ರ ಸುಮಾರಿಗೆ ಕಚೇರಿಯ ಶೌಚಾಲಯಕ್ಕೆ ಹೋಗಿ ವಾಪಾಸು ಬಂದರು ಕಡೆಗೆ ಬರುತ್ತಿದ್ದರು. ಆಗ ಅಪರಿಚಿತ ವ್ಯಕ್ತಿಯೊಬ್ಬ ದಯಾನಂದ ಕುಂದರ್ ಅವರಲ್ಲಿ ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ಹತ್ತಿರ ಬಂದು, ಮುಖಕ್ಕೆ ಖಾರದ ಪುಡಿಯಲ್ಲಿ ಎರಚಿದನು. ಬಳಿಕ ಅವರನ್ನು ಅಲ್ಲೇ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದ್ದು, ನಂತರ ಅಲ್ಲಿದ್ದ ಇಬ್ಬರು ಅಪರಿಚಿತರು ಒಟ್ಟು ಸೇರಿ ದಯಾನಂದ ಕುಂದರ್ ಅವರಿಗೆ ಚಾಕು ತೋರಿಸಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಡು ವಂತೆ ಕೇಳಿದರು. ಕೊಡದೆ ಇದ್ದಾಗ ಆರೋಪಿ ಮುತ್ತಣ್ಣ ಮತ್ತು ಇಬ್ಬರು ಅಪರಿಚಿತರು ಸೇರಿ ದಯಾನಂದ ಕುಂದರ್ ಅವರ ಮುಖಕ್ಕೆ ಮತ್ತು ಬೆನ್ನಿಗೆ ಕೈಯಿಂದ ಹಲ್ಲೆ ಮಾಡಿ 6ಲಕ್ಷ ರೂ. ಮೌಲ್ಯದ ಸುಮಾರು 6 ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿದರು. ಅಲ್ಲದೆ ಘಟನೆಯ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಂದು ಬಿಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ | ಅಜ್ಮೀರ್ ದರ್ಗಾಕ್ಕೆ ಶಾಸಕ ತುನ್ನೂರ್ ಭೇಟಿ
ಯಾದಗಿರಿ: ದೇಶದ ಹೆಸರಾಂತ ಧಾರ್ಮಿಕ ಕ್ಷೇತ್ರವಾಗಿರುವ ರಾಜಸ್ಥಾನ ರಾಜ್ಯದ ಅಜ್ಮೀರ್ ದರ್ಗಾಕ್ಕೆ ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಗಿರಿಜಿಲ್ಲೆ ಯಾದಗಿರಿ ಸೇರಿದಂತೆಯೇ ನಾಡಿನ ರೈತಾಪಿ ವರ್ಗ ಸೇರಿದಂತೆಯೇ ನಾಡಿನ ಎಲ್ಲರಿಗೂ ದೇವರು ಒಳ್ಳೆಯದಾಗಲಿ ಎಂದು ಬೇಡಿಕೊಂಡಿರುವುದಾಗಿ ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ತುನ್ನೂರ್ ಅವರಿಗೆ ಹಝರತ್ ಖಾಜಾ ಗರೀಬ್ ಅಜಯ್ ಮೈನುದ್ದಿನ್ ದರ್ಗಾದ ಕಮಿಟಿ ಸದಸ್ಯರು ಸನ್ಮಾನಿಸಿದರು. ಈ ವೇಳೆ ಸುಕ್ಷೇತ್ರ ನಾರಾಯಣಪುರದ ರಶೀದ್ ಮುತ್ಯಾ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಪಾಟೀಲ್, ತಾಯಪ್ಪ ಯಾದವ,ಸೇರಿದಂತೆಯೇ ಇತರರಿದ್ದರು.
ಅಮೆರಿಕದ ಯಾವುದೇ ಮಿಲಿಟರಿ ಆಕ್ರಮಣಕ್ಕೆ ನಿರ್ಣಾಯಕವಾಗಿ ಪ್ರತಿಕ್ರಿಯೆ ನೀಡಲಾಗುವುದು: ಇರಾನ್ ಎಚ್ಚರಿಕೆ
ಟೆಹ್ರಾನ್: ಅಮೆರಿಕದ ಯಾವುದೇ ಮಿಲಿಟರಿ ಆಕ್ರಮಣಕ್ಕೆ ಇರಾನ್ ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿದೆ ಎಂದು, ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಬೆದರಿಕೆಗಳನ್ನು ಖಂಡಿಸುವಂತೆ ಒತ್ತಾಯಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬರೆದ ಪತ್ರದಲ್ಲಿ ಇರಾನ್ನ ರಾಯಭಾರಿ ತಿಳಿಸಿದ್ದಾರೆ. ಇರಾನ್ ಮೇಲಿನ ಸಂಭಾವ್ಯ ದಾಳಿಗಾಗಿ ಹಿಂದೂ ಮಹಾಸಾಗರದಲ್ಲಿರುವ ಚಾಗೋಸ್ ದ್ವೀಪಗಳಲ್ಲಿ ಇರುವ ವಾಯುನೆಲೆಯನ್ನು ಬಳಸುವುದಾಗಿ ಟ್ರಂಪ್ ಇತ್ತೀಚೆಗೆ ನೀಡಿದ ಬೆದರಿಕೆಯನ್ನು ಉಲ್ಲೇಖಿಸಿ, ಭದ್ರತಾ ಮಂಡಳಿಯ ಸದಸ್ಯರು ಹಾಗೂ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕ್ರಮ ಕೈಗೊಳ್ಳಬೇಕೆಂದು ಇರಾನ್ ನ ವಿಶ್ವಸಂಸ್ಥೆಯ ರಾಯಭಾರಿ ಅಮೀರ್ ಸಯೀದ್ ಇರಾವಾನಿ ಆಗ್ರಹಿಸಿದ್ದಾರೆ. ಈ ಪ್ರದೇಶದಲ್ಲಿ ಉಂಟಾಗಿರುವ ಅಸ್ಥಿರ ಪರಿಸ್ಥಿತಿ ಹಾಗೂ ಅಮೆರಿಕ ನಿರಂತರವಾಗಿ ಸೇನಾ ಉಪಕರಣಗಳನ್ನು ಸಂಗ್ರಹಿಸುತ್ತಿರುವ ಹಿನ್ನೆಲೆ, ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಕೇವಲ ವಾಗ್ವಾದ ಅಥವಾ ಸಾಮಾನ್ಯ ಹೇಳಿಕೆಯೆಂದು ಪರಿಗಣಿಸಬಾರದು ಎಂದು ಇರಾವಾನಿ ತಿಳಿಸಿದ್ದಾರೆ. ಇರಾನ್ ದೇಶವು ಉದ್ವಿಗ್ನತೆ ಅಥವಾ ಯುದ್ಧವನ್ನು ಬಯಸುವುದಿಲ್ಲ ಮತ್ತು ಯಾವುದೇ ಯುದ್ಧವನ್ನು ಪ್ರಾರಂಭಿಸುವುದಿಲ್ಲ. ಇರಾನ್ ಮೇಲೆ ದಾಳಿ ನಡೆದರೆ, ಈ ಪ್ರದೇಶದಲ್ಲಿನ ಶತ್ರು ಪಡೆಗಳ ಎಲ್ಲಾ ನೆಲೆಗಳು ಮತ್ತು ಸ್ವತ್ತುಗಳನ್ನು ಗುರಿಗಳೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಮೆರಿಕದೊಂದಿಗೆ ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳಲು ಟೆಹ್ರಾನ್ ಗೆ 10ರಿಂದ 15 ದಿನಗಳ ಕಾಲಾವಕಾಶವಿದೆ ಎಂದು ಟ್ರಂಪ್ ಗುರುವಾರ ಎಚ್ಚರಿಸಿದ್ದರು.
ಜಮ್ಮುಕಾಶ್ಮೀರ: ರಮಝಾನ್ ದಾನ ನಿಯಂತ್ರಣಕ್ಕೆ ಕಿಷ್ತವಾರ್ ಆಡಳಿತದ ಆದೇಶ; ರಾಜಕೀಯ ಪಕ್ಷಗಳ ಟೀಕೆ
ಶ್ರೀನಗರ: ಪವಿತ್ರ ರಮಝಾನ್ ತಿಂಗಳಲ್ಲಿ ‘ವ್ಯಕ್ತಿಗಳಿಂದ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆ ಸಂಗ್ರಹಗಳನ್ನು’ ತಡೆಯಲು ಕಿಷ್ತವಾರ್ ಜಿಲ್ಲಾಧಿಕಾರಿಗಳು ಗುರುವಾರ ಆದೇಶವನ್ನು ಹೊರಡಿಸಿದ್ದು, ಜಮ್ಮುಕಾಶ್ಮೀರದ ಹಲವಾರು ರಾಜಕೀಯ ಪಕ್ಷಗಳು ಇದನ್ನು ಕಟುವಾಗಿ ಟೀಕಿಸಿವೆ ಎಂದು The Hindu ವರದಿ ಮಾಡಿದೆ. ಪವಿತ್ರ ರಮಝಾನ್ ತಿಂಗಳಲ್ಲಿ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆಗಳ ಸಂಗ್ರಹದ ಪ್ರವೃತ್ತಿಯಿದ್ದು,ಇದಕ್ಕೆ ತಕ್ಷಣ ಕಡಿವಾಣ ಹಾಕುವ ಅಗತ್ಯವಿದೆ ಎಂದು ತನ್ನ ಆದೇಶದಲ್ಲಿ ಹೇಳಿರುವ ಜಿಲ್ಲಾಧಿಕಾರಿ ಪಂಕಜಕುಮಾರ ಶರ್ಮಾ ಅವರು,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 163ನ್ನು ಉಲ್ಲೇಖಿಸಿದ್ದಾರೆ. ಪರಿಹಾರ, ಕಲ್ಯಾಣ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿರುವ ಸಾರ್ವಜನಿಕ ದೇಣಿಗೆಗಳು ದುರುಪಯೋಗವಾದಂತೆ, ಅಕ್ರಮವಾಗಿ ವರ್ಗಾವಣೆಯಾಗದಂತೆ ಅಥವಾ ವಿಧ್ವಂಸಕ ಚಟುವಟಕೆಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಶಾಸನಬದ್ಧ ಹೊಣೆಗಾರಿಕೆಯಾಗಿದೆ. ಸಂಬಂಧಿತ ಕಾಯ್ದೆಗಳಡಿ ನೋಂದಣಿ ಹೊಂದಿರದ ವ್ಯಕ್ತಿಗಳು, ಎನ್ಜಿಒಗಳು, ಟ್ರಸ್ಟ್ಗಳು, ಸೊಸೈಟಿಗಳು ಅಥವಾ ಸಮಿತಿಗಳು ದೇಣಿಗೆಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದಕ್ಕಾಗಿ ವಕ್ಫ್ ಮಂಡಳಿಯ ಕಿಷ್ತವಾರ್ ಘಟಕದ ಕಾರ್ಯ ನಿರ್ವಹಣಾಧಿಕಾರಿ, ಜಾಮಿಯಾ ಮಸೀದಿ ಕಿಷ್ತವಾರ್ನ ಇಮಾಮ್ ಅಥವಾ ಸಂಬಂಧಿತ ತಹಶೀಲ್ದಾರರಿಂದ ಪೂರ್ವ ಲಿಖಿತ ಅನುಮತಿಯನ್ನು ಪಡೆಯಬೇಕು ಎಂದು ಆದೇಶದಲ್ಲಿ ಒತ್ತಿ ಹೇಳಲಾಗಿದೆ. ಆದೇಶವು ಕಟ್ಟುನಿಟ್ಟಾಗಿ ಜಾರಿಯಾಗುವುದನ್ನು ಖಚಿತ ಪಡಿಸಿಕೊಳ್ಳುವಂತೆ ಹಿರಿಯ ಎಸ್ಪಿ,ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ಗಳಿಗೆ ಸೂಚಿಸಲಾಗಿದೆ. ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪದ ವಿರುದ್ಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಮ್ಮುಕಾಶ್ಮೀರದ ಉಪ ಮುಖ್ಯಮಂತ್ರಿ ಸುರಿಂದರ್ ಕುಮಾರ ಚೌಧರಿಯವರು,ಸರಕಾರವು ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಬದ್ಧವಾಗಿದೆ. ಆದಾಗ್ಯೂ ಅಧಿಕಾರಿಗಳು ಸಾವಿಧಾನಿಕ ಮತ್ತು ಆಡಳಿತಾತ್ಮಕ ಮಿತಿಗಳನ್ನು ಮೀರದೇ ಕೆಲಸ ಮಾಡಬೇಕು ಎಂದು ಹೇಳಿದರು. ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಹೊಂದಿರುವ ಅಧಿಕಾರಿಗಳು ಇಂತಹ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ಹೇಳಿದ ಜಮ್ಮುಕಾಶ್ಮೀರ ಸಚಿವ ಸತೀಶ ಶರ್ಮಾ,ಇದು ದುರದೃಷ್ಟಕರವಾಗಿದೆ. ಅವರು ತಮ್ಮನ್ನು ತಾವು ಬದಲಿಸಲಿಕೊಳ್ಳುವ ಅಗತ್ಯವಿದೆ ಎಂದರು. ಆದೇಶವು ಅಸಾಂವಿಧಾನಿಕವಾಗಿದೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿದ ಪಿಡಿಪಿ ನಾಯಕ ಹಾಗೂ ಶಾಸಕ ಆಗಾ ಸೈಯದ್ ಮುಂತಾಜಿರ್ ಮೆಹ್ದಿ ಅವರು, ಈ ಆದೇಶವು ಮುಸ್ಲಿಂ ದತ್ತಿಗಳ ಸ್ವಾಯತ್ತತೆಗೆ ಬೆದರಿಕೆಯೊಡ್ಡಿದೆ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಅನಗತ್ಯ ಸರಕಾರಿ ಹಸ್ತಕ್ಷೇಪವನ್ನು ಸೂಚಿಸುತ್ತದೆ ಎಂದು ಹೇಳಿದರು.
