ಲಕ್ನೋ,ಫೆ.24: ಅಪ್ರಾಪ್ತ ವಯಸ್ಕ ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಇತರ ಅಪರಾಧಗಳಿಗಾಗಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ಅಲಹಾಬಾದ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕಳೆದೊಂದು ವರ್ಷದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಸೋಮವಾರ ಪೊಕ್ಸೊ ಕಾಯ್ದೆಯಡಿ ಪ್ರಯಾಗರಾಜ್ನ ಝುನ್ಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಯಾಗರಾಜ್ನ ವಿಶೇಷ ಪೊಕ್ಸೊ ನ್ಯಾಯಾಲಯವು ಎಫ್ಐಆರ್ ದಾಖಲಿಸುವಂತೆ ಶನಿವಾರ ಪೊಲೀಸರಿಗೆ ಆದೇಶಿಸಿತ್ತು. ಬಲ್ಲ ಮೂಲಗಳ ಪ್ರಕಾರ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುವ ಮುನ್ನ ಸರಕಾರಿ ವಕೀಲರ ಕಚೇರಿಗೆ ನೋಟಿಸ್ ರವಾನಿಸಲಾಗಿದೆ. ಎಫ್ಐಆರ್ ಪ್ರಕಾರ, ಆರೋಪಿಗಳು ಗುರುಕುಲದಲ್ಲಿ ಮತ್ತು ಪ್ರಯಾಗರಾಜ್ನಲ್ಲಿ ಇತ್ತೀಚಿಗೆ ನಡೆದ ಮಾಘ ಮೇಳ ಸೇರಿದಂತೆ ಧಾರ್ಮಿಕ ಸಮಾವೇಶಗಳ ಸಂದರ್ಭಗಳಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರರಾದ ಅಶುತೋಷ ಬ್ರಹ್ಮಚಾರಿ ಮಹಾರಾಜ್ ಮತ್ತು ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಇತರ ಇಬ್ಬರು ಆರೋಪಿಸಿದ್ದಾರೆ. ದೂರುದಾರರು ಎಫ್ಐಆರ್ನಲ್ಲಿ ಸರಸ್ವತಿ ಮತ್ತು ಮುಕುಂದಾನಂದರ ಜೊತೆ 2-3 ಅಪರಿಚಿತ ವ್ಯಕ್ತಿಗಳನ್ನೂ ಹೆಸರಿಸಿದ್ದಾರೆ. ಆರೋಪಿಗಳು ಧಾರ್ಮಿಕ ಗುರುಗಳ ಸೋಗಿನಲ್ಲಿ ಅಪ್ರಾಪ್ತ ವಯಸ್ಕ ಮತ್ತು ಇನ್ನೋರ್ವ ಯುವಕನ ಮೇಲೆ ಹಲವಾರು ಸಂದರ್ಭಗಳಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮೌನಿ ಅಮವಾಸ್ಯೆಯಂದು ತಾನು ಪವಿತ್ರ ಸ್ನಾನ ಮಾಡುವುದನ್ನು ತಡೆದಿದ್ದಾರೆ ಎಂದು ಆರೋಪಿಸಿ ಮಾಘ ಮೇಳದ ಸಂಘಟಕರೊಂದಿಗೆ ತನ್ನ ಸಂಘರ್ಷದಿಂದಾಗಿ ಸರಸ್ವತಿ ಇತ್ತೀಚಿಗೆ ಸುದ್ದಿಯಾಗಿದ್ದರು. ಕಾಶಿಯಲ್ಲಿನ ತನ್ನ ವಿದ್ಯಾಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸರಸ್ವತಿ, ತನಗೆ ಕಾನೂನು ನೆರವು ನೀಡುವುದಾಗಿ ಕೆಲವು ವಕೀಲರು ತನ್ನನ್ನು ಸಂಪರ್ಕಿಸಿದ್ದರು. ಆದರೆ ಅವರು ತೆಗೆದುಕೊಂಡಿರಬಹುದಾದ ಯಾವುದೇ ಕ್ರಮದ ಕುರಿತು ತನಗೆ ಮಾಹಿತಿಯಿಲ್ಲ ಎಂದು ತಿಳಿಸಿದರು. ಫೋಟೊವೊಂದನ್ನೂ ತೋರಿಸಿದ ಅವರು ಪ್ರಯಾಗ್ರಾಜ್ನ ಪೊಲೀಸ್ ಅಧಿಕಾರಿಯೋರ್ವರು ತನ್ನ ವಿರುದ್ಧದ ‘ಪಿತೂರಿ’ಯ ಕೇಂದ್ರಬಿಂದುವಾಗಿದ್ದಾರೆ ಎಂದು ಪ್ರತಿಪಾದಿಸಿದರು. ಚಿತ್ರವು ಪೊಲೀಸ್ ಅಧಿಕಾರಿಯು ದೂರುದಾರರಾದ ಅಶುತೋಷ ಬ್ರಹ್ಮಚಾರಿಯ ಜೊತೆ ಕೇಕ್ ಕತ್ತರಿಸುತ್ತಿರುವುದನ್ನು ತೋರಿಸಿದೆ.
ಟಿ-20 ವಿಶ್ವಕಪ್ | ಟೀಮ್ ಇಂಡಿಯಾದ ಸೆಮಿ ಫೈನಲ್ ವಿಶ್ವಾಸ ವೃದ್ಧಿಗೆ ಬೃಹತ್ ಗೆಲುವು ಅಗತ್ಯ
ಹೊಸದಿಲ್ಲಿ, ಫೆ.24: ಪ್ರಸಕ್ತ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸೆಮಿ ಫೈನಲ್ ವಿಶ್ವಾಸ ವೃದ್ಧಿಸಲು ಬಾಕಿ ಉಳಿದಿರುವ ಎರಡೂ ಪಂದ್ಯಗಳನ್ನು ಬೃಹತ್ ಅಂತರದಿಂದ ಗೆಲ್ಲುವ ಅಗತ್ಯವಿದೆ. ಗ್ರೂಪ್ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಸಹಿತ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿ ಅಜೇಯವಾಗುಳಿದಿದ್ದ ಭಾರತ ತಂಡವು ಸೂಪರ್-8ರ ಆರಂಭಿಕ ಪಂದ್ಯದಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 76 ರನ್ಗಳ ಅಂತರದಿಂದ ಸೋತಿರುವ ಸೂರ್ಯಕುಮಾರ್ ಬಳಗವು ಗ್ರೂಪ್-1ರಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದೆ. ಭಾರತ ತಂಡವು -3.800 ನೆಟ್ ರನ್ ರೇಟ್ ನೊಂದಿಗೆ ಅಂಕಪಟ್ಟಿಯಲ್ಲಿ ವೆಸ್ಟ್ಇಂಡೀಸ್(+5.350)ಹಾಗೂ ದಕ್ಷಿಣ ಆಫ್ರಿಕಾ(+3.800)ಕ್ಕಿಂತ ಹಿಂದಿದೆ. ಭಾರತ ತಂಡವು ಉಳಿದಿರುವ ಎರಡು ಪಂದ್ಯಗಳನ್ನು ಗೆದ್ದ ಮಾತ್ರಕ್ಕೆ ಸೆಮಿ ಫೈನಲ್ಗೆ ಅರ್ಹತೆ ಪಡೆಯುವುದು ಖಚಿತವಾಗುವುದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿರುವ ಭಾರತ ತಂಡವು ಮಾರ್ಚ್ 1ರಂದು ಕೋಲ್ಕತಾದಲ್ಲಿ ವೆಸ್ಟ್ಇಂಡೀಸ್ ತಂಡವನ್ನು ಎದುರಿಸುವ ಮೊದಲು ಫೆ.26ರಂದು ಚೆನ್ನೈನಲ್ಲಿ ಝಿಂಬಾಬ್ವೆ ತಂಡವನ್ನು ಮುಖಾಮುಖಿಯಾಗಲಿದೆ. ಸೆಮಿ ಫೈನಲ್ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಭಾರತ ತಂಡ ಮೊದಲಿಗೆ ಝಿಂಬಾಬ್ವೆ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುವ ಅಗತ್ಯವಿದೆ. ಸುಮಾರು 100 ರನ್ ಅಂತರದಿಂದ ಗೆಲುವು ದಾಖಲಿಸಿದರೆ ನೆಟ್ ರನ್ರೇಟ್ನಲ್ಲಿ ಆಗಿರುವ ಹಾನಿಯನ್ನು ಸರಿಪಡಿಸಬಹುದು. ಒಂದು ವೇಳೆ ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ಇಂಡೀಸ್ ತಂಡಗಳು ತಲಾ ನಾಲ್ಕು ಅಂಕಗಳನ್ನು ಗಳಿಸಿದರೆ, ಸಹಜವಾಗಿಯೇ ನೆಟ್ ರನ್ ರೇಟ್ ಮೂಲಕ ಸೆಮಿ ಫೈನಲ್ಗೇರುವ ತಂಡವನ್ನು ನಿರ್ಧರಿಸಲಾಗುತ್ತದೆ. ಸದ್ಯ ಭಾರತವು ರನ್ ರೇಟ್ ವಿಚಾರದಲ್ಲಿ ಬಹಳಷ್ಟು ಹಿಂದುಳಿದಿದ್ದು, ಈ ಅಂತರವನ್ನು ತಕ್ಷಣವೇ ಭರ್ತಿ ಮಾಡಬೇಕಾಗಿದೆ. ಒಂದು ವೇಳೆ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿ 220 ರನ್ ಗಳಿಸಿದರೆ, ಝಿಂಬಾಬ್ವೆ ತಂಡವನ್ನು ಸುಮಾರು 120 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕಾಗಿದೆ. ಹೀಗಾದಲ್ಲಿ ಭಾರತದ ನೆಟ್ ರನ್ ರೇಟ್ ಹೆಚ್ಚಾಗಲಿದೆ. ಕಡಿಮೆ ಅಂತರದಿಂದ ಗೆಲುವು ದಾಖಲಿಸಿದರೆ ಇತರ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ದಕ್ಷಿಣ ಆಫ್ರಿಕಾವು ವೆಸ್ಟ್ಇಂಡೀಸ್ ತಂಡವನ್ನು ಮಣಿಸಬೇಕು. ಹಾಗೆ ಮಾಡಿದಾಗ ಮಾತ್ರ ಭಾರತ ತಂಡ ಸೆಮಿ ಫೈನಲ್ಗೆ ತಲುಪಬಹುದು. ಟಿ-20 ವಿಶ್ವಕಪ್ ಆರಂಭಕ್ಕೆ ಮೊದಲು ಸಾಮಾನ್ಯ ತಂಡ ಎನಿಸಿಕೊಂಡಿದ್ದ ವೆಸ್ಟ್ಇಂಡೀಸ್, ಈ ಬಾರಿಯ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಬಲಿಷ್ಠ ತಂಡಗಳನ್ನು ಮಣಿಸಿ ಸೂಪರ್-8ರ ಹಂತ ಪ್ರವೇಶಿಸಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ ವಿಂಡೀಸ್ ತಂಡವನ್ನು ಸೋಲಿಸಲು ವಿಫಲವಾದರೆ ಭಾರತ ತಂಡ ಇನ್ನುಳಿದ ಎರಡೂ ಪಂದ್ಯಗಳನ್ನು 100 ರನ್ಗಳಿಗೂ ಅಧಿಕ ಅಂತರದಿಂದ ಮಣಿಸಬೇಕಾಗುತ್ತದೆ. ಝಿಂಬಾಬ್ವೆ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಿದರೂ, ವಿಂಡೀಸ್ ತಂಡವನ್ನು ದೊಡ್ಡ ಅಂತರದಲ್ಲಿ ಸೋಲಿಸುವುದು ಅಷ್ಟು ಸುಲಭವಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಭಾರತ ತಂಡವು ಸೆಮಿ ಫೈನಲ್ ತಲುಪಲು ಅನೇಕ ಸವಾಲುಗಳನ್ನು ಮೆಟ್ಟಿನಿಲ್ಲಬೇಕಾಗಿದೆ. ಅದೃಷ್ಟ ಕೂಡ ಕೈಹಿಡಿಯಬೇಕು. ► ಭಾರತ ಎರಡೂ ಪಂದ್ಯಗಳನ್ನು ಗೆದ್ದರೆ... ಒಂದೊಮ್ಮೆ ಭಾರತ ತಂಡವು ಸೂಪರ್-8ರ ಗ್ರೂಪ್-1ರಲ್ಲಿ ವೆಸ್ಟ್ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ, ಒಟ್ಟು ನಾಲ್ಕು ಅಂಕವನ್ನು ಗಳಿಸುತ್ತದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡವು ತನ್ನೆಲ್ಲಾ ಪಂದ್ಯಗಳನ್ನು ಜಯಿಸಿದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿ ಫೈನಲ್ಗೆ ಅರ್ಹತೆ ಪಡೆಯುತ್ತವೆ. ಒಂದು ವೇಳೆ ಭಾರತ ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ, ದಕ್ಷಿಣ ಆಫ್ರಿಕಾ ಒಂದು ಪಂದ್ಯವನ್ನು ಸೋತರೆ, ಮೂರು ತಂಡಗಳು ನಾಲ್ಕು ಅಂಕಗಳನ್ನು ಗಳಿಸಿ ಟೈ ಸಾಧಿಸಬಹುದು. ಅಂತಹ ಸಂದರ್ಭದಲ್ಲಿ ನೆಟ್ ರನ್ರೇಟ್ ಮೂಲಕ ಸೆಮಿ ಫೈನಲಿಸ್ಟ್ ತಂಡವನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಭಾರತ ತಂಡವು ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ ಹಾಗೂ ದಕ್ಷಿಣ ಆಫ್ರಿಕಾ ತಂಡವು ತನ್ನ ಎರಡೂ ಪಂದ್ಯಗಳನ್ನು ಸೋತರೆ, ಭಾರತ ಹಾಗೂ ವೆಸ್ಟ್ಇಂಡೀಸ್ ತಂಡಗಳು ಸೆಮಿ ಫೈನಲ್ಗೆ ಅರ್ಹತೆ ಪಡೆದುಕೊಳ್ಳುತ್ತವೆ. ► ಭಾರತ ತಂಡ ಕೇವಲ ಒಂದು ಪಂದ್ಯ ಗೆದ್ದರೆ.. ಒಂದು ವೇಳೆ ಭಾರತ ತಂಡವು ಇನ್ನುಳಿದ ಎರಡು ಸೂಪರ್-8 ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದರೆ ಟೂರ್ನಿಯಿಂದ ನಿರ್ಗಮಿಸಲಿದೆ. ಆಗ ಇತರ ಗುಂಪುಗಳ ಫಲಿತಾಂಶ ಇಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಲಿ ಚಾಂಪಿಯನ್ ಭಾರತ ತಂಡ ಸಣ್ಣ ತಪ್ಪುಗಳಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸೆಮಿ ಫೈನಲ್ ಹಾದಿ ಸುಗಮವಾಗಬೇಕಾದರೆ ಕೇವಲ ಗೆಲುವು ಮಾತ್ರ ಸಾಲದು, ಸಂಪೂರ್ಣ ಪ್ರಾಬಲ್ಯ ಸಾಧಿಸುವ ಅಗತ್ಯವಿದೆ.
ಪಹಣಿ ಜೊತೆಗೆ ಆಧಾರ್ ಜೋಡಿಸಿ: ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು: ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕರೆ ನೀಡಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಆಟೋ ಮ್ಯುಟೇಶನ್ ತಂತ್ರಾಂಶಕ್ಕೆ ಚಾಲನೆ ನೀಡಿದ ಅವರು, ಪಹಣಿಯ ಜೊತೆಗೆ ಆಧಾರ್ ಜೋಡಣೆಯಾದರೆ ಪಹಣಿಯಲ್ಲಿ ಏನೇ ಬದಲಾವಣೆ ಆದರೂ ಆ ಸಂದೇಶವನ್ನು ಆಸ್ತಿ ಮಾಲಕರ ಮೊಬೈಲ್ಗೆ ಕಳುಹಿಸಲಾಗುತ್ತದೆ. ಆಗ ಆಸ್ತಿ ಮಾಲಕರ ಗಮನಕ್ಕೆ ಬಾರದೆ ನಡೆಯುವ ಖಾತೆ ಬದಲಾವಣೆ ಅಥವಾ ಮಾರಾಟವನ್ನು ತಡೆಯಬಹುದು ಎಂದರು. ಇದಲ್ಲದೆ, ನ್ಯಾಯಾಲಯ ಆದೇಶ ನಮೂದಿಸಿದರೆ ಅಥವಾ ಪಹಣಿಯಲ್ಲಿ ಬೇರೆಯವರ ಹೆಸರು ಸೇರಿಸಿದರೂ ಸಹ ಎಸ್ಎಂಎಸ್ ಮೂಲಕ ಮಾಹಿತಿ ಬರಲಿದೆ. ಆಧಾರ್ ಜೋಡಣೆ ಮಾಡದಿದ್ದರೆ ಆಸ್ತಿ ಮಾಲಕರ ಗಮನಕ್ಕೆ ಬಾರದೆ ಖಾತೆ ಬದಲಾವಣೆ ಆಗುವಂತಹ ಅಪರೂಪದ ಸಾಧ್ಯತೆಗಳಿವೆ. ಹೀಗಾಗಿ ಮಾಲಕತ್ವ ಸುಭದ್ರವಾಗಿರಬೇಕಾದರೆ ಮೊದಲು ಪಹಣಿ ಜೊತೆಗೆ ಆಧಾರ್ ಜೋಡಿಸಿ ಎಂದು ಸಚಿವರು ಕರೆ ನೀಡಿದರು.
ಕ್ಯಾಲಿಫೋರ್ನಿಯಾ: ಸಿಖ್ ವ್ಯಕ್ತಿಯನ್ನು ಅಪಹರಿಸಿ ಹತ್ಯೆ
ನ್ಯೂಯಾರ್ಕ್, ಫೆ.24: ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಸಿಖ್ ವ್ಯಕ್ತಿಯನ್ನು ಅಪಹರಿಸಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು 57 ವರ್ಷದ ಅವತಾರ್ ಸಿಂಗ್ ಎಂದು ಗುರುತಿಸಲಾಗಿದೆ. ಫೆಬ್ರವರಿ 17ರಂದು ಕ್ಯಾಲಿಫೋರ್ನಿಯಾದ ಟ್ರೇಸಿ ನಗರದ ಗುರುದ್ವಾರದ ಹೊರಗಡೆ ಕುಳಿತಿದ್ದ ಸಿಂಗ್ನನ್ನು ಹಾಡುಹಗಲೇ ಮೂವರು ಶಂಕಿತರು ಕಾರಿನಲ್ಲಿ ಅಪಹರಿಸಿದ್ದರು. ಮೂರು ದಿನಗಳ ಬಳಿಕ ಸಿಂಗ್ನ ಮೃತದೇಹ ಹತ್ತಿರದ ಕೆರೆಯ ಬಳಿ ಪತ್ತೆಯಾಗಿತ್ತು. ದುಷ್ಕರ್ಮಿಗಳು ಬೇರೆ ಯಾರನ್ನೂ ಅಪಹರಿಸಲು ಉದ್ದೇಶಿಸಿದ್ದು ತಪ್ಪು ತಿಳುವಳಿಕೆಯಿಂದ ಸಿಂಗ್ನನ್ನು ಅಪಹರಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಅನ್ನು ಸೆಮಿಫೈನಲ್ ಗೆ ತಲುಪಿಸಿದ ಹ್ಯಾರಿ ಬ್ರೂಕ್; ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳಕೊಂಡ ಪಾಕ್
England Vs Pakistan- ಐಸಿಸಿ ಟಿ20 ವಿಶ್ವಕಪ್ ನ ಪ್ರತಿಯೊಂದು ಪಂದ್ಯವೂ ಒಂದಕ್ಕಿಂತ ಒಂದು ರೋಚಕವಾಗಿ ಸಾಗುತ್ತಿವೆ. ಇದೀಗ ಸೂಪರ್ 8 ಹಂತದ ಥ್ರಿಲ್ಲಿಂಗ್ ಮ್ಯಾಚ್ ನಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರು ಅಮೋಘ ಶತಕ ಬಾರಿಸುವ ಮೂಲಕ ಪಾಕಿಸ್ತಾನದ ಕೈಯಿಂದ ಪಂದ್ಯವನ್ನು ಕಿತ್ತುಕೊಂಡರು. ಇದೇವೇಳೆ ಮೊದಲನೇ ಪಂದ್ಯವನ್ನು ಮಳೆಯಿಂದಾಗಿ ಕಳೆದುಕೊಂಡಿದ್ದ ಪಾಕ್, ಎರಡನೇ ಪಂದ್ಯವನ್ನೂ ಸೋತಿರುವುದರಿಂದ ಅದರ ಸೆಮಿಫೈನಲ್ ಹಾದಿ ಕಠಿಣವಾಗಿದೆ.
ಇರಾನ್ ಬತ್ತಳಿಕೆಗೆ ಚೀನಾದ ಸೂಪರ್ಸಾನಿಕ್ ಕ್ಷಿಪಣಿ, ರಶ್ಯದ ಹಾವೋಕ್ ಹೆಲಿಕಾಪ್ಟರ್ ಸೇರ್ಪಡೆ
ಟೆಹ್ರಾನ್, ಫೆ.24: ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಪಡೆಗಳನ್ನು ಜಮಾವಣೆಗೊಳಿಸುತ್ತಿರುವಂತೆಯೇ ಇರಾನ್ ಕೂಡಾ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಿದ್ದು ಚೀನಾದಿಂದ ಎರಡು ಅತ್ಯಾಧುನಿಕ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದ ಬಹುತೇಕ ಪೂರ್ಣಗೊಂಡಿರುವುದಾಗಿ ವರದಿಯಾಗಿದೆ. ಚೀನಾದ ಸಿಎಂ-302 ಬ್ಯಾಲಿಸ್ಟಿಕ್ ಕ್ಷಿಪಣಿಯು ವಿಶ್ವದ ಅತ್ಯುತ್ತಮ ಹಡಗು ನಾಶಕ ಕ್ರೂಸ್ ಕ್ಷಿಪಣಿಯಾಗಿದೆ. ಇದು ಕೆಳಮಟ್ಟದಲ್ಲಿ ಕ್ಷಿಪ್ರವಾಗಿ ಮತ್ತು ಶಬ್ದಾತೀತ ವೇಗದಲ್ಲಿ ಹಾರುತ್ತದೆ. ಶತ್ರುಗಳು ಪತ್ತೆಹಚ್ಚುವ ಮೊದಲೇ ಸುಮಾರು 290 ಕಿ.ಮೀ ದೂರದ ಗುರಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ. ಹಡಗು, ಯುದ್ದವಿಮಾನ ಅಥವಾ ನೆಲದ ಮೇಲಿನ ಲಾಂಚರ್ಗಳಿಗೂ ಜೋಡಿಸಬಹುದು ಮತ್ತು ಭೂಮಿಯ ಮೇಲಿನ ಗುರಿಗಳನ್ನೂ ಹೊಡೆಯುವ ಸಾಮರ್ಥ್ಯ ಹೊಂದಿದೆ. ವಿಮಾನವಾಹಕ ನೌಕೆಯನ್ನು ಸಂಪೂರ್ಣವಾಗಿ ಮುಳುಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದರ ಜೊತೆಗೆ, ರಶ್ಯದ ಹ್ಯಾವೋಕ್ ದಾಳಿ ಹೆಲಿಕಾಪ್ಟರ್ಗಳು ಈಗಾಗಲೇ ಇರಾನ್ ತಲುಪಿದ್ದು ಇದನ್ನು ಕ್ರಿಜಾಂಟೆಮಾ-ಎಂ ಸೂಪರ್ಸಾನಿಕ್ ಟ್ಯಾಂಕ್ ವಿರೋಧಿ ಕ್ಷಿಪಣಿಯೊಂದಿಗೆ ಅಳವಡಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಸ್ವಯಂ ಚಾಲಿತ ಮ್ಯುಟೇಶನ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, 8 ದಿನದಲ್ಲಿಯೇ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಆಟೋ ಮ್ಯುಟೇಶನ್ ತಂತ್ರಾಂಶಕ್ಕೆ ಚಾಲನೆ ನೀಡಿದ ಅವರು, ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದರೆ 7 ದಿನ ನೊಟೀಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದ ಮೂಲಕ ತಕರಾರು ಸಲ್ಲಿಸಬಹುದು. ಯಾರೂ ತಕರಾರು ಸಲ್ಲಿಸದಿದ್ದರೆ ಎಂಟನೆ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ. ನೋಂದಣಿಯೇತರವಾಗಿ ಖಾತೆ ಬದಲಾವಣೆಗೆ ಮನವಿ ಬಂದಂತಹ ಪ್ರಕರಣಗಳಿಗೆ 15 ದಿನ ನೊಟೀಸ್ ಅವಧಿ ಇದ್ದು, ತಕರಾರು ಸಲ್ಲಿಸಬಹುದಾಗಿದೆ. ತಕರಾರು ಇಲ್ಲದಿದ್ದರೆ 16ನೆ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ ಎಂದು ತಿಳಿಸಿದರು. 2024ನೆ ಸಾಲಿನ ಎಪ್ರಿಲ್ 1 ರಿಂದ 2026 ಫೆ.20ರವರೆಗಿನ ಅವಧಿಯಲ್ಲಿ 35,11,987 ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತವಾಗಿ ಮಾಡಿದ್ದರೆ, ಕೇವಲ 5207 ಪ್ರಕರಣಗಳಲ್ಲಿ ಮಾತ್ರ ತಕರಾರು ದಾಖಲಾಗಿವೆ. ಅಂದರೆ ನಾವು ಒಟ್ಟು ಮ್ಯುಟೇಶನ್ ಶೇ.98 ರಷ್ಟು ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ ಮಾಡಿದಂತಾಗಿದೆ. ತಕರಾರು ದಾಖಲಿಸಿದ ಪ್ರಕರಣಗಳನ್ನೂ 60 ದಿನಗಳಲ್ಲಿ ಇತ್ಯರ್ಥಗೊಳಿಸಿ ಆದೇಶ ಹೊರಡಿಸುತ್ತಿದ್ದೇವೆ ಎಂದು ಅವರು ವಿವರಿಸಿದರು. ಸ್ವಯಂ ಚಾಲಿತ ಮ್ಯುಟೇಶನ್ಗೆ ಚಾಲನೆ ನೀಡುವ ಮೂಲಕ ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆಬಾಗಿಲಿಗೇ ತಲುಪಿಸಬೇಕು ಎಂಬ ಸರಕಾರದ ಉದ್ದೇಶ ಈಡೇರಿದೆ ಎಂದ ಅವರು, ಕಂದಾಯ ಇಲಾಖೆಯನ್ನು ಜನಪರಗೊಳಿಸಬೇಕು, ಆಡಳಿತದಲ್ಲಿ ಸುಧಾರಣೆ ಮತ್ತು ಸರಳೀಕರಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಿಂದ ಹೆಜ್ಜೆ ಹೆಜ್ಜೆಗೂ ಹಲವಾರು ಬದಲಾವಣೆಗಳನ್ನು ತರಲಾಗುತ್ತಿದೆ. ಆ ಬದಲಾವಣಾ ಪರ್ವದ ಮತ್ತೊಂದು ಮಹತ್ವದ ಹೆಜ್ಜೆಯೇ ಸ್ವಯಂ ಚಾಲಿತ ಮ್ಯುಟೇಶನ್ಗೆ ಚಾಲನೆ ಎಂದು ಸಚಿವರು ಉಲ್ಲೇಖಿಸಿದರು. ಈ ಸೇವೆಯನ್ನು ಒಂದು ತಿಂಗಳಿನಿಂದ ಮಂಡ್ಯದಲ್ಲಿ ಅನುಷ್ಠಾನಗೊಳಿಸಿ ಸಾಧಕ ಪರಿಶೀಲಿಸಿ ಇಂದಿನಿಂದ ಶೇ.98 ರಷ್ಟು ಎಲ್ಲಾ ಖಾತೆ ಬದಲಾವಣೆಗಳೂ ಸ್ವಯಂ ಚಾಲಿತಗೊಳ್ಳಲು ಮುನ್ನುಡಿ ಇಟ್ಟಿದ್ದೇವೆ. ಅಲ್ಲದೆ, ಖಾತೆ ಬದಲಾವಣೆ ಕಂದಾಯ ಇಲಾಖೆಯ ಮೂಲ ಜವಾಬ್ದಾರಿಗಳಲ್ಲೊಂದು. ಇನ್ನೂ ಜನ ಸಾಮಾನ್ಯರು ಖಾತೆ ಬದಲಾವಣೆಗಾಗಿ ಸರಕಾರಿ ಕಚೇರಿಗೆ ಅಲೆಯುವಂತಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಆನ್ಲೈನ್ನಲ್ಲಿಯೇ ತಮ್ಮ ಖಾತೆ ಬದಲಾವಣೆ ಕೆಲಸಗಳನ್ನು ನಿರ್ವಹಿಸಬಹುದು ಎಂದು ಅವರು ವಿವರಿಸಿದರು. ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವ್ಯಾವ ಸೇವೆಗಳಿಗೆ ನೊಟೀಸ್ ನೀಡುವ ಅಗತ್ಯ ಇರುವುದಿಲ್ಲವೋ ಅವುಗಳನ್ನು 2024ರ ಎಪ್ರಿಲ್ ತಿಂಗಳಿನಿಂದಲೇ ಸ್ವಯಂ ಚಾಲಿತವಾಗಿ ವರ್ಗಾವಣೆಯಾಗುವಂತೆ ಮಾಡಲಾಗಿತ್ತು. ಹಕ್ಕು-ಬಾಧ್ಯತೆ ದಾಖಲಾತಿ, ಋಣ ತೆಗೆಯುವುದು, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆಯಾಜ್ಞೆ, ಸರಕಾರದ ಆದೇಶ, ಸಾಗುವಳಿ ಚೀಟಿ ನಮೂದು, ಪಹಣಿ ವರ್ಗಾವಣೆ ಸೇವೆಗಳನ್ನು ಈಗಾಗಲೇ ಸ್ವಯಂ ಚಾಲಿತಗೊಳಿಸಲಾಗಿತ್ತು. ಇಂತಹ ಪ್ರಕರಣಗಳು ತಿಂಗಳಿಗೆ ಸರಾಸರಿ 2.47 ಲಕ್ಷ ಖಾತೆ ಬದಲಾವಣೆಗಾಗಿ ಬರುತ್ತವೆ. ಈ ಪೈಕಿ 1.75 ಲಕ್ಷ ಖಾತೆ ಬದಲಾವಣೆಯನ್ನು ಈಗಾಗಲೇ ಸ್ಚಯಂ ಚಾಲಿತವಾಗಿ ನೆರವೇರಿಸಲಾಗಿದೆ. ಅಂದರೆ ಶೇ.65 ರಿಂದ ಶೇ.71 ರಷ್ಟು ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಮೀನಾ ನಾಗರಾಜ್ ಸೇರಿದಂತೆ ಪ್ರಮುಖರಿದ್ದರು. ‘ಶಾನುಭೋಗರ ಕೆಲಸ ಭೂಮಿ ತಂತ್ರಾಂಶ ಮಾಡುತ್ತಿದೆ’: ‘ಈ ಹಿಂದೆ ಶಾನುಭೋಗರು ಮಾಡುತ್ತಿದ್ದ ಕೆಲಸವನ್ನು ಈಗ ಭೂಮಿ ತಂತ್ರಾಂಶದ ಮೂಲಕ ಮಾಡಲಾಗುತ್ತಿದೆ. ಆದರೆ, ಇದಕ್ಕಾಗಿ ಜನ ಸಾಮಾನ್ಯರು ದಿನನಿತ್ಯ ಸರಕಾರಿ ಕಚೇರಿಗಳಿಗೆ ಅಲೆಯುವುದು ಸಾಮಾನ್ಯವಾಗಿತ್ತು. ಕೆಲ ಅಧಿಕಾರಿಗಳ ಸ್ವೇಚ್ಛಾಚಾರದಿಂದ, ಅವ್ಯವಸ್ಥೆ ಮತ್ತು ಮಧ್ಯವರ್ತಿಗಳ ಕಿರುಕುಳದಿಂದ ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದರು. ಇದರಿಂದ ಸರಕಾರಕ್ಕೂ ಕೆಟ್ಟ ಹೆಸರು ಉಂಟಾಗುತ್ತಿತ್ತು. ಪ್ರಸ್ತುತ ಸ್ವಯಂ ಚಾಲಿತ ಮ್ಯುಟೇಶನ್ಗೆ ಚಾಲನೆ ನೀಡಲಾಗಿದ್ದು, ಈ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡಿದಂತಾಗಿದೆ’ -ಕೃಷ್ಣ ಭೈರೇಗೌಡ, ಕಂದಾಯ ಸಚಿವ
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ODI | ಮಂಡಿ ಗಾಯಕ್ಕೊಳಗಾದ ಹರ್ಮನ್ಪ್ರೀತ್ ಕೌರ್
ಹೊಸದಿಲ್ಲಿ, ಫೆ.24: ಬ್ರಿಸ್ಬೇನ್ನಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಂಡಿ ಗಾಯಕ್ಕೆ ಒಳಗಾಗಿದ್ದಾರೆ. ಎರಡನೇ ಇನಿಂಗ್ಸ್ನಲ್ಲಿ ಫೀಲ್ಡಿಂಗ್ ಮಾಡಲು ಅವರು ಮೈದಾನಕ್ಕಿಳಿಯಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಉಪನಾಯಕಿ ಸ್ಮತಿ ಮಂಧಾನ ತಂಡವನ್ನು ಮುನ್ನಡೆಸಿದರು. ಭಾರತೀಯ ಇನಿಂಗ್ಸ್ನಲ್ಲಿ ಹರ್ಮನ್ಪ್ರೀತ್ 83 ಎಸೆತಗಳಲ್ಲಿ 53 ರನ್ ಗಳಿಸಿದರು.
