ಕಲಬುರಗಿ | ಆಂದೋಲ ಗ್ರಾಮ ಪಂಚಾಯತ್ ಎದುರು ನೀರಿಗಾಗಿ ಪ್ರತಿಭಟನೆ
ಕಲಬುರಗಿ : ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದ ಭೀಮನಗರದಲ್ಲಿ ಕಳೆದ ಒಂದು ವರ್ಷದಿಂದ ನೀರಿನ ಸಮಸ್ಯೆ ಇದ್ದರು ಕೂಡ ಬಗೆಹರಿಸಿಲ್ಲ. ಕ್ಯಾನಲ್ ಹಾಗೂ ಬೋರವೇಲ್ ನೀರೇ ಸ್ಥಳಿಯರಿಗೆ ಆಸರೆಯಾಗಿತ್ತು. ಬೇಸಿಗೆಯ ಕಾರಣಕ್ಕೆ ಕ್ಯಾನಲ್ ನೀರು ಬರುತ್ತಿಲ್ಲ ಮತ್ತು ಬೋರವೆಲ್ ಕೂಡ ಹಾಳಾಗಿರುವುದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಭಿಮನಗರದಲ್ಲಿ ನೀರಿನ ಸಮಸ್ಯೆಯನ್ನ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತ್ ಮುಂದೆ ಕೊಡಗಳ ಸಮೇತ ಮಹಿಳೆಯರು ಪ್ರತಿಭಟನೆ ನಡೆಸಿದರು. ಜೇವರ್ಗಿ ತಾಲೂಕಿನ ಆಂದೋಲ ಗ್ರಾಮ ಪಂಚಾಯತ್ ಮುಂದೆ ನೀರಿನ ಸಮಸ್ಯೆಯನ್ನ ಬಗೆ ಹರಿಸುವಂತೆ ಒತ್ತಾಯಿಸಿ ಭೀಮನಗರದ ನೀವಾಸಿಗಳು ಪ್ರತಿಭಟನೆ ನಡೆಸಿದರು. ನಗರದಲ್ಲಿ ನಲ್ಲಿ (ನಳ) ನೀರಿನ ಸಮಸ್ಯೆಯು ಕಳೆದ ಒಂದು ವರ್ಷದಿಂದ ಹೀಗೆ ಇದೆ. ಇಲ್ಲಿಯವರೆಗೂ ಗ್ರಾಮದ ಹೊರವಲಯದಲ್ಲಿ ಹಾದು ಹೋದ ಕ್ಯಾನಲ್ ನೀರೆ ಬಳಸಲಾಗುತಿತ್ತು. ಬೋರವೆಲ್ ಗಳಂತು ಹಾಳಾಗಿದ್ದರು ಕೂಡ ದುರಸ್ತಿ ಮಾಡಿಸಲು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಮುಂದಾಗಿಲ್ಲ. ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಹಾಗೂ ತಾಲೂಕು ಆಡಳಿತ ಸೂಚಿಸಿದರೂ ಕೂಡ ಗ್ರಾಮ ಪಂಚಾಯತ್ ಅಧಿಕಾರಿಗಳು ಕಾರ್ಯಪ್ರವೃತರಾಗಿಲ್ಲ. ನೀರಿನ ಸಮಸ್ಯೆ ಬರುವುದಕಿಂತಲು ಮುಂಚೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳುವಂತೆ ತಾಲೂಕು ಆಡಳಿತ, ಜಿಲ್ಲಾಡಳಿತ ಸೂಚನೆ ನೀಡಿದರೂ, ಸಮಸ್ಯೆ ಬಗೆಹರಿಸಿಲ್ಲ ಎಂದು ದೂರಿದ್ದಾರೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುರಿತು ಮನವಿ ಸ್ವಿಕರಿಸಿ ಸಮಸ್ಯೆಯನ್ನು ಬಗೆಹರಿಸುತ್ತೆವೆ ಎಂದು ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ರಾಜು ಜಳೆಂದ್ರ , ಮೌನೇಶ ಗೋಲಾ, ಶ್ರೀಕಾಂತ ಬಡಿಗೇರ, ಭಿಮರಾಯ ಕಟ್ಟಿ, ಮಲ್ಲಿಕಾರ್ಜುನ ಜಳೇಂದ್ರ, ದೇವಪ್ಪ ಕ್ಯಾಮನ್, ಭಿಮು ದೋರನಳ್ಳಿ, ಮರೆಪ್ಪ ಹೋತಿನಮಡು, ರೇಣುಕಾ ಹಂದಗಿ, ಕಲ್ಯಾಣಮ್ಮ ಹೋತಿನಮಡು, ಗುಂಡಮ್ಮ ಗೋಲಾ, ಶರಣಮ್ಮ ಕ್ಯಾಮನ್, ಮಾಳಮ್ಮ ಹಂದಗಿ, ಕಾಂತಮ್ಮ ಕಟ್ಟಿಮನಿ, ಗೋದಬಾಯಿ ಗೋಲಾ, ಸಕ್ರಮ್ಮ ಸನಸೂರ, ಸಕ್ರಮ್ಮ ಹಂದಗಿ, ಶೆಕಮ್ಮ ಮಳ್ಳಿ ಸೇರಿದಂತೆ ಅನೇಕರಿದ್ದರು.
ಪ್ರಕಾಶ್ ಶೆಟ್ಟಿಗೆ ವಂದನಾ ಪ್ರಶಸ್ತಿ
ಮಂಗಳೂರು: ಖ್ಯಾತ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಸುಧೀರ್ಘ ಸೇವೆ, ಕೊಡುಗೆಯನ್ನು ಪರಿಗಣಿಸಿ ನಗರದ ಹೋಟೆಲ್ ಮೋತಿಮಹಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ವಂದನಾ ಪ್ರಶಸ್ತಿ -2025 ನೀಡಿ ಗೌರವಿಸಲಾಯಿತು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ 22 ನೇ ವಾರ್ಷಿಕ ಮತ್ತು 2025ನೇ ಸಾಲಿನ ಪ್ರತಿಷ್ಠಿತ ‘ವಂದನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಂದನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಪ್ರಕಾಶ್ ಶೆಟ್ಟಿ ಯವರು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಸಾಧಕರನ್ನು ಗುರುತಿಸಿ, ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ದೇವದಾಸ್ ರೈ ಪ್ರಶಸ್ತಿ ಪ್ರದಾನದ ವಿಧಿ ವಿಧಾನವನ್ನು ನೆರವೇರಿಸಿದರು. ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಬಿದ್ದಪ್ಪ ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಗಳ ಮಾಹಿತಿ ನೀಡಿದರು. ಸಹಾಯಕ ಗವರ್ನರ್ ಕೆ.ಎಮ್ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು. ರೋಟರ್ಯಾಕ್ಟ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಸಂಜಯ್ ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾ ಪತ್ರಿಕೆ ‘ಸೆಂಟೊರ್’ ಬಿಡುಗಡೆಗೊಳಿಸಿದರು. ರೋಟರಿ ಮಂಗಳೂರು ಸೆಂಟ್ರಲ್ನ ಅಧ್ಯಕ್ಷ ಬ್ರಿಯಾನ್ ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸುಧೀರ್ ಶೆಟ್ಟಿಯವರನ್ನು ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡಿಸಲಾಯಿತು. ಕಾರ್ಯದರ್ಶಿ ರಾಜೇಶ್ ಸೀತಾರಾಮ್ ವರದಿ ಮಂಡಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಚುನಾಯಿತ ಅಧ್ಯಕ್ಷ ಭಾಸ್ಕರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟಾರ್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಅಕ್ಷಯ್ ರೈ ವಂದಿಸಿದರು. ಲೆಕ್ಕ ಪರಿಶೋಧಕ ನಿತಿನ್ ಶೆಟ್ಟಿ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.
‘ಸ್ಮಾರ್ಟ್ ಮೀಟರ್ ಹಗರಣ; ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು : ಸಿ.ಎನ್.ಅಶ್ವತ್ಥನಾರಾಯಣ್
ಬೆಂಗಳೂರು : ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಹಗರಣ ವ್ಯವಸ್ಥಿತವಾಗಿ ನಡೆದಿದ್ದು, 9 ಸುಳ್ಳುಗಳನ್ನು ಹೇಳಿದ್ದಾರೆ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ಹೋರಾಟವನ್ನು ಬಿಜೆಪಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ಮಂಗಳವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.26ರಂದು ಪತ್ರಿಕಾಗೋಷ್ಠಿ ನಡೆಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಕೇಂದ್ರ ಸರಕಾರ ನಿಗದಿತ ನಿಯಮಗಳ ಪ್ರಕಾರ, ಟೆಂಡರ್ ಮಾಡಿದ್ದಾಗಿ ಹೇಳಿದ್ದಾರೆ. ಪ್ರಿಬಿಡ್ ಟೆಂಡರ್ನಲ್ಲಿ ಯಾರೂ ಬಂದಿರಲಿಲ್ಲ ಎಂದಿದ್ದಾರೆ. ಆದರೆ, 10 ಜನರು ಭಾಗವಹಿಸಿದ್ದರು. 117 ಜನರು ಮಾಹಿತಿ ಕೇಳಿದ್ದರು ಎಂದು ವಿವರಿಸಿದರು. ಕೇಂದ್ರದ ನಿಯಮಾವಳಿಯಂತೆ ಐಎಸ್ 16444 ಸ್ಟಾಂಡರ್ಡ್ ಇರುವ ಹತ್ತಾರು ಜನರಿದ್ದಾರೆ. ಅವರನ್ನೇ ರಾಜ್ಯವು ಪರಿಗಣಿಸಬೇಕಿತ್ತು. 1 ಲಕ್ಷ ಸ್ಮಾರ್ಟ್ ಮೀಟರ್ ಉತ್ಪಾದಿಸಿ ವಿತರಿಸಿದ ಅನುಭವ ಬೇಕಿತ್ತು. ಟೆಂಡರ್ 200 ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತದ್ದಾದರೆ ಗ್ಲೋಬಲ್ ಟೆಂಡರ್ ಕರೆಯಬೇಕಿತ್ತು. ಪ್ರಿಬಿಡ್ ವೇಳೆ ಇದನ್ನು ಹೇಳಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು. ಇಂಧನ ಸಚಿವರು ತಾತ್ಕಾಲಿಕ ಸಂಪರ್ಕ ಪಡೆಯುವವರಿಗೆ ಹಾಗೂ ಹೊಸ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದಿದ್ದಾರೆ. ಆದರೆ, ಇದು ಕಡ್ಡಾಯವಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಎಲ್ಲ ಗ್ರಾಹಕರಿಗೆ, ಫೀಡರ್, ಟ್ರಾನ್ಸ್ ಫಾರ್ಮರ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದ ಬಳಿಕವೇ ಹೊಸ ಗ್ರಾಹಕರಿಗೆ ಕಡ್ಡಾಯ ಮಾಡಬಹುದೆಂದು ಕೇಂದ್ರ ವಿದ್ಯುತ್ ಪ್ರಾಧಿಕಾರವು (ಸಿಇಸಿ) ತಿಳಿಸಿದೆ ಎಂದು ದಾಖಲೆ ನೀಡಿದರು. ಗ್ರಾಹಕರ ಜೇಬಿನಿಂದ ಹಣ ಲೂಟಿ ಮಾಡಲು ಸರಕಾರ ಮುಂದಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಲೂಟಿ, ಕಳ್ಳತನ ಮಾಡುತ್ತಿದ್ದಾರೆ. ಗ್ರಾಹಕರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದ್ದಾರೆ. ಇವರಿಗೆ ಶಿಕ್ಷೆ ಆಗಲೇಬೇಕು, ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಅವರು ಪ್ರಕಟಿಸಿದರು.
ಮಂಗಳೂರು ಜೈಲು: ತಂತ್ರಜ್ಞರ ತಂಡದಿಂದ ಪರಿಶೀಲನೆ
ಮಂಗಳೂರು: ನಗರದ ಕೋಡಿಯಾಲಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಜಾಮರ್ ಅಳವಡಿಸಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ಸಾರ್ವಜನಿಕರ ಆಕ್ರೋಶದ ಬಳಿಕ ಹೊಸದಿಲ್ಲಿಯ ಟೆಲಿ ಕಮ್ಯುನಿಕೇಶನ್ ಕನ್ಸಲ್ಟೆಂಟ್ ಇಂಡಿಯಾ-ಟಿಸಿಐ ಲಿಮಿಟೆಡ್ನ ತಂತ್ರಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ತಂಡವು ಎ.೨ರಂದು ವರದಿ ನೀಡಿ ಜೈಲು ಅಧೀಕ್ಷಕರ ಮೂಲಕ ಬಂಧಿಖಾನೆ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಹೊಸದಿಲ್ಲಿಯಿಂದ ಅಮಿತ್ ಕುಮಾರ್ ಎಂಬವರು ಆಗಮಿಸಿದ್ದಾರೆ. ಅವರಿಗೆ ಕರ್ನಾಟಕದ ಸುರೇಂದ್ರ ಎಂಬವರು ಸಾಥ್ ನೀಡಿದ್ದಾರೆ. ಇಬ್ಬರು ತಂತ್ರಜ್ಞರ ತಂಡ ಮಂಗಳವಾರ ಪರಿಶೀಲನೆ ನಡೆಸಿದೆ. ಜೈಲು ವ್ಯಾಪ್ತಿಗೆ ಸೀಮಿತವಾಗಿ ಜಾಮರ್ ಕಾರ್ಯನಿರ್ವಹಣೆಗೆ ಈ ತಂಡ ಶ್ರಮಿಸಿದ್ದು, ಶೇ.75ರಷ್ಟು ಸಮಸ್ಯೆ ಬಗೆಹರಿದಿದೆ. ಮಂಗಳವಾರ ಜೈಲಿನ ಹೊರಗಡೆ ಸರ್ವೇ ನಡೆಸಿ ಅಧಿಕೃತ ವರದಿಯನ್ನು ಸಲ್ಲಿಸಲಿದ್ದಾರೆ. ಬಳಿಕ ಅದನ್ನು ರಾಜ್ಯ ಬಂಧಿಖಾನೆ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ. ಸುರೇಶ್ ಮಾಹಿತಿ ನೀಡಿದ್ದಾರೆ.
ವಿಜಯನಗರ ಕಾಲದ ಹೊಸ ತಾಮ್ರದ ಪಟದ ಶಾಸನ ಪತ್ತೆ: ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಣೆ
ಬೆಂಗಳೂರು : ಕರ್ನಾಟಕ ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿ ತಾಮ್ರದ ಪಟದ ಶಾಸನ ಇದೀಗ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಪತ್ತೆಯಾದ ಈ ತಾಮ್ರದ ಪಟದ ಶಾಸನ ವಿಜಯನಗರ ರಾಜವಂಶಕ್ಕೆ ಸೇರಿದ್ದಾಗಿದ್ದು, ಹೀಗೆ ಬೆಳಕಿಗೆ ಬಂದ ತಾಮ್ರದ ಈ ಶಾಸನವನ್ನು ನಗರದ ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ. ಮಂಗಳವಾರ ನಗರದಲ್ಲಿನ ಫಾಲ್ಕಾನ್ ಕಾಯಿನ್ಸ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪತ್ತೆಯಾದ ಶಾಸನದ ಕುರಿತು ಮಾಹಿತಿ ನೀಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಡಾ.ಕೆ.ಎಂ.ರೆಡ್ಡಿ, ತಾಮ್ರದ ಈ ಶಾಸನ ಕರ್ನಾಟಕ ಮೂಲದ್ದಾಗಿದೆ. ಇದು ವಿಜಯನಗರದ ಸಂಗಮ ದೊರೆ ದೇವರಾಯ-1 ಈತನ ಆಡಳಿತದಲ್ಲಿದ್ದವು. ಅಲ್ಲದೆ ಈ ತಾಮ್ರದ ಶಾಸನದ ಮೇಲೆ ಶ.ಕ.1328 ವ್ಯಾಯಾ, ಕಾರ್ತಿಕ, ಬಾ.10, ಶುಕ್ರವಾರದಂದು ಎಂದು ಕೆತ್ತಲಾದ ಸಂಸ್ಕೃತ ಭಾಷೆಯಲ್ಲಿನ ನಾಗರಿ ಲಿಪಿಯಲ್ಲಿ ಕನ್ನಡದ ಬರವಣಿಗೆಗಳು ಕಂಡು ಬಂದಿವೆ ಎಂದು ಮಾಹಿತಿ ನೀಡಿದರು. ಇದು ಚಂದ್ರ, ಯದು, ಸಂಗಮ ಮತ್ತು ಅವನ ಐದು ಮಕ್ಕಳಾದ ಹರಿಹರ, ಕಂಪ, ಬುಕ್ಕ, ಮಾರಪ, ಮುದ್ದಪ್ಪರಿದ ಆರಂಭಗೊಂಡು ಸಂಗಮ ರಾಜವಂಶದ ವಂಶಾವಳಿಯನ್ನು ಪ್ರತಿನಿಧಿಸುತ್ತಿದೆ. ಬುಕ್ಕ ಎನ್ನುವವನು ಹರಿಹರ ಮತ್ತು ಅವನ ರಾಣಿ ಮೇಲಾಂಬಿಕಾಗೆ ಜನಿಸಿದ್ದನು. ನಂತರ ಬುಕ್ಕನ ಮಗನಾಗಿ ದೇವರಾಯ ಜನಿಸಿದನು. ಇನ್ನು ಪಟ್ಟಾಭಿಷೇಕದ ಸಮಯದಲ್ಲಿ ಹರಿಹರನ ಮಗನಾದ ರಾಜ ದೇವರಾಯ-1 ಗುಡಿಪಲ್ಲಿ ಗ್ರಾಮವನ್ನು ರಾಜೇಂದ್ರಮಡಾ ಮತ್ತು ಉದಯಪಲ್ಲಿ ಎಂಬ ಎರಡು ಕುಗ್ರಾಮಗಳ ಜೊತೆಗೆ ದೇವರಿಯಾಪುರ-ಅಗ್ರಹಾರ ಎಂದು ಮರುನಾಮಕರಣ ಮಾಡಿ ಅವುಗಳನ್ನು 61 ಭಾಗಗಳಾಗಿ ವಿಭಜಿಸಿದನು ಎಂದು ಅವರು ತಿಳಿಸಿದರು. ಋಗ್ವೇದರಿಗೆ 26.5 ಪಾಲುಗಳು, ಯಜುರ್ವೇದಿಗಳಿಗೆ 29.5 ಪಾಲುಗಳು, ಶುಕ್ಲ-ಯಜುರ್ವೇದಿಗಳಿಗೆ 3 ಪಾಲುಗಳು, ದೇವಭಾಗಕ್ಕೆ 2 ಪಾಲು ಸಾಮನಾಥಲೆ, ಶಿವ ಮತ್ತು ಜನಾರ್ದನರಿಗೆ ಹೀಗೆ ಪುರದಲ್ಲಿ ನೆಲೆಗೊಂಡಿರುವ ಗ್ರಾಮವನ್ನು ಉಲ್ಲೇಖಿಸಲಾಗಿದೆ. ಗಮನಾರ್ಹವೆಂದರೆ ಮುಳಬಾಗಿಲು ರಾಜ್ಯ, ಹೊಡೆನಾಡ-ಸ್ಥಳ ಎಂಬುದಾಗಿ ಕನ್ನಡ ಭಾಷೆಯಲ್ಲಿ ಇರುವುದು ತಾಮ್ರದ ಪಟ್ಟಿಗಳಲ್ಲಿ ಕಂಡು ಬಂದಿದೆ ಎಂದು ಕೆ.ಎಂ.ರೆಡ್ಡಿ ಮಾಹಿತಿ ನೀಡಿದರು. ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನವಾದ ವರಾಹ ಅನ್ನು ಸಾಮಾನ್ಯ ಚಿತ್ರದ ಸ್ಥಳದಲ್ಲಿ ಮುದ್ರೆಯ ಚಿತ್ರದಂತೆ ಕಂಡು ಬಂದಿರುವುದು ಆಸಕ್ತಿದಾಯಕವಾಗಿದೆ. ಇಲ್ಲಿಯವರೆಗೆ ದೃಢೀಕರಿಸದ ರಾಜ ದೇವರಾಯರ ಪಟ್ಟಾಭಿಷೇಕದ ದಿನಾಂಕವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಪಟ್ಟಾಭಿಷೇಕ ನಡೆಯುತ್ತಿರುವಾಗ ಅನುದಾನವನ್ನು ನೀಡಲಾಯಿತು ಎಂದು ತಿಳಿದು ಬಂದಿದೆ. ಹೀಗೆ ಐದು ತಾಮ್ರಗಳ ಪಟ್ಟಿಯುಳ್ಳ ಶಾಸನ ಬೆಳಕಿಗೆ ಬಂದಿರುವುದು ಕೇವಲ ಐತಿಹಾಸಿಕ ಆವಿಷ್ಕಾರ ಮಾತ್ರ ಅಲ್ಲದೇ, ವಿಜಯನಗರ ಸಾಮ್ರಾಜ್ಯವನ್ನು ನೋಡುವ ಇತಿಹಾಸವನ್ನು ಸಹ ಬದಲಾಯಿಸುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಫಾಲ್ಕಾನ್ ಕಾಯಿನ್ಸ್ ಗ್ಯಾಲರಿಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಂ.ಪರೇಖ್, ಎಂ.ಡಿ.ಕೀರ್ತಿ ಪರೇಖ್, ಹಾರ್ದಿಕ್ ಪರೇಖ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮನಪಾ, ರಾ.ಹೆ.ಇಲಾಖೆಯಿಂದ ಆದಿವಾಸಿ ಕೊರಗ ಸಮುದಾಯಕ್ಕೆ ಅನ್ಯಾಯ: ಡಾ. ಕೃಷ್ಣಪ್ಪ ಕೊಂಚಾಡಿ
ಮಂಗಳೂರು: ಸಾಣೂರು ಬಿಕರ್ಣಕಟ್ಟೆ ಹೆದ್ದಾರಿ ಅಗಲೀಕರಣಕ್ಕಾಗಿ ವಾಮಂಜೂರಿನ ಮಂಗಳ ಜ್ಯೋತಿಯಲ್ಲಿ ನೂರಾರು ವರ್ಷಗಳಿಂದ ವಾಸವಾಗಿರುವ ಕೊರಗ ಸಮುದಾಯದ ಕುಟುಂಬಗಳನ್ನು ಬೀದಿಗೆ ತಳ್ಳುವ ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಧೋರಣೆ ಅಮಾನುಷ ಮತ್ತು ತೀವ್ರ ಖಂಡನಿಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪಕೊಂಚಾಡಿ ಹೇಳಿದರು. ಮನಪಾ ಅಧಿಕಾರಿಗಳು ನೀಡಿದ ಭರವಸೆಯನ್ನು ಮರೆತು ಬುಲ್ಡೋಜರ್ ಕಾರ್ಯಾಚರಣೆ ನಡೆಸಲು ಮುಂದಾಗಿರುವ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ಮಂಗಳವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕೇವಲ ಕೊರಗಜ್ಜ ಗುಡಿಗೆ ಮಾತ್ರ ನೋಟಿಸು ನೀಡಿ ಜುಜುಬಿ 5 ಲಕ್ಷ ರೂ.ಪರಿಹಾರವನ್ನು ಘೋಷಿಸಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಉಳಿದಂತೆ ಅಲ್ಲಿ 70 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸಿಸು ತ್ತಿರುವ ಕೊರಗ ಕುಟುಂಬಗಳಿಗೆ ಯಾವುದೇ ನೋಟಿಸು, ಪರ್ಯಾಯ ವ್ಯವಸ್ಥೆ, ಪರಿಹಾರವನ್ನು ನೀಡದೆ, ಏಕಾಏಕಿ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಲು ಮುಂದಾಗಿರುವುದನ್ನು ಅವರು ಖಂಡಿಸಿದರು. ಸ್ಥಳೀಯ ಘಟಕದ ಅಧ್ಯಕ್ಷ ಕರಿಯ. ಕೆ ಮಾತನಾಡಿ ಕಮಿಷನರ್ ಮತ್ತು ಹೆದ್ದಾರಿ ಇಲಾಖೆ ಕೊಟ್ಟ ಮಾತಿಗೆ ವ್ಯತಿರಿಕ್ತವಾಗಿ ಮನೆ ಉರುಳಿಸಲು ಬುಲ್ಡೋಜರ್ ಕಳುಹಿಸಿದೆ. ಬುಲ್ಡೋಜರ್ ಎಂಬುದು ಜಾಗತಿಕವಾಗಿ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಗಳ ಸಂಕೇತವಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆದ್ದಾರಿ ಇಲಾಖೆ ಅಧಿಕಾರಿಗಳು ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದರು. ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೃಷ್ಣ ಇನ್ನಾ, ಸಿಐಟಿಯು ದ.ಕ. ಜಿಲ್ಲಾ ಮುಖಂಡ ವಸಂತ ಆಚಾರಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಕೆ. ಯಾದವ ಶೆಟ್ಟಿ ಮಾತನಾಡಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಮಾರ್ಗದರ್ಶಕ ಯೋಗೀಶ್ ಜಪ್ಪಿನ ಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಕೋರ್ ಗ್ರೂಪ್ನ ಸದಸ್ಯರಾದ ರವೀಂದ್ರ ವಾಮಂಜೂರು, ವಿಕಾಸ್, ಮಂಜುಳಾ, ಶೇಖರ ವಾಮಂಜೂರು, ಜಯಮಧ್ಯ, ಪೂರ್ಣೇಶ್, ತುಳಸಿ, ದಿನೇಶ್, ಕೃಷ್ಣ ಕತ್ತಲ್ಸಾರ್, ವಿನೋದ್, ಪುನೀತ್, ಲಿಖಿತ್, ವಿಘ್ನೇಶ್ ವಹಿಸಿದ್ದರು.
ಆಳಂದ | ಸಂಭ್ರಮದ ಯುಗಾದಿ, ಈದ್-ಉಲ್-ಫಿತ್ರ್ ಆಚರಣೆ
ಕಲಬುರಗಿ: ಆಳಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾನುವಾರ ಯುಗಾದಿ ಹಬ್ಬವನ್ನು ಆಚರಿಸಿದರೆ ಸೋಮವಾರ ಈದ್-ಉಲ್-ಫಿತ್ರ್ ಹಬ್ಬವು ಸಡಗರ ಸಂಭ್ರಮದೊoದಿಗೆ ಆಚರಿಸಲಾಯಿತು. ಈದ್-ಉಲ್-ಫಿತ್ರ್ ಪ್ರಯುಕ್ತ ಸೋಮವಾರ ಬೆಳಗಿನ ಜಾವ ಆಳಂದ ಪಟ್ಟಣದ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ಪರಸ್ಪರ ಹೃದಯ ಸ್ಪರ್ಶಿಸಿ ಶುಭಾಷಯ ಕೋರಿದರು. ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ನೇತೃತ್ವದಲ್ಲಿ ಸಿಬ್ಬಂದಿಗಳು ನಾಲ್ಕು ಧಿಕ್ಕಿಗೆ ಕಾವಲು ನಿಂತು ಭದ್ರತೆ ಒದಗಿಸಿದರು. ಯುಗಾದಿ ಮತ್ತು ಈದ್-ಉಲ್-ಫಿತ್ರ್ ಹಬ್ಬವು ಏಕಕಾಲಕ್ಕೆ ಈ ಎರಡೂ ಹಬ್ಬಕ್ಕೆ ಸರ್ವ ಧರ್ಮೀಯರು ಹೃದಯ ಸ್ಪರ್ಶಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಕೆಗಳನ್ನು ಹೇಳಿಕೊಂಡಿದ್ದು ಸಾಮಾನ್ಯವಾಗಿ ಕಂಡಿತು. ಪಟ್ಟಣದಲ್ಲಿ ರಾಜ್ಯ ನೀತಿ ಆಯೋಗ ಉಪಾಧ್ಯಕ್ಷರಾದ ಶಾಸಕ ಬಿ.ಆರ್.ಪಾಟೀಲ್ ಅವರು ತಮ್ಮ ಅಭಿಮಾನಿಗಳ ಮನೆಗೆ ಭೇಟಿ ನೀಡಿ ಹಬ್ಬದ ಶುಭಾಷಯ ಕೋರಿ ಸುರಕುಂಬಾ ಸವಿದರು. ಮುಸ್ಲಿಂ ಬಾಂಧವರಿಗೆ ಗುತ್ತೇದಾರ್ ಶುಭಹಾರೈಕೆ : ತಾಲೂಕಿನ ತೆಲಾಕುಣಿ ಗ್ರಾಮದಲ್ಲಿ ಕಿಣ್ಣಿಸುಲ್ತಾನ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಿಬೂಬಭಾಷಾ ಶೇಖ್ ಅವರ ನಿವಾಸದಲ್ಲಿ ಈದ್-ಉಲ್-ಫಿತ್ರ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸೌಹಾರ್ದ ಕೂಟದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಪಾಳ್ಗೊಂಡು ಸನ್ಮಾನ ಸ್ವೀಕರಿಸಿದರು. ಈ ಬಾರಿ ಯುಗಾದಿ ಮತ್ತು ಈದ್-ಉಲ್-ಫಿತ್ರ್ ಹಬ್ಬಗಳು ಏಕಕಾಲದಲ್ಲಿ ಸಂಭ್ರಮ ಸಂಗಮವಾಗಿ ಬಂದಿರುವ ಈ ಶುಭ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ತರಲಿ ಎಂದು ಅವರು ಶುಭಕೋರಿದರು. ಈ ವೇಳೆ ಹಬ್ಬದ ವಿಶೇಷವಾದ ಸುರಕುಂಬಾ ಸವಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಬಸವರಾಜ ಕೇರೂರ, ಶ್ರೀರಾಮ ಮಂದಿರ ಕಮೀಟಿ ಏಕನಾಥ ಏಟೆ, ನಿಜಲಿಂಗಪದಪ ಮೋದೆ, ಜಾಫರ್ ಮಖಾಂದರ, ಮೋದಿನ ಜಮಾದಾರ, ಸುನಿಲ ಹಿರೋಳಿಕರ್, ಮಲ್ಲಿನಾಥ ಹತ್ತೆ, ಕಸಾಪ ಅಧ್ಯಕ್ಷ ಹಣಮಂತ ಶೇರಿ ಮತ್ತಿತರರು ಇದ್ದರು. ಗ್ರಾಪಂ ಅಧ್ಯಕ್ಷ ಮಹಿಬೂಬಭಾಷಾ ಶೇಖ್ ಸರ್ವರನ್ನು ಸ್ವಾಗತಿಸಿ ಸನ್ಮಾನಿಸಿದರು. ಶಶಿಕಾಂತ ಪಾಟೀಲ ವಂದಿಸಿದರು. ಹಬ್ಬದ ನಿಮಿತ್ತ ಎಂದಿನoತೆ ಮುಸ್ಲಿಂ ಬಾಂಧವರು ಹಿಂದೂ ಬಾಂಧವರನ್ನು ತಮ್ಮ ಮನೆಗಳಿಗೆ ಅಹ್ವಾನಿಸಿ ಸಾಂಪ್ರದಾಯಿಕ ಸುರಕುಂಬಾ ಕುಡಿಸಿ ಪರಸ್ಪರ ಆತ್ಮೀಯತೆ ಮೆರೆದರು.
