ಗಂಗೊಳ್ಳಿ: ಯಕ್ಷಗಾನ ಕಲಾರಂಗದ 86ನೇ ಮನೆ ಹಸ್ತಾಂತರ
ಉಡುಪಿ, ಫೆ.4: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ ಇವಳ ಬಡ ಕುಟುಂಬಕ್ಕೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕಿದಿಯೂರು ಎಸ್.ವಿ.ಎಸ್.ಟಿ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಭಾಸ್ಕರ ಭಟ್ ಪ್ರಾಯೋಜಕತ್ವದಲ್ಲಿ, ಸುಮಾರು ಏಳು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ‘ಲಲಿತಾ ಸದನ’ ಮನೆಯನ್ನು ಮಂಗಳವಾರ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಿಸರ್ಗ ಹಾಗೂ ಆಕೆಯ ಹೆತ್ತವರಾದ ರಾಘವೇಂದ್ರ ಖಾರ್ವಿ ಮತ್ತು ರೇಷ್ಮಾ ದಂಪತಿಗೆ ಮನೆಯನ್ನು ಹಸ್ತಾಂತರಿಸಲಾಯಿತು. ಮನೆಯನ್ನು ಉದ್ಘಾಟಿಸಿದ ಕಾಣಿಯೂರು ಶ್ರೀಗಳು ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಜಿಲ್ಲೆಯೇ ಅಭಿಮಾನ ಪಡುವ ಸಂಘಟನೆ ಯಾಗಿದ್ದು, ಅವರ ಸಾಮಾಜಿಕ ಕಳಕಳಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಾರ್ಯಕರ್ತರು ಪಡುವ ಪರಿಶ್ರಮ ಅನನ್ಯ ಎಂದರು. ದಾನಿಗಳಾದ ಎ. ಭಾಸ್ಕರ ಭಟ್ ಮಾತನಾಡಿ ಕಲಾರಂಗದ ಸದಸ್ಯನಾಗಿ, ರುಚಿಶುದ್ಧಿ ಯಕ್ಷಗಾನ ಸಂಯೋಜಿ ಸುತ್ತಾ ಬಂದ ಸಂಸ್ಥೆ ಈಗ ಸಮಾಜ ಮತ್ತು ಶಿಕ್ಷಣಕ್ಕಾಗಿ ಮಾಡುತ್ತಿರುವ ಕೆಲಸ ಕಂಡು ಬೆರಗಾಗಿದ್ದೇನೆ. ಮನೆ ನಿರ್ಮಿಸಿ ಕೊಡುವ ಅವಕಾಶ ಕಲ್ಪಿಸಿ ನನ್ನ ಸಂಕಲ್ಪ ಈಡೇರಿಸಿದ್ದಕ್ಕಾಗಿ ಸಂಸ್ಥೆಗೆ ಕೃತಜ್ಞ ಎಂದರು. ವಿದ್ಯಾಸಮುದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡು ಬಿ. ಅಮೀನ್, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್, ಕೋಶಾಧಿಕಾರಿ ಪ್ರೊ.ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಕೆ. ಸೀತಾರಾಮ ಭಟ್, ಅನಂತರಾಜ ಉಪಾಧ್ಯಾಯ, ವಿಜಯಕುಮಾರ್ ಮುದ್ರಾಡಿ, ಜಯರಾಮ ಪಡಿಯಾರ್, ಕಿಶೋರ ಸಿ.ಉದ್ಯಾವರ, ಮಂಜುನಾಥ ಹೆಬ್ಬಾರ, ಎಚ್. ಸುಜಯೀಂದ್ರ ಹಂದೆ ಮುಂತಾದವರು ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
Mumbai | ಲಿಫ್ಟ್ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ
ಮುಂಬೈ, ಫೆ. 4: ಮುಂಬೈನ ಗೋರೆಗಾಂವ್ ಉಪನಗರದ ವಸತಿ ಕಟ್ಟಡವೊಂದರ ಲಿಫ್ಟ್ನಲ್ಲಿ ಗ್ಯಾಸ್ ತುಂಬಿದ ಬಲೂನ್ ಗಳು ಸ್ಫೋಟಗೊಂಡು ಇಬ್ಬರಿಗೆ ಸುಟ್ಟ ಗಾಯಗಳಾದ ಘಟನೆ ಒಳಗಾದ ಘಟನೆ ನಡೆದಿದೆ. ಈ ಕುರಿತ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಮಹಿಳೆಯೊಬ್ಬರು ಮೊದಲು ಲಿಫ್ಟ್ಗೆ ಪ್ರವೇಶಿಸಿ ತಮ್ಮ ಟ್ರಾಲಿಯೊಂದಿಗೆ ಒಳಗೆ ನಿಂತಿದ್ದಾರೆ. ಬಳಿಕ ದೊಡ್ಡ ಪಾಲಿಥಿನ್ ಚೀಲದಲ್ಲಿ ಹಲವಾರು ಬಲೂನ್ ಗಳನ್ನು ಹೊತ್ತ ವ್ಯಕ್ತಿ ಲಿಫ್ಟ್ ಒಳಬಂದಿದ್ದು, ಆತನಿಗೆ ಜಾಗ ಮಾಡಿಕೊಡಲಾಗಿದೆ. ಅದಾದ ಬಳಿಕ ಮತ್ತೊಬ್ಬ ವ್ಯಕ್ತಿ ಲಿಫ್ಟ್ ಗೆ ಪ್ರವೇಶಿಸುವ ಸಂದರ್ಭದಲ್ಲೇ ಬಲೂನ್ ಗಳು ಏಕಾಏಕಿ ಭಾರೀ ಜ್ವಾಲೆಯೊಂದಿಗೆ ಸ್ಫೋಟಗೊಂಡಿವೆ. ಸ್ಫೋಟದ ಪರಿಣಾಮ ಲಿಫ್ಟ್ ಒಳಭಾಗ ಕೆಲ ಕ್ಷಣಗಳ ಕಾಲ ಜ್ವಾಲೆಯಿಂದ ಆವರಿಸಿಕೊಂಡಿದ್ದು, ನಂತರ ಮೂವರು ಆತಂಕದಿಂದ ಹೊರಗೆ ಓಡಿಬಂದಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ಬಲೂನ್ ಗಳನ್ನು ತಂದ ವ್ಯಕ್ತಿ ಸಮತೋಲನ ಕಳೆದುಕೊಂಡು ನೆಲಕ್ಕುರುಳಿದ ದೃಶ್ಯವೂ ದಾಖಲಾಗಿದೆ. ಘಟನೆಯಲ್ಲಿ ಒಬ್ಬ ಪುರುಷ ಹಾಗೂ ಮಹಿಳೆ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲೂನ್ ಗಳನ್ನು ತಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಲೂನ್ ಗಳಿಗೆ ಬಳಸಿದ ಅನಿಲದ ಸ್ವರೂಪ ಕುರಿತು ತನಿಖೆ ಮುಂದುವರೆದಿದೆ. ತಜ್ಞರ ಪ್ರಕಾರ, ಹೀಲಿಯಂ ಅನಿಲದಿಂದ ತುಂಬಿದ ಬಲೂನ್ ಗಳು ಸಾಮಾನ್ಯವಾಗಿ ದಹನಶೀಲವಾಗಿರುವುದಿಲ್ಲ. ಆದರೆ ಹೈಡ್ರೋಜನ್ ಅನಿಲದಿಂದ ತುಂಬಿದ ಬಲೂನ್ ಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ಸಂಭವ ಹೆಚ್ಚಿರುವುದರಿಂದ ಅಪಾಯಕಾರಿಯಾಗಿವೆ.
ಕಲಬುರಗಿ | ಫೆ. 26ರಿಂದ ರಸ್ತೆ ಸಂಚಾರ ಗಣತಿ ಪ್ರಾರಂಭ : ಶರಣಪ್ಪಾ ಸುಲಗಂಟೆ
ಕಲಬುರಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರ ಗಣತಿಯನ್ನು ನಡೆಸಲಾಗುತ್ತಿದ್ದು, 2026ನೇ ಸಾಲಿನ ರಸ್ತೆ ಸಂಚಾರ ಗಣತಿ ಫೆ.26ರಂದು ಬೆಳಿಗ್ಗೆ 6 ಗಂಟೆಯಿಂದ ಫೆ.27ರಂದು ಬೆಳಗ್ಗೆ 6 ಗಂಟೆಯವರೆಗೆ ಸತತವಾಗಿ ಎರಡು ದಿನಗಳ ಕಾಲ ನಡೆಯಲಿದೆ ಎಂದು ಸಂಪರ್ಕ ಮತ್ತು ಕಟ್ಟಡಗಳು ಈಶಾನ್ಯ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಶರಣಪ್ಪಾ ಸುಲಗಂಟೆ ತಿಳಿಸಿದ್ದಾರೆ. ಈ ಸಂಚಾರ ಗಣತಿಗಾಗಿ ಈಶಾನ್ಯ ವಲಯದ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಮೇಲೆ 370 ಗಣತಿ ಕೇಂದ್ರಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ 692 ಗಣತಿ ಕೇಂದ್ರಗಳನ್ನು ಸೇರಿಸಿ ಒಟ್ಟು 1,062 ಗಣತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತಿ ರಸ್ತೆಯಲ್ಲಿನ ವಾಹನ ಸಂಚಾರದ ತೀವ್ರತೆಯನ್ನು ಅಳೆಯುವುದು, ಹಾಲಿ ರಸ್ತೆಗಳ ದುರಸ್ತಿ, ರಸ್ತೆಗಳ ಅಗಲಿಕರಣ, ಮೇಲ್ದರ್ಜೆಗೇರಿಕೆ ಹಾಗೂ ಹೊಸ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಈ ಗಣತಿ ವರದಿ ಅತ್ಯಂತ ಪ್ರಮುಖವಾಗಿರುತ್ತದೆ. ಜೊತೆಗೆ, ವಾಹನ ಅಪಘಾತಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸಹ ಈ ಸಂಚಾರ ಗಣತಿ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ರಸ್ತೆ ಸಂಚಾರ ಗಣತಿಯಿಂದ ಯಾವ ರಸ್ತೆಯಲ್ಲಿ ಯಾವ ರೀತಿಯ ವಾಹನ ಸಂಚಾರ ಅಧಿಕವಾಗಿದೆ ಎಂಬುದು ಸ್ಪಷ್ಟವಾಗುವುದರಿಂದ, ಸರ್ಕಾರ ಮಟ್ಟದಲ್ಲಿ ಹಲವಾರು ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಚಾರ ಗಣತಿ ಯಶಸ್ವಿಗೊಳಿಸಲು ವಾಹನ ಚಾಲಕರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಶರಣಪ್ಪಾ ಸುಲಗಂಟೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಜಮಾಡಿ ಟೋಲ್ನಲ್ಲಿ ಪುಂಡಾಟ: ಪ್ರಕರಣ ದಾಖಲು
ಪಡುಬಿದ್ರೆ, ಫೆ.4: ಹೆಜಮಾಡಿ ಟೋಲ್ಗೇಟ್ ಬಳಿ ರಸ್ತೆಯಲ್ಲಿ ಬಸ್ ನಿಲ್ಲಿಸಿ, ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಪುಂಡಾಟಿಕೆ ಮೆರೆದ ಬಗ್ಗೆ ಬಸ್ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.3ರಂದು ರಾತ್ರಿ ಹೆಜಮಾಡಿ ಟೋಲ್ ಗೇಟ್ ಬಳಿ ಮಂಗಳೂರು ಕಡೆಯಿಂದ -ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯದಲ್ಲಿ ಬಸ್ಸನ್ನು ನಿಲ್ಲಿಸಿದ್ದು, ಅದರಲ್ಲಿದ್ದವರು ಕೆಳಗೆ ರಸ್ತೆಗೆ ಇಳಿದು ರಸ್ತೆಯಲ್ಲಿ ಬೆಂಕಿ ಉಗುಳುವ ಪಟಾಕಿಯನ್ನು ಸಿಡಿಸಿ, ಕುಣಿದು ಕುಪ್ಪಳಿಸಿದ್ದರು. ಈ ಮೂಲಕ ಆ ರಸ್ತೆಯಲ್ಲಿ ಹೋಗುವ ವಾಹನದ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದರೆಂದು ದೂರಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಬಸ್ನ ಮಾಹಿತಿ ಸಂಗ್ರಹಿಸಿ, ಬಸ್ಸಿನ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
SSLC Exam Results 2026: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ 'ಟಿವಿ–ಮೊಬೈಲ್ ಸ್ವಿಚ್ ಆಫ್' ಟಾಸ್ಕ್
SSLC Exam Results 2026: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಇದೀಗ ಹೊಸ ರೀತಿಯ ಟಾಸ್ಕ್ ಒಂದನ್ನು ಪರಿಚಯಿಸಿದೆ. ವಿದ್ಯಾರ್ಥಿಗಳ ಗಮನವನ್ನು ಓದಿನತ್ತ ಕೇಂದ್ರೀಕರಿಸಲು 'ಟಿವಿ ಮತ್ತು ಮೊಬೈಲ್ ಸ್ವಿಚ್ ಆಫ್' ಎಂಬ ಅಭಿಯಾನಕ್ಕೆ ಚಾಲನೆ ನೀಡಲು ಇಲಾಖೆ ಮುಂದಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿರುವ
ಬೆಳಗಾವಿ| ಅಪ್ರಾಪ್ತ ಬಾಲಕಿಗೆ ಕಿರುಕುಳ ಪ್ರಕರಣ: ಮೂವರು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ
ಬೆಳಗಾವಿ : ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದಲ್ಲಿ ಮೂವರು ಆರೋಪಿಗಳಿಗೆ ಜಿಲ್ಲಾ ಪೊಕ್ಸೋ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರ ಡಿಸೆಂಬರ್ 2ರಂದು ಈ ಘಟನೆ ನಡೆದಿತ್ತು. ಬೆಳಗಾವಿ ಭಾರತನಗರದ ಬಾಕ್ಸೈಟ್ ರಸ್ತೆಯ ನಿವಾಸಿಗಳಾದ ಸಚಿನ್ ರಾಮಸಿಂಗ್ ಸಹಾನೆ (22), ಬಿಬಿಸರ ಪ್ರಸಾದ ಸಹಾನೆ (26) ಹಾಗೂ ಶುಭಂ ಶ್ರವಣ ಯಾದವ್ (23) ವಿರುದ್ಧ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದಲ್ಲಿ ಬಾಲಕಿಯ ಪೋಷಕರು ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಅಂದಿನ ಠಾಣಾಧಿಕಾರಿ ಎಸ್.ಎಸ್. ಮುತ್ತತ್ತಿ ಅವರು ಪ್ರಕರಣ ದಾಖಲಿಸಿಕೊಂಡು ಪೊಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸಿ.ಎಂ. ಪುಷ್ಪಲತಾ ಅವರು ಐದು ಸಾಕ್ಷಿಗಳ ಹೇಳಿಕೆಗಳು ಹಾಗೂ 20 ದಾಖಲೆಗಳ ಆಧಾರದ ಮೇಲೆ ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಆರೋಪಿಗಳಿಗೆ ತಲಾ ಮೂರು ವರ್ಷ ಕಾರಾಗೃಹ ಶಿಕ್ಷೆ ಮತ್ತು 10ರೂ. ಸಾವಿರ ದಂಡ ವಿಧಿಸಿದರು. ಇದಲ್ಲದೆ ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ 1 ಲಕ್ಷ ರೂ. ಪರಿಹಾರ ಧನ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಎಲ್.ವಿ. ಪಾಟೀಲ್ ವಾದ ಮಂಡಿಸಿದರು.
ಬೋಟಿನಿಂದ ನೀರಿಗೆ ಬಿದ್ದು ಮೀನುಗಾರ ಮೃತ್ಯು
ಕೋಟ, ಫೆ.4: ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಎಂಬಲ್ಲಿ ಫೆ.3ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಮಣೂರು ಗ್ರಾಮದ ಆನಂದ ಎಂಬವರ ಮಗ ನಟರಾಜ್ (36) ಎಂದು ಗುರುತಿಸಲಾಗಿದೆ. ಈಶ್ವರಿ ಎಂಬ ಬೋಟಿನಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಇವರು, ಮೀನುಗಾರಿಕೆ ನಿಮಿತ್ತ ಇತರ ಕೆಲಸಗಾರ ರೊಂದಿಗೆ ಬೋಟಿನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಊಟ ಮಾಡಿ ಕೈ ತೊಳೆಯುವಾಗ ನಟರಾಜ್ ಆಯತಪ್ಪಿ ನೀರಿ ಬಿದ್ದು ನಾಪತ್ತೆಯಾಗ್ದಿದ್ದು ಬೆಳಗ್ಗೆ ಇವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲದ ಬಗ್ಗೆ ಪತ್ರ ಬರೆದಿಟ್ಟು ಯುವಕ ನಾಪತ್ತೆ
ಕಾರ್ಕಳ, ಫೆ.4: ಪ್ಲಿಪ್ಕಾರ್ಟ್ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಮುಂಡ್ಕೂರು ಗ್ರಾಮದ ಯಜ್ಞೇಶ್ ಮಾಧವ ಆಚಾರ್ಯ (39) ಎಂಬವರು ಫೆ.1ರಂದು ಸಂಜೆ ವೇಳೆ ಸಾಲದ ಬಗ್ಗೆ ಪತ್ರ ಬರೆದಿಟ್ಟು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
ಗಂಗೊಳ್ಳಿ, ಫೆ.4: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.3ರಂದು ಸಂಜೆ ವೇಳೆ ಸೇನಾಪುರ ಗ್ರಾಮದ ಬೆಳ್ಳಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಸೇನಾಪುರ ಗ್ರಾಮದ ಬೆಳ್ಳಾಡಿ ನಿವಾಸಿ ರಾಜೀವ ಶೆಟ್ಟಿ (58) ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಮನೆಯ ತೆಂಗಿನ ಮರವನ್ನು ಹತ್ತಿ ಕಾಯಿಯನ್ನು ಕೀಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದರೆನ್ನಲಾಗಿದೆ. ಇರಿಂದ ಗಂಭೀರವಾಗಿ ಗಾಯಗೊಂಡ ಅವರು, ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಇರಾನ್ ಡ್ರೋನ್ ಉಡಾಯಿಸಿದ ಅಮೆರಿಕ ಸೇನೆ, ಶಾಂತಿ ಮಾತುಕತೆಗೆ ಅಂತಿಮ ಹಂತದ ಸಿದ್ಧತೆ | USA Military
ಅಮೆರಿಕ ಮತ್ತು ಇರಾನ್ ನಡುವೆ ಏನೂ ಸರಿ ಇಲ್ಲ ಎಂಬುದು ಪದೇ ಪದೇ ಗೊತ್ತಾಗುತ್ತಿದ್ದು, ಈ ಎರಡೂ ದೇಶಗಳು ಯಾವ ಕ್ಷಣದಲ್ಲಿ ಬೇಕಾದರೂ ಒಬ್ಬರ ಮೇಲೆ ಮತ್ತೊಬ್ಬರು ಭೀಕರ ಯುದ್ಧ ಆರಂಭ ಮಾಡಬಹುದು. ಒಂದು ಕಡೆ ಅಮೆರಿಕ ತನ್ನ ದೊಡ್ಡ ಪ್ರಮಾಣದ ಸೇನೆಯನ್ನು ಇರಾನ್ ಜಲಗಡಿ ಸಮೀಪಕ್ಕೆ ನುಗ್ಗಿಸಿದೆ, ಇನ್ನೊಂದು ಕಡೆ ಇರಾನ್ ಕೂಡ ಈ ವಿಚಾರದಲ್ಲಿ
ವಿವಾದದ ಕೇಂದ್ರ ಬಿಂದುವಾಗುತ್ತಿರುವ ಉಪ್ಪೂರು ಬೀದಿ ನಾಯಿ ಶೆಲ್ಟರ್
ಸುಪ್ರೀಂ ಕೋರ್ಟಿನ ಕಟ್ಟುನಿಟ್ಟಿನ ಆದೇಶ ಜಾರಿಗೆ ಮುಂದಾದ ಉಡುಪಿ ಜಿಲ್ಲಾಡಳಿತ
ಬೆಂಗಳೂರು–ಪುಣೆ ಹೈ ಸ್ಪೀಡ್ ರೈಲು ಕಾರಿಡಾರ್: ಮಧ್ಯ ಹಾಗೂ ಉತ್ತರ ಕರ್ನಾಟಕಕ್ಕೆ ಭರ್ಜರಿ ಗುಡ್ ನ್ಯೂಸ್
ಬೆಂಗಳೂರು, ಫೆಬ್ರವರಿ 4: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ದೇಶಾದ್ಯಂತ 7 ಹೈ ಸ್ಪೀಡ್ ರೈಲು ಕಾರಿಡಾರ್ಗಳ ಘೋಷಣೆ ಮಾಡಲಾಯಿತು. ಇನ್ನೂ ಕರ್ನಾಟಕಕ್ಕೆ ಮತ್ತೊಂದು ಹೈ ಸ್ಪೀಡ್ ರೈಲು ಮಾರ್ಗ ದೊರಕುವ ಸೂಚನೆ ಸಿಕ್ಕಿದೆ. ಇದು ಬಂದ್ರೆ, ಯಾವೆಲ್ಲಾ ಜಿಲ್ಲೆಗಳಿಗೆ ಅನುಕೂಲ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬೆಂಗಳೂರು ಮತ್ತು ಪುಣೆ ನಡುವೆ
Retired Out Vs Retired Hurt-ಚುಟುಕು ಕ್ರಿಕೆಟ್ ಪ್ರಸಿದ್ಧವಾಗುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಪದ ರಿಟೈರ್ಡ್ ಔಟ್. ಇತ್ತೀಚೆಗೆ ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ ಅವರು ರಿಟೈರ್ಡ್ ಔಟ್ ಆಗಿ ಅವಮಾನಕ್ಕೊಳಗಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಟಿ20 ವಿಶ್ವಕಪ್ ತಾಲೀಮು ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಅವರು ರಿಟೈರ್ಡ್ ಔಟ್ ಆದದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ಏನಿದು? ರಿಟೈರ್ಡ್ ಹರ್ಟ್ ಗಿಂತ ಹೇಗೆ ಭಿನ್ನ?
ಮಂಗಳೂರು: ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯ ಅತ್ತೆ (ಪತ್ನಿಯ ತಾಯಿ) ಪುಷ್ಪಾವತಿ ಕಾರಂದೂರು (96) ವಯೋಸಹಜ ಅಸೌಖ್ಯದಿಂದ ಬುಧವಾರ ಮುಂಜಾನೆ ನಿಧನರಾದರು. ಮೃತರು ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ಬೆಂಗಳೂರು, ಫೆ.4: ಕೇಂದ್ರ ಸರಕಾರವು ಜಾರಿಗೆ ತಂದಿರುವ ‘ವಿಬಿ: ಜಿ ರಾಮ್ ಜಿ’ ಕಾಯ್ದೆಯನ್ನು ವಾಪಸ್ ಪಡೆದು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಅಧಿಕೃತ ನಿರ್ಣಯವನ್ನು ಪ್ರತಿಪಕ್ಷಗಳ ವಿರೋಧ ಹಾಗೂ ಸಭಾತ್ಯಾಗದ ನಡುವೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ನಿರ್ಣಯದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸರಕಾರದ ಪರವಾಗಿ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, 20 ವರ್ಷಗಳ ಹಿಂದೆಯೆ ಯುಪಿಎ ಸರಕಾರವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಮೂಲಕ ಜನರಿಗೆ ಉದ್ಯೋಗದ ಹಕ್ಕು, ಗ್ಯಾರಂಟಿಯನ್ನು ನೀಡಿತ್ತು ಎಂದರು. ಈ ಯೋಜನೆಯಡಿ ಉದ್ಯೋಗ ಶ್ರೀಸಾಮಾನ್ಯನ ಹಕ್ಕು, ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆ, ಗ್ರಾಮ ಪಂಚಾಯಿತಿಗಳನ್ನು ಬಲವರ್ಧನೆ ಮಾಡುವ ಉದ್ದೇಶವಿತ್ತು. ಸಮಾಜದ ಎಲ್ಲ ವರ್ಗಗಳಿಗೆ ಘನತೆಯ ಗ್ಯಾರಂಟಿ ಈ ಯೋಜನೆ ನೀಡಿತ್ತು. ಈ ಯೋಜನೆ ವಿಶ್ವದ ಅತೀ ದೊಡ್ಡ ಹಕ್ಕು ಆಧಾರಿತ ಉದ್ಯೋಗ ಯೋಜನೆಯಾಗಿದೆ ಎಂದು ಹೇಳಿದರು. ಸಂಕಷ್ಟದ ಸಮಯದಲ್ಲಿ ಬಡ ಕುಟುಂಬಗಳು ಹಸಿವು, ಬಲವಂತದ ವಲಸೆ, ಸಾಲದ ಸುಳಿಗೆ ಸಿಲುಕಬಾರದು, ಅವರ ಮನೆಯ ಬಳಿಯೆ ಘನತೆ ಹಾಗೂ ಕನಿಷ್ಟ ವೇತನದ ಮೂಲಕ ಉದ್ಯೋಗ ನೀಡುವ ಯೋಜನೆಯನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಜಾರಿಗೆ ತಂದಿದ್ದರು. 20 ವರ್ಷಗಳಲ್ಲಿ ದೇಶದಲ್ಲಿ 4,420 ಕೋಟಿ ಮಾನವ ದಿನ ಸೃಷ್ಟಿ, 16 ಕೋಟಿ ಉದ್ಯೋಗ ಕಾರ್ಡ್ ವಿತರಣೆ, 10 ಕೋಟಿ ಗ್ರಾಮೀಣ ಆಸ್ತಿ ಸೃಜನೆ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ರಾಜ್ಯದಲ್ಲಿ 183 ಕೋಟಿ ಮಾನವ ದಿನಗಳು, 71 ಲಕ್ಷ ಉದ್ಯೋಗ ಕಾರ್ಡ್ಗಳಿವೆ, 84 ಲಕ್ಷ ಗ್ರಾಮೀಣ ಆಸ್ತಿ ಸೃಜನೆ ಮಾಡಿದ್ದೇವೆ. ಈ ಉದ್ಯೋಗ ಖಾತರಿ ಯೋಜನೆ ಕೇವಲ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದ ಸಭೆಗಳಲ್ಲಿ ಚರ್ಚೆಯಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು. ನರೇಂದ್ರ ಮೋದಿ ನೇತೃತ್ವದ ಸರಕಾರವು ಈ ಯೋಜನೆಯು ಗ್ರಾಮೀಣ ಪ್ರದೇಶದ ಶೇ.58.1ರಷ್ಟು ಮಹಿಳೆಯರು ಆರ್ಥಿಕ ಸಶಕ್ತರಾಗಿದ್ದಾರೆ. ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಣೆಯಾಗಿದೆ, ಪಾರದರ್ಶಕವಾಗಿ ನಡೆಯುತ್ತಿದೆ, ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆಯಾಗಿದೆ, ಗ್ರಾ.ಪಂ.ಗಳ ಬಲವರ್ಧನೆ ಆಗುತ್ತಿದೆ ಎಂದು ಒಪ್ಪಿಕೊಂಡಿದೆ ಎಂದು ಉಲ್ಲೇಖಿಸಿದರು. ನಾಥೂರಾಮ್ ಗೋಡ್ಸೆ ಹೆಸರು ಇಟ್ಟುಕೊಳ್ಳಲಿ: ಈ ಯೋಜನೆಯ ಹೆಸರನ್ನು ವಿಕಸಿತ್ ಭಾರತ್ ನಾಥೂರಾಮ್ ಗೋಡ್ಸೆ ಕಾಯ್ದೆ ಎಂದು ಇಟ್ಟುಕೊಳ್ಳಲಿ. ಆದರೆ, ಜನರಿಗೆ ಎರಡು ಹೊತ್ತು ಊಟ ಕೊಡಿ, ಅವರಿಗೆ ಕೆಲಸ ಕೊಡಿ. ನಾವು ಭೀಕ್ಷೆ ಕೇಳುತ್ತಿಲ್ಲ. ಜನರ ಹಕ್ಕು ಕೇಳುತ್ತಿದ್ದೇವೆ. ನಮ್ಮ ಹಣ ಖರ್ಚು ಮಾಡಲು ಕೇಂದ್ರದ ಅನುಮತಿ ಪಡೆಯಬೇಕು. ಗ್ರಾಮ ಸಭೆಗಳಿಗೆ ಅಧಿಕಾರವಿಲ್ಲದಂತಾಗುತ್ತದೆ. ಕೇಂದ್ರ ಅಧಿಸೂಚಿಸುವ ಕಡೆ ಕೆಲಸ ಮಾಡಬೇಕು. ಮನರೇಗಾದಲ್ಲಿ 365 ದಿನ ಕೆಲಸ ಕೇಳಬಹುದಿತು. ಈ ಕಾಯ್ದೆಯಡಿ 60 ದಿನ ನಿಷೇಧ ಹೇರಿದ್ದಾರೆ ಎಂದು ಮಾಹಿತಿ ನೀಡಿದರು. ಕೇಂದ್ರ ಸರಕಾರ ಈ ಕಾಯ್ದೆಯಡಿ 3.38 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಹೇಳಿದೆ. ಇದರಲ್ಲಿ 2.30 ಲಕ್ಷ ಕೋಟಿ ರೂ.ಕೇಂದ್ರದ ಪಾಲು, ಉಳಿದ ಮೊತ್ತ ರಾಜ್ಯ ಸರಕಾರದ ಪಾಲು. ಆದರೆ, 2.30 ಲಕ್ಷ ಕೋಟಿ ರೂ.ಗಳಲ್ಲಿ ಇವರು ಇಟ್ಟಿರುವ ಹಣ 95 ಸಾವಿರ ಕೋಟಿ ರೂ.ಮಾತ್ರ. ಇದರಲ್ಲಿ 125 ದಿನ ಕೆಲಸ ಕೊಡಲು ಆಗುತ್ತದೆಯೇ? ಇದೊಂದು ಬೋಗಸ್ ಯೋಜನೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಕೃಷಿ ಕಾಯ್ದೆಗಳನ್ನು ಮೋದಿ ಸರಕಾರ ಯಾವ ರೀತಿ ಹಿಂಪಡೆಯಿತೋ, ಅದೇ ರೀತಿ ಪಂಚಾಯಿತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಈ ಕಾಯ್ದೆಯನ್ನು ಹಿಂಪಡೆಯಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ನಾವು ಈ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಆ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮಂಡಿಸಿದ ನಿರ್ಣಯವನ್ನು ಅಂಗೀಕರಿಸಬೇಕೆಂದು ಕೋರಿದರು. ಸ್ಪೀಕರ್ ಯು.ಟಿ.ಖಾದರ್ ನಿರ್ಣಯವನ್ನು ಸಭೆಯ ಮತಕ್ಕೆ ಹಾಕಿ ಧ್ವನಿಮತದ ಮೂಲಕ ಅಂಗೀಕರಿಸಿದರು.
