ಸುಳ್ಯ | ಹಲ್ಲೆ, ಕೊಲೆ ಬೆದರಿಕೆ: ಪ್ರಕರಣ ದಾಖಲು
ಸುಳ್ಯ, ನ.21: ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದ ಘಟನೆ ಕಡಬ ತಾಲೂಕಿನ ಎಣ್ಮೂರಿನ ಹೇಮಳದಲ್ಲಿ ನ.18ರಂದು ನಡೆದಿದೆ. ಕಡಬ ತಾಲೂಕು ಎಣ್ಮೂರಿನ ಹೇಮಳ ನಿವಾಸಿ ಶೀನಪ್ಪಗೌಡ ಎಂಬವರ ಸಹೋದರನ ಮಗ ರಾಮಣ್ಣ ಗೌಡ ಎಂಬಾತ ಬಾವಿಗೆ ಅಳವಡಿಸಿದ್ದ ಪೈಪನ್ನು ತೆಗೆದ ವೇಳೆ, ಶೀನಪ್ಪಗೌಡ ಈ ಬಗ್ಗೆ ಪ್ರಶ್ನಿಸಿದ್ದರು. ಈ ವೇಳೆ ರಾಮಣ್ಣ ಗೌಡ ನೀವು ಈ ಬಾವಿಯ ನೀರನ್ನು ಕುಡಿಯಬಾರದೆಂದು ಹೇಳಿ ಶೀನಪ್ಪ ಗೌಡರ ಕತ್ತು ಬಿಗಿಯಾಗಿ ಹಿಡಿದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಶೀನಪ್ಪಗೌಡರ ಕಿರುಚಾಟ ಕೇಳಿ ಪತ್ನಿ, ನೆರೆಮನೆಯವರು ಜಗಳ ಬಿಡಿಸಲು ಬಂದಿದ್ದು, ಈ ವೇಳೆ ಶೀನಪ್ಪ ಗೌಡರನ್ನು ಆರೋಪಿ ನೆಲಕ್ಕೆ ದೂಡಿ ಹಾಕಿ ಮರದ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಗಾಯಗೊಂಡ ಶೀನಪ್ಪಗೌಡರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಆರೋಪಿ ರಾಮಣ್ಣ ಗೌಡನ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಕಲಗೂಡು | ಹಸು ಮಾರಿ ಡಿಡಿ ಪಾವತಿಸಿದ ಆರ್ಟಿಐ ಕಾರ್ಯಕರ್ತ : ದಾಖಲೆಗಳನ್ನು ಎತ್ತಿನಗಾಡಿಯಲ್ಲಿ ಸಾಗಾಟ
ಅರಕಲಗೂಡು, ನ.21: ತಾಲೂಕಿನ ರಾಮನಾಥಪುರ ಹೋಬಳಿ ಕಾಳೆನಹಳ್ಳಿ ಗ್ರಾಮ ಪಂಚಾಯತ್ನಲ್ಲಿ ಆರ್ಟಿಐ ಕಾರ್ಯಕರ್ತನೋರ್ವ ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಪಡೆಯಲು ತನ್ನ ಹಸು ಮಾರಿ ಪಾವತಿಸಿ ಎತ್ತಿನಗಾಡಿಯಲ್ಲಿ ಸಾಗಿಸಿರುವ ಘಟನೆ ನಡೆದಿದೆ. ಬಸವನಹಳ್ಳಿ ಗ್ರಾಮದ ರವಿ ಬಿ.ಎಸ್ ಅವರು ಸೆ.29ರಂದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಕೇಳಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ನಂತರ ಗ್ರಾಮ ಪಂಚಾಯತ್ ಒಟ್ಟು 32,340 ರೂ. ಪಾವತಿಸಬೇಕು ಎಂದು ರವಿಗೆ ತಿಳಿಸಿತು. ನಂತರ ಗ್ರಾಮ ಪಂಚಾಯತ್ 16,370 ಪುಟಗಳ ಪ್ರತಿಗಳನ್ನು ಅಂಚೆ ಕಚೇರಿಯ ಮೂಲಕ ರವಿಗೆ ಕಳುಹಿಸಿತು.ದಾಖಲೆಗಳನ್ನು ಪಡೆಯಲು ರವಿ ತನ್ನ ಹಸುವನ್ನು ಮಾರಾಟ ಮಾಡಿ ಸ್ನೇಹಿತರ ಬಳಿ ಸಾಲ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದಾಖಲೆಗಳ ಪ್ರಮಾಣ ಅಷ್ಟು ದೊಡ್ಡದಾಗಿದ್ದರಿಂದ, ರವಿ ಅವರು ಎತ್ತಿನಗಾಡಿ ಬಳಸಿಕೊಂಡು ದಾಖಲೆಗಳನ್ನು ಮನೆಗೆ ತೆಗೆದುಕೊಂಡು ಹೊಗಿದ್ದಾರೆ. ಅರ್ಜಿಯನ್ನು ಹಿಂತೆಗೆದುಕೊಳ್ಳಲು ಒತ್ತಡ, ಆಮಿಷ : ರವಿಯವರ ಹೇಳಿಕೆಯ ಪ್ರಕಾರ, ಕೆಲವು ವ್ಯಕ್ತಿಗಳು ಅರ್ಜಿಯನ್ನು ಹಿಂತೆಗೆದುಕೊಳ್ಳಲು ಒತ್ತಡ ಹಾಕಿದ್ದುಷ್ಟೆ ಅಲ್ಲ, ‘‘ನಿಮಗೆ ಬೇಕಾದ ಸೌಲಭ್ಯ ಮಾಡಿಸುತ್ತೇವೆ’’ ಎಂದು ಆಮಿಷಗಳನ್ನೂ ನೀಡಿರುವುದಾಗಿ ಆರೋಪಿಸಿದ್ದಾರೆ.
ಟ್ರಂಪ್ ಬೆಂಬಲಿಗ Fox News ಸಮೀಕ್ಷೆಯ ಪ್ರಕಾರವೇ ಈಗ ಅಮೆರಿಕನ್ನರಿಂದ ಟ್ರಂಪ್ ಆಡಳಿತದ ಬಗ್ಗೆ ಅಸಮಾಧಾನ!
ಅಮೆರಿಕದ ಆರ್ಥಿಕತೆಗೆ ಟ್ರಂಪ್ ಹೆಚ್ಚು ಹಾನಿ ಮಾಡುತ್ತಿದ್ದಾರೆ ಎಂದ ಅಮೆರಿಕನ್ನರು
ಮೈಸೂರು | ಶೋಷಿತರು ಸಂವಿಧಾನ ಅಪ್ಪುವುದು ಪ್ರಭುತ್ವಕ್ಕೆ ಭಯ : ಭನ್ವರ್ ಮೇಘವಂಶಿ
ಪ.ಮಲ್ಲೇಶ್ ವಿಚಾರ ಸಂಕಿರಣ
ಬಸವನಗುಡಿ ಕಡಲೆಕಾಯಿ ಪರಿಷೆಗೆ ತೆರೆ; 9 ಲಕ್ಷ ಮಂದಿ ಭಾಗಿ, 3 ಕೋಟಿ ರೂ. ವಹಿವಾಟು
ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಐದು ದಿನಗಳ ಬಳಿಕ ಶುಕ್ರವಾರ ಮುಕ್ತಾಯಗೊಂಡಿದೆ. ಒಂಬತ್ತು ಲಕ್ಷಕ್ಕೂ ಹೆಚ್ಚು ಜನರು ಪರಿಷೆಗೆ ಭೇಟಿ ನೀಡಿದ್ದು, ಮೂರು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿದೆ ಎನ್ನಲಾಗಿದೆ. ಈ ಬಾರಿ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಯೋಜಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು ಅದು ಫಲಕೊಟ್ಟಿದೆ. ಈ ಬಾರಿ ಪರಿಷೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಜನರು ವಿವಿಧ ವಸ್ತುಗಳನ್ನು ಖರೀದಿಸಿದರು.
ನ. 26ರಂದು ರಾಷ್ಟ್ರವ್ಯಾಪಿ ಮುಷ್ಕರ? ಯಾರಿಂದ ಪ್ರತಿಭಟನೆ? ಯಾಕಾಗಿ ಪ್ರತಿಭಟನೆ? ಭಾರತ್ ಬಂದ್ ಆಗುತ್ತಾ?
ಕೇಂದ್ರದ ಹತ್ತು ಕಾರ್ಮಿಕ ಸಂಘಟನೆಗಳು ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿವೆ. ನವೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಈ ಕ್ರಮವನ್ನು ಕಾರ್ಮಿಕ ವಿರೋಧಿ ಮತ್ತು ಉದ್ಯೋಗಪತಿ ಪರ ಎಂದು ಆರೋಪಿಸಿವೆ. ಪ್ರಧಾನಿ ಮೋದಿ ಅವರು ಈ ಸಂಹಿತೆಗಳನ್ನು ಕಾರ್ಮಿಕರ ಹಕ್ಕುಗಳನ್ನು ಬಲಪಡಿಸುವ ಸುಧಾರಣೆಗಳು ಎಂದು ಹೇಳಿದ್ದಾರೆ. ಸಂಘಟನೆಗಳು ತಮ್ಮ ಸಲಹೆಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದವು.
ಮಂಗಳೂರು, ನ.21: ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ (ನ.20) ಜುಮಾದಿಲ್ ಆಖಿರ್ ತಿಂಗಳ ಪ್ರಥಮ ಚಂದ್ರದರ್ಶನ ಆಗಿರುವ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ (ನ.21)ಯಿಂದ ಜುಮಾದಿಲ್ ಆಖಿರ್ ಚಾಂದ್ 1 ಆಗಿರುತ್ತದೆ ಎಂದು ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾಸ್ ತೀರ್ಮಾನಿಸಿರುವುದಾಗಿ ಎಂದು ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ : ಮಹಾಂತೇಶ್ ಕೌಲಗಿ
ಕಲಬುರಗಿ: ಹಿಂದುಳಿದ ವರ್ಗಗಳು ಸೇರಿದಂತೆ ರಾಜ್ಯದ ಎಲ್ಲಾ ಸಮುದಾಯಗಳ ಹಿತವನ್ನು ಬಯಸಿ, ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯ ಅವರನ್ನು ಷಡ್ಯಂತ್ರ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ರಾಜ್ಯದಲ್ಲಿ ದಂಗೆಗಳನ್ನು ಎದುರಿಸಬೇಕಾದಿತು ಎಂದು ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖಂಡ ಮಹಾಂತೇಶ್ ಕೌಲಗಿ ಎಚ್ಚರಿಕೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಾಂತೇಶ್ ಕೌಲಗಿ, ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಸಿಎಂ ಸಿದ್ದರಾಮಯ್ಯನವರನ್ನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ಹೇಳಿದರು. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಹಲವು ಭಾಗ್ಯಗಳನ್ನು ಜಾರಿಗೆ ತರುವುದರ ಮೂಲಕ ಜನಮನ್ನಣೆ ಗಳಿಸಿದ್ದರು. ಎರಡನೇ ಸಲ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ಎಲ್ಲರ ಅಭ್ಯುದಯ ಬಯಸುವ ಇಂತಹ ಮುಖ್ಯಮಂತ್ರಿಗಳನ್ನು ಅಧಿಕಾರದ ಆಸೆಯಿಂದ ಕೆಳಗಿಳಿಸುವ ಪ್ರಯತ್ನ ಮಾಡಬಾರದು ಎಂದು ಕಾಂಗ್ರೆಸ್ ಶಾಸಕರಿಗೆ ಎಚ್ಚರಿಸಿದರು. ಸಿದ್ದರಾಮಯ್ಯನವರಿಗೆ 125ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ. ಮಾಧ್ಯಮಗಳಲ್ಲಿ ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿವೆ. ಇವುಗಳಿಗೆ ಯಾವುದೇ ಬೆಲೆ ಕೊಡದೆ, ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೌರವಯುತವಾಗಿ ನಡೆಸಿಕೊಂಡು ಮುಂದಿನ ಅವಧಿಗೂ ಸಿದ್ದರಾಮಯ್ಯನವರೇ ಸಿಎಂ ಎಂದು ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳು ನಡೆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬೆಲೆ ತೆರಬೇಕಾದೀತು. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುವ ವಿಷಯದಲ್ಲಿ ಕೈ ಹಾಕಬಾರದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಸಯ್ಯ ಗುತ್ತೇದಾರ್, ಅರ್ಜುನ್ ಗೊಬ್ಬುರ, ಭೈಲಪ್ಪ ನೆಲೋಗಿ, ಪೀಡಪ್ಪ ಜಾಲಗಾರ್, ಶರಣಬಸಪ್ಪಾ ಕನ್ನಗೊಂಡ, ಲಕ್ಷ್ಮಣ ಪೂಜಾರಿ, ಸುರೇಶ್ ವಳಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಟ್ಕಳ | ಹೆರಾಡಿ ಕ್ರಾಸ್ನಲ್ಲಿ ಬಸ್ ನಿಲುಗಡೆಗೆ ಒತ್ತಾಯ
ಭಟ್ಕಳ, ನ.21: ಕಾಯ್ಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರಾಡಿ ಕ್ರಾಸ್ನಲ್ಲಿ ಬಸ್ ನಿಲುಗಡೆ ಪುನಃ ಆರಂಭಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಓWಏಖಖಿಅ) ಭಟ್ಕಳ ಘಟಕಕ್ಕೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಗ್ರಾಮಸ್ಥರ ಪ್ರಕಾರ, ಹೆರಾಡಿ ಕ್ರಾಸ್ ಪ್ರದೇಶದಲ್ಲಿ ಶಾಲೆ, ಪಂಚಾಯತ್, ಬ್ಯಾಂಕ್ ಸೇರಿದಂತೆ ಹಲವು ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ದಿನವೂ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಮಾರ್ಗವಾಗಿ ಸಂಚಾರ ಮಾಡುತ್ತಾರೆ. ಹಿಂದೆ ಸರಕಾರಿ ಬಸ್ಗಳು ಇಲ್ಲಿ ನಿಲ್ಲುತ್ತಿದ್ದರೂ, ಇತ್ತೀಚೆಗೆ ಸ್ಥಳೀಯ ಬಸ್ಗಳು ನಿಲುಗಡೆ ಮಾಡದೇ ಹೋಗುತ್ತಿರುವುದರಿಂದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಈ ಸ್ಥಳದಲ್ಲಿ ಬಸ್ ನಿಲ್ಲಿಸುವುದು ಅತ್ಯಂತ ಅಗತ್ಯವಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಘಟಕದ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಘಟಕದ ವ್ಯವಸ್ಥಾಪಕರ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಮನವಿಯನ್ನು ಸ್ವೀಕರಿಸಿದರು. ಮನವಿ ಸಲ್ಲಿಸುವ ವೇಳೆ ಗಣೇಶ ನಾಯ್ಕ, ವಿಷ್ಣು ನಾಯ್ಕ, ದಿಲೀಪ ನಾಯ್ಕ, ಮಿಥುನ ನಾಯ್ಕ, ಅಶೋಕ ನಾಯ್ಕ ಮತ್ತು ಸುಬ್ರಹ್ಮಣ್ಯ ನಾಯ್ಕ ಉಪಸ್ಥಿತರಿದ್ದರು.
ʻಹೈಕಮಾಂಡ್ ಮಾತಿಗೆ ಬದ್ಧ ಎಂದು ಸಿಎಂ ಹೇಳಿದ್ದಾರೆ ಅವರ ಮಾತಿಗೆ ನಾವೂ ಬದ್ಧʼ: ಡಿಕೆ ಶಿವಕುಮಾರ್
ಮುಖ್ಯಮಂತ್ರಿಗಳು ಐದು ವರ್ಷ ಅಧಿಕಾರದಲ್ಲಿ ಇರುತ್ತಾರೆ. ಅನಗತ್ಯ ಊಹಾಪೋಹಗಳನ್ನು ಸೃಷ್ಟಿಸಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನಾವು ಅವರ ನಾಯಕತ್ವದ ಬಗ್ಗೆ ಮಾತನಾಡಿಲ್ಲ ಅವರೇ ಸಂಪುಟ ಪುನಾರಚನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಪಕ್ಷದ ಹಿರಿಯರ ಮಾರ್ಗದರ್ಶನ ಅಗತ್ಯವಿದ್ದಾಗ ಭೇಟಿ ಮಾಡುವುದಾಗಿ ತಿಳಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳ ಬಗ್ಗೆಯೂ ಮಾಹಿತಿ ನೀಡಿದರು.
ಭಟ್ಕಳ ಎರಡನೇ ವಿಜ್ಞಾನ ಮೇಳ: 52 ತಂಡಗಳಿಂದ ವೈಜ್ಞಾನಿಕ ಪ್ರತಿಭೆ ಪ್ರದರ್ಶನ
ಭಟ್ಕಳ, ನ.21: ಶಮ್ಸ್ ಪಿಯು ಕಾಲೇಜು ಮತ್ತು ಎಜೆ ಅಕಾಡಮಿ ಆಫ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ನ ಸಹಯೋಗದೊಂದಿಗೆ ಎರಡನೇ ಭಟ್ಕಳ ಅಂತರ ಶಾಲೆ ಮತ್ತು ಅಂತರ ಕಾಲೇಜು ವಿಜ್ಞಾನ ಮೇಳ (ಸೈನ್ಸ್ ಫೇರ್) ಗುರುವಾರ ಡಾ. ಎಂ.ಟಿ. ಹಸನ್ ಬಾಪಾ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಮೇಳದಲ್ಲಿ ಒಟ್ಟು 10 ಸಂಸ್ಥೆಗಳ 52 ತಂಡಗಳು ತಮ್ಮ ಸಂಶೋಧನಾ ಯೋಜನೆಗಳನ್ನು ಪ್ರದರ್ಶಿಸಿದವು. ಮುಖ್ಯ ಅತಿಥಿ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ನ ಉಪಾಧ್ಯಕ್ಷ ಡಾ.ಮುಹಮ್ಮದ್ ಜುಬೈರ್ ಕೋಲಾ ಅವರು ಶಿಕ್ಷಣದ ಮಹತ್ವ ಮತ್ತು ಶಾಲಾ ಮಟ್ಟದಲ್ಲಿಯೇ ಸಂಶೋಧನಾ ದೃಷ್ಟಿಕೋನವನ್ನು ಬೆಳೆಸುವ ಅಗತ್ಯ ಕುರಿತು ಮಾತನಾಡಿದರು. ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಚೇರ್ಮನ್ ನಝೀರ್ ಅಹ್ಮದ್ ಖಾಝಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭವು ಅಹ್ಮದ್ ಜಯಾನ್ ಅವರ ಕಿರಾತ್ ಮತ್ತು ಮೊಹಮ್ಮದ್ ಅಝಾನ್ ಅವರ ಅನುವಾದದೊಂದಿಗೆ ಪ್ರಾರಂಭವಾಯಿತು. ನ್ಯೂ ಶಮ್ಸ್ ಶಾಲೆಯ ಪ್ರಾಂಶುಪಾಲ ಲಿಯಾಖತ್ ಅಲಿ ಅತಿಥಿಗಳನ್ನು ಸ್ವಾಗತಿಸಿದರು. ಶಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ರಝಾ ಮಾನ್ವಿ ಪರಿಚಯಿಸಿದರು. ಸೈನ್ ಫೇರ್ನ ಸಂಚಾಲಕಿ ಡಾ.ಮಮತಾ ನಾಯ್ಕ ಧನ್ಯವಾದ ಅರ್ಪಿಸಿದರು. ಎಐಟಿಎಂನ ಪ್ರೊ.ಖುರ್ರತುಲೈನ್ ವಸೀಮ್ ಎಚ್. (ಗಣಿತ), ಡಾ. ಚೇತನ್ ಪೈ (ಭೌತಶಾಸ್ತ್ರ), ಪ್ರೊ.ಅಲ್ ಶಿಫಾ (ರಸಾಯನಶಾಸ್ತ್ರ), ಅಂಜುಮನ್ ಪದವಿ ಮಹಾವಿದ್ಯಾಲಯದ ಡಾ. ವಿನಾಯಕ್ ಆನಂದ್ ಕಾಮತ್ (ಭೌತಶಾಸ್ತ್ರ), ಅಂಜುಮನ್ ಮಹಿಳಾ ಪದವಿ ಮಹಾವಿದ್ಯಾಲಯದ ಡಾ.ರೂಪಾ ಡಿ. ಶಾನಭಾಗ್ (ಜೂಲಜಿ) ಹಾಗೂ ಪ್ರೊ.ಶಹೀದಾ ಇಕ್ಕೇರಿ (ಬೋಟನಿ) ಮೌಲ್ಯಮಾಪಕರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ್, ಎಜೆ ಅಕಾಡಮಿ ಆಫ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ನ ನಿರ್ದೇಶಕ ಅಬ್ದುಲ್ಲಾ ಜಾವೇದ್, ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಉಪಾಧ್ಯಕ್ಷ ಸೈಯದ್ ಖುತುಬ್ ಬರ್ಮಾವರ್ ನದ್ವಿ, ಮೌಲಾನ ಅಝೀಝುರ್ರಹ್ಮಾನ್ ನದ್ವಿ, ಸೈಯದ್ ಶಕೀಲ್ ಎಸ್.ಎಂ. ಮತ್ತಿತರರು ಉಪಸ್ಥಿತರಿದ್ದರು.
Chikkamagaluru | ಡಿ.5ರಂದು ಕೊಪ್ಪ ಸಂತ ಜೋಸೆಫರ ಪ್ರೌಢ ಶಾಲೆಯ ವಜ್ರಮಹೋತ್ಸವ
ಚಿಕ್ಕಮಗಳೂರು : ಕೊಪ್ಪ ಸಂತ ಜೋಸೆಫರ ಪ್ರೌಢಶಾಲೆಯ ವಜ್ರಮಹೋತ್ಸವ ಆಚರಣೆ ಕಾರ್ಯಕ್ರಮವು ಡಿಸೆಂಬರ್ 5ರಂದು ಆಯೋಜಿಸಲಾಗಿದೆ. ಈ ಸಂಬಂಧ ಸ್ವಾಗತ ಸಮಿತಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ಸಭೆಯನ್ನು ಶುಕ್ರವಾರ ನಡೆಸಲಾಯಿತು. ಈ ವೇಳೆ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ವಜ್ರಮಹೋತ್ಸವ ಆಚರಣೆಯ ಧ್ಯೇಯೋದ್ದೇಶಗಳನ್ನು ವಿವರಿಸಿ, ಸರ್ವರನ್ನು ಆಮಂತ್ರಿಸಿದರು. ಹಾಗೂ ಶಾಲೆಯ ಎಲ್ಲ ಹಳೇ ವಿದ್ಯಾರ್ಥಿಗಳಿಗೆ ಆಹ್ವಾನ ಪತ್ರಿಕೆ ತಲುಪಲು ಸಹಕರಿಸುವಂತೆ ವಿನಂತಿಸಿಕೊಂಡರು. ಶಾಲೆಯ ಕಾನೂನು ಸಲಹೆಗಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, 60 ವರ್ಷಗಳ ಹಿಂದೆ ಮಲೆನಾಡಿನ ಈ ಭಾಗದ ಕೇವಲ ಹೆಣ್ಣು ಮಕ್ಕಳ ಶೈಕ್ಷಣಿಕ ಸುಧಾರಣೆಗೆಂದು ಪ್ರಾರಂಭವಾದ ಈ ಸಂಸ್ಥೆ 1985ರ ನಂತರ ಕೋ - ಎಜುಕೇಷನ್ (ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ) ಪ್ರಾರಂಭಿಸಿ ಸಾವಿರಾರು ಮಕ್ಕಳ ಭವಿಷ್ಯದ ಭಾಷ್ಯವನ್ನು ಬರೆದಿದೆ. ಈ ಶಾಲೆಯು ತನ್ನ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಟ್ಟದ ಸರ್ವತೋಮುಖ ವಿದ್ಯಾಭ್ಯಾಸವನ್ನು ನೀಡುವುದರೊಂದಿಗೆ ಈ ಭಾಗದ ಖಾಸಗಿ ಶಾಲೆಗಳ ಶ್ರೇಣಿಯಲ್ಲಿ ಮುಂಚೂಣಿಯಲ್ಲಿದ್ದು, ಸುಮಾರು 6,000ಕ್ಕೂ ಮಿಗಿಲಾಗಿ ಹಿರಿಯ ವಿದ್ಯಾರ್ಥಿಗಳ ಬಳಗವನ್ನು ಹೊಂದಿದೆ. ಶಾಲೆಯ ಆವರಣದಲ್ಲಿ ‘ಹಿರಿಯ ವಿದ್ಯಾರ್ಥಿಗಳ ಸಂಘದ’ ಪ್ರತ್ಯೇಕ ಕಚೇರಿಯನ್ನು ಹೊಂದಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಪಾರ ಸಂಖ್ಯೆಯಲ್ಲಿರುವ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳು ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದೀಪಕ್ ಎಚ್.ಎಲ್. ಮಾತನಾಡಿ, ವಜ್ರಮಹೋತ್ಸವ ಕಾರ್ಯಕ್ರಮ ಅಂಗವಾಗಿ ಸುಮಾರು 2,000ಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳ ಸಂಪರ್ಕವನ್ನು ಸಾಧಿಸಿದ್ದು, ಬಹುತೇಕ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವುದಲ್ಲದೆ ಶಾಲೆಯ ಅಭಿವೃದ್ಧಿಗೆ ತನು-ಮನ-ಧನ ಸಹಾಯ ನೀಡುತ್ತಿದ್ದಾರೆ ಎಂದರು. ಶಾಲೆಯ ಮುಖ್ಯೋಪಾಧ್ಯಾಯ ಭಗಿನಿ ಅನಿತಾ ಮಿನೇಜಸ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ವಜ್ರಮಹೋತ್ಸವ ಸಮಿತಿಯ ಎಲ್ಲ ಸದಸ್ಯರಿಂದ ಈ ಅಭೂತಪೂರ್ವ ಕಾರ್ಯ ಸಾಧ್ಯವಾಗಿದೆ ಎಂದು ತಿಳಿಸುತ್ತಾ, ಎಲ್ಲ ಹಿರಿಯ ವಿದ್ಯಾರ್ಥಿಗಳಿಗೆ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಶಿಕ್ಷಕ ಛಾಯಾಪತಿ ನಿರೂಪಿಸಿದರು.