Yadgiri | ತಡಿಬಿಡಿ-ಗುಂಡಗುರ್ತಿ ಗ್ರಾಮಗಳಲ್ಲಿ ಬಸ್ ನಿಲುಗಡೆಗೆ ಒತ್ತಾಯ: ನಕಸೆ ಮನವಿ
ಯಾದಗಿರಿ: ಯಾದಗಿರಿಯಿಂದ ಸುರಪುರಕ್ಕೆ ಸಂಚರಿಸುವ ಬಸ್ಸುಗಳು ತಡಿಬಿಡಿ, ಹುಂಡೆಕಲ್, ಗುಂಡಗುರ್ತಿ ಹಾಗೂ ಅನವಾರ ಗ್ರಾಮಗಳಲ್ಲಿ ನಿಲುಗಡೆ ಮಾಡದೆ ಮುಂದುವರಿಯುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ನಮ್ಮ ಕರ್ನಾಟಕ ಸೇನೆ (ನಕಸೆ) ವಡಗೇರಾ ತಾಲೂಕು ಯುವ ಘಟಕವು ಸಂಬಂಧಿತ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸಿ ಮಾತನಾಡಿದ ನಕಸೆ ವಡಗೇರಾ ತಾಲೂಕು ಯುವ ಅಧ್ಯಕ್ಷ ರಾಜು ಬಿ. ಮ್ಯಾಗಿನಮನಿ ಅವರು, ಯಾದಗಿರಿ–ಸುರಪುರ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಬಸ್ಸುಗಳು ರಶ್ ಕಾರಣದಿಂದ ನಿಗದಿತ ಗ್ರಾಮಗಳಲ್ಲಿ ನಿಲ್ಲದೆ ಮುಂದೆ ಸಾಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವೃದ್ಧರು, ಮಹಿಳೆಯರು ಹಾಗೂ ಬಾಣಂತಿಯರೂ ಸಹ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು. ಮಾರ್ಗ ಮಧ್ಯದ ಗ್ರಾಮಗಳಲ್ಲಿ ಬಸ್ ನಿಲುಗಡೆ ಕಡ್ಡಾಯಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದನೆ ದೊರಕದಿದ್ದಲ್ಲಿ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳೊಂದಿಗೆ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶ್ರೀದೇವಿ ಕಟ್ಟಿಮನಿ, ರಾಜು ಗುಂಡಗುರ್ತಿ, ರಂಗನಾಥ ಗುಂಡಗುರ್ತಿ, ಸಿದ್ದು ಹುಂಡೆಕಲ್, ಮೌನೇಶ್, ಆದ್ಯಪ್ಪ ಹುಂಡೆಕಲ್ ಸೇರಿದಂತೆ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀನಗರ,ಫೆ.20: ಪವಿತ್ರ ರಮಝಾನ್ ತಿಂಗಳಲ್ಲಿ ‘ವ್ಯಕ್ತಿಗಳಿಂದ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆ ಸಂಗ್ರಹಗಳನ್ನು’ ತಡೆಯಲು ಕಿಷ್ತವಾರ್ ಜಿಲ್ಲಾಧಿಕಾರಿಗಳು ಗುರುವಾರ ಆದೇಶವನ್ನು ಹೊರಡಿಸಿದ್ದು, ಜಮ್ಮುಕಾಶ್ಮೀರದ ಹಲವಾರು ರಾಜಕೀಯ ಪಕ್ಷಗಳು ಇದನ್ನು ಕಟುವಾಗಿ ಟೀಕಿಸಿವೆ. ಪವಿತ್ರ ರಮಝಾನ್ ತಿಂಗಳಲ್ಲಿ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆಗಳ ಸಂಗ್ರಹದ ಪ್ರವೃತ್ತಿಯಿದ್ದು,ಇದಕ್ಕೆ ತಕ್ಷಣ ಕಡಿವಾಣ ಹಾಕುವ ಅಗತ್ಯವಿದೆ ಎಂದು ತನ್ನ ಆದೇಶದಲ್ಲಿ ಹೇಳಿರುವ ಜಿಲ್ಲಾಧಿಕಾರಿ ಪಂಕಜಕುಮಾರ ಶರ್ಮಾ ಅವರು,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 163ನ್ನು ಉಲ್ಲೇಖಿಸಿದ್ದಾರೆ. ಪರಿಹಾರ,ಕಲ್ಯಾಣ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿರುವ ಸಾರ್ವಜನಿಕ ದೇಣಿಗೆಗಳು ದುರುಪಯೋಗವಾದಂತೆ, ಅಕ್ರಮವಾಗಿ ವರ್ಗಾವಣೆಯಾಗದಂತೆ ಅಥವಾ ವಿಧ್ವಂಸಕ ಚಟುವಟಕೆಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಶಾಸನಬದ್ಧ ಹೊಣೆಗಾರಿಕೆಯಾಗಿದೆ. ಸಂಬಂಧಿತ ಕಾಯ್ದೆಗಳಡಿ ನೋಂದಣಿ ಹೊಂದಿರದ ವ್ಯಕ್ತಿಗಳು, ಎನ್ಜಿಒಗಳು, ಟ್ರಸ್ಟ್ಗಳು, ಸೊಸೈಟಿಗಳು ಅಥವಾ ಸಮಿತಿಗಳು ದೇಣಿಗೆಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದಕ್ಕಾಗಿ ವಕ್ಫ್ ಮಂಡಳಿಯ ಕಿಷ್ತವಾರ್ ಘಟಕದ ಕಾರ್ಯ ನಿರ್ವಹಣಾಧಿಕಾರಿ, ಜಾಮಿಯಾ ಮಸೀದಿ ಕಿಷ್ತವಾರ್ನ ಇಮಾಮ್ ಅಥವಾ ಸಂಬಂಧಿತ ತಹಶೀಲ್ದಾರರಿಂದ ಪೂರ್ವ ಲಿಖಿತ ಅನುಮತಿಯನ್ನು ಪಡೆಯಬೇಕು ಎಂದು ಆದೇಶದಲ್ಲಿ ಒತ್ತಿ ಹೇಳಲಾಗಿದೆ. ಆದೇಶವು ಕಟ್ಟುನಿಟ್ಟಾಗಿ ಜಾರಿಯಾಗುವುದನ್ನು ಖಚಿತ ಪಡಿಸಿಕೊಳ್ಳುವಂತೆ ಹಿರಿಯ ಎಸ್ಪಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ಗಳಿಗೆ ಸೂಚಿಸಲಾಗಿದೆ. ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪದ ವಿರುದ್ಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಮ್ಮುಕಾಶ್ಮೀರದ ಉಪ ಮುಖ್ಯಮಂತ್ರಿ ಸುರಿಂದರ್ ಕುಮಾರ ಚೌಧರಿಯವರು, ಸರಕಾರವು ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಬದ್ಧವಾಗಿದೆ. ಆದಾಗ್ಯೂ ಅಧಿಕಾರಿಗಳು ಸಾವಿಧಾನಿಕ ಮತ್ತು ಆಡಳಿತಾತ್ಮಕ ಮಿತಿಗಳನ್ನು ಮೀರದೇ ಕೆಲಸ ಮಾಡಬೇಕು ಎಂದು ಹೇಳಿದರು. ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಹೊಂದಿರುವ ಅಧಿಕಾರಿಗಳು ಇಂತಹ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ಹೇಳಿದ ಜಮ್ಮುಕಾಶ್ಮೀರ ಸಚಿವ ಸತೀಶ ಶರ್ಮಾ, ಇದು ದುರದೃಷ್ಟಕರವಾಗಿದೆ. ಅವರು ತಮ್ಮನ್ನು ತಾವು ಬದಲಿಸಿಕೊಳ್ಳುವ ಅಗತ್ಯವಿದೆ ಎಂದರು. ಆದೇಶವು ಅಸಾಂವಿಧಾನಿಕವಾಗಿದೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿದ ಪಿಡಿಪಿ ನಾಯಕ ಹಾಗೂ ಶಾಸಕ ಆಗಾ ಸೈಯದ್ ಮುಂತಾಜಿರ್ ಮೆಹ್ದಿ ಅವರು, ಈ ಆದೇಶವು ಮುಸ್ಲಿಂ ದತ್ತಿಗಳ ಸ್ವಾಯತ್ತತೆಗೆ ಬೆದರಿಕೆಯೊಡ್ಡಿದೆ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಅನಗತ್ಯ ಸರಕಾರಿ ಹಸ್ತಕ್ಷೇಪವನ್ನು ಸೂಚಿಸುತ್ತದೆ ಎಂದು ಹೇಳಿದರು. ರಾಜಕೀಯಗೊಳಿಸಬೇಡಿ: ಉಮರ್ ಅಬ್ದುಲ್ಲಾ ದೇಣಿಗೆಗಳನ್ನು ನಿಯಂತ್ರಿಸುವ ಆದೇಶವನ್ನು ಸಮರ್ಥಿಸಿಕೊಂಡ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು, ಧಾರ್ಮಿಕ ವಿಷಯಗಳನ್ನು ರಾಜಕೀಯಗೊಳಿಸಬೇಡಿ ಎಂದು ತನ್ನ ಪಕ್ಷದವರೂ ಸೇರಿದಂತೆ ರಾಜಕೀಯ ನಾಯಕರನ್ನು ಕೇಳಿಕೊಂಡರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಮಝಾನ್ ಸಂದರ್ಭದಲ್ಲಿ ದಾನರೂಪದ ದೇಣಿಗೆಗಳ ದುರುಪಯೋಗವನ್ನು ತಡೆಯಲು ಧಾರ್ಮಿಕ ನಾಯಕರ ಶಿಫಾರಸುಗಳ ಆಧಾರದಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ರೋಗಿಗಳ ಅಥವಾ ದತ್ತಿ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಕೆಲವೊಮ್ಮೆ ಅಂತಹ ರೋಗಿಗಳು ನಿಜಕ್ಕೂ ಅಸ್ತಿತ್ವದಲ್ಲಿದ್ದಾರೆಯೇ ಎನ್ನುವುದೂ ಗೊತ್ತಿರುವುದಿಲ್ಲ ಎಂದು ಹೇಳಿದರು. ಯಾವುದೇ ನಿಯಂತ್ರಣವಿಲ್ಲದೆ ದೇಣಿಗೆಗಳ ಸಂಗ್ರಹವು ಹಣದ ದುರುಪಯೋಗಕ್ಕೆ ಕಾರಣವಾಗುತ್ತದೆ ಮತ್ತು ನಿಜವಾಗಿಯೂ ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಕಿಷ್ತವಾರ್ನಲ್ಲಿನ ಧಾರ್ಮಿಕ ನಾಯಕರು ಆದೇಶವನ್ನು ಸ್ವಾಗತಿಸಿದ್ದಾರೆ ಎಂದ ಅವರು, ಧಾರ್ಮಿಕ ವಿಷಯಗಳನ್ನು ರಾಜಕೀಯಗೊಳಿಸದಂತೆ ಶಾಸಕರಿಗೆ ಸೂಚಿಸಿದರು. ಆದೇಶವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ಅದು ದೇಶವಿರೋಧಿ ಚಟುವಟಿಕೆಗಳಿಗಾಗಿ ದೇಣಿಗೆಗಳ ದುರುಪಯೋಗವನ್ನು ತಡೆಯುತ್ತದೆ ಎಂದು ಹೇಳಿದೆ.
ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಸಮಿತಿ ರಚನೆ : ರಾಜ್ಯ ಸರಕಾರ ಆದೇಶ
ಬೆಂಗಳೂರು : ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ರಚನೆ ಮಾಡಿ, ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಮಿತಿಯ ಸಂಚಾಲಕರಾಗಿರುತ್ತಾರೆ. ಹಣಕಾಸು ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸೇರಿ ಯೋಜನೆ, ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿತ್ತಾರೆ. ಸಮಿತಿಯು ಖಾಲಿ ಇರುವ ನಿರ್ಣಾಯಕ(ಕ್ರಿಟಿಕಲ್) ಹುದ್ದೆಗಳನ್ನು ಒಪ್ಪಂದ ಅಥವಾ ಹೊರಗುತ್ತಿಗೆ ಮೂಲಕ ಭರ್ತಿ ಮಾಡಲು ಅನುಮತಿ ನೀಡುವ ಅಧಿಕಾರವನ್ನು ಹೊಂದಿದೆ. ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅಧಿಕಾರಗಳು ಮತ್ತು ನಿರ್ದಿಷ್ಟ ಕಾರ್ಯಗಳಿಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ತಾಯಂದಿರ ಮರಣ ಅನುಪಾತವನ್ನು 40ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಸಾಧಿಸುವಂತೆ ಸಮಿತಿಯು ಕಾರ್ಯನಿರ್ವಹಿಸಬೇಕು. ಎಲ್ಲಾ ಗರ್ಭಿಣಿ ಮಹಿಳೆಯರಿಗೆ ತಾಯಂದಿರ ಆರೋಗ್ಯ ಸೇವೆಗಳ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಬೇಕು. ವಿಶೇಷವಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ತಾಯಂದಿರ ಆರೋಗ್ಯ ಆರೈಕೆಯ ಅಸಮಾನತೆಗಳನ್ನು ಪರಿಹರಿಸಬೇಕು ಎಂದು ಸಮಿತಿಗೆ ಸೂಚನೆ ನೀಡಲಾಗಿದೆ.
ಬಟಾಟೆ ಚಿಪ್ಸ್ ನೆನಪಿಸುತ್ತದೆ: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರತಿಪಕ್ಷವನ್ನು ಟೀಕಿಸಿದ ಸಚಿವ ಅಶ್ವಿನಿ ವೈಷ್ಣವ್
ಹೊಸದಿಲ್ಲಿ,ಫೆ.20: ಇಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಶುಕ್ರವಾರ ಭಾರತವು ಅಮೆರಿಕ ನೇತೃತ್ವದ ಪ್ರಮುಖ ಉಪಕ್ರಮ ಪ್ಯಾಕ್ಸ್ ಸಿಲಿಕಾಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡಿದೆ. ಈ ವೇಳೆ ವೇದಿಕೆಯಲ್ಲಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಪಕ್ಷವನ್ನು ಟೀಕಿಸುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಕೃತಕ ಬುದ್ಧಿಮತ್ತೆ (ಎಐ) ಚಿಪ್ಗಳ ಕುರಿತು ಮಾತನಾಡಿದ ವೈಷ್ಣವ್,‘ಚಿಪ್’ಗಳ ಬಗ್ಗೆ ಮಾತನಾಡುವ ಕೆಲವರಿದ್ದಾರೆ ಮತ್ತು ಅದು ನನಗೆ ‘ಬಟಾಟೆ ಚಿಪ್ಸ್’ನ್ನು ಮಾತ್ರ ನೆನಪಿಸುತ್ತದೆ. ಅವರು ಅಳುತ್ತಲೇ ಇರುತ್ತಾರೆ. ಕೆಲವೊಮ್ಮೆ ಸಂಸತ್ತಿನಲ್ಲಿಯೂ ಅಳುತ್ತಾರೆ. ಅವರು ಅಳುತ್ತಲೇ ಇರಲಿ, ಆದರೆ ನಾವು ಸ್ಪಷ್ಟ ದಿಕ್ಕಿನತ್ತ ಮುನ್ನಡೆಯುತ್ತಲೇ ಇರಬೇಕು ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು. ‘ಈ ಎಲ್ಲವನ್ನೂ ಸಾಧ್ಯವಾಗಿಸಿದ್ದಕ್ಕಾಗಿ’ ತನ್ನ ಸಹೋದ್ಯೋಗಿಗಳಾದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಷ್ಣವ್ ಧನ್ಯವಾದಗಳನ್ನು ಸಲ್ಲಿಸಿದರು. ‘ಎಲ್ಲವೂ’ ಎಂದರೆ ಈ ಇಡೀ ಎಐ ಇಂಪ್ಯಾಕ್ಟ್ ಶೃಂಗಸಭೆ, ನಾವು ನಿರ್ಮಿಸುತ್ತಿರುವ ಸಿಲಿಕಾನ್ ಪೂರೈಕೆ ಸರಪಳಿ ಮತ್ತು ನಮ್ಮ ಯುವಜನರನ್ನು ಅರಸಿಕೊಂಡು ಬರಲಿರುವ ಬೃಹತ್ ಹೊಸ ಅವಕಾಶಗಳು ಎಂದು ಅವರು ತಿಳಿಸಿದರು. ‘28 ವರ್ಷಗಳ ಸರಾಸರಿ ವಯಸ್ಸಿನೊಂದಿಗೆ ಭಾರತವು ಇಂದು ಯುವ ರಾಷ್ಟ್ರವಾಗಿದೆ. ಅದು ತನ್ನ ಮುಂದೆ ಸುದೀರ್ಘ ಬೆಳವಣಿಗೆಯ ಮಾರ್ಗವನ್ನು ಹೊಂದಿದೆ. 2047ರಲ್ಲಿಯೂ 37 ವರ್ಷಗಳ ಸರಾಸರಿ ವಯಸ್ಸಿನೊಂದಿಗೆ ಭಾರತವು ಯುವ ರಾಷ್ಟ್ರವಾಗಿಯೇ ಇರಲಿದೆ. ಅಂದರೆ 2047ರ ಬಳಿಕವೂ ಇನ್ನೂ 50 ವರ್ಷಗಳ ಬೆಳವಣಿಗೆ ಅವಧಿಯು ನಮ್ಮದಾಗಿರಲಿದೆ’ ಎಂದು ಪ್ಯಾಕ್ಸ್ ಸಿಲಿಕಾಗೆ ಸಹಿ ಹಾಕಿದ ಸಂದರ್ಭದಲ್ಲಿ ತನ್ನ ಭಾಷಣದಲ್ಲಿ ವೈಷ್ಣವ್ ಹೇಳಿದರು.