ಅನಂತ ಸುಬ್ಬರಾವ್ ಚಳವಳಿಯಲ್ಲಿ ರಾಜಿ ಮಾಡಿಕೊಳ್ಳದ ಯಶಸ್ವಿ ನಾಯಕ: ರಮಾನಾಥ ರೈ
ಮಂಗಳೂರು: ಅನಂತ ಸುಬ್ಬರಾವ್ ಅವರು ಚಳವಳಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಓರ್ವ ಯಶಸ್ವಿ ನಾಯಕರಾಗಿದ್ದರು. ಸಾರಿಗೆ ಇಲಾಖೆಯ ಲಕ್ಷಾಂತರ ಕಾರ್ಮಿಕರ ನೋವು ನಲಿವುಗಳಲ್ಲಿ ಅವರು ಭಾಗಿಯಾಗು ತ್ತಿದ್ದರು. ಸುಬ್ಬರಾವ್ ಅವರಂತೆ ಆದರ್ಶ ಕಾರ್ಮಿಕ ನಾಯಕನ ಆದರ್ಶಗಳನ್ನು ನಾವಿಂದು ಪಾಲಿಸಬೇಕಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಅಗಲಿಕ ಕಾರ್ಮಿಕ ನಾಯಕ , ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಹಿರಿಯ ಮುಂದಾಳು, ಎಐಟಿಯುಸಿ ಹಾಗೂ ಕೆಎಸ್ಆರ್ಟಿಸಿ ಯೂನಿಯನ್ನ ನಾಯಕ ಅನಂತ ಸುಬ್ಬರಾವ್ ಅವರಿಗೆ ಬುಧವಾರ ಸಿಪಿಐ ದ.ಕ. ಮತ್ತು ಉಡುಪಿ, ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ವತಿಯಿಂದ ನಗರದ ಬಿಜೈನ ಕರ್ಣಾಟಕ ಬ್ಯಾಂಕ್ ನೌಕರರ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಎಸ್ಆರ್ಟಿಸಿ ಸಂಸ್ಥೆಯ ಕಾರ್ಮಿಕರ ನಾಯಕರಾಗಿ ಗುರುತಿಸಿಕೊಂಡಿದ್ದ ಅನಂತ ಸುಬ್ಬರಾವ್ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಕಾರ್ಮಿಕರ ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ಹಿಂದೆ ತಾನು ಸಾರಿಗೆ ಸಚಿವನಾಗಿದ್ದಾಗ ಅವರ ಹೋರಾಟವನ್ನು ಚೆನ್ನಾಗಿ ಅರಿತುಕೊಳ್ಳುವ ಅವಕಾಶ ಸಿಕ್ಕಿತು ಎಂದು ನೆನಪಿಸಿಕೊಂಡದರು. ಜಿಲ್ಲಾ ಸಿಪಿಐ ಹಿರಿಯ ಧುರೀಣ, ಪ್ರಗತಿಪರ ಚಿಂತಕ ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾತನಾಡಿ ಅನಂತ ಸುಬ್ಬರಾವ್ ಅವರು ಕಾರ್ಮಿಕರ ಮತ್ತು ಜನಸಾಮಾನ್ಯರ ಚಳವಳಿಗಳಿಗೆ ತನ್ನ ಜೀವನವನ್ನು ಸಮರ್ಪಿಸಿದ ನಾಯಕರಲ್ಲಿ ಕೊನೆಯ ಕೊಂಡಿಯಾಗಿದ್ದವರು. ಅವರ ಅಗಲಿಗೆ ನಿಜಕ್ಕೂ ತುಂಬಲಾರದ ನಷ್ಟವಾಗಿದೆ. ಕಾರ್ಮಿಕರ ಬಗ್ಗೆ , ರಾಜಕೀಯ, ಕಮುನ್ಯಿಸ್ಟ್ ಸಿದ್ಧಾಂತ ಬಗ್ಗೆ ಅಪಾರ ಕಾಳಜಿ, ಬದ್ಧತೆಯನ್ನು ಅವರು ಹೊಂದಿದ್ದರು.ಕಾರ್ಮಿಕರ ಕಾನೂನು, ಮುಖ್ಯವಾಗಿ ಕೆಎಸ್ಆರ್ಟಿಸಿ ವರ್ಕರ್ಸ್ ಫೆಡರೇಶನ್ನ ಪ್ರತಿನಿತ್ಯದ ಆಗುಹೋಗುಗಳ ಬಗ್ಗೆ ಅವರಲ್ಲಿದ್ದ ಅಪಾರ ಜ್ಞಾನ ಭಂಡಾರವನ್ನು ಸರಿಗಟ್ಟಲು ಯಾರಿಗೂ ಸಾಧ್ಯವಿಲ್ಲ ಎಂದರು. ಅನಂತ ಸುಬ್ಬ ರಾವ್ ಅವರಂತಹ ನಾಯಕರು ಮಾಡಿರುವ ಜನೋಪಯೋಗಿ ಕೆಲಸ, ಕ್ರಾಂತಿಕಾರಿ ಹೋರಾಟದ ಮಾಹಿತಿಯನ್ನು ಜನರಿಗೆ ತಲುಪಿಸಬೇಕಾಗಿದೆ. ಅನಂತ ಸುಬ್ಬರಾವ್ ಕಟ್ಟಿರುವ ಸಂಘಟನೆಗಳನ್ನು ಅದರಲ್ಲೂ ಕೆಎಸ್ಆರ್ಟಿಸಿ ನೌಕರರ ಒಕ್ಕೂಟವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದು ಡಾ.ಕಕ್ಕಿಲ್ಲಾಯ ಹೇಳಿದರು. ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಫಣೀಂದ್ರ ಅವರು ಮಾತನಾಡಿ ‘ಅನಂತ ಸುಬ್ಬರಾವ್ ಆರು ದಶಕಗಳಿಂದ ಕಾರ್ಮಿಕರ ಗಟ್ಟಿ ಧ್ವನಿಯಾಗಿ ಗುರುತಿಸಿಕೊಂಡಿದ್ದರು ’ಎಂದು ಬಣ್ಣಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್, ಡಿಎಸ್ಎಸ್ ಮುಖಂಡ ದೇವದಾಸ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೆಎಸ್ಆರ್ಟಿಸಿ ನೌಕರರ ಸಂಘದ ಪ್ರವೀಣ್ ಕುಮಾರ್ , ಎನ್ಎಫ್ ಐಡಬ್ಲ್ಯು ಜಿಲ್ಲಾ ಕಾರ್ಯದರ್ಶಿ ಭಾರತಿ ಪ್ರಶಾಂತ್ ಮಾತನಾಡಿದರು. ಸಿಪಿಐ ಜಿಲ್ಲಾ ಮಾಜಿ ಕಾರ್ಯದರ್ಶಿ ವಿ.ಕುಕ್ಯಾನ್, ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ ಎಂ. ಕರುಣಾಕರ ಮಾರಿಪಳ್ಳ, ಪ್ರಮುಖರಾದ ಶಶಿಕಲಾ ಉಡುಪಿ ಮತ್ತಿತರರು ಭಾಗವಹಿಸಿದ್ದರು. ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಸೀತಾರಾಮ ಬೇರಿಂಜ ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಸರ್ಕಾರ ಒಪ್ಪಿಗೆ? ಎಷ್ಟು ಹೆಚ್ಚಳ? ಯಾವಾಗ ಅನ್ವಯ?
ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ. ದರ ಪರಿಷ್ಕರಣೆಗೆ ರಾಜ್ಯ ಸರ್ಕಾರವು ಅನುಮತಿ ನೀಡಿದೆ ಎನ್ನಲಾಗಿದೆ. ಶೇಕಡಾ 5 ರಷ್ಟು ದರ ಹೆಚ್ಚಳವಾಗಬಹುದು. ಕಳೆದ ವರ್ಷ ಗರಿಷ್ಠ ಶೇಕಡಾ 70 ರಷ್ಟು ದರ ಏರಿಕೆಯಾಗಿದ್ದು, ಮತ್ತೆ ಹೆಚ್ಚಳಕ್ಕೆ ಮುಂದಾಗಿರುವುದು ಪ್ರಯಾಣಿಕರಿಗೆ ಬೇಸರ ತರಿಸಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಕಾಳಗಿ | ಅಧಿಕಾರಿಗಳ ಗಮನಕ್ಕಿಲ್ಲದೆ ಗ್ರಂಥಾಲಯ ಕಟ್ಟಡ ಲೋಕಾರ್ಪಣೆ
ಕೆಕೆಆರ್ ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ ನಿರ್ಮಾಣ
Manipura | ಮುಖ್ಯಮಂತ್ರಿಯಾಗಿ ಯುಮ್ನಾಮ್ ಖೇಮ್ ಚಂದ್ ಸಿಂಗ್ ಪ್ರಮಾಣವಚನ
ಇಂಫಾಲ್: ಮಣಿಪುರದ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಾಮ್ ಖೇಮ್ಚಂದ್ ಸಿಂಗ್ ಬುಧವಾರ ಇಂಫಾಲ್ ನ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಫೆಬ್ರವರಿ 2025ರಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಲಾಯಿತು. ಖೇಮ್ಚಂದ್ ಸಿಂಗ್ ಅವರೊಂದಿಗೆ ಬಿಜೆಪಿಯ ನೆಮ್ಚಾ ಕಿಪ್ಗೆನ್, ಗೋವಿಂದಾಸ್ ಕೊಂಥೌಜಮ್, ನಾಗಾ ಪೀಪಲ್ಸ್ ಫ್ರಂಟ್ ನ ಲೋಸಿ ದಿಖೋ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಲೋಕೆನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನೆಮ್ಚಾ ಕಿಪ್ಗೆನ್ ಅವರು ರಾಜ್ಯದ ಮೊದಲ ಕುಕಿ ಸಮುದಾಯದ ಉಪಮುಖ್ಯಮಂತ್ರಿಯಾಗಲಿದ್ದು, ಲೋಸಿ ದಿಖೋ ಮತ್ತೊಬ್ಬ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಮಾಣವಚನ ಸಮಾರಂಭದಲ್ಲಿ ಬಿಜೆಪಿ ಶಾಸಕರು, ಪಕ್ಷದ ಹಿರಿಯ ನಾಯಕರು ಹಾಗೂ ಎನ್ಡಿಎ ಮೈತ್ರಿ ಕೂಟದ ಪ್ರಮುಖರು ಉಪಸ್ಥಿತರಿದ್ದರು. ಹೊಸ ಸಂಪುಟದ ರಚನೆಯೊಂದಿಗೆ ರಾಜ್ಯದಲ್ಲಿ ಶಾಂತಿ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಖೇಮ್ಚಂದ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ವಿಕಸಿತ್ ಭಾರತ್’ ಮತ್ತು ʼವಿಕಸಿತ್ ಮಣಿಪುರ’ ಗುರಿ ಸಾಧನೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಖೇಮ್ಚಂದ್ ಸಿಂಗ್ ದೀರ್ಘಕಾಲದ RSS ಕಾರ್ಯಕರ್ತರಾಗಿದ್ದು, ರಾಜ್ಯ ರಾಜಕಾರಣದಲ್ಲಿ ವಿವಿಧ ಸಂಘಟನೆ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ವಹಿಸಿಕೊಂಡ ಅನುಭವ ಹೊಂದಿದ್ದಾರೆ. ಟೇಕ್ವಾಂಡೋ ಕ್ರೀಡೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಅವರು ಟೇಕ್ವಾಂಡೋ ಫೆಡರೇಶನ್ ಆಫ್ ಇಂಡಿಯಾದ ಮಾಜಿ ಉಪಾಧ್ಯಕ್ಷರಾಗಿದ್ದಾರೆ. 2012ರ ವಿಧಾನಸಭಾ ಚುನಾವಣೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಿ ಸೋಲು ಕಂಡ ಅವರು, 2013ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಸಿಂಗಜಮೇ ಯುಮ್ನಮ್ ಲೈಕೈನಲ್ಲಿ ಜನಿಸಿದ ಅವರು 1978ರಲ್ಲಿ ಇಂಫಾಲ್ ನ ರಾಮ್ ಲಾಲ್ ಪಾಲ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಅವರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಇದ್ದಾರೆ. ರಾಜ್ಯದಲ್ಲಿ ಹಿಂಸಾಚಾರ ಮತ್ತು ಆಡಳಿತ ವೈಫಲ್ಯ ಆರೋಪಗಳ ನಡುವೆ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಕಳೆದ ವರ್ಷದ ಫೆ. 9ರಂದು ರಾಜೀನಾಮೆ ಸಲ್ಲಿಸಿದ್ದರು. ಬಳಿಕ ರಾಜ್ಯದಲ್ಲಿ ಕರ್ಫ್ಯೂ ಹಾಗೂ ಇಂಟರ್ನೆಟ್ ನಿರ್ಬಂಧ ಕ್ರಮಗಳು ಜಾರಿಯಾಗಿದ್ದರೂ ಹಿಂಸಾಚಾರ ಮುಂದುವರಿದಿತ್ತು. ಕುಕಿ–ಝೋ ಸಮುದಾಯ ಸೇರಿದಂತೆ ಹಲವು ಗುಂಪುಗಳ ನಡುವೆ ಉದ್ಭವಿಸಿದ ಜನಾಂಗೀಯ ಉದ್ವಿಗ್ನತೆ ರಾಜಕೀಯ ಅಸ್ಥಿರತೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲೇ ನಾಯಕತ್ವ ಬದಲಾವಣೆ ನಡೆದು, ಹೊಸ ಸರ್ಕಾರ ರಚನೆಯಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಎಚ್.ಡಿ. ಕುಮಾರಸ್ವಾಮಿ ಚರ್ಚೆ | HD Kumaraswamy
ಕೇಂದ್ರ ಬಜೆಟ್-2026 ಮಂಡನೆ ಆಗಿ 3 ದಿನ ಕಳೆದಿದ್ದು, ಈಗಲೂ ಬಜೆಟ್ ಬಗ್ಗೆ ಬಿಸಿಬಿಸಿ ಚರ್ಚೆ ಕಡಿಮೆ ಆಗಿಲ್ಲ. ಅದರಲ್ಲೂ 50 ಲಕ್ಷ ಕೋಟಿ ರೂಪಾಯಿ ದಾಟಿರುವ ಭಾರತದ ಬಜೆಟ್ ಕುರಿತು ಇಡೀ ಜಗತ್ತು ಈಗ ಮಾತನಾಡುತ್ತಿದೆ. ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ರೀತಿ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ. ಈಗಾಗಲೇ ಬಜೆಟ್
ಫೆ.12: ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ
ಮಂಗಳೂರು: ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ರೈತ ಕಾರ್ಮಿಕರ ನೇತೃತ್ವದಲ್ಲಿ ಫೆ.12ರಂದು ಅಖಿಲ ಭಾರತ ಮಹಾಮುಷ್ಕರ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರವು ದೇಶದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ನಾಶ ಮಾಡಲು ಕಾರ್ಮಿಕ ಚಳುವಳಿಯನ್ನು ಹತ್ತಿಕ್ಕಲು ಹಾಗೂ ಬಂಡವಾಳಿಗರ ಲಾಭದ ಹಿತಾ ಸಕ್ತಿಗಳನ್ನು ಕಾಪಾಡಲು ಪ್ರಮುಖ 29 ಕಾನೂನುಗಳನ್ನು ರದ್ದುಗೊಳಿಸಿದೆ. ಉದ್ಯಮಸ್ನೇಹಿ ಹೆಸರಿನಲ್ಲಿ 4 ಕಾರ್ಮಿಕ ಸಂಹಿತೆಗಳಾದ ವೇತನ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ, ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ ಹಾಗೂ ಸಾಮಾಜಿಕ ಭದ್ರತಾ ಸಂಹಿತೆಗಳನ್ನು ಕಳೆದ ನವೆಂಬರ್ 21ರಿಂದ ಜಾರಿಗೊಳಿಸಲು ಅಧಿಸೂಚನೆ ಹೊರಡಿಸಿದೆ. ಸ್ವಾತಂತ್ರ್ಯದ ಬಳಿಕ ಕಾರ್ಮಿಕರು ನಡೆಸಿದ ದೀರ್ಘ ಹೋರಾಟದ ಫಲವಾಗಿ ಕನಿಷ್ಠ ವೇತನ, ಕೆಲಸದ ಸಮಯದ ಮಿತಿ, ಸಂಘಟನೆ ಮತ್ತು ಮುಷ್ಕರದ ಹಕ್ಕು, ಸಾಮಾಜಿಕ ಭದ್ರತೆ ಕಾನೂನುಗಳು ಬಂದಿತ್ತು. ಆದರೆ ಈ ಎಲ್ಲಾ ಹಕ್ಕುಗಳನ್ನು ಹಿಂಪಡೆಯುವ ಪ್ರಯತ್ನವು 4 ಕಾರ್ಮಿಕ ಸಂಹಿತೆಗಳಾಗಿವೆ ಎಂದರು. ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದ ಉನ್ನತ ತ್ರಿಪಕ್ಷೀಯ ವೇದಿಕೆಯಾದ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಈವರೆಗೂ ಕರೆಯಲಾಗಿಲ್ಲ. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಇಲ್ಲದ ವೇಳೆ ಪ್ರಮುಖ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ಚರ್ಚೆ ಇಲ್ಲದೆ ಈ ಸಂಹಿತೆಗಳಿಗೆ ಅಂಗೀಕಾರ ಪಡೆದಿದೆ. ಕೇಂದ್ರ ಸರಕಾರ ನಿಗದಿ ಮಾಡಿದ ನೆಲಮಟ್ಟದ ಕನಿಷ್ಠ ಕೂಲಿ ದಿನಕ್ಕೆ 178 ರೂ. ಆಗಿದೆ. ಇದರಲ್ಲಿ ಯಾವುದೇ ಕಾರ್ಮಿಕನಿಗೆ ಬದುಕು ನಿರ್ವಹಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರವೇ ನೇಮಕ ಮಾಡಿದ ಡಾ.ಅನೂಪ್ ಸತ್ಪತಿ ಸಮಿತಿ ಕನಿಷ್ಠ ಕೂಲಿ ದಿನಕ್ಕೆ 375 ರೂ. ನೀಡಬೇಕೆಂದು ಶಿಫಾರಸು ಮಾಡಿತ್ತು. 7ನೇ ವೇತನ ಆಯೋಗ ತಿಂಗಳಿಗೆ 18,000 ರೂ. ಎಂದು ಹೇಳಿತ್ತು. ಆದರೆ ಸರಕಾರ ಇವೆಲ್ಲವನ್ನೂ ತಿರಸ್ಕರಿಸಿದೆ. ಪ್ರೊವಿಡೆಂಟ್ ಫಂಡ್ ವೇತನ ಮಿತಿ 15,000 ರೂ. ಮತ್ತು ಇಎಸ್ಐ ವೇತನ ಮಿತಿ 21,000 ರೂ.ಗೆ ಮಿತಿಗೊಳಿಸಿರುವುದು ಕಾರ್ಮಿಕರನ್ನು ಈ ಯೋಜನೆಗಳಿಂದ ಹೊರಗಿಡುವ ಸಂಚು ರೂಪಿಸಿದೆ ಎಂದು ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ. ಹೊಸ ಸಂಹಿತೆಯಲ್ಲಿ ಸಂಘಟನೆ ಮತ್ತು ಮುಷ್ಕರಕ್ಕೆ ಅವಕಾಶವಿಲ್ಲ, 1926ರ ಟ್ರೇಡ್ ಯೂನಿಯನ್ ಕಾಯ್ದೆಯಲ್ಲಿ 1 ಕೈಗಾರಿಕೆಯ 7 ಕಾರ್ಮಿಕರು ಒಟ್ಟಾಗಿ ಸಂಘ ರಚಿಸಲು ಅವಕಾಶವಿತ್ತು. ಹಿಂದಿನ ಕಾನೂನಿನ ಪ್ರಕಾರ ಮುಷ್ಕರ ನಡೆಸಲು 15 ದಿನಗಳ ಮುಂಚಿತವಾಗಿ ನೊಟೀಸು ನೀಡಿದರೆ ಸಾಕಿತ್ತು. ಆದರೆ ಹೊಸ ಸಂಹಿತೆ ಪ್ರಕಾರ ಅದನ್ನು 60 ದಿವಸಗಳಿಗೆ ಏರಿಕೆ ಮಾಡಲಾಗಿದೆ. ಅಲ್ಲದೆ ಸಂಧಾನ ನಡೆಯುವವರೆಗೆ ಮುಷ್ಕರ ನಡೆಸುವುದು ಅಕ್ರಮವೆಂದು ಘೋಷಿಸಲಾಗಿದೆ. ಇನ್ನೊಬ್ಬರ ಹೋರಾಟಕ್ಕೆ ಬೆಂಬಲ ಸೂಚಿಸಿ ಮುಷ್ಕರ ಮಾಡುವುದು ಕೂಡಾ ಅಪರಾಧವಾಗಿದೆ. ಒಟ್ಟಿನಲ್ಲಿ ಇದು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಒಪ್ಪಂದಗಳಿಗೂ ವಿರುದ್ಧವಾಗಿದೆ ಎಂದರು. *ಫೆ.5,6,7: ದ.ಕ. ಜಿಲ್ಲಾದ್ಯಂತ ವಾಹನ ಪ್ರಚಾರ ಜಾಥಾ ಅಖಿಲ ಭಾರತ ಮಹಾಮುಷ್ಕರದ ಸಂದೇಶವನ್ನು ಜನಸಾಮಾನ್ಯರಿಗೆ ತಿಳಿಸುವ ಸಲುವಾಗಿ ಫೆ.5,6,7ರಂದು ದ.ಕ. ಜಿಲ್ಲಾದ್ಯಂತ ವಾಹನ ಪ್ರಚಾರ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಫೆ.5ರಂದು ಬೆಳಗ್ಗೆ 9:30ಕ್ಕೆ ನಗರದ ಲೇಡಿಗೋಷನ್ ಬಳಿ ಜಾಥಾವನ್ನು ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ. ಉದ್ಘಾಟಿಸಲಿದ್ದಾರೆ. ಈ ಜಾಥಾ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಫೆ.7ರಂದು ಸಂಜೆ 6ಕ್ಕೆ ನಗರದ ಯೆಯ್ಯಾಡಿಯಲ್ಲಿ ಸಮಾರೋಪಗೊಳ್ಳಲಿದೆ ಎಂದರು. *ಫೆ.12: ಜಿಲ್ಲಾದ್ಯಂತ ರಸ್ತೆತಡೆ ಚಳುವಳಿ ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ಫೆ.12ರಂದು ಬೆಳಗ್ಗೆ 9ಕ್ಕೆ ದ.ಕ.ಜಿಲ್ಲಾದ್ಯಂತ ಏಕಕಾಲದಲ್ಲಿ ತಾಲೂಕು, ವಲಯ ಕೇಂದ್ರಗಳ ಸಹಿತ 25ಕ್ಕೂ ಅಧಿಕ ಕಡೆಗಳಲ್ಲಿ ರಸ್ತೆತಡೆ ಚಳುವಳಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಸೀತಾರಾಮ ಬೆರಿಂಜ, ಬಿ. ಶೇಖರ್, ಯೋಗಿಶ್ ಜಪ್ಪಿನಮೊಗರು, ಕೆ. ಯಾದವ ಶೆಟ್ಟಿ, ಓಸ್ವಾಲ್ ಪ್ರಕಾಶ್ ಫೆರ್ನಾಂಡೀಸ್, ಬಿ.ಎನ್. ದೇವಾಡಿಗ, ಪಿ.ಎಚ್. ಮೋಹನ್, ಕಿರಣ್ರಾಜ್ ಉಪಸ್ಥಿತರಿದ್ದರು.
Epstein files ನಲ್ಲಿ ಉಲ್ಲೇಖಿತ ಭಾರತೀಯ ಸಂಜಾತ ಅಮೆರಿಕದ ಪ್ರಜೆ ದೀಪಕ್ ಚೋಪ್ರಾ ಯಾರು?
ಹೊಸದಿಲ್ಲಿ: ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೀನ್ಗೆ ಸಂಬಂಧಿಸಿದ ದಾಖಲೆಗಳಲ್ಲಿ ಪ್ರತಿಷ್ಠಿತ ಭಾರತ-ಅಮೆರಿಕನ್ ಆರೋಗ್ಯ ತಜ್ಞ ಮತ್ತು ಲೇಖಕರ ಹೆಸರು ಸೇರ್ಪಡೆಯಾದ ನಂತರ ಅವರು ತೀವ್ರ ವಿಚಾರಣೆಗೆ ಒಳಗಾಗಿದ್ದಾರೆ. ಎಪ್ಸ್ಟೀನ್ ಕಡತಗಳಲ್ಲಿ ದೀಪಕ್ ಚೋಪ್ರಾ ಹೆಸರು ಉಲ್ಲೇಖವಾಗಿದ್ದರೂ, ಲೈಂಗಿಕ ಅಪರಾಧಿ ಜೊತೆಗೆ ನಿಕಟ ವೈಯಕ್ತಿಕ ಸಂಬಂಧವಿರುವುದು ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದಕ್ಕೆ ಸಂಬಂಧಿಸಿ ಮಾಹಿತಿ ಲಭ್ಯವಾಗಿಲ್ಲ. ►ದೀಪಕ್ ಚೋಪ್ರಾ ಯಾರು? ಭಾರತೀಯ ಸಂಜಾತ ಅಮೆರಿಕನ್ ಪ್ರಜೆಯಾಗಿರುವ ದೀಪಕ್ ಚೋಪ್ರಾ ಪರ್ಯಾಯ ಔಷಧಿಗಳನ್ನು ಸೂಚಿಸುವುದರಲ್ಲಿ ಪರಿಣತರು ಮತ್ತು ಅನೇಕ ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ. ಅವರು ವೈದ್ಯ ಮತ್ತು ಲೇಖಕರಾಗಿದ್ದು ‘ನವಯುಗ’ ಚಳವಳಿಯಲ್ಲಿ (ಅಂದರೆ ಯೋಗ, ಧ್ಯಾನ, ಜ್ಯೋತಿಷ್ಯದಂತಹ ವಿಚಾರಗಳ ಅಧ್ಯಯನ ಮಾಡಿದ ವಿದ್ವಾಂಸರು) ಪ್ರಮುಖ ವ್ಯಕ್ತಿ. ಲಕ್ಷಾಂತರ ಜನರನ್ನು ಧ್ಯಾನ ಮತ್ತು ಸಮಗ್ರ ಜೀವನಕ್ಕೆ ಕರೆತಂದ ದಾರ್ಶನಿಕ ಎಂದು ಅವರನ್ನು ನೋಡಲಾಗುತ್ತಿದೆ. ಪ್ರಸಿದ್ಧ ಭಾಷಣಕಾರರೂ ಆಗಿರುವ ದೀಪಕ್ ಅವರ ಹೆಸರು ಎಪ್ಸ್ಟೀನ್ ಫೈಲ್ ಗಳಲ್ಲಿ ಉಲ್ಲೇಖಗೊಂಡಿದೆ. ದೀಪಕ್ ಚೋಪ್ರಾ ಮತ್ತು ಎಪ್ಸ್ಟೀನ್ ಅವರು ಡೊನಾಲ್ಡ್ ಟ್ರಂಪ್ ಅವರ ಎರಡನೇ ಪತ್ನಿ ಮಾರ್ಲಾ ಮೇಪಲ್ಸ್ ಕುರಿತಂತೆ ಮತ್ತು ಅಪ್ರಾಪ್ತ ವಯಸ್ಕರ ಲೈಂಗಿಕ ದೌರ್ಜನ್ಯ ಮೊಕದ್ದಮೆ ಕುರಿತಂತೆ ಇಮೇಲ್ ಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಕಡತಗಳ ಪ್ರಕಾರ ಎಪಿಸ್ಟೀನ್ 2016ರಲ್ಲಿ ದೀಪಕ್ ಚೋಪ್ರಾರನ್ನು ಸಂಪರ್ಕಿಸಿದ್ದಾರೆ. ಆಗಷ್ಟೇ ಹಿಂತೆಗೆದುಕೊಳ್ಳಲಾದ ಸಿವಿಲ್ ಮೊಕದ್ದಮೆಯೊಂದರ ಸುದ್ದಿಯ ಲಿಂಕ್ ಅನ್ನು ದೀಪಕ್ ಚೋಪ್ರಾಗೆ ಕಳುಹಿಸಿದ್ದಾರೆ. ಜಾಗತಿಕವಾಗಿ ಪ್ರಸಿದ್ಧಿ ಪಡೆದ ಪರ್ಯಾಯ ಔಷಧಿಯ ಪರವಾಗಿ ಮಾತನಾಡುವ ದೀಪಕ್ ಚೋಪ್ರಾ 1990ರಲ್ಲಿ ಪ್ರಸಿದ್ಧಿಗೆ ಬಂದಿದ್ದರು. ಮೊದಲು ಅವರು ಸೇಂಟ್ ಕೊಲುಂಬಾದಲ್ಲಿ ಶಾಲಾ ಶಿಕ್ಷಣ ಪಡೆದಮೇಲೆ 1969ರಲ್ಲಿ ದಿಲ್ಲಿಯಲ್ಲಿ ಏಮ್ಸ್ನಲ್ಲಿ ಪದವಿ ಪಡೆದರು. ಹೊಸದಿಲ್ಲಿಯಲ್ಲಿ ಜನಿಸಿದ ಅವರು ನಂತರ 1970ರಲ್ಲಿ ಅಮೆರಿಕಕ್ಕೆ ತೆರಳಿದರು. ಅಲ್ಲಿ ಇಂಟರ್ನಲ್ ಮೆಡಿಸಿನ್ ಮತ್ತು ಎಂಡೊಕ್ರೈನೊಲಜಿಯಲ್ಲಿ ವೃತ್ತಿ ಆರಂಭಿಸಿದ್ದರು. ಆಗ ಭಾರತ ಸರ್ಕಾರ ಭಾರತೀಯ ವೈದ್ಯರು ಅಮೆರಿಕದ ಲೈಸೆನ್ಸಿಂಗ್ ಎಕ್ಸಾಮ್ ಬರೆಯುವುದನ್ನು ನಿಷೇಧಿಸಿತ್ತು. ಹೀಗಾಗಿ ಅವರು ಶ್ರೀಲಂಕಾಗೆ ಹೋಗಿ ಪರೀಕ್ಷೆ ಬರೆದು ನ್ಯೂಜೆರ್ಸಿಗೆ ತೆರಳಿದ್ದರು. ಕಾಲಾನುಸಾರ ದೀಪಕ್ ಅವರು ಅಲೋಪತಿಯ ಬದಲಾಗಿ ‘ಇಂಟೆಗ್ರೇಟಿವ್ ಮೆಡಿಸಿನ್’ ಎಂದು ಆರೋಗ್ಯ ಮತ್ತು ಆಧ್ಯಾತ್ಮವನ್ನು ಜೊತೆಗೂಡಿಸಿದ ವೈದ್ಯಪದ್ಧತಿಯನ್ನು ಪ್ರಚಾರ ಮಾಡಲಾರಂಭಿಸಿದರು. ಈ ಕುರಿತಾಗಿ ಅವರು 90 ಪುಸ್ತಕಗಳನ್ನು ಬರೆದಿದ್ದಾರೆ. ಬಹಳಷ್ಟು ಪುಸ್ತಕಗಳು ನ್ಯೂಯಾರ್ಕ್ ಟೈಮ್ಸ್ನ ಅತ್ಯುತ್ತಮ ಮಾರಾಟವಾಗುವ ಪುಸ್ತಕಗಳಾಗಿದ್ದವು. ಓಫ್ರಾ ವಿನ್ಫ್ರೇ ಮೊದಲಾದ ತಾರೆಯರು ಅವರ ವೈದ್ಯಕ್ರಮವನ್ನು ಪ್ರಚಾರ ಮಾಡಿದ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿತ್ತು. ಮನಸ್ಸು-ದೇಹದ ಮೇಲೆ ಪ್ರಭಾವ ಬೀರಿ ಗುಣಪಡಿಸುವ ಕಲ್ಪನೆಯನ್ನು ಅವರು ಪಾಶ್ಚಾತ್ಯ ಮುಖ್ಯವಾಹಿನಿಗೆ ಚರ್ಚೆಗೆ ತಂದರು. ಮಾತ್ರವಲ್ಲದೆ, ಧಾನ್ಯ, ಆಯುರ್ವೇದ ಮತ್ತು ಸಮಗ್ರ ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸುವ ಸೆಂಟರ್ ಫಾರ್ ವೆಲ್ಬೀಯಿಂಗ್ ಅನ್ನು ಸ್ಥಾಪಿದರು. ನಂತರ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು. ದೀಪಕ್ ಚೋಪ್ರಾ ನ್ಯೂ ಇಂಗ್ಲಂಡ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅದು ಅವರ ವೈದ್ಯಕೀಯ ವೃತ್ತಿಜೀವನದ ಉತ್ತುಂಗದ ದಿನಗಳಾಗಿದ್ದವು. ಎಪ್ಸ್ಟೀನ್ ಕಡತಗಳಲ್ಲಿ ದೀಪಕ್ ಚೋಪ್ರಾ ಏಕಿದ್ದಾರೆ? “ವುಡಿ ಜೊತೆಗೆ ಭೋಜನ ಕೂಟದಲ್ಲಿ ಭಾಗವಹಿಸಲು ಬಯಸುವಿರಾ?” ಎಂದು ಎಪ್ಸ್ಟೀನ್ ಅವರು ದೀಪಕ್ ಅವರಿಗೆ ಇಮೇಲ್ ಹಾಕಿದ್ದಾರೆ. “ಖಂಡಿತಾ ಬಯಸುತ್ತೇನೆ, ಆವರು ಸಮೀಪದಲ್ಲಿದ್ದಾರೆಯೆ?” ಎಂದು ದೀಪಕ್ ಉತ್ತರಿಸಿದ್ದಾರೆ. ನಂತರ ಅವರು ಭೇಟಿಯಾಗಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಹೊಸದಾಗಿ ಬಿಡುಗಡೆಯಾದ ಎಪ್ಸ್ಟೀನ್ ಕಡತಗಳಲ್ಲಿ ದೀಪಕ್ ಹೆಸರು ಬಂದಿರುವುದು ಎಲ್ಲರ ಹುಬ್ಬೇರಿಸಿದೆ. ಎಪ್ಸ್ಟೀನ್ ತಮ್ಮ ಕಡತಗಳಲ್ಲಿ ಅನೇಕ ಪ್ರಭಾವೀ ಸ್ನೇಹಿತರ ಅಂತರಂಗದ ಜೀವನವನ್ನು ಬಹಿರಂಗಪಡಿಸಿದ್ದಾರೆ. ಅವರಲ್ಲಿ ದೀಪಕ್ ಚೋಪ್ರಾ ಹೆಸರೂ ಇದೆ. 2016ರಿಂದ 2018ರ ನಡುವೆ ಇಬ್ಬರ ನಡುವೆ ಗಂಭೀರ ಮಾತುಕತೆಗಳು ನಡೆದಿರುವುದಾಗಿ ದಾಖಲೆಗಳು ಉಲ್ಲೇಖಿಸಿವೆ. ಅವರ ಮಾತುಕತೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಪತ್ನಿ ಮಾರ್ಲಾ ಮೇಪಲ್ಸ್ ಗರ್ಭಿಣಿಯಾಗಿರುವ ತಮಾಷೆ ಮಾತುಕತೆಯೂ ಇತ್ತು. “ಟ್ರಂಪ್ ಜೊತೆಗೆ 10,000 ಡಾಲರ್ ಬೆಟ್ ಸೋತಿದ್ದೇನೆ. ಅದಕ್ಕಾಗಿ ಟ್ರಕ್ ತುಂಬಾ ಮಗುವಿನ ಆಹಾರ ಕಳುಹಿಸಿದ್ದೇನೆ” ಎಂದೂ ಇಬ್ಬರ ನಡುವಿನ ಮಾತುಕತೆಯ ವಿವರಗಳಲ್ಲಿ ಉಲ್ಲೇಖಗೊಂಡಿವೆ. ಬದಲಿಗೆ ಚೋಪ್ರಾ, “ನಾವು ಹಂಚಿಕೊಂಡ ಮಾಹಿತಿ ನಮ್ಮೊಳಗೇ ಇರುತ್ತದೆ. ನಾನು ಬೇರೆಯವರೊಂದಿಗೆ ಏನೂ ಹಂಚಿಕೊಳ್ಳುವುದಿಲ್ಲ, ಆದರೆ ನಿನ್ನ ಮೇಲೆ ನಂಬಿಕೆ ಇದೆ” ಎಂದು ಬರೆದಿದ್ದಾರೆ. 2016ರಲ್ಲಿ ನಡೆದ ಸಂಭಾಷಣೆಯೊಂದರಲ್ಲಿ ಟ್ರಂಪ್ ವಿರುದ್ಧ ಲೈಂಗಿಕ ಹಲ್ಲೆಯ ಸಿವಿಲ್ ಮೊಕದ್ದಮೆಯನ್ನು ಮಹಿಳೆ ಹಿಂತೆಗೆದುಕೊಂಡಿರುವ ಸುದ್ದಿಯ ಲಿಂಕ್ ಕಳುಹಿಸಲಾಗಿತ್ತು. ಅದಕ್ಕೆ ಉತ್ತರವಾಗಿ ದೀಪಕ್, “ನಿಮ್ಮ ವಿರುದ್ಧವೂ ಸಿವಿಲ್ ಕೇಸ್ ಹಿಂತೆಗೆದುಕೊಂಡಿದ್ದಾರೆಯೆ?” ಎಂದು ಪ್ರಶ್ನಿಸಿದ್ದಾರೆ. “ಹೌದು” ಎಂದು ಎಪ್ಸ್ಟೀನ್ ಉತ್ತರಿಸಿದಾಗ ದೀಪಕ್, “ಗುಡ್” ಎಂದು ಉತ್ತರಿಸಿದ್ದಾರೆ.