ಕಲಿತ ವಿದ್ಯೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿರಬೇಕು : ಸಿಎಂ ಸಿದ್ದರಾಮಯ್ಯ
ʼದೇವರಾಜು ಅರಸು, ಹಾವನೂರು ಪ್ರಶಸ್ತಿʼ ಪ್ರದಾನ
ಎಐ ಯುಗದಲ್ಲಿ ತಮ್ಮ ಜವಾಬ್ದಾರಿಗಳನ್ನು ಮರೆಯಬೇಡಿ : ಪ್ರೊ.ಅನನ್ಯ ಮುಖರ್ಜಿ
ಮಣಿಪಾಲ ಮಾಹೆಯ 33ನೇ ಘಟಿಕೋತ್ಸವ
ಮೂಡುಬಿದಿರೆ | ತಾಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ ಉದ್ಘಾಟನೆ
ಮೂಡುಬಿದಿರೆ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ವಲಯ ಮತ್ತು ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆ ಕಲ್ಲಬೆಟ್ಟು, ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಮೂಡುಬಿದಿರೆ ತಾಲ್ಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಗಳು 2025-26, ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜರುಗಿತು. ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ತಾಂತ್ರಿಕ, ವೈದ್ಯಕೀಯ ಕ್ಷೇತ್ರಗಳ ಜೊತೆಗೆ ನಿಮ್ಮ ಆಸಕ್ತಿಯನ್ನು ಮೂಲ ವಿಜ್ಞಾನದ ಸಂಶೋಧನೆಗಳಿಗೆ ತೋರಿಸಬೇಕು ಎಂದು ಕರೆಯನ್ನಿತ್ತು ಶುಭ ಹಾರೈಸಿದರು. ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ಜೈನ್ ಮಾತನಾಡಿ, “ಮಕ್ಕಳೇ ಕೇವಲ ನೀವು ಬದಲಾಗುವುದಲ್ಲ, ಅದರ ಜೊತೆಗೆ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ. ಅದು ನಿಮ್ಮ ಭವಿಷ್ಯವನ್ನು ಬದಲಿಸಬಲ್ಲದು. ವಿಜ್ಞಾನವೆಂಬ ಸುಜ್ಞಾನದ ಬೆಳಕಿನಲ್ಲಿ ಸಮಾಜಕ್ಕೆ ಒಳಿತಾಗುವ ಕೊಡುಗೆಗಳನ್ನು ನೀಡುವಂತವರಾಗಿ ಬೆಳೆಯಿರಿ” ಎಂದು ಶುಭ ಹಾರೈಸಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಮಾತನಾಡಿದರು. ವಿಜ್ಞಾನ ಮಾದರಿ ತಯಾರಿ ಹಾಗೂ ಪ್ರದರ್ಶನದ ಈ ಸ್ಪರ್ಧೆಯ ಗುಂಪು ವಿಭಾಗದಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳಾದ ನಿಹಾರ್ ಹಾಗೂ ಶಾಶ್ವತ್ (ಪ್ರಥಮ), ಗಗನದೀಪ ಹಾಗೂ ಚಿನ್ಮಯಿ (ದ್ವಿತೀಯ) ಮತ್ತುಅಭಿನೀತ್ ಹಾಗೂ ಪ್ರಣವ್ (ತೃತೀಯ) ಬಹುಮಾನ ಪಡೆದರೆ, ವೈಯುಕ್ತಿಕ ವಿಭಾಗದಲ್ಲಿ ಸಂತಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯಶಸ್ (ಪ್ರಥಮ) ಮತ್ತು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮೈತ್ರಿ (ದ್ವಿತೀಯ) ಹಾಗೂ ತರುಣ್ (ತೃತೀಯ) ಬಹುಮಾನವನ್ನು ಗಳಿಸುವ ಮೂಲಕ ಈ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಶಾಲೆ ಪಾರಮ್ಯ ಮೆರೆಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನ ಶಿಕ್ಷಕರಾದ ಪಶುಪತಿ ಶಾಸ್ತ್ರಿ , ಮೂಡುಬಿದಿರೆ ಮಹಾವೀರ ಕಾಲೇಜಿನ ಉಪನ್ಯಾಸಕರಾಗಿರುವ ಚೈತ್ರಾ ಹಾಗೂ ಕುಮಾರಿ ಆಶ್ವಿತಾ ತೀರ್ಪುಗಾರರಾಗಿ ಸಹಕರಿಸಿದರು. ಉಪ ಮುಖ್ಯಶಿಕ್ಷಕರಾದ ಜಯಶೀಲ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಟೇಶ್ ಭಟ್ ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹೇಶ್ವರಿ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿ, ನಂತರ ವಂದನಾರ್ಪಣೆಗೈದರು. ವಿಜ್ಞಾನ ಶಿಕ್ಷಕರಾದ ಪ್ರಜ್ವಲ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
ಮೂರು ದಿನಗಳ ‘ಮತ್ಸ್ಯಮೇಳ-2025ಕ್ಕೆ ಚಾಲನೆ
ಬೆಂಗಳೂರು : ಇಲ್ಲಿನ ಹೆಬ್ಬಾಳದಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆ ವತಿಯಿಂದ ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿರುವ ಮೂರು ದಿನಗಳ ‘ಮತ್ಸ್ಯಮೇಳ-2025ಕ್ಕೆ ಶುಕ್ರವಾರದಂದು ಚಾಲನೆ ದೊರೆಯಿತು. ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ತಯಾರಿ, ಮಾರಾಟ, ರಫ್ತು ಮಾಡುವ ಉದ್ದೇಶದಿಂದ ಜನರಿಗೆ ಮೀನಿನ ವಿಶೇಷ ತಿಂಡಿಗಳನ್ನು ಈ ಸಲದ ಮತ್ಸ್ಯಮೇಳದಲ್ಲಿ ಪರಿಚಯಿಸಲಾಗಿದೆ. ಫಿಶ್ ಬಾಲ್ಸ್, ಫಿಶ್ ಬರ್ಗರ್, ಫಿಶ್ ಸ್ಯಾಂಡ್ ವಿಚ್ ಸೇರಿದಂತೆ ಕರಾವಳಿ ಭಾಗದ ವಿಶೇಷ ಮೀನಿನ ಉತ್ಪನ್ನಗಳನ್ನು ಹೆಚ್ಚಿನ ಪ್ರಚಾರದೊಂದಿಗೆ ಪರಿಚಯಿಸಲಾಗುತ್ತಿದೆ. ಮೇಳದಲ್ಲಿ ಸುಮಾರು 100ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗಿದೆ. 50ಕ್ಕಿಂತ ಹೆಚ್ಚಿನ ಮಳಿಗೆಗಳು ಮೀನುಗಾರಿಕೆ ವಿಷಯಕ್ಕೆ ಸಂಬಂಧಿಸಿದ್ದಾಗಿವೆ. 14ಕ್ಕೂ ಹೆಚ್ಚು ಮಳಿಗೆಗಳಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆ ಹಾಗೂ ಕೇಂದ್ರ ಸರಕಾರ ಸೇರಿದಂತೆ ಇತರೆ ಸಂಸ್ಥೆಗಳ ಕುರಿತಾದ್ದಾಗಿದೆ. ಇನ್ನು ಉಳಿದ ಮಳಿಗೆಗಳಲ್ಲಿ ವಿವಿಧ ಬಗೆಯ ಅಕ್ವೇರಿಯಂಗಳನ್ನು ಮಾರಾಟಕ್ಕೆ ಇಡಲಾಗಿದೆ. ರಾಜ್ಯ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಮಳಿಗೆ ಹತ್ತು ಹಲವು ಮಾಹಿತಿಗಳನ್ನು ತಿಳಿಸಿಕೊಡುತ್ತದೆ. ಯೋಜನೆಗಳು ಅನುಷ್ಠಾನಗೊಂಡಿರುವ ಬಗ್ಗೆಯೂ ವಿಸ್ತೃತ ಮಾಹಿತಿಯನ್ನು ಈ ಮಳಿಗೆ ತಿಳಿಸಿಕೊಡುವುದೇ ವಿಶೇಷತೆಯಿಂದ ಕೂಡಿದೆ. ಜೊತೆಗೆ ಅಚ್ಚರಿಯಿಂದ ಗಮನ ಸೆಳೆಯುವಂತಹದ್ದು ಮೀನುಗಾರಿಕೆಯಲ್ಲಿ ಬಳಸುವ ಸಾಧನಗಳನ್ನು ಮಳಿಗೆಯಲ್ಲಿ ವೀಕ್ಷಿಸಬಹುದಾಗಿದೆ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ, ಹೆಬ್ಬಾಳದ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಕೇಂದ್ರ ಸರಕಾರದ ಮೀನುಗಾರಿಕೆ ಸಂಬಂಧ ಯೋಜನೆಗಳನ್ನು ಒಳಗೊಂಡು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ಇತರೆ ಮಳಿಗೆಗಳಲ್ಲಿನ ಮಾಹಿತಿಯನ್ನು ಮತ್ಸ್ಯಮೇಳಕ್ಕೆ ಆಗ ಮಿಸಿದ್ದವರು ಕೇಳಿ ತಿಳಿದುಕೊಳ್ಳುತ್ತಿದ್ದರು. ವಿವಿಧ ಮಳಿಗೆಗಳಲ್ಲಿದ್ದ ಅಕ್ವೇರಿಯಂಗಳು ಮತ್ಸ್ಯಮೇಳದ ಪ್ರಮುಖ ಆಕರ್ಷಣೆಯಾಗಿದ್ದವು. ನಾನಾ ಬಗೆಯ ಅಕ್ವೇರಿಯಂಗಳಲ್ಲಿ ಇಡಲಾಗಿದ್ದ ಮೀನುಗಳು ಮೇಳಕ್ಕೆ ಬಂದವರನ್ನು ಆಸಕ್ತಿಯಿಂದ ವೀಕ್ಷಿಸುವಂತೆ ಮಾಡಿದ್ದವು. 150 ರೂ.ಗಳಿಂದ ಹಿಡಿದು 6.5 ಲಕ್ಷ ರೂ.ಗಳವರೆಗಿನ ಅಕ್ವೇರಿಯಂಗಳನ್ನು ಮಳಿಗೆಗಳಲ್ಲಿ ಪ್ರದರ್ಶನ ಜೊತೆಗೆ ಮಾರಾಟಕ್ಕೆ ಇಡಲಾಗಿತ್ತು. ಇದೇ ವೇಳೆ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ಕುಮಾರ್ ಕಳ್ಳೇರಿ ಮಾತನಾಡಿ, ರಾಜ್ಯವು ಮೀನು ಉತ್ಪಾದನೆಯಲ್ಲಿ ಕಳೆದ ಐದು ವರ್ಷದಲ್ಲಿ 56,182.26 ಕೋಟಿ ರೂ.ಗಳ ಮೌಲ್ಯದ 49,91,381 ಮೆಟ್ರಿಕ್ ಟನ್ ಮೀನನ್ನು ಉತ್ಪಾದಿಸಿದ್ದು, ದೇಶದಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ. ಮೀನಿನ ಮೌಲ್ಯವರ್ಧಿತ ಉತ್ಪಾದನೆ ಮತ್ತು ಮಾರಾಟಕ್ಕೆ ಒತ್ತು ನೀಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಮೀನು ಉತ್ಪಾದನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು. ಮೇಳದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕ ಯು.ಮಹೇಶ್ಕುಮಾರ್, ಮಿನುಗಾರಿಕೆ ಇಲಾಖೆಯ ಸಹ ನಿರ್ದೇಶಕಿ ಯಶಸ್ವಿನಿ ಸೇರಿದಂತೆ ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಇದ್ದರು.
7.11 ಕೋಟಿ ರೂ. ಮೆಗಾ ದರೋಡೆಯ ಪ್ರಮುಖ ಸೂತ್ರಧಾರ ಕಾನ್ಸ್ಟೆಬಲ್ ಅಣ್ಣಪ್ಪ ನಾಯ್ಕ್ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸಿಎಂಎಸ್ ಏಜೆನ್ಸಿಯ ಮಾಜಿ ಹಾಗೂ ಹಾಲಿ ಉದ್ಯೋಗಿಗಳ ಸಹಾಯದಿಂದ ಈ ಮಹಾದರೋಡೆ ನಡೆಸಲಾಗಿದೆ. ದರೋಡೆಗೆ ಮುನ್ನ ತಂಡವು ಹಲವು ಬಾರಿ ಸ್ಥಳ ಪರಿಶೀಲನೆ ನಡೆಸಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಯೋಜಿಸಿತ್ತು.
Hebri | ನೆಟ್ವರ್ಕ್ ಸಮಸ್ಯೆ : ನಾಡ್ಪಾಲಿಗೆ ಸಂಸದ ಕೋಟ ಭೇಟಿ
ಬಿಎಸ್ಸೆನ್ನೆಲ್ ಅಧಿಕಾರಿಗಳೊಂದಿಗೆ ಚರ್ಚೆ
ಮುಂಬೈ ವಿಮಾನ ನಿಲ್ದಾಣದಲ್ಲಿ 53 ಕೋಟಿ ರೂ. ಮೌಲ್ಯದ ಗಾಂಜಾ, ಚಿನ್ನ, ವಜ್ರ ವಶ; 20 ಜನರ ಬಂಧನ
ಮುಂಬೈ, ನ. 21: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ವಾರದಲ್ಲಿ ಹಲವು ಪ್ರಕರಣಗಳಲ್ಲಿ 53 ಕೋಟಿ ರೂ. ಮೌಲ್ಯದ ಹೈಡ್ರೋಫೋನಿಕ್ ಗಾಂಜಾ, ಚಿನ್ನ ಹಾಗೂ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಹಾಗೂ 20 ಮಂದಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ನವೆಂಬರ್ 13 ಹಾಗೂ 20ರ ನಡುವೆ ನಡೆದ ವಿವಿಧ ಕಾರ್ಯಾಚರಣೆಗಳ ಸಂದರ್ಭ ಈ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಕಾರ್ಯಾಚರಣೆಯಲ್ಲಿ 7 ಪ್ರಕರಣಗಳಲ್ಲಿ 25.31 ಕೋಟಿ ರೂ. ಮೌಲ್ಯದ 25.318 ಕಿ.ಗ್ರಾಂ ಹೈಡ್ರೋಫೋನಿಕ್ ಗಾಂಜಾವನ್ನು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಹಾಗೂ ಹಲವು ಪ್ರಯಾಣಿಕರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇನ್ನೊಂದು ಕಾರ್ಯಾಚರಣೆಯಲ್ಲಿ 7 ಪ್ರಕರಣಗಳಲ್ಲಿ 26.981 ಕೋಟಿ ರೂ. ಮೌಲ್ಯದ 26.981 ಕಿ.ಗ್ರಾಂ. ಹೈಡ್ರೋಫೋನಿಕ್ ಗಾಂಜಾವನ್ನು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಹಾಗೂ 8 ಮಂದಿಯನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಕಾರ್ಯಾಚರಣೆಗಳಲ್ಲದೆ, ಇದೇ ಸಂದರ್ಭ 4 ಚಿನ್ನ ಕಳ್ಳ ಸಾಗಾಟದ ಪ್ರತ್ಯೇಕ ಪ್ರಕರಣಗಳನ್ನು ಕೂಡ ಕಂದಾಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಗಳಲ್ಲಿ 65.57 ಲಕ್ಷ ರೂ. ಮೌಲ್ಯದ ಒಟ್ಟು 551 ಗ್ರಾಂ. 24 ಕ್ಯಾರೇಟ್ ಚಿನ್ನವನ್ನು ನಾಲ್ವರು ಪ್ರಯಾಣಿಕರಿಂದ ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕಂದಾಯ ಅಧಿಕಾರಿಗಳು ವಜ್ರಗಳನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಆತನಿಂದ ಒಟ್ಟು 54.13 ಲಕ್ಷ ರೂ. ಮೌಲ್ಯದ ವಜ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕ ವಲಯದಲ್ಲಿ ಮಹತ್ವದ ಸುಧಾರಣೆ | 4 ಕಾರ್ಮಿಕ ಸಂಹಿತೆಗಳ ಜಾರಿ
ಹಳೆಯ 29 ಕಾರ್ಮಿಕ ಕಾನೂನುಗಳನ್ನು ಏಕರೂಪಗೊಳಿಸಿ ನೂತನ ಸಂಹಿತೆಗಳ ಅನುಷ್ಠಾನ
ಕಲಬುರಗಿ | ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತ್ಯು
ಕಲಬುರಗಿ : ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಆಳಂದ ತಾಲೂಕಿನ ಮುದ್ದಡಗಾ ಗ್ರಾಮದ ಹೊರ ವಲಯದಲ್ಲಿ ಸಂಭವಿಸಿದೆ. ಮುದ್ದಡಗಾ ಗ್ರಾಮದ ನಿವಾಸಿ ಗಂಗಮ್ಮ ಸುಧಾಕರ ಹಾಗರಗಿ (40) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಯಂತ್ರದಲ್ಲಿ ಸೋಯಾಬಿನ್ ಹಾಕುವಾಗ ಮೈ ಮೇಲಿನ ಸೀರೆ ಯಂತ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ಕುರಿತು ಮೃತಳ ಪತಿ ಸುಧಾಕರ್ ಅವರು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಸಂಪರ್ಕವನ್ನು ಬಲಪಡಿಸಲು ಕ್ರಮ : ವಿ.ಎಸ್.ಆರಾಧ್ಯ
ಬೆಂಗಳೂರು : ನಗರದ ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಬಸ್ಗಳ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮೆಟ್ರೋ ಫೀಡರ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ ತಿಳಿಸಿದ್ದಾರೆ. ಶುಕ್ರವಾರ ಇಲ್ಲಿನ ಕೆ.ಜಿ. ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಟನೆ (ಎಫ್ಕೆಸಿಸಿಐ) ಸಭಾಂಗಣದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಸಾರಿಗೆ ಅಭಿವೃದ್ಧಿ ಸಂವಾದ’ದಲ್ಲಿ ಮಾತನಾಡಿದ ಅವರು, ಬಿಎಂಟಿಸಿ ಪ್ರಯಾಣಿಕರಿಗೆ ತಡೆರಹಿತ ‘ಡೋರ್–ಟು–ಡೋರ್’ ಸಂಪರ್ಕವನ್ನು ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. 150 ಬಸ್ಗಳ ಸಣ್ಣ ದಳದಿಂದ ಆರಂಭವಾದ ಬಿಎಂಟಿಸಿ ಸಂಸ್ಥೆ ಇಂದು ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ನೀಡುವ ಮಹಾನಗರ ಸಾರಿಗೆ ನಿಗಮವಾಗಿ ಬೆಳೆದಿದೆ. ರಾಜ್ಯ ಸರಕಾರದ ನಿರಂತರ ಹೂಡಿಕೆ ಮತ್ತು ಮೂಲಸೌಕರ್ಯ ಬೆಂಬಲ ಬಿಎಂಟಿಸಿಯ ಅಭಿವೃದ್ಧಿಗೆ ಕಾರಣವಾಗಿದೆ. ಈಗ 1700ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳು ನಗರ ವಿವಿಧ ಮಾರ್ಗಗಳಲ್ಲಿ ಚಲಿಸುತ್ತಿದೆ ಎಂದು ಅವರು ವಿವರಿಸಿದರು. ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಕೈಗಾರಿಕಾ ವಲಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಎಫ್ಕೆಸಿಸಿಐನೊಂದಿಗೆ ಮುಂದಿನ ದಿನಗಳಲ್ಲಿ ನೀತಿ ಸಂವಾದ, ಸಂಯುಕ್ತ ಯೋಜನೆಗಳು ಮತ್ತು ಸಲಹಾ ಸಹಕಾರ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.
ಅಲ್-ಫಲಾಹ್ ಸಂಸ್ಥಾಪಕನಿಗೆ ಉಗ್ರರ ನಂಟು ಆರೋಪ; ಜವಾದ್ ಅಹ್ಮದ್ ಸಿದ್ದಿಕಿ ಪೂರ್ವಜರ ಮನೆ ಧ್ವಂಸಕ್ಕೆ ನೋಟಿಸ್
ಫರೀದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿಯ ಪೂರ್ವಜರ ಮನೆಯನ್ನು ಧ್ವಂಸಗೊಳಿಸಲು ನೋಟಿಸ್ ಜಾರಿಯಾಗಿದೆ. ಇಂದೋರ್ನ ಮೌನಲ್ಲಿರುವ ಈ ಮನೆಯು ರಕ್ಷಣಾ ಸಚಿವಾಲಯದ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ. ಜವಾದ್ ಸಿದ್ದಿಕಿಯನ್ನು ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಬಂಧಿಸಲಾಗಿದೆ. ದಿಲ್ಲಿಸ್ಫೋಟ ಪ್ರಕರಣದಲ್ಲಿ ಬಂಧಿತ ಉಗ್ರ ಮುಜಾಮ್ಮಿಲ್ ಅಹ್ಮದ್ ಗನಾಯಿಗೆ ಬಾಂಬ್ ತಯಾರಿಕೆ ವಿಡಿಯೊಗಳನ್ನು ಕಳುಹಿಸಿದ್ದ ಎನ್ನಲಾಗಿದೆ.
ನವೆಂಬರ್ ಕ್ರಾಂತಿಯಿಲ್ಲ, ಶಾಂತಿ : ರಾಮಲಿಂಗಾರೆಡ್ಡಿ
ಬೆಂಗಳೂರು : ನವೆಂಬರ್ ಕ್ರಾಂತಿ ಇಲ್ಲ, ಬರೀ ಶಾಂತಿ. ರಾಜಕೀಯ ಬದಲಾವಣೆ ಕುರಿತು ಮಾಹಿತಿ ಬೇಕಿದ್ದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೆ ಕೇಳಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಹೊಸದಿಲ್ಲಿಗೆ ಹೋಗಿದ್ದಾರೆ, ಕಾರಣವೇನು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಬೇಕಾದರೆ ದೆಹಲಿಯಲ್ಲಿ ಏನೇನು ಆಗಿದ್ಯೋ ನಮಗೆ ಗೊತ್ತಿಲ್ಲ. ನಿಮಗೆ ಸಂಪೂರ್ಣ ಮಾಹಿತಿ ಬೇಕಾದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೆ ಕೇಳಿ ಎಂದು ತಿಳಿಸಿದರು. ನಮ್ಮಲ್ಲಿ ಬಿಜೆಪಿಯಲ್ಲಿದ್ದಷ್ಟು ಬಣ ಇಲ್ಲ, ಬಿಜೆಪಿಯಲ್ಲಿ ನಾಲ್ಕೈದು ಬಣ ಇದೆ. ನಮ್ಮಲ್ಲಿ ಒಂದೇ ಬಣ ಕಾಂಗ್ರೆಸ್ ಬಣ. ನಮ್ಮಲ್ಲಿ ಹತ್ತಾರು ಹಿರಿಯ ನಾಯಕರು ಇದ್ದಾರೆ. ನಮ್ಮ ಪಕ್ಷ ಸದೃಢವಾಗಿದೆ. ಸರಕಾರ ಎರಡೂವರೆ ವರ್ಷ ಪೂರೈಸಿದೆ. ಐದು ವರ್ಷವೂ ಸರಕಾರ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಮಿಕರ ಭವಿಷ್ಯ ನಿಧಿ ನಿಯಮದಲ್ಲಿ ಮಹತ್ವದ ಬದಲಾವಣೆ; ಮೂಲವೇತನ ಮಿತಿ ಏರಿಕೆ! ಉದ್ಯೋಗ ಕಂಪನಿಗಳ ಕೊಡುಗೆ ಹೆಚ್ಚಳ
ಕಾರ್ಮಿಕರ ಭವಿಷ್ಯನಿಧಿಗೆ (ಇಪಿಎಫ್) ಅರ್ಹತೆ ಪಡೆಯಲು ಮೂಲವೇತನ ಮಿತಿಯನ್ನು 15,000 ರೂ.ಗಳಿಂದ 25,000 ರೂ.ಗೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಪ್ರಸ್ತಾವನೆ ಮುಂದಿನ ವರ್ಷದ ಆರಂಭದಲ್ಲಿ ಕೇಂದ್ರ ಟ್ರಸ್ಟಿಗಳ ಮಂಡಳಿಯ ಮುಂದೆ ಬರಲಿದ್ದು, ಇದರಿಂದ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಇಪಿಎಫ್ ವ್ಯಾಪ್ತಿಗೆ ಬರಲಿದ್ದಾರೆ.
ರಾಯಚೂರು | ಉದ್ಯಮಗಳು ಬೆಳೆಯಲು ಹೊಸ ತಂತ್ರಜ್ಞಾನ, ಕೌಶಲ್ಯ ಅಗತ್ಯ : ಡಾ.ಮಲ್ಲಿಕಾರ್ಜುನ ಎಸ್.ಅಯ್ಯನಗೌಡರ್
ರಾಯಚೂರು : ರಾಯಚೂರು ಜಿಲ್ಲೆಯ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹಾಗೂ ಹೊಸ ಉದ್ಯಮಿಶೀಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ರಾಯಚೂರು ಜಿಲ್ಲಾ ಕೈಗಾರಿಕಾ ಕೇಂದ್ರ, ರಾಯಚೂರು ಜಿಲ್ಲಾ ಕೃಷಿ ತಾಂತ್ರಿಕ ಮಹಾವಿದ್ಯಾಲಯ ಇದರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಇನ್ಕ್ಯೂಬೇಶನ್ ಕಾರ್ಯಗಾರ ನಡೆಯಿತು. ನಗರದ ಕೃಷಿ ತಾಂತ್ರಿಕ ಮಹಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಗಾರವನ್ನು ಜಿಲ್ಲಾ ಕೃಷಿ ತಾಂತ್ರಿಕ ಮಹಾ ವಿದ್ಯಾಲಯದ ಕೃಷಿ ತಾಂತ್ರಿಕರಾದ ಡೀನ್ ಡಾ.ಮಲ್ಲಿಕಾರ್ಜುನ ಎಸ್.ಆಯ್ಯನಗೌಡರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ.ಮಲ್ಲಿಕಾರ್ಜುನ ಎಸ್.ಆಯ್ಯನಗೌಡರ್, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮಗಳು ಉಳಿದು ಬೆಳೆಯಲು ಹೊಸ ತಂತ್ರಜ್ಞಾನ ಮತ್ತು ಕೌಶಲ ಅತ್ಯಗತ್ಯ. ಜೊತೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಒಳ್ಳೆಯ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಹೇಳಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಬಿ.ಸತೀಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತಾನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರ್ಯಾಂಪ್ (ಆರ್ಎಎಂಪಿ) ಯೋಜನೆಯು ದೇಶದ ಎಂ.ಎಸ್.ಎ.ಇ. ಗಳಿಗೆ ಹೊಸ ಚೈತನ್ಯ ನೀಡಲಿದ್ದು, ಈ ಯೋಜನೆಯಡಿ ಸಿಗುವ ಸಾಲ ಸೌಲಭ್ಯ ಮತ್ತು ಮಾರುಕಟ್ಟೆ ಅವಕಾಶಗಳನ್ನು ಜಿಲ್ಲೆಯ ಉದ್ಯಮಿಗಳು ಸದುಪಯೋಗಪಡಿಸಿಕೊಳ್ಳಬೇಕು. ಇನ್ ಕ್ಯೂಬೇಶನ್ ಕಾರ್ಯಕ್ರಮಗಳು ಹೊಸ ಉದ್ಯಮದಾರರ ಹೊಸ ಆಲೋಚನೆಗಳಿಗೆ ವೇದಿಕೆ ಕಲ್ಪಿಸುತ್ತದೆ ಎಂದು ಸಲಹೆ ಮಾಡಿದರು. ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಬಿಸನೆಸ್ ಇನ್ ಕ್ಯೋಬೇಶನ್ ವಿಭಾಗದ ಮುಖ್ಯಸ್ಥರಾದ ಡಾ.ಬಸಂತಿ ಘಂಟಿ ಮಾತಾನಾಡಿ, ಒಂದು ಯಶಸ್ವಿ ಉದ್ಯಮಕ್ಕೆ ಕೇವಲ ಹಣ ಹೂಡಿಕೆ ಮುಖ್ಯವಲ್ಲ, ಬದಲಾಗಿ ಹೊಸ ಅವಿಷ್ಕಾರ, ಸರಿಯಾದ ಮಾರ್ಗದರ್ಶನ ಮತ್ತು ವ್ಯವಹಾರದ ಜ್ಞಾನವು ಅಷ್ಟೇ ಮುಖ್ಯ. ಈ ಎಲ್ಲಾ ಅಂಶಗಳು ಒಂದೇ ಸೂರಿನಡಿ ಇನ್ ಕ್ಯೂಬೇಶನ್ ಕೇಂದ್ರಗಳು ಒದಗಿಸುತ್ತದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಲೀಡ್ ಡಿಸ್ಟ್ರೀಕ್ಟ್ ವ್ಯವಸ್ಥಾಪಕರಾದ ಪಾಂಡಪ್ಪ ಲಮಾಣಿ ಮಾತಾನಾಡಿ, ಬ್ಯಾಂಕಿನಿಂದ ಸಾಲ ಸೌಲಭ್ಯ, ಮುದ್ರಾ ಯೋಜನೆ, ಸಿ.ಜಿ.ಟಿ.ಎಂ.ಎಸ್.ಸಿ. ಯೋಜನೆಯಡಿ ಕೈಗಾರಿಕಾ ಸ್ಥಾಪನೆಗಾಗಿ ಸಾಲ ಪಡೆಯುವ ಬಗ್ಗೆ ಸುಧೀರ್ಘವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ರಾಜಕುಮಾರ್ ಪಾಟೇಲ್ ಮಾತಾನಾಡಿ, ಗ್ರಾಮೀಣ ಯುವಕರು ಇಂತಹ ಕಾರ್ಯಾಗಾರಗಳ ಪ್ರಯೋಜನ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದರ ಜೊತೆಗೆ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಕಾರ್ಯಕ್ರಮದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಯಶಸ್ವಿ ಉದ್ಯಮಿಗಳಾದ ಹರಿಚೈತನ್ಯ ರಾಯಚೂರು ಮಾತನಾಡಿ, ತಾವು ಕೈಗಾರಿಕೆ ಪ್ರಾರಂಭಿಸುವಾಗ ಬಂದ ಸಮಸ್ಯೆಗಳು ಹಾಗೂ ನಂತರ ಯಶಸ್ವಿ ಆಗಿರುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದ ವೇದಿಕೆಯಲ್ಲಿ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗ, ಕೃಷಿ ತಾಂತ್ರಿಕ ಮಹಾ ವಿದ್ಯಾಲಯದ ಪಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಶರಣಗೌಡ ಹಿರೇಗೌಡರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ಉಪ ನಿರ್ದೇಶಕರಾದ ಲಕ್ಷ್ಮೀಕಾಂತ್ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದುಬೈ ಏರ್ ಶೋ 2025 ವೇಳೆ ನ. 21ರಂದು ಭಾರತದ ತೇಜಸ್ ಯುದ್ಧ ವಿಮಾನ ಪ್ರದರ್ಶನದ ಮಧ್ಯೆಯೇ ಪತನವಾಗಿ, ಅದರಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ‘ನೆಗೆಟಿವ್ ಜಿ’ ಒತ್ತಡವನ್ನು ನಿಭಾಯಿಸುವಲ್ಲಿ ಪೈಲಟ್ ವಿಫಲರಾಗಿದ್ದಿರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಏನಿದು ‘ನೆಗೆಟಿವ್-ಜಿ’? ಇಲ್ಲಿದೆ ಉತ್ತರ.