ಎ.3ರಿಂದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ
ಮಂಗಳೂರು , ಎ.1: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ (ಎಫ್ಎಂಸಿಐ) ಪದವಿ ಪ್ರದಾನ ಸಮಾರಂಭ 2025ರ ಎ. 3 ರಿಂದ 5 ರವರೆಗೆ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಅವರು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 35ನೇ ಪದವಿ ಪ್ರದಾನ ಸಮಾರಂಭವು ಎ 3ರಂದು ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. ಸಂತ ಅಲೋಶಿಯೆಸ್ ಪರಿಗಣಿತ ವಿವಿ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕೋಲ್ಕತ್ತಾದ ರಾಷ್ಟ್ರೀಯ ಹೋಮಿಯೋಪತಿ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಸುಭಾಸ್ ಸಿಂಗ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಒಟ್ಟು 89 ಬಿಎಚ್ಎಂಎಸ್ ಪದವೀಧರರು ಮತ್ತು 27 ಎಂಡಿ (ಹೊಂ.) ಸ್ನಾತಕೋತ್ತರ ಪದವೀಧರರು ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದು, 17 ಮಂದಿ ರ್ಯಾಂಕ್ ವಿಜೇತರನ್ನು ಗೌರವಿಸಲಾಗುವುದು ಎಂದರು. ಎ.4 ರಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜಿನ ಪದವಿ ಪ್ರದಾನ ಸಮಾರಂಭವು ನಡೆಯಲಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಮತ್ತು ಹೊಸದಿಲ್ಲಿಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ರಾಜೀವ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂಬಿಬಿಎಸ್ 153, ಪಿಜಿ ಮೆಡಿಕಲ್ 77, ಅಲೈಡ್ ಹೆಲ್ತ್ 135 ಯುಜಿ, 40 ಪಿಜಿ, ಮತ್ತು ಫಿಸಿಯೋಥೆರಪಿ 54 ಯುಜಿ, 10 ಪಿಜಿ ಸೇರಿದಂತೆ ಒಟ್ಟು 469 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಈ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ 61 ಮಂದಿ ರ್ಯಾಂಕ್ ಪಡೆದವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು. ಎ. 5 ರಂದು ಫಾದರ್ ಮುಲ್ಲರ್ ಸ್ಕೂಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಫಾದರ್ ಮುಲ್ಲರ್ ಕಾಲೇಜ್ (ಸ್ಪೀಚ್ ಮತ್ತು ಹಿಯರಿಂಗ್)ನ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು. ಸಮಾರಂಭದಲ್ಲಿ 243 ಪದವೀಧರರು ತಮ್ಮ ಪದವಿಗಳನ್ನು ಸ್ವೀಕರಿಸಲಿರುವರು.ಈ ಕಾರ್ಯಕ್ರಮವು ನರ್ಸಿಂಗ್ ಸ್ಕೂಲ್ನ 47 ಪದವೀಧರರನ್ನು, ನರ್ಸಿಂಗ್ ಕಾಲೇಜಿನ 141 ಪದವೀಧರರನ್ನು (ಬಿ.ಎಸ್ಸಿ., ಪೋಸ್ಟ್ ಬೇಸಿಕ್ ಬಿ.ಎಸ್ಸಿ. ಮತ್ತು ಎಂ.ಎಸ್ಸಿ. ಸೇರಿದಂತೆ) ಮತ್ತು ವಾಕ್ ಮತ್ತು ಶ್ರವಣ ಕಾಲೇಜಿನ 55 ಪದವೀಧರರನ್ನು ಗೌರವಿಸಲಾಗುವುದು. ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲ ಪದವಿ ಪ್ರದಾನ ಸಮಾರಂಭಗಳ ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನಾ ವಹಿಸಲಿದ್ದಾರೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಎಫ್ಎಂಎಚ್ಸಿಆ್ಯಂಡ್ಎಚ್ ಆಡಳಿತಾಧಿಕಾರಿ ವಂ. ಫೌಸ್ಟಿನ್ ಲ್ಯೂಕಸ್ ಲೋಬೊ, ಎಫ್ಎಂಎಂಸಿ ಆಡಳಿತಾಧಿಕಾರಿ ವಂ. ಅಜಿತ್ ಬಿ. ಮಿನೇಜಸ್, ಎಫ್ಎಂಎಂಸಿಎಚ್ ಆಡಳಿತಾಧಿಕಾರಿ ವಂ. ಜಾರ್ಜ್ ಜೀವನ್ ಸಿಕ್ವೇರಾ, ಡಾ. ಇಎಸ್ಜೆ ಪ್ರಭು ಕಿರಣ್, ಡಾ. ಗಿರೀಶ್ ನಾವಡ, ರೆ|ಸಿ. ಧನ್ಯಾ ದೇವಾಸಿಯಾ, ಪ್ರೊ. ಸಿಂಥಿಯಾ ಸಾಂತ್ಮಯೋರ್, ಡಾ. ಆ್ಯಂಟನಿ ಸಿಲ್ವನ್ ಡಿ ಸೋಜ, ಡಾ.ಉದಯ್ ಕುಮಾರ್, ಡಾ. ಹಿಲ್ಡಾ ಡಿ ಸೋಜ, ಪ್ರೊ.ಚೆರಿಷ್ಮಾ ಡಿ ಸಿಲ್ವಾ , ಡಾ. ಶೆರ್ಲಿನ್, ಡಾ. ರೇಷಾಲ್ ಡಾ. ಕೆಲ್ವಿನ್ ಪಾಯ್ಸ್ , ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಬೆಂಗಳೂರು : ಹಾಲು, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ನಾಳೆ(ಎ.2) ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಎ. 5ಕ್ಕೆ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಎ.7ಕ್ಕೆ ಜನಾಕ್ರೋಶ ಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಮಂಗಳವಾರ ನಗರದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಿದೆ. ಜತೆಗೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ನಾಳೆಯೇ ವಿಧಾನಸೌಧದ ಆವರಣದಲ್ಲಿನ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ಎ.7ರಿಂದ ‘ಜನಾಕ್ರೋಶ ಯಾತ್ರೆ’: ಎ.7ರ ಮಧ್ಯಾಹ್ನ 3ಕ್ಕೆ ಮೈಸೂರಿನಿಂದ ಜನಜಾಗೃತಿ ಹೋರಾಟ ಆರಂಭವಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೋರಾಟಕ್ಕೆ ಚಾಲನೆ ಕೊಡಲಿದ್ದು, 7ಕ್ಕೆ ಮೈಸೂರು, ಚಾಮರಾಜನಗರ ಜಿಲ್ಲೆ, 8ರ ಬೆಳಗ್ಗೆ ಮಂಡ್ಯ, ಮಧ್ಯಾಹ್ನ ಹಾಸನದಲ್ಲಿ ಹೋರಾಟ ಇದೆ. 9ಕ್ಕೆ ಕೊಡಗು- ಮಂಗಳೂರಿನಲ್ಲಿ ಹೋರಾಟ, 10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ಮೊದಲ ಹಂತದ ಹೋರಾಟ ಇದೆ ಎಂದರು. ಎ.13ರಿಂದ ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಎರಡನೇ ಹಂತದ ಹೋರಾಟ ಇರುತ್ತದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಇದು ಸಂಚರಿಸಲಿದೆ. ಪ್ರತಿ ಜಿಲ್ಲೆಯಲ್ಲಿ ನಗರದಲ್ಲಿ 2-3 ಕಿಮೀ ಪಾದಯಾತ್ರೆ, ಬಳಿಕ ಸಭೆ ನಡೆಯಲಿದೆ. ಪಕ್ಷದ ಶಾಸಕರು, ಪರಿಷತ್ ಸದಸ್ಯರು, ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ರಣವೀರ್ ಅಲಹಾಬಾದಿಯಾ ಪಾಸ್ಪೋರ್ಟ್ ನೀಡಲು ಸುಪ್ರೀಂ ನಕಾರ; ಸಭ್ಯತೆ ಕಾಯ್ದುಕೊಳ್ಳುವೆ ಎಂದ ಪಾಡ್ಕಾಸ್ಟರ್
ಹಾಸ್ಯನಟ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಯೂಟ್ಯೂಬ್ ಶೋ ವೇಳೆ ಪೋಷಕರ ಲೈಂಗಿಕತೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಪಾಸ್ಪೋರ್ಟ್ ಪಡೆದು ಅವರು ವಿದೇಶಕ್ಕೆ ಹೋದರೆ ಅಶ್ಲೀಲ ಹೇಳಿಕೆ ಸಂಬಂಧಿಸಿದ ತನಿಖೆಯ ಮೇಲೆ ಪರಿಣಾಮ ಬೀರಲಿದೆ. ವಿವಾದಾತ್ಮಕ ಹೇಳಿಕೆ ಕುರಿತು ತನಿಖೆ ಪೂರ್ಣಗೊಂಡ ನಂತರ ಆರೋಪಿ ವಿದೇಶ ಪ್ರವಾಸ ಮಾಡಲು ಪಾಸ್ಪೋರ್ಟ್ ಬಿಡುಗಡೆ ಕುರಿತ ಅರ್ಜಿಯನ್ನು ನಾವು ಪರಿಗಣಿಸುತ್ತೇವೆ ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಮಿತಿ ಮುಖ್ಯಸ್ಥರಾಗಿ ಮೆಲ್ವಿನ್ ರೊಡ್ರಿಗಸ್ ನೇಮಕ
ಮಂಗಳೂರು : ಹೊಸದಿಲ್ಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಮಿತಿ ಮುಖ್ಯಸ್ಥರಾಗಿ ಕವಿ, ಸಾಹಿತಿ ಮೆಲ್ವಿನ್ ರೊಡ್ರಿಗಸ್ ಇತ್ತೀಚೆಗೆ ನೇಮಕಗೊಂಡಿದ್ದಾರೆ. 24 ರಾಷ್ಟ್ರೀಯ ಭಾಷೆಗಳ ಸಾಹಿತ್ಯದ ಶ್ರೇಯೋಭಿವೃದ್ದಿಗಾಗಿ1954 ರಿಂದ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಡಿ ಶ್ರಮಿಸುತ್ತಿರುವ ಸ್ವಾಯತ್ತ ಸಂಸ್ಥೆ ಸಾಹಿತ್ಯ ಅಕಾಡೆಮಿಯಾಗಿದೆ. ಇದರ ಪಶ್ಚಿಮ ಪ್ರಾದೇಶಿಕ ವಲಯದಲ್ಲಿ ಗುಜರಾತಿ, ಮರಾಠಿ, ಸಿಂಧಿ ಮತ್ತು ಕೊಂಕಣಿ ಭಾಷೆಗಳಿದ್ದು, ಪ್ರಸ್ತುತ ಮೆಲ್ವಿನ್ ರೊಡ್ರಿಗಸ್ ಕೊಂಕಣಿ ಭಾಷಾ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ.
ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲಿ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕೊನೆಗೂ ಬಿಜೆಪಿಯವರು ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಮನಸ್ಸು ಮಾಡಿದ್ದು ಉತ್ತಮ ಬೆಳವಣಿಗೆ. ಬಿಜೆಪಿಯವರು ಅಸಲಿಗೆ ಪ್ರತಿಭಟನೆ ನಡೆಸಬೇಕಿರುವುದು ಕೇಂದ್ರ ಸರಕಾರದ ವಿರುದ್ಧ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, ಒಂದು ವರ್ಷದಲ್ಲಿ ಒಂದು ಸಾಮಾನ್ಯ ಸಸ್ಯಾಹಾರಿ ಊಟದ ಬೆಲೆ ಶೇ.57ರಷ್ಟು ದುಬಾರಿಯಾಗಿದೆ. ತರಕಾರಿ ಹಾಗೂ ಬೇಳೆ ಕಾಳುಗಳು ಸೇರಿದಂತೆ ಅಡುಗೆಗೆ ಸಂಬಂಧಿಸಿದ ವಸ್ತುಗಳ ಬೆಲೆಗಳು ಒಂದೂವರೆ ಪಟ್ಟು ಹೆಚ್ಚಾಗಿವೆ ಎಂದು ಹೇಳಿದ್ದಾರೆ. ಪ್ರಸ್ತುತ ಕಚ್ಚಾ ತೈಲದ ಬೆಲೆ ಶೇ.34 ಇಳಿಕೆಯಾಗಿದೆ. ಆದರೆ ದೇಶದ ನಾಗರಿಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ದುಬಾರಿ ಸುಂಕ, ತೆರಿಗೆಗಳನ್ನು ವಿಧಿಸಿ 36.58 ಲಕ್ಷ ಕೋಟಿ ರೂ. ವನ್ನು ಕೇಂದ್ರ ಸರಕಾರ ಸಂಗ್ರಹಿಸಿದೆ. ಆರೋಗ್ಯ ಕ್ಷೇತ್ರದ ಹಣದುಬ್ಬರ ಶೇ.14 ಹೆಚ್ಚಿದೆ, ಸಾಮಾನ್ಯ ಔಷಧಗಳ ಬೆಲೆಯೂ ಅಧಿಕವಾಗಿ ಹೆಚ್ಚಳವಾಗಿದೆ. ಜೀವ ವಿಮೆ, ಆರೋಗ್ಯ ವಿಮೆಗಳ ಮೇಲೂ ಶೇ.18 ಜಿಎಸ್ಟಿ ಹೇರಲಾಗಿದೆ. ಮೊದಲ ಬಾರಿಗೆ ಕೃಷಿ ಉತ್ಪನ್ನಗಳಿಗೂ ಜಿಎಸ್ಟಿ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕೊನೆಗೂ ಬಿಜೆಪಿಯವರು ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಮನಸು ಮಾಡಿದ್ದು ಉತ್ತಮ ಬೆಳವಣಿಗೆ! ಬಿಜೆಪಿಯವರು ಅಸಲಿಗೆ ಮಾತನಾಡಬೇಕಿರುವುದು ಜನಾಕ್ರೋಶ ಪ್ರತಿಭಟನೆ ನಡೆಸಬೇಕಿರುವುದು ಕೇಂದ್ರ ಸರ್ಕಾರದ ವಿರುದ್ಧ. - ಕಳೆದ ಒಂದು ವರ್ಷದಲ್ಲಿ ಒಂದು ಸಾಮಾನ್ಯ ಸಸ್ಯಾಹಾರಿ ಊಟದ ಬೆಲೆ 57%ನಷ್ಟು ದುಬಾರಿಯಾಗಿದೆ. - ತರಕಾರಿ ಹಾಗೂ ಬೇಳೆ ಕಾಳುಗಳು… — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 1, 2025 ಎಪ್ರಿಲ್ನಿಂದ ಎಟಿಎಂ ಶುಲ್ಕಗಳನ್ನೂ ಏರಿಸುತ್ತಿದೆ ಕೇಂದ್ರ ಸರಕಾರ. 2018ರಿಂದ 2024ರವರೆಗೆ ಕನಿಷ್ಠ ಠೇವಣಿ ನಿರ್ವಹಿಸದ ದಂಡವಾಗಿ ಬಡ ಜನರಿಂದ 43,500 ಕೋಟಿ ರೂ. ಹಣ ಲೂಟಿಗೈದಿದೆ. ಅಕ್ಕಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಶೇ.70 ರಿಂದ ಶೇ.80ನಷ್ಟು ದುಪ್ಪಟಾಗಿವೆ ಎಂದು ಹೇಳಿದ್ದಾರೆ. 100 ಕೋಟಿಗೂ ಅಧಿಕ ಭಾರತೀಯರಿಗೆ ಅಗತ್ಯ ಸೇವೆಗಳಿಗೆ ಖರ್ಚು ಮಾಡಲಾಗದಷ್ಟು ಖರೀದಿ ಸಾಮಥ್ರ್ಯ ಕುಸಿದಿದೆ ಎಂದು ಬ್ಲೂಮ್ ವರದಿ ಮಾಡಿದೆ. ಟೋಲ್ ದರ ಏರಿಕೆಯು ಭಾರತೀಯರನ್ನು ಕಂಗಾಲಾಗಿಸಿದೆ. ಗ್ಯಾಸ್ ಸಿಲಿಂಡರ್ ದರ ಜನರನ್ನು ಒಲೆ ಹಚ್ಚದೆಯೇ ಸುಡುತ್ತಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರಕಾರದ ಕಳಪೆ ಆರ್ಥಿಕ ನೀತಿಯಿಂದಾಗಿ ಹಣದುಬ್ಬರವು ಗಣನೀಯ ಏರಿಕೆಯಾಗಿದೆ, ಇದಕ್ಕೆ ಸರಿ ಹೊಂದಿಸಲು ಅನಿವಾರ್ಯವಾಗಿ ನಮ್ಮ ಸರಕಾರ ಕೆಲವೊಂದಿಷ್ಟು ಬೆಲೆಗಳನ್ನು ಪರಿಷ್ಕರಿಸಿದೆ. ಆದರೆ ಅದಕ್ಕೆ ಮೂಲ ಕಾರಣ ಕೇಂದ್ರ ಸರಕಾರ. ಬಿಜೆಪಿ ನಾಯಕರು ಜನರ ಎದೆಗೆ ಕಿವಿಗೊಟ್ಟರೆ ಆ ಆಕ್ರೋಶ ಕೇಳಿಸಲಿದೆ ಎಂದು ತಿಳಿಸಿದ್ದಾರೆ.
ಕೆದಕಿದರೆ ಪ್ರತಿಯೊಬ್ಬರ ಬದುಕಿನಲ್ಲೂ ಒಂದೊಂದು ಕತೆಯಿರುತ್ತದೆ. ಒಬ್ಬರ ಬದುಕಿನ ಕತೆ ಮತ್ತೊಬ್ಬರಿಗೆ ಸ್ಪೂರ್ತಿಯೂ ಆಗುತ್ತದೆ. ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಯುವ ಬ್ಯಾಟರ್ ಅನಿಕೇತ್ ವರ್ಮಾ ಅವರ ಬಗ್ಗೆ ಕ್ರಿಕೆಟ್ ಜಗತ್ತಿಗೆ ತಿಳಿದಿರದ ಹಲವು ಸಂಗತಿಗಳನ್ನು ಅವರ ಮಾವ ಅಮಿತ್ ವರ್ಮಾ ಬಹಿರಂಗಗೊಳಿಸಿದ್ದಾರೆ. ಬದುಕು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಅನಿತೇಕ್ ಗೂ ಬಾಲ್ಯ ಸುಲಭವಿದ್ದಿರಲಿಲ್ಲ. ಅವರಿಗೆ ಸಾಧನೆಯ ಹಿಂದಿರುವುದು ಅವರನ್ನು ಸಾಕಿ ಸಲಹಿದ ಅಜ್ಜಿ ಮತ್ತು ತನ್ನೆಲ್ಲಾ ಕಷ್ಟಗಳಲ್ಲೂ ಜೊತೆಗೆ ನಿಂತು ಪ್ರೋತ್ಸಾಹಿಸಿದ್ದ ಮಾವ. ಹೀಗಿದೆ ಅನಿಕೇತ್ ವರ್ಮಾ ಬದುಕಿನ ಕತೆ.
ಸುರತ್ಕಲ್: ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಸೇರಿ ನಾಲ್ವರಿಗೆ ಮುಖ್ಯಮಂತ್ರಿ ಪದಕ
ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಸೇರಿ ನಾಲ್ವರಿಗೆ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪಟ್ಟಿಗೆ ಆಯ್ಕೆಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ಸೇವೆಯನ್ನು ಪರಿಗಣಿಸಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ನಾಯ್ಕ್, ಹೆಡ್ ಕಾಸ್ಟೇಬಲ್ಗಳಾದ ಉಮೇಶ್ ಮತ್ತು ಅಣ್ಣಪ್ಪ ವಂಡ್ಸೆ ಈ ಬಾರಿ ಮುಖ್ಯ ಮಂತ್ರ ಪದಕಕ್ಕೆ ಬಾಜನರಾಗಿದ್ದಾರೆ. ಮುಖ್ಯಮಂತ್ರಿ ಪದಕ ಪುರಸ್ಕೃತ ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗೆ ಸಮಾನ ಮನಸ್ಕ ಸಂಘಟನೆಗಳು ಅಭಿನಂದಿಸಿದೆ.
ವಿಶ್ವ ಬಾಕ್ಸಿಂಗ್ ಕಪ್ 2025 | ಸೋಲಿನೊಂದಿಗೆ ಭಾರತದ ಅಭಿಯಾನ ಆರಂಭ
ಫೋಝ್ ಡೂ ಈಗ್ವಾಸೂ (ಬ್ರೆಝಿಲ್): ಲಕ್ಷ್ಯ ಚಾಹರ್ರ ಸೋಲಿನೊಂದಿಗೆ ಭಾರತವು ತನ್ನ ವಿಶ್ವ ಬಾಕ್ಸಿಂಗ್ ಕಪ್ 2025 ಅಭಿಯಾನವನ್ನು ನಿರಾಶಾದಾಯಕವಾಗಿ ಆರಂಭಿಸಿದೆ. ಚಾಹರ್ ರನ್ನು 80 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬ್ರೆಝಿಲ್ ನ ವಾಂಡರ್ಲಿ ಪೆರೇರ 5-0 ಅಂಕಗಳಿಂದ ಸೋಲಿಸಿದರು. ಹಾಲಿ ರಾಷ್ಟ್ರೀಯ ಲೈಟ್ ಹೆವಿವೇಟ್ ಚಾಂಪಿಯನ್ ಚಾಹರ್, ಪೆರೇರರಿಂದ ಕಠಿಣ ಸವಾಲನ್ನು ಎದುರಿಸಿದರು. ಪೆರೇರ 2023ರ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತರಾಗಿದ್ದಾರೆ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ. ಪೆರೇರ ಅವರು ಚಾಹರ್ರನ್ನು ಸಮಗ್ರವಾಗಿ ಸೋಲಿಸಿದರು. ಒಬ್ಬರನ್ನು ಹೊರತುಪಡಿಸಿ ಎಲ್ಲಾ ತೀರ್ಪುಗಾರರು ಅವರಿಗೆ 30 ಅಂಕಗಳನ್ನು ನೀಡಿದರು. ಅವರು 150 ಅಂಕಗಳ ಪೈಕಿ 149 ಅಂಕಗಳನ್ನು ಗಳಿಸಿದರು. ಚಾಹರ್ 135 ಅಂಕಗಳನ್ನು ಪಡೆದರು. ವಿಶ್ವ ಬಾಕ್ಸಿಂಗ್ ಕಪ್ನಲ್ಲಿ ಈ ಸೋಲು ಭಾರತಕ್ಕೆ ಸವಾಲಿನ ಆರಂಭವನ್ನು ಒದಗಿಸಿದೆ. ಇದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಫೆಬ್ರವರಿಯಲ್ಲಿ ವಿಶ್ವ ಬಾಕ್ಸಿಂಗ್ ಗೆ ತಾತ್ಕಾಲಿಕ ಮಾನ್ಯತೆಯನ್ನು ನೀಡಿದ ಬಳಿಕ ಅದು ನಡೆಸುತ್ತಿರುವ ಮೊದಲ ಪಂದ್ಯಾವಳಿಯಾಗಿದೆ. ಅದೂ ಅಲ್ಲದೆ, ಹೊಸ ತೂಕ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಬಾಕ್ಸರ್ ಗಳಿಗೆ ಈ ಪಂದ್ಯಾವಳಿಯು ಮೊದಲ ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದೆ.
ಉಳ್ಳಾಲ: ಮಾಡೂರಿನ ಜನತೆಯ ಬಹು ಬೇಡಿಕೆಯಾಗಿದ್ದ ಸರಕಾರಿ ಶಾಲೆಯನ್ನು ಆಂಗ್ಲಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಶಾಸಕ ಹಾಗೂ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಗ್ರೀನ್ ಸಿಗ್ನಲ್ ನೀಡಿದ್ದು, ತನ್ನ ವೇತನದಿಂದ ಒಂದು ಲಕ್ಷ ರೂ.ವನ್ನು ಆಂಗ್ಲಮಾಧ್ಯಮ ಶಾಲೆಯ ಕಾರ್ಯ ನಿರ್ವಹಣೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಸರಕಾರಿ ಶಾಲೆ ಉನ್ನತೀಕರಣದ ಪ್ರಸ್ತಾವ ಕೇಳಿಬಂದ ಹಿನ್ನೆಲೆಯಲ್ಲಿ ಮಾಡೂರು ಶಾಲೆಯಲ್ಲಿ , ಅಭಿವೃದ್ಧಿ ಸಮಿತಿಯೊಂದಿಗೆ ಎರಡನೇ ಬಾರಿ ಸಭೆ ನಡೆಸಿದ ಅವರು ಆಂಗ್ಲ ಮಾಧ್ಯಮ ಶಾಲೆ ಆರಂಭಿ ಸುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪೂರಕ ದಾಖಲೆಗಳೆಲ್ಲವನ್ನು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸಿದ್ಧಪಡಿಸುವುದಾಗಿ ತಿಳಿಸಿದ ಅವರು ಎಲ್ ಕೆ.ಜಿ ,ಯುಕೆಜಿ ಹಾಗೂ ಒಂದನೇ ತರಗತಿಗೆ ದಾಖಲಾತಿಗಳನ್ನು ಆರಂಭಿಸುವಂತೆ ತಿಳಿಸಿದ್ದಾರೆ. ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಕರ್ತವ್ಯ, ವಿದ್ಯಾರ್ಥಿಗಳ ಸಂಖ್ಯೆಯನ್ನು ಸಮಿತಿ, ಶಿಕ್ಷಕ ವೃಂದದೊಂದಿಗೆ ಚರ್ಚಿಸಿ ನಿಗದಿ ಪಡಿಸಬೇಕು. ಎಲ್ ಕೆ.ಜಿ , ಯುಕೆಜಿಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸೂಚಿಸಿದರು. ಸಮಿತಿ ರಚಿಸಿ ಶಿಕ್ಷಕರಿಗೆ ಎಷ್ಟು ವೇತನ ಜೋಡಿಸ ಬಹುದು ಅನ್ನುವ ಚರ್ಚೆ ನಡೆಸಬೇಕಿದೆ. ಕೊಠಡಿಗಳನ್ನು ಕಡಿಮೆ ಖರ್ಚಿನಲ್ಲಿ ಆಕರ್ಷಕ ವಾಗಿ ಪೇಟಿಂಗ್ ಮಾಡಬೇಕು. ಎಲ್ಲರೂ ತಂಡವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಖಂಡಿತ. ಒಂದನೇ ತರಗತಿ ಆರಂಭಿಸಲು ಕೆಲವೊಂದು ಸಮಸ್ಯೆ ಗಳಿವೆ. ಆದರೆ ಅದರ ಬಗ್ಗೆ ನಾನು ಶಿಕ್ಷಣ ಸಚಿವರ ಜೊತೆ ಹಾಗೂ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಸಮಿತಿ ಹಾಗೂ ಊರಿನವರು ಸೇರಿಸಿ ದಾನಿಗಳಿಂದ ಹಣ ಸಂಗ್ರಹಿಸಿ ಒಂದು ವರ್ಷದ ಬಜೆಟ್ ನಡೆಸಿ ಎಲ್ಲಾ ಖರ್ಚುವೆಚ್ಚಗಳ ಪಟ್ಟಿಯನ್ನು ಮಾಡಬೇಕು ಎಂದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೊಳಿಯಾರ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಜೀಝ್ ಮಾಡೂರು, ಕಾಂಗ್ರೆಸ್ ಕೋಟೆಕಾರು ಸಮಿತಿ ಅಧ್ಯಕ್ಷ ಸುಕುಮಾರ್ ಗಟ್ಟಿ, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷೆ ಸುರೇಖ ಚಂದ್ರಹಾಸ್, ಚಂದ್ರಿಕಾ ರೈ, ಕೌನ್ಸಿಲಾರಾದ ಸುಜೀತ್ ಮಾಡೂರು, ಬಶೀರ್, ಅಹಮ್ಮದ್ ಭಾವ, ಇಶಾಕ್ , ಮೊಹಮ್ಮದ್ ದೇರಳಕಟ್ಟೆ , ಮಾಜಿ ಕೌನ್ಸಿಲರಾದ ಹಮೀದ್ ಹಸನ್, ನಾಮ ನಿದೇರ್ಶಿತ ಸದಸ್ಯರಾದ ಸಫಿಯಾ, ಗಫೂರು ಮಾಡೂರು , ಕ್ಷೇತ್ರ ಶಿಕ್ಷಣಾಧಿ ಕಾರಿ ಎಚ್ ಆರ್ ಈಶ್ವರ್ ,ಕ್ಷೇತ್ರ ಸಮನ್ವಯ ಅಧಿಕಾರಿ ಸುಶ್ಮಾ ವಿ ಕಿಣಿ, ಶಿಕ್ಷಣ ಸಂಯೋಜಕಿ ಅನ್ನಪೂರ್ಣ ಬುಚ್ಚಾನ್ ಉಪಸ್ಥಿತರಿದ್ದರು.
ಕಳೆದ 38 ವರ್ಷದಿಂದ ಮಾಗಡಿಯ ಈ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಎಕ್ಸಾಂ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಊಟ!
ಮಾಗಡಿ ಗ್ರಾಮಾಂತರದ ತಿಪ್ಪಸಂದ್ರ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದೂರದೂರುಗಳಿಂದ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಈ ಪ್ರೌಢಶಾಲೆಯಲ್ಲಿ ಈ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದರ ವಿಶೇಷವೇನೆಂದರೆ, ಕಳೆದ 38 ವರ್ಷಗಳಿಂದ ದಾನಿಗಳ ಉದಾತ್ತ ನೆರವಿನಿಂದಾಗಿ ಈ ಸೇವೆ ನಡೆಯುತ್ತಾ ಬಂದಿದೆ.
'ಎಚ್ಡಿ ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ' - ಮಧ್ಯಂತರ ಆದೇಶ ಮುಂದುವರಿಸಿದ ಹೈಕೋರ್ಟ್
HD Kumaraswamy Land Encroachment Case : ಬಿಡದಿಯ ಕೇತಗಾನಹಳ್ಳಿ ಬಳಿಯ ಭೂಮಿ ಒತ್ತುವರಿ ಕೇಸ್ಗೆ ಸಂಬಂಧಿಸಿದಂತೆ ಎಚ್ಡಿ ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಸದ್ಯ ಆ ಆದೇಶವನ್ನು ಮುಂದುವರೆದಿದೆ. ಈ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ಬಗ್ಗೆ ವಿವರ ಇಲ್ಲಿದೆ.
ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ಯೋಜನೆ ವಿರುದ್ಧ ತುಷಾರ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಹೊಸದಿಲ್ಲಿ: ಅಹ್ಮದಾಬಾದ್ ನಲ್ಲಿ ಮಹಾತ್ಮಾ ಗಾಂಧಿಯವರು ಸ್ಥಾಪಿಸಿದ ಸಾಬರಮತಿ ಆಶ್ರಮವನ್ನು ಪುನರಾಭಿವೃದ್ಧಿಗೊಳಿಸುವ ಗುಜರಾತ್ ಸರಕಾರದ ಯೋಜನೆಯನ್ನು ಪ್ರಶ್ನಿಸಿ ಗಾಂಧೀಜಿಯವರ ಮರಿಮೊಮ್ಮಗ ತುಷಾರ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ. ಈ ವಿಷಯದಲ್ಲಿ ತುಷಾರ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ 2022ರ ಗುಜರಾತ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಲ್ಲಿ ಸುಮಾರು ಎರಡೂವರೆ ವರ್ಷಗಳ ವಿಳಂಬವನ್ನು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ರಾಜೇಶ ಬಿಂಡಲ್ ಅವರ ಪೀಠವು ಉಲ್ಲೇಖಿಸಿತು. ಗಾಂಧಿ ಆಶ್ರಮ ಎಂದೂ ಕರೆಯಲಾಗುವ ಸಾಬರಮತಿ ಆಶ್ರಮವನ್ನು ಮಹಾತ್ಮಾ ಗಾಂಧಿಯವರು 1917ರಲ್ಲಿ ಸ್ಥಾಪಿಸಿದ್ದರು. ಆಶ್ರಮದ ಪುನರಾಭಿವೃದ್ಧಿಗಾಗಿ ಗುಜರಾತ್ ಸರಕಾರದ ಪ್ರಸ್ತಾವಿತ 1,200 ಕೋ.ರೂ.ಗಳ ಯೋಜನೆಯು ಶತಮಾನದಷ್ಟು ಹಳೆಯದಾದ ಆಶ್ರಮದ ಸ್ವರೂಪವನ್ನೇ ಬದಲಿಸುತ್ತದೆ ಮತ್ತು ಅದರ ತತ್ವಗಳನ್ನು ಕಳಂಕಿತಗೊಳಿಸಲಿದೆ ಎಂದು ತನ್ನ ಅರ್ಜಿಯಲ್ಲಿ ವಾದಿಸಿದ್ದ ತುಷಾರ ಗಾಂಧಿ, ಯೋಜನೆಯಲ್ಲಿ ಸಂರಕ್ಷಿಸಲಾಗುವ 40 ಕಟ್ಟಡಗಳನ್ನು ಗುರುತಿಸಲಾಗಿದ್ದು,ಉಳಿದ ಸುಮಾರು 200 ನಿರ್ಮಾಣಗಳನ್ನು ನಾಶಗೊಳಿಸಲಾಗುತ್ತದೆ ಅಥವಾ ಮರುನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ್ದರು. ರಾಜ್ಯ ಸರಕಾರವು ಭರವಸೆ ನೀಡಿದ್ದರೂ ಆಶ್ರಮದ ಮುಖ್ಯ ಪ್ರದೇಶವು ಹಾನಿಗೀಡಾಗಬಹುದು ಎಂಬ ಆತಂಕವಷ್ಟೇ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲು ಸಿಂಧುವಾದ ಕಾರಣವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು. ಆಶ್ರಮದ ಅಸ್ತಿತ್ವದಲ್ಲಿರುವ ರಚನೆಗೆ ಹಾನಿಯನ್ನುಂಟು ಮಾಡುವುದಿಲ್ಲ ಅಥವಾ ಬದಲಿಸುವುದಿಲ್ಲ ಎಂದು ರಾಜ್ಯ ಸರಕಾರವು ನೀಡಿದ್ದ ಭರವಸೆಯನ್ನು 2022ರಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವು ಒಪ್ಪಿಕೊಂಡಿತ್ತು. ಪ್ರಸ್ತಾವಿತ ಯೋಜನೆಯು ಮಹಾತ್ಮಾ ಗಾಂಧಿಯವರ ಪರಿಕಲ್ಪನೆಗಳು ಮತ್ತು ಚಿಂತನೆಗಳಿಗೆ ಪ್ರಚಾರ ನೀಡುವುದು ಮಾತ್ರವಲ್ಲ,ಅದು ಸಮಾಜಕ್ಕೂ ಮನುಕುಲಕ್ಕೂ ಲಾಭದಾಯಕವಾಗಲಿದೆ ಎಂದು ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು.
ಒಳಮೀಸಲಾತಿಗಾಗಿ ವಿಸ್ತ್ರತ ಸಮೀಕ್ಷೆಗೆ ಪರಿಶಿಷ್ಟರ ಮಹಾ ಒಕ್ಕೂಟ ಆಗ್ರಹ
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿತ 101 ಜಾತಿಗಳ ಜನರ ಸಾಮಾಜಿಕ - ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಗತಿ ಬಗ್ಗೆ ನಿಖರವಾದ ಯಾವುದೇ ಡೇಟಾ ಇಲ್ಲದಿರುವುದ ರಿಂದ, ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಬಗ್ಗೆ ಶಿಫಾರಸ್ಸು ಮಾಡಲು ರಚಿಸಲಾದ ನ್ಯಾ. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವೇ ಸ್ವತ ವಿಸ್ತ್ರತ ಸಮೀಕ್ಷೆ ನಡೆಸಬೇಕು ಎಂಬ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ - ಸಂಸ್ಥೆಗಳ ಮಹಾಒಕ್ಕೂಟವು ರಾಜ್ಯ ಸರಕಾರವನ್ನು ಆಗ್ರಹಿಸಿದೆ. ಬೇಡಿಕೆಗೆ ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಸರಕಾರವು ಅದನ್ನು ಅಂಗೀಕರಿಸಿ, ಹೊಸ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಿದೆ. ಇದು ಮಹಾಒಕ್ಕೂಟದ ನ್ಯಾಯಯುತ ಹೋರಾಟಕ್ಕೆ ಸಂದ ಮೊದಲ ವಿಜಯ. ಇದನ್ನು ಮಹಾ ಒಕ್ಕೂಟ ಸ್ವಾಗತಿಸಿದೆ ಎಂದು ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ತಿಳಿಸಿದ್ದಾರೆ. ಒಳಮೀಸಲಾತಿಗೆ ಅಗತ್ಯವಾದ ನ್ಯಾಯ ಸಮ್ಮತ ವರ್ಗೀಕರಣ ಮಾಡಲು ಆಯೋಗವೇ ಹೊಸತಾಗಿ 101 ಜಾತಿಗಳ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಸ್ವತಃ ಕೈಗೆತ್ತಿಗೊಳ್ಳಬೇಕು ಎಂದು ಮಹಾಒಕ್ಕೂಟವು ಮಾ.31 ರಂದು ಮಹಾಒಕ್ಕೂಟದ ನಿಯೋಗ ನ್ಯಾ. ನಾಗಮೋಹನ್ ದಾಸ್ಅವರನ್ನು ಆಯೋಗದ ಬೆಂಗಳೂರು ಕಚೇರಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿದೆ. ಸರಕಾರಿ ಆಡಳಿತಯಂತ್ರದ ನೆರವಿನೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಮೀಕ್ಷೆ ನಡೆಸುವುದಕ್ಕೆ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಮಿತಿ ರಚನೆಗೆ ಕೂಡಾ ಸಚಿವ ಸಂಪುಟ ಒಪ್ಪಿಗೆ ನೀಡಿರುವುದರಿಂದ, ಈ ಹೊಸ ಸಮೀಕ್ಷೆಗಾಗಿ ಸಿದ್ಧಪಡಿಸುವ ಪ್ರಶ್ನಾವಳಿಯಲ್ಲಿ 101 ಜಾತಿಗಳಿಗೆ ಸೇರಿದ ಜನರಲ್ಲಿ ಯಾವ್ಯಾವ ವೃತ್ತಿಗಳಲ್ಲಿ ಎಷ್ಟೆಷ್ಟು ಶೇಕಡಾ ಜನರು ಕೆಲಸ ಮಾಡುತ್ತಿದ್ದಾರೆ? ಅವರ ಕೌಟುಂಬಿಕ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿನ್ನೆಲೆ ಏನು? ಯಾವ್ಯಾವ ಆರ್ಥಿಕ ಹಿನ್ನೆಲೆಯ ಮಕ್ಕಳು ಯಾವ್ಯಾವ ಶಿಕ್ಷಣ ಸಂಸ್ಥೆಗಳಲ್ಲಿ, ಎಂತಹ ಶಿಕ್ಷಣ ಪಡೆಯುತ್ತಿದ್ದಾರೆ? ಯಾರ ಉದ್ಯೋಗ ಏನು? ಕುಟುಂಬಗಳ ವಾರ್ಷಿಕ ಆದಾಯ ಎಷ್ಟು? ಎಂಬಿತ್ಯಾದಿಯಾಗಿ 101 ಜಾತಿಗಳಿಗೆ ಸೇರಿದ ಎಲ್ಲ ವರ್ಗಗಳ ಬದುಕಿಗೆ ಸೇರಿದ ಎಲ್ಲ ಅಂಶಗಳ ಬಗ್ಗೆ ಡೇಟಾ ಸಂಗ್ರಹಿಸಬೇಕು ಮತ್ತು ಹೀಗೆ ಸಂಗ್ರಹವಾದ ಡೇಟಾ ವನ್ನು ಸರಕಾರ / ಆಯೋಗ ಬಹಿರಂಗ ಪಡಿಸ ಬೇಕು ಎಂದು ಮಹಾ ಒಕ್ಕೂಟ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ನ್ಯಾ. ನಾಗಮೋಹನ್ ದಾಸ್ ಅವರನ್ನು ಆಗ್ರಹಿಸಿದೆ . *ಕಾಂತರಾಜ್ ವರದಿ ಬಹಿರಂಗ ಮಾಡಿ:2015 ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವೇ ನೇಮಿಸಿರುವ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು, ಸುಮಾರು 167 ಕೋಟಿ ರೂ ಖರ್ಚು ಮಾಡಿ ನಡೆಸಿರುವ, ರಾಜ್ಯದ ಎಲ್ಲ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿಯನ್ನು ಈ ಕೂಡಲೇ ಬಹಿರಂಗ ಗೊಳಿಸಬೇಕು ಎಂದು ಮಹಾಒಕ್ಕೂಟ ಸರಕಾರವನ್ನು ಆಗ್ರಹಿಸಿದೆ ಎಂದು ಲೋಲಾಕ್ಷ ಹೇಳಿದ್ದಾರೆ.
