ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ; ಜವಾಬ್ದಾರಿಯಿಂದ ಹಿಂದೆ ಸರಿದ ಅಣ್ಣಾಮಲೈ
6 ಕ್ಷೇತ್ರಗಳಿಗೆ ಸೀಮಿತವಾಗಿ ಉಸ್ತುವಾರಿ ನೀಡಿರುವುದಕ್ಕೆ ಅಸಮಾಧಾನ?
ರಾಜೀನಾಮೆ ನೀಡಲು ನಾನೇನು ತಪ್ಪು ಮಾಡಿದ್ದೇನೆ : ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ
ಬೆಂಗಳೂರು : ‘ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶದಿಂದಲೇ ಯಾವುದೇ ಸಾಕ್ಷಿ, ಆಧಾರಗಳಿಲ್ಲದೆ ಆರೋಪ ಮಾಡುವುದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದೂ ಇಲ್ಲ. ರಾಜೀನಾಮೆ ನೀಡಲು ನಾನೇನು ತಪ್ಪು ಮಾಡಿದ್ದೇನೆ. ಹೀಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು. ಮಂಗಳವಾರ ವಿಧಾನಸಭೆಯಲ್ಲಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ನಿಯಮ 69ರಡಿಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರ ನೀಡಿದ ಅವರು, ಬಿಜೆಪಿ ಅವಧಿಯಲ್ಲಿ ಶಾಸಕರ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆಯಾಗಿತ್ತು. ಆಗ ಯಾರು ರಾಜೀನಾಮೆ ನೀಡಿದರು. ಬಿಜೆಪಿ ಅವಧಿಯಲ್ಲಿ ಹೊರಬಂದ ಹಗರಣ ಬಗ್ಗೆ ನನ್ನ ಬಳಿಯೂ ದಾಖಲೆಗಳಿವೆ ಎಂದು ತಿರುಗೇಟು ನೀಡಿದರು. ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಅಕ್ರಮ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದ ಆರ್.ಬಿ.ತಿಮ್ಮಾಪುರ, ನನ್ನ ವಿರುದ್ಧ ಲಂಚದ ಆರೋಪ ಮಾಡಿರುವ ಆಡಿಯೋ ಮಾಡಿದ ವ್ಯಕ್ತಿ ಸಿಎಲ್-7 ಪರವಾನಗೆಗೆ ಅರ್ಜಿ ಸಲ್ಲಿಸಿದ್ದು, ಆತ ಸಲ್ಲಿಸಿರುವ ದಾಖಲೆಗಳೇ ಸಮರ್ಪಕವಾಗಿಲ್ಲ. ಹೀಗಾಗಿ ಬ್ಲಾಕ್ಮೇಲ್ ಪ್ರಯತ್ನ ಮಾಡಿದ್ದಾರೆ ಎಂದು ವಿವರಣೆ ನೀಡಿದರು. ನಾನು ದಲಿತ ಸಮುದಾಯಕ್ಕೆ ಸೇರಿದ್ದೇನೆಂದು ನನ್ನ ಸ್ಥಾನ ಉಳಿಸಿಕೊಳ್ಳಲು ಬಳಸಿಕೊಳ್ಳಲು ಹೋಗುವುದಿಲ್ಲ. ಆದರೆ, ನಾನು ಯಾವುದೇ ರೀತಿಯಲ್ಲಿಯೂ ತಪ್ಪು ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ 1314 ಪರವಾನಗೆ ನೀಡಿದ್ದಾರೆ. ಆದರೆ, ನನ್ನ ಅವಧಿಯಲ್ಲಿ 1,195 ಮದ್ಯದಂಗಡಿಗಳ ಪರವಾನಗೆ ನೀಡಲಾಗಿದೆ ಎಂದು ಅವರು ವಿವರ ನೀಡಿದರು.
ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಯಿಂದ ಕಳವು ಪ್ರಕರಣ: ಆರೋಪಿ ಸೆರೆ
ಕುಂದಾಪುರ, ಫೆ.3: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಅಂಗಡಿಯಿಂದ ಚಿನ್ನದ ಸರವು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಕಜೆಕಾರ್ ಗ್ರಾಮದ ಬಡಗ ನಿವಾಸಿ ರಮೇಶ(42) ಬಂಧಿತ ಆರೋಪಿ. ಜ.27ರಂದು ಸಂಜೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯ ಇರುವ ಎಸ್ಪಿಜಿ ಗೋಲ್ಡ್ ಆ್ಯಂಡ್ ಡೈಮಂಡ್ ಅಂಗಡಿಗೆ ಬಂದ ಅಪರಿಚಿತ ವ್ಯಕ್ತಿ ಚಿನ್ನವನ್ನು ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿಯ ಕೆಲಸದವರ ಕಣ್ಣು ತಪ್ಪಿಸಿ ಸುಮಾರು 9 ಗ್ರಾಮ ತೂಕದ 125000 ರೂ. ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ, ಚಿನ್ನದ ಅಂಗಡಿಯಿಂದ ಕಳ್ಳತನ ಮಾಡಿದ ಚಿನ್ನದ ಚೈನ್ ಮತ್ತು ಆತನ ವಶದಲ್ಲಿದ್ದ 33000ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಂತೆ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಜಯರಾಮ್ ಡಿ.ಗೌಡ ನೇತೃತ್ವದಲ್ಲಿ ಠಾಣಾ ಎಸ್ಸೈಗಳಾದ ನಂಜಾನಾಯ್ಕ್ ಎನ್., ಪುಷ್ಪ ಹಾಗೂ ಸಿಬ್ಬಂದಿ ಸಂತೋಷ, ಮಹಾಬಲ ಶೆಟ್ಟಿಗಾರ, ಪ್ರೀನ್ಸ್, ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ, ಲೋಹಿತ್, ಚಂದ್ರಶೆಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಅದಾನಿ ಫೌಂಡೇಶನ್ನಿಂದ ಪಡುಬಿದ್ರಿ ಗ್ರಾಪಂಗೆ ಕಸ ನಿರ್ವಹಣಾ ವಾಹನ ಹಸ್ತಾಂತರ
ಉಡುಪಿ, ಫೆ.3: ಅದಾನಿ ಪವರ್ ಲಿಮಿಟೆಡ್ ಉಡುಪಿ, ಅದಾನಿ ಫೌಂಡೇಶನ್ನ ಸಹಯೋಗದಲ್ಲಿ ಸಿಎಸ್ಆರ್ ಕಾರ್ಯಕ್ರಮದ ಭಾಗವಾಗಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಉಪಕ್ರಮದ ಅಡಿಯಲ್ಲಿ ಪಡುಬಿದ್ರಿ ಗ್ರಾಪಂಗೆ 14 ಲಕ್ಷ ರೂ. ವೆಚ್ಚದಲ್ಲಿ ವಿಶೇಷವಾಗಿ ವಿನ್ಯಾಸ ಗೊಳಿಸಿದ ಕಸದ ಸಂಗ್ರಹಣಾ ವಾಹನವನ್ನು ಹಸ್ತಾಂತರಿಸಲಾಯಿತು. ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಅನುಕೂಲವಾಗುವ ಹೈಡ್ರಾಲಿಕ್ ಡೆಕ್ ಹೊಂದಿರುವ ಈ ವಾಹನದ ಕೀಲಿ ಯನ್ನು ಅದಾನಿ ಗ್ರೂಪ್ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಅವರಿಗೆ ಗ್ರಾಪಂ ಕಚೇರಿ ಆವರಣದಲ್ಲಿ ಅಧಿಕೃತವಾಗಿ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಕಿಶೋರ್ ಆಳ್ವ, ಉಡುಪಿ ತಾಪ ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪಡುಬಿದ್ರೆ ಸಹಿತ ಏಳು ಗ್ರಾಪಂಗಳಿಗೆ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಾತ್ರ ಮೀಸಲಾದ ವಿಶೇಷ ಸಿಎಸ್ಆರ್ ಅನುದಾನವನ್ನು ಅದಾನಿ ಗ್ರೂಪ್ ನೀಡಿರುವುದಾಗಿ ತಿಳಿಸಿದರು. ಜೊತೆಗೆ ಶಿಕ್ಷಣ, ಆರೋಗ್ಯ, ಗ್ರಾಮೀಣ ಕ್ರೀಡೆಗಳ ಉತ್ತೇಜನ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿಯೂ ಆದಾನಿ ಸಂಸ್ಥೆಯ ಸಿಎಸ್ಆರ್ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದರು. ಈವರೆಗೆ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಾತ್ರ ಅದಾನಿ ಫೌಂಡೇಶನ್ ವತಿಯಿಂದ 1.92 ಕೋಟಿ ರೂ. ಮೊತ್ತದ ಸಿಎಸ್ಆರ್ ಅನುದಾನವನ್ನು ವೆಚ್ಚ ಮಾಡಲಾ ಗಿದೆ ಎಂದು ಅವರು ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ, ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ ಹಾಗೂ ಸದಸ್ಯರಾದ ರವಿ ಶೆಟ್ಟಿ, ಜ್ಯೋತಿ ಮೆನನ್, ಸುನಂದಾ, ಮುಬೀನಾ, ಶೋಭಾ ಶೆಟ್ಟಿ, ಸಂದೇಶ್, ಅಶೋಕ್, ಹರೀಶ್ ಶೆಟ್ಟಿ, ನವೀನ್ ಶೆಟ್ಟಿ, ಸುಜಾತಾ ಆಚಾರ್ಯ, ಶಶಿ ಹಾಗೂ ನಿಯಾಝ್, ಅದಾನಿ ಪವರ್ ಲಿಮಿಟೆಡ್ ಉಡುಪಿ ತಾಪ ವಿದ್ಯುತ್ ಸ್ಥಾವರದ ಪರವಾಗಿ ಸಹಾಯಕ ಮಹಾಪ್ರಬಂಧಕ ರವಿ ಆರ್. ಜೇರೆ ಹಾಗೂ ಆದಾನಿ ಫೌಂಡೇಶನ್ನ ಅನುದೀಪ್ ಉಪಸ್ಥಿತರಿದ್ದರು.
ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದರೆ ಸದನದ ಹೊರಗೆ ಕಳುಹಿಸುತ್ತೇನೆ: ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು : ಸದನದ ಕರ್ಯಕಲಾಪಗಳಿಗೆ ಪದೇ ಪದೇ ಅಡ್ಡಿಪಡಿಸಿದರೆ, ತಮ್ಮ ಆಸನಗಳಲ್ಲಿ ಕುಳಿತುಕೊಂಡೆ ಮಾತನಾಡುತ್ತಿದ್ದರೆ, ಅಂತಹವರ ಹೆಸರನ್ನು ಸೂಚಿಸಿ, ಸದನದ ಹೊರಗೆ ಕಳುಹಿಸಬೇಕಾಗುತ್ತದೆ. ಅದಕ್ಕೆ ಆಡಳಿತ ಪಕ್ಷದವರು ಇರಲಿ, ವಿಪಕ್ಷದವರೆ ಇರಲಿ. ಅದಕ್ಕೆ ಅವಕಾಶ ನೀಡಬೇಡಿ ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದ ಪ್ರಸಂಗ ನಡೆಯಿತು. ಮಂಗಳವಾರ ವಿಧಾನಸಭೆಯಲ್ಲಿ ವಿಜಿ ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಿ, ಮನರೇಗಾ ಪುನಃ ಸ್ಥಾಪಿಸಬೇಕು ಎಂದು ಸರಕಾರದ ವತಿಯಿಂದ ಮಂಡನೆ ಮಾಡಿದ ನಿರ್ಣಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಬಿಜೆಪಿ ಸದಸ್ಯರು ಪದೇ ಪದೇ ಮಧ್ಯಪ್ರವೇಶ ಮಾಡಿ ಅಡ್ಡಿಪಡಿಸುತ್ತಿದ್ದರಿಂದ ಅವರು ಈ ಮೇಲಿನಂತೆ ಎಚ್ಚರಿಕೆ ನೀಡಿದರು. ನಂತರ ಮಾತನಾಡಿದ ಮುಖ್ಯಮಂತ್ರಿ, ಸದನ ನಡೆಯಬೇಕಾದರೆ ಪರಸ್ಪರ ಸಹಕಾರ ಇರಬೇಕು. ನಾನು ಮಾತನಾಡುವಾಗ ಪದೇ ಪದೇ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ. ಇದೇ ಪ್ರವೃತ್ತಿ ಮುಂದುವರೆಸಿದರೆ ನೀವು ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ವಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯ ರಾಜೇಶ್ ನಾಯಕ್ ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ಸ್ಪೀಕರ್, ರಾಜೇಶ್ ನಾಯಕ್ ನಿಮಗೆ ಪದೇ ಪದೇ ಹೇಳುತ್ತಿದ್ದೇನೆ. ಒಂದು ಬಾರಿ ನಾನು ನಿಮ್ಮನ್ನು ಹೆಸರಿಸಿದರೆ, ಸದನದ ಹೊರಗೆ ಕಳುಹಿಸಬೇಕಾಗುತ್ತದೆ ಎಚ್ಚರಿಕೆ ಅಂದರು. ಅಲ್ಲದೇ, ವಿಪಕ್ಷ ನಾಯಕ ಅಶೋಕ್ ಅವರನ್ನು ನಿಮ್ಮ ಸದಸ್ಯರನ್ನು ನಿಯಂತ್ರಣದಲ್ಲಿರಿಸಿ ಎಂದರು.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತ ತಪಾಸಣೆ : 3 ಸ್ಮಾರ್ಟ್ ಫೋನ್, 2 ಏರ್ಬಡ್ಸ್ ಪತ್ತೆ
ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ನಡೆಸಿದ ಅನಿರೀಕ್ಷಿತ ತಪಾಸಣೆ ವೇಳೆ 3 ಸ್ಮಾರ್ಟ್ ಫೋನ್ಗಳು ಹಾಗೂ 2 ಏರ್ಬಡ್ಸ್ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಜೈಲಿನ ವಿಚಾರಣಾಧೀನ ಕೈದಿಗಳಾದ ಶ್ರೀನಿವಾಸ ಗಣೇಶ್, ಪ್ರದೀಪ್ ಅಲಿಯಾಸ್ ದಾಸರಹಳ್ಳಿ ಪ್ರದೀಪ್ ಹಾಗೂ ದಿನೇಶ್ ಅಲಿಯಾಸ್ ಡಿಯೋ ದಿನಿ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜೈಲಿನ ವಾರ್ಡನ್ ಬಸವರಾಜ, ಅಧೀಕ್ಷಕ ರಾಕೇಶ್ ಸೇರಿದಂತೆ 42 ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕಳೆದ ಜ.28ರಂದು ಬ್ಯಾರಕ್ ಸಂಖ್ಯೆ 11ರಿಂದ 13ರವರೆಗೆ ಅನಿರೀಕ್ಷಿತ ತಪಾಸಣೆ ನಡೆಸಿದ ವೇಳೆ, ಈ ಮೂವರು ಕೈದಿಗಳು ಜೈಲಿನ ಶೌಚಾಲಯದಲ್ಲಿ ಸ್ಮಾರ್ಟ್ ಫೋನ್ ಮತ್ತು ಏರ್ಬಡ್ಸ್ಗಳನ್ನು ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ | ಫೆ.8ರಂದು ಕನ್ನಡ ಜಾನಪದ ಸಮ್ಮೇಳನ, ದಶಮಾನೋತ್ಸವ ಸಂಭ್ರಮ : ಶಿವರಾವ ಭೋವಿ
ಸೇಡಂ : ತಾಲೂಕು ಕನ್ನಡ ಜಾನಪದ ಪರಿಷತ್ತು ವತಿಯಿಂದ ಫೆ.8ರಂದು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ 3ನೇ ಕನ್ನಡ ಜಾನಪದ ಸಮ್ಮೇಳನ ಹಾಗೂ ದಶಮಾನೋತ್ಸವ ಸಂಭ್ರಮದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ತಾಲೂಕಾಧ್ಯಕ್ಷ ಶಿವರಾವ ಭೋವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 7.30ಕ್ಕೆ ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಚಾಲನೆ ಪಡೆಯಲಿದೆ. ಕಜಾಪ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಾಲಾಜಿ ಅವರು ರಾಷ್ಟ ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾಧ್ಯಕ್ಷ ಎಂ.ನಿ.ನಿಂಗಪ್ಪ ನಾಡ ಧ್ವಜಾರೋಹಣ, ತಾಲೂಕು ಅಧ್ಯಕ್ಷ ಶಿವರಾವ ಭೋವಿ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು. ಅಂದು ಬೆಳಗ್ಗೆ 8.30ಕ್ಕೆ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ಸರ್ಕಾರಿ ನೌಕರರ ಭವನದ ವರೆಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದ್ದು, ಕೊತ್ತಲ ಬಸವೇಶ್ವರ ದೇವಾಲದ ಸದಾಶಿವ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದು, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರ ಉದ್ಘಾಟಿಸಲಿದ್ದಾರೆ. ವೀರಣ್ಣ ಮಾದೇನೊರ್, ಬಸವರಾಜ ಮಳಗಿ, ಶೇಖಪ್ಪ ಸಜ್ಜನ ಉಪಸ್ಥಿತಿ ಇರಲಿದ್ದಾರೆ ಎಂದು ವಿವರಿಸಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ತಂಡಗಳು ಪಾಲ್ಗೊಳ್ಳಲಿವೆ. ಬೆಳಿಗ್ಗೆ 10.15ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಜ್ಞಾನಪ್ರಕಾಶ ಮಹಾಸ್ವಾಮಿಗಳು ಹಾಗೂ ಪಂಚಾಕ್ಷರಿ ಮಹಾಸ್ವಾಮಿಗಳು ವಹಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಬಸವರಾಜ ಆರ್.ಪಾಟೀಲ ಊಡಗಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಎಸ್.ಬಾಲಾಜಿ, ಮುಡುಬಿ ಗುಂಡೇರಾವ, ಶಿವರಾವ ಭೋವಿ, ಡಾ. ಶರಣಪ್ಪ ಗೋನಾಳ, ಎಂ.ಬಿ.ನಿoಗಪ್ಪ, ಡಾ.ಎಚ್.ಬಿ.ಪಾಟೀಲ, ಬಿಇಒ ಮಾರುತಿ ಹುಜರಾತಿ, ಬಸವರಾಜ ಸಾಗರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕ್ಯಾಲೆಂಡರ್ ಬಿಡುಗಡೆ, ಸಮ್ಮೇಳನಾಧ್ಯಕ್ಷರ ಸನ್ಮಾನ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ದಶಮಾನೋತ್ಸವ ಗೌರವ ಸನ್ಮಾನ ಮಾಡಲಾಗುವುದು ಎಂದರು. ಮಧ್ಯಾಹ್ನ ಮಕ್ಕಳ ಮತ್ತು ಮಹಿಳಾ ಸಂಘಗಳ ಗೋಷ್ಠಿ ನಡೆಯಲಿದ್ದು, ಸಾಹಿತಿ ಡಾ.ಜಗನ್ನಾಥ ತರನಳ್ಳಿ ಅವರು ಉಪನ್ಯಾಸ ನೀಡಲಿದ್ದಾರೆ. ಡಾ.ಶ್ರೀನಿವಾಸರೆಡ್ಡಿ ಪಾಟೀಲ ಕೋಲಕುಂದಾ, ಲಿಂಗಾರೆಡ್ಡಿ ಶೇರಿ, ಸಿದ್ದಪ್ಪ ತಳ್ಳಳ್ಳಿ, ಶೋಭಾದೇವಿ ಚಕ್ಕಿ, ಡಾ.ಚಂದ್ರಕಲಾ ಬಿದರಿ, ಶರಣಪ್ಪ ಮಹಾಗಾಂವ, ಸಿದ್ದಯ್ಯಸ್ವಾಮಿ ಆಡಕಿ, ಅವಿನಾಶ ಬೊರಂಚಿ ಆಗಮಿಸಲಿದ್ದಾರೆ ಎಂದರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಕಲಾವತಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕನ್ನಡ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶಿವರಾವ ಭೋವಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಈ ಸಾಂಸ್ಕೃತಿಕ ಹಬ್ಬದಲ್ಲಿ ತಾಲ್ಲೂಕಿನ ಸಮಸ್ತ ಜನತೆ, ಸಾಹಿತ್ಯಾಸಕ್ತರು ಹಾಗೂ ಜಾನಪದ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಕೋರಿದರು. ಪರಿಷತ್ ಖಜಾಂಚಿ ಶಿವಯೋಗಿ ಸಕ್ಪಾಲ್, ಸಂಚಾಲಕ ಗುರುಲಿಂಗ ಕೋಡ್ಲಾ, ಜಗನ್ನಾಥ ಎಂ.ಭಾಗೋಡಿ, ಮಲ್ಲಮ್ಮ ಪತ್ರಿ, ರಾಜೇಶ್ವರಿ ಬಿಲಗುಂದಿ, ಪುಷ್ಪ ಗೊಬ್ಬೂರ, ಭವಾನಿ ಕೇಶ್ವರ ಪತ್ರಿಕಾಗೋಷ್ಠಿಯಲ್ಲಿದ್ದರು.ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮುರುಳಿಧರ ದೇಶಪಾಂಡೆ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
KSRTC: ಪರಿಶಿಷ್ಟ ಜಾತಿಯವರಿಗೆ ಉಚಿತ ವಾಹನ ಚಾಲನಾ ತರಬೇತಿ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ
ಬೆಂಗಳೂರು: ಪರಿಶಿಷ್ಟ ಜಾತಿಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪಿಎಂ-ಎಜೆಎವೈ ಯೋಜನೆಯಡಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ ಹಾಗೂ ಚಾಲನಾ ಪರವಾನಗಿ ನೀಡಲು ನಿಗಮ ಮುಂದಾಗಿದೆ. ಎಲ್ಲೆಲ್ಲಿ ತರಬೇತಿ? ಈ ಉಚಿತ
ಮಹಾರಾಷ್ಟ್ರ| ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಪುತ್ರಿಯನ್ನೇ ಕೊಂದ ತಂದೆ !
ಮುಂಬೈ, ಫೆ. 2: ಮಹಾರಾಷ್ಟ್ರದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಮಕ್ಕಳ ನಿಯಮದಿಂದ ಹೊರಬರಲು ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳಲ್ಲಿ ಒಬ್ಬರನ್ನು ಹತ್ಯೆಗೈದಿದ್ದಾನೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರು ಗ್ರಾಮದ ನಿವಾಸಿ ಪಾಂಡುರಂಗ ಕೊಂಡ್ಮಂಗಲೆ (28)ತನ್ನ 6 ವರ್ಷದ ಪುತ್ರಿಯನ್ನು ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯ ಕಾಲುವೆಯೊಂದಕ್ಕೆ ತಳ್ಳಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪಾಂಡುರಂಗ ಹಾಗೂ ಗ್ರಾಮದ ಸರಪಂಚ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಲಾಗಿದೆ ಎಂದು ನಿಝಾಮಾಬಾದ್ ಪೊಲೀಸರು ಮಂಗಳವಾರ ಪ್ರಕಟಿಸಿದ್ದಾರೆ. ಬಾಲಕಿಯ ಮೃತದೇಹ ಯೆಡಪಳ್ಳಿಯಲ್ಲಿರುವ ನಿಝಾಮ್ ಸಾಗರ್ ಕಾಲುವೆಯಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾಗಿತ್ತು. ತನಿಖೆಯಲ್ಲಿ ಆಕೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕೆರೂರು ಗ್ರಾಮದ ನಿವಾಸಿ ಪ್ರಾಚಿ (6) ಎಂದು ಗುರುತಿಸಲಾಗಿತ್ತು ಎಂದು ನಿಝಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ ತಂದೆ ಪಾಂಡುರಂಗ ಕೊಡ್ಮಂಗಲೆಯನ್ನು ಬಂಧಿಸಿದ್ದರು. ಪ್ರಾಚಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ ಎಂದು ಆತ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ. ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗಿ ಬಾಲಕಿಯನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡ. ಕೆರೂರು ಗ್ರಾಮದಲ್ಲಿ ಕ್ಷೌರದ ಅಂಗಡಿ ನಡೆಸುತ್ತಿದ್ದ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯ ಸ್ಪರ್ಧಿಸಲು ಉತ್ಸುಕನಾಗಿದ್ದ. ಆತನಿಗೆ 3 ವರ್ಷದ ಪುತ್ರ ಹಾಗೂ 6 ವರ್ಷದ ಅವಳಿ ಪುತ್ರಿಯರು ಇದ್ದರು. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಸ್ಫರ್ದಿಸುವಂತಿಲ್ಲ. ಈ ನಿಯಮದ ಕಾರಣಕ್ಕೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಆತ ಅನರ್ಹನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪಾಂಡುರಂಗ ತನ್ನ ಗೆಳೆಯ ಹಾಗೂ ಗ್ರಾಮದ ಸರಪಂಚ ಗಣೇಶ್ ಶಿಂಧೆಯೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದ್ದ. ಆರಂಭದಲ್ಲಿ ಪಾಂಡುರಂಗ ಪುತ್ರಿಯನ್ನು ದತ್ತು ನೀಡಲು ಚಿಂತಿಸಿದ್ದ. ಆದರೆ, ಇದರಿಂದ ಆತನ ಉದ್ದೇಶ ಈಡೇರುವಂತಿರಲಿಲ್ಲ. ಯಾಕೆಂದರೆ, ಜನನ ಪ್ರಮಾಣ ಪತ್ರದಲ್ಲಿ ಪ್ರಾಚಿ ಆತನ ಪುತ್ರಿ ಎಂದು ನೋಂದಣಿಯಾಗಿತ್ತು. ಪ್ರಾಚಿಯನ್ನು ತ್ಯಜಿಸುವ ಕುರಿತು ಕೂಡ ಪಾಂಡುರಂಗ ಯೋಚಿಸಿದ್ದ. ಆದರೆ, ಆಕೆ ಹಿಂದಿರುಗಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಆತ ಚಿಂತಿತನಾಗಿದ್ದ. ಅನಂತರ ಆತ ಪ್ರಾಚಿಯನ್ನು ಹತ್ಯೆಗೈದು, ಅಪಘಾತವೆಂದು ಬಿಂಬಿಸಲು ನಿರ್ಧರಿಸಿದ ಎಂದು ಪೊಲೀಸರು ಹೇಳಿದ್ದಾರೆ.
ತ್ಯಾಜ್ಯಗಳ ಬ್ಲ್ಯಾಕ್ಸ್ಪಾಟ್ನಲ್ಲಿ ಅರಳುತ್ತಿರುವ ಹೂವುಗಳು: ಬೀಡಿನಗುಡ್ಡೆ ಮೈದಾನದ ಬಳಿ ಉದ್ಯಾನವನ ನಿರ್ಮಾಣ
ಉಡುಪಿ, ಫೆ.3: ಉಡುಪಿ ನಗರವನ್ನು ಸುಂದರ ನಗರವಾಗಿಸುವ ಪ್ರಯತ್ನದ ಅಂಗವಾಗಿ ನಗರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಇರುವ ಬ್ಲ್ಯಾಕ್ಸ್ಪಾಟ್ಗಳನ್ನು ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ಅಂಥ ಕಡೆಗಳಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡುವ ಕಾಯಕಕ್ಕೆ ನಗರಸಭೆ ಮುಂದಾಗಿದೆ. ಉಡುಪಿ ನಗರಸಭೆಯ ಎಸ್.ಬಿ.ಎಂ 2.0ರ ಐಇಸಿ ಘಟಕದ ಇಂಟರ್ ಪರ್ಸನಲ್ ಕಮ್ಯೂನಿಕೇಶನ್ ಸ್ಕಿಲ್ ಉಪ ಘಟಕದಡಿ ನೇಮಕಗೊಂಡ 24 ಮಂದಿ ಕಮ್ಯೂನಿಟಿ ಮೊಬಿಲೈಸರ್ಗಳು ಪೌರಾಯುಕ್ತರ ಮಾರ್ಗದರ್ಶನದಲ್ಲಿ ಉಡುಪಿ ನಗರಸಭೆಯ ಆರೋಗ್ಯ ನಿರೀಕ್ಷರು ಮತ್ತು ಸೂಪರ್ವೈಸರ್ಗಳ ಸಹಯೋಗದೊಂದಿಗೆ, ಉಡುಪಿ ನಗರವನ್ನು ಸ್ವಚ್ಛವಾಗಿರಿಸುವ ಕಾಯಕದಲ್ಲಿ ಇದೀಗ ನಿರಂತರತೊಡಗಿಸಿಕೊಂಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಗರವಿಭಾಗದ ಕಮ್ಯೂನಿಟಿ ಮೊಬಿಲೈಸರ್ಗಳು ಬೀಡಿನಗುಡ್ಡೆ ಮೈದಾನದ ಹತ್ತಿರದ ಬ್ಲಾಕ್ಸ್ಟಾಟ್ (ತ್ಯಾಜ್ಯ ವಿಶೇಷವಾಗಿ ಸಂಗ್ರಹಗೊಳ್ಳುವ ಪ್ರದೇಶ) ನಲ್ಲಿ ಸುಂದರ ಗಾರ್ಡನ್ ನಿರ್ಮಿಸಿ ಅಲ್ಲಿ ಮತ್ತೆ ಕಸದ ರಾಶಿ ಬೀಳದಂತೆ ಬ್ಯಾನರ್ ಅಳವಡಿಸಿದ್ದಾರೆ. ಇದು ನಗರದಲ್ಲಿ ಬ್ಲ್ಯಾಕ್ಸ್ಪಾಟ್ಗಳೆಂದು ಗುರುತಿಸಲ್ಪಟ್ಟ ಜಾಗದಲ್ಲಿ ಮುಂದುವರಿಯಲಿದೆ. ಕಸಗಳನ್ನು ತೆಗೆದು ಅದನ್ನು ಜನರು ವಿಹರಿಸುವ ಪಾರ್ಕ್ ಮಾಡುವ ಕಾರ್ಯ ನಿರಂತರ ನಡೆಯಲಿದೆ. ನಗರಸಭೆಯ ಕಮ್ಯೂನಿಟಿ ಮೊಬಿಲೈಸರ್ಗಳ ಈ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಉಡುಪಿ ಜಿಲ್ಲೆ ಸ್ವಚ್ಛ ಜಿಲ್ಲೆಯಾಗಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ನಗರಸಭೆಯ ಪರಿಸರ ಇಂಜಿನಿಯರ್ ರವಿಪ್ರಕಾಶ್, ಬ್ಲ್ಯಾಕ್ಸ್ಪಾಟ್ಗಳಲ್ಲಿ ಸಾರ್ವಜನಿ ಕರು ಹಾಕುವ ಕಸವನ್ನು ವಿಲೇವಾರಿ ಮಾಡುವುದರಿಂದ ಅಲ್ಲಿ ಮತ್ತೆ ಮತ್ತೆ ಕಸದ ರಾಶಿ ಬೀಳುತ್ತಲೇ ಇರುತ್ತದೆ ಹೊರತು ಕಸ ಕಡಿಮೆಯಾಗುವುದಿಲ್ಲ. ಆದ್ದರಿಂದ ಸ್ವಚ್ಛ ಉಡುಪಿ ಪರಿಕಲ್ಪನೆಗೆ ತ್ಯಾಜ್ಯ ವಿಲೇವಾರಿ ಮಾಡುವು ದೊಂದೇ ಪರಿಹಾರವಲ್ಲ. ಅಲ್ಲದೇ ಕಸ ಹಾಕಿದವರಿಗೆ ದಂಡ ವಿಧಿಸುವುದು ಕೂಡಾ ನಿರಂತರವಾಗಿ ಸಾಧ್ಯವಾ ಗುವುದಿಲ್ಲ ಎಂದರು. ಆದ್ದರಿಂದ ತ್ಯಾಜ್ಯ ರಾಶಿ ಇರುವ ಪ್ರದೇಶದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಿ ಆ ಪ್ರದೇಶವನ್ನು ಸುಂದರ ಪ್ರದೇಶವಾಗಿ ಮಾರ್ಪಾಡು ಮಾಡಿ ಉದ್ಯಾನವನ ನಿರ್ಮಿಸಿ ಬ್ಯಾನರ್ ಹಾಕುವ ಮೂಲಕ ಬ್ಲ್ಯಾಕ್ಸ್ಪಾಟ್ಗಳನ್ನೇ ನಿರ್ಮೂಲನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಇದೇ ರೀತಿ ಬ್ಲಾಕ್ಸ್ಪಾಟ್ಗಳನ್ನು ಬ್ಯೂಟಿಫಿಕೇಶನ್ ಮಾಡುವ ಉದ್ದೇಶವನ್ನು ನಗರಸಭೆ ಹೊಂದಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಆರೋಗ್ಯ ನಿರೀಕ್ಷಕ ಸತೀಶ್, ಪ್ರಕಾಶ್ ಪ್ರಭು, ಹರೀಶ್ ಬಿಲ್ಲವ ಹಾಗೂ ಸಿಟಿ ಭಾಗದ ಸೂಪರ್ವೈಸರ್ಗಳು, ಕಮ್ಯೂನಿಟಿ ಮೊಬಿಲೈಸರ್ಗಳು ಉಪಸ್ಥಿತರಿದ್ದರು.
Chitradurga | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಪೊಕ್ಸೊ ಕಾಯ್ದೆಯಡಿ ಶಿಕ್ಷಕನ ಬಂಧನ
ಚಿತ್ರದುರ್ಗ : ತಾಲೂಕಿನ ಖಾಸಗಿ ಶಾಲೆಯೊಂದರ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಕನೋರ್ವನನ್ನು ಭರಮಸಾಗರ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ವರದಿಯಾಗಿದೆ. ರಂಗಣ್ಣ (55) ಆರೋಪಿ ಶಿಕ್ಷಕನಾಗಿದ್ದು, ಈತನ ವಿರುದ್ಧ ಮಕ್ಕಳ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯು ನೀಡಿದ ದೂರಿನ ಮೇರೆಗೆ ಪೊಲೀಸರು ಫೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಷ್ಠಿತ ಮಠವೊಂದಕ್ಕೆ ಸೇರಿದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ರಂಗಣ್ಣ, ಶಾಲೆಯ ಸುಮಾರು 6 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಡಳಿತ ಮಂಡಳಿಯಿಂದಲೇ ದೂರು: ಶಾಲೆಯ ಆಡಳಿತ ಸಮಿತಿಯು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಭರಮಸಾಗರ ಪೊಲೀಸ್ ಠಾಣೆಗೆ ತೆರಳಿ ಶಿಕ್ಷಕ ರಂಗಣ್ಣನ ವಿರುದ್ಧ ಅಧಿಕೃತವಾಗಿ ದೂರು ನೀಡಿದೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಸಂತ್ರಸ್ತ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮಣಿಪುರದಲ್ಲಿ ಹೊಸ ಬೆಳವಣಿಗೆ; ಬಿಜೆಪಿ ಹಿರಿಯ ನಾಯಕ ಯುನ್ಮಮ್ ಖೇಮಚಂದ್ ಗೆ ಒಲಿದ ಸಿಎಂ ಪಟ್ಟ!
ಒಂದು ವರ್ಷದ ರಾಷ್ಚ್ರಪತಿ ಆಡಳಿತದ ಬಳಿಕ ಮಣಿಪುರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಪಕ್ಷದ ಹಿರಿಯ ಮುಖಂಡ ಯುನ್ಮಮ್ ಖೇಮಚಂದ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಿಂಸಾಚಾರ ಮತ್ತು ಜನಾಂಗೀಯ ಸಂಘರ್ಷದ ಬಳಿಕ ಕಳೆದ ವರ್ಷ ಎನ್ ಪಿಪಿ ಪಕ್ಷವು ಬೆಂಬಲ ಹಿಂಪಡೆದುಕೊಂಡ ಕಾರಣ ಸರ್ಕಾರ ಬಿದ್ದು ಹೋಗಿತ್ತು. ಇದೀಗ ಬಿಜೆಪಿ ಹಲವು ಪಕ್ಷಗಳು ಬೆಂಬಲ ನೀಡಿದ್ದರಿಂದ ಸರ್ಕಾರ ರಚನೆ ಸಾಧ್ಯವಾಗಿದೆ. ಒಂದು ವರ್ಷದಲ್ಲಿ ಬಳಿಕ ನಡೆಯುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಖೇಮಚಂದ್ ಅವರ ಮುಂದಿದೆ.
ಫೆ.5ರಂದು ಮಲ್ಪೆ ಬಂದರಿನಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ
ಉಡುಪಿ, ಫೆ.3: ಮೀನುಗಾರಿಕೆ ಇಲಾಖೆ ಉಡುಪಿ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ, ಕರಾವಳಿ ಕಾವಲು ಪೊಲೀಸ್, ಮಲ್ಪೆ ಮೀನುಗಾರರ ಸಂಘ, ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಕನ್ನಿ ಪಾರ್ಟಿ ಮೀನುಗಾರರ ಸಂಘ ಮಲ್ಪೆ, ಕೆನರಾ ಬ್ಯಾಂಕ್ ಹಾಗೂ ಮಲ್ಪೆ ಬಂದರಿನ ಎಲ್ಲಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವೊಂದು ಫೆ.5ರಂದು ಬೆಳಗ್ಗೆ 9:30ಕ್ಕೆ ಮಲ್ಪೆ ಬಂದರಿನಲ್ಲಿರುವ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನರೇಂದ್ರ ಮೋದಿ, ಕೆವಿನ್ ರುಡ್, ಹರ್ದೀಪ್ ಸಿಂಗ್ ಪುರಿ: Epstein files ನಲ್ಲಿ ಹೆಸರಿರುವ ವಿಶ್ವ ನಾಯಕರು ಯಾರ್ಯಾರು?
ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಉದ್ಯಮಿ ಜೆಫ್ರಿ ಎಪ್ಸ್ಟೀನ್ ನ ಅಪರಾಧಗಳ ಕುರಿತು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ವಿಶ್ವದ ಪ್ರಭಾವಿ ನಾಯಕರ ಹೆಸರು ಕೇಳಿಬಂದಿದೆ. ಮೂರು ಮಿಲಿಯನ್ ಗಿಂತಲೂ ಹೆಚ್ಚು ಪುಟಗಳ ದಾಖಲೆಗಳನ್ನು ಒಳಗೊಂಡಿರುವ ಫೈಲ್ ಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ದಾಖಲೆಗಳ ಬಿಡುಗಡೆಯನ್ನು ಒತ್ತಾಯಿಸಲು ಕಾನೂನು ಜಾರಿಗೆ ತಂದ ನಂತರ ಇದನ್ನು ಬಿಡುಗಡೆ ಮಾಡಲಾಗಿದೆ. 2008ರಲ್ಲಿ ಎಪ್ಸ್ಟೀನ್ ಮೇಲೆ ಲೈಂಗಿಕ ಅಪರಾಧಗಳ ಆರೋಪ ಹೊರಿಸಲಾಯಿತು. ಆದರೆ ಪ್ರಾಸಿಕ್ಯೂಟರ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗಿದ್ದ ಆತ ಬರೀ 18 ತಿಂಗಳ ಜೈಲು ಶಿಕ್ಷೆ ಅನುಭವಿಸಿದ್ದ. ಜೈಲಿನಲ್ಲಿದ್ದಾಗಲೂ ಆತನಿಗೆ ದಿನಕ್ಕೆ 12 ಗಂಟೆಗಳ ಕಾಲ, ವಾರಕ್ಕೆ ಆರು ದಿನಗಳು “ಕೆಲಸದ ಬಿಡುಗಡೆ” ಮೇಲೆ ತನ್ನ ಕಚೇರಿಗೆ ಹೋಗಲು ಅವಕಾಶ ನೀಡಲಾಗಿತ್ತು. 13 ತಿಂಗಳ ನಂತರ ಆತನನ್ನು ಪ್ರೊಬೇಶನ್ ನಲ್ಲಿ ಬಿಡುಗಡೆ ಮಾಡಲಾಯಿತು. 2019ರಲ್ಲಿ, ಅಪ್ರಾಪ್ತ ವಯಸ್ಕರ ಲೈಂಗಿಕ ಕಳ್ಳಸಾಗಣೆ ಸೇರಿದಂತೆ ಆರೋಪಗಳ ಮೇಲೆ ಅವರನ್ನು ಮತ್ತೆ ಬಂಧಿಸಲಾಯಿತು. ಆದರೆ ಈ ಪ್ರಕರಣದ ವಿಚಾರಣೆ ಪ್ರಾರಂಭವಾಗುವ ಮೊದಲೇ ಎಪ್ಸ್ಟೀನ್ 2019ರಲ್ಲಿ ಮ್ಯಾನ್ ಹ್ಯಾಟನ್ ಜೈಲಿನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆತನ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಇಮೇಲ್ ಗಳ ಬಗ್ಗೆ ಎಪ್ಸ್ಟೀನ್ ಫೈಲ್ ನಲ್ಲಿ ಬಹಿರಂಗವಾಗಿದೆ. ಇದರಲ್ಲಿ ಆತ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ನಾರ್ವೆ, ಸ್ಲೋವಾಕಿಯಾ ಮತ್ತು ಭಾರತದ ಶ್ರೀಮಂತ ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗಿನ ಸಂವಹನ ನಡೆಸಿರುವ ಬಗ್ಗೆಯೂ ಮಾಹಿತಿ ಇದೆ. ಎಪ್ಸ್ಟೀನ್ ದಾಖಲೆ ಅಥವಾ ಇಮೇಲ್ ಗಳಲ್ಲಿ ಹೆಸರಿಸಲ್ಪಟ್ಟ ಮಾತ್ರಕ್ಕೆ ಒಬ್ಬ ವ್ಯಕ್ತಿ ಕ್ರಿಮಿನಲ್ ತಪ್ಪು ಮಾಡಿದ ತಪ್ಪಿತಸ್ಥನೆಂದು ಅರ್ಥವಲ್ಲ. ಇಲ್ಲಿಯವರೆಗೆ ಇದರಲ್ಲಿ ಹೆಸರಿಸಲಾದ ವ್ಯಕ್ತಿಗಳ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸಲಾಗಿಲ್ಲ. ಆದಾಗ್ಯೂ, ಹೊಸ ದಾಖಲೆಗಳು ಟ್ರಂಪ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಬಿಲ್ ಗೇಟ್ಸ್ ಮತ್ತು ಎಲಾನ್ ಮಸ್ಕ್ನಂತಹ ವ್ಯವಹಾರ ಉದ್ಯಮಿಗಳು ಸೇರಿದಂತೆ ಅಮೆರಿಕದ ಉನ್ನತ ವ್ಯಕ್ತಿಗಳ ನಡುವಿನ ಸಂವಹನವನ್ನು ತೋರಿಸುತ್ತವೆ. ಈ ದಾಖಲೆಗಳಲ್ಲಿ ಕಾಣಿಸಿಕೊಂಡಿರುವ ಇತರ ದೇಶಗಳ ಕೆಲವು ಪ್ರಭಾವಿ ಪುರುಷರು ಮತ್ತು ಒಬ್ಬ ಮಹಿಳೆ ಯಾರು? ದಾಖಲೆಯಲ್ಲಿ ಏನಿದೆ ಎಂಬುದನ್ನು ನೋಡೋಣ. ► ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಡುಗಡೆಯಾದ ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಾಗಿರುವ ರಿಲಯನ್ಸ್ ಗ್ರೂಪ್ ನ ಬಿಲಿಯನೇರ್ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ಎಪ್ಸ್ಟೀನ್ ನಡುವಿನ ಸಂಭಾಷಣೆಗಳಿವೆ. ಎಲ್ಲಾ ಸಂಭಾಷಣೆಗಳು 2008ರಲ್ಲಿ ಲೈಂಗಿಕ ಅಪರಾಧಗಳಿಗೆ ಎಪ್ಸ್ಟೀನ್ ಮೊದಲ ಬಾರಿ ಶಿಕ್ಷೆಗೊಳಗಾದ ನಂತರದ ವರ್ಷಗಳಲ್ಲಿ ನಡೆದವು. ಭಾರತಕ್ಕೆ ಬರುವ ಅಮೆರಿಕದ ರಾಯಭಾರಿಗಳ ಸಂಖ್ಯೆಯನ್ನು ನಿರ್ಧರಿಸುವುದರಿಂದ ಹಿಡಿದು ಅಮೆರಿಕದ ಉನ್ನತ ಅಧಿಕಾರಿಗಳೊಂದಿಗೆ ಮೋದಿಗಾಗಿ ಸಭೆಗಳನ್ನು ಏರ್ಪಡಿಸುವವರೆಗೆ ಹಲವಾರು ವಿಷಯಗಳ ಬಗ್ಗೆ ಇಬ್ಬರೂ ಪರಸ್ಪರ ಇಮೇಲ್ ಸಂವಹನ ನಡೆಸಿದ್ದು ಇದರಲ್ಲಿದೆ. ಅನಿಲ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಕಿರಿಯ ಸಹೋದರ; ಅವರು ಪ್ರಧಾನಿ ಮೋದಿಗೂ ಆಪ್ತರು. ಮಾರ್ಚ್ 16, 2017ರಂದು, ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ತಮ್ಮ ಮೊದಲ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಎರಡು ತಿಂಗಳ ನಂತರ, ಅಂಬಾನಿ ಎಪ್ಸ್ಟೀನ್ ಗೆ ಐ-ಸಂದೇಶವನ್ನು ಕಳುಹಿಸಿದ್ದಾರೆ. ಜಾರೆಡ್ ಕುಶ್ನರ್ ಮತ್ತು ಸ್ಟೀವ್ ಬ್ಯಾನನ್ ಸೇರಿದಂತೆ ಟ್ರಂಪ್ ವಲಯದ ಹಿರಿಯ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು “ನಾಯಕತ್ವ” ತನ್ನ ಸಹಾಯವನ್ನು ಕೇಳುತ್ತಿದೆ ಎಂಬುದಾಗಿತ್ತು ಆ ಸಂದೇಶ. ಮೇ ತಿಂಗಳಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡುವುದಕ್ಕಾಗಿ ಮೋದಿ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಅಂಬಾನಿ ಎಪ್ಸ್ಟೀನ್ ಅವರಿಂದ ಸಲಹೆ ಕೇಳಿದ್ದಾರೆ. ಎರಡು ವಾರಗಳ ನಂತರ, ಮಾರ್ಚ್ 29ರಂದು ನಡೆದ ಮತ್ತೊಂದು ಐಮೆಸೇಜ್ ವಿನಿಮಯದಲ್ಲಿ, ಎಪ್ಸ್ಟೀನ್ ಅಂಬಾನಿಗೆ ಹೀಗೆ ಉತ್ತರಿಸಿದ್ದಾರೆ: “ಇಸ್ರೇಲ್ ಕಾರ್ಯತಂತ್ರದ ಕುರಿತಾದ ಚರ್ಚೆಗಳು ಮೋದಿಯ ದಿನಾಂಕದ ಮೇಲೆ ಪ್ರಾಬಲ್ಯ ಸಾಧಿಸುತ್ತಿವೆ.” ಮೋದಿ ಜುಲೈನಲ್ಲಿ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ ಎಂದು ಎರಡು ದಿನಗಳ ನಂತರ ಅಂಬಾನಿ ಎಪ್ಸ್ಟೀನ್ ಗೆ ತಿಳಿಸಿದ್ದು, “ನಿಮಗೆ ಟ್ರ್ಯಾಕ್ 2ಗಾಗಿ ಯಾರು ಗೊತ್ತು?” ಎಂದು ಕೇಳಿದ್ದಾರೆ. ಜೂನ್ 26ರಂದು, ಟ್ರಂಪ್ ಅಧ್ಯಕ್ಷರಾದ ನಂತರ ಮೋದಿ ತಮ್ಮ ಮೊದಲ ಭೇಟಿಯಲ್ಲಿ ವಾಷಿಂಗ್ಟನ್ ನಲ್ಲಿ ಟ್ರಂಪ್ ಅವರನ್ನು ಭೇಟಿಯಾದರು. ನಂತರ, 2017 ಜುಲೈ 6ರಂದು ಮೋದಿ ಇಸ್ರೇಲ್ ಗೆ ಭೇಟಿ ನೀಡಿದರು. ಆ ವರ್ಷ ಭಾರತ 715 ಮಿಲಿಯನ್ ಡಾಲರ್ ಮೌಲ್ಯದ ಇಸ್ರೇಲಿ ಶಸ್ತ್ರಾಸ್ತ್ರಗಳ ಅತಿದೊಡ್ಡ ಖರೀದಿದಾರರಾಯಿತು. ಗಾಝಾದಲ್ಲಿ ಇಸ್ರೇಲ್ ನ ಜನಾಂಗೀಯ ಹತ್ಯೆಯ ಯುದ್ಧದ ಹೊರತಾಗಿಯೂ ಉಭಯ ದೇಶಗಳ ನಡುವಿನ ರಕ್ಷಣಾ ಪಾಲುದಾರಿಕೆ ಮುಂದುವರೆದಿದೆ. ಈ ಭೇಟಿಯು 1992ರಲ್ಲಿ ಇಸ್ರೇಲ್ ಜೊತೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ತೆರೆಯಿತು. ಅದಕ್ಕೂ ಮೊದಲು 1948ರಲ್ಲಿ ದೇಶ ರಚನೆಯಾದಾಗಿನಿಂದ ಭಾರತವು ಭಾರತೀಯ ನಾಗರಿಕರನ್ನು ಇಸ್ರೇಲ್ ಗೆ ಪ್ರಯಾಣಿಸುವುದನ್ನು ನಿಷೇಧಿಸಿತ್ತು. ಜುಲೈ 6ರಂದು ಮೋದಿ ಅವರ ಭೇಟಿಯ ನಂತರ, ಎಪ್ಸ್ಟೀನ್ “Jabor Y” ಎಂದು ಉಲ್ಲೇಖಿಸಿದ ಅಪರಿಚಿತ ವ್ಯಕ್ತಿಗೆ ಇಮೇಲ್ ಮಾಡಿ, “ಭಾರತದ ಪ್ರಧಾನಿ ಮೋದಿ ಸಲಹೆ ಪಡೆದರು. ಅಮೆರಿಕ ಅಧ್ಯಕ್ಷರ ಪ್ರಯೋಜನಕ್ಕಾಗಿ ಇಸ್ರೇಲ್ ನಲ್ಲಿ ನೃತ್ಯ ಮಾಡಿದರು, ಹಾಡು ಹಾಡಿದರು. ಅವರು ಕೆಲವು ವಾರಗಳ ಹಿಂದೆ ಭೇಟಿಯಾದರು… ಇದು ಕೆಲಸ ಮಾಡಿತು!” ಎಂದಿದ್ದಾರೆ. ಅಂಬಾನಿ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಕಳೆದ ವರ್ಷ ಇಸ್ರೇಲಿ ರಾಜ್ಯ ರಕ್ಷಣಾ ಗುಂಪಿನೊಂದಿಗೆ ಒಂದು ದಶಕದಲ್ಲಿ 10 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದದಲ್ಲಿ ಜಂಟಿ ಉದ್ಯಮ ಮಾಡಿಕೊಂಡಿತು. ಮೋದಿ ಅವರ ಇಸ್ರೇಲ್ ಭೇಟಿಯ ಸ್ವಲ್ಪ ಸಮಯದ ನಂತರ, ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಹಾಗೂ ಯುಎಸ್ ಖಜಾನೆಯ ಮಾಜಿ ಕಾರ್ಯದರ್ಶಿ ಲ್ಯಾರಿ ಸಮ್ಮರ್ಸ್ ಪ್ರತಿಸ್ಪರ್ಧಿ ಅಭ್ಯರ್ಥಿ ಹಿಲರಿ ಕ್ಲಿಂಟನ್ ಗಿಂತ ಟ್ರಂಪ್ ಇನ್ನೂ ಉತ್ತಮ ಅಧ್ಯಕ್ಷರಾಗಿದ್ದಾರೆ ಎಂದು ನೀವು ಭಾವಿಸುತ್ತೀರಾ ಎಂದು ಎಪ್ಸ್ಟೀನ್ ಅವರನ್ನು ಕೇಳಿದರು. ಎಪ್ಸ್ಟೀನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, “ಹೌದು, ಖಂಡಿತ. ಭಾರತ–ಇಸ್ರೇಲ್ ಉದಾಹರಣೆಗೆ ಅದ್ಭುತ ಮತ್ತು ಅವರ ಎಲ್ಲಾ ಕಾರ್ಯಗಳು,” ಎಂದು ಹೇಳಿದರು. ಇತ್ತೀಚಿನ ದಾಖಲೆಗಳಲ್ಲಿ ಬಹಿರಂಗಗೊಂಡ ಮತ್ತೊಂದು ಸಂಭಾಷಣೆಯಲ್ಲಿ, 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಭಾರಿ ಬಹುಮತವನ್ನು ಗಳಿಸಿದ ಕೆಲವೇ ಗಂಟೆಗಳ ನಂತರ ಮೋದಿ ಮತ್ತು ಶ್ವೇತಭವನದ ಮಾಜಿ ಮುಖ್ಯ ತಂತ್ರಜ್ಞ ಸ್ಟೀವ್ ಬ್ಯಾನನ್ ನಡುವೆ ಸಭೆಯನ್ನು ಏರ್ಪಡಿಸಲು ಎಪ್ಸ್ಟೀನ್ ಪ್ರಸ್ತಾಪಿಸಿದರು. ಮೇ 19, 2019ರಂದು ಬ್ಯಾನನ್ ಗೆ ಬರೆದ ಐ-ಮೆಸೇಜ್ನಲ್ಲಿ, ಎಪ್ಸ್ಟೀನ್ ಅಂಬಾನಿಯನ್ನು ಉಲ್ಲೇಖಿಸಿ, “ಮೋದಿ ಗುರುವಾರ ನನ್ನನ್ನು ನೋಡಲು ಯಾರನ್ನಾದರೂ ಕಳುಹಿಸುತ್ತಿದ್ದಾರೆ,” ಎಂದು ಬರೆದಿದ್ದಾರೆ. ಆ ಗುರುವಾರ, ಮೇ 23ರಂದು ಎಪ್ಸ್ಟೀನ್ ನ್ಯೂಯಾರ್ಕ್ ನಲ್ಲಿ ಅಂಬಾನಿಯನ್ನು ಭೇಟಿಯಾದರು. ಆ ದಿನದ ಅವರ ಕ್ಯಾಲೆಂಡರ್ ನಲ್ಲಿ ಬೇರೆ ಯಾವುದೇ ಸಭೆ ನಿಗದಿಯಾಗಿರಲಿಲ್ಲ. ಅಂಬಾನಿ ಜೊತೆಯ ಭೇಟಿಯ ನಂತರ, ಎಪ್ಸ್ಟೀನ್ ಬ್ಯಾನನ್ ಗೆ ಬರೆದ ಪತ್ರದಲ್ಲಿ, “ಮೋದಿ ಜೊತೆಗಿನ ಸಭೆ ನಿಜವಾಗಿಯೂ ಆಸಕ್ತಿದಾಯಕವಾಗಿತ್ತು. ಅವರು (2019ರ ಸಂಸತ್ ಚುನಾವಣೆಯಲ್ಲಿ) ಭಾರಿ ಬಹುಮತದೊಂದಿಗೆ ಗೆದ್ದರು. ಆದರೆ ವಾಷ್ ನಲ್ಲಿ ಯಾರೂ ಅವನೊಂದಿಗೆ ಮಾತನಾಡುವುದಿಲ್ಲ ಎಂದು ಅವರ ವ್ಯಕ್ತಿ ಹೇಳಿದರು. ಅವರ ಮುಖ್ಯ ಶತ್ರು ಚೀನಾ ಮತ್ತು ಆ ಪ್ರದೇಶದಲ್ಲಿ ಅದರ ಅಧಿಕೃತ ಪ್ರತಿನಿಧಿ ಪಾಕಿಸ್ತಾನ. ಅವರು 22ರಲ್ಲಿ G20 ಆಯೋಜಿಸುತ್ತಾರೆ. ಮೋದಿಗೆ ನಿಮ್ಮ ದೂರದೃಷ್ಟಿಯಲ್ಲಿ ಸಂಪೂರ್ಣ ವಿಶ್ವಾಸವಿದೆ,” ಎಂದು ಬರೆದಿದ್ದಾರೆ. ನಂತರ ಎಪ್ಸ್ಟೀನ್ ಅಂಬಾನಿಗೆ ಕಳುಹಿಸಿದ ಸಂದೇಶದಲ್ಲಿ “ಮೋದಿ ಸ್ಟೀವ್ ಬ್ಯಾನನ್ ಅವರನ್ನು ಭೇಟಿಯಾಗಿದ್ದು ಖುಷಿಯಾಗಬಹುದು ಎಂದು ನಾನು ಭಾವಿಸುತ್ತೇನೆ; ನೀವೆಲ್ಲರೂ ಚೀನಾ ಸಮಸ್ಯೆಯನ್ನು ಹಂಚಿಕೊಳ್ಳುತ್ತೀರಿ,” ಎಂದಿದ್ದಾರೆ. ಇದಕ್ಕೆ ಅಂಬಾನಿ “Sure” ಎಂದು ಉತ್ತರಿಸಿದರು. ನಂತರ ಎಪ್ಸ್ಟೀನ್ ಬ್ಯಾನನ್ ಗೆ ಉತ್ತರಿಸಿದರು: “ಮೋದಿ ಆನ್ ಬೋರ್ಡ್.” ಭಾರತ ಸರ್ಕಾರದ ಪರವಾಗಿ ಅಂತಹ ನಿರ್ಧಾರಗಳನ್ನು ಅನುಮೋದಿಸಲು ಅನಿಲ್ ಅಂಬಾನಿಗೆ ಅಧಿಕಾರವಿದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆ ಬೇಸಿಗೆಯಲ್ಲಿ ಬ್ಯಾನನ್ ಮತ್ತು ಭಾರತೀಯ ಅಧಿಕಾರಿಗಳ ನಡುವೆ ನಡೆದ ಸಭೆಯ ಯಾವುದೇ ಸಾರ್ವಜನಿಕ ದಾಖಲೆಗಳಿಲ್ಲ. ►ಹರ್ದೀಪ್ ಸಿಂಗ್ ಪುರಿ, ಭಾರತೀಯ ರಾಜಕಾರಣಿ ಎಪ್ಸ್ಟೀನ್ ಫೈಲ್ ಗಳಲ್ಲಿ ಕಾಣಿಸಿಕೊಂಡಿರುವ ಭಾರತದ ಮತ್ತೊಂದು ಪ್ರಮುಖ ಹೆಸರು ಹರ್ದೀಪ್ ಸಿಂಗ್ ಪುರಿ. ಅವರು 2014ರಲ್ಲಿ ಭಾರತೀಯ ವಿದೇಶಾಂಗ ಸೇವೆಯಿಂದ ನಿವೃತ್ತರಾಗಿ ಬಿಜೆಪಿ ಸೇರಿದ್ದಾರೆ. ದಾಖಲೆಗಳಲ್ಲಿ ಪುರಿ ಮತ್ತು ಎಪ್ಸ್ಟೀನ್ ನಡುವಿನ ಇಮೇಲ್ ವಿನಿಮಯಗಳು ಜೂನ್ 2014ರಲ್ಲಿ ಪ್ರಾರಂಭವಾದವು. ಎಪ್ಸ್ಟೀನ್ ಲಿಂಕ್ಡ್ಇನ್ ಸಹ-ಸಂಸ್ಥಾಪಕ ರೀಡ್ ಹಾಫ್ಮನ್ ಬಗ್ಗೆ ಪುರಿಗೆ ಬರೆದು, ಹಾಫ್ಮನ್ ಭಾರತಕ್ಕೆ ಭೇಟಿ ನೀಡಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇಮೇಲ್ ಗಳ ವಿನಿಮಯದ ನಂತರ, ಪುರಿ ಭಾರತದಲ್ಲಿ ಹೂಡಿಕೆ ಅವಕಾಶಗಳಿಗಾಗಿ ಎಪ್ಸ್ಟೀನ್ ಮತ್ತು ಹಾಫ್ಮನ್ ಗೆ ವಿವರವಾದ ಪತ್ರ ಬರೆದಿದ್ದಾರೆ. ಅವರು ಹೊಸದಾಗಿ ಆಯ್ಕೆಯಾದ ಮೋದಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಆರ್ಥಿಕ ಯೋಜನೆಗಳನ್ನು ರೂಪಿಸಿದರು. ಹಾಫ್ಮನ್ ಅವರನ್ನು ಭೇಟಿ ಮಾಡಲು ಒತ್ತಾಯಿಸಿದರು. ಪುರಿ ಎಪ್ಸ್ಟೀನ್ ಅವರನ್ನು ಕನಿಷ್ಠ ಮೂರು ಸಂದರ್ಭಗಳಲ್ಲಿ — ಫೆಬ್ರವರಿ 4, 2015; ಜನವರಿ 6, 2016; ಮೇ 19, 2017 — ತಮ್ಮ ಮ್ಯಾನ್ ಹ್ಯಾಟನ್ ಟೌನ್ ಹೌಸ್ ನಲ್ಲಿ ಭೇಟಿಯಾದರು ಎಂದು ದಾಖಲೆಗಳು ತೋರಿಸುತ್ತವೆ. ಎಪ್ಸ್ಟೀನ್ ಅವರ ಭೇಟಿಗಳು ಮತ್ತು ಸಂವಹನಗಳು ಕಟ್ಟುನಿಟ್ಟಾಗಿ ವ್ಯವಹಾರಕ್ಕೆ ಸಂಬಂಧಿಸಿದವು ಎಂದು ಪುರಿ ಪ್ರತಿಕ್ರಿಯಿಸಿದ್ದಾರೆ. ಡಿಸೆಂಬರ್ 2014ರಲ್ಲಿ ಪುರಿ ಮತ್ತೊಮ್ಮೆ ಎಪ್ಸ್ಟೀನ್ ಗೆ ಇಮೇಲ್ ಬರೆದು, “ನೀವು ನಿಮ್ಮ ವಿನೂತನ ದ್ವೀಪದಿಂದ ಹಿಂತಿರುಗಿದಾಗ ದಯವಿಟ್ಟು ನನಗೆ ತಿಳಿಸಿ,” ಎಂದಿದ್ದಾರೆ. “ಭಾರತದಲ್ಲಿ ಆಸಕ್ತಿಯನ್ನು ಹುಟ್ಟುಹಾಕಲು” ಎಪ್ಸ್ಟೀನ್ ಗೆ ಕೆಲವು ಪುಸ್ತಕಗಳನ್ನು ನೀಡಬೇಕಿದೆ; ಅದಕ್ಕಾಗಿ ಸಭೆ ಏರ್ಪಡಿಸುವಂತೆ ಪುರಿ ಕೇಳಿಕೊಂಡಿದ್ದಾರೆ. ► ಭಾರತ ಸರ್ಕಾರ ಹೇಗೆ ಪ್ರತಿಕ್ರಿಯಿಸಿದೆ? ಎಪ್ಸ್ಟೀನ್ ಫೈಲ್ ಗಳಲ್ಲಿ ಮೋದಿ ಅವರ ಉಲ್ಲೇಖಗಳನ್ನು ಭಾರತ ನಿರಾಕರಿಸಿದೆ. “ಜುಲೈ 2017ರಲ್ಲಿ ಪ್ರಧಾನಿಯವರ ಇಸ್ರೇಲ್ ಗೆ ಅಧಿಕೃತ ಭೇಟಿಯ ಸಂಗತಿಯನ್ನು ಮೀರಿ, ಇಮೇಲ್ ನಲ್ಲಿನ ಉಳಿದ ಪ್ರಸ್ತಾಪಗಳು ಶಿಕ್ಷೆಗೊಳಗಾದ ಅಪರಾಧಿಯೊಬ್ಬರ ಕೀಳು ಆಲೋಚನೆಗಳು ಅಲ್ಲದೆ ಹೆಚ್ಚೇನೂ ಅಲ್ಲ; ಇದನ್ನು ಅತ್ಯಂತ ತಿರಸ್ಕಾರದಿಂದ ತಳ್ಳಿಹಾಕಬೇಕು,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಪಕ್ಷದ ನೇತೃತ್ವದ ವಿರೋಧ ಪಕ್ಷವು ಇತ್ತೀಚಿನ ಬಹಿರಂಗಪಡಿಸುವಿಕೆಗಳ ಬಗ್ಗೆ, ವಿಶೇಷವಾಗಿ ಇಸ್ರೇಲ್ ಸಂಬಂಧಗಳಿಗೆ ಸಂಬಂಧಿಸಿದವುಗಳ ಬಗ್ಗೆ ಉತ್ತರಗಳನ್ನು ಕೋರಿದೆ. ಕಾಂಗ್ರೆಸ್ ಪಕ್ಷದ ಸಂಘಟನಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಎಕ್ಸ್ ನಲ್ಲಿ ಬರೆದ ಪೋಸ್ಟ್ನಲ್ಲಿ, “ಎಪ್ಸ್ಟೀನ್ ಫೈಲ್ಸ್ನ ಹೊಸ ಬ್ಯಾಚ್ನ ವರದಿಗಳು ಪ್ರಧಾನಿ ಮೋದಿಯನ್ನು ಸಂಪರ್ಕಿಸುವ ವಿಕೃತ ವ್ಯಕ್ತಿಗಳ ಬಗ್ಗೆ ಮತ್ತು ಅವರು ವಿದೇಶಿ ಕುಶಲತೆಗೆ ಎಷ್ಟು ಒಳಗಾಗುತ್ತಾರೆ ಎಂಬುದರ ಬಗ್ಗೆ ಒಂದು ದೊಡ್ಡ ಎಚ್ಚರಿಕೆಯ ಕರೆಯಾಗಿದೆ. ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವ ಈ ಗೊಂದಲದ ಬಹಿರಂಗಪಡಿಸುವಿಕೆಗಳ ಬಗ್ಗೆ ಪ್ರಧಾನಿ ವೈಯಕ್ತಿಕವಾಗಿ ಸ್ಪಷ್ಟನೆ ನೀಡಬೇಕು,” ಎಂದಿದ್ದಾರೆ. ► ಕೆವಿನ್ ರುಡ್, ಮಾಜಿ ಆಸ್ಟ್ರೇಲಿಯಾದ ಪ್ರಧಾನಿ 2007ರಿಂದ 2010ರವರೆಗೆ ಮತ್ತು ಮತ್ತೆ 2013ರಲ್ಲಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಆಸ್ಟ್ರೇಲಿಯಾದ ರಾಜತಾಂತ್ರಿಕ ಕೆವಿನ್ ರುಡ್ ಅವರ ಹೆಸರನ್ನು ಎಪ್ಸ್ಟೀನ್ ಫೈಲ್ ಗಳಲ್ಲಿ ಉಲ್ಲೇಖಿಸಲಾಗಿದೆ. ಜೂನ್ 8, 2014ರಂದು ಸಂಜೆ 4:30ಕ್ಕೆ ಎಪ್ಸ್ಟೀನ್ ಅವರ ದೈನಂದಿನ ಸಭೆಯ ವೇಳಾಪಟ್ಟಿಯಲ್ಲಿ ರುಡ್ ಅವರ ಹೆಸರು ಕಾಣಿಸಿಕೊಂಡಿತು. ಆ ದಿನ ಎಪ್ಸ್ಟೀನ್ ರುಡ್ ಸೇರಿದಂತೆ ಹಲವಾರು ಸಭೆಗಳಿಗಾಗಿ ಯುಎಸ್ ವರ್ಜಿನ್ ದ್ವೀಪಗಳಲ್ಲಿರುವ ತನ್ನ ಖಾಸಗಿ ದ್ವೀಪ ಲಿಟಲ್ ಸೇಂಟ್ ಜೇಮ್ಸ್ನಿಂದ ನ್ಯೂಯಾರ್ಕ್ ಗೆ ಪ್ರಯಾಣಿಸಿದ್ದರು. ಪ್ರಸ್ತುತ ಅಮೆರಿಕದಲ್ಲಿ ಆಸ್ಟ್ರೇಲಿಯಾದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ ರುಡ್ ತಾನು ಎಪ್ಸ್ಟೀನ್ ಅವರನ್ನು ಭೇಟಿ ಮಾಡಿಲ್ಲ; ಅವರೊಂದಿಗೆ ಯಾವುದೇ ಗೆಳೆತನ ಹೊಂದಿಲ್ಲ ಎಂದಿದ್ದಾರೆ. ಆದರೆ ಹೊಸದಾಗಿ ಬಿಡುಗಡೆಯಾದ ಫೈಲ್ ಗಳು, ನಿಗದಿತ ಅಪಾಯಿಂಟ್ಮೆಂಟ್ಗೆ ಎರಡು ದಿನಗಳ ಮೊದಲು, ಜೂನ್ 6, 2014ರಂದು ಮುಂಬರುವ ರವಿವಾರದ ಊಟದಲ್ಲಿ ಮಾಂಸಾಹಾರಿ ಆಹಾರ ಲಭ್ಯವಾಗುವಂತೆ ಕೇಳಲು ಎಪ್ಸ್ಟೀನ್ ತಮ್ಮ ಸಹಾಯಕ ಲೆಸ್ಲಿ ಗ್ರಾಫ್ಗೆ ಇಮೇಲ್ ಮಾಡಿದ್ದನ್ನು ತೋರಿಸುತ್ತವೆ. “ಈಗ ಕೆವಿನ್ ರುಡ್ ಕೂಡ ಬರುತ್ತಿದ್ದಾರೆ,” ಎಂದು ಅದರಲ್ಲಿದೆ. ಆ ಸಮಯದಲ್ಲಿ ರುಡ್ ಸರ್ಕಾರದಲ್ಲಿ ಇರಲಿಲ್ಲ. ► ಪೀಟರ್ ಮ್ಯಾಂಡೆಲ್ಸನ್, ಯುಕೆ ರಾಜಕಾರಣಿ ಯುಕೆಯ ಮಾಜಿ ಕ್ಯಾಬಿನೆಟ್ ಮಂತ್ರಿಯಾಗಿದ್ದ ಪೀಟರ್ ಮ್ಯಾಂಡೆಲ್ಸನ್ ಅವರ ಹೆಸರು ಈ ಹಿಂದೆ ಸಾರ್ವಜನಿಕವಾಗಿ ಪ್ರಕಟವಾದ ಎಪ್ಸ್ಟೀನ್ ಫೈಲ್ ಗಳಲ್ಲಿ ಕಾಣಿಸಿಕೊಂಡಿತ್ತು. ಇತ್ತೀಚಿನ ಕಡತಗಳಲ್ಲಿ ಎಪ್ಸ್ಟೀನ್ ಜೊತೆಗಿನ ಹೆಚ್ಚಿನ ಸಂಪರ್ಕಗಳು ಕಾಣಿಸಿಕೊಂಡ ನಂತರ ಅವರು ಲೇಬರ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಎಪ್ಸ್ಟೀನ್ ಜೊತೆಗಿನ ಸಂಪರ್ಕದ ಆರೋಪದ ಮೇಲೆ ಕಳೆದ ವರ್ಷ ಮ್ಯಾಂಡೆಲ್ಸನ್ ಅವರನ್ನು ಅಮೆರಿಕಕ್ಕೆ ಯುಕೆ ರಾಯಭಾರಿಯಾಗಿ ವಜಾಗೊಳಿಸಲಾಯಿತು. 2003 ಮತ್ತು 2004ರಲ್ಲಿ ಮೂರು ಪ್ರತ್ಯೇಕ ವಹಿವಾಟುಗಳಲ್ಲಿ ಎಪ್ಸ್ಟೀನ್ ಮ್ಯಾಂಡೆಲ್ಸನ್ ಗೆ 75,000 ಡಾಲರ್ ಪಾವತಿಗಳನ್ನು ಮಾಡಿದ್ದಾರೆ ಎಂದು ಇತ್ತೀಚಿನ ದಾಖಲೆಗಳು ಬಹಿರಂಗಪಡಿಸುತ್ತವೆ. ಲೇಬರ್ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಮ್ಯಾಂಡೆಲ್ಸನ್, “ಈ ವಾರಾಂತ್ಯದಲ್ಲಿ ಜೆಫ್ರಿ ಎಪ್ಸ್ಟೀನ್ ಸಂಬಂಧಿಸಿದ ವಿವಾದದಲ್ಲಿ ಸಂಬಂಧ ಹೊಂದಿದ್ದೇನೆ ಮತ್ತು ಇದರ ಬಗ್ಗೆ ವಿಷಾದವಿದೆ,” ಎಂದು ಬರೆದಿದ್ದಾರೆ. ಪಾವತಿಗಳ ಬಗ್ಗೆ ತನಗೆ “ನೆನಪಿಲ್ಲ” ಎಂದೂ ಹೇಳಿದ್ದಾರೆ. ಇತ್ತೀಚಿನ ದಾಖಲೆಗಳು ರುಡ್ ಅವರ ಪ್ರಸ್ತಾವಿತ ಗಣಿಗಾರಿಕೆ ತೆರಿಗೆಯ ವಿರುದ್ಧದ ಅಭಿಯಾನದ ಬಗ್ಗೆ ಮ್ಯಾಂಡೆಲ್ಸನ್ ಇಮೇಲ್ ಮೂಲಕ ಎಪ್ಸ್ಟೀನ್ ಅವರೊಂದಿಗೆ ಚರ್ಚಿಸಿರುವುದನ್ನು ತೋರಿಸುತ್ತವೆ. ರುಡ್ ಪ್ರಧಾನಿಯಾಗಿದ್ದಾಗ ಗಣಿಗಾರಿಕೆ ಕಂಪನಿಗಳು ಗಳಿಸುವ “super profits” ಮೇಲೆ 40 ಪ್ರತಿಶತ ತೆರಿಗೆ ವಿಧಿಸಲಾಗುತ್ತಿತ್ತು. ► ಮೆಟ್ಟೆ–ಮರಿಟ್, ನಾರ್ವೆಯ ಕ್ರೌನ್ ಪ್ರಿನ್ಸೆಸ್ ಯುಎಸ್ ನ್ಯಾಯಾಂಗ ಇಲಾಖೆ ಬಹಿರಂಗಪಡಿಸಿದ ಎಪ್ಸ್ಟೀನ್ ಫೈಲ್ ನಲ್ಲಿ ನಾರ್ವೆಯ ಕ್ರೌನ್ ಪ್ರಿನ್ಸೆಸ್ ಮೆಟ್ಟೆ–ಮರಿಟ್ ಅವರ ಹೆಸರು ಇದೆ. ಅವರು ಎಪ್ಸ್ಟೀನ್ ಜೊತೆ ಹಲವು ವರ್ಷಗಳ ಕಾಲ ಸಂಪರ್ಕದಲ್ಲಿದ್ದರು ಎಂದು ದಾಖಲೆಗಳು ತೋರಿಸುತ್ತವೆ. ನಾರ್ವೇಜಿಯನ್ ಸಿಂಹಾಸನದ ಉತ್ತರಾಧಿಕಾರಿ ಕ್ರೌನ್ ಪ್ರಿನ್ಸ್ ಹಾಕನ್ ಅವರನ್ನು ವಿವಾಹವಾದ ಮೆಟ್ಟೆ–ಮರಿಟ್ ಎಪ್ಸ್ಟೀನ್ ಫೈಲ್ ಗಳಲ್ಲಿ ಸುಮಾರು 1,000 ಬಾರಿ ಕಾಣಿಸಿಕೊಂಡಿದ್ದಾರೆ; ಇಬ್ಬರ ನಡುವೆ ಹಲವಾರು ಇಮೇಲ್ ಸಂವಹನ ನಡೆದಿದೆ. ಇಮೇಲ್ ಗಳಲ್ಲಿ ಮೆಟ್ಟೆ–ಮರಿಟ್ ಎಪ್ಸ್ಟೀನ್ ಗೆ “you tickle my brain” ಎಂದು ಹೇಳಿದ್ದಾರೆ. ಅವರನ್ನು “soft hearted” ಹಾಗೂ “such a sweetheart” ಎಂದು ಕರೆದಿದ್ದಾರೆ. ಮತ್ತೊಂದರಲ್ಲಿ, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಎಪ್ಸ್ಟೀನ್ ಕಳುಹಿಸಿದ ಹೂವುಗಳಿಗಾಗಿ ಧನ್ಯವಾದ ಅರ್ಪಿಸಿ “Love, Mm” ಎಂದು ಬರೆದಿದ್ದಾರೆ. 2012ರಲ್ಲಿ ಮೆಟ್ಟೆ–ಮರಿಟ್ ಎಪ್ಸ್ಟೀನ್ ಗೆ ನೀನು “ತುಂಬಾ ಆಕರ್ಷಕ” ಎಂದು ಹೇಳಿದ್ದಾರೆ. “ಒಬ್ಬ ತಾಯಿ ತನ್ನ 15 ವರ್ಷದ ಮಗನಿಗೆ ಫೋನ್ ವಾಲ್ ಪೇಪರ್ ಗಾಗಿ ಸರ್ಫ್ಬೋರ್ಡ್ ಹೊತ್ತೊಯ್ಯುತ್ತಿರುವ ಇಬ್ಬರು ಬೆತ್ತಲೆ ಮಹಿಳೆಯರ ಚಿತ್ರವನ್ನು ಸೂಚಿಸುವುದು ತಪ್ಪೇ?” ಎಂದು ಕೇಳಿದ್ದಾರೆ. ನಾರ್ವೆಯ ರಾಜಮನೆತನಕ್ಕೆ ಕಠಿಣ ಪರಿಸ್ಥಿತಿಯಲ್ಲಿರುವ ಹೊತ್ತಲ್ಲೇ ಈ ಬಹಿರಂಗಪಡಿಸುವಿಕೆಗಳು ಬಂದಿವೆ. ಕ್ರೌನ್ ಪ್ರಿನ್ಸ್ ಹಾಕನ್ ಅವರನ್ನು ಮದುವೆಯಾಗುವ ಮೊದಲು ಮೆಟ್ಟೆ–ಮರಿಟ್ ಅವರಿಗೆ ಹುಟ್ಟಿದ ಮಗ ಮಾರಿಯಸ್ ಬೋರ್ಗ್ ಹೊಯ್ಬಿ ಈ ವಾರದ ಕೊನೆಯಲ್ಲಿ ಅತ್ಯಾಚಾರದ ವಿಚಾರಣೆಗೆ ಒಳಗಾಗಲಿದ್ದಾರೆ. ಹೊಯ್ಬಿ ವಿರುದ್ಧ ನಾಲ್ವರು ಮಹಿಳೆಯರ ಮೇಲಿನ ಅತ್ಯಾಚಾರ, ಹಲ್ಲೆ ಮತ್ತು ಮಾದಕವಸ್ತು ಅಪರಾಧಗಳು ಸೇರಿದಂತೆ 38 ಅಪರಾಧಗಳ ಆರೋಪ ಹೊರಿಸಲಾಗಿದೆ.