Ranji Trophy Final | ಶುಭಮನ್ ಶತಕ; ಕರ್ನಾಟಕದ ವಿರುದ್ಧ ಜಮ್ಮು-ಕಾಶ್ಮೀರ 284/2
ಹುಬ್ಬಳ್ಳಿ, ಫೆ.24: ಶುಭಮನ್ ಪುಂಡಿರ್ ಅಜೇಯ ಶತಕ (117 ರನ್, 221 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಯುವ ಆಟಗಾರ ಯಾವರ್ ಹಸನ್ (88 ರನ್, 150 ಎಸೆತ, 13 ಬೌಂಡರಿ) ಮತ್ತು ಅಬ್ದುಲ್ ಸಮದ್ (ಔಟಾಗದೆ 52, 67 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಆತಿಥೇಯ ಕರ್ನಾಟಕ ತಂಡದ ವಿರುದ್ಧ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದೆ. ಮಂಗಳವಾರ ಮೊದಲ ದಿನದಾಟದ ಅಂತ್ಯಕ್ಕೆ 27ರ ವಯಸ್ಸಿನ ಎಡಗೈ ಬ್ಯಾಟರ್ ಶುಭಮ್ ಔಟಾಗದೆ 117 ರನ್ ಗಳಿಸಿದ್ದಾರೆ. 52 ರನ್ ಗಳಿಸಿದ ಅಬ್ದುಲ್ ಸಮದ್ ಅವರು ಶುಭಮ್ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ನಾಯಕ ಪರಾಸ್ ಡೋಗ್ರಾ ಗಾಯಗೊಂಡು ನಿವೃತ್ತರಾದಾಗ ಶುಭಮ್ ಹಾಗೂ ಸಮದ್ ಜೋಡಿ ಮೂರನೇ ವಿಕೆಟ್ಗೆ 105 ರನ್ ಸೇರಿಸಿ ತಂಡವನ್ನು ಆಧರಿಸಿದರು. ಕೆಎಸ್ಸಿಎ ಹುಬ್ಬಳ್ಳಿ ಕ್ರಿಕೆಟ್ ಮೈದಾನ ಸಾಂಪ್ರದಾಯಿಕವಾಗಿ ಬ್ಯಾಟರ್ಗಳಿಗೆ ಸ್ನೇಹಿಯಾಗಿದ್ದು, ಟಾಸ್ ಜಯಿಸಿದ ಜಮ್ಮು-ಕಾಶ್ಮೀರ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಶುಭಮ್ ಹಾಗೂ ಹಸನ್ ಎಂಟು ಬಾರಿ ಚಾಂಪಿಯನ್ ಕರ್ನಾಟಕ ತಂಡದ ವಿರುದ್ಧ ಎರಡನೇ ವಿಕೆಟ್ಗೆ ನಿರ್ಣಾಯಕ 139 ರನ್ ಜೊತೆಯಾಟ ನಡೆಸಿದರು. ಶಿಖರ್ ಶೆಟ್ಟಿ ಬೌಲಿಂಗ್ನಲ್ಲಿ ಮಿಡ್ವಿಕೆಟ್ನತ್ತ ಸಿಕ್ಸರ್ ಸಿಡಿಸಿದ ಶುಭಮ್ ತನ್ನದೇ ಶೈಲಿಯಲ್ಲಿ ಶತಕ ಪೂರೈಸಿದರು. ತನ್ನ ಹೆಲ್ಮೆಟ್ ತೆಗೆದು, ಎರಡೂ ಕೈಗಳನ್ನು ಎತ್ತಿ ಶತಕದ ಸಂಭ್ರಮ ಆಚರಿಸಿದರು. ಪಂದ್ಯ ಮುಂದುವರಿದಂತೆ ಪಿಚ್ ವಿರೂಪಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಟಾಸ್ ಜಯಿಸಿದ ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮೊದಲು ಬ್ಯಾಟಿಂಗ್ ಮಾಡುವ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರು. ಇದೇ ಮೊದಲ ಬಾರಿ ರಣಜಿ ಟೂರ್ನಿಯಲ್ಲಿ ಫೈನಲ್ ಪಂದ್ಯ ಆಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಇಂದು ಕಾಮ್ರಾನ್ ಇಕ್ಬಾಲ್ (6 ರನ್) ವಿಕೆಟ್ ಬೇಗನೆ ಕಳೆದುಕೊಂಡಿತು. ಆರಂಭಿಕ ಆಟಗಾರ ಇಕ್ಬಾಲ್ ಅವರು ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿ ನಿಂತಿದ್ದ ಕೆ.ಎಲ್. ರಾಹುಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಭೋಜನ ವಿರಾಮದ ವೇಳೆಗೆ ಜಮ್ಮು-ಕಾಶ್ಮೀರ ತಂಡವು ಒಂದು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ಹಸನ್ ಹಾಗೂ ಶುಭಮ್ ಮೊದಲು ಬ್ಯಾಟಿಂಗ್ ಮಾಡುವ ತಮ್ಮ ನಾಯಕನ ನಿರ್ಧಾರವನ್ನು ಸಮರ್ಥಿಸಿದರು. ಸವಾಲಿನ ವಾತಾವರಣದಲ್ಲಿ ಹಸನ್ ಹಾಗೂ ಶುಭಮ್ ಹೊಸ ಚೆಂಡನ್ನು ಸಮರ್ಥವಾಗಿ ಎದುರಿಸಿದರು. ಪ್ರತೀ ಓವರ್ಗೆ ಮೂರು ರನ್ ಗಳಿಸುತ್ತಾ ಸ್ಟ್ರೈಕ್ ಬದಲಿಸುತ್ತಾ ಜೊತೆಯಾಟವನ್ನು ವಿಸ್ತರಿಸಿದರು. ಮೂವರು ವೇಗಿಗಳಾದ ಪ್ರಸಿದ್ಧ ಕೃಷ್ಣ, ವಿಜಯಕುಮಾರ್, ವಿದ್ಯಾಧರ ಪಾಟೀಲ್ ಹಾಗೂ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಶಿಸ್ತುಬದ್ಧ ಲೈನ್ ಹಾಗೂ ಲೆಂಗ್ತ್ನಲ್ಲಿ ಬೌಲಿಂಗ್ ಮಾಡಿದರು. ಈ ವರ್ಷದ ರಣಜಿ ಋತುವಿನಲ್ಲಿ ಗರಿಷ್ಠ ವಿಕೆಟ್ಗಳು (55) ಪಡೆದ ಸಾಧನೆಯೊಂದಿಗೆ ಫೈನಲ್ಗೆ ಪ್ರವೇಶಿಸಿದ್ದ ಗೋಪಾಲ್ ಎದುರಾಳಿ ಬ್ಯಾಟರ್ಗಳನ್ನು ಪದೇ ಪದೇ ಕಾಡಿದರು. 2025ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಕಾಲಿಟ್ಟಿರುವ 22ರ ವಯಸ್ಸಿನ ಹಸನ್ ಅವರು ಅರ್ಧಶತಕ ಗಳಿಸದೆ 9 ಪಂದ್ಯಗಳನ್ನು ಕಳೆದಿದ್ದರು. ಫೈನಲ್ ಪಂದ್ಯದಲ್ಲಿ 150 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 88 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದ ಹಸನ್ ಚೊಚ್ಚಲ ಶತಕದಿಂದ ವಂಚಿತರಾದರು. ಪ್ರಸಿದ್ಧ ಕೃಷ್ಣ ಎಸೆದ ಬೌನ್ಸರ್ ಒಂದು ಪರಾಸ್ ಡೋಗ್ರಾ ಅವರ ಕುತ್ತಿಗೆಗೆ ಅಪ್ಪಳಿಸಿತು. ಆಗ ಫಿಜಿಯೊರಿಂದ ಡೋಗ್ರಾ ಚಿಕಿತ್ಸೆ ಪಡೆದರು. ತಂಡದ ಸಿಬ್ಬಂದಿಯಿಂದ ಮತ್ತೊಮ್ಮೆ ತಪಾಸಣೆಗೆ ಒಳಗಾದ ಡೋಗ್ರಾ ಕೋಚ್ ಅಜಯ್ ಶರ್ಮಾ ಅವರ ಸೂಚನೆಯ ಮೇರೆಗೆ ಗಾಯಾಳು ನಿವೃತ್ತಿಯಾದರು. ಆಗ ಸಮದ್ ಅವರು ಶುಭಮ್ ಜೊತೆ ಕೈಜೋಡಿಸಿ ತಂಡದ ಮೊತ್ತವನ್ನು 284ಕ್ಕೆ ತಲುಪಿಸಿದರು. ಸಂಕ್ಷಿಪ್ತ ಸ್ಕೋರ್ ಜಮ್ಮು-ಕಾಶ್ಮೀರ: 87 ಓವರ್ಗಳಲ್ಲಿ 284/2 (ಶುಭಮ್ ಪುಂಡಿರ್ ಔಟಾಗದೆ 117, ಯಾವರ್ ಹಸನ್ 88, ಅಬ್ದುಲ್ ಸಮದ್ ಔಟಾಗದೆ 52, ಪ್ರಸಿದ್ಧ ಕೃಷ್ಣ 2-36)
ಬೆಂಗಳೂರು: ವಿವಿಧ ಕೈಗಾರಿಕಾ ವಲಯಗಳ ಭವಿಷ್ಯದ ಹಾದಿ ಹೇಗಿರಬೇಕು ಮತ್ತು ಸರಕಾರವು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಸ್ವರೂಪ ಯಾವುದಾಗಿರಬೇಕು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಏರೋಸ್ಪೇಸ್ ಮತ್ತು ರಕ್ಷಣೆ, ಮಶೀನ್ ಟೂಲ್ಸ್, ಆಟೋ/ಇ.ವಿ, ಮತ್ತು ಪರಿಸರಸ್ನೇಹಿ ಇಂಧನ ವಲಯಗಳ ವಿಷನ್ ಗ್ರೂಪ್ಗಳ ಸಭೆ ನಡೆಸಿದರು. ಮಂಗಳವಾರ ನಗರದ ಖನಿಜ ಭವನದಲ್ಲಿ ನಡೆದ ಸಭೆಗಳಲ್ಲಿ ಉದ್ಯಮಿಗಳು ಹಾಗೂ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು. ಕೆಲವರು ವರ್ಚುವಲ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಐಕೆಎಫ್ ಸಿಇಒ ಜೋತ್ಸ್ನಾ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೆಶಕ ದೊಡ್ಡ ಬಸವರಾಜು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಸಚಿವ ಪಾಟೀಲ್, ಇಡೀ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮಗಳ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜಪಾನಿನಲ್ಲಿ 2028ರ ಹೊತ್ತಿಗೆ ಸುಝುಕಿ ಮತ್ತು ಟೊಯೊಟಾ ಕಂಪನಿಗಳು ಏರಿಯಲ್ ಟ್ಯಾಕ್ಸಿ ಸೇವೆ ಆರಂಭಿಸುತ್ತಿವೆ. ಅದಕ್ಕೆ ಬೆಂಗಳೂರಿನ ಸಾಸ್ಮೋಸ್ ಕಂಪನಿಯೇ ವಿದ್ಯುತ್ ಸಾಧನ-ಸಲಕರಣೆಗಳನ್ನು ಪೂರೈಸುತ್ತಿದೆ. ನಮ್ಮಲ್ಲೂ `ಫ್ಲೈ-ಟ್ಯಾಕ್ಸಿ’ ಸೇವೆಗೆ ಸಂಬಂಧಿಸಿದಂತೆ ಸಮರ್ಪಕ ನೀತಿ ರೂಪಿಸಿ, ಇಲ್ಲೂ ಅಂತಹ ಸೇವೆಯನ್ನು ಆರಂಭಿಸಬಹುದು ಎಂದು ಉದ್ಯಮಿಗಳು ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು’ ಎಂದರು. ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರದ ಕೈಗಾರಿಕೆಗಳಿಗೆ ಅಗತ್ಯವಾದ ಪರೀಕ್ಷಾ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಸ್ಥಾಪಿಸಬೇಕೆಂಬ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂತು. ಈ ಸೌಲಭ್ಯಗಳನ್ನು ಒದಗಿಸಲಾಗುವುದು. ನಾವು ಈ ಕ್ಷೇತ್ರಗಳ ಬೆಳವಣಿಗೆಗೆ ಅಗತ್ಯವಾದ ನೀಲನಕ್ಷೆ ತಯಾರಿಸಬೇಕೆಂಬ ಸಲಹೆ ಕೇಳಿಬಂದಿದೆ. ನಾವು ಈಗಾಗಲೇ ಬೆಂಗಳೂರು ಉತ್ತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಧಾರವಾಡ-ವಿಜಯಪುರ-ಬೆಳಗಾವಿ ರಕ್ಷಣಾ ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಕೇಂದ್ರ ಸರಕಾರದ ಬಳಿ ಕೇಳಿದ್ದೇವೆ. ಇವುಗಳ ಜೊತೆಗೆ ಬೆಂಗಳೂರು ಮತ್ತು ಮೈಸೂರು ನಡುವೆ ಕೂಡ ಇಂತಹ ಕಾರಿಡಾರ್ ಬೆಳವಣಿಗೆಗೆ ಸದವಕಾಶ ಇದೆ ಎಂದು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದರು. ಕರ್ನಾಟಕವು ರಕ್ಷಣಾ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯ ರಾಜಧಾನಿಯಾಗಬೇಕು. ಇದಕ್ಕಾಗಿ 200 ಎಕರೆಯಲ್ಲಿ ಪ್ರತ್ಯೇಕ ಪಾರ್ಕ್ ಸ್ಥಾಪಿಸಬೇಕು. ಇದೇ ರೀತಿಯಲ್ಲಿ 100 ಎಕರೆಯಲ್ಲಿ ಏವಿಯಾನಿಕ್ಸ್ ಮತ್ತು ಸೆನ್ಸರ್ ಪಾರ್ಕ್ ಆರಂಭಿಸಬೇಕು ಎಂಬ ಚಿಂತನೆಗಳ ಪ್ರಸ್ತಾಪವಾಗಿದೆ. ವಿಶೇಷ ಹೂಡಿಕೆ ವಲಯ ಅಸ್ತಿತ್ವಕ್ಕೆ ಬಂದಮೇಲೆ ಇವುಗಳನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಬೇಕಾದ ಭೂಮಿಗೆ ಯಾವ ತೊಂದರೆಯೂ ಇಲ್ಲ ಎಂದು ಅವರು ನುಡಿದರು. ರಾಜ್ಯದಲ್ಲಿ ಮಶೀನ್ ಟೂಲ್ಸ್ ಕ್ಷೇತ್ರದಲ್ಲಿ ವಾರ್ಷಿಕ 36,500 ಕೋಟಿ ರೂ. ವಹಿವಾಟು ನಡೆದಿದ್ದು, ಒಳ್ಳೆಯ ಬೆಳವಣಿಗೆ ಇದೆ. ಇದರ ಉತ್ತೇಜನಕ್ಕೆಂದೇ ನಾವು ಬೃಹತ್ ಪ್ರಮಾಣದ ಪ್ರದರ್ಶನಮೇಳಗಳನ್ನು ನಡೆಸಿದ್ದೇವೆ. ಇದಾದ ಮೇಲೆ ಈ ಕ್ಷೇತ್ರದಲ್ಲಿ ವಿಪರೀತ ಬೇಡಿಕೆ ಕಂಡುಬರುತ್ತಿದೆ. ಬೃಹತ್ ಯಂತ್ರಗಳಿಗೆ ಬೇಕಾದ ಕಂಟ್ರೋಲ್ ಸಿಸ್ಟಂ ನಮ್ಮಲ್ಲೇ ಇರುವಂತೆ ನಾವು ಸುಧಾರಿಸಿಕೊಳ್ಳಬೇಕಿದೆ. ಇದಕ್ಕೆ ಬೇಕಾದ ಒಂದು ಪರೀಕ್ಷಾರ್ಥ ಘಟಕ ಈಗ ಬೆಂಗಳೂರಿನಲ್ಲಿದೆ. ಮತ್ತೊಂದು ಘಟಕವನ್ನು ತುಮಕೂರಿನಲ್ಲಿ ತೆರೆಯಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ವೃತ್ತಿ ತರಬೇತಿ ಸಂಸ್ಥೆಗಳನ್ನು ಹೆಚ್ಚು ಮಾಡುವ ಆಲೋಚನೆ ಇದೆ ಎಂದು ಪಾಟೀಲ ತಿಳಿಸಿದರು. ಆಟೋ ಮತ್ತು ಇ.ವಿ. ವಲಯದಲ್ಲಿ ಡ್ರೈಪೋರ್ಟ್ ಜಾಲದ ಅಗತ್ಯವಿದೆ ಎಂದು ವಿಷನ್ ಗ್ರೂಪ್ ಸದಸ್ಯರು ಗಮನಕ್ಕೆ ತಂದಿದ್ದಾರೆ. ಇ.ವಿ.ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗುವುದು. ಈಗ ಟಾಟಾ ಸಮೂಹದವರು ಧಾರವಾಡದಲ್ಲಿ ಇ.ವಿ. ಬಸ್ಗಳನ್ನು ತಯಾರಿಸುತ್ತಿದ್ದು, ಇಲ್ಲಿಂದಲೇ ದೇಶದಾದ್ಯಂತ ಪೂರೈಸುತ್ತಿದ್ದಾರೆ. ಈಗ ಅದೇ ಸಮೂಹವು ಮಿನಿ ಎಸ್ಕವೇಟರ್ ಉತ್ಪಾದನೆಗೆ ಸಜ್ಜಾಗಿದೆ. ಇದರ ರಫ್ತಿಗೆ ಸೂಕ್ತ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಜತೆಗೆ ದ್ವಿಚಕ್ರ ಇ.ವಿ. ವಾಹನಗಳ ಪರೀಕ್ಷಾ ಘಟಕ ಅಗತ್ಯವೆಂದು ಹೇಳಿದ್ದು, ಇವುಗಳನ್ನು ಪರಿಶೀಲಿಸಲಾಗುವುದು ಎಂದು ಅವರು ವಿವರಿಸಿದರು. ಹಸಿರು ಇಂಧನ ಕ್ಷೇತ್ರದಲ್ಲಿ ಬ್ಯಾಟರಿಗಳಲ್ಲಿ ವಿದ್ಯುತ್ ಸಂಗ್ರಹಕ್ಕೆ ಸಮರ್ಪಕ ನೀತಿ ಬೇಕೆಂದು ಹೇಳಿದ್ದಾರೆ. ಡೇಟಾ ಸೆಂಟರುಗಳ ಸ್ಥಾಪನೆಯ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಇವೆಲ್ಲವನ್ನೂ ಕುರಿತು ಸರಕಾರ ಗಂಭೀರವಾಗಿ ಆಲೋಚಿಸಿ, ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ಹೇಳಿದರು.
ಅಮೆರಿಕ ವಿರುದ್ಧ ಪರೋಕ್ಷವಾಗಿ ಗುಡುಗಿದ ಇರಾನ್, ಕೆಲವೇ ದಿನಗಳಲ್ಲಿ ಯುದ್ಧ ಶುರುವಾಗುವ ಭೀತಿ | US Military
ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕಾರಣಕ್ಕೂ ನೆಮ್ಮದಿ ನೆಲೆಸುವ ಸಾಧ್ಯತೆ ಈಗಿನ ವಾತಾವರಣಕ್ಕೆ ಕಾಣುತ್ತಿಲ್ಲ. ಒಂದು ಕಡೆ ಅಮೆರಿಕ ಸಂಧಾನ ಪ್ರಕ್ರಿಯೆ ನಡೆಸಲು ಸಂಪೂರ್ಣವಾಗಿ ಸಿದ್ಧವಿಲ್ಲ, ಆ ಕಡೆ ಇರಾನ್ ಕೂಡ ತಲೆಬಾಗಿ ನಡೆಯಲು ಸಿದ್ಧವಿಲ್ಲ. ಇಬ್ಬರೂ ಹೀಗೆ ಬಡಿದಾಡುವ ಸಮಯದಲ್ಲೇ ಮತ್ತೆ ಮತ್ತೆ ಯುದ್ಧದ ಆತಂಕ ಮನೆ ಮಾಡುತ್ತಲೇ ಇದೆ. ಇನ್ನೊಂದು ಕಡೆ ಇರಾನ್ ನೆಲದಲ್ಲಿ ಯಾರೂ
ಇರಾನ್–ಅಮೆರಿಕ ಯುದ್ಧದಲ್ಲಿ ಹಿಜ್ಬುಲ್ಲಾ ಪ್ರವೇಶಿಸಿದರೆ ದಾಳಿ: ಲೆಬನಾನ್ ಗೆ ಇಸ್ರೇಲ್ ಎಚ್ಚರಿಕೆ
ಟೆಲ್ ಅವೀವ್, ಫೆ.24: ಇರಾನ್ ಮತ್ತು ಅಮೆರಿಕ ನಡುವೆ ನಡೆಯುವ ಯಾವುದೇ ಯುದ್ಧದಲ್ಲಿ ಹಿಜ್ಬುಲ್ಲಾ ತೊಡಗಿಸಿಕೊಂಡರೆ, ವಿಮಾನ ನಿಲ್ದಾಣ ಸೇರಿದಂತೆ ಲೆಬನಾನ್ ನ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಇಸ್ರೇಲ್ ಲೆಬನಾನ್ಗೆ ಮಂಗಳವಾರ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಬನಾನ್ ಪ್ರಧಾನಿ ನವಾಫ್ ಸಲಾಮ್, ‘ಗಾಝಾದ ಸಂಘರ್ಷ ಲೆಬನಾನ್ ಮೇಲೆ ದೊಡ್ಡ ವೆಚ್ಚವನ್ನು ವಿಧಿಸಿದೆ. ನಮ್ಮನ್ನು ಮತ್ತೊಂದು ಸಾಹಸಕ್ಕೆ ಎಳೆಯಬಾರದು’ ಎಂದು ಹೇಳಿದ್ದಾರೆ.
ವಾಷಿಂಗ್ಟನ್, ಫೆ.24: ಅಮೆರಿಕದ ಸುಂಕ ಮತ್ತು ಗಡಿರಕ್ಷಣಾ ಇಲಾಖೆ ಹೊಸ 10% ಜಾಗತಿಕ ಸುಂಕವನ್ನು ಜಾರಿಗೊಳಿಸಿದ್ದು, ಈ ದರವು ಅಮೆರಿಕ ಅಧ್ಯಕ್ಷ ಟ್ರಂಪ್ ಈ ಹಿಂದೆ ಘೋಷಿಸಿದ್ದ 15%ಕ್ಕಿಂತ ಕಡಿಮೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಐಇಇಪಿಎ ಕಾಯ್ದೆಯಡಿ ತೆರಿಗೆ ಸಂಗ್ರಹಿಸುವುದನ್ನು ಟ್ರಂಪ್ ಆಡಳಿತ ನಿಲ್ಲಿಸಿದೆ. ಇದೇ ಸಮಯದಲ್ಲಿ, ವ್ಯಾಪಾರ ಕಾಯ್ದೆಯ ಸೆಕ್ಷನ್ 122ರಡಿ ಹೊಸ 10% ಜಾಗತಿಕ ಸುಂಕವನ್ನು ವಿಧಿಸಲಾಗಿದೆ. ಈ ಕ್ರಮವು 150 ದಿನಗಳವರೆಗೆ ಜಾರಿಯಲ್ಲಿರಲು ಸೆಕ್ಷನ್ 122ರಡಿ ಅವಕಾಶವಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. 15% ಸುಂಕ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಶ್ವೇತಭವನದ ಅಧಿಕಾರಿಗಳನ್ನು ಉಲ್ಲೇಖಿಸಿ ‘ದಿ ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ.
ಪಾಕಿಸ್ತಾನ ಬುಡಕ್ಕೆ ಬೆಂಕಿ ಇಟ್ಟ ಗಡಿಭಾಗ, ಮುಂದೆ ಇದೆ ಮಾರಿಹಬ್ಬ ಅಂತಿದ್ದಾರೆ ತಜ್ಞರು | Pakistan Military
ಪಾಕಿಸ್ತಾನ ತಾನು ಮಾಡಿರುವ ತಪ್ಪಿಗೆ ಏನು ಎದುರಿಸಬೇಕೋ ಅದನ್ನೇ ಈಗ ಎದುರಿಸುತ್ತಿದ್ದು, ಸಾಲು ಸಾಲು ಸಮಸ್ಯೆಗಳು ಇದೀಗ ಪಾಕಿಸ್ತಾನಕ್ಕೆ ಎದುರಾಗುತ್ತಿದೆ. ಅದರಲ್ಲೂ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆಗೆ ಈಗ ದೊಡ್ಡ ಸವಾಲು ಎದುರಾಗಿದೆ. ಗಡಿ ಭಾಗದಲ್ಲಿ ಪಾಕಿಸ್ತಾನಕ್ಕೆ ಉಗ್ರರು ದೊಡ್ಡ ಸಮಸ್ಯೆ ಉಂಟುಮಾಡುತ್ತಾ ಇದ್ದಾರೆ. ಈ ಕಾರಣಕ್ಕೆ ಕಾರ್ಯಾಚರಣೆ ನೆಪದಲ್ಲಿ ಅಫ್ಘಾನಿಸ್ತಾನ ನೆಲದ ಮೇಲೆ ಪಾಕ್ ಸೇನೆ
ಕಾರು ಹರಿಸಿ ವ್ಯಕ್ತಿಯೋರ್ವನ ಹತ್ಯೆ ಆರೋಪ: ಡಿಎಂಕೆ ನಾಯಕನ ಪುತ್ರನ ಬಂಧನ
ಗುವಾಹಟಿ, ಫೆ. 24: ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ ಕುರಿತ ವಾಗ್ವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಮೇಲೆ ಕಾರು ಹರಿಸಿ, ಒಬ್ಬರನ್ನು ಹತ್ಯೆಗೈದ ಆರೋಪದಲ್ಲಿ ತಮಿಳುನಾಡಿನ ಡಿಎಂಕೆ ನಾಯಕರೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆದಿತ್ಯ (20)ಎಂದು ಗುರುತಿಸಲಾಗಿದೆ. ಘಟನೆಯ ಸಂದರ್ಭ ಕಾರಿನಲ್ಲಿದ್ದ ಆತನ ಗೆಳೆಯರಾದ ಋತಿಕ್ ಕುಮಾರ್ ಹಾಗೂ ಹರೀಶ್ನನ್ನು ಕೂಡ ಬಂಧಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಶಿವಮೂರ್ತಿ ಎಂದು ಗುರುತಿಸಲಾಗಿದೆ. ಇವರು ಕೃಷ್ಣ ಗಿರಿ ಜಿಲ್ಲೆಯ ನಿವಾಸಿ ಹಾಗೂ ಲೇಬರ್ ಇನ್ಸ್ಪೆಕ್ಟರ್. ಪೊಲೀಸರ ಪ್ರಕಾರ, ಆದಿತ್ಯ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಶಿವಮೂರ್ತಿ ಅವರ ಮನೆ ಎದುರು ದ್ವಿಚಕ್ರ ವಾಹನ ನಿಲ್ಲಿಸಿರುವುದು ಕಂಡು ಬಂದಿದೆ. ಇದು ಆದಿತ್ಯನಿಗೆ ಸಂಚರಿಸುವುದಕ್ಕೆ ಅಡ್ಡಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಆತ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ. ಇದರಿಂದ ದ್ವಿಚಕ್ರ ವಾಹನಕ್ಕೆ ಹಾನಿ ಉಂಟಾಗಿದೆ. ಈ ಕುರಿತು ವಾಗ್ವಾದ ಆರಂಭವಾದಾಗ ಆದಿತ್ಯ ಕಾರನ್ನು ಶಿವಮೂರ್ತಿ, ಅವರ ಪುತ್ರ ಕಿರುಬಾಕರನ್, ಸೊಸೆ ಅಮ್ಸವಲ್ಲಿ ಹಾಗೂ ಮೊಮ್ಮಗಳು ನಿಲಾನಿ ಮೇಲೆ ಹರಿಸಿದ್ದಾನೆ. ಇದರಿಂದ ಶಿವಮೂರ್ತಿ ಅವರು ಗಂಭೀರ ಗಾಯಗೊಂಡು ಮೃತಪಟ್ಟರು. ಈ ಘಟನೆಗೆ ಸಂಬಂಧಿಸಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಹಾಗೂ ಮೂವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀದರ್ ನ ಕೂಲಿ ಕಾರ್ಮಿಕನ ಮಗನಿಗೆ 9 ಚಿನ್ನದ ಪದಕ
ಬೀದರ್ : ತಾಲೂಕಿನ ಮರಕುಂದಾ ಗ್ರಾಮದ ಕೂಲಿ ಕಾರ್ಮಿಕರಾದ ವಿಜಯಕುಮಾರ್ ಹಾಗೂ ಪ್ರಭಾವತಿ ದಂಪತಿಗಳ ಮಗ ರಾಹುಲ್ ಅವರು ಮಂಗಳವಾರ ನಡೆದ ಗುಲ್ಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 9 ಚಿನ್ನದ ಪದಕ ಗಳಿಸಿದ್ದಾರೆ. ರಾಹುಲ್ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಮಾಡಿದ್ದರು. ಇವರು ಎಂ.ಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ ಶೇ. 87 ರಷ್ಟು ಅಂಕ ಪಡೆದು, 9 ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಸದ್ಯಕ್ಕೆ ರಾಹುಲ್ ಬೀದರ್ ನ ಖಾಸಗಿ ಪಿಯುಸಿ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಲೆಕ್ಚರರ್ ಆಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. 9 ಚಿನ್ನದ ಪದಕ ಬಂದುದ್ದರಿಂದ ಅತೀವ ಸಂತೋಷವಾಗಿದೆ. ಓದಿನಿಂದ ಎಲ್ಲವನ್ನು ಸಾಧಿಸಬಹುದು ಎಂದು ಹೇಳುವ ರಾಹುಲ್, ಮುಂದಿನ ದಿನಗಳಲ್ಲಿ ಪಿಎಚ್ಡಿ ಮಾಡುತ್ತೇನೆ ಎನ್ನುತ್ತಾರೆ. ರಾಹುಲ್ ಅವರ ತಂದೆ ವಿಜಯಕುಮಾರ್ ಅವರು ತಮ್ಮ ಸ್ವಂತ ಊರಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾರೆ. ರಾಹುಲ್ ನಿಗೆ ಚಿನ್ನದ ಪದಕ ಬಂದಿದಕ್ಕಾಗಿ ಆತನ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಪಾಕ್ ವೈಮಾನಿಕ ದಾಳಿ | ನಾಗರಿಕರ ಪ್ರಾಣಹಾನಿ ಬಗ್ಗೆ ವಿಶ್ವಸಂಸ್ಥೆ ಕಳವಳ
ಇಸ್ಲಮಾಬಾದ್, ಫೆ.24: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಗುಂಪನ್ನು ಉದ್ದೇಶಿಸಿ ಅಫ್ಘಾನಿಸ್ತಾನದ ಗಡಿಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ್ದ ವೈಮಾನಿಕ ದಾಳಿ ಗುಪ್ತಚರ ವೈಫಲ್ಯದಿಂದ ಗುರಿತಪ್ಪಿ ನಾಗರಿಕರ ಸಾವು-ನೋವಿಗೆ ಕಾರಣವಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರತಿನಿಧಿ ಸಹಿತ ಅಂತಾರಾಷ್ಟ್ರೀಯ ಸಂಘಟನೆಗಳು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ದಾಳಿಯಲ್ಲಿ ಟಿಟಿಪಿಯ ಯಾವುದೇ ಉನ್ನತ ಕಮಾಂಡರ್ ಅಥವಾ `ಮೋಸ್ಟ್ ವಾಂಟೆಡ್' ವ್ಯಕ್ತಿ ಮೃತಪಟ್ಟಿಲ್ಲ. ಈ ದಾಳಿಯಲ್ಲಿ ಯಾವುದೇ ವಸ್ತುನಿಷ್ಠ ಗುರಿಯನ್ನು ಸಾಧಿಸಲು ಪಾಕಿಸ್ತಾನ ವಿಫಲವಾಗಿದ್ದು ಕಾರ್ಯಾಚರಣೆಯು ಸಂಪೂರ್ಣ ಗುಪ್ತಚರ ವೈಫಲ್ಯವಾಗಿದೆ. ಗಡಿಯಾಚೆಗಿನ ಕಾರ್ಯಾಚರಣೆಯಲ್ಲಿ ಟಿಟಿಪಿಯ ಉನ್ನತ ನಾಯಕತ್ವವನ್ನು ತೊಡೆದುಹಾಕುವಲ್ಲಿ ಇದು ಪಾಕಿಸ್ತಾನದ ಎರಡನೇ ವೈಫಲ್ಯವಾಗಿದೆ ಎಂದು ಮೂಲಗಳು ಹೇಳಿವೆ. ಟಿಟಿಪಿ ಮುಖ್ಯಸ್ಥ ನೂರ್ ವಾಲಿ ಮೆಷುದ್ನನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಪಾಕ್ ಹೇಳಿದೆ, ಆದರೆ ಮೆಷುದ್ ಹತನಾಗಿಲ್ಲ. ಆದರೆ ಮಹಿಳೆಯರು, ಮಕ್ಕಳು ಸೇರಿದಂತೆ ವ್ಯಾಪಕ ಸಂಖ್ಯೆಯಲ್ಲಿ ನಾಗರಿಕರ ಸಾವು-ನೋವು ಸಂಭವಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ವಿಶೇಷ ಮಾನವ ಹಕ್ಕುಗಳ ಪ್ರತಿನಿಧಿ ರಿಚರ್ಡ್ ಬೆನ್ನೆಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. `ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಮರುಕಳಿಸಿದ ಬಳಿಕ ನಡೆದ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ನಾಗರಿಕರ ಸಾವು-ನೋವಿನ ಬಗ್ಗೆ ಕಳವಳಗೊಂಡಿದ್ದೇನೆ. ಸಂಯಮ ವಹಿಸಿ ನಾಗರಿಕರ ರಕ್ಷಣೆಗೆ ಆದ್ಯತೆ ನೀಡುವಂತೆ ಎರಡೂ ಕಡೆಯವರನ್ನು ಆಗ್ರಹಿಸುತ್ತೇವೆ' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
Raichur | ದೈಹಿಕ, ಮಾನಸಿಕ ಸದೃಢತೆಗೆ ನೌಕರರಿಗೆ ಕ್ರೀಡೆಗಳು ಅತ್ಯಗತ್ಯ: ಸಿಇಓ ಈಶ್ವರ ಕುಮಾರ್ ಕಾಂದೂ
ಕ್ರೀಡಾ, ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ
ಯಾವುದೇ ಸಂಭಾವ್ಯ ದಾಳಿ ಎದುರಿಸಲು ಸಶಸ್ತ್ರ ಪಡೆಗಳು ಸನ್ನದ್ದವಾಗಿವೆ : ಇರಾನ್
ಟೆಹ್ರಾನ್, ಫೆ.24: ಜಿನೆವಾದಲ್ಲಿ ಫೆಬ್ರವರಿ 26ರಂದು ಇರಾನ್ ಮತ್ತು ಅಮೆರಿಕ ನಡುವೆ ಮೂರನೇ ಸುತ್ತಿನ ಪರಮಾಣು ಮಾತುಕತೆ ನಿಗದಿಯಾಗಿರುವಂತೆಯೇ, ಯಾವುದೇ ಸಂಭಾವ್ಯ ಸನ್ನಿವೇಶಕ್ಕೆ ಸಿದ್ದವಾಗಿರುವುದಾಗಿ ಇರಾನ್ ಹೇಳಿದೆ. ಅಮೆರಿಕದ ಕೃತ್ಯಗಳನ್ನು ನಿಕಟವಾಗಿ ಗಮನಿಸುವುದನ್ನು ಮುಂದುವರಿಸುತ್ತೇವೆ ಮತ್ತು ಯಾವುದೇ ಸಂಭಾವ್ಯ ಸನ್ನಿವೇಶಕ್ಕೆ ಎಲ್ಲಾ ಅಗತ್ಯದ ಸಿದ್ದತೆಗಳನ್ನು ನಡೆಸಿದ್ದೇವೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಹೇಳಿದ್ದಾರೆ. ಸಂಘರ್ಷವನ್ನು ತಡೆಗಟ್ಟಲು ಇರಾನ್ ಯುದ್ದಕ್ಕೆ ಸಂಪೂರ್ಣವಾಗಿ ಸಿದ್ದವಾಗಿರಬೇಕು ಎಂದು ಇರಾನ್ ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ರಮಿನ್ ಮೆಹ್ಮನ್ಪರಾಸ್ಟ್ ಹೇಳಿದ್ದಾರೆ. ಗೌರವಾನ್ವಿತ ಮತ್ತು ನ್ಯಾಯಯುತ ಒಪ್ಪಂದಕ್ಕೆ ಇರಾನ್ ಮುಕ್ತವಾಗಿದೆ. ಚೆಂಡು ಅಮೆರಿಕನ್ನರ ಅಂಗಳದಲ್ಲಿದೆ. ಆದರೆ ಮಿಲಿಟರಿ ಬೆದರಿಕೆಗಳ ಮೂಲಕ ಟೆಹ್ರಾನ್ ಅನ್ನು ರಿಯಾಯಿತಿಗೆ ಒಪ್ಪಿಸಬಹುದು ಎಂಬ ಕಲ್ಪನೆ ಸರಿಯಲ್ಲ. ಯುದ್ದ ನಡೆಯಬಾರದು ಎಂದು ನಾವು ಬಯಸಿದರೂ, ಯುದ್ದಕ್ಕೆ 100% ಸಿದ್ಧವಾಗಿರಬೇಕು. ದೇಶದ ಸಶಸ್ತ್ರ ಪಡೆಗಳು ಅತ್ಯುನ್ನತ ಮಟ್ಟದಲ್ಲಿ ಸನ್ನದ್ದವಾಗಿವೆ ಎಂದವರು ಹೇಳಿರುವುದಾಗಿ ಇರಾನ್ನ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಲೆಬನಾನ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ `ತುರ್ತು ಅಗತ್ಯವಿಲ್ಲದ ಸಿಬ್ಬಂದಿ'ಗಳನ್ನು ತಕ್ಷಣ ತೆರವುಗೊಳಿಸಲು ಅಮೆರಿಕಾದ ವಿದೇಶಾಂಗ ಇಲಾಖೆ ಸೂಚಿಸಿರುವುದಾಗಿ ವರದಿಯಾಗಿದೆ. ಇರಾನ್ ಮೇಲೆ ದಾಳಿ ವಿರುದ್ದ ಉನ್ನತ ಕಮಾಂಡರ್ ಸಲಹೆ ನೀಡಿದ್ದಾರೆ ಎಂಬ ವರದಿ ತಿರಸ್ಕರಿಸಿದ ಟ್ರಂಪ್ ಇರಾನ್ನೊಂದಿಗೆ ಯುದ್ದದ ವಿರುದ್ದ ಅಮೆರಿಕದ ಉನ್ನತ ಕಮಾಂಡರ್ ಜ. ಡೇನಿಯಲ್ ಕೈನ್ ಎಚ್ಚರಿಕೆ ನೀಡಿದ್ದಾರೆ ಎಂಬ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. `ಈ ವರದಿಗಳು 100% ತಪ್ಪು ಮತ್ತು ಜ. ಕೈನ್ ಅವರ ಅಗಾಧ ಜ್ಞಾನ ಸಂಪತ್ತಿಗೆ ಅಗೌರವ ತೋರುತ್ತವೆ. ಅಮೆರಿಕ ಯುದ್ದವನ್ನು ಸುಲಭದಲ್ಲಿ ಗೆಲ್ಲಬಹುದು. ಆದರೆ ನಮ್ಮೆಲ್ಲರಂತೆಯೇ ಜ. ಕೈನ್ ಕೂಡಾ ಯುದ್ದವನ್ನು ಬಯಸುವುದಿಲ್ಲ. ಆದರೆ ಒಂದು ವೇಳೆ ಇರಾನ್ ವಿರುದ್ದ ಮಿಲಿಟರಿ ಕಾರ್ಯಾಚರಣೆಯ ನಿರ್ಧಾರ ಕೈಗೊಂಡರೆ ಯುದ್ದವನ್ನು ಸುಲಭದಲ್ಲಿ ಗೆಲ್ಲಬಹುದು ಎಂಬುದು ಜ. ಕೈನ್ ಅವರ ಅಭಿಪ್ರಾಯವಾಗಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಜ. ಕೈನ್ ಅವರು ಇರಾನ್ ವಿರುದ್ದ ಏನು ಮಾಡಬಾರದು ಎಂಬ ಬಗ್ಗೆ ಮಾತನಾಡುವುದಿಲ್ಲ. ಹೇಗೆ ಗೆಲ್ಲಬೇಕು ಎಂಬುದಷ್ಟೇ ಅವರಿಗೆ ಗೊತ್ತಿರುವುದು. ಅದನ್ನು ಮಾಡಲು(ಗೆಲುವು ಸಾಧಿಸಲು) ಅವರಿಗೆ ಸೂಚಿಸಿದೊಡನೆ ಬ್ಯಾಗ್ ಪ್ಯಾಕ್ ಮಾಡಿ ಹೊರಡುವವರಲ್ಲಿ ಅವರು ಮುಂಚೂಣಿಯಲ್ಲಿ ಇರುತ್ತಾರೆ. ಆದ್ದರಿಂದ ಇರಾನ್ನೊಂದಿಗಿನ ಸಂಭಾವ್ಯ ಯುದ್ದದ ಬಗ್ಗೆ ಬರೆಯಲಾದ ಎಲ್ಲವನ್ನೂ ತಪ್ಪಾಗಿ ಮತ್ತು ಉದ್ದೇಶಪೂರ್ವಕವಾಗಿ ಬರೆಯಲಾಗಿದೆ ಎಂದು ಟ್ರಂಪ್ ಹೇಳಿದ್ದು ಪರಮಾಣು ಒಪ್ಪಂದಕ್ಕೆ ಮುಂದಾಗಿದ್ದರೆ ಅದು ಇರಾನ್ ದೇಶಕ್ಕೆ ಮತ್ತು ಅದರ ಜನತೆಗೆ ಕೆಟ್ಟ ದಿನವಾಗಲಿದೆ ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ರಾಯಚೂರು | ಶಿಕ್ಷಣವೇ ಅಭಿವೃದ್ಧಿಗೆ ಮೂಲ: ಎಂ. ರಾಮಪ್ಪ
ಭೋವಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ರಾಯಚೂರು | ದೈಹಿಕ ಶಿಕ್ಷಣ ಪಠ್ಯಪುಸ್ತಕ ಮುದ್ರಣಕ್ಕೆ ಒತ್ತಾಯಿಸಿ ಮನವಿ
ರಾಯಚೂರು : ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ಮತ್ತು ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾದ ಜಗದೀಶ್ ಚಂದ್ರ ಅವರಿಗೆ ದೈಹಿಕ ಶಿಕ್ಷಣ ಪಠ್ಯಪುಸ್ತಕಗಳನ್ನು ಮುದ್ರಣ ಮಾಡದೇ ಮೌಲ್ಯ ಶಿಕ್ಷಣ ಪುಸ್ತಕದಲ್ಲಿ ವಿಲೀನಗೊಳಿಸಿರುವ ಕ್ರಮವನ್ನು ಖಂಡಿಸಿ ಮನವಿ ಸಲ್ಲಿಸಲಾಯಿತು. ದೈಹಿಕ ಶಿಕ್ಷಣ ವಿಷಯವನ್ನು ಪ್ರತ್ಯೇಕವಾಗಿ ಬೋಧಿಸಲು ಅಗತ್ಯವಾದ ಪಠ್ಯಪುಸ್ತಕಗಳ ಕೊರತೆಯಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ದೈಹಿಕ ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪ್ರಮುಖವಾಗಿರುವುದರಿಂದ ಪ್ರತ್ಯೇಕ ಪಠ್ಯಪುಸ್ತಕಗಳನ್ನು ತಕ್ಷಣ ಮುದ್ರಿಸಿ ಶಾಲೆಗಳಿಗೆ ವಿತರಣೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಕೆ. ರಂಗಸ್ವಾಮಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪರಶುರಾಮ ಹುಜರಾತಿ , ಗ್ರೇಡ್-1 ಜಿಲ್ಲಾಧ್ಯಕ್ಷ ಯಂಕಪ್ಪ ಪಿರಂಗಿ, ಗ್ರೇಡ್-2 ಜಿಲ್ಲಾಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ಮಲ್ಲಿಕಾರ್ಜುನ ಸೇರಿದಂತೆ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಉಮೇಶ್ ಎಸ್., ಹುಸೇನ್ ಬಾಷ, ವಿಜಯ ಜ್ಯೋಶಿ, ಗಂಗಾಧರ, ನರಹರಿ ದೇವರು, ಗುರುರಾಜ್, ಪರಿಮಳ ಭಂಡಾರಿ, ಜಯಲಕ್ಷ್ಮಿ, ವೀಣ, ನಾಗಭೂಷಣ, ಶಕುಂತಲಾ, ಪ್ರವೀಣ್, ಸುಜಾತ, ಮಮತ, ಶಂಷಾದ್, ಅಂಬಾದೇವಿ ಹಾಗೂ ವೆಂಕಟೇಶ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ದೈಹಿಕ ಶಿಕ್ಷಣದ ಮಹತ್ವವನ್ನು ವಿವರಿಸಿ, ವಿಷಯಕ್ಕೆ ಅಗತ್ಯ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
Kalaburagi | ಮದುವೆ ಮೆರವಣಿಗೆಯಲ್ಲಿ ಮಾರಕಾಸ್ತ್ರಗಳ ಪ್ರದರ್ಶನ ಪ್ರಕರಣ: ಮೂವರ ಬಂಧನ
ಕಲಬುರಗಿ: ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಶಕ್ತಿ ನಗರದ ಮದುವೆ ಮೆರವಣಿಗೆಯಲ್ಲಿ ಬಹಿರಂಗವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಬಸವನಗರದ ಹನುಮಾನ್ ದೇವರ ಗುಡಿ ಹತ್ತಿರದ ನಿವಾಸಿ ರಾಜವರ್ಧನ್ ಮಹಾದೇವಪ್ಪ ಸಂಗವಾರ (31), ಶಕ್ತಿನಗರದ ನಿವಾಸಿ ಸಂಜಯ ರಾಜೇಶ್ ಗಾಯಕವಾಡ್ (23) ಹಾಗೂ ಶಕ್ತಿ ನಗರದ ಮತ್ತೋರ್ವ ಆರೋಪಿ ತುಷಾರ್ ರಾಜೇಶ್ ಗಾಯಕವಾಡ್ (24) ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಫೆ.22 ರಂದು ನಗರದ ಎಂ.ಜಿ ರಸ್ತೆಯಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ ಬಂಧಿತ ಆರೋಪಿಯಾಗಿರುವ ತುಷಾರ್ ಗಾಯಕವಾಡ ಮದುವೆಯಾಗಿತ್ತು. ಬಳಿಕ ಅದೇ ದಿನ ಸಂಜೆ 7 ಗಂಟೆಗೆ ಶಕ್ತಿ ನಗರದಲ್ಲಿ ಆತನ ಮನೆ ಎದುರು ಮದುವೆಯ ಮೆರವಣಿಗೆಯಲ್ಲಿ ಡಿಜೆ ಡ್ಯಾನ್ಸ್ ಮಾಡುತ್ತಿದ್ದಾಗ ತುಷಾರನು ಸಂಜಯ್ ಎಂಬಾತನಿಗೆ ಚಾಕು ಹಾಗೂ ರಾಜವರ್ಧನಿಗೆ ಮಚ್ಚು ಹಿಡಿದು ಡ್ಯಾನ್ಸ್ ಮಾಡಲು ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ. ಡ್ಯಾನ್ಸ್ ಮಾಡಿದ್ದಲ್ಲದೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಭಯ ಹುಟ್ಟಿಸುವಂತಹ ಕೃತ್ಯ ಎಸಗಿದ ಆರೋಪದ ಮೇರೆಗೆ ಮೂವರು ಸೇರಿದಂತೆ ಇತರರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ FIR No. 23/2026 ಕಲಂ 54, 351(2) r/w 3(5) BNS-2023 ಮತ್ತು 25(1)(A) ಆಯುಧ ಕಾಯ್ದೆ ಅಡಿಯಲ್ಲಿ (SUO-Moto) ಪ್ರಕರಣ ದಾಖಲಾಗಿದೆ.