ನೆತನ್ಯಾಹು ಬಂಧಿಸುವಂತೆ ಹಂಗರಿಗೆ ಆಮ್ನೆಸ್ಟಿ ಆಗ್ರಹ
ಲಂಡನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರ ಹಂಗರಿಗೆ ಭೇಟಿ ನೀಡಲಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ, ಅವರನ್ನು ಬಂಧಿಸುವಂತೆ ಆಮ್ನೆಸ್ಟಿ ಇಂಟರ್ನ್ಯಾಷನಲ್ ಹಂಗರಿ ರಾಷ್ಟ್ರದ ಪ್ರಧಾನಿ ವಿಕ್ಟರ್ ಆರ್ಬನ್ರನ್ನು ಆಗ್ರಹಿಸಿದೆ. ಗಾಝಾದಲ್ಲಿ ಇಸ್ರೇಲ್ ನ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ನೆತನ್ಯಾಹು ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ನವೆಂಬರ್ನಲ್ಲಿ ಬಂಧನ ವಾರಾಂಟ್ ಜಾರಿಗೊಳಿಸಿದೆ. ಐಸಿಸಿಯ ಸದಸ್ಯನಾಗಿರುವುದರಿಂದ ಹಂಗರಿ ಐಸಿಸಿ ಹೊರಡಿಸಿದ ಬಂಧನ ವಾರಂಟ್ ಅನ್ನು ಜಾರಿಗೊಳಿಸಬೇಕಿದೆ. ಆದರೆ ನೆತನ್ಯಾಹು ಅವರ ನಿಕಟ ಮಿತ್ರನಾಗಿರುವ ಆರ್ಬನ್, ತಾನು ವಾರಾಂಟ್ ಜಾರಿಗೊಳಿಸುವುದಿಲ್ಲ ಎಂದಿದ್ದಾರೆ. ನೆತನ್ಯಾಹು ಆಪಾದಿತ ಯುದ್ದಾಪರಾಧಿ. ಹಸಿವನ್ನು ಯುದ್ಧ ವಿಧಾನವಾಗಿ ಬಳಸಿದ, ಉದ್ದೇಶಪೂರ್ವಕವಾಗಿ ನಾಗರಿಕರ ಮೇಲೆ ದಾಳಿ ಮಾಡಿದ, ಕೊಲೆ, ಕಿರುಕುಳ ಮತ್ತು ಇತರ ಅಮಾನವೀಯ ಕೃತ್ಯಗಳ ಆರೋಪ ಎದುರಿಸುತ್ತಿದ್ದಾರೆ. ಐಸಿಸಿಯ ಸದಸ್ಯ ರಾಷ್ಟ್ರವಾಗಿ ಹಂಗರಿ ನೆತನ್ಯಾಹುರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಬದ್ಧವಾಗಿದೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಅಧಿಕಾರಿ ಎರಿಕಾ ಗ್ವುವೆರಾ-ರೊಸಾಸ್ ಹೇಳಿದ್ದಾರೆ.
ಮಣಿಪಾಲ: ಐಟಿಐ ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ
ಉಡುಪಿ, ಎ.1: ಮಣಿಪಾಲದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ನಲ್ಲಿ ಸಿಡಿಎಸ್ಎಲ್ ಇನ್ವೆಸ್ಟರ್ ಪ್ರೆಟೆಕ್ಷನ್ ಫಂಡ್ (ಸಿಡಿಎಸ್ಎಲ್ ಐಪಿಎಫ್) ಸಂಸ್ಥೆಯು ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳು ಆರ್ಥಿಕ ಸಾಕ್ಷರತೆ ಗಳಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಮೂಲಕ ಹೂಡಿಕೆದಾರರಿಗೆ ಮೂಲಧನ ಮಾರುಕಟ್ಟೆಯಲ್ಲಿ ತಮ್ಮ ಹೂಡಿಕೆಗಳ ಕುರಿತು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನೆರವಾಗಲಿದೆ. ಜೊತೆಗೆ ಹೂಡಿಕೆಯ ಮೂಲಭೂತ ತತ್ವಗಳನ್ನು ವಿವರಿಸಲಾಯಿತು. ವಿದ್ಯಾರ್ಥಿಗಳಿಗೆ ಹೂಡಿಕೆಯ ಪರಿಕಲ್ಪನೆಗಳನ್ನು ಸರಳ ಕನ್ನಡದಲ್ಲೇ ತಿಳಿಸಲಾಯಿತು. ಮೂಲಧನ ಮಾರುಕಟ್ಟೆ ಮತ್ತು ಡಿಪಾಸಿಟರಿ ಸೇವೆಗಳ ಪ್ರಾಥಮಿಕ ಪರಿಚಯ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರವಾಗಿ ಮಾತನಾಡಿದರು. ಹೂಡಿಕೆದಾರರಿಗೆ ಶಿಕ್ಷಣ ಒದಗಿಸುವ ಈ ಕ್ರಮವು ಮೂಲಧನ ಮಾರುಕಟ್ಟೆಯಲ್ಲಿ ಆರ್ಥಿಕ ಒಳಗೊಳ್ಳು ವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಿಡಿಎಸ್ಎಲ್ ಐಪಿಎಫ್ ಸಂಸ್ಥೆಯು ಈ ಮೂಲಕ ಹೂಡಿಕೆದಾರರಿಗೆ ಮೂಲಧನ ಮಾರುಕಟ್ಟೆಯ ಸವಾಲುಗಳನ್ನು ಆತ್ಮವಿಶ್ವಾಸದಿಂದ ನಿಭಾಯಿ ಸಲು ಮತ್ತು ಆತ್ಮನಿರ್ಭರ ಹೂಡಿಕೆದಾರ ಆಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆ ವಿವರಿಸಿದೆ.
ಎ.18ರಂದು ಕನ್ನಡ ಚಿತ್ರ ‘ಕೋರ’ ಬಿಡುಗಡೆ
ಉಡುಪಿ, ಎ.1: ರತ್ನಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ ಮೂರ್ತಿ ನಿರ್ಮಿಸಿ, ಒರಟ ಶ್ರೀ ನಿರ್ದೇಶಿಸಿದ ‘ಕೋರ’ ಚಿತ್ರ ಇದೇ ಎ.18ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಪಿ.ಮೂರ್ತಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಮಾಹಿತಿಗಳನ್ನು ಹಂಚಿಕೊಂಡ ಅವರು, ರಿಯಾಲಿಟಿ ಶೋ ಖ್ಯಾತಿ ಪಡೆದಿರುವ ಸುನಾಮಿ ಕಿಟ್ಟಿ ಈ ಚಿತ್ರದ ನಾಯಕ ನಟರಾಗಿ ನಟಿಸಿದ್ದಾರೆ ಎಂದರು. ಕೊರಗಜ್ಜನ ಆಶೀರ್ವಾದದಿಂದ ಆರಂಭವಾದ ಚಿತ್ರ ಕೋರ. ಇದು ನಮ್ಮ ನೆಲದ ಕಥೆ. ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ ಕುರಿತಾದ ಕಥೆಯೂ ಕೂಡಾ ಆಗಿದೆ. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ. ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಮೊದಲಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ ಎಂದರು. ಚಿತ್ರದಲ್ಲಿ ತಾನೂ ಕೂಡಾ ಕಠೋರ ಎಂಬ ಪಾತ್ರ ನಿರ್ವಹಿಸಿದ್ದಾಗಿ ತಿಳಿಸಿದ ಮೂರ್ತಿ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಕನ್ನಡಿಗರು ಚಿತ್ರವನ್ನು ನೋಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ನಿರ್ದೇಶಕ ಒರಟಶ್ರೀ ಮಾತನಾಡಿ, ಕೋರ 90 ವರ್ಷಗಳ ಹಿಂದೆ ಪ್ರಕೃತಿಯನ್ನು ದೇವರೆಂದು ಪೂಜಿಸು ತ್ತಿದ್ದ ಕಥೆ. ಈಗ, ಒಂದು ಸಣ್ಣ ಭೂಮಿಗೆ ಸಹ ಸಂಘರ್ಷ ನಡೆಯುತ್ತದೆ. ಇದು ವಿಶಿಷ್ಟ ವಿಷಯವನ್ನು ಹೊಂದಿ ರುವ ಕಮರ್ಷಿಯಲ್ ಚಿತ್ರ. ಇದು ಕನ್ನಡ ಚಿತ್ರವಾಗಿದ್ದರೂ, ಇದು ಎಲ್ಲಾ ಭಾಷೆಗಳೊಂದಿಗೆ ಸಂಪರ್ಕ ಸಾಧಿಸಬಹುದಾದ ಕಥೆ ಎಂದರು. ಚಿತ್ರದ ತಾರಾಗಣದಲ್ಲಿ ಎಂ.ಕೆ.ಮಠ, ಮುನಿ, ನೀನಾಸಂ ಅಶ್ವಥ್, ಯತಿರಾಜ್, ಸೌಜನ್ಯ ನಟಿಸಿದ್ದಾರೆ, ಹೇಮಂತ್ ಕುಮಾರ್ ಸಂಗೀತವಿದ್ದು, ಸೆಲ್ವಂ ಛಾಯಾಗ್ರಾಹಣವಿದೆ ಎಂದರು.
ಯೂನುಸ್ ವಿವಾದಾತ್ಮಕ ಹೇಳಿಕೆಗಳಿಗೆ ಈಶಾನ್ಯ ರಾಜ್ಯಗಳ ನಾಯಕರ ಖಂಡನೆ
ಹೊಸದಿಲ್ಲಿ: ಬಾಂಗ್ಲಾ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ಚೀನಾ ಪ್ರವಾಸದ ಸಂದರ್ಭ ಈಶಾನ್ಯ ಭಾರತದ ರಾಜ್ಯಗಳ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮುಹಮ್ಮದ್ಯೂಸ್ ಅವರ ಹೇಳಿಕೆಯು ‘‘ನಿಂದನಾತ್ಮಕ’’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ಬಣ್ಣಿಸಿದರೆ, ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಈಶಾನ್ಯ ಭಾರತದ ಬಗ್ಗೆ ಢಾಕಾದ ನಿಲುವು ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಕೇಂದ್ರ ಸರಕಾರದ ವಿದೇಶಾಂಗ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ. ಯೂನುಸ್ ಅವರು ತನ್ನ ನಾಲ್ಕು ದಿನಗಳ ಚೀನಾ ಪ್ರವಾಸದ ವೇಳೆ ಈಶಾನ್ಯ ಭಾರತದ ರಾಜ್ಯಗಳ ಬಗ್ಗೆ ನೀಡಿದ್ದರೆನ್ನಲಾದ ವಿವಾದಾತ್ಮಕ ಹೇಳಿಕೆಯೊಂದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.‘‘ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಸಪ್ತ ಸಹೋದರಿಯರೆಂದು ಕರೆಯಲಾಗುತ್ತದೆ. ಅವು ಭಾರತದ ಭೂ ಆವೃತ ಪ್ರದೇಶವಾಗಿದೆ. ಸಮುದ್ರವನ್ನು ತಲುಪಲು ಅವರಿಗೆ ದಾರಿಯೇ ಇಲ್ಲ. ಬಾಂಗ್ಲಾಗೇಶವು ಆ ಪ್ರದೇಶದಲ್ಲಿರುವ ಸಮುದ್ರದ ‘ಪಾಲಕ’ನಾಗಿದೆ . ಈ ಸನ್ನಿವೇಶವು ಬೃಹತ್ ಅವಕಾಶವನ್ನು ತೆರೆದಿಟ್ಟಿದೆ. ಚೀನಾದ ಆರ್ಥಿಕತೆಯ ವಿಸ್ತರಣೆಯೂ ಇದರಿಂದ ಸಾಧ್ಯವಿದೆ’’ ಎಂದವರು ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸರಕಾರದ ಪದಚ್ಯುತಿಯ ಬಳಿಕ ಢಾಕಾವು ಬೀಜಿಂಗ್ ಜೊತೆಗೆ ನಿಕಟ ರಾಜತಾಂತ್ರಿಕ ಸಂಬಂಧಕ್ಕೆ ಯತ್ನಿಸುತ್ತಿರುವ ನಡುವೆಯೇ ಯೂನುಸ್ ಈ ಹೇಳಿಕೆ ನೀಡಿದ್ದಾರೆ. ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಿರುವ ಭಾರತವು ಬಾಂಗ್ಲಾದ ಮಧ್ಯಂತರ ಸರಕಾರದ ಈ ಭೂರಾಜಕೀಯ ನಡೆಗಳನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ತಿಳಿಸಿದ್ದಾರೆ. ಯೂನುಸ್ ಅವರ ಹೇಳಿಕೆಯನ್ನು ಖಂಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಅವರು, ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗದ ಜೊತೆ ಸಂಪರ್ಕಿಸಲು ಇನ್ನಷ್ಟು ಅಗಾಧವಾಗಿ ರೈಲು ಹಾಗೂ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಆಯಕಟ್ಟಿನ ‘ಚಿಕನ್ನೆಕ್ ಕಾರಿಡಾರ್’ಗೆ ಸಂಬಂಧಿಸಿ ಬಾಂಗ್ಲಾ ಈ ನಿರೂಪಣೆಯನ್ನು ಮಾಡಿದೆ ಎನ್ನಲಾಗಿದೆ. ಚಿಕನ್ ನೆಕ್ ಕಾರಿಡಾರ್ ಪ್ರದೇಶವು ಈಶಾನ್ಯ ಭಾರತವನ್ನು ದೇಶದ ಇತರ ಭಾಗಳ ಜೊತೆ ಸಂಪರ್ಕಿಸುತ್ತದೆ.ನೇಪಾಳ, ಬಾಂಗ್ಲಾ ಹಾಗೂ ಭೂತಾನ್ ಈ ಭೂಪ್ರದೇಶದ ಆಸುಪಾಸಿನಲ್ಲಿರುವ ದೇಶಗಳಾಗಿವೆ. ‘‘ಐತಿಹಾಸಿಕವಾಗಿಯೂ ಭಾರತದೊಳಗಿರುವ ಆಂತರಿಕ ಶಕ್ತಿಗಳು ಈಶಾನ್ಯ ಭಾರತವನ್ನು ಮುಖ್ಯಭೂಮಿಯಿಂದ ಭೌತಿಕವಾಗಿ ದೂರವಿರಿಸಲು ನಿರ್ಣಾಯಕವಾದ ಈ ಭೂಪ್ರದೇಶ (ಚಿಕನ್ನೆಕ್ ಕಾರಿಡಾರ್)ವನ್ನು ಕಡಿದುಹಾಕಬೇಕೆಂಬ ಅಪಾಯಕಾರಿ ಯೋಚನೆ ಮಾಡಿದ್ದವು. ಹೀಗಾಗಿ ಈಶಾನ್ಯರಾಜ್ಯಗಳನ್ನು ಭಾರತದ ಮುಖ್ಯಭೂಮಿಯೊಂದಿಗೆ ಸಂಪರ್ಕಿಸಲು ಪರ್ಯಾಯ ರಸ್ತೆ ಮಾರ್ಗಗಳನ್ನು ಅನ್ವೇಷಿಸಬೇಕಾಗಿದೆ’’ ಎಂದು ಶರ್ಮಾ ಅವರು ಹೇಳಿದ್ದಾರೆ. ಯೂನಸ್ ಹೇಳಿಕೆಗೆ ತ್ರಿಪುರಾದ ‘ತಿಪ್ರಾ ಮೊಥಾ’ ಪಕ್ಷದ ನಾಯಕ ಪ್ರದ್ಯೋತ್ ಮಾಣಿಕ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಈಗಿನ ಬಾಂಗ್ಲಾದಲ್ಲಿರುವ ಚಿತ್ತಗಾಂಗ್ನಲ್ಲಿ ಆಳ್ವಿಕೆಯನ್ನು ನಡೆಸಿದ್ದ ನಮ್ಮ ಮೂಲನಿವಾಸಿಗಳಿಗೆ ಬೆಂಬಲ ನೀಡುವ ಮೂಲಕ ಸಮುದ್ರ ಮಾರ್ಗವನ್ನು ರೂಪಿಸಿಕೊಳ್ಳಲು ಭಾರತಕ್ಕೀಗ ಸಕಾಲವಾಗಿದೆ. ಬಾಂಗ್ಲಾದ ಕೃತಘ್ನ ಆಡಳಿತವನ್ನು ನಾವೀಗ ಅವಲಂಭಿಸಬೇಕಾಗಿಲ್ಲವೆಂದವರು ಹೇಳಿದ್ದಾರೆ. 1947ರಲ್ಲಿ ಚಿತ್ತಗಾಂಗ್ ನಲ್ಲಿ ವಾಸವಾಗಿದ್ದ ಗುಡ್ಡಗಾಡು ಜನರು ಭಾರತ ಭಾಗವಾಗಲು ಬಯಸಿದ್ದ ಹೊರತಾಗಿಯೂ ಅಲ್ಲಿನ ಬಂದರನ್ನು ಬಿಟ್ಟುಕೊಟ್ಟಿದ್ದುದು ಭಾರತದ ಅತಿ ದೊಡ್ಡ ಪ್ರಮಾದವಾಗಿದೆ. ತಾನೊಬ್ಬ ಸಮುದ್ರದ ಪಾಲಕನೆಂದು ಯೂನಸ್ ಭಾವಿಸಿದ್ದಿರಬಹುದು. ಆದರೆ ವಾಸ್ತವಿಕವಾಗಿ ಆತ ಈಗಾಗಲೇ 85 ರ ಪ್ರಾಯ ದಾಟಿರುವ ಮತ್ತು ತಾತ್ಕಾಲಿಕವಾಗಿ ನಿಯೋಜನೆಗೊಂಡಿರುವ ನಾಯಕನಾಗಿದ್ದಾನೆ ಎಂದು ಪ್ರದ್ಯೋತ್ ಮಾಣಿಕ್ಯ ಹೇಳಿದ್ದಾರೆ. ಭಾರತಕ್ಕೆ ದಿಗ್ಬಂಧನ ವಿಧಿಸುವಂತೆ ಬಾಂಗ್ಲಾದೇಶವು ಚೀನಾವನ್ನು ಆಹ್ವಾನಿಸುತ್ತಿದೆಯೆಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅಪಾದಿಸಿದ್ದಾರೆ. ಈಶಾನ್ಯ ಭಾರತದ ಸುರಕ್ಷತೆಗೆ ಬಾಂಗ್ಲಾ ಸರಕಾರದ ನಿಲುವು ಅತ್ಯಂತ ಅಪಾಯಕಾರಿಯಾಗಿದೆ. ಕೇಂದ್ರ ಸರಕಾರವು ಮಣಿಪುರವನ್ನು ಗಮನಿಸುತ್ತಿಲ್ಲ ಮತ್ತು ಚೀನಾವು ಅರುಣಾಚಲ ಪ್ರದೇಶದಲ್ಲಿ ಹಳ್ಳಿಯೊಂದನ್ನು ಸ್ಥಾಪಿಸಿದೆ. ನಮ್ಮ ವಿದೇಶಾಂಗ ನೀತಿಯು ಎಂತಹ ಶೋಚನೀಯ ಸ್ಥಿತಿಯಲ್ಲಿದೆಯೆಂದರೆ, ಯಾವ ದೇಶವನ್ನು ಸೃಷ್ಟಿಸುವಲ್ಲಿ ನಾವು ಪ್ರಮುಖ ಪಾತ್ರವನ್ನು ವಹಿಸಿದ್ದೆವೋ ಅವರೀಗ ನಮ್ಮನ್ನು ಸುತ್ತುವರಿಯುವ ಯತ್ನದಲ್ಲಿ ಮಗ್ನರಾಗಿದ್ದಾರೆ’’ ಎಂದರು. ಅಸ್ಸಾಂನ ಹಿರಿಯ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಕೂಡಾ ಯೂನಸ್ ಹೇಳಿಕೆಯನ್ನು ಖಂಡಿಸಿದ್ದಾರೆ. ಈಶಾನ್ಯ ಭಾರತ ಹಾಗೂ ಚೀನಾದ ಕುರಿತು ಮುಹಮ್ಮದ್ ಯೂನಸ್ ಅವರ ಹೇಳಿಕೆಗಳು ತೀವ್ರ ಆತಂಕಕಾರಿಯಾಗಿದೆ ಹಾಗೂ ಅಸ್ವೀಕಾರಾರ್ಹವಾಗಿದೆ. ಭಾರತದ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಅದು ಕಡೆಗಣಿಸುತ್ತದೆ ಎಂದವರು ಹೇಳಿದ್ದಾರೆ.
ಕೊಲೆ ಮಾಡುವ ಭಯ; ಪತ್ನಿಯನ್ನು ಲವರ್ ಜೊತೆ ಮದುವೆ ಮಾಡಿಕೊಟ್ಟ ಪತಿ! ಬಳಿಕ ನಡೆದಿದ್ದೇನು?
ಮೀರತ್ನಲ್ಲಿ ನಡೆದ ಕುಖ್ಯಾತ ಡ್ರಮ್ ಕೊಲೆ ಮತ್ತು ಔರೈಯಾದಲ್ಲಿ ಪತಿಯನ್ನು ಕೊಲೆ ಮಾಡಲು ಗುತ್ತಿಗೆ ಕೊಟ್ಟ ಪ್ರಕರಣ ಸದ್ದು ಮಾಡಿದ ಬಳಿಕ ವ್ಯಕ್ತಿಯೊಬ್ಬ ಭಯಗೊಂಡಿದ್ದು ತನ್ನ ಪತ್ನಿಯನ್ನು ಅವಳ ಪ್ರಿಯತಮನ ಜೊತೆ ಮದುವೆ ಮಾಡಿಕೊಟ್ಟಿದ್ದಾನೆ. ತನ್ನ ಪತ್ನಿ ಮತ್ತು ಪ್ರಿಯಕರ ತನಗೆ ಏನಾದರೂ ಮಾಡಬಹುದು ಎನ್ನುವ ಭಯದಿಂದ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದು ಬಳಿಕ
ಡಿಸೇಲ್ ಮಾರಾಟ ತೆರಿಗೆ ಹೆಚ್ಚಳ | ಕರ್ನಾಟಕದಲ್ಲಿ ಡಿಸೇಲ್ 2 ರೂ. ದುಬಾರಿ
ಬೆಂಗಳೂರು : ಕರ್ನಾಟಕ ಸರಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಏಪ್ರಿಲ್ 1, 2025 ರಿಂದ ಜಾರಿಗೆ ಬರುವಂತೆ ಶೇ.21.17% ಕ್ಕೆ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಡೀಸೆಲ್ ಲೀಟರ್ ಗೆ 2 ರೂ. ಬೆಲೆ ಏರಿಕೆಯಾಗಿದೆ. ತೆರಿಗೆ ಹೆಚ್ಚಳದ ನಂತರ ಡಿಸೇಲ್ ಬೆಲೆಯು 91.02 ರೂ. ಆಗಲಿದೆ.
ಮಣಿಪಾಲ| ಯುವಕನೊಂದಿಗೆ ಅಸಭ್ಯ ವರ್ತನೆ ಆರೋಪ: ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು
ಮಣಿಪಾಲ, ಎ.1: ಯುವಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಮಣಿಪಾಲ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಮಾ.27ರಂದು ಮಣಿಪಾಲ ಪೊಲೀಸ್ ಕಾನ್ಸ್ಟೇಬಲ್ ಶರಣ ಬಸವ ಎಂಬಾತ ಸಾರ್ವಜನಿಕವಾಗಿ ಸುಮಂತ್ ಎಂಬವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಸುಮಂತ್ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಯಾವುದೇ ದೂರು ಬೇಡ ಎಂದು ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತವಾಗಿ ಶರಣ ಬಸವ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ. 92(ಓ)ಆ್ಯಂಡ್(ಆರ್) ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಹಾಗೂ ಈ ಬಗ್ಗೆ ಸೂಕ್ತ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಭದ್ರಾ ಜಲಾಶಯದಿಂದ ನೀರು ಬಿಡುಗಡೆ; ನದಿ ಪಾತ್ರದಲ್ಲಿ 3 ದಿನ ನಿಷೇಧ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ
ಭದ್ರಾ ಜಲಾಶಯದಿಂದ ಮಂಗಳವಾರ ಸಂಜೆ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆ 3 ದಿನ ನದಿ ಪಾತ್ರದಲ್ಲಿ ನಿಷೇಧ ವಿಧಿಸಲಾಗಿದೆ. ಜತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ. ಕುಡಿಯುವ ಹಾಗೂ ಬೆಳೆ ರಕ್ಷಣೆ ಉದ್ದೇಶಕ್ಕೆ ನೀರು ಬಿಡುಗಡೆ ಮಾಡಲಾಗಿದೆ ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಕಾರು ಢಿಕ್ಕಿ: ರಸ್ತೆ ದಾಟಲು ನಿಂತಿದ್ದ ವಿದ್ಯಾರ್ಥಿ ಮೃತ್ಯು; ಎ.2ರಂದು ರಾ.ಹೆದ್ದಾರಿ ವಿರುದ್ಧ ಪ್ರತಿಭಟನೆ
ಬ್ರಹ್ಮಾವರ, ಎ.1: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬ್ರಹ್ಮಾವರದ ಬಿರಿಯಾನಿ ಪಾಯಿಂಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ 8.30ರ ಸುಮಾರಿಗೆ ನಡೆದಿದೆ. ಮೃತರನ್ನು ಬ್ರಹ್ಮಾವರ ಎಸ್ಎಂಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಂಶ್ ಶೆಟ್ಟಿ(11) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಬೇಸಿಗೆ ಕ್ರೀಡಾ ಶಿಬಿರ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಂಶ್ ಶೆಟ್ಟಿ ಶಾಲೆಗೆ ಹೋಗಲು ರಸ್ತೆ ದಾಟಲು ರಸ್ತೆ ಬದಿ ನಿಂತುಕೊಂಡಿದ್ದನು. ಈ ವೇಳೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು, ರಸ್ತೆಯ ತೀರಾ ಎಡಭಾಗಕ್ಕೆ ಬಂದು ವಂಶ್ ಶೆಟ್ಟಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ವಂಶ್ ಶೆಟ್ಟಿ ರಸ್ತೆಗೆ ಎಸೆಯಲ್ಪಟ್ಟು, ತಲೆಗೆ ತೀವ್ರ ಸ್ವರೂಪದ ರಕ್ತಗಾಯಗೊಂಡರು. ಕೂಡಲೇ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಂಶ್ ಶೆಟ್ಟಿ ಬೆಳಗ್ಗೆ 9.30ರ ಸುಮಾರಿಗೆ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾ.ಹೆದ್ದಾರಿ ವಿರುದ್ಧ ಎ.2ರಂದು ಪ್ರತಿಭಟನೆ ಅಪಘಾತ ವಲಯವಾಗಿ ಮಾರ್ಪಟ್ಟಿರುವ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವ್ಯವಸ್ಥೆ ವಿರೋಧಿಸಿ ಎ.2ರಂದು ಬೆಳಗ್ಗೆ 9.30ಕ್ಕೆ ಬ್ರಹ್ಮಾವರದ ಎಸ್ಎಂಎಸ್ ಕಾಲೇಜು ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಹಲವು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವುದರಿಂದ ಅಗತ್ಯ ವಾಗಿರುವ ಸರ್ವಿಸ್ ರಸ್ತೆ ಹಾಗೂ ಫ್ಲೈ ಓವರ್ ನಿರ್ಮಿಸಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ಇದರಲ್ಲಿ ಕಾಲೇಜು ವಿದ್ಯಾರ್ಥಿ ಗಳು ಹಾಗೂ ಬ್ರಹ್ಮಾವರದ ಸುಮಾರು 23ಕ್ಕೂ ಹೆಚ್ಚು ಸಂಘಟನೆಗಳು ಕೈಜೋಡಿಸಲಿವೆ ಎಂದು ತಿಳಿದುಬಂದಿದೆ.
ಮೋಹನಲಾಲ್ ನಟನೆಯ ‘ಎಂಪುರಾನ್’ನಲ್ಲಿ 2.08 ನಿಮಿಷದ ದೃಶ್ಯಗಳನ್ನು ತೆಗೆದುಹಾಕಿದ ನಿರ್ಮಾಪಕರು
ತಿರುವನಂತಪುರ,ಎ.1: ಮೋಹನಲಾಲ್ ಅಭಿನಯದ ಚಿತ್ರ‘ಎಲ್2:ಎಂಪುರಾನ್’ ಮಾ.27ರಂದು ಬಿಡುಗಡೆಗೊಂಡ ಬಳಿಕ ಬಲಪಂಥೀಯರ ನಿರಂತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಿರ್ಮಾಪಕರು ಚಿತ್ರದಲ್ಲಿ ಒಟ್ಟು 2.08 ನಿಮಿಷಗಳ 24 ‘ಸ್ವಯಂಪ್ರೇರಿತ ಕಡಿತ’ಗಳನ್ನು ಮಾಡಿದ್ದಾರೆ. ಕೇಂದ್ರೀಯ ಸೆನ್ಸಾರ್ ಮಂಡಳಿ (ಸಿಬಿಎಫ್ಸಿ)ಯ ಪ್ರಾದೇಶಿಕ ಅಧಿಕಾರಿಗಳಿಂದ ಪ್ರಮಾಣಪತ್ರವನ್ನು ಪಡೆದಿರುವ ಚಿತ್ರದ ಪರಿಷ್ಕೃತ ಆವೃತ್ತಿಯು ಬುಧವಾರ ಭಾರತದಲ್ಲಿಯ ಹೆಚ್ಚಿನ ಚಿತ್ರಮಂದಿರಗಳ ತೆರೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮರು-ಸೆನ್ಸಾರ್ ಪ್ರಮಾಣ ಪತ್ರದ ಪ್ರಕಾರ ಪ್ರಮುಖ ಬದಲಾವಣೆಗಳಲ್ಲಿ ಬಲರಾಜ್ ಅಲಿಯಾಸ್ ಬಾಬಾ ಬಜರಂಗಿ ಪಾತ್ರದ ಹೆಸರು ಒಂದಾಗಿದೆ. ಇದು 2002ರ ಗುಜರಾತ್ ಗಲಭೆಗಳ ಸಂದರ್ಭ ನರೋಡಾ ಪಾಟಿಯಾ ಹತ್ಯಾಕಾಂಡದ ರೂವಾರಿಯಾಗಿದ್ದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಜರಂಗ ದಳ ನಾಯಕ ಬಾಬು ಬಜರಂಗಿಯನ್ನು ಉಲ್ಲೇಖಿಸಿದಂತಿದ್ದು,ಪರಿಷ್ಕತ ಆವೃತ್ತಿಯಲ್ಲಿ ಪಾತ್ರಕ್ಕೆ ಬಲದೇವ್ ಎಂದು ಮರುನಾಮಕರಣ ಮಾಡಲಾಗಿದೆ. ಘಟನಾವಳಿಗಳ ಅವಧಿಯನ್ನು ‘ಇಂಡಿಯಾ 2002’ ಎಂದು ತೋರಿಸಿದ್ದ ಡಿಸ್ಪ್ಲೇ ಕಾರ್ಡ್ನಲ್ಲಿ ಅದನ್ನು ‘ಕೆಲವು ವರ್ಷಗಳ ಹಿಂದೆ’ ಎಂದು ಬದಲಿಸಲಾಗಿದೆ. ಧಾರ್ಮಿಕ ಕಟ್ಟಡವೊಂದರ ಎದುರಿನಿಂದ ಹಾದು ಹೋಗುತ್ತಿರುವ ವಾಹನಗಳು,ಮಹಿಳೆಯರ ವಿರುದ್ಧ ಹಿಂಸಾಚಾರ ಮತ್ತು ಗಲಭೆ ಸ್ಥಳಗಳಲ್ಲಿಯ ಮೃತದೇಹಗಳ ದೃಶ್ಯಗಳನ್ನೂ ಚಿತ್ರದಿಂದ ತೆಗೆದುಹಾಕಲಾಗಿದೆ. ಗಲಭೆಯ ಸಂದರ್ಭದಲ್ಲಿ ಯುವಕ ಜಾವೇದ್ ಮಸೂದ್(ಈ ಪಾತ್ರವನ್ನು ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ವಹಿಸಿದ್ದಾರೆ) ಮತ್ತು ಆತನ ತಂದೆ ಮಸೂದ್ ನಡುವಿನ ಸಂಭಾಷಣೆಯನ್ನು ತೆಗೆಯಲಾಗಿದೆ. ರಾಜಕೀಯ ವಿರೋಧಿಗಳ ವಿರುದ್ಧ ಆಡಳಿತ ಪಕ್ಷವು ಬಳಸುತ್ತಿದೆ ಎಂದು ತೋರಿಸಲಾಗಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಉಲ್ಲೇಖವೂ ಕತ್ತರಿ ಪ್ರಯೋಗಕ್ಕೆ ಗುರಿಯಾಗಿದೆ. ಎನ್ಐಎ ಉಲ್ಲೇಖವಿರುವ ಪ್ರತಿಯೊಂದು ದೃಶ್ಯದಲ್ಲಿಯೂ ಆಡಿಯೊವನ್ನು ಮೌನವಾಗಿಸಲಾಗಿದೆ. ಚಿತ್ರದ ಕ್ರೆಡಿಟ್ಗಳ ಪಟ್ಟಿಯಿಂದ ನಟ ಹಾಗೂ ಕೇಂದ್ರ ಸಚಿವ ಸುರೇಶ ಗೋಪಿ ಮತ್ತು ಐಆರ್ಎಸ್ ಅಧಿಕಾರಿ ಜ್ಯೋತಿಸ್ ಮೊಹನ್ ಅವರ ಹೆಸರುಗಳನ್ನೂ ತೆಗೆಯಲಾಗಿದೆ. ಯಾವುದೇ ಕಡಿತವಿಲ್ಲದೆ ಮೂಲ ಚಿತ್ರವು ದೇಶದ ಹೊರಗೆ ಪ್ರದರ್ಶನವನ್ನು ಮುಂದುವರಿಸಲಿದೆ,ಆದರೆ ಕಡಿತಗಳೊಂದಿಗೆ ಪರಿಷ್ಕೃತ ಆವೃತ್ತಿ ಒಟಿಟಿಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಚಿತ್ರವನ್ನು ಪರಿಷ್ಕರಿಸಲಾಗಿದೆ ಎಂಬ ವರದಿಗಳು ಟಿಕೆಟ್ಗಳಿಗೆ ಭಾರೀ ಬೇಡಿಕೆಯನ್ನು ಸೃಷ್ಟಿಸಿದ್ದು,ಗುರುವಾರ ಬಿಡುಗಡೆಗೊಂಡಾಗಿನಿಂದಲೂ ಚಿತ್ರವು ಕೇರಳದಾದ್ಯಂತ ಹೌಸ್ಪುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಬಲಪಂಥೀಯರ ಪ್ರತಿಭಟನೆ ಮುಂದುವರಿದಿದ್ದರೂ ಚಿತ್ರದ ನಿರ್ಮಾಪಕರೊಂದಿಗೆ ಒಗ್ಗಟ್ಟು ಪ್ರದರ್ಶಿಸಿರುವ ಸಿಪಿಎಂ ಮತ್ತು ಕಾಂಗ್ರೆಸ್ ನಾಯಕರು ಥಿಯೇಟರ್ಗಳಲ್ಲಿ ಯಾವುದೇ ಕಡಿತವಿಲ್ಲದ ಮೂಲ ಆವೃತ್ತಿಯನ್ನು ವೀಕ್ಷಿಸಿದ್ದಾರೆ. ಚಿತ್ರವು ಮಾ.31ರವರೆಗೆ ವಿಶ್ವಾದ್ಯಂತ 200 ಕೋ.ರೂ.ಗಳ ಒಟ್ಟು ಆದಾಯವನ್ನು ಗಳಿಸಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಟೆಸ್ಟ್ ನಾಯಕತ್ವ ತ್ಯಜಿಸಿದ ಬ್ರಾತ್ ವೇಟ್
ಬಾರ್ಬಡೋಸ್ : ನಾಲ್ಕು ವರ್ಷಗಳ ನಂತರ ಕ್ರೆಗ್ ಬ್ರಾತ್ ವೇಟ್ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಶಾಯ್ ಹೋಪ್ ಟಿ20 ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್(ಸಿಡಬ್ಲ್ಯುಐ)ಸೋಮವಾರ ತಿಳಿಸಿದೆ. 32ರ ಹರೆಯದ ಬ್ರಾತ್ ವೇಟ್ ರನ್ನು 2021ರ ಮಾರ್ಚ್ನಲ್ಲಿ ಜೇಸನ್ ಹೋಲ್ಡರ್ ಬದಲಿಗೆ ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ವೆಸ್ಟ್ ಇಂಡೀಸ್ ಏಕದಿನ ತಂಡದ ನಾಯಕನಾಗಿರುವ ಹೋಪ್ ಅವರು ಇದೀಗ ರೊವ್ ಮನ್ ಪೊವೆಲ್ ಬದಲಿಗೆ ಟಿ20 ನಾಯಕತ್ವ ಹೊಣೆ ಹೊತ್ತಿದ್ದಾರೆ. ಪೊವೆಲ್ 2023ರ ಮೇನಿಂದ ವಿಂಡೀಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಬ್ರಾತ್ ವೇಟ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡ 27 ವರ್ಷಗಳ ನಂತರ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಜಯಿಸಿತ್ತು. ಕಳೆದ ವರ್ಷ ಬ್ರಿಸ್ಬೇನ್ ನಲ್ಲಿ 8 ರನ್ನಿಂದ ರೋಚಕ ಜಯ ಸಾಧಿಸಿ ಈ ಸಾಧನೆ ಮಾಡಿತ್ತು. ಈ ವರ್ಷಾರಂಭದಲ್ಲಿ ಪಾಕಿಸ್ತಾನದಲ್ಲಿ ಸ್ಮರಣೀಯ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ತಂಡದ ನಾಯಕತ್ವವಹಿಸಿದ್ದರು. 34 ವರ್ಷಗಳಲ್ಲಿ ಮೊದಲ ಬಾರಿ ಸರಣಿಯನ್ನು 1-1ರಿಂದ ಸಮಬಲಗೊಳಿಸಲು ತಂಡದ ನೇತೃತ್ವವಹಿಸಿದ್ದರು.
