SENSEX
NIFTY
GOLD
USD/INR

Weather

29    C
...

ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ: ಪೋಪ್ ಲಿಯೋ

ಕ್ಯಾಮರೂನ್, ಎ.16: ಜಾಗತಿಕ ರಾಜಕೀಯ ಮತ್ತು ಯುದ್ಧ ಪರಿಸ್ಥಿತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೋಪ್ ಲಿಯೋ, “ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ” ಎಂದು ಹೇಳಿದ್ದಾರೆ. ಕ್ಯಾಮರೂನ್‌ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗಳಿಗೆ ಶತಕೋಟಿ ಡಾಲರ್‌ ಗಳನ್ನು ಖರ್ಚು ಮಾಡುವ ಪ್ರವೃತ್ತಿಯನ್ನು ಖಂಡಿಸಿದರು. “ಕೆಲವೇ ನಿರಂಕುಶ ನಾಯಕರು ಜಗತ್ತನ್ನು ಧ್ವಂಸಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದರು. ತಮ್ಮ ವಿರುದ್ಧ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ ಬಳಿಕ ಪ್ರತಿಕ್ರಿಯಿಸಿದ ಪೋಪ್, “ಯುದ್ಧದ ಮಾಸ್ಟರ್ಸ್‌ ಗೆ ನಾಶಮಾಡಲು ಒಂದು ಕ್ಷಣ ಸಾಕು. ಆದರೆ ಪುನರ್‌ ನಿರ್ಮಾಣಕ್ಕೆ ಇಡೀ ಜೀವನ ಸಾಲದು ಎಂಬುದನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ” ಎಂದು ಹೇಳಿದರು. “ಕೊಲೆ ಮತ್ತು ವಿನಾಶಕ್ಕೆ ಶತಕೋಟಿ ಹಣ ಖರ್ಚಾಗುತ್ತದೆ. ಆದರೆ ಚಿಕಿತ್ಸೆ, ಶಿಕ್ಷಣ ಮತ್ತು ಪುನರ್ ಸ್ಥಾಪನೆಗೆ ಅಗತ್ಯವಾದ ಸಂಪನ್ಮೂಲಗಳು ಎಲ್ಲಿಯೂ ಕಾಣುತ್ತಿಲ್ಲ” ಎಂದು ಪೋಪ್ ಲಿಯೋ ಅವರು ಬೇಸರ ವ್ಯಕ್ತಪಡಿಸಿದರು. ಜಗತ್ತಿನ ನಾಯಕರು ಶಾಂತಿ, ಮಾನವೀಯತೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಪೋಪ್ ಲಿಯೋ ಕರೆ ನೀಡಿದರು.

ವಾರ್ತಾ ಭಾರತಿ 16 Apr 2026 10:05 pm

ಕಾಳಗಿ | ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಉತ್ಸವ

ಕಾಳಗಿ: ದಕ್ಷಿಣಕಾಶಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೀಲಕಂಠ ಕಾಳೇಶ್ವರ ಅಲಂಕೃತ ಬೆಳ್ಳಿ ಮೂರ್ತಿ ಪಲ್ಲಕ್ಕಿ ಉತ್ಸವವು ಜರುಗುವುದರೊಂದಿಗೆ ಜಾತ್ರೆ ತೆರೆ ಕಂಡಿತು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ದೇವಸ್ಥಾನದಿಂದ ಪ್ರಾರಂಭವಾದ ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಉತ್ಸವ ಅಪಾರ ಭಕ್ತ ಸಮೂಹದ ಮಧ್ಯೆ ಪಟ್ಟಣದ ಮುತ್ತನಕಟ್ಟಿ ಅಂಬಿಗರ ಚೌಡಯ್ಯ ದೇವಸ್ಥಾನ, ಚಾಮುಂಡೇಶ್ವರ ದೇವಸ್ಥಾನ, ಮರ್ಗಮ್ಮ ದೇವಸ್ಥಾನ, ಮುಖ್ಯಬಜಾರ ರಸ್ತೆ, ಚೌವಡಿ ಕಟ್ಟಿ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ಅರ್ಚಕರ ಮನೆಗೆ ತಲುಪಿತು. ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ಕಲಾ ತಂಡಗಳು ಹಾಗೂ ಡೊಳ್ಳು ಭಾಜ, ಭಜಂತ್ರಿ, ಹಲಗೆ, ಭಜನೆಗಳು ಮೆರಗು ನೀಡಿದವು. ಯುವಕರ ತಂಡ ಪಲ್ಲಕ್ಕಿ ಉತ್ಸವದಲ್ಲಿ ದಾಸೋಹ ವ್ಯವಸ್ಥೆ ಮಾಡಿತ್ತು. ನಂತರ ದೇವಸ್ಥಾನ ಆವರಣದಲ್ಲಿ ಪೈಲ್ವಾನರಿಂದ ನಡೆದ ಜಂಗಿ ಕುಸ್ತಿಯಲ್ಲಿ ವಿಜೇತರಿಗೆ ಬೆಳ್ಳಿ ಖಡ್ಗ ನೀಡಲಾಯಿತು. ವಿಧಾನ ಪರಿಷತ್ ಸದಸ್ಯ ಹಾಗೂ ನೀಲಕಂಠ ಕಾಳೇಶ್ವರ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಜಗದೇವ ಗುತ್ತೇದಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ಶರಣಗೌಡ ಪೊಲೀಸ್ ಪಾಟೀಲ, ಜಗದೀಶ್ ಮಾಲಿಪಾಟೀಲ, ನೀಲಕಂಠ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ಅನೀಲಕುಮಾರ ಮಾಲಿಪಾಟೀಲ, ವೇದಪ್ರಕಾಶ ಮೊಟಗಿ, ಸಂತೋಷ ಪಂತಗೆ, ಪರಮೇಶ್ವರ ಮಡಿವಾಳ, ಬಂಡಪ್ಪ ಬೊಮ್ಮಣ್ಣಿ, ಸೋಮಣ್ಣ ಮಕಪನೋರ, ಜಗನ್ನಾಥ ಚಂದನಕೇರಿ, ಶರಣಪ್ಪ ಮುಕರಂಬಿ, ಶಿವಕಿರಣ ಪ್ಯಾಟಿಮಠ, ನಾಗಯ್ಯಸ್ವಾಮಿ ಮಠಪತಿ, ಬಸವರಾಜ ಸಿಂಗಶೆಟ್ಟಿ, ಸಂತೊಷ ಕಡಬೂರ, ಯಲ್ಲಾಲಿಂಗ ಉನ್ನಿ, ಉದಯಕುಮಾರ ಸುಂಠಾಣ, ರೇವಣಸಿದ್ದ ಕಲಶೆಟ್ಟಿ, ಶಾಮರಾವ ಕಡಬೂರ, ಸುನೀಲ್ ರಾಜಾಪೂರ ಸೇರಿದಂತೆ ಅನೇಕರು ಇದ್ದರು.

ವಾರ್ತಾ ಭಾರತಿ 16 Apr 2026 10:02 pm

ಸುರಪುರ | ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ವಿವರವುಳ್ಳ ಗ್ರಂಥ ಬಿಡುಗಡೆ

ಸುರಪುರ: ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಅಪರೂಪದ ಐತಿಹಾಸಿಕ ಘಟನೆಗಳನ್ನು ಒಳಗೊಂಡ ಅಪ್ಪಾರಾವ್ ವಕೀಲರ ಆತ್ಮಚರಿತ್ರೆ ಆಟೋ ಬಯೋಗ್ರಾಫಿ ಆಫ್ ಆನ್ ಅನಾನಿಮಸ್ ಫ್ರೀಡಮ್ ಫೈಟರ್ ಗ್ರಂಥವನ್ನು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಡಾ. ಲಕ್ಷ್ಮಾರೆಡ್ಡಿ ಅವರ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರೊಫೆಸರ್ ಕೊಂಡ ರಾಮಚಂದ್ರರೆಡ್ಡಿ ಮಾತನಾಡಿ, ಹೈದರಾಬಾದ್ ವಿಮೋಚನ ಹೋರಾಟದ ಅಜ್ಞಾತ ಪುಟಗಳನ್ನು ದಿವಂಗತ ಅಪ್ಪಾರಾವ್ ವಕೀಲರು ಈ ಕೃತಿಯ ಮೂಲಕ ಸಮಾಜದ ಮುಂದೆ ತಂದಿದ್ದು, ಇದು ಮಹತ್ವದ ಐತಿಹಾಸಿಕ ದಾಖಲೆಯಾಗಲಿದೆ ಎಂದು ಹೇಳಿದರು. ಗ್ರಂಥದ ಮುದ್ರಣ ವೆಚ್ಚವನ್ನು ಡಾ. ಲಕ್ಷ್ಮಾರೆಡ್ಡಿ ವಹಿಸಿಕೊಂಡಿದ್ದು, ಸುರಪುರ ಕನ್ನಡ ಸಾಹಿತ್ಯ ಸಂಘದಿಂದ ಈ ಕೃತಿ ಪ್ರಕಟಿಸಲಾಗಿದೆ. ಕಾರ್ಯಕ್ರಮದಲ್ಲಿ ಸುರಪುರ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ ಹಾಗೂ ಗ್ರಂಥದ ಸಂಪಾದಕ ಮಂಡಳಿಯ ಸದಸ್ಯರಾದ ಜೆ ಆಗಸ್ಟಿನ್ ನ್ಯಾಯವಾದಿ, ಕೋಶ್ಯಾಧ್ಯಕ್ಷರಾದ ಪ್ರಕಾಶ್ ಚಂದ್ ಜೈನ್, ಉಸ್ಮಾನಿಯಾ ವಿಶ್ವವಿದ್ಯಾಲಯ ಹೈದರಾಬಾದ್ ನ ಕಲಾ ವಿಭಾಗದ ಡೀನ್ ಆಗಿರುವ ಡಾ.ಲಿಂಗಪ್ಪ ಗೋನಾಳ ಹಾಗೂ ಉಸ್ಮಾನಿಯಾ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರೊಫೆಸರ್ ಕೊಂಡ ರಾಮಚಂದ್ರರೆಡ್ಡಿ, ಆಂಧ್ರ ಪ್ರದೇಶದ ಮಾಜಿ ಹೈಕೋರ್ಟ್ ಗೌರ್ನ್ಮೆಂಟ್ ಅಡ್ವೊಕೇಟ್ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಡಾ. ಲಕ್ಷ್ಮಾರೆಡ್ಡಿ ಅವರು ಸೇರಿದಂತೆ ಇತರ ಬಂಧು ಬಳಗದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:54 pm

ಸುರಪುರ | ರಾಜುಗೌಡ, ಶರಣಗೌಡ ಕಂದಕೂರ ಮುಂಬರುವ ದಿನಗಳಲ್ಲಿ ಸಚಿವರಾಗುತ್ತಾರೆ : ರಂಭಾಪುರಿ ಶ್ರೀ

ಸುರಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಯುವ ರಾಜಕಾರಣಿಗಳಾದ ನರಸಿಂಹ ನಾಯಕ ರಾಜುಗೌಡ ಹಾಗೂ ಶರಣಗೌಡ ಕಂದಕೂರು ಅವರು ಮುಂದಿನ ದಿನಗಳಲ್ಲಿ ಸಚಿವರಾಗಲಿದ್ದಾರೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದರು. ತಾಲೂಕಿನ ದೇವಪುರ ಗ್ರಾಮದಲ್ಲಿ ಜಡಿ ಶಾಂತಲಿಂಗೇಶ್ವರ ದೇವಸ್ಥಾನದ ಕಳಸಾರೋಹಣದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಸರ್ಕಾರ ರಚನೆಯಾಗಲಿದ್ದು, ಆ ಸರ್ಕಾರದಲ್ಲಿ ಈ ಇಬ್ಬರು ನಾಯಕರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳಿದರು. ರಾಜುಗೌಡ ಮತ್ತು ಶರಣಗೌಡ ಇಬ್ಬರೂ ಅಭಿವೃದ್ಧಿ ಪರ ಧೋರಣೆಯ ಯುವ ನಾಯಕರು ಆಗಿದ್ದು, ವಿಧಾನಸೌಧದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಧ್ವನಿಯನ್ನು ಗಟ್ಟಿಯಾಗಿ ಪ್ರತಿನಿಧಿಸುತ್ತಿದ್ದಾರೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಗೌರವ ನೀಡುವ ಇವರಿಂದ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ರಾಜುಗೌಡ ಅವರು ನನಗೆ ಸದಾ ಮಾರ್ಗದರ್ಶಕರಾಗಿದ್ದಾರೆ. ರಂಭಾಪುರಿ ಶ್ರೀಗಳ ಆಶೀರ್ವಾದದಿಂದ ನಮ್ಮ ಕುಟುಂಬ ರಾಜಕೀಯವಾಗಿ ಬೆಳೆದಿದ್ದು, ಮುಂದಿನ ದಿನಗಳಲ್ಲಿ ರಾಜುಗೌಡ ಅವರಿಗೆ ಸಹ ಆಶೀರ್ವಾದ ದೊರೆಯಲಿ ಎಂದು ವಿನಂತಿಸಿದರು. ಮಾಜಿ ಸಚಿವ ರಾಜುಗೌಡ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ಶರಣಗೌಡ ಕಂದಕೂರು ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ರಂಭಾಪುರಿ ಶ್ರೀಗಳು ಮಾಜಿ ಸಚಿವ ರಾಜುಗೌಡ ಶಾಸಕ ಶರಣಗೌಡ ಕಂದಕೂರ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಿಎಸ್ ಮ್ಯಾಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ ದಯಾನಂದ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ದೇವಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆಳಗೆ ಮುದ್ರ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯ, ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯರು, ಕಲಬುರ್ಗಿಯ ಚವದಾಪುರಿ ಮಠದ ಡಾ. ರಾಜಶೇಖರ ಶಿವಾಚಾರ್ಯ, ತೊನಸನಹಳ್ಳಿಯ ರೇವಣಸಿದ್ದ ಶಿವಾಚಾರ್ಯ, ನವಲಕಲ್ಲದ ಸೋಮನಾಥ ಶಿವಾಚಾರ್ಯ, ರುಕ್ಮಾಪುರ ಹಿರೇಮಠದ ಗುರು ಶಾಂತ ಮೂರ್ತಿ ಶಿವಾಚಾರ್ಯ, ಲಕ್ಷ್ಮಿಪುರ ಶ್ರೀ ಗಿರಿ ಮಠದ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಹಾಗೂ ಮುಖಂಡರಾದ ರಾಜಾ ಹನುಮಪ್ಪ ನಾಯಕ ತಾತಾ, ವೇಣು ಮಾಧವ ನಾಯಕ, ಸುರೇಶ ಆರ್ ಸಜ್ಜನ್, ವೀರೇಶ ಚಿಂಚೋಳಿ, ಸಿದ್ದನಗೌಡ ಕರಿಬಾವಿ, ಶಂಕರ ನಾಯಕ, ಮಹೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:51 pm

ದ್ವಿತೀಯ ಪಿಯುಸಿ ಪರೀಕ್ಷೆ-02: ನೋಂದಣಿಗೆ ವಿದ್ಯಾರ್ಥಿಗಳ ಪರದಾಟ

ಉಡುಪಿ: ಎ.30ರಿಂದ ಪ್ರಾರಂಭಗೊಳ್ಳುವ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕಾಗಿ ಆನ್‌ಲೈನ್ ಮೂಲಕ ನೋಂದಾಯಿ ಸಲು ಎ.17 ಶುಕ್ರವಾರ ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದ ತಾಂತ್ರಿಕ ತೊಂದರೆಯಿಂದಾಗಿ ವೆಬ್‌ಸೈಟ್‌ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಇದರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೊಂದಾಯಿಸಲು ವಿದ್ಯಾರ್ಥಿಗಳು ಪರದಾಡುತಿದ್ದಾರೆ ಎಂದು ಉಡುಪಿ ಸ್ನೇಹ ಟ್ಯುಟೋರಿಯಲ್‌ನ ಪ್ರಾಂಶುಪಾಲರಾದ ಉಮೇಶ್ ಚೇರ್ಕಾಡಿ ತಿಳಿಸಿದ್ದಾರೆ. ಕಾರಣಾಂತರಗಳಿಂದ ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಗೆ ಗೈರುಹಾಜರಾದ ಅಥವಾ ಫಲಿತಾಂಶ ಪೂರ್ಣ ಗೊಳಿಸದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ-2 ನಡೆಸಲು ಮಂಡಳಿ ಪ್ರಕಟಿಸಿದ್ದು, ಎ.30ರಂದು ಈ ಪರೀಕ್ಷೆ ನಡೆಯುವು ದಾಗಿ ಪ್ರಕಟಿಸಿದೆ. ಪರೀಕ್ಷೆಗೆ ಹೆಸರು ನೊಂದಾಯಿಸಲು ಎ.17ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದ ತಾಂತ್ರಿಕ ತೊಂದರೆಯಿಂದ ಮೊಬೈಲ್ ರಿಜಿಸ್ಟರ್ ಮಾಡಲಾಗದೇ, ಒಟಿಪಿ ಬಾರದೇ ಸೈಬರ್ ಸೆಂಟರ್‌ನ ಮೂಲಕ ನೊಂದಾಯಿಸಲು ಸಾದ್ಯವಾಗುತ್ತಿಲ್ಲ. ಅಲ್ಲದೇ ಆಪ್‌ಲೈನ್‌ನಲ್ಲಿ ಕಾಲೇಜಿ ನಲ್ಲಿ ನೊಂದಾಯಿಸಲು ಸಹ ಪ್ರಾಂಶುಪಾಲರಿಗೆ ಸಾಧ್ಯವಾಗದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಮಂಡಳಿ ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಕಣ್ಣುಮುಚ್ಚಿ ಕುಳಿತಿದೆ. ಇದರಿಂದಾಗಿ ಪುನರಾವರ್ತಿತ ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ವಿದ್ಯಾರ್ಥಿಗಳು ಸೈಬರ್ ಸೆಂಟರ್‌ನಿಂದ ಕಾಲೇಜಿಗೆ ಅಲೆದಾಡುತಿದ್ದಾರೆ ಎಂದು ಉಮೇಶ್ ಚೇರ್ಕಾಡಿ ಹೇಳಿದ್ದಾರೆ.

ವಾರ್ತಾ ಭಾರತಿ 16 Apr 2026 9:51 pm

ಸೇನಾ ಸಂಘರ್ಷವು ಸಮಸ್ಯೆಯನ್ನು ಪರಿಹರಿಸಲಾರದು: ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ, ಎ.15: ಪಶ್ಚಿಮ ಏಶ್ಯಾ ಹಾಗೂ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷಗಳನ್ನು ಶಾಂತಿಯುತವಾಗಿ ಪರಿಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ. ಸೇನಾ ಸಂಘರ್ಷವು ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಆಸ್ಟ್ರಿಯಾದ ಫೆಡರಲ್ ಚಾನ್ಸಲರ್ ಕ್ರಿಶ್ಚಿಯನ್ ಸ್ಟಾಕರ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದರು. ಇಂದು ಇಡೀ ಜಗತ್ತು ಅತ್ಯಂತ ಗಂಭೀರ ಹಾಗೂ ಉದ್ವಿಗ್ನ ಪರಿಸ್ಥಿತಿ ಎದುರಿಸುತ್ತಿದೆ. ಜಾಗತಿಕ ಉದ್ವಿಗ್ನತೆಗಳ ಪರಿಣಾಮ ಎಲ್ಲಾ ದೇಶಗಳಲ್ಲಿ ಕೂಡ ಕಂಡು ಬರುತ್ತಿದೆ ಎಂದು ಹೇಳಿದರು. ಸಂಘರ್ಷಗಳನ್ನು ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಬೇಕು ಎಂಬ ಅಭಿಪ್ರಾಯವನ್ನು ಭಾರತ ಹಾಗೂ ಆಸ್ಟ್ರೀಯ ದೇಶಗಳು ಹಂಚಿಕೊಂಡಿವೆ ಎಂದು ಪ್ರಧಾನಿ ಹೇಳಿದರು. ಆಸ್ಟ್ರಿಯಾದ ಚಾನ್ಸಲರ್ ಭೇಟಿಯಿಂದ ವ್ಯಾಪಾರ ಮತ್ತು ಹೂಡಿಕೆಯಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ನಿರೀಕ್ಷೆ ಇದೆ ಎಂದು ಎಂದು ಮೋದಿ ಅವರು ಗಮನ ಸೆಳೆದರು. ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿದ ಅವರು, ಇದು ಯುರೋಪ್ ಒಕ್ಕೂಟದೊಂದಿಗೆ ಭಾರತದ ಸಂಬಂಧಗಳಲ್ಲಿ ಹೊಸ ಮಜಲನ್ನು ಆರಂಭಿಸಿದೆ ಎಂದರು. ಚಾನ್ಸೆಲರ್ ಸ್ಟಾಕರ್ ತಮ್ಮ ಮೊದಲ ಅಧಿಕೃತ ಭಾರತದ ಭೇಟಿಗಾಗಿ ಮಂಗಳವಾರ ಹೊಸದಿಲ್ಲಿಗೆ ಆಗಮಿಸಿದರು. ಈ ಭೇಟಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.

ವಾರ್ತಾ ಭಾರತಿ 16 Apr 2026 9:50 pm

ಮಂಗಳೂರು ಲಾಠಿ ಚಾರ್ಜ್ ಪ್ರಕರಣದ 101 ಆರೋಪಿಗಳ ಖುಲಾಸೆ

ಮಂಗಳೂರು, ಎ.16: ನಗರ ಪೊಲೀಸ್ ಕಮಿಷನರ್ ಕಚೇರಿಯ ಮುಂದೆ 2017ರ ಎ.4ರಂದು ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಎಲ್ಲಾ 101 ಆರೋಪಿಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಹ್ಮದ್ ಖುರೇಶಿ ಎಂಬಾತನನ್ನು ಅಕ್ರಮವಾಗಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೆ ದೌರ್ಜನ್ಯ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾಗಿದ್ದರು. ಈ ಸಂದರ್ಭ ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಕಲ್ಲುತೂರಾಟ ನಡೆದಿದೆ ಎಂಬ ಆರೋಪದಲ್ಲಿ ಹಲವರ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 101 ಮಂದಿಯ ವಿರುದ್ಧ ಅಂತಿಮ ವರದಿ ಸಲ್ಲಿಸಲಾಗಿತ್ತು. ಆ ಪೈಕಿ ಎರಡು ಪ್ರಕರಣಗಳು ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಇನ್ನೊಂದು ಪ್ರಕರಣದ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಗಳನ್ನು ಸಾಬೀತುಪಡಿಸಲು ಸರಕಾರಿ ಪರ ವಕೀಲರು ವಿಫಲವಾಗಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟು ಪ್ರಕರಣದಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ವಕೀಲರಾದ ಆಸಿಫ್ ಬೈಕಾಡಿ, ಮುಫೀದಾ ರಹ್ಮಾನ್, ಇರ್ಷಾದ್ ಸಖಾಫಿ ಮೊಂಟೆಪದವು, ಅಯಾಝ್ ಚಾರ್ಮಾಡಿ, ಮುಹಮ್ಮದ್ ಆದಿಲ್, ನಿಶಾನ್ ಎಂ.ಕೆ, ರುಬೀನ, ಅಂಸೀನ ವಾದಿಸಿದ್ದರು.

ವಾರ್ತಾ ಭಾರತಿ 16 Apr 2026 9:48 pm

Yadgiri | ಎ.15ರಿಂದ ಹೀಟ್ ವೇವ್ ಯಲ್ಲೋ ಅಲರ್ಟ್: ಮುನ್ನೆಚ್ಚರಿಕೆ ಕ್ರಮಗಳಿಗೆ ಜಿಲ್ಲಾಧಿಕಾರಿ ಸಲಹೆ

ಯಾದಗಿರಿ: ಜಿಲ್ಲೆಯಲ್ಲಿ ಏಪ್ರಿಲ್ 15ರಿಂದ 19ರವರೆಗೆ ಬಿಸಿಗಾಳಿ ತೀವ್ರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ‘ಹೀಟ್ ವೇವ್ ಯಲ್ಲೋ ಅಲರ್ಟ್’ ನೀಡಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬಿಸಿಗಾಳಿ (ಹೀಟ್ ವೇವ್) ಹಾಗೂ ಹೀಟ್ ಸ್ಟ್ರೋಕ್‌ನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ. ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಸಾಕಷ್ಟು ನೀರು ಕುಡಿಯುವುದು, ಹಗುರವಾದ ಹತ್ತಿ ಬಟ್ಟೆ ಧರಿಸುವುದು, ಟೋಪಿ ಅಥವಾ ಛತ್ರಿ ಬಳಸುವುದು ಅಗತ್ಯ. ಬಿಸಿಲಿನ ಅವಧಿಯಲ್ಲಿ ಶ್ರಮದಾಯಕ ಕೆಲಸಗಳನ್ನು ತಗ್ಗಿಸಬೇಕು ಎಂದು ಸಲಹೆ ನೀಡಲಾಗಿದೆ. ದೇಹದ ನಿರ್ಜಲೀಕರಣ ತಪ್ಪಿಸಲು ಮಜ್ಜಿಗೆ, ನಿಂಬೆ ನೀರು, ಓಆರ್‌ಎಸ್ ಮುಂತಾದ ದ್ರವ ಪದಾರ್ಥಗಳನ್ನು ಸೇವಿಸಬೇಕು. ಚಹಾ, ಕಾಫಿ, ಮದ್ಯಪಾನ ಹಾಗೂ ಕಾರ್ಬೋನೇಟೆಡ್ ಪಾನೀಯಗಳನ್ನು ಕಡಿಮೆ ಮಾಡಬೇಕು ಎಂದು ಸೂಚಿಸಲಾಗಿದೆ. ಶಿಶುಗಳು, ವೃದ್ಧರು ಹಾಗೂ ದೀರ್ಘಕಾಲದ ಕಾಯಿಲೆ ಇರುವವರು ವಿಶೇಷ ಜಾಗ್ರತೆ ವಹಿಸಬೇಕು. ಅನಾರೋಗ್ಯ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರೈತರು ಮತ್ತು ಕೃಷಿ ಕಾರ್ಮಿಕರು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾತ್ರ ಕೆಲಸ ನಿರ್ವಹಿಸಬೇಕು. ಜಾನುವಾರುಗಳಿಗೆ ಸಾಕಷ್ಟು ನೀರು ಮತ್ತು ನೆರಳು ಒದಗಿಸಬೇಕು ಎಂದು ತಿಳಿಸಲಾಗಿದೆ. ಬಿಸಿಗಾಳಿಯ ಪರಿಣಾಮ ಕಡಿಮೆಗೊಳಿಸಲು ಸಾರ್ವಜನಿಕರು ಸರ್ಕಾರ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 16 Apr 2026 9:46 pm

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ : ಉಡುಪಿ ಜಿಲ್ಲಾ ಸಮಿತಿ ರಚನೆ

ಮೂಳೂರು :  ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ರಿ) ಇದರ ನೂತನ ಉಡುಪಿ ಜಿಲ್ಲಾ ಸಮಿತಿ ರಚಿಸುವ ಸಲುವಾಗಿ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಸಭಾಂಗಣದಲ್ಲಿ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷ  ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಲ್‌ರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಳ್‌ರವರ ದುಆದೊಂದಿಗೆ ಸಭೆಯು ಪ್ರಾರಂಭವಾಯಿತು. ಸಂಸ್ಥೆಯ ಮ್ಯಾನೇಜರ್ ಅಲ್ ಹಾಜ್ ಯು.ಕೆ. ಮುಸ್ತಫ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಕೆ.ಎಸ್.ಸಿ ವಿಝನ್ 30 ಚೇರ್ಮೆನ್  ಹಾತಿಂ ಕೂಳೂರು ಹಾಗೂ ಕೇಂದ್ರ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಅರಮೆಕ್ಸ್ ಹಾಜರಿದ್ದರು. ವಿಝನ್ 30 ಚೇರ್‌ಮ್ಯಾನ್ ಹಾತಿಂ ಕೂಳೂರು ಮಾತನಾಡಿ ಶುಭಾಶಂಸೆಗೈದರು. ಚುನಾವನಾಧಿಕಾರಿ ಕೇಂದ್ರ ಸಮಿತಿಯ ಸದಸ್ಯ ಅಬ್ದುಲ್ ಅಝೀಝ್ ಮೂಳೂರುರವರ ನೇತೃತ್ವದಲ್ಲಿ ಡಿ.ಕೆ.ಎಸ್.ಸಿ ನೂತನ ಉಡುಪಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ ಕುಂಬೋಳ್, ಡೆವಲಪ್ಮೆಂಟ್ ಚೇರ‍್ಮೆನ್ ಆಗಿ ಅಬ್ದುಲ್ಲಾಹ್ ಹಾಜಿ ಸೂಪರ್ ಸ್ಟೋರ್, ಕಾಪು ಅಧ್ಯಕ್ಷರಾಗಿ ಹಾಜಿ ಅಬೂಬಕ್ಕರ್ ನೇಜಾರ್, ಪ್ರಧಾನ ಕಾರ್ಯದರ್ಶಿಯಾಗಿ  ಫಾರೂಕ್ ಅಹ್ಮದ್ ಕರ್ನಿರೆ ಆಯ್ಕೆಯಾದರು. ಹಣಕಾಸು ಕಾರ್ಯದರ್ಶಿಯಾಗಿ ಎ.ಹೆಚ್ ಅಬ್ದುಲ್ ಖಾದರ್ ಪಡುಬಿದ್ರಿ, ಉಪ ಹಣಕಾಸು ಕಾರ್ಯದರ್ಶಿಯಾಗಿ ನಝೀರ್ ಅಹ್ಮದ್ ಕೋಡಿ ಕನ್ನಂಗಾರ್, ಉಪಾಧ್ಯಕ್ಷರುಗಳಾಗಿ ಕೆ.ಎಚ್. ಮುಹಮ್ಮದ್ ಕನ್ನಂಗಾರ್, ಅಬ್ಬು ಹಾಜಿ ಮೂಳೂರು ಹಾಗೂ ಸಯ್ಯಿದ್ ಅಲಿ ಪಡುಬಿದ್ರಿ ಜೊತೆ ಕಾರ್ಯದರ್ಶಿಗಳಾಗಿ ಮೊಹಿದಿನ್ ಪಡುಬಿದ್ರಿ,(Ex.D.S.P) ಅಬ್ದುಲ್ಲ ಮೂಳೂರು ಹಾಗೂ ಹಮೀದ್ ಯೂಸುಫ್ ಮೂಳೂರು. ಸಂವಹನ ಕಾರ್ಯದರ್ಶಿಯಾಗಿ  ವೈ.ಬಿ.ಸಿ. ಬಶೀರ್ ಅಲಿ, ಸಲಹೆಗಾರರಾಗಿ ಇಕ್ಬಾಲ್ ಕಲ್ಯಾಣಪುರ, ಲೆಕ್ಕಪರಿಶೋಧಕರಾಗಿ ಹಮೀದ್ ಅದ್ದು ಮುಂತಾದವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ದ.ಕ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷರಾದ ಮನ್ಸೂರ್ ರಯ್ಯಾನ್ ಕೃಷ್ಣಾಪುರ, ಸಂಘಟನಾ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಹಾಗೂ ಇನ್ನಿತರ ಸದಸ್ಯರು, ಘಟಕಗಳ ನಾಯಕರು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸಾಕ್ ಬೊಳ್ಳಾಯಿ ಕಾರ್ಯಕ್ರಮವನ್ನು ನಿರೂಪಿಸಿ, ಉಡುಪಿ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿ ಫಾರೂಕ್ ಅಹ್ಮದ್ ಕರ್ನಿರೆ ಧನ್ಯವಾದಗೈದರು.