ಮೆಕ್ಸಿಕೋದ ಫಾತಿಮಾ ಬಾಷ್ ʼವಿಶ್ವ ಸುಂದರಿʼ
ಬ್ಯಾಂಕಾಕ್, ನ.21: ಥೈಲ್ಯಾಂಡ್ ನಲ್ಲಿ ನಡೆದ 2025ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದಾದ್ಯಂತದ 120ಕ್ಕೂ ಅಧಿಕ ಮಹಿಳೆಯರು ಸ್ಪರ್ಧೆಯಲ್ಲಿದ್ದು ಇವರಲ್ಲಿ ಮೆಕ್ಸಿಕೋ, ಐವರಿ ಕೋಸ್ಟ್, ಫಿಲಿಪ್ಪೀನ್ಸ್, ಥೈಲ್ಯಾಂಡ್ ಮತ್ತು ವೆನೆಝುವೆಲಾದ ಸ್ಪರ್ಧಿಗಳು ಅಂತಿಮ ಹಂತಕ್ಕೆ ಅರ್ಹತೆ ಪಡೆದಿದ್ದರು. ಭಾರತದ ಮಣಿಕಾ ವಿಶ್ವಕರ್ಮ ಟಾಪ್ 12ರ ಹಂತದಲ್ಲಿ ಸ್ಪರ್ಧೆಯಿಂದ ನಿರ್ಗಮಿಸಿದರು.
ರಾಯಚೂರು | ಸಂವಿಧಾನ ದಿನಾಚರಣೆ ಕುರಿತು ಪೂರ್ವಭಾವಿ ಸಭೆ
ರಾಯಚೂರು : ನವೆಂಬರ್ 26ರಂದು ರಾಯಚೂರು ಜಿಲ್ಲಾ ಮತ್ತು ಸಿಂಧನೂರ್, ಮಾನವಿ, ಲಿಂಗಸಗೂರು, ಸಿರವಾರ, ಅರಕೇರಿ, ದೇವದುರ್ಗ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನವೆಂಬರ್ 21ರಂದು ಸಂಜೆ, ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಶಿವಾನಂದ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಿಂದ ಸಂವಿಧಾನ ಕುರಿತ ಪುಸ್ತಕಗಳನ್ನು ಪೂರೈಸಲಾಗುತ್ತಿದೆ. ನವೆಂಬರ್ 26ರಂದು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಾಷ್ಟ್ರಧ್ವಜಗಳ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳಿಂದ ಸಂವಿಧಾನ ಪುಸ್ತಕಗಳ ಪ್ರದರ್ಶನ ಮತ್ತು ಜಾಥಾಗಳನ್ನು ಹಮ್ಮಿಕೊಳ್ಳಬೇಕು. ಜಾಥಾದಲ್ಲಿ ಸಂವಿಧಾನದ ಕುರಿತು ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರಮುಖ ನುಡಿಮುತ್ತುಗಳ ಪ್ಲೇಕಾರ್ಡಗಳನ್ನು ಪ್ರದರ್ಶಿಸಬೇಕು. ಜಿಲ್ಲಾ ಹಾಗೂ ಎಲ್ಲ ತಾಲೂಕು ಕೇಂದ್ರದಲ್ಲಿ ಕಾರ್ಯಕ್ರಮ ರೂಪಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಕುರಿತು ಉಪನ್ಯಾಸ ಏರ್ಪಡಿಸಬೇಕು ಎಂದು ಸೂಚನೆ ನೀಡಿದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಣೆಗೆ ಕ್ರಮ ವಹಿಸಬೇಕು. ಈ ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಕಡ್ಡಾಯವಾಗಿ ಲಘು ಉಪಹಾರದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ರಾಯಚೂರು ಜಿಲ್ಲಾ ಕೇಂದ್ರದಲ್ಲಿ ನವೆಂಬರ್ 26ರಂದು ಸಂವಿಧಾನ ಜಾಗೃತಿ ಜಾಥಾವನ್ನು ವಿಶೇಷವಾಗಿ ನಡೆಸಲು ನಿರ್ಣಯಿಸಲಾಯಿತು. ಅಂದು ಬೆಳಗ್ಗೆ 9 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಾಥಾ ಆರಂಭವಾಗಿ ಬಸ್ ನಿಲ್ದಾಣದ ಮಾರ್ಗ ಬಳಸಿ ತೀನ್ ಕಂದಿಲ್ ವೃತ್ತ, ಚಟ್ಟಿಭಾವಿ ಚೌಕ್, ಸರ್ದಾರ್ ವಲ್ಲಭಬಾಯಿ ಪಟೇಲ್ ರಸ್ತೆ, ಗಾಂಧಿ ಚೌಕ್, ಹಳೆಯ ಡಿ.ಸಿ ಆಫೀಸ್ ರಸ್ತೆ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ರಂಗಮಂದಿರದವರೆಗೆ ಜಾಥಾ ನಡೆಸಲು ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು. ಸಂವಿಧಾನ ದಿನಾಚರಣೆಯ ವೇದಿಕೆಯ ಕಾರ್ಯಕ್ರಮವನ್ನು ಜಿಲ್ಲಾ ರಂಗಮಂದಿರದಲ್ಲಿ ನಡೆಸಲು ನಿರ್ಣಯಿಸಲಾಯಿತು. ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನ ಜಾಗೃತಿಯ ಉಪನ್ಯಾಸ ಏರ್ಪಡಿಸಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ರಾಜ್ಯ ಸರಕಾರ ವಿಶಿಷ್ಟವಾಗಿ ಆಚರಿಸುತ್ತಿರುವುದು ಸಂತಷದ ಸಂಗತಿಯಾಗಿದೆ. ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಸಂವಿಧಾನ ಸಂರಕ್ಷಣಾ ಪಡೆಯ ಕೆ.ಇ.ಕುಮಾರ್, ಮುಖಂಡರಾದ ಎಂ.ಆರ್.ಭೇರಿ, ವಿಶ್ವನಾಥ್, ಬಸವರಾಜ ಸಾಸಲಮರಿ ಹಾಗೂ ಇತರರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಜಾನ್ವೆಸ್ಲಿ, ಗಿರಿಯಪ್ಪ ನೆಲಹಾಳ, ಕರುಣಕುಮಾರ್ ಕಟ್ಟಿಮನಿ, ಪಿ.ಪ್ರಭಾಕರ, ಪರಶುರಾಮ ಅರೋಲಿ, ಪ್ರಾಣೇಶ ಮಂಚಾಳ, ರವಿ ದಾದಸ, ಎಂ.ವೆಂಕಟೇಶ ಅರೋಲಿಕರ, ನಿವೇದಿತಾ ಎನ್, ಜಿಲ್ಲಾ ಪೊಲೀಸ್ ಇಲಾಖೆಯ ಶಾಂತವೀರ್ ಈ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜೇಂದ್ರ ಜಲ್ದಾರ, ಪುರಸಭೆ ತಹಶೀಲ್ದಾರ್ ಎಂ.ಡಿ.ಆಸೀಫ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಪ್ಪ ಉಪ್ಪಾಳ, ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಆಹಾರ ಇಲಾಖೆಯ ಲೆಕ್ಕಾಧಿಕ್ಷಕರಾದ ಸಿದ್ದಪ್ಪ, ಮಹಾನಗರ ಪಾಲಿಕೆಯ ವಿನೋದಕುಮಾರ್ ಎಂ., ರಾಯಚೂರು ಸಿಟಿ ಕಾರ್ಪೋರೇಶನ್ ಅಧಿಕಾರಿ ಜೈಪಾಲ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಬಿ ಎನ್ ಕುಮಾರಸ್ವಾಮಿ, ಕಾರ್ಮಿಕ ಇಲಾಖೆಯ ಗಂಗಮ್ಮ, ವಿಕಲಚೇತನರ ಇಲಾಖೆಯ ವಿನಯಕುಮಾರ್, ಕೈಮಗ್ಗ ಮತ್ತು ಜವಳಿ ಇಲಾಖೆಯ ರಾಮಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Kundapura | ಕೊಲ್ಲೂರು ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ
ಕುಂದಾಪುರ:, ನ.21: ಆರು ತಿಂಗಳ ಹಿಂದೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಮೇಲಿನ ದೋಷಾರೋಪಣೆಗಳು ಸಾಬೀತಾಗಿದ್ದು, ಆತ ಅಪರಾಧಿಯೆಂದು ಕುಂದಾಪುರದ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಬಿ. ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಕಾರ್ಕಳ ಮೂಲದ ಉಮಾನಾಥ ಪ್ರಭು (59) ಅಪರಾಧಿಯಾಗಿದ್ದು, ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಕಳವು ಪ್ರಕರಣದಲ್ಲಿ 1 ವರ್ಷ 6 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಲಾಗಿದೆ. ಪ್ರಕರಣದ ವಿವರ : 2025ರ ಮೇ ತಿಂಗಳಿನಲ್ಲಿ ಕೊಲ್ಲೂರು ಠಾಣಾ ವ್ಯಾಪ್ತಿಯ ಇಡೂರು-ಕುಂಜ್ಞಾಡಿ ಗ್ರಾಮದ ಜನತಾ ಕಾಲನಿಯ ಮನೆಯೊಂದರಲ್ಲಿ ರಾತ್ರಿ ಯಾರೂ ಇಲ್ಲದ ವೇಳೆ ಎರಡು ಚಿನ್ನದ ಬಳೆಗಳ ಕಳ್ಳತನ ನಡೆದಿದ್ದು, ಬೆಳಿಗ್ಗೆ ಘಟನೆ ಬೆಳಕಿಗೆ ಬಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಜಾಡು ಹಿಡಿದ ಪೊಲೀಸರು ಜೂ.17ರಂದು ಅಜೆಕಾರು ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದರು. ಅಭಿಯೋಜನೆ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಉದಯ್ ಕುಮಾರ್ ವಾದಿಸಿದ್ದರು. ಆರೋಪಿಯು ರೂಢಿಗತವಾಗಿ ಕಳ್ಳತನ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದು, ಆತನಿಗೆ ಬಿ.ಎನ್.ಎಸ್ ಕಾಯ್ದೆಯಡಿ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಸಹಾಯಕ ಸರಕಾರಿ ಅಭಿಯೋಜಕರು ಮನವಿ ಮಾಡಿದ್ದರು. ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಒಟ್ಟು 20 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಕಾನೂನು ಸುವ್ಯವಸ್ಥೆ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ತನಿಖೆ ಕಳೆದ ವರ್ಷ ಜಾರಿಗೆ ಬಂದ ‘ಭಾರತೀಯ ನ್ಯಾಯ ಸಂಹಿತೆ’ (ಬಿಎನ್ಎಸ್) ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಆತ ನ್ಯಾಯಾಂಗ ಬಂಧನದಲ್ಲಿಯೇ ಇದ್ದ. ಹೀಗಾಗಿ ನ್ಯಾಯಾಲಯದಲ್ಲಿ ಶೀಘ್ರ ವಿಚಾರಣೆ ನಡೆಸಿದ್ದು, ಸಾಕ್ಷ್ಯಗಳನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದಲ್ಲಿ 2025ರ ಆಗಸ್ಟ್ 1ರಿಂದ ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿದ್ದು, ಸುಮಾರು ಎರಡೂವರೆ ತಿಂಗಳಿನಲ್ಲಿ ಪ್ರಕ್ರಿಯೆ ಮುಗಿದಿತ್ತು. ಕಳ್ಳತನ ಪ್ರಕರಣವೊಂದರಲ್ಲಿ ಅತೀ ಶೀಘ್ರವಾಗಿ ಬಿ.ಎನ್.ಎಸ್. ಕಾಯ್ದೆಯಡಿ ವಿಚಾರಣೆ ಮುಗಿಸಿ ಆರೋಪಿಗೆ ಶಿಕ್ಷೆ ವಿಧಿಸಿರುವುದು ವಿಶೇಷವಾಗಿದೆ. ಹೊಸ ಕಾಯ್ದೆಯಲ್ಲಿ ತಾಂತ್ರಿಕ ಸಾಕ್ಷಿಗಳ ವಿಚಾರಣೆಗೆ ಹೆಚ್ಚಿನ ಮಹತ್ವವಿರುವುದು ಇಲ್ಲಿ ಗಮನಾರ್ಹ.
ಯಾದಗಿರಿ | ನಗರದ ಹಲವೆಡೆ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯಗಳ ಉದ್ಘಾಟನೆ
ಯಾದಗಿರಿ : ನಗರದ ವಿವಿಧ ಮುಖ್ಯ ಸ್ಥಳಗಳಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. 2023-24ನೇ ಸಾಲಿನ ಎಸ್ ಬಿಎಮ್ 2.0 ಅನುದಾನದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ಲುಂಬಿನಿ ಉದ್ಯಾನವನದ ಬಳಿ ಸುಮಾರು 30ಲಕ್ಷ ಅನುದಾನದಲ್ಲಿ ನಿರ್ಮಿಸಿದ ಅನ್ಸ್ಪಿರೇಷನಲ್ ಶೌಚಾಲಯ ಹಾಗೂ ಫಿಲ್ಟರ್ ಬೆಡ್ ಗಾರ್ಡನ್ ಹತ್ತಿರ 2.50 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಶೌಚಾಲಯಗಳ ಉಸ್ತುವಾರಿ ವಹಿಸಿಕೊಂಡವರು ಸದಾ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಲುಷಿತ ಗಬ್ಬೆದ್ದು ನಾರುವಂತ ಸ್ಥಿತಿಗೆ ಶೌಚಾಲಯಗಳು ತಲುದಂತೆಯೇ ನಿರ್ವಹಣೆ ಮಾಡಬೇಕೆಂದು ಶಾಸಕರು ಹೇಳಿದರು. ಜಿಲ್ಲಾಧಿಕಾರಿ ಹರ್ಷಲ್ ಬೊಯರ್ ಮಾತನಾಡಿ, ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಅವಶ್ಯಕತೆ ಸಾಕಷ್ಟು ಇತ್ತು. ಇದನ್ನು ಮನಗಂಡು ನಗರದ ಮೂರು ಕಡೆ ಶೌಚಾಲಯ ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ಈ ವೇಳೆ ಯುಡಾ ಅಧ್ಯಕ್ಷರಾದ ಬಾಬುರಾವ ಕಾಡ್ಲೂರ್, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರಾದ ಲಕ್ಷಿಕಾಂತ ರೆಡ್ಡಿ, ಪೌರಾಯುಕ್ತರಾದ ಉಮೇಶ್ ಚವ್ಹಾಣ, ಸಹಾಯಕ ಕಾರ್ಯಪಾಲ ಅಭಿಯಂತರರಾದ ವಿಶ್ವನಾಥರೆಡ್ಡಿ, ಪರಿಸರ ಅಭಿಯಂತರಾದ ಪ್ರಶಾಂತ್, ಕಿರಿಯ ಸಹಾಯಕ ಅಭಿಯಂತರರಾದ ಲೊಕೇಶ್ವರಿ, ತಾಯಪ್ಪ ಯಾದವ್, ಕಿರಿಯ ಆರೋಗ್ಯ ನಿರಿಕ್ಷಕರಾದ ಶಿವಪುತ್ರ, ಮಂಜುನಾಥ ಉಪಸ್ಥಿತರಿದ್ದರು.
ಗುಜರಾತ್ | ವನತಾರಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಪುತ್ರ
ಜಾಮನಗರ, ನ. 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಗುಜರಾತ್ ನ ಜಾಮನಗರದಲ್ಲಿರುವ ವನ್ಯ ಜೀವಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ವನತಾರಕ್ಕೆ ಶುಕ್ರವಾರ ಭೇಟಿ ನೀಡಿದ್ದಾರೆ. ಅಂಬಾನಿ ಕುಟುಂಬದ ಆಹ್ವಾನದ ಮೇರೆಗೆ ಡೊನಾಲ್ಡ್ ಟ್ರಂಪ್ ಜೂನಿಯರ್ ರಿಲಾಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ ಅವರ ಕನಸಿನ ಕೂಸಾಗಿರುವ ವಂತಾರಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ಅನಂತ್ ಅಂಬಾನಿ ಅವರ ಜೊತೆಗೆ ವನತಾರದಲ್ಲಿ ಸುತ್ತಾಡಿ ವನ್ಯ ಜೀವಿಗಳನ್ನು ವೀಕ್ಷಿಸಿದರು. ಅಲ್ಲದೆ ಆ ಪ್ರದೇಶದಲ್ಲಿರುವ ಕೆಲವು ದೇವಾಲಯಗಳಿಗೆ ಕೂಡ ಭೇಟಿ ನೀಡಿದರು ಎಂದು ಮೂಲಗಳು ತಿಳಿಸಿವೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ಗುರುವಾರ ಆಗ್ರಾದಲ್ಲಿರುವ ತಾಜ್ ಮಹಲ್ ಗೆ ಭೇಟಿ ನೀಡಿದ್ದರು.
ಗುಜರಾತ್ | ಮನೆಯಲ್ಲಿ ಅಗ್ನಿ ದುರಂತ; ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಮೃತ್ಯು
ಗೋಧ್ರಾ, ನ. 21: ಗುಜರಾತ್ ನ ಗೋಧ್ರಾ ಪಟ್ಟಣದಲ್ಲಿರುವ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸದಸ್ಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ದುರ್ಘಟನೆ ಗಂಗೋತ್ರಿ ನಗರದಲ್ಲಿ ಗುರುವಾರ ತಡ ರಾತ್ರಿ ಸಂಭವಿಸಿದೆ. ಮೃತರನ್ನು ಆಭರಣ ವ್ಯಾಪಾರಿ ಕಮಲ್ ದೋಶಿ (50), ಪತ್ನಿ ದವಳ್ ಬೆನ್ (45) ಹಾಗೂ ಅವರ ಪುತ್ರರಾದ ದೇವ್ (24) ಹಾಗೂ ರಾಜ್ (22) ಎಂದು ಗುರುತಿಸಲಾಗಿದೆ. ಅವರು ಮಲಗಿದ್ದಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವಿಭಾಗೀಯ ಪೊಲೀಸ್ ಠಾಣೆಯ ಅಧಿಕಾರಿ ಆರ್.ಎಂ. ವಸೆಯ್ಯಾ ತಿಳಿಸಿದ್ದಾರೆ. ದೋಶಿ ಕುಟುಂಬ ತಮ್ಮ ಓರ್ವ ಪುತ್ರನ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಸಿದ್ಧತೆ ನಡೆಸುತ್ತಿತ್ತು. ಅಲ್ಲದೆ, ಅವರು ಶುಕ್ರವಾರ ಬೆಳಗ್ಗೆ ವಾಪಿಗೆ ತೆರಳಬೇಕಿತ್ತು. ‘‘ಮೇಲ್ನೋಟಕ್ಕೆ ನೆಲ ಮಹಡಿಯ ಏರ್ ಕಂಡಿಶನ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿರುವ ಮರದ ಪೀಠೋಪಕರಣಗಳಿಗೆ ಬೆಂಕಿ ಹತ್ತಿಕೊಂಡಿರುವುದು ಕಂಡು ಬಂದಿದೆ. ಇದರಿಂದ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ್ದಾರೆ’’ ಎಂದು ವೆಸೆಯ್ಯಾ ಅವರು ತಿಳಿಸಿದ್ದಾರೆ.
16ನೇ ವಯಸ್ಸಿನಲ್ಲಿ ಹೋದ ನೆನಪಿನ ಶಕ್ತಿ 61ನೇ ವಯಸ್ಸಿಗೆ ವಾಪಸ್ ಬಂತು!
ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಿಂದ ವೈದ್ಯಕೀಯ ವಿಸ್ಮಯ ಘಟನೆಯೊಂದು ವರದಿಯಾಗಿದ್ದು, ತಮ್ಮ 16ನೇ ವಯಸ್ಸಿನಲ್ಲಿ ತಲೆಗೆ ಪೆಟ್ಟು ಬಿದ್ದು ನೆನಪಿನ ಶಕ್ತಿ ಕಳೆದುಕೊಂಡಿದ್ದ ಬಾಲಕನೊಬ್ಬ, ದಶಕಗಳ ಬಳಿಕ ತಲೆಗೆ ಬಿದ್ದ ಮತ್ತೊಂದು ಪೆಟ್ಟಿನಿಂದ ತಮ್ಮ 61ನೇ ವಯಸ್ಸಿನಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಸೇರಿರುವ ಸಿನಿಮೀಯ ಘಟನೆ ನಡೆದಿದೆ. ಆಗ ರಿಖಿ ಆಗಿದ್ದ, ಇದೀಗ ರವಿ ಚೌಧರಿ ಆಗಿರುವ ವ್ಯಕ್ತಿಯು 45 ವರ್ಷದ ಬಳಿಕ ಸಿರ್ಮೌರ್ ಜಿಲ್ಲೆಯಲ್ಲಿನ ತಮ್ಮ ಸ್ವಗ್ರಾಮ ನಾಡಿಗೆ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಕಳೆದ ವಾರ ಮರಳಿದ್ದಾರೆ. ತಮ್ಮ ಮಧ್ಯ ವಯಸ್ಸಿನಲ್ಲಿ ಅವರು ಮನೆಗೆ ಮರಳುತ್ತಾರೆ ಎಂದು ಅವರ ಕುಟುಂಬದ ಸದಸ್ಯರೂ ಭಾವಿಸಿರಲಿಲ್ಲವೇನೊ! ರಿಖಿಯನ್ನು ಗ್ರಾಮಸ್ಥರು ಪುಷ್ಪಾರ್ಚನೆ, ಸಂಗೀತ ಹಾಗೂ ಕಣ್ಣೀರಿನೊಂದಿಗೆ ತಮ್ಮ ಗ್ರಾಮಕ್ಕೆ ಸ್ವಾಗತಿಸಿದರು. ಈ ವೇಳೆ ತಮ್ಮ ಸಹೋದರನನ್ನು ನೋಡುತ್ತಿದ್ದಂತೆಯೇ ಅವರ ಒಡಹುಟ್ಟಿದವರಾದ ದುರ್ಗಾ ರಾಮ್, ಚಂದರ್ ಮೋಹನ್, ಚಂದ್ರಮಣಿ, ಕೌಶಲ್ಯ ದೇವಿ, ಕಲಾ ದೇವಿ ಹಾಗೂ ಸುಮಿತ್ರ ದೇವಿ ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತರು. ಜೀವಂತ ಶವವಾಗಿದ್ದ ರಿಖಿಯನ್ನು ಅವರು ಇಷ್ಟು ವರ್ಷಗಳ ಕಾಲ ಮರೆತೇ ಬಿಟ್ಟಿದ್ದರು ಎಂದು ನಾಡಿ ಗ್ರಾಮದ ನಿವಾಸಿ ರುದ್ರ ಶರ್ಮ ಹೇಳುತ್ತಾರೆ. “ಇಂತಹ ಘಟನೆಗಳು ತುಂಬಾ ಅಪರೂಪ. ಕುಟುಂಬದಲ್ಲಿ ಹಾಗೂ ಗ್ರಾಮದಲ್ಲಿ ಸಾಕಷ್ಟು ಸಂಭ್ರಮ ಮನೆ ಮಾಡಿದೆ” ಎನ್ನುತ್ತಾರೆ ಅವರು. 1980ರಲ್ಲಿ ಅಂಬಾಲಕ್ಕೆ ಪ್ರವಾಸ ತೆರಳಿದ್ದಾಗ, ಹರ್ಯಾಣದ ಯಮುನಾನಗರ್ ನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಿಖಿ ದೊಡ್ಡ ರಸ್ತೆ ಅಪಘಾತಕ್ಕೆ ಈಡಾಗಿದ್ದರು. ಆಗ ಅವರ ತಲೆಗೆ ಅದೆಂತಹ ಪೆಟ್ಟಾಗಿತ್ತೆಂದರೆ, ಅವರು ತಮ್ಮ ಹೆಸರು ಮತ್ತು ಗುರುತು ಸೇರಿದಂತೆ ಸಂಪೂರ್ಣ ನೆನಪಿನ ಶಕ್ತಿ ಕಳೆದುಕೊಂಡಿದ್ದರು ಎಂದು ರುದ್ರ ಶರ್ಮ ಸ್ಮರಿಸುತ್ತಾರೆ. ಬಳಿಕ, ಅವರ ಸ್ನೇಹಿತರೊಬ್ಬರು ಅವರಿಗೆ ರವಿ ಚೌಧರಿ ಎಂದು ಮರುನಾಮಕರಣ ಮಾಡಿದ್ದರು ಎನ್ನಲಾಗಿದೆ. ಹಿಂದಿನ ಯಾವುದೇ ನೆನಪಿಲ್ಲದ ರಿಖಿ, ಬಳಿಕ ಮುಂಬೈಗೆ ತೆರಳಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸತೊಡಗಿದರು ಹಾಗೂ ಕಾಲೇಜೊಂದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಮಹಾರಾಷ್ಟ್ರದ ನಾಂದೇಡ್ ನಲ್ಲಿ ನೆಲೆಸಿದರು. ಬಳಿಕ ಸಂತೋಷಿ ಎಂಬುವವರನ್ನು ವಿವಾಹವಾದ ರಿಖಿಗೆ ಇದೀಗ ಮೂವರು ಮಕ್ಕಳಿದ್ದಾರೆ. ಈ ಪೈಕಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ ಎಂದು ರುದ್ರ ಶರ್ಮ ಹಾಗೂ ನಾಡಿಯ ಸ್ಥಳೀಯರು ತಿಳಿಸುತ್ತಾರೆ. ಕೆಲ ತಿಂಗಳ ಹಿಂದೆ ಅವರ ತಲೆಗೆ ಆದ ಮತ್ತೊಂದು ಪೆಟ್ಟು, ಅವರ ಜೀವನವನ್ನು ಮತ್ತೆ ಬದಲಿಸಿದೆ. ನಾಡಿ ಗ್ರಾಮದಲ್ಲಿನ ಮಸುಕುಮಸುಕಾದ ಮಾವಿನ ಮರದ ಚಿತ್ರಗಳು, ಇಕ್ಕಟ್ಟಾದ ಬೀದಿಗಳು ಹಾಗೂ ಸತೌನ್ ನಲ್ಲಿನ ಮನೆಯೊಂದರ ಅಂಗಳ ಅವರ ಕನಸಿನಲ್ಲಿ ಬರತೊಡಗಿದೆ. ತಕ್ಷಣವೇ ರಿಖಿಗೆ ಇದು ಕನಸಲ್ಲ, ಬದಲಿಗೆ ನೆನಪುಗಳು ಎಂದು ಅರಿವಾಗಿದೆ ಎಂದು ಅವರು ಹೇಳುತ್ತಾರೆ. ಬಳಿಕ ಸತೌನ್ ಅನ್ನು ಪತ್ತೆ ಹಚ್ಚಲು ಕಾಲೇಜು ವಿದ್ಯಾರ್ಥಿಯೊಬ್ಬರ ನೆರವನ್ನು ರಿಖಿ ಪಡೆದಿದ್ದಾರೆ. ಗೂಗಲ್ ನಲ್ಲಿ ನಾಡಿ ಗ್ರಾಮ ಹಾಗೂ ಸತೌನ್ ಅನ್ನು ಪತ್ತೆ ಹಚ್ಚುವಾಗ, ಅವರಿಗೆ ಕೆಫೆಯೊಂದರ ಫೋನ್ ನಂಬರ್ ಪತ್ತೆಯಾಗಿದೆ. ಆ ಸಂಖ್ಯೆಗೆ ಕರೆ ಮಾಡಿರುವ ರಿಖಿ, ರುದ್ರಪ್ರಕಾಶ್ ಎಂಬ ಹೆಸರಿನ ಗ್ರಾಮದ ಹಿರಿಯ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಮುಂದುವರಿದಂತೆ, ರಿಖಿಯ ಸಂಬಂಧಿಕರಾದ ಎಂ.ಕೆ.ಚೌಧರಿ ಎಂಬುವವರು ಹಳೆಯ ನೆನಪುಗಳನ್ನು ತಂದುಕೊಂಡಿದ್ದು, ಅಂತಿಮವಾಗಿ ಅವರನ್ನು ನವೆಂಬರ್ 15ರಂದು ಕುಟುಂಬದ ಸದಸ್ಯರೊಂದಿಗೆ ಮರುಮಿಲನ ಮಾಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮಾನಸಿಕ ಆರೋಗ್ಯ ತಜ್ಞ ಡಾ. ಆದಿತ್ಯ ಶರ್ಮ, “ಯಾವುದೂ ಅಸಾಧ್ಯವಲ್ಲವಾದರೂ, ಪೆಟ್ಟಿನ ನಂತರ ನೆನಪು ಮರುಕಳಿಸುವ ಇಂತಹ ಘಟನೆಗಳನ್ನು ತೀರಾ ವಿರಳವಾಗಿ ದಾಖಲಿಸಲಾಗಿದೆ. ವೈದ್ಯಕೀಯ ಪರಿಶೀಲನೆ ಹಾಗೂ ಮಿದುಳಿನ ಸ್ಕ್ಯಾನ್ ನಂತರವಷ್ಟೇ ಇದರ ನಿಖರ ಕಾರಣ ತಿಳಿದು ಬರಲಿದೆ” ಎಂದು ಹೇಳಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ACIನಿಂದ ಮಾನ್ಯತೆ; 3ನೇ ಹಂತದ ಮಾನ್ಯತೆ ಪಡೆದ ದೇಶದ ಮೊದಲ ಏರ್ಪೋರ್ಟ್
ಕೆಐಎಎಲ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ 3ನೇ ಹಂತದ ಮಾನ್ಯತೆ ನೀಡಿದೆ. ಆ ಮೂಲಕ ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಅತ್ಯುತ್ತಮ ಸೌಲಭ್ಯ, ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣಕ್ಕಾಗಿ ಈ ಮನ್ನಣೆ ದೊರೆತಿದ್ದು, ಈ ಗೌರವಕ್ಕೆ ಪಾತ್ರವಾದ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.