ಶಹಾಬಾದ್ | ಶಿವಾಜಿ ಮಹಾರಾಜರು ದೇಶದ ಹೆಮ್ಮೆಯ ಪ್ರತೀಕ: ಸುನೀಲ ಫಂಡ್
ಶಹಾಬಾದ್: ಶಿವಾಜಿ ಮಹಾರಾಜರು ಕೇವಲ ಐತಿಹಾಸಿಕ ಮಹಾರಾಜರಷ್ಟೇ ಅಲ್ಲ, ಇಂದಿಗೂ ಸಹ ಇಡೀ ಭಾರತ ದೇಶಕ್ಕೆ ಸ್ಪೂರ್ತಿಯ ಸೆಲೆ ಹಾಗೂ ಹೆಮ್ಮೆಯ ಪ್ರತೀಕ ಎಂದು ಮರಾಠಾ ಸಮಾಜದ ಮುಖಂಡ ಸುನೀಲ ಫಂಡ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜ ಅವರು ಭಾರತೀಯ ಸಂಸ್ಕೃತಿ ಹಾಗೂ ಕಲೆಗೆ ಅರ್ಥ ತಂದ ಮಹಾನ್ ವ್ಯಕ್ತಿ. ಕಡಿಮೆ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಶಕ್ತಿಶಾಲಿ ಸಾಮ್ರಾಜ್ಯ ಕಟ್ಟಿದ ಪರಾಕ್ರಮಿ ನಾಯಕರು. ಧೈರ್ಯ ಮತ್ತು ಸಾಹಸದ ಸಂಕೇತವಾಗಿದ್ದ ಶಿವಾಜಿ ಮಹಾರಾಜರು ಯುವಜನತೆಗೆ ಸದಾ ಆದರ್ಶಪ್ರಾಯರು ಎಂದು ಹೇಳಿದರು. ಅರುಣ ಪಟ್ಟಣಕರ ಹಾಗೂ ರಾಜು ಮಾನೆ ಮಾತನಾಡಿ, ಶಿವಾಜಿ ಮಹಾರಾಜರು ವಿಶ್ವಚೇತನರು. ಅವರ ತಾಯಿ ಜೀಜಾಬಾಯಿ ಬಾಲ್ಯದಲ್ಲಿಯೇ ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ದೇಶಕ್ಕಾಗಿ ಹೋರಾಡಿದ ಮಹಾಪುರುಷರ ಜೀವನ ಸಾಧನೆಗಳನ್ನು ಹೇಳಿ ಅವರಲ್ಲಿದೇಶಭಕ್ತಿ ಮತ್ತು ಆದರ್ಶಗಳನ್ನು ಬೆಳೆಸಿದರು. ಜೀಜಾಬಾಯಿಯವರಂತೆ ಪ್ರತಿಯೊಬ್ಬ ತಾಯಿ ತಮ್ಮ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಬೋಧಿಸಬೇಕು. ಶಿವಾಜಿಯವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ದೇವದಾಸ ಜಾಧವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದೀನೆಶ ಗೌಳಿ ವಂದಿಸಿದರು. ಈ ಸಂದರ್ಭದಲ್ಲಿ ಮಂಡಲ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರ ಪ್ರಮುಖರು, ಮೊರ್ಚಾ ಹಾಗೂ ಪ್ರಕೊಷ್ಠಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಮರಾಠಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಫರೀದಾಬಾದ್,ಫೆ.20: ಸ್ಥಳೀಯ ನಿವಾಸಿಯೋರ್ವ ಕಸದ ರಾಶಿಯಲ್ಲಿ ಬಚ್ಚಿಟ್ಟಿದ್ದ 15 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಹಿಂದಿರುಗಿಸುವ ಮೂಲಕ ಗುಜರಿ ವ್ಯಾಪಾರಿ ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ. ಜನವರಿ 2024ರಲ್ಲಿ ಅಶೋಕ ಶರ್ಮಾ ತನ್ನ ಕುಟುಂಬದೊಂದಿಗೆ ಪ್ರಯಾಗರಾಜ್ನಲ್ಲಿ ನಡೆಯುತ್ತಿದ್ದ ಕುಂಭಮೇಳಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳರು ನುಗ್ಗಬಹುದು ಎಂದು ಆತಂಕಗೊಂಡಿದ್ದ ಅವರು ಕುಟುಂಬದ 100 ಗ್ರಾಂ ತೂಕದ ಚಿನ್ನಾಭರಣಗಳನ್ನು ರಕ್ಷಿಸಲು ವಿನೂತನ ಉಪಾಯವನ್ನು ಕಂಡುಕೊಂಡಿದ್ದರು. ಚಿನ್ನಾಭರಣಗಳನ್ನು ಹಳೆಯ ಪೆಟ್ಟಿಗೆಯೊಂದರಲ್ಲಿ ತುಂಬಿ, ಮನೆಯಲ್ಲಿನ ಗುಜರಿ ವಸ್ತುಗಳು ತುಂಬಿದ್ದ ಚೀಲದಲ್ಲಿ ಬಚ್ಚಿಟ್ಟಿದ್ದರು. ಕುಟುಂಬವು ಯಾತ್ರೆಯಿದ ವಾಪಸಾದ ಬಳಿಕ ಬದುಕು ಎಂದಿನಂತೆ ಸಾಗಿತ್ತು. ಶರ್ಮಾಗೆ ಚಿನ್ನಾಭರಣಗಳ ನೆನಪೇ ಇರಲಿಲ್ಲ. ಸುಮಾರು 10 ತಿಂಗಳುಗಳ ಬಳಿಕ ದೀಪಾವಳಿಗೆ ಮುನ್ನ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಶರ್ಮಾ ಕುಟುಂಬವು ತಿಳಿಯದೆ ಚಿನ್ನಾಭರಣಗಳಿದ್ದ ಹಳೆಯ ವಸ್ತುಗಳ ಚೀಲವನ್ನು ಗುಜರಿ ವ್ಯಾಪಾರಿ ಹಾಜಿ ಅಖ್ತರ್ ಖಾನ್ಗೆ ಮಾರಾಟ ಮಾಡಿತ್ತು. ದೀಪಾವಳಿ ಸಂದರ್ಭದಲ್ಲಿ ಪೂಜೆಗೆ ನಗದು ಹಣ ಮತ್ತು ಚಿನ್ನಾಭರಣಗಳನ್ನು ಇರಿಸಲು ಮುಂದಾದಾಗ ಕುಟುಂಬಕ್ಕೆ ತನ್ನ ತಪ್ಪಿನ ಅರಿವಾಗಿತ್ತು. ತಕ್ಷಣವೇ ಖಾನ್ ಗೋದಾಮಿಗೆ ಧಾವಿಸಿದ ಶರ್ಮಾ ಅಲ್ಲೆಲ್ಲ ಚಿನ್ನಾಭರಣಗಳಿಗಾಗಿ ವಿಫಲ ಹುಡುಕಾಟ ನಡೆಸಿದ್ದರು. ಕುಟುಂಬವು ಹತಾಶಗೊಂಡಿತ್ತು. ಚಿನ್ನಾಭರಣಗಳನ್ನು ಕಳ್ಳರಿಂದ ರಕ್ಷಿಸುವ ಪ್ರಯತ್ನದಲ್ಲಿ ಶರ್ಮಾ ಗೊತ್ತಿಲ್ಲದೇ ಅದನ್ನು ಗುಜರಿ ವ್ಯಾಪಾರಿಗೆ ನೀಡಿದ್ದರು. ತಿಂಗಳುಗಳ ಬಳಿಕ ತನ್ನ ಅಂಗಡಿಯಲ್ಲಿನ ಗುಜರಿ ವಸ್ತುಗಳನ್ನು ಪರಿಶೀಲಿಸುತ್ತಿದ್ದ ಖಾನ್ ಕಣ್ಣಿಗೆ ಆ ರಾಶಿಯಲ್ಲಿ ಹಳೆಯ ಪೆಟ್ಟಿಗೆಯು ಕಣ್ಣಿಗೆ ಬಿದ್ದಿತ್ತು. ತೆರೆದು ನೋಡಿದಾಗ ಅದರಲ್ಲಿ ಚಿನ್ನಾಭರಣಗಳನ್ನು ಕಂಡು ದಂಗಾಗಿದ್ದರು. ತಕ್ಷಣವೇ ಅವರಿಗೆ ಶರ್ಮಾರ ನೆನಪಾಗಿತ್ತು. ಪರರ ಸೊತ್ತುಗಳಿಗೆ ಆಶೆ ಪಡದ ಖಾನ್ ಹೆಚ್ಚುವರಿ ಪೋಲಿಸ್ ಆಯುಕ್ತ ಜಿತೇಶ್ ಮಲ್ಹೋತ್ರಾರ ಸಮ್ಮುಖದಲ್ಲಿ 15 ಲ.ರೂ.ಗಳ ಚಿನ್ನಾಭರಣಗಳನ್ನು ಶರ್ಮಾರಿಗೆ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಸಂಪೂರ್ಣ ಸರಳ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆಗೆ ಸರ್ಕಾರದ ಹೆಜ್ಜೆ! ಏನಿದು ಯುಎಲ್ಎಂಎಸ್
ಅನೇಕರಿಗೆ ಭೂ ಮಾಲಿಕತ್ವದ ವ್ಯವಸ್ಥೆ ಆರ್ಥಿಕ ಶಕ್ತಿಮತ್ತು ನೆಮ್ಮದಿ ನೀಡುವುದರ ಬದಲಿಗೆ ಗೊಂದಲ, ಅನಿಶ್ಚಿತತೆ, ವ್ಯಾಜ್ಯಗಳು ಗೂಡಾಗಿ ಪರಿಣಮಿಸಿದೆ. ಹಾಲಿ ವ್ಯವಸ್ಥೆ ಆಸ್ತಿಗಳಆರ್ಥಿಕ ಮೌಲ್ಯ, ಆದಾಯ, ಉತ್ಪಾದನೆಯನ್ನು ತಗ್ಗಿಸುತ್ತಿದೆ.ಜನಗಳಿಗೆ ನೆಮ್ಮದಿಯಿಲ್ಲ ಮತ್ತು ಸಮಾಜಕ್ಕೆ ಲಾಭವಿಲ್ಲ. ದೇಶದ ನ್ಯಾಯಾಲಯಗಳಲ್ಲಿರುವ ಶೇ. 50ಕ್ಕೂ ಹೆಚ್ಚು ವ್ಯಾಜ್ಯಗಳು ಭೂಮಿ/ಮಾಲಿಕತ್ವ ಸಂಬಂಧಿಸಿದವುಗಳು. ಈ ಭೂವ್ಯಾಜ್ಯಗಳಿಂದ ಮತ್ತು ಅನಿಶ್ಚಿತತೆಯಿಂದ ನಾವು ಭೂ ಗ್ಯಾರಂಟಿಯಡಿಗೆ ಸಾಗಲು ULMS ಪರಿಣಾಮಕಾರಿ ಮಾರ್ಗವಾಗಲಿದೆ. ಇದರಿಂದ ಜನಗಳ ಕೇಂದ್ರಿತ, ಜನಪರ ಆಡಳಿತ ಸುಧಾರಣೆ ಸಾಧ್ಯ. ಈ ಏಕೀಕೃತ ವ್ಯವಸ್ಥೆಯನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳು ಮುಂದಿನ 6 ತಿಂಗಳುಗಳಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಲಾಗಿದೆ.
ಉತ್ತರ ಪ್ರದೇಶ| ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ರಮಝಾನ್ನಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ನಿರಾಕರಿಸಿದ ಸರಕಾರ
ಲಕ್ನೋ,ಫೆ.20: ಉತ್ತರ ಪ್ರದೇಶ ಸರಕಾರವು ಪವಿತ್ರ ರಮಝಾನ್ ತಿಂಗಳಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಶಬ್ದ ನಿರ್ಬಂಧಗಳ ಕುರಿತು ಅಸ್ತಿತ್ವದಲ್ಲಿರುವ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಅನ್ವಯವಾಗುತ್ತವೆ ಎಂದು ಅದು ಹೇಳಿದೆ. ರಾಜ್ಯ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ ಸಮಾಜವಾದಿ ಪಕ್ಷದ ಸದಸ್ಯ ಕಮಾಲ್ ಅಖ್ತರ್ ಅವರು, ಮಸೀದಿಗಳು ‘ಸೆಹ್ರಿ’ ಮತ್ತು ಇಫ್ತಾರ್’ಗಾಗಿ ಘೋಷಣೆಗಳನ್ನು ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ರಮಝಾನ್ ಮಾಸ ಗುರುವಾರದಿಂದ ಆರಂಭಗೊಂಡಿದೆ. ರಾಜ್ಯದಲ್ಲಿ ಎಲ್ಲ ಧರ್ಮಗಳ ಹಬ್ಬಗಳನ್ನು ಆಚರಿಸಲಾಗುತ್ತದೆ ಮತ್ತು ಅದೇ ರೀತಿ ರಮಝಾನ್ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸಲು ಮಸೀದಿಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದ ಅಖ್ತರ್, ಉಪವಾಸವನ್ನು ಆಚರಿಸುವವರಿಗೆ ‘ಸೆಹ್ರಿ’ ಮತ್ತು ‘ಇಫ್ತಾರ್’ ಸಮಯಗಳ ಬಗ್ಗೆ ತಿಳಿಸಲು ಸಾಂಪ್ರದಾಯಿಕವಾಗಿ ಮಸೀದಿಗಳು ಸಂಕ್ಷಿಪ್ತ ಘೋಷಣೆಗಳನ್ನು ಮಾಡುತ್ತವೆ ಎಂದರು. ಸರಕಾರವು ಇತ್ತೀಚಿಗೆ ಹೆಚ್ಚಿನ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಿದೆ ಎಂದು ಬೆಟ್ಟು ಮಾಡಿದ ಅಖ್ತರ್,ಮಸೀದಿಗಳು ಧ್ವನಿವರ್ಧಕಗಳ ಮೂಲಕ ಜನರಿಗೆ ಸೂಚನೆ ನೀಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಅವರು,ಆಂತರಿಕ ಸಂವಹನಕ್ಕಾಗಿ ಒಳಾಂಗಣಗಳನ್ನು ಹೊರತುಪಡಿಸಿ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟ ನಿರ್ದೇಶನ ನೀಡಿದೆ ಎಂದು ತಿಳಿಸಿದರು. ಮದುವೆಗಳಲ್ಲಿಯೂ ನಿಗದಿತ ಸಮಯವನ್ನು ಮೀರಿ ಧ್ವನಿವರ್ಧಕಗಳ ಬಳಕೆಯ ಬಗ್ಗೆ ದೂರುಗಳು ಬಂದರೆ ಪೊಲೀಸರು ನಿಯಮ ಪಾಲನೆಯನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ಖನ್ನಾ ಹೇಳಿದರು. ‘ಸೆಹ್ರಿ’ ಮತ್ತು ‘ಇಫ್ತಾರ್’ಗಾಗಿ ಮಸೀದಿಗಳಲ್ಲಿ ಘೋಷಣೆಗಳನ್ನು ಮಾಡುವ ಸಂಪ್ರದಾಯವನ್ನು ಉಲ್ಲೇಖಿಸಿದ ಅವರು, ಗಡಿಯಾರಗಳು ಸಾಮಾನ್ಯವಾಗಿರದಿದ್ದಾಗ ಮತ್ತು ಜನರು ಸೂರ್ಯನ ಸ್ಥಾನವನ್ನು ಅವಲಂಬಿಸಿ ಸಮಯವನ್ನು ಅಂದಾಜಿಸುತ್ತಿದ್ದ ಕಾಲದಲ್ಲಿ ಈ ಪದ್ಧತಿ ಹುಟ್ಟಿಕೊಂಡಿತ್ತು. ಇಂದು ಬಹುತೇಕ ಪ್ರತಿಯೊಬ್ಬರೂ ಮೊಬೈಲ್ ಫೋನ್ಗಳನ್ನು ಹೊಂದಿದ್ದು ಅವು ಸಮಯವನ್ನು ತೋರಿಸುತ್ತವೆ. ಹೀಗಾಗಿ ಮಸೀದಿಯಿಂದ ಘೋಷಣೆಗಳ ಅಗತ್ಯ ಈಗ ಇಲ್ಲ ಎಂದು ಹೇಳಿದರು. ‘ಸರಕಾರವು ಯಾರದೇ ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪವನ್ನು ಮಾಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯವು ಧ್ವನಿವರ್ಧಕಗಳ ಬಳಕೆಯ ಕುರಿತು ನಿಯಮಗಳನ್ನು ರೂಪಿಸಿದೆ ಮತ್ತು ಇದು ನಮ್ಮ ಆದೇಶವಲ್ಲ’ ಎಂದು ಖನ್ನಾ ಹೇಳಿದರು. ಸರ್ವೋಚ್ಚ ನ್ಯಾಯಾಲಯದ ಆದೇಶವು ಶಬ್ದದ ಮಟ್ಟಗಳಿಗೆ ಸಂಬಂಧಿಸಿದೆ ಮತ್ತು ಧ್ವನಿವರ್ಧಕಗಳನ್ನು ನಿಷೇಧಿಸಿಲ್ಲ ಎಂದು ಪ್ರತಿಪಾದಿಸಿದ ಅಖ್ತರ್, ರಮಝಾನ್ ಸಮಯದಲ್ಲಿ ಧ್ವನಿವರ್ಧಕಗಳಿಗೆ ಅವಕಾಶ ನೀಡುವಂತೆ ಸಚಿವರನ್ನು ಒತ್ತಾಯಿಸಿದರು. ಇದಕ್ಕೆ ಸಚಿವರು ಯಾವುದೇ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.
ಆಳಂದ | ಗ್ರಾಮಾಭಿವೃದ್ಧಿಗೆ ಸಮಗ್ರ ಯೋಜನೆಗಳ ಸಮನ್ವಯ ಅಗತ್ಯ: ಭಾಸ್ಕರ್ರಾವ್ ಪೇರೆ ಪಾಟೀಲ
ಆಳಂದ : ಕೃಷಿ ಕ್ಷೇತ್ರದ ಸ್ವಾವಲಂಬನೆ, ದೇಶಿ ಕೃಷಿಯ ಉತ್ತೇಜನ ಹಾಗೂ ಗ್ರಾಮ ಸ್ವಚ್ಛತಾ ಕ್ರಮಗಳನ್ನು ಸಮನ್ವಯಗೊಳಿಸಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಗ್ರಾಮಗಳು ಸಂಪೂರ್ಣ ಅಭಿವೃದ್ಧಿಯ ದಾರಿಗೆ ಸಾಗುತ್ತವೆ ಎಂದು ಮಹಾರಾಷ್ಟ್ರದ ಪಾಟೋದಾ ಆದರ್ಶ ಗ್ರಾಮದ ಸರಪಂಚ್ ಭಾಸ್ಕರ್ರಾವ್ ಪೇರೆ ಪಾಟೀಲ ಹೇಳಿದರು. ತಾಲೂಕಿನ ತಡೋಳಾ ಗ್ರಾಮದ ಶ್ರೀ ಕಲ್ಲೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಕಮೀಟಿ ಹಾಗೂ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಆಯೋಜಿಸಿದ್ದ ಸಮಾಜ ಪ್ರಬೋಧನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಪಾಟೋದಾ ಗ್ರಾಮದಲ್ಲಿ ದೇಶಿ ಕೃಷಿ ಪದ್ಧತಿ, ಜೈವಿಕ ಗೊಬ್ಬರ ಬಳಕೆ, ನೀರಿನ ಸಮರ್ಪಕ ಸಂರಕ್ಷಣೆ, ಗ್ರಾಮ ಸ್ವಚ್ಛತಾ ಅಭಿಯಾನ ಹಾಗೂ ಸಾರ್ವಜನಿಕ ಪಾಲ್ಗೊಳ್ಳುವಿಕೆಯಿಂದ ಸಮಗ್ರ ಅಭಿವೃದ್ಧಿ ಸಾಧಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ಜನಪರವಾಗಿ ಜಾರಿಗೊಳಿಸಿದರೆ ಗ್ರಾಮ ಸ್ವಾವಲಂಬನೆ ಕನಸಲ್ಲ, ನಿಜವಾಗುತ್ತದೆ” ಎಂದು ಹೇಳಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಮುಡಬಿ, ಕಮೀಟಿ ಅಧ್ಯಕ್ಷ ಇಂದ್ರಜೀತ ಜಗತಾಪ, ಕಾರ್ಯದರ್ಶಿ ದಿನಕರ್ ಕುಲಕರ್ಣಿ, ವೆಂಕಟ ಪಾಟೀಲ, ಭೀಮಾಶಂಕರ ಬೋಳಶೆಟ್ಟಿ, ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಹಾಲು ಉತ್ಪಾದಕ ಸಂಘದ ರಾಮಮೂರ್ತಿ ಗಾಯಕವಾಡ, ಪ್ರಗತಿಪರ ರೈತ ಕಲ್ಯಾಣಿ ಅವುಟೆ, ತುಕಾರಾಮ ನಕಾತೆ, ಗ್ರಾಪಂ ಮಾಜಿ ಅಧ್ಯಕ್ಷ ಮೈಲಾರಿ ಜೋಗೆ, ಪ್ರಭಾಕರ್ ಸಲಗರ, ಡಾ. ವೆಂಕಟ್ ಕಾಂಬಳೆ, ಡಾ. ಹರಿದಾಸ್ ಪಾಟೀಲ, ರಾಮಕೃಷ್ಣ ಮಾಸ್ಟರ್ ಸಂಜಯ ಸಿಂಧೆ, ಕಮಲೇಶ ಅವುಟೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಮಕೃಷ್ಣ ಪಾಟೀಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ರೈತರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು.