ದೇವೇಗೌಡರ ಭಾವುಕ ನುಡಿಗಳಿಗೆ ಮೌನವಾದ ರಾಜ್ಯಸಭೆ : ವಯಸ್ಸಾದರೂ ಕುಗ್ಗದ ’ನೀರಾವರಿ’ ಕಿಚ್ಚು
Deve Gowda On Karnataka Water Crisis: ರೈತರ ಪರವಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. 2047ಕ್ಕೆ ಭಾರತವು ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲವೆಂದು ದೇವೇಗೌಡರು ಹೇಳಿದರು. ಇದೇ ವೇಳೆ, ಕರ್ನಾಟಕದ ಕುಡಿಯುವ ನೀರಿನ ಮತ್ತು ನೀರಾವರಿ ಸಮಸ್ಯೆಯ ಬಗ್ಗೆ ರಾಜ್ಯಸಭೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿದರು.
ಮಂಗಳೂರು: ನಗರ ಹೊರವಲಯದ ನಾಯರ್ ಕುದ್ರು ಎಂಬಲ್ಲಿರುವ ಐಲ್ಯಾಂಡ್ ಡ್ರೀಮ್ಸ್ ರೆಸಾರ್ಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಸುನಿತಾ (46) ಎಂಬಾಕೆ ಫೆ.2ರಿಂದ ಕಾಣೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು ಕೆಲಸಕ್ಕೆ ಮನೆಯಿಂದ ಹೋದವರು ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 5.3 ಅಡಿ ಎತ್ತರದ, ಸಾಧಾರಣ ಶರೀರದ, ಎಣ್ಣೆ ಕಪ್ಪುಮೈಬಣ್ಣದ ಇವರು ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಬಿಳಿ ಬಣ್ಣದ ಗುಲಾಬಿ ಹೂವುಗಳಿರುವ ಚೂಡಿದಾರ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ತಿಳಿದಲ್ಲಿ ಠಾಣೆಗೆ ತಿಳಿಸುವಂತೆ ಪ್ರಕಟನೆ ತಿಳಿಸಿದೆ.
ಕಲಬುರಗಿ | ಪುರುಷರಂತೆ ಮಹಿಳೆಯರಿಗೆ ಸ್ಥಾನಮಾನ ಕೊಟ್ಟದ್ದು ಲಿಂಗಾಯತ ಧರ್ಮ: ಸಿದ್ದು ಯಾಪಲರವಿ
ಅರಿವಿನ ಮನೆ 886ನೇ ದತ್ತಿ ಕಾರ್ಯಕ್ರಮ
ಆಲೂರು: ಕೊರಗ ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ನೀಡುವಂತೆ ಮನವಿ
ಕುಂದಾಪುರ, ಫೆ.4: ಕೊರಗ ಸಮುದಾಯಕ್ಕೆ ಆಲೂರು ಹರ್ಕೂರು ಗ್ರಾಮದಲ್ಲಿ ಕಾದಿರಿಸಿದ ಭೂಮಿಗೆ ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಮಿತಿ ನಿಯೋಗವು ಬುಧವಾರ ಕುಂದಾಪುರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನೆಯಿಂದ ಕಳೆದ 2016ರಿಂದ ನಿರಂತರವಾಗಿ 10 ವರ್ಷಗಳ ಕಾಲ ಆಲೂರು-ಹರ್ಕೂರು ಗ್ರಾಮದಲ್ಲಿ ಲಭ್ಯವಿರುವ ಡಿ.ಸಿ ಮನ್ನಾ ಭೂಮಿ ಹಾಗೂ ಸರಕಾರಿ ಭೂಮಿಯಲ್ಲಿ ಡಾ.ಮಹಮ್ಮದ್ ಫೀರ್ ವರದಿ ಅನ್ವಯ ಕನಿಷ್ಠ ಒಂದು ಎಕರೆಯಂತೆ ಕೊರಗ ಕುಟುಂಬಗಳಿಗೆ ಭೂಮಿ ನೀಡಲು ಸಾಕಷ್ಟು ಬಾರಿ ಧರಣಿ, ಮನವಿ, ಹಕ್ಕೊತ್ತಾಯ ನಡೆಸುತ್ತ ಬಂದಿದೆ. ಈವರೆಗೆ ಭೂಮಿ ಹಕ್ಕು ಪಡೆಯಲು ವಿಳಂಬವಾಗಿದೆ. ಇದರಿಂದ ಆ ಕುಟುಂಬಗಳು ಕಾನೂನುಬದ್ಧ ಹಕ್ಕುಗಳಿಂದ ವಂಚಿತರಾಗಿ ಜೀವನೋಪಾಯ ಹಾಗೂ ವಾಸ ಸಂಬಂಧಿಸಿದ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ಆಲೂರು ಹಾಗೂ ಹರ್ಕೂರು ಗ್ರಾಮಗಳಲ್ಲಿ ಪರಿಶಿಷ್ಟ ಪಂಗಡ(ಕೊರಗ) ಸಮುದಾಯದ ಒಟ್ಟು 13 ಕುಟುಂಬಗಳಿಗೆ ಈಗಾಗಲೇ ಭೂಮಿಯನ್ನು ಗುರುತಿಸಲಾಗಿದ್ದು, ಸರ್ವೆ ಕಾರ್ಯ ನಡೆದು ಸರ್ವೇ ನಕ್ಷೆ ಹಾಗೂ ಮಹಜರು(ಪಂಚನಾಮೆ), ಹೇಳಿಕೆ ಇತರೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮಂಜೂರಾತಿಗೆ ಬೇಕಾದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೊರಗ ಕುಟುಂಬಗಳಿಗೆ ಭೂಮಿ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ(ಮಂಜೂರಾತಿ ಆದೇಶ/ ಸಾಗುವಳಿ ಚೀಟಿ) ಇನ್ನೂ ವಿಳಂಬ ಮಾಡದೆ ಕೂಡಲೇ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಸ್ವೀಕರಿಸಿದ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಶೀಘ್ರವೇ ಸ್ಥಳ ತನಿಖೆ ನಡೆಸಿ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ರಾಜ್ಯ ಸಮಿತಿ ಸದಸ್ಯ ಕೃಷ್ಣ ಇನ್ನಾ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಮಿತಿ ಸದಸ್ಯರಾದ ಪೂರ್ಣೇಶ್, ಮಾಲತಿ ಆಲೂರು, ಕೊರಗ ನಾರ್ಕಳಿ, ಜ್ಯೋತಿ ಆಲೂರು, ಮಂಜುನಾಥ ಆಲೂರು, ಶೇಖರ ಬ್ರಹ್ಮೇರಿ, ಚಂದ್ರವತಿ, ರೇಷ್ಮಾ ನಾಡ, ಕಾರ್ಮಿಕ ಸಂಘಟನೆಯ ಮುಖಂಡರಾದ ಸುರೇಶ್ ಕಲ್ಲಾಗರ, ಎಚ್.ನರಸಿಂಹ, ವಿ. ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.
ಯಂತ್ರ ಇಂಡಿಯಾ ಲಿಮಿಟೆಡ್ ನಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು; ಯಾರು ಅರ್ಜಿ ಸಲ್ಲಿಸಬಹುದು?
ಸರ್ಕಾರಿ ವಲಯದಲ್ಲಿ ವೃತ್ತಿ ಆರಂಭಿಸುವ ಆಸಕ್ತ ಅಭ್ಯರ್ಥಿಗಳಿಗೆ ಯಂತ್ರ ಇಂಡಿಯಾ ಲಿಮಿಟೆಡ್ 2026ರ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ತರಬೇತಿಯ ಅವಧಿಯಲ್ಲಿ ಮಾಸಿಕ ಭತ್ಯೆ ದೊರೆಯಲಿದೆ. ಯಂತ್ರ ಇಂಡಿಯಾ ಲಿಮಿಟೆಡ್ 2026ರ ಸಾಲಿಗೆ 3,979 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಐಟಿಐ ಉತ್ತೀರ್ಣರು ಹಾಗೂ 10ನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಗೂ ಅವಕಾಶವಿದೆ. ಫೆಬ್ರವರಿ 1 ರಿಂದ ಮಾರ್ಚ್ 3ರವರೆಗೆ ಅರ್ಜಿ ಸಲ್ಲಿಸಬಹುದು. ತರಬೇತಿಯ ಅವಧಿಯಲ್ಲಿ ಮಾಸಿಕ ಭತ್ಯೆ ದೊರೆಯಲಿದ್ದು, ಸರ್ಕಾರಿ ವಲಯದಲ್ಲಿ ವೃತ್ತಿ ಆರಂಭಿಸಲು ಇದು ಉತ್ತಮ ಅವಕಾಶ. ಈ ನೇಮಕಾತಿ 59ನೇ ಬ್ಯಾಚ್ ಅಡಿಯಲ್ಲಿ ನಡೆಯಲಿದ್ದು, ಅಭ್ಯರ್ಥಿಗಳಿಗೆ 1961ರ ಅಪ್ರೆಂಟಿಸ್ಶಿಪ್ ಕಾಯ್ದೆಯಡಿ ಕೌಶಲ್ಯ ಆಧಾರಿತ ತರಬೇತಿ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಲಾದ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದು: https://www.recruit-gov.com/Yantra2024/ ಪ್ರಮುಖ ದಿನಾಂಕಗಳು • ಅಧಿಸೂಚನೆ ದಿನಾಂಕ: 24 ಜನವರಿ 2026 • ಆನ್ಲೈನ್ ಅರ್ಜಿ ಆರಂಭ: 01 ಫೆಬ್ರವರಿ 2026 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಮಾರ್ಚ್ 2026 • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 03 ಮಾರ್ಚ್ 2026 • ತಿದ್ದುಪಡಿ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು. • ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು • ಫಲಿತಾಂಶದ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು. • ವಿವರಗಳಿಗೆ ಅಭ್ಯರ್ಥಿಗಳು ಯಂತ್ರ ಇಂಡಿಯಾ ಲಿಮಿಟೆಡ್ ನ ಅಧಿಕೃತ ವೆಬ್ ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ► ಅರ್ಜಿ ಪ್ರಕ್ರಿಯೆ ಯಂತ್ರ ಇಂಡಿಯಾದ ಟ್ರೇಡ್ ಅಪ್ರೆಂಟಿಸ್ ನೇಮಕಾತಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ 2026 ಫೆಬ್ರವರಿ 1 ರಂದು ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 03 ಆಗಿದ್ದು, ರಾತ್ರಿ 11:59ರ ವರೆಗೆ ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ಯಂತ್ರ ಇಂಡಿಯಾದ ಅಧಿಕೃತ ನೇಮಕಾತಿ ವೆಬ್ಸೈಟ್ಗೆ ಭೇಟಿ ನೀಡಿ ಮೊದಲು ನೋಂದಣಿ ಮಾಡಬೇಕು. ನಂತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಫೋಟೋ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ► ಹುದ್ದೆಗಳ ವಿವರ ಈ ನೇಮಕಾತಿಗೆ ಒಟ್ಟು 3,979 ಹುದ್ದೆಗಳು ನಿಗದಿಪಡಿಸಲಾಗಿದೆ. ಇದರಲ್ಲಿ 2,843 ಹುದ್ದೆಗಳು ಮಾಜಿ ಐಟಿಐ ಟ್ರೇಡ್ ಅಪ್ರೆಂಟಿಸ್ಗಳಿಗೆ, 1,136 ಹುದ್ದೆಗಳು ಐಟಿಐ ಅಲ್ಲದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ತರಬೇತಿ ದೇಶದ ವಿವಿಧ ರಾಜ್ಯಗಳಲ್ಲಿರುವ ಯಂತ್ರ ಇಂಡಿಯಾ ಕಾರ್ಖಾನೆಗಳಲ್ಲಿ ನಡೆಯಲಿದೆ. ► ಶೈಕ್ಷಣಿಕ ಅರ್ಹತೆ ಐಟಿಐ ಅಲ್ಲದ ಅಭ್ಯರ್ಥಿಗಳು 10ನೇ ತರಗತಿಯನ್ನು ಒಟ್ಟಾರೆಯಾಗಿ ಕನಿಷ್ಠ ಶೇ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜೊತೆಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇ 40 ಅಂಕಗಳು ಕಡ್ಡಾಯ. ಮಾಜಿ ಐಟಿಐ ಅಭ್ಯರ್ಥಿಗಳು NCVT ಅಥವಾ SCVT ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಉತ್ತೀರ್ಣರಾಗಿರಬೇಕು. 10ನೇ ತರಗತಿಯಲ್ಲಿ ಹಾಗೂ ಐಟಿಐನಲ್ಲಿ ಎರಡೂ ಕಡೆ ಕನಿಷ್ಠ ಶೇ 50 ಅಂಕಗಳು ಇರಬೇಕು. ► ಅರ್ಜಿ ಶುಲ್ಕ ಮತ್ತು ಮಾಸಿಕ ಭತ್ಯೆ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 200 ರೂ. + ಜಿಎಸ್ಟಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್ಸಿ, ಎಸ್ಟಿ, ಮಹಿಳೆಯರು, ಅಂಗವಿಕಲರು ಹಾಗೂ ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ 100 ರೂ. + ಜಿಎಸ್ಟಿ ಮಾತ್ರ ಶುಲ್ಕವಿದೆ. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಆಯ್ಕೆಯಾದ ಅಪ್ರೆಂಟಿಸ್ಗಳಿಗೆ ತಿಂಗಳಿಗೆ 8,200 ರೂ. ರಿಂದ 9,600 ರೂ. ವರೆಗೆ ಮಾಸಿಕ ಭತ್ಯೆ ನೀಡಲಾಗುತ್ತದೆ. ► ಆಯ್ಕೆ ಪ್ರಕ್ರಿಯೆ ಅಭ್ಯರ್ಥಿಗಳ ಆಯ್ಕೆ ಅಂಕಗಳ ಆಧಾರದ ಮೇಲೆ ತಯಾರಿಸಲಾದ ಮೆರಿಟ್ ಪಟ್ಟಿಯ ಮೂಲಕ ನಡೆಯಲಿದೆ. ಆಯ್ಕೆಯು ಕಾರ್ಖಾನೆವಾರು ಮತ್ತು ವ್ಯಾಪಾರವಾರು ಆಗಿರುತ್ತದೆ. ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಮೂಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಕಾಪು, ಫೆ.4: ಮುಸ್ಲಿಂ ಎಜುಕೇಶನಲ್ ಇನ್ಸಿಟ್ಯೂಶನ್(ಮೀಫ್) ಉಡುಪಿ ಘಟಕ, ಅಲ್-ಇಹ್ಸಾನ್ ಗ್ರೂಪ್ ಆಫ್ ಎಜುಕೇಶನಲ್ ಇನ್ಸಿಟ್ಯೂಷನ್ ಡಿಕೆಎಸ್ಸಿ ಮೂಳೂರು ಮತ್ತು ಜಂಇಯ್ಯತುಲ್ ಫಲಾಹ್ ಕಾಪು ಶಾಖೆಯ ಸಹಯೋಗದೊಂದಿಗೆ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ವನ್ನು ಬುಧವಾರ ಆಯೋಜಿಸಲಾಗಿತ್ತು. ಕಾರ್ಯಾಗಾರವನ್ನು ಅಲ್-ಇಹ್ಸಾನ್ನ ಪ್ರಧಾನ ವ್ಯವಸ್ಥಾಪಕ ಮೌಲಾನಾ ಯು.ಕೆ.ಮುಸ್ತಫಾ ಸಅದಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೀಫ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಅಕ್ರಮ್ ಮೌಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೀಫ್ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಶಬೀ ಅಹ್ಮದ್ ಖಾಝಿ, ಜಂ ಇಯ್ಯತುಲ್ ಫಲಾಹ್ ಕಾಪು ಶಾಖೆಯ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್, ಅಲ್-ಇಹ್ಸಾನ್ ಮುಖ್ಯ ಸಲಹೆಗಾರ ಅನ್ವರ್ ಹುಸೇನ್ ಗೂಡಿನಬಳಿ, ಮೀಫ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸ್ಲಂ ಹೈಕಾಡಿ, ಅಲ್-ಇಹ್ಸಾನ್ ಕ್ಯಾಂಪಸ್ಸಿನ ಮುಖ್ಯಾಧಿಕಾರಿ ಪ್ರೊ.ಯೂಸುಫ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೊಯ್ಯಾರು ಶಾಲೆಯ ಮುಖ್ಯೋಪಾಧ್ಯಾಯ, ಗಣಿತ ಶಿಕ್ಷಕ ಯಾಕುಬ್ ಎಸ್. ಕಾರ್ಯಾಗಾರ ನಡೆಸಿಕೊಟ್ಟರು. ಶಾಲಾ ಪ್ರಾಂಶುಪಾಲ ಹಬೀಬ್ ರಹಮಾನ್ ಸ್ವಾಗತಿಸಿ ದರು. ಪ್ರೌಢಶಾಲಾ ಮೇಲ್ವಿಚಾರಕ ಖಲಂದರ್ ಶಫಿ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಮತ್ತು ಕಾಪು ತಾಲೂಕಿನ 5 ಪ್ರೌಢ ಶಾಲೆಗಳ ಒಟ್ಟು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಾಮರಾಜನಗರ| ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಗುಂಡ್ಲುಪೇಟೆ-ಕೇರಳ ಮುಖ್ಯ ರಸ್ತೆಯ ಮಲ್ಲಯ್ಯನಪುರ ಗೇಟ್ ಬಳಿ ಇರುವ ಶೆಡ್ನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ವಾರಸುದಾರರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ. ಮೃತ ವ್ಯಕ್ತಿಯು 40 ರಿಂದ 45ರ ಹರೆಯದವರಾಗಿದ್ದು, ಕಂದು ಬಣ್ಣದ ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುವುದು ಕಂಡು ಬಂದಿದೆ. ವಾರಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಗುಂಡ್ಲುಪೇಟೆ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತದಿಂದ ರೈತರ ಬೇಡಿಕೆಗೆ ಪೂರ್ಣ ಸಹಮತ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.
ಬೈಂದೂರು ರೈತರ ಧರಣಿ 135ನೇ ದಿನಕ್ಕೆ: ಸ್ಥಳಕ್ಕೆ ಉಡುಪಿ ಡಿಸಿ ಭೇಟಿ
ಬ್ರಹ್ಮಾವರ: ಮಟಪಾಡಿ ಶಿವರಾಮ ಶೆಟ್ಟಿ ರಸ್ತೆ ಲೋಕಾರ್ಪಣೆ
ಬ್ರಹ್ಮಾವರ, ಫೆ.4: ಇಲ್ಲಿನ ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟಪಾಡಿ ರಸ್ತೆಗೆ ಸ್ವಾತಂತ್ರ್ಯ ಹೋರಾಟ ಗಾರ, ಗಾಂಧಿವಾದಿ ದಿ. ಮಟಪಾಡಿ ಶಿವರಾಮ ಶೆಟ್ಟಿ ಹೆಸರಿನ ನಾಮಕರಣ ಮಾಡಿ ಲೋಕಾರ್ಪಣೆ ಗೊಳಿಸಲಾಯಿತು. ಮಟಪಾಡಿ ಶಿವರಾಮ ಶೆಟ್ಟಿ ಅವರು ಈ ರಸ್ತೆಗಾಗಿ ಸ್ಥಳ ದಾನ ಮಾಡಿದ್ದು, ಅವರ 10ನೇ ಪುಣ್ಯ ತಿಥಿಯ ಸಂದರ್ಭ ಅವರನ್ನು ಹೆಸರನ್ನೇ ಈ ರಸ್ತೆಗಿರಿಸಲಾಯಿತು. ಮಟಪಾಡಿ ಕುಟುಂಬದ ಹಿರಿಯರಾದ ನಿವೃತ್ತ ವಲಯ ಶಿಕ್ಷಣಾಧಿ ಕಾರಿ ಮಹಾಬಲ ಶೆಟ್ಟಿ ಅವರು ರಸ್ತೆಯನ್ನು ಲೋಕಾರ್ಪಣೆ ಗೊಳಿಸಿದರು. ಪಂಚಾಯತು ಅಧ್ಯಕ್ಷೆ ಶಾರದಾ ಪೂಜಾರಿ, ಉಪಾಧ್ಯಕ್ಷ ಅಶೋಕ್ ಪೂಜಾರಿ ಹಾಗೂ ಇತರ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಬಳಿಕ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ, ದಲಿತ ಸಮುದಾಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಟಪಾಡಿ ಶಿವರಾಮ ಶೆಟ್ಟಿ, ಆ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ್ದ ಗಾಂಧಿ ತತ್ವಗಳನ್ನು ಜೀವನದಲ್ಲಿ ವಾಸ್ತವವಾಗಿ ಅಳವಡಿಸಿಕೊಂಡಿದ್ದರು. ಶಿವರಾಮ ಶೆಟ್ಟಿ ಅವರ ಬದುಕು ಇಂದಿನ ಯುವ ಜನತೆಗೆ ಪ್ರೇರಣೆಯಾಗಿದೆ ಎಂದರು. ಶಿವರಾಮ ಶೆಟ್ಟಿ ಅವರ ಪುತ್ರ ಭಾರತೀಯ ರೆಡ್ಕ್ರಾಸ್ ಕರ್ನಾಟಕ ಘಟಕದ ಸಭಾಪತಿಗಳಾದ ಬಸ್ರೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿವರಾಮ ಶೆಟ್ಟಿ ಅವರ ಬದುಕಿನ ಮುಖ್ಯ ಮಜಲುಗಳನ್ನು ವಿವರಿಸಿದರು. ಮಟಪಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಪೂಜಾರಿ ಶುಭ ಹಾರೈಸಿದರು. ಮನೋಜ್ ಶೆಟ್ಟಿ, ಡಾ. ಸುರೇಂದ್ರ ಶೆಟ್ಟಿ, ಪುತ್ರ ಜಯಪ್ರಕಾಶ್ ಶೆಟ್ಟಿ ಮಾತಾನಾಡಿದರು. ಮಾಜಿ ತಾಲೂಕು ಪಂಚಾಯತು ಸದಸ್ಯ ಸುಧೀರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಡಾ. ದೇವದಾಸ್ ಶೆಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ದಿ. ಶಿವರಾಮ ಶೆಟ್ಟಿ ಅವರ ಮಕ್ಕಳು, ಕುಟುಂಬ ಸದಸ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ಶಿವರಾಮ ಶೆಟ್ಟಿ ಅವರ ಹತ್ತನೇ ಪುಣ್ಯ ತಿಥಿಯ ಅಂಗವಾಗಿ 20 ದಲಿತ ಕುಟುಂಬ ಗಳಿಗೆ ಮೂರುವರೆ ಲಕ್ಷ ರೂಪಾಯಿಗಳ ಗೃಹಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ಕಲಿಕೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 3 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಯಚೂರು | ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ವಿಫಲ: ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ
ರಾಯಚೂರು :ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸಮಾಜದ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜ ವತಿಯಿಂದ ನಗರದ ಗ್ರಾಮೀಣ ಶಾಸಕ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಹಿಂದುಳಿದ ಪ್ರವರ್ಗ–1ಕ್ಕೆ ಸೇರಿದ ಕೋಲಿ, ಕಬ್ಬಲಿಗ ಜನಾಂಗದ ತಳವಾರರು, ಪರಿಶಿಷ್ಟ ಪಂಗಡದ ನಾಯಕ, ನಾಯ್ಕಡ ತಳವಾರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳು ಹಾಗೂ ಸಿಂಧತ್ವಗಳನ್ನು ಪಡೆದುಕೊಳ್ಳುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಈ ಅಕ್ರಮವನ್ನು ತಡೆಯಲು ಶಾಸಕರು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಾಲೇಜು ಮತ್ತು ಉನ್ನತ ಶಿಕ್ಷಣದಲ್ಲಿ ನೀಡಬೇಕಾದ ವಿದ್ಯಾರ್ಥಿವೇತನ, ಪ್ರೋತ್ಸಾಹ ಧನ ಹಾಗೂ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಜೊತೆಗೆ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸುತ್ತಿರುವ ಹಾಗೂ ಸ್ನಾತಕೋತ್ತರ ಪದವಿ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾಸಿಕ ವೇತನ ಮತ್ತು ವಸತಿ ಭತ್ಯೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಇದಲ್ಲದೆ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ನಕಲಿ ಜಾತಿ ಪ್ರಮಾಣ ಪತ್ರಗಳ ಕುರಿತು ಸ್ವತಂತ್ರ ತನಿಖೆ ನಡೆಸಲು ಮತ್ತು ಸ್ವಯಂಪ್ರೇರಿತ (ಸೋಮೋಟೋ) ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮರೆಪ್ಪ ದೊರೆ, ಲಿಂಗಣ್ಣ, ಯಲ್ಲಪ್ಪ, ಮಲ್ಲಿಕಾರ್ಜುನ, ರೂಪ ಶ್ರೀನಿವಾಸ ನಾಯಕ, ರಾಮು ನಾಯಕ, ಮಾರೆಪ್ಪ ನಾಯಕ, ಗೋಪಾಲ ನಾಯಕ ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಸದಸ್ಯರು ಭಾಗವಹಿಸಿದ್ದರು.
ಶಿವರಾತ್ರಿಗೆ ಮಹದೇಶ್ವರ ಬೆಟ್ಟ ಸಜ್ಜು ; ಚೆಕ್ಪೋಸ್ಟ್ನಲ್ಲೇ ಪ್ಲಾಸ್ಟಿಕ್ಗೆ ಕಡಿವಾಣ
ಫೆ.14 ರಿಂದ 18 ರವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕಾಗಿ ಶ್ರೀ ಕ್ಷೇತ್ರದಲ್ಲಿ ಸಿದ್ಧತಾ ಕಾರ್ಯಗಳು ಜೋರಾಗಿ ಸಾಗಿವೆ. ಜಾತ್ರಾ ಮಹೋತ್ಸವಕ್ಕೆ 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವಿಧಾನಸಭೆ ಅಧಿವೇಶನ| ಸಚಿವ ತಿಮ್ಮಾಪುರ್ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು: ಧರಣಿ-ಗದ್ದಲ
ಬೆಂಗಳೂರು, ಫೆ. 4: ಅಬಕಾರಿ ಲಂಚ ಪ್ರಕರಣದ ಆರೋಪ ಹಿನ್ನೆಲೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ್ ರಾಜೀನಾಮೆಗೆ ಪಟ್ಟುಹಿಡಿದು ಬಿಜೆಪಿ-ಜೆಡಿಎಸ್ ಸದಸ್ಯರು, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರಿಸಿದರು. ಈ ಮಧ್ಯೆ ಕೇಂದ್ರ ಸರಕಾರ ಜಾರಿಗೆ ತಂದಿರುವ ‘ವಿಬಿ-ಜಿ ರಾಮ್ ಜಿ’ ಕಾಯ್ದೆ ರದ್ದುಗೊಳಿಸಿ, ‘ಮನರೇಗಾ’ ಮರು ಜಾರಿಗೆ ಆಡಳಿತ ಪಕ್ಷದ ಸದಸ್ಯರು ಒತ್ತಾಯ ಮಾಡಿದ್ದರಿಂದ ಸದನವು ಗದ್ದಲ-ಕೋಲಾಹಲಕ್ಕೆ ಸಾಕ್ಷಿಯಾಯಿತು. ನಿನ್ನೆ ರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸಿದ ಪ್ರತಿಪಕ್ಷ ಸದಸ್ಯರು, ವಿಧಾನಸಭೆಯಲ್ಲಿ ಬುಧವಾರ ಸದನ ಸಮಾವೇಶಗೊಂಡಾಗ ಧರಣಿ ನಡೆಸಿ ತಿಮ್ಮಾಪುರ್ ರಾಜೀನಾಮೆಗೆ ಆಗ್ರಹಿಸಿದರು. ‘ಕೋಟಿ ಕೋಟಿ ಲೂಟಿ, ಅಬಕಾರಿ ಸಚಿವರು ರಾಜೀನಾಮೆ ಕೊಡಲೇಬೇಕು. ಗೋವಿಂದ ಗೋವಿಂದ ಕೋಟಿ ಕೋಟಿ ಗೋವಿಂದ’ ಎಂಬ ಘೋಷಣೆ ಕೂಗಿದರು. ಸ್ಪೀಕರ್ ಯು.ಟಿ.ಖಾದರ್ ಧರಣಿಯನ್ನು ಕೈಬಿಟ್ಟು ವಿಪಕ್ಷ ಸದಸ್ಯರು ತಮ್ಮ ಸ್ಥಾನಕ್ಕೆ ತೆರಳಲು ಮನವಿ ಮಾಡಿಕೊಂಡರೂ ಧರಣಿ ಕೈಬಿಡದೆ ರಾಜೀನಾಮೆ ಕೊಡಲೇಬೇಕು, ಅಬಕಾರಿ ಇಲಾಖೆಯಲ್ಲಿ ಲೂಟಿ ಲೂಟಿ ಎಂಬ ಘೋಷಣೆಗಳನ್ನು ಕೂಗಿದರು. ಆಗ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಿನ್ನೆ ಸದನದಲ್ಲಿ 6 ಸಾವಿರ ಕೋಟಿ ರೂ.ಭ್ರಷ್ಟಾಚಾರಾದ ಆರೋಪಕ್ಕೆ ಸಂಬಂಧಿಸಿದ 5 ದಾಖಲೆಗಳನ್ನು ನೀಡಿದ್ದೇವೆ. ಸಚಿವ ಸ್ಥಾನಕ್ಕೆ ಆರ್.ಬಿ.ತಿಮ್ಮಾಪುರ ರಾಜೀನಾಮೆ ಕೊಡಬೇಕು. ಆರೋಪದ ಬಗ್ಗೆ ತನಿಖೆಯಾಗಬೇಕು. ನಿರ್ದೋಷಿ ಎಂದಾದರೆ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿ. ಈ ಹಿಂದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು. ಕೆ.ಎಸ್.ಈಶ್ವರಪ್ಪ ಮೇಲೂ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು ಎಂದು ಉಲ್ಲೇಖಿಸಿದರು. ಈ ವೇಳೆ ಮಧ್ಯೆಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ, ‘ಅಸೋಸಿಯೇಷನ್ನವರು ಹೇಳಿರುವುದು ಸಾಕ್ಷಿಯಾಗುತ್ತದೆಯೇ?, ನಿಮ್ಮ ಆರೋಪ ಜನ ಒಪ್ಪುತ್ತಾರೆಯೇ? 6ಸಾವಿರ ಕೋಟಿ ರೂ. ಲೂಟಿ ಆರೋಪಕ್ಕೆ ಆಧಾರವೆಲ್ಲಿದೆ? ಧರಣಿ ಮಾಡಿ ಸದನಕ್ಕೆ ಅಡ್ಡಿಪಡಿಸುತ್ತಿರುವವರನ್ನು ಹೊರಹಾಕಿ ಎಂದು ಆಗ್ರಹಿಸಿದರು. ಸ್ಪೀಕರ್ ಯು.ಟಿ.ಖಾದರ್, ‘ನಿಯಮಬದ್ದವಾಗಿ ಪ್ರತಿಭಟನೆ ಮಾಡಿ. ಇಂದು ರಾತ್ರಿ 12 ಗಂಟೆಯವರೆಗೂ ಅಧಿವೇಶನ ನಡೆಯಲಿದೆ’ ಎಂದರು. ಆದರೂ ಧರಣಿನಿರತ ಪ್ರತಿಪಕ್ಷಗಳ ಸದಸ್ಯರ ತಮ್ಮ ಧರಣಿ ಮುಂದುವರೆಸಿ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಿಮ್ಮಾಪುರ ರಾಜೀನಾಮೆ ಆಗ್ರಹಿಸುತ್ತಾ, ಚಪ್ಪಾಳೆ ಬಡಿಯುತ್ತಾ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು. ಈ ನಡುವೆ ‘ಮನರೇಗಾ’ ಮರು ಜಾರಿಗೆ ಆಗ್ರಹಿಸಿ ಆಡಳಿತ ಪಕ್ಷದ ಸದಸ್ಯರಾದ ಎನ್.ಎಚ್.ಕೋನರೆಡ್ಡಿ, ಶರತ್ ಬಚ್ಚೇಗೌಡ, ಬಿಜೆಪಿಯ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು. ಪ್ರತಿಪಕ್ಷಗಳು ಘೋಷಣೆ ಕೂಗುತ್ತಾ ಮುಂದುವರಿಸಿದವು. ಇದರಿಂದ ಸದನದಲ್ಲಿ ಗದ್ದಲ-ಗೊಂದಲದ ವಾತಾವರಣ ಮುಂದುವರೆದಿದ್ದರಿಂದ ಸ್ಪೀಕರ್ ಪೀಠದಲ್ಲಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಸದನದ ಕಲಾಪವನ್ನು 10 ನಿಮಿಷ ಮುಂದೂಡಿದರು.