ಗೃಹಲಕ್ಷ್ಮಿ ಯೋಜನೆ ಬಾಕಿಯಿರುವ 23ನೇ ಕಂತಿನ ಹಣ ಬಿಡುಗಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ! ಯಾವಾಗ ಬರುತ್ತೆ?
ರಾಜ್ಯದ 1.27 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ. ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣ ನವೆಂಬರ್ 28ರೊಳಗೆ ಬಿಡುಗಡೆಯಾಗಲಿದೆ. ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ ಬ್ಯಾಂಕ್ ಆರಂಭವಾಗಲಿದೆ. 30 ಸಾವಿರದಿಂದ 3 ಲಕ್ಷದ ವರೆಗೂ ಸಾಲ ಸಿಗಲಿದೆ. ಮಹಿಳೆಯರ ರಕ್ಷಣೆಗಾಗಿ ಅಕ್ಕಪಡೆ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ 3000 ಮಂದಿ ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ.
ನ.22ರಿಂದ ಭಾರತ-ದಕ್ಷಿಣ ಆಫ್ರಿಕ 2ನೇ ಟೆಸ್ಟ್ | ಗಾಯಾಳು ಶುಭಮನ್ ಗಿಲ್ ಹೊರಗೆ; ನಾಯಕನಾಗಿ ರಿಶಭ್ ಪಂತ್
ಗುವಾಹಟಿ, ನ. 21: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ಗುವಾಹಟಿಯ ಬರ್ಸಪಾರ ಸ್ಟೇಡಿಯಮ್ ನಲ್ಲಿ ಶನಿವಾರ ಆರಂಭಗೊಳ್ಳಲಿದೆ. ಆದರೆ, ಭಾರತ ತಂಡದ ನಾಯಕ ಶುಭಮನ್ ಗಿಲ್ ಗಾಯಾಳುವಾಗಿ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ನಾಯಕನಾಗಿ ಅವರ ಸ್ಥಾನವನ್ನು ರಿಶಭ್ ಪಂತ್ ವಹಿಸಿಕೊಳ್ಳಲಿದ್ದಾರೆ. ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್ನ ವೇಳೆ ಗಿಲ್ ಕುತ್ತಿಗೆ ನೋವಿಗೆ ಒಳಗಾಗಿದ್ದರು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ನಿಗಾದಲ್ಲಿ ಇಡಲಾಗಿತ್ತು. ಅವರು ಬುಧವಾರ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಿದ್ದರು. ಆದರೆ, ಗುರುವಾರ ಅಲ್ಲಿನ ಬರ್ಸಪಾರ ಸ್ಟೇಡಿಯಮ್ ನಲ್ಲಿ ನಡೆದ ಭಾರತದ ಹೊರಾಂಗಣ ನೆಟ್ ಅಭ್ಯಾಸದಲ್ಲಿ ಅವರು ಭಾಗವಹಿಸಿರಲಿಲ್ಲ. ಅವರು ಶುಕ್ರವಾರ ಮುಂಬೈಗೆ ಪ್ರಯಾಣಿಸಿದರು. ಅವರು 2-3 ದಿನಗಳ ಕಾಲ ಮುಂಬೈಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಆಡುವ ಹನ್ನೊಂದರ ತಂಡದಲ್ಲಿ, ಶುಭಮನ್ ಗಿಲ್ರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಂತ್, ‘‘ತಂಡ ಸಂಯೋಜನೆಯನ್ನು ನಾವು ನಾಳೆ ಪ್ರಕಟಿಸಲಿದ್ದೇವೆ. ಅವರ ಸ್ಥಾನವನ್ನು ತುಂಬುವ ಆಟಗಾರನ ಬಗ್ಗೆ ನಾವು ಈಗಾಗಲೇ ಬಹುತೇಕ ನಿರ್ಧರಿಸಿದ್ದೇವೆ ಮತ್ತು ಆ ಆಟಗಾರನೊಂದಿಗೆ ಮಾತನಾಡಿದ್ದೇವೆ’’ ಎಂದು ಹೇಳಿದರು. ಕೋಲ್ಕತಾದಲ್ಲಿ ನಡೆದ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕ 30 ರನ್ಗಳಿಂದ ಗೆದ್ದಿದ್ದು, ಸರಣಿಯಲ್ಲಿ 1-0 ಅಂತರದಿಂದ ಮುಂದಿದೆ. ಹಾಗಾಗಿ, ಸರಣಿಯನ್ನು ಸಮಬಲಗೊಳಿಸಲು ಭಾರತ ಉತ್ಸುಕವಾಗಿದೆ. ದಕ್ಷಿಣ ಆಫ್ರಿಕ ತಂಡವೂ ಗಾಯಾಳು ಸಮಸ್ಯೆಯಿಂದ ಬಳಲುತ್ತಿದೆ. ಸರಣಿ ಪೂರ್ವ ಅಭ್ಯಾಸದ ವೇಳೆ ಪಕ್ಕೆಲುಬು ಗಾಯಕ್ಕೆ ಒಳಗಾಗಿದ್ದ ತಂಡದ ಮುಂಚೂಣಿ ವೇಗಿ ಕಗಿಸೊ ರಬಡ ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾಗಿ, ಎರಡನೇ ಪಂದ್ಯಕ್ಕೂ ಅವರು ಲಭಿಸುವುದಿಲ್ಲ. ►ಪಿಚ್ ವರದಿ ಗುವಾಹಟಿ ಪಿಚ್ಚನ್ನು ಸಾಮಾನ್ಯವಾಗಿ ಬ್ಯಾಟಿಂಗ್ಸ್ನೇಹಿ ಎಂಬುದಾಗಿ ಪರಿಗಣಿಸಲಾಗಿದೆ. ಇಲ್ಲಿನ ಪಂದ್ಯಗಳಲ್ಲಿ ಹೆಚ್ಚು ರನ್ಗಳು ದಾಖಲಾಗುತ್ತಿವೆ. ಮುಂಜಾನೆಯ ತೇವಾಂಶ ಮತ್ತು ಶೀತಲ ವಾತಾವರಣವು ವೇಗದ ಬೌಲರ್ ಗಳಿಗೆ, ಮುಖ್ಯವಾಗಿ ಮೊದಲ ಕೆಲವು ಗಂಟೆಗಳಲ್ಲಿ ಸ್ವಿಂಗ್ ಒದಗಿಸಬಹುದು. ಎರಡೂ ತಂಡಗಳಲ್ಲಿ ಉತ್ತಮ ವೇಗದ ಬೌಲರ್ ಗಳು ಇರುವುದರಿಂದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಹೊಸ ಚೆಂಡನ್ನು ಎದುರಿಸುವಾಗ ಸವಾಲು ಎದುರಿಸಬಹುದು. ಬೌಲರ್ ಗಳಿಗೆ ಚೆಂಡಿನಲ್ಲಿ ಹೆಚ್ಚುವರಿ ಚಲನೆ ಸಿಗಬಹುದು. ಇದು ಅವರಿಗೆ ಬೇಗನೇ ವಿಕೆಟ್ ಗಳನ್ನು ಉರುಳಿಸಲು ನೆರವು ನೀಡಬಹುದು. ►ಹವಾಮಾನ ಮುನ್ಸೂಚನೆ ಗುವಾಹಟಿಯಲ್ಲಿ ನವೆಂಬರ್ ತಿಂಗಳು ಆಹ್ಲಾದಕರವಾಗಿರುತ್ತದೆ. ಹಗಲಿನ ಸರಾಸರಿ ಉಷ್ಣತೆ 27 ಡಿಗ್ರಿ ಸೆಲ್ಸಿಯಸ್ ಇದ್ದರೆ, ರಾತ್ರಿಯ ಉಷ್ಣತೆ 18 ಡಿಗ್ರಿ ಸೆಲ್ಸಿಯಸ್ವರೆಗೆ ಕುಸಿಯಬಹುದು. ಮಳೆ ವಿರಳವಾಗಿರುತ್ತದೆ ಮತ್ತು ದಿನಕ್ಕೆ ಒಂದು ಮಳೆ ಬರುವ ಸಾಧ್ಯತೆಯಿರುತ್ತದೆ. ತೇವಾಂಶವು 82 ಶೇಕಡದಷ್ಟಿದ್ದು, ಪರಿಸ್ಥಿತಿಯು ಸಾಮಾನ್ಯವಾಗಿ ಕ್ರಿಕೆಟ್ಗೆ ಸೂಕ್ತವಾಗಿರುತ್ತದೆ. ಇಲ್ಲಿ ದಿನದಾಟವು ಸಾಮಾನ್ಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ, ಅಂದರೆ ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತದೆ. ಆ ಮೂಲಕ ಆಟಗಾರರು ಸಹಜ ಬೆಳಕನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ►ಸಂಭಾವ್ಯ ಆಡುವ 11ರ ತಂಡಗಳು ದಕ್ಷಿಣ ಆಫ್ರಿಕ: ಏಡನ್ ಮರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮಲ್ಡರ್, ಟೋನಿ ಡಿ ರೊರ್ಝಿ, ಟೆಂಬ ಬವುಮ (ನಾಯಕ), ಡೆವಾಲ್ಡ್ ಬ್ರೆವಿಸ್, ಟ್ರೈಸ್ಟನ್ ಸ್ಟಬ್ಸ್, ಕೈಲ್ ವೆರೇನ್ (ವಿಕೆಟ್ ಕೀಪರ್), ಕೇಶವ ಮಹಾರಾಜ, ಸೈಮನ್ ಹಾರ್ಮರ್, ಮಾರ್ಕೊ ಜಾನ್ಸನ್. ಭಾರತ: ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ರಿಶಭ್ ಪಂತ್ (ನಾಯಕ ಹಾಗೂ ವಿಕೆಟ್ ಕೀಪರ್), ರವೀಂದ್ರ ಜಡೇಜ, ಧ್ರುವ ಜೂರೆಲ್, ವಾಶಿಂಗ್ಟನ್ ಸುಂದರ್, ನಿತೀಶ್ ರಾಣಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್.
ಮಂಗಳೂರು | ನ.22, 23 ರಂದು ಸಿಟಿಗೋಲ್ಡ್ನಲ್ಲಿ ವಿಶೇಷ ರಿಯಾಯಿತಿ ಕೊಡುಗೆ
ಮಂಗಳೂರು,ನ.21:ನಗರದ ಕಂಕನಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಚಿನ್ನಾಭರಣ ಮಳಿಗೆಯಾದ ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ 11ನೇ ವಾರ್ಷಿಕೋತ್ಸವದ ಪ್ರಯುಕ್ತ ನ.22ರಿಂದ 23ರವರೆಗೆ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮೇಳ ನಡೆಯಲಿದೆ. ಚಿನ್ನಾಭರಣಗಳ ತಯಾರಿಕಾ ಶುಲ್ಕದ ಮೇಲೆ ಫ್ಲಾಟ್ ಶೇ.60 ಹಾಗೂ ವಜ್ರಾಭರಣ ಖರೀದಿ ಪ್ರತೀ ಕ್ಯಾರೆಟ್ ಮೇಲೆ 18,000 ರೂ. ರಿಯಾಯಿತಿ ನೀಡಲಾಗುವುದು ಎಂದು ಸಿಟಿ ಗೋಲ್ಡ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ರಾಯಚೂರು | ಪುಟ್ಪಾತ್ ತೆರವು ಕಾರ್ಯಾಚರಣೆಯಲ್ಲಿ ತಾಲೂಕು ಆಡಳಿತ ವಿಫಲ : ಕರವೇ ಆರೋಪ
ಸಿರವಾರ : ತಾಲೂಕು ಆಡಳಿತದ ಅಧಿಕಾರಿಗಳು ಮುಂದಿನ 10 ದಿನಗಳಲ್ಲಿ ಸಿರವಾರ ನಗರವನ್ನು ಧೂಳು ಮುಕ್ತಗೊಳಿಸದಿದ್ದರೆ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಸಮಿತಿ ವತಿಯಿಂದ ಡಿ.2ರಂದು ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಅರೆಬೆತ್ತಲೆ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಖಾಜನಗೌಡ ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಮಾತನಾಡಿದ ರಾಘವೇಂದ್ರ ಖಾಜನಗೌಡ, ನಗರದಲ್ಲಿ ನಡೆಯುತ್ತಿರುವ ಪುಟ್ ಪಾತ್ ತೆರವು ಕಾಮಗಾರಿಗಳು ಮತ್ತು ರಸ್ತೆ ಗುಂಡಿಗಳಿಂದ ವಿಪರೀತ ಧೂಳು ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಉಸಿರಾಟದ ತೊಂದರೆ, ಅಸ್ತಮಾ, ಅಲರ್ಜಿ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ಪಟ್ಟಣ ಪಂಚಾಯತ್ ಹಾಗೂ ಸಿರವಾರ ತಾಲೂಕು ಆಡಳಿತ ಧೂಳು ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಧೂಳಿನಲ್ಲಿಯೇ ಸಂಚರಿಸುವ ದುಸ್ಥಿತಿ ಎದುರಾಗಿದೆ. ಈ ಧೂಳಿನಿಂದಾಗಿ ಅನೇಕರಿಗೆ ಉಸಿರಾಟದ ತೊಂದರೆ, ಅಸ್ತಮಾ, ಅಲರ್ಜಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಮುಂದಿನ 10 ದಿನಗಳಲ್ಲಿ ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷ ಮಲ್ಲಮ್ಮ,ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಶಂಕ್ರಿ ದೇವತಗಲ್, ಯಲ್ಲಪ್ಪ ದೊರೆ, ನಾಗೇಶ ನವಲಕಲ್, ಭೀಮರಾಯ, ಅಂಜಿನೇಯ್ಯ ಪೂಜಾರಿ, ರಮೇಶ ದೊರೆ, ಅಲಂಪಾಷಾ, ಹನುಮೇಶ್ ಶಾಖಪೂರು, ದೇವಪ್ಪ ನಾಯಕ ನವಲಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತುಂಬೆ | ಮೀಫ್ ವತಿಯಿಂದ ಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟ
ತುಂಬೆ,ನ.20: ನಾನಾ ಸ್ಪರ್ಧೆಗಳಲ್ಲಿ ಆಟವಾಡುವುದು ಮತ್ತು ಅದರಲ್ಲಿ ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಓರ್ವ ಉತ್ತಮ ಸ್ಪರ್ಧಾಳುವಿನ ಲಕ್ಷಣವಾಗಿದೆ. ಮೀಫ್ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಮನೋಭಾವದಿಂದ ಕೊಡುವ ಕೊಡುಗೆಗಳು ಸ್ತುತ್ಯಾರ್ಹವಾಗಿದೆ ಎಂದು ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ಹೇಳಿದರು. ಮೀಫ್ ಸಂಘಟನೆಯು ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ನ ಸಹಯೋಗದೊಂದಿಗೆ ತುಂಬೆಯ ಬಿ.ಎ. ಕ್ರೀಡಾಂಗಣದಲ್ಲಿ ಆಯೋಜಿಸಿದ ಉಡುಪಿ ಮತ್ತು ದ.ಕ. ಅಂತರ್ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಂಟ್ವಾಳ ಠಾಣೆಯ ಎಸ್ಸೈ ಕೃಷ್ಣಾ ಪಾಟೀಲ್ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಪಂದ್ಯಾಟ ಉದ್ಘಾಟಿಸಿದರು. ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಮೀಫ್ ಉಪಾಧ್ಯಕ್ಷ ಪರ್ವೇಝ್ ಅಲಿ, ಕನ್ವೀನರ್ ಮುಹಮ್ಮದ್ ಶಾರಿಕ್, ಸೆಕ್ರೆಟರಿ ಅನ್ವರ್ ಹುಸೈನ್ ಗೂಡಿನಬಳಿ, ತುಂಬೆ ವಿದ್ಯಾಸಂಸ್ಥೆಯ ಪಿಟಿಎ ಅಧ್ಯಕ್ಷ ನಿಸಾರ್ ಅಹ್ಮದ್ ವಳವೂರು, ಪಿಟಿಎ ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯ ಮ್ಯಾಕ್ಸಿಂ ಕುವೆಲ್ಲೊ, ಹಜಾಜ್ ಗ್ರೂಪ್ನ ಮುಹಮ್ಮದ್ ಮುಸ್ತಫ, ತುಂಬೆ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಸ್ಥೆ ವಿದ್ಯಾ ಕೆ., ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥೆ ಮಲ್ಲಿಕಾ ಶೆಟ್ಟಿ, ಎಂಇಟಿ ಸೂಪರಿಂಟೆಂಡೆಂಟ್ ಬಿ. ಅಬ್ದುಲ್ ಕಬೀರ್, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ. ನಾಯಕ್ ಕೆ, ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಗೊನ್ಸಾಲ್ವಿಸ್, ಫುಟ್ಬಾಲ್ ಕೋಚ್ ಗಫೂರ್ ಮತ್ತಿತರರು ಉಪಸ್ಥಿತರಿದ್ದರು. ತುಂಬೆ ಕಾಲೇಜಿನ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ಬಿ. ಕಾರ್ಯಕ್ರಮ ನಿರೂಪಿಸಿದರು. ಮೀಫ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ವಂದಿಸಿದರು. ಉಡುಪಿ ಮತ್ತು ದ.ಕ. ಜಿಲ್ಲೆಯ ಸುಮಾರು 20 ತಂಡಗಳು ಸ್ಪರ್ಧಾ ಕಣದಲ್ಲಿತ್ತು. ವಿಜೇತ ತಂಡಗಳಾದ ಪುತ್ತೂರು ಸಾಲ್ಮರದ ಮೌಂಟೆನ್ ವ್ಯೆ ಆಂಗ್ಲಮಾಧ್ಯಮ ಶಾಲೆ (ಪ್ರಥಮ), ಬಜ್ಪೆಯ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ), ಬಜ್ಪೆ ಅನ್ಸಾರ್ ಆಂಗ್ಲಮಾಧ್ಯಮ ಶಾಲೆಯ ಫಝಲುದ್ದೀನ್ (ಬೆಸ್ಟ್ ಆಲ್-ರೌಂಡರ್) ಪುತ್ತೂರು ಸಾಲ್ಮರದ ಮೌಂಟೆನ್ ವ್ಯೆ ಆಂಗ್ಲಮಾಧ್ಯಮ ಶಾಲೆಯ ದಿಹಾನ್ (ಬೆಸ್ಟ್ ಅಟ್ಯಾಕರ್) ಮತ್ತು ಮುನಾಝ್ (ಬೆಸ್ಟ್ ಪಾಸ್ಸರ್) ಅವರಿಗೆ ದ.ಕ. ಜಿಲ್ಲಾ ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಮತ್ತಿತರರು ಟ್ರೋಫಿ ವಿತರಿಸಿದರು.