Kodagu | ಕಾಡುಕೋಣಕ್ಕೆ ಢಿಕ್ಕಿಯಾಗಿ ಗೂಡ್ಸ್ ಆಟೋ ಪಲ್ಟಿ : ಇಬ್ಬರಿಗೆ ಗಾಯ
ಗಾಯಗೊಂಡ ಕಾಡುಕೋಣಕ್ಕೆ ವನ್ಯ ಜೀವಿ ಸಂರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ
ಧರ್ಮಸ್ಥಳ| ಶ್ರೀಧರ ಕೊಲೆ ಪ್ರಕರಣದ ಮರು ತನಿಖೆಗೆ ಎಸ್ಐಟಿ ನೇಮಕ: ರಾಜ್ಯ ಸರಕಾರ ಆದೇಶ
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣದ ಮರು ತನಿಖೆಗೆ ಎಸ್.ಐ.ಟಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಂಬೂ ರಾವ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ತಂಡದಲ್ಲಿ ಉಡುಪಿ ಜಿಲ್ಲಾ ಎಸ್.ಪಿ ಹರಿರಾವ್ ಶಂಕರ್ ಐಪಿಎಸ್, ಡಿವೈಎಸ್ಪಿ ಎಂಆರ್ ಹರೀಶ್ ಅವರಿದ್ದಾರೆ. 2022ರ ಡಿ.18ರಂದು ಶಿಬಾಜೆಯಲ್ಲಿ ಕೆಲಸ ಮಾಡುತ್ತಿದ್ದ ತೋಟದ ಒಳಗೆ ಶ್ರೀಧರ ಅವರ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಹಲವಾರು ಪ್ರಭಾವಿಗಳು ಭಾಗಿಯಾಗಿರುವ ಆರೋಪ ಆರಂಭದಿಂದಲೂ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ದಲಿತ ಸಂಘಟನೆಗಳು ಬೃಹತ್ ಹೋರಾಟಗಳನ್ನು ನಡೆಸಿದ್ದರು. ಆದರೆ ಶ್ರೀಧರ ಅವರ ಕೊಲೆ ಪ್ರಕರಣದ ಆರೋಪಿಗಳು ಪತ್ತೆಯಾಗಲೇ ಇಲ್ಲ. ಪೊಲೀಸ್ ತನಿಖೆ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಹರೀಶ್ ಮುಗೇರ ಎಂಬವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಕೊಂಡಿದ್ದರು. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಬಳಿಕ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಇದೀಗ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಎಂಎ ಸಲೀಂ ಅವರು ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.
ಫೆ.24ರಂದು ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬ ಆಚರಣೆ; ಅಭಿವಂದನಾ ಕಾರ್ಯಕ್ರಮ
ಮಂಗಳೂರು: ಫೆಬ್ರವರಿ 24ರಂದು 'ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ ಹಾಗೂ 77 ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಈ ಕುರಿತು ಅಭಿವಂದನಾ ಸಮಿತಿಯ ಅಧ್ಯಕ್ಷರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಹುಟ್ಟುಹಬ್ಬದ ದಿನ ಪೂರ್ವಾಹ್ನ 10.30 ಗಂಟೆಗೆ ಎಸ್ ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಅಭಿವಂದನಾ ಕಾರ್ಯಕ್ರಮ ಹಾಗೂ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಸಮಾರಂಭ ನಡೆಯಲಿದೆ. ಸಹಕಾರಿ ಕ್ಷೇತ್ರದ ಬಲವರ್ಧನೆಗೆ ತನ್ನದೇ ಆದ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿರುವ ದಕ್ಷಿಣ ಕನ್ನಡ ಕೇಂದ್ರ ಸಹಕಾರಿಬ್ಯಾಂಕ್ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿದವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಸಹಕಾರಿ ನಾಯಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿರುವ 'ಸಹಕಾರ ರತ್ನ' ಡಾ। ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮಾ ಚರಣೆಯನ್ನು ನಡೆಸಲು ಅವಿಭಜಿತ ಜಿಲ್ಲೆಯ ಸಮಸ್ತ ಸಹಕಾರಿಗಳೆಲ್ಲರೂ ತೀರ್ಮಾನಿಸಿ ದ್ದೇವೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಡಾ.ಎಂ.ಎನ್.ಆರ್. ಆದರ್ಶ ಸಹಕಾರಿ: ಸಹಕಾರ ಕ್ಷೇತ್ರವನ್ನು ಸದೃಢಗೊಳಿಸುವ ಚಿಂತನೆಯೊಂದಿಗೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿರುವ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರಿಗಳೆಲ್ಲರಿಗೂ ಆದರ್ಶಪ್ರಾಯರಾಗಿ ದ್ದಾರೆ. ಸಹಕಾರ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಕಾರ್ಯಯೋಜನೆಯನ್ನು ಆಯೋಜಿಸಿ, ನಮಗೆಲ್ಲರಿಗೂ ಮಾರ್ಗ ದರ್ಶಕರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77 ಮಂದಿಗೆ ಸವಲತ್ತುಗಳ ವಿತರಣೆ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಉದ್ಘಾಟಿಸಲಿದ್ದಾರೆ, ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಅಭಿವಂದನಾ ಭಾಷಣ ಮಾಡಲಿದ್ದಾರೆ, ಶಾಸಕ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಭಾಸ್ಕರ್ ಎಸ್. ಕೋಟ್ಯಾನ್ ,ಶಶಿಕುಮಾರ್ ರೈ ಬಾಲ್ಯೊಟ್ಟು , ಎಸ್.ಬಿ.ಜಯರಾಮ್ ರೈ , ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು,ವಾದಿರಾಜ ಶೆಟ್ಟಿ, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
Bidar | ನಾಯಿ, ಹಾವು ಕಡಿತ : ಮಾರ್ಗಸೂಚಿ ಅನುಸರಿಸಲು ಡಿಸಿ ಮನವಿ
ಬೀದರ್: 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹಾವು ಕಡಿತದಿಂದ ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ನಾಟಿ ಔಷಧಿ ಪಡೆದುಕೊಳ್ಳದೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾವು ಕಡಿದ ಬಳಿಕ ಆತಂಕಕ್ಕೊಳಗಾಗಬಾರದು. ಮನೆಯಲ್ಲಿರುವ ಯಾವುದೇ ಲೇಪನಗಳನ್ನು ಹಚ್ಚಬಾರದು. ನಾಟಿ ವೈದ್ಯರ ಬಳಿಗೆ ಹೋಗುವುದನ್ನು ತಪ್ಪಿಸಿ, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಸಂಬಂಧಿಸಿದ ಲಸಿಕೆ (ವಾಕ್ಸಿನ್) ಮತ್ತು ಔಷಧಿಗಳು ಲಭ್ಯವಿದ್ದು, ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೇವಲ ಶೇ.5 ರಷ್ಟು ಹಾವುಗಳು ಮಾತ್ರ ವಿಷಕಾರಿ ಆಗಿದ್ದು, ಶೇ.95 ರಷ್ಟು ಹಾವುಗಳಿಗೆ ವಿಷ ಇರುವುದಿಲ್ಲ. ಆದರೆ ಹಾವು ವಿಷಕಾರಿ ಅಥವಾ ವಿಷರಹಿತವೆಂದು ತಕ್ಷಣ ತಿಳಿಯುವುದಿಲ್ಲ. ಆದ್ದರಿಂದ ಹಾವು ಕಡಿತವಾದ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಂತ ಸೂಕ್ತ ಎಂದು ಸಲಹೆ ನೀಡಿದ್ದಾರೆ. ಜನವರಿ 2025ರಿಂದ ಡಿಸೆಂಬರ್ 2025ರವರೆಗೆ ಒಟ್ಟು 245 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 3 ಪ್ರಕರಣಗಳಲ್ಲಿ ಮರಣ ಸಂಭವಿಸಿದೆ. ಉಳಿದವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನಾಟಿ ವೈದ್ಯರ ಬಳಿ ಔಷಧಿ ತೆಗೆದುಕೊಂಡು ಗುಣಮುಖರಾದರೆಂಬ ತಪ್ಪು ಕಲ್ಪನೆ ಜನರಲ್ಲಿ ಇದೆ. ಆದರೆ ಆ ಸಮಯದಲ್ಲಿ ಚಿಕಿತ್ಸೆ ಪಡೆಯಲು ವಿಳಂಬವಾಗುವುದರಿಂದ ರೋಗಿಯ ಸ್ಥಿತಿ ಗಂಭೀರವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಪೋಸ್ಟರ್, ವಿಡಿಯೋ, ಐಇಸಿ ಚಟುವಟಿಕೆಗಳು ಹಾಗೂ ಸ್ಥಳೀಯ ಭಾಷೆಯಲ್ಲಿ ಜನಜಾಗೃತಿ ಸಭೆಗಳು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಭಾಲ್ಕಿ : ಸಾಮಾಜಿಕ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಭಾಲ್ಕಿಯ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾಲ್ಕಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಸಾರ್ವಜನಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಭಂಗ ತರುವ ಉದ್ದೇಶದಿಂದ ಕೆಲವರು ಮನಬಂದಲ್ಲಿ ಮಹಾಪುರುಷರ ಭಾವಚಿತ್ರಕ್ಕೆ ಪೂಜೆ ಮಾಡುವುದು, ಕಟ್ಟೆ ಕಟ್ಟುವುದು ಮತ್ತು ಕಂಬ ನೆಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ವಿನಾಃ ಕಾರಣ ನಿಯಮ ಬಾಹಿರವಾಗಿ ಈ ರೀತಿ ಸಾಮಾಜಿಕ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಕೃತ್ಯಕ್ಕೆ ಕೈ ಹಾಕಿದರೆ, ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಒಂದು ವೇಳೆ ಈ ಆದೇಶವನ್ನು ಉಲ್ಲಂಘನೆ ಮಾಡಿದ್ದರೆ, ನಿಯಮಾನುಸಾರ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಔರಾದ್ | ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ : ಶಿವಾಜಿರಾವ್ ಪಾಟೀಲ್
ಔರಾದ್ : ಛತ್ರಪತಿ ಶಿವಾಜಿ ಮಹಾರಾಜರು ಕೆಲ ರಾಜರ ದಬ್ಬಾಳಿಕೆ ವಿರುದ್ಧ ಹೋರಾಡಿದರೇ ಹೊರತು ಅವರು ಮುಸ್ಲಿಂ ವಿರೋಧಿಯಾಗಿರಲಿಲ್ಲ ಎಂದು ಮರಾಠ ಸಮಾಜದ ಮುಖಂಡ ಶಿವಾಜಿರಾವ್ ಪಾಟೀಲ್ ಮುಂಗನಾಳ ಅವರು ಹೇಳಿದರು. ಪಟ್ಟಣದ ತಹಸೀಲ್ ಕಚೇರಿಯಲ್ಲಿ ಗುರುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಸೈನ್ಯದಲ್ಲಿ ಮುಸ್ಲಿಂ ಸೈನಿಕರಿದ್ದರು. ರಾಜನಿಗೆ ಕೆಲ ಮಹತ್ವದ ಸಲಹೆ ನೀಡಲು ಮುಸ್ಲಿಂ ಅಧಿಕಾರಿಗಳಿದ್ದರು. ಹೀಗಾಗಿ ಶಿವಾಜಿ ಮಹಾರಾಜರನ್ನು ಸರ್ವಧರ್ಮೀಯ ನಾಯಕ ಎಂದು ಹೇಳಬೇಕಾಗುತ್ತದೆ ಎಂದರು. ತಹಶೀಲ್ದಾರ್ ಮಹೇಶ್ ಪಾಟೀಲ್ ಅವರು ಮಾತನಾಡಿ, ಸಂಸ್ಕೃತಿ ರಕ್ಷಣೆ, ಸ್ತ್ರೀ ಹಾಗೂ ರೈತಪರ ಚಿಂತನೆಗಳಿಂದ ಶ್ರೇಷ್ಠ ದೊರೆ ಎನಿಸಿಕೊಂಡ ಛತ್ರಪತಿ ಶಿವಾಜಿ ಕುರಿತು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಜಂಜೆರಾವ್ ನಾಯ್ಕ ಉಪನ್ಯಾಸ ನೀಡಿ, ಅತ್ಯಂತ ಶಕ್ತಿಶಾಲಿ ರಾಜರ ಆಳ್ವಿಕೆಯಲ್ಲಿ ಶಿವಾಜಿ ಮಹಾರಾಜರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಒ ಕಿರಣ್ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ದೊಂಡಿಬಾ ನರೋಟೆ, ಸುಧಾಕರ್ ಕೊಳ್ಳೂರ್, ಸೂರ್ಯಕಾಂತ್ ಸಿಂಗೆ, ಅಂಬಿಕಾ ಕೇರಬಾ ಪವಾರ್, ಕಲ್ಲಪ್ಪ ದೇಶಮುಖ, ರಾಮಣ್ಣ ವಡೆಯರ್, ಅಬ್ದುಲ್ ರಹೀಮಸಾಬ್, ಖಂಡೋಬಾ ಕಂಗಟೆ, ಶಿವರಾಜ್ ಅಲ್ಮಾಜೆ, ಡಾ.ಧನರಾಜ್ ರಾಗಾ, ಕೇರಬಾ ಪವಾರ್, ಗೋವಿಂದ್ ಇಂಗಳೆ ಹಾಗೂ ವಿರೇಶ್ ಅಲ್ಮಾಜೆ ಉಪಸ್ಥಿತರಿದ್ದು.
Bidar | ಎಸ್ಐಆರ್ನಲ್ಲಿ ಆಧಾರ್, ರೇಷನ್ ಕಾರ್ಡ್ ಪರಿಗಣನೆಗೆ ಮನವಿ
ಬೀದರ್: ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ದಾಖಲಾತಿಗಳನ್ನು ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿಯವರು ಆಗ್ರಹಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಭಾರತೀಯ ಮೂಲದ ನಾಗರಿಕರಾಗಿದ್ದರೂ ಎಸ್ಐಆರ್ ಮ್ಯಾಪಿಂಗ್ ಮೂಲಕ ಮತಪಟ್ಟಿಯಿಂದ ಹೆಸರುಗಳನ್ನು ಅಳಿಸಲಾಗುತ್ತಿದೆ. ಇದರಿಂದ ಮತದಾನ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಡವರು, ಅನಕ್ಷರಸ್ಥರು, ಹಿಂದುಳಿದ ವರ್ಗದವರು, ಅಲೆಮಾರಿ ಜನರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಎಸ್ಐಆರ್ ಪ್ರಕ್ರಿಯೆಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇವರ ಬಳಿ ಹುಟ್ಟು ಹಾಗೂ ವಿಳಾಸದ ದಾಖಲೆಗಳಾಗಿ ಸಾಮಾನ್ಯವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಮಾತ್ರ ಲಭ್ಯವಿದ್ದು, ಇವುಗಳನ್ನು ಮಾನ್ಯ ದಾಖಲೆಗಳಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಮತದಾನ ಹಕ್ಕಿಗೆ ಧಕ್ಕೆಯಾಗದಂತೆ ಸರ್ಕಾರ ತಕ್ಷಣ ಕ್ರಮ ಕೈಗೊಂಡು, ಆಧಾರ್ ಮತ್ತು ರೇಷನ್ ಕಾರ್ಡ್ ದಾಖಲಾತಿಗಳನ್ನು ಎಸ್ಐಆರ್ ಪ್ರಕ್ರಿಯೆಯಲ್ಲಿ ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಶ್ರೀಕಾಂತ್ ಸ್ವಾಮಿ, ಓಂಪ್ರಕಾಶ್ ರೊಟ್ಟೆ, ಜಗದೀಶ್ವರ್ ಬಿರಾದಾರ್, ಸಂತೋಷ್ ಜೋಳದಾಪಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೆೆಎಲ್ಇ ಸಂಸ್ಥೆಯ ನೂತನ ಚೇರ್ಮನ್ ಆಗಿ ಅಮಿತ್ ಕೋರೆ ಆಯ್ಕೆ
ಬೆಳಗಾವಿಯ ಪ್ರತಿಷ್ಠಿತ ಕೆೆೆಎಲ್ ಇ ಆಡಳಿತ ಮಂಡಳಿಯ ನೂತನ ಕಾರ್ಯಾಧ್ಯಕ್ಷರಾಗಿ ಅಮಿತ್ ಪ್ರಭಾಕರ ಕೋರೆಯವರು ಆಯ್ಕೆಯಾಗಿದ್ದಾರೆ. ಇಂದು ಕೆಎಲ್ಇ ಪ್ರಧಾನ ಕಚೇರಿಯಲ್ಲಿ ಜರುಗಿದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಅಮಿತ್ ಕೋರೆಯವರಿಗೆ ಸಂಸ್ಥೆಯ ಸಾರಥ್ಯವನ್ನು ವಹಿಸಲಾಯಿತು.