ವಾರ್ತಾ ಭಾರತಿ 16 Apr 2026 9:41 pm

Bidar | ಜಿಲ್ಲೆಯ ಎಲ್ಲಾ ಇಲಾಖೆಗಳು ಕೆ-ಜಿಐಎಸ್ ಆವೃತ್ತಿ 2.0ರ ಪ್ರಯೋಜನ ಪಡೆಯಿರಿ : ಎಡಿಸಿ ಶಿವಾನಂದ್ ಕರಾಳೆ

ಬೀದರ್: ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಸುಧಾರಿತ ಆವೃತ್ತಿಯಾದ ಕೆ-ಜಿಐಎಸ್ 2.0 ಅನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಆಯೋಜಿಸಿದ ಕಾರ್ಯಾಗಾರದಲ್ಲಿ ಎಲ್ಲಾ ಇಲಾಖೆಗಳು ಇದರ ಪ್ರಯೋಜನ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಹೇಳಿದರು. ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ನಡೆದ ಕೆ-ಜಿಐಎಸ್ 2.0 ತಾಂತ್ರಿಕ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಆಸ್ತಿಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ನಿಖರ ಮೇಲ್ವಿಚಾರಣೆಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಅತ್ಯಂತ ಅಗತ್ಯವಾಗಿದೆ. ಕೆ-ಜಿಐಎಸ್ 2.0 ಆವೃತ್ತಿ ಭೂಮಿಯ ಅಂಕಿ-ಅಂಶಗಳು, ನಕ್ಷೆಗಳು ಹಾಗೂ ಇಲಾಖಾವಾರು ದತ್ತಾಂಶಗಳನ್ನು ವೇಗವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡಲಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜೇಶ್ ಎನ್.ಎಲ್. ಅವರು, ಕೆ-ಜಿಐಎಸ್ ಯೋಜನೆಯ ಉದ್ದೇಶಗಳು ಹಾಗೂ ಅಭಿವೃದ್ಧಿ ಕುರಿತು ವಿವರಿಸಿದರು. 2016ರಲ್ಲಿ ಕೆ-ಜಿಐಎಸ್ 1.0 ಜಾರಿಗೆ ಬಂದಿದ್ದು, ಸುಮಾರು 600 ಜಿಐಎಸ್ ಪದರಗಳು ಹಾಗೂ 20 ಲಕ್ಷಕ್ಕೂ ಹೆಚ್ಚು ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಜೊತೆಗೆ 41 ಮೊಬೈಲ್ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸಿ ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ಕೆ-ಜಿಐಎಸ್ ಯೋಜನೆಗೆ 2024ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ ಲಭಿಸಿರುವುದನ್ನು ಉಲ್ಲೇಖಿಸಿ, ಸ್ಥಳೀಯ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಆಧಾರದಲ್ಲಿ ಪರಿಹಾರ ಕಂಡುಕೊಳ್ಳಲು ಈ ತಂತ್ರಜ್ಞಾನ ಸಹಾಯಕವಾಗಲಿದೆ ಎಂದರು. ಕಾರ್ಯಾಗಾರದಲ್ಲಿ ಇ-ಆಡಳಿತ ಇಲಾಖೆಯ ವೈಜ್ಞಾನಿಕ ಅಧಿಕಾರಿಗಳಾದ ಕರುಣಾಕರ್ ಸಂಗನಬಸಪ್ಪ ಹಾಗೂ ಲಕ್ಷ್ಮೀಜಿ ಅವರು ಕೆ-ಜಿಐಎಸ್ 2.0 ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶರಣಪ್ಪ ಕೊಟ್ಟಪ್ಪಗೊಳ್, ಡಿವೈಎಸ್ಪಿ ದೂದಪೀರ್ ಮುಲ್ಲಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:40 pm

Bidar | ಬ್ರೀಮ್ಸ್‌ನಲ್ಲಿ ಅಕ್ರಮ ನೇಮಕ ಆರೋಪ: ಗುತ್ತಿಗೆ ನೌಕರರ ವಜಾಗೆ ಕರವೇ ಒತ್ತಾಯ

ಬೀದರ್: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಬ್ರೀಮ್ಸ್ ಸಂಸ್ಥೆಯಲ್ಲಿ ಕಾನೂನುಬಾಹಿರವಾಗಿ ನೇಮಕಗೊಂಡಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬ್ರೀಮ್ಸ್‌ನ ಮಾಜಿ ನಿರ್ದೇಶಕರಾಗಿದ್ದ ಡಾ. ಶಿವಕುಮಾರ್ ಶೆಟಕರ್ ಅವರ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಸುಮಾರು 10ರಿಂದ 12 ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳನ್ನು ಕಾನೂನುಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶುಶ್ರೂಷಕ ಅಧಿಕಾರಿ ಲಿಂಗರಾಜ್ ಹಿರೇಮಠ್, ಟ್ಯೂಟರ್ ಡಾ. ಜೈಸಿಂಗ್ ಡಿ. ಹಾಗೂ ಕಚೇರಿ ಅಧಿಕ್ಷಕ ಶ್ರೀನಿವಾಸ್ ಜಮಾದಾರ್ ಸೇರಿದಂತೆ ಕೆಲವರು ಸೇರಿ ಈ ನೇಮಕಾತಿಗಳನ್ನು ನಡೆಸಿದ್ದಾರೆ ಎಂದು ದೂರಲಾಗಿದೆ. ನೇಮಕಗೊಂಡ ಕೆಲ ಸಿಬ್ಬಂದಿಗಳು ಸಂಸ್ಥೆಯಲ್ಲಿ ನಿಯಮಿತವಾಗಿ ಸೇವೆ ಸಲ್ಲಿಸದೇ, ಅಕ್ರಮವಾಗಿ ಹಾಜರಾತಿ ತೋರಿಸಿ ವೇತನ ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಿಬ್ಬಂದಿಗಳನ್ನು ಗುರುತಿಸಿ 15 ದಿನಗಳೊಳಗೆ ಸೇವೆಯಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಬ್ರೀಮ್ಸ್ ಸಂಸ್ಥೆ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮರ್ಜಾಪುರ್, ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾವ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗೇಶ್ ರಾಯಣ್ಣೂರ್, ಜಿಲ್ಲಾ ಸಹ ಕಾರ್ಯದರ್ಶಿ ಅಲೆಕ್ಸಾಂಡರ್, ಜಿಲ್ಲಾ ಮುಖಂಡ ಸಂಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಗಿರೀಶ್ ಓಂಕಾರೆ, ದಕ್ಷಿಣ ಕ್ಷೇತ್ರದ ಉಪಾಧ್ಯಕ್ಷ ಧನರಾಜ್ ಚಿಟ್ಟಾವಾಡಿ, ದಕ್ಷಿಣ ಕ್ಷೇತ್ರದ ಕಾರ್ಯದರ್ಶಿ ರಾಜಗೊಂಡ, ಅನಿಲ್ ಕಮಠಾಣಾ ಹಾಗೂ ಸುಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:37 pm

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ| ಹರ್ಯಾಣದ ಐವರು ಶಾಸಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್

ಚಂಡಿಗಢ, ಎ.15: ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸತೀಶ್ ನಂದಲ್ ಪರವಾಗಿ ಅಡ್ಡ ಮತದಾನ ಮಾಡಿರುವುದಕ್ಕಾಗಿ ಕಾಂಗ್ರೆಸ್ ಹರ್ಯಾಣದ ಐವರು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ರಾಜ್ಯ ಶಿಸ್ತು ಸಮಿತಿಯ ಶಿಫಾರಸು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಔಪಚಾರಿಕ ಅನುಮೋದನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಾರಾಯಣಗಢದ ಶೆಲ್ಲಿ ಚೌಧರಿ, ಸಡೌರದ ರೇಣು ಬಾಲಾ, ರತಿಯಾದ ಜರ್ನೈಲ್ ಸಿಂಗ್, ಹಥಿನ್‌ನ ಮುಹಮ್ಮದ್ ಇಸ್ರೈಲ್ ಹಾಗೂ ಪುನಹಾನದ ಮುಹಮ್ಮದ್ ಇಲ್ಯಾಸ್ ಅಮಾನತುಗೊಂಡ ಶಾಸಕರಾಗಿದ್ದಾರೆ. ಧರ್ಮಪಾಲ್ ಮಲಿಕ್ ನೇತೃತ್ವದ ಪಕ್ಷದ ರಾಜ್ಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್‌ಗೆ ಅವರ ಪ್ರತಿಕ್ರಿಯೆ ಪರಿಶೀಲಿಸಿದ ಬಳಿಕ ಅಮಾನತು ಮಾಡಲು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಐವರು ಶಾಸಕರಲ್ಲಿ ಶೆಲ್ಲಿ ಚೌಧರಿ, ರೇಣು ಬಾಲಾ ಹಾಗೂ ಜರ್ನೈಲ್ ಸಿಂಗ್ ಅಡ್ಡ ಮತದಾನದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಹಮ್ಮದ್ ಇಲ್ಯಾಸ್ ಹಾಗೂ ಮುಹಮ್ಮದ್ ಇಸ್ರೈಲ್ ಪ್ರತಿಕ್ರಿಯೆ ನೀಡಿಲ್ಲ. ರೇಣು ಬಾಲಾ ಹಾಗೂ ಶೆಲ್ಲಿ ಚೌಧರಿ ಇಬ್ಬರೂ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕಿದ್ದೇವೆ. ತಮ್ಮನ್ನು ವಿನಾ ಕಾರಣ ಸಿಲುಕಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಡ್ಡ ಮತದಾನದ ಆರೋಪವನ್ನು ಜರ್ನೈಲ್ ಸಿಂಗ್ ಕೂಡ ನಿರಾಕರಿಸಿದ್ದಾರೆ. ತಾವು ಮತಗಳನ್ನು ಪರಿಶೀಲಿಸಲು ಪಕ್ಷದಿಂದ ಅಧಿಕಾರ ಪಡೆದಿದ್ದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಮತಗಳನ್ನು ತೋರಿಸಿರುವುದಾಗಿ ಮೂವರು ಶಾಸಕರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ‘‘ಗಂಭೀರ ಅಶಿಸ್ತು’’ ಪ್ರಕರಣ ಎಂದು ಕರೆದ ಹರ್ಯಾಣದ ಕಾಂಗ್ರೆಸ್ ಅಧ್ಯಕ್ಷ ರಾವ್ ನರೇಂದರ್ ಸಿಂಗ್, ಪಕ್ಷದ ಅಧಿಕೃತ ಅಭ್ಯರ್ಥಿ ಕರಮ್‌ವೀರ್ ಸಿಂಗ್ ಬೌದ್ಧ್ ವಿರುದ್ಧ ಮತ ಚಲಾಯಿಸಿರುವುದರಿಂದ ಈ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಗಳಿ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದರು.

ವಾರ್ತಾ ಭಾರತಿ 16 Apr 2026 9:36 pm

ಅಮೆರಿಕದ ನೆಲೆಗಳನ್ನು ಗುರಿಯಾಗಿಸಲು ಚೀನಾದ ಬೇಹುಗಾರಿಕಾ ಉಪಗ್ರಹ ಬಳಸಿದ ಇರಾನ್: ವರದಿ

ನ್ಯೂಯಾರ್ಕ್, ಎ.16: ಇರಾನ್ 2024ರ ಅಂತ್ಯದಲ್ಲಿ ರಹಸ್ಯವಾಗಿ ಚೀನಾದ ಬೇಹುಗಾರಿಕಾ ಉಪಗ್ರಹವನ್ನು ಪಡೆದಿದ್ದು, ಇದು ಪ್ರಸ್ತುತ ಯುದ್ಧದ ಸಂದರ್ಭದಲ್ಲಿ ಮಧ್ಯಪ್ರಾಚ್ಯದಾದ್ಯಂತ ಅಮೆರಿಕ ಮಿಲಿಟಿರಿ ನೆಲೆಗಳನ್ನು ಗುರಿಯಾಗಿಸಲು ನೆರವಾಗಿತ್ತು ಎಂದು `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ. `ಅರ್ಥ್ ಐ ಕಂಪೆನಿ' ಎಂಬ ಚೀನೀ ಸಂಸ್ಥೆ ನಿರ್ಮಿಸಿದ್ದ `ಟಿಇಇ-01ಬಿ' ಉಪಗ್ರಹವನ್ನು ಚೀನಾ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಬಳಿಕ ಅದನ್ನು ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‌ಜಿಸಿ) ಖರೀದಿಸಿತ್ತು ಎಂದು ಸೋರಿಕೆಯಾದ ಇರಾನ್ ಮಿಲಿಟರಿ ದಾಖಲೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ. ಇರಾನ್‍ನ ಮಿಲಿಟರಿ ಕಮಾಂಡರ್‌ಗಳು ಉಪಗ್ರಹವನ್ನು ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಮೇಲ್ವಿಚಾರಣೆ ಮಾಡಲು ನಿರ್ದೇಶಿಸಿದರು ಎಂದು ಉಪಗ್ರಹ ಚಿತ್ರಣ ಮತ್ತು ಕಕ್ಷೆಯ ವಿಶ್ಲೇಷಣೆಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ. ಒಪ್ಪಂದದ ಭಾಗವಾಗಿ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಇತರ ಪ್ರದೇಶಗಳಾದ್ಯಂತ ವಿಸ್ತರಿಸಿರುವ ನೆಟ್‍ವರ್ಕ್‍ನೊಂದಿಗೆ ಬೀಜಿಂಗ್ ಮೂಲದ ಉಪಗ್ರಹ ನಿಯಂತ್ರಣ ಮತ್ತು ಡೇಟಾ ಸೇವೆಗಳ ಪೂರೈಕೆದಾರ `ಎಂಪೋಸ್ಯಾಟ್' ನಿರ್ವಹಿಸುವ ಕೇಂದ್ರಗಳಿಗೆ ಐಆರ್‌ಜಿಸಿ ಪ್ರವೇಶವನ್ನು ಪಡೆದುಕೊಂಡಿದೆ ಎಂದು ವರದಿ ಹೇಳಿದೆ. ಚೀನಾದ ವಿದೇಶಾಂಗ ಇಲಾಖೆ ವರದಿಯನ್ನು ನಿರಾಕರಿಸಿದೆ. ಇತ್ತೀಚೆಗೆ, ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಚೀನಾದ ಹೆಸರಿಗೆ ಕಳಂಕ ತರುವ ಕಾರ್ಯವನ್ನು ನಡೆಸುತ್ತಿದ್ದು, ಈ ವರದಿ ಇಂತಹ ಪ್ರಯತ್ನಗಳ ಭಾಗವಾಗಿದೆ ಎಂದು ವಿದೇಶಾಂಗ ಇಲಾಖೆ ಖಂಡಿಸಿದೆ.

ವಾರ್ತಾ ಭಾರತಿ 16 Apr 2026 9:34 pm

Humnabad | ಡಾ ಬಿ.ಆರ್ ಅಂಬೇಡ್ಕರ್‌ಗೆ ಅವಮಾನ ಆರೋಪ : ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಹುಮನಾಬಾದ್: ಎ.14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಅಂಗವಾಗಿ ಹಣಕುಣಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಗಂಧಾ ಹಾಗೂ ಆಡಳಿತಾಧಿಕಾರಿಗಳು ಭಾವಚಿತ್ರಕ್ಕೆ ಗೌರವ ಸಲ್ಲಿಸದೇ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ದಲಿತ್ ಪ್ಯಾಂಥರ್ ಸಂಘಟನೆ ಒತ್ತಾಯಿಸಿದೆ. ಗುರುವಾರ ಹುಮನಾಬಾದ್ ತಹಶೀಲ್ದಾರ್ ಅವರ ಮೂಲಕ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಆಡಳಿತಾಧಿಕಾರಿಗಳ ಕರ್ತವ್ಯವಾಗಿದ್ದು, ಈ ಬಾರಿ ಅವರು ಯಾವುದೇ ರೀತಿಯ ಗೌರವ ಸಲ್ಲಿಸದೇ ಮಹಾನ್ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರು ಈ ಬಗ್ಗೆ ಪ್ರಶ್ನಿಸಿದಾಗ, ಆಡಳಿತದಿಂದ ಯಾವುದೇ ಆದೇಶ ಅಥವಾ ಸಹಾಯಧನ ಬಂದಿಲ್ಲ ಎಂದು ಉಡಾಫೆಯ ಉತ್ತರ ನೀಡಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಗಣಪತಿ ಅಷ್ಟೋರೆ, ವೈಜಿನಾಥ್ ಶಿಂಧೆ, ಸುಶೀಲಕುಮಾರ್ ಭೂಲಾ, ಸಿದ್ಧಾರ್ಥ ಜಾನ್ವೀರ್, ರಾಹುಲ್ ಚಿಟಗುಪ್ಪಕರ್, ರವಿ ಶಿಂಧೆ, ವಿಠಲ್ ಶಿವನಾಯಕ್, ಉದಯಕುಮಾರ್, ಲಕ್ಷ್ಮಣ್ ಶಿಂಧೆ, ಪ್ರಭು ಮಟ್ಟೆನೋರ್ ಹಾಗೂ ರಾಜಪ್ಪ ಸಾಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:32 pm

Humnabad | ವಿವಿಧ ಕಳ್ಳತನ ಪ್ರಕರಣ : 34.55 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ, 26 ಆರೋಪಿಗಳ ಬಂಧನ

ಹುಮನಾಬಾದ್: ಚಿಟಗುಪ್ಪಾ, ಬಸವಕಲ್ಯಾಣ, ಮುಡಬಿ, ಮಂಠಾಳ್ ಹಾಗೂ ಹುಮನಾಬಾದ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ, ಒಟ್ಟು 34 ಲಕ್ಷ 55 ಸಾವಿರ ರೂ. ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ 26 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ 4.15 ಲಕ್ಷ ರೂ. ಮೌಲ್ಯದ ಕೇಬಲ್ ವೈರ್, ಕಬ್ಬಿಣದ ರಾಡು, ಮೋಟಾರ್ ಸೇರಿದಂತೆ ಸಾಮಾನುಗಳನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಲಾಗಿದೆ ಎಂದರು. ಹಂದಿಕೇರಾ ಗ್ರಾಮದಲ್ಲಿ 2 ಎಮ್ಮೆ ಹಾಗೂ 1 ಕೋಣ ಕಳ್ಳತನ ಪ್ರಕರಣದಲ್ಲಿ 3.50 ಲಕ್ಷ ರೂ. ಮೌಲ್ಯದ ಒಂದು ಎಮ್ಮೆ, 1 ಲಕ್ಷ ರೂ. ನಗದು ಮತ್ತು ಒಂದು ಗೂಡ್ಸ್ ವಾಹನವನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ. ಮಾಣಿಕ್ ನಗರದಲ್ಲಿ ಮನೆ ಬೀಗ ಮುರಿದು 8 ಲಕ್ಷ ರೂ. ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 7.52 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಚಿಟಗುಪ್ಪಾ ಠಾಣೆ ವ್ಯಾಪ್ತಿಯ ಹಳ್ಳಿಖೇಡ (ಕೆ) ಗ್ರಾಮದಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 5.50 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಮಹಿಳೆಯ ಕೊರಳಿಂದ ಚಿನ್ನದ ಸರ ಕಳವು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 80 ಸಾವಿರ ರೂ. ಮೌಲ್ಯದ ಸರವನ್ನು ವಶಪಡಿಸಿಕೊಂಡಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಬಸವಕಲ್ಯಾಣ ಠಾಣೆ ವ್ಯಾಪ್ತಿಯಲ್ಲಿ ಸೋಯಾಬಿನ್ ಕಳ್ಳತನ ಹಾಗೂ 70 ಸಾವಿರ ರೂ. ಜೇಬು ಕಳ್ಳತನ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 80 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯ 40 ಸಾವಿರ ರೂ. ಕಳ್ಳತನ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು 35 ಸಾವಿರ ರೂ. ಜಪ್ತಿ ಮಾಡಿ ನೋಟಿಸ್ ನೀಡಿ ಬಿಡಲಾಗಿದೆ. ಮುಡಬಿ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಆಕಳು ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 1 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಾರ್‌ನಲ್ಲಿ ನಡೆದ 22 ಸಾವಿರ ರೂ. ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 25 ಸಾವಿರ ರೂ. ಮೌಲ್ಯದ ನಗದು ಮತ್ತು ಸ್ಕೂಟಿ ವಶಪಡಿಸಿಕೊಂಡಿದ್ದಾರೆ. ಪಲ್ಸರ್ ಬೈಕ್ ಕಳ್ಳತನ ಪ್ರಕರಣದಲ್ಲಿ 80 ಸಾವಿರ ರೂ. ಮೌಲ್ಯದ ಬೈಕ್ ಕಲಬುರಗಿ ಗಂಜ್‌ನಲ್ಲಿ ಪತ್ತೆಯಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ. ಮಂಠಾಳ್ ಠಾಣೆ ವ್ಯಾಪ್ತಿಯಲ್ಲಿ 70 ಸಾವಿರ ರೂ. ಮೌಲ್ಯದ ಬೈಕ್ ಕಳ್ಳತನ ಪ್ರಕರಣದಲ್ಲಿ ಬೆರಳು ಮುದ್ರೆಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬೈಕ್ ಜಪ್ತಿ ಮಾಡಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ವಾರ್ತಾ ಭಾರತಿ 16 Apr 2026 9:29 pm

ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಇಎಸ್‌ಐ ಸೌಲಭ್ಯ ಲಭ್ಯ

ಉಡುಪಿ, ಎ.16: ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಉಡುಪಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ವಿಭಾಗದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಈಗ ತನ್ನ ಸೇವಾವ್ಯಾಪ್ತಿಯನ್ನು ವಿಸ್ತರಿಸಿದ್ದು ಸಮಾಜದ ಶ್ರಮಜೀವಿಗಳಾದ ಕಾರ್ಮಿಕ ವರ್ಗದವರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ನೌಕರರ ರಾಜ್ಯ ವಿಮಾ (ಇಎಸ್‌ಐ) ಸೌಲಭ್ಯವನ್ನು ಅಧಿಕೃತವಾಗಿ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿವಿ ಭಂಡಾರಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಆಸ್ಪತ್ರೆಯು ಇಎಸ್‌ಐ ನಿಯಮ ಗಳನ್ನು ಅಕ್ಷರಶಃ ಪಾಲಿಸುವ ಮೂಲಕ, ಅದರ ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ಅರ್ಹ ಫಲಾನುಭವಿಗಳಿಗೆ ಅತ್ಯಂತ ಪ್ರಾಮಾಣಿಕ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲು ಬದ್ಧವಾಗಿದೆ. ವಿಮೆ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ಗೌರವಯುತ ಮತ್ತು ನಗದು ರಹಿತ ಚಿಕಿತ್ಸೆ ತಲುಪಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ಪ್ರಮುಖ ಚಿಕಿತ್ಸಾ ಸೌಲಭ್ಯಗಳನ್ನು ವಿವರಿಸಿದ ಅವರು, ಮನೋವೈದ್ಯಕೀಯ ಚಿಕಿತ್ಸೆ, ಅಮಲು ಪದಾರ್ಥ ವಿಮುಕ್ತಿ ಚಿಕಿತ್ಸೆ, ಆಟಿಸಂ ಮತ್ತು ಕಲಿಕಾ ನ್ಯೂನತೆಗಳ ಚಿಕಿತ್ಸೆ, ವಾಕ್ ಚಿಕಿತ್ಸೆ, ವೃತ್ತಿಪರ ಚಿಕಿತ್ಸೆ, ಕಣ್ಣಿನ ಮತ್ತು ದಂತ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸಾ ಸೇವೆ ಇಲ್ಲಿ ಲಭ್ಯವಿದೆ ಎಂದರು. ಆಸ್ಪತ್ರೆ ಈಗಾಗಲೇ ಸರ್ಕಾರದ ಹಲವಾರು ಮಹತ್ವಾಕಾಂಕ್ಷಿ ಯೋಜನೆ ಗಳೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆ, ಐಟಿಡಿಪಿ ಹಾಗೂ ಕೊಂಕಣ ರೈಲ್ವೆ ಸಿಬ್ಬಂದಿಗಳ ಆರೋಗ್ಯ ಸೇವೆ, ಕರ್ನಾಟಕ ಸರಕಾರ ಸಹಭಾಗಿತ್ವದ ‘ಮಾನಸಧಾರ’ ಯೋಜನೆ, ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಇರುವ ಸರಕಾರದ ಇಸಿಆರ್‌ಸಿ ಕೇಂದ್ರದ ನಿರ್ವಹಣೆ (ಬೀದಿಯಲ್ಲಿ ಅಲೆದಾಡುವ ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ ಚಿಕಿತ್ಸೆ ನೀಡುವುದು) ಆಸ್ಪತ್ರೆ ಮಾಡುತ್ತಿದೆ ಎಂದರು. ಇಎಸ್‌ಐ ಸೌಲಭ್ಯದ ಪ್ರಯೋಜನ ಪಡೆಯಲು ಇಚಿಸುವ ಫಲಾನುಭವಿ ಗಳು ತಮ್ಮ ಇಎಸ್‌ಐ ಕಾರ್ಡ್ ಇ-ಪೆಹಚಾನ್ ಕಾರ್ಡ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ಆಸ್ಪತ್ರೆಯನ್ನು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ. ದೂರವಾಣಿ: 0820-2535299 / 2535399 ಸಂಪರ್ಕಿಸಬಹುದು ಎಂದು ನಾಡಿನ ಖ್ಯಾತ ಮನೋವೈದ್ಯರಾದ ಡಾ.ಭಂಡಾರಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರುಮನೆ, ಡಾ.ದೀಪಕ್ ಮಲ್ಯ, ಡಾ.ಮಾನಸ್ ಇ.ಆರ್ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:27 pm

ಡಾ.ಎಂ.ಎ.ಸಲೀಂ ಅವಧಿ ವಿಸ್ತರಣೆ: 2027ರ ಆ.29ರ ವರೆಗೆ ಡಿಜಿ-ಐಜಿಪಿಯಾಗಿ ಕರ್ತವ್ಯ

ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಎಂ.ಎ.ಸಲೀಂ ಅವರ ಸೇವಾ ಅವಧಿಯನ್ನು ವಿಸ್ತರಿಸಿ ರಾಜ್ಯ ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿದ್ದು, 2027ರ ಆಗಸ್ಟ್ 29ರವರೆಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ. 1993ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ.ಎಂ.ಎ.ಸಲೀಂ ಅವರು, ಈ ಹಿಂದೆ ಅಪರಾಧ ತನಿಖಾ ದಳ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ(ಡಿಜಿಪಿ) ಸೇವೆ ಸಲ್ಲಿಸಿದ್ದರು.  

ವಾರ್ತಾ ಭಾರತಿ 16 Apr 2026 9:26 pm

Raichur | ಬಿಎಸ್‌ಎನ್‌ಎಲ್ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ವಿಳಂಬ: ಪ್ರತಿಭಟನೆ

ರಾಯಚೂರು: ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳಿಂದ ನಿವೃತ್ತರಾದ ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ನೀಡುವಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಅಖಿಲ ಭಾರತ ಬಿಎಸ್‌ಎನ್‌ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಿಂಚಣಿದಾರರು, ಫೆಬ್ರವರಿ 27ರಂದು ಹೊರಡಿಸಲಾದ ಡಿಪಿಇ ಆದೇಶವನ್ನು ತಕ್ಷಣ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಕೈಗಾರಿಕಾ ತುಟ್ಟಿ ಭತ್ಯೆ ಪರಿಷ್ಕರಣೆ ಮಾಡುವ ಪದ್ಧತಿ ಇದ್ದರೂ, ಈ ಬಾರಿ ಅನಗತ್ಯ ವಿಳಂಬವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 1997, 2007 ಹಾಗೂ 2017ರ ವೇತನ ಮಾಪಕಗಳ ಅಡಿಯಲ್ಲಿ ಸಿಪಿಎಸ್‌ಇ ಉದ್ಯೋಗಿಗಳಿಗೆ ಜನವರಿ 1ರಿಂದ ಅನ್ವಯವಾಗುವ ಐಡಿಎ ದರಗಳನ್ನು ನಿಗದಿಪಡಿಸಲಾಗಿದೆ. 2007ರ ವೇತನ ಮಾಪಕಕ್ಕೆ ಅನುಗುಣವಾಗಿ ಡಿಒಟಿ (ಐಡಿಎ) ಪಿಂಚಣಿದಾರರು ಡಿಆರ್ ಹೆಚ್ಚಳಕ್ಕೆ ಅರ್ಹರಾಗಿದ್ದಾರೆ. ಆದಾಗ್ಯೂ, ಸಂಬಂಧಿತ ದೂರಸಂಪರ್ಕ ಇಲಾಖೆ ಇನ್ನೂ ಆದೇಶ ಜಾರಿಗೆ ತರದಿರುವುದು ಲಕ್ಷಾಂತರ ಪಿಂಚಣಿದಾರರಲ್ಲಿ ಆತಂಕ ಮೂಡಿಸಿದೆ ಎಂದು ತಿಳಿಸಿದರು. ದೇಶಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್ ಪಿಂಚಣಿದಾರರು ಇದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಫೆ.27ರ ಆದೇಶವನ್ನು ತಕ್ಷಣ ಜಾರಿಗೆ ತರಬೇಕು, ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಿದ ಡಿಆರ್ ನೀಡಬೇಕು, ಆದೇಶದ ಪ್ಯಾರಾ 5 ಅನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ತುಟ್ಟಿ ಪರಿಹಾರವನ್ನು ಸ್ವಯಂಚಾಲಿತವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಏಪ್ರಿಲ್ 30ರಂದು ದೇಶಾದ್ಯಂತ ಸಿಸಿಎ/ಬಿಎಸ್‌ಎನ್‌ಎಲ್ ಕಚೇರಿಗಳ ಮುಂದೆ ಬೃಹತ್ ಶಾಂತಿಯುತ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ವಲಯ ಉಪಾಧ್ಯಕ್ಷ ಎಸ್.ವಿ.ಅರಳಿ, ಜಿಲ್ಲಾಧ್ಯಕ್ಷ ಸಿದ್ದಪ್ಪ, ಜಿಲ್ಲಾ ಕಾರ್ಯದರ್ಶಿ ಸೈಯದ್ ಅಕ್ಬರ್ ಹುಸೇನ್, ಖಜಾಂಚಿ ಮೊಹ್ಮದ್ ಯೂನೂಸ್, ಗೌರವಾಧ್ಯಕ್ಷ ಬಸವರಾಜ, ಬಾಬುಲಾಲ್, ಮುಕ್ತಾ ಯರನಾಕರ ಸೇರಿದಂತೆ ಅನೇಕರಿದ್ದರು.

ವಾರ್ತಾ ಭಾರತಿ 16 Apr 2026 9:25 pm

ಕುಂದಾಪುರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಇಚ್ಛಾಶಕ್ತಿ ತೋರದ ಅಧಿಕಾರಿಗಳ ವಿರುದ್ಧ ಶಾಸಕರ ಆಕ್ರೋಶ

ಕುಂದಾಪುರ, ಎ.16: ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೂರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಪ್ರಸ್ತಾಪಗೊಂಡ ಸಮಸ್ಯೆಗಳಿಗೆ ಇವತ್ತಿಗೂ ಪರಿಹಾರ ಸಿಕ್ಕಿಲ್ಲ. ಕಳೆದ ಸಭೆಗೂ ಇಂದಿನ ಸಭೆಗೂ ನಡುವೆ ಕೇವಲ ಪತ್ರ ವ್ಯವಹಾರ ನಡೆದಿದ್ದು ಬಿಟ್ಟರೆ ಬೇರೆನೂ ಪ್ರಗತಿ ಆಗಿಲ್ಲ. ಪತ್ರ ಬರೆದು ಸುಮ್ಮನೆ ಕುಳಿತರೆ ಹೇಗೆ? ಸಮಸ್ಯೆ ಪರಿಹಾರಕ್ಕೆ ಇಚ್ಚಾಶಕ್ತಿ ತೋರಿಸುತ್ತಿಲ್ಲ. ಸಭೆಯಲ್ಲಿ ಪ್ರತಿಬಾರಿ ಅದೇ ಸಮಸ್ಯೆಗಳನ್ನು ಮತ್ತೆ ಮತ್ತೆ ಹೇಳಿದರೆ ಏನು ಮಾಡಲು ಸಾಧ್ಯ ಎಂದು ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಜೆಜೆಎಂ ಯೋಜನೆಯಡಿ 3 ವರ್ಷಗಳಿಂದ ಏನೂ ಕೆಲಸ ಆಗಿಲ್ಲ. ಅವರಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಒಂದು ಹೆಜ್ಜೆ ಕೂಡ ಮುಂದೆ ಹೋಗಿಲ್ಲ, ಎಲ್ಲ ಕಡೆ ಪೈಪ್‌ಲೈನ್ ಆಗಿದೆ ಬಿಟ್ಟರೆ ನೀರಿಲ್ಲ. ಯಾವುದಕ್ಕೂ ಒಂದು ಪ್ಲಾನ್ ಇಲ್ಲ. ಭೂಸ್ವಾಧೀನ ಮಾಡಿಕೊಂಡಿಲ್ಲ. ಹೊಸ ಟ್ಯಾಂಕ್ ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಪೈಪ್‌ಲೈನ್ ಮಾಡಿದ ಬಳಿಕ ಮೀಸಲು ಅರಣ್ಯ ಅನುಮತಿಗೆ ಬರೆದರೆ ಹೇಗೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿ ಎಂದರು. ಕೋಟೇಶ್ವರದಲ್ಲಿ ಹಾನಿಯಾದ 280 ಮೀ. ಪೈಪ್‌ಲೈನ್‌ನ್ನು ಗ್ರಾ.ಪಂ. ಮೂಲಕ ಸರಿಪಡಿಸಲಾಗಿದೆ ಎಂದು ಕೋಟೇಶ್ವರ ಪಿಡಿಒ ಹೇಳಿದರೆ, ಗೋಪಾಡಿಯಲ್ಲಿ 340 ಮೀ. ಪೈಪ್‌ಲೈನ್ ಹಾನಿಯಾಗಿದ್ದು, ನೀರು ಸರಬರಾಜು ಮಾಡುವ ಬಾವಿಯಲ್ಲಿ ಎಪ್ರಿಲ್ ಅಂತ್ಯಕ್ಕಾಗುವಷ್ಟು ನೀರಿದ್ದು, ಮೇನಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಗೋಪಾಡಿ ಪಿಡಿಒ ಹೇಳಿದರು. ಗೋಪಾಡಿಯಲ್ಲಿ ಶಾಲೆ ಸಮೀಪ ಟ್ಯಾಂಕ್ ನಿರ್ಮಿಸಲು ಸ್ಥಳೀಯರ ಆಕ್ಷೇಪವಿದ್ದು, ಕೋಟೇಶ್ವರದ ಕುಂಬ್ರಿ ಭಾಗದಲ್ಲಿ ನೀರು ಕಲುಷಿತವಾಗಿದೆ ಎಂದು ಶಾಸಕರು ಸಭೆಯ ಗಮನಕ್ಕೆ ತಂದರು. ಬೀಜಾಡಿಯಲ್ಲಿ ಕುಡಿಯುವ ನೀರು ಸರಬರಾಜು ಬಾವಿಯನ್ನು ಆಳ ಗೊಳಿಸಬೇಕು ಎಂದು ಬೀಜಾಡಿ ಪಿಡಿಒ ಹೇಳುತ್ತಿದ್ದಂತೆಯೇ, ಕಳೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಈಗ ಮತ್ತೆ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಗೊಂಡರು. ಮಲ್ಯಾಡಿಯಲ್ಲಿ ತೆರೆದ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದೆ. ಕೊರ್ಗಿ ಗ್ರಾಮದ ಕುಂಜನಕಟ್ಟೆ ಎಂಬಲ್ಲಿ ಬಾವಿಗೆ ಫಿಲ್ಟರ್ ಅಳವಡಿಸಬೇಕು. ಗುಡ್ಡಟ್ಟು ಎಂಬಲ್ಲಿ ಬಾವಿಗೆ ಫಿಲ್ಟರ್ ಅಳವಡಿಸಬೇಕು. ಯಡಾಡಿ- ಮತ್ಯಾಡಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ, ಮಡಾಮಕ್ಕಿ-ಶೇಡಿಮನೆ ಭಾಗದಲ್ಲಿ ನೀರಿನ ಸಮಸ್ಯೆ ಇದೆ ಎಂದು ಪಿಡಿಒಗಳು ಸಭೆಯ ಗಮನಕ್ಕೆ ತಂದರು. ಗಿಳಿಯಾರು ಭಾಗದಲ್ಲಿ ನೀರಿನ ಸಮಸ್ಯೆ ಇದ್ದು 2 ದಿನಕ್ಕೊಮ್ಮೆ ನೀರು ನೀಡಲಾಗುತ್ತಿದೆ. ಐರೋಡಿಯಲ್ಲಿ ದಿನ ಬಿಟ್ಟು ದಿನ ನೀರು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಆವರ್ಸೆ ಗ್ರಾಮದ ನಾಲ್ಕು ಟ್ಯಾಂಕ್‌ಗಳಿಗೆ ವಾರಾಹಿ ನೀರಿನ ಹರಿವು ತುಂಬಾ ಕಡಿಮೆಯಿದ್ದು, ಟ್ಯಾಂಕ್ ತುಂಬಲು ತುಂಬಾ ಸಮಯ ಬೇಕಾಗುತ್ತದೆ. ನೀರು ರಭಸವಾಗಿ ಬರುವಂತೆ ಮಾಡಬೇಕು ಎಂದು ಪಿಡಿಒ ಸಭೆಯ ಗಮನಕ್ಕೆ ತಂದರು. ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್, ಕುಂದಾಪುರ ಇಒ ಮಹೇಶ ಕೆ.ಜಿ., ಬ್ರಹ್ಮಾವರ ಇಒ ಎಚ್.ವಿ. ಇಬ್ರಾಹಿಂಪುರ, ಕಾರ್ಕಳ ಇಒ ಪ್ರಶಾಂತ್, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಉದಯ ಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:25 pm

ಲೆಬನಾನ್–ಇಸ್ರೇಲ್ ನಡುವೆ 10 ದಿನಗಳ ಕದನ ವಿರಾಮ ಒಪ್ಪಂದ ಜಾರಿ: ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್, ಎ.16: ಲೆಬನಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಗೆ ತಾತ್ಕಾಲಿಕ ಶಮನವಾಗಿ 10 ದಿನಗಳ ಕದನ ವಿರಾಮ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಟ್ರೂತ್ ಸೋಷಿಯಲ್‌ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ‘ಬೀಬಿ’ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದ್ದು, ಕದನ ವಿರಾಮ ಒಪ್ಪಂದಕ್ಕೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. “ಲೆಬನಾನ್ ಸ್ಥಳೀಯ ಕಾಲಮಾನ ರಾತ್ರಿ 12 ಗಂಟೆಯ ನಂತರ 10 ದಿನಗಳ ಕಾಲ ಕದನ ವಿರಾಮ ಜಾರಿಯಾಗಲಿದೆ. ಮಂಗಳವಾರ, 34 ವರ್ಷಗಳ ಬಳಿಕ ಮೊದಲ ಬಾರಿಗೆ ಲೆಬನಾನ್ ಮತ್ತು ಇಸ್ರೇಲ್ ಪ್ರತಿನಿಧಿಗಳು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಚರ್ಚೆ ನಡೆಸಿದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರೊಂದಿಗೆ ಶಾಶ್ವತ ಕದನ ವಿರಾಮಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ”, ಎಂದು ಟ್ರಂಪ್ ತಿಳಿಸಿದ್ದಾರೆ. “ವಿಶ್ವದ ವಿವಿಧ ಭಾಗಗಳಲ್ಲಿ ಒಂಭತ್ತು ಯುದ್ಧಗಳನ್ನು ನಿಲ್ಲಿಸುವಲ್ಲಿ ಭಾಗಿಯಾಗಿರುವುದು ಗೌರವದ ಸಂಗತಿ. ಇದು ನನ್ನ 10ನೇ ಪ್ರಯತ್ನವಾಗಿದ್ದು, ಇದನ್ನೂ ಅಂತ್ಯಗೊಳಿಸಲು ಬದ್ಧನಾಗಿದ್ದೇನೆ” ಎಂದು ಟ್ರಂಪ್ ಅವರು ಹೇಳಿದ್ದಾರೆ.