ಅವ್ಯವಸ್ಥೆ, ರೋಬೋಡಾಗ್ ವಿವಾದ ಮತ್ತು ಪ್ರತಿಭಟನೆ: ಭಾರತದ AI ಶೃಂಗಸಭೆಯಲ್ಲಿ ಏನೇನು ನಡೆಯಿತು?
AI ಶೃಂಗಸಭೆಗಳ ಗುರಿ ಕಾಲಾನಂತರದಲ್ಲಿ ಸಂಪೂರ್ಣವಾಗಿ ಬದಲಾಗಿದೆ. 2023 ರಲ್ಲಿ UK ಬ್ಲೆಚ್ಲಿ ಪಾರ್ಕ್ನಲ್ಲಿ ಮೊದಲ ಶೃಂಗಸಭೆಯನ್ನು ಆಯೋಜಿಸಿದಾಗ, AI ನ ಅಪಾಯಗಳ ಬಗ್ಗೆ ಮತ್ತು ಅದು ಹಾನಿಯನ್ನುಂಟುಮಾಡುವುದನ್ನು ಹೇಗೆ ತಡೆಯುವುದು ಎಂಬುದರ ಕುರಿತು ಮಾತನಾಡಲು ವಿಶ್ವ ನಾಯಕರು ಭೇಟಿಯಾಗಿದ್ದರು. ಸಿಯೋಲ್ನಲ್ಲಿ (2024) ನಡೆದ ಎರಡನೇ ಸಭೆಯೂ ಅದೇ ಮಾರ್ಗವನ್ನು ಅನುಸರಿಸಿತು. ಆದರೆ, ಪ್ಯಾರಿಸ್ನಲ್ಲಿ (2025) ನಡೆದ ಮೂರನೇ ಶೃಂಗಸಭೆಯ ಹೊತ್ತಿಗೆ, ದೇಶಗಳು ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿಸುವುದನ್ನು ನಿಲ್ಲಿಸಿ, ತಮ್ಮದೇ ಆದ AI ಕೈಗಾರಿಕೆಗಳನ್ನು ಹೇಗೆ ಬೆಳೆಸುವುದು ಎಂಬುದರ ಕಡೆಗೆ ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದವು. ಹೊಸದಿಲ್ಲಿಯಲ್ಲಿನ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತ ಈ ಬದಲಾವಣೆಯನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡಿತು. ನಿಯಮಗಳು ಮತ್ತು ಸುರಕ್ಷತೆಯನ್ನು ಹೈಲೈಟ್ ಮಾಡಬೇಕಿದ್ದ ಈ ಕಾರ್ಯಕ್ರಮವು ಬೃಹತ್ ವ್ಯಾಪಾರ ಪ್ರದರ್ಶನದಂತೆ ಕಾಣಿಸಿತು. ವೇಳಾಪಟ್ಟಿಯಲ್ಲಿ ಹಣಕಾಸು ವ್ಯವಹಾರಗಳು, ಹೊಸ ಉತ್ಪನ್ನಗಳ ಅನಾವರಣ, CEOಗಳ ಭಾಷಣಗಳು ಮತ್ತು ಪ್ರದರ್ಶನಗಳು ತುಂಬಿಕೊಂಡಿದ್ದವು. ಸಂಕ್ಷಿಪ್ತವಾಗಿ ಹೇಳುವುದಾದರೆ, ಶೃಂಗಸಭೆಗಳ ಮೂಲ ಗುರಿಯಾದ ಸುರಕ್ಷತಾ ಮಾನದಂಡಗಳನ್ನು ರಚಿಸುವುದು ಮತ್ತು ಅಪಾಯಗಳನ್ನು ಮೇಲ್ವಿಚಾರಣೆ ಮಾಡುವುದನ್ನು ನಿರ್ಲಕ್ಷಿಸಲಾಯಿತು. ದಿಲ್ಲಿಯಲ್ಲಿ ನಡೆದ ಶೃಂಗಸಭೆ ವ್ಯವಹಾರದ ಬಗ್ಗೆ—AI ಅನ್ನು ಯಾರು ನಿರ್ಮಿಸುತ್ತಾರೆ, ಯಾರು ಅದನ್ನು ಬಳಸುತ್ತಾರೆ ಮತ್ತು ಅದರಿಂದ ಯಾರು ಹೆಚ್ಚು ಹಣ ಗಳಿಸುತ್ತಾರೆ ಎಂಬುದರ ಬಗ್ಗೆ—ಕೇಂದ್ರೀಕೃತವಾಗಿತ್ತು. ಶೃಂಗಸಭೆಯಲ್ಲಿನ ಅವ್ಯವಸ್ಥೆ, ಎಡವಟ್ಟು ಪ್ರಮುಖ ಕಾರ್ಯಕ್ರಮವಾಗಿ ಗಮನ ಸೆಳೆದಿದ್ದರೂ, ಕಳಪೆ ಸಂಘಟನೆ ಮತ್ತು ಲಾಜಿಸ್ಟಿಕ್ಸ್ ಕುರಿತು ತೀವ್ರ ಟೀಕೆ ವ್ಯಕ್ತವಾಯಿತು. ಕಟ್ಟುನಿಟ್ಟಾದ ಭದ್ರತಾ ತಪಾಸಣೆ ವ್ಯವಸ್ಥೆಯಿಂದಾಗಿ ಅನೇಕ ಪ್ರತಿನಿಧಿಗಳು ಆಹಾರ ಅಥವಾ ನೀರು ಲಭ್ಯವಿಲ್ಲದೆ ಗಂಟೆಗಳ ಕಾಲ ಸಿಲುಕಿಕೊಂಡರು. ದೆಹಲಿಯ ಮಧ್ಯಭಾಗ ಮತ್ತು ಅದರಾಚೆಗೆ ವಿಐಪಿ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಸಂಚಾರ ನಿರ್ಬಂಧಿಸಿದ್ದರಿಂದ ದೀರ್ಘಾವಧಿಯ ಸಂಚಾರ ದಟ್ಟಣೆ ಉಂಟಾಯಿತು. ಇದರ ಪರಿಣಾಮವಾಗಿ ಸಭೆಯಲ್ಲಿ ಭಾಗವಹಿಸುವವರು, ಪ್ರತಿನಿಧಿಗಳು ಹಾಗೂ ಕಾರ್ಯಕ್ರಮದಲ್ಲಿ ಭಾಷಣ ಮಾಡುವವರೂ ಸಹ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಸ್ಥಳದಲ್ಲಿದ್ದವರು ತಮ್ಮ ವಾಹನಗಳಿಗೆ ತಲುಪಲು ಹಲವಾರು ಕಿಲೋಮೀಟರ್ ನಡೆದು ಹೋಗಬೇಕಾಯಿತು. ಶೃಂಗಸಭೆ ಆಕರ್ಷಿಸಿದ ಹಾಜರಾತಿಯ ಪ್ರಮಾಣಕ್ಕೆ ನಗರ ಸಿದ್ಧವಾಗಿರಲಿಲ್ಲ. ಏತನ್ಮಧ್ಯೆ, ಶೃಂಗಸಭೆಯಲ್ಲಿ ಮುಜುಗರ ತಂದ ವಿಷಯ ರೋಬೋಡಾಗ್ ವಿವಾದವಾಗಿತ್ತು. ವಾಣಿಜ್ಯವಾಗಿ ಲಭ್ಯವಿರುವ ಚೀನಾ ನಿರ್ಮಿತ ರೋಬೋಟ್ ನಾಯಿಯನ್ನು ತಾವೇ ಅಭಿವೃದ್ಧಿಪಡಿಸಿದ್ದಾಗಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ ಹೇಳಿಕೊಂಡಿತ್ತು. ಗಲ್ಗೋಟಿಯಾಸ್ನ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ನ 350 ಕೋಟಿ ರೂ.ಗಳ AI ಉಪಕ್ರಮದ ಅಡಿಯಲ್ಲಿ “ಓರಿಯನ್” ಅನ್ನು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡ ವಿಡಿಯೊ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣ ಬಳಕೆದಾರರು ಇದು ಚೀನಾದ Unitree Go2 ರೋಬೋಡಾಗ್ ಎಂದು ಗುರುತಿಸಿ, ವಿವಿ ವಿದೇಶಿ ತಂತ್ರಜ್ಞಾನವನ್ನು ತಮ್ಮದೇಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಗಲ್ಗೋಟಿಯಾಸ್ ವಿವಿಯಿಂದ ಸಮರ್ಪಕ ಉತ್ತರ ಸಿಗಲಿಲ್ಲ. ತಮ್ಮ ತಪ್ಪುಗಳಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರೂ ಅದು ಫಲಿಸಲಿಲ್ಲ. ಕೊನೆಗೆ ಗಲ್ಗೋಟಿಯಾಸ್ ವಿವಿಯನ್ನು ಎಕ್ಸ್ಪೋದಿಂದ ಹೊರಹಾಕಲಾಯಿತು. ದಿಲ್ಲಿಯಲ್ಲಿ 2023 ರಲ್ಲಿ G20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದರೂ, ಈ AI ಕಾರ್ಯಕ್ರಮದೊಂದಿಗೆ ಸರ್ಕಾರವು ಆ ಯಶಸ್ಸನ್ನು ಪುನರಾವರ್ತಿಸಲು ಹೆಣಗಾಡಿತು. G20 ಹಲವು ತಿಂಗಳುಗಳ ಕಾಲ ನಡೆದಿದ್ದರಿಂದ ನಿರ್ವಹಣೆಗೆ ಅನುಕೂಲವಾಗಿತ್ತು. ಆದರೆ AI ಶೃಂಗಸಭೆಯು ಏಕಕಾಲದಲ್ಲಿ ಹೆಚ್ಚಿನದನ್ನು ಸಾಧಿಸಲು ಪ್ರಯತ್ನಿಸಿತು. ವಿಶ್ವ ನಾಯಕರ ಉನ್ನತ ಮಟ್ಟದ ಸಭೆಯನ್ನು ಬೃಹತ್ ಸಾರ್ವಜನಿಕ ವ್ಯಾಪಾರ ಪ್ರದರ್ಶನದೊಂದಿಗೆ ಸಂಯೋಜಿಸಿದ ಪರಿಣಾಮ ಸಂಘಟಕರು ಅಸ್ತವ್ಯಸ್ತ ವಾತಾವರಣವನ್ನು ಸೃಷ್ಟಿಸಿದರು. ಈ ಕಳಪೆ ಯೋಜನೆ ವಿಶೇಷವಾಗಿ ಸಣ್ಣ ತಂತ್ರಜ್ಞಾನ ಉದ್ಯಮಿಗಳಿಗೆ ನೋವುಂಟುಮಾಡಿತು. ಕಾರ್ಯಕ್ರಮದ ವೇಳೆ ಅವರನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ. ಈ ವೈಫಲ್ಯಗಳು ಸರ್ಕಾರವು ಹೊಸ ಮತ್ತು ಅತ್ಯಾಧುನಿಕ ಕೈಗಾರಿಕೆಗಳಲ್ಲಿ ದೊಡ್ಡ ಪ್ರಮಾಣದ ಯೋಜನೆಗಳನ್ನು ಸಮರ್ಥವಾಗಿ ನಿರ್ವಹಿಸಿ ಬೆಂಬಲಿಸಲು ಸಾಮರ್ಥ್ಯ ಹೊಂದಿದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ತಂತ್ರಜ್ಞಾನ ದಿಗ್ಗಜರ ಸಮಾಗಮ ಮತ್ತು ಹೂಡಿಕೆ ಈ ಶೃಂಗಸಭೆ ವಿಶ್ವದ ಪ್ರಮುಖ ನಾಯಕರನ್ನು ಒಟ್ಟುಗೂಡಿಸಿತು. ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ, ಓಪನ್ಎಐನ ಸ್ಯಾಮ್ ಆಲ್ಟ್ಮನ್, ಆಂಥ್ರೊಪಿಕ್ನ ಡೇರಿಯೊ ಅಮೋಡೆ, ಗೂಗಲ್ ಡೀಪ್ಮೈಂಡ್ ಸಿಇಒ ಡೆಮಿಸ್ ಹಸ್ಸಾಬಿಸ್, ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಸೇರಿದಂತೆ ಇತರ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು. ಈ “ದಿಗ್ಗಜರ ಸಮಾಗಮ” ಬೃಹತ್ ಆರ್ಥಿಕ ಪರಿಣಾಮಗಳಿಗೆ ಕಾರಣವಾಯಿತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ AI ಮೂಲಸೌಕರ್ಯಕ್ಕಾಗಿ 250 ಶತಕೋಟಿ ಡಾಲರ್ಗಿಂತ ಹೆಚ್ಚು ಬದ್ಧತೆಗಳು ಹಾಗೂ ಡೀಪ್-ಟೆಕ್ ವೆಂಚರ್ ಕ್ಯಾಪಿಟಲ್ಗೆ 20 ಶತಕೋಟಿ ಡಾಲರ್ಗಿಂತ ಹೆಚ್ಚು ಬದ್ಧತೆಗಳನ್ನು ಘೋಷಿಸಿದರು. ಟಾಟಾ ಗ್ರೂಪ್ ಮತ್ತು ಓಪನ್ಎಐ ಹಾಗೂ ಎಎಮ್ಡಿ ನಡುವಿನ ಪಾಲುದಾರಿಕೆ ಸೇರಿದಂತೆ ಮಹತ್ವದ ಒಪ್ಪಂದಗಳು ಕೂಡ ನಡೆದವು. ಆದಾಗ್ಯೂ, ಈ ಅಂಕಿಅಂಶಗಳು ದೊಡ್ಡದಾಗಿದ್ದರೂ, ಅಂತರರಾಷ್ಟ್ರೀಯ ಹೂಡಿಕೆಯ ಈ ಮಟ್ಟವನ್ನು ಸಮಾನವಾಗಿ ಹೊಂದಿಸಲು ಭಾರತ ಇನ್ನೂ ತನ್ನದೇ ಆದ ಸ್ಥಳೀಯ ಖಾಸಗಿ ಸಂಪತ್ತಿನ ಕೊರತೆಯನ್ನು ಎದುರಿಸುತ್ತಿದೆ ಎಂಬುದು ವಾಸ್ತವ. ಭಾರತದ ದೇಶೀಯ AI ಉತ್ತೇಜನ ಶೃಂಗಸಭೆಯಲ್ಲಿ ಗಮನ ಸೆಳೆದ ಮತ್ತೊಂದು ವಿಷಯ ಭಾರತೀಯ ನವೋದ್ಯಮ ‘ಸರ್ವಂ AI’ ಆಗಿತ್ತು. ಸರ್ವಂ AI ಮಾದರಿಯು ಚಿತ್ರ ಶೀರ್ಷಿಕೆ ರಚನೆ, ದೃಶ್ಯ ಪಠ್ಯ ಗುರುತಿಸುವಿಕೆ, ಚಾರ್ಟ್ ವ್ಯಾಖ್ಯಾನ ಮತ್ತು ಸಂಕೀರ್ಣ ಟೇಬಲ್ ಪಾರ್ಸಿಂಗ್ ಸೇರಿದಂತೆ ಹಲವು ದೃಶ್ಯ ತಿಳುವಳಿಕೆ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಚಾಟ್ಜಿಪಿಟಿ ಮತ್ತು Gemini ಗಿಂತ ಭಿನ್ನವಾಗಿ, ಇದು ಅನೇಕ ಭಾರತೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಮಾದರಿಗಳು ಚೀನಾದ ಡೀಪ್ಸೀಕ್ ಇತ್ತೀಚೆಗೆ ಮಾಡಿದಂತೆ ಜಗತ್ತನ್ನು ಸಂಪೂರ್ಣವಾಗಿ ಬದಲಾಯಿಸದಿದ್ದರೂ, ಭಾರತವು ಗಂಭೀರ AI ತಂತ್ರಜ್ಞಾನವನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ತೋರಿಸಿವೆ. ಶರ್ಟ್ ಬಿಚ್ಚಿ ಪ್ರತಿಭಟನೆ ಶುಕ್ರವಾರ (ಫೆಬ್ರವರಿ 20), ಭಾರತ್ ಮಂಟಪದಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ (IYC) ಕಾರ್ಯಕರ್ತರ ಗುಂಪೊಂದು ಪ್ರದರ್ಶನ ಸಭಾಂಗಣದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿತು. ಸರ್ಕಾರ ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆಗಳನ್ನು ಹೊಂದಿರುವ ಟಿ-ಶರ್ಟ್ಗಳನ್ನು ಪ್ರದರ್ಶಿಸಿ ಇವರು ಆಕ್ರೋಶ ವ್ಯಕ್ತಪಡಿಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಲ್ ಸಂಖ್ಯೆ 5 ರ ಲಾಬಿ ಪ್ರದೇಶವನ್ನು ಪ್ರವೇಶಿಸಿ “ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ”, “ಭಾರತ-ಯುಎಸ್ ವ್ಯಾಪಾರ ಒಪ್ಪಂದ” ಮತ್ತು “ಎಪ್ಸ್ಟೀನ್ ಫೈಲ್ಸ್” ಎಂದು ಮುದ್ರಿತ ಟಿ-ಶರ್ಟ್ಗಳನ್ನು ತೋರಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಜನರು ಕರುಣೆ, ಗೌರವ ತೋರದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು: ಮಾಜಿ ಸಚಿವ ರಮೇಶ್ ಕುಮಾರ್ ಬೇಸರ
ಕೋಲಾರ: ಹೆಂಡತಿ ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ನನ್ನ ಶ್ರೀನಿವಾಸಪುರ ಕ್ಷೇತ್ರದ ಜನರು ಕರುಣೆ, ಪ್ರೀತಿ ಮತ್ತು ಗೌರವ ತೋರದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು ಎಂದು ಮಾಜಿ ಸಚಿವ ಹಾಗೂ ಶ್ರೀನಿವಾಸಪುರ ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ನಿ, ಮಕ್ಕಳು, ಕುಟುಂಬಕ್ಕೂ ಹೆಚ್ಚಾಗಿ ನಾನು ಕ್ಷೇತ್ರದ ಜನರನ್ನು ನೋಡಿಕೊಂಡಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ನನ್ನ ಮನಸ್ಥಿತಿ ಮತ್ತು ಕೆಲಸವನ್ನು ನೋಡದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು. ನನ್ನನ್ನು ಏಕಾಂಗಿಯಾಗಿ ಮಾಡಿದರು. ನಾನು ಕೂಡ ಉಪ್ಪು ಕಾರ ತಿನ್ನುವ ಮನುಷ್ಯನೇ. ನಾನು ಸಿಮೆಂಟ್, ಸ್ಟೀಲ್ ನಿಂದ ಮಾಡಿದ ಗೊಂಬೆ ಅಲ್ಲ. ಹಾಗಾಗಿ ನನಗೂ ದುಃಖ, ನೋವು, ಬೇಸರ ಆಗುತ್ತದೆ. ಅದಕ್ಕೆ ಸ್ವಲ್ಪ ದಿನ ಅಜ್ಞಾತ ವಾಸದಲ್ಲಿದ್ದೆ ಎಂದು ಹೇಳಿದ್ದಾರೆ. ಜನರನ್ನೇ ಕುಟುಂಬ ಎಂದುಕೊಂಡಿದ್ದ ನಾನು ಸೋತು ಏಕಾಂಗಿಯಾದಾಗ ಈ ಸಮಾಜಕ್ಕೆ ಏಕೆ ಮುಖ ತೋರಿಸಬೇಕು ಎಂಬ ಭಾವನೆ ನನ್ನಲ್ಲಿ ಬಂದಿತ್ತು. ಅದಕ್ಕೆ ಅಜ್ಞಾತ ವಾಸಕ್ಕೆ ಹೋಗುವ ನಿರ್ಧಾರ ತೆಗೆದುಕೊಂಡೆ ಎಂದು ತಿಳಿಸಿದ್ದಾರೆ. ನನಗೆ ಜಾತಿ,ಹಣ, ಅಧಿಕಾರದ ಆಸೆ ಇಲ್ಲ. ಯಾವುದಕ್ಕೂ ಆಸೆಪಡದ ಇವನು ಈ ಪಾಳು ಬಿದ್ದಿರುವ ಭೂಮಿಗೆ ಹೋಗ್ತಾನಾ?, ಆಸೆಪಡ್ತಾನಾ? ಆ ತಪ್ಪು ಮಾಡ್ತಾನಾ ಅನ್ನೋ ಕರುಣೆಯೇ ಇಲ್ಲದೆ ಕೆಲವರು ಆರೋಪ ಮಾಡಿಬಿಟ್ಟರು. ಏನೆಲ್ಲಾ ಮಾತನಾಡಿದರು, ತೇಜೋವಧೆ ಮಾಡಿದರು, ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿರುವುದು, ಅಧಿಕಾರದ ಅಪೇಕ್ಷೆ ಇಲ್ಲದೆ ಅಧಿಕಾರದಲ್ಲಿರುವುದು ತುಂಬಾ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಪತ್ನಿ 47 ವರ್ಷ ನನ್ನ ಜೊತೆ ಇದ್ದಳು, ಒಂದು ಸೀರೆ ಕೊಡಿಸಿ ಎನ್ನಲಿಲ್ಲ, ನನ್ನನ್ನು ಸಿನಿಮಾಗೆ ಕರೆದುಕೊಂಡು ಹೋಗಿ ಎಂದು ಕೇಳಿಲ್ಲ, ಸರ್ಕಾರಿ ಕಾರಿನಲ್ಲಿ ಕೂರಲಿಲ್ಲ. ಯಾವುದಕ್ಕೂ ಆಸೆ ಪಡದೆ ಕಷ್ಟದಲ್ಲಿ ಭಾಗಿಯಾದಳು. ನಾನು ಗೌರವದಿಂದ, ಧೈರ್ಯದಿಂದ ಹಾಗೂ ಪ್ರಾಮಾಣಿಕವಾಗಿ ಬದುಕಲು ಕಾರಣವಾದಳು, ಸರ್ಕಾರಿ ಬಂಗಲೆಯಲ್ಲೂ ಇರಲು ಆಕೆ ಒಪ್ಪಲಿಲ್ಲ , ಅಂಥವರು ದೂರವಾದಾಗ ಮನಸ್ಸಿಗೆ ಕಷ್ಟವಾಗುತ್ತದೆ ಎಂದು ಭಾವುಕರಾಗಿದ್ದರು. ನನಗೆ ಹೊಸದಾಗಿ ಕನಸು, ಆಸೆ ಏನೂ ಇಲ್ಲ. 50 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಹಲವು ಏಳು ಬೀಳು ನೋಡಿದ್ದೇನೆ. 1970ರಲ್ಲಿ ಬೆಂಗಳೂರು ಕಾರ್ಪೊರೇಷನ್ ಚುನಾವಣೆಗೆ ಮಲ್ಲೇಶ್ವರಂನ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದೆ. ಆಗ ನಾನು ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿಯಾಗಿದ್ದೆ. ಆಮೇಲೆ 1978 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಆಗ ನನಗೆ 28 ವರ್ಷ, ಮೊದಲ ಚುನಾವಣೆಗೆ 15 ಸಾವಿರ ರೂಪಾಯಿ ಖರ್ಚು ಮಾಡಿದ್ದೆ. 1983ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದೆ. ಆಗ ಅವರಿವರು ನೀಡಿದ 45 ಸಾವಿರ ರೂಪಾಯಿ ಖರ್ಚಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ದಿಲ್ಲಿ| ಮನೆ ಮುಂದೆಯೇ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ, ಫೆ. 24: ರಾಷ್ಟ್ರ ರಾಜಧಾನಿ ವಲಯದಲ್ಲಿರುವ ಗ್ರೇಟರ್ ನೋಯ್ಡಾದಲ್ಲಿ ಮಂಗಳವಾರ ಮೂವರು ಹಂತಕರು ವ್ಯಕ್ತಿಯೊಬ್ಬರನ್ನು ಅವರ ಮನೆಯ ಹೊರಗಡೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಗುಂಡಿನ ಗಾಯಗಳಿಂದ ಗಂಭೀರವಾಗಿದ್ದ ನಿತಿನ್ರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ, ಅವರು ಬಳಿಕ ಕೊನೆಯುಸಿರೆಳೆದರು. ಹಲವಾರು ವ್ಯಕ್ತಿಗಳು ನಿತಿನ್ರನ್ನು ಎಳೆದುಕೊಂಡು ಹೋಗಿ ನೆಲಕ್ಕೆ ಕೆಡವಿ ಅವರ ಮೇಲೆ ಹಲವು ಬಾರಿ ಗುಂಡು ಹಾರಿಸುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ದೀರ್ಘಕಾಲೀನ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಗ್ರೇಟರ್ ನೋಯ್ಡಾದ ಸಹಾಯಕ ಉಪ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ಹೇಳಿದ್ದಾರೆ. ‘‘ಇಂದು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ, ಸಚಿನ್ ಮತ್ತು ಅವನ ಸಂಗಡಿಗರು ಲುಕ್ಸರ್ ಗ್ರಾಮದ ನಿವಾಸಿ ನಿತಿನ್ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ನಿತಿನ್ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಪರಿಸ್ಥಿತಿ ನಿಯಂತ್ರಣದಲ್ಲಿದೆ’’ ಎಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.
Uttar Pradesh | ನಾಗಾಲ್ಯಾಂಡ್ ಮೂಲದ ವೈದ್ಯೆಗೆ ಲೈಂಗಿಕ ಕಿರುಕುಳ, ಜನಾಂಗೀಯ ನಿಂದನೆ
ಲಕ್ನೋ, ಫೆ. 24: ಉತ್ತರಪ್ರದೇಶದ ಗೋರಖ್ಪುರದಲ್ಲಿ ರವಿವಾರ ನಾಗಾಲ್ಯಾಂಡ್ನ 25 ವರ್ಷದ ವೈದ್ಯೆಯೊಬ್ಬರನ್ನು ದುಷ್ಕರ್ಮಿಗಳು ಸುಮಾರು 1.5 ಕಿ.ಮೀ. ದೂರ ಹಿಂಬಾಲಿಸಿಕೊಂಡು ಬಂದು ಲೈಂಗಿಕ ಕಿರುಕುಳ ನೀಡಿದ್ದಾರೆ ಹಾಗೂ ಅವರಿಗೆ ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋರಖ್ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿರುವ ಅವರು ರಾತ್ರಿ ಎಂಟು ಗಂಟೆಯ ಸುಮಾರಿಗೆ ಮಾಲ್ ಒಂದರಿಂದ ಕಾಲೇಜು ಆವರಣಕ್ಕೆ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರನ್ನು ಮೂವರು ವ್ಯಕ್ತಿಗಳು ಹಿಂಬಾಲಿಸಿಕೊಂಡು ಬಂದು ಬಳಿಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಹಾಗೂ ಮೂರನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಗೋರಖ್ಪುರ ಪೊಲೀಸ್ ಸೂಪರಿಂಟೆಂಡೆಂಟ್ ಅಭಿನವ್ ತ್ಯಾಗಿ ಹೇಳಿದರು. ವೈದ್ಯೆಯು ತನ್ನ ಕಾಲೇಜಿಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಬೈಕ್ನಲ್ಲಿ ಅವರನ್ನು ಬೆಂಬಲಿಸಿದರು ಹಾಗೂ ಅವರನ್ನು ಜನಾಂಗೀಯವಾಗಿ ನಿಂದಿಸಿದರು. ಒಬ್ಬ ವ್ಯಕ್ತಿಯು ತನ್ನ ಅಂಗಿ ಕಳಚಿದನು ಮತ್ತು ಇನ್ನೊಬ್ಬ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದನು ಎಂದು ಅವರು ತನ್ನ ದೂರಿನಲ್ಲಿ ಹೇಳಿದ್ದಾರೆ.
ಅಜೀಂ ಪ್ರೇಮ್ ಜೀ ವಿವಿ ವಿರುದ್ಧ ಎಬಿವಿಪಿ ಪ್ರತಿಭಟನೆ; ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ
ಬೆಂಗಳೂರು: ಸರ್ಜಾಪುರ ಸಮೀಪದ ಬೂರಗುಂಟೆ ಗ್ರಾಮದಲ್ಲಿ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸೈನ್ಯದ ವಿರುದ್ಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಪದಾಧಿಕಾರಿಗಳು ಸರ್ಜಾಪುರದ ವಿಶ್ವವಿದ್ಯಾಲಯದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು. ಎಬಿವಿಪಿ ಪ್ರತಿಭಟನೆಯಿಂದಾಗಿ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶ್ವವಿದ್ಯಾಲಯದ ಆವರಣದಲ್ಲಿ 50ಕ್ಕೂ ಹೆಚ್ಚು ಎಬಿವಿಪಿ ಕಾರ್ಯಕರ್ತರು ʼಭಾರತ್ ಮಾತಾ ಕೀ ಜೈʼ ಎಂದು ಘೋಷಣೆಗಳನ್ನು ಕೂಗುತ್ತಾ ಒಳನುಗ್ಗಲು ಪ್ರಯತ್ನಿಸಿದರು. ವಿಶ್ವವಿದ್ಯಾಲಯದ ನಾಮಫಲಕಕ್ಕೆ ಮಸಿ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯವು ದೇಶ ವಿರೋಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎಬಿವಿಪಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದರು.
ಪತ್ಯೇಕ ಪ್ರಕರಣ: ಮಾದಕ ವಸ್ತು ಸೇವಿಸಿದ ಆರೋಪ: 5 ಮಂದಿ ಸೆರೆ
ಮಂಗಳೂರು, ಫೆ.24: ಮಂಗಳೂರು ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ನಾರ್ಲ ಪಡೀಲ್ ನಿವಾಸಿಗಳಾದ ಸುಹಾನ್ ಪೂಜಾರಿ (21) ಮತ್ತು ಬಿ ಸುದೇಶ್ (19) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಸಹಾಯಕ ಪೊಲೀಸ್ ಉಪ-ನಿರೀಕ್ಷಕ ಮೋಹನ್ ಕೆ.ವಿ ರೌಂಡ್ಸ್ ನಲ್ಲಿರುವಾಗ ಉಳ್ಳಾಲ ತಾಲೂಕು ಕೋಟೆಕಾರ್ ಗ್ರಾಮದ ಬೀರಿ ರಸ್ತೆಯ ಬದಿಯಲ್ಲಿ ಆರೋಪಿಗಳಾದ ಸುಹಾನ್ ಪೂಜಾರಿ ಮತ್ತು ಬಿ ಸುದೇಶ್ ಎಂಬವರು ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಆರೋಪಿಗಳು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ತಾಲೂಕು ಕಸಬಾ ಬೆಂಗ್ರೆ ಸಮೀಪ ಗಾಂಜಾ ಸೇವಿಸಿರುವ ಆರೋಪದಲ್ಲಿ ಅಶ್ರಫ್ ಎಂಬಾತನನ್ನು ಪಣಂಬೂರು ಪೊಲೀಸ್ ಠಾಣಾ ಉಪ-ನಿರೀಕ್ಷಕಿ ಶ್ರೀಕಲಾ ಕೆ.ಟಿ ಅವರು ಫೆ.23ರಂದು ಬಂಧಿಸಿದ್ದಾರೆ. ಮಂಗಳೂರು ನಗರದ ಪಂಜಿಮೊಗರು ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಸೇವನೆ ಮಾಡಿರುವ ಆರೋಪದಲ್ಲಿ ಉರುಂದಾಡಿ ಗುಡ್ಡೆ ನಿವಾಸಿ ಚಂದನ್ ( 19 ) ಮತ್ತು ಸಿದ್ದಾಪುರ ಕಾನಕೇರಿ ನಿವಾಸಿ ಕಿರಣ್ ರವಿ ನಾಯ್ಕ ( 24 ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮನೆ ಸಮೀಕ್ಷೆ ನಡೆಸಲು ಕೇರಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ
ಹೊಸದಿಲ್ಲಿ, ಫೆ. 24: ತನ್ನ ‘‘ನವ ಕೇರಳ ನಾಗರಿಕ ಸ್ಪಂದನೆ ಕಾರ್ಯಕ್ರಮ’’ವನ್ನು ಜಾರಿಗೊಳಿಸಲು ಕೇರಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮೋದನೆ ನೀಡಿದೆ. ಈ ಕಾರ್ಯಕ್ರಮದ ಮೂಲಕ, ರಾಜ್ಯ ಸರಕಾರವು ತನ್ನ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗಳಿಂದ ಜನರ ಅಭಿಪ್ರಾಯವನ್ನು ಸಮಿತಿಗಳು ಮತ್ತು ಸ್ವಯಂಸೇವಕರ ಮೂಲಕ ಸಂಗ್ರಹಿಸಲು ಉದ್ದೇಶಿಸಿದೆ. ರಾಜ್ಯದಲ್ಲಿ ಏಪ್ರಿಲ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಇತ್ತೀಚೆಗೆ ಕೇರಳ ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು ಈ ಮಧ್ಯಂತರ ಆದೇಶವನ್ನು ನೀಡಿತು. ಆದರೆ, ಈ ಕಾರ್ಯಕ್ರಮಕ್ಕೆ ತಗಲಿದ ವೆಚ್ಚದ ವಿವರಗಳನ್ನು ಒಳಗೊಂಡ ವರದಿಯೊಂದನ್ನು ಸೂಕ್ತ ಸಮಯದಲ್ಲಿ ಸಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲಯವು ಕೇರಳ ಸರಕಾರಕ್ಕೆ ನಿರ್ದೇಶನ ನೀಡಿತು. ವಿಚಾರಣೆಯ ವೇಳೆ, ಸುಪ್ರೀಂ ಕೋರ್ಟ್ ನ್ಯಾಯಪೀಠವು ಹೈಕೋರ್ಟ್ ಹಸ್ತಕ್ಷೇಪದ ಆಧಾರವನ್ನು ಪ್ರಶ್ನಿಸಿತು. ‘‘ತನ್ನ ಕಾರ್ಯಕ್ರಮಗಳ ಪರಿಣಾಮಗಳೇನು ಮತ್ತು ಅದನ್ನು ಹೇಗೆ ಸುಧಾರಿಸಬಹುದು ಎನ್ನುವುದನ್ನು ರಾಜ್ಯವೊಂದು ಯಾಕೆ ತಿಳಿಯಬಾರದು? ಅದರಲ್ಲಿ ಏನು ತಪ್ಪಿದೆ?’’ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ ಕೇರಳ ಸರಕಾರದ ಪರ ವಕೀಲ ಕಪಿಲ್ ಸಿಬಲ್, ಈ ಕಸರತ್ತಿನಲ್ಲಿ ತೊಡಗಿರುವ ಸ್ವಯಂಸೇವಕರಿಗೆ ಒಂದು ಪೈಸೆಯನ್ನೂ ಕೊಡಲಾಗಿಲ್ಲ ಎಂದು ಹೇಳಿದರು. ಹೈಕೋರ್ಟ್ನಲ್ಲಿ ಅರ್ಜಿದಾರರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ನರೇಂದ್ರ ಹೂಡ, ಈ ಕಾರ್ಯಕ್ರಮವು ವಾಸ್ತವಿಕವಾಗಿ, ಚುನಾವಣೆಗೆ ಮುಂಚಿತವಾಗಿ ಸರಕಾರದ ವೆಚ್ಚದಲ್ಲಿ ನಡೆಸಲಾಗುತ್ತಿರುವ ರಾಜಕೀಯ ಸಾರ್ವಜನಿಕ ಸಂಪರ್ಕ ಅಭಿಯಾನವಾಗಿದೆ ಎಂದು ಆರೋಪಿಸಿದ್ದರು.
ಪಶ್ಚಿಮ ಬಂಗಾಳದ 6 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ|ಪೊಲೀಸರಿಂದ ಶೋಧ
ಕೋಲ್ಕತ, ಫೆ. 24: ಬಾಂಬ್ ಇಡಲಾಗಿದೆ ಎಂಬ ಇಮೇಲ್ ಬೆದರಿಕೆಗಳ ಹಿನ್ನೆಲೆಯಲ್ಲಿ, ಕೋಲ್ಕತಾದ ಎರಡು ಸೇರಿದಂತೆ ಪಶ್ಚಿಮ ಬಂಗಾಳದ ಕನಿಷ್ಠ ಆರು ಜಿಲ್ಲಾ ನ್ಯಾಯಾಲಯಗಳಲ್ಲಿ ಪೊಲೀಸರು ಮಂಗಳವಾರ ಶೋಧ ನಡೆಸಿದರು. ನ್ಯಾಯಾಲಯಗಳಲ್ಲಿ ಬಾಂಬ್ಗಳನ್ನು ಇಡಲಾಗಿದೆ ಎಂಬ ಬೆದರಿಕೆಯನ್ನು ಹೊತ್ತ ಇಮೇಲ್ ಸಂದೇಶ ಬಂದ ಬಳಿಕ, ಮಧ್ಯ ಕೋಲ್ಕತದ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಲಯ ಹಾಗೂ ಬ್ಯಾಂಕ್ಸ್ಹಾಲ್ ನ್ಯಾಯಾಲಯಕ್ಕೆ ಬಾಂಬ್ ಪತ್ತೆ ಮಾಡುವ ನಾಯಿಗಳು ಮತ್ತು ಬಾಂಬ್ ನಿಷ್ಕ್ರಿಯ ತಂಡಗಳನ್ನು ಕಳುಹಿಸಲಾಗಿದೆ. ಆದರೆ, ಶೋಧ ಕಾರ್ಯಾಚರಣೆಯ ವೇಳೆ, ಯಾವುದೇ ಬಾಂಬ್ ಪತ್ತೆಯಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೂಗ್ಲಿ ಜಿಲ್ಲೆಯ ಚಿನ್ಸುರಾ, ಪಶ್ಚಿಮ ಬರ್ದ್ವಾನ್ ಜಿಲ್ಲೆಯ ಅಸನ್ಸೋಲ್ ಮತ್ತು ದುರ್ಗಾಪುರ ಹಾಗೂ ಮುರ್ಶಿದಾಬಾದ್ ಜಿಲ್ಲೆಯ ಬರ್ಹಾಂಪುರ ನ್ಯಾಯಾಲಯಗಳಲ್ಲೂ ಇಂಥದೇ ಘಟನೆಗಳು ನಡೆದಿವೆ. ಪ್ರಸಕ್ತ ಚಾಲ್ತಿಯಲ್ಲಿರುವ ಪಶ್ಚಿಮ ಬಂಗಾಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವೇಳೆ, ತಮ್ಮ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸುಮಾರು 60 ಲಕ್ಷ ಮತದಾರರು ತಕರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಬೃಹತ್ ಪ್ರಮಾಣದ ಅರ್ಜಿಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ಪಶ್ಚಿಮ ಬಂಗಾಳದ ಜಿಲ್ಲಾ ನ್ಯಾಯಾಲಯಗಳ 250 ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರ ಜೊತೆಗೆ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ ನ್ಯಾಯಾಧೀಶರನ್ನೂ ನಿಯೋಜಿಸಬಹುದು ಎಂಬುದಾಗಿ ಮಂಗಳವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.