ಕಿವಿ ಮಾತ್ರವಲ್ಲ, ಪಾದವೂ ಕಿವಿ: ಆನೆಗಳ ಅಚ್ಚರಿ ರಹಸ್ಯ!
ಭೂಮಿಯ ಮೂಲಕ ಕಂಪನಗಳನ್ನು ಗ್ರಹಿಸುವ ಮೂಲಕ ಆನೆಗಳು ಪರಸ್ಪರ ಸಂವಹನ ಮಾಡಬಲ್ಲವು. ಅಪಾಯವನ್ನು ಗ್ರಹಿಸಿ ಸುರಕ್ಷಿತ ಪ್ರದೇಶಗಳಿಗೆ ಸಾಗಬಲ್ಲವು. ಕೇಳುವ ಬಗ್ಗೆ ಆಲೋಚನೆ ಬಂದಾಗ ನಮಗೆ ಮೊದಲು ಕಿವಿಯ ದೃಶ್ಯವೇ ಕಣ್ಣಮುಂದೆ ಬರುತ್ತದೆ. ಆದರೆ, ಭೂಮಿಯ ಮೇಲಿರುವ ಅತಿ ದೈತ್ಯ ಪ್ರಾಣಿಗಳಾಗಿರುವ ಆನೆಗಳು ತಮ್ಮ ಇಡೀ ದೇಹವನ್ನೇ ಕಿವಿಯಾಗಿಸಿಕೊಂಡಿವೆ ಎನ್ನುವುದು ನಿಮಗೆ ಗೊತ್ತೆ? ತಮ್ಮ ದೊಡ್ಡ ಕಿವಿಗಳನ್ನು ಬಳಸುವ ಜೊತೆಗೆ ಆನೆಗಳು ತಮ್ಮ ಕಾಲಿನ ಮೂಲಕವೂ ಕಂಪನವನ್ನು ಸ್ವೀಕರಿಸುತ್ತವೆ. ಇದರಿಂದಾಗಿ ಬಹಳ ದೂರದಿಂದಲೇ ಕರೆಗಳನ್ನು ಗ್ರಹಿಸುತ್ತವೆ, ಬಿರುಗಾಳಿ–ಚಂಡಮಾರುತಗಳ ಬಗ್ಗೆ ತಿಳಿದುಕೊಳ್ಳುತ್ತವೆ ಮತ್ತು ಆತಂಕಗಳನ್ನೂ ದೂರದಿಂದಲೇ ಗಮನಿಸುತ್ತವೆ. ಅವುಗಳ ಅಸ್ತಿತ್ವಕ್ಕೆ, ಸಂವಹನಕ್ಕೆ ಮತ್ತು ಸಾಮಾಜಿಕ ಜೀವನಕ್ಕೆ ಈ ವಿಶೇಷ ಕೌಶಲ್ಯಗಳನ್ನು ಅವು ಬಳಸಿಕೊಳ್ಳುತ್ತವೆ. ► ಕಿವಿಗಳ ಮೂಲಕ ಹೇಗೆ ಕೇಳುತ್ತವೆ? ಮಾನವರ ಕಿವಿಗೆ ಕೇಳಿಬರದ ಇನ್ಫ್ರಾಸೌಂಡ್ ಎನ್ನುವ ಕಡಿಮೆ ಫ್ರೀಕ್ವೆನ್ಸಿ ಇರುವ ಧ್ವನಿಗಳಿಗೆ ಆನೆಗಳು ಪ್ರತಿಸ್ಪಂದಿಸುತ್ತವೆ. ಈ ಆಳವಾದ ಗುಡುಗುಟ್ಟುವ ಸದ್ದು ಗಾಳಿಯಲ್ಲಿ ಮತ್ತು ಭೂಗತವಾಗಿ ಹಲವು ಕಿಲೋಮೀಟರ್ಗಳವರೆಗೆ ಸಾಗಬಲ್ಲದು. ವನ್ಯಜೀವಿ ಸಂಶೋಧಕರು ಹೇಳುವ ಪ್ರಕಾರ, ಆನೆಗಳು ಕಡಿಮೆ ಫ್ರೀಕ್ವೆನ್ಸಿಯ ಕರೆಗಳನ್ನು ಮಾಡಿದಾಗ ಧ್ವನಿ ಗಾಳಿಯ ಮೂಲಕ ಮಾತ್ರವಲ್ಲದೆ ಭೂಕಂಪಗಳ ಕಂಪನಗಳ ರೀತಿಯಲ್ಲಿ ಭೂಮಿಯಾದ್ಯಂತ ಪ್ರಯಾಣಿಸುತ್ತದೆ. ಆನೆಗಳು ವಿಶೇಷ ಇಂದ್ರಿಯ ಕೋಶಗಳ ಮೂಲಕ ಇವುಗಳ ಸಂವೇದನೆಯನ್ನು ಪಡೆಯುತ್ತವೆ. ಮುಖ್ಯವಾಗಿ ಅವುಗಳ ಪಾದಗಳ ಅಡಿಭಾಗದಲ್ಲಿರುವ ದಪ್ಪನೆಯ ಪಂಜಗಳ ಮೂಲಕ ಕಂಪನಗಳನ್ನು ಗ್ರಹಿಸುತ್ತವೆ. ► ಸಂವೇದನ ಗ್ರಹಿಸುವ ಪಾದ! ಆನೆಯ ಪಾದ ಮುಖ್ಯವಾಗಿ ಸಂವೇದನೆ ಗ್ರಹಿಸುವುದಕ್ಕಾಗಿಯೇ ನಿರ್ಮಾಣವಾಗಿದೆ. ದಪ್ಪನೆಯ ಚರ್ಮದ ಅಡಿಯಲ್ಲಿ ಕೊಬ್ಬಿನ ಅಂಗಾಂಶಗಳ ಒಂದು ಪದರ ಇರುತ್ತದೆ. ಅದು ಆಘಾತವನ್ನು ಸಹಿಸುವಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಕಂಪನಗಳನ್ನು ಹಿಗ್ಗಿಸುತ್ತದೆ. ಈ ಅಂಗಾಂಶದ ಒಳಗೆ ಸಂವೇದನೆ ಗ್ರಹಿಸುವ ಹಾಗೂ ಒತ್ತಡ ಮತ್ತು ಕಂಪನಕ್ಕೆ ಅತಿ ಸೂಕ್ಷ್ಮವಾಗಿರುವ ಪಾಸಿನಿಯನ್ ಕಾರ್ಪಸ್ಕಲ್ಸ್ಗಳು ಇರುತ್ತವೆ. ಕಂಪನಗಳನ್ನು ಗ್ರಹಿಸಿದ ತಕ್ಷಣ ಅವು ಮೂಳೆಗಳು ಮತ್ತು ನರವ್ಯೂಹಗಳ ಮೂಲಕ ಒಳಕಿವಿಗೆ ಪ್ರಸಾರವಾಗುತ್ತವೆ. ಅಲ್ಲಿ ಆನೆಗಳ ಮೆದುಳು ಆ ಗ್ರಹಿಕೆಯನ್ನು ಧ್ವನಿಯಾಗಿ ಪ್ರಕ್ರಿಯೆಗೊಳಿಸುತ್ತದೆ. ಹೀಗೆ ಆನೆಗಳು ಕಿವಿಗಳಿಂದ ಮಾತ್ರ ಕೇಳುವುದಿಲ್ಲ, ಬದಲಾಗಿ ನೆಲದಿಂದಲೂ ಧ್ವನಿಗಳನ್ನು ಗ್ರಹಿಸುತ್ತವೆ. ► ಈ ವಿಶೇಷ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳುತ್ತವೆ? * ದೀರ್ಘ ದೂರದ ಸಂವಹನ: ದೃಶ್ಯ ಸಂಪರ್ಕ ಅಸಾಧ್ಯವಾಗಿದ್ದಾಗಲೂ ಹಿಂಡುಗಳು ವಿಶಾಲವಾದ ಭೂಪ್ರದೇಶಗಳಲ್ಲಿ ಸಂಪರ್ಕದಲ್ಲಿರಬಹುದು. * ಆರಂಭಿಕ ಎಚ್ಚರಿಕೆ ವ್ಯವಸ್ಥೆ: ಸಮೀಪಿಸುತ್ತಿರುವ ಪರಭಕ್ಷಕಗಳು, ಮಾನವರು ಅಥವಾ ಪ್ರತಿಸ್ಪರ್ಧಿ ಹಿಂಡುಗಳನ್ನು ಕಾಣುವ ಮೊದಲೇ ಪತ್ತೆಹಚ್ಚುತ್ತವೆ. * ಪರಿಸರ ಜಾಗೃತಿ: ದೂರದ ಗುಡುಗು ಸಹಿತ ಮಳೆ ಅಥವಾ ಮಳೆಯಿಂದ ಬರುವ ಕಂಪನಗಳಿಂದ ನೀರನ್ನು ಪತ್ತೆಹಚ್ಚುತ್ತವೆ. ಶುಷ್ಕ ಪ್ರದೇಶಗಳಲ್ಲಿ ನೀರು ಪತ್ತೆಹಚ್ಚಲು ಇವು ನಿರ್ಣಾಯಕವಾಗಿರುತ್ತವೆ. * ಭೂಕಂಪನಗಳ ಸಂದರ್ಭ: ಭೂಕಂಪನಗಳಾದಾಗ ಆನೆಗಳು ದೂರ ಚಲಿಸುವುದು, ಗುಂಪುಗೂಡುವುದು ಅಥವಾ ಸಂಕೇತಗಳಿಗೆ ಪ್ರತಿಕ್ರಿಯಿಸುವುದು ಅಧ್ಯಯನಗಳಿಂದ ತಿಳಿದುಬಂದಿದೆ. ► ಕಿವಿ–ಪಾದದ ವ್ಯವಸ್ಥೆ ಆನೆಗಳು ಪಾದಗಳಿಂದ ಸಿಗುವ ಮಾಹಿತಿಯನ್ನು ದೊಡ್ಡ ತಟ್ಟೆಯಾಕಾರದ ಕಿವಿಗಳಿಂದ ಬರುವ ಸಂಕೇತಗಳ ಜೊತೆಗೆ ಬಳಸಿಕೊಳ್ಳುತ್ತವೆ. ಕಡಿಮೆ ಫ್ರೀಕ್ವೆನ್ಸಿಯ ಶಬ್ದಗಳಿಗೆ ಬಹಳ ಸಂವೇದನೆ ಹೊಂದಿರುತ್ತವೆ. ಹೀಗೆ ಕಿವಿ–ಪಾದದ ಆಲಿಕೆ ವ್ಯವಸ್ಥೆ ಏನು ನಡೆಯುತ್ತಿದೆ ಎನ್ನುವುದನ್ನು ಮಾತ್ರವಲ್ಲದೆ ಎಲ್ಲಿ ನಡೆಯುತ್ತಿದೆ ಎನ್ನುವುದನ್ನೂ ಗ್ರಹಿಸಲು ಸಾಧ್ಯವಾಗಿಸುತ್ತದೆ. ಮಾತ್ರವಲ್ಲದೆ, ಆನೆಗಳಿಗೆ ಸಾಮಾಜಿಕವಾಗಿ ಬೆರೆತು ಸಾಗಲು ಮತ್ತು ಕುಟುಂಬ ಸದಸ್ಯರೊಂದಿಗೆ ಒಂದಾಗಲು ಸೂಚನೆಗಳನ್ನು ರವಾನಿಸಲು ಸಹ ನೆರವಾಗುತ್ತದೆ. ಆದರೆ ಮಾನವರ ಪ್ರಕೃತಿಯ ಜೊತೆಗಿನ ಹಸ್ತಕ್ಷೇಪದಿಂದಾಗಿ ಆನೆಗಳ ಈ ಗ್ರಹಿಕೆಯ ಸಂವೇದನೆಗೆ ಅಡ್ಡಿ ಉಂಟಾಗಿದೆ. ಭಾರೀ ಯಂತ್ರಗಳು, ಗಣಿಗಾರಿಕೆ, ರಸ್ತೆ ಸಂಚಾರ ಮತ್ತು ನಿರ್ಮಾಣ ಕಾರ್ಯಗಳಿಂದ ನೆಲದಲ್ಲಿ ನಿರಂತರ ಕಂಪನಗಳಾಗುತ್ತವೆ. ಹೀಗಾಗಿ ಆನೆಗಳ ಭೂಕಂಪನ ಸಂವಹನದಲ್ಲಿ ಗೊಂದಲ ಉಂಟಾಗುತ್ತದೆ. ಇದು ಒತ್ತಡ, ಕಕ್ಕಾಬಿಕ್ಕಿಯಾಗುವುದು ಮತ್ತು ಬದಲಾದ ಚಲನೆಗೆ ಕಾರಣವಾಗಬಹುದು. ಮಾನವ–ಆನೆ ಸಂಘರ್ಷಕ್ಕೂ ಕಾರಣವಾಗಿರಬಹುದು.
ಮಂಗಳೂರು| ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ, ದಂಡ
ಮಂಗಳೂರು, ಫೆ.4: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬೆಳ್ತಂಗಡಿಯ ಶಂಕರ ಗೌಡ (60) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ- 1(ಪೊಕ್ಸೊ) ನ್ಯಾಯಾಲಯವು ಮಂಗಳವಾರ 8 ವರ್ಷದ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 2025ರ ಮಾರ್ಚ್ನಲ್ಲಿ ಶಂಕರಗೌಡ ತನಗೆ ಪರಿಚಯವಿದ್ದ ಬಾಲಕಿಯ ಮನೆಗೆ ತೆರಳಿ ಅಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ 1(ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್. ಆರೋಪಿಗೆ ಒಟ್ಟು 8 ವರ್ಷಗಳ ಶಿಕ್ಷೆ ವಿಧಿಸಿದ್ದಾರೆ. ಬಿಎನ್ಎಸ್ ಕಲಂ 74ರಡಿ 3 ವರ್ಷದ ಕಠಿಣ ಶಿಕ್ಷೆ ಮತ್ತು 20,000 ರೂ.ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಶಿಕ್ಷೆ, ಬಿಎನ್ಎಸ್ ಕಲಂ 75 (2)ರಡಿ 2 ವರ್ಷ ಕಠಿಣ ಶಿಕ್ಷೆ ಮತ್ತು 15,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಾದಾ ಸಜೆ, ಪೊಕ್ಸೊ ಕಾಯ್ದೆಯ ಕಲಂ 8 ರಡಿ 3 ವರ್ಷ ಕಠಿಣ ಶಿಕ್ಷೆ ಮತ್ತು 20,000 ರೂ.ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದಾರೆ. ಈ ಶಿಕ್ಷೆಗಳನ್ನು ಜತೆಯಾಗಿ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. *2 ಲ.ರೂ ಪರಿಹಾರ: ದಂಡದ ಮೊತ್ತದಲ್ಲಿ 50,000 ರೂ. ಅಲ್ಲದೆ 1.50 ಲ.ರೂ ಹೆಚ್ಚುವರಿ ಪರಿಹಾರವನ್ನು ಸಂತ್ರಸ್ತೆ ಬಾಲಕಿಗೆ ನೀಡಬೇಕು ಎಂದು ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಧರ್ಮಸ್ಥಳ ಠಾಣಾಧಿಕಾರಿಯಾಗಿದ್ದ ಸಮರ್ಥ್ ರವೀಂದ್ರ ಗಾಣಿಗೇರ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪೊಕ್ಸೊ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.
ಬೀದರ್ | ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಬೀದರ್ : ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗು ಉತ್ತಮ ಗುಣಮಟ್ಟದ ಔಷಧ ಲಭ್ಯವಾಗಬೇಕು. ಅದಕ್ಕಾಗಿ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಯಾಗಬೇಕು ಎಂದು ಆಗ್ರಹಿಸಿ ಅಲೆಮಾರಿ ಹೋರಾಟ ಸಮಿತಿ, ವಿಶ್ವಕ್ರಾಂತಿ ಧೀರ ಪೀಠದ ಬೆಂಬಲದೊಂದಿಗೆ ಡ್ರಗ್ ಆಕ್ಷನ್ ಫೋರಮ್ ಸಂಘಟನೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ನಗರದ ನೆಹರು ಕ್ರೀಡಾಂಗಣದಿಂದ ಪ್ರತಿಭಟನೆ ಮೂಲಕ ತೆರಳಿ ಮಡಿವಾಳ ವೃತ್ತದಲ್ಲಿ ಆರೋಗ್ಯ ಅರಿವಿನ ಕಲಾ ಜಾಥಾ ತಂಡದಿಂದ ಬೀದಿ ನಾಟಕದ ಮೂಲಕ ಜನ ಜಾಗೃತಿ ಮೂಡಿಸಲಾಯಿತು. ನಂತರ ಪ್ರತಿಭಟನೆ ಮೆರವಣಿಗೆ ಮೂಲಕ, ಘೋಷಣೆಗಳು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, 2024ರ ಡಿಸೆಂಬರ್ ನಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕಳಪೆ ಔಷಧಗಳಿಂದ ಹಲವಾರು ತಾಯಂದಿರ ಮರಣದ ನಂತರ, ಫೆಬ್ರವರಿ 2025ರಲ್ಲಿ 15 ಜಿಲ್ಲೆಗಳಲ್ಲಿ 'ಆರೋಗ್ಯ ಹಕ್ಕಿನ ಜಾಥಾ' ಹಮ್ಮಿಕೊಳ್ಳಲಾಗಿತ್ತು. ಈ ಜಿಲ್ಲೆಗಳಿಂದ ಸ್ಥಳೀಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಗಿತ್ತು. ಆದರೆ ಮನವಿಗೆ ಯಾವುದೇ ಉತ್ತರ ಬರದ ಕಾರಣ ಎಲ್ಲಾ 31 ಜಿಲ್ಲೆಗಳಲ್ಲಿ ಆರೋಗ್ಯ ಹಕ್ಕಿನ ಜಾಥಾ ಹಮ್ಮಿಕೊಂಡಿವೆ ಎಂದು ತಿಳಿಸಲಾಗಿದೆ. ಪ್ರತಿ ಸಲವೂ ಚಿಕಿತ್ಸೆಯ ಖರ್ಚಿನಲ್ಲಿ ಶೇ.60 ರಿಂದ 70 ರಷ್ಟು ಖರ್ಚು ಔಷಧಗಳ ಮೇಲೆ ಇರುತ್ತದೆ. ಈ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಸಿಗಬೇಕು ಎನ್ನುವುದು ನಮ್ಮ ಮೊದಲನೆಯ ಬೇಡಿಕೆಯಾಗಿದೆ. ಎಲ್ಲಾ ಸರ್ಕಾರಿ ವ್ಯವಸ್ಥೆಗಳಲ್ಲಿ ಪ್ರತಿಯೊಬ್ಬರಿಗೂ ಔಷಧಗಳು ಉಚಿತವಾಗಿ ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆಯ ವೈದ್ಯರು ಯಾವುದೇ ಕಾರಣಕ್ಕೂ ಔಷಧಗಳನ್ನು ಹೊರಗಡೆ ಖರೀದಿಸಲು ಚೀಟಿಯನ್ನು ಬರೆದು ಕೊಡಬಾರದು. ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಔಷಧಗಳ ಗುಣಮಟ್ಟ ಉತ್ತಮವಾಗಿ ಇರಬೇಕು ಎನ್ನುವ ಜವಾಬ್ದಾರಿ ಸರ್ಕಾರ ವಹಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆ ಜಾರಿಗೆ ತರಬೇಕು. ರಾಜ್ಯದ ಎಲ್ಲ ಲಿಂಗ, ವರ್ಗ ಜಾತಿಯವರ, ಬಡವರಿಗೆ, ಕಾರ್ಮಿಕರಿಗೆ, ದಲಿತ, ಆದಿವಾಸಿ ಸಮುದಾಯಗಳಿಗೆ, ಸ್ಲಂ ನಿವಾಸಿಗಳಿಗೆ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಆರೋಗ್ಯ ಹಕ್ಕಾಗಬೇಕು. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ವಿಶ್ವಕ್ರಾಂತಿ ಧೀರ ಪೀಠದ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ, ಜಗದೀಶ್ವರ್ ಬಿರಾದಾರ್, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರರಾದ ರಿಣಾ ಸಂಗಮ್, ಭೀಮಾ, ಅಲೆಮಾರಿ ಸಮುದಾಯದ ರಾಮಕ್ಕ, ಪೋಚಮ್ಮ, ಕೆಂಚಮ್ಮ ಹಾಗೂ ಶಾಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಂಗಳೂರು, ಫೆ.4: ಪೆಹಲ್ಗಾಮ್ ದಾಳಿಯಿಂದಾಗಿ ಈ ದೇಶದ 26 ಜನ ಅಮಾಯಕರು ಪ್ರಾಣತೆತ್ತರು. ಆಗ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಯಾಕೆ ಘೋಷಿಸಲಿಲ್ಲ. ಭಾರತದ ಗಡಿಯೊಳಗೆ ಭಯೋತ್ಪಾದಕರನ್ನು ಬಿಟ್ಟವರ್ಯಾರು? ಅವರು ಹೇಗೆ ಬಂದರು ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಬಿಜೆಪಿಗೆ ಪ್ರಶ್ನೆ ಹಾಕಿದರು. ಬುಧವಾರ ವಿಧಾನ ಪರಿಷತ್ ಕಲಾಪದಲ್ಲಿ ಪಾಕಿಸ್ತಾನ ಶತ್ರು ರಾಷ್ಟ್ರವೋ, ಇಲ್ಲ ಮಿತ್ರ ರಾಷ್ಟ್ರವೋ ಎಂಬುದರ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲವು ಭಾರಿ ಮಾತಿನ ಚಕಮಕಿಗೆ ಕಾರಣವಾಯಿತು. ಈ ವೇಳೆ ಬಿಜೆಪಿ ಸದಸ್ಯ ನವೀನ್ ಮಾತನಾಡಿ, ಕೆಲವರಿಗೆ ಪಾಕಿಸ್ತಾನದ ಮೇಲೆ ಅತಿಯಾದ ಪ್ರೇಮವಿದೆ. ಕೆಲವರು ಯಾವಾಗಲೂ ಪಾಕಿಸ್ತಾನವನ್ನು ಜಪಿಸುತ್ತಾರೆ. ಪಾಕಿಸ್ತಾನ ನಮಗೆ ಶತ್ರು ರಾಷ್ಟ್ರವಲ್ಲ. ಅದು ನಮ್ಮ ನೆರೆಯ ರಾಷ್ಟ್ರ ಎಂದು ಕಾಂಗ್ರೆಸ್ನ ಓರ್ವ ಹಿರಿಯ ಸದಸ್ಯರೇ ಹೇಳಿದ್ದಾರೆ. ಹಾಗಾಗಿ ಅವರಿಗೆ ಯಾವಾಗಲೂ ಪಾಕಿಸ್ತಾನ ಎಂದರೆ ಬಲು ಪ್ರೀತಿ ಎಂದು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿ.ಕೆ.ಹರಿಪ್ರಸಾದ್, ಕೇಂದ್ರದಲ್ಲಿ ನಿಮ್ಮದೇ(ಬಿಜೆಪಿ) ಸರಕಾರ ಅಧಿಕಾರದಲ್ಲಿದೆ. ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಎಂದು ಘೋಷಿಸಿಬಿಡಿ. ಶತ್ರು ರಾಷ್ಟ್ರ ಎಂದರೆ ಆ ದೇಶದ ಜೊತೆ ಯಾವುದೇ ರೀತಿಯ ವ್ಯಾಪಾರ-ವಹಿವಾಟು ನಡೆಸುವಂತಿಲ್ಲ. ಪಾಕಿಸ್ತಾನಕ್ಕೆ ಗೋ ಮಾಂಸದ ರಫ್ತು ಮಾಡುತ್ತಿರುವವರು ಯಾರು?, ಅಲ್ಲಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿರುವವರ್ಯಾರು? ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇದೆ. ಪಾಕಿಸ್ತಾನವನ್ನು ನಾಳೆ ಶತ್ರು ರಾಷ್ಟ್ರ ಎಂದು ಘೋಷಿಸಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಸವಾಲು ಹಾಕಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್ ಮಾತನಾಡಿ, ಪಾಕಿಸ್ತಾನದ ಬಗ್ಗೆ ನಮಗೆ ಯಾವುದೇ ಪ್ರೀತಿಯೂ ಇಲ್ಲ. ಪ್ರೇಮವೂ ಇಲ್ಲ. ಅಲ್ಲಿನ ಪ್ರಧಾನ ಮಂತ್ರಿ ನವಾಜ್ ಷರೀಫ್ರ ಮೊಮ್ಮಗನ ಹುಟ್ಟುಹಬ್ಬಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ನಿಮ್ಮ ಮೋದಿಯವರಲ್ಲವೇ? ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನು ಬಿಜೆಪಿ ಸದಸ್ಯ ಕಿಶೋರ್ ಶೆಟ್ಟಿ ಮಾತನಾಡುವ ವೇಳೆ ಪಾಕಿಸ್ತಾನದ ವಿರುದ್ಧ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯುದ್ಧವನ್ನೇ ಸಾರಿದರು. ಕಾರ್ಗಿಲ್ ವಶಪಡಿಸಿಕೊಂಡು ಭಾರತದ ತಾಕತ್ತು ಏನೆಂಬುದು ತೋರಿಸಿಕೊಟ್ಟಿದ್ದಾರೆ. ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದಾಗಲೂ ಆ ರಾಷ್ಟ್ರದ ವಿರುದ್ಧ ವಾಯು ದಾಳಿ ನಡೆಸಲಾಯಿತು ಎಂದಾಗ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು. ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆದಾಗ ಯಾವ ಸರಕಾರವಿತ್ತು? ನಿಮ್ಮ ಮೋದಿ ಸರಕಾರ ಅಲ್ಲವೇ ಎಂದು ಪ್ರತಿಪಕ್ಷವನ್ನು ಆಡಳಿತ ಪಕ್ಷದ ಸದಸ್ಯರು ಕಿಚಾಯಿಸಿದರು. ಕ್ರಿಕೆಟ್ ಆಡಲು ಯಾರು ಬಿಟ್ಟಿದ್ದು? ಭಾರತದ ಮೇಲೆ ಪದೇ ಪದೇ ದಾಳಿ ನಡೆಸುತ್ತಿರುವ ಪಾಕಿಸ್ತಾನದವರ ಜೊತೆ ಕ್ರಿಕೆಟ್ ಆಡುತ್ತಾರಲ್ಲ. ಇವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ದುಬೈನಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಲು ಯಾರು ಬಿಟ್ಟಿದ್ದು? ಬಿಸಿಸಿಐನಲ್ಲಿ ಸಾವಿರಾರು ಕೋಟಿ ರೂ. ಹಣವಿದೆ. ಆದರೂ, ಹಣದ ಆಸೆಗಾಗಿ ಕ್ರಿಕೆಟ್ ಆಡಿ ಇಡೀ ರಾಷ್ಟ್ರದ ಮಾನವನ್ನು ಹರಾಜು ಹಾಕಿದರು ಎಂದು ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘಪರಿವಾರದವರ ಹೆಸರು ‘ಇಂಡಿಯಾ ಗೇಟ್’ನಲ್ಲಿದೆಯೇ? ಬಿಜೆಪಿಯವರು ದಿಲ್ಲಿಯಲ್ಲಿರುವ ಇಂಡಿಯಾ ಗೇಟ್ ನೋಡಿಕೊಂಡು ಬನ್ನಿ. ಅಲ್ಲಿ 97 ಸಾವಿರ ಜನರ ಹೆಸರುಗಳಿವೆ. ಅದರಲ್ಲಿ 37 ಸಾವಿರ ಮುಸಲ್ಮಾನರೇ ಇದ್ದಾರೆ. 18 ಸಾವಿರ ಜನರು ಸಿಖ್ಖರು ಇದ್ದಾರೆ. ಜೊತೆಗೆ ಕ್ರೈಸ್ತರು ಇದ್ದಾರೆ. ತಾವು ದೇಶಭಕ್ತರು ಎಂದು ಹೇಳಿಕೊಳ್ಳುವ, ಸರ್ಟಿಫಿಕೇಟ್ ಕೊಡುವ ಯಾರದಾದರೂ ಒಂದೇ ಒಂದು ಸಂಘಪರಿವಾರದವರ ಹೆಸರು ಇಂಡಿಯಾ ಗೇಟ್ನಲ್ಲಿದೆಯೇ? ನೋಡಿಕೊಂಡು ಬನ್ನಿ ಎಂದು ಬಿ.ಕೆ.ಹರಿಪ್ರಸಾದ್ ಪ್ರತಿಪಕ್ಷಕ್ಕೆ ಸವಾಲು ಹಾಕಿದರು.
ಬೀದರ್ಗೆ ಕೃಷಿ ಮಹಾವಿದ್ಯಾಲಯ ಮಂಜೂರು ಮಾಡುವಂತೆ ಮನವಿ
ಬೀದರ್ : ಹೈದರಾಬಾದ್-ಕರ್ನಾಟಕ ಭಾಗದ ಗಡಿ ಜಿಲ್ಲೆಯಾದ ಬೀದರ್ಗೆ ಒಂದು ಕೃಷಿ ಮಹಾವಿದ್ಯಾಲಯ ಮಂಜೂರು ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಫುಲಾರಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೀದರ್ ಜಿಲ್ಲೆಯಲ್ಲಿ ಶೇ.60ಕ್ಕಿಂತ ಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದು, ಕೃಷಿ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ರೈತ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ತೊಂದರೆಯಾಗುತ್ತಿದೆ ಎಂದು ತಿಳಿಸಲಾಗಿದೆ. ಬೀದರ್ ಜಿಲ್ಲೆಯ ಜನವಾಡಾ ಪ್ರದೇಶದಲ್ಲಿ ಈಗಾಗಲೇ ಕೃಷಿ ಸಂಶೋಧನಾ ಕೇಂದ್ರ ಇರುವುದರಿಂದ, ಅದೇ ಸ್ಥಳದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸಿದರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಈ ವಿಷಯವನ್ನು ಮಂಡಿಸಿ, ಬೀದರ್ ಜಿಲ್ಲೆಗೆ ಕೃಷಿ ಮಹಾವಿದ್ಯಾಲಯ ಮಂಜೂರು ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಜಾವಿದ್, ಉಪಾಧ್ಯಕ್ಷ ರಾಜಕುಮಾರ್ ಎನ್.ಪಾಟೀಲ್, ಶೇಖ್ ನವಾಜ್, ಕಂಟೆಪ್ಪಾ ಗುಪ್ತಾ, ಶಿವಗೌಡಾ, ರಾಮು, ಜಮೀಲ್ ಖಾದ್ರಿ ಹಾಗೂ ನಭಿ ಅಲಿಯಂಬರ್ ಸೇರಿದಂತೆ ಇನ್ನಿತತರು ಉಪಸ್ಥಿತರಿದ್ದರು.
