ಅಧಿಕಾರ ಹಂಚಿಕೆ: ಗಾಯ ಕೆರೆದವರು ಯಾರು?
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೂ ಬಾಧಿಸುತ್ತಿರುವ ನಾಯಕತ್ವ ಬದಲಾವಣೆ ಎಂಬ ಸಮಸ್ಯೆಯನ್ನು ಹುಟ್ಟುಹಾಕಿದ್ದೇ ಆ ಪಕ್ಷದ ಹೈಕಮಾಂಡ್; ಸ್ಪಷ್ಟವಾದ ಸಂದೇಶ ನೀಡದಿರುವ ಮೂಲಕ. ಒಂದು ಹಂತದಲ್ಲಿ ಆ ವಿಷಯ ಸತ್ತೇ ಹೋಗಿದೆ, ಕೇರಳ ಚುನಾವಣೆ ಮುಗಿಯುವವರೆಗೆ ಅದರ ಬಗ್ಗೆ ಮಾತೇ ಇಲ್ಲ ಎನ್ನುವಂತಾಗಿತ್ತು. ಈಗ ಮತ್ತೆ ಹಳೆಯ ಗಾಯವನ್ನು ಕೆರೆದವರು ಯಾರು? ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿಲ್ಲ ಎನ್ನುವುದು ಈ ಅಂಕಣಕಾರನ ಖಚಿತ ಅಭಿಪ್ರಾಯ. ಅದು ಮೂವರ ನಡುವೆ ನಡೆದಿರುವ ಮಾತುಕತೆ. ಅವರ ಪೈಕಿ ಯಾರೊಬ್ಬರೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ‘ಅಧಿಕಾರ ಹಂಚಿಕೆಯ ಪ್ರಾರ್ಥನೆ ಫಲಿಸಿರಬಹುದು’, ಅದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ದಿಲ್ಲಿಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ಭೇಟಿ ಮಾಡುವ ವಿಶ್ವಾಸದಲ್ಲಿ ಇರಬಹುದು ಎಂಬ ವ್ಯಾಖ್ಯಾನಗಳು, ವಿಶ್ಲೇಷಣೆಗಳಾಗುತ್ತಿವೆ. ಸರಕಾರ ಬಂದಾಗ ಮುಖ್ಯಮಂತ್ರಿ ಮಾಡುವುದು ಬೇರೆ ವಿಚಾರ. ತದನಂತರ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಎಲ್ಲಾ ಕಾಲಕ್ಕೂ, ಎಲ್ಲಾ ಪಕ್ಷಗಳಿಗೂ, ಎಲ್ಲಾ ನಾಯಕರಿಗೂ ಸವಾಲಿನ ಪ್ರಶ್ನೆಯೇ. ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಮಾಡುವುದು ಎಷ್ಟು ಕಷ್ಟವೋ ಅವರನ್ನು ಆ ಸ್ಥಾನದಿಂದ ಇಳಿಸುವುದು ಅದಕ್ಕಿಂತಲೂ ಕಷ್ಟ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿನ ಬಹಳ ಒಳ್ಳೆಯ ಉದಾಹರಣೆ ಎಂದರೆ 2014ರಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯಬೇಕಾದ ಸಂದರ್ಭ ಬಂದಾಗ ತಮ್ಮ ಅತ್ಯಂತ ಆಪ್ತ, ಅತ್ಯಂತ ದುರ್ಬಲ, ಯಕಶ್ಚಿತ್ ಶಾಸಕ ಎಂದೇ ಹೇಳಲಾಗುತ್ತಿದ್ದ ಜಿತಿನ್ ರಾಮ್ ಮಾಂಝಿ ಅವರನ್ನು ತಂದು ಕೂರಿಸಿದ್ದು ಹಾಗೂ ಮಾಂಝಿಯನ್ನು ಮಾಜಿ ಮಾಡಲು ಚಾಣಾಕ್ಷ ರಾಜಕಾರಣಿ ನಿತೀಶ್ ಕುಮಾರ್ ಆವರೆಗೆ ಕಲಿತಿದ್ದ ರಾಜಕೀಯ ವಿದ್ಯೆಗಳೆಲ್ಲವನ್ನೂ ಬಳಸಿದ್ದು. ಮೊದಲಿಗೆ ನಿತೀಶ್ ತಂಡದಲ್ಲಿ ಮಾಂಝಿ ಒಬ್ಬ ಕಾರ್ಮಿಕನ ರೀತಿ ಇದ್ದವರು. ಈಗ ಅದೇ ನಿತೀಶ್ ಸರಕಾರದಲ್ಲಿ ಅವರು ಪಾಲುದಾರ (ಪುಷ್ಪ ಸಿನೆಮಾ ರೀತಿ). ದಿಲ್ಲಿಗೆ ಬೆಂಗಳೂರಿಗಿಂತ ಪಾಟ್ನಾ ಬಲು ಸಮೀಪ. ರಾಹುಲ್ ಗಾಂಧಿಗೆ ಈ ನಿದರ್ಶನ ಗೊತ್ತಿಲ್ಲದಿರುವ ಸಾಧ್ಯತೆ ಇಲ್ಲ. ಆದರೂ ನಾಯಕತ್ವ ಬದಲಾವಣೆ ಬಗ್ಗೆ ನಿರ್ಲಿಪ್ತ ನಿಲುವು ತೆಳೆದಿದ್ದಾರೆ. ಒಬ್ಬರಿಗೆ ಅಧಿಕಾರ ಕೊಡಲು ಇಷ್ಟವಿಲ್ಲದಿದ್ದರೆ, ಇನ್ನೊಬ್ಬರಿಗೆ ಇರುವ ಅಧಿಕಾರವನ್ನು ಸುಸೂತ್ರವಾಗಿ ನಡೆಸಲು ಇದ್ದ ಅಡೆತಡೆಗಳನ್ನು ನಿವಾರಿಸಬಹುದಿತ್ತು. ಅದನ್ನೂ ಮಾಡಿಲ್ಲ ಎನ್ನುವುದಾದರೆ ಇರುವ ವ್ಯವಸ್ಥೆ ಬಗೆಗೂ ಅವರಿಗೆ ಸಮಾಧಾನ ಇಲ್ಲವೇನೋ ಎಂಬುದಾಗಿ ಕೂಡ ವ್ಯಾಖ್ಯಾನಿಸಬಹುದು. ಅದೇನೇ ಇದ್ದರೂ ಅವರು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು ಎನ್ನುವುದು ವಾಸ್ತವ. ಬಹಳ ವಿಷಯಗಳಲ್ಲಿ ಸ್ಥಳ ಮಹಿಮೆ ಎನ್ನುವುದು ಮಹತ್ವದ ಪಾತ್ರವಹಿಸುತ್ತದೆ. ರಾಜಕೀಯದಲ್ಲಿ ಒಂಚೂರು ಜಾಸ್ತಿಯೇ ಮಹತ್ವ ಇರುತ್ತದೆ. ಮೈಸೂರು ವಿಮಾನ ನಿಲ್ದಾಣದ ಬದಲು ದಿಲ್ಲಿಯಲ್ಲಿ ಕೂತು ಮಾತನಾಡಿದರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ. ನಾಯಕತ್ವ ಬದಲಾವಣೆ ವಿಚಾರವನ್ನು ಬಿಡಿ, ಕೇರಳ ಚುನಾವಣೆಯಿಂದ ಹಿಡಿದು, ಸಚಿವ ಸಂಪುಟ ಪುನರ್ ರಚನೆವರೆಗೆ ಬೇರಾವುದೇ ವಿಷಯವನ್ನಾದರೂ ದಿಲ್ಲಿಗೆ ಕರೆಸಿಕೊಂಡು ಮಾತನಾಡಬಹುದಿತ್ತು. ಕರ್ನಾಟಕದಲ್ಲೂ ಕೇರಳದ ಚರ್ಚೆ ಮುಂದೆ ನಡೆಯುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಕೇರಳ ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಗೆಲ್ಲುವ ಅವಕಾಶ ಇರುವುದು ಕೇರಳದಲ್ಲಿ ಮಾತ್ರ. ಅದರಿಂದಾಗಿ ಸದ್ಯ ರಾಹುಲ್ ಗಾಂಧಿ ಕೇರಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದಾರೆ. ಕರ್ನಾಟಕದ ವಿದ್ಯಮಾನಗಳಿಗೆ ಈಗ ಅವರ ಬಳಿ ವಿಶೇಷ ಮಾನ್ಯತೆ ಇಲ್ಲ. ಮೈಸೂರು ವಿಮಾನ ನಿಲ್ದಾಣದಲ್ಲಿ ರಾಜ್ಯ ನಾಯಕರನ್ನು ಭೇಟಿ ಮಾಡುವ ಉದ್ದೇಶವೂ ಅವರಿಗಿರಲಿಲ್ಲ. ಅದೇ ಕಾರಣಕ್ಕೋ ಏನೋ ಕರ್ನಾಟಕದ ನಾಯಕರ ಜೊತೆ ಕೇರಳದ ವಿಷಯವನ್ನಷ್ಟೇ, ಅದೂ ಕೆಲವೇ ನಿಮಿಷ ಮಾತನಾಡಿ ಅಲ್ಲಿಂದ ಜಾಗ ಖಾಲಿ ಮಾಡಿದರು ಎನ್ನುತ್ತವೆ ದಿಲ್ಲಿ ಮೂಲಗಳು. ಸಿದ್ದುಗೆ ರಾಹುಲ್ ಕರೆ ಸಿದ್ದರಾಮಯ್ಯ ಅವರು ದೇವರಾಜ ಅರಸು ದಾಖಲೆ ಮುರಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಕರೆ ಮಾಡಿದ್ದಾರೆ. ಶಾಸ್ತ್ರಕ್ಕೆ ಅಭಿನಂದನೆ ಹೇಳಿ ಮರುಕ್ಷಣವೇ ಕೇರಳ ಚುನಾವಣೆ ಕಡೆಗೆ ಹೊರಳಿದ್ದಾರೆ. ರಾಜ್ಯ ಬಜೆಟ್, ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಉತ್ಸಾಹ ತೋರಿದರೂ ರಾಹುಲ್ ಗಾಂಧಿ ಮತ್ತೆ ಮತ್ತೆ ತಲುಪಿದ್ದು ಕೇರಳದ ಕಡೆಗೆ ಎನ್ನುತ್ತವೆ ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳು. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಸಿದ್ದರಾಮಯ್ಯ ಜೊತೆ ಮಾತನಾಡಿದ್ದರಿಂದ ಅವರು ಮತ್ತೊಮ್ಮೆ ರಾಜ್ಯ ನಾಯಕರನ್ನು ಮೈಸೂರಿಗೆ ಕರೆಸಿಕೊಂಡು ಮಾತನಾಡುವ ಅವಶ್ಯಕತೆ ಏನಿತ್ತು ಎನ್ನುವ ಪ್ರಶ್ನೆಯ ಬೆನ್ನುಹತ್ತಿದರೆ ಅವರು ಕರೆಸಿಕೊಂಡಿರಲಿಲ್ಲ ಎನ್ನುವ ಮಾಹಿತಿ ಖಚಿತವಾಗುತ್ತದೆ.ಜೊತೆಜೊತೆಯಲ್ಲಿ ಕೇರಳದ ವಿಷಯವೂ ತೆರೆದುಕೊಳ್ಳುತ್ತದೆ. ಯಾರು ಏನೇ ಮಾತನಾಡಿದರೂ ತಮಗೆ ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿಕೊಳ್ಳುವ ಮಾಧ್ಯಮಗಳ ಮತ್ತು ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಅಧಿಕಾರದ ಕನಸು ಕಟ್ಟಿಕೊಟ್ಟಿಕೊಡುವ ಸ್ವಾಮೀಜಿ/ಜ್ಯೋತಿಷಿಗಳ ಆರ್ಭಟ-ಕಪಟಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ರಾಜ್ಯ ನಾಯಕರು ಮೈಮರೆತಿದ್ದಾರೆ. ಈ ವಿಷಯದಲ್ಲಿ ರಾಹುಲ್ ಗಾಂಧಿ ಕೂಡ ‘ಕಾಂಗ್ರೆಸಿಗ’ ಎನ್ನುವುದನ್ನು ನಿರೂಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಅಸ್ಪಷ್ಟತೆಗೆ ಇನ್ನಷ್ಟು ನಿದರ್ಶನಗಳು ಬೇಕೆಂದರೆ... ಅವರೀಗ ದೇಶಾದ್ಯಂತ ಹಿಂದುಳಿದವರು, ಪರಿಶಿಷ್ಟ ಜಾತಿಯವರು, ಪಂಗಡದವರು, ಆದಿವಾಸಿಗಳು, ಸಣ್ಣಸಂಖ್ಯಾತರು ಆಯಕಟ್ಟಿನ ಜಾಗಕ್ಕೆ ಬರಬೇಕು ಎಂದು ಭಾಷಣ ಮಾಡುತ್ತಾರೆ. ಆದರೆ ಅವರ ಪಕ್ಷ ಅಧಿಕಾರದಲ್ಲಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ಮಾತ್ರ ಹಿಂದುಳಿದ ಜಾತಿಯ ಅಥವಾ ಅಹಿಂದ ನಾಯಕ. ಉಳಿದಿಬ್ಬರು ಮುಂದುವರಿದ ಜಾತಿಗೆ ಸೇರಿದವರು. ಇದು ಗೊತ್ತಿದ್ದೂ ಹಿಂದುಳಿದ ಜಾತಿಯ ನಾಯಕನೊಬ್ಬ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎನ್ನುವುದನ್ನು ನಾಲ್ಕು ಕೋಣೆಯೊಳಗಾದರೂ ನಿರ್ಧರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗೆಯೇ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಷಯ ಕೂಡ ಚರ್ಚೆಯಾಗುತ್ತಿದೆ(ತೀವ್ರವಾಗಿ ಅಲ್ಲ). ದಲಿತರಿಗೆ ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆಸಬೇಕಿತ್ತಲ್ಲವೇ? 2021ರಲ್ಲಿ ಇದೇ ರಾಹುಲ್ ಗಾಂಧಿ ಪಂಜಾಬ್ನಲ್ಲಿ ದಲಿತ ನಾಯಕ ಚರಣಜಿತ್ ಸಿಂಗ್ ಚೆನ್ನಿ ಅವರನ್ನು ಭಾರೀ ವಿರೋಧದ ನಡುವೆಯೂ ಮುಖ್ಯಮಂತ್ರಿ ಮಾಡಿದ್ದರು. ಈಗಲೂ ಅಂಥ ಧೈರ್ಯ ಅಥವಾ ಬದ್ಧತೆ ಪ್ರದರ್ಶಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಆಡಳಿತದ 2013-2018ರ ಅವಧಿಗೂ ಇಂದಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಈಗ ಅವರ ಆಡಳಿತ ಕಾರ್ಯವೈಖರಿಗೆ ದೊಡ್ಡ ಸಾವಾಲಾಗಿರುವುದು ಕಾಂಗ್ರೆಸ್ ಹೈಕಮಾಂಡ್ ಹೇರಿರುವ ಗ್ಯಾರಂಟಿಗಳು. ಗ್ಯಾರಂಟಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ನೀಡುತ್ತಿರುವ ದೂರದೃಷ್ಟಿಯುಳ್ಳ ಅಪರೂಪದ ಯೋಜನೆಗಳು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ರಾಜ್ಯದ ಗ್ರಾಮೀಣ ಆರ್ಥಿಕತೆ ವೃದ್ಧಿಯಾಗಲು, ಮಹಿಳೆಯರು ಸ್ವಾವಲಂಬಿಗಳಾಗಲು, ಗುಳೆ ಹೋಗುತ್ತಿದ್ದವರ ಪ್ರಮಾಣ ಕಮ್ಮಿಯಾಗಲು ಮತ್ತು ಜಿಎಸ್ಟಿ ಸಂಗ್ರಹ ಜಾಸ್ತಿಯಾಗಲು ಗ್ಯಾರಂಟಿ ಯೋಜನೆಗಳೇ ಕಾರಣ ಎನ್ನುವುದು ಅತಿಶಯೋಕ್ತಿಯೂ ಅಲ್ಲ. ಆದರೆ ಒಂದೇ ಸಲಕ್ಕೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಹೊರಟಿದ್ದು ದುಸ್ಸಾಹಸ. ಗ್ಯಾರಂಟಿಗಳೆಂಬ ಮಣಭಾರ ಹೊರಿಸಿ ಸರಕಾರ ಶರವೇಗದಲ್ಲಿ ಓಡಲಿ ಎಂದು ಬಯಸಿದರೆ ಅರ್ಥವುಂಟೆ? ಎರಡನೆಯದಾಗಿ ಈಗ ಅಧಿಕಾರ ಕೇಂದ್ರಗಳು ಕೂಡ ಜಾಸ್ತಿ. ಈ ಕಗ್ಗಂಟನ್ನು ಬಿಡಿಸಬೇಕಾಗಿದ್ದವರು ರಾಹುಲ್ ಗಾಂಧಿ ಅಲ್ಲವೇ? ರಾಹುಲ್ ಗಾಂಧಿ ಜಾತಿಗಣತಿ ಬಗ್ಗೆ ಕೂಡ ದೊಡ್ಡ ದೊಡ್ಡ ಮಾತನ್ನಾಡುತ್ತಾರೆ. ಕೇಂದ್ರ ಸರಕಾರ ಜಾತಿ ಗಣತಿ ಮಾಡುವುದಾಗಿ ಘೋಷಿಸಿದಾಗ, ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದೇ ಕೇಂದ್ರ ಸರಕಾರ ಜಾತಿ ಗಣತಿ ಘೋಷಿಸಿದೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ. ಆದರೆ ರಾಹುಲ್ ಗಾಂಧಿ ಜಾತಿ ಗಣತಿ ಬಗ್ಗೆ ಮಾತನಾಡುತ್ತಿರುವುದು ಯಾವಾಗಿನಿಂದ? 2024ರ ಲೋಕಸಭಾ ಚುನಾವಣೆ ಸಂದರ್ಭದಿಂದ. ಸಿದ್ದರಾಮಯ್ಯ ಜಾತಿಗಣತಿ ಬಗ್ಗೆ 20 ವರ್ಷದ ಹಿಂದೆ ನಡೆದ ಅಹಿಂದ ಸಮಾವೇಶದಲ್ಲೇ ಮಾತನಾಡಿದ್ದರು. 