ದಿಲ್ಲಿಯಲ್ಲಿ ಈಶಾನ್ಯ ಮಹಿಳೆಯರಿಗೆ ಜನಾಂಗೀಯ ನಿಂದನೆ: ಕ್ರಮಕ್ಕೆ ಈಶಾನ್ಯ ಮುಖ್ಯಮಂತ್ರಿಗಳ ತೀವ್ರ ಆಗ್ರಹ
ಗುವಾಹಟಿ/ಹೊಸದಿಲ್ಲಿ: ದಿಲ್ಲಿಯ ಮಾಳವೀಯ ನಗರ ಪ್ರದೇಶದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಎಸಗಿದ ಘಟನೆಗೆ ಈಶಾನ್ಯ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು, ಇಂತಹ ವರ್ತನೆಗಳನ್ನು ಯಾವುದೇ ರೀತಿಯಲ್ಲೂ ಸಹಿಸಲಾಗುವುದಿಲ್ಲ ಎಂದು ಖಂಡಿಸಿದರು. ಸಮಾಜದಲ್ಲಿ ಜನಾಂಗೀಯ ದ್ವೇಷಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿಷಯ ತಿಳಿದ ತಕ್ಷಣ ದಿಲ್ಲಿ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ತ್ವರಿತ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಈ ಘಟನೆ ಕಳವಳಕಾರಿ ಮತ್ತು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟರು. “ಈಶಾನ್ಯ ಭಾರತ ದೇಶದ ಅವಿಭಾಜ್ಯ ಅಂಗ. ಪ್ರತಿಯೊಬ್ಬ ನಾಗರಿಕರೂ ಸಮಾನತೆ, ಘನತೆ ಮತ್ತು ಗೌರವಕ್ಕೆ ಅರ್ಹರು. ಇಂತಹ ಘಟನೆಗಳು ಪರಸ್ಪರ ಗೌರವದ ಮಹತ್ವವನ್ನು ನೆನಪಿಸುತ್ತವೆ,” ಎಂದು ಹೇಳಿದರು. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಕೂಡಾ ಪ್ರಕರಣವನ್ನು ಖಂಡಿಸಿ, ಈಶಾನ್ಯ ರಾಜ್ಯಗಳ ಜನರ ವಿರುದ್ಧ ನಡೆಯುವ ತಾರತಮ್ಯ ತಕ್ಷಣ ನಿಲ್ಲಬೇಕು ಎಂದು ಆಗ್ರಹಿಸಿದರು. ಜನಾಂಗೀಯ ಹಾಗೂ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ಸಮಾಜಕ್ಕೆ ನಾಚಿಕೆಗೇಡು ಎಂದರು. ವರದಿಗಳ ಪ್ರಕಾರ, ಮಾಳವೀಯ ನಗರದಲ್ಲಿರುವ ನಾಲ್ಕನೇ ಅಂತಸ್ತಿನ ಫ್ಲ್ಯಾಟ್ನಲ್ಲಿ ವಾಸಿಸುತ್ತಿರುವ ಅರುಣಾಚಲ ಪ್ರದೇಶದ ಮೂವರು ಮಹಿಳೆಯರು ಹವಾನಿಯಂತ್ರಕ (ಎಸಿ) ಅಳವಡಿಸಲು ಎಲೆಕ್ಟ್ರಿಷಿಯನ್ ನನ್ನು ಕರೆಸಿಕೊಂಡಿದ್ದರು. ಗೋಡೆ ಕೊರೆಯುವ ವೇಳೆ ಧೂಳು ಹಾಗೂ ಅವಶೇಷಗಳು ಕೆಳಂತಸ್ತಿಗೆ ಬೀಳುತ್ತಿವೆ ಎಂಬ ಕಾರಣಕ್ಕೆ ನೆರೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ವೇಳೆ ಮಹಿಳೆಯರ ವಿರುದ್ಧ ಜನಾಂಗೀಯ ನಿಂದನೆ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವಾ ಕೇಂದ್ರಗಳ ಅಗತ್ಯತೆಯಿದೆ : ಡಾ. ಎಚ್ ಆರ್ ತಿಮ್ಮಯ್ಯ
ಉಳ್ಳಾಲ: ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಸೇವಾ ಕೇಂದ್ರಗಳ ಅಗತ್ಯತೆಯಿದ್ದು, ಸಮಾಜಮುಖಿ ಆರೋಗ್ಯ ಯೋಜನೆಗಳು ಸಾರ್ವಜನಿಕ ಆರೋಗ್ಯದ ಬೆಳವಣಿಗೆಗೆ ನೆರವಾಗುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ಅಭಿಪ್ರಾಯಪಟ್ಟರು. ಅವರು ಗ್ರಾಮೀಣ ಭಾಗದ ಜನರಿಗೆ ಹಾಗೂ ದೇಶದಾದ್ಯಂತ ಬರುವ ಭಕ್ತಾಧಿಗಳಿಗೆ ಸಮೀಪದಲ್ಲೇ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ವತಿಯಿಂದ, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಾಗೂ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತುಆದಿ ಕೊರಗತನಿಯ ದೈವಸ್ಥಾನದ ಸಹಕಾರದಲ್ಲಿ ಸ್ಥಾಪಿಸಲಾಗಿದ ದೆಕ್ಕಾಡು, ಕುತ್ತಾರಿನ ಆದಿಸ್ಥಳ ಸ್ವಾಮಿ ಕೊರಗಜ್ಜ ದೇವಸ್ಥಾನ ಪರಿಸರದಲ್ಲಿ ಆದಿಸ್ಥಳ ಕೊರಗಜ್ಜ ಸೇವಾ ಕ್ಲಿನಿಕ್ ನ ಉದ್ಘಾಟನೆ ನಡೆಸಿ ಮಾತನಾಡಿದರು. ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ. ಬಿ. ಸಂದೀಪ್ ರೈ ಅವರು, ಉನ್ನತ ಮಟ್ಟದ ವೈದ್ಯಕೀಯ ಸಂಸ್ಥೆಗಳು ಮತ್ತು ಗ್ರಾಮೀಣ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ಸಂಜೆ ೪ ರಿಂದ ೬ ಗಂಟೆಯವರೆಗೆ ಕಾರ್ಯಾಚರಿಸಲಿದ್ದು, ಚಿಕಿತ್ಸೆ ಜೊತೆಗೆ ಔಷಧಿಯನ್ನು ಉಚಿತವಾಗಿ ಕ್ಲಿನಿಕ್ ನಲ್ಲಿ ಒದಗಿಸಲಾಗುವುದು ಎಂದರು. ಈ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್. ಶೆಟ್ಟಿ , ಸೇವಾ ಕ್ಲಿನಿಕ್ ನಲ್ಲಿ ವೈದ್ಯರಾಗಿರುವ ಡಾ. ಪ್ರಕಾಶ್, ಡೆಪ್ಯುಟಿ ವೈದ್ಯಕೀಯ ಅಧೀಕ್ಷಕ ಡಾ. ಶಿರಾಲ್ ಹೆಗ್ಡೆ, ಡಾ.ಅನಿಲ್ ಸನಿಲ್, ಅರುಣ್ ಪೂಂಜ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಹೇಮಂತ್ ಶೆಟ್ಟಿ , ಶ್ರೀಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ದೈವಸ್ಥಾನದ ಮಹಾಬಲ ಹೆಗ್ಡೆ, ವಿನೋದ್ ಶೆಟ್ಟಿ ಬೊಳ್ಯ, ಮುನ್ನೂರು ಗ್ರಾ.ಪಂ ಉಪಾಧ್ಯಕ್ಷ ಮಹಾಬಲ್ ದೆಪ್ಪೆಲಿಮಾರ್, ಸತೀಶ್ ಮಿತ್ತಗೆಲ , ಮೂಲ್ಯಣ್ಣ ಬಾಲಕೃಷ್ಣ ಮೂಲ್ಯ, ಹರೀಶ್ ಭಂಡಾರಬೈಲ್, ದೈವ ನರ್ತಕ ಮಾಯಿಲ, ಗಣೇಶ್ ಪೂಜಾರಿ, ಮೋನಪ್ಪ ಗೌಡ, ಲಕ್ಷ್ಮಣ್ ಗೌಡ ಹಾಗೂ ದೈವದ ಚಾಕರಿ ವರ್ಗದವರು ಉಪಸ್ಥಿತರಿದ್ದರು.
ಮಣಿಪಾಲ| ಬೈಕ್ ಕಳವು ಪ್ರಕರಣ: 11ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ
ಮಣಿಪಾಲ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 80 ಬಡಗಬೆಟ್ಟು ಗ್ರಾಮದ ನೇತಾಜಿನಗರ ನಿವಾಸಿ ಶರತ್ (26) ಹಾಗೂ ಗಣೇಶ್ (31) ಬಂಧಿತ ಆರೋಪಿಗಳು. 80 ಬಡಗುಬೆಟ್ಟು ಗ್ರಾಮದ ರಾಹುಲ್ನಗರದ ವೀರ ಮಾರುತಿ ಭಜನಾ ಮಂದಿರ ಬಳಿ ಸುದರ್ಶನ್ ಎಂಬವರು ಫೆ.21ರಂದು ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿದ 11 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಶದಲ್ಲಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರ ವಿರುದ್ಧ ಮಣಿಪಾಲ, ಉಡುಪಿ ನಗರ, ಭದ್ರಾವತಿ, ಕೊಪ್ಪ, ತೀರ್ಥಹಳ್ಳಿ, ಮಡಿಕೇರಿ ಹಾಗೂ ತುಮಕೂರು ಪೊಲೀಸ್ ಠಾಣೆಗಳಲ್ಲಿ 11ಕ್ಕೂ ಅಧಿಕ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಜಯನಗರ | ಫೆ.29ರಿಂದ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ
ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಹಿಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿ ಫೆಬ್ರವರಿ 29ರಿಂದ ಆರಂಭವಾಗಲಿದೆ. ಒಟ್ಟು 4 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಹಕಾರ ಮಾರಾಟ ಮಹಾಮಂಡಳಿ ವತಿಯಿಂದ ಪ್ರತಿ ಕ್ವಿಂಟಾಲ್ಗೆ 5,875 ರೂ. ರಂತೆ ಖರೀದಿ ನಡೆಯಲಿದೆ. ಪ್ರತಿ ರೈತನಿಂದ ಎಕರೆಗೆ 4 ಕ್ವಿಂಟಾಲ್ ಮಿತಿಯಲ್ಲಿ ಗರಿಷ್ಠ 40 ಕ್ವಿಂಟಾಲ್ ಉತ್ಪನ್ನವನ್ನು ಖರೀದಿಸಲಾಗುತ್ತದೆ. ಮಾರ್ಚ್ 1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿ 80 ದಿನಗಳ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ಬಳಿಕ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ 90 ದಿನಗಳವರೆಗೆ ಖರೀದಿ ನಡೆಯಲಿದೆ. ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿಗಾಗಿ ಕೋಗಳಿ, ಹರಪನಹಳ್ಳಿ, ಹಿರೇಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ ರೈತರು ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ ಹಾಗೂ ಎಫ್ಐಡಿ ದಾಖಲೆಗಳೊಂದಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬೇಕು. ತಾಂತ್ರಿಕ ತೊಂದರೆಗಳಿದ್ದಲ್ಲಿ ಸಮೀಪದ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.
ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಗುಡ್ನ್ಯೂಸ್ ಕೊಟ್ಟಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು, ಡಿಸಿಸಿ ಬ್ಯಾಂಕ್ ಕನಸು ನನಸು ಮಾಡಲು ಸಹಕಾರ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆಗಳು ಎಂದಿದ್ದಾರೆ. ಕಳೆದ ಒಂದು ದಶಕದಿಂದ ನಮ್ಮ ಹೋರಾಟವಾಗಿದ್ದ
ಹೊಸಪೇಟೆ | ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ 34ನೇ ಘಟಿಕೋತ್ಸವ
ಮೂವರಿಗೆ ನಾಡೋಜ ಪ್ರಶಸ್ತಿ ಪ್ರದಾನ
ನೆಲಮಂಗಲ ನಗರಸಭೆಯಲ್ಲಿ ವಿಪ್ ಉಲ್ಲಂಘನೆ: ಕಾಂಗ್ರೆಸ್ ಗೆ ಮತ ಚಲಾಯಿಸಿದ ಜೆಡಿಎಸ್ ನ 7 ಸದಸ್ಯರು ಅನರ್ಹ
ನೆಲಮಂಗಲ: ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಜೆಡಿಎಸ್ ಪಕ್ಷದ 7 ಸದಸ್ಯರನ್ನು ವಿಪ್ ಉಲ್ಲಂಘನೆ ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ಅವರು ಅವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಮಾಡಿದ್ದಾರೆ.ಆನಂದ್ ಜಿ, ಶಾರದ ಉಮೇಶ್, ದಾಕ್ಷಾಯಣಿ ರವಿಕುಮಾರ್, ಬಿ.ಪದ್ಮನಾಭ, ಭಾರತಿಬಾಯಿ, ನರಸಿಂಹಮೂರ್ತಿ ಮತ್ತು ಲತಾ ಹೇಮಂತ್ಕುಮಾರ್ ಅವರು ಅನರ್ಹಗೊಂಡ ನಗರಸಭೆ ಸದಸ್ಯರು. ಇವರು ಜೆಡಿಎಸ್ ಪಕ್ಷದ ಬಿ ಫಾರಂ ಪಡೆದು ಚುನಾವಣೆ ಗೆದ್ದಿದ್ದು, ಅನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2025 ರ ಫೆ.13ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಜಾರಿಯಾಗಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರ 18 ಮತಗಳು ಚಲಾವಣೆಯಾಗಿ ಗೆಲುವು ಪಡೆದರೆ, ಜೆಡಿಎಸ್ ಪಕ್ಷದ ಅಭ್ಯರ್ಥಿ 10 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಡಿಸಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ದೂರು ಆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಪಕ್ಷದಿಂದ ಗೆದ್ದ 7 ಸದಸ್ಯರು ಮತ ಚಲಾವಣೆ ಮಾಡಿದ ಹಿನ್ನೆಲೆ ವಿಪ್ ಉಲ್ಲಂಘನೆಯಾಗಿ ಚುನಾವಣಾ ಅಕ್ರಮ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮುನೇಗೌಡ ದೂರು ಸಲ್ಲಿಸಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಜಿಲ್ಲಾಧಿಕಾರಿಗಳು ಅರ್ಜಿದಾರರು ಹಾಗೂ ಎದುರುದಾರರನ್ನು ವಿಚಾರಣೆ ಮಾಡಿ 7 ಸದಸ್ಯರನ್ನು ಅನರ್ಹಗೊಳಿಸುವ ಮೂಲಕ ಅಂತಿಮ ಆದೇಶವನ್ನು ನೀಡಿದ್ದಾರೆ.ಸಮಬಲ: ನಗರಸಭೆಯ 7 ಸದಸ್ಯರು ಅನರ್ಹವಾದ ಹಿನ್ನೆಲೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಸದಸ್ಯ ಬಲ ಸಮಬಲವಾಗಿದ್ದು, ಮುಂದಿನ ರಾಜಕೀಯ ಲೆಕ್ಕಾಚಾರ ಬೂದಿಮುಚ್ಚಿದ ಕೆಂಡದಂತಾಗಿದೆ. ಅನರ್ಹಗೊಂಡ ಸದಸ್ಯರು ಮುಂದಿನ ಕಾನೂನು ಹೋರಾಟ ಮಾಡುತ್ತೇವೆ ಎಂದರೆ, ಕಾನೂನು ಅನ್ವಯವೇ ಅನರ್ಹವಾಗಿದ್ದಾರೆ. ಇದೇ ಅಂತಿಮ ಎಂದು ಜೆಡಿಎಸ್ನ ಮುಖಂಡರು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರಿದ್ದರೂ ಅನರ್ಹತೆಯ ಸುಳಿಯಲ್ಲಿ ಮತದಾನ ಮಾಡಿದ ಸದಸ್ಯರು ಸಿಲುಕಿದಂತಾಗಿದೆ.ಈ ಬಗ್ಗೆ ವಿಕ ಜೊತೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ತಾಯಿದ್ರೋಹ ಮಾಡುವವರಿಗೆ ಶಿಕ್ಷೆ ನಿಶ್ಚಿತ. ಜೆಡಿಎಸ್ನಿಂದ ಬಿ ಫಾರಂ ಪಡೆದು ಪಕ್ಷದಿಂದ ಗೆದ್ದು ಹೆಸರು ಮಾಡಿಕೊಂಡು, ದುರಾಸೆಯಿಂದ ಕಾಂಗ್ರೆಸ್ ಜತೆ ಹೋಗಿ ಪಕ್ಷಕ್ಕೆ ದ್ರೋಹ ಮಾಡಿದ್ದರು. ಎಚ್.ಡಿ. ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಮೋಸ ಮಾಡಿದವರನ್ನು ಪಕ್ಷದಿಂದ ಹೊರಗೆ ಹಾಕಲು ವಿಪ್ ಉಲ್ಲಂಘನೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ನಮಗೀಗ ಜಯವಾಗಿದೆ. ಪಕ್ಷದ ಒಳಗೆಯಿದ್ದು ಬೇರೆ ಪಕ್ಷಕ್ಕೆ ಮತದಾನ ಮಾಡಲು ಪ್ರೇರಣೆ ಮಾಡುವವರಿಗೂ ಇದು ತಕ್ಕ ಪಾಠವಾಗಿದೆ ಎಂದು ತಿಳಿಸಿದ್ದಾರೆ.
ಹರಪನಹಳ್ಳಿ | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಹರಪನಹಳ್ಳಿ : ತಾಲೂಕಿನ ಜಂಗಮ ತುಂಬಿಗೆರೆ ಗ್ರಾಮದ ರೈತ ಗುಡಾಳ್ ಸಿದ್ದಯ್ಯ (53) ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕೈಗಡ ಸಾಲದಿಂದ ಕಂಗೆಟ್ಟಿದ್ದ ಅವರು ಸೋಮವಾರ ಸಂಜೆ ಗಡಿ ಗುಡಾಳ್ ಗ್ರಾಮಕ್ಕೆ ರಥೋತ್ಸವಕ್ಕೆ ಹೋಗಿ ಬರುತ್ತೇನೆಂದು ತಿಳಿಸಿ, ತಮ್ಮ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರ ಪತ್ನಿ ಗೌರಮ್ಮ ನೀಡಿದ ದೂರಿನಲ್ಲಿ, “ಕೈಗಡ ಸಾಲವನ್ನು ತೀರಿಸಲು ಸಾಧ್ಯವಾಗದೆ ಪತಿ ಜಿಗುಪ್ಸೆಗೊಂಡಿದ್ದರು. ಕುಟುಂಬದವರು ಸಮಾಧಾನಪಡಿಸಿದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ. ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗತಿಕ ಪ್ರಶಸ್ತಿ
ಮಂಗಳೂರು, ಫೆ.24: ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ ) ವರ್ಲ್ಡ್ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2025ರ ಅತ್ಯುತ್ತಮ ವಿಮಾನ ನಿಲ್ದಾಣಕ್ಕಾಗಿ ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಪ್ರಶಸ್ತಿ ವಿಜೇತ ಎಂದು ಹೆಸರಿಸಿದೆ. ಜಾಗತಿಕವಾಗಿ, ಪ್ರಯಾಣಿಕರ ಅನುಭವಕ್ಕಾಗಿ ವಿಶ್ವದಾದ್ಯಂತ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅದರ ಸ್ಥಾನವನ್ನು ಪುನರುಚ್ಚರಿಸುತ್ತದೆ. ಎಎಸ್ಕ್ಯೂ ಪ್ರಶಸ್ತಿಗಳನ್ನು ವಾಯುಯಾನ ಉದ್ಯಮದ ಗ್ರಾಹಕ ತೃಪ್ತಿಯ ಅತ್ಯಂತ ವಿಶ್ವಾಸಾರ್ಹ ಅಳತೆ ಎಂದು ಪರಿಗಣಿಸಲಾಗಿದೆ, ಇದು ಎಸಿಐ ಯ ಸ್ವತಂತ್ರವಾಗಿ ನಿರ್ವಹಿಸಲ್ಪಟ್ಟ ಸಮೀಕ್ಷೆ ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ನೈಜ-ಸಮಯದ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಸಂಪೂರ್ಣವಾಗಿ ಆಧರಿಸಿದೆ. ಆಗಮನ ವಿಭಾಗವು ವಲಸೆ ಪ್ರಕ್ರಿಯೆಗಳು, ಸಾಮಾನು ವಿತರಣೆ, ಟರ್ಮಿನಲ್ ವಾತಾವರಣ, ಸ್ವಚ್ಛತೆ, ಮಾರ್ಗಶೋಧನೆ ಮತ್ತು ಒಟ್ಟಾರೆ ಸೌಕರ್ಯ ಸೇರಿದಂತೆ ಸಂಪೂರ್ಣ ಒಳಬರುವ ಪ್ರಯಾಣವನ್ನು ಮೌಲ್ಯಮಾಪನ ಮಾಡುತ್ತದೆ. ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಆಗಮನದ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, 2024ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 2025ರಲ್ಲಿ, ವಿಶ್ವಾದ್ಯಂತ ಕೇವಲ ಆರು ವಿಮಾನ ನಿಲ್ದಾಣಗಳು ಆಗಮನದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ - ಜಾಗತಿಕವಾಗಿ ವಿಭಾಗದಲ್ಲಿ ಆಯ್ಕೆಯಾಗಿತ್ತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಎಚ್ಎಲ್) ನಿರ್ವಹಿಸುತ್ತದೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿರುವ ಎಸಿಐ ವರ್ಲ್ಡ್ನ ವಿಮಾನ ನಿಲ್ದಾಣ ಅನುಭವ ಶೃಂಗಸಭೆಯ ಭಾಗವಾಗಿ, ಟರ್ಕಿಯ ಇಸ್ತಾನ್ಬುಲ್ನಲ್ಲಿ ಸೆಪ್ಟೆಂಬರ್ 2, 2026 ರಂದು ನಡೆಯಲಿರುವ ಎಎಸ್ಕ್ಯೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಔಪಚಾರಿಕವಾಗಿ ಪ್ರದಾನ ಮಾಡಲಾಗುತ್ತದೆ. ಈ ವರ್ಷ ವಿಶ್ವಾದ್ಯಂತ 100 ವಿಮಾನ ನಿಲ್ದಾಣಗಳನ್ನು ವಿಭಾಗಗಳಲ್ಲಿ ಗುರುತಿಸಲಾಗಿದೆ ಮತ್ತು ಒಟ್ಟು 195 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ನಲ್ಲಿ ಕರ್ನಾಟಕದ ಬಾಲೆಗೆ 2 ಕಂಚಿನ ಪದಕ
KIWG 2026: ಕರ್ನಾಟಕದ 17 ವರ್ಷದ ಆಲ್ಪೈನ್ ಸ್ಕೀಯರ್ ಜಿಯಾ ಆರ್ಯನ್, ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2026ರಲ್ಲಿ ತಮ್ಮ ಎರಡನೇ ಭಾಗವಹಿಸುವಿಕೆಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಸವಾಲಿನಿಂದ ಕೂಡಿದ್ದ ಕೊಂಗ್ಡೂರಿ ಇಳಿಜಾರುಗಳಲ್ಲಿ ಸತತ ಎರಡು ದಿನಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಜಿಯಾ ಆರ್ಯನ್
ವಿಜಯನಗರ | ಕೊಟ್ಟೂರು ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ
ವಿಜಯನಗರ : ಜಿಲ್ಲೆಯ ಕೊಟ್ಟೂರು ತಾಲೂಕು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಸ್ ತಂಗುದಾಣದಲ್ಲಿ ಕುಡಿಯುವ ನೀರಿನ ಘಟಕವೇ ಇಲ್ಲದ ಕಾರಣ, ನಿತ್ಯವೂ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಿತಿವಂತರು ಹಾಗೂ ಮಧ್ಯಮ ವರ್ಗದವರು ಹಣ ನೀಡಿ ಅಂಗಡಿಗಳಲ್ಲಿ ದೊರೆಯುವ ಬಾಟಲಿ ನೀರನ್ನು ಖರೀದಿಸಿ ಧಾಹ ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಬಡವರು ಹಾಗೂ ಹಳ್ಳಿಯಿಂದ ಕೂಲಿ ಕೆಲಸಕ್ಕಾಗಿ ಪಟ್ಟಣಕ್ಕೆ ಬಂದವರು ದುಡ್ಡು ಕೊಟ್ಟು ನೀರು ಖರೀದಿಸಲು ಸಾಧ್ಯವಾಗದೆ, ಸಣ್ಣ ಹೋಟೆಲ್ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿರುವುದರಿಂದ, ಸಾರಿಗೆ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಕೊಡ್ಲಾಡಿ: ಯಕ್ಷಗಾನ ಕಲಾರಂಗದ 89ನೆಯ ಮನೆ ಹಸ್ತಾಂತರ
ಉಡುಪಿ, ಫೆ.24: ಕಳೆದ ಏಳು ವರ್ಷಗಳಿಂದ ನಡೂರಿನ ಶ್ರೀವಾಣಿ ಪ್ರೌಢಶಾಲೆಯಲ್ಲಿ ಕನ್ನಡ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುರೇಂದ್ರ ನಾಯ್ಕ್ ಇವರಿಗೆ ಕುಂದಾಪುರ ತಾಲೂಕಿನ ಕೊಡ್ಲಾಡಿಯಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀಬ್ರಹ್ಮಲಿಂಗೇಶ್ವರ’ವನ್ನು ಸೋಮವಾರ ಮನೆ ನಿರ್ಮಿಸಿದ ದಾನಿಗಳಾದ ಬೆಂಗಳೂರಿನ ಎಸ್. ವೆಂಕಟೇಶ್-ನಂದಾ ವೆಂಕಟೇಶ್ ದಂಪತಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್, ಯಕ್ಷಗಾನ ಕಲಾರಂಗದ ಸಮಾಜಪರ ಕೆಲಸವನ್ನು ಪ್ರಶಂಸಿಸಿ, ಈ ಸಂಸ್ಥೆಯೊಂದಿಗೆ ಕೈಜೋಡಿಸುವುದು ಹೆಮ್ಮೆಯ ಸಂಗತಿ ಎಂದರು. ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ವಹಿಸಿದ್ದರು. ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘ ನಡೂರಿನ ಗೌರವ ಮಾರ್ಗದರ್ಶಕ ಪ್ರೊ. ಸಖಾರಾಮ ಸೋಮಯಾಜಿ ಮನೆ ಆರಂಭಿಸಿ ಕೈಸಾಗದೆ ಕಂಗಾಲಾಗಿ ಕುಳಿತ ಹೊತ್ತಿಗೆ ಸುರೇಂದ್ರ ನಾಯ್ಕರಿಗೆ ಕಲಾರಂಗವನ್ನು ಮಾರ್ಗತೋರಿಸಿದೆ. ಕಷ್ಟಕ್ಕೆ ಸ್ಪಂದಿಸುವ ಸಂಸ್ಥೆಯಿಂದ ನಿರ್ಮಾಣಗೊಂಡ ಮನೆ, ನೊಂದ ಶಿಕ್ಷಕರಿ ಗೊದಗಿದ ಮಹಾ ಭಾಗ್ಯ ಎಂದರು. ಫಲಾನುಭವಿ ಸುರೇಂದ್ರ ನಾಯ್ಕ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘ ನಡೂರಿನ ಆಡಳಿತಾಧಿಕಾರಿ ಎಂ. ವಿಶ್ವನಾಥ ಶೆಟ್ಟಿ, ಹೆಪ್ಪಿವರ್ಲ್ಡ್ನ ಪ್ರವರ್ಥಕರಾದ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಪ್ರೊ. ಕೆ. ಸದಾಶಿವ ರಾವ್, ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯಾಯ, ಪ್ರಭಾಕರ ಬಂಡಿ, ಜಯರಾಮ ಪಡಿಯಾರ್, ವಿನೋದಾ ಎಂ, ಯಕ್ಷಗಾನ ಕಲಾವಿದ ಉಮೇಶ್ ನಾಯ್ಕ್ ಹಾಗೂ ಇತರರು ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ದೂರು-ಪ್ರತಿದೂರುಗಳ ತನಿಖೆಗೆ ಒಬ್ಬರೇ ಅಧಿಕಾರಿ ನೇಮಿಸಬೇಕು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ಬೆಂಗಳೂರು: ಯಾವುದೇ ಪ್ರಕರಣದ ಸಂಬಂಧ ದಾಖಲಾಗುವ ದೂರು ಮತ್ತು ಪ್ರತಿದೂರುಗಳನ್ನು ಒಬ್ಬರೇ ಅಧಿಕಾರಿ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹೈಕೋರ್ಟ್, ತಪ್ಪಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆಸ್ತಿ ವ್ಯಾಜ್ಯವೊಂದರಲ್ಲಿ ಉಂಟಾದ ಕಲಹದ ಸಂಬಂಧ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಯತ್ನ ಪ್ರಕರಣ ರದ್ದು ಕೋರಿ ಕಲ್ಮನೆ ಗ್ರಾಮದ ಸಿದ್ದಪ್ಪ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಅವುಗಳ ತನಿಖೆಗೆ ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಆಲಿಸಿದ ನ್ಯಾಯಪೀಠ, ದೂರು ಮತ್ತು ಪ್ರತಿದೂರಿನ ತನಿಖೆಯನ್ನು ಒಬ್ಬರೇ ತನಿಖಾಧಿಕಾರಿ ನಡೆಸಬೇಕು ಎಂದು ಎಷ್ಟು ಬಾರಿ ಹೇಳಬೇಕು? ಎಂದು ಸರ್ಕಾರದ ವಿರುದ್ಧ ಅತೃಪ್ತಿ ಹೊರಹಾಕಿತು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಲು ಆದೇಶಿಸಬೇಕು ಎಂದರು. ಆಗ ನ್ಯಾಯಪೀಠ, ಒಂದೇ ಪ್ರಕರಣಕ್ಕೆ ಸಂಬಂಧಿಸಿದ ದೂರು-ಪ್ರತಿದೂರಿನ ತನಿಖೆಗೆ ರಾಜ್ಯ ಸರ್ಕಾರ ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸುತ್ತಿರುವುದು ಆಘಾತಕಾರಿ. ಆದರೆ, ದೂರು-ಪ್ರತಿದೂರಿಗೆ ಒಬ್ಬರೇ ತನಿಖಾಧಿಕಾರಿ ಇರಬೇಕು ಎಂಬುದರಲ್ಲಿ ಕಾನೂನು ಸ್ಪಷ್ಟವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದು ಕಾಗದದಲ್ಲಿ ಮಾತ್ರ ಉಳಿದಿದೆ. ದೂರು-ಪ್ರತಿದೂರಿನಲ್ಲಿ ವಿಭಿನ್ನ ತನಿಖಾಧಿಕಾರಿ ನೇಮಿಸಿರುವ ಪ್ರಕರಣಗಳು ಈ ನ್ಯಾಯಾಲಯದ ಮುಂದೆ ಬರುತ್ತಿದ್ದು, ತನಿಖಾಧಿಕಾರಿಗಳು ವಿಭಿನ್ನ ಅಭಿಪ್ರಾಯ ನೀಡುತ್ತಾರೆ. ಒಬ್ಬರು ಬಿ ರಿಪೋರ್ಟ್ ಸಲ್ಲಿಸಿದರೆ ಮತ್ತೊಬ್ಬರು ಆರೋಪ ಪಟ್ಟಿ ಸಲ್ಲಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಹಾಲಿ ಪ್ರಕರಣದಲ್ಲಿ ಎರಡೂ ದೂರಿನ ಸಂಬಂಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ದೂರು-ಪ್ರತಿದೂರಿಗೆ ಒಬ್ಬರೇ ತನಿಖಾಧಿಕಾರಿ ನೇಮಕ ಮಾಡದೇ ಇರುವುದು ಕಾನೂನಿನ ಅಗತ್ಯತೆ ಪೂರೈಸುವುದಿಲ್ಲ. ಆದ್ದರಿಂದ, ಇಡೀ ಪ್ರಕರಣದಲ್ಲಿ ಹೊಸದಾಗಿ ತನಿಖೆ ನಡೆಯುವ ಅಗತ್ಯವಿದೆ. ಸರ್ಕಾರ ಒಂದೇ ಪ್ರಕರಣದ ದೂರು-ಪ್ರತಿದೂರಿನಲ್ಲಿ ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸುವುದರಿಂದ ಹೀಗಾಗುತ್ತಿದೆ. ಇದು ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಕ್ಷಮ ಪ್ರಾಧಿಕಾರವನ್ನು ಎಚ್ಚರಿಸಲಾಗುತ್ತಿದೆ. ಸುತ್ತೋಲೆ ಹೊರಡಿಸಿದಾಗಿಯೂ ಇದು ಮರುಕಳಿಸಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಅಂತಿಮವಾಗಿ ನ್ಯಾಯಪೀಠ, ಪ್ರಕರಣವನ್ನು ಒಬ್ಬರೇ ತನಿಖಾಧಿಕಾರಿ ಒಂದು ತಿಂಗಳಲ್ಲಿ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ವಿದ್ಯಾಪೋಷಕ್ ವಿದ್ಯಾರ್ಥಿಗಳ ‘ಜೀವನವಿದಾ’ ಶಿಬಿರ ಉದ್ಘಾಟನೆ
ಉಡುಪಿ, ಫೆ.24: ಉಡುಪಿಯ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿ ಗಳಿಗಾಗಿ ಐದು ದಿನಗಳ ಕಾಲ ಹಮ್ಮಿಕೊಂಡ ‘ಜೀವನ ವಿದ್ಯಾ’ ಸನಿವಾಸ ಶಿಬಿರ ಇಂದು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಕಳೆದ 16 ವರ್ಷಗಳಿಂದ ಸತತವಾಗಿ ನಡೆದುಕೊಂಡು ಬರುತ್ತಿರುವ ಶಿಬಿರವನ್ನು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥರು ಉದ್ಘಾಟಿಸಿದರು. ಗೀತಾಲೇಖನ ಬರೆದು ಒಪ್ಪಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು ತಮ್ಮ ಅನುಗ್ರಹ ಸಂದೇಶದಲ್ಲಿ ಇಂತಹ ಶಿಬಿರ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ವಿದ್ಯಾಪೋಷಕ್ನ 1000 ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಆರೋಗ್ಯ ಕಾರ್ಡನ್ನು ವಿತರಿಸಿ ಮಾತನಾಡಿದ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಶಿಕ್ಷಣ ಮತ್ತು ಆರೋಗ್ಯದ ಕುರಿತು ಕೆಲಸ ಮಾಡುವ ಮಾಹೆ ಯಕ್ಷಗಾನ ಕಲಾರಂಗದ ಕಾರ್ಯಕ್ರಮಗಳಿಗೆ ಸದಾ ಕೈ ಜೋಡಿಸುತ್ತದೆ ಎಂದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಪರ್ಯಾಯ ಶ್ರೀ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿಎಸ್. ವೆಂಕಟೇಶ್, ನಂದಾ ವೆಂಕಟೇಶ್, ಸಿ.ವಿ. ಸಂತೋಷ್, ಭಾಸ್ಕರ ಭಟ್, ಸಿ. ಎಸ್. ರಾವ್, ಪಿ. ಸತೀಶ ರಾವ್, ಶಿಬಿರದ ನಿರ್ದೇಶಕ ಗುರುದತ್ ಬಂಟ್ವಾಳಕರ್ ಭಾಗವಹಿಸಿದ್ದರು. ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ವಿದ್ಯಾ ಪ್ರಸಾದ್, ಯು.ಎಸ್.ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಅಶೋಕ ಎಂ., ಮಂಜುನಾಥ ಹೆಬ್ಬಾರ, ಅಜಿತ್ಕುಮಾರ್, ಆನಂದ ಶೆಟ್ಟಿ, ಎನ್.ರಾಮ ಭಟ್, ಪ್ರಭಾಕರ ಬಂಡಿ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಮಂಗಳೂರಿನ ಪ್ರೊಟೊ ಅಪ್ ಸ್ಕಿಲ್ ನಿರ್ದೇಶನದಲ್ಲಿ ನಡೆಯುವ ಐದು ದಿನಗಳ ಸನಿವಾಸ ಶಿಬಿರದ ಪ್ರಯೋಜನ ವನ್ನು ಪ್ರಥಮ ಪಿಯು ಮುಗಿಸಿದ ವಿದ್ಯಾಪೋಷಕ್ನ 250 ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಶಿಬಿರಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಜೀವನ ಕೌಶಲ, ಆಂಗ್ಲಭಾಷಾ ಪ್ರೌಢಿಮೆ ಬೆಳೆಸಿ, ಅವರಿಗೆ ಸಾಧಕ ವ್ಯಕ್ತಿಗಳ ಪರಿಚಯ, ಜೀವನ ಮೌಲ್ಯಗಳನ್ನು ಕಲಿಸಲಾಗುತ್ತದೆ.
ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪ: ತಿರುಚಿದ ಫೋಟೋ ಆಧರಿಸಿ ಪ್ರಾಂಶುಪಾಲರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು
ಬೆಂಗಳೂರು: ರಾಷ್ಟ್ರಧ್ವಜದ ಮೇಲೆ ನಿಂತಿರುವ ರೀತಿಯಲ್ಲಿ ವಾಟ್ಸ್ಆ್ಯಪ್ನಲ್ಲಿ ಹರಿದಾಡಿದ್ದ ಎಡಿಟ್ ಮಾಡಿದ ಚಿತ್ರವನ್ನು ಆಧರಿಸಿ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಆರೋಪದಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ನಾಗಸಂದ್ರ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ಬಿ.ಸಿ. ವೇಣುಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ಅರ್ಜಿದಾರರ ಚಿತ್ರವನ್ನು ಅವರ ವಿದ್ಯಾರ್ಥಿಯೇ ಎಡಿಟ್ ಮಾಡಿದ್ದು, ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಅಪರಾಧದ ಉದ್ದೇಶ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ' ಕಾಯ್ದೆಯ ಸೆಕ್ಷನ್ 2ರ ಅಡಿಯಲ್ಲಿ ವೇಣುಗೋಪಾಲ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸಿದೆ. ಹೈಕೋರ್ಟ್ ಆದೇಶವೇನು? ಪ್ರಕರಣದಲ್ಲಿ 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ' ಕಾಯ್ದೆಯ ಸೆಕ್ಷನ್ 2 ಅನ್ನು ಅನ್ವಯಿಸಲು 'ಅಪರಾಧದ ಉದ್ದೇಶ' ಪ್ರಮುಖವಾಗುತ್ತದೆ. ಪ್ರಾಂಶುಪಾಲರ ಚಿತ್ರವನ್ನು ಅರಿಯದೇ ರಾಷ್ಟ್ರಧ್ವಜದ ಮೇಲೆ ಇರಿಸಿದ್ದಾಗಿ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬೇರೆಡೆ ತೆಗೆದ ಅರ್ಜಿದಾರರ ಚಿತ್ರವನ್ನು ಎಡಿಟ್ ಮಾಡಿ ರಾಷ್ಟ್ರಧ್ವಜದ ಮೇಲೆ ಇಟ್ಟಿರುವುದು ಸ್ಪಷ್ಟವಾಗುತ್ತದೆ. ಜತೆಗೆ, ಅರ್ಜಿದಾರರ ವಿರುದ್ಧ ಇಂಥದೇ ಅಪರಾಧವೆಸಗಿದ ಕುರಿತು ಯಾವುದೇ ದಾಖಲೆಗಳಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಅದೇ ಶಾಲೆಯ ಪ್ರಾಂಶುಪಾಲರಾಗಿದ್ದು, ಇಂಥ ಘಟನೆಗಳು ಹಿಂದೆಂದೂ ನಡೆದಿಲ್ಲ. ಆದ್ದರಿಂದ, ಅಪರಾಧದ ಉದ್ದೇಶವಿಲ್ಲದಿರುವುದು ಹಾಗೂ ಕೃತ್ಯದ ಅಸಂಭವನೀಯತೆ ಪರಿಗಣಿಸಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವುದು ಸೂಕ್ತವೆಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಪ್ರಕರಣವೇನು? ಅರ್ಜಿದಾರರ ಶಾಲೆಯಲ್ಲಿ 2024ರ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಿಸಲಾಗಿತ್ತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತಿತರರ ವಾಟ್ಸ್ಆ್ಯಪ್ ಸ್ಟೇಟಸ್ಗಳಲ್ಲಿ ಅರ್ಜಿದಾರರು ಚಪ್ಪಲಿ ಧರಿಸಿ ರಾಷ್ಟ್ರಧ್ವಜದ ಮೇಲೆ ನಿಂತಿರುವ ರೀತಿಯಲ್ಲಿ ಫೋಟೋಗಳು ಹರಿದಾಡಿದ್ದವು. ಈ ಸಂಬಂಧ ಬಿ.ಎಂ. ಚಿಕ್ಕಣ್ಣ ಎಂಬವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಅರ್ಜಿದಾರರ ವಿರುದ್ಧ ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ವೇಣುಗೋಪಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ವಾದ ಮಂಡಿಸಿದ್ದ ವೇಣುಗೋಪಾಲ್ ಪರ ವಕೀಲರು, ಅರ್ಜಿದಾರರ ಮೊಬೈಲ್ ಫೋನ್ ವಿದ್ಯಾರ್ಥಿಗಳ ಬಳಿ ಇತ್ತು. ಅವರೇ ಅರ್ಜಿದಾರರ ಚಿತ್ರವನ್ನು ಎಡಿಟ್ ಮಾಡಿ ರಾಷ್ಟ್ರಧ್ವಜದ ಮೇಲೆ ಇರಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಯಾವುದೇ ಉದ್ದೇಶ ಪ್ರಾಂಶುಪಾಲರಿಗೆ ಇರಲಿಲ್ಲ. ವಿದ್ಯಾರ್ಥಿಗಳು ಮಾಡಿರುವ ಕೃತ್ಯದ ಬಗ್ಗೆ ಅವರಿಗೆ ಯಾವುದೇ ಅರಿವು ಸಹ ಇರಲಿಲ್ಲ. ಆದ್ದರಿಂದ, ಪ್ರಕರಣ ರದ್ದುಪಡಿಸಬೇಕೆಂದು ಕೋರಿದ್ದರು. ಸರ್ಕಾರದ ಪರ ವಕೀಲರು, ಚಿತ್ರದ ಪ್ರಕಾರ ಅರ್ಜಿದಾರರು ರಾಷ್ಟ್ರಧ್ವಜದ ಮೇಲೆ ನಿಂತಿದ್ದಾರೆ. ನಿಜಕ್ಕೂ ಅದನ್ನು ವಿದ್ಯಾರ್ಥಿಗಳು ಎಡಿಟ್ ಮಾಡಿ ಹಾಕಿದ್ದಾರೆಯೇ ಅಥವಾ ಇಲ್ಲವೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಆದ್ದರಿಂದ, ಪ್ರಕರಣ ರದ್ದುಪಡಿಸದಂತೆ ಮನವಿ ಮಾಡಿದ್ದರು. ಸೆಕ್ಷನ್ 2 ಹೇಳುವುದೇನು? ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ಸೆಕ್ಷನ್ 2 ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕವಾಗಿ ಕಾಣಿಸುವಂತಹ ಯಾವುದೇ ಇತರ ಸ್ಥಳದಲ್ಲಿ ಯಾವುದೇ ವ್ಯಕ್ತಿ ಭಾರತದ ರಾಷ್ಟ್ರಧ್ವಜ ಅಥವಾ ಭಾರತದ ಸಂವಿಧಾನ ಅಥವಾ ಅದರ ಯಾವುದೇ ಭಾಗವನ್ನು ಸುಡುವ, ವಿರೂಪಗೊಳಿಸುವ, ಮಲಿನಗೊಳಿಸುವ, ಕುರೂಪಗೊಳಿಸುವ, ನಾಶಪಡಿಸುವ, ತುಳಿಯುವ ಅಥವಾ ಇನ್ಯಾವುದೇ ರೀತಿಯಲ್ಲಿ ಅವುಗಳಿಗೆ ಅಗೌರವ ತೋರಿದರೆ, ಅಂಥ ವ್ಯಕ್ತಿಗೆ ಗರಿಷ್ಠ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.
ಕೆಎಸ್ಆರ್ ಬೆಂಗಳೂರು- ಕಾರವಾರ ನಡುವಿನ ಪಂಚಗಂಗಾ ಎಕ್ಸ್ಪ್ರೆಸ್ಗೆ ತಾತ್ಕಾಲಿಕ ಹೆಚ್ಚುವರಿ ಬೋಗಿ
ಉಡುಪಿ: ಕೆಎಸ್ಆರ್ ಬೆಂಗಳೂರು- ಕಾರವಾರ- ಕೆಎಸ್ಆರ್ ಕಾರವಾರ ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಜನರ ಬೇಡಿಕೆ ಹೆಚ್ಚಿರುವುದರಿಂದ ತಾತ್ಕಾಲಿಕ ನೆಲೆಯಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿ ಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಈ ವ್ಯವಸ್ಥೆ ಮಾರ್ಚ್ 2ರಿಂದ ಎಪ್ರಿಲ್ 16ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ 14 ಎಲ್ಎಚ್ಬಿ ಕೋಚ್ಗಳೊಂದಿಗೆ ಸಂಚರಿಸುವ ಈ ರೈಲಿಗೆ ಮಾ.2ರಿಂದ ಐದು ಹೆಚ್ಚುವರಿ ಕೋಚ್ಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಇದು ಮುಂದಿನ ಎಪ್ರಿಲ್ 16ರವರೆಗೆ ಇರುತ್ತದೆ. ಇವುಗಳಲ್ಲಿ ಒಂದು ಫಸ್ಟ್ ಕ್ಲಾಸ್ ಎಸಿ ಒಂದು, 3 ಟಯರ್ ಎಸಿ ಇಕಾನಮಿ ಕೋಚ್ ಒಂದು, ಸ್ಲೀಪರ್ ಕೋಚ್ ಒಂದು ಹಾಗೂ ಜನರಲ್ 3 ಕೋಚ್ಗಳಿರುತ್ತವೆ.
ಸುರಪುರ | ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ನಾಟಕ ಪ್ರದರ್ಶನ
ಸುರಪುರ : ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಸುರಪುರದ ಕ್ರಾಂತಿ ಕಿಡಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಜೀವನಾಧಾರಿತ ನಾಟಕ ಪ್ರದರ್ಶನ ಕುರಿತು ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಹಿರಿಯ ಕಲಾವಿದ ವೆಂಕಟೇಶ ಬೇಟೆಗಾರ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಶೌರ್ಯ ಸಾಹಸ ಮೆರೆದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಇತಿಹಾಸವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ನಾಟಕವನ್ನು ಆಯೋಜಿಸಲಾಗಿದೆ ಎಂದರು. ನಾಟಕಕಾರ ಮಲ್ಲೇಶ ಬಿ. ಕೋನ್ಹಾಳ ರಚಿಸಿರುವ ಈ ಕೃತಿ ಅಮೂಲ್ಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಮಾ.11ರಂದು ಉಚಿತ ಪ್ರದರ್ಶನ : ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ, ಮಾರ್ಚ್ 11ರಂದು ರಾತ್ರಿ ಗರುಡಾದ್ರಿ ಕಲಾಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಉಚಿತ ಪ್ರವೇಶವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಸುರಪುರ ವಿಜಯೋತ್ಸವದ ಅಂಗವಾಗಿ ಸಗರ ನಾಡು ಗ್ರಾಮೀಣ ನಾಟಕೋತ್ಸವ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹಾಗೂ ಮೂಕ ನಾಯಕ ಸಾಂಸ್ಕೃತಿಕ ಕಲಾ ನಾಟ್ಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಈ ನಾಟಕ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಾಟಕ ರಚನೆಗಾರ ಮಲ್ಲೇಶ ಬಿ. ಕೋನ್ಹಾಳ ಮಾತನಾಡಿ ನಾಟಕದ ಹಿನ್ನಲೆ ವಿವರಿಸಿದರು. ಬಳಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಹೆಮನೂರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Hassan | ಹೆರಿಗೆ ಬಳಿಕ ತಾಯಿ ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪ
ಸರಕಾರಿ ಆಸ್ಪತ್ರೆ ಎದುರು ಕುಟುಂಬಸ್ಥರ ಧರಣಿ
ಹುಬ್ಬಳ್ಳಿ ಕೆಎಸ್ ಸಿಎ ಮೈದಾನದ ಪೆವಿಲಿಯನ್ ಗೆ ಸುನಿಲ್ ಜೋಶಿ ಹೆಸರು; ಭಾವುಕರಾದ ಕರ್ನಾಟಕದ ಹೆಮ್ಮೆಯ ಸ್ಪಿನ್ನರ್
Sunil Joshi Pavilion- 90ರ ದಶಕದ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಸುನಿಲ್ ಜೋಶಿ ಅವರದ್ದು ಮರೆಯಲಾಗದ ಹೆಸರು. ಐದಾರು ವರ್ಷಗಳ ಕಾಲ ರಾಷ್ಟ್ರೀಯ ತಂಡದ ಭಾಗವಾಗಿದ್ದ ಗದಗ ಮೂಲದ ಸ್ಪಿನ್ ಮಾಂತ್ರಿಕನ ಹೆಸರನ್ನು ಇದೀಗ ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದ ಪೆವಿಲಿಯನ್ ಗೆ ಇಡಲಾಗಿದೆ. ಕರ್ನಾಟಕ ಮತ್ತು ಜಮ್ಮು-ಕಾಶ್ಮೀರಗಳ ನಡುವೆ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದ ಆರಂಭದ ದಿನ ಪೆವಿಲಿಯನ್ ಉದ್ಘಾಟನಾ ಕಾರ್ಯಕ್ರಮವೂ ನಡೆಯಿತು. ಬಿಸಿಸಿಐ ಅಧ್ಯಕ್ಷ ಮಿಥುನಿ ಮನ್ಹಾಸ್ ಮತ್ತು ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲ ದಾಖಲೆಗಳು ಡಿಜಿಟಲೀಕರಣಗೊಳಿಸಿ : ಶಾಸಕ ಚನ್ನಾರೆಡ್ಡಿ ಪಾಟೀಲ್ ಸೂಚನೆ
ಅಧ್ಯಕ್ಷ ಬಾಬುರಾವ ಕಾಡ್ಲೂರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ
ಮಂಗಳೂರು,ಫೆ.24: ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರದ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, 2026ನೇ ಸಾಲಿನಲ್ಲಿ ರಸ್ತೆ ಸಂಚಾರ ಸಮೀಕ್ಷೆಯನ್ನು ಫೆ.26ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 28 ರ ಬೆಳಗ್ಗೆ 6ಗಂಟೆಯವರೆಗೆ 2 ದಿನಗಳ ಕಾಲ ನಡೆಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖಾ ವತಿಯಿಂದ ಈ ಸಮೀಕ್ಷೆಗೆ ಸುಮಾರು 139 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ಕೆ ಮಾಡಲಾಗಿದೆ. ಈ ವಾಹನ ಸಂಚಾರ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಮಂಗಳೂರು ವಿಭಾಗದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Tamarind Price Surge: ಹುಣಸೆಹಣ್ಣಿನ ಕೃಷಿಯಲ್ಲಿ ಹಲವು ಸಮಸ್ಯೆಗಳು ಎದುರಾಗಿರುವ ಹೊರತಾಗಿಯೂ, ಹುಣಸೆಹಣ್ಣಿಗೆ ಬಂಪರ್ ಲಾಭ ಬರುತ್ತಿದೆ. ಭಾರತೀಯರ ಅಡುಗೆಯಲ್ಲಿ ಹುಣಸೆಹಣ್ಣಿಗೆ ವಿಶೇಷವಾದ ಸ್ಥಾನವಿದೆ. ಉಪ್ಪಿನ ನಂತರ ವಿಶೇಷವಾದ ಸ್ಥಾನವಿರುವ ಪದಾರ್ಥವೆಂದರೆ ಅದು ಹುಣಸೆಹಣ್ಣು ಎಂದು ಹೇಳಬಹುದು. ಇದೀಗ ಕಳೆದ ಎರಡು ವರ್ಷಗಳಿಂದಲೂ ಹುಣಸೆಹಣ್ಣಿನ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಕಳೆದ ವರ್ಷ ಕೆಜಿಗೆ ಹುಣಸೆಹಣ್ಣಿನ ಬೆಲೆಯು 100
ಯಾದಗಿರಿ | ಸಿಎಂ ಸಿದ್ದರಾಮಯ್ಯರಿಂದ ಯುಜಿಡಿ ಕಾಮಗಾರಿಗೆ 287.70 ಕೋಟಿ ರೂ. ಭರವಸೆ
ಯಾದಗಿರಿ : ನಗರದಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿಗಾಗಿ 287.70 ಕೋಟಿ ರೂ. ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ತಿಳಿಸಿದ್ದಾರೆ. ಕಳೆದ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ್ದು, ಅಲ್ಲಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಈ ಕಾಮಗಾರಿ ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಬಹುಕಾಲದ ಮಹತ್ವದ ಬೇಡಿಕೆ ಈಡೇರಿಸುವ ಹಂತಕ್ಕೆ ಬಂದಿದೆ ಎಂದು ಶಾಸಕರು ತಿಳಿಸಿದ್ದಾರೆ. ವಿವಿಧ ಕಾಮಗಾರಿಗಳಿಗೆ ಸಚಿವರೊಂದಿಗೆ ಚರ್ಚೆ : ಸೇತುವೆಗಳ ನಿರ್ಮಾಣಕ್ಕೆ ಸತೀಶ ಜಾರಕಿಹೋಳಿ, ಆಸ್ಪತ್ರೆ ಕಟ್ಟಡಗಳಿಗೆ ದಿನೇಶ್ ಗುಂಡುರಾವ, ಶಾಲಾ ಕಟ್ಟಡಗಳಿಗಾಗಿ ಮಧು ಬಂಗಾರಪ್ಪ ಸೇರಿದಂತೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಎಲ್ಲರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು. ವಡಗೇರಾ, ಹುಣಸಗಿಯಲ್ಲಿ ಪದವಿ ಕಾಲೇಜು : ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರೊಂದಿಗೆ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ವಡಗೇರಾದಲ್ಲಿ ಪದವಿ ಕಾಲೇಜು ಸ್ಥಾಪನೆಗೆ ಮನವಿ ಮಾಡಲಾಗಿದೆ. ಈ ವೇಳೆ ಹುಣಸಗಿಯಲ್ಲೂ ಕಾಲೇಜು ಮಂಜೂರು ಮಾಡುವಂತೆ ಕೇಳಿಕೊಳ್ಳಲಾಗಿದ್ದು, ಎರಡು ಕಡೆಗೂ ಕಾಲೇಜು ಮಂಜೂರು ಮಾಡುವ ಭರವಸೆ ಲಭಿಸಿದೆ ಎಂದು ಶಾಸಕರು ವಿವರಿಸಿದರು. 585.28 ಕೋಟಿ ರೂ. ಅನುದಾನಕ್ಕೆ ಮನವಿ : ತಮ್ಮ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ 2026-27ನೇ ಸಾಲಿನ ಆಯ-ವ್ಯಯದಲ್ಲಿ ಸುಮಾರು 585.28 ಕೋಟಿ ರೂ. ಅನುದಾನ ಮೀಸಲಿಡುವಂತೆ ಕಳೆದ ವಾರ ಮನವಿ ಸಲ್ಲಿಸಿರುವುದಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದ್ದಾರೆ.
ಕಾಲೇಜು ಬಸ್ ಅಪಘಾತ: ಹಲವರಿಗೆ ಸಣ್ಣಪುಟ್ಟ ಗಾಯ
ಕುಂದಾಪುರ, ಫೆ.24: ಹಳ್ಳಿಹೊಳೆ ಗ್ರಾಮದ ಸುಳಗೊಡು ಶಾಲೆಯಲ್ಲಿ ನಡೆಯುತ್ತಿದ್ದ ಎನ್ಎಸ್ಎಸ್ ಶಿಬಿರಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಅಪಘಾತಕ್ಕೀಡಾದ ಘಟನೆ ಹಳ್ಳಿಹೊಳೆ ಸಮೀಪದ ಶೆಟ್ಟಿಪಾಲು ಎಂಬಲ್ಲಿ ಸೋಮವಾರ ನಡೆದಿದೆ. ಖಾಸಗಿ ಕಾಲೇಜು ಮಕ್ಕಳ ಎನ್ಎಸ್ಎಸ್ ಶಿಬಿರಕ್ಕೆ ಶಾಲೆಯ ಬಸ್ನಲ್ಲಿ ಕರೆ ತರುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ. ಇದರಿಂದ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತೆಂಗಿನ ಮರಕ್ಕೆ ಗುದ್ದಿದ್ದರಿಂದ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಕೋಗಿಲು ಬಡಾವಣೆ ತೆರವು ಪ್ರಕರಣ | ಐವರು ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣ: ವಕೀಲ ಉಮಾಪತಿ
ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ 180ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಸಿಜೆಎಂ ನ್ಯಾಯಾಲಯವು ಐವರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ವಕೀಲ ಉಮಾಪತಿ ಎಸ್. ತಿಳಿಸಿದ್ದಾರೆ. ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಅಧಿಕಾರಿಗಳಾದ ಮಹೇಶ್ವರ ರಾವ್ ಎಂ., ಪೊಮ್ಮಲ ಸುನಿಲ್ಕುಮಾರ್, ಕರಿಗೌಡ, ಜಗದೀಶ್ ಮತ್ತು ಸೀಮಂತ್ ಕುಮಾರ್ ಸಿಂಗ್ ಅವರನ್ನು ದೂರಿನಲ್ಲಿ ಆರೋಪಿಸಲಾಗಿದೆ. ನ್ಯಾಯಾಲಯವು ಇದೀಗ ಐವರು ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಠಿಣ ಸೆಕ್ಷನ್ಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ವಕೀಲರಾದ ಟಿ. ನರಸಿಂಹಮೂರ್ತಿ, ಸುಧಾ ಕಟ್ವಾ ಉಪಸ್ಥಿತರಿದ್ದರು.
ಕುಂದಾಪುರ| ಬಾಲಕನ ವಿಡಿಯೋ ವೈರಲ್ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಕುಂದಾಪುರ, ಫೆ.24: ಕಂಡ್ಲೂರಿನಲ್ಲಿ ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ವಿಡಿಯೋ ವೈರಲ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಂಡ್ಲೂರು ಪೇಟೆಯಲ್ಲಿರುವ ಸೆಲೂನ್ನಲ್ಲಿ ಫೆ.22ರಂದು ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಹೇಳಿದ ವಿಷಯವನ್ನು ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಸಾರ್ವಜನಿಕವಾಗಿ ಪ್ರಚೋದನೆ ಗೊಳಿಸಿ ಗಲಾಟೆ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕುಂದಾಪುರ ಗ್ರಾಮಾಂತರ ಪೊಲೀಸರು, ಸೆಲೂನಿನ ಮಾಲಕ ಕಂಡ್ಲೂರು ಜನತಾ ಕಾಲೋನಿ ನಿವಾಸಿ ಶಶಾಂಕ ಭಂಡಾರಿ(30) ಹಾಗೂ ಕಾವ್ರಾಡಿ ಗ್ರಾಮದ ಮರಾಸಿ ಉದ್ದಿನಮಕ್ಕಿಯ ಪ್ರಮೋದ ಡಿಸೋಜ(25) ಎಂಬವರನ್ನು ಬಂಧಿಸಿ, ಕುಂದಾಪುರ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೆಲೂನ್ ಎದುರಗಡೆ ಗುಂಪುಗೂಡಿ, ಬೆದರಿಕೆ ಹಾಕಿರುವ ಬಗ್ಗೆ ಸೆಲೂನ್ ಮಾಲಕ ಶಶಾಂಕ ಭಂಡಾರಿ ನೀಡಿರುವ ಪ್ರತಿದೂರಿನಂತೆಯೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 20-30 ಜನರನ್ನು ಗುರುತಿಸಲಾಗಿದ್ದು, ಇವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ 25-30 ಜನರನ್ನು ಗುರುತಿಸಲಾಗುತ್ತಿದ್ದು, ಅವರ ವಿರುದ್ಧವೂ ಸಹ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ರಂಗಭೂಮಿಯಿಂದ ಯುವಪೀಳಿಗೆಯ ಬೆಳವಣಿಗೆ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ, ಫೆ.24: ಯುವಪೀಳಿಗೆಗಳ ಪ್ರತಿಭೆ ಅರಳಲು, ಯುವಜನರು ಬೆಳೆಯಲು ರಂಗಭೂಮಿ ಸಹಕಾರಿ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಮೂರನೇ ದಿನವಾದ ಮಂಗಳವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ರಂಗಚಟುವಟಿಕೆಗಳು ನಮ್ಮನ್ನು ಮಾನವೀಯಗೊಳಿಸುತ್ತವೆ. ಜನರನ್ನು ದಾರಿ ತಪ್ಪದಂತೆ ಸರಿದಾರಿಯಲ್ಲಿ ಒಯ್ಯುತ್ತವೆ. ಸಮಾಜದ ಅಂಕು ಡೊಂಕುಗಳನ್ನು ರಂಗಭೂಮಿ ಎತ್ತಿ ತೋರಿಸುತ್ತದೆ ಎಂದು ಅವರು ತಿಳಿಸಿದರು. ರಂಗಸಾಧಕ ಸನ್ಮಾನ ಸ್ವೀಕರಿಸಿದ ಸಂಗೀತ ಗುರು ರಮೇಶ್ ಕೆ. ಪುತ್ತೂರು ಮಾತನಾಡಿ, ಸಂಗೀತ ಕಲಿಯುವುದು ನಮ್ಮ ಕಾಲದಲ್ಲಿ ಕಷ್ಟದ ಕೆಲಸವಾಗಿತ್ತು. ಈಗ ರೆಕಾರ್ಡ್ ಮಾಡಿಕೊಂಡು ಬಂದು ಹಾಡುತ್ತಾರೆ. ಕರೊಕೆ ಬಂದ ಮೇಲೆ ಹಾಡುಗಾರ ಬಿಟ್ಟರೆ ಬೇರೆ ಯಾವ ಪಕ್ಕವಾದ್ಯಗಳು ಬೇಡವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಹಾರ್ಮೋನಿಯಂ ಹಿಡಿದುಕೊಂಡು ನಾನು ಸಂಗೀತ ಲೋಕಕ್ಕೆ ಕಾಲಿಟ್ಟೆ. ಹಲವು ನಾಟಕ, ನೃತ್ಯಗಳಿಗೆ ಸಂಗೀತ ಸಂಯೋಜನೆ ನಡೆಸಿದೆ. ಶಾಸ್ತ್ರೀಯ ಸಂಗೀತ ಕಲಿತು, ಕಲಿಸಿಕೊಟ್ಟಿದ್ದೇನೆ. ಇಂದು ಸಂಗೀತ ಸುಲಭವಾಗಿದೆ. ಆದರೆ, ನನಗೆ ರಂಗಭೂಮಿ ಮತ್ತು ಸಂಗೀತ ಬದುಕು ಕಟ್ಟಿಕೊಟ್ಟಿದೆ ಎಂದು ಸ್ಮರಿಸಿದರು. ಉದ್ಯಮಿ ಸಾಧು ಸಾಲ್ಯಾನ್, ಉದ್ಯಮಿ ಮಹೇಶ್ ಶೆಣೈ, ಹೋಟೆಲ್ ಪಂಚರತ್ನ ಪ್ಯಾರಡೈಸ್ ಮಾಲಕ ಸಂತೋಷ್ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಈಡಿಗ ಮಹಾ ಮಂಡಳದ ಉಡುಪಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಕಾಪು, ಹಿಂದೂ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಬಾಲಕೃಷ್ಣ ಶಿಬಾರ್ಲ ಸ್ವಾಗತಿಸಿದರು. ಶ್ರೀವತ್ಸ ವಂದಿಸಿದರು. ಗಣೇಶ್ ಸಗ್ರಿ ಕಾರ್ಯಕ್ರಮ ನಿರೂಪಿಸಿದರು.
ಲಿಂಗಸುಗೂರು | ಟಾಟಾಎಸ್ ವಾಹನ ಪಲ್ಟಿ : 15 ಜನರಿಗೆ ಗಾಯ
ಲಿಂಗಸುಗೂರು : ಶವ ಸಂಸ್ಕಾರ ಮುಗಿಸಿ ವಾಪಸಾಗುತ್ತಿದ್ದ ವೇಳೆ ಟಾಟಾ ಎಸ್ ವಾಹನ ಪಲ್ಟಿಯಾಗಿ 15 ಜನ ಗಾಯಗೊಂಡ ಘಟನೆ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದ ಬಳಿ ಜರುಗಿದೆ. ಮಂಗಳವಾರ 2 ಗಂಟೆಗೆ ಸುಮಾರಿಗೆ ಲಿಂಗಸುಗೂರಿನಿಂದ ಶವಸಂಸ್ಕಾರ ಮುಗಿಸಿಕೊಂಡು ಚಿತ್ತಾಪುರಕ್ಕೆ ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿ ಬಿದ್ದಿದೆ ಎನ್ನಲಾಗಿದೆ. ವಾಹನ ಪಲ್ಟಿಯಾದ ಪರಿಣಾಮ ಸುಮಾರು 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Raichur | ಏಕಾಏಕಿ ಮಳೆಯಿಂದ ಜೋಳದ ಬೆಳೆ ನಾಶ
ರಾಯಚೂರು : ರಾಯಚೂರು ನಗರ ಹಾಗೂ ತಾಲೂಕಿನ ವಿವಿಧೆಡೆ ಏಕಾಏಕಿ ಸುರಿದ ಮಳೆಯ ಪರಿಣಾಮ ಹೊಲದಲ್ಲಿ ಕಟಾವು ಮಾಡಿದ ಜೋಳ ಬೆಳೆ ಹಾನಿಗೀಡಾಗಿದೆ. ಜಿಲ್ಲೆಯ ಬಹುತೇಕ ಕಡೆ ಜೋಳ ಕಟಾವು ಮಾಡಿ ನೆಲದ ಮೇಲೆ ರಾಶಿ ಮಾಡಲಾಗಿದ್ದು, ಮಳೆಯ ಕಾರಣದಿಂದ ಜೋಳ ನೆಲದ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ರಾಯಚೂರು ತಾಲೂಕಿನ ಮನ್ಸಲಾಪೂರ, ಹೊಸಪೇಟೆ, ಮರ್ಚೇಡ್, ಮಲ್ಲಾಪೂರ, ಜೇಗರಕಲ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ತಡರಾತ್ರಿ ಮತ್ತು ಬೆಳಗಿನ ಜಾವ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದ ಬಿಳಿ ಜೋಳ ಬೆಳೆದ ರೈತರು ಆತಂಕದಲ್ಲಿದ್ದಾರೆ. ಕಟಾವು ಮಾಡಿದ ಜೋಳ ರಾಶಿ ಮಾಡುವ ಮುನ್ನವೇ ಮಳೆ ಸುರಿದಿರುವುದರಿಂದ ಜೋಳ ಕಪ್ಪಾಗುವ ಸಾಧ್ಯತೆ ಇದ್ದು, ರೈತರು ಆರ್ಥಿಕ ಹಾನಿ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವುದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ಇನ್ನಷ್ಟು ಮಳೆ ಬೀಳುವ ಸಾಧ್ಯತೆ ರೈತರಲ್ಲಿ ಆತಂಕ ಹೆಚ್ಚಿಸಿದೆ. ಸಮೀಕ್ಷೆಗೆ ರೈತರ ಒತ್ತಾಯ : ಅಕಾಲಿಕ ಮಳೆಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿದ್ದು, ಜಿಲ್ಲಾಡಳಿತ ತಕ್ಷಣ ಬೆಳೆ ಸಮೀಕ್ಷೆ ನಡೆಸಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ರೈಲ್ವೆ ಅಂಡರ್ಪಾಸ್ನಲ್ಲಿ ನೀರು : ನಗರದಲ್ಲಿ ಸೋಮವಾರ ಬೆಳಿಗ್ಗೆ ಸುಮಾರು ಅರ್ಧಗಂಟೆ ಸುರಿದ ಮಳೆಯಿಂದ ರಸ್ತೆಗಳ ಮೇಲೆ ನೀರು ನಿಂತು ವಾಹನ ಸವಾರರು ಪರದಾಡಿದರು. ರಂಗಮಂದಿರ ಹಿಂಭಾಗದ ವಿದ್ಯಾಭಾರತಿ ಶಾಲೆಗೆ ಹೋಗುವ ರಸ್ತೆಯ ರೈಲ್ವೆ ಅಂಡರ್ಪಾಸ್ನಲ್ಲಿ ಮಳೆನೀರು ಸಂಗ್ರಹವಾಗಿ ಸಂಚಾರಕ್ಕೆ ತೊಂದರೆ ಉಂಟಾಯಿತು.
‘ಕೇಂದ್ರ, ರಾಜ್ಯ ಯೋಜನೆಗಳನ್ನು ಬದ್ಧತೆಯಿಂದ ಜನರಿಗೆ ತಲುಪಿಸಿ’
ಕೇಂದ್ರ ಪುರಸ್ಕೃತ ಯೋಜನೆಗಳ ಕಾರ್ಯಾಗಾರದಲ್ಲಿ ಸಂಸದ ಕೋಟ
Uttar Pradesh | ತಂದೆಯನ್ನು ರೈಫಲ್ನಿಂದ ಹತ್ಯೆಗೈದು, ದೇಹವನ್ನು ತುಂಡುತುಂಡಾಗಿ ಕತ್ತರಿಸಿದ NEET ರಿಪೀಟರ್!