ಕೋಡಿ ಬ್ಯಾರೀಸ್ ನಲ್ಲಿ ಸೌಹಾರ್ದ ಈದ್ ಮಿಲನ್ ಔತಣಕೂಟ
ಕುಂದಾಪುರ, ಎ.1: ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುವ ರಂಝಾನ್ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳುವ ಸೌಹಾರ್ದ ಔತಣ ಕೂಟ ಸಮಾಜದಲ್ಲಿನ ಬಾಂಧವ್ಯ ಹಾಗೂ ಸಾಮರಸ್ಯಕ್ಕೆ ಇನ್ನಷ್ಟು ಶಕ್ತಿ ನೀಡುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಊರಿನಲ್ಲಿ ಒಗ್ಗಟ್ಟು ಹೆಚ್ಚಲಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಕೋಡಿಯ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಪಿಟಿಎ ಸದಸ್ಯರುಗಳಿಂದ ಮಂಗಳವಾರ ನಡೆದ ’ಬ್ಯಾರೀಸ್ ಸೌಹಾರ್ದ ಈದ್ ಮಿಲನ್ ಔತಣಕೂಟದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಚೇಯರ್ಮೆನ್ ಸೈಯದ್ ಮೊಹಮ್ಮದ್ ಬ್ಯಾರಿ, ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುಲ್ ರೆಹಮಾನ್ ಬ್ಯಾರಿ, ಬ್ಯಾರೀಸ್ ಗ್ರೂಪ್ ಟ್ರಸ್ಟ್ನ ಸದಸ್ಯರಾದ ಅಶ್ರಫ್ ಬ್ಯಾರಿ, ಸಿದ್ದೀಕ್ ಬ್ಯಾರಿ, ಡಾ.ಆಸಿಫ್ ಬ್ಯಾರಿ, ಜಯರತ್ನ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ದಿನೇಶ್ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಸ್ಥಳೀಯ ಪ್ರಮುಖರಾದ ಕೋಡಿ ಶಂಕರ್ ಪೂಜಾರಿ, ಅಬ್ದುಲ್ ಸಾಹೇಬ್ ಕೋಡಿ, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ ದೋಮ, ಚಂದ್ರಶೇಖರ ಶೆಟ್ಟಿ , ಶಮಂತ್ ಎಸ್. ಕುಂದಾಪುರ, ಸುಜನ್ ಶೆಟ್ಟಿ, ಸುನೀಲ್ ಪೂಜಾರಿ ಕೋಡಿ, ಮುನಾಫ್ ಕೋಡಿ, ರಿಯಾಝ್ ಕೋಡಿ, ಅಭಿಜಿತ್ ಹೇರಿಕುದ್ರು ಉಪಸ್ಥಿತರಿದ್ದರು. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಮತ್ತು ಬ್ಯಾರೀಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಬ್ಯಾರೀಸ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ, ಬ್ಯಾರೀಸ್ ಡಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಫಿರ್ದೋಸ್, ಹಾಜಿ ಕೆ. ಮೊಹಿದ್ದೀನ್ ಬ್ಯಾರಿ ಸ್ಮಾರಕ ಸರಕಾರಿ ಪ್ರೌಢಶಾಲೆ ಮುಖ್ಯೋಪಧ್ಯಾಯ ಜಯಶೀಲ ಶೆಟ್ಟಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಟ್ಪಪ್ಪ, ಬೀಬಿ ಫಾತಿಮಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಮಿತ್ರಾ ಹಾಜರಿದ್ದರು.
ಮಲೇಶ್ಯಾ ಗ್ಯಾಸ್ ಪೈಪ್ಲೈನ್ ಸೋರಿಕೆ: 100ಕ್ಕೂ ಅಧಿಕ ಮಂದಿಗೆ ಗಾಯ
ಕೌಲಲಾಂಪುರ: ಮಲೇಶ್ಯಾದ ರಾಜಧಾನಿ ಬಳಿ ಗ್ಯಾಸ್ ಪೈಪ್ಲೈನ್ ಸೋರಿಕೆಯ ಹಿನ್ನೆಲೆಯಲ್ಲಿ ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. ಕೌಲಲಾಂಪುರ ಬಳಿಯ ಸೆಲಾಂಗೊರ್ ರಾಜ್ಯದಲ್ಲಿ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿ ಗ್ಯಾಸ್ ಪೈಪ್ಲೈನ್ ನಲ್ಲಿ ಸೋರಿಕೆಯಾಗುತ್ತಿರುವುದು ಪತ್ತೆಯಾದೊಡನೆ ಪೈಪ್ಲೈನ್ ನ ವಾಲ್ವ್ ಮುಚ್ಚಿ ಗ್ಯಾಸ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಗಂಭೀರ ಗಾಯಗೊಂಡ 60 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ ಸೋರಿಕೆಯ ಬಳಿಕ ಕಾಣಿಸಿಕೊಂಡ ಬೆಂಕಿಯಿಂದ ಸುಮಾರು 50 ಮನೆಗಳಿಗೆ ಹಾಗೂ ಹಲವು ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಂಡೋ ಬಾಧಿತ ಕುಟುಂಬದ ಜೊತೆ ಈದ್ ಆಚರಣೆ
ಕುಂದಾಪುರ, ಎ.1: ಚಿತ್ತೂರು ಮುಸ್ಲಿಂ ಬಾಂಧವರು, ಈದುಲ್ ಫಿತ್ರ್ ಹಬ್ಬವನ್ನು ಎಂಡೋ ಸಲ್ಫಾನ್ ಬಾಧಿತ ಕುಟುಂಬದ ನಿವಾಸಕ್ಕೆ ತೆರಳಿ ಕಿಟ್, ಹಣ್ಣು-ಹಂಪಲು, ಪಾನಿಯ ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಆಲೂರು ಗ್ರಾಮದ ಹೊಯ್ಯಾಣ ಎಂಬಲ್ಲಿ ಸುಮಾರು 20 ವರ್ಷಗಳಿಂದ ಎಂಡೋ ಸಲ್ಫಾನ್ ಪೀಡಿತರಾಗಿ ಹೊರ ಜಗತ್ತನ್ನೇ ಕಾಣದೆ ಮನೆಯೊಳಗಿದ್ದ ಉಷಾ ಮತ್ತು ಉದಯ ಎಂಬ ಅಣ್ಣ-ತಂಗಿಯರ ಬದುಕಿನ ಕರಾಳ ಕಥೆಯನ್ನು ಕೇಳಿ ತಿಳಿದ ಮುಸ್ಲೀಂ ಬಾಂಧವರು ಈ ಬಾರಿ ಹಬ್ಬವನ್ನು ಅವರೊಂದಿಗೆ ಆಚರಿಸಿಕೊಂಡರು. ಅಬ್ದುಲ್ ಸಲಾಂ ಚಿತ್ತೂರು ಮತ್ತವರ ತಂಡದ ಜೊತೆ ಮಾತನಾಡಿದ ಅವರ ತಾಯಿ, ಗ್ರಾ.ಪಂ ವತಿಯಿಂದ ಕುಡಿಯುವ ನೀರಿಗಾಗಿ ಬಾವಿ ಒದಗಿಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವದಿಂದಾಗಿ ಎರಡು ಮಕ್ಕಳನ್ನು ಆರೈಕೆ ಮಾಡುವುದರಲ್ಲಿ ಬಹಳಷ್ಟು ಕಷ್ಟವಾಗುತ್ತದೆ. ತುಂಬಾ ದೂರ ಹೋಗಿ ನೀರು ತರಬೇಕಾದ ಅನಿವಾರ್ಯತೆ ಬಗ್ಗೆ ಅಳಲನ್ನು ತೋಡಿ ಕೊಂಡರು. ಈ ಸಂದರ್ಭದಲ್ಲಿ ತಂಡದಲ್ಲಿದ್ದ ಅಬ್ದುಲ್ ರೆಹಮಾನ್, ಜಯರಾಮ, ಮುಹಮ್ಮದ್, ಇಕ್ಬಾಲ್, ರಿಯಾಝ್, ಸುಲೇಮಾನ್, ಇರ್ಷಾದ್, ಶರ್ಫಾನ್ ತಂಡ ಒಟ್ಟಾಗಿ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ವರ್ಷತೊಡಕು: ಮಾಂಸದಂಗಡಿ ಮುಂದೆ ಸರದಿ ಸಾಲು - ಏ. 2ರಂದು ಮಟನ್ ಗೆ ಇನ್ನೂ ಡಿಮ್ಯಾಂಡು!
ಯುಗಾದಿ 2025ರ ನಂತರ ಹೊಸತೊಡಕು ಅಂಗವಾಗಿ ಬೆಂಗಳೂರಿನಲ್ಲಿ ಏ. 1ರಂದು ಮಾಂಸದ ಮಾರಾಟ ಭರ್ಜರಿಯಾಗಿತ್ತು. ಬೆಂಗಳೂರಿನ ಹಲವಾರು ಮಟನ್ ಸ್ಟಾಲ್ ಗಳ ಮುಂದೆ ಬೆಳಗಿನಜಾವದಿಂದಲೇ ಜನರು ಬಂದು ಮಾಂಸ ಖರೀದಿಗೆ ತೊಡಗಿದ್ದರು. ಅತ್ಯಂತ ಖ್ಯಾತಿ ಪಡೆದಿರುವ ಪಾಪಣ್ಣ ಮಟನ್ ಸ್ಟಾಲ್ ನ ಮುಂದೆಯೂ ಬೆಳಗ್ಗೆ 5 ಗಂಟೆ ಸುಮಾರಿನಿಂದಲೂ ಕ್ಯು ಇತ್ತು. ಇಡೀ ಬೆಂಗಳೂರಿನಲ್ಲಿ ಬರೋಬ್ಬರಿ 2 ಸಾವಿರ ಕೆ.ಜಿ. ಮಟನ್ ಬಿಕರಿಯಾಗಿರುವ ಬಗ್ಗೆ ಮಾಹಿತಿಯಿದೆ.
ಎಪ್ರಿಲ್ ಅಂತ್ಯದ ವೇಳೆಗೆ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ ಸಾಧ್ಯತೆ
ಹೊಸದಿಲ್ಲಿ: ಕಳೆದ ಹತ್ತು ತಿಂಗಳುಗಳಿಂದಲೂ ಬಾಕಿಯಿರುವ ಆಡಳಿತಾರೂಢ ಬಿಜೆಪಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಪ್ರಸಕ್ತ ಸಂಸತ್ ಅಧಿವೇಶನ ಮುಗಿದ ತಕ್ಷಣ ಆರಂಭಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಚುನಾವಣಾ ಪ್ರಕ್ರಿಯೆಗೆ ಸಿದ್ಧತೆಗಳು ಆರಂಭಗೊಂಡಿದ್ದವು ಮತ್ತು ಮಾ.31ರೊಳಗೆ ಮುಗಿಯಬೇಕಿತ್ತು, ಆದರೆ ಸಂಸತ್ ಅಧಿವೇಶನದಿಂದಾಗಿ ಇನ್ನಷ್ಟು ವಿಳಂಬಗೊಂಡಿದೆ. 13 ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣೆಗಳು ಪೂರ್ಣಗೊಂಡ ಬಳಿಕ ಆಯಾ ರಾಜ್ಯ ಅಧ್ಯಕ್ಷರ ಹೆಸರುಗಳನ್ನು ಪ್ರಕಟಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಉತ್ತರ ಪ್ರದೇಶ,ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಬಾಕಿಯುಳಿದಿರುವ ಹೆಚ್ಚಿನ ರಾಜ್ಯಗಳ ಬಿಜೆಪಿ ಅಧ್ಯಕ್ಷರ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದೂ ಮೂಲಗಳು ತಿಳಿಸಿದವು. 19 ರಾಜ್ಯ ಬಿಜೆಪಿ ಅಧ್ಯಕ್ಷರ ಹೆಸರುಗಳನ್ನು ಪ್ರಕಟಿಸಿದ ಬಳಿಕ ಪಕ್ಷದ ಮುಂದಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಮುನ್ನ ಶೇ.50ರಷ್ಟು ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣೆಗಳನ್ನು ನಡೆಸುವುದು ಕಡ್ಡಾಯವಾಗಿದೆ. ಅದಕ್ಕೂ ಮುನ್ನ ಬೂತ್,ಮಂಡಲ ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾವಣೆಗಳು ನಡೆಯುತ್ತವೆ. ಜೆ.ಪಿ.ನಡ್ಡಾ ಅವರು 2019ರಲ್ಲಿ ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಳ್ಳುವ ಮೂಲಕ ಪಕ್ಷದ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರು. ಜನವರಿ 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದ ಅವರು ಹಾಲಿ ಗೃಹಸಚಿವ ಅಮಿತ್ ಶಾ ಅವರಿಂದ ಅಧಿಕಾರವನ್ನು ಸ್ವೀಕರಿಸಿದ್ದರು. ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅವರ ಅಧಿಕಾರಾವಧಿಯನ್ನು ಜೂನ್ 2024ರವರೆಗೆ ವಿಸ್ತರಿಸಲಾಗಿತ್ತು. ನಡ್ಡಾ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಅವರ ಉತ್ತರಾಧಿಕಾರಿಯಾಗಲು ಸಂಭಾವ್ಯ ಅಭ್ಯರ್ಥಿಗಳಿಗಾಗಿ ಬಿಜೆಪಿಯು ಎದುರು ನೋಡುತ್ತಿದೆ. ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಕಠಿಣ ಕೆಲಸವಾಗಿದೆ. ಬಿಜೆಪಿಯು ಸರಿಯಾದ ಜಾತಿ ಸಂಯೋಜನೆಯನ್ನು ಹಾಗೂ ಭಾಷಾ ವಿವಾದ ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತು ಉತ್ತರ-ದಕ್ಷಿಣ ವಿಭಜನೆಯನ್ನು ನಿಭಾಯಿಸಬೇಕಿದೆ. ಲೋಕಸಭಾ ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಹಿನ್ನಡೆಯಾಗಿದ್ದರಿಂದ ಪಕ್ಷಕ್ಕೆ ಸದನದಲ್ಲಿ ತನ್ನದೇ ಸ್ವಂತ ಬಹುಮತವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅದು ಈಗಾಗಲೇ ಆ ರಾಜ್ಯದಲ್ಲಿ ತನ್ನ ನೆಲೆಯನ್ನು ಸುಭದ್ರಗೊಳಿಸುವ ಒತ್ತಡದಲ್ಲಿದೆ. ಇದು ನೂತನ ಅಧ್ಯಕ್ಷರು ಉತ್ತರ ಪ್ರದೇಶದಿಂದ ಆಯ್ಕೆಯಾಗಲಿದ್ದಾರೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಅಭ್ಯರ್ಥಿಯು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರೆಸ್ಸೆಸ್ ಸೇರಿದಂತೆ ಎಲ್ಲರೂ ಒಪ್ಪುವಂತಹ ವ್ಯಕ್ತಿಯಾಗಿರಬೇಕು ಮತ್ತು ಸಾಂಸ್ಥಿಕ ಮೌಲ್ಯಗಳನ್ನು ಅಳವಡಿಸಿಕೊಂಡಿರಬೇಕು ಎಂದೂ ಮೂಲಗಳು ತಿಳಿಸಿವೆ.
ಎಲ್ಲಾ ದೇಶಗಳ ಮೇಲೆ ಸುಂಕ ವಿಧಿಸುತ್ತೇವೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕವು ಎಲ್ಲಾ ದೇಶಗಳ ಮೇಲೆ ಸುಂಕವನ್ನು ವಿಧಿಸುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸುಂಕವನ್ನು ಸಾರ್ವತ್ರಿಕವಾಗಿ ವಿಧಿಸಲಾಗುವುದು. ನಾವು ಎಲ್ಲಾ ದೇಶಗಳೊಂದಿಗೆ ಪ್ರಾರಂಭಿಸುತ್ತೇವೆ. ಅದರಿಂದ ಏನಾಗುತ್ತದೆ ನೋಡೋಣ' ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಹಿಂದೆ, ಆಯ್ದ ಕೆಲವು ದೇಶಗಳ ವಿರುದ್ಧ ಮಾತ್ರ ಸುಂಕ ವಿಧಿಸುವುದಾಗಿ ಟ್ರಂಪ್ ಹೇಳಿದ್ದರು. ವ್ಯಾಪಾರ ಅಸಮತೋಲನವನ್ನು ಹೊಂದಿರುವ ದೇಶಗಳನ್ನು ಅಥವಾ ಅಮೆರಿಕನ್ ಸರಕುಗಳ ಮೇಲೆ ಸುಂಕವನ್ನು ಹೇರುವ ದೇಶಗಳನ್ನು ಗುರಿಯಾಗಿಟ್ಟುಕೊಂಡು ಪರಸ್ಪರ ಸುಂಕಗಳನ್ನು ಪರಿಗಣಿಸುವುದಾಗಿ ಟ್ರಂಪ್ ಸರಕಾರ ಈ ಹಿಂದೆ ಹೇಳಿತ್ತು.
ಅತ್ಯಾಚಾರ ಪ್ರಕರಣ:‘ಸ್ವಘೋಷಿತ ಕ್ರೈಸ್ತ ಪಾದ್ರಿʼ ಬಜಿಂದರ್ ಸಿಂಗ್ ಗೆ ಜೀವಾವಧಿ ಶಿಕ್ಷೆ
ಚಂಡಿಗಡ: ಪಂಜಾಬಿನ ಮೊಹಾಲಿ ನ್ಯಾಯಾಲಯವು 2018ರ ಅತ್ಯಾಚಾರ ಪ್ರಕರಣದಲ್ಲಿ ಸ್ವಘೋಷಿತ ಬೋಧಕ ಪಾದ್ರಿ ಬಜಿಂದರ್ ಸಿಂಗ್ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ‘ಯೇಶು ಯೇಶು ಪ್ರವಾದಿ’ ಎಂದೇ ಜನಪ್ರಿಯನಾಗಿರುವ ಸಿಂಗ್(42) ದೋಷಿ ಎಂದು ನ್ಯಾಯಾಲಯವು ಘೋಷಿಸಿದ ಬಳಿಕ ಆತನನ್ನು ಜೈಲಿನಲ್ಲಿರಿಸಲಾಗಿತ್ತು. ಸಂತ್ರಸ್ತ ಮಹಿಳೆಯು 2018ರಲ್ಲಿ ಝಿರ್ಕಾಪುರ ಪೋಲಿಸ್ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ತನ್ನನ್ನು ವಿದೇಶಕ್ಕೆ ಕರೆದೊಯ್ಯುವುದಾಗಿ ಆಮಿಷವೊಡ್ಡಿದ್ದ ಸಿಂಗ್ ಮೊಹಾಲಿಯಲ್ಲಿನ ಆತನ ನಿವಾಸದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಮತ್ತು ಅದರ ವೀಡಿಯೊ ಮಾಡಿದ್ದ. ತಾನು ಆತನ ಬೇಡಿಕೆಗಳನ್ನು ಒಪ್ಪದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಳು. ಪ್ರಕರಣದಲ್ಲಿಯ ಇತರ ಐದು ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಿಂಗ್ ತನ್ನ ಕಚೇರಿಯಲ್ಲಿ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ್ದ ವೀಡಿಯೊ ವೈರಲ್ ಆದ ಬಳಿಕ ಈ ತಿಂಗಳ ಆರಂಭದಲ್ಲಿ ಮೊಹಾಲಿ ಪೋಲಿಸರು ಆತನ ವಿರುದ್ಧ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವೀಡಿಯೊದಲ್ಲಿಯ ಘಟನೆ ಫೆ.14ರಂದು ನಡೆದಿತ್ತು ಎನ್ನಲಾಗಿದೆ. ಇದರ ಜೊತೆಗೆ 22ರ ಹರೆಯದ ಮಹಿಳೆಯೋರ್ವಳು ಫೆ.28ರಂದು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿಯೂ ಸಿಂಗ್ ವಿಶೇಷ ತನಿಖಾ ತಂಡದಿಂದ ತನಿಖೆಯನ್ನು ಎದುರಿಸುತ್ತಿದ್ದಾನೆ. 2012ರಲ್ಲಿ ಬೋಧಕನಾಗಿದ್ದ ಸಿಂಗ್ ನಡೆಸುವ ಸಮಾವೇಶಗಳಿಗೆ ಪವಾಡಗಳ ಮೂಲಕ ತಮ್ಮ ಅನಾರೋಗ್ಯವನ್ನು ಗುಣಪಡಿಸಿಕೊಳ್ಳಲು ಬಯಸುವ ಭಾರೀ ಸಂಖ್ಯೆಯ ಅನುಯಾಯಿಗಳು ಪಾಲ್ಗೊಳ್ಳುತ್ತಿದ್ದರು. ಆತ ಜಲಂಧರ್ ನ ತಾಜ್ ಪುರದಲ್ಲಿ ಎರಡು ಮತ್ತು ಮೊಹಾಲಿಯ ಮಜ್ರಿಯಲ್ಲಿ ಒಂದು ಚರ್ಚ್ಗಳನ್ನು ನಡೆಸುತ್ತಿದ್ದಾನೆ. ಆದರೆ ಆತನ ಚರ್ಚ್ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಹಲವಾರು ಶಾಖೆಗಳನ್ನು ಹೊಂದಿದೆ ಎಂದು ಆತನ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ. ಆತನ ‘ಪ್ರವಾದಿ ಬಜಿಂದರ್ ಸಿಂಗ್’ ಹೆಸರಿನ ಯೂಟ್ಯೂಬ್ ಚಾನೆಲ್ 37.40 ಲಕ್ಷಕ್ಕೂ ಅಧಿಕ ಸಬ್ ಸ್ಕ್ರೈಬರ್ಗಳನ್ನು ಹೊಂದಿದೆ.
ಗುಜರಾತ್ | ಪಟಾಕಿ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅವಘಡ; 17 ಜನರು ಮೃತ್ಯು
ಅಹ್ಮದಾಬಾದ್: ಗುಜರಾತಿನ ಬನಾಸ್ಕಾಂತಾ ಜಿಲ್ಲೆಯ ದೀಸಾದಲ್ಲಿಯ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 17 ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ದೀಸಾ ನಗರಸಭೆಯ ಅಗ್ನಿಶಾಮಕ ದಳ ಮತ್ತು 108 ಆ್ಯಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಯಂತೆ ಕಾರ್ಖಾನೆಯ ಗನ್ಪೌಡರ್ ಘಟಕದಲ್ಲಿ ಸಂಭವಿಸಿದ್ದ ಭಾರೀ ಸ್ಫೋಟದಿಂದಾಗಿ ಬೆಂಕಿ ಹತ್ತಿಕೊಂಡಿತ್ತು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಮಾನವ ಅಂಗಾಂಗಗಳು 200 ಮೀ.ಗಷ್ಟು ದೂರ ಹಾರಿ ಬಿದ್ದಿದ್ದು, ಪಕ್ಕದ ಗದ್ದೆಗಳಲ್ಲಿ ಹಲವಾರು ದೇಹಗಳ ಭಾಗಗಳು ಪತ್ತೆಯಾಗಿವೆ. ದುರಂತ ಸಂಭವಿಸಿದಾಗ ಎಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಮತ್ತು ಎಷ್ಟು ಜನರು ಸುರಕ್ಷಿತರಾಗಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಬೆಂಕಿಯನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ದಳವು ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಸ್ಫೋಟದಿಂದಾಗಿ ಕಾರ್ಖಾನೆ ಕಟ್ಟಡ ಭಾಗಶಃ ಕುಸಿದು ಬಿದ್ದಿದ್ದು, ರಕ್ಷಣಾ ತಂಡಗಳು ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿವೆ. ಗಾಯಾಳುಗಳನ್ನು ದೀಸಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ರಭಸಕ್ಕೆ ಕಾರ್ಖಾನೆಯ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಕಾರ್ಮಿಕರ ಕುಟುಂಬಗಳೂ ಕಾರ್ಖಾನೆಯ ಆವರಣದಲ್ಲಿ ವಾಸವಾಗಿವೆ.
2020ರ ದಿಲ್ಲಿ ಗಲಭೆ ಪ್ರಕರಣ : ಕಾನೂನು ಸಚಿವ ಕಪಿಲ್ ಮಿಶ್ರಾಗೆ ಸಂಕಷ್ಟ, ಸಚಿವ ಸ್ಥಾನವೂ ಕಳೆದುಕೊಳ್ಳುವ ಭೀತಿ
Delhi Court orders FIR against Kapil Mishra 2020ರ ಹೊಸ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಾನೂನು ಸಚಿವ ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಕಪಿಲ್ ಮಿಶ್ರಾ ಅವರು ಸ್ಥಳದಲ್ಲೇ ಇದ್ದರು ಎಂಬುದು ಸ್ಪಷ್ಟವಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ತಿಳಿಸಿದ್ದಾರೆ. ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಯಮುನಾ ವಿಹಾರ್ ನಿವಾಸಿ ಮೊಹಮ್ಮದ್ ಇಲ್ಯಾಸ್ ಸಲ್ಲಿಸಿದ್ದ ಅರ್ಜಿ ಕುರಿತು ಚೌರಾಸಿಯಾ ಅವರು ವಿಚಾರಣೆ ನಡೆಸಿದರು.
ಹೈದರಾಬಾದ್ | ಕ್ಯಾಬ್ ಚಾಲಕನಿಂದ ಜರ್ಮನ್ ಮಹಿಳೆಯ ಅತ್ಯಾಚಾರ
ಹೈದರಾಬಾದ್: ಸೋಮವಾರ ರಾತ್ರಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ 25ರ ಹರೆಯದ ಜರ್ಮನ್ ಮಹಿಳೆಯ ಮೇಲೆ ಕ್ಯಾಬ್ ಚಾಲಕ ಅತ್ಯಾಚಾರವೆಸಗಿದ ಘಟನೆ ಇಲ್ಲಿಯ ಪಹಾಡಿಶರೀಫ್ ಪೋಲಿಸ್ ಠಾಣಾ ವ್ಯಾಪ್ತಿಯ ಮಾಮಿಡಿಪಲ್ಲಿಯಲ್ಲಿ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಮಹಿಳೆ ಹಗಲಿನಲ್ಲಿ ತನ್ನ ಸ್ನೇಹಿತರೊಂದಿಗೆ ನಗರದಲ್ಲಿಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಅವರನ್ನು ಮನೆಗಳಿಗೆ ಡ್ರಾಪ್ ಮಾಡಿ ಅದೇ ಕ್ಯಾಬ್ ನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಮಾಮಿಡಿಪಲ್ಲಿ ಸಮೀಪ ನಿರ್ಜನ ಸ್ಥಳದಲ್ಲಿ ಕ್ಯಾಬ್ ನಿಲ್ಲಿಸಿದ್ದ ಚಾಲಕ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ತನಿಖೆಯನ್ನು ಆರಂಭಿಸಿರುವ ಪೋಲಿಸರು ಆರೋಪಿಯ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.
ಇಸ್ರೇಲ್ ಭದ್ರತಾ ಮುಖ್ಯಸ್ಥರ ನೇಮಕ ; ನಿರ್ಧಾರ ಬದಲಿಸಿದ ಪ್ರಧಾನಿ ನೆತನ್ಯಾಹು
ಜೆರುಸಲೇಂ: ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ನೌಕಾಪಡೆಯ ಮಾಜಿ ಕಮಾಂಡರ್ ವೈಸ್ ಅಡ್ಮಿರಲ್ ಎಲಿ ಶಾರ್ವಿತ್ ರನ್ನು ಭದ್ರತಾ ಏಜೆನ್ಸಿ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದಲಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. `ಕರ್ತವ್ಯ ನಿರ್ವಹಿಸಲು ಸಿದ್ಧ ಎಂಬ ಹೇಳಿಕೆಗಾಗಿ ವೈಸ್ ಅಡ್ಮಿರಲ್ ಶಾರ್ವಿತ್ ಅವರಿಗೆ ಪ್ರಧಾನಿ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ಹೆಚ್ಚಿನ ಪರಿಶೀಲನೆಯ ನಂತರ ಇತರ ಅಭ್ಯರ್ಥಿಗಳನ್ನು ಪರೀಕ್ಷಿಸಲು ಅವರು ಉದ್ದೇಶಿಸಿದ್ದಾರೆ' ಎಂದು ಪ್ರಧಾನಿ ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಭದ್ರತಾ ಏಜೆನ್ಸಿಯ ಹಾಲಿ ನಿರ್ದೇಶಕ ರೊನೆನ್ ಬಾರ್ ಅವರನ್ನು ವಜಾಗೊಳಿಸುವ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ಸ್ಥಗಿತಗೊಳಿಸಿದ ಮಧ್ಯೆಯೇ, ಶಾರ್ವಿತ್ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಕಗೊಳಿಸುವ ನಿರ್ಧಾರವನ್ನು ಸೋಮವಾರ ನೆತನ್ಯಾಹು ಘೋಷಿಸಿದ್ದರು. ಬಾರ್ ಅವರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಇಸ್ರೇಲ್ ನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಶಾರ್ವಿತ್ ರನ್ನು ನೇಮಕಗೊಳಿಸುವ ನಿರ್ಧಾರವನ್ನು ಘೋಷಿಸಿದ ಕೆಲ ಗಂಟೆಗಳಲ್ಲೇ, ನೆತನ್ಯಾಹು ಸರಕಾರದ ವಿರುದ್ಧ ನಡೆದಿದ್ದ ಪ್ರತಿಭಟನೆಗಳಲ್ಲಿ ಶಾರ್ವಿತ್ ಪಾಲ್ಗೊಂಡಿದ್ದ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆತನ್ಯಾಹು ಸರಕಾರದ ನ್ಯಾಯಾಂಗ ಸುಧಾರಣೆ ಪ್ರಯತ್ನಗಳನ್ನು ವಿರೋಧಿಸಿ 2023ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಶಾರ್ವಿತ್ ಕೂಡಾ ಪಾಲ್ಗೊಂಡಿದ್ದರು. ಅಲ್ಲದೆ ನೆತನ್ಯಾಹು ವಿರೋಧಿಸಿದ್ದ ಲೆಬನಾನ್ ಜತೆಗಿನ ಜಲ ಒಪ್ಪಂದವನ್ನು ಶಾರ್ವಿತ್ ಬೆಂಬಲಿಸಿದ್ದರು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದ್ದವು. ಹವಾಮಾನ ಬದಲಾವಣೆ ಸಮಸ್ಯೆ ಕುರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ವಿರೋಧಿಸಿ ಶಾರ್ವಿತ್ ಲೇಖನ ಬರೆದಿರುವುದನ್ನು ಟ್ರಂಪ್ ಬೆಂಬಲಿಗ, ಸೆನೆಟರ್ ಲಿಂಡ್ಸೆ ಗ್ರಹಾಂ ಟೀಕಿಸಿದ್ದರು. ` ಅಧ್ಯಕ್ಷ ಟ್ರಂಪ್ಗಿಂತ ಉತ್ತಮ ಬೆಂಬಲಿಗರು ಇಸ್ರೇಲ್ ಗೆ ಎಂದಿಗೂ ಇರಲಿಲ್ಲ. ಅಧ್ಯಕ್ಷ ಟ್ರಂಪ್ ಹಾಗೂ ಅವರ ನೀತಿಗಳ ಬಗ್ಗೆ ಎಲಿ ಶಾರ್ವಿತ್ ಅವರ ಹೇಳಿಕೆಗಳು ಈ ನಿರ್ಣಾಯಕ ಸಂದರ್ಭದಲ್ಲಿ ಅನಗತ್ಯ ಒತ್ತಡ ಸೃಷ್ಟಿಸಲಿವೆ. ಆದ್ದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ ನಿರ್ಧಾರ ಬದಲಾಯಿಸಬೇಕೆಂದು ನನ್ನ ಇಸ್ರೇಲಿ ಸ್ನೇಹಿತರಿಗೆ ಸಲಹೆ ಮಾಡುತ್ತೇನೆ' ಎಂದು ಗ್ರಹಾಂ ಸೋಮವಾರ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
ಅಜೆಕಾರು ಕೊಲೆ ಪ್ರಕರಣ: ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು
ಕಾರ್ಕಳ, ಎ.1: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ(44) ಕೊಲೆ ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆ(28)ಗೆ ರಾಜ್ಯ ಹೈಕೋರ್ಟ್ ಇಂದು ಜಾಮೀನು ನೀಡಿ ಆದೇಶಿಸಿದೆ. ದಿಲೀಪ್ ಹೆಗ್ಡೆ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಮಾ.4ರಂದು ತಿರಸ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆರೋಪಿ ದಿಲೀಪ್ ಹೆಗ್ಡೆಗೆ ಜಾಮೀನು ನೀಡಿ ಆದೇಶಿಸಿದೆ. ಆರೋಪಿ ಪರವಾಗಿ ನ್ಯಾಯವಾದಿ ನಿಶ್ಛಿತ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದಾರೆ. 2024ರ ಅ.20ರಂದು ಬಾಲಕೃಷ್ಣ ಪೂಜಾರಿ ಎಂಬವರನ್ನು ಅವರ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಕೊಲೈಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಅ.25ರಂದು ಅಜೆಕಾರು ಪೊಲೀಸರು ಬಂಧಿಸಿದ್ದರು.