2007ರಲ್ಲಿ ಕೇಂದ್ರ ಸರಕಾರ ಜಾತಿಗಣತಿ ಪೈಲೆಟ್ ಪ್ರಾಜೆಕ್ಟ್ ಗಾಗಿ 23.5 ಕೋಟಿ ರೂ. ಕೊಟ್ಟಿತ್ತು. ಅದಕ್ಕೆ 1.5 ಕೋಟಿ ರೂ. ಸೇರಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿಗಣತಿ ತಯಾರಿಗಾಗಿ ಒಟ್ಟು 25 ಕೋಟಿ ರೂ. ಕೊಟ್ಟದ್ದು ಆಗ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ. ನಂತರ ಅವರು ಮುಖ್ಯಮಂತ್ರಿಯಾದ ಮೇಲೆ 2014ರಲ್ಲಿ ಜಾತಿಗಣತಿ ಮಾಡುವುದಾಗಿ ಘೋಷಿಸಿದರು. ಇದರಿಂದ ಕಾಂತರಾಜ್ ಆಯೋಗ ಸುದೀರ್ಘವಾಗಿ, ಸಮರ್ಪಕವಾಗಿ, ಸಮರ್ಥನೀಯವಾಗಿ ಸಮೀಕ್ಷೆ ನಡೆಸಲು ಸಾಧ್ಯವಾಯಿತು. ಆದರೂ ರಾಹುಲ್ ಗಾಂಧಿ ಉಲ್ಲೇಖಿಸುತ್ತಿರುವುದು ಅವಸರದಲ್ಲಿ ನಡೆದ ತೆಲಂಗಾಣದ ಜಾತಿಗಣತಿ ಬಗ್ಗೆ. ಇದಕ್ಕೂ ಮೀರಿ ಕಾಂತರಾಜ್ ಆಯೋಗ ಸಮೀಕ್ಷೆ ನಡೆಸಿ ಜಯಪ್ರಕಾಶ್ ಹೆಗ್ಡೆ ಆಯೋಗ ಕೊಟ್ಟಿದ್ದ ವರದಿ ಜಾರಿ ಮಾಡುವ ಕುರಿತು ವಿಷಯಾಧಾರಿತವಾಗಿಯಾದರೂ ಸಿದ್ದರಾಮಯ್ಯ ಜೊತೆ ನಿಲ್ಲದೆ ಆ ವರದಿ ಕಸದ ಬುಟ್ಟಿಗೆ ಎಸೆಯಲ್ಪಡುವಂತಾಗಲು ರಾಹುಲ್ ಗಾಂಧಿ ಕಾರಣ ಅಲ್ಲವೇ? ಸಂವಿಧಾನದ ಪ್ರತಿ ಹಿಡಿದು ದೇಶ ಸುತ್ತುವ, ಸಂವಿಧಾನ ರಕ್ಷಿಸಿ ಎಂದು ಹೇಳುವ ರಾಹುಲ್ ಗಾಂಧಿಗೆ, ಕೆ.ಎನ್. ರಾಜಣ್ಣ ಅವರನ್ನು ಒಂದು ಮಾತೂ ಕೇಳದೆ, ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿ ಸಂಪುಟದಿಂದ ವಜಾ ಮಾಡಿದ್ದು ಅಪ್ರಜಾಪ್ರಭುತ್ವ ನಡೆ ಎನಿಸುವುದಿಲ್ಲ. ಮೊನ್ನೆ ಮೊನ್ನೆ ಕೂಡ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದದ್ದು ಶಾಲೆಯೊಂದರ ಕಾರ್ಯಕ್ರಮ ಮುಗಿಸಿ. ಆ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆ ದುಬಾರಿಯಾಗಬಾರದು, ಶಿಕ್ಷಣ ಖಾಸಗೀಕರಣವಾಗಬಾರದು, ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದರೂ ಸರಕಾರಿ ಶಿಕ್ಷಣ ವ್ಯವಸ್ಥೆ ಸದೃಢವಾಗಿರಬೇಕು ಎಂದಿದ್ದಾರೆ. ಆದರೆ ಅವರದೇ ಪಕ್ಷದ ರಾಜ್ಯ ನಾಯಕರನೇಕರು ಶಿಕ್ಷಣವನ್ನು ಬಿಕರಿಗಿಟ್ಟು ತಿಜೋರಿ ತುಂಬಿಕೊಳ್ಳುತ್ತಿದ್ದಾರೆ. ಪಕ್ಷ ಮತ್ತು ಸರಕಾರದಲ್ಲಿ ಇಂಥ ನೀತಿಗಳ ಬಗ್ಗೆ ರಾಹುಲ್ ಗಾಂಧಿ ಕಿವಿ ಹಿಂಡಬಹುದಲ್ಲವೇ? ಕಾಂಗ್ರೆಸ್ ಪಕ್ಷ ಈಗ ಮನರೇಗಾ ವಿರುದ್ಧ ಜನವರಿ 26ರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆಯಂತೆ. ತಾಲೂಕು ಮಟ್ಟದಲ್ಲೂ ಪಾದಯಾತ್ರೆ ನಡೆಸಲಿದೆಯಂತೆ. ಇಷ್ಟು ತಡ ಮಾಡುತ್ತಿರುವುದು ಏಕೆ? ಆ ಕ್ಷಣಕ್ಕೆ ಸ್ಪಂದಿಸದಿದ್ದರೆ ಯಾವ ಹೋರಾಟವೂ ಯಶಸ್ಸು ಸಾಧಿಸಲಾರದು. ಇದೇ ರಾಹುಲ್ ಗಾಂಧಿ ಮತ್ತವರ ತಂಡ (ಕಾಂಗ್ರೆಸ್ ಪಕ್ಷ ಅಲ್ಲ) ಇತ್ತೀಚೆಗೆ ಮತಗಳ್ಳತನದ ಹೋರಾಟ ಆರಂಭಿಸಿತ್ತು. ಅದಕ್ಕೂ ಮೊದಲು ಸಂವಿಧಾನ ರಕ್ಷಿಸುವ ಅಭಿಯಾನ ಹಮ್ಮಿಕೊಂಡಿತ್ತು. ಅದಕ್ಕೂ ಹಿಂದೆ ಚುನಾವಣಾ ಬಾಂಡ್, ರಫೇಲ್, ಇನ್ನೊಂದು, ಮತ್ತೊಂದು ವಿಚಾರಗಳನ್ನು ಕೈಗೆತ್ತಿಕೊಂಡಿತ್ತು. ಒಂದು ಬಂದ ಮೇಲೆ ಮತ್ತೊಂದನ್ನು ಮರೆಯಲಾಯಿತು. ಈಗ ಮನರೇಗಾ ಬಂತು, ಮತಗಳ್ಳತನ ಮೂಲೆಗುಂಪಾಯಿತು. ಇದರ ಜವಾಬ್ದಾರಿ ಹೊರಬೇಕಾದವರು ಯಾರು? ರಾಹುಲ್ ಗಾಂಧಿ ಅಲ್ಲವೇ?
ಫೆ.11, 12ರಂದು ಕಂಪ್ಲಿ ಉತ್ಸವ : ಶಾಸಕ ಜೆ.ಎನ್.ಗಣೇಶ್
ಕಂಪ್ಲಿ: ತಾಲೂಕಿನ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾದ 'ಕಂಪ್ಲಿ ಉತ್ಸವ'ವನ್ನು ಫೆ.11 ಮತ್ತು 12ರಂದು ಹಾಗೂ 'ಕುರುಗೋಡು ಉತ್ಸವ'ವನ್ನು ಫೆ.15 ಮತ್ತು 16ರಂದು ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಘೋಷಿಸಿದರು. ಪಟ್ಟಣದ ಕೊಟ್ಟಾಲ್ ಪ್ರದೇಶದಲ್ಲಿ 2024-25ನೇ ಸಾಲಿನ ಕೆಕೆಆರ್ಡಿಬಿ (KKRDB) ಯೋಜನೆಯಡಿ ಸುಮಾರು 50 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಉತ್ಸವಗಳ ಯಶಸ್ವಿ ಆಯೋಜನೆಗಾಗಿ ಸರ್ಕಾರಕ್ಕೆ 5 ಕೋಟಿ ರೂ. ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸರ್ಕಾರ ಕೇವಲ ಒಂದೆರಡು ಕೋಟಿ ರೂ. ನೀಡುವುದಾಗಿ ತಿಳಿಸಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಉತ್ಸವ ಮಾಡುವುದು ಕಷ್ಟಕರವಾಗಿರುವುದರಿಂದ, ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಕ್ಷೇತ್ರಾದ್ಯಂತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕರು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡ ಎಂ. ಸುಧೀರ್ ಮಾತನಾಡಿ, ಸ್ಥಳೀಯ ಸ್ಮಶಾನದ ಸುತ್ತಲೂ ತಂತಿ ಬೇಲಿ ಅಳವಡಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಪಡಿಸಬೇಕು. ಹಾಗೆಯೇ ನಾರಿಹಳ್ಳದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ ಹರಿವಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಿಡಿಒ ಅಪರಂಜಿ, ಪ್ರಮುಖ ಮುಖಂಡರಾದ ಎಂ.ಸುಧೀರ್, ಕೆ.ರವಿಚಂದ್ರ, ಸುಧಾಕರ, ಈರಣ್ಣ, ದುಬ್ಬಾರೆಡ್ಡಿ, ಮಲ್ಲಿಕಾರ್ಜುನ, ನಾಗರಾಜ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಾಲಕಿಯರಿಗೆ ಕ್ರೀಡೆಯಲ್ಲಿ ಪ್ರತಿಭಾ ಪ್ರರ್ಶನಕ್ಕೆ ಹೆತ್ತವರ ಪ್ರೋತ್ಸಾಹ ಅಗತ್ಯ: ಪಿ.ಟಿ.ಉಷಾ
ಮಂಗಳೂರಿನಲ್ಲಿ ಅಥ್ಲಿಟ್ಗಳ ಪ್ರತಿಭಾ ಆನ್ವೇಷಣಾ ಶಿಬಿರ
ವಿಜಯನಗರ | ರಸ್ತೆ ನಿಯಮ ಪಾಲನೆ ದಂಡಕ್ಕಾಗಿ ಅಲ್ಲ, ಜೀವದ ರಕ್ಷಣೆಗಾಗಿ ಇರಲಿ : ನ್ಯಾ.ಡಿ.ಪಿ.ಕುಮಾರಸ್ವಾಮಿ
ವಿಜಯನಗರ (ಹೊಸಪೇಟೆ): ಜೀವವು ಅತ್ಯಂತ ಅಮೂಲ್ಯವಾದುದು. ರಸ್ತೆ ಸಂಚಾರಿ ನಿಯಮಗಳನ್ನು ಕೇವಲ ದಂಡಕ್ಕೆ ಹೆದರಿ ಪಾಲಿಸದೆ, ಸ್ವಯಂಪ್ರೇರಿತರಾಗಿ ಜೀವದ ರಕ್ಷಣೆಗಾಗಿ ಪಾಲಿಸುವ ಮೂಲಕ ಸುರಕ್ಷಿತವಾಗಿರಿ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಗರದ ವಡಕಾರಾಯ ದೇವಸ್ಥಾನದ ಬಳಿ ಭಾನುವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ '37ನೇ ರಸ್ತೆ ಸುರಕ್ಷತಾ ಸಪ್ತಾಹ'ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ರಸ್ತೆ ಅಪಘಾತಗಳು ಸಂಭವಿಸಿದಾಗ ಕೇವಲ ಒಬ್ಬ ವ್ಯಕ್ತಿಯಲ್ಲ, ಇಡೀ ಕುಟುಂಬವೇ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಸವಾರನು ತಮಗಾಗಿ ಅಲ್ಲದಿದ್ದರೂ, ತಮ್ಮನ್ನು ನಂಬಿರುವ ಕುಟುಂಬದವರಿಗಾಗಿ ಹೆಲ್ಮೆಟ್ ಧರಿಸುವ ಜವಾಬ್ದಾರಿ ತೋರಬೇಕು ಎಂದು ಅವರು ಕಿವಿಮಾತು ಹೇಳಿದರು. ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಯಲ್ಲಿ ಸಂಚಾರಿ ನಿಯಮಗಳ ಫಲಕಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆಯಲಾಯಿತು. ಕಾರ್ಯಕ್ರಮದಲ್ಲಿ ಎಎಸ್ಪಿ ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ನಾಗಲಾಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯಾದಗಿರಿ | ಮಹಿಳಾ ನೌಕರರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ: ರೋಶಿನಿ ಗೌಡ
ಯಾದಗಿರಿ: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಮಹಿಳಾ ನೌಕರರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಸಂಘಟನೆಯನ್ನು ಬಲಪಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಶೇ.52 ರಷ್ಟು ಮಹಿಳಾ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ನೌಕರರು ಎದುರಿಸುತ್ತಿರುವ ಸಮಸ್ಯೆಗಳು, ಸವಲತ್ತುಗಳನ್ನು ಪಡೆಯಲು ಸಂಘಟನೆ ಅವಶ್ಯಕವಾಗಿದೆ. ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘಟನೆ ಬಲಗೊಳಿಸಬೇಕೆಂದು ಮನವಿ ಮಾಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನೌಕರರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸಮಸ್ಯೆ ಗಳ ಪರಿಹಾರಕ್ಕೆ ಸಂಘಟಿತ ಹೋರಾಟಕ್ಕೆ ಅಣಿಗೊಳಿಸಲಾಗುತ್ತಿದೆ ಎಂದರು. ಮೇರಿ ದೇವಾಸಿಯಾ ಜನ್ಮದಿನ ಸೆ.13 ರಂದು ಮಹಿಳಾ ಸರ್ಕಾರಿ ನೌಕರರ ದಿನಾಚರಣೆ ಸರ್ಕಾರ ಈಗಾಗಲೇ ಸಿಎಂ ಮತ್ತು ಡಿಸಿಎಂ ಘೋಷಣೆ ಮಾಡಿದ್ದು, ಅಭಿನಂದನಾರ್ಹ ಎಂದರು. ಸಮಸ್ಯೆಗಳ ನಿವಾರಣೆಗೆ ಎಲ್ಲಾ ಮಹಿಳಾ ನೌಕರರು ಸಂಘದೊಂದಿಗೆ ಹೆಜ್ಜೆಹಾಕುವ ಮೂಲಕ ಸಂಘಟಿತ ಪ್ರ ಪ್ರಯತ್ನಕ್ಕೆ ಬೆಂಬ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆಶಾರಾಣಿ ಹಾಗೂ ಸ್ಥಳಿಯ ಸಂಘದ ಅನುಸೂಯಾ, ರೂಪಾ ಜಿ., ರೂಪಾ ಹಿರೇಮಠ, ಸಾವಿತ್ರಿ, ಲೀಲಾ ಸೇರಿದಂತೆಯೇ ಇತರರಿದ್ದರು.