ಸಹೋದರಿಯನ್ನು ನಾಲ್ಕು ದಿನಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿದ್ದ ಆರೋಪಿ
Bidar | ಒಳ ಮೀಸಲಾತಿಯಲ್ಲಿನ ಅನ್ಯಾಯ ಸರಿಪಡಿಸಲು ಬಲಗೈ ಸಮುದಾಯದಿಂದ ಮನವಿ
ಬೀದರ್ : ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ತಕ್ಷಣವೇ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ಮನವಿ ಪತ್ರ ಸಲ್ಲಿಸಿದೆ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲ, ಸಮಾಜ ಕಲ್ಯಾಣ ಇಲಾಖೆ ಸಚಿವ, ಗೃಹ ಸಚಿವ, ಪಂಚಾಯತ್ ರಾಜ್ ಇಲಾಖೆ ಸಚಿವ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಿಗೆ ಮಂಗಳವಾರ ಮನವಿ ಸಲ್ಲಿಸಲಾಗಿದೆ. ಮನವಿ ಪತ್ರದಲ್ಲಿ, ಒಳಮೀಸಲಾತಿ ರೋಸ್ಟರ್ ಬಿಂದುಗಳನ್ನು ಅವೈಜ್ಞಾನಿಕವಾಗಿ ಗುರುತಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನು ಹಿಂದಿನ ಮುಖ್ಯ ಕಾರ್ಯದರ್ಶಿಗಳು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರೂ, ಯಾವುದೇ ತಿದ್ದುಪಡಿ ಮಾಡದೆ ಹಳೆಯ ಬಿಂದುಗಳನ್ನೇ ಆಧರಿಸಿ ಆದೇಶ ಹೊರಡಿಸಲಾಗಿದೆ ಎಂದು ದೂರಲಾಗಿದೆ. ಪರಿಶಿಷ್ಟ ಜಾತಿಗಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಒಳಮೀಸಲಾತಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವ ತನಕ ಪ್ರಸ್ತುತ ಅನ್ವಯಿಸುತ್ತಿರುವ ಒಳಮೀಸಲಾತಿ ಕ್ರಮಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಹೊಸ ಜಾತಿ ಪ್ರಮಾಣಪತ್ರ ವಿತರಣೆ ತಕ್ಷಣ ನಿಲ್ಲಿಸಬೇಕು. ಹಳೆಯ ಜಾತಿ ಪ್ರಮಾಣಪತ್ರಗಳನ್ನು ಮುಂದುವರಿಸಬೇಕು. ಒಳಮೀಸಲಾತಿಗೆ ಅನ್ವಯಿಸಿರುವ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಬೇಕು. ಗೊಂದಲ ಪರಿಹಾರವಾಗುವ ತನಕ ಹಳೆಯ ಮೀಸಲಾತಿ ಪದ್ಧತಿಯನ್ನೇ ಅನುಸರಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಸಮುದಾಯದ ವತಿಯಿಂದ ಸಭೆ ನಡೆಸಿ ಬೀದರ್ ಬಂದ್ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಮಹೇಶ್ ಗೋರನಾಳಕರ್, ಪ್ರಮುಖರಾದ ಕೆ.ಪುಂಡಲಿಕರಾವ್, ಅರವಿಂದಕುಮಾರ್ ಅರಳಿ, ಶಂಕರ್ ದೊಡ್ಡಿ, ವಿಜಯಕುಮಾರ್ ಗಾಯಕವಾಡ್, ಮಾರುತಿ ಬೌದ್ಧೆ, ಅನೀಲಕುಮಾರ್ ಬೆಲ್ದಾರ್, ಡಾ. ಕಾಶಿನಾಥ್ ಚೆಲ್ವಾ, ವಿಠಲದಾಸ್ ಪ್ಯಾಗೆ, ಶ್ರೀಪತರಾವ್ ದಿನೆ, ಶಿವಕುಮಾರ್ ನೀಲಿಕಟ್ಟಿ, ದಶರಥ್ ಗುರು, ಸಂದೀಪ್ ಕಾಂಟೆ, ಸುನೀಲ್ ಸಂಗಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ನಾಟೆಕರ್, ಪ್ರಕಾಶ್ ರಾವಣ್, ಭೀಮರಾವ್ ಮಾಲಗತ್ತಿ, ರಾಹುಲ್ ಡಾಂಗೆ, ಪವನ್ ಮಿಠಾರೆ, ಸಂಜುಕುಮಾರ್ ಸಾಗರ್, ವಿನೋದ್ ಬಂದಗೆ, ಸೂರ್ಯಕಾಂತ್ ಸಾಧೂರೆ, ಅರುಣ ಪಟೇಲ್ ಹಾಗೂ ದೇವೆಂದ್ರ ಸೋನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೀತಿ ನಿರೂಪಣೆ ಭಾಷಣವನ್ನು ಮಾರ್ಪಾಡು ಮಾಡಿದ ರಾಜ್ಯಪಾಲರ ಕ್ರಮವನ್ನು ತಿರಸ್ಕರಿಸಿದ ಕೇರಳ ವಿಧಾನಸಭೆ; ಸದನ ಮುಂದೂಡಿಕೆ
ತಿರುವನಂತಪುರಂ: ಸಚಿವ ಸಂಪುಟ ಅನುಮೋದಿಸಿರುವ ನೀತಿ ನಿರೂಪಣೆ ಭಾಷಣದ ಬದಲು, ಸದನವನ್ನುದ್ದೇಶಿಸಿ ತಾವು ಮಾರ್ಪಾಡು ಮಾಡಿದ ನೀತಿ ನಿರೂಪಣೆ ಭಾಷಣವನ್ನು ಅಧಿಕೃತ ಭಾಷಣ ಎಂದು ಪರಿಗಣಿಸಬೇಕು ಎಂಬ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರ ಆಗ್ರಹವನ್ನು ಮಂಗಳವಾರ ಕೇರಳ ವಿಧಾನಸಭೆ ತಿರಸ್ಕರಿಸಿದೆ. ಸಚಿವ ಸಂಪುಟ ಅನುಮೋದಿಸಿರುವ ನೀತಿ ನಿರೂಪಣೆ ಭಾಷಣವನ್ನು ರಾಜ್ಯಪಾಲರು ಏಕಪಕ್ಷೀಯವಾಗಿ ಮಾರ್ಪಾಡು ಮಾಡುವುದು ಅಸಾಂವಿಧಾನಿಕವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ. ಈ ಹಿಂದೆ ರಾಜ್ಯಪಾಲರು ನೀತಿ ನಿರೂಪಣೆ ಭಾಷಣದ ಕೆಲ ಭಾಗಗಳನ್ನು ಕೈಬಿಟ್ಟಿರುವ ನಿದರ್ಶನಗಳಿದ್ದರೂ, ಸಚಿವ ಸಂಪುಟ ಅನುಮೋದಿಸಿದ ನೀತಿ ನಿರೂಪಣೆ ಭಾಷಣವೇ ಅಧಿಕೃತ ಎಂದು ಅಂದಿನ ಸ್ಪೀಕರ್ಗಳು ರೂಲಿಂಗ್ ನೀಡಿದ್ದಾರೆ. ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳೂ ಇವೆ ಎಂದು ಅವರು ಬೊಟ್ಟು ಮಾಡಿದ್ದಾರೆ. ಮುಖ್ಯಮಂತ್ರಿಯವರ ಪ್ರತಿಕ್ರಿಯೆಯನ್ನು ಆಧರಿಸಿ, ರಾಜ್ಯಪಾಲರ ಪತ್ರವನ್ನು ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ಸ್ಪೀಕರ್ ಎ.ಎನ್. ಶಂಶೀರ್ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಹಣಕಾಸು ಮುಗ್ಗಟ್ಟು, ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಪಡೆಯುವಲ್ಲಿನ ವಿಳಂಬ ಹಾಗೂ ತೆರಿಗೆ ಹಂಚಿಕೆ ಮತ್ತು ಹಣಕಾಸು ಆಯೋಗದ ಅನುದಾನದ ಬಗ್ಗೆ ನೀತಿ ನಿರೂಪಣೆ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಮೂರು ಭಾಗಗಳನ್ನು ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕೈಬಿಟ್ಟಿದ್ದರು ಹಾಗೂ ಮಾರ್ಪಾಡು ಮಾಡಿದ್ದರು. ಈ ನಡುವೆ, ಕೇರಳ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ರಾಜ್ಯ ವಿಧಾನಸಭಾ ಅಧಿವೇಶನ ಮಾರ್ಚ್ 30ರವರೆಗೆ ನಡೆಯಬೇಕಿದ್ದರೂ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಔರಾದ್ | ಪರೀಕ್ಷೆ ಧೈರ್ಯದಿಂದ ಎದುರಿಸಿ ಉನ್ನತ ಗುರಿ ಸಾಧಿಸಿ : ರತಿಕಾಂತ್ ನೇಳಗೆ
ಎಸೆಸೆಲ್ಸಿ ಮಕ್ಕಳೊಂದಿಗೆ ಸಂವಾದ
Bidar | ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುವವರನ್ನು ಒಕ್ಕಲೆಬ್ಬಿಸಬಾರದು: ಡಾ.ಮೂರ್ತಿ ಎಲ್
ಬೀದರ್ : ಹಲವಾರು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವ್ಯವಸಾಯದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗ ಅಧ್ಯಕ್ಷ ಡಾ. ಮೂರ್ತಿ ಎಲ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರವಾಸದ ವೇಳೆ ಅನೇಕ ಜಿಲ್ಲೆಗಳಲ್ಲಿ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಎಸ್ಸಿ, ಎಸ್ಟಿ ಸಮುದಾಯದ ಜನರನ್ನು ತೆರವುಗೊಳಿಸುವ ಸಮಸ್ಯೆ ಕಂಡು ಬಂದಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಮಾ.8 ರಂದು ಅರಣ್ಯ ಹಾಗೂ ಕಂದಾಯ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು. ಈ ಕುರಿತು ಆಯೋಗದಿಂದ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. 3,850 ಪ್ರಕರಣಗಳ ವಿಚಾರಣೆ : ಪರಿಶಿಷ್ಟ ಜಾತಿ, ಪಂಗಡದ ಜನರ ಹಿತರಕ್ಷಣೆಗಾಗಿ ಆಯೋಗ ಸಜ್ಜಾಗಿದ್ದು, ಈಗಾಗಲೇ 3,850 ಪ್ರಕರಣಗಳು ವಿಚಾರಣೆಯಲ್ಲಿವೆ. ದಿನನಿತ್ಯ ಸಾವಿರಾರು ಅರ್ಜಿಗಳು ಬರುತ್ತಿದ್ದು, 350 ಪ್ರಕರಣಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ದೌರ್ಜನ್ಯ ಪ್ರಕರಣಗಳು, ಸ್ಮಶಾನ ಭೂಮಿ, ಎಸ್ಸಿಪಿ/ಟಿಎಸ್ಪಿ ಅನುದಾನ ಬಳಕೆ, ಕಾಲೊನಿ ಅಭಿವೃದ್ಧಿ, ಸುಳ್ಳು ಜಾತಿ ಪ್ರಮಾಣಪತ್ರ, ವಿದ್ಯಾರ್ಥಿ ನಿಲಯಗಳ ಸಮಸ್ಯೆ, ಜಮೀನು ಮಂಜೂರು ಸೇರಿದಂತೆ ಹಲವು ವಿಷಯಗಳ ಅಹವಾಲುಗಳನ್ನು ಆಲಿಸಲಾಯಿತು. ಸುಳ್ಳು ಜಾತಿ ಪ್ರಮಾಣಪತ್ರಕ್ಕೆ ಕಠಿಣ ಕ್ರಮ : ಇತ್ತೀಚೆಗೆ ಸುಳ್ಳು ಜಾತಿ ಪ್ರಮಾಣಪತ್ರಗಳ ಪ್ರಮಾಣ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಬೇಡ ಜಂಗಮ, ಬುಡಗ ಜಂಗಮ ಪ್ರಕರಣಗಳ ಕುರಿತು ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆ, ಶಾಲೆ-ಕಾಲೇಜು ಹಂತದಲ್ಲಿ ಸುಳ್ಳು ಪ್ರಮಾಣಪತ್ರ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇನ್ನೂ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಎಸ್ಸಿ, ಎಸ್ಟಿ ಸಮುದಾಯ ಮುಖಂಡರೊಂದಿಗೆ ಸಭೆ ನಡೆಸಿ, ಸಮಸ್ಯೆಗಳ ಸಮಗ್ರ ವರದಿ ಸಿದ್ಧಪಡಿಸಿ ಏಪ್ರಿಲ್ 9 ರಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು. ಜಿಲ್ಲೆಯ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಆಯೋಗದ ಸದಸ್ಯ ಸುನೀಲ್ ಉಕ್ಕಲಿ, ಕಾರ್ಯದರ್ಶಿ ಡಾ.ಎಚ್.ಎಸ್.ಶಿವರಾಮ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಮಾಜಿ ಎಂಎಲ್ಸಿ ಅರವಿಂದ್ ಅರಳಿ, ಅನಿಲ್ ಬೆಲ್ದಾರ್, ಮಾರುತಿ ಬೌದ್ಧೆ, ರಮೇಶ್ ಡಾಕೂಳಗಿ, ಮಹೇಶ್ ಗೋರನಾಳಕರ್, ಪಂಡಿತರಾವ್ ಚಿದ್ರಿ, ಬಸವರಾಜ್ ಮಾಳಗೆ, ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡದ ನೂರಾರು ಪದಾಧಿಕಾರಿಗಳು ವಿವಿಧ ಸಮುದಾಯದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಎಲ್ ಮೆಂಚೊ ಎಂದು ಕರೆಯಲ್ಪಡುವ ಮೆಕ್ಸಿಕೊದ ಕುಖ್ಯಾತ ಅಕ್ರಮ ಮಾದಕ ವಸ್ತು ಸಾಗಣೆದಾರ ನೆಮಿಸಿಯೊ ಒಸೆಗುರಾನನ್ನು ಮೆಕ್ಸಿಕನ್ ಸೇನಾಪಡೆ ಹತ್ಯೆ ಮಾಡಿದೆ. ಈ ಹಿಂದೆ ಎಲ್ ಮೆಂಚೊನನ್ನು ಬಂಧಿಸುವ ಬಗ್ಗೆ ಮಾಹಿತಿ ನೀಡಿದವರಿಗೆ 1.5 ಮಿಲಿಯನ್ ಡಾಲರ್ (ಸುಮಾರು ₹125 ಕೋಟಿ) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿತ್ತು. ಆದರೆ ಮೆಕ್ಸಿಕೊ ಅಧಿಕಾರಿಗಳಿಗೆ ಆತನ ಸುಳಿವು ನೀಡಿದ್ದು ಬೇರೆ ಯಾರೂ ಅಲ್ಲ, ಆತನ ಪ್ರೇಯಸಿ. ಆಕೆ ನೀಡಿದ ಮಾಹಿತಿಯಿಂದಾಗಿ ಸರ್ಕಾರವು ಅವನ ಅಡಗುತಾಣದ ಮೇಲೆ ತ್ವರಿತವಾಗಿ ದಾಳಿ ಮಾಡಲು ಸಾಧ್ಯವಾಯಿತು. ಎಲ್ ಮೆಂಚೊ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (CJNG) ನ ನಾಯಕನಾಗಿದ್ದ. ರವಿವಾರ ನಡೆದ ಭೀಕರ ಗುಂಡಿನ ಚಕಮಕಿಯ ವೇಳೆ ಆತನ ಸಹಚರರು ರಾಷ್ಟ್ರೀಯ ಗಾರ್ಡ್ನ ವಿಶೇಷ ಪಡೆಗಳಿಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್ ಮೇಲೆ ಗುಂಡು ಹಾರಿಸಲು ಯಶಸ್ವಿಯಾದರು. ಹಾನಿಗೊಳಗಾದ ಹೆಲಿಕಾಪ್ಟರ್ ಹತ್ತಿರದ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಈ ವೇಳೆ ಸೈನಿಕರು ಎಲ್ ಮೆಂಚೊ ಮತ್ತು ಅವನ ಇಬ್ಬರು ಅಂಗರಕ್ಷಕರನ್ನು ಗುಂಡು ಹಾರಿಸಿ ಗಾಯಗೊಳಿಸಿದರು. ಮೆಕ್ಸಿಕೋದ ರಕ್ಷಣಾ ಸಚಿವಾಲಯದ ಪ್ರಕಾರ, ಪಶ್ಚಿಮ ರಾಜ್ಯವಾದ ಜಲಿಸ್ಕೊದ ಟಪಲ್ಪಾ ಪಟ್ಟಣದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಮೆಕ್ಸಿಕನ್ ವಿಶೇಷ ಪಡೆಗಳು ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಗಾಯಗೊಂಡು ಒಸೆಗುರಾ ಹೆಲಿಕಾಪ್ಟರ್ನಲ್ಲೇ ಸಾವಿಗೀಡಾಗಿದ್ದಾನೆ. ಎಲ್ ಮೆಂಚೊ ಯಾರು? ಎಲ್ ಮೆಂಚೊ ಎಂದೇ ಕರೆಯಲ್ಪಡುವ ಒಸೆಗುರಾ ಸೆರ್ವಾಂಟೆಸ್ ಮೂಲತಃ ಪಶ್ಚಿಮ ರಾಜ್ಯವಾದ ಮೈಕೋವಕನ್ನ ನಿವಾಸಿ; ಆತನಿಗೆ 59 ವರ್ಷ ವಯಸ್ಸು. ಕನಿಷ್ಠ ಮೂರು ದಶಕಗಳಿಂದ ಈತ ಸಂಘಟಿತ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದಾನೆ. 1994ರಲ್ಲಿ ಅಮೆರಿಕದಲ್ಲಿ ಹೆರಾಯಿನ್ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲ್ಪಟ್ಟ ಈತ, ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾನೆ. ನಂತರ ಮೆಕ್ಸಿಕೊಗೆ ವಾಪಾಸಾದ ಬಳಿಕ ಮಾದಕ ವಸ್ತು ಕಳ್ಳಸಾಗಣೆ ಭೂಗತ ಜಗತ್ತಿನಲ್ಲಿ ಕುಖ್ಯಾತನಾದ. 2009ರಲ್ಲಿ ಎಲ್ ಮೆಂಚೊ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (CJNG) ಅನ್ನು ಸ್ಥಾಪಿಸಿದ್ದು, ಇದು ಮೆಕ್ಸಿಕೊದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಕ್ರಿಮಿನಲ್ ಸಂಘಟನೆಯಾಗಿ ಹೊರಹೊಮ್ಮಿತು. ಈ ಕಾರ್ಟೆಲ್ ಕೊಕೇನ್, ಮೆಥಾಂಫೆಟಮೈನ್, ಫೆಂಟನಿಲ್ ಹಾಗೂ ವಲಸಿಗರನ್ನು ಯುನೈಟೆಡ್ ಸ್ಟೇಟ್ಸ್ಗೆ ಕಳ್ಳಸಾಗಣೆ ಮಾಡುತ್ತದೆ. ಇದರ ಜೊತೆಗೆ ಡ್ರೋನ್ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸುವಂತಹ ನವೀನ ಹಿಂಸಾತ್ಮಕ ತಂತ್ರಗಳನ್ನು ಅಳವಡಿಸಿಕೊಂಡಿದೆ. 2015ರಲ್ಲಿ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಜಲಿಸ್ಕೊದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲು ರಾಕೆಟ್ ಲಾಂಚರ್ ಬಳಸಿತ್ತು. ಗರ್ಲ್ ಫ್ರೆಂಡ್ ನೀಡಿದ ಮಾಹಿತಿ ರಕ್ಷಣಾ ಸಚಿವ ರಿಕಾರ್ಡೊ ಟ್ರೆವಿಲ್ಲಾ ಅವರ ಪ್ರಕಾರ, ಮೆಕ್ಸಿಕನ್ ಮಿಲಿಟರಿಯಿಂದ ಕೊಲ್ಲಲ್ಪಟ್ಟ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ನ ಪ್ರಬಲ ನಾಯಕ ನೆಮೆಸಿಯೊ ಒಸೆಗುರಾನ ಗರ್ಲ್ ಫ್ರೆಂಡ್ ಪಶ್ಚಿಮ ಮೆಕ್ಸಿಕೋದ ವೆಕೇಷನ್ ಹೋಮ್ಗಳ ಸುಂದರ ಹಳ್ಳಿಯಾದ ಟಪಲ್ಪಾದಲ್ಲಿ ಆತನನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಸೆಗುರಾ ಅವರ ಪ್ರೇಯಸಿ ನೀಡಿದ ಮಾಹಿತಿಯು ಡ್ರಗ್ ದೊರೆಯ ಅಡಗುತಾಣದ ಮೇಲೆ ಮರುದಿನ ದಾಳಿಯನ್ನು ತ್ವರಿತವಾಗಿ ಯೋಜಿಸಲು ಅಧಿಕಾರಿಗಳಿಗೆ ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ. ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೆಕ್ಸಿಕೋದ ರಕ್ಷಣಾ ಕಾರ್ಯದರ್ಶಿ ರಿಕಾರ್ಡೊ ಟ್ರೆವಿಲ್ಲಾ ಅವರು ಮಾದಕ ವಸ್ತು ದೊರೆಯನ್ನು ಹೇಗೆ ಪತ್ತೆಹಚ್ಚಲಾಯಿತು ಎಂಬುದನ್ನು ವಿವರಿಸಿದರು. ಒಬ್ಬ ವಿಶ್ವಾಸಾರ್ಹ ಸಹಾಯಕ ಎಲ್ ಮೆಂಚೊ ಅವರ ಗರ್ಲ್ ಫ್ರೆಂಡ್ಗಳ ಪೈಕಿ ಒಬ್ಬಾಕೆಯನ್ನು ಟಪಲ್ಪಾದಲ್ಲಿರುವ ಮನೆಗೆ ಕರೆತಂದರು. ಇದು ಅಧಿಕಾರಿಗಳಿಗೆ ಅವರನ್ನು ಪತ್ತೆಹಚ್ಚಲು ಅವಕಾಶ ಮಾಡಿಕೊಟ್ಟಿತು. ಶನಿವಾರ ಆಕೆ ಒಸೆಗುರಾನನ್ನು ಭೇಟಿಯಾಗಿ ಹೋದಳು. ಆಕೆಯೇ ಒಸೆಗುರಾ ಅಲ್ಲಿರುವ ಬಗ್ಗೆ ಮಾಹಿತಿ ನೀಡಿದಳು. ರಾಷ್ಟ್ರೀಯ ಗಾರ್ಡ್ನ ವಿಶೇಷ ಪಡೆ ರವಿವಾರ ದಾಳಿಗಾಗಿ ಭೂ ಮತ್ತು ವಾಯು ಎರಡೂ ತಂತ್ರಗಳೊಂದಿಗೆ ತ್ವರಿತವಾಗಿ ಕಾರ್ಯಾಚರಣೆಯನ್ನು ರೂಪಿಸಿತು. ಯಾರಿಗೂ ಗೊತ್ತಾಗದಂತೆ ಸೇನಾ ಪಡೆ ಜಲಿಸ್ಕೊಗೆ ಪ್ರವೇಶಿಸದೆ ಟಪಲ್ಪಾ ಪ್ರದೇಶವನ್ನು ಸಮೀಪಿಸಿತು ಎಂದು ಟ್ರೆವಿಲ್ಲಾ ಹೇಳಿದ್ದಾರೆ. ಸಂಘಟಿತ ಅಪರಾಧ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಒಸೆಗುರಾ ಇರುವಿಕೆಯನ್ನು ದೃಢಪಡಿಸಿದ ಬಳಿಕ ದಾಳಿ ನಡೆಸಲು ನಿರ್ಧರಿಸಲಾಯಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಸಾಕಷ್ಟು ಹಿಂಸಾತ್ಮಕ ದಾಳಿಯಾಗಿತ್ತು, ಎಂದು ಟ್ರೆವಿಲ್ಲಾ ಹೇಳಿರುವುದಾಗಿ ಎಎಫ್ಪಿ ವರದಿ ಉಲ್ಲೇಖಿಸಿದೆ. ಒಸೆಗುರಾ ಆಕ್ರಮಣಕಾರಿ ಶಸ್ತ್ರಾಸ್ತ್ರಗಳು ಮತ್ತು ಎರಡು ರಾಕೆಟ್ ಲಾಂಚರ್ಗಳನ್ನು ಒಳಗೊಂಡ ಶಸ್ತ್ರಾಗಾರವನ್ನು ಹೊಂದಿದ್ದಾಗ ಆತನನ್ನು ಬಂಧಿಸಲು ಯತ್ನಿಸಲಾಯಿತು. ಆತನ ಭದ್ರತಾ ಬೆಂಗಾವಲು ಪಡೆ ಮೆಕ್ಸಿಕೊ ಸೇನಾ ಪಡೆಗಳ ವಿರುದ್ಧ ಈ ರೀತಿಯ ಆಯುಧಗಳನ್ನು ಮೊದಲು ಬಳಸಿದ್ದರು. 2015ರಲ್ಲಿ ಅವರು ಮಿಲಿಟರಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿ, ಮಾದಕ ವಸ್ತು ಕಳ್ಳಸಾಗಣೆದಾರನನ್ನು ಸೆರೆಹಿಡಿಯುವುದನ್ನು ತಪ್ಪಿಸಲು ಸಹಾಯ ಮಾಡಿದ್ದರು. ಆದರೆ ಎಲ್ ಮೆಂಚೊಗೆ ರವಿವಾರ ಈ ಅದೃಷ್ಟ ಇರಲಿಲ್ಲ. ದಾಳಿ ನಡೆದಾಗ ಆತ ಮತ್ತು ಅವನ ಆಪ್ತ ಕಾವಲುಗಾರರ ವಲಯವು ಕ್ಯಾಬಿನ್ಗಳ ಸಂಕೀರ್ಣವನ್ನು ಸುತ್ತುವರೆದ ಅರಣ್ಯ ಪ್ರದೇಶದಲ್ಲಿ ಆಶ್ರಯ ಪಡೆದರು. ಅಲ್ಲಿ ಸೈನಿಕರು ಸುತ್ತುವರೆದರು. ಕೊನೆಗೆ ಒಸೆಗುರಾ ಪೊದೆಗಳಲ್ಲಿ ಅಡಗಿಕೊಂಡಿರುವುದನ್ನು ಕಂಡುಹಿಡಿದರು ಎಂದು ಮಿಲಿಟರಿ ಮುಖ್ಯಸ್ಥರು ವಿವರಿಸಿದ್ದಾರೆ. ಮೆಕ್ಸಿಕೊದಲ್ಲಿ ಹಿಂಸಾಚಾರ ರವಿವಾರ ಮುಂಜಾನೆ ಒಸೆಗುರಾ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 62 ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ 25 ರಾಷ್ಟ್ರೀಯ ಗಾರ್ಡ್ ಮಿಲಿಟರಿ ಪೊಲೀಸ್ ಸದಸ್ಯರು ಮತ್ತು 34 ಶಂಕಿತ ಗ್ಯಾಂಗ್ ಸದಸ್ಯರು ಸೇರಿದ್ದಾರೆ. ಒಂದು ಡಜನ್ಗಿಂತಲೂ ಹೆಚ್ಚು ರಾಜ್ಯಗಳಲ್ಲಿನ 85 ರಸ್ತೆ ತಡೆಗಳಲ್ಲಿ ಕಾರ್ಟೆಲ್ ನಿಷ್ಠಾವಂತರು ಕಾರುಗಳಿಗೆ ಬೆಂಕಿ ಹಚ್ಚಿದರು ಎಂದು ರಾಯಿಟರ್ಸ್ ವರದಿ ಮಾಡಿದೆ. ಸೋಮವಾರ ಮುಂಜಾನೆ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ; ರಸ್ತೆ ತಡೆಗಳು ನಿಯಂತ್ರಣದಲ್ಲಿವೆ ಎಂದು ಹೇಳಿದ್ದಾರೆ. ಆದಾಗ್ಯೂ, ಒಸೆಗುರಾನ ಕುಖ್ಯಾತ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (CJNG)ನ ಭದ್ರಕೋಟೆಯಾದ ಜಲಿಸ್ಕೊದಲ್ಲಿ ಮೆಕ್ಸಿಕೊ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಲ್ಲಿ 2,000 ಸೈನಿಕರನ್ನು ನಿಯೋಜಿಸಲಾಗಿದೆ. ಮೆಕ್ಸಿಕನ್ನರು ಹಾಗೂ ರಾಜ್ಯದ ಪ್ರಸಿದ್ಧ ಕರಾವಳಿ ಪಟ್ಟಣಗಳಲ್ಲಿನ ಪ್ರವಾಸಿಗರು ಮೆಕ್ಸಿಕೊದ ಇತರ ಭಾಗಗಳಿಗೆ ಹಿಂಸಾಚಾರ ತ್ವರಿತವಾಗಿ ಹರಡುವ ಸಾಧ್ಯತೆಯಿಂದ ಆತಂಕಗೊಂಡಿದ್ದಾರೆ. ಎಲ್ ಮೆಂಚೊ ಜೊತೆಗೆ ಗಾಯಗೊಂಡ ಇಬ್ಬರನ್ನು ಗ್ವಾಡಲಜರದ ಆಸ್ಪತ್ರೆಗೆ ಹೆಲಿಕಾಪ್ಟರ್ನಲ್ಲಿ ಸಾಗಿಸಲಾಗಿತ್ತು. ಮಾರ್ಗ ಮಧ್ಯೆಯೇ ಅವರೂ ಸಾವಿಗೀಡಾದರು ಎಂದು ಟ್ರೆವಿಲ್ಲಾ ತಿಳಿಸಿದ್ದಾರೆ. ಶವಗಳನ್ನು ವಿಮಾನದ ಮೂಲಕ ಮೆಕ್ಸಿಕೊ ನಗರಕ್ಕೆ ಸಾಗಿಸಿ ಜನರಲ್ ಪ್ರಾಸಿಕ್ಯೂಟರ್ ಕಚೇರಿಗೆ ಹಸ್ತಾಂತರಿಸಲಾಗಿದೆ. ಒಸೆಗುರಾ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಭದ್ರತಾ ಕಾರ್ಯದರ್ಶಿ ಒಮರ್ ಗಾರ್ಸಿಯಾ ಹರ್ಫುಚ್ ತಿಳಿಸಿದ್ದಾರೆ. ಏತನ್ಮಧ್ಯೆ, ಆತನ ಶವಸಂಸ್ಕಾರ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಕಾರ್ಟೆಲ್ ನಾಯಕನನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಅಮೆರಿಕ ಗುಪ್ತಚರ ಬೆಂಬಲ ನೀಡಿದೆ ಎಂದು ಶ್ವೇತಭವನ ದೃಢಪಡಿಸಿದ್ದು, ಎರಡೂ ದೇಶಗಳಲ್ಲಿ ಮೋಸ್ಟ್ ವಾಂಟೆಡ್ ಅಪರಾಧಿಗಳಲ್ಲಿ ಒಬ್ಬನಾಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಮೆಕ್ಸಿಕೊ ಸೈನ್ಯವನ್ನು ಶ್ಲಾಘಿಸಿದೆ.
BIdar | ವಿವಿಧ ಬೇಡಿಕೆಗಳ ಈಡೇರಿಕೆಗೆ ಎಸ್ಐಓ ಮನವಿ
ಬೀದರ್ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ (ಎಸ್ಐಓ) ಮನವಿ ಸಲ್ಲಿಸಿದೆ. ನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರನ್ನು ಸೋಮವಾರ ಭೇಟಿ ಮಾಡಿ ಸಲ್ಲಿಸಿದ ಮನವಿ ಪತ್ರದಲ್ಲಿ, ಗುಲ್ಬರ್ಗಾ ಪ್ರದೇಶದಲ್ಲಿ ಕೆಇಎ ಉಪಕೇಂದ್ರ ಸ್ಥಾಪನೆ ಮಾಡಿ ಸ್ಥಳೀಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶವನ್ನು ಸುಲಭಗೊಳಿಸಬೇಕು. ಬೀದರ್ ಜಿಲ್ಲೆಯಲ್ಲಿ ಹಂಚಿಕೆಗೊಂಡ ಸ್ಥಳಗಳಲ್ಲಿ ಮೌಲಾನಾ ಆಝಾದ್ ಶಾಲೆಗಳ ಶೀಘ್ರ ಕಾರ್ಯಾರಂಭ ಮಾಡಬೇಕು. ಬೆಂಗಳೂರು ಹಜ್ ಹೌಸ್ನ ಉಚಿತ ಕೋಚಿಂಗ್ ತರಗತಿಗಳಲ್ಲಿ ತಾಂತ್ರಿಕ ಕೋರ್ಸ್ಗಳನ್ನು ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಪ್ರಗತಿಗೆ ವಿಶೇಷ ಮೇಲ್ವಿಚಾರಣೆ ಮತ್ತು ನಿರಂತರ ಪರಿಶೀಲನೆ ನಡೆಸಬೇಕು. ಪಿಎಚ್ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್ಗಳ ಪರಿಚಯ ಮಾಡಬೇಕು. ಮೌಲಾನಾ ಆಝಾದ್ ಮಾದರಿ ಶಾಲೆಗಳು (MAMS) ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು (MRDS) ಸೇರಿದಂತೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಉನ್ನತೀಕರಣಗೊಳಿಸಬೇಕು. ಬೀದರ್ನಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ಆಫ್-ಕ್ಯಾಂಪಸ್ ಸ್ಥಾಪನೆ ಮಾಡಬೇಕು. ದೇವನಹಳ್ಳಿಯಲ್ಲಿ ಅಲ್ಪಸಂಖ್ಯಾತ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಬೇಕು. ಸರ್ ಸೈಯದ್ ರಿಸರ್ಚ್ ಇನ್ಸ್ಟಿಟ್ಯೂಟ್ ದೃಷ್ಟಿಕೋನದ ಎರಡು ವರ್ಷಕ್ಕೊಮ್ಮೆ ಪರಿಶೀಲನೆ ನಡೆಸಬೇಕು. ವೈದ್ಯಕೀಯ ಶಿಕ್ಷಣದ ಮೂಲಸೌಕರ್ಯಗಳ ಪರಿಶೀಲನೆ ನಡೆಸಬೇಕು. ಖಾಲಿ ಇರುವ ಸರ್ಕಾರಿ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಬೀದರ್ನಲ್ಲಿ ಯುವಕರಿಗಾಗಿ ಸಾಫ್ಟ್ ಸ್ಕಿಲ್ ಎನ್ಹಾನ್ಸ್ಮೆಂಟ್ ಕೇಂದ್ರಗಳ ಸ್ಥಾಪನೆ ಮಾಡಬೇಕು. ಪ್ರಗತಿಶೀಲ ರಾಜ್ಯಗಳಿಗೆ ಸಮನಾಗಿ ಶಿಕ್ಷಣ ಬಜೆಟ್ ಹೆಚ್ಚಳ ಮಾಡಬೇಕು. ಸ್ಥಳೀಯ ಯುವಕರ ಉದ್ಯೋಗ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಬೀದರ್ ವಿಶ್ವವಿದ್ಯಾಲಯದಲ್ಲಿ ಹೊಸ ಮೆಡಿಕಲ್ ಅಲೈಡ್ ಕೋರ್ಸ್ಗಳು ಅಳವಡಿಸಬೇಕು. ಜಿಲ್ಲೆಯಲ್ಲಿ ಹೊಸ BUMS ಮತ್ತು BHMS ಕಾಲೇಜುಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಎಸ್ಐಓ ಜಿಲ್ಲಾ ಅಧ್ಯಕ್ಷ ಸೈಫುದ್ದೀನ್, ಜಿಲ್ಲಾ ಕಾರ್ಯದರ್ಶಿ ಫುರ್ಕಾನ್ ಪಟೇಲ್, ಬೀದರ್ ಘಟಕದ ಅಧ್ಯಕ್ಷ ಸೈಯದ್ ಇಝ್ಹಾನ್, ಬೀದರ್ ಘಟಕದ ಕಾರ್ಯದರ್ಶಿ ಎಂ.ಎ. ಮುಕ್ತದಿರ್ ಹಾಗೂ ಪಿ.ಆರ್ ಕಾರ್ಯದರ್ಶಿ ಇಬ್ರಾಹಿಂ ಮಸೂದ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಹಮದಾಬಾದ್ ಮೋದಿ ಮೈದಾನದ ವಿಚಿತ್ರ ಕುಖ್ಯಾತಿ : ಗೆಲುವಿನ ಬೆನ್ನಲ್ಲೇ ಬೆನ್ನಟ್ಟುವ ಸೋಲು - ನಿಜವೇ?
Modi Stadium in Ahmedabad : ದಕ್ಷಿಣ ಆಫ್ರಿಕಾದ ವಿರುದ್ದ ಟಿ20 ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ. ಇನ್ನೊಂದು ಕಡೆ, ವೆಸ್ಟ್ ಇಂಡೀಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಹಾಗಾಗಿ, ಭಾರತ ಉಪಾಂತ್ಯಕ್ಕೆ ಏರಬೇಕಾದರೆ ಅಷ್ಟೊಂದು ಸುಲಭದ ಲೆಕ್ಕಾಚಾರವಿಲ್ಲ. ಅಹಮದಾಬಾದ್ ಮೈದಾನದಲ್ಲಿ ಗೆದ್ದವರಿಗೆ ಮುಂದೆ ಸಾಲುಸಾಲು ಸೋಲಾಗಲಿದೆ ಎನ್ನುವ ಅಂಕಿಅಂಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಣಿಪುರದ ನಿರ್ವಸಿತ ಕುಟುಂಬಗಳಿಗೆ 5,000 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರಕಾರ
ಗುವಾಹಟಿ, ಫೆ. 24: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) (ಪಿಎಂಎವೈ-ಜಿ) ಅಡಿಯಲ್ಲಿ ಆಂತರಿಕ ನಿರ್ವಸಿತ ವ್ಯಕ್ತಿಗಳಿಗೆ (ಐಡಿಪಿಎಸ್) ಪುನರ್ವಸತಿಯಾಗಿ 5,000 ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಮಣಿಪುರದ ಮುಖ್ಯಮಂತ್ರಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ಹೊಸದಿಲ್ಲಿಯಲ್ಲಿ ಸೋಮವಾರ ಕೇಂದ್ರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಭೇಟಿಯಾದ ಬಳಿಕ ಈ ಅನುಮೋದನೆ ದೊರಕಿದೆ. ಈ ಭೇಟಿಯ ಸಂದರ್ಭ ಉಪ ಮುಖ್ಯಮಂತ್ರಿಗಳಾದ ನೇಮ್ಚಾಕಿಪಗೆನ್ ಹಾಗೂ ಲೋಸಿಲ್ ದಿಖೋ ಕೂಡ ಜೊತೆಗಿದ್ದರು. ಮಣಿಪುರದ ಮೂವರು ನಾಯಕರನ್ನು ಚೌಹಾನ್ ಅವರು ಪ್ರೀತಿಯಿಂದ ಬರ ಮಾಡಿಕೊಂಡರು. ರಾಜ್ಯದಲ್ಲಿ ಶಾಂತಿ ಹಾಗೂ ಸಹಜ ಸ್ಥಿತಿಯನ್ನು ಮರು ಸ್ಥಾಪಿಸಲು ನೆರವು ನೀಡುವುದಾಗಿ ಭರವಸೆ ನೀಡಿದರು ಎಂದು ಮಣಿಪುರ ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆಯಲ್ಲಿ ತಿಳಿಸಿದೆ. ಮಣಿಪುರದ ಜನಾಂಗೀಯ ಹಿಂಸಾಚಾರದಿಂದ ಸಂತ್ರಸ್ತರಾದ ಆಂತರಿಕ ನಿರ್ವಸಿತ ವ್ಯಕ್ತಿಗಳಿಗೆ (ಐಡಿಪಿಎಸ್) 5,000 ಮನೆಗಳ ನಿರ್ಮಾಣಕ್ಕೆ ಪಿಎಂಎವೈ-ಜಿ ಅಡಿಯಲ್ಲಿ ವಿಶೇಷ ಯೋಜನೆ ರೂಪಿಸುವಂತೆ ಕೋರಿ ಮಣಿಪುರ ಸರಕಾರ ಈ ತಿಂಗಳ ಆರಂಭದಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾದ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಅರ್ಹ ಸಂತ್ರಸ್ತ ಕುಟುಂಬಗಳ ವಿವರವನ್ನು ಸಂಗ್ರಹಿಸಲು ಆವಾಸ್ ಪ್ಲಸ್ 2024 ಕುಟುಂಬ ಸಮೀಕ್ಷೆಯ ಅಡಿಯಲ್ಲಿ ವಿಶೇಷ ವ್ಯವಸ್ಥೆಗೆ ಕೂಡ ಅನುಮೋದನೆ ನೀಡಿತ್ತು.
Bidar | ಫೆ.26 ರಂದು ರಮಾತಾಯಿ ಅಂಬೇಡ್ಕರ್ ಅವರ 128ನೇ ಜಯಂತ್ಯೋತ್ಸವ : ಗೋರನಾಳಕರ್
ಬೀದರ್ : ಫೆ. 26 ಗುರುವಾರ ಬೆಳಿಗ್ಗೆ 11:30 ಗಂಟೆಗೆ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮಾತೋಶ್ರೀ ರಮಾತಾಯಿ ಅಂಬೇಡ್ಕರ್ ಅವರ 128ನೇ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬುದ್ದ ಬೆಳಕು ಟ್ರಸ್ಟ್ ನ ಅದ್ಯಕ್ಷ ಹಾಗೂ ಜಯಂತ್ಯೋತ್ಸವ ಕಾರ್ಯಕ್ರಮದ ಆಯೋಜಕ ಮಹೇಶ್ ಗೋರನಾಳಕರ್ ಅವರು ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾತೋಶ್ರೀ ರಮಾತಾಯಿ ಅಂಬೇಡ್ಕರ್ ಅವರ ಜಯಂತ್ಯೋತ್ಸವ ನಿಮಿತ್ಯ ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಪೂರ್ವ ಸಿದ್ದತೆ ಪರಿಕ್ಷೆ ಬಗ್ಗೆ ತರಬೇತಿ, ಕಾನೂನು ಅರಿವು ಹಾಗೂ ನೆರವು ಮತ್ತು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಬುದ್ದ ಬೆಳಕು ಟ್ರಸ್ಟ್ ವತಿಯಿಂದ ಜರುಗಲಿರುವ ಈ ಕಾರ್ಯಕ್ರಮವನ್ನು ಬೆಂಗಳೂರು ಅಕ್ಕ ಐಎಎಸ್ ಅಕಾಡೆಮಿ ಅಧ್ಯಕ್ಷ ಡಾ.ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಮಾತೋಶ್ರೀ ರಮಾತಾಯಿ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷೆ ನಂದಮ್ಮ ಕುಂದೆ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸರ್ಕಾರದ ನಿವೃತ್ತ ಅಪರ ಕಾರ್ಯದರ್ಶಿ ಡಾ.ಭೀಮಸೇನರಾವ್ ಶಿಂಧೆ, ನಿವೃತ್ತ ಎಇ ಮಲ್ಲಿಕಾರ್ಜುನ್ ಸುಬಾನೆ ಹಾಗೂ ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿಯ ಅಧ್ಯಕ್ಷ ಡಾ.ಕಾಶಿನಾಥ್ ಚೆಲ್ವಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷೆ ನಂದಮ್ಮ ಕುಂದೆ ಅವರು ಮಾತನಾಡಿ, ಇದು ಕೇವಲ ಅಂಬೇಡ್ಕರ್ ವಾದಿಗಳು ಹಾಗೂ ಬೌದ್ದ ಅನುಯಾಯಿಗಳ ಕಾರ್ಯಕ್ರಮ ಆಗಿರದೆ ಇಡೀ ಮಹಿಳಾ ಸಮೂಹದ ಕಾರ್ಯಕ್ರಮವಾಗಿದೆ. ಈ ಅಪರೂಪದ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯದ ಮಹಿಳೆಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿಯ ಅಧ್ಯಕ್ಷ ಡಾ.ಕಾಶಿನಾಥ್ ಚಲ್ವಾ, ಯುವ ಮುಖಂಡ ಶರಣು ಫುಲೆ ಇದ್ದರು.
ಕಾರಂಜಾ ಯೋಜನೆಯ ಎಲ್ಲಾ ಕಾಲುವೆ ಪುನರ್ ನಿರ್ಮಾಣವಾಗಿವೆ : ಸಚಿವ ಈಶ್ವರ್ ಖಂಡ್ರೆ
ಭಾಲ್ಕಿ : ರೈತರ ಏಳ್ಗೆಗಾಗಿ ಸರ್ಕಾರ ಸದಾ ಬದ್ಧವಾಗಿದ್ದು, ಈ ಭಾಗದ ರೈತರಿಗೆ ವರವಾಗುವ ರೀತಿಯಲ್ಲಿ ಕಾರಂಜಾ ಯೋಜನೆಯ ಎಲ್ಲಾ ಕಾಲುವೆಗಳು ಪುನರ್ ನಿರ್ಮಾಣವಾಗಿವೆ. ಈ ಯೋಜನೆಯಿಂದ ಬರದ ನಾಡು ಇಂದು ಮಲೆನಾಡಾಗಿ ಪರಿವರ್ತನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು. ಪಟ್ಟಣದ ಕಾರಂಜಾ ಸಬ್ ಡಿವಿಜಿನ್ ಕಚೇರಿಯ ಆವರಣದಲ್ಲಿ ಸೋಮವಾರ ಕಾರಂಜಾ ರೈತ ಭವನದ ಸಾರ್ವಜನಿಕರ ಬಳಕೆಗಾಗಿ ಶುಭಕಾರ್ಯ ಪ್ರಾರಂಭ ಮಾಡಿ ಮಾತನಾಡಿದ ಅವರು, ಈ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ 9.14 ಕೋಟಿ ರೂ. ಅನುದಾನದಲ್ಲಿ ರೈತಭವನ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ರೈತ ಭವನವು ಉತ್ತಮ ರೀತಿಯಿಂದ ನಡೆಸಿಕೊಂಡು ಹೋಗುವ ಸಲುವಾಗಿ ಪ್ರಕಾಶ್ ಮಾಶೆಟ್ಟೆ ಅವರಿಗೆ ಅದರ ಉಸ್ತುವಾರಿ ವಹಿಸಲಾಗಿದೆ. ಸಾರ್ವಜನಿಕರು ತಮ್ಮೆಲ್ಲಾ ಕಾರ್ಯಕ್ರಮಗಳು ಈ ರೈತ ಭವನದಲ್ಲಿ ಮಾಡುವುದರೊಂದಿಗೆ ಇದರ ಉಪಯೋಗ ಪಡೆದುಕೊಳ್ಳಬೇಕು. ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಎಲ್ಲಾ ಸಮುದಾಯದ ಜನರ ಅನುಕೂಲಕ್ಕಾಗಿ ಅಭಿವೃದ್ದಿ ಪೂರಕ ಕೆಲಸಗಳು ಮಾಡಲಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಉತ್ತಮ ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಎಲ್ಲಾ ಅಭಿವೃದ್ಧಿ ಕಾರ್ಯಗಳು ಮಾಡಲಾಗಿದೆ ಎಂದು ಅವರು ಹೇಳಿದರು. ಬಾಲ್ಕಿಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಲಾಗಿದೆ. ಕೆರೆ ಅಭಿವೃದ್ಧಿಗಾಗಿ 15 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರ ಎಲ್ಲಾ ಕೆಲಸಗಳು ಉತ್ತಮ ರೀತಿಯಿಂದ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ರೈತಾಪಿ ವರ್ಗ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳಿಗೂ ವೇಗ ನೀಡಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂಧನಕೇರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ಅಭಿಯಂತರ ಜ್ಞಾನೇಶ್ವರ್ ಮುಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಲಾಸ್ ಮಾಶೆಟ್ಟೆ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ್ ವಂಕೆ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ್ ಚವ್ಹಾಣ, ಬಾತಂಬ್ರಾ ಸಬ್ ಡಿವಿಜನ್ ಅಭಿಯಂತರ ಸೂರ್ಯಕಾಂತ್ ವಾಡಿಕರ್, ಅಭಿಯಂತರ ಚನ್ನಬಸವಣ್ಣ ಬೋಚರೆ, ನಾಗಭೂಷಣ ಸ್ವಾಮಿ ಹಾಗೂ ಉದ್ಯಮಿ ಸೋಮನಾಥಪ್ಪ ಅಸ್ಟೂರೆ ಉಪಸ್ಥಿತರಿದ್ದರು. ಪ್ರಕಾಶ್ ಮಾಶೆಟ್ಟೆ ಸ್ವಾಗತಿಸಿದರು. ದೀಪಕ್ ಥಮಕೆ ನಿರೂಪಿಸಿದರು.