ನ.24: ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆ
ಉಡುಪಿ, ನ.21: ಉಡುಪಿ ತಾಲೂಕು ಪಂಚಾಯತಿಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನವೆಂಬರ್ 24ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ತಾಲೂಕು ಪಂಚಾಯತ್ ಕಚೇರಿಯಲ್ಲಿ, ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನ.26: ಆದಿಉಡುಪಿ ಮಾರುಕಟ್ಟೆ ಪ್ರಾಂಗಣದ ಸಂತೆ ಸ್ಥಳಾಂತರ
ಉಡುಪಿ, ನ.21: ಭಾರತದ ಪ್ರಧಾನಮಂತ್ರಿಗಳು ನ.28ರಂದು ಉಡುಪಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಬೇಕಿದ್ದ ನ.26 ಬುಧವಾರದ ವಾರದ ಸಂತೆಯನ್ನು ಸಂತೆಕಟ್ಟೆಯ ಕಲ್ಯಾಣಪುರಕ್ಕೆ ಸ್ಥಳಾಂತರಿಸಲಾಗಿದೆ. ಆದಿಉಡುಪಿ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನ.26 ರಿಂದ 28ರವರೆಗೆ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
ನಿತೀಶ್ ಕುಮಾರ್ ಅವರ ಸಚಿವ ಸಂಪುಟ ಭ್ರಷ್ಟ, ಕ್ರಿಮಿನಲ್ ನಾಯಕರಿಂದ ತುಂಬಿದೆ: ಪ್ರಶಾಂತ್ ಕಿಶೋರ್ ಆರೋಪ
ಬೆತಿಯಾ, ನ. 21: ನಿತೀಶ್ ಕುಮಾರ್ ಅವರ ಸರಕಾರದ ನೂತನ ಸಚಿವ ಸಂಪುಟ ಭ್ರಷ್ಟ ಹಾಗೂ ಕ್ರಿಮಿನಲ್ ನಾಯಕರಿಂದ ತುಂಬಿದೆ ಎಂದು ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಶುಕ್ರವಾರ ಆರೋಪಿಸಿದ್ದಾರೆ. ಪಶ್ಚಿಮ ಚಂಪಾರಣ್ ನ ಗಾಂಧಿ ಆಶ್ರಮದಲ್ಲಿ ದಿನವಿಡೀ ಮೌನ ಉಪವಾಸ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಪಕ್ಷ ಜನವರಿ 15ರಂದು ‘ಬಿಹಾರ್ ನವ ನಿರ್ಮಾಣ ಸಂಕಲ್ಪ ಯಾತ್ರೆ’ ಆರಂಭಿಸಲಿದೆ. ಈ ಸಂದರ್ಭ ಜನ ಸುರಾಜ್ ಪಕ್ಷದ ಕಾರ್ಯಕರ್ತರು ರಾಜ್ಯದ ಎಲ್ಲಾ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು. ಸಚಿವ ಸಂಪುಟಕ್ಕೆ ಆಯ್ಕೆಯಾದ ನಾಯಕರನ್ನು ಗಮನಿಸಿದಾಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬಿಹಾರದ ಕುರಿತು ಕನಿಷ್ಠ ಕಾಳಜಿ ಕೂಡ ಇಲ್ಲ ಎಂಬುದು ತಿಳಿಯುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಸಂಸ್ಕೃತ ಮೃತ ಭಾಷೆ: ಉದಯನಿಧಿ ಸ್ಟಾಲಿನ್
ತಮಿಳುನಾಡು ಡಿಸಿಎಂ ಹೇಳಿಕೆಗೆ ಬಿಜೆಪಿ ಆಕ್ರೋಶ
ಉಡುಪಿ | ಮಹಿಳೆಯರಲ್ಲಿ ರಕ್ತ ಹೀನತೆ ಗಂಭೀರ ಸಮಸ್ಯೆ : ಸ್ವರೂಪ ಟಿ.ಕೆ
ಪೌಷ್ಠಿಕ ಆಹಾರ ನೀಡಲು ಸೂಚನೆ
ಎಸ್ಐಆರ್ ಪ್ರಶ್ನಿಸಿ ಹೊಸ ಅರ್ಜಿ | ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ನ. 21: ಕೇರಳ, ಉತ್ತರಪ್ರದೇಶ ಸೇರಿದಂತೆ ಬಹು ರಾಜ್ಯಗಳಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಶ್ನಿಸಿದ ಹೊಸ ಅರ್ಜಿಗಳ ಗುಚ್ಛವನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ. ಇತ್ತೀಚೆಗೆ ಸಲ್ಲಿಸಲಾದ ಎಲ್ಲಾ ಹೊಸ ಅರ್ಜಿಗಳ ಕುರಿತಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಎಸ್ವಿಎನ್ ಭಟ್ಟಿ ಹಾಗೂ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠ ಭಾರತದ ಚುನಾವಣಾ ಆಯೋಗಕ್ಕೆ ನೋಟಿಸು ನೀಡಿದೆ. ಕೇರಳದ ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಈ ವಿಷಯದ ಬಗ್ಗೆ ತುರ್ತು ವಿಚಾರಣೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು. ಎಸ್ಐಆರ್ ಪ್ರಕ್ರಿಯೆಯು ಮುಂಬರುವ ಚುನಾವಣೆಗಳ ಮೇಲೆ ಪ್ರಭಾವ ಬೀರಬಹುದು ಎಂದು ಅವರು ತಿಳಿಸಿದರು. ಈ ಕಳವಳಗಳನ್ನು ಗಣನೆಗೆ ತೆಗೆದುಕೊಂಡ ಪೀಠ ಕೇರಳಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನ. 26ಕ್ಕೆ ನಿಗದಿಪಡಿಸಿತು. ಇತರ ರಾಜ್ಯಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿಗಳನ್ನು ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಆಲಿಸಲಾಗುವುದು ಎಂದು ಹೇಳಿತು. ರಾಷ್ಟ್ರವ್ಯಾಪಿ ಎಸ್ಐಆರ್ ಅನ್ನು ಪ್ರಶ್ನಿಸುವ ಹಲವು ಅರ್ಜಿಗಳು ಈಗಾಗಲೇ ಸುಪ್ರೀಂ ಕೋರ್ಟ್ ನ ಮುಂದಿವೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ 27ರಂದು ಉಡುಪಿಗೆ
ಉಡುಪಿ, ನ.21: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ನ.26 ಮತ್ತು 27ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನ.26ರ ಸಂಜೆ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡುವ ಡಾ.ಚೌಧರಿ, ನ.27ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಭೇಟಿ, ಅಪರಾಹ್ನ 12 ಗಂಟೆಗೆ ಸಖಿ ಒನ್ ಸ್ಟಾಪ್ ಸೆಂಟರ್ ಗೆ ಭೇಟಿ ನೀಡಿ ನಂತರ ಮಂಗಳೂರಿಗೆ ತೆರಳಿ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಶಾಸಕರು ಹೈಕಮಾಂಡ್ ಭೇಟಿಯಾದರೆ ಬೇರೆ ಅರ್ಥ ಬೇಡ : ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯ ನಾಯಕರು ಅಥವಾ ಶಾಸಕರು ಹೊಸದಿಲ್ಲಿಯಲ್ಲಿ ಹೈಕಮಾಂಡ್ ಭೇಟಿಯಾದರೆ, ಇದಕ್ಕೆ ಬೇರೆ ಅರ್ಥ ಕೊಡುವುದು ಬೇಡ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಚೆಲುವರಾಯಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವುದಕ್ಕೆ ಬೇರೆ ಕಾರಣ ಇರುತ್ತದೆ.ಆದರೆ, ಅದಕ್ಕೆ ಬೇರೆ ಅರ್ಥ ಕೊಡೋದು ಸರಿಯಲ್ಲ ಎಂದರು. ಹೈಕಮಾಂಡ್ ಮಧ್ಯಪ್ರವೇಶಿಸುವಂತೆ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದ್ದಾರೆ ಎನ್ನಲಾಗಿರುವ ವಿಚಾರವಾಗಿ ಮಾತನಾಡಿ, ಬಹಳ ಊಹಾಪೋಹಗಳಿವೆ. ಯಾವುದೇ ತೀರ್ಮಾನವಿರಲಿ, ಅದನ್ನು ಹೈಕಮಾಂಡ್ ತೀರ್ಮಾನಿಸಬೇಕು. ಸ್ಥಳೀಯವಾಗಿ ಯಾರೂ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಎಟಿಎಂ ವಾಹನ ದರೋಡೆ ಪ್ರಕರಣ; 8 ಮಂದಿಯ ಬಂಧನ, 5.30 ಕೋಟಿ ರೂ. ವಶ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ಎಟಿಎಂ ಹಣ ದರೋಡೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಬೆಂಗಳೂರು ಪೊಲೀಸರು ಆಂಧ್ರಪ್ರದೇಶ, ಚಿತ್ತೂರು, ತಿರುಪತಿ ಹಾಗೂ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ಕೈಗೊಂಡು ಈವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿ ದರೋಡೆಗೀಡಾದ ಒಟ್ಟು ಹಣದಲ್ಲಿ 5.30 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಬಂಧಿತ 8 ಆರೋಪಿಗಳಲ್ಲಿ ಸಿಎಂಎಸ್ ಏಜೆನ್ಸಿಯ ನಾಲ್ಕು ಜನ ಸಿಬ್ಬಂದಿ, ಪ್ರಕರಣದ ಸೂತ್ರಧಾರ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್, ಮುಖ್ಯ ಸಹಾಯಕ ಝೇವಿಯರ್ ಮತ್ತು ದರೋಡೆಗೆ ಬಳಸಲಾಗಿದ್ದ ಕಾರನ್ನು ನೀಡಿದ್ದ ಕಲ್ಯಾಣ ನಗರದ ಇಬ್ಬರು ಸೇರಿದ್ದಾರೆ. ಎಲ್ಲ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ದರೋಡೆಯಾದ ಉಳಿದ ಹಣ ಚೆನ್ನೈ ಕಡೆಗೆ ಸಾಗಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದ ಹಿಂದಿನ ಸೂತ್ರಧಾರ ಗೋವಿಂದಪುರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂಬುದಾಗಿ ಗೊತ್ತಾದ ಬೆನ್ನಲ್ಲೇ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ನಗರದಲ್ಲಿ ಅಣ್ಣಪ್ಪನನ್ನು ಬಂಧಿಸಿದ್ದಾರೆ. ಆತನ ಜೊತೆಗೆ ಸಿಎಂಎಸ್ ಏಜೆನ್ಸಿಯ ಹಣ ಸಾಗಾಟದ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ಆಂತರಿಕ ಮಾಹಿತಿ ಹೊಂದಿದ್ದ ಮಾಜಿ ಉದ್ಯೋಗಿ ಝೇವಿಯರ್ ಸಹ ಬಂಧಿತನಾಗಿದ್ದಾನೆ. ಝೇವಿಯರ್ ಒಂದು ವರ್ಷದ ಹಿಂದೆ ಸಿಎಂಎಸ್ನಿಂದ ಕೆಲಸ ಬಿಟ್ಟಿದ್ದ ಎನ್ನಲಾಗಿದೆ. ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್ಟೇಬಲ್ ಅಪ್ಪಣ್ಣ ಕೆಲಸವಿಲ್ಲದ ಸಮಯದಲ್ಲಿ ಝೇವಿಯರ್ ನನ್ನು ಭೇಟಿಯಾಗುತ್ತಿದ್ದ. ಈ ಸಂದರ್ಭದಲ್ಲಿ, ಝೇವಿಯರ್ ಸಿಎಂಎಸ್ ಏಜೆನ್ಸಿಯ ಹಣ ಸಾಗಾಟದ ಸೂಕ್ಷ್ಮ ವಿವರಗಳನ್ನು ಕಾನ್ಸ್ಟೇಬಲ್ಗೆ ತಿಳಿಸಿದ್ದು, ಇಬ್ಬರೂ ಸೇರಿ ದರೋಡೆಗೆ ಸಂಚು ರೂಪಿಸಿದರು. ಝೇವಿಯರ್ ಸಿಎಂಎಸ್ನ ಆಂತರಿಕ ಸಂಚನ್ನು ನೋಡಿಕೊಂಡರೆ, ಅಣ್ಣಪ್ಪ ಪರಾರಿಯಾಗುವ ಬಗ್ಗೆ ಸಂಚು ರೂಪಿಸುವ ಜವಾಬ್ದಾರಿ ಹಂಚಿಕೊಂಡಿದ್ದರು ಎನ್ನಲಾಗಿದೆ. ದರೋಡೆ ನಡೆದ ಸ್ಥಳದಲ್ಲಿ ಮುಖ್ಯ ಆರೋಪಿಗಳಾದ ಅಣ್ಣಪ್ಪ ಮತ್ತು ಝೇವಿಯರ್ ಇರಲಿಲ್ಲ. ಬದಲಾಗಿ, ಅವರು ದೂರದಿಂದಲೇ ಕಾರ್ಯಾಚರಣೆಯನ್ನು ನಿಯಂತ್ರಿಸಿದ್ದರು. ಅಣ್ಣಪ್ಪ ನಾಯ್ಕ್ ಕಮ್ಮನಹಳ್ಳಿ ಮತ್ತು ಕಲ್ಯಾಣನಗರದ ಯುವಕರ ತಂಡವನ್ನು ಸಂಘಟಿಸಿ, ದರೋಡೆ ನಡೆಸಲು ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮಗ್ರ ತರಬೇತಿಯನ್ನು ನೀಡಿದ್ದ. ಪೊಲೀಸರ ಕಾರ್ಯವೈಖರಿ ಹೇಗಿರುತ್ತದೆ ಎಂಬುದರ ಬಗ್ಗೆಯೂ ಆತ ಈ ತಂಡಕ್ಕೆ ಮಾಹಿತಿ ನೀಡಿದ್ದ ಎಂದು ತಿಳಿದುಬಂದಿದೆ. ಸೂತ್ರಧಾರಿ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಸಿಕ್ಕಿದ್ದೇಗೆ? : ಈ ಪ್ರಕರಣದ ಜಾಡು ಹಿಡಿದು ಹೊರಟ ಬೆಂಗಳೂರು ಪೊಲೀಸರು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮೂವರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದಾಗ ಅವರು ಕಾನ್ಸ್ಟೇಬಲ್ ಅಪ್ಪಣ್ಣ ನಾಯ್ಕ್ ಹೆಸರನ್ನು ಪೊಲೀಸರ ಮುಂದೆ ತಿಳಿಸಿದ್ದಾರೆ. ‘ನಮಗೆ ದರೋಡೆಯ ನಂತರ ಹೇಗೆ ತಪ್ಪಿಸಿಕೊಳ್ಳಬೇಕು, ಹಣವನ್ನು ಎಲ್ಲಿ ಸಾಗಿಸಬೇಕು’ ಎಂಬುದನ್ನು ಅಪ್ಪಣ್ಣನೇ ಹೇಳಿಕೊಟ್ಟಿದ್ದು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ ತಕ್ಷಣವೇ ಬೆಂಗಳೂರು ನಗರದಲ್ಲಿ ಅಪ್ಪಣ್ಣನನ್ನು ಬಂಧಿಸಲಾಗಿದೆ. ‘ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ಕೆಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವಿವರದ ಬಗ್ಗೆ ನಾನು ಇಲ್ಲಿ ಹೇಳಿದರೆ ಉಳಿದ ಆರೋಪಿಗಳು ಎಚ್ಚರವಾಗುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾರನ್ನೂ ಬಿಡುವುದಿಲ್ಲ, ಹಿಡಿದು ಹಾಕ್ತೇವೆ’ -ಡಾ.ಜಿ.ಪರಮೇಶ್ವರ್, ಗೃಹ ಸಚಿವ.
ಮರ್ಸಿಡಿಸ್ ಬೆಂಝ್ ಕಾರು ಅಕ್ರಮ ನೊಂದಣಿ: ಆರ್ಟಿಒ
ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ಪ್ರಕರಣ ದಾಖಲು
ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ
ಬೆಂಗಳೂರು : ವಾರಾಂತ್ಯಗಳಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ಆರು ಟ್ರಿಪ್ಗಳ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ನಿರ್ವಹಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06207 ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ವಿಶೇಷ ಎಕ್ಸ್ ಪ್ರೆಸ್ ರೈಲು ನ.22 ರಿಂದ ಡಿ.27ರವರೆಗೆ ಪ್ರತಿ ಶನಿವಾರದಂದು ರಾತ್ರಿ 7.20 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ನಿಂದ ಹೊರಡಲಿದೆ ಮತ್ತು ಮರುದಿನ ಬೆಳಗ್ಗೆ 7.30ಕ್ಕೆ ಕಲಬುರಗಿಯನ್ನು ತಲುಪಲಿದೆ. ಮತ್ತೆ, ರೈಲು ಸಂಖ್ಯೆ 06208 ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ ಪ್ರೆಸ್ ರೈಲು ನ.23 ರಿಂದ ಡಿ.28ರವರೆಗೆ ಪ್ರತಿ ರವಿವಾರ ಬೆಳಗ್ಗೆ 9.35 ಗಂಟೆಗೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 8.30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಮಾರ್ಗದಲ್ಲಿ, ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು 20 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು 2 ಸೆಕೆಂಡ್ ಲಗೇಜ್ ಕಮ್ ಬ್ರೇಕ್ ವ್ಯಾನ್/ವಿಕಲಚೇತನ ಸ್ನೇಹಿ ಬೋಗಿಗಳನ್ನು ಒಳಗೊಂಡಿರಲಿದೆ. ಕಿರ್ಲೋಸ್ಕರವಾಡಿಯಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ಗೆ ನಿಲುಗಡೆ : ನ.24ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 20669/20670 ಎಸ್ಎಸ್ಎಸ್ ಹುಬ್ಬಳ್ಳಿ-ಪುಣೆ-ಎಸ್ಎಸ್ಎಸ್ ಹುಬ್ಬಳ್ಳಿ ಟ್ರೈ-ವೀಕ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ನಿಲುಗಡೆ ಒದಗಿಸಲಾಗಿದೆ. ರೈಲು ಸಂಖ್ಯೆ 20669 ಎಸ್ಎಸ್ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ ಪ್ರೆಸ್ ಬೆಳಗ್ಗೆ 9.38 ಗಂಟೆಗೆ ಕಿರ್ಲೋಸ್ಕರವಾಡಿ ತಲುಪಿ, 9.40 ಗಂಟೆಗೆ ಅಲ್ಲಿಂದ ಹೊರಡಲಿದೆ. ರೈಲು ಸಂಖ್ಯೆ 20670 ಪುಣೆ-ಎಸ್ಎಸ್ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ ಪ್ರೆಸ್ ಸಂಜೆ 5.43 ಗಂಟೆಗೆ ಕಿರ್ಲೋಸ್ಕರವಾಡಿ ತಲುಪಿ, 5.45 ಗಂಟೆಗೆ ಅಲ್ಲಿಂದ ಹೊರಡಲಿದೆ. ಪ್ರಯಾಣಿಕರು ಹೊಸದಾಗಿ ಒದಗಿಸಲಾದ ಈ ನಿಲುಗಡೆಯನ್ನು ಗಮನಿಸಿ, ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಪ್ರಕಟಣೆ ಕೋರಿದೆ.
ಜಿ20 ಶೃಂಗಸಭೆಯಲ್ಲಿ ಟ್ರಂಪ್ ಪಾಲ್ಗೊಳ್ಳುವುದಿಲ್ಲ: ಶ್ವೇತಭವನ
ವಾಷಿಂಗ್ಟನ್, ನ.21: ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಅಮೆರಿಕಾದ ವಿರುದ್ಧ ನಕಾರಾತ್ಮಕವಾಗಿ ಮಾತನಾಡುವುದನ್ನು ಮುಂದುವರಿಸಿರುವ ಕಾರಣ ಆ ದೇಶದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಳ್ಳುವುದಿಲ್ಲ ಎಂದು ಶ್ವೇತಭವನದ ವಕ್ತಾರೆ ಕ್ಯಾರೊಲಿನ್ ಲೆವಿಟ್ ಹೇಳಿದ್ದಾರೆ. ಈ ವಾರಾಂತ್ಯದಲ್ಲಿ ಜೊಹಾನ್ಸ್ಬರ್ಗ್ನಲ್ಲಿ ನಡೆಯುವ ಶೃಂಗಸಭೆಯ ಸಮಾರೋಪದ ಅಧ್ಯಕ್ಷತೆ ಹಸ್ತಾಂತರ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಮೆರಿಕಾದ ರಾಯಭಾರಿ ಪಾಲ್ಗೊಳ್ಳುತ್ತಾರೆ. ಅಮೆರಿಕಾ ಮತ್ತು ಅದರ ಅಧ್ಯಕ್ಷರ ವಿರುದ್ಧ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಬಳಸುತ್ತಿರುವ ಪದಗಳನ್ನು ನಾವು ಮೆಚ್ಚುವುದಿಲ್ಲ ಎಂದವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಜಿ20 ಶೃಂಗಸಭೆ ಬಹಿಷ್ಕರಿಸುವ ಬಗ್ಗೆ ಅಂತಿಮ ಕ್ಷಣದಲ್ಲಿ ಅಮೆರಿಕಾ ಮರುಚಿಂತನೆ ನಡೆಸುವ ಸೂಚನೆಗಳಿವೆ. ಅಮೆರಿಕಾವು ಜಿ20ಯ ಸ್ಥಾಪಕ ಸದಸ್ಯನಾಗಿದ್ದು ಅವರಿಗೆ ಪಾಲ್ಗೊಳ್ಳುವ ಹಕ್ಕು ಇದೆ. ಅವರು ಪಾಲ್ಗೊಳ್ಳುವುದನ್ನು ನಾವು ಬಯಸುತ್ತೇವೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಗುರುವಾರ ಹೇಳಿಕೆ ನೀಡಿದ್ದರು.
ಮಂಗಳೂರು | ಕುಳಾಯಿ ಗ್ರಾಮಸಂಘದಿಂದ ಮಕ್ಕಳ ದಿನಾಚರಣೆ
ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಗ್ರಾಮಸಂಘ ಯುವಕ ಮಂಡಲದ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಕುಳಾಯಿ ಗ್ರಾಮಸಂಘದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಸಂಘದ ಮಾಜಿ ಅಧ್ಯಕ್ಷ ಕೆ.ಪಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. NMPT ನ ಸುರೇಶ್ ಪೂಜಾರಿ, ಸಮಾಜಸೇವಕಿ ಕಸ್ತೂರಿ ಕೆ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತಾ ಎಸ್., ಶಾರದೆ ಸೇವಾ ಪ್ರತಿನಿಧಿ ಸುಕನ್ಯ ಅವರು ಆತಿಥಿಗಳಾಗಿ ಭಾಗವಹಿಸಿದ್ದರು. ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಸ್ವಾಗತಿಸಿದರು. ಬಾಗ್ಯವತಿ ಕಾರ್ಯಕ್ರಮ ನಿರೂಪಿಸಿ, ವಂದನೆ ಸಲ್ಲಿಸಿದರು.
ಶೌರ್ಯ ಮತ್ತು ದುರಂತದ ಮುಖಾಮುಖಿ: ದುಬೈನಲ್ಲಿ ʻತೇಜಸ್ʼ ವಿಮಾನ ಪತನದ ಹಿಂದಿನ ಕಥನ
ದುಬೈನ ಏರ್ಶೋದಲ್ಲಿ ಪ್ರದರ್ಶನ ನೀಡುವ ವೇಳೆ, ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಪತನಗೊಂಡ ಪರಿಣಾಮ, ದುರ್ಘಟನೆಯಲ್ಲಿ ಪ್ರತಿಭಾವಂತ ಪೈಲಟ್ ಮೃತಪಟ್ಟಿದ್ದಾರೆ. ಈ ಬಗ್ಗೆ ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದ್ದು, ಮೃತರ ಕುಟುಂಬಸ್ಥರ ಜೊತೆ ನಾವಿದ್ದೇವೆ ಎಂದು ಹೇಳಿದೆ. ಈ ಅವಘಡ ಸಂಭವಿಸಿದ್ದು ಯಾಕೆ.? ಎರಡನೇ ಬಾರಿ ಇಂತಹ ದುರ್ಘಟನೆಗೆ ಒಳಗಾಗುತ್ತಿರುವುದು ಏಕೆ? ನೆಗೆಟಿವ್ ಜಿ ಟರ್ನ್ ಎಂದರೆ ಏನು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನಲ್ಲಿ ಚಿರತೆ ಸಾವು!
ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನಲ್ಲಿ ಗಂಡು ಚಿರತೆಯೊಂದು ನ.19ರ ಬುಧವಾರದಂದು ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅಧಿಕಾರಿಗಳು, 2023ರ ಜನವರಿ 3ರಂದು ಚಾಮರಾಜನಗರದ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಿಂದ ಈ ಚಿರತೆಯನ್ನು ರಕ್ಷಿಸಿ, ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆಗ ಅದು ಕೇವಲ ಮೂರು ತಿಂಗಳ ಮರಿಯಾಗಿತ್ತು. ಈ ಚಿರತೆಯು ಅಕ್ಟೋಬರ್ 30ರಿಂದ ಆಹಾರ ಸೇವನೆ ಕಡಿಮೆ ಮಾಡಿದ್ದು, ಹೆಚ್ಚಿನ ಜ್ವರ ಮತ್ತು ದೌರ್ಬಲ್ಯದಿಂದ ಬಳಲುತ್ತಿತ್ತು. ತಕ್ಷಣಕ್ಕೆ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೂಕ್ತ ಚಿಕಿತ್ಸೆ ಆರಂಭಿಸಿದ್ದರಿಂದ ಆಹಾರ ಸೇವನೆಯು ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು. ಬಳಿಕ ಮಾಂಸದಲ್ಲೇ ಔಷಧವನ್ನು ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ. ಆದಾಗ್ಯೂ, ನವೆಂಬರ್ 13ರಿಂದ ಮತ್ತೆ ಆಹಾರ ಸೇವನೆ ನಿಲ್ಲಿಸಿದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ರಕ್ತದ ಪರೀಕ್ಷೆಗಾಗಿ ಮಾದರಿ ಕಳುಹಿಸಿ, ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಎದೆಗೂಡಿನ ಮತ್ತು ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಛಾಯೆಯ ದ್ರವ ಸಂಗ್ರಹ ಆಗಿರುವುದರಿಂದ ಪ್ರಾಣಿಯು ಶ್ವಾಸಕೋಶ ಮತ್ತು ಹೃದಯ ಬಡಿತವನ್ನು ಕಳೆದುಕೊಂಡು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಣಿಯ ಒಳಾಂಗಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಐಎಎಚ್ ಮತ್ತು ವಿಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮರಣದ ನಿಖರ ಕಾರಣ ತಿಳಿಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕಲಬುರಗಿ | ಅತಿವೃಷ್ಟಿ, ನೆರೆ ಹಾವಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ
ಕಲಬುರಗಿ : ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆ ಹಾವಳಿಗೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಗೂ ರಾಜ್ಯಕ್ಕೆ ಕೇಂದ್ರ ಸರಕಾರದ ಮಲತಾಯಿ ಧೋರಣೆ ಖಂಡಿಸಿ, ರೈತ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕಲಬುರಗಿ ತಾಲೂಕಿನ ಸಣ್ಣೂರು ಗ್ರಾಮದಲ್ಲಿ ವಾಗದರಿ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಬಳಿಕ ಕಲಬುರಗಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸುರಿದ ಭಾರೀ ಮಳೆ ಮತ್ತು ನೆರೆಹಾವಳಿಯಿಂದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಡೆಸಿದ ಸರ್ವೆಯ ವರದಿಯ ಪ್ರಕಾರ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಎನ್ ಡಿಆರ್ ಎಫ್ ನಿಯಮಗಳ ಪ್ರಕಾರ ಪರಿಹಾರ ಮತ್ತು ಅದಕ್ಕೆ ಹೆಚ್ಚುವರಿ ಪರಿಹಾರ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಕೇಂದ್ರ ಸರಕಾರ ಪರಿಹಾರದ ಹಣ ಬಿಡುಗಡೆ ಮಾಡದೆ ವಿಳಂಬ ಮಾಡಿದೆ. ಇದು ಸರಿಯಲ್ಲ, ಕೂಡಲೇ ಪರಿಹಾರದ ಹಣ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು. ಕಬ್ಬು ಬೆಳೆಗಾರರಿಗೆ ರಾಜ್ಯ ಸರಕಾರ ಘೋಷಿಸಿರುವಂತೆ 3,300 ರೂ. ಕಲಬುರಗಿ ಜಿಲ್ಲೆಯ ರೈತರಿಗೂ ನೀಡಬೇಕು ಹಾಗೂ ಜಿಲ್ಲಾಡಳಿತದ ಮಾತು ಕೇಳದೆ ಕಾರ್ಖಾನೆಗಳು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಶಾಂತಪ್ಪ ಪಾಟೀಲ್, ಅಧ್ಯಕ್ಷ ಚಂದು ಜಾಧವ್, ಜಿಲ್ಲಾ ಸಂಚಾಲಕ ಸುನಿಲ ಮಾರುತಿ ಮಾನಪಡೆ, ಬನ್ನೇಪ್ಪ ಪೂಜಾರಿ ಸಣ್ಣೂರ, ಬಸವಣಪ್ಪ ಪಾಟೀಲ್ ಸರಡಗಿ, ನಾಗಣ್ಣ ಕಂಠಿ ಮುಗಳನಗಾಂವ್, ಬಸಣ್ಣ ಕಮ್ಮಠಾಣ, ಮೋಹನ್ ಜಾಧವ್, ಶ್ರೀನಾಥ್ ತಲಕೇರಿ, ಅಪ್ಪಾರಾವ್ ಸುರಾ, ವಾಸುದೇವ ಮೇಲಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚುನಾವಣೆಗಳಲ್ಲಿ ಹಣ ಹಂಚುವ ಮೂಲಕ ಜನರ ಕಲ್ಯಾಣ ಸಾಧ್ಯವಿಲ್ಲ: ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ
ಹೊಸದಿಲ್ಲಿ: ಚುನಾವಣೆಗಳಲ್ಲಿ ಜನರಿಗೆ ಹಣ ಹಂಚುವ ಮೂಲಕ ಕಲ್ಯಾಣವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, “ಸಂವಿಧಾನ ಕಡ್ಡಾಯಗೊಳಿಸಿರುವ ಆರ್ಥಿಕ ಸಮಾನತೆ ಮತ್ತು ಸಮಾನ ಪ್ರಗತಿಯನ್ನು ಖಾತರಿಗೊಳಿಸಬೇಕಿದೆ” ಎಂದು ಕಿವಿಮಾತು ಹೇಳಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಹಾಗೂ ಮಾಜಿ ಕಾನೂನು ಕಾರ್ಯದರ್ಶಿ ಜಿ.ವಿ.ಜಿ.ಕೃಷ್ಣಮೂರ್ತಿಯವರ 91ನೇ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮುರಳಿ ಮನೋಹರ್ ಜೋಶಿ, ತಾರತಮ್ಯವನ್ನು ಹೋಗಲಾಡಿಸಲು ಹಾಲಿ ಅಸ್ತಿತ್ವದಲ್ಲಿರುವ ರಾಜ್ಯಗಳನ್ನು ವಿಭಜಿಸಿ ಸಮಾನ ಸಂಖ್ಯೆ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ, ಸಮಾನ ಜನ ಸಂಖ್ಯೆ ಇರುವ ಸಣ್ಣ ರಾಜ್ಯಗಳನ್ನು ರಚಿಸಬೇಕು ಎಂದು ಕರೆ ನೀಡಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕಿದೆ. ಆದರೆ, ಕರ್ನಾಟಕ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ಜನರ ನಡುವೆ ಅಗಾಧ ಪ್ರಮಾಣದ ಆರ್ಥಿಕ ತಲಾದಾಯದ ಅಸಮತೋಲನವಿದೆ ಎಂದು ಮಾಜಿ ಕೇಂದ್ರ ಸಚಿವರೂ ಆದ ಮುರಳಿ ಮನೋಹರ್ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದಲ್ಲಿ ವ್ಯಕ್ತಿಯೊಬ್ಬನ ತಲಾದಾಯವೆಷ್ಟು? ಆತ ಒಂದು ನಿರ್ದಿಷ್ಟ ಆರ್ಥಿಕ ಸಾಮರ್ಥ್ಯದೊಂದಿಗೆ ಮತ ಚಲಾಯಿಸುತ್ತಾನೆ. ನಂತರ, ಮರಳುಗಾಡು, ಗಿರಿಪ್ರದೇಶ ಅಥವಾ ಈಶಾನ್ಯ ರಾಜ್ಯಗಳಲ್ಲಿ ವಾಸಿಸುತ್ತಿರುವ ವ್ಯಕ್ತಿಯ ತಲಾದಾಯವೆಷ್ಟು? ಆತನಿಗೂ ಸಮಾನ ತಲಾದಾಯವಿದೆಯೆ? ಇಲ್ಲ” ಎಂದು ಅವರು ಬೊಟ್ಟು ಮಾಡಿದ್ದಾರೆ. “ಆರ್ಥಿಕ ಸ್ಥಿತಿ ಹಾಗೂ ಅಭಿವೃದ್ಧಿ ನಡುವಿನ ವ್ಯತ್ಯಾಸ ತಾರತಮ್ಯವಾಗಿದ್ದು, ಚುನಾವಣೆಗಳಲ್ಲಿ ಹಣ ಹಂಚುವ ಮೂಲಕ ಕಲ್ಯಾಣ ಸಾಧಿಸಲು ಸಾಧ್ಯವಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಂದು ನೀವು ಚುನಾವಣೆಗೂ ಮುನ್ನ ಹಣ ಹಂಚಿದ್ದೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಣ ಹಂಚಿಕೆ ಮಾಡಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ, ನೀವು ಮತಗಳನ್ನು ಖರೀದಿಸಲು ಹಣ ಹಂಚಿದ್ದೀರಿ ಎಂದು ಅವರು ಹೇಳುತ್ತಿದ್ದಾರೆ” ಎಂದು ಬಿಜೆಪಿಯ ಮಾಜಿ ರಾಷ್ಟ್ರಾಧ್ಯಕ್ಷರೂ ಆದ ಮುರಳಿ ಮನೋಹರ್ ಜೋಶಿ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಎನ್ಡಿಎ ಸರಕಾರ ಕಲ್ಯಾಣ ಕಾರ್ಯಕ್ರಮಗಳ ನೆಪದಲ್ಲಿ ಹಣ ಹಂಚಿಕೆ ಮಾಡಿದ್ದ ವಿಷಯವು ಬಿಹಾರದಲ್ಲಿನ ಎನ್ಡಿಎ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುರಳಿ ಮನೋಹರ್ ಜೋಶಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಶಿವಕುಮಾರ್ ಅವರೇ, ಕಾಂಗ್ರೆಸ್ ನಲ್ಲಿದ್ದರೆ ಸಿಎಂ ಆಗೋ ನಂಬಿಕೆ ನಿಮಗಿದೆಯಾ? Recalling ಬಿಎಸ್ವೈ ಹೇಳಿಕೆ
BSY old statement on DK Shivakumar : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ತೀವ್ರ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ನವೆಂಬರ್ ಕ್ರಾಂತಿ ಎಂದು ಏನು ಹಲವು ದಿನಗಳಿಂದ ರಾಜಕೀಯ ವಿದ್ಯಮಾನ ನಡೆದುಕೊಂಡು ಬಂದಿದೆಯೋ, ಅದಕ್ಕೆ ಪೂರಕ ಎನ್ನುವಂತೆ, ಶಾಸಕರ ದೆಹಲಿ ಪ್ರವಾಸ ನಡೆದಿದೆ. ಇನ್ನೊಂದು ಕಡೆ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದವಾಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ | ನಟಿ ರನ್ಯಾರಾವ್ ಸೇರಿ ನಾಲ್ವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ
ಬೆಂಗಳೂರು : ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ದ ಅಧಿಕಾರಿಗಳು ನಟಿ ರನ್ಯಾರಾವ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ನಗರದ ವಿಶೇಷ ಆರ್ಥಿಕ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿರುವುದಾಗಿ ವರದಿಯಾಗಿದೆ. ಈ ಪ್ರಕರಣದಲ್ಲಿ ಬಂಧನಕೊಳ್ಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾರಾವ್ ಮತ್ತು ಆಕೆಯ ಸ್ನೇಹಿತ ತರುಣ್ ಕೊಂಡರಾಜು ಹಾಗೂ ಅವರಿಂದ ಚಿನ್ನ ಖರೀದಿಸಿದ್ದ ಸಕಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ವಿರುದ್ಧ ನ.20 ಗುರುವಾರದಂದು ಡಿಆರ್ಐ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆಂದು ಗೊತ್ತಾಗಿದೆ. ಈ ಆರೋಪಪಟ್ಟಿಯು 2,200 ಪುಟಗಳನ್ನು ಹೊಂದಿದ್ದು, ಅದರಲ್ಲಿ 350 ಪುಟಗಳ ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ. 2025ರ ಮಾರ್ಚ್ 3ರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಕೆ.ಜಿ. ಚಿನ್ನದ ಗಟ್ಟಿಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ವೇಳೆ ರನ್ಯಾರಾವ್ ಅವರನ್ನು ಬಂಧಿಸಲಾಯಿತು. ನಂತರ, ಇತರ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಭರತ್ ಕುಮಾರ್ ಜೈನ್ ಹೊರತುಪಡಿಸಿ, ರನ್ಯಾ, ತರುಣ್ ಮತ್ತು ಸಾಹಿಲ್ ವಿರುದ್ಧ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ (ಕಾಫಿಫೋಸಾ) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವುದಾಗಿ ತಿಳಿದುಬಂದಿದೆ. ತರುಣ್ ಕೊಂಡರಾಜು ಮತ್ತು ರನ್ಯಾರಾವ್ ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದರು. ಅದಕ್ಕಾಗಿ ಜೀನಿವಾ ಅಥವಾ ಬ್ಯಾಂಕಾಕ್ ಮೂಲಕ ಭಾರತಕ್ಕೆ ಚಿನ್ನ ಸಾಗಾಟ ಮಾಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಡಿಆರ್ ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭಾರತಕ್ಕೆ ಬಂದಿಳಿದ ರನ್ಯಾರಾವ್ಳನ್ನು ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಬಂಧಿಸಿದ್ದರು. ಬಳಿಕ ಆಕೆ ಮನೆ ಮೇಲೂ ದಾಳಿ ನಡೆಸಿದ್ದರು.
ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಮಾಡನ್ನೂರು ದಶಮಾನೋತ್ಸವದ ಪೋಸ್ಟರ್ ಪ್ರದರ್ಶನ
ವಿಟ್ಲ : ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಸೆಂಟರ್ ನಲ್ಲಿ ಡಿ.5 ರಿಂದ 7 ರ ವರೆಗೆ ನಡೆಯುವ ದಶಮಾನೋತ್ಸವ ಸಮ್ಮೇಳನದ ಪ್ರಚಾರಾರ್ಥವಾಗಿ ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಪೋಸ್ಟರ್ ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮುಹಮ್ಮದ್ ಪೊನ್ನೋಟು ಖತೀಬ್ ಆರಿಫ್ ಬಾಖವಿ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ, ಝುಬೈರ್ ಮಾಸ್ಟರ್, ಇಕ್ಬಾಲ್ ಶೀತಲ್, ಸಮೀರ್ ಪಳಿಕೆ, ಮೊಯ್ದೀನ್ ಹಾಜಿ ಕೂಜಪ್ಪಾಡಿ, ಬಿ.ಎಂ.ಅಬ್ದುಲ್ ಖಾದರ್, ಅಬೂಬಕರ್ ಮದನಿ ಮುಂತಾದವರು ಉಪಸ್ಥಿತರಿದ್ದರು.
ಪ್ರಶ್ನೆಗಾಗಿ ನಗದು ಪ್ರಕರಣ | ಲೋಕಪಾಲ್ ಆದೇಶದ ವಿರುದ್ಧ ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿಗೆ ಸಿಬಿಐ ವಿರೋಧ
ಹೊಸ ದಿಲ್ಲಿ: ಪ್ರಶ್ನೆಪಗಾಗಿ ನಗದು ಪ್ರಕರಣದಲ್ಲಿ ತಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅವಕಾಶ ನೀಡಿರುವ ಲೋಕಪಾಲ್ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿರುವ ಮೇಲ್ಮನವಿಯನ್ನು ಸಿಬಿಐ ವಿರೋಧಿಸಿದೆ. ಲೋಕಪಾಲ್ ವಿಚಾರಣೆಯ ವೇಳೆ ದಾಖಲೆಗಳನ್ನು ಸಲ್ಲಿಸುವ ಅಧಿಕಾರ ಮಹುವಾ ಮೊಯಿತ್ರಾರಿಗಿರಲಿಲ್ಲ ಹಾಗೂ ಅವರು ಕೇವಲ ತಮ್ಮ ಪ್ರತಿಕ್ರಿಯೆಗಳನ್ನು ನೀಡಬಹುದಾಗಿತ್ತೇ ಹೊರತು, ಮೌಖಿಕ ವಿಚಾರಣೆಯಲ್ಲೂ ಪಾಲ್ಗೊಳ್ಳುವಂತಿರಲಿಲ್ಲ ಎಂದು ಸಿಬಿಐ ವಾದಿಸಿದೆ. “ಹೀಗಿದ್ದೂ, ಲೋಕಪಾಲ್ ಅವರ ಮೌಖಿಕ ವಿಚಾರಣೆ ನಡೆಸಿತು. ನಂತರ, ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಲೋಕಪಾಲ್ ಅನುಮತಿ ನೀಡಿತು” ಎಂದು ಸಿಬಿಐ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ನ್ಯಾ. ಅನಿಲ್ ಕ್ಷೇತ್ರಪಾಲ್ ಮತ್ತು ನ್ಯಾ. ಹರೀಶ್ ವೈದ್ಯನಾಥನ್ ಅವರನ್ನೊಳಗೊಂಡ ನ್ಯಾಯಪೀಠದ ಗಮನಕ್ಕೆ ತಂದರು. ಮಹುವಾ ಮೊಯಿತ್ರಾ ಉದ್ಯಮಿಯೊಬ್ಬರಿಂದ ನಗದು ಪಡೆದು, ಅದರ ಬದಲಿಗೆ ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಾಗಿ ನಗದು ಪ್ರಕರಣ ದಾಖಲಾಗಿದೆ. ಉಭಯ ವಾದಿಗಳ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಮಹುವಾ ಮೊಯಿತ್ರಾರ ಮೇಲ್ಮನವಿಗೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಕಾಯ್ದಿರಿಸಿತು.
ವಿಟ್ಲ: ಪುಣಚ ಗ್ರಾಮದ ಹಿರಿಯ ದೈವ ನರ್ತಕ, ನಾಟಿ ವೈದ್ಯ ನಡುಸಾರು ಅಣ್ಣು ಅಜಿಲ (75) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ಇವರು ತುಳುನಾಡಿನ ದೈವಗಳಲ್ಲಿ ವಿಶೇಷವೆನಿಸಿದ ಜಠಾಧಾರಿ ದೈವ ನರ್ತಕರಾಗಿದ್ದರು. ಪುಣಚ ಗ್ರಾಮದ ದಲ್ಕಜೆಗುತ್ತು ಎಂಬಲ್ಲಿ ಕಳೆದ 38 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದರು. ಅದಲ್ಲದೇ ಪಾರಂಪರಿಕವಾಗಿ ಬಂದ ನಾಟಿ ವೈದ್ಯ ಪದ್ಧತಿಯ ಮೂಲಕ ಚಿರಪರಿಚಿತರಾಗಿದ್ದರು. ಪುಣಚ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಉತ್ತರ ಪ್ರದೇಶ | ಮಗುವಿನ ಗಾಯಕ್ಕೆ ಫೆವಿಕ್ವಿಕ್ ಹಾಕಿದ ಆಸ್ಪತ್ರೆಯ ಸಿಬ್ಬಂದಿ!
ಸಂಬಂಧಿಕರ ಆರೋಪ; ತನಿಖೆಗೆ ಆದೇಶಿಸಿದ ಮುಖ್ಯ ವೈದ್ಯಾಧಿಕಾರಿ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿ ಅವರನ್ನು ಭೇಟಿಯಾದ ಡಿ.ಕೆ.ಶಿವಕುಮಾರ್
ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹತ್ಯೆ ಪ್ರಕರಣವೊಂದಲ್ಲಿ ಜೈಲು ಸೇರಿದ್ದು, ಚಿತ್ರದುರ್ಗ ಕ್ಷೇತ್ರದ ಶಾಸಕ ವೀರೇಂದ್ರ ಪಪ್ಪಿ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಲ್ಲಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಶುಕ್ರವಾರ ಸಂಜೆ 4.30ರ ಸುಮಾರಿಗೆ ಏಕಾಏಕಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಖುದ್ದು ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೊದಲಿಗೆ ವೀರೇಂದ್ರ ಪಪ್ಪಿ ಅವರನ್ನು ಭೇಟಿ ಮಾಡಿ ಸಮಾಧಾನ ಹೇಳಿದರು. ಅನಂತರ ಕೋರ್ಟ್ ವಿಚಾರಣೆ ಮುಗಿಸಿ ಬಂದ ಶಾಸಕ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾಗಿ ಸಂತೈಸಿದರು.
ಕಲಬುರಗಿ: ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಬಾರ್ಕಿ ಮತ್ತು ಮೊಗವೀರ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರಕಾರ ಸಿದ್ದತೆ ನಡೆಸಿದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಪ್ಪಣ್ಣಪ್ಪ ಕಮಕನೂರ್, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯವನ್ನು ಬಿಲಿಷ್ಠಗೊಳಿಸಲು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ರಾಜ್ಯದಲ್ಲಿರುವ ಎಲ್ಲಾ ಹಿಂದುಳಿದ ವರ್ಗಗಳ ಆಯೋಗಗಳು ಶಿಫಾರಸ್ಸು ಮಾಡಿವೆ. ಕಳೆದ 30 ವರ್ಷಗಳ ಕಾಲದ ಹೋರಾಟಕ್ಕೆ ಪ್ರತಿಫಲ ಸಿಗುವ ಸಮಯವ ಬಂದಿದೆ. ಇಂತಹ ಸಂದರ್ಭದಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸುವುದು ಸರಿಯಲ್ಲ ಎಂದು ತಿಳಿಸಿದರು. ಎಸ್ಟಿ ಶಿಫಾರಸ್ಸಿಗೆ ಕೇಂದ್ರಕ್ಕೆ ಸಲ್ಲಿಸಲು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸಂಬಂಧಪಟ್ಟ ಹಲವು ಸಚಿವರಿಗೆ ಈಗಾಗಲೇ ಭೇಟಿ ಮಾಡಿ ಮನವರಿಕೆ ಮಾಡಿದ್ದೇವೆ. ಅದಕ್ಕೆ ಎಲ್ಲರೂ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗಾಗಿ ಸರಕಾರಕ್ಕೆ ಬೆಳಗಾವಿ ಅಧಿವೇಶನದವರೆಗೆ ಕಾಲಾವಕಾಶ ನೀಡಬೇಕು. ಒಂದು ವೇಳೆ ಸರಕಾರ ಇದರಲ್ಲಿ ವಿಳಂಬ ನೀತಿ ಅನುಸರಿಸಿದರೆ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜಗೋಪಾಲರೆಡ್ಡಿ, ಶರಣಪ್ಪ ನಾಟೀಕರ್, ಸೈಬಣಪ್ಪ, ಅವ್ವಣ್ಣ ಮ್ಯಾಕೇರಿ, ರಮೇಶ್ ನಾಟೀಕರ್, ಸೋಮನಾಥ್, ಬಸವರಾಜ್ ಬೂದಿಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯ ಕಾಂಗ್ರೆಸ್ ಸರಕಾರ ಸಂಘಿ ಅಜೆಂಡಾ ಜಾರಿಗೊಳಿಸುತ್ತಿದೆ: ಸುನೀಲ್ ಕುಮಾರ್ ಬಜಾಲ್ ಆರೋಪ
ಅಧಿಕೃತ ಕಸಾಯಿಖಾನೆ ತೆರೆಯಲು ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ
ಮಂಗಳೂರು | ಕಂಬಳ ಕ್ರೀಡೆಗೆ 5 ಕೋ.ರೂ. ಅನುದಾನ ನೀಡಲು ಅಸೋಸಿಯೇಶನ್ ಮನವಿ
ಮಂಗಳೂರು, ನ.21: ರಾಜ್ಯ ಸರಕಾರದ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುವ ಕಂಬಳ ಕ್ರೀಡೆಗೆ 5 ಕೋ.ರೂ. ಅನುದಾನ ನೀಡಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಮನವಿ ಮಾಡಿದೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ವರ್ಷ 25 ಜೋಡುಕರೆ ಕಂಬಳಗಳು ನಡೆಯಲಿದೆ. ಇದಕ್ಕೆ ಮುಂದಿನ ಬಜೆಟ್ ನಲ್ಲಿ ಪ್ರವಾಸೋದ್ಯಮ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆಗಳು ತಲಾ 2.5 ಕೋ. ರೂ.ಗಳಂತೆ 5 ಕೋ. ರೂ. ಮೀಸಲಿಡಬೇಕು ಎಂದು ಹೇಳಿದರು. ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ 10 ಕಂಬಳಗಳಿಗೆ ತಲಾ 5 ಲ. ರೂ. ಬಿಡುಗಡೆ ಮಾಡಿತ್ತು. ಆದರೆ 20 ಕಂಬಳಗಳು ನಡೆದಿದ್ದವು. ಈ ಮೊತ್ತ ಸಾಕಾಗಲಿಲ್ಲ. ಕ್ರೀಡಾ ಇಲಾಖೆ ಪ್ರತಿ ಕಂಬಳಕ್ಕೆ 2 ಲ. ರೂ. ಬಿಡುಗಡೆ ಮಾಡಿತ್ತು. ಒಂದು ಕಂಬಳ ಆಯೋಜನೆಗೆ 40 ರಿಂದ 50 ಲ. ರೂ. ವೆಚ್ಚವಾಗುತ್ತದೆ. ಚಿನ್ನವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಆದರೆ ಚಿನ್ನದ ದರ ವಿಪರೀತ ಹೆಚ್ಚಾಗಿರುವುದರಿಂದ ಹೊರೆಯಾಗಿದೆ. ಕಂಬಳದಿಂದ ಕ್ರೀಡೆ ಮತ್ತು ಪ್ರವಾಸೋದ್ಯಮ ಇಲಾಖೆಗಳಿಗೆ ಪ್ರಯೋಜನವಾಗುತ್ತಿದೆ. ಅನೇಕ ಕುಟುಂಬಗಳು ಕಂಬಳವನ್ನು ಅವಲಂಬಿಸಿಕೊಂಡಿವೆ ಎಂದು ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಕಂಬಳದ ತೀರ್ಪುಗಾರರು, ಕೋಣ ಓಡಿಸುವವರು, ಪರಿಚಾರಕ ವರ್ಗದವರ ಸಹಿತ ಕಂಬಳದಲ್ಲಿ ತೊಡಗಿಸಿಕೊಂಡವರ ಜೀವನ ಭದ್ರತೆಗಾಗಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ಒದಗಿಸಬೇಕು. ಕಂಬಳವು ಜಾನಪದ ಕ್ರೀಡೆಯಾದ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಪ್ರೋತ್ಸಾಹ ನೀಡಬೇಕು. ಒಂಟಿ ಕರೆಯ ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು. ನಿಯಮ ಕಟ್ಟುನಿಟ್ಟು ಪಾಲನೆಗೆ ಸೂಚನೆ : ಕಂಬಳಗಳನ್ನು ನಡೆಸಲು ಅಸೋಸಿಯೇಶನ್ ಬೈಲಾ ರಚಿಸಿದೆ. ಕಂಬಳವು 24 ಗಂಟೆಗಳ ಒಳಗೆ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಸಮಯ ಪಾಲನೆ ಮಾಡಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಕೋಣಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಬಾರದು ಎಂದು ಕೂಡ ತಿಳಿಸಲಾಗಿದೆ. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಕೆಯ ನಿಯಮಗಳನ್ನು ಸಂಘವು ಕಟ್ಟುನಿಟ್ಟಾಗಿ ಪಾಲಿಸಲಿದೆ. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕದ ಶಬ್ದವನ್ನು ಕಂಬಳ ಕರೆ ಒಳಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಈ ವರ್ಷದಿಂದ ಸಬ್ ಜೂನಿಯರ್ ವಿಭಾಗಕ್ಕೆ ಅವಕಾಶವಿರುವುದಿಲ್ಲ. ಇದರಿಂದಾಗಿ ಸುಮಾರು ಮೂರು ಗಂಟೆಗಳ ಸಮಯ ಉಳಿಸಲು ಸಾಧ್ಯವಾಗಲಿದೆ. ಸಬ್ ಜೂನಿಯರ್ ಕೋಣಗಳಿಗೆ ತರಬೇತಿ ಸಿಗುವಂತಾಗಲು ಪ್ರತ್ಯೇಕ ಕೂಟಗಳನ್ನು ಆಯೋಜಿಸಲಾಗುವುದು. ಕಂಬಳದಲ್ಲಿ ಭಾಗವಹಿಸುವ ಕೋಣಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿಂದೆ 150-160 ಇದ್ದದ್ದು, ಇದೀಗ 280ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಸಮಯ ಪರಿಪಾಲನೆ ಕಷ್ಟವಾಗುತ್ತಿದೆ ಎಂದು ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಮೈಸೂರಿನಲ್ಲಿ ಕಂಬಳ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಆಸಕ್ತಿ ತೋರಿಸಿದ್ದಾರೆ. ಅಲ್ಲಿ ಕಂಬಳಕ್ಕೆ ಪೂರಕವಾದ 20 ಎಕರೆ ಜಾಗವಿದೆ. ತಜ್ಞರು ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾಧ್ಯವಾದರೆ ಎಪ್ರಿಲ್ ಬಳಿಕ ಕಂಬಳ ನಡೆಸಲಾಗುವುದು. ಬೆಂಗಳೂರಿನಲ್ಲಿ ಕಂಬಳ ನಡೆಸಲು ಈ ಬಾರಿ ಬೇಡಿಕೆ ಬಂದಿಲ್ಲ ಎಂದು ಹೇಳಿದರು. ಹೆಚ್ಚುವರಿ ಸಾಧನಗಳ ಬಳಕೆ : ಸಮಯವನ್ನು ಮೇಲ್ವಿಚಾರಣೆ ಮಾಡಲು ಟೈಮರ್ಗಳು, ಸಿಸಿಟಿವಿ ಕ್ಯಾಮರಾಗಳು ಮತ್ತು ಹೆಚ್ಚುವರಿ ರೆಕಾರ್ಡಿಂಗ್ ಸಾಧನಗಳನ್ನು ಬಳಸಲಾಗುತ್ತದೆ. ವಿಳಂಬ ತಡೆಯುವುದು, ಆಧುನಿಕ ತಂತ್ರಜ್ಞಾನ ಬಳಸಿ ಫಲಿತಾಂಶ ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ಈ ಬಾರಿ ಮೂರು ಕಡೆ ಹೊಸದಾಗಿ ಕಂಬಳ ನಡೆಯಲಿದೆ ಎಂದರು. ರಾಜ್ಯದ ಎಲ್ಲೆಡೆ ಕಂಬಳ ನಡೆಸಲು ಯಾರೂ ಅಡ್ಡಿ ಮಾಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಪಿಲಿಕುಳ ಕಂಬಳದ ಪ್ರಕರಣ ನಡೆಯುತ್ತಿದೆ. ಅದರ ತೀರ್ಪು ಹೊರಬೀಳಲಿದೆ. ಉಳಿದಂತೆ ಎಲ್ಲ ಕಡೆ ಹಸಿರು ನಿಶಾನೆ ದೊರೆತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ರಾಷ್ಟ್ರೀಯ ಮಾನ್ಯತೆಗಾಗಿ ಪ್ರಧಾನಿಗೆ ಮನವಿ : ಕಂಬಳಕ್ಕೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ನ.28ರಂದು ಉಡುಪಿಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಿ.ಆರ್.ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕಂಬಳ ಸಂಘಟಕ ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.