ಶಹಾಪುರ | ಮದ್ಯ, ಮಾದಕ ವಸ್ತುಗಳಿಂದ ಕುಟುಂಬಗಳ ವಿನಾಶ : ಶರಣಪ್ಪ ಸಲಾದಪುರ
ಶಹಾಪುರ: ಇಂದಿನ ಸಮಾಜ ಎದುರಿಸುತ್ತಿರುವ ಗಂಭೀರ ಸವಾಲುಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನವೂ ಒಂದು. ಈ ಪೀಡಿತ ವ್ಯಸನಗಳಿಂದಾಗಿ ಬಹಳಷ್ಟು ಕುಟುಂಬಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನಾಶವಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಕಳವಳ ವ್ಯಕ್ತಪಡಿಸಿದರು. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 'ಮದ್ಯ ಮತ್ತು ಮಾದಕ ವಸ್ತುಗಳ ವಿರೋಧಿ ಜನಜಾಗೃತಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಗೃಹ ಹಿಂಸೆ ಹೆಚ್ಚುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜಾಲಕ್ಕೆ ಸಿಲುಕುತ್ತಿರುವುದು ಸಮಾಜದ ಭವಿಷ್ಯಕ್ಕೆ ದೊಡ್ಡ ಬೆದರಿಕೆಯಾಗಿದೆ. ಯುವಜನರು ದಾರಿ ತಪ್ಪದಂತೆ ನೋಡಿಕೊಳ್ಳುವುದು ಪೋಷಕರು, ಶಿಕ್ಷಕರು ಮತ್ತು ಇಡೀ ಗ್ರಾಮದ ಹೊಣೆಗಾರಿಕೆಯಾಗಿದೆ ಎಂದು ಅವರು ತಿಳಿಸಿದರು. ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಸಂಯಮ ಮಂಡಳಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಕೇವಲ ಸರ್ಕಾರ ಅಥವಾ ಇಲಾಖೆಗಳಿಂದ ಮಾತ್ರ ಇದು ಸಾಧ್ಯವಿಲ್ಲ. ಗ್ರಾಮಸ್ಥರು ಶಕ್ತಿಯುತವಾಗಿ ಕೈಜೋಡಿಸಿದಾಗ ಮಾತ್ರ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಶರಣಪ್ಪ ಸಲಾದಪುರ ಅಭಿಪ್ರಾಯಪಟ್ಟರು. ಗ್ರಾಮ ಪಂಚಾಯಿತ್, ಮಹಿಳಾ ಸಂಘಗಳು ಹಾಗೂ ಸ್ಥಳೀಯ ಯುವಕ ಮಂಡಳಿಗಳು ಒಗ್ಗೂಡಿ ಶಿರವಾಳದಂತಹ ಗ್ರಾಮಗಳನ್ನು ನಶಮುಕ್ತಗೊಳಿಸಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಿಡಿಒ ಮಲ್ಲಿಕಾರ್ಜುನ ವಗ್ಗರ್, ಬಾಪುಗೌಡ ಶಿರವಾಳ, ಮರೆಪ್ಪ, ಆರೋಗ್ಯ ಇಲಾಖೆ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ ಇನ್ನಷ್ಟು ಸರಳೀಕರಣಗೊಳಿಸಲು ಕ್ರಮ : ಮಧುಬಂಗಾರಪ್ಪ
ಬೆಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಈಗಾಗಲೇ ಸರಳಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ಕ್ರಮ ವಹಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಸ್ ಆಫ್ ಪ್ರೈಮರಿ ಮತ್ತು ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕವು(ಕ್ಯಾಮ್ಸ್) ಆಯೋಜಿಸಿದ್ದ 'ವಿಷನ್ - ಮಿಷನ್' ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣವನ್ನು ಸರಳೀಕರಿಸುವಂತೆ ಶಿಕ್ಷಣ ಒಕ್ಕೂಟಗಳಿಂದ ಮನವಿಗಳು ಬಂದಿದ್ದು, ಅವುಗಳನ್ನು ಪರಿಶೀಲಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 'ಮೂರು ಪರೀಕ್ಷಾ ಪದ್ಧತಿ', ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ 'ವೆಬ್ಕಾಸ್ಟಿಂಗ್' ಅಳವಡಿಕೆ ಹಾಗೂ ಎಸೆಸಸೆಲ್ಸಿ ಹಾಗೂ ಪಿಯುಸಿ ತೇರ್ಗಡೆ ಅಂಕಗಳನ್ನು ಶೇ.35 ರಿಂದ ಶೇ.33ಕ್ಕೆ ಇಳಿಸಿರುವುದು ಸೇರಿದಂತೆ ವಿದ್ಯಾರ್ಥಿ ಸ್ನೇಹಿ ಸುಧಾರಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿವೆ. ಸಮಾಜದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್, ರಾಮೋಜಿ ಗೌಡ, ಭಾರತೀಯ ಶಿಕ್ಷಣ ಮಂಡಳಿಯ ಕಾರ್ಯನಿರತ ಅಧ್ಯಕ್ಷರಾದ ಎನ್.ಪಿ.ಸಿಂಗ್ ಮತ್ತು ಕ್ಯಾಮ್ಸ್ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
Kalaburagi | ಗುಲ್ಬರ್ಗಾ ವಿವಿ ಕುಲಸಚಿವರಿಂದ ಜೀವ ಬೆದರಿಕೆ ಆರೋಪ: ಕುಲಪತಿಗಳಿಗೆ ಅತಿಥಿ ಉಪನ್ಯಾಸಕನ ದೂರು
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನಕರ್ ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಡಾ.ರಾಜಕುಮಾರ ದಣ್ಣೂರ ಗಂಭೀರವಾಗಿ ಆರೋಪಿಸಿದ್ದು, ಕುಲಪತಿಗಳಿಗೆ ದೂರು ನೀಡಿದ್ದಾರೆ. ಕಳೆದ 7 ವರ್ಷಗಳಿಂದ ಪೂರ್ಣಕಾಲಿಕ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ, 2026ರ ಶೈಕ್ಷಣಿಕ ಸಾಲಿನಲ್ಲಿ ನನ್ನ ಕಾರ್ಯಭಾರವನ್ನು ಏಕಾಏಕಿ 12 ಗಂಟೆಗೆ ಇಳಿಸಿ ಅನ್ಯಾಯ ಮಾಡಲಾಗಿದೆ. ಈ ಕುರಿತು ವಿಚಾರಿಸಲು ಹೋದಾಗ ಕುಲಸಚಿವರು ಏಕವಚನದಲ್ಲಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಅವರ ನಡೆ ನನಗೆ ಭೀತಿ ಉಂಟುಮಾಡಿದ್ದು, ರಕ್ಷಣೆ ನೀಡಬೇಕು, ಎಂದು ರಾಜಕುಮಾರ ದಣ್ಣೂರ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆರೋಪಗಳನ್ನು ನಿರಾಕರಿಸಿರುವ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಅತಿಥಿ ಉಪನ್ಯಾಸಕರ ನೇಮಕಾತಿ ಹಾಗೂ ಅಂಕಗಳ ಹಂಚಿಕೆಯಲ್ಲಿ ನಮ್ಮ ಪಾತ್ರವಿರುವುದಿಲ್ಲ. ಡೀನ್ ಮತ್ತು ವಿಷಯ ತಜ್ಞರನ್ನು ಒಳಗೊಂಡ ಸಂದರ್ಶನ ಸಮಿತಿಯು ನೀಡಿದ ಅಂಕಗಳ ಆಧಾರದ ಮೇಲೆ ನಾವು ಸಹಿ ಹಾಕುತ್ತೇವೆ ಅಷ್ಟೇ. ಇದನ್ನು ದಣ್ಣೂರ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದಾಗ, ಅವರು ನನ್ನ ಚೇಂಬರ್ನಲ್ಲೇ ಉದ್ಧಟತನ ತೋರಿ, ಏಕವಚನದಲ್ಲಿ ನಿಂದಿಸಿದ್ದಾರೆ, ಎಂದು ಸ್ಪಷ್ಟನೆ ನೀಡಿದ್ದಾರೆ. ಅವರೇ ಬೆದರಿಕೆ ಹಾಕಿದ್ದರಿಂದ ಪೊಲೀಸರಿಗೆ ಕರೆ ಮಾಡುವೆ ಎಂದು ಹೇಳಿದಾಗ ಅವರು ಕಚೇರಿಯಿಂದ ನಿರ್ಗಮಿಸಿದ್ದಾರೆ ಎಂದು ಕುಲಸಚಿವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
Mudigere | ಚಾರ್ಮಾಡಿ ಘಾಟಿಯ ಬಿದ್ರುತಳ ಭಾಗದಲ್ಲಿ ಅರಣ್ಯ ಅಗ್ನಿ ಅವಘಡ
ಮೂಡಿಗೆರೆ : ಚಾರ್ಮಾಡಿ ಘಾಟಿಯ ಮೂಡಿಗೆರೆ ಅರಣ್ಯ ವಿಭಾಗದ ಬಿದ್ರುತಳ ಭಾಗದಲ್ಲಿ ರವಿವಾರ ರಾತ್ರಿ ಅರಣ್ಯ ಅಗ್ನಿ ಅವಘಡ ಸಂಭವಿಸಿದೆ. ರಸ್ತೆಯಿಂದ ಸುಮಾರು ಒಂದುರಿಂದ ಎರಡು ಕಿಲೋಮೀಟರ್ ದೂರದ ದಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯದಲ್ಲಿ ಹೊತ್ತಿಕೊಂಡ ಅಗ್ನಿಯ ಜ್ವಾಲೆಗಳು ದೂರದಿಂದಲೇ ಕಾಣಿಸಿಕೊಂಡಿದ್ದು, ಇದರಿಂದಾಗಿ ಪ್ರದೇಶದಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಂಕಿ ಉಂಟಾಗಲು ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆಯ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳಿಗೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಗ್ನಿ ನಂದಿಸುವ ಸಲುವಾಗಿ ಅಗ್ನಿಶಾಮಕ ದಳವನ್ನು ಕರೆಸಿ ತುರ್ತು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಓಸ್ಲೊ, ಜ.18: ತನ್ನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ಗೆ ಹಸ್ತಾಂತರಿಸಿರುವುದಾಗಿ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಮಚಾದೊ ನೀಡಿರುವುದನ್ನು ತಿರಸ್ಕರಿಸುವುದಾಗಿ ನೊಬೆಲ್ ಪ್ರತಿಷ್ಠಾನ ರವಿವಾರ ಹೇಳಿದೆ. ಪ್ರಶಸ್ತಿಗಳ ಘನತೆಯನ್ನು ಮತ್ತು ಆಲ್ಫ್ರೆಡ್ ನೊಬೆಲ್ ಅವರ ಆಶಯಗಳ ನಿಬಂಧನೆಗಳನ್ನು ಎತ್ತಿಹಿಡಿಯುವುದು ತನ್ನ ಮುಖ್ಯ ಆದ್ಯತೆಗಳಲ್ಲಿ ಒಂದಾಗಿದೆ ಎಂದು ನೊಬೆಲ್ ಪ್ರತಿಷ್ಠಾನ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಬಹುಮಾನಗಳನ್ನು ಮನುಕುಲಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡಿದವರಿಗೆ ಮಾತ್ರ ನೀಡಲಾಗುತ್ತದೆ ಮತ್ತು ಅವುಗಳನ್ನು ಸ್ವೀಕರಿಸುವ ಹಕ್ಕು ಯಾರಿಗೆ ಇದೆ ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದ್ದರಿಂದ ಬಹುಮಾನಗಳನ್ನು ಸಾಂಕೇತಿಕವಾಗಿ ವರ್ಗಾಯಿಸಲು ಸಾಧ್ಯವಿಲ್ಲ' ಎಂದು ನೊಬೆಲ್ ಪ್ರತಿಷ್ಠಾನ ಹೇಳಿದೆ.