ವಾರ್ತಾ ಭಾರತಿ 16 Apr 2026 9:22 pm

Raichur | ಜನನ–ಮರಣ ಪ್ರಮಾಣಪತ್ರ ವಿಭಾಗದಲ್ಲಿ ಅವ್ಯವಸ್ಥೆ ಆರೋಪ : ಕ್ರಮಕ್ಕೆ ಕರವೇಯಿಂದ ಆಗ್ರಹ

ರಾಯಚೂರು: ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಹಾಗೂ ಅಧಿಕ ಶುಲ್ಕ ವಸೂಲಿ ಆರೋಪಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾ ಘಟಕದವರು ಗುರುವಾರ ಜಿಲ್ಲಾಡಳಿತ ಭವನದ ಎದುರು ಮನವಿ ಸಲ್ಲಿಸಿದರು. ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ಸಿಬ್ಬಂದಿಗಳು ಸಮರ್ಪಕ ಪರಿಶೀಲನೆ ನಡೆಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದರಿಂದ ಜನರು ಹಲವು ಬಾರಿ ಕಚೇರಿಗೆ ಸುತ್ತಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ, ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ ಎಂದು ದೂರಿದರು. ಮಹಬೂಬ್ ಪಾಶಾ ಅವರ ಜನನ ಪ್ರಮಾಣಪತ್ರ ಪ್ರಕರಣವನ್ನು ಉದಾಹರಿಸಿ, ಕೋರ್ಟ್ ಆದೇಶದಂತೆ ಸಲ್ಲಿಸಿದ ಅರ್ಜಿಯಲ್ಲಿಯೂ ತಪ್ಪು ಮಾಹಿತಿಯನ್ನು ನಮೂದಿಸಿ ಪ್ರಮಾಣಪತ್ರ ನೀಡಲಾಗಿದೆ. ನಂತರ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೂ ಮತ್ತೆ ಮತ್ತೆ ತಪ್ಪುಗಳನ್ನು ಮಾಡಲಾಗುತ್ತಿದ್ದು, ಪ್ರತಿ ಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದೇ ರೀತಿ ಹಲವು ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ದಾಖಲೆಗಳನ್ನು ನಮೂದಿಸಿ ನಂತರ ತಿದ್ದುಪಡಿ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ದಾಖಲೆಗಳಿಲ್ಲದಿದ್ದರೆ ರೂ.500 ರಿಂದ 1000ರವರೆಗೆ ಲಂಚ ಪಡೆದು ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಖಲೀಲ್ ಪಾಷಾ, ರಾಚಯ್ಯ ಸ್ವಾಮಿ, ಬಂದೇನವಾಜ್, ಜಾಫರ್, ಸೈಯದ್ ಮನ್ಸೂರ್, ಮನ್ನಾನ್, ಫಾರೂಕ್, ತಾಹೇರ್, ಸುದರ್ಶನರೆಡ್ಡಿ, ಈರಣ್ಣ, ಅಬ್ದುಲ್ ಹಬೀಬ್, ಮೌಲಾ, ಬಾಬು, ಗುರು, ಪಾಂಡುರಂಗ, ಮಹೆಬೂಬ್, ಹುಸೇನ್, ಬಾಬಾಫಕ್ರುದ್ದಿನ್, ಆನಂದ, ಶಕ್ಷಾವಲಿ, ಸೈಯದ್ ಮಹೆಬೂಬ್, ಸಾದೀಕ್, ನಿಸಾರ್ ಸೇರಿದಂತೆ ಅನೇಕರಿದ್ದರು.

ವಾರ್ತಾ ಭಾರತಿ 16 Apr 2026 9:22 pm

ಎ.17ರಿಂದ ಲ್ಯಾಂಡ್ ಮಾರ್ಕ್ ಫೋರಮ್‌ನ ಅಂತರರಾಷ್ಟ್ರೀಯ ಕಾರ್ಯಾಗಾರ; ಸ್ಪೀಕರ್‌ ಯು.ಟಿ. ಖಾದರ್ ಭಾಗಿ

ಹೊಸದಿಲ್ಲಿ: ಲ್ಯಾಂಡ್ ಮಾರ್ಕ್ ಫೋರಮ್ ಸಂಸ್ಥೆ ಆಯೋಜಿಸಿರುವ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರವು ಹೊಸದಿಲ್ಲಿಯಲ್ಲಿ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರವು ಎ.17 ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 11ರವರೆಗೆ ನಡೆಯಲಿದೆ. ವಿಶ್ವದ ವಿವಿಧ ದೇಶಗಳಿಂದ ಸುಮಾರು 200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದು, ನಾಯಕತ್ವ, ವ್ಯಕ್ತಿತ್ವ ವಿಕಾಸ, ಪರಿಣಾಮಕಾರಿ ಸಂವಹನ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತಂತೆ ಚರ್ಚೆಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 16 Apr 2026 9:21 pm

IPL 2026: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕೆ ಆಡುತ್ತಿಲ್ಲ? ಇನ್ನೆಷ್ಟು ಪಂದ್ಯ ಆಡುವುದಿಲ್ಲ?

Rohit Sharma Injury- ಐಪಿಎಲ್ 2026ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಗಾಯದ ಕಾರಣ ಹೊರಗುಳಿದಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಗೆ ಒಳಗಾಗಿದ್ದ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ರಾಂತಿ ಪಡೆದಿದ್ದಾರೆ. ರೋಹಿತ್ ಚೇತರಿಸಿಕೊಳ್ಳಲು ಇನ್ನು ಎರಡು ಪಂದ್ಯಗಳ ಕಾಲಾವಕಾಶ ಬೇಕಾಗಬಹುದು ಎಂದು ನಾಯಕ ಹಾರ್ದಿಕ್ ಪಾಂಡ್ಯ ಖಚಿತಪಡಿಸಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿದ್ದ ರೋಹಿತ್ ಅನುಪಸ್ಥಿತಿಯು ತಂಡದ ಬ್ಯಾಟಿಂಗ್ ಸಂಯೋಜನೆಗೆ ದೊಡ್ಡ ಹಿನ್ನಡೆಯಾಗಿದ್ದು, ಅವರ ಬದಲಿಗೆ ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಸ್ಯಾಂಟ್ನರ್ ಕೂಡ ಅನಾರೋಗ್ಯದಿಂದ ಪಂದ್ಯ ತಪ್ಪಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 16 Apr 2026 9:19 pm

ಮೋದಿ ಸರ್ಕಾರದ ಸಂಸದೀಯ ಕ್ಷೇತ್ರ ನಿರ್ಣಯ ನಿರ್ಧಾರವು ದಕ್ಷಿಣ ಭಾರತದ ಹಿತರಕ್ಷಣೆ, ಮಹಿಳಾ ಮೀಸಲಾತಿಗೆ ಪೂರಕ: ತೇಜಸ್ವಿ ಸೂರ್ಯ

ನವದೆಹಲಿ: ಮಹಿಳಾ ಮೀಸಲಾತಿ ಮತ್ತು ನೂತನ ಸಂಸದೀಯ ಕ್ಷೇತ್ರ ನಿರ್ಣಯಕ್ಕೆ ಸಂಬಂಧಿಸಿದ ಸಾಂವಿಧಾನಿಕ ಕ್ರಮಗಳನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಲೋಕಸಭೆಯಲ್ಲಿ ಬಲವಾಗಿ ಬೆಂಬಲಿಸಿ ಮಾತನಾಡಿದ್ದು, ಈ ಕ್ರಮಗಳನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. 2029 ರಿಂದ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಈ ಕ್ರಮ ಅತ್ಯಂತ ಅವಶ್ಯಕ ಎಂದು ವಿವರಿಸಿದ್ದಾರೆ. ದಕ್ಷಿಣದ ಹಾಗೂ ಸಣ್ಣ ರಾಜ್ಯಗಳ

ಒನ್ ಇ೦ಡಿಯ 16 Apr 2026 9:19 pm

ಶಾಸಕ ವಿನಯ್ ಕುಲಕರ್ಣಿ ಕಣ್ಣೀರು! ಶಿಕ್ಷೆ ಪ್ರಕಟಕ್ಕೂ ಮುನ್ನ ಜಡ್ಜ್‌ ಮುಂದೆ ಕೊನೆ ಮಾತು ಹೇಳಿದ್ದೇನು?

ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಲಯದಲ್ಲಿ ಕಣ್ಣೀರಿಟ್ಟಿದ್ದು, ಶಿಕ್ಷೆ ಪ್ರಕಟಕ್ಕೂ ಮುನ್ನ ನ್ಯಾಯಾಧೀಶರ ಮುಂದೆ ಕೊನೆಯ ಮಾತುಗಳನ್ನಾಡಿದ್ದಾರೆ. ಮಕ್ಕಳು, ಕ್ಷೇತ್ರ ಹಾಗೂ ತಮ್ಮ ಕೃಷಿ ಜೀವನ, ರಾಜಕೀಯ ಪಿತೂರಿ ಉಲ್ಲೇಖಿಸಿ ಶಿಕ್ಷೆ ಪ್ರಮಾಣ ಕಡಿಮೆ ನೀಡುವಂತೆ ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 16 Apr 2026 8:53 pm

National Highway: ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಿಗ್ ಅಪ್ಡೇಟ್‌

National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಕೆಲವು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲವಯ ಹೆದ್ದಾರಿಗಳು ಅಭಿವೃದ್ಧಿ ಕಾಮಗಾರಿಗಳ ಹಂತದಲ್ಲಿವೆ. ಈ ಸಾಲಿಗೆ ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕವನ್ನು ಸಂಪರ್ಕಿಸುವ NH ಕೂಡ ಸೇರಿದೆ. ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766Cಯಡಿ ಬರುವ ಬೈಂದೂರು- ಕೊಲ್ಲೂರು ನಡುವಿನ 38 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ವೇಗ

ಒನ್ ಇ೦ಡಿಯ 16 Apr 2026 8:40 pm

ವಿರಾಟ್ ಕೊಹ್ಲಿಗೆ ಮರೆತು ಹೋಯಿತೇ ತಮ್ಮದೇ ಮಾತು? ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಾಗ ಅಭಿಮಾನಿಗಳಿಗೆ ನೆನಪಾಯ್ತು!

Virat Kohli And Impact Player Rule 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವ ದಿನವೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದ ವಿರಾಟ್ ಕೊಹ್ಲಿ, ಲಖನೌ ವಿರುದ್ಧದ ಪಂದ್ಯದಲ್ಲಿ ಅನಿವಾರ್ಯವಾಗಿ ಅದೇ ನಿಯಮದಡಿ ಕಣಕ್ಕಿಳಿದಿದ್ದಾರೆ. ಪಾದದ ನೋವಿನ ಕಾರಣ ಫೀಲ್ಡಿಂಗ್ ಮಾಡದ ಅವರು, ಸುಯಶ್ ಶರ್ಮಾ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿ 48 ರನ್ ಗಳಿಸಿದರು. ಈ ಮೂಲಕ ತಮ್ಮ ಹಳೆಯ ಹೇಳಿಕೆಯಿಂದ ಅವರು ಹಿಂದೆ ಸರಿದರಾ ಎಂಬ ಚರ್ಚೆ ಶುರುವಾಗಿದೆ. ಪೂರ್ಣ ಫಿಟ್‌ನೆಸ್ ಇದ್ದರೆ ಮಾತ್ರ ಆಡುವುದಾಗಿ ಈ ಹಿಂದೆ ಅವರು ಸಂದರ್ಶನದಲ್ಲಿ ತಿಳಿಸಿದ್ದರು.

ವಿಜಯ ಕರ್ನಾಟಕ 16 Apr 2026 8:40 pm

Indian Railway: ಭಾರತದ ಟಾಪ್ 6 ಅತಿ ಉದ್ದವಾದ ರೈಲು ಪ್ಲಾಟ್‌ಫಾರ್ಮ್‌ಗಳ ಪಟ್ಟಿ ಇಲ್ಲಿದೆ

ವಿಶ್ವದಲ್ಲೇ ಅತಿ ದೊಡ್ಡ ರೈಲು ಜಾಲಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಂಪರ್ಕಿಸುವ ಅತಿ ದೊಡ್ಡ ವ್ಯವಸ್ಥೆಯಲ್ಲಿ ಕೆಲವು ರೈಲು ನಿಲ್ದಾಣಗಳು ತಮ್ಮ ದೇಶದಲ್ಲೆ ಅತಿ ಉದ್ದವಾದ ಪ್ಲಾಟ್‌ಫಾರ್ಮ್‌ಗಳಿಂದ ವಿಶೇಷ ಗಮನ ಸೆಳೆಯುತ್ತಿವೆ. ಇಂತಹ ಉದ್ದವಾದ ಪ್ಲಾಟ್‌ಫಾರ್ಮ್‌ಗಳು ರೈಲುಗಳನ್ನು ಸುಲಭವಾಗಿ ನಿಲುಗಡೆಗೊಳಿಸಲು ಸಹಾಯ ಮಾಡುವುದರ ಜೊತೆಗೆ, ಹೆಚ್ಚಿನ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಸಹಕಾರಿಯಾಗುತ್ತವೆ.

ಒನ್ ಇ೦ಡಿಯ 16 Apr 2026 8:33 pm

ಗುರುಗ್ರಾಮ| ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿ ಆತ್ಮಹತ್ಯೆ

ಗುರುಗ್ರಾಮ,ಎ.16: ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶಗಳು ಬುಧವಾರ ಪ್ರಕಟಗೊಂಡ ಬೆನ್ನಲ್ಲೆ ಇಲ್ಲಿಯ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು. ಕುನಾಲ್ (16) ಮೃತ ವಿದ್ಯಾರ್ಥಿಯಾಗಿದ್ದು,ನಿರೀಕ್ಷಿತ ಅಂಕಗಳು ಬಾರದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಜತೋಲಿ ಪ್ರದೇಶದ ಬಾಬಾ ಹರದೇವ ಕಾಲನಿಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಕುನಾಲ್ ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದ. ಆದರೆ ಫಲಿತಾಂಶ ತನ್ನ ನಿರೀಕ್ಷೆಯಂತೆ ಬರದಿದ್ದರಿಂದ ಬೇಸರಗೊಂಡಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ಪೋಷಕರು ಮರುಪರೀಕ್ಷೆ ಬರೆಯುವಂತೆ ಮಗನಿಗೆ ಉತ್ತೇಜನವನ್ನೂ ನೀಡಿದ್ದರು. ಆದರೆ ಆತ ಖಿನ್ನತೆಗೆ ಒಳಗಾಗಿದ್ದ. ಫಲಿತಾಂಶ ಪ್ರಕಟಗೊಂಡ ಬಳಿಕ ಕುನಾಲ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 16 Apr 2026 8:28 pm

ಎ.18ರಿಂದ ಪದವು ಕುಲಶೇಖರದಲ್ಲಿ ಬಿಂಬಪ್ರತಿಷ್ಠೆ, ಬ್ರಹ್ಮಕಲಶೋತ್ಸವ

​ಮಂಗಳೂರು: ನಗರದ ಪದವು ಕುಲಶೇಖರದಲ್ಲಿ ಹಿಂದು ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಶನೈಶ್ಚರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಎ. 18 ರಿಂದ 24 ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಅವರು ದೇವಾಲಯದ ಆವರಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ​ಎಂ. ಗಿರಿಧರ ಭಟ್ ಮತ್ತು ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಏಪ್ರಿಲ್ 18ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದೆ. 108 ಕಾಯಿ ಗಣಯಾಗ, ರುದ್ರಯಾಗ ಹಾಗೂ ಏಪ್ರಿಲ್ 22 ರವರೆಗೆ ಲಕ್ಷ್ಮೀನಾರಾಯಣ ಪ್ರಧಾನ ಹೋಮ ನಡೆಯಲಿದ್ದು, ಏಪ್ರಿಲ್ 23 ರಂದು ಗಣಪತಿ, ದುರ್ಗಾ, ನವಗ್ರಹ ಸಹಿತ ಶ್ರೀ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲ ಶಾಭಿಷೇಕ ನೆರವೇರಲಿದೆ. ಏಪ್ರಿಲ್ 24 ರಂದು ಚಂಡಿಕಾಯಾಗ ಮತ್ತು ಸಮಗ್ರ ಶನೈಶ್ಚರ ಮಹಾಯಾಗದೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ. ​ಉತ್ಸವದ ಅಂಗವಾಗಿ ಏಪ್ರಿಲ್ 19 ರಂದು ಬೆಳಿಗ್ಗೆ 9 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಪದವು ದೇವಸ್ಥಾನದವರೆಗೆ ಹಸಿರುವಾಣಿ (ಹೊರೆಕಾಣಿಕೆ) ಮೆರವಣಿಗೆ ನಡೆಯಲಿದ್ದು, ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಚಾಲನೆ ನೀಡಲಿದ್ದಾರೆ. ಅಂದು ಸಂಜೆ ಶಿವಾಜಿ ಮಂಟಪದಲ್ಲಿ ಹಿಂದು ಯುವಸೇನೆಯ ಸಮಾವೇಶ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಯಕ್ಷಗಾನ, ನಾಟಕ ಹಾಗೂ ಸಂಗೀತ ಲಹರಿಗಳು ಪ್ರದರ್ಶನ ಗೊಳ್ಳಲಿವೆ. ಪ್ರತಿದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ವೇದವ್ಯಾಸ ಕಾಮತ್, ಪ್ರದಾನ ಕಾರ್ಯದರ್ಶಿ ಬಾಸ್ಕರ ಚಂದ್ರ ಶೆಟ್ಟಿ, ಶನಿಶ್ಚರ ಪೂಜಾ ಸಮಿತಿ ಅದ್ಯಕ್ಷರಾದ ರಾಮಚಂದ್ರ ಚೌಟ, ಮಾತೃಮಂಡಳಿ ಅಧ್ಯಕ್ಷರಾದ ವಿಜಯ ಅರುಣ್, ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ ಮತ್ತು ಉಮೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 8:27 pm

ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೆ ಹೊರಟ ಸರಕಾರ: ಗೌರವ್ ಗೊಗೋಯ್

ಹೊಸದಿಲ್ಲಿ, ಎ. 16: ಸರಕಾರ ಮಂಡಿಸಿರುವ ಮೂರು ಮಸೂದೆಗಳು ‘‘ಮಹಿಳಾ ವಿರೋಧಿ, ಜಾತಿ ಗಣತಿ ವಿರೋಧಿ, ಸಂವಿಧಾನ ವಿರೋಧಿ ಮತ್ತು ದೇಶದ ಒಕ್ಕೂಟ ವ್ಯವಸ್ಥೆ ವಿರೋಧಿಯಾಗಿದೆ ಎಂಬುದಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ ಗುರುವಾರ ಲೋಕಸಭೆಯಲ್ಲಿ ಆರೋಪಿಸಿದ್ದಾರೆ. ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೊಳಿಸುವ ನೈಜ ಬದ್ಧತೆ ಸರಕಾರಕ್ಕೆ ಇದ್ದರೆ, ಲೋಕಸಭೆಯ ಪ್ರಸಕ್ತ ಬಲದ ಆಧಾರದಲ್ಲೇ ತಕ್ಷಣ ಜಾರಿಗೊಳಿಸಬೇಕು ಎಂದು ಅವರು ಹೇಳಿದರು. ಸರಕಾರವು ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ತನಗೆ ಬೇಕಾದಂತೆ ಕ್ಷೇತ್ರಗಳನ್ನು ವಿಭಜಿಸುವ ಮೂಲಕ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಸೂದೆಗಳ ಚರ್ಚೆ ವೇಳೆ ಮಾತನಾಡಿದ ಗೊಗೋಯಿ ಆರೋಪಿಸಿದರು. ‘‘ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಮ್‌ನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮೂಲಕ ಅವರು ಏನು ಮಾಡಿರುವರೋ, ಅದನ್ನು ಮಹಿಳಾ ಮೀಸಲಾತಿ ಹೆಸರಿನಲ್ಲಿ ಇಡೀ ದೇಶದಲ್ಲಿ ಮಾಡಲು ಬಯಸಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು. ಸರಕಾರದ ಕೃತ್ಯಗಳು ‘‘ನಾಚಿಕೆಗೇಡಿನವು’’ ಎಂದು ಅವರು ಬಣ್ಣಿಸಿದರು.

ವಾರ್ತಾ ಭಾರತಿ 16 Apr 2026 8:25 pm

Delhi | ಇಂದಿರಾಗಾಂಧಿ ಏರ್‌ ಪೋರ್ಟ್‌ ನಲ್ಲಿ ಆಕಾಸ ಏರ್ ಗೆ ಢಿಕ್ಕಿ ಹೊಡೆದ ಸ್ಪೈಸ್‌ ಜೆಟ್ ವಿಮಾನ

ಹೊಸದಿಲ್ಲಿ, ಎ.16: ದಿಲ್ಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಆಕಾಸ ಏರ್ ವಿಮಾನಕ್ಕೆ ಸ್ಪೈಸ್‌ ಜೆಟ್ ವಿಮಾನ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಎರಡೂ ವಿಮಾನಗಳಿಗೆ ಹಾನಿಯಾಗಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ರನ್‌ವೇ ಮೇಲೆ ಸಾಗುವ ವೇಳೆ ಸ್ಪೈಸ್‌ ಜೆಟ್ ಸಂಸ್ಥೆಯ ಬೋಯಿಂಗ್ ಬಿ737-700 ವಿಮಾನ ನಿಯಂತ್ರಣ ತಪ್ಪಿ ಮುಂದೆ ಸಾಗಿದ್ದು, ನಿಂತಿದ್ದ ಆಕಾಸ ಏರ್ ವಿಮಾನದ ಹಿಂಭಾಗದ ಎಡ ಭಾಗಕ್ಕೆ ಢಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಸ್ಪೈಸ್‌ ಜೆಟ್ ವಿಮಾನದ ಬಲ ರೆಕ್ಕೆಗೂ ಹಾನಿಯಾಗಿದೆ. ಆ ಸಮಯದಲ್ಲಿ ಆಕಾಸ ಏರ್ ವಿಮಾನ ದಿಲ್ಲಿಯಿಂದ ಹೈದರಾಬಾದ್‌ ಗೆ ತೆರಳಲು ಸಿದ್ಧವಾಗಿತ್ತು. ಘಟನೆಯ ಬಳಿಕ ಸುರಕ್ಷತಾ ಕ್ರಮವಾಗಿ ವಿಮಾನವನ್ನು ಸೇವೆಯಿಂದ ಹಿಂತೆಗೆದು ಟರ್ಮಿನಲ್‌ ಗೆ ಕಳುಹಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಆಕಾಸ ಏರ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸ್ಪೈಸ್‌ ಜೆಟ್ ವಿಮಾನವನ್ನೂ ತಕ್ಷಣವೇ ಸೇವೆಯಿಂದ ಹಿಂತೆಗೆದು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ಘಟನೆಯ ನಿಖರ ಕಾರಣ ತಿಳಿದುಬರಬೇಕಿದ್ದು, ವಿಮಾನಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:23 pm

ಮಾದಕ ವಸ್ತು ಸೇವನೆ ಮಾಡಿದ ಆರೋಪ: ಯುವಕ ಸೆರೆ

ಮಂಗಳೂರು, ಎ.16: ನಗರದ ಬಂದರ್ ದಕ್ಕೆ ಪರಿಸರದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಹೊಯಿಗೆ ಬಜಾರ್ ನಿವಾಸಿ ಪ್ರಣಮ್ ಸಾಲಿಯಾನ್ (30)ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಠಾಣೆಯ ಸಿಬ್ಬಂದಿ ಸಾಗರ್ ದೆವಕತ್ತಿ ಜೊತೆ ಬುಧವಾರ ಅಪರಾಹ್ನ ಗಸ್ತು ನಿರತರಾಗಿದ್ದ ವೇಳೆ ಆರೋಪಿ ಪೊಲೀಸರನ್ನು ಕಂಡು ತಪ್ಪಿಸಲು ಯತ್ನಿಸಿದ. ಸಂಶಯದ ಮೇರೆಗೆ ಹಿಡಿದು ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಸಂಶಯಗೊಂಡು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:17 pm

5 ರಿಂದ 17 ವರ್ಷದೊಳಗಿನವರಿಗೆ ಆಧಾರ್ ಬಯೋಮೆಟ್ರಿಕ್ ಅಪ್‍ಡೇಟ್‍ಗೆ ಸೆ.30ರ ವರೆಗೆ ಕಾಲಾವಕಾಶ

ಬೆಂಗಳೂರು : ರಾಜ್ಯದಲ್ಲಿನ 5 ರಿಂದ 17 ವರ್ಷದೊಳಗಿನವರಿಗೆ ಸೆಪ್ಟೆಂಬರ್ 30ರ ವರೆಗೆ ಆಧಾರ್ ಸಂಖ್ಯೆಯ ಕಡ್ಡಾಯ ಬಯೋಮೆಟ್ರಿಕ್ ಅಪ್‍ಡೇಟ್ ಮಾಡಿಸಲು ಕಾಲಾವಕಾಶ ನೀಡಲಾಗಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಗುರುವಾರ ಈ ಸಂಬಂಧ ಆದೇಶ ಹೊರಡಿಸಿರುವ ಸರಕಾರ, ರಾಜ್ಯದ ಎಲ್ಲ ಆಧಾರ್ ಸೇವಾ ಕೇಂದ್ರಗಳಲ್ಲಿ ಈ ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಹಾಗೂ ಸಂಬಂಧಿತ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದೆ. ಎಲ್ಲ ಪೋಷಕರು ಜವಾಬ್ದಾರಿಯಿಂದ ಈ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಗ್ರಾಮ ಪಂಚಾಯತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಈ ವಿಷಯದ ಕುರಿತು ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಅಪ್‍ಡೇಟ್ ಏತಕ್ಕೆ? : ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್‍ಡೇಟ್ ಮಾಡಿಸುವುದರಿಂದ ಹಲವು ಸರಕಾರಿ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದು, ಸರಕಾರದ ಯೋಜನೆಗಳ ಲಾಭ ಪಡೆಯುವುದು ಹಾಗೂ ವಿದ್ಯಾರ್ಥಿ ವೇತನ-ತರಬೇತಿ ಸೌಲಭ್ಯಗಳನ್ನು ಪಡೆಯುವುದು ಒಳಗೊಂಡಿದೆ.  

ವಾರ್ತಾ ಭಾರತಿ 16 Apr 2026 8:16 pm

Kalaburagi | ಮಾನಸಿಕ ಗುಲಾಮಗಿರಿಯಿಂದ ಹೊರಬನ್ನಿ: ನಿಜಗುಣಾನಂದ ಸ್ವಾಮೀಜಿ ಕರೆ

135ನೇ ಜಯಂತ್ಯೋತ್ಸವ ಸಮಾರೋಪ ಸಮಾರಂಭ

ವಾರ್ತಾ ಭಾರತಿ 16 Apr 2026 8:16 pm

ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ನಷ್ಟವಿಲ್ಲ; ಕರ್ನಾಟಕಕ್ಕೆ 42 ಲೋಕಸಭಾ ಸ್ಥಾನಗಳು: ಗೃಹ ಸಚಿವ ಅಮಿತ್ ಶಾ

ಹೊಸದಿಲ್ಲಿ, ಎ.16: ಕ್ಷೇತ್ರ ಪುನರ್ವಿಂಗಡಣೆ ಹಾಗೂ ಸಂಬಂಧಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯ ಕುಗ್ಗುತ್ತದೆ ಎಂಬ ಭೀತಿ ಆಧಾರರಹಿತವಾಗಿದ್ದು, ಗೊಂದಲವನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಗುರುವಾರ ಹೇಳಿದರು. ಸದನದಲ್ಲಿ ಚರ್ಚೆಗೆ ಉತ್ತರಿಸಿದ ಅವರು, “ಸಾಂವಿಧಾನಿಕ ತಿದ್ದುಪಡಿ ಮಸೂದೆ ಸೇರಿ ಮೂರು ಮಸೂದೆಗಳು ಸದನದ ಮುಂದಿವೆ. ಇವುಗಳಿಂದ ದಕ್ಷಿಣ ರಾಜ್ಯಗಳಿಗೆ ಹಾನಿ ಉಂಟಾಗುತ್ತದೆ ಎನ್ನುವ ನಿರೂಪಣೆಗೆ ಯಾವುದೇ ವಾಸ್ತವಿಕತೆ ಇಲ್ಲ,” ಎಂದು ಸ್ಪಷ್ಟಪಡಿಸಿದರು. ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮಗಳ ಕುರಿತು ವಿವರಿಸಿದ ಶಾ, “ಪ್ರಸ್ತುತ ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿದ್ದು, ಒಟ್ಟು 543 ಸ್ಥಾನಗಳ ಪೈಕಿ ಶೇ. 5.15ರಷ್ಟು ಪ್ರಾತಿನಿಧ್ಯ ಹೊಂದಿದೆ. ಪುನರ್ವಿಂಗಡಣೆಯ ಬಳಿಕ ಈ ಸಂಖ್ಯೆ 42ಕ್ಕೆ ಏರಿಕೆಯಾಗಲಿದೆ. 812 ಸದಸ್ಯರ ಬಲದ ಲೋಕಸಭೆಯಲ್ಲಿ ಕರ್ನಾಟಕದ ಪ್ರಾತಿನಿಧ್ಯ ಶೇ. 5.14ರಷ್ಟೇ ಇರುತ್ತದೆ. ಹೀಗಾಗಿ ರಾಜ್ಯಕ್ಕೆ ಯಾವುದೇ ನಷ್ಟವಾಗುವುದಿಲ್ಲ,” ಎಂದು ಅವರು ತಿಳಿಸಿದರು. ಆಂಧ್ರಪ್ರದೇಶದ ಕುರಿತು ಮಾತನಾಡಿದ ಅವರು, “ಪ್ರಸ್ತುತ 25 ಸ್ಥಾನಗಳಿದ್ದು, ಶೇ. 4.60ರಷ್ಟು ಪ್ರಾತಿನಿಧ್ಯ ಹೊಂದಿದೆ. ಪುನರ್ವಿಂಗಡಣೆಯ ನಂತರ ಸ್ಥಾನಗಳು 38ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯ ಶೇ. 4.75ಕ್ಕೆ ಹೆಚ್ಚಳವಾಗಲಿದೆ. ತೆಲಂಗಾಣದಲ್ಲಿ 17 ಸ್ಥಾನಗಳಿರುವ ರಾಜ್ಯದ ಪ್ರಾತಿನಿಧ್ಯ ಶೇ. 3.13. ಶೇ. 50ರಷ್ಟು ಏರಿಕೆಯ ಬಳಿಕ ಸ್ಥಾನಗಳು 26ಕ್ಕೆ ಹೆಚ್ಚಳವಾಗಲಿದ್ದು, ಪ್ರಾತಿನಿಧ್ಯ ಶೇ. 3.18ಕ್ಕೆ ಏರಲಿದೆ,” ಎಂದು ವಿವರಿಸಿದರು. ತಮಿಳುನಾಡಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಭರವಸೆ ನೀಡಿದ ಶಾ, “39 ಸ್ಥಾನಗಳು 59ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯ ಶೇ. 7.18ರಿಂದ ಶೇ. 7.23ಕ್ಕೆ ಹೆಚ್ಚಳವಾಗಲಿದೆ. ಕೇರಳದಲ್ಲಿಯೂ 20 ಸ್ಥಾನಗಳು 30ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯದ ಪಾಲು ಶೇ. 3.67ರಿಂದ ಶೇ. 3.68ಕ್ಕೆ ಸ್ವಲ್ಪ ಮಾತ್ರ ಏರಿಕೆಯಾಗಲಿದೆ”, ಎಂದು ಅಮಿತ್‌ ಶಾ ಅವರು ಹೇಳಿದರು.

