TET 2026 | ಭೋಪಾಲ್ ನಲ್ಲಿ ಶಿಕ್ಷಕರ ಪ್ರತಿಭಟನೆ: ಪರೀಕ್ಷೆ ರದ್ದತಿಗೆ ಆಗ್ರಹ
ಭೋಪಾಲ್: ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಶನಿವಾರ ಮಧ್ಯಪ್ರದೇಶದ ಸಾವಿರಾರು ಶಿಕ್ಷಕರು ಭೋಪಾಲ್ ನ BHEL ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲ ಸೇವಾನಿರತ ಶಿಕ್ಷಕರು ತಮ್ಮ ಸೇವೆಯಲ್ಲಿ ಮುಂದುವರಿಯಲು ಹಾಗೂ ಭಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ. ಈ ನಿರ್ದೇಶನದ ಪ್ರಕಾರ, ಐದು ವರ್ಷಕ್ಕಿಂತ ಹೆಚ್ಚು ಸೇವಾವಧಿ ಹೊಂದಿರುವ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಆದರೆ, ಐದು ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಶಿಕ್ಷಕರಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲಾಗಿದ್ದರೂ, ಅವರಿಗೆ ಭಡ್ತಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಈ ಆದೇಶಕ್ಕೆ ಸೇವಾನಿರತ ಶಿಕ್ಷಕರಿಂದ ವ್ಯಾಪಕ ಕಳವಳ ವ್ಯಕ್ತವಾಗಿದ್ದು, ಈಗಾಗಲೇ ಸೇವೆಯಲ್ಲಿರುವ ಶಿಕ್ಷಕರಿಗೆ ಈ ನಿಯಮ ಅನ್ವಯಿಸಬಾರದು ಎಂದು ಒತ್ತಾಯಿಸಿದ್ದಾರೆ. ಸೇವಾನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ವೇದಾಂತ ವಿದ್ಯುತ್ ಘಟಕ ಸ್ಫೋಟ | ಮೃತರ ಸಂಖ್ಯೆ 24ಕ್ಕೆ ಏರಿಕೆ
ರಾಯಪುರ, ಎ. 19: ಛತ್ತೀಸ್ಗಢ ದ ಶಕ್ತಿಯಲ್ಲಿರುವ ವೇದಾಂತ ವಿದ್ಯುತ್ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಮೃತ ಕಾರ್ಮಿಕ ಛತ್ತೀಸ್ಗಢದ ನಿವಾಸಿ. ದುರಂತದಲ್ಲಿ ಗಾಯಗೊಂಡ ಆರು ದಿನಗಳ ಬಳಿಕ ಈತ ರಾಜಗಢ ವೈದ್ಯಕೀಯ ಕಾಲೇಜಿನಲ್ಲಿ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಇತರ 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಕಾರ್ಮಿಕರು ಶನಿವಾರ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರನ್ನು ಸುಬ್ರತಾ ಕುಮಾರ್ ಜನ ಎಂದು ಗುರುತಿಸಲಾಗಿದೆ. ಈತ ರಾಯಗಢ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ. ಇನ್ನೊಬ್ಬರನ್ನು ಉಪೇಂದ್ರ ಶಾ ಎಂದು ಗುರುತಿಸಲಾಗಿದೆ. ಈತ ರಾಯಪುರದ ಕಾಲ್ಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಜನ ಪಶ್ಚಿಮ ಬಂಗಾಳದ ಮೇಧಿನಿಪುರ ಹಾಗೂ ಶಾ ಜಾರ್ಖಂಡ್ನ ಗರವಾ ನಿವಾಸಿಗಳು. ಘಟನೆಯಲ್ಲಿ ಇಬ್ಬರಿಗೂ ಸುಮಾರು ಶೇ. 90ರಷ್ಟು ಗಾಯಗಳಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Aland | ಸಿಯುಕೆಯಲ್ಲಿ ‘ಉತ್ತರ ಪೂರ್ವ ರಾಜ್ಯಗಳ ಉತ್ಸವ–2026’ ವೈಭವ
ಆಳಂದ: ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಆಯೋಜಿಸಲಾದ “ಉತ್ತರ ಪೂರ್ವ ರಾಜ್ಯಗಳ ಉತ್ಸವ–2026” ಕಾರ್ಯಕ್ರಮವು ವೈವಿಧ್ಯತೆಯೊಳಗಿನ ಏಕತೆಯನ್ನು ಸಾರುವ ವಿಶಿಷ್ಟ ವೇದಿಕೆಯಾಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕದ ಎಡಿಜಿಪಿ (ಆಡಳಿತ) ಯಾಡಾ ಮಾರ್ಟಿನ್ ಮಾರ್ಬನ್ಯಾಂಗ್, ಐಪಿಎಸ್ ಮಾತನಾಡಿ, ಉತ್ತರ ಪೂರ್ವ ರಾಜ್ಯಗಳ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕೌಶಲ್ಯಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ಹೇಳಿದರು. ಈ ಭಾಗದ ಜನರು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆ ವಿಷಯ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡು, ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಸಿಯುಕೆ ವೈವಿಧ್ಯತೆಯೊಳಗಿನ ಏಕತೆಯ ಪ್ರತಿರೂಪವಾಗಿದ್ದು, ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. “ಸಿಯುಕೆ ನಿಜಕ್ಕೂ ಮಿನಿ ಭಾರತ,” ಎಂದು ಹೇಳಿದರು. ಭಾರತದ ಬಹುಮುಖ ಸಮಾಜದ ಪ್ರತಿಬಿಂಬವಾಗಿರುವ ಈ ವಿಶ್ವವಿದ್ಯಾಲಯದಲ್ಲಿ ವಿವಿಧ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳು ಒಟ್ಟಾಗಿ ಕಲಿಯುತ್ತಾ ಬೆಳೆದು ಬರುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಉತ್ತರ ಪೂರ್ವ ವಿದ್ಯಾರ್ಥಿ ಸಮುದಾಯದ ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಯನ್ನು ಅವರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಉತ್ತರ ಪೂರ್ವ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ ನೃತ್ಯ, ವೇಷಭೂಷಣ ಹಾಗೂ ಪರಂಪರೆಗಳನ್ನು ಮನಮೋಹಕವಾಗಿ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ಪ್ರಭಾರ ಕುಲಸಚಿವರಾದ ಪ್ರೊ. ಚನ್ನವೀರ ಆರ್. ಎಂ., ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಬಸವರಾಜ ಕುಬಕಡ್ಡಿ, ಕಾರ್ಯಕ್ರಮ ಸಂಯೋಜಕ ಡಾ. ಜೋಮಿಯರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Uttar Pradesh | ಕಾನ್ಪುರದಲ್ಲಿ ಅವಳಿ ಪುತ್ರಿಯರ ಕತ್ತು ಕೊಯ್ದು ಹತ್ಯೆಗೈದ ತಂದೆ
ಲಕ್ನೋ, ಎ. 19: ನೌಬಸ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿದ್ವಾಯಿ ನಗರದಲ್ಲಿರುವ ತ್ರಿಮೂರ್ತಿ ಅಪಾರ್ಟ್ಮೆಂಟ್ನಲ್ಲಿ ವೈದ್ಯಕೀಯ ಪ್ರತಿನಿಧಿ ಶಶಿ ರಂಜನ್ ಮಿಶ್ರಾ ತನ್ನ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಕೊಯ್ದು ಹತ್ಯೆಗೈದಿದ್ದಾನೆ. ಆರೋಪಿ ಶಶಿ ರಂಜನ್ ಮಿಶ್ರಾ ತನ್ನ ಪತ್ನಿ ರೇಷ್ಮಾ ಕ್ಷೇತ್ರಿ ಹಾಗೂ ಮೂವರು ಮಕ್ಕಳಾದ 11 ವರ್ಷದ ಅವಳಿ ಪುತ್ರಿಯರಾದ ರಿದ್ಧಿ ಮತ್ತು ಸಿದ್ಧಿ, 6 ವರ್ಷದ ಪುತ್ರ ಗನ್ನುನೊಂದಿಗೆ ಇಲ್ಲಿ ವಾಸಿಸುತ್ತಿದ್ದರು ಎಂದು ದಕ್ಷಿಣ ಡಿಸಿಪಿ ದೀಪೇಂದ್ರ ನಾಥ್ ಚೌಧರಿ ತಿಳಿಸಿದ್ದಾರೆ. ಪೊಲೀಸರು ತುರ್ತು ಸಂಖ್ಯೆ 112ರಿಂದ ಕರೆ ಸ್ವೀಕರಿಸಿದ್ದರು. ಅವಳಿ ಮಕ್ಕಳನ್ನು ಹತ್ಯೆಗೈದ ಬಗ್ಗೆ ಸ್ವತಃ ಶಶಿ ರಂಜನ್ ಮಿಶ್ರಾ ಕರೆಯಲ್ಲಿ ಮಾಹಿತಿ ನೀಡಿದ್ದ. ಪೊಲೀಸರು ಫ್ಲ್ಯಾಟ್ ಗೆ ಧಾವಿಸಿದಾಗ ಇಬ್ಬರು ಬಾಲಕಿಯರ ಮೃತದೇಹಗಳು ನೆಲದ ಮೇಲೆ ಬಿದ್ದಿದ್ದವು. ಕೊಠಡಿ ರಕ್ತದಿಂದ ತುಂಬಿತ್ತು. ಸಮೀಪದಲ್ಲೇ ಚಾಕು ಬಿದ್ದಿತ್ತು. ಆರೋಪಿ ಮೃತದೇಹಗಳ ಪಕ್ಕದಲ್ಲೇ ಕುಳಿತಿದ್ದ. ಆತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಹತ್ಯೆಯ ಹಿಂದಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಿಶ್ರಾ ಕುಡಿದ ಮತ್ತಿನಲ್ಲಿ ತನಗೆ ದಿನನಿತ್ಯ ಹೊಡೆಯುತ್ತಿದ್ದ ಎಂದು ಪತ್ನಿ ರೇಷ್ಮಾ ಕ್ಷೇತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಫ್ಲ್ಯಾಟ್ ನಲ್ಲಿ ಪ್ರವೇಶ ದ್ವಾರದಿಂದ ಹಿಡಿದು ಮಲಗುವ ಕೋಣೆವರೆಗೆ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಎಂದು ಅವರು ತಿಳಿಸಿದ್ದಾರೆ. ರೇಷ್ಮಾ ಪಶ್ಚಿಮ ಬಂಗಾಳದ ಸಿಲಿಗುರಿಯ ನಿವಾಸಿ ಹಾಗೂ ಆರೋಪಿ ಶಶಿ ರಂಜನ್ ಮಿಶ್ರಾ ಬಿಹಾರದ ನಿವಾಸಿ. ಇವರು 2014ರಲ್ಲಿ ವಿವಾಹವಾಗಿದ್ದರು.
ಕಲಬುರಗಿಯಲ್ಲಿ ಬಸವ ಜಯಂತಿ ಅಂಗವಾಗಿ ಕಾರ್ ರ್ಯಾಲಿ
ಕಲಬುರಗಿ: ಬಸವ ಜಯಂತಿ ನಿಮಿತ್ತ ಬಸವ ಮಿತ್ರ ಮಂಡಲ ಹಮ್ಮಿಕೊಂಡಿದ್ದ 12ನೇ ವರ್ಷದ ಬೃಹತ್ ಕಾರ್ ರ್ಯಾಲಿ ನಗರದಲ್ಲಿ ವೈಭವದಿಂದ ಜರುಗಿತು. ಮಂಡಲದ ಜಗದೀಶ್ ದೇಶಮುಖ ಅವರ ನೇತೃತ್ವದಲ್ಲಿ ನಡೆದ ರ್ಯಾಲಿಗೆ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ದೊಡ್ಡಪ್ಪ ಅಪ್ಪ ಚಾಲನೆ ನೀಡಿ ಆಶೀರ್ವದಿಸಿದರು. ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ಈ ಮೆರವಣಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಅನ್ನಪೂರ್ಣ ಕ್ರಾಸ್ ಮೂಲಕ ಸಾಗುತ್ತಾ ಜಗತ್ ವೃತ್ತ ತಲುಪಿತು. ಬಳಿಕ ಬಸವಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿ ಸಮಾಪ್ತಿಯಾಯಿತು. ಸುಮಾರು 1000ಕ್ಕೂ ಹೆಚ್ಚು ಕಾರುಗಳಲ್ಲಿ ಸಾವಿರಾರು ಬಸವ ಭಕ್ತರು ಭಾಗವಹಿಸಿ ನಗರಾದ್ಯಂತ ಬಸವಣ್ಣನವರ ಜಯಘೋಷ ಮೊಳಗಿಸಿದರು. ರ್ಯಾಲಿಯುದ್ದಕ್ಕೂ ಯುವ ಸಮೂಹದ ಉತ್ಸಾಹ ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದ ಎಂ.ವೈ. ಪಾಟೀಲ್, ಡಾ. ಅಜಯ್ ಸಿಂಗ್, ದತ್ತಾತ್ರೇಯ ಪಾಟೀಲ್ ರೇವೂರ್, ಶಶೀಲ್ ನಮೋಶಿ, ಮಾಜಿ ಸಂಸದ ಡಾ. ಉಮೇಶ್ ಜಾಧವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇಷ್ಟಲಿಂಗ ಪೂಜೆ, ದೀಕ್ಷಾ ಸಮಾರಂಭ : ಬಸವ ಜಯಂತಿ ಅಂಗವಾಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಸಮಾರಂಭ ಭಕ್ತಿಭಾವದಿಂದ ನಡೆಯಿತು. ಇಳಕಲದ ಮಹಾಂತೇಶ್ವರ ಮಠದ ಗುರು ಮಹಾಂತ ಮಹಾಶಿವಯೋಗಿಗಳು ಹಾಗೂ ಪ್ರಭುಶ್ರೀ ಮಾತಾಜಿ ಅವರ ಮಾರ್ಗದರ್ಶನದಲ್ಲಿ ಪೂಜೆ ಕೈಂಕರ್ಯಗಳು ನಡೆದವು. ಈ ಸಂದರ್ಭದಲ್ಲಿ ಬಸವಣ್ಣ ಅವರ ಕಾಯಕ-ದಾಸೋಹ ತತ್ವಗಳು, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸುಮಾರು 1000ಕ್ಕೂ ಅಧಿಕ ಭಕ್ತರು ಏಕಕಾಲದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಶರಣ ಸಂಸ್ಕೃತಿಯ ಮಹತ್ವವನ್ನು ಮೆರೆದರು. ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ್, ಕಾರ್ಯಾಧ್ಯಕ್ಷ ಬಿ.ಜಿ. ಪಾಟೀಲ್ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ್ ಪಾಲ್ಗೊಂಡಿದ್ದರು. ಅಲ್ಲದೆ, ಬಸವರಾಜ್ ದೇಶಮುಖ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರವೀಂದ್ರ ಶಾಬಾದಿ, ಆರ್.ಜಿ. ಶೆಟ್ಗರ್, ಡಾ. ಭಾಗ್ಯಶ್ರೀ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬರುವ ಹತ್ತು ಪ್ರಾಣಿಗಳ ಬಗ್ಗೆ ಗೊತ್ತೇ?
ಕೆಲವು ಅಪರೂಪದ, ಅಳಿವಿನಂಚಿನಲ್ಲಿರುವ ಪ್ರಭೇದಗಳು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತವೆ. ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಪಶ್ಚಿಮ ಘಟ್ಟಗಳು ವಿಶ್ವದ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದೆ. ಹಿಮಾಲಯಕ್ಕಿಂತಲೂ ಹಳೆಯದಾದ ಈ ಕಾಡುಗಳು ಭೂಮಿಯ ಮೇಲೆ ಎಲ್ಲೂ ಸಿಗದ ಕೆಲವು ಪ್ರಭೇದಗಳನ್ನು ಹೊಂದಿವೆ. ಸೂರ್ಯನ ಬೆಳಕು ನೆಲಕ್ಕೆ ಬೀಳದಂತಹ ದಟ್ಟ ಕಾಡುಗಳು, ಮಂಜಿನ ಬೆಟ್ಟಗಳು ಮತ್ತು ನದಿ ಕಣಿವೆಗಳಲ್ಲಿ ಅಡಗಿರುವ ಪ್ರಾಣಿಗಳು ಅಲ್ಲಿನ ಪರಿಸರದಷ್ಟೇ ವಿಶಿಷ್ಟವಾಗಿವೆ. ಸಿಂಹ-ಬಾಲದ ಮಕಾಕ್ (Lion-tailed macaque) ಬೆಳ್ಳಿಯ ನೀಳಗಡ್ಡೆಯ ಮುಖದ ರೋಮಗಳು ಮತ್ತು ಕುಚ್ಚು ಕೂದಲಿನ ಬಾಲ ಹೊಂದಿರುವ ಈ ಪುರಾತನ ಜೀವಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುತ್ತದೆ. ಸಣ್ಣ ಗುಂಪುಗಳಲ್ಲಿ ಕಂಡುಬರುವ ಇವುಗಳು ತಮ್ಮ ಜೀವನದ ಬಹುಪಾಲನ್ನು ದಟ್ಟ ಕಾಡಿನ ಮರಗಳ ಮೇಲೆಯೇ ಕಳೆಯುತ್ತವೆ. ಅಪರೂಪಕ್ಕೆ ಮಾತ್ರ ನೆಲಕ್ಕೆ ಇಳಿಯುತ್ತವೆ. ನೀಲಗಿರಿ ತಹರ್ (Nilgiri tahr) ಎತ್ತರದ ಹುಲ್ಲುಗಾವಲುಗಳಲ್ಲಿ ಹೆಚ್ಚು ಕಂಡುಬರುವ ಈ ದೃಢ ಗೊರಸುಳ್ಳ ಪ್ರಾಣಿ ಸಾಮಾನ್ಯವಾಗಿ ಕಲ್ಲಿನ ಬಂಡೆಗಳ ಮೇಲ್ಭಾಗದಲ್ಲಿ ಕಾಣಸಿಗುತ್ತದೆ. ಒಮ್ಮೆ ಅಳಿವಿನಂಚಿನಲ್ಲಿದ್ದ ಈ ಪ್ರಾಣಿಗಳ ಸಂರಕ್ಷಣಾ ಪ್ರಯತ್ನಗಳು ಅದರ ಸಂಖ್ಯೆಯನ್ನು ಸ್ಥಿರಗೊಳಿಸಲು ಸಹಾಯ ಮಾಡಿವೆ. ಮಲಬಾರ್ ದೈತ್ಯ ಅಳಿಲು (Malabar giant squirrel) ಭಾರತೀಯ ದೈತ್ಯ ಅಳಿಲು ಎಂದೇ ಕರೆಯಲಾಗುವ ಈ ಬಹುಬಣ್ಣದ ಜೀವಿ ಮರಗಳ ಮೇಲೆ ಚುರುಕಾಗಿ ಜಿಗಿಯುತ್ತದೆ. ಬಣ್ಣಬಣ್ಣದ ಚರ್ಮವುಳ್ಳ ಈ ಅಳಿಲುಗಳು ಭಾರತದ ಅತ್ಯಂತ ಆಕರ್ಷಕ ಸಸ್ತನಿಗಳಲ್ಲಿ ಒಂದಾಗಿದೆ. ನೇರಳೆ ಕಪ್ಪೆ (Purple frog) ಭೂಮಿಯ ಅತ್ಯಂತ ವಿಚಿತ್ರ ಉಭಯಚರಗಳಲ್ಲಿ ಒಂದಾದ ಈ ನೇರಳೆ ಕಪ್ಪೆ ತನ್ನ ಜೀವನದ ಬಹುಪಾಲನ್ನು ನೆಲದಡಿಯಲ್ಲೇ ಕಳೆಯುತ್ತದೆ. ಮುಂಗಾರು ಸಮಯದಲ್ಲಿ ಸಂತಾನೋತ್ಪತ್ತಿಗಾಗಿ ಕೆಲಕಾಲ ಹೊರಗೆ ಬರುತ್ತದೆ. ಇದನ್ನು “ಲಿವಿಂಗ್ ಫಾಸಿಲ್” ಎಂದೂ ಕರೆಯಲಾಗುತ್ತದೆ. ನೀಲಗಿರಿ ಲಂಗೂರ್ (Nilgiri langur) ಹೊಳಪುಳ್ಳ ಕಪ್ಪು ಚರ್ಮ ಮತ್ತು ಚಿನ್ನದ-ಕಂದು ಬಣ್ಣದ ತಲೆಯಿಂದ ಗುರುತಿಸಬಹುದಾದ ಈ ನಾಚಿಕೆ ಸ್ವಭಾವದ ಸಸ್ತನಿ ಪ್ರಾಣಿ ಮುಖ್ಯವಾಗಿ ಎಲೆಗಳು, ಹಣ್ಣುಗಳು ಮತ್ತು ಹೂವುಗಳನ್ನು ತಿನ್ನುತ್ತದೆ. ಮಲಬಾರ್ ಸಿವೆಟ್ (Malabar civet) ಅತ್ಯಂತ ಅಪರೂಪದ ಈ ಸಸ್ತನಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಆವಾಸಸ್ಥಾನದ ನಷ್ಟದಿಂದಾಗಿ ಅಳಿವಿನಂಚಿಗೆ ತಳ್ಳಲ್ಪಟ್ಟಿದೆ. ಇದನ್ನು ಕಾಣುವುದು ಅತ್ಯಂತ ವಿರಳ. ಭಾರತೀಯ ಹಾರುವ ಹಲ್ಲಿ (Indian flying lizard) ಈ ಗಮನಾರ್ಹ ಸರೀಸೃಪವು ನಿಜವಾಗಿ ಹಾರುವುದಿಲ್ಲ. ಆದರೆ ರೆಕ್ಕೆಯಂತಿರುವ ಪೊರೆಗಳನ್ನು ಬಳಸಿಕೊಂಡು ಮರಗಳ ನಡುವೆ ಜಾರುತ್ತದೆ. ಮರದ ತೊಗಟೆಗಳ ಮೇಲೆ ಮರೆಯಾಗಿದ್ದರೆ ಕಾಣುವುದೇ ಕಷ್ಟ. ಮಲಬಾರ್ ಗ್ರೇ ಹಾರ್ನ್ಬಿಲ್ (Malabar grey hornbill) ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಈ ಹಣ್ಣು ತಿನ್ನುವ ಪಕ್ಷಿ ಬೀಜ ಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ದೊಡ್ಡ ಬಾಗಿದ ಕೊಕ್ಕು ಮತ್ತು ಜೋರಾದ ಕೂಗಿನಿಂದ ಸುಲಭವಾಗಿ ಗುರುತಿಸಬಹುದು. ತಿರುವಾಂಕೂರು ಆಮೆ (Travancore tortoise) ಅರಣ್ಯದಲ್ಲಿ ವಾಸಿಸುವ ಈ ಅಪರೂಪದ ಆಮೆ ಎಲೆಗಳ ಕಸ ಮತ್ತು ದಟ್ಟ ಪೊದೆಗಳಲ್ಲಿ ಬದುಕುತ್ತದೆ. ಗಾತ್ರದ ಹೊರತಾಗಿಯೂ ಇದನ್ನು ಗುರುತಿಸುವುದು ಕಷ್ಟ. ನೀಲಗಿರಿ ಮಾರ್ಟೆನ್ (Nilgiri marten) ಭಾರತದ ಏಕೈಕ ಮಾರ್ಟೆನ್ ಪ್ರಭೇದವಾದ ಈ ಮಾಂಸಾಹಾರಿ ಪ್ರಾಣಿ ವಿರಳವಾಗಿ ಕಂಡುಬರುತ್ತದೆ. ದೇಶದಲ್ಲಿ ಅತಿ ಕಡಿಮೆ ಅಧ್ಯಯನಗೊಂಡ ಸಸ್ತನಿಗಳಲ್ಲಿ ಒಂದಾಗಿದೆ. ಕೃಪೆ: Indian Express
Kalaburagi | ಎ.22ರಂದು ಸಿ.ಯು.ಕೆ 10ನೇ ಘಟಿಕೋತ್ಸವ; 769 ಅಭ್ಯರ್ಥಿಗಳಿಗೆ ಪದವಿ ಪ್ರದಾನ: ಪ್ರೊ.ಬಟ್ಟು ಸತ್ಯನಾರಾಯಣ
ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭಾಗಿ
ಆಳಂದದಲ್ಲಿ ಮೇ 6, 7ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ: ಶಿವುಪುತ್ರ ನಡಗೇರಿ
ಆಳಂದ: ಭಾರತ ರತ್ನ, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಮೇ 6 ಮತ್ತು 7ರಂದು ಎರಡು ದಿನಗಳ ಕಾಲ ವಿಶೇಷ ಹಾಗೂ ಅರ್ಥಪೂರ್ಣ ಉತ್ಸವವನ್ನು ಆಯೋಜಿಸಲಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಜಯಂತಿ ಪ್ರಚಾರ ಸಮಿತಿ ಅಧ್ಯಕ್ಷ ಶಿವುಪುತ್ರ ನಡಗೇರಿ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮೊದಲ ಬಾರಿಗೆ ತಾಲೂಕು ಮಟ್ಟದ ಸಮಿತಿಯ ಆಶ್ರಯದಲ್ಲಿ ಸಂಯೋಜಿತವಾಗಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಜನಸಾಮಾನ್ಯರ ಹೆಚ್ಚಿನ ಭಾಗವಹಿಸುವಿಕೆಗೆ ಒತ್ತು ನೀಡಲಾಗಿದೆ ಎಂದರು. ಮೇ 6ರಂದು ಸಂಜೆ 5 ಗಂಟೆಗೆ ಶ್ರೀರಾಮ ಮಾರುಕಟ್ಟೆಯಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಖ್ಯಾತ ವಾಗ್ಮೀ ಸುಸ್ಮಾ ಅಂದಾರೆ, ರಾಜ್ಯಸಭಾ ಸದಸ್ಯೆ ಜ್ಯೋತಿ ವಾಘ್ಮೋರೆ, ಶಾಸಕ ಬಿ.ಆರ್. ಪಾಟೀಲ, ಮಾಜಿ ಶಾಸಕ ಸುಭಾಷ್ ಗುತ್ತೇದಾರ, ಜೆಡಿ(ಎಸ್) ಜಿಲ್ಲಾಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಹಾಗೂ ಎನ್. ಮಹೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭದ ನಂತರ ಕಲಬುರಗಿಯ ಡಾ. ಅಂಬೇಡ್ಕರ್ ಕಲಾ ತಂಡದಿಂದ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಪ್ರತಿಬಿಂಬಿಸುವ ನಾಟಕ ಪ್ರದರ್ಶನವೂ ನಡೆಯಲಿದೆ. ಮೇ 7ರಂದು ಗೌತಮ ಬುದ್ಧ, ಬಸವಣ್ಣ ಹಾಗೂ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದಿನವಿಡೀ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿವೆ. ಈ ಬಾರಿ ಭೀಮನಗರದ ಆಶ್ರಯದಲ್ಲಿ ತಾಲೂಕು ಮಟ್ಟದ ಸಮಿತಿಯಿಂದ ವಿಶಿಷ್ಟ ರೀತಿಯಲ್ಲಿ ಆಚರಣೆ ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಿವುಪುತ್ರ ನಡಗೇರಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಸಾಲೇಗಾಂವ, ಉಪಾಧ್ಯಕ್ಷ ಗಂಗಾರಾಮ ಮುದಗಲೆ, ಮುಖಂಡ ದಯಾನಂದ ಸಾಲೇಗಾಂವ, ಕಿಟ್ಟಿ ಸಾಲೇಗಾಂವ, ಮುತ್ತಣ್ಣಾ ಜಂಗಲೆ, ಲಕ್ಷ್ಮಣ ಝಳಕಿಕರ್, ಅಜೆಯ ಸಿ.ಎಂ. ನಾಗರಾಜ ದೇವನೂರ, ಸುಧಾಕರ್ ಮೊದಲೆ, ಕೆಂಚಣ್ಣಾ ಝಳಕಿಕರ್ ಅನೇಕರು ಭಾಗವಹಿಸಿದ್ದರು.
ಹೊಸದಾಗಿ ಗಿರಣಿಯಿಂದ ತಂದ ಬಾಸ್ಮತಿಗಿಂತ ಹಳೇ ಬಾಸ್ಮತಿ ಏಕೆ ಉತ್ತಮ?