ಬಿಜಾಪುರದಲ್ಲಿ ನಡೆದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ರಾಜ್ಯದ ಎಲ್ಲರಿಗೂ ಮಾದರಿಯಾಗಿದೆ. ಈ ಹೋರಾಟದಲ್ಲಿ ರೈತ, ದಲಿತ,ಕಾರ್ಮಿಕ ಸಂಘಟನೆಗಳು, ಎಡಪಂಥೀಯ ಪಕ್ಷಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವು. ಇವರೆಲ್ಲರ ಏಕೈಕ ಗುರಿ ಖಾಸಗಿ ಸಹಭಾಗಿತ್ವ ಇಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿತ್ತು ಈ ಹೋರಾಟದ ಪರಿಣಾಮವಾಗಿ ಬಿಜಾಪುರ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಬೇಕಾಗಿ ಬಂತು. ಇತ್ತೀಚಿನ ವರ್ಷಗಳಲ್ಲಿ ಬಿಜಾಪುರ ಜಿಲ್ಲೆ ಮಾತ್ರವಲ್ಲ ಉತ್ತರ ಕರ್ನಾಟಕ ಇಂಥದೊಂದು ಹೋರಾಟವನ್ನು ಕಂಡಿರಲಿಲ್ಲ. ಕಳೆದ ಎರಡೂ ವರೆ ದಶಕಗಳಿಂದ ನಿತ್ಯ ಪ್ರಚೋದನಕಾರಿ ಭಾಷಣಗಳು, ಜನಾಂಗ ದ್ವೇಷದ ಮಾತುಗಳನ್ನು ಕೇಳಿ ತತ್ತರಿಸಿ ಹೋಗಿದ್ದ ಈ ಭಾಗದಲ್ಲಿ ಜನರಿಗೆ, ನಾಡಿನ ಬದುಕಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟಗಳು ಅಪರೂಪವಾಗಿದ್ದವು. ಹಿಂದೂ ಮುಸಲ್ಮಾನರು ಜತೆಗೂಡಿ ಮೊಹರಂ, ದೀಪಾವಳಿ ಆಚರಿಸುತ್ತ ಬಂದ ಪ್ರದೇಶವಿದು. ಸೌಹಾರ್ದ ಇಲ್ಲಿನ ಸಹಜ ಸಂಸ್ಕೃತಿ.ವಿವಿಧ ಸಮುದಾಯಗಳ ನಡುವೆ ಕೊಳ್ಳಿ ಇಡುವ ಅಸಹಜ ಕುಸಂಸ್ಕೃತಿಯೊಂದು ಇತ್ತೀಚೆಗೆ ವ್ಯಾಪಕವಾಗಿ ನೆಲೆಯೂರಲು ಹವಣಿಸುತ್ತಿತ್ತು. ಇಂಥ ನಿರಾಶಾದಾಯಕ ವಾತಾವರಣದಲ್ಲಿ ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಹೊಸ ಭರವಸೆಯನ್ನು ಮೂಡಿಸಿತು. ಇನ್ನು ಮುಂದೆ ಒಂಟಿ ಹೋರಾಟಗಳಿಗೆ ಭವಿಷ್ಯವಿಲ್ಲ, ಜಂಟಿ ಹೋರಾಟಗಳಿಗೆ ಸೋಲಿಲ್ಲ ಎಂಬ ಸಂದೇಶಗಳನ್ನು ನಾಡಿಗೆ ನೀಡಿ ಹೊಸ ದಾರಿಯನ್ನು ತೋರಿಸಿತು ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ. ನನ್ನ ಬಿಜಾಪುರ ಜಿಲ್ಲೆಯಲ್ಲಿ ಇಂಥದೊಂದು ಹೋರಾಟ ಇತ್ತೀಚಿನ ದಿನಗಳಲ್ಲಿ ನಡೆದಿರಲಿಲ್ಲ. ಆಲಮಟ್ಟಿ ಅಣೆಕಟ್ಟೆಗಾಗಿ ಅರುವತ್ತರ ದಶಕದಲ್ಲಿ ನಡೆದ ಸುದೀರ್ಘ ಹೋರಾಟದ ನೆನಪು ನನಗಿನ್ನೂ ಇದೆ. ಆಗ ಬಿಜಾಪುರದ ಲೋಕಸಭಾ ಸದಸ್ಯರಾಗಿದ್ದ ಕಾಂಗ್ರೆಸ್ನ ರಾಜಾರಾಮ ದುಬೆ, ಗುಡದಿನ್ನಿ, ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಎನ್.ಕೆ. ಉಪಾಧ್ಯಾಯ, ಡಾ.ಅಂಬೇಡ್ಕರ್ ಅವರ ರಿಪಬ್ಲಿಕನ್ ಪಕ್ಷದ ಶಾಸಕ ಸಿದ್ಧಾರ್ಥ ಅರಕೇರಿ, ಸುಗಂಧಿ ಅವರ ಜಂಟಿ ನಾಯಕತ್ವದಲ್ಲಿ ದೀರ್ಘವಾಗಿ ನಡೆದ ಹೋರಾಟಕ್ಕೆ ಸರಕಾರ ಕೊನೆಗೂ ಮಣಿಯಿತು.ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಬಿಜಾಪುರಕ್ಕೆ ಬಂದು ಆಲಮಟ್ಟಿ ಅಣೆಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಅದರ ನಂತರ ನಡೆದ ಬಹುದೊಡ್ಡ, 106 ದಿನಗಳಷ್ಟು ದೀರ್ಘ ಕಾಲದ ಹೋರಾಟವೆಂದರೆ ಬಿಜಾಪುರಕ್ಕೆ ಸರಕಾರಿ ಮೆಡಿಕಲ್ ಕಾಲೇಜು ಆಗ ಬೇಕೆಂದು ನಡೆದ ಹೋರಾಟವೆಂದರೆ ಅತಿಶಯೋಕ್ತಿಯಲ್ಲ. ಈ ಆಂದೋಲನವನ್ನು ಸಂಘಟಿಸಿದವರು ಯಾವುದೇ ಒಂದು ಪಕ್ಷದವರಲ್ಲ, ಸಂಘಟನೆಯವರಲ್ಲ, ಇದು ಎಲ್ಲ ಜನಪರ ಸಂಘಟನೆಗಳು ಸಮಾನ ಮನಸ್ಕ ಗೆಳೆಯರು ಕೂಡಿ ನಡೆಸಿದ ಹೋರಾಟ. ಇದರಲ್ಲಿ ಕಾಂಗ್ರೆಸ್, ರೈತ ಸಂಘ, ಜೆಡಿಎಸ್, ಸಿಪಿಐ, ಸಿಪಿಎಂ, ಎಸ್.ಯು.ಸಿ.ಐ ಎಲ್ಲ ದಲಿತ ಸಂಘಟನೆಗಳು ಪಾಲ್ಗೊಂಡಿದ್ದವು. ಹೋರಾಟ ತೀವ್ರ ಸ್ವರೂಪ ತಾಳಿದಾಗ ಈ ಚಳವಳಿಯ ನಾಯಕರಾದ ಹೆಸರಾಂತ ಅಂಬೇಡ್ಕರ್ವಾದಿ ಲೇಖಕ, ಪತ್ರಕರ್ತ ಅನಿಲ ಹೊಸಮನಿ , ಎಸ್.ಯು.ಸಿ.ಐ.ನ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಭಗವಾನ ರೆಡ್ಡಿ, ಆಮ್ ಆದ್ಮಿ ಪಕ್ಷದ ಭೋಗೇಶ ಸೊಲ್ಲಾಪುರ, ಸಿದ್ರಾಮ ಹಳ್ಳೂರ, ಅರವಿಂದ ಕುಲಕರ್ಣಿ, ಹುಣಶ್ಯಾಳದ ಸಂಗನ ಬಸವ ಸ್ವಾಮೀಜಿ ಇವರನ್ನು ಬಂಧಿಸಲಾಯಿತು. ಇದರ ಬಿಸಿ ಬೆಂಗಳೂರಿನವರೆಗೂ ತಲುಪಿತು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜಾಪುರಕ್ಕೆ ಬಂದು ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಭರವಸೆಯನ್ನು ನೀಡಿದರು. ಆದರೂ ಬಂಧಿತರ ಬಿಡುಗಡೆಯಾಗಿರಲಿಲ್ಲ. ಎರಡು ವಾರ ಕಾಲ ಜೈಲು ವಾಸ ಅನುಭವಿಸಿದ ನಂತರ ನ್ಯಾಯಾಲಯ ಇವರನ್ನು ಸಂಕ್ರಮಣದ ದಿನ ಜನವರಿ 14ರಂದು ಜಾಮೀನು ಮೇಲೆ ಬಿಡುಗಡೆ ಮಾಡಿತು. ಖಾಸಗಿ ಸಹಭಾಗಿತ್ವದ (ಪಿಪಿಪಿ) ಹೆಸರಿನಲ್ಲಿ 150 ಎಕರೆ ಅಮೂಲ್ಯ ಭೂಮಿಯನ್ನು ನುಂಗುವ ಮಸಲತ್ತು ನಡೆದಿತ್ತು. (ನುಂಗಪ್ಪಗಳು ಯಾರೆಂಬುದು ಈಗ ಬೇಡ) ಆದರೆ ಈ ಮಸಲತ್ತನ್ನು ಅವಿರತ ಹೋರಾಟದ ಮೂಲಕ ಜನ ವಿಫಲಗೊಳಿಸಿದರು. ನಾವು (ಡಾ.ಸಿದ್ಧನ ಗೌಡ ಪಾಟೀಲ, ಡಾ. ಮಲ್ಲಿಕಾ ಘಂಟಿ, ಡಾ.ರಾಜೇಂದ್ರ ಪೊದ್ದಾರ, ಶಂಕರ ಹಲಗತ್ತಿ, ಮೊದಲಾದವರು) ಅಲ್ಲಿ ಹೋಗಿ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದೆವು. ಈಗ ಹೋರಾಟದ ಗೆಳೆಯರು ಜಾಮೀನು ಮೇಲೆ ಬಿಡುಗಡೆ ಯಾದರೂ ಅವರ ಮೇಲೆ ಹಲವಾರು ಖಟ್ಲೆಗಳನ್ನು ಹಾಕಲಾಗಿದೆ. ಸರಕಾರ ಅವರ ಮೇಲಿನ ಖಟ್ಲೆಗಳನ್ನು ವಾಪಸ್ ಪಡೆಯಬೇಕು. ಇದರಿಂದ ಸ್ಪಷ್ಟವಾದ ಅಂಶವೆಂದರೆ ಎಲ್ಲ ಸಮಾನ ಮನಸ್ಕರು ಜೊತೆ ಗೂಡಿ ಹೋರಾಟಕ್ಕೆ ಇಳಿದರೆ ಗೆಲುವು ಅಸಾಧ್ಯವಲ್ಲ. ಇನ್ನೊಂದು ಅಂಶವೆಂದರೆ ಇನ್ನು ಮುಂದೆ ಹೋರಾಟವೇ ಉಳಿದ ದಾರಿ ಎಂಬುದು ಬಿಜಾಪುರದ ಹೋರಾಟದಿಂದ ಸ್ಪಷ್ಟವಾಗಿದೆ. ರಾಜ್ಯದ ಹಲವಾರು ಕಡೆ ಆಗಾಗ ಚಳವಳಿ, ಹೋರಾಟಗಳು ನಡೆಯುತ್ತಿರುತ್ತವೆ. ಬಹುತೇಕ ಹೋರಾಟಗಳು ಸಣ್ಣಪುಟ್ಟ ಬೇಡಿಕೆಗಳಿಗಾಗಿ ನಡೆಯುತ್ತವೆ. ಅವೂ ಕೂಡ ಯಶಸ್ವಿಯಾದ ಉದಾಹರಣೆಗಳು ವಿರಳ. ಆದರೆ ನವ ಉದಾರೀಕರಣದ ಈ ಕಾಲಘಟ್ಟದಲ್ಲಿ ಖಾಸಗಿ ಸಹಭಾಗಿತ್ವದ ಸರಕಾರಿ ಕಾಲೇಜು ಸ್ಥಾಪನೆಯ ಸರಕಾರದ ಮಸಲತ್ತನ್ನು ವಿರೋಧಿಸಿ ನಡೆದ ಹೋರಾಟವಿದು. ಈ ಹೋರಾಟವನ್ನು ವಿಫಲಗೊಳಿಸಲು ಹಲವಾರು ತಂತ್ರ, ಕುತಂತ್ರಗಳು ನಡೆದವು. ತೊಂಭತ್ತು ದಿನಗಳ ಧರಣಿ ಸತ್ಯಾಗ್ರಹ, ಹದಿನೈದು ದಿನಗಳ ಹಗಲೂ ರಾತ್ರಿ ಕೊರೆಯುವ ಚಳಿಯಲ್ಲಿ ನಡೆದ ಸತ್ಯಾಗ್ರಹ, ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರ ಮನೆಯ ಮುಂದೆ ನಡೆದ ಪ್ರತಿಭಟನೆ, ಆ ಸಂದರ್ಭದಲ್ಲಿ ಆರು ಜನರ ಬಂಧನ.ಇಷ್ಟು ದೀರ್ಘಕಾಲ ಬದ್ಧತೆ, ಸಂಯಮ ಹಾಗೂ ಸ್ಫೂರ್ತಿಯನ್ನು ಇಟ್ಟುಕೊಂಡು ಈ ಹೋರಾಟ ನಡೆಯಿತು. ಇದರ ಯಶಸ್ಸಿನ ಗುಟ್ಟೇನಂದರೆ ಹೋರಾಟದ ಮಧ್ಯದಲ್ಲಿ ಒಡಕು ಬರದಂತೆ ಕಾಯ್ದು ಕೊಂಡಿದ್ದು. ಒಡಕು ಹುಟ್ಟಿಸಲು ನಡೆದ ಹುನ್ನಾರಗಳು ವಿಫಲಗೊಂಡವು. ಈ ಮೆಡಿಕಲ್ ಕಾಲೇಜು ಹೋರಾಟದಲ್ಲಿ ಪಾಲ್ಗೊಂಡ ಸಂಘಟನೆಗಳಿಗೆ ತಮ್ಮದೇ ಆದ ಪ್ರತ್ಯೇಕ ಅಜೆಂಡಾ ಇರಲಿಲ್ಲ. ಎಲ್ಲರ ಏಕೈಕ ಗುರಿ ಪಿಪಿಪಿ ಅಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿತ್ತು.ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಹಲವಾರು ಕಡೆ ಸಂಯುಕ್ತ ಹೋರಾಟಗಳು ನಡೆದರೂ ಯಶಸ್ವಿಯಾದ ಉದಾಹರಣೆಗಳು ತುಂಬಾ ಕಡಿಮೆ.ರಾಜಕೀಯ ರಂಗವನ್ನು ತೆಗೆದುಕೊಂಡರೂ ಕೂಡ ಬಿಜೆಪಿಯನ್ನು ಕೋಮುವಾದಿ, ಫ್ಯಾಶಿಸ್ಟ್ ಪಕ್ಷ ಎಂದು ಒಪ್ಪಿಕೊಳ್ಳುವವರು ಅದರ ವಿರುದ್ಧ ಒಂದಾಗಿ ಪ್ರತೀ ಕ್ಷೇತ್ರದಲ್ಲಿ ಏಕೈಕ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಿದ್ದರೆ ಪರಿಸ್ಥಿತಿ ಈಗಿನಂತೆ ಇರುತ್ತಿರಲಿಲ್ಲ. ಪ್ರತಿಪಕ್ಷಗಳ ಈ ಒಡಕು ಬಿಜೆಪಿ ಗೆಲುವಿಗೆ ಕಾರಣವಾಗಿದೆ.ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ (ಎನ್ಡಿ ಎ) ಅಧಿಕಾರಕ್ಕೆ ಬರುತ್ತಿದೆ. ಅದು ತನ್ನ ಕೋಮುವಾದಿ ಅಜೆಂಡಾಗಳನ್ನು ಜಾರಿಗೆ ತರುತ್ತಲೇ ಇದೆ.ಅದನ್ನು ಫ್ಯಾಶಿಸ್ಟ್ ಎಂದು ಟೀಕಿಸುವವರು ಕೂಡ ಅದನ್ನು ತಡೆಯಲು ಸಾಧ್ಯವಾಗಿಲ್ಲ. ಪ್ರತಿಪಕ್ಷ ಗಳ ಈ ಅನೈಕ್ಯತೆಯ ಕೋಮುವಾದಿ ಶಕ್ತಿಗಳ ಗೆಲುವಿನ ಗುಟ್ಟಾಗಿ ರೈತ, ಕಾರ್ಮಿಕ ಸಂಘಟನೆಗಳು ಜಂಟಿ ಹೋರಾಟಗಳನ್ನು ಮಾಡುತ್ತಲೇ ಬಂದಿವೆ. ಆದರೂ ನವ ಉದಾರೀಕರಣದ ಪ್ರಭುತ್ವದ ಧೋರ ಣೆಯನ್ನು ಪರಾಭವಗೊಳಿಸಲು ಸಾಧ್ಯವಾಗಿಲ್ಲ. ನಾನು ಅನೇಕ ಜಂಟಿ ಹೋರಾಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಷ್ಟೇ ಅಲ್ಲ ಕೆಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಇದರಲ್ಲಿ ಪಾಲ್ಗೊಳ್ಳುವ ಬಹುತೇಕ ಸಂಘಟನೆಗಳು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತವೆ. ತಮ್ಮದೇ ಆದ ಸ್ವಂತದ ಹೋರಾಟವಿದ್ದರೆ ಮಾತ್ರ ತಮ್ಮ ಸಂಘಟನೆಯ ಎಲ್ಲರೂ ಭಾಗವಹಿಸುವಂತೆ ಎಚ್ಚರ ವಹಿಸುತ್ತವೆ. ಜಂಟಿ ಹೋರಾಟವಾದರೆ ಕೆಲವೇ ಕೆಲವು ನಾಯಕರು ಮಾತ್ರ ಬರುತ್ತಾರೆ. ಹೀಗಾಗಿ ಐಕ್ಯ ಹೋರಾಟಗಳು ಯಶಸ್ವಿಯಾಗುತ್ತಿಲ್ಲ. ಕನಿಷ್ಠ ಜನಸಾಮಾನ್ಯರ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾದರೂ ಸಂಯುಕ್ತ ಹೋರಾಟ ನಡೆಸುವುದು ಇಂದಿನ ಅನಿವಾರ್ಯತೆಯಾಗಿದೆ. ಈ ನಿಟ್ಟಿನಲ್ಲಿ ಬಿಜಾಪುರದಲ್ಲಿ ನಡೆದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ರಾಜ್ಯದ ಎಲ್ಲರಿಗೂ ಮಾದರಿಯಾಗಿದೆ. ಈ ಹೋರಾಟದಲ್ಲಿ ರೈತ, ದಲಿತ,ಕಾರ್ಮಿಕ ಸಂಘಟನೆಗಳು, ಎಡಪಂಥೀಯ ಪಕ್ಷಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವು. ಇವರೆಲ್ಲರ ಏಕೈಕ ಗುರಿ ಖಾಸಗಿ ಸಹಭಾಗಿತ್ವ ಇಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿತ್ತು ಈ ಹೋರಾಟದ ಪರಿಣಾಮವಾಗಿ ಬಿಜಾಪುರ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಬೇಕಾಗಿ ಬಂತು. ಇದು ಇಲ್ಲಿಗೆ ಮುಗಿಯುವುದಿಲ್ಲ. ಆದರೆ ಬರೀ ಭರವಸೆಯನ್ನು ಮಾತ್ರ ನಂಬದೇ ಗುರಿ ಸಾಧಿಸುವ ವರೆಗೆ ಹೋರಾಟವನ್ನು ನಿಧಾನವಾಗಿ ನಡೆಸಿಕೊಂಡು ಹೋಗಬೇಕಾಗಿದೆ. ಮಾರ್ಚ್ನಲ್ಲಿ ಮಂಡಿಸಲ್ಪಡುವ ಮುಂಗಡ ಪತ್ರದಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಅನುದಾನವನ್ನು ಒದಗಿಸಲು ಒತ್ತಡ ತರಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಜೊತೆಗೂಡಿ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ. ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ವಿಷಯದಲ್ಲಿ ಜನರು ಬೀದಿಗೆ ಬರುವ ಮೊದಲು ಜನ ಪ್ರತಿನಿಧಿಗಳು ಜಿಲ್ಲೆಯ ಹಾಗೂ ತಮ್ಮನ್ನು ಚುನಾಯಿಸಿದ ಜನರ ಹಿತರಕ್ಷಣೆಗಾಗಿ ಖಾಸಗಿ ಸಹಭಾಗಿತ್ವವನ್ನು ವಿರೋಧಿಸಿ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜಿನ ಪರವಾಗಿ ಸರಕಾರದ ಮೇಲೆ ಒತ್ತಡ ತರಬೇಕಾಗಿತ್ತು.ಆದರೆ ಪಾಟೀಲರು, ಗೌಡರು, ನಾಡಗೌಡರು, ದೇಸಾಯರು ಮೊದಲಾದ ಫ್ಯೂಡಲ್ ಧಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿರುವ ಜಿಲ್ಲೆ ಬಿಜಾಪುರ. ಇವರಲ್ಲಿ ಬಹುತೇಕ ಶಾಸಕರಿಗೆ ಸ್ವಹಿತಾಸಕ್ತಿ ಮುಖ್ಯವಾಗಿರುತ್ತದೆ. ಎಲ್ಲರೂ ಹಾಗಿಲ್ಲವಾದರೂ ವಿಷ ಕಕ್ಕುವ ಮಾತುಗಳಿಗೆ ಹೆಸರಾದ ಬಿಜಾಪುರ ನಗರ ಶಾಸಕ ಯತಾಳ್ ಗೌಡರು ಇಡೀ ಪ್ರಕರಣದಲ್ಲಿ ಖಳನಾಯಕ ನಂತೆ ಕಾಣಿಸಿಕೊಂಡರು. ಖಾಸಗಿ ಸಹಭಾಗಿತ್ವದ ಸರಕಾರಿ ಮೆಡಿಕಲ್ ಕಾಲೇಜಿನ ಪಾಲುಗಾರಿಕೆ ವಹಿಸಲು 500 ಕೋಟಿ ರೂಪಾಯಿ ಕೊಡುವುದಾಗಿ ಸದನದಲ್ಲೇ ಅವರು ಹೇಳಿದ್ದರು. ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಆರಂಭವಾದಾಗ ಸ್ಥಳೀಯ ಶಾಸಕನಾಗಿ ಕನಿಷ್ಠ ಸಹಾನುಭೂತಿಯನ್ನು ಅವರು ತೋರಿಸಲಿಲ್ಲ. ಬದಲಿಗೆ ಹೋರಾಟಗಾರರನ್ನು ಪೇಮೆಂಟ್ ಗಿರಾಕಿಗಳೆಂದು ಅವಮಾನಿಸಿದರು. ಆದರೆ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಧರಣಿ ನಡೆದ ಸ್ಥಳಕ್ಕೆ ಬಂದು ಸಹಾನುಭೂತಿ ತೋರಿಸಿದರು. ಆದರೆ ಈ ಗೆಲುವಿನ ಮೊದಲ ಶ್ರೇಯಸ್ಸು ಹೋರಾಟಗಾರರಿಗೆ ಸಲ್ಲಬೇಕು. ಹೋರಾಟ ನಡೆಯದಿದ್ದರೆ ಇಷ್ಟೊತ್ತಿಗೆ ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ತಲೆ ಎತ್ತಲು ಪೂರ್ವ ತಯಾರಿಗಳು ನಡೆಯುತ್ತಿದ್ದವು.ಹೋರಾಟಗಾರರ ಜೊತೆಗೆ ಇದರ ಯಶಸ್ಸಿಗೆ ತಮ್ಮದೇ ಆದ ಕೊಡುಗೆ ನೀಡಿದವರು ಬಿಜಾಪುರದ ಮಾಧ್ಯಮದ ಗೆಳೆಯರು.ಅವರು ಬಿಟ್ಟೂ ಬಿಡದೇ ಬೆನ್ನು ಹತ್ತಿದರು. ಇದೇ ಕಾರಣಕ್ಕಾಗಿ ಯುವ ಪತ್ರಕರ್ತ ಮಿತ್ರ ಬಸವರಾಜ ಸಂಪಳ್ಳಿ ಅವರಿಗೆ ಎಂ.ಬಿ.ಪಾಟೀಲರು ಆ್ಯಕ್ಟಿವಿಸ್ಟ್ ತರ ಮಾತಾಡಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು. ಆದರೆ ಸಚಿವರಿಗೆ ಗೊತ್ತಿಲ್ಲ ‘ಜರ್ನಲಿಸ್ಟ್ ಒಳಗೆ ಒಬ್ಬ ಆ್ಯಕ್ಟಿವಿಸ್ಟ್ಟ್’ ಇರದಿದ್ದರೆ ಆತ ಪತ್ರಕರ್ತನೇ ಅಲ್ಲ. ಇಂದಿನ ನಿರಾಶಾದಾಯಕ ಕಾರ್ಪೊರೇಟ್, ಕಮ್ಯೂನಲ್ ದಿನಗಳಲ್ಲಿ ಸಂಯುಕ್ತ ಹೋರಾಟವೊಂದೇ ಉಳಿದ ದಾರಿಯಾಗಿದೆ.
ಶಹಾಬಾದ್ | ಜ.20ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ: ಕೃಷ್ಣಪ್ಪ ಕರಣಿಕ
ಶಹಾಬಾದ್: ತಾಲೂಕ ಕಚೇರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.20ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು, ಅಂಗನವಾಡಿ ಮೇಲ್ವಿಚಾರಕಿಯ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. ಧರಣಿ ಸತ್ಯಾಗ್ರಹದಲ್ಲಿ ಶಹಾಬಾದ್ನ ಪ್ರಗತಿ ಪರ ಚಿಂತಕರು, ನಾಗರಿಕರು, ಕಾರ್ಮಿಕರು, ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಲಬುರಗಿ | ಸಾಮಾಜಿಕ ಜಾಲತಾಣಗಳಿಂದ ಎಚ್ಚರವಿರಿ: ಖ್ವಾಜಾ ಹುಸೇನ್
ಕಲಬುರಗಿ : ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೋಸ, ವಂಚನೆ, ಸುಲಿಗೆ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳಿಂದ ಸಾರ್ವಜನಿಕರು ಜಾಗರೂಕರಾಗಬೇಕು ಎಂದು ಎಂ.ಬಿ. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಖ್ವಾಜಾ ಹುಸೇನ್ ಹೇಳಿದರು. ಇಲ್ಲಿನ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎಂ.ಬಿ. ನಗರ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಫೋನಿನಲ್ಲಿ ಯಾರಿಗೂ ಕೆವೈಸಿ, ಓಟಿಪಿ ನೀಡಬಾರದು, ಪಾರ್ಸಲ್ ಹಾಗೂ ಕೊರಿಯರ್ ಸಂಬಂಧಿಸಿದ ಸಂಶಯಾಸ್ಪದ ಕರೆಗಳಿಗೆ ಸ್ಪಂದಿಸಬಾರದು ಎಂದು ಸಲಹೆ ನೀಡಿದರು. ಬಹುತೇಕ ಸೈಬರ್ ವಂಚಕರು ಬಹುಭಾಷಿಕರಾಗಿದ್ದು, ಕನ್ನಡ ಭಾಷೆ ತಿಳಿಯದವರಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಕನ್ನಡದಲ್ಲೇ ಮಾತನಾಡುವುದರಿಂದ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಎಂದರು. ಪಿಎಸ್ಐ ಅನಿತಾ ಗುತ್ತೇದಾರ, ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು. ಸಭೆಯಲ್ಲಿ ಕಾಲೋನಿಯ ಹಿರಿಯರಾದ ಬಿ.ಎನ್.ಪುಣ್ಯಶೆಟ್ಟಿ, ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಎಸ್.ಜಿ. ಬಿರಾದಾರ ಸೇರಿದಂತೆ ಹಲವರು ಸಲಹೆಗಳನ್ನು ನೀಡಿದರು. ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಎಎಸ್ಐ ಅಯ್ಯುಬ್, ಸಿವಿಲ್ ಪೊಲೀಸ್ ಸಿಬ್ಬಂದಿ ಹಾಗೂ ಕಾಲೋನಿಯ ಗಣ್ಯರು ಉಪಸ್ಥಿತರಿದ್ದರು.
ಚಿಲಿಯಲ್ಲಿ ತೀವ್ರಗೊಂಡ ಕಾಡ್ಗಿಚ್ಚು: 20,000 ಜನರ ಸ್ಥಳಾಂತರ
ಸ್ಯಾಂಟಿಯಾಗೊ, ಜ.18: ಚಿಲಿಯಲ್ಲಿ ಕಾಡ್ಗಿಚ್ಚು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಎರಡು ದಕ್ಷಿಣ ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು ಸುಮಾರು 20 ಸಾವಿರ ಜನರನ್ನು ಸ್ಥಳಾಂತರಿಸಿರುವುದಾಗಿ ಚಿಲಿ ಅಧ್ಯಕ್ಷ ಗ್ಯಾಬ್ರಿಯೆಲ್ ಬೋರಿಕ್ ಹೇಳಿದ್ದಾರೆ. ನುಬಲ್ ಮತ್ತು ಬಯೊಬಿಯೊ ಪ್ರದೇಶಗಳಲ್ಲಿ 12 ಕಡೆಗಳಲ್ಲಿ ಕಾಡ್ಗಿಚ್ಚು ತೀವ್ರಗೊಂಡಿದ್ದು ಇಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ. ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದೆ.
ಎಲ್ಲವೂ ಸುಗಮವಾಗಿ ನಡೆಯತೊಡಗಿದಾಗ ಹಳೆಯ ಪೀಳಿಗೆ ಪಕ್ಕಕ್ಕೆ ಸರಿಯಬೇಕು: ಸಚಿವ ನಿತಿನ್ ಗಡ್ಕರಿ
ನಾಗ್ಪುರ (ಮಹಾರಾಷ್ಟ್ರ),ಜ.18: ಎಲ್ಲವೂ ಸುಗಮವಾಗಿ ನಡೆಯಲು ಆರಂಭಿಸಿದಾಗ ಹೊಸ ಪೀಳಿಗೆಯು ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಮತ್ತು ಹಳೆಯ ಪೀಳಿಗೆಯು ಪಕ್ಕಕ್ಕೆ ಸರಿಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ರವಿವಾರ ಹೇಳಿದರು. ತನ್ನದೇ ಪರಿಕಲ್ಪನೆಯ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಘದ (ಎಐಡಿ) ಅಧ್ಯಕ್ಷ ಆಶಿಷ್ ಕಾಳೆ ಆಯೋಜನೆಯ ಅಡ್ವಾಂಟೇಜ್ ವಿದರ್ಭ-ಖಾಸದಾರ್ ಔದ್ಯೋಗಿಕ ಮಹೋತ್ಸವದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಗಡ್ಕರಿ, ‘ಕಾಳೆಯವರು ಅಡ್ವಾಂಟೇಜ್ ವಿದರ್ಭ ಉಪಕ್ರಮದಲ್ಲಿ ಯುವಪೀಳಿಗೆಯನ್ನು ತೊಡಗಿಸಿಕೊಂಡಿದ್ದಾರೆ. ಕ್ರಮೇಣ ಪೀಳಿಗೆಯೂ ಬದಲಾಗಬೇಕು ಎನ್ನುವುದು ನನ್ನ ನಂಬಿಕೆಯಾಗಿದೆ. ಕಾಳೆಯವರ ತಂದೆ ನನ್ನ ಸ್ನೇಹಿತರು. ನಾವು ಈಗ ನಿಧಾನವಾಗಿ ನಿವೃತ್ತರಾಗಬೇಕು ಮತ್ತು ಜವಾಬ್ದಾರಿಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸಬೇಕು. ಎಲ್ಲವೂ ಸುಸೂತ್ರವಾಗಿ ನಡೆಯತೊಡಗಿದಾಗ ನಾವು ಹಿಂದೆ ಸರಿಯಬೇಕು ಮತ್ತು ಬೇರೆ ಏನಾದರೂ ಕೆಲಸದಲ್ಲಿ ತೊಡಗಿಕೊಳ್ಳಬೇಕು ’ಎಂದು ಹೇಳಿದರು. ಇದು ಅಡ್ವಾಂಟೇಜ್ ವಿದರ್ಭ ಪ್ರದರ್ಶನದ ಮೂರನೇ ವರ್ಷವಾಗಿದ್ದು,ಫೆ.6ರಿಂದ 8ರವರೆಗೆ ನಾಗ್ಪುರದಲ್ಲಿ ನಡೆಯಲಿದೆ ಎಂದು ಎಐಡಿಯ ಮುಖ್ಯ ಮಾರ್ಗದರ್ಶಕರೂ ಆಗಿರುವ ಗಡ್ಕರಿ ತಿಳಿಸಿದರು. ವಿದರ್ಭ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅತ್ಯುತ್ತಮ ಉದ್ಯಮಿಗಳಿದ್ದಾರೆ ಎಂದು ಹೇಳಿದ ಅವರು,ವಿದರ್ಭವನ್ನು ಭಾರತೀಯ ಕೈಗಾರಿಕಾ ರಂಗದಲ್ಲಿ ಪ್ರಬಲ ಮತ್ತು ಉದಯೋನ್ಮುಖ ಬೆಳವಣಿಗೆ ಕೇಂದ್ರವನ್ನಾಗಿ ಮಾಡುವುದು ಮಹೋತ್ಸವದ ಉದ್ದೇಶವಾಗಿದೆ ಎಂದರು. ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ಕೈಗಾರಿಕಾ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಹಾಗೂ ಸೇವಾ ಕ್ಷೇತ್ರದ ಮಹತ್ವವನ್ನೂ ಗಡ್ಕರಿ ಒತ್ತಿ ಹೇಳಿದರು.
