ಇರಾನ್ ನ ಪೂರ್ವ ಟೆಹ್ರಾನ್ ನಲ್ಲಿ ಭಾರೀ ದಾಳಿ; ಕನಿಷ್ಠ 40 ಮೃತ್ಯು
ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ ನ ಪೂರ್ವ ಭಾಗದಲ್ಲಿರುವ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ದಾಳಿಯ ಪರಿಣಾಮವಾಗಿ ರಾಜಧಾನಿಯಲ್ಲಿ ಭಾರೀ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಕೆಲವೇ ನಿಮಿಷಗಳ ಅಂತರದಲ್ಲಿ ದೊಡ್ಡ ಸ್ಫೋಟ ಸಂಭವಿಸಿರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ. ಆದರೆ ಸ್ಫೋಟದ ನಿಖರ ಗುರಿ ಅಥವಾ ಅದರ ಪರಿಣಾಮದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ನಗರದಲ್ಲಿ ದಿನವಿಡೀ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪ್ರತಿ ಒಂದು ಅಥವಾ ಎರಡು ಗಂಟೆಗಳಿಗೊಮ್ಮೆ ಸ್ಫೋಟಗಳ ಶಬ್ದಗಳು ಕೇಳಿಬರುತ್ತಿವೆ ಎಂಬ ವರದಿಗಳು ತಿಳಿಸಿವೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಇದಷ್ಟೇ ಅಲ್ಲದೆ, ಇಸ್ಫಹಾನ್ ಸೇರಿದಂತೆ ಇರಾನ್ ನ ಇತರ ಪ್ರಮುಖ ನಗರಗಳನ್ನೂ ಗುರಿಯಾಗಿಸಲಾಗಿದೆ. ಪರಮಾಣು ಸೌಲಭ್ಯಗಳಿಗೆ ಸಮೀಪದಲ್ಲಿರುವುದರಿಂದ ಇಸ್ಫಹಾನ್ ಪ್ರದೇಶದಲ್ಲಿ ಕಳವಳ ಹೆಚ್ಚಾಗಿದೆ. ಅಲ್ಲಿನ ಗವರ್ನರ್ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ ಎಂಬ ವರದಿಗಳೂ ಬಂದಿವೆ. ಯುನೆಸ್ಕೋ ವಿಶ್ವ ಪಾರಂಪರ್ಯ ತಾಣವಾಗಿ ನೋಂದಾಯಿಸಲ್ಪಟ್ಟಿರುವ ಪುರಾತನ ಅರಮನೆ ಮೇಲೂ ಬಾಂಬ್ ದಾಳಿ ನಡೆದಿದ್ದು, ಆ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಭ್ರಷ್ಟಾಚಾರ, ಅಸಮಾನತೆಯಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ : ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಸಾಣೇಹಳ್ಳಿ ಶ್ರೀ
ಜಗಳೂರು : ಸಮಾಜದಲ್ಲಿನ ವ್ಯಾಪಕ ಭ್ರಷ್ಟಾಚಾರ, ಅಸಮಾನತೆಯಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ತಾಲೂಕಿನ ದೊಣೆಹಳ್ಳಿ ದಾಸೋಹ ಮಠದಲ್ಲಿ ದಾಸೋಹ ಸಂಸ್ಕೃತಿ ಉತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಸಂರಕ್ಷಣಾ ಸಮಾವೇಶ’ದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ಆಡಳಿತ ವ್ಯವಸ್ಥೆಯಿಂದ ಬಡವರು ಶ್ರೀಮಂತರ ಮಧ್ಯೆ ಆರ್ಥಿಕ ಅಸಮಾನತೆಗೆ ಕಾರಣವಾಗಿದೆ. ಬಲ್ಲಿದನ ದಬ್ಬಾಳಿಕೆಯಿಂದ ದುಡಿಯುವ ವರ್ಗದವರು ಬಡವರಾಗಿಯೇ ಉಳಿಯುತ್ತಿದ್ದಾನೆ. ಸಂವಿಧಾನ ಬದ್ಧ ಸಮಾನತೆಯ ಹಕ್ಕುಗಳು ಅನ್ವಯವಾಗುತ್ತಿಲ್ಲ. ಪ್ರಜಾಪ್ರತಿನಿಧಿಗಳು ಅಧಿಕಾರ ದಾಹದಿಂದ ಕೋಟಿ ಕೋಟಿ ರೂ. ಲೂಟಿ ಹೊಡೆಯದೆ ಜನರ ಸುಖ ದುಖಃಗಳಿಗೆ ಭಾಗಿಯಾಗುವುದನ್ನು ಮೈಗೂಡಿಸಿಕೊಂಡು ಸಮಾಜದ ಋಣ ತೀರಿಸಬೇಕೆಂದು ಸಲಹೆ ನೀಡಿದರು. ನೈತಿಕ ನೆಲೆಗಟ್ಟಿನ ಮೇಲೆ, ಸಾರ್ವಜನಿಕ ಪ್ರಜ್ಞೆಗೆ ಮನ್ನಣೆ ನೀಡುವ ದಾಸೋಹ ಸಂಸ್ಕೃತಿ ಅಗತ್ಯವಿದೆ. ಸಮಾಜದಲ್ಲಿನ ಅನಾಚಾರ ಖಂಡಿಸದಿದ್ದರೆ ನಾವೂ ಅದರ ಪಾಲುದಾರರಾಗಬೇಕಾಗುತ್ತೇವೆ. ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಬೇಕಿದೆ. ಕೇವಲ ವೇಷ ಭಾಷೆಯಿಂದ ಮಾತ್ರವಲ್ಲದೆ ಅರಿವು ಆಚಾರ ರೂಢಿಸಿಕೊಂಡರೆ ವ್ಯಕ್ತಿಯು ಸಮಾಜಕ್ಕೆ ಶಕ್ತಿಯಾಗುತ್ತಾನೆ ಅಭಿಪ್ರಾಯಿಸಿದರು. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿಲ್ಲಪ್ಪ ಮಾತನಾಡಿ, ದೇಶದ ಸಾಂಪ್ರದಾಯಿಕ ಸಮಾಜ ಬದಲಾಗಿ ಕಾನೂನು ಸಮಾಜ ನಿರ್ಮಾಣವಾಗಬೇಕಿದೆ. ಸಂವಿಧಾನ ದೇಶದ ಪವಿತ್ರ ಗ್ರಂಥವಾಗಿದೆ. ಕಾನೂನನ್ನು ಗೌರವಿಸದಿದ್ದರೆ ಸಮಾಜದ ಅಭಿವೃದ್ಧಿ ಅಸಾಧ್ಯ.ಸಾರ್ವಜನಿಕರೇ ಕಾನೂನು ಅಸ್ತ್ರಗಳನ್ನು ಬಳಸುವ ಹೊಣೆಗಾರಿಕೆ ಹೊಂದಬೇಕು. ನಮ್ಮ ಪ್ರಗತಿಗೆ ವರ್ತಮಾನದ ಆಲೋಚನೆ ಅಗತ್ಯವಿದೆ. ಸಂವಿಧಾನ ಎಂದರೆ ಸಮಾನ ಅವಕಾಶವಾಗಬೇಕು. ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ರೂಪಿಸಬೇಕು. ಎಲ್ಲಾ ವರ್ಗದವರಿಗೆ ಇಂದಿಗೂ ಸಾಮಾಜಿಕ ಸಮಾನತೆ, ನ್ಯಾಯ ಸಿಗುತ್ತಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ಮುರಿದುಹಾಕುತ್ತಿರುವುದು ಬೇಸರದ ಸಂಗತಿ ಎಂದರು. ಜಿ.ಬಿ.ವಿನಯ ಕುಮಾರ್ ಮಾತನಾಡಿದರು. ಇದೇ ವೇಳೆ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾವೇಶದಲ್ಲಿ ದೊಣೆಹಳ್ಳಿ ದಾಸೋಹ ಮಠದ ಸಂಚಾಲಕ ಗುರುಮೂರ್ತಿ, ಕಾನಾಮಡುಗು ಮಠದ ಐಮಡಿ ಶರಣಾರ್ಯರು, ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ.ಬಸವರಾಜ್, ಕಾರ್ಮಿಕ ಸಂಘಟನೆ ಮುಖಂಡ ಶಿವಶಂಕರ್, ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣ, ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಎಲ್.ಎಚ್.ಅರುಣ್ ಕುಮಾರ್, ಲಂಕೇಶ್ ಪತ್ರಿಕೆ ಹಿರಿಯ ವರದಿಗಾರ ಅರಕೆರೆ ಸಿದ್ದಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಪ್ರೋ.ಜಯಲಕ್ಷ್ಮೀ, ಸ್ಮಿತಾ, ಶರಣಬಸವೇಶ್ವರ ಡಿ.ಎಡ್ ಕಾಲೇಜು ಪ್ರಾಂಶುಪಾಲ ಎಲ್.ಪಿ.ಸುಭಾಷ್ ಚಂದ್ರ, ಉಪನ್ಯಾಸಕರಾದ ಭದ್ರಪ್ಪ, ಪ್ರಕಾಶ್, ಮನೋಜ್, ಶರತ್, ದಾದಾ ಖಲಂದರ್, ಮುಖಂಡರಾದ ಆವರೆಗರೆ ರುದ್ರಮುನಿ ಹಾಗೂ ಇತರರು ಉಪಸ್ಥಿತರಿದ್ದರು. ದೇಶದಲ್ಲಿ 4,600 ಜಾತಿಗಳಿವೆ, ಜಾತಿಗೊಂದು ಕಸುಬುಗಳಿವೆ. ಅಂತರ್ಜಾತಿ ವಿವಾಹಗಳಿಗೆ ಕಟ್ಟುಪಾಡುಗಳಿವೆ. ಒಂದೇ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶವಿಲ್ಲ. ಜಾತಿ ಮತ್ತು ಕಸುಬು ವಂಶಪರಂಪರೆಯಾಗಿ ಮಾಡಿದ್ದಾರೆ.ಜಾತಿ-ಜಾತಿ ನಡುವೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಸಮಾನತೆಗಳಿವೆ. ದೇಶದಲ್ಲಿನ ಜಾತಿಯ ಸಮಾನತೆಯನ್ನು ಅರ್ಥ ಮಾಡಿಕೊಂಡರೆ ಸಂವಿಧಾನ ಅರ್ಥವಾಗುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಶೇ.18ರಷ್ಟಿದ್ದ ಅಕ್ಷರಸ್ಥರ ಸಂಖ್ಯೆ ಇಂದು ಶೇ.81ರಷ್ಟಿದೆ. ಬಡತನ ರೇಖೆಗಿಂತ ಶೇ.20ರಷ್ಟಿದೆ. ಹೊರ ದೇಶಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡುತ್ತೇವೆ. ಅಗತ್ಯ ಮೂಲ ಸೌಕರ್ಯ ಹೊಂದಿದ್ದೇವೆ. ಡಾ.ಎಚ್.ಎನ್.ನಾಗಮೋಹನ್ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಮನೆ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅನ್ಯಾಯ : ಶಾಸಕ ಬಿ.ಎನ್.ರವಿಕುಮಾರ್
ಬೆಂಗಳೂರು : ವಸತಿ ಇಲಾಖೆಯಡಿ ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪದೇ ಪದೇ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂದು ವಿಧಾನಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಧ್ವನಿ ಎತ್ತಿದ ಪ್ರಸಂಗ ಜರುಗಿತು. ಸೋಮವಾರ ವಿಧಾನಸಭೆಯ ಪ್ರಶೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪ ಮಾಡಿದ ಬಿ.ಎನ್.ರವಿಕುಮಾರ್ ಅವರು, ವಸತಿ ಇಲಾಖೆಯ ವಿವಿಧ ನಿಗಮಗಳಿಂದ ಕ್ಷೇತ್ರದ ಮುಸ್ಲಿಮರಿಗೆ ಯಾವ ರೀತಿಯಲ್ಲಿ ಸಮಸ್ಯೆ ಆಗುತ್ತಿದೆ ಎಂದು ಸದನದ ಗಮನ ಸೆಳೆದರು. ವಸತಿ ಇಲಾಖೆಯ ನಿಗಮಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ವಸತಿ ರಹಿತರಿಗೆ ಮನೆಗಳನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ನಿಯಮಗಳನ್ನು ಪಾಲಿಸಿಲ್ಲ.ಅದರಲ್ಲೂ, ಶಿಡ್ಲಘಟ್ಟದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ. 75 ಮನೆಗಳು ಬೇರೆಯವರಿಗೆ ಕೊಡಲಾಗಿದೆ. ಈ ಸಮಸ್ಯೆ ಬಗೆಹರಿಸಬೇಕು ಎಂದು ಸರಕಾರಕೆಕ ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಕೇಂದ್ರ ಪುರಸ್ಕೃತ ಯೋಜನೆಗ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಯು ಖಾಯಂ ನಿರೀಕ್ಷಣಾ ಪಟ್ಟಿ ಮೂಲಕ ಕ್ರಮಾಂಕವಾರು ಆಯ್ಕೆ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ 500 ಮನೆಗಳನ್ನು ನೀಡಿದ್ದೇವೆ. 75 ಮನೆಗಳು ಶಾಸಕರ ವಿವೇಚನೆ ಇಂದ ನೀಡುವುದಾಗಿದೆ. ಈ ಸಂಬಂಧಿಸಿದಂತೆ ಚರ್ಚಿಸಲು ನಾಳೆ ಸಭೆ ಕರೆಯಲಾಗಿದೆ. ಸಭೆಗೆ ಶಾಸಕರೂ ಬರಬಹುದು. ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಅಝೀಂ ಪ್ರೇಮ್ಜಿ ವಿವಿ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಹಿಂಪಡೆಯಲು ಸಾಹಿತಿ, ಚಿಂತಕರು ಆಗ್ರಹ
ಬೆಂಗಳೂರು : ಅಝೀಂ ಪ್ರೇಮ್ ಜಿ ವಿಶ್ವ ವಿದ್ಯಾನಿಲಯದ ‘ಸ್ಪಾರ್ಕ್ ರೀಡಿಂಗ್ ಸರ್ಕಲ್’ ವಿದ್ಯಾರ್ಥಿಗಳ ಮೇಲೆ ವಿಶ್ವ ವಿದ್ಯಾನಿಲಯವು ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ತಕ್ಷಣವೇ ಕೈಬಿಡಬೇಕು ಎಂದು ಸಾಹಿತಿ, ಚಿಂತಕರು, ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸೋಮವಾರ ಈ ಕುರಿತು ಅಝೀಂ ಪ್ರೇಮ್ ಜಿ ವಿಶ್ವ ವಿದ್ಯಾನಿಲಯದ ಕುಲಪತಿಗಳಿಗೆ ಪತ್ರ ಬರೆದಿರುವ ಹಿರಿಯ ಸಾಹಿತಿಗಳಾದ ಡಾ.ಜಿ.ರಾಮಕೃಷ್ಣ, ರಾಜೇಂದ್ರ ಚೆನ್ನಿ, ಡಾ.ಸಿದ್ದನಗೌಡ ಪಾಟೀಲ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ದು.ಸರಸ್ವತಿ, ವಿಮಲಾ ಕೆ.ಎಸ್.ಅವರು, ಕರ್ನಾಟಕದ ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಪ್ರತಿನಿಧಿಗಳಾದ ನಾವು, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ತನ್ನದೇ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ. ವಿಶ್ವ ವಿದ್ಯಾನಿಲಯವೊಂದು ತನ್ನದೇ ಆದ ಆಂತರಿಕ ಪ್ರಕ್ರಿಯೆಗಳನ್ನು ನಡೆಸುವಂತಹ ಹಕ್ಕನ್ನು ಹೊಂದಿದ್ದರೂ ವಿದ್ಯಾರ್ಥಿ-ಯುವಜನರು ಒಂದು ಚರ್ಚೆಯನ್ನು ಹಮ್ಮಿಕೊಂಡಿದ್ದ ಒಂದೇ ಕಾರಣಕ್ಕೆ ಅವರ ಮೇಲೆ ‘ಭಾರತೀಯ ನ್ಯಾಯ ಸಂಹಿತೆ' ಮತ್ತು ‘ಐಟಿ ಕಾಯ್ದೆ' ಅಡಿಯಲ್ಲಿ ಮೊಕದ್ದಮೆ ದಾಖಲಿಸುವುದು ಅತ್ಯಂತ ಅತಿರೇಕದ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು, ಅದರಲ್ಲಿಯೂ ಮುಖ್ಯವಾಗಿ ವಿಶ್ವ ವಿದ್ಯಾನಿಲಯಗಳು ಚರ್ಚೆ ಮತ್ತು ಸಂವಾದಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಮಾಜದ ಮತ್ತು ಪ್ರಭುತ್ವದ ಧೋರಣೆಗಳನ್ನು ವಿಮರ್ಶಿಸುವಂತೆ ಹುರಿದುಂಬಿಸುವ ವಲಯಗಳಾಗಬೇಕು. ಹೀಗಿರುವಾಗ, ಗೂಂಡಾ ಪಡೆಗಳು ವಿಶ್ವವಿದ್ಯಾಲಯದೊಳಗೆ ನುಗ್ಗಿದ್ದೂ ಅಲ್ಲದೇ ದಾಂಧಲೆ ನಡೆಸಿ, ನಿಮ್ಮದೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವಂತಹ ಸಂದರ್ಭದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ, ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಬೇಕಿದ್ದ ವಿಶ್ವವಿದ್ಯಾಲಯದ ಅಧಿಕಾರಿ ವರ್ಗ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆಯೇ ಎಫ್ಐಆರ್ ದಾಖಲಿಸಿದೆ. ಈ ಮೂಲಕ ವಿಶ್ವವಿದ್ಯಾಲಯವು ತಾನು ಪಠ್ಯಕ್ರಮದಲ್ಲಿ ಪ್ರತಿಪಾದಿಸುವ ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನೇ ಹತ್ತಿಕ್ಕಲು ಮುಂದಾಗಿದೆ ಎಂದು ಹೇಳಿದ್ದಾರೆ. ವಿಶ್ವವಿದ್ಯಾಲಯವು ಗೂಂಡಾಗಳ ಬಗ್ಗೆ ಮೃದು ಧೋರಣೆ ತೋರುತ್ತಿದ್ದು, ವಿಶ್ವವಿದ್ಯಾಲಯದ ಆವರಣಕ್ಕೆ ಅಕ್ರಮವಾಗಿ ನುಗ್ಗಿ, ಆಸ್ತಿಪಾಸ್ತಿ ಹಾನಿ ಮಾಡಿ, ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಹೊರಗಿನ ವ್ಯಕ್ತಿಗಳ ಮೇಲೆ ಕೇವಲ ಜಾಮೀನು ಲಭ್ಯವಿರುವ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಈ ಹಿಂದೆ ನಡೆದ ಘಟನೆಗಳ ಬಗ್ಗೆ ಚರ್ಚೆ-ಸಂವಾದ ನಡೆಸಲು ಮುಂದಾದ ನಿಮ್ಮದೇ ವಿದ್ಯಾರ್ಥಿಗಳ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿದ್ದೀರಿ. ಈ ನಿಲುವಿನಿಂದಾಗಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ನಡೆಯನ್ನು ಹೊರಗಿನಿಂದ ಬಂದ ಗೂಂಡಾಗಳಿಗೆ ಸಮೀಕರಿಸಿದಂತಾಗಿದೆ. ಹಾಗಾಗಿ, ಭಿನ್ನಾಭಿಪ್ರಾಯಗಳಿಗೆ ಮತ್ತು ಸಂವಾದಕ್ಕೆ ನಿಮ್ಮ ವಿಶ್ವ ವಿದ್ಯಾನಿಲಯದಲ್ಲಿ ಸ್ಥಾನವಿಲ್ಲ ಎಂಬ ಸಂದೇಶವನ್ನು ಕರ್ನಾಟಕದ ಜನತೆಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೂಡಲೇ ‘ಸ್ಪಾರ್ಕ್ ರೀಡಿಂಗ್ ಸರ್ಕಲ್'ನ ಭಾಗವಾಗಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ದಾಖಲಿಸಿರುವ ಪೊಲೀಸ್ ದೂರನ್ನು ತಕ್ಷಣವೇ ಹಿಂಪಡೆಯಬೇಕು. ಈ ಮೂಲಕ ವಿಶ್ವವಿದ್ಯಾಲಯವು ವಿದ್ಯಾರ್ಥಿ-ವಿದ್ಯಾರ್ಥಿನಿಯರ, ಪೋಷಕರ ವಿಶ್ವಾಸವನ್ನು ಮರಳಿ ಗಳಿಸುತ್ತದೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಂಬಿದ್ದೇವೆ ಎಂದು ತಿಳಿಸಿದ್ದಾರೆ.
ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು : ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು(ಆರೆಸೆಸ್ಸ್) ಯಾರೂ ನಿಷೇಧ ಮಾಡಿಲ್ಲ, ಯಾರೂ ನಿಷೇಧ ಮಾಡಲು ಆಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೆಸೆಸ್ಸ್ ಸಂಘಟನೆ ನಿಷೇಧಕ್ಕೂ ಮತ್ತು ಅದರ ಕಾರ್ಯ ಚಟುವಟಿಕಗಳನ್ನು ನಿರ್ಬಂಧಿಸುವುದಕ್ಕೂ ವ್ಯತ್ಯಾಸವಿದೆ. ನಮ್ಮ ಸರಕಾರ ಅಥವಾ ಬೇರೆ ಯಾವುದೇ ಸರಕಾರವೂ ಆರೆಸೆಸ್ಸ್ ಅನ್ನು ನಿಷೇಧಿಸುವ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂದು ನುಡಿದರು.
ದೈವ ಪಾತ್ರದ ಅಪಹಾಸ್ಯ; ರಣವೀರ್ ಸಿಂಗ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕೊನೇ ಅವಕಾಶ ನೀಡಿದ ಹೈಕೋರ್ಟ್
ಬೆಂಗಳೂರು : ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಅವಕಾಶ ನೀಡಿದೆ. ಪ್ರಕರಣ ಸಂಬಂಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಪ್ರಕರಣದ ಖಾಸಗಿ ದೂರುದಾರರಾದ ಪ್ರಶಾಂತ್ ಮೆಥಲ್ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಹೈಗ್ರೌಂಡ್ಸ್ ಠಾಣೆ ಪೊಲೀಸರ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಕೆಗೆ ಇದೇ ಕೊನೆಯ ಅವಕಾಶ ನೀಡುತ್ತಿರುವುದಾಗಿ ತಿಳಿಸಿ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತು. ಜತೆಗೆ, ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿ ಫೆಬ್ರವರಿ 24ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ
Abhiskeh Sharma: ಭಾರತ ತಂಡ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ, ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಅವರು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ತೋರಿದ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲರ ಮನಗೆದ್ದಿದೆ. ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲಯಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪಂದ್ಯದ ಬಳಿಕ ನಡೆದ ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್ ಶರ್ಮಾ, ತುಂಬಾ ಸಮಯದ ನಂತರ
ಕೊಪ್ಪಳ | ಊಟದಲ್ಲಿ ಜಿರಳೆ ಪತ್ತೆ ಆರೋಪ: ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕೊಪ್ಪಳ: ರಾತ್ರಿಯ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಆರೋಪಿಸಿ ಎಸ್ಸಿ–3 ಹಾಸ್ಟಲ್ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಈ ವೇಳೆ ಎಸ್ಸಿ–2 ಹಾಸ್ಟಲ್ನಲ್ಲಿನ ಅವ್ಯವಸ್ಥೆ ಹಾಗೂ ವಾರ್ಡನ್ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆ ಕುರಿತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡದಿರುವುದು, ಕೊಳೆತ ತರಕಾರಿಯಿಂದ ಅಡುಗೆ ತಯಾರಿಸುವುದು, ಸರಿಯಾಗಿ ಬೇಯದ ಊಟ ಬಡಿಸುವುದು ಸೇರಿದಂತೆ ಹಲವು ಸಮಸ್ಯೆಗಳು ಇರುವುದಾಗಿ ಅವರು ಆರೋಪಿಸಿದರು. ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಯಾರಾದರೂ ಸಮಸ್ಯೆಗಳ ಬಗ್ಗೆ ಮಾತನಾಡಿದರೆ “ನಿಮ್ಮ ಫೈಲ್ ತೆಗೆದುಕೊಂಡು ಬನ್ನಿ, ಹಾಸ್ಟಲ್ನಿಂದ ಅಮಾನತು ಮಾಡುತ್ತೇನೆ” ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು. ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮಾತನಾಡಿ, ವಾರ್ಡನ್ಗಳ ಕೊರತೆ ಇರುವುದರಿಂದ ಸಮಸ್ಯೆಗಳು ಉಂಟಾಗಿವೆ. ಸಾಧ್ಯವಾದಷ್ಟು ಉತ್ತಮ ಅಡುಗೆ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇವೆ. ಸಾಧ್ಯವಾಗದಿದ್ದರೆ ನಿಮಗೆ ದೊರೆಯಬೇಕಾದ ಹಣವನ್ನು ನೀಡುತ್ತೇವೆ ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ವಾರ್ಡನ್ ಬಸವರಾಜ ಅವರನ್ನು ವರ್ಗಾವಣೆ ಮಾಡಬೇಕು ಹಾಗೂ ಹಾಸ್ಟಲ್ನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿರ್ದೇಶಕರು “ತಮಗೆ ಬೇಕಾದ್ದು ಮಾಡಿಕೊಳ್ಳಿ” ಎಂದು ಹೇಳಿದರೆಂದು ಆರೋಪಿಸಿದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಧರಣಿಗೆ ಮುಂದಾದರು. ವಿದ್ಯಾರ್ಥಿಗಳ ಆಕ್ರೋಶ ಹೆಚ್ಚುತ್ತಿದ್ದಂತೆ ಉಪ ನಿರ್ದೇಶಕ ಅಜ್ಜಪ್ಪ ಸೋಲಗಾಡ ಅವರು ಸ್ಥಳದಿಂದ ತೆರಳಿದರು. ಆದರೂ ವಿದ್ಯಾರ್ಥಿಗಳು ಧರಣಿಯನ್ನು ಮುಂದುವರಿಸಿದರು.
ಅಮೆರಿಕ ಷೇರು ಮಾರುಕಟ್ಟೆ ಮುಕ್ತಾಯದ ಬಳಿಕ ಟ್ರಂಪ್ ಸುದ್ದಿಗೋಷ್ಠಿ; ಮಹತ್ವ ಘೋಷಣೆ ಸಾಧ್ಯತೆ
ವಾಷಿಂಗ್ಟನ್, ಮಾ. 9: ಅಮೆರಿಕ ಷೇರು ಮಾರುಕಟ್ಟೆ ಮುಕ್ತಾಯದ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುದ್ದಿಗೋಷ್ಠಿ ನಡೆಸುವುದಾಗಿ ಘೋಷಿಸಿದ್ದಾರೆ. ಸ್ಥಳೀಯ ಸಮಯದ ಪ್ರಕಾರ ಸಂಜೆ 5:30ಕ್ಕೆ ನಡೆಯಲಿರುವ ಈ ಸುದ್ದಿಗೋಷ್ಠಿ ಭಾರತೀಯ ಸಮಯದ ಪ್ರಕಾರ ಮಾರ್ಚ್ 10ರಂದು ಮುಂಜಾನೆ 3 ಗಂಟೆಗೆ ಆರಂಭವಾಗಲಿದೆ. “ಇಂದು ಅನೇಕ ಪ್ರಮುಖ ಸಭೆಗಳು ಮತ್ತು ದೂರವಾಣಿ ಕರೆಗಳು ನಡೆಯುತ್ತಿವೆ,” ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ನಲ್ಲಿ ತಿಳಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ನಿಧಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯ ವಿಷಯವೇನು ಎಂಬುದನ್ನು ಅಧ್ಯಕ್ಷರು ಸ್ಪಷ್ಟಪಡಿಸಿಲ್ಲ. ಆದರೆ ಅಮೆರಿಕದ ಷೇರು ಮಾರುಕಟ್ಟೆ ಮುಕ್ತಾಯವಾದ ಬಳಿಕವೇ ಕಾರ್ಯಕ್ರಮವನ್ನು ನಿಗದಿಪಡಿಸಿರುವುದು ಗಮನಾರ್ಹವಾಗಿದೆ. ತೈಲ ಬೆಲೆಗಳು ಏರಿಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಅಮೆರಿಕದ ಷೇರು ಮಾರುಕಟ್ಟೆಗಳು ಕುಸಿದಿವೆ. ಇದರ ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕ ಮಾರುಕಟ್ಟೆಗಳಿಗೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಸಂಘರ್ಷದ ಪರಿಣಾಮವಾಗಿ ವಿದೇಶಿಯರು ವ್ಯಾಪಾರ ಕೇಂದ್ರಗಳಿಂದ ಪಲಾಯನ ಮಾಡುತ್ತಿರುವ ವರದಿಗಳು ಕೇಳಿಬಂದಿವೆ. ಮಿಲಿಟರಿ ನೆಲೆಗಳು, ಸರ್ಕಾರಿ ಕಟ್ಟಡಗಳು, ತೈಲ ಹಾಗೂ ನೀರಿನ ಆಗರಗಳು, ಹೋಟೆಲ್ ಗಳು ಮತ್ತು ಕನಿಷ್ಠ ಒಂದು ಶಾಲೆ ಸೇರಿದಂತೆ ಹಲವು ಸ್ಥಳಗಳಿಗೆ ಬಾಂಬ್ ದಾಳಿಗಳು ನಡೆದಿದ್ದು, ಲಕ್ಷಾಂತರ ಜನರು ಆಶ್ರಯ ಪಡೆಯುವಂತಾಗಿದೆ ಎಂದು Aljazeera ವರದಿ ಮಾಡಿದೆ.
ವಾಷಿಂಗ್ಟನ್, ಮಾ. 9: ಅಮೆರಿಕದ ಜಾರ್ಜಿಯಾ ರಾಜ್ಯದ ಫೋರ್ಸಿತ್ ಕೌಂಟಿಯಲ್ಲಿ ಭಾರತೀಯ ಮೂಲದ ಅಮೆರಿಕದ ಕುಟುಂಬಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದನ್ನು ಟೀಕಿಸಿದ MAGA(Make America Great Again) ಬೆಂಬಲಿಗರೊಬ್ಬರ ಸಾಮಾಜಿಕ ಮಾಧ್ಯಮ ಪೋಸ್ಟ್ ಆನ್ ಲೈನ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಉದ್ಯೋಗಗಳು, ವಸತಿ ಮಾರುಕಟ್ಟೆಗಳು ಮತ್ತು ಶಾಲೆಗಳಲ್ಲಿ ಭಾರತೀಯರು ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಇದಕ್ಕೆ H-1B ವೀಸಾವೇ ಕಾರಣ ಎಂದು ಹೇಳಿದ್ದಾರೆ. ‘ಕೇಟ್’ ಎಂದು ಗುರುತಿಸಲಾದ ಬಳಕೆದಾರರು ಮಾಡಿದ ಪೋಸ್ಟ್ನಲ್ಲಿ, ಫೋರ್ಸಿತ್ ಕೌಂಟಿಯಲ್ಲಿ ಈಗ ಸುಮಾರು 35,000 ಭಾರತೀಯ ಮೂಲದ ಅಮೆರಿಕದ ಕುಟುಂಬಗಳು ವಾಸಿಸುತ್ತಿದ್ದು, ಇದು ಸ್ಥಳೀಯ ಜನಸಂಖ್ಯಾಯ ಸ್ವರೂಪವನ್ನೇ ಬದಲಾಯಿಸುತ್ತಿದೆ ಎಂದು ಹೇಳಲಾಗಿದೆ. ಕಂಪೆನಿಗಳು ಅಮೆರಿಕನ್ನರ ಬದಲಿಗೆ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದು, ಅಮೆರಿಕದ ವಲಸೆ ವ್ಯವಸ್ಥೆ ಅಮೆರಿಕನ್ನರನ್ನು ಕಡೆಗಣಿಸಿ, ವಲಸಿಗರಿಗೆ ದೇಶದಲ್ಲೇ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ. “ಅಟ್ಲಾಂಟಾ ಮತ್ತು ಆಲ್ಫರೆಟ್ಟಾ ಮೂಲದ ಕಂಪೆನಿಗಳು ಪ್ರತ್ಯೇಕವಾಗಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿವೆ. ಈಗ ದೇಶದ ಪ್ರತಿಯೊಂದು ಕೌಂಟಿಯೂ ಇದೇ ರೀತಿ ಮಾಡಲಿದೆ. ನಾವು ಅಮೆರಿಕವನ್ನು ಕಳೆದುಕೊಳ್ಳುವುದು ಹೀಗೆಯೇ,” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೆಲವರು ದೇಶದಲ್ಲಿ ಹೆಚ್ಚುತ್ತಿರುವ ಭಾರತೀಯ ಮೂಲದ ಅಮೆರಿಕನ್ನರ ಸಂಖ್ಯೆಯನ್ನು ಟೀಕಿಸುವುದರ ಜೊತೆಗೆ ಅವರನ್ನು ಗಡೀಪಾರು ಮಾಡಬೇಕೆಂದು ಕೂಡ ಕರೆ ನೀಡಿದ್ದಾರೆ. “ಈ ವಿಷಯದ ಬಗ್ಗೆ ಸಾಕಷ್ಟು ಮಾತನಾಡಲಾಗುವುದಿಲ್ಲ. ತೆರಿಗೆದಾರರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸುತ್ತಿರುವಾಗಲೇ ಅವರ ಉದ್ಯೋಗಗಳು ಕಳೆದುಹೋಗುತ್ತಿವೆ. ಇಷ್ಟು ಜನರನ್ನು ದೇಶಕ್ಕೆ ಒಳಗೆ ಬಿಡಲು ನಾವು ಮತ ಚಲಾಯಿಸಿಲ್ಲ,ಅವರು ತಮ್ಮ ದೇಶಗಳಿಗೆ ಹಿಂದಿರುಗಬೇಕು,” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ನ್ಯೂಜೆರ್ಸಿಯಲ್ಲಿಯೂ ಇದೇ ಸಮಸ್ಯೆ ಇದೆ. ಅಮೆರಿಕನ್ನರನ್ನು ಇಲಾಖೆಗಳು, ಕಂಪೆನಿಗಳು ಮತ್ತು ಇಡೀ ಕೈಗಾರಿಕೆಗಳಿಂದ ಹೊರಗಿಡಲಾಗುತ್ತಿದೆ. ಅಮೆರಿಕನ್ನರ ವಿರುದ್ಧ ತಾರತಮ್ಯ ನಡೆಯುತ್ತಿದೆ. ಇದು ಆಕ್ರೋಶವನ್ನುಂಟುಮಾಡುತ್ತದೆ,” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಭಾರತದ ಜನರು ಭಾರತದಲ್ಲೇ ಏಕೆ ಉಳಿಯಲು ಸಾಧ್ಯವಿಲ್ಲ?” ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ►‘ಲಿಟಲ್ ಇಂಡಿಯಾ’ವಾಗಿ ರೂಪಾಂತರವಾಗುತ್ತಿರುವ ಫೋರ್ಸಿತ್ ಕೌಂಟಿ ಜಾರ್ಜಿಯಾ ರಾಜ್ಯದ ಈಶಾನ್ಯ ಭಾಗದಲ್ಲಿರುವ ಫೋರ್ಸಿತ್ ಕೌಂಟಿಯಲ್ಲಿ ಪ್ರೌಢಶಾಲೆಗಳಿಂದ ಹಿಡಿದು ಕಚೇರಿಗಳವರೆಗೆ ಹಲವಾರು ಸಾರ್ವಜನಿಕ ಸ್ಥಳಗಳ ಸಭಾಂಗಣಗಳು ಮತ್ತು ಕಾರ್ಯಸ್ಥಳಗಳಲ್ಲಿ ಭಾರತೀಯ ಮೂಲದ ಅಮೆರಿಕನ್ನರ ಉಪಸ್ಥಿತಿ ಗಮನಾರ್ಹವಾಗಿ ಹೆಚ್ಚಾಗಿದೆ. ಒಮ್ಮೆ ಬಹುಪಾಲು ಶ್ವೇತ ವರ್ಣೀಯ ಜನಸಂಖ್ಯೆ ಹೊಂದಿದ್ದ ಹಾಗೂ 1912ರಲ್ಲಿ ಆಫ್ರಿಕನ್-ಅಮೆರಿಕನ್ ಜನಸಂಖ್ಯೆಯನ್ನು ಹೊರಹಾಕಿದ ಇತಿಹಾಸಕ್ಕಾಗಿ ಪ್ರಸಿದ್ಧವಾಗಿದ್ದ ಈ ಕೌಂಟಿಯಲ್ಲಿ, 2010ರಿಂದ ವಲಸಿಗರ ಹೆಚ್ಚಿದ ಪ್ರವಾಹದೊಂದಿಗೆ ಜನಸಂಖ್ಯಾ ಸ್ವರೂಪದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಈ ಕೌಂಟಿ ಈಗ ಜಾರ್ಜಿಯಾ ರಾಜ್ಯದಲ್ಲಿ ಅತ್ಯಧಿಕ ಭಾರತೀಯ-ಅಮೆರಿಕನ್ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿರುವುದು ಅನೇಕ ಸ್ಥಳೀಯ ಅಮೆರಿಕನ್ನರಿಗೆ ಅಚ್ಚರಿಯುಂಟ ಮಾಡಿದೆ. usafacts.org ಮಾಹಿತಿಯ ಪ್ರಕಾರ, 2010ರಿಂದ 2022ರವರೆಗೆ ಕೌಂಟಿಯ ಏಷ್ಯನ್ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಇತ್ತೀಚಿನ ಜನಗಣತಿ ಆಧಾರಿತ ಅಂದಾಜುಗಳ ಪ್ರಕಾರ, ಸುಮಾರು 35,000 ಭಾರತೀಯ-ಅಮೆರಿಕನ್ನರು ಫೋರ್ಸಿತ್ ಕೌಂಟಿಯಲ್ಲಿ ವಾಸಿಸುತ್ತಿದ್ದಾರೆ. ಜನಸಂಖ್ಯೆಯಷ್ಟೇ ಅಲ್ಲ, ಅವರ ಸಂಸ್ಕೃತಿಯೂ ಸ್ಥಳೀಯ ಶಾಲೆಗಳು ಮತ್ತು ಸಮುದಾಯ ಕಾರ್ಯಕ್ರಮಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಗಾಳಿಪಟ ಹಾರಿಸುವಿಕೆ ಮತ್ತು ಗರ್ಬಾ ಹಬ್ಬಗಳನ್ನು ಸಹ ಅಧಿಕೃತವಾಗಿ ಸಂಭ್ರಮದಿಂದ ಇಲ್ಲಿ ಆಚರಿಸಲಾಗುತ್ತಿದೆ. ಸ್ಥಳೀಯರಿಗೆ ಇದು ಹೊಸ ಸಂಸ್ಕೃತಿಯನ್ನು ಅರಿಯುವ ಅವಕಾಶ ಒದಗಿಸುತ್ತಿದೆ. “ಕಳೆದ ವರ್ಷ ಲ್ಯಾಂಬರ್ಟ್ ಶಾಲೆಯಲ್ಲಿ ನಾವು ದೊಡ್ಡ ಗರ್ಬಾ ರಾತ್ರಿಯನ್ನು ಯೋಜಿಸಿದ್ದೆವು. ಅದು ನನ್ನ ಸ್ವಂತ ಸಂಸ್ಕೃತಿಯೊಂದಿಗೆ ಮನೆಯಲ್ಲಿರುವ ಅನುಭವ ನೀಡಿತು. ಜೊತೆಗೆ ಅದನ್ನು ಭಾರತೀಯರಲ್ಲದ ಮತ್ತು ವಿಭಿನ್ನ ಹಿನ್ನೆಲೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಯಿತು,” ಎಂದು ಲ್ಯಾಂಬರ್ಟ್ ಶಾಲೆಯ ವಿದ್ಯಾರ್ಥಿನಿ ಸ್ನೇಹಾ ರಾಮಿನೇನಿ NRI ಪಲ್ಸ್ ಗೆ ತಿಳಿಸಿದ್ದಾರೆ. “ನಾನು ಈ ಕಾರ್ಯಕ್ರಮಗಳಿಗೆ ನಿಜವಾಗಿಯೂ ಹೋಗುತ್ತೇನೆ,” ಎಂದು ಭಾರತೀಯರಲ್ಲದ ವಿದ್ಯಾರ್ಥಿನಿ ಕಾಸಿಯಾ ರೊಮಾಂಚಿಕ್ ಹೇಳಿದ್ದಾರೆ. “ನನಗೆ ಅದರ ಬಗ್ಗೆ ತಿಳಿದಿರುವ ಯಾರೊಂದಿಗಾದರೂ ಹೋಗುವುದು ಉತ್ತಮ. ಅವರು ಅದನ್ನು ನನಗೆ ಪರಿಚಯಿಸಬಹುದು,” ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ವಿನಿಮಯವನ್ನು ಸ್ವೀಕರಿಸುತ್ತಿದ್ದರೂ, ದೇಶದಲ್ಲಿ ಕಾನೂನುಬದ್ಧವಾಗಿ ವಾಸಿಸುವ ಭಾರತೀಯ-ಅಮೆರಿಕನ್ನರ ಸಂಖ್ಯೆಯ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತಪಡಿಸುತ್ತಿರುವ MAGA ಬೆಂಬಲಿಗರಿಗೆ ಫೋರ್ಸಿತ್ ಕೌಂಟಿ ಎಚ್ಚರಿಕೆಯ ಸಂಕೇತವಾಗಿ ಕಾಣುತ್ತಿದೆ. ವಿಪರ್ಯಾಸವೆಂದರೆ, ಇದೇ ಕೌಂಟಿಯಲ್ಲಿ 1987ರಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ ಜೆಸ್ಸಿ ಜಾಕ್ಸನ್ ‘ಬ್ರದರ್ಹುಡ್ ಮಾರ್ಚ್’ ನಡೆಸಿದ್ದರು. ಆಗ ಕೌಂಟಿಯ ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರದ ಇತಿಹಾಸವನ್ನು ಅವರು ಪ್ರತಿಭಟಿಸಿದ್ದರು. ಇಂದು ಇದೇ ಫೋರ್ಸಿತ್ ಕೌಂಟಿ ಜನಸಂಖ್ಯಾ ಸ್ವರೂಪದಲ್ಲಿ ಸಂಪೂರ್ಣ ವಿಭಿನ್ನ ಚಿತ್ರಣ ನೀಡುತ್ತಿದ್ದು, ಆಧುನಿಕ ಅಮೆರಿಕದ ಬದಲಾಗುತ್ತಿರುವ ಸಾಮಾಜಿಕ ಮುಖವನ್ನು ಪ್ರತಿಬಿಂಬಿಸುವ ಪ್ರದೇಶವಾಗಿ ಪರಿಣಮಿಸಿದೆ. ಸೌಜನ್ಯ: timesofindia
LPG ಸಿಲಿಂಡರ್ ಪೂರೈಕೆ ಸ್ಥಗಿತ: ಬೆಂಗಳೂರಿನ ಹಲವು ಹೋಟೆಲ್ಗಳು ಮಂಗಳವಾರದಿಂದ ಬಂದ್! ಊಟ ತಿಂಡಿಗೆ ಸಮಸ್ಯೆ
ಇಸ್ರೇಲ್ ಇರಾನ್ ಯುದ್ಧ ಹಿನ್ನೆಲೆ ಹೋಟೆಲ್ಗಳಿಗೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸ್ಥಗಿತವಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಹೋಟೆಲ್ಗಳನ್ನು ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ಯಾಸ್ ಇಲ್ಲದೆ ನಾವು ಅಡುಗೆ ಮಾಡುವುದು ಅಸಾಧ್ಯ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ಇದರಿಂದ ನಗರದ ಲಕ್ಷಾಂತರ ಮಂದಿಗೆ ಊಟ ತಿಂಡಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಬೆಂಗಾವಲು ಕಾರ್ಯಾಚರಣೆ: ಫ್ರಾನ್ಸ್ ಯೋಜನೆ
ಅಮೆರಿಕ-ಇಸ್ರೇಲ್ ಹೊತ್ತಿಸಿದ ಬೆಂಕಿಯ ನಡುವೆ ಪರಿಸ್ಥಿತಿ ಗಂಭೀರ ಎಂದ ಇರಾನ್
ವಿರಾಟ್ ಕೊಹ್ಲಿಯ ದಶಕದ ಹಳೆಯ ದಾಖಲೆ ಅಳಿಸಿದ ಸಂಜು ಸ್ಯಾಮ್ಸನ್
T20 World Cup: 2026ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅಧಿಪತ್ಯ ಸಾಧಿಸುವುದರ ಜೊತೆಗೆ, ವೈಯಕ್ತಿಕ ದಾಖಲೆಗಳ ಪುಟದಲ್ಲೂ ಹೊಸ ಇತಿಹಾಸ ಸೃಷ್ಟಿಯಾಗಿದೆ. ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್, ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಕೊಹ್ಲಿ ದಾಖಲೆ ಮುರಿದಿದ್ದಾರೆ. ಈವರೆಗೆ ಭಾರತದ
ಮಾಧ್ಯಮ ಒಂದು ಸರಕಾರವನ್ನು ತರುವ ಹಾಗೂ ಉರುಳಿಸುವಷ್ಟು ಶಕ್ತಿಶಾಲಿ : ಎಚ್.ವಿಶ್ವನಾಥ್
ಪತ್ರಕರ್ತ ಜಿ.ಮಹಾಂತೇಶ್ ಅವರು ಸಂಪಾದಿಸಿರುವ ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ
ಗೃಹಬಳಕೆಯ LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ; 25 ದಿನದ ಬಳಿಕವೇ ರೀಫಿಲ್ಗೆ ಅವಕಾಶ!