Bidar | ಸರ್ವರ ಒಳಿತಿಗಾಗಿ ಶ್ರಮಿಸಿದ ಸರ್ವಜ್ಞ ನಮ್ಮೆಲ್ಲರಿಗೂ ಆದರ್ಶ : ಸಚಿವ ರಹೀಂ ಖಾನ್
ಬೀದರ್ : ಸಮಾಜದಲ್ಲಿ ಜಾತಿ, ವರ್ಗ, ವರ್ಣ ಭೇದ ಎನ್ನದೇ ಸರ್ವರ ಒಳಿತಿಗಾಗಿ ಶ್ರಮಿಸಿದ ಸರ್ವಜ್ಞ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಹೇಳಿದರು. ನಗರದ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಂತ ಕವಿ ಸರ್ವಜ್ಞ ಅವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಇಂದಿಗೂ ಬೇರೂರಿರುವ ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ತಾರತಮ್ಯ ಹೋಗಲಾಡಿಸಲು ಸರ್ವಜ್ಞ ಸೇರಿದಂತೆ ಅನೇಕ ಮಹಾತ್ಮರ ಮಾನವೀಯ ಮೌಲ್ಯಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಕುಂಬಾರ ಸಮಾಜದ ಇತಿಹಾಸ ತುಂಬಾ ಪ್ರಾಚೀನವಾಗಿದೆ. ಕುಂಬಾರಿಕೆ ವೃತ್ತಿ ವೈಜ್ಞಾನಿಕವಾಗಿದ್ದು, ಎಲ್ಲರೂ ಮಣ್ಣಿನ ಪರಿಕರಗಳನ್ನು ಹೆಚ್ಚು ಬಳಸಬೇಕು ಎಂದು ಹೇಳಿದರು. ಯುವ ಸಾಹಿತಿ ಈಶ್ವರ್ ರುಮ್ಮಾ ಅವರು ವಿಶೇಷ ಉಪನ್ಯಾಸ ನೀಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಸರ್ವಜ್ಞರ ತ್ರಿಪದಿಗಳು ಆದರ್ಶವಾಗಿವೆ. ಸರ್ವಜ್ಞ ಲಕ್ಷಾಂತರ ತ್ರಿಪದಿಗಳ ಮೂಲಕ ಸಮಾಜದ ಎಲ್ಲ ಕ್ಷೇತ್ರಗಳ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದರು ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ.ಕರಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ, ಜಿಲ್ಲಾ ಕುಂಬಾರ ಸಮಾಜದ ಮುಖಂಡರಾದ ವಿಠಲ್ ಕುಂಬಾರ್, ನಾಗರಾಜ್ ಕರ್ಪೂರ್, ಶಿವಾನಂದ್ ಕುಂಬಾರ್, ಮಲ್ಲಿಕಾರ್ಜುನ್ ಕುಂಬಾರ್, ರಾಜಕುಮಾರ್ ಕುಂಬಾರ್, ಬಾಲಾಜಿ ಕುಂಬಾರ್, ಕಾಶಿನಾಥ್ ಕುಂಬಾರ್, ಶ್ರೀಕಾಂತ್ ಕುಂಬಾರ್ ಹಾಗೂ ಪವನ್ ಕುಂಬಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಕೊಪ್ಪಳ | ರಾಜ್ಯ ಬಜೆಟ್ ನಲ್ಲಿ ಲಿಂಗತ್ವ, ಲೈಂಗಿಕ ಅಲ್ಪಸಂಖ್ಯಾತರಿಗೆ 200 ಕೋಟಿ ರೂ. ಮೀಸಲಿಡಿ : ರಮ್ಯಾ ಒತ್ತಾಯ
ಕೊಪ್ಪಳ : 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಲಿಂಗತ್ವ, ಲೈಂಗಿಕ ಅಲ್ಪಸಂಖ್ಯಾತರಿಗೆ ಈ ಬಾರಿ 200 ಕೋಟಿ ರೂ. ಮೀಸಲಿಡಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಮುಖಂಡರಾದ ರಮ್ಯಾ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಎರಡು ನೂರು ಕೋಟಿಯನ್ನು ಮೀಸಲಿಡುವುದಾಗಿ ಘೋಷಿಸಿತ್ತು, ಆದರೆ ವಾಗ್ದಾನ ಮಾಡಿದ ಸರಕಾರ ಈಗ ತನ್ನ ಮಾತು ಉಳಿಸಿಕೊಳ್ಳುವ ಹೊಣೆಗಾರಿಕೆಯಿಂದ ಎಂದು ಸರಿಯಬಾರದು ಈ ಬಾರಿ ಬಜೆಟ್ಟಿನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕವಾಗಿ ಮತ್ತು ಕಡ್ಡಾಯವಾಗಿ ಅನುದಾನ ಘೋಷಿಸಬೇಕು, ವಿವಿಧ ಬೇಡಿಕೆಗಳಾದ ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸಬೇಕು, ಅಭಿವೃದ್ಧಿಗಾಗಿ 250 ಕೋಟಿ ರೂ. ಗಳ ಪ್ರತ್ಯೇಕ ಬಜೆಟ್ ನೀಡಬೇಕು, ವಸತಿ, ಹಾಸ್ಟೆಲ್, ಶಾರ್ಟ್ ಸ್ಟೇ ಹೋಮ್ ಗಳನ್ನು ತಕ್ಷಣ ಒದಗಿಸಬೇಕು, ಪ್ರತಿ ವರ್ಷ ಕನಿಷ್ಠ 500 ಮನೆಗಳನ್ನು ಹಂಚಿಕೆ ಮಾಡಬೇಕು ಎಂದರು. ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಮುಖಂಡರಾದ ಆರಾಧನಾ ಮಾತನಾಡಿ, ಕೃಷಿಯಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬರಿಗೆ ಎರಡು ಎಕರೆ ಕೃಷಿಗೆ ಯೋಗ್ಯ ಭೂಮಿಯನ್ನು ನೀಡಬೇಕು, ಮೈತ್ರಿ ಪಿಂಚಣಿಯನ್ನು ತಿಂಗಳಿಗೆ 2000 ಕ್ಕೆ ಹೆಚ್ಚಿಸಬೇಕು, ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಂಗಳಿಗೆ 5,000 ರೂ. ವೃದ್ಯಾಪ ಪಿಂಚಣಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈ ಬಾರಿ ಬಜೆಟ್ ನಲ್ಲಿ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರು ಹಾಗೂ ನಿವೃತ್ತ ಪ್ರಾಚಾರ್ಯ ಅಲ್ಲಮಪ್ರಭು ಬೆಟ್ಟದೂರು, ಮಂಜುನಾಥ್ ಉಪಸ್ಥಿತರಿದ್ದರು.
ಕುಕನೂರು | ನಾಳೆ(ಫೆ.21) ಪಟ್ಟಣ ಪಂಚಾಯತ್ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ
ಕುಕನೂರು: ಕರ್ನಾಟಕ ಪುರಸಭೆಗಳ ಕಾಯ್ದೆಯನ್ವಯ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಫೆ.21 ರಂದು ಇಂದು ತಹಶೀಲ್ದಾರ್ ಬಸವರಾಜ್ ಬೆಣ್ಣೆಶಿರೂರು ಅವರ ಸಮ್ಮುಖದಲ್ಲಿ ನಡೆಯಲಿದೆ. ಪಟ್ಟಣ ಪಂಚಾಯತಿಯ ಒಟ್ಟು 19 ಸದಸ್ಯರಲ್ಲಿ ಕಾಂಗ್ರೆಸ್ ಪಕ್ಷದ 10 ಮಂದಿ ಹಾಗೂ ಬಿಜೆಪಿ ಪಕ್ಷದ 9 ಮಂದಿ ಸದಸ್ಯರು ಇದ್ದಾರೆ. ಸದಸ್ಯರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ನಾಳೆ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ಬಳಿಕ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಜರುಗಲಿದ್ದು, ಮಧ್ಯಾಹ್ನ 2 ಗಂಟೆಯ ಬಳಿಕ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಅಧ್ಯಕ್ಷೆಯಾಗಿದ್ದ ಲಲಿತಮ್ಮ ಯಡಿಯಾಪುರ ಹಾಗೂ ಉಪಾಧ್ಯಕ್ಷರಾಗಿದ್ದ ಪ್ರಶಾಂತ್ ಆರ್ ಬೆರಳಿನ್ ಅವರ ಅಧಿಕಾರ ಅವಧಿ 15 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದು, ಅವರ ತೆರವಾದ ಸ್ಥಾನಗಳಿಗೆ ಇನ್ನುಳಿದ 15 ತಿಂಗಳ ಅವಧಿಗಾಗಿ ಈ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರು ಮತದಾನದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಇನ್ನೂಳಿದ 15 ತಿಂಗಳ ಅಧಿಕಾರ ಅವಧಿಗೆ ಒಪ್ಪಂದದ ಮೇರೆಗೆ ಸ್ಥಾನ ಹಂಚಿಕೆ ಮಾಡಿಕೊಳ್ಳಲಾಗಿದೆ ಎಂದು ಸದಸ್ಯರು ತಿಳಿಸಿದ್ದಾರೆ. ಈ ಹಿಂದೆ ನಡೆದ ಒಳಒಪ್ಪಂದದ ಪ್ರಕಾರ 16ನೇ ವಾರ್ಡಿನ ಲೀಲಾವತಿ ಮುಧೋಳ್ ಸಂಭಾವ್ಯ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಉಪಾಧ್ಯಕ್ಷರಾಗಿ ಮಂಜುಳಾ ಕಲ್ಮೇನಿ ನೇಮಕವಾಗುವ ಸಾಧ್ಯತೆಯೂ ಇದೆ.
ಕಾನ್ಪುರದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ದಾರುಣ ಘಟನೆ: ಜೇನುನೊಣಗಳ ದಾಳಿಗೆ ಹಿರಿಯ ಅಂಪೈರ್ ಸಾವು
ಕಾನ್ಪುರ: ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದ ವೇಳೆ ನಡೆದ ಜೇನುನೊಣಗಳ ದಾಳಿಗೆ ಕ್ರಿಕೆಟ್ ಅಂಪೈರ್ ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಶುಕ್ಲಗಂಜ್, ಉನ್ನಾವ್ ನ ರಾಹುಲ್ ಸಪ್ರು ಕ್ರೀಡಾಂಗಣದಲ್ಲಿ ದುರಂತ ನಡೆದಿದ್ದು ಅನುಭವಿ ಕ್ರಿಕೆಟ್ ಅಂಪೈರ್ ಆಗಿರುವ ಮಾಣಿಕ್ ಗುಪ್ತಾ(65) ಅವರೇ ಮೃತಪಟ್ಟ ದುರ್ವೈವಿ. ಜೂನಿಯರ್ ಲೀಗ್ ಕ್ರಿಕೆಟ್ ಪಂದ್ಯವೊಂದರ ಪಾನೀಯ ವಿರಾಮದ ಸಮಯದಲ್ಲಿ ಜೇನುನೊಣಗಳ ದಾಳಿಯಿಂದ ಸಾವನ್ನಪ್ಪಿದರು. ಮಾಣಿಕ್ 30 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ರಾಜ್ಯಮಟ್ಟದ ಅಂಪೈರ್ ಆಗಿದ್ದರು. ಘಟನೆಯಲ್ಲಿ ಬಹಳಷ್ಟು ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಾಣಿಕ್ ಗುಪ್ತಾ ಅವರನ್ನು ತಕ್ಷಣವೇ ಶುಕ್ಲಗಂಜ್ ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಎಲ್ಎಲ್ ಆರ್ ಆಸ್ಪತ್ರೆಗೆ ಕರೆಯೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು. ದುರ್ಘಟನೆ ನಡೆದದ್ದು ಹೇಗೆ? ಘಟನೆಯ ಬಗ್ಗೆ ಅವರ ಸಹೋದರ ಅಮಿತ್ ಗುಪ್ತಾ ಅವರು ಎಎನ್ಐ ಜೊತೆ ಮಾತನಾಡಿ, ಅವರ ಪಂದ್ಯ ಅದಾಗಲೇ ಮುಗಿದಿತ್ತು, ಮತ್ತು ಅವರ ಸಹ ಅಂಪೈರ್ ಪ್ರತ್ಯೇಕ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಾನೀಯ ವಿರಾಮದ ಸಮಯದಲ್ಲಿ ಮಾಣಿಕ್ ಗುಪ್ತಾ ಅವರು ಸಹ ಅಂಪೈರ್ ಬಳಿ ಮಾತನಾಡಲೆಂದು ತೆರಳಿದ್ದರು. ಅವರಿಬ್ಬರೂ ಒಟ್ಟಿಗೆ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಜೇನುನೊಣಗಳ ಹಿಂಡೊಂದು ಹಿಂದಿನಿಂದ ಬಂದು ಅಲ್ಲಿದ್ದವಲ್ಲರ ಮೇಲೆ ದಾಳಿ ಮಾಡಿತು. ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ ಮಾಣಿಕ್ ಅವರು ಸಮತೋಲನ ಕಳೆದುಕೊಂಡು ಬಿದ್ದರು. ಈ ವೇಳೆ ದೊಡ್ಡ ಸಂಖ್ಯೆಯ ಜೇನುನೊಣಗಳು ಅವರ ಮೇಲೆರಗಿದವು. ಎಂದು ವಿವರಿಸಿದರು. ಇನ್ನು ಘಟನೆ ಬಗ್ಗೆ ಮಾತನಾಡಿರುವ ಸಹ ಅಂಪೈರ್ ಜಗದೀಶ್ ಶರ್ಮಾ, ಪಾನೀಯ ವಿರಾಮದ ವೇಳೆ ನಮ್ಮ ಮೇಲೆ ಜೇನುನೊಣಗಳ ಹಿಂಡು ದಾಳಿ ಮಾಡಿತು. ನಾವು ಓಡಿ ತಪ್ಪಿಸಿಕೊಂಡೆವು. ಆದರೆ ಹಿರಿಯರಾದ ಮಾಣಿಕ್ ಭಾಯ್ ಗೆ ಜೇನುನೊಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೇನುನೊಣಗಳು ಅಲ್ಲಿದ್ದ ಎಲ್ಲರ ಮೇಲೂ ದಾಳಿ ಮಾಡಿದವು. ಆದರೆ ಕೆಳಗೆ ಬಿದ್ದ ಮಾಣಿಕ್ ತೀವ್ರವಾಗಿ ದಾಳಿಗೊಳಗಾದರು ಎಂದು ಮಾಹಿತಿ ನೀಡಿದರು. 30 ವರ್ಷ ಅಂಪೈರಿಂಗ್ ಅನುಭವ ಅವರು ಸುಮಾರು 30 ವರ್ಷಗಳ ಕಾಲ ಅಂಪೈರಿಂಗ್ ಮಾಡಿದ ಅನುಭವ ಹೊಂದಿದ್ದರು. ಅವರು ರಾಜ್ಯ ಪ್ಯಾನಲ್ ಅಂಪೈರ್ ಆಗಿದ್ದರು ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಸರ್ಕ್ಯೂಟ್ನಲ್ಲಿ ಪ್ರಸಿದ್ಧರಾಗಿದ್ದರು. ಅಂಪೈರ್ ಮಾಣಿಕ್ ಗುಪ್ತಾ ಅವರ ಪಕ್ಕದ ಮನೆಯ ಭರತೇಂದು ಪುರಿ ಅವರು ಘಟನೆಗೆ ದುಃಖತಪ್ತರಾಗಿದ್ದಾರೆ. ಮಾಣಿಕ್ ಗುಪ್ತಾ ಅವರು ತಮ್ಮ ಕುಟುಂಬಕ್ಕೆ ಚಿಕಿತ್ಸೆ ನೀಡಲು ಮತ್ತು ಪೋಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಇದು ವಿಷಾದಕರ ಘಟನೆ. ಒಬ್ಬ ಪ್ರತಿಷ್ಠಿತ ಅಂಪೈರ್ ಮತ್ತು ಕಾನ್ಪುರ್ ಕ್ರಿಕೆಟ್ ಅಸೋಸಿಯೇಷನ್ನ ಸದಸ್ಯರಾಗಿದ್ದ ಅವರು ಕ್ರಿಕೆಟ್ ಗೆ ಸಂಪೂರ್ಣವಾಗಿ ಬದ್ಧರಾಗಿದ್ದರು ಎಂದು ಗುಣಗಾನ ಮಾಡಿದರು.
Explain: ಶಾಲಿನಿ ರಜನೀಶ್ ವಿರುದ್ಧ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಬಂಧನ, ಇನ್ ಸೈಡ್ ಮಾಹಿತಿ ಏನೇನು?
ಮುಡಾದಲ್ಲಿ ಸೈಟ್ ಪಡೆದುಕೊಂಡ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ದ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಬಂಧನ ಆಗಿದೆ. ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸ್ನೇಹಮಯಿ ಕೃಷ್ಣ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ ಇದಕ್ಕೆ ಶಾಲಿನಿ ರಜನೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಬಂಧನ ಆಗಿದೆ.
Punch EV: ಭಾರತದಲ್ಲಿ ಟಾಟಾ ಪಂಚ್-ಇವಿ ಬಿಡುಗಡೆ: 10 ಲಕ್ಷಕ್ಕಿಂತ ಕಡಿಮೆ ಬೆಲೆ, 468 ಕಿ.ಮೀ ರೇಂಜ್
ಟಾಟಾ ಮೋಟರ್ಸ್ (Tata Motors) ಭಾರತದಲ್ಲಿ ತನ್ನ ಜನಪ್ರಿಯ ಎಲೆಕ್ಟ್ರಿಕ್ ಎಸ್ಯುವಿ ಮಾದರಿ ಟಾಟಾ ಪಂಚ್ ಇವಿ (Tata Punch EV) ಫೇಸ್ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಗಳು ಮತ್ತು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಈ ಕಾರು ಮಾರುಕಟ್ಟೆಗೆ ಬಂದಿದೆ. ಈ ಅಪ್ಡೇಟೆಡ್ ಮಾದರಿಯು ಕಂಪನಿಯ ಇವಿ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ
ವೈವಿಧ್ಯತೆ, ಸಮಾನತೆ -ಒಳಗೊಳ್ಳುವಿಕೆ’ ರಾಜ್ಯಮಟ್ಟದ ಕಾರ್ಯಾಗಾರ
ಉಡುಪಿ, ಫೆ.20: ಇಲ್ಲಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರುಸಾ 1.0/ಪಿಎಂ ಉಷಾ ಅನುದಾನದಡಿ ‘ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ’ ಕುರಿತ ರಾಜ್ಯಮಟ್ಟದ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವು ಬುಧವಾರ ಜರಗಿತು. ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಎನ್. ಆನ್ಲೈನ್ ಮೂಲಕ ಭಾಗವಹಿಸಿ, ಪ್ರಸ್ತುತ ಶೈಕ್ಷಣಿಕ ಸುಧಾರಣೆಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ.ಕೆ.ಆರ್.ಕವಿತಾ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಡಾ.ಅಶೋಕ ಕಾಮತ್ ಹಾಗೂ ಡಾ. ಮಂಜುಳಾ ವಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ರುಸಾ ಸಂಯೋಜಕಿ ಕವಿತಾ ಹಾಗೂ ಐಕ್ಯೂಎಸಿ ಸಂಯೋಜಕಿ ಪ್ರೊ.ಶ್ರೀಮತಿ ಅಡಿಗ ಉಪಸ್ಥಿತರಿ ದ್ದರು. ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಮಂಜುನಾಥ್ ವಂದಿಸಿದರು. ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕ ಯೋಗೀಶ್ ಡಿ.ಎಚ್. ಕಾರ್ಯಕ್ರಮ ನಿರೂಪಿಸಿ ದರು. ಈ ವಿಶೇಷ ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಉಪನ್ಯಾಸಕರು ಭಾಗವಹಿಸಿದ್ದರು.
ಫೆ.21 ರಿಂದ ಷರತ್ತುಬದ್ಧವಾಗಿ ಬಂಡೀಪುರ ಸಫಾರಿ ಪುನಾರಂಭ; ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ
ಕೆಲವು ತಿಂಗಳು ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿಯನ್ನು ಸರಕಾರ ಷರತ್ತುಗಳೊಂದಿಗೆ ಪುನಾರಂಭ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿ ಸಫಾರಿ ಕೌಂಟರ್ ಬಳಿ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಫಾರಿ ಕೌಂಟರ್ ಪ್ರವೇಶದ್ವಾರದಲ್ಲಿ ಸಮಾವೇಶಗೊಂಡ ರೈತ ಮುಖಂಡರು, ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಘೋಷಣೆ ಕೂಗಿದರು.
ಚೈನೀಸ್ ರೋಬೊಡಾಗ್ ವಿವಾದ: ಪ್ರೊ. ನೇಹಾ ಸಿಂಗ್ ಅಮಾನತು ಮಾಡಿಲ್ಲ ಎಂದು ಗ್ಯಾಲ್ಗೋಟಿಯಾಸ್ ವಿವಿ ಸ್ಪಷ್ಟನೆ, ಯಾರೀಕೆ?
ಜಾಗತಿಕ 2026 ಚೈನೀಸ್ ರೋಬೊ ಡಾಗ್ ಅನ್ನು ಖರೀದಿಸಿ ನಾವೇ ತಯಾರಿಸಿದ್ದು, ಎಂದು ಹೇಳುವ ಮೂಲಕ ಭಾರಿ ವಿವಾದಕ್ಕೆ ಸೃಷ್ಟಿ ಮಾಡಿದ್ದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರೊ. ನೇಹಾ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿಲ್ಲ ಎಂದು ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದೆ. ಹಾಗಾದ್ರೆ, ಶೃಂಗಸಭೆಯಲ್ಲಿ ಈ ವಿಶ್ವವಿದ್ಯಾಲಯ ಮಾಡಿದ ಒಂದು ಎಡವಟ್ಟು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದೇಗೆ? ವಿವಾದಾತ್ಮಕ ಹೇಳಿಕೆ ನೀಡಿದ ಈ ನೇಹಾ ಸಿಂಗ್ ಯಾರು ಮಾಹಿತಿ ಇಲ್ಲಿದೆ.
‘ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ’ ಹಿರಿಯ ರಂಗಕರ್ಮಿಗಳು ಆಯ್ಕೆ
ಉಡುಪಿ, ಫೆ.20: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ನೀಡುವ ಶಂಕರ್ ರೂಫಿಂಗ್ ಸಿಸ್ಟಮ್ ದತ್ತಿ ನಿಧಿ ಪ್ರಯೋಜಿತ ಮಲರ್ಬಾ ವಿಶ್ವರಂಗ ಪುರಸ್ಕಾರ 2026ಕ್ಕೆ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ. ಗೀತಾ ಸುರತ್ಕಲ್(ರಂಗ ನಟಿ), ಶ್ರೀಪತಿ ಮಂಜನಬೈಲು ಬೆಂಗಳೂರು (ರಂಗ ನಟ), ಎಸ್.ನಿತ್ಯಾನಂದ ಪೈ ಕಾರ್ಕಳ(ರಂಗ ಸಂಘಟನೆ), ಅವಿನಾಶ್ ಕಾಮತ್ ಮುಂಬೈ(ರಂಗ ನಟ), ಬಿ.ಎಸ್.ರಾಮ್ ಶೆಟ್ಟಿ ಹಾರಾಡಿ(ರಂಗ ನಿರ್ದೇಶನ ) ಅವರಿಗೆ ಮಾ.26ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ನಗದು, ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರಿ ಶಾಲೆಯ ವಿದ್ಯಾರ್ಥಿಗಳೂ ಸಾಧಿಸಲು ಸಮರ್ಥರು: ಎಂ.ಎ.ಗಫೂರ್
ಉಡುಪಿ, ಫೆ.20: ಸರಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಬೌದ್ಧಿಕವಾಗಿಯೂ ಮಾನಸಿಕ ವಾಗಿಯೂ ಸಮರ್ಥರಿದ್ದಾರೆ. ಅವರಿಗೆ ಅನುಕೂಲತೆಗಳನ್ನು ಮತ್ತು ಅವಕಾಶಗಳನ್ನು ಒದಗಿಸಿಕೊಟ್ಟಲ್ಲಿ ಅವರು ಉನ್ನತವಾದ ಸಾಧನೆಯನ್ನು ಮಾಡಬಲ್ಲರು. ಈ ದಿಸೆಯಲ್ಲಿ ಸಂಘ ಸಂಸ್ಥೆಗಳೂ ಕೂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಅಭಿಪ್ರಾಯಪಟ್ಟಿದ್ದಾರೆ. ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಣಿಪಾಲ್ ಪೇಮೆಂಟ್ ಅಂಡ್ ಐಡೆಂಟಿಟಿ ಸೊಲ್ಯೂಷನ್ಸ್ ಲಿಮಿಟೆಡ್ ರವರಿಂದ ಸುನಿಧಿ ಫೌಂಡೇಶನ್ ಟ್ರಸ್ಟ್ ಮೂಲಕ ಕೊಡ ಮಾಡಲಾದ ಸುಮಾರು 2 ಲಕ್ಷ ರೂ. ಮೌಲ್ಯದ ವಿಜ್ಞಾನ ಪ್ರಯೋಗೋಪಕರಣಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ, ಸುನಿಧಿ ಫೌಂಡೇಶನ್ನ ರೂಪಶ್ರೀ ರತ್ನಾಕರ್, ಪ್ರಾಂಶುಪಾಲ ಜಗದೀಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಡಯಟ್ ಉಪನ್ಯಾಸಕ ಯೋಗ ನರಸಿಂಹಸ್ವಾಮಿ, ಮುಖ್ಯೋಪಾಧ್ಯಾಯನಿ ಇಂದಿರಾ ಬಿ. ಮತ್ತು ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.
Kalaburagi | ಪರೀಕ್ಷೆಯಲ್ಲಿ ನಕಲು ತಡೆದ ಶಿಕ್ಷಕನ ಮೇಲೆ ವಿದ್ಯಾರ್ಥಿ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕಲಬುರಗಿ: ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿ ತಡೆಯಲು ಮುಂದಾದ ಪರೀಕ್ಷಾ ಮೇಲ್ವಿಚಾರಕರ ಮೇಲೆ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿದ ಘಟನೆ ನಗರದ ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜನಲ್ಲಿ ನಡೆದಿದೆ. ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ ವಿಷಯದ ಆಂತರಿಕ ಪರೀಕ್ಷೆ (ಇಂಟರ್ನಲ್ ಎಕ್ಸಾಮ್) ನಡೆಯುತ್ತಿದ್ದ ವೇಳೆ ಶಹಬಾಜ್ ಎಂಬ ವಿದ್ಯಾರ್ಥಿ ಮೊಬೈಲ್ ಫೋನ್ ಬಳಸಿ ನಕಲು ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕುಮಾರ್ ಎಂಬುವವರು ವಿದ್ಯಾರ್ಥಿಯನ್ನು ಪ್ರಶ್ನಿಸಿ, ಉತ್ತರ ಪತ್ರಿಕೆಯನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಪತ್ರಿಕೆ ಪಡೆದು ತರಗತಿ ಕೊಠಡಿಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದರಿಂದ ವಿದ್ಯಾರ್ಥಿ ಕೋಪಗೊಂಡು ಸಹಾಯಕ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಪರೀಕ್ಷಾ ಹಾಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಇತರೆ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಆರೋಪಿತ ವಿದ್ಯಾರ್ಥಿ ಪರೀಕ್ಷಾ ಹಾಲ್ನಿಂದ ತೆರಳಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಯ ಪೋಷಕರ ಗಮನಕ್ಕೆ ವಿಚಾರವನ್ನು ತಂದಿದ್ದು, ಶಿಸ್ತು ಕ್ರಮವಾಗಿ ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಈವರೆಗೂ ಹಲ್ಲೆಗೆ ಒಳಗಾದ ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲವೆಂದು ತಿಳಿದುಬಂದಿದೆ. ಬ್ರಹ್ಮಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊಸದಿಲ್ಲಿ: ದಿಲ್ಲಿಯಲ್ಲಿ ಆಯೋಜನೆಗೊಂಡಿರುವ AI ಇಂಪ್ಯಾಕ್ಟ್ ಶೃಂಗಸಭೆಗೆ ಬ್ರಿಟನ್ ನ ಉಪ ಪ್ರಧಾನಮಂತ್ರಿ ಡೇವಿಡ್ ಲ್ಯಾಮಿ ಅವರೊಂದಿಗೆ ತಡವಾಗಿ ಆಗಮಿಸಿದ ಬ್ರಿಟನ್ ನ ಮಾಜಿ ಪ್ರಧಾನಿ ರಿಷಿ ಸುನಕ್, “ಕೃತಕ ಬುದ್ಧಿಮತ್ತೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿದ್ದರೂ, ಭಾರತದ ರಾಷ್ಟ್ರ ರಾಜಧಾನಿ ದಿಲ್ಲಿಯ ಸಂಚಾರ ದಟ್ಟಣೆ ಸಮಸ್ಯೆಯನ್ನು ಈಗಲೂ ಪರಿಹರಿಸಲು ಸಾಧ್ಯವಾಗಿಲ್ಲ” ಎಂದು ತಮಾಷೆ ಮಾಡಿದ ಘಟನೆ ನಡೆದಿದೆ. ಅವರು ಹೀಗೆ ಹೇಳುತ್ತಿದ್ದಂತೆಯೇ ಸಭಿಕರು ನಗೆಗಡಲಲ್ಲಿ ತೇಲಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ರಿಷಿ ಸುನಕ್, “ನಾವು ಕೆಲ ನಿಮಿಷ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ. ಅದು ಸಂಪೂರ್ಣವಾಗಿ ನನ್ನ ತಪ್ಪು. ನಾವು ಈ ವಾರ ಕೇಳಿದಂತೆ ಕೃತಕ ಬುದ್ಧಿಮತ್ತೆ ಹಲವಾರು ಕೆಲಸಗಳನ್ನು ಮಾಡಬಲ್ಲದು. ಆದರೆ, ಅದಕ್ಕಿನ್ನೂ ದಿಲ್ಲಿಯ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅದನ್ನು ಮಾಡಲು ಮುಂದಾಗಿ,” ಎಂದು ಹಾಸ್ಯಮಯವಾಗಿ ಹೇಳಿದರು. ಆದರೆ, ರಿಷಿ ಸುನಕ್ ಅವರ ಲಘು ಧಾಟಿಯ ಮಾತುಗಳು ಅಲ್ಲಿಗೇ ನಿಲ್ಲಲಿಲ್ಲ. ನರೇಂದ್ರ ಮೋದಿಯವರ ಕೃತಕ ಬುದ್ಧಿಮತ್ತೆ ಕುರಿತ ದೂರದೃಷ್ಟಿಯನ್ನು ಶ್ಲಾಘಿಸಿದ ಅವರು, ಭಾರತ ಕೃತಕ ಬುದ್ಧಿಮತ್ತೆಯಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿದ್ದರೂ, ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಬ್ರಿಟನ್ ಈಗಲೂ ಭಾರತಕ್ಕಿಂತ ಮೇಲಿದೆ ಎಂದು ಮತ್ತೊಮ್ಮೆ ಹಾಸ್ಯ ಚಟಾಕಿ ಹಾರಿಸಿದರು. “ಕೊಂಚ ಬೇಸರವಾದರೂ, ಭಾರತ ಆ ಸ್ಥಾನವನ್ನು ಪಡೆಯಲು ಬ್ರಿಟನ್ ಅನ್ನು ಹಿಂದಿಕ್ಕಿದೆ. ನಾನು ಕೆಲ ಕ್ಷಣಗಳ ಹಿಂದಷ್ಟೇ ಭಾರತದ ಪ್ರಧಾನಿಯನ್ನುದ್ದೇಶಿಸಿ ಹೇಳಿದಂತೆ, ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಇಂಗ್ಲೆಂಡ್ ಈಗಲೂ ಮುಂದಿದೆ; ಇದು ಬಹಳ ಮುಖ್ಯ,” ಎಂದು ವಿನೋದಮಯವಾಗಿ ಹೇಳಿದರು. ಭಾರತ್ ಮಂಟಪಂನಲ್ಲಿ ಆಯೋಜನೆಗೊಂಡಿರುವ AI ಇಂಪ್ಯಾಕ್ಟ್ ಶೃಂಗಸಭೆಯ ಪ್ರಯುಕ್ತ ವಿಐಪಿಗಳ ಸಂಚಾರಕ್ಕಾಗಿ ಹಲವು ಮಾರ್ಗಗಳನ್ನು ಬದಲಿಸಲಾಗಿದ್ದು, ಇದರಿಂದ ದಿಲ್ಲಿಯಾದ್ಯಂತ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಗಮನಾರ್ಹ ಪ್ರಮಾಣದ ವಿಳಂಬವಾಗುತ್ತಿದೆ ಎಂದು ಸವಾರರು ತಿಳಿಸಿದ್ದು, ದಿಲ್ಲಿಯ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರವು ತೆವಳುತ್ತಿದೆ ಅಥವಾ ಸಂಪೂರ್ಣವಾಗಿ ನಿಲುಗಡೆಯ ಹಂತಕ್ಕೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಿ ಸುನಕ್ ಮೇಲಿನಂತೆ ತಮಾಷೆ ಮಾಡಿದ್ದಾರೆ.
ಆಳಂದ | ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಆಳಂದ: ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮಹಾನ್ ಯೋಧರಷ್ಟೇ ಅಲ್ಲ, ಅವರು ಶೌರ್ಯ, ಸ್ವಾಭಿಮಾನ, ನ್ಯಾಯ ಮತ್ತು ಸುವ್ಯವಸ್ಥೆಯ ಆದರ್ಶ ಪ್ರತೀಕರಾಗಿದ್ದಾರೆ ಎಂದು ತಾಲೂಕು ಮರಾಠಾ ಸಮಾಜದ ಕಾರ್ಯದರ್ಶಿ ಪ್ರಕಾಶ ಮಾನೆ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅತ್ಯಂತ ಗೌರವ ಹಾಗೂ ಸಾಂಸ್ಕೃತಿಕ ಭಾವೋದ್ರೇಕದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಿದ ಮಹಾರಾಜರು, ಜನಸಾಮಾನ್ಯರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಆಡಳಿತ ನಡೆಸಿದ ಶ್ರೇಷ್ಠ ಆಡಳಿತಗಾರರಾಗಿದ್ದರು. ಅವರ ಆಡಳಿತ ವ್ಯವಸ್ಥೆ ಇಂದಿಗೂ ಪ್ರಜಾಪ್ರಭುತ್ವಕ್ಕೆ ದಿಕ್ಕು ತೋರಿಸುವಂತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭಧಲ್ಲಿ ಮರಾಠಾ ಸಮಾಜದ ಅಧ್ಯಕ್ಷ ನರೇಶ ಬೋಸ್ಲೆ, ಉಪಾಧ್ಯಕ್ಷ ಸಂಜಯ ಇಂಗಳೆ, ಕಾರ್ಯದರ್ಶಿ ಪ್ರಕಾಶ ಮಾನೆ, ನಗರಾಧ್ಯಕ್ಷ ದತ್ತಾ ಬಾಬರೆ, ಖಜಾಂಚಿ ಸಂಜಯ ಮೋರೆ, ಭಾಪುರಾವ್ ಬೋಸ್ಲೆ, ದೀಲಿಪ ಸಿಂಧೆ, ರತನ ಬೋಸ್ಲೆ, ಮನೋಹರ್ ಉಮರೆ, ಅಂಕುಶ ಪವಾರ, ಸಾಗರ ಪವಾರ, ಗಂಗೇಶ ಬೋಸ್ಲೆ, ವಿನಾಯಕ ಬೋಸ್ಲೆ ಮತ್ತು ರಾಜ್ಯ ಸರ್ಕಾರಿ ನೌಕರ ಸಂಘದ ಮುಖಂಡ ಲೋಕೇಶ ಜಾಧವ, ಕಂದಾಯ ಇಲಾಖೆಯ ಮಹಾದೇವ ಸೇರಿದಂತೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕ ಪ್ರತಿನಿಧಿಗಳು ಇದ್ದರು.