ಸಾಮಾನ್ಯ ನಂಬಿಕೆಗಳ ಹೊರತಾಗಿಯೂ ಹಳೇ ಬಾಸ್ಮತಿ ಅಕ್ಕಿಯಲ್ಲಿ ಪೋಷಕಾಂಶಗಳು ಹೆಚ್ಚು ಇರುವುದಿಲ್ಲ! ಭಾರತೀಯ ಅಡುಗೆಮನೆಗಳಲ್ಲಿ ಹಳೆಯ ಬಾಸ್ಮತಿ ಅಕ್ಕಿಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಅಕ್ಕಿ ಹಳೆಯದಾದಷ್ಟು ಪೋಷಕಾಂಶ ಹೆಚ್ಚಿರುತ್ತದೆ ಎನ್ನುವ ಸಾಮಾನ್ಯ ನಂಬಿಕೆ ಇದೆ. ಅಕ್ಕಿಯ ಸುವಾಸನೆ ಮತ್ತು ನಯವಾದ ವಿನ್ಯಾಸಕ್ಕಾಗಿ ಮಾತ್ರವಲ್ಲದೆ, ಅದರ ಆರೋಗ್ಯ ಪ್ರಯೋಜನಗಳಿಗಾಗಿಯೂ ಬಾಸ್ಮತಿ ಬಹಳ ಆದ್ಯತೆಯ ಅಕ್ಕಿಯಾಗಿದೆ. ಆದರೆ ಹೊಸದಾಗಿ ಗಿರಣಿಗೆ ಕೊಟ್ಟು ತಂದ ಅಕ್ಕಿಗಿಂತ ಹಳೇ ಬಾಸ್ಮತಿ ಆರೋಗ್ಯಕರವೆ? ಆಕಾಶ್ ಹೆಲ್ತ್ ಕೇರ್ ನ ಪ್ರಮುಖ ಆಹಾರ ತಜ್ಞರಾಗಿರುವ ಗಿನ್ನಿ ಕಾರ್ಲಾ ಈ ಕುರಿತ ಗೊಂದಲವನ್ನು ನಿವಾರಿಸಿದ್ದಾರೆ. ►ಹಳೆಯ ಬಾಸ್ಮತಿ ಅಕ್ಕಿಯನ್ನು ಭಿನ್ನವಾಗಿಸುವುದೇನು? ಗಿನ್ನಿ ಕಾರ್ಲಾ ಪ್ರಕಾರ, “ಹೊಸ ಅಕ್ಕಿ ಮತ್ತು ಬಾಸ್ಮತಿ ಅಕ್ಕಿಯನ್ನು ಹೋಲಿಸಿದರೆ ಪ್ರಮುಖ ವ್ಯತ್ಯಾಸ ಅದರ ಹಳೆಯತನದಲ್ಲಿದೆ. ಬಾಸ್ಮತಿ ಅಕ್ಕಿ ಹಳೆಯದಾದಷ್ಟು ಅದರ ತೇವಾಂಶವು ಕಡಿಮೆಯಾಗುತ್ತದೆ ಮತ್ತು ಸ್ಟಾರ್ಚ್ ರಚನೆ ಬದಲಾಗುತ್ತದೆ. ಹೀಗಾಗಿ ಬೇಯಿಸಿದ ನಂತರ ಹೆಚ್ಚು ಜಿಗುಟಿಲ್ಲದ ಹಾಗೂ ಪ್ರತ್ಯೇಕ ಧಾನ್ಯಗಳಿಗೆ ಕಾರಣವಾಗುತ್ತದೆ. ಇದರಿಂದ ರಚನೆ ಮತ್ತು ಜೀರ್ಣಸಾಧ್ಯತೆ ಎರಡೂ ಸುಧಾರಿಸುತ್ತವೆ. ಈ ರಚನಾತ್ಮಕ ಬದಲಾವಣೆಯೇ ಹಳೆಯ ಬಾಸ್ಮತಿಯನ್ನು ಹೊಸದಾಗಿ ಅರೆದ ಅಕ್ಕಿಯಿಂದ ಪ್ರತ್ಯೇಕಿಸುತ್ತದೆ. ಇದು ಬೇಯಿಸಿದಾಗ ಮೃದುವಾಗುವುದರ ಜೊತೆಗೆ ಧಾನ್ಯಗಳು ಪ್ರತ್ಯೇಕವಾಗಿಯೇ ಇರುತ್ತವೆ.” ►ಹಳತಾದಂತೆ ಪೌಷ್ಠಿಕಾಂಶ ಬದಲಾಗುತ್ತದೆಯೆ? “ಸಾಮಾನ್ಯ ನಂಬಿಕೆಯ ಹೊರತಾಗಿಯೂ ಹಳತಾಗಿರುವುದರಿಂದ ಪೋಷಕಾಂಶಗಳ ಮೌಲ್ಯ ಹೆಚ್ಚಾಗುವುದಿಲ್ಲ. ಹಳತಾಗುವುದರಿಂದ ಅಕ್ಕಿಯಲ್ಲಿರುವ ಪ್ರಮುಖ ಪೋಷಕಾಂಶಗಳು ಬದಲಾಗುವುದಿಲ್ಲ. ಮುಖ್ಯವಾಗಿ ಕಡಿಮೆ ತೇವಾಂಶ ಮತ್ತು ಪುನರ್ರಚನೆಯಾದ ಪಿಷ್ಟದಿಂದ ದೇಹವು ಅದನ್ನು ಹೇಗೆ ಸಂಸ್ಕರಿಸುತ್ತದೆ ಎಂಬುದರಲ್ಲಿ ಬದಲಾವಣೆ ಕಂಡುಬರುತ್ತದೆ” ಎನ್ನುತ್ತಾರೆ ಗಿನ್ನಿ ಕಾರ್ಲಾ. “ಅಂದರೆ ಸೂಕ್ಷ್ಮ ಚಯಾಪಚಯ ಪ್ರಯೋಜನಗಳು ಇರಬಹುದು. ವಿಶೇಷವಾಗಿ ದೇಹವು ಕಾರ್ಬೋಹೈಡ್ರೇಟ್ ಗಳನ್ನು ಹೇಗೆ ಜೀರ್ಣಿಸಿಕೊಳ್ಳುತ್ತದೆ ಮತ್ತು ಹೀರಿಕೊಳ್ಳುತ್ತದೆ ಎಂಬುದರಲ್ಲಿ ಬದಲಾವಣೆ ಕಂಡುಬರುತ್ತದೆ” ಎಂದು ಅವರು ವಿವರಿಸುತ್ತಾರೆ. ►ಹಳೇ ಬಾಸ್ಮತಿಯನ್ನು ಜೀರ್ಣಿಸುವುದು ಸುಲಭವೆ? ಕಾರ್ಲಾ ಅವರ ಪ್ರಕಾರ, ಹೊಸದಾಗಿ ಅರೆದ ಅಕ್ಕಿಗೆ ಹೋಲಿಸಿದರೆ ವಯಸ್ಸಾದ ಬಾಸ್ಮತಿ ಅಕ್ಕಿಯನ್ನು ಜೀರ್ಣಿಸಿಕೊಳ್ಳುವುದು ಸುಲಭ. ಏಕೆಂದರೆ ಅದಕ್ಕೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (GI) ಇರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಧಾನವಾಗಿ ಏರಿಕೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಯಸುವವರು ಅಥವಾ ಸೂಕ್ಷ್ಮ ಜೀರ್ಣಕ್ರಿಯೆ ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಬಹುದು. ಆದರೂ ಅದನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ►ಬಾಸ್ಮತಿಯಿಂದ ಅನನುಕೂಲತೆ ಇದೆಯೆ? ಪ್ರಯೋಜನಗಳ ಹೊರತಾಗಿಯೂ ಹಳೆಯ ಬಾಸ್ಮತಿ ಅಕ್ಕಿಯ ಬಗ್ಗೆ ಜಾಗರೂಕತೆ ವಹಿಸಬೇಕು. ಎಷ್ಟೇ ಆದರೂ ಅದು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಗಿರುತ್ತದೆ. “ಮಧುಮೇಹ ಇರುವವರು ಸೇವನೆಯ ಪ್ರಮಾಣದಲ್ಲಿ ನಿಯಂತ್ರಣ ವಹಿಸುವುದು ಅತ್ಯಗತ್ಯ. ಏಕೆಂದರೆ ಅತಿ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು” ಎನ್ನುತ್ತಾರೆ ಕಾರ್ಲಾ. “ಆಹಾರದಲ್ಲಿ ಸಾಕಷ್ಟು ಧಾನ್ಯಗಳು, ತರಕಾರಿಗಳು ಮತ್ತು ನಾರಿನಂಶ ಇಲ್ಲದೆ ಪಾಲಿಶ್ ಮಾಡಿದ ಅಕ್ಕಿಯನ್ನು ಹೆಚ್ಚು ಅವಲಂಬಿಸಿದ್ದರೆ, ಅದು ಒಟ್ಟು ಪೋಷಕಾಂಶದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
2027ರ ಫೆ.18ರಿಂದ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: ಡಾ.ರಾಜೇಂದ್ರ ಕುಮಾರ್
ಕಾರ್ಕಳ: ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕವು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಎಂ. ಎನ್. ರಾಜೇಂದ್ರ ಕುಮಾರ್ 2027ರ ಫೆ.18 ರಿಂದ ಫೆ.28 ರವರಗೆ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಯಲಿರುವುದು ಎಂದು ಘೋಷಿಸಿದರು. ದಿನಾಂಕ ಘೋಷಿಸಿ ಮಾತನಾಡಿದ ಅವರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಮಸ್ತಕಾಭಿಷೇಕ ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ ಇದೊಂದು ಅತ್ಯಮೋಘವಾದ ಕಾರ್ಕಳವಲ್ಲದೆ ನಾಡಿನ ಸಮಸ್ತ ಬಂದುಗಳು ಜಾತಿ ಮತ ಬೇದವಿಲ್ಲದೆ ನಡೆಸುವ ಮೂಲಕ ನಾವು ಮಾತ್ರ ಬೆಳೆಯುವುದಲ್ಲ, ಸಮಾಜ ಕೂಡ ಬೆಳೆಯಬೇಕು ಎಂದರು ಮಸ್ತಕಾಭಿಷೇಕಕ್ಕೆ ಇನ್ನು 305 ದಿನಗಳು ಬಾಕಿ ಇವೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ದಾನಶಾಲೆ, ಬಾಹುಬಲಿ ಪ್ರವಚನ ಮಂದಿರದಲ್ಲಿ ರವಿವಾರ ಮಹಾಮಸ್ತಕಾಭಿಷೇಕ ಕಾರ್ಯಾಲಯದ ಉದ್ಘಾಟನೆ ಹಾಗೂ ದಿನಾಂಕ ಘೋಷಣೆ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳದ ಹರ್ಶೆಂದ್ರ ಕುಮಾರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ಜೀವಿತಾವಧಿಯಲ್ಲಿ ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೋಮಟೇಶ್ವರನ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿರುವುದು ನಮ್ಮ ಸೌಭಾಗ್ಯ, ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದರು ಕಾರ್ಕಳ ಜೈನ ಮಠದ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಹಾಮಸ್ತಕಾಭಿಷೇಕ ಧಾರ್ಮಿಕ ವಿಧಿ ವಿಧಾನದ ಜತೆಗೆ ಜಗತ್ತಿಗೆ ಒಳಿತಾಗಲಿ ಎನ್ನುವ ಮಹೋನ್ನತ ದೃಷ್ಟಿಕೋನದ ಮಹೋತ್ಸವ ಆಗಿದೆ . ಈ ಪವಿತ್ರ ಕಾರ್ಯದ ಹಿಂದೆ ಭಾರತೀಯ ಸಂಸ್ಕೃತಿ, ಶ್ರದ್ದೆ, ಭಕ್ತಿಯ ಶಕ್ತಿಯ ಸಂದೇಶವಿದೆ ಭಕ್ತರ ಮನಸ್ಸು ಸದಾ ಭಗವಂತನ ಸಾನ್ನಿಧ್ಯದಲ್ಲಿ ನೆಲೆಸಿರಬೇಕು. ಭಗವಾನ್ ಬಾಹುಬಲಿಯ ತ್ಯಾಗ ಮತ್ತು ವೈರಾಗ್ಯದ ಜೀವನ ನಮ್ಮ ಜೀವನಕ್ಕೆ ದಾರಿದೀಪವಾಗಲಿ, ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಮೋಹನ್ ಆಳ್ವ, ಅಧಾನಿ ಗ್ರೂಫ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮಾಜಿ ಸಚಿವ ಅಭಯಚಂದ್ರ ಜೈನ್ ಶುಭ ಹಾರೈಸಿ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಪೂರ್ಣ ಪ್ರಮಾಣದ ಸಹಕಾರದ ಭರವಸೆ ನೀಡಿದರು ಸಮಿತಿಯ ಉಪಾಧ್ಯಕ್ಷ ಕೆ ಪಿ ಜಗದೀಶ್ ಅಧಿಕಾರಿ ಕಾರ್ಕಳ ಡಿ ವೈ ಎಸ್ ಪಿ ವಿಜಯ ಪ್ರಸಾದ್, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಸ್ತಕಾಭಿಷೇಕ ಸಮಿತಿ ಮುಖ್ಯಸ್ಥರುಗಳಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಜಿ. ಪಂ. ಸಿಇಒ ಪ್ರತೀಕ್ ಬಯಾಲ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್ ಉಪಸ್ಥಿತರಿದ್ದರು. ಪುಷ್ಪರಾಜ್ ಜೈನ್ ಮಂಗಳೂರು ಸ್ವಾಗತಿಸಿ, ಮೋಹನ್ ಪಡಿವಾಳ್ ವಂದಿಸಿ ,ಅಜಿತ್ ಕೊಕ್ರಾಡಿ ನಿರೂಪಿಸಿದರು.
Uttar Pradesh | ಹಲ್ಲೆ, ಜಾತಿ ನಿಂದನೆ ಆರೋಪ: ತನಗೆ ತಾನೇ ಬೆಂಕಿ ಹಚ್ಚಿಕೊಂಡ ದಲಿತ ಯುವಕ
ಮುಝಫ್ಫರ್ ನಗರ: ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ ತನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಅವಮಾನಗೊಂಡ ದಲಿತ ಯುವಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವ ಘಟನೆ ಮುಝಫ್ಫರ್ ನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ರವಿವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಹಚ್ಚಿಕೊಂಡ ದಲಿತ ಯುವಕನನ್ನು ಹಿಮಾಂಶು (25) ಎಂದು ಗುರುತಿಸಲಾಗಿದ್ದು, ಆತ ಯಾವುದೋ ಕೆಲಸ ಮಾಡಲು ನಿರಾಕರಿಸಿದ್ದರಿಂದ ಟಿಂಕು ಅಲಿಯಾಸ್ ಗೌರವ್ (28) ಎಂಬ ವ್ಯಕ್ತಿ ಆತನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ಶನಿವಾರ ಮುಝಫ್ಫರ್ ನಗರ ಜಿಲ್ಲೆಯ ಖತೌಲಿ ತೆಹಸಿಲ್ ನ ಗಾಂಧಾರಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅವಮಾನದಿಂದ ಮನನೊಂದ ಹಿಮಾಂಶು, ಆತ್ಮಹತ್ಯೆ ಪ್ರಯತ್ನದ ಭಾಗವಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಆತನ ದೇಹದ ಶೇ. 30ರಷ್ಟು ಭಾಗ ಸುಟ್ಟು ಗಾಯಗೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿಂಕು ಅಲಿಯಾಸ್ ಗೌರವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ ಎಂದು ರವಿವಾರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಿಮಾಂಶು ದೇಹದ ಶೇ. 30ರಷ್ಟು ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಹಿಮಾಂಶು ಕೆಲಸ ಮಾಡಲು ನಿರಾಕರಿಸಿದ್ದರಿಂದ, ಆತನ ಕೆನ್ನೆಗೆ ಹೊಡೆದ ಟಿಂಕು ಅಲಿಯಾಸ್ ಗೌರವ್, ಆತನಿಗೆ ಜಾತಿ ನಿಂದನೆ ಮಾಡಿದನು ಎಂದು ಹಿಮಾಂಶು ಕುಟುಂಬದ ಸದಸ್ಯರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
Good News: ಗುತ್ತಿಗೆದಾರರಿಗೆ ಸಿಹಿ ಸುದ್ದಿ: 300 ಕೋಟಿ ರೂಪಾಯಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಬೆಂಗಳೂರು, ಏಪ್ರಿಲ್ 19: ದೀರ್ಘಕಾಲದ ಹೋರಾಟ ಮತ್ತು ಸತತ ಪ್ರತಿಭಟನೆಗಳ ಫಲವಾಗಿ ರಾಜ್ಯದ ಸಣ್ಣ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸುತ್ತಿದ್ದ ಗುತ್ತಿಗೆದಾರರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಸರ್ಕಾರ 2,000 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.
ವರುಣ್ ಚಕ್ರವರ್ತಿ ಕೈಚಳಕದ ಬಳಿಕ ರಿಂಕು ಸಿಂಗ್ ಸಾಹಸ; ಕೊನೆಗೂ ಕೋಲ್ಕತಾ ತೆರೆಯಿತು ಗೆಲುವಿನ ಖಾತೆ!
ಆರು ಪಂದ್ಯಗಳನ್ನಾಡಿಯೂ ಈ ಸೀಸನ್ ನಲ್ಲಿ ಗೆಲುವು ಕಾಣದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇದೀಗ ಮೊದಲ ಗೆಲುವಿನ ಸವಿಯುಂಡಿದೆ. ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ ಅವರ ಬಿಗು ಬೌಲಿಂಗ್ ದಾಳಿ ಮತ್ತು ರಿಂಕು ಸಿಂಗ್ ಅವರ ಸಮಯೋಚಿತ ಅಜೇಯ ಅರ್ಧಶತಕದ ನೆರವಿನಿಂದ ಬಲಿಷ್ಠ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಯಲ್ಲಿ ಕೊನೇ ಸ್ಥಾನದಿಂದ ಒಂದು ಸ್ಥಾನ ಮೇಲೇರಿದೆ. ಇದೇವೇಳೆ ರಾಜಸ್ಥಾನ ರಾಯಲ್ಸ್ ಈ ಪಂದ್ಯದ ಸೋಲಿನ ಬಳಿಕ 3ನೇ ಸ್ಥಾನದಲ್ಲಿದೆ. ()
ಅಫಜಲಪುರ | ಎ.22ರಂದು ಉಚಿತ ಸಾಮೂಹಿಕ ವಿವಾಹ, ಧಾರ್ಮಿಕ ಕಾರ್ಯಕ್ರಮ
ಅಫಜಲಪುರ: ಪಟ್ಟಣದಲ್ಲಿ ಎ.22ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭವ್ಯವಾಗಿ ನಡೆಯಲಿವೆ ಎಂದು ಆಶ್ರಮದ ಪೀಠಾಧಿಪತಿ ಹಝರತ್ ಮಲ್ಲಿಕಾರ್ಜುನ ದಾವಲಮಲೀಕ ಮುತ್ಯಾ ತಿಳಿಸಿದ್ದಾರೆ. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೀರದಾರ ಫಂಕ್ಷನ್ ಹಾಲ್ನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲವಾರು ಜೋಡಿಗಳು ಇದರಲ್ಲಿ ವಿವಾಹವಾಗಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಕರ ದಿವ್ಯ ಸಾನಿಧ್ಯವಿದ್ದು, ವಿವಿಧ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಮ್ಮಲಿಂಗೇಶ್ವರ ಬೃಹನ್ಮಠ, ರೇವೂರ (ಬಿ) ಅವರ ಶ್ರೀಕಂಠ ಶಿವಾಚಾರ್ಯರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಸೇರಿದಂತೆ ಅನೇಕ ಗಣ್ಯರು, ಸರ್ಕಾರಿ ಅಧಿಕಾರಿಗಳು, ನ್ಯಾಯವಾದಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಂ.ಎಲ್.ಪಟೇಲ್ ಬಳೂಂಡಗಿ, ವಾಸಿಮ್ ಅಬ್ದುಲ್ ಜಾಗೀರದಾರ, ಬಾಬುಮಿಯಾ ಪುಲಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಚಿವ ಝಮೀರ್ ಅಹ್ಮದ್ ಜೆಡಿಎಸ್ ಸೇರ್ಪಡೆ ವದಂತಿಗೆ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು: ‘ಸಚಿವ ಝಮೀರ್ ಅಹ್ಮದ್ ಖಾನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾರೊಬ್ಬರೂ ನನ್ನ ಸಂಪರ್ಕದಲ್ಲಿಲ್ಲ. ಹಾಗಿದ್ದ ಮೇಲೆ ಅವರು ಜೆಡಿಎಸ್ ಪಕ್ಷ ಸೇರುವ ಮಾತೆಲ್ಲಿಂದ ಬರಬೇಕು?. ಝಮೀರ್ ಅಹ್ಮದ್ ಜೆಡಿಎಸ್ ಸೇರ್ಪಡೆ ಎಂಬುದೆಲ್ಲವೂ ಗಾಳಿಸುದ್ದಿಯಷ್ಟೇ?’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ಕುರಿತ ವದಂತಿಗಳಿಗೆ ತೆರೆ ಎಳೆದರು. ರವಿವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂಬ ಬಗ್ಗೆ ನಾನು ತಾನೇ ನಿರ್ಧಾರ ಕೈಗೊಳ್ಳಬೇಕು. ನನ್ನ ಸಂಪರ್ಕಕ್ಕೆ ಯಾರೂ ಬಂದಿಲ್ಲ ಎಂದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇಕೆ ಬರುತ್ತದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಏನಾಗುತ್ತದೋ ನೋಡೋಣ. ಫಲಿತಾಂಶ ಬರುವ ಮುನ್ನವೇ ಯಾಕೆ ಅನುಮಾನ? ಅಲ್ಪಸಂಖ್ಯಾತರನ್ನು ನಾವೇ ರಕ್ಷಣೆ ಮಾಡುವವರು ಎನ್ನುವ ಕಾಂಗ್ರೆಸ್ ಏಕೆ ಗೊಂದಲ ಮಾಡುತ್ತಿದೆ. ಒಂದು ಸಮುದಾಯದ ಮೇಲೆ ಯಾಕೆ ಗದಾಪ್ರಹಾರ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಮತ್ತೆ ಅದೇ ತಪ್ಪು ಮಾಡುವುದಿಲ್ಲ: ನನಗೂ ನೀವು ಹೇಳಿದ ವ್ಯಕ್ತಿಗೂ ಯಾವುದೇ ಸಂಪರ್ಕ ಇಲ್ಲ. ಜೆಡಿಎಸ್ ಜತೆಗೆ ಯಾರೂ ಸಂಪರ್ಕ ಸಾಧಿಸಿಲ್ಲ. ನಾವು ಮಾಡಿದ ತಪ್ಪುಗಳನ್ನೇ ಮತ್ತೆ ಮಾಡುವುದಿಲ್ಲ. ಇನ್ನೊಂದು ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟುಗಳನ್ನು ಲಾಭ ಮಾಡಿಕೊಳ್ಳುವ ಮನಸ್ಥಿತಿ ನಮ್ಮದಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಎಲ್ಲದಕ್ಕೂ ಬಳಕೆಯಾಗುವ ಮೈದಾ ಬದಲಿಗೆ ಏನನ್ನು ಬಳಸಬಹುದು?
ಮೈದಾವನ್ನು ಎಲ್ಲಾ ರೀತಿಯ ಅಡುಗೆಯಲ್ಲಿ ಏಕೆ ಬಳಸಬೇಕು? ಅದರ ಬದಲಿಗೆ ಬೇರೆ ಯಾವುದೇ ವಸ್ತುವನ್ನು ಬಳಸಲಾಗುವುದಿಲ್ಲವೇ? ಎಲ್ಲಾ ಅಡುಗೆ ಮನೆಗಳಲ್ಲಿ ಮೈದಾ ಇದ್ದೇ ಇರುತ್ತದೆ. ಹುಟ್ಟುಹಬ್ಬದ ಕೇಕ್ಗಳಿಂದ ಹಿಡಿದು ಬೇಕರಿ ಶೈಲಿಯ ಬ್ರೆಡ್ ಗಳು, ಪೂರಿಗಳು ಮತ್ತು ಗರಿಗರಿಯಾದ ತಿಂಡಿಗಳವರೆಗೆ ಮೈದಾ ಉಪಯೋಗವಾಗುತ್ತದೆ. ಮೈದಾವನ್ನು ಅನೇಕ ರೀತಿಯ ಅಡುಗೆಗಳಲ್ಲಿ ಬಳಸಬಹುದಾದರೂ, ಇದು ಆರೋಗ್ಯಕರ ಆಯ್ಕೆಯಲ್ಲ. ಹಾಗಿದ್ದರೆ ಅದನ್ನು ಎಲ್ಲಾ ರೀತಿಯ ಅಡುಗೆಯಲ್ಲಿ ಏಕೆ ಬಳಸಬೇಕು? ಅದರ ಬದಲಿಗೆ ಬೇರೆ ಯಾವುದೇ ವಸ್ತುವನ್ನು ಬಳಸಲಾಗುವುದಿಲ್ಲವೇ? ಮೈದಾವನ್ನು ಸರ್ವ ಉದ್ದೇಶದ ಹಿಟ್ಟು ಎಂದು ಕರೆಯುವುದೇಕೆ? ಮೈದಾವನ್ನು ಗೋಧಿಯಿಂದಲೇ ತಯಾರಿಸಲಾಗುತ್ತದೆ. ಆದರೆ ಇದು ಗೋಧಿ ಧಾನ್ಯದ ಹೊರಗಿನ ಹೊಟ್ಟು ಮತ್ತು ಬೀಜಾಣುವನ್ನು ತೆಗೆದುಹಾಕಿ ತಯಾರಿಸಿದ ಸಂಸ್ಕರಿಸಿದ ಹಿಟ್ಟು. ಉಳಿಯುವುದು ಒಳಭಾಗ ಮಾತ್ರ, ಅದನ್ನು ನಯವಾದ ಮೃದುವಾದ ಪುಡಿಯಾಗಿ ಮಾಡಲಾಗುತ್ತದೆ. ಈ ಸಂಸ್ಕರಣಾ ಪ್ರಕ್ರಿಯೆ ಹಿಟ್ಟನ್ನು ಮೃದುವಾಗಿಸಿ, ಮಿಶ್ರಣ ಸುಗಮಗೊಳಿಸುತ್ತದೆ. ಎಣ್ಣೆ ಸಮೃದ್ಧವಾಗಿರುವ ಬೀಜಾಣುವನ್ನು ತೆಗೆದುಹಾಕಿರುವುದರಿಂದ ಮೈದಾವನ್ನು ಹೆಚ್ಚು ದಿನ ಸಂಗ್ರಹಿಸಬಹುದು. ಇದನ್ನು ಹೆಚ್ಚು ವೈವಿಧ್ಯಮಯವಾಗಿಸುವುದು ಅದರಲ್ಲಿರುವ ಗ್ಲುಟನ್ ಅಂಶ. ಇದು ಗಾಳಿಯನ್ನು ಹಿಡಿದಿಡಲು ಮತ್ತು ಹಿಟ್ಟಿಗೆ ಉಬ್ಬುವ ಗುಣ ನೀಡಲು ಸಹಾಯ ಮಾಡುತ್ತದೆ. ಈ ಸಮತೋಲನದಿಂದಲೇ ಇದನ್ನು ಸರ್ವ ಉದ್ದೇಶದ ಹಿಟ್ಟು ಎಂದು ಕರೆಯಲಾಗುತ್ತದೆ. ಹೀಗಾಗಿ ಇದು ಬ್ರೆಡ್ಗೂ ಹಾಗೂ ಸೂಕ್ಷ್ಮ ಕೇಕ್ಗೂ ಸೂಕ್ತವಾಗುತ್ತದೆ. ಕೇಕ್ ಬೇಯಿಸುವಾಗ ಮೈದಾ ಮೃದುವಾದ, ಹಗುರವಾದ ತುದಿಯನ್ನು ನೀಡುತ್ತದೆ. ಗಾಳಿಯ ಗುಳ್ಳೆಗಳನ್ನು ಹಿಡಿದಿಡುವ ಮೃದು ಗ್ಲುಟನ್ ಜಾಲವನ್ನು ರೂಪಿಸುತ್ತದೆ. ಬ್ರೆಡ್ಗಳಲ್ಲಿ ಮೈದಾ ಬಳಸಿದರೆ ಗ್ಲುಟನ್ ಇನ್ನಷ್ಟು ಬೆಳೆಯುತ್ತದೆ ಮತ್ತು ಉತ್ತಮ ರಚನೆ ಹಾಗೂ ಅಗಿಯುವ ಗುಣ ನೀಡುತ್ತದೆ. ಪೂರಿಗಳಲ್ಲಿ ಇದು ಹಿಟ್ಟನ್ನು ಉಬ್ಬುವಂತೆ ಮಾಡುತ್ತದೆ, ಬಿಸಿ ಎಣ್ಣೆಯಲ್ಲಿ ಸುಂದರವಾಗಿ ಉಬ್ಬಲು ಸಹಾಯ ಮಾಡುತ್ತದೆ. ಮೈದಾ ಆರೋಗ್ಯಕರ ಆಯ್ಕೆಯಲ್ಲವೇಕೆ? ಮೈದಾ ಅಡುಗೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ಪೌಷ್ಠಿಕಾಂಶದ ದೃಷ್ಟಿಯಿಂದ ಇದು ಕಡಿಮೆ. ಸಂಸ್ಕರಣಾ ಪ್ರಕ್ರಿಯೆಯಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಕಳೆದುಹೋಗುತ್ತವೆ. ಇದರಲ್ಲಿ ಮುಖ್ಯವಾಗಿ ಸರಳ ಕಾರ್ಬೋಹೈಡ್ರೇಟ್ಗಳು ಉಳಿಯುತ್ತವೆ. ಇದರಿಂದ ಇದು ಬೇಗ ಜೀರ್ಣವಾಗುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಕಾಲ ನೀಡುವುದಿಲ್ಲ. ಮೈದಾವನ್ನು ಸಂಪೂರ್ಣವಾಗಿ ತೊರೆಯಲು ಸಾಧ್ಯವಿಲ್ಲದಿದ್ದರೂ, ಅದರ ಬದಲಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಬಹುದು. ಮೈದಾದ ಬದಲಿಗೆ ಬಳಸಬಹುದಾದ ಕೆಲವು ಹಿಟ್ಟುಗಳು: ಕೇಕ್ಗಳಿಗೆ: ಮೃದುತ್ವ ಕಳೆದುಕೊಳ್ಳದ ಆರೋಗ್ಯಕರ ಕೇಕ್ಗಳಿಗೆ ಬಾದಾಮಿ ಹಿಟ್ಟು ಉತ್ತಮ ಆಯ್ಕೆ. ಇದು ಸಮೃದ್ಧ ರುಚಿ ಮತ್ತು ತೇವಾಂಶ ನೀಡುತ್ತದೆ. ಆದರೆ ಬಾದಾಮಿ ಹಿಟ್ಟು ಮಾತ್ರ ಬಳಸಿದರೆ ಕೇಕ್ ದಟ್ಟವಾಗಬಹುದು. ಹೀಗಾಗಿ ಸಂಪೂರ್ಣ ಗೋಧಿ ಹಿಟ್ಟಿನೊಂದಿಗೆ ಬೆರೆಸುವುದು ಉತ್ತಮ. ಓಟ್ ಹಿಟ್ಟು ಮತ್ತೊಂದು ಆಯ್ಕೆ; ಇದು ಸ್ವಾಭಾವಿಕವಾಗಿ ಸೌಮ್ಯ ಸಿಹಿತನ ಹೊಂದಿದ್ದು, ಚಹಾ ಕೇಕ್ಗಳಿಗೆ ಸೂಕ್ತವಾಗಿದೆ. ಬ್ರೆಡ್ಗಳಿಗೆ: ಬ್ರೆಡ್ಗೆ ರಚನೆ ಮುಖ್ಯ. ಸಂಪೂರ್ಣ ಗೋಧಿ ಹಿಟ್ಟು ಫೈಬರ್ ಸಮೃದ್ಧವಾಗಿದ್ದು, ದಟ್ಟ ಮತ್ತು ತುಂಬುವ ಬ್ರೆಡ್ ನೀಡುತ್ತದೆ. ಮೃದುವಾದ ತಳಿರು ಬಯಸಿದರೆ ಬಹುಧಾನ್ಯ ಹಿಟ್ಟು ಅಥವಾ ಸ್ವಲ್ಪ ಮೈದಾವನ್ನು ಬೆರೆಸಬಹುದು. ಹೆಚ್ಚು ರಚನೆಗಾಗಿ ಅಧಿಕ ಗ್ಲುಟನ್ ಇರುವ ಬ್ರೆಡ್ ಹಿಟ್ಟನ್ನು ಬಳಸಬಹುದು. ಪೂರಿಗಳಿಗೆ: ಪೂರಿಗಳನ್ನು ತಯಾರಿಸುವಾಗ ಮೈದಾವನ್ನು ಸಂಪೂರ್ಣವಾಗಿ ಬದಲಿಸುವುದು ಕಷ್ಟ. ಆದರೆ ಗೋಧಿ ಮತ್ತು ರವೆಯ ಮಿಶ್ರಣ ಉತ್ತಮ ರಚನೆ ನೀಡುತ್ತದೆ. ಮೊಸರು (ಯೋಗರ್ಟ್) ಸೇರಿಸಿದರೆ ಹಿಟ್ಟು ಮೃದುವಾಗುತ್ತದೆ ಮತ್ತು ಉಬ್ಬುವಿಕೆ ಉತ್ತಮವಾಗುತ್ತದೆ. ತಿನಿಸುಗಳು ಮತ್ತು ಕುಕೀಸ್ಗಳಿಗೆ: ಕಡಲೆ ಹಿಟ್ಟು ಖಾರದ ಬೇಕ್ಸ್ಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ವಿಶಿಷ್ಟ ರುಚಿ ನೀಡುತ್ತದೆ. ರಾಗಿ ಹಿಟ್ಟು ಪೌಷ್ಠಿಕಾಂಶ ಹೆಚ್ಚಿಸುತ್ತದೆ ಹಾಗೂ ಮಣ್ಣಿನ ಸುವಾಸನೆ ನೀಡುತ್ತದೆ. ಗರಿಗರಿಯಾದ ತಿಂಡಿಗಳಿಗೆ ಅಕ್ಕಿ ಹಿಟ್ಟು ಉತ್ತಮ ಆಯ್ಕೆ. ಹೀಗಾಗಿ ಮುಂದಿನ ಬಾರಿ ಕೇಕ್ ಬೇಯಿಸುವಾಗ, ಹಿಟ್ಟು ಬೆರೆಸುವಾಗ ಅಥವಾ ಪೂರಿ ಮಾಡುವಾಗ ಮೈದಾವಿನ ಬದಲಿಗೆ ಬೇರೆ ಆಯ್ಕೆಗಳನ್ನು ಪ್ರಯತ್ನಿಸಿ. ಮೈದಾ ಸರ್ವಉಪಯೋಗಿಯಾಗಿರಬಹುದು, ಆದರೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆಯಲ್ಲ.