ಮೋದಿ ಸರಕಾರ ಪೆಲೆಸ್ತೀನ್ ಜನರನ್ನು ಕೈಬಿಟ್ಟಿದೆ: ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೆ ಕಾಂಗ್ರೆಸ್ ಟೀಕೆ
ಹೊಸದಿಲ್ಲಿ, ಫೆ. 24: ಭಾರತ ಸರಕಾರ ಪೆೆಲೆಸ್ತೀನ್ ಜನರನ್ನು ಕೈಬಿಟ್ಟಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ಗಾಝಾದ ನಾಗರಿಕರ ಮೇಲೆ ಇಸ್ರೇಲ್ ನಿರ್ದಯವಾಗಿ ದಾಳಿ ಮುಂದುವರಿಸಿರುವ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ಗೆ ತೆರಳುತ್ತಿದ್ದಾರೆ ಎಂದು ಅದು ಹೇಳಿದೆ. ಪೆಲಿಸ್ತೀನ್ ಜನರ ಪರ ತನ್ನ ಬದ್ಧತೆಯ ಕುರಿತು ಮೋದಿ ಸರಕಾರ ಸಿನಿಕತನದ ಹಾಗೂ ಬೂಟಾಟಿಕೆಯ ಹೇಳಿಕೆಗಳನ್ನು ನೀಡುತ್ತದೆ. ಆದರೆ, ವಾಸ್ತವವಾಗಿ ಮೋದಿ ಸರಕಾರ ಪೆಲೆಸ್ತೀನ್ ಜನತೆಯನ್ನು ಕೈಬಿಟ್ಟಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಹೇಳಿದ್ದಾರೆ. ಆಕ್ರಮಿತ ಪಶ್ಚಿಮದಂಡೆಯಲ್ಲಿ ಸಾವಿರಾರು ಫೆಲೆಸ್ತೀನ್ ಜನರನ್ನು ಇಸ್ರೇಲ್ ಹೊರ ಹಾಕುವುದು ಹಾಗೂ ಸ್ಥಳಾಂತರಿಸುವುದು ತೀವ್ರಗೊಂಡಿದೆ. ಇದು ಪ್ರಪಂಚದಾದ್ಯಂತ ಖಂಡನೆಗೆ ಗುರಿಯಾಗಿದೆ ಎಂದು ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ. ಗಾಝಾದಲ್ಲಿರುವ ನಾಗರಿಕರ ಮೇಲೆ ಇಸ್ರೇಲ್ನ ನಿರ್ದಯ ದಾಳಿ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಇಸ್ರೇಲ್ ಹಾಗೂ ಅಮೆರಿಕ ಇರಾನ್ ಮೇಲೆ ವಾಯು ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಗಮನ ಸೆಳೆದಿದ್ದಾರೆ. ಇಸ್ರೇಲ್ನ ಪ್ರತಿಪಕ್ಷ ನೆತನ್ಯಾಹು ಅವರು ದೇಶದ ನ್ಯಾಯಾಂಗದ ಸ್ವಾತಂತ್ರ್ಯವನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ. ಆದುದರಿಂದ ಅದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ನ ಸಂಸತ್ತಿನಲ್ಲಿ ಮಾಡುವ ಭಾಷಣವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಬೆಳಗಾವಿ - ಮುಂಬೈ ನಡುವೆ ಹೊಸ ವಿಮಾನ ಸೇವೆ; ಮಾರ್ಚ್ 29 ರಿಂದ ಹಾರಾಟ ಆರಂಭ; ವೇಳಾಪಟ್ಟಿ ಏನು?
ಬೆಳಗಾವಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರಿಗೆ ಗುಡ್ನ್ಯೂಸ್. ಬೆಳಗಾವಿ ಮುಂಬೈ ನಡುವೆ ಹೊಸ ವಿಮಾನ ಸೇವೆ ಆರಂಭವಾಗಲಿದೆ. ಮಾರ್ಚ್ 29 ರಿಂದ ಚಾಲನೆ ಸಿಗುತ್ತಿದ್ದು, ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಮಾಹಿತಿ ಹಂಚಿಕೊಂಡಿದ್ದಾರೆ. ನಿತ್ಯ ಬೆಳಿಗ್ಗೆ ಮುಂಬೈನಿಂದ ಬೆಳಗಾವಿ ಆಗಮಿಸಲಿದ್ದು, ಸಂಜೆ ಮುಂಬೈನತ್ತ ವಾಪಸ್ ಆಗಲಿದೆ.
ಆಳಂದ | ದ್ವಿತೀಯ ವರ್ಷದ ಬಿ.ಎಡ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಆಳಂದ: ಪಟ್ಟಣದ ಶ್ರೀ ರಾಜಶೇಖರ ಮಹಾಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್. ಕಾಲೇಜಿನಲ್ಲಿ 2025–26ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 2024–25ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಪ್ರತಿಭಾ ಪ್ರದರ್ಶನ ಸಮಾರಂಭ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಹೊರ್ತಿ ಸರ್ವೋದಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಾಧಕ ರಮೇಶ್ ಬಲ್ಲಿದ ಅವರು, ತಮ್ಮ ಜೀವನದ ಹೃದಯಸ್ಪರ್ಶಿ ಅನುಭವಗಳನ್ನು ಹಂಚಿಕೊಂಡು, ಶಿಕ್ಷಕರ ವೃತ್ತಿಯ ಮಹತ್ವ ಮತ್ತು ಹೊಣೆಗಾರಿಕೆ ಕುರಿತು ಆಳವಾದ ಚಿಂತನೆಗಳನ್ನು ವ್ಯಕ್ತಪಡಿಸಿದರು. ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ನಿವೃತ್ತ ಸಹ ನಿರ್ದೇಶಕ ವಿಜಯಕುಮಾರ್ ಜಿ.ಎಂ. ಮಾತನಾಡಿ, “ತಾಳ್ಮೆಯೇ ವೃತ್ತಿಜೀವನದ ತಪಸ್ಸು. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅರಿತು, ಅದಕ್ಕೆ ತಕ್ಕಂತೆ ಬೋಧಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರಾದವರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು, ಅವರಲ್ಲಿರುವ ಶಕ್ತಿಯನ್ನು ಹೊರತರುವ ಪ್ರಯತ್ನ ಮಾಡಬೇಕು,” ಎಂದು ಹೇಳಿದರು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ನಂದಗಾವ ಮಠದ ಶ್ರೀ ರಾಜರಾಜಶೇಖರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ಶಿಕ್ಷಣವೇ ಸಮಾಜದ ಬೆಳಕು. ಗುಣಮಟ್ಟದ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ ಮತ್ತು ಪರಿಶ್ರಮವನ್ನು ಜೀವನದ ಮೂಲಮಂತ್ರಗಳಾಗಿ ಅಳವಡಿಸಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು. ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, “ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವೇ ನಮ್ಮ ಸಂಸ್ಥೆಯ ಮೂಲ ಉದ್ದೇಶ. ಇಲ್ಲಿ ಲಭ್ಯವಿರುವ ಪ್ರತಿಭಾವಂತ ಬೋಧಕರು ಮತ್ತು ಗುಣಮಟ್ಟದ ಶಿಕ್ಷಣದ ಸದುಪಯೋಗ ಪಡೆದು ವಿದ್ಯಾರ್ಥಿಗಳು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು,” ಎಂದರು. ಕಲಬುರಗಿ ಎನ್ವಿ ಬಿಇಡ್ ಕಾಲೇಜಿನ ಪ್ರಾಚಾರ್ಯ ಡಾ.ವಿಜಯಕುಮಾರ ಕೆ. ಗೋತಗಿ, ಸoಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರುಗಳಾದ ಕಲ್ಯಾಣಿ ಸಾವಳಗಿ, ಅಪ್ಪಾಸಾಬ ಬಿರಾದಾರ, ಜ್ಯೋತಿ ವಿಶಾಖಾ, ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳು ನಡೆದವು. ಬಿಎಡ್ ಕಾಲೇಜು ಪ್ರಾಚಾರ್ಯ ಅಶೋಕ ಆರ್. ರೆಡ್ಡಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಸಂದೀಪ ಬಿಕ್ಕಮಳ್ಳಿ ಮತ್ತು ನೇತ್ರಾ ಎಸ್. ಪಾಟೀಲ ನಿರೂಪಿಸಿದರು. ಅಭಿಜೀತ್ ಜಮಾದಾರ ವಂದಿಸಿದರು.
ಬೆಂಗಳೂರು: ಸಚಿವ ಡಾ.ಎಚ್.ಸಿ.ಮಹದೇವಪ್ಪ ನಮ್ಮ ಪಕ್ಷದ ಹೈಕಮಾಂಡ್ ಆಗಿರುವುದರಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ, ಮಾಹಿತಿ ಅವರಿಗೆ ತಿಳಿದಿರಬೇಕು. ಹೀಗಾಗಿ ಅವರು ದಲಿತ ಸಿಎಂ ವಿಚಾರ ಪ್ರಸ್ತಾವ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ ನಗರದ ಕುಮಾರಪಾರ್ಕ್ನಲ್ಲಿರುವ ತಮ್ಮ ಸರಕಾರಿ ನಿವಾಸದ ಬಳಿ ‘ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ಅಧಿಕಾರ ಹಸ್ತಾಂತರ, ದಲಿತ ಸಿಎಂ’ ಬಗ್ಗೆ ಆಗುತ್ತಿರುವ ಚರ್ಚೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ಮಹದೇವಪ್ಪ ಅವರ ಹೇಳಿಕೆ ನೋಡಿದೆ. ಅದರ ಹೊರತಾಗಿ ಬೇರೆ ಯಾವುದೇ ಚರ್ಚೆ ಇಲ್ಲ. ಅವರಿಗೆ ಮುಖ್ಯಮಂತ್ರಿ ಬದಲಾವಣೆ ಮಾಹಿತಿ ಇರಬಹುದು, ಆದರೆ ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಶಿವಕುಮಾರ್ ಹೇಳಿದರು. ದಿಲ್ಲಿಗೆ ಹೋಗಬೇಕಿದೆ: ಹೈಕಮಾಂಡ್ ನಿಮ್ಮನ್ನು ಹಾಗೂ ಮುಖ್ಯಮಂತ್ರಿ ಅವರನ್ನು ಕರೆದಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ಕರೆ ಬಂದಿಲ್ಲ. ನಾನು ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ದಿಲ್ಲಿಗೆ ಹೋಗಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು. ನಗರಾಭಿವೃದ್ಧಿ ಇಲಾಖೆ ಯೋಜನೆಗೆ ಸಂಬಂಧಿಸಿದಂತೆ 1 ಲಕ್ಷ ಕೋಟಿ ರೂ. ನೀಡಲಾಗುತ್ತಿದ್ದು, ದೊಡ್ಡ ನಗರಗಳಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ನಗರಾಭಿವೃದ್ಧಿ ಸಚಿವರ ಬಳಿ ಚರ್ಚೆ ಮಾಡಿ, 2 ಹಾಗೂ 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಹೇಳುತ್ತೇನೆ ಎಂದು ಅವರು ತಿಳಿಸಿದರು. ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ: ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ನೀವು ಮೌನವಾಗಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವರು ಹಾಗೂ ಶಾಸಕರನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿ. ಪಕ್ಷದ ವಿಚಾರವಾಗಿ ದಿಲ್ಲಿಗೆ ಮಾಹಿತಿ ನೀಡುವ ವಿಚಾರ ನಾನು ಮಾಡುತ್ತಿದ್ದೇನೆ ಎಂದು ತಿಳಿಸಿದರು. ಡಾ.ಜಿ.ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಅವರು ದೊಡ್ಡವರು’ ಎಂದು ತಿಳಿಸಿದರು. ಸತೀಶ್ ಜಾರಕಿಹೊಳಿ ನಿಮ್ಮ ಜೊತೆ ಚರ್ಚೆ ಮಾಡಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಸತೀಶ್ ಜಾರಕಿಹೊಳಿ ನಮ್ಮ ಹಿರಿಯ ನಾಯಕರು, ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾವು ವಾರಕ್ಕೊಮ್ಮೆ ಮಾತನಾಡುತ್ತಿರುತ್ತೇವೆ. ನಾವು ಸಮಾನ ಮನಸ್ಕರು. ಅವರಿಗೂ ಪಕ್ಷದ ಬಗ್ಗೆ ಅಪಾರವಾದ ಚಿಂತನೆ ಇದೆ. ನಮ್ಮ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲ ಯೋಜನೆ ತಯಾರು ಮಾಡುತ್ತಿದ್ದೇವೆ ಎಂದು ತಿಳಿಸಿದರು. ನೂತನ ಶಾಸಕರು ಕನಿಷ್ಠ 5 ಮಂತ್ರಿ ಸ್ಥಾನವನ್ನು ಹೊಸಬರಿಗೆ ನೀಡಬೇಕು ಎಂದು ಹೈಕಮಾಂಡ್ ಗೆ ಬರೆದಿರುವ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ನನಗೆ ಅವರ ಪತ್ರ ತಲುಪಿಲ್ಲ. ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ನರೇಂದ್ರ ಮೋದಿ ಶಾಸಕರಾಗದೆ ಮುಖ್ಯಮಂತ್ರಿ ಆಗಲಿಲ್ಲವೇ. ಅವರು ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು. ಮೊದಲ ಬಾರಿಗೆ ಶಾಸಕರಾದಾಗ ಮಂತ್ರಿಯಾದವರಲ್ಲಿ ನಾನೂ ಒಬ್ಬ. ಹೊಸ ಪೀಳಿಗೆ ಬೆಳೆಯಬೇಕು. ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ? ನಾನು ಸಚಿವನಾಗಿ 36 ವರ್ಷವಾಗಿದೆ. ಹೊಸ ಪೀಳಿಗೆ, ಹೊಸ ಆಲೋಚನೆಗಳು ಬರಬೇಕು. ಹೊಸಬರು ಸಂಪುಟಕ್ಕೆ ಬರಬೇಕು ಎಂದು ಬೆಂಬಲಿಸುವವರಲ್ಲಿ ನಾನೂ ಇದ್ದೇನೆ. ಹೊಸಬರನ್ನು ನಾವು ತಯಾರು ಮಾಡಬೇಕಲ್ಲ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಅವರು ತಿಳಿಸಿದರು. ನಿಮ್ಮ ಮಂತ್ರಿಮಂಡಲದಲ್ಲಿ ಹೊಸ ಶಾಸಕರು ಸೇರ್ಪಡೆಯಾಗಲಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರು ಸಚಿವ ಸಂಪುಟ ವಿಸ್ತರಣೆ ಮಾಡುವ ಕಾರಣಕ್ಕೆ ಕೆಲವರು ಪತ್ರ ಬರೆಯುತ್ತಾರೆ, ದಿಲ್ಲಿಗೆ ಹೋಗುತ್ತಾರೆ, ಹೊರಗಡೆ ಹೋಗುತ್ತಾರೆ. ಅವರಿಗೂ ಆಸೆ ಇರುತ್ತದೆ ಎಂದು ತಿಳಿಸಿದರು. ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ನಮ್ಮ ಸರಕಾರ 5065 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಮುಖ್ಯಮಂತ್ರಿ 2 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಶೇ.75ರಷ್ಟು ಕಾಮಗಾರಿಗಳು ಮುಕ್ತಾಯವಾಗಿದ್ದು, ಎಪ್ರಿಲ್ ತಿಂಗಳಾಂತ್ಯದ ವೇಳೆಗೆ ಎಲ್ಲವೂ ಮುಕ್ತಾಯಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಶಿವಕುಮಾರ್ ಹೇಳಿದರು. ಕಾಮಗಾರಿಯಲ್ಲಿ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಹೇಳಿದ್ದೇನೆ. 10 ಲಕ್ಷ ಇ ಖಾತಾ ದಾಖಲೆ ವಿತರಣೆ ಕಾರ್ಯಕ್ರಮ ಮಾಡಲಾಗುವುದು. ಇನ್ನು 30 ಸಾವಿರ ಬೀದಿವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರ ವ್ಯಾಪಾರಕ್ಕೆ ವಾಹನ ನೀಡುವ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು. ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರು ಅಧಿಕಾರದಲ್ಲಿದ್ದಾಗ ಯಾಕೆ ಖಾಲಿ ಹುದ್ದೆಗಳನ್ನು ಮಾಡಲಿಲ್ಲ? ಶೀಘ್ರದಲ್ಲೇ ನಾವು ಹುದ್ದೆಗಳ ನೇಮಕಾತಿ ಮಾಡುತ್ತೇವೆ. ನಿರುದ್ಯೋಗಿ ಯುವಕರಿಗೆ ತೊಂದರೆಯಾಗಬಾರದು ಎಂದು ಯುವನಿಧಿ ಯೋಜನೆ ನೀಡಿದ್ದೇವೆ. ಒಳ ಮೀಸಲಾತಿ ಸೇರಿದಂತೆ ಅನೇಕ ವಿಚಾರವಾಗಿ ವಿಳಂಬವಾಗಿದೆ ಎಂದರು. ಬಜೆಟ್ ಗೌಪ್ಯವಾಗಿರಬೇಕು: ರಾಜ್ಯ ಬಜೆಟ್ ನಲ್ಲಿ ಏನೆಲ್ಲಾ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಮುಖ್ಯಮಂತ್ರಿ ಆಗಲಿ, ಮಂತ್ರಿಗಳಾಗಲಿ ಬಜೆಟ್ ಯಾವ ರೀತಿ ಇರುತ್ತದೆ ಎಂದು ಮುಂಚಿತವಾಗಿ ಮುನ್ಸೂಚನೆ ನೀಡಲು ಆಗುವುದಿಲ್ಲ. ಅದೇ ಬಜೆಟ್ನ ಮಹತ್ವ. ಇಲ್ಲಿ ಗೌಪ್ಯತೆ ಇರಬೇಕು ಎಂದು ಹೇಳಿದರು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯುವುದು. ರಾಜ್ಯದ ಹಿತದ ವಿಚಾರದಲ್ಲಿ ಸಾಕಷ್ಟು ಸವಾಲುಗಳಿವೆ. ಕೇಂದ್ರ ಸರಕಾರ ನಮಗೆ ಸಹಕಾರ ನೀಡಿಲ್ಲ. ಈ ಮಧ್ಯೆ ಮುಖ್ಯಮಂತ್ರಿಯೆ ಹಣಕಾಸು ಸಚಿವರಾಗಿರುವುದರಿಂದ ಅವರು ಯಾವ ರೀತಿ ಬಜೆಟ್ ಮಂಡಿಸುತ್ತಾರೆ ನೋಡೋಣ ಎಂದು ಶಿವಕುಮಾರ್ ತಿಳಿಸಿದರು.
Telangana | ಜಾತ್ರೆಯಲ್ಲಿ ಸವರ್ಣಿಯರಿಂದ ದಲಿತ ಕುಟುಂಬದ ಮೇಲೆ ಹಲ್ಲೆ: ಎರಡು ತಿಂಗಳ ಮಗು ಮೃತ್ಯು
ಹೈದರಾಬಾದ್,ಫೆ.24: ನಾಗರಕರ್ನೂಲಿನಲ್ಲಿ ಕುಮ್ಮೇರ ಜಾತ್ರೆಯಲ್ಲಿ ಮೇಲ್ಜಾತಿಗಳ ಪುರುಷರ ಗುಂಪೊಂದು ಹಿಂದುಳಿದ ಚಾಕಲಿ ಸಮುದಾಯದ ಕುಟುಂಬವೊಂದರ ಹಲ್ಲೆ ನಡೆಸಿದ ಪರಿಣಾಮ ಎರಡು ತಿಂಗಳ ಹೆಣ್ಣುಮಗು ಮೃತಪಟ್ಟಿದೆ. ಕುಮ್ಮೇರ ಗ್ರಾಮದ ಈ ಕುಟುಂಬವು ದೇವಸ್ಥಾನವನ್ನು ಪ್ರವೇಶಿಸಲು 100 ರೂ.ಗಳನ್ನು ಪಾವತಿಸಲು ನಿರಾಕರಿಸಿದಾಗ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ತಮ್ಮನ್ನು ಕೆಳಜಾತಿಗಳಿಗೆ ಸೇರಿದವರು ಎಂದು ನಿಂದಿಸಲಾಗಿತ್ತು. ಸಾಮಾನವಾಗಿ ದೇವಸ್ಥಾನಕ್ಕೆ ಪ್ರವೇಶ ಉಚಿತವಾಗಿದ್ದರಿಂದ ತಾವು ಹಣ ನೀಡಲು ನಿರಾಕರಿಸಿದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ತನ್ನ ಸೊಸೆಯು ಕರುಣೆ ಕೋರಿ ಶಿಶುವನ್ನು ಆರೋಪಿಗಳ ಪಾದದ ಬಳಿಯಿರಿಸಿ ತನ್ನ ಪತಿ ಗಣೇಶಗೆ ಹೊಡೆಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡ ಸಂದರ್ಭದಲ್ಲಿ ಶಿಶುವು ಗಾಯಗೊಂಡಿತ್ತು ಎಂದು ಚಿಲುಕೇಶ್ವರಂ ಚಂದ್ರಕಲಾ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಫೆ.18ರಂದು ಘಟನೆ ನಡೆದಿದ್ದು,ತೀವ್ರವಾಗಿ ಗಾಯಗೊಂಡಿದ್ದ ಮಗು ಫೆ.21ರಂದು ಮೃತಪಟ್ಟಿತ್ತು. ಮಗುವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಕುಟುಂಬವು ಧರ್ಮ ಸಮಾಜ ಪಕ್ಷದ (ಡಿಎಸ್ಪಿ) ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದೆ. ಕುಟುಂಬವು ಜೀತದಾಳುಗಳಾಗಿ ದುಡಿಯಲು ನಿರಾಕರಿಸಿದ್ದರಿಂದ ಅದನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಹಿಂದೆಯೂ ಮೇಲ್ಜಾತಿಗಳ ವ್ಯಕ್ತಿಗಳು ಅದನ್ನು ಗುರಿಯಾಗಿಸಿಕೊಂಡಿದ್ದರು ಎಂದು ಡಿಎಸ್ಪಿ ಮುಖಂಡ ವಿ.ಶಿವ ಮಹಾರಾಜ ಆರೋಪಿಸಿದ್ದಾರೆ. ‘ಆರಂಭದಲ್ಲಿ ನಾವು ಬಿಎನ್ಎಸ್ಎಸ್ ಮತ್ತು ಬಿಎನ್ಎಸ್ನ ವಿವಿಧ ಕಲಂಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೆವು. ಗಣೇಶನ ಪತ್ನಿ ಮೌನಿಕಾ ಪರಿಶಿಷ್ಟ ಜಾತಿಗೆ ಸೇರಿದವಳು ಎನ್ನುವುದು ಈಗ ಬೆಳಕಿಗೆ ಬಂದಿದ್ದು,ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಜೊತೆಗೆ ಕೊಲೆ ಯತ್ನ ಆರೋಪವನ್ನೂ ಹೊರಿಸಲಾಗಿದೆ ’ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ‘ಆರೋಪಿಗಳು ನಮ್ಮನ್ನು ಕೂದಲು ಹಿಡಿದು ಎಳೆದಾಡಿದ್ದರು ಮತ್ತು ಜನಸಮೂಹದ ಮುಂದೆ ಎಸೆದಿದ್ದರು. ನಾಲ್ವರು ನನ್ನ ಮಗ ಗಣೇಶನನ್ನು ಸರಳುಗಳಿಂದ ಥಳಿಸಿದ್ದರು. ಅವರು ನಮ್ಮ ಚಿನ್ನದ ಕಿವಿಯೋಲೆಗಳು, ಬೆಳ್ಳಿ ಬಳೆಗಳು ಮತ್ತು ಫೋನ್ ಅನ್ನು ಕಿತ್ತುಕೊಂಡಿದ್ದಾರೆ. ಕುಮ್ಮೇರ ಗ್ರಾಮಕ್ಕೆ ಮರಳದಂತೆ ಮತ್ತು ನಮ್ಮ ಮನೆಯನ್ನು ಧ್ವಂಸಗೊಳಿಸುವುದಾಗಿ ಅವರು ಬೆದರಿಕೆಯೊಡ್ಡಿದ್ದಾರೆ ’ಎಂದು ಚಂದ್ರಕಲಾ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಳ ಪೈಕಿ ಓರ್ವ ಗಾಯಗೊಂಡಿದ್ದು, ಪ್ರತಿದೂರಿನ ಆಧಾರದಲ್ಲಿ ಪೊಲೀಸರು ಚಂದ್ರಕಲಾ ಕುಟುಂಬದ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kalaburagi | ಸವಿತಾ ಮಹರ್ಷಿ ಅವರ 7ನೇ ಜಯಂತ್ಯೋತ್ಸವ ಆಚರಣೆ
ಕಲಬುರಗಿ: ಸವಿತಾ ಮಹರ್ಷಿ ಅವರ 7ನೇ ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾ ಸವಿತಾ ಸಮಾಜದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸವಿತಾ ಮಹರ್ಷಿ ಜಯಂತಿ ಹಾಗೂ ಉಪನ್ಯಾಸ ಕಾರ್ಯಕ್ರಮ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಪೀಠಾಧಿಪತಿ ಸವಿತಾನಂದನಾಥ ಸ್ವಾಮೀಜಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕಾಂಗ್ರೆಸ್ ಮುಖಂಡ ನೀಲಕoಠರಾವ ಮೂಲಗೆ, ಸಮಾಜದ ಜಿಲ್ಲಾಧ್ಯಕ್ಷ ಶಂಕರ ಕಾಳನೂರ, ಅಪ್ಪಣ್ಣಾ ಚಿನ್ನಾಕಾರ, ಶರಣಬಸವಪ್ಪ ಸೂರ್ಯವಂಶಿ, ದೇವಿಂದ್ರಪ್ಪ ಕುರಿಹಾಳ, ಶೀವಪುತ್ರಪ್ಪ ಬೆಳಮಗಿ, ಡಾ. ನಾಗಪ್ಪ ಗೋಗಿ, ದೇವಿಂದ್ರ ದೇಸಾಯಿ ಕಲ್ಲೂರ್, ಈರಣ್ಣ ಹಡಪದ, ಅಪ್ಪು ಕಣಕಿ, ಅಶೋಕ ರಾಜನಕೋಳೂರು, ಗಣೇಶ ಚಿನ್ನಾಕರ್, ಸೂರ್ಯಕಾಂತ ಬೆಣ್ಣೂರ, ಶರಣಬಸಪ್ಪ ಸೂರ್ಯವಂಶಿ, ದೇವೇಂದ್ರ, ಶಶಿಕಾಂತ, ಜ್ಯೋತಿ, ಅನೀಲ ಮದ್ದೂರ್, ರಾಮಚಂದ್ರ ನವಲಗಿ, ವಿನೋದ ಬಿದರಕರ್, ಪ್ರಭಾಕರ ಪೆದ್ದಾರ್ಪೇಟ್, ರಾಜು ಕೊಳ್ಳಿ, ಮಹಾಂತೇಶ ವಾಡಿ, ಶಿವಕುಮಾರ ಹಡಗಿಲ್, ರಾಜು ಮಾನೆ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು ಇದ್ದರು.
Kalaburagi | ಪಂಚಾಯತ್ರಾಜ್ ಫೆಲೋಗಳಿಗೆ ಆಯೋಜಿಸಿದ ಎರಡು ದಿನಗಳ ತರಬೇತಿ ಯಶಸ್ವಿ
ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಕಲ್ಯಾಣ ಕರ್ನಾಟಕ ಪ್ರದೇಶದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಗಳಿಗಾಗಿ ಫೆ.20 ಹಾಗೂ 21 ರಂದು ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮವು ಕಲಬುರಗಿ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಈ ತರಬೇತಿ ಕಾರ್ಯಕ್ರಮವು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ. ವಿಜಯ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) - ಕರ್ನಾಟಕ ಪ್ರಾದೇಶಿಕ ಶಾಖೆ ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಕಲಬುರಗಿ ಸ್ಥಳೀಯ ಶಾಖೆ ಇವುಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಆಡಳಿತ, ನೀರು ಸರಬರಾಜು, ಘನ ತ್ಯಾಜ್ಯ ನಿರ್ವಹಣೆ, ಉಪ ಸಮಿತಿಗಳು, ಮಕ್ಕಳ, ಮಹಿಳಾ ಮತ್ತು ಅಂಗವಿಕಲ ವ್ಯಕ್ತಿಗಳ ಉದ್ದೇಶಿತ ಆಯವ್ಯಯ ಮತ್ತು ಪಂಚಾಯಿತಿಗಳಿಗೆ ಸಂಬಂಧಿಸಿದ ತಂತ್ರಾoಶಗಳ ಒಳಗೊಂಡ ವಿಷಯಗಳ ಕುರಿತು ತಜ್ಞರು ಉಪನ್ಯಾಸ ನೀಡಿದರು. ಈ ತರಬೇತಿ ಕಾರ್ಯಕ್ರಮವು ಫೆಲೋಗಳ ಸಾಮರ್ಥ್ಯವರ್ಧನೆಗೆ ಹಾಗೂ ಪರಿಣಾಮಕಾರಿ ಕ್ಷೇತ್ರ ಕಾರ್ಯಾಚರಣೆಗೆ ದಾರಿಯಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತ ಉಮಾಮಾದೇವನ್, ಎನ್.ಜಿ.ಎಮ್.ಎ ನಿರ್ದೇಶಕರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂದೆ, ಕಾರವಾರ ಜಿಲ್ಲಾ ಪಂಚಾಯತ್ ಸಿಇಓ ಡಾ. ದಿಲೀಷ ಶಶಿ ಅವರು ವಿಡಿಯೋ ಸಂವಾದದ ಮೂಲಕ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ತಜ್ಞರುಗಳು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು. ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ನಳಿನ್ ಅತುಲ್ ಅವರು ಭಾಗವಹಿಸಿ ಮಾತನಾಡಿದರು.
Karnataka Vs Jammu And Kashmir Ranji Final Match- ಚೊಚ್ಚಲ ಬಾರಿ ರಣಜಿ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಅನುಭವಿ ಆಟಗಾರರನ್ನೊಳಗೊಂಡಿರುವ ಕರ್ನಾಟಕದ ವಿರುದ್ಧ ದಿಟ್ಟತನದ ಪ್ರದರ್ಶನ ತೋರುತ್ತಿದೆ. ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ಮೊದಲ ದಿನವಾದ ಮಂಗಳವಾರ ಪರಸ್ ದೋಗ್ರಾ ಬಳಗ 2 ವಿಕೆಟ್ ನಷ್ಟಕ್ಕೆ 284 ರನ್ ಕಲೆ ಹಾಕಿದೆ. ಹೀಗಾಗಿ 2ನೇ ದಿನವಾದ ಬುಧವಾರ ಎದುರಾಳಿಯನ್ನು ಸಾಧ್ಯವಾದಷ್ಟು ಬೇಗನೇ ಕಟ್ಟಿಹಾಕದೇ ಹೋದಲ್ಲಿ ಅದು ಕರ್ನಾಟಕದ ಪಾಲಿಗೆ ಮುಳುವಾಗುವ ಸಾಧ್ಯತೆ ಹೆಚ್ಚು.
ಮುಹಮ್ಮದ್ ಮುಹಿಯುದ್ದೀನ್ ಪಕ್ಕಲಡ್ಕ
ಮಂಗಳೂರು: ಬಜಾಲ್ ಪಕ್ಕಲಡ್ಕ ನಿವಾಸಿ ಮುಹಮ್ಮದ್ ಮುಹಿಯುದ್ದೀನ್(94) ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಎಂಎಂ ದೀನ್ ಸಾಬ್ ಎಂದೇ ಗುರುತಿಸಿಕೊಂಡಿದ್ದ ಮುಹಮ್ಮದ್ ಮುಹಿಯುದ್ದೀನ್ ಅವರು ಪ್ರಕಾಶ್ ಬೀಡಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಸುಮಾರು 4 ದಶಕಗಳ ಸೇವೆ ಸಲ್ಲಿಸಿದ್ದರು. ಮುಹಮ್ಮದ್ ಮುಹಿಯುದ್ದೀನ್ ಅವರು ಪಕ್ಕಲಡ್ಕ ಮುಹಿಯುದ್ದೀನ್ ಜುಮಾ ಮಸ್ಜಿದ್ನ ಕಟ್ಟಡ ನವೀಕರಣದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮದರಸ ಸಮಿತಿಯ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, 2 ಗಂಡು, 4ಹೆಣ್ಣುಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಲಬುರಗಿ | 9ನೇ ದಿನ ಪೂರೈಸಿದ ʼಕಲ್ಯಾಣ ನಡಿಗೆ, ಹರಳಯ್ಯ ಜ್ಯೋತಿಯಾತ್ರೆʼ
ಕಲಬುರಗಿ: ಬಸವಾದಿ ಶರಣರು ಮಾಡಿರುವ ತ್ಯಾಗ–ಬಲಿದಾನಗಳ ಸಂದೇಶವನ್ನು ಮನೆ-ಮನೆಗೆ ತಲುಪಿಸುವುದು ಹಾಗೂ ಶರಣ ಹರಳಯ್ಯ–ಕಲ್ಯಾಣಮ್ಮ ದಂಪತಿ ಚಮ್ಮಾವುಗೆಗಳಿರುವ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮ, ಬಸವಕಲ್ಯಾಣದ ತ್ರಿಪುರಾಂತ ಕೆರೆ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಆಶಯದೊಂದಿಗೆ ಬೀದರ್ನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ 'ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ' ಸೋಮವಾರ ಕಮಲಾಪುರ ತಾಲೂಕಿನ ಜೀವಣಗಿ ಗ್ರಾಮಕ್ಕೆ ತಲುಪಿತು. ಫೆ.15ರಿಂದ ಮಾ.1ರವರೆಗೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಸುಕ್ಷೇತ್ರ ಬಿಜನಳ್ಳಿಯ ಶರಣಭೂಮಿ ಬಸವಕಲ್ಯಾಣದವರೆಗೆ ಪಾದಯಾತ್ರೆ ನಡೆಯುತ್ತಿದ್ದು, 9ನೇ ದಿನ ಜೀವಣಗಿ ಗ್ರಾಮ ತಲುಪಿತು. ಸೋಮವಾರ ಬೆಳಗ್ಗೆ ಕಾಳಗಿ ತಾಲೂಕಿನ ರಟಕಲ್ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಬಳಿಕ ಕಲ್ಯಾಣ ನಡಿಗೆ ಮತ್ತು ಹರಳಯ್ಯಾ ಜ್ಯೋತಿ ಯಾತ್ರೆಯು ಕಾಲ್ನಡಿಗೆ ಮುಖಾಂತರ ಮಧ್ಯಾಹ್ನ ಜೀವಣಗಿ ಗ್ರಾಮಕ್ಕೆ ತಲುಪಿತು. ಯಾತ್ರೆಗೆ ಗ್ರಾಮದ ಮಹಿಳೆಯರು, ಮುಖಂಡರು ಆರತಿ ಬೆಳಗಿ, ಪೂಜೆ ಸಲ್ಲಿಸಿ ಸ್ವಾಗತಿಸಿದರು. ತದನಂತರ ಗ್ರಾಮದಲ್ಲಿ ಮೆರವಣಿಗೆ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳೊಂದಿಗೆ ಎಸೆಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ನೈತಿಕ ಮೌಲ್ಯಗಳ ಕುರಿತು ಸಂವಾದ ನಡೆಯಿತು. ವಿದ್ಯಾರ್ಥಿಗಳಿಗೆ ಬಸವಣ್ಣನವರ 'ವಚನ ಸುಧೆ’ ಎಂಬ ಕಿರುಹೊತ್ತಿಗೆ ಉಚಿತವಾಗಿ ವಿತರಿಸಲಾಯಿತು. ಕಲ್ಯಾಣ ನಡಿಗೆಯ ನೇತೃತ್ವದ ವಹಿಸಿರುವ ಬಸವಕುಮಾರ್ ಪಾಟೀಲ್ ಅವರು ಮಾತನಾಡಿ, 'ವಿದ್ಯಾರ್ಥಿಗಳೇ ನಾಳಿನ ಪ್ರಬುದ್ಧ ನಾಗರಿಕರು. ವಿದ್ಯಾರ್ಥಿಗಳು ದೇಶಭಕ್ತಿ, ಸಂಸ್ಕಾರ, ಸಂಸ್ಕೃತಿ ಹಾಗೂ ಉನ್ನತ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ ಆತ್ಮವಿಶ್ವಾದಿಂದ ಎದುರಿಸಬೇಕುʼ ಎಂದು ಸಲಹೆ ನೀಡಿದರು. ಸಂಜೆ 6ಕ್ಕೆ 'ದುರ್ಗುಣ–ದುಶ್ಚಟಗಳ ಭಿಕ್ಷೆ, ಸದ್ಗುಣ–ಸನ್ನಡತೆಯ ದೀಕ್ಷೆ’ ಎಂಬ ಸಂಕಲ್ಪದೊಂದಿಗೆ ಸಾರ್ವಜನಿಕ ಉಪನ್ಯಾಸ ನಡೆಯಿತು. ರಾತ್ರಿ 8ಕ್ಕೆ ಬಳ್ಳಾರಿಯ ಧಾತ್ರಿ ರಂಗಸಂಸ್ಥೆಯ ಕಲಾ ತಂಡದಿಂದ ಪ್ರದರ್ಶನಗೊಂಡ 'ಕಲ್ಯಾಣ ಕ್ರಾಂತಿ' ನಾಟಕ ಮೈನವಿರೇಳಿಸಿತು. ಫೆ.24ರಂದು 10ನೇ ದಿನದ ಕಲ್ಯಾಣ ನಡಿಗೆಯು ಮಂಗಳವಾರ ಮಧ್ಯಾಹ್ನ ಕಮಲಾಪುರ ಪಟ್ಟಣಕ್ಕೆ ತಲುಪಿದೆ. ಫೆ.25ಕ್ಕೆ ಬಸವಕಲ್ಯಾಣ ತಾಲೂಕಿನ ಕಲಕೋರಾ, ಫೆ.26ಕ್ಕೆ ಮುಡಬಿ, ಫೆ.27ರಂದು ಯರಂಡಗಿ, ಫೆ.28 ಬಸವಕಲ್ಯಾಂಣ ಹಾಗೂ ಮಾ.1ರಂದು ಬಸವಕಲ್ಯಾಣದಲ್ಲಿ ಸಮಾರೋಪ ನಡೆಯಲಿದೆ. ಪಾದಯಾತ್ರೆಯಲ್ಲಿ ಪ್ರಮುಖರಾದ ಪಂಡರಿ ಬಾಳೂರೆ, ನಾಗಯ್ಯ ಸ್ವಾಮಿ ಮುಧೋಳ, ಶಂಕರಲಿಂಗ ಸ್ವಾಮೀಜಿ, ಮಂಜುನಾಥ ರೆಡ್ಡಿ, ವೀರಣ್ಣ ಕೊರಲಳ್ಳಿ, ಮನೋಜಕುಮಾರ್ ಬುಕ್ಕಾ, ರೇವಣಸಿದ್ದಪ್ಪ ಭಂಕೂರ, ರಾಮಶೆಟ್ಟಿ ಹಂಗನಳ್ಳಿ, ಕಲ್ಯಾಣರಾವ ಬೆನಕನಳ್ಳಿ, ಸತ್ಯಕ್ಕ ಬೆಂಗಳೂರು, ಜ್ಯೋತಿ ಸದಾನಂದ, ಮಲ್ಲಮ್ಮ ಆರ್.ಪಾಟೀಲ್, ಓಂಪ್ರಕಾಶ್ ರೊಟ್ಟೆ, ಸುನೀತಾ ಚಂದ್ರಶೇಖರ್ ಭದ್ರಾವತಿ, ಸಂತೋಷ ಕೆ.ಉಜಳಂಬೆ, ಕೆ.ಬಾಳಪ್ಪ ಶಿವಮೊಗ್ಗ, ಮಲ್ಲಿನಾಥ ಪಾಟೀಲ್, ಸೋಮಶೇಖರ ಮಾಲಿಪಾಟೀಲ, ರಾಜಕುಮಾರ ಕೋಟಿ, ವೀರೇಶ ಮಾಲಿಪಾಟೀಲ, ಸುಭಾಷ ಬಿರಾದರ್ ಸೇರಿದಂತೆ ಜೀವಣಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸೈಬರ್ ವಂಚನೆಯಿಂದ ಹಿರಿಯ ನಾಗರಿಕರ ರಕ್ಷಣೆ: ರವಿರಾಜ ನಾಯಕ್
ಉಡುಪಿ, ಫೆ.24: ಇಂದಿನ ಆಧುನಿಕ ಯುಗದಲ್ಲಿ ಜನಸಾಮಾನ್ಯರು ಸೈಬರ್ ವಂಚನೆಗೆ ಬಲಿಯಾಗುತ್ತಿರುವುದು ಸಾಮಾನ್ಯ ವಿಷಯವಾಗಿದೆ. ಇದರಿಂದ ಸೈಬರ್ ಕ್ರೈಂ ಕುರಿತ ಅರಿವು ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕಾ ಗಿದೆ. ಅದರಲ್ಲಿಯೂ ಹಿರಿಯ ನಾಗರಿಕರು ಈ ಬಗ್ಗೆ ಎಚ್ಚರವಸುವುದು ಅತ್ಯಂತ ಅಗತ್ಯವಾಗಿದೆ ಎಂದು ತರಬೇತುದಾರ ರವಿರಾಜ ನಾಯಕ್ ಹೇಳಿದ್ದಾರೆ. ಉಡುಪಿ ಹಿರಿಯ ನಾಗರಿಕರ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಉಡುಪಿ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹಿರಿಯ ನಾಗರಿಕರಿಗಾಗಿ ಉಡುಪಿ ರೆಡ್ ಕ್ರಾಸ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತಾನಾಡುತ್ತಿದ್ದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಹಿರಿಯ ನಾಗರಿಕ ಸಂಸ್ಥೆಯ ಗೌರವಾಧ್ಯಕ್ಷ ಕೆ.ಸದಾನಂದ ಹೆಗ್ಡೆ, ಕಾರ್ಯದರ್ಶಿ ನಂದಕುಮಾರ್ ಉಪಸ್ಥಿತರಿದ್ದರು. ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಕೆ.ಮುರಳೀಧರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇನ್ನರ್ ವೀಲ್ ಕ್ಲಬ್ನ ಮಾಲತಿ ತಂತ್ರಿ ಪರಿಚಯ ಮಾಡಿದರು. ಇನ್ನರ್ವೀಲ್ ಕ್ಲಬ್ನ ಕಾರ್ಯ ದರ್ಶಿ ಶೈಲಾಮಯ್ಯ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಮಾಡಿದರು. ಜತೆ ಕಾರ್ಯದರ್ಶಿ ಜಯತಂತ್ರಿ ವಂದಿಸಿದರು.