ಆಳಂದ ಬಸ್ ನಿಲ್ದಾಣ ಕಟ್ಟಡ ಪರಿಶೀಲಿಸಿದ ಅರುಣ್ ಕುಮಾರ್ ಪಾಟೀಲ್
ಆಳಂದ: ಕೆಕೆಆರ್ಡಿಬಿ ಅನುದಾನದ 5 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡಿರುವ ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ನೂತನ ಕಟ್ಟಡ ಕಾಮಗಾರಿಯನ್ನು ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಅವ್ಯವಸ್ಥೆ, ಪ್ರಯಾಣಿಕರ ಅಸೌಕರ್ಯ ಹಾಗೂ ತಾತ್ಕಾಲಿಕ ಬಸ್ ನಿಲ್ದಾಣದ ಕೊರತೆಗಳನ್ನು ಕಣ್ಣಾರೆ ಕಂಡ ಅವರು, ಕೂಡಲೇ ಸರಿಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಸಮರ್ಪಕ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ರೂಪಿಸಬೇಕು. ಪ್ರಯಾಣಿಕರು ನಿಲ್ಲುವ ಶೆಡ್ನ್ನು ವಿಸ್ತರಿಸಿ ಮಳೆ–ಬಿಸಿಲಿನಿಂದ ರಕ್ಷಣೆ ದೊರೆಯುವಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು. ಕಾಮಗಾರಿ ಸ್ಥಳದಲ್ಲಿ ಬಸ್ಗಳ ನಿಲುಗಡೆ ಹಾಗೂ ಜನಜಂಗುಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಬಸ್ ನಿಲ್ದಾಣ ವಿಸ್ತರಣೆಗೆ ಅಗತ್ಯವಾಗಿರುವ ಎಪಿಎಂಸಿಯಿಂದ ಮಾತುಕತೆಯಲ್ಲಿ ಇರುವ 20 ಗುಂಟೆ ಜಮೀನನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲೇ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು. ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ಕಾಮಗಾರಿ ಚುರುಕುಗೊಳಿಸುವುದರ ಜೊತೆಗೆ ಈ ಅವಧಿಯಲ್ಲಿ ಪ್ರಯಾಣಿಕರ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಈ ವೇಳೆ ಆಳಂದ ಬಸ್ ಡಿಪೋ ಘಟಕಕ್ಕೂ ಭೇಟಿ ನೀಡಿ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿದರು. ಪಾರ್ಕಿಂಗ್ ಪ್ರದೇಶದಲ್ಲಿ ಸಿಸಿ ರಸ್ತೆ ನಿರ್ಮಾಣ, ಬಸ್ ದುರಸ್ತಿಗೆ ನವೀನ ಯಂತ್ರೋಪಕರಣಗಳ ಒದಗಿಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು. ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಫಜಲಪುರ | ಸಮಾನತೆಗಾಗಿ ಎಲ್ಲರೂ ಕೈಜೋಡಿಸಲಿ: ಅರುಣಕುಮಾರ ಪಾಟೀಲ
ಅಸ್ಪೃಶ್ಯತಾ ನಿರ್ಮೂಲನೆಗೆ ಅರಿವು ಕಾರ್ಯಕ್ರಮ
`ಇದು ನಾಚಿಕೆಗೇಡು': ಎಐ ಸಮ್ಮಿಟ್ ನಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿಗರು
Youth Congress Protest- ಇಂಡಿಯಾ ಎಐ ಶೃಂಗಸಭೆ ನಡೆಯುತ್ತಿರುವ ಭಾರತ ಮಂಟಪಮ್ ನಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿನ ನಡೆಸಿದ ಪ್ರತಿಭಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸಮ್ಮಿಟ್ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆಯ ಮಾತುಗಳನ್ನಾಡಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಮಾಡಿರುವ ಅಪಮಾನ ಎಂದು ಬಿಜೆಪಿ ಮುಖಂಡರು ಹರಿಹಾಯ್ದಿದ್ದಾರೆ. ಜೊತೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೇ ಈ ಪ್ರತಿಭಟನೆಯ ಸೂತ್ರಧಾನ ಎಂದು ಬಿಜೆಪಿಗರು ಆರೋಪಿಸಿದ್ದಾರೆ.
Kalaburagi | ಸಮ್ಮೇಳನಗಳಿಂದ ವಿದ್ಯಾರ್ಥಿಗಳ ಮೆದುಳು ಚುರುಕು : ಬಸವರಾಜ ದೇಶಮುಖ
ಕಲಬುರಗಿ: ಅಂತರಾಷ್ಟ್ರೀಯ ಉನ್ನತ ಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಲ್ಲಿ ಸಂಶೋಧನಾ ಕೌಶಲ್ಯ ವೃದ್ಧಿಯಾಗುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮತ್ತು ಶರಣಬಸವ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಬಸವರಾಜ ದೇಶಮುಖ ಅಭಿಪ್ರಾಯಪಟ್ಟರು. ಶುಕ್ರವಾರ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ನಡೆದ “ಸಮಗ್ರ ಬುದ್ಧಿಮತ್ತೆ ಮತ್ತು ಸಂವಹನ ವ್ಯವಸ್ಥೆಗಳು” ಕುರಿತ 3ನೇ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಸಮ್ಮೇಳನಗಳ ಸಂಘಟನೆಗೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ವಿಟಿಯು ಪಿಜಿ ಅಧ್ಯಯನ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಡಾ. ಡಿ.ಸಿ. ಶುಭಾಂಗಿ ಮಾತನಾಡಿ, ಸಮಗ್ರ ಬುದ್ಧಿಮತ್ತೆ ಮತ್ತು ಸಂವಹನ ವ್ಯವಸ್ಥೆಗಳ ಕ್ಷೇತ್ರವು ಉದಯೋನ್ಮುಖ ಸಂಶೋಧನಾ ವಲಯವಾಗಿದ್ದು, ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂಶೋಧನೆಗೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕರೆ ನೀಡಿದರು. ಇಡೀ ಕಲ್ಯಾಣ ಕರ್ನಾಟಕಕ್ಕೆ ಐಇಇಇ ಸಂಪರ್ಕ ಒದಗಿಸುವ ಜವಾಬ್ದಾರಿಯನ್ನೂ ವಿಶ್ವವಿದ್ಯಾಲಯ ಹೊತ್ತಿದೆ ಎಂದರು. ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನಕ್ಕೆ ಭಾರತ ಸೇರಿದಂತೆ ವಿವಿಧ ದೇಶಗಳಿಂದ 1600ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಸುಮಾರು 235 ಪ್ರಬಂಧಗಳನ್ನು ಪರಿಶೀಲನೆಯ ಬಳಿಕ ಅಂಗೀಕರಿಸಲಾಗಿದೆ ಎಂದು ತಿಳಿಸಿದರು. ಸಮ್ಮೇಳನದ ಸಮಿತಿಯ ಅಧ್ಯಕ್ಷರಾದ ವಿವಿಯ ಕುಲಸಚಿವರಾದ ಡಾ. ಲಕ್ಷ್ಮಿ ಪಾಟೀಲ್ ಮಾಕಾ ಸಮ್ಮೇಳನದ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಭಾಷಣಕಾರರಾದ ಪೋರ್ಚುಗಲ್ನ ಲಿಸ್ಬನ್ನಲ್ಲಿರುವ ಇನ್ಸ್ಟಿಟ್ಯೂಟ್ ಡಿಇ ಟೆಲಿಕಮ್ಯುನಿಕೇಶನ್ನ ಹಿರಿಯ ಸಂಶೋಧಕ ಡಾ. ರೊಡಾಲ್ಫೊ ಓಲಿವೇರಾ ಮತ್ತು ಮಂಡಿಯ ಐಐಟಿ ಸ್ಕೂಲ್ ಆಫ್ ಕಂಪ್ಯೂಟಿಂಗ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನ ಡಾ. ದಿನೇಶ್ ಸಿಂಗ್, ಬೆಂಗಳೂರಿನ ಶ್ರೀ ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ. ಕೆ. ಎಲ್. ಹೇಮಲತಾ, ಶರಣಬಸವ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ. ವಿ. ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ. ಎಸ್. ಎಚ್. ಹೊನ್ನಳ್ಳಿ ಮತ್ತು ಹಣಕಾಸು ಅಧಿಕಾರಿ ಡಾ. ಕಿರಣ್ ಮಾಕಾ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು. ಡಾ. ಶಿವಕುಮಾರ ಜವಳಿಗಿ ಸ್ವಾಗತಿಸಿದರು. ಡಾ. ಸುಜಾತಾ ವಿ. ಮಲ್ಲಾಪುರ ವಂದಿಸಿದರು.
ಅಫಜಲಪುರ | ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಅದ್ವಿಕ್ ಸೂಪರ್ ಚಾಂಪಿಯನ್
ಅಫಜಲಪುರ: ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಹಾಗೂ ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ಕಲಬುರಗಿ ನಗರದ ಎಸ್.ಆರ್.ಎನ್ ಮೆಹ್ತಾ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಅದ್ವಿಕ ವಿಜಯ್ ಕುಮಾರ್ ಮಾಂಜರೆ ಸೂಪರ್ ಚಾಂಪಿಯನ್ಶಿಪ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಗ್ಯಾಲಕ್ಸಿ ಇಂಟರ್ನ್ಯಾಷನಲ್ ಮೆಹ್ತಾ ಅಬಾಕಸ್ ಸಂಸ್ಥೆಯ ಸ್ಥಾಪಕಿ ರಚನಾ ಮೆಹತಾ ಅವರ ನೇತೃತ್ವದಲ್ಲಿ ಆಯೋಜಿಸಲಾದ ನ್ಯಾಷನಲ್ ಲೆವಲ್ ಅಬಾಕಸ್ ಅಂಡ್ ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ದೇಶದ 7 ರಾಜ್ಯಗಳಿಂದ 450ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದವು. ಕಠಿಣ ಸ್ಪರ್ಧೆಯಲ್ಲಿ ಅದ್ವಿಕ್ ಕೇವಲ ಏಳು ನಿಮಿಷಗಳಲ್ಲಿ ಅಬಾಕಸ್ ಬಿ-ಗ್ರೂಪ್ ಮಟ್ಟದ 150 ಗಣಿತ ಸಮಸ್ಯೆಗಳನ್ನು ಬಗೆಹರಿಸಿ ಅಸಾಧಾರಣ ಪ್ರತಿಭೆ ತೋರಿದ್ದಾನೆ. ಈ ಸಾಧನೆಯ ಹಿನ್ನೆಲೆಯಲ್ಲಿ ದುಬೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಅಬಾಕಸ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಕುಟುಂಬದ ಜೊತೆಗೆ ಕಲಬುರಗಿ ಜಿಲ್ಲೆಗೆ ಗೌರವ ತಂದಿದ್ದಾನೆ. ಈ ಸಂದರ್ಭದಲ್ಲಿ ಯಲ್ಲಮ್ಮಾ ಕೃಷ್ಣ ಸಿಂಗೆ, ಜ್ಯೋತಿ ಲಕ್ಷ್ಮಿ ಶೇರೇಕರ್, ಚಿದಾನಂದ ಕೆಳಗಿನ ತೋಟ, ಶಿವಕಾಂತಮ್ಮ, ವಾರ್ಡನ್ ಕೃಷ್ಣ ಸಿಂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಯಡ್ರಾಮಿ ಪ್ರಜಾಸೌಧಕ್ಕೆ 5 ಎಕರೆ ಭೂಮಿದಾನ ಮಾಡಿದ ಪ್ರಭಾವತಿ ಧರಂಸಿಂಗ್
ಜೇವರ್ಗಿ: ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರಂಸಿಂಗ್ ಅವರ ಪತ್ನಿ ಪ್ರಭಾವತಿ ಧರಂಸಿಂಗ್ ಅವರು ಯಡ್ರಾಮಿ ತಾಲೂಕಿನ ಅಭಿವೃದ್ಧಿಗಾಗಿ 5 ಎಕರೆ ಜಮೀನನ್ನು ‘ಪ್ರಜಾಸೌಧ’ ನಿರ್ಮಾಣಕ್ಕೆ ದಾನವಾಗಿ ನೀಡುವ ಮೂಲಕ ಜನಪರ ಕಾಳಜಿ ಮೆರೆದಿದ್ದಾರೆ. ಯಡ್ರಾಮಿ ತಾಲೂಕಿನ ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಕೆಕೆಆರ್ಡಿಬಿ ಹಾಗೂ ಕಂದಾಯ ಇಲಾಖೆಯ ಸಹಯೋಗದಲ್ಲಿ ‘ಪ್ರಜಾಸೌಧ’ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಗುರುವಾರ ಜೇವರ್ಗಿ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ಪ್ರಭಾವತಿ ಧರಂಸಿಂಗ್ ಅವರು, ಸರ್ಕಾರದ ಹೆಸರಿಗೆ ಭೂಮಿಯನ್ನು ದಾನ ಮಾಡುವ ನೋಂದಣಿ ಪತ್ರಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಯಡ್ರಾಮಿ ತಹಶೀಲ್ದಾರ್ ಯಲ್ಲಪ್ಪ ಸುಭೇದಾರ್, ಮುಖಂಡರಾದ ರಜಾಕ್ ಮುನಿಯಾರ್, ಹಯ್ಯಳಪ್ಪ ಗಂಗಾಕರ್, ಮೆಹಬೂಬ್ ಪಟೇಲ್ ಸೇರಿದಂತೆ ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕಿ ಹಣ ಪಾವತಿಸದಿದ್ದರೆ ಮಾ. 6 ರಂದು ಪ್ರತಿಭಟನೆ; ಗುತ್ತಿಗೆದಾರರಿಂದ ಸರ್ಕಾರಕ್ಕೆ ಎಚ್ಚರಿಕೆ
ಮೂರು ವರ್ಷಗಳಿಂದ ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿರುವ 37 ಸಾವಿರ ಕೋಟಿ ರೂಪಾಯಿ ಬಿಲ್ ತಕ್ಷಣ ಪಾವತಿಸಬೇಕು. ಇಲ್ಲವಾದರೆ, ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಎಚ್ಚರಿಸಿದರು.
ಕರಾವಳಿಗೆ ಬರುವ ಪ್ರವಾಸಿಗರ ಫೇವರೆಟ್ ತಾಣವಾಗುತ್ತಿದೆ ಪಿಲಿಕುಳ: ಶಾಲಾ ಶೈಕ್ಷಣಿಕ ಪ್ರವಾಸಕ್ಕೂ ಪಿಲಿಕುಳವೇ ಬೆಸ್ಟ್
ಕರಾವಳಿಯಲ್ಲಿ ಇತ್ತೀಚಿನ ಸಾಲಿನಲ್ಲಿ ಪ್ರವಾಸೋದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಕರಾವಳಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಪಿಲಿಕುಳಕ್ಕೆ ಭೇಟಿ ನೀಡುವ ವಾಡಿಕೆ ಹೆಚ್ಚಾಗುತ್ತಿದ್ದು, ಕರಾವಳಿಯಲ್ಲಿ ಪಿಲಿಕುಳ ಪ್ರವಾಸಿಗರ ಫೇವರೆಟ್ ಹಾಟ್ ಸ್ಪಾಟ್ ಆಗಿ ಮಾರ್ಪಡುತ್ತಿದೆ. ಇದು ಕೇವಲ ಹಿರಿಯರನ್ನು ಮಾತ್ರವಲ್ಲದೆ, ಪುಟಾಣಿಗಳು ಹಾಗೂ ಶಾಲ ಮಕ್ಕಳೂ ಸೇರಿದಂತೆ ವಿದೇಶಿಗರನ್ನು ಆಕರ್ಷಿಸುತ್ತಿದೆ.
ಮಧ್ಯಾಹ್ನದ ಚಹಾವನ್ನು ಆರೋಗ್ಯಕರವಾಗಿ ಬದಲಿಸುವುದು ಹೇಗೆ?