ಸಹ್ಯಾದ್ರಿ ಕಾಲೇಜಿನಲ್ಲಿ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮ
ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಆಶ್ರಯದಲ್ಲಿ ಸಹ್ಯಾದ್ರಿ ಕಾರ್ನಿವಲ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಶುಕ್ರವಾರ ಕಾಲೇಜಿನ ಕ್ಯಾಂಪಸ್ನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜೆವಿ ಗ್ರೂಪ್ ಆಫ್ ಕಂಪನಿಯ ನಿರ್ದೇಶಕಿ ಆತ್ಮಿಕಾ ಅಮೀನ್ ಉದ್ಘಾಟಿಸಿ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಮುಖ್ಯ ಅತಿಥಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ರಕ್ಷಾ ಚಿಲಿಂಬಿ ಅವರು ಆತ್ಮವಿಶ್ವಾಸ, ಸಂವಹನ ಮತ್ತು ಅನುಭವದ ಕಲಿಕೆಯ ಮಹತ್ವವನ್ನು ಒತ್ತಿ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ಅವರು ಸಹ್ಯಾದ್ರಿಯ ಸಂಸ್ಥೆಯು ತ್ವರಿತವಾಗಿ ಬೆಳವಣಿಗೆ ಹೊಂದಿದ್ದು, ಪರಿಗಣಿತ ವಿಶ್ವವಿದ್ಯಾಲಯವಾಗುವ ಹಾದಿಯಲ್ಲಿದೆ. ಬಿಬಿಎ, ಬಿಸಿಎ ಮತ್ತು ಎಂಸಿಎ ನಂತಹ ಹೊಸ ಶೈಕ್ಷಣಿಕ ಪದವಿ ಶಿಕ್ಷಣ ಕೋರ್ಸ್ಗಳಿಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದೊಂದಿಗೆ ಸಲಹಾ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಪ್ರಕಟಿಸಿದರು. ವಿಜ್ ಕ್ವಿಜ್, ಮಾರ್ಕೆಟ್ವರ್ಸ್ ಮತ್ತು ಸ್ಟೂಡೆಂಟ್ ಕಾರ್ನರ್ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಕಾಲೇಜುಗಳಿಂದ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರ್ಯಾಂಡ್ ಫಿನಾಲೆಗೆ ಅರ್ಹತೆ ಪಡೆದರು. ಸಹ್ಯಾದ್ರಿ ವಿಜ್ ರಸಪ್ರಶ್ನೆಯನ್ನು ಕ್ವಿಜ್ ಮಾಸ್ಟರ್ ರಕ್ಷಿತ್ ಶೆಟ್ಟಿ ನಡೆಸಿಕೊಟ್ಟರು. ಸಹ್ಯಾದ್ರಿ ವಿಜ್ ರಸಪ್ರಶ್ನೆಯ ಕೊನೆಯಲ್ಲಿ, ತಲಾ ಮೂವರು ಸದಸ್ಯರನ್ನು ಒಳಗೊಂಡ ಆರು ತಂಡಗಳು ಫೈನಲ್ಗೆ ಅರ್ಹತೆ ಪಡೆದವು. ಕಟ್ಪಾಡಿಯ ತ್ರಿಶ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಪ್ರಥಮ ಸ್ಥಾನ, ಉಜಿರೆಯ ಎಸ್ಡಿಎಂ ಎರಡನೇ ಸ್ಥಾನ ಮತ್ತು ಮಂಗಳೂರಿನ ಎಂಎಪಿಎಸ್ ಕಾಲೇಜು ಮೂರನೇ ಸ್ಥಾನ ಪಡೆದು ಕ್ರಮವಾಗಿ ರೂ. 25,000, ರೂ. 15,000 ಮತ್ತು ರೂ. 10,000 ನಗದು ಬಹುಮಾನವನ್ನು ಹಂಚಿ ಕೊಂಡವು. ಉಳಿದ ಮೂರು ತಂಡಗಳಿಗೆ ತಲಾ ರೂ. 4,000 ಸಮಾಧಾನಕರ ಬಹುಮಾನಗಳನ್ನು ನೀಡಲಾ ಯಿತು. ವಿದ್ಯಾರ್ಥಿ ಕಾರ್ನರ್ ಬಹುಮಾನವನ್ನು ಜಸ್ಟ್ ಟೈಲ್ಸ್ - ನಿಟ್ಟೆ ಸ್ವರೂಪ್ ಕಾಲೇಜು ಗೆದ್ದುಕೊಂಡಿತು. ಟ್ರಸ್ಟಿ ದೇವದಾಸ್ ಹೆಗ್ಡೆ, ಉಪ ಪ್ರಾಂಶುಪಾಲ ಮತ್ತು ಸಿಒಇ ಡಾ. ಸುಧೀರ್ ಶೆಟ್ಟಿ, ಎಂಬಿಎ ವಿಭಾಗದ ನಿರ್ದೇಶಕ ಡಾ. ವಿಶಾಲ್ ಸಮರ್ಥ, ಡೀನ್ ಸ್ಟ್ರಾಟೆಜಿಕ್ ಪ್ಲಾನಿಂಗ್ ಪ್ರೊ. ರಮೇಶ್ ಕೆ. ಜಿ. ಉಪಸ್ಥಿತರಿದ್ದರು. ಡಾ. ವಿಶಾಲ್ ಸಮರ್ಥ ಸ್ವಾಗತಿಸಿದರು, ಕಾರ್ಯಕ್ರಮ ಸಂಯೋಜಕ ಪ್ರೊ. ಅನಿರುದ್ಧ್ ಭಟ್ ಕಾರ್ನಿವಲ್ನ ಅವಲೋಕನವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿ ಸಂಯೋಜಕ ವಿಶಾಖ ಪೈ ವಂದಿಸಿದರು.
ಆಲ್ದೂರು | ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಮೃತ್ಯು
ಆಲ್ದೂರು: ಸಮೀಪದ ಬಿಳಿಗಿರಿ ಎಸ್ಟೇಟ್ ನಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ರಮೇಶ್ (27) ಹಾಗೂ ಮಹೇಶ್ (39) ಮೃತಪಟ್ಟ ಕಾರ್ಮಿಕರು. ಕೊಪ್ಪ ತಾಲೂಕಿನ ಗಣಪತಿ ಕಟ್ಟೆ ಗ್ರಾಮದ ನಿವಾಸಿಯಾದ ರಮೇಶ್ ಅವರು ಬಿಳಿಗಿರಿ ಎಸ್ಟೇಟ್ ನಲ್ಲಿ ಎರಡುವರೆ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಡವಂತಿ ಗ್ರಾಮದ ನಿವಾಸಿಯಾಗಿರುವ ಮಹೇಶ್ ಅವರು ಕುಟುಂಬದೊಂದಿಗೆ ಬಿಳಿಗಿರಿ ಎಸ್ಟೇಟ್ ನಲ್ಲಿ ಒಂದೂವರೆ ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಲೈನ್ ನಲ್ಲಿ ವಾಸವಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
Yadgiri | ಬಂಜಾರ ಸಮಾಜ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ : ದೇವರಾಜ್ ನಾಯಕ್
ಯಾದಗಿರಿ: ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ನೂತನ ರಾಜ್ಯಾಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ದೇವರಾಜ್ ನಾಯಕ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬಯಿಯಲ್ಲಿ ನಡೆದ ಸಭೆಯಲ್ಲಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಶಂಕರ ಪವಾರ ಅವರು ಹಿಂದಿನ ರಾಜ್ಯ ಘಟಕವನ್ನು ವಿಸರ್ಜಿಸಿ ತಮ್ಮನ್ನು ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ತಿಳಿಸಿದರು. ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಬಂಜಾರ ಸಮಾಜವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕಾರ್ಯಯೋಜನೆ ರೂಪಿಸಲಾಗುವುದು. ಸುಮಾರು 60 ವರ್ಷಗಳ ಹಿಂದೆ ಆಗಿನ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರಿಂದ ಉದ್ಘಾಟನೆಗೊಂಡ ಈ ಸಂಘವು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದರು. ಸಂಘದ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ಸಂಘವೇ ಬಂಜಾರ ಸಮುದಾಯದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಯಾದಗಿರಿಯಲ್ಲಿಯೇ ಶೀಘ್ರದಲ್ಲೇ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು. ಈ ಸಮಾವೇಶಕ್ಕೆ ರಾಷ್ಟ್ರೀಯ ಅಧ್ಯಕ್ಷ ಡಾ. ಶಂಕರ ಪವಾರ ಸೇರಿದಂತೆ ವಿವಿಧ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರವಿ ರಾಠೋಡ್ ಮುದ್ನಾಳ್, ಬಂಗಾರು ರಾಠೋಡ್, ಮೇಘನಾಥ ಚವ್ಹಾಣ, ಆನಂದ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಾಕ್ಸ್: ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ಹುದ್ದೆಗಳು ಗಿರಿಜಿಲ್ಲೆಯ ಬಂಜಾರ ಸಮುದಾಯಕ್ಕೆ ಲಭಿಸಿರುವುದು ಸಂತೋಷದ ಸಂಗತಿ ಎಂದು ಹಿರಿಯ ಮುಖಂಡ ಜನಾರ್ಧನ ರಾಠೋಡ್ ಅಭಿನಂದನೆ ಸಲ್ಲಿಸಿದ್ದಾರೆ.
Mysuru | ಕಾವೇರಿ ನದಿಯಲ್ಲಿ ಈಜಲು ಹೋದ 6 ಮಂದಿ ನೀರಿನಲ್ಲಿ ಮುಳುಗಿ ಮೃತ್ಯು
ಮೈಸೂರು: ಕಾವೇರಿ ನದಿಗೆ ಈಜಲು ಹೋಗಿದ್ದ 6 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಅರ್ಕೇಶ್ವರ ದೇಗುಲದ ಬಳಿ ನಡೆದಿದೆ. ಮೃತಪಟ್ಟವರನ್ನು ಯಾಸಿನ್ (23), ಫಾತಿಮ್ (30), ಹುಮಾಯೂನ್ (7), ನೇಹಾನ್(19), ಅಲೀಂ(13) ಎಂದು ತಿಳಿದು ಬಂದಿದ್ದು ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ರವಿವಾರ ಉರೂಸ್ ಹಿನ್ನೆಲೆ ದರ್ಗಾಕ್ಕೆ ಬೆಂಗಳೂರು ಮತ್ತು ಊಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಟು ಜನರ ತಂಡವೊಂದು ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ನದಿಯಲ್ಲಿ ಮುಳುಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ ಕಾವೇರಿ ನದಿಯಲ್ಲಿ ಮುಳುಗಿ ಆರು ಮಂದಿ ಮೃತಪಟ್ಟ ಘಟನೆಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ ಆರ್ಥಿಕ ಸವಾಲುಗಳು ಮತ್ತಷ್ಟು ಬಾಧಿಸದಿರಲಿ ಎಂಬ ಮಾನವೀಯ ಕಾಳಜಿಯೊಂದಿಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಿ ತಮ್ಮವರನ್ನು ಕೂಡಿಕೊಳ್ಳಲಿ ಎಂದು ಹಾರೈಸುತ್ತೇನೆ. ಎಂದು ಹೇಳಿದ್ದಾರೆ. ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ… — Siddaramaiah (@siddaramaiah) April 19, 2026
Cauvery River: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲು: 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
Cauvery River: ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾಗಿದ್ದು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ
Yadgiri | ಎ.26ರಂದು ಹುಬ್ಬಳ್ಳಿಯಲ್ಲಿ ಅಹಿಂದ್ ರಾಜ್ಯಮಟ್ಟದ ವಿಚಾರ ಸಂಕಿರಣ
ಯಾದಗಿರಿ: ಅಹಿಂದ್ ಸಂಘಟನೆಯಿಂದ ಏಪ್ರಿಲ್ 26ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹಣಮೇಗೌಡ ಮರಕಲ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ರಾಯಲ್ ಎರಿಟೆಜ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ ಸೇರಿದಂತೆ ಅಹಿಂದ್ ಸಂಘಟನೆಯ ರಾಜ್ಯ ಮಟ್ಟದ ನಾಯಕರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಅಹಿಂದ್ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ವೇಳೆ ಶಹಾಪುರ ತಾಲೂಕು ಅಧ್ಯಕ್ಷ ಶೇಖರ ದೊರೆ ಉಪಸ್ಥಿತರಿದ್ದರು. ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ಅಹಿಂದ್ ಮುಖಂಡರು ಹಾಗೂ ಪದಾಧಿಕಾರಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮುಖಂಡ ಸುದರ್ಶನ ನಾಯಕ ತಿಳಿಸಿದ್ದಾರೆ.
ಬಡಗಬೆಟ್ಟು ಸೊಸೈಟಿ 2025-26ನೇ ಸಾಲಿನಲ್ಲಿ 18.13ಕೋಟಿ ರೂ ಲಾಭ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ: ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ 4062.29 ರೂ. ಕೋಟಿ ವಾರ್ಷಿಕ ವಹಿವಾಟು ನಡೆಸಿ 18.13 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ 108 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಸಂಘವು, 2025-26ನೇ ಆರ್ಥಿಕ ವರ್ಷಾಂತ್ಯಕ್ಕೆ 22,869 ಸದಸ್ಯರನ್ನು ಹೊಂದಿದ್ದು, ವರದಿ ವರ್ಷಾಂತ್ಯಕ್ಕೆ 658.80 ಕೋಟಿ ರೂ. ಠೇವಣಿ ಸಂಗ್ರಹಿಸಿ, ಕಳೆದ ಸಾಲಿಗಿಂತ ಶೇ.14.93 ರಷ್ಟು ಏರಿಕೆ ಸಾಧಿಸಿದೆ ಎಂದರು. ವರದಿ ವರ್ಷಾಂತ್ಯಕ್ಕೆ ಸದಸ್ಯರ ಹೊರಬಾಕಿ ಸಾಲ 533.96 ಕೋಟಿ ರೂ. ಆಗಿದ್ದು, ಇದು ಕಳೆದ ಸಾಲಿಗಿಂತ ಶೇ.11.94ರಷ್ಟು ಏರಿಕೆಯಾಗಿದೆ. ಸಂಘವು 117.60 ಕೋಟಿ ರೂ. ನಿಧಿಗಳು ಹಾಗೂ ರೂ. 268.30 ಕೋಟಿ ಹೂಡಿಕೆಗಳನ್ನು ಹೊಂದಿದ್ದು, ಒಟ್ಟು ರೂ. 791.46 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಸಂಘವು ತನ್ನ ಕಾರ್ಯಕ್ಷೇತ್ರದಲ್ಲಿ 11 ಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ 8 ಶಾಖೆಗಳು ಸಂಘದ ಸ್ವಂತ ನಿವೇಶನಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಂಘದ 12ನೇ ಶಾಖೆಗಾಗಿ ಕುಂದಾಪುರದ ಹೃದಯ ಭಾಗದಲ್ಲಿ ಸ್ವಂತ ಕಚೇರಿ ಖರೀದಿಸಲಾಗಿದ್ದು, ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ಸಂಘವು ಪ್ರತಿ ವರ್ಷ ಸುಮಾರು 25ಲಕ್ಷ ರೂ.ವನ್ನು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದೆ. ಡಿಜಿಟಲೀಕರಣದ ಭಾಗವಾಗಿ ಅಭಿವೃದ್ಧಿಪಡಿಸಿದ ಚೇತನಾ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ತಮ್ಮ ಖಾತೆ ಗಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ, ಸಾಲ ಖಾತೆ ನಿರ್ವಹಣೆ ಹಾಗೂ ಸಂಘದ ನೂತನ ಯೋಜನೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿ ಗಾಗಿ ಸಮೀಪದ ಶಾಖೆಯನ್ನು ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದರು. ಸಂಘದ ಎಲ್ಲಾ ಶಾಖೆಗಳಲ್ಲಿ ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್ ಸೇವೆ, ಹಣ ವರ್ಗಾವಣೆ ಸೌಲಭ್ಯ, ಆರೋಗ್ಯ ಕಾರ್ಡ್, ವಿಮಾ ಸೇವೆಗಳು, ದೈನಿಕ ಠೇವಣಿ ಸಂಗ್ರಾಹಕರಿಗೆ ಮೊಬೈಲ್ ಮೂಲಕವೇ ಠೇವಣಿ ಸಂಗ್ರಹಣೆಗೆ ಅವಕಾಶ ಒದಗಿಸಿರುವುದು, 0 ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ ಕಾಲ್ ಸೇವೆ ಹಾಗೂ ಉಚಿತ ಎಸ್ಎಂಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಪುರುಷೋತ್ತಮ ಪಿ.ಶೆಟ್ಟಿ, ಉಮಾನಾಥ ಎಲ್., ಪದ್ಮನಾಭ ನಾಯಕ್, ಹಾಜಿ ಸೈಯದ್ ಅಬ್ದುಲ್ ರಜಾಕ್, ಸದಾಶಿವ ನಾಯ್ಕ್, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರಿ ಎಸ್.ಭಟ್, ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಲೆಕ್ಕಿಗ ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು. 1400 ಕೋಟಿ ರೂ. ವ್ಯವಹಾರ ಗುರಿ ಮುಂದಿನ ವರ್ಷದಲ್ಲಿ 750 ಕೋಟಿ ರೂ. ಠೇವಣಿ ಹಾಗೂ 650 ಕೋಟಿ ರೂ. ಸಾಲ ವಿತರಣೆ ಸೇರಿದಂತೆ ಒಟ್ಟು 1400 ಕೋಟಿ ರೂ. ವ್ಯವಹಾರ ನಡೆಸುವ ಗುರಿಯನ್ನು ಸಂಸ್ಥೆಯು ಹೊಂದಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು. ಉಡುಪಿಯ ಹೃದಯಭಾಗದಲ್ಲಿ ಈಗಾಗಲೇ ಖರೀದಿಸಿರುವ 1 ಎಕರೆ ಜಾಗದಲ್ಲಿ ಅಂದಾಜು ರೂ. 10 ಕೋಟಿ ವೆಚ್ಚದಲ್ಲಿ ಸಹಕಾರ ಸೌಧ ನಿರ್ಮಾಣದ ಯೋಜನೆಯನ್ನು ಕೈಗೊಂಡಿದೆ. ಪ್ರತಿಯೊಂದು ಶಾಖೆಯಲ್ಲಿ ಶಾಖಾ ಸಲಹಾ ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳ ಮೇಲ್ವಿಚಾರಣೆ ಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದರು.
Firecracker factory blast: ತಮಿಳುನಾಡಿನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 18ಕ್ಕೂ ಹೆಚ್ಚು ಮಂದಿ ಸಾವು
Tamil Nadu Firecracker factory blast: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ (ಏಪ್ರಿಲ್ 19) ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 18ಕ್ಕೂ ಅಧಿಕ ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಹರೇಕಳ ನ್ಯೂಪಡ್ಪು ನಿವಾಸಿ, ಸಮಾಜ ಸೇವಕ ಬಿಎಸ್ಆರ್ ಸಲಾಂ (54) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ಹಣ್ಣು ಹಂಪಲು ವ್ಯಾಪಾರಿಯಾಗಿದ್ದ ಬಿಎಸ್ಆರ್ ಸಲಾಂ ಅವರು ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ನ ಹಿರಿಯ ಸದಸ್ಯರಾಗಿದ್ದರು. ಪತ್ನಿ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ ಬಿಎಸ್ಆರ್ ಸಲಾಂ ನಿಧನಕ್ಕೆ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಹಾಗೂ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ.
Bidar | ಬಸವಣ್ಣ ಸಮಾನತೆಯ ಸಂದೇಶ ಜಗತ್ತಿಗೆ ನೀಡಿದ ವಿಶ್ವಗುರು: ಶಾಸಕ ಶೈಲೇಂದ್ರ ಬೆಲ್ದಾಳೆ
ಬೀದರ್: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಸಹೋದರರೇ ದಾಯಾದಿಗಳಾಗುತ್ತಿರುವ ಸಂದರ್ಭದಲ್ಲೂ, 9 ಶತಮಾನಗಳ ಹಿಂದೆಯೇ ಪ್ರತಿಯೊಬ್ಬರನ್ನು “ಇವ ನಮ್ಮವ” ಎಂದು ಒಗ್ಗೂಡಿಸುವ ಸಂದೇಶ ನೀಡಿದ ವಿಶ್ವಗುರು ಬಸವಣ್ಣ ಎಂದೇ ಗುರುತಿಸಿಕೊಂಡವರು ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಹೇಳಿದರು. ನಗರದ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಅಲ್ಲಮಪ್ರಭು ಅವರ ಅಧ್ಯಕ್ಷತೆಯಲ್ಲಿ 700ಕ್ಕೂ ಹೆಚ್ಚು ಶರಣರು ಸಮಾಜದ ವಿಚಾರಗಳನ್ನು ಚರ್ಚಿಸಿ, ವಚನಗಳ ಮೂಲಕ ಶ್ರೇಷ್ಠವಾದ ಸಂದೇಶಗಳನ್ನು ನೀಡಿದ್ದಾರೆ ಎಂದರು. ನಾವು “ನಾನು” ಎಂಬ ಅಹಂ ಬಿಟ್ಟು “ನಾವು” ಎಂಬ ಭಾವನೆ ಬೆಳೆಸಿಕೊಂಡು, ಎಲ್ಲಾ ಜಾತಿ–ಪಂಗಡದವರು ಒಗ್ಗೂಡಿ ಸಾಮರಸ್ಯದ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು. ಶಿವಶರಣಪ್ಪ ವಾಲಿ ಮಾತನಾಡಿ, ಬಸವಣ್ಣನವರು ಯಾವುದೇ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಲಿಂಗದೀಕ್ಷೆ ನೀಡುವ ಮೂಲಕ ಸಮಾನತೆಯ ಸಂದೇಶ ಸಾರಿದರು. ಆದರೆ ಇಂದಿನ ದಿನಗಳಲ್ಲಿ ಸಮಾಜವನ್ನು ಒಗ್ಗೂಡಿಸಬೇಕಾದವರೇ ವಿಭಜನೆಗೆ ಕಾರಣವಾಗುತ್ತಿರುವುದು ದುಃಖಕರ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಪ್ರೊ.ವೆಂಕಣ್ಣ ದೊಣ್ಣೇಗೌಡ ಉಪನ್ಯಾಸ ನೀಡಿ, ಬಸವಣ್ಣ ಹಾಗೂ ಶರಣರು ಕಂದಾಚಾರ, ಆಡಂಬರ ಮತ್ತು ಮೂಢನಂಬಿಕೆಗಳನ್ನು ತಿರಸ್ಕರಿಸಿ ವೈಜ್ಞಾನಿಕತೆಯನ್ನೇ ಭಕ್ತಿ ಎಂದು ಪ್ರತಿಪಾದಿಸಿದರು. ಕಾಯಕ ಮತ್ತು ದಾಸೋಹವೇ ನಿಜವಾದ ಭಕ್ತಿ ಎಂಬ ತತ್ವವನ್ನು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು. ಜಾತಿ ವ್ಯವಸ್ಥೆ ಬಲವಾಗಿದ್ದ ಕಾಲದಲ್ಲೇ ಶರಣರು ಅದನ್ನು ತೊಡೆದು ಹಾಕಿ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ್ದು, ಭಕ್ತನು ದೇವನಾಗಬಲ್ಲನು ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಂಗಾಬಿಕಾ ಅಕ್ಕ, ರಜನೀಶ್ ವಾಲಿ, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ್ ಹೊಸಳ್ಳಿ, ಸಮಿತಿ ಖಜಾಂಚಿ ಸಿದ್ದು ಸ್ವಾಮಿ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ್ ಧನ್ನೂರ್, ಧನರಾಜ್ ಹಂಗರಗಿ, ಸುರೇಶ್ ಚೆನ್ನಶೆಟ್ಟಿ, ಶಕುಂತಲಾ ಬೆಲ್ದಾಳೆ ಹಾಗೂ ಅನ್ಶುಲ್ ವಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದಿ ಭಾಷೆಯ ರಾಜ್ಯಗಳಲ್ಲಿ ಸ್ಥಾನ ಹೆಚ್ಚಿಸುವುದು ಬಿಜೆಪಿಯ ಗುಪ್ತ ಅಜೆಂಡಾ: ಡಿ.ಕೆ. ಶಿವಕುಮಾರ್
ಬೆಂಗಳೂರು: ಉತ್ತರ ಭಾರತದ ಹಿಂದಿ ಭಾಷೆಯ ರಾಜ್ಯಗಳಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಂಡು ದಕ್ಷಿಣದ ಧ್ವನಿ ಕ್ಷೀಣಿಸುವಂತೆ ಮಾಡುವುದು ಬಿಜೆಪಿಯ ಗುಪ್ತ ಅಜೆಂಡಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಕೇಂದ್ರ ಸರಕಾರದ ವಿವಾದಿತ ಮಸೂದೆಗೆ ಸೋಲು ಆಗಿರುವ ಕುರಿತು ರವಿವಾರ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲಾತಿ ಮಸೂದೆಯು ಕೇವಲ ಒಂದು ಮಾಯಾಜಾಲವಾಗಿದ್ದು, ಇದು ದಕ್ಷಿಣದ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳಲು ನಡೆಸುತ್ತಿರುವ ರಾಜಕೀಯ ಸರ್ಜಿಕಲ್ ದಾಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ನಮ್ಮ ಧ್ವನಿ ಕ್ಷೀಣಿಸಿದರೆ ತೆರಿಗೆ ಹಣದ ಹಂಚಿಕೆಯಲ್ಲೂ ನಮಗೆ ಅನ್ಯಾಯವಾಗುತ್ತದೆ. ಇದನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಒಪ್ಪುವುದಿಲ್ಲ. ನಾವು ಮಹಿಳಾ ಮೀಸಲಾತಿಯನ್ನು ಸ್ವಾಗತಿಸುತ್ತೇವೆ, ಆದರೆ ಅದರ ಹೆಸರಲ್ಲಿ ನಡೆಯುವ ಪ್ರಾದೇಶಿಕ ಅನ್ಯಾಯವನ್ನು ಬಲವಾಗಿ ವಿರೋಧಿಸುತ್ತೇವೆ. ನಮ್ಮ ರಾಜ್ಯದ ಹಿತಾಸಕ್ತಿ ಬಲಿ ಕೊಡಲು ನಾವು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಳಾ ಮೀಸಲಾತಿ ಎಂಬುದು ಮಹಿಳೆಯರ ಹಕ್ಕಾಗಬೇಕೇ ಹೊರತು, ದಕ್ಷಿಣ ಭಾರತವನ್ನು ಹತ್ತಿಕ್ಕುವ ಆಯುಧವಾಗಬಾರದು. ಒಕ್ಕೂಟ ವ್ಯವಸ್ಥೆಯ ಅಡಿಪಾಯಕ್ಕೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರವು ತಕ್ಷಣವೇ ಮರುವಿಂಗಡಣೆಯ ಷರತ್ತನ್ನು ಕೈಬಿಟ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು, ಇಲ್ಲದಿದ್ದರೆ ದಕ್ಷಿಣ ಭಾರತದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವನ್ನು ಆಗುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳದಂತಹ ರಾಜ್ಯಗಳು ರಾಷ್ಟ್ರೀಯ ಹಿತಾಸಕ್ತಿಯಿಂದ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಆದರೆ, ಈಗ ಕೇಂದ್ರ ಸರಕಾರ ಜನಸಂಖ್ಯೆ ಹೆಚ್ಚಿಸಿಕೊಂಡ ರಾಜ್ಯಗಳಿಗೆ ಹೆಚ್ಚಿನ ಸಂಸತ್ ಸ್ಥಾನ ನೀಡಿ, ಜನಸಂಖ್ಯೆ ನಿಯಂತ್ರಿಸಿದ ನಮ್ಮಂತಹ ಪ್ರಗತಿಪರ ರಾಜ್ಯಗಳ ಪ್ರಾತಿನಿಧ್ಯ ಕುಗ್ಗಿಸಲು ಹೊರಟಿದೆ. ಇದು ಕನ್ನಡಿಗರ ಹಾಗೂ ಇಡೀ ದಕ್ಷಿಣ ಭಾರತೀಯರ ಸ್ವಾಭಿಮಾನಕ್ಕೆ ಎಸಗುತ್ತಿರುವ ದ್ರೋಹ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರ ಗ್ಯಾರೆಂಟಿ ನೀಡುತ್ತದೆಯೇ?: ಡಿ.ಕೆ.ಶಿವಕುಮಾರ್ ‘ಮಹಿಳಾ ಮೀಸಲಾತಿ ನೀಡಲು ಕ್ಷೇತ್ರ ಮರುವಿಂಗಡಣೆ ಆಗಲೇಬೇಕು ಎಂಬ ಹಠವೇಕೆ? ಈಗಿರುವ 543 ಕ್ಷೇತ್ರಗಳಲ್ಲೇ ಮೀಸಲಾತಿ ನೀಡಲು ನಿಮಗಿರುವ ತಡೆಯೇನು?. ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳ ಸಂಸತ್ ಸ್ಥಾನಗಳ ಸಂಖ್ಯೆ ಇಳಿಕೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಕಾನೂನಾತ್ಮಕವಾಗಿ ಗ್ಯಾರೆಂಟಿ ನೀಡುತ್ತದೆಯೇ?’ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
Bidar | ಬಸವಣ್ಣ ಸಮಾನತೆಯ ಸಂದೇಶ ನೀಡಿದ ಮಹಾನ್ ಚಿಂತಕ : ಮಹಾಂತಪ್ರಭು ಮಹಾಸ್ವಾಮಿ
ಬೀದರ್: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಅವರು ಸಮಾನತೆ, ಕಾಯಕದ ಮಹತ್ವವನ್ನು ಸಾರಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಸೆಗುಣಸಿಯ ಡಾ. ಮಹಾಂತಪ್ರಭು ಮಹಾಸ್ವಾಮಿ ಹೇಳಿದರು. ಭಾಲ್ಕಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ-2026, ಚನ್ನಬಸವ ಪಟ್ಟದೇವರು ಅವರ 27ನೇ ಸ್ಮರಣೋತ್ಸವ ಹಾಗೂ ನಾಡೋಜ ಬಸವಲಿಂಗ ಪಟ್ಟದೇವರು ಅವರ ಅಮೃತ ಮಹೋತ್ಸವ ಅಂಗವಾಗಿ ಶನಿವಾರ ನಡೆದ 75 ಸ್ವಚ್ಛತಾ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪೂಜೆಯೇ ಕಾಯಕ ಮಾಡಿಕೊಂಡ ಸಮಾಜವನ್ನು ಕಾಯಕವೇ ಪೂಜೆ ಎಂಬ ಮೌಲ್ಯಕ್ಕೆ ಪರಿವರ್ತಿಸಿದವರು ಬಸವಣ್ಣ ಎಂದು ಅವರು ಹೇಳಿದರು. ಶರಣರು ಇಂಗ್ಲೆಂಡ್ನ ಮ್ಯಾಗ್ನಾಕಾರ್ಟಕ್ಕೂ ಮುಂಚೆಯೇ ಅನುಭವಮಂಟಪದ ಮೂಲಕ ಪ್ರಜಾತಂತ್ರದ ಮೌಲ್ಯಗಳನ್ನು ಬಿತ್ತಿದ್ದರು ಎಂದು ಉಲ್ಲೇಖಿಸಿದರು. ಬಸವಣ್ಣನವರ ತತ್ವಸಿದ್ಧಾಂತಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆ ಮಾಡಿದವರು ಭಾಲ್ಕಿಯ ಶ್ರೀಗಳಾಗಿದ್ದಾರೆ ಎಂದು ಹೇಳಿ, ವಿಶೇಷವಾಗಿ ಬಸವಲಿಂಗ ಪಟ್ಟದೇವರು ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ರಾಜ್ಯದ ಆರ್ಥಿಕ ಇಲಾಖೆಯ ಅಪರ್ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮಾತನಾಡಿ, ಗಡಿಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿದ್ದು, ಅಮೃತ ಮಹೋತ್ಸವವು ವ್ಯಕ್ತಿಗಲ್ಲ, ಅವರ ಜೀವನ ಮೌಲ್ಯಗಳಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ತಹಸೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರೆ, ಬಸವರಾಜ್ ಪಾಟೀಲ್ ಸೇಡಂ, ರೇವಣಸಿದ್ದಪ್ಪ ಜಲಾದೆ, ಗುರುನಾಥ್ ಕೊಳ್ಳೂರು, ಪ್ರಕಾಶ್ ಟೊಣ್ಣೆ, ವೈಜಿನಾಥ್ ಕಾಮಶೆಟ್ಟಿ, ಸಿದ್ಧಣ್ಣ ಭೂಮಾ, ಜೈರಾಜ್ ಖಂಡ್ರೆ ಹಾಗೂ ವಿಜಯಕುಮಾರ್ ಸೋನಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗೀತಾ ಪಾಟೀಲ್ ನಿರೂಪಿಸಿದರು. ಮಹಾನಂದಾ ದೇಶಮುಖ ಶರಣು ಸಮರ್ಪಣೆ ಮಾಡಿದರು.