ಕೇಂದ್ರದಿಂದ ರಾಜ್ಯಗಳ ಮೇಲೆ ಹೊರೆ ಹೆಚ್ಚಳ: ಶಾಸಕ ಶರತ್ ಬಚ್ಚೇಗೌಡ
ಬೆಂಗಳೂರು, ಫೆ. 4: ‘ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿರುವ ನಡುವೆ ರಾಜ್ಯಗಳ ಮೇಲಿನ ಹೊರೆಯನ್ನು ಹಂತ-ಹಂತವಾಗಿ ಹೆಚ್ಚಳ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ. ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ವಿಬಿ-ಜಿ ರಾಮ್ ಜಿ ವಿರುದ್ಧ ನಿರ್ಣಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶರತ್ ಬಚ್ಚೇಗೌಡ, ‘ಕೇಂದ್ರ ಸರಕಾರ ಅವೈಜ್ಞಾನಿಕವಾಗಿ ಜಾರಿಗೆ ತಂದ ಫಸಲ್ ಬಿಮಾ ಯೋಜನೆಯಡಿ 2025ರ ಜುಲೈ ವೇಳೆಗೆ 947 ಕೋಟಿ ರೂ. ರೈತರಿಗೆ ಕೊಡಬೇಕಾಗಿತ್ತು. ಆದರೆ, ಆ ಹಣ ಎಲ್ಲಿ ಹೋಯಿತು?’ ಎಂದು ಪ್ರಶ್ನಿಸಿದರು. ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಜಾರಿಗೆ ತಂದಿದೆ. ಆ ಯೋಜನೆಯಡಿ ನೀಡಿರುವ ಕಾರ್ಡ್ನಿಂದ ಯಾರಿಗೂ ಅನುಕೂಲವಾಗಿಲ್ಲ, ಕಾರ್ಡ್ ಇದ್ದರೂ ಆಸ್ಪತ್ರೆಯಲ್ಲಿ ಹಣ ಪಾವತಿಸಬೇಕಾದ ಪರಿಸ್ಥಿತಿ ಇದೆ. ಜಲಜೀವನ್ ಮಿಷನ್ ಅಡಿ ಮನೆಮನೆಗೂ ನೀರು ನೀಡುವುದಾಗಿ ಹೇಳಿದೆ. ಎಲ್ಲ ರೀತಿಯಲ್ಲೂ ಸೋರಿಕೆಯಾಗುತ್ತಿದೆ. ಈ ಯೋಜನೆಯಡಿ ಅಳವಡಿಸುವ ಪೈಪ್ ಉತ್ಪಾದಕರಿಗೆ ಮಾತ್ರ ಅನುಕೂಲವಾಗಿದೆ ಎಂದು ಆರೋಪಿಸಿದರು. ಹೀಗೆ, ಶೇ.90 ರಷ್ಟು ಕೇಂದ್ರದ ಪಾಲು, ಶೇ.10 ರಷ್ಟು ರಾಜ್ಯದ ಪಾಲಿದ್ದ ಯೋಜನೆಯನ್ನು ಶೇ.60 ರಷ್ಟು ಕೇಂದ್ರದ ಪಾಲು, ಶೇ 40 ರಷ್ಟು ಪಾಲು ಯೋಜನೆಯನ್ನು ಮಾರ್ಪಾಡು ಮಾಡಿದೆ. ಈ ಕಾರಣದಿಂದ ಈ ರೀತಿ ಕೇಂದ್ರ ಸರಕಾರ ತನ್ನೆಲ್ಲಾ ಹೊರೆ ಅನ್ನು ರಾಜ್ಯ ಸರಕಾರದ ಮೇಲೆ ಹೇರುತ್ತಿದೆ, ಎನ್ಡಿಎ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ರಾಜ್ಯಗಳ ಮೇಲಿನ ಸಾಲ 25 ಲಕ್ಷ ಕೋಟಿ ರೂ. ಇತ್ತು. 2014 ರಿಂದ 2025 ರವರೆಗೆ ರಾಜ್ಯ ಸರಕಾರಗಳ ಮೇಲಿನ ಸಾಲದ ಹೊರೆ 94 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು. ಒಟ್ಟಿನಲ್ಲಿ 10 ವರ್ಷದಲ್ಲಿ ರಾಜ್ಯದ ಮೇಲಿನ ಸಾಲದ ಹೊರೆ ಮೂರು ಪಟ್ಟು ಹೆಚ್ಚಾಗಿದೆ. ಈ ರೀತಿ ರಾಜ್ಯ ಸರಕಾರಗಳನ್ನು ಆರ್ಥಿಕ ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಮನರೇಗಾ ಯೋಜನೆಯಲ್ಲಿ ಜನರಿಗೆ ಉದ್ಯೋಗ ಕೊಡುವ ಹಕ್ಕನ್ನು ರಕ್ಷಿಸಲು ನಾವು ಹೋರಾಟಕ್ಕೆ ಸಿದ್ಧವಿದ್ದೇವೆ ಎಂದು ಹೇಳಿದರು.
Humnabad | ವಕೀಲನಿಗೆ ಚಾಕು ಇರಿತ : 11 ಮಂದಿ ವಿರುದ್ಧ ಪ್ರಕರಣ ದಾಖಲು, 5 ಮಂದಿಯ ಬಂಧನ
ಹುಮನಾಬಾದ್: ಹಂದಿಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದನ್ನು ಪ್ರಶ್ನಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದ ವಕೀಲನ ಕುತ್ತಿಗೆಗೆ ಚಾಕು ಇರಿದು ಹಲ್ಲೆ ಮಾಡಿದ ಘಟನೆ ಮಂಗಳವಾರ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 5 ಮಂದಿಯನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ವಕೀಲರನ್ನು ಬೆನಚಿಂಚೋಳಿ ಗ್ರಾಮದ ನಿವಾಸಿ ಅನಿಲ್ (30) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಹುಡಗಿ ಗ್ರಾಮದ ನಿವಾಸಿಗಳಾದ ಅಜಯ್, ರಮೇಶ್, ರಾಜು, ಸಂಜು, ಮಾಣಿಕ್, ನರಸಪ್ಪ, ತುಕಾರಾಮ್, ಕಂತಮ್ಮ, ಸಂಗೀತಾ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವಕೀಲರ ಸಹೋದರ ವಿಜಯಕುಮಾರ್ ಅವರಿಗೆ ಸೇರಿದ ಹಂದಿಗಳನ್ನು ಹುಮನಾಬಾದ್ ರೈಲ್ವೆ ಗೇಟ್ ಬಳಿ ಹುಡಗಿ ಗ್ರಾಮದ ಕೆಲವರು ಕಳವು ಮಾಡಿಕೊಂಡು ಹೋಗುತ್ತಿರುವುದನ್ನು ಪ್ರಶ್ನಿಸಿ, ಈ ಕುರಿತು ದೂರು ನೀಡಲು ಅನಿಲ್ ಹಳ್ಳಿಖೇಡ್ ಪೊಲೀಸ್ ಠಾಣೆಗೆ ತೆರಳಿದ್ದರು. ಪೊಲೀಸರು ಸ್ಥಳ ಪರಿಶೀಲನೆ ಮಾಡಲು ಸೂಚಿಸಿದ ಹಿನ್ನೆಲೆಯಲ್ಲಿ, ಅನಿಲ್ ಬೈಕ್ನಲ್ಲಿ ಸ್ಥಳಕ್ಕೆ ತೆರಳುತ್ತಿದ್ದಾಗ ಆರೋಪಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ಕೊಲೆ ಉದ್ದೇಶದಿಂದ ಅನಿಲ್ ಅವರ ಕುತ್ತಿಗೆಗೆ ಚಾಕು ಇರಿದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅನಿಲ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಳ್ಳಿಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ವಕೀಲರ ಸಂಘದಿಂದ ದೂರು : ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು. ಇಂತಹ ಘಟನೆ ಜಿಲ್ಲೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಕೀಲರ ಸಂಘದ ವಿಜಯಕುಮಾರ್ ನಾತೆ, ಶಂಭುಲಿಂಗ್ ಧೂಮ್ಮನಸೂರೆ, ಅಶೋಕ್ ವರ್ಮಾ, ಸಲ್ಮಾನ್ ಅಲಿ ಹಾಗೂ ಕೃಷ್ಣ ಮುಗುಳಿ ಅವರಿಂದ ಮನವಿ ಸಲ್ಲಿಸಲಾಗಿದೆ.
ರಂಗಭೂಮಿ, ಸಾಹಿತ್ಯ ಪ್ರಶ್ನಿಸಲು ಪ್ರೇರಣೆ: ಜಿ.ಎನ್.ಮೋಹನ್
ಬೆಂಗಳೂರು, ಫೆ.4: ರಂಗಭೂಮಿ ಹಾಗೂ ಸಾಹಿತ್ಯ ಸದಾ ಪ್ರಶ್ನೆ ಮಾಡಲು ಪ್ರೇರೇಪಿಸುತ್ತವೆ. ಸ್ಥಗಿತಗೊಂಡ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ನಿರಂತರವಾಗಿರಲಿ ಎಂದು ಪತ್ರಕರ್ತ ಜಿ.ಎನ್.ಮೋಹನ್ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಸಾಹಿತ್ಯ ಅಕಾಡಮಿ, ರಾಷ್ಟ್ರೀಯ ರಂಗಶಾಲೆ ವತಿಯಿಂದ ಆಯೋಜಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುಸ್ತಕಗಳನ್ನು ದ್ವೇಷಿಸುವ ನಾಜಿ ಕಾಲವಿತ್ತು. ಈಗ ದೇಶದೆಲ್ಲೆಡೆ ಅಂತಹದೇ ವಾತಾವರಣವನ್ನು ಸೃಷ್ಟಿಸಿ, ಪುಸ್ತಕ ದ್ವೇಷವನ್ನು ಹರಡಲಾಗುತ್ತಿದೆ. ಪ್ರಶ್ನೆ ಮಾಡುವ ಮನಸ್ಸನ್ನು ಚಿವುಟಿ ಹಾಕುವ ಯತ್ನ ನಡೆಯುತ್ತಿದೆ. ಇದರ ವಿರುದ್ಧ ಜಾಗೃತಿ ಅಗತ್ಯ ಎಂದು ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ರಂಗಭೂಮಿ ಹಾಗೂ ಸಾಹಿತ್ಯವನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಎರಡೂ ಸಹಾ ಗಂಡಬೇರುಂಡದಂತೆ ಎಂದು ಹೇಳಿದರು. ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಮಾತನಾಡಿ, ಮಾನವೀಯ ಸಮಾಜವನ್ನು ಸೃಷ್ಟಿಸುವುದು ಇಂದಿನ ಅಗತ್ಯ. ಮನಸ್ಸನ್ನು ಕಲುಷಿತಗೊಳಿಸುತ್ತಿರುವ ಕಾಲದ ಬಗ್ಗೆ ಎಚ್ಚರ ಇರಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಹಾಮನೆ, ಕವಿ ಅಂಕಣಕಾರ ಬಿ.ಎನ್.ಮಲ್ಲೇಶ್, ಅಕಾಡಮಿ ಸದಸ್ಯರಾದ ಮಮತಾ ಅರಸೀಕೆರೆ, ರವಿಕುಮಾರ್ ಭಾಗಿ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ: ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು 12 ಆರೋಪಿಗಳಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ. ಬಸಪ್ಪ ರುದ್ರಪ್ಪ ನಾಯಿಕ, ರಾಜು ರುದ್ರಪ್ಪ ನಾಯಿಕ, ಕೆಂಪಣ್ಣ ರಾಜು ನಾಯಿಕ, ಪಾರ್ವತಿ ಬಸಪ್ಪ ನಾಯಿಕ, ಯಲ್ಲವ್ವ ರುದ್ರಪ್ಪ ನಾಯಿಕ, ಲಕ್ಕಪ್ಪ ರಾಜು ನಾಯಿಕ, ಗಂಗವ್ವ ಬಸಪ್ಪ ವಾಲಿಕಾರ, ಸಂಗೀತಾ ಸದಾಶಿವ ಹೆಗ್ಗನಾಯಿಕ, ಸಂತೋಷ ಬಸಪ್ಪ ನಾಯಿಕ, ಶೋಭಾ ರಾಜು ನಾಯಿಕ, ಲಕ್ಕವ್ವ ಯಲ್ಲಪ್ಪ ನಾಯಿಕ ಹಾಗೂ ಶಿವಪ್ಪ ರಾಯಪ್ಪ ವನ್ನೂರಿ ಶಿಕ್ಷೆಗೆ ಒಳಗಾದವರು. ಕಾನೂನು ಸಂಘರ್ಷಕ್ಕೆ ಒಳಪಟ್ಟ ಇನ್ನೋರ್ವನ ವಿಚಾರಣೆ ಇನ್ನೂ ಮುಂದುವರಿದಿದೆ. 2023ರ ಡಿಸೆಂಬರ್ 11ರಂದು ಪ್ರೀತಿಸಿದ ಯುವಕ–ಯುವತಿ ಮನೆ ಬಿಟ್ಟು ಹೋಗಿದ್ದರಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು, ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿ ಮನೆ ಧ್ವಂಸಗೊಳಿಸಿದ್ದರು. ಈ ಅಮಾನವೀಯ ಘಟನೆ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸಿದ್ದರು. ಕಾಕತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು 2023ರ ಡಿಸೆಂಬರ್ 16ರಂದು ಸಿಐಡಿಗೆ ವರ್ಗಾಯಿಸಲಾಗಿತ್ತು. ಆಗ ಸಿಐಡಿ ವಿಶೇಷ ವಿಚಾರಣೆ ವಿಭಾಗದ ಪೊಲೀಸ್ ಅಧೀಕ್ಷಕರಾಗಿದ್ದ ಪೃಥ್ವಿಕ್ ಶಂಕರ್ ಅವರು ತನಿಖೆ ನಡೆಸಿ, 2024ರ ಏಪ್ರಿಲ್ 22ರಂದು 12 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತನಿಖೆಯಲ್ಲಿ 92 ಸಾಕ್ಷಿದಾರರು ಹಾಗೂ 37 ವಸ್ತುಗಳನ್ನು ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎಸ್. ಮಂಜುನಾಥ್ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ಪ್ರಕಟಿಸಿ, ಬುಧವಾರ ಶಿಕ್ಷೆ ಪ್ರಮಾಣ ಘೋಷಿಸಿದರು. ಸರಕಾರಿ ವಿಶೇಷ ಅಭಿಯೋಜಕ ಎಲ್.ಎಸ್. ಸುಳ್ಳದ ವಾದ ಮಂಡಿಸಿದ್ದರು. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ನ್ಯಾಯಾಲಯದ ಸಭಾಂಗಣದಲ್ಲಿ ಅಪರಾಧಿಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರಿಟ್ಟರು. ಭಾರತೀಯ ದಂಡ ಸಂಹಿತೆಯ ಕಲಂ 34, 37, 109, 114, 117, 143, 147, 148, 149, 307, 323, 324, 326, 341, 342, 353, 354, 354(ಬಿ), 355, 392, 427, 452, 504, 506 ಹಾಗೂ ಆಸ್ತಿ ನಾಶ ಕಾಯ್ದೆಯ ಕಲಂ 2(ಎ) ಅಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
ಕಲಬುರಗಿ | ಫೆ.8 ರಂದು ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
ಕಲಬುರಗಿ : ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ – ಕಲಬುರಗಿ ಜಿಲ್ಲಾ ಘಟಕದ ಸಹಯೋಗದಲ್ಲಿ ಫೆಬ್ರವರಿ 8ರಂದು (ರವಿವಾರ) ನಗರದ ಮಾತೋಶ್ರೀ ನೀಲಗಂಗಮ್ಮಾ ಗುರುಪ್ಪ ಅಂದಾನಿ ಗ್ಯಾಲರಿಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸಹ ನಿರ್ದೇಶಕ (ಆಡಳಿತ) ಗಣಪತಿ ಲ. ಬಾರಾಟಕ್ಕೆ ಅವರು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುವರು. ಗೊಂಬೆಯಾಟ ಪ್ರದರ್ಶನವನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಂಕ್ರಮ್ಮ ಢವಳಗಿ ಅವರು ಉದ್ಘಾಟಿಸಲಿದ್ದಾರೆ. ಖ್ಯಾತ ಹಿರಿಯ ಚಿತ್ರಕಲಾವಿದ ಡಾ. ವಿ.ಜಿ.ಅಂದಾನಿ ಅವರು ಘನ ಉಪಸ್ಥಿತಿ ವಹಿಸಲಿದ್ದು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಶೇಷ ಅತಿಥಿಗಳಾಗಿ ಕಲಬುರಗಿ ಡಯಟ್ ಉಪನಿರ್ದೇಶಕ (ಅಭಿವೃದ್ಧಿ) ಬಸವರಾಜ ಎಂ. ಶೆಟ್ಟಿ, ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಶಿವಾನಂದ ಕೊಪ್ಪದ, ಚಿತ್ರಕಲಾವಿದ ಮಂಜುನಾಥ ಮಾನೆ, ಕಲಾಭೋಧಕ ಧರ್ಮಾನಂದ, ಎಂ.ಕೆ. ರಾಜೇಶ್ ನೀಲಹಳ್ಳಿ, ಕೇಂದ್ರ ಸಂಘ ರಾಜ್ಯ ಪರಿಷತ್ ಸದಸ್ಯ ಸಂತೋಷ ಸಲಗರ, ರಾಜೇಂದ್ರ ಝಳಕಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತಮಲ್ಲ ಶಿವಬೊ ವಹಿಸುವರು. ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿರುವ ಚಿತ್ರಕಲಾ ಶಿಕ್ಷಕರಾದ ಬಾಬಾಸಾಹೇಬ ವಸಂತ ಸಾಳುಂಕೆ, ಎಸ್.ವಿ. ವಿಜಯಭಾರತಿ, ಮಹಮ್ಮದ್ ಗೌಸ್ ಪಟೇಲ್ ಹಾಗೂ ಪ್ರಭಾಕರ ಬೆಳ್ಳಿ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ವಿ. ಕೋರಳ್ಳಿ ಹಾಗೂ ಸಂಘಟನಾ ಕಾರ್ಯದರ್ಶಿ ಪ್ರಭು ಜಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಳಂದ | ದೆಹಲಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಜೆಡಿಎಸ್ ಬಲವರ್ಧನೆ ಚರ್ಚೆ
ಫೆ.27ರಂದು ವಿಜಯಪುರದಲ್ಲಿ ಜೆಡಿಎಸ್ ಸಮಾವೇಶ
ಮಂಗಳೂರು : ನಗರದ ಕೊಟ್ಟಾರ ಚೌಕಿ ಬಳಿಯ ಕಾರ್ ವಾಶ್ ಸರ್ವಿಸ್ನಲ್ಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ ಆಚಾರ್ಯ (61) ಎಂಬವರು ಜ.29ರಿಂದ ಕಾಣೆಯಾಗಿದ್ದಾರೆ. ಅಂದು ಕೆಲಸಕ್ಕೆ ಹೋದವರು ಮನೆಗೆ ಮರಳಿ ಬಾರದೆ ಕಾಣೆಯಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 5.5 ಅಡಿ ಎತ್ತರದ, ಎಣ್ಣೆ ಕಪ್ಪುಮೈಬಣ್ಣದ, ಕೋಲು ಮುಖದ ಇವರು ಕಪ್ಪುಬಣ್ಣದ ಪ್ಯಾಂಟ್, ಕಪ್ಪುಚುಕ್ಕಿ ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್ ಧರಿಸಿದ್ದರು. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ತಿಳಿದಲ್ಲಿ ಠಾಣೆಗೆ ತಿಳಿಸುವಂತೆ ಪ್ರಕಟನೆ ತಿಳಿಸಿದೆ.
ರಿವ್ಯೂ–ರೇಟಿಂಗ್–ಆಫರ್: ಇದು Gen Z ರಿಯಲ್ ಎಸ್ಟೇಟ್ ಖರೀದಿ ಮಂತ್ರ
ಆನ್ಲೈನ್ ವೇದಿಕೆಗಳ ಮೇಲೆ ಬಹುವಾಗಿ ನಂಬಿಕೆ ಇಡುವ ಜನ್ ಝೀ ನಿರ್ಧಾರ ಕೈಗೊಳ್ಳುವ ಮೊದಲು ರಿವ್ಯೂ ಮತ್ತು ರೇಟಿಂಗ್ ಗಳನ್ನೇ ನಂಬುತ್ತಾರೆ! ಜನರೇಷನ್ ಝೆಡ್ ಅಥವಾ Gen Z ಎನ್ನುವ ಪೀಳಿಗೆ ಇಂಟರ್ನೆಟ್, ಸ್ಮಾರ್ಟ್ಫೋನ್ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಜಗತ್ತಿನಲ್ಲಿ ಹುಟ್ಟಿ ಬೆಳೆದವರು. ಹೀಗಾಗಿ ಅವರು ಆಸ್ತಿ ಹುಡುಕಾಟದಲ್ಲೂ ಆನ್ಲೈನ್ ನಲ್ಲೇ ಪ್ರಾರಂಭಿಸುತ್ತಾರೆ. ವೈಯಕ್ತಿಕ ಹಂತಗಳಿಗಿಂತ ಮೊದಲು ಡಿಜಿಟಲ್ ಅನ್ವೇಷಣೆ ಆರಂಭವಾಗಿರುತ್ತದೆ. ಹಿಂದಿನ ತಲೆಮಾರು ಮುದ್ರಿತ ಆಸ್ತಿಪತ್ರಗಳು, ಕರಪತ್ರಗಳು, ಸ್ಥಳಕ್ಕೆ ಹೋಗಿ ಮನೆ ನೋಡುವುದು ಮತ್ತು ಏಜೆಂಟ್ಗಳ ಅಭಿಪ್ರಾಯದ ಮೇಲೆ ಮನೆ ಖರೀದಿಗೆ ನಿರ್ಧರಿಸುತ್ತಿದ್ದರು. ಆದರೆ ಹೊಸ ತಲೆಮಾರು ಇದಕ್ಕೆ ಭಿನ್ನವಾಗಿದೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹುಡುಕುತ್ತಾರೆ. ಸ್ಮಾರ್ಟ್ಫೋನ್ಗಳ ಅಪ್ಲಿಕೇಶನ್ಗಳ ಮೂಲಕ ಪ್ರೀಮಿಯಂ ಮನೆಗಳು ಹೇಗಿವೆ ಎನ್ನುವುದನ್ನು ನೋಡುತ್ತಾರೆ. ಇನ್ಸ್ಟಾಗ್ರಾಂ, ಯುಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಸೈಟ್ ಗಳು ಅಲ್ಪಾವಧಿಯ ಸೈಟ್ ಪ್ರವಾಸ, ನೆರೆಹೊರೆಯ ವಿವರ ಮತ್ತು ಜೀವನಶೈಲಿಯ ಅನುಭವ ನೀಡುವ ಕಿರು ವೀಡಿಯೊಗಳನ್ನು ಪ್ರದರ್ಶಿಸುವ ಪ್ರಬಲ ಮಾರ್ಕೆಟಿಂಗ್ ಸಾಧನಗಳಾಗಿವೆ. ಅಧಿಕ ಬೆಲೆಯ ಅಥವಾ ಕಡಿಮೆ ಬೆಲೆಯ ಯಾವುದೇ ರೀತಿಯ ಮನೆಗಳಿರಲಿ, ಸೈಟ್ ಭೇಟಿ ಕೊನೆಯಲ್ಲಿ ಬರುತ್ತದೆ. ಮೊದಲಿಗೆ ಕಂಟೆಂಟ್ ಸಿದ್ಧಪಡಿಸಿ ಗ್ರಾಹಕರಿಗೆ ಕಳುಹಿಸಬೇಕು. ಫೋಟೋಗಳು, ವೀಡಿಯೊಗಳು ಮತ್ತು ಮನೆಯ 3ಡಿ ವೀಕ್ಷಣೆ ಸಾಧ್ಯವಾಗುವಂತಹ ವೀಡಿಯೊಗಳನ್ನು ಮೊದಲು ಕಳುಹಿಸಬೇಕಾಗುತ್ತದೆ. ದೃಶ್ಯಾತ್ಮಕವಾಗಿ ತಮ್ಮ ಆಸ್ತಿ ಬಗ್ಗೆ ಕಥೆಯ ರೂಪದಲ್ಲಿ ನಿರೂಪಣೆ ನೀಡಬೇಕಾಗುತ್ತದೆ. ರಿವ್ಯೂ ನೋಡಿ ನಿರ್ಧರಿಸುವ ಗ್ರಾಹಕರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಮಾರಾಟ ತಜ್ಞ ಮತ್ತು ಆಸ್ತಿ ತಜ್ಞರಾಗಿರುವ ಅನಿಲ್ ಅವರ ಪ್ರಕಾರ, “ಇತ್ತೀಚೆಗೆ ಎಲ್ಲವೂ ರೇಟಿಂಗ್ ಗಳು ಮತ್ತು ರಿವ್ಯೂಗಳನ್ನು ಅನುಸರಿಸಿ ಖರೀದಿ ಮಾಡುತ್ತಾರೆ. ಹಿಂದೆ ಆನ್ಲೈನ್ ಪೋರ್ಟಲ್ಗಳೇ ಇರಲಿಲ್ಲ. ನಾವು ಡಿಗ್ರಿ ಮುಗಿಸುವಾಗ ಫೋನ್ ಕೂಡ ನಮ್ಮ ಬಳಿ ಇರಲಿಲ್ಲ. ನಾನು ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಐದಾರು ವರ್ಷ ಕೆಲಸ ಮಾಡಿದ್ದೇನೆ. ನಾನು ಕಂಡಿರುವ ಪ್ರಕಾರ ಪ್ರಮುಖ ಬಿಲ್ಡರ್ ಗಳಿಗೆ ರಿವ್ಯೂಗಳಿಂದ ಏನೂ ಬದಲಾವಣೆಯಾಗುವುದಿಲ್ಲ. ಮಾರುಕಟ್ಟೆಯಲ್ಲಿ ಅವರಿಗೆ ಒಂದು ಸ್ಥಾನ ಇದ್ದೇ ಇರುತ್ತದೆ. ಈಗ ಖರೀದಿಸುವ Gen Z ಸ್ಥಳೀಯ ಬಿಲ್ಡರ್ ಗಳನ್ನು ಹೆಚ್ಚು ಪರಿಗಣಿಸುತ್ತಾರೆ. ಅವರ ಅನುಭವ ಮುಖ್ಯವಾಗುತ್ತದೆ.” “ಮಧ್ಯಮ ವರ್ಗದವರು ರಿವ್ಯೂ ನೋಡ್ತಾರೆ, ರೇಟ್ ನೋಡ್ತಾರೆ, ಆದರೆ ಅವರು ಸೂಕ್ತ ಖರೀದಿದಾರರಲ್ಲ. ಅವರಿಗೆ ಭಯ ಜಾಸ್ತಿ. ಕಡಿಮೆ ಸಿಕ್ಕರೂ ಏಕೆ ಕಡಿಮೆ ಕೊಡ್ತಾರೆ ಎಂಬ ಆಲೋಚನೆ ಮಾಡುತ್ತಾರೆ. ಹಲವು ಸಲ ನೋಡಿದರೂ ನಿರ್ಧಾರ ಕೈಗೊಳ್ಳುವುದಿಲ್ಲ. ರಿವ್ಯೂ ನೋಡುವುದರ ಹೊರತಾಗಿ ಎಲ್ಲರ ಅಭಿಪ್ರಾಯ ಕೇಳುತ್ತಾರೆ. ಖರೀದಿಸುವ ಮೊದಲೇ ಅವರನ್ನು ಆಕರ್ಷಿಸಬೇಕಾಗುತ್ತದೆ. ಹೀಗಾಗಿ ಉತ್ತಮ ಫೋಟೋಗಳು ಮುಖ್ಯವಾಗುತ್ತವೆ. ಅವರು ಫೋಟೋ ನೋಡಿ ಸೈಟ್ ವಿಸಿಟ್ಗೆ ಬಂದರೆ ಶೇ. 30ರಷ್ಟು ಒಕೆ ಆಗಿರುತ್ತದೆ. ನಂತರ ಅವರಿಗೆ ಲಾಭದ ಬಗ್ಗೆ ವಿವರ ನೀಡಬೇಕಾಗುತ್ತದೆ. ಖರೀದಿಸಿದರೆ ಸಿಗುವ ಲಾಭಗಳನ್ನು ಹೇಳಬೇಕಾಗುತ್ತದೆ. ಭವಿಷ್ಯದಲ್ಲಿ ಆಸ್ತಿಗೆ ಇರುವ ಮೌಲ್ಯವನ್ನು ವಿವರಿಸಬೇಕಾಗುತ್ತದೆ. ಶಾಲೆ–ಕಾಲೇಜು ಮತ್ತು ಕನೆಕ್ಟಿವಿಟಿ ವಿವರ ನೀಡಬೇಕಾಗುತ್ತದೆ. ಅಲ್ಲಿಗೆ ಶೇ. 60–70ರಷ್ಟು ಖರೀದಿ ಖಚಿತವಾಗುತ್ತದೆ. ನಂತರ ಅಂತಿಮವಾಗಿ ಸಾಲ ಸಿಗುತ್ತದೆ ಎಂದಾದರೆ ಖರೀದಿ ಮಾಡುತ್ತಾರೆ.” ಆನ್ಲೈನ್ನಲ್ಲಿ ಮೋಸ ಹೋಗುತ್ತಾರೆ! ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವ ಏಜೆಂಟ್ ಒಬ್ಬರ ಪ್ರಕಾರ, “ಕೆಲವು ಬ್ರೋಕೇಜ್ ಇಲ್ಲವೆಂದು ಹೇಳುವ ಆನ್ಲೈನ್ ಮಾಧ್ಯಮಗಳನ್ನು ಜನರು ಬಹುವಾಗಿ ನಂಬುತ್ತಾರೆ. ಆದರೆ ಅವರೇ ವಂಚಕರು ಆಗುವ ಸಾಧ್ಯತೆ ಇದೆ. ಹಣವಿಲ್ಲದೆ ಯಾರೂ ಏನನ್ನೂ ಸುಲಭವಾಗಿ ಮಾಡಿಕೊಡುವುದಿಲ್ಲ. ಮೊದಲಿಗೆ ಐದು ಸಂಖ್ಯೆಗಳನ್ನು (ಮಾಲೀಕರ ಫೋನ್ ಸಂಖ್ಯೆ) ಕೊಡುತ್ತಾರೆ, ನಂತರ ಗ್ರಾಹಕರಿಂದ ಹಣ ಕೇಳಲು ಆರಂಭಿಸುತ್ತಾರೆ. ಹಣ ಕೊಡದಿದ್ದರೆ ಹೆಚ್ಚಿನ ಸಂಖ್ಯೆಗಳು ಸಿಗುವುದಿಲ್ಲ. ಅದಕ್ಕಿಂತ ಅಧಿಕೃತವಾಗಿ ಹಣ ಕೇಳಿ ಪಡೆಯುವ ಇತರ ಆನ್ಲೈನ್ ಮಾಧ್ಯಮಗಳು ಸೂಕ್ತ. ನಾವು ಬ್ರೋಕರ್ ಅಸೋಸಿಯೇಷನ್ ನಿಂದ ಅಂತಹ ಕೆಲವು ಸಂಸ್ಥೆಗಳ ವಿರುದ್ಧ ಮೊಕದ್ದಮೆ ಹೂಡಿದ್ದೇವೆ. ಕೆಲವೊಂದು ಸಂಸ್ಥೆಗಳ ಜೊತೆ ನಾನು ಹೀಗೆಯೇ ಮೋಸ ಹೋಗಿದ್ದೇನೆ. ದುಡ್ಡು ಕೊಟ್ಟು ಒಂದೂವರೆ ತಿಂಗಳಾದರೂ ಒಂದೂ ಕರೆ ಬಂದಿಲ್ಲ. ಹಾಗೆಂದು ಎಲ್ಲರೂ ವಂಚಕರಲ್ಲ. ಕೆಲವರು ದುಡ್ಡು ತೆಗೆದುಕೊಂಡರೂ ಕೆಲಸ ಮಾಡುತ್ತಾರೆ. ಕೆಲವು ಕಂಪನಿಗಳು ಬ್ರೋಕರ್ಗಳು ತಂಡವಾಗಿ ಹಣ ಹೂಡಲು ಅವಕಾಶ ಕೊಡುತ್ತವೆ. ಅವುಗಳಿಂದ ಕರೆಗಳೂ ಬರುತ್ತವೆ.” “ಹೊಸ ತಲೆಮಾರು ಎಲ್ಲವನ್ನೂ ಆನ್ಲೈನ್ ನಿಂದಲೇ ಬಯಸುತ್ತಾರೆ. ಫೋಟೋಗಳು, ವೀಡಿಯೊಗಳು ಮತ್ತು ಫೋಟೋಶೂಟ್ ಮಾಡುವುದನ್ನು ಬಯಸುತ್ತಾರೆ. ಆದರೆ ಇಷ್ಟೆಲ್ಲ ಕಳುಹಿಸಿದ ನಂತರ ಸೈಟ್ ವಿಸಿಟ್ಗೂ ಬರುವುದಿಲ್ಲ. ಇವರು ನಿಜವಾದ ಗ್ರಾಹಕರು ಆಗಿರುವುದಿಲ್ಲ. ಸುಮ್ಮನೆ ಮನೆ ನೋಡುತ್ತಿರುತ್ತಾರೆ,” ಎನ್ನುತ್ತಾರೆ ಏಜೆಂಟ್. ಆಫರ್ಗಳನ್ನು ನೋಡಿ ಖರೀದಿಸುವವರು! Gen Z ಸಾಮಾಜಿಕ ಮಾಧ್ಯಮಗಳಲ್ಲಿ ರಿಯಲ್ ಎಸ್ಟೇಟ್ ಇನ್ಫ್ಲೂಯೆನ್ಸರ್ ಗಳು ಏನು ಹೇಳುತ್ತಾರೆ ಎಂದು ಗಮನಿಸುತ್ತಾರೆ. ಕೆಲವು ಸಂಸ್ಥೆಗಳು ಮಾಡುವ ಬಹಿರಂಗ ಮಾರಾಟ ಪ್ರಚಾರಗಳು ಮತ್ತು ಕಾರ್ಪೋರೇಟ್ ಶೈಲಿಯ ಸಂವಹನಗಳಿಂದ ಪ್ರಭಾವಿತರಾಗುವುದಿಲ್ಲ. ವೈಯಕ್ತಿಕವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಮೊದಲು ಅಧಿಕೃತ, ಸಂಬಂಧಿತ ಮತ್ತು ಮಾಹಿತಿಯುಕ್ತ ವಿಷಯಗಳಿಗೆ ಆದ್ಯತೆ ನೀಡುತ್ತಾರೆ. ಸಾಂಪ್ರದಾಯಿಕ ಜಾಹೀರಾತಿಗೆ ವಿರುದ್ಧವಾಗಿ ತೆರೆಮರೆಯ ವೀಡಿಯೊಗಳು, ಗ್ರಾಹಕರ ಪ್ರಶಂಸಾಪತ್ರಗಳು ಮತ್ತು ಬಳಕೆದಾರರು ರಚಿಸಿದ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಅನಿಲ್ ಅವರ ಪ್ರಕಾರ ಬಹಳಷ್ಟು ಯುವ ತಲೆಮಾರು ಆಫರ್ಗಳಿಗೆ ಸ್ಪಂದಿಸುತ್ತಾರೆ. “ಸೆಲೆಬ್ರಿಟಿಗಳನ್ನು ತಂದು ಸೈಟ್ ಮಾರಾಟ ಮಾಡುವವರೂ ಇದ್ದಾರೆ. ಕೆಲವೊಮ್ಮೆ ಶನಿವಾರ–ರವಿವಾರ ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಅಲ್ಲಿ ಎಲ್ಲರೂ ಬಂದಿರುತ್ತಾರೆ. ‘ಇವತ್ತು ಕೊನೆಯ ದಿನ ಆಫರ್’ ಎಂದು ಹೇಳುತ್ತಾರೆ. ಹೀಗೆ ಪ್ರಿಬುಕಿಂಗ್ ನಲ್ಲಿ ಖರೀದಿಸಿದರೆ ಕಡಿಮೆ ಬೆಲೆಗೆ ಸಿಗುತ್ತದೆ. ತುರ್ತು ಸೃಷ್ಟಿ ಮಾಡಿ ಮಾರಾಟ ಮಾಡುತ್ತಾರೆ. ಅಂತಹ ಆಫರ್ಗಳೂ ಜನರು ಕೊಳ್ಳಲು ಕಾರಣವಾಗುತ್ತಿವೆ. ಮೊದಲಿಗೆ ಫೋಟೋ ಕಳಿಸಿಕೊಟ್ಟಾಗ ಗೇಟೆಡ್ ಕಮ್ಯುನಿಟಿ ಎಂದು ತೋರಿಸುತ್ತಾರೆ. ಸೈಟ್ನಲ್ಲಿ ಏನೂ ಇಲ್ಲದಿದ್ದರೂ ಹಿಂದೆ ಕಟ್ಟಿರುವ ಫಿನಿಶಿಂಗ್ ಎಲ್ಲವನ್ನೂ ತೋರಿಸಿ ಫೈನಲ್ ಮಾಡಿಬಿಡುತ್ತಾರೆ.”