ಅಮೆರಿಕ-ಬ್ರಿಟನ್ ಜಂಟಿ ನೆಲೆಯ ಮೇಲೆ ದಾಳಿ: ಇರಾನ್ ಬೆದರಿಕೆ
ಟೆಹ್ರಾನ್: ಇರಾನ್ ಗುರಿಯಾಗಿಸಿ ಅಮೆರಿಕ ದಾಳಿ ನಡೆಸುವ ಮೊದಲೇ ಹಿಂದೂ ಮಹಾಸಾಗರದಲ್ಲಿರುವ ಅಮೆರಿಕ- ಬ್ರಿಟನ್ ಜಂಟಿ ಸೇನಾನೆಲೆ ಡಿಯೆಗೊ ಗ್ರಾಸಿಯಾದ ಮೇಲೆ ಮುನ್ನೆಚ್ಚರಿಕೆಯ ದಾಳಿ ನಡೆಸುವುದಾಗಿ ಇರಾನ್ ಪ್ರತಿಜ್ಞೆ ಮಾಡಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ಟೆಲಿಗ್ರಾಫ್' ವರದಿ ಮಾಡಿದೆ. ಬ್ರಿಟನ್ ಒಡೆತನದ ಡಿಯೆಗೊ ಗಾರ್ಸಿಯಾವು ಚಾಗೋಸ್ ದ್ವೀಪ ಸಮುದಾಯದಲ್ಲಿನ ಪ್ರಮುಖ ದ್ವೀಪವಾಗಿದೆ. ಇರಾನ್ ಮೇಲೆ ದಾಳಿ ನಡೆಸುವ ಟ್ರಂಪ್ ಬೆದರಿಕೆ ಇನ್ನಷ್ಟು ಗಂಭೀರವಾದರೆ ಬ್ರಿಟನ್-ಅಮೆರಿಕ ಜಂಟಿ ಸೇನಾನೆಲೆಯನ್ನು ಗುರಿಯಾಗಿಸಿ ಮುನ್ನೆಚ್ಚರಿಕೆ ದಾಳಿ ನಡೆಸುವಂತೆ ಮಿಲಿಟರಿ ಕಮಾಂಡರ್ ಗಳಿಗೆ ಸೂಚಿಸಲಾಗಿದೆ ಎಂದು ಇರಾನ್ ನ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಉಪಗ್ರಹಗಳಿಂದ ಲಭಿಸಿದ ಚಿತ್ರಗಳ ಪ್ರಕಾರ, ಕಳೆದ ವಾರ ಈ ಸೇನಾನೆಲೆಗೆ ಕನಿಷ್ಠ 3 ಬಿ-2 ಸ್ಪಿರಿಟ್ ಜೆಟ್(ಅತ್ಯಾಧುನಿಕ ಬಾಂಬರ್ ವಿಮಾನಗಳು) ಆಗಮಿಸಿವೆ. ಸೇನಾ ನೆಲೆಯಲ್ಲಿ ಬಿ-1 ಲ್ಯಾನ್ಸರ್, ಬಿ-2 ಸ್ಪಿರಿಟ್ ಮತ್ತು ಬಿ-52 ಸ್ಟ್ರಟೊಫೋಟ್ರೆಸ್ ಬಾಂಬರ್ ಗಳು ಹಾಗೂ ಸುಮಾರು 4 ಸಾವಿರ ಮಿಲಿಟರಿ ಸಿಬ್ಬಂದಿಗಳಿದ್ದಾರೆ. ಮುನ್ನೆಚ್ಚರಿಕೆ ನೀಡುವ ಕ್ರಮವಾಗಿ ಡಿಯೆಗೊ ಗಾರ್ಸಿಯಾದತ್ತ ಕ್ಷಿಪಣಿ ದಾಳಿ ನಡೆಸಲು ಕೆಲವರು ಸಲಹೆ ನೀಡಿದ್ದು ಇದನ್ನು ಪರಿಶೀಲಿಸಲಾಗುತ್ತಿದೆ. ಸೇನಾ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸುವ ಬದಲು, ಸೇನಾ ನೆಲೆಯ ಬಳಿಯಿರುವ ಸಮುದ್ರಕ್ಕೆ ಅಪ್ಪಳಿಸುವಂತೆ ಕ್ಷಿಪಣಿ ದಾಳಿ ನಡೆಸಿ ನಮ್ಮ ಸಾಮಥ್ರ್ಯದ ಬಗ್ಗೆ ಸಂದೇಶ ರವಾನಿಸುವ ಯೋಜನೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ಇರಾನ್ ನ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಗರಿಷ್ಠ ಒತ್ತಡವನ್ನು ಮುಂದುವರಿಸಲಾಗುವುದು. ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ನಿಯಂತ್ರಿಸುವ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಆ ದೇಶದ ಮೇಲೆ ಬಾಂಬ್ ದಾಳಿಯ ಸಾಧ್ಯತೆಯನ್ನೂ ತಳ್ಳಿಹಾಕಲಾಗದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎಚ್ಚರಿಕೆ ನೀಡಿದ್ದರು. ಟ್ರಂಪ್ ಅವರ ಬೆದರಿಕೆಗೆ ನಮ್ಮ ಪ್ರತಿಕ್ರಿಯೆ ಶಬ್ದಗಳಲ್ಲಿ ಅಲ್ಲ, ಕ್ರಿಯೆಗಳ ಮೂಲಕ ವ್ಯಕ್ತವಾಗಲಿದೆ. ಈ ವಲಯದಲ್ಲಿರುವ ಎಲ್ಲಾ ಸೇನಾ ನೆಲೆಗಳೂ ನಮ್ಮ ಕ್ಷಿಪಣಿಗಳ ವ್ಯಾಪ್ತಿಯಲ್ಲಿವೆ. ಕ್ಷಿಪಣಿಗಳನ್ನು ಲೋಡ್ ಮಾಡಲಾಗಿದ್ದು ಇರಾನ್ಗೆ ಯಾವ ದಿಕ್ಕಿನಿಂದ ಬೆದರಿಕೆ ಎದುರಾದರೂ ಗುರಿಯಾಗಿಸಲು ಸಿದ್ಧವಾಗಿರಿಸಲಾಗಿದೆ. ನಮಗೆ ದೊರಕಿದ ವರದಿ ಪ್ರಕಾರ, ಎಲ್ಲಾ ಕ್ಷಿಪಣಿ ಲಾಂಚರ್ ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಮತ್ತು ಪರಮಾಣು ತಾಣಗಳಿಗೆ ಭದ್ರತೆ ಹೆಚ್ಚಿಸುವಂತೆ ಕಮಾಂಡರ್ ಗಳಿಗೆ ಸೂಚಿಸಲಾಗಿದೆ' ಎಂದು ಇರಾನ್ ನ ಅಧಿಕಾರಿ ಹೇಳಿದ್ದಾರೆ.
ಆರ್ಟಿಇ ಅಡಿ ಶಾಲಾ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಎ.15ರಿಂದ ಅವಕಾಶ
ಬೆಂಗಳೂರು : ಖಾಸಗಿ ಮತ್ತು ಅನುದಾನಿಕ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ(ಆರ್ ಟಿಇ) ಪ್ರವೇಶಾತಿ ಕೋರಿ ಅರ್ಜಿ ಸಲ್ಲಿಸುವ ಕುರಿತಾಗಿ ಶಿಕ್ಷಣ ಇಲಾಖೆಯು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಆನ್ಲೈನ್ ಅರ್ಜಿಗಳನ್ನು ಸಲ್ಲಿಸಲು ಎ.15ರಿಂದ ಮೇ.12ರ ವರೆಗೆ ಅವಕಾಶ ನೀಡಲಾಗಿದೆ. ಮಾರ್ಗಸೂಚಿಯಂತೆ ಮಾ.28ರಂದೇ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿದಂತೆ ನೆರೆಹೊರೆಯ ಎಲ್ಲ ಶಾಲೆಗಳ ತಾತ್ಕಾಲಿಕ ಪಟ್ಟಿಯನ್ನು ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿಯನ್ನು ಶಾಲಾವಾರು ಶೇ.25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ಕನಿಷ್ಟ ಲಭ್ಯವಿರುವ ಶಾಲಾವಾರು ಸೀಟುಗಳ ಸಂಖ್ಯೆಯನ್ನು ಆಯಾ ಜಿಲ್ಲೆಯ ಅಧಿಕೃತ ವೆಬ್ಸೈಟ್ನಲ್ಲಿ ಅಥವಾ ಕಛೇರಿಯ ನೋಟೀಸ್ ಬೋರ್ಡ್ನಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಅರ್ಜಿ ಸಲ್ಲಿಸಿ, ದಾಖಲೆ ಪರಿಶೀಲನೆ ನಂತರ ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಮೇ 17ರಂದು ಪ್ರಕಟಿಸಲಾಗುವುದು. ಆನ್ ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಮೇ 21ರಂದು ನಡೆಸಲಾಗುವುದು. ಮೇ 22ರಿಂದ ಮೇ 31ವರೆಗೆ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭವಾಗಲಿದೆ ಎಂದು ಇಲಾಖೆ ಹೇಳಿದೆ.
ಜಾಮರ್ ಸಮಸ್ಯೆ ಪರಿಹರಿಸದಿದ್ದಲ್ಲಿ ಜೈಲಿಗೆ ಮುತ್ತಿಗೆ: ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ
ಮಂಗಳೂರು, ಎ.1: ನಗರದ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ನಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಎ.3ರೊಳಗೆ ಈ ಸಮಸ್ಯೆ ಬಗೆಹರಿಸಿದ್ದರೆ ಎ.4ರಂದು ರಾಸ್ತಾ ರೋಕೋ ನಡೆಸಿ ಜೈಲ್ಗೆ ಮುತ್ತಿಗೆ ಹಾಕಲಾಗುವುದು ಎಂದು ಶಾಸಕ ಡಾ. ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ. ಜೈಲ್ ಜಾಮರ್ನಿಂದಾಗಿ ಸುತ್ತಮುತ್ತ ವ್ಯಾಪಾರಿಗಳು, ನಾಗರಿಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.ಹಾಗಾಗಿ ರಾಸ್ತಾ ರೋಕೋ ನಡೆಸಿ ಮುತ್ತಿಗೆ ಹಾಕುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
CM Siddaramaiah Image By Using AI : AI ಪ್ರಾಂಪ್ಟ್: ಕರ್ನಾಟಕದ ಮುಖ್ಯಮಂತ್ರಿಯವರ ಚಿತ್ರ ಮತ್ತು ಕರ್ನಾಟಕಕ್ಕೆ ಅವರ ಕೊಡುಗೆಗಳು ಎನ್ನುವ ಒಕ್ಕಣೆಯನ್ನು ಹಾಕಿಕೊಂಡು, ಬಿಜೆಪಿಯ ಐಟಿ ಸೆಲ್ ಟ್ವೀಟ್ ಒಂದನ್ನು ಮಾಡಿದೆ. ಇದಕ್ಕೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗೆ ಹೋಗಿರುವ ವಿಷಯವನ್ನು ಕಾಂಗ್ರೆಸ್ ಪ್ರಸ್ತಾವಿಸಿ, ತಿರುಗೇಟು ನೀಡಿದೆ.
ಉಡುಪಿ, ಎ.1: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಅಡಚಣೆ ಯಾಗುವ ಬೈಂದೂರು-ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ತಗ್ಗರ್ಸೆ ಗ್ರಾಮದ 153 ಮರಗಳು, ಯಳಜಿತ್ ಗ್ರಾಮದ 600 ಮರಗಳು, ಗೋಳಿಹೊಳೆ ಗ್ರಾಮದ 1242 ಮರಗಳು ಹಾಗೂ ಜಡ್ಕಲ್ ಗ್ರಾಮದ 219 ಮರಗಳು ಸೇರಿದಂತೆ ಒಟ್ಟು 2214 ವಿವಿಧ ಜಾತಿಯ ಮರಗಳನ್ನು ತೆರವು ಗೊಳಿಸುವುದಕ್ಕಾಗಿ ಸಾರ್ವಜನಿಕರ ಅಹವಾಲು ಸಭೆಯನ್ನು ಕರೆಯಲಾಗಿದೆ. ಸಭೆಯು ಎಪ್ರಿಲ್ 22ರಂದು ಬೈಂದೂರು ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ತಗ್ಗರ್ಸೆ ಗ್ರಾಮಕ್ಕೆ ಸಂಬಂಧಿಸಿದಂತೆ ಬೆಳಗ್ಗೆ 10 ಗಂಟೆಗೆ, ಯಳಜಿತ್ ಗ್ರಾಮಕ್ಕೆ ಸಂಬಂಧಿಸಿದಂತೆ 11:30ಕ್ಕೆ, ಗೋಳಿಹೊಳೆ ಗ್ರಾಮಕ್ಕೆ ಸಂಬಂಧಿಸಿದಂತೆ ಅಪರಾಹ್ನ 2:00ಕ್ಕೆ ಹಾಗೂ ಜಡ್ಕಲ್ ಗ್ರಾಮಕ್ಕೆ ಸಂಬಂಧಿ ಸಿದಂತೆ 3:30ಕ್ಕೆ ನಡೆಯಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಯಲ್ಲಿ ಹಾಜರಾಗಿ ಅಥವಾ ಆ ದಿನಾಂಕದ ಒಳಗೆ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ ಕುಂದಾಪುರ ಇವರಿಗೆ ಲಿಖಿತ ರೂಪದಲ್ಲಿ, ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ -kpurforest@yahoo.com- ಸಹ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆ ತಿಳಿಸಿದೆ.
ಯಾದಗಿರಿ | ಬ್ಯಾಂಕ್ ಸಾಲ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ
ಸುರಪುರ : ಜಿಲ್ಲೆಯಲ್ಲಿನ ಬ್ಯಾಂಕುಗಳಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಸಾಲ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ರಾಜಾ ವೆಂಕಟಪ್ಪ ನಾಯಕ ನಾಮಫಲಕದ ಬಳಿ ಪ್ರತಿಭಟನೆ ನಡೆಸಲಾಯಿತು. ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಯಾದಗಿರಿ ಜಿಲ್ಲೆಯ ಬ್ಯಾಂಕ್ಗಳ ಪ್ರಾದೇಶಿಕ ವ್ಯವಸ್ಥಾಪಕರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಬ್ಯಾಂಕುಗಳಲ್ಲಿ ಸಾಲವನ್ನು ನೀಡುತ್ತಿಲ್ಲ, ಬೇರೆ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳಲು ಎನ್ ಓ ಸಿ ಕೂಡ ನೀಡುತ್ತಿಲ್ಲ. ಇದರಿಂದಾಗಿ ಗ್ರಾಹಕರು ಬ್ಯಾಂಕುಗಳಿಗೆ ಹಿಡಿ ಶಾಪ ಹಾಕುವಂತಹ ಪರಿಸ್ಥಿತಿ ಎದುರಾಗಿದೆ, ಇದರ ವಿರುದ್ಧ ಪ್ರಾದೇಶಿಕ ವ್ಯವಸ್ಥಾಪಕರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ತಾಲೂಕಾಧ್ಯಕ್ಷ ನಾಗರಾಜ ದರ್ಬಾರಿ, ವೆಂಕಟೇಶ, ಹಣಮಂತರಾಯ, ಶಿವು, ಅಂಬರೀಶ, ದೇವಪ್ಪ,ನಾಗರಾಜ, ಸಂತೋಷ್ ಸೇರಿದಂತೆ ಅನೇಕರು ಭಾಗವಹಿಸಿದ್ದರು
ಕಲಬುರಗಿ | ಶಾಲಾ ಕಟ್ಟಡ, ರಸ್ತೆ ಕಾಮಗಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಅವರಿಂದ ಚಾಲನೆ
ಕಲಬುರಗಿ : ಆಳಂದ ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ರಸ್ತೆ ಹಾಗೂ ಶಾಲಾ ಕಟ್ಟಡ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರು ಮೂರು ದಿನಗಳಿಂದ ಸರಣಿ ಚಾಲನೆ ನೀಡುವುದರೊಂದಿಗೆ ಕ್ಷೇತ್ರದಲ್ಲಿ ಬೇಸಿಗೆ ನೀರು ಸೇರಿ ಮೂಲಸೌಲಭ್ಯಗಳ ಸಮಸ್ಯೆಗಳನ್ನು ಆಲಿಸಿ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. ಆಳಂದ ತಾಲೂಕಿನ ತುಗಾಂವ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅಕ್ಷರ ಅವಿಸ್ಕಾರ ಯೋಜನೆ ಅಡಿಯಲ್ಲಿ 56 ಲಕ್ಷ ರೂ. ಅನುದಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಗುದ್ದಲಿ ಪೂಜೆಯನ್ನು ಶಾಸಕರು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ, ತಾಪಂ ಮಾಜಿ ಉಪಾಧ್ಯಕ್ಷ ಗುರುನಾಥ ಪಾಟೀಲ, ಕುರುಬ ಸಮಾಜ ಮುಖಂಡ ತುಕಾರಾಮ ವಗ್ಗೆ, ಸಿದ್ಧುಗೌಡ ಪಾಟೀಲ ಮಗಿ, ಈರಣ್ಣಾ ಹತ್ತರಕಿ, ಗುತ್ತಿಗೆದಾರ ದಯಾನಂದ ಚೌಲ ಸೇರಿದಂತೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಶಾಸಕರು ಸ್ವಗ್ರಾಮ ಸರಸಂಬಾ ಗ್ರಾಮದಿಂದ ಚಿಂಚೋಳಿ ಕೆ. ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ 1.85 ಕೋಟಿ ರೂ. ವೆಚ್ಚದಲ್ಲಿ ಹಾಗೂ ಸರಸಂಬಾ ಗ್ರಾಮದಿಂದ ಮಾಹಾರಾಷ್ಟ್ರದ ಗೋಗಾಂವ ಬಾರ್ಡರ್ ವರೆಗೆ 2.19 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಗುದ್ದಲಿ ಪೂಜೆ ನೆರವೇರಸಿದರು. ನಿಂಬರಗಾ ವಲಯದ ಮಾಡಿಯಾಳ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅಕ್ಷರ ಅವಿಸ್ಕಾರ ಯೋಜನೆ ಅಡಿಯಲ್ಲಿ 75 ಲಕ್ಷ ರೂ. ಅನುದಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಮಾಡಿಯಾಳ ಕ್ರಾಸ್ ದಿಂದ ಜವಳಿ ಡಿ ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ 5.6 ಕೋಟಿ ರೂ. ವೆಚ್ಚದಲ್ಲಿ ಡಾಂಬರಿಕರಣ ರಸ್ತೆ ಗುದ್ದಲಿ ಪೂಜೆ ನೇರವೇರಿಸಿದ್ದರು. ಬಳಿಕ ಕುಡಕಿ ಗ್ರಾಮದ ಕೆ.ಕೆ.ಆರ್.ಡಿ.ಬಿ ಅಕ್ಷರ ಅವಿಸ್ಕಾರ ಯೋಜನೆ ಅಡಿಯಲ್ಲಿ 75 ಲಕ್ಷ ರೂ. ಅನುದಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಗುದ್ದಲಿ ಪೂಜೆ ನೇರವೇರಸಿ ಗುಣಪಟ್ಟದ ಕಾಮಗಾರಿ ಕೈಗೊಂಡು ಸಕಾಲಕ್ಕೆ ಕೋಣೆಗಳು ನಿಮಿಸುವಂತಾಗಬೇಕು ಎಂದು ಕಾಮಗಾರಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಈ ಮುನ್ನದಿನ ಕಡಗಂಚಿ, ನರೋಣಾ ಮುಖ್ಯರಸ್ತೆಯಿಂದ ಗೋಳಾ ಬಿ. ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ 3.22 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಗುದ್ದಲಿ ಪೂಜೆ ನೆರವೇರಸಿ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಉತ್ತಮ ರಸ್ತೆ ನಿರ್ಮಾಣವಾಗಬೇಕು ಕಾಮಗಾರಿಗೆ ಸ್ಥಳೀಯ ನಿಗಾವಹಿಸಬೇಕು ಎಂದು ಹೇಳಿದರು. ಕಿಣ್ಣಿಸುಲ್ತಾನ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಿಣ್ಣಿಸುಲ್ತಾನ್ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕರು ಚಾಲನೆ ನೀಡಿ, ತೊಗರಿ ಖರೀದಿಯಿಂದ ರೈತರಿಗೆ ಅನುಕೂಲವಾಗಲಿದೆ ಸರಣಿಯಂತೆ ಹೆಸರು ನೋಂದಾಯಿಸಿ ತೊಗರಿ ಮಾರಾಟ ಮಾಡಬೇಕು ಹಾಗೂ ಖರೀದಿ ಮತ್ತು ತೂಕದಲ್ಲಿ ಯಾವುದೇ ಸಮಸ್ಯೆಯಾಗದಂತೆ ಸಂಘದವರು ನೋಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಬಳಿಕ ಕಿಣ್ಣಿಸುಲ್ತಾನ್ ಗ್ರಾಮದಿಂದ ಹೊನ್ನಳ್ಳಿ ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ 3.14 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಹಾಗೂ 25 ಲಕ್ಷ ರೂ. ವೆಚ್ಚದಲ್ಲಿ ನಮ್ಮ ಹೊಲ ನಮ್ಮ ರಸ್ತೆ ಕಾಂಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಸೇರಿದಂತೆ ಗ್ರಾಮ ಪಂಚಾಯತ್, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಮುನ್ನಹಳ್ಳಿ ಗ್ರಾಮದಿಂದ ಬಸವನಸಂಗೋಳಗಿ ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ 3.99 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಗುದ್ದಲಿ ಪೂಜೆ ನೆರವೇರಿಸಿ, ಬಸವಣ್ಣ ಸಂಗೋಳಗಿ ಗ್ರಾಮದ ಹದಗೇಟ ರಸ್ತೆ ನಿರ್ಮಾಣ ಉತ್ತಮಕಾರ್ಯ ಕೈಗೊಂಡು ಸಂಚಾರಕ್ಕೆ ಅನುಕೂಲ ಒದಗಿಸಬೇಕು ಎಂದು ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ದರ್ಗಾಶಿರೂರ್ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅಕ್ಷರ ಅವಿಸ್ಕಾರ ಯೋಜನೆ ಅಡಿಯಲ್ಲಿ 1 ಕೋಟಿ ರೂ. ಅನುದಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಕೆರೂರ ಗ್ರಾಮದಲ್ಲಿ 78 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಶಾಲಾ ಕೋಣೆಗಳ ನಿರ್ಮಾಣ ಮತ್ತು ನಿಂಬಾಳ ಗ್ರಾಮದಲ್ಲಿ 50 ಲಕ್ಷ ರೂ.ಗಳಲ್ಲಿ ಮೂರು ಶಾಲಾ ಕೋಣೆ ನಿರ್ಮಾಣಕ್ಕೆ ಶಾಸಕರು ಗುದ್ದಲಿ ಪೂಜೆ ನೇರವೇರಸಿದರು. ಆಯಾ ಗ್ರಾಮಗಳ ಕಾಮಗಾರಿ ಪೂಜೆಯಲ್ಲಿ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು, ಸರ್ಕಾರಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ ಮತ್ತಿತರರ ಗಣ್ಯರು ಭಾಗವಹಿಸಿದ್ದರು. ತುರ್ತು ಕೆಲಸಕ್ಕೆ ಮೊದಲಾದ್ಯತೆ : ನಾನು ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕುಳಿತು ಸಮಸ್ಯೆ ಪಟ್ಟಿಮಾಡಿದವನ್ನಲ್ಲ. ಹಳ್ಳಿಗಳಿಗೆ ನಿರಂತರ ಓಡಾಟ ಎಂದಿನಂತೆ ಇದ್ದುದ್ದೆ. ಹೀಗಾಗಿ ಕ್ಷೇತ್ರದಲ್ಲಿನ ಎಲ್ಲ ರೀತಿಯ ಸಮಸ್ಯೆಗಳ ಅರಿವಿದೆ. ಜನರ ಬೇಡಿಕೆ ಮತ್ತು ತುರ್ತು ಅಗತ್ಯತೆಯನ್ನು ಎರಡೂ ಕ್ರೂಢಿಕರಿಸಿ ಅನುದಾನ ಬಂದಂತೆ ಕಾಮಗಾರಿಗಳನ್ನು ಸ್ವಯಂ ಪ್ರೇರಿತವಾಗಿ ಮಂಜೂರಾತಿಗೊಳಿಸಿ ಚಾಲನೆ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ಶಾಲೆ, ರಸ್ತೆ, ನೀರಾವರಿ ಕಾಮಗಾರಿಗಳಿಗೆ ಪ್ರಯತ್ನಿಸಲಾಗುತ್ತಿದೆ. ಸದ್ಯ ಬೇಸಿಗೆ ನೀರಿನ ಬವಣೆ ನಿವಾರಿಸಬೇಕಾಗಿದೆ ಇಂಥ ಕೆಲಸಕ್ಕೆ ಜನರ ಸಹಕಾರ ಅಗತ್ಯವಾಗಿದೆ. - ಬಿ.ಆರ್. ಪಾಟೀಲ್, ಶಾಸಕರು
ಎಂಪುರಾನ್ ವಿವಾದ: ಬಲಪಂಥೀಯ ಸಂಘಟನೆಗಳ ಆಕ್ರೋಶದ ನಂತರ 24 ದೃಶ್ಯಗಳಿಗೆ ಕತ್ತರಿ ಹಾಕಿದ ಚಿತ್ರ ತಂಡ
ತಿರುವನಂತಪುರಂ: ವಿವಾದಿತ ಪಾತ್ರದ ಹೆಸರನ್ನು ಬದಲಿಸುವುದರಿಂದ ಹಿಡಿದು, ಕೃತಜ್ಞತೆಗಳ ಪಟ್ಟಿಯಿಂದ ಕೇಂದ್ರ ಸಚಿವ ಸುರೇಶ್ ಗೋಪಿ ಹೆಸರನ್ನು ಕೈಬಿಡುವವರೆಗೆ ಒಟ್ಟು 24 ದೃಶ್ಯಗಳನ್ನು ಸ್ವಯಂಪ್ರೇರಿತವಾಗಿ ಕೈಬಿಟ್ಟಿರುವ ಮೋಹನ್ ಲಾಲ್ ನಾಯಕತ್ವದ ಬಹು ನಿರೀಕ್ಷಿತ 'ಎಲ್2: ಎಂಪುರಾನ್' ಚಲನಚಿತ್ರ ಮರು ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ವಿರುದ್ಧ ಬಿಜೆಪಿ-ಸಂಘ ಪರಿವಾರದ ಕಾರ್ಯಕರ್ತರು ಬಲವಾದ ಅಭಿಯಾನ ನಡೆಸುತ್ತಿರುವ ಬೆನ್ನಿಗೇ, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರದ ನಿರ್ಮಾಪಕ ಆ್ಯಂಟನಿ ಪೆರುಂಬವೂರ್, ಯಾವುದೇ ವರ್ಗದ ಯಾವುದೇ ಬಗೆಯ ಒತ್ತಡಕ್ಕೆ ಒಳಗಾಗದೆ ಕೆಲ ದೃಶ್ಯಗಳನ್ನು ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮರು ಸೆನ್ಸಾರ್ ಪ್ರಮಾಣ ಪತ್ರವನ್ನು ಈಗಾಗಲೇ ಮಂಜೂರು ಮಾಡಿರುವುದರಿಂದ, ಚಿತ್ರದ ಮರು ಸಂಕಲನಗೊಂಡ ಆವೃತ್ತಿಯು ಯಾವುದೇ ಕ್ಷಣದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಚಿತ್ರದ ಖಳನಾಯಕ ಪಾತ್ರದ ಬಾಲರಾಜ್ ಅಲಿಯಾಸ್ ಬಾಬಾ ಬಜರಂಗಿ ಹೆಸರು ಬಜರಂಗ ದಳದ ನಾಯಕ ಬಾಬು ಬಜರಂಗಿ ಹೆಸರನ್ನು ಹೋಲುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿರುವುದರಿಂದ, ಆ ಪಾತ್ರದ ಹೆಸರನ್ನು ಬಲದೇವ್ ಎಂದು ಬದಲಾವಣೆ ಮಾಡಿರುವುದೂ ಸೇರಿದಂತೆ, ಚಿತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಇದರೊಂದಿಗೆ, ಚಿತ್ರದಿಂದ ತೆಗೆದು ಹಾಕಿರುವ ದೃಶ್ಯಗಳಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರದ ಕೆಲವು ದೃಶ್ಯಗಳು, ಪ್ರಾರ್ಥನಾ ಸ್ಥಳಗಳ ದೃಶ್ಯಗಳೂ ಸೇರಿವೆ. ರಾಷ್ಟ್ರೀಯ ತನಿಖಾ ದಳದ ಉಲ್ಲೇಖ ಸೇರಿದಂತೆ ಹಲವು ಸಂಭಾಷಣೆಗಳನ್ನೂ ನಿಶ್ಯಬ್ದಗೊಳಿಸಲಾಗಿದೆ. 2002ನೇ ವರ್ಷ ಎಂಬ ಉಲ್ಲೇಖವನ್ನು 'ಕೆಲವು ವರ್ಷಗಳ ಹಿಂದೆ' ಎಂದು ಬದಲಿಸಲಾಗಿದೆ. ಕೃತಜ್ಞತಾ ಪಟ್ಟಿಯಲ್ಲಿದ್ದ ಕೇರಳದ ಏಕೈಕ ಬಿಜೆಪಿ ಸಂಸದರಾದ ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಹೆಸರನ್ನು ಅವರ ಮನವಿಯ ಮೇರೆಗೆ ಕೈಬಿಡಲಾಗಿದೆ. ಭಾರತೀಯ ಕಂದಾಯ ಸೇವೆಯ ಅಧಿಕಾರಿಯೊಬ್ಬರಿಗೆ ಸಲ್ಲಿಸಲಾಗಿದ್ದ ಕೃತಜ್ಣತೆಯನ್ನೂ ತೆಗೆದು ಹಾಕಲಾಗಿದೆ. ಇದಕ್ಕೂ ಮುನ್ನ, ಮಾರ್ಚ್ 27ರಂದು ಬಿಡುಗಡೆಯಾಗಿದ್ದ 'ಎಂಪುರಾನ್' ಚಿತ್ರದಿಂದ ಎರಡು ನಿಮಿಷ ಹಾಗೂ ಎಂಟು ಸೆಕೆಂಡ್ಗಳ ಅವಧಿಯನ್ನು ಕಡಿತಗೊಳಿಸಲಾಗಿದೆ. ಸೋಮವಾರದವರೆಗೆ 200 ಕೋಟಿ ರೂ.ಗೂ ಹೆಚ್ಚು ಗಲ್ಲಾಪೆಟ್ಟಿಗೆ ಸಂಗ್ರಹ ಕಂಡಿರುವ ಸ್ವಯಂಪ್ರೇರಿತ ಕಡಿತವಿಲ್ಲದ 'ಎಂಪುರಾನ್' ಚಿತ್ರವನ್ನು ವೀಕ್ಷಿಸಲು ಕಳೆದ ಒಂದೆರಡು ದಿನಗಳಿಂದ ಚಿತ್ರಮಂದಿರಗಳ ಬಳಿ ಪ್ರೇಕ್ಷಕರಿಂದ ಭಾರಿ ನೂಕುನುಗ್ಗಲುಂಟಾಗಿದೆ. ಈ ನಡುವೆ, ಚಿತ್ರದ ಬಗೆಗಿನ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಆ್ಯಂಟನಿ ಪೆರುಂಬವೂರ್, ಚಿತ್ರಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳೂ ಸಾಮೂಹಿಕವಾಗಿದ್ದು, ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮೇಲೆ ದಾಳಿ ನಡೆಸಲು ಯಾವುದೇ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೋಹನ್ ಲಾಲ್ಗೂ ಕೂಡಾ ಚಿತ್ರದ ಕತೆಯ ಬಗ್ಗೆ ಚೆನ್ನಾಗಿ ತಿಳಿದಿತ್ತು. ಸಮಾಜದ ಯಾವುದೇ ವರ್ಗದ ಭಾವನೆಗಳಿಗೆ ಧಕ್ಕೆಯುಂಟು ಮಾಡದಿರಲು ಚಿತ್ರತಂಡವು ಸ್ವಯಂಪ್ರೇರಿತವಾಗಿ ಕೆಲ ದೃಶ್ಯಗಳನ್ನು ಕೈಬಿಟ್ಟಿದೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿರಲಿಲ್ಲ ಎಂದೂ ಅವರು ಸಮಜಾಯಿಷಿ ನೀಡಿದ್ದಾರೆ. ಮೋಹನ್ ಲಾಲ್ ಅವರಿಗೆ ಚಿತ್ರದ ಕತೆ ತಿಳಿದಿರಲಿಲ್ಲ ಎಂಬ ಸೇನೆಯ ಮಾಜಿ ಅಧಿಕಾರಿ ಹಾಗೂ ಬಿಜೆಪಿ ನಾಯಕರಾದ ಎ.ಕೆ.ರವೀಂದ್ರನ್ ಅಲಿಯಾಸ್ ಮೇಜರ್ ರವಿ ಅವರ ಆರೋಪವನ್ನೂ ಆ್ಯಂಟನಿ ತಳ್ಳಿ ಹಾಕಿದ್ದಾರೆ. ಈ ವಿಷಯದ ಕುರಿತು ಚಿತ್ರದ ಕತೆಗಾರ ಮುರಳಿ ಗೋಪಿ ಮೌನವಾಗಿರುವುದರ ಅರ್ಥ, ಅವರು ಸ್ವಯಂಪ್ರೇರಿತ ಕಡಿತದ ನಿರ್ಧಾರದಲ್ಲಿ ಭಾಗಿಯಾಗಿರಲಿಲ್ಲವೆಂದಲ್ಲ ಎಂದೂ ಅವರು ಹೇಳಿದ್ದಾರೆ.
ಕಲಬುರಗಿ | ಡಾ.ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಿ : ತಿಪ್ಪಣ್ಣಪ್ಪ ಕಮಕನೂರ
ಕಲಬುರಗಿ : ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಅವರು ಭಾರತ ಸರ್ಕಾರಕ್ಕೆ ಒತ್ತಾಯಿಸಿದರು. ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಏರ್ಪಡಿಸಿದ ಕರ್ನಾಟಕ ರತ್ನ-ಶತಾಯಿಷಿ ಶ್ರೀ ಡಾ. ಶಿವಕುಮಾರ ಮನಹಾಸ್ವಾಮಿಗಲವರ 118 ನೇ ಜನ್ಮದಿನದ ನಿಮಿತ್ತಮ ಸಾಧಕರಿಗೆ ಸಿದ್ಧಿಯಗಂಗಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀ ಡಾ.ಶಿವಕುಮಾರ ಮಹಾಸ್ವಾಮಿ ಅವರು ಅನ್ನ, ಶಿಕ್ಷಣ ನೀಡಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿ ನಿಂತ ಸಂತ-ಮಹಾತ್ಮರು ಶ್ರೀಗಳಾಗಿದ್ದಾರೆ. ಸಿದ್ಧಗಂಗಾ ಶ್ರೀಗಳು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಕನ್ನಡ ಭವನದ ಆವರಣದಲ್ಲಿನ ಸಾಹಿತ್ಯ ಮಂಟಪಕ್ಕೆ ಶೆಡ್ ನಿರ್ಮಾಣಕ್ಕಾಗಿ 5 ಲಕ್ಷ ರೂ. ಗಳ ಅನುದಾನವನ್ನು ನೀಡಿ ಪರಿಷತ್ತಿನ ಸಾಹಿತ್ಯಕ ಚಟುವಟಿಕೆಗಳಿಗೆ ಸಹಕರಿಸುವುದಾಗಿ ಭರವಸೆ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಯವರು ಅಧ್ಯಕ್ಷರಾದ ನಂತರ ಎಲ್ಲ ಜಾತಿ-ಜನಾಂಗದವರರನ್ನು ಒಟ್ಟುಗೂಡಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಪರಿಷತ್ತನ್ನು ಅನುಭವ ಮಂಟಪದ ರೀತಿಯಲ್ಲಿ ಕನ್ನಡ ಕಟ್ಟುವ ಕಾಯಕ ಮಾಡುತ್ತಿದ್ದಾರೆ ಎಂದು ಮನದುಂಬಿ ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು ಶತಮಾನ ಕಂಡ ಅಪರೂಪದ ಶರಣರಾಗಿದ್ದಾರೆ. ಜಾತಿ, ಧರ್ಮ, ಬೇಧವನ್ನು ಮಾಡದೇ ಎಲ್ಲರೂ ಒಂದೇ ಎಂಬ ಭಾವನೆಯಿಂದ ಹಸಿದು ಬಂದ ಒಡಲುಗಳಿಗೆ ಹೊಟ್ಟೆ ತುಂಬಿಸಿದ ಮಹಾನ್ ಸಂತರಾಗಿದ್ದಾರೆ. ಅಂಥ ಶ್ರೇಷ್ಠ ಸಂತ ಇಂದಿನ ಹೊಸ ಜನಾಂಗಕ್ಕೆ ಪ್ರೇರಣೆಯಾಗಬೇಕೆಂದರು. ಪತ್ರಕರ್ತರ ಸಂಗದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಮುಖಂಡರಾದ ರವಿ ಬಿರಾದಾರ ಕಮಲಾಪೂರ, ಬಸವರಾಜ ಬಿರಬಿಟ್ಟೆ, ಅಕಾಡೆಮಿ ಅಧ್ಯಕ್ಷ ಬಿ.ಎಂ.ಪಾಟೀಲ ಕಲ್ಲೂರ ಮಾತನಾಡಿದರು. ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ಧರ್ಮರಾಜ ಜವಳಿ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಶಕುಂತಲಾ ಪಾಟೀಲ,. ಜ್ಯೋತಿ ಕೋಟನೂರ, ಬಾಬುರಾವ ಪಾಟೀಲ, ರವಿಕುಮಾರ ಶಹಾಪುರಕರ್, ಸಂತೋಷ ಕುಡಳ್ಳಿ, ಶರಣಬಸಪ್ಪ ಕೋಬಾಳ, ಎಸ್.ಕೆ. ಬಿರಾದಾರ, ಅಮೃತಪ್ಪ ಅಣೂರ ಕವಿಗಳು ಇತರರಿದ್ದರು. ವಿವಿಧ ಕ್ಷೇತ್ರದ ಪ್ರಮುಖರಾದ ರಾಜೇಶ ಬಾಲಕಿಶನ್ ವರ್ಮಾ, ಕಲ್ಯಾಣಕುಮಾರ ಸಂಗಾವಿ, ಡಾ.ಸಿದ್ದು ಪಾಟೀಲ, ಡಾ.ಆರೀಫ್ ರಾಜಾ ಅಹ್ಮದ್, ಹಣಮಂತ್ರಾಯಗೌಡ ಕಪನುರ ಉದನೂರ, ಮಲ್ಲಿಕಾರ್ಜುನ ಸಾರವಾಡ ಅವರನ್ನು ಸಿದ್ಧಿಯಗಂಗಾ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಯಿತು.