Election: ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಸಂದೇಶವನ್ನು ಭಾರತೀಯ ಚುನಾವಣಾ ಆಯೋಗ ಹಂಚಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಬಳಕೆಗೆ ಸಂಬಂಧಿಸಿದಂತೆ ಈ ನಿರ್ದೇಶನ ಇದೆ. ಭಾರತೀಯ ಚುನಾವಣಾ ಆಯೋಗದ ಆದೇಶದಲ್ಲಿ ಏನಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. 2026 ರ ಸಾರ್ವತ್ರಿಕ ಚುನಾವಣೆಗಳು
ಹುಲಸೂರ್ | ಅಂಬೇಡ್ಕರ್ ಬ್ಯಾನರ್ ಹರಿದ ಕಿಡಿಗೇಡಿಗಳು : ಪ್ರಕರಣ ದಾಖಲು
ಹುಲಸೂರ್ : ಭಾಲ್ಕಿ ತಾಲೂಕಿನ ಕೊಂಗಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಾಕಲಾಗಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಅವಮಾನ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಗೌತಮ್ ಸೂರ್ಯವಂಶಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಎ.13ರಂದು ಗ್ರಾಮದ ಯುವಕರು ಶಿವಾಜಿ ವೃತ್ತದ ಬಳಿ ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿದ್ದರು. ಎ.28ರಂದು ನಡೆಯಲಿರುವ ಜಯಂತಿ ಮೆರವಣಿಗೆ ಹಿನ್ನೆಲೆ ಈ ಬ್ಯಾನರ್ ಹಾಕಲಾಗಿತ್ತು. ಆದರೆ ಎ.18ರ ರಾತ್ರಿ ಕೆಲ ಕಿಡಿಗೇಡಿಗಳು ಬ್ಯಾನರ್ ಅನ್ನು ಉದ್ದೇಶಪೂರ್ವಕವಾಗಿ ಹರಿದು ಅವಮಾನಗೊಳಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ದೂರಿನಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಅಂಬೇಡ್ಕರ್ ಅವರ ಭಾವಚಿತ್ರವಿದ್ದ ಬ್ಯಾನರ್ ಅನ್ನು ಉದ್ದೇಶಪೂರ್ವಕವಾಗಿ ಹರಿದು, ಅವಮಾನಗೊಳಿಸಿರುವುದು ಕಂಡು ಬಂದಿದೆ. ಹಾಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮೇ 4ರಂದು ಕುಕನೂರಿನಲ್ಲಿ ಬಸವಣ್ಣ, ಅಂಬೇಡ್ಕರ್, ರಾಯಣ್ಣ ಮೂರ್ತಿ ಶಂಕುಸ್ಥಾಪನೆ: ಶಾಸಕ ಬಸವರಾಜ ರಾಯರೆಡ್ಡಿ
ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯುಸಿ ನಂತರದ ಶಿಕ್ಷಣಕ್ಕೆ ಮೀಫ್ನಿಂದ ಉಚಿತ ಸೀಟ್
ಮಂಗಳೂರು, ಎ.19: ಪಿಯುಸಿ ಉತ್ತೀರ್ಣಗೊಂಡ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ನಂತರದ ವಿದ್ಯಾಭ್ಯಾಸಕ್ಕೆ ಕೆಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಉಚಿತ ಸೀಟುಗಳ ಕೊಡುಗೆಯನ್ನು ಮೀಫ್ ಸಂಸ್ಥೆಗೆ ನೀಡಿದ್ದಾರೆ. ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಅಥವಾ ಸರಕಾರಿ ಸಂಸ್ಥೆಗಳಲ್ಲಿ ಕಲಿತ ಪ್ರತಿಭಾವಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಮತ್ತು ಅನಾಥ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ಗರಿಷ್ಠ ಶೇ 90 ಕ್ಕಿಂತ ಅಧಿಕ ಅಂಕ ಪಡೆದಿರಬೇಕು. ಕೆಲವೊಂದು ಕೋರ್ಸುಗಳಿಗೆ ಶೇ 80ಕ್ಕಿಂತ ಅಧಿಕ ಅಂಕಗಳನ್ನು ಪರಿಗಣಿಸಲಾಗುವುದು. ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿ ಆಯಾ ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಅರ್ಜಿಯನ್ನು ಪಡೆದು, ಪರಿಶೀಲನೆ ನಡೆಸಿ, ಅವರ ಶಿಪಾರಸ್ಸಿ ನೊಂದಿಗೆ ಮೀಫ್ ಕಚೇರಿಗೆ ತಲುಪಿಸಬೇಕು. ದ.ಕ ಮತ್ತು ಉಡುಪಿ ಜಿಲ್ಲೆಗಳ ಅರ್ಜಿಗಳನ್ನು ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎ.30 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಪರಾಹ್ನ 2 ರಿಂದ 5ರ ವರೆಗೆ ಮೊಬೈಲ್ ಸಂಖ್ಯೆ +91 8792115666, +91 8431990966 ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಮೀಫ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಸಿಎಂ ರಾಣೆಬೆನ್ನೂರು ಭೇಟಿ , ಭದ್ರತಾ ಕ್ರಮಗಳಿಂದ ಸಣ್ಣ ವ್ಯಾಪಾರಿಗಳಿಗೆ ಆಥಿ೯ಕ ಸಂಕಷ್ಟ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಣೇಬೆನ್ನೂರು ಭೇಟಿಯ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಬಿಗಿ ಭದ್ರತಾ ಕ್ರಮಗಳು ಸ್ಥಳೀಯ ಸಣ್ಣ ವ್ಯಾಪಾರಿಗಳ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿವೆ ಎಂಬ ಆರೋಪ ಕೇಳಿಬಂದಿದೆ. ದೊಡ್ಡ ಕೆರೆಯ ಬಳಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಶನಿವಾರದಿಂದಲೇ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಹೇರಲಾಗಿತ್ತು.
Koppal | ಕುಷ್ಟಗಿಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ
ಲಕ್ಷ ಮನೆಗಳಲ್ಲಿ ಗ್ರಂಥಾಲಯದ ಬೀಜ ಬಿತ್ತುತ್ತೇವೆ: ಪುಸ್ತಕ ಪ್ರಾಧಿಕಾರದ ರಾಜ್ಯಾಧ್ಯಕ್ಷ ಡಾ.ಮಾನಸ
ಪುತ್ತೂರು| 'ಮಾದರಿ ಮದುವೆ' ಸಮ್ಮೇಳನ: ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ
ಪುತ್ತೂರು: ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ 'ಮಾದರಿ ಮದುವೆ' ಅಭಿಯಾನದ ಸಮಾರೋಪ ಸಮ್ಮೇಳನವು ಮೇ 2ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಈ ಸಂಬಂಧ ಸ್ವಾಗತ ಸಮಿತಿ ಕಚೇರಿಯನ್ನು ಬನ್ನೂರು ಸುನ್ನೀ ಸೆಂಟರ್ ನಲ್ಲಿ ತೆರೆಯಲಾಯಿತು. ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷ ಸೈಯದ್ ಇಲ್ಯಾಸ್ ತಂಙಳ್ ಎರುಮಾಡ್ ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಯೂಸುಫ್ ಸಾಜ ಗೌಸಿಯಾ, ರಾಜ್ಯ ಸಮಿತಿ ನಾಯಕರಾದ ಕೆ ಎಂ ಅಬೂಬಕರ್ ಸಿದ್ದೀಖ್, ಮನ್ಸೂರ್ ಅಲಿ ಕೋಟೆಗದ್ದೆ, ಇಬ್ರಾಹೀಂ ಸಖಾಫಿ ಪಯೋಟ, ಅಬ್ದುರ್ರಹ್ಮಾನ್ ರಝ್ವಿ ಉಡುಪಿ, ಅಹ್ಮದ್ ಮದನಿ ಮಡಿಕೇರಿ, ಅಶ್ರಫ್ ಎಮ್ಮೆಮಾಡು, ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸಾಲಿಹ್ ಮುರ ಸ್ವಾಗತಿಸಿ, ಸ್ವಾಗತ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ ವಂದಿಸಿದರು.
ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 16 ಸಾವು, 6 ಗಾಯ
Tamil Nadu Fireworks Factory Tragedy- ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 16 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ರಾಸಾಯನಿಕ ಮಿಶ್ರಣದ ವೇಳೆ ಉಂಟಾದ ಘರ್ಷಣೆಯಿಂದ ಈ ದುರಂತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಸಿಎಂ ಎಂ.ಕೆ. ಸ್ಟಾಲಿನ್ ಸಂತಾಪ ಸೂಚಿಸಿ, ರಕ್ಷಣಾ ಕಾರ್ಯಕ್ಕೆ ಸಚಿವರಿಗೆ ಸೂಚಿಸಿದ್ದಾರೆ. 1991 ರಿಂದಲೂ ಈ ಭಾಗದಲ್ಲಿ ಸರಣಿ ಸ್ಫೋಟಗಳು ನಡೆಯುತ್ತಿದ್ದು, 2010-2020ರ ನಡುವೆ 230ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಅಕ್ರಮ ಘಟಕಗಳೇ ಇಂತಹ ಪದೇ ಪದೇ ಮರುಕಳಿಸುವ ದುರಂತಗಳಿಗೆ ಪ್ರಮುಖ ಕಾರಣವಾಗಿವೆ.
Chamarajanagar| ಕೆಸರಿನಲ್ಲಿ ಸಿಲುಕಿಕೊಂಡ ಕಾಡಾನೆಗಳು
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಉಡುತೊರೆ ಜಲಾಶಯ ಹಿನ್ನೀರಿನಲ್ಲಿ ಮೂರು ಕಾಡಾನೆಗಳು ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಉಡುತೊರೆ ಜಲಾಶಯದ ಹಿನ್ನೀರಿನಲ್ಲಿ ನೀರು ಕುಡಿಯಲು ಬಂದಿದ್ದ ಆನೆಗಳು ಕೆಸರಿನಲ್ಲಿ ಸಿಲುಕಿದ್ದು, ಅವುಗಳಲ್ಲಿ ಒಂದು ಆನೆ ಕಷ್ಟಪಟ್ಟು ಹೊರಬಂದಿದೆ. ಮತ್ತೊಂದು ಆನೆ ಇನ್ನೂ ಕೆಸರಿನಲ್ಲಿ ಸಿಲುಕಿಕೊಂಡಿದ್ದರೆ, ಮೂರನೇ ಆನೆ ಆತಂಕದಿಂದ ಸುತ್ತಮುತ್ತ ಅಲೆದಾಡುತ್ತಿತ್ತು. ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಹನೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಆನೆಯನ್ನು ರಕ್ಷಿಸಿದ್ದಾರೆ.
ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ
ಮೂಡುಬಿದಿರೆ: ದ.ಕ ಮತ್ತು ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ 17 ಪ್ರಕರಣಗಳಲ್ಲಿ ಭಾಗಿಯಾಗಿ 4 ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆ ತಾಲೂಕಿನ ತೆಂಕ ಮಿಜಾರು ಗ್ರಾಮದ ಆರ್ಗ ನಿವಾಸಿ ಸದ್ಯ ಬಂಟ್ವಾಳ ತಾಲೂಕಿನ ಬಿಸಿ ರೋಡ್ ಬಳಿಯ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕೆ. ಅಬ್ದುಲ್ ಬಶೀರ್ ಯಾನೆ ಅರ್ಗ ಬಶೀರ್ (50) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 6, ಬಜ್ಪೆ ಪೊಲೀಸ್ ಠಾಣೆಯಲ್ಲಿ 5, ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣೆಯಲ್ಲಿ 2, ಮಂಗಳೂರು ಗ್ರಾಮಾಂತರ, ಧರ್ಮಸ್ಥಳ, ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರೋಪಿಯು 4 ವರ್ಷಗಳಿಂದ ನ್ಯಾಯಾಯಲಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಈ ಕುರಿತು ನ್ಯಾಯಾಲಯವು ಆರೋಪಿಯ ಬಂಧನಕ್ಕಾಗಿ ವಾರೆಂಟ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪರ್ಲಿಯಾದ ಮನೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಂಪಿ ಕ್ಷೇತ್ರ ಮರುವಿಂಗಡನೆಗೆ ವಿರೋಧ, ಮಹಿಳಾ ಮೀಸಲಾತಿಗಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಹಾವೇರಿ: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಇದೀಗ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದೆ. ನಾವು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸ್ಪಷ್ಟಪಡಿಸಿದರು. ಜಿಲ್ಲೆಯ ಇಂದು ರಾಣೇಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ. ಸ್ಥಳೀಯ
ಮೇ 10ರಂದು ಅನಾಥ, ಬಡ ಯುವತಿಯರ ಮದುವೆಗೆ ನೆರವು: ಅರ್ಜಿ ಆಹ್ವಾನ
ಮಂಗಳೂರು, ಎ.19: ನಗರದ ಬಂದರ್ನಲ್ಲಿರುವ ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ವತಿಯಿಂದ ಸುಲ್ತಾನುಲ್ ಆಶಿಖೀನ್ ಅಶ್ಶೈಖ್ ಅಸ್ಸಯ್ಯದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿ (ಖ.ಸಿ)ರ 100ನೇ ಆಂಡ್ ನೇರ್ಚೆಯು ಮೇ 4ರಿಂದ 11ರವರೆಗೆ ನಡೆಯಲಿದೆ. ಆ ಪ್ರಯುಕ್ತ ಮೇ 10ರಂದು ಅನಾಥ /ಬಡ ನಿರ್ಗತಿಕ ಇಪ್ಪತ್ತೈದು ವರ್ಷ ಮೀರಿದ ಯುವತಿಯರ ಮದುವೆಗೆ ಸಹಕರಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಮೇ 25ರೊಳಗೆ ಮದುವೆ ನಿಗದಿಯಾಗಿರುವ ಇಪ್ಪತ್ತೈದು ಪ್ರಾಯ ಮೀರಿದ ಹೆಣ್ಣು ಮಕ್ಕಳ ಹೆತ್ತವರು ಎ.27ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಫಾರಂಗಳಿಗೆ ಮೊ.ಸಂ: 90191 44555/97407 99555ನ್ನು ಸಂಪರ್ಕಿಸಬಹುದು. ಮೊದಲು ಬಂದ ಅರ್ಜಿಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು ಎಂದು ಅಶ್ಶೈಖ್ ಅಸ್ಸಯ್ಯದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿ 100ನೇ ಆಂಡ್ ನೇರ್ಚೆಯ ಕನ್ವೀನರ್ ಹಾಜಿ ಎಸ್ಎಂ ರಶೀದ್ ತಿಳಿಸಿದ್ದಾರೆ.
RCB: ಡಿಸಿ ವಿರುದ್ಧ ಸೋತರೂ ಆರ್ಸಿಬಿ ಬೌಲರ್ಗಳ ಬೆನ್ನಿಗೆ ನಿಂತ ದಿನೇಶ್ ಕಾರ್ತಿಕ್; ಇಲ್ಲಿದೆ ಕಾರಣ
RCB Dinesh Karthik: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್ 18) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರೋಚಕ ಐಪಿಎಲ್ ಪಂದ್ಯದಲ್ಲಿ ಸೋತರೂ ಸಹ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಪ್ರದರ್ಶನವನ್ನು ಮೆಂಟರ್ ದಿನೇಶ್ ಕಾರ್ತಿಕ್ ಶ್ಲಾಘಿಸಿದ್ದಾರೆ. ಆರ್ಸಿಬಿ ನೀಡಿದ 175 ರನ್ಗಳ ಗುರಿಯನ್ನು ಡೆಲ್ಲಿ ತಲುಪುವ ಮೂಲಕ ಗೆಲುವು ಸಾಧಿಸಿತು ನಮ್ಮ ಬೌಲರ್ಗಳು ನಿರೀಕ್ಷೆಗೂ ಮೀರಿದ
China: ಅಂಡರ್ವಾಟರ್ 'ಬುಲೆಟ್ ರೈಲು' ಮಾರ್ಗ ನಿರ್ಮಾಣ ಪೂರ್ಣ, ವೈಶಿಷ್ಟ್ಯವೇನು?
Underwater Bullet Train: ತಂತ್ರಜ್ಞಾನದಲ್ಲಿ ದಶಕಗಳಷ್ಟು ಮುಂದೆ ಇರುವ ಚೀನಾ ದೇಶದಲ್ಲಿ ಇದೀಗ ಅಂಡರ್ವಾಟರ್ ಬುಲೆಟ್ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿನ ಯಾಂಗ್ಟ್ಜಿ ನದಿ ಅಡಿಯಲ್ಲಿ 11.8 ಕಿ.ಮೀ. ಉದ್ದದ ಅತಿವೇಗದ ಸುರಂಗ ನಿರ್ಮಾಣವು ಪೂರ್ಣಗೊಳಿಸಿ ಚೀನಾ ಮೈಲಿಗಲ್ಲು ಸಾಧನೆ ಮಾಡಿದೆ. ಇದು ಶಾಂಘೈನ ಚಾಂಗ್ಮಿಂಗ್ನಿಂದ ಜಿಯಾಂಗ್ಸು ಪ್ರಾಂತ್ಯದ ತೈಕಾಂಗ್ಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಒಟ್ಟು
ಗುರುಪುರ: ಸಾರ್ವಜನಿಕ ರಕ್ತದಾನ ಶಿಬಿರ
ಗುರುಪುರ: ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ (ರಿ) ಅಡ್ಡೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಜಂಟಿ ಆಶ್ರಯದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ರವಿವಾರ ಅಡ್ಡೂರಿನ ಸರ್ಕಾರಿ ಶಾಲೆಯಲ್ಲಿ ನಡೆಯಿತು. ದುಆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸದಖತುಲ್ಲಾ ಫೈಝಿ, ಮಾನವನ ಜೀವ ಉಳಿಸುವ ರಕ್ತದಾನವು ಮಹಾದಾನವಾಗಿದ್ದು, ಇದಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ. ರಕ್ತದಾನ ಜೀವ ಉಳಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಬಾದ್ಯತೆಯನ್ನು ನಿರ್ವಹಿಸುತ್ತದೆ. ಯುವ ಸಮೂಹ ಸಾಮಾಜ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಾನವ ಜನಾಂಗದ ಬದುಕಿನ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸಬೇಕು ಎಂದು ಹೇಳಿದರು. ಶಿಬಿರದಲ್ಲಿ 82 ಮಂದಿ ರಕ್ತದಾನ ಮಾಡಿದರು. ಈ ಸಂದರ್ಭ ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕ ನಿಝಾಮ್ ತೋಕೂರು ಹಾಗೂ ರಿಫಾ ಕ್ಲಿನಿಕ್ ಸಹಾಯಕ ಸಿಬ್ಬಂದಿ ಅಬ್ದುಲ್ ರೆಹ್ಮಾನ್ ಅವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಕ್ತನಿಧಿ ಸಿಬ್ಬಂದಿ ಕೆಎಂಸಿ ವೈದ್ಯೆ ಡಾ. ಋತ್ವಿ, ಡಾ.ಇ.ಕೆ. ಸಿದ್ದೀಕ್, ಬಿಜೆಎಂ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ, ಜಿ.ಪಂ.ಮಾಜಿ ಸದಸ್ಯ ಯು.ಪಿ.ಇಬ್ರಾಹೀಂ, ಗುರುಪುರ ಗ್ರಾ.ಪಂ.ಸದಸ್ಯರಾದ ಎ.ಕೆ.ಅಶ್ರಫ್, ಸಾಹಿಕ್ ಪಾಂಡೇಲ್, ಎಫ್ ಸಿಕೆ ಅಧ್ಯಕ್ಷ ಹಾರೀಸ್, ಗೌರವಾಧ್ಯಕ್ಷ ಯಾಕೂಬ್ ಕೆಳಗಿನಕೆರೆ, ಸಿದ್ದೀಕ್ ಕೆಳಗಿನಕೆರೆ, ಮುಸ್ತಫಾ ದೆಮ್ಮಲೆ, ಹಮೀದ್ ಕಡೆ ತೋಟ, ಮಜೀದ್, ಮನ್ಸೂರ್, ತೌಸೀಫ್ ಕೆಳಗಿನಕೆರೆ, ಹಂಝ ಕೆಳಗಿನಕೆರೆ, ಗೌಸ್, ಮುಹಿಯುದ್ದೀನ್, ಉಸ್ಮಾನ್, ಮತ್ತಿತರರು ಉಪಸ್ಥಿತರಿದ್ದರು. ಅಸ್ತಾರ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು. ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕ ಇಮ್ರಾನ್ ಅಡ್ಡೂರು ವಂದಿಸಿದರು.
ತುಳು ನೆಲೆಯ ಜ್ಞಾನ ವಿಕಾಸಕ್ಕೆ ಶಿಬಿರ ಪೂರಕ : ಮಮತಾ ಗಟ್ಟಿ
ಮಂಗಳೂರು, ಎ.19: ತುಳು ಜನಪದ ಕಥೆಗಳನ್ನು, ತುಳುನಾಡಿನ ಆಟ ಕೂಟಗಳನ್ನು ಮಕ್ಕಳಿಗೆ ಪರಿಚಯಿಸಿದ ’ತೆಲಿಕೆ ನಲಿಕೆ’ ಮಕ್ಕಳ ಶಿಬಿರವು ಒಳ್ಳೆಯ ಪ್ರಯತ್ನ ಹಾಗೂ ನಮ್ಮ ಮಣ್ಣಿನ ಕಂಪನ್ನು ಈ ಶಿಬಿರದಲ್ಲಿ ಮಕ್ಕಳು ಅನುಭವಿಸಲು ಸಾಧ್ಯವಾಗಿರುವುದು ಸಂತಸದ ವಿಚಾರ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ನಗರದ ಉರ್ವಸ್ಟೋರಿನ ತುಳು ಭವನದಲ್ಲಿ ಹಮ್ಮಿಕೊಂಡ ಒಂದು ವಾರದ ’ತೆಲಿಕೆ ನಲಿಕೆ’ ಮಕ್ಕಳ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬೃಂದಾವನ ಯೋಗ ಮತ್ತು ನೇಚರ್ ಕೇರ್ ಸಂಸ್ಥೆಯ ಅಧ್ಯಕ್ಷೆ ಡಾ. ಶಾರದಾ ಬಂಗೇರ ಮಾತನಾಡಿ, ಮಕ್ಕಳ ಶಿಬಿರಗಳು ಬೇಸಿಗೆಯಲ್ಲಿ ಮಕ್ಕಳ ಆರೋಗ್ಯದ ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಪೋಷಕರು ಸಾಧ್ಯವಾದಷ್ಟು ಮಕ್ಕಳಿಗೆ ಮನೆ ಮದ್ದು ಹಾಗೂ ನೈಸರ್ಗಿಕವಾಗಿ ಲಭ್ಯವಿರುವ ಪಾನೀಯಗಳನ್ನು ನೀಡಬೇಕು, ಇದು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು. ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ತೆಲಿಕೆ ನಲಿಕೆ ಶಿಬಿರದ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ ರಂಗ ಕಲಾವಿದ ವಿನೋದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಕಾಡಮಿಯ ಸದಸ್ಯೆ ಅಕ್ಷಯ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಒಂದು ನಿಂಬೆಯ ಕತೆ!: ಸಿಎಸ್ಕೆ ಸೋಲಿನ ಹಿಂದೆ ಸನ್ರೈಸರ್ಸ್ ಅಭಿಮಾನಿಯ 'ಮಾಟ-ಮಂತ್ರ'? ವೈರಲ್ ಆಗಿದೆ ವಿಡಿಯೋ
SRH Vs CSK- ಐಪಿಎಲ್ ಅಂದಮೇಲೆ ಅಲ್ಲಿ ಕೇವಲ ಬ್ಯಾಟು-ಚೆಂಡಿನ ಅಬ್ಬರವಷ್ಟೇ ಇರುವುದಿಲ್ಲ, ಬದಲಿಗೆ ಅಭಿಮಾನಿಗಳ ನಂಬಿಕೆ, ಮೂಢನಂಬಿಕೆ ಮತ್ತು ವಿಚಿತ್ರ ವರ್ತನೆಗಳೂ ಸಹ ಸುದ್ದಿಯಾಗುತ್ತವೆ. ಇತ್ತೀಚೆಗೆ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ನಡೆದ ಪಂದ್ಯದಲ್ಲಿ ಇಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಗ್ಯಾಲರಿಯಲ್ಲಿದ್ದ ಪ್ರೇಕ್ಷಕನೊಬ್ಬ ನಿಂಬೆ ಹಣ್ಣಿನೊಂದಿಗೆ ಮಂತ್ರ ಮಾಡಿದಾಗಲೇ ಸಿಎಸ್ ಕೆ ಬ್ಯಾಟರ್ ಶಿವಂ ದುಬೆ ಔಟಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ಆಂಟಿಕ್ ಜ್ಯುವೆಲ್ಲರಿ ಪ್ರದರ್ಶನಕ್ಕೆ ಚಾಲನೆ
ಮಂಗಳೂರು, ಎ.19: ನಗರದ ಫಳ್ನೀರ್ನಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ಎ.27ರವರೆಗೆ ನಡೆಯಲಿರುವ ಪ್ರಾಚೀನ (Antique) ಜ್ಯುವೆಲ್ಲರಿ ಶೋಗೆ ಶನಿವಾರ ಚಾಲನೆ ನೀಡಲಾಯಿತು. ಅತಿಥಿಯಾಗಿ ಭಾಗವಹಿಸಿದ ಎಜುಕೇಷನಲ್ ಟ್ರೈನರ್ ಲೀಡರ್ಶಿಪ್ ಕೋಚ್, ಮೋಟಿವೆಷನಲ್ ಸ್ಪೀಕರ್ ಯು.ಟಿ. ಫರ್ಝಾನ ಮತ್ತು ಲೋಟಸ್ ವೆಂಚರ್ ಆ್ಯಂಡ್ ಲೋಟಸ್ ಅವೆನು ಬೆಂಗಳೂರು ಇದರ ಪಾಲುದಾರೆ ವಿದ್ಯಾ ಜೆ. ಕೊಟ್ಟಾರಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಯು.ಟಿ.ಫರ್ಝಾನ ಮಾತನಾಡಿ ಪ್ರಾಚೀನ ಜ್ಯುವೆಲರಿ ಶೋ ಆಧುನಿಕ ಮತ್ತು ಪರಂಪರೆಯ ವಿನ್ಯಾಸಗಳಲ್ಲಿ ವೈವಿಧ್ಯಮಯ ಆಭರಣಗಳನ್ನು ಪ್ರದರ್ಶಿಸುವುದಕ್ಕೆ ಹೆಮ್ಮೆಯಾಗುತ್ತದೆ ಎಂದರು. ವಿದ್ಯಾ ಜೆ. ಕೊಟ್ಟಾರಿ ಮಾತನಾಡಿ ಪ್ರಾಚೀನ ಆಭರಣ ಪ್ರದರ್ಶನದ ಮೂಲಕ ವಧುಗಳ ಅತ್ಯಂತ ಸುಮಧುರ ಮತ್ತು ಸಂತಸದ ಕ್ಷಣಗಳಿಗೆ ಮಲಬಾರ್ ಗೋಲ್ಡ್ ಪ್ರೋತ್ಸಾಹ ನೀಡಿದಂತಾಗುತ್ತದೆ. ಆಧುನಿಕ ಹಾಗೂ ಪರಂಪರೆಯ ವಧು ಆಭರಣಗಳ ಆಕರ್ಷಕ ಮತ್ತು ಅಪರೂಪದ ಸಂಗ್ರಹ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದರು. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಝ್ ರಹ್ಮಾನ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿ.ಎಸ್., ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮ್ಯಾನೇಜರ್ ಗಿರೀಶ್ ಶೆಟ್ಟಿ, ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ಸಮೀರ್ ಮತ್ತಿತರರು ಉಪಸ್ಥಿತರಿದ್ದರು.