ವಾರ್ತಾ ಭಾರತಿ 16 Apr 2026 8:15 pm

ಕಾರವಾರ: ರಾಸಾಯನಿಕ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಸ್ಫೋಟ

ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಸಮೀಪದ ರಾಸಾಯನಿಕ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಏಕಾಏಕಿ ಸ್ಫೋಟಗೊಂಡು ಬೆಂಕಿಗೆ ಆಹುತಿಯಾದ ಘಟನೆ ಗುರುವಾರ ಸಂಭವಿಸಿದೆ. ಈ ಅಪಘಾತ ಸಂಭವಿಸಿದ ಬೆನ್ನಲ್ಲೇ ಟ್ಯಾಂಕರ್ ಚಾಲಕ ನಾಪತ್ತೆಯಾಗಿದ್ದು, ಆತನ ಸ್ಥಿತಿಯ ಬಗ್ಗೆ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳದಲ್ಲಿ ಶೋಧ ಕಾರ್ಯವನ್ನು ಚುರುಕುಗೊಳಿಸಿವೆಯಾದರೂ, ಉರಿಯುತ್ತಿರುವ ಬೆಂಕಿಯ ಕೆನ್ನಾಲಗೆ ಮತ್ತು ಅತಿಯಾದ ಶಾಖದಿಂದಾಗಿ ಕಾರ್ಯಾಚರಣೆಗೆ ತೀವ್ರ ಅಡೆತಡೆ ಉಂಟಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಕೋಲಾ-ಹುಬ್ಬಳ್ಳಿ ನಡುವಿನ ಈ ಬ್ಯುಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ರಸ್ತೆಯ ಎರಡೂ ಬದಿಗಳಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಟ್ಯಾಂಕರ್ನಲ್ಲಿದ್ದ ರಾಸಾಯನಿಕ ಪದಾರ್ಥದ ಸ್ವರೂಪದಿಂದಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವುದು ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:14 pm

ಟೆಕ್ಕಿಗಳಿಗೆ 10,000 ರೂ ಸ್ಟೈಪೆಂಡ್‌ನೊಂದಿಗೆ ಎನ್‌ಐಸಿಯಿಂದ ಡಿಜಿಟಲ್ ಇಂಡಿಯಾ ಇಂಟರ್ನ್‌ಶಿಪ್ ಘೋಷಣೆ

ಬೆಂಗಳೂರು: ನೀವು ಭವಿಷ್ಯದ ತಂತ್ರಜ್ಞಾನವನ್ನು ರೂಪಿಸುವ, ಹೊಸ ಕೋಡಿಂಗ್ (Coding) ಕಲಿಯುವ ಮತ್ತು ಪ್ರಪಂಚದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಂತಹ ಆವಿಷ್ಕಾರಗಳನ್ನು ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಬರುವ 'ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್' (NIC) ಇದೀಗ ಡಿಜಿಟಲ್ ಇಂಡಿಯಾ ಇಂಟರ್ನ್‌ಶಿಪ್

ಒನ್ ಇ೦ಡಿಯ 16 Apr 2026 8:13 pm

Kalaburagi | ಡಾ.ಶಿವಕುಮಾರ ಸ್ವಾಮಿಗಳ ಜಯಂತಿ : ಗುರುವಂದನಾ ಮಹೋತ್ಸವ

ಕಲಬುರಗಿ : ಜಿಲ್ಲಾ ವೀರಶೈವ ಸಮಾಜ ಹಾಗೂ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಶಿವಕುಮಾರ ಮಹಾಶಿವಯೋಗಿಗಳವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಆಚರಿಸಲಾಯಿತು. ತುಮಕೂರ ಸಿದ್ಧಗಂಗಾಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿದ್ದರು. ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಸಮಾರಂಭವನ್ನು ಉದ್ಘಾಟಿಸಿದರು. ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನೇತೃತ್ವದಲ್ಲಿ ಸಮಾರಂಭ ಜರುಗಿತು. ಕರುಣೇಶ್ವರ ಶಿವಾಚಾರ್ಯರು, ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಶಿವಲಿಂಗೇಶ್ವರ ಮಹಾಸ್ವಾಮಿಗಳು, ಅಪ್ಪಾರಾವ ದೇವಿಮುತ್ಯಾ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ, ಶರಣಬಸವೇಶ್ವರ ಸಂಸ್ಥಾನದ ಬಸವರಾಜ ದೇಶಮುಖ, ರಾಜು ಭೀಮಳ್ಳಿ, ಅಲ್ಲಮಪ್ರಭು ದೇಶಮುಖ, ಜಯಶ್ರೀ ಮತ್ತಿಮೂಡ, ನೀಲಕಂಠರಾವ ಮೂಲಗೆ, ಅರುಣಕುಮಾರ ಪಾಟೀಲ, ದೇವಿಂದ್ರಪ್ಪ ಅವಂಟಿ, ಚನ್ನಬಸಯ್ಯಗುರುವಿನ, ಕಲ್ಯಾಣಪ್ಪ ಪಾಟೀಲ, ಸಂಗಮೇಶ ನಾಗನಳ್ಳಿ, ಶರಣು ಭೂಸನೂರ, ಮಂಜು ರೆಡ್ಡಿ, ರಾಜಕುಮಾರ ಕೋಟೆ, ವಿಶ್ವನಾಥ ಪಾಟೀಲ, ಪ್ರಶಾಂತ ಗುಡ್ಡಾ, ಈಶ್ವರ ಪನಶೆಟ್ಟಿ, ಶ್ರೀಶೈಲ ಘೋಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಂತರ ಕಾರ್ಯನಿರತರ ಪತ್ರಕರ್ತರ ಸಂಘದ ಚುನಾಯಿತ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವಾರ್ತಾ ಭಾರತಿ 16 Apr 2026 8:09 pm

Delimitation: ನಿಮ್ಮ ಕುತಂತ್ರ ನೋಡಿ ಚಾಣಕ್ಯ ಶಾಕ್‌ ಆಗ್ತಿದ್ದ! ಅಮಿತ್ ಶಾಗೆ ಪ್ರಿಯಾಂಕಾ ಗಾಂಧಿ ಟಾಂಗ್; ಗೊಳ್ಳೆಂದು ನಕ್ಕ ಸದನ

ಲೋಕಸಭೆಯಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದರು. ಗೃಹ ಸಚಿವರ ವಿರುದ್ಧ ಹರಿಹಾಯ್ದ ಪ್ರಿಯಾಂಕಾ, ನಿಮ್ಮ ಸುಳ್ಳುಗಳು ಮಹಿಳೆಯರಿಗೆ ಚನ್ನಾಗಿ ಗೊತ್ತಾಗುತ್ತದೆ. ಮಹಿಳಾ ಮೀಸಲಾತಿ ವಿಷಯ ಸ್ವಾಗತಾರ್ಹ ಆದರೆ, ಇದರ ಹಿಂದೆ ರಾಜಕೀಯ ವಾಸನೆ ಇದೆ. ನಿಮ್ಮ ಕುತಂತ್ರ ನೋಡಿ ಚಾಣಕ್ಯನೇ ಶಾಕ್‌ ಆಗುತ್ತಿದ್ದ ಎಂದು ಟಾಂಗ್ ಕೊಟ್ಟಿದ್ದಾರೆ.

ವಿಜಯ ಕರ್ನಾಟಕ 16 Apr 2026 8:06 pm

ಲಾಡ್ಜ್‌ನಲ್ಲಿರಿಸಿದ್ದ ಬ್ಯಾಗ್‌ನಿಂದ ಚಿನ್ನಾಭರಣ ಕಳವು: ಪ್ರಕರಣ ದಾಖಲು

ಮಂಗಳೂರು, ಎ.16: ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್‌ವೊಂದರಲ್ಲಿ ಇರಿಸಿದ್ದ ಬ್ಯಾಗ್‌ನಿಂದ ಚಿನ್ನಾಭರಣ ಕಳವಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್‌ನಲ್ಲಿ ತಾನು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಎ.13ರಂದು ಬೆಳಗ್ಗೆ 6:30ರಿಂದ ವಾಸ್ತವ್ಯ ಹೊಂದಿದ್ದು, ಎ.15ರಂದು ಬೆಳಗ್ಗೆ 8:30ಕ್ಕೆ ತಣ್ಣೀರುಬಾವಿ ಬೀಚ್‌ಗೆ ಹೋಗುವ ವೇಳೆ ಬ್ಯಾಗ್‌ ನಲ್ಲಿ ಲ್ಯಾಪ್‌ಟಾಪ್, ಮಕ್ಕಳ ಎರಡು ಉಂಗುರ, ಪತ್ನಿಯ ಒಂದು ಉಂಗುರ ಮತ್ತು ತನಗೆ ಸೇರಿದ ಬ್ರಾಸ್‌ಲೆಟ್‌ ಗಳನ್ನಿಟ್ಟು ರೂಮ್‌ಗೆ ಲಾಕ್ ಮಾಡಿ ಕೀಯನ್ನು ಕೊಂಡು ಹೋಗಿದ್ದೆ. ಅಂದು ಪೂ.11:30 ವಾಪಸ್ ರೂಮ್‌ಗೆ ಬಂದು ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಒಡವೆಗಳನ್ನು ಇರಿಸಿದ್ದ ಪ್ಲಾಸ್ಟಿಕ್ ಬಾಕ್ಸ್‌ನಿಂದ ಸುಮಾರು 10 ಗ್ರಾಂ ತೂಕದ ತನ್ನ 1.40 ಲಕ್ಷ ರೂ. ಮೌಲ್ಯದ ಬ್ರಾಸ್‌ಲೆಟ್ ಇರಲಿಲ್ಲ. ಉಳಿದ ವಸ್ತುಗಳು ಯಥಾ ಸ್ಥಿತಿಯಲ್ಲಿತ್ತು. ಸದ್ರಿ ಸೊತ್ತನ್ನು ನಕಲಿ ಕೀ ಬಳಸಿ ಬಾಗಿಲು ತೆರೆದು ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಎ.ಎನ್. ಶಿವ ಎಂಬವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:04 pm

ಕಾರು ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು

ಮಂಗಳೂರು, ಎ.16: ನಗರದ ಉರ್ವಸ್ಟೋರ್ ಜಂಕ್ಷನ್ ಬಳಿ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಹಾಗೂ ಹಿಂಬದಿ ಸವಾರ ಗಾಯಗೊಂಡ ಘಟನೆ ಬುಧವಾರ ನಡೆದಿದೆ. 74ರ ಹರೆಯದ ಬಿ.ಎಚ್. ವೆಂಕಟರಮಣ ಪೈ ಮೃತಪಟ್ಟಿದ್ದು, ಅವರ ಮೊಮ್ಮಗ 10ರ ಹರೆಯದ ಅಥರ್ವ ಗಾಯಗೊಂಡಿರುವುದಾಗಿ ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ. ಎ.15ರಂದು ಬೆಳಗ್ಗೆ 8:15ಕ್ಕೆ ವೆಂಕಟರಮಣ ಸ್ಕೂಟರ್‌ನಲ್ಲಿ ತನ್ನ ಮೊಮ್ಮಗ ಅಥರ್ವನನ್ನು ಕೂರಿಸಿಕೊಂಡು ಮನೆಯಿಂದ ಬಿಜೈ ಕಾಪಿಕಾಡ್ ಕಡೆಗೆ ಹೊರಟಿದ್ದರು. ಉರ್ವಸ್ಟೋರ್ ಜಂಕ್ಷನ್ ಬಳಿ ಯು ಟರ್ನ್ ತೆಗೆದು ಕೊಳ್ಳುತ್ತಿರುವ ವೇಳೆ ಕೊಟ್ಟಾರ ಚೌಕಿ ಕಡೆಯಿಂದ ಕಾರನ್ನು ಅದರ ಚಾಲಕ ಮುಹಮ್ಮದ್ ಶಂಶೀರ್ ಎಂಬಾತ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದರು. ವೆಂಕಟರಮಣ ಗಂಭೀರ ಗಾಯಗೊಂಡಿದ್ದರೆ, ಅಥರ್ವನಿಗೆ ತರಚಿದ ಗಾಯವಾಗಿತ್ತು. ಸಾರ್ವಜನಿಕರು ಹಾಗೂ ಕಾರು ಚಾಲಕ ನಗರದ ಎಜೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೆಂಕಟರಮಣ ಪೈ 8:49ಕ್ಕೆ ಮೃತಪಟ್ಟಿರುವುದಾಗಿದೆ ಬಿ.ಎಚ್. ಮಹೇಶ್ ಪೈ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:03 pm

Ballari | ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಿ: ಪಿಡಿಒ ಶೇಷಗಿರಿ

ಬಳ್ಳಾರಿ / ಕಂಪ್ಲಿ: ಇಂದಿನ ಜೀವನದ ಒತ್ತಡದಲ್ಲಿ ಜನರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದು, ಇದರಿಂದ ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಪಿಡಿಒ ಹಾರ್ವಿ ಶೇಷಗಿರಿ ಹೇಳಿದರು. ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ವಿನೂತನ ಪದವಿ ಕಾಲೇಜಿನ ನೇತೃತ್ವದಲ್ಲಿ ಎನ್‌ಎಸ್‌ಎಸ್ ಶಿಬಿರದ ಅಂಗವಾಗಿ, ಕಂಪ್ಲಿ ತಾಲೂಕು ಜೆಸಿಐ ಸೋನಾ ಘಟಕ ಹಾಗೂ ವೀರಬ್ರಹ್ಮೇಂದ್ರ ಸ್ವಾಮಿ ಪಾಲಿಕ್ಲಿನಿಕ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೇಸಿಗೆ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಆರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ಶಿಬಿರದಲ್ಲಿ ತಜ್ಞ ವೈದ್ಯರಾದ ಜೆಸಿ ಡಾ. ಭರತ್ ಪದ್ಮಶಾಲಿ, ಜೆಸಿ ಡಾ. ಶ್ರದ್ಧಾ ಭರತ್ ಹಾಗೂ ಜೆಸಿ ಡಾ. ಪ್ರವೀಣ್ ಅವರು ಭಾಗವಹಿಸಿ, ವಯಸ್ಕರು ಮತ್ತು ಹಿರಿಯ ನಾಗರಿಕರಿಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿದರು. ಸುಮಾರು 150ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ವೈದ್ಯಕೀಯ ಸಲಹೆ ಹಾಗೂ ಔಷಧಿಗಳನ್ನು ಪಡೆದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಫಾರೂಕ್, ಶಿಕ್ಷಕ ರಾಮುಲು, ಪ್ರಾಂಶುಪಾಲ ಮದ್ದಾನೆಪ್ಪ ಬಿಡನಾಳ, ಉಪನ್ಯಾಸಕರು, ಸಿಬ್ಬಂದಿ ವರ್ಗ, ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 7:59 pm

ಕಂಪ್ಲಿಯಲ್ಲಿ 33 ಕೋಟಿ ರೂ. ಯುಜಿಡಿ ಯೋಜನೆಗೆ ಚಾಲನೆ : ಅಗ್ನಿಶಾಮಕ ಠಾಣೆ ಶಂಕುಸ್ಥಾಪನೆ

ಬಳ್ಳಾರಿ/ಕಂಪ್ಲಿ: ಪಟ್ಟಣದ 5 ಮತ್ತು 12ನೇ ವಾರ್ಡುಗಳಲ್ಲಿ ಯುಜಿಡಿ (UGD) ಕಾಮಗಾರಿಗೆ ಮೊದಲ ಹಂತದಲ್ಲಿ ಸುಮಾರು 33 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಮುಂದಿನ ಹಂತಗಳಲ್ಲಿ ಇನ್ನಷ್ಟು ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗುವುದು ಎಂದು ಶಾಸಕ ಜೆ.ಎನ್. ಗಣೇಶ ಹೇಳಿದರು. ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಮಿನಿ ವಿಧಾನಸೌಧ ಹಿಂಭಾಗದಲ್ಲಿ 2025-26ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ 2.18 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಬೇಸಿಗೆ ಸಮಯದಲ್ಲಿ ಸಂಭವಿಸುವ ಅಗ್ನಿ ಅವಘಡಗಳಿಂದ ರೈತರ ಮೇವು ಸುಟ್ಟು ಹಾನಿಯಾಗುತ್ತಿರುವ ಹಿನ್ನೆಲೆ, ಅಗ್ನಿಶಾಮಕ ಠಾಣೆ ಬಹಳ ಅಗತ್ಯವಾಗಿತ್ತು. ಇತನಕ ಗಂಗಾವತಿಯಿಂದ ಅಗ್ನಿಶಾಮಕ ದಳ ಬರುವಷ್ಟರಲ್ಲಿ ಹೆಚ್ಚಿನ ಹಾನಿ ಉಂಟಾಗುತ್ತಿತ್ತು. ಈಗ ಈ ಹೊಸ ಠಾಣೆಯಿಂದ ರೈತರಿಗೆ ಸಹಾಯವಾಗಲಿದೆ ಎಂದರು. ಪಟ್ಟಣದಲ್ಲಿ ಬಸ್ ಡಿಪೋ ಹಾಗೂ ತಾಲೂಕು ಕ್ರೀಡಾಂಗಣಕ್ಕೆ ಜಾಗದ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕ್ಷೇತ್ರದಲ್ಲಿ ಶೇ.90ರಷ್ಟು ರಸ್ತೆ ಅಭಿವೃದ್ಧಿಯಾಗಿದ್ದು, ಉಳಿದ ರಸ್ತೆ ಕಾಮಗಾರಿಗಳನ್ನು ಕೂಡ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಕಂಪ್ಲಿ ಪಟ್ಟಣದ 36 ರಸ್ತೆಗಳನ್ನು 4.16 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಿನಿ ವಿಧಾನಸೌಧ, ನೂರು ಹಾಸಿಗೆಯ ಆಸ್ಪತ್ರೆ ಸೇರಿದಂತೆ ಹಲವು ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿವೆ ಎಂದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 7:54 pm

2nd PUC Result-2026 : ವಾಣಿಜ್ಯ ವಿಭಾಗದಲ್ಲಿ ಕುಶಾಲ್‌ಗೆ 584 ಅಂಕ‌‌

ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಹೊಸದುರ್ಗದ ಎಸ್.ನಿಜಲಿಂಗಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ಕುಶಾಲ್ ಎಚ್.ಎಂ ವಾಣಿಜ್ಯ ವಿಭಾಗದಲ್ಲಿ 584 (ಶೇ.97.33) ಅಂಕಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮಹೇಂದ್ರ ಬಾಬು ಬಿ.ಎಂ. ಹಾಗೂ ಕಾವ್ಯ ಅವರ ಪುತ್ರ.

ವಾರ್ತಾ ಭಾರತಿ 16 Apr 2026 7:52 pm

ಅಮಿತ್‌ ಶಾ ಲೋಕಸಭೆ ಭಾಷಣದಲ್ಲಿ ಕರ್ನಾಟಕದ ಕ್ಷೇತ್ರ ಪುನರ್‌ವಿಂಗಡಣೆ ಲೆಕ್ಕಾಚಾರ; ಕ್ಲಿಯರ್‌ ಆಯ್ತು ಸೀಟು ಹೆಚ್ಚಳ ವಿಚಾರ

ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ವಿಧೇಯಕದ ಬಗ್ಗೆ ಚರ್ಚಿಸಲು, ಇಂದಿನಿಂದ (ಏ.16-ಗುರುವಾರ) ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ. ವಿಶೇಷವಾಗಿ ಲೋಕಸಭೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಕುರಿತು ಸುದೀರ್ಘವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇದರಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಎರಡೂ ಮಸೂದೆ ಬೆಂಬಲಿಸಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ.

ವಿಜಯ ಕರ್ನಾಟಕ 16 Apr 2026 7:50 pm

Vijayanagara | ದಾದಾಪೀರ್‌ಗೆ ʼಸರಸ್ವತಿ ಕನ್ನಡ ರತ್ನʼ ರಾಜ್ಯ ಪ್ರಶಸ್ತಿ

ವಿಜಯನಗರ: ಜಿಲ್ಲೆಯ ಕೊಟ್ಟೂರು ತಾಲೂಕಿನ ಪತ್ರಿಕಾ ವರದಿಗಾರರಾದ ದಾದಾಪೀರ್ ಅವರು ಸಮಾಜಸೇವಾ ಕ್ಷೇತ್ರದಲ್ಲಿ ನೀಡಿರುವ ಮಹತ್ವದ ಕೊಡುಗೆಗಳನ್ನು ಗುರುತಿಸಿ, ದಾವಣಗೇರಿಯ ಸರಸ್ವತಿ ದಾಸಪ್ಪ ಶಣೈ ಪ್ರತಿಷ್ಠಾನವು ಪ್ರತಿವರ್ಷ ನೀಡುವ ಪ್ರತಿಷ್ಠಿತ ʼಸರಸ್ವತಿ ಕನ್ನಡ ರತ್ನʼ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಎ.19ರಂದು ರವಿವಾರ ದಾವಣಗೆರೆ ನಗರದ ಚನ್ನಗಿರಿ ವಿರುಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪತ್ರಕರ್ತ ದಾದಾಪೀರ್ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿ, ತಮ್ಮ ಪೋಷಕರು, ಗುರುಗಳು ಹಾಗೂ ಸ್ವಗ್ರಾಮಕ್ಕೆ ಕೀರ್ತಿ ತರುವಂತೆ ಶುಭಾಶಯಗಳನ್ನು ವ್ಯಕ್ತಪಡಿಸಲಾಗಿದೆ.

ವಾರ್ತಾ ಭಾರತಿ 16 Apr 2026 7:47 pm

ಹಳೇ‌ ಶಹಾಬಾದ್‌ನಲ್ಲಿ 893ನೇ ಬಸವ ಜಯಂತಿ ಉತ್ಸವ : ಎ.20ರಂದು ಸಾಂಸ್ಕೃತಿಕ ನಾಯಕನ ಭವ್ಯ ಮೆರವಣಿಗೆ

ಕಲಬುರಗಿ : ಜಿಲ್ಲೆಯ ಶಹಾಬಾದ್‌ ಪಟ್ಟಣದ ಹಳೇ ಶಹಾಬಾದ್‌ನಲ್ಲಿ 893ನೇ ಬಸವ ಜಯಂತಿ ಉತ್ಸವದ‌ ನಿಮಿತ್ಯ ಬಸವಾದಿ ಶರಣರ ಒಕ್ಕೂಟ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಘಟಕ ಹಾಗೂ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಹಳೇ ಶಹಾಬಾದ್‌ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ‌ ಕಾರ್ಯಕ್ರಮಗಳು ಸಾಂಸ್ಕೃತಿಕ ನಾಯಕನ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ಎ.17 ಮತ್ತು 18 ರಂದು ಎರಡು ದಿನಗಳ ಕಾಲ‌ ಸಂಜೆ‌ 7 ಗಂಟೆಗೆ ಹಳೇ‌ ಶಹಾಬಾದಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ದಿ. ಸ್ಪಿರಿಟ್ ಕಲಾ ತಂಡ ಮತ್ತು ಚಿನ್ಮಯಿ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಎ.17ರ‌ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಸಕ‌ ಬಸವರಾಜ ಮತ್ತಿಮಡು ಉದ್ಘಾಟಿಸುವರು. ರಾವೂರು ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲಬುರಗಿಯ ಪಿ.ಡಿ.ಎ. ಇಂಜಿನೀಯರಿಂಗ್ ಕಾಲೇಜಿನ ಉಪನ್ಯಾಸಕ ಸಂಜಯ್ ಮಾಕಲ್ ಉಪನ್ಯಾಸ ನೀಡುವರು. ದಲಿತ‌ ಸಂಘರ್ಷ ಸಮಿತಿಯ ರಾಜ್ಯ‌ ಸಂಚಾಲಕ ಮರೆಪ್ಪ ಹಳ್ಳಿ‌ ಧ್ವಜಾರೋಹಣ ನೆರವೇರಿಸಲಿದ್ದು, ಡಿ.ಎಸ್.ಪಿ. ಶಂಕರಗೌಡ ಪಾಟೀಲ ಸೇರಿದಂತೆ ಸ್ಥಳೀಯ ಅನೇಕ‌ ಮುಖಂಡರುಗಳು ಅತಿಥಿಗಳಾಗಿ ಆಗಮಿಸುವರು. ಎ.18ರ‌ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಬುರಗಿಯ ಮಕ್ತಂಪುರ ಗದ್ದುಗೆ ಮಠದ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳ ನೇತೃತ್ವ ಮತ್ತು ಶ್ರೀ ವೀರಭದ್ರೇಶ್ವರ ಚಾರಿಟೇನಲ್‌ ಟ್ರಸ್ಟ್ ಅಧ್ಯಕ್ಷ‌ಬಸವರಾಜ ತರನಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎ.20ಕ್ಕೆ ಸಾಂಸ್ಕೃತಿಕ ‌ನಾಯಕನ ಭವ್ಯ ಮೆರವಣಿಗೆ : ಇನ್ನು ಎ.20 ರಂದು ಸಂಜೆ 6 ಗಂಟೆಗೆ ಹಳೇ‌ ಶಹಾಬಾದ್‌ನಲ್ಲಿ ನಡೆಯುವ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಿ.ಪಿ.ಐ ಪರಶುರಾಮ‌ ವನಂಜಕರ್ ಚಾಲನೆ ನೀಡುವರು. ಶಹಾಬಾದ್‌ ಹಡಪದ‌ ಅಪ್ಪಣ್ಣನವರ ಮಠದ ಮ.ನಿ.ಪ್ರ. ರಾಜಶಿವಯೋಗಿಗಳ ನೇತೃತ್ವ ಮತ್ತು ಶಹಾಬಾದ್‌ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಘಟಕದ ಅಧ್ಯಕ್ಷ ಬಸವಣಪ್ಪ ವಾಲಿ ಅಧ್ಯಕ್ಷತೆಯಲ್ಲಿ ನಡೆಯುವ ಮೆರವಣಿಗೆಯಲ್ಲಿ ಸ್ಥಳೀಯ ಅನೇಕ ಮುಖಂಡರು ಭಾಗಿಯಾಗುವರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಹಾಂತಗೌಡ ಪಾಟೀಲ‌ ಧ್ವಜಾರೋಹಣ ಮಾಡುವರು.

ವಾರ್ತಾ ಭಾರತಿ 16 Apr 2026 7:42 pm

ಸಿಬಿಎಸ್‌ಇ ಪರೀಕ್ಷೆ: ಆಳ್ವಾಸ್ ಶಾಲೆಗೆ ಶೇ.100 ಫಲಿತಾಂಶ

ಮೂಡುಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ ತರಗತಿಯ ಫಲಿತಾಂಶ ದಲ್ಲಿ ಆಳ್ವಾಸ್ ಶಾಲೆಯು ಸತತ ಆರನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ. ಈ ಬಾರಿ 46 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಕರ್ನಾಟಕದ ಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅನಘಾ ಉಮೇಶ್ ರಾವ್ (ಶೇ.99.2), ಪ್ರಮತ್ ಔರಾದ್ವರ್ (ಶೇ.99), ಆದ್ಯಾ ಭಟ್ (ಶೇ. 99), ಅನುರಾಧ(ಶೇ.99), ವಾತ್ಸಲ್ಯ ಎನ್ (ಶೇ.98), ಧನ್ವಿತ್ ಪಿ.ಬಿ.(ಶೇ.97.2), ನಮ್ರತಾ (ಶೇ.97.2), ಮನೋಘ್ನ (ಶೇ.97), ಶ್ವೇತಾ(ಶೇ.97), ಶಿವಾನಿ ಜಿ.ಎ.(ಶೇ.97), ವಾಘ್ಮಿ ಪ್ರಶಾಂತ್ (ಶೇ.97), ಅವನಿ ಪಿ. ಶೆಟ್ಟಿ (ಶೇ.96.6), ವಿಭಾಸ್ (ಶೇ.96.6), ಯಕ್ಷಿತಾ (ಶೇ.96.4), ಸೃಜನ್ (ಶೇ.96.4), ಗೌತಮ್ (ಶೇ.96.4), ಪ್ರತೀಕ್ಷಾ ಕೆ.ಎಂ. (ಶೇ.96.4), ಸಾನ್ವಿ (ಶೇ.96.4), ಜನಿತ್ (ಶೇ.96.2), ಭಾರ್ಗವ್ (ಶೇ.96), ಜಶ್ಮಿತಾ (ಶೇ.96), ಐಶ್ರೀ ಶೆಟ್ಟಿ (ಶೇ.96), ಆದಿಲ್ (ಶೇ.96), ಧೃತಿ (ಶೇ.96.4), ನಿಶ್ವಲ್ (ಶೇ.96.4), ಹಿತೈಶಿ (ಶೇ.96), ಪ್ರಥಮ್ (ಶೇ.96), ಆದ್ರಿತ್ (ಶೇ.95.4), ಸುಮಿತ್ (ಶೇ.95.2), ಐಶಾನಿ (ಶೇ.95.2), ಭೃತಿ (ಶೇ.95), ಪೂರ್ವಿಕ್ (ಶೇ.95), ತರುಂಜನ್ (ಶೇ.95), ಸಾಯಿದೀಕ್ಷಾ, ಅಂಜನಾತಯನ್ (ಶೇ.95), ಗ್ಲೋರಿ ಪ್ರಕಾಶ್(ಶೇ.95), ಅಂಜನಿ (ಶೇ.95), ದಿವ್ಯಾ (ಶೇ. 95), ಧನ್ಯಾ(ಶೇ.95), ನಿಶಾ (ಶೇ.95), ಅಧ್ವಿತಿ(ಶೇ.95), ಯಶಶ್ವಿ (ಶೇ.95), (ಶೇ.95), ಸಂಜನಾ(ಶೇ.95), ಹರ್ಷವರ್ಧನ್ ಸಿದ್ಧಾರ್ಥ(ಶೇ.95) ರೋಹಿತ್ (ಶೇ.95) ಸಿದ್ಧಾರ್ಥ (ಶೇ.95) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ. 116 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದರೆ, 185 ವಿದ್ಯಾರ್ಥಿಗಳು ಶೇ.85 ಹಾಗೂ 225ವಿದ್ಯಾರ್ಥಿಗಳು ಶೇ.80ಕ್ಕಿಂತ ಅಧಿಕ ಅಂಕವನ್ನು ಗಳಿಸಿದ್ದಾರೆ. ಸಂಸ್ಕೃತದಲ್ಲಿ 7ವಿದ್ಯಾರ್ಥಿಗಳು, ಹಿಂದಿಯಲ್ಲಿ 4 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 3, ಕನ್ನಡದಲ್ಲಿ 3, ವಿಜ್ಞಾನ ಹಾಗೂ ಇಂಗ್ಲೀಷ್‌ನಲ್ಲಿ ತಲಾ ಓರ್ವ ವಿದ್ಯಾರ್ಥಿ ಶೇ.100 ಅಂಕ ಪಡೆದಿದ್ದಾರೆ. ಇವುಗಳ ಜೊತೆಯಲ್ಲಿ ಐಟಿ ವಿಷಯದಲ್ಲಿ 17 ವಿದ್ಯಾಥಿಗಳು ಶೇ.100 ಅಂಕ ಗಳಿಸಿದ್ದಾರೆ. ವಿಷಯವಾರು ಅಂಕಗಳಲ್ಲಿ, 36 ವಿದ್ಯಾರ್ಥಿಗಳು ಶೇ.100, 69 ವಿದ್ಯಾರ್ಥಿಗಳು ಶೇ.99 ಅಂಕ, 117 ವಿದ್ಯಾರ್ಥಿಗಳು ಶೇ. 98, 175ವಿದ್ಯಾರ್ಥಿಗಳು ಶೇ.97, 255 ವಿದ್ಯಾರ್ಥಿಗಳು ಶೇ.96, 335 ವಿದ್ಯಾಥಿಗಳು ಶೇ. 95 ಅಂಕಗಳಿಸಿದ್ದಾರೆ. ಜಗತ್ತಿನಾದ್ಯಂತ ಶೇ95ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು 2.24 ಶೇಕಡಾವಾರು ಆದರೆ, ಆಳ್ವಾಸ್‌ನಲ್ಲಿ ಶೇ.10.33 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಶೇ.90ಕ್ಕಿಂತ ಅಧಿಕ ಶೇ8.96ಆದರೆ, ಆಳ್ವಾಸ್‌ನಲ್ಲಿ ಶೇ.26 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಸಲುವಾಗಿ ಆಳ್ವಾಸ್ ಸಿಬಿಎಸ್‌ಇ ಶಾಲೆಯಲ್ಲಿ ಕಠಿಣವಾದ ಸ್ಟ್ಯಾಂಡರ್ಡ ಮ್ಯಾಥ್ಸ್ ವಿಷಯವನ್ನು ಇತರ ವಿಷಯಗಳೊಂದಿಗೆ ಭೋದಿಸಲಾ ಗುತ್ತಿದ್ದು, ಈ ವಿಷಯ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಆಳ್ವ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿ ಪ್ರೀತಂ ಕುಂದರ್, ಆಳ್ವಾಸ್ ಸಿ.ಬಿ.ಎಸ್.ಇ ಶಾಲೆಯ ಮುಖ್ಯ ಶಿಕ್ಷಕ ಮುಹಮ್ಮದ್ ಶಫಿ ಶೇಖ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 7:39 pm

ಗಲಾಟೆ ಪ್ರಕರಣ; ಅನಂತಕುಮಾರ್ ಹೆಗಡೆ ಪುತ್ರನ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು :  ಗಲಾಟೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಪುತ್ರ ಅಶುತೋಷ್‌ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ. ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೇ ಇರುವುದರಿಂದ ಪ್ರಕರಣದಿಂದ ಕೈಬಿಡುವಂತೆ ಕೋರಿ ಅಶುತೋಷ್‌ ಹೆಗಡೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ನಾಲ್ಕನೇ ಆರೋಪಿ ಅಶುತೋಷ್‌ ವಿರುದ್ಧ ಮೇಲ್ನೋಟಕ್ಕೆ ಅಪರಾಧವಾಗುವಂಥ ಆರೋಪಗಳಿಲ್ಲ. ಮುಂದಿನ ವಿಚಾರಣೆಗೆ ಒಳಪಟ್ಟು ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ನಾಲ್ಕನೇ ಆರೋಪಿಗೆ ಮಾತ್ರ ಈ ಮಧ್ಯಂತರ ಆದೇಶ ಸೀಮೀತವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಶುತೋಷ್‌ ಪರ ವಾದ ಮಂಡಿಸಿದ್ದ ವಕೀಲ ಪವನ್‌ಚಂದ್ರ ಶೆಟ್ಟಿ, ಎಫ್‌ಐಆರ್‌ ಅಥವಾ ಆರೋಪ ಪಟ್ಟಿಯಲ್ಲಿ ಅಶುತೋಷ್‌ ಹೆಸರಿಲ್ಲ. ತನ್ನ ಅಜ್ಜನನ್ನು ನೋಡಲು ಅವರು ಭಾರತಕ್ಕೆ ಬಂದಿದ್ದರು. ತಂದೆಯ ಅಧಿಕೃತ ಕಾರಿನಲ್ಲಿ ವಾಪಸ್‌ ಬರುವಾಗ ಕೃತ್ಯ ನಡೆದಿದ್ದು, ಅದರಲ್ಲಿ ಅಶುತೋಷ್‌ ಪಾತ್ರವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಅರ್ಜಿಯಲ್ಲಿ ಮೊದಲಿಗೆ ಅಶುತೋಷ್‌ ಪಕ್ಷಕಾರರಾಗಿಲ್ಲ. ಆದ್ದರಿಂದ, ತಿದ್ದುಪಡಿ ಅಥವಾ ಪ್ರತ್ಯೇಕ ಅರ್ಜಿ ಸಲ್ಲಿಸಿದರೆ ನ್ಯಾಯಾಲಯದ ಅದನ್ನು ಪರಿಗಣಿಸಬಹುದು ಎಂದಿದ್ದರು. ಪ್ರಕರಣವೇನು? ತುಮಕೂರಿನಲ್ಲಿ ಮದುವೆಯಲ್ಲಿ ಪಾಲ್ಗೊಂಡು ಕಾರ್‌ನಲ್ಲಿ ಹಳೇ ನಿಜಗಲ್‌ ಬಳಿ ಬರುತಿದ್ದಾಗ ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಮತ್ತೊಂದು ಕಾರಿನ ಚಾಲಕ ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದರು. ಇದರಿಂದ, ನಮ್ಮೊಂದಿಗಿದ್ದ ಸಲ್ಮಾನ್‌ ಖಾನ್‌ ಎಂಬಾತನ ಮೂರು ಹಲ್ಲುಗಳು ಮುರಿದಿವೆ ಎಂದು ಗಾಯಾಳು, ಹಾಲೇನಹಳ್ಳಿಯ ಸೈಫ್‌ ಖಾನ್‌ ದೂರು ನೀಡಿದ್ದರು. ಅನಂತ್‌ ಕುಮಾರ್‌ ಹೆಗಡೆ ಅವರು ಆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್‌ ಕುಮಾರ್‌ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್‌ ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಆರೋಪಿಸಿದ್ದರು. ದೂರು ಆಧರಿಸಿ ದಾಬಸ್‌‌ಪೇಟೆ ಠಾಣೆ ಪೊಲೀಸರು ಅನಂತ್‌ ಕುಮಾರ್‌ ಹೆಗಡೆ, ಅವರ ಭದ್ರತಾ ಸಿಬ್ಬಂದಿ ಶ್ರೀಧರ್‌ ಹಾಗೂ ಕಾರು ಚಾಲಕ ಮಹೇಶ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಾರ್ತಾ ಭಾರತಿ 16 Apr 2026 7:33 pm

ಮಂಗಳೂರು: ಗೆಳೆಯರ ಬಳಗದಿಂದ ಶರೀಫ್ ಹಾಜಿ ವೈಟ್‌ಸ್ಟೋನ್‌ಗೆ ಸನ್ಮಾನ

ಮಂಗಳೂರು, ಎ.16: ಸಮಾಜಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಅನನ್ಯ ಕೊಡುಗೆ ನೀಡಿದ ಉದ್ಯಮಿ ಶರೀಫ್ ಹಾಜಿ ವೈಟ್ ಸ್ಟೋನ್ ಅವರಿಗೆ ಗೆಳೆಯರ ಬಳಗ ಮಂಗಳೂರು ವತಿಯಿಂದ ಸನ್ಮಾನ ಕಾರ್ಯಕ್ರಮವು ನಗರದ ವೈಟ್ ಸ್ಟೋನ್ ಪ್ರೀಮಿಯರ್ ಇನ್ ಸಭಾಂಗಣದಲ್ಲಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಸಾಪ ದ.ಕ.ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಂಡೆ ಪೆಂಙಳ್ ಅಭಿಯಾನದ ಅಧ್ಯಕ್ಷ ಮನ್ಸೂರ್ ಅಹಮ್ಮದ್ ಅಝಾದ್, ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದೈಜಿವರ್ಲ್ಡ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿದರು. ಹರ್ಷದ್ ಕಂದಕ್, ಉದ್ಯಮಿ ಸಿ.ಆರ್ ಅಬೂಬಕ್ಕರ್ ಉಪಸ್ಥಿತರಿದರು. ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ ತೊಕ್ಕೊಟ್ಟು ಅಭಿನಂದನಾ ಪತ್ರ ವಾಚಿಸಿದರು. ಗೆಳೆಯರ ಬಳಗ ಮಂಗಳೂರು ಅಧ್ಯಕ್ಷ ಡಿ.ಐ. ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಕಾರ್ಯದರ್ಶಿ ಸಾಜಿದ್ ಉಳ್ಳಾಲ್ ವಂದಿಸಿದರು.