ಟ್ರಂಪ್ ನಮಗೆ ದ್ರೋಹ ಬಗೆದಿದ್ದಾರೆ: ಇರಾನ್ನಲ್ಲಿ ಪ್ರತಿಭಟನಾಕಾರರ ಆಕ್ರೋಶ
ಟೆಹ್ರಾನ್, ಜ.18: ಇತ್ತೀಚಿನ ಪ್ರತಿಭಟನೆಯ ಅಲೆಯ ಸಮಯದಲ್ಲಿ ಬೀದಿಗಿಳಿದ ಅನೇಕ ಇರಾನಿಯನ್ನರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವನಾಡಿಯಾಗಿ ಕಾಣಿಸಿಕೊಂಡಿದ್ದರು. ಆ ನಂಬಿಕೆ, ವಿಶ್ವಾಸಕ್ಕೆ ಅವರು ದ್ರೋಹ ಬಗೆದಿದ್ದಾರೆ. ಅವರು ನಮ್ಮನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಇರಾನಿನ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಆರಂಭದ ದಿನಗಳಲ್ಲಿ ಅಮೆರಿಕಾ ಅಧ್ಯಕ್ಷರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಪ್ರೋತ್ಸಾಹಿಸಿ ಇರಾನ್ ಆಡಳಿತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು ಮತ್ತು `ಸಹಾಯ ಬರುತ್ತಿದೆ' ಎಂದು ಘೋಷಿಸಿದ್ದರು. ಶಾಂತಿಯುತ ಪ್ರತಿಭಟನಾಕಾರರಿಗೆ ಹಾನಿ ಎಸಗಿದರೆ ಅಮೆರಿಕಾ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಟ್ರಂಪ್ ಕ್ರಮೇಣ ಮೃದು ನಿಲುವು ತಳೆದಿರುವುದನ್ನು ಪ್ರತಿಭಟನಾಕಾರರು ಟೀಕಿಸಿದ್ದಾರೆ. `ಇರಾನಿನಲ್ಲಿ ಪ್ರತಿಭಟನೆಯ ಸಂದರ್ಭ ನಡೆದ ಸಾವುಗಳಿಗೆ ಟ್ರಂಪ್ ಹೊಣೆ. ಯಾಕೆಂದರೆ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದವರನ್ನು ಅವರು ಪ್ರೋತ್ಸಾಹಿಸಿದ್ದರು ಮತ್ತು ಅಮೆರಿಕಾದ ನೆರವಿನ ಭರವಸೆ ನೀಡಿದ್ದರು. ಆದರೆ ಬಳಿಕ ಈ ರೀತಿ ದ್ರೋಹ ಎಸಗಿರುವುದನ್ನು ಕಂಡರೆ ಅಮೆರಿಕಾವು ಇರಾನ್ ಆಡಳಿತದ ಜೊತೆಗೆ `ಡೀಲ್' ಮಾಡಿಕೊಂಡಿರುವ ಅನುಮಾನ ಮೂಡುತ್ತಿದೆ ಎಂದು ಪ್ರತಿಭಟನಾಕಾರರನ್ನು ಉಲ್ಲೇಖಿಸಿ `ಟೈಮ್' ಪತ್ರಿಕೆ ವರದಿ ಮಾಡಿದೆ.
ಫೆ.10 ರಿಂದ ಫೆ.25ರೊಳಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸುವಂತೆ ಸೂಚನೆ
ಬೆಂಗಳೂರು : 2025-26ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಫೆ.10ರಿಂದ ಫೆ.25ರೊಳಗೆ ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಹಣ ಸಂಗ್ರಹಿಸದೆ ಪರೀಕ್ಷಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಕಾಲೇಜು ಮಟ್ಟದಲ್ಲಿ ಪರೀಕ್ಷೆ ನಡೆಸಬೇಕು ಎಂದು ಪದವಿ ಪೂರ್ವ ಕಾಲೇಜುಗಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸೂಚನೆ ನೀಡಿದೆ. ಈ ಪರೀಕ್ಷೆ ಸಂಬಂಧ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಅಳವಡಿಸಿರುವ ದ್ವಿತೀಯ ಪಿಯುಸಿ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅನುಸರಿಸಿ, ಅದೇ ಮಾದರಿಯಲ್ಲಿ ಪ್ರಥಮ ಪಿಯುಸಿ ತರಗತಿಗೆ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕಾರ್ಯ ನಡೆಸಬೇಕು ಎಂದಿದ್ದಾರೆ. ಫೆ.25ರೊಳಗೆ ಎಲ್ಲಾ ಪರೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಎಸ್ಎಟಿಎಸ್ ತಂತ್ರಾಂಶದಲ್ಲಿ ಇಂದೀಕರಿಸಬೇಕು. ಫಲಿತಾಂಶ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಮಾ.13ರೊಳಗೆ ಫಲಿತಾಂಶ ಪಟ್ಟಿಗೆ ಜಿಲ್ಲಾ ಉಪನಿರ್ದೇಶಕರಿಂದ ಅನುಮೋದನೆ ಪಡೆಯಬೇಕು. ಮಾ.30 ಫಲಿತಾಂಶವನ್ನು ಘೋಷಣೆ ಮಾಡಬೇಕು ಅವರು ಸೂಚನೆ ನೀಡಿದ್ದಾರೆ. ನಾಳೆಯಿಂದ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆ : ಜ.19 ರಿಂದ ಫೆ.2ರವರೆಗೆ ದ್ವಿತೀಯ ಪಿಯುನ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಬೋರ್ಡ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಕಲಬುರಗಿ | ಜ.19ರಂದು ಬಿಜೆಪಿ ಪ್ರತಿಭಟನೆ : ಮಲ್ಲಿಕಾರ್ಜುನ
ಕಲಬುರಗಿ : ರಾಜ್ಯ ಸರಕಾರದ ವೈಫಲ್ಯ ಹಾಗೂ ಎಸ್ಸಿಪಿ., ಟಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ವಿರುದ್ಧ ಜ.19ರಂದು ಬಿಜೆಪಿ ಎಸ್.ಸಿ. ಮೋರ್ಚಾದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜೀನಕೇರಿ ತಿಳಿಸಿದ್ದಾರೆ. ನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು. ಸಿಎಂ ಅವರು ಅಹಿಂದ ಪರ ಇದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಒಂದು ಒಳ್ಳೆಯ ಯೋಜನೆ ನೀಡಿಲ್ಲ. ಇರುವ ಯೋಜನೆಗಳನ್ನು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ದಲಿತಪರ ಇಲ್ಲ. ದಲಿತಪರ ಎಂದು ವೋಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಮುಖಂಡ ರಾಜು ವಾಡೇಕರ್, ರಮೇಶ್ ವಾಡೇಕರ್ ಸೇರಿ ಅನೇಕರು ಮಾತನಾಡಿದರು. ಈ ಸುದ್ದಿಗೋಷ್ಠಿಯಲ್ಲಿ ರಾಜು ಕಟ್ಟಿಮನಿ, ಮಲ್ಲಿಕಾರ್ಜುನ್ ಸರಡಗಿ, ಸಚಿನ ಕಟ್ಟಿಮನಿ, ಪ್ರದೀಪ ಬಾಚನಾಳ, ಶ್ರೀಮಂತ ಭಂಡಾರಿ, ಭಂಡೇಶ್ ಆರ್., ರಾಜೇಶ್ ಶಿವನೂರ್, ಪ್ರಧ್ವಿರಾಜ್ ರಾಂಪೂರ್, ದತ್ತು ಹಯ್ಯಾಳಕರ್, ಮರಲಿಂಗ ಇತರರು ಉಪಸ್ಥಿತರಿದ್ದರು.
ಪಿಜಿ ವೈದ್ಯಕೀಯ 3ನೇ ಸುತ್ತಿನಲ್ಲಿ ಸೀಟು ನೋಂದಣಿಗೆ ಅವಕಾಶ
ಬೆಂಗಳೂರು : ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೂಚನೆ ಮೇರೆಗೆ ಪಿಜಿನೀಟ್-2025 ರಲ್ಲಿ ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಕನಿಷ್ಠ ಅರ್ಹತಾ ಅಂಕಗಳನ್ನು ಕಡಿಮೆಗೊಳಿಸಿ ಪರಿಷ್ಕರಿಸಿರುವುದರಿಂದ 3ನೇ ಸುತ್ತಿನ (ಮಾಪ್-ಅಪ್) ಸೀಟು ಹಂಚಿಕೆಗಾಗಿ ಅರ್ಹ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ರವಿವಾರ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್.ಪ್ರಸನ್ನ ಪ್ರಕಟಣೆ ಹೊರಡಿಸಿದ್ದು, ಆನ್ ಲೈನ್ ನೋಂದಣಿ, ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗಾಗಿ ಪ್ರಾಧಿಕಾರದ ಪೋರ್ಟಲ್ ಅನ್ನು ಜ.26ರ ಬೆಳಿಗ್ಗೆ 11ರವರೆಗೆ ತೆರೆದಿರಲಾಗುತ್ತದೆ. 3ನೇ ಸುತ್ತಿನಲ್ಲಿ (ಮಾಪ್- ಅಪ್) ಲಭ್ಯವಾಗುವ ಸೀಟುಗಳ ಹಂಚಿಕೆಗೆ ಮಾತ್ರ ಇತರೆ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಬಹುದು ಎಂದಿದ್ದಾರೆ. ಮುಂದಿನ ಯಾವುದೇ ಸುತ್ತಿನ ಸೀಟು ಹಂಚಿಕೆಗೆ ಆನ್ ಲೈನ್ ನೋಂದಣಿ ಮಾಡಿಕೊಳ್ಳಲು / ಅರ್ಜಿ ಸಲ್ಲಿಸಲು ಅವಕಾಶಗಳನ್ನು ನೀಡುವುದಿಲ್ಲ. 3ನೇ ಸುತ್ತಿಗೆ ಲಭ್ಯವಿರುವ ಸೀಟುಗಳ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ರದ್ದುಗೊಳ್ಳಬಹುದಾದ ಅಥವಾ ಹೊಸದಾಗಿ ಸೇರ್ಪಡೆಯಾಗುವ ಸೀಟುಗಳು ಇದ್ದಲ್ಲಿ ಅವನ್ನೂ ಹಂಚಿಕೆಗೆ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪರಿಷ್ಕೃತ ಮಾಹಿತಿಗಾಗಿ ಆಗಿಂದಾಗ್ಗೆ ಪ್ರಾಧಿಕಾರದ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಬೇಕು ಎಂದು ಅವರು ಸೂಚಿಸಿದ್ದಾರೆ. ಈವರೆಗೆ ನೋಂದಣಿ ಮಾಡದಿರುವ ಪಿಜಿ ವೈದ್ಯಕೀಯ ಅರ್ಹ ಅಭ್ಯರ್ಥಿಗಳೂ ನೋಂದಣಿ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಎಲ್ಲರೂ ಒಂದಾಗಿ ಕೋಮುವಾದಿಗಳನ್ನು ದಮನಿಸಬೇಕಿದೆ : ಶಾಸಕ ಬಿ.ಆರ್.ಪಾಟೀಲ್
ಬೆಂಗಳೂರು : ಇವತ್ತು ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಕೋಮುವಾದಿ ಶಕ್ತಿ ಎಡೆ ಎತ್ತಿದೆ. ದೇಶದಲ್ಲಿ ಮತ್ತೆ ಚಾತುರ್ವರ್ಣ ವ್ಯವಸ್ಥೆ ಮರಳಿ ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್), ಬಿಜೆಪಿ ಸಜ್ಜಾಗಿ ನಿಂತಿವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಕೋಮುವಾದಿ ಶಕ್ತಿಯನ್ನು ದಮನಮಾಡಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಕರೆ ನೀಡಿದ್ದಾರೆ. ರವಿವಾರ ನಗರದ ಗಾಂಧಿ ಭವನದಲ್ಲಿ ದಸಂಸ ವತಿಯಿಂದ ಆಯೋಜಿಸಿದ್ದ ‘ಸಮಾನತೆಯ ಹಾದಿಯಲ್ಲಿ ಲಕ್ಷ್ಮೀನಾರಾಯಣ ನಾಗವಾರ’ ಹೋರಾಟಗಾರನ ಅಳಿಯದ ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆ ತರುವಲ್ಲಿ ದಸಂಸ ತನ್ನದೇ ಆದ ಛಾಪು ಮೂಡಿಸಿದೆ. ಬಸವಣ್ಣನವರನ್ನು ಮೇಲ್ಜಾತಿಯವರು ಮಾತ್ರ ಪೂಜಿಸುತ್ತ, ಅವರ ವಿಚಾರದಲ್ಲಿ ಹೋಗುತ್ತಿದ್ದರು. ಆದರೆ ಬಸವಣ್ಣ ಅವರನ್ನು ಕೇರಿಗೆ ಕರೆದುಕೊಂಡು ಹೋಗಿದ್ದು ದಸಂಸ. ಬಸವಣ್ಣ ಎಂದರೆ ಕೇವಲ ನಂದಿ, ದನ ಎಂದು ಪೂಜಿಸಲಾಗುತ್ತಿದ್ದು, ಬಸವಣ್ಣ ಒಬ್ಬ ಮಾನವತಾವಾದಿ ಎಂದು ದಸಂಸ ತೋರಿಸಿಕೊಟ್ಟಿದೆ ಎಂದು ನುಡಿದರು. ದಲಿತ ಮುಖಂಡ ಲಕ್ಷ್ಮೀನಾರಾಯಣ ನಾಗವಾರ ಕಾಂಗ್ರೆಸ್ಗೆ ಸಕ್ರೀಯವಾಗಿ ಬೆಂಬಲ ನೀಡಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಲಿಲ್ಲ ಎನ್ನುವ ನೋವು ಅವರಲ್ಲಿತ್ತು. ರಾಜಕೀಯದಲ್ಲಿ ಅವಕಾಶ ಸಿಗಬೇಕಿದ್ದವರಿಗೆ ಸಿಗುವುದಿಲ್ಲ. ಲಕ್ಷ್ಮೀನಾರಾಯಣ ನಾಗವಾರ ಅವರು ಸಮಾನತೆಯ ಕನಸು ಕಾಣುತ್ತಿದ್ದರು. ಅವರ ಕನಸನ್ನು ಕಟ್ಟುವ ಕೆಲಸ ನಮ್ಮ ಮುಂದಿದೆ ಎಂದು ಅವರು ತಿಳಿಸಿದರು. ಕೆನರಾ ಬ್ಯಾಂಕ್ ಎಸ್ಸಿ-ಎಸ್ಟಿ ನೌಕರರ ಸಂಘದ ಪುರುಷೋತ್ತಮ ದಾಸ್ ಮಾತನಾಡಿ, ಹುಟ್ಟುತ್ತಾ ನಾವೆಲ್ಲರೂ ಮನುಷ್ಯರು, ಯಾರೋ ಇಟ್ಟ ಲೇಬಲ್ಗಳಿಂದ ಬೇರೆ-ಬೇರೆ ಮಾಡಬಾರದು. ಕುವೆಂಪು ಹೇಳಿದಂತೆ ವಿಶ್ವಮಾನವರಾಗಬೇಕಾಗಿರುವುದು ನಮ್ಮ ಕರ್ತವ್ಯ. ಡಾ.ಅಂಬೇಡ್ಕರ್ ಅವರು ಹೇಳಿದಂತೆ ಜಾತಿವಿನಾಶ ಮಾಡಬೇಕು, ಅದಕ್ಕೆ ನಾವು ಪ್ರಯತ್ನಿಸೋಣ ಎಂದು ಹೇಳಿದರು. ಬೇರೆ ಬೇರೆ ಸಮುದಾಯದವರಿಗೆ ಹಾಸ್ಟೆಲ್, ಕಲ್ಯಾಣ ಮಂಟಪಗಳಿವೆ. ಆದರೆ ದಲಿತರ ಕಲ್ಯಾಣ ಮಂಟಪ ಎಲ್ಲಿದೆ? ನಮಗೆ ಇರುವ ಹಾಸ್ಟೆಲ್ಗಳಿಗೆ ಕಿಟಕಿ, ಬಾಗಿಲು ಮುರಿದಿರುತ್ತವೆ. ಅದಕ್ಕಾಗಿ ವಿದ್ಯಾವಂತರಾದವರು ಕೆಲಸ ಮಾಡಬೇಕು. 30 ಎಕರೆ ಜಾಗ ತೆಗೆದುಕೊಂಡು ಕ್ರೀಡಾಂಗಣ ಮಾಡಿ ನಮ್ಮ ಮಕ್ಕಳನ್ನು ಅಂತರ್ರಾಷ್ಟ್ರೀಯ, ಒಲಂಪಿಕ್ಸ್ ನಲ್ಲಿ ಆಟವಾಡಲು ಅನುಕೂಲ ಮಾಡಬೇಕು ಎಂಬ ಕನಸಿದೆ ಎಂದರು. ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಡಾ.ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ರಂಗಕರ್ಮಿ ಜನಾರ್ಧನ್(ಜನ್ನಿ), ಸಮಾಜವಾದಿ ಚಿಂತಕ ಅಲಿಬಾಬಾ ಮತ್ತಿತರರು ಉಪಸ್ಥಿತರಿದ್ದರು.