Yadgiri | ಹತ್ತಿಕುಣಿ ಕ್ಲಸ್ಟರ್ ಯೋಜನೆಗೆ 72 ಕೋಟಿ ರೂ. ಅನುಮೋದನೆ : ರೈತರಲ್ಲಿ ಸಂತಸ
ಯಾದಗಿರಿ/ಗುರುಮಠಕಲ್: ಕ್ಷೇತ್ರದ ಹತ್ತಿಕುಣಿ ಕ್ಲಸ್ಟರ್ ಯೋಜನೆಯಡಿ 72 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸ್ಥಳೀಯ ರೈತರಿಗೆ ಸಂತಸ ತಂದಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸ್ಥಳೀಯ ಶಾಸಕ ಶರಣಗೌಡ ಕಂದಕೂರ್ ಅವರು, ಈ ಮಹತ್ವದ ಕಾಮಗಾರಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಂದಲೇ ಸಾಧಿಸಲು ಸಾಧ್ಯ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಇದೀಗ ಆ ಭರವಸೆ ಕಾರ್ಯಗತಗೊಳ್ಳುತ್ತಿರುವುದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ವಸಂತ್ ಸುಂಗುಲ್ಕರ್ ತಿಳಿಸಿದ್ದಾರೆ. ಹತ್ತಿಕುಣಿ ಎಡದಂಡೆ ಕಾಲುವೆ 1973ರಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 14 ಕಿಲೋಮೀಟರ್ ಉದ್ದ ಹೊಂದಿದೆ. ಈ ಯೋಜನೆಯ ಮೂಲಕ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂಡಹಳ್ಳಿ, ದಸ್ತರಾಬಾದ್ ಹಾಗೂ ಮುಂಡರಗಿ ಸೇರಿದಂತೆ ಬರಪೀಡಿತ ಗ್ರಾಮಗಳ ಸುಮಾರು 5,300 ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದೆ. ಆದರೆ ಕಳೆದ ಹಲವು ವರ್ಷಗಳಿಂದ ಸಮರ್ಪಕ ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ ನೀರಿನ ಹರಿವು ಕುಂಠಿತಗೊಂಡಿತ್ತು. ಇದರಿಂದ ಅಲಬೂರು, ಬಾದರ್ಲಿ, ಗಿಣಿವಾರ, ಹರತನೂರು ಹಾಗೂ ವೆಂಗಲಾಪುರ ಗ್ರಾಮಗಳ ಕೊನೆಯ ಭಾಗದ ರೈತರಿಗೆ ನೀರು ತಲುಪದೇ ಸಂಕಷ್ಟ ಎದುರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಹತ್ತಿಕುಣಿ ಜಲಾಶಯ ಕಾಲುವೆಯ ಸಮಗ್ರ ದುರಸ್ತಿ ಕೈಗೊಳ್ಳಲಾಗುತ್ತಿದ್ದು, ಇದರಿಂದ ಎಲ್ಲಾ ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪುವ ನಿರೀಕ್ಷೆ ಇದೆ. ಈ ಕಾಮಗಾರಿ ಪೂರ್ಣಗೊಂಡರೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗುವುದರೊಂದಿಗೆ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿ ವಸಂತ ಸುಂಗುಲ್ಕರ್ ಸಂತಸ ಹಂಚಿಕೊಂಡಿದ್ದಾರೆ.
ಕೇರಳದಲ್ಲಿ ಎರಡು ದಿನ ತೀವ್ರಗೊಳ್ಳಲಿದೆ ತಾಪಮಾನ ; ಏಪ್ರಿಲ್ ಅಂತ್ಯಕ್ಕೆ ಬೇಸಿಗೆ ಮಳೆ ಸಾಧ್ಯತೆ
ಕೇರಳದಲ್ಲಿ ಮುಂದಿನ ಎರಡು ದಿನಗಳ ಕಾಲ ತೀವ್ರ ಬಿಸಿಗಾಳಿ ಬೀಸಲಿದ್ದು, ತಾಪಮಾನವು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಹೊರತುಪಡಿಸಿ ಉಳಿದ 12 ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಪಾಲಕ್ಕಾಡ್ನಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.
Raichur | ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಒಗ್ಗಟ್ಟಿನ ಹೋರಾಟ ಅಗತ್ಯ: ಶಾಸಕ ಬಸನಗೌಡ ದದ್ದಲ್
ಗೋವಿಂದರಾವ್ ಸಮಿತಿ ವರದಿ: ಸಾಧಕ–ಬಾಧಕಗಳ ಚರ್ಚೆ
ರಾಯಚೂರಿನಲ್ಲಿ 44.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು
ರಾಯಚೂರು: “ಬಿಸಿಲೂರು” ಎಂದೇ ಕರೆಯಲಾಗುವ ರಾಯಚೂರು ಜಿಲ್ಲೆಯಲ್ಲಿ ಶನಿವಾರ ರಾಜ್ಯದಲ್ಲಿಯೇ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಬಿಸಿಲಿನ ತಾಪಕ್ಕೆ ಜನರು ತತ್ತರಿಸುವಂತಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆಯೇ ತಾಪಮಾನ ಏರಿಕೆಯಾಗುತ್ತಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ ವರದಿ ಪ್ರಕಾರ ಜಿಲ್ಲೆಯಲ್ಲಿ ಗರಿಷ್ಠ 44.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಯಚೂರು ತಾಲೂಕಿನ ದೇವಸೂಗೂರು ಗ್ರಾಮದಲ್ಲಿ 44.2 ಡಿಗ್ರಿ ಹಾಗೂ ಕಲಮಲಾ ಗ್ರಾಮದಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತಿಹೆಚ್ಚು ಎಂದು ತಿಳಿದುಬಂದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕನಿಷ್ಠ 42 ರಿಂದ ಗರಿಷ್ಠ 44.2 ಡಿಗ್ರಿವರೆಗೆ ಉಷ್ಣಾಂಶ ಕಂಡುಬಂದಿದ್ದು, ಬಿಸಿಲಿನ ತೀವ್ರತೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳಿಂದಲೇ 40 ಡಿಗ್ರಿ ಸೆಲ್ಸಿಯಸ್ ಮೀರಿದ ತಾಪಮಾನ ದಾಖಲಾಗುತ್ತಿದ್ದರೂ, ಶನಿವಾರ ಅದು ಮತ್ತಷ್ಟು ಏರಿಕೆಯಾಗಿದ್ದು, ಜನರು ತಂಪು ಪಾನೀಯಗಳು ಮತ್ತು ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಮಧ್ಯಾಹ್ನ ವೇಳೆಯಲ್ಲಿ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಾಗಿದ್ದು, ಕೆಲವು ಕಡೆ ನಿರ್ಜನ ದೃಶ್ಯ ಕಂಡುಬರುತ್ತಿದೆ. ಬಿಸಿಲಿನ ಝಳದಿಂದ ರಸ್ತೆಗಳು ಕೆಂಡದಂತಾಗಿದ್ದು, ಬಿಸಿ ಗಾಳಿ ಜನರ ದಾಹವನ್ನು ಹೆಚ್ಚಿಸಿದೆ. ದೇವಸೂಗೂರು ಸಮೀಪದ ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಪ್ರದೇಶದಲ್ಲೂ ಉಷ್ಣಾಂಶ ಹೆಚ್ಚಳ ಕಂಡುಬಂದಿದ್ದು, ಪರಿಸರದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಬಿಸಿಲಿನ ತೀವ್ರತೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಉಷ್ಣ ಅಲೆ ಎಚ್ಚರಿಕೆ : ಭಾರತದ ಹವಾಮಾನ ಇಲಾಖೆ (ಐಎಂಡಿ) ಇತ್ತೀಚೆಗೆ 2026ರ ಏಪ್ರಿಲ್ ಮಧ್ಯಭಾಗದಿಂದ ದೇಶದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಉಷ್ಣ ಅಲೆಗಳ ಎಚ್ಚರಿಕೆ ನೀಡಿತ್ತು. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ 40 ಡಿಗ್ರಿ ಗಡಿ ದಾಟುವ ಸಾಧ್ಯತೆ ಇದ್ದು, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ 42-43 ಡಿಗ್ರಿವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅಧಿಕಾರಾವಧಿ ವಿಸ್ತರಿಸಲು ಬಿಸಿಸಿಐ ಚಿಂತನೆ!: ಯಾಕೆ?
2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯನ್ನು 2027ರವರೆಗೆ ವಿಸ್ತರಿಸಲು ಬಿಸಿಸಿಐ ಚಿಂತಿಸಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಿರತೆ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರೊಂದಿಗೆ ಉತ್ತಮ ಸಮನ್ವಯ ಸಾಧಿಸುವುದು ಇದರ ಉದ್ದೇಶ. ಅಗರ್ಕರ್ ಅವಧಿಯಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದರೂ, ಟೆಸ್ಟ್ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರು ಸೋತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದ ಹೊರಬಿದ್ದಿದೆ. ಆದಾಗ್ಯೂ, ರೋಹಿತ್- ಕೊಹ್ಲಿ ನಿವೃತ್ತಿಯ ನಂತರದ ಪರಿವರ್ತನೆಯ ಹಂತವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ವಿಸ್ತರಣೆಯ ಬಗ್ಗೆ ಐಪಿಎಲ್ ವೇಳೆ ಅಂತಿಮ ಮಾತುಕತೆ ನಡೆಯಲಿದೆ.
BTS ತಮ್ಮ ಕಂಬ್ಯಾಕ್ ವರ್ಲ್ಡ್ ಟೂರ್ ನಡೆಸುತ್ತಿದ್ದು , ಇದರ ಭಾಗವಾಗಿ ಜಪಾನ್ ಪ್ರವಾಸ ಬೆಳೆಸಿದ ದಿನವೇ J-Hope ಅಜ್ಜಿ ದ.ಕೊರಿಯಾದಲ್ಲಿ ನಿಧನರಾದ ವಾರ್ತೆ ಬಂದಿದೆ. ಆದರೆ, ಇಲ್ಲಿ ಕಾನ್ಸರ್ಟ್ ಬಿಟ್ಟು ಹೋಗಲು ಸಾಧ್ಯವಾಗದ ಕಾರಣದಿಂದಾಗಿ ಆ ನೋವಿನಲ್ಲಿ J-Hope ಕಾನ್ಸರ್ಟ್ ನಲ್ಲಿ ಭಾಗಿಯಾಗಿದ್ದು, ಆರ್ಮಿಗಳೊಂದಿಗಿನ ಸಂಭಾಷಣೆ ವೇಳೆ ಈ ವಿಚಾರ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ನೋವಿನಿಂದ ಹೊರಬರಲು ತಂಡದ ಸದಸ್ಯರ ಬೆಂಬಲದ ಕುರಿತು ತಿಳಿಸಿದ್ದು, ತಂಡದ ಬಗ್ಗೆ ಹಾಗೂ ಅವರ ಕಾರ್ಯದ ಬಗ್ಗೆ ತನ್ನ ಅಜ್ಜಿ ಹೆಮ್ಮೆ ಪಡುತ್ತಿದ್ದ ವಿಚಾರವನ್ನು ಹಂಚಿಕೊಂಡಿದ್ದು, ಸದ್ಯ J-Hope ಆತ್ಮಸ್ಥೈರ್ಯಕ್ಕೆ ಆರ್ಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮತದಾರ ಕ್ಷೇತ್ರ ಮರುವಿಗಂಡಣೆಗೆ ನಮ್ಮ ವಿರೋಧವಿದೆ : ಸಿಎಂ ಸಿದ್ದರಾಮಯ್ಯ
ಮತದಾರರ ಕ್ಷೇತ್ರ ಮರುವಿಂಗಡಣೆಯು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುವುದರಿಂದ ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸುತ್ತಿದೆ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ಅವರು ಮಹಿಳಾ ಮೀಸಲಾತಿಯನ್ನು ತಾವು ಸ್ವಾಗತಿಸುವುದಾಗಿ ಹೇಳಿದರು. ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂಬುದನ್ನು ನೆನಪಿಸಿದರು.
ಕಲಬುರಗಿ | ಕನ್ನಡ ಭವನದಲ್ಲಿ ಸಾಂಸ್ಕೃತಿಕ ಮಹೋತ್ಸವ
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕಲ್ಯಾಣ ನಾಡಿನ ಸಾಂಸ್ಕೃತಿಕ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ನಾಗಲಿಂಗಯ್ಯ ಮಠಪತಿ ಉದ್ಘಾಟಿಸಿ ಮಾತನಾಡಿ, ಸಂಗೀತವು ಮನುಷ್ಯನ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು. ನಾಡಿಗೆ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದ್ದು, ಅನೇಕ ಪ್ರತಿಭಾವಂತ ಕಲಾವಿದರು ಇನ್ನೂ ಗುರುತಿಸಬೇಕಿರುವುದು ನಮ್ಮ ಕರ್ತವ್ಯ ಎಂದು ಅವರು ಅಭಿಪ್ರಾಯಪಟ್ಟರು. ಸಾನಿಧ್ಯ ವಹಿಸಿದ್ದ ಪ.ಪೂ. ರೇವಣಸಿದ್ದ ಶಿವಾಚಾರ್ಯ ಆಶೀರ್ವಚನ ನೀಡಿ, ಪುರಂದರದಾಸರು, ಕನಕದಾಸರು ಸೇರಿದಂತೆ ಅನೇಕ ಸಂತರು ಸಂಗೀತದ ಮೂಲಕ ಮೋಕ್ಷ ಪಡೆದಿರುವ ಇತಿಹಾಸವಿದೆ ಎಂದು ಹೇಳಿದರು. ಸಂಗೀತ ಕ್ಷೇತ್ರವು ಮನಸ್ಸಿಗೆ ಆನಂದ, ತೃಪ್ತಿ ಹಾಗೂ ಆಯುಷ್ಯ ವೃದ್ಧಿ ನೀಡುವ ಮಹತ್ವದ ಕ್ಷೇತ್ರವಾಗಿದ್ದು, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದರು. ಅತಿಥಿಯಾಗಿ ಭಾಗವಹಿಸಿದ ದೇವಿಂದ್ರಪ್ಪ ಮುಡುಬುಳ, ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಭಾಗ್ಯ ಎಂದು ತಿಳಿಸಿ, ಕಲಾ ಬಳಗದ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸೋಮಶೇಖರ ತೆಂಗಳಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದ್ದು, ಅನನ್ಯಾರ ಭರತನಾಟ್ಯ ಪ್ರದರ್ಶನ ಮನಸ್ಸಿಗೆ ರೋಮಾಂಚಕಾರಿಯಾಗಿ ಅನುಭವವಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ವಿಜಯಕುಮಾರ್ ತೆಗಲ ತಿಪ್ಪಿ, ಸತೀಶ್ ಪಾಟೀಲ್ ಆಲಗೂಡ್, ಚನ್ನಬಸಪ್ಪ ಉಡುಗಿ, ವಿಶ್ವನಾಥ್ ಗೌನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರೇಣುಕಾ ಹಾಗರಗುಂಡಗಿ ಪ್ರಾರ್ಥಿಸಿದರು. ಶಿವಾನಂದ ಬಂದೆ ಅವರು ಕೇದಾರ್ ರಾಗದಲ್ಲಿ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ನಾಗರಾಜ್ ಗುಡೂರ್, ಶಿವಕುಮಾರ್ ಹಿರೇಮಠ, ಬಸಯ್ಯ ಗುತ್ತೇದಾರ್, ಕಲ್ಪನಾ ಗೋಲ್ಡ್ಸ್ಮಿತ್, ದತ್ತರಾಜ್ ಕಲ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ವೈಭವದ ಸಂಗೀತ ಕಾರ್ಯಕ್ರಮ ನೀಡಿದರು. ಶಂಕರ್ ರುದ್ರವಡಿ ಅವರು ಸಿತಾರ್ ವಾದನದಿಂದ ಗಮನಸೆಳೆದರು. ಪರಶುರಾಮ್ ಗರೂರ್, ಚೇತನ್ ಕುಮಾರ್ ಬೀದಿಮನಿ, ರವಿ ಸ್ವಾಮಿ ಗೋಟೂರು, ಚಂದ್ರಕಾಂತ್ ನಿರುಗುಡಿ, ಗುರುರಾಜ್ ಬಿರಾದರ್ ವಾದ್ಯ ಸಂಗೀತದಲ್ಲಿ ಸಹಕರಿಸಿದರು. ಶಿವಶಂಕರ್ ಬಿರಾದರ್ ಮಂಗಲಗಾನ ಹಾಡಿ ಕಾರ್ಯಕ್ರಮಕ್ಕೆ ತೆರೆ ಎಳೆದರು. ಕಾರ್ಯಕ್ರಮವನ್ನು ಚಿದಾನಂದ ಎಸ್. ಚರಣಮಗೇರಿ ಕಾರ್ಯಕ್ರಮ ನಿರೂಪಿಸಿದರು. ರಾಜಕುಮಾರ್ ಉದನೂರು ವಂದಿಸಿದರು. ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ತೆಂಗಳಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿರುವುದಾಗಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಕಲಾ ಪ್ರದರ್ಶನಗಳು ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.
ಬೇಸಿಗೆ ರಜೆಯಲ್ಲಿ ಮಕ್ಕಳ ಕೈಗೆ ಜ್ಞಾನ ಸೇತು: ಜಾರ್ಖಂಡ್ ಮಾದರಿ ಪ್ರಯೋಗಕ್ಕೆ ಮುಂದಾದ ಶಿಕ್ಷಣ ಇಲಾಖೆ, ಏನಿದು?
ಬೇಸಿಗೆಯಲ್ಲಿ ಮಕ್ಕಳ ಕಲಿಕೆಗಾಗಿ ಜಾರ್ಖಂಡ್ ಮಾದರಿಯಲ್ಲಿ ಜ್ಞಾನಸೇತು ಎಂಬ ಕಲಿಕಾ ಪ್ರಯೋಗಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಮೂಲಕ ಬೇಸಿಗೆಯ ದಿನಗಳಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ಕುಳಿತು ಮೊಬೈಲ್ ಮೂಲಕವೇ ಗಣಿತ, ವಿಜ್ಞಾನ ಆಂಗ್ಲಪಠ್ಯಗಳನ್ನು ಕಲಿಯಲು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಏನಿದು ಜ್ಞಾನಸೇತು, ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹದು, ಇದನ್ನು ಬಳಸುವುದೇಗೆ? ಎಂಬುದರ ಮಾಹಿತಿ ಇಲ್ಲಿದೆ..
ನಮ್ಮ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ, ನಾವು ಯಾವತ್ತಿದ್ರೂ ಜಾತ್ಯಾತೀತವಾಗಿ ಉಳಿಯುತ್ತೇವೆ, ನಾವು NDA ಜೊತೆ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ಆದರೆ ನಮ್ಮ ಸಿದ್ದಾಂತವನ್ನ ಮರ್ಜ್ ಮಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಚಿಕ್ಕಮಗಳೂರಲ್ಲಿ ಹೇಲಿದ್ದಾರೆ.
Strait of Hormuz: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ಪಡೆಯಿಂದ ಗುಂಡಿನ ದಾಳಿ: ವರದಿ
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ನೌಕಾಪಡೆಗೆ ಸೇರಿದ ಗನ್ಬೋಟ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ಚಲಿಸುತ್ತಿದ್ದ ಎರಡು ಭಾರತೀಯ ಧ್ವಜದ ಸರಕು ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿವೆ ಎಂದು ವರದಿಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹಡಗುಗಳು ತಕ್ಷಣವೇ ತಮ್ಮ ಪ್ರಯಾಣವನ್ನು ನಿಲ್ಲಿಸಿ ಹಿಂದಕ್ಕೆ ತಿರುಗಿವೆ. ಇರಾನ್ ಪಡೆಗಳು ಭಾರತೀಯ ಮಾಲೀಕತ್ವದ ಅಥವಾ ಭಾರತೀಯ ಧ್ವಜದ
ಇಟಲಿಯಲ್ಲಿ ಗುರುದ್ವಾರದ ಹೊರಗೆ ಗುಂಡಿನ ದಾಳಿಗೆ 2 ಭಾರತೀಯ ಪ್ರಜೆಗಳು ಬಲಿ: ಪೂರ್ವ ಯೋಜಿತ ಘಟನೆ ಶಂಕೆ
ಇಟಲಿಯ ಕೊವೊ ಪಟ್ಟಣದಲ್ಲಿ ವೈಶಾಖಿ ಹಬ್ಬದ ಹಿನ್ನಲೆಯಲ್ಲಿ ಗುರುದ್ವಾರಕ್ಕೆ ಹೋಗಿ ಹೊರಗೆ ಬಂದ ವೇಳೆ ಗುಂಡಿನ ದಾಳಿ ನಡೆದಿದ್ದು, 2 ಭಾರತೀಯ ಮೂಲದ ಪ್ರಜೆಗಳು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, 3ಮೇಲೆ ಗುಂಡಿನ ದಾಳಿ ನಡೆದಿದ್ದು 1ವ್ಯಕ್ತಿಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್ನು, ದಾಳಿಕೋರನನ್ನು ಭಾರತೀಯ ಎಂದು ಶಂಕಿಸಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.
ಗೋವಾ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ-ಪಣಜಿಗೆ ನಿತ್ಯ ಎಕ್ಸ್ಪ್ರೆಸ್ ಬಸ್ಗಳ ಸಂಚಾರ, ವೇಳಾಪಟ್ಟಿ
NWKRTC Hubballi to Panaji Bus: ಉತ್ತರ ಕರ್ನಾಟಕ ಭಾಗದಿಂದ ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ ಸೇರಿ ವಿವಿಧ ಭಾಗಗಳಿಂದ ಪಣಜಿ, ಗೋವಾಗೆ ತೆರಳುವ ಪ್ರಯಾಣಿಕರಿಗೆ ಸುಹಿ ಸುದ್ದಿಯೊಂದು ಸಿಕ್ಕಿದೆ. ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿಯಿಂದ ಪಣಜಿಗೆ 3 ವೇಗದೂತ ಬಸ್ಗಳ ಕಾರ್ಯಾಚರಣೆ ಆರಂಭಿಸಿದೆ. ಈ ಬಸ್ಗಳ ವೇಳಾಪಟ್ಟಿ, ಟಿಕೆಟ್ ದರ ಹಾಗೂ
I-PAC ಕಾರ್ಯಾಚರಣೆ ಸ್ಥಗಿತ ವರದಿ ಆಧಾರರಹಿತ: ಟಿಎಂಸಿ ಸ್ಪಷ್ಟನೆ
ಪಶ್ಚಿಮ ಬಂಗಾಳದ ಐ-ಪ್ಯಾಕ್ ಸಂಸ್ಥೆಯು ತನ್ನ ಕಾರ್ಯಾಚರಣೆಯನ್ನು 20 ದಿನಗಳ ಕಾಲ ಸ್ಥಗಿತಗೊಳಿಸಿದೆ ಎಂಬ ಮಾಧ್ಯಮ ವರದಿಗಳನ್ನು ತೃಣಮೂಲ ಕಾಂಗ್ರೆಸ್ ಖಂಡಿಸಿದ್ದು, ಆರೋಪಗಳನ್ನು ತಳ್ಳಿ ಹಾಕಿದೆ. ಇಂತಹ ವರದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿದ್ದು, ಚುನಾವಣಾ ಸಮಯದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯಿಂದ ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಹೊರಟು ಮುಖಭಂಗ: ಇಂಡಿಯಾ ಒಕ್ಕೂಟಕ್ಕೆ ಜಯ: ಡಿಕೆ ಶಿವಕುಮಾರ್
ಮಹಿಳೆಯರ ಪರ ಕಾಂಗ್ರೆಸ್ ನಿಂತಿದೆ. ಮಹಿಳಾ ಮೀಸಲಾತಿ ಕಾಯ್ದೆಯು ಕಾಂಗ್ರೆಸ್ನ ಕನಸಾಗಿದ್ದು, ಬಿಜೆಪಿ ಇದನ್ನು ಚರ್ಚೆ ನಡೆಸದೆ ತರಾತುರಿಯಲ್ಲಿ ತರಲು ಹೊರಟಿರುವುದು ಸರಿಯಲ್ಲ, ಸೋಲುತ್ತದೆ ಎಂದರೂ ಚುನಾವಣೆ ಸಮಯದಲ್ಲಿ ಬಿಲ್ ತಂದು ಈಗ ಮುಖಬಂಗ ಅನುಭವಿಸಿದ್ದಾರೆಂಡು ಡಿಕೆಶಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು, ಎ.19: ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಹೋದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿದೆ. ಇದು ಇಂಡಿಯಾ ಒಕ್ಕೂಟದ ಜಯವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ರವಿವಾರ ಬೆಳಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾಗಿರುವ ಬಗ್ಗೆ ಕೇಳಿದಾಗ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕ್ಷೇತ್ರ ವಿಂಗಡಣೆ ವಿರುದ್ದ ಪ್ರತಿಭಟಿಸಿದ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳ ಹೋರಾಟಕ್ಕೆ, ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ದೊಡ್ಡ ಜಯ. ಮಹಿಳೆಯರ ಪರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ನಿಂತಿದೆ. ಇಲ್ಲಿ ಯಾರಿಗೂ ಅವಮಾನವಾಗಿಲ್ಲ ಎಂದರು. ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಯ್ದೆ ಕಾಂಗ್ರೆಸ್ ಪಕ್ಷದ ಕನಸು ಮತ್ತು ಕೂಸು. ಇದರ ಪರವಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಬಿಜೆಪಿ ಸರಕಾರ ಮಾಡಿರುವ ನಿರ್ಧಾರ ಸರಿಯಾದ ಸಮಯವಲ್ಲ. ನಮ್ಮದು ಹಿಟ್ಲರ್ ಆಡಳಿತವಲ್ಲ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಜೊತೆ ಚರ್ಚೆ ನಡೆಸಬೇಕಿತ್ತು. ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ತರುವ ಪ್ರಮೇಯವೇನಿತ್ತು. ಇಂಡಿಯಾ ಒಕ್ಕೂಟದ ಎಲ್ಲಾ ಸದಸ್ಯರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು. *ಸೋಲುತ್ತದೆ ಎಂದರೂ ಬಿಲ್ ತಂದಿದ್ದು ಬಿಜೆಪಿ ವಿಪಕ್ಷಗಳ ವಿರುದ್ದ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, ಬಿಲ್ ಸೋಲುತ್ತದೆ ಎಂದು ಗೊತ್ತಿದ್ದರೂ ತಂದವರು ಅವರು. ಅವರುಗಳು ಮಹಿಳಾ ವಿರೋಧಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರತಿನಿಧಿಗಳಲ್ಲವೇ? ಇವರುಗಳು ಜನರಿಂದ ಗೆದ್ದಿಲ್ಲವೇ? ಅವರುಗಳು ಇದರ ಬಗ್ಗೆ ಮಾತನಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಮಹಿಳಾ ಮೀಸಲಾತಿ ಬಿಲ್ ಅವರ ಆಸ್ತಿಯಲ್ಲ. ದೇಶದ ಆಸ್ತಿ ಎಂದರು. ಈ ಹಿಂದೆ ರಾಜೀವ್ ಗಾಂಧಿಯವರು ಶೇ.50ರಷ್ಟು ಮೀಸಲಾತಿ ತಂದಿದ್ದರು. ಸೋನಿಯಾ ಗಾಂಧಿ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು. ಈ ಬಿಲ್ ಅಡಿಯಲ್ಲಿ ದಕ್ಷಿಣ ಭಾರತದ ಕ್ಷೇತ್ರಗಳನ್ನು ಕತ್ತರಿಸಿ ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚು ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮನ್ನೆಲ್ಲಾ ಕರೆದು ಚರ್ಚೆ ಮಾಡಬೇಕಿತ್ತು ಎಂದರು.
ಪೂರ್ವ ಕರಾವಳಿ ಸಮುದ್ರದಲ್ಲಿ ಜಪಾನ್ ಹಾಗೂ ದ.ಕೊರಿಯಾ ಸಮೀಪದಲ್ಲಿ ಉತ್ತರ ಕೊರಿಯಾ ಸರಣಿ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವ ಮೂಲಕ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು, ಏ.19ರಂದು ಮತ್ತೊಂದು ಸರಣಿಯ ಮಿಸೈಲ್ ಲಾಂಚ್ ಮಾಡಿದೆ. ಈ ಕುರಿತು ದ.ಕೊರಿಯಾ ಹಾಗು ಜಪಾನ್ ಕಳವಳ ವ್ಯಕ್ತಪಡಿಸಿದ್ದು, ಜಪಾನ್ ನಲ್ಲಿ ಹೈ ಅಲರ್ಟ್ ಪ್ರೊಟೋಕಾಲ್ ಜಾರಿಯಾಗಿದೆ. ಇನ್ನು, ಇದು ಈ ವರ್ಷದಲ್ಲಿ ನಡೆದ 7ನೇ ಘಟನೆಯಾಗಿದ್ದು, ಇದು ಸದ್ಯ ಈ ಪ್ರದೇಶದಲ್ಲಿ ಉದ್ವಿಗ್ನತೆಯ ಕಾರ್ಮೋಡ ಕವಿಯುವಂತೆ ಮಾಡಿದೆ.
ರಾಜ್ಯದಲ್ಲಿ ಬಿಸಿ ಗಾಳಿಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಎಚ್ಚರಿಕೆ, ಹಲವೆಡೆ ಆಲಿಕಲ್ಲು ಮಳೆಯ ಮುನ್ಸೂಚನೆ
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ತೀವ್ರತರದ ಬಿಸಿಗಾಳಿ ಮುಂದುವರಿಯಲಿದ್ದು, ಸುಡುವ ಬಿಸಿಲಿನಿಂದ ಜನರು ಜಾಗರೂಕರಾಗಿರಲು ಹವಾಮಾನ ಇಲಾಖೆ ಸೂಚಿಸಿದೆ. ಇದೇ ವೇಳೆ ರಾಜ್ಯದ ಹಲವೆಡೆ ಗುಡುಗು ಹಾಗೂ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಗೌರವದ ಗದ್ದಲದಲ್ಲಿ ನಿಶ್ಯಬ್ದವಾದ ನೈತಿಕತೆ!