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯ ವೇಳೆ ತನ್ನ ಗುಡಿಸಲನ್ನು ಬುಲ್ಡೋಝರ್ನಿಂದ ಕೆಡವುವಾಗ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಪುಸ್ತಕಗಳನ್ನು ಹಿಡಿದುಕೊಂಡು ಓಡಿಹೋಗುತ್ತಿರುವ ಇತ್ತೀಚಿನ ವೀಡಿಯೊ ಎಲ್ಲರನ್ನೂ ಬೆಚ್ಚಿಬೀಳಿಸಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ. ಪ್ರಯಾಗರಾಜ್ ನಲ್ಲಿ ಅಕ್ರಮ ಧ್ವಂಸ ಪ್ರಕರಣದ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಅಂಬೇಡ್ಕರ್ ನಗರದ ಜಲಾಲ್ ಪುರದಿಂದ ವೈರಲ್ ಆದ ವೀಡಿಯೊವನ್ನು ಉಲ್ಲೇಖಿಸಿತು. ಇತ್ತೀಚೆಗೆ ಸಣ್ಣ ಗುಡಿಸಲುಗಳನ್ನು ಬುಲ್ಡೋಝರ್ ಗಳಿಂದ ಕೆಡವಲಾಗುತ್ತಿರುವ ವೀಡಿಯೊ ಬಂದಿತ್ತು. ಕೆಡವಲಾದ ಗುಡಿಸಲಿನಿಂದ ಒಬ್ಬ ಪುಟ್ಟ ಬಾಲಕಿ ಕೈಯ್ಯಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು ಓಡಿಹೋಗುತ್ತಿರುವ ಆ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ̧ ಎಂದು ನ್ಯಾಯಮೂರ್ತಿ ಭುಯಾನ್ ಮೌಖಿಕವಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಆ ವೀಡಿಯೊಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಜಲಾಲ್ಪುರ ತಹಶೀಲ್ದಾರ್ ಹೊರಡಿಸಿದ ಆದೇಶದ ನಂತರ ಸರ್ಕಾರಿ ಭೂಮಿಯಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆಗೂ ಮೊದಲು ಹಲವಾರು ನೋಟಿಸ್ ಗಳನ್ನು ನೀಡಲಾಗಿತ್ತು”, ಅಂಬೇಡ್ಕರ್ ನಗರ ಪೊಲೀಸರು ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದರು.
ಕಲಬುರಗಿ | ಈದ್ ಉಲ್ ಫಿತ್ರ್ ಹಬ್ಬದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಭಾಗಿ
ಕಲಬುರಗಿ : ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರು ನಗರದಲ್ಲಿರುವ ನಾಗನಹಳ್ಳಿ ವೃತ್ತದ ಬಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಿನ್ನೆಲೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ರಮಝಾನ್ ಹಬ್ಬದ ಶುಭ ಕೋರಿದರು. ರಮಝಾನ್ ಹಬ್ಬದ ಸಂಪ್ರದಾಯದಂತೆ ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ವ್ರತ ಆಚರಿಸಿದ್ದಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟು ಉಪವಾಸ ವ್ರತ ಆಚರಿಸುತ್ತಾರೆ. ಉಪವಾಸ (ರೋಜಾ) ಮಾತ್ರವಲ್ಲದೇ ದಾನ ( ಝಕಾತ್) ನಮಾಜ್, ಕುರಾನ್ ಪಠನ, ತರಾವೀಹ್ ಮಾಡುವ ಮೂಲಕ ದೇವರನ್ನು (ಅಲ್ಲಾಹ್ ನನ್ನು) ಸ್ಮರಿಸುತ್ತಾರೆ ಎಂದರು. ಈದ್ ಉಲ್ ಫಿತ್ರ್ ಹಬ್ಬ ಮನುಕುಲದ ಸೌಹಾರ್ಧತೆಯನ್ನು ಸಾರುವ ಹಾಗೂ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಉದಾತ್ತ ಚಿಂತನೆಗಳನ್ನೊಳಗೊಂಡಿದ್ದಲ್ಲದೆ ಈ ಹಬ್ಬವು ಕೃತಜ್ಞತೆ, ಕರುಣೆ, ತ್ಯಾಗ ಮತ್ತು ದಾನಗಳ ತತ್ವಗಳನ್ನು ಹೇಳುತ್ತದೆ. ಈದ್ ಹಬ್ಬವು ನಾಡಿಗೆ ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯನ್ನು ತರಲಿ ಎಂದು ಶಾಸಕರು ಹೇಳಿದರು.
AI ರಚಿತ ‘ಘಿಬ್ಲಿ’ ಆ್ಯನಿಮೇಷನ್ಗಳು ಆಕರ್ಷಕವಾಗಿವೆ, ಆದರೆ ಅವು ಕಲೆಯನ್ನು ಬಿಂಬಿಸುತ್ತಿವೆಯೇ?
ಹೊಸದಿಲ್ಲಿ : ಓಪನ್ AI (ಮುಕ್ತ ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಇನ್ನಷ್ಟು ಮುಂದುವರಿಯುವದರೊಂದಿಗೆ ಸಾಮಾಜಿಕ ಮಾಧ್ಯಮಗಳು ಜಪಾನಿನ ಖ್ಯಾತ ಆ್ಯನಿಮೇಟರ್ ಹಾಗೂ ಸ್ಟುಡಿಯೊ ಘಿಬ್ಲಿಯ ಸಹಸ್ಥಾಪಕ ಹಯಾವೊ ಮಿಯಾಝಾಕಿ ಶೈಲಿಯಲ್ಲಿ AI-ರಚಿತ ಚಿತ್ರಗಳಿಂದ ತುಂಬಿಹೋಗಿವೆ. ಬಾಲಿವುಡ್ ಬ್ಲಾಕ್ ಬಸ್ಟರ್ಗಳು,ಇಂಟರ್ನೆಟ್ ಮೀಮ್ಗಳು,ಅಷ್ಟೇ ಏಕೆ...ನಿಜ ಜೀವನದ ಛಾಯಾಚಿತ್ರಗಳೂ ಸೌಮ್ಯ ಜಲವರ್ಣಗಳು ಮತ್ತು ಘಿಬ್ಲಿ ಚಲನಚಿತ್ರದ ಕೈಯಿಂದ ರಚಿಸಿದ ಮೋಡಿಯೊಂದಿಗೆ ಇದ್ದಕ್ಕಿದ್ದಂತೆ ಮರುರೂಪಿಸಲ್ಪಟ್ಟಿವೆ. ಇದು ಅಚ್ಚರಿದಾಯಕವಾಗಿದೆ, ಜೊತೆಗೆ ಪ್ರಭಾವಿಯೂ ಆಗಿದೆ. ಆದರೆ ಇದು ನಿಜವಾದ ಕಲೆಯೇ? ಈ ಬಗ್ಗೆ ಸ್ವತಃ ಮಿಯಾಝಾಕಿ ಏನು ಯೋಚಿಸುತ್ತಾರೆ ಎಂದು ಊಹಿಸುವುದು ಕಷ್ಟವೇನಲ್ಲ. ಆ್ಯನಿಮೇಷನ್ ಜಗತ್ತಿನಲ್ಲಿ ಅತ್ಯಂತ ಗೌರವವನ್ನು ಹೊಂದಿರುವ ಮಿಯಾಝಾಕಿ AI-ರಚಿತ ಕಾರ್ಯಗಳ ಬಗ್ಗೆ ತನ್ನ ತಿರಸ್ಕಾರವನ್ನು ಎಂದಿಗೂ ಮುಚ್ಚಿಡಲಿಲ್ಲ. AI-ರಚಿತ ಆ್ಯನಿಮೇಷನ್ ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದ, ಈಗ ಪ್ರಸಿದ್ಧವಾಗಿರುವ 2016ರ ಕ್ಲಿಪ್ ನಲ್ಲಿ ‘ಇದು ಜೀವನಕ್ಕೇ ಅವಮಾನ’ ಎಂದು ಅವರು ಬಣ್ಣಿಸಿದ್ದರು. ಇದು ಓಬಿರಾಯನ ಶೈಲಿಗೇ ಜೋತು ಬಿದ್ದಿರುವ ಹಳೆಯ ತಲೆಯ ಗೊಣಗಾಟ ಎಂದು ಕೆಲವರು ತಳ್ಳಿ ಹಾಕಿದ್ದರು. ಆದರೆ ಮಿಯಾಝಾಕಿಯವರ ಮಾತುಗಳು ಈಗ ಹಿಂದೆಂದಿಗಿಂತಲೂ ಪ್ರಸ್ತುತವಾಗಿವೆ. ಏಕೆಂದರೆ AI ಘಿಬ್ಲಿಯ ಸೌಂದರ್ಯವನ್ನು ಪುನರಾವರ್ತಿಸಬಹುದು. ಆದರೆ ಅದರ ಜೀವಾಳವನ್ನು ಸೆರೆಹಿಡಿಯಲು ಅದಕ್ಕೆಂದಿಗೂ ಸಾಧ್ಯವಿಲ್ಲ. ಕಲೆ ಅಂದ್ರೆ ಕೇವಲ ಅಂತಿಮ ಚಿತ್ರ, ದಕ್ಷತೆ ಅಥವಾ ಸ್ವಯಂಚಾಲಿತ ತಂತ್ರ ಅಲ್ಲ. ಅದು ಚಿತ್ರಗಳನ್ನು ರೂಪಿಸುವ ಕೈಗಳು,ಅದರಲ್ಲಿ ಹೆಣೆದ ಕಥೆಗಳು ಮತ್ತು ಆ ಕಾರ್ಯದ ಹಿಂದಿನ ಸಮರ್ಪಿತ ವರ್ಷಗಳ ಕುರಿತಾಗಿದೆ. ಅದು ಅಪೂರ್ಣ,ಬದಲಿಸಲಾಗದ ಮತ್ತು ಆಳವಾದ ವೈಯಕ್ತಿಕತೆಯ ಕುರಿತಾಗಿದೆ. ಘಿಬ್ಲಿ ಚಿತ್ರಗಳು ಅಪೂರ್ಣತೆಗಳು, ಪ್ರತಿಯೊಂದೂ ಫ್ರೇಮ್ ಗೂ ಜೀವ ತುಂಬುವ ಮಾನವ ಸ್ಪರ್ಶದ ಮೇಲೆ ನಿರ್ಮಾಣಗೊಂಡಿವೆ. ಅನಿಮೇಟರ್ ಗಳು ತಮ್ಮ ಕಲೆಯನ್ನು ಪರಿಷ್ಕರಿಸಲು ವರ್ಷಗಳನ್ನು ಕಳೆಯುತ್ತಾರೆ. ಕೇವಲ ಅವು ಚೆನ್ನಾಗಿ ಕಾಣುವಂತೆ ಮಾಡುವುದಕ್ಕಲ್ಲ. ಅವು ನಿಜ ಎಂಬ ಭಾವನೆಯು ಮೂಡುವಂತಾಗಲೂ ಅವರು ಶ್ರಮಿಸುತ್ತಾರೆ. ಪಾತ್ರವನ್ನು ಜೀವಂತವಾಗಿ ರೂಪಿಸುವಲ್ಲಿ ಅವರ ಕೈಚಳಕ ಅಡಗಿರುತ್ತದೆ. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜನಿಸಿದ್ದ ಮಿಯಾಝಾಕಿ ತನ್ನ ಕಲ್ಪನೆಯ ಬಾಲ್ಯವನ್ನು ಕಲೆಯಲ್ಲಿ ಮೂಡಿಸಿದ್ದರು. ಪ್ರತಿಯೊಂದೂ ಫ್ರೇಮ್ ನಲ್ಲಿ ತನ್ನ ನೆನಪುಗಳು, ಹಂಬಲಗಳು ಮತ್ತು ಮಾನವ ಅನುಭವವನ್ನು ತುಂಬಿದ್ದರು. AI-ರಚಿತ ಘಿಬ್ಲಿ ಚಿತ್ರವನ್ನು ಚಕಾರವೆತ್ತದೆ ನಾವು ಸಂಭ್ರಮಿಸುವಾಗ ನಾವು ಕೇವಲ ತಂತ್ರಜ್ಞಾನವನ್ನು ಮೆಚ್ಚಿಕೊಳ್ಳುತ್ತಿಲ್ಲ. ನಿಜವಾದ ಕಲಾವಿದರು ತಮ್ಮ ಕೆಲಸಕ್ಕಾಗಿ ಪಡುವ ಶ್ರಮ ಮತ್ತು ಅದರಲ್ಲಿ ತುಂಬುವ ಭಾವನೆಗಳನ್ನು ನಾವು ಕಡೆಗಣಿಸುತ್ತಿದ್ದೇವೆ. ಮಿಯಾಝಾಕಿಯವರ ಚಿತ್ರಗಳು ಕೇವಲ ಕಣ್ಣಿಗೆ ಅದ್ಭುತವಾಗಿ ಗೋಚರಿಸುವುದು ಮಾತ್ರವಲ್ಲ. ಅವು ಅಲ್ಗಾರಿದಮ್ ಎಂದಿಗೂ ಅರ್ಥ ಮಾಡಿಕೊಳ್ಳದ ಸ್ಪರ್ಶವನ್ನು ಒಳಗೊಂಡಿವೆ. AI ಶೈಲಿಗಳನ್ನು ಪುನರಾವರ್ತಿಸಬಹುದು, ಆದರೆ ಅದು ನಿಜವಾದ ಕಲೆಯನ್ನು ವ್ಯಾಖ್ಯಾನಿಸುವ ಉದ್ದೇಶ, ಶ್ರಮ ಮತ್ತು ಜೀವಾಳವನ್ನು ಪುನರಾವರ್ತಿಸಲು ಸಾಧ್ಯವಿಲ್ಲ. AI ಅಸ್ತಿತ್ವದಲ್ಲಿದೆ ಎನ್ನುವುದು ಅಪಾಯವಲ್ಲ, ಅದರ ಅನುಕರಣೆಗಳನ್ನು ನಾವು ಸಮಾನವಾಗಿ ಸ್ವೀಕರಿಸಲು ಸಿದ್ಧರಿದ್ದೇವೆ ಎನ್ನುವುದರಲ್ಲಿ ಅಪಾಯ ಅಡಗಿದೆ. ತಂತ್ರಜ್ಞಾನವು ಯಾವಾಗಲೂ ಸೃಜನಶೀಲತೆಯನ್ನು ರೂಪಿಸಿದೆ. ಹೀಗಾಗಿ ಕಲೆಯ ವಿಕಸನದಲ್ಲಿ ಮುಂದಿನ ಹೆಜ್ಜೆಯಾಗಿದೆ ಎಂದು AI ಸಮರ್ಥಕರು ವಾದಿಸುತ್ತಾರೆ. ಆದರೆ ಒಂದು ನಿರ್ಣಾಯಕ ವ್ಯತ್ಯಾಸವಿದೆ. ಪ್ರಿಂಟಿಂಗ್ ಪ್ರೆಸ್,ಕ್ಯಾಮೆರಾ,ಡಿಜಿಟಲ್ ಆ್ಯನಿಮೇಷನ್ ಉಪಕರಣಗಳು ಇವೆಲ್ಲ ಕಲಾವಿದರನ್ನು ಸಶಕ್ತಗೊಳಿಸಿದ್ದವು. ಇನ್ನೊಂದೆಡೆ AI ಇವುಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡುತ್ತದೆ. ಅದು ನೆರವಾಗುವುದಿಲ್ಲ, ಅದು ಬದಲಿಸುತ್ತದೆ. ಅದು ಸೃಜನಶೀಲತೆಯನ್ನು ಹೆಚ್ಚಿಸುವುದಿಲ್ಲ, ಅದು ಕಲೆಯನ್ನು ಸ್ವಯಂಚಾಲಿತಗೊಳಿಸುತ್ತದೆ. ಅಲ್ಲದೆ ನೈತಿಕ ಸಂದಿಗ್ಧತೆಯೂ ಇದೆ. AI-ರಚಿತ ಚಿತ್ರಗಳು ಸುಮ್ಮನೆ ಗಾಳಿಯಿಂದ ಮೂಡಿ ಬರುವುದಿಲ್ಲ, ಅವು ಅಸಂಖ್ಯಾತ ಕಲಾವಿದರ, ಹೆಚ್ಚಾಗಿ ಅವರಿಗೆ ಗೊತ್ತಿಲ್ಲದೆ ಅಥವಾ ಅವರ ಒಪ್ಪಿಗೆಯಿಲ್ಲದೆ, ಕೆಲಸದ ಮೇಲೆ ನಿರ್ಮಾಣಗೊಂಡಿರುತ್ತದೆ. ಓಪನ್ AIನ ಇತ್ತೀಚಿನ ರೋಲ್ ಔಟ್ ಎಷ್ಟೊಂದು ವಿವಾದಾತ್ಮಕವಾಗಿತ್ತೆಂದರೆ ಕಾಪಿರೈಟ್ ಕಳವಳಗಳಿಂದಾಗಿ ಕೆಲವು ಶೈಲಿಗಳನ್ನು ಕೆಲವೇ ಗಂಟೆಗಳಲ್ಲಿ ನಿರ್ಬಂಧಿಸಬೇಕಾಗಿತ್ತು. ಇದೊಂದೇ ಎಲ್ಲವನ್ನೂ ಹೇಳುತ್ತದೆ.
ನೀರಾವರಿ ಪಂಪುಸೆಟ್ಟುಗಳ ವಿದ್ಯುದ್ದೀಕರಣ: ಅರ್ಜಿ ಆಹ್ವಾನ
ಉಡುಪಿ, ಎ.1: ಜಿಲ್ಲಾ ವ್ಯಾಪ್ತಿಯಲ್ಲಿ 2025-26ನೇ ಸಾಲಿಗೆ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ನೀರಾವರಿ ಪಂಪುಸೆಟ್ಗಳ ವಿದ್ಯುದ್ದೀಕರಣಕ್ಕೆ (ವಿದ್ಯುತ್ ಮಾರ್ಗಗಳನ್ನು ಮೆಸ್ಕಾಂ ವತಿಯಿಂದ ನಿರ್ಮಿಸಲು) ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳು ಆರ್ಟಿಸಿ ಹಾಗೂ ಜಾತಿ ಪ್ರಮಾಣ ಪತ್ರದೊಂದಿಗೆ ಹತ್ತಿರದ ಉಪವಿಭಾಗದಲ್ಲಿ ಒಂದು ತಿಂಗಳ ಒಳಗೆ ಅರ್ಜಿ ನೋಂದಾ ಯಿಸಬಹುದು ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಪರಿಷ್ಕೃತ ಆಸ್ತಿ ತೆರಿಗೆ ಪಾವತಿಗೆ ಸೂಚನೆ
ಉಡುಪಿ, ಎ.1: ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡದ/ಖಾಲಿ ನಿವೇಶನ ಮಾಲಕರು ಹಾಗೂ ಅಧಿಭೋಗದಾರರು ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯಂತೆ, ಉಡುಪಿ ನಗರಸಭಾ ವ್ಯಾಪ್ತಿಯ ಮಾರುಕಟ್ಟೆ ಬೆಲೆ ಪರಿಷ್ಕರಣೆಯಾಗದೇ ಇರುವುದರಿಂದ, 2024-25ರಲ್ಲಿ ನಿರ್ಧಾರವಾದ ತೆರಿಗೆಯ ಮೇಲೆ ಶೇ. 3ರಷ್ಟು ತೆರಿಗೆಯನ್ನು ಉಡುಪಿ ನಗರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಹೆಚ್ಚಿಸಲಾಗಿದೆ. ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡದ/ಖಾಲಿ ನಿವೇಶನ ಮಾಲಕರು ಹಾಗೂ ಅಧಿಭೋಗ ದಾರರು 2025-26ನೇ ಸಾಲಿನ ಆಸ್ತಿ ತೆರಿಗೆಯನ್ನು, 2024-25ರ ಆಸ್ತಿತೆರಿಗೆಯ ಮೇಲೆ ಶೇ.3ರಷ್ಟು ಹೆಚ್ಚಿಸಿ, ಎಪ್ರಿಲ್ 1ರಿಂದ 30ರ ಒಳಗೆ ಪಾವತಿಸಿದ್ದಲ್ಲಿ ಶೇ.5ರ ರಿಯಾಯಿತಿ ಪಡೆಯ ಬಹುದು. ಮೇ 1ರಿಂದ ಜೂನ್ 30ರವರೆಗೆ ದಂಡ ರಹಿತ ಪಾವತಿಗೆ ಅವಕಾಶವಿದ್ದು, ಜುಲೈ 1ರ ನಂತರ ಪಾವತಿಸಿದ್ದಲ್ಲಿ ಆಸ್ತಿ ತೆರಿಗೆಯ ಮೇಲೆ ಪ್ರತಿ ತಿಂಗಳು ಶೇ.2ರಷ್ಟು ದಂಡ ವಿಧಿಸಲಾಗುವುದು. 2024-25ನೇ ಸಾಲಿನ ಹಾಗೂ ಹಿಂದಿನ ಅವಧಿಯ ಆಸ್ತಿ ತೆರಿಗೆ ಪಾವತಿಸದೇ ಇರುವವರು ಶೇ.2ರಷ್ಟು ದಂಡದೊಂದಿಗೆ ಪಾವತಿಸಿ, ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿ: ಅಗ್ನಿಪಥ್ ಯೋಜನೆಯಡಿ ಪ್ರಸಕ್ತ ಸಾಲಿನ ಅಗ್ನಿವೀರ್ ಇನ್ಟೇಕ್ ನೇಮಕಾತಿ ಪರೀಕ್ಷೆಗೆ ಅವಿವಾತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಜಿಲ್ಲೆಯ ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಆನ್ಲೈನ್ ನೋಂದಣಿಗೆ ಎಪ್ರಿಲ್ 10 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ವೆಬ್ಸೈಟ್ -www.joinindianarmy.nic.in- ಸಹಾಯವಾಣಿ ಸಂಖ್ಯೆ: 0824- 2951279, ಎಆರ್ಓ ಮೊ.ನಂ: 9805505538 ಅಥವಾ ಮಂಗಳೂರು ಸೇನಾ ನೇಮಕಾತಿ ಕಚೇರಿ/ ಸೈನಿಕ ಮಂಡಳಿ ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ, ಎ.1: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯು ಎ.2ರಂದು ಬೆಳಗ್ಗೆ 8:30ಕ್ಕೆ ನಗರದ ಪೊಲೀಸ್ ಕವಾಯತು (ಚಂದು ಮೈದಾನ) ಮೈದಾನದಲ್ಲಿ ನಡೆಯಲಿದೆ. ಉಡುಪಿಯ ನಿವೃತ್ತ ಡಿಎಸ್ಪಿ ರವಿ ನಾಯ್ಕ ಗೌರವ ವಂದನೆ ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
ಮೂರು ದಿನ ಕರಾವಳಿ ಜಿಲ್ಲೆಗಳಲ್ಲಿ ಹಳದಿ ಅಲರ್ಟ್
ಉಡುಪಿ, ಎ.1: ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತು ವಾರಿ ಕೇಂದ್ರ ಬೆಂಗಳೂರು ಇದರ ಮುನ್ಸೂಚನೆ ಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಹಳದಿ ಅಲರ್ಟ್ ಜಾರಿಗೊಳಿಸಲಾಗಿದೆ. ಈ ದಿನಗಳಲ್ಲಿ ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿ ಕಾರ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಕೃಷಿಕರು ಸಿಡಿಲಿನ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಂದ ದೂರವಿರ ಬೇಕು. ಸಾರ್ವಜನಿಕರು, ಮಕ್ಕಳು, ಕಾರ್ಮಿಕರು ಸಿಡಿಲು ಬರುವ ಸಂದರ್ಭ ದಲ್ಲಿ ಮನೆಯ ಹೊರಗೆ ತಿರುಗಾಡದೇ, ಮನೆ ಹಾಗೂ ಸೂಕ್ತ ಕಟ್ಟಡದೊಳಗೆ ಇರಬೇಕು. ಮೀನುಗಾರರು ನದಿ ಹಾಗೂ ನೀರಿರುವ ಪ್ರದೇಶದಿಂದ ದೂರವಿದ್ದು, ಸಮುದ್ರಕ್ಕೆ ಇಳಿಯದೆ ಎಚ್ಚರ ವಹಿಸಬೇಕು. ಮಕ್ಕಳು, ಸಾರ್ವಜನಿಕರು ಇಂಥ ಸಂದರ್ಭಗಳಲ್ಲಿ ಅಪಾಯಕಾರಿ ಮರ, ವಿದ್ಯುತ್ ಕಂಬದ ಬಳಿ ಇರಬಾ ರದು. ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು. ದುರ್ಬಲ ಕಟ್ಟಡ, ಮರಗಳ ಬಳಿ, ಕೆಳಗೆ ನಿಲ್ಲಬಾರದು. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ವಿಪತ್ತು ನಿಭಾಯಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾದಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳಿಗಾಗಿ ಈಕೆಳಗಿನ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ಗೆ ಕರೆ ಮಾಡಬಹುದು. ತುರ್ತುಸೇವೆಗೆ ಶುಲ್ಕರಹಿತ: 1077, ದೂರವಾಣಿ ಸಂಖ್ಯೆ:0820-2574802.
ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಹೆಸರಿ ಪೊಲೀಸ್ ಕಮಿಷನರ್ಗೆ ನಕಲಿ ಕರೆ ಆರೋಪ: ಇಂಟಕ್ ಕಾರ್ಯಕರ್ತನಿಂದ ಮುಚ್ಚಳಿಕೆ
ಮಂಗಳೂರು: ರಿವಾಲ್ವರ್ ಅಮಾನತು ರದ್ದುಪಡಿಸಲು ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಮಂಗಳೂರು ಪೊಲೀಸ್ ಕಮಿಷನರ್ಗೆ ನಕಲಿ ಕರೆ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗದ ಇಂಟಕ್ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದು ಮುಚ್ಚಳಿಕೆ ಪಡೆದು ಕಳುಹಿಸಿದ್ದಾರೆ. ಈ ಹಿಂದೊಮ್ಮೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈತನ ಬಂಧನವಾಗಿತ್ತು. ಈತನ ಕ್ರಿಮಿನಲ್ ಚಟುವಟಿಕೆ ಗಮನಿಸಿ ರಿವಾಲ್ವರ್ನ್ನು ಪೊಲೀಸರು ಅಮಾನತ್ತಿನಲ್ಲಿರಿಸಿದ್ದರು. ಪೊಲೀಸರು ದಾಖಲಿಸಿಕೊಂಡಿದ್ದ ಈ ಪ್ರಕರಣವು ಹೈಕೋರ್ಟ್ನಲ್ಲಿ ರದ್ದುಗೊಂಡಿತ್ತು. ಈ ಆದೇಶವನ್ನು ಮುಂದಿರಿಸಿ ತನ್ನ ರಿವಾಲ್ವರ್ ಲೈಸೆನ್ಸ್ ಅಮಾನತನ್ನು ರದ್ದುಪಡಿಸಬೇಕೆಂದು ಆರೋಪಿಯು ಪೊಲೀಸರ ಮೇಲೆ ಸತತ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಆದರೂ ಅಮಾನತು ರದ್ದುಪಡಿಸಲು ಕಮಿಷನರ್ ಮುಂದಾಗಿರಲಿಲ್ಲ ಎಂದು ತಿಳಿದು ಬಂದಿದೆ. ಅಮಾನತು ರದ್ದುಪಡಿಸಲು ತಾನು ಮಾಡಿದ ಪ್ರಯತ್ನ ವಿಫಲಗೊಂಡ ಬಳಿಕ ಆರೋಪಿಯು ಕಳೆದ ವಾರ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯ ಹೆಸರಿನಲ್ಲಿ ಪೊಲೀಸ್ ಕಮಿಷನರಿಗೆ ಕರೆ ಮಾಡಿ ರಿವಾಲ್ವರ್ ಅಮಾನತನ್ನು ರದ್ದುಗೊಳಿಸುವಂತೆ ಸೂಚಿಸಿದ್ದ. ಇದರಿಂದ ಸಂಶಯಗೊಂಡ ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಮುಖ್ಯಮಂತ್ರಿಗಳ ಕಚೇರಿಯಲ್ಲಿ ವಿಚಾರಿಸಿದಾಗ ಅಂತಹ ಯಾವುದೇ ಕರೆ ಮಾಡದಿರುವುದು ತಿಳಿದು ಬಂತು. ತಕ್ಷಣ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಯಿಸಿ ಬಿಡಲಾಯಿತು ಎಂದು ತಿಳಿದು ಬಂದಿದೆ.
ಮಂಗಳೂರು| ಮುಡಾ ಆಯುಕ್ತೆಗೆ ಕೊಲೆ ಬೆದರಿಕೆ: ಪ್ರಕರಣ ದಾಖಲು
ಮಂಗಳೂರು, ಎ.1: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನೂರ್ ಝಹರಾ ಖಾನಮ್ರಿಗೆ ಜೀವ ಬೆದರಿಕೆ ಹಾಕಿರುವ ಆರೋಪದಡಿ ಇಬ್ಬರ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.7ರಂದು ಮುಡಾ ಕಚೇರಿಯಲ್ಲಿ ದಲ್ಲಾಲಿಯೊಬ್ಬ ಕಡತ ತಿದ್ದಿರುವ ಘಟನೆ ನಡೆದ ಬಳಿಕ ಮುಡಾ ಕಚೇರಿ ಯೊಳಗೆ ಸಾರ್ವಜನಿಕರ ಏಕ ನಿವೇಶನ ಇತ್ಯಾದಿ ಕೆಲಸಗಳಿಗೆ ಮಧ್ಯವರ್ತಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದಕ್ಕೆ ವಿರುದ್ಧವಾಗಿ ‘ಆರೋಪಿಗಳಾದ ವಹಾಬ್ ಮತ್ತು ಸಾಬಿತ್ ವಾಟ್ಸಾಪ್ ಗ್ರೂಪ್ ತಯಾರಿಸಿ ಉಳಿದ ಮಧ್ಯವರ್ತಿಗಳನ್ನು ಅದಕ್ಕೆ ಸೇರಿಸಿ ನನ್ನ ಬಗ್ಗೆ ಅವಮಾನಕರ ಸಂದೇಶಗಳನ್ನು ಕಳುಹಿಸಿದ್ದಾರೆ. ಜತೆಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕುವುದು, ಆಗಾಗ ಕಚೇರಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ್ದಾರೆ. ಅಲ್ಲದೆ ವಾಮಾಚಾರ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ’ ಎಂದು ಆಯುಕ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನೂರಕ್ಕೆ ನೂರರಷ್ಟು ಯತ್ನಾಳ್ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ: ರಮೇಶ್ ಜಾರಕಿಹೊಳಿ
ಬೆಳಗಾವಿ: ‘ಶಾಸಕ ಯತ್ನಾಳ್ ಮತ್ತು ನಾವು ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬಿಡುವುದಿಲ್ಲ. ಯಾವುದೇ ಸಂದರ್ಭದಲ್ಲಿಯೂ ನಾವು ಹೊಸ ಪಕ್ಷವನ್ನೂ ಕಟ್ಟುವುದಿಲ್ಲ’ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ. ಯತ್ನಾಳ್ ಬಿಜೆಪಿ ತೊರೆದು ಎಲ್ಲಿಯೂ ಹೋಗುವುದಿಲ್ಲ, ಪಕ್ಷದಲ್ಲೇ ಇರಲಿದ್ದಾರೆ. ಆದರೆ, ಅವರ ಕುರಿತು ಅನಗತ್ಯ ತಪ್ಪು ಪ್ರಚಾರ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು. ಹಿಂದುತ್ವಕ್ಕಾಗಿ ಆರೆಸೆಸ್ಸ್ ಇರುವಾಗ ಬೇರೆ ಪಕ್ಷದ ಅವಶ್ಯಕತೆ ಇಲ್ಲ. ಮೊನ್ನೆ ಶಾಸಕರ ಸಭೆಯಲ್ಲಿಯೂ ಚರ್ಚೆ ಆಗಿದೆ. ಬಿಜೆಪಿ ಪಕ್ಷಕ್ಕೆ ಮುಜಗುರ ಆಗುವ ಹೇಳಿಕೆ ಕೊಡಬೇಡ ಎಂದು ಹೇಳಿದ್ದೇನೆ. ಯತ್ನಾಳ್ ನಮ್ಮ ಪಕ್ಷದ ದೊಡ್ಡ ನಾಯಕರಿದ್ದರು. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದು ದುರ್ದೈವ. ಪಕ್ಷದ ಹಿರಿಯರನ್ನು ಶೀಘ್ರವೇ ಭೇಟಿ ಮಾಡಿ ಯತ್ನಾಳ್ ಉಚ್ಚಾಟನೆ ಹಿಂಪಡೆಯುವಂತೆ ಮನವಿ ಮಾಡುತ್ತೇವೆ ಎಂದು ಅವರು ನುಡಿದರು.
Property Tax: ಆಸ್ತಿದಾರರಿಗೆ ಭರ್ಜರಿ ಗುಡ್ನ್ಯೂಸ್: ಆಸ್ತಿ ತೆರಿಗೆ ಮೇಲೆ ಶೇ 5% ರಿಯಾಯಿತಿ!
Property Tax: ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳು ಮಾರ್ಚ್ 31ರ ಅಂತ್ಯಕ್ಕೆ ಆಸ್ತಿ ತೆರಿಗೆ ಪಾವತಿ ಮಾಡುವುದು ಮುಗಿಯಲಿದೆ ಎಂದೇ ಹೇಳಲಾಗಿತ್ತು. ಇದೀಗ ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ವಿಸ್ತರಣೆ ಮಾಡುವುದರೊಂದಿಗೆ ಆಸ್ತಿ ತೆರಿಗೆ
ಪ್ರಧಾನಿ ಮೋದಿಯಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆ!