ಬಹಳಷ್ಟು ಮಂದಿಗೆ ಮಧ್ಯಾಹ್ನದ ಚಹಾ ಆರಾಮದಾಯಕ ಸಂಪ್ರದಾಯ ಅಥವಾ ಸಾಮಾಜಿಕ ಅಭ್ಯಾಸ. ಇದನ್ನೇ ಜೀರ್ಣಕ್ರಿಯೆಗೆ ನೆರವಾಗುವ ಆಂಟಿ ಆಕ್ಸಿಂಡಂಟ್ ಶ್ರೀಮಂತ ಪಾನೀಯವಾಗಿ ಬದಲಾಯಿಸಬಹುದು. ಸೂಕ್ತವಾಗಿ ತಯಾರಿಸಿದಲ್ಲಿ ಮಧ್ಯಾಹ್ನ ನಂತರದ ಚಹಾವನ್ನು ಆರೋಗ್ಯಕರವಾಗಿಸಬಹುದು ಎನ್ನುತ್ತಾರೆ ಜಠರಕರುಳಿನತಜ್ಞ ಡಾ ಸೌರಭ್ ಸೇಥಿ. “ಜಠರಕರುಳಿನ ತಜ್ಞನಾಗಿರುವ ನಾನು ನನ್ನ ಸಂಜೆಯ ಕರಿ ಚಹಾವನ್ನು ಹೇಗೆ ಸೇವಿಸುತ್ತೇನೆ ಎನ್ನುವುದನ್ನು ತಿಳಿಸುತ್ತೇನೆ. 5 ಸರಳ ಹಂತಗಳಲ್ಲಿ ಚಹಾವನ್ನು ಜಠರ ಸ್ನೇಹಿಯಾಗಿ ಬದಲಿಸಬಹುದು” ಎನ್ನುತ್ತಾರೆ ಸೌರಭ್. ಚಹಾ ಮಾಡುವುದು ಹೇಗೆ? - ನೀರು ಮತ್ತು ಚಹಾ ಎಲೆಗಳನ್ನು ಹಾಲು ಹಾಕದೆ ಕುದಿಸಿ. ಕರಿ ಚಹಾದಲ್ಲಿ ಪಾಲಿಫೀನಾಲ್ಗಳು ಮತ್ತು ಆ್ಯಂಟಿ ಆಕ್ಸಿಡಂಟ್ಸ್ ಸಮೃದ್ಧವಾಗಿರುತ್ತದೆ. - ಅದು ಕುದಿಯುತ್ತಿರುವಾಗ ಸಣ್ಣ ಗಾತ್ರದ ಶುಂಠಿಯನ್ನು ಬೆರೆಸಿ. ಇದು ಕರುಳಿನ ಚಲನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ನೆರವಾಗುತ್ತದೆ. - ಕೆಲವು ಏಲಕ್ಕಿ ಬೀಜಗಳನ್ನು ಪುಡಿ ಮಾಡಿ ಅದರಲ್ಲಿ ಹಾಕಿ. ಹೊಟ್ಟೆ ಉಬ್ಬರಿಸುವುದು ಕಡಿಮೆಯಾಗಲು ಮತ್ತು ಸ್ವಾಭಾವಿಕ ಸಕ್ಕರೆಯ ಪರಿಮಳ ಸಿಗಲಿದೆ. - ಸಣ್ಣ ತುಂಡು ಲವಂಗ ಸೇರಿಸಿ. ಅದು ಯಕೃತ್ತಿನ ಕಾರ್ಯವನ್ನು ಬೆಂಬಲಿಸುವ ಸಂಯುಕ್ತವಾದ ಯುಜೆನಾಲ್ ಅನ್ನು ಹೊಂದಿರುತ್ತದೆ. - ಒಮ್ಮೆ ಕುದಿದ ಬಳಿಕ ಚಹಾವನ್ನು ಸೋಸಿ ತಣ್ಣಗಾಗಲು ಬಿಡಿ. ನಂತರ ಸಿಹಿಗಾಗಿ ಜೇನುತುಪ್ಪ ಚಿಮುಕಿಸಬಹುದು. ಬಹಳಷ್ಟು ಮಂದಿಗೆ ಮಧ್ಯಾಹ್ನದ ಚಹಾ ಆರಾಮದಾಯಕ ಸಂಪ್ರದಾಯ. ಸಾಮಾಜಿಕ ಅಭ್ಯಾಸ. ಇದನ್ನೇ ಜೀರ್ಣಕ್ರಿಯೆಗೆ ನೆರವಾಗುವ ಆಂಟಿ ಆಕ್ಸಿಂಡಂಟ್ ಶ್ರೀಮಂತ ಪಾನೀಯವಾಗಿ ಬದಲಾಯಿಸಬಹುದು. ಅದರಿಂದ ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆ ಬೆಳೆಯುತ್ತದೆ. ಸೂಕ್ತವಾಗಿ ಕುದಿಸುವುದು ಮತ್ತು ಸೂಕ್ತ ಅಂಶಗಳನ್ನು ಬೆರೆಸಿದಲ್ಲಿ ಕೆಫೇನ್ನ ಮೂಲವಾಗಿರದೆ, ಉತ್ತಮ ಪಾನೀಯವಾಗುತ್ತದೆ. ಚಹಾದಿಂದ ಉರಿಯೂತ ಶಮನ “ಮೊದಲ ಹೆಜ್ಜೆ ಗುಣಮಟ್ಟದ ಚಹಾಗೆ ಬಳಸುವ ಎಲೆಯನ್ನು ಗಮನಿಸಬೇಕು. ಕರಿ ಚಹಾದಲ್ಲಿ ಥಿಯಾಫ್ಲಾವಿನ್ಗಳಿವೆ. ಹೀಗಾಗಿ ಜೀವಕೋಶಗಳನ್ನು ರಕ್ಷಿಸುತ್ತವೆ ಮತ್ತು ಉರಿಯೂತವನ್ನು ಶಮನಗೊಳಿಸುತ್ತದೆ. ಚಹಾ ಬ್ಯಾಗ್ಗಳ ಬದಲಾಗಿ ಚಹಾ ಎಲೆಗಳನ್ನು ಬಳಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತ ಸಂಯುಕ್ತಗಳು ದೊರೆಯುತ್ತವೆ” ಎನ್ನುತ್ತಾರೆ ಆಹಾರತಜ್ಞೆ ಗರೀಮಾ ಗೋಯಲ್. ಅವರ ಪ್ರಕಾರ, ಚಹಾದಲ್ಲಿ ಸರಿಯಾದ ಮಸಾಲೆ ಬೆರೆಸಿದರೆ ಉತ್ತಮ. ಶುಂಠಿ, ದಾಲ್ಚಿನ್ನಿ, ಏಲಕ್ಕಿ, ಲವಂಗ ಅಥವಾ ಒಂದು ಚಿಟಿಕೆ ಅರಿಶಿಣ ಬೆರೆಸುವುದರಿಂದ ಚಹಾದ ಆಂಟಿ ಆಕ್ಸಿಡಂಟ್ ಗುಣ ಮತ್ತು ಉರಿಯೂತ ವಿರೋಧಿ ತತ್ವಗಳು ಸಿಗುತ್ತವೆ. ಆದರೆ ಗ್ರೀನ್ ಟೀ ಆಗಿದ್ದರೆ 80 ಡಿಗ್ರಿ ಸೆಲ್ಷಿಯಸ್ ಮತ್ತು ಕರಿ ಚಹಾವಾಗಿದ್ದರೆ 2-3 ನಿಮಿಷಗಳ ಕಾಲ 90–95° ಸೆಲ್ಷಿಯಸ್ನಲ್ಲಿ ಕುದಿಸಬೇಕು. ಕೃಪೆ: indianexpress.com
ನಕಲಿ ದಾಖಲೆ ಸೃಷ್ಟಿಸಿ ಅಪಪ್ರಚಾರ ಆರೋಪ : ಸ್ನೇಹಮಯಿ ಕೃಷ್ಣ ಬಂಧನ
ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣರನ್ನು ಶುಕ್ರವಾರ ಮಧ್ಯಾಹ್ನ ಪೊಲೀಸರು ಬಂಧಿಸಿದ್ದಾರೆ. ಮುಡಾದ ಮಾಜಿ ಆಯುಕ್ತ ಡಿ.ಬಿ ನಟೇಶ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ʼಸ್ನೇಹಮಯಿ ಕೃಷ್ಣ ಫೇಸ್ಬುಕ್ ಖಾತೆಯ ಮೂಲಕ ನಕಲಿ ದಾಖಲೆ, ಧ್ವನಿ ಕ್ಲಿಪ್ ಅನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ್ದಾರೆʼ ಎಂದು ಡಿ.ಬಿ ನಟೇಶ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದೊಡ್ಡಬಳ್ಳಾಪುರ ನೇಕಾರರ ಹೊಸ ಪ್ರಯೋಗ: ಕರ್ನಾಟಕದ ಸೀರೆಗಳಿಗೆ ಬ್ರ್ಯಾಂಡ್ ಸೃಷ್ಟಿಯ ಕನಸು ಹೊತ್ತು ಬಂದ ಸೀರೆ ಸಂತೆ
ದೊಡ್ಡಬಳ್ಳಾಪುರ: ಮಗ್ಗಕ್ಕೆ ಹೆಸರುವಾಸಿಯಾಗಿರುವ ದೊಡ್ಡಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ಸೀರೆ ಸಂತೆ ನಡೆಯುತ್ತಿದೆ. ಈ ಸಂತೆಯು ಜನರನ್ನು ಆಕರ್ಷಿಸುತ್ತಲೂ ಇದೆ. ನೇಕಾರರಿಂದ ಗ್ರಾಹಕರಿಗೆ ನೇರವಾಗಿ ಮಾರಾಟವಾಗುತ್ತಿರುವುದು, ನೇಕಾರರೇ ಸಂತೆಗೆ ಬಂದು ಸೀರೆಗಳನ್ನು ಮಾರಾಟ ಮಾಡುತ್ತಿರುವುದು ಇದರ ಮತ್ತೊಂದು ವಿಶೇಷ. ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಬ್ರ್ಯಾಂಡ್ ಸೀರೆಗಿಂತಲೂ ನಮ್ಮ ಕರ್ನಾಟಕದ ದೊಡ್ಡಬಳ್ಳಾಪುರದ ಸೀರೆಗಳೇನು ಕಮ್ಮಿ ಇಲ್ಲ ಎಂದು
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ‘ಎಐ ಇಂಪ್ಯಾಕ್ಟ್’ ಶೃಂಗಸಭೆಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಗ್ರೂಪ್ ಫೋಟೊ ತೆಗೆಸಿಕೊಳ್ಳುವಾಗ ಎದುರಾಳಿ ಎಐ ಸಂಸ್ಥೆ ಆಂಥ್ರೊಪಿಕ್ನ ಸಿಇಒ ಡೇರಿಯೊ ಅಮೋಡೆ ಅವರೊಂದಿಗೆ ವೇದಿಕೆಯಲ್ಲಿನ ಮುಜುಗರದ ಕ್ಷಣವನ್ನು ಓಪನ್ ಎಐ ಸಿಇಒ ಸ್ಯಾಮ್ ಅಲ್ಟ್ಮನ್ ಒಪ್ಪಿಕೊಂಡಿದ್ದಾರೆ. ‘ನಾನು ಒಂದು ರೀತಿಯ ಗೊಂದಲದಲ್ಲಿದ್ದೆ ಮತ್ತು ನಾನು ಏನು ಮಾಡಬೇಕು ಎಂದು ನನಗೆ ತಿಳಿದಿರಲಿಲ್ಲ’ ಎಂದು ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ನಡೆದ ಘಟನೆಯನ್ನು ಸ್ಮರಿಸುತ್ತ ಅಲ್ಟ್ಮನ್ ಹೇಳಿದರು. ಭಾರತ ಮಂಡಪಮ್ನಲ್ಲಿ ಉದ್ಘಾಟನಾ ಸಮಾರಂಭದ ಬಳಿಕ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಹಲವಾರು ದಿಗ್ಗಜರು ಗ್ರೂಪ್ ಫೋಟೋಕ್ಕಾಗಿ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರ ಜೊತೆಗೂಡಿದ್ದರು. ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ ಪಿಚೈ, ಮೆಟಾದ ಮುಖ್ಯ ಎಐ ಅಧಿಕಾರಿ ಅಲೆಕ್ಸಾಂಡರ್ ವಾಂಗ್,ಸರ್ವಂ ಸಹಸ್ಥಾಪಕ ಪ್ರತ್ಯೂಷ್ ಕುಮಾರ್ ಮತ್ತು ಗೂಗಲ್ ಡೀಪ್ಮೈಂಡ್ನ ಸಿಇಒ ಡೆಮಿಸ್ ಹಸ್ಸಾಬಿಸ್ ಮತ್ತಿತರರು ಅವರಲ್ಲಿ ಸೇರಿದ್ದರು. ಪ್ರಧಾನಿ ಮೋದಿ ಮಧ್ಯದಲ್ಲಿ ನಿಂತಿದ್ದರೆ ಅವರ ಬಲಕ್ಕೆ ಪಿಚೈ ಮತ್ತು ಎಡಕ್ಕೆ ಅಲ್ಟ್ಮನ್ ಇದ್ದರು. ಈ ಹಿಂದೆ ಓಪನ್ ಎಐನ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದು ಈಗ ಆಂಥ್ರೊಪಿಕ್ನ ಸಿಇಒ ಆಗಿರುವ ಅಮೋಡೆ ಅಲ್ಟ್ಮನ್ ಪಕ್ಕದಲ್ಲಿ ನಿಂತಿದ್ದರು. ಕ್ಯಾಮೆರಾಗಳು ಫೋಟೊ ಕ್ಲಿಕ್ಕಿಸಲಾರಂಭಿಸುತ್ತಿದ್ದಂತೆ ಮೋದಿ ಮತ್ತು ಇತರ ನಾಯಕರು ಒಗ್ಗಟ್ಟಿನ ಪ್ರದರ್ಶನವಾಗಿ ಜೊತೆಯಾಗಿ ಕೈಗಳನ್ನು ಮೆಲಕ್ಕೆತ್ತಿದ್ದರು. ಈ ವೇಳೆ ಅಲ್ಟಮನ್ ಮತ್ತು ಅಮೋಡೆ ಕ್ಷಣ ಕಾಲ ಗೊಂದಲಕ್ಕೊಳಗಾಗಿದ್ದರು, ಪರಸ್ಪರ ಕೈಗಳನ್ನು ಸೇರಿಸದೆ ತಮ್ಮ ಮುಷ್ಟಿಗಳನ್ನು ಮೇಲಕ್ಕೆತ್ತಿದ್ದರು. ‘ಏನಾಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಒಂದು ರೀತಿಯ ಗೊಂದಲದಲ್ಲಿದ್ದೆ. ಪ್ರಧಾನಿ ಮೋದಿಯವರು ಏಕಾಏಕಿ ನನ್ನ ಕೈಹಿಡಿದು ಮೇಲಕ್ಕೆತ್ತಿದಾಗ ನಾವು ಏನು ಮಾಡಬೇಕು ಎನ್ನುವುದು ನನಗೆ ಖಚಿತವಿರಲಿಲ್ಲ’ ಎಂದು ಅಲ್ಟಮನ್ ವಿವರಿಸಿದರು. ಅಲ್ಟ್ಮನ್ (40) ಮತ್ತು ಅಮೋಡೆ (43) 2019ರವರೆಗೂ ಓಪನ್ ಎಐನಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಂಪನಿಯ ಕಾರ್ಯಾಚರಣೆ ಕುರಿತು ಭಿನ್ನಾಭಿಪ್ರಾಯದ ನಡುವೆ 2020ರಲ್ಲಿ ಅಮೋಡೆ,ಅವರ ಸೋದರಿ ಡೇನಿಯೆಲಾ ಮತ್ತು ಹಲವಾರು ಹಿರಿಯ ಓಪನ್ ಎಐ ಸಂಶೋಧಕರು ಕಂಪನಿಯಿಂದ ಹೊರನಡೆದಿದ್ದರು. ಈ ಗುಂಪು ನಂತರ ಆಂಥ್ರೊಪಿಕ್ ಅನ್ನು ಸ್ಥಾಪಿಸಿತು. ಆಗಿನಿಂದಲೂ ಓಪನ್ ಎಐ ಮತ್ತು ಆಂಥ್ರೊಪಿಕ್ ಪ್ರಬಲ ಪ್ರತಿಸ್ಪರ್ಧಿಗಳಾಗಿವೆ. ಆಂಥ್ರೊಪಿಕ್ ಹಿಂದೆ ಚಾಟ್ಜಿಪಿಟಿಯು ಜಾಹೀರಾತುಗಳನ್ನು ಪರಿಚಯಿಸುವ ಯೊಜನೆಯನ್ನು ಹೊಂದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅದನ್ನು ಅಣಕಿಸಿ ವಿಡಂಬನಾತ್ಮಕ ಸೂಪರ್ಬೌಲ್ ಜಾಹೀರಾತುಗಳನ್ನು ಪ್ರಕಟಿಸಿತ್ತು.
ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಧರಿಸಿದ್ದ ಅಮೆರಿಕಾ ಕೈಗಡಿಯಾರ ಇಷ್ಟೊಂದು ಸದ್ದು ಮಾಡಿದ್ದು ಇದೇ ವಿಚಾರಕ್ಕೆ
Hardik Pandya: ಕೊಲೊಂಬೋದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನ ನಡೆದ ಟಿ20 ವಿಶ್ವಕಪ್ 2026 ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿತು. ಪಂದ್ಯ ಮುಗಿದರೂ ಸಹ ಅಂದು ಹಾರ್ದಿ ಪಾಂಡ್ಯ ಧರಿಸಿದ್ದ 25,00,000 ರೂಪಾಯಿ ಬೆಲೆಯ ಕೈಗಡಿಯಾರದ ಸದ್ದು ಮಾತ್ರ ಹಾಗೆ ಇದೆ. ಹಾಗಾದ್ರೆ, ಈ ದುಬಾರಿ ಬೆಲೆ ವಾಚ್ನ ವಿಶೇಷತೆಗಳು
ಹೊಸದಿಲ್ಲಿ: ಮಸೀದಿಗಳಿಗೆ ಮೊಘಲ್ ಚಕ್ರವರ್ತಿ ಬಾಬರ್ ಹೆಸರಿಡುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಬಾಬರ್ ಹೆಸರಿನಲ್ಲಿ ಮಸೀದಿಗಳಿಗೆ ಹೆಸರು ಇಡುವುದು ಮತ್ತು ‘ಬಾಬರಿ ಮಸೀದಿ’ ಎಂದು ನಾಮಕರಣ ಮಾಡುವುದನ್ನು ಸಂಪೂರ್ಣವಾಗಿ ತಡೆಯುವಂತೆ ನಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಬಾಬರ್ ಹೆಸರಿಡುವುದು ಅಥವಾ 'ಬಾಬರಿ ಮಸೀದಿ' ಎಂದು ನಾಮಕರಣ ಮಾಡದಂತೆ ಸಂಪೂರ್ಣ ನ್ಯಾಯಾಂಗ ನಿರ್ಬಂಧ ಕೋರಿ ಉತ್ತರ ಪ್ರದೇಶದ ದೇವಕಿ ನಂದನ್ ಪಾಂಡೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ತಿರಸ್ಕರಿಸಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಮಸೀದಿಯೊಂದಕ್ಕೆ ಶಿಲಾನ್ಯಾಸ ನೆರವೇರಿಸಿದ ಟಿಎಂಸಿ ಶಾಸಕ ಹುಮಾಯೂನ್ ಕಬೀರ್, ಮಸೀದಿಗೆ ಮೊಘಲ್ ಚಕ್ರವರ್ತಿಯ ಹೆಸರಿಡುವುದು ಸಂವಿಧಾನಬಾಹಿರವಲ್ಲ ಎಂದು ಹೇಳಿದ್ದರು.
ಹುಸಿ ಬಾಂಬ್ ಕರೆ | ಡಿಜಿಟಲ್ ಭೂತವಾಗಿ ಕಾಡುವ ಮಾಸ್ಟರ್ಮೈಂಡ್ಗಳು!
ಹುಸಿ ಬಾಂಬ್ ಕರೆಗಳು ಹೆಚ್ಚಾಗುತ್ತಿದ್ದರೂ ತನಿಖೆ ಮುಂದೆ ಸಾಗುತ್ತಿಲ್ಲವೇಕೆ?

24 C