ರಾಯಚೂರು | ಕಾರ್ಮಿಕರ ವೇತನ ಪಾವತಿಸುವಂತೆ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದಿಂದ ಅಧಿಕಾರಿಗಳಿಗೆ ಮನವಿ
ರಾಯಚೂರು: ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ತುಂಗಭದ್ರಾ ನೀರಾವರಿ ಕಾರ್ಮಿಕರ ವೇತನ ಪಾವತಿಸುವಂತೆ ಆಗ್ರಹಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (AICCTU) ಕೇಂದ್ರ ಸಮಿತಿಯಿಂದ ಶುಕ್ರವಾರ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಯರಮರಸ್ ವೃತ್ತದ ಯರಮರಸ್, ಕಲ್ಲೂರು, ಆರ್ ಡಿಎಸ್, ಸಿರವಾರ, ಮಾನ್ವಿ, ಮಸ್ಕಿ, ಸಿಂಧನೂರು, ಜವಳಗೇರಾ, ತುರವಿಹಾಳ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ 5 ತಿಂಗಳಿಂದ ಬಾಕಿ ವೇತನ ಪಾವತಿಸದೆ ವಿಳಂಬ ಮಾಡಲಾಗಿದೆ. ಆದ್ದರಿಂದ ಕೂಡಲೇ ವೇತನ ಪಾವತಿಸುವಂತೆ ಒತ್ತಾಯಿಸಲಾಯಿತು. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕೆಲಸದಲ್ಲಿ ತೊಡಿಗಿರುವ ಕಾರ್ಮಿಕರಿಗೆ ಟೆಂಡರ್ ನಿಯಮಾವಳಿಗಳಂತೆ ವೇತನ ಪಾವತಿಸದಿರುವುದರಿಂದ ಟೆಂಡರ್ ಪಡೆದ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. 1936ರ ವೇತನ ಪಾವತಿ ಕಾಯ್ದೆಯ ಸೆಕ್ಷನ್ 5ರ ಪ್ರಕಾರ ಪ್ರತಿ ತಿಂಗಳ 7ನೇ ತಾರೀಖಿನ ಮೊದಲು ವೇತನವನ್ನು ಪಾವತಿಸಬೇಕು. ಆದರೆ 5 ತಿಂಗಳು ಕಾರ್ಮಿಕರಿಗೆ ವೇತನವನ್ನು ಪಾವತಿಸಲಾಗಿಲ್ಲ. ತಕ್ಷಣ ಬಾಕಿ ಇರುವ ಎಲ್ಲಾ ವೇತನ, ಇಎಸ್ಐ, ಇಪಿಎಫ್ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಬಸವರಾಜ್, AICCTU ಜಿಲ್ಲಾಧ್ಯಕ್ಷ ಅಝೀಝ್ ಜಾಗೀರದಾರ, ಭೀಮಣ್ಣ, ಜಗದೀಶ್, ನಿಸಾರ್ ಅಹ್ಮದ್, ಜಿಲಾನಿ ಪಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Dharwad | ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಧಾರವಾಡ : ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಚಿಕ್ಕಮಲ್ಲಿಗವಾಡ ಗ್ರಾಮದ ನಾರಾಯಣ ಶಿಂಧೆ (42), ಈತನ ತಂದೆ ವಿಠ್ಠಲ ಶಿಂಧೆ (80) ಹಾಗೂ ನಾರಾಯಣನ ಮಕ್ಕಳಾದ ಶಿವಕುಮಾರ ಶಿಂಧೆ (12) ಹಾಗೂ ಶ್ರೀನಿಧಿ ಶಿಂಧೆ (11) ಎಂಬುವವರು ಅದೇ ಗ್ರಾಮದ ದೇವಾಲಯವೊಂದರ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದನ ಕಾಯುವವರು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ನಾರಾಯಣ ತನ್ನ ಎರಡೂ ಮಕ್ಕಳು ಹಾಗೂ ತಂದೆಯೊಂದಿಗೆ ಬಾವಿಗೆ ಹಾರಿದ್ದಾರೆ ಎನ್ನಲಾಗಿದೆ. ಸದ್ಯ ನಾಲ್ಕೂ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರು | ನ.22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ
ತುಮಕೂರು : ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ನವೆಂಬರ್ 22ರಂದು ಶ್ರೀ ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್, ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಆಯೋಜಿಸಲಾಗಿದೆ ಎಂದು ಸಾಹೇ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 14ನೇ ಸಾಹೇ ಘಟಿಕೋತ್ಸವದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಸ್ಥಾಪಕರಾದ ಶ್ರೀಸ್ವಾಮಿ ಜಪಾನಂದ ಜಿ ಮಹಾರಾಜ್ ಹಾಗೂ ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆಯ ವಿರೋಸ್ಪೇಸ್ ಇಂಜಿನಿಯರಿಂಗ್ನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದರು. ಸಾಹೇ ವಿವಿಯ 14ನೇ ಘಟಿಕೋತ್ಸವದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಜಯರಾಮ್ ರಮೇಶ್ ಅವರು ಭಾಷಣ ಮಾಡಲಿದ್ದಾರೆ. ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಪದವಿ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆಯನ್ನು ಭೋದಿಸಿ, ಪ್ರಮಾಣ ಪತ್ರಗಳನ್ನು ವಿತರಿಸಲಿದ್ದಾರೆ ಹಾಗೂ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ ಮತ್ತು ಡಾ.ಜಿ.ಎಸ್.ಆನಂದ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವರಾದ ಡಾ.ಅಶೋಕ್ ಮೆಹತಾ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಗುರುಶಂಕರ್ ಸಿ., ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಜಿ ಎನ್., ಉಪ ಕುಲಸಚಿವರಾದ ಡಾ.ಸುದೀಪ್ ಕುಮಾರ್, ಟಿ.ಬೇಗೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ ದಿವಾಕರ್, ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ವಿ.ರವಿ ಪ್ರಕಾಶ್ ಹಾಗೂ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಲಿದ್ದಾರೆ. ಶ್ರೀ ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್ ಸಾಹೇ ವಿವಿಯ 14ನೇ ಘಟಿಕೋತ್ಸವದಲ್ಲಿ 664 ಬಿಇ ಮತ್ತು ಎಂಟೆಕ್, 372 ಎಂ.ಬಿ.ಬಿ.ಎಸ್ ಮತ್ತು ಎಂ.ಡಿ. 34, ಬಿಡಿಎಸ್ ಮತ್ತು ಎಂ.ಡಿ.ಎಸ್ ಹಾಗೂ 14 ಪಿಹೆಚ್ಡಿ ಪದವಿಗಳು ಸೇರಿದಂತೆ ಒಟ್ಟು 1086 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು. ಶೈಕ್ಷಣಿಕ ಬೆಳವಣಿಗೆಯಲ್ಲಿ ಸಾಧನೆ ತೋರಿದ 15 ಜನರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಇಂಜಿನಿಯರಿಂಗ್ ನ 8, ವೈದ್ಯಕೀಯ ವಿಭಾಗದ 3, ದಂತ ವೈದ್ಯಕೀಯದ 2, ಎಂಸಿಎ ಮತ್ತು ಎಂಟೆಕ್ ವಿಭಾಗದ 2 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಲಭಿಸಲಿದೆ ಎಂದು ವಿವರ ನೀಡಿದರು.
ವಾಯು ಮಾಲಿನ್ಯ: ದಿಲ್ಲಿಯಲ್ಲಿ ಶಾಲೆಗಳ ಹೊರಾಂಗಣ ಚಟುವಟಿಕೆಗಳಿಗೆ ನಿಷೇಧ
ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿಷಮಿಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿನ ಶಾಲೆಗಳ ಹೊರಾಂಗಣ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ. ದಿಲ್ಲಿಯಲ್ಲಿನ ವಾಯುಮಾಲಿನ್ಯ ಕಳೆದ ಒಂದು ವಾರದಲ್ಲಿ ಮತ್ತಷ್ಟು ಹದಗೆಟ್ಟಿರುವುದರಿಂದ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದ್ದು, ಸುಪ್ರೀಂ ಕೋರ್ಟ್ ಹಾಗೂ ದಿಲ್ಲಿ ಹೈಕೋರ್ಟ್ ಕೂಡಾ ಈ ವಿಷಯುಕ್ತ ಗಾಳಿಯ ತೀವ್ರ ಸಂತ್ರಸ್ತರಾದ ಶಾಲಾ ಮಕ್ಕಳೆಡೆಗೆ ತಮ್ಮ ಗಮನ ಹರಿಸಿವೆ. ಈ ನಡೆಯನ್ನು ಹಲವಾರು ತಜ್ಞರು ಸ್ವಾಗತಿಸಿದ್ದಾರೆ. ಗುರುವಾರ ಅರ್ಜಿಯೊಂದರ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್ ನ ನ್ಯಾ. ಸಚಿನ್ ದತ್ತ, ಇಂತಹ ಅತ್ಯಂತ ಮಾಲಿನ್ಯಕಾರ ತಿಂಗಳುಗಳಲ್ಲೂ ದಿಲ್ಲಿ ಸರಕಾರ ಹೊರಾಂಗಣ ಕ್ರೀಡೆಗಳನ್ನು ಆಯೋಜಿಸುತ್ತಿರುವ ಕ್ರಮವನ್ನು ಪ್ರಶ್ನಿಸಿದರು. “ನವೆಂಬರ್ ನಿಂದ ಜನವರಿ ತಿಂಗಳವರೆಗೆ ಮಕ್ಕಳು ಹೊರಾಂಗಣ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಾರದು” ಎಂದು ಅವರು ತಾಕೀತು ಮಾಡಿದರು. ಪ್ರಾಧಿಕಾರಗಳು ಶಾಲಾ ಮಕ್ಕಳ ಆರೋಗ್ಯವನ್ನು ರಕ್ಷಿಸಲು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಅಪಾಯಕಾರಿ ತಿಂಗಳುಗಳಲ್ಲಿ ಕ್ರೀಡಾ ವೇಳಾಪಟ್ಟಿಯನ್ನು ಪರಿಷ್ಕರಿಸಲೇಬೇಕು ಎಂದು ಒತ್ತಿ ಹೇಳಿದರು. ವಾಯು ಗುಣಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ಇಳಿಕೆಯಾಗುತ್ತಿದ್ದರೂ, ಈ ತಿಂಗಳಲ್ಲಿ ಸಾಲುಸಾಲು ಹೊರಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಈ ಕ್ರೀಡಾ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ತಯಾರಿಸುತ್ತದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೆ, ಶ್ವಾಸಕೋಶ ತಜ್ಞರು ಹಂಚಿಕೊಂಡಿರುವ ಸೂಕ್ಷ್ಮ ಕಣಗಳ ಮಾಲಿನ್ಯದಿಂದ ಮಕ್ಕಳ ಶ್ವಾಸಕೋಶಕ್ಕೆ ಆಗುತ್ತಿರುವ ದುಷ್ಪರಿಣಾಮಗಳ ಚಿತ್ರಗಳನ್ನೂ ಅವರು ನ್ಯಾಯಾಲಯದ ಮುಂದೆ ಸಲ್ಲಿಸಿದರು. ದಿಲ್ಲಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದ ಕುರಿತು ಹೈಕೋರ್ಟ್ ಗಿಂತ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಎಲ್ಲ ಶಾಲಾ ಕ್ರೀಡಾಕೂಟಗಳನ್ನು ಸ್ವಚ್ಛ ತಿಂಗಳುಗಳಿಗೆ ವರ್ಗಾಯಿಸುವಂತೆ ತಕ್ಷಣವೇ ಶಾಲೆಗಳಿಗೆ ನಿರ್ದೇಶನ ನೀಡುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸೂಚಿಸಿತು. ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು ಗಂಭೀರ ಮಟ್ಟಕ್ಕೆ ಕುಸಿದಿರುವ ಬೆನ್ನಿಗೇ ನ್ಯಾಯಾಲಯಗಳಿಂದ ಈ ನಿರ್ದೇಶನ ಹೊರ ಬಿದ್ದಿದೆ. ದಿಲ್ಲಿಯಲ್ಲಿನ ವಾಯು ಗುಣಮಟ್ಟ ತೀರಾ ವಿಷಮಿಸಿರುವುದರಿಂದ, ಆರೋಗ್ಯವಂತ ವಯಸ್ಕರಿಗೂ ಮನೆಯೊಳಗೆ ಇರುವಂತೆ ಸಲಹೆ ನೀಡಲಾಗಿದೆ.
ಬೆಂಗಳೂರು ಕಂಟೋನ್ಮೆಂಟ್ - ಕಲಬುರಗಿ ನಡುವೆ 6 ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ; ಯಾವಾಗ? ವೇಳಾಪಟ್ಟಿ ಏನು?
ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ಆರು ಟ್ರಿಪ್ಗಳ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ನವೆಂಬರ್ 22 ರಿಂದ ಡಿಸೆಂಬರ್ 28 ರವರೆಗೆ ಸಂಚರಿಸಲಿವೆ. ಅಲ್ಲದೆ, ವಂದೇ ಭಾರತ್ ಎಕ್ಸ್ಪ್ರೆಸ್ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿದೆ.
ಮಹಿಳಾ ವಕೀಲರ POSH ದೂರುಗಳಿಗೆ ಸಂಬಂಧಿಸಿದಂತೆ ಅರ್ಜಿ; ಕೇಂದ್ರ ಸರಕಾರ, ಬಾರ್ ಕೌನ್ಸಿಲ್ ಗೆ ಸುಪ್ರೀಂ ನೊಟೀಸ್
ಹೊಸದಿಲ್ಲಿ: ಬಾರ್ ಕೌನ್ಸಿಲ್ ಗಳ ಮುಂದೆ ಮಹಿಳಾ ವಕೀಲರು ಇತರ ವಕೀಲರ ಮೇಲೆ ಮಾಡುವ ಆರೋಪಗಳಿಗೆ POSH ಕಾಯ್ದೆ ಅನ್ವಯವಾಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಶುಕ್ರವಾರ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ನ್ಯಾ. ಬಿ.ವಿ.ನಾಗರತ್ನ ಮತ್ತು ನ್ಯಾ. ಆರ್.ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ ಈ ನೋಟಿಸ್ ಜಾರಿಗೊಳಿಸಿದ್ದು, ಈ ವಿಷಯವನ್ನು ಇಂತಹುದೇ ಮತ್ತೊಂದು ಮೇಲ್ಮನವಿಯೊಂದಿಗೆ ಸೇರ್ಪಡೆಗೊಳಿಸಿದೆ. ಜುಲೈ 7ರ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ (POSH), 2013 ಬಾರ್ ಕೌನ್ಸಿಲ್ ಗಳಿಗೆ ಅನ್ವಯವಾಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್ ತೀರ್ಪಿನಿಂದ ಮಹಿಳಾ ವಕೀಲರಿಗೆ ಯಾವುದೇ ಪರಿಹಾರ ದೊರೆಯದಂತಾಗಿದೆ ಎಂದು ಈ ಮೇಲ್ಮನವಿಯಲ್ಲಿ ವಾದಿಸಲಾಗಿದೆ. ವಕೀಲರ ಕಾಯ್ದೆ, 1961ರ ಸೆಕ್ಷನ್ 35ರ ಅಡಿಯಲ್ಲಿ ಮಹಿಳಾ ವಕೀಲರು ಬಾರ್ ಕೌನ್ಸಿಲ್ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಈ ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದೆ. ವಕೀಲರ ವೃತ್ತಿಪರ ದುರ್ನಡತೆಗೆ ವಕೀಲರ ಕಾಯ್ದೆ, 1961ರ ಸೆಕ್ಷನ್ 35ರ ಅಡಿ ಶಿಕ್ಷೆ ನೀಡುತ್ತದೆ. ಆದರಿದು ಲೈಂಗಿಕ ದೌರ್ಜನ್ಯಕ್ಕಿಂತ ವಿಭಿನ್ನವಾಗಿದೆ ಎಂದೂ ಅರ್ಜಿದಾರರು ವಾದಿಸಿದ್ದಾರೆ.
Kundapura | ಹೆಸಕುತ್ತೂರು ಶಾಲೆಯಲ್ಲಿ ಮಕ್ಕಳ ಹಬ್ಬದ ಸಡಗರ ‘ಸಿಂಗಾರ’
ಕುಂದಾಪುರ, ನ.21: ಮಕ್ಕಳು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು. ಅಂತಹ ಸಾಧಕ ಮಕ್ಕಳನ್ನು ಅತಿಥಿಗಳಾಗಿ ಮಾಡಿ ಮಕ್ಕಳ ಹಬ್ಬ ಮಾಡಿದಾಗ ಇತರೆ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗುತ್ತದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬದ ಸಡಗರ ‘ಸಿಂಗಾರ’ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳೇ ಉದ್ಘಾಟಕರಾಗಿ, ಅಧ್ಯಕ್ಷರಾಗಿ, ಅತಿಥಿಗಳಾಗಿ ಸಭಾ ಕಾರ್ಯಕ್ರಮ ನಡೆಸಿಕೊಟ್ಟಿರುವುದು ಇಲ್ಲಿನ ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಕಾಂತಾರ ಚಾಪ್ಟರ್-1 ಸಿನಿಮಾದ ಬಾಲನಟಿ ಸಮೀಕ್ಷ ಸುರೇಶ ಹಕ್ಲಾಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ವಿದ್ಯಾರ್ಥಿ ನಾಯಕಿ ಆರಾಧನಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಉಪ ನಾಯಕ ಅದ್ವಿತ್ ವಿ. ಶೆಟ್ಟಿ, ಶಾಲಾ ವಿಪಕ್ಷ ನಾಯಕಿ ರನ್ಯಾ, ಶಾಲಾ ಸಾಂಸ್ಕೃತಿಕ ಸಚಿವೆ ಕನಿಷ್ಕ, ಆರಾಧ್ಯ ಎಂ.ಪಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮೀಕ್ಷ ಸುರೇಶ್ ಹಕ್ಲಾಡಿ ಅವರನ್ನು ಕೆ. ಜಯಪ್ರಕಾಶ್ ಹೆಗ್ಡೆ ಸನ್ಮಾನಿಸಿದರು. ಕುಂದಾಪುರ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಂದ್ರನಾಯ್ಕ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು, ಹಳೆ ವಿದ್ಯಾರ್ಥಿ ಗಳನ್ನು, ಪೋಷಕರ ಕ್ರೀಡಾಕೂಟದಲ್ಲಿ ವಿಜೇತರನ್ನು ಗೌರವಿಸಲಾಯಿತು. ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ವಿಶೇಷ ಸ್ಮರಣಶಕ್ತಿ ಪ್ರದರ್ಶನ ನಡೆಯಿತು. ನಾಟಕಗಳಾದ ಶಿವಭೂತಿ, ಹೆಡ್ಡಾಯಣವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸುಧಾಕರ ಕುಲಾಲ್, ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್, ಸಹ ಶಿಕ್ಷಕರಾದ ಸಂಜೀವ ಎಂ, ವಿಜಯಾ ಆರ್, ಅಶೋಕ ತೆಕ್ಕಟ್ಟೆ, ವಿಜಯ ಶೆಟ್ಟಿ, ರವೀಂದ್ರ ನಾಯಕ್, ಸ್ವಾತಿ ಬಿ, ಗೌರವ ಶಿಕ್ಷಕಿ ಮಧುರ ಉಪಸ್ಥಿತರಿದ್ದರು. ಶಾಲಾ ಶಿಕ್ಷಣ ಸಚಿವೆ ಕೃತಿ ಸ್ವಾಗತಿಸಿ, ಶ್ರೀವತ್ಸ ಭಟ್ ವಂದಿಸಿದರು.
ವಿಜಯನಗರ | ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿಕ ಮೌಲ್ಯಗಳನ್ನು ಬೆಳೆಸಬೇಕು : ಶಾಸಕ ಡಾ.ಎನ್ಟಿ ಶ್ರೀನಿವಾಸ್
ವಿಜಯನಗರ : ಹಿರೇ ಹೆಗ್ಡಾಳ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಶ್ರೀನಿವಾಸ್ ಎನ್ ಟಿ, ಶಿಕ್ಷಕರು ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿಯ ಮೌಲ್ಯ ಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳನ್ನು ಪಡೆದುಕೊಂಡು ರಾಜ್ಯಕ್ಕೆ ಮತ್ತು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳಾದ ಮೈಲೇಶ್ ಬೇವೂರ್, ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಶಿಕ್ಷಕ ವೃಂದ ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು.
'ನಾನು 140 ಶಾಸಕರಿಗೂ ಅಧ್ಯಕ್ಷ' - ಕಾಂಗ್ರೆಸ್ಸಿನ ಒಕ್ಕಲಿಗ ಶಾಸಕರ ದೆಹಲಿ ಪರೇಡ್ ಬಗ್ಗೆ ಡಿಕೆಶಿ ಫಸ್ಟ್ ರಿಯಾಕ್ಷನ್
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಅವರೇ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಕೆಲ ಶಾಸಕರು ದೆಹಲಿಗೆ ಭೇಟಿ ನೀಡಿರುವುದು ಸಚಿವ ಸಂಪುಟ ಪುನರ್ರಚನೆಗೆ ಸಂಬಂಧಿಸಿದ್ದು, ಇದು ಸಹಜ ಪ್ರಕ್ರಿಯೆ ಎಂದಿದ್ದಾರೆ. ಯಾವುದೇ ಗುಂಪುಗಾರಿಕೆ ಇಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿಯಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ನಾಯಕತ್ವ ವಿಚಾರದಲ್ಲಿ ಬಹಿರಂಗ ಹೇಳಿಕೆ | ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ : ಸುರ್ಜೆವಾಲ
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿರುವ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ. ಶುಕ್ರವಾರ ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಕರ್ನಾಟಕದ ಬಿಜೆಪಿ ಹಾಗೂ ಕೆಲ ಮಾಧ್ಯಮದವರು ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ಕರ್ನಾಟಕಕ್ಕೆ ಕೆಟ್ಟ ಹೆಸರು ತರಲು ಸಂಚು ರೂಪಿಸಿರುವ ಬಗ್ಗೆ ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರಕಾರದ ಸಾಧನೆ ಹಾಗೂ ಐದು ಗ್ಯಾರಂಟಿಗಳ ಯಶಸ್ಸನ್ನು ದುರ್ಬಲಗೊಳಿಸುವ ಏಕೈಕ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ. ಕೆಲ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ನೀಡುತ್ತಿರುವ ಅನಗತ್ಯ ಹೇಳಿಕೆಗಳು ಗೊಂದಲ ಸೃಷ್ಟಿಗೆ ಕಾರಣವಾಗಿವೆ ಎಂದು ಸುರ್ಜೆವಾಲ ಬೇಸರ ವ್ಯಕ್ತಪಡಿಸಿದ್ದಾರೆ. ಪಟ್ಟಬಧ್ರ ಹಿತಾಸಕ್ತಿಗಳ ಅಪಪ್ರಚಾರ, ಕಾರ್ಯಸೂಚಿಗೆ ಯಾರೊಬ್ಬರೂ ತುತ್ತಾಗಬಾರದು ಎಂದು ಎಚ್ಚರಿಸಿದ್ದೇವೆ. ಪಕ್ಷದ ವಿವಿಧ ನಾಯಕರು, ಕಾರ್ಯಕರ್ತರ ಅಭಿಪ್ರಾಯವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಸುರ್ಜೆವಾಲ ಹೇಳಿದ್ದಾರೆ.
ವಿಜಯನಗರ | ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಿಂದ ಬಾಲಕಾರ್ಮಿಕ ಪದ್ಧತಿ ಕುರಿತು ಜಾಗೃತಿ
ಹೊಸಪೇಟೆ : ಕಮಲಾಪುರು ಪಟ್ಟಣ ವ್ಯಾಪ್ತಿಯಲ್ಲಿ ಅಂಗಡಿಗಳಿಗೆ ಭೇಟಿ ನೀಡಿ ಬಾಲಕಾರ್ಮಿರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಮಾಲಕರಿಗೆ ಪೋಸ್ಟರ್ಗಳನ್ನು ನೀಡಿ ಜಾಗೃತಿ ಮೂಡಿಸಲಾಯಿತು. ಶಿಕ್ಷಣ ಕಲಿಯುವ ವಯಸ್ಸಿನಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿದು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ತಪ್ಪು. 6 ರಿಂದ 14 ವರ್ಷ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಸರಿಯಲ್ಲ. 18 ವರ್ಷದೊಳಗಿನ ಕಿಶೋರ ಬಾಲಕಾರ್ಮಿಕರು ಅಪಾಯಕಾರಿ ಉದ್ಯಮಗಳಲ್ಲಿ ದುಡಿಯುವುದು ಕಂಡುಬಂದಲ್ಲಿ ಇಲಾಖೆಯನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ ಬಿ ಈರಣ್ಣ, ಯೋಜನಾ ನಿರ್ದೇಶಕ ಮೌನೇಶ್, ಕಾರ್ಮಿಕ ನಿರ್ದೇಶಕ ಶಿವಶಂಕರ ಬಿ ತಳವಾರ, ರೆವಿನ್ಯೂ ಇಲಾಖೆ ಗಂಗಾಧರ, ಆರೋಗ್ಯ ಇಲಾಖೆ ಎಸ್ ಮಂಜುನಾಥ, ಸಿಡಿಪಿಓ ಇಲಾಖೆ ರೇಣುಕಾ ಯಲ್ಲಮ್ಮ, ಡಿಸಿಪಿಯು,ಸಿ ಎಚ್ ಎಲ್ ನೇತ್ರಾ, ಡಿಸಿಪಿಯು ಆಪ್ತ ಸಮಾಲೋಚಕಿ ಲಲಿತಾ ಬಾರಿಕರ, ಪೊಲೀಸ್ ಎಎಸ್ಐ ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ, ಭಿಮದಾಸ್ ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಖಾದರ್ ಭಾಷಾ ಹೆಚ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಟಿ ಎನ್ ಲತಾ, ಪುರಸಭೆ ಹರೀಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳ |ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ “ಮಾದರಿ ನೆರೆಹೊರೆ-ಮಾದರಿ ಸಮಾಜ” ಅಭಿಯಾನ
ಕೊಪ್ಪಳ : ಜಮಾಅತೆ ಇಸ್ಲಾಮಿ ಹಿಂದ್ “ಮಾದರಿ ನೆರೆಹೊರೆ ಮಾದರಿಯ ಸಮಾಜ” ಎಂಬ ಹೆಸರಿನ 10 ದಿನಗಳ ‘ನೆರೆಹೊರೆಯ ಹಕ್ಕುಗಳು” ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಇಂದು ಚಾಲನೆ ನೀಡಿದೆ. ಅಭಿಯಾನವು ನವೆಂಬರ್ 20 ರಿಂದ 30ರವರೆಗೆ ನಡೆಯಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ದಿಲಾವರ್ ಖಾನ್ ಹೇಳಿದರು. ಕೊಪ್ಪಳದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿಲಾವರ್ ಖಾನ್, ಅತಿಯಾದ ಖಾಸಗಿತನದ ಮೇಲೆ ಕೇಂದ್ರೀಕೃತವಾಗಿರುವ ಇಂದಿನ ನಗರ ಜೀವನವು ನೆರೆಯವರ ನಡುವಿನ ಒಡನಾಟ ಹಾಗೂ ಪರಸ್ಪರ ಕಾಳಜಿಯನ್ನು ನಿಧಾನವಾಗಿ ಕುಗ್ಗಿಸುತ್ತಿದೆ ಎಂದು ಹೇಳಿದರು. “ನೆರೆಯವರ ಬಗ್ಗೆ ನಿರ್ಲಕ್ಷ್ಯ ಹೆಚ್ಚುತ್ತಿದ್ದು, ಅವರ ಹಕ್ಕುಗಳನ್ನು ಕಡೆಗಣಿಸುವ ಪ್ರವೃತ್ತಿ ಗಂಭೀರವಾಗಿದೆ. ಸಮಾಜವನ್ನು ಈ ವಿಷಯದತ್ತ ಎಚ್ಚರಗೊಳಿಸುವ ತುರ್ತು ಅಗತ್ಯವಿದೆ” ಎಂದು ಹೇಳಿದರು. ಈ ಅಭಿಯಾನವು ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಕರುಣೆ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಆಸಕ್ತಿ ಇರುವ ಪ್ರತಿಯೊಬ್ಬ ನಾಗರಿಕನಿಗೂ ಮುಕ್ತ ಆಹ್ವಾನವಾಗಿದೆ ಎಂದು ಹೇಳಿದರು. ನೆರೆಯವರ ಹಕ್ಕುಗಳ ಕುರಿತು ಉಪದೇಶಗಳನ್ನು ನೀಡುವುದು, ಪರಸ್ಪರ ಕಾಳಜಿ, ಸಹಕಾರ, ಶಿಸ್ತು, ಸ್ವಚ್ಛತೆ ಮತ್ತು ನಾಗರಿಕ ಜವಾಬ್ದಾರಿಯನ್ನು ಉತ್ತೇಜಿಸುವುದು, ನೆರೆಯವರ ನಡುವಿನ ಅಂತರಗಳನ್ನು ಕಡಿಮೆ ಮಾಡಿ ಸಹೋದರತ್ವ ಮತ್ತು ಸೌಹಾರ್ದತೆಯನ್ನು ಬೆಳೆಸುವುದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದ ಆಧ್ಯಕ್ಷ ಸೈಯದ್ ಹಿದಾಯತ್ ಅಲಿ, ಅಸ್ಗರ್ ಖಾನ್, ಅಯಾಝ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೆಚ್ಚು ಸಾಲ ಮಾಡಿದ ಸಿಎಂ ಸಿದ್ದರಾಮಯ್ಯ : ಆರ್.ಅಶೋಕ್
ಬೆಂಗಳೂರು : ‘ರಾಜ್ಯದಲ್ಲಿ ಅತ್ಯಂತ ಹೆಚ್ಚು 2 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯನವರು ಬೆಲೆ ಏರಿಕೆ, ಅಕ್ರಮ, ಹಗರಣಗಳ ಚಾಂಪಿಯನ್ ಆಗಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ. ಶುಕ್ರವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ‘ವರ್ಷ ಎರಡೂವರೆ ಕನ್ನಡಿಗರಿಗೆ ಬಲು ಹೊರೆ’ ‘ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ’ ಕುರಿತ ವಿಡಿಯೋ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿದ್ಯುತ್, ಹಾಲು, ನೋಂದಣಿ ಶುಲ್ಕ, ಪೆಟ್ರೋಲ್, ಡೀಸೆಲ್, ಅಬಕಾರಿ ಸೇರಿದಂತೆ 25ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಒಂದೇ ವರ್ಷದಲ್ಲಿ ಇಷ್ಟು ಬೆಲೆ ಏರಿಸಿದ ನಂಬರ್ ಒನ್ ಸರಕಾರ ಇದು ಎಂದು ದೂರಿದರು. ರೈತರು, ಗುತ್ತಿಗೆದಾರರ ಆತ್ಮಹತ್ಯೆಗೆ ಈ ಸರಕಾರ ಕಾರಣವಾಗಿದೆ. ಜಾತಿಗಳ ನಡುವೆ ಬೆಂಕಿ ಹಚ್ಚುವುದರಲ್ಲಿ ಚಾಂಪಿಯನ್, ದಿಲ್ಲಿಗೆ ಹಣ ಕಳಿಸುವುದರಲ್ಲೂ ಇವರೇ ಚಾಂಪಿಯನ್. ಈ ರೀತಿಯಲ್ಲೇ ಸಿದ್ದರಾಮಯ್ಯ ಚಾಂಪಿಯನ್ ಆಗಿದ್ದಾರೆ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯನವರು ನಮಗೆ ಬೇಡ ಎಂದು ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದ ಶಾಸಕರೇ ದಿಲ್ಲಿಗೆ ಹೋಗಿ ದೂರು ನೀಡಿದ್ದಾರೆ ಎಂದು ಹೇಳಿದರು. ಸರಕಾರ ಬರೀ ಸುಳ್ಳು ಹೇಳುತ್ತಿದ್ದು, ಜನರ ಪಾಲಿಗೆ ಗೋಳು, ರೈತರಿಗೆ ಹೂಳು. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಆರಂಭವಾಗಿದೆ. ಪರ-ವಿರೋಧ ಹೊಸದಿಲ್ಲಿ ಯಾತ್ರೆ ನಡೆಯುತ್ತಿದೆ. ನಿಜಕ್ಕೂ ಕಾಂಗ್ರೆಸ್ ಪಕ್ಷದ ಒಳಗೆ ಏನು ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಈ ಆಟಾಟೋಪಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಕೋರಿದರು.