ಶ್ರಮವಿಲ್ಲದೆ ಪ್ರತಿಫಲ ಸಿಗಲಾರದು: ಡಾ.ಶ್ರೀಧರ ಪೈ
ಉಡುಪಿ, ಫೆ.4: ಜೆನ್ ಝೀಗಳು ಇಂದು ಪ್ರತಿಭಾವಂತರಾಗಿದ್ದಾರೆ. ಅಪಾರ ಶಕ್ತಿ, ಉತ್ಸಾಹವನ್ನು ಹೊಂದಿರುವ ಯುವಜನತೆ ಯಶಸ್ವಿ ಜೀವನ ನಡೆಸಬೇಕಾದರೆ ಉತ್ತಮ ಶ್ರಮಪಡುವುದು ಅಗತ್ಯ. ಇಲ್ಲದಿದ್ದರೆ ಪ್ರತಿಫಲ ಸಿಗಲಾರದು ಎಂದು ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಟ್ರಸ್ಟ್ನ ಆಡಳಿತಾಧಿಕಾರಿ ಡಾ.ಶ್ರೀಧರ್ ರಂಗನಾಥ ಪೈ ಹೇಳಿದ್ದಾರೆ. ಇನ್ನಂಜೆ ಎಸ್.ವಿ.ಎಚ್. ಶಿಕ್ಷಣ ಸಂಸ್ಥೆಯಲ್ಲಿ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಮ್ಮ ಬದುಕನ್ನು ನಾವು ಸರಿಯಾಗಿ ರೂಪಿಸಿಕೊಳ್ಳಬೇಕು. ನಮ್ಮ ಜೀವನ ಭತ್ತ ತುಂಬುವ ಚೀಲವಾಗಿರದೆ, ಭತ್ತವನ್ನು ಬೆಳೆಯುವ ಗದ್ದೆಯಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಸೋದೆ ಎಜ್ಯುಕೇಷನ್ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಡಾ.ರಾಧಾಕೃಷ್ಣ ಐತಾಳ್ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣದಲ್ಲಿ ಸಿಗಲಾರದ ಅನೇಕ ಹೊಸ ಸಂಗತಿಗಳನ್ನು ಈ ಶಿಬಿರಗಳಲ್ಲಿ ಕಲಿಯಲು ಸಾಧ್ಯ. ಸಹಬಾಳ್ವೆ, ಭಾತೃತ್ವ, ಸರ್ವಾಂಗೀಣ ಪ್ರಗತಿ ಎನ್ಎಸ್ಎಸ್ ಶಿಬಿರದ ಮೂಲಕ ಎಲ್ಲರಲ್ಲೂ ಮೂಡಲಿ ಎಂದು ಹಾರೈಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ.ಎಂ. ವಿಶ್ವನಾಥ್ ಪೈ, ಉದ್ಯಮಿ ನವೀನ್ ಅಮೀನ್, ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ, ಎಸ್.ವಿ.ಎಚ್. ಪ.ಪೂ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ, ವಿದ್ಯಾರ್ಥಿ ನಾಯಕರಾದ ರಂಜಿತ್, ಧೃತಿ ಉಪಸ್ಥಿತರಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಸುಚಿತ್ ಕೋಟ್ಯಾನ್ ಸ್ವಾಗತಿಸಿದರು. ಅಧಿಕಾರಿ ಡಾ.ರೇಖಾ ಎನ್.ಚಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿನಿ ಮೇಘಾ ವಂದಿಸಿದರು. ರೋಶನಿ ಕಾರ್ಯಕ್ರಮ ನಿರೂಪಿಸಿದರು.
ಮುಂಬೈ: ಗುರು ನಾರಾಯಣ ತುಳು ನಾಟಕೋತ್ಸವದಲ್ಲಿ ‘ಬಗ್ಗನ ಭಾಗ್ಯ’ ಪ್ರಥಮ
ಉಡುಪಿ, ಫೆ.4: ಮುಂಬೈ ಬಿಲ್ಲವರ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಗುರು ನಾರಾಯಣ ತುಳು ನಾಟಕೋತ್ಸವ - 2026ರಲ್ಲಿ, ಬಿಲ್ಲವರ ಅಸೋಸಿಯೇಷನ್ ಮೀರಾ ರೋಡ್ ಕಲಾವಿದರು ಅಭಿನಯಿಸಿದ, ಗಂಗಾಧರ ಕಿದಿಯೂರ್ ವಿರಚಿತ ಬಗ್ಗನ ಭಾಗ್ಯ ಜಾನಪದ ತುಳು ನಾಟಕವು ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ. ನಾಟಕೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ಒಟ್ಟು 15 ತುಳು ನಾಟಕಗಳ ಪೈಕಿ ಬಗ್ಗನ ಭಾಗ್ಯ ನಾಟಕವು ವಿಶಿಷ್ಟ ಕಥಾವಸ್ತು, ಕಲಾವಿದರ ನೈಜ ಹಾಗೂ ಪ್ರಭಾವಶೀಲ ಅಭಿನಯ, ಹಾಗೂ ಅಶೋಕ್ ಕುರ್ಮಾ ವಳದೂರು ಅವರ ದಕ್ಷ ನಿರ್ದೇಶನದ ಮೂಲಕ ಪ್ರಥಮ ಸ್ಥಾನ ಸಹಿತ 8 ಪ್ರಮುಖ ಪ್ರಶಸ್ತಿಗಳನ್ನು ಪಡೆದು ಪ್ರೇಕ್ಷಕರ ಭಾರೀ ಮೆಚ್ಚುಗೆಗೆ ಪಾತ್ರವಾಯಿತು. ಉಡುಪಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರು 20ಕ್ಕೂ ಅಧಿಕ ತುಳು ಹಾಗೂ ಕನ್ನಡ ನಾಟಕಗಳನ್ನು ರಚಿಸಿರುವ ಹಿರಿಯ ನಾಟಕಕಾರರು. ತುಳು ನಾಟಕಗಳ ಸಮಗ್ರ ಸಂಪುಟ ರಚಿಸಿರುವುದರ ಜೊತೆಗೆ, ತುಳು ಲಿಪಿಯಲ್ಲಿ ಕೂಡ ನಾಟಕಗಳನ್ನು ರಚಿಸಿದ್ದಾರೆ. ಅವರ ಬಗ್ಗನ ಭಾಗ್ಯ ನಾಟಕವು ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರ ಕಥಾಹಂದರವನ್ನು ಆಧರಿಸಿದೆ.
ಭಾರತ–ಅಮೆರಿಕ ಒಪ್ಪಂದ | ಕೃಷಿ, ಹೈನುಗಾರಿಕೆ ಕ್ಷೇತ್ರಗಳ ರಕ್ಷಣೆಗೆ ಕೇಂದ್ರದ ಭರವಸೆ
ಹೊಸದಿಲ್ಲಿ, ಫೆ. 4: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಇತ್ತೀಚೆಗೆ ಪ್ರಕಟಿತ ಬಹು ನಿರೀಕ್ಷಿತ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಸಂಸತ್ತಿನಲ್ಲಿ ವಿವರಣೆಯನ್ನು ನೀಡಿದರು. ಸುಂಕಗಳ ಕುರಿತು ಉದ್ವಿಗ್ನತೆ ಮತ್ತು ತಿಂಗಳುಗಳ ಅನಿಶ್ಚಿತತೆಯ ಬಳಿಕ ಒಪ್ಪಂದ ಅಂತಿಮಗೊಂಡಿದೆ. ಲೋಕಸಭೆಯಲ್ಲಿ ಪ್ರತಿಪಕ್ಷ ಸಂಸದರ ಪ್ರತಿಭಟನೆಗಳ ನಡುವೆಯೇ ಮಾತನಾಡಿದ ಗೋಯಲ್, ಕೃಷಿ ಮತ್ತು ಹೈನುಗಾರಿಕೆಯಂತಹ ಸೂಕ್ಷ್ಮ ಕ್ಷೇತ್ರಗಳ ರಕ್ಷಣೆಯನ್ನು ಖಚಿತಪಡಿಸುವಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ಹೇಳಿದರು. ಒಪ್ಪಂದ ಕುರಿತು ಉಭಯ ದೇಶಗಳು ಒಮ್ಮತಕ್ಕೆ ಬರಲು ಒಂದು ವರ್ಷವೇ ಬೇಕಾಯಿತು ಮತ್ತು ಅವುಗಳ ಪ್ರಮುಖ ಕ್ಷೇತ್ರಗಳು ಕಡೆಗಣಿಸಲ್ಪಟ್ಟಿಲ್ಲ ಎಂಬುದನ್ನು ಖಾತರಿ ಮಾಡಿಕೊಳ್ಳಲಾಗಿದೆ ಎಂದು ಗೋಯಲ್ ಹೇಳಿದರು. ಕಳೆದ ವರ್ಷ ಉಭಯ ದೇಶಗಳ ಸಂಧಾನಕಾರರು ವಿವಿಧ ಹಂತಗಳಲ್ಲಿ ವಿವರವಾದ ಚರ್ಚೆಗಳನ್ನು ನಡೆಸಿದ್ದರು. ಎರಡೂ ದೇಶಗಳು ತಮ್ಮ ಪ್ರಮುಖ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಮತ್ತು ಸೂಕ್ಷ್ಮ ವಲಯಗಳ ಸುರಕ್ಷತೆ ಹಾಗೂ ಸಾಧ್ಯವಿರುವ ಅತ್ಯುತ್ತಮ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಬಯಸುವುದು ಸಹಜ. ಚರ್ಚೆಗಳ ಸಂದರ್ಭದಲ್ಲಿ ಭಾರತವು ತನ್ನ ಸೂಕ್ಷ್ಮ ಕ್ಷೇತ್ರಗಳ, ವಿಶೇಷವಾಗಿ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದು ವರ್ಷದ ಚರ್ಚೆಗಳ ಬಳಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿವಿಧ ಕ್ಷೇತ್ರಗಳಿಗೆ ಅಂತಿಮ ರೂಪ ನೀಡುವಲ್ಲಿ ಉಭಯ ದೇಶಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.
ಮಣಿಪಾಲ ಸಿಂಡಿಕೇಟ್ ಸರ್ಕಲ್ನಲ್ಲಿ ಸಂಚಾರ ನಿಯಮ ಉಲ್ಲಂಘನೆ
ಮಣಿಪಾಲ, ಫೆ.4: ಮಣಿಪಾಲ ಸಿಂಡಿಕೇಟ್ ವೃತ್ತದ ಬಳಿ ಸಿಗ್ನಲ್ ಲೈಟ್ನಲ್ಲಿ ಏಕಮುಖ ಸಂಚಾರದ ಸುವ್ಯವಸ್ಥೆ ಇದ್ದರೂ, ಫುಡ್ ಡೆಲಿವರಿ ಬೈಕುಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಿರುದ್ಧ ದಿಕ್ಕುಗಳಲ್ಲಿ ಸಂಚರಿಸುವುದು ನಿತ್ಯವು ಕಂಡುಬರುತ್ತಿದೆ ಎಂದು ಸಾಮಾಜಿಕ ಕಾರ್ಯ ಕರ್ತರು ಆರೋಪಿಸಿದ್ದಾರೆ. ಇವರನ್ನು ಹಿಂಬಾಲಿಸಿಕೊಂಡು ಇತರ ದ್ವಿಚಕ್ರ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದು, ಈ ಕಾರಣದಿಂದ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ವೃತ್ತದ ಬಳಿ ಅಪಘಾತಗಳು ಸಂಭವಿಸಲು ಕಾರಣ ವಾಗುತ್ತಿವೆ. ಜಿಲ್ಲಾಡಳಿತ, ಸಂಚಾರ ಪೋಲಿಸ್ ಠಾಣೆ ಸಿಂಡಿಕೇಟ್ ವೃತ್ತದ ಬಳಿ ಸಂಚಾರ ನಿಯಮ ಉಲ್ಲಂಘಿಸುವರ ವಿರುಧ್ಧ ಶಿಸ್ತುಕ್ರಮ ಜರಗಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
ಬರೋಬ್ಬರಿ 6000 ಕೋಟಿ ಹಗರಣ: ನುಂಗಿ ನೀರು ಕುಡಿದವರಾರು? ಅಬಕಾರಿ ಲಂಚಾವತಾರದ ಇಂಚಿಂಚೂ ಮಾಹಿತಿ ಇಲ್ಲಿದೆ
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಅಬಕಾರಿ ತಲೆನೋವು ಶುರುವಾಗಿದೆ. ಅಬಕಾರಿ ಇಲಾಖೆಯಲ್ಲಿ ಸುಮಾರು 6000 ಕೋಟಿ ಹಗರಣ ನಡೆದಿದೆ ಎಂಬ ಆರೋಪ ಇದಾಗಿದೆ. ಹೀಗಾಗಿ ಸಚಿವ ಆರ್ ಬಿ ತಿಮ್ಮಾಪೂರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ. ಕಳೆದ ಎರಡು ದಿನಗಳಲ್ಲಿ ವಿಧಾನಸಭೆಯಲ್ಲೂ ಈ ಕುರಿತಾಗಿ ಸದ್ದು ಗದ್ದಲ ಉಂಟಾಗಿದೆ. ಆದರೆ ಅಬಕಾರಿ ಸಚಿವರು ತಮ್ಮ ವಿರುದ್ಧದ ಆರೋಪ ನಿರಾಕರಣೆ ಮಾಡಿದ್ದಾರೆ. ಹಾಗಾದರೆ ಏನಿದು ಅಬಕಾರಿ ಹಗರಣ? ಇದರಲ್ಲಿ ಯಾವ ರೀತಿಯಲ್ಲಿ ಲಂಚಾವತಾರ ನಡೆದಿದೆ ಎಂಬ ಮಾಹಿತಿ ಇಲ್ಲಿದೆ.
ಎನ್ಸಿಪಿ ವಿಲೀನದ ಕುರಿತು ಮಾತನಾಡಲು ಫಡ್ನವೀಸ್ ಗೆ ಯಾವುದೇ ಹಕ್ಕಿಲ್ಲ: ಶರದ್ ಪವಾರ್
ಮುಂಬೈ, ಫೆ. 4: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎನ್ಸಿಪಿಯ ಉಭಯ ಬಣಗಳ ವಿಲೀನ ಚರ್ಚೆಗಳ ಭಾಗವಾಗಿರಲಿಲ್ಲ ಮತ್ತು ಆ ಕುರಿತು ಹೇಳಿಕೆ ನೀಡಲು ಅವರಿಗೆ ಯಾವುದೇ ಹಕ್ಕು ಇಲ್ಲ ಎಂದು ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಹೇಳಿದ್ದಾರೆ. ಬುಧವಾರ ಬಾರಾಮತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಸಿಪಿ (ಎಸ್ಪಿ) ನಾಯಕ ಜಯಂತ್ ಪಾಟೀಲ್ ಮತ್ತು ಎನ್ಸಿಪಿ ವರಿಷ್ಠ ಅಜಿತ್ ಪವಾರ್ ಅವರು ವಿಲೀನ ಮಾತುಕತೆಗಳನ್ನು ಮುನ್ನಡೆಸುತ್ತಿದ್ದರು ಎಂದು ಹೇಳಿದರು. ಉಪಮುಖ್ಯಮಂತ್ರಿ ಅಜಿತ್ ಜ. 28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಅಜಿತ್ ನಿಧನದ ಬಳಿಕ ಪವಾರ್ ಮತ್ತು ಅವರ ಪಕ್ಷದ ಇತರ ನಾಯಕರು, ವಿಲೀನ ಮಾತುಕತೆಗಳು ಮುಂದುವರಿದ ಹಂತದಲ್ಲಿದ್ದವು ಮತ್ತು ಅಜಿತ್ ಫೆ. 12ರಂದು ಉಭಯ ಬಣಗಳ ವಿಲೀನವನ್ನು ಘೋಷಿಸಲು ನಿರ್ಧರಿಸಿದ್ದರು ಎಂದು ಹೇಳಿದ್ದರು. ಆದರೂ ಫಡ್ನವೀಸ್, ವಿಲೀನ ಮಾತುಕತೆಗಳು ನಿಜವಾಗಿಯೂ ಪ್ರಗತಿಯಲ್ಲಿದ್ದರೆ ಅಜಿತ್ ತಮ್ಮೊಂದಿಗೆ ವಿವರಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಹೇಳಿದ್ದರು. ಈ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪವಾರ್, ‘ನನ್ನ ಹೆಸರನ್ನು ಉಲ್ಲೇಖಿಸಲು ಅವರಿಗೆ ಯಾವ ಹಕ್ಕು ಇದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಅವರು ವಿಲೀನ ಮಾತುಕತೆಗಳ ಭಾಗವಾಗಿರಲಿಲ್ಲ, ಹೀಗಾಗಿ ಆ ಬಗ್ಗೆ ಹೇಳಿಕೆ ನೀಡಲು ಅವರಿಗೆ ಯಾವುದೇ ಹಕ್ಕು ಇಲ್ಲ’ ಎಂದು ಉತ್ತರಿಸಿದರು. ಉಭಯ ಬಣಗಳ ವಿಲೀನ ಈಗ ನಡೆಯಲಿದೆಯೇ ಎಂಬ ಪ್ರಶ್ನೆಗೆ ಪವಾರ್, ‘ಪರಸ್ಪರರನ್ನು ಬೆಂಬಲಿಸುವುದು ಈಗ ನಮ್ಮ ಆದ್ಯತೆಯಾಗಿದೆ ಮತ್ತು ನಂತರ ಹೇಗೆ ಮುಂದುವರಿಯಬೇಕು ಎನ್ನುವುದನ್ನು ನಿರ್ಧರಿಸಲಾಗುವುದು’ ಎಂದು ಉತ್ತರಿಸಿದರು. ‘ರಾಜಕೀಯ ಚರ್ಚೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ನಾವು ಯಾರೊಂದಿಗೂ ಮಾತುಕತೆ ನಡೆಸುತ್ತಿಲ್ಲ’ ಎಂದರು. ಅಜಿತ್ ನಿಧನದ ಬಳಿಕ ಉಪಮುಖ್ಯಮಂತ್ರಿಯಾಗಿ ಅವರ ಪತ್ನಿ ಸುನೇತ್ರಾ ಪವಾರ್ ನೇಮಕ ಕುರಿತು ಪ್ರಶ್ನೆಗೆ ಉತ್ತರಿಸಿದ ಪವಾರ್, ಆ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅವರಿಗೆ ಅವಕಾಶ ಸಿಕ್ಕಿರುವುದು ಸಂತೋಷದ ಮತ್ತು ತೃಪ್ತಿಯ ವಿಷಯವಾಗಿದೆ ಎಂದರು. ಬಾರಾಮತಿಯಲ್ಲಿ ಪವಾರ್ ಕುಟುಂಬವು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ವಿದ್ಯಾ ಪ್ರತಿಷ್ಠಾನದ ಆವರಣದಲ್ಲಿ ಅಜಿತ್ ಗಾಗಿ ಸ್ಮಾರಕ ನಿರ್ಮಾಣವನ್ನು ಯೋಜಿಸಲಾಗುತ್ತಿದೆ ಎಂಬ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ ಅವರು, ‘ನಾನು ಆ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ಆ ಕುರಿತು ಇನ್ನೂ ಯಾವುದೇ ಚರ್ಚೆಗಳು ನಡೆದಿಲ್ಲ. ನಾವು ಒಟ್ಟಿಗೆ ಕುಳಿತು ನಿರ್ಧರಿಸುತ್ತೇವೆ’ ಎಂದು ತಿಳಿಸಿದರು. ಗಮನಾರ್ಹವಾಗಿ, ಅಜಿತ್ ಅವರ ನಿಕಟ ಸಹಾಯಕ ಮತ್ತು ಪವಾರ್ ಕುಟುಂಬದ ಆಪ್ತ ಕಿರಣ ಗುಜರ್ ಅವರು, ಅಜಿತ್ ಅಂತ್ಯಸಂಸ್ಕಾರ ನಡೆದ ವಿದ್ಯಾ ಪ್ರತಿಷ್ಠಾನದ ಆವರಣದಲ್ಲಿ ಸ್ಮಾರಕವನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ರವಿವಾರ ತಿಳಿಸಿದ್ದರು.
ಫೆ.5ರಿಂದ ಬಹುಭಾಷಾ ನಿರಂತರ ನಾಟಕೋತ್ಸವ
ಉಡುಪಿ, ಫೆ.4: ನಿರಂತರ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ 8ನೇ ವರ್ಷದ ಬಹುಭಾಷಾ ನಿರಂತರ ನಾಟಕೋತ್ಸವ’ವು ಫೆ.5ರಿಂದ 8ವರೆಗೆ ಉದ್ಯಾವರದ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಉದ್ಯಾವರ ಗ್ರಾಮ ಪಂಚಾಯತ್ ಕಚೇರಿಯ ಹಿಂಭಾಗದಲ್ಲಿರುವ ಕಾಲೇಜಿನ ಮೈದಾನದಲ್ಲಿ ಪ್ರತಿದಿನ ಸಂಜೆ ಗಂಟೆ 6.30ಕ್ಕೆ ನಾಟಕಗಳು ಆರಂಭವಾಗಲಿವೆ. ಫೆ.5ರಂದು ಭೂಮಿಗೀತಾ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ’ನೆಲ ರ್ನೀ’ದ ದುನಿಪು’ ಎಂಬ ತುಳು ನಾಟಕ, ಫೆ.6ರಂದು ರಂಗಾಯಣ ಶಿವಮೊಗ್ಗದ ರೆಪಟರಿ ಕಲಾವಿದರು ಅಭಿನಯಿ ಸುವ ’ನಮ್ಮಳಗೊಬ್ಬ ಗಾಂಧಿ’ ಕನ್ನಡ ನಾಟಕ, ಫೆ.7ರಂದು ಅಸ್ತಿತ್ವ ಮಂಗಳೂರು ಇವರು ನಟಿಸುವ ಕೊಂಕಣಿ ನಾಟಕ ’ಭಾಟಗಾರ ಮುನಿಸ್’ ಮತ್ತು ಫೆ.8ರಂದು ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇರ್ಟ ಕೇರಳ ಇವರಿಂದ ಮಲಯಾಳಂ ನಾಟಕ ’ಕೂಹೂ’ ಪ್ರದರ್ಶನವಾಗಲಿದೆ. ಫೆ.7ರ ಕಾರ್ಯಕ್ರಮದಲ್ಲಿ 800 ಮೀಟರ್ ದೂರವನ್ನು ನಿರಂತರವಾಗಿ ಈಜುತ್ತಾ ಕೊಳಲು ವಾದನ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ವಿಶ್ವದಾಖಲೆ ಸ್ಥಾಪಿಸಿರುವ ಉದ್ಯಾವರ ಮೂಲದ ಸಾಧಕ ರೂಬನ್ ಮಚಾದೊರವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಟರ್ಕಿಶ್ ಏರ್ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ಟರ್ಕಿಶ್ ಏರ್ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂಡಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಏರ್ಲೈನ್ಸ್ನಲ್ಲಿ 236 ಜನರು ಪ್ರಯಾಣಿಸುತ್ತಿದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
Yumnam Khemchand Singh: ಮಣಿಪುರ ನೂತನ ಸಿಎಂ ಆಗಿ ಯುಮ್ನಮ್ ಖೇಮ್ಚಂದ್ ಸಿಂಗ್ ಪ್ರಮಾಣವಚನ ಸ್ವೀಕಾರ
Yumnam Khemchand Singh: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ಇಂದು ಫೆಬ್ರವರಿ 4ರ ಬುಧವಾರ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಸುಮಾರು ಒಂದು ವರ್ಷ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದ ನಂತರ ಹೊಸ ಸರ್ಕಾರ ರಚನೆಯಾಗಿದ್ದು, ಈ ಬೆಳವಣಿಗೆಯನ್ನು ರಾಜ್ಯದ ರಾಜಕೀಯದಲ್ಲಿ ಮಹತ್ವದ ತಿರುವು ಎಂದು ಕಾಣಲಾಗುತ್ತಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ
ಭಟ್ಕಳ: ಮಿನಿ ವಿಧಾನಸೌಧದಲ್ಲಿ ಆಧಾರ್ ಸೇವೆ ಪುನಾರಂಭ
ಭಟ್ಕಳ: ಕಳೆದ ಎರಡು–ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ಭಟ್ಕಳ ತಾಲ್ಲೂಕು ಆಡಳಿತ ಭವನದ (ಮಿನಿ ವಿಧಾನಸೌಧ) ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಮಂಗಳವಾರ ಪುನಾರಂಭಗೊಂಡಿದ್ದು, ಆಧಾರ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಸಾರ್ವಜನಿಕರಿಗೆ ಬಹು ನಿರಾಳತೆ ದೊರೆತಿದೆ. ಮಿನಿ ವಿಧಾನಸೌಧದಲ್ಲಿದ್ದ ಆಧಾರ್ ಕಿಟ್ನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಖಾಸಗಿ ಸಂಸ್ಥೆಗೆ ನೀಡಿದ್ದ ಒಪ್ಪಂದ ಅವಧಿ ಮುಗಿದ ನಂತರ ಕೇಂದ್ರ ನಿಷ್ಕ್ರಿಯವಾಗಿತ್ತು. ಇದರಿಂದ ಖಾಸಗಿ ಕೇಂದ್ರಗಳು ಹಾಗೂ ಟೈಪಿಂಗ್ ಕೇಂದ್ರಗಳಲ್ಲಿ ಆಧಾರ್ ಸೇವೆ ಸ್ಥಗಿತಗೊಂಡು, ಸಾರ್ವಜನಿಕರು ತಾಲ್ಲೂಕು ಕಚೇರಿ ಮತ್ತು ಅಂಚೆ ಕಚೇರಿಗಳಲ್ಲಿರುವ ಸರ್ಕಾರಿ ಕೇಂದ್ರಗಳ ಮೇಲೆಯೇ ಅವಲಂಬಿತರಾಗಿದ್ದರು. ತಾಂತ್ರಿಕ ಕಾರಣಗಳಿಂದ ಅಲ್ಲಿ ಕೂಡ ಸೇವೆ ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿತ್ತು. ಈ ಪರಿಸ್ಥಿತಿಯಿಂದಾಗಿ ಆಧಾರ್ ತಿದ್ದುಪಡಿ ಹಾಗೂ ನವೀಕರಣಕ್ಕಾಗಿ ಜನರು ಅಂಚೆ ಕಚೇರಿಗಳಿಗೆ ಮರುಮರು ಭೇಟಿ ನೀಡಬೇಕಾಗಿತ್ತು. ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದರು. ಪ್ರವೇಶ ಪ್ರಕ್ರಿಯೆ ಸೇರಿದಂತೆ ಅನೇಕ ಅಗತ್ಯ ಕಾರ್ಯಗಳಲ್ಲಿ ವಿಳಂಬ ಉಂಟಾಗಿತ್ತು. ಕೇಂದ್ರ ಅಂಚೆ ಕಚೇರಿಯಲ್ಲಿ ತಿಂಗಳಲ್ಲಿ ಒಮ್ಮೆ ಸೀಮಿತ ಸಂಖ್ಯೆಯಲ್ಲಿ ಟೋಕನ್ ನೀಡಿ ಆಧಾರ್ ಸಂಬಂಧಿತ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿತ್ತು. ಆದರೆ ಟೋಕನ್ ಪಡೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಜನರು ಮುಂಜಾನೆಯೇ ಚಿಕ್ಕ ಮಕ್ಕಳೊಂದಿಗೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಧಾರ್ ಸಮಸ್ಯೆ ಗಂಭೀರವಾಗುತ್ತಿದ್ದಂತೆ ವಿಷಯವನ್ನು ಜಿಲ್ಲಾ ಆಡಳಿತದ ಗಮನಕ್ಕೆ ತರಲಾಗಿದ್ದು, ಸಾಮಾಜಿಕ ಸಂಘಟನೆಗಳ ಮೂಲಕ ಭಟ್ಕಳ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮಾಹಿತಿ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸರ್ಕಾರಿ ಮಟ್ಟದಲ್ಲಿ ಹಸ್ತಕ್ಷೇಪ ಮಾಡಿ ಮಿನಿ ವಿಧಾನ ಸೌಧದಲ್ಲಿ ಆಧಾರ್ ಸೇವೆ ಪುನರಾರಂಭಕ್ಕೆ ಕ್ರಮ ಕೈಗೊಂಡರು. ಆದರೆ ಲಕ್ಷಾಂತರ ಜನಸಂಖ್ಯೆ ಹೊಂದಿರುವ ಭಟ್ಕಳ ತಾಲ್ಲೂಕಿಗೆ ಕೇವಲ ಎರಡು ಆಧಾರ್ ಕೇಂದ್ರಗಳು ಸಾಲದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಂದು ಪಂಚಾಯತ್ ಕಚೇರಿಗಳಲ್ಲೂ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸುವಂತೆ ಅವರು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ನಾಗೇಂದ್ರ ಕೊಲಾಶೆಟ್ಟಿ ಅವರು, ಮಿನಿ ವಿಧಾನಸೌಧದಲ್ಲಿರುವ ಆಧಾರ್ ಕೇಂದ್ರದಲ್ಲಿ ಪ್ರತಿದಿನ 50ರಿಂದ 60 ಟೋಕನ್ಗಳನ್ನು ವಿತರಿಸಲಾಗುವುದು ಎಂದರು. ತುರ್ತು ಅಗತ್ಯ ಇರುವ ವರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸಣ್ಣ ಪ್ರಮಾಣದ ತಿದ್ದುಪಡಿ ಗಳನ್ನು ಯುಐಡಿಎಐ ಜಾಲತಾಣದ ಮೂಲಕ ಆನ್ಲೈನ್ನಲ್ಲಿಯೂ ಮಾಡಬಹುದೆಂದು ಅವರು ಹೇಳಿದರು.