ರಿಯಾದ್ (ಸೌದಿ ಅರೇಬಿಯಾ), ಫೆ. 3: ಅಲಿಫ್ ಇಂಟರ್ನ್ಯಾಷನಲ್ ಶಾಲೆ ಆಯೋಜಿಸಿದ್ದ ‘ಬುಕ್ ಬ್ಲೂಮ್–500’ ಸೃಜನಶೀಲ ಬರವಣಿಗೆ ಕಾರ್ಯಕ್ರಮ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಒಂದೇ ವೇದಿಕೆಯಲ್ಲಿ 506 ವಿದ್ಯಾರ್ಥಿಗಳು ರಚಿಸಿದ ಪುಸ್ತಕಗಳ ಅನಾವರಣ ನಡೆದಿರುವುದು ಈ ಸಾಧನೆಯ ಪ್ರಮುಖ ಅಂಶವಾಗಿದೆ. ಕಾರ್ಯಕ್ರಮದ ಸ್ಥಳದಲ್ಲಿದ್ದ ಗಿನ್ನೆಸ್ ವಿಶ್ವ ದಾಖಲೆ ಅಧಿಕಾರಿ ದಾಖಲೆಯನ್ನು ಅಧಿಕೃತವಾಗಿ ದೃಢಪಡಿಸಿ ಶಾಲೆಗೆ ಪ್ರಮಾಣಪತ್ರ ವಿತರಿಸಿದರು. 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡ ಈ ಕಾರ್ಯಕ್ರಮದ ಮೂಲಕ ಹತ್ತು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳು ಪ್ರಕಟಗೊಂಡಿದ್ದು, ಇಂಗ್ಲಿಷ್, ಅರೇಬಿಕ್, ಹಿಂದಿ, ಉರ್ದು, ಮಲಯಾಳಂ, ಕನ್ನಡ ಹಾಗೂ ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಪುಸ್ತಕಗಳು ರಚಿಸಲ್ಪಟ್ಟಿವೆ. ಕಾರ್ಯಕ್ರಮವನ್ನು ಪ್ರಮುಖ ಮಾಧ್ಯಮ ವಿಶ್ಲೇಷಕ ಹಾಗೂ ಅರಬ್ ನ್ಯೂಸ್ ಮುಖ್ಯ ಮಾಜಿ ಸಂಪಾದಕ ಉಸ್ತಾದ್ಝ್ ಖಾಲಿದ್ ಅಲ್ ಮಯೀನಾ ಉದ್ಘಾಟಿಸಿದರು. ಮುಂದಿನ ಪೀಳಿಗೆಯ ಸಾಹಿತ್ಯ ಪ್ರತಿಭೆಯನ್ನು ಬೆಳೆಸುವಲ್ಲಿ ಶಾಲೆಯ ಪ್ರಯತ್ನ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು. ಸಮುದಾಯ, ಶಿಕ್ಷಣ ಹಾಗೂ ವ್ಯವಹಾರ ವಲಯಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲಿಫ್ ಗ್ರೂಪ್ ಆಫ್ ಸ್ಕೂಲ್ಸ್ ಅಧ್ಯಕ್ಷ ಉಸ್ತಾದ್ ಅಲಿ ಅಬ್ದುರಹ್ಮಾನ್, ಸಿಇಒ ಲುಕ್ಮಾನ್ ಅಹ್ಮದ್ ಮತ್ತು ಪ್ರಾಂಶುಪಾಲ ಮೊಹಮ್ಮದ್ ಮುಸ್ತಫಾ ಸಭೆಯನ್ನುದ್ದೇಶಿಸಿ ಮಾತನಾಡಿ, ನೂರಾರು ಯುವ ಲೇಖಕರನ್ನು ಸಮಾಜಕ್ಕೆ ಪರಿಚಯಿಸುವ ಅವಕಾಶ ದೊರೆತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕ ಅಬ್ದುಲ್ ನಾಸರ್ ಹಾಜಿ (ಸ್ಟ್ರಾಂಗ್ಲೈಟ್) ಹಾಗೂ ಅಲಿಫ್ ಗ್ಲೋಬಲ್ ಸ್ಕೂಲ್ ನಿರ್ದೇಶಕ ಮೊಹಮ್ಮದ್ ಅಹ್ಮದ್ ಉಪಸ್ಥಿತರಿದ್ದರು. ‘A school with a smile’ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿರುವ ‘ಓದಿ ಮತ್ತು ಆನಂದಿಸಿ’ ಕಾರ್ಯಕ್ರಮವನ್ನು ಪ್ರಾಂಶುಪಾಲ ಮೊಹಮ್ಮದ್ ಮುಸ್ತಫಾ ಉಲ್ಲೇಖಿಸಿದರು. ವಿದ್ಯಾರ್ಥಿಗಳ ಚಿಂತನೆ ಚುರುಕುಗೊಳಿಸಲು, ಭಾಷಾ ಪಾಂಡಿತ್ಯ ವೃದ್ಧಿಸಲು ಹಾಗೂ ಭಾವನಾತ್ಮಕ ಬುದ್ಧಿವಂತಿಕೆಯನ್ನು ಬಲಪಡಿಸಲು ಪುಸ್ತಕಗಳು ನೆರವಾಗುತ್ತವೆ ಎಂದು ಸಿಇಒ ಲುಕ್ಮಾನ್ ಅಹ್ಮದ್ ಹೇಳಿದರು. ಶಾಲಾ ಆಡಳಿತಾಧಿಕಾರಿ ಅಲಿ ಬುಖಾರಿ, ಮುಖ್ಯೋಪಾಧ್ಯಾಯ ನೌಶಾದ್ ನಲಕತ್ ಹಾಗೂ ಸಂಯೋಜಕ ಸುಂದಸ್ ಸಬೀರ್ ಚೌಧರಿ ಕಾರ್ಯಕ್ರಮದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕರ್ನಾಟಕದ ಕೊಡಗಿನಂತಿದೆ ಮೇಘಾಲಯ: ರಾಜ್ಯಪಾಲ ಸಿ.ಎಚ್. ವಿಜಯಶಂಕರ್
► ರಾಜ್ಯಪಾಲರೊಂದಿಗೆ ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ಸಂವಾದ ► ಮೇಘಾಲಯದ ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ
ಟ್ರಂಪ್ ತೆರಿಗೆ ಕಡಿಮೆ ಮಾಡಿ ನಮಗೇನೂ ಮಹದುಪಕಾರ ಮಾಡಿಲ್ಲ: ರಂಗಸ್ವಾಮಿ ಮೂಕನಹಳ್ಳಿ
ಭಾರತ-ಯುರೋಪ್ ಹಾಗೂ ಅರಬ್ ಲೀಗ್ ನಡುವಿನ ವ್ಯಾಪಾರ ಒಪ್ಪಂದಗಳ ಬೆಳವಣಿಗೆಯ ನಡುವೆ ಅಮೆರಿಕ ಕೂಡ ಎಚ್ಚೆತ್ತುಕೊಂಡಿದ್ದು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಘೋಷಿಸಿದ್ದಾರೆ ಡೊನಾಲ್ಡ್ ಟ್ರಂಪ್. ಈ ಒಪ್ಪಂದದ ಭಾಗವಾಗಿ ಭಾರತ ಮೇಲಿನ ದುಬಾರಿ ಆಮದು ಸುಂಕವನ್ನು ಕಡಿತಗೊಳಿಸಲಾಗಿದ್ದು, ಶೇ.25ರಷ್ಟಿದ್ದ ಸುಂಕವನ್ನು ಶೇ.18ಕ್ಕೆ ಇಳಿಸಲಾಗಿದೆ. ಈ ನಿರ್ಧಾರದಿಂದ ಭಾರತ-ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳು ಮತ್ತಷ್ಟು ಬಲವಾಗುವ ನಿರೀಕ್ಷೆ ವ್ಯಕ್ತವಾಗಿದ್ದು,
ರಾಯಚೂರು ಜಿಲ್ಲಾ ಉತ್ಸವಕ್ಕೆ ಸಕಲ ಸಿದ್ಧತೆ, 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ನಿತೀಶ್ ಕೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಉತ್ಸವಕ್ಕೆ ಚಾಲನೆ
Manipur | ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಂದಿನ ಮುಖ್ಯಮಂತ್ರಿ ಯುಮ್ನಮ್ ಖೇಮ್ಚಂದ್ ಸಿಂಗ್
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ
Bengaluru | ತೆರಿಗೆ ಬಾಕಿ ಪಾವತಿಸದ ಏಳು ಸಾವಿರ ಆಸ್ತಿಗಳ ಹರಾಜಿಗೆ ಕ್ರಮ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆಗಳಲ್ಲಿ ಸುಮಾರು 7 ಸಾವಿರ ಆಸ್ತಿ ಮಾಲಕರು ಒಟ್ಟು 437ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿಯನ್ನು ಉಳಿಸಿಕೊಂಡಿದಿದ್ದು, ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಹರಾಜು ಹಾಕಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತಿಳಿಸಿದೆ. ಈ ಸಂಬಂಧ ಪ್ರಾಧಿಕಾರವು ಪ್ರಕಟನೆ ಹೊರಡಿಸಿದ್ದು, ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲಕರಿಗೆ ನೋಟಿಸ್ಗಳನ್ನು ಕಳುಹಿಸಲಾಗಿದೆ. ಆದರೂ ಅವರು ತೆರಿಗೆ ಪಾವತಿಸದೆ ಇರುವುದರಿಂದ, ಮುಂದಿನ ಕ್ರಮವಾಗಿ ಜಪ್ತಿ ಆದೇಶಗಳನ್ನು ಹೊರಡಿಸಲಾಗಿದೆ. ಜಪ್ತಿ ಆದೇಶಗಳ ಹೊರಡಿಸಿದ ಬಳಿಕವೂ ತೆರಿಗೆ ಪಾವತಿ ಆಗದಿರುವ ಹಿನ್ನೆಲೆಯಲ್ಲಿ, ಕೊನೆಯ ಕ್ರಮವಾಗಿ ಫೆ.17ರಂದು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಹರಾಜಿಗೆ ಸಂಬಂಧಿಸಿದ ನೋಟಿಸ್ಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಪ್ರಕಟಿಸಲಾಗಿದೆ. ಸಂಬಂಧಿತ ಆಸ್ತಿ ಮಾಲಕರು ತಕ್ಷಣವೇ https://BBMPTax.karnataka.gov.in ಮೂಲಕ ಆನ್ಲೈನ್ ಪಾವತಿ ಮಾಡಿದಲ್ಲಿ, ಹರಾಜು ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಬಹುದು ಎಂದು ಪ್ರಾಧಿಕಾರವು ಹೇಳಿದೆ.
ಮಾದಕ ವಸ್ತು ಸೇವನೆ ಆರೋಪ: ನಾಲ್ವರ ಬಂಧನ
ಮಂಗಳೂರು, ಫೆ.3: ಸಾರ್ವಜನಿಕ ಸ್ಥಳದಲ್ಲಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಫೆ.2ರಂದು ಕಾವೂರು ಜಂಕ್ಷನ್ ಹತ್ತಿರ ಪಂಜಿಮೊಗರು ಉರುಂದಾಡಿ ಕ್ರಾಸ್ ನಿವಾಸಿ ಶೈಲೇಶ್ (39) ಮತ್ತು ನಗರದ ಮರಕಡ ಜಂಕ್ಷನ್ ಬಳಿ ಯೆಯ್ಯಾಡಿ ಪದವು ನಿವಾಸಿ ವಿನ್ಯಾಸ್ (18) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕೂಳೂರು ಸಾರ್ವಜನಿಕ ಸ್ಥಳದಲ್ಲಿ ಪುಲೇಶ್ವರ ಭೂಯಿಯಾನ್ (22) ಮತ್ತು ನಗರದ ಕೆ.ಎಸ್.ರಾವ್ ರೋಡ್ ಸಮೀಪ ಕದ್ರಿ ಮುಂಡನ ಕ್ರಾಸ್ ರಸ್ತೆ ನಿವಾಸಿ ಚಂದನ್ ಸಿ. (26) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Tamil Nadu : ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್ ಶಾಕ್ - ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ
Annamalai Resigned as Election Incharge : ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ದೊಡ್ಡ ಶಾಕ್ ಎದುರಾಗಿದೆ. ಆರು ಜಿಲ್ಲೆಗಳ ಚುನಾವಣಾ ಉಸ್ತುವಾರಿಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.
ಕೆಎಸ್ಡಿಎಲ್ | ಜನವರಿಯಲ್ಲಿ ಸಾರ್ವಕಾಲಿಕ ದಾಖಲೆಯ ಉತ್ಪಾದನೆ; 4,894 ಟನ್ ಸೋಪ್ ಉತ್ಪಾದನೆ
ಬೆಂಗಳೂರು : ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಈ ವರ್ಷದ ಜನವರಿಯಲ್ಲಿ ಒಟ್ಟು 4,894 ಮೆಟ್ರಿಕ್ ಟನ್ ಸೋಪ್ ಉತ್ಪನ್ನ ಉತ್ಪಾದನೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮಂಗಳವಾರ ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜನವರಿ ತಿಂಗಳಲ್ಲಿ ಸಾಬೂನು ವಿಭಾಗದಲ್ಲಿ 3,798 ಟನ್, ಮಾರ್ಜಕಗಳ ವಿಭಾಗದಲ್ಲಿ 941ಟನ್ ಮತ್ತು ಕಾಸ್ಮೆಟಿಕ್ಸ್ ವಿಭಾಗದಲ್ಲಿ 155 ಟನ್ ಉತ್ಪಾದನೆ ನಡೆದಿದೆ ಎಂದು ಹೇಳಿದ್ದಾರೆ. ಕೆಎಸ್ಡಿಎಲ್ ಈ ಹಿಂದೆ 2020ರ ಸೆಪ್ಟೆಂಬರ್ನಲ್ಲಿ 3,113 ಟನ್, 2021ರ ನವೆಂಬರ್ನಲ್ಲಿ 2,744 ಟನ್, 2022ರ ಸೆಪ್ಟೆಂಬರ್ನಲ್ಲಿ 3,650 ಟನ್, 2023ರ ನವೆಂಬರ್ನಲ್ಲಿ 4,144 ಟನ್, 2025ರ ಮಾರ್ಚ್ನಲ್ಲಿ 4,486 ಟನ್, 2025ರ ಡಿಸೆಂಬರ್ನಲ್ಲಿ 4,735 ಟನ್ ಉತ್ಪಾದನೆ ಮೂಲಕ ದಾಖಲೆ ನಿರ್ಮಿಸಿತ್ತು ಎಂದು ಅವರು ತಿಳಿಸಿದ್ದಾರೆ. ಉತ್ತರ ಭಾರತ ಮತ್ತು ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮತ್ತು ಬ್ರ್ಯಾಂಡಿಂಗ್ ಬಲವರ್ಧನೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಮೂರು ಪಾಳಿಗಳಲ್ಲಿ ನಿರಂತರ ಮತ್ತು ಗುಣಮಟ್ಟದ ಉತ್ಪಾದನಾ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ. ಸಂಸ್ಥೆಯ ವತಿಯಿಂದ ಈಗ 45ಕ್ಕೂ ಹೆಚ್ಚು ಉತ್ಪನ್ನಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ಪನ್ನಗಳನ್ನು ಪರಿಚಯಿಸಲಾಗುವುದು. ಸಂಸ್ಥೆಯ ವಹಿವಾಟನ್ನು 2030ರ ವೇಳೆಗೆ 5ಸಾವಿರ ಕೋಟಿ ರೂ.ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಕೆಎಸ್ಡಿಎಲ್ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎಸ್. ನಾಡಗೌಡ ತಿಳಿಸಿದ್ದಾರೆ. ಹೆಚ್ಚುವರಿ ಸಿಬ್ಬಂದಿಯ ನೇಮಕವಾಗಲಿ ಅಥವಾ ಹೊಸ ಯಂತ್ರೋಪಕರಣಗಳ ಖರೀದಿಯನ್ನೂ ಮಾಡದೆ, ಹಾಲಿ ಇರುವ ವ್ಯವಸ್ಥಯಿಂದಲೇ ಇಷ್ಟು ದಾಖಲೆ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಇದಕ್ಮೆ ಶ್ರಮಿಸಿದ ಎಲ್ಲ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ತಿಳಿಸಿದ್ದಾರೆ.
ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಬ್ಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್. ಪುರಂ ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
T20 World Cup- ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್? ಹೀಗಿದೆ ಸಂಭಾವ್ಯ ಭಾರತ ಪ್ಲೇಯಿಂಗ್ ಇಲೆವೆನ್
India Vs USA ICC World CupT20 Match- ವಿಶ್ವ ಚುಟುಕು ಕ್ರಿಕೆಟ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡವು ಅಮೆರಿಕ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಭಾರತ ಪ್ಲೇಯಿಂಗ್ ಇಲೆವೆನ್ ನಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುದು ಬಹಳ ಕುತೂಹಲ ಕೆರಳಿಸಿರುವ ಸಂಗತಿಯಗಿದೆ. ತಿಲಕ್ ವರ್ಮಾ ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದರಿಂದ ಪೈಪೋಟಿ ಹೆಚ್ಚಾಗಿದೆ. ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಇಬ್ಬರಲ್ಲೊಬ್ಬರು ಸ್ಥಾನ ಬಿಟ್ಟುಕೊಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಬಾಲಕಿಯರು ಚಾಂಪಿಯನ್, ಬಾಲಕರು ರನ್ನರ್ಅಪ್
ಮೂಡುಬಿದಿರೆ: ತಮಿಳುನಾಡಿನ ಈರೋಡಿನಲ್ಲಿ ನಡೆದ 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಬಾಲಕಿಯರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಬಾಲಕರ ತಂಡ ರನ್ನರ್ಅಪ್ ಪ್ರಶಸ್ತಿ ಪಡೆಯಿತು. ಕರ್ನಾಟಕ ತಂಡದಲ್ಲಿ ಬಾಲಕಿಯರ ವಿಭಾಗದಲ್ಲಿ ಆರು ಮಂದಿ ಹಾಗೂ ಬಾಲಕರ ವಿಭಾಗದಲ್ಲಿ ನಾಲ್ಕು ಮಂದಿ ಆಳ್ವಾಸ್ ಕ್ರೀಡಾಪಟುಗಳು ಪಾಲ್ಗೊಂಡು ರಾಜ್ಯದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ವಿಜೇತ ಕರ್ನಾಟಕ ತಂಡದ ಪರವಾಗಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಚರಣ್ ಹಾಗೂ ಬಾಲಕಿಯರ ತಂಡದಲ್ಲಿ ರಾಜ್ಯ ತಂಡದ ನಾಯಕಿಯಾಗಿದ್ದ ಆಳ್ವಾಸ್ನ ಗೀತಾ ಮತ್ತು ಶುಭಶ್ರೀ ಅವರಿಗೆ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಲಭಿಸಿತು. ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
‘ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಗಳು’ ಮಾಹಿತಿ ಶಿಬಿರ
ಉಡುಪಿ, ಫೆ.3: ಮಾದಕ ವಸ್ತುಗಳ ಸೇವನೆ ಈಗ ವಿರಾಟ್ ರೂಪ ತಾಳಿ ವಿಶ್ವವ್ಯಾಪಿಯಾಗಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಅಪಾಯಕರ ರೀತಿ ಯಲ್ಲಿ ಹೆಚ್ಚುತ್ತಿರುವ ಈ ಪ್ರಸಕ್ತ ಸಂದರ್ಭದಲ್ಲಿ ಅಮಲು ಪದಾರ್ಥಗಳ ಸೇವನೆಯು ಕೇವಲ ಸಾಮಾಜಿಕ ಮತ್ತು ಆರೋಗ್ಯದ ಸಮಸ್ಯೆ ಮಾತ್ರವಲ್ಲ ಒಂದು ದೇಶದ ಯುವ ಜನಾಂಗ ಎದುರಿಸುತ್ತಿರುವ ಅತ್ಯಂತ ಭೀಕರ ಸಮಸ್ಯೆಯಾಗಿದೆ ಎಂದು ರೋಟರಿ ಮಿಡ್ಟೌನ್ ಅಧ್ಯಕ್ಷ ಪಿ.ರಾಘವೇಂದ್ರ ಭಟ್ ಹೇಳಿದ್ದಾರೆ. ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್, ರೋಟರಿ ಉಡುಪಿ ಮಿಡ್ಟೌನ್ ಹಾಗೂ ಕುಕ್ಕೆಹಳ್ಳಿ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಾದಕ ವಸ್ತುಗಳ ದುಷ್ಪರಿಣಾಮಗಳು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಮುಖ್ಯ ಅತಿಥಿಯಾಗಿ ಕುಕ್ಕೆಹಳ್ಳಿ ಗ್ರಾಪಂ ಅಧ್ಯಕ್ಷ ಪುರಂದರ ಕೋಟ್ಯಾನ್ ಮಾತನಾಡಿ, ವ್ಯಕ್ತಿಗಳ ನಡುವಿನ ಮನಸ್ತಾಪಗಳು, ಹಲವು ಬಗೆಯ ನೋವು ನಿರಾಶೆಗಳು, ಹಣಕಾಸಿನ ಮುಗ್ಗಟ್ಟು ಉದ್ಯೋಗದಲ್ಲಿನ ಸಮಸ್ಯೆ, ಲೈಂಗಿಕ ಸಮಸ್ಯೆ ಮತ್ತು ಮಾನಸಿಕ ಒತ್ತಡದಿಂದ ವಿಮುಖರಾಗಲು, ಮಾದಕ ವಸ್ತುಗಳ ಸೇವನೆ ಮಾಡುತ್ತ ಅದನ್ನೇ ಚಟವಾಗಿ ಬೆಳೆಸಿಕೊಂಡು ಅದರ ದಾಸಾನು ದಾಸರಾಗುತ್ತಾರೆ. ಅದನ್ನು ತಡೆಗಟ್ಟಲು ಇಂತಹ ಮಾಹಿತಿ ವಿದ್ಯಾರ್ಥಿ ದೆಸೆಯಿಂದಲೇ ಎಚ್ಚರಿಸಿದಾಗ ಅವರು ಮುಂದೆ ದುಶ್ಚಟಕ್ಕೆ ಬಲಿಯಾಗದೇ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಜೇಸಿಐ ತರಬೇತಿದಾರ ಹಾಗೂ ಉಪನ್ಯಾಸಕಿ ಅನಿತಾ ನರೇಂದ್ರ ಕುಮಾರ್ ಮಾದಕ ವಸ್ತುಗಳ ಬಗ್ಗೆ ಮನವರಿಕೆ ಮಾಡಿ ಕೊಟ್ಟರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ರವೀಂದ್ರ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಉಡುಪಿ ಮಿಡ್ಟೌನ್ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆ.ಎಲ್., ಎಸ್.ಡಿ.ಎಂ.ಸಿ. ಸದಸ್ಯ ವಿಶ್ವನಾಥ ಬೆಳಂಪಳ್ಳಿ ಹಾಗೂ ದೈಹಿಕ ಶಿಕ್ಷಕ ಗಣೇಶ್ ಉಪಸ್ಥಿತರಿದ್ದರು. ಪಿ.ಎಂ.ಶ್ರೀ ಶಾಲೆಯ ಮುಖ್ಯ ಶಿಕ್ಷಕಿ ಸ್ವಾಗತಿಸಿದರು. ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತಾಡಿದರು. ದಿವ್ಯ ಉಡುಪಿ ಕಾರ್ಯಕ್ರಮ ನಿರೂಪಿಸಿ, ಸುಧಾ ಭಟ್ ಅಮಾಸೆಬೈಲು ವಂದಿಸಿದರು. ಸುಮಾರು 93 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.
ʼರೈಲ್ವೆ ಪರೀಕ್ಷೆಯಲ್ಲಿ ಕನ್ನಡ ನಿರಾಕರಣೆʼ ಕನ್ನಡಿಗರ ಹಕ್ಕುಗಳ ಮೇಲಿನ ನೇರ ಆಕ್ರಮಣ : ನಾರಾಯಣಗೌಡ
ಬೆಂಗಳೂರು : ‘ಕನ್ನಡವನ್ನು ಕೈಬಿಟ್ಟು ಪರೀಕ್ಷೆಗಳನ್ನು ನಡೆಸಲು ರೈಲ್ವೆ ಇಲಾಖೆ ಮುಂದಾಗಿದೆ. ಇದು ಕನ್ನಡಿಗರ ಸ್ವಾಭಿಮಾನವನ್ನು ಮತ್ತೆ ಕೆಣಕುವಂತಹ ಅಪಮಾನಕಾರಿ ಕ್ರಮವಾಗಿದೆ. ಇದು ಕೇವಲ ಭಾಷಾ ಅನ್ಯಾಯವಲ್ಲ, ಕನ್ನಡಿಗರ ಹಕ್ಕುಗಳ ಮೇಲಿನ ನೇರ ಆಕ್ರಮಣವಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂದು ಕರವೇ ದೊಡ್ಡಮಟ್ಟದ ಹೋರಾಟಗಳನ್ನು ನಡೆಸಿತ್ತು. ಅದರ ಫಲವಾಗಿ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿತ್ತು. ಆದರೆ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಕನ್ನಡವನ್ನು ಪರೀಕ್ಷೆಗಳಿಂದ ಕೈಬಿಡುವ ಪ್ರಯತ್ನಗಳನ್ನು ಕರವೇ ಗಮನಿಸುತ್ತಿದೆ’ ಎಂದಿದ್ದಾರೆ. ‘ಕೇವಲ ಕೆಲವು ದಿನಗಳ ಹಿಂದೆಯಷ್ಟೇ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ, ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸಬೇಕೆಂದು ನಾವು ಗಟ್ಟಿಯಾಗಿ ಒತ್ತಾಯಿಸಿದ್ದೆವು. ರೈಲ್ವೆ ಸಚಿವ ಸೋಮಣ್ಣನವರೂ ಸಹ ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸಬೇಕೆಂದು ಸೂಚಿಸಿದ್ದರು. ರೈಲ್ವೆಯ ಯಾವುದೇ ಪರೀಕ್ಷೆಯಿರಲಿ, ಅದನ್ನು ಕನ್ನಡದಲ್ಲೂ ಕಡ್ಡಾಯವಾಗಿ ನಡೆಸಬೇಕು. ಕನ್ನಡಿಗರು ಇನ್ನೊಂದು ಭಾಷೆಯನ್ನು ಕಲಿತು ಪರೀಕ್ಷೆ ಬರೆಯಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಕರವೇ ಎಂದಿಗೂ ಒಪ್ಪುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ. ‘ಈ ಆದೇಶವನ್ನು ತಕ್ಷಣ ಹಿಂಪಡೆಯದಿದ್ದರೆ, ಕರವೇ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳನ್ನು ಆಯೋಜಿಸಲಿದೆ. ರೈಲ್ವೆ ಕಚೇರಿಗಳ ಮುಂದೆ ಧರಣಿ, ಬಂದ್, ರಸ್ತೆ ತಡೆ, ಹಾಗೂ ಅಗತ್ಯವಿದ್ದರೆ ಹೋರಾಟದ ತೀವ್ರ ಸ್ವರೂಪಗಳನ್ನು ತೆಗೆದುಕೊಳ್ಳಲು ಸಿದ್ಧವಿದೆ. ಕನ್ನಡಿಗರ ಭಾಷಾ ಹಕ್ಕುಗಳನ್ನು ರಕ್ಷಿಸುವಲ್ಲಿ ಕರವೇ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.
ಎಚ್ಚರಿಕೆ… ಸ್ಮಾರ್ಟ್ ಗ್ಲಾಸ್ ಗಳ ಮೂಲಕ ರಹಸ್ಯವಾಗಿ ಮಹಿಳೆಯರ ಚಿತ್ರೀಕರಣ!