ವಾರ್ತಾ ಭಾರತಿ 16 Apr 2026 7:32 pm

Kalaburagi | ಸೊಲಾಪುರ ವಿಭಾಗದ ಇಬ್ಬರು ರೈಲ್ವೆ ಸಿಬ್ಬಂದಿಗೆ ʼಸುರಕ್ಷತಾ ಪ್ರಶಸ್ತಿʼ ಪ್ರದಾನ

ಕಲಬುರಗಿ: ಸೆಂಟ್ರಲ್ ರೈಲ್ವೆಯ ಛತ್ರಪತಿ ಶಿವಾಜಿ ಟರ್ಮಿನಸ್ ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಇಲಾಖೆಯ ಮಹಾ ವ್ಯವಸ್ಥಾಪಕ ರಾಜೀವ್ ಶ್ರೀವಾಸ್ತವ ಅವರು ಸೊಲಾಪುರ ವಿಭಾಗದ ಇಬ್ಬರು ಸಿಬ್ಬಂದಿಗೆ ‘ಸುರಕ್ಷತಾ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಿದರು. ಧಾರಾಶಿವ TRD ಟೆಕ್ನಿಷಿಯನ್ ರಮೇಶ್ ತನ್ಮೋರ್ ಮತ್ತು ದುಧನಿಯ ಟೆಕ್ನಿಷಿಯನ್ (TRD), ಯೋಗೇಂದ್ರ ಕುಮಾರ್ ಅವರು ಪ್ರಶಸ್ತಿ ವಿಜೇತರಿಬ್ಬರಿಗೂ ಪ್ರಶಸ್ತಿಯೊಂದಿಗೆ ಪದಕ, ವಿಶೇಷ ಸಾಧನೆ ಕುರಿತ ಪ್ರಶಂಸಾ ಪತ್ರ ಹಾಗೂ 3,500 ರೂ. ನಗದು ಬಹುಮಾನ ನೀಡಲಾಗಿದ್ದು, ಸಿಬ್ಬಂದಿಗಳು ಕರ್ತವ್ಯನಿಷ್ಠೆ, ಎಚ್ಚರಿಕೆ ಮತ್ತು ತಕ್ಷಣದ ಕ್ರಮದ ಮೂಲಕ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಿ ಸುರಕ್ಷಿತ ರೈಲು ಸಂಚಾರಕ್ಕೆ ನೆರವಾದ ಹಿನ್ನೆಲೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಇಲಾಖೆಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಚಂದ್ರ ಕಿಶೋರ್ ಪ್ರಸಾದ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

ವಾರ್ತಾ ಭಾರತಿ 16 Apr 2026 7:27 pm

ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಸೀಮೆನ್ಸ್ ಹೆಲ್ತಿನಿಯರ್ಸ್ ತಂಡ

ಉದ್ದೇಶಿತ ಯೋಜನೆ ಕುರಿತು‌ ಸುದೀರ್ಘ ಚರ್ಚೆ

ವಾರ್ತಾ ಭಾರತಿ 16 Apr 2026 7:25 pm

Kalaburagi | ಸೋಲಾಪುರ ವಿಭಾಗದ ಮಾರ್ಗವಾಗಿ ಮುಂಬೈ–ಚೆನ್ನೈ ನಡುವೆ 16 ಸಮರ್ ಸ್ಪೆಷಲ್ ರೈಲುಗಳು

ಕಲಬುರಗಿ: ಬೇಸಿಗೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಆಧರಿಸಿ ಸೆಂಟ್ರಲ್ ರೈಲ್ವೆ ಸೋಲಾಪುರ ವಿಭಾಗದ ಮಾರ್ಗವಾಗಿ ಮುಂಬೈ ಮತ್ತು ಚೆನ್ನೈ ನಡುವೆ ಒಟ್ಟು 16 ಸಮರ್ ಸ್ಪೆಷಲ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಸೆಂಟ್ರಲ್ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ವಿಕ್ರಮ್ ತಿಳಿಸಿದ್ದಾರೆ. ಈ ವಿಶೇಷ ರೈಲುಗಳು ಸೋಲಾಪುರ ವಿಭಾಗದ ಕುರ್ಡುವಾಡಿ, ಸೋಲಾಪುರ, ಕಲಬುರಗಿ ಮತ್ತು ವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. CSMT ಮುಂಬೈ–ಚೆನ್ನೈ ಸೆಂಟ್ರಲ್ ವಾರಂತ್ಯ ಸ್ಪೆಷಲ್ (16 ಟ್ರಿಪ್‌ಗಳು): ರೈಲು ಸಂಖ್ಯೆ 01015 ವಾರಂತ್ಯ ವಿಶೇಷ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈನಿಂದ ಪ್ರತಿ ರವಿವಾರ ರಾತ್ರಿ 00.20ಕ್ಕೆ (19-04-2026 ರಿಂದ 07-06-2026ರವರೆಗೆ) ಹೊರಡಲಿದ್ದು, ಅದೇ ದಿನ ರಾತ್ರಿ 23.30ಕ್ಕೆ ಚೆನ್ನೈ ಸೆಂಟ್ರಲ್ ರೈಲ್ವೆ ಸ್ಟೇಷನ್ ತಲುಪಲಿದೆ. (8 ಟ್ರಿಪ್‌ಗಳು). ರೈಲು ಸಂಖ್ಯೆ 01016 ವಾರಂತ್ಯ ವಿಶೇಷ ರೈಲು ಚೆನ್ನೈ ಸೆಂಟ್ರಲ್‌ನಿಂದ ಪ್ರತಿ ಸೋಮವಾರ ಬೆಳಗ್ಗೆ 04.00ಕ್ಕೆ (20-04-2026 ರಿಂದ 08-06-2026ರವರೆಗೆ) ಹೊರಡಲಿದ್ದು, ಮುಂದಿನ ದಿನ ಬೆಳಗ್ಗೆ 04.15ಕ್ಕೆ CSMT ಮುಂಬೈ ತಲುಪಲಿದೆ. (8 ಟ್ರಿಪ್‌ಗಳು) ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ದಾದರ್, ಠಾಣೆ, ಕಲ್ಯಾಣ, ಲೋಣಾವಳಾ, ಪುಣೆ, ದೌಂಡ್, ಕುರ್ಡುವಾಡಿ, ಸೋಲಾಪುರ, ಕಲಬುರಗಿ, ವಾಡಿ, ಕೃಷ್ಣಾ, ರೈಚೂರು, ಮಂತ್ರಾಲಯಂ ರಸ್ತೆ, ಅದೋನಿ, ಗುಂಟಕಲ್, ಗೂಟಿ, ತಾಡಿಪತ್ರಿ, ಯೆರ್ರಗುಂಟ್ಲ, ಕಡಪಾ, ರಾಜಂಪೇಟ, ರೇಣಿಗುಂಟ, ಅರಕ್ಕೋಣಂ ಮತ್ತು ತಿರುವಳ್ಳೂರು ನಿಲ್ದಾಣಗಳು ತಲುಪಲಿವೆ. ಈ ರೈಲುಗಳ ಟಿಕೆಟ್ ಕಾಯ್ದಿರಿಕೆ ವಿಶೇಷ ಶುಲ್ಕದೊಂದಿಗೆ ಎಲ್ಲಾ ಕಂಪ್ಯೂಟರೈಸ್‌ಡ್ ರಿಸರ್ವೇಶನ್ ಕೇಂದ್ರಗಳಲ್ಲಿ ಹಾಗೂ IRCTC ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅನ್ ರಿಜವರ್ ಬೋಗಿಗಳ ಟಿಕೆಟ್‌ಗಳನ್ನು ನಿಲ್ದಾಣ ಕೌಂಟರ್‌ಗಳಲ್ಲಿ ಹಾಗೂ RailOne ಆಪ್ ಮೂಲಕ ಪಡೆಯಬಹುದಾಗಿದ್ದು, ಪ್ರಯಾಣಿಕರು ಮಾನ್ಯ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

ವಾರ್ತಾ ಭಾರತಿ 16 Apr 2026 7:20 pm

ದ್ವಿತೀಯ PUC ಪರೀಕ್ಷೆ-2 ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ, ಏಪ್ರಿಲ್ 18 ಕೊನೆಯ ದಿನ

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮಹತ್ವದ ಹಾಗೂ ನಿರಾಳತೆ ತರುವಂತಹ ಸುದ್ದಿಯೊಂದನ್ನು ನೀಡಿದೆ. ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಅಂತಿಮ ಗಡುವನ್ನು ಇದೀಗ ಏಪ್ರಿಲ್ 18, 2026ರವರೆಗೆ ವಿಸ್ತರಿಸಿ ಮಂಡಳಿಯು

ಒನ್ ಇ೦ಡಿಯ 16 Apr 2026 7:18 pm

ಕರಾವಳಿಯಲ್ಲಿ ಏರುತ್ತಿರುವ ತಾಪಮಾನ: ಶಾಖದ ಹೊಡೆತದಿಂದ ಆರೋಗ್ಯ ಕಾಪಾಡಲು ಸಲಹೆ - ಸೂಚನೆ

ಉಡುಪಿ, ಎ.16: ಪ್ರಸ್ತುತ ಕರಾವಳಿ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ ಏರುತಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ತಾಪಮಾನ 33ರಿಂದ 34 ಡಿಗ್ರಿ ತಲುಪುತ್ತಿದೆ. ಆದರೆ ಗಾಳಿಯಲ್ಲಿರುವ ಅಧಿಕ ತೇವಾಂಶದಿಂದಾಗಿ ಉಷ್ಣತೆಯ ನಿಜವಾದ ಅನುಭವ 38 ಡಿಗ್ರಿಯಷ್ಟಿರುತ್ತದೆ ಎಂದು ಹವಾಮಾನ ಮಾಪಕಗಳು ಸೂಚಿಸುತ್ತಿವೆ. ಈಗಾಗಲೇ ಹವಾಮಾನ ಇಲಾಖೆ ಈ ಬಾರಿಯ ಬೇಸಿಗೆಯಲ್ಲಿ (ಮಾರ್ಚ್‌ನಿಂದ ಮೇ ಕೊನೆಯವರಿಗೆ ಅಥವಾ ಮಳೆಗಾಲ ಪ್ರಾರಂಭ ಗೊಳ್ಳುವ ಜೂನ್ ಮೊದಲ ವಾರದವರೆಗೆ) ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಸಾಧ್ಯತೆ ಇದ್ದು, ಕರಾವಳಿಯಲ್ಲೂ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸೂಚನೆ ನೀಡಿದೆ. ಹೀಗಾಗಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ವಿಶೇಷ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಬಿರು ಬಿಸಿಲಿನಿಂದ ಉಂಟಾಗುವ ಬಳಲಿಕೆ, ನಿರ್ಜಲೀಕರಣ ಹಾಗೂ ಶಾಖಾ ಘಾತ (ಹೀಟ್ ಸ್ಟ್ರೋಕ್)ಗಳನ್ನು ತಡೆಯಲು ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನತೆಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದೆ. ಅತೀ ಹೆಚ್ಚಿನ ತಾಪಮಾನದಿಂದಾಗುವ ಅನಾರೋಗ್ಯವನ್ನು ತಡೆಗಟ್ಟಲು ಸಾರ್ವಜನಿಕರು ಸಾಧ್ಯವಾದಷ್ಟು ಗರಿಷ್ಠ ತಾಪಮಾನದ ಅವಧಿಯಾದ ಅಪರಾಹ್ನ 12ರಿಂದ 3:00ಗಂಟೆಯವರೆಗೆ ಬಿಸಿಲಿಗೆ ಹೋಗುವುದನ್ನು ಕಡಿಮೆ ಮಾಡ ಬೇಕು. ಬಾಯಾರಿಕೆಯ ಅನುಭವವಾಗದಿದ್ದರೂ ಸಹ ಸಾಕಷ್ಟು ನೀರು ಕುಡಿಯುತ್ತಿರಬೇಕು. ಸಾಧ್ಯವಾದಷ್ಟು ಹಗುರ ವಾದ, ತಿಳಿಬಣ್ಣದ, ಸಡಿಲವಾದ ಹತ್ತಿಬಟ್ಟೆಗಳನ್ನು ಧರಿಸಬೇಕು.ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ/ಟೋಪಿ, ಬೂಟು ಅಥವಾ ಚಪ್ಪಲಿಗಳನ್ನು ಬಳಸಬೇಕು. ವಾತಾವರಣದ ಉಷ್ಣತೆ ಹೆಚ್ಚಿರುವಾಗ ಅಂದರೆ 11:00ಗಂಟೆಯಿಂದ 3:00ರವರೆಗೆ ಶ್ರಮದಾಯಕ ಚಟುವಟಿಕೆ ಗಳನ್ನು ಆದಷ್ಟು ತಪ್ಪಿಸಬೇಕು. ಇದೇ ಅವಧಿಯಲ್ಲಿ ಹೊರಾಂಗಣಗಳಲ್ಲಿ ನಡೆಯುವ ಸಭಾ, ಸಮಾರಂಭಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ/ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯಾಡುವ ವ್ಯವಸ್ಥೆ ಹಾಗೂ ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ಪ್ರಯಾಣಿಸುವಾಗ ನೀರನ್ನು ಜೊತೆಯಲ್ಲಿ ಕೊಂಡೊಯ್ಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯ ಗಳನ್ನು ಸೇವಿಸಬಾರದು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಜ್ಜಿಗೆ ಕುಡಿಯಿರಿ: ಸಾಧ್ಯವಿದ್ದಷ್ಟು ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓಆರ್‌ಎಸ್‌ನ್ನು ಬಳಸ ಬೇಕು. ಋತುಮಾನದಲ್ಲಿ ಲಭ್ಯವಿರುವ ಹಾಗೂ ಅಧಿಕ ನೀರಿನ ಅಂಶವನ್ನು ಹೊಂದಿರುವ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್ ಹಣ್ಣುಗಳನ್ನು, ತರಕಾರಿ, ಸೊಪ್ಪು, ಎಳನೀರು ಗಳನ್ನು ಹೆಚ್ಚಾಗಿ ಸೇವಿಸಬೇಕು. ಸಾಕುಪ್ರಾಣಿಗಳನ್ನು ಸಹ ನೆರಳಿನಲ್ಲಿ ಇರಿಸಿ, ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸುತ್ತಿರಬೇಕು. ಮನೆಯನ್ನು ತಂಪಾಗಿರಿಸಲು ಪರದೆ, ಶಟರ್ ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು. ಹೊರಗೆ ತೆರಳುವಾಗ ನೀರಿನ ಬಾಟೆಲ್, ಛತ್ರಿ, ಟೋಪಿ ಅಥವಾ ಕ್ಯಾಪ್, ಹೆಡ್‌ಕವರ್, ಹ್ಯಾಂಡ್‌ಟವೆಲ್, ಹ್ಯಾಂಡ್ ಫ್ಯಾನ್, ಎಲೆಕ್ಟ್ರೋಲೈಟ್, ಗ್ಲೂಕೋಸ್, ಓಆರ್‌ಎಸ್‌ನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್ ಅನ್ನು ಒಯ್ಯುವುದು ಉತ್ತಮ. ಅಲ್ಲದೇ ಆರೋಗ್ಯ ಇಲಾಖೆ ಆಗಾಗ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅತೀ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ಆರೋಗ್ಯದ ಮೇಲೆ ನಿರ್ಜಲೀಕರಣ, ಶಾಖಸೆಳೆತ, ಶಾಖದ ಬಳಲಿಕೆ ಮತ್ತು ಶಾಖದ ಆಘಾತ ದಂತಹ ವ್ಯತಿರಿಕ್ತ ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ತಾಪಮಾನದಿಂದ ಆಘಾತಕ್ಕೊಳಗಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆಯಾದ ಬಟ್ಟೆಯಿಂದ ಮೈ ಒರೆಸಬೇಕು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕುತ್ತಿರಬೇಕು. ನೀರು ಅಥವಾ ಪುನರ್ಜಲೀಕರಣ ಪಾನೀಯ ಗಳಾದ ಓಆರ್‌ಎಸ್, ನಿಂಬೆ ಪಾನಕ ನೀಡಬೇಕು. ವ್ಯಕ್ತಿಗೆ ತಂಪಾದ ಗಾಳಿಯ ವ್ಯವಸ್ಥೆ ಮಾಡಬೇಕು. ರೋಗಲಕ್ಷಣಗಳು ಉಲ್ಬಣಿಸಿದರೆ ವೈದ್ಯರನ್ನು ಸಂಪರ್ಕಿಸಬೇಕು. ಅತೀ ಹೆಚ್ಚು ತಾಪಮಾನದಿಂದ ಉದ್ಭವಿಸುವ ರೋಗ ಲಕ್ಷಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 16 Apr 2026 7:17 pm

West Bengal | ಅಧಿಕಾರಿಗಳ ವರ್ಗಾವಣೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ

ಇದೇ ಮೊದಲ ಬಾರಿಯಲ್ಲ ಎಂದ ಸರ್ವೋಚ್ಚ ನ್ಯಾಯಾಲಯ

ವಾರ್ತಾ ಭಾರತಿ 16 Apr 2026 7:14 pm

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿ: ಚೆಕ್ ಪೋಸ್ಟ್‌ಗಳಲ್ಲಿ ರಸಗೊಬ್ಬರ ತಪಾಸಣೆ ಕಡ್ಡಾಯ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಈ ಬಾರಿ ರಸಗೊಬ್ಬರ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯಿದೆ.ಹೀಗಾಗಿ, ರಾಜ್ಯದ ಎಲ್ಲ ಚೆಕ್ ಪೋಸ್ಟ್‌ ಗಳಲ್ಲಿ ರಸಗೊಬ್ಬರ ತಪಾಸಣೆ ಕಡ್ಡಾಯಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರು ಮೇವಿನ ಸ್ಥಿತಿಗತಿ, ಹವಾಮಾನ ಪರಿಸ್ಥಿತಿ ಹಾಗೂ ಕೃಷಿ ಚಟುವಟಿಕೆಗಳ ಸಿದ್ಧತೆ ಕುರಿತ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಈ ಬಾರಿ ರಸಗೊಬ್ಬರ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ವ್ಯಾಪಾರಿಗಳು ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನು ಇರಿಸುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಸಮಯದಲ್ಲಿ ರಸಗೊಬ್ಬರ ಲಭ್ಯತೆಯನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಅದರಲ್ಲೂ ಯೂರಿಯಾ, ಡಿಎಪಿ ಸರಿಯಾಗಿ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ರಸಗೊಬ್ಬರ ಸಾಗಾಟ ಮಾಡುವುದನ್ನು ನಿಯಂತ್ರಿಸಬೇಕು. ಇದಕ್ಕಾಗಿ ಚೆಕ್ ಪೋ ಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಬೇಕು ಎಂದ ಅವರು, ಹಾವೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಮಾರಾಟವಾಗಿದ್ದು, ಇದಕ್ಕೆ ಕಾರಣವೇನು? ರಸಗೊಬ್ಬರ ಮಾರಾಟದ ಮೇಲೆ ನಿರಂತರ ನಿಗಾ ವಹಿಸಿ, ಅರ್ಹ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.  

ವಾರ್ತಾ ಭಾರತಿ 16 Apr 2026 7:09 pm

ಸಚಿವ ಸ್ಥಾನ ಕೇಳವುದು ತಪ್ಪಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು : ಶಾಸಕರು ಸಚಿವ ಸ್ಥಾನ ಕೇಳವುದು ತಪ್ಪಲ್ಲ. ಸಂಪುಟ ಪುನರ್ ರಚನೆ ಆಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿಂದೆ ಮಂತ್ರಿ ಆಗಿದ್ದಾಗ ಪುನರ್ ರಚನೆ ಆಗಿತ್ತು. ಅದೇ ರೀತಿ, ಈಗಲೂ ಬೇರೆಯವರಿಗೆ ಸಚಿವ ಸ್ಥಾನ ಸಿಗಬೇಕು. ಪಕ್ಷದ ಹಂತದಲ್ಲಿ ಅದು ಆಗುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ನುಡಿದರು. ಸಂಸತ್‍ನಲ್ಲಿ ಕ್ಷೇತ್ರ ಮರು ವಿಂಗಡಣೆ ವಿಧೇಯಕ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಗಳಲ್ಲಿ ಈಗ ಇರುವ ಲೋಕಸಭೆ ಕ್ಷೇತ್ರಗಳ ಪೈಕಿ ಶೇ.50ರಷ್ಟು ಕ್ಷೇತ್ರ ಹೆಚ್ಚಳ ಮಾಡಿದರೆ ಯಾವುದೇ ಅನ್ಯಾಯ ಆಗಲ್ಲ. ಆದರೆ, ಮಹಿಳಾ ಮೀಸಲಾತಿ ಕೊಡಲು ಕ್ಷೇತ್ರ ಹೆಚ್ಚು ಮಾಡುವ ಅವಶ್ಯಕತೆ ಇಲ್ಲ. ಎಷ್ಟೇ ಸ್ಥಾನ ಇದ್ದರು ಶೇ.33% ಮೀಸಲು ಕೊಡಬೇಕು ಅಷ್ಟೇ ಎಂದರು. ಪಂಚಾಯತಿ, ನಗರ ಪಾಲಿಕೆಯಲ್ಲಿ ಈಗಾಗಲೇ ಶೇ.50ರಷ್ಟು ಮಹಿಳಾ ಮೀಸಲಾತಿ ಇದೆ. ಕೇಂದ್ರ ಹಿಂದೆ ಮಸೂದೆ ಬಂದಾಗಲೇ ಮಹಿಳಾ ಮೀಸಲಾತಿ ಕೊಟ್ಟಿದ್ದರೆ ಇಷ್ಟು ಹೊತ್ತಿಗೆ ಮಹಿಳಾ ಮೀಸಲಾತಿ ಇರುತ್ತಿತ್ತು. ಈಗ ಕೇಂದ್ರ ಸರಕಾರದವರು ತಡೆ ಮಾಡಿದ್ದಾರೆ. ಈಗಲೂ ಈಗ ಇರುವ ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಮಾಡಲಿ ಎಂದೂ ಅವರು ಆಗ್ರಹಿಸಿದರು.  

ವಾರ್ತಾ ಭಾರತಿ 16 Apr 2026 7:06 pm

ಕಾಲದ ಬೇಡಿಕೆಗೆ ಅನುಗುಣವಾಗಿ ಮದ್ರಸ ಪಠ್ಯಪುಸ್ತಕಗಳ ಪರಿಷ್ಕರಣೆ: ಮುಫತ್ತಿಷ್ ಉಮರ್ ದಾರಿಮಿ

ಪುತ್ತೂರು, ಎ.16: ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆ ಗಳನ್ನು ಕಾಣುತ್ತಿವೆ. ಪರಂಪರೆಯ ಬೋಧನಾ ವಿಧಾನಗಳ ಜೊತೆಗೆ ಸ್ಮಾರ್ಟ್‌ಕ್ಲಾಸ್ ಹಾಗೂ ಡಿಜಿಟಲ್ ತರಗತಿ ಗಳ ಬಳಕೆ ಹೆಚ್ಚುತ್ತಿದ್ದು, ಇದು ವಿದ್ಯಾರ್ಥಿಗಳ ಕಲಿಕೆಗೆ ಹೊಸ ದಿಕ್ಕನ್ನು ನೀಡುತ್ತಿದೆ. ಆ ಹಿನ್ನೆಲೆಯಲ್ಲಿ ಸಮಸ್ತ ಶಿಕ್ಷಣ ಮಂಡಳಿಯು ಮದ್ರಸಗಳ ಪಠ್ಯಪುಸ್ತಕಗಳನ್ನು ಕಾಲಾನುಗುಣವಾಗಿ ಪರಿಷ್ಕರಿಸುತ್ತಿದೆ ಎಂದು ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ಹೇಳಿದರು. ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಪಡೀಲ್ ಮುಈನುಲ್ ಇಸ್ಲಾಂ ಮದ್ರಸ ಸಭಾಂಗಣ ದಲ್ಲಿ ನಡೆದ ಆಯೋಜಿಸಲಾದ ಮದ್ರಸ ಅಧ್ಯಾಪಕರ ಪರಿಷ್ಕೃತ ಪಠ್ಯಪುಸ್ತಕಗಳ ಪರಿಚಯಿಸುವ ಅಬ್‌ವಾಬ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮಗಳ ಬಳಕೆಯಿಂದ ವಿದ್ಯಾರ್ಥಿಗಳಿಗೆ ವಿಷಯವನ್ನು ಸುಲಭವಾಗಿ ಮತ್ತು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಡಿಜಿಟಲ್ ಮಾಧ್ಯಮದ ಮೂಲಕ ಪಾಠ ಬೋಧನೆ ಮಾಡಿದಾಗ ವಿದ್ಯಾರ್ಥಿಗಳ ಗಮನ ಹೆಚ್ಚು ಕೇಂದ್ರೀಕೃತವಾಗುತ್ತದೆ. ಕ್ರಿಯಾತ್ಮಕ ಕಲಿಕಾ ವಿಧಾನಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಸೃಜನಶೀಲತೆ ಮತ್ತು ಚಿಂತನಾ ಸಾಮರ್ಥ್ಯವನ್ನು ಉತ್ತೇಜಿಸುತ್ತವೆ. ಪರಿಷ್ಕೃತ ಮದ್ರಸ ಪಠ್ಯಪುಸ್ತಕಗಳಲ್ಲಿ ಡಿಜಿಟಲ್ ಬೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಉಮರ್ ದಾರಿಮಿ ಸಾಲ್ಮರ ತಿಳಿಸಿದರು. ನಹೀಮ್ ಫೈಝಿ ಮಾತನಾಡಿ ಸ್ಮಾರ್ಸ್ ಕ್ಲಾಸ್‌ಗಳ ಬಳಕೆಯಿಂದ ಕಡಿಮೆ ಸಮಯದಲ್ಲಿ ಹೆಚ್ಚು ವಿಷಯವನ್ನು ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಾಗುತ್ತಿದ್ದು, ಕಲಿಕೆಯ ಗುಣಮಟ್ಟವೂ ಹೆಚ್ಚುತ್ತಿದೆ ಎಂದರು. ರೇಂಜ್ ಉಪಾಧ್ಯಕ್ಷ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೇಂಜ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ರಹ್ಮಾನಿ ಕಾರ್ಯಕ್ರಮ ಉದ್ಘಾಟಿಸಿದರು. ಪಡೀಲ್ ಮಸೀದಿಯ ಗೌರವಾಧ್ಯಕ್ಷ ಮುಹಮ್ಮದ್ ಹಾಜಿ ಪಡೀಲ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಸಮಸ್ತ ಉಲಮಾ ಸಂಘಟನೆಯ ಶಿಕ್ಷಣ ಕ್ಷೇತ್ರದ ಸೇವೆಯನ್ನು ಶ್ಲಾಘಿಸಿದರು. ಡಿಜಿಟಲ್ ಮಾಧ್ಯಮದ ಪ್ರತ್ಯಕ್ಷ ಪ್ರದರ್ಶನದ ಮೂಲಕ ’ಅಬ್ ವಾಬ್’ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಪಡೀಲ್ ಜುಮಾ ಮಸೀದಿಯ ಉಪಾಧ್ಯಕ್ಷ ಎಂ.ಎಚ್. ಅಬ್ದುಲ್ ರಹ್ಮಾನ್ ಹಾಜಿ, ರೇಂಜ್ ಕೋಶಾಧಿಕಾರಿ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಇಬ್ರಾಹಿಂ ಹಾಜಿ ಸುಪ್ರೀಂ ಮತ್ತಿತರರು ಉಪಸ್ಥಿತರಿದ್ದರು. ರೇಂಜ್ ಜೊತೆ ಕಾರ್ಯದರ್ಶಿ ಅಬ್ದುಲ್ ನಾಸಿರ್ ಫೈಝಿ ಸ್ವಾಗತಿಸಿದರು. ರೇಂಜ್ ಉಪಾಧ್ಯಕ್ಷ ನಝೀರ್ ಅರ್ಶದಿ ವಂದಿಸಿದರು.

ವಾರ್ತಾ ಭಾರತಿ 16 Apr 2026 7:01 pm

ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮಗಳು ಅನಿವಾರ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ

ಬೆಂಗಳೂರು : ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಝಮೀರ್ ಅಹ್ಮದ್ ಖಾನ್ ಅಥವಾ ನಾನೇ ಆಗಿರಲಿ. ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮಗಳು ಅನಿವಾರ್ಯ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಾವು ಕೆಲಸ ಮಾಡಿದ್ದು, ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ನಾನು ಪ್ರಚಾರ ಮಾಡಿಲ್ಲ. ನನಗೆ ವಹಿಸಿದ್ದ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇಲ್ಲಿ ಅಲ್ಪಸಂಖ್ಯಾತರ ನಾಯಕರ ನಡುವೆ ಗೊಂದಲ ಬಂದಿದೆ. ಅದನ್ನು ಬಗೆಹರಿಸಬೇಕೆ ಹೊರತು, ಬೇರೆ ರೀತಿಯ ವ್ಯಾಖ್ಯಾನ ಅಗತ್ಯವಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಆಪ್ತರನ್ನು ಗುರಿ ಮಾಡಲಾಗಿದೆ ಎಂಬುದು ಸಲ್ಲ. ಪಕ್ಷಕ್ಕೆ ತೊಂದರೆಯಾಗುವಂತಹ ಕೆಲಸ ಯಾರೇ ಮಾಡಿದರೂ ಕ್ರಮಗಳು ಅನಿವಾರ್ಯ. ಡಿ.ಕೆ.ಶಿವಕುಮಾರ್, ಜಗ್ಗಿ ವಾಸುದೇವ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಸದ್ಗುರು ಈ ಮೊದಲು ರಾಹುಲ್‍ಗಾಂಧಿ ಯಾರು ಎಂದು ಗೊತ್ತಿಲ್ಲ ಎಂದು ಹೇಳಿಕೆ ನೀಡಿರಬಹುದು. ಡಿಕೆಶಿ ಕಾರ್ಯಕ್ರಮಕ್ಕೆ ಹೋಗಿ ನಾನು ರಾಹುಲ್‍ಗಾಂಧಿ ಪಕ್ಷದವನು ಎಂದು ಹೇಳಿ ಬಂದಿದ್ದಾರೆ ಎಂದರು.  

ವಾರ್ತಾ ಭಾರತಿ 16 Apr 2026 7:01 pm

ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ಅಮಿತ್ ಶಾ

ಮಾಲ್ಡಾ,ಎ.16: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾಲ್ಡಾ ಜಿಲ್ಲೆಯ ಗಜೋಲ್‌ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, “ಇದು ಭಾರತ; ಇಲ್ಲಿ ಬಾಬರಿ ಮಸೀದಿ ನಿರ್ಮಿಸಲು ಯಾರಿಗೂ ಅವಕಾಶ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಆಮ್ ಜನತಾ ಉನ್ನಾಯನ್ ಪಕ್ಷದ ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ಬಾಬರಿ ಮಾದರಿಯ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವ ಹಿನ್ನೆಲೆ ಶಾ ಈ ಹೇಳಿಕೆ ನೀಡಿದ್ದಾರೆ. ಕಬೀರ್ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ “ಏಜೆಂಟ್” ಎಂದು ಆರೋಪಿಸಿದ ಅಮಿತ್‌ ಶಾ, “ಅವರು ಬ್ಯಾನರ್ಜಿ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು. ಈ ಪ್ರಸ್ತಾಪದ ಬಳಿಕ ಕಳೆದ ಡಿಸೆಂಬರ್‌ ನಲ್ಲಿ ಕಬೀರ್ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. “ಕಬೀರ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿ ಸರಕಾರ ಬಂದರೆ ಇಂತಹ ಯಾವುದೇ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ” ಎಂದು ಅಮಿತ್‌ ಶಾ ಹೇಳಿದರು. ಮಾಣಿಕ್‌ ಚಕ್‌ ನಲ್ಲಿ ನಡೆದ ಮತ್ತೊಂದು ರ್ಯಾಲಿಯಲ್ಲಿ, “ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಕನಸುಗಳು ಭಗ್ನಗೊಳ್ಳಲಿವೆ” ಎಂದು ಟೀಕಿಸಿದರು. ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಹುಮಾಯೂನ್ ಕಬೀರ್‌ ಅವರು ಕಳೆದ ವರ್ಷ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ 33ನೇ ವಾರ್ಷಿಕೋತ್ಸವದ ಅಂಗವಾಗಿ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. 86 ಕೋಟಿ ರೂ. ವೆಚ್ಚದಲ್ಲಿ ಎಂಟು ಎಕರೆ ಖಾಸಗಿ ಭೂಮಿಯಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದೆ. ಈ ವಿಷಯ ರಾಜ್ಯದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸೋಮವಾರ ಬಿರ್ಭುಮ್ ಮತ್ತು ಪಶ್ಚಿಮ ಬರ್ಧಮಾನ್ ಜಿಲ್ಲೆಗಳಲ್ಲಿ ನಡೆದ ರ್ಯಾಲಿಗಳಲ್ಲಿಯೂ ಶಾ, “ಮಮತಾ ಬ್ಯಾನರ್ಜಿ ಮತ್ತು ಕಬೀರ್ ಇಬ್ಬರೂ ಒಂದೇ ರೀತಿಯವರು” ಎಂದು ಆರೋಪಿಸಿದ್ದರು. ರಾಣಿಗಂಜ್‌ ನಲ್ಲಿ ನಡೆದ ಸಭೆಯಲ್ಲಿ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರೆಂದು ಆರೋಪಿಸಿ, ಅದನ್ನು ಕಬೀರ್ ಪ್ರಸ್ತಾಪಿಸಿದ ಮಸೀದಿ ನಿರ್ಮಾಣ ಯೋಜನೆಗೆ ಸಂಬಂಧಿಸಿ ಟೀಕಿಸಿದರು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದವು ಎಂದು ಅಮಿತ್‌ ಶಾ ಹೇಳಿದರು. ಆದರೆ, 2019ರ ಜನಾದೇಶದ ಬಳಿಕ ಬಿಜೆಪಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದೆ ಎಂದು ಅವರು ಉಲ್ಲೇಖಿಸಿದರು. ಕಬೀರ್ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು 1,000 ಕೋಟಿ ರೂ. ಒಪ್ಪಂದದಲ್ಲಿ 200 ಕೋಟಿ ರೂಪಾಯಿ ಮುಂಗಡ ಪಡೆದಿದ್ದಾರೆ ಎಂಬ ಆರೋಪಗಳಿರುವ ವೈರಲ್ ವೀಡಿಯೊವನ್ನೂ ಅವರು ಉಲ್ಲೇಖಿಸಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಕಬೀರ್ ಅವರ ಸಿದ್ಧಾಂತಗಳು ಬಿಜೆಪಿಗೆ ಸಂಪೂರ್ಣ ವಿರುದ್ಧ. ಅವರ ಜೊತೆ ಮೈತ್ರಿ ಮಾಡುವುದಕ್ಕಿಂತ ಬಿಜೆಪಿ 20 ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳಲು ಸಿದ್ಧ” ಎಂದು ಹೇಳಿದರು.