ಭಟ್ಕಳ: ಮುರುಡೇಶ್ವರದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲೊಂದು ಯುವಕನಿಗೆ ಢಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟ ಘಟನೆ ಭಟ್ಕಳ ರೈಲು ನಿಲ್ದಾಣದ ಸಮೀಪದ ರೈಲ್ವೆ ಸೇತುವೆ ಕೆಳಭಾಗದಲ್ಲಿ ಬುಧವಾರ ನಡೆದಿದೆ. ಮೃತ ಯುವಕನನ್ನು ಗುಳ್ಮಿ ನಿವಾಸಿ ಮುಹಮ್ಮದ್ ನಾಸಿರ್ (33) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಸತ್ತಿನಲ್ಲಿ ವಿರೋಧ ಪಕ್ಷದ ಧ್ವನಿ ಹತ್ತಿಕ್ಕುವ ಪ್ರಯತ್ನ ಆತಂಕಕಾರಿ: ಸಿಎಂ ಸಿದ್ದರಾಮಯ್ಯ ಖಂಡನೆ
ಬೆಂಗಳೂರು: ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿರುವ ಆಡಳಿತ ಪಕ್ಷದ ಈ ನಡೆ ಖಂಡನೀಯ ಎಂದು ಅವರು ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ
ಸಂಸತ್ತಿನಲ್ಲಿ ವಿಪಕ್ಷ ನಾಯಕನ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಧ್ವನಿ ಅಡಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿರುವ ಆಡಳಿತ ಪಕ್ಷದ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ರಾಹುಲ್ಗಾಂಧಿಯವರು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆಯವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಎಂಬ ಪುಸ್ತಕದಲ್ಲಿನ ವಿಷಯಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಭದ್ರತೆಯ ಕುರಿತು ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದರು. ಈ ಪುಸ್ತಕವು 2024ರಲ್ಲೇ ಬಿಡುಗಡೆಯಾಗಬೇಕಿತ್ತು, ಆದರೆ ಕೇಂದ್ರ ಸರಕಾರ ಇದರ ಬಿಡುಗಡೆಗೆ ತಡೆಯೊಡ್ಡಿರುವ ಕಾರಣಕ್ಕೆ ಇನ್ನೂ ಪ್ರಕಟವಾಗಿಲ್ಲ. ಇತ್ತೀಚಿನ ಕಾರವಾನ್ ಮ್ಯಾಗಝಿನ್ನ ಲೇಖನದಲ್ಲಿ ಈ ಪುಸ್ತಕದ ಕೆಲವು ಬರಹಗಳನ್ನು ಉಲ್ಲೇಖಿಸಲಾಗಿದೆ. ಜನರಲ್ ನರವಣೆಯವರು ಕಾರವಾನ್ನ ಲೇಖನದಲ್ಲಿ ಪ್ರಕಟಗೊಂಡಿರುವ ವಿಚಾರಗಳು ತಮ್ಮದಲ್ಲ ಎಂದು ಅಲ್ಲಗಳೆದಿಲ್ಲ. ಬದಲಿಗೆ, ತಮ್ಮ ಪುಸ್ತಕ ಬಿಡುಗೆಯಾಗಲು ಸರಕಾರದ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ನರವಣೆಯವರ ಬರಹಗಳಲ್ಲಿ ತಪ್ಪುಗಳಿದ್ದರೆ ಅಥವಾ ಅಸತ್ಯದಿಂದ ಕೂಡಿದ್ದರೆ ಕೇಂದ್ರ ಸರಕಾರವು ಪುಸ್ತಕದ ಪ್ರಕಟಣೆಗೆ ಅನುಮತಿ ನೀಡಬಾರದಿತ್ತು. ಆದರೆ ಕೇಂದ್ರ ಸರಕಾರದ ಮೌನವು ನರವಾಣೆ ಅವರು ಹೇಳಲು ಹೊರಟಿರುವ ಸತ್ಯವನ್ನು ಅಡಗಿಸುವ ದುಷ್ಟ ಆಲೋಚನೆಯಿಂದ ಕೂಡಿದೆ ಎಂಬುದನ್ನು ತೋರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. 2020ರಲ್ಲಿ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಸರಕಾರವು ದಿಟ್ಟ ಹಾಗೂ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲವಾಯಿತು ಎನ್ನುವ ಮಾಹಿತಿ ಈ ಪುಸ್ತಕದಲ್ಲಿದೆ. ಸರಕಾರದ ಈ ದ್ವಂದ್ವ ನಿಲುವಿನಿಂದ ಸೇನಾಪಡೆಗಳು ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಸಂದಿಗ್ಧತೆಯನ್ನು ಕೂಡ ನಿಭಾಯಿಸಬೇಕಾಯಿತು. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಲ್ಲಿನ ರಾಜಕೀಯ ನಾಯಕತ್ವದ ವೈಫಲ್ಯ ಮತ್ತು ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರಗಳಲ್ಲಿ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಇರುವ ಅಸಾಮರ್ಥ್ಯವನ್ನು ತೋರಿಸುತ್ತದೆ. ಇಂತಹ ವಿಷಯಗಳು ಸಂಸತ್ತಿನಲ್ಲಿ ಚರ್ಚೆಗೆ ಒಳಪಡಬೇಕು ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಜನರ ಪರವಾಗಿ ಪ್ರಶ್ನೆಗಳನ್ನು ಕೇಳುವುದು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯವರ ಕರ್ತವ್ಯವಾಗಿದೆ. ಅದನ್ನು ಅವರು ಮಾಡಿದ್ದಾರೆ. ರಾಹುಲ್ ಗಾಂಧಿಯವರು ಭಾರತದ ಅಥವಾ ನಮ್ಮ ಸೇನಾಪಡೆಗಳ ವಿರುದ್ಧ ಮಾತನಾಡಿಲ್ಲ. ಹೀಗಿದ್ದರೂ ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು, ಸತತ ಎರಡು ದಿನಗಳ ಕಾಲ ಸಂಸತ್ತನ್ನು ಸ್ಥಗಿತಗೊಳಿಸಿ, ಎಂಟು ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿ ಮತ್ತು ರಾಷ್ಟ್ರಪತಿಯ ಭಾಷಣದ ಮೇಲೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವನ್ನೇ ನಿರಾಕರಿಸಿರುವುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದ ಕ್ರಮವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ರಾಜಕೀಯ ಪರಿಣಾಮಗಳನ್ನು ಎದುರಿಸುವ ಬದ್ಧತೆಯನ್ನು ತೋರ್ಪಡಿಸುವಂತಿರಬೇಕು. ಆದರೆ ಮೋದಿ ಸರಕಾರ ಒತ್ತಡ ತಂತ್ರದ ಮೂಲಕ ಎದುರಾಳಿಗಳ ಧ್ವನಿಯನ್ನೇ ಹತ್ತಿಕ್ಕಲು ಹೊರಟಿದೆ. ಇಲ್ಲಿ ಜನರಿಂದ ಮುಚ್ಚಿಡುವಂತಹ ವಿಷಯಗಳು ಇಲ್ಲದಿದ್ದರೆ ಚರ್ಚೆಯನ್ನು ನಿರಾಕರಿಸುತ್ತಿರುವುದು ಯಾಕೆ? ರಾಷ್ಟ್ರೀಯ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗಿದ್ದರೆ, ಸಂಸತ್ತಿನ ಪರಾಮರ್ಶೆಗೆ ಒಳಪಡಲು ಯಾಕೆ ಭಯ? ಬಿಜೆಪಿಯ ದೇಶ ಮೊದಲು, ಧರ್ಮ ಮೊದಲು ಇವೆಲ್ಲ ಬೊಗಳೆ ಭಾಷಣದ ಸರಕುಗಳಷ್ಟೆ. ಮೌನ, ಪಲಾಯನ ಮತ್ತು ಶರಣಾಗತಿಗಳನ್ನು ಸಂಘಪರಿವಾರ ಬಿಜೆಪಿ ನಾಯಕರಿಗೆ ಧಾರೆಯೆರೆದು ಕಳಿಸಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಧ್ವನಿ ಅಡಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿರುವ ಆಡಳಿತ ಪಕ್ಷದ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. @RahulGandhi ಯವರು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆಯವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'… pic.twitter.com/Mhuyv5Hw86 — Siddaramaiah (@siddaramaiah) February 4, 2026
ರಾಯಚೂರು | ಗಾಂಜಾ, ಸಿಎಚ್ ಪೌಡರ್, ಮಟ್ಕಾ ಬುಕ್ಕಿಗಳ ಹಾವಳಿ
► ಅಕ್ರಮ ಚಟುವಟಿಕೆ ತಡೆಗೆ ಪೊಲೀಸ್ ಇಲಾಖೆ ಕಾರ್ಯಾಚರಣೆ ► 25 ದಿನಗಳಲ್ಲಿ 156 ಕೇಸ್, 10 ಜನರ ಗಡಿಪಾರು
ಮೈಲಾರ ಕಾರ್ಣಿಕ 2026: ಸಂಪಾಯಿತಲೇ ಪರಾಕ್..! ಎರಡೇ ನುಡಿಯಲ್ಲಿ ಭವಿಷ್ಯ; ಏನಿದರ ಅರ್ಥ?
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಕಾರ್ಣಿಕ ನುಡಿಯಲಾಗಿದೆ. ಸಂಪಾಯಿತಲೇ ಪರಾಕ್ ಎಂಬುದು ಗೊರವಯ್ಯ ರಾಮಜ್ಜ ಹೇಳಿದ್ದಾರೆ. ಇದನ್ನು ರಾಜ್ಯದ ಜನ ಈ ವರ್ಷದ ಭವಿಷ್ಯವಾಣಿ ಎಂದೇ ಭಾವಿಸುತ್ತಾರೆ. ಏನಿದರ ಅರ್ಥ? ಕಳೆದ ವರ್ಷದ ಕಾರ್ಣಿಕ ನುಡಿ ಏನಿತ್ತು? ಈ ಬಗ್ಗೆ ವಿವರ ಇಲ್ಲಿದೆ.
ಶಿರಸಿ| ವ್ಯಕ್ತಿಯ ಕೊಲೆ ಪ್ರಕರಣ: ಆರೋಪಿಗಳು ಖುಲಾಸೆ
ಶಿರಸಿ: 2019ರ ಎಪ್ರಿಲ್ ನಲ್ಲಿ ಲೋಕಸಭಾ ಚುನಾವಣೆಯ ಸಂದರ್ಭ ಬಾಬಾ ಜಾನ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 16 ಮಂದಿ ಆರೋಪಿಗಳ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಪೊಲೀಸರು ಅಂತಿಮ ವರದಿಯನ್ನು ಸಲ್ಲಿಸಿದ್ದರು. ಸದ್ರಿ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿರಸಿ, ಸಾಕ್ಷಿಗಳ ವಿಚಾರಣೆ ಮಾಡಿದ ನಂತರ 16 ಆರೋಪಿಗಳ ಪೈಕಿ 15 ಆರೋಪಿಗಳನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಆರೋಪಿಗಳ ಪರವಾಗಿ ಮಂಗಳೂರಿನ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ನ ವಕೀಲರಾದ ಆಸಿಫ್ ಬೈಕಾಡಿ, ಒಮರ್ ಫಾರೂಕ್ ಮುಲ್ಕಿ, ಇಜಾಝ್ ಅಹ್ಮದ್ ಉಳ್ಳಾಲ ವಾದಿಸಿದ್ದಾರೆ.
ದತ್ತಪೀಠದಲ್ಲಿ ಹೊಸ ಧಾರ್ಮಿಕ ಆಚರಣೆಗೆ ಅವಕಾಶ ನೀಡಿರುವುದು ಕಾನೂನು ಬಾಹಿರ: ವಿಎಚ್ಪಿ
ಚಿಕ್ಕಮಗಳೂರು, ಫೆ.4: ಶ್ರೀಗುರುದತ್ತಾತ್ರೇಯ ಸ್ವಾಮಿ ಪೀಠದಲ್ಲಿ ಗುಹೆಯ ಒಳಭಾಗದಲ್ಲಿ ಹೊಸ ಹೊಸ ಆಚರಣೆ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ಆರೋಪಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿ.ರಂಗನಾಥ್, ಗುರುದತ್ತಾತ್ರೇಯ ಪೀಠದಲ್ಲಿ ಹಿಂದೆ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಯಾವುದೇ ರೀತಿಯ ಹೊಸ ಆಚರಣೆಗೆ ಅವಕಾಶ ನೀಡಿರಲಿಲ್ಲ. ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದ ನಂತರದಲ್ಲಿ ಅಪರ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಗಳಾಗಿದ್ದು, ಜ.23ರಂದು ಹೊಸದಾಗಿ ಕಲಮೆ ತಯ್ಯಬಾ ಆಚರಣೆ ಮಾಡಿದ್ದು, ಈ ಆಚರಣೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿರುವುದು ಕಾನೂನು ಬಾಹಿರವಾಗಿದೆ ಎಂದು ಹೇಳಿದರು. ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ದತ್ತಪೀಠಕ್ಕೆ ಸಂಬಂಧಿಸಿದಂತೆ ದಾವೆ ನಡೆಯುತ್ತಿದ್ದು, ನ್ಯಾಯಾಲಯದ ಆದೇಶವಾಗುವವರೆಗೂ ಯಾವುದೇ ಹೊಸ ಆಚರಣೆಗೆ ಅವಕಾಶವಿರುವುದಿಲ್ಲ. ಸಂಘಟನೆಯು ದತ್ತಪೀಠದಲ್ಲಿ ದತ್ತ ಗುಹೆಯ ಮುಂಭಾಗದಲ್ಲಿ ಹೋಮ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಹೋಮ ಮಾಡಲು ಅವಕಾಶ ನೀಡಲು ಬರುವುದಿಲ್ಲ ಎಂದು ಹೇಳಿದ್ದರಿಂದ ನಾವು ಹೋಮವನ್ನು ಪಕ್ಕದ ಶೆಡ್ನಲ್ಲಿ ಮಾಡಲಾಗಿದೆ ಎಂದರು. ಜಿಲ್ಲಾಡಳಿತ ಕಲಮೆ ತಯ್ಯಬಾ ಆಚರಣೆಗೆ ಅವಕಾಶ ನೀಡಿರುವುದರಿಂದ ನಮಗೂ ಗುಹೆಯ ಮುಂಭಾಗದಲ್ಲಿ ಹೋಮ ಮಾಡಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಲಾಗುವುದು. ಒಂದು ವೇಳೆ ನಮಗೆ ಹೋಮ ಮಾಡಲು ಅವಕಾಶ ನೀಡದಿದ್ದಲ್ಲಿ ಜಿಲ್ಲಾಧಿಕಾರಿಗಳ ವಿರುದ್ದವೆ ದಾವೆ ಅರ್ಜಿಯನ್ನು ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಿಂದೂ ಪೂಜಾ ಪದ್ಧತಿಯಲ್ಲಿ ಮದುವೆ ಆಗದೇ ಇರುವವರೇ ಪೂಜೆ ಮಾಡಬೇಕೆಂದು ನಿಯಮವಿಲ್ಲ. ಆದರೂ ಈಗ ದತ್ತಾತ್ರೇಯರ ಪೂಜೆ ಮಾಡುತ್ತಿರುವ ಅರ್ಚಕರು ಅವಿವಾಹಿತರೇ ಆಗಿದ್ದಾರೆ. ಶಾಖಾದ್ರಿಯವರ ಹೇಳಿಕೆಯಂತೆ ಮುಜಾವರ್ಗಳು ಅವಿವಾಹಿತರಾಗಿರಬೇಕು ಮತ್ತು 25 ವರ್ಷಗಳಿಗಿಂತ ಹೆಚ್ಚು ಅವಧಿಗೆ ಪೂಜೆ ಮಾಡುವಂತಿಲ್ಲ. ಈಗ ಇರುವ ಮುಜಾವರ್ಗಳು ವಿವಾಹಿತರಾಗಿದ್ದಾರೆ ಮತ್ತು 35 ವರ್ಷ ಪೂಜೆ ಮಾಡುತ್ತಿದ್ದಾರೆ. ಸೈಯದ್ ಫೀರ್ ಮೊಹಮ್ಮದ್ ಶಾಖಾದ್ರಿ ಅವರ ಅಪೇಕ್ಷೆ ಮತ್ತು ನಿಯಮಗಳಿಗೆ ಅನುಸಾರವಾಗಿ ಕೂಡಲೇ ಮುಜಾವರ್ಗಳನ್ನು ಬದಲಾಯಿಸುವಂತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಮಿತ್, ಸುನೀಲ್, ಶ್ಯಾಂ ವಿ.ಗೌಡ, ಪುಷ್ಪಾಂಜಲಿ, ಮೇಘ, ವಿನುತಾ ಉಪಸ್ಥಿತರಿದ್ದರು.
ಕಲಬುರಗಿ | ಮೊಟ್ಟೆ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಂಗನವಾಡಿ ಟೀಚರ್, ಸಿಬ್ಬಂದಿ
ಕಲಬುರಗಿ : ನಗರದ ಸ್ಟೇಷನ್ ಬಝಾರ್ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ಹಣ ಬಿಡುಗಡೆ ಮಾಡುವುದಕ್ಕೆ ಲಂಚ ಪಡೆಯುತ್ತಿದ್ದ ವೇಳೆ ಅಂಗನವಾಡಿ ಟೀಚರ್ ಹಾಗೂ ಯು.ಎಫ್.ಡಬ್ಲ್ಯೂಸಿ ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬುಧವಾರ ನಡೆದಿದೆ. ಬಂಧಿತರನ್ನು ಅಂಗನವಾಡಿ ಟೀಚರ್ ಹೀನಾ ಹಾಗೂ ಯು.ಎಫ್.ಡಬ್ಲ್ಯೂಸಿ ಸಿಬ್ಬಂದಿ ಪಿಂಕುಬಾಯಿ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಉದಯನಗರ ನಿವಾಸಿ ಸೌಭಾಗ್ಯ ಬಲಭೀಮ ರಾಠೋಡ ಅವರು ನೀಡಿದ ದೂರಿನ ಮೇರೆಗೆ, ಲೋಕಾಯುಕ್ತ ಎಸ್ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್ಪೆಕ್ಟರ್–2 ರಾಜಶೇಖರ ಬಡದೆಸಾರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಏನಿದು ಪ್ರಕರಣ? : ಸ್ಟೇಷನ್ ಬಝಾರ್ ಅಂಗನವಾಡಿ ಕೇಂದ್ರಕ್ಕೆ ಮೂರು ತಿಂಗಳ ಮೊಟ್ಟೆ ಹಣವಾಗಿ ಒಟ್ಟು 14,490 ರೂ. ಜಮೆಯಾಗಿತ್ತು. ಈ ಹಣವನ್ನು ಬಿಡುಗಡೆ ಮಾಡುವ ನೆಪದಲ್ಲಿ ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಒಂದು ತಿಂಗಳ ಮೊಟ್ಟೆ ಹಣವಾಗಿ 4,830 ರೂ. ಹಾಗೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿಗೆ ತಲಾ 600 ರೂ. ನಂತೆ 1,200 ರೂ. ಸೇರಿ ಒಟ್ಟು 6,030 ರೂ. ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ.
ಹೊಸದಿಲ್ಲಿ: ಬಜೆಟ್ ನಂತರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ ರೈಲ್ವೆ ಮೂಲಸೌಕರ್ಯ ವೃದ್ಧಿಸುವ ಹಾಗೂ ರಾಜ್ಯದ ಇನ್ನೂ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದರು. ಈಗಾಗಲೇ ರಾಜ್ಯಕ್ಕೆ ಹೈ ಸ್ಪೀಡ್ ರೈಲು ಕಾರಿಡಾರ್ಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ಬೆಂಗಳೂರು-ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್ ನೀಡಲಾಗಿದೆ. ಈ ಮಾರ್ಗವು ಹುಬ್ಬಳ್ಳಿ, ಬೆಳಗಾವಿ ಮೂಲಕ ಹಾದು ಹೋಗಲಿದೆ ಎಂದು ರೈಲ್ವೆ ಸಚಿವರು ತಮಗೆ ತಿಳಿಸಿದರು ಎಂದು ಸಚಿವ ಕುಮಾರಸ್ವಾಮಿ ಹೇಳಿದರು. ಇದಲ್ಲದೆ ಬೆಂಗಳೂರು-ಮುಂಬೈಗೆ ಹೊಸ ರೈಲು ಆರಂಭಿಸುವ ಬಗ್ಗೆ ಮಾಹಿತಿಯನ್ನು ರೈಲ್ವೆ ಸಚಿವರು ತಮಗೆ ನೀಡಿದರು. ಬೆಂಗಳೂರು-ಪುಣೆ ಹೈ ಸ್ಪೀಡ್ ರೈಲು ಕಾರಿಡಾರ್ ಹಾಗೂ ಬೆಂಗಳೂರು-ಮುಂಬೈ ನಡುವಿನ ಹೊಸ ರೈಲಿನಿಂದ ಕರ್ನಾಟಕಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು. ಹೊಸ ರೈಲು ಸಂಪರ್ಕ ಮತ್ತು ಹಾಲಿ ರೈಲು ಮಾರ್ಗಗಳಲ್ಲಿ ವನ್ಯಜೀವಿಗಳ ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಬೇಲಿ ಮತ್ತು ಬ್ಲಾಕ್ ಕಾರಿಡಾರ್ಗಳ ಅನುಷ್ಠಾನದ ಕುರಿತು ವಿವರವಾದ ಮಾತುಕತೆ ನಡೆಸಲಾಯಿತು. ಮಂಡ್ಯ ಲೋಕಸಭೆ ಕ್ಷೇತ್ರ ಸೇರಿದಂತೆ ಕರ್ನಾಟಕದ ಎಲ್ಲಾ ಬಾಕಿ ಇರುವ ರೈಲ್ವೆ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್ಪ್ರೆಸ್ ರಾಮನಗರದಲ್ಲಿ ನಿಲುಗಡೆಯನ್ನು ಕೋರಿ ಮನವಿ ಮಾಡಲಾಯಿತು ಎಂದು ಕುಮಾರಸ್ವಾಮಿ ಹೇಳಿದರು. ಇದಲ್ಲದೆ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಮಂಡ್ಯ ಜಿಲ್ಲೆಯಲ್ಲಿ ಸುಧಾರಿತ ಆಧಾರ್ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಕೂಡ ರೈಲ್ವೆ ಸಚಿವರಿಗೆ ಮನವರಿಕೆ ಮಾಡಲಾಯಿತು. ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ, ಸಂಪರ್ಕ ಮತ್ತು ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರ ಜೊತೆ ನಡೆಸಿದ ಚರ್ಚೆ ಫ್ರಲಪ್ರದವಾಗಿತ್ತು. ತಮ್ಮ ಮನವಿಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಅವರು ಉಪಸ್ಥಿತರಿದರು.
ಶಿವಮೊಗ್ಗ | ಕೇಂದ್ರ ಕಾರಾಗೃಹಕ್ಕೆ ನಿಷೇಧಿತ ವಸ್ತು ಎಸೆದ ಮೂವರು ಆರೋಪಿಗಳ ಬಂಧನ
ಶಿವಮೊಗ್ಗ : ನಗರದ ಹೊರವಲಯದಲ್ಲಿರುವ ಸೋಗಾನೆ ಕೇಂದ್ರ ಕಾರಾಗೃಹದ ಆವರಣಕ್ಕೆ ಮೊಬೈಲ್ ಫೋನ್, ಸಿಗರೇಟ್ ಹಾಗೂ ಬೀಡಿಗಳನ್ನು ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಮ್ರಾನ್ ಪಾಷಾ ಅಲಿಯಾಸ್ ಇಮ್ಮು (25), ಸೈಯದ್ ಮಲ್ಲಿಕ್ ಅಲಿಯಾಸ್ ತಬ್ರೇಜ್ (22) ಹಾಗೂ ಅಲ್ಲಾ ಬಕಶ್ ಅಲಿಯಾಸ್ ಪೊಟ್ಯಾಟೋ (20) ಎಂದು ಗುರುತಿಸಲಾಗಿದೆ. ಜ.30ರಂದು ಕಾರಾಗೃಹದ ಆವರಣದೊಳಗೆ ಕಪ್ಪು ಬಣ್ಣದ ಗಮ್ ಟೇಪ್ನಿಂದ ಪ್ಯಾಕ್ ಮಾಡಲಾಗಿದ್ದ ಮೊಬೈಲ್ ಫೋನ್, ಬೀಡಿ ಮತ್ತು ಸಿಗರೇಟ್ ಬಂಡಲ್ಗಳನ್ನು ಅಕ್ರಮವಾಗಿ ಎಸೆದು ಹೋಗಿರುವುದು ಪತ್ತೆಯಾಗಿತ್ತು. ಈ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಕೆ.ಟಿ. ಗುರುರಾಜ್ ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸಿ ಫೆ.2ರಂದು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ
ಉಡುಪಿ -ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿದ್ದಾರೆ. ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಬೆಂಗಳೂರು ಮತ್ತು ಕರ್ನಾಟಕ ಕರಾವಳಿ ನಡುವೆ ಓಡಿಸುವ ಅಗತ್ಯವನ್ನು ಮನವರಿಕೆ ಮಾಡಿ, ಮನವಿ ಮಾಡಿದ್ದಾರೆ.
Digital Arrest: 15 ನಿಮಿಷಗಳಲ್ಲಿ 50 ಲಕ್ಷ ರೂ. ಸಾಲ ಮಂಜೂರು: ಬ್ಯಾಂಕ್ ಕ್ರಮಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು: ಸಾಮಾನ್ಯ ಜನರಿಗೆ ಸಣ್ಣ ಮೊತ್ತದ ಸಾಲ ಬೇಕೆಂದರೆ ಹತ್ತಾರು ಬಾರಿ ಬ್ಯಾಂಕ್ ಅಲೆದಾಡಿಸುವ, ನೂರಾರು ದಾಖಲೆಗಳನ್ನು ಕೇಳುವ ಬ್ಯಾಂಕ್ಗಳು, ವಂಚಕರಿಗೆ ಮಾತ್ರ ಹೊಸ ಹೊಸ ದಾರಿಗಳನ್ನು ಹುಡುಕಿ ಕೊಡುತ್ತಿದೆಯೇ? ಎಂಬ ಗಂಭೀರ ಪ್ರಶ್ನೆ ಈಗ ಎದ್ದಿದೆ. 'ಡಿಜಿಟಲ್ ಅರೆಸ್ಟ್' (Digital Arrest) ಹೆಸರಿನಲ್ಲಿ ವಂಚನೆಗೊಳಗಾದ ಅಮಾಯಕ ಮಹಿಳೆಯೊಬ್ಬರಿಗೆ ಕೇವಲ 15 ನಿಮಿಷಗಳಲ್ಲಿ, ಯಾವುದೇ ದಾಖಲೆಗಳಿಲ್ಲದೆ 50
ಭಾರತದ ಗಡಿಯಲ್ಲಿ ನುಸುಳಿ ದೇಶವನ್ನು ಧ್ವಂಸ ಮಾಡಲು ಹೊಂಚು ಹಾಕುತ್ತಿದ್ದ ಜೈಶ್-ಎ-ಮೊಹಮ್ಮದ್ ಕಮಾಂಡರ್ ಸೇರಿದಂತೆ ಇನ್ನೊಬ್ಬ ಉಗ್ರನನ್ನು ಉಧಂಪುರನ ವಿವಿಧ ಭದ್ರತಾ ಪಡೆಗಳು ಜಂಟಿ ಕಾರ್ಯಚರಣೆ ನಡೆಸಿ ಎನ್ ಕೌಂಟರ್ ಮಾಡುವ ಮೂಲಕ ಮಟ್ಟಹಾಕುವಲ್ಲಿ ಯಶಸ್ವಿಯಾಗಿದೆ. ಕಾರ್ಯಚರಣೆ ವೇಳೆ ತಪ್ಪಿಸಿಕೊಳ್ಳಲು ಉಗ್ರರು ಗಡಿಯಲ್ಲಿ ನುಸುಳಿದಾಗಲೂ ಸಹ ಬಿಡದೇ ರಣಬೇಟೆಗಿಳಿದ ಸಿಂಹದಂತೆ ಕಾದು ದಾಳಿ ನಡೆಸಿದೆ ಹತ್ಯೆ ಮಾಡಿದೆ. ಈ ಬೆನ್ನಲ್ಲೆ, ಸದ್ಯ ಈ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿದ್ದು, ಸಂಚೂಕೋರರ ಹುಟ್ಟಡಗಿಸುವ ಕೆಲಸ ಮುಂದುವರೆದಿದೆ.
ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಈ ಸ್ಟೋರಿ ತಪ್ಪದೆ ಓದಿ... Online Games
ಮಕ್ಕಳ ಕೈಗೆ ಮೊಬೈಲ್ ಕೊಡುವುದು &ಮಕ್ಕಳು ಮೊಬೈಲ್ ಬಳಸುವುದನ್ನೇ ದೊಡ್ಡ ಸಾಧನೆ ಎನ್ನುವ ರೀತಿ ಇತ್ತೀಚೆಗೆ ಪೋಷಕರು ಬಿಂಬಿಸುತ್ತಿದ್ದಾರೆ. ಸ್ವಂತ ಅಪ್ಪ &ಅಮ್ಮನಿಂದಲೇ ಇಷ್ಟು ಪ್ರೋತ್ಸಾಹ ಸಿಕ್ಕರೆ ಇನ್ನು ಮಕ್ಕಳು ಸುಮ್ಮನೆ ಇರೋದಕ್ಕೆ ಆಗುತ್ತಾ? ಇಲ್ಲ ಹೀಗೆಲ್ಲಾ ಮನೆಯಲ್ಲೇ ಮೊಬೈಲ್ ನೋಡಲು ಬೆಂಬಲ ಸಿಗುವ ಕಾರಣಕ್ಕೆ, ಮಕ್ಕಳು ಕೂಡ ಮೊಬೈಲ್ ಲೋಕದಲ್ಲಿ ಈಗ ಕಳೆದು
ಮಂಗಳೂರು| ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಾಂತ್ರಿಕ ಕಾರ್ಯಾಗಾರ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ IEEE ವಿದ್ಯಾರ್ಥಿ ವಿಭಾಗವು ಸೋಮವಾರ ಅಂತರರಾಷ್ಟ್ರೀಯ ಸೆಮಿನಾರ್ ಹಾಲ್ ನಲ್ಲಿ ‘ಕೋಡ್–ಮಿಶ್ರ ದೃಶ್ಯಗಳಿಗೆ ಕಡಿಮೆ ಸಂಪನ್ಮೂಲ ಭಾಷಾ ಅಡೆತಡೆಗಳನ್ನು ನಿವಾರಿಸುವುದು’ (“Bridging Low-Resource Language Barriers for Code-mixed Visuals”)ವಿಷಯದ ಕುರಿತು ತಾಂತ್ರಿಕ ಸಂವಾದಾತ್ಮಕ ಕಾರ್ಯಾಗಾರ ಆಯೋಜಿಸಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ನೈಜೀರಿಯಾದ ಎನ್ಎಲ್ಪಿ ಸಂಶೋಧಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಪಿಎಚ್ಡಿ ವಿದ್ವಾಂಸ ಅಲ್ಹಾಜಿ ಇದಿ ಬಬಟೆ ಅವರು ಮಲ್ಟಿಮೋಡಲ್ ಕಲಿಕಾ ವಿಧಾನಗಳ ಮೂಲಕ ಕಡಿಮೆ ಸಂಪನ್ಮೂಲ ಭಾಷೆಗಳು ಮತ್ತು ಕೋಡ್–ಮಿಶ್ರ ಸಂದರ್ಭಗಳಲ್ಲಿ ಎದುರಾಗುವ ಸವಾಲುಗಳು ಹಾಗೂ ಪರಿಹಾರ ಮಾರ್ಗಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸೈನ್ಸಸ್ ನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ ಅವರು ಕೃತಕ ಬುದ್ಧಿಮತ್ತೆ, ನೈಸರ್ಗಿಕ ಭಾಷಾ ಸಂಸ್ಕರಣೆ ಹಾಗೂ ಬಹುಭಾಷಾ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮಕ್ಕೆ ಸಂಯೋಜಕ ಡಾ. ಅಬ್ದುಲ್ಲಾ ಗುಬ್ಬಿ ಸ್ವಾಗತ ಕೋರಿದರು. ಡಾ. ಅಝೀಝ್ ಮುಸ್ತಫಾ ಧನ್ಯವಾದ ಸಲ್ಲಿಸಿದರು. ಸಿಎಸ್ಇ ವಿಭಾಗದ ಮುಖ್ಯಸ್ಥ ಪ್ರೊ. ಸಿನಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಫೆ.5ರಂದು ಉಳ್ಳಾಲ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಮಾಸಿಕ ದ್ಸಿಕ್ರ್ ಮಜ್ಲಿಸ್
ಉಳ್ಳಾಲ: ಇಲ್ಲಿನ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಪ್ರತಿ ತಿಂಗಳು ನಡೆಯುವ ಮಾಸಿಕ ದ್ಸಿಕ್ರ್ ಹಲ್ಕಾ ಕಾರ್ಯಕ್ರಮವು ನಾಳೆ(ಫೆ.5) ಗುರುವಾರ ಮಗ್ರಿಬ್ ನಮಾಝ್ ಬಳಿಕ ಕೂರತ್ ತಂಞಳ್(ನ.ಮ) ಸುಪುತ್ರ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ಮುಹೀನಿ ಅಲ್ ಅಝ್ ಹರಿ ಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಉಳ್ಳಾಲ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಉಳ್ಳಾಲ | 14 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಸೆರೆ
ಉಳ್ಳಾಲ: ಗಾಂಜಾ ಪ್ರಕರಣವೊಂದರಲ್ಲಿ ಶಾಮೀಲಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ ಆರೋಪಿ ಮುಕಚೇರಿ ನಿವಾಸಿ ಮುಹಮ್ಮದ್ ಸಂಶೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಲಯವು ಎಲ್ ಪಿಸಿ ವಾರಂಟ್ ಹೊರಡಿಸಿತ್ತು.14 ವರ್ಷಗಳ ಬಳಿಕ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಸುಪ್ರೀಂ ಕೋರ್ಟ್ಗೆ ಖುದ್ದಾಗಿ ಹಾಜರಾಗಿ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಿಧ ಸಮಸ್ಯೆಗಳ ಕುರಿತು ನ್ಯಾಯಾಲಯದ ಗಮನ ಸೆಳೆದರು. ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡು ಚುನಾವಣಾ ಆಯೋಗ ‘ವಾಟ್ಸಾಪ್ ಆಯೋಗ’ದಂತೆ ವರ್ತಿಸುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಕುತ್ತಿಗೆಗೆ ಕಪ್ಪು ಸ್ಕಾರ್ಫ್ ಧರಿಸಿ ಬಿಳಿ ಉಡುಪಿನಲ್ಲಿ ಹಾಜರಾದ ಬ್ಯಾನರ್ಜಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ.ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಎದುರುಪಕ್ಷದ ವಕೀಲರು ಮಧ್ಯಪ್ರವೇಶಿಸಲು ಯತ್ನಿಸಿದರೂ ಬ್ಯಾನರ್ಜಿ ತಮ್ಮ ಮಾತನ್ನು ಮುಂದುವರಿಸಿದರು. “ನಾನು ಆ ರಾಜ್ಯಕ್ಕೆ ಸೇರಿದವಳು” ಎಂದು ಬ್ಯಾನರ್ಜಿ ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಕಾಂತ್, “ಯಾವುದೇ ಸಂದೇಹವಿಲ್ಲ, ಮೇಡಂ!” ಎಂದು ಹೇಳಿದರು. “ನಿಮ್ಮ ದಯೆಯಿಂದಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನ್ಯಾಯಮೂರ್ತಿ ಬಾಗ್ಚಿ ಮತ್ತು ನ್ಯಾಯಮೂರ್ತಿ ಪಾಂಚೋಲಿ ಜಿ ಅವರಿಗೂ ನನ್ನ ವಿನಮ್ರ ನಮನಗಳು…” ಎಂದು ಬ್ಯಾನರ್ಜಿ ಪ್ರತಿಕ್ರಿಯಿಸಿದರು. ತಮ್ಮ ವಾದ ಮಂಡಿಸಿದ ಬ್ಯಾನರ್ಜಿ, “ಸಮಸ್ಯೆ ಏನೆಂದರೆ ನಮ್ಮ ವಕೀಲರು ಯಾವಾಗಲೂ ನಮ್ಮ ಪ್ರಕರಣವನ್ನು ಮೊದಲಿನಿಂದಲೂ ಹೋರಾಡುತ್ತಿದ್ದಾರೆ. ಆದರೆ ಎಲ್ಲವೂ ಮುಗಿದ ನಂತರ ನಮಗೆ ನ್ಯಾಯ ಸಿಗುತ್ತಿಲ್ಲ. ನ್ಯಾಯ ಬಾಗಿಲಿನ ಹಿಂದೆ ಉಳಿಯುತ್ತದೆ. ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ನಾನು ಚುನಾವಣಾ ಆಯೋಗಕ್ಕೆ ಎಲ್ಲಾ ವಿವರಗಳನ್ನು ಒಳಗೊಂಡಂತೆ ಆರು ಪತ್ರಗಳನ್ನು ಬರೆದಿದ್ದೇನೆ. ಆದರೆ ಯಾವುದೇ ಉತ್ತರವಿಲ್ಲ ಸರ್. ನಾನು ಬಂಧಿತ ಕಾರ್ಮಿಕಳಂತೆ ಇದ್ದೇನೆ ಸರ್. ಬಹುಶಃ ಅದಕ್ಕೆ ಹಣ ನೀಡಬೇಕಾಗಬಹುದು. ನಾನು ತುಂಬಾ ಸಣ್ಣ ವ್ಯಕ್ತಿ. ನಾನು ಸಾಮಾನ್ಯ ಕುಟುಂಬದಿಂದ ಬಂದವಳು. ಆದರೆ ನಾನು ನನ್ನ ಪಕ್ಷಕ್ಕಾಗಿ ಹೋರಾಡುತ್ತಿಲ್ಲ” ಎಂದು ಹೇಳಿದರು. ಈ ಹಂತದಲ್ಲಿ ಸಿಜೆಐ ಕಾಂತ್ “ಮೇಡಂ ಬ್ಯಾನರ್ಜಿ” ಎಂದು ಮಧ್ಯೆ ಪ್ರವೇಶಿಸಿದರು. “ಪಶ್ಚಿಮ ಬಂಗಾಳ ರಾಜ್ಯವು ತನ್ನದೇ ಆದ ರೀತಿಯಲ್ಲಿ ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಅತ್ಯುತ್ತಮ ಕಾನೂನು ತಂಡ ರಾಜ್ಯದ ಪರವಾಗಿ ವಾದಿಸುತ್ತಿದೆ” ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ಆದಾಗ್ಯೂ, ನ್ಯಾಯಾಲಯವು ಬ್ಯಾನರ್ಜಿ ಅವರಿಗೆ ವಾದ ಮುಂದುವರಿಸಲು ಅವಕಾಶ ನೀಡಿತು. ರಾಜ್ಯದಲ್ಲಿ ಎದುರಾಗುತ್ತಿರುವ ಕಾರ್ಯವಿಧಾನ ಸಂಬಂಧಿತ ತೊಂದರೆಗಳನ್ನು ಒಪ್ಪಿಕೊಂಡ ಪೀಠ, ಎಲ್ಲರೂ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಯೋಚಿಸಬೇಕೆಂದು ಸೂಚಿಸಿತು. “ಪ್ರತಿಯೊಂದು ಸಮಸ್ಯೆಗೆ ತನ್ನದೇ ಆದ ಪರಿಹಾರವಿದೆ. ಯಾವುದೇ ಮುಗ್ಧ ನಾಗರಿಕನನ್ನು ಬಿಡಲಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ದಿಸೆಯಲ್ಲಿ ನಾವು ಪರಿಹಾರ ಕಂಡುಕೊಳ್ಳಬೇಕು” ಎಂದು ಸಿಜೆಐ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಲು ಯತ್ನಿಸಿದ ಬ್ಯಾನರ್ಜಿ, “ನೀವು ನನಗೆ ಕೇವಲ ಐದು ನಿಮಿಷಗಳನ್ನು ನೀಡಿದರೆ…” ಎಂದು ಮನವಿ ಮಾಡಿದರು. ಇದಕ್ಕೆ ಧೈರ್ಯ ತುಂಬುವ ಧಾಟಿಯಲ್ಲಿ ಸಿಜೆಐ ಕಾಂತ್, “ಐದು ಅಲ್ಲ, ಹದಿನೈದು ನಿಮಿಷಗಳನ್ನು ನೀಡುತ್ತೇವೆ” ಎಂದು ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ 2027ರ ಅಂತ್ಯದೊಳಗೆ ಎತ್ತಿನಹೊಳೆ ನೀರು
ಬೆಂಗಳೂರು: ಎತ್ತಿನಹೊಳೆ ಯೋಜನೆಯ ಮೂಲಕ 2027ರ ಅಂತ್ಯದೊಳಗೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಕೆರೆಗಳಿಗೆ ನೀರು ಹರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಸಭೆಯಲ್ಲಿ ಕೋಲಾರ
“ನನ್ನ ದೇಶದ್ರೋಹಿ ಸ್ನೇಹಿತ” ಹೇಳಿಕೆ ವಿವಾದ: ಸಂಸತ್ ಸಂಕೀರ್ಣದಲ್ಲಿ ರಾಹುಲ್ ಗಾಂಧಿ–ರವನೀತ್ ಬಿಟ್ಟು ಮಾತಿನ ಚಕಮಕಿ
ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕೇಂದ್ರ ಸಚಿವ ರವನೀತ್ ಬಿಟ್ಟು ನಡುವೆ ಬುಧವಾರ ಸಂಸತ್ ಭವನದ ಸಂಕೀರ್ಣದಲ್ಲಿ ಮಾತಿನ ಚಕಮಕಿ ನಡೆದಿದ್ದು, “ನನ್ನ ದೇಶದ್ರೋಹಿ ಸ್ನೇಹಿತ” ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸಂಸತ್ ಭವನದ ಮಕರ ದ್ವಾರ ಬಳಿ ಅಮಾನತುಗೊಂಡ ಸಂಸದರೊಂದಿಗೆ ರಾಹುಲ್ ಗಾಂಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ, ಬಿಟ್ಟು ಸಂಕೀರ್ಣಕ್ಕೆ ಪ್ರವೇಶಿಸುತ್ತಿದ್ದರು. ಈ ವೇಳೆ ಅಮಾನತುಗೊಂಡ ಸಂಸದರು ಯುದ್ಧ ಗೆದ್ದವರಂತೆ ಕುಳಿತಿದ್ದಾರೆ ಎಂದು ಬಿಟ್ಟು ಪ್ರತಿಕ್ರಿಯಿಸಿದರೆಂದು ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಅವರು “ನೋಡಿ ದೇಶದ್ರೋಹಿ ನಡೆದುಕೊಂಡು ಬರುತ್ತಿದ್ದಾನೆ, ಅವನ ನಡೆಯ ವೇಗ ನೋಡಿ” ಎಂದು ಹೇಳಿ ಕೈಕುಲುಕಲು ಮುಂದಾದರು. ಆದರೆ ಕಾಂಗ್ರೆಸ್ ದೇಶವನ್ನು ಮಾರಿದೆ ಎಂದು ಆರೋಪಿಸಿದ ಬಿಟ್ಟು ಕೈಕುಲುಕುವುದನ್ನು ನಿರಾಕರಿಸಿದರು. ಬಳಿಕ ಕಾಂಗ್ರೆಸ್ ಸಂಸದರು ಬಿಜೆಪಿ ದೇಶವನ್ನು ಮಾರಿದೆ ಎಂದು ತಿರುಗೇಟು ನೀಡಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಬಿಟ್ಟು ಅಲ್ಲಿಂದ ತೆರಳಿದರು. ರವನೀತ್ ಬಿಟ್ಟು ಅವರು ಹಿಂದೆ ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದು, ನಂತರ ಬಿಜೆಪಿ ಸೇರ್ಪಡೆಯಾಗಿದ್ದರು. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕವೂ ಅವರು ಬಿಜೆಪಿಯಲ್ಲೇ ಮುಂದುವರಿದಿದ್ದಾರೆ. ಈ ಹೇಳಿಕೆಯನ್ನು ಸಿಖ್ ಶಾಸಕ ಹಾಗೂ ದಿಲ್ಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಖಂಡಿಸಿದರು. “ಸಿಖ್ಖರು ದೇಶದ್ರೋಹಿಗಳಾಗಲು ಸಾಧ್ಯವಿಲ್ಲ. ಈ ಹೇಳಿಕೆ ಕಾಂಗ್ರೆಸ್ ಮನೋಭಾವದಲ್ಲಿ ಬದಲಾವಣೆ ಇಲ್ಲದಿರುವುದನ್ನು ತೋರಿಸುತ್ತದೆ” ಎಂದು ಅವರು ಹೇಳಿದರು. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷ ಗಾಂಧಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, “ದ್ರೋಹ ಮಾಡಿದವನನ್ನು ಬೇರೆ ಯಾವ ಪದದಲ್ಲಿ ಕರೆಯಬೇಕು? ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡದಾಗ ನಾವು ಇನ್ನೇನು ಮಾಡಬಹುದು?” ಎಂದು ಕಾಂಗ್ರೆಸ್ ಸಂಸದ ಅಮರಿಂದರ್ ರಾಜಾ ವಾರಿಂಗ್ ಪ್ರಶ್ನಿಸಿದರು.
ಆನ್ಲೈನ್ ಗೇಮ್ ವ್ಯಸನಕ್ಕೆ ಬಲಿಯಾದ ಮೂವರು ಸಹೋದರಿಯರು; ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರ ಕಳವಳ
ಗಾಜಿಯಾಬಾದ್: ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಅದು ಹದಿಹರೆಯದವರ ಪಾಲಿಗೆ ಕಂಟಕವಾಗುತ್ತಿದೆಯೇ ಎಂಬ ಅನುಮಾನ ಮತ್ತೆ ಬಲವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದ ಮನಕಲಕುವ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆನ್ಲೈನ್ ಮೊಬೈಲ್ ಗೇಮ್ಗೆ ದಾಸರಾಗಿದ್ದ 12, 14 ಮತ್ತು 16 ವರ್ಷದ ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇವರು ಕೊರಿಯನ್ ಶೈಲಿಯ
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ : ಹೆಲಿಕಾಪ್ಟರ್ ರೈಡ್ಗೆ ಚಾಲನೆ
ಮೊದಲ ಬಾರಿಗೆ ಹೆಲಿಕಾಪ್ಟರ್ ಹತ್ತಿ ಸಂತಸ ವ್ಯಕ್ತಪಡಿಸಿದ ಸರಕಾರಿ ಶಾಲಾ ಮಕ್ಕಳು
ಶಿವಮೊಗ್ಗ | ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬಿಎಂಡಬ್ಲ್ಯೂ ಕಾರು ಢಿಕ್ಕಿ: ಮಹಿಳೆ ಮೃತ್ಯು
ಶಿವಮೊಗ್ಗ : ಅತಿ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪ ನಡೆದಿದೆ. ಮೃತ ಮಹಿಳೆಯನ್ನು ಮಲ್ಲಿಕಾ ಜೋಗಿ (42) ಎಂದು ಗುರುತಿಸಲಾಗಿದೆ. ಅತಿ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ, ಅರ್ಚಕರ ಪತ್ನಿ ಮಲ್ಲಿಕಾ ಜೋಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ನಂತರ ಪಕ್ಕದ ಮರಕ್ಕೆ ಗುದ್ದಿದೆ ಎಂದು ತಿಳಿದು ಬಂದಿದೆ. ಮೃತ ಮಲ್ಲಿಕಾ ಜೋಗಿ ಮೇಗರವಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಅಶೋಕ್ ಜೋಗಿ ಅವರ ಪತ್ನಿಯಾಗಿದ್ದಾರೆ. ಅಪಘಾತದಲ್ಲಿ ಅಶೋಕ್ ಜೋಗಿ ಕೂಡ ತೀವ್ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕೃಷಿ ಆಮದುಗಳಿಗೆ ಅವಕಾಶ ಕಲ್ಪಿಸಿದೆ: ಜೈರಾಮ್ ರಮೇಶ್ ಆರೋಪ
ಹೊಸದಿಲ್ಲಿ,ಫೆ.4: ಭಾರತ-ಅಮೆರಿಕ ನಡುವಿನ ನೂತನ ವ್ಯಾಪಾರ ಒಪ್ಪಂದ ಕುರಿತು ಸರಕಾರದ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್, ಅದು ಪ್ರಮುಖ ವಿವರಗಳನ್ನು ಮರೆಮಾಚಿದೆ ಮತ್ತು ಕೃಷಿ ಆಮದುಗಳಿಗೆ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದೆ. ಡೊನಾಲ್ಡ್ ಟ್ರಂಪ್ ಅವರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಘೋಷಿಸಿ ಒಂದು ದಿನವೇ ಕಳೆದಿದ್ದರೂ ಯಾವುದೇ ಅಧಿಕೃತ ವಿವರಗಳನ್ನು ಈವರೆಗೂ ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿಲ್ಲ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, ಭಾರತವು ಕೃಷಿ ಆಮದುಗಳಿಗೆ ಮುಕ್ತ ಅವಕಾಶ ನೀಡಲು ಒಪ್ಪಿಕೊಂಡಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ಈವರೆಗೆ ಯಾವುದೇ ಜಂಟಿ ಹೇಳಿಕೆಯನ್ನು ಹೊರಡಿಸಲಾಗಿಲ್ಲ ಎಂದು ಅವರು ಬೆಟ್ಟು ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಯದ ಮೇರೆಗೆ ಟ್ರಂಪ್ ಒಪ್ಪಂದವನ್ನು ಘೋಷಿಸಿದ್ದಾರೆ ಎಂದು ಅಭಿಪ್ರಾಯಿಸಿರುವ ರಮೇಶ್, ಒಪ್ಪಂದದ ಹಿಂದೆ ರಾಜಕೀಯ ರಾಜಕೀಯ ಉದ್ದೇಶಗಳ ಸುಳಿವು ನೀಡಿದರು. ಮೋದಿ ಸರಕಾರವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದೊಂದಿಗೆ ಭಾರತದ ವ್ಯಾಪಾರ ಒಪ್ಪಂದಗಳ ಕುರಿತು ಸಂಸತ್ತಿಗೆ ಸಂಪೂರ್ಣ ಮಾಹಿತಿ ನೀಡಬೇಕೆಂಬ ಕಾಂಗ್ರೆಸ್ ಪಕ್ಷದ ಆಗ್ರಹದ ಹಿನ್ನೆಲೆಯಲ್ಲಿ ರಮೇಶ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ. ಈ ಕುರಿತ ಪ್ರತ್ಯೇಕ ಎಕ್ಸ್ ಪೋಸ್ಟ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಸುಂಕಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಸತ್ತನ್ನು ಎದುರಿಸಲು ಮೋದಿಯವರು ಸಿದ್ಧರಿಲ್ಲ ಎಂದು ಆರೋಪಿಸಿದ್ದಾರೆ.
ದುಬೈ ಯಕ್ಷೋತ್ಸವಕ್ಕೆ ಮುಹೂರ್ತ ಪೂಜೆ
ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಆಯೋಜನೆಯ ದುಬೈ ಯಕ್ಷೋತ್ಸವ - 2026ರ ಮುಹೂರ್ತ ಪೂಜೆ ದುಬೈ ಗೀಸೈಸ್ನ ಫಾರ್ಚೂನ್ ಪ್ಲಾಝ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನೆರವೇರಿತು. ಪುತ್ತಿಗೆ ವಾಸುದೇವ ಭಟ್ ಅವರ ನೇತೃತ್ವದಲ್ಲಿ, ಶಿವರಾಜ್ ಭಟ್, ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಸಂತೋಷ್ ರಾವ್ ಎರ್ಮಾಳ್ ಅವರ ಪೌರೋಹಿತ್ಯದಲ್ಲಿ ಮುಹೂರ್ತ ಪೂಜೆಯ ವಿಧಿ ವಿಧಾನಗಳು ಸಂಪನ್ನಗೊಂಡವು. ದುಬೈನ ಶ್ರೀ ರಾಜರಾಜೇಶ್ವರಿ ಭಜನಾ ವೃಂದ ಮತ್ತು ಕೇಂದ್ರದ ಸದಸ್ಯರ ಭಾಗವಹಿಸುವಿಕೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕೇಂದ್ರದ ಕಲಾವಿದರಿಂದ ಸ್ತುತಿ ಪದ್ಯ, ಗೆಜ್ಜೆ ಧಾರಣೆ, ಚೌಕಿಪೂಜೆ, ರಂಗಸ್ಥಳಕ್ಕೆ ದೇವರು ಮತ್ತು ಜೂನ್ 21ರಂದು ನಡೆಯಲಿರುವ ದುಬೈ ಯಕ್ಷೋತ್ಸವ ಸಂಬಂಧಿಸಿ ಯಕ್ಷಗಾನ ಪ್ರಸಂಗ ಅಭ್ಯಾಸಕ್ಕೆ ಚಾಲನೆ ನೀಡಲಾಯಿತು. ಕೇಂದ್ರದ ಹಿರಿಯ-ಕಿರಿಯ, ನೂತನ ಕಲಾವಿದರು ಸೇರಿ ಗೆಜ್ಜೆ ಸೇವೆ ನಡೆಸಿದರು. ವೆಂಕಟೇಶ ಶಾಸ್ತ್ರಿ ಅವರು ಶುಭ ಹಾರೈಸಿದರು. ಗಮ್ಮತ್ ಕಲಾವಿದರು ದುಬೈ ಅಧ್ಯಕ್ಷ ವಾಸು ಶೆಟ್ಟಿ, ಕೇಂದ್ರದ ಹಿರಿಯ ಸದಸ್ಯ ಜಯಾನಂದ ಪಕ್ಕಳ, ಸುವರ್ಣ ಪ್ರತಿಷ್ಠಾನ ಕರ್ನಿರೆ ಸ್ಥಾಪಕ ಪ್ರಭಾಕರ ಸುವರ್ಣ, ಪದ್ಮಶಾಲಿ ಸಮಾಜದ ವರದರಾಜ್ ಶೆಟ್ಟಿಗಾರ್, ದುಬೈ ಕರ್ನಾಟಕ ಸಂಘದ ಮನೋಹರ ಹೆಗ್ಡೆ, ಜಯಂತ ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್ ಪೊಳಲಿ, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಉಪಸ್ಥಿತರಿದ್ದರು. ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿ ಕೊಟ್ಟಿಂಜ ಅವರು ದುಬೈ ಯಕ್ಷೋತ್ಸವದ ಮಾಹಿತಿ ನೀಡಿದರು. ಕೇಂದ್ರದ ಮುಖ್ಯ ಗುರು ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಅವರು ದುಬೈ ಯಕ್ಷೋತ್ಸವ ಪ್ರಯುಕ್ತ ನಡೆಯಲಿರುವ ‘ಶ್ರೀಹರಿ ಲೀಲಾಮೃತ’ ಯಕ್ಷಗಾನ ಪ್ರದರ್ಶನದ ಮಾಹಿತಿ ನೀಡಿದರು. ಗಿರೀಶ್ ನಾರಾಯಣ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಶಿವಮೊಗ್ಗ | ಮೂರು ತಿಂಗಳಿನಿಂದ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ ಕಿಡಿಗೇಡಿ ವಶಕ್ಕೆ
ಶಿವಮೊಗ್ಗ : ಕಳೆದ ಮೂರು ತಿಂಗಳಿನಿಂದ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಕಿಡಿಗೇಡಿಯನ್ನು ಅಕ್ಕಪಡೆ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ. ಕಳೆದ ಮೂರು ತಿಂಗಳಿಂದ ವ್ಯಕ್ತಿಯೋರ್ವ ಹಾಸ್ಟೆಲ್ಗೆ ಹೋಗಿ ಬರುವಾಗ ವಿದ್ಯಾರ್ಥಿನಿಯನ್ನು ನಿರಂತರವಾಗಿ ಫಾಲೋ ಮಾಡುತ್ತಿದ್ದಾನೆ ಎನ್ನುವ ಮಾಹಿತಿ ಅಕ್ಕಪಡೆಗೆ ಲಭಿಸಿತ್ತು. ಶಾಲೆ ಹಾಗೂ ಹಾಸ್ಟೆಲ್ಗಳಲ್ಲಿ ಅಕ್ಕಪಡೆ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮಗಳ ಪರಿಣಾಮವಾಗಿ ವಿದ್ಯಾರ್ಥಿನಿ ತಾನು ಅನುಭವಿಸುತ್ತಿದ್ದ ಮಾನಸಿಕ ಕಿರುಕುಳವನ್ನು ಅಕ್ಕಪಡೆಯ ಗಮನಕ್ಕೆ ತಂದಿದ್ದಾಳೆ. ಈ ಹಿನ್ನೆಲೆಯಲ್ಲಿ ಫೆ.3 ರಂದು ಬೆಳಿಗ್ಗೆ ಅಕ್ಕಪಡೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ರೆಡ್ಹ್ಯಾಂಡ್ ಆಗಿ ಹಿಡಿದು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ. ನಂತರ ಪ್ರಕರಣ ದಾಖಲಿಸಿ ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಆರೋಪಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಕೊರಿಯನ್ ಲವ್ ಗೇಮ್, ಬ್ಲೂ ವೇಲ್, ಪೋಕ್ಮನ್ ಗೋ: ಸಾವಿಗೆ ಕಾರಣವಾಗುತ್ತಿರುವ ಅಪಾಯಕಾರಿ ಆನ್ಲೈನ್ ಗೇಮ್ಗಳು
ಗಾಜಿಯಾಬಾದ್: ಆನ್ಲೈನ್ ಗೇಮ್ಗಳು ಕೇವಲ ಮನರಂಜನೆಯಲ್ಲ, ಅವು ಮಕ್ಕಳ ಪ್ರಾಣಕ್ಕೆ ಕಂಟಕವಾಗಬಲ್ಲವು ಎಂಬ ಆತಂಕಕಾರಿ ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಕೆಲ ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 'ಬ್ಲೂ ವೇಲ್' (Blue Whale) ಗೇಮ್ ಮಾದರಿಯಲ್ಲೇ, ಇದೀಗ 'ಕೊರಿಯನ್ ಲವ್ ಗೇಮ್' (Korean Love Game) ಎಂಬ ಹೊಸ ಪಿಡುಗು ಮಕ್ಕಳನ್ನು ಆವರಿಸಿಕೊಂಡಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ
2,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಐಟಿ ವಲಯ, ತಿಳಿಯಬೇಕಾದ ಮಾಹಿತಿ ಇಲ್ಲಿದೆ | Stock Market
ಭಾರತದ ಐಟಿ ವಲಯ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಅಮೆರಿಕ ಕೂಡ ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುವ ಹಂತಕ್ಕೆ ತಲುಪಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರು ಇಡೀ ಭಾರತದ ಐಟಿ ತವರು ಎಂಬ ಕೀರ್ತಿ ಪಡೆದಿದ್ದು, ಸಾವಿರಾರು ಕಂಪನಿಗಳು ಇಲ್ಲಿಂದಲೇ ಕಾರ್ಯನಿರ್ವಹಣೆ ಮಾಡುತ್ತವೆ. ಹೀಗಿದ್ದಾಗ ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟು, ಲಕ್ಷ ಲಕ್ಷ ಕೋಟಿ ರೂಪಾಯಿ ತೆರಿಗೆ
ಸುಪ್ರೀಂಕೋರ್ಟ್ ನಲ್ಲಿ ತಾವೇ ವಾದ ಮಂಡಿಸಿದ ಮಮತಾ ಬ್ಯಾನರ್ಜಿ; ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್
ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದಗಳನ್ನು ಮಂಡಿಸುವಾಗ, ಮಮತಾ ಬ್ಯಾನರ್ಜಿ ಅವರು, ಚುನಾವಣಾ ಪ್ರಕ್ರಿಯೆಯ ಒತ್ತಡದಿಂದಾಗಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಇದರಲ್ಲಿ ಮುಖ್ಯ ಚುನಾವಣಾ ಅಧಿಕಾರಿಯ ನಿರ್ದೇಶನಗಳಿಂದಾಗಿ ತೀವ್ರ ಒತ್ತಡದಿಂದಾಗಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಬೂ ತ್ ಮಟ್ಟದ ಅಧಿಕಾರಿಯೂ ಸೇರಿದ್ದಾರೆ ಎಂದರು.
ಅಬಕಾರಿ ಸಚಿವರ ರಾಜೀನಾಮೆ ಪಡೆದ ಮೇಲೆ ಭ್ರಷ್ಟಾಚಾರದ ತನಿಖೆ ನಡೆಸಿ: ವಿಜಯೇಂದ್ರ
“ಕಾಂಗ್ರೆಸ್ ಹೈಕಮಾಂಡಿಗೆ ಕರ್ನಾಟಕ ರಾಜ್ಯ ಎಟಿಎಂ ಆಗಿ ಪರಿವರ್ತನೆ”
ಬಿಜೆಪಿ ಸರಕಾರದ ಅಕ್ರಮದಲ್ಲಿ ಯಾರು ರಾಜೀನಾಮೆ ಕೊಟ್ಟಿದ್ದರು?: ಡಿ.ಕೆ.ಶಿವಕುಮಾರ್ ಪ್ರಶ್ನೆ
“ದಲಿತ ಸಚಿವರಿಗೆ ತೊಂದರೆ ನೀಡಲು ಬಿಜೆಪಿ ಪ್ರಯತ್ನ”
ಗಾಜಿಯಾಬಾದ್ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರ ಸಾವು: ‘ಕೊರಿಯನ್ ಲವರ್’ ಆನ್ಲೈನ್ ಗೇಮ್ ಬಗ್ಗೆ ತನಿಖೆ ತೀವ್ರ
Korean Lover Game: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಸಾವನ್ನಪ್ಪಿರುವ ಘಟನೆ ದೇಶಾದ್ಯಂತ ಆತಂಕ ಮೂಡಿಸಿದ್ದು, ಈ ಪ್ರಕರಣದ ಹಿಂದೆ ‘ಕೊರಿಯನ್ ಲವರ್ ಗೇಮ್' ಎಂದು ಕರೆಯಲಾಗುತ್ತಿರುವ ಆನ್ಲೈನ್ ಚಟುವಟಿಕೆಗಳ ಪ್ರಭಾವವಿದೆಯೇ ಎಂಬುದರ ಕುರಿತು ಪೊಲೀಸರು ಗಂಭೀರ ತನಿಖೆ ಆರಂಭಿಸಿದ್ದಾರೆ. ಈ ದುರ್ಘಟನೆಯೊಂದಿಗೆ, ಮಕ್ಕಳ ಮೇಲೆ ಡಿಜಿಟಲ್ ಜಗತ್ತಿನ ಪರಿಣಾಮ ಮತ್ತು ಆನ್ಲೈನ್ ವ್ಯಸನದ
Moodbidri | ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಮೂಡುಬಿದಿರೆ : ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊರ್ವ ತನ್ನ ಸ್ವಂತ ತೋಟದಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಮಾನಾಡಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಪಡುಮಾನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಿರುಮಲಬೆಟ್ಟು ನಿವಾಸಿ, ದಿವಂಗತ ಮುತ್ತಯ್ಯ ಪೂಜಾರಿ ಅವರ ಪುತ್ರ ಅಗೋಟಿ ಯಾನೆ ರಮೇಶ್ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ರಮೇಶ್ ಅವರು ಆರ್ಥಿಕ ಸಂಕಷ್ಟದಿಂದ ಮನನೊಂದಿದ್ದರು ಎನ್ನಲಾಗಿದೆ. ಮೃತರಿಗೆ ಪತ್ನಿ ಹಾಗೂ ಎರಡುವರೆ ವರ್ಷದ ಪುತ್ರಿ ಇದ್ದಾರೆ. ಘಟನೆಯ ಕುರಿತು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

22 C