ಉಡುಪಿ, ಎ.1: ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ಏಪ್ರಿಲ್ ಫೂಲ್ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು. ಕಲ್ಸಂಕ ಜಂಕ್ಷನ್ನಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಅಮೃತ್ ಶೆಣೈ ಹಾಗೂ ಸಾಮಾಜಿಕ ಕಾರ್ಯ ಕರ್ತ ಅನ್ಸಾರ್ ಅಹ್ಮದ್ ಕೇಶ ಮುಂಡನ ಮಾಡಿಸಿದರು. ಬಳಿಕ ಎಲ್ಲ ಪ್ರತಿಭಟನಕಾರರ ಕಿವಿ ಮೇಲೆ ಹೂವನ್ನು ಇಡಲಾಯಿತು. ಭಿಕ್ಷುಕನ ವೇಷ ಧರಿಸಿದ್ದ ಅನ್ಸಾರ್ ಅಹ್ಮದ್ ಕೈಯಲ್ಲಿದ್ದ ತಟ್ಟೆಗೆ ಹಣ ಹಾಕುವ ಮೂಲಕ ಮೆರವಣಿಗೆಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ ನೀಡಿದರು. ಕಲ್ಸಂಕದಿಂದ ಹೊರಟ ಮೆರವಣಿಗೆ ಕಡಿಯಾಳಿ, ಕುಂಜಿಬೆಟ್ಟು ಮಾರ್ಗವಾಗಿ ಇಂದ್ರಾಳಿ ಸೇತುವೆವರೆಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಸೇತುವೆ ನಿರ್ಮಾಣಕ್ಕಾಗಿ ಭಿಕ್ಷಾಟನೆಯ ಮೂಲಕ ಹಣವನ್ನು ಸಂಗ್ರಹಿಸಲಾಯಿತು. ಇಂದ್ರಾಳಿಯಲ್ಲಿ ಪ್ರತಿಭಟನಾ ಸಭೆ ನಡೆಸಿ, ಕೇಂದ್ರ ಸರಕಾರದ ವೈಫಲ್ಯವನ್ನು ವಿರೋಧಿಸಲಾಯಿತು. ನಂತರ ಸೇತುವೆ ಉದ್ಘಾಟನೆಗೆ ಮುಖವಾಡ ಧರಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದ್ರಾಳಿಗೆ ಆಗಮಿಸಿದರು. ಈ ವೇಳೆ ಮೆರವಣಿಗೆಯಲ್ಲಿ ಅನ್ಸಾರ್ ಅಹ್ಮದ್ ಸಂಗ್ರಹಿಸಿದ ಹಣವನ್ನು ಮೋದಿಯವರಿಗೆ ನೀಡುವ ಮೂಲಕ ಕೇಂದ್ರ ಸರಕಾರದ ವಿಳಂಬ ನೀತಿಯನ್ನು ಅಣಕಿಸಲಾಯಿತು.ನಂತರ ಮೋದಿ ಸೇತುವೆಯನ್ನು ಉದ್ಘಾಟಿಸುವ ಮೂಲಕ ಏಪ್ರಿಲ್ ಫೂಲ್ ಆಚರಿಸಲಾಯಿತು. ಕಳೆದ ಏಳೆಂಟು ವರ್ಷಗಳಿಂದ ಉಡುಪಿ ಜನತೆಯನ್ನು ಸಂಸದರು ಮೂರ್ಖರನ್ನಾಗಿ ಮಾಡಿರುವ ಬಗ್ಗೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿ ದರು. ಇದೇ ವೇಳೆ ಪ್ರತಿಭಟನಕಾರರು ಕೆಲವೊತ್ತು ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಕೇಂದ್ರ ಸರಕಾರ ಹಾಗೂ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಭೆಯಲ್ಲಿ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ವೆಲ್ಫೇರ್ ಪಾರ್ಟಿಯ ಉಡುಪಿ ಜಿಲ್ಲಾಧ್ಯಕ್ಷ ಇದ್ರಿಸ್ ಹೂಡೆ, ಸಮಿತಿಯ ಅಧ್ಯಕ್ಷ ಕೀರ್ತಿ ಶೆಟ್ಟಿ, ಪ್ರಧಾನ ಸಂಚಾಲಕ ಅಮೃತ್ ಶೆಣೈ, ಮುಖಂಡರಾದ ಪ್ರಸಾದ್ರಾಜ್ ಕಾಂಚನ್, ರಮೇಶ್ ಕಾಂಚನ್, ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಹರಿಪ್ರಸಾದ್ ರೈ, ಮುಹಮ್ಮದ್ ಮೌಲಾ, ಸುರೇಶ್ ಕಲ್ಲಾಗರ್, ಎಂ.ಎ.ಗಫೂರ್, ಮಂಜುಳಾ ನಾಯಕ್, ಪ್ರೊ.ಸುರೇಂದ್ರನಾಥ್ ಕೊಕ್ಕರ್ಣೆ, ಉದ್ಯಾವರ ನಾಗೇಶ್ ಕುಮಾರ್, ದಿನೇಶ್ ಮೊಳಹಳ್ಳಿ, ಇಸ್ಮಾಯಿಲ್ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು. ‘ಇಲಾಖೆಗಳ ಮಧ್ಯೆ ಹೊಂದಾಣಿಕೆ ಕೊರತೆ’ ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ವಾಗಿದೆ. ಈ ವಿಳಂಬದಿಂದಾಗಿ ನಿರ್ಮಾಣ ವೆಚ್ಚ ಕೂಡ ಜಾಸ್ತಿ ಯಾಗಿ ಸರಕಾರಕ್ಕೆ ದೊಡ್ಡ ನಷ್ಟವಾಗುತ್ತಿದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ. ಈ ಎರಡು ಇಲಾಖೆಗಳ ಮಧ್ಯೆ ಹೊಂದಾಣಿಕೆ ಮೂಡಿಸುವ ಕಾರ್ಯವನ್ನು ನಮ್ಮ ಸಂಸದರು ಮಾಡ ಬೇಕಿತ್ತು. ಆದರೆ ಇವರು ಪ್ರತಿ ಬಾರಿಯೂ ಒಂದು ತಿಂಗಳ ಗಡುವು ನೀಡಿ ಕಾಮಗಾರಿ ಮುಗಿಸುವುದಾಗಿ ಸುಳ್ಳು ಭರವಸೆಯನ್ನು ನೀಡುತ್ತಿದ್ದಾರೆ. ಇದರಿಂದ ಅದೆಷ್ಟೋ ಮಂದಿ ಇಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಅವರು ದೂರಿದರು. ‘ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬದಿಂದ ಅನೇಕ ಅಪಘಾತಗಳು ಸಂಭವಿಸಿ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೂ ಕೇಂದ್ರ ಸರಕಾರ ಕಿವುಡಾಗಿದೆ ಮತ್ತು ಕುರುಡು ಆಗಿದೆ. ನಮ್ಮ ಸಂಸದರು ಅಗತ್ಯವೇ ಇಲ್ಲದ ರೀತಿ ವರ್ತಿಸುತ್ತಿದ್ದಾರೆ. ಶೋಭಾ ಅವರ ಹಾದಿಯಲ್ಲಿಯೇ ಕೋಟ ಶ್ರೀನಿವಾಸ ಪೂಜಾರಿ ಕೂಡ ಸಾಗುತ್ತಿದ್ದಾರೆ. ಸರಕಾರದ ವಿರುದ್ಧ ನಮ್ಮ ಆಕ್ರೋಶ ವ್ಯಕ್ತಪಡಿಸಲು ಈ ಹೋರಾಟ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಅಸಹಾಯಕ ರಾಗಿರುವ ಸಂಸದರು, ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ’ -ಅಮೃತ್ ಶೆಣೈ, ಪ್ರಧಾನ ಸಂಚಾಲಕರು, ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ
18 ಮಂದಿ ಶಾಸಕರ ಅಮಾನತು | ಆದೇಶ ಹಿಂಪಡೆಯಲು ಸ್ಪೀಕರ್ ಖಾದರ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮನವಿ
ಬೆಂಗಳೂರು : ‘ಹದಿನೆಂಟು ಮಂದಿ ಶಾಸಕರನ್ನು ಅಮಾನತು ಮಾಡಿರುವ ನಿರ್ಣಯ ಅತ್ಯಂತ ಕಠೋರವಾಗಿದ್ದು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಬೇಕು’ ಎಂದು ಕೋರಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ, ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದಾರೆ. ಮಂಗಳವಾರ ಸ್ಪೀಕರ್ ಖಾದರ್ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ಆರ್.ಅಶೋಕ್, ‘ನಮ್ಮ ಪ್ರತಿಭಟನೆ ನಿಮ್ಮ ವಿರುದ್ಧ ಇರಲಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಮತ್ತೊಮ್ಮೆ ಗಮನಕ್ಕೆ ತರಲು ಬಯಸುತ್ತೇನೆ. ಈ ಪತ್ರದ ಆರಂಭದಲ್ಲಿ ತಿಳಿಸಿದಂತೆ ಸದನ ದೊಡ್ಡದು. ಸ್ಪೀಕರ್ ದೊಡ್ಡವರು ಎಂಬ ಪ್ರಜಾಪ್ರಭುತ್ವದ ಮೂಲಭೂತ ಆಶಯ. ಹೀಗಾಗಿ ನಾವೆಲ್ಲರೂ ಸೇರಿಕೊಂಡು ಈ ಸಂಸ್ಥೆಯ ಘನತೆ ಹಾಗೂ ಗೌರವವನ್ನು ಉಳಿಸಬೇಕಾಗಿದೆ. ಆದುದರಿಂದ ಶಾಸಕರ ಅಮಾನತು ಆದೇಶವನ್ನು ಮತ್ತೊಮ್ಮೆ ಮರು ಪರಿಶೀಲಿಸಬೇಕು’ ಎಂದು ಕೋರಿದ್ದಾರೆ. ‘ಮಾ.21ರಂದು ಅಧಿವೇಶನದ ವೇಳೆ ಸದನದಲ್ಲಿ ‘ಹನಿಟ್ರ್ಯಾಪ್’ ಹಾಗೂ ‘ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ’ ವಿಚಾರದ ಚರ್ಚೆಯು ವಿಕೋಪಕ್ಕೆ ತಿರುಗಿದಾಗ ಪ್ರತಿಪಕ್ಷ ಸದಸ್ಯರು ಸ್ಪೀಕರ್ ಪೀಠದ ಸುತ್ತ ನಿಂತು ಪ್ರತಿಭಟನೆ ಮಾಡಿದ್ದೇವೆ. ವಿಧಾನ ಮಂಡಲ ಉಭಯ ಸದನಗಳು ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಳಗಳು, ‘ಪ್ರಜಾಪ್ರಭುತ್ವದ ದೇಗುಲಗಳು' ಎಂದು ಕರೆದರೆ ತಪ್ಪೇನೂ ಇಲ್ಲ. ಈ ದೇಗುಲಗಳಲ್ಲಿನ ಸ್ಪೀಕರ್ ಮತ್ತು ಸಭಾಪತಿಗೆ ಇರುವ ಸ್ಥಾನವೂ ಅಷ್ಟೇ ಗೌರವಾನ್ವಿತವಾದುದು. ಈ ವಿಚಾರದಲ್ಲಿ ನನಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಮಾ.21ರಂದು ನಡೆದ ಘಟನೆ ಉದ್ದೇಶಪೂರ್ವಕವಾದುದಲ್ಲ. ಪೀಠಕ್ಕೆ ಅಗೌರವ ತರುವ ಉದ್ದೇಶವೂ ಯಾವ ಶಾಸಕರಿಗೂ ಇರಲಿಲ್ಲ. ಎರಡು ವರ್ಷಗಳಲ್ಲಿ ತಾವು ಸದನದ ಕಲಾಪ ನಿರ್ವಹಿಸುವುದನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಸಂಸದೀಯ ಚರ್ಚೆಯ ಗುಣಮಟ್ಟ ಭಾಷೆಯ ಬಳಕೆ, ಕಲಾಪಗಳಲ್ಲಿನ ನಿಯಮಗಳ ಪಾಲನೆ ಇತ್ಯಾದಿಗಳೆಲ್ಲವೂ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ದಿನಗಳಲ್ಲಿ, ಯಾರಿಗೇ ಆಗಲೀ ಇದು ಕಷ್ಟದ ಕೆಲಸ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ. ಒಂದು ವೇಳೆ ತಾವು ಅಂದು ನಮ್ಮ ಎಲ್ಲ ಶಾಸಕರನ್ನು ತಮ್ಮ ಕೊಠಡಿಗೆ ಕರೆದು ವಿವರಣೆ ಮಾಡಿದ್ದರೆ ನಾವು ಖಂಡಿತ ಈ ಘಟನೆ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೆವು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಈಗ ಒಂದಿಷ್ಟು ಕಠೋರ ಎನ್ನುವಂತಹ ನಿರ್ಧಾರ ತಮ್ಮಿಂದ ಪ್ರಕಟವಾಗಿದೆ. ಇದರಿಂದಾಗಿ ಒಟ್ಟು 18 ಶಾಸಕರು ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದಂತೆ ಆಗಿದೆ. ಈ ನಿರ್ಬಂಧಗಳನ್ನು ಸಡಿಲಿಸಿ, ಎಂದಿನಂತೆ ಒಬ್ಬ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಕೊಡಬೇಕೆಂದು ಅಶೋಕ್ ಮನವಿ ಮಾಡಿದ್ದಾರೆ.
Heavy Rain: ರಾಜ್ಯದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ; ಮಾಹಿತಿ, ವಿವರ
ಕರ್ನಾಟಕದಲ್ಲಿ ವಸಂತ ಮಳೆ ಆರಂಭವಾಗಿದೆ. ಬೇಸಿಗೆ ಮಳೆಯಿಂದಾಗಿ ಜನರಲ್ಲಿ ಸಂತಸ ಮೂಡಿದೆ. ಏಪ್ರಿಲ್, ಜೂನ್ ತಿಂಗಳಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ದಕ್ಷಿಣ ಕರ್ನಾಟಕ, ಕರಾವಳಿ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರೂ ಮಳೆಯಾಗುವ ಸಾಧ್ಯತೆ ಇದೆ. ಯುಗಾದಿ ಹಬ್ಬದ ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಏಪ್ರಿಲ್
ಮಹಾರಾಷ್ಟ್ರ ಜಲಾಶಯಗಳಿಂದ ರಾಜ್ಯಕ್ಕೆ ನೀರು ಹರಿಸಲು ಕೋರಿ ಪತ್ರ ಬರೆದ ಸಿದ್ದರಾಮಯ್ಯ
ಬೆಂಗಳೂರು : ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ್ನು ಪೂರೈಸಲು ಮಹಾರಾಷ್ಟ್ರದ ಕೊಯ್ನಾ ಜಲಾಶಯಗಳಿಂದ ಮೂರು ಟಿಎಂಸಿ ನೀರನ್ನು ಹರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಪತ್ರ ಬರೆದಿರುವ ಅವರು, ಮಹಾರಾಷ್ಟ್ರದ ವಾರಣಾ/ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಕನಿಷ್ಠ 2 ಟಿಎಂಸಿ ನೀರನ್ನು ಮತ್ತು ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಮಾರ್ಚ್ ಆರಂಭದಿಂದಲೂ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಬೇಸಿಗೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಮಹಾರಾಷ್ಟ್ರ ಸರಕಾರವು ಕೃಷ್ಣಾ ನದಿಯ ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡಿತ್ತು. ಪ್ರಸ್ತುತ ಉತ್ತರ ಕರ್ನಾಟಕದ ಪರಿಸ್ಥಿತಿಯು ಹಿಂದಿಗಿಂತಲೂ ಹೆಚ್ಚು ಗಂಭೀರವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಿಪ್ಪರಗಿ ಬ್ಯಾರೇಜ್ ಸೇರಿ ಸ್ಥಳೀಯ ಜಲಾಶಯಗಳಲ್ಲಿ ಸಂಗ್ರಹವಾದ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ 2025ರಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಆದುದರಿಂದ ನೀರನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮಂಗಳೂರು - ತಲಪಾಡಿ ಹೆದ್ದಾರಿ ದುರಸ್ತಿ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ
ಮಂಗಳೂರು, ಎ.1: ನಗರದಿಂದ ಕೇರಳ ಸಂಪರ್ಕಿಸುವ ರಾ.ಹೆ.66ರ ಹಳೆಯ ನೇತ್ರಾವತಿ ಸೇತುವೆ ಯಲ್ಲಿ (ತಲಪಾಡಿಯಿಂದ ಮಂಗಳೂರಿಗೆ ಬರುವ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದುರಸ್ತಿ ಕಾಮಗಾರಿಯು ಸೋಮವಾರ (ಎ.1) ಆರಂಭಗೊಂಡಿದ್ದು, ಎ.30ರೊಳಗೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಸೇತುವೆಯ ಒಂದು ಬದಿಯಲ್ಲಿ (ಮಂಗಳೂರಿನಿಂದ ತಲಪಾಡಿ ಕಡೆಗೆ ಹೋಗುವ) ವಾಹನಗಳ ಸಂಚಾರಕ್ಕಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದ ಪಂಪುವೆಲ್ನಿಂದ ತೊಕ್ಕೊಟ್ಟುವರೆಗಿನ ಹೆದ್ದಾರಿಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಅದನ್ನು ತಪ್ಪಿಸಲು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. *ಮುಡಿಪು-ಕೊಣಾಜೆ-ದೇರಳಕಟ್ಟೆ ಕಡೆಯಿಂದ ಮಂಗಳೂರಿಗೆ ಸಂಚರಿಸುವ ಸ್ಥಳೀಯ ಲಘು ವಾಹನಗಳು /ದ್ವಿಚಕ್ರ ವಾಹನಗಳು ಕೊಣಾಜೆ-ಹರೇಕಳ (ಬ್ರಿಡ್ಜ್)ಅಡ್ಯಾರ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬಹುದು. *ಮಂಗಳೂರು ಕಡೆಯಿಂದ ಕೊಣಾಜೆ-ಮುಡಿಪು-ದೇರಳಕಟ್ಟೆ ಕಡೆಗೆ ಸಂಚರಿಸುವ ಸ್ಥಳೀಯ ದ್ವಿಚಕ್ರ/ಲಘು ವಾಹನಗಳು ಅಡ್ಯಾರ್-ಹರೇಕಳ (ಬ್ರಿಡ್ಜ್) ಮುಖಾಂತರ ಸಂಚರಿಸಬಹುದು. *ತಲಪಾಡಿ, ಉಳ್ಳಾಲ ಕಡೆಯಿಂದ ಬೆಂಗಳೂರು, ಉಪ್ಪಿನಂಗಡಿ, ಪುತ್ತೂರು, ಸುಳ್ಯ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟಿನಿಂದ ಬಲಕ್ಕೆ ತಿರುಗಿ ಮುಡಿಪು ಬೋಳಿಯಾರ್ -ಮೆಲ್ಕಾರ್ ಮೂಲಕ ಸಂಚರಿಸಬಹುದು. *ಬಿ.ಸಿ ರೋಡ್ ಕಡೆಯಿಂದ ತಲಪಾಡಿ ಮತ್ತು ಕೇರಳ ಕಡೆಗೆ ಸಂಚರಿಸುವ ವಾಹನಗಳು ಮೆಲ್ಕಾರ್-ಮುಡಿಪು-ತೊಕ್ಕೊಟ್ಟು ಮೂಲಕ ಸಂಚರಿಸುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಬೈಕ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು
ಮಂಗಳೂರು : ವಿಮಾನ ನಿಲ್ದಾಣ ರಸ್ತೆಯ ಐಟಿಐ ಕಾಲೇಜು ಬಳಿ ಸೋಮವಾರ ರಾತ್ರಿ ಸುಮಾರು 10:30ಕ್ಕೆ ರಸ್ತೆ ದಾಟುತ್ತಿದ್ದ ಪದ್ಮನಾಭ ನಾಯಕ್ (69) ಎಂಬವರಿಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಗರದ ಶರ್ಬತ್ ಕಟ್ಟೆಯ ನಿವಾಸಿಯಾಗಿದ್ದ ಪದ್ಮನಾಭ ತನ್ನ ಮನೆಗೆ ತೆರಳಲು ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಬೈಕ್ ಸವಾರ ಚರಣ್ ಶೆಟ್ಟಿ ಎಂಬಾತ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿ ಸಿದ ಪರಿಣಾಮ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಪದ್ಮನಾಭ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪದ್ಮನಾಭ ಮಂಗಳೂರು ಸರ್ಕೀಟ್ ಹೌಸ್ನ ಉದ್ಯೋಗಿಯಾಗಿ ನಿವೃತ್ತರಾಗಿದ್ದರು. ಘಟನೆಯಲ್ಲಿ ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯವಾಗಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೋಲ್ ದರ ಏರಿಕೆ: ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ದುಬಾರಿ; ನೂತನ ಶುಲ್ಕ ಪಟ್ಟಿ ಇಲ್ಲಿದೆ
Bengaluru Mysore Expressway Toll Hike : ದೇಶದಾದ್ಯಂತ ಟೋಲ್ ದರ ಏರಿಕೆಯಾಗಿದೆ. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ದರವೂ ದುಬಾರಿಯಾಗಿದೆ. ಕಾರು, ಬಸ್, ಲಾರಿಗಳಿಗೆ ಹೊಸ ದರ ಎಷ್ಟಿದೆ? ಮಾಸಿಕ ಪಾಸ್ ದರ ಎಷ್ಟು? ಈ ಬಗ್ಗೆ ವಿವರ ಇಲ್ಲಿದೆ.
ರೀಲ್ಸ್ ಎಡವಟ್ಟು; ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಹೆಂಡ್ತಿ, ಕೆಲಸ ಕಳ್ಕೊಂಡ ಕಾನ್ಸ್ಟೇಬಲ್ ಗಂಡ!
ದೇವಾಲಯವೊಂದಕ್ಕೆ ಭೇಟಿ ನೀಡಿ ಕಾನ್ಸ್ಟೇಬಲ್ ಪತ್ನಿ ಜ್ಯೋತಿ ತನ್ನ ಅತ್ತಿಗೆ ಪೂಜಾ ಸಹಾಯದಿಂದ ಡ್ಯಾನ್ಸ್ ರೀಲ್ ಚಿತ್ರೀಕರಿಸಿದರು. ಸಿಗ್ನಲ್ನಲ್ಲಿ ಎರಡೂ ಬದಿಗಳಲ್ಲಿ ವಾಹನಗಳು ನಿಂತಿದ್ದರೂ ಕ್ಯಾರೆ ಎನ್ನದೆ ಜ್ಯೋತಿ ನೃತ್ಯ ಮಾಡುತ್ತಲೇ ಇದ್ದರು. ಜನಪ್ರಿಯ ಹರ್ಯಾನ್ವಿ ಹಾಡಿಗೆ ನೃತ್ಯ ಮಾಡಿದ್ದರು. ಅಷ್ಟೇ ಅಲ್ಲದೆ, ಮನೆಗೆ ಹೋಗಿ ಅಜಯ್ ಕುಂಡು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆ ವಿಡಿಯೋವನ್ನು ಅಪ್ಲೋಡ್ ಸಹ ಮಾಡಿದಳು. ತಕ್ಷಣ ಆ ವಿಡಿಯೋ ಎಲ್ಲೆಡೆ ವೈರಲ್ ಆಯಿತು. ಹೀಗಾಗಿ ಪತಿಯನ್ನುಕೆಲಸದಿಂದ ಅಮಾನತು ಮಾಡಲಾಯಿತು.
ತೊಗರಿ ಖರೀದಿ; ಹಮಾಲಿ, ಹೆಚ್ಚಿನ ತೊಗರಿ ಕೇಳಿದಲ್ಲಿ ದೂರು ನೀಡಿ : ಜಿಲ್ಲಾಧಿಕಾರಿ
ಕಲಬುರಗಿ : ಬೆಂಬಲ ಬೆಲೆ ಯೋಜನೆಯಡಿ ಸ್ಥಾಪಿಸಲಾದ ತೊಗರಿ ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 100 ರೂ. ಹಮಾಲಿ ಮತ್ತು ಪ್ರತಿ ಕ್ವಿಂಟಾಲಿಗೆ 2 ಕೆ.ಜಿ ತೊಗರಿ ರೈತರಿಂದ ಪಡೆಯುತ್ತಿರುವ ದೂರು ಕೇಳಿ ಬರುತ್ತಿದ್ದು, ರೈತರ ಯಾವುದೇ ಕಾರಣಕ್ಕೂ ಹಮಾಲಿ ಮೊತ್ತ ಅಥವಾ ಕ್ವಿಂಟಾಲಿಗೆ 2 ಕೆ.ಜಿ ತೊಗರಿ ಸೂಟು ನೀಡಬಾರದೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ. ರೈತರು ಪ್ರತಿ 50 ಕೆ.ಜಿ ಚೀಲಕ್ಕೆ ಚೀಲದ ತೂಕ 600 ಗ್ರಾಂ ಮಾತ್ರ ಹೆಚ್ಚುವರಿಯಾಗಿ ತೊಗರಿ ನೀಡಬೇಕಿದ್ದು, ಅದಕ್ಕಿಂತ ಹೆಚ್ಚು ನೀಡಬೇಕಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ಯಾವುದೇ ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 100 ರೂ. ಹಮಾಲಿ ಅಥವಾ ಪ್ರತಿ ಕ್ವಿಂಟಾಲಿಗೆ 2 ಕೆ.ಜಿ ತೊಗರಿ ಸೂಟು ನೀಡುವಂತೆ ಕೇಳಿದಲ್ಲಿ ಕೂಡಲೇ ರೈತರು ತಾಲೂಕಿನ ತಹಶೀಲ್ದಾರರು, ಸಹಾಯಕ ಕೃಷಿ ನಿರ್ದೇಶಕಕು ಅಥವಾ ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕರು ಕೃಷಿ ಮಾರುಕಟ್ಟೆ ಇಲಾಖೆ ಅಥವಾ ಸಂಬಂಧಿತ ತಾಲೂಕು ನೋಡಲ್ ಅಧಿಕಾರಿಗಳಲ್ಲಿ ದೂರು ಸಲ್ಲಿಸುವಂತೆ ತಿಳಿಸಿದ್ದಾರೆ.
ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸಲು ಜನಪ್ರತಿನಿಧಿ, ಅಧಿಕಾರಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಚರ್ಚೆ
ಕಲಬುರಗಿ : ಕಲಬುರಗಿ ನಗರವನ್ನು ನಾಗರಿಕ ಸ್ನೇಹಿಯಾಗಿಸಲು, ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಸಲುವಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲು ಪೂರ್ವಭಾವಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಸಕರು, ಅಧಿಕಾರಿಗಳು ಹಾಗೂ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದರು. ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಚರ್ಚೆ ನಡೆಸಿದ ಸಚಿವರು, ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಹಲವಾರು ಸಲಹೆ, ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ವಿಡಿಯೋ ಸಂವಾದದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ಕನಿಝಾ ಫಾತಿಮಾ ಹಾಗೂ ಕಲಬುರಗಿ ನಗರ ಪಾಲಿಕೆಯ ಆಯುಕ್ತರು, ನಗರ ಯೋಜನಾ ಸಂಸ್ಥೆಯಾದ ಐಐಹೆಚ್ಎಸ್ ಪ್ರತಿನಿಧಿಗಳು ಭಾಗವಹಿಸಿದ್ದರು. ನಗರಕ್ಕೆ ಸುಸ್ಥಿರ ನೀರು ಸರಬರಾಜು, ಉತ್ತಮ ರಸ್ತೆ, ಉದ್ಯಾನವನ, ತ್ಯಾಜ್ಯ ಮರುಬಳಕೆ, ತ್ಯಾಜ್ಯ ವಿಲೇವಾರಿ, ಸುಗಮ ವಾಹನ ಸಂಚಾರ, ಆಕರ್ಷಕ ಹಾಗೂ ಅನುಕೂಲಕರ ಬಸ್ ತಂಗುದಾಣಗಳ ನಿರ್ಮಾಣ ಮುಂತಾದ ಮೂಲಭೂತ ಸೌಲಭ್ಯಗಳನ್ನು ಉತ್ತಮ ಪಡಿಸಿ ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು. ನಗರ ಯೋಜನೆಯನ್ನು ರೂಪಿಸುವಲ್ಲಿ ಪರಿಣಿತ ಸಲಹಾ ಸಂಸ್ಥೆಯಾದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ ಸಂಸ್ಥೆಯು ಸ್ಥಳೀಯ ಶಾಸಕರು ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಲಬುರಗಿ ನಗರದ ಉತನ್ನತೀಕರಣಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಒಳಗೊಂಡ ವರದಿಯನ್ನು ಐದು ದಿನಗಳ ಒಳಗಾಗಿ ಸಲ್ಲಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಬೆಂಬಲ ಬೆಲೆ ತೊಗರಿ ಖರೀದಿ; ಏ.25ರ ವರೆಗೆ ನೋಂದಣಿಗೆ ಕಾಲಾವಧಿ ವಿಸ್ತರಣೆ: ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಜಿಲ್ಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿದ್ದು, ರೈತರ ಹಿತದೃಷ್ಠಿಯಿಂದ ತೊಗರಿ ಖರೀದಿಗೆ ನೊಂದಣಿಯನ್ನು ಏ.25ರ ವರೆಗೆ ಮತ್ತು ಭೌತಿಕ ತೊಗರಿ ಖರೀದಿಗೆ ಮೇ 1ರ ವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ತೊಗರಿಗೆ ಪ್ರತಿ ಕ್ವಿಂಟಾಲ್ ರೂ.7,550 ನಿಗದಿಪಡಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ 450 ರೂ. ಪ್ರತಿ ಕ್ವಿಂಟಾಲಿಗೆ ಸೇರಿಸಿ ಒಟ್ಟು ಪ್ರತಿ ಕ್ವಿಂಟಾಲಿಗೆ 8,000 ರೂ. ದರ ನಿಗದಿಪಡಿಸಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ ಮತ್ತು ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಸಂಸ್ಥೆಗಳ ಮೂಲಕ ಜಿಲ್ಲೆಯಲ್ಲಿ ಒಟ್ಟು 189 ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ತೊಗರಿ ಖರೀದಿ ಮಾಡಲಾಗುತ್ತಿದೆ. ಜಿಲ್ಲೆಯ ರೈತ ಭಾಂದವರು ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಮಾರಾಟಕ್ಕಾಗಿ ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ರೈತ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ ಹೆಸರು ನೊಂದಾಯಿಸಿಕೊಂಡು ತೊಗರಿ ಉತ್ಪನ್ನವನ್ನು ಮಾರಾಟ ಮಾಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. 1.85 ಲಕ್ಷ ತೊಗರಿ ಖರೀದಿ : ಕಲಬುರಗಿ ಜಿಲ್ಲೆಯಲ್ಲಿ 2024-25ನೇ ಸಾಲಿಗೆ 6.27 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, 50 ಲಕ್ಷ ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿದೆ. ಏಪ್ರಿಲ್ 1ರ ವರೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಕಲಬುರಗಿ ಸಂಸ್ಥೆಯು 24,123 ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಸಂಸ್ಥೆಯು 10,206 ಸೇರಿ ಒಟ್ಟಾರೆ 34,329 ರೈತರು ತೊಗರಿ ಮಾರಾಟಕ್ಕೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ 12,556 ರೈತರಿಂದ 1,85,740 ಕ್ವಿಂಟಲ್ ತೊಗರಿ ರೈತರಿಂದ ಖರೀದಿಸಲಾಗಿದೆ. ಇದರಲ್ಲಿ 1,643 ರೈತರಿಗೆ ಡಿ.ಬಿ.ಟಿ ಮೂಲಕ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
Anant Ambani Walk To Dwarka : ಮುಕೇಶ್ ಅಂಬಾನಿಯವರ ಮಗ ಅನಂತ್ ಅಂಬಾನಿ ತಮ್ಮ 30ನೇ ಹುಟ್ಟುಹಬ್ಬಕ್ಕೆ ಜಾಮ್ನಗರದಿಂದ ದ್ವಾರಕಾವರೆಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾರೆ. ಹಾದಿ ಮಧ್ಯೆ ಕೋಳಿಗಳ ಹಿಂಡನ್ನು ರಕ್ಷಣೆ ಮಾಡಿದ್ದು, ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹನಿಟ್ರ್ಯಾಪ್ ರಾಜಕೀಯ ತಂತ್ರವೋ? ಜನನಾಯಕರ ನೈತಿಕ ಅಧಃಪತನವೋ?
ಬೆಂಗಳೂರು, ಏಪ್ರಿಲ್ 01: ರಾಜ್ಯ ಕಾಂಗ್ರೆಸ್ನ ಸಿದ್ದರಾಮಯ್ಯ ಪಾಳಯದಲ್ಲಿ ಸೇನಾಧೀಪತಿಯಂತೆ ಮುನ್ನಲೆಯಲ್ಲಿದ್ದುಕೊಂಡು ಸದಾ ಒಂದಲ್ಲ ಒಂದು ವಿಚಾರವನ್ನು ಪ್ರಸ್ತಾಪಿಸುತ್ತಿದ್ದ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ದಾಳ ಉರುಳಿಸುತ್ತಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣರವರು ಇದೀಗ ಮೌನಕ್ಕೆ ಜಾರಿದ್ದಾರೆ. ಸದನದಲ್ಲಿ ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಬೊಬ್ಬಿರಿದಿದ್ದವರು ಇದೀಗ ಆ ಬಗ್ಗೆ ಪ್ರಸ್ತಾಪಿಸದೆ ಇರುವುದು ಮತ್ತು ಹನಿಟ್ರ್ಯಾಪ್ನಿಂದ ಕೊಲೆ
'ಬಿಜೆಪಿ ನಾಯಕರು ಜನರ ಎದೆಗೆ ಕಿವಿಗೊಟ್ಟರೆ ಕೇಂದ್ರ ವಿರುದ್ಧ ಆಕ್ರೋಶ ಕೇಳಿಸಲಿದೆ'
ಬೆಂಗಳೂರು, ಏಪ್ರಿಲ್ 01: ಹಾಲಿನ ದರ, ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿಯ ಈ ನಿರ್ಧಾರವನ್ನು ಟೀಕೆ ಮಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಜನಾಕ್ರೋಶ ಪ್ರತಿಭಟನೆ ನಡೆಸಬೇಕಿರುವುದು ಕೇಂದ್ರ ಸರ್ಕಾರದ ವಿರುದ್ಧ ಎಂದಿದ್ದಾರೆ.
ರಾಹುಲ್ ದ್ರಾವಿಡ್ ಗೆ ಯಾಕೆ ರಾಜಸ್ಥಾನ ರಾಯಲ್ಸ್ ಮೇಲೆ ಅಷ್ಟೊಂದು ಪ್ರೀತಿ? `ಗೋಡೆ'ಗೂ ಭಾವನಗೆಳಿವೆ
Rajasthan Royals And Rahul Dravid - ರಾಹುಲ್ ದ್ರಾವಿಡ್ ಅವರು ವ್ಹೀಲ್ ಚೇರ್ ನಲ್ಲಿ ರಾಜಸ್ಥಾನ ತಂಡದ ಕೋಚಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಫೋಟೋ, ವಿಡಿಯೋಗಳೆಲ್ಲಾ ವೈರಲ್ ಆದಾಗ ಅವರ ಕ್ರಿಕೆಟ್ ಬದ್ಧತೆಯ ಬಗ್ಗೆ ಅನೇಕ ಹೊಗಳಿಕೆಗಳು ಕೇಳಿ ಬಂದವು. ರಾಹುಲ್ ದ್ರಾವಿಡ್ ಎಂದರೆ ಹಾಗೆ. ಅವರಿಗೆ ಅವರೇ ಸಾಟಿ. ಆದರೂ ರಾಜಸ್ಥಾನ ರಾಯಲ್ಸ್ ಮೇಲಿನ ಅವರ ಈ ಪರಿ ಬದ್ಧತೆಗೆ ಕಾರಣವನ್ನು ಯಾವತ್ತಾದರೂ ಯೋಚಿಸಿದ್ದೀರಾ? ತಮ್ಮನ್ನು ಗೌರವಯುತವಾಗಿ ನಡೆಸಿಕೊಂಡ ಆ ತಂಡಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆಯುತ್ತಿದ್ದಾರೆ ಗ್ರೇಟ್ ವಾಲ್
ಏ. 1ರ ಸಂಜೆಯಿಂದ ಮೂರು ದಿನಗಳವರೆಗೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ - ಯಾವ್ಯಾವ ಊರುಗಳಲ್ಲಿ ವರ್ಷಧಾರೆ
ಏ. 1ರ ಸಂಜೆಯಿಂದ ಮೂರು ದಿನಗಳವರೆಗೆ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಏ. 1ರಂದು ಸಂಜೆಯಿಂದ ರಾತ್ರಿಯೊಳಗೆ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹೇಳಿದೆ. ಏ. 1ರಿಂದ 3ರವರೆಗೆ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ. ಅದರಲ್ಲೂ ಏ. 1ರಂದು ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಾಗಲಿದೆ. ಏ. 2ರಂದು ಮಧ್ಯ ಕರ್ನಾಟಕ, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದೆ. ಏ. 3ರಂದು ಮಳೆಯ ಕರಾವಳಿ, ಮಳೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹೇಳಿದೆ.