ಬೇಕಿದೆ ಕಾನೂನು ಕಣ್ಗಾವಲು…
ಡಾ.ಕೆ.ವಿ.ರಾವ್ಗೆ ಜೀವಮಾನ ಸಾಧನಾ ಪ್ರಶಸ್ತಿ
ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಅವರಿಗೆ ವಿಜ್ಞಾನ ಮತ್ತು ಶಿಕ್ಷಣಕ್ಕಾಗಿ ಅವರ ಸೇವೆಯನ್ನು ಪರಿಗಣಿಸಿ ಭಾರತೀಯ ಭೌತಶಾಸ್ತ್ರ ಅಧ್ಯಾಪಕರ ಸಂಘವು ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ‘ಕ್ವಾಂಟಂ ವಿಜ್ಞಾನ ಮತ್ತು ತಂತ್ರಜ್ಞಾನ’ಸಮ್ಮೇಳನದ ಸಂದರ್ಭದಲ್ಲಿ ಡಾ. ಕೆ.ವಿ.ರಾವ್ ಅವರು ವಿವಿಧ ಜವಾಬ್ದಾರಿಯುತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕರ್ತವ್ಯ ನಿರ್ವಹಿಸಿದ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಜ್ಞಾನ ಸಂವಹನದ ನಾನಾ ಆಯಾಮಗಳ ಕಾರ್ಯಕ್ರಮಗಳ ಮೂಲಕ ನೀಡಿರುವ ಸೇವೆಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಬಕಾರಿ ಲಂಚ ಪ್ರಕರಣ ಮರೆಮಾಚಲು ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ಧ ನಿರ್ಣಯ ಮಂಡನೆ : ಆರ್.ಅಶೋಕ್
ಬೆಂಗಳೂರು : ‘ಅಬಕಾರಿ ಇಲಾಖೆಯಲ್ಲಿನ ಲಂಚ ಪ್ರಕರಣ, ವರ್ಗಾವಣೆ ದಂಧೆಯನ್ನು ಮರೆಮಾಚಲು ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸುವ ಮೂಲಕ ಕೇಂದ್ರ ಸರಕಾರವನ್ನು ನಿಂದಿಸುವ ಕೆಲಸ ಮಾಡುತ್ತಿದ್ದು, ಇದರ ವಿರುದ್ದ ಹೋರಾಟ ಮಾಡುತ್ತೇವೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಮಂಗಳವಾರ ವಿಧಾನಸಭೆ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ನಿಯಮಾವಳಿಗಳನ್ನು ಮೀರಿ ಕೇಂದ್ರ ಸರಕಾರವನ್ನು ತೆಗಳುವ ನಿರ್ಣಯವನ್ನು ಮಂಡಿಸಿದ್ದಾರೆ. ನಿಯಮ ಪ್ರಕಾರ ಎಲ್ಲರಿಗೂ 7 ದಿನ ಮುನ್ನ ನೋಟಿಸ್ ನೀಡಬೇಕು. ಇದು ಸದನದ ನಿರ್ಣಯವಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ಸರಕಾರದ ನಿರ್ಣಯ’ ಎಂದು ಹೇಳಿದರು. ‘ಮಾಜಿ ಸಿಎಂ ಎಸ್.ಎಂ.ಕೃಷ್ಣ ರಾಜ್ಯಕ್ಕೆ ವಿಮಾನ ನಿಲ್ದಾಣ, ನಮ್ಮ ಮೆಟ್ರೊ ತಂದರು. ಇದನ್ನು ಮುತ್ಸದ್ಧಿತನ ಎನ್ನುತ್ತಾರೆ. ಆದರೆ, ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರ ಅಭಿವೃದ್ಧಿ ಹಾಗೂ ಪಕ್ಷದ ಅಭಿವೃದ್ಧಿ ಮಾತ್ರ ಬೇಕಿದೆ. ಹೀಗಾಗಿ ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ದ ನಿರ್ಣಯ ಮಂಡಿಸಲಾಗಿದೆ’ ಎಂದು ಅಶೋಕ್ ದೂರಿದರು. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ನಾಯಕ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಲ್ಲಿ ಮಾತನಾಡಲು ಆಗಿಲ್ಲ. ಹೀಗಾಗಿ ಇಲ್ಲಿನ ಕಲಾಪದಲ್ಲಿ ಉತ್ತರನ ಪೌರುಷ ತೋರಿಸಿದ್ದಾರೆ. ಈ ನಿರ್ಣಯ ಸದನದ ನಿರ್ಣಯವಲ್ಲ ಎಂದ ಅವರು, ಸಿಎಂ ಸಿದ್ದರಾಮಯ್ಯ ಜಿಎಸ್ಟಿ ಸಭೆಗೆ ಹೋಗುವುದಿಲ್ಲ, ಪ್ರಧಾನಿಯವರು ಕರೆದ ಸಭೆಗೆ ತೆರಳುವುದಿಲ್ಲ. ಇದೀಗ ಸೋನಿಯಾ ಗಾಂಧಿ ಮೆಚ್ಚಿಸಲು ನಿರ್ಣಯ ಮಂಡನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಹೊಸದಿಲ್ಲಿ: ಇತ್ತೀಚೆಗೆ ಪ್ರಕಟವಾದ ಕೇಂದ್ರ ಬಜೆಟ್ನಲ್ಲಿ ಅಂಗವೈಕಲ್ಯ ಪಿಂಚಣಿ ಪಡೆಯುವ ರಕ್ಷಣಾ ಸಿಬ್ಬಂದಿಗೆ ಲಭ್ಯವಿದ್ದ ಆದಾಯ ತೆರಿಗೆ ವಿನಾಯಿತಿಯನ್ನು ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರಕ್ಕೆ ದೇಶದಾದ್ಯಂತ ಮಾಜಿ ಸೈನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕ್ರಮವು ಅಂಗವಿಕಲ ಯೋಧರ ಹಕ್ಕುಗಳನ್ನು ಘಾಸಿಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು thewire.in ವರದಿ ಮಾಡಿದೆ. ಬಜೆಟ್ನ ಪ್ರಕಾರ, ಇನ್ನು ಮುಂದೆ ದೈಹಿಕ ಅಂಗವೈಕಲ್ಯದಿಂದಾಗಿ ಸೇವೆಯಿಂದ “ಅಮಾನ್ಯಗೊಳಿಸಲ್ಪಟ್ಟ” ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಆದರೆ ಅಂಗವೈಕಲ್ಯ ಹೊಂದಿದ್ದರೂ ತಮ್ಮ ಪೂರ್ಣ ಸೇವಾ ಅವಧಿ (ಸೂಪರ್ಅನ್ಯುಯೇಷನ್) ಪೂರ್ಣಗೊಳಿಸಿ ನಿವೃತ್ತರಾದ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ. ಈ ನಿರ್ಧಾರವು ಅಂಗವಿಕಲ ಪಿಂಚಣಿದಾರರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸೇನೆಯಿಂದ ನಿವೃತ್ತರಾದವರು ಕಳವಳ ವ್ಯಕ್ತಪಡಿಸಿದ್ದಾರೆ. ಸೇವೆಯಿಂದ ಅಮಾನ್ಯಗೊಂಡವರಿಗಿಂತ ಸೇವಾವಧಿ ಪೂರ್ಣಗೊಳಿಸಿ ನಿವೃತ್ತರಾದ ಅಂಗವಿಕಲ ಸೈನಿಕರ ಸಂಖ್ಯೆ ಹೆಚ್ಚಿನದಿರುವುದರಿಂದ ದೊಡ್ಡ ವರ್ಗದ ಯೋಧರು ನೇರವಾಗಿ ನಷ್ಟ ಅನುಭವಿಸಲಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮೇಜರ್ ಜನರಲ್ ಶೈಲ್ ಝಾ ಅವರು, “ಅಗ್ನಿವೀರ್ ಯೋಜನೆಯಿಂದ ದೇಶದ ಭದ್ರತೆ ಮೊದಲು ಹದಗೆಟ್ಟಿತು. ಈಗ ಅಂಗವೈಕಲ್ಯ ಪಿಂಚಣಿಯ ಮೇಲಿನ ದಾಳಿಯಿಂದ ವೃತ್ತಿಪರ ಸೈನಿಕರ ಬದ್ಧತೆಯ ನೀತಿಯನ್ನೇ ಕುಗ್ಗಿಸಲಾಗುತ್ತಿದೆ. ರಾಷ್ಟ್ರದ ರಕ್ಷಣೆಯ ಶವಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ ಹೊಡೆಯಲಾಗುತ್ತಿದೆ,” ಎಂದು ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಸೇವೆಯ ವೇಳೆ ಅಂಗವಿಕಲರಾದ ಸೈನಿಕರನ್ನು ಆಡಳಿತಾತ್ಮಕ ಹುದ್ದೆಗಳ ಮೂಲಕ ಸೇವೆಯಲ್ಲಿ ಮುಂದುವರಿಸಲಾಗುತ್ತಿತ್ತು. ಕರ್ತವ್ಯದ ಸಮಯದಲ್ಲಿ ಗಾಯಗೊಂಡು ಅಂಗವೈಕಲ್ಯಕ್ಕೊಳಗಾದ ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ, ಜೀವಾವಧಿ ವೈದ್ಯಕೀಯ ಚಿಕಿತ್ಸೆ ಹಾಗೂ ಹೆಚ್ಚುವರಿ ತೆರಿಗೆಮುಕ್ತ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗುತ್ತಿವೆ. “ಹಣಕಾಸು ಮಸೂದೆ 2026ರಲ್ಲಿ ಸರ್ಕಾರವು ಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದ ಮಾಜಿ ಸೈನಿಕರು ಮತ್ತು ಸೇವಾ ಸಿಬ್ಬಂದಿಗೆ ನೀಡಲಾಗುತ್ತಿದ್ದ ಆದಾಯ ತೆರಿಗೆ ವಿನಾಯಿತಿಯ ಎಲ್ಲಾ ಪ್ರಯೋಜನಗಳನ್ನು ತೆಗೆದುಹಾಕಿದೆ. ನಿವೃತ್ತಿಯವರೆಗೂ ಸೇವೆ ಸಲ್ಲಿಸಿದ ಧೈರ್ಯಶಾಲಿಗಳ ವಿರುದ್ಧ ಇದು ನಿರ್ದಯಿ ಕ್ರಮ— ವಾಹ್!” ಎಂದು ನಿವೃತ್ತ ಮೇಜರ್ ಜನರಲ್ ಬೀರೇಂದರ್ ಧನೋವಾ ಅವರು ಸಹ X ನಲ್ಲಿ ಪೋಸ್ಟ್ ಮಾಡಿದ್ದಾರೆ. “ನೀವು ಕರ್ತವ್ಯದ ವೇಳೆ ಗಾಯಗೊಂಡು ಅಮಾನ್ಯರಾದರೆ ಪಿಂಚಣಿ ಸೂಚ್ಯಂಕ ಸಿಗುವುದಿಲ್ಲ ಆದರೆ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ನಿವೃತ್ತಿಯವರೆಗೂ ಸೇವೆ ಮುಂದುವರಿಸಿದರೆ ಪಿಂಚಣಿ ಸೂಚ್ಯಂಕ ಸಿಗುತ್ತದೆ ಆದರೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಯಾವ ದಾರಿ ನೋಡಿದರೂ ಕೊನೆಗೆ ಸರ್ಕಾರವೇ ಗೆಲ್ಲುತ್ತದೆ,” ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಈಗ ರದ್ದುಗೊಂಡಿರುವ ತೆರಿಗೆ ವಿನಾಯಿತಿ 1922ರಿಂದ ಜಾರಿಯಲ್ಲಿತ್ತು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ. ಇನ್ನೊಂದೆಡೆ, ಅಂಗವಿಕಲ ಪಿಂಚಣಿದಾರ ಸೈನಿಕರಲ್ಲಿ ಎರಡು ಪ್ರತ್ಯೇಕ ವರ್ಗಗಳನ್ನು ಸೃಷ್ಟಿಸಿ ತೆರಿಗೆ ವಿನಾಯಿತಿಯನ್ನು ವಿಭಿನ್ನವಾಗಿ ಅನ್ವಯಿಸುವುದು ಹೇಗೆ ನ್ಯಾಯಸಮ್ಮತ ಎಂಬ ಪ್ರಶ್ನೆಯನ್ನು ಮಾಜಿ ಕರ್ನಲ್ ಒಬ್ಬರು ಎತ್ತಿದ್ದಾರೆ. “ದೇಶ ಸೇವೆ ಮಾಡುವಾಗ ಅಂಗವೈಕಲ್ಯಕ್ಕೊಳಗಾದ ಸೈನಿಕರ ವಿರುದ್ಧ ಸರ್ಕಾರ ಮತ್ತೆ ತಾರತಮ್ಯ ಮಾಡುತ್ತಿರುವುದು ಆಘಾತಕಾರಿ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆ
ಮಂಗಳೂರು : ಗೃಹಲಕ್ಷ್ಮಿ ಯೋಜನೆಯಡಿ ಮೊತ್ತವನ್ನು ನಿಗದಿತವಾಗಿ ಜಮೆ ಮಾಡಬೇಕು. ಬ್ಯಾಂಕ್ ಅಕೌಂಟ್ ಸೀಡಿಂಗ್ ಮಾಡಲು ಬಾಕಿ ಇರುವ ಬಗ್ಗೆ ಆದಷ್ಟು ಶೀಘ್ರವಾಗಿ ಕ್ರಮವಹಿಸುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2,668 ಫಲಾನುಭವಿಗಳ ಪೈಕಿ 1,422 ಫಲಾನುಭವಿಗಳ ಅಕೌಂಟ್ ಸೀಡಿಂಗ್ ಮಾಡಲಾಗಿದ್ದು, 1246 ಸೀಡಿಂಗ್ ಮಾಡಲು ಬಾಕಿ ಇರುತ್ತದೆ. ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 3,80,408 ಫಲಾನುಭವಿಗಳು ಯೋಜ ನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸಭೆಗೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮರಣ ಹೊಂದಿದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮಾಹಿತಿ ಪಡೆದು ಕೊಂಡು ಪರಿಶೀಲನೆ ನಡೆಸಬೇಕು ಎಂದರು. ಪಡಿತರ ಚೀಟಿ ತಿದ್ದುಪಡಿಗೆ ಸಂಬಂಧಿಸಿದಂತೆ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅನುಮೋದನೆಯಾಗುವ ತನಕ ರೇಶನ್ ಕಾರ್ಡ್ ಪ್ರತಿಯನ್ನು ನೀಡದಂತೆ ಗ್ರಾಮ ಒನ್ ನವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕರಿಗೆ ಅಧ್ಯಕ್ಷರು ತಿಳಿಸಿದರು. ಕಡಬದಲ್ಲಿ ಕೆಎಸ್ಆರ್ಟಿಸಿ ಡಿಪೋ ರಚಿಸಲು 3 ಕಡೆಗಳಲ್ಲಿ ತಹಶೀಲ್ದಾರ್ ಮತ್ತು ವಿಭಾಗೀಯ ನಿಯಂತ್ರಣಾಧಿ ಕಾರಿಯವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಜಾಗವನ್ನು ಗುರುತಿಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ನಿರ್ಧರಿಸು ವಂತೆ ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ತಿಳಿಸಿದರು. ಮಾಣಿಯಲ್ಲಿ ಫ್ಲೈ ಓವರ್ನ ಕೆಳಗೆ ಕೆಎಸ್ಆರ್ಟಿಸಿ ಎಕ್ಸ್ಪ್ರೆಸ್ ಬಸ್ಸುಗಳು ನಿಲುಗಡೆ ಮಾಡುವುದಿಲ್ಲವೆಂದು ತಿಳಿಸಿದಾಗ, ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಜಿಲ್ಲಾಧ್ಯಕ್ಷರು ಕೆಎಸ್ಆರ್ಟಿಸಿ. ಅಧಿಕಾರಿಗಳಿಗೆ ಸೂಚಿಸಿದರು. ಯುವನಿಧಿ ಯೋಜನೆಯಡಿ ನೈಜತೆ ಪರಿಶೀಲನೆ ನಡೆಸಿ, ಉದ್ಯೋಗದಲ್ಲಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಭರತ್ ಮುಂಡೋಡಿ ಸಲಹೆ ನೀಡಿದರು. ಸಭೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ. ಎಸ್, ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ನಾರಾಯಣ ನಾಯ್ಕ್, ಸದಸ್ಯರಾದ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿ.ಎ, ಉಮಾನಾಥ ಶೆಟ್ಟಿ, ಬಿ.ಪದ್ಮನಾಭ ಸಾಲ್ಯಾನ್ ಮತ್ತಿತರರು ಇದ್ದರು.
‘ಅಬಕಾರಿ ಇಲಾಖೆಯಲ್ಲಿ ಲಂಚ’ ಆರೋಪ ಪ್ರಕರಣ : ವಿಧಾನಸಭೆಯಲ್ಲಿ ಪ್ರತಿಧ್ವನಿ
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆಯನ್ನಿಟ್ಟ ಆರೋಪ ಪ್ರಕರಣ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ಲಂಚಕ್ಕೆ ಬೇಡಿಕೆ ಇಟ್ಟಿರುವ ಅಧಿಕಾರಿಗಳ ಆಡಿಯೊ ಸಾಕ್ಷ್ಯ ಇದೆ. ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಕೂಡಲೇ ಅಬಕಾರಿ ಸಚಿವರು ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು. ಈ ವೇಳೆ ಬಿಜೆಪಿ ಸದಸ್ಯ ವಿ.ಸುನೀಲ್ಕುಮಾರ್ ಮಧ್ಯಪ್ರವೇಶಿಸಿ, ‘ಗಂಭೀರವಾದ ಆರೋಪಗಳನ್ನು ವಿರೋಧ ಪಕ್ಷದ ನಾಯಕರು ಎಳೆಎಳೆಯಾಗಿ ಬಿಡಿಸಿಡುತ್ತಿದ್ದಾರೆ. ಆರೋಪ ಹೊತ್ತಿರುವ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ನೈತಿಕತೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಅವರ ರಾಜೀನಾಮೆಯನ್ನು ಪಡೆಯಬೇಕು’ ಎಂದು ವಾಗ್ದಾಳಿ ನಡೆಸಿದರು. ಆಗ ಕಾಂಗ್ರೆಸ್ ಪಕ್ಷದ ಸದಸ್ಯ ಎ.ಎಸ್.ಪೊನ್ನಣ್ಣ ಮಾತನಾಡಿ, ‘ವಿರೋಧ ಪಕ್ಷದವರು ಮಾಡುತ್ತಿರುವ ಆರೋಪ ಏನೂ ಅರ್ಥವಾಗುತ್ತಿಲ್ಲ ಎಂದರು. ಇದಕ್ಕೆ ಬಿಜೆಪಿಯ ಸುರೇಶ್ಗೌಡ ಮಾತನಾಡಿ, ‘ಮೊದಲ ಬಾರಿ ಶಾಸಕರಾದವರು ಏಳು ಬಾರಿ ಶಾಸಕರಾದವರಿಗೆ ಪಾಠ ಮಾಡುತ್ತಿದ್ದಾರೆ’ ಎಂದು ಛೇಡಿಸಿದರು. ಪೊನ್ನಣ್ಣ ಅವರ ಬೆಂಬಲಕ್ಕೆ ನಿಂತ ಇಂಧನ ಸಚಿವ ಕೆ.ಜೆ.ಜಾರ್ಜ್, ‘ಪೊನ್ನಣ್ಣ ಅವರು ಹೊಸಬರಾಗಿ ಶಾಸಕರಾಗಿರಬಹುದು. ಅವರಿಗೆ ಒಳ್ಳೆಯ ಅನುಭವವಿದೆ ಎಂದರು. ಬಿಜೆಪಿ ಮತ್ತೊಬ್ಬ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಿಮ್ಮ ಸರಕಾರದ ಕಾನೂನು ಸಲಹೆಗಾರರು ಇವರು ಎಂದು ಲೇವಡಿ ಮಾಡಿದರು. ಆಗ ಅಶೋಕ್ ಮಾತನಾಡಿ, ಪೊನ್ನಣ್ಣ ಅವರೇ ನಿಮಗೂ ಆಡಿಯೊ ಕೊಡುತ್ತೇವೆ, ಕೇಳಿ ಎಂದು ಮಾತು ಮುಂದುವರೆಸಿ, ಮಂಡ್ಯ ಅಬಕಾರಿ ಇಲಾಖೆಯ ಡಿಸಿ ಪರವಾನಗಿ ನೀಡುವ ವಿಚಾರದಲ್ಲಿ ಜಾತಿ ತಂದಿದ್ದಾರೆ. ಜಾತಿ ಆಧಾರದ ಮೇಲೆ ಮದ್ಯದಂಗಡಿಯ ಪರವಾನಗಿ ನೀಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು. ಆಗ ಆಡಳಿತ ಪಕ್ಷದ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ವೈನ್ ಸ್ಪೋರ್ಗೆ ಹೋದರೆ ಇಂತಹ 50 ಆಡಿಯೋ, ವಿಡಿಯೊಗಳನ್ನು ತರಬಹುದು ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರು, ಅಬಕಾರಿ ಜಿಲ್ಲಾಧಿಕಾರಿ ಎಣ್ಣೆ ಅಂಗಡಿಯಲ್ಲಿ ಕುಡಿದು ಮಾತನಾಡಿದ್ದಾರೆಯೇ? ಎಂದು ಪ್ರಶ್ನಿಸಿದರು. ಬಿಜೆಪಿಯ ವೇದವ್ಯಾಸ ಕಾಮತ್ ಮಾತನಾಡಿ, ‘ಇದು ಕೊಬ್ಬರಿಯ ವಿಚಾರವಲ್ಲ. ಎಣ್ಣೆ ಅಂಗಡಿಯ ವಿಚಾರ’ ಎಂದು ಛೇಡಿಸಿದರು. ಜೆಡಿಎಸ್ ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ಸಮರ್ಥನೆಗೂ ಒಂದು ಇತಿಮಿತಿ ಬೇಡವೇ?, ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು. ಆಡಳಿತ ಪಕ್ಷದ ಸದಸ್ಯ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ‘ಅಶೋಕ್ ಅವರು ಸಚಿವರಾಗಿದ್ದಾಗಲೂ ಹಣ ಪಡೆದ ಆರೋಪ ಬಂದಿದೆ. ಆದರೆ, ನಮ್ಮ ಮುಖ್ಯಮಂತ್ರಿ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿದ್ದಾರೆ ಎಂದಾಗ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಸರಕಾರ ಯಾವುದಾದರೂ ಇರಲಿ, ಭ್ರಷ್ಟಾಚಾರ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.
ರಾಯಚೂರು | ಟಿಪ್ಪರ್–ಬೈಕ್ ಮುಖಾಮುಖಿ ಢಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು
ರಾಯಚೂರು : ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಸಮೀಪ ನಡೆದಿದೆ. ಮೃತರನ್ನು ಚಡಕಲ್ ಗುಡ್ಡ ಗ್ರಾಮದ ನಿವಾಸಿ ಬಸವರಾಜ್ (32) ಎಂದು ಗುರುತಿಸಲಾಗಿದೆ. ಮೃತ ಬಸವರಾಜ್ ಅವರು ಸಿರವಾರದಿಂದ ಪಾಮನಕಲ್ಲೂರಿಗೆ ತಮ್ಮ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಲಿಂಗಸುಗೂರಿನಿಂದ ರಾಯಚೂರು ಕಡೆಗೆ ಹೊರಟಿದ್ದ ಟಿಪ್ಪರ್ ಎದುರಿನಿಂದ ಬಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಬಸವರಾಜ್ ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಟಿಪ್ಪರ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅಪಘಾತದ ಬಳಿಕ ಚಾಲಕ ಟಿಪ್ಪರ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆ್ಯಪ್ ಮೂಲಕ ಆಧಾರ್ ಅಪ್ಡೇಟ್ | ನೀವು ತಿಳಿದುಕೊಳ್ಳಬೇಕಾಗಿರುವುದು ಏನು?
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ನೂತನ ಅಪ್ಲಿಕೇಶನ್ ಮೂಲಕ ನಿಮ್ಮ ಆಧಾರ್ ದತ್ತಾಂಶವನ್ನು ರಕ್ಷಿಸಬಹುದು. ಆಫ್ಲೈನ್ ಬಳಕೆಗೂ ಆ್ಯಪ್ ಲಭ್ಯವಿದೆ. ಆಧಾರ್ ಬಳಕೆ ಇತ್ತೀಚೆಗೆ ಅಧಿಕವಾಗುತ್ತಿದೆ. ಹೋಟೇಲ್, ಆಸ್ಪತ್ರೆ, ಮೊಬೈಲ್ ಅಂಗಡಿ, ಸರ್ಕಾರಿ ಕಚೇರಿ ಸೇರಿದಂತೆ ಇತರೆ ಎಲ್ಲಾ ಸೇವಾ ವಲಯಗಳಲ್ಲಿ ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್ನ ನಕಲಿ ಪ್ರತಿ ನೀಡುತ್ತೇವೆ. ಇದರಿಂದ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಆದ್ದರಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೂತನ ಅಪ್ಲಿಕೇಶನ್ ಮೂಲಕ ಆಧಾರ್ ದತ್ತಾಂಶವನ್ನು ರಕ್ಷಿಸಲಿದೆ. ಆಫ್ಲೈನ್ ಬಳಕೆಗೂ ಅಪ್ಲಿಕೇಶನ್ ಲಭ್ಯವಿದೆ. ‘ಒಂದೇ ಕುಟುಂಬ- ಒಂದು ಅಪ್ಲಿಕೇಶನ್’ ಯೋಜನೆಯಡಿ ಆಧಾರ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ. ಒಂದು ಮೊಬೈಲ್ ಫೋನ್ ಬಳಸಿಕೊಂಡು 5 ಪ್ರೊಫೈಲ್ಗಳನ್ನು ಸೃಷ್ಟಿಸಬಹುದು. ಅಂದರೆ ಒಂದೇ ಸಾಧನದಲ್ಲಿ ಕುಟುಂಬದ 5 ಸದಸ್ಯರ ಆಧಾರ್ ಮಾಹಿತಿ ಇರಿಸಿಕೊಳ್ಳಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಅಥವಾ ಪಿಡಿಎಫ್ ಮೂಲಕ ಆಧಾರ್ ಮಾಹಿತಿ ಹಂಚಿಕೊಳ್ಳಬಹುದು. ಕಾಗದ ರಹಿತ ಸೇವೆ ಇನ್ನು ಮುಂದೆ ವಿವಿಧ ಕೆಲಸಗಳಿಗಾಗಿ ದಾಖಲೆ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ನ ಭೌತಿಕ ಪ್ರತಿ ನೀಡಬೇಕಾಗಿಲ್ಲ. ಆನ್ಲೈನ್ನಲ್ಲಿಯೇ 2 ಪ್ರಕಾರದಲ್ಲಿ ಹಂಚಿಕೊಳ್ಳಬಹುದು. ಅವುಗಳೆಂದರೆ, ಹಂಚಿಕೆ ಐಡಿ: ಬಳಕೆದಾರರು ‘ಪಾಸ್ವರ್ಡ್-ರಕ್ಷಿತ ಆಧಾರ್ ಪಿಡಿಎಫ್’ ರಚಿಸಬಹುದು. ಅವಶ್ಯಕತೆಗೆ ಅನುಗುಣವಾಗಿ ಹೆಸರು ಮತ್ತು ವಯಸ್ಸಿನಂತಹ ಆಯ್ಡ ವಿವರಗಳನ್ನು ಮಾತ್ರ ಹಂಚಿಕೊಳ್ಳಬಹುದು. ಕ್ಯುಆರ್ ಕೋಡ್ ಸ್ಕ್ಯಾನ್: ಅಪ್ಲಿಕೇಶನ್ನಲ್ಲಿ ನಿಮ್ಮ ಆಧಾರ್ ಕ್ಯುಆರ್ ಕೋಡ್ ಲಭ್ಯವಿರಲಿದೆ. ಅಗತ್ಯವಿದ್ದಾಗ ಆಧಾರ್ ಪರಿಶೀಲನೆಗೆ ಇದನ್ನು ಬಳಸಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಮಾಹಿತಿ ಆನ್ಲೈನ್ ಮೂಲಕ ಹಸ್ತಾಂತರಗೊಳಿಸಬಹುದು. ಹೊಸ ಅಪ್ಲಿಕೇಶನ್, ಸಮಯ ಹಾಗೂ ಶ್ರಮ ಎರಡನ್ನೂ ಉಳಿಸಲಿದೆ. ಈ ಹಿಂದೆ ಮೊಬೈಲ್ ಸಂಖ್ಯೆ ಸೇರ್ಪಡೆ ಅಥವಾ ನವೀಕರಣಕ್ಕೆ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಬೇಕಿತ್ತು. ಆಧಾರ್ ಅಪ್ಲಿಕೇಶನ್ನಲ್ಲಿ ಒಟಿಪಿ ಮತ್ತು ಮುಖ ಪರಿಶೀಲನೆ ಮಾಡುವ ಮೂಲಕ ಸುಲಭವಾಗಿ ಬದಲಿಸಬಹುದಾಗಿದೆ. ಆಧಾರ್ ಅಪ್ಲಿಕೇಶನ್ ಡೌನ್ಲೋಡ್ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್ನಲ್ಲಿ ಆ್ಯಪ್ ಉಚಿತವಾಗಿ ಲಭ್ಯವಿದೆ. ಡೌನ್ಲೋಡ್ ಮಾಡಿಕೊಂಡು ಆ್ಯಪ್ ತೆರೆಯಬೇಕು. ಅಲ್ಲಿ ಗೋಚರಿಸುವ ನಿಬಂಧನೆಗಳಿಗೆ ಅನುಮತಿ ನೀಡಬೇಕು. ಬಳಿಕ ‘ಬಿಗಿನ್ ಜರ್ನಿ’ ಆಯ್ಕೆ ಮಾಡಿ. ನಂತರ ‘ಕಂಟಿನ್ಯೂ ರಿಜಿಸ್ಟರ್’ ಮೇಲೆ ಕ್ಲಿಕ್ ಮಾಡಿ. ‘ರಿಜಿಸ್ಟರ್ ವಿತ್ ಜಸ್ಟ್ 3 ಸ್ಟೆಪ್ಸ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಎಂಟರ್ ಯುವರ್ ಆಧಾರ್ ನಂಬರ್’ ಆಯ್ಕೆ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ‘ಕನ್ಫರ್ಮ್ ಆಧಾರ್ ನಂಬರ್’ ಮೇಲೆ ಕ್ಲಿಕ್ ಮಾಡಿ. ‘ಟರ್ಮ್ಸ್ ಆ್ಯಂಡ್ ಕಂಡೀಷನ್ಸ್’ ಪುಟ ತೆರೆದುಕೊಳ್ಳುತ್ತದೆ. ‘ಕಂಟಿನ್ಯೂ’ ಆಯ್ಕೆ ಮಾಡಿ. ಈಗ ಮೊಬೈಲ್ ಸಂಖ್ಯೆ ಪರೀಕ್ಷೆಯಾಗುfತದೆ. ಬಳಿಕ ‘ಫೇಸ್ ಅಥೆಂಟಿಫಿಕೇಶನ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಸ್ಟಾರ್ಟ್ ಫೇಸ್ ಅಥೆಂಟಿಫಿಕೇಶನ್’ ಕ್ಲಿಕ್ ಮಾಡಿ ನಿಮ್ಮ ಮುಖ ಸ್ಕ್ಯಾನ್ ಮಾಡಿ. ನಿಮ್ಮ ಆಧಾರ್ ಅಪ್ಲಿಕೇಶನ್ ದೃಢೀಕರಣವಾಗುತ್ತದೆ. ಆಧಾರ್ ಅಪ್ಲಿಕೇಶನ್ಗೆ ಪಾಸ್ವರ್ಡ್ ಹೊಂದಿಸಬಹುದು. ಈಗ ಆಧಾರ್ ಅಪ್ಲಿಕೇಶಣ್ ಸಂಪೂರ್ಣ ಸೇವೆಗೆ ಸಿದ್ಧವಾಗುತ್ತದೆ. ಸೌಲಭ್ಯ ಪಡೆಯುವುದು ಹೇಗೆ? ಅಪ್ಲಿಕೇಶನ್ ಮುಖಪುಟ ತೆರೆಯಿರಿ. ಇದರಲ್ಲಿ ಹಲವು ಆಯ್ಕೆಗಳಿವೆ. ಕೆಳಭಾಗದಲ್ಲಿ ‘ಸೆಲೆಕ್ಟಿವ್ ಶೇರ್, ಡೌನ್ಲೋಡ್ ಆಧಾರ್, ಬಯೊಮೆಟ್ರಿಕ್ ಅನ್ಲಾಕ್ಡ್, ಹೋಮ್, ಸೆಕ್ಯುರಿಟಿಮ ಸರ್ವಿಸಸ್ ಮತ್ತು ಹೆಲ್ಪ್ ಸೇರಿದಂತೆ ನಿಮ್ಮ ಭಾಷೆಯನ್ನು ಆರಿಸಬಹುದು. ಸೆಲೆಕ್ಟ್ ಶೇರ್ ಆರಿಸಿದರೆ, ನಿಮ್ಮ ಆಧಾರ್ ಮಾಹಿತಿಯನ್ನು ಬೇರೆಯವರಿಗೆ ಕಳುಹಿಸಬಹುದು. ಇದರಲ್ಲಿ ನಿಮಗೆ ಅಗತ್ಯವಿರುವ ಮಾಹಿತಿ ಆರಿಸಿಕೊಳ್ಳಬಹುದು. (ಫೋಟೋ ಮತ್ತು ವಿಳಾಸ ಮಾತ್ರ ಅಗತ್ಯವಿದ್ದರೆ ಅದನ್ನು ಆಯ್ಕೆ ಮಾಡಿ ಕಳುಹಿಸಬಹುದು). ಶೇರ್ ಕಸ್ಟಮ್ ಐಡಿ ಆಯ್ಕೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದು. ಡೌನ್ಲೋಡ್ ಆಧಾರ್ ಆಯ್ಕೆ ಮಾಡಿಕೊಂಡು ಎಲ್ಲೆಡೆ ಯಾವಾಗ ಬೇಕಾದರೂ ಡೌನ್ಲೋಡ್ ಮಾಡಬಹುದು. ಆಧಾರ್ ಪಿಡಿಎಫ್ಗೆ ಸುರಕ್ಷಿತ ಪಾಸ್ವರ್ಡ್ ರಚಿಸುವ ಅವಕಾಶವಿದೆ. ಸೆಕ್ಯುರಿಟಿ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನೀವು ಈವರೆಗೆ ಆಧಾರ್ನಲ್ಲಿ ಮಾಡಿರುವ ಎಲ್ಲ ಬದಲಾವಣೆಗಳ ಇತಿಹಾಸ ಕಾಣಬಹುದು. ಜೊತೆಗೆ ನಿಮ್ಮ ಆಧಾರ್ ಅಪ್ಲಿಕೇಶನ್ನ ಪಾಸ್ವರ್ಡ್ ಬದಲಿಸಲು ಅವಕಾಶವಿದೆ. ಸರ್ವಿಸಸ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಮೊಬೈಲ್ ನಂಬರ್ ಅಪ್ಡೇಟ್ ಹಾಗೂ ಅಡ್ರೆಸ್ ಅಪ್ಡೇಟ್ ಸೇವೆಗಳು ಲಭ್ಯವಾಗುತ್ತವೆ. ಮೊಬೈಲ್ ಸಂಖ್ಯೆ ನವೀಕರಣ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬಯಸಿದರೆ ‘ಮೊಬೈಲ್ ನಂಬರ್ ಅಪ್ಡೇಟ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ‘ಕಂಟಿನ್ಯೂ ಟು ಅಪ್ಡೇಟ್ ಮೊಬೈಲ್ ನಂಬರ್’ ಆಯ್ಕೆ ಮಾಡಿ. ಆಧಾರ್ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ನವೀಕರಿಸಬೇಕಾದ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹೊಸ ಸಂಖ್ಯೆಗೆ ಒಟಿಪಿ ಪಡೆಯಿರಿ. ನಂತರ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿಸಿದರೆ ಮೊಬೈಲ್ ಸಂಖ್ಯೆ ನಿಗದಿತ ಅವಧಿಯೊಳಗೆ ನವೀಕರಣಗೊಳ್ಳುತ್ತದೆ. ವಿಳಾಸ ಅಪ್ಡೇಟ್ ಮಾಡುವುದು ವಿಳಾಸವನ್ನು ಬದಲಿಸಲು ಬಯಸಿದರೆ ‘ಅಡ್ರೆಸ್ ಅಪ್ಡೇಟ್’ ಆಯ್ಕೆ ಮಾಡಿ. ‘ಮೈ ಡಾಕ್ಯುಮೆಂಟ್ಸ್’ ಆಯ್ಕೆ ಮಾಡಿ. ‘ಕಂಟಿನ್ಯೂ ಟು ಅಪ್ಡೇಟ್ ಅಡ್ರೆಸ್’ ಕ್ಲಿಕ್ ಮಾಡಿ. ‘ಒಟಿಪಿ’ ದೃಢೀಕರಿಸಿ. ‘ಕಂಟಿನ್ಯೂ’ ಆಯ್ಕೆಮಾಡಿ. ಯಾವುದಾದರೂ ದಾಖಲೆ ಆಯ್ಕೆಮಾಡಿ. ದಾಖಲೆ ಆಯ್ಕೆ ಮಾಡಿದ ನಂತರ ‘ಕಂಟಿನ್ಯೂ’ ಮೇಲೆ ಕ್ಲಿಕ್ ಮಾಡಿ. ‘ಪಿಡಿಎಫ್’ ರೂಪದಲ್ಲಿರುವ ನಿಮ್ಮ ದಾಖಲೆ ಅಪ್ಲೋಡ್ ಮಾಡಬಹುದು. ಅಥವಾ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬಹುದು. ನಿಮ್ಮ ಲಭ್ಯತೆಗೆ ಅನುಗುಣವಾಗಿ ‘ಸ್ಕ್ಯಾನ್ ಡಾಕ್ಯುಮೆಂಟ್ ಡೈರೆಕ್ಟರಿ’ ಅಥವಾ ‘ಸೆಲೆಕ್ಟ್ ಫೈಲ್ ಟು ಅಪ್ಲೋಡ್’ ಯಾವುದಾದರೂ ಒಂದನ್ನು ಆರಿಸಿ ದಾಖಲೆ ಸಲ್ಲಿಸಿ. ‘ಕಂಟಿನ್ಯೂ ಟು ಆಡ್ ನ್ಯೂ ಅಡ್ರೆಸ್’ ಆಯ್ಕೆ ಮಾಡಿ. ಬಳಿಕ ನಿಮ್ಮ ಮನೆ ವಿಳಾಸ, ಪಿನ್ಕೋಡ್ ಜಿಲ್ಲೆ, ರಾಜ್ಯ, ಹಳ್ಳಿ, ಅಂಚೆ ಕಚೇರಿಯ ಮಾಹಿತಿ ಭರ್ತಿ ಮಾಡಿ. ಮುಖ ಪರಿಶೀಲನೆ ಮಾಡಿ. ನಿಗದಿತ ಶುಲ್ಕ ಪಾವತಿಸಿದರೆ ನಿಮ್ಮ ವಿಳಾಸ ಬದಲಾಗುತ್ತದೆ. ಕುಟುಂಬಸ್ಥರ ಪ್ರೊಫೈಲ್ ಸೇರಿಸುವುದು ಆಧಾರ್ ಅಪ್ಲಿಕೇಶಣ್ ಮುಖಪುಟದ ಮೂಲೆಯಲ್ಲಿ ‘ಆಡ್ ಪ್ರೊಫೈಲ್’ ಕಾಣಿಸುತ್ತದೆ. ಅಲ್ಲಿ ನಿಮ್ಮ ಫೋಟೋ ಮೇಲೆ ಕ್ಲಿಕ್ ಮಾಡಿ. ಬಳಿಕ ‘ಆಡ್ ಎ ನ್ಯೂ ಪ್ರೊಫೈಲ್ ಇನ್ 2 ಸ್ಟೆಪ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಎಂಟರ್ ಆಧಾರ್ ನಂಬರ್’ ಆಯ್ಕೆ ಮಾಡಿ. ನಂತರ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆ ನಮೂದಿಸಿ. ಅವರ ಮುಖ ಪರಿಶೀಲನೆ ಮಾಡಿದರೆ ಅಪ್ಲಿಕೇಶನ್ ಜೊತೆ ಅವರ ಪ್ರೊಫೈಲ್ ಲಿಂಕ್ ಆಗುತ್ತದೆ. ಹೀಗೆ ಮನೆಯ 5 ಸದಸ್ಯರ ಆಧಾರ್ ಮಾಹಿತಿ ಸೇರಿಸಬಹುದು. ಜೊತೆಗೆ ಅವರ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನವೀಕರಿಸಬಹುದು. ಕ್ಯುಆರ್ ಕೋಡ್ ಪಡೆಯುವುದು ಅಪ್ಲಿಕೇಶನ್ ಮುಖಪುಟದ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ನ ಕ್ಯುಆರ್ ಕೋಡ್ ಸೃಷ್ಟಿಯಾಗುತ್ತದೆ.
ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಮತ್ತೆ ಅನ್ಯಾಯ, ಆದೇಶ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ: ಕರವೇ ಎಚ್ಚರಿಕೆ
ಬೆಂಗಳೂರು: ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂಬ ಬೇಡಿಕೆಯನ್ನು ಮತ್ತೆ ಕೈಬಿಟ್ಟಿರುವ ರೈಲ್ವೇ ಇಲಾಖೆಯ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ಕೇವಲ ಭಾಷಾ ಅನ್ಯಾಯವಲ್ಲ, ಕನ್ನಡಿಗರ ಸ್ವಾಭಿಮಾನ ಮತ್ತು ಹಕ್ಕುಗಳ ಮೇಲಿನ ನೇರ ದಾಳಿ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು,
ʼಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕ್ತೇನೆʼ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹೇಳಿಕೆ ವೈರಲ್
ಕಲಬುರಗಿ : ʼಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕ್ತೇನೆʼ ಎಂದು ಹೇಳಿಕೆ ನೀಡಿದ್ದ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ಏನಿದೆ? : ‘ಮಣಿಕಂಠ ರಾಠೋಡ್ ಬಿಜೆಪಿ’ ಎಂಬ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮೀಸಲಾತಿ ಕುರಿತಾಗಿ ನೀಡಿರುವ ಹೇಳಿಕೆ ವ್ಯಾಪಕವಾಗಿ ಹರಿದಾಡುತ್ತಿದೆ. ನನಗೆ ಪ್ರಧಾನಿ ಆಗಲು ಅವಕಾಶ ಸಿಕ್ಕರೆ ಅದೆಂತ ಚಮತ್ಕಾರ ಮಾಡುತ್ತೇನೆಂದರೆ ಅಮೆರಿಕಾ, ಬ್ರಿಟನ್ ದೇಶದ ಜನರು ಬಂದು ಭಾರತೀಯ ಪೌರತ್ವ ಕೇಳಬೇಕು. ಇದು ಸಾಧ್ಯವಾಗಿಸಲು ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾಗಿದೆ. ಕೇವಲ ಬಡವರಿಗಷ್ಟೇ ಮೀಸಲಾತಿ ಸಿಗಬೇಕು. ಜಾತಿ ಆಧಾರದಲ್ಲಿ ಮೀಸಲಾತಿ ರದ್ದಾಗಬೇಕು. ದೇಶದಲ್ಲಿ ಜಾತಿಯ ಆಧಾರದಲ್ಲಿ ಮೀಸಲಾತಿ ಜಾರಿಯಲ್ಲಿದೆ. ಅದನ್ನು ಮೊದಲು ರದ್ದು ಮಾಡಬೇಕಾಗಿದೆ. ಇದರ ಬದಲಾಗಿ ಬಡವರಿಗೆ ಹಂಚಿಕೆ ಮಾಡುತ್ತೇನೆ. ಶ್ರೀಮಂತರಿಗೆ ಇದರ ಸೌಲಭ್ಯ ಸಿಗದ ಹಾಗೆ ಮಾಡುತ್ತೇನೆ. ಹೀಗೆ ಮಾಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತ ವಿಶ್ವದಲ್ಲಿ ಪ್ರಕಾಶಿಸಲಿದೆ ಹಾಗೂ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಗೂ ಹೆಚ್ಚಾಗಲಿದೆ ಎಂದಿದ್ದಾರೆ. ನಾನು ಆ ಜಾತಿ ಈ ಜಾತಿ ಎಂದು ಹೇಳುವವರಿಗೆ ಭಾರತೀಯ ಪೌರತ್ವ ಕೊಡಬಾರದು. ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕುತ್ತೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮಣಿಕಂಠ ರಾಠೋಡ್ ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಅಲ್ಲದೆ ಹಲವು ವಿವಾದಗಳಲ್ಲಿ ಅವರು ಸಿಲುಕಿಕೊಂಡಿದ್ದರು. ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಪ್ರಕರಣ : ಆರೆಸ್ಸೆಸ್ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ವೇಳೆ ಪತ್ರಿಕಾಗೋಷ್ಠಿಯಲ್ಲಿ, ಇಂದು ಬೆದರಿಕೆ ಕರೆಗಳು ಬರುತ್ತಿವೆ, ನಾಳೆ ನಿಮ್ಮ ಮನೆವರೆಗೂ ಬರಬಹುದು” ಎಂದು ಹೇಳಿದ್ದ ಹಿನ್ನೆಲೆಯಲ್ಲಿ, ಜೀವ ಬೆದರಿಕೆ ಆರೋಪದಡಿ ಮಣಿಕಂಠ ರಾಠೋಡ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಅವರ ಮೀಸಲಾತಿ ವಿರೋಧಿ ಹೇಳಿಕೆಗಳು ಸಂವಿಧಾನಬದ್ಧ ಹಕ್ಕುಗಳಿಗೆ ವಿರುದ್ಧವಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.