ಸ್ಥಳೀಯ ಸಮುದಾಯವು ಯಾರನ್ನಾದರೂ ಗೌರವಿಸುವಾಗ, ಅವರ ಆ ಕ್ಷಣದ ಸತ್ಯವನ್ನು ಆಧರಿಸಿಕೊಳ್ಳಬೇಕು. ಅದು ಮಠ, ಗುತ್ತು, ಮನೆಯ ಪರಂಪರೆಗಿಂತ ದೊಡ್ಡದು, ಆರ್ಥಿಕ ಪ್ರಭಾವಕ್ಕಿಂತ ಗಂಭೀರ. ಏಕೆಂದರೆ ಸಮಾಜವು ತನ್ನ ವೇದಿಕೆಗೆ ಯಾರನ್ನು ಏರಿಸುತ್ತದೆ ಎನ್ನುವುದು, ಅದರ ಆತ್ಮದ ಗುಣಮಟ್ಟವನ್ನು ತೋರಿಸುತ್ತದೆ. ಕೆಲವು ಘಟನೆಗಳು ಹೊರಗೆ ನಡೆದರೂ, ಅವು ನಮ್ಮೊಳಗಿನ ಮೌಲ್ಯಗಳ ಮೇಲೆ ನೇರವಾಗಿ ಪ್ರಶ್ನೆಗಳನ್ನು ಎತ್ತುತ್ತವೆ. ಇತ್ತೀಚೆಗೆ ನನ್ನ ಗೆಳೆಯರೊಬ್ಬರ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆ ಕೂಡ ಅಂಥದ್ದೇ. ಒಂದು ಸಮಾಜವನ್ನು ಪ್ರತಿನಿಧಿಸುವ ಕೆಲ ವ್ಯಕ್ತಿಗಳು ಆರ್ಥಿಕ ಸಹಾಯಕ್ಕಾಗಿ ಅವರ ಮನೆಗೆ ಬಂದಿದ್ದರು. ಕೊಡಬೇಕಾದ ಮೊತ್ತದ ಬಗ್ಗೆ ಮಾತೇ ಆಗಿರಲಿಲ್ಲ, ಆದರೆ ಅವರು ತಮ್ಮದೇ ನಿರ್ಧಾರದಲ್ಲಿ ದೊಡ್ಡ ಮೊತ್ತವನ್ನು ರಶೀದಿಯಲ್ಲಿ ಬರೆದು ಮುಂದೆ ಇಟ್ಟರು. ಸಹಾಯ ಎನ್ನುವುದು ಒತ್ತಾಯವಾದರೆ ಅಲ್ಲಿ ದಾನವು ದಬ್ಬಾಳಿಕೆಯಾಗುತ್ತದೆ. ಎಷ್ಟೇ ಸಜ್ಜನರಾಗಿದ್ದರೂ ಆ ಕ್ಷಣಕ್ಕೆ ನನ್ನ ಗೆಳೆಯರಿಗೂ ಸಿಟ್ಟು ಬಂತು. ‘‘ನಿಮ್ಮ ಮಠದ ಸ್ವಾಮೀಜಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ, ಅಂಥವರ ಹೆಸರಿನಲ್ಲಿ ಹಣ ಕೇಳುವ ನಿಮಗೆ ನೈತಿಕತೆ ಇರಬೇಕಲ್ಲವಾ’’ ಎಂದರು. ಇಲ್ಲಿ ಅಡಿಕೆ ಕೃಷಿ ನಲುಗಿದೆ, ರೈತರ ಬದುಕು ಸಂಕಷ್ಟದಲ್ಲಿದೆ. ನಾನು ನಿಮ್ಮ ಸಮಾಜದವನೇ ಅಲ್ಲ. ನಮ್ಮ ಮುಂದೆ ನಮ್ಮದೇ ಜವಾಬ್ದಾರಿಗಳಿವೆ. ನಿಮಗೆ ಬೇಕಾದಂತೆ ಮೊತ್ತವನ್ನು ಬರೆದು ಕೊಡುವುದು ಸರಿಯಲ್ಲ, ಎಂದೆಲ್ಲ ಸ್ಪಷ್ಟವಾಗಿ ಹೇಳಿದರು. ಮಾತು ಕಠಿಣವಾಯಿತು. ಬರೆದ ರಶೀದಿಯನ್ನು ಇವರ ಸಮ್ಮುಖದಲ್ಲೇ ಹರಿದು, ಮಠದ ಶಾಪ ನಿಮಗೆ ತಟ್ಟಲಿ ಎಂದು ಬಂದವರು ಕಠೋರವಾಗಿ ಹೇಳಿ ಹೊರಟರು. ಮನೆ ಮೆಟ್ಟಿಲಲ್ಲಿ ನಿಂತು ಹೇಳಿದ ಆ ಶಬ್ದ, ಬರೀ ಶಾಪದಂತೆ ಅಲ್ಲ, ಇವರಿಗೆ ಒಂದು ಎಚ್ಚರಿಕೆಯಂತೆ ಕೇಳಿಸಿತು. ಎಂದಿಗೂ ಯಾರೊಬ್ಬನನ್ನು ಬರೀ ಕೈಯಲ್ಲಿ ವಾಪಸ್ ಕಳಿಸದ, ನೋಯಿಸದ ಆ ಸಜ್ಜನ ವ್ಯಕ್ತಿ ಮಾನಸಿಕವಾಗಿ ನೊಂದು ತಾನು ಮಾಡಿದ ಅನ್ಯಾಯವಾದರೂ ಏನು? ಇಷ್ಟರವರೆಗೆ ಬಂದವರಿಗೆಲ್ಲ ಕೈಲಾದಷ್ಟು ಕೊಡುತ್ತಾ ಬಂದೆ, ತನ್ನ ಮಿತ ದಾನದ ಪ್ರವೃತ್ತಿ ತಪ್ಪೇ? ಮುಂದೆ ಹೀಗೆ ಬಂದವರ ಬೇಡಿಕೆಗೆ ನೂರು ಸಲ ಯೋಚಿಸಬೇಕು ಎಂದು ನೊಂದುಕೊಂಡು ಹೇಳಿದಾಗ ಅವರ ನೋವಿನ ಪಾಲು ನನ್ನದೂ ಆಯಿತು. ಈ ಸಣ್ಣ ಘಟನೆಯಲ್ಲೇ ಒಂದು ದೊಡ್ಡ ಪ್ರಶ್ನೆ ಮರೆತು ಕುಳಿತಿದೆ. ಇಂದು ನಾವು ಗೌರವಿಸಬೇಕಾದ ಮಠಮಾನ್ಯ, ಧಾರ್ಮಿಕ ಕೇಂದ್ರ, ಧಾರ್ಮಿಕ -ಸಾಮಾಜಿಕ ನಾಯಕರು, ಸಚಿವರು, ರಾಜಕಾರಣಿಗಳು ಸಂಘಟನೆಗಳ ನಾಯಕರು... ಹೀಗೆ ಸಮಾಜಕ್ಕೆ ದಿಕ್ಕು ತೋರಿಸಬೇಕಾದ ವ್ಯಕ್ತಿಗಳು ಎಲ್ಲರೂ ಅಲ್ಲದಿದ್ದರೂ, ಕೆಲವರು ಲಂಚ-ಭ್ರಷ್ಟಾಚಾರದಲ್ಲಿ, ಭೂಮಿ - ಲೈಂಗಿಕ ಹಗರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಹೊಸ ವಿಷಯವಲ್ಲ. ಆ ಆರೋಪಗಳು ಸಾಬೀತಾಗುತ್ತವೆ ಎನ್ನುವುದಕ್ಕಿಂತ ಮುಂಚೆಯೇ ನಾವು ಅವರನ್ನು ಹೇಗೆ ನೋಡುವೆವು ಎಂಬುದು ಮುಖ್ಯ. ನಾವು ಸಂಶಯವನ್ನು ಮೌನಗೊಳಿಸಿ, ಬರೀ ಗೌರವವನ್ನು ಮುಂದಿಟ್ಟರೆ, ಅದು ಸತ್ಯದ ಮೇಲೆ ಕರಿನೆರಳನ್ನು ಚೆಲ್ಲುತ್ತದೆ. ಕೆಲವು ದೃಶ್ಯಗಳು ನಮ್ಮ ಕಣ್ಣು ಮುಂದೆ ನಡೆದರೂ, ಅವು ಮನಸ್ಸಿನ ಒಳಗೆ ನಿಧಾನವಾಗಿ ಒಂದು ಪ್ರಶ್ನೆಯಾಗಿ ಉಳಿಯುತ್ತವೆ. ಇತ್ತೀಚೆಗೆ ನಾನು ನೋಡಿದ ಒಂದು ಜಾತ್ರೆಯೋ, ಧಾರ್ಮಿಕ ಸಂಭ್ರಮವೂ ಅಂಥದ್ದೇ. ದೇವರ ಹೆಸರಿನಲ್ಲಿ ಅಲ್ಲಿ ರಾಶಿ ಜನ ಸೇರಿದ್ದರು, ಮಂಗಳವಾದ್ಯಗಳ ಮಧ್ಯೆ ವೇದಿಕೆ ತುಂಬಿಕೊಂಡಿತ್ತು. ಆದರೆ ಆ ವೇದಿಕೆಯಲ್ಲಿ ಕುಳಿತಿದ್ದ ಕೆಲವು ಮುಖಗಳು ನನಗೆ ಹೊಸದಲ್ಲ. ಅವರ ಬಗ್ಗೆ ನಿನ್ನೆವರೆಗೂ ನಾವು ಓದಿದ್ದ ವರದಿಗಳು ಇನ್ನೂ ಮನಸ್ಸಿನಲ್ಲಿ ತಾಜಾವಾಗಿವೆ. ಆರೋಪಗಳು ಸಾಬೀತಾಗಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವುದು ನ್ಯಾಯಾಲಯದ ಕೆಲಸ. ಆದರೆ ಸಾಮಾಜಿಕವಾಗಿ ಆ ಕ್ಷಣಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮ ಹೊಣೆ. ಆ ಕ್ಷಣದಲ್ಲಿ ಕಂಡದ್ದು ಅಚ್ಚರಿಯಲ್ಲ, ಆದರೆ ಆತಂಕಕರ. ನಿನ್ನೆವರೆಗೂ ಪ್ರಶ್ನೆ ಮಾಡಿದವರು ಇವತ್ತು ಆ ಕಳಂಕಿತ ನಾಯಕರಿಗೆ ಹಾರ ಹಾಕುತ್ತಿದ್ದರು. ಸಂಶಯದಿಂದ ನೋಡಿದವರು ಇಂದು ಇಂದ್ರ ಚಂದ್ರ ಎಂದು ಬಹುಪರಾಕ್ ಹೇಳುತ್ತಿದ್ದರು. ಫೋಟೊ ತೆಗೆಸಿಕೊಳ್ಳಲು ಸಾಲಿನಲ್ಲಿ ನಿಂತವರು, ಅದೇ ವ್ಯಕ್ತಿಯ ಬಗ್ಗೆ ಕೆಲ ದಿನಗಳ ಹಿಂದೆ ಅನುಮಾನ ವ್ಯಕ್ತಪಡಿಸಿದ್ದವರೇ. ಇದು ಮರೆತಿರುವುದು ಅಲ್ಲ, ಮರೆತುಬಿಡಲು ನಾವು ತೀರ್ಮಾನಿಸಿರುವುದು. ಈ ನಿರ್ಧಾರದಲ್ಲಿ ಒಂದು ಅಪಾಯದ ಬೀಜ ಮರೆತು ಕುಳಿತಿದೆ. ಯಾರ ಮೇಲಾದರೂ ಗಂಭೀರ ಆರೋಪಗಳಿರುವಾಗ, ಸತ್ಯ ಸ್ಪಷ್ಟವಾಗುವವರೆಗೆ, ಅದರ ನಿಜ ಲೋಕಕ್ಕೆ ಗೊತ್ತಾಗುವವರೆಗೆ ಒಂದು ಅಂತರವನ್ನು ಕಾಪಾಡಿಕೊಳ್ಳುವುದು ಈ ಸಮಾಜದ ಜವಾಬ್ದಾರಿ. ಆ ಅಂತರವೇ ಮೌಲ್ಯಗಳ ರೇಖೆ. ಆದರೆ ನಾವು ಅದನ್ನು ಅಳಿಸಿ, ವೇದಿಕೆಯ ಮೇಲೆ ಕೂರಿಸಿ, ಗೌರವದ ಹೊದಿಕೆಯನ್ನು ಹೊದಿಸಿದಾಗ, ಅದು ಕೇವಲ ವ್ಯಕ್ತಿಗೆ ನೀಡುವ ಸನ್ಮಾನವಾಗುವುದಿಲ್ಲ; ಅದು ಒಂದು ಕೆಟ್ಟ ಸಂದೇಶವಾಗುತ್ತದೆ. ಏನೇ ಆಗಲಿ, ಜನರ ಮುಂದೆ ಬಂದರೆ ಸಾಕು, ಗೌರವ ದೊರೆಯುತ್ತದೆ ಎಂಬ ಸಂದೇಶ. ಇದೇ ಸಂದೇಶ ತಪ್ಪು ಮಾಡುವವರಿಗೆ ಧೈರ್ಯ ನೀಡುತ್ತದೆ. ಮತ್ತೆ ಮತ್ತೆ ತಪ್ಪು ಮಾಡಲು ಅವಕಾಶ ಕಲ್ಪಿಸುತ್ತದೆ. ರಾಜಕೀಯದಲ್ಲಿ ಇಂಥ ವಿರೋಧಾಭಾಸಗಳು ಹೊಸದಲ್ಲ. ಆದರೆ ಧಾರ್ಮಿಕ ವೇದಿಕೆಗಳೂ ಇದೇ ದಾರಿಯಲ್ಲಿ ನಡೆಯಲು ಆರಂಭಿಸಿದಾಗ ಪ್ರಶ್ನೆ ಗಂಭೀರವಾಗುತ್ತದೆ. ಮೌಲ್ಯಗಳನ್ನು ಬೋಧಿಸುವವರು, ಸಮಾಜಕ್ಕೆ ದಿಕ್ಕು ತೋರಿಸುವವರು ಕೂಡ ಇದೇ ಗೊಂದಲಕ್ಕೆ ಒಳಗಾದರೆ, ನಾವು ಮುಂದೆ ಸಾಗಬೇಕಾದ ದಿಕ್ಕು ಎಲ್ಲಿದೆ? ಹಿಂದೊಮ್ಮೆ ಸ್ವಾಮೀಜಿಗಳ ಧಾರ್ಮಿಕ ನಾಯಕರ ಅಸ್ತಿತ್ವ ಮೌಲ್ಯಗಳ ನೆಲೆಯ ಮೇಲೆಯೇ ನಿಂತಿತ್ತು. ಇಂದು ಕೆಲವೆಡೆ ಅದು ಪ್ರಭಾವದ ಮೇಲೆ ನಿಂತಂತಿದೆ. ಮೌಲ್ಯಗಳು ನಿಧಾನವಾಗಿ ಹಿಂಬದಿಗೆ ಸರಿಯುತ್ತಿರುವುದನ್ನು ಕಾಣಬಹುದು. ಪಲ್ಲಕ್ಕಿಯಲ್ಲಿ ಹೊರುವ ಕೈಗಳು ಒಂದು ಕ್ಷಣ ನಿಂತು ಯೋಚಿಸಬೇಕು. ನಾವು ಹೊರುತ್ತಿರುವುದು ವ್ಯಕ್ತಿಯನ್ನಾ ಅಥವಾ ಆ ವ್ಯಕ್ತಿಯ ಮೂಲಕ ಪ್ರತಿನಿಧಿಸಲಾಗುತ್ತಿರುವ ಮೌಲ್ಯವನ್ನಾ? ಏಕೆಂದರೆ ಪ್ರತಿಯೊಂದು ಗೌರವವೂ ಒಂದು ಮಾನದಂಡವನ್ನು ನಿರ್ಮಿಸುತ್ತದೆ. ನಾವು ಯಾರನ್ನು ಎತ್ತಿ ಹಿಡಿಯುತ್ತೇವೋ, ನಾಳೆಯ ಸಮಾಜ ಅದನ್ನೇ ಮಾದರಿಯನ್ನಾಗಿ ತೆಗೆದುಕೊಳ್ಳುತ್ತದೆ. ಈ ಪ್ರಶ್ನೆ ವ್ಯಕ್ತಿಗಳ ಬಗ್ಗೆ ಮಾತ್ರವಲ್ಲ. ಇದು ನಮ್ಮ ಬಗ್ಗೆ. ನಮ್ಮ ಮೌನ, ನಮ್ಮ ಹಾರ, ಶಾಲು, ಚಪ್ಪಾಳೆ, ನಮ್ಮ ಒಪ್ಪಿಗೆ ಇವೆಲ್ಲ ಸೇರಿ ಒಂದು ವಾತಾವರಣವನ್ನು ನಿರ್ಮಿಸುತ್ತವೆ. ಆ ವಾತಾವರಣದಲ್ಲಿ ತಪ್ಪುಗಳು ಸಾಮಾನ್ಯವಾಗುತ್ತವೆ, ಸಂಶಯಗಳು ಮೌನವಾಗುತ್ತವೆ, ಮೌಲ್ಯಗಳು ಬದಲಾಗುತ್ತವೆ. ಆದ್ದರಿಂದ ನಾವು ಯಾವಾಗಲಾದರೂ ನಿಂತು ನಮ್ಮನ್ನೇ ಕೇಳಿಕೊಳ್ಳಬೇಕು. ನಾವು ಗೌರವಿಸುತ್ತಿರುವುದು ವ್ಯಕ್ತಿಯನ್ನಾ, ಅಥವಾ ಮೌಲ್ಯಗಳನ್ನಾ? ಆ ಉತ್ತರವೇ ನಮ್ಮ ಸಮಾಜದ ಮುಂದಿನ ದಿಕ್ಕನ್ನು ನಿರ್ಧರಿಸುತ್ತದೆ. ಸಮಾಜದ ವಿಚಿತ್ರಗಳೆಂದರೆ ನಾವು ದೇವರನ್ನೇ ನಿರ್ಮಿಸುತ್ತೇವೆ ಮತ್ತೆ ನಿಧಾನವಾಗಿ ಅವನ ಕಣ್ಣಿಗೆ ಬಟ್ಟೆ ಕಟ್ಟುತ್ತೇವೆ. ಮುಲ್ಲಾ, ಪಾದ್ರಿ, ಸ್ವಾಮೀಜಿ, ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ, ಕುಲಪತಿ, ಸಂಸದ, ಸಚಿವ ರಾಜಕಾರಣಿ....ಇವರಲ್ಲಿ ಯಾರಾದರೂ ತಪ್ಪಿತಸ್ಥರಾಗಿ ನ್ಯಾಯಾಲಯದ ಬಾಗಿಲಿಗೆ ತಲುಪಿದಾಗ, ಕಾನೂನು ತನ್ನ ಕೆಲಸವನ್ನು ನಿಧಾನವಾಗಿ, ಸಾಕ್ಷಿಗಳ ಬೆಳಕಿನಲ್ಲಿ ಮಾಡುತ್ತಿರುತ್ತದೆ. ಆದರೆ ಅದಕ್ಕೂ ಮುನ್ನವೇ, ಅವರನ್ನು ಭುಜದ ಮೇಲೆ ಹೊತ್ತಿದ್ದ ಸಮುದಾಯವೇ ತನ್ನ ತೀರ್ಪನ್ನು ಕೊಟ್ಟಿರಬೇಕು. ಅಷ್ಟೇ ಅಲ್ಲ, ಅವಶ್ಯಕವಾಗಿದ್ದರೆ ದೂರ ನಿಲ್ಲಬೇಕು, ಪ್ರಶ್ನಿಸಬೇಕು, ಮೌನದಿಂದಲೂ ವಿರೋಧ ವ್ಯಕ್ತಪಡಿಸಬೇಕು. ಆದರೆ ನಮ್ಮಲ್ಲಿ ನಡೆಯುವುದು ಬೇರೆಯೇ. ನ್ಯಾಯಾಲಯದ ಮೆಟ್ಟಿಲು ಏರಿದ ವ್ಯಕ್ತಿಯೇ ವೇದಿಕೆಯ ಮೇಲೂ ಏರುತ್ತಾನೆ. ಕೇಸು ಎದುರಿಸುತ್ತಿರುವವನ ಮಾತುಗಳು ‘ಆಶೀರ್ವಾದ’ಗಳಾಗಿ ಕೇಳಿಸುತ್ತವೆ. ದೇಣಿಗೆಯ ಮೊತ್ತ ಹೆಚ್ಚಿದಂತೆ ಭಕ್ತಿಯ ಗಾತ್ರವೂ ದೊಡ್ಡದಾಗುತ್ತದೆ. ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವ ಜನರ ಕೈಗಳು, ಅವನ ತಪ್ಪಿನ ಭಾರವನ್ನು ಮರೆಯುತ್ತವೆ. ಇದು ಭಕ್ತಿ ಅಲ್ಲ, ನಿಜವಾಗಿಯೂ ಇದು ಬದಲಾಗುತ್ತಿರುವ ನಮ್ಮ ಸಮಾಜದ ಸ್ಮತಿ ಕ್ಷೀಣತೆ. ನ್ಯಾಯಾಲಯವು ತಪ್ಪು ಸಾಬೀತುಪಡಿಸುವ ತನಕ ನಿರಪರಾಧಿ ಎಂಬುದು ಕಾನೂನಿನ ಸಿದ್ಧಾಂತ. ಆದರೆ ಸಮಾಜದ ಹೊಣೆ ಅದಕ್ಕಿಂತ ದೊಡ್ಡದು. ನಾವು ಯಾರನ್ನಾದರೂ ಎತ್ತರಕ್ಕೆ ಎತ್ತುವ ಮೊದಲು, ಅವರ ಒಳಗಿನ ನಿಶ್ಯಬ್ದವನ್ನು ಕೇಳುವ ಜವಾಬ್ದಾರಿ ನಮ್ಮದು. ನಾವು ನಿರ್ಮಿಸುವ ಪ್ರತಿಮೆಗಳಲ್ಲಿ ಭಗ್ನತೆಗಳು ಕಾಣಿಸಿಕೊಳ್ಳುವಾಗ, ಅವನ್ನು ಪುನಃ ಕಟ್ಟುವುದು ನಿರ್ಮಿಸುವುದು ಅಥವಾ ಮರೆಮಾಡುವುದು ಸುಲಭ. ಆದರೆ ಅವನ್ನು ಇಡಿಯಾಗಿ ಪರಿಪೂರ್ಣ ಎಂದು ಒಪ್ಪಿಕೊಳ್ಳುವುದು ಮಾತ್ರ ಸಮಾಜದ ಪ್ರೌಢತೆಯಲ್ಲ . ಇವತ್ತು ನಮ್ಮ ಕಾರ್ಯಕ್ರಮಗಳಲ್ಲಿ, ಮಠ-ಮಂದಿರಗಳ ಗದ್ದುಗೆಗಳಲ್ಲಿ, ಗೌರವದ ಕುರ್ಚಿಗಳಲ್ಲಿ ಕುಳಿತುಕೊಳ್ಳುವವರ ಆಯ್ಕೆ ಅವರ ಚಾರಿತ್ರ್ಯದಿಂದ ಅಲ್ಲ, ಅವರ ಸುತ್ತಲಿನ ಜನಸಮೂಹದ ಗದ್ದಲದಿಂದ ನಿರ್ಧಾರವಾಗುತ್ತಿದೆ. ಸತ್ಯಕ್ಕೆ ಬೆಂಬಲಿಗರೇ ಇಲ್ಲದ ಕಾಲದಲ್ಲಿ, ಸದ್ದು ಮಾಡುವವರೇ ‘ಸತ್ಪುರುಷ’ರಾಗುತ್ತಿದ್ದಾರೆ. ನಿಶ್ಯಬ್ದದಲ್ಲಿ ಬದುಕುವ ಪ್ರಾಮಾಣಿಕತೆ ಜನರಿಗೆ ಆಕರ್ಷಕವಾಗುವುದಿಲ್ಲ; ಅದಕ್ಕೆ ಪಲ್ಲಕ್ಕಿ ಸಿಗುವುದಿಲ್ಲ. ಹೀಗಾಗಿ, ಎತ್ತರದ ಸ್ಥಾನದಲ್ಲಿ ಇರುವವನು ಜನರ ಪ್ರೀತಿಯನ್ನು ಉಳಿಸಿಕೊಳ್ಳಲು ತನ್ನ ಒಳಗಿನ ಶುದ್ಧತೆಯನ್ನು ಕಳೆದುಕೊಳ್ಳುವ ಅಪಾಯಕ್ಕೆ ತುತ್ತಾಗುತ್ತಾನೆ. ಜನರ ಮೆಚ್ಚುಗೆಯನ್ನೇ ಗುರಿಯಾಗಿ ಮಾಡಿಕೊಂಡಾಗ, ಆತನಿಗೆ ಸತ್ಯಕ್ಕಿಂತ ನಾಟಕವೇ ಉಪಯುಕ್ತವಾಗುತ್ತದೆ. ಇದು ವ್ಯಕ್ತಿಯ ದೌರ್ಬಲ್ಯ ಮಾತ್ರವಲ್ಲ, ಇದು ಸಮಾಜದ ಒಪ್ಪಿಗೆ. ಅಂತಿಮವಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ ಅದಕ್ಕಿಂತ ಮುನ್ನವೇ ಅವನಿಗೆ ಸಮಾಜವೇ ಮಾನ್ಯತೆ ಕೊಡುತ್ತದೆ! ನಾವು ಯಾರ ಕೈತಟ್ಟುತ್ತೇವೆ, ಯಾರನ್ನು ಮೌನದಿಂದ ದೂರ ಇಡುತ್ತೇವೆ ಅದರಲ್ಲೇ ನಮ್ಮ ಸಂಸ್ಕೃತಿಯ ನಿಜವಾದ ಮುಖ ಕಾಣಿಸುತ್ತದೆ. ಕರಾವಳಿಯ ಬಹು ಮುಖ್ಯ ಕಾದಂಬರಿಕಾರರಾಗಿದ್ದ ದಿವಂಗತ ವಿಶುಕುಮಾರ್ ಅವರ ‘ಭಗವಂತನ ಆತ್ಮಕಥೆ’ ಇಲ್ಲಿ ಕೇವಲ ಒಂದು ಕಾದಂಬರಿ ಅಲ್ಲ, ಅದು ನಮ್ಮ ನಂಬಿಕೆಗಳ ಕನ್ನಡಿ. ಗರ್ಭಗುಡಿಯೊಳಗಿಂದ ಹೊರಬಂದು ‘ನನಗೆ ಇಲ್ಲಿ ಉಸಿರುಗಟ್ಟುತ್ತಿದೆ’ ಎಂದು ಹೇಳುವ ಭಗವಂತ ಕಾದಂಬರಿಕಾರರ ಕೈಗೆ ತನ್ನ ಆತ್ಮಕತೆಯನ್ನು ಇಟ್ಟು ಅವಸರದಿಂದಲೇ ದೇವಾಲಯದಿಂದ ನಿರ್ಗಮಿಸುತ್ತಾನೆ . ಕೃತಿಕಾರ ವಿಶುಕುಮಾರ್, ದೇವರು ತನ್ನ ಕೈಗೆ ಕೊಟ್ಟ ಆ ಡೈರಿಯ ಒಂದೊಂದೇ ಪುಟವನ್ನು ತೆರೆಯುತ್ತಾರೆ. ಆವಾಗ ಆ ದೈವಿಕ ಆವರಣದ ಒಳಗಡೆ ನಡೆಯುವ ಒಂದೊಂದೇ ಕುಟಿಲತೆಯ ಪರಿಚಯವಾಗುತ್ತದೆ ಕಣ್ಣಿದ್ದೂ ಇಲ್ಲದ ಭಗವಂತ ಅವೆಲ್ಲವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ದೇವರ ಕಥೆ ಬೆಚ್ಚಿ ಬೀಳಿಸುತ್ತದೆ.ಇದು ಬರೀ ಸಾಹಿತ್ಯದ ಕಲ್ಪನೆ ಮಾತ್ರವಲ್ಲ; ನಾವೇ ಕಟ್ಟಿದ ಆಚಾರ-ವಿಚಾರಗಳ ಗೂಡಿನೊಳಗೆ ಸಿಕ್ಕಿಹಾಕಿಕೊಂಡಿರುವ ಸತ್ಯದ ಪ್ರತಿಧ್ವನಿಯೂ ಹೌದು. ನಾವು ದೇವರನ್ನು ಅಂಧಕಾರದೊಳಗೆ ಕೂರಿಸಿ, ಬೆಳಕನ್ನು ಹೊರಗಡೆ ಆಚರಿಸುತ್ತಿದ್ದೇವೆ. ಕಣ್ಣು ಕಾಣದ, ಬಾಯಿ ಮಾತಾಡದ ಆ ಮೂರ್ತಿಯ ಮೌನವನ್ನು ನಾವು ನಮ್ಮ ಸೌಕರ್ಯಕ್ಕೆ ತಕ್ಕಂತೆ ಭಾಷಾಂತರಿಸುತ್ತಿದ್ದೇವೆ. ಆ ಮೌನದ ಮೇಲೆ ನಾವು ಕಟ್ಟುತ್ತಿರುವ ಕಾರ್ಯಕ್ರಮಗಳು, ಶುದ್ಧೀಕರಣಗಳ ಹೆಸರಿನಲ್ಲಿ ನಡೆಯುವ ಗದ್ದಲ ಅವೆಲ್ಲವೂ ಬರೀ ಭಕ್ತಿಯ ಶಬ್ದಗಳೇ ಅಲ್ಲ, ಕೆಲವೊಮ್ಮೆ ಆತ್ಮವಂಚನೆಯ ಘೋಷಣೆಗಳೂ ಆಗುತ್ತವೆ. ಭಗವಂತ ತನ್ನ ಡೈರಿಯನ್ನು ಒಪ್ಪಿಸಿ ಹೊರಟುಹೋಗುವ ಆ ದೃಶ್ಯ ಅದು ನಂಬಿಕೆಯ ಒಂದು ಅಂತಿಮ ಎಚ್ಚರಿಕೆ. ಪ್ರತಿಯೊಂದು ಪುಟವೂ ತೆರೆಯುವಾಗ ಕಾಣಿಸಿಕೊಳ್ಳುವ ಸಂಕಟಗಳು, ನಮ್ಮ ಧಾರ್ಮಿಕ ಕೇಂದ್ರ, ಮಠ ವಾತಾವರಣದೊಳಗಿನ ಉಸಿರುಗಟ್ಟುವಿಕೆಯನ್ನು ಮಾತ್ರ ಹೇಳುವುದಿಲ್ಲ; ಅದು ನಮ್ಮ ಮನಸ್ಸಿನಲ್ಲೇ ಹುಟ್ಟಿಕೊಂಡಿರುವ ಅಸಹಜತೆಯನ್ನು ಬಯಲಿಗೆಳೆಯುತ್ತದೆ. ಇದು ಎಲ್ಲೆಡೆ ಸತ್ಯ ಎಂದು ಹೇಳಲು ಸಾಧ್ಯವಿಲ್ಲ.ಆದರೆ ಸುಳ್ಳು ಎಂದು ತಳ್ಳಿಹಾಕಲು ನಮಗೆ ಸಾಕ್ಷಿ ಇಲ್ಲದಷ್ಟರ ಮಟ್ಟಿಗೆ ನಮ್ಮ ಧಾರ್ಮಿಕ ಸಂವೇದನೆ ಕುಂದುತ್ತಿರುವುದೂ ಸತ್ಯ. ಅಪರಾಧಿಯ ಕೈಗೆ ನಂಬರ್ ಬರೆದ ಪ್ಲೇಟ್ಕೊಟ್ಟು ಫೋಟೊ ತೆಗೆಸಿ ಪತ್ರಿಕೆಯಲ್ಲಿ ಪದೇ ಪದೇ ಅದು ಪ್ರಕಟವಾದಾಗ ಅದೊಂದು ಕೀಳರಿಮೆಯಾಗಿ ಕಾಣದೆ ಅದೇ ಅವನಿಗೆ ಪರವಾನಿಗೆಯಾಗಿ ಕಾಣಿಸುವ ಸಾಧ್ಯತೆಗಳಿವೆ. ಮತ್ತೆ ಮತ್ತೆ ಅವನನ್ನೇ ವೇದಿಕೆಗೆ ಏರಿಸಿದಾಗ, ಬಹುಪರಾಕ್ ಎಂದಾಗ ಎಲ್ಲೋ ಒಂದು ಕಡೆ ಆತ ಅದನ್ನೇ ಬಹುಮಾನ ಎಂದು ಪರಿಗಣಿಸುವ ಸಾಧ್ಯತೆಗಳೇ ಹೆಚ್ಚು. ಇಂದಿನ ನಮ್ಮ ಸಮಾರಂಭಗಳಲ್ಲಿ, ಯಾರು ಮುಖ್ಯ ಅತಿಥಿ ಎಂಬುದನ್ನು ನಿರ್ಧರಿಸುವ ಮಾನದಂಡಗಳು ಬದಲಾಗಿವೆ. ಆ ವ್ಯಕ್ತಿಯ ಒಳಗಿನ ಪ್ರಾಮಾಣಿಕತೆಗಿಂತ, ಅವನ ಹೊರಗಿನ ಪ್ರಭಾವವೇ ಮುಖ್ಯವಾಗುತ್ತಿದೆ.ಯಾರು ಯಾವ ಪೀಠದಲ್ಲಿ ಕುಳಿತಿದ್ದಾನೆ, ಎಷ್ಟು ಜನರನ್ನು ತನ್ನ ಸುತ್ತ ಇಟ್ಟುಕೊಂಡಿದ್ದಾನೆ ಇವುಗಳೇ ಅವನಿಗೆ ಸ್ಥಾನ ನೀಡುತ್ತಿವೆ. ಆದರೆ ಈ ಕ್ಷಣದ ಸತ್ಯವೇನು? ಅವನ ಮನಸ್ಸು ಎಷ್ಟು ಶುಚಿ? ಅವನ ನಡೆ ಎಷ್ಟು ನೇರ? ಈ ಪ್ರಶ್ನೆಗಳು ಕೇಳದೇ ಉಳಿಯುತ್ತಿವೆ. ಸ್ಥಳೀಯ ಸಮುದಾಯವು ಯಾರನ್ನಾದರೂ ಗೌರವಿಸುವಾಗ, ಅವರ ಆ ಕ್ಷಣದ ಸತ್ಯವನ್ನು ಆಧರಿಸಿಕೊಳ್ಳಬೇಕು. ಅದು ಮಠ, ಗುತ್ತು, ಮನೆಯ ಪರಂಪರೆಗಿಂತ ದೊಡ್ಡದು, ಆರ್ಥಿಕ ಪ್ರಭಾವಕ್ಕಿಂತ ಗಂಭೀರ. ಏಕೆಂದರೆ ಸಮಾಜವು ತನ್ನ ವೇದಿಕೆಗೆ ಯಾರನ್ನು ಏರಿಸುತ್ತದೆ ಎನ್ನುವುದು, ಅದರ ಆತ್ಮದ ಗುಣಮಟ್ಟವನ್ನು ತೋರಿಸುತ್ತದೆ. ಕೊನೆಗೆ, ಭಗವಂತನು ಹೊರಟುಹೋದ ಆ ಗರ್ಭಗುಡಿ ಖಾಲಿಯಾಗುವುದಿಲ್ಲ.ಅಲ್ಲಿ ನಾವು ನಮ್ಮ ನಂಬಿಕೆಗಳನ್ನು ತುಂಬುತ್ತೇವೆ. ಆದರೆ ಆ ನಂಬಿಕೆಗಳಿಗೆ ಉಸಿರಾಡಲು ಜಾಗವಿದೆಯೇ? ಅಥವಾ ನಾವು ಕಟ್ಟಿದ ಸಂಪ್ರದಾಯಗಳ ಗೋಡೆಗಳ ಮಧ್ಯೆ ಅವುಗಳೂ ಉಸಿರುಗಟ್ಟುತ್ತಿವೆಯೇ? ಈ ಪ್ರಶ್ನೆಯನ್ನು ಕೇಳುವ ಧೈರ್ಯವೇ ನಮ್ಮ ಶುದ್ಧೀಕರಣದ ಮೊದಲ ಹೆಜ್ಜೆ.