ಬೀದರ್ | ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಹೆಸರು ನೋಂದಾಯಿಸಲು ಮನವಿ
ಬೀದರ್ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಹೆಸರು ನೋಂದಾಯಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕ ನಾಗೇಶ್ ಎಂ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ತರಬೇತಿಗಾಗಿ ಮೈಸೂರಿನ ಕೇಂದ್ರ ಕಚೇರಿಯಲ್ಲಿ 50 ದಿನಗಳ ತರಬೇತಿ ನಡೆಸಲು ನಿರ್ಧರಿಸಲಾಗಿದೆ. ಹಾಗಾಗಿ ಆಸಕ್ತರು ಹೆಸರು ನೋಂದಾಯಿಸಬಹುದು ಎಂದು ಅವರು ಹೇಳಿದ್ದಾರೆ. ಆಸಕ್ತರು ಏ.4 ರ ಒಳಗಾಗಿ ದೂರವಾಣಿ ಸಂಖ್ಯೆ: 0821-2515944 ಗೆ ಕರೆ ಮಾಡುವ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾಷೆ, ಸಂಸ್ಕೃತಿ, ಕಲೆಯನ್ನು ಗೌರವಿಸಿ ತೆಲುಗು ನಟ ಡಾ. ರಾಜಶೇಖರ್
ಮಂಗಳೂರು: ಭಾಷೆ, ಸಂಸ್ಕೃತಿ, ಕಲೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ತೆಲುಗು ಸಿನಿಮಾ ನಟ ಡಾ ರಾಜಶೇಖರ್ ಹೇಳಿದ್ದಾರೆ. ತೆಲುಗು ಕಲಾ ಸಮಿತಿ ವತಿಯಿಂದ ಪಣಂಬೂರು ನವ ಮಂಗಳೂರು ಬಂದರು ಪ್ರಾಧಿಕಾರ ಸಭಾಂಗಣ ದಲ್ಲಿ ಆಯೋಜಿಸಲಾದ ಯುಗಾದಿ ಸಂಭ್ರಮ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತೆಲುಗು ಭಾಷೆ ಮಾತನಾಡುವವರು ಒಟ್ಟಾಗಿ ಸೇರಿ ಎಲ್ಲಾ ರೀತಿಯ ಹಬ್ಬಯನ್ನು ಕುಟುಂಬದ ಹಬ್ಬವಾಗಿ ಆಚರಣೆ ಮಾಡುವುದು ತುಂಬಾ ಖುಷಿಯ ವಿಚಾರವಾಗಿದೆ ಎಂದು ಹೇಳಿದರು. ಇದೇ ವೇಳೆ ಸ್ಪಂದನ ಮ್ಯಾಗಜಿನ್ನನ್ನು ತೆಲುಗು ನಟಿ ಜೀವಿತಾ ರಾಜಶೇಖರ್ ಬಿಡುಗಡೆ ಗೊಳಿಸಿದರು. ನವ ಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ ವೆಂಕಟರಮಣ ಅಕ್ಕರಾಜು ಕಾರ್ಯಕ್ರಮ ಉದ್ಘಾಟಿಸಿದರು. ಸುಷ್ಮಾ ವೆಂಕಟರಮಣ ಅಕ್ಕರಾಜು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿದ್ದರು. ಸಮಿತಿ ಗೌರವಾಧ್ಯಕ್ಷ ಸಾಂಬಶಿವರಾವ್ ನಡೆಲ್ಲಾ,ಅಧ್ಯಕ್ಷ ರಾಮ ಚಂದರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್,ಮಹಿಳಾ ವಿಭಾಗದ ಅಧ್ಯಕ್ಷೆ ನಳಿನಿ, ಉಪಸ್ಥಿತರಿದ್ದರು.
2020 ರ ದಿಲ್ಲಿ ಗಲಭೆ ; ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ
ಹೊಸದಿಲ್ಲಿ : 2020 ರ ಈಶಾನ್ಯ ದಿಲ್ಲಿ ಗಲಭೆ ಪ್ರಕರಣದಲ್ಲಿ ದಿಲ್ಲಿಯ ಹಾಲಿ ಕಾನೂನು ಸಚಿವ ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲು ದಿಲ್ಲಿ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಯಮುನಾ ವಿಹಾರ್ ನಿವಾಸಿ ಮುಹಮ್ಮದ್ ಇಲ್ಯಾಸ್ ಸಲ್ಲಿಸಿದ ಅರ್ಜಿಗೆ ಸ್ಪಂದಿಸಿದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರು ಈ ಆದೇಶ ನೀಡಿರುವುದಾಗಿ ವರದಿಯಾಗಿದೆ. ಘಟನೆ ಸಂದರ್ಭದಲ್ಲಿ ಕಪಿಲ್ ಮಿಶ್ರಾ ಸ್ಥಳದಲ್ಲಿಯೇ ಇದ್ದರು ಎಂಬುದನ್ನು ಎಂಬುದು ದೃಢಪಟ್ಟಿದೆ ಎಂದು ಕೋರ್ಟ್ ಹೇಳಿದೆ. 53 ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಗಲಭೆಯಲ್ಲಿ ಮಿಶ್ರಾ ಮತ್ತು ಇತರ ಆರು ಜನರ ಪಾತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಇಲ್ಯಾಸ್ ಕಳೆದ ಡಿಸೆಂಬರ್ ನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವರ್ಷದ ಮಾರ್ಚ್ನಲ್ಲಿ, ದಿಲ್ಲಿ ಪೊಲೀಸರು ಗಲಭೆಯಲ್ಲಿ ಮಿಶ್ರಾ ಪಾತ್ರವಿಲ್ಲ ಎಂದು ಹೇಳಿ, ಈ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದರು. ಕಪಿಲ್ ಮಿಶ್ರಾ, ಮುಸ್ತಫಾಬಾದ್ ಶಾಸಕ ಮತ್ತು ಉಪ ಸ್ಪೀಕರ್ ಮೋಹನ್ ಸಿಂಗ್ ಬಿಶ್ತ್, ಆಗಿನ ಡಿಸಿಪಿ (ಈಶಾನ್ಯ) ದಯಾಳ್ಪುರ ಪೊಲೀಸ್ ಠಾಣೆಯ ಆಗಿನ ಠಾಣಾಧಿಕಾರಿ ಮತ್ತು ಮಾಜಿ ಬಿಜೆಪಿ ಶಾಸಕ ಜಗದೀಶ್ ಪ್ರಧಾನ್ ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ತಮ್ಮ ಅರ್ಜಿಯಲ್ಲಿ ಇಲ್ಯಾಸ್ ಆರೋಪಿಸಿರುವುದಾಗಿ ವರದಿಯಾಗಿದೆ. 2020 ರ ಫೆಬ್ರವರಿ 23 ರಂದು ಕಾರ್ಡಂಪುರಿಯಲ್ಲಿ ಮಿಶ್ರಾ ಮತ್ತಿತರರು ರಸ್ತೆ ತಡೆದು ಬೀದಿ ವ್ಯಾಪಾರಿಗಳ ಕೈಗಾಡಿಗಳನ್ನು ನಾಶಪಡಿಸುವುದನ್ನು ನೋಡಿರುವುದಾಗಿ ಇಲ್ಯಾಸ್ ಹೇಳಿಕೊಂಡಿದ್ದಾರೆ. ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಬೆದರಿಸುವಾಗ ಮಾಜಿ ಡಿಸಿಪಿ ಮತ್ತಿತರ ಕೆಲ ಅಧಿಕಾರಿಗಳು ಮಿಶ್ರಾ ಅವರೊಂದಿಗೆ ನಿಂತಿದ್ದರು ಎಂದು ಅವರು ಹೇಳಿದ್ದಾರೆ. ಮಾಜಿ ದಯಾಳ್ಪುರ ಠಾಣಾಧಿಕಾರಿ ಮತ್ತಿತರರು ಈಶಾನ್ಯ ದಿಲ್ಲಿಯಾದ್ಯಂತ ಮಸೀದಿಗಳನ್ನು ಧ್ವಂಸ ಮಾಡುವುದನ್ನು ತಾನು ನೋಡಿರುವುದಾಗಿ ಲಿಯಾಸ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಗಲಭೆಯ ಸಂಚುಕೋರರೆಂದು ಪೊಲೀಸರು ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ ಮತ್ತು ಶಾರ್ಜೀಲ್ ಇಮಾಮ್ ಸೇರಿದಂತೆ ಹಲವಾರು ವಿದ್ಯಾರ್ಥಿ ಮುಖಂಡರು ಮತ್ತು ಕಾರ್ಯಕರ್ತರನ್ನು ಹೆಸರಿಸಿದ್ದಾರೆ. ಆದರೆ, ದಿಲ್ಲಿ ಅಲ್ಪಸಂಖ್ಯಾತ ಆಯೋಗ ರಚಿಸಿದ 10 ಸದಸ್ಯರ ಸತ್ಯಶೋಧನಾ ತಂಡ ದಿಲ್ಲಿ ಹಿಂಸಾಚಾರ ಯೋಜಿತ ಮತ್ತು ಗುರಿಯಾಗಿಸಿ ಮಾಡಲಾಗಿರುವುದು ಎಂದು ಹೇಳಿತ್ತು. ಮತ್ತು ಮಿಶ್ರಾ ಅದಕ್ಕೆ ಕಾರಣವೆಂದು ಅದು ಬೊಟ್ಟು ಮಾಡಿತ್ತು. 2020ರ ಫೆಬ್ರವರಿ 23 ರಂದು ಈಶಾನ್ಯ ದಿಲ್ಲಿಯ ಜಾಫ್ರಾಬಾದ್ನಲ್ಲಿ ಪ್ರತಿಭಟನಾಕಾರರನ್ನು ಬಲವಂತವಾಗಿ ಚದುರಿಸಲು ಕಪಿಲ್ ಮಿಶ್ರಾ ಬಹಿರಂಗವಾಗಿ ಕರೆ ನೀಡಿದ ನಂತರ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ ಶುರುವಾಗಿತ್ತು ಎಂದು ವರದಿ ಹೇಳಿದೆ. ಮೂರು ದಿನಗಳ ನಂತರ ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರ ಮಾತನ್ನು ಕೇಳುವುದಿಲ್ಲ ಎಂದು ಹೇಳುವ ಮೂಲಕ ಮಿಶ್ರಾ ಮತ್ತು ಅವರ ಬೆಂಬಲಿಗರು ವಿಷಯಗಳನ್ನು ತಮ್ಮ ಕೈಗೆ ತೆಗೆದುಕೊಳ್ಳಲಿರುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅದು ಹೇಳಿದೆ. ಪೊಲೀಸರ ಮಾತನ್ನು ಕೇಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರಲ್ಲಿ ಅವರು ಕಾನೂನುಬಾಹಿರ ನಡೆಗೆ ಮುಂದಾಗಿರುವುದು ಸ್ಪಷ್ಟವಿತ್ತು ಮತ್ತು ಹಾಜರಿದ್ದ ಅಧಿಕಾರಿಗಳು ಹಿಂಸಾಚಾರ ಪ್ರಚೋದಿಸುತ್ತಿದ್ದುದನ್ನು ಕಾಣಬಹುದಿತ್ತು ಎಂದು ಸಮಿತಿ ಹೇಳಿದೆ. ಡಿಸಿಪಿ ವೇದ್ ಪ್ರಕಾಶ್ ಸೂರ್ಯ ಪಕ್ಕದಲ್ಲೇ ನಿಂತಿದ್ದರೂ ಪೊಲೀಸರು ಮಿಶ್ರಾ ಅವರನ್ನು ಬಂಧಿಸಲಿಲ್ಲ ಎಂದು ಸಮಿತಿ ಹೇಳಿದೆ. ಹಿಂಸಾಚಾರ ಉಂಟಾಗುವುದನ್ನು ತಪ್ಪಿಸಲು ಮತ್ತು ಪ್ರಾಣ, ಆಸ್ತಿ ಪಾಸ್ತಿ ರಕ್ಷಿಸಲು ತಕ್ಷಣದ ಕ್ರಮ ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಮಿತಿ ಹೇಳಿತ್ತು.
‘ವಿವಿ ಗೌರವ ಡಾಕ್ಟರೇಟ್ ’ ಸಹಕಾರ ಕ್ಷೇತ್ರಕ್ಕೆ ಸಂದ ಗೌರವ: ಡಾ.ಎಂ.ಎನ್.ರಾಜೇಂದ್ರ ಕುಮಾರ್
ಮಂಗಳೂರು ,ಎ.1: ಮಂಗಳೂರು ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಶನಿವಾರ ರಾಜ್ಯದ ಪ್ರಮುಖ ಸಹಕಾರಿ ಧುರೀಣ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಸಮಾಜ ಸೇವೆಯಲ್ಲಿ ಸಲ್ಲಿಸಿದ ಅಪೂರ್ವ ಸಾಧನೆಗಾಗಿ ಪ್ರದಾನ ಮಾಡಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಗಣ್ಯರ ಸಮ್ಮುಖದಲ್ಲಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಪದವಿ ಪ್ರದಾನ ಮಾಡಿದರು ಸಹಕಾರ ಕ್ಷೇತ್ರಕ್ಕೆ ಸಂದ ಗೌರವ : ಗೌರವ ಡಾಕ್ಟರೇಟ್ ಪದವಿ ನನಗೊಬ್ಬನಿಗೆ ಸೇರಿದಲ್ಲ. ಇದು ನಾನು ಪ್ರತಿನಿಧಿಸುವ ಸಹಕಾರ ಕ್ಷೇತ್ರಕ್ಕೆ ಸಂದ ಗೌರವ. ಸಹಕಾರ ಕ್ಷೇತ್ರವನ್ನು ನಾನು ಸದಾ ಗೌರವಿಸುತ್ತಾ ಬಂದವನು. ಈ ಸಹಕಾರ ಕ್ಷೇತ್ರದಲ್ಲಿ ನಿರ್ವಂಚನೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ನನಗೆ ಈ ಎಲ್ಲಾ ಗೌರವ - ಸ್ಥಾನಮಾನಗಳು ಲಭಿಸಿವೆ. ಇನ್ನು ಮುಂದೆಯೂ ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಈ ಪದವಿ ಪ್ರೇರಣೆ ಆಗಿದೆ ಎಂದು ರಾಜೇಂದ್ರ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಹೊಸತನದ ಹರಿಕಾರ: ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ಥಕ, ಪ್ರಾಮಾಣಿಕ ಸೇವೆಯನ್ನು ಕಳೆದ 31 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಮಾಡುತ್ತಿರುವ ಡಾ. ಎಂ.ಎನ್.ರಾಜೇದ್ರ ಕುಮಾರ್ ಅವರು ಈ ಬ್ಯಾಂಕ್ನ್ನು ಅತ್ಯುನ್ನತ ಮಟ್ಟಕ್ಕೇರಿಸಿದ ಅದ್ವಿತೀಯ ನಾಯಕ. ಮನೆ ಬಾಗಿಲಿಗೆ ಬ್ಯಾಂಕಿಂಗ್ ಪರಿಕಲ್ಪನೆ ಯೊಂದಿಗೆ ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು. ಇವರ ಅಧ್ಯಕ್ಷಗಿರಿಯಲ್ಲಿ ಎಸ್ಸಿಡಿಸಿಸಿ ಬ್ಯಾಂಕಿಗೆ 22ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 19ಬಾರಿ ನಬಾರ್ಡ್ ಪ್ರಶಸ್ತಿಗಳು ಸಂದಿವೆ. ಮಾತ್ರವಲ್ಲ 3 ಬಾರಿ ಬ್ಯಾಂಕಿಂಗ್ ಪ್ರೊಂಟಿಯರ್ಸ್ ಪ್ರಶಸ್ತಿ ಹಾಗೂ 4 ಬಾರಿ ಎಪಿವೈ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ. ಪ್ರಶಸ್ತಿಗಳ ಸರಮಾಲೆ : ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಿರುವ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ಸಾಮಾಜಿಕ ಸ್ಪಂದನೆಯ ಕಾರ್ಯಗಳನ್ನು ಪರಿಗಣಿಸಿ ಹಲವಾರು ರಾಷ್ಟಿಯ - ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಸರಕಾರದಿಂದ ‘ ಸಹಕಾರ ರತ್ನ ’ ಲಭಿಸಿದೆ. ಮಾತ್ರವಲ್ಲ ‘ಸಹಕಾರ ವಿಶ್ವ ಬಂಧುಶ್ರೀ’ , ‘ ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ ’, ‘ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ’ , ‘ಬೆಸ್ಟ್ ಚೇರ್ಮೆನ್ ನ್ಯಾಷನಲ್ ಎವಾರ್ಡ್’ , ‘ ನ್ಯಾಷನಲ್ ಎಕ್ಸ್ ಲೆನ್ಸ್ ಎವಾರ್ಡ್’ , ‘ಔಟ್ ಸ್ಟೆಂಡಿಂಗ್ ಗ್ಲೋಬಲ್ ಲೀಡರ್ ಶಿಪ್ ಎವಾರ್ಡ್ ’ , ಬಹು ಪ್ರಭಾವಶಾಲಿ ಸಹಕಾರ ನಾಯಕ ಪ್ರಶಸ್ತಿ , ಅಂತಾರಾಷ್ಟ್ರೀಯ ಶ್ರೇಷ್ಠ ನಾಯಕತ್ವ ಎವಾರ್ಡ್, ಅಂತಾರಾ ಷ್ಟ್ರೀಯ ಸಾಧಕ ಪ್ರಶಸ್ತಿ , ಮದರ್ ತೆರೆಸಾ ಮೆಮೆರಿಯಲ್ ನ್ಯಾಶನಲ್ ಎವಾರ್ಡ್ ಹಾಗೂ ಏಶ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್ ನಿಂದ ಉಜ್ವಲ ಉದ್ಯಮಿ ಪ್ರಶಸ್ತಿ ಹೀಗೆ ಹಲವಾರು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಸಂದಿವೆ.
ಎ.9ರಂದು ಮಂಗಳೂರಿಗೆ ಬಿಜೆಪಿಯ ಜನಾಕ್ರೋಶ ಯಾತ್ರೆ
ಮಂಗಳೂರು, ಎ.1: ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು, ಎ.9ರಂದು ಜನಾಕ್ರೋಶ ಯಾತ್ರೆ ಮಂಗಳೂರಿಗೆ ಆಗಮಿಸಲಿದೆಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ. ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾತ್ರೆಯ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು. ರಾಜ್ಯದ ಜನತೆಗೆ ಯುಗಾದಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ರಾಜ್ಯ ಕಾಂಗ್ರೆಸ್ ಸರಕಾರ ಅವಕಾಶ ನೀಡಿಲ್ಲ. ಹಾಲು ಮತ್ತು ಮೊಸರಿನ ದರ ಲೀಟರ್ಗೆ ನಾಲ್ಕು ರೂ., ವಿದ್ಯುತ್ ದರ ಯೂನಿಟ್ಗೆ 36 ಪೈಸೆ ಹೆಚ್ಚಿಸಿ ಜನತೆಗೆ ಆಘಾತ ನೀಡಿದೆ. ವಾಹನ ಖರೀದಿ ತೆರಿಗೆ, ಮುದ್ರಾಂಕ ಶುಲ್ಕ ಸಹಿತ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುವ ಮೂಲಕ ದುಬಾರಿಯ ವಾತಾವರಣವನ್ನು ಕಾಂಗ್ರೆಸ್ ಸರಕಾರ ಸೃಷ್ಟಿಸಿದೆ. ಅಧಿಕಾರಕ್ಕೆ ಬಂದ ಬಳಿಕ ಒಟ್ಟು ಮೂರು ಬಾರಿ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಸರಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಚೀಟಿ ದರ ಏರಿಕೆ, ವೈದ್ಯಕೀಯ ಪ್ರಮಾಣ ಪತ್ರದ ದರ 250 ರೂ.ನಿಂದ 300 ರೂ.ಗೆ ಏರಿಕೆ , ಮುದ್ರಾಂಕ ಶುಲ್ಕ 50 ರೂ.ನಿಂದ 500 ರೂ.ಗೆ ಏರಿಸಲಾಗಿದೆ. ಬಿತ್ತನೆ ಬೀಜದ ದರ, ನೀರಿನ ಬಿಲ್, ಕಸ ವಿಲೇವಾರಿ ಸೆಸ್ ಏರಿಸುವ ಮೂಲಕ ಜನತೆಗೆ ಕಾಂಗ್ರೆಸ್ ಸರಕಾರ ಶಾಪಗ್ರಸ್ತ ಸರಕಾರವಾಗಿ ಪರಿಣಮಿಸಿದೆ ಎಂದು ಆರೋಪಿಸಿದರು. ರಾಜ್ಯ ಕಾಂಗ್ರೆಸ್ ಸರಕಾರದಿಂದ ಇದೀಗ ಜನಸಾಮಾನ್ಯರಿಗೆ ಬದುಕೇ ಇಲ್ಲದಾಗುವ ಸ್ಥಿತಿ ಒದಗಿದೆ. ಮುಸಲ್ಮಾನರಿಗೆ ಪ್ರತ್ಯೇಕ ಬಜೆಟ್ ಮಂಡಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಸರಕಾರ ವಿಫಲವಾಗಿದೆ. ಎಸ್ಸಿ ಎಸ್ಟಿ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಮೂಲಕ ಎಸ್ಸಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ಹಿಂದು ಸಮಾಜಕ್ಕೆ ತೊಂದರೆ ನೀಡುವ ರೀತಿಯಲ್ಲಿ ಸರಕಾರ ಕಾರ್ಯವೆಸಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎ.2 ಮತ್ತು 3ರಂದು ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಶಾಸಕರ ಅಮಾನತು ಖಂಡನೀಯ: ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಶಾಸಕರ ಸಹಿತ ಬಿಜೆಪಿ 18 ಮಂದಿ ಶಾಸಕರನ್ನು 6 ತಿಂಗಳ ಕಾಲ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿರುವುದು ಖಂಡನೀಯ ಎಂದು ಸತೀಶ್ ಕುಂಪಲ ಹೇಳಿದರು. ಶಾಸಕರನ್ನು ಆರು ತಿಂಗಳು ಅಮಾನತು ಮಾಡಿರುವುದು ಸರಿಯಲ್ಲ. ಯು.ಟಿ. ಖಾದರ್ ಅವರು ಸ್ಪೀಕರ್ ಆದಾಗ ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎಂಬ ಆಶಾವಾದ ಹೊಂದಲಾಗಿತ್ತು. ಆದರೆ, ಜಿಲ್ಲೆ ಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಸ್ಪೀಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಅವರು ಕಾಂಗ್ರೆಸ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ಏನು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ಅವರು ವಿಡೀಯೊ ತೋರಿಸಲಿ. ಶಾಸಕರ ಅಮಾನತಿ ನಿಂದ ಅವರ ಕ್ಷೇತ್ರಗಳಲ್ಲಿ ಮತದಾರರಿಗೆ ತೊಂದರೆಯಾಗುತ್ತಿದೆ. ತಕ್ಷಣ ಅಮಾನತನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳಾ ರಾವ್, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಎಸ್ಸಿ ಮೋರ್ಚಾ ಅಧ್ಯಕ್ಷ ಜಗನ್ನಾಥ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಹೇಶ್ ಜೋಗಿ, ಜಿಲ್ಲಾ ವಕ್ತಾರ ಅರುಣ್ ಜಿ.ಶೇಟ್, ಮಾಧ್ಯಮ ಸಹ ಸಂಯೋಜಕ ಮನೋಹರ ಶೆಟ್ಟಿ, ಸಂಜಯ ಪ್ರಭು ಉಪಸ್ಥಿತರಿದ್ದರು.
ರಾಜ್ಯದಲ್ಲಿ ತಾಪಮಾನ ಏರಿಕೆ: ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕ ಉಷ್ಣಾಂಶ ದಾಖಲು
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು, ಮಂಗಳವಾರದಂದು ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ 34, ಮಂಗಳೂರಿನಲ್ಲಿ 33.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕರಾವಳಿ ಪ್ರದೇಶಗಳಾದ ಹೊನ್ನಾವರ 33.5, ಕಾರವಾರ 35.4, ಪಣಂಬೂರು 34.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ 35, ಬೀದರ್ 37.2, ವಿಜಯಪುರ 38.2, ಬಾಗಲಕೋಟೆ 37.7, ಧಾರವಾಡ 35.4, ಗದಗ 37.7, ಹಾವೇರಿ 36.2, ಕೊಪ್ಪಳ 36.2, ರಾಯಚೂರು 37.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ 34.5, ಚಿಕ್ಕಮಗಳೂರು 31.6, ಚಿತ್ರದುರ್ಗ 37, ದಾವಣಗೆರೆ 36.5, ಹಾಸನ 33.9, ಚಿಂತಾಮಣಿ 34.6, ಮಂಡ್ಯ 34.2, ಮಡಿಕೇರಿ 33, ಮೈಸೂರು 35.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಎ.4ರಂದು ಮಳೆ ಸಾಧ್ಯತೆ: ಎ.2 ರಿಂದ ಎ.5ರವರೆಗೆ ಗರಿಷ್ಠ ತಾಪಮಾನವು 3 ಡಿಗ್ರಿ ಸೆಲ್ಸಿಯಸ್ ನಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಮುಖ ವಾಗುವ ಸಾಧ್ಯತೆ ಇದೆ. ಅಲ್ಲದೆ, ಎ.3 ಮತ್ತು ಎ.4ರಂದು ರಾಜ್ಯದ ಕೆಲ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. 12 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್: ಎ.1 ಮತ್ತು ಎ.2ರಂದು ರಾಜ್ಯದ ಕೆಲ ಭಾಗಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ. ಎ.3 ಮತ್ತು ಎ.4ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನದ ಕೆಲವು ಕಡೆಗಳಲ್ಲಿ ಗುಡುಗು ಮಿಂಚಿನ ಮಳೆಯಾಗಲಿದ್ದು, ಈ 12 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉದ್ಯಾವರ: ಶಾಲಾ ಮುಖ್ಯ ಶಿಕ್ಷಕಿಗೆ ಬೀಳ್ಗೊಡುಗೆ
ಉದ್ಯಾವರ, ಎ.1: ಇಲ್ಲಿನ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ನಿಯೋಜಿತ ಮುಖ್ಯ ಶಿಕ್ಷಕಿ ರತಿ ಅವರನ್ನು ಇಲಾಖೆಯ ಆದೇಶದಂತೆ ಅವರ ಮೂಲಶಾಲೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮರ್ಣೆ ಇಲ್ಲಿಗೆ ಆತ್ಮೀಯವಾಗಿ ಬೀಳ್ಗೊಡಲಾಯಿತು. ಮುಂದಿನ ಜೂನ್ ತಿಂಗಳಲ್ಲಿ ವಯೋ ನಿವೃತ್ತಿ ಹೊಂದಲಿರುವ ರತಿ ಅವರು ಉದ್ಯಾವರದ ಹಿಂದೂ ಶಾಲೆಯಲ್ಲಿ ಮಾಡಿದ ಕರ್ತವ್ಯ ನಿರ್ವಹಣೆ ಗಾಗಿ ಅವರನ್ನು ಶ್ಲಾಘಿಸಿ, ಶಾಲು, ಹಾರ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಗೌರವಿಸಿ ಬೀಳ್ಕೊಡಲಾಯಿತು. ಶಾಲಾ ಸಂಚಾಲಕ ಸುರೇಶ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶಾಲಾಡಳಿತ ಮಂಡಳಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕಿ ಹೇಮಲತಾ ಹಾಗೂ ಸಹಶಿಕ್ಷಕರು ರತಿ ಅವರ ಶಿಕ್ಷಕಿಯಾಗಿ ಸೇವೆಯ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು. ಸಹಶಿಕ್ಷಕ ವಿಕ್ರಮ್ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಅನುರಾಧಾ ವಂದಿಸಿದರು.
ಬಜೆಟ್ನಲ್ಲಿ ಉಡುಪಿ ಕಡೆಗಣನೆ; ಬಿಜೆಪಿ ಪ್ರತಿಭಟನೆ
ಉಡುಪಿ: ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾರ್ಯಕರ್ತರು ಸರಕಾರಿ ಸೇವೆಗಾಗಿ ಅಧಿಕಾರಿಗಳ ಬಳಿಗೆ ಹೋದರೇ ಅವರನ್ನು ಕಡೆಗಣಿಸಲಾಗುತ್ತಿದೆ. ಮಣಿಪಾಲ ಠಾಣೆಯ ಸಿಬ್ಬಂದಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಪಿಎಸ್ಐ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ದ್ದಾನೆ. ಖಾಕಿ ರೌಡಿಸಂ ಇಲ್ಲಿ ನಡೆಯುವುದಿಲ್ಲ ಎಂದು ಶಾಸಕ ಯಶ್ಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಬಜೆಟ್ನಲ್ಲಿ ಉಡುಪಿ ಜಿಲ್ಲೆಯ ಕಡೆಗಣನೆ ಹಾಗೂ ಮಲತಾಯಿ ಧೋರಣೆ ಖಂಡಿಸಿ ಬಿಜೆಪಿ ಉಡುಪಿ ನಗರ ಘಟಕ ವತಿಯಿಂದ ನಡೆದ್ದ ಪ್ರತಿಭಟನಾ ಮೆರವಣಿಗೆ ಹಾಗೂ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತಿದ್ದರು. ಈ ಜಿಲ್ಲೆಯ ಜನತೆ ಬುದ್ದಿವಂತರಾಗಿದ್ದು, ಖಾಕಿಗೆ ಗೌರವ ಕೊಡುತ್ತಾರೆ. ಅಧಿಕಾರಿಗಳು, ಕಾನೂನಿಗೆ ವಿಶೇಷ ಗೌರವವನ್ನು ನೀಡುವವರು ಇದೇ ಜಿಲ್ಲೆಯವರು. ಆದರೆ ಇಲ್ಲಿನ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಾ, ಸುಖಾ ಸುಮ್ಮನೆ ಅಮಾಯಕರ ಮೇಲೆ ದೌರ್ಜನ್ಯ ಎಸಗಿದರೆ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ ಎಂದವರು ಎಚ್ಚರಿಕೆ ನೀಡಿದರು. ಜಿಲ್ಲೆಯ ಐವರು ಶಾಸಕರು ಬಿಜೆಪಿಯವರು ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಉಡುಪಿಯನ್ನು ಕಡೆಗಣಿಸುತ್ತಿದ್ದಾರೆ. ಈ ಬಾರಿ ಬಜೆಟ್ನಲ್ಲಿ ಜಿಲ್ಲೆಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಮುಂದಿನ ಬಜೆಟ್ ನಲ್ಲಿ ಉಡುಪಿ ಜಿಲ್ಲೆಯನ್ನು ಪರಿಗಣಿಸಿ, ವಿಶೇಷ ಅನುದಾನ ಬಿಡುಗಡೆ ಗೊಳಿಸಬೇಕು. ಇಲ್ಲವಾದಲ್ಲಿ ಉಡುಪಿಗರ ತಾಕತ್ತನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಲು ಸಿದ್ದರಿದ್ದೇವೆ ಎಂದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಉಡುಪಿ ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಸಲ್ಲಿ ಸುವ ಜಿಲ್ಲೆಗಳಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇಲ್ಲಿನ ಜನರಿಗೆ ಯಾವುದೇ ಉಪಯೋಗಿ ಯೋಜನೆ ನೀಡಿಲ್ಲ. ಬಜೆಟ್ ಪೂರ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ವಿವಿಧ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದ್ದೆವು. ಆದರೆ ಜಿಲ್ಲೆಗೆ ಬಿಡಿಗಾಸು ನೀಡಿಲ್ಲ. ಆದ್ದರಿಂದ ಸಿದ್ದರಾಮಯ್ಯ ಉಡುಪಿ ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕು ಎಂದರು. ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ ಕುಂದಾಪುರ, ಕಾರ್ಕಳ ಶಾಸಕ ವಿ.ಸುನಿಲ್ಕುಮಾರ್ ಮಾತನಾಡಿದರು. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ಕುಮಾರ್ ಪುತ್ತೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ದಿನೇಶ ಅಮೀನ್, ಮಂಗಳೂರು ವಿಭಾಗ ಪ್ರಮುಖ ಉದಯಕುಮಾರ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ದಿನಕರಬಾಬು, ದಿನಕರ ಶೆಟ್ಟಿ, ಶಿವಕುಮಾರ ಅಂಬಲಪಾಡಿ, ರೇಷ್ಮಾ ಶೆಟ್ಟಿ, ಸಂಧ್ಯಾ ರಮೇಶ, ವೀಣಾ ಶೆಟ್ಟಿ, ನಗರಸಭಾ ಸದಸ್ಯ ಗಿರೀಶ ಅಂಚನ್, ರಾಜೀವ ಕುಲಾಲ್, ಸುಪ್ರಸಾದ್ ಶೆಟ್ಟಿ ಬೈಕಾಡಿ ಮತ್ತಿತರರಿದ್ದರು.
ಗ್ರಾಪಂ ನೌಕರರಿಗೂ ಇಎಸ್ಐ ಸೌಲಭ್ಯ: ಕೇಂದ್ರ ಸಚಿವರಿಗೆ ಸಂಸದ ಕೋಟ ಮನವಿ
ಉಡುಪಿ, ಎ.1: ಕರ್ನಾಟಕ ರಾಜ್ಯದ 5,995 ಗ್ರಾಮಪಂಚಾಯತ್ ಗಳೂ ಸೇರಿದಂತೆ, ಭಾರತದಲ್ಲಿ ಒಟ್ಟು 2,55,401 ಗ್ರಾಪಂಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ 16,77,005 ಮಂದಿ ಪಂಚಾ ಯತ್ ಸಿಬ್ಬಂದಿ ಗಳು ದುಡಿಯುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಇಎಸ್ಐ (ಆರೋಗ್ಯ ವಿಮೆ) ಸೌಲಭ್ಯ ನೀಡುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಕಾರ್ಮಿಕ ಸಚಿವ ಡಾ.ಮನ್ಸುಕ್ ಮಾಂಡವೀಯ ಅವರಲ್ಲಿ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯತಿಗಳಲ್ಲಿ ಬಡವರ ಮಧ್ಯೆ ಕಡಿಮೆ ಸಂಬಳಕ್ಕೆ ದುಡಿಯುತ್ತಿ ರುವ ನೀರುಗಂಟಿ, ಜಾಡ ಮಾಲಿ, ವಾಟರ್ಮೆನ್, ಕಂಪ್ಯೂಟರ್ ಆಪರೇಟರ್, ಜವಾನ ಸೇರಿದಂತೆ, 10ಕ್ಕಿಂತ ಕಡಿಮೆ ಸಿಬ್ಬಂದಿ ಗಳಿರು ವುದರಿಂದ ಈಗಿರುವ ನಿಯಮದಂತೆ, ಅಲ್ಲಿನ ಸಿಬ್ಬಂದಿಗಳು ಆರೋಗ್ಯ ವಿಮೆ ಯಿಂದ ವಂಚಿತ ರಾಗಿದ್ದು, ಸಂಕಷ್ಟ ಪಡುತ್ತಿದ್ದಾರೆ ಎಂದು ಕೋಟ ಕೇಂದ್ರ ಸಚಿವರಿಗೆ ನೀಡಿದ ಮನವಿಯಲ್ಲಿ ವಿವರಿಸಿದ್ದಾರೆ. ಆದ್ದರಿಂದ, ಮಾನವೀಯ ನೆಲೆಯಲ್ಲಿ ಕೇಂದ್ರ ಸರಕಾರ, ಎಲ್ಲಾ ರಾಜ್ಯಗಳಿಂದ ಮಾಹಿತಿಯೊಂದಿಗೆ ವರದಿ ಪಡೆದು, ಪಂಚಾಯತ್ ಸಿಬ್ಬಂದಿಗಳಿಗೂ ಇಎಸ್ಐ ಸೌಲಭ್ಯ ನೀಡಿ, ಬಡ ಸಿಬ್ಬಂದಿಗಳ ಕುಟುಂಬಕ್ಕೆ ನೆರವಾಗಬೇಕೆಂದು ಡಾ.ಮನ್ಸುಕ್ ಮಾಂಡವೀಯರಿಗೆ ಲಿಖಿತ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಸಚಿವರು, ಇಲ್ಲಿಯವರೆಗೆ ಈ ವಿಷಯ ತನ್ನ ಗಮನ ಬಂದಿರಲಿಲ್ಲ. ಈ ಬಗ್ಗೆ ಶೀಘ್ರವೇ ಅಗತ್ಯ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋಟ ಅವರೊಂದಿಗೆ ಬಾಗಲಕೋಟೆ ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ್ ಉಪಸ್ಥಿತರಿದ್ದರು.
ಕಲಬುರಗಿ | ಗುಲ್ಬರ್ಗಾ ವಿವಿಯಲ್ಲಿ ದಾಸೋಹ ದಿನ ಆಚರಣೆ
ಕಲಬುರಗಿ : ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯ ಜ್ಞಾನ ಗಂಗಾ ಆವರಣದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ನಾತಕೋತ್ತರ ಬಾಲಕರ ವಸತಿ ನಿಲಯದಲ್ಲಿ ತ್ರೀವಿಧ ದಾಸೋಹಿ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿ ಪ್ರಯುಕ್ತ ದಾಸೋಹ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಸತಿ ನಿಲಯದ ಪಾಲಕರಾದ ಲಕ್ಷ್ಮೀಕಾಂತ, ವಸತಿ ನಿಲಯದ ಅಧ್ಯಕ್ಷ ರಾಚಯ್ಯ ಸ್ವಾಮಿ ಹಿರೇಮಠ, ಉಪಾಧ್ಯಕ್ಷರಾದ ಶಾಂತು, ವಸತಿ ನಿಲಯದ ಅಡುಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.