ಯಡ್ರಾಮಿ | ಸರಕಾರಿ ಮಹಿಳಾ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಯಡ್ರಾಮಿ : ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ಯಡ್ರಾಮಿ ತಾಲೂಕಿನ ಅಧ್ಯಕ್ಷರಾಗಿ ರೇಣುಕಾಬಾಯಿ ದೊಡ್ಡಮನಿ ಮತ್ತು ಉಪಾಧ್ಯಕ್ಷೆಯಾಗಿ ಭಾಗ್ಯಶ್ರೀ ಪುರಾಣಿಕ ಅವರನ್ನು ಆಯ್ಕೆ ಮಾಡಲಾಯಿತು. ಪಟ್ಟಣದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಭೆ ಆಯೋಜಿಸಲಾಗಿದ್ದು, ಈ ವೇಳೆ ಜಿಲ್ಲಾಧ್ಯಕ್ಷ ರೇಣುಕಾ ಡಾಂಗೆ, ಅಲ್ಲಾಪಟೇಲ ಚಿಂಚೋಳಿ ಹಾಗೂ ಕೆಂಚಪ್ಪ ದೋಣಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಸಮಿತಿ ಪದಾಧಿಕಾರಿಗನ್ನು ಆಯ್ಕೆ ಮಾಡಲಾಯಿತು. ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ರೇಣುಕಾ ಡಾಂಗೆ, ಮಹಿಳಾ ನೌಕರರ ಶಿಸ್ತು, ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ನಡೆದುಕೊಂಡು, ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಹೇಳಿದರು. ಪದಾಧಿಕಾರಿಗಳು : ತಾಲೂಕು ಗೌರವಾಧ್ಯಕ್ಷರಾಗಿ ಬಸವರಾಜೇಶ್ವರಿ, ಅನುಸೂಯ ಆಲೂರ, ಹಿರಿಯ ಉಪಾಧ್ಯಕ್ಷೆ ಲಲಿತಾ ನಿಂಗಪ್ಪ ಬಳಬಟ್ಟಿ, ಪ್ರಧಾನ ಕಾರ್ಯದರ್ಶಿ ಮಹಾನಂದಾ, ಖಜಾಂಚಿ ಆಸ್ಮಾಬೇಗಂ, ರಾಜ್ಯ ಪರಿಷತ್ ಸದಸ್ಯೆ ಅನಿತಾ ಪೂಜಾರಿ, ಆಂತರಿಕ ಪರಿಶೋಧಕ ಶರಣಮ್ಮ ಕಲಶೆಟ್ಟಿ, ಸಹಾಯಕ ಕಾರ್ಯದರ್ಶಿ ವೀಣಾ ಕಲ್ಯಾಣಿ, ರೇಣುಕಾ ಮುತ್ತಪ್ಪ, ಮಸ್ರತ್ ಮಿಜ್ಞಾ, ಸಂಘಟನಾ ಕಾರ್ಯದರ್ಶಿಗಳಾಗಿ ಶೈಲಾ ಕೋಲಾರ, ವಿದ್ಯಾರಾಣಿ, ನಾಗಮ್ಮ ಶೀಲಾ ಪುರಾಣಿ ಮಂಜುಳಾ, ಕ್ರೀಡಾ ಕಾರ್ಯದರ್ಶಿ ರುದ್ರಮ್ಮ ಹಾಗೂ ಸಂಸ್ಕೃತಿಕ ಕಾರ್ಯದರ್ಶಿ ಮರಲಿಂಗಮ್ಮ, ಸುನಿತಾ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಫೆ.28ರಿಂದ ‘ಪಯಣ’ ಚಿತ್ರಕಲೆ -ಛಾಯಾಚಿತ್ರಗಳ ಪ್ರದರ್ಶನ
ಉಡುಪಿ, ಫೆ.24: ಉಡುಪಿಯ ಆರ್ಟಿಸ್ಟ್ಸ್ ಫೋರಂ ಸದಸ್ಯರ ಚಿತ್ರಕಲೆ ಮತ್ತು ಛಾಯಾಚಿತ್ರ ಕೃತಿಗಳ ಸಂಯುಕ್ತ ಪ್ರದರ್ಶನ ‘ಪಯಣ’ ಫೆ.28ರಿಂದ ಮಾ.2ರವರೆಗೆ ಉಡುಪಿಯ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿರುವ ಗ್ಯಾಲರಿ ದೃಷ್ಠಿಯಲ್ಲಿ ನಡೆಯಲಿದೆ. ಗ್ಯಾಲರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂ ಅಧ್ಯಕ್ಷ ರಮೇಶ್ ರಾವ್, ಪ್ರದರ್ಶನವನ್ನು ಫೆ.28ರಂದು ಸಂಜೆ 5ಗಂಟೆಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉದ್ಘಾಟಿಸಲಿರು ವರು. ಪ್ರದರ್ಶನದಲ್ಲಿ ಒಟ್ಟು 27 ಕಲಾವಿದರ ಒಟ್ಟು 40 ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ ಎಂದರು. ಈ ಪ್ರದರ್ಶನದಲ್ಲಿ ರಮೇಶ್ ರಾವ್, ಸಕು ಪಾಂಗಾಳ, ಲಿಯಾಕತ್ ಅಲಿ, ಕುರ್ಶಿದ್ ಯಾಕುಬ್, ಸೀತಾರಾ ರಾವ್, ಜನಾರ್ದನ ಹಾವಂಜೆ, ಜೀವನ್ ಶೆಟ್ಟಿ, ಪ್ರಸಾದ್ ರಾವ್ ಜಿ., ಮಂಜುನಾಥ ಮಯ್ಯ, ರೇಶ್ಮಾ ಶೆಟ್ಟಿ, ಶ್ರೀನಾಥ ಮಣಿಪಾಲ, ಸಪ್ನಾ ನರೋಹ್ನಾ, ಗಣೇಶ್ ಕುಕ್ಕೆಹಳ್ಳಿ, ಮೋನಪ್ಪ ಎಚ್.ಎಸ್., ಥಾಮಸ್ ಎಂ.ಜೆ., ಪವನ್ ಕುಮಾರ್ ಅತ್ತಾವರ, ಸ್ನೇಹಾ ಸುಬ್ರಹ್ಮಣ್ಯ, ಎಚ್.ಕೆ.ರಾಮಚಂದ್ರ, ಡಾ.ಕಿರಣ್ ಆಚಾರ್ಯ, ಸಂತೋಷ್ ಪೈ, ಅಭಿಷೇಕ್ ತಲ್ವಾಲ್ಕರ್, ಜಯವಂತ್, ಸತೀಶ್ಚಂದ್ರ, ರವಿ ಹಿರೆಬೆಟ್ಟು, ವಸಂತ ಹೆಬ್ರಿ, ಆಸ್ಟ್ರೋ ಮೋಹನ್, ಪ್ರವೀಣಾ ಮೋಹನ್ ಸೇರಿದಂತೆ ಹಲವು ಕಲಾವಿದರ ಕೃತಿಗಳು ಪ್ರದರ್ಶಿಸಲ್ಪಡಲಿವೆ. ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಫೋರಂ ಕಾರ್ಯದರ್ಶಿ ಸಕು ಪಾಂಗಾಳ, ಪವನ್ ಕುಮಾರ್ ಅತ್ತಾವರ ಉಪಸ್ಥಿತರಿದ್ದರು.
Kalaburagi | ಫೆ.27 ರಂದು ಉದ್ಯೋಗ ಮೇಳ
ಕಲಬುರಗಿ: ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆ.27ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐ.ಟಿ.ಐ. ಕಾಲೇಜು ಹಿಂದುಗಡೆಯಿರುವ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ವಿವರ ಇಂತಿದೆ : ಕಲಬುರಗಿ ಕೆಜೆಪಿ ಗ್ರೂಪ್ ಆಫ್ ಕಂಪನಿಯಲ್ಲಿ ಬ್ರ್ಯಾಂಚ್ ಮ್ಯಾನೇಜರ್, ಮಾರ್ಕೇಟಿಂಗ್ ಮ್ಯಾನೇಜರ್, ಸೂಪರವೈಜರ್, ಪ್ರೊಜೆಕ್ಟ್ ಇನ್ಚಾರ್ಜ್, ಕ್ಯಾಷಿಯರ್ ಆಂಡ್ ಬಿಲ್ಲಿಂಗ್ ಎಕ್ಸಿಕ್ಯೂಟೀವ್, ಸೆಲ್ಸ್ ಆಫೀಸರ್ಸ್, ಆಫೀಸ್ ಕ್ಲರ್ಕ್ ಹುದ್ದೆಗಳಿಗೆ ಪಿಯುಸಿ/ ಯಾವುದೇ ಪದವಿಯೊಂದಿಗೆ ಕಂಪ್ಯೂಟರ ಜ್ಞಾನ ಹೊಂದಿರಬೇಕು. ಆಫೀಸ್ ಬಾಯ್ ಹುದ್ದೆಗೆ ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ಹೌಸ್ ಕೀಪಿಂಗ್ ಸ್ಟಾಫ್ ಹುದ್ದೆಗೆ ಎಸೆಸೆಲ್ಸಿ (ಪಾಸ್/ಫೇಲ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಕಮಲಾಪುರ ಶ್ರೀ ಸಾಯಿ ಕೃಪಾ ವಿದ್ಯಾಮಂದಿರ ಇಂಗ್ಲೀಷ್ ಮಿಡಿಯಂ ಸ್ಕೂಲ್ದಲ್ಲಿ ಮದರ್ ಟೀಚರ್ ಹುದ್ದೆಗೆ ಎಂಬಿಎ (ಮಾರ್ಕೇಟಿಂಗ್) ವಿದ್ಯಾರ್ಹತೆ ಹೊಂದಿರಬೇಕು. ಇಂಗ್ಲೀಷ್ ಟೀಚರ್, ಸೋಷಿಯಲ್ ಟೀಚರ್, ಮ್ಯಾಥ್ಸ್ ಟೀಚರ್, ಸೈನ್ಸ್ ಟೀಚರ್, ಡ್ರಾಯಿಂಗ್ ಟೀಚರ್, ಡ್ಯಾನ್ಸ್ ಟೀಚರ್ ಹಾಗೂ ಪಿಯಿಟಿ ಟೀಚರ್ ಹುದ್ದೆಗಳಿಗೆ ಪದವಿಯೊಂದಿಗೆ ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 25 ರಿಂದ 38 ವರ್ಷದೊಳಗಿರಬೇಕು. ಸಾಥ್ವಿಕ್ ಎಂಟಪ್ರ್ರೈಸಸ್ದಲ್ಲಿ ಸೆಲ್ಸ್ ಆಫೀಸರ್ಸ್, ಲೋನ್ ಎಕ್ಸಿಕ್ಯೂಟೀವ್, ಫೀಲ್ಡ್ ಆಫೀಸರ್ಸ್, ಕಸ್ಟಮರ್ ಸಪೋರ್ಟ್ ಹುದ್ದೆಗಳಿಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಸ್ವತಂತ್ರ ಮೈಕ್ರೊ ಫೈನಾನ್ಸ್ದಲ್ಲಿ ಫೀಲ್ಡ್ ಆಫೀಸರ್ಸ್ ಹಾಗೂ ಕಲೆಕ್ಷನ್ ಆಫೀಸರ್ ಹುದ್ದೆಗಳಿಗೆ ಪಿಯುಸಿ / ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡೆಟಾ) ಭಾವಚಿತ್ರಗಳು ಹಾಗೂ ಆಧಾರ್ಕಾರ್ಡ್ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.
ಕಾರ್ಕಳದ ಗರ್ಭಿಣಿ ಸಾವಿನ ಕುರಿತು ತನಿಖೆ: ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.
ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆ
ಕೇರಳ ಇನ್ಮುಂದೆ ಕೇರಳಂ: ಮರುನಾಮಕರಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ, ಮುಂದೇನು?
ಕೇರಳವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡಲು ಮಂಗಳವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇರಳ ವಿಧಾನಸಭೆಯು ಈ ಹಿಂದೆ ಎರಡು ಬಾರಿ ಅಂಗೀಕರಿಸಿದ್ದ ಬೇಡಿಕೆಗೆ ಇದೀಗ ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಿ ರಾಜ್ಯದ ಹೆಸರನ್ನು ‘ಕೇರಳ’ದಿಂದ ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ 2023 ಮತ್ತು 2024ರಲ್ಲಿ ಕೇರಳ ವಿಧಾನಸಭೆಯು ನಿರ್ಣಯಗಳನ್ನು ಅಂಗೀಕರಿಸಿತ್ತು. ಎರಡೂ ನಿರ್ಣಯಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ್ದರು. ಕಳೆದ ತಿಂಗಳು ಕೇರಳ ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಈ ಕ್ರಮಕ್ಕೆ ಪಕ್ಷದ ಬೆಂಬಲ ಸೂಚಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ನಿರ್ಣಯವನ್ನು ಮತ್ತೆ ಮಂಡಿಸಿದ್ದೇಕೆ? 2024ರ ನಿರ್ಣಯದಲ್ಲಿ ಮಲಯಾಳಂನಲ್ಲಿ ರಾಜ್ಯದ ಹೆಸರು ‘ಕೇರಳಂ’ ಆಗಿದ್ದು, ರಾಜ್ಯಗಳನ್ನು ಭಾಷಾವಾರು ಆಧಾರದ ಮೇಲೆ 1956ರ ನವೆಂಬರ್ 1ರಂದು ಮರುಸಂಘಟಿಸಲಾಯಿತು ಎಂದು ಉಲ್ಲೇಖಿಸಲಾಗಿದೆ. ನವೆಂಬರ್ 1ನ್ನು ‘ಕೇರಳ ಪಿರವಿ’ (ಕೇರಳ ರಾಜ್ಯ ಉದಯವಾದ ದಿನ) ಎಂದು ಆಚರಿಸಲಾಗುತ್ತದೆ. ಮಲಯಾಳಂನಲ್ಲಿ ರಾಜ್ಯವನ್ನು ‘ಕೇರಳಂ’ ಎಂದು ಉಲ್ಲೇಖಿಸಲಾಗುತ್ತಿದ್ದರೂ, ಸಂವಿಧಾನದ ಮೊದಲ ಶೆಡ್ಯೂಲ್ನಲ್ಲಿ ಅದರ ಹೆಸರು ‘ಕೇರಳ’ ಎಂದು ನಮೂದಾಗಿದೆ. ಸಂವಿಧಾನದ 3ನೇ ವಿಧಿಯಡಿ ‘ಕೇರಳಂ’ ಎಂದು ಹೆಸರನ್ನು ಬದಲಾಯಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಸರ್ವಾನುಮತದಿಂದ ವಿನಂತಿಸಿತ್ತು. ನಿರ್ಣಯವನ್ನು ಎರಡನೇ ಬಾರಿ ಮಂಡಿಸಬೇಕಾದ ಕಾರಣವನ್ನು ವಿವರಿಸಿದ ಸಿಎಂ ಪಿಣರಾಯಿ ವಿಜಯನ್, ಹಿಂದಿನ ನಿರ್ಣಯವು ಮೊದಲ ಶೆಡ್ಯೂಲ್ನಲ್ಲಷ್ಟೇ ಅಲ್ಲದೆ ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಭಾಷೆಗಳಲ್ಲಿಯೂ ಬದಲಾವಣೆಗಳನ್ನು ಕೋರಿತ್ತು ಎಂದು ತಿಳಿಸಿದ್ದಾರೆ. ಪರಿಶೀಲನೆ ವೇಳೆ ಅಗತ್ಯ ತಿದ್ದುಪಡಿ ಮೊದಲ ಶೆಡ್ಯೂಲ್ನಲ್ಲಿ ಮಾತ್ರ ಮಾಡುವುದೇ ಸೂಕ್ತವೆಂದು ಕಂಡುಬಂದ ಹಿನ್ನೆಲೆ, ವ್ಯತ್ಯಾಸ ಸರಿಪಡಿಸಲು ಹೊಸ ನಿರ್ಣಯವನ್ನು ಅಂಗೀಕರಿಸಲಾಯಿತು. ಹೆಸರಿನ ಮೂಲ ‘ಕೇರಳ’ ಎಂಬ ಹೆಸರಿನ ಮೂಲದ ಬಗ್ಗೆ ಹಲವು ಸಿದ್ಧಾಂತಗಳಿವೆ. ಕ್ರಿ.ಪೂ. 257ರ ಅಶೋಕನ ಶಿಲಾಶಾಸನ IIರಲ್ಲಿ ‘ಕೇರಳಪುತ್ರ’ ಎಂಬ ಉಲ್ಲೇಖ ಸಿಗುತ್ತದೆ. ಇದನ್ನು ಚೇರ ರಾಜವಂಶದ ಉಲ್ಲೇಖವೆಂದು ಅರ್ಥೈಸಲಾಗುತ್ತದೆ. ಕೆಲವು ವಿದ್ವಾಂಸರು ‘ಕೇರಳ’ವನ್ನು ‘ಚೇರಂ’ನಿಂದ ಬಂದ ಪದವೆಂದು ಗುರುತಿಸಿದ್ದಾರೆ. ಮೊದಲ ಮಲಯಾಳಂ-ಇಂಗ್ಲಿಷ್ ನಿಘಂಟನ್ನು ಸಂಕಲಿಸಿದ ಜರ್ಮನ್ ವಿದ್ವಾಂಸ ಹರ್ಮನ್ ಗುಂಡರ್ಟ್ ‘ಕೇರಂ’ ಅನ್ನು ‘ಚೇರಂ’ನ ಕನ್ನಡ ರೂಪವೆಂದು ಗಮನಿಸಿ, ‘ಕೇರಳಂ’ ಅನ್ನು ‘ಚೇರಂ’ ಎಂದು ವಿವರಿಸಿದ್ದಾರೆ. ಇದು ಗೋಕರ್ಣಂ ಮತ್ತು ಕನ್ಯಾಕುಮಾರಿಯ ನಡುವಿನ ಪ್ರದೇಶವನ್ನು ಸೂಚಿಸುತ್ತದೆ. ‘ಚೇರ್’ ಎಂದರೆ ‘ಸೇರುವುದು’ ಎಂದರ್ಥ. ‘ಚೇರ್’ ಮತ್ತು ‘ಆಳಂ’ (ಭೂಮಿ ಅಥವಾ ಪ್ರದೇಶ) ಸೇರಿ ‘ಚೇರಳಂ’ ಎಂಬ ರೂಪ ಬಂದಿರಬಹುದು ಎನ್ನಲಾಗುತ್ತದೆ. ಏಕೀಕೃತ ಕೇರಳದ ಬೇಡಿಕೆ ಮಲಯಾಳಂ ಮಾತನಾಡುವ ಪ್ರದೇಶಗಳನ್ನು ಐತಿಹಾಸಿಕವಾಗಿ ವಿವಿಧ ರಾಜರು ಮತ್ತು ರಾಜಪ್ರಭುತ್ವಗಳು ಆಳುತ್ತಿದ್ದವು. 1920ರ ದಶಕದಲ್ಲಿ ಐಕ್ಯ (ಏಕೀಕೃತ) ಕೇರಳ ಚಳುವಳಿ ವೇಗ ಪಡೆದುಕೊಂಡಿತು. ಮಲಬಾರ್, ಕೊಚ್ಚಿ ಮತ್ತು ತಿರುವಾಂಕೂರುಗಳನ್ನು ಒಂದಾಗಿ ಸೇರಿಸಿ ಮಲಯಾಳಂ ಮಾತನಾಡುವ ಜನರಿಗೆ ಪ್ರತ್ಯೇಕ ರಾಜ್ಯ ರಚಿಸುವ ಬೇಡಿಕೆ ಮುಂದಿಟ್ಟರು. ಸ್ವಾತಂತ್ರ್ಯ ಹೋರಾಟದ ಪ್ರಭಾವದಿಂದ ಪ್ರೇರಿತರಾದ ಮಲಯಾಳಂ ಭಾಷಿಕರು ಒಂದೇ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ಕಾರಣ ಒಂದೇ ಆಡಳಿತದಡಿ ಒಂದಾಗಲು ಒತ್ತಾಯಿಸಿದರು. ಸ್ವಾತಂತ್ರ್ಯದ ನಂತರ ರಾಜಪ್ರಭುತ್ವಗಳ ಏಕೀಕರಣ ಪ್ರಕ್ರಿಯೆ ರಾಜ್ಯತ್ವಕ್ಕೆ ದಾರಿ ಮಾಡಿಕೊಟ್ಟಿತು. 1949ರ ಜುಲೈ 1ರಂದು ತಿರುವಾಂಕೂರು ಮತ್ತು ಕೊಚ್ಚಿ ವಿಲೀನಗೊಂಡು ತಿರುವಾಂಕೂರು–ಕೊಚ್ಚಿನ್ ರಾಜ್ಯ ರೂಪುಗೊಂಡಿತು. ನಂತರ ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಮರುಸಂಘಟನೆ ವೇಳೆ ಸೈಯದ್ ಫಜಲ್ ಅಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗವು ಮಲಬಾರ್ ಜಿಲ್ಲೆ ಹಾಗೂ ಕಾಸರಗೋಡು ತಾಲ್ಲೂಕನ್ನು ಸೇರಿಸಿ, ಆದರೆ ಈಗ ತಮಿಳುನಾಡಿನ ಭಾಗವಾಗಿರುವ ತಿರುವಾಂಕೂರಿನ ದಕ್ಷಿಣ ತಾಲ್ಲೂಕುಗಳನ್ನು ಹೊರತುಪಡಿಸಿ ಕೇರಳ ರಾಜ್ಯ ರಚಿಸಲು ಶಿಫಾರಸು ಮಾಡಿತು. ರಾಜ್ಯದ ಹೆಸರು ಬದಲಿಸುವ ಪ್ರಕ್ರಿಯೆ ನಗರಗಳ ಮರುನಾಮಕರಣಕ್ಕಿಂತ ಭಿನ್ನವಾಗಿ, ರಾಜ್ಯದ ಹೆಸರನ್ನು ಬದಲಿಸಲು ಸಂವಿಧಾನ ತಿದ್ದುಪಡಿ ಅಗತ್ಯವಿರುತ್ತದೆ. ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಮಾಡಬೇಕು. ಕೇಂದ್ರ ಗೃಹ ಸಚಿವಾಲಯ (MHA) ವಿನಂತಿಯನ್ನು ಪರಿಶೀಲಿಸಿ ರೈಲ್ವೆ ಸಚಿವಾಲಯ, ಗುಪ್ತಚರ ಬ್ಯೂರೋ, ಅಂಚೆ ಇಲಾಖೆ, ಸರ್ವೇ ಆಫ್ ಇಂಡಿಯಾ ಹಾಗೂ ಭಾರತದ ರಿಜಿಸ್ಟ್ರಾರ್ ಜನರಲ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (NOC) ಪಡೆಯುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಫೆಬ್ರುವರಿ 24ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಕೇರಳ’ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಬಳಿಕ ರಾಷ್ಟ್ರಪತಿಗಳು ‘ಕೇರಳ (ಹೆಸರು ಬದಲಾವಣೆ) ಮಸೂದೆ, 2026’ ಅನ್ನು ಸಂವಿಧಾನದ 3ನೇ ವಿಧಿಯ ಪ್ರಕಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಕೇರಳ ವಿಧಾನಸಭೆಗೆ ಕಳುಹಿಸಲಿದ್ದಾರೆ. ವಿಧಾನಸಭೆಯ ಅಭಿಪ್ರಾಯ ಸ್ವೀಕರಿಸಿದ ನಂತರ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ರಾಷ್ಟ್ರಪತಿಗಳ ಶಿಫಾರಸು ಪಡೆಯಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 2011ರಲ್ಲಿ ಒರಿಸ್ಸಾ ರಾಜ್ಯವನ್ನು ‘ಒಡಿಶಾ’ ಎಂದೂ ಅಲ್ಲಿನ ಭಾಷೆ ‘ಒರಿಯಾ’ವನ್ನು ‘ಒಡಿಯಾ’ ಎಂದೂ ಮರುನಾಮಕರಣ ಮಾಡಲಾಗಿತ್ತು. 2000ರಲ್ಲಿ ರಚನೆಯಾದ ಉತ್ತರಾಂಚಲವನ್ನು 2007ರಲ್ಲಿ ‘ಉತ್ತರಾಖಂಡ್’ ಎಂದು ಬದಲಾಯಿಸಲಾಯಿತು. 1995ರಲ್ಲಿ ಬಾಂಬೆ ‘ಮುಂಬೈ’ ಆಯಿತು. 2014ರ ನವೆಂಬರ್ 1ರಂದು ಕರ್ನಾಟಕ ಸರ್ಕಾರವು ಬೆಂಗಳೂರನ್ನು ಅಧಿಕೃತವಾಗಿ ‘ಬೆಂಗಳೂರು’ (Bengaluru) ಎಂದು ಮರುನಾಮಕರಣ ಮಾಡಿತು. 2001ರಲ್ಲಿ ಕಲ್ಕತ್ತಾ ‘ಕೋಲ್ಕತ್ತಾ’ ಆಯಿತು. 1996ರಲ್ಲಿ ಮದ್ರಾಸ್ ‘ಚೆನ್ನೈ’ ಎಂದು ಬದಲಾಗಿದೆ. 2018ರಲ್ಲಿ ಅಲಹಾಬಾದ್ ‘ಪ್ರಯಾಗರಾಜ್’ ಆಯಿತು. 2016ರಲ್ಲಿ ಗುರಗಾಂವ್ ‘ಗುರುಗ್ರಾಮ್’ ಎಂದು ಮರುನಾಮಕರಣಗೊಂಡಿತು. ಸಂವಿಧಾನ ಏನು ಹೇಳುತ್ತದೆ? ರಾಜ್ಯಗಳ ಮರುನಾಮಕರಣ ವಿಧಾನವನ್ನು ಸಂವಿಧಾನದಲ್ಲಿ ವಿವರಿಸಲಾಗಿದೆ. ಸಂವಿಧಾನದ 3ನೇ ವಿಧಿಯು ಸಂಸತ್ತಿಗೆ ರಾಜ್ಯಗಳ ರಚನೆ, ಗಡಿಬದಲಾವಣೆ ಹಾಗೂ ಹೆಸರು ಬದಲಾವಣೆ ಕುರಿತ ಅಧಿಕಾರ ನೀಡುತ್ತದೆ. 3(ಇ) ಉಪವಿಧಿಯ ಪ್ರಕಾರ, ಸಂಸತ್ತು ಕಾನೂನಿನ ಮೂಲಕ ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸಬಹುದು. ಆದರೆ, ಈ ರೀತಿಯ ಮಸೂದೆಯನ್ನು ರಾಷ್ಟ್ರಪತಿಗಳ ಶಿಫಾರಸಿನ ಮೇರೆಗೆ ಮಾತ್ರ ಸಂಸತ್ತಿನಲ್ಲಿ ಮಂಡಿಸಬೇಕು. ಸಂಸತ್ತಿನಲ್ಲಿ ಪರಿಚಯಿಸುವ ಮೊದಲು ರಾಷ್ಟ್ರಪತಿಗಳು ಮಸೂದೆಯನ್ನು ಸಂಬಂಧಿತ ರಾಜ್ಯ ವಿಧಾನಸಭೆಯ ಅಭಿಪ್ರಾಯಕ್ಕಾಗಿ ಕಳುಹಿಸಬೇಕು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡು ರಾಷ್ಟ್ರಪತಿಗಳ ಒಪ್ಪಿಗೆ ದೊರಕಿದ ಬಳಿಕ ಹೆಸರಿನ ಬದಲಾವಣೆ ಅಧಿಕೃತವಾಗುತ್ತದೆ.
Kalaburagi | ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಅಭಿವೃದ್ಧಿಗೆ 25 ಕೋಟಿ ರೂ. ಮೀಸಲಿಗೆ ಆಗ್ರಹ
ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿರ್ಮಾಣವಾಗಿತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಅಭಿವೃದ್ಧಿಗೆ ಕರ್ನಾಟಕ ಸರ್ಕಾರದ 2026-27 ನೇ ಸಾಲಿನ ಬಜೆಟ್ನಲ್ಲಿ ಹೆಚ್ಚುವರಿಯಾಗಿ 25 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಬೇಕು ಎಂದು ಡಾ.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಹೋರಾಟ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಸಿಎಂ, ಸಚಿವ ಎಚ್.ಸಿ.ಮಹಾದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ವಾಡಿ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಲು 10 ಎಕರೆ ಭೂಮಿ ಮಂಜೂರು ಮಾಡಿ 3 ಕೋಟಿ ರೂ. ಅನುದಾನ ನೀಡಿದ್ದು, ಸ್ವಾಗತಾರ್ಹ. ಆದರೆ ಹಲವು ಯೋಜನೆಗಳು ಮಾಡುವ ಉದ್ದೇಶ ಇರುವುದರಿಂದ ಈ ಅನುದಾನ ಸಾಕಾಗುವುದಿಲ್ಲ ಹಾಗೂ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದ ಭಾಗವಾಗಿ, ವಸ್ತು ಸಂಗ್ರಹಾಲಯ, ಸಂಶೋಧನ ಕೇಂದ್ರ, ಅತ್ಯಾಧುನಿಕ ಅಂತರಾಷ್ಟ್ರೀಯ ಗ್ರಂಥಾಲಯ ನಿರ್ಮಾಣ, ಉದ್ಯಾನ ವನ, ಬೌದ್ಧದಮ್ಮ ಅಧ್ಯಯನ ಕೇಂದ್ರ, ಸಭಾಂಗಣ, ಅತಿಥಿಗೃಹ ಹಾಗೂ ಬಾಬಾ ಸಾಹೇಬರು ಸ್ಥಳೀಯರೊಂದಿಗೆ ತೆಗೆಸಿಕೊಂಡ ಭಾವಚಿತ್ರದ ಬೃಹತ್ ಪ್ರತಿಮೆ ನಿರ್ಮಾಣ, ಪರಿಶಿಷ್ಟ ಸಮುದಾಯದ ವಿದ್ಯಾರ್ಥಿ ಯುವಜನರಿಗಾಗಿ ಕೌಶಲ್ಯ ತರಬೇತಿ ಕೇಂದ್ರ, ಐಎಎಸ್, ಐಪಿಎಸ್, ಕೆಎಎಸ್, ಐಎಫ್ಎಸ್, ಯುಪಿಎಸ್ಸಿ, ಕೆಪಿಎಸ್ಸಿ, ಮತ್ತಿತರ ಸ್ಪರ್ದಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ನಿರ್ಮಾಣ ಮಾಡುವ ಯೋಜನೆಯಿದ್ದು, ಇವುಗಳ ಅನುಷ್ಠಾನಕ್ಕೆ 25 ಕೋಟಿ ರೂ. ನೀಡಬೇಕು ಎಂದು ಆಗ್ರಹಿಸಿದರು. ಅಂಬೇಡ್ಕರ್ ಭೇಟಿಯ ಕುರಿತು ಸಂಶೋಧನಾ ಗ್ರಂಥ ರಚನೆಗಾಗಿ 10 ಲಕ್ಷ ರೂಪಾಯಿ ವಿಶೇಷ ಅನುದಾನ ಮಂಜೂರು ಮಾಡಬೇಕು. ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಮಂಜೂರು ಮಾಡಿದ ಭೂಮಿ ಡಾ.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದ ಹೆಸರಿಗೆ ನೋಂದಣಿ ಮಾಡಬೇಕು. ಹಾಗೂ ಆ ಭೂಮಿಯನ್ನು ಬೇರೆ ಯೋಜನೆಗೆ ಬಳಸದಂತೆ ಆದೇಶ ಮಾಡಬೇಕು. ಇಡೀ ಯೋಜನೆಯ ನೀಲನಕ್ಷೆ ತಯಾರಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸಬೇಕು. ಇಲ್ಲಿನ ಪ್ರತಿಯೊಂದು ಕಟ್ಟಡಗಳು ಬೌದ್ಧ ವಾಸ್ತು ಶಿಲ್ಪದ ಮಾದರಿಯಲ್ಲಿ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ತೇಜಸ್, ಪಿಎಂಕೆ ಫ್ಯಾನ್ಸ್ ಕ್ಲಬ್ನ ಪ್ರಧಾನ ಕಾರ್ಯದರ್ಶಿ ರವಿ ಕೋಳಕೂರ, ಭಾರತೀಯ ಬೌದ್ಧ ಮಹಾ ಸಭಾದ ಜಿಲ್ಲಾ ಖಜಾಂಚಿ ಸಿದ್ದರಾಮ ನಡಗೇರಿ, ರಮಾ ದೊಡ್ಡಮನಿ, ಭೀಮರತ್ನ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಮೈಲಾರಿ ದೊಡ್ಡಮನಿ ಇದ್ದರು.
Kalaburagi | ಗುಲ್ಬರ್ಗಾ ವಿವಿ ವೈಫಲ್ಯಗಳ ತನಿಖೆಗೆ ಉನ್ನತ ಸಮಿತಿ ರಚಿಸುವಂತೆ ಆಗ್ರಹ
ಕಲಬುರಗಿ: ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ವೈಫಲ್ಯಗಳು, ಆರ್ಥಿಕ ಅವ್ಯವಹಾರಗಳು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಬಿಜೆಪಿ ಯುವ ಮೋರ್ಚಾ ವತಿಯಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಿ.ಎಡ್ (B.Ed) ಪರೀಕ್ಷೆ ಫಲಿತಾಂಶವು ಸುಮಾರು ಒಂದೂವರೆ ವರ್ಷಗಳಾದರೂ ಪ್ರಕಟವಾಗದೇ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರ ನೇಮಕಾತಿ ಸೇರಿದಂತೆ ವಿವಿಧ ಉದ್ಯೋಗಾವಕಾಶಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮತ್ತು ಶುಲ್ಕ ವಿನಾಯಿತಿ ಹಿಂಪಡೆಯುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ದೂರಿದ್ದಾರೆ. ಹಣಕಾಸು ವಿಭಾಗದಲ್ಲಿ ಪಾರದರ್ಶಕತೆ ಕೊರತೆ ಇದ್ದು, ಹೊರಗುತ್ತಿಗೆ ನೌಕರರಿಗೆ ಜವಾಬ್ದಾರಿ ಹುದ್ದೆ ನೀಡಿದ ಪರಿಣಾಮ ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಉಲ್ಲೇಖಿಸಿದ ಅವರು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಹಾಗೂ ಸಿಂಡಿಕೇಟ್ ಸದಸ್ಯರೊಂದಿಗೆ ಉಂಟಾಗಿರುವ ಕಲಹಗಳಿಂದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮೆರಿಟ್ ಉಲ್ಲಂಘನೆ ನಡೆದಿದೆ. ಹಲವು ವರ್ಷಗಳಿಂದ ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಅರೆಕಾಲಿಕರಾಗಿ ನೇಮಕ ಮಾಡಲಾಗಿದ್ದು, ಬೇರೆಡೆ ಪೂರ್ಣಕಾಲಿಕವಾಗಿ ಕೆಲಸ ಮಾಡುವವರಿಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಉಪಾಧ್ಯಕ್ಷ ಶಿವ ಅಷ್ಠಗಿ, ನಗರ ಉಪಾಧ್ಯಕ್ಷ ಶಿವಲಿಂಗ ಪಾಟೀಲ್, ಸೌರಭ ರಂಗದಾಳ, ಮಲ್ಲು ರಾಯಪ್ಪಗೌಡ, ಸಾಗರ ಕಾಮನಳ್ಳಿ, ಮಲ್ಲಿಕಾರ್ಜುನ್ ಎಸ್, ಜಗದೀಶ್ ಹಾಗೂ ನೀಲಕಂಠ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಡುಪಿ, ಫೆ.24: ಶಿಕ್ಷಕ ಹಾಗೂ ಖ್ಯಾತ ಸುಗಮ ಸಂಗೀತಗಾರರಾಗಿದ್ದ ದಿ.ಹಾರ್ಯಾಡಿ ಚಂದ್ರಶೇಖರ ಕೆದ್ಲಾಯರ ಧರ್ಮಪತ್ನಿ ಪೂರ್ಣಿಮಾ (66) ಹೃದಯಘಾತದಿಂದ ರವಿವಾರ ನಿಧನರಾದರು. ಅವರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

22 C