Pawan Kalyan: ಆಸ್ಪತ್ರೆಗೆ ದಾಖಲಾದ ನಟ ಪವನ್ ಕಲ್ಯಾಣ್: ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರು ಹೈದರಾಬಾದ್ನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಬೆನ್ನುನೋವು ಮತ್ತು ಸೈನಸೈಟಿಸ್ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ, ಶುಕ್ರವಾರ ಅಧಿಕೃತ ಸಭೆಯಲ್ಲಿದ್ದಾಗ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಎಂಆರ್ಐ (MRI) ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. 10 ದಿನಗಳ ವಿಶ್ರಾಂತಿಗೆ ಸೂಚನೆ ಶಸ್ತ್ರಚಿಕಿತ್ಸೆಯ ನಂತರ
ಚಿರತೆಯಿಂದ ಅತ್ತೆ ರಕ್ಷಿಸಿದ ಸೊಸೆಗೆ ಸಿಗಲಿದೆ 'ಕಿತ್ತೂರು ರಾಣಿ ಚನ್ನಮ್ಮ ಸಾಹಸ ಪ್ರಶಸ್ತಿ': ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನಡೆದ ಘಟನೆ ಕೇವಲ ಆಕಸ್ಮಿಕವಷ್ಟೇ ಅಲ್ಲ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಶಿಸಿದ್ದಾರೆ. ಜೊತೆಗೆ ಕಷ್ಟದ ಸಂದರ್ಭದಲ್ಲಿ ಧೈರ್ಯ, ಸಾಹಸ ಮೆರೆದ ಸೊಸೆಗೆ ಪ್ರಶಸ್ತಿ ನೀಡುವ ಕುರಿತು ಮಾತನಾಡಿದ್ದಾರೆ. ಮೈಸೂರಿನ ಸಿದ್ಧಾರ್ಥ
Tumakuru | ಮನೆಗೆ ಬೆಂಕಿ ಹಚ್ಚಿ ಚಿನ್ನ ಕಳ್ಳತನ: 24 ಗಂಟೆಯಲ್ಲಿ ಆರೋಪಿಯ ಬಂಧನ
ತಿಪಟೂರು: ನಗರದ ಬಂಡಿಹಳ್ಳಿಯಲ್ಲಿ ಮನೆಗೆ ಬೆಂಕಿ ಹಚ್ಚಿ ಚಿನ್ನ ಕಳ್ಳತನ ಮಾಡಿದ ಆರೋಪಿಯನ್ನು ನಗರ ಠಾಣೆ ಪೊಲೀಸರು 24 ಗಂಟೆಗಳೊಳಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಹಾಸನದ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿಯ ಬಸವೇಶ್ವರ ನಗರ (ಹೊಸಟ್ಟಿ) ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ. ಘಟನೆ ವಿವರ: ಬಂಡಿಹಳ್ಳಿಯ ಪ್ರಶಾಂತ್ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೂಲತಃ ಹಾಸನ ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ಉಪ್ಪಾರ ಹೊಸಹಳ್ಳಿಯವರಾದ ಲಕ್ಷ್ಮಿ ಅವರ ಮನೆಗೆ ಎಪ್ರಿಲ್ 17ರಂದು ಸಂಜೆ ಸುಮಾರು 7.15ರ ವೇಳೆಗೆ ಬಂದ ಆರೋಪಿ ಜಗದೀಶ್, ಲಕ್ಷ್ಮಿ ಅವರ ತಂಗಿ ಆಶಾ ಅವರನ್ನು ಕೇಳಿದ್ದಾನೆ. ಆಶಾ ಅವರ ಪರಿಚಯದ ಜಗದೀಶ್, ಈ ಹಿಂದೆ ಹಲವು ಬಾರಿ ಲಕ್ಷ್ಮಿ ಅವರ ಮನೆಗೆ ಬಂದಿದ್ದ ಎನ್ನಲಾಗಿದೆ. ಆಕೆ ಇಲ್ಲ ಎಂದು ಹೇಳುತ್ತಿದ್ದಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ ಲಕ್ಷ್ಮಿ ಅವರು ಮನೆಗೆ ಬೀಗ ಹಾಕಿ ಹತ್ತಿರದ ಗಂಗಾಮಣಿ ಅವರ ಮನೆಗೆ ತೆರಳಿದ್ದಾರೆ. ಅಲ್ಲಿಗೂ ಬಂದ ಜಗದೀಶ್ ಬೆದರಿಕೆ ಮುಂದುವರಿಸಿದ್ದಾನೆ ಎಂದು ತಿಳಿದು ಬಂದಿದೆ. ನಂತರ ಗಂಗಾಮಣಿ ಹಾಗೂ ಅವರ ತಮ್ಮ ಅರುಣ್ ಅವರು ಲಕ್ಷ್ಮಿ ಅವರ ಮನೆ ಕಡೆ ತೆರಳಿ ನೋಡುವಾಗ, ಮನೆಯ ಮೇಲ್ಛಾವಣಿಯಿಂದ ಜಗದೀಶ್ ಇಳಿದು ಬರುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಮನೆಯ ಕಿಟಕಿಯಿಂದ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಲಕ್ಷ್ಮಿ ಅವರು ಮನೆಗೆ ಹೋದಾಗ, ಬಾಗಿಲು ಜಖಂ ಆಗಿದ್ದು, ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ಆರಿಸಿದೆ. ಬೆಂಕಿಯಿಂದ ಮನೆಯಲ್ಲಿದ್ದ ಕಬ್ಬಿಣದ ಬೀರು, ಅದರೊಳಗಿನ ಬಟ್ಟೆಗಳು ಹಾಗೂ ಇತರ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಟಿವಿ, ಹಾಸಿಗೆ ಸೇರಿದಂತೆ ಅನೇಕ ವಸ್ತುಗಳು ಹಾನಿಗೊಳಗಾಗಿದ್ದು, ಸುಮಾರು 60,000 ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ತನಿಖೆ ವೇಳೆ ಆರೋಪಿ ಜಗದೀಶ್ ಮನೆಗೆ ಬೆಂಕಿ ಹಚ್ಚುವ ಮೊದಲು ಮನೆಯಲ್ಲಿದ್ದ ಚಿನ್ನವನ್ನು ಕದ್ದಿರುವುದು ಬಹಿರಂಗವಾಗಿದೆ. ತಂಗಿ ಆಶಾ ಬಗ್ಗೆ ಮಾಹಿತಿ ನೀಡದ ಕಾರಣ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಮೊ.ನಂ. 60/2026ರಲ್ಲಿ ಬಿಎನ್ಎಸ್ ಕಲಂ 326(ಜಿ), 324(5), 351(2), 331 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ವಿಪಕ್ಷಗಳಿಂದ ಮತ್ತೆ ನಿರ್ಣಯ ಮಂಡನೆ ಸಾಧ್ಯತೆ
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಸಂಸತ್ತಿನಲ್ಲಿ ಮತ್ತೊಮ್ಮೆ ನಿರ್ಣಯ ಮಂಡಿಸಲು ವಿಪಕ್ಷಗಳು ಸಿದ್ಧತೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. 2011ರ ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿ ಮಹಿಳೆಯರಿಗೆ ಮೀಸಲಾತಿ ಜಾರಿಗೊಳಿಸಲು ಉದ್ದೇಶಿಸಿದ್ದ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ವಿಪಕ್ಷಗಳು ಪರಾಭವಗೊಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ಪದಚ್ಯುತಿಗೊಳಿಸಬೇಕು ಎಂದು ಆಗ್ರಹಿಸಿ ಸುಮಾರು 63 ರಾಜ್ಯಸಭಾ ಸದಸ್ಯರು ಹಾಗೂ 130 ಲೋಕಸಭಾ ಸದಸ್ಯರು ಮಾರ್ಚ್ 12ರಂದು ನಿರ್ಣಯ ಮಂಡಿಸಿದ್ದರು. ಆದರೆ, ಎಪ್ರಿಲ್ 6ರಂದು ಎರಡೂ ಸದನಗಳ ಮುಖ್ಯಸ್ಥರಿಂದ ಈ ನಿರ್ಣಯ ತಿರಸ್ಕೃತಗೊಂಡಿತ್ತು. ಜ್ಞಾನೇಶ್ ಕುಮಾರ್ ವಿರುದ್ಧ ಹೊಸ ಆರೋಪಗಳನ್ನು ಹೊರಿಸಿ, ವಿಪಕ್ಷಗಳು ಹೊಸ ನಿರ್ಣಯದ ಕರಡನ್ನು ತಯಾರಿಸಲಿವೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆಯಲ್ಲಿ ಸಾಂವಿಧಾನಿಕ ಮಸೂದೆಯ ಮೇಲೆ ತಮಗೆ ದೊರೆತ ಗೆಲುವಿನಿಂದ ಬೀಗುತ್ತಿರುವ ವಿಪಕ್ಷಗಳು, ಈ ಬಾರಿ ತಮ್ಮ ನಿರ್ಣಯದ ಪರ ಸಹಿ ಹಾಕುವವರ ಒಟ್ಟು ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿವೆ. ಮುಂದಿನ ವಾರ ಈ ಹೊಸ ನೋಟಿಸ್ ಅನ್ನು ಮಂಡಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಮಾರ್ಚ್ 12ರಂದು ಮಂಡಿಸಿದ್ದ ನೋಟಿಸ್ ಅನ್ನು ತಿರಸ್ಕರಿಸಿದ್ದ ರಾಜ್ಯಸಭಾಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂವಿಧಾನದಡಿ ಜ್ಞಾನೇಶ್ ಕುಮಾರ್ ವಿರುದ್ಧದ ದುರ್ನಡತೆ ಆರೋಪಗಳನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವಲ್ಲಿ ವಿಪಕ್ಷಗಳು ವಿಫಲಗೊಂಡಿವೆ ಎಂದು ಹೇಳಿದ್ದರು.
ಮಹಿಳಾ ಮೀಸಲಾತಿ: ಮೋದಿ ಸರಕಾರಕ್ಕೆ 13 ಪ್ರಶ್ನೆಗಳು
1) 2023ರಲ್ಲೇ ಸರ್ವ ಪಕ್ಷಗಳ ಸರ್ವಾನುಮೋದನೆಯೊಂದಿಗೆ ಸಂವಿಧಾನದ ಆರ್ಟಿಕಲ್ 334A ತಿದ್ದುಪಡಿ ತಂದು ಮಹಿಳಾ ಮೀಸಲಾತಿಯನ್ನು ಕಾನೂನು ಮಾಡಿದ ಮೇಲೆ ಹೊಸ ಸಂವಿಧಾನ ತಿದ್ದುಪಡಿಯ ಅಗತ್ಯವೇನಿತ್ತು? 2) 2023ರ ಕಾಯ್ದೆಯಲ್ಲಿ ವಿರೋಧ ಪಕ್ಷಗಳೆಲ್ಲ ಒಕ್ಕೊರಲಿನಿಂದ ಆಗ್ರಹಿಸಿದಂತೆ ಹಾಲಿ 543 ಸ್ಥಾನಗಳಲ್ಲೇ ಶೇ.33ರ ಮೀಸಲಾತಿಯನ್ನು ಕಲ್ಪಿಸದೆ 2026ರ ಸೆನ್ಸಸ್ ಆಧರಿಸಿದ ಡಿಲಿಮಿಟೇಷನ್ ಆದ ನಂತರ ಮೀಸಲಾತಿಯನ್ನು ಜಾರಿ ಮಾಡಲಾಗುವುದು ಎಂಬ ಅನಗತ್ಯ ಹಾಗೂ ಮಹಿಳಾ ಮೀಸಲಾತಿಯನ್ನು 2034ರ ತನಕ ಜಾರಿ ಮಾಡಲು ಸಾಧ್ಯವಾಗದಂತೆ ಷರತ್ತುಗಳನ್ನು ಸೇರಿಸಿದ್ದೇಕೆ? 3) 2023ರಲ್ಲೇ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಪಾಸಾಗಿ ರಾಷ್ಟ್ರಪತಿಯಿಂದ ಅನುಮೋದನೆಗೊಂಡು ಗೆಜೆಟ್ಟಾದ ಕಾಯ್ದೆಯನ್ನು 2026ರ ಎಪ್ರಿಲ್ 16ರ ತನಕ ನೋಟಿಫಿಕೇಶನ್ ಮಾಡಲಿಲ್ಲವೇಕೆ? 4) ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿ ಮಾಡುವ ಉದ್ದೇಶದಿಂದಲೇ 2026ರ ಸಂವಿಧಾನ ತಿದ್ದುಪಡಿ ಮಸೂದೆ ತಂದಿದ್ದಲ್ಲಿ ಅದಕ್ಕೆ 2011ರ ಸೆನ್ಸಸ್ ಆಧರಿಸಿ ಡಿಲಿಮಿಟೇಷನ್ ಮಾಡುವ ಕುತಂತ್ರದ ಉಪ ಷರತ್ತುಗಳನ್ನು ಸೇರಿಸಿದ್ದೇಕೆ? 5) ಅತ್ಯಂತ ವಿವಾದಾಸ್ಪದವಾಗಿರುವ ಡಿಲೀಮಿಟೇಷನ್ ಷರತ್ತುಗಳನ್ನು ಸೇರಿಸಿದಲ್ಲಿ ಸಂಸತ್ತಿನಲ್ಲಿ 2/3 ಬಹುಮತ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಈ ಪ್ರಕ್ರಿಯೆಗಳನ್ನು ಶುರು ಮಾಡಿದ್ದೇಕೆ? 6) ಈಗಲೂ ಒಂದು ವಿಶೇಷ ಅಧಿವೇಶನ ಕರೆದು ಹಾಲಿ 543 ಸ್ಥಾನಗಳಲ್ಲೇ 33 ಶೇ. ಮೀಸಲಾತಿ ನೀಡುವ ಸರಳ ತಿದ್ದುಪಡಿ ತರಲು ನಿಮ್ಮ ಸರಕಾರ ಸಿದ್ಧವಿಲ್ಲವೇಕೆ? 7) 2034ರ ತನಕ ಜಾರಿಯಾಗದಂತೆ ಮಹಿಳಾ ಮೀಸಲಾತಿಯನ್ನು 2023ರಲ್ಲಿ ಚುನಾವಣೆಗೆ ಒಂದು ವರ್ಷ ಮುಂಚೆ ಮಂಡಿಸಿದಿರಿ. ಈಗ ಐದು ರಾಜ್ಯಗಳ ಚುನಾವಣಾ ನಡೆಯುತ್ತಿರುವಾಗ ಅದರ ಮಧ್ಯೆ (ಡಿಲಿಮಿಟೇಷನ್ ಷರತ್ತು ಸೇರಿಸಿದ್ದರಿಂದ) ಸೋಲುತ್ತೇವೆ ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ದುರುದ್ದೇಶದಿಂದ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸಿ ಸೋಲಿಸಿದಿರಿ. ಹಾಗೂ ಆ ಸೋಲಿಗೆ ವಿರೋಧ ಪಕ್ಷಗಳೇ ಕಾರಣವೆಂಬ ಸುಳ್ಳು ಮತ್ತು ದ್ವೇಷಪೂರಿತ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದೀರಿ. ಹಾಗಿದ್ದಲ್ಲಿ ನೀವು ಈ ಮಸೂದೆಯನ್ನು ಮಂಡಿಸಿದ್ದೆ ವಿರೋಧ ಪಕ್ಷಗಳ ಬಗ್ಗೆ ಅಪಪ್ರಚಾರ ಮಾಡಲಿಕ್ಕಲ್ಲವೇ? ಅಂದರೆ ನಿಮ್ಮ ಕ್ಷುಲ್ಲಕ ಚುನಾವಣಾ ಪ್ರಯೋಜನಗಳಿಗಾಗಿ ಮಹಿಳಾ ಮೀಸಲಾತಿಗೆ ದ್ರೋಹ ಬಗೆಯುತ್ತಲೇ ಬಂದಿದ್ದೀರಲ್ಲವೇ? 8) ಮಹಿಳಾ ಮೀಸಲಾತಿಯ ಪ್ರಸ್ತಾವಗಳನ್ನು 1996ರಿಂದಲೂ ಸಂಸತ್ತಿನಲ್ಲಿ ಕಾಂಗ್ರೆಸ್ ಸರಕಾರ, ಸಂಯುಕ್ತ ರಂಗ ಸರಕಾರ ಮತ್ತು ನಿಮ್ಮದೇ ವಾಜಪೇಯಿ ಸರಕಾರ ಹಾಗೂ ಆ ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಂಸತ್ತಿನಲ್ಲಿ ಪದೇ ಪದೇ ಮಂಡಿಸುತ್ತಲೇ ಬಂದಿವೆ. ಆಗೆಲ್ಲಾ ಪ್ರಧಾನವಾಗಿ ಮಹಿಳಾ ಮೀಸಲಾತಿಯೊಳಗೆ ಒಬಿಸಿಗಳಿಗೆ ಒಳಮೀಸಲಾತಿ ಇಲ್ಲವೆಂಬ ಆಕ್ಷೇಪಗಳಿಂದಾಗಿ ಮಹಿಳಾ ಮೀಸಲಾತಿ ಅನುಮೋದನೆಗೊಳ್ಳಲಿಲ್ಲ. ಒಬಿಸಿ ಒಳಮೀಸಲಾತಿ ಕೊಟ್ಟು ಮಹಿಳಾ ಮೀಸಲಾತಿ ಜಾರಿಗೆ ತರುವ ಪ್ರಯತ್ನವನ್ನು ಇತರ ಸರಕಾರಗಳಂತೆ ವಾಜಪೇಯಿ ಸರಕಾರ ಕೂಡ ಮಾಡಲಿಲ್ಲವೇಕೆ? 2026ರಲ್ಲಿ ನೀವು ಮುಂದಿಟ್ಟ ಮಸೂದೆಯಲ್ಲೂ ಒಬಿಸಿ ಒಳಮೀಸಲಾತಿಯ ಪ್ರಸ್ತಾಪವಿಲ್ಲವೇಕೆ? 9) 1996-2014ರ ತನಕ ಮಹಿಳಾ ಮೀಸಲಾತಿ ಜಾರಿಗೆ ತರುವ ಪ್ರಯತ್ನಗಳು ವಿಫಲವಾಗಿದ್ದಕ್ಕೆ ಒಂದು ಕಾರಣ ಅವೆಲ್ಲವೂ ಮಿತ್ರಕೂಟದ ಸರಕಾರಗಳು. ಆದರೆ 2014, 2019ರಲ್ಲಿ ಮೋದಿ ಸರಕಾರಕ್ಕೆ ಪೂರ್ಣ ಬಹುಮತವಿತ್ತು. ಅದನ್ನು ಬಳಸಿಕೊಂಡು ಮೇಲ್ಜಾತಿ ಮಾಧ್ಯಮ ವರ್ಗಕ್ಕೆ EWS ಮೀಸಲಾತಿ ಜಾರಿ ಮಾಡಿದ ನಿಮ್ಮ ಸರಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಯಾವುದೇ ಡೀಲಿಮಿಟೇಷನ್ ಷರತ್ತಿಲ್ಲದೆ ಜಾರಿ ಮಾಡುವ ಪ್ರಯತ್ನಗಳನ್ನೇ ಏಕೆ ಮಾಡಲಿಲ್ಲ? ಆ ಪ್ರಯತ್ನ ಮಾಡಿದಾಗಲೂ 2023ರಲ್ಲಿ 2034ರ ತನಕ ಜಾರಿಯಾಗಲು ಸಾಧ್ಯವಿಲ್ಲದಂತೆ, 2026ರಲ್ಲಿ ದುರುದ್ದೇಶದ ಡಿಲಿಮಿಟೇಷನ್ ಷರತ್ತನ್ನು ಸೇರಿಸಿ ಮಸೂದೆಗೆ ಸೋಲಾಗುವಂತೆ ನೋಡಿಕೊಂಡಿರಿ. ಹೀಗಾಗಿ ಅತ್ಯಂತ ಮಹಿಳಾ ದ್ವೇಷಿ ಮತ್ತು ಮಹಿಳಾ ಮೀಸಲಾತಿ ವಿರೋಧಿ ಎಂದರೆ ಮೋದಿ ಸರಕಾರವೇ ಅಲ್ಲವೇ? 10) ಬಿಜೆಪಿಗೆ ನಿಜಕ್ಕೂ ಮಹಿಳಾ ಸಬಲೀಕರಣದ ಬಗ್ಗೆ ಬದ್ಧತೆ ಇದ್ದರೇ, ಕಾನೂನಿನ ತನಕ ಕಾಯದೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಶೇ.33ರಷ್ಟು ಟಿಕೇಟುಗಳನ್ನು ಕೊಡಬಹುದಲ್ಲವೇ? ಆದರೆ ಟಿಎಂಸಿಯನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಿರೋಧ ಪಕ್ಷಗಳಂತೆ ಬಿಜೆಪಿಯೂ ಮಹಿಳೆಯರಿಗೆ ಶೇ. 12-15ಕ್ಕಿಂತ ಹೆಚ್ಚಿನ ಟಿಕೇಟುಗಳನ್ನು ಕೊಡುತ್ತಿಲ್ಲವೇಕೆ? 11) ಮಸೂದೆಯು ಸೋತ ನಂತರ ಪ್ರಧಾನಿ ಮೋದಿ ಸರಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಂಡು ಕೇವಲ ಬಿಜೆಪಿ ನಾಯಕನಂತೆ ವಿರೋಧ ಪಕ್ಷಗಳನ್ನು ಮಹಿಳಾ ವಿರೋಧಿ ಎಂದು ಸುಳ್ಳುಗಳಿಂದ ಕೂಡಿದ ಚುನಾವಣಾ ದ್ವೇಷ ಭಾಷಣ ಮಾಡಿದ್ದಾರೆ. ಹೇಗಿದ್ದರೂ ಇದನ್ನು ತಡೆಯಬೇಕಾದ ಚುನಾವಣಾ ಆಯೋಗ, ಸುಪ್ರೀಂ ಕೋರ್ಟುಗಳು ಮೋದಿಯ ಗುಮಾಸ್ತರಂತೆ ನಡೆದುಕೊಳ್ಳುತ್ತಿವೆ. ಹೀಗಾಗಿ ಸೋಲುವ ಮಸೂದೆಯನ್ನು ಮಂಡಿಸಿದ್ದೆ ಚುನಾವಣಾ ಸಂದರ್ಭದಲ್ಲಿ ಈ ರೀತಿ ವಿರೋಧ ಪಕ್ಷಗಳಿಗೆ ಮಹಿಳಾ ವಿರೋಧಿಗಳೆಂಬ ಪಟ್ಟವನ್ನು ಕಟ್ಟಿ ಮಹಿಳಾ ಓಟುಗಳನ್ನು ಪಡೆಯಲೆಂದೇ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿಯಲ್ಲವೇ? 12) ನಿನ್ನೆಯ ಭಾಷಣದಲ್ಲಿ ಪ್ರಧಾನಿ ಮೋದಿ ತಮ್ಮನ್ನು ನಾರಿ ರಕ್ಷಕರೆಂದೂ ಕೊಚ್ಚಿಕೊಂಡರು. ಆದರೆ ಕಳೆದ 11 ವರ್ಷಗಳಲ್ಲಿ ಮಣಿಪುರ, ಕಥುವಾ, ಉನ್ನಾವ್ ಗಳಲ್ಲಿ, ಮಹಿಳಾ ಪೈಲ್ವಾನರಿಗೆ ಲೈಂಗಿಕ ಕಿರುಕುಳ, ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಬಿಜೆಪಿ ನಾಯಕರು ಸನ್ಮಾನ ಮಾಡಿದ್ದು.. ಇವೆ ಇನ್ನಿತರ ಪ್ರಕರಣಗಳಲ್ಲಿ ಬಿಜೆಪಿಯ ಸಂಸದರೂ ಮತ್ತು ನಾಯಕರುಗಳೇ ಮಹಿಳಾ ಪೀಡಕರು, ರೇಪಿಸ್ಟುಗಳು ಕೊಲೆಗಾರರೂ ಆಗಿದ್ದರೂ ಪ್ರಧಾನಿ ಮೋದಿ ಬಾಯಿ ಬಿಚ್ಚಲಿಲ್ಲವೇಕೆ?? ಬದಲಿಗೆ ಬೇಟಿಗಳನ್ನು ಭಕ್ಷಿಸುವ ಅಪರಾಧಿಗಳನ್ನು ರಕ್ಷಿಸುತ್ತಾ ಬಂದಿರುವುದೇಕೆ? 13) ಮಹಿಳಾ ಮೀಸಲಾತಿ ಸೋತದ್ದನ್ನು ಮೋದಿಯವರು ಭ್ರೂಣ ಹತ್ಯೆಗೆ ಹೋಲಿಸಿದರಷ್ಟೇ. ಸ್ತ್ರೀ ಭ್ರೂಣ ಹತ್ಯೆಯಿಂದಾಗಿ ಸಮಾಜದಲ್ಲಿ ಪುರುಷ ಜನಸಂಖ್ಯೆಗೆ ಹೋಲಿಸಿದಲ್ಲಿ ಮಹಿಳೆಯರ ಜನಸಂಖ್ಯಾ ಅನುಪಾತ ಕಡಿಮೆಯಾಗುತ್ತಾ ಹೋಗುತ್ತದೆ. ವಾಸ್ತವದಲ್ಲಿ ಬಿಜೆಪಿ ಅತಿ ಹೆಚ್ಚು ಕಾಲ ರಾಜ್ಯಭಾರ ಮಾಡುತ್ತಿರುವ ಗುಜರಾತ್, ಬಿಜೆಪಿಯ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕ ಯಾಜಮಾನ್ಯ ಹೊಂದಿರುವ ಹರ್ಯಾಣ, ಉತ್ತರ ಪ್ರದೇಶಗಳೇ ಇಡೀ ದೇಶದಲ್ಲಿ ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ಜನಸಂಖ್ಯಾ ಅನುಪಾತ ಅತಿ ಕಡಿಮೆ ಇರುವ ರಾಜ್ಯಗಳಾಗಿರುವುದೇಕೆ? ಬಿಜೆಪಿಯ ಮತ್ತು ಸಂಘಪರಿವಾರದ ಪ್ರಭಾವಗಳು ಹೋಲಿಕೆಯಲ್ಲಿ ಕಡಿಮೆ ಇರುವ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಪ. ಬಂಗಾಳಗಳಲ್ಲಿ ಮಹಿಳೆಯರ ಅನುಪಾತ ಹಿಂದಿ-ಹಿಂದೂ ಭಾರತಕ್ಕಿಂತ ಹೆಚ್ಚಿರುವುದೇಕೆ?
Kohli Vs Chahal: ಆಗ ಅವನೀತ್ ಕೌರ್, ಈಗ ಲಿಜ್ಲಾಜ್; 'ಅಲ್ಗಾರಿದಮ್' ಕಮೆಂಟ್ ಮೂಲಕ ಕೊಹ್ಲಿ ಕಾಲೆಳೆದ ಚಹಾಲ್
Kohli Vs Chahal: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಅವರು ತಮ್ಮ ಬ್ಯಾಟಿಂಗ್ನಿಂದಲ್ಲ, ಬದಲಾಗಿ ಇನ್ಸ್ಟಾಗ್ರಾಮ್ನಲ್ಲಿ ನೀಡಿದ ಒಂದು 'ಲೈಕ್' ಮೂಲಕ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಜೊತೆಗೆ ಇದರ ಬೆನ್ನಲ್ಲೇ ಯುಜ್ವೇಂದ್ರ ಚಹಾಲ್ ಅವರ 'ಅಲ್ಗಾರಿದಮ್' ಟ್ರೋಲ್ ಸಖತ್ ವೈರಲ್ ಆಗಿದೆ.