ಮಂಗಳೂರು ಮೂಲದ ಅಹ್ಯಾನ್ ಅನ್ವರ್ ಅಂತರ್ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಕ್ರೀಡಾ ಪ್ರಮೋಷನ್ ಪಂದ್ಯಾಟಕ್ಕೆ ಆಯ್ಕೆ
ಮಂಗಳೂರು: ಮಂಗಳೂರು ಮೂಲದ ಅಹ್ಯಾನ್ ಅನ್ವರ್ ಗೋವಾದ ಪಣಜಿ ಯಲ್ಲಿ ನಡೆದ ರಾಜ್ಯ ಮಟ್ಟದ ಮಿನಿ /ಸೆಕೆಂಡರಿ ಶಾಲಾ ಕ್ರೀಡೆ ಯಲ್ಲಿ U-11 ಬಾಲಕರ ರೋಲರ್ ಸ್ಕೇಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ರಿಂಕ್ 1 ರಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ವಿಜೇತರಾಗಿದ್ದಾರೆ. ಜೊತೆಗೆ ದಕ್ಷಿಣ ಗೋವಾದ ಮಡಗಾoವ್ ನಲ್ಲಿ ಫೆಬ್ರವರಿ 1 ರಂದು ನಡೆದ ಗೋವಾ ಸ್ಕೇಟಿಂಗ್ ಫೆಸ್ಟಿವಲ್ ಟೂರ್ನಮೆಂಟ್ ನಲ್ಲಿ, 11 ವರ್ಷ ದೊಳಗಿನ ಬಾಲಕರ ವಿಭಾಗ ದಲ್ಲಿ 1000 ಮೀಟರ್ ಮತ್ತು 800 ಮೀಟರ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಈ ವರ್ಷ ಇಂಡೋನೇಷ್ಯಾದಲ್ಲಿ ನಡೆಯುವ ಅಂತರ್ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಕ್ರೀಡಾ ಪ್ರಮೋಷನ್ ಪಂದ್ಯಾಟಕ್ಕೆ ಆಯ್ಕೆ ಯಾಗಿರುತ್ತಾನೆ. ಅಬ್ದುಲ್ ಅನ್ವರ್ ಕುತ್ತೆತ್ತೂರು ಹಾಗೂ ಹಸೀನಾ ದಂಪತಿಯ ಪುತ್ರನಾಗಿರುವ ಇವನು ಪ್ರಸ್ತುತ ಯೂನಿವರ್ಸಲ್ ರೋಲರ್ ಸ್ಕೇಟಿಂಗ್ ಕ್ಲಬ್ ಮಡಗಾoವ್ ಗೋವಾ ಇದರ ಪ್ರತಿನಿಧಿಯಾಗಿರುತ್ತಾನೆ.
India Russia: ರಷ್ಯಾ ಜೊತೆಗಿನ ತೈಲ ಖರೀದಿ ಒಪ್ಪಂದಕ್ಕೆ ಗುಡ್ಬೈ ಹೇಳಿದ ಭಾರತ, ಇದರ ಪರಿಣಾಮ ಏನು ತಿಳಿಯಿರಿ
ಭಾರತ ಮತ್ತು ರಷ್ಯಾ ನಡುವೆ ಅತ್ಯಂತ ಗಟ್ಟಿಯಾದ ಸಂಬಂಧ ಇದ್ದು, ಎರಡೂ ದೇಶಗಳು ಭಾರಿ ದೊಡ್ಡ ಮಟ್ಟದಲ್ಲಿ ದ್ವಿಪಕ್ಷೀಯ ಸಂಬಂಧ ಬೆಳೆಸಿಕೊಂಡು ಬಂದಿವೆ. ಇದೇ ಕಾರಣಕ್ಕೆ ಭಾರತ &ರಷ್ಯಾ ಸ್ನೇಹ ಕಂಡು ಬೇಸರ ಹೊರ ಹಾಕುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಷ್ಟೆಲ್ಲಾ ಇದ್ದರೂ ಎರಡೂ ದೇಶಗಳು ಅತ್ಯುತ್ತಮವಾಗಿ ಸಂಬಂಧ ಉಳಿಸಿಕೊಂಡು ಹೋಗುತ್ತಿವೆ, ಆದರೂ ದಿಢೀರ್ ಭಾರತ
ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹದು?
ಅಭ್ಯರ್ಥಿಗಳು 10ನೇ ತರಗತಿಯನ್ನು ಗಣಿತ, ಇಂಗ್ಲಿಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಪಾಸಾಗಿರಬೇಕು. ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಗಮನಿಸಿ. ಭಾರತ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಗ್ರಾಮೀಣ್ ಡಾಕ್ ಸೇವಾ ಜಿಡಿಎಸ್ ಪೋಸ್ಟ್ ಗೆ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಸುಮಾರು 28000+ ಹುದ್ದೆಗಳಿಗೆ ಆಗುತ್ತಿದೆ. ಭಾರತ ಅಂಚೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು 2026 ಜನವರಿ 31ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಫೆಬ್ರವರಿ 14ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 2026 ಜನವರಿ 01ರಂತೆ 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು. ಅಭ್ಯರ್ಥಿಗಳು ಭಾರತ ಅಂಚೆ ಜಿಡಿಎಸ್ ನೇಮಕಾತಿ 2026 ಗಾಗಿ ಸಂಪೂರ್ಣ ವಿವರಗಳನ್ನು ಕೆಳಗೆ ಪರಿಶೀಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://indiapost.gov.in/gdsonlineengagement ► ಪ್ರಮುಖ ದಿನಾಂಕಗಳು * ಅಧಿಸೂಚನೆ ದಿನಾಂಕ: 30 ಜನವರಿ 2026 * ಆನ್ಲೈನ್ ಅರ್ಜಿ ಆರಂಭ: 31 ಜನವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಫೆಬ್ರವರಿ 2026 * ಶುಲ್ಕ ಪಾವತಿಗೆ ಕೊನೆಯ ದಿನಾಂಕ: 16 ಫೆಬ್ರವರಿ 2026 * ತಿದ್ದುಪಡಿ ದಿನಾಂಕ: 18 - 19 ಫೆಬ್ರವರಿ 2026 * ಮೆರಿಟ್ ಪಟ್ಟಿ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು. * ವಿವರಗಳಿಗೆ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಜಿಡಿಎಸ್ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ► ಅರ್ಜಿ ಶುಲ್ಕ ಜನರಲ್/ಒಬಿಸಿ:100 ರೂ. ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಮಹಿಳೆಯರು: 0 ರೂ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ► ವಯೋಮಿತಿ * ಕನಿಷ್ಠ ವಯಸ್ಸು- 18 ವರ್ಷಗಳು * ಗರಿಷ್ಠ ವಯಸ್ಸು 40 ವರ್ಷಗಳು 2026 ಜನವರಿ 1ಕ್ಕೆ ಅನ್ವಯಿಸುವಂತೆ ವಯೋಮಿತಿ ನಿರ್ಧರಿಸಲಾಗುವುದು. ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ಗ್ರಾಮೀಣ್ ಡಾಕ್ ಸೇವಕ್ ಜಿಡಿಎಸ್ 2026 ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು. ► ಒಟ್ಟು ಹುದ್ದೆಗಳು ಸುಮಾರು 28000+ ಹುದ್ದೆಗಳು ► ಹುದ್ದೆಯ ಹೆಸರು ಗ್ರಾಮೀಣ್ ಡಾಕ್ ಸೇವಕ್ ಜಿಡಿಎಸ್ 2026 ಬ್ರಾಂಚ್ ಪೋಸ್ಟ್ಮಾಸ್ಟರ್ (ಬಿಪಿಎಂ), ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ಎಬಿಪಿಎಂ), ಡಾಕ್ ಸೇವಕ್ ► ವಿದ್ಯಾರ್ಹತೆ ಅಭ್ಯರ್ಥಿಗಳು 10ನೇ ತರತಿಯನ್ನು ಗಣಿತ, ಇಂಗ್ಲಿಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಪಾಸಾಗಿರಬೇಕು. ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಗಮನಿಸಿ. ► ಆಯ್ಕೆ ಪ್ರಕ್ರಿಯೆ ಮೆರಿಟ್ ಪಟ್ಟಿಯ ಆಧಾರದಲ್ಲಿ ಆಯ್ಕೆ ದಾಖಲೆ ಪರಿಶೀಲನೆ ಅಂತಿಮ ಆಯ್ಕೆ
ಮಂಗಳೂರು| ಭಾರತದ ಧಾರ್ಮಿಕ ಸಮ್ಮೇಳನ (CRI) “ಯುವಕರೊಂದಿಗೆ ಪವಿತ್ರ ಜೀವನ ದಿನ” ಕಾರ್ಯಾಗಾರ
ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ “ಯುವಕರೊಂದಿಗೆ ಪವಿತ್ರ ಜೀವನದ ದಿನ” ಎಂಬ ವಿಷಯದಲ್ಲಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವು ಅರ್ಥಪೂರ್ಣ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಅಲ್ಲಿ ಪವಿತ್ರ ಜೀವನದ ಸಂತೋಷವನ್ನು ಸಾಂಕೇತಿಕವಾಗಿ ಮೇಣದಬತ್ತಿಯೊಂದಿಗೆ ಜೋಡಿಸಲಾದ ಹೃದಯದ ಮೂಲಕ ವ್ಯಕ್ತಪಡಿಸಲಾ ಯಿತು. ಕಾರ್ಯಕ್ರಮವನ್ನು ಪ್ರಾಂತೀಯ ರೆವರೆಂಡ್ ಫಾದರ್ ಸಿಲ್ವೆಸ್ಟರ್ ಡಿ’ಸೋಜಾ ಉದ್ಘಾಟಿಸಿದರು. ನಂತರ ಪವಿತ್ರ ಯೂಕರಿಸ್ಟ್ ನಡೆಯಿತು. ರೆವರೆಂಡ್ ಫಾದರ್ ಸಿಲ್ವೆಸ್ಟರ್ ಡಿ’ಸೋಜಾ ಮುಖ್ಯ ಆಚರಣೆಯಲ್ಲಿ ಭಾಗವಹಿಸಿದರು. ತಮ್ಮ ಧರ್ಮೋಪದೇಶದಲ್ಲಿ, ಪವಿತ್ರೀಕರಣದ ಸಂತೋಷವನ್ನು ಅವರು ಎತ್ತಿ ತೋರಿಸಿದರು, ಪೋಪ್ ಫ್ರಾನ್ಸಿಸ್ ಅವರನ್ನು ಉಲ್ಲೇಖಿಸಿ, ಧಾರ್ಮಿಕತೆಯು ಸಂತೋಷದಾಯಕ, ಸಮೀಪಿಸಬಹುದಾದ ಮತ್ತು ಸಹಾನುಭೂತಿಯ ಸಾಕ್ಷಿಗಳಾಗಿರಬೇಕು, ವಿಶೇಷವಾಗಿ ಯುವಕರಿಗೆ ಎಂದು ಹೇಳಿದರು. ಉಪಾಹಾರ ವಿರಾಮದ ನಂತರದ ಅಧಿವೇಶನವನ್ನು ಫಾದರ್ ಮೆಲ್ವಿನ್ ಪಿಂಟೊ ಎಸ್ಜೆ ನೇತೃತ್ವ ವಹಿಸಿದ್ದರು, ಇದರಲ್ಲಿ ಉತ್ಸಾಹಭರಿತ ಮತ್ತು ಉತ್ಕೃಷ್ಟವಾದ ಫಲಕ ಚರ್ಚೆ ನಡೆಯಿತು. ಯುವಕರು ತಮ್ಮ ಅಭಿಪ್ರಾಯಗಳು ಮತ್ತು ಕಾಳಜಿಗಳನ್ನು ಬಹಿರಂಗವಾಗಿ ಹಂಚಿಕೊಂಡರು, ಧಾರ್ಮಿಕತೆಯು ಹೆಚ್ಚು ಸುಲಭವಾಗಿ ಸಂಪರ್ಕಿಸಬಹು ದಾದ, ಪಾರದರ್ಶಕ, ಬೆಂಬಲ ನೀಡುವ ಮತ್ತು ಉತ್ತಮ ಕೇಳುಗರಾಗಿರಬೇಕು ಎಂಬ ಅಗತ್ಯವನ್ನು ಒತ್ತಿ ಹೇಳಿದರು. ಆಧುನಿಕ ಸವಾಲುಗಳ ನಡುವೆ ದೇವರ ಕರೆಯನ್ನು ಗ್ರಹಿಸುವಲ್ಲಿ ಗೌಪ್ಯತೆ, ಉತ್ತಮ ಸಂವಹನ, ನೈತಿಕ ಬೆಂಬಲ ಮತ್ತು ಮಾರ್ಗದರ್ಶನದ ಪ್ರಾಮುಖ್ಯತೆಯನ್ನು ಬಲವಾಗಿ ಎತ್ತಿ ತೋರಿಸಲಾಯಿತು. ಕೃತಜ್ಞತೆಯ ಸಂಕೇತವಾಗಿ, ಫಲಕ ಸದಸ್ಯರು, ಯುವ ಪ್ರತಿನಿಧಿಗಳು, ಸಿಆರ್ಐ ಕಾರ್ಯಕಾರಿ ಸಮಿತಿ ಸದಸ್ಯರು, ವಲಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಸ್ಮರಣಿಕೆಗಳನ್ನು ನೀಡಲಾಯಿತು. ಅಧ್ಯಕ್ಷರಾದ ರೆವರೆಂಡ್ ಫಾದರ್ ಡೊಮಿನಿಕ್ ವಾಸ್ ವಂದಿಸಿದರು. ಸುಮಾರು 650 ಪುರೋಹಿತರು ಮತ್ತು ಧಾರ್ಮಿಕರು, 120 ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜನರು ಮರೆತರೂ ಸರ್ಕಾರ ಎನ್ಪಿಆರ್ ಅನ್ನು ಮರೆತಿಲ್ಲ. ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿಯಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ (NPR) ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಿವಾಸಿಗಳ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಆರು ವರ್ಷಗಳ ಹಿಂದೆ CAA, NRC ಜೊತೆಗೆ NPR ವಿರುದ್ಧವೂ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆದಾಗ್ಯೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಾಗಿ ಅಧಿಸೂಚನೆ ಇನ್ನೂ ಬಂದಿಲ್ಲ. ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1 ರವಿವಾರ ಮಂಡಿಸಿದ 2026-27 ರ ಕೇಂದ್ರ ಬಜೆಟ್ ನಲ್ಲಿ ಎನ್ಪಿಆರ್ ಮತ್ತು 2027 ರ ಜನಗಣತಿಗೆ ರೂ. 6,000 ಕೋಟಿ ಅನುದಾನ ನೀಡಲಾಗಿದೆ. ಜನಗಣತಿ ನಿಯಮಗಳ ಅಡಿಯಲ್ಲಿ ಎನ್ಪಿಆರ್ ಅನ್ನು ಜನಗಣತಿಯಲ್ಲಿ ಮನೆಗಳ ಪಟ್ಟಿ ಹಂತದ ಪ್ರಕ್ರಿಯೆಯೊಂದಿಗೆ ನಡೆಸಲಾಗುವುದು. ಮನೆಗಳ ಪಟ್ಟಿ ಹಂತದಲ್ಲಿ ದೇಶದ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಕಟ್ಟಡಗಳು ಮತ್ತು ಮನೆಗಳು ಯಾವ ರೀತಿಯದ್ದು ಎಂಬುದನ್ನು ದಾಖಲಿಸಲಾಗುತ್ತದೆ. ಈ ವರ್ಷ ಎಪ್ರಿಲ್ 1 ರಿಂದ ಸೆಪ್ಟೆಂಬರ್ 30 ರ ನಡುವೆ ಮನೆಗಳ ಪಟ್ಟಿ ಹಂತವನ್ನು ಕೈಗೊಳ್ಳಲು ಸೂಚಿಸಲಾಗಿದೆ. ಈ ಅಧಿಸೂಚನೆಯಲ್ಲಿ NPR ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಜನಗಣತಿ, ಸಮೀಕ್ಷೆ ಮತ್ತು ಅಂಕಿಅಂಶಗಳು/ಭಾರತದ ರಿಜಿಸ್ಟ್ರಾರ್ ಜನರಲ್ (RGI) ಶೀರ್ಷಿಕೆಯಡಿಯಲ್ಲಿ, ಕೇಂದ್ರ ಬಜೆಟ್ 6,000 ಕೋಟಿ ರೂ. ಅನುದಾನ ನೀಡಲಾಗಿದೆ. ಅದರಲ್ಲಿ 218 ಕೋಟಿ ರೂ.ಗಳು ಬಂಡವಾಳ ವೆಚ್ಚವಾಗಿದೆ. ಬಜೆಟ್ ಈ ಅನುದಾನವನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಗೆ ನಿಬಂಧನೆಗಳು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಮತ್ತು ಜನಗಣತಿ, 2027 ರ ವೆಚ್ಚ ಸೇರಿದಂತೆ RGI ಯ ವಿವಿಧ ಯೋಜನೆಗಳು ಎಂದು ವಿವರಿಸುತ್ತದೆ. ಮೇಲೆ ಹೇಳಿದಂತೆ ದೇಶದ “ಸಾಮಾನ್ಯ ನಿವಾಸಿಗಳ” ಪಟ್ಟಿ ಎನ್ಪಿಆರ್. ಇದರಲ್ಲಿ ಪೋಷಕರು, ಕುಟುಂಬ (ಹೆಂಡತಿ ಮತ್ತು ಮಕ್ಕಳು), ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಮನೆಯ ಪ್ರಸ್ತುತ ವಿಳಾಸ ಮತ್ತು ಶಾಶ್ವತ ವಿಳಾಸ, ಉದ್ಯೋಗ ಮತ್ತು ಶೈಕ್ಷಣಿಕ ಅರ್ಹತೆಗಳ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಇದು ಸ್ವಯಂ ಘೋಷಣೆಯಾಗಿದ್ದು, ಇದರಲ್ಲಿ ಯಾವುದೇ ದಾಖಲೆಗಳ ಅಗತ್ಯವಿಲ್ಲ. 2019 ರಲ್ಲಿ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ನಂತರ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ನಡೆಸಲು ದಾರಿ ಮಾಡಿಕೊಡುತ್ತದೆ . ಅಲ್ಪಸಂಖ್ಯಾತರ ಪೌರತ್ವವನ್ನು ಕಸಿದುಕೊಳ್ಳಲು ಇದನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳು ತಮ್ಮ ತಮ್ಮ ವಿಧಾನಸಭೆಗಳಲ್ಲಿ ಎನ್ಪಿಆರ್ ಪ್ರಕ್ರಿಯೆಯನ್ನು ವಿರೋಧಿಸಿ ನಿರ್ಣಯಗಳನ್ನು ಅಂಗೀಕರಿಸಿದವು. ಆಮೇಲೆ ಕೇಂದ್ರ ಸರ್ಕಾರ ಈ ಪ್ರಕ್ರಿಯೆಯನ್ನು ಪಕ್ಕಕ್ಕಿರಿಸಿದ್ದರೂ NPR ಪ್ರಕ್ರಿಯೆಗೆ ಆಗ 3,941.35 ಕೋಟಿ ರೂ.ಗಳನ್ನು ಅನುಮೋದಿಸಿತ್ತು. ಎನ್ಪಿಆರ್ ಪ್ರಕ್ರಿಯೆ 2020 ರಲ್ಲಿ ಜನಗಣತಿಯ ಮನೆ ಪಟ್ಟಿ ಹಂತದ ಜೊತೆಗೆ ನಡೆಯಬೇಕಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಯಿತು. ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಎನ್ಪಿಆರ್ಗೆ ಹಂಚಿಕೆ ಮಾಡಿರುವ ಬಗ್ಗೆ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು, ಎನ್ಪಿಆರ್ ನಡೆಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಎನ್ಪಿಆರ್ ನಡೆಸಲು ಯಾವುದೇ ಅಧಿಸೂಚನೆ ಬಂದಿಲ್ಲ. 2020-21 ರಿಂದ ಹಿಂದಿನ ಬಜೆಟ್ಗಳಲ್ಲಿ ಮಾಡಲಾದ ಮೊತ್ತಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಸರ್ಕಾರವು ಎನ್ಪಿಆರ್ ನಡೆಸಲು ನಿರ್ಧರಿಸಿದಾಗ, ಅಲ್ಲಿ ಅದಕ್ಕಾಗಿ ನಿಧಿ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅನುದಾನ ನೀಡಲಾಗಿದೆ ಎಂದು ಹೇಳಿರುವುದಾಗಿ ʼಇಂಡಿಯನ್ ಎಕ್ಸ್ ಪ್ರೆಸ್ʼ ವರದಿ ಮಾಡಿದೆ. ಕಾನೂನಿನಲ್ಲಿ ಏನು ಹೇಳಲಾಗಿದೆ? NPR ಎಂಬುದು ರಾಷ್ಟ್ರೀಯ ನಾಗರಿಕರ ನೋಂದಣಿಗೆ ಅಗತ್ಯವಿರುವ ಮೊದಲ ಹೆಜ್ಜೆಯಾಗಿದ್ದು, ಕಾನೂನಿನಲ್ಲಿಯೂ ಅದನ್ನೇ ಹೇಳಲಾಗಿದೆ. ಎನ್ಪಿಆರ್ ಅನ್ನು ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು, 2003 ರಿಂದ ನಿಯಂತ್ರಿಸಲಾಗುತ್ತದೆ. ನಿಯಮಗಳನ್ನು 1955 ರ ಪೌರತ್ವ ಕಾಯ್ದೆಯ ಸೆಕ್ಷನ್ 18 ರ ಉಪವಿಭಾಗಗಳು (1) ಮತ್ತು (3) ರ ಅಡಿಯಲ್ಲಿ ರೂಪಿಸಲಾಗಿದೆ. ಎನ್ಆರ್ ಸಿಗೆ ಅವಕಾಶ ನೀಡುವ ನಿಯಮ 3 ಮತ್ತು ಉಪ-ನಿಯಮ (4) ರ ಪ್ರಕಾರ, ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಹೊರಡಿಸಲಾದ ಆದೇಶದ ಮೂಲಕ, ಸಾಮಾನ್ಯವಾಗಿ ಸ್ಥಳೀಯ ನೋಂದಣಿದಾರರ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಜನಸಂಖ್ಯಾ ನೋಂದಣಿಯನ್ನು ಸಿದ್ಧಪಡಿಸುವ ದಿನಾಂಕವನ್ನು ನಿರ್ಧರಿಸಬಹುದು. ನಿಯಮದ ಉಪ-ನಿಯಮ (5) “ಭಾರತೀಯ ನಾಗರಿಕರ ಸ್ಥಳೀಯ ನೋಂದಣಿಯು ಜನಸಂಖ್ಯಾ ನೋಂದಣಿಯಿಂದ ಸರಿಯಾದ ಪರಿಶೀಲನೆಯ ನಂತರ ವ್ಯಕ್ತಿಗಳ ವಿವರಗಳನ್ನು ಹೊಂದಿರಬೇಕು ಎಂದು ಹೇಳುತ್ತದೆ. ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿಯ ಸಿದ್ಧತೆ ಎಂಬ ಶೀರ್ಷಿಕೆಯ ನಿಯಮ 4 ರ ಅಡಿಯಲ್ಲಿ, ಉಪ-ನಿಯಮ 4 ಹೀಗೆ ಹೇಳುತ್ತದೆ- ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ, ಪೌರತ್ವ ಸಂದೇಹಾಸ್ಪದವಾಗಿರುವ ವ್ಯಕ್ತಿಗಳ ವಿವರಗಳನ್ನು ಸ್ಥಳೀಯ ನೋಂದಣಿದಾರರು ಹೆಚ್ಚಿನ ವಿಚಾರಣೆಗಾಗಿ ಜನಸಂಖ್ಯಾ ನೋಂದಣಿಯಲ್ಲಿ ಸೂಕ್ತ ಟಿಪ್ಪಣಿಯೊಂದಿಗೆ ನಮೂದಿಸಬೇಕು. ಸಂದೇಹಾಸ್ಪದ ಪೌರತ್ವದ ಸಂದರ್ಭದಲ್ಲಿ, ಪರಿಶೀಲನಾ ಪ್ರಕ್ರಿಯೆ ಮುಗಿದ ತಕ್ಷಣ ವ್ಯಕ್ತಿ ಅಥವಾ ಕುಟುಂಬಕ್ಕೆ ನಿರ್ದಿಷ್ಟಪಡಿಸಿದ ಫಾರ್ಮ ನಲ್ಲಿ ತಿಳಿಸಬೇಕು. ನಿಯಮ 7 ರ ಅಡಿಯಲ್ಲಿ, ಕುಟುಂಬದ ಮುಖ್ಯಸ್ಥರು ಎನ್ಪಿಆರ್ ಪ್ರಕ್ರಿಯೆಯ ಸಮಯದಲ್ಲಿ ಗಣತಿದಾರರಿಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು. ಮಾಹಿತಿ ನೀಡಲು ವಿಫಲವಾದರೆ ಅವರಿಗೆ (ನಿಯಮ 17 ರ ಅಡಿಯಲ್ಲಿ) 1,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. 2011 ರ ಜನಗಣತಿಯ ಮನೆ ಪಟ್ಟಿ ಹಂತದ ಜೊತೆಗೆ ಎನ್ಪಿಆರ್ಗಾಗಿ ಡೇಟಾವನ್ನು ಮೊದಲು 2010 ರಲ್ಲಿ ಸಂಗ್ರಹಿಸಲಾಯಿತು. 2015 ರಲ್ಲಿ, ಮನೆ-ಮನೆ ಸಮೀಕ್ಷೆಯಲ್ಲಿ ಈ ಡೇಟಾವನ್ನು ಮತ್ತಷ್ಟು ನವೀಕರಿಸಲಾಯಿತು. 2016 ರಲ್ಲಿ, ಮೋದಿ ಸರ್ಕಾರವು ಕಲ್ಯಾಣ ಸವಲತ್ತುಗಳನ್ನು ನೀಡಲು ಆಧಾರ್ ಅನ್ನು ಪ್ರಮುಖ ಮಾರ್ಗವಾಗಿ ಬಳಸಲು ನಿರ್ಧರಿಸಿತು. ಎಲ್ಲದಕ್ಕೂ ಆಧಾರ್ ಸಂಖ್ಯೆಯನ್ನೇ ಆಧಾರವಾಗಿರಿಸಿದ ಕಾರಣ ಎನ್ಪಿಆರ್ ಗೆ ನೀಡುತ್ತಿದ್ದ ಆದ್ಯತೆಯೂ ಕಡಿಮೆ ಆಯಿತು. ಆಗಸ್ಟ್ 3, 2019 ರಂದು ಅಧಿಸೂಚನೆಯ ಮೂಲಕ, ಭಾರತದ ರಿಜಿಸ್ಟ್ರಾರ್ ಜನರಲ್ (RGI) ಅದನ್ನು ಪುನರುಜ್ಜೀವನಗೊಳಿಸಿದರು. RGI ಈಗಾಗಲೇ ಎನ್ಪಿಆರ್ ಪ್ರೊಫಾರ್ಮಾವನ್ನು ಸಿದ್ಧಪಡಿಸಿದ್ದು 2015 ರ ದತ್ತಾಂಶದ ಡಿಜಿಟಲೀಕರಣ ಪೂರ್ಣಗೊಂಡಿದೆ. ►ಪ್ರತಿಭಟನೆಗಳು ಸಿಎಎ, ಪ್ರಸ್ತಾವಿತ ರಾಷ್ಟ್ರವ್ಯಾಪಿ ಎನ್ಆರ್ಸಿ ಮತ್ತು ಅಸ್ಸಾಂನಲ್ಲಿ 19 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಟ್ಟ ಎನ್ಆರ್ಸಿ ಪ್ರಕ್ರಿಯೆಯ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆ ನಡೆದಿತ್ತು. ಇದು ದೇಶದಲ್ಲಿ ಪೌರತ್ವದ ಕಲ್ಪನೆಯ ಸುತ್ತಲಿನ ಆತಂಕವನ್ನು ಹೆಚ್ಚಿಸಿತು. ಆ ಸಮಯದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇ ಪದೇ ರಾಷ್ಟ್ರವ್ಯಾಪಿ ಎನ್ಆರ್ ಸಿ ಇರುತ್ತದೆ ಎಂದು ಹೇಳುತ್ತಿದ್ದರು. ಸಿಎಎ ಮೊದಲು ಬಂದು ನಂತರ ಎನ್ಆರ್ಸಿ ಜಾರಿಗೆ ಬರುವ ಕ್ರೊನೋಲಜಿಯನ್ನು ಅವರು ವಿವರಿಸಲು ಪ್ರಯತ್ನಿಸಿದರು. ಆದಾಗ್ಯೂ, ಸಿಎಎ ವಿರುದ್ಧದ ಪ್ರತಿಭಟನೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 2019 ರಲ್ಲಿ ಸರ್ಕಾರವು ಎನ್ಆರ್ಸಿ ನಡೆಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು.
ಇಷ್ಟೆಲ್ಲಾ ಆಗಿರುವಾಗ ಟಿ20 ವಿಶ್ವಕಪ್ ಆಡೋ ರಿಸ್ಕ್ ಬೇಕಾ?: ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಮಾರ್ಮಿಕ ಹೇಳಿಕೆ
Pat Cummins Injury- ಟಿ20 ಕ್ರಿಕೆಟ್ ಗಾಗಿ ಟೆಸ್ಟ್ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದ ಬಹಳಷ್ಟು ಮಹಾನುಭಾವರಿದ್ದಾರೆ. ಅದೇ ಟೆಸ್ಟ್ ಗಾಗಿ ಟಿ20 ತೊರೆದವರು ಬಹಳ ಕಡಿಮೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇದೀಗ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಗಳು ಮುಖ್ಯವಾಗಿರುವುದರಿಂದ ಅವರು ಇದೀಗ ಟಿ20 ವಿಶ್ವಕಪ್ ನಲ್ಲಿ ಆಡುವ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ. ಕಮಿನ್ಸ್ ಅನುಪಸ್ಥಿತಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾವು ಬೆನ್ ಡ್ವಾರ್ಶುಯಿಸ್ ಅವರನ್ನು ಆಯ್ಕೆ ಮಾಡಿದೆ.
ಸಿದ್ದಾಪುರ| ವಿವಾಹಿತೆಯ ಜೊತೆ ಜ್ಯೋತಿಷಿ ಅಕ್ರಮ ಸಂಬಂಧ ಆರೋಪ: ಪ್ರಶ್ನಿಸಿದ್ದಕ್ಕೆ ತಂಡದಿಂದ ಹಲ್ಲೆ; ಓರ್ವ ಮೃತ್ಯು
ಜ್ಯೋತಿಷಿ ಕಮಲಾಕರ ಭಟ್ ಸಹಿತ ಏಳು ಮಂದಿ ಆರೋಪಿಗಳ ಬಂಧನ
ಯುಗಾದಿಯ ಸಂಭ್ರಮದ ನಡುವೆ ಬಾಕ್ಸ್ ಆಫೀಸ್ ನಲ್ಲಿ ಯಶ್ vs ರಣವೀರ್ ಸಿಂಗ್!
‘ಧುರಂಧರ್’ ಸಿನಿಮಾ ಬಿಡುಗಡೆಯಾಗುವ ದಿನವೇ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ದಿಗ್ಗಜ ಸಿನಿಮಾಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಬಹು ನಿರೀಕ್ಷಿತ ಸೀಕ್ವೆಲ್ ನಿಂದಾಗಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಡುವೆ ದೊಡ್ಡ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಟೀಸರ್ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಸಂದರ್ಭದಲ್ಲಿ ಮಾರ್ಚ್ 19ರಂದೇ ಬಿಡುಗಡೆಯಾಗುವ ಸಿನಿಮಾ ‘ಧುರಂಧರ್: ದಿ ರಿವೆಂಜ್’ ಟೀಸರ್ ಕೂಡ ಬಿಡುಗಡೆಯಾಗಿದೆ. ಧುರಂಧರ್ ಸೀಕ್ವೆಲ್ ಟೀಸರ್ ಬಿಡುಗಡೆ ಹೊಸ ದಾಖಲೆ ಬರೆದ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ ಟೀಸರ್ ಇಂದು ಬಿಡುಗಡೆಯಾಗಿದೆ. ಮೊದಲ ಭಾಗದ ಯಶಸ್ಸಿನ ಕಾರಣದಿಂದ ಎರಡನೇ ಭಾಗದ ಯಶಸ್ಸಿನ ನಿರೀಕ್ಷೆಗಳನ್ನು ಮೂಡಿಸಿದೆ. ಆದರೆ ವಿಶೇಷವೆಂದರೆ ಈ ಸೀಕ್ವೆಲ್ ಸಿನಿಮಾ ಬಿಡುಗಡೆಯಾಗುವ ದಿನವೇ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ಸಿನಿಮಾಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಬಹು ನಿರೀಕ್ಷಿತ ಸೀಕ್ವೆಲ್ನಿಂದಾಗಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಡುವೆ ದೊಡ್ಡ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಯುಗಾದಿಯಂದು ಬಿಡುಗಡೆಯಾಗುವ ‘ಟಾಕ್ಸಿಕ್’ ಇತ್ತ ‘ಟ್ಯಾಕ್ಸಿಕ್’ ಸಿನಿಮಾದಲ್ಲಿ ಯಶ್ ನಾಯಕರಾಗಿ ನಟಿಸಿದ್ದು, ಮಹಿಳಾ ನಟಿಯರ ಸಾಲೇ ಇದೆ. ಚಿತ್ರದಲ್ಲಿ ಗೀತು ಮೋಹನ್ ದಾಸ್ ನಿರ್ದೇಶನವಿದೆ. ಕಿಯಾರಾ ಆಡ್ವಾಣಿ, ನಯನತಾರ, ಹುಮಾ ಖುರೇಶಿ, ತಾರಾ ಸುತೈರಾ, ರುಕ್ಮಿಣಿ ವಸಂತ್ ಮೊದಲಾದವರು ಸಿನಿಮಾದಲ್ಲಿ ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಲ್ಲಿ ಚಿತ್ರೀಕರಿಸಲಾಗಿದ್ದು, ನಂತರ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗಿದೆ. 2026 ಮಾರ್ಚ್ 19ರಂದು ‘ಟ್ಯಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಆದಿತ್ಯ ಧರ್ ನಿರ್ದೇಶನದ “ಧುರಂಧರ್: ದಿ ರಿವೆಂಜ್’” ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ದಿಗ್ಗಜರ ಸಿನಿಮಾಗಳು ಒಂದೇ ದಿನ ʼಕ್ಲ್ಯಾಷ್ʼ ಆಗಲಿದೆ. ಅಭೂತಪೂರ್ವ ಗಳಿಕೆಯ ದಾಖಲೆ 2025 ಡಿಸೆಂಬರ್ 5ರಂದು ಬಿಡುಗಡೆಯಾದ ‘ಧುರಂಧರ್’ ಮೊದಲ ಭಾಗವು 56 ದಿನಗಳಲ್ಲಿ ವಿಶ್ವಾದ್ಯಂತ 1,347 ಕೋಟಿ ರೂ. ಮೀರಿ ಗಳಿಕೆ ಮಾಡಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕರಾಗಿ ನಟಿಸಿದ್ದು, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಆರ್ ಮಾಧವನ್ ಸೇರಿದಂತೆ ಖ್ಯಾತ ನಟರು ನಟಿಸಿದ್ದರು. ಸದ್ಯ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿದ್ದು, ಎರಡನೇ ಭಾಗದ ಟೀಸರ್ ಬಿಡುಗಡೆಯಾಗಿದೆ. ಸೀಕ್ವೆಲ್ನಲ್ಲಿ ನಿರ್ದೇಶಕ ಆದಿತ್ಯ ಧರ್ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಈ ಬಾರಿ ಡಿಜಿಟಲ್ ಹಕ್ಕುಗಳನ್ನು ‘ಜಿಯೋ ಹಾಟ್ಸ್ಟಾರ್’ ಖರೀದಿಸಿದೆ. ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟು ವಾರಗಳ ನಂತರ 2026 ಮೇ 16ರಂದು ಒಟಿಟಿಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಭಾರತವನ್ನು ಹೆಲಿಕಾಪ್ಟರ್ ಹಬ್ ಆಗಿಸುವ ಗುರಿ: ಅದಾನಿ ಡಿಫೆನ್ಸ್–ಲಿಯೋನಾರ್ಡೊ ನಡುವೆ ಮಹತ್ವದ ಒಪ್ಪಂದ
ನವದೆಹಲಿ: ಭಾರತದ ರಕ್ಷಣಾ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ, ಅದಾನಿ ಡಿಫೆನ್ಸ್ &ಏರೋಸ್ಪೇಸ್ ಮತ್ತು ಜಾಗತಿಕ ಏರೋಸ್ಪೇಸ್ ದೈತ್ಯ ಸಂಸ್ಥೆ ಲಿಯೋನಾರ್ಡೊ (Leonardo) ತಂತ್ರಾತ್ಮಕ ಸಹಭಾಗಿತ್ವಕ್ಕೆ ಮುಂದಾಗಿವೆ. ಭಾರತದಲ್ಲೇ ಸಂಪೂರ್ಣ ಹೆಲಿಕಾಪ್ಟರ್ ಉತ್ಪಾದನೆಯ ಉದ್ದೇಶದೊಂದಿಗೆ ಎರಡೂ ಕಂಪನಿಗಳು ಒಪ್ಪಂದ ಪತ್ರಕ್ಕೆ ಸಹಿ ಹಾಕಿವೆ. ಭಾರತೀಯ ಸಶಸ್ತ್ರ ಪಡೆಗಳ ಹೆಚ್ಚುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ಭಾರತದಲ್ಲಿ
ಸದನದಲ್ಲಿ ಅಬಕಾರಿ ಹಗರಣ ಕಿಕ್! ಆರ್ ಬಿ ತಿಮ್ಮಾಪೂರ ರಾಜೀನಾಮೆಗೆ ಬಿಗಿಪಟ್ಟು
ಅಬಕಾರಿ ಇಲಾಖೆಯ ಹಗರಣ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ವಿಪಕ್ಷಗಳು ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿದವು, ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ತನಿಖೆ ಪೂರ್ಣಗೊಳ್ಳುವವರೆಗೂ ಸಚಿವರು ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದರು.
10ನೇ ತರಗತಿ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆ: ಸಂತೋಷ್ಕುಮಾರ್ ಎಲ್. ಎಂ ಬರಹ
10ನೇ ತರಗತಿ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆ ಆಗಿರುವ ಬಗ್ಗೆ ಹವ್ಯಾಸಿ ಬರಹಗಾರ ಸಂತೋಷ್ಕುಮಾರ್ ಎಲ್.ಎಂ ಅವರ ಬರಹ ಇಲ್ಲಿದೆ. 10ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳಿಗೆ ಕನ್ನಡ ಪರೀಕ್ಷೆ ಇದೆ. ಹಾಗಾಗಿ ಈ ಪಾಠ ಅರ್ಥವಾಗುತ್ತಿಲ್ಲ ಅಂತ ನನ್ನ ಹತ್ತಿರ ಬಂದಳು. ಇದೇ ಮೊದಲ ಬಾರಿಗೆ ಆ ಪಾಠವನ್ನು ಓದಲು ಶುರುವಿಟ್ಟುಕೊಂಡ ನನಗೆ ತಲೆ ಕೂದಲನ್ನು
ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ
ಬೆಂಗಳೂರು : ವಿರೋಧ ಪಕ್ಷಗಳ ಗದ್ದಲದ ಮಧ್ಯೆ ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಈ ಹಿಂದಿನಂತೆ ಅದರ ಮೂಲ ಸ್ವರೂಪದಲ್ಲಿಯೇ ಮರು ಸ್ಥಾಪಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಂಡಿಸಲಾಯಿತು.
Fake SSLC Question Paper : ಇನ್ಸ್ಟಾಗ್ರಾಮ್ನಲ್ಲಿ ನಕಲಿ ಪ್ರಶ್ನೆಪತ್ರಿಕೆ ಹರಿಬಿಟ್ಟ ಖದೀಮರ ವಿರುದ್ಧ ಎಫ್ಐಆರ್
ಬೆಂಗಳೂರು: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆತಂಕವನ್ನೇ ಬಂಡವಾಳವಾಗಿಸಿಕೊಂಡು ಹಣ ಗಳಿಸಲು ಯತ್ನಿಸುವ ಜಾಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಇದೀಗ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹರಿಬಿಟ್ಟ ಎರಡು ಖಾತೆಗಳ ವಿರುದ್ಧ ಪೊಲೀಸ್ ತನಿಖೆ ಚುರುಕುಗೊಂಡಿದೆ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿ, ಅವರಿಂದ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಶಾಲಾ ಶಿಕ್ಷಣ
Russia Military: 450 ಡ್ರೋನ್ ಮತ್ತು 70 ಕ್ಷಿಪಣಿ ಹಾರಿಸಿದ ರಷ್ಯಾ ಸೇನೆ, ಶಾಂತಿ ಮಾತುಕತೆಗೂ ಮೊದಲೇ ಆಘಾತ
ರಷ್ಯಾ ಮತ್ತು ಉಕ್ರೇನ್ ನಡುವೆ ಸಾಧ್ಯವಾದಷ್ಟು ಬೇಗ ಮಾತುಕತೆ ನಡೆಸಿ, ಯುದ್ಧವನ್ನ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡಬೇಕು ಎಂದು ಅಮೆರಿಕ ಕಾಯುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾ ಒದ್ದಾಡುತ್ತಿದ್ದಾರೆ. ಒಂದು ಕಡೆ ಕೊನೇ ಹಂತಕ್ಕೆ ಬರುತ್ತಿರುವ ಶಾಂತಿ ಒಪ್ಪಂದ ನಂತರ ನಿಂತು ಹೋಗುತ್ತಿದೆ. ಹೀಗಾಗಿ ಹೇಗಾದರು ಮಾಡಿ ಈ
ಅಕ್ರಮ ಸಂಬಂಧ ಗುಟ್ಟು ರಟ್ಟಾಗಿ ಕೊಲೆ: ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಬಂಧನ! ಉತ್ತರ ಕನ್ನಡದಲ್ಲಿ ಘಟನೆ
ಉತ್ತರ ಕನ್ನಡದಲ್ಲಿ ಅನೈತಿಕ ಸಂಬಂಧದ ಗಲಾಟೆ ಕೊಲೆಗೆ ಕಾರಣವಾಗಿದೆ. ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ನಡೆದ ಗಲಾಟೆಯಲ್ಲಿ ವಸಂತ್ ನಾಯ್ಕ್ ಎಂಬುವರು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಚಿಕ್ಕಬಳ್ಳಾಪುರ: ಕೋಲಾರ ಚಿನ್ನದ ಗಣಿಯಿಂದ (ಕೆಜಿಎಫ್) ಒಂದು ಕಾಲದಲ್ಲಿ ಅಗಾಧವಾದ ಚಿನ್ನವನ್ನು ಹೊರತೆಗೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದೇ ಕೆಜಿಎಫ್ ಚಿನ್ನದ ಕುರಿತು ಹಿಟ್ ಸಿನಿಮಾ ಕೂಡ ಬಂದಿದೆ. ಇದೀಗ ಬೆಂಗಳೂರಿನ ಸಮೀಪದಲ್ಲೇ ಮತ್ತೊಂದು ಕೆಜಿಎಫ್ ಉದಯಿಸುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಇದಕ್ಕಾಗಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ಹೆಲಿಕಾಪ್ಟರ್ ಬಳಸಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ವಿಡಿಯೋಗಳು
ಕಾವೇರಿ 2.0: ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ! ಕೇವಲ 10 ನಿಮಿಷದಲ್ಲಿ ನೋಂದಣಿ ಪೂರ್ಣ! ನೋಂದಣಿ ಹೇಗೆ?
ಇನ್ನು ಮುಂದೆ ಆಸ್ತಿ ನೋಂದಣಿಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾಯುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ತಂತ್ರಾಂಶದ ಮೂಲಕ ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರಿಂದ ನೋಂದಣಿ ಪ್ರಕ್ರಿಯೆ ಕೇವಲ 10 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ. ಡಿಜಿಟಲ್ ದಾಖಲೆಗಳು ಲಭ್ಯವಾಗಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ.
ಕೆ-ಪಾಪ್ ಡಿಮನ್ ಹಂಟರ್ಸ್ನ 'ಗೋಲ್ಡನ್' ಹಾಡು 68ನೇ ಗ್ರ್ಯಾಮಿ ಪ್ರಶಸ್ತಿ ಪ್ರೀಮಿಯರ್ ಸಮಾರಂಭದಲ್ಲಿ 'ಬೆಸ್ಟ್ ಸಾಂಗ್ ರಿಟನ್ ಫಾರ್ ವಿಶ್ಯುಯಲ್ ಮೀಡಿಯಾ' ಪ್ರಶಸ್ತಿ ಪಡೆದು, ಕೆ-ಪಾಪ್ ಇಂಡಸ್ಟ್ರಿಯಿಂದ ಮೊದಲ ಗ್ರ್ಯಾಮಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಾಡು ಈಗಾಗಲೇ ಹಲವು ಜಾಗತಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಇದೀಗ ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದೆ.
ಧರ್ಮರಾಯಸ್ವಾಮಿ ದೇವಾಲಯದ ಚಿನ್ನದ ನೆಕ್ಲೆಸ್ ಕಳವು: ಮುಜರಾಯಿ ಇಲಾಖೆ ಅಧಿಕಾರಿ ಸಸ್ಪೆಂಡ್
ಐತಿಹಾಸಿಕ ಕರಗ ನಡೆಯುವ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನೆಕ್ಲೆಸ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ , ಆರೋಪ ಹೊತ್ತಿರುವ ಕೆ.ನಾಗರಾಜು ಅವರನ್ನು ಅಮಾನತುಗೊಳಿಸಲಾಗಿದೆ.
Raising Star Asia Cup 2026- ಪಾಕಿಸ್ತಾನದ ಯಾವುದೇ ನಿರ್ಧಾರವೂ ಸ್ಥಿರ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಂಡರ್ 19 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಆಡಿದೆ. ಇದೀಗ ಮಹಿಳಾ ರೈಸಿಂಗ್ ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಆಡಲಿದೆ. ಆದರೆ ಪುರುಷರ ಕ್ರಿಕೆಟ್ ತಂಡ ಮಾತ್ರ ಟಿ20 ವಿಶ್ವಕಪ್ ಅನ್ನು ಮಾತ್ರ ಬಹಿಷ್ಕರಿಸಿದೆ. ಪಾಕಿಸ್ತಾನದ ಈ ದ್ವಿಮುಖ ನೀತಿಗೆ ಏನನ್ನಬೇಕು ಎಂದು ನಗುತ್ತಿದೆ ಕ್ರಿಕೆಟ್ ಜಗತ್ತು.
ಉಡುಪಿ ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ನಿಧನ
ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ(66) ಸೋಮವಾರ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತ್ರಾಸಿ ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದ ರಾಜು ದೇವಾಡಿಗ, ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ, ಹೆಮ್ಮಾಡಿ ಪಂಚಗಂಗಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಅವರು, ದೇವಾಡಿಗ ಸಮಾಜ ಸೇವಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಅವರು ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಓವಧ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ ತ್ರಾಸಿಯ ಅವರ ಸ್ವಗೃಹದಲ್ಲಿ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿ, ನಂತರ ಮೃತ ದೇಹದ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಶಾಸಕ ಗುರುರಾಜ್ ಗಂಟಿಹೊಳೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ಸೇರಿದಂತೆ ಅನೇಕರು ರಾಜು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ರಾಹುಲ್ ಗಾಂಧಿ ಭಾಷಣ ವೇಳೆ ಸದನದಲ್ಲಿ ಗದ್ದಲ; ಸ್ಪೀಕರ್ ಕಡೆ ಪೇಪರ್ ಎಸೆದ 7 ಸಂಸದರ ಅಮಾನತು
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥರ ಆತ್ಮಕಥೆಯ ಉಲ್ಲೇಖ ಮಾಡುತ್ತಿದ್ದಂತೆ ಗದ್ದಲ ಉಂಟಾಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಸಭಾಧ್ಯಕ್ಷರು ಕಲಾಪವನ್ನು ಮುಂದೂಡಬೇಕಾಯಿತು. ಈ ಘಟನೆಯಿಂದಾಗಿ 7 ಸಂಸದರನ್ನು ಅಮಾನತುಗೊಳಿಸಲಾಗಿದೆ.
Budget Session| ಲೋಕಸಭೆಯಲ್ಲಿ ಗದ್ದಲ: ವಿಪಕ್ಷಗಳ 8 ಸಂಸದರನ್ನು ಅಮಾನತುಗೊಳಿಸಿದ ಸ್ಪೀಕರ್
ಹೊಸದಿಲ್ಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯ ಸ್ಪೀಕರ್ ಪೀಠದ ಕಡೆಗೆ ಕಾಗದಗಳನ್ನು ಎಸೆದು ಗದ್ದಲವನ್ನು ಸೃಷ್ಟಿಸಿದ ವಿಪಕ್ಷಗಳ 8 ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನದ ಮುಂದಿನ ಅವಧಿಗೆ ಅಮಾನತು ಮಾಡಿ ಆದೇಶಿಸಿದ್ದಾರೆ. ಲೋಕಸಭೆಯಲ್ಲಿನ ಗದ್ದಲ ಮತ್ತು ಪೀಠದ ಕಡೆಗೆ ಕಾಗದಗಳನ್ನು ಎಸೆದ ಘಟನೆಗೆ ಸಂಬಂಧಿಸಿದಂತೆ, ಸಂಸದ ಹಿಬಿ ಈಡನ್, ಅಮರಿಂದರ್ ಸಿಂಗ್, ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಕಿರಣ್ ಕುಮಾರ್ ರೆಡ್ಡಿ, ಎಸ್ ವೆಂಕಟೇಶ್ ಸೇರಿದಂತೆ 8 ವಿರೋಧ ಪಕ್ಷದ ಸಂಸದರನ್ನು ಈ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಪೀಠದ ಎದುರು ಕಾಗದಗಳನ್ನು ಎಸೆದ ವಿರೋಧ ಪಕ್ಷದ ಸಂಸದರ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಿರ್ಣಯ ಮಂಡಿಸಿದ್ದರು.
ಕಡೆಗೂ ಸಿಕ್ತು ಉದ್ಯಮಿ ಸಿಜೆ ರಾಯ್ ಡೆತ್ ನೋಟ್ - ಒಂಭತ್ತು ಪುಟಗಳ ಆ ಸುಸೈಡ್ ನೋಟ್ ನಲ್ಲೇನಿದೆ?
ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾನ್ಪಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಅವರ 9 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಕುಟುಂಬಸ್ಥರಿಗೆ ಕ್ಷಮೆಯಾಚಿಸಿ, ಹಣಕಾಸಿನ ವಿವರ ಹಾಗೂ ಉತ್ತರಾಧಿಕಾರಿಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಹಿಂದಿನ ನಂಬಿಕಸ್ಥರನ್ನೂ ಕೈಬಿಡಬಾರದೆಂದು ಸೂಚಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ʼಜನ ನಾಯಗನ್ʼ ವಿಳಂಬ | 100 ಕೋಟಿ ರೂ. ನಷ್ಟ ಎದುರಿಸುತ್ತಿರುವ ತಮಿಳು ಚಿತ್ರರಂಗ!
ಏನಿದು ತಮಿಳು ಚಿತ್ರರಂಗದ ಬಿಕ್ಕಟ್ಟು?
ದ್ವೇಷ ಭಾಷಣ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು
ಬೆಳ್ತಂಗಡಿ: ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಜಾರಿಯಾಗಿದ್ದ ಜಾಮೀನುರಹಿತ ವಾರೆಂಟ್ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಬಂಟ್ವಾಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ದ್ವೇಷ ಭಾಷಣ ಮಾಡಿದ ಆರೋಪದಡಿ ಬೆಳ್ತಂಗಡಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ, ಮಹೇಶ್ ಶೆಟ್ಟಿ ತಿಮರೋಡಿ ಅವರು ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯ ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಬಂಟ್ವಾಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ಪರವಾಗಿ ನ್ಯಾಯವಾದಿ ಸಿರಾಜುದ್ದೀನ್ ಜೋಗಿಬೆಟ್ಟು ವಾದ ಮಂಡಿಸಿದ್ದರು.
ಅಬಕಾರಿ ಗದ್ದಲದ ನಡುವೆ ಸದನದಲ್ಲಿ ಮನರೇಗಾ ನಿರ್ಣಯ: ಕೇಂದ್ರದ ನಡೆ ಸಂವಿಧಾನದ ಉಲ್ಲಂಘನೆ ಎಂದ ಸಿದ್ದರಾಮಯ್ಯ
ಅಬಕಾರಿ ಇಲಾಖೆ ಹಗರಣದ ಆರೋಪದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ 'ವಿಬಿ-ಗ್ರಾಮ್ ಜಿ' ಕಾಯ್ದೆಯ ವಿರುದ್ಧ ನಿರ್ಣಯ ಮಂಡಿಸಿದರು. ಇದು ಒಕ್ಕೂಟ ತತ್ವ, ಗ್ರಾಮೀಣ ಜನರ ಬದುಕಿನ ಹಕ್ಕು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಅದರ ಮೂಲ ಸ್ವರೂಪದಲ್ಲಿ ಮರುಸ್ಥಾಪಿಸಲು ಒತ್ತಾಯಿಸಿದರು. ಈ ಕುರಿತಂತೆ ಸಿದ್ದರಾಮಯ್ಯ ಮಂಡಿಸಿದ ನಿರ್ಣಯದಲ್ಲಿ ಪ್ರಮುಖ ಅಂಶಗಳ ಕುರಿತ ವರದಿ ಇಲ್ಲಿದೆ..
BAGALAKOTE | ಗೆಳೆಯನಿಗೆ ಮದ್ಯಪಾನ ಮಾಡಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಯುವಕ
ಬಾಗಲಕೋಟೆ: ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಸ್ನೇಹಿತನನ್ನೇ ಯುವಕನೋರ್ವ ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ಘಟನೆ ಬಾದಾಮಿ ತಾಲೂಕಿನ ಕಾಕನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಖಾನಾಪುರ ಎಸ್.ಕೆ. ಗ್ರಾಮದ ನಿವಾಸಿ ಸೋಮಶೇಖರ್ ಹನುಮಂತ ಕಿಳ್ಳಿಕ್ಯಾತರ (42) ಕೊಲೆಯಾದ ವ್ಯಕ್ತಿ. ಈತನ ಗೆಳೆಯ ಕಾಕನೂರು ನಿವಾಸಿ ಸಂಜಯ್ ಕಿಳ್ಳಿಕ್ಯಾತರ ಕೊಲೆ ಆರೋಪಿಯಾಗಿದ್ದಾನೆ. ಸೋಮಶೇಖರ್ ತನ್ನ ಪತ್ನಿ ಜೊತೆ ಸಲುಗೆ ಹೊಂದಿದ್ದಾನೆ ಎಂದು ಶಂಕಿಸಿ ಆರೋಪಿ ಸಂಜಯ್ ಈ ಕೃತ್ಯ ಎಸಗಿದ್ದಾನೆನ್ನಲಾಗಿದೆ. ಸೋಮಶೇಖರ್ ರನ್ನು ರವಿವಾರ ಅಪರಾಹ್ನ ಕಾಕನೂರು ಗ್ರಾಮದ ಹೊರವಲಯದಲ್ಲಿರುವ ಮಾವಿನ ತೋಟಕ್ಕೆ ಕರೆದೊಯ್ದ ಸಂಜಯ್ ಮದ್ಯಪಾನ ಮಾಡಿಸಿದ್ದಾನೆ. ಬಳಿಕ ಸೋಮಶೇಖರ್ ರ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರವಿವಾರದಿಂದ ಸೋಮಶೇಖರ್ ನಾಪತ್ತೆಯಾಗಿದ್ದು, ಶೋಧ ನಡೆಸಿದಾಗ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬಾದಾಮಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಆರೋಪಿ ಸಂಜಯ್ ನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
DAVANAGERE | ಆಸ್ತಿ ವಿವಾದ: ವೃದ್ಧ ಸಹೋದರರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ
ದಾವಣಗೆರೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವೃದ್ಧ ಸಹೋದರರಿಬ್ಬರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ನೀಲಪ್ಪ (65) ಎಂದು ಗುರುತಿಸಲಾಗಿದೆ. ಅವರ ಅಣ್ಣ ಚಂದ್ರಪ್ಪ (68) ಕೊಲೆ ಆರೋಪಿಯಾಗಿದ್ದಾನೆ. ಆಸ್ತಿ ವಿಚಾರವಾಗಿ ಇವರಿಬ್ಬರ ನಡುವೆ ಅಡಿಕೆ ತೋಟದಲ್ಲಿ ಸೋಮವಾರ ಮಾತಿನ ಚಕಮಕಿ ನಡೆದಿದೆ. ಬಳಿಕ ಈ ಗಲಾಟೆ ತೀವ್ರ ಸ್ವರೂಪ ಪಡೆದಿದ್ದು, ಆರೋಪಿ ಚಂದ್ರಪ್ಪ ಮಚ್ಚಿನಿಂದ ನೀಲಪ್ಪರ ಮೇಲೆ ಹಲ್ಲೆ ನಡೆಸಿದ್ದಾನೆನ್ನಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ನೀಲಪ್ಪ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ಪಡೆದ ಮಾಯಕೊಂಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಚಂದ್ರಪ್ಪನನ್ನು ಬಂಧಿಸಿದ್ದಾರೆ.
ಸಂಸತ್ತಿನಲ್ಲಿ ಸತ್ಯ ಎದುರಿಸಲು ‘56 ಇಂಚಿನ ಎದೆ’ ಸಾಲದು: ಬಿ.ಕೆ. ಹರಿಪ್ರಸಾದ್
ನರವಣೆ ಪುಸ್ತಕದ ಆಧಾರದಲ್ಲಿ ಚೀನಾ ಅತಿಕ್ರಮಣ ಕುರಿತ ಚರ್ಚೆಗೆ ಅವಕಾಶ ನೀಡದಿರುವುದು ಕೇಂದ್ರ ಸರ್ಕಾರದ ಹೇಡಿತನ
ಕಾವ್ಯಕ್ಕೆ ಪ್ರತಿಭಟಿಸುವ ನಾಲಿಗೆಯೂ ಉಂಟು!
ಕನ್ನಡ ಸಾಹಿತ್ಯದ ಸಮಕಾಲೀನ ವಲಯದಲ್ಲಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಹೆಸರು ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಅವರ ಕಾವ್ಯಯಾನವು ಕೇವಲ ಪದಗಳ ಸಂಯೋಜನೆಯಲ್ಲ; ಅದು ಬದುಕಿನ ತೀವ್ರ ಅನುಭವಗಳು, ಸಾಮಾಜಿಕ ಹೊಣೆಗಾರಿಕೆ, ತಾತ್ವಿಕ ಚಿಂತನೆ ಮತ್ತು ಮಾನವೀಯ ಸಂವೇದನೆಯ ಸಮನ್ವಯವಾಗಿದೆ. ದೀರ್ಘಕಾಲದ ಅಧ್ಯಯನ, ಬೋಧನೆ ಹಾಗೂ ಸಾಹಿತ್ಯಸಾಧನೆಯ ಮೂಲಕ ಅವರು ರೂಪಿಸಿಕೊಂಡ ಕಾವ್ಯಪ್ರಜ್ಞೆ, ಇಂದಿನ ಕನ್ನಡ ಕಾವ್ಯಧಾರೆಗೆ ಮಹತ್ವದ ಕೊಡುಗೆಯಾಗಿದೆ. ಪ್ರೊ. ಸಿದ್ಧರಾಮಯ್ಯ ಅವರ ಕವಿತೆಗಳು ಮೇಲ್ನೋಟಕ್ಕೆ ಸರಳವಾಗಿ ಕಾಣಿಸಿಕೊಂಡರೂ, ಅವುಗಳೊಳಗೆ ಅರ್ಥದ ಅನೇಕ ಪದರಗಳು ಅಡಗಿವೆ. ಪುರಾಣ, ಇತಿಹಾಸ, ತತ್ವ, ಸಮಕಾಲೀನ ಸಮಾಜ ಮತ್ತು ವೈಯಕ್ತಿಕ ಅನುಭವಗಳು ಅವರ ಕಾವ್ಯದಲ್ಲಿ ಸಹಜವಾಗಿ ಬೆರೆತು ಹೋಗಿವೆ. ಅವರು ಬಳಸುವ ಭಾಷೆ ಅಲಂಕಾರಪ್ರಿಯವಾಗಿಲ್ಲ; ಆದರೆ ಅತ್ಯಂತ ಶಕ್ತಿಯುತ, ನೇರ ಮತ್ತು ಹೃದಯಸ್ಪರ್ಶಿ. ಈ ಕಾರಣದಿಂದಲೇ ಅವರ ಕವಿತೆಗಳು ಓದುಗರ ಮನಸ್ಸಿನಲ್ಲಿ ತಕ್ಷಣ ಸ್ಪಂದನೆ ಹುಟ್ಟಿಸುತ್ತವೆ. ಸಿದ್ಧರಾಮಯ್ಯ ಅವರ ಕಾವ್ಯದ ಮುಖ್ಯ ಲಕ್ಷಣವೆಂದರೆ ಪ್ರಶ್ನಿಸುವ ಮನೋಭಾವ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಸಮಾನತೆ, ಜಾತಿ, ಮತದ ಹೆಸರಿನ ವಿಭಜನೆ, ಅಧಿಕಾರದ ಅಹಂಕಾರ, ಮೌಲ್ಯಗಳ ಕುಸಿತ ಇವೆಲ್ಲವನ್ನೂ ಅವರು ಕವಿತೆಯ ಮೂಲಕ ಧೈರ್ಯವಾಗಿ ಪ್ರಶ್ನಿಸುತ್ತಾರೆ. ಆದರೆ ಅವರ ಪ್ರಶ್ನೆಗಳು ಕಟುವಾಗಿಲ್ಲ; ಅವು ಮಾನವೀಯತೆಯ ನೆಲೆಯಿಂದ ಹೊರಹೊಮ್ಮುವ ಚಿಂತನೆಯ ಪ್ರಶ್ನೆಗಳು. ಇದೇ ಸಂದರ್ಭದಲ್ಲಿ ಪ್ರೀತಿ, ಸಹಾನುಭೂತಿ, ಸಂಬಂಧಗಳ ನಾಜೂಕು, ಆತ್ಮಪರಿಶೀಲನೆ, ಮೌನದ ತತ್ವಗಳೂ ಅವರ ಕಾವ್ಯದಲ್ಲಿ ಸಮಾನ ಮಹತ್ವವನ್ನು ಪಡೆಯುತ್ತವೆ. ಅಧ್ಯಾಪಕರಾಗಿ ಅವರು ಬೆಳೆಸಿದ ತಾರ್ಕಿಕ ದೃಷ್ಟಿ ಮತ್ತು ಸಂಶೋಧನಾತ್ಮಕ ಮನೋಭಾವ, ಅವರ ಕಾವ್ಯಕ್ಕೂ ಬಲ ತುಂಬಿದೆ. ಪುರಾಣಕಥೆಗಳು ಮತ್ತು ಸಾಂಸ್ಕೃತಿಕ ಸಂಕೇತಗಳನ್ನು ಅವರು ಪುನರ್ವ್ಯಾಖ್ಯಾನ ಮಾಡುವ ರೀತಿಯೂ ಗಮನಾರ್ಹ. ಪುರಾಣವು ಅವರಲ್ಲಿ ಭಕ್ತಿಯ ವಸ್ತುವಾಗಿಲ್ಲ; ಅದು ಮಾನವೀಯತೆಯನ್ನು ಅಳೆಯುವ ಒಂದು ತತ್ವೋಪಕರಣವಾಗಿದೆ. ಈ ದೃಷ್ಟಿಕೋನವು ಅವರ ಕಾವ್ಯವನ್ನು ಕೇವಲ ಭಾವನಾತ್ಮಕವಾಗಿರದೆ, ವಿಚಾರಪ್ರಧಾನವಾಗಿಯೂ ರೂಪಿಸುತ್ತದೆ. ಪ್ರೊ. ಸಿದ್ಧರಾಮಯ್ಯ ಅವರ ಕಾವ್ಯದಲ್ಲಿ ಮೊದಲಿಗೆ ಗಮನಸೆಳೆಯುವುದು ಅವರ ಭಾಷೆಯ ಸರಳತೆ ಮತ್ತು ತಾತ್ವಿಕ ಗಂಭೀರತೆ ನಡುವಿನ ಸಮತೋಲನ. ಉದಾಹರಣೆಗೆ, ‘ಹೇಳಲಾರೆ ಶುಭಾಶಯ’ ಕವಿತೆಯಲ್ಲಿ ಅವರು ಸಂಭ್ರಮದ ಆಚರಣೆಗಳ ಹಿಂದೆ ಅಡಗಿರುವ ಸಾಮಾಜಿಕ ವೈರುಧ್ಯಗಳನ್ನು ಪ್ರಶ್ನಿಸುತ್ತಾರೆ. ಇಲ್ಲಿ ‘ಶುಭಾಶಯ’ ಎಂಬ ಪದವು ಕೇವಲ ವೈಯಕ್ತಿಕ ಭಾವವಲ್ಲ; ಅದು ವ್ಯವಸ್ಥೆಯೊಡನೆ ಹೊಂದಾಣಿಕೆ ಮಾಡಿಕೊಂಡಿರುವ ಮೌನದ ಸಂಕೇತವಾಗುತ್ತದೆ. ಈ ಕವಿತೆ, ಸಮಾಜದಲ್ಲಿ ಅನ್ಯಾಯ ನಡೆಯುತ್ತಿದ್ದರೂ ಸಂಭ್ರಮಿಸುತ್ತಿರುವ ಮನಸ್ಥಿತಿಯ ಮೇಲಿನ ಸೂಕ್ಷ್ಮ ಟೀಕೆಯಾಗಿ ಕಾಣಿಸುತ್ತದೆ. ಇದೇ ರೀತಿಯಲ್ಲಿ ‘ಕನ್ಯಾದಾನ’ ಎಂಬ ಕವಿತೆ ಪುರಾಣಕಥೆಯನ್ನು ಆಧಾರವಾಗಿಟ್ಟುಕೊಂಡು, ಪಿತೃತ್ವಾಧಾರಿತ ಸಾಮಾಜಿಕ ವ್ಯವಸ್ಥೆಯನ್ನು ವಿಮರ್ಶಾತ್ಮಕವಾಗಿ ಅನಾವರಣಗೊಳಿಸುತ್ತದೆ. ಇಲ್ಲಿ ಪುರಾಣವು ಭಕ್ತಿಯ ವಸ್ತುವಾಗದೆ, ವಿಮರ್ಶೆಯ ಉಪಕರಣವಾಗುತ್ತದೆ. ಈ ವಿಧಾನವು ಆಧುನಿಕ ಕನ್ನಡ ಕಾವ್ಯದಲ್ಲಿ ಕಂಡುಬರುವ ಪುನರ್ವ್ಯಾಖ್ಯಾನಾತ್ಮಕ (reinterpretative) ಪ್ರವೃತ್ತಿಗೆ ಪ್ರಾತಿನಿಧ್ಯ ವಹಿಸುತ್ತದೆ. ಪುರಾಣದ ಪಾತ್ರಗಳು ಸಮಕಾಲೀನ ಪ್ರಶ್ನೆಗಳೊಂದಿಗೆ ಮುಖಾಮುಖಿಯಾಗುತ್ತವೆ; ಇದರಿಂದ ಕವಿತೆಯೂ ಇತಿಹಾಸಾತೀತವಾಗದೆ, ಸಮಕಾಲೀನವಾಗುತ್ತದೆ. ಪ್ರೊ. ಸಿದ್ಧರಾಮಯ್ಯ ಅವರ ಕಾವ್ಯದಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಮೌನ ಮತ್ತು ಪ್ರತಿರೋಧದ ಸಂಬಂಧ. ‘ನತ್ತು’ ಕವಿತೆಯಲ್ಲಿ ಕಾಣಿಸುವ ಮೌನವು ಶರಣಾಗತಿಯ ಸಂಕೇತವಲ್ಲ; ಅದು ಒಳಗೊಳ್ಳುವ, ಪ್ರಶ್ನಿಸುವ ಮತ್ತು ಪ್ರತಿರೋಧಿಸುವ ಶಕ್ತಿಯನ್ನು ಹೊತ್ತಿದೆ. ಈ ಮೌನವು ಶಂಕರಶಿಷ್ಯ ಪರಂಪರೆಯ ತಾತ್ವಿಕ ನೆಲೆಯನ್ನು ನೆನಪಿಸುತ್ತಲೇ, ಆಧುನಿಕ ಮಾನವನ ಅಂತರ್ದ್ವಂದ್ವವನ್ನೂ ಪ್ರತಿಬಿಂಬಿಸುತ್ತದೆ. ಇಲ್ಲಿ ಕವಿ ಧಾರ್ಮಿಕ ಸಂಕೇತವನ್ನು ಮಾನಸಿಕ ಮತ್ತು ತತ್ವಶಾಸ್ತ್ರೀಯ ಅನುಭವವಾಗಿ ಪರಿವರ್ತಿಸುತ್ತಾರೆ. ಸಾಮಾಜಿಕ ಜಾಗೃತಿಯ ದೃಷ್ಟಿಯಿಂದ ‘ನಮ್ಮ ಸಂಗಡ’ ಮತ್ತು ‘ಕನ್ನಡಿ’ ಮೊದಲಾದ ಕವಿತೆಗಳು ಗಮನಾರ್ಹವಾಗಿವೆ. ಕನ್ನಡಿಯಲ್ಲಿ ಕವಿ ವ್ಯಕ್ತಿಯ ಆತ್ಮಪರಿಶೀಲನೆಯನ್ನು ಸಮಾಜದ ಪ್ರತಿಬಿಂಬವಾಗಿ ರೂಪಿಸುತ್ತಾರೆ. ಕನ್ನಡಿ ಇಲ್ಲಿ ಕೇವಲ ವಸ್ತುವಲ್ಲ; ಅದು ಸತ್ಯವನ್ನು ಎದುರುಗಾಣಿಸುವ ತತ್ವವಾಗಿದೆ. ಈ ಕವಿತೆ ಓದುಗರನ್ನು ‘ನಾನು ಯಾರು?’ ಎಂಬ ಅಸ್ತಿತ್ವಾತ್ಮಕ ಪ್ರಶ್ನೆಯೊಂದಿಗೆ ಮುಖಾಮುಖಿಯಾಗಿಸುತ್ತದೆ. ಇನ್ನು ‘ವೃತ್ತಿ ಕಲ್ಚರ್’ ಹಾಗೂ ‘ಅಧಿಕಾರ’ ಕವಿತೆಗಳಲ್ಲಿ ಕಾಣಿಸುವ ವ್ಯಂಗ್ಯ, ಸಮಕಾಲೀನ ವ್ಯವಸ್ಥೆಗಳ ಮೇಲಿನ ಗಂಭೀರ ವಿಮರ್ಶೆಯಾಗಿದೆ. ಅಧಿಕಾರದ ಅಹಂಕಾರ, ನೈತಿಕ ಕುಸಿತ ಮತ್ತು ಮಾನವೀಯ ಮೌಲ್ಯಗಳ ಕ್ಷಯವನ್ನು ಕವಿ ನೇರವಾದ ಮತ್ತು ತತ್ವಬದ್ಧ ಭಾಷೆಯಲ್ಲಿ ಬರೆಯುತ್ತಾರೆ. ಈ ಕವಿತೆಗಳು ಮಾರ್ಕ್ಸೀಯ ಅಥವಾ ದಲಿತ ಸಂವೇದನೆಯ ನೇರ ಘೋಷಣೆಯಾಗದೆ, ಮಾನವೀಯ ನೈತಿಕತೆಯ ನೆಲೆಯಲ್ಲಿ ನಿಂತ ವಿಮರ್ಶೆಯಾಗಿ ಹೊರಹೊಮ್ಮುತ್ತವೆ. ಪ್ರೊ. ಸಿದ್ಧರಾಮಯ್ಯ ಅವರ ಕಾವ್ಯವು ಭಾವಪ್ರಧಾನವಾಗಿರುವಷ್ಟೇ ಅಲ್ಲ, ಕಾವ್ಯವಿಮರ್ಶೆಗೆ ಸಮೃದ್ಧ ಅವಕಾಶವನ್ನು ಒದಗಿಸುತ್ತದೆ. ಅವರ ಕವಿತೆಗಳಲ್ಲಿ ಕಾಣಿಸುವ ಪುರಾಣ, ತತ್ವ, ಸಮಾಜ ಮತ್ತು ವೈಯಕ್ತಿಕ ಅನುಭವಗಳ ಸಂಯೋಜನೆ, ಸಮಕಾಲೀನ ಕನ್ನಡ ಕಾವ್ಯವನ್ನು ಅರ್ಥಮಾಡಿಕೊಳ್ಳಲು ಒಂದು ಮಹತ್ವದ ಅಧ್ಯಯನ ಕ್ಷೇತ್ರವಾಗಿದೆ. ಅಧ್ಯಾಪಕರಾಗಿ ಅವರಿಗಿರುವ ಪಠ್ಯಜ್ಞಾನ ಮತ್ತು ವಿಮರ್ಶಾತ್ಮಕ ದೃಷ್ಟಿ, ಅವರ ಕಾವ್ಯದಲ್ಲಿ ಸಹಜವಾಗಿ ವ್ಯಕ್ತವಾಗಿದೆ. ಈ ಸಂಕಲನವು ಕೇವಲ ಕಾವ್ಯಾಸ್ವಾದನೆಗೆ ಮಾತ್ರವಲ್ಲ; ಸಾಹಿತ್ಯದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವಿಚಾರಪರ ಓದುಗರಿಗೆ ವಿಶ್ಲೇಷಣಾತ್ಮಕ ಪಠ್ಯವಾಗಿಯೂ ಉಪಯುಕ್ತವಾಗಿದೆ. ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಕಾವ್ಯಸಾಧನೆ, ಕನ್ನಡ ಸಾಹಿತ್ಯದಲ್ಲಿ ವಿಚಾರಪ್ರಧಾನ ಕಾವ್ಯದ ಶಕ್ತಿಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ‘ಹೇಳಲಾರೆ ಶುಭಾಶಯ’ ಸೇರಿದಂತೆ ಅವರ ಕವಿತಾಸಂಕಲನಗಳಲ್ಲಿ ಕಾಣಿಸುವ ಮೌನ, ವಿರೋಧ, ವ್ಯಂಗ್ಯ ಮತ್ತು ಆಂತರಿಕ ಸಂವಾದಗಳು ಓದುಗರನ್ನು ಸುಮ್ಮನೆ ಓದಿ ಮುಗಿಸುವ ಹಂತದಲ್ಲೇ ಬಿಡುವುದಿಲ್ಲ. ಅವು ಓದುಗರನ್ನು ಪ್ರಶ್ನೆ ಮಾಡುವಂತೆ, ಒಳಗೆ ನೋಡಿಕೊಳ್ಳುವಂತೆ ಮತ್ತು ಸಮಾಜದತ್ತ ಹೊಸ ದೃಷ್ಟಿಯಿಂದ ನೋಡುವಂತೆ ಪ್ರೇರೇಪಿಸುತ್ತವೆ. ಈ ಅರ್ಥದಲ್ಲಿ ಅವರ ಕಾವ್ಯ ಓದುಗರ ಪಾಲಿಗೆ ಒಂದು ಅನುಭವ, ಒಂದು ಚಿಂತನೆಯ ಪ್ರಯಾಣ. ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ಸಾಹಿತ್ಯವನ್ನು ಕೇವಲ ಸೌಂದರ್ಯದ ವಸ್ತುವೆಂದು ಕಾಣದೆ, ಸಮಾಜದೊಂದಿಗೆ ಸಂವಾದ ನಡೆಸುವ ಶಕ್ತಿಯುತ ಮಾಧ್ಯಮವೆಂದು ನಂಬಿದ ಕವಿ. ಅವರ ಈ ನಿಷ್ಠೆ, ಪ್ರಾಮಾಣಿಕತೆ ಮತ್ತು ನಿರಂತರ ಸೃಜನಶೀಲತೆ ಕನ್ನಡ ಸಾಹಿತ್ಯಕ್ಕೆ ದೀರ್ಘಕಾಲದ ಶಕ್ತಿಯಾಗಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಕೃತಿ ಕನ್ನಡ ಕಾವ್ಯವನ್ನು ಪ್ರೀತಿಸುವ ಎಲ್ಲ ಓದುಗರಿಗೂ, ವಿಶೇಷವಾಗಿ ವಿಚಾರಪರ ಕಾವ್ಯವನ್ನು ಆಸ್ವಾದಿಸುವವರಿಗೆ, ಅರ್ಥಪೂರ್ಣ ಸಂಗಾತಿಯಾಗಲಿದೆ ಎಂಬ ವಿಶ್ವಾಸವಿದೆ.
ಮೈಸೂರಿನ ಸೌಂದರ್ಯಕ್ಕೆ 'ಇಕಿಗಾಯ್ ಕೆಫೆ' ಮೆರುಗು : ಸಾಂಸ್ಕೃತಿಕ ನಗರದ ಲೇಟೆಸ್ಟ್ ಅಡ್ಡಾ
Food Fun And Laughter - Ikigai Cafe : ಸಾಂಸ್ಕೃತಿಕ ನಗರ ನಮ್ಮ ಹೆಮ್ಮೆಯ ಮೈಸೂರಿನಲ್ಲಿ ಹೊಸ ಕೆಫೆಯೊಂದು ಆರಂಭವಾಗಿದೆ. ಈ ರೆಸ್ಟೋರೆಂಟ್ ಹೆಸರು ಇಕಿಗಾಯ್ ಕೆಫೆ. ಇಕೆಗಾಯ್ ಎನ್ನುವುದು ಜಪಾನ್ ದೇಶದ ಭಾಷೆ. ಇದನ್ನು ಶುಭ ಸೂಚಕ ಪದ ಎಂದು ಆ ದೇಶದಲ್ಲಿ ಕರೆಯುವುದುಂಟು. ಮೈಸೂರಿಗರು ಈ ಕೆಫೆಗೊಮ್ಮೆ ಭೇಟಿ ಕೊಡಿ
Gold Price: ಚಿನ್ನದ ಬೆಲೆ 1,50,000 ರೂಪಾಯಿಗೆ ಕುಸಿತ, ಇನ್ನು ಎಷ್ಟು ಕಡಿಮೆ ಆಗಬಹುದು ಬಂಗಾರ?
ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ, ಚಿನ್ನದ ಬೆಲೆಯಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಆಗುತ್ತಿರುವ ಹಿನ್ನೆಲೆ ಆಭರಣ ಪ್ರಿಯರು ಕೂಡ ಖುಷಿಯಾಗಿದ್ದಾರೆ. ಅಲ್ಲದೆ, ಚಿನ್ನ ಖರೀದಿಗೆ ಪ್ಲಾನ್ ಕೂಡ ಮಾಡುತ್ತಿದ್ದಾರೆ. ಚಿನ್ನದ ರೀತಿಯಲ್ಲೇ ಬೆಳ್ಳಿ ಬೆಲೆ ಕೂಡ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ಕುಸಿದು ಬೀಳುತ್ತಿದೆ. ಮದುವೆ ಸೇರಿದಂತೆ ಹಲವು ಶುಭಕಾರ್ಯ ಬರುವ
Uttar Pradesh | ಪೈಪ್ ಒಡೆದ ಆರೋಪದಲ್ಲಿ ಶಾಲೆಯಲ್ಲಿ ದಲಿತ ಬಾಲಕನ ಮೇಲೆ ದೌರ್ಜನ್ಯ: ಪ್ರಕರಣ ದಾಖಲು
ಆಗ್ರಾ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಪೈಪ್ ಒಡೆದ ಆರೋಪದಲ್ಲಿ 8ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕ ಮತ್ತು ಶಾಲಾ ಸಮಿತಿ ಸದಸ್ಯ ಥಳಿಸಿದ್ದಲ್ಲದೆ ನಿಂದಿಸಿ ದೌರ್ಜನ್ಯ ಎಸಗಿರುವ ಬಗ್ಗೆ ವರದಿಯಾಗಿದೆ. ಹಲ್ಲೆಯಿಂದಾಗಿ 14 ವರ್ಷದ ದಲಿತ ಬಾಲಕನ ಬೆನ್ನು ಮತ್ತು ಕೈಕಾಲುಗಳಿಗೆ ಗಾಯಗಳಾಗಿದೆ. ಆತನಿಗೆ ನಡೆದಾಡಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ ಆರೋಪಿಗಳು ಆತನಿಗೆ ಶಾಲೆಗೆ ಬರದಂತೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. “ಮೈನ್ಪುರಿಯ ಕುರವಲಿ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಶಾಲಾ ಸಮಿತಿ ಸದಸ್ಯ ರಾಜೀವ್ ವರ್ಮಾ ಮತ್ತು ಶಿಕ್ಷಕ ಸುಖ್ಬೀರ್ ಸಿಂಗ್ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸ್ಥಳೀಯ ಠಾಣೆಯ ಎಸ್ಎಚ್ಒ ಲಲಿತ್ ಭಾಟಿ ತಿಳಿಸಿದ್ದಾರೆ. ನನಗೆ ಬಾಯಾರಿಕೆಯಾಗುತ್ತಿತ್ತು, ನಾನು ನೀರು ಕುಡಿಯಲು ಹೋದಾಗ ನೀರಿನ ಟ್ಯಾಂಕ್ ಪೈಪ್ ಮುರಿದಿರುವುದು ಕಂಡು ಬಂದಿದೆ. ಪೈಪ್ ಒಡೆದಿರುವುದಾಗಿ ನನ್ನ ಮೇಲೆ ಆರೋಪ ಹೊರಿಸಲಾಯಿತು. ನಾನು ಪೈಪ್ ಒಡೆದಿಲ್ಲ ಎಂದು ಪದೇ ಪದೇ ಹೇಳಿದೆ. ಆದರೆ ಯಾರೂ ನನ್ನ ಮಾತನ್ನು ಕೇಳಲಿಲ್ಲ. ನನಗೆ ಥಳಿಸಿ ಜಾತಿ ನಿಂದನೆ ಮಾಡಿದರು. ಶಾಲೆಯ ಆವರಣದಲ್ಲಿ ಮತ್ತೆ ಕಂಡರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಸಂತ್ರಸ್ತ ಬಾಲಕ ಹೇಳಿದ್ದಾನೆ. ಪೈಪ್ಗೆ ಮತ್ತೊಬ್ಬ ಬಾಲಕ ಹಾನಿ ಮಾಡಿದ್ದಾನೆ ಮತ್ತು ನಮ್ಮ ಮಗನನ್ನು ಅನ್ಯಾಯವಾಗಿ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಬಾಲಕನ ಕುಟುಂಬ ಹೇಳಿಕೊಂಡಿದೆ. ಬಾಲಕನ ಅಣ್ಣ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಶಾಲಾ ಸಮಿತಿ ಸದಸ್ಯ ರಾಜೀವ್ ವರ್ಮಾ, ಇದು ಸುಳ್ಳು ಆರೋಪ, ನಾನು ಘಟನೆಯ ವೇಳೆ ಅಲ್ಲಿ ಇರಲೇ ಇಲ್ಲ. ಶಿಕ್ಷಕರು ಹಾಜರಿದ್ದರಬಹುದು, ನನಗೆ ತಿಳಿದಿಲ್ಲ. ನಾನು ಶೀಘ್ರದಲ್ಲೇ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗುತ್ತೇನೆ. ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಲೋಕಸಭೆ ಅಧಿವೇಶನ | ಅನುರಾಗ್ ಠಾಕೂರ್ ಧರಿಸಿದ್ದ ʼಐಷಾರಾಮಿ Louis Vuitton ಬೆಲ್ಟ್ʼ ವೈರಲ್!
ಅವರೇಕೆ ಬೆಲ್ಟ್ ಅನ್ನು ಮರೆಮಾಚಿದರು ಎಂದು ಪ್ರಶ್ನಿಸಿದ ಜನರು
ಟಿ20 ವಿಶ್ವಕಪ್ 2026 - ಪಾಕಿಸ್ತಾನಕ್ಕೆ ಕೇವಲ ಒಂದು ಪಂದ್ಯ ಬಹಿಷ್ಕರಿಸಲು ಅವಕಾಶ - ಐಸಿಸಿ ನಿಯಮಗಳು ಏನು ಹೇಳ್ತವೆ?
ಭಾರತದ ವಿರುದ್ಧ ಟಿ20 ವಿಶ್ವಕಪ್ 2026 ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಸರ್ಕಾರ ನಿರ್ಬಂಧ ಹೇರಿದೆ. ಫೆಬ್ರವರಿ 15ರ ಪಂದ್ಯ ಬಹಿಷ್ಕರಿಸಿದರೆ ಪಾಕಿಸ್ತಾನಕ್ಕೆ 'ವಾಕೋವರ್' ನೀಡಲಾಗುತ್ತದೆ. ಇದರಿಂದ ನೆಟ್ ರನ್ ರೇಟ್ ಕುಸಿಯಲಿದ್ದು, ಸೂಪರ್ 8 ಹಂತಕ್ಕೆ ತಲುಪುವ ಅವಕಾಶಗಳಿಗೆ ಹೊಡೆತ ಬೀಳಲಿದೆ. ಹಣಕಾಸಿನ ದಂಡನೆಗಳೂ ಎದುರಾಗುವ ಸಾಧ್ಯತೆ ಇದೆ. ಐಸಿಸಿ ನಿಯಮಗಳ ಪ್ರಕಾರ ಇದು ಟೂರ್ನಿಯ ಸಮಗ್ರತೆಯನ್ನು ಉಲ್ಲಂಘಿಸುತ್ತದೆ.
ಫೆ. 6: ನಾನ್ವೆಜ್ ತುಳು ಸಿನಿಮಾ ಬಿಡುಗಡೆ
ಮಲ್ಪಿಪ್ಲೆಕ್ಸ್ನಲ್ಲಿ ಕೇವಲ 99 ರೂಪಾಯಿ ಟಿಕೇಟ್ ದರ!
ಅಣ್ಣಾಮಲೈ ಫುಲ್ ರೆಬೆಲ್, ಬಿಜೆಪಿ ಹೈಕಮಾಂಡ್ ಕೊಟ್ಟಿದ್ದ ಹುದ್ದೆಗೆ ಗುಡ್ಬೈ... K Annamalai
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿಯ ಎಲೆಕ್ಷನ್ ಗೆದ್ದೇ ಗೆಲ್ಲಬೇಕು ಎಂಬ ಗುರಿಯೊಂದಿಗೆ ಬಿಜೆಪಿ ನಾಯಕರು ಮುಂದೆ ನುಗ್ಗಿದ್ದಾರೆ. ಈ ಪೈಕಿ ಘಟಾನುಘಟಿ ನಾಯಕರೇ ತಮಿಳುನಾಡು ರಾಜ್ಯದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಮತಬೇಟೆ ಶುರು ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಶಕ್ತಿಶಾಲಿ ರಾಜ್ಯದಲ್ಲಿ ಅಧಿಕಾರ ಹಿಡಿದೇ ತೀರಬೇಕು
ಕೆನಡಾದಲ್ಲಿ ಮತ್ತೆ ಗುಂಡಿನ ಮೊರೆತ, 3 ಭಾರತೀಯರು ಅರೆಸ್ಟ್: ಕೆನಡಿಯನ್ನರಲ್ಲಿ ಹೆಚ್ಚುತ್ತಿದೆ ವಲಸೆ ವಿರೋಧಿ ಭಾವನೆ!
ಕೆನಡಾದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಸರ್ರೆ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಮೂವರು ಭಾರತೀಯ ಮೂಲದ ಯುವಕರನ್ನು ಬಂಧಿಸಲಾಗಿದೆ. ಇವರ ಮೇಲೆ ಬಂದೂಕು ಅಪರಾಧದ ಆರೋಪ ಹೊರಿಸಲಾಗಿದೆ. ಕೆನಡಾದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಅಲ್ಲಿನ ಜನರಲ್ಲಿ ಆತಂಕ ಮೂಡಿಸುತ್ತಿದ್ದು, ವಲಸಿಗರಿಂದ ದೇಶದ ಮೇಲೆ ನಕರಾತ್ಮಕ ಪರಿಣಾಮ ಬೀಳುತ್ತಿದೆ ಎಂದು ದೇಶದ ಶೇ.48% ಪ್ರಜೆಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ವಲಸೆ ನಿಯಮಗಳನ್ನು ಕಠಿಣಗೊಳಿಸುವ ಸಾಧ್ಯತೆ ಇದೆ.
ಫೆ.7-8: ಉಚಿತ ಶ್ರವಣ ತಪಾಸಣಾ ಶಿಬಿರ
ಮಂಗಳೂರು, ಫೆ.3: ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಕಾರದೊಂದಿಗೆ 7 ಮತ್ತು 8 ಫೆಬ್ರವರಿ 2026 ರಂದು ಉಚಿತ ಶ್ರವಣ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ಶಿಬಿರ ನಡೆಯಲಿದೆ ಎಂದು ಸಂಚಾಲಕ ಲವ ಬಂಗೇರಾ ತಿಳಿಸಿದ್ದಾರೆ. ಈ ಶಿಬಿರದಲ್ಲಿ ಕಿವಿಯ ಶ್ರವಣ ತಪಾಸಣೆ, ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ. ಪತ್ರಕರ್ತರ ಕುಟುಂಬದ ಸದಸ್ಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಉಚಿತ ತಪಾಸಣೆ ಪಡೆಯಬಹುದಾಗಿದೆ. ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್ ಮಲ್ಪೆ ಶ್ರವಣ ಯಂತ್ರದ (Hearing Machine) ವೆಚ್ಚದ 40% ಮೊತ್ತವನ್ನು ಭರಿಸುತ್ತಿದೆ. ಮೊದಲ 30 ನೋಂದಾಯಿತ ವ್ಯಕ್ತಿಗಳು ಮಾತ್ರ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಹಿಂದಿನ ಶಿಬಿರದಲ್ಲಿ 68 ಮಂದಿ ತಪಾಸಣೆಗೆ ಒಳಗಾಗಿದ್ದರು. ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ +91 89518 04399 ಕ್ಕೆ ಕರೆಮಾಡಬಹುದಾಗಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಲವ ಬಂಗೇರಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ,ಶ್ರವಣ ತಜ್ಞೆ ಡಾ. ಅಂಕಿತಾ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ನ್ಯಾಯಾಲಯದ ಸಿಂಧೂ ಜಲ ಒಪ್ಪಂದ ವಿಚಾರಣೆಯಲ್ಲಿ ಭಾಗವಹಿಸಲು ಭಾರತ ನಕಾರ
ಭಾರತದ ಸಿಂಧೂ ಜಲ ಒಪ್ಪಂದ ರದ್ದತಿ ಪ್ರಶ್ನಿಸಿ ಪಾಕಿಸ್ತಾನವು ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಕುರಿತ ವಿಚಾರಣೆಯನ್ನು ಐಸಿಜೆ ಮುಂದುವರೆಸಿದ್ದು, ಭಾರತ ಈ ವಿಚಾರಣೆಯ ಸಿಂಧುತ್ವ ಪ್ರಶ್ನಿಸಿದೆ. ಅಲ್ಲದೇ ಯಾವುದೇ ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದ ಈ ಕಠಿಣ ನಿಲುವು ಮತ್ತು ಯಾವುದೇ ಒತ್ತಡಕ್ಕೆ ಮಣಿಯದಿರುವ ದೃಢ ನಿರ್ಧಾರ, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಾಕಿಸ್ತಾನ ಈಗ ಐಸಿಜೆ ವಿಚಾರಣೆ ಭರವಸೆಯ ಮೇಲೆ ದಿನ ದೂಡುತ್ತಿದೆ.
ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಸಾಗರ ಮಾರಿಕಾಂಬ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ. ಉಸಿರಾಟದ ತೊಂದರೆ ಹಾಗೂ ಮಧುಮೇಹ ಸಮಸ್ಯೆಯಿಂದಾಗಿ ಅವರು ಅಚಾನಕ್ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣವೇ ಅವರನ್ನು ಸಾಗರದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಪ ವಿಭಾಗೀಯ ಆಸ್ಪತ್ರೆಯ ವೈದ್ಯ ಡಾ. ವಿಕ್ರಂ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ದೇವಸ್ಥಾನದಲ್ಲಿ ಉಂಟಾಗಿದ್ದ ಭಾರಿ ಜನಸಂದಣಿಯಿಂದ ಉಸಿರಾಟ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಕಾಗೋಡು ತಿಮ್ಮಪ್ಪ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆತಂಕಕ್ಕೆ ಕಾರಣವಿಲ್ಲ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಭಾರತದ ಗೌಪ್ಯತೆಯ ಹಕ್ಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ: ವಾಟ್ಸಾಪ್, ಮೆಟಾಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ಸುಪ್ರೀಂಕೋರ್ಟ್ ವಾಟ್ಸಾಪ್ ಮತ್ತು ಮೆಟಾಗೆ ಬಳಕೆದಾರರ ಡೇಟಾ ಹಂಚಿಕೆ ಬಗ್ಗೆ ಕಠಿಣ ಎಚ್ಚರಿಕೆ ನೀಡಿದೆ. ಭಾರತದ ಗೌಪ್ಯತೆಯ ಜೊತೆ ಆಟವಾಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಬಳಕೆದಾರರ ಡೇಟಾವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದಿಲ್ಲ. ದಂಡದ ಮೊತ್ತ ಠೇವಣಿ ಮಾಡಲಾಗಿದೆ. ಪ್ರಕರಣಗಳ ವಿಚಾರಣೆ ಮುಂದುವರಿಯಲಿದೆ.
ಲ್ಯಾಂಡ್ ಲಾರ್ಡ್ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ : ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರು: ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ ಲ್ಯಾಂಡ್ ಲಾರ್ಡ್ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಅವರು, ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಮತ್ತು ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮವೆಂದು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಕಳಕಳಿಯ ವಿಷಯದ ಸಿನಿಮಾಗಳಿಗೆ ಬೆಂಬಲ ನೀಡುವುದು ಸರ್ಕಾರದ ನೈತಿಕ ಹೊಣೆ ಎಂದು ಸಹ ಹೇಳಿದರು. ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಲ್ಯಾಂಡ್ ಲಾರ್ಡ್ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರುವಂತೆ ಈ ನಿರ್ಧಾರ ಪ್ರೇರಣೆಯಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ನಾಗರಿಕರ ಗೌಪ್ಯತೆಯ ಹಕ್ಕುಗಳನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ: ವಾಟ್ಸ್ಆ್ಯಪ್ ಗೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ: ಬಳಕೆದಾರರ ದತ್ತಾಂಶ ಹಂಚಿಕೆಯ ಕಳವಳಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ವಾಟ್ಸ್ಆ್ಯಪ್ ಮತ್ತು ಅದರ ಪೋಷಕ ಕಂಪೆನಿ ಮೆಟಾವನ್ನು ತರಾಟೆಗೆ ತೆಗೆದುಕೊಂಡಿದೆ. ತಂತ್ರಜ್ಞಾನ ಅಥವಾ ವ್ಯವಹಾರದ ಹೆಸರಿನಲ್ಲಿ ನಾಗರಿಕರ ಗೌಪ್ಯತೆಯ ಹಕ್ಕಿನೊಂದಿಗೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ದತ್ತಾಂಶ ಹಂಚಿಕೆಯ ಹೆಸರಿನಲ್ಲಿ ದೇಶದ ನಾಗರಿಕರ ಗೌಪ್ಯತೆಯ ಹಕ್ಕಿನೊಂದಿಗೆ ನೀವು ಆಟವಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತಂತ್ರಜ್ಞಾನ ದೈತ್ಯ ಸಂಸ್ಥೆ ವಾಟ್ಸ್ಆ್ಯಪ್ ಮತ್ತು ಅದರ ಪೋಷಕ ಕಂಪೆನಿ ಮೆಟಾಗೆ ತಿಳಿಸಿದೆ. ಪ್ರಕರಣದಲ್ಲಿ ನ್ಯಾಯಾಲಯವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ವಿಚಾರಣೆಯಲ್ಲಿ ಒಂದು ಪಕ್ಷವನ್ನಾಗಿ ಮಾಡಿದೆ. ಫೆಬ್ರವರಿ 9ರಂದು ಈ ಕುರಿತು ಮಧ್ಯಂತರ ಆದೇಶಗಳನ್ನು ಹೊರಡಿಸುವುದಾಗಿ ಹೇಳಿದೆ.
ಬಿಸಿಸಿ ಪ್ರೀಮಿಯರ್ ಲೀಗ್ 2026: ಪ್ಯಾರಡೈಸ್ ತಂಡ ಚಾಂಪಿಯನ್
ಮೂಡಬಿದ್ರಿ: ಬೆಳ್ವಾಯಿ ಕಮ್ಯೂನಿಟಿ ಸೆಂಟರ್ (ಬಿಸಿಸಿ) ಆಯೋಜಿಸಿದ್ದ ಬಿಸಿಸಿ ಪ್ರೀಮಿಯರ್ ಲೀಗ್ 2026 (ಸೀಸನ್–3) ಅಂಡರ್ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ಜ.31 ಮತ್ತು ಫೆ.1 ರಂದು ಎಸ್ಎಂಪಿ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು. ಜ.31ರಂದು ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಿಸಿಸಿ ಅಧ್ಯಕ್ಷ ಅನ್ವರ್ ಹುಸೇನ್ ಇಸ್ಮಾಯಿಲ್ ವಹಿಸಿದ್ದರು. ಹಸ್ದುಲ್ಲಾ ಇಸ್ಮಾಯಿಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಸಿಸಿ ಕಾರ್ಯದರ್ಶಿ ಶೇಖ್ ಫಹಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಟೂರ್ನಮೆಂಟ್ ಅನ್ನು ಈವೆಂಟ್ಸ್ ಮ್ಯಾನೇಜರ್ ಜಾಹಿದ್ ಹುಸೇನ್ ಹಾಗೂ ಸಹಾಯಕ ಈವೆಂಟ್ಸ್ ಮ್ಯಾನೇಜರ್ ಮುಹಮ್ಮದ್ ಸಿರಾಜ್ ನಿರ್ವಹಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮುಹಮ್ಮದ್ ಸಾಹೇಬ್ ಉಸ್ಮಾನ್, ನಾಸಿರ್ ಶೇಖ್ ಗುಲಾಂ ಹುಸೇನ್, ಅನ್ವರ್ ಎ. ಕರೀಂ, ಶೌಕತ್ ಅಲಿ, ಅಮೀರ್ ಗೌಸ್, ಹುಸೇನ್ ಸಾಹೇಬ್, ನಾಸಿರ್ ನ್ಯೂ ಮಾಸ್ಟರ್, ಮುನೀರ್ ಯೂಸುಫ್, ನಾಸಿರ್ ಎ. ಕರೀಂ, ಅಬ್ದುಲ್ ಕಯ್ಯುಮ್ ಮತ್ತು ಅಝೀಮ್ ಜಾಫರ್ ಸಾಹೇಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ಯಾರಡೈಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಮ್ ಬೆಳ್ವಾಯಿ ಫ್ರೆಂಡ್ಸ್ ರನ್ನರ್-ಅಪ್ ಆಗಿ ಹೊರಹೊಮ್ಮಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷರು, ಇಂತಹ ಕ್ರೀಡಾ ಟೂರ್ನಮೆಂಟ್ಗಳು ಸೌಹಾರ್ದತೆ, ಶಿಸ್ತು ಮತ್ತು ತಂಡಭಾವನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಪ್ರಮುಖ ಪ್ರಾಯೋಜಕರಾದ ALS ಬಾರ್ಡರ್ಲೆಸ್ ಲಾಜಿಸ್ಟಿಕ್ಸ್, ಎಕ್ಸ್ಪರ್ಟೈಸ್, AR ಅರೇಬಿಯನ್ ಲಾಜಿಸ್ಟಿಕ್ಸ್ ಮತ್ತು ಟೀಮ್ ಟೆನ್ ರೇಸಿಂಗ್ ಸಂಸ್ಥೆಗಳಿಗೆ ಹಾಗೂ ಎಲ್ಲಾ ದಾನಿಗಳು, ಹಿತೈಷಿಗಳು, ಬಿಸಿಸಿ ಸದಸ್ಯರು, ಸ್ವಯಂಸೇವಕರು, ತಂಡದ ಮಾಲೀಕರು, ಕ್ರಿಕೆಟ್ ಆಟಗಾರರು ಹಾಗೂ ಆಯೋಜನಾ ಸಮಿತಿಯ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
BELAGAVI | ಸವದತ್ತಿ: ರಸ್ತೆ ಮಧ್ಯೆ ವ್ಯಕ್ತಿಯ ಬರ್ಬರ ಹತ್ಯೆ
ಬೆಳಗಾವಿ: ವ್ಯಕ್ತಿಯೊಬ್ಬರನ್ನು ಸಾರ್ವಜನಿಕ ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸಮೀಪ ಮಂಗಳವಾರ ಸಂಜೆ ನಡೆದಿದೆ. ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದವರು. ಕೊಲೆ ಆರೋಪಿ ಈರಯ್ಯ ಮಠಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಬಸಪ್ಪರನ್ನು ಆರೋಪಿ ಈರಯ್ಯ ತಡೆದು ಮಚ್ಚಿನಿಂದ ಸುಮಾರು 16 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಆರೋಪಿಯು ಮೃತದೇಹದ ಮೇಲೆ ಕಾಲಿಟ್ಟು ನಿಂತು ಅಟ್ಟಹಾಸ ಮೆರೆದಿರುವ ವೀಡಿಯೊ ವೈರಲ್ ಆಗಿದೆ. ನಂತರ ಆರೋಪಿ ಈರಯ್ಯ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಈರಯ್ಯನ ತಾಯಿಯೊಂದಿಗೆ ಬಸಪ್ಪ,ಊರು ಬಿಟ್ಟು ಹೋಗಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಬಸಪ್ಪನ ವಿರುದ್ಧ ದ್ವೇಷ ಹೊಂದಿದ್ದನೆನ್ನಲಾಗಿದೆ. ಇತ್ತೀಚೆಗೆ ಬಸಪ್ಪ ಮರಳಿ ಗ್ರಾಮಕ್ಕೆ ಬಂದಿದ್ದರಿಂದ ಹಳೆಯ ವೈಷಮ್ಯ ತೀವ್ರಗೊಂಡು ಈ ಆತ ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸವದತ್ತಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೆಲ್ಫಿ ಎಂಬ ಈ ಹುಚ್ಚನ್ನು ಜನರು ತನ್ನಷ್ಟಕ್ಕೆ ಕಂಡು ಕೊಂಡಿಲ್ಲ. ಇದರ ಹಿಂದೆ ಬಹು ದೊಡ್ಡ ವ್ಯಾಪಾರಿ ಲೋಕ ಟೊಂಕ ಕಟ್ಟಿ ನಿಂತಿದೆ. ಮೊಬೈಲ್ ಎನ್ನುವುದೇ ಬಹು ದೊಡ್ಡ ಆಕರ್ಷಣೆಯಾದರೆ, ಅದರಲ್ಲಿ ಸ್ಮಾರ್ಟ್ ಫೋನ್ ಎಂಬ ಮಾಯಾವಿ ಪ್ರಚಂಡ ಸಂಯಮಿಗಳನ್ನು ಕ್ಷಣ ಹೊತ್ತಾದರೂ ಅಲುಗಾಡಿಸದೆ ಇರಲಾರದು. ಆಧುನಿಕ ತಂತ್ರಜ್ಞಾನದ ಈ ಎಲ್ಲ ಆವಿಷ್ಕಾರಗಳು ತನ್ನಷ್ಟಕ್ಕೆ ಹಾನಿಕಾರಕವಲ್ಲ. ಅವುಗಳು ಅನಿಷ್ಟವೆಂತಲೂ ಅಲ್ಲ. ತಂತ್ರಜ್ಞಾನ ಮಾನವ ಬದುಕಿಗೆ ಮಹತ್ತರ ಕೊಡುಗೆ ಮಾತ್ರವಲ್ಲ; ಭವಿಷ್ಯದ ಬದುಕಿನ ದಿಕ್ಸೂಚಿಯೂ ಹೌದು. ಆದರೆ ಅದನ್ನು ನಿಯಂತ್ರಿಸುತ್ತಿರುವವರ ನಿಯತ್ತು ಇದೆಯಲ್ಲ! ಇದುವೇ ಮಾನವ ಸಮುದಾಯಗಳಿಗೆ ವರವಾಗುವ ಬದಲು ಕಂಟಕವಾಗಿ ಪರಿಣಮಿಸುತ್ತದೆ. ಗಣರಾಜ್ಯೋತ್ಸವದ ದಿನ ಭಾರತೀಯರಾದ ನಮಗೆ ಹೆಮ್ಮೆಯ ದಿನವಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯರೂ ತಮ್ಮ ಅಸ್ಮಿತೆಯನ್ನು ಅಧಿಕೃತವಾಗಿ ಘೋಷಿಸಿಕೊಂಡು ಆಚರಿಸಿಕೊಂಡು ಬರಲಾಗುತ್ತಿರುವ ಸುವರ್ಣ ದಿನ. ಅತಿ ದೊಡ್ಡ ದೇಶದ ಅತ್ಯಂತ ಮಹತ್ವದ ಮೌಲಿಕವೂ ಆದ ಸಂವಿಧಾನವನ್ನು ಸಿದ್ಧಪಡಿಸಿ (ಬಾಬಾಸಾಹೇಬ ಕೃತ) ಅರ್ಪಿಸಿಕೊಂಡು ಪ್ರತಿನಿತ್ಯವೂ ಅನುಷ್ಠಾನಗೊಳಿಸಿಕೊಳ್ಳಲು ಕಟಿಬದ್ಧರಾದ ದಿನವೆಂದು ಹಲವು ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ. ಪ್ರಾಯಶಃ ಇನ್ನು ಮುಂದೆಯೂ ಸಾವಿರಾರು ವರ್ಷಗಳವರೆಗೆ ಆಚರಿಸಿಕೊಂಡು ಬರುತ್ತೇವೇನೋ ಗೊತ್ತಿಲ್ಲ. ನಾಳಿನ ಭವಿಷ್ಯವನ್ನು ಕರಾರುವಾಕ್ಕಾಗಿ ಬಲ್ಲವರಾರು? ಅರುವತ್ತು ವರ್ಷಗಳ ಹಿಂದೆ ಗಣರಾಜ್ಯೋತ್ಸವ ಎಂದರೆ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ. ಶಾಲಾ, ಕಾಲೇಜು, ಕಚೇರಿ, ಗ್ರಾಮ ಪಂಚಾಯತ್, ಅಂಗಡಿ ಮುಂಗಟ್ಟು, ಓಣಿಯ ವೃತ್ತ ಎಲ್ಲೆಂದರಲ್ಲಿ ಧ್ವಜನೆಟ್ಟು ಅದನ್ನು ಫರಾರಿಯಿಂದ ಶೃಂಗರಿಸಿ, ರಂಗೋಲಿ ಚಿತ್ತಾರ ಬಿಡಿಸಿ, ಮಕ್ಕಳಾದಿಯಾಗಿ ಎಲ್ಲರೂ ಇಸ್ತ್ರಿ ಮಾಡಿದ ಶುಭ್ರ ಪೋಷಾಕು ಅಥವಾ ಅವರವರ ಶಾಲಾ ಕಾಲೇಜುಗಳ ಸಮವಸ್ತ್ರ ಧರಿಸಿ ನಸುಕಿನ ಚಳಿಯಲ್ಲಿ ನಸು ನಡುಗುತ್ತಲೇ ಕವಾಯತ್ತು ನಡೆಸುವುದು ಇತ್ತು. ಅದನ್ನು ನೋಡುವುದೇ ಒಂದು ಸಂಭ್ರಮ. ಸೂರ್ಯೋದಯದ ಹೊಸ್ತಿಲಿಲ್ಲ ಝೇಂಡಾ ಹಾರಿಸಿ ‘ಬೊಲೊ ಭಾರತ್ ಮಾತಾ ಕೀ ಜೈ’ ’ವಂದೇ ಮಾತರಂ’ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಆಯಾ ಊರಿನ ಪೊಲೀಸ್ ಗ್ರೌಂಡ್ಗಳಿಗೆ ತೆರಳಿ ಅಲ್ಲಿ ಪರೇಡ್ ನೋಡುವ ಖುಷಿಯಂತೂ ಹೇಳ ತೀರಲಾಗದು. ಚಬ್ಬೀಸ್ ಜನವರಿ ಅಂದರೆ ಹಿಂದಿನ ದಿನ ರಾತ್ರಿಯೇ ಮಕ್ಕಳ ತಯಾರಿ. ಇದ್ದ ಬಟ್ಟೆಗಳನ್ನೇ ಶುಭ್ರವಾಗಿ ತೊಳೆದುಕೊಂಡು. ಚೆಂಬು, ತಂಬಿಗಿಯಲ್ಲಿ ನಿಗಿನಿಗಿ ಕೋಳಸಿ (ಇದ್ದಿಲು) ಕೆಂಡ ಹಾಕಿ ಇಸ್ತ್ರಿ ತಿದ್ದುವ ಭರಾಟೆ. ಆಗಿನ್ನೂ ಬಡಬಗ್ಗರಾದಿ ಮಧ್ಯಮ ವರ್ಗದವರು ರೊಕ್ಕ ಕೊಟ್ಟು ಇಸ್ತ್ರಿ ಮಾಡಿಸಿಕೊಳ್ಳುವುದು ಇರಲಿಲ್ಲ. ಹೀಗೆ ಇಸ್ತ್ರಿ ತೀಡುವಾಗ ಕೈ ಸುಟ್ಟುಕೊಳ್ಳುವುದು ಇತ್ತು. ಸುಟ್ಟುಕೊಂಡರೂ ಪಾಲಕರಿಗೆ ಹೇಳುವಂತಿರಲಿಲ್ಲ. ಹೇಳಿದರೆ ಅಷ್ಟು ಇಸ್ತ್ರಿಗೂ ಸಂಚಕಾರ ಬರುವುದಿತ್ತು. ಹುಡುಗಿಯರು ರಿಬ್ಬನ್ ಒಗೆದು ಮಡಿ ಮಾಡಿಕೊಳ್ಳುವುದೇ ಒಂದು ಹಬ್ಬವಾಗಿರುತ್ತಿತ್ತು. ಅಂತೂ ಅಪರೂಪಕ್ಕೆ ಬಿಳಿ ಬೂಟು ಸಿಕ್ಕರಂತೂ ಸ್ವರ್ಗಕ್ಕೆ ಮೂರಲ್ಲ ಒಂದೇ ಗೇಣು. ಯಾವಾಗ ಬೆಳಗಾಗುವುದೆಂಬ ತವಕದಲ್ಲಿ ರಾತ್ರಿ ನಿದ್ದೆ ಮಾಡುವುದು ಕೂಡ ದುಸ್ತರವೇ ಆಗುವುದಿತ್ತು. ಹೊತ್ತು ಮೂಡಿದ್ದೇ ಸಾಕು. ಲಗುಬಗೆಯಿಂದ ಆದರೆ ತುಂಬು ಸಂಭ್ರಮದಲ್ಲಿ ತಯಾರಾಗಿ ನಡೆಯುತ್ತ ಶಾಲೆ, ಕಾಲೇಜುಗಳಿಗೆ ಮಕ್ಕಳು, ಕಚೇರಿ, ಅಂಗಡಿ, ಸಂಘ, ಸಂಸ್ಥೆಗಳಿಗೆ ದೊಡ್ಡವರು ಹೋಗುವ ಸರದಿ ರಸ್ತೆಯ ತುಂಬ ಸಾಲು ದೀಪಗಳಂತೆ ಕಂಗೊಳಿಸುವುದಿತ್ತು. ಅಲ್ಲಿ ಸರದಿಯಲ್ಲಿ ನಿಂತು ಧ್ವಜಕ್ಕೆ ಸೆಲ್ಯೂಟ್ ಹೊಡೆಯುವುದೆಂದರೆ ಅದು ಮಾಮೂಲಿಯಲ್ಲ. ಅದೊಂದು ಅಗ್ದಿ ಹೆಮ್ಮೆಯ, ಪೂರ್ಣ ಸ್ವಾಭಿಮಾನದ ಕ್ರಿಯೆಯಾಗಿರುತ್ತಿತ್ತು. ಅಟೆನ್ಸೆನ್ ಸ್ಟ್ಯಾಂಡರ್ಸಿಸ್ ಇತ್ಯಾದಿ ಆದೇಶಗಳ ಶಬ್ದಶಃ ಅರ್ಥ ತಿಳಿಯುತ್ತಿರಲಿಲ್ಲ. ಆದರೆ ಆದೇಶಗಳನ್ನು ಭಯ ಭಕ್ತಿಯಿಂದ ಪಾಲಿಸುವ ಕ್ರಿಯೆ ಮಾತ್ರ ಪ್ರೀತಿಯದಾಗಿತ್ತು. ನಂತರ ರಾಷ್ಟ್ರಗೀತೆ ಹಾಡಿ ಜೈಕಾರ ಹಾಕಿದರೆ ಒಂದು ಪೆಪ್ಪರ್ಮೆಂಟ್ ಡೆಫನೆಂಟ್ ಸಿಗುತ್ತಿತ್ತು. ಒಂದು ಅರ್ಧ ಚಂದ್ರದ ನಿಂಬಿ ಹುಳಿ ಪೆಪ್ಪರ್ಮೆಂಟ್ ಅದೆಷ್ಟು ರುಚಿಯಾಗಿರುತ್ತೆಂದರೆ ಇನ್ನೂವರೆಗೂ ಅದರ ಸ್ವಾದ ರಸನೇಂದ್ರಿಯದ ರಸಾತಳದಲ್ಲಿ ಕೈದುವಾಗಿದೆ. ಕುವೆಂಪುವಿನ ‘ಇದು ದೇವರು ತಿನ್ನುವ ಪೆಪ್ಪರ್ಮೆಂಟು’ ಎಂಬ ಕವನವನ್ನು ಗುನುಗುನುಸುವುದು ಮಜವೇ ಆಗಿತ್ತು. ಆದರೆ ಈಗ ಹೊಳೆ-ಹಳ್ಳಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಈಗ ಗಣರಾಜ್ಯೋತ್ಸವದಲ್ಲಿ ಎಂದಿನಂತೆ ಶಾಲಾ, ಕಾಲೇಜು, ಕಚೇರಿ ಎಲ್ಲೆಂದರಲ್ಲಿ ಗಣರಾಜ್ಯೋತ್ಸವದ ಆಚರಣೆ ಏನೋ ನಡೆದಿದೆ. ಮೊದಲಿನ ಸಂಭ್ರಮ, ಕುತೂಹಲ ಅಸಲಿಗೆ ಆ ಖದರು, ಡೌಲುಗಳು ಇಲ್ಲವೇ ಇಲ್ಲ. ಹೀಗೆಂದು ಅಲವತ್ತುಕೊಂಡರೆ ಹಣ್ಣೆಲೆಗಳ ಹಳವಂಡವಾದಾತು! ಹಾಗೆ ನೋಡಿದರೆ ಈಗ ಮೊದಲಿಗಿಂತ ಭರ್ ಭರಾಟೆ ಇದೆ. ತರಹೇವಾರಿ ಶೃಂಗಾರದ ವಸ್ತುಗಳು, ಗರಿಗರಿ ದಿರಿಸು. ಖಾಸ್ ಝೇಂಡಾ ವಂದನೆಗೆಂದೇ ಹೊಲಿಸಿದ ಪೋಷಾಕು. ವಿವಿಧ ನಮೂನೆ ಧ್ವಜಗಳು, ಸರ್ ಭರ್ ಹರಿದಾಡುವ ವಾಹನಗಳು, ಕಿವಿಗಡಚಿಕ್ಕುವ ಮೈಕು, ಡಿಜೆ ಒಂದೇ ಎರಡೇ ಎಣಿಸಲಾಗದ ಆಧುನಿಕ ಸೌಲಭ್ಯಗಳು. ಇಷ್ಟಲಿರಲಿಕ್ಕಾಗಿಯೂ ಮಕ್ಕಳಾದಿ ದೊಡ್ಡವರಲ್ಲಿಯೂ ಆ ಮೊದಲಿನ ಸಂಭ್ರಮ, ಕುತೂಹಲ ನಾಪತ್ತೆ. ಕಾರಣ ಬೇಕೆನಿಸಿದ್ದೆಲ್ಲ ಕ್ಷಣ ಮಾತ್ರದಲ್ಲೇ ಅಂಗೈಯಲ್ಲಿ ದೊರೆಯುವಾಗ ಕುತೂಹಲಕ್ಕೆ ಜಾಗವಾದರೂ ಎಲ್ಲಿದೆ? ಆದ್ದರಿಂದ ಇಂದಿನ ರಾಷ್ಟ್ರೀಯ ಹಬ್ಬಗಳೆಂದರೆ ಅವು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವರಾತಗಳೆಂದೇ ಹೇಳಬೇಕು. ಇಂದು ಕಂಡದ್ದು ಸೆಲ್ಫೋತ್ಸವವೇ ಹೊರತು ಗಣರಾಜ್ಯೋತ್ಸವವಲ್ಲ. ಸುಮ್ಮನೆ ಮೊನ್ನೆಯ ಧ್ವಜಾರೋಹಣದ ಪ್ರಸಂಗದ ಮೇಲೆ ಕಣ್ಣು ಹಾಯಿಸಿದರೂ ಸಾಕು. ಎಲ್ಲರೂ ತಮ್ಮ ತಮ್ಮ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವಲ್ಲಿ ಅದೆಷ್ಟು ವ್ಯಸ್ತರಾಗಿದ್ದರೆಂದರೆ ಅವರ್ಯಾರಿಗೂ ಅಲ್ಲಿ ಮಾತಾಡುತ್ತಿರುವವರು ಯಾರು? ಏನು ಮಾತಾಡುತ್ತಿದ್ದಾರೆ? ಅಲ್ಲಿ ನಮ್ಮ ಭವಿಷ್ಯದ ಬಗೆಗೆ ಏನಾದರೂ ಇದೆಯೇ? ದೇಶಕ್ಕಾಗಿ ಬಲಿದಾನ ಕೊಟ್ಟವರು ಯಾರು? ಅವರ ತ್ಯಾಗ, ನೋವು ಇತ್ಯಾದಿ ಯಾವುದರ ಬಗೆಗೂ ಕುತೂಹಲ ಹುಟ್ಟುತ್ತಿಲ್ಲ. ಹಾಗಾದರೆ ಅವರ ಸ್ವಾದ ಕೆಟ್ಟಿದೆಯೆ? ಅದಕ್ಕೆ ಕಾರಣಗಳು ಏನಾದರೂ ಇವೆಯೇ? ಎಂಬುದರ ಕುರಿತು ಮಂಥನ ನಡೆಸುವುದು ಹೆಚ್ಚು ಸೂಕ್ತವೆಂದು ತೋರುತ್ತದೆ. ಇಲ್ಲವಾದರೆ ಅದೇ ಹಳೆಯ ರಾಗದಂತೆ ‘‘ನಮ್ಮ ಕಾಲ ಛಲೋ ಇತ್ತು. ಈಗ ಕಾಲ ಕೆಟ್ಟಿದೆ’’ ಎಂದು ವೃಥಾ ಹಳಹಳಿಸುವ ಮೂರ್ಖತನವಾದೀತು. ಜನರೀಗ ಯಾವುದೆ ತತ್ವ, ಆದರ್ಶ ಅಥವಾ ಮಹಾನ್ ವ್ಯಕ್ತಿ-ಶಕ್ತಿಗಳ ಕೈಯಲ್ಲಿ ಇಲ್ಲ. ಅವರೀಗ ಅತ್ಯಂತ ಆಕರ್ಷಕವಾದ ಡಿಜಿಟಲ್ ಲೋಕದ ಅನಭಿಷಕ್ತ ದೊರೆಗಳಾಗಿದ್ದಾರೆ. ಕ್ಷಣ ಮಾತ್ರದಲ್ಲಿ ಇಡೀ ಬ್ರಹ್ಮಾಂಡವನ್ನೇ ಅಂಗೈಗೆ ನಿಲುಕಿಸುವ ಭ್ರಮೆ ಹುಟ್ಟಿಸುತ್ತಿರುವ ಡಿಜಿಟಲ್ ಪ್ರಪಂಚವನ್ನು ಹಿಂದೆ ಹಾಕುವ ಯಾವ ಟೂಲ್ಸ್ಗಳು ನಮ್ಮಲ್ಲಿ ಇಲ್ಲ. ಡಿಜಿಟಲ್ ಲೋಕವನ್ನು ನಿಯಂತ್ರಿಸುತ್ತಿರುವವರು ಯಾರು? ಯಾತಕ್ಕಾಗಿ ಅವರು ಅದರ ಮೇಲೆ ಏಕಸ್ವಾಮ್ಯ ಸ್ಥಾಪಿಸಿಕೊಂಡಿದ್ದಾರೆ? ಎಂಬ ಗಂಭೀರ ಚರ್ಚೆ ಒತ್ತಟ್ಟಿಗಿರಲಿ, ಅದರ ಲಾಭದಾಯಕ ನವ ಆರ್ಥಿಕತೆಯ ಕಬಂಧ ಬಾಹುಗಳ ವಿಶ್ಲೇಷಣೆಯನ್ನು ಬದಿಗಿಟ್ಟು ಅದರಿಂದಾಗುತ್ತಿರುವ ಚಿಕ್ಕ ಪರಿಣಾಮವೊಂದನ್ನೇ ನೋಡಿದರೂ ಸಾಕು. ಅದರ ಬಲಾಢ್ಯ ಬಾಹುವಿನ ಆಕ್ರಾಂತ ನಡೆ ಕಾಣಿಸದೆ ಇರದು. ಸೆಲ್ಫಿ ಎಂಬ ಒಂದೇ ಕಾರನಾಮೆ ನೋಡಿದರೂ ಸಾಕು. ಮೊಬೈಲ್ ಎಂಬ ಮಾಂತ್ರಿಕ ಡಬ್ಬಿ (ಈ ಮೊದಲು ಟಿ.ವಿ.ಗೆ ಹಾಗೆಂದು ಕರೆಯುತ್ತಿದ್ದೇವಷ್ಟೆ) ಕೈವಶವಾದಂದಿನಿಂದ ಮನುಷ್ಯರಲ್ಲಿ ಸ್ವಾಭಾವಿಕವಾಗಿಯೇ ಇದ್ದ ಆತ್ಮರತಿಗೆ ಉಕ್ಕು ಬಂದಿದೆ. ಮೊಬೈಲ್ನಿಂದ ಅರ್ಥಪೂರ್ಣ ಬದುಕು ಅದೆಷ್ಟು ದಕ್ಕಿತೊ? ಬಿಟ್ಟಿತೊ? ಬೇಕಿಲ್ಲ. ದಕ್ಕಿದ್ದು ಮಾತ್ರ ಸ್ವವಿಜೃಂಭಣೆ. ಹೋದಲ್ಲಿ ಬಂದಲ್ಲಿ, ನಿಂತರೂ ಕುಂತರೂ ಅಷ್ಟೇ ಏಕೆ ಸತ್ತರೂ ಶವದ ಒಂದೆರಡು ಫೋಟೊ ಕ್ಲಿಕ್ಕಿಸದಿದ್ದರೆ ಸಮಾಧಾನವಿಲ್ಲ. ಚಿಕ್ಕ ಮಕ್ಕಳಿಂದ ಮುದುಕರವರೆಗೆ, ಭಿಕ್ಷುಕರಿಂದ ಕೋಟ್ಯಧೀಶರವರೆಗೆ ಸೆಲ್ಫಿಗಳಲ್ಲಿ ತಲ್ಲೀನ. ಗುಂಪು ಫೋಟೊಗಳಂತೂ ಸೈ. ಅದರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳದಿದ್ದರೆ ಸಮಾಧಾನವಿಲ್ಲ. ಮದುವೆ, ಸೀಮಂತ, ತೊಟ್ಟಿಲು, ಹುಟ್ಟುಹಬ್ಬ, ಸಭೆ, ಸಮಾರಂಭ, ವಿಚಾರ ಸಂಕಿರಣ, ಸಮ್ಮೇಳನ ಏನೇ ಕಾರ್ಯಕ್ರಮವಿರಲಿ ಅಲ್ಲೊಂದು ಸೆಲ್ಫಿ ಪಾಯಿಂಟ್ ನಿರ್ಮಿಸಲಾಗುತ್ತಿದೆ. ಹೋಟೆಲ್, ಮಾಲ್, ಸಿನೆಮಾ ಥಿಯೆಟರ್, ಮದುವೆ ಮಂಟಪ ಮುಂತಾದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸೆಲ್ಫಿ ಪಾಯಿಂಟ್ ಇರಲೇಬೇಕು. ವೇದಿಕೆ ಮೇಲೆ ಭಗವಂತನೇ ಪ್ರತ್ಯಕ್ಷನಾಗಿದ್ದರೂ ಜನರು ಮಾತ್ರ ಒಂದೆರಡು ಸೆಲ್ಫಿ ತೆಗೆದುಕೊಳ್ಳದೆ ಅವನೊಂದಿಗೆ ಮಾತನಾಡಲಾರರು. ಸೆಲ್ಫಿಯ ಗರ್ದಿ ಗಮ್ಮತ್ ಬೇರೆ. ವಿವಿಧ ಭಂಗಿ, ಭಾವ, ಸ್ಥಳಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳಬೇಕಾದುದು ಅನಧಿಕೃತವಾಗಿ ಕಡ್ಡಾಯವಾಗಿದೆ. ಪಾಯಿಖಾನೆ ಸಮಯ ಒಂದು ಬಿಟ್ಟರೆ ಪ್ರಾಯಶಃ ಎಲ್ಲ ಅವಸರದಲ್ಲಿಯೂ ಫೋಟೊ ಕ್ಲಿಕ್ಕಿಸಿಕೊಳ್ಳಲಾಗುತ್ತದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸತ್ತವರಿಗೂ ಕಡಿಮೆ ಇಲ್ಲ. ಪ್ರಿವೆಡ್ಡಿಂಗ್ ಫೋಟೊಗ್ರಫಿ ಇನ್ನೊಂದು ಗೋಳು. ಹೀಗೆ ತೆಗೆದುಕೊಂಡ ಚಿತ್ರಗಳನ್ನು ದಾಖಲು ಮಾಡಿ ಇಡಲಾಗುತ್ತಿದೆಯೇ ಎಂದರೆ ಇಲ್ಲ. ಏಕೆಂದರೆ ತಾವು ಹೊಡೆದುಕೊಂಡ ಎಲ್ಲ ಸೆಲ್ಫಿಗಳನ್ನು ಪ್ರಿಂಟ್ ಹಾಕಿಸಿಕೊಂಡರೆ ಅವುಗಳನ್ನಿಡಲು ಕೋಟೆಯೊಂದನ್ನು ಕಟ್ಟಿಸಬೇಕಾಗಬಹುದು. ಆದ್ದರಿಂದ ಹೋದವಾರ ತೆಗೆದ ಫೋಟೊ ಈ ವಾರ ಡಿಲೀಟ್. ಈ ಇವೆಂಟ್ ಫೋಟೊ ಮುಂದಿನ ಇವೆಂಟ್ಗೆ ಡಿಲೀಟ್. ಮೊಬೈಲ್ಗೂ ಒಂದು ಮಿತಿ ಇದೆ. ಫೋಟೊಗಳು ತುಂಬಿ ತುಳುಕಿದೊಡನೆ ಅದು ಮುಂದಿನವುಗಳನ್ನು ಇಂಬಿಟ್ಟುಕೊಳ್ಳಲಾಗದೆ ಒದ್ದಾಡುತ್ತದೆ. ಆಗ ಹಿಂದಿನವುಗಳನ್ನು ಅಳಿಸಿ ಹಾಕದೆ ಗತ್ಯಂತರವಿಲ್ಲ. ಸೆಲ್ಫಿಗಳಿಗಾಗಿಯೇ ಪ್ರಾಣ ತೆತ್ತವರು ಉಂಟು. ತಮ್ಮ ಫೋಟೊಗಳನ್ನು ವಿರಾಮದ ಹೊತ್ತಿನಲ್ಲಿ ತಾವೇ ನೋಡಿ ಖುಷಿ ಪಟ್ಟವರಂತೆ ವಿಷಾದ, ದುಃಖ ಪಟ್ಟು ನರಳುವವರು ಇಲ್ಲದಿಲ್ಲ. ತಮ್ಮ ಫೋಟೊಗಳನ್ನೇ ಕ್ಲಿಕ್ಕಿಸಿಕೊಳ್ಳುವ ಗುಂಗಿನಲ್ಲಿ ಕಳೆದು ಹೋದವರಿಗೆ ಸ್ವಾತಂತ್ರ್ಯೋತ್ಸವ ಅಥವಾ ಗಣರಾಜ್ಯೋತ್ಸವ ಗಮನಿಸಲು ಪುರುಸೊತ್ತಾದರೂ ಎಲ್ಲಿದೆ. ಹುಡುಗರಂತೂ ಗೆಳೆಯ, ಗೆಳತಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಲ್ಲಿ ಪ್ರಚಂಡ ಪ್ರತಿಭೆಯನ್ನು ವಿನಿಯೋಗಿಸುವುದನ್ನು ನೋಡಬೇಕು. ಫೋಟೊ ತೆಗೆಯುವ ಆ್ಯಂಗಲ್, ಹಿನ್ನೆಲೆ ಸೀನರಿ, ಬಣ್ಣಗಳ ಕಾಂಬಿನೇಷನ್ ಏನೇನೋ! ಅವರಿಂದಲೇ ಕೇಳಿ ಕಲಿಯಬೇಕು. ವಿದ್ಯಾರ್ಥಿಗಳು ಧ್ವಜಕ್ಕಿಂತ ಹೆಚ್ಚು ಭಕ್ತಿ ಭಾವದಿಂದ ಸೆಲ್ಫಿ ತೆಗೆಯುವುದು ಮತ್ತು ನೋಡುವುದರಲ್ಲಿ ಬಿಝಿಯಾಗಿದ್ದರೆ ಶಿಕ್ಷಕರಿಗೆ ಅವರನ್ನು ನಿಯಂತ್ರಿಸುವುದೇ ದೊಡ್ಡ ಕೆಲಸ. ಕೊರೋನ ಕಾಲದಲ್ಲಿ ಮೊಬೈಲ್ ಬಳಕೆ ಕಡ್ಡಾಯ ಮಾಡಿದವರೇ ಶಿಕ್ಷಕರು. ಈಗ ಅದನ್ನು ಹಿಡಿಯಬೇಡಿರಿ ಎಂದರೆ ನಡೆದೀತೆ? ಮಜವೆಂದರೆ ಇತರರ ಫೋಟೊ ನೋಡಲು ಯಾರಿಗೂ ಮನಸ್ಸಿಲ್ಲ. ತಮ್ಮ ಫೋಟೊ ತಾವು ನೋಡಿಕೊಳ್ಳುವುದರಲ್ಲೇ ಸುಖವಿದೆ. ಇದಕ್ಕೆ ಕೆಲವು ಅಪವಾದಗಳಿರಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ತಾನು ಹೇಗೆ ಕಾಣುತ್ತೇನೆ ಎಂಬ ಕುತೂಹಲ ಇದೆಯಲ್ಲ? ಇದಕ್ಕಿಂತ ಪ್ರಖರವಾದ ಕುತೂಹಲ ಇನ್ನೊಂದಿಲ್ಲವಂತೆ. ಸೆಲ್ಫಿ ಹಾವಳಿಯಿಂದಾಗಿ ಮೇಕಪ್ ಪಿಡುಗು ಉಲ್ಬಣಿಸಿದೆ. ಪ್ರಸಾಧನ ವಸ್ತುಗಳು, ಶೃಂಗಾರ ಸಾಧನಗಳಿಗೆ ಸಿಕ್ಕಾಪಟ್ಟೆ ವ್ಯಾಪಾರ. ಜನರು ತಿನ್ನುವ ಅಥವಾ ಜ್ಞಾನಾರ್ಜನೆ ಗೈಯುವ ಸಾಧನಗಳಿಗಿಂತ ಪ್ರಸಾಧನ ಮತ್ತು ಫ್ಯಾಷನ್ ವಸ್ತುಗಳಿಗೆ ಹೆಚ್ಚು ಹಣ ವಿನಿಯೋಗಿಸುವಂತೆ ಮಾಡಿದೆ ಆಧುನಿಕ ಮಾರುಕಟ್ಟೆ. ಸೆಲ್ಫಿ ಎಂಬ ಈ ಹುಚ್ಚನ್ನು ಜನರು ತನ್ನಷ್ಟಕ್ಕೆ ಕಂಡು ಕೊಂಡಿಲ್ಲ. ಇದರ ಹಿಂದೆ ಬಹು ದೊಡ್ಡ ವ್ಯಾಪಾರಿ ಲೋಕ ಟೊಂಕ ಕಟ್ಟಿ ನಿಂತಿದೆ. ಮೊಬೈಲ್ ಎನ್ನುವುದೇ ಬಹು ದೊಡ್ಡ ಆಕರ್ಷಣೆಯಾದರೆ, ಅದರಲ್ಲಿ ಸ್ಮಾರ್ಟ್ ಫೋನ್ ಎಂಬ ಮಾಯಾವಿ ಪ್ರಚಂಡ ಸಂಯಮಿಗಳನ್ನು ಕ್ಷಣ ಹೊತ್ತಾದರೂ ಅಲುಗಾಡಿಸದೆ ಇರಲಾರದು. ಆಧುನಿಕ ತಂತ್ರಜ್ಞಾನದ ಈ ಎಲ್ಲ ಆವಿಷ್ಕಾರಗಳು ತನ್ನಷ್ಟಕ್ಕೆ ಹಾನಿಕಾರಕವಲ್ಲ. ಅವುಗಳು ಅನಿಷ್ಟವೆಂತಲೂ ಅಲ್ಲ. ತಂತ್ರಜ್ಞಾನ ಮಾನವ ಬದುಕಿಗೆ ಮಹತ್ತರ ಕೊಡುಗೆ ಮಾತ್ರವಲ್ಲ; ಭವಿಷ್ಯದ ಬದುಕಿನ ದಿಕ್ಸೂಚಿಯೂ ಹೌದು. ಆದರೆ ಅದನ್ನು ನಿಯಂತ್ರಿಸುತ್ತಿರುವವರ ನಿಯತ್ತು ಇದೆಯಲ್ಲ! ಇದುವೇ ಮಾನವ ಸಮುದಾಯಗಳಿಗೆ ವರವಾಗುವ ಬದಲು ಕಂಟಕವಾಗಿ ಪರಿಣಮಿಸುತ್ತದೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಇತ್ಯಾದಿಗಳ ಮೂಲಕ ಒದಗಿ ಬರುವ ಫೇಸ್ಬುಕ್, ಇನ್ಸ್ಟಾಗ್ರಾಂ, ಎಐ ಮುಂತಾದವುಗಳು ಮಾನವ ಶ್ರಮವನ್ನು ಕಡಿಮೆ ಮಾಡುವುದರೊಂದಿಗೆ ಅವರ ಬುದ್ಧಿಮತ್ತೆಯನ್ನು ಇನ್ನೂ ಉತ್ಕೃಷ್ಟವಾಗಿ ಬಳಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಮನುಷ್ಯರು ತಮ್ಮ ಬುದ್ಧಿಯನ್ನು ಹೊಸ ಹೊಸ ಬಗೆಯಲ್ಲಿ ದುಡಿಸಿಕೊಳ್ಳುವ ಮೂಲಕ ಹೊಸ ಲೋಕವನ್ನೇ ನಿರ್ಮಿಸಲು ಶಕ್ತರು ಎಂಬುದನ್ನು ಇವು ಸಾಬೀತು ಮಾಡಿವೆ. ಮನುಷ್ಯರು ಬೇರೆ ಗ್ರಹಗಳಿಗೆ ಲಗ್ಗೆಯಿಟ್ಟು ಅಲ್ಲಿಯೂ ನೆಲೆಸುವ ದಿನ ದೂರವಿಲ್ಲ. ದೇದಿಪ್ಯಮಾನ ವಿಜ್ಞಾನ, ತಂತ್ರಜ್ಞಾನಗಳ ಆವಿಷ್ಕಾರಗಳು ಒಂದೆಡೆ ಇದ್ದರೆ, ಅವುಗಳನ್ನು ಕೆಲವೇ ಜನರು ತಮ್ಮ ಕಬ್ಜಾದಲ್ಲಿ ಇಟ್ಟುಕೊಂಡು ಆರ್ಥಿಕ ಲಾಭದ ಲಾಯಕ್ಕೆ ಬಿಗಿದು ಮನುಷ್ಯರನ್ನು ಬಲಿ ಪಡೆಯುತ್ತಿರುವ ವಿದ್ಯಮಾನ ಇನ್ನೊಂದೆಡೆ ಇದೆ. ಸಮಸ್ಯೆ ಡಿಜಿಟಲ್ ಆವಿಷ್ಕಾರಗಳಲ್ಲಿ ಇಲ್ಲ. ಅವುಗಳನ್ನು ತಮಗಾಗಿ ಮಾತ್ರ ದುಡಿಸಿಕೊಳ್ಳುತ್ತಿರುವ ಬಂಡವಾಳಶಾಹಿಗಳ ಕುತಂತ್ರದಲ್ಲಿ ಇದೆ. ಬಂಡವಾಳಿಗರು ತಮಗೆ ಲಾಭ ತರುವ ವಸ್ತು, ವಿಷಯಗಳ ಬಗೆಗೆ ಜನರಲ್ಲಿ ಮೋಹ ಹುಟ್ಟಿಸಿ ಅವರು ಅವುಗಳ ಚಟಗಾರರಾಗುವಂತೆ ಮಾಡುತ್ತಾರೆ. ಫೋಟೊ ತೆಗೆಸಿಕೊಳ್ಳುವುದು ತಪ್ಪಲ್ಲ. ಅದನ್ನೊಂದು ವ್ಯಸನ ಮಾಡಿಕೊಳ್ಳುವುದು ತಪ್ಪು. ಹಾಗಾದರೆ ಇದರಲ್ಲಿ ವ್ಯಾಪಾರಿಗಳದೇನು ತಪ್ಪು? ಜನರೇಕೆ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಬೇಕು? ಬಡವರೇಕೆ ಅದ್ದೂರಿ ಮದುವೆ ಮಾಡಿಕೊಂಡು ಸಾಲಗಾರರಾಗಬೇಕು? ಅವರಿಗೆ ಸ್ವಂತ ಬುದ್ಧಿಯಿಲ್ಲವೆ? ಎಂಬ ಪ್ರಶ್ನೆಗಳು ಹೊಟ್ಟೆ ತುಂಬಿದ ದೃಷ್ಟಿಹೀನರಿಂದ ಪುಂಖಾನುಪುಂಖವಾಗಿ ಬರುವುದುಂಟು. ತಾರ್ಕಿಕವಾಗಿ ಕೇಳಿದ ಪ್ರಶ್ನೆಗಳು ಸರಿಯಾಗಿವೆ. ಆದರೆ ತಾತ್ವಿಕವಾಗಿ ಅಂಥ ಪ್ರಶ್ನೆಗಳು ಮೂಡಿದ ವಸ್ತುಸ್ಥಿತಿಯ ಅರಿವು ಅವುಗಳನ್ನು ಕೇಳುವವರಿಗೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಮನುಷ್ಯರು ಸ್ವಭಾವತಃ ಅನುಕರಣಶೀಲರು ಮತ್ತು ಭಯಾವಹರು. ಅವರು ಯಾವತ್ತೂ ಭೌತಿಕವಾಗಿ ತಮಗಿಂತ ಮೇಲು ವರ್ಗದವರನ್ನು ಅನುಕರಿಸುವರಲ್ಲದೆ ಅದನ್ನೇ ಆದರ್ಶವೆಂದುಕೊಳ್ಳುತ್ತಾರೆ. ಮನುಷ್ಯರಲ್ಲಿ ವಿವೇಚನೆ ಬೆಳೆಯುವುದಕ್ಕಿಂತ ಮುಂಚೆ ಜೀವನೋತ್ಸಾಹ ಮೊಳೆದಿದೆ. ಪ್ರಚಂಡ ಜೀವನೋತ್ಸಾಹವೇ ಅವರನ್ನು ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೈ ಹಿಡಿದು ನಡೆಸಿದೆ. ಆದರೆ ಈ ಜೀವನೋತ್ಸಾಹಕ್ಕೆ ಚಿಮ್ಮು ಹಲಗೆಯಾಗಿ ಒದಗಿ ಬರುವುದೇ ಈ ಭೌತ ಪ್ರಪಂಚ. ತನ್ನ ಸುತ್ತಲಿನ ಭೌತ ಪ್ರಪಂಚದ ವಿದ್ಯಮಾನಗಳು ಮನುಷ್ಯರನ್ನು ಇನ್ನಿಲ್ಲದಂತೆ ಪ್ರಭಾವಿಸುತ್ತವೆ. ಮನುಷ್ಯರ ಈ ಮಿತಿಯನ್ನು ಯಾರೂ ಬಳಸಿಕೊಳ್ಳಬಹುದು. ಪ್ರವಾಹದಗುಂಟ ಈಸುವುದು ಸುಲಭ. ಪ್ರವಾಹದ ವಿರುದ್ಧ ಈಸಿ ಜೈಸುವುದು ಕಷ್ಟ ಸಾಧ್ಯ. ಹೀಗಾಗಿ ಮನುಷ್ಯರಿಗೆ ಸಂಭ್ರಮಿಸಲು ನೆಪ ಬೇಕು. ನೆಪಕ್ಕೆ ಒದಗಿ ಬರುವ ವಸ್ತು ವಿಷಯಗಳಿಂದ ದೂರ ನಿಲ್ಲುವುದು ಎಲ್ಲರಿಗೂ ಸಾಧ್ಯವಿಲ್ಲ. ಅಂತೆಯೇ ಅಣ್ಣ ಬಸವಣ್ಣನವರು ‘‘ವಿಷಯವೆಂಬ ಹಸುರೆನೆನ್ನ ಮುಂದೆ ತಂದು ಪಸರಿಸದಿರಯ್ಯಾ ಪಶುವೇನು ಬಲ್ಲದು? ಹಸುರೆಂದೆಳೆಸುವುದು. ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ, ಸುಬುದ್ಧಿಯೆಂಬ ಉದಕವನ್ನೆರೆದು ನೋಡಿ ಸಲಹಯ್ಯಾ ಕೂಡಲಸಂಗಮದೇವಾ’’ ಎಂದು ಹೇಳಿದ್ದಾರೆ. ಮನುಷ್ಯರಲ್ಲಿ ಸ್ವಭಾವ ಜನ್ಯವಾಗಿರುವ ವಸ್ತು ಮೋಹವನ್ನು ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿ ಲೋಕವೇ ಸೆಲ್ಫಿಯಂಥ ಕಡಿಮೆ ಉಪಯೋಗಿ ಹೆಚ್ಚು ಹಾನಿಕಾರಕ ಚಟಗಳನ್ನು ಬಿತ್ತಿ ಬೆಳೆಯುತ್ತಿದೆ. ಹೀಗಾಗಿಯೇ ನಮ್ಮ ರಾಷ್ಟ್ರೀಯ ಹಬ್ಬಗಳೆಲ್ಲವೂ ಮುಂಚಿನ ಆಕರ್ಷಣೆ ಮತ್ತು ಕುತೂಹಲ ಕಳೆದುಕೊಂಡು ಔಪಚಾರಿಕ ಸಂಪ್ರದಾಯಗಳಾಗಿ ನಿಲ್ಲುತ್ತಿವೆ. ಅಷ್ಟಕ್ಕೂ ಹೊಸ ಪೀಳಿಗೆಗೆ ಸ್ವಾತಂತ್ರ್ಯ ಸಂಘರ್ಷದ ಬ್ಯಾನಿ ಗೊತ್ತಿಲ್ಲವಷ್ಟೆ.
ದ್ವೇಷ ಭಾಷಣ ಮಸೂದೆ ರಾಷ್ಟ್ರಪತಿ ಅಂಗಳಕ್ಕೆ: ಸರ್ಕಾರ v/s ರಾಜ್ಯಪಾಲ ಮತ್ತೊಂದು ಸುತ್ತಿನ ಸಂಘರ್ಷ
ರಾಜ್ಯ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಲು ನಿರಾಕರಿಸಿದ್ದಾರೆ. ಉಭಯ ಸದನದಲ್ಲಿ ಅಂಗೀಕಾರವಾಗಿರುವ ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿದ್ದು, ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ 29 ಕಾರಣಗಳನ್ನು ನೀಡಿ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದಾರೆ. ರಾಜ್ಯಪಾಲರ ಈ ನಿರ್ಧಾರದಿಂದ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಉಂಟಾಗಿದೆ. ಮಸೂದೆಗೆ ಅಂಕಿತ ಹಾಕದೇ ಇರಲು ರಾಜ್ಯಪಾಲರು ಕೊಟ್ಟ ಪ್ರಮುಖ ಕಾರಣಗಳೇನು? ಈ ವಿಧೇಯಕದಲ್ಲಿರುವ ಪ್ರಮುಖ ಹೈಲೈಟ್ಸ್ ಏನು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
Viral Post: ಹಿಂದಿ ಮಾತನಾಡುವವರು ಇಂಡಿಯನ್ಸ್: ದಕ್ಷಿಣ ಭಾರತದವರು ಜೋಕರ್ಸ್, ಕಿಡಿ ಹೊತ್ತಿಸಿದ ಪೋಸ್ಟ್
Hindi Speakers: ಸೋಷಿಯಲ್ ಮೀಡಿಯಾದಲ್ಲಿ ಹಿಂದಿ - ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ವಿಚಾರವಾಗಿ ಮಾಡಿರುವ ಪೋಸ್ಟ್ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಹಿಂದಿ ಮಾತನಾಡುವವರು ಇಂಡಿಯನ್ಸ್ ಎಂದು ಬರೆದುಕೊಳ್ಳಲಾಗಿದೆ. ಇದಕ್ಕೆ ಕನ್ನಡಿಗರು ಸಹ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ Priya Meh ♑️ / @PRIYAME60820600
“ತಾಳ್ಮೆ ಫಲ ನೀಡಿತು”: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ
ಹೊಸದಿಲ್ಲಿ: ಅಮೆರಿಕ ಜೊತೆಗಿನ ಭಾರತದ ಐತಿಹಾಸಿಕ ವ್ಯಾಪಾರ ಒಪ್ಪಂದವು ನಿರಂತರ ತಾಳ್ಮೆಯ ಫಲಿತಾಂಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸುಂಕ ಮಾತುಕತೆಗಳ ಬಗ್ಗೆ ಹಿಂದಿನ ಟೀಕೆಗಳು ಸಕಾರಾತ್ಮಕ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದ್ದಾರೆ. ಎನ್ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವ್ಯಾಪಾರ ಒಪ್ಪಂದವು ಅನುಕೂಲಕರ ಆರ್ಥಿಕ ವಾತಾವರಣವನ್ನು ಸೃಷ್ಟಿಸಿದೆ. ಜಾಗತಿಕ ವ್ಯಾಪಾರ ಮಾತುಕತೆಯಲ್ಲಿ ಸರಕಾರ ಅನುಸರಿಸುತ್ತಿರುವ ನಿರಂತರ, ಸಮತೋಲನಯುತ ಮತ್ತು ಸೂಕ್ತ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಜನರು ಸುಂಕಗಳ ಬಗ್ಗೆ ಟೀಕಿಸಿದರು, ನಾವು ತಾಳ್ಮೆಯಿಂದ ಮುಂದುವರಿದೆವು, ಅದರ ಫಲಿತಾಂಶಗಳು ಈಗ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಶ್ವದ ಕ್ರಮವು ಬದಲಾಗುತ್ತಿದೆ. ಅದರ ಪಥವು ಭಾರತದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಿದೆ. ನಾನು ಇದನ್ನು ವಿವಿಧ ಜಾಗತಿಕ ವೇದಿಕೆಗಳಲ್ಲಿ ಹೇಳುತ್ತಾ ಬಂದಿದ್ದೇನೆ. ಇಂದು ಅನೇಕ ದೇಶಗಳಲ್ಲಿ ವ್ಯಾಪಾರ ಉದ್ವಿಗ್ನತೆಗಳ ನಡುವೆಯೂ ಭಾರತವು ಪ್ರಯೋಜನ ಪಡೆಯುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು. ಸಭೆಗೆ ಮುಂಚಿತವಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ವಿಶ್ವಾಸವು ಎಲ್ಲಾ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿಯಾಗಿದೆ. ನಮ್ಮ ನಾಗರಿಕರ ಈ ಶಕ್ತಿಯು, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

22 C