ವಾರ್ತಾ ಭಾರತಿ 16 Apr 2026 7:00 pm

Raichur | ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ಸದಸ್ಯರಿಂದ ವಿವಿಧ ಕಡೆ ಭೇಟಿ, ಪರಿಶೀಲನೆ

ರಾಯಚೂರು: ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ಸದಸ್ಯ ಜಟೋತು ಹುಸೇನ್ ಅವರು ಗುರುವಾರ ರಾಯಚೂರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊದಲಿಗೆ ನಗರದ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆಯ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು ಹಾಗೂ ಸರ್ಕಾರದ ಸೌಲಭ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯ ಒಳಹೊರಗಿನ ಸ್ವಚ್ಛತೆ ಕಾಪಾಡುವುದು ಮತ್ತು ಚಿಕಿತ್ಸೆ ಸಂಬಂಧಿತ ಮಾಹಿತಿಯನ್ನು ನಾಮಫಲಕದಲ್ಲಿ ಪ್ರದರ್ಶಿಸುವುದಕ್ಕೂ ನಿರ್ದೇಶನ ನೀಡಿದರು. ಅವರು ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಅಹವಾಲುಗಳನ್ನು ಆಲಿಸಿದರು. ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಏರ್‌ ಕಂಡಿಷನಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ ಅವರು, ರೋಗಿಗಳ ಸಂಬಂಧಿಕರಿಗೆ ಕುಳಿತುಕೊಳ್ಳಲು ಹಾಗೂ ಊಟದ ವ್ಯವಸ್ಥೆ ಕಲ್ಪಿಸಲು ಆಯೋಗದಿಂದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಕುರಿತು 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ನಗರದ ವಡವಟ್ಟಿ ಹಾಗೂ ಅಸ್ಕಿಹಾಳ ಪ್ರದೇಶಗಳ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಆಹಾರ ಧಾನ್ಯಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇರಬಾರದು ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕವೇ ದಾಖಲಿಸಬೇಕು ಹಾಗೂ ರಿಜಿಸ್ಟರ್ ಮತ್ತು ಬಯೋಮೆಟ್ರಿಕ್ ಹಾಜರಾತಿಗಳಲ್ಲಿ ವ್ಯತ್ಯಾಸವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ರಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸೂರ್ಯಕಾಂತ್, ಡಾ.ಅರವಿಂದ ಸಾಗವಿ, ಡಾ.ಜಯಕೃಷ್ಣ, ಡಾ.ಸೋಮಶೇಖರ, ಡಾ. ಶರಣಬಸವ ಸೇರಿದಂತೆ ರಿಮ್ಸ್ ಆಸ್ಪತ್ರೆಯ ವಿವಿಧ ವಿಭಾಗದ ಮುಖ್ಯಸ್ಥರು‌, ವಿವಿಧ ವಸತಿ ನಿಲಯಗಳ‌ ನಿಲಯ ಪಾಲಕರು ಇದ್ದರು.

ವಾರ್ತಾ ಭಾರತಿ 16 Apr 2026 6:58 pm

Bengaluru | 11.86 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ಜಪ್ತಿ: 10 ಮಂದಿ ಆರೋಪಿಗಳ ಬಂಧನ

ಬೆಂಗಳೂರು : ಬೆಂಗಳೂರು ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಸುಮಾರು 11.86 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿ, ಇಬ್ಬರು ವಿದೇಶಿ ಮಹಿಳೆಯರು ಹಾಗೂ ಹೊರರಾಜ್ಯದ ಐವರು ಸೇರಿದಂತೆ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ. ನಗರದ ಯಲಹಂಕ, ಡಿ.ಜೆ.ಹಳ್ಳಿ, ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ 5.9 ಕೆ.ಜಿ. ಎಂಡಿಎಂಎ, 1.15 ಕೆ.ಜಿ. ಕೊಕೇನ್, 21 ಕೆ.ಜಿ. ಗಾಂಜಾ ಮತ್ತು 19 ಗ್ರಾಂ ಎಕ್ಸ್‌ ಟೆಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ, ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪೈಕಿ ವಿದೇಶಿ ಮಹಿಳೆಯರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿ ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ವಾರ್ತಾ ಭಾರತಿ 16 Apr 2026 6:54 pm

ಎ.17: ಅಡ್ಯಾರ್ ಕಣ್ಣೂರಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು, ಎ.16: ಗಲ್ಫ್ ಬ್ರದರ್ಸ್ ಅಡ್ಯಾರ್ ಕಣ್ಣೂರು (ರಿ) ಇದರ ವತಿಯಿಂದ ಅಡ್ಯಾರ್ ಕಣ್ಣೂರು ಜಮಾತಿಗೊಳಪಟ್ಟ 13 ಕರಿಯದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ (5, 7, 10, 12ನೇ ತರಗತಿ) ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿ ಯರಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಓರ್ವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮ ಮಾ.17ರಂದು ಮಗ್ರಿಬ್ ನಮಾಝ್ ಬಳಿಕ ಬೋರುಗುಡ್ಡೆ ಬದ್ರಿಯಾ ಹಯಾತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ. ಅದಲ್ಲದೆ ಬ್ಯಾಚುಲರ್ಸ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಪದವಿ ಪಡೆದ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 16 Apr 2026 6:51 pm

Raichur | ಗ್ರಾಮ ಪಂಚಾಯತ್‌ ನೌಕರರ ಸಂಘದಿಂದ ಪ್ರತಿಭಟನೆ

ರಾಯಚೂರು : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಈಗಾಗಲೇ ಇಲಾಖೆ ಒಪ್ಪಿಕೊಂಡಿರುವಂತೆ ಎಲ್ಲಾ ನೌಕರರಿಗೆ 5,000 ರೂ. ವೇತನ ಹೆಚ್ಚಳ ಮಾಡಿ ತಕ್ಷಣ ಆದೇಶ ಹೊರಡಿಸಬೇಕು ಎಂದು ನೌಕರರು ಒತ್ತಾಯಿಸಿದರು. ಜೊತೆಗೆ ನಿವೃತ್ತ ಹಾಗೂ ನಿಧನ ಹೊಂದಿದ ನೌಕರರ ಕುಟುಂಬಗಳಿಗೆ ರೂ.6 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸೇವಾ ಹಿರಿತನದ ಆಧಾರದ ಮೇಲೆ ವೇತನ ನೀಡಬೇಕು ಹಾಗೂ ಸ್ವಚ್ಛವಾಹಿನಿ ನೌಕರರ ಸಭೆ ಕರೆದು ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಬೇಕು. 18–20 ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿರುವ ನೌಕರರನ್ನು ನಿಯಮಿತಗೊಳಿಸಬೇಕು. ಜೊತೆಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಮನವಿ ಮಾಡಿದರು. ಇದಲ್ಲದೆ ಬಾಕಿ ವೇತನ ಹಾಗೂ ನಿವೃತ್ತಿ ಉಪದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ನೌಕರರು ಸರ್ಕಾರವನ್ನು ಒತ್ತಾಯಿಸಿದರು. ಪತ್ರಿಭಟನೆಯಲ್ಲಿ ಮಲ್ಲಿಕಾರ್ಜುನ, ಪಾಂಡುರಂಗ, ಆಂಜಿನೇಯ ಮಾಡಗಿರಿ, ಜಂಬಣ್ಣ, ವೀರೇಶ, ಸುರೇಶ ಮಾನ್ವಿ, ಡಿ. ಶರಣಬಸವ, ಗಿರಿಯಪ್ಪ ಪೂಜಾರಿ, ಅಂಬಣ್ಣ ನಾಯಕ, ಚಂದ್ರು, ಸುಭಾಸ್ ಸಾಬ್, ಶಿವಪ್ಪ ನಾಯಕ, ವೆಂಕಪ್ಪ, ಶರಣಬಸವ, ಷಣ್ಮಖಪ್ಪ, ಶಿವರಾಜಸ್ವಾಮಿ, ಈರಪ್ಪ, ಪಂಚಯ್ಯ, ಬಸವರಾಜಗೌಡ, ಸಗರಪ್ಪ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 16 Apr 2026 6:51 pm

ವಿನೋದ್ ಕಾಂಬ್ಳಿಗೆ ಮತ್ತೆ ಆರೋಗ್ಯ ಸಮಸ್ಯೆ: ನೆರವಿಗೆ ನಿಂತ ಗೆಳೆಯರು; ಆಪ್ತಮಿತ್ರನನ್ನು ಬಿಟ್ಟುಕೊಡದ ತೆಂಡೂಲ್ಕರ್

Vinod Kambli Illness- ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಮೆದುಳಿತ ಪಾರ್ಶ್ವವಾಯು (Stroke) ವಿಗೆ ತುತ್ತಾಗುವ ಅಪಾಯದಲ್ಲಿದ್ದಾರೆ. ಇದರಿಂದಾಗಿ ಅವರು ಸ್ಮರಣಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮಧ್ಯಪಾನ ತ್ಯಜಿಸಿದ್ದರೂ ಧೂಮಪಾನ ಮುಂದುವರಿಸಿರುವುದು ಆರೋಗ್ಯವನ್ನು ಹದಗೆಡಿಸಿದೆ ಎಂದು ಆಪ್ತ ಮಾರ್ಕಸ್ ಕೌಟೊ ತಿಳಿಸಿದ್ದಾರೆ. ಇದೀಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಅವರ ಕೆಲವು ಆಪ್ತಮಿತ್ರ ಸೇರಿ ಕಾಂಬ್ಳಿ ಅವರ ನೆರವಿಗೆ ಧಾವಿಸಿದ್ದಾರೆ. ವಾಟ್ಸಾಪ್ ಗುಂಪನ್ನು ರಚಿಸಿ ಆರ್ಥಿಕ ನೆರವು ನೀಡುತ್ತಿದ್ದಾರೆ.

ವಿಜಯ ಕರ್ನಾಟಕ 16 Apr 2026 6:50 pm

ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯುವುದರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಗಳೂರು, ಎ.16: ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಾಟ ಮಾಡಲಾಗುತ್ತಿದ್ದು, ಇದರ ವಿರುದ್ಧ ಸುಮಾರು 17 ಬಾರಿ ದೂರು ನೀಡಿದರೂ ಕ್ರಮವಾಗಿಲ್ಲ. ಮುಂದಿನ ಶೈಕ್ಷಣಿಕ ಆರಂಭವಾಗುವುದರೊಳಗೆ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಖಾಸಗಿ (ವೈಟ್ ಬೋರ್ಡ್) ವಾಹನದ ಚಾಲಕರು, ಮಾಲಕರು ನಿಯಮ ಮೀರಿ ಮಕ್ಕಳನ್ನು ಖಾಸಗಿ ಕರೆದುಕೊಂಡು ಹೋಗುತ್ತಿದ್ದಾರೆ ಇದು ಅಪಾಯಕಾರಿಯಾಗಿದೆ. ತ್ರಾಸಿಯಲ್ಲಿ ಕೆಲ ವರ್ಷದ ಹಿಂದೆ ಖಾಸಗಿ ವಾಹನದಲ್ಲಿ ವಿದ್ಯಾರ್ಥಿಗಳನ್ನು ಸಾಗಾಟ ಮಾಡಿದ ಸಂದರ್ಭ ದುರ್ಘಟನೆಯಾಗಿತ್ತು. ಈ ಸಂದರ್ಭ ಮಕ್ಕಳಿಗೂ ಸಮರ್ಪಕವಾದ ಪರಿಹಾರವೂ ಸಿಕ್ಕಿಲ್ಲ. ಇಂತಹ ಘಟನೆಗಳು ನಮ್ಮ ಕಣ್ಣ ಮುಂದಿದ್ದರೂ ಮಂಗಳೂರು ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ವಾಹನ ಸಂಚಾರ ನಿಯಮಗಳನ್ನೇ ಉಲ್ಲಂಘಿಸಿ ಖಾಸಗಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದರು. ಟೂರಿಸ್ಟ್ ವಾಹನಗಳ ಮಾಲಕರು ದುಬಾರಿ ತೆರಿಗೆ, ಇನ್ಸೂರೆನ್ಸ್ ಸೇರಿದಂತೆ ಸುಮಾರು 23ಸಾವಿರ ರೂ. ಕಟ್ಟಿ ವಾಹನ ಓಡಿಸುತ್ತಾರೆ. ಸರಕಾರದ ನಿರ್ದೇಶನದಂತೆ ಪ್ಯಾನಿಕ್ ಬಟನ್‌ಗಾಗಿ 14ಸಾವಿರ ರೂ. ಕಟ್ಟಬೇಕಾಗಿದೆ. ಆದರೆ ಖಾಸಗಿ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಗಲಿ, ದುಬಾರಿ ಇನ್ಸೂರೆನ್ಸ್ ಆಗಲಿ, ಯಾವುದೇ ರೀತಿಯ ತೆರಿಗೆಗಳನ್ನು ಪಾವತಿಸದೆ ಬಾಡಿಗೆ ಆಧಾರದಲ್ಲಿ ಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ, ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಸ್ಥಾಪನಾಧ್ಯಕ್ಷ ಮೋಹನ್ ಕುಮಾರ್ ಅತ್ತಾವರ, ಕಾರ್ಯಾಧ್ಯಕ್ಷ ಕಿರಣ್ ಲೇಡಿಹಿಲ್, ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುರತ್ಕಲ್ ಉಪಸ್ಥಿತರಿದ್ದರು. 

ವಾರ್ತಾ ಭಾರತಿ 16 Apr 2026 6:47 pm

Kalaburagi | ಪೋಕ್ಸೋ ಪ್ರಕರಣ: ಆರೋಪಿಗೆ 1.25 ಲಕ್ಷ ರೂ. ದಂಡ, 20 ವರ್ಷ ಕಠಿಣ ಜೈಲು ಶಿಕ್ಷೆ

ಕಲಬುರಗಿ : ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿತನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,25,000 ರೂ. ದಂಡ ವಿಧಿಸಿ ಕಲಬುರಗಿಯ ವಿಶೇಷ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ನಿವಾಸಿ ನಾಗೇಶ ಅಲಿಯಾಸ್ ಸಂಜು (23) ಶಿಕ್ಷೆಗೆ ಒಳಗಾದ ಯುವಕ ಎಂದು ತಿಳಿದುಬಂದಿದೆ. ಪ್ರಕರಣದ ವಿವರಗಳ ಪ್ರಕಾರ, ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 16 ವರ್ಷದ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ಮೋಸಗೊಳಿಸಿದ್ದ ಆರೋಪಿತ ನಾಗೇಶ ಅಲಿಯಾಸ್ ಸಂಜು, ಬಳಿಕ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಕ್ರಮವಾಗಿ ಬಂಧನದಲ್ಲಿಟ್ಟು ಹಲವು ದಿನಗಳ ಕಾಲ ಅತ್ಯಾಚಾರ ಎಸಗಿದ್ದನು. 2024ರ ಸೆ.10ರಿಂದ ನ.6ರವರೆಗೆ ಸುಮಾರು 56 ದಿನಗಳ ಕಾಲ ಬಾಲಕಿಯನ್ನು ಬೆಳ್ಳಂದೂರು ಪ್ರದೇಶದ ಮನೆಯೊಂದರಲ್ಲಿ ಇರಿಸಿಕೊಂಡು, ಜಬರದಸ್ತಿಯಿಂದ ದೌರ್ಜನ್ಯ ಎಸಗಿದ ಬಗ್ಗೆ ತನಿಖೆಯಲ್ಲಿ ಬಹಿರಂಗವಾಗಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವಬೆದರಿಕೆ ಹಾಕಿದ್ದನ್ನೂ ತಿಳಿದುಬಂದಿದೆ. ಘಟನೆಯ ಬಳಿಕ ತನಿಖೆ ನಡೆಸಿದ ಯಡ್ರಾಮಿ ಪೊಲೀಸ್ ಠಾಣೆಯ ಸಿಪಿಐ ರಾಜೇಸಾಹೇಬ ನದಾಫ ಅವರ ನೇತೃತ್ವದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಆರೋಪಿತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಪೋಕ್ಸೋ ಕಾಯ್ದೆಯಡಿ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್‌ ಮುಜೀರ್ ಉಲ್ಲಾ ಸಿ.ಜಿ. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ನಾಗೇಶ ಅಲಿಯಾಸ್ ಸಂಜು (23) ಎಂಬಾತನಿಗೆ ಪೋಕ್ಸೋ ಕಾಯ್ದೆಯ ಕಲಂ 6ರಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿದರು. ದಂಡ ಪಾವತಿಸಲು ವಿಫಲವಾದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದರು. ಇದೇ ಪ್ರಕರಣದಲ್ಲಿ ಬಿಎನ್‌ಎಸ್ ಕಲಂ 137(2) ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ 5 ತಿಂಗಳ ಸಾಧಾ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಇದಲ್ಲದೆ, ಪೀಡಿತ ಬಾಲಕಿಗೆ 3 ಲಕ್ಷ ರೂ. ಪರಿಹಾರವನ್ನು ಕಾನೂನು ಪ್ರಾಧಿಕಾರದಿಂದ ಒಂದು ತಿಂಗಳೊಳಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು.

ವಾರ್ತಾ ಭಾರತಿ 16 Apr 2026 6:46 pm

ಕರ್ನಾಟಕದ 5 ಜಿಲ್ಲೆ ಹೊರತುಪಡಿಸಿ ಎಲ್ಲಾ ಕಡೆ ಮುಂಗಾರು ಕೊರತೆ! ಮಳೆಗಾಲದ ಬಗ್ಗೆ CM ಸಿದ್ದರಾಮಯ್ಯ ಮಹತ್ವದ ಮಾಹಿತಿ

ರಾಜ್ಯದಲ್ಲಿ ಈ ಬಾರಿ ಮುಂಗಾರು ಕೊರತೆಯಾಗಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕ 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಯಲ್ಲಿ ಮುಂಗಾರಿ ನಿರೀಕ್ಷೆ ಮಟ್ಟದಲ್ಲಿ ಇರುವುದಿಲ್ಲ ಎಂದು ಸಿಎಂ ಹೇಳಿದ್ದು, ಅಗತ್ಯ ಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯ ಕರ್ನಾಟಕ 16 Apr 2026 6:45 pm

ಮುಸ್ಲಿಂ ಧಾರ್ಮಿಕ ಗುರುಗಳು ಅಖಾಡಕ್ಕೆ! ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ನಿಂದ ಅನ್ಯಾಯ ಎಂದ ಮೌಲವಿಗಳು

ಕಾಂಗ್ರೆಸ್ ಅಲ್ಪಸಂಖ್ಯಾತ ದಂಗಲ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ದಿನೇಶ್ ಗುಂಡೂರಾವ್ ಯಾವುದೇ ಪಕ್ಷ ಯಾರೋಬ್ಬರ ಮೇಲೆ ನಿಂತಿಲ್ಲ. ಪಕ್ಷ ಯಾರೊಬ್ಬರನ್ನು ಓಲೈಸುವುದಿಲ್ಲ. ಜಮೀರ್ ಅಹ್ಮದ್ ಒಳ್ಳೆಯ ನಾಯಕರು ಹಾಗೂ ಜನಪ್ರಿಯ ನಾಯಕರು. ಗೊಂದಲ ದಾವಣಗೆರೆ ದಕ್ಷಿಣಕ್ಕೆ ಸೀಮಿತವಾದ ವಿಚಾರ ಪಕ್ಷದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕಾಗುತ್ತೆ. ಅದನ್ನು ಮಾಡಿದ್ದಾರೆ. ಪಕ್ಷದಲ್ಲಿ ಯಾರನ್ನು ತುಳಿಯುವುದಿಲ್ಲ ಹಾಗೂ ಯಾವ ಧರ್ಮವನ್ನು ಓಲೈಸುವ ಕೆಲಸ ಮಾಡುತ್ತಿಲ್ಲ. ಜಾತಿ, ಧರ್ಮ ನೋಡಿ ಪರವಾಗಿ ನಿಲ್ಲುವುದಿಲ್ಲ. ಬಿಜೆಪಿಯವರು ಒಬ್ಬರ ಪರವಾಗಿ ಮಾತ್ರ ಧ್ವನಿ ಎತ್ತುತ್ತಾರೆ. ನಾವು ಹಾಗಲ್ಲ ಎಂದು ಪಕ್ಷದ ನಿರ್ಧಾರವನ್ನು ಗುಂಡುರಾವ್ ಸಮರ್ಥನೆ ಮಾಡಿಕೊಂಡಿದ್ದಾರೆ.

ವಿಜಯ ಕರ್ನಾಟಕ 16 Apr 2026 6:43 pm

ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್

ವಾರ್ತಾ ಭಾರತಿ 16 Apr 2026 6:42 pm

ಸಿಬಿಎಸ್‌ಇ ಫಲಿತಾಂಶ: ಪೀಸ್ ಪಬ್ಲಿಕ್ ಸ್ಕೂಲ್‌ಗೆ ಶೇ.100 ಫಲಿತಾಂಶ

ಉಳ್ಳಾಲ: ಸಿಬಿಎಸ್‌ಇ ಫಲಿತಾಂಶ ಪ್ರಕಟಗೊಂಡಿದ್ದು, ಪೀಸ್ ಪಬ್ಲಿಕ್ ಸ್ಕೂಲ್ ಕಲ್ಲಾಪು ಸತತ 13 ನೇ ಬಾರಿಗೆ ಶೇ. 100 ಫಲಿತಾಂಶ ಸಾಧಿಸಿದೆ. ಪರೀಕ್ಷೆ ಬರೆದ ಒಟ್ಟು 76 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗು 42 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಉಮರ್ ಅಹ್ಮದ್ ಪಿ ಶೇ. 93.2, ನೈಮ ಝಯಿನಾಬ್ ಶೇ.90, ಮರಿಯಮ್ ಷರೀಫ್ - ಶೇ.83.8, ಆಯಿಷಾ ಶನೋಮ್ ಶೇ .83.4, ತಾಬಿಶ್ ಬಿನ್ ಅಬ್ದುಲ್ ಜಲೀಲ್ ಶೇ.82.4, ಲಿಬ ಹಂದ ಶೇ. 80.6, ಮೊಹಮ್ಮದ್ ರಹೀಸ್ ಶೇ.79, ಮರಿಯಮ್ ರಿದ ಶೇ.76.6, ಖತೀಜಾ ಮಿಶ್ರಿಯ ತಮನ್ನಾ ಶೇ.76.2 ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಅಬ್ದುಲ್ ರಹಿಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 6:35 pm

SSLC ವಿದ್ಯಾರ್ಥಿಗಳಿಗೆ ಗಮನಕ್ಕೆ: ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆ ಬರೆದಿರುವ ಹಾಗೂ ಬರೆಯಲಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಮಾಹಿತಿ ನೀಡಿದೆ. 2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಕೇವಲ ಗ್ರೇಡ್ ನೀಡುವ ಬದಲು, ಕಡ್ಡಾಯವಾಗಿ ಅಂಕಗಳನ್ನು ನೀಡುವಂತೆ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಹೈಕೋರ್ಟ್

ಒನ್ ಇ೦ಡಿಯ 16 Apr 2026 6:33 pm

ನಮನ್ ತಿವಾರಿಗೆ ಕಾಲು ಮುಟ್ಟಲು ಬಿಡದ ವಿರಾಟ್ ಕೊಹ್ಲಿ: ವಿಡಿಯೋ ಭಾರಿ ವೈರಲ್‌

RCB Vs LSG IPL 2026: ಆರ್‌ಸಿಬಿ ತಂಡವು ಎಲ್‌ಎಸ್‌ಜಿ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಎಲ್‌ಎಸ್‌ಜಿ ಯುವ ಆಟಗಾರ ನಮನ್ ತಿವಾರಿ ಅವರ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಿನ್ನಸ್ವಾಮಿಯಲ್ಲಿ ಬುಧವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಕ್ನೋ

ಒನ್ ಇ೦ಡಿಯ 16 Apr 2026 6:28 pm

ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಅದೇ SDPI ಧ್ವಜ ಡಿಕೆ ಶಿವಕುಮಾರ್‌ ಈರೋಡ್‌ ಪ್ರಚಾರದಲ್ಲಿ ಕಂಡಾಗ..

ರಾಜಕಾರಣ ತುಂಬಾ ವಿಚಿತ್ರ ಮಾತ್ರವಲ್ಲ ಅನುಕೂಲಸಿಂಧು ಕೂಡ ಹೌದು. ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಅನ್ವಯಿಸುತ್ತದೆ. ಒಂದು ಸಿಮೀತ ಪ್ರದೇಶದಲ್ಲಿ ಪರಸ್ಪರ ಬಡಿದಾಡುವ ಈ ಪಕ್ಷಗಳು, ಬೇರೊಂದು ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುತ್ತವೆ. ಇದಕ್ಕೆ ಅದೆಷ್ಟೇ ರಾಜಕೀಯ ಸ್ಪಷ್ಟನೆ ನೀಡಿದರೂ, ಅಧಿಕಾರಕ್ಕಾಗಿ ಇಷ್ಟೆಲ್ಲಾ ಕಸರತ್ತು ನಡೆಯುತ್ತಿದೆ ಎಂಬುದು ಸ್ಪಷ್ಟ. ಅದೇ ರೀತಿ ಕರ್ನಾಟಕದಲ್ಲಿ ಪರಸ್ಪರ ಕತ್ತಿ ಮಸೆಯುವ ಎಸ್‌ಡಿಪಿಐ ಮತ್ತು ಕಾಂಗ್ರೆಸ್‌, ತಮಿಳುನಾಡಿನಲ್ಲಿ ಒಂದೇ ಮೈತ್ರಿಕೂಟದಲ್ಲಿವೆ. ಡಿಕೆ ಶಿವಕುಮಾರ್‌ ಈರೋಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ನಡೆಸಿದ ಚುನಾವಣಾ ಪ್ರಚಾರದಲ್ಲಿ ಎಸ್‌ಡಿಪಿಐ ಧ್ವಜ ರಾರಾಜಿಸಿದೆ.

ವಿಜಯ ಕರ್ನಾಟಕ 16 Apr 2026 6:27 pm

ನಿತ್ಯವೂ ʼಸ್ಕಿನ್‌ ಕೇರ್‌ʼ ಗೆ ಸಮಯ ಸಿಗುವುದಿಲ್ಲವೆ? ಇಲ್ಲಿವೆ ಚರ್ಮದ ರಕ್ಷಣೆಯ ಸಲಹೆಗಳು...

ಹತ್ತು ಹಂತಗಳ ಚರ್ಮದ ಆರೈಕೆ ಉತ್ತಮವಾದರೂ ಅದಕ್ಕೆ ಪರ್ಯಾಯವಾಗಿ 3 ಹಂತದ ಚರ್ಮದ ಆರೈಕೆಯೂ ಪರಿಣಾಮಕಾರಿಯಾಗಿರುತ್ತದೆ. ಎಲ್ಲರಿಗೂ ಸ್ಪಷ್ಟವಾದ ಮತ್ತು ಕಲೆರಹಿತ ಚರ್ಮದ ಕನಸು ಇರುತ್ತದೆ. ಆದರೆ ಗಾಜಿನಂತೆ ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಬೇಕೆಂದರೆ ಶ್ರಮ ಬೇಕಾಗುತ್ತದೆ. ವಿಶೇಷವಾಗಿ ದೈನಂದಿನ ಜೀವನದ ನಿಬಿಡ ಕೆಲಸಗಳ ನಡುವೆ 10 ಹಂತದ ಚರ್ಮದ ಆರೈಕೆಯ ದಿನಚರಿ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ತ್ವರಿತವಾಗಿ ಚರ್ಮದ ಆರೈಕೆಯ ದಾರಿಗಳನ್ನು ಹುಡುಕಬೇಕಾಗುತ್ತದೆ. ಅರ್ಚನಾ ವೆಲ್ನೆಸ್ ಕ್ಲಿನಿಕ್‌ನ ಸಂಸ್ಥಾಪಕಿ ಕಾಸ್ಮೆಟಾಲಜಿಸ್ಟ್ ಅರ್ಚನಾ ಮಾಯೆಕರ್ ಪ್ರಕಾರ, “ಹತ್ತು ಹಂತಗಳ ಚರ್ಮದ ಆರೈಕೆ ಉತ್ತಮವಾದರೂ ಅದಕ್ಕೆ ಪರ್ಯಾಯವಾಗಿ 3 ಹಂತದ ಚರ್ಮದ ಆರೈಕೆಯೂ ಪರಿಣಾಮಕಾರಿಯಾಗಿರುತ್ತದೆ.” ಅರ್ಚನಾ ಹೇಳುವ ಪ್ರಕಾರ ಮೇಕಪ್, ಸನ್‌ಸ್ಕ್ರಿನ್ ಮತ್ತು ಕಲ್ಮಶಗಳನ್ನು ತೊಡೆದು ಹಾಕಲು ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ವಿಷಯದಲ್ಲಿ ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ. ಎರಡನೆಯದಾಗಿ ನಯವಾದ ಸೀರಮ್‌ ಚರ್ಮಕ್ಕೆ ಬಳಸಬೇಕು. ನಿಮ್ಮ ಚರ್ಮಕ್ಕೆ ಸೂಕ್ತವಾಗಿ ಹೊಂದುವ ಸೀರಮ್ ಬಳಸಿ. ಹೈಡ್ರೇಶನ್, ಮೊಡವೆ ಅಥವಾ ಚರ್ಮದ ರಿಪೇರಿಗೂ ಸೀರಮ್ ಒಳ್ಳೆಯದು. ಅಂತಿಮವಾಗಿ ಉತ್ತಮ ಮಾಯ್‌ಶ್ಚರೈಸರ್‌ ಬಳಸುವುದರಿಂದ ಚರ್ಮದ ರಕ್ಷಣೆ ಸಾಧ್ಯವಾಗಲಿದೆ. ವಿವರವಾಗಿ ಹೇಳುವುದಾದಲ್ಲಿ ಮೂರು ಹಂತದ ಚರ್ಮದ ರಕ್ಷಣೆಯಲ್ಲಿ ಮೊದಲನೆಯದು ಸ್ವಚ್ಛತೆ. ಅಂದರೆ ಚರ್ಮದ ಶುದ್ಧೀಕರಣ. ದಿನವಿಡೀ ಚರ್ಮ ಕೊಳಕು, ಎಣ್ಣೆ, ಬೆವರು ಮತ್ತು ಮಾಲಿನ್ಯಕಾರಕಗಳನ್ನು ಸಂಗ್ರಹಿಸುತ್ತವೆ. ಹೀಗಾಗಿ ಸಂಜೆ ಉತ್ತಮ ಕ್ಲೆನ್ಸರ್‌ನಿಂದ ಮುಖವನ್ನು ಸ್ವಚ್ಛಗೊಳಿಸಬಹುದು. ಮುಖ್ಯವಾಗಿ ಕಲ್ಮಶಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಮುಚ್ಚಿ ಹೋಗಿರುವ ರಂಧ್ರಗಳು ಮತ್ತು ಒಡೆಯುವುದರಿಂದ ಇದು ರಕ್ಷಿಸುತ್ತದೆ. ನಿಮ್ಮ ಚರ್ಮಕ್ಕೆ ಸೂಕ್ತವಾದ ಕ್ಲೆನ್ಸರ್‌ ಆಯ್ಕೆ ಮಾಡಬೇಕು. ಜೆಲ್ ಕ್ಲೆನ್ಸರ್‌ಗಳು ಎಣ್ಣೆಮಯ ಚರ್ಮಕ್ಕೆ ಸೂಕ್ತ. ಕ್ರೀಮ್ ಆಧಾರಿತ ಕ್ಲೆನ್ಸರ್‌ಗಳು ಒಣ ಅಥವಾ ಸೂಕ್ಷ್ಮ ಚರ್ಮಕ್ಕೆ ಉತ್ತಮ. ಬೆಳಿಗ್ಗೆ ಮತ್ತು ಮಲಗುವ ಮೊದಲು ಎರಡು ಬಾರಿ ಸ್ವಚ್ಛಗೊಳಿಸಿದಲ್ಲಿ ಚರ್ಮವನ್ನು ತಾಜಾ ಮತ್ತು ಸ್ವಚ್ಛವಾಗಿಡುತ್ತವೆ. ಎರಡನೆಯದು ಚಿಕಿತ್ಸೆ. ಅಂದರೆ ಮೊಡವೆ, ವರ್ಣದ್ರವ್ಯ, ಮಂದತೆ ಅಥವಾ ಸೂಕ್ಷ್ಮ ರೇಖೆಗಳಂತಹ ನಿರ್ದಿಷ್ಟ ಚರ್ಮದ ಸಮಸ್ಯೆಗಳಿಗೆ ಉತ್ತಮ. ಸೀರಮ್‌ಗಳು ಅಥವಾ ಟೋನರ್‌ಗಳಂತಹ ಉತ್ಪನ್ನಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸೀರಮ್‌ಗಳು ಅಥವಾ ಟೋನರ್‌ಗಳು ಸಕ್ರಿಯ ಅಂಶಗಳನ್ನು ಹೊಂದಿರುತ್ತವೆ. ಉದಾಹರಣೆಗೆ ವಿಟಮಿನ್ ಸಿ ಸೀರಮ್‌ಗಳು ಚರ್ಮವನ್ನು ಬೆಳಗಿಸಲು ಸಹಾಯ ಮಾಡುತ್ತವೆ. ಆದರೆ ಸ್ಯಾಲಿಸಿಲಿಕ್ ಆಮ್ಲವು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಶುದ್ಧೀಕರಣದ ನಂತರ ಚಿಕಿತ್ಸಾ ಉತ್ಪನ್ನಗಳನ್ನು ಅನ್ವಯಿಸುವುದರಿಂದ ಆಳವಾಗಿ ಭೇದಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಮೂರನೆಯದು ಮಾಯಿಶ್ಚರೈಸಿಂಗ್. ಅಂದರೆ ಚರ್ಮದ ಪ್ರಕಾರ ಏನೇ ಇರಲಿ ಹೈಡ್ರೇಶನ್ ಮುಖ್ಯ. ಪಾಯಿಶ್ಚರೈಸರ್ ತೇವಾಂಶ ಉಳಿಸಿಕೊಳ್ಳಲು ನೆರವಾಗುತ್ತದೆ. ಚರ್ಮದ ತಡೆಗೋಡೆ ಬಲಪಡಿಸುತ್ತದೆ. ಚರ್ಮವನ್ನು ಮೃದು ಮತ್ತು ನಯವಾಗಿಸುತ್ತದೆ. ಎಣ್ಣೆಯುಕ್ತ ಚರ್ಮಕ್ಕೂ ಸಮತೋಲನ ಕಾಪಾಸಿಕೊಳ್ಳಲು ಹಗುರ, ಕಾಮೆಡೋಜೆನಿಕ್ ಅಲ್ಲದ ಮಾಯಿಶ್ಚರೈಸರ್ ಅಗತ್ಯವಿದೆ. ಉತ್ಕೃಷ್ಟ ಕ್ರೀಮ್ ರಾತ್ರಿ ನಿದ್ರೆ ಮಾಡುವಾಗ ಚರ್ಮದ ದುರಸ್ತಿಗೆ ಬೆಂಬಲ ನೀಡುತ್ತದೆ. ಈ ಮೂರು ಹಂತದ ಚರ್ಮದ ಆರೈಕೆ ದಿನಚರಿಯು ಚರ್ಮವನ್ನು ಗಮನಿಸಿಕೊಳ್ಳಲು ಸರಳ ಮತ್ತು ಶಕ್ತಿಯುತ ಮಾರ್ಗವಾಗಿದೆ. ಸ್ಥಿರತೆ ಮತ್ತು ಸರಿಯಾದ ಉತ್ಪನ್ನಗಳೊಂದಿಗೆ ಕಾಲಾನಂತರದಲ್ಲಿ ಆರೋಗ್ಯಕರ ಮತ್ತು ಹೆಚ್ಚು ಕಾಂತಿಯುತ ಚರ್ಮವನ್ನು ಪಡೆಯಬಹುದು. ಸೂಚನೆ: ಈ ಲೇಖನವನ್ನು ಮಾಧ್ಯಮಗಳಲ್ಲಿ ಪ್ರಕಟವಾದ ವಿವರಗಳಿಂದ ಬರೆಯಲಾಗಿದೆ. ತಜ್ಞರ ಸಲಹೆಗಳಿಗೆ ಪರ್ಯಾಯವಲ್ಲ. ಚರ್ಮದ ಸಮಸ್ಯೆಗಳು ಅಥವಾ ಮೇಕಪ್‌ಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ ವೃತ್ತಿಪರ ವೈದ್ಯರು ಅಥವಾ ತಜ್ಞರ ಸಲಹೆಗಳನ್ನು ಪಡೆಯುವುದು ಉತ್ತಮ. ಕೃಪೆ: hindustantimes.com

ವಾರ್ತಾ ಭಾರತಿ 16 Apr 2026 6:24 pm

Kerala | ವಿಷ್ಣು ಉತ್ಸವ ಆಚರಣೆ ವೇಳೆ ಕೈಯಲ್ಲಿದ್ದ ಪಟಾಕಿ ಸ್ಫೋಟಗೊಂಡು ವ್ಯಕ್ತಿ ಮೃತ್ಯು

ಪಾಲಕ್ಕಾಡ್: ವಿಷ್ಣು ಉತ್ಸವ ಆಚರಣೆಯ ವೇಳೆ ಕೈಯಲ್ಲಿ ಹಿಡಿದಿದ್ದ ಪಟಾಕಿ ಸ್ಫೋಟಗೊಂಡು 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶ್ರೀಕೃಷ್ಣಪುರಂನಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಶ್ರೀಕಕೃಷ್ಣಪುರಂ ನಿವಾಸಿ ದಿಲೀಪ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ವಿಷ್ಣು ಉತ್ಸವ ಆಚರಣೆಯ ಭಾಗವಾಗಿ ದಿಲೀಪ್ ಹಾಗೂ ಅವರ ಸ್ನೇಹಿತರು ಬುಧವಾರ ಸಂಜೆ ಸುಮಾರು 8.30ಕ್ಕೆ ಶ್ರೀುಕೃಷ್ಣಪುರಂನ ಕ್ಲಬ್ ಒಂದರ ಬಳಿ ಪಟಾಕಿ ಸಿಡಿಸುತ್ತಿದ್ದರು ಎನ್ನಲಾಗಿದೆ. ಒಂದಷ್ಟು ಪಟಾಕಿಗಳನ್ನು ತನ್ನ ಒಂದು ಕೈಯಲ್ಲಿ ಹಿಡಿದುಕೊಂಡು, ಮತ್ತೊಂದು ಪಟಾಕಿಗೆ ದಿಲೀಪ್ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಟಾಕಿ ಸ್ಫೋಟದ ವೇಳೆ ಸಿಡಿದ ಕಿಡಿಯೊಂದು ದಿಲೀಪ್ ಕೈಯಲ್ಲಿ ಹಿಡಿದಿದ್ದ ಪಟಾಕಿಗಳಿಗೆ ತಾಕಿದ್ದು, ಅವು ಸ್ಫೋಟಗೊಂಡು ಅವರು ಗಂಭೀರವಾಗಿ ಗಾಯಗೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ. ತಕ್ಷಣವೇ ದಿಲೀಪ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ಸುಮಾರು 10.30ರ ವೇಳೆಗೆ ಮೃತಪಟ್ಟಿದ್ದಾರೆ. ಈ ಅವಘಡದ ಬೆನ್ನಿಗೇ ಸಂಭವಿಸಿದ ಹೃದಯಸ್ತಂಭನದಿಂದ ದಿಲೀಪ್ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿಕೊಂಡಿರುವ ಶ್ರೀ ಕೃಷ್ಣಪುರಂ ಠಾಣೆಯ ಪೊಲೀಸರು, ತನಿಖೆ ಪ್ರಾರಂಭಿಸಿದ್ದಾರೆ.