Bangladesh Vs Ireland- ಢಾಕಾದಲ್ಲಿ ಶುಕ್ರವಾರ ಉಂಟಾದ ಭೂಕಂಪನದಿಂದಾಗಿ ಬಾಂಗ್ಲಾದೇಶ ಮತ್ತು ಐರ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೂ ಕೆಲಕಾಲ ಅಡಚಣೆ ಉಂಟಾಯಿತು. ಈ ವೇಳೆ ಮೈದಾನದಲ್ಲಿದ್ದ ಆಟಗಾರರು, ನಿರೂಪಕರು, ಪತ್ರಕರ್ತರು ಸುರಕ್ಷಿತ ಸ್ಥಳಗಳಿಗೆ ಓಡಿ ಹೋದರು. ಟಿವಿ ಸ್ಟುಡಿಯೋ ಕೂಡ ನಡುಗಿತು. ಪ್ರೇಕ್ಷಕರು ಸಹ ಆತಂಕಗೊಂಡರು. ಡ್ರೆಸ್ಸಿಂಗ್ ರೂಂನಲ್ಲಿದ್ದ ಐರ್ಲೆಂಡ್ ತಂಡದ ಆಟಗಾರರು ಭಯಗೊಂಡು ಬೌಂಡರಿ ಲೈನ್ ಬಳಿ ಬಂದರು. ಪರಿಸ್ಥಿತಿ ತಿಳಿಯಾದ ನಂತರ ಪಂದ್ಯ ಪುನರಾರಂಭವಾಯಿತು. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ರಾಯಚೂರು | ಮಳೆಯಿಂದ ಬೆಳೆ ನಷ್ಟ : ಪರಿಹಾರ ನೀಡುವಂತೆ ರೈತರಿಂದ ಪ್ರತಿಭಟನೆ
ರಾಯಚೂರು: ಹತ್ತಿ, ಮೆಣಸಿನಕಾಯಿ, ಭತ್ತ ಸೇರಿದಂತೆ ಇತರೆ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ಘೋಷಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು. ಜಿಲ್ಲೆಯಲ್ಲಿ ಹತ್ತಿ ಬೆಳೆ ವ್ಯಾಪಕವಾಗಿ ಹೆಚ್ಚಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬರುತ್ತಿದೆ. ಪ್ರತಿ ಕ್ವಿಂಟಾಲ್ ಹತ್ತಿಗೆ ಈಗ ರೂ. 6,500 ರಿಂದ 7,000 ರೂಪಾಯಿವರೆಗೆ ಮಾತ್ರ ದರ ಸಿಗುತ್ತಿದೆ. ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ರೂ. 8110/- ಇದ್ದರೂ, ಖರೀದಿ ಕೇಂದ್ರಗಳಲ್ಲಿ ಅಧಿಕಾರಿಗಳ ಭಾರೀ ಭ್ರಷ್ಟಾಚಾರದ ಪರಿಣಾಮವಾಗಿ ರೈತರಿಗೆ ದರ ಲಭಿಸುತ್ತಿಲ್ಲ” ಎಂದು ಸಂಘದ ಮುಖಂಡರು ಆರೋಪಿಸಿದರು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಹತ್ತಿ, ಭತ್ತ, ಮೆಣಸಿನಕಾಯಿ, ಜೋಳ, ತೊಗರಿ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬಿತ್ತಿದ್ದಾರೆ. ಆದರೆ ಅತಿಯಾದ ಮಳೆಯಿಂದಾಗಿ ಅತೀವೃಷ್ಟಿ ಸಂಭವಿಸಿ, ರೈತರ ಬೆಳೆಗಳಿಗೆ ಭಾರೀ ನಷ್ಟವಾಗಿದೆ. ಈ ಕುರಿತು ರೈತ ಸಂಘ ಸರಕಾರದ ಗಮನಕ್ಕೆ ತಂದಿದ್ದು, ಮುಖ್ಯಮಂತ್ರಿಗಳು ಸ್ವತಃ ವೈಮಾನಿಕ ಸಮೀಕ್ಷೆ ನಡೆಸಿ, ವಿವಿಧ ಬೆಳೆಗಳಿಗೆ ಅನುಗುಣವಾಗಿ ಪರಿಹಾರದ ಮೊತ್ತವನ್ನು ಘೋಷಿಸಿದ್ದಾರೆ. ಹತ್ತಿ ಖರೀದಿಗಾಗಿ ನೋಂದಣಿ ಮಾಡಿಕೊಳ್ಳುವುದೇ ರೈತರಿಗೆ ಸವಾಲಾಗಿದ್ದು, ಸ್ಲಾಟ್ ಬುಕ್ಕಿಂಗ್ ಕೇವಲ 30 ಸೆಕೆಂಡ್ಗಳಲ್ಲಿ ಮುಕ್ತಾಯವಾಗುತ್ತಿರುವುದರಿಂದ ಬಹುತೇಕ ರೈತರು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ತಕ್ಷಣ ಸರಿಪಡಿಸುವಂತೆ ಅವರು ಆಗ್ರಹಿಸಿದರು. ಹತ್ತಿ, ತೊಗರಿ, ಭತ್ತ ಮತ್ತು ಜೋಳ ಖರೀದಿ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತೆರೆಯಬೇಕು ಹಾಗೂ ರೈತರ ಖಾತೆಗೆ ಹಣವನ್ನು ಕಾಲಮಿತಿಯೊಳಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು. ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ನಡೆದ ಕಾಮಗಾರಿಗಳು ತೀರಾ ಕಳಪೆಯಾಗಿದ್ದು,ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ದೊಡ್ಡ ಬಸನಗೌಡ ಬಲ್ಲಟಗಿ, ಸುಗೂರಯ್ಯ ಆರ್.ಎಸ್. ಮಠ, ಯಂಕಪ್ಪ ಕಾರಬಾರಿ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಬಸವರಾಜ ಮಾಲೀಪಾಟೀಲ್, ಲಿಂಗಾರೆಡ್ಡಿ ಪಾಟೀಲ್, ವೀರೇಶ ಗವಿಗಟ್, ಸಿದ್ದಯ್ಯಸ್ವಾಮಿ ಗೋರ್ಕಲ್, ಹೆಚ್. ಶಂಕ್ರಪ್ಪ, ದೇವರಾಜ ನಾಯಕ, ಶರಣಪ್ಪ, ಉಮಾಪತಿ ಗೌಡ, ಬೂದಯ್ಯಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿಎಂ ಬದಲಾವಣೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಮಹತ್ವದ ಸಂದೇಶ
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವು ಭುಗಿಲೆದ್ದಿದೆ. ಡಿ.ಕೆ.ಶಿವಕುಮಾರ್ ಅವರ ಬಣದ ಶಾಸಕರು ದೆಹಲಿಗೆ ತೆರಳಿ ಸಿಎಂ ಸ್ಥಾನಕ್ಕಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಾನು ಯಾವುದೇ ಬಣವನ್ನು ಕಳಿಸಿಲ್ಲ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಿಎಂ ಬದಲಾವಣೆ ಚರ್ಚೆಗಳು ಜೋರಾಗಿಯೇ ಇವೆ. ಇದರ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾದ ರಣದೀಪ್ ಸಿಂಗ್
ಮಂಗಳೂರು ವಿವಿಯಲ್ಲಿ ಅಂತರ್ಜಲ ನಿರ್ವಹಣೆ ಕಾರ್ಯಾಗಾರ ಉದ್ಘಾಟನೆ
ಕೊಣಾಜೆ: ಆಧುನಿಕತೆ ಮತ್ತು ನಮ್ಮ ಜನಜೀವನಶೈಲಿ ಎಷ್ಟೇ ಮುಂದುವರಿದರೂ ನೀರಿಲ್ಲದೆ ಬದುಕಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಂದು ಅರಣ್ಯನಾಶ, ಪರಿಸರ ಮಾಲಿನ್ಯ ಹಾಗೂ ಇನ್ನಿತರ ಕಾರಣಗಳ ಪರಿಣಾಮವಾಗಿ ಭೂಕುಸಿತ, ನೆರೆ ಮೊದಲಾದ ಸಮಸ್ಯೆಗಳು ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಅಂತರ್ಜಲ ಮಟ್ಟವೂ ಕುಸಿಯುತ್ತಿರುವುದು ಆಘಾತಕಾರಿಯಾಗಿದೆ. ಈ ನಿಟ್ಟಿನಲ್ಲಿ ಅಂತರ್ಜಲ ಜಲಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕಿದೆ ಎಂದು ಮಂಗಳೂರು ವಿವಿ ವಿಜ್ಞಾನ ವಿಕಾಯದ ಡೀನ್ ಪ್ರೊ.ಮಂಜಯ್ಯ ಅವರು ಹೇಳಿದರು. ಕೇಂದ್ರೀಯ ಅಂತರ್ಜಲ ಮಂಡಳಿ, ನೈರುತ್ಯ ಕ್ಷೇತ್ರ ಬೆಂಗಳೂರು ಇದರ ವತಿಯಿಂದ ಮಂಗಳೂರು ವಿವಿ ಸಾಗರಭೂ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ವಿವಿಯ ಸೆಮಿನಾರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಲಚರ ಮ್ಯಾಪಿಂಗ್, ಅಂತರ್ಜಲ ಸಂಬಂಧಿತ ಸಮಸ್ಯೆಗಳು ಹಾಗೂ ಅಂತರ್ಜಲ ನಿರ್ವಹಣೆ ಎಂಬ ವಿಷಯದಲ್ಲಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಂತರ್ಜಲದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಬಹಳ ಮುಖ್ಯವಾಗುತ್ತದೆ ಎಂದರು. ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪಾಲಾಕ್ಷಪ್ಪ ಅವರು ಮಾತನಾಡಿ, 1970 ರ ನಂತರ ಕೊಳವೆ ಬಾವಿಗಳು ಬಂದು ಕೆರೆ, ತೆರದ ಬಾವಿಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಅಂತರ್ಜಲಮಟ್ಟವೂ ಕುಸಿಯುವಂತಾಗಿದೆ. ಜಲಮೂಲಗಳ ಸಂರಕ್ಷಣೆಗಳಾಗಬೇಕು ಮತ್ತು ಹೆಚ್ಚೆಚ್ಚು ಸಂಶೋಧನೆಗಳಾಗಬೇಕು ಎಂದರು. ಫರಿದಾಬಾದ್ ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ ನ ನಿವೃತ್ತ ಸದಸ್ಯ ಡಾ.ಕೆ.ನಜೀಬ್, ಸಾಗರ ಭೂ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ.ಪ್ರಿಯಾ ಅವರು ಮಾತನಾಡಿದರು. ಬೆಂಗಳೂರಿನ ಕೇಂದ್ರೀಯ ಅಂತರ್ಜಲ ಮಂಡಳಿಯ ನಿರ್ದೇಶಕರಾದ ಜಿ.ಕೃಷ್ಣ ಮೂರ್ತಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಂತರ್ಜಲ ಮಟ್ಟ ಕುಸಿತ, ನೀರಿನ ಮೂಲ ಬರಿದಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಬ್ಧಾರಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯ ವತಿಯಿಂದ ಅನೇಕ ಯೋಜನೆಯನ್ನು ರೂಪಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಎಚ್ ಪಿ.ಜಯಪ್ರಕಾಶ್ ಅವರು ಸ್ವಾಗತಿಸಿದರು. ಡಾ.ದವಿತ್ ರಾಜು ವಂದಿಸಿದರು.
ನ.22ರಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ದ.ಕ. ಜಿಲ್ಲಾ ಪ್ರವಾಸ
ಮಂಗಳೂರು,ನ.21: ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ಪ್ರಭಾಕರ್ ನ.22ರಂದು ದ.ಕ. ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಪೂ.11ಕ್ಕೆ ನಗರದ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉಮೇಶ್ ಪಂಬದ ಮತ್ತು ಸಿಂಧೂ ಗುಜರಾನ್ ಮೈಲೊಟ್ಟು ಅವರ ಸನ್ಮಾನ ಕಾರ್ಯಕ್ರಮ ಮತ್ತು ಮಧ್ಯಾಹ್ನ 12ಕ್ಕೆ ನಗರದ ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು | ಬೀದಿ ನಾಯಿಗಳ ಬಗ್ಗೆ ಮಾಹಿತಿ ನೀಡಲು ಬಜಪೆ ಪ.ಪಂ ಮುಖ್ಯಾಧಿಕಾರಿ ಸೂಚನೆ
ಮಂಗಳೂರು,ನ.21: ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳ, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಮುಖ್ಯಸ್ಥರು ಆಯಾ ಸಂಸ್ಥೆಯ ಆವರಣದಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದಲ್ಲಿ ಮಾಹಿತಿ ನೀಡಲು ಮುಖ್ಯಾಧಿಕಾರಿ/ಪೌರಾಯುಕ್ತರಿಗೆ ಸೂಚಿಸಿದ್ದಾರೆ. ಆಯಾ ಸಂಸ್ಥೆಯ ಆವರಣದಲ್ಲಿ ಬೀದಿ ನಾಯಿಗಳ ಉಪಟಳ ತಡೆಯಲು ಹಾಗೂ ಅವುಗಳ ಪ್ರವೇಶ ನಿಯಂತ್ರಿಸಲು ಕ್ರಮ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಯಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಸಹಕರಿಸಲು ಹಾಗೂ ಅವುಗಳ ಪ್ರವೇಶ ನಿರ್ಬಂಧಿಸುವುದನ್ನು ಮೇಲ್ವಿಚಾರಣೆ ಮಾಡಲು ಆಯಾ ಸಂಸ್ಥೆಯ ವತಿಯಿಂದ ಜವಾಬ್ದಾರಿಯುತ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬೇಕು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಯಾವುದೇ ಸಂಸ್ಥೆಯ ವ್ಯಾಪ್ತಿಯಲ್ಲಿ ಪುನ: ನಾಯಿಗಳು ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಅವನ್ನು ಸ್ಥಳಾಂತರಿಸುವ ವೆಚ್ಚವನ್ನು ಆ ಸಂಸ್ಥೆಯಿಂದಲೇ ವಸೂಲಿ ಮಾಡಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಸಂಸ್ಥೆಗಳ ವಿರುದ್ಧ ಕಾನುನು ಕ್ರಮ ಕೈಗೊಳ್ಳಲಾಗುವುದು ಎಂದು ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು | ಬಾಲ್ಯವಿವಾಹ ಕಂಡುಬಂದರೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ತಹಶೀಲ್ದಾರ್ ಸೂಚನೆ
ಮಂಗಳೂರು, ನ.21: ಬಾಲ್ಯವಿವಾಹ ಮತ್ತು ಪೊಕ್ಸೊ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮಂಗಳೂರು ತಹಶೀಲ್ದಾರ್ ಟಿ. ರಮೇಶ್ ಬಾಬು ಸೂಚಿಸಿದ್ದಾರೆ. ಮಂಗಳೂರು ತಾಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ತಾಲೂಕು ಮಟ್ಟದ ವಿವಿಧ ಯೋಜನೆಗಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಬೇಟಿ ಬಚಾವೋ, ಬೇಟಿ ಪಡಾವೋ, ಪೊಕ್ಸೊ, ಬಾಲ್ಯವಿವಾಹ, ಮಕ್ಕಳ ನಾಪತ್ತೆ ಸೇರಿದಂತೆ ಇತರೆ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಕೆಲಸ ನಿರ್ವಹಿಸಬೇಕು ಎಂದು ಟಿ. ರಮೇಶ್ ಬಾಬು ಹೇಳಿದರು. ಮಾದಕ ಮತ್ತು ವ್ಯಸನ ನಿಷೇಧ ಯೋಜನೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಮಿತಿ, ಭಾಗ್ಯಲಕ್ಷ್ಮಿ ಯೋಜನೆಯ ಕಾರ್ಯಪಡೆ ಸಮಿತಿ, ಅಂಗವಿಕಲ ಕುಂದು ಕೊರತೆ ನಿವಾರಣೆ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಮಾರಾಟ ಹಾಗೂ ಸಾಗಾಟ ತಡೆ ಸಮಿತಿ, ಬಾಲ್ಯವಾಹ ನಿಷೇಧ ಸಮಿತಿ, ಮಕ್ಕಳ ರಕ್ಷಣಾ ಸಮಿತಿ, ಬೇಟಿ ಬಚಾವೋ ಬೇಟಿ ಪಡಾವೋ ಸಮಿತಿ, ಮಾತೃವಂದನ ಯೋಜನೆ ಸಮಿತಿಯ ಪ್ರಗತಿಯನ್ನು ಅವರು ಪರಿಶೀಲಿಸಿದರು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ 2025ರ ಎಪ್ರಿಲ್ನಿಂದ ಅಕ್ಟೋಬರ್ ವರೆಗೆ 16 ಪ್ರಕರಣಗಳು ದಾಖಲಾಗಿದೆ. ಮಂಗಳೂರು ಶಿಶು ಅಭಿವೃದ್ಧಿ ಯೋಜನ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ವಲಯ ಸಭೆ ಹಾಗೂ ಅಂಗನವಾಡಿಗಳಲ್ಲಿ ತಾಯಂದಿರ ಸಭೆ ಮತ್ತು ಸ್ತ್ರೀಶಕ್ತಿ ಸಭೆಗಳಲ್ಲಿ ಸೇರಿದ ಮಹಿಳೆಯರಿಗೆ ಮಾದಕ ವಸ್ತು ಸೇವನೆ ಮತ್ತು ಮಾರಾಟ ನಿಷೇಧದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮಂಗಳೂರು ತಾಪಂ ಇಒ ಮಹೇಶ್ ಹೊಳ್ಳ, ಪೋಲಿಸ್ ನಿರೀಕ್ಷಕ ಗುರುರಾಜ್, ಮಂಗಳೂರು (ಗ್ರಾಮಾಂತರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಗಿ ಮತ್ತಿತರರು ಉಪಸ್ಥಿತರಿದ್ದರು.
ʻಸಂಸ್ಕೃತ ಸತ್ತ ಭಾಷೆʼ ಎಂದ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್; ಬಿಜೆಪಿ ಕಿಡಿ
ತಮಿಳುನಾಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಸಿಎಂ ಉದನಿಧಿ ಸ್ಟಾಲಿನ್ ಅವರು ಸಂಸ್ಕೃತ ಸತ್ತ ಭಾಷೆ ಎಂದು ಹೇಳಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಒಂದು ಭಾಷೆ ಅವಮಾನಿಸಿ ಮತ್ತೊಂದನ್ನು ನೆಚ್ಚಿಕೊಳ್ಳುವುದು ತಪ್ಪ. ಸತ್ತ ಭಾಷೆ ಎಂದು ಕರೆಯುವದಕ್ಕೆ ಯಾರಿಗೂ ಹಕ್ಕಿಲ್ಲ. ತಮಿಳಿನಲ್ಲಿ ಕೆಲವು ಸಂಸ್ಕೃತ ಪದ ಸೇರಿಕೊಂಡಿದೆ ಎಂದು ಬಿಜೆಪಿ ಕಿಡಿಕಾರಿದೆ.
ಮಂಗಳೂರು | ಬೀದಿ ನಾಯಿಗಳ ಹಾವಳಿ : ಕಟ್ಟುನಿಟ್ಟಿನ ಕ್ರಮಕ್ಕೆ ಡಿಸಿ ಸೂಚನೆ
ಮಂಗಳೂರು,ನ.21: ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳ ಅನುಷ್ಠಾನದ ಕುರಿತು ದ.ಕ. ಜಿಲ್ಲಾ ಮಟ್ಟದ ಸಮಿತಿ ಸಭೆಯು ಶುಕ್ರವಾರ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ದರ್ಶನ್ ಎಚ್., ಮಹಾನಗರಪಾಲಿಕೆ, ನಗರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಬೀದಿ ನಾಯಿಗಳ ಗಣತಿಯನ್ನು ಮಾಡಿ ವರದಿ ಸಲ್ಲಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಹಾಗೂ ಪ್ರವಾಸಿ ತಾಣಗಳ ಆವರಣದಲ್ಲಿ ಬೀದಿ ನಾಯಿಗಳನ್ನು ಹಿಡಿದು ಅವುಗಳ ಸಂತಾನಹರಣ ಶಶ್ತ್ರಚಿಕಿತ್ಸೆ ನಡೆಸಿ ಈಗಾಗಲೆ ಗೊತ್ತುಪಡಿಸಿದ ನಾಯಿ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳ ಆವರಣದಲ್ಲಿ ಬೀದಿ ನಾಯಿಗಳು ನುಸುಳದಂತೆ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಕ ಮಾಡಿ ಪಾಲನಾ ವರದಿ ಸಲ್ಲಿಸಲು ಸೂಚಿಸಿದರು. ಪ್ರತೀ 3 ತಿಂಗಳಿಗೊಮ್ಮೆ ಈ ಎಲ್ಲಾ ಸಂಸ್ಥೆಗಳ ಆವರಣದ ಒಳಗೆ ಮತ್ತು ಹೊರಗೆ ಬೀದಿ ನಾಯಿಗಳ ವಾಸಸ್ಥಾನ ಇಲ್ಲದಿರುವ ಬಗ್ಗೆ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು. ಸಾರ್ವಜನಿಕ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪಾರ್ಕ್, ಡಿಪೋ ಮತ್ತು ಟರ್ಮಿನಲ್ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ಸಿಗದಂತೆ ನೋಡಲ್ ಅಧಿಕಾರಿಗಳು ಕ್ರಮವಹಿಸಬೇಕು. ಎಲ್ಲಾ ತಾಲೂಕಿನ ತಹಶೀಲ್ದಾರರು ಹಾಗೂ ತಾಪಂ ಇಒ ಬೀದಿ ನಾಯಿ ಆಶ್ರಯ ಕೇಂದ್ರವನ್ನು ಮಾಡಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು. ಹೆದ್ದಾರಿಗಳಲ್ಲಿ ಎಲ್ಲಾ ದನ ಮತ್ತು ಬೀಡಾಡಿ ಪ್ರಾಣಿಗಳನ್ನು ಆಶ್ರಯತಾಣ/ಗೋಶಾಲೆಗೆ ಸ್ಥಳಾಂತರಿಸುವಂತೆ ರಾ.ಹೆ. ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಮತ್ತು ನಗರ ಮತ್ತು ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಡಿಸಿ ತಿಳಿಸಿದರು. ಸಾರಿಗೆ, ಹೆದ್ದಾರಿ ಮತ್ತು ಪೊಲೀಸ್ ಇಲಾಖೆಯಿಂದ ಹೆದ್ದಾರಿ ಗಸ್ತು ತಂಡ ರಚಿಸಿ ಸಹಾಯವಾಣಿ ಸಂಖ್ಯೆಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಈ ಸಂಖ್ಯೆಗಳನ್ನು ಕಂಟ್ರೋಲ್ ರೂಂ, ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಗೆ ಲಿಂಕ್ ಮಾಡಲು ಸೂಚಿಸಿದರು. ಮಹಾ ನಗರ ಪಾಲಿಕೆ ಮತ್ತು ಸ್ಥಳೀಯ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರಗಳನ್ನು ಹಾಕುವ ಸ್ಥಳ ಮತ್ತು ಸಮಯವನ್ನು ಕೂಡಲೇ ನಿಗದಿಪಡಿಸುವಂತೆ ನಿರ್ದೇಶನ ನೀಡಿದರು. ಈ ಬಗ್ಗೆ ಭಿತ್ತಿಪತ್ರಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇದನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಎಚ್.ವಿ.ದರ್ಶನ್ ತಿಳಿಸಿದರು. ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಪ್ರಾರಂಭಿಕ ಹಂತದಲ್ಲಿ ಕನಿಷ್ಟ 100 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಎಲ್ಲಾ ತಾಪಂ ಇಒಗಳಿಗೆ ಸೂಚಿಸಿದರು. ಸುಪ್ರೀಂ ಕೋರ್ಟ್ ಗೆ ಡಿಸೆಂಬರ್ 20ರೊಳಗೆ ಅಫಿಡವಿಟ್ ಸಲ್ಲಿಸಬೇಕಾಗಿರುವುದರಿಂದ ಈ ಎಲ್ಲಾ ಸೂಚನೆಗಳಿಗೆ ಕ್ರಮ ಕೈಗೊಂಡು ಪ್ರತಿಯೊಂದು ಇಲಾಖೆಯು ಪಾಲನಾ ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ (ಪೌರಾಡಳಿತ) ಡಿ.15ರೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಆದೇಶಿಸಿದರು. ಸಮಿತಿಯ ಸದಸ್ಯ ಕಾರ್ಯದರ್ಶಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಮಾತನಾಡಿ, ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ನವೆಂಬರ್ 7ರಂದು ಸರ್ವೋಚ್ಚ ನ್ಯಾಯಾಲಯವು ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ನರ್ವಡೆ ವಿನಾಯಕ್ ಖರ್ಭೂರಿ, ಅಪರ ಜಿಲ್ಲಾಧಿಕಾರಿ ರಾಜು ಕೆ., ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಮಹಾನಗರಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಬದಲಾವಣೆ ಜಟಾಪಟಿ: ಭಿನ್ನಮತಕ್ಕೆ ಬೀಳುತ್ತಾ ಬ್ರೇಕ್? ದಿನದ ಟಾಪ್ 7 ಬೆಳವಣಿಗೆ ಏನೇನು
ರಾಜ್ಯ ಕಾಂಗ್ರೆಸ್ ಬಣ ರಾಜಕೀಯ ಕುತೂಹಲದ ಘಟ್ಟಕ್ಕೆ ತಲುಪಿದೆ. ಸಿಎಂ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಸಿಎಂ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಹೇಳಿಕೆ ಡಿಕೆ ಶಿವಕುಮಾರ್ ಕ್ಯಾಂಪ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ನಡುವೆ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರ ಪರವಾಗಿ ಶಾಸಕರು ಬ್ಯಾಟಿಂಗ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರನ್ನು ಸಿದ್ದರಾಮಯ್ಯ ಅವರು ಭೇಟಿ ಮಾಡಿ ಮಾತನಾಡಲಿದ್ದಾರೆ.

21 C