ಬಿಜೆಪಿ ಹಿರಿಯ ನಾಯಕ, ಮಾಜಿ ಸಂಸದ ಬಲ್ಬೀರ್ ಪುಂಜ್ ನಿಧನ: ಪ್ರಧಾನಿ ಮೋದಿ ಸಂತಾಪ
ಹೊಸ ದಿಲ್ಲಿ: ಲೇಖಕ, ಪತ್ರಕರ್ತ, ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯಸಭಾ ಸಂಸದ ಬಲ್ಬೀರ್ ಪುಂಜ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ದಿ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದಲ್ಲಿ ಪತ್ರಕರ್ತರಾಗಿದ್ದ ಬಲ್ಬೀರ್ ಪುಂಜ್, ಸಾಮಾಜಿಕ ವಿದ್ಯಮಾನಗಳ ವಿಶ್ಲೇಷಕರೂ ಆಗಿದ್ದರು. ಅವರು ‘Tryst with Ayodhya: Decolonisation of India’ ಹಾಗೂ ‘Narrative ka Mayajaal’ ಕೃತಿಗಳನ್ನೂ ರಚಿಸಿದ್ದರು. ಬಲ್ಬೀರ್ ಪುಂಜ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಅವರೊಬ್ಬ ಚಿಂತಕರು, ಲೇಖಕರು ಹಾಗೂ ಸಾರ್ವಜನಿಕ ಬುದ್ಧಿಜೀವಿಯಾಗಿದ್ದರು. ಅವರು ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಸೇವೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದರು ಎಂದು ಶ್ಲಾಘಿಸಿದ್ದಾರೆ. ಬಲ್ಬೀರ್ ಪುಂಜ್ ಬಿಜೆಪಿಯ ಬೌದ್ಧಿಕ ಮತ್ತು ನೀತಿ ನಿರೂಪಣೆ ವಲಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ಸದನದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಷಯಗಳ ಕುರಿತ ಚರ್ಚೆಗಳಲ್ಲಿ ಭಾಗಿಯಾಗುತ್ತಿದ್ದರು. ರಾಜಕೀಯಕ್ಕೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ಅವರು 1971ರಲ್ಲಿ ‘The Motherland’ ಎಂಬ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
ಧರ್ಮದಿಂದ ರಾಷ್ಟ್ರೀಯತೆ ಅಳೆಯುವುದು ಸಮಾಜಕ್ಕೆ ಮಾರಕ : ಮರೆಪ್ಪ ಹಳ್ಳಿ
ಬಸವ ಜಯಂತಿ ಉತ್ಸವಕ್ಕೆ ಚಾಲನೆ
ನಮ್ಮ ಸಮಾಜವನ್ನು ನಾಶಪಡಿಸುತ್ತಿದ್ದಾರೆ: ನೆತನ್ಯಾಹು ವಿರುದ್ಧ ಇಸ್ರೇಲ್ನಲ್ಲಿ ಭಾರೀ ಪ್ರತಿಭಟನೆ
ಟೆಲ್ ಅವೀವ್, ಎ. 19: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರದ ವಿರುದ್ಧ ಶನಿವಾರ ರಾತ್ರಿ ಟೆಲ್ ಅವೀವ್ ನಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಫೇಲ್ ಪ್ನೀನಾ ಅವರು, ನೆತನ್ಯಾಹು ನಮ್ಮ ಸಮಾಜವನ್ನು ಒಳಗಿನಿಂದಲೇ ನಾಶಪಡಿಸುತ್ತಿದ್ದಾರೆ. ಯುರೋಪಿಯನ್ ರಾಷ್ಟ್ರಗಳು ಹಾಗೂ ಅಮೆರಿಕದೊಂದಿಗೆ ಇಸ್ರೇಲ್ ನ ಸಂಬಂಧಗಳನ್ನು ಅವರು ದುರ್ಬಲಗೊಳಿಸುತ್ತಿದ್ದಾರೆ. ಈ ಕಾರಣದಿಂದಲೇ ತಾವು ಪ್ರತೀ ವಾರ ನಡೆಯುವ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು. “ಅಕ್ಟೋಬರ್ 7ರಂದು ನಡೆದ ಘಟನೆಗಳು ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಈ ಸರಕಾರವು, ಮುಂದಿನ ಸರಕಾರವೂ ಸಮಗ್ರ ತನಿಖೆ ನಡೆಸಬೇಕು. ನಮಗೆ ಉತ್ತರ ಸಿಗಬೇಕು” ಎಂದು ಅವರು ಹೇಳಿದರು. ಸಾಮಾಜಿಕ ಕಾರ್ಯಕರ್ತೆ ಲೀ ಹಾಫ್ಮನ್-ಅಗೀವ್ ಅವರು, “ಅಕ್ಟೋಬರ್ 7ರಂದು ಮತ್ತು ಅದರ ನಂತರ ನಡೆದ ಯುದ್ಧದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಬೆಂಬಲ ಸೂಚಿಸಲು ನಾನು ಇಲ್ಲಿ ಬಂದಿದ್ದೇನೆ,” ಎಂದು ಹೇಳಿದರು. ಇನ್ನೊಬ್ಬ ಪ್ರತಿಭಟನಾಕಾರ ಚೈಮ್ ಟ್ರಿವಾಕ್ಸ್ ಅವರು, ಲೆಬನಾನ್ ಹಾಗೂ ಇರಾನ್ ವಿರುದ್ಧ ಯುದ್ಧ ಆರಂಭಿಸುವಲ್ಲಿ ಇಸ್ರೇಲ್ ತಪ್ಪುಗಳನ್ನು ಮಾಡಿದೆ ಎಂದು ಟೀಕಿಸಿದರು. ನೆತನ್ಯಾಹು ದೇಶದ ಹಿತಕ್ಕಿಂತ ತಮ್ಮ ವೈಯಕ್ತಿಕ ಕಾರಣಗಳಿಗಾಗಿ, ವಿಶೇಷವಾಗಿ “ಜೈಲಿನಿಂದ ತಪ್ಪಿಸಿಕೊಳ್ಳಲು” ಈ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಆರೋಪಿಸಿದರು.
ಫೆ. 18ರಿಂದ 28ರವರೆಗೆ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ
ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕವು ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ಅಧ್ಯಕ್ಷ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು 2027ರ ಫೆ. 18ರಿಂದ ಫೆ. 28ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿರುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಅಧಾನಿ ಗ್ರೂಪ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಕಿಶೋರ್ ಅಳ್ವ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷ ಕೆ.ಪಿ. ಜಗದೀಶ್ ಅಧಿಕಾರಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಸ್ತಕಾಭಿಷೇಕ ಸಮಿತಿಯ ಮುಖ್ಯಸ್ಥರುಗಳಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ. ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಷ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್ ಹಾಗೂ ಇತರರು ಉಪಸ್ಥಿತರಿದ್ದರು.
ಜೈಲಲ್ಲಿ ಕಣ್ಣೀರಿಟ್ಟ ವಿನಯ್ ಕುಲಕರ್ಣಿಗೆ ಕೈದಿ ಸಂಖ್ಯೆ 16,110; ಶೀಘ್ರವೇ ಕೆಲಸ ಹಂಚಿಕೆ, ಕೂಲಿ ನಿಗದಿ
ಬೆಂಗಳೂರು: ಧಾರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕೊಲೆಗಾರನಾಗಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲ 17ಆರೋಪಿಗಳು ಜೈಲು ಸೇರಿದ್ದಾರೆ. ಈ ವಿಚಾರವಾಗಿ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಇಂಥಹ ಮಹತ್ವದ ಕೋರ್ಟ್ ತೀರ್ಪಿನಿಂದ ಪೊಲೀಸರು, ರಾಜಕಾರಣಿಗಳಿಗೆ, ಹಣವಂತರಿಗೆ ಬುದ್ಧಿ ಬರಲಿದೆ. ಇದೊಂದು ಎಚ್ಚರಿಕೆ ಗಂಟೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಜೈಲು ಸೇರಿದ ವಿನಯ್ ಕಣ್ಣೀರಿಟ್ಟಿದ್ದಾರೆ. ಜೈಲಾಧಿಕಾರಿಗಳು
ಹೊಸಪೇಟೆಯಲ್ಲಿ ಸರಣಿ ಅಪಘಾತ: ಇಬ್ಬರು ಮೃತ್ಯು; ಹಲವರಿಗೆ ಗಂಭೀರ ಗಾಯ
ವಿಜಯನಗರ: ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಹಲವು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹೊಸಪೇಟೆಯ ಹೊರವಲಯದಲ್ಲಿರುವ ಟನಲ್ ಪ್ರದೇಶದಿಂದ ಡಾಣಾಪುರ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಅತೀ ವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸಿದ ಲಾರಿಯೊಂದು ರಸ್ತೆ ಮಧ್ಯೆ ಕಾರು, ಬೈಕ್ ಮತ್ತು ಬಸ್ ಗಳಿಗೆ ಢಿಕ್ಕಿ ಹೊಡೆದು ರಸ್ತೆ ಬದಿಗೆ ಉರುಳಿಬಿದ್ದಿದೆ. ಅಪಘಾತದ ತೀವ್ರತೆಗೆ ಕಾರೊಂದು ಸಂಪೂರ್ಣ ಅಪ್ಪಚ್ಚಿಯಾಗಿದ್ದರೆ, ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಾಹ್ನವಿ ಎಸ್. ಹಾಗೂ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪಾಕಿಸ್ತಾನದ ಫಿಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರೊಂದಿಗೆ ಟ್ರಂಪ್ ಉತ್ತಮ ಸಂಬಂಧವನ್ನು ಹೊಂದಿದು, ಇರಾನ್ ನೊಂದಿಗಿನ ಮಾತುಕತೆಗಳಲ್ಲಿ ಮಧ್ಯವರ್ತಿಯನ್ನಾಗಿಸಿದ್ದಾರೆ. ಆದರೆ, ಇತ್ತ ಮುನೀರ್ ಇರಾನ್ ನ ಮಿಲಿಟರಿಯ ಉನ್ನತಧಾರಿಕಾರಿಗಳೊಂದಿಗೆ ಧೀರ್ಘಕಾಲದ ವೈಯಕ್ತಿಕ ಸಂಬಂಧಗಳನ್ನು ಹೊಂದಿದ್ದು, ಟ್ರಂಪ್ ಅವರ ಈ ಒಡನಾಟ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿ ಹಾಗೂ ಭದ್ರತೆಗೆ ಅಪಾಯಕಾರಿಯಾಗಬಹುದು ಎಂದು ಅಮೆರಿಕಾದ ಗುಪ್ತಚರ ವರದಿ ಬಹಿರಂಗಗೊಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Hubballi | ಚಿನ್ನಾಭರಣ ಮಳಿಗೆಯಿಂದ ಕಳ್ಳತನ: ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹುಬ್ಬಳ್ಳಿ: ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ದುರ್ಗದಬೈಲ್ ಎಂಬಲ್ಲಿರುವ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿದ ಕಳ್ಳನೋರ್ವ ಚಿನ್ನದ ಸರ ಕಳವುಗೈದ ಘಟನೆ ವರದಿಯಾಗಿದೆ. ದುರ್ಗದ ಬೈಲ್ ನಲ್ಲಿರುವ ಭೂಸದ ಬಿಲ್ಡಿಂಗ್ ನಲ್ಲಿರುವ ಚಿನ್ನಾಭರಣ ಮಳಿಗೆಯಲ್ಲಿ ಈ ಕಳವು ನಡೆದಿದೆ. ಗುರುತು ಪತ್ತೆಯಾಗದಿರಲು ಬುರ್ಖಾ ಧರಿಸಿ ಅಂಗಡಿಯೊಳಗೆ ನುಗ್ಗಿದ ಕಳ್ಳ, ಚಿನ್ನದ ಸರ ಕಳವುಗೈದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: ಕಛೇರಿ ಉದ್ಘಾಟನೆ
ಕಾರ್ಕಳ: 2007 ಫೆಬ್ರವರಿ ಯಲ್ಲಿ ನಡೆಯಲಿರುವ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಇದರ ಕಾರ್ಯಾಲಯದ ಉದ್ಘಾಟನೆಯನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಹೆಗ್ಡೆ ಯವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಅಧ್ಯಕ್ಷ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಅದಾನಿ ಗ್ರೂಫ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಕಾರ್ಕಳ ಡಿ ವೈ ಎಸ್ ಪಿ ವಿಜಯ ಪ್ರಸಾದ್, ಜಗದೀಶ್ ಅಧಿಕಾರಿ, ಮಸ್ತಕಾಭಿಷೇಕ ಸಮಿತಿ ಕೋಶಾಧಿಕಾರಿ ಎ ಮೋಹನ್ ಪಡಿವಾಳ್, ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್, ಮಸ್ತಕಾಭಿಷೇಕ ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು.
Gold Price: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರ ಗಮನಕ್ಕೆ: ಇಂದಿನ ಬಂಗಾರ, ಬೆಳ್ಳಿ ದರಪಟ್ಟಿ ಇಲ್ಲಿದೆ
ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಬೆಂಗಳೂರಿನಲ್ಲಿ ಇಂದು ಚಿನ್ನ ಖರೀದಿಸಲು ಅತ್ಯಂತ ಶುಭ ಮುಹೂರ್ತವಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸಿದ್ದಾರೆ. ಹೂಡಿಕೆಯ ದೃಷ್ಟಿಯಿಂದಲೂ ಈ ದಿನ ಚಿನ್ನದ ಮೇಲೆ ಹಣ ಹೂಡುವುದು ಉತ್ತಮ ಎಂದು
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಮೊದಲ ಹಂತದ ಮತದಾನಕ್ಕೂ ಮುನ್ನ 7 ಲಕ್ಷ ಹೊಸ ಮತದಾರರ ಸೇರ್ಪಡೆ
ಹೊಸದಿಲ್ಲಿ, ಎ.19: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮುನ್ನ ಮತದಾರರ ಪಟ್ಟಿಗೆ ಸುಮಾರು 7 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಆದರೆ, ಈ ಸಂಬಂಧದ ವಿವರವಾದ ಮಾಹಿತಿ ಇನ್ನೂ ಬಿಡುಗಡೆ ಆಗಿಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೊಸದಾಗಿ ಸೇರ್ಪಡೆಗೊಂಡವರಲ್ಲಿ ಸುಮಾರು 3.22 ಲಕ್ಷ ಮಂದಿ ಮೊದಲ ಹಂತದ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ 3.88 ಲಕ್ಷ ಮಂದಿ ಎರಡನೇ ಹಂತದಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಹೊಸ ಸೇರ್ಪಡೆಗಳಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲಿರುವ 18 ವರ್ಷ ತುಂಬಿದ ಯುವಕರ ಸಂಖ್ಯೆ ಎಷ್ಟು ಎಂಬುದನ್ನು ಆಯೋಗ ಸ್ಪಷ್ಟಪಡಿಸಿಲ್ಲ. ಲಿಂಗವಾರು ವಿವರಗಳನ್ನೂ ನೀಡಿಲ್ಲ. ಮತದಾರರ ಪಟ್ಟಿಗೆ ಸೇರಲು ಸಲ್ಲಿಸಿದ ಫಾರ್ಮ್–6 ಅರ್ಜಿಗಳ ವಿವರಗಳು ಹಾಗೂ ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನೂ ಬಹಿರಂಗಪಡಿಸಲಾಗಿಲ್ಲ. ಇದುವರೆಗೆ ಒಟ್ಟು ಸಂಖ್ಯೆಗಳಷ್ಟೇ ಪ್ರಕಟವಾಗಿದ್ದು, ವಿವರವಾದ ಅಂಕಿಅಂಶಗಳನ್ನು ನಂತರ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚಿನ ಪರಿಷ್ಕರಣೆ ನಂತರ ರಾಜ್ಯದ ಒಟ್ಟು ಮತದಾರರ ಸಂಖ್ಯೆ 6,82,51,008ಕ್ಕೆ ಏರಿಕೆಯಾಗಿದೆ. ನ್ಯಾಯಮಂಡಳಿಗಳ ಆದೇಶಗಳ ಆಧಾರದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಇದರ ನಡುವೆ, ಕಳೆದ ವಾರದ ವಿಶೇಷ ತೀವ್ರ ಪರಿಷ್ಕರಣೆ (SIR) ವರದಿ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 10.9 ಶೇಕಡಾ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮೃತರು, ಸ್ಥಳಾಂತರಗೊಂಡವರು ಹಾಗೂ ನಕಲಿ ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ಕೈಬಿಡಲಾಗಿದೆ ಎಂದು ವರದಿ ಹೇಳಿದೆ.
MS Dhoni: ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರತಿಯೊಂದು ಪಂದ್ಯದ ವೇಳೆಯೂ ಅಭಿಮಾನಿಗಳನ್ನು ಕಾಡುತ್ತಿರುವ ಏಕೈಕ ಪ್ರಶ್ನೆಯೆಂದರೆ ಅದು ಎಂ.ಎಸ್ ಧೋನಿ ಆಡುತ್ತಾರಾ? ಎಂಬುದು. ಸದ್ಯ ಧೋನಿ ಅವರ ಲಭ್ಯತೆಯ ಸುತ್ತಲಿನ ಚರ್ಚೆಗಳು ದಿನದಿಂದ ದಿನಕ್ಕೆ ಕಾವೇರುತ್ತಲಿವೆ. ಈ ನಡುವೆಯೇ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸನ್ರೈಸರ್ಸ್
ವಿಜಯನಗರ : ಲಾರಿ ಚಾಲಕನ ಬೇಜವಾಬ್ದಾರಿ ಚಾಲನೆಗೆ ಸರಣಿ ಅಪಘಾತ; ನಾಲ್ವರ ಸಾವು, ಹಲವರಿಗೆ ಗಾಯ
ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಲಾರಿ ಚಾಲಕನ ಅತಿವೇಗ ಹಾಗೂ ಬೇಜವಾಬ್ದಾರಿತನದಿಂದ ಭೀಕರ ಸರಣಿ ಅಪಘಾತ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸಪೇಟೆ ಹೊರವಲಯದ ಟನಲ್ನಿಂದ ಡಣಾಪುರದವರೆಗೆ ಲಾರಿಯನ್ನು ಅಜಾಗರೂಕತೆಯಿಂದ ಚಲಾಯಿಸಿದ ಚಾಲಕ, ದಾರಿಯುದ್ದಕ್ಕೂ ಸಿಕ್ಕ ಸಿಕ್ಕ ಬೈಕ್, ಕಾರು ಹಾಗೂ ಬಸ್ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
KSRTC Mantralaya Bus: ಕರಾವಳಿ ಜನರಿಗೆ ಗುಡ್ನ್ಯೂಸ್, ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ಬಸ್ಗಳ ಸಂಚಾರ, ವೇಳಾಪಟ್ಟಿ
ಮಂಗಳೂರು: ರಾಜ್ಯಾದ್ಯಂತ ತನ್ನ ಸಾರಿಗೆ ಸೇವೆ, ಹೊಸ ಉಪ್ರಕಮಗಳಿಂದಲೇ ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕರಾವಳಿ ಭಾಗದ ಜನರಿಗೆ ಗುಡ್ನ್ಯೂಸ್ ನೀಡಿದೆ. ಕರಾವಳಿಯ ಮಂಗಳೂರು, ಉಡುಪಿ, ಮಲೆನಾಡು ಮಾರ್ಗವಾಗಿ ರಾಯಚೂರು ಹತ್ತಿರದ ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆಯಲ್ಲಿರುವ ಶ್ರೀ ಮಂತ್ರಾಲಯಕ್ಕೆ ವಿಶೇಷ ನಾನ್ ಎಸಿ ಪಲ್ಲಕ್ಕಿ ಬಸ್ಗಳನ್ನು ಕಾರ್ಯಾಚರಣೆ ಆರಂಭಿಸಿದೆ. ಕರಾವಳಿ ಸೇರಿ
ರಾಹುಲ್ ಗಾಂಧಿ ವಿರುದ್ಧದ ‘ದ್ವಿಪೌರತ್ವ’ ಅರ್ಜಿ: ಎಫ್ಐಆರ್ ಆದೇಶ ಹಿಂಪಡೆದ ಅಲಹಾಬಾದ್ ಹೈಕೋರ್ಟ್
ಲಕ್ನೋ, ಎ.18: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧದ ದ್ವಿಪೌರತ್ವ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ನೀಡಿದ್ದ ತನ್ನದೇ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಲಕ್ನೋ ಪೀಠ ಹಿಂಪಡೆದು, ವಿಚಾರಣೆಗೆ ಅವಕಾಶ ನೀಡಿದೆ. ಎಪ್ರಿಲ್ 17ರಂದು ನಡೆದ ವಿಚಾರಣೆಯಲ್ಲಿ, ರಾಹುಲ್ ಗಾಂಧಿಗೆ ನೋಟಿಸ್ ನೀಡಬೇಕೇ ಎಂಬ ವಿಷಯವನ್ನು ನ್ಯಾಯಾಲಯವು ಅರ್ಜಿದಾರರು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ವಕೀಲರಿಂದ ವಿಚಾರಿಸಿತು. ನೋಟಿಸ್ ಅಗತ್ಯವಿಲ್ಲ ಎಂದು ವಕೀಲರು ತಿಳಿಸಿದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಎಫ್ಐಆರ್ ದಾಖಲಿಸಲು ಸೂಚಿಸಿತ್ತು. ಆದರೆ, ಆದೇಶ ಹೊರಬರುವ ಮೊದಲು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಪ್ರಕರಣವನ್ನು ಮರುಪರಿಶೀಲಿಸಿದರು. ಹಿಂದಿನ ತೀರ್ಪುಗಳನ್ನು ಪರಿಶೀಲಿಸಿದ ಅವರು, ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡುವುದು ಕಡ್ಡಾಯ ಎಂದು ಪರಿಗಣಿಸಿದರು. ಹೀಗಾಗಿ, ನೋಟಿಸ್ ನೀಡದೆ ಎಫ್ಐಆರ್ ಆದೇಶ ನೀಡುವುದು ಸರಿಯಲ್ಲ ಎಂದು ನ್ಯಾಯಾಲಯ ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ, ಹಿಂದಿನ ಎಫ್ಐಆರ್ ಆದೇಶವನ್ನು ಹಿಂಪಡೆದು, ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಲು ಸೂಚಿಸಲಾಗಿದೆ. ಮುಂದಿನ ವಿಚಾರಣೆ ಎಪ್ರಿಲ್ 20ರಂದು ನಡೆಯಲಿದೆ. ಈ ಪ್ರಕರಣವನ್ನು ಕರ್ನಾಟಕ ಮೂಲದ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಸಲ್ಲಿಸಿದ್ದು, ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. Foreigners Act (1946) ಮತ್ತು ಪಾಸ್ಪೋರ್ಟ್ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಶುಕ್ರವಾರ ಇದೇ ಪೀಠವು ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸೂಚಿಸಿತ್ತು. ಇದಕ್ಕೂ ಮೊದಲು, ಜನವರಿ 28, 2026ರಂದು ಜನಪ್ರತಿನಿಧಿಗಳ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಕೇಂದ್ರ ಗೃಹ ಸಚಿವಾಲಯದ ವಿದೇಶಿ ನಾಗರಿಕರ ವಿಭಾಗಕ್ಕೆ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಸಚಿವಾಲಯವು ಅವುಗಳನ್ನು ಸಲ್ಲಿಸಿದೆ. ಅರ್ಜಿದಾರರ ಪ್ರಕಾರ, ರಾಹುಲ್ ಗಾಂಧಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿದ್ದಾರೆ ಹಾಗೂ ಅಲ್ಲಿ ನಡೆದ ಚುನಾವಣೆಯಲ್ಲಿ ಪಾಲ್ಗೊಂಡಿರುವ ದಾಖಲೆಗಳಿವೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಮೊದಲು ರಾಯ್ಬರೇಲಿಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿ, ಡಿಸೆಂಬರ್ 17, 2025ರಂದು ಹೈಕೋರ್ಟ್ ಲಕ್ನೋ ಪೀಠಕ್ಕೆ ವರ್ಗಾಯಿಸಲಾಯಿತು. ಜನವರಿಯಲ್ಲಿ ಅರ್ಜಿ ವಜಾಗೊಂಡ ನಂತರ ಅರ್ಜಿದಾರರು ಹೈಕೋರ್ಟ್ಗೆ ಮೊರೆ ಹೋಗಿದ್ದರು. ಹೈಕೋರ್ಟ್ ಮೊದಲು ಎಫ್ಐಆರ್ಗೆ ಆದೇಶಿಸಿ, ಇದೀಗ ಅದನ್ನು ಹಿಂಪಡೆದಿದೆ. 2019ರಲ್ಲಿ ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು, ಕಂಪೆನಿಯ ದಾಖಲೆಗಳಲ್ಲಿ ಯಾರನ್ನಾದರೂ ‘ಬ್ರಿಟಿಷ್ ಪ್ರಜೆ’ ಎಂದು ಉಲ್ಲೇಖಿಸಿದ್ದ ಮಾತ್ರಕ್ಕೆ ಅವರು ವಿದೇಶಿ ಪೌರತ್ವ ಹೊಂದಿದ್ದಾರೆ ಎಂದು ಸಾಬೀತಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಗುಜರಾತ್| 10 ಲಕ್ಷ ರೂ.ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಇಬ್ಬರು ಜಿಎಸ್ಟಿ ಅಧಿಕಾರಿಗಳು
ಅಹ್ಮದಾಬಾದ್: ಗುಜರಾತ್ನ ನಡಿಯಾದ್ನಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಟ್ರಕ್ ಬಿಡುಗಡೆ ಮಾಡಲು 55 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, 10 ಲಕ್ಷ ರೂ.ಲಂಚ ಪಡೆಯುತ್ತಿದ್ದಾಗ ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ (GST) ಇಲಾಖೆಯ ಇಬ್ಬರು ಉನ್ನತ ದರ್ಜೆಯ ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಆರೋಪಿಗಳನ್ನು ಎರಡನೆ ದರ್ಜೆಯ ಸೂಪರಿಂಟೆಂಡೆಂಟ್ ಅಮರ್ ನಾಥ್ ಗೋವರ್ಧನ್ ರಾಮ್ ಸರೋಜ್ ಹಾಗೂ ಎರಡನೆ ದರ್ಜೆಯ ಜಿಎಸ್ಟಿ ಇನ್ಸ್ ಪೆಕ್ಟರ್ ಸುಬೋಧ್ ಸುಭಾಶ್ ಚೌಹಾಣ್ ಎಂದು ಗುರುತಿಸಲಾಗಿದೆ. ಈ ಇಬ್ಬರನ್ನೂ ನಡಿಯಾದ್ ನಲ್ಲಿರುವ ಕೇಂದ್ರೀಯ ಜಿಎಸ್ಟಿ ಭವನದಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ಸರಕು ಹೊತ್ತೊಯ್ಯುತ್ತಿದ್ದ ಒಂದು ಟ್ರಕ್ ಅನ್ನು ಮಾರ್ಗಮಧ್ಯದಲ್ಲಿ ತಡೆಹಿಡಿದಿದ್ದ ಕೇಂದ್ರೀಯ ಜಿಎಸ್ಟಿ ಅಧಿಕಾರಿಗಳು, ಅದನ್ನು ವಶಕ್ಕೆ ಪಡೆದಿದ್ದರು. ಆ ವಾಹನವನ್ನು ತಪಾಸಣೆಗಾಗಿ ನಡಿಯಾದ್ ಜಿಎಸ್ಟಿ ಕಚೇರಿಗೆ ತರಲಾಗಿತ್ತು. ವಾಹನವನ್ನು ಬಿಡುಗಡೆಗೊಳಿಸುವಂತೆ ದೂರುದಾರರು ಅಧಿಕಾರಿಗಳನ್ನು ಸಂಪರ್ಕಿಸಿದಾಗ, ದಾಖಲೆಗಳಲ್ಲಿ ಲೋಪವಿದೆ ಎಂದು ಇನ್ಸ್ ಪೆಕ್ಟರ್ ಸುಬೋಧ್ ಚೌಹಾಣ್ ಹಾಗೂ ಸೂಪರಿಂಟೆಂಡೆಂಟ್ ಅಮರ್ ನಾಥ್ ಸರೋಜ್ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಟ್ರಕ್ ಅನ್ನು ಬಿಡುಗಡೆಗೊಳಿಸಲು ಒಟ್ಟು 55 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ 10 ಲಕ್ಷ ರೂ. ಪಾವತಿಸುವಂತೆ ಆಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಟ್ರಕ್ ಮಾಲಕ ಭ್ರಷ್ಟಾಚಾರ ನಿಗ್ರಹ ದಳವನ್ನು ಸಂಪರ್ಕಿಸಿದ್ದಾರೆ. ಅಧಿಕೃತ ದೂರು ದಾಖಲಾದ ಬಳಿಕ, ಎಪ್ರಿಲ್ ತಿಂಗಳಲ್ಲಿ ಆರೋಪಿಗಳನ್ನು ಬಲೆಗೆ ಬೀಳಿಸಿಕೊಳ್ಳಲು ಗಾಂಧಿನಗರ ಭ್ರಷ್ಟಾಚಾರ ನಿಗ್ರಹ ದಳದ ಘಟಕ ಯೋಜನೆಯೊಂದನ್ನು ರೂಪಿಸಿತ್ತು. ಬಳಿಕ, ನಡಿಯಾದ್ ನಲ್ಲಿರುವ ಕೇಂದ್ರೀಯ ಜಿಎಸ್ಟಿ ಕಚೇರಿಯಲ್ಲೇ ಹಣವನ್ನು ವಿನಿಮಯ ಮಾಡಲಾಗಿದೆ. ಅವರು 10 ಲಕ್ಷ ರೂ. ಲಂಚವನ್ನು ಸ್ವೀಕರಿಸುತ್ತಿದ್ದಂತೆಯೇ ಪೊಲೀಸ್ ಇನ್ಸ್ ಪೆಕ್ಟರ್ ಎ. ಚೌಧರಿ ನೇತೃತ್ವದ ಭ್ರಷ್ಟಾಚಾರ ನಿಗ್ರಹ ದಳದ ತಂಡ ಕಚೇರಿಯೊಳಗೆ ಪ್ರವೇಶಿಸಿದ್ದು, ಇಬ್ಬರೂ ಅಧಿಕಾರಿಗಳನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. 10 ಲಕ್ಷ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ.
Dharmasthala | ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ, ಎ.19: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರಗೈದ ಆರೋಪದಲ್ಲಿ ಇಬ್ಬರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಸುಮಂತ್(28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್(26) ಬಂಧಿತ ಆರೋಪಿಗಳು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷದ ಬಾಲಕಿಯನ್ನು ಆರೋಪಿಗಳು ಪುಸಲಾಯಿಸಿ ಎ.16ರಂದು ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಿರುವ ಬಗ್ಗೆ ಸಂತ್ರಸ್ತೆ ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಬಾಲಕಿಯ ಪೋಷಕರು ಧರ್ಮಸ್ಥಳ ಪೊಲೀಸ್ ಠಾಣೆಗೆ ಎ.17ರಂದು ದೂರು ನೀಡಿದ್ದಾರೆ. ದೂರಿನನ್ವಯ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶನಿವಾರ ಸಂಜೆ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಬಂಧಿತ ಆರೋಪಿಗಳ ಪೈಕಿ ಸುಮಂತ್ ಗೆ ಮೇ 10ರಂದು ಮದುವೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.
ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುವ ಹಬ್ಬಗಳಲ್ಲಿ ಅಕ್ಷಯ ತೃತೀಯ ಕೂಡ ಒಂದು. ಆಧ್ಯಾತ್ಮಿಕ ಶಕ್ತಿ, ಯಶಸ್ಸು ಮತ್ತು ಸಮೃದ್ಧಿಯ ಸಂಕೇತವಾಗಿರುವ ಈ ದಿನವು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಬರುತ್ತದೆ. ಸಂಸ್ಕೃತದಲ್ಲಿ 'ಅಕ್ಷಯ' ಎಂದರೆ ಎಂದಿಗೂ ಮುಗಿಯದ ಎಂದರ್ಥ. ಈ ದಿನದಂದು ಮಾಡಿದ ಒಳ್ಳೆಯ ಕೆಲಸಗಳು ಮತ್ತು ಹೂಡಿಕೆಗಳು ಶಾಶ್ವತವಾದ ಸಮೃದ್ಧಿಯನ್ನು ನೀಡುತ್ತವೆ

34 C