ವಾರ್ತಾ ಭಾರತಿ 16 Apr 2026 6:21 pm

ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ: ಮಹಿಳೆಯರು, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಿಗೆ ಆಹ್ವಾನ

ಮಂಗಳೂರು, ಎ.16: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ದೇರಳಕಟ್ಟೆಯ ’ಮೇಲ್ತೆನೆ’ ಸಂಘಟನೆಯ ಸಹಯೋಗದೊಂದಿಗೆ ಮೇ 5ರಂದು ಮುಡಿಪು ನಂದರಪದವು ಎಸ್.ಕೆ ಮಲ್ಟಿಪರ್ಪಸ್ ಹಾಲ್‌ನಲ್ಲಿ ಆಯೋಜಿಸಿರುವ ಉಳ್ಳಾಲ ತಾಲೂಕು ಮಟ್ಟದ ಮೂರನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರಿಗೆ ಮೆಹಂದಿ ವಿನ್ಯಾಸ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದಿಂದ ಬ್ಯಾರಿಗೆ ಭಾಷಾಂತರ ಮತ್ತು ಬ್ಯಾರಿ ಆಶು ಭಾಷಣ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಸ್ಪರ್ಧೆಗೂ ರೂ.3,000, ರೂ.2,000, ರೂ.1,000 ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಭಾಷಾಂತರ ಸ್ಪರ್ಧೆಗೆ ಸಮ್ಮೇಳನದಂದೇ ವಿಷಯ ನೀಡಲಾಗುವುದು. ಆಶು ಭಾಷಣದ ವಿಷಯವನ್ನು ಸ್ಪರ್ಧೆಗೆ 30 ನಿಮಿಷ ಮುಂಚಿತವಾಗಿ ನೀಡಲಾಗುವುದು. ಮೆಹಂದಿ ಸ್ಪರ್ಧೆಗೆ 30 ನಿಮಿಷಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಉಳ್ಳಾಲ ತಾಲೂಕು ಮಟ್ಟದ ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತರು ಎ.30ರ ಒಳಗಾಗಿ ಮೊ.ಸಂ: 9449902192/ 9980772865/9742937692 ಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಹೆಸರು ಭಾಗವಹಿಸುವ ಸ್ಪರ್ಧೆ ಹಾಗೂ ಮೊಬೈಲ್ ಸಂಖ್ಯೆಯನ್ನು ಕಳುಹಿಸಿ ಹೆಸರನ್ನು ನೋಂದಾಯಿಸಬಹುದು ಎಂದು ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ವಾರ್ತಾ ಭಾರತಿ 16 Apr 2026 6:18 pm

ಡಾ.ಸಂಜೀವ ದಂಡಕೇರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ

ಮಂಗಳೂರು: ಬೆಂಗಳೂರಿನ ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ಸಂಸ್ಥೆಯು ರಾಷ್ಟ್ರ - ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಅಸಾಧಾರಣ ಸಾಧಕರಿಗೆ ನೀಡುವ 51ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಕರಾವಳಿ ಕರ್ನಾಟಕದ ಶ್ರೇಷ್ಠ ನಾಟಕಕಾರ, ತುಳು ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ಡಾ. ಸಂಜೀವ ದಂಡಕೇರಿ ಆಯ್ಕೆಯಾಗಿದ್ದಾರೆ. ನಾಟಕ ರಂಗದೊಂದಿಗೆ ಡಾ.ದಂಡಕೇರಿಯವರು ಮಾಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. *ವೈದ್ಯಕೀಯದಿಂದ ರಂಗಭೂಮಿಗೆ: ಆಯುರ್ವೇದ ವೈದ್ಯರಾಗಿರುವ ಡಾ.ಸಂಜೀವ ದಂಡಕೇರಿ ತುಳು ಭಾಷೆಯಲ್ಲಿ ಸುಮಾರು 20 ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಅವರ ಪ್ರಥಮ ನಾಟಕ ’ಕಲ್ಪಂದಿ ತಿಮ್ಮೆ’ 1962ರಲ್ಲಿ ರಂಗ ಪ್ರದರ್ಶನಗೊಂಡಿದೆ. ಅವರಿಗೆ ಅಪಾರ ಜನಮನ್ನಣೆ ತಂದುಕೊಟ್ಟ ’ಬಯ್ಯ ಮಲ್ಲಿಗೆ’ ತುಳು ನಾಟಕ ಕಳೆದ 58 ವರ್ಷಗಳಲ್ಲಿ ದೇಶ - ವಿದೇಶಗಳಲ್ಲಿ ಸುಮಾರು 28 ಸಾವಿರ ಪ್ರದರ್ಶನಗಳನ್ನು ಕಂಡು ಮುನ್ನಡೆಯುತ್ತಿದೆ. ಉಳಿ ದಂತೆ ಪೊಣ್ಣ ಜನ್ಮ, ಕಾವೇರಿ, ಬೊಲ್ಲಿ ಮೂಡ್‌ಂಡ್, ಪೂ ಪನ್ನೀರ್, ಪಾದ ಕಾಣಿಕೆ, ಸರಸ್ವತಿ, ಒಂಜೇ ಕರ್ಲ್, ಗಂಗಾ ರಾಮ್ ನೂರಾರು ಪ್ರದರ್ಶನ ಕಂಡ ನಾಟಕಗಳು. ದಂಡಕೇರಿಯ ’ಬಯ್ಯ ಮಲ್ಲಿಗೆ’ 1975ರಲ್ಲಿ ಚಲನಚಿತ್ರವಾಗಿ ಮಂಗಳೂರಿನ ಜ್ಯೋತಿ ಮತ್ತು ರಾಮಕಾಂತಿ ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿತು. ಶ್ರೀ ಜಯರಾಮ್ ಫಿಲಂಸ್‌ನಡಿ ನಿರ್ಮಾಣಗೊಂಡ ಈ ತುಳು ಚಿತ್ರದ ಕಥೆ, ಚಿತ್ರಕಥೆ - ಸಂಭಾಷಣೆಗಳನ್ನು ಅವರೇ ಬರೆದಿದ್ದು ಸ್ವತ: ನಟಿಸಿರುವುದು ವಿಶೇಷ. ಮುಂದೆ 1977ರಲ್ಲಿ ’ಬೊಳ್ಳಿದೋಟ’ ಚಿತ್ರವನ್ನು ನಿರ್ಮಿಸಿ ಕಥೆ, ಚಿತ್ರಕಥೆ - ಸಂಭಾಷಣೆಯೊಂದಿಗೆ ನಟನೆಯನ್ನೂ ಮಾಡಿದ್ದಾರೆ. ’ಕುಂಕುಮ ಸಾಕ್ಷಿ’ ಚಲನ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಅವರದೇ. ರಂಗಭೂಮಿ ಮತ್ತು ಚಲನಚಿತ್ರಗಳ ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಡಾ. ದಂಡಕೇರಿ ತೊಡಗಿಸಿಕೊಂಡಿ ದ್ದರು. ಎರಡು ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾಗಿ, ಎಯ್ಯಾಡಿ ರಾಮ ಮಂದಿರ ಹಾಗೂ ನಾರ್ಥ್ ರೋಟರಿ ಕ್ಲಬ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. *ಪ್ರಶಸ್ತಿ - ಗೌರವಗಳು: ನಾಟಕ ರಂಗದ ಸೇವೆಗಾಗಿ ಡಾ. ಸಂಜೀವ ದಂಡಕೇರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ (2000), ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ (2002), ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ (2004), ಕುವೆಂಪು ವಿಶ್ವ ರತ್ನ ಪ್ರಶಸ್ತಿ (2005), ಬುದ್ಧ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ (2012) ಲಭಿಸಿವೆ. 2005ರಲ್ಲಿ ಸಿಂಗಾಪುರದಲ್ಲಿ ನಡೆದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಿ ’ಗ್ಲೋಬಲ್ ಮ್ಯಾನ್ ಅವಾರ್ಡ್’ ಪಡೆದಿದ್ದಾರೆ. ಮಂಗಳೂರಿನ ಪುರಭವನದಲ್ಲಿ ರಂಗ ಮಲ್ಲಿಗೆ (2001), ರಂಗ ಸೌರಭ (2002), ತೌಳವ ಪ್ರಶಸ್ತಿ (2008) ಮತ್ತು ರಂಗ ಚಾವಡಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ತುಳು ಸಿನಿಮೋತ್ಸವ 2(018), ವಿಶ್ವ ತುಳುವರೆ ಆಯನೊ (2016) ಮತ್ತು ಮೂಲ್ಕಿ ತುಳು ಸಮ್ಮೇಳನಗಳಲ್ಲಿ ’ಜೀವಮಾನ ಸಾಧನಾ ಪ್ರಶಸ್ತಿ’ಗಳು ಲಭಿಸಿವೆ. ದೇಶ - ವಿದೇಶದ ವಿವಿಧ ಸಂಘ ಸಂಸ್ಥೆಗಳಿಂದ ನೂರಾರು ಸನ್ಮಾನ - ಗೌರವಗಳನ್ನು ಪಡೆದಿದ್ದಾರೆ. *ಪ್ರಶಸ್ತಿ ಪ್ರದಾನ: ಮೇ 23ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಸಂಜೀವ ದಂಡಕೇರಿ 2026ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸುವರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 16 Apr 2026 6:15 pm

ಕಟ್ಟಿದ ಮೂಗಿಗೆ ಕೊತ್ತಂಬರಿ ಪರಿಮಳ! ವೈದ್ಯರ ಸಲಹೆಗಳೇನು?

ಕೆಲವು ಕೊತ್ತಂಬರಿ ಬೀಜಗಳನ್ನು ಬಾಣಲೆಯಲ್ಲಿ ಹುರಿದು ನಂತರ ಅವುಗಳನ್ನು ಟಿಶ್ಯೂ ಪೇಪರ್ ಮೇಲೆ ಇರಿಸಿ ಪರಿಮಳ ಸೇವಿಸುವುದು ಉಪಯುಕ್ತವೆ? ಅಡುಗೆ ಮತ್ತು ಸಾಂಪ್ರದಾಯಿಕ ಔಷಧಿಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಕೊತ್ತಂಬರಿ ಬೀಜಗಳು ಆರೋಗ್ಯ ಪ್ರಯೋಜನಗಳಿಗಾಗಿ ಪ್ರಸಿದ್ಧಿ ಪಡೆದಿವೆ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೊತ್ತಂಬರಿಯ ಇತರ ಲಾಭಗಳೂ ಸುದ್ದಿಯಾಗುತ್ತಿವೆ. ಮೂಗು ಕಟ್ಟಿಕೊಂಡಿರುವುದು, ಶೀತ ಮತ್ತು ಕೆಮ್ಮಿನಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳಿಗೂ ಉತ್ತಮ ಪರಿಹಾರ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ಶೈಲಿಯ ಪ್ರಕಾರ, ಕೆಲವು ಕೊತ್ತಂಬರಿ ಬೀಜಗಳನ್ನು ಬಾಣಲೆಯಲ್ಲಿ ಹುರಿದು ನಂತರ ಅವುಗಳನ್ನು ಟಿಶ್ಯೂ ಪೇಪರ್ ಮೇಲೆ ಇರಿಸಿ. ಅದನ್ನು ಚೆನ್ನಾಗಿ ಸುತ್ತಿಕೊಳ್ಳಿ ಮತ್ತು ಬೀಜಗಳ ವಾಸನೆ ಸ್ವೀಕರಿಸಿ. ಇದರಿಂದ ಉಸಿರಾಟದ ಮಾರ್ಗದಲ್ಲಿ ಕಟ್ಟಿಕೊಂಡಿರುವ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ವಿಧಾನ ಕೆಲಸ ಮಾಡುತ್ತದೆಯೆ? : ಹೊಸದಿಲ್ಲಿಯ ಕಾಸ್ಮೆಟಿಕ್ ಸ್ಕಿನ್ ಆಂಡ್ ಹೋಮಿಯೋ ಕ್ಲಿನಿಕ್ನ ಕಾಸ್ಮೆಟಾಲಜಿಸ್ಟ್ ಡಾ. ಕರುಣಾ ಮಲ್ಹೋತ್ರಾ ಪ್ರಕಾರ ಕೊತ್ತಂಬರಿ ಬೀಜಗಳು ಉಸಿರಾಟದ ಬೆಂಬಲಕ್ಕೆ ಸಹಾಯ ಮಾಡುತ್ತವೆ. ಕೊತ್ತಂಬರಿ ಬೀಜದಲ್ಲಿ ಆಂಟಿಆಕ್ಸಿಡಂಟ್ಗಳು ಮತ್ತು ಉರಿಯೂತದ ಸಂಯುಕ್ತಗಳು ಸಮೃದ್ಧವಾಗಿವೆ. ಅವು ಶ್ವಾಸನಾಳದ ಸ್ನಾಯುಗಳ ಶಮನಕ್ಕೆ ಮತ್ತು ಉಸಿರಾಟ ಸುಗಮಗೊಳಿಸಲು ನೆರವಾಗುತ್ತವೆ. ಕೊತ್ತಂಬರಿ ಬೀಜಗಳಲ್ಲಿ ಕಂಡುಬರುವ ಅಗತ್ಯ ಎಣ್ಣೆಗಳು, ಮುಖ್ಯವಾಗಿ ಲಿನಲೂಲ್ ಉಸಿರಾಟದ ಸ್ಥಳದಲ್ಲಿ ಲೋಳೆ ಮತ್ತು ಕಫವನ್ನು ತೆರವುಗೊಳಿಸಲು ಸಹಾಯ ಮಾಡುವ ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿವೆ. ಇವು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉಪಯುಕ್ತ. ಹೆಚ್ಚುವರಿಯಾಗಿ ಕೊತ್ತಂಬರಿ ಬೀಜಗಳು ಉಸಿರಾಟದ ಮಾರ್ಗದಲ್ಲಿ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಸ್ತಮಾ ಅಥವಾ ಇತರ ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಸಂಭಾವ್ಯ ಪರಿಹಾರ ನೀಡುತ್ತದೆ” ಎನ್ನುತ್ತಾರೆ ಕರುಣಾ ಮಲ್ಹೋತ್ರ. ಕೊತ್ತಂಬರಿ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಸರಳವಾಗಿರಬಹುದು. “ಹುರಿದ ಕೊತ್ತಂಬರಿಯ ಪರಿಮಳ ಹೀರುವ ಜೊತೆಗೆ ಅದನ್ನು ಸೂಪ್ಗಳು, ಸ್ಟ್ಯೂಟಗಳು ಅಥವಾ ಮಸಾಲೆಗಳ ಜೊತೆಗೆ ಸೇರಿಸಿಯೂ ಸೇವಿಸಬಹುದು. ಚಹಾ ರೀತಿಯಲ್ಲಿ ಕೊತ್ತಂಬರಿ ಬೀಜವನ್ನು ಬೇಯಿಸಿ ಕೂಡ ಸೇವಿಸಬಹುದು. ಅಂದರೆ ಕೊತ್ತಂಬರಿ ಬೀಜ ಹುಡಿ ಮಾಡಿಟ್ಟು ಅದನ್ನು ಬಿಸಿ ನೀರಿನಲ್ಲಿ ಕುದಿಸಿ ಸೇವಿಸಬಹುದು” ಎನ್ನುತ್ತಾರೆ ಕರುಣಾ. ಸಣ್ಣ ಪುಟ್ಟ ಉಸಿರಾಟದ ಸಮಸ್ಯೆಯನ್ನು ಕೊತ್ತಂಬರಿ ಬೀಜಗಳು ಸರಿಪಡಿಸಬಹುದಾದರೂ ದೊಡ್ಡ ಪ್ರಮಾಣದಲ್ಲಿ ಉಸಿರಾಟದ ಸಮಸ್ಯೆ ಇರುವವರಿಗೆ ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ಪರ್ಯಾಯವಾಗದು. ಸೂಚನೆ: ಈ ಲೇಖನವನ್ನು ಮಾಧ್ಯಮಗಳಲ್ಲಿ ಪ್ರಕಟವಾದ ವಿವರಗಳಿಂದ ಬರೆಯಲಾಗಿದೆ. ತಜ್ಞರ ಸಲಹೆಗಳಿಗೆ ಪರ್ಯಾಯವಲ್ಲ. ಉಸಿರಾಟದ ಸಮಸ್ಯೆಗಳು ಮತ್ತು ಕೊತ್ತಂಬರಿ ಬೀಜದ ಸದುಪಯೋಗಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ ವೃತ್ತಿಪರ ವೈದ್ಯರು ಅಥವಾ ತಜ್ಞರ ಸಲಹೆಗಳನ್ನು ಪಡೆಯುವುದು ಉತ್ತಮ.

ವಾರ್ತಾ ಭಾರತಿ 16 Apr 2026 6:14 pm

ಮಹಿಳಾ ಮೀಸಲಾತಿ ಮಸೂದೆ: ಲೋಕಸಭೆಯಲ್ಲಿ ಸೀಟು ಹಂಚಿಕೆ ಮತ್ತು ಕ್ಷೇತ್ರ ಮರುವಿಂಗಡಣೆ ರಾಜಕೀಯ ನಕ್ಷೆಯನ್ನು ಹೇಗೆ ಮರುರೂಪಿಸುತ್ತದೆ?

ಶಾಸಕಾಂಗಗಳಲ್ಲಿ ಶೇಕಡಾ 33 ರಷ್ಟು ಮಹಿಳಾ ಕೋಟಾವನ್ನು ಕೋರುವ ಮಸೂದೆಗಳಾದ ನಾರಿ ಶಕ್ತಿ ವಂದನ್ ಅಧಿನಿಯಮ್ ಅನ್ನು ಕೇಂದ್ರವು ಗುರುವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಂವಿಧಾನ (131ನೇ ತಿದ್ದುಪಡಿ) ಮಸೂದೆ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ 2026 ಅನ್ನು ಮಂಡಿಸಿದರೆ, ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2026 ಅನ್ನು ಮಂಡಿಸಲು ಪ್ರಸ್ತಾಪಿಸಿದರು. ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಮಸೂದೆಗಳ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಕೆಲವು ಉದ್ದೇಶಗಳಿಗಾಗಿ ರಾಷ್ಟ್ರದ ಸಾಂವಿಧಾನಿಕ ರಚನೆಯನ್ನು ಬದಲಾಯಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ಲೋಕಸಭೆ ಸ್ಪೀಕರ್ ಮಧ್ಯಪ್ರವೇಶಿಸಿ, ನಿಯಮ 72 ರ ಸಮಯದಲ್ಲಿ ತಮ್ಮ ವಾದಗಳನ್ನು ಕಾಯ್ದಿರಿಸುವಂತೆ ಕೇಳಿಕೊಂಡಿದ್ದು, ಪೂರ್ಣ ಪ್ರಮಾಣದ ಚರ್ಚೆಯ ಸಮಯದಲ್ಲಿ ತಮ್ಮ ಆಕ್ಷೇಪಣೆಗಳನ್ನು ಮಂಡಿಸಲು ಸಾಕಷ್ಟು ಸಮಯವನ್ನು ಒದಗಿಸುವುದಾಗಿ ವಿರೋಧ ಪಕ್ಷಗಳಿಗೆ ಭರವಸೆ ನೀಡಿದರು. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಏನಿದೆ? ನಾರಿ ಶಕ್ತಿ ವಂದನ್ ಅಧಿನಿಯಮ್ ಎಂಬ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಬಯಸುವ ಸಾಂವಿಧಾನಿಕ ತಿದ್ದುಪಡಿಯಾಗಿದೆ. ಪ್ರಸ್ತಾವಿತ ಬದಲಾವಣೆಗಳು ಜಾರಿಗೆ ಬಂದರೆ, ಭಾರತದ ಸಂಸತ್ತಿನ ಆಕಾರವು ಗಾತ್ರ ಮತ್ತು ಪ್ರಾತಿನಿಧ್ಯ ಎರಡರಲ್ಲೂ ಮೂಲಭೂತವಾಗಿ ಬದಲಾಗುತ್ತದೆ. ಲೋಕಸಭೆಯು ಪ್ರಸ್ತುತ 543 ಸ್ಥಾನಗಳಿಂದ 850 ಕ್ಕೆ ಗಮನಾರ್ಹವಾಗಿ ವಿಸ್ತರಿಸುವ ನಿರೀಕ್ಷೆಯಿದೆ. ಈ ವಿಸ್ತೃತ ಸದನದೊಳಗೆ, ಮೂರನೇ ಒಂದು ಭಾಗದಷ್ಟು ಸ್ಥಾನಗಳು ಅಂದರೆ ಸುಮಾರು 283 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುತ್ತವೆ. ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಅಂತಹ ಕೋಟಾವನ್ನು ಜಾರಿಗೆ ತರಲಾಗುತ್ತಿದೆ. ಈ ಮಸೂದೆಯನ್ನು 2023 ರಲ್ಲಿ ಅಂಗೀಕರಿಸಲಾಯಿತು. ಇದು 2027 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಪೂರ್ಣಗೊಂಡ ನಂತರವೇ ಕೋಟಾ ಜಾರಿಗೆ ಬರುತ್ತದೆ. ಅಂದರೆ 2034 ರ ಮೊದಲು ಮೂಲ ಕಾನೂನಿನ ಅಡಿಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕೇಂದ್ರವು ಡಿಲಿಮಿಟೇಶನ್ ಮಸೂದೆಯನ್ನು ಮಂಡಿಸಿದೆ. ► ಕ್ಷೇತ್ರ ಮರುವಿಂಗಡಣೆ ಅಥವಾ ಡಿಲಿಮಿಟೇಷನ್ ಎಂದರೇನು? 2029 ರ ಸಾರ್ವತ್ರಿಕ ಚುನಾವಣೆಯಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆಯಾದ ಸ್ಥಾನಗಳ ಅನುಪಾತವನ್ನು ಬದಲಾಯಿಸದೆ ಮಹಿಳೆಯರಿಗೆ ಶೇ. 33 ರಷ್ಟು ಸ್ಥಾನಗಳನ್ನು ಮೀಸಲಿಡಲು ಸರ್ಕಾರ ಮುಂದಾಗಿರುವುದರಿಂದ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಜನಸಂಖ್ಯೆಯ ಆಧಾರದ ಮೇಲೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಕ್ಷೇತ್ರಗಳನ್ನು ಮರುವಿಂಗಡಿಸುವ ಪ್ರಕ್ರಿಯೆಯಾಗಿದೆ ಇದು. ಪ್ರತಿ ಜನಗಣತಿಯ ನಂತರ ಈ ಪ್ರಕ್ರಿಯೆ ಕೈಗೊಳ್ಳಬೇಕೆಂದು ಸಂವಿಧಾನದ 82ನೇ ವಿಧಿ ಆದೇಶಿಸುತ್ತದೆ. 1952 ರಿಂದ ಪ್ರತಿ ದಶಕದಲ್ಲಿ ಮೂರು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳಲಾಗಿದ್ದರೂ, 1976 ರಲ್ಲಿ 42 ನೇ ಸಾಂವಿಧಾನಿಕ ತಿದ್ದುಪಡಿಯು 2001 ರ ಜನಗಣತಿಯ ನಂತರ ಪರಿಷ್ಕರಣೆಯನ್ನು ಸ್ಥಗಿತಗೊಳಿಸಿತು. ಇದು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543 ಕ್ಕೆ ಸ್ಥಗಿತಗೊಳಿಸಿತು. ಸಂವಿಧಾನವು ಸಂಸತ್ತಿಗೆ ಕ್ಷೇತ್ರ ಮರು ವಿಂಗಡಣೆ ನಿರ್ಧರಿಸಲು ಅಧಿಕಾರ ನೀಡುತ್ತದೆ. ಸರ್ಕಾರವು ಕ್ಷೇತ್ರ ಮರು ವಿಂಗಡಣೆ ಆಯೋಗವನ್ನು ಸ್ಥಾಪಿಸಲು ಮಸೂದೆಯನ್ನು ಮಂಡಿಸುತ್ತಿದೆ. ಆಯೋಗವನ್ನು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನೇತೃತ್ವ ವಹಿಸಲು ಪ್ರಸ್ತಾಪಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಅಥವಾ ಅವರ ನಾಮನಿರ್ದೇಶಿತರು ಸದಸ್ಯರಾಗಿದ್ದಾರೆ. ►ವಿರೋಧ ಪಕ್ಷಗಳು ವಿರೋಧಿಸುತ್ತಿರುವುದೇಕೆ? ಮಹಿಳಾ ಕೋಟಾ ಮಸೂದೆಯನ್ನು ಬೆಂಬಲಿಸುತ್ತಿದ್ದರೂ, 2029 ರ ಲೋಕಸಭಾ ಚುನಾವಣೆಗೆ ಮುನ್ನ ಅದನ್ನು ಕ್ಷೇತ್ರ ಮರು ವಿಂಗಡಣೆ ಜತೆ ಜೋಡಿಸುವ ಸರ್ಕಾರದ ಕ್ರಮವು ಮಸೂದೆಗಳನ್ನು ವಿರೋಧಿಸುವಂತೆ ಮಾಡಿದೆ ಎಂದು ವಿರೋಧ ಪಕ್ಷ ಹೇಳಿದೆ. ಸರ್ಕಾರ ಮೂರು ಮಸೂದೆಗಳನ್ನು ಪ್ಯಾಕೇಜ್ ಮಾಡಿ ಮಾರಾಟ ಮಾಡುತ್ತಿದ್ದರೆ, ಮೂಲಭೂತ ಅಂಶಗಳು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿವೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತಿದೆ. ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಮಹಿಳಾ ಮೀಸಲಾತಿಯಾಗಿದೆ. ಆದರೆ ಮೂಲಭೂತ ಅಂಶಗಳು ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿವೆ. ಬಿಜೆಪಿ ಈಗ ಪ್ರಬಲವಾಗಿರುವ ಕೆಲವು ಜನನಿಬಿಡ ರಾಜ್ಯಗಳಿಗೆ ಸವಲತ್ತು ನೀಡುವ ಕ್ಷೇತ್ರ ಮರು ವಿಂಗಡಣೆ ಪ್ರಸ್ತಾಪಗಳ ಬಗ್ಗೆ ದೇಶಾದ್ಯಂತ ಅನೇಕ ಕಳವಳಗಳು ವ್ಯಕ್ತವಾಗಿವೆ. ಲೋಕಸಭೆಯಲ್ಲಿ ಹಲವಾರು ರಾಜ್ಯಗಳ ಸೀಟುಗಳ ಸಂಖ್ಯೆಯೂ ಕುಸಿಯುತ್ತದೆ. ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಮರು ವಿಂಗಡಣೆ ಮಾಡಲಾದ ವಿಧಾನವು ಮೋದಿ-ಶಾ ಜೋಡಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ. ಈ ಮಸೂದೆಗಳ ನಿಜವಾದ ಉದ್ದೇಶ ದುರುದ್ದೇಶಪೂರಿತವಾಗಿದೆ, ಅವುಗಳ ವಿಷಯವು ಮೋಸದ್ದಾಗಿದ್ದು ಅವುಗಳಿಂದ ಹಾನಿಯೇ ಹೆಚ್ಚು. ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷದ ಬೇಡಿಕೆಯು ಸರಳವಾಗಿದೆ. ಲೋಕಸಭೆಯಲ್ಲಿ ಪ್ರಸ್ತುತ 543 ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡುವುದು, ಜೊತೆಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮಹಿಳೆಯರಿಗೆ ಕೋಟಾಗಳನ್ನು ಮೀಸಲಿಡುವುದು. 2023 ರಲ್ಲಿ ಇದು ಅದರ ನಿಲುವಾಗಿತ್ತು ಮತ್ತು ಬದಲಾಗದೆ ಉಳಿದಿದೆ. ಇದು ನಿಜವಾದ ಅಧಿಕಾರ ಹಂಚಿಕೆಯನ್ನು ಪ್ರತಿನಿಧಿಸುತ್ತದೆ. ಇದು ಹೆಚ್ಚು ಪ್ರಜಾಪ್ರಭುತ್ವವಾಗಿದ್ದು ಸಾಂವಿಧಾನಿಕ ಮೌಲ್ಯಗಳು ಮತ್ತು ತತ್ವಗಳಿಗೆ ಹೊಂದಿಕೆಯಾಗುತ್ತದೆ ಎಂದು ಅದು ವಾದಿಸುತ್ತದೆ. ಹೆಚ್ಚುವರಿಯಾಗಿ, ಹೊಸ ಮಸೂದೆಗಳು ಉತ್ತರ-ದಕ್ಷಿಣ ವಿಭಜನೆಯನ್ನು ಪ್ರಚೋದಿಸಿದೆ ಎಂದಿದ್ದಾರೆ ಜೈರಾಮ್ ರಮೇಶ್. ಗುರುವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಪ್ಪು ಬಾವುಟ ಹಾರಿಸಿ, ಡಿಲಿಮಿಟೇಶನ್ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿದರು. ಡಿಲಿಮಿಟೇಶನ್ ಮಸೂದೆಯನ್ನು ಅಂಗೀಕರಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರಕ್ಕೆ ಕಠಿಣ ಎಚ್ಚರಿಕೆ ನೀಡಿದ ನಂತರ ಈ ಪ್ರತಿಭಟನೆ ನಡೆದಿದೆ. ಈ ಅಧಿವೇಶನದ ಮೂಲಕ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ►ಸರ್ಕಾರದ ನಿಲುವೇನು? ಮಹಿಳಾ ಮೀಸಲಾತಿ ಮಸೂದೆ ಸಮತೋಲಿತವಾಗಿದೆ. ಇದು ಪ್ರತಿಯೊಂದು ರಾಜ್ಯ, ಸಮುದಾಯ ಮತ್ತು ಪ್ರದೇಶದ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದು ಸರ್ಕಾರ ಹೇಳಿದೆ. ಡಿಲಿಮಿಟೇಶನ್ ಬಗ್ಗೆ ವದಂತಿಗಳನ್ನು ಹರಡಿದ್ದಕ್ಕಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. 33% ಮೀಸಲಾತಿ ನೀಡಿದ ನಂತರ, ಇತಿಹಾಸ ನಿರ್ಮಾಣವಾಗುತ್ತದೆ. ಮಹಿಳೆಯರಿಗಾಗಿ ನಾವು ಎಷ್ಟು ಮಹತ್ವದ ಹೆಜ್ಜೆ ಇಡುತ್ತಿದ್ದೇವೆ ಎಂಬುದರ ಕುರಿತು ಭಾರತ ಇಡೀ ಜಗತ್ತಿಗೆ ಒಂದು ಮಾದರಿಯನ್ನು ಸ್ಥಾಪಿಸುತ್ತದೆ. ಇದಕ್ಕೆ ಯಾವುದೇ ವಿರೋಧ ಇರಬಾರದು ಎಂದು ರಿಜಿಜು ಹೇಳಿದ್ದಾರೆ. ಕ್ಷೇತ್ರ ಮರುವಿಂಗಡಣೆ ಅಥವಾ ಇನ್ನಾವುದೋ ವಿಷಯಗಳನ್ನು ಎತ್ತುವ ಮೂಲಕ ಮಹಿಳಾ ಮೀಸಲಾತಿಯನ್ನು ದುರ್ಬಲಗೊಳಿಸಬಾರದು. ಕ್ಷೇತ್ರ ಮರು ವಿಂಗಡಣೆ ಬಗ್ಗೆ ಗೊಂದಲ ಹರಡಲಾಗುತ್ತಿದೆ. ಇದರಿಂದ ಯಾರಿಗೂ ಹಾನಿಯಾಗುವುದಿಲ್ಲ. ಸಂಸತ್ತಿನಲ್ಲಿ ಇದನ್ನು ಸ್ಪಷ್ಟಪಡಿಸಲಾಗುವುದು. ಆದರೆ ಕೆಲವು ಪಕ್ಷಗಳು ದಕ್ಷಿಣ ಭಾರತದಲ್ಲಿ ಕ್ಷೇತ್ರ ಮರು ವಿಂಗಡಣೆ ಬಗ್ಗೆ ತಪ್ಪು ಸಂದೇಶವನ್ನು ಹರಡಲು ಪ್ರಯತ್ನಿಸಿವೆ. ಅವರು ಹಾಗೆ ಮಾಡಬಾರದು ಎಂದು ಅಧಿವೇಶನಕ್ಕೂ ಮುನ್ನ ಮಾತನಾಡಿದ ರಿಜಿಜು ಹೇಳಿದ್ದಾರೆ ►ಸದಸ್ಯರ ಬೆಂಬಲ ಲೆಕ್ಕಾಚಾರ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳಿಗೆ ಹಾಜರಿರುವವರಲ್ಲಿ ಮೂರನೇ ಎರಡರಷ್ಟು ವಿಶೇಷ ಬಹುಮತ ಮತ್ತು ಮತದಾನವನ್ನು ಅಂಗೀಕರಿಸುವ ಅಗತ್ಯವಿದೆ. ವಿರೋಧ ಪಕ್ಷದ ಯಾವುದೇ ವಾಕ್ಔಟ್ ಅಥವಾ ಗೈರುಹಾಜರಿ ಪರಿಣಾಮಕಾರಿ ಬಹುಮತದ ಮಿತಿಯನ್ನು ಕಡಿಮೆ ಮಾಡಬಹುದು. ಲೋಕಸಭೆಯಲ್ಲಿ 537 ಸದಸ್ಯರ ಬಲದೊಂದಿಗೆ, ಮೂರನೇ ಎರಡರಷ್ಟು ಅಂದರೆ 360 ಸದಸ್ಯರ ಮತ ಬೇಕು. 293 ಸದಸ್ಯರನ್ನು ಹೊಂದಿರುವ ಆಡಳಿತಾರೂಢ ಎನ್‌ಡಿಎಗೆ 67 ಸ್ಥಾನಗಳ ಕೊರತೆ ಇದೆ. ರಾಜ್ಯಸಭೆಯಲ್ಲಿ, ಮ್ಯಾಜಿಕ್ ಸಂಖ್ಯೆ 163. ಆದರೆ ಎನ್‌ಡಿಎಯ 142 ಕ್ಕೂ ಹೆಚ್ಚು ಸದಸ್ಯರ ಬಲವು ಬಹುಮತಕ್ಕೆ 21 ಸ್ಥಾನಗಳ ಕಡಿಮೆಯಾಗಿದೆ. ಸರ್ಕಾರದ ಸವಾಲುಗಳಿಗೆ ಹೆಚ್ಚುವರಿಯಾಗಿ, ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಮತ್ತು ಕೆ. ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿಯಂತಹ ಪಕ್ಷಗಳು ಈ ಹಿಂದೆ ವಿಷಯಾಧಾರಿತ ಬೆಂಬಲವನ್ನು ನೀಡಿದ್ದವು. ಈಗ ಕ್ಷೇತ್ರ ಮರುವಿಂಗಡಣೆ ಬಗ್ಗೆ ತಮ್ಮ ನಿಲುವನ್ನು ಗಟ್ಟಿಗೊಳಿಸಿವೆ. ಏತನ್ಮಧ್ಯೆ, ಸರ್ಕಾರವು ತನ್ನ ಬಳಿ ಸಂಖ್ಯಾಬಲವಿದೆ ಎಂದು ಸಮರ್ಥಿಸಿಕೊಂಡಿದೆ. ಯಾವ ಪಕ್ಷ ಏನು ಹೇಳುತ್ತಿದೆ ಎಂಬುದರ ರಾಜಕೀಯಕ್ಕೆ ನಾನು ಹೋಗುತ್ತಿಲ್ಲ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಯಾವುದೇ ಪಕ್ಷ ವಿರೋಧಿಸುತ್ತಿಲ್ಲ. ತಾತ್ವಿಕವಾಗಿ ಮತ್ತು ಉತ್ಸಾಹದಿಂದ, ಎಲ್ಲರೂ ಒಟ್ಟಿಗೆ ಇದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಕೃಪೆ: Times of India