ಗಾಝಾ ಸಲಹಾ ಸಮಿತಿಗೆ ಇಸ್ರೇಲ್ ಪ್ರಧಾನಿ ಆಕ್ಷೇಪ
ಜೆರುಸಲೇಂ, ಜ.18: ಶ್ವೇತಭವನವು ರಚಿಸಿದ ಗಾಝಾ ಸಲಹಾ ಸಮಿತಿಯ ಸಂಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ಷೇಪಿಸಿದ್ದು ಈ ಬಗ್ಗೆ ಚರ್ಚಿಸಲು ಆಡಳಿತಾರೂಢ ಮೈತ್ರಿಪಕ್ಷದ ಸಭೆ ಕರೆದಿರುವುದಾಗಿ ವರದಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯ `ಶಾಂತಿ ಮಂಡಳಿಯ' ಅಡಿಯಲ್ಲಿ ಕಾರ್ಯನಿರ್ವಹಿಸುವ ಗಾಝಾ ಕಾರ್ಯಕಾರಿ ಮಂಡಳಿಯ ರಚನೆಯನ್ನು ಈ ವಾರ ಶ್ವೇತಭವನ ಘೋಷಿಸಿದೆ. ಸಲಹೆಗಾರನ ಪಾತ್ರ ನಿರ್ವಹಿಸುವ ಕಾರ್ಯಕಾರಿ ಮಂಡಳಿಯಲ್ಲಿ ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿದಾನ್ ಮತ್ತು ಖತರ್ ರಾಜತಾಂತ್ರಿಕ ಅಲಿ ಅಲ್-ಥವಾದಿ ಸೇರಿದಂತೆ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಅಧಿಕಾರಿಗಳನ್ನು ಹೆಸರಿಸಲಾಗಿದೆ. ಕಾರ್ಯಕಾರಿ ಮಂಡಳಿ ರಚನೆಗೆ ಇಸ್ರೇಲ್ ಪ್ರಧಾನಿಯ ಕಚೇರಿ ಆಕ್ಷೇಪ ವ್ಯಕ್ತಪಡಿಸಿದ್ದು `ಇದು ಇಸ್ರೇಲ್ನ ನೀತಿಗೆ ವಿರುದ್ಧವಾಗಿ ಸಾಗುತ್ತದೆ. ಈ ವಿಷಯದ ಬಗ್ಗೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ವಿದೇಶಾಂಗ ಸಚಿವರಿಗೆ ಸೂಚಿಸಲಾಗಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಕಲಬುರಗಿ | ಜ.21ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಕಲಬುರಗಿ, ಜ. 18: ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಜ.21ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಕಲಬುರಗಿಯ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವ ಡಾ. ಶರಣಪ್ರಕಾಶ ಪಾಟೀಲ, ಆಳಂದ ಶಾಸಕ ಬಿ.ಆರ್.ಪಾಟೀಲ್, ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಝ್ ಫಾತೀಮಾ, ಜೇವರ್ಗಿ ಶಾಸಕ ಡಾ.ಅಜಯಸಿಂಗ್, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಡೀನ್, ಕಲಾನಿಕಾಯ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
`ಪ್ರತಿದಿನ ಅಪ್ಪನ ಮುಂದೆ ಕೂತು ಅಳುತ್ತಿದ್ದೆ, ಅನುಭವಿಸಿದ ನೋವು ಒಂದೆರಡಲ್ಲ': ಮನದಾಳ ತೆರೆದಿಟ್ಟ ಹರ್ಷಿತ್ ರಾಣಾ!
Harhit Rana Allround Performance- ಹರ್ಷಿತ್ ರಾಣಾ ಅವರು ಭಾರತ ತಂಡಕ್ಕೆ ಆಯ್ಕೆ ಆಗಿದ್ದಾಗ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇವನ್ಯಾವ ಸೀಮೆ ಆಲ್ರೌಂಡರ್ ಎಂಬ ಮಾತುಗಳೂ ಕೇಳಿ ಬಂದಿದ್ದವು. ಎಲ್ಲಾ ಕುಹಕ, ವ್ಯಂಗ್ಯಗಳಿಗೂ ಹರ್ಷಿತ್ ರಾಣಾ ಅವರ ಆಟವೇ ಉತ್ತರ ನೀಡಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಆಲ್ರೌಂಡ್ ಪ್ರದರ್ಶನದಿಂದ ಮಿಂಚಿದ್ದಾರೆ. ಆದರೆ ಅವರು ಇದೇನೂ ತನಗೆ ಹೊಸದಲ್ಲ. ಕಳೆದ 10 ವರ್ಷಗಳಿಂದ ವೈಫಲ್ಯಗಳನ್ನು ನಿರಂತರವಾಗಿ ಅನುಭವಿಸುತ್ತಾ ಬಂದಿದ್ದೇನೆ. ಆಗೆಲ್ಲಾ ತನ್ನ ಬೆಂಬಲಕ್ಕೆ ನಿಂತವರು ತನ್ನ ತಂದೆ ಎಂದು ಅವರು ಹೇಳಿದ್ದಾರೆ.
Bengaluru | ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಬೆಂಗಳೂರು : ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಸ್ಫೋಟಿಸುವುದಾಗಿ ರವಿವಾರ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಬಗ್ಗೆ ವರದಿಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿಗೆ ಅಪರಿಚಿತರಿಂದ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಮೂರು ಆರ್ಡಿಎಕ್ಸ್, ಐಇಡಿ ಬಳಸಿ ಟರ್ಮಿನಲ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ತಕ್ಷಣ ಎಚ್ಚೆತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು, ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯ ದಳಗಳು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ನಾಳೆ ಸಚಿವ ವಿಜಯ್ ಶಾ ಸಲ್ಲಿಸಿದ್ದ ಅರ್ಜಿ ವಿಚಾರಣೆ
ಭೋಪಾಲ್,ಜ.18: ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಾಕಾರಿ ಪದ ಬಳಕೆ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಜಾಯ್ಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಸಚಿವ ವಿಜಯ್ ಶಾ ಅವರ ಅರ್ಜಿಯ ವಿಚಾರಣೆಯನ್ನು ನಡೆಸುವ ನಿರೀಕ್ಷೆಯಿದೆ. ಕರ್ನಲ್ ಕುರೇಷಿ ವಿರುದ್ಧ ಆಡಿದ ಮಾತುಗಳಿಗಾಗಿ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ವಿಜಯ್ ಶಾ ಅವರನ್ನು ಸರ್ವೋಚ್ಚ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತ್ತು. ಶಾ ಅವರು ನ್ಯಾಯಾಲಯದ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿತ್ತು. ಸಚಿವರ ನಡವಳಿಕೆಯ ಹಿಂದಿರುವ ಉದ್ದೇಶವು ಶಂಕಾಸ್ಪದವಾಗಿದೆಯೆಂದು ಹೇಳಿತ್ತು. ವಿಜಯ್ ಶಾ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕೆ.ಪರಮೇಶ್ವರ್, ಈ ವಿಷಯವಾಗಿ ಸಚಿವರು ಬಹಿರಂಗವಾಗಿ ಕ್ಷಮೆಯಾಚಿಸಿ ಹೇಳಿಕೆ ನೀಡಿದ್ದು, ಅದನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲಾಗಿದ್ದು ಮತ್ತು ನ್ಯಾಯಾಲಯದ ದಾಖಲೆಗೂ ನೀಡಲಾಗಿದೆ ಎಂದು ಹೇಳಿದರು. ಅದನ್ನು ಒಪ್ಪದ ನ್ಯಾಯಪೀಠವು ,‘‘ ಆನ್ಲೈನ್ ಮೂಲಕ ಕ್ಷಮಾಯಾಚನೆ ಅಂದರೆ ಏನು? ವಿಜಯ್ ಶಾ ಅವರ ಉದ್ದೇಶಗಳು ಹಾಗೂ ಪ್ರಾಮಾಣಿಕತೆಯ ಬಗ್ಗೆ ಸಂದೇಹವನ್ನು ಮೂಡಿಸುತ್ತದೆ. ನ್ಯಾಯಾಲಯದ ದಾಖಲೆಗೆ ಕ್ಷಮಾಯಾಚನೆ ಪತ್ರವನ್ನು ಒಪ್ಪಿಸಿ ಅದನ್ನು ಪರಿಶೀಲಿಸಬೇಕಿದೆ ಎದು ನ್ಯಾಯಾಲಯವು ವಿಜಯ್ ಶಾ ಅವರಿಗೆ ತಿಳಿಸಿದೆ. ಕ.ಸೋಫಿಯಾ ಖುರೇಷಿ ಹಾಗೂ ಮಹಿಳಾ ವಾಯುಪಡೆ ಅಧಿಕಾರಿ ವಿಂಗ್ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಶನ್ ಸಿಂಧೂರ್ ಸಂದರ್ಭದಲ್ಲಿ ಮಾಧ್ಯಮಗಳಿಗೆ ಕಾರ್ಯಾಚರಣೆಯ ವಿವರಗಳನ್ನು ನೀಡಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆಗೆ ಭಯೋತ್ಪಾದಕರ ‘ಸಹೋದರಿ’ಯನ್ನೇ ಕಳುಹಿಸಿದ್ದಾರೆಂದು ಹೇಳಿದ್ದಕ್ಕಾಗಿ ವಿಜಯ್ ಶಾ ತೀವ್ರ ವಿವಾದಕ್ಕೆ ಒಳಗಾಗಿದ್ದರು.
‘ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ’ ನಾಳೆ ಲೋಕಾರ್ಪಣೆ
ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಯಶೋಗಾಥೆಯ ಮೂರ್ತಿಶಿಲ್ಪ, ಉಬ್ಬುಶಿಲ್ಪ, ಮಾಹಿತಿ ಫಲಕ, ಕಥಾಚಿತ್ರ ಹಾಗೂ ರೊಬೋಟಿಕ್ ತಂತ್ರಜ್ಞಾನ, ಡೈಮೆನ್ನನ್ ಚಿತ್ರಮಂದಿರ-ಧ್ವನಿ ಪಭಾವಗಳೊಂದಿಗೆ ನೋಡುಗನ ಮನಸ್ಸಿನಲ್ಲಿ ರಾಯಣ್ಣನ ಕ್ರಾಂತಿಯ ಘಟನೆಗಳನ್ನು ಬಿಂಬಿಸುವ ವಸ್ತು ಸಂಗ್ರಹಾಲಯ (ವೀರಭೂಮಿ) ಹಾಗೂ ರಾಯಣ್ಣನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ(ಜ.19) ಲೋಕಾರ್ಪಣೆ ಮಾಡಲಿದ್ದಾರೆ. ರವಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಮಾಜಿ ಸಚಿವ ಹಾಗೂ ರಾಯಣ್ಣ ಅಧ್ಯಯನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಅಧಿಕಾರಿಗಳು, ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ನಂದಗಡದಲ್ಲಿನ ವಸ್ತು ಸಂಗ್ರಹಾಲಯದ ಸಿದ್ಧತೆಗಳನ್ನು ಪರಿಶೀಲಿಸಿದರು. ಅಲ್ಲದೆ, ನಾಳೆ(ಜ.19) ನಂದಗಡ ರೂರಲ್ ಎಜುಕೇಷನ್ ಸೊಸೈಟಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ದತೆಗಳನ್ನು ವೀಕ್ಷಿಸಿದರು. ರಾಯಣ್ಣನವರ ಕುರಿತ ಪಾರಂಪರಿಕ ಮತ್ತು ಆಧುನಿಕ ಮಾಧ್ಯಮದ ದೃಶ್ಯವನ್ನು ಸಮ್ಮಿಶ್ರಗೊಳಿಸಿದ್ದು, ಭಿತ್ತಿಚಿತ್ರದಲ್ಲಿ ರಾಯಣ್ಣರ ವಂಶ, ಸಂಸ್ಥಾನದೊಂದಿಗೆ ಸಂಬಂಧ, ಭರಮಪ್ಪ ಹುಲಿಯನ್ನು ಸಂಹರಿಸಿದ್ದು, ಸಂಗೊಳ್ಳಿಯಲ್ಲಿನ ಮೆರವಣಿಗೆ, ರಾಯಣ್ಣ ಜನನ ವಿವರಗಳ ಭಿತ್ತಿಚಿತ್ರ ಪ್ರದರ್ಶನದ ಇರಲಿದೆ. ಅಲ್ಲದೆ, ರಾಯಣ್ಣನ ಬಾಲ್ಯದ ಚಟುವಟಿಕೆಗಳನ್ನು ಬಿಂಬಿಸುವ ಚಿತ್ರಗಳನ್ನು ಆಲೋಗ್ರಾಮ್ ಚಿತ್ರ ಮಂದಿರದಲ್ಲಿ ಬಿಂಬಿಸಲಾಗುವುದು ಎಂದು ತಿಳಿಸಲಾಗಿದೆ. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ’ವನ್ನು 2016ರಲ್ಲಿ ರಚಿಸಲಾಗಿದ್ದು, ರಾಯಣ್ಣನ ಜನ್ಮಭೂಮಿಯಾದ ಸಂಗೊಳ್ಳಿ, ಹುತಾತ್ಮನಾದ ನಂದಗಡ ಪ್ರದೇಶಗಳ ಅಭಿವೃದ್ಧಿಯ ಜೊತೆಗೆ ರಾಯಣ್ಣ ಮತ್ತವರ ಸಂಗಡಿಗರ ನಾಡ ನಿಷ್ಠೆ, ಕುರಿತಂತೆ ಕಾರ್ಯಕ್ರಮಗಳನ್ನು ರೂಪಿಸಿ, ಯುವ ಸಮುದಾಯಕ್ಕೆ ತಲುಪಿಸಲು ರಾಜ್ಯ ಸರಕಾರ ಕ್ರಮ ವಹಿಸಿದೆ. ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಹೆಸರಲ್ಲಿ 100ಎಕರೆ ಪ್ರದೇಶದಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಿದೆ. ರಾಯಣ್ಣ ಬಾಲ್ಯದಿಂದ ಗಲ್ಲಿಗೇರಿಸಿದವರೆಗಿನ ಇತಿಹಾಸವನ್ನು ಸಾರುವ ಶೌರ್ಯಭೂಮಿ ನಿರ್ಮಾಣ, ಕಲ್ಯಾಣ ಮಂಟಪ ನವೀಕರಣ. ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಸ್ಥಳದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ(ವೀರಭೂಮಿ). ನಂದಗಡದಲ್ಲಿ ರಾಯಣ್ಣನ ಸಮಾಧಿ ಬಳಿಯಿರುವ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಸೈನಿಕ ಶಾಲೆ: ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಸೈನಿಕ ಶಾಲೆಯನ್ನು ಸ್ಥಾಪಿಸಲಾಗಿದ್ದು, ರಕ್ಷಣಾ ಇಲಾಖೆಯ ಅಧೀನದಲ್ಲಿ ಬರುವ ಸೈನಿಕ ಸ್ಕೂಲ್ ಸೊಸೈಟಿಯಿಂದ ಅನುಮೋದನೆ ಪಡೆದು ಸೈನಿಕ ಶಾಲೆಯು ಸಿಎಂ ಅವರಿಂದ ಉದ್ಘಾಟನೆಯಾಗಿದ್ದು, 2022-23ನೆಯ ಸಾಲಿನಿಂದ 6ನೆ ತರಗತಿಯಿಂದ ಪ್ರಾರಂಭಗೊಂಡಿದೆ. ಪ್ರಸ್ತುತ 2025-26ನೆಯ ಸಾಲಿನಲ್ಲಿ ಸೈನಿಕ ಶಾಲೆಯಲ್ಲಿ 6, 7, 8 ಮತ್ತು 9ನೆ ತರಗತಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸೇರಿ ದೇಶದ ವಿವಿಧ ರಾಜ್ಯಗಳ ಒಟ್ಟು 388 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶೌರ್ಯ ಭೂಮಿ: ಸಂಗೊಳ್ಳಿಯಲ್ಲಿ ರಾಯಣ್ಣ ಮತ್ತು ಅವನ ಚಟುವಟಿಕೆ ಕುರಿತಂತೆ 10 ಎಕರೆ ಪ್ರದೇಶದಲ್ಲಿ ಶಿಲ್ಪಗಳ ನಿರ್ಮಾಣವನ್ನು ಮಾಡಲಾಗಿದೆ. ಇದು ಅತ್ಯಂತ ಆಕರ್ಷಣೀಯವಾಗಿದ್ದು, ಸಾವಿರ ಸಂಖ್ಯೆಯಲ್ಲಿ ಪ್ರತಿದಿನವು ಪ್ರವಾಸಿಗಳು ಮಕ್ಕಳ ಸಹಿತ ಬಂದು ವೀಕ್ಷಿಸುತ್ತಿದ್ದಾರೆ. ರಾಯಣ್ಣ ಮತ್ತು ಆತನ ಸಂಗಡಿಗರನ್ನು ನೇಣು ಹಾಕಿದ ನಂದಗಡದಲ್ಲಿ ವೀರಭೂಮಿ ಹೆಸರಿನಲ್ಲಿ ವಸ್ತು ಸಂಗ್ರಹಾಲಯವು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದ ಸ್ಥಗಿತಗೊಳಿಸಿದ ಯುರೋಪಿಯನ್ ಯೂನಿಯನ್
ಬ್ರಸೆಲ್ಸ್, ಜ.18: ಗ್ರೀನ್ಲ್ಯಾಂಡ್ ವಿಷಯದಲ್ಲಿ ಅಮೆರಿಕಾದ ನಿಲುವನ್ನು ಬೆಂಬಲಿಸದ ಕಾರಣಕ್ಕೆ ಡೆನ್ಮಾರ್ಕ್ ಹಾಗೂ ಇತರ ಹಲವಾರು ಯುರೋಪಿಯನ್ ರಾಷ್ಟ್ರಗಳ ಮೇಲೆ ಹೊಸದಾಗಿ ಸುಂಕ ವಿಧಿಸುವ ಅಧ್ಯಕ್ಷ ಟ್ರಂಪ್ ನಿರ್ಧಾರದ ಬಳಿಕ ಅಮೆರಿಕಾದ ಜೊತೆಗಿನ ವ್ಯಾಪಾರ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಯುರೋಪಿಯನ್ ಯೂನಿಯನ್ ಹೇಳಿದೆ. ವ್ಯಾಪಾರ ಒಪ್ಪಂದಕ್ಕೆ ವ್ಯಾಪಕ ಅನುಮೋದನೆಯಿದ್ದರೂ ಗ್ರೀನ್ಲ್ಯಾಂಡ್ ವಿಷಯದಲ್ಲಿ ಟ್ರಂಪ್ ಅವರ ಬೆದರಿಕೆ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಿಲ್ಲ. ಅಮೆರಿಕಾದ ಉತ್ಪನ್ನಗಳ ಮೇಲಿನ ಶೂನ್ಯ ಶೇಕಡಾ ಸುಂಕಗಳನ್ನು ತಡೆಹಿಡಿಯಬೇಕು ಎಂದು ಯುರೋಪಿಯನ್ ಪೀಪಲ್ಸ್ ಪಾರ್ಟಿ(ಇಪಿಪಿ) ಅಧ್ಯಕ್ಷ ಮಾನ್ಫ್ರೆಡ್ ವೆಬರ್ ಹೇಳಿದ್ದಾರೆ. ಹೊಸ ಸುಂಕಗಳು ಅಟ್ಲಾಂಟಿಕ್ ಸಾಗರದಾದ್ಯಂತದ ಸಂಬಂಧಗಳನ್ನು ಹಾನಿಯುಂಟುಮಾಡುವ ಅಪಾಯವನ್ನು ಉಂಟುಮಾಡುತ್ತದೆ. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವು ಅಂತಾರಾಷ್ಟ್ರೀಯ ಕಾನೂನಿನ ಮೂಲ ತತ್ವಗಳಾಗಿವೆ ಮತ್ತು ಯುರೋಪ್ ಮತ್ತು ಜಾಗತಿಕ ಸಮುದಾಯಕ್ಕೆ ಪ್ರಮುಖವಾಗಿವೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಪ್ರತಿಪಾದಿಸಿದ್ದಾರೆ.
ವಾಡಿ | ಸ್ಪರ್ಧೆಗಾಗಿ ಪ್ರಬಂಧ ಬೇಡ, ಜ್ಞಾನಕ್ಕಾಗಿ ಬರೆಯಿರಿ : ಕಾಶಿನಾಥ ಧನ್ನಿ
ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ
ಡಿಕೆ ಶಿವಕುಮಾರ್ - ಹೈಕಮಾಂಡ್ ಭೇಟಿ: ಒಂದೇ ವಾಕ್ಯದಲ್ಲಿ ಹೇಳುವುದಾದ್ರೆ ಕಾಲವೇ ಉತ್ತರಿಸುತ್ತದೆ ಎಂದ DCM
ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕಾರಣಿಗಳು ತಮ್ಮ ಕೆಲಸ ಮಾಡುತ್ತಾರೆ ಎಂದರು. ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿ ಕ್ಷೇತ್ರದಲ್ಲಿ ಐದು ಕಿ.ಮೀ. ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು. ಪಂಚಾಯತಿ ಮಟ್ಟದಲ್ಲಿ ನಿರ್ಣಯ ಕೈಗೊಂಡು ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಆಳಂದ | ಜ.19ರಿಂದ ಶ್ರೀ ಚನ್ನಮಲ್ಲೇಶ್ವರ ಚರಿತಾಮೃತ ಮಹಾಪುರಾಣ ಪ್ರವಚನ ಕಾರ್ಯಕ್ರಮ : ಚನ್ನಮಲ್ಲ ಶಿವಾಚಾರ್ಯರು
ಆಳಂದ : ಮಾಡಿಯಾಳ ಗ್ರಾಮದ ಶ್ರೀ ಚನ್ನಮಲ್ಲೇಶ್ವರ ಮಠದ ಜಾತ್ರೆಯ ಅಂಗವಾಗಿ ಜ.19ರಿಂದ 30ರವರೆಗೆ ರಾತ್ರಿ 8 ಗಂಟೆಗೆ ಶ್ರೀ ಚನ್ನಮಲ್ಲೇಶ್ವರ ಚರಿತಾಮೃತ ಮಹಾಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಚನ್ನಮಲ್ಲ ಶಿವಾಚಾರ್ಯರು ಹೇಳಿದರು. ಜಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶ್ರೀ ಉಪಮನ್ಯು ಶಿವಾಚಾರ್ಯರು (ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ, ಐನಾಪುರ) ಪ್ರವಚನ ನೀಡಲಿದ್ದಾರೆ ಎಂದರು. ಜ.21ರಂದು ಪುರಾಣ ಪ್ರವಚನದ ನಂತರ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.26ರಂದು ಬೆಳಗ್ಗೆ 10 ಗಂಟೆಗೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಖ್ಯಾತ ನೇತ್ರ ತಜ್ಞ ಡಾ.ವಿಶ್ವನಾಥ ರೆಡ್ಡಿಯವರಿಂದ ಉಚಿತ ನೇತ್ರ ತಪಾಸಣೆ ನಡೆಯಲಿದೆ ಎಂದು ಅವರು ವಿವರಿಸಿದರು. ಜ.27ರಂದು ಸಾಯಂಕಾಲ ಶ್ರೀ ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯ ಬಡದಾಳ ಶಾಲಾ ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶನ ನಡೆಯಲಿದೆ. ಜ.28ರಂದು ಸಾಯಂಕಾಲ ಹಿರಿಯ ಕೃಷಿ ವಿಜ್ಞಾನಿ ರಾಜು ತೆಗ್ಗೆಳಿ ಹಾಗೂ ಡಾ. ಯೂಸುಫ್ ಅಲಿ ಅವರು ರೈತರಿಗೆ ಕೃಷಿ ಕುರಿತು ವಿಶೇಷ ಮಾರ್ಗದರ್ಶನ ನೀಡಲಿದ್ದಾರೆ. ಅನಂತರ ಸುಚಿತ ಕಿಣಗಿ ಹಾಗೂ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ. ಜ.29ರಂದು ಬೆಳಗ್ಗೆ 10 ಗಂಟೆಗೆ ಮಾಡಿಯಾಳ ಆಯುರ್ವೇದ ಆಸ್ಪತ್ರೆಯ ವತಿಯಿಂದ ಬಡ ರೋಗಿಗಳಿಗೆ ಉಚಿತ ಸಂಧಿವಾತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ರಾತ್ರಿ 8 ಗಂಟೆಗೆ ಧರ್ಮಸಭೆ ನಡೆಯಲಿದ್ದು, ನಾಗುರ ಮಠಾಧ್ಯಕ್ಷರು ಹಾಗೂ ಮಾತೋಶ್ರೀ ಸಿದ್ದಮಾಂಬೆ ಸಾನಿಧ್ಯ ವಹಿಸಲಿದ್ದಾರೆ. ಹಜರತ್ ಸೈಯದ್ ಭಾಷಾ ಹುಸೇನ ಮಠಾಧ್ಯಕ್ಷರು (ಬಟ್ಟರಗಾ ದರ್ಗಾ) ಹಾಗೂ ಗರೀಬ ಸಾಹೇಬ ಮಠಾಧ್ಯಕ್ಷರು (ಹಿತ್ತಲಶಿರೂರು) ನೇತೃತ್ವ ವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್21ರ ವಿನ್ನರ್ ಹಾಗೂ ಇಂಡಿಯನ್ ಐಡಲ್ ಖ್ಯಾತ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಹಿರೇಮಠ ಮತ್ತು ತಂಡದಿಂದ ಭಕ್ತಿ ಸಂಗಮ ಕಾರ್ಯಕ್ರಮ ನಡೆಯಲಿದೆ. ಜ.30ರಂದು ಬೆಳಗ್ಗೆ 10:30ಕ್ಕೆ ಸುಮಂಗಲಿಯರ ಕುಂಭಕಳಸ, ಮುತ್ತಿನಾರತಿ ಸಹಿತ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ಅಡ್ಡಪಲ್ಲಕಿ ಮಹೋತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಬೀದರ್ ಸಂಸದ ಸಾಗರ ಖಂಡ್ರೆ, ಶಾಸಕರಾದ ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ್, ಬಸವರಾಜ ಮತ್ತಿಮೂಡ, ಶರಣು ಸಲಗರ, ಮಾಜಿ ಶಾಸಕ ಸುಭಾಷ ಗುತ್ತೇದಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ಹಿರಿಯ ಮುಖಂಡ ಸಂಗಣ್ಣ ಮದ್ದಡಗಿ, ಸೂರ್ಯಕಾಂತ ರಾಮಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸೇಡಂ | ವಿವಿಧ ಬೇಡಿಕೆ ಈಡೇರಿಕೆಗಾಗಿ ಜ.20ಕ್ಕೆ ಮೆದಕ್ ಗ್ರಾಪಂ ಮುತ್ತಿಗೆ : ಸಾಬಪ್ಪ
ಸೇಡಂ : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ.20ರಂದು ಮೆದಕ್ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಗುವುದು ಎಂದು ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಸಾಬಪ್ಪ ಹೇಳಿದ್ದಾರೆ. ಮೆದಕ್ ಗ್ರಾಪಂ ವ್ಯಾಪ್ತಿಯ ಸಿಲಾರಕೋಟ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯ ಇಲ್ಲದೇ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ. ಶೌಚಾಲಯ ನಿರ್ಮಾಣಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.
ಚಿತ್ತಾಪುರ | ದುಶ್ಚಟಗಳ ದಾಸರಾಗದಿರಿ: ಫಕೀರಪ್ಪ ದೊಡ್ಡಮನಿ
ಚಿತ್ತಾಪುರ : ಯುವ ಜನಾಂಗ ಯಾವುದೇ ದುಶ್ಚಟಗಳಿಗೆ ದಾಸರಾಗಬಾರದು ಎಂದು ಜಿಮ್ಸ್ ಆಸ್ಪತ್ರೆಯ ಹಿರಿಯ ನರ್ಸಿಂಗ್ ಅಧಿಕಾರಿ ಫಕೀರಪ್ಪ ದೊಡ್ಡಮನಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಕಿವಿಮಾತು ಹೇಳಿದ್ದಾರೆ. ತಾಲೂಕಿನ ಹುಳಂಡಗೇರ ಗ್ರಾಮದಲ್ಲಿ ಗುರು ಅಯ್ಯಳಲಿಂಗೇಶ್ವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ನಿಮಿತ್ತ ಹಮಿಕೊಂಡಿದ್ದ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ತಂಬಾಕಿನಲ್ಲಿ ನಿಕೋಟಿನ್ ಅಂಶವಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶ್ವಾಸಕೋಶಕ್ಕೆ ಹಾನಿಯುಂಟಾಗುವ ಕಾರಣದಿಂದ ತಂಬಾಕು ಸೇವನೆ ಮಾಡಬಾರದು ಎಂದು ಹೇಳಿದರು. ಜೆಸ್ಕಾಂನ ಮಾಜಿ ನಿರ್ದೇಶಕ ಗೋಪಿಕೃಷ್ಣ ಮಾತನಾಡಿದರು. ಗ್ರಾಮದ ಮಕ್ಕಳಿಗೆ ನೋಟ್ ಬುಕ್, ಪೆನ್ ನೀಡಿ ಸನ್ಮಾನಿಸಿದರು. ಮಲ್ಲೇಶಿ ಬೇನಳ್ಳಿ, ಇತರರಿದ್ದರು. ನೃತ್ಯ, ಕಿರುನಾಟಕ ಇತರ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು 2028ರ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಸಕ್ತ ಅವಧಿಯಲ್ಲಿ ಆಸೆ ಇರುವವರು ಸಿಎಂ ಆಗಬಹುದು ಎಂದ ಅವರು, ಮುಖ್ಯಮಂತ್ರಿ ಬದಲಾವಣೆ ಗೊಂದಲಕ್ಕೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತೆರೆ ಎಳೆಯಬೇಕು ಎಂದು ಅಭಿಪ್ರಾಯಪಟ್ಟರು. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದರು.
Karnataka Weather: ಈ ವರ್ಷ ಬಿಸಿಲಿನ ಝಳ ಹೆಚ್ಚಿರಲಿದೆ - ಹವಾಮಾನ ತಜ್ಞರಿಂದ ಎಚ್ಚರಿಕೆ! ಬೇಸಿಗೆ ಆರಂಭ ಯಾವಾಗ?
ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಡಿಸೆಂಬರ್ನಲ್ಲಿ ದಾಖಲೆಯ ಚಳಿ ದಾಖಲಾಗಿದ್ದರಿಂದ, ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣತೆ ಇರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಜನವರಿ ಅಂತ್ಯದ ವೇಳೆಗೆ ಚಳಿ ಕಡಿಮೆಯಾಗಿ, ಫೆಬ್ರವರಿಯಿಂದಲೇ ಬಿಸಿಲು ಆರಂಭವಾಗಲಿದೆ. ಶುಷ್ಕ ವಾತಾವರಣದಿಂದಾಗಿ ಜನರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಯಾದಗಿರಿ | ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು : ನ್ಯಾ.ಮರಿಯಪ್ಪ
ಯಾದಗಿರಿ : ಸ್ನಾತಕ ಮತ್ತು ಸ್ನಾತಕೊತ್ತರ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಂದರ್ಭಗಳಲ್ಲಿ ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು. ನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಸಮಾಜ ವಿಭಾಗದ ಸ್ನಾತಕ ಮತ್ತು ಸ್ನಾತಕೊತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವ್ಯವಸ್ಥೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿದೆ. ಇದು ನಿಜವಾಗಿಯು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ. ಎಲ್ಲ ಹಂತಗಳಲ್ಲಿಯೂ ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹಿಳೆಯನ್ನು ಗೌರವದಿಂದ ಕಾಣಬೇಕು. ಆಗ ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯಲು ಸಹಾಯಕವಾಗತ್ತದೆ ಎಂದು ಅವರು ಹೇಳಿದರು. ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನೂತನಾ ಬಿ.ಡಿ. ಮಾತನಾಡಿ, ಅರ್ಹತೆ ಇರುವವರಿಗೆ ಅವಕಾಶಗಳು ಸಾಕಷ್ಟು ಪ್ರಾಪ್ತವಾಗುತ್ತವೆ. ಆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಅಧ್ಯಯನ ಮಾಡಿ, ಪ್ರಾಮಾಣಿಕವಾಗಿ ಪ್ರಯತ್ನಸಿದಾಗ