ಇರಾನ್ ಯುದ್ಧದ ಪರಿಣಾಮ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಮೇಲಾಗಿದೆ. ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ರೀಫಿಲ್ಗೆ 25 ದಿನ ಕಾಯಬೇಕಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಹಾಗೂ ಅನಗತ್ಯ ಸಂಗ್ರಹ ತಡೆಗೆ ಸರ್ಕಾರ ಈ ಕ್ರಮಕೈಗೊಂಡಿದೆ. ಮೊದಲಿಗೆ 15 ದಿನಗಳ ಬಳಿಕ ರೀಫಿಲ್ಗೆ ಅವಕಾಶ ಇತ್ತು. ಆಬಳಿಕ 21, ಈಗ 25 ದಿನಕ್ಕೆ ಹೆಚ್ಚಿಸಲಾಗಿದೆ.
ಯಾದಗಿರಿ | ಪೋಕ್ಸೋ ಪ್ರಕರಣ : ಮಲ್ಲಿಕಾರ್ಜುನ ಮುತ್ಯಾ ಜಾಮೀನು ಅರ್ಜಿ ವಜಾ
ಯಾದಗಿರಿ : ಪೋಕ್ಸೋ ಪ್ರಕರಣದ ಆರೋಪ ಎದುರಿಸುತ್ತಿರುವ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜನ ಮುತ್ಯಾ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪ ಎದುರಿಸುತ್ತಿರುವ ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮುತ್ಯಾ ಅರ್ಜಿ ಸಲ್ಲಿಸಿದ್ದು,ಸೋಮವಾರ ಅದರ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರುಳಸಿದ್ದರಾಧ್ಯ ಅವರು ಜಾಮೀನು ತಿರಸ್ಕರಿಸಿದ್ದಾರೆ. ಇದೀಗ ಮುತ್ಯಾಗೆ ಬಂಧನ ಭೀತಿ ಎದುರಾಗಿದೆ ಎನ್ನಲಾಗುತ್ತಿದೆ. ಜಾಮೀನು ಕೋರಿ ಮಂಗಳವಾರ ಹೈಕೋರ್ಟ್ ಮೆಟ್ಟಿಲು ಎರುವ ಸಾಧ್ಯಗಳಿವೆ ಎಂದು ತಿಳಿದುಬಂದಿದೆ.
ಕೃಷಿ ಕಲ್ಪ ಪ್ರತಿಷ್ಠಾನದ ಜೊತೆಗಿನ ತಿಳಿವಳಿಕೆ (ಎಂಒಯು) ಪತ್ರಕ್ಕೆ ರಾಜ್ಯ ಸರಕಾರ ಅಂಕಿತ
ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಮೀಣ ನಾವೀನ್ಯತೆ ಮತ್ತು ಉದ್ಯಮಶೀಲತೆ ಬಲಪಡಿಸಲು ಕಲಬುರಗಿಯಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ನಾವೀನ್ಯತೆಗೆ ಸಂಬಂಧಿಸಿದಂತೆ ಶ್ರೇಷ್ಠತೆಯ ಕೇಂದ್ರ (ಸಿಒಇ) ಸ್ಥಾಪಿಸಲು ರಾಜ್ಯ ಸರಕಾರವು ಕೃಷಿ ಕಲ್ಪ ಫೌಂಡೇಷನ್ ಜೊತೆಗೆ ತಿಳಿವಳಿಕೆ ಒಪ್ಪಂದ (ಎಂಒಯು) ಪತ್ರಕ್ಕೆ ಸಹಿ ಹಾಕಿದೆ. ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು, ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ಮೂಲಕ ಈ ಒಪ್ಪಂದಕ್ಕೆ ಸೋಮವಾರ ನಗರದ ಕೆಐಟಿಎಸ್ ಕಚೇರಿಯಲ್ಲಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಸಹಿ ಹಾಕಿದೆ. ರಾಜ್ಯ ಸರಕಾರದ ಪರವಾಗಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಮತ್ತು ಈ ಉಪಕ್ರಮದ ಅನುಷ್ಠಾನ ಪಾಲುದಾರಿಕೆ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿರುವ ಕೃಷಿ ಕಲ್ಪ ಫೌಂಡೇಷನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ.ಪಾಟೀಲ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕವು ಕೃಷಿ ಮತ್ತು ಗ್ರಾಮೀಣ ಉದ್ಯಮದಲ್ಲಿ ನಾವೀನ್ಯತೆ ಕೇಂದ್ರವಾಗಿ ಹೊರಹೊಮ್ಮಲು ಅಪಾರ ಸಾಮಥ್ರ್ಯ ಹೊಂದಿದೆ. ಸ್ಥಳೀಯ ಆರ್ಥಿಕತೆಯ ವೇಗವರ್ಧಕ ಕಾರ್ಯಕ್ರಮದಡಿ (ಎಲ್ಇಎಪಿ-ಲೀಪ್), ರಾಜ್ಯ ಸರಕಾರವು ಬೆಂಗಳೂರಿನಾಚೆಗೆ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಉದ್ಯಮ ಅವಕಾಶಗಳನ್ನು ಸ್ಥಳೀಯ ಸಮುದಾಯಗಳಿಗೆ ಹತ್ತಿರ ತರಲು ಬದ್ಧವಾಗಿದೆ ಎಂದು ತಿಳಿಸಿದರು. ಕಲಬುರಗಿಯಲ್ಲಿ ಸ್ಥಾಪನೆಗೊಳ್ಳಲಿರುವ ಶ್ರೇಷ್ಠತಾ ಕೇಂದ್ರವು ರೈತರು, ನವೋದ್ಯಮಗಳು, ಸಂಶೋಧಕರು ಮತ್ತು ಯುವ ನಾವೀನ್ಯಕಾರರು ಅತ್ಯಾಧುನಿಕ ಕೃಷಿ-ತಂತ್ರಜ್ಞಾನ ಪರಿಹಾರಗಳ ಜೊತೆ ಕಾರ್ಯನಿರ್ವಹಿಸಲು, ಜೀವನೋಪಾಯ ಬಲಪಡಿಸಿಕೊಳ್ಳಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಸದೃಢ ವೇದಿಕೆಯನ್ನು ನಿರ್ಮಾಣ ಮಾಡಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಒಪ್ಪಂದದ ಮುಖ್ಯಾಂಶಗಳು: ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಗ್ರಾಮೀಣ ನಾವೀನ್ಯತೆ ಮತ್ತು ತಂತ್ರಜ್ಞಾನ-ನೇತೃತ್ವದ ಪರಿಹಾರಗಳ ಮೇಲೆ ಗಮನ ಕೇಂದ್ರೀಕರಿಸಿದ ಕೃಷಿ ಮತ್ತು ಸಂಬಂಧಿತ ನಾವೀನ್ಯತೆಯ ಶ್ರೇಷ್ಠತಾ ಕೇಂದ್ರದ ಸ್ಥಾಪನೆ. ಬೆಂಗಳೂರಿನ ಆಚೆಗೆ ಪ್ರಾದೇಶಿಕ ನಾವೀನ್ಯತೆ ವ್ಯವಸ್ಥೆ ಬಲಪಡಿಸಲು ಐದು ವರ್ಷಗಳಲ್ಲಿ 1,000 ಕೋಟಿ ರೂ. ವೆಚ್ಚದ ‘ಲೀಪ್’ ಕಾರ್ಯಕ್ರಮದ ಅಡಿಯಲ್ಲಿ ಅನುಷ್ಠಾನ. ಐದು ವರ್ಷಗಳಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಾದ್ಯಂತ ಆರು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವುದು. ಕೃಷಿ ಕಲ್ಪ ಫೌಂಡೇಷನ್ ಅನುಷ್ಠಾನ ಪಾಲುದಾರರಾಗಿ ಕಾರ್ಯನಿರ್ವಹಣೆ. ಶ್ರೇಷ್ಠತಾ ಕೇಂದ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತಾ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ಐದು ವರ್ಷಗಳ ಅವಧಿಯಲ್ಲಿ 16.5 ಕೋಟಿ ರೂ.ನೆರವಿನ ಮೂಲಕ ಈ ಉಪಕ್ರಮವನ್ನು ಬೆಂಬಲಿಸಲಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್ಡಿಬಿ) ಮೂಲ ಸೌಕರ್ಯ ಅಭಿವೃದ್ಧಿಯ 4.5 ಕೋಟಿ ರೂ. ನೆರವು ಸೇರಿದೆ. ಅತ್ಯಾಧುನಿಕ ನಾವೀನ್ಯತಾ ಮೂಲಸೌಕರ್ಯಗಳ ಅಭಿವೃದ್ಧಿಯಡಿ ಅತ್ಯಾಧುನಿಕ ಕೃಷಿ ನಾವೀನ್ಯತೆ ಪ್ರಯೋಗಾಲಯಗಳು, 3ಡಿ ಮುದ್ರಣ ಮತ್ತು ಮೂಲಮಾದರಿ ಸೌಲಭ್ಯಗಳು, ತಯಾರಕರ ಪ್ರಯೋಗಾಲಯ, ಮಾಧ್ಯಮ ಮತ್ತು ವಿಷಯ ಪ್ರಯೋಗಾಲಯ ಸ್ಥಾಪನೆ. ಕೃಷಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ) ನೆರವಿನ ಕೃಷಿ, ಕೃಷಿಗಾಗಿ ಐಒಟಿ, ರೋಬೊಟಿಕ್ಸ್, ಡಿಜಿಟಲ್ ಕೃಷಿ ವೇದಿಕೆಗಳು ಮತ್ತು ದತ್ತಾಂಶ-ಆಧಾರಿತ ಕೃಷಿ ತಂತ್ರಜ್ಞಾನಗಳು ಸೇರಿದಂತೆ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಣ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯಮ ಅಭಿವೃದ್ಧಿ ಕಾರ್ಯಗತಗೊಳಿಸುವ ನವೋದ್ಯಮಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್ಪಿಒ), ಸ್ವ-ಸಹಾಯ ಗುಂಪುಗಳು (ಎಸ್ಎಚ್ಜಿ) ಮತ್ತು ಗ್ರಾಮೀಣ ನಾವೀನ್ಯಕಾರರಿಗೆ ಬೆಂಬಲ. ಮಾರ್ಗದರ್ಶನ ಮತ್ತು ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿ ಮತ್ತು ಮೇಲ್ವಿಚಾರಣಾ ಸಮಿತಿಯ ರಚನೆ, ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಉತ್ಪನ್ನ ಸ್ಟಾರ್ಟ್ಅಪ್ಗಳು, ನಾವೀನ್ಯಕಾರರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಈ ಶ್ರೇಷ್ಠತಾ ಕೇಂದ್ರವು ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ. ಕೃಷಿ ಮೌಲ್ಯ ಸರಪಳಿಯಾದ್ಯಂತ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ. ಕೃಷಿ ಕಲ್ಪ ಪ್ರತಿμಷ್ಠಾನವು ಈ ಕೇಂದ್ರವನ್ನು ಕಾರ್ಯಗತಗೊಳಿಸಲಿದೆ. ಈ ಸಮಾರಂಭದಲ್ಲಿ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್., ಕೆಐಟಿಎಸ್ನ ಪ್ರಧಾನ ವ್ಯವಸ್ಥಾಪಕಿ ಅಪೂರ್ವ, ಕೃಷಿ ಕಲ್ಪ ಪ್ರತಿಷ್ಠಾನದ ಗ್ರಾಮೀಣ ಉದ್ಯಮಶೀಲತೆಯ ಉಪಾಧ್ಯಕ್ಷ ಈರಣ್ಣ, ಯುವ ಉದ್ಯಮಶೀಲತೆಯ ಮುಖ್ಯಸ್ಥ ಅಭಿನಂದನ್, ಕೆಐಟಿಎಸ್ ಮತ್ತು ಕೃಷಿ ಕಲ್ಪ ಪ್ರತಿಷ್ಠಾನದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಎಸ್ಟಿ ಪರಿಷ್ಕರಣೆ-ಕೇಂದ್ರದ ಅನುದಾನ ವಿಳಂಬದಿಂದ ವಿತ್ತೀಯ ಕೊರತೆ ಬಜೆಟ್ ಮಂಡನೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ಬಿಡುಗಡೆ ವಿಳಂಬ ಹಾಗೂ ಜಿಎಸ್ಟಿ ಪರಿಷ್ಕರಣೆಯಿಂದಾಗಿ ಈ ಬಾರಿ ವಿತ್ತೀಯ ಕೊರತೆ ಬಜೆಟ್ ಮಂಡನೆ ಮಾಡುವಂತಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸೋಮವಾರ ನಗರದ ಖಾಸಗಿ ಹೊಟೇಲ್ನಲ್ಲಿ ರಾಜ್ಯ ವಿಧಾನಮಂಡಲದ ವತಿಯಿಂದ ಶಾಸಕರು ಹಾಗೂ ವಿಧಾನಪರಿಷತ್ತಿನ ಸದಸ್ಯರಿಗಾಗಿ ಆಯವ್ಯಯ ರಾಜಸ್ವಗಳ ಸಂಗ್ರಹಣೆ, ಅನುದಾನಗಳ ವರ್ಗೀಕರಣ ಮತ್ತು ಹಂಚಿಕೆ ಹಾಗೂ ಆಯವ್ಯಯ ಅನುದಾನಗಳ ಬಳಕೆ, ನಿರ್ವಹಣೆ ವಿಷಯದ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು. 2025-26ರಲ್ಲಿ 4,09,018 ಕೋಟಿ ರೂ.ಗಳಿದ್ದ ಬಜೆಟ್ ಗಾತ್ರ, 2026-27ರಲ್ಲಿ 4,48,004 ಕೋಟಿ ರೂ.ಗಳಿಗೆ ತಲುಪಿದೆ. ನಾವು 2025-26ರಲ್ಲಿ ಬಜೆಟ್ ಅಂದಾಜುಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ, ಕೇಂದ್ರ ಸರಕಾರದಿಂದ ಬರಬೇಕಾದ ಅನುದಾನ ಬರಲಿಲ್ಲ. ಆದುದರಿಂದ, ನಾವು ಬಜೆಟ್ನಲ್ಲಿ ಘೋಷಣೆ ಮಾಡಿದಂತಹ ಒಟ್ಟು ಖರ್ಚು ತಲುಪಲು ಸಾಧ್ಯವಿಲ್ಲ. ಆದುದರಿಂದ, ವಿತ್ತೀಯ ಕೊರತೆ ಬಜೆಟ್ ಮಂಡಿಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಮುಖ್ಯಮಂತ್ರಿ ಹೇಳಿದರು. ಜಿಎಸ್ಟಿ ಪರಿಷ್ಕರಣೆ ಮಾಡುವ ಮುನ್ನ ನಮಗೆ ಜಿಎಸ್ಟಿಯಿಂದ ಬರುತ್ತಿದ್ದ ತೆರಿಗೆ ಬೆಳವಣಿಗೆ ದರ ಶೇ.10ರಷ್ಟು ಇತ್ತು. ಪರಿಷ್ಕರಣೆ ಆದ ನಂತರ ಅದು ಶೇ.4ಕ್ಕೆ ಇಳಿಯಿತು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಇದರ ಪರಿಣಾಮ ಬೀರಿದೆ. ರಾಜ್ಯದ ಜಿಎಸ್ಡಿಪಿ 33,05,500 ರೂ.ಗಳು. ಈ ಮೊತ್ತದ ಶೇ.25ರಷ್ಟು ಸಾಲ ಇರಬೇಕೆಂದು ವಿತ್ತೀಯ ಹೊಣೆಗಾರಿಕೆ ಕಾಯ್ದೆ ತಿಳಿಸುತ್ತದೆ ಎಂದು ಅವರು ತಿಳಿಸಿದರು. ವಿಪಕ್ಷದವರು ಆರೋಪ ಮಾಡುತ್ತಿರುವಂತೆ ನಾವು ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಿ ಸಾಲ ಮಾಡಿಲ್ಲ. ಇದು ನಾನು ಮಂಡಿಸಿದ 17ನೆ ಬಜೆಟ್. 2013-2018ರವರೆಗೆ ನಾನು ಮಂಡಿಸಿದ ಬಜೆಟ್ ಗಳಲ್ಲಿ ರಾಜಸ್ವ ಹೆಚ್ಚಳ ಇತ್ತು. ಎಂದಿಗೂ ವಿತ್ತೀಯ ಕೊರತೆ ಎದುರಾಗಿರಲಿಲ್ಲ. ಈಗ ವಿತ್ತೀಯ ಕೊರತೆ ಇದೆ. ಕಳೆದ ವರ್ಷ ವಿತ್ತೀಯ ಕೊರತೆ 19 ಸಾವಿರ ಕೋಟಿ ರೂ. ಇತ್ತು, ಮುಂದಿನ ವರ್ಷಕ್ಕೆ 22 ಸಾವಿರ ಕೋಟಿ ರೂ.ಗಳಾಗುತ್ತದೆ. ಕೇಂದ್ರದಿಂದ ಬರಬೇಕಾದ ಬಾಕಿ ಹಣ ಬಂದಿದ್ದರೆ, ವಿತ್ತೀಯ ಕೊರತೆಯನ್ನು ನಿವಾರಿಸಲು ಸಾಧ್ಯವಾಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದರು. 2025-26ರಲ್ಲಿ ಜಿಎಸ್ಟಿಯನ್ನು ಪರಿಷ್ಕರಣೆ ಮಾಡಿದರು. 2017ರಲ್ಲಿ ಜಿಎಸ್ಟಿ ಜಾರಿಗೆ ಬಂತು. ಅದಕ್ಕಿಂತ ಮುಂಚೆ ನಮ್ಮ ಆರ್ಥಿಕ ಬೆಳವಣಿಗೆ ಶೇ.14ರಷ್ಟು ಇತ್ತು. 2022ರವರೆಗೆ ಕೇಂದ್ರ ಸರಕಾರ ಪರಿಹಾರ ನೀಡುತ್ತಿತ್ತು. ಆನಂತರ ಅದನ್ನು ನಿಲ್ಲಿಸಿದರು. ಇದು ಸಹ ವಿತ್ತೀಯ ಕೊರತೆಗೆ ಕಾರಣವಾಯಿತು ಎಂದು ಮುಖ್ಯಮಂತ್ರಿ ಉಲ್ಲೇಖಿಸಿದರು. ಜಲಜೀವನ್ ಮಿಷನ್ ಯೋಜನೆಯಡಿ ಕೇಂದ್ರ ಸರಕಾರ ನಮಗೆ 19 ಸಾವಿರ ಕೋಟಿ ರೂ.ಗಳನ್ನು ಕೊಡಬೇಕಿತ್ತು. ಆದರೆ, ಕೊಟ್ಟಿದ್ದು 11 ಸಾವಿರ ಕೋಟಿ ರೂ.ಮಾತ್ರ. ನಾವು ಈ ಯೋಜನೆಗೆ 27 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ. ರಾಜ್ಯದ ಜಿಎಸ್ಡಿಪಿ 2025-26ರಲ್ಲಿ ಶೇ.8.1ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ ಶೇ.7.4ಕ್ಕೆ ಹೆಚ್ಚಿದೆ ಎಂದು ಸಿದ್ದರಾಮಯ್ಯ ಹೇಳಿದರು. 2026-27ನೆ ಸಾಲಿನಲ್ಲಿ ವಾಣಿಜ್ಯ ತೆರಿಗೆಯಿಂದ 1.25 ಲಕ್ಷ ಕೋಟಿ ರೂ., ಮೋಟಾರು ವಾಹನ ತೆರಿಗೆ-15,500 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ-29 ಸಾವಿರ ಕೋಟಿ ರೂ., ಅಬಕಾರಿ-45 ಸಾವಿರ ಕೋಟಿ ರೂ. ಹಾಗೂ ಇತರೆ-5500 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದರು. ಕೇಂದ್ರಕ್ಕೆ ನಮ್ಮ ರಾಜ್ಯದಿಂದ 4.50 ಲಕ್ಷ ಕೋಟಿ ರೂ.ಗಳನ್ನು ವಿವಿಧ ತೆರಿಗೆಗಳ ಮೂಲಕ ನೀಡುತ್ತೇವೆ. 2026-27ರಲ್ಲಿ ಕೇಂದ್ರದಿಂದ ನಮಗೆ 73 ಸಾವಿರ ಕೋಟಿ ರೂ.ತೆರಿಗೆ ಹಂಚಿಕೆ ಬರಲಿದೆ. 14ನೆ ಹಣಕಾಸು ಆಯೋಗದಲ್ಲಿ ಕೇಂದ್ರದಿಂದ ನಮಗೆ ತೆರಿಗೆ ಹಂಚಿಕೆ ಪ್ರಮಾಣ ಶೇ.4.7, 15ನೆ ಹಣಕಾಸು ಆಯೋಗದಲ್ಲಿ ಶೇ.3.6 ಹಾಗೂ 16ನೆ ಹಣಕಾಸು ಆಯೋಗದಲ್ಲಿ ಶೇ.4.131 ನಿಗದಿ ಮಾಡಿದ್ದಾರೆ ಎಂದು ಅವರು ಹೇಳಿದರು. ಬಜೆಟ್ ಯಾವ ರೀತಿ ಖರ್ಚು ಆಗುತ್ತಿದೆ ಎಂದು ನೋಡಬೇಕಾದದ್ದು ಶಾಸಕರ ಕರ್ತವ್ಯ. ರೆವಿನ್ಯೂ ಸರಪ್ಲಸ್, ರೆವಿನ್ಯೂ ಡಿಫಿಸಿಟ್, ಸಂಚಿತ ನಿಧಿ, ಭದ್ಧತಾ ವೆಚ್ಚ, ಪೂರಕ ಅಂದಾಜು, ಆರ್ಥಿಕ ವರದಿಗಳು, ಸಮೀಕ್ಷಾ ವರದಿಗಳ ಬಗ್ಗೆಯೂ ಶಾಸಕರು ಗಮನ ಹರಿಸಬೇಕು. ಅಧ್ಯಯನ ಮಾಡಬೇಕು ಎಂದು ಅವರು ಹೇಳಿದರು. ವೇದಿಕೆ ಮೇಲೆ ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಎನ್.ಎಸ್.ಭೊಸರಾಜು ಉಪಸ್ಥಿತರಿದ್ದರು. ನಾವೆಲ್ಲರೂ ಶಾಸಕರಾಗಿ ಬಂದಿದ್ದೇವೆ. ಬಜೆಟ್ ಸಂದರ್ಭದಲ್ಲಿ ಇದರ ಸಂಪೂರ್ಣ ಅರಿವು ಇರುವುದಿಲ್ಲ. ಆರ್ಥಿಕ ವ್ಯವಸ್ಥೆ, ವಿತ್ತೀಯ ಕೊರತೆ, ಸರ್ಪ್ಲಸ್ ಬಜೆಟ್ ಇವುಗಳ ಕುರಿತು ತಿಳಿದುಕೊಳ್ಳಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಶಾಸಕರಿಗೆ ಈ ಕಾರ್ಯಾಗಾರವನ್ನು ಆಯೋಜಿಸಿದ್ದು, 17 ಬಾರಿ ಬಜೆಟ್ ಮಂಡಿಸಿ, ಅನುಭವವಿರುವ ಮುಖ್ಯಮಂತ್ರಿ ಅವರಿಂದ ಶಾಸಕರಿಗೆ ತರಬೇತಿ ನೀಡಲು ನಿರ್ಧರಿಸಲಾಯಿತು. ಯು.ಟಿ.ಖಾದರ್, ಸ್ಪೀಕರ್ ಪ್ರತಿ ಬಾರಿ ಬಜೆಟ್ ಮಂಡಿಸುತ್ತೇವೆ. ಎಲ್ಲರಿಗೂ ಸವಿಸ್ತಾರವಾಗಿ ಶಾಸಕರಿಗೆ ಬಜೆಟ್ ಬಗ್ಗೆ ತಿಳಿಸಲು, ಇದೇ ಮೊಟ್ಟಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಮಾಡಿದ್ದೇವೆ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ, ಇಡೀ ದೇಶದಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಮೊದಲನೆ ಸ್ಥಾನಕ್ಕೆ ಬರಲಿ ಎಂದು ಹಾರೈಸುತ್ತೇನೆ. ಬಜೆಟ್ ಮೇಲೆ ಚರ್ಚೆ ಮಾಡುವಾಗ ಅಂಕಿ ಅಂಶಗಳನ್ನು ಕ್ರೋಢೀಕರಿಸಿ, ಸದನದಲ್ಲಿ ಚರ್ಚೆ ಮಾಡುವಾಗ ಪ್ರಸ್ತಾವ ಮಾಡಿ. ಬಸವರಾಜ ಹೊರಟ್ಟಿ, ಸಭಾಪತಿ
ಮಧ್ಯಪ್ರಾಚ್ಯ ಸಂಘರ್ಷ | ವಿಶ್ವಾಸಾರ್ಹ ಪಾಲುದಾರರಿಗೆ ಇಂಧನ ಪೂರೈಕೆ ಮುಂದುವರಿಕೆ: ಪುಟಿನ್
ಮಾಸ್ಕೋ, ಮಾ. 9: ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಹಾಗೂ ಇಂಧನ ಮಾರುಕಟ್ಟೆಗಳಲ್ಲಿ ಉಂಟಾಗಿರುವ ಅಸ್ಥಿರತೆಯ ನಡುವೆಯೇ ರಷ್ಯಾದ ಕಂಪೆನಿಗಳು ಪ್ರಸ್ತುತ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಕ್ರೆಮ್ಲಿನ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಡೆಯುತ್ತಿರುವ ಯುದ್ಧವು ವಿಶ್ವಾದ್ಯಂತ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಎಚ್ಚರಿಸಿದರು. ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಅವಲಂಬಿಸಿರುವ ತೈಲ ಉತ್ಪಾದನೆ ಶೀಘ್ರದಲ್ಲೇ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದರು. ಯುರೋಪಿನ ಖರೀದಿದಾರರು ‘ರಾಜಕೀಯವಿಲ್ಲದೆ ದೀರ್ಘಾವಧಿಯ ಸಹಕಾರ’ದಲ್ಲಿ ತೊಡಗಿಕೊಳ್ಳಲು ಸಿದ್ಧರಾಗಿದ್ದರೆ ರಷ್ಯಾ ಅವರೊಂದಿಗೆ ಕೆಲಸ ಮಾಡಲು ಸಿದ್ಧವಿದೆ ಎಂದು ಪುಟಿನ್ ಹೇಳಿದರು. ಜೊತೆಗೆ, ಮಾಸ್ಕೋ ತನ್ನ ‘ವಿಶ್ವಾಸಾರ್ಹ ಪಾಲುದಾರರಿಗೆ’ ಇಂಧನ ಸಂಪನ್ಮೂಲಗಳನ್ನು ಪೂರೈಸುವುದನ್ನು ಮುಂದುವರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ರಷ್ಯಾ ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿದ್ದು, ವಿಶ್ವದಲ್ಲೇ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪವನ್ನು ಹೊಂದಿದೆ.
ಬಜ್ಪೆ| ಕಲುಷಿತಗೊಂಡಿರುವ ಮಳವೂರು ಪಲ್ಗುಣಿ ನದಿ; ನಾಗರಿಕರ ಹಿತರಕ್ಷಣಾ ವೇದಿಕೆ ಆಕ್ರೋಶ
ಬಜ್ಪೆ: ಬೃಹತ್ ಕಾರ್ಖಾನೆಗಳಿಂದ ಕಲುಷಿತಗೊಂಡಿರುವ ಮಳವೂರು ಪಲ್ಗುಣಿ ನದಿಯನ್ನು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ನಿಯೋಗವು ಸೋಮವಾರ ವೀಕ್ಷಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಮಳವೂರು ಮೂಲಕ ಹರಿಯುವ ಪಲ್ಗುಣಿ ನದಿಯಲ್ಲಿ ಮೀನುಗಳು ಸಾಯುತ್ತಿದ್ದು, ನೀರಿನಲ್ಲಿ ನೊರೆಗಳು ಹರಡಿದೆ. ದುರ್ನಾಥ ವಿಪರೀತವಾಗಿ ಹರಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ ಆದರೂ ಜಿಲ್ಲಾಡಳಿ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಜೀ ಭಾಗದ ಜನರ ದೌರ್ಭ್ಯಾಗ್ಯ ಎಂದು ನಿಯೋಗವು ಆಕ್ರೋಶ ವ್ಯಕ್ತಪಡಿಸಿದೆ. ಈ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ಬಹುಗ್ರಾಮ ಕುಡಿಯುವ ಯೋಜನೆಯನ್ನು ಅನುಷ್ಟಾನ ಗೊಳಿಸಲಾಗಿದ್ದು, ಈ ಯೋಜನೆಯಡಿ ಸುತ್ತಲಿನ 10 ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. ಈ ನೀರು ಜನರ ಗೃಹೋಪಯೋಗಗಳಿಗೆ ಯೋಗ್ಯವೇ ಎನ್ನುವಷ್ಟು ಆತಂಕ ಜೊತೆಗೆ ಅನುಮಾನ ಹುಟ್ಟಿದೆ. ಡ್ಯಾಮ್ ಪಕ್ಕದವರೆಗೆ ಕಲುಷಿತ ನೀರು ಹರಡಿಕೊಂಡಿದ್ದು, ಡ್ಯಾಮ್ ನ ಒಳಗೆಯೂ ಕೊಳಕು ನೀರು ಸೇರಿರುವ ಆತಂಕವಿದೆ. ಹಾಗಾಗಿ ತಕ್ಷಣ ಜಿಲ್ಲಾಡಳಿಯ ಡ್ಯಾಮ್ ನ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ಕಲುಷಿತ ನೀರು ಜೀವ ನದಿಗೆ ಸೇರುದನ್ನು ತೆರಯಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿರುವ ಬಜ್ಪೆ ನಾಗರಿಕರ ಹಿತ ರಕ್ಷಣಾ ವೇದಿಕೆಯು ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಜನ ಕಾರ್ಯಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಹತ್ತೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರನ್ನು ಸೇರಿಸಿಕೊಂಡು ಬೃಹತ್ ಮಟ್ಟದ “ ಫಲ್ಗುಣಿ ನದಿ ಬಚಾವೊ” ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಜ್ಪೆ ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಕ್ ಬಜ್ಪೆ ಅವರಿ ಜಿಲ್ಲಾಡಳಿವನ್ನು ಎಚ್ಚರಿಸಿದ್ದಾರೆ. ನಿಯೋಗದಲ್ಲಿ ರಾಜ್ಯ ದಲಿತ ಸಂಘದ ಅಧ್ಯಕ್ಷ ಹಾಗೂ ವೇದಿಕೆಯ ಗೌರವಾಧ್ಯಕ್ಷರಾದ ದೇವದಾಸ್, ಹಾಜಿ ಮೋನು, ಹಾಜಿ ಸಲೀಮ್,ಉಪಾಧ್ಯಕ್ಷರಾದ ಇಂಜಿನಿಯರ್ ಇಸ್ಮಾಯಿಲ್, ವಸಂತ್ , ಕಾರ್ಯದರ್ಶಿ ನಿಸಾರ್ ಕರಾವಳಿ, ದಲಿತ ಸಂಘದ ನಾಯಕರಾದ ಮಂಜಪ್ಪ ಪುತ್ರನ್ ಹಿರಿಯರಾದ ಖಾದರ್ ಜರಿ, ಅನ್ವರ್ ರಝಾಕ್ ಮತ್ತು ಕೆಪಿಸಿಸಿ ಸಾಮಾಜಿಕ ಜಾಲತಾಣದ ಹಫೀಝ್ ಕೊಳಂಬೆ ಇದ್ದರು. ಈ ವಿಷ ಮಿಶ್ರಿತ ಕೊಳಚೆ ನೀರನ್ನು ಯಾವ ಯಾವ ಕಾರ್ಖಾನೆಗಳಿಂದ ನದಿಗೆ ಬಿಡಲಾಗುತ್ತಿದೆ ಎನ್ನುವ ಕುರಿತು ಸಂಬಂಧಪಟ್ಟ ಇಲಾಖೆ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಇಷ್ಟು ದೊಡ್ಡ ಅಕ್ರಮ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದೆ. ಜನರ ಜೀವದೊಂದಿಗೆ ಯಾತೂ ಚೆಲ್ಲಾಟವಾ ಡುವುದು ಬೇಡ. ಕಣ್ಣುಮುಚ್ಚಿ ಕುಳಿತಿರುವ ಜನಪ್ರಧಿನಿಧಿಗಳು ಜಿಲ್ಲಾಡಳಿತ ಕಣ್ಣು ತೆರೆಯದಿದ್ದಲ್ಲಿ ನಾಗರಿಕರು ಸೇರಿ ಕಣ್ಣು ತೆರೆಸುವ ಕೆಲಸ ಮಾಡುತ್ತೇವೆ. -ಸಿರಾಜ್ ಬಜ್ಪೆ, ಅಧ್ಯಕ್ಷರು, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ
ಪೆಟ್ರೋಲ್, ಡೀಸೆಲ್ ದರದಲ್ಲಿ ತತ್ಕ್ಷಣ ಏರಿಕೆ ಇಲ್ಲ
ಹೊಸದಿಲ್ಲಿ, ಮಾ. 9: ಅಂತರ ರಾಷ್ಟ್ರೀಯ ಕಚ್ಚಾ ತೈಲದ ದರ ಬ್ಯಾರೆಲ್ಗೆ 100 ಅಮೆರಿಕ ಡಾಲರ್ ದಾಟಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು ಸರಕಾರದ ಮೂಲಗಳು ಸೋಮವಾರ ತಿಳಿಸಿವೆ. ದೇಶಾದ್ಯಂತ ನಿರಂತರ ಇಂಧನ ಪೂರೈಕೆಯನ್ನು ನಿರ್ವಹಿಸಲು ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವು ಹೇಳಿವೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ 10ನೇ ದಿನಕ್ಕೆ ಕಾಲಿಲಿಸಿದ್ದು, ವಿಶ್ವ ಮಾರುಕಟ್ಟೆ ಕುಸಿಯುತ್ತಿದೆ. ಅಂತರ ರಾಷ್ಟ್ರೀಯ ಮಾನದಂಡವಾಗಿ ಬಳಸುವ ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರಲ್ಗೆ ಸುಮಾರು 120 ಅಮೆರಿಕ ಡಾಲರ್ಗೆ ಏರಿಕೆಯಾಗಿದೆ. ಯುದ್ಧ ಆರಂಭವಾಗುವ ಇದ್ದ ಬೆಲೆಗಿಂತ ಇದು ಶೇ. 65ರಷ್ಟು ಹೆಚ್ಚಾಗಿದೆ. ಆದರೆ, ಅನಂತರ ಕುಸಿಯಲು ಪ್ರಾರಂಭಿಸಿದೆ ಎಂದು ಅವು ಹೇಳಿವೆ. ಸರಕಾರ ಜಾಗತಿಕ ತೈಲ ಮಾರುಕಟ್ಟೆಯನ್ನು ನಿಕಟವಾಗಿ ಗಮನಿಸುತ್ತಿದೆ. ಆದರೆ, ಚಿಲ್ಲರೆ ಇಂಧನ ಬೆಲೆಯನ್ನು ಏರಿಸುವ ಯಾವುದೇ ತತ್ಕ್ಷಣದ ಯೋಜನೆ ಇಲ್ಲ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ. ಮುಂದಿನ 6-8 ವಾರಗಳ ಅವಶ್ಯಕತೆಗಳನ್ನು ಪೂರೈಸಲು ದೇಶವು ಕಚ್ಚಾ ತೈಲ ಹಾಗೂ ಸಿದ್ಧಪಡಿಸಿದ ತೈಲದ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ. ಆದರೂ ಅನಿಲ (ಎಲ್ಪಿಜಿ) ರಿಫಿಲ್ ಆರ್ಡರ್ ಮಾಡುವ ನೀತಿಯಲ್ಲಿ ಸರಕಾರ ಸ್ವಲ್ಪ ಬದಲಾವಣೆ ಮಾಡಿದೆ ಎಂದು ಮೂಲಗಳು ಹೇಳಿವೆ. ·
ಉಬಾರ್ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ಇಫ್ತಾರ್ ಕೂಟ
ಉಪ್ಪಿನಂಗಡಿ: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಬಾರ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಇದರ ಅಂಗ ಸಂಸ್ಥೆಯಾದ ಉಬಾರ್ ಡೋನಾರ್ಸ್ನ ವತಿಯಿಂದ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ವೈದ್ಯ ಡಾ. ಎಂ.ಆರ್. ಶೆಣೈ, ಉಪ್ಪಿನಂಗಡಿಯಲ್ಲಿ ಎಲ್ಲಾ ಜಾತಿ- ಧರ್ಮದವರು ಒಳ್ಳೆಯ ಬಾಂಧವ್ಯದಿಂದ ಇದ್ದೇವೆ. ಆದ್ದರಿಂದ ಇಲ್ಲಿ ಕೋಮು ಸೌಹಾರ್ದತೆಗೆ ಯಾವತ್ತೂ ಧಕ್ಕೆಯಾಗಿಲ್ಲ. ಇಫ್ತಾರ್ ಕೂಟದಂತಹ ಕಾರ್ಯಕ್ರಮಗಳಿಂದ ಈ ಸೌಹಾರ್ದತೆ ಇನ್ನಷ್ಟು ಮುಂದುವರಿಯಲಿ ಎಂದರು. ವೈದ್ಯ ಡಾ. ನಿರಂಜನ್ ರೈ ಮಾತನಾಡಿ, ಸಮಾಜದಲ್ಲಿರುವ ಸೌಹಾರ್ದತೆಯ ಒಗ್ಗಟ್ಟು ತೋರಿಸಲು ಇಫ್ತಾರ್ ಕೂಟ ಪ್ರೇರಣೆಯಾಗಲಿ. ಹೊಸ ತಲೆಮಾರಿನ ಯುವಕರಿಗೆ ಈ ಕಾರ್ಯಕ್ರಮ ಮಾದರಿಯಾಗಲಿ ಎಂದರು. ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡಿಸ್ ಮಾತನಾಡಿ, ಮುಸ್ಲಿಂ ಸಮುದಯಕ್ಕೆ ಈ ತಿಂಗಳು ಪುಣ್ಯ ಸಂಗ್ರಹಿಸುವ ಕಾಲ. ಯುವಕರ ಈ ಕಾರ್ಯಕ್ರಮದ ಮೂಲಕ ಇಲ್ಲಿನ ಸೌಹಾರ್ದತೆಯ ಕಿಚ್ಚು ಎಲ್ಲೆಡೆ ಹರಡಲಿ ಎಂದರು. ಉಮ್ರಾ ಯಾತ್ರೆ ಕೈಗೊಂಡಿರುವ ಉದ್ಯಮಿ ಸಿದ್ದೀಕ್ ಕೆಂಪಿಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಮದ್ ಅನ್ಸಾರಿ ದುವಾಶೀರ್ವಚನ ನೀಡಿದರು. ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ಉಬಾರ್ ಸ್ಪೋರ್ಟಿಂಗ್ ಕ್ಲಬ್ನ ಅಧ್ಯಕ್ಷ ಶಬೀರ್ ಕೆಂಪಿ, ಗೌರವ ಸಲಹೆಗಾರ ಯು.ಟಿ. ತೌಸೀಫ್, ಗೌರವಾಧ್ಯಕ್ಷ ರಫೀಕ್ ಮಾಸ್ಟರ್, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಪ್ರಮುಖರಾದ ಶುಕೂರ್ ಹಾಜಿ ಶುಕ್ರಿಯಾ, ಮಹಮ್ಮದ್ ಹಾಜಿ ನೆಕ್ಕಿಲಾಡಿ, ಅಝೀಝ್ ಬಸ್ತಿಕ್ಕಾರ್, ಝಕರಿಯಾ ಕೊಡಿಪ್ಪಾಡಿ, ಮುಸ್ತಫಾ ಲತೀಫೀ, ನಝೀರ್ ಮಠ, ಅಬೂಬಕ್ಕರ್ ಪುತ್ತು, ಶುಕೂರ್ ಮೇದರಬೆಟ್ಟು, ಇಬ್ರಾಹಿಂ ದುಬಾಲ್, ಅಯ್ಯೂಬ್ ದೇಂತಾರ್, ಹಮೀದ್ ಕರಾವಳಿ, ರಹಿಮಾನ್ ಮಠ, ಮಹಮ್ಮದ್ ಕೆಂಪಿ, ಹನೀಫ್ ಕಡವಿನಬಾಗಿಲು, ದಾವೂದ್ ಚಾಯ್ ಡೇಸ್, ಶುಕೂರ್ ನೆಕ್ಕಿಲ್, ಶಫೀಕ್ ಅರಫಾ, ಇಸ್ಮಾಯಿಲ್ ತಂಙಳ್, ಶುಕೂರ್ ಮೇದರಬೆಟ್ಟು, ಈಸುಬು ಪೆದಮಲೆ, ಸಿದ್ದಿಕ್ ಮೇದರಬೆಟ್ಟು, ಮೋನು ಪಿಲಿಗೂಡು, ಬಶೀರ್ ಪೆರಿಯಡ್ಕ, ಇಬ್ರಾಹೀಂ ಆಚೀ ಕೆಂಪಿ, ಅಫ್ತಾಬ್ ಬಸ್ತಿಕ್ಕಾರ್, ನವಾಝ್ ಉಬಾರ್, ನವಾಝ್ ಎಲೈಟ್, ಶಾನಿಲ್ ಬಸ್ತಿಕ್ಕಾರ್, ಸಾದಿಕ್ ಅಗ್ನಾಡಿ, ಮಕ್ದೂಮ್ ರಾಝೀ, ಶೌಕತ್ ಬಸ್ತಿಕ್ಕಾರ್, ಇಕ್ಬಾಲ್ ಸಿಪಿಸಿ, ಹೌಷಾ ಕೆಂಪಿ, ಶಿಬ್ಲಿ ಶುಕ್ರಿಯಾ, ಅನಸ್ ದಿಲ್ದಾರ್, ರಾಝೀಕ್, ಅನೀಸ್ ಗಾಂಧಿಪಾರ್ಕ್, ಮುಝಾಫರ್, ಮನ್ಸೂರ್, ಶೌಕತ್ ಬಸ್ತಿಕ್ಕಾರ್, ರವೂಫ್, ಇಬ್ರಾಹಿಂ ಸಿಟಿ, ನಝೀರ್ ಹೊಸಮೊಗ್ರು, ಇಸಾಕ್ ಸಿಟಿ, ಸಾದಿಕ್ ಗಾಂಧಿ ಪಾರ್ಕ್, ವೆಂಕಟೇಶ್ ಕುಟ್ಟಿ, ಕೇಶವ ಲಕ್ಷ್ಮೀ ನಗರ, ಖಾದರ್ ಆದರ್ಶನಗರ, ಸಿಯಾಕ್ ಕೆಂಪಿ, ಶುಕೂರ್ ಕೆಂಪಿ, ಮೊಯಿನ್ ನೆಟ್ಟಿಬೈಲ್, ಸಿಯಾಬ್ ತಂಙಳ್, ಹಸನ್ ಶುಕ್ರಿಯಾ, ಫೌಝರ್ ಯು.ಟಿ., ಮುನೀರ್ ಎನ್ಮಾಡಿ, ರಿಯಾಝ್ ಕರಾಯ ಹಾಜರಿದ್ದರು. ಇರ್ಷಾದ್ ಯುಟಿ. ಕಾರ್ಯಕ್ರಮ ನಿರೂಪಿಸಿದರು.
ಮಹಿಳೆಯರ ಆತ್ಮವಿಶ್ವಾಸ, ಧೈರ್ಯ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕ -ಮಮತಾ ಗಟ್ಟಿ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ಸಾಧಕಿಯರಿಗೆ ಗೌರವ
ಯೆನೆಪೋಯ ವಿವಿಯಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ
ಮಂಗಳೂರು,ಮಾ.9: ದೇರಳಕಟ್ಟೆಯ ಯೆನೆಪೊಯ ( ಪರಿಗಣಿತ) ವಿಶ್ವವಿದ್ಯಾನಿಲಯದಲ್ಲಿ ಜೆಂಡರ್ ಸೆನ್ಸಿಟೈಸೇಶನ್ ಸೆಲ್ (ಲಿಂಗ ಸಂವೇದನಾ ಘಟಕ) ವತಿಯಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸೋಮವಾರ ಯೆಂಡ್ಯೂರನ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು. ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಕೆ. ಎಸ್. ಗಂಗಾಧರ ಸೋಮಯಾಜಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಮಹಿಳೆಯರ ಸಬಲೀಕರಣ, ಸಮಾಜದಲ್ಲಿ ಮಹಿಳೆಯರ ಪಾತ್ರ ಹಾಗೂ ಪರಸ್ಪರ ಸಹಕಾರದ ಮಹತ್ವದ ಕುರಿತು ಮಾತನಾಡಿದರು. ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಜೈಬುನ್ನಿಸಾ ಅವರು ಮಹಿಳೆಯರ ಹಕ್ಕುಗಳು ಮತ್ತು ಕಾನೂನು ರಕ್ಷಣೆ ಕುರಿತು ವಿವರಿಸಿದರು. ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಜೆಂಡರ್ ಸೆನ್ಸಿಟೈಸೇಶನ್ ಸೆಲ್ (ಲಿಂಗ ಸಂವೇದನಾ ಘಟಕ) ಸಂಯೋಜಕಿಯಾದ ಡಾ. ಲೀನಾ ಕೆ. ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕಾರ್ಯದರ್ಶಿಯಾದ ಡಾ. ಗ್ಲಾಡಿಸ್ ಕೊಲಾಸೋ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಮಾ, ಸ್ವಾಗತಿಸಿ, ಫಾತಿಮಾ ವಂದಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಸಿಬ್ಬಂದಿ ಮಮತಾ ಜೆ ಶೆಟ್ಟಿ ಉತ್ತಮ ಉದ್ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಾರು 300 ಮಂದಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇರಾನ್ನ ಮತ್ತೊಂದು ಯುದ್ದನೌಕೆಯನ್ನು ಮುಳುಗಿಸಿದ ಅಮೆರಿಕ: ವರದಿ
ವಾಷಿಂಗ್ಟನ್, ಮಾ.9: ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ ನೇವಿ(ಐಆರ್ಜಿಸಿಎನ್) ನಿರ್ವಹಿಸುವ ಶಾಹಿದ್ ಸೊಲೈಮಾನಿ ವರ್ಗದ ಹಡಗು ನಿರೋಧಕ ಕ್ಷಿಪಣಿಗಳಿಂದ ಸಜ್ಜುಗೊಂಡ ಯುದ್ದನೌಕೆ ಅಮೆರಿಕದ ದಾಳಿಯಿಂದ ಮುಳುಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪರ್ಶಿಯನ್ ಕೊಲ್ಲಿಯ ಬಂದರ್ ಲೆಂಗೆಹ್ ಕರಾವಳಿಯಲ್ಲಿ ಅಮೆರಿಕದ ದಾಳಿಯ ಬಳಿಕ ಇರಾನ್ ನೌಕಾಪಡೆಯ ಹಡಗು ಸೋಮವಾರ ಸ್ಫೋಟಗೊಂಡಿದೆ ಎಂದು ಹೇಳಲಾದ ವೀಡಿಯೊ ವೈರಲ್ ಆಗಿದೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಮುಹಮ್ಮದ್ ಅಶ್ಮಿಲ್ ಶಾಹ್ ಹುದವಿಗೆ ಸನ್ಮಾನ
ಮಂಗಳೂರು: ಕೇಂದ್ರ ಲೋಕ ಸೇವಾ ಆಯೋಗದಲ್ಲಿ 382ನೇ ರ್ಯಾಂಕ್ನಲ್ಲಿ ತೇರ್ಗಡೆಯಾದ ಮುಹಮ್ಮದ್ ಅಶ್ಮಿಲ್ ಶಾಹ್ ಹುದವಿಗೆ ಸಂಸ್ಥೆಯ ವತಿಯಿಂದ ಕುನಿಯ ಕ್ಯಾಂಪಸ್ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭವನ್ನು ಉದ್ಘಾಟಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಶ್ಮಿಲ್ ಶಾಹ್ ಹುದವಿ ಅವರನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಶಾಹಿದ್ ತೆಕ್ಕಿಲ್ ಅವರು ಅಶ್ಮಿಲ್ ಶಾಹ್ ಹುದವಿ ಈ ಮಟ್ಟಕ್ಕೆ ಬೆಳೆಯಲು ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮತ್ತು ಯುಪಿ ಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐಎಎಸ್ ಅಕಾಡೆಮಿ ಅಪಾರ ಕೊಡುಗೆ ನೀಡಿದೆ ಕುನಿಯ ಇಬ್ರಾಹೀಂ ಅಹ್ಮದ್ ಅಲಿ ಹಾಜಿ ಅವರ ದೂರದೃಷ್ಟಿ ಕೇವಲ ಎರಡು ವರ್ಷದಲ್ಲಿ ಫಲ ನೀಡಿದೆ ಮುಂದೆ ಈ ಸಂಸ್ಥೆಯ ಮುಖಾಂತರ ಹಲವರು ಉನ್ನತ ಹುದ್ದೆಗೆ ಏರಲಿದ್ದು ಶಾಹ್ ಹುದವಿ ಯುವಕರಿಗೆ ಮತ್ತು ಸಮಾಜಕ್ಕೆ ಮಾದರಿ ಯಾಗಿದ್ದಾರೆ ಎಂದರು. ಸಮಾರಂಭದಲ್ಲಿ ಕಣ್ಣೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಕುನಿಯ ಸಂಸ್ಥೆಯ ಸಲಹೆಗಾರ ಡಾ. ಖಾದರ್ ಮಾಂಘಾಡ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ ಎಚ್ ಕುಂಞಿಂಬು, ಎ ಕೆ ಎಂ ಅಶ್ರಫ್ , ಬಿಹಾರದ ಮುಜಾಪುರ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಹಬುಲ್ಲಾ ಅನ್ಸಾರಿ,ಕಾಸರಗೋಡು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ,ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ,ಕಾಸರಗೋಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞ್ಞೆ, ಪೆರಿಯ ಪಂಚಾಯತ್ ಅಧ್ಯಕ್ಷೆ ಡಾ. ಸಬಿತ ,ಪಳ್ಳಿಕ್ಕೆರೆ ಪಂಚಾಯತ್ ಅಧ್ಯಕ್ಷೆ ಶೋಭನ ,ಡಾ. ಸಂತೋಷ್ ,ಸುದೀಪ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿಲಿ ಶಹಾದತಿ ಅವರು ಕುನಿಯ ಐ ಎ ಎಸ್ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆಯ ಬಗ್ಗೆ ವಿವರಿಸಿದರು. ಡಾ. ಲಕ್ಷ್ಮೀ ಭಾಯಿ ಸ್ವಾಗತಿಸಿ ಅಜ್ಮಲ್ ವಂದಿಸಿದರು. ನಂತರ ಎರಡು ಸಾವಿರಷ್ಟು ವಿದ್ಯಾರ್ಥಿಗಳು ಸಾರ್ವಜನಿಕರು ಸಾಧಕರ ಜೊತೆ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
ಸೌದಿ ಅರೇಬಿಯಾ | ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟವರು ಭಾರತೀಯರಲ್ಲ: ರಾಯಭಾರಿ ಕಚೇರಿ ಸ್ಪಷ್ಟನೆ
ರಿಯಾದ್, ಮಾ.9: ಸೌದಿ ಅರೆಬಿಯಾದ ಸೆಂಟ್ರಲ್ ಅಲ್-ಖರ್ಜ್ ಗವರ್ನರೇಟ್ನಲ್ಲಿರುವ ವಸತಿ ಕಟ್ಟಡಕ್ಕೆ ರವಿವಾರ ನಡೆದ ದಾಳಿಯಲ್ಲಿ ಯಾವುದೇ ಭಾರತೀಯ ಮೃತಪಟ್ಟಿಲ್ಲ ಎಂದು ರಿಯಾದ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೋಮವಾರ ಹೇಳಿದೆ. ರವಿವಾರ ಸಂಜೆ ನಡೆದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ಮೃತಪಟ್ಟಿರುವುದಾಗಿ ಈ ಹಿಂದೆ ವರದಿಯಾಗಿತ್ತು. ವರದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ರಾಯಭಾರಿ ಕಚೇರಿ ` ದಾಳಿಯಲ್ಲಿ ಮೃತಪಟ್ಟ ಇಬ್ಬರೂ ಬಾಂಗ್ಲಾದೇಶದ ಪ್ರಜೆಗಳು. ದಾಳಿಯಲ್ಲಿ ಯಾವುದೇ ಭಾರತೀಯ ಮೃತಪಟ್ಟಿಲ್ಲ ಎಂಬ ವರದಿಯಿಂದ ನಿರಾಳವಾಗಿದೆ. ಓರ್ವ ಭಾರತೀಯ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಸೌದಿ ಅರೆಬಿಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ಪಶ್ಚಿಮ ಏಶ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೌದಿ ಅರೆಬಿಯಾದಲ್ಲಿರುವ ಭಾರತೀಯ ಪ್ರಜೆಗಳಿಗೆ ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳು ನೀಡಿದ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ಸಲಹೆ ನೀಡಲಾಗಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಮಧ್ಯಪ್ರಾಚ್ಯ ಸಂಘರ್ಷ ಜಾಗತಿಕ ಹಣದುಬ್ಬರವನ್ನು ಹೆಚ್ಚಿಸಬಹುದು: ಐಎಂಎಫ್ ಎಚ್ಚರಿಕೆ
ವಾಷಿಂಗ್ಟನ್, ಮಾ.9: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ತೈಲ ಬೆಲೆಗಳನ್ನು ದೀರ್ಘಕಾಲದವರೆಗೆ ಹೆಚ್ಚಿಸಿದರೆ ಜಾಗತಿಕ ಹಣದುಬ್ಬರದ ಹೊಸ ಅಪಾಯಕ್ಕೆ ಕಾರಣವಾಗಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಆಡಳಿತ ನಿರ್ದೇಶಕಿ ಕ್ರಿಸ್ತಲಿನಾ ಜಾರ್ಜಿವಾ ಸೋಮವಾರ ಎಚ್ಚರಿಸಿದ್ದಾರೆ. ಜಪಾನ್ನ ಹಣಕಾಸು ಸಚಿವಾಲಯವು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಜಾರ್ಜಿವಾ, ಈ ಪ್ರದೇಶದಲ್ಲಿನ ಭೌಗೋಳಿಕ, ರಾಜಕೀಯ ಉದ್ವಿಗ್ನತೆಗಳು ಈಗಾಗಲೇ ಜಾಗತಿಕ ಆರ್ಥಿಕತೆಯ ಸ್ಥಿತಿಸ್ಥಾಪಕತ್ವವನ್ನು ಪರೀಕ್ಷಿಸುತ್ತಿವೆ. ಮಧ್ಯಪ್ರಾಚ್ಯದಲ್ಲಿನ ಹೊಸ ಸಂಘರ್ಷವು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಬಿಕ್ಕಟ್ಟು ತೈಲ ಮಾರುಕಟ್ಟೆಯಲ್ಲಿ ನಿರಂತರ ಅಡಚಣೆಗಳಿಗೆ ಕಾರಣವಾದರೆ ಇಂಧನ ಬೆಲೆಗಳು ಹಣದುಬ್ಬರದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದವರು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ. ವರ್ಷದ ಬಹುಪಾಲು ಅವಧಿಯಲ್ಲಿ ತೈಲ ಬೆಲೆಯಲ್ಲಿ 10% ಹೆಚ್ಚಳವು ಜಾಗತಿಕ ಹಣದುಬ್ಬರವನ್ನು ಸುಮಾರು 40 ಮೂಲಬಿಂದುವಿನಷ್ಟು(ಬೇಸಿಸ್ ಪಾಯಿಂಟ್) ಹೆಚ್ಚಿಸಬಹುದು. ಈ ಹೊಸ ಪರಿಸರದಲ್ಲಿ ನೀತಿ ನಿರೂಪಕರಿಗೆ ನನ್ನ ಸಲಹೆ ಏನೆಂದರೆ ಊಹಿಸಲೂ ಸಾಧ್ಯವಿಲ್ಲದ ವಿಷಯಗಳ ಬಗ್ಗೆ ಯೋಚಿಸಿ ಮತ್ತು ಅದಕ್ಕೆ ಸಿದ್ದರಾಗಿ' ಎಂದವರು ಹೇಳಿದ್ದಾರೆ. ಇರಾನ್, ಅಮೆರಿಕ ಮತ್ತು ಇಸ್ರೇಲನ್ನು ಒಳಗೊಂಡ ಉದ್ವಿಗ್ನತೆಯು ಉಲ್ಬಣಗೊಂಡ ನಂತರ ಜಾಗತಿಕ ಇಂಧನ ಮಾರುಕಟ್ಟೆಯು ಅನಿಶ್ಚಿತತೆಯನ್ನು ಎದುರಿಸುವ ಸಂದರ್ಭ ಈ ಐಎಂಎಫ್ ಈ ಎಚ್ಚರಿಕೆ ನೀಡಿದೆ. ಭಾರತದ ಹಣಕಾಸು ಸಚಿವಾಲಯದ ವರದಿಯೂ ಮಧ್ಯಪ್ರಾಚ್ಯದಲ್ಲಿನ ದೀರ್ಘಕಾಲದ ಬಿಕ್ಕಟ್ಟು ವಿನಿಮಯ ದರದ ಮೇಲೆ ಒತ್ತಡಕ್ಕೆ ಮತ್ತು ಹಣದುಬ್ಬರ ಸೇರಿದಂತೆ ವ್ಯಾಪಕ ಆರ್ಥಿಕ ಪರಿಣಾಮಗಳನ್ನು ಉಂಟು ಮಾಡಬಹುದು. ಸಂಘರ್ಷವು ಈಗಾಗಲೇ ಹಾರ್ಮುಜ್ ಜಲಸಂಧಿಯ(ಇದು ಜಾಗತಿಕ ತೈಲ ಹರಿವಿನ ಸುಮಾರು 20%ವನ್ನು ನಿರ್ವಹಿಸುವ ವಿಶ್ವದ ಅತ್ಯಂತ ನಿರ್ಣಾಯಕ ಜಲಸಂಧಿಯಾಗಿದೆ) ಮೂಲಕ ಸಾಗಾಟವನ್ನು ಅಡ್ಡಿಪಡಿಸಿದೆ ಎಂದು ಎಚ್ಚರಿಸಿದೆ. ಇಸ್ರೇಲ್ನಿಂದ `ಬಿಳಿರಂಜಕ' ಗುಂಡು ಬಳಕೆ: ಆರೋಪ ದಕ್ಷಿಣ ಲೆಬನಾನ್ನ ಪಟ್ಟಣದ ಮೇಲೆ ಇಸ್ರೇಲ್ `ಬಿಳಿ ರಂಜಕ'ವನ್ನು ಒಳಗೊಂಡ ಮದ್ದುಗುಂಡುಗಳನ್ನು ಅಕ್ರಮವಾಗಿ ಬಳಸಿದೆ ಎಂದು ಮಾನವ ಹಕ್ಕುಗಳ ಸಂಸ್ಥೆಯು ಆರೋಪಿಸಿದೆ. ದಕ್ಷಿಣ ಲೆಬನಾನ್ನ ನಗರದ ಮೇಲೆ `ಬಿಳಿ ರಂಜಕ' ಹೊಂದಿದ ಶೆಲ್ಗಳನ್ನು ಇಸ್ರೇಲಿ ಮಿಲಿಟರಿ ಕಾನೂನುಬಾಹಿರವಾಗಿ ಪ್ರಯೋಗಿಸಿದೆ ಎಂದು ಮಾನವ ಹಕ್ಕುಗಳ ಗುಂಪು `ಹ್ಯೂಮನ್ ರೈಟ್ಸ್ ವಾಚ್' ಸೋಮವಾರ ಹೇಳಿದೆ.
ಮೈಸೂರಿನಲ್ಲಿ ಹೊಸ ಲೇಔಟ್ MDA ಸಜ್ಜು; ಪಕ್ಕದ 4 ಗ್ರಾಮಗಳ 2000 ಎಕರೆಯಲ್ಲಿ ನಿರ್ಮಾಣ; 460 ಕೋಟಿ ರೂ. ಮೀಸಲು
ಮೈಸೂರಿನಲ್ಲಿ ಮನೆ ಕಟ್ಟಿಸಬೇಕು ಎಂದುಕೊಂಡಿರುವವರಿಗೆ ಗುಡ್ನ್ಯೂಸ್. ಪಕ್ಕದ 4 ಗ್ರಾಮಗಳ 2000 ಎಕರೆಯಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇದಕ್ಕಾಗಿ ಬಜೆಟ್ನಲ್ಲಿ 460 ಕೋಟಿ ರೂ. ಮೀಸಲಿಟ್ಟಿದೆ. ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿಯವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರೈತರು ಜಾಗ ನೀಡಲು ಮುಂದೆ ಬಂದಿದ್ದು, 50:50 ಮಾದರಿಯಲ್ಲಿ ನಿವೇಶನಗಳನ್ನು ಸಿದ್ಧಪಡೆಸಲು ಯೋಜನೆ ರೂಪಿಸಲಾಗಿದೆ.
ಅಕ್ರಮ ದಾಸ್ತಾನಿಗೆ ತಡೆ; LPG ಸಿಲಿಂಡರ್ ಬುಕಿಂಗ್ ಅವಧಿ 25 ದಿನಗಳಿಗೆ ವಿಸ್ತರಿಸಿದ ಕೇಂದ್ರ
ಹೊಸದಿಲ್ಲಿ,ಮಾ.9: ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು LPG ಸಿಲಿಂಡರ್ ಗಳ ಬುಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸರಕಾರಿ ಮೂಲಗಳು ಸೋಮವಾರ ತಿಳಿಸಿವೆ. ಈ ಹಿಂದೆ 55 ದಿನಗಳಿಗೊಮ್ಮೆ LPG ಸಿಲಿಂಡರ್ ಗಳನ್ನು ಬುಕ್ ಮಾಡಿದವರೂ ಈಗ 15 ದಿನಗಳಲ್ಲಿ ಸಿಲಿಂಡರ್ ಗಳನ್ನು ಬುಕ್ ಮಾಡಲು ಆರಂಭಿಸಿರುವ ನಿದರ್ಶನಗಳು ಬೆಳಕಿಗೆ ಬಂದಿವೆ ಎಂದು ಅವು ಹೇಳಿವೆ. ಗೃಹಬಳಕೆ ಗ್ರಾಹಕರಿಗೆ ಯಾವಾಗಲೂ ಆದ್ಯತೆ ನೀಡಲಾಗುತ್ತದೆ ಎಂದು ದೃಢಪಡಿಸಿದ ಮೂಲಗಳು,ಭಾರತವು ಇನ್ನಷ್ಟು LPG ಪೂರೈಕೆದಾರರನ್ನು ಅನ್ವೇಷಿಸುತ್ತಿದ್ದು, ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ ಮತ್ತು ನಾರ್ವೆಯಂತಹ ದೇಶಗಳು LPG ಮಾರಾಟಕ್ಕಾಗಿ ಭಾರತವನ್ನು ಸಂಪರ್ಕಿಸಿವೆ ಎಂದು ತಿಳಿಸಿದವು. ಭಾರತದ ಬಳಿ ಸಾಕಷ್ಟು ದಾಸ್ತಾನು ಇರುವುದರಿಂದ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ ಗೆ 130 ಡಾಲರ್ ಗಳನ್ನು ದಾಟುವವರೆಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳು ಏರುವ ಸಾಧ್ಯತೆಯಿಲ್ಲ ಎಂದು ತಿಳಿಸಿದ ಸರಕಾರಿ ಮೂಲಗಳು,ಕಚ್ಚಾತೈಲ ಬೆಲೆಗಳು ಪ್ರತಿ ಡಾಲರ್ ಗೆ 100ರ ಆಸುಪಾಸಿನಲ್ಲಿರಲಿವೆ ಎಂದು ನಾವು ನಿರೀಕ್ಷಿಸಿದ್ದೇವೆ. ದೇಶದ ಯಾವುದೇ ಪೆಟ್ರೋಲ್ ಪಂಪ್ ನಲ್ಲಿ ಇಂಧನ ಕೊರತೆಯಿಲ್ಲ ಎಂದು ಹೇಳಿದವು. ಹಾರ್ಮುಝ್ ಜಲಸಂಧಿಯ ಬದಲು ಇತರ ಸಮುದ್ರಮಾರ್ಗಗಳ ಮೂಲಕ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಲಾಗುತ್ತಿದೆ ಎಂದ ಮೂಲಗಳು, ಭಾರತದಲ್ಲಿ ವಿಮಾನ ಇಂಧನ ಸಾಕಷ್ಟು ದಾಸ್ತಾನಿದೆ. ಭಾರತವು ಎಟಿಎಫ್ನ ಉತ್ಪಾದಕ ಮತ್ತು ರಫ್ತುದಾರನಾಗಿದೆ, ಹೀಗಾಗಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದವು. ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಅನುಕೂಲಕರ ಸ್ಥಿತಿಯಲ್ಲಿದೆ ಎಂದು ಅವು ಒತ್ತಿ ಹೇಳಿದವು.
ಕಾಂತಾವರ ಕನ್ನಡ ಸಂಘದ ವಾರ್ಷಿಕ ಪ್ರಶಸ್ತಿ ಘೋಷಣೆ
ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದಲ್ಲಿ ಗಮಕಿ ಸತೀಶ್ ಕುಮಾರ್ ಕೆಮ್ಮಣ್ಣು ಅವರು ಸ್ಥಾಪಿಸಿರುವ ದತ್ತಿನಿಧಿಯ ‘ಗಮಕಕಲಾ ಪ್ರವಚನ’ ಪ್ರಶಸ್ತಿಗೆ ಶ್ರೀ ಮುಳಿಯ ಶಂಕರ ಭಟ್ಟ ಅವರು, ಗಮಕಿ ಯಾಮಿನಿ ಭಟ್ ಉಡುಪಿ ಅವರ ದತ್ತಿನಿಧಿಯ ‘ಗಮಕಕಲಾ ವಾಚನ’ ಪ್ರಶಸ್ತಿಗೆ ಶ್ರೀ ಪದ್ಯಾಣ ಗಣಪತಿ ಭಟ್ ಅವರು, ಕಾರ್ಕಳದ ಶಿಲ್ಪಿ ದಿ . ಕೆ.ಶಾಮರಾಯ ಆಚಾರ್ಯ ಅವರ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಗೆ ಶ್ರೀ ಪಿ. ದಾಮೋದರ ಆಚಾರ್ಯ ಕಾರ್ಕಳ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಸಂಘದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕೊಡಮಾ ಡುತ್ತಿರುವ ವಾರ್ಷಿಕ ಗೌರವ ಪ್ರಶಸ್ತಿಗೆ ಶ್ರೀಮತಿ ಶಕುಂತಳಾ ಭಟ್ ಹಳೆಯಂಗಡಿ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಮಾ. 15ರಂದು ಕಾಂತಾವರದ ‘ಕನ್ನಡ ಭವನ’ದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದ್ದು, ಜೊತೆಗೆ ಪ್ರೊ! ಡಿ.ಎ. ಶಂಕರ್, ಮೈಸೂರು ಅವರಿಗೆ ೨೦೨೫ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ನೀಡಲಾಗುವುದು. ಈ ಮೇಲಿನ ನಾಲ್ಕು ದತ್ತಿನಿಧಿಯ ಪ್ರಶಸ್ತಿಗಳು ರೂಪಾÊ ಹತ್ತು ಸಾವಿರದ ನಗದು, ತಾಮ್ರಪತ್ರ ಮತ್ತು ಸನ್ಮಾನ ವನ್ನು ಒಳಗೊಂಡಿದೆ. ವಾರ್ಷಿಕ ಗೌರವ ಪ್ರಶಸ್ತಿಯು ಐದು ಸಾವಿರ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವ ಈ ಸಮಾರಂಭದ ಉದ್ಘಾಟನೆಯನ್ನು ಹಿರಿಯ ಕವಿ ಬೆಂಗಳೂರಿನ ಪ್ರೊ.ಟಿ.ಯಲ್ಲಪ್ಪ ಅವರು ಮಾಡುವರು. ಇದೇ ಸಂದರ್ಭದಲ್ಲಿ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಒಂಬತ್ತು ಹೊಸ ಹೊತ್ತಗೆಗಳನ್ನು ಹಂಪಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ.ಎ.ಸುಬ್ಬಣ್ಣ ರೈ ಅವರು ಬಿಡುಗಡೆ ಮಾಡುತ್ತಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಪಶ್ಚಿಮ ಏಷ್ಯಾ ಸಂಘರ್ಷದಿಂದ ಅನಿಲ ಪೂರೈಕೆಗೆ ಅಡ್ಡಿ : ಪುಣೆಯ ಅನಿಲ ಚಿತಾಗಾರ ಸ್ಥಗಿತ
ಮುಂಬೈ, ಮಾ. 9: ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಉಂಟಾದ ಇಂಧನ ಪೂರೈಕೆ ಬಿಕ್ಕಟ್ಟು ಪುಣೆಯ ಅತಿ ದೊಡ್ಡ ಚಿತಾಗಾರಗಳಲ್ಲಿ ಒಂದಾದ ವೈಕುಂಠ ಧಾಮದ ಮೇಲೂ ಪರಿಣಾಮ ಬೀರಿದೆ. ಇಂಧನ ಪೂರೈಕೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪುಣೆ ಮಹಾನಗರ ಪಾಲಿಕೆ ಅನಿಲ ಬಳಸಿ ಅಂತ್ಯಕ್ರಿಯೆ ನಡೆಸುವ ಸೌಲಭ್ಯಗಳಿಗೆ ಅನಿಲ ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದು ಎಲ್ಪಿಜಿ ಆಧಾರಿತ ಚಿತಾಗಾರಗಳನ್ನು ಮುಚ್ಚಲು ಕಾರಣವಾಗಿದೆ. ಆದರೆ, ವಿದ್ಯುತ್ ಆಧಾರಿತ ಹಾಗೂ ಸಾಂಪ್ರದಾಯಿಕ ಕಟ್ಟಿಗೆಯ ಚಿತಾಗಾರಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಪಿಜಿಯಲ್ಲಿರುವ ಪ್ರೊಪೇನ್ ಹಾಗೂ ಬ್ಯುಟೇನ್ ಅನ್ನು ದೇಶದಲ್ಲಿ ಮಿತವಾಗಿ ಬಳಸಲಾಗುತ್ತದೆ. ಪ್ರೊಪೇನ್ ಹಾಗೂ ಬ್ಯುಟೇನ್ ಅನ್ನು ದೇಶಾದ್ಯಂತ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ಆದ್ಯತೆ ಮೇರೆಗೆ ಬಳಸುವಂತೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಯ ಆದೇಶ ಹೊರಡಿಸಿದೆ ಎಂದು ಪುಣೆ ಮಹಾನಗರ ಪಾಲಿಕೆ ತಿಳಿಸಿದೆ. ಪುಣೆಯ ನವಿ ಪೇಠ್ ಪ್ರದೇಶದಲ್ಲಿ ಸುಮಾರು 17 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ವೈಕುಂಠ ಧಾಮದಲ್ಲಿ ಪ್ರತಿದಿನ 20 ಶವಗಳ ಸಂಸ್ಕಾರ ಮಾಡಲಾಗುತ್ತದೆ. ಅಲ್ಲದೆ, ಇದು ನಗರದ ಅತಿದೊಡ್ಡ ಚಿತಾಗಾರಗಳಲ್ಲಿ ಒಂದು. ವಿದ್ಯುತ್ ಚಿತಾಗಾರ ಹಾಗೂ ಕಟ್ಟಿಗೆ ಆಧಾರಿತ ಚಿತಾಗಾರಗಳು ಯಾವುದೇ ತೊಂದರೆಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ ಎಂದು ಪುಣೆ ಮಹಾನಗರ ಪಾಲಿಕೆ ತಿಳಿಸಿದೆ.
ಬೆಂಗಳೂರು : ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದ ನಾಳೆ(ಮಾ.10)ಯಿಂದ ಬೆಂಗಳೂರು ನಗರದಲ್ಲಿನ ಹೊಟೇಲ್ಗಳನ್ನು ಬಂದ್ ಮಾಡುವ ಸಾಧ್ಯತೆಗಳಿವೆ ಎಂದು ಬೆಂಗಳೂರು ಹೊಟೇಲ್ಗಳ ಸಂಘ ಎಚ್ಚರಿಕೆ ನೀಡಿದೆ. ಇರಾನ್ ಹಾಗೂ ಅಮೆರಿಕಾ-ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಹಾಗೂ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ 60 ರೂ. ಹಾಗೂ 115 ರೂ.ಗಳಷ್ಟು ಹೆಚ್ಚಾಗಿದೆ. ಹೀಗಾಗಿ ಸಿಲಿಂಡರ್ಗಳ ಪೂರೈಕೆ ನಿಲ್ಲಿಸಲಾಗಿದೆ. ಸೋಮವಾರ ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಎಸ್. ಅವರು, ಹೊಟೇಲು ಉದ್ಯಮ ಅಗತ್ಯ ಸೇವೆ ಅಡಿಯಲ್ಲಿ ಬುರುವುದರಿಂದ ಇದನ್ನೇ ಅವಲಂಬಿಸಿರುವ ಜನಸಾಮಾನ್ಯರು, ಹಿರಿಯ ನಾಗರಿಕರು ವಿದ್ಯಾರ್ಥಿಗಳು, ವೈದ್ಯಕೀಯ ಹಾಗೂ ಇನ್ನಿತರ ಸೇವೆಯಲ್ಲಿರುವ ಹೆಚ್ಚಿನ ಜನರಿಗೆ ತಮ್ಮ ದಿನನಿತ್ಯದ ತಿಂಡಿ-ತಿನಿಸುಗಳಿಗೆ ತೊಂದರೆಯಾಗಲಿದೆ ಎಂದರು. ಇದರ ಜೊತೆಗೆ ಅಡುಗೆ ಅನಿಲ ಸರಬರಾಜು ಮತ್ತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ನಮ್ಮ ಹೊಟೇಲ್ ಉದ್ಯಮವೂ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ತೈಲ ಕಂಪೆನಿಗಳು 70 ದಿನಗಳ ವರೆಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲವೆಂದು ತಿಳಿಸಿದ್ದವು. ಆದರೆ, ಇದೀಗ ಏಕಾಏಕಿ ಸರಬರಾಜು ನಿಲ್ಲಿಸಿರುವುದು ಹೊಟೇಲ್ ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಅವರು ಗಮನ ಸೆಳೆದರು. ಆದುದರಿಂದ ಸಂಬಂಧಪಟ್ಟ ಕೇಂದ್ರ ಸಚಿವರು ಈ ವಿಚಾರದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ವಾಣಿಜ್ಯ ಸಲಿಂಡರ್ ಸರಬರಾಜನ್ನು ಪುನರಾರಂಭ ಮಾಡಿ ಹೊಟೇಲ್ ಉದ್ಯಮಕ್ಕೆ ಅಗತ್ಯ ಸಹಕಾರ ನೀಡಬೇಕು. ಅನಿಲ ಸಿಲಿಂಡರ್ ಪೂರೈಕೆ ಆಗುವ ವರೆಗೆ ಹೊಟೇಲ್ಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಸಿಲಿಂಡರ್ ದರ ಹೆಚ್ಚಳ ಸರಿಯಲ್ಲ : ‘ಕೇಂದ್ರ ಸರಕಾರ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗೆ 115 ರೂ.ಗಳನ್ನು ಹಾಗೂ ಮನೆ ಬಳಕೆಯ ಸಿಲಿಂಡರ್ ಗೆ 60ರೂ.ಹೆಚ್ಚಳ ಮಾಡಿದೆ. ಇದು ಬಹಳ ಹೆಚ್ಚಾಗಿದೆ ಎನ್ನುವುದು ಎಲ್ಲರ ಅಭಿಪ್ರಾಯ. ಕೇಂದ್ರ ಸರಕಾರ ಬೆಲೆ ಏರಿಕೆ ಮಾಡುತ್ತಿರುವುದು ಸರಿಯಲ್ಲ. ಸಿಲಿಂಡರ್ ಸರಬರಾಜಿನ ಕುರಿತು ಆತಂಕವಿರುವುದು ಬೇರೆ ವಿಷಯ. ಆದರೆ, ಎಲ್ಪಿಜಿ ದರ ಹೆಚ್ಚಳ ಎನ್ನುವುದು ಬೇರೆ ವಿಷಯ’ -ಸಿದ್ದರಾಮಯ್ಯ ಮುಖ್ಯಮಂತ್ರಿ
ಪಂಚಗ್ಯಾರಂಟಿ ಯೋಜನೆಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ : ಡಾ. ಮಧುಮಾಲ
ಮೂಡುಬಿದಿರೆ : ಆತ್ಮವಿಶ್ವಾಸವೇ ಮನುಷ್ಯನ ಸಬಲೀಕರಣದ ಮೊದಲ ಪ್ರತೀಕ. ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಆಥಿ೯ಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಗೌರವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಮಧುಮಾಲಾ ಕೆ. ಹೇಳಿದರು. ಅವರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಗ್ಯಾರಂಟಿ ಯೋಜನಾ ಸಮಿತಿಯ ಕಚೇರಿಯಲ್ಲಿ ನಡೆದ ಸರಕಾರದ ಪಂಚಗ್ಯಾರಂಟಿ ಯೋಜನೆಗಳ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಿರುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು. ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯಿಂದ ಉಳಿತಾಯವಾಗುವ ಹಣವನ್ನು ಉಪಯೋಗ ಮಾಡಿಕೊಂಡು ಆಥಿ೯ಕವಾಗಿ ಸ್ವಾವಲಂಬಿಗಳಾಗುವ ಯೋಚನೆಗಳನ್ನು ಮಾಡಿಕೊಳ್ಳಬೇಕಾಗಿದೆ. ಮಹಿಳೆಯರು ದಾರಾವಾಹಿ, ಗೋಲ್ಡ್ ರೇಟ್, ಸೀರೆ ಬೆಲೆ, ಅಡುಗೆ ಕೋಣೆ ಮತ್ತು ಹೊಸ ರುಚಿಗಳ ಮಾತುಕತೆಗೆ ಮಾತ್ರ ಸೀಮಿತವಾಗದೆ ಪಂಚಾಯತ್ ಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಭಾಗವಹಿಸಿ ತಮ್ಮ ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸುವುದಲ್ಲದೆ ಇತರ ಊರುಗಳಲ್ಲಿ ಏನೇನು ಸುದ್ಧಿಗಳಾಗಿವೆ ಎಂಬುವುದನ್ನು ನ್ಯೂಸ್ ಪೇಪರ್ ಗಳ ಮೂಲಕ ಓದಿ ತಿಳಿದುಕೊಂಡಾಗ ಜ್ಞಾನದ ಅಭಿವೃದ್ಧಿಯೂ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ. ಲಿಂಗ ಸಮಾನತೆಯು ಬಹು ಮುಖ್ಯ ಅಂಶವಾಗಿದ್ದು ಮನೆಗಳಲ್ಲಿ ಗಂಡು-ಹೆಣ್ಣೆಂಬ ಬೇಧವನ್ನು ಮಾಡದೆ ಕೆಲಸ ಗಳನ್ನು ಹಂಚಿಕೊಂಡು ಮಾಡುವ ಮೂಲಕ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮಕ್ಕಳಿಗೆ ಹೇಳಿಕೊಡಬೇಕು ಹಾಗೆ ಆದಾಗ ಮಹಿಳೆಗೆ ಸ್ವಲ್ಪ ಆರಾಮ ಸಿಗುತ್ತದೆ ಮತ್ತು ಮಾನಸಿಕ ಆರೋಗ್ಯವು ಸುಸ್ಥಿರವಾಗಿರಲು ಸಾಧ್ಯವಾ ಗುತ್ತದೆ ಎಂದು ಹೇಳಿದರು. ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮನೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಂತಹ ಶಕ್ತಿಯನ್ನು ಹೆಣ್ಣು ಹುಟ್ಟಿದಾಗಿನಿಂದ ಪಡೆದುಕೊಂಡು ಬಂದಿದ್ದಾಳೆ ಇದಕ್ಕೆ ಯಾವುದೇ ಪದವಿಯ ಅಗತ್ಯವಿಲ್ಲ ಎಂದ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ಪಡೆಯದೆ ಆಕೆ ಸಬಲೀಕರಣಗೊಳ್ಳುವ ದಿನಗಳು ಆದಷ್ಟು ಬೇಗ ಬರುವಂತ್ತಾ ಗಬೇಕೆಂದು ಆಶಿಸಿದರು. ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ ಅವರು ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು.
ಮಧ್ಯಪ್ರಾಚ್ಯ ಸಂಘರ್ಷ | ಇಂಧನ ಪೂರೈಕೆಗೆ ಬೆಂಬಲಿಸಲು ಜಿ7 ಸಿದ್ಧ; ಸ್ಟಾಕ್ ಪೈಲ್ ಬಿಡುಗಡೆಗೂ ಸೂಚನೆ
ಹೊಸದಿಲ್ಲಿ, ಮಾ. 9: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಮತ್ತು ಅನಿಲ ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಇಂಧನ ಪೂರೈಕೆಯನ್ನು ಸ್ಥಿರವಾಗಿರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಅಗತ್ಯವಿದ್ದರೆ ತುರ್ತು ತೈಲ ನಿಕ್ಷೇಪಗಳನ್ನು (ಸ್ಟಾಕ್ ಪೈಲ್) ಬಿಡುಗಡೆ ಮಾಡುವುದೂ ಸೇರಿದಂತೆ ಕ್ರಮಗಳನ್ನು ಕೈಗೊಳ್ಳಲು ತಾವು ಸಿದ್ಧ ಎಂದು ಅವರು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. ಫ್ರಾನ್ಸ್ ಸೋಮವಾರ ಆಯೋಜಿಸಿದ್ದ ವೀಡಿಯೊ ಕಾನ್ಫರೆನ್ಸ್ ನ ಬಳಿಕ ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದರು. “ಸ್ಟಾಕ್ ಪೈಲ್ ಬಿಡುಗಡೆಯಂತಹ ಕ್ರಮಗಳನ್ನು ಒಳಗೊಂಡಂತೆ ಜಾಗತಿಕ ಇಂಧನ ಪೂರೈಕೆಯನ್ನು ಬೆಂಬಲಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರ ಪರಿಣಾಮವಾಗಿ ಸೋಮವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಬ್ಯಾರೆಲ್ ಗೆ 119 ಡಾಲರ್ ಗಿಂತ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಯುದ್ಧದ ಪರಿಣಾಮಗಳು ಮತ್ತು ಇಂಧನ ಮಾರುಕಟ್ಟೆಯ ಸ್ಥಿತಿಗತಿಗಳ ಕುರಿತು ಚರ್ಚಿಸಲು ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಆನ್ ಲೈನ್ ಸಭೆ ನಡೆಸಿದರು. ಸಭೆಯ ನಂತರ ಜಪಾನ್ ನ ಹಣಕಾಸು ಸಚಿವ ಸತ್ಸುಕಿ ಕಟಯಾಮಾ ಮಾತನಾಡಿ, ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ತುರ್ತು ತೈಲ ನಿಕ್ಷೇಪಗಳನ್ನು ಜಂಟಿಯಾಗಿ ಬಿಡುಗಡೆ ಮಾಡುವಂತೆ ಕರೆ ನೀಡಿದೆ ಎಂದು ತಿಳಿಸಿದರು. ‘ಪ್ರತಿಯೊಂದು ದೇಶವೂ ಸಂಘಟಿತ ರೀತಿಯಲ್ಲಿ ತೈಲ ನಿಕ್ಷೇಪಗಳನ್ನು ಬಿಡುಗಡೆ ಮಾಡಬೇಕೆಂದು IEA ಒತ್ತಾಯಿಸಿದೆ’ ಎಂದು ಕಟಯಾಮಾ ಹೇಳಿದರು. ಇರಾನ್ ನಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತು ಬೆಲೆ ಏರಿಕೆಯ ಕುರಿತು ಸಭೆಯಲ್ಲಿ ಸಚಿವರು ಚರ್ಚೆ ನಡೆಸಿದರು.
ಇಸ್ರೇಲ್ ಜೊತೆ ‘ಸಂಪೂರ್ಣ ಕದನ ವಿರಾಮ’ಕ್ಕೆ ಲೆಬನಾನ್ ಅಧ್ಯಕ್ಷರ ಕರೆ
ಬೈರೂತ್, ಮಾ. 9: ಇಸ್ರೇಲ್ ಜೊತೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆಯೇ ‘ಸಂಪೂರ್ಣ ಕದನ ವಿರಾಮ’ ಘೋಷಣೆಗೆ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಕರೆ ನೀಡಿದ್ದಾರೆ. ದೇಶವನ್ನು ಸ್ಥಿರಗೊಳಿಸುವ ಉದ್ದೇಶದಿಂದ ರೂಪಿಸಿದ ಹೊಸ ಯೋಜನೆಗೆ ಅಂತರರಾಷ್ಟ್ರೀಯ ಸಮುದಾಯ ಬೆಂಬಲ ನೀಡಬೇಕೆಂದು ಅವರು ಕೋರಿದ್ದಾರೆ ಎಂದು Aljazeera ವರದಿ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಲೆಬನಾನ್ ಮೇಲಿನ ಇಸ್ರೇಲ್ ನ ಭೂಮಿ, ವಾಯು ಮತ್ತು ಸಮುದ್ರ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಸಂಪೂರ್ಣ ಕದನ ವಿರಾಮವನ್ನು ಸ್ಥಾಪಿಸುವುದೇ ಈ ಪ್ರಸ್ತಾಪದ ಉದ್ದೇಶ ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಯ ಭಾಗವಾಗಿ ಲೆಬನಾನ್ ಸಶಸ್ತ್ರ ಪಡೆಗಳು ಇತ್ತೀಚಿನ ಉದ್ವಿಗ್ನತೆ ಕಂಡುಬಂದ ಪ್ರದೇಶಗಳನ್ನು ತಕ್ಷಣವೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಿವೆ. ಅಲ್ಲಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಹೆಜ್ಬೊಲ್ಲಾ ಸಂಘಟನೆಯನ್ನು ನಿಶ್ಯಸ್ತ್ರಗೊಳಿಸಿ, ಅದರ ಶಸ್ತ್ರಾಸ್ತ್ರ ಡಿಪೋಗಳು ಮತ್ತು ಸಂಗ್ರಹಣಾ ಸೌಲಭ್ಯಗಳನ್ನು ಕೆಡವುವ ಕ್ರಮ ಕೈಗೊಳ್ಳಲಾಗುತ್ತದೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಲೆಬನಾನ್ ಸೇನೆಗೆ ಅಂತರರಾಷ್ಟ್ರೀಯ ಲಾಜಿಸ್ಟಿಕಲ್ ಬೆಂಬಲ ಅಗತ್ಯವಿದೆ ಎಂದು ಔನ್ ತಿಳಿಸಿದ್ದಾರೆ. ಕದನ ವಿರಾಮ ಕ್ರಮಗಳ ಅನುಷ್ಠಾನದ ಬಗ್ಗೆ ಒಪ್ಪಂದಕ್ಕೆ ಬರಲು ಲೆಬನಾನ್ ಮತ್ತು ಇಸ್ರೇಲ್ ದೇಶಗಳು ಅಂತರರಾಷ್ಟ್ರೀಯ ಆಶ್ರಯದಲ್ಲಿ ನೇರ ಮಾತುಕತೆಗಳನ್ನು ಪ್ರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.
ವಿವಿಗಳಲ್ಲಿ ಒಂದು ಸಾವಿರ ಬೋಧಕ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ: ಸಚಿವ ಡಾ.ಸುಧಾಕರ್
ಬೆಂಗಳೂರು : ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ 1 ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಸೋಮವಾರ ವಿಧಾನಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಲಿಯಿರುವ 3 ಸಾವಿರ ಹುದ್ದೆಗಳ ಪೈಕಿ 1 ಸಾವಿರ ಭರ್ತಿ ಮಾಡಲು ಬಜೆಟ್ನಲ್ಲಿ ಮಂಜೂರಾತಿ ದೊರೆತಿದೆ. ಆಯಾ ವಿವಿಗಳ ಕುಲಪತಿಗಳ ಜೊತೆ ಚರ್ಚಿಸಿ ಅಗತ್ಯವಿರುವ ಬೋಧಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ವ್ಯಾಪ್ತಿಯ ಸರಕಾರಿ ಕಾಲೇಜುಗಳ ಕಲಿಕಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿಜಿಟಲ್ ಕಲಿಕೆ, ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ, ಕಲಿಕೆ ಜೊತೆ ಕೌಶಲ್ಯ ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಂ.ಸಿ.ಸುಧಾಕರ್ ಹೇಳಿದರು.
ಕಟಪಾಡಿ ಪಳ್ಳಿಗುಡ್ಡೆ ಮೈದಾನ ತೆರವಿಗೆ ಕ್ರಮ ಕೈಗೊಳ್ಳಲು ಆಗ್ರಹ
ಉಡುಪಿ, ಮಾ.9: ಕಾಪು ತಾಲೂಕು ಕೋಟೆ ಗ್ರಾಪಂ ವ್ಯಾಪ್ತಿಯಲ್ಲಿರುವ ಒಟ್ಟು ಸುಮಾರು 6.96ಎಕರೆ ಸರಕಾರಿ ಭೂಮಿಯನ್ನು ಖಾಸಗೀ ಶಿಕ್ಷಣ ಸಂಸ್ಥೆಯಾದ ಕಟಪಾಡಿ ಎಸ್ವಿಎಸ್ ಹೈಸ್ಕೂಲ್ ಹೆಸರಿನಲ್ಲಿ ಪಹಣಿ ಕಲಂ 11ರಲ್ಲಿ ಎಲಿನೇಶನ್ ಮಾಡಿದ್ದು, ಅದನ್ನು ಆ ಸಂಸ್ಥೆ ದುರುಪಯೋಗ ಪಡಿಸಿ ಕೊಳ್ಳುತ್ತಿದೆ. ಆದ್ದರಿಂದ ಅದನ್ನು ಸಾರ್ವಜನಿಕರ ಬಳಕೆಗೆ ತೆರವುಗೊಳಿಸಬೇಕು ಎಂದು ಗ್ರಾಮಸ್ಥ ಪ್ರಭಾಕರ ಕೋಟ್ಯಾನ್ ಒತ್ತಾಯಿಸಿದ್ದಾರೆ. ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್ವಿಎಸ್ ಹೈಸ್ಕೂಲ್ ಕಟಪಾಡಿ ಎಂಬ ಖಾಸಗಿ ವಿದ್ಯಾಸಂಸ್ಥೆ ಸರಕಾರಿ ಜಾಗದಲ್ಲಿ ಆಟದ ಮೈದಾನವನ್ನು ಎಲಿನೇಶನ್ ಮೂಲಕ ಹೊಂದಿದ್ದು, ಇದೀಗ ಆಟದ ಮೈದಾನಕ್ಕೆ ಗೇಟು ಅಳವಡಿಸಿ, ಬೀಗ ಹಾಕಿದ್ದಾರೆ. ಅಲ್ಲದೇ ಇದಕ್ಕೆ ಎಸ್ವಿಎಸ್ ಕ್ರೀಡಾಂಗಣ ಎಂಬ ನಾಮಫಲಕವನ್ನೂ ಅಳವಡಿಸಿದ್ದಾರೆ ಎಂದು ದೂರಿದರು. ಹಲವು ದಶಕಗಳಿಂದ ಪಳ್ಳಿಗುಡ್ಡೆ ಮೈದಾನವೆಂದು ನಿತ್ಯ ಬಳಕೆಯಲ್ಲಿ, ನೆಹರೂ ಮೈದಾನವೆಂದು ಸಾರ್ವಜನಿಕ ವಾಗಿ ಕರೆಯಲ್ಪಡುತಿದ್ದ ಈ ಮೈದಾನ ಸಾರ್ವಜನಿಕರ ಬಳಕೆ, ಮಕ್ಕಳ ದೈನಂದಿನ ಆಟಕ್ಕೆ ಬಳಕೆಯಾಗುತ್ತಿತ್ತು. ಆದರೇ ಈಗ ಸಂಸ್ಥೆಯವರು ಮೈದಾನಕ್ಕೆ ಗೇಟು ಅಳವಡಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಆಟವಾ ಡಲು ಪ್ರತಿದಿನಕ್ಕೆ 3,000ರೂ.ಗಳನ್ನು ಅಕ್ರಮವಾಗಿ ವಸೂಲಿ ಮಾಡುತಿದ್ದಾರೆ. ಈ ದಂಧೆ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ ಎಂದವರು ಆರೋಪಿಸಿದರು. ಅಲ್ಲದೇ ಸರಕಾರಿ ಜಾಗದಲ್ಲಿ ಬೇರೆ ಬೇರೆ ಕಟ್ಟಡಗಳನ್ನು, ವೇದಿಕೆಯನ್ನು ನಿರ್ಮಿಸಲು ಮುಂದಾಗಿದ್ದು, ಗ್ರಾಮಪಂಚಾಯತ್ ಈಗಾಗಲೇ ಅದನ್ನು ತೆರವು ಗೊಳಿಸುವಂತೆ ನಿರ್ಣಯ ತೆಗೆದುಕೊಂಡು ನೋಟೀಸು ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಪ್ರಭಾಕರ ಕೋಟ್ಯಾನ್ ತಿಳಿಸಿದರು. ಈ ಮೈದಾನವನ್ನು ಕಾಪು ತಾಲೂಕಿನ ‘ತಾಲೂಕು ಕ್ರೀಡಾಂಗಣ’ವಾಗಿ ಘೋಷಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. 10 ದಿನದೊಳಗೆ ಮೈದಾನಕ್ಕೆ ಹಾಕಿರುವ ಬೀಗವನ್ನು ತೆರವುಗೊಳಿಸದಿದ್ದರೆ, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು ಎಂದವರು ಎಚ್ಚರಿಸಿದ್ದಾರೆ. ಗ್ರಾಮಸ್ಥ ಶೈಲೇಶ್ ಉಪಸ್ಥಿತರಿದ್ದರು.
ಮಲ್ಪೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಸದರಿಂದ ವೀಕ್ಷಣೆ
ಉಡುಪಿ, ಮಾ.9: ಉಡುಪಿಯ ಕರಾವಳಿ ಜಂಕ್ಷನ್ನಿಂದ ಮಲ್ಪೆ ಬಳಿಯ ಕಲ್ಮಾಡಿ ಸೇತುವೆವರೆಗಿನ ಇಕ್ಕೆಲಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿಯನ್ನು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ವೀಕ್ಷಣೆ ನಡೆಸಿದರು. ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಭೂ ಮಾಲಕರಿಗೆ ಪರಿಹಾರ ನೀಡದಿರುವುದು, ಭಾಗಶಃ ಸ್ವಾಧೀನವಾದ ಭೂಮಿಗಳಿಗೆ ಪೋಡಿ ರಚನೆಯಲ್ಲಾದ ವಿಳಂಬದಿಂದ ಹಣ ಪಾವತಿಯ ಸಮಸ್ಯೆ, ವಿದ್ಯುತ್ ಕಂಬಗಳ ಸ್ಥಳಾಂತರದ ಸಮಸ್ಯೆಯಿಂದ ಮರಗಳ ತೆರವಿಗೆ ಅಡಚಣೆ ಮುಂತಾದ ತೊಂದರೆಗಳನ್ನು ಸಂಸದರು ಖುದ್ಧಾಗಿ ಪರಿಶೀಲಿಸಿದರು. ಭೂಮಾಲಕರ ಖಾತಾ ಸಮಸ್ಯೆಗಳಿದ್ದಲ್ಲಿ ಅಥವಾ ವ್ಯಾಜ್ಯ, ತಕರಾರು ಗಳಿದ್ದಲ್ಲಿ ಪರಿಹಾರದ ಹಣವನ್ನು ಅವರ ಹೆಸರಲ್ಲಿ ಠೇವಣಿ ಇರಿಸುವಂತೆ ಸೂಚಿಸಿದರಲ್ಲದೇ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮರಗಳ ತೆರವಿಗೆ ಅನುಮತಿ ನೀಡುವಂತೆ ಸ್ಥಳದಲ್ಲೇ ಸೂಚನೆ ನೀಡಿದರು. ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಕಾಯುತ್ತಿದ್ದೇವೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ಎಂದು ಸ್ಥಳೀಯರು ಒತ್ತಾಯಿಸಿ ದಾಗ, ಶಾಲಾ ಮಕ್ಕಳ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಗಿತಗೊಳಿಸಿ ಕಂಬಗಳ ತೆರವಿಗೆ ಅವಕಾಶ ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುಮಾರು 2 ಕಿ.ಮೀ ರಸ್ತೆಯಲ್ಲಿ ಸಂಚರಿಸಿದ ಸಂಸದ ಕೋಟ, ಸಮರ್ಪಕ ದಾಖಲೆ ನೀಡಿದವರಿಗೆ ಒಂದು ವಾರದಲ್ಲಿ ಹಣ ಪಾವತಿ ಮಾಡುವಂತೆ, 3ಡಿ ಅಪೂರ್ಣವಾದವರಿಗೆ 15 ದಿನಗಳ ಒಳಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ, ಯಾವುದೇ ಕಾರಣಕ್ಕೂ ವಿಳಂಬ ವಿಲ್ಲದೆ ರಸ್ತೆ ಕೆಲಸ ಮಳೆಗಾಲದೊಳಗೆ ಪೂರ್ಣಗೊಳಿಸುವಂತೆ ತಾಕಿತು ಮಾಡಿದರು. ಸಂಸದರೊಂದಿಗೆ ಕುಂದಾಪುರದ ಸಹಾಯಕ ಕಮಿಷನರ್ ರಶ್ಮಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ್ ನಾಯಕ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಲೋಕೇಶ್ ಶಶಿಧರ್ ನವೀನ್, ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕೇಯ, ಮಾಜಿ ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಹರೀಶ್ ರಾಂ, ಮಲ್ಪೆ ಠಾಣಾಧಿಕಾರಿ ಈರಣ್ಣ ಶಿರಗುಪ್ಪಿ ಉಪಸ್ಥಿತರಿದ್ದರು.
ಆಸ್ಪತ್ರೆಗಳಿಗೆ ಅಗತ್ಯ ಔಷಧಿಗಳ ಖರೀದಿಗೆ 880ಕೋಟಿ ರೂ.ಅನುಮೋದನೆ : ದಿನೇಶ್ ಗುಂಡೂರಾವ್
ಬೆಂಗಳೂರು : ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆ ಹಾಗೂ ಇತರ ಸರಕಾರಿ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ 890 ವಿಧಗಳ ಔಷಧಿಗಳನ್ನು 880.68 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಸೋಮವಾರ ಪರಿಷತ್ತಿನ ಪ್ರಶೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯರಾದ ಡಾ.ಧನಂಜಯ ಸರ್ಜಿ ಹಾಗೂ ಪ್ರತಾಪ ಸಿಂಹ ನಾಯಕ್ ಕೆ. ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಔಷಧಗಳನ್ನು ಖರೀದಿಸಲು ಕೆಎಸ್ಎಂಎಸ್ಸಿಎಲ್ ಸಂಸ್ಥೆಗೆ ಅನುಮೋದನೆ ನೀಡಲಾಗಿದೆ. ಔಷಧಿ ಖರೀದಿಯನ್ನು ಪಾರದರ್ಶಕವಾಗಿ ಟೆಂಡರ್ ಕರೆದು ಮಾಡಲಾಗುತ್ತಿದೆ. ಹೆಚ್ಚು ಗುತ್ತಿಗೆದಾರರು ಭಾಗವಹಿಸಲು ಅವಕಾಶವಾಗುವಂತೆ ಟೆಂಡರ್ ಷರತ್ತುಗಳನ್ನು ವಿಧಿಸಲಾಗಿದೆ ಎಂದರು. ಔಷಧ ಸರಬರಾಜು ಮಾಡುವ ಮುನ್ನವೇ ಗುಣಮಟ್ಟದ ಪರೀಕ್ಷೆ ಮಾಡಲಾಗುವುದು. ಕೊರತೆ ಇರುವ ಔಷಧಗಳನ್ನು ತಾತ್ಕಾಲಿಕವಾಗಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ವಾರ್ಷಿಕ ಔಷಧಿ ಖರೀದಿ ಬದಲು 3 ರಿಂದ 4 ತಿಂಗಳಿಗೊಮ್ಮೆ ಅಗತ್ಯವಿರುವ ಔಷಧಿ ಖರೀದಿ ಮಾಡಲಾಗುತ್ತಿದೆ. ಇದರಿಂದ ಅವಧಿ ಮುಗಿಯುವ ಔಷಧಿಗಳ ಸಂಖ್ಯೆ ತಪ್ಪಲಿದೆ. 232 ಕೋಟಿ ರೂ.ಗಳಷ್ಟು ಔಷಧಿಗಳನ್ನು ಒದಗಿಸಲಾಗಿದೆ. ಈ ತಿಂಗಳು, ಮುಂದಿನ ತಿಂಗಳು ಸರಬರಾಜು ಆಗಲಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. 2025-26ನೇ ಸಾಲಿನಲ್ಲಿ ಕೆಎಸ್ಎಂಎಸ್ಸಿಎಲ್ ಸಂಸ್ಥೆಯಿಂದ 534 ಔಷಧಿಗಳಲ್ಲಿ ಆದ್ಯತೆ ಮೇಲೆ 496 ಔಷಧಿಗಳ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಉಳಿದ 38 ಔಷಧಿಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ರಾಜ್ಯದ ಎಲ್ಲ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಎಬಿ-ಎಆರ್ಕೆ ಮೊದಲಾದ ಅನುದಾನಗಳನ್ನು ಜೀವ ರಕ್ಷಕ ಔಷಧಿ ಖರೀದಿಸಿ ರೋಗಿಗಳಿಗೆ ನೀಡಲು ನಿರ್ದೇಶನ ನೀಡಲಾಗಿದೆ. ಆರೋಗ್ಯ ಸಂಸ್ಥೆಗಳು ಅಗತ್ಯವಿರುವ ಔಷಧಿಗಳನ್ನು ಗವರ್ನಮೆಂಟ್-ಇ- ಮಾರ್ಕೆಟ್ ಪ್ಲೇಸ್ ಮೂಲಕ ನೇರ ಖರೀದಿಗೂ ಅವಕಾಶ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಗುಣಮಟ್ಟ ಖಾತರಿ ಪ್ರಕ್ರಿಯೆಯಿಂದ ವಿಳಂಬ: ತಮಿಳುನಾಡು ರಾಜ್ಯ ಬಹಳ ಅಚ್ಚುಕಟ್ಟಾದ ಖರೀದಿ ಪ್ರಕ್ರಿಯೆ ನಡೆಸುತ್ತದೆ. ನಮ್ಮ ಟೆಂಡರ್ಗಳಲ್ಲಿ ಅನವಶ್ಯಕ ಷರತ್ತುಗಳಿಂದ ಹೆಚ್ಚು ಬಿಡ್ದಾರರು ಬರುತ್ತಿರಲಿಲ್ಲ. ಯಾವ ಔಷಧ ಎಷ್ಟು ಅಗತ್ಯ ಇದೆ ಎಂದು ಪರಿಶೀಲನೆ ಮಾಡಿ, ಪಾರದರ್ಶಕ ವ್ಯವಸ್ಥೆ ಮುಖಾಂತರ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದೇವೆ. ಖರೀದಿಸಿದ ಔಷಧಗಳನ್ನು ಉಗ್ರಾಣದಲ್ಲಿಯೂ ಮತ್ತೊಮ್ಮೆ ಪರೀಕ್ಷೆ ನಡೆಸಿ, ಗುಣಮಟ್ಟ ಖಾತರಿ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದೇ ವೆ. ಇದರಿಂದ ಸ್ವಲ್ಪ ವಿಳಂಬ ಆಗಿದೆ. ಎಬಿಆರ್ಕೆ ಅಡಿಯಲ್ಲಿ ಎಲ್ಲ ಜಿಲ್ಲೆ ಗಳಲ್ಲಿ ಸುಮಾರು 300 ಕೋಟಿ ರೂ. ಹಣ ಇದ್ದು, ಹೆಚ್ಚುವರಿಯಾಗಿ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಸ್ಥಳೀಯವಾಗಿಯೂ ಖರೀದಿಸಲು ಸೂಚನೆ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.
T20 ವಿಶ್ವಕಪ್: ICC ಟೀಂ ಆಫ್ ದಿ ಟೂರ್ನಮೆಂಟ್ ಬಿಡುಗಡೆ; ಭಾರತದ ನಾಲ್ವರು ಆಯ್ಕೆ; ಸೂರ್ಯ ಕುಮಾರ್ಗಿಲ್ಲ ಸ್ಥಾನ!
ಟಿ20 ವಿಶ್ವಕಪ್ನ ಟೀಂ ಆಫ್ ದಿ ಟೂರ್ನಮೆಂಟ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿ ಮಾಡಲಾಗಿದೆ. ಭಾರತ ತಂಡದ ನಾಲ್ಕು ಆಟಗಾರರು ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಸೂರ್ಯ ಕುಮಾರ್ಗೆ ಈ ಬಾರಿ ಅವಕಾಶ ನೀಡಿಲ್ಲ. ಇನ್ನು ಸರಣಿ ಶ್ರೇಷ್ಠನಾಗಿ ಹೊರಹೊಮ್ಮಿದ ಸಂಜು ಸ್ಯಾಮ್ಸನ್ಗೆ ಕೀಪರ್ ಆಗಿ ಸ್ಥಾನ ನೀಡಲಾಗಿದೆ. ಐಸಿಸಿ ಆಯ್ಕೆ ಮಾಡಿದ 12 ಆಟಗಾರರ ಪಟ್ಟಿ ಇಲ್ಲಿದೆ.
ಉಪ್ಪಿನಂಗಡಿ: ಕಾರು ಢಿಕ್ಕಿ; ಅಟೋ ಚಾಲಕ ಸಹಿತ ಐವರು ಮಕ್ಕಳಿಗೆ ಗಾಯ
ಉಪ್ಪಿನಂಗಡಿ: ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರೊಂದು ಅಟೋ ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಅಟೋ ರಿಕ್ಷಾದಲ್ಲಿದ್ದ ಒಂದೇ ಕುಟುಂಬದ ಐವರು ಮಕ್ಕಳು ಹಾಗೂ ಅಟೋ ಚಾಲಕರಾದ ಅವರ ತಂದೆ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿಯಲ್ಲಿ ಮಾ.9ರಂದು ಸಂಜೆ ನಡೆದಿದೆ. ಅಟೋ ರಿಕ್ಷಾ ಚಾಲಕ ಕಲಂದರ್ ಶಾಫಿ, ಅವರ ಮಕ್ಕಳಾದ ಮಹಮ್ಮದ್ ಜಾಝೀರ್ (13), ಮಹಮ್ಮದ್ ಇರ್ಷಾದ್ (11), ಮಹಮ್ಮದ್ ರಾಝೀಕ್ (9), ಮಹಮ್ಮದ್ ನೂರ್ (5), ಸಝ್ಮಾ (4) ಗಾಯಗೊಂಡವರು. ಇವರಲ್ಲಿ ಕಲಂದರ್ ಶಾಫಿ, ಸಝ್ಮಾ ಹಾಗೂ ಮಹಮ್ಮದ್ ಜಾಝೀರ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವಿವರ: ಅಟೋ ಚಾಲಕರಾಗಿರುವ ಕಲಂದರ್ ಶಾಫಿಯವರು ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ತನ್ನ ಮಕ್ಕಳನ್ನು ಇಂದು ಸಂಜೆ ಅಟೋ ರಿಕ್ಷಾದಲ್ಲಿ ಶಾಲೆಯಿಂದ 34 ನೆಕ್ಕಿಲಾಡಿಯ ತನ್ನ ಮನೆಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭ ಮಂಗಳೂರಿನಿಂದ ಉಪ್ಪಿನಂಗಡಿ ಕಡೆ ಬರುತ್ತಿದ್ದ ಕಾರೊಂದು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಪ್ರವೇಶಿಸುವಲ್ಲಿ ಎದುರಿನಿಂದ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡಿದಿದೆ. ಡಿಕ್ಕಿಯ ರಭಸಕ್ಕೆ ಅಟೋ ರಿಕ್ಷಾ ಮಗುಚಿ ಬಿದ್ದಿದ್ದು ಅದರಲ್ಲಿದ್ದ ಒಂದೇ ಮನೆಯ ಆರು ಮಂದಿಯೂ ಗಾಯಗೊಂಡಿದ್ದಾರೆ. ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧದ ಪರಿಣಾಮ ತೈಲ ಬೆಲೆ ಬ್ಯಾರೆಲ್ ಗೆ 100 ಡಾಲರ್ ದಾಟಿದೆ. ರವಿವಾರ ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಶೇಕಡಾ 30 ಕ್ಕಿಂತ ಹೆಚ್ಚು ಏರಿಕೆಯಾಗಿ, ಒಂದು ಹಂತದಲ್ಲಿ ಬ್ಯಾರೆಲ್ ಗೆ 119 ಡಾಲರ್ಗೆ ತಲುಪಿತು. 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಮೊದಲ ಬಾರಿಗೆ ತೈಲವು ಬ್ಯಾರೆಲ್ ಗೆ 100 ಡಾಲರ್ ಗಿಂತ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಸಮನ್ವಯದೊಂದಿಗೆ ಏಳು ಹಣಕಾಸು ಮಂತ್ರಿಗಳ ಗುಂಪು ಪೆಟ್ರೋಲಿಯಂ ನಿಕ್ಷೇಪಗಳನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಲಿದ್ದಾರೆ ಎಂದು financial times ವರದಿ ಮಾಡಿದ ನಂತರ ತೈಲ ಬೆಲೆಗಳು ಬ್ಯಾರೆಲ್ ಗೆ 110 ಡಾಲರ್ಗೆ ಇಳಿದವು. 2024ರ ಚುನಾವಣೆಗೆ ಮುನ್ನ ಜೀವನ ವೆಚ್ಚದ ಬಗ್ಗೆ ಭಾರೀ ಪ್ರಚಾರ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಲೆ ಏರಿಕೆಯನ್ನು ತಳ್ಳಿಹಾಕಿದರು. ಇರಾನ್ ನ ಪರಮಾಣು ಕಾರ್ಯಕ್ರಮದ ಬೆದರಿಕೆ ನಾಶವಾದ ನಂತರ ತೈಲ ಬೆಲೆಗಳು ಶೀಘ್ರವಾಗಿ ಕುಸಿಯುತ್ತವೆ. ಅಮೆರಿಕ ಮತ್ತು ಜಗತ್ತನ್ನು ಸುರಕ್ಷಿತ ಮತ್ತು ಶಾಂತಿಯುತವಾಗಿಸಲು ಈಗ ತೈಲಕ್ಕಾಗಿ ಹೆಚ್ಚಿನ ಹಣವನ್ನು ಪಾವತಿಸುವುದು ಅತ್ಯಂತ ಸಣ್ಣ ಬೆಲೆ ಎಂದು ಅವರು ವಾದಿಸಿದ್ದು, ಮೂರ್ಖರು ಮಾತ್ರ ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂದು ಟ್ರಂಪ್ ಟ್ರೂತ್ ಸೋಷಿಯಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಕೂಡ ಜನರು ಹೆಚ್ಚುತ್ತಿರುವ ಬೆಲೆ ಬಗ್ಗೆ ಹೆಚ್ಚು ಚಿಂತಿಸಬೇಡಿ ಎಂದು ಹೇಳಿದ್ದಾರೆ. ಸಿಬಿಎಸ್ ನ್ಯೂಸ್ನ ‘ಫೇಸ್ ದಿ ನೇಷನ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಪಂಪ್ ನಲ್ಲಿ ಬೆಲೆಗಳಲ್ಲಿ ಯಾವುದೇ ಹೆಚ್ಚಳ “ತಾತ್ಕಾಲಿಕ”. ಅದು ಹೆಚ್ಚು ಕಾಲ ಹಾಗೆಯೇ ಇರುವುದಿಲ್ಲ ಎಂದಿದ್ದಾರೆ. ಫೆ. 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ನಂತರ ಕಚ್ಚಾ ತೈಲ ಬೆಲೆಗಳು ಸುಮಾರು 50 ಪ್ರತಿಶತದಷ್ಟು ಏರಿಕೆಯಾಗಿವೆ. ಪ್ರತೀಕಾರವಾಗಿ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಇದು ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ಅಪಾಯವನ್ನುಂಟುಮಾಡಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (OPEC) ಮೂರು ದೊಡ್ಡ ಉತ್ಪಾದಕ ರಾಷ್ಟ್ರಗಳಾದ ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈತ್, ಜಲಮಾರ್ಗದ ಪರಿಣಾಮಕಾರಿ ಮುಚ್ಚುವಿಕೆಯಿಂದಾಗಿ ಎಲ್ಲಿಯೂ ಹೋಗಲು ಸಾಧ್ಯವಾಗದ ಬ್ಯಾರೆಲ್ ಗಳ ಸಂಗ್ರಹದ ನಡುವೆ ಉತ್ಪಾದನೆಯನ್ನು ಕಡಿತಗೊಳಿಸಿವೆ. ಈ ಪ್ರದೇಶದಲ್ಲಿನ ಇಂಧನ ಉತ್ಪಾದನಾ ಸೌಲಭ್ಯಗಳ ಮೇಲಿನ ದಾಳಿಗಳು ಪೂರೈಕೆಗೆ ಮತ್ತಷ್ಟು ಬೆದರಿಕೆಯನ್ನುಂಟುಮಾಡಿವೆ. ಖತರ್, ಸೌದಿ ಅರೇಬಿಯಾ ಮತ್ತು ಕುವೈತ್ ಸೇರಿದಂತೆ ಕೊಲ್ಲಿಯಲ್ಲಿನ ಇಂಧನ ಸೌಲಭ್ಯಗಳ ಮೇಲಿನ ಅನೇಕ ದಾಳಿಗಳಿಗೆ ಇರಾನ್ ಕಾರಣ ಎಂದು ಆರೋಪಿಸಲಾಗಿದೆ. ಶನಿವಾರ, ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಇರಾನ್ ನ ತೈಲ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯುದಾಳಿ ನಡೆಸಿತು. ಇರಾನ್ ನ ರಾಜ್ಯ ಮಾಧ್ಯಮದ ಪ್ರಕಾರ, ದಾಳಿಗಳು ಟೆಹ್ರಾನ್ ಮತ್ತು ಅಲ್ಬೋರ್ಜ್ ಪ್ರಾಂತ್ಯದಲ್ಲಿರುವ ನಾಲ್ಕು ತೈಲ ಸಂಗ್ರಹಾಗಾರ ಸೌಲಭ್ಯಗಳು ಮತ್ತು ತೈಲ ಉತ್ಪನ್ನಗಳ ವರ್ಗಾವಣೆ ಕೇಂದ್ರದ ಮೇಲೆ ಪರಿಣಾಮ ಬೀರಿವೆ. ಇರಾನ್ ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ರವಿವಾರ ಪ್ರತೀಕಾರವಾಗಿ ಈ ಪ್ರದೇಶದಾದ್ಯಂತ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಅಮೆರಿಕ ಮತ್ತು ಇಸ್ರೇಲ್ “ಈ ಆಟವನ್ನು ಮುಂದುವರಿಸಿದರೆ” ತೈಲವು ಬ್ಯಾರೆಲ್ ಗೆ 200 ಡಾಲರ್ ಆಗಿ ಏರಿಕೆಯಾಗಬಹುದು ಎಂದು ಎಚ್ಚರಿಸಿದೆ. ►ಷೇರು ಕುಸಿತ ಹೂಡಿಕೆದಾರರು ಇಂಧನ ಬೆಲೆಗಳ ಏರಿಕೆಯಿಂದ ಉಂಟಾಗುವ ಕುಸಿತಕ್ಕೆ ಸಿದ್ಧರಾಗಿದ್ದರಿಂದ ಸೋಮವಾರ ಏಷ್ಯಾದ ಷೇರುಗಳು ತೀವ್ರವಾಗಿ ಕುಸಿದವು. ಜಪಾನ್ ನ ನಿಕ್ಕಿ 225 ಆರಂಭಿಕ ವಹಿವಾಟಿನಲ್ಲಿ 7 ಪ್ರತಿಶತದಷ್ಟು ಕುಸಿದ ನಂತರ 5 ಪ್ರತಿಶತಕ್ಕಿಂತ ಹೆಚ್ಚು ಕುಸಿತ ಕಂಡಿತು. ದಕ್ಷಿಣ ಕೊರಿಯಾದ KOSPI 8 ಪ್ರತಿಶತದಷ್ಟು ಕುಸಿದ ನಂತರ 6 ಪ್ರತಿಶತದಷ್ಟು ಕುಸಿತ ಕಂಡಿತು. ಹಾಂಗ್ ಕಾಂಗ್ ನಲ್ಲಿ ಹ್ಯಾಂಗ್ ಸೆಂಗ್ ಸೂಚ್ಯಂಕವು 1.35 ಪ್ರತಿಶತದಷ್ಟು ಕುಸಿದಿದೆ. ಯುರೋಪಿಯನ್ ಷೇರುಗಳು ಕುಸಿತದೊಂದಿಗೆ ಪ್ರಾರಂಭವಾಗಿವೆ. ಲಂಡನ್ ನಲ್ಲಿ FTSE 100 ಮತ್ತು ಫ್ರಾಂಕ್ಫರ್ಟ್ನಲ್ಲಿನ DAX ಕ್ರಮವಾಗಿ ಸುಮಾರು 2 ಪ್ರತಿಶತ ಮತ್ತು 3 ಪ್ರತಿಶತದಷ್ಟು ಕುಸಿದವು. ಅಧಿಕೃತ ಷೇರು ಮಾರುಕಟ್ಟೆಗಳು ದಿನದ ಪ್ರಾರಂಭಕ್ಕೂ ಮುಂಚೆಯೇ ತೊಂದರೆಯ ಲಕ್ಷಣಗಳು ಕಂಡುಬಂದವು. ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು, ಇದರಿಂದಾಗಿ ಬೆಲೆಗಳು ಗಮನಾರ್ಹವಾಗಿ ಕುಸಿದವು. ಯುಎಸ್ ನ S&P 500 1.7% ರಷ್ಟು ಕುಸಿಯಿತು. ಆಪಲ್ ಮತ್ತು ಗೂಗಲ್ನಂತಹ ದೊಡ್ಡ ತಂತ್ರಜ್ಞಾನ ಕಂಪೆನಿಗಳಿಂದ ಕೂಡಿದ ನಾಸ್ಡಾಕ್ 1.9% ರಷ್ಟು ಕುಸಿಯಿತು. ಟ್ರಂಪ್ ಆಡಳಿತ ಅಧಿಕಾರಿಗಳು ವಾರಗಳಲ್ಲಿ ಯುದ್ಧವು ಕೊನೆಗೊಳ್ಳುತ್ತದೆ ಎಂದು ಹೇಳಿದ್ದರೂ, ಜಾಗತಿಕ ಇಂಧನ ಪೂರೈಕೆಗಳಿಗೆ ದೀರ್ಘಕಾಲದ ಅಡಚಣೆಯ ಸಾಧ್ಯತೆಯು ಹೆಚ್ಚಿನ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯ ನಿಧಾನಗತಿಯ ಭಯವನ್ನು ಹುಟ್ಟುಹಾಕಿದೆ. ತೈಲ ಬೆಲೆಗಳಲ್ಲಿನ ಪ್ರತಿ ನಿರಂತರ 10 ಪ್ರತಿಶತ ಏರಿಕೆಯು ಹಣದುಬ್ಬರದಲ್ಲಿ 0.4 ಪ್ರತಿಶತ ಏರಿಕೆ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ 0.15 ಪ್ರತಿಶತದಷ್ಟು ಇಳಿಕೆಗೆ ಕಾರಣವಾಗುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರತಿ ಬಾರಿ ತೈಲ ಬೆಲೆಗಳು ಸಾಮಾನ್ಯಕ್ಕಿಂತ 10% ಹೆಚ್ಚಾದಾಗ ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆಗಳು (ಹಣದುಬ್ಬರ) 0.4% ರಷ್ಟು ಹೆಚ್ಚಾಗುತ್ತವೆ ಎಂದು ಅಂದಾಜಿಸಿದೆ. ಅದೇ ಸಮಯದಲ್ಲಿ ಇದು ಜಾಗತಿಕ ಆರ್ಥಿಕ ಬೆಳವಣಿಗೆಯನ್ನು 0.15% ರಷ್ಟು ನಿಧಾನಗೊಳಿಸುತ್ತದೆ. “ಈ ಆಘಾತ ಅಲ್ಪಕಾಲಿಕವಾಗಿದ್ದರೆ ಜಾಗತಿಕ ಆರ್ಥಿಕತೆಯು ಬೇಗನೆ ಚೇತರಿಸಿಕೊಳ್ಳಬಹುದು” ಎಂದು ಜೋನ್ಸ್ ಟ್ರೇಡಿಂಗ್ ನ ಮುಖ್ಯ ಮಾರುಕಟ್ಟೆ ತಂತ್ರಜ್ಞ ಮೈಕ್ ಓ ರೂರ್ಕ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. “ತೈಲ ಬೆಲೆ ವಾರಗಳವರೆಗೆ ಈ ಮಟ್ಟದಲ್ಲಿ ಮುಂದುವರಿದರೆ ಅದು ಜಾಗತಿಕವಾಗಿ ಪ್ರಮುಖ ತಲೆನೋವಾಗಲಿದೆ. ಇಲ್ಲಿಯವರೆಗೆ ಮಾರುಕಟ್ಟೆಗಳು ಇರಾನ್ ನಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಅಂದಾಜು ಮಾಡಿವೆ” ಎಂದು ಅವರು ಹೇಳಿದ್ದಾರೆ. ಶುಕ್ರವಾರ ಫೈನಾನ್ಷಿಯಲ್ ಟೈಮ್ಸ್ ಪ್ರಕಟಿಸಿದ ಸಂದರ್ಶನದಲ್ಲಿ ಖತರ್ ನ ಇಂಧನ ಸಚಿವ ಸಾದ್ ಅಲ್–ಕಾಬಿ ಈ ಪ್ರದೇಶದ ಎಲ್ಲಾ ಉತ್ಪಾದಕರು ಶೀಘ್ರದಲ್ಲೇ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಲ್ಪಡಬಹುದು ಎಂದು ಹೇಳಿದ್ದಾರೆ. ತೈಲ ಬೆಲೆಗಳು ಬ್ಯಾರೆಲ್ ಗೆ 150 ಡಾಲರ್ ತಲುಪಬಹುದು ಎಂದು ಎಚ್ಚರಿಸಿದ್ದಾರೆ. ►ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು? ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿವೆ. ಆದರೆ ಈ ಏರಿಕೆ ಹಣದುಬ್ಬರವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಭಾರತ ನಿರೀಕ್ಷಿಸುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡಿದ ಅವರು ಹಣದುಬ್ಬರವು ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿದ “ಸುರಕ್ಷತಾ ವಲಯ”ದ ಕೆಳಭಾಗದಲ್ಲಿದೆ. ಇದು ಹಣದುಬ್ಬರದ ಮೇಲೆ ಹೆಚ್ಚಿನ ಕಚ್ಚಾ ತೈಲ ಬೆಲೆಗಳ ಪರಿಣಾಮವನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಪ್ರಸ್ತುತ ಬೆಲೆ ಏರಿಕೆಗಳು ತುಂಬಾ ಕಡಿಮೆ ಇರುವುದರಿಂದ ಭಾರತವು ಏರುತ್ತಿರುವ ತೈಲ ಬೆಲೆಯನ್ನು ನಿಭಾಯಿಸಲು ಉತ್ತಮ ಸ್ಥಿತಿಯಲ್ಲಿದೆ. ಜನವರಿಯಲ್ಲಿ ಚಿಲ್ಲರೆ ಹಣದುಬ್ಬರವು ಕೇವಲ 2.75% ಆಗಿತ್ತು. ಇದು ಭಾರತೀಯ ರಿಸರ್ವ್ ಬ್ಯಾಂಕ್ನ 2% ರಿಂದ 6% ರ “ಸುರಕ್ಷಿತ ವಲಯ”ದ ಒಳಗೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಅಕ್ಟೋಬರ್ 2025ರ ಹಣಕಾಸು ನೀತಿ ವರದಿಯನ್ನು ಉಲ್ಲೇಖಿಸಿದ ವಿತ್ತ ಸಚಿವೆ, ಕಚ್ಚಾ ತೈಲ ಬೆಲೆಗಳಲ್ಲಿ 10% ಹೆಚ್ಚಳವು ಸಂಪೂರ್ಣ ಹೆಚ್ಚಳವನ್ನು ದೇಶೀಯ ಇಂಧನ ಬೆಲೆಗಳಿಗೆ ವರ್ಗಾಯಿಸಿದರೆ ಹಣದುಬ್ಬರವನ್ನು ಸುಮಾರು 30 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಬಹುದು ಎಂದು ಹೇಳಿದ್ದಾರೆ. ಆದಾಗ್ಯೂ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದ ಹಣದುಬ್ಬರದ ಮೇಲೆ ಉಂಟಾಗುವ ಮಧ್ಯಮಾವಧಿಯ ಪರಿಣಾಮವು ವಿನಿಮಯ ದರದ ಚಲನೆಗಳು, ಜಾಗತಿಕ ಬೇಡಿಕೆ ಮತ್ತು ಪೂರೈಕೆ ಪರಿಸ್ಥಿತಿ, ಹಣಕಾಸು ನೀತಿ ಪ್ರಸರಣ ಹಾಗೂ ಸಾಮಾನ್ಯ ಹಣದುಬ್ಬರದ ಸ್ಥಿತಿ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ. ►ಕಚ್ಚಾ ತೈಲ ಬೆಲೆಯಲ್ಲಿನ ತೀವ್ರ ಏರಿಕೆಗೆ ವಿವಿಧ ದೇಶಗಳು ಯಾವ ರೀತಿ ಪ್ರತಿಕ್ರಿಯಿಸಿವೆ? 2022ರ ನಂತರದ ಅತ್ಯುನ್ನತ ಮಟ್ಟಕ್ಕೆ ತೈಲ ಬೆಲೆಗಳಲ್ಲಿ ತೀವ್ರ ಏರಿಕೆಯೊಂದಿಗೆ ಜಾಗತಿಕ ಮಾರುಕಟ್ಟೆಗಳು ಸೋಮವಾರ ಕುಸಿದಿದ್ದು, ಇದು ಏಷ್ಯಾದಾದ್ಯಂತ ಷೇರುಗಳಲ್ಲಿ ವ್ಯಾಪಕ ಮಾರಾಟಕ್ಕೆ ಕಾರಣವಾಯಿತು. ಭಾರತದಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆಗಳು ಸೋಮವಾರ ಆರಂಭದಲ್ಲಿ 30% ರಷ್ಟು ಏರಿಕೆಯಾಗಿ ಬ್ಯಾರೆಲ್ ಗೆ ಸುಮಾರು 120 ಡಾಲರ್ ತಲುಪಿದ್ದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 3 ಕ್ಕಿಂತ ಹೆಚ್ಚು ಕುಸಿದವು. ►ಫಿಲಿಪೈನ್ಸ್ ಫಿಲಿಪೈನ್ಸ್ ನಲ್ಲಿ ಖಾಸಗಿ ಕಂಪೆನಿಗಳನ್ನು ವಾರದಲ್ಲಿ ನಾಲ್ಕು ದಿನಗಳ ಕೆಲಸದ ಪದ್ಧತಿಯನ್ನು ಪ್ರಯತ್ನಿಸಲು ಪ್ರೋತ್ಸಾಹಿಸಲಾಗುತ್ತಿದೆ. ಅಧ್ಯಕ್ಷ ಫರ್ಡಿನ್ಯಾಂಡ್ ಆರ್ ಮಾರ್ಕೋಸ್ ಜೂನಿಯರ್ ಸೋಮವಾರ ಸರ್ಕಾರಿ ಕಚೇರಿಗಳಿಗೆ ಇದನ್ನು ಅನ್ವಯಿಸಿದ ನಂತರ ಫ್ರಾನ್ಸಿಸ್ ಎಸ್ಕುಡೆರೊ ಈ ನಿರ್ಧಾರವನ್ನು ಬೆಂಬಲಿಸಿದರು. ಈ ಕ್ರಮವು ಕಡಿಮೆ ಪ್ರಯಾಣ, ಕಡಿಮೆ ವೆಚ್ಚ ಮತ್ತು ಕಡಿಮೆ ಸಂಚಾರವನ್ನು ಗುರಿಯಾಗಿರಿಸಿಕೊಂಡಿದೆ. ಇದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ. ►ಬಾಂಗ್ಲಾದೇಶ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹೆಚ್ಚುತ್ತಿರುವ ಇಂಧನ ಬಿಕ್ಕಟ್ಟಿನ ನಡುವೆ ಬಾಂಗ್ಲಾದೇಶ ತನ್ನ ವಿಶ್ವವಿದ್ಯಾಲಯಗಳನ್ನು ಮುಚ್ಚಿದ್ದು, ಇಂಧನವನ್ನು ಪಡಿತರಗೊಳಿಸಲು ಪ್ರಾರಂಭಿಸಿದೆ. ವಿದ್ಯುತ್ ಮತ್ತು ಇಂಧನವನ್ನು ಸಂರಕ್ಷಿಸುವ ಸಲುವಾಗಿ ತುರ್ತು ಕ್ರಮಗಳ ಭಾಗವಾಗಿ ಈದ್ uಲ್-ಫಿತರ್ ರಜೆಯನ್ನು ಮುಂಚಿತವಾಗಿ ಆರಂಭಿಸಿರುವ ಅಧಿಕಾರಿಗಳು ಸೋಮವಾರದಿಂದ ದೇಶಾದ್ಯಂತ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳನ್ನು ಮುಚ್ಚಿದ್ದಾರೆ. ►ದಕ್ಷಿಣ ಕೊರಿಯಾ 30 ವರ್ಷಗಳಲ್ಲಿ ಮೊದಲ ಬಾರಿಗೆ ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆಯ ನಂತರ ದಕ್ಷಿಣ ಕೊರಿಯಾ ದೇಶೀಯ ಇಂಧನ ಬೆಲೆಗಳನ್ನು ಮಿತಿಗೊಳಿಸಲು ಮುಂದಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ದೇಶವು ಹಾರ್ಮುಜ್ ಜಲಸಂಧಿಯನ್ನು ಮೀರಿ ಪರ್ಯಾಯ ಇಂಧನ ಸಾಗಣೆಗಳನ್ನು ಹುಡುಕುತ್ತದೆ ಎಂದು ಹೇಳಿದ್ದಾರೆ. ಅಗತ್ಯವಿದ್ದರೆ 100 ಟ್ರಿಲಿಯನ್ ವಾನ್ ಮೌಲ್ಯದ ಮಾರುಕಟ್ಟೆ ಸ್ಥಿರೀಕರಣ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ►ಜಪಾನ್ ಸಂಭವನೀಯ ಕಚ್ಚಾ ತೈಲ ಬಿಡುಗಡೆಗೆ ಸಿದ್ಧರಾಗುವಂತೆ ಜಪಾನ್ ಸರ್ಕಾರವು ರಾಷ್ಟ್ರೀಯ ತೈಲ ನಿಕ್ಷೇಪಕ್ಕೆ ಸೂಚನೆ ನೀಡಿದೆ ಎಂದು ಅಕಿರಾ ನಾಗತ್ಸುಮಾ ತಿಳಿಸಿದ್ದಾರೆ. ಸಂಭಾವ್ಯ ಬಿಡುಗಡೆಯ ಬಗ್ಗೆ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ. ಅಕಿರಾ ನಾಗತ್ಸುಮಾ ಜಪಾನ್ ನ ವಿರೋಧ ಪಕ್ಷವಾದ ಸೆಂಟ್ರಿಸ್ಟ್ ರಿಫಾರ್ಮ್ ಅಲೈಯನ್ಸ್ ನ ಸದಸ್ಯರಾಗಿದ್ದಾರೆ. ►ಭಾರತದ ಮೇಲೆ ಪರಿಣಾಮ? ಭಾರತವು ವರ್ಷಕ್ಕೆ ಸುಮಾರು 1.8 ರಿಂದ 2 ಶತಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ತೈಲ ಬೆಲೆಯಲ್ಲಿ ಪ್ರತಿ ಬ್ಯಾರೆಲ್ ಗೆ 1 ಡಾಲರ್ ಹೆಚ್ಚಳವಾದರೆ ದೇಶದ ತೈಲ ಆಮದು ಬಿಲ್ ವಾರ್ಷಿಕವಾಗಿ ಸುಮಾರು 2 ಶತಕೋಟಿ ಡಾಲರ್ ವರೆಗೆ ಹೆಚ್ಚಾಗುತ್ತದೆ. ಜಾಗತಿಕ ತೈಲ ಬೆಲೆಗಳು ಗಗನಕ್ಕೇರುತ್ತಿದ್ದರೂ ಸರ್ಕಾರವು ಪೆಟ್ರೋಲ್ ಅಥವಾ ಡೀಸೆಲ್ ಬೆಲೆಯನ್ನು ತಕ್ಷಣ ಹೆಚ್ಚಿಸಲು ಯೋಜಿಸುತ್ತಿಲ್ಲ. ಇದು ಕಳೆದ ಕೆಲವು ವರ್ಷಗಳಿಂದ ಭಾರತ ಅನುಸರಿಸುತ್ತಿರುವ ಅದೇ ನೀತಿಯನ್ನು ಮುಂದುವರಿಸುವಂತಾಗಿದೆ. ಶುಕ್ರವಾರ ಬಿಡುಗಡೆಯಾದ ಮಾಸಿಕ ವರದಿಯಲ್ಲಿ ತೈಲ ಬೆಲೆ ಬ್ಯಾರೆಲ್ ಗೆ 100 ಡಾಲರ್ ಗಿಂತ ಹೆಚ್ಚಾದರೆ ಅದು ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಭಾರೀ ಒತ್ತಡವನ್ನುಂಟುಮಾಡಬಹುದು ಎಂದು ಹಣಕಾಸು ಸಚಿವಾಲಯ ಎಚ್ಚರಿಸಿದೆ. ದುಬಾರಿ ಕಚ್ಚಾ ತೈಲವು ಅತ್ಯಂತ ಸ್ಪಷ್ಟವಾದ ಸಮಸ್ಯೆಯಾಗಿದ್ದರೂ, ಆರ್ಥಿಕತೆಯು ಸ್ಥಿರವಾಗಿರಲು ನೈಸರ್ಗಿಕ ಅನಿಲ ಮತ್ತು ಅಡುಗೆ ಅನಿಲದ ವೆಚ್ಚ ಹಾಗೂ ಪೂರೈಕೆಯೂ ಅಷ್ಟೇ ಮುಖ್ಯ ಎಂದು ವರದಿ ತಿಳಿಸಿದೆ. ಹೆಚ್ಚಿನ ತೈಲ ಬೆಲೆಗಳು ಭಾರತದ ಆರ್ಥಿಕತೆಗೆ ಖಂಡಿತವಾಗಿಯೂ ಸಮಸ್ಯೆಗಳನ್ನು ಉಂಟುಮಾಡಬಹುದಾದರೂ, ದೇಶದಲ್ಲಿ ಇಂಧನದ ಕೊರತೆಯನ್ನು ತಪ್ಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಸರ್ಕಾರಿ ಮೂಲಗಳ ಪ್ರಕಾರ ಭಾರತೀಯ ಸಂಸ್ಕರಣಾಗಾರಗಳು ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸಿರದ ವಿಶ್ವದ ಭಾಗಗಳಿಂದ ಹೆಚ್ಚಿನ ತೈಲವನ್ನು ತ್ವರಿತವಾಗಿ ಖರೀದಿಸುತ್ತಿವೆ. ಈ ಇತರ ಪ್ರದೇಶಗಳು ಈಗಾಗಲೇ ಭಾರತದ ತೈಲದ ಸುಮಾರು 60% ಅನ್ನು ಒದಗಿಸುತ್ತವೆ. ಭಾರತವು ಕಚ್ಚಾ ತೈಲ, ಪೆಟ್ರೋಲ್ ಮತ್ತು ಡೀಸೆಲ್ ನ ಬ್ಯಾಕಪ್ ಸರಬರಾಜುಗಳನ್ನು ಸಹ ನಿರ್ಮಿಸುತ್ತಿದೆ. ಈಗಾಗಲೇ ಟ್ಯಾಂಕರ್ಗಳಲ್ಲಿರುವ ರಷ್ಯಾದ ಕಚ್ಚಾ ತೈಲ ಸೇರಿದಂತೆ ಇತರ ಪ್ರದೇಶಗಳಿಂದ ತೈಲ ಸರಕುಗಳು ಬರುತ್ತಿರುವುದರಿಂದ ಭಾರತದ ಕಚ್ಚಾ ತೈಲ ಮತ್ತು ಅದರಿಂದ ಪಡೆದ ಪ್ರಮುಖ ಇಂಧನಗಳಾದ ಡೀಸೆಲ್ ಮತ್ತು ಪೆಟ್ರೋಲ್ ನ ದಾಸ್ತಾನು ಹೆಚ್ಚುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮಂಗಳವಾರ ದೇಶವು ಆರರಿಂದ ಎಂಟು ವಾರಗಳ ಕಚ್ಚಾ ತೈಲ ಮತ್ತು ಇಂಧನದ ದಾಸ್ತಾನುಗಳನ್ನು ಹೊಂದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇವುಗಳನ್ನು ಇತರ ಪ್ರದೇಶಗಳಿಂದ ಸರಬರಾಜುಗಳನ್ನು ಹೆಚ್ಚಿಸುವುದರೊಂದಿಗೆ ನಿರಂತರವಾಗಿ ಮರುಪೂರಣ ಮಾಡಲಾಗುತ್ತದೆ. ಸಂಸ್ಕರಣಾಗಾರಗಳು ಕಚ್ಚಾ ತೈಲವನ್ನು ಸಂಸ್ಕರಿಸುವುದನ್ನು, ಇಂಧನಗಳನ್ನು ಉತ್ಪಾದಿಸುವುದನ್ನು ಹಾಗೂ ಪಶ್ಚಿಮ ಏಷ್ಯಾವನ್ನು ಹೊರತುಪಡಿಸಿ ಇತರ ಪ್ರದೇಶಗಳಿಂದ ಹೆಚ್ಚಿನ ತೈಲವನ್ನು ಪಡೆಯುವುದನ್ನು ಮುಂದುವರಿಸುವುದರಿಂದ ಈ ದಾಸ್ತಾನುಗಳು ಬದಲಾಗುತ್ತಲೇ ಇರುತ್ತವೆ. ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಸಾಕಷ್ಟು ಅಡುಗೆ ಅನಿಲ ದೊರೆಯುವಂತೆ ಮಾಡಲು ಸರ್ಕಾರವು ಅಗತ್ಯ ಸರಕುಗಳ ಕಾಯ್ದೆ ಎಂಬ ವಿಶೇಷ “ತುರ್ತು ಕಾನೂನು”ವನ್ನು ಬಳಸಿದೆ. ಈ ಕಾನೂನಿನಡಿಯಲ್ಲಿ ತೈಲ ಕಂಪೆನಿಗಳಿಗೆ ಸಾಧ್ಯವಾದಷ್ಟು LPG ಉತ್ಪಾದಿಸಲು ಸರ್ಕಾರ ಆದೇಶಿಸಿದೆ. ಈ ಅನಿಲವು ಮನೆಗಳಲ್ಲಿ ಅಡುಗೆಗಾಗಿ ಮಾತ್ರ ಬಳಸಬೇಕು; ರಾಸಾಯನಿಕಗಳು ಅಥವಾ ಇತರ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸಲು ಬಳಸಬಾರದು ಎಂದು ಸರ್ಕಾರ ಹೇಳಿದೆ. ಭಾರತದ LPG ಆಮದುಗಳಲ್ಲಿ 80% ಕ್ಕಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತವೆ. ಭಾರತದ ಎಲ್ಎನ್ಜಿ ಅರ್ಧಕ್ಕಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತಿರುವುದರಿಂದ ಸರ್ಕಾರವು ಈಗಾಗಲೇ ಕೆಲವು ಕೈಗಾರಿಕೆಗಳಿಗೆ ಅನಿಲ ಸರಬರಾಜನ್ನು ಕಡಿತಗೊಳಿಸಲು ಪ್ರಾರಂಭಿಸಿದೆ. ಸಂಭವನೀಯ ಕೊರತೆಗೆ ಸಿದ್ಧರಾಗಲು ಇದು ಒಂದು ಕ್ರಮವಾಗಿದೆ. ಯುದ್ಧವು ಉಲ್ಬಣಗೊಂಡರೆ ಅನಿಲವನ್ನು ಪಡೆಯುವವರಿಗೆ “ಆದ್ಯತೆಯ ಪಟ್ಟಿಯನ್ನು” ಅನ್ವಯಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಇದರಿಂದ ಅಗತ್ಯ ವಲಯಗಳಲ್ಲಿ ಇಂಧನದ ಕೊರತೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಕೆಲವು ಕೈಗಾರಿಕೆಗಳಲ್ಲಿ ಅನಿಲದ ಬದಲಿಗೆ ಇತರ ರೀತಿಯ ಇಂಧನಗಳನ್ನು ಬಳಸಬೇಕಾಗಬಹುದು ಎಂದು ಹೇಳಲಾಗಿದೆ. ಪ್ರಸ್ತುತ ದೇಶೀಯ ನೈಸರ್ಗಿಕ ಅನಿಲವನ್ನು ಆದ್ಯತೆಯ ಪಟ್ಟಿಯ ಆಧಾರದ ಮೇಲೆ ನಗರ ಅನಿಲ ವಿತರಣೆ, ರಸಗೊಬ್ಬರ ಹಾಗೂ ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ವಲಯಗಳಿಗೆ ಹಂಚಲಾಗುತ್ತಿದೆ.
ಕೊಪ್ಪಳ | ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ಅಗತ್ಯ: ವಿಠ್ಠಲ್ ಜಾಬಗೌಡರ
ಕೊಪ್ಪಳ: ಇಂದಿನ ದಿನಗಳಲ್ಲಿ ಸ್ವಯಂರಕ್ಷಣೆಗಾಗಿ ಕರಾಟೆ ಅತೀ ಅಗತ್ಯವಾದ ಕ್ರೀಡೆಯಾಗಿದ್ದು, ಎಲ್ಲರೂ ಕಲಿಯಬೇಕಾದ ಕ್ರೀಡೆಯಾಗಿದೆ. ಕರಾಟೆಯನ್ನು ಎಲ್ಲ ಶಾಲೆ–ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದು ಕೊಪ್ಪಳ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ ಹೇಳಿದರು. ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರಾಟೆ ಇಂಡಿಯಾ ಆರ್ಗನೈಜೇಷನ್ ಹಾಗೂ ನ್ಯಾಷನಲ್ ಸ್ಪಿರಿಟ್ ಕರಾಟೆ ಅಕಾಡಮಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ ಹಾಗೂ ಬೆಲ್ಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿನಿಯರಿಗೆ ಡ್ರಾಗನ್ ಸ್ಟಿಕ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೈಹಿಕವಾಗಿ ಶಕ್ತಿವಂತರಾಗಲು ಹಾಗೂ ಆರೋಗ್ಯಕರ ಮನಸ್ಸು ಬೆಳೆಸಲು ಕ್ರೀಡೆಗಳು ಸಹಕಾರಿಯಾಗುತ್ತವೆ. ಕರಾಟೆ ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಏಕಾಗ್ರತೆ ಹೆಚ್ಚುತ್ತದೆ ಎಂದು ಹೇಳಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಬೆಲ್ಟ್ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಎಪಿಜೆ ಅಬ್ದುಲ್ ಕಲಾಂ ಸಿಬಿಎಸ್ಸಿ ಶಾಲೆ ಲಿಂಗದಳ್ಳಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲ್ ಹಾಗೂ ಹಿಟ್ನಾಳ ಶಾಲೆಯ ಸುಮಾರು 250 ವಿದ್ಯಾರ್ಥಿನಿಯರು 2025–26ನೇ ಸಾಲಿನಲ್ಲಿ ಪಡೆದ ಕರಾಟೆ ತರಬೇತಿಯ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಅವರಿಗೆ ಬೆಲ್ಟ್ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪ್ರಾಸ್ತಾವಿಕವಾಗಿ ನ್ಯಾಷನಲ್ ಸ್ಟೀರಿಟ್ ಕರಾಟೆ ಅಕಾಡಮಿ ಮುಖ್ಯಸ್ಥ ರಾಜಾಬಕ್ಷಿ ಎಚ್.ವಿ ನೆರವೇರಿಸಿದರು. ಅದ್ಯಕ್ಷತೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ್ ಅಲಿ ವಹಿಸಿದ್ದರು. ವೇದಿಕೆಯ ಮೇಲೆ ನ್ಯಾಷನಲ್ ಶುಟೋಕಾನ್ ಕರಾಟೆ ಅಸೋಶಿಯೇಷನ್ ಕರ್ನಾಟಕದ ಅಧ್ಯಕ್ಷರಾದ ಬಿ.ಬಾಷಾಸಾಹೇಬ, ಹಿರಿಯ ಹೋರಾಟಗಾರ ನಜೀರ್ ಮೂಲಿಮನಿ, ಮಾಜಿ ನಗರಸಭಾ ಸದಸ್ಯ ಮಾನ್ವಿ ಪಾಷಾ, ತರಬೇತುದಾರರಾದ ದೀಪಾ ಮತ್ತು ರೋಹಿಣಿ ಉಪಸ್ತಿತರಿದ್ದರು. ನಿರೂಪಣೆಯನ್ನು ದಾವಲಸಾಬ ಬೆಟಗೇರಿ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ದೇವಪ್ಪ ಕಲ್ಲನ್ನವರ ಮಾಡಿದರು.
ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ : ಎಚ್.ಡಿ.ದೇವೇಗೌಡ
ಬೆಂಗಳೂರು : ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಕಾರ್ಯಗತ ಮಾಡಲಾಗದೇ ರಾಜ್ಯ ಸರಕಾರವು ಕೇಂದ್ರ ಸರಕಾರವನ್ನು ಅನಗತ್ಯವಾಗಿ ದೂರುತ್ತಿದೆ. ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದೂರಿದ್ದಾರೆ. ಸೋಮವಾರ ರಾಜ್ಯಸಭೆಯಲ್ಲಿ ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ. ಅದನ್ನು ಮರೆಮಾಚಿಕೊಳ್ಳಲು ಕೇಂದ್ರವನ್ನು ದೂರುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರದ ನಿರ್ಲಕ್ಷದಿಂದ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಟೀಕಿಸಿದರು. ಎತ್ತಿನಹೊಳೆ ಯೋಜನೆ ಕಾರ್ಯಗತ ಮಾಡುವಲ್ಲಿ ಸರಕಾರ ಪರಿಸರಕ್ಕೆ ಧಕ್ಕೆ ತಂದಿದೆ ಹಾಗೂ ಕಾನೂನು, ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆಗ ಶೆಟ್ಟರ್ ಅವರು ರಾಜ್ಯದ ಸಿಎಂ ಆಗಿದ್ದರು, ಆಗ ಆ ಯೋಜನೆಯ ಅಂದಾಜು ವೆಚ್ಚ 8ಸಾವಿರ ಕೋಟಿ ರೂ. ಇದೀಗ ಅದು 33ಸಾವಿರ ಕೋಟಿ ರೂ.ಮೀರಿದೆ. ಈವರೆಗೂ ಒಂದು ಹನಿ ನೀರು ಹರಿದಿಲ್ಲ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ತೊಟ್ಟು ನೀರು ಹೋಗಿಲ್ಲ. ಅಲ್ಲದೆ, ಆ ಯೋಜನೆ ಕಾರ್ಯಗತ ಆಗುತ್ತಿರುವ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ಹತ್ತಿರದಲ್ಲಿರುವ ಅರಸೀಕರೆಗೆ ನೀರು ಬಂದಿಲ್ಲ. ಈ ಬಗ್ಗೆ ನಾನು ಪುಟಗಟ್ಟಲೆ ಮಾಹಿತಿ ಇಟ್ಟುಕೊಂಡು ಮಾತನಾಡಬಲ್ಲೆ ಎಂದು ಅವರು ಹೇಳಿದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಕೊಡಬೇಕೆಂದು ಸರಕಾರ ಎತ್ತಿಹೊಳೆ ಯೋಜನೆ ಮೂಲಕ ರೂಪಿಸಿತ್ತೋ, ಈಗ ಆ ಯೋಜನೆ ಕಾರ್ಯಗತವಾಗದೇ ಅದೇ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರನ್ನು 3 ಹಂತಗಳಲ್ಲಿ ಶುದ್ಧೀಕರಿಸದೆ ಮಲೀನ ನೀರನ್ನು ಹರಿಸುತ್ತಿದೆ. ಆ ನೀರು ಮಾನವ ಬಳಕೆ ಯೋಗ್ಯವಲ್ಲದ್ದು. ಇದರ ಪರಿಣಾಮ ಆ ಭಾಗದಲ್ಲಿ ಬೆಳೆಯುತ್ತಿರುವ ಬೆಳೆಗಳು-ತರಕಾರಿಗಳು ವಿಷಕಾರಿಯಾಗುತ್ತಿದ್ದು ಅವು ಸೇವನೆಗೆ ಯೋಗ್ಯವಲ್ಲದ್ದಾಗಿವೆ. ಜನರ ಜೀವದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಅವರು ಟೀಕಿಸಿದರು.
ಯಾದಗಿರಿ | ಹೃದಯಾಘಾತದಿಂದ ಪೌರ ಕಾರ್ಮಿಕ ಮೃತ್ಯು
ಯಾದಗಿರಿ: ನಗರಸಭೆಯ ಪೌರ ಕಾರ್ಮಿಕನೊಬ್ಬ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಎದೆನೋವಿನಿಂದ ಬಳಲಿ, ನಂತರ ಸ್ವಲ್ಪ ಸಮಯದಲ್ಲಿಯೇ ಹೃದಯಾಘಾತಕ್ಕೆ ಬಲಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿ ಪಿಲ್ಲಪ್ಪ ಬೊಮ್ಮನ್ ಮೃತಪಟ್ಟ ಪೌರ ಕಾರ್ಮಿಕರಾಗಿದ್ದಾರೆ. ಸೋಮವಾರ ಬೆಳಗ್ಗೆ ಎಂದಿನಂತೆ ಕಸ ಎತ್ತುವ ಕೆಲಸಕ್ಕೆ ಬಂದಿದ್ದ ಪಿಲ್ಲಪ್ಪ ಅವರಿಗೆ ಅಚಾನಕ್ ಸುಸ್ತು ಕಾಣಿಸಿಕೊಂಡು ಎದೆನೋವು ಉಂಟಾಗಿದೆ. ಬಳಿಕ ಅವರ ತಮ್ಮ ಮನೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ ಸ್ವಲ್ಪ ಸಮಯದಲ್ಲೇ ನೋವು ಹೆಚ್ಚಾದ ಕಾರಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೃತ ಪಿಲ್ಲಪ್ಪ ಅವರಿಗೆ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಮಾ.10ರಂದು ಅವರ ಅಂತ್ಯಕ್ರಿಯೆ ನಡೆಯಲಿದೆ.
ಇರಾನ್ನ ಮತ್ತೊಂದು ಬ್ಯಾಲಿಸ್ಟಿಕ್ ಕ್ಷಿಪಣಿ ಹೊಡೆದುರುಳಿಸಿದ ನೇಟೊ
ಅಂಕಾರ, ಮಾ.9: ಪೂರ್ವ ಮೆಡಿಟರೇನಿಯನ್ನಲ್ಲಿ ನೇಟೋದ ವಾಯು ರಕ್ಷಣಾ ವ್ಯವಸ್ಥೆಯು ಇರಾನ್ನಿಂದ ಪ್ರಯೋಗಿಸಲಾದ ಎರಡನೇ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದೆ. ಕ್ಷಿಪಣಿಯು ಟರ್ಕಿಯ ವಾಯುಪ್ರದೇಶದಲ್ಲಿದ್ದಾಗ ಹೊಡೆದುರುಳಿಸಲಾಗಿದ್ದು ಮುಲಾಜಿಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಟರ್ಕಿ ಸೋಮವಾರ ಎಚ್ಚರಿಸಿದೆ. ಆಗ್ನೇಯ ಗಾಜಿಯಾಂಟೆಪ್ ಪ್ರಾಂತದಲ್ಲಿ ಕ್ಷಿಪಣಿಯ ಅವಶೇಷ ಪತನಗೊಂಡಿದ್ದು ಅದೃಷ್ಟವಶಾತ್ ಯಾವುದೇ ಸಾವು- ನೋವು ವರದಿಯಾಗಿಲ್ಲ. ಇದಕ್ಕೆ ಸೂಕ್ತ ಪ್ರತಿಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಟರ್ಕಿ ಎಚ್ಚರಿಕೆ ನೀಡಿದೆ. ಇರಾನ್ನಲ್ಲಿನ ಯುದ್ದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು: ಪ್ರಮುಖ ನೇಟೊ ನೆಲೆಯ ಸಮೀಪದ ಟರ್ಕಿಯ ನಗರ ಅದಾನದಲ್ಲಿರುವ ತನ್ನ ಕಾನ್ಸುಲೇಟ್ ಕಚೇರಿಯ ಎಲ್ಲಾ `ಅನಿವಾರ್ಯವಲ್ಲದ' ಸಿಬ್ಬಂದಿಗಳು ತಕ್ಷಣ ಕಾನ್ಸುಲೇಟ್ನಿಂದ ನಿರ್ಗಮಿಸುವಂತೆ ಅಮೆರಿಕ ಸಲಹೆ ನೀಡಿದೆ. ಜೊತೆಗೆ, ದಕ್ಷಿಣ ಟರ್ಕಿಯಲ್ಲಿರುವ ಎಲ್ಲಾ ಅಮೆರಿಕನ್ನರು ಅಲ್ಲಿಂದ ತೆರಳುವಂತೆ ಬಲವಾಗಿ ಸಲಹೆ ನೀಡುವುದಾಗಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಯುಎಇಯ ಸಶಸ್ತ್ರ ಪಡೆಗಳ ಇಬ್ಬರು ಯೋಧರು ಸೋಮವಾರ ಹೆಲಿಕಾಪ್ಟರ್ ದುರಂತದಲ್ಲಿ ಸಾವು. ತಾಂತ್ರಿಕ ವೈಫಲ್ಯದಿಂದ ದುರಂತ ಸಂಭವಿಸಿರುವುದಾಗಿ ಯುಎಇ ಹೇಳಿಕೆ. ಸೋಮವಾರ ಇರಾನ್ ಪ್ರಯೋಗಿಸಿದ 15 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ 12 ಅನ್ನು ಹೊಡೆದುರುಳಿಸಿದ್ದು ಮೂರು ಕ್ಷಿಪಣಿಗಳು ಸಮುದ್ರಕ್ಕೆ ಪತನಗೊಂಡಿರುವುದಾಗಿ ಯುಎಇ ವಾಯು ರಕ್ಷಣಾ ವಿಭಾಗ ಹೇಳಿದೆ. ಯುದ್ದ ಪ್ರಾರಂಭಗೊಂಡಂದಿನಿಂದ 253 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ 233 ಅನ್ನು, 1440 ಡ್ರೋನ್ಗಳಲ್ಲಿ 1,359 ಅನ್ನು ಮತ್ತು 8 ಕ್ರೂಸ್ ಕ್ಷಿಪಣಿಗಳನ್ನು ಯುಎಇ ಹೊಡೆದುರುಳಿಸಲಾಗಿದೆ. ಇದರಲ್ಲಿ 4 ಮಂದಿ ಮೃತಪಟ್ಟಿದ್ದು, 117 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇರಾನ್ನ ಯಾವುದೇ ನಾಯಕರನ್ನು ಗುರಿಯಾಗಿಸುವುದನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ. ಇರಾನ್ನ ನೂತನ ಪರಮೋಚ್ಛ ನಾಯಕ ಮೊಜ್ತಾಬ ಖಮೈನಿಯನ್ನು ಗುರಿಯಾಗಿಸಿ ದಾಳಿ ನಡೆಸುವ ಇಸ್ರೇಲ್ನ ಬೆದರಿಕೆಗೆ ಪ್ರತಿಕ್ರಿಯಿಸಿದ ಚೀನಾ ` ಮೊಜ್ತಾಬ ಖಾಮಿನೈಯನ್ನು ನೇಮಕಗೊಳಿಸುವುದು ಇರಾನ್ನ ಆಂತರಿಕ ವಿಷಯ. ಯಾವುದೇ ನೆಪ ಹೇಳಿ ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಮಧ್ಯ ಪ್ರವೇಶಿಸುವುದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ. ಇರಾನ್ನ ಸಾರ್ವಭೌಮತೆ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ | ಭಾರತೀಯ ಶೇರು ಮಾರುಕಟ್ಟೆಯಲ್ಲಿ ರಕ್ತಪಾತ: 30 ಲಕ್ಷ ಕೋಟಿ.ರೂ.ಕಳೆದುಕೊಂಡ ಹೂಡಿಕೆದಾರರು
ಹೊಸದಿಲ್ಲಿ,ಮಾ.9: ಫೆ.28ರಂದು ಅಮೆರಿಕ,ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭಗೊಂಡಾಗಿನಿಂದ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನೇ ದಿನೇ ಉಲ್ಬಣಗೊಳ್ಳುತ್ತಲೇ ಇದೆ. ಪರಿಣಾಮವಾಗಿ ಹೂಡಿಕೆದಾರರ 30 ಲಕ್ಷ ಕೋಟಿ.ರೂ.ಸಂಪತ್ತು ಕರಗಿ ಹೋಗಿದೆ. ಹೆಚ್ಚುತ್ತಿರುವ ಕಚ್ಚಾತೈಲ ಬೆಲೆಗಳು, ವಿದೇಶಿ ನಿಧಿಯ ಹೊರಹರಿವು ಮತ್ತು ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ಭಾರತದ ಪಾಲಿಗೆ ವ್ಯಾಪಕ ಆರ್ಥಿಕ ಕುಸಿತದ ಭೀತಿಯಿಂದ ಹೂಡಿಕೆದಾರರು ಕಂಗಾಲಾಗಿದ್ದಾರೆ. ಭಾರತೀಯ ಶೇರು ಮಾರುಕಟ್ಟೆಗಳ ಸೂಚ್ಯಂಕಗಳು ನಿರಂತರವಾಗಿ ಕುಸಿಯುತ್ತಲೇ ಇವೆ. ಸೋಮವಾರ ಒಂದೇ ದಿನ ಮಾರುಕಟ್ಟೆ ಬಂಡವಾಳೀಕರಣ 12.78 ಲಕ್ಷ.ಕೋಟಿ.ರೂ.ಗಳಷ್ಟು ಕರಗಿದೆ. ದಿನದ ವಹಿವಾಟಿನ ನಡುವೆ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 2000 ಕ್ಕೂ ಅಧಿಕ ಅಂಶಗಳ ಕುಸಿತವನ್ನು ದಾಖಲಿಸಿತ್ತು,ಆದಾಗ್ಯೂ ನಂತರ ಚೇತರಿಸಿಕೊಂಡು ದಿನದ ಅಂತ್ಯದಲ್ಲಿ 1352.74 ಅಂಶಗಳ (ಶೇ.1.71) ಕುಸಿತದೊಂದಿಗೆ 77,566.16ರಲ್ಲಿ ಮುಕ್ತಾಯಗೊಂಡಿದೆ. ಎನ್ಎಸ್ಇ ಸೂಚ್ಯಂಕ ನಿಫ್ಟಿ 50 ಮಧ್ಯಂತರದ ವಹಿವಾಟಿನಲ್ಲಿ 700ಕ್ಕೂ ಅಧಿಕ ಅಂಶಗಳಷ್ಟು ಕುಸಿದಿದ್ದು,ನಂತರ ಚೇತರಿಸಿಕೊಂಡು 422.40 ಅಂಶಗಳ (ಶೇ.1.73) ಕುಸಿತದೊಂದಿಗೆ 24,028.05ರಲ್ಲಿ ದಿನದಾಟವನ್ನು ಮುಗಿಸಿದೆ. ಇಂದಿನ ಕುಸಿತ ಶೇರು ಮಾರುಕಟ್ಟೆಯು ಈ ವರ್ಷ ಅನುಭವಿಸಿದ ಭಾರೀ ಹೊಡೆತಗಳಲ್ಲಿ ಒಂದಾಗಿದೆ. ಇತ್ತೀಚಿನ ಭೂರಾಜಕೀಯ ಉಲ್ಬಣತೆಯ ಬಳಿಕ ಲಿಸ್ಟ್ ಆಗಿರುವ ಎಲ್ಲ ಕಂಪೆನಿಗಳ ಸಂಯೋಜಿತ ಮಾರುಕಟ್ಟೆ ಬಂಡವಾಳೀಕರಣವು ತೀವ್ರವಾಗಿ ಕುಗ್ಗಿರುವುದನ್ನು ಬಾಂಬೆ ಶೇರು ವಿನಿಮಯ ಕೇಂದ್ರದ ದತ್ತಾಂಶಗಳು ತೋರಿಸಿವೆ.
ದಿಲ್ಲಿಯಲ್ಲಿ ಯಾರನ್ನು ಭೇಟಿ ಮಾಡುತ್ತೇನೆ ಎಂದು ಹೇಳಲು ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ದಿಲ್ಲಿ : ಹೊಸದಿಲ್ಲಿಯಲ್ಲಿ ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸೋಮವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದಿಲ್ಲಿಗೆ ಬಂದ ಮೇಲೆ ನಾನು ಎಲ್ಲರನ್ನು ಭೇಟಿ ಮಾಡುತ್ತೇನೆ. ನೀವುಗಳು(ಮಾಧ್ಯಮಗಳು), ಡಿ.ಕೆ ದಿಲ್ಲಿಗೆ ಹೋದರೂ ನಾಯಕರು ಸಮಯ ನೀಡಿಲ್ಲ, ಕಾಯುತ್ತಾ ಕೂತಿದ್ದಾರೆ ಎಂದು ವರದಿ ಮಾಡುತ್ತೀರಲ್ಲಾ, ಹಾಗೇ ಕಾಯುತ್ತಾ ಕೂತಿರುವೆ ಎಂದರು. ಪುಣೆಯಲ್ಲಿರುವ ನನ್ನ ಸ್ನೇಹಿತರ ಮನೆ ಮದುವೆ ಕಾರ್ಯಕ್ರಮವಿತ್ತು. ಹೀಗಾಗಿ ನಿನ್ನೆ ದಿಲ್ಲಿಗೆ ಬಂದಿದ್ದೆ. ಇಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿದ್ದೆ. ಇಂದು ಅನೇಕ ಸಭೆಗಳಿವೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮವಿದೆ ಎಂದು ಶಿವಕುಮಾರ್ ಹೇಳಿದರು. ನಾಳೆಗೆ ನೀವು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಳ್ಳುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ, ಹೌದು, ನಾಳೆಗೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ. ಮತ್ತೊಂದು ದಿನ ನಮ್ಮ ಪರಾಜಿತ ಅಭ್ಯರ್ಥಿಗಳು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಭೋಜನಕೂಟ ಹಮ್ಮಿಕೊಳ್ಳಲಾಗುವುದು. ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಭೋಜನಕೂಟ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು. ಖಾಸಗಿ ಕಾರ್ಯಕ್ರಮ ಎಂದರೂ ಡಿ.ಕೆ.ಶಿವಕುಮಾರ್ ದಿಲ್ಲಿ ಭೇಟಿ ಎಂದರೆ ವಿಭಿನ್ನ ಚರ್ಚೆಗಳೆ ಸಾಗುತ್ತವೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಾವ ವಿಭಿನ್ನ ಚರ್ಚೆನೂ ಬೇಡ. ನಾಳೆ (ಮಂಗಳವಾರ) ಭೋಜನಕೂಟವಿದೆ, ನಾಡಿದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇದೆ ಎಂದು ತಿಳಿಸಿದರು. ಅಸ್ಸಾಂ ಚುನಾವಣೆಗೆ 43 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 43 ಅಭ್ಯರ್ಥಿಗಳ ಪಟ್ಟಿ ಈಗಾಗಲೆ ಬಿಡುಗಡೆಯಾಗಿದ್ದು, ಇಂದು ಮತ್ತೊಂದು ಸ್ಕ್ರೀನಿಂಗ್ ಸಮಿತಿ ಸಭೆ ಇದೆ. ಈ ಸಮಿತಿಯಲ್ಲಿ ನಾನು ಇಲ್ಲ ಎಂದು ತಿಳಿಸಿದರು.
ಕಲಬುರಗಿ | ನಾವೀನ್ಯ ಬೋಧನಾ ತಂತ್ರಗಳಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು: ಪ್ರೊ. ಶುಭಾಂಗಿ
ಕಲಬುರಗಿ: ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಕಾಲೇಜುಗಳ ಅಧ್ಯಾಪಕರು ನಾವೀನ್ಯ ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು. ವಿಷಯದ ಅರಿವು, ಆಸಕ್ತಿ, ಸಕ್ರಿಯ ಕಲಿಕೆ ಹಾಗೂ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹ ನೀಡಬೇಕು ಎಂದು ಕಲಬುರಗಿ ವಿಟಿಯು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಪ್ರೊ. ಶುಭಾಂಗಿ ಡಿ.ಸಿ. ಸಲಹೆ ನೀಡಿದರು. ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೂಸಾ/ಪಿಎಂ-ಉಷಾ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯ ಬೋಧನಾ ತಂತ್ರಗಳು ಮತ್ತು ಪಠ್ಯಕ್ರಮ ಚೌಕಟ್ಟು” ಕುರಿತ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್ಡಿಪಿ) ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಬದಲಾಗುತ್ತಿರುವ ಶೈಕ್ಷಣಿಕ ಕ್ಷೇತ್ರಕ್ಕೆ ಅನುಗುಣವಾಗಿ ಶಿಕ್ಷಣದ ಬೆಳವಣಿಗೆ, ಪಠ್ಯಕ್ರಮ ಚೌಕಟ್ಟು, ಬೋಧನಾ ವಿಧಾನ ಹಾಗೂ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ವಿಷಯದ ಗ್ರಹಿಕೆಗೆ ಜೊತೆಗೆ ಎಐ ಹಾಗೂ ರೋಬೋಟ್ ತಂತ್ರಜ್ಞಾನಗಳ ಅರಿವು ಮೂಡಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಎಂದು ಹೇಳಿದರು. ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ನ ತರಬೇತಿ ಅಧಿಕಾರಿ ಜೋಶುವಾ ಡೇನಿಯಲ್ ಮಾತನಾಡಿ, ವೃತ್ತಿಪರ ಸಂಸ್ಥೆಗಳ ಅಗತ್ಯ ಕೌಶಲ್ಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಕಲಿಕೆ ವಿಧಾನಗಳ ನಡುವಿನ ಅಂತರ ಕಡಿಮೆಗೊಳಿಸಲು ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯ, ವೃತ್ತಿ ಜ್ಞಾನ ಹಾಗೂ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದರು. ಉದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿಗಳು ಸಜ್ಜಾಗಲು ಅಧ್ಯಾಪಕರು ಹೊಸ ಜ್ಞಾನ ಮತ್ತು ತಂತ್ರಜ್ಞಾನ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಜೆಕಾರ್ತಿಕೇಯ ತರಬೇತಿ ಸಲಹಾ ಸಂಸ್ಥೆಯ ಸಿಇಓ ಡಾ. ಅಭಯ್ ಸರ್ದೇಶ್ಪಾಂಡೆ ಮಾತನಾಡಿ, ಇಂದಿನ ಗುಣಮಟ್ಟದ ಶಿಕ್ಷಣದೊಂದಿಗೆ ಮಾನವನ ನಡವಳಿಕೆಯಲ್ಲಿ ಬದಲಾವಣೆ ಅಗತ್ಯ. ಈ ತರಬೇತಿಯಿಂದ ಶಿಕ್ಷಕರು ಪ್ರಾಯೋಗಿಕ ಹಾಗೂ ಸಂವಾದಾತ್ಮಕ ಬೋಧನೆಗೆ ಒತ್ತು ನೀಡುವ ಮೂಲಕ ಶೈಕ್ಷಣಿಕ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಬೋಧನೆ ಶಿಕ್ಷಕರ ವೃತ್ತಿ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಮಾನ್ಯತೆ ಹಾಗೂ ಉನ್ನತ ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸಲು ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದರು. ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಹೂವಿನಭಾವಿ ಬಾಬಣ್ಣ, ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಜಿ. ಕಣ್ಣೂರು, ಹಣಕಾಸು ಅಧಿಕಾರಿ ಜಯಾಂಬಿಕಾ ಉಪಸ್ಥಿತಿರಿದ್ದರು. ಅನ್ವಯಿಕ ವಿದ್ಯುನ್ಮಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಆರ್. ಎಲ್ ರಾಯಭಾಗಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ. ರಮೇಶ್ ಲಂಡನ್ಕರ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಪ್ರೊ. ಮಲಶೆಟ್ಟಿ, ಡಾ. ಸುರೇಶ್ ಜಂಗೆ ಹಾಗೂ ಡಾ. ಟಿ. ನಿಂಗಣ್ಣ ಅತಿಥಿಗಳನ್ನು ಪರಿಚಯಿಸಿದರು. ಸಂಗೀತಾ ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಎಂ. ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಸ್ನಾಕತೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಮಹಾವಿದ್ಯಾಲಯಗಳ ಅಧ್ಯಾಪಕರು ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಸದಸ್ಯರಾದ ರೇಖಾ ಕುಮಾರಿ, ಜಾಬೆಜ್, ಪೌಜಿತ ಭಾಗವಹಿಸಿದ್ದರು.
ಬೈಕ್ -ಸ್ಕೂಟರ್ ಮಧ್ಯೆ ಅಪಘಾತ: ಓರ್ವ ಮೃತ್ಯು, ಇಬ್ಬರಿಗೆ ಗಾಯ
ಕಾಪು: ಕಾಪು ಎ1 ಹೋಟೆಲ್ ಜಂಕ್ಷನ್ ಬಳಿ ಬೈಕ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಎಲ್ಲೂರು ಗ್ರಾಮದ ಅದಮಾರು ಕಾಲೇಜು ಬಳಿ ನಿವಾಸಿ ಜಯಂತ್ ಎಂಬವರ ಮಗ ಸೂರಜ್(23) ಎಂದು ಗುರುತಿಸಲಾಗಿದೆ. ಬೈಕ್ನ ಹಿಂಬದಿ ಸವಾರ ಆದೀಶ್ ಹಾಗೂ ಸ್ಕೂಟರ್ ಸವಾರ ಉಮೇಶ್ ಎಂಬವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡುಬಿದ್ರೆಯ ಸುಜಲಾನ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಸೂರಜ್, ಮಾ.8ರಂದು ರಾತ್ರಿ ಕೆಲಸ ಮುಹಿಸಿ ಕಟಪಾಡಿಗೆ ಹೋಗಿದ್ದು, ವಾಪಸ್ಸು ಬೈಕ್ನಲ್ಲಿ ಆದೀಶ್ ಎಂಬವರನ್ನು ಕೂರಿಸಿಕೊಂಡು ಬರುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಸ್ಕೂಟರ್ ಢಿಕ್ಕಿ ಹೊಡೆಯತ್ತೆನ್ನಲಾಗಿದೆ. ಇದರಿಂದ ಮೂವರು ಸವಾರರು ರಸ್ತೆಗೆ ಬಿದ್ದು ಗಾಯಗೊಂಡರು. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್ ಅವರ ಬ್ರೈನ್ ಡೆಡ್ ಆಗಿದ್ದು, ಮಾ.9ರಂದು ಬೆಳಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭ್ರೂಣ ಹತ್ಯೆ ತಡೆಗೆ ಎಲ್ಲ ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿ ನೇಮಕ : ದಿನೇಶ್ ಗುಂಡೂರಾವ್
‘10ನೇ ವಾರದಲ್ಲೇ ಗರ್ಭಿಣಿಯರ ಕಡ್ಡಾಯ ನೋಂದಣಿ’
ಆಳಂದ | ಹೂಗಾರ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ: ಪ್ರಕಾಶ ಫುಲಾರ
ಆಳಂದ: ತೀರಾ ಹಿಂದುಳಿದ ಹೂಗಾರ ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆ ಬಲಪಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಾಲೂಕು ಹೂಗಾರ ಸಮಾಜದ ನೂತನ ಅಧ್ಯಕ್ಷ ಪ್ರಕಾಶ ಬಿ. ಫುಲಾರ ಕರೆ ನೀಡಿದರು. ಪಟ್ಟಣದ ಶ್ರೀ ಭಕ್ತಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನಡೆದ ತಾಲೂಕು ಹೂಗಾರ ಸಮಾಜದ ಸಭೆಯಲ್ಲಿ ಘಟಕದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಮಾಜ ಬಾಂಧವರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಮಾಜದ ಕುಂದುಕೊರತೆಗಳ ನಿವಾರಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಸಂಘಟಿತ ಪ್ರಯತ್ನ ಅಗತ್ಯವಿದೆ. ಇದಕ್ಕಾಗಿ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಸಮಾಜವನ್ನು ಇನ್ನಷ್ಟು ಶಕ್ತಿಯುತವಾಗಿಸಬಹುದು ಎಂದು ಅಭಿಪ್ರಾಯಪಟ್ಟರು. ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸಮಾಜದವರು ಸಮರ್ಪಕವಾಗಿ ಪಡೆದುಕೊಳ್ಳಬೇಕು. ಇದರಿಂದ ಸಮಾಜದವರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಸಮಾಜದ ಯಾವುದೇ ಸಮಸ್ಯೆಗಳು ಅಥವಾ ಅಗತ್ಯತೆಗಳಿದ್ದರೆ ಅವನ್ನು ಗಮನಕ್ಕೆ ತಂದರೆ ಪರಿಹಾರಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಗೌರವಾಧ್ಯಕ್ಷ ಚಂದ್ರಕಾಂತ್ ಬಿ. ಫುಲಾರ ಅವರು, ಸಮಾಜದ ಏಕತೆ ಹಾಗೂ ಸಂಘಟನೆ ಬಲವಾಗಿದ್ದರೆ ಮಾತ್ರ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಹಿರಿಯ ಸಲಹೆಗಾರ ಡಾ. ಮೋಹನ ಜಿಡ್ಡಿಮನಿ ಹಾಗೂ ಉಪಾಧ್ಯಕ್ಷ ಹಣಮಂತ ಅಂಬೇವಾಡ ಅವರು ಸಹ ಮಾತನಾಡಿದರು. ನೂತನ ಪದಾಧಿಕಾರಿ ಆಯ್ಕೆ : ಪ್ರಕಾಶ ಬಾಬುರಾವ್ ಫುಲಾರ (ಅಧ್ಯಕ್ಷ), ಚಂದ್ರಕಾಂತ ಫುಲಾರ ಆಳಂದ (ಗೌರವ ಅಧ್ಯಕ್ಷ), ಹಣಮಂತ ಹೂಗಾರ, ಮಲ್ಲಿಕಾರ್ಜುನ ಮಾನಾಜಿ, ಶರಣಬಸಪ್ಪ ಹೂಗಾರ ಮಾಡಿಯಾಳ, ಪ್ರಶಾಂತ ಬಿರಾದಾರ (ಉಪಾಧ್ಯಕ್ಷ), ಗಂಗಾಧರ ಆರ್. ಪೂಜಾರಿ ಹಿತಲಶಿರೂರ, ಪುರುಶೋತಮ ಮಂಟಗಿ ಇನಾಮದಾರ (ಖಜಾಂಚಿ), ಭೀಮಾಶಂಕರ ಎಸ್. ಹೂಗಾರ (ಸಂಘಟನಾ ಕಾರ್ಯದರ್ಶಿ), ಸಿದ್ಧರಾಮ ಜಿ. ಹೂಗಾರ (ಸಹ ಕಾರ್ಯದರ್ಶಿ), ಸೈಬಣ್ಣ ಬಿ. ಹೂಗಾರ (ಕಾರ್ಯದರ್ಶಿ), ಡಾ. ಮೋಹನ ಜಿಡಿಮನಿ ಮತ್ತು ಚಂದ್ರಕಾಂತ ಹಿತ್ತಲಶಿರೂರ (ಹಿರಿಯ ಸಲಹೆಗಾರ), ಅಲ್ಲದೆ, ಸೋಮನಾಥ ಎ. ಫುಲಾರ, ಸಂಜುಕುಮಾರ ಪುಲಾರ, ಸಿದ್ಧು ಹೂಗಾರ, ವಿಶ್ವನಾಥ ಫುಲಾರ, ಬಸವನರಾಜ ಎಂ. ಹೂಗಾರ, ಸೋಮನಾಥ ಕೆ. ಡಾಂಗೆ, ಸಂತೋಷ ಎಸ್. ಹಿರೋಳಿ, ನಾಗೇಂದ್ರಪ್ಪ ಕೊಡಲಹಂಗರಗಾ, ಗಜಾನನ ಕೆ. ಅವಟೆ, ಕಮಲೇಶ ಕೆ. ಅವಟೆ, ಮಹಾದೇವ ಬಾಳಿ ಸೇರಿದಂತೆ ಇನ್ನಿತರರು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಅಕ್ರಮ ಅನ್ನಭಾಗ್ಯದ ಅಕ್ಕಿ ದಾಸ್ತಾನು: ಇಬ್ಬರು ಆರೋಪಿಗಳ ಬಂಧನ
ಬೈಂದೂರು, ಮಾ.9: ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಉಚಿತ ಅನ್ನ ಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯಂತೆ ಬೈಂದೂರು ಆಹಾರ ನಿರೀಕ್ಷಕ ವಿನಯ ಕುಮಾರ್ ಎಂಬವರು ಪೊಲೀಸರೊಂದಿಗೆ ದಾಳಿ ನಡೆಸಿ, ಅಕ್ರಮವಾಗಿ ಅಕ್ಕಿ ದಾಸ್ತಾನು ಇರಿಸಿದ್ದ ಅಬ್ದುಲ್ ಮಜೀದ ಮತ್ತು ಐಶಾ ವಾಸೀಂ ಎಂಬವರು ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಉಚಿತ ಅನ್ನ ಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿಯನ್ನು ದಾಸ್ತಾನು ಇರಿಸಿರುವುದು ಕಂಡುಬಂದಿದೆ. ಆರೋಪಿಗಳಿಂದ ಒಟ್ಟು 400 ಕೆಜಿ ತೂಕದ 9200ರೂ. ಮೌಲ್ಯದ 15 ಚೀಲ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಡ್ಜ್ನ ಮಹಡಿಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ
ಮಣಿಪಾಲ, ಮಾ.9: ಅನಾರೋಗ್ಯದಿಂದ ಹಬಳಲುತ್ತಿದ್ದ ಚಿತ್ರದುರ್ಗದ ವ್ಯಕ್ತಿಯೊಬ್ಬರು ಮಣಿಪಾಲದಲ್ಲಿ ತಂಗಿದ್ದ ಲಾಡ್ಜ್ನ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಮೃತರನ್ನು ಚಿತ್ರದುರ್ಗದ ಜಗದೀಶಪ್ಪ ಜೆ. ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಫೆ.20ರಂದು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಬಂದು ಮಣಿಪಾಲ ಈಶ್ವರ ನಗರ ಲಾಡ್ಜ್ನ 2ನೇ ಮಹಡಿಯ ರೂಮ್ನಲ್ಲಿ ತಂಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡ ಇವರು, 2ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು, ಮಾ.8ರಂದು ರಾತ್ರಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ನುಗ್ಗಿ 5.35 ಲಕ್ಷ ರೂ. ಮೌಲ್ಯದ ನಗನಗದು ಕಳವು: ಪ್ರಕರಣ ದಾಖಲು
ಕೋಟ, ಮಾ.9: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಮಾ.8ರಂದು ರಾತ್ರಿ ವೇಳೆ ಬೇಳೂರು ಗ್ರಾಮದ ಗುಳ್ಳಾಡಿ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಸತೀಶ ಶೆಟ್ಟಿ ಎಂಬವರು ರಾವುತೇಶ್ವರ ದೇವಸ್ಥಾನದ ಗೆಂಡೋತ್ಸವ ಕಾರ್ಯಕ್ರಮಕ್ಕೆ ಹೆಂಡತಿ ಹಾಗೂ ಮಗಳೊಂದಿಗೆ ಮನೆಗೆ ಬೀಗ ಹಾಕಿ ಹೋಗಿದ್ದು ಪೂಜೆ ಮುಗಿಸಿ ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮುಖ್ಯ ದ್ವಾರದ ಬೀಗವನ್ನು ಕತ್ತಿಯಿಂದ ಮುರಿದು, ಒಳನುಗ್ಗಿದ ಕಳ್ಳರು, ಕೋಣೆಯ ಕಾಪಾಟಿಲ್ಲಿದ್ದ 2,35,000 ರೂ. ನಗದು ಮತ್ತು ಚಿನ್ನದ ಬ್ರಾಸ್ ಲೈಟ್ ಹಾಗೂ ಕಿವಿಯ ಬೆಂಡೋಲೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 5,35,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು | ನರೇಗಾದಡಿ ಕೆಲಸ ನೀಡದ ಆರೋಪ : ಗ್ರಾಕೂಸ್ ಸಂಘಟನೆಯಿಂದ ಪ್ರತಿಭಟನೆ
ರಾಯಚೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎಂಎನ್ಆರ್ಇಜಿಎ) ಕೂಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಗ್ರಾಮೀಣ ಭಾಗದ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ (ಗ್ರಾಕೂಸ್) ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕೂಲಿಕಾರರು ಧರಣಿ ನಡೆಸಿದರು. ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವುದೇ ಇಲ್ಲ ಎಂದು ಅವರು ಆರೋಪಿಸಿದರು. ಜೊತೆಗೆ 15 ದಿನಗಳಾದರೂ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೆಲಸ ನೀಡಲಾಗುತ್ತಿಲ್ಲ ಎಂದು ದೂರಿದರು. ಜಿಲ್ಲಾ ಪಂಚಾಯಿತಿಯಿಂದ ಸೂಚನೆ ಬಂದಿದೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದು, ಕೇಂದ್ರ ಸರ್ಕಾರ 10 ಕಾಮಗಾರಿಗಳು ಬಾಕಿ ಇದ್ದರೆ ಹೊಸ ಕಾಮಗಾರಿಗಳನ್ನು ಅನುಮೋದಿಸಲು ಸಾಧ್ಯವಿಲ್ಲ ಎಂಬ ಆದೇಶವನ್ನು ಹೊರಡಿಸಿದೆ ಎಂದು ಹೇಳಿ ಕಾರ್ಮಿಕರಿಗೆ ಕೆಲಸ ನೀಡದೇ ವಂಚಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೇಂದ್ರ ಸರ್ಕಾರ ಕಾರ್ಮಿಕರ ಖಾತೆಗೆ 7 ದಿನಗಳೊಳಗೆ ಕೂಲಿ ಹಣ ಪಾವತಿಸಲಾಗುವುದು ಎಂದು ಘೋಷಿಸಿದ್ದರೂ, ವಾಸ್ತವದಲ್ಲಿ ಅದು ಜಾರಿಯಾಗುತ್ತಿಲ್ಲ. ಇದರಿಂದ ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೆಲಸ ನೀಡದಿದ್ದಲ್ಲಿ ಕಾನೂನಿನ ಪ್ರಕಾರ ನಿರುದ್ಯೋಗ ಭತ್ಯೆ ನೀಡುವ ಅವಕಾಶವಿದ್ದರೂ ಪಂಚಾಯತ್ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ವಿಷಯದಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಕೆಲಸ ಮಾಡದ ಕಾರ್ಮಿಕರ ಹೆಸರಿನಲ್ಲಿ ಹಣ ಪಾವತಿಸಿರುವ ಘಟನೆಗಳೂ ನಡೆದಿರುವುದು ವಿಷಾದನೀಯ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಹುಚ್ಚಪ್ಪ, ಮಾರೆಮ್ಮ, ಆಂಜನೇಯ್ಯ, ಬಸವರಾಜ, ಹನುಮಂತಮ್ಮ, ಬಾಬು, ಪದ್ಮಮ್ಮ, ಈರಮ್ಮ, ಗುಂಡಪ್ಪ, ಬಸವರಾಜ, ಶರಣಮ್ಮ, ಯಲ್ಲಮ್ಮ, ಕೃಷ್ಣಮ್ಮ, ಇಂದ್ರಮ್ಮ, ಬಾಬಮ್ಮ ಸೇರಿ ಅನೇಕರಿದ್ದರು.
ಮಣಿಪಾಲ: ಮಾ.11ರಿಂದ ಅಖಿಲ ಭಾರತ ಅಂತರ ವಿವಿ ಚೆಸ್
ಮಣಿಪಾಲ, ಮಾ.9: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ಪುರುಷರ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಚೆಸ್ ಚಾಂಪಿಯನ್ಷಿಪ್ ಮಾ.11ರಿಂದ 13ರವರೆಗೆ ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆಯಲಿದೆ. ಭಾರತೀಯ ವಿವಿಗಳ ಸಂಘದ (ಎಐಯು) ಸಹಯೋಗದಲ್ಲಿ ಮಾಹೆ ನಾಲ್ಕು ದಿನಗಳ ಚಾಂಪಿಯನ್ಷಿಪ್ನ್ನು ಆಯೋಜಿಸುತ್ತಿದೆ. ಚಾಂಪಿಯನ್ ಷಿಪ್ನ ಉದ್ಘಾಟನಾ ಸಮಾರಂಭ ಮಾ.11ರ ಬುಧವಾರ ಬೆಳಗ್ಗೆ 9:30ಕ್ಕೆ ಡಾ.ಟಿಎಂಎ ಪೈ ಸಭಾಂಗಣದ ಮೂರನೇ ಮಹಡಿಯಲ್ಲಿ ನಡೆಯಲಿದೆ. ಹೊಸದಿಲ್ಲಿಯ ಎಐಯುನ ಹೆಚ್ಚುವರಿ ಕಾರ್ಯದರ್ಶಿ ಮಮತಾ ಆರ್. ಅಗರ್ವಾಲ್ ಅವರು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಮಾಹೆಯ ಪ್ರೊವೈಸ್ ಚಾನ್ಸಲರ್ (ಆರೋಗ್ಯ ವಿಜ್ಞಾನ)ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ದೇಶಾದ್ಯಂತದಿಂದ ಬರುವ ವಿವಿಧ ವಿಶ್ವವಿದ್ಯಾಲಯಗಳ ಚೆಸ್ ಆಟಗಾರರು ಈ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲಿದ್ದಾರೆ. ದೇಶದ ಕೆಲವು ಪ್ರಮುಖ ಚೆಸ್ ಆಟಗಾರರು ಇದರಲ್ಲಿ ಸೇರಿದ್ದಾರೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದ 3 ನಿಲ್ದಾಣದಿಂದ BMTC ಫೀಡರ್ ಬಸ್ಗಳ ಸೇವೆ ಆರಂಭ; ಬೆಳಂದೂರು ಸೇರಿ ಹಲವೆಡೆಗೆ ಸಂಪರ್ಕ
ಹಳದಿ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭಿಸಿದೆ. ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ನಿಲ್ದಾಣಗಳಿಂದ ಬಸ್ಗಳು ಸುತ್ತಮುತ್ತಲ ಬಡಾವಣೆಗೆ ಸಂಪರ್ಕ ಕಲ್ಪಿಸಲಿವೆ. ಈ ಬಗ್ಗೆ ಬಿಎಂಆರ್ಸಿಎಲ್ ಮಾಹಿತಿ ಹಂಚಿಕೊಂಡಿದೆ. ಫೀಡರ್ ಬಸ್ ಮಾರ್ಗ ಏನು? ಎಲ್ಲಿಂದ ಎಲ್ಲಿಗೆ ಸಂಪರ್ಕ? ಯಾವೆಲ್ಲಾ ನಿಲ್ದಾಣಗಳು? ಸಂಪೂರ್ಣ ವಿವರ ಇಲ್ಲಿದೆ.
ಕಲಬುರಗಿ | ವಿಶ್ವ ಮಹಿಳಾ ದಿನಾಚರಣೆ
ಕಲಬುರಗಿ: ಕರ್ನಾಟಕ ಯುವಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯಿಂದ ನಗರದ ಕನ್ನಡ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ 2ರಿಂದ 9 ವರ್ಷ ವಯಸ್ಸಿನ 1,000 ಹೆಣ್ಣುಮಕ್ಕಳನ್ನು ದತ್ತು ಪಡೆದು ಅವರ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಪೋಸ್ಟ್ಆಫೀಸ್ ಖಾತೆ ತೆರೆಯಿಸಿ 15 ವರ್ಷಗಳ ಕಾಲ ಪ್ರತಿ ತಿಂಗಳು 250 ರೂ. ಹಣ ಜಮಾ ಮಾಡುವುದಾಗಿ ಘೋಷಣೆ ಮಾಡಲಾಯಿತು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರು, ಸಾಹಿತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷೆ ಡಾ. ವಿಶಾಲಾಕ್ಷಿ ವಿ. ಕರಡ್ಡಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರ ದೇಸಾಯಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ಮಾತನಾಡಿದರು. ಸಂಘಟನೆಯ ರಾಜ್ಯಾಧ್ಯಕ್ಷ ಅವ್ವಣಗೌಡ ಪಾಟೀಲ್ ಮಾತನಾಡಿ, ನಮ್ಮ ಸಂಘಟನೆ ಸದಾ ರೈತರ ಹಾಗೂ ವಿದ್ಯಾರ್ಥಿಗಳ ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಮುಂದೆಯೂ ಜನರ ವಿಶ್ವಾಸಕ್ಕೆ ತಕ್ಕಂತೆ ಸೇವಾ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಕಳ್ತೂರು ಸಂತೆಕಟ್ಟೆ ಹಿಂದೂ ರುದ್ರಭೂಮಿ ಉದ್ಘಾಟನೆ
ಹೆಬ್ರಿ, ಮಾ.9: 38ನೇ ಕಳ್ತೂರು ಗ್ರಾಮ ಪಂಚಾಯತ್ ಮತ್ತು ಸ್ಮಶಾನ ಅಭಿವೃದ್ಧಿ ಸಮಿತಿಯ ವತಿಯಿಂದ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಆರ್ಬೆಟ್ಟು ದಿ.ವೆಂಕಟೇಶ ಕಾಮತ್ ಸಾರ್ವಜನಿಕ ಹಿಂದೂ ರುದ್ರಭೂಮಿ ರವಿವಾರ 38ನೇ ಕಳ್ತೂರಿನಲ್ಲಿ ಉದ್ಘಾಟನೆಗೊಂಡಿತು. ಊರಿಗೊಂದು ಸುಸಜ್ಜಿತ ಸ್ಮಶಾನ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿದಂತೆ ಊರಿನ ಅಭಿವೃದ್ಧಿಗೂ ಎಲ್ಲರೂ ಕೈಜೋಡಿಸಿದರೆ ಊರಿನ ಸಮಗ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು. ಸ್ಮಶಾನದಲ್ಲೂ ಮನಸ್ಸಿಗೆ ಶಾಂತಿ ದೊರೆಯಬೇಕು, ಅಷ್ಟು ಅಚ್ಚುಕಟ್ಟಾಗಿ ಕಳ್ತೂರಿನಲ್ಲಿ ಸಾರ್ವಜನಿಕ ರುದ್ರ ಭೂಮಿಯನ್ನು ನಿರ್ಮಿಸಲಾಗಿದೆ. ದಾನಿಗಳ ನೆರವಿನಿಂದ ಸಕಲ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡಿರುವುದು ಪುಣ್ಯದ ಕೆಲಸ ಎಂದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದರು. ತನ್ನ ತಂದೆಯ ಸ್ಮರಣಾರ್ಥ ರುದ್ರಭೂಮಿ ನಿರ್ಮಿಸಿ ಕೊಟ್ಟ ಉದ್ಯಮಿ ಎ. ಮಾಧವ ಕಾಮತ್ ಮಾತನಾಡಿ ರಾಜಕೀಯ ಬದಿಗೊತ್ತಿ ಎಲ್ಲರೂ ಸೇರಿ ಕೆಲಸ ಮಾಡಿದಾಗ ಊರಿನ ಅಭಿವೃದ್ಧಿ ಸಾದ್ಯವಾಗುತ್ತದೆ. ಸ್ಮಶಾನ ನಿರ್ಮಾಣದ ಮೂಲಕ ನಮ್ಮೂರಿನ ಬಹುಕಾಲದ ಕೊರತೆ ಈಡೇರಿದೆ ಎಂದರು. ಸ್ಮಶಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಎ.ಸಿ, ಸಹಕಾರ ನೀಡಿದ ಹಲವರನ್ನು ಗೌರವಿಸಲಾಯಿತು. 38ನೇ ಕಳ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ರುದ್ರಭೂಮಿಯ ಕೀಯನ್ನು ಹಸ್ತಾಂತರಿಸಲಾಯಿತು. ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿಯ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೈರ್ಮಾಡಿ ಅಶೋಕ ಕುಮಾರ್ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಹೆಬ್ರಿ ತಾಲೂಕಿನ ಯೋಜನಾಧಿಕಾರಿ ಲೀಲಾವತಿ, ದಾನಿಗಳಾದ ಉದ್ಯಮಿ ಎ. ಮಾಧವ ಕಾಮತ್, ನಾಗರಾಜ ಕಾಮತ್, ಮಹೇಶ ಶೆಟ್ಟಿ ಬ್ರಹ್ಮಾವರ, ನರಸಿಂಹ ಗಡಿಯಾರ್ ಭಾಗವಹಿಸಿದ್ದರು. ಕಂಬಳಗದ್ದೆ ಮನೆ ಚಂದ್ರಶೇಖರ ಶೆಟ್ಟಿ, ಜಯರಾಮ ನಾಯ್ಕ್, ಶಿವಪುರ ಶ್ರೀನಿವಾಸ ಹೆಬ್ಬಾರ್, ಸುಧಾಕರ ನಾಯ್ಕ್, ಸ್ಮಶಾನ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಗಿರೀಶ ಕಾಮತ್, ರವಿ ಪೂಜಾರಿ ಸಂತೆಕಟ್ಟೆ, ಸ್ಮಶಾನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ದಾನಿಗಳು ಉಪಸ್ಥಿತರಿದ್ದರು. ಗಿರೀಶ್ ಕಾಮತ್ ಸ್ವಾಗತಿಸಿ ಚಂದ್ರಶೇಖರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ದೀಕ್ಷಿತ್ ಶೆಟ್ಟಿ ಮತ್ತು ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.
ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಆರಂಭ : ಕೆ.ವೆಂಕಟೇಶ್
ಬೆಂಗಳೂರು : ಪಶು ಸಂಗೋಪನೆ ಇಲಾಖೆಯಲ್ಲಿ ಖಾಲಿ ಉಳಿದಿರುವ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ. ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿಮೆಂಟ್ ಮಂಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 400 ಪಶು ವೈದ್ಯಾಧಿಕಾರಿಗಳ ಖಾಯಂ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ಸಕಲೇಶಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಪಶುವೈದ್ಯರು ಮತ್ತು ಸಿಬ್ಬಂದಿ ವರ್ಗದ ಹುದ್ದೆಗಳ ಕೊರತೆ ಇರುವುದು ಸರಕಾರದ ಗಮನಕ್ಕೆ ಬಂದಿರುವುದರಿಂದಲೇ ಹೆಚ್ಚುವರಿಯಾಗಿ 400 ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಹಾಗೂ 300 ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿತ್ತು. ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆ ಹಂತದಲ್ಲಿ ಇರುವುದಾಗಿ ಅವರು ಉಲ್ಲೇಖಿಸಿದರು. ಹುದ್ದೆಗಳ ಕೊರತೆ ಇದ್ದರೂ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಲಭ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಧಿಕ ಪ್ರಭಾರದಲ್ಲಿರಿಸಿ, ರೈತರ ಜಾನುವಾರುಗಳಿಗೆ ಸಂಚಾರಿ ಪಶುಚಿಕಿತ್ಸಾಲಯ ವಾಹನದ (1962 ಸಹಾಯವಾಣಿ) ಸೌಲಭ್ಯದೊಂದಿಗೆ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ವಿಳಂಬವಾಗದಂತೆ ಚಿಕಿತ್ಸೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಗಲ್ಫ್ನಲ್ಲಿರುವ ಕನ್ನಡಿಗರ ರಕ್ಷಣೆ; ವಿದೇಶಾಂಗ ಸಚಿವ ಜೈಶಂಕರ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ
ಉಡುಪಿ, ಮಾ.9: ಬಹರೈನ್, ಕತಾರ್, ಕುವೈಟ್, ದುಬೈ ಮುಂತಾದ ಕೊಲ್ಲಿ ರಾಷ್ಟ್ರಗಳಲ್ಲಿರುವ ಕನ್ನಡಿಗರ ಮನವಿಯಂತೆ, ಯುದ್ಧಪೀಡಿತ ಪ್ರದೇಶಗಳ ಭಾರತೀಯರನ್ನು ರಕ್ಷಿಸುವ ಕುರಿತಂತೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಹೊಸದಿಲ್ಲಿಯ ಪಾರ್ಲಿಮೆಂಟ್ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದರು. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಯ ಬಗ್ಗೆ ವಿವರಿಸಿದ ಸಚಿವ ಜೈಶಂಕರ್, ಆ ಪ್ರದೇಶದ ವಿಮಾನ ನಿಲ್ದಾಣದ ಮೇಲೆ ದಾಳಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಪ್ರಯತ್ನ ಮಾಡುತ್ತಿದೆ.ಯಾವುದೇ ಆತಂಕ ಬೇಡ ಎಂದು ಭರವಸೆ ನೀಡಿದರು. ಈ ಮಧ್ಯೆ ಲೋಕಸಭಾ ಸದನದಲ್ಲಿ ಸರಕಾರದ ಪರವಾಗಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ವಿದೇಶಾಂಗ ಸಚಿವರು, ಸೌದಿ ಅರೇಬಿಯಾ, ಓಮನ್, ಜೋರ್ಡನ್, ಬಹರೈನ್, ಕುವೈಟ್, ಕತಾರ್ ಸಹಿತ ಜಗತ್ತಿನಾದ್ಯಂತ ಇರುವ ಭಾರತೀಯರನ್ನು ರಕ್ಷಿಸುವ ಹೊಣೆ ಕೇಂದ್ರ ಸರಕಾರ ನಿರ್ವಹಿಸುತ್ತಿದ್ದು, ಈಗಾಗಲೇ 49 ವಿಮಾನಗಳು ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬಂದಿವೆ ಎಂದರು. ವಿವಿಧ ಸೌಲಭ್ಯಗಳ ಮೂಲಕ ಈಗಾಗಲೇ 67 ಸಾವಿರ ಮಂದಿ ಭಾರತಕ್ಕೆ ಮರಳಿ ಬಂದಿದ್ದಾರೆ. ಇರಾನ್ ಸಂಪರ್ಕ ಸಿಗದಷ್ಟು ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಯುದ್ಧ ತಪ್ಪಿಸಲು ಮಾತುಕತೆ ಒಂದೇ ಪರಿಹಾರ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧದಲ್ಲಿ ತೊಡಗಿಕೊಂಡ ದೇಶಗಳಿಗೆ ಮನವರಿಕೆ ಮಾಡುತ್ತಿದ್ದಾರೆ. ಒಟ್ಟು ಒಂದು ಕೋಟಿ ಭಾರತೀಯ ಪೌರರು ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ ಎಂದರು. ಯುದ್ಧದ ಮೂಲಕ ಇಂಧನದ ಸಮಸ್ಯೆ ಸೃಷ್ಟಿಯಾಗಿದೆ. ಭಾರತ ಜಗತ್ತಿನಲ್ಲಿ ಶಾಂತಿ ನೆಲೆಸಲು ಸರ್ವ ಯತ್ನ ಮಾಡುತ್ತಿದೆ. ವಿದೇಶದಲ್ಲಿರುವ ದೇಶದ ಜನರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿಯಿಂದ ಕೇಂದ್ರ ಕೆಲಸ ಮಾಡುತ್ತಿದೆ. ಸಂಕಷ್ಟದಲ್ಲಿರುವವರನ್ನು ಭಾರತಕ್ಕೆ ಕರೆ ತರುತ್ತೇವೆ ಎಂದು ಸದನದಲ್ಲಿ ಕೇಂದ್ರ ಸರಕಾರದ ಪರವಾಗಿ ಸಚಿವ ಜೈಶಂಕರ್ ಹೇಳಿಕೆ ನೀಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ಪಣ್ಣ ಹೆಗ್ಡೆ ಸಹಿತ ಅಗಲಿದ ಗಣ್ಯರಿಗೆ ಸದನದಲ್ಲಿ ಶ್ರದ್ಧಾಂಜಲಿ
ಬೆಂಗಳೂರು : ಇತ್ತೀಚೆಗೆ ಅಗಲಿದ ಮಾಜಿ ಶಾಸಕರಾದ ಬನ್ನೂರು ಅಪ್ಪಣ್ಣ ಹೆಗ್ಡೆ, ವೈ.ಎಂ. ವೀರಣ್ಣ ಹಾಗೂ ಹಿರಿಯ ಪತ್ರಕರ್ತ ಪಿ.ರಾಮಯ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್, ಸಂತಾಪ ಸೂಚನೆ ನಿರ್ಣಯ ಮಂಡಿಸಿ, ಮಾಜಿ ಶಾಸಕರಾದ ಬನ್ನೂರು ಅಪ್ಪಣ್ಣ ಹೆಗ್ಡೆ ಹಾಗೂ ವೈ.ಎಂ.ವೀರಣ್ಣ ಅವರ ರಾಜಕೀಯ ಮತ್ತು ಸಾಮಾಜಿಕ ಜನೋಪಕಾರಿ ಸೇವೆಗಳನ್ನು ಸ್ಮರಿಸಿದರು. ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಾಜಿ ಶಾಸಕ ಬನ್ನೂರು ಅಪ್ಪಣ್ಣ ಹೆಗ್ಡೆ ಅವರು ಮೂಲತಃ ಕೃಷಿಕರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲೂ ಅವರು ಭಾಗಿಯಾಗಿದ್ದರು. ಅಧಿಕಾರ ವಿಕೇಂದ್ರೀಕರಣದಲ್ಲಿ ಕೆಲಸ ಮಾಡಿದ್ದ ಅಪ್ಪಣ್ಣ ಹೆಗ್ಡೆ ಒಬ್ಬ ಸಭ್ಯ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು. ಅದೇ ರೀತಿ ದಾವಣಗೆರೆಯ ವೈ.ಎಂ.ವೀರಣ್ಣ ಸಹ ಕೃಷಿಕರಾಗಿದ್ದರೂ ಶಿಕ್ಷಣದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದರು. ನಗರಸಭೆ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿ, ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಸ್ಮರಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಬನ್ನೂರು ಅಪ್ಪಣ್ಣ ಹೆಗ್ಡೆ, ವೈ.ಎಂ.ವೀರಣ್ಣ ಅನೇಕ ಸಮಾಜಮುಖಿ ಸೇವೆಗಳನ್ನು ಸಲ್ಲಿಸಿದ್ದಾರೆ. ಅವರ ವ್ಯಕ್ತಿತ್ವ ನಡೆ, ಎಲ್ಲರಿಗೂ ಮಾದರಿ. ಅವರ ಸಮಾಜಮುಖಿ ಕೆಲಸಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಂತಾಪ ಸಲ್ಲಿಸಿದರು. ಆ ಬಳಿಕ ಮೃತರ ಗೌರವಾರ್ಥ ಸದಸನದ ಎಲ್ಲ ಸದಸ್ಯರು ಎದ್ದುನಿಂತು ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಅಫಜಲಪುರ | ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಅಫಜಲಪುರ: ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆ ಅಫಜಲಪುರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮವನ್ನು ತಹಸೀಲ್ದಾರ ಸಂಜೀವಕುಮಾರ ದಾಸರ ಉದ್ಘಾಟಿಸಿ ಮಾತನಾಡಿ, ಸಂಘದ ಚಟುವಟಿಕೆಗಳನ್ನು ಬಲಪಡಿಸಲು ಮೊದಲು ಸಂಘಕ್ಕೆ ಸ್ವಂತ ನಿವೇಶನ ಪಡೆದು ನಂತರ ಭವನ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವರುಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಮಹಿಳೆಯರಿಗೆ ಸ್ವಾತಂತ್ರ್ಯ, ಬೆಂಬಲ ಹಾಗೂ ಗೌರವ ನೀಡಿದಾಗ ಅವರು ಸಮಾಜದಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯುತ್ತಿವೆ. ಪುರುಷರು ಮಹಿಳೆಯರನ್ನು ಬೆಂಬಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕ.ರಾ.ಸ. ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಬಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು. ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿರುವ ದ್ರೌಪದಿ ಮುರ್ಮು ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರಂತಹ ಮಹಿಳೆಯರು ನಿರ್ಭಯವಾಗಿ ಆಡಳಿತ ಕಾರ್ಯ ನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಜಿಲ್ಲಾ ಕ.ರಾ.ಸ.ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಡಾ. ರವಿಕಾಂತಿ ಕ್ಯಾತನಾಳ, ಮಹಿಳಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಂದಿನಿ ಸನಬಾಳ ಮಾತನಾಡಿದರು. ಇದೇ ವೇಳೆಯಲ್ಲಿ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ಕಾರ್ಯದರ್ಶಿ ಮಹೇಶ ಹೂಗಾರ್, ಚೇತನ, ಮಲ್ಲೇಶಪ್ಪ ಬಿಂಜೆಗೇರಿ, ಬಸವರಾಜ ಕಲ್ಲೂರು, ಸಾಧಿಕ್ ನಾಗೂರ್ ಪ್ರಶಾಂತ ಬಿಂದಿಗೆ, ಶರಣಮ್ಮ, ಸಿದ್ದು, ಪ್ರವೀಣ ದೇಸಾಯಿ, ಗುರು ಹಂಡಿ, ಬಾಗಪ್ಪ ತಳವಾರ, ಶಿವಶರಣ ಸಂಗೊಳ್ಳಿ ಸೇರಿದಂತೆ ಅನೇಕರು ಹಾಜರಿದ್ದರು. ಅಬ್ದುಲ್ ಅವರು ಸ್ವಾಗತಿಸಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುಮಾರು 40 ಮಹಿಳಾ ನೌಕರರನ್ನು ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬಹ್ರೇನ್, ಮಾ. 9: ಮದ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಬಹ್ರೇನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ತನ್ನ ಪ್ರಜೆಗಳನ್ನು ಭಾರತಕ್ಕೆ ಕಳುಹಿಸಲು ಸೌದಿ ಅರೇಬಿಯಾ ಮೂಲಕ ಟ್ರಾನ್ಸಿಟ್ ವೀಸಾ ವ್ಯವಸ್ಥೆ ಮಾಡಲಾಗಿದೆ ಎಂದು ಬಹ್ರೇನ್ ನಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ವಿಶೇಷವಾಗಿ ಪ್ರವಾಸಿ ಅಥವಾ ಅಲ್ಪಾವಧಿ ವೀಸಾಗಳಲ್ಲಿ ಇರುವವರಿಗೆ ಆದ್ಯತೆ ನೀಡಲಾಗುವುದು. ಕೋರಿಕೆಯ ಮೇರೆಗೆ ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೌದಿ ಸರ್ಕಾರದಿಂದ ವೈಯಕ್ತಿಕ ಟ್ರಾನ್ಸಿಟ್ ವೀಸಾ ಪಡೆಯಲಿದೆ. ಅಗತ್ಯ ಟ್ರಾನ್ಸಿಟ್ ವೀಸಾ ಕೋರಿಕೆಗಳನ್ನು ಬಹ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸಲ್ಲಿಸಲಿದೆ ಎಂದು ಬಹ್ರೇನ್ ನಲ್ಲಿರುವ ಭಾರತದ ರಾಯಭಾರಿ ವಿನೋದ್ ಕೆ ಜಾಕೋಬ್ ತಿಳಿಸಿದ್ದಾರೆ. ಸೌದಿ ಅರೇಬಿಯಾ ಮೂಲಕ ಟ್ರಾನ್ಸಿಟ್ ವೀಸಾಗೆ ಸಂಬಂಧಿಸಿದ Standard Operating Procedure (SOP) ಪ್ರಕಟಿಸಲಾಗಿದೆ. ಭಾರತಕ್ಕೆ ಹೊರಡಲಿಚ್ಛಿಸುವ ಪ್ರಯಾಣಿಕರು ದೃಢೀಕೃತ ಏರ್ ಟಿಕೆಟ್ ಹೊಂದಿರಬೇಕು. ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಮೊದಲು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡುವ ಔಪಚಾರಿಕ ಟಿಪ್ಪಣಿಯನ್ನು ಚೆಕ್ ಪಾಯಿಂಟ್ ನಲ್ಲಿರುವ ಸೌದಿ ವಲಸೆ ಅಧಿಕಾರಿಗಳಿಗೆ ತೋರಿಸಬೇಕು ಎಂದು ಸೂಚಿಸಲಾಗಿದೆ. ಸೌದಿ ಟ್ರಾನ್ಸಿಟ್ ವೀಸಾದ ಅವಧಿಯು 72ರಿಂದ 96 ಗಂಟೆಗಳವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯೊಳಗೆ ಪ್ರಯಾಣಿಕರು ಸೌದಿ ಅರೇಬಿಯಾದಿಂದ ಭಾರತಕ್ಕೆ ಹೊರಡಬೇಕು. ಹಗಲಿನ ವೇಳೆಯಲ್ಲಿ ಸೌದಿ ಚೆಕ್ಪಾಯಿಂಟ್ಗೆ ತಮ್ಮ ಪ್ರಯಾಣವನ್ನು ಮಾಡಬೇಕು ಎಂದು ಸಲಹೆ ನೀಡಲಾಗಿದೆ. ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಹ್ರೇನ್ ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದಿರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ರಾಯಭಾರ ಕಚೇರಿ ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. ಬಹ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ತುರ್ತು ಅಗತ್ಯಗಳಿಗೆ 24×7 ಸಹಾಯವಾಣಿ ವ್ಯವಸ್ಥೆ ಸಕ್ರಿಯವಾಗಿದೆ. ತುರ್ತು ಸಹಾಯಕ್ಕಾಗಿ +973 39418071 ಮತ್ತು +973 38400433 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಟ್ರಾನ್ಸಿಟ್ ವೀಸಾ ಸೌಲಭ್ಯವನ್ನು ಬಳಸಿಕೊಳ್ಳಲು ಬಯಸುವ ಭಾರತೀಯರು wel2.bahrain@mea.gov.in ಇಮೇಲ್ ವಿಳಾಸಕ್ಕೆ ವೀಸಾ, ಪಾಸ್ಪೋರ್ಟ್ ಸಹಿತ ತಮ್ಮ ವೈಯುಕ್ತಿಕ ಮಾಹಿತಿಗಳೊಂದಿಗೆ ಕೋರಿಕೆಗಳನ್ನು ಸಲ್ಲಿಸಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನಗತ್ಯವಾಗಿ ಅಡ್ಡಿಪಡಿಸಿ ರಾಜಕೀಯ : ಕೆ.ಜೆ.ಜಾರ್ಜ್
ಬೆಂಗಳೂರು : ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನೆ ಯೋಜನೆ ವಿಚಾರದಲ್ಲಿ ಅನಗತ್ಯವಾಗಿ ಅಡ್ಡಿಪಡಿಸಿ ರಾಜಕೀಯ ಮಾಡಲಾಗುತ್ತಿದೆ. ಈ ಯೋಜನೆಯನ್ನು ವಿರೋಧಿಸುವವರೊಂದಿಗೆ ಚರ್ಚೆ ನಡೆಸಲು ಸಿದ್ಧವಾಗಿದ್ದೇನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಸೋಮವಾರ ವಿಧಾನ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎನ್.ಜವರಾಯಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ. ರಾತ್ರಿ ಹಾಗೂ ಪೀಕ್ ಅವರ್ನಲ್ಲಿ ವಿದ್ಯುತ್ ಕೊರತೆಯಿದ್ದು, ಸೋಲಾರ್ ಹಾಗೂ ಪವನ ವಿದ್ಯುತ್ ಶಕ್ತಿ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ ಎಂದರು. ಕೇಂದ್ರ ಸರಕಾರದಿಂದಲೂ ವಿದ್ಯುತ್ ಪೂರೈಕೆಯಾಗುತ್ತಿದೆ. ಆದಾಗ್ಯೂ ವಿದ್ಯುತ್ ಸ್ಟೋರೇಜ್ ಮಾಡಲು ಶರಾವತಿ ಕಣಿವೆಯಿಂದ ಜಲ ವಿದ್ಯುತ್ ಉತ್ಪಾದಕ ಘಟಕ ಸ್ಥಾಪಿಸುವ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಕೇಂದ್ರ ವನ್ಯಜೀವಿ ಮಂಡಳಿ ಮುಂದೆ ನಮ್ಮ ಯೋಜನೆ ಬಾಕಿಯಿರುವಾಗಲೇ ಉದ್ದೇಶಿತ ಕಾಮಗಾರಿಗಳಿಗೆ ಅಡ್ಡಿ ಮಾಡುವುದು ಸರಿಯಿಲ್ಲ ಎಂದು ಆಕ್ಷೇಪಿಸಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ವಾರಾಹಿ ವಿದ್ಯುತ್ ಯೋಜನೆಯಿಂದ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಅರಣ್ಯ ಪ್ರದೇಶದ ನೆಲದಡಿಯಲ್ಲಿ ಪೈಪುಗಳನ್ನು ಹಾಕಲಾಗುವುದು. ಸುಮಾರು 110 ಎಕರೆ ಅರಣ್ಯ ಪ್ರದೇಶದಲ್ಲಿ ಪೈಪ್ ಹಾದು ಹೋಗಲಿದೆ. ನಾಲ್ಕು ವರ್ಷಗಳಲ್ಲಿ ಯೋಜನೆ ಕಾಮಗಾರಿ ಮುಗಿದ ಬಳಿಕ ಅರಣ್ಯ ಪ್ರದೇಶ ಎಂದಿನಂತೆ ಇರಲಿದ್ದು, ವನ್ಯಜೀವಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಿದರು.
ಅಫಜಲಪುರ | ಉಚಿತ ಕಣ್ಣಿನ ತಪಾಸಣೆ ಶಿಬಿರ : 100 ಜನರಿಗೆ ತಪಾಸಣೆ, 46 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ
ಅಫಜಲಪುರ: ಮತಕ್ಷೇತ್ರದ ಕಲಬುರಗಿ ತಾಲೂಕಿನ ಫರಹತಾಬಾದ್ ಗ್ರಾಮದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಸಾರ್ವಜನಿಕ ಆಸ್ಪತ್ರೆ ಹಾಗೂ ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರ ಅವರುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಉದ್ಘಾಟಿಸಿದರು. ಶಿಬಿರದಲ್ಲಿ ಒಟ್ಟು 100 ಜನರಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 46 ಜನರನ್ನು ಮುಂದಿನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಇಂತಹ ಆರೋಗ್ಯ ಶಿಬಿರಗಳು ತುಂಬಾ ಉಪಯುಕ್ತವಾಗಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ಎಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಸಂಚಾಲಕರಾದ ಡಾ.ಶರಣಬಸಪ್ಪ ಹರವಾಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್, ಫರತಹಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಶಾಕ್ ಪಟೇಲ್, ನಾಗರಾಜ ನಿಂಬರಗಿ, ಶರಣು ಸಜ್ಜನ್, ಕೇಶವ ಮೊಟಗಿ, ಸಿದ್ಧರಾಮ ಬೋಲಶೆಟ್ಟಿ, ಶರಣಬಸಪ್ಪ ಮೈನಾಳ, ಚಂದ್ರಕಾಂತ ನಡಗಟ್ಟಿ, ದೇವಿಂದ್ರಪ್ಪ ಯಾದಗಿರಿ, ವಾಹಿಧ್ ಕೋಬಳ, ಭಗವಂತರಾಯ ಪರಿಟ, ಮರೆಪ್ಪ ಪೂಜಾರಿ, ಹರ್ಷ ಮಹಾಶೆಟ್ಟಿ, ಶರಣು ಕೋಣಿನ ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಫರಹತಾಬಾದ ಮುಖ್ಯ ವೈದ್ಯಾಧಿಕಾರಿ ಸಂತೋಷ್ ಪಾಟೀಲ್, ಕಣ್ಣಿನ ತಪಾಸಣೆ ಸಂಯೋಜಕ ಸುರೇಶ್ ಭಂಡಾಗರ ಹಾಗೂ ಗ್ರಾಮಸ್ಥರು, ಪಕ್ಷದ ಮುಖಂಡರು ಮತ್ತು ಯುವ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು
ಉಳ್ಳಾಲ: ಬೆಂಗಳೂರಿನ ಕಟ್ಟಡವೊಂದರಲ್ಲಿ ಎಸಿ ಜೋಡಣೆ ಕಾರ್ಯನಿರ್ವಹಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ತಲಪಾಡಿ ನಿವಾಸಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತಲಪಾಡಿ ನಿವಾಸಿ ವಿಶ್ವನಾಥ್ ಮತ್ತು ಮೀನಾಕ್ಷಿ ದಂಪತಿ ಪುತ್ರ ಹರ್ಷಿತ್ ಪೂಜಾರಿ (32) ಮೃತ ಯುವಕ. ವಿದೇಶದಲ್ಲಿ ಶಿಪ್ಪಿಂಗ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹರ್ಷಿತ್ ಮೂರು ತಿಂಗಳಿಗೊಮ್ಮೆ ಸಿಗುವ ರಜೆಯಲ್ಲಿ ಊರಿಗೆ ಮರಳಿದಾಗ ತನ್ನ ಮೂಲ ಎಸಿ ಮೆಕ್ಯಾನಿಕ್ ಕೆಲಸವನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಅವರು ಸಂಬಂಧಿಯೋರ್ವರಿಗೆ ಎಸಿ ಮೆಕ್ಯಾನಿಕ್ ತರಬೇತಿ ನೀಡುವ ಪ್ರಯುಕ್ತ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಬಹುಮಹಡಿ ಕಟ್ಟಡದಲ್ಲಿ ಎಸಿ ಜೋಡಣೆ ನಡೆಸುವ ವೇಳೆ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಹರ್ಷಿತ್ ರನ್ನು ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಾ.7 ರಂದು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆತರುವ ಸಂದರ್ಭದಲ್ಲಿ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಹರ್ಷಿತ್ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಸೋಮವಾರ ಬೆಳಗ್ಗೆ ನಡೆದಿದೆ. ಮೃತ ಹರ್ಷಿತ್ ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಎರಡು ವರ್ಷದ ಪುಟ್ಟ ಹೆಣ್ಣು ಮಗುವನ್ನು ಅಗಲಿದ್ದಾರೆ.
ಸೇಡಂ | ಡಾ.ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಕಾಮಗಾರಿ ಪ್ರಾರಂಭಿಸಿ: ರೇವಣಸಿದ್ದಪ್ಪ ಶಿಂಧೆ
ಸೇಡಂ: ತಾಲೂಕಿನ ಭೊಂದೇಮಪಳ್ಳಿ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆಗೆ ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ. ಕೂಡಲೇ ಮೂರ್ತಿ ಸ್ಥಾಪನೆ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಮುಖಂಡ ರೇವಣಸಿದ್ದಪ್ಪ ಶಿಂಧೆ ಆಗ್ರಹಿಸಿದರು. ಈ ಕುರಿತು ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸಮ್ಮುಖದಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಸಂಬಂಧಿಸಿದಂತೆ ಜಿಪಿಎಸ್ ಫೋಟೋ ತೆಗೆದು ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೆ ಮೂರ್ತಿ ಸ್ಥಾಪನೆ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಿ ಕೆಲವು ವ್ಯಕ್ತಿಗಳು ಅಧಿಕಾರಿಗಳು ಹಾಗೂ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ರಸ್ತೆ ಮಧ್ಯದಲ್ಲಿ ಇರುವ ಅಂಬೇಡ್ಕರ್ ಮೂರ್ತಿ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಅವರು ಹೇಳಿದರು. ತಾಲೂಕಿನ ಮೇದಕ್, ಕೋನಪೂರ್, ದುಗ್ಗನೂರು, ಸುಲೇಪೇಟೆ ಸೇರಿದಂತೆ ಹಲವೆಡೆ ರಸ್ತೆ ಮಧ್ಯದಲ್ಲೇ ವಿವಿಧ ಮೂರ್ತಿಗಳು ಇದ್ದರೂ ಅವುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ ಭೊಂದೇಮಪಳ್ಳಿ ಗ್ರಾಮದ ಅಂಬೇಡ್ಕರ್ ಮೂರ್ತಿ ವಿಷಯ ಮಾತ್ರ ಸಚಿವರಿಗೆ ಕಾಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಭೀಮು ಮುಧೋಳ, ವಿಶ್ವನಾಥ್ ಉಡಗಿ, ಜಗು ಇಮಾಡಪೂರ, ಲಾಲಪ್ಪ, ವೇಂಕಟಪ್ಪ, ನರಶೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ
Middle East War Update: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಡಿದೆ. ಇರಾನ್ ಮೇಲಿನ ಯುಎಸ್-ಇಸ್ರೇಲ್ ಜಂಟಿ ದಾಳಿ, ಪ್ರತಿದಾಳಿ ಮುಂದುವರಿದಿದೆ. ಈ ಮೂರು ರಾಷ್ಟ್ರಗಳು ಶಾಂತಿ ಸಂಧಾನ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಸೋಮವಾರ (ಮಾರ್ಚ್ 09) ಇರಾನ್ ಸರ್ವೋಚ್ಚ ನಾಯಕ ಖಮೇನಿ ಸ್ಥಾನಕ್ಕೆ ಉತ್ತರಾಧಿಕಾರಿಯನ್ನು ನೇಮಿಸಿದೆ. ಸಂಧಾನ ನಿರ್ಧಾರ ಇಸ್ರೇಲ್ ಅಧ್ಯಕ್ಷರ ಜತೆ ಸೇರಿ ನಿರ್ಧರಿಸುತ್ತೇವೆ ಎಂದು
ದೇರಳಕಟ್ಟೆ: ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3” ಉದ್ಘಾಟನೆ
ಕೊಣಾಜೆ: ದೇರಳಕಟ್ಟೆಯ ನಿಟ್ಟೆ ಮೈದಾನದಲ್ಲಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವತಿಯಿಂದ ಆಯೋಜಿಸಲಾದ “ಶ್ರೀ ಎನ್.ವಿ. ಹೆಗ್ಡೆ ಸ್ಮಾರಕ ಕ್ರಿಕೆಟ್ ಟೂರ್ನಮೆಂಟ್ – ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3” ಅಂತರ್ ಕಾಲೇಜು ದಕ್ಷಿಣ ಭಾರತ ಮಟ್ಟದ ಫಿಸಿಯೋಥೆರಪಿ ಕ್ರಿಕೆಟ್ ಚಾಂಪಿಯನ್ಶಿಪ್ ಅನ್ನು ಭಾರತೀಯ ಕ್ರಿಕೆಟಿಗ ಶಿಖರ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿ ಭಾರತೀಯ ಕ್ರಿಕೆಟ್ನಲ್ಲಿ ಯುವ ಆಟಗಾರರಿಗೆ ಅವಕಾಶ ದೊರಕಲು ರಾಜ್ಯ ಮಟ್ಟದ ಟೂರ್ನಮೆಂಟ್ಗಳು ಬಹಳ ಮುಖ್ಯ. ಕರ್ನಾಟಕದಲ್ಲಿ ನಡೆಯುವ ನಂದಿ ಟ್ರೋಫಿ ಸ್ಪರ್ಧೆಗಳು ಯುವ ಪ್ರತಿಭೆಗಳನ್ನು ಗುರುತಿಸಿ ದೊಡ್ಡ ಮಟ್ಟದ ಕ್ರಿಕೆಟ್ಗೆ ದಾರಿ ತೋರಿಸುತ್ತವೆ. ನಾನು ಕೂಡ ಇಂತಹ ಟೂರ್ನಮೆಂಟ್ಗಳ ಮೂಲಕವೇ ಮುಂದಿನ ಹಂತಕ್ಕೆ ಸಾಗುವ ಅವಕಾಶ ಪಡೆದೆ. ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ಶಿಸ್ತಿನ ಅಭ್ಯಾಸ, ತಂಡದ ಮನೋಭಾವ ಮತ್ತು ನಿರಂತರ ಅಭ್ಯಾಸವನ್ನು ಬೆಳೆಸಿದರೆ, ಭವಿಷ್ಯದಲ್ಲಿ ರಾಜ್ಯ ಹಾಗೂ ದೇಶದ ಪರವಾಗಿ ಆಡಲು ಸಾಧ್ಯವಾಗುತ್ತದೆ ಎಂದರು. ಗೌರವ ಅತಿಥಿಗಳಾಗಿ ಸಹಕುಲಾಧಿಪತಿ (ಆಸ್ಪತ್ರೆ ಆಡಳಿತ ಮತ್ತು ಪಿಜಿ ಅಧ್ಯಯನ) ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಮಾತನಾಡಿ ಸಂಸ್ಥೆಯ ಸ್ಥಾಪಕರು ಅಗಲಿದ ನಂತರ ಅವರ ಸ್ಮರಣಾರ್ಥ ಈ ಟೂರ್ನಮೆಂಟ್ ಆಯೋಜಿಸಿರು ವುದು ತುಂಬಾ ಅರ್ಥಪೂರ್ಣವಾಗಿದೆ. ತುಂಬಾ ನೋವಿನ ನಡುವೆಯೂ ಅವರ ಹೆಸರಿನಲ್ಲಿ ಈ ಟೂರ್ನಮೆಂಟ್ಗೆ ಹೆಸರು ನೀಡಿ ಅವರ್ ಇಚ್ಛೆಯಂತೆ ಇಷ್ಟದ ಕ್ರಿಕೆಟ್ ಆಯೋಜಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಫಿಸಿಯೋಥೆರಪಿ ವಿಭಾಗ ಪಂದ್ಯಾಟಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ದಕ್ಷಿಣ ಭಾರತದ ವಿವಿಧ ಕಾಲೇಜುಗಳ ಕ್ರೀಡಾಪಟುಗಳನ್ನು ಒಂದೇ ವೇದಿಕೆಗೆ ತರಲು ಈ ರೀತಿಯ ಟೂರ್ನಮೆಂಟ್ಗಳು ಉತ್ತಮ ಅವಕಾಶ ಒದಗಿಸುತ್ತವೆ. ಯುವ ಪ್ರತಿಭೆಗಳು ಇಂತಹ ಸ್ಪರ್ಧೆಗಳ ಮೂಲಕವೇ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇದೀಗ ಭಾರತದಲ್ಲಿ ಕ್ರಿಕೆಟ್ ಜ್ವರ ಹೆಚ್ಚಾಗಿದೆ. ಇತ್ತೀಚೆಗೆ ನಡೆದ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ನಿನ್ನೆ ನಡೆದ ಪಂದ್ಯದಲ್ಲಿಯೂ ಜಯ ಸಾಧಿಸಿರುವುದು ಕ್ರೀಡಾಭಿಮಾನಿಗಳಿಗೆ ಮತ್ತಷ್ಟು ಉತ್ಸಾಹ ತಂದಿದೆ ಎಂದು ಹೇಳಿದರು. ಉಪಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ , ನಿಟ್ಟೆ ಸೆಟಲೈಟ್ ಸೆಂಟರ್ ನ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ, ಕ್ಷೇಮ ಡೀನ್ ಡಾ. ಸಂದೀಪ್ ರೈ, ಡೀನ್ ಜಯಪ್ರಕಾಶ್ ಉಪಸ್ಥಿತರಿದ್ದರು. ಟೂರ್ನಮೆಂಟ್ನ್ನು ಆಯೋಜನಾ ಅಧ್ಯಕ್ಷ ಹಾಗೂ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಪ್ರೊ. ಡಾ. ಧನೇಶ್ ಕುಮಾರ್ ಕೆ.ಯು. ಸ್ವಾಗತಿಸಿದರು. ಆಯೋಜನಾ ಕಾರ್ಯದರ್ಶಿ ಜಯೇಶ್ ಚಂದ್ರನ್ ವಂದಿಸಿದರು. ‘ಗಣ್ಯರು ಕ್ರೀಡೆ ವಿದ್ಯಾರ್ಥಿಗಳಲ್ಲಿ ತಂಡಭಾವನೆ, ಶಿಸ್ತು ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸು ತ್ತದೆ ಎಂದು ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾಲಯದ ಸಲಹೆಗಾರ ವಿನಯ ಹೆಗ್ಡೆ ಅವರ ದೃಷ್ಟಿಯಿಂದ ದಕ್ಷಿಣ ಭಾರತದ ಕ್ರೀಡಾಪಟುಗಳನ್ನು ಒಂದೇ ವೇದಿಕೆಗೆ ತರಬೇಕೆಂಬ ಉದ್ದೇಶದಿಂದ ಈ ಟೂರ್ನಮೆಂಟ್ ಆರಂಭಿಸಲಾಗಿದೆ. ಕ್ರಿಕೆಟ್ ಮೇಲಿನ ಅಪಾರ ಆಸಕ್ತಿ ಮತ್ತು ಕ್ರೀಡಾಭಿಮಾನವನ್ನು ಸ್ಮರಿಸಿ ಈ ಟೂರ್ನಮೆಂಟ್ಗೆ ಶ್ರೀ ಎನ್.ವಿ. ಹೆಗ್ಡೆ ಸ್ಮಾರಕ ಎಂದು ಹೆಸರಿಡಲಾಗಿದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಈ ಬಾರಿ ದಕ್ಷಿಣ ಭಾರತದ ವಿವಿಧ ಫಿಸಿಯೋಥೆರಪಿ ಕಾಲೇಜುಗಳಿಂದ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ’ . -ಪ್ರೊ. ಡಾ. ಧನೇಶ್ ಕುಮಾರ್ ಕೆ.ಯು., ಆಯೋಜಕರು
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಇಫ್ತಾರ್ ಕೂಟ
ಮಂಗಳೂರು, ಮಾ.9: ಎಲ್ಲರ ಮನಸ್ಸು ಒಗ್ಗೂಡಿದರೆ ಸಮಾಜದಲ್ಲಿ ಶಾಂತಿ ತನ್ನಿಂದ ತಾನೆ ಬರುತ್ತದೆ ಮಾಣಿಲ ಶ್ರೀಧಾಮದ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ನೇತೃತ್ವದಲ್ಲಿ ನಡೆದ ಇಫ್ತಾರ್ ಸೌಹಾರ್ಧ ಕೂಟದಲ್ಲಿ ಮಾತನಾಡಿ ದರು. ಶಾಂತಿ ಸೌಹಾರ್ದತೆ ಮತ್ತು ಸಹೋದರತೆ ಎಲ್ಲರೊಂದಿಗೆ ಪ್ರತಿ ವಿಶ್ವಾಸದಿಂದ ಬಾಳಿದಾಗ ಮಾತ್ರ ಸಾಧ್ಯ ಇದಕ್ಕೆ ಇಂತಹ ಸೌಹಾರ್ಧ ಕೂಟಗಳು ಸಾಕ್ಷಿಯಾಗಲಿವೆ ಎಂದರು. ಕಳೆದ 10 ವರ್ಷಗಳಿಂದ ಇಫ್ತಾರ್ ಕೂಟ, ದೀಪಾವಳಿ, ಕ್ರಿಸ್ಮಸ್ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಿಸುವ ಐವನ್ ಡಿ ಸೋಜ ಪ್ರಯತ್ನ ಶ್ಲಾಘನೀಯ. ಅವರ ಈ ಕಾರ್ಯ ಮಾದರಿಯಾಗಿದೆ ಎಂದು ನುಡಿದರು. ಕುದ್ರೋಳಿ ನಡುಪಳ್ಳಿ ಜುಮಾ ಮಸೀದಿಯ ರಿಯಾಜ್ ಫೈಝಿ ಕಕ್ಕಿಂಜೆ ಮಾತನಾಡಿ ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸಿದಕ್ಕೆ ನಾವು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ನುಡಿದರು. ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ. ಜೆ.ಬಿ. ಸಲ್ದಾನಾ ಇವರು ಮಾತನಾಡಿ ಎಲ್ಲ ಧರ್ಮಗಳ ಸಾರಗಳು ಒಂದೇ ಆಗಿದ್ದು ಪ್ರತಿಯೊಬ್ಬರೂ ಎಲ್ಲ ಧರ್ಮಗಳನ್ನು ಪ್ರೀತಿಸಬೇಕು ಪರಸ್ಪರ ಪ್ರೀತಿಯ ಮೂಲಕ ಸಮಾಜನ್ನು ಗೆಲ್ಲಬಹುದು ಎಂದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ ನಾವು ಎಲ್ಲ ಧರ್ಮದವರು ಒಗ್ಗಟ್ಟಾಗಿದ್ದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದರು. ಮಾಜಿ ಶಾಸಕ ಕೃಷ್ಣ ಜೆ ಪಾಲೇಮಾರ್ ಶ್ಲಾಘಿಸಿದರು. ವಿಧಾನ ಪರಿಷತ್ ಐವನ್ ಡಿ ಸೋಜ ಸ್ವಾಗತಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಘಟನೆಯ ಪ್ರಮುಖ ಪಾತ್ರವನ್ನು ವಹಿಸಿದ ಮಹಮ್ಮದ್ ಗುಲಾಂರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಭಾಸ್ಕರ್ ಶೆಟ್ಟಿ, ರೋಹನ್ ಕಾರ್ಪೊರೇಷನ್ನ ಮುಖ್ಯಸ್ಥ ರೋಹನ್ ಮಾಂತೆರೋ, ಮೂಡಾ ಕಮಿಷನರ್ ಮುಹಮ್ಮದ್ ನಜೀರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೈಕಲ್ ಡಿ ಸೋಜ , ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಅಹ್ಮದ್ ಮುದಾಸ್ಸರ್, ಬಿಸಿಸಿಐ ಅಧ್ಯಕ್ಷ ರಶೀದ್ ಹಾಜಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸರಕಾರಿ ಪ್ಲೀಡರ್ ಹಾಗೂ ಹಿರಿಯ ವಕೀಲ ಎಂ.ಪಿ. ನೊರೊನ್ಹಾ, ಜೆರೋಸಾ ಶಿಕ್ಷಣ ಸಂಸ್ಥೆಯ ಸಿಸ್ಟರ್ ಅರ್ಪಿತಾ, ಪ್ರಮುಖರಾದ ಅಬ್ದುಲ್ ಸಲೀಂ, ಶಾಹುಲ್ ಹಮೀದ್, ಸಿ.ಎಂ. ಮುಸ್ತಾಫಾ ಸುಳ್ಯ, ನಾರಾಯಣ್ ಕೋಟ್ಯಾನ್ ರಿಚರ್ಡ್ ಬೆಳಗಂ ಮತ್ತಿತರರು ಉಪಸ್ಥಿತರಿದ್ದರು.
ವಾಡಿ | ಮಕ್ಕಳಿಗೆ ಸಮಯ ನೀಡಿ ನಿಗಾವಹಿಸಬೇಕು: ರೇವಮ್ಮ ಗುರ್ಜಾಲಕರ
ವಾಡಿ: ಹೆತ್ತವರು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಮಕ್ಕಳಿಗೆ ಸಮಯ ನೀಡಿ ಅವರ ಮೇಲೆ ನಿಗಾವಹಿಸಬೇಕು. ಇಲ್ಲವಾದರೆ ಎಳೆಯ ಮಕ್ಕಳು ಹಾದಿ ತಪ್ಪುವ ಸಾಧ್ಯತೆ ಇದೆ ಎಂದು ಆವಿಷ್ಕಾರ ಸಾಂಸ್ಕೃತಿಕ ಸಂಘಟನೆಯ ಕಲಬುರಗಿ ಜಿಲ್ಲಾ ಸಮಿತಿ ಸದಸ್ಯೆ ರೇವಮ್ಮ ಎಸ್. ಗುರ್ಜಾಲಕರ ಹೇಳಿದರು. ಹಲಕರ್ಟಿ ಬಸವೇಶ್ವರ ವಿದ್ಯಾಭಿವೃದ್ಧಿ ಶಿಕ್ಷಣ ಸಂಸ್ಥೆಯ 23ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಜೊತೆಗಿರುವಾಗ ಮೊಬೈಲ್ ಹಿಡಿದುಕೊಳ್ಳದೇ ಅವರೊಂದಿಗೆ ಬೆರೆತು ಮಾತನಾಡಬೇಕು. ಅವರ ಅಭ್ಯಾಸ ಹಾಗೂ ಬೆಳವಣಿಗೆಯ ಕಡೆ ಗಮನ ಹರಿಸಬೇಕು. ಮಕ್ಕಳೇ ನಮ್ಮ ನಿಜವಾದ ಆಸ್ತಿ ಆಗಿದ್ದು, ಅವರು ದಾರಿ ತಪ್ಪದಂತೆ ನೋಡಿಕೊಳ್ಳಲು ಅವರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಇಂದಿನ ಶಿಕ್ಷಣ ವ್ಯವಸ್ಥೆ ಅಜ್ಞಾನ ಕಳೆದು ಜ್ಞಾನ ನೀಡಬೇಕಾದರೂ ಅದು ಕೇವಲ ಅಂಕಗಳಿಗೆ ಸೀಮಿತವಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಸಂಕುಚಿತ ಮನೋಭಾವನೆ ಬೆಳೆಯುವ ಸಾಧ್ಯತೆ ಇದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು ಎಂದು ಅಭಿಪ್ರಾಯಪಟ್ಟರು. ಕಲೆ, ಸಾಹಿತ್ಯ, ಮನೋರಂಜನೆ, ಆಟ ಹಾಗೂ ನೀತಿ–ನೈತಿಕ ಮೌಲ್ಯಗಳಂತಹ ಮಾನವೀಯ ಅಂಶಗಳ ಬೋಧನೆ ಇಂದಿನ ಮಕ್ಕಳಿಗೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್ ಕಲಬುರಗಿ)ಯ ಬೋಧಕ ಸತೀಶ್ ಎಂ ಜಿ, ಮಹಿಳಾ ಸಾಂಸ್ಕೃತಿಕ ಸಂಘಟನೆ ಎಐಎಂ ಎಸ್ ಎಸ್ ನ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ, ರಂಗಕಲಾವಿದ ಶಿವಣ್ಣ ಬಿ ಹಿಟ್ಟಿನ, ಪ್ರಮುಖರಾದ ಸೂಗಣ್ಣ ಚಂದನಕೇರಿ, ದತ್ತಾತ್ರೇಯ ಬುಕ್ಕಾ, ಮಲ್ಲಿಕಾರ್ಜುನ ಹಣ್ಣಿಕೇರಾ, ಸಂಸ್ಥೆ ಉಪಾಧ್ಯಕ್ಷ ಭಾಗಣ್ಣ ಬುಕ್ಕಾ, ಭೀಮರಾಯ ಕೊಲ್ಕುಂದಿ, ಗುಂಡಣ್ಣ ಎಂ.ಕೆ, ಶಿವಪ್ಪ ಇಸಬಾ, ಚಂದ್ರಕಾಂತ ಇಸಬಾ, ಶಿವಕುಮಾರ ಛತ್ರಿ, ಗೌರಮ್ಮ ಸರಡಗಿ, ಸಾವಿತ್ರಿಬಾಯಿ ದೋಶೆಟ್ಟಿ, ಗೋದಾವರಿ ಕಾಂಬಳೆ ಹಾಗೂ ಇನ್ನಿತರರು ಇದ್ದರು. ಮುಖ್ಯ ಶಿಕ್ಷಕ ಶರಣಕುಮಾರ ದೋಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಲಬುರಗಿ ಜಿಲ್ಲಾ ಮಟ್ಟದ ಬಾಲಕರ ಖೋ ಖೋ ಪಂದ್ಯದಲ್ಲಿ ಚಿತ್ತಾಪುರ ತಾಲ್ಲೂಕು ಪ್ರತಿನಿಧಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಸಂಸ್ಥೆಯ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಸನ್ಮಾನಿಸಿ ಗೌರವಿಸಿದರು. ನಂತರ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಂಗಳೂರು,ಮಾ.9: ತೋಟಬೆಂಗ್ರೆಯ ಲೋಕನಾಥ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಫನಾ (18) ಎಂಬಾಕೆ ಮಾ.6 ರಿಂದ ಕಾಣೆಯಾಗಿದ್ದಾರೆ. ಎಂದಿನಂತೆ ಬಂದರಿನಲ್ಲಿರುವ ವಿವೇಕ್ ಮಾರ್ಟ್ಗೆ ಕೆಲಸಕ್ಕೆಂದು ಹೋದವರು ವಾಪಸ್ ಬಂದಿಲ್ಲ ಎಂದು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 4.8 ಅಡಿ ಎತ್ತರದ, ಸಾಧಾರಣ ಕಪ್ಪುಮೈಬಣ್ಣದ, ದುಂಡಗಿನ ಶರೀರ ಹೊಂದಿದ್ದು, ಬಿಳಿ ಬಣ್ಣದ ಚೂಡಿದಾರ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಹಿಂದಿ ಭೋಜಪುರಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ವಾಡಿ | ಬಸವ ಮಹೋತ್ಸವ-ಐವರು ಸಾಧಕರಿಗೆ ʼಬಸವ ಶ್ರೀʼ ಪ್ರಶಸ್ತಿ ಪ್ರದಾನ
ಶಿಕ್ಷಣ ಸಂಸ್ಥೆಗಳು ಬಡ ಮಕ್ಕಳ ಭವಿಷ್ಯ ಬರೆಯಲಿ : ಸೋಮಶೇಖರ ಶಿವಾಚಾರ್ಯ
Kalaburagi | ಯುಗಾದಿ ಹಬ್ಬ : ಶ್ರೀಶೈಲಂಗೆ ವಿಶೇಷ ಬಸ್ಗಳ ಕಾರ್ಯಾಚರಣೆ
ಕಲಬುರಗಿ: ಚಂದ್ರಮಾನ ಯುಗಾದಿ ಪ್ರಯುಕ್ತ ಮಾ.19 ರಂದು ಆಂಧ್ರಪ್ರದೇಶ ರಾಜ್ಯದ ಶ್ರೀಶೈಲಂನಲ್ಲಿ ಜರುಗುವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಇದೇ ಮಾ.10 ರಿಂದ 20 ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ/ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ/ಹೆಚ್ಚುವರಿ ವಾಹನಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕರು ನಿರ್ದೇಶಕ ಸುಶೀಲಾ ಅವರು ತಿಳಿಸಿದ್ದಾರೆ. ಈ ಜಾತ್ರೆಗೆ ಹೋಗಲು ಒಟ್ಟಿಗೆ 50 ಜನ ಪ್ರಯಾಣಿಕರು ಇದ್ದಲ್ಲಿ, ಒಂದು ವಾಹನವನ್ನು ತಮ್ಮ ಗ್ರಾಮ/ಸ್ಥಳದಿಂದ ಎಲ್ಲಿಯೂ ನಿಲುಗಡೆ ಮಾಡದೇ ಬೈಪಾಸ್ ಮುಖಾಂತರ ನೇರವಾಗಿ ಶ್ರೀಶೈಲಂಗೆ ಕಾರ್ಯಾಚರಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವಿಭಾಗೀಯ ಸಂಚಾರ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಕಲಬುರಗಿ ವಿಭಾಗ-1ರ ವಿಭಾಗೀಯ ಸಂಚಾರ ಅಧಿಕಾರಿಗಳ ಮೊಬೈಲ್ ಸಂಖ್ಯೆ 7760992102, ಕಲಬುರಗಿ ವಿಭಾಗ-2 ಮೊಬೈಲ್ ಸಂಖ್ಯೆ-7760984086, ಯಾದಗಿರಿ-7760992452, ಬೀದರ-7760992202, ರಾಯಚೂರು-7760992352, ಕೊಪ್ಪಳ-7760992402, ಬಳ್ಳಾರಿ-7760992152, ವಿಜಯನಗರ (ಹೊಸಪೇಟೆ)-7760992302 ಹಾಗೂ ವಿಜಯಪುರ-7760992252 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಮಂಗಳೂರು: ಪ್ರಸಕ್ತ (2025-26ನೇ) ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ಅಭ್ಯರ್ಥಿಗಳಿಗೆ ಬೆಂಗಳೂರಿನ ಹಜ್ ಭವನದಲ್ಲಿ ವಸತಿಯುತ ಕೆಎಎಸ್ ಸಂದರ್ಶನ ತರಬೇತಿಗಾಗಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಅಭ್ಯರ್ಥಿಗಳು KPSC 2023-24ನೇ ಸಾಲಿನ ಕೆಎಎಸ್ ಅಧಿಸೂಚನೆಯ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲಸಂಖ್ಯಾತರ ನಿರ್ದೇಶನಾಲಯದ ಜಾಲತಾಣ https://dom.karnataka.gov.in ಮೂಲಕ ಅರ್ಜಿ ಸಲ್ಲಿಸಲು ಮಾ.13 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮಂಗಳೂರು (0824-2433078), ಬಂಟ್ವಾಳ (0825-5232470), ಬೆಳ್ತಂಗಡಿ (0826-295335), ಪುತ್ತೂರು (0825-1237078), ಸುಳ್ಯ (0825-7230666) ಅಥವಾ ಇಲಾಖೆಯ ವೆಬ್ಸೈಟ್ https://dom.karnataka.gov.in ಹಾಗೂ ಸಹಾಯವಾಣಿ: 8277799990ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಪಲಾಯನ ಕಳವಳಕಾರಿ: ಜಿ.ಪಂ. ಉಪ ಕಾರ್ಯದರ್ಶಿ
ದ.ಕ. ಜಿಲ್ಲಾ ಕೌಶಲ ಅಭಿವೃದ್ಧಿ ಯೋಜನೆ ತಯಾರಿ ಸಭೆ
ಮೂರನೇ ಟಿ-20 ವಿಶ್ವಕಪ್ ಪ್ರಶಸ್ತಿಯೊಂದಿಗೆ ಅದ್ವಿತೀಯ ಸಾಧನೆಗೈದ ಭಾರತ
ಹೊಸದಿಲ್ಲಿ,ಮಾ.9: ಭಾರತ ಕ್ರಿಕೆಟ್ ತಂಡವು ಮೂರನೇ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಟಿ-20 ವಿಶ್ವಕಪ್ನಲ್ಲಿ ಯಾವ ತಂಡವೂ ಮಾಡದ ಸಾಧನೆ ಮಾಡಿದೆ. ಅಹ್ಮದಾಬಾದ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದ ಅಂಕಿ-ಅಂಶಗಳು ಇಂತಿವೆ. 3: ಭಾರತ ತಂಡವು 2007 ಹಾಗೂ 2024ರ ನಂತರ ಮೂರನೇ ಬಾರಿ ಟಿ-20 ವಿಶ್ವಕಪ್ ಜಯಿಸಿದೆ. ವೆಸ್ಟ್ಇಂಡೀಸ್(2012 ಹಾಗೂ 2016)ಮತ್ತು ಇಂಗ್ಲೆಂಡ್(2010 ಹಾಗೂ 2022)ತಲಾ ಎರಡು ಬಾರಿ ಈ ಸಾಧನೆ ಮಾಡಿವೆ. ಭಾರತ ತಂಡವು ಪುರುಷರ ಟಿ-20 ವಿಶ್ವಕಪ್ನಲ್ಲಿ ಸತತವಾಗಿ ಪ್ರಶಸ್ತಿಗಳನ್ನು ಗೆದ್ದಿರುವ ಮೊದಲ ತಂಡವಾಗಿದೆ. ಈ ಹಿಂದೆ ಹಾಲಿ ಚಾಂಪಿಯನ್ ತಂಡ ಫೈನಲ್ಗೂ ತಲುಪಿಲ್ಲ. ಭಾರತ ತಂಡವು ಸ್ವದೇಶದಲ್ಲಿ ವಿಶ್ವಕಪ್ ಟೂರ್ನಿ ಗೆದ್ದಿರುವ ಮೊದಲ ತಂಡವಾಗಿದೆ. 1-3: ಪುರುಷರ ಟಿ-20 ವಿಶ್ವಕಪ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ತಂಡ ಒಂದು ಗೆಲುವು-ಮೂರರಲ್ಲಿ ಸೋತಿದೆ. ಭಾರತ ತಂಡ ಈ ಹಿಂದೆ ಕಿವೀಸ್ ವಿರುದ್ಧದ ಎಲ್ಲ ಮೂರೂ ವಿಶ್ವಕಪ್ ಪಂದ್ಯಗಳನ್ನು ಸೋತಿತ್ತು. 255/5: ನ್ಯೂಝಿಲ್ಯಾಂಡ್ ವಿರುದ್ಧ ಫೈನಲ್ನಲ್ಲಿ ಭಾರತ ತಂಡವು 5 ವಿಕೆಟ್ಗಳ ನಷ್ಟಕ್ಕೆ 255 ರನ್ ಗಳಿಸಿದೆ. ಇದು ಟಿ-20 ಕ್ರಿಕೆಟ್ನ ನಾಕೌಟ್ ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಇದು ಪುರುಷರ ಟಿ-20 ವಿಶ್ವಕಪ್ ಪಂದ್ಯದಲ್ಲಿ ದಾಖಲಾದ ಮೂರನೇ ಗರಿಷ್ಠ ಮೊತ್ತವಾಗಿದೆ. 96: ಪುರುಷರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಭಾರೀ ರನ್ ಅಂತರದಿಂದ ಜಯಶಾಲಿಯಾಗಿದೆ. ಭಾರತವು ಪ್ರಸಕ್ತ ವಿಶ್ವಕಪ್ನಲ್ಲಿ ನಮೀಬಿಯಾ ವಿರುದ್ಧ 93 ರನ್ ಅಂತರದಿಂದ ಗೆಲುವು ದಾಖಲಿಸಿತ್ತು. ನ್ಯೂಝಿಲ್ಯಾಂಡ್ ತಂಡವು ಪ್ರಸಕ್ತ ಪಂದ್ಯಾವಳಿಯಲ್ಲಿ ಹೀನಾಯ ಸೋಲನುಭವಿಸಿದೆ. ಪುರುಷರ ಟಿ-20 ಕ್ರಿಕೆಟ್ನಲ್ಲಿ ಕಿವೀಸ್ ತಂಡದ ಮೂರು ಹೀನಾಯ ಸೋಲುಗಳ ಪೈಕಿ ಎರಡನ್ನು ಭಾರತ ವಿರುದ್ಧ ಅಹ್ಮದಾಬಾದ್ನಲ್ಲಿ ಎದುರಿಸಿದೆ. 4/15: ಜಸ್ಪ್ರಿತ್ ಬುಮ್ರಾ ಟಿ-20 ಪಂದ್ಯದಲ್ಲಿ ಮೊದಲ ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದಾರೆ. ಪುರುಷರ ಟಿ-20 ವಿಶ್ವಕಪ್ ಫೈನಲ್ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಆಗಿದ್ದಾರೆ. ಲಂಕಾದ ಅಜಂತಾ ಮೆಂಡಿಸ್ 2012ರಲ್ಲಿ ವೆಸ್ಟ್ಇಂಡೀಸ್ ತಂಡದ ವಿರುದ್ಧ 12 ರನ್ಗೆ ನಾಲ್ಕು ವಿಕೆಟ್ಗಳನ್ನು ಉರುಳಿಸಿದ್ದರು. 1: ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 7ಕ್ಕೆ 253 ರನ್ ಗಳಿಸಿದ್ದ ಭಾರತ ತಂಡವು ಪುರುಷರ ಟಿ-20 ಕ್ರಿಕೆಟ್ನಲ್ಲಿ ಸತತ ಎರಡನೇ ಬಾರಿ 250ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡವಾಗಿದೆ. ಭಾರತ ತಂಡ ರವಿವಾರದ ಪಂದ್ಯದಲ್ಲಿ ಮೂರನೇ ಬಾರಿ 250ಕ್ಕೂ ಅಧಿಕ ರನ್ ಗಳಿಸಿದೆ. ಭಾರತ ತಂಡವು 2026ರಲ್ಲಿ ಟಿ-20 ಪಂದ್ಯದಲ್ಲಿ ನಾಲ್ಕನೇ ಬಾರಿ 250ಕ್ಕೂ ಅಧಿಕ ರನ್ ಕಲೆ ಹಾಕಿದೆ. ಒಂದೇ ವರ್ಷದಲ್ಲಿ ಎಲ್ಲ ಟಿ-20 ಕ್ರಿಕೆಟ್ನಲ್ಲಿ ತಂಡವೊಂದರ ಶ್ರೇಷ್ಠ ಸಾಧನೆ ಇದಾಗಿದೆ. 18: ಅಭಿಷೇಕ್ ಶರ್ಮಾ ನ್ಯೂಝಿಲ್ಯಾಂಡ್ ವಿರುದ್ಧ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟಿ-20 ವಿಶ್ವಕಪ್ನ ನಾಕೌಟ್ ಪಂದ್ಯದಲ್ಲಿ ಬ್ಯಾಟರ್ವೊಬ್ಬನ ವೇಗದ ಅರ್ಧಶತಕ ಇದಾಗಿದೆ. ಈ ಹಿಂದೆ ಸೆಮಿ ಫೈನಲ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫಿನ್ ಅಲೆನ್(19 ಎಸೆತ)ಹಾಗೂ ಭಾರತ ವಿರುದ್ಧ ಜೇಕಬ್ ಬೆಥೆಲ್(19 ಎಸೆತ)ವೇಗದ ಅರ್ಧಶತಕ ಗಳಿಸಿದ್ದರು. 89: ಸಂಜು ಸ್ಯಾಮ್ಸನ್ ನ್ಯೂಝಿಲ್ಯಾಂಡ್ ವಿರುದ್ಧ 89 ರನ್ ಗಳಿಸಿದ್ದಾರೆ. ಇದು ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ವಿಂಡೀಸ್ನ ಮರ್ಲಾನ್ ಸ್ಯಾಮುಯೆಲ್ಸ್ ಔಟಾಗದೆ 85 ಹಾಗೂ 2021ರಲ್ಲಿ ಆಸ್ಟ್ರೇಲಿಯದ ವಿರುದ್ಧ ಕಿವೀಸ್ನ ಕೇನ್ ವಿಲಿಯಮ್ಸನ್ 85 ರನ್ ಗಳಿಸಿದ್ದರು. ಸ್ಯಾಮ್ಸನ್ ಪುರುಷರ ಟಿ-20 ವಿಶ್ವಕಪ್ನ ಸೆಮಿ ಫೈನಲ್ ಹಾಗೂ ಫೈನಲ್ ಎರಡರಲ್ಲೂ ಅರ್ಧಶತಕ ಗಳಿಸಿದ ಮೂರನೇ ಬ್ಯಾಟರ್ ಆಗಿದ್ದಾರೆ. ಶಾಹೀದ್ ಅಫ್ರಿದಿ(2009) ಹಾಗೂ ವಿರಾಟ್ ಕೊಹ್ಲಿ(2014)ಈ ಸಾಧನೆ ಮಾಡಿದ್ದರು. 92/0: ಪುರುಷರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡವು ಪವರ್ಪ್ಲೇನಲ್ಲಿ ಜಂಟಿ ಗರಿಷ್ಠ ಸ್ಕೋರ್(92/0) ಗಳಿಸಿದೆ. 2024ರಲ್ಲಿ ಅಫ್ಘಾನಿಸ್ತಾನದ ವಿರುದ್ಧ ವೆಸ್ಟ್ಇಂಡೀಸ್ ತಂಡದ ಸಾಧನೆ(92/1)ಯನ್ನು ಸರಿಗಿಟ್ಟಿದೆ. 4: ಅಭಿಷೇಕ್ ಶರ್ಮಾ ಟಿ-20 ಕ್ರಿಕೆಟ್ನಲ್ಲಿ ಪವರ್ಪ್ಲೇ ಒಳಗೆ ನಾಲ್ಕನೇ ಬಾರಿ ಅರ್ಧಶತಕ ಗಳಿಸಿದರು. ಪುರುಷರ ಟಿ-20 ವಿಶ್ವಕಪ್ನಲ್ಲಿ ಪವರ್ಪ್ಲೇನಲ್ಲಿ ಅರ್ಧಶತಕ ಸಿಡಿಸಿದ ಏಳನೇ ಬ್ಯಾಟರ್ ಆಗಿದ್ದಾರೆ. 3: ಸ್ಯಾಮ್ಸನ್ ಸತತ ಮೂರನೇ ಬಾರಿ 80ಕ್ಕೂ ಅಧಿಕ ರನ್ ಗಳಿಸಿದರು. ಈ ಹಿಂದಿನ ಎರಡು ಪಂದ್ಯಗಳಲ್ಲಿ ವಿಂಡೀಸ್ ವಿರುದ್ಧ ಔಟಾಗದೆ 97, ಇಂಗ್ಲೆಂಡ್ ವಿರುದ್ಧ 89 ರನ್ ಕಲೆ ಹಾಕಿದ್ದರು. ಮಹೇಲ ಜಯವರ್ಧನೆ 2010ರ ಟಿ-20 ವಿಶ್ವಕಪ್ನಲ್ಲಿ ಸತತವಾಗಿ ಮೂರು ಬಾರಿ 80 ಪ್ಲಸ್ ಸ್ಕೋರ್ ಗಳಿಸಿದ ಇನ್ನೋರ್ವ ಆಟಗಾರನಾಗಿದ್ದಾರೆ. 321: ಸ್ಯಾಮ್ಸನ್ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 321 ರನ್ ಗಳಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಆಗಿರುವ ಸ್ಯಾಮ್ಸನ್, ವಿರಾಟ್ ಕೊಹ್ಲಿ ದಾಖಲೆಯನ್ನು(2014ರಲ್ಲಿ 319 ರನ್) ಮುರಿದಿದ್ದಾರೆ. ಸ್ಯಾಮ್ಸನ್ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಒಟ್ಟು 178 ರನ್ ಗಳಿಸಿದ್ದು, ಮತ್ತೊಮ್ಮೆ ಕೊಹ್ಲಿ ದಾಖಲೆ(2014ರಲ್ಲಿ 149)ಯನ್ನು ಮುರಿದಿದ್ದಾರೆ. 24: ಪ್ರಸಕ್ತ ವಿಶ್ವಕಪ್ನಲ್ಲಿ ಸ್ಯಾಮ್ಸನ್ ಒಟ್ಟು 24 ಸಿಕ್ಸರ್ಗಳನ್ನು ಸಿಡಿಸಿದರು. ಒಂದೇ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ಬ್ಯಾಟರ್ವೊಬ್ಬನ ಶ್ರೇಷ್ಠ ಸಾಧನೆ ಇದಾಗಿದೆ. ಫಿನ್ ಅಲೆನ್ ಒಟ್ಟು 20 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಪವರ್ಪ್ಲೇನಲ್ಲಿನ ಕಳಪೆ ಪ್ರದರ್ಶನಕ್ಕೆ ಬೆಲೆ ತೆರಬೇಕಾಯಿತು: ಸ್ಯಾಂಟ್ನರ್ ಭಾರತ ತಂಡದ ವಿರುದ್ಧ ರವಿವಾರ ನಡೆದ ಪುರುಷರ ಟಿ-20 ವಿಶ್ವಕಪ್ ಫೈನಲ್ನಲ್ಲಿ ಎರಡೂ ಪವರ್ಪ್ಲೇಗಳಲ್ಲಿ ನೀಡಿರುವ ಕಳಪೆ ಪ್ರದರ್ಶನಕ್ಕೆ ನ್ಯೂಝಿಲ್ಯಾಂಡ್ ತಂಡ ಬೆಲೆ ತೆರಬೇಕಾಯಿತು ಎಂದು ನಾಯಕ ಮಿಚೆಲ್ ಸ್ಯಾಂಟ್ನರ್ ಅಭಿಪ್ರಾಯಪಟ್ಟಿದ್ದಾರೆ. ಫೈನಲ್ ಪಂದ್ಯದಲ್ಲಿ 96 ರನ್ಗಳ ಅಂತರದಿಂದ ಸೋತಿರುವ ಕಿವೀಸ್ ಪಡೆ ತನ್ನ ಬಹುಕಾಲದ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಕನಸು ಈಡೇರಿಸಿಕೊಳ್ಳಲು ಮತ್ತೊಮ್ಮೆ ವಿಫಲವಾಯಿತು. ‘‘ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ತಂಡವು ತನ್ನ ಶಕ್ತಿಯನ್ನು ತೋರಿಸಿಕೊಟ್ಟಿದೆ. ಎರಡು ಪವರ್ಪ್ಲೇಗಳಲ್ಲಿ ನಾವು ಸಂಪೂರ್ಣ ವಿಫಲವಾದೆವು. ಬೌಲಿಂಗ್ ಪವರ್ಪ್ಲೇನಲ್ಲಿ ಒಂದೂ ವಿಕೆಟ್ ಪಡೆಯದೆ 90ಕ್ಕೂ ಅಧಿಕ ರನ್ ಬಿಟ್ಟುಕೊಟ್ಟೆವು. ಬ್ಯಾಟಿಂಗ್ ಪವರ್ಪ್ಲೇನಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ 40 ರನ್ ಗಳಿಸಿದ್ದೆವು’’ಎಂದು ಸ್ಯಾಂಟ್ನರ್ ಹೇಳಿದರು. ಭಾರತದ ಆರಂಭಿಕ ಆಟಗಾರರಾದ ಸ್ಯಾಮ್ಸನ್ ಹಾಗೂ ಅಭಿಷೇಕ್ ಮೊದಲ ಆರು ಓವರ್ಗಳ ಪವರ್ಪ್ಲೇನಲ್ಲಿ 92 ರನ್ ಗಳಿಸಿದ್ದರು. ಇದೇ ಅವಧಿಯಲ್ಲಿ ರನ್ ಚೇಸ್ ವೇಳೆ ಕಿವೀಸ್ 52 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಸಚಿನ್ ತೆಂಡುಲ್ಕರ್ಗೆ ಎಲ್ಲ ಶ್ರೇಯಸ್ಸು ಸಲ್ಲಿಸಿದ ‘ಸರಣಿಶ್ರೇಷ್ಠ‘ ಸ್ಯಾಮ್ಸನ್ ಭಾರತ ಕ್ರಿಕೆಟ್ ತಂಡವು 2026ರ ಆವೃತ್ತಿಯ ಟಿ-20 ಚಾಂಪಿಯನ್ಪಟ್ಟಕ್ಕೇರಿದ ನಂತರ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್, ತನ್ನ ಸಾಧನೆಯ ಎಲ್ಲ ಶ್ರೇಯಸ್ಸನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ಗೆ ಸಮರ್ಪಿಸಿದರು. ಫೈನಲ್ ಪಂದ್ಯದ ನಂತರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಯಾಮ್ಸನ್, ಭಾರತ ತಂಡವು ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡಿದ್ದಾಗ ಕೇವಲ ಎರಡು ಪಂದ್ಯಗಳನ್ನು ಆಡಿದ ನಂತರ ಆಡುವ 11ರ ಬಳಗದಿಂದ ಹೊರಗುಳಿದಿದ್ದ ಸಂದರ್ಭದಲ್ಲಿ ನಾನು ತೆಂಡುಲ್ಕರ್ರನ್ನು ಭೇಟಿಯಾಗಿದ್ದೆ ಎಂದು ಬಹಿರಂಗಪಡಿಸಿದರು. ‘‘ನಾನು ಆಸ್ಟ್ರೇಲಿಯ ಪ್ರವಾಸ ಕೈಗೊಂಡಾಗ ಆಡುವ 11ರ ಬಳಗದಲ್ಲಿ ಸ್ಥಾನ ಕಳೆದುಕೊಂಡು ಯೋಚಿಸುತ್ತಾ ಕುಳಿತ್ತಿದ್ದೆ. ನಂತರ ಸಚಿನ್ ಸರ್ ಬಳಿ ತೆರಳಿ ಅವರೊಂದಿಗೆ ದೀರ್ಘಸಮಯ ಸಮಾಲೋಚಿಸಿದೆ. ಸಚಿನ್ರಂತಹ ಆಟಗಾರರಿಂದ ಮಾರ್ಗದರ್ಶನ ಪಡೆಯುವ ಅಪೂರ್ವ ಅವಕಾಶ ಲಭಿಸಿತು. ನನಗೆ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದು ಸ್ಯಾಮ್ಸನ್ ಹೇಳಿದರು. ಪಂದ್ಯಾವಳಿಯಲ್ಲಿ ಒಟ್ಟು 321 ರನ್ ಗಳಿಸಿದ ಗರಿಷ್ಠ ರನ್ ಸ್ಕೋರರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಸ್ಯಾಮ್ಸನ್ ಭಾರತ ತಂಡವು ಮೂರನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ‘‘2024ರಲ್ಲಿ ವೆಸ್ಟ್ಇಂಡೀಸ್ನಲ್ಲಿ ಟಿ-20 ವಿಶ್ವಕಪ್ ಗೆದ್ದಿರುವ ಭಾರತ ತಂಡದಲ್ಲಿ ನಾನಿದ್ದೆ. ಆಗ ನಾನು ಪಂದ್ಯವನ್ನು ಆಡಿರಲಿಲ್ಲ. ಆದರೆ ನಾನು ಎಲ್ಲವನ್ನೂ ನೋಡುತ್ತಿದ್ದೆ, ಕನಸು ಕಾಣುತ್ತಿದ್ದೆ, ಕೆಲಸ ಮಾಡುತ್ತಲ್ಲೇ ಇದ್ದೆ. ನಾನು ಇನ್ನಷ್ಟು ಶ್ರಮಪಡುವ ಅಗತ್ಯವಿದೆ ಎಂದು ಯೋಚಿಸಿದೆ. ಇದೀಗ ನಾನು ಬಯಸಿದ್ದನ್ನು ಸಾಧಿಸಿದ್ದೇನೆ. ದೇವರ ದಯೆಯಿಂದ ನಾನು ಯೋಚಿಸಿದಂತೆ ಆಗಿದೆ’’ ಎಂದರು. ‘‘ವಿಶ್ವಕಪ್ ಟೂರ್ನಿಗಿಂತ ಮೊದಲು ಸ್ವದೇಶದಲ್ಲಿ ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಕಳಪೆ ಫಾರ್ಮ್ನಿಂದಾಗಿ ತಂಡದಿಂದ ಕೈಬಿಡಲ್ಪಟ್ಟಾಗ ಮಾನಸಿಕವಾಗಿ ಪರದಾಟ ನಡೆಸಿದ್ದೆ. ನನ್ನ ಕನಸು ಭಗ್ನವಾಯಿತು, ಏನು ಮಾಡಲಿ ಎಂದು ಯೋಚಿಸುತ್ತಿದ್ದೆ. ಆದರೆ ದೇವರ ದಯೆಯಿಂದ ಏಕಾಏಕಿ ವಿಶ್ವಕಪ್ನ ನಿರ್ಣಾಯಕ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದೆ. ನನ್ನ ದೇಶಕ್ಕಾಗಿ ಏನು ಮಾಡಬೇಕೊ ಅದನ್ನು ಮಾಡಿದೆ. ನನ್ನ ಕನಸು ಈಡೇರಿದ್ದಕ್ಕೆ ತುಂಬಾ ಹೆಮ್ಮೆ ಹಾಗೂ ಖುಷಿಯಾಗುತ್ತಿದೆ’’ ಎಂದು ಸ್ಯಾಮ್ಸನ್ ಹೇಳಿದ್ದಾರೆ.
Raichur | ಅಂಬೇಡ್ಕರ್ ವೃತ್ತದಲ್ಲಿ ಛಲವಾದಿ ಮಹಾಸಭಾದಿಂದ ಪ್ರತಿಭಟನೆ
ಹಳೆಯ ಮೀಸಲಾತಿ ಮುಂದುವರಿಸಲು ಒತ್ತಾಯ
ಸೆಂಟ್ರಲ್ ಕಮಿಟಿ ನಿಯೋಗ ಪೊಲೀಸ್ ಆಯುಕ್ತ-ಎಸ್ಪಿ ಭೇಟಿ
ಮಂಗಳೂರು, ಮಾ.9: ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ರ ನಿರ್ದೇಶನದಂತೆ ರಮಝಾನ್ ಕೊನೆಯ ಹತ್ತರಲ್ಲಿ ಹಾಗೂ ಈದ್ ಸಂದರ್ಭ ವಿಶೇಷ ಪ್ರಾರ್ಥನೆಗೆ ತೆರಳಲಿರುವ ಕಾರಣ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಕಮಿಟಿಯ ನಿಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಸಂದರ್ಭ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಮಾಜಿ ಮೇಯರ್ ಕೆ. ಅಶ್ರಫ್, ಕಾರ್ಯದರ್ಶಿಗಳಾದ ಹಾಜಿ ಅಹ್ಮದ್ ಬಾವ ಪಡೀಲ್, ಹಾಜಿ ಬಿ. ಅಬೂಬಕರ್, ಎಂ.ಎ. ಅಶ್ರಫ್, ಅಬ್ಬಾಸ್ ಉಚ್ಚಿಲ್, ಇಕ್ಬಾಲ್ ಅಹ್ಮದ್ ಮುಲ್ಕಿ ಉಪಸ್ಥಿತರಿದ್ದರು.
ಕರೂರು ಕಾಲ್ತುಳಿತ ಪ್ರಕರಣ | ಟಿವಿಕೆ ಮುಖ್ಯಸ್ಥ ವಿಜಯ್ಗೆ ಸಿಬಿಐ ಸಮನ್ಸ್
ಹೊಸದಿಲ್ಲಿ, ಮಾ. 9: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಹೊಸ ಸುತ್ತಿನ ವಿಚಾರಣೆಗೆ ಮಂಗಳವಾರ ಹಾಜರಾಗುವಂತೆ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ಸಿಬಿಐ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 12 ಹಾಗೂ 19ರಂದು ವಿಜಯ್ ಅವರನ್ನು ಸಿಬಿಐಯ ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭ ಸಿಬಿಐ ಮುಂದಿನ ವಿಚಾರಣೆಗೆ ಅಗತ್ಯವಿರುವ ವಿಷಯಗಳನ್ನು ಸಂಗ್ರಹಿಸಿತು ಹಾಗೂ ಹೆಚ್ಚಿನ ಸ್ಪಷ್ಟನೆಯನ್ನು ವಿಜಯ್ ಅವರಿಂದ ಪಡೆದುಕೊಂಡಿತು. ಅವರಿಗೆ ಈಗ ಹೊಸ ನೋಟಿಸ್ ನೀಡಲಾಗಿದೆ. ತಮಿಳುನಾಡಿನ ಕರೂರಿನಲ್ಲಿ 2025 ಸೆಪ್ಟಂಬರ್ 27ರಂದು ನಡೆದ ವಿಜಯ್ ಅವರ ರ್ಯಾಲಿಯ ಸಂದರ್ಭ ಸಂಭವಿಸಿದ ಕಾಲ್ತುಳಿದಲ್ಲಿ 41 ಮಂದಿ ಮೃತಪಟ್ಟಿದ್ದರು ಹಾಗೂ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ನಡೆಸುತ್ತಿತ್ತು. ಸುಪ್ರೀಂ ಕೋರ್ಟ್ನ ಆದೇಶದ ಬಳಿಕ ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ.
ಬಜಾಲ್: ಫೂಟ್ ಪಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ
ಮಂಗಳೂರು: ಸೊಸೈಟಿ ಆಫ್ ಸೈಂಟ್ ವಿನ್ಸೆಂಟ್ ಡಿ ಪಾವ್ಲ್, ಹೆಲ್ತ್ ಕಮಿಷನ್ ಬಜಾಲ್ ಚರ್ಚ್ ಹಾಗೂ ಶ್ರೀದೇವಿ ವೆಲ್ನೆಸ್ ಸೆಂಟರ್ನ ಜಂಟಿ ಆಶ್ರಯದಲ್ಲಿ ಬಜಾಲ್ ಸಂತ ಜೋಸೆಫರ ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ನಡೆ ಯುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರಕ್ಕೆ ರವಿವಾರ ಚಾಲನೆ ನೀಡಲಾಯಿತು. ಮಾ.25ರವರೆಗೆ ಶಿಬಿರ ನಡೆಯಲಿದೆ. ಬಜಾಲ್ ಚರ್ಚಿನ ಧರ್ಮಗುರು ವಂ.ಫಾ. ಲೀಯೊ ಲೋಬೊ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀದೇವಿ ವೆಲ್ನೆಸ್ ಸೆಂಟರ್ನ ವ್ಯವಸ್ಥಾಪಕ ಶ್ರೀಧರ ಪೂಜಾರಿ ಈ ಥೆರಪಿಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಬಜಾಲ್ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ದೀಪಕ್ ಡಿಸೋಜ, ಕಾರ್ಯದರ್ಶಿ ಲೀಡಿಯ ಲೋಬೊ, ಸೊಸೈಟಿ ಆಫ್ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಅಧ್ಯಕ್ಷ ಎಡ್ವಿನ್ ಪಿಂಟೊ, ಹೆಲ್ತ್ ಕಮಿಷನ್ನ ಸಂಚಾಲಕ ಗ್ರೇಸಿ ನೊರೊನ್ನಾ, ಬಜಾಲ್ ಚರ್ಚಿನ ಸರ್ವ ಆಯೋಗದ ಸಂಯೋಜಕ ರೊನಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಗ್ರೇಸಿ ನೊರೊನ್ನಾ ಸ್ವಾಗತಿಸಿದರು. ಗ್ಲೇವಿನ್ ಡಿಸೋಜ ವಂದಿಸಿದರು. ವಿಕ್ಟರ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯ ಮಂಡಿಸಲಿರುವ ಪ್ರತಿಪಕ್ಷ : ವರದಿ
ಹೊಸದಿಲ್ಲಿ,ಮಾ.9: ಮುಂಬರುವ ದಿನಗಳಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ (ದೋಷಾರೋಪಣೆ) ನಿರ್ಣಯವನ್ನು ಮಂಡಿಸುವ ಸಾಧ್ಯತೆಯಿದೆ. ಬಲ್ಲ ಮೂಲಗಳ ಪ್ರಕಾರ ಲೋಕಸಭೆಯಲ್ಲಿ ಟಿಎಂಸಿಯ ಉಪನಾಯಕಿ ಶತಾಬ್ದಿ ರಾಯ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ನಡೆದ ಇಂಡಿಯಾ ಬಣದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದರು. ಪ.ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಮತದಾರರ ಪಟ್ಟಿಗಳಿಂದ ಹೆಸರುಗಳನ್ನು ಅಳಿಸಿದ್ದನ್ನು ವಿರೋಧಿಸಿ ರಾಜ್ಯದ ಮುಖ್ಯಮಂತ್ರಿಮಮತಾ ಬ್ಯಾನರ್ಜಿಯವರು ಮಾ.6ರಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ರಾಯ್ ಒತ್ತಿ ಹೇಳಿದರು. ಚುನಾವಣಾ ಆಯೋಗವು ಪ.ಬಂಗಾಳದ ಅಂತಿಮ ಮತದಾರರ ಪಟ್ಟಿಗಳನ್ನು ಫೆ.28ರಂದು ಬಿಡುಗಡೆಗೊಳಿಸಿದೆ. ಕುಮಾರ ವಿರುದ್ಧ ದೋಷಾರೋಪಣೆ ನಿರ್ಣಯವನ್ನು ಮಂಡಿಸುವ ಮೂಲಕ ಪ್ರತಿಪಕ್ಷವು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ರಾಯ್ ವಾದವನ್ನು ಇತರ ಪ್ರತಿಪಕ್ಷ ನಾಯಕರು ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿದವು. ಟಿಎಂಸಿ ನಿರ್ಣಯವನ್ನು ಮಂಡಿಸಲಿದೆ. ಅದನ್ನು ಮಂಡಿಸುವ ಸದನ ಸೇರಿದಂತೆ ವಿವರಗಳನ್ನು ಪ್ರತಿಪಕ್ಷಗಳು ಚರ್ಚಿಸಲಿವೆ. ಯಾವುದೇ ಸದನದಲ್ಲಿ ನಿರ್ಣಯವನ್ನು ಸಲ್ಲಿಸಲು ಅಗತ್ಯ ಸಂಖ್ಯಾಬಲ ತಮ್ಮ ಬಳಿಯಿದೆ ಎಂದು ಹಿರಿಯ ಪ್ರತಿಪಕ್ಷ ನಾಯಕರೋರ್ವರು ತಿಳಿಸಿದರು. ಸಂವಿಧಾನದ ವಿಧಿ 324(5)ರ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಂತೆ ಮುಖ್ಯ ಚುನಾವಣಾ ಆಯುಕ್ತರನ್ನೂ ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಪದಚ್ಯುತಗೊಳಿಸಬಹುದು.
ಮಹಿಳೆಯಿಂದ ದೇಶ ಸುಭದ್ರ: ಶ್ರೀಲತಾ ಸುರೇಶ್ ಶೆಟ್ಟಿ
ಕೋಟ, ಮಾ.9: ದೇಶ ಮಹಿಳೆಯರಿಂದ ಸುಭದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಇತ್ತೀಚಿಗಿನ ಕೆಲ ಹುದ್ದೆ ಗಳನ್ನು ಅಲಂಕೃರಿಸಿದ ಮಹಿಳಾ ಮಣಿಗಳ ಕಾರ್ಯವೈಕರಿಯೇ ಸಾಕ್ಷಿ ಎಂದು ಉಡುಪಿ ಜಿಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದ್ದಾರೆ. ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲ ಇವರ ಮಾರ್ಗದರ್ಶನ ದಲ್ಲಿ ಸ್ನೇಹಕೂಟ ಮಣೂರು ಇವರ ಸಹಯೋಗದೊಂದಿಗೆ ಸೋಮವಾರ ಕೋಟದ ಸಮುದ್ಯತಾ ಬ್ಯಾಂಕೇಟ್ ಹಾಲ್ನಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಅಭಿನಂದನಾ ನುಡಿಗಳನ್ನಾಡಿದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಲತಾ ಎಸ್.ಹೆಗ್ಡೆ, ಮಹಿಳೆ ಇಂದು ಬಹು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾಳೆ. ಸಾಮಾಜಿಕ ಕಾರ್ಯದಲ್ಲಿ ಪುರುಷರಂತೆ ಮಹಿಳೆ ಕೂಡಾ ಮುಂಚೂಣಿಯ ಹೆಜ್ಜೆ ಇರಿಸಿದ್ದಾಳೆ. ಇಂತಹ ಸಂದರ್ಭದಲ್ಲಿ ಲೀಲಾವತಿ ಎಂಬ ಮಹಿಳಾ ಸಾಧಕಿಯನ್ನು ಗುರುತಿಸುವ ಪಂಚವರ್ಣ ಮಹಿಳಾ ಮಂಡಲಕ್ಕೆ ಪ್ರತಿಮಹಿಳೆ ಬೆಂಬಲ ಇದ್ದೆ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರವನ್ನು ಪಾಂಡೇಶ್ವರ ಲೀಲಾವತಿ ಗಂಗಾಧರ ಪೂಜಾರಿ ಇವರಿಗೆ ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಕಾರ್ಯಕ್ರಮವನ್ನು ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ.ಮಯ್ಯ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯೆ ಜಯಂತಿ ಕೋಟ್ಯಾನ್ ಪ್ರಾರ್ಥಿಸಿದರು. ಸ್ನೇಹಕೂಟದ ವಿನಯ ಉಡುಪ ಸನ್ಮಾನ ಪತ್ರ ವಾಚಿಸಿದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ದಿನೇಶ್ ಆಚಾರ್, ಪುಷ್ಭ ಹಂದಟ್ಟು ಸಹಕರಿಸಿದರು.
Mandya | ನೇಣುಬಿಗಿದುಕೊಂಡು ದಂಪತಿ ಆತ್ಮಹತ್ಯೆ
ಮಂಡ್ಯ : ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ವರ್ಷದ ಮಗು ಅದೃಷ್ಟವಶಾತ್ ಬದುಕುಳಿದಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ಸೋಮವಾರ ನಡೆದಿರುವುದು ವರದಿಯಾಗಿದೆ. ಜಯನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೆ.ಆರ್.ಪೇಟೆ ತಾಲೂಕು ಹೊಸಕೋಟೆ ಗ್ರಾಮದ ದರ್ಶನ್(29) ಮತ್ತು ಪತ್ನಿ ದಿವ್ಯಶ್ರೀ(25) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ದರ್ಶನ್ ಕೃಷಿ ಜತೆಗೆ ಕಾರು ಚಾಲಕ ವೃತ್ತಿ ಮಾಡುತ್ತಿದ್ದು, ಪತ್ನಿ ದಿವ್ಯ ಪ್ಯಾರಾಮೆಡಿಕಲ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ದಂಪತಿ ಎರಡು ವರ್ಷದ ಹೆಣ್ಣು ಮಗುವನ್ನು ಹತ್ಯೆಗೈಯಲು ಯತ್ನಿಸಿದ್ದು, ಮಗು ಬದುಕುಳಿದಿದೆ ಎನ್ನಲಾಗಿದೆ. ಕೆ.ಆರ್.ಪೇಟೆ ತಾಲೂಕು ನಾಟನಹಳ್ಳಿಯ ದಿವ್ಯ ಅವರನ್ನು ಮೂರು ವರ್ಷದ ಹಿಂದೆ ಹೊಸಕೋಟೆಯ ದರ್ಶನ್ ಜತೆ ವಿವಾಹ ಮಾಡಿಕೊಡಲಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದರ್ಶನ್ ತಂದೆ ದೂರು ನೀಡಿದ್ದು, ಈ ಸಂಬಂಧ ಕೆ.ಆರ್.ಪೇಟೆ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಡಿಜಿಟಲ್ ಅರೆಸ್ಟ್ | ಮಾಜಿ ನ್ಯಾಯಾಧೀಶರಿಗೆ ಒಂದು ಕೋಟಿ.ರೂ.ಗೂ ಅಧಿಕ ವಂಚನೆ
ಹೈದರಾಬಾದ್,ಮಾ.9: ಮಾಜಿ ಜಿಲ್ಲಾ ನ್ಯಾಯಾಧೀಶರೋರ್ವರು ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾಗಿ ಒಂದು ಕೋಟಿ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದರು. 69 ವರ್ಷದ ನಿವೃತ್ತ ನ್ಯಾಯಾಧೀಶರ ಮೊಬೈಲ್ ಫೋನ್ ಸಂಖ್ಯೆ ಮಹಿಳೆಯರ ಕಳ್ಳ ಸಾಗಣೆ ಮತ್ತು ಇತರ ಅಪರಾಧಗಳಲ್ಲಿ ಒಳಗೊಂಡಿದೆ ಎಂದು ಸೈಬರ್ ಕ್ರಿಮಿನಲ್ಗಳು ವಾರದ ಹಿಂದೆ ಅವರಿಗೆ ಬೆದರಿಸಿದ್ದರು. ಇಲ್ಲಿಯ ಮಲ್ಕಾಜ್ಗಿರಿ ನಿವಾಸಿಯಾಗಿರುವ ಅವರು ಒಂದು ಕೋ.ರೂ.ಗೂ ಅಧಿಕ ಹಣವನ್ನು ವಂಚಕರಿಗೆ ವರ್ಗಾಯಿಸಿದ್ದರು. ತಾನು ವಂಚನೆಗೊಳಗಾಗಿದ್ದು ಗೊತ್ತಾದ ಬಳಿಕ ಮೂರು ದಿನಗಳ ಹಿಂದೆ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದು,ತನಿಖೆಯು ಪ್ರಗತಿಯಲ್ಲಿದೆ.
ಮಾ.11ರಂದು ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ : ಚುನಾವಣೆ ಹೊಸ್ತಿಲಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಹೊಸದಿಲ್ಲಿ,ಮಾ.9: ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಸನ್ನಿಹಿತವಾಗಿರುವ ಕೇರಳಕ್ಕೆ ಮಾ.11ರಂದು ಒಂದು ದಿನದ ಭೇಟಿ ನೀಡಲಿದ್ದಾರೆ. ಮೋದಿ ರಾಜ್ಯದ ಅತಿ ದೊಡ್ಡ ನಗರ ಮತ್ತು ಆರ್ಥಿಕ ಕೇಂದ್ರವಾಗಿರುವ ಕೊಚ್ಚಿಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮರೀನ್ ಡ್ರೈವ್ನಲ್ಲಿ ಆಯೋಜಿತ ಅಖಿಲ ಭಾರತ ಕೇರಳ ಧೀವರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಕಳೂರ್ ಕ್ರೀಡಾಂಗಣದಲ್ಲಿ ಎನ್ಡಿಎ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡುವ ಮುನ್ನ ನಗರದಲ್ಲಿ ಹಲವಾರು ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅವರು ರ್ಯಾಲಿಗೆ ಮುನ್ನ ಸಣ್ಣ ರೋಡ್ ಶೋ ನಡೆಸುವ ಸಾಧ್ಯತೆಯೂ ಇದೆ. ರ್ಯಾಲಿಯಲ್ಲಿ 40,000ಕ್ಕೂ ಅಧಿಕ ಬೆಂಬಲಿಗರು ಸೇರುವ ನಿರೀಕ್ಷೆಯಿದೆ. ಫೆ.25ರಂದು ಕೇಂದ್ರ ಸಂಪುಟವು ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದ ಕೆಲವೇ ದಿನಗಳ ಬಳಿಕ ಇದು ಕೇರಳಕ್ಕೆ ಮೋದಿಯವರ ಮೊದಲ ಭೇಟಿಯಾಗಿದೆ. ಈ ವರ್ಷದ ಎಪ್ರಿಲ್-ಮೇ ತಿಂಗಳಿನಲ್ಲಿ ತಮಿಳುನಾಡು, ಅಸ್ಸಾಂ, ಪುದುಚೇರಿ ಮತ್ತು ಪಶ್ಚಿಮ ಬಂಗಾಳಗಳ ಜೊತೆ ಕೇರಳದಲ್ಲಿಯೂ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಸ್ತುತ 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕರಿಲ್ಲ. ಆದಾಗ್ಯೂ 2024ರ ಲೋಕಸಭಾ ಚುನಾವಣೆಯಲ್ಲಿ ಜನಪ್ರಿಯ ಮಲಯಾಳಂ ನಟ ಸುರೇಶ್ ಗೋಪಿ ಅವರು ತ್ರಿಶೂರಿನಲ್ಲಿ 75,000ಕ್ಕೂ ಅಧಿಕ ಮತಗಳಿಂದ ಜಯಶಾಲಿಯಾಗುವ ಮೂಲಕ ಬಿಜೆಪಿ ಪ್ರಮುಖ ಗೆಲುವನ್ನು ಸಾಧಿಸಿತ್ತು. ಇದು ಸಾಂಪ್ರದಾಯಿಕವಾಗಿ ಕಾಂಗ್ರೆಸ್-ಎಡರಂಗ ಪ್ರಾಬಲ್ಯದ ರಾಜ್ಯವಾಗಿರುವ ಕೇರಳದಲ್ಲಿ ಬಿಜೆಪಿಯ ಮೊದಲ ಲೊಕಸಭಾ ವಿಜಯವಾಗಿದೆ.
ಮಾ.10ರಂದು ಎಲ್ಪಿಜಿ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಉಡುಪಿ, ಮಾ.9: ಎಲ್ಪಿಜಿ ದರ ಏರಿಕೆ ಮಾಡಿರುವ ಕೇಂದ್ರ ಸರಕಾರದ ಜನವಿರೋಧಿ ನೀತಿಯ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾ.10ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಬ್ರಹ್ಮಗಿರಿ ಸರ್ಕಲ್ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡೆಯುವೆಯೂ ಭಾರತದಲ್ಲಿ ಇಂಧನ ಕೊರತೆ ಇಲ್ಲ, ಆದ್ದರಿಂದ ನಮ್ಮ ಇಂಧನ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೆಂದ್ರ ಪೆಟ್ರೋಲಿಂ ಸಚಿವರು ಸ್ಪಷ್ಟಪಡಿಸಿರುವಾಗ ಕೇಂದ್ರ ಸರಕಾರವು ಗೃಹ ಬಳಕೆ ಸಿಲಿಂಡರ್ ಬೆಲೆಯನ್ನು ಏಕಾಏಕಿ 60ರೂ.ಗೆ ಹೆಚ್ಚಳ ಮಾಡಿದೆ. ಅದೇ ರೀತಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 115 ರೂ.ಗೆ ಏರಿಕೆ ಮಾಡಲಾಗಿದೆ. ಕಳೆದ 11 ತಿಂಗಳಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ ಒಟ್ಟು 110ರೂ. ಹೆಚ್ಚಳ ಮಾಡಿರುವುದು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ಹಾಗೂ ಗೃಹ ಬಳಕೆ ಗ್ರಾಹಕರು ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

21 C