ವಾರ್ತಾ ಭಾರತಿ 16 Apr 2026 6:12 pm

ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಪದವಿ ಪ್ರದಾನ

ಮಂಗಳೂರು, ಎ.16: ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ 36ನೇ ಪದವಿ ಪ್ರದಾನ ಸಮಾರಂಭ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಗುರುವಾರ ನಡೆಯಿತು. ಯೇನಪೊಯ ವಿವಿ ಕುಲಪತಿ ಡಾ ಕೆ.ಎಸ್. ಗಂಗಾಧರ ಸೋಮಯಾಜಿ ಅವರು ಪದವಿ ಪ್ರದಾನ ಮಾಡಿ ಮಾತ ನಾಡಿ, ರೋಗಿಗಳೊಂದಿಗೆ ಮಾತನಾಡುವುದರಿಂದ ಶೇ. 90ರಷ್ಟು ರೋಗ ಪತ್ತೆ ಮಾಡಲು ಸಾಧ್ಯವಿದೆ. ರೋಗಿಗಳೊಂದಿಗೆ ಮಾತನಾಡುವುದರಿಂದ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಇದರಿಂದಾಗಿ ಹೆಚ್ಚಿನ ಪರೀಕ್ಷೆ ಗಳಿಲ್ಲದೆ ರೋಗ ನಿರ್ಣಯ ಸಾಧ್ಯ ಎಂದು ಅಭಿಪ್ರಾಯಿಸಿದರು. ವಿವಿಧ ಸವಾಲುಗಳು, ಅಡೆತಡೆಗಳ ನಡುವೆಯೂ ಹೋಮಿಯೋಪತಿ ಇಂದಿಗೂ ಉಳಿದುಕೊಂಡಿದೆ. ನೀಟ್ ಅರ್ಹತೆಯ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುತ್ತಿರುವುದರಿಂದ ಅನೇಕ ಕಡೆಗಳಲ್ಲಿ ನೋಂದಣಿಗೆ ಸಮಸ್ಯೆಯಾಗುತ್ತಿದೆ. ಸರಕಾರ ಇದನ್ನು ಸರಳಗೊಳಿಸಬೇಕು ಎಂದು ಅವರು ಹೇಳಿದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಫಾದರ್ ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋಮಿಯೋಪತಿ ಮಾತಿನೊಂದಿಗೆ ಆರಂಭಗೊಂಡು, ರೋಗಿಗಳಿಗೆ ಗೌರವ ನೀಡುವುದು ಹಾಗೂ ಅವರ ಹಿನ್ನೆಲೆಯನ್ನು ಸಂಗ್ರಹಿಸಿ ಚಿಕಿತ್ಸೆ ನೀಡುವ ವಿಧಾನವಾಗಿದೆ ಎಂದರು. ತರಗತಿಗಳಲ್ಲಿ ಸಿಗುವ ಜ್ಞಾನವೇ ಸಂಪೂರ್ಣವಲ್ಲ. ಅದರೊಂದಿಗೆ ಸರಿಯಾದ ಪುರಾವೆಗಳು, ಸಂಶೋಧನೆಗಳು ಅಗತ್ಯ. ಸಾಕಷ್ಟು ಸಂದರ್ಭಗಳಲ್ಲಿ ಹೋಮಿಯೋಪತಿ ವಿಧಾನ ಎರಡನೇ ಆಯ್ಕೆಯಾಗುತ್ತದೆ. ಆದರೆ, ಹೋಮಿಯೋಪತಿಯ ಆಳ, ಅಗಲವನ್ನು ವಿವರಿಸುವ ಕೆಲಸವಾಗಬೇಕು. ರೋಗಿಗಳು ಕೇಳುವ ಪ್ರಶ್ನೆಗಳನ್ನು ಕಡೆಗಣಿಸದೆ ಸಂಶೋಧನೆಗ ಮೆಟ್ಟಿಲಾಗಿ ಬಳಸಿಕೊಳ್ಳಬೇಕು. ರೋಗಿಗಳ ತಾಳ್ಮೆ ಪರೀಕ್ಷಿಸದೆ ಅವರಿಗೆ ಆರಾಮ ದಾಯಕ ಅನುಭವ ನೀಡಬೇಕು. ನಿರಂತರ ಕಲಿಕೆ, ಅಭ್ಯಾಸ, ಸಂಶೋಧನೆಯಿಂದ ಹೋಮಿಯೋಪಥಿ ವಿಧಾನದಲ್ಲಿ ಹೊಸತನ ಮೂಡಿಸಲು ಸಾಧ್ಯ. ಕಣ್ಣೀರಿನೊಂದಿಗೆ ಬರುವ ರೋಗಿಗಳನ್ನು ನಗುಮುಖದಿಂದ ಸ್ವೀಕರಿಸಿದಾಗ, ಅವರ ಆತ್ಮವಿಶ್ವಾಸ ಹೆಚ್ಚಾಗುವ ಜತೆಗೆ ರೋಗದ ಪ್ರಾಮಾಣ ಇಳಿಮುಖವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಆತ್ಮ ವಿಶ್ವಾಸವೇ ಗುಣಪಡಿಸುತ್ತದೆ ಎಂದವರು ಹೇಳಿದರು. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ. ಫಾವುಸ್ತಿನ್ ಲೂಕಸ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ವಂ. ಡೊನಾಲ್ಡ್ ನೀಲೇಶ್ ಕ್ರಾಸ್ತಾ ವಂದಿಸಿದರು. ಫಾದರ್ ಮುಲ್ಲರ್ ಹೋಮಿಯೋಪತಿಕ್ ಫಾರ್ಮಾಸಿಟಿಕಲ್ ಡಿವಿಷನ್ ನ ಆಡಳಿತಾಧಿಕಾರಿ ವಂ. ನೆಲ್ಸನ್ ಧೀರಜ್ ಪಾಯಿಸ್, ಸಹಾಯಕ ಆಡಳಿತಾಧಿಕಾರಿ ವಂ. ಅಶ್ವಿನ್ ಲಾರೆನ್ಸ್ ಕ್ರಾಸ್ತಾ, ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭುಕಿರಣ್, ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿಸೋಜಾ, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ, ಉಪ ವೈದ್ಯಕೀಯ ಅಧೀಕ್ಷಕಿ ಡಾ. ದೀಪಾ ಪಾಯಿಸ್ ಮತ್ತಿತರರು ಉಪಸ್ಥಿತರಿದ್ದರು. ಆರ್‌ಜಿಎಚ್‌ಎಸ್ ಚಿನ್ನದ ಪದಕ ವಿಜೇತರಾದ ಡಾ. ಮರ್ಲಿನ್ ಲಿಜಾ ಜೇಮ್ಸ್, ಯುಜಿ ವಿಭಾಗದಲ್ಲಿ ಪ್ರೆಸಿಡೆನ್ಸ್ ಗೋಲ್ಡ್ ಮೆಡಲ್ ವಿಜೇತರಾದ ಡಾ. ಅತಿಲ್ ಮೊಂತೇರೊ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಇ.ಎಸ್.ಜೆ. ಪ್ರಭು ಕಿರಣ್ ಅವರು 2025-26ನೇ ಶೈಕ್ಷಣಿಕ ವರ್ಷದ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಚಟುವಟಿಕೆಗಳ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಸ್ಥೆಗೆ 2028ರ ಜನವರಿ 5ರವರೆಗೆ ಆಯುಷ್ ಪ್ರವೇಶ ಮಟ್ಟದ ಮಾನ್ಯತೆಯ ಜತೆಗೆ ಆಸ್ಪತ್ರೆಯಲ್ಲಿರುವ ವೈದ್ಯಕೀಯ ಪ್ರಯೋಗಾಲಯವು ಎನ್‌ಎಬಿಎಲ್ ಮಾನ್ಯತೆಯನ್ನು ಪಡೆದಿರುವುದಾಗಿ ತಿಳಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಂ. ನೆಲ್ಸನ್ ಧೀರಜ್ ಪಾಯಸ್ ಅವರು ಈ ಸಂದರ್ಭ ‘ಮುಲ್ಲರ್ಸ್ ಕಾಸ್ಮೆಸ್ಯೂಟಿಕಲ್ಸ್’ ಎಂಬ ಹೊಸ ಸೌಂದರ್ಯವರ್ದಕ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ 92 ಹೋಮಿಯೋಪಥಿ ಪದವೀಧರರು ಸೇರಿದಂತೆ 111 ಪದವೀಧರರು ಮತ್ತು 19 ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. 8 ಸಂಸ್ಥಾ ಮಟ್ಟದ ಬಹುಮಾನಗಳು, 12 ಪದವಿ ಮಟ್ಟದ ಮತ್ತು 5 ಸ್ನಾತಕೋತ್ತರ ವಿಷಯವಾರು ಬಹುಮಾನಗಳನ್ನು ವಿತರಿಸಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾಲೇಜು 4 ಪದವಿ ಮತ್ತು 12 ಸ್ನಾತಕೋತ್ತರ ರ್ಯಾಂಕ್ ಪಡೆದವರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ವಾರ್ತಾ ಭಾರತಿ 16 Apr 2026 6:09 pm

ಕಾನೂನು ಪದವೀಧರರಿಗೆ ಎಸ್ಎಸ್ಸಿಯಲ್ಲಿ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

ಸಿಬ್ಬಂದಿ ಆಯ್ಕೆ ಆಯೋಗದ (ಎಸ್ಎಸ್ಸಿ) ಕರ್ನಾಟಕ- ಕೇರಳ ಪ್ರದೇಶದ (ಕೆಕೆಆರ್) ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಈಗ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ಪದವಿ ಮಗಿಸಿದವರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಅವಕಾಶವೊಂದು ಸಿಗಲಿದೆ. ಸಿಬ್ಬಂದಿ ಆಯ್ಕೆ ಆಯೋಗದ (ಎಸ್ಎಸ್ಸಿ) ಕರ್ನಾಟಕ- ಕೇರಳ ಪ್ರದೇಶದ (ಕೆಕೆಆರ್) ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಈಗ ಅರ್ಜಿ ಆಹ್ವಾನಿಸಲಾಗಿದೆ. ಪ್ರಮುಖ ದಿನಾಂಕಗಳು: * ಎಸ್ಎಸ್ಸಿ ಕೆಕೆಆರ್ ಹುದ್ದೆಯ ಅಧಿಸೂಚನೆ: 08 ಎಪ್ರಿಲ್ 2026 * ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 08 ಎಪ್ರಿಲ್ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಎಪ್ರಿಲ್ 2026 ಹುದ್ದೆಯ ವಿವರ * ಹುದ್ದೆಗಳ ಸಂಖ್ಯೆ- 1 * ಹುದ್ದೆಯ ಹೆಸರು- ಯುವ ವೃತ್ತಿಪರ * ಉದ್ಯೋಗ ಸ್ಥಳ- ಬೆಂಗಳೂರು * ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಕಾನೂನು ಪದವಿ ಫೂರ್ಣಗೊಳಿಸಿರಬೇಕು. * ವಯೋಮಿತಿ: 01 ಜುಲೈ 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 32 ವರ್ಷ ಮೀರಿರಬಾರದು. * ಅರ್ಜಿ ಶುಲ್ಕ” ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. * ವೇತನ: ತಿಂಗಳಿಗೆ ₹ 60,000/- ವೇತನ ನೀಡಲಾಗುತ್ತದೆ * ಆಯ್ಕೆ ವಿಧಾನ: ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ? 1. ಮೊದಲು SSC KKR ಅಧಿಕೃತ ವೆಬ್‌ಸೈಟ್ https://ssckkr.kar.nic.in/ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ. 2. ಅರ್ಜಿ ನಮೂನೆಯನ್ನು ಪ್ರಿಂಟ್ ಹಾಕಿಕೊಂಡು, ಸರಿಯಾಗಿ ಭರ್ತಿ ಮಾಡಿ. 3. ನಿಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಅಗತ್ಯ ಪ್ರಮಾಣಪತ್ರಗಳನ್ನು ಸ್ವಯಂ ದೃಢೀಕರಿಸಿ (Self-Attested) ಅರ್ಜಿಯೊಂದಿಗೆ ಲಗತ್ತಿಸಿ. 4. ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ 30 ಏಪ್ರಿಲ್ 2026 ರ ಒಳಗೆ ತಲುಪುವಂತೆ ಕಳುಹಿಸಿ. ಅರ್ಜಿ ಕಳುಹಿಸಬೇಕಾದ ವಿಳಾಸ ಪ್ರಾದೇಶಿಕ ನಿರ್ದೇಶಕರು, SSC (KKR), 1 ನೇ ಮಹಡಿ, ಇ-ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು, ಕರ್ನಾಟಕ – 560034.

ವಾರ್ತಾ ಭಾರತಿ 16 Apr 2026 6:08 pm

Kalaburagi | ಅಲ್ಲೂರು (ಬಿ) 2,877 ಎಕರೆ ಅರಣ್ಯ ಸಂರಕ್ಷಿತ ಮೀಸಲು : ವನ್ಯಜೀವಿ ಮಂಡಳಿ ಸಭೆ ನಿರ್ಧಾರ

ಬೆಂಗಳೂರು : ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲ್ಲೂರು (ಬಿ) ಗ್ರಾಮದ 2877 ಎಕರೆ ಅರಣ್ಯವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 6ನೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಬೆಟ್ಟ ಗುಡ್ಡಗಳಿಂದ ಕೂಡಿದ, ಹಚ್ಚಹಸಿರಿನ ರಮಣೀಯವಾದ ಈ ಅರಣ್ಯ ಪ್ರದೇಶ ಚಿರತೆ, ಕಾಡುಹಂದಿ, ಜಿಂಕೆ, ಕಾಡುಕುರಿ, ಕಾಡುಬೆಕ್ಕು, ಚಿಪ್ಪುಹಂದಿ, ನರಿ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವಾಗಿದ್ದು, ಈ ಪ್ರದೇಶವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ಯೋಗ್ಯವಾಗಿದೆ ಎಂದು ಸಭೆ ತೀರ್ಮಾನಿಸಿತು. ಇದಕ್ಕೂ ಮುನ್ನ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಕಲಂ 36 ಎ ರೀತ್ಯ ಸ್ಥಳೀಯ ಗ್ರಾಮಪಂಚಾಯತಿಯ ವಿಶೇಷ ಗ್ರಾಮಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಿ, ಸಂರಕ್ಷಿತ ಮೀಸಲು ಎಂದು ಘೋಷಿಸಲು ಸಮ್ಮತಿ ಪಡೆಯಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಉಳಿದಂತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪರಿಸರ ಸೂಕ್ಷ್ಮ ವಲಯದಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಹಂತ1 ಪದವಿ ಕಾಲೇಜು ಆವರಣ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.  

ವಾರ್ತಾ ಭಾರತಿ 16 Apr 2026 6:06 pm

Raichur | ಎಸ್‌ಟಿ ಆಯೋಗದ ಸದಸ್ಯರಿಂದ ಅಸ್ಕಿಹಾಳಗೆ ಭೇಟಿ : ಡಿ.ಸಿ, ಜಿಲ್ಲಾ ಮಟ್ಟದ ಅಧಿಕಾರಿಗಳ‌ ವಿರುದ್ಧ ಆಕ್ರೋಶ

ರಾಯಚೂರು: ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯ ಜಟೋತು ಹುಸೇನ್ ಅವರು ನಗರದ ಅಸ್ಕಿಹಾಳ ಬಡಾವಣೆಗೆ ಭೇಟಿ ನೀಡಿದ ವೇಳೆ ಸಂಬಂಧಿತ ಅಧಿಕಾರಿಗಳು ಹಾಜರಿರದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾ ಪ್ರವಾಸದಲ್ಲಿದ್ದ ಅವರು ಬೆಳಿಗ್ಗೆ ರಿಮ್ಸ್ ಆಸ್ಪತ್ರೆ ಹಾಗೂ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿ, ಬಳಿಕ ಯಕ್ಲಾಸಪೂರು ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್‌ಟಿ ಸಮುದಾಯದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಬೇಕಿತ್ತು. ಸಭೆಗೆ ಮುನ್ನ ಅಸ್ಕಿಹಾಳ ಬಡಾವಣೆಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿರದ ಕಾರಣ ಅಸಮಾಧಾನಗೊಂಡ ಅವರು, ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ಜಿಲ್ಲಾಧಿಕಾರಿಗಳು ರಜೆಯಲ್ಲಿದ್ದರೂ ಮಾಹಿತಿ ನೀಡಬಹುದಿತ್ತು. ಆಯೋಗದ ಸದಸ್ಯನಿಗೆ ಗೌರವ ಇಲ್ಲವೇ? ನಾನು ನಿಮ್ಮ ಜಿಲ್ಲೆಗೆ ಬಂದಿದ್ದೇನೆ, ಈ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ. ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಹಶಿಲ್ದಾರ್ ಸುರೇಶ ವರ್ಮಾ, ಡಿಡಿಪಿಐ ಕೆ.ಡಿ ಬಡಿಗೇರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪ್ರವೀಣಕುಮಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

ವಾರ್ತಾ ಭಾರತಿ 16 Apr 2026 6:05 pm

ಮಂಜೇಶ್ವರ: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಮಂಜೇಶ್ವರ : ಮಂಜೇಶ್ವರ ಕುಂದುಕೊಳಕೆ ಕಡಲ ಕಿನಾರೆಯಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಗುರುವಾರ ಸಂಜೆ ಹೊಸಬೆಟ್ಟು ಕಡಲತೀರದಲ್ಲಿ ಪತ್ತೆಯಾಗಿದೆ. ಮಂಜೇಶ್ವರ ಚೌಕಿಯ ಉಮ್ಮರುಲ್ ಫಾರೂಕ್ - ರಝೀನಾ ದಂಪತಿ ಪುತ್ರ ಮುಹಮ್ಮದ್ ಜೈನುಲ್ ಆಬಿದ್ (18) ಮೃತಪಟ್ಟವರು. ಬುಧವಾರ ಸಂಜೆ ಸ್ನೇಹಿತರ ಜೊತೆ ಕಡಲ ಕಿನಾರೆಗೆ ತಲಪಿದ್ದ ಸಂದರ್ಭದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದರು. ನಾಗರಿಕರು , ರಕ್ಷಣಾ ತಂಡಗಳು ಶೋಧ ನಡೆಸಿದ್ದವು. ಈ ನಡುವೆ ಘಟನೆ ನಡೆದ ಸ್ಥಳದಿಂದ ಅಲ್ಪದೂರದ ಹೊಸಬೆಟ್ಟು ತೀರದಲ್ಲಿ ಗುರುವಾರ ಸಂಜೆ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 16 Apr 2026 6:02 pm

‘ಮಹಿಳಾ ಮೀಸಲಾತಿ ಮಸೂದೆ’ | ಕಾಂಗ್ರೆಸ್ ಬೆಂಬಲಿಸುವ ವಿಶ್ವಾಸ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ‘ಮಹಿಳಾ ಮೀಸಲಾತಿ ಮಸೂದೆಗಾಗಿ ಲೋಕಸಭೆ ವಿಶೇಷ ಅಧಿವೇಶನ ನಡೆಯುತ್ತಿದ್ದು, ಮಹಿಳೆಯರಿಗೂ ಕಾನೂನು ರಚನೆಗೆ ಸಮಾನ ಅವಕಾಶ ಸಿಗಲಿದೆ. ಇದಕ್ಕೆ ವಿಪಕ್ಷ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂಬ ವಿಶ್ವಾಸವಿದೆ’ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭರವಸೆ ವ್ಯಕ್ತಪಡಿಸಿದ್ದಾರೆ. ಗುರುವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ದೇಶದಲ್ಲಿ ಸರ್ವರಿಗೂ ಸಮಾನ ಹಕ್ಕು ಇರಬೇಕು, ಸಮಾನ ಅವಕಾಶ ಸಿಗಬೇಕು ಎಂದು ಬಯಸಿದ್ದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದೂ ಹೇಳಿದ್ದರು. ಇದೀಗ ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಚಿಂತನೆಗೆ ಶಕ್ತಿ ಕೊಟ್ಟಿದ್ದಾರೆ ಎಂದರು. ಈ ಹಿಂದೆ ಮಹಿಳೆಯರಿಗೆ ಅವಕಾಶ, ಅಧಿಕಾರ ಮತ್ತು ಸಮಾನ ಹಕ್ಕು ಕೊಡುವಲ್ಲಿ ಬಾಯಿ ಮಾತಿನ ಭಾಷಣ ಇತ್ತೇ ಹೊರತು ಹೃದಯವಂತಿಕೆ ಇರಲಿಲ್ಲ. ಆದರೆ ಇಂದು ನಾರಿಶಕ್ತಿ ಹೆಸರಿನಲ್ಲಿ ಪ್ರಧಾನಿ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸುತ್ತಿದ್ದಾರೆ. ಇನ್ನು ಮುಂದೆ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಅವಕಾಶಗಳ ದೊರೆಯಲಿವೆ. ನಾರಿ ಶಕ್ತಿ ಮಸೂದೆ ಮೂಲಕ ಕಾನೂನು ರಚನೆಯಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಸಿಗಲಿದೆ ಎಂದು ಅವರು ನುಡಿದರು. ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ನವರು ಯಾವುದೇ ಅಪಸ್ವರ ಎತ್ತದೆ ಅಂಗೀಕಾರಕ್ಕೆ ಸಹಕರಿಸಲಿದ್ದಾರೆಂಬ ವಿಶ್ವಾಸ ಇದೆ. ಒಂದು ವೇಳೆ ಅಪಸ್ವರ ತೆಗೆದರೆ ಅವರ ಭವಿಷ್ಯ ಗಂಭೀರವಾಗುತ್ತದೆ. ಈ ಮಸೂದೆಯನ್ನು ಪಕ್ಷದ ಪರವಾಗಿ ಸ್ವಾಗತಿಸುತ್ತೇವೆ. ದೇಶದಲ್ಲಿನ ನಾರಿ ಶಕ್ತಿ ಅಂಬೇಡ್ಕರ್‍ಗೆ ಹೇಗೆ ಕೃತಜ್ಞತೆ ಹೊಂದಿದ್ದಾರೋ ಹಾಗೇಯೇ ಮೋದಿಜಿಗೂ ಕೃತಜ್ಞತೆ ವ್ಯಕ್ತಪಡಿಸಲಿದ್ದಾರೆ ಎಂದು ಅವರು ಹೇಳಿದರು. ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಎಂದೂ ಬಂದಿಲ್ಲ. ಬಿಜೆಪಿ ಗುಮ್ಮ ತೋರಿಸುವುದರಿಂದ ಕಾಂಗ್ರೆಸ್ ಬೆಂಬಲಕ್ಕೆ ಅವರು ಹೋಗುತ್ತಿದ್ದಾರೆ. ಬಿಜೆಪಿ ಹನ್ನೆರಡು ವರ್ಷದಿಂದ ದೇಶ ಆಳುತ್ತಿದೆ. ಆದರೆ ಯಾವುದೇ ಅಲ್ಪಸಂಖ್ಯಾತರಿಗೆ ಏನೂ ತೊಂದರೆಯಾಗಿಲ್ಲ. ಮೋದಿಯವರನ್ನು ಮುಸ್ಲಿಮರು ಮೆಚ್ಚುತ್ತಿದ್ದಾರೆ ಎಂದು ಅವರು ತಿಳಿಸಿದರು.  

ವಾರ್ತಾ ಭಾರತಿ 16 Apr 2026 5:59 pm

Kalaburagi | ವಿವಿಧ ʼಕನ್ನಡ ಪುಸ್ತಕ ಸೊಗಸು ಬಹುಮಾನʼಕ್ಕಾಗಿ ಅರ್ಜಿ ಆಹ್ವಾನ

ಕಲಬುರಗಿ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2025ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್) ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ “ಕನ್ನಡ ಪುಸ್ತಕ ಸೊಗಸು ಬಹುಮಾನ”ಗಳಿಗಾಗಿ ಆಸಕ್ತಿಯುಳ್ಳ ಪ್ರಕಾಶಕರು, ಮುದ್ರಕರು ಹಾಗೂ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಕೆ.ಬಿ. ಕಿರಣ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು, ಚಿತ್ರಕಲಾವಿದರ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ 2026ರ ಮೇ 11ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ವಿಳಾಸಕ್ಕೆ ಕಳುಹಿಸಬೇಕು. ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಕೊನೆಯ ದಿನಾಂಕ ಮುಗಿದ ನಂತರ ಬಂದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ. ನಿಗದಿತ ಅರ್ಜಿ ನಮೂನೆಯನ್ನು ವೆಬ್‍ಸೈಟ್‍ದಿಂದ https://kpp.karnataka.gov.in ದಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-560002 ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ.

ವಾರ್ತಾ ಭಾರತಿ 16 Apr 2026 5:59 pm

Kalaburagi | ಜಿಲ್ಲಾ ಕಸಾಪದಿಂದ ಎ.19ರಂದು ಬಸವ ಪರ್ವ: ವಿಜಯಕುಮಾರ ತೇಗಲತಿಪ್ಪಿ

ಕಲಬುರಗಿ: ನುಡಿದಂತೆ ನಡೆ, ನಡೆದಂತೆ ನುಡಿ ಎಂಬ ಕಾಯಕತತ್ವದ ಮೂಲಕ ವಿಶ್ವದೆಲ್ಲೆಡೆ ಕ್ರಾಂತಿ ಎಬ್ಬಿಸುವ ಬಸವಾದಿ ಶರಣರ ಚಿಂತನೆಗಳನ್ನು ಇಂದಿನ ಸಮಾಜಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಬಸವ ಜಯಂತಿ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಎ.19 ರಂದು ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಬಸವ ಪರ್ವ-2026 ಎಂಬ ಇವ ನಮ್ಮವನಾಗಿಸುವ ಹಬ್ಬ ವಿಶೇಷ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಬಸವ ಪರ್ವ ದ ಪೂರ್ವಭಾವಿ ಸಭೆಯನ್ನು ನಡೆಸಿ ಕಾರ್ಯಕ್ರಮದ ಪ್ರಚಾರದ ಸಂಬಂಧಿಸಿದ ಕರಪತ್ರಗಳನ್ನು ಬಿಡುಗಡೆಗೊಳಿಸಿ, ಕತ್ತಲು ಕವಿದಂತಿರುವ ಇಂದಿನ ಸಮಾಜವನ್ನು ಸಮಾನತೆ, ಸೌಹಾರ್ದತೆ ಮತ್ತು ಸಮೃದ್ಧಿಯ ಬೆಳಕಿನೆಡೆಗೆ ಕೊಂಡೊಯ್ಯಲು ಬಸವಾದಿ ಶರಣರ ಚಿಂತನೆಗಳಿಮದ ಮಾತ್ರ ಸಾಧ್ಯ. ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾತ್ಮರು ಸ್ತ್ರೀ ಸಮಾನತೆಗೂ ಒತ್ತು ನೀಡಿದ್ದರು. ಗಂಡ ತೀರಿದ ಮಹಿಳೆಯನ್ನು ಗಂಗಾದೇವಿ ಎಂದು ಕರೆಯಬೇಕೆಂಬ ಜನಪದರ ಮಾತಿನಂತೆ, ವಿಧವಾ ತಾಯಂದಿಯರಿಗಾಗಿ ಗಂಗಾ ಭಾಗೀರಥಿ ತವರಿನುಡುಗೊರೆ ಸ್ಪೂರ್ತಿ ಎನ್ನುವ ಭಾವ ಬೆಸೆಯುವ ಕಾರ್ಯಕ್ರಮವೂ ಸಹ ರೂಪಿಸಲಾಗಿದೆ. ಭಾವಗಂಗೆ ಬತ್ತದಿರಲಿ ಜೀವನೋತ್ಸಾಹ ಹೆಚ್ಚಾಗಲಿ ಎನ್ನುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು. ಸತಿ ಪತಿಗಳೊಂದಾದ ಭಕ್ತಿ ಎನ್ನುವಂತೆ ಶರಣ ದಂಪತಿಗಳಾದ ಶಶಿಕಲಾ ಶಿವಪ್ಪ ತಳಕಿನ್ ಮಳಖೇಡ, ಶಕುಂತಲಾ ಯಶ್ವಂತರಾವ ಪಾಟೀಲ ಜಾವಳಿ, ಕಲ್ಪನಾ ಅಣ್ಣಾರಾವ ಪೆದ್ದಿ ಕೋಡ್ಲಿ, ಮಹಾದೇವಿ ಡಾ.ಕೆ.ಎಸ್.ಬಂಧು, ನಿರ್ಮಲಾ ಸಿದ್ದಣ್ಣ ಬೆಡಸೂರ ಸೇಡಂ, ನಂದಿನಿ ವಿಶ್ವಾರಾಧ್ಯ ಬಿರಾಳ ಶಹಾಬಾದ, ಪ್ರೀತಿ ಬಸವರಜ ಬಿರಾದಾರ ಸೊನ್ನ, ರೇಣುಕಾ ರಾಮು ರೆಡ್ಡಿ ಗುಮ್ಮಟ ಅವರನ್ನು ಬಸವ ಪುರಸ್ಕಾರ ನೀಡಿ ಸತ್ಕರಿಸಲಾಗುವುದು. ವಚನ ಪ್ರಿಯರಿಗೆ ಕಾಯಕ ಪ್ರಿಯ ಗೌರವ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದರು. ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿಯ ಬಸವ ಧಾಮ ದ ಶ್ರೀ ಬಸವೇಶ್ವರಿ ಮಾತಾಜೀ ದಿವ್ಯ ನೇತೃತ್ವದಲ್ಲಿ ಜಿಪಂನ ಮಾಜಿ ಉಪಾಧ್ಯಕ್ಷ ಹರ್ಷಾನಂದ ಎಸ್ ಗುತ್ತೇದಾರ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಜಿಲ್ಲಾ ಬಸವ ಜಯಂತೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ರವಿ ಬಿರಾದಾರ ಕಮಲಾಪೂರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಅಫಜಲಪೂರ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸಣ್ಣಾ ಗುಣಾರಿ, ಸಾಹಿತ್ಯ ಪ್ರೇರಕಿ ರಾಜೇಶ್ವರಿ ಸಾಹು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ವಿವರಿಸಿದರು. ಪ್ರಚಾರಾರ್ಥವಾಗಿ ಕರಪತ್ರ ಬಿಡುಗಡೆ ಸಂದರ್ಭದಲ್ಲಿ ಶಕುಂತಲಾ ಪಾಟೀಲ ಜಾವಳಿ, ಧರ್ಮಣ್ಣ ಎಚ್ ಧನ್ನಿ, ಧರ್ಮರಾಜ ಜವಳಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಶರಣರಾಜ ಛಪ್ಪರಬಂದಿ, ರವಿ ಶಹಾಪೂರಕರ್, ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ, ಡಾ. ರೆಹಮಾನ್ ಪಟೇಲ್ ಇತರರಿದ್ದರು.

ವಾರ್ತಾ ಭಾರತಿ 16 Apr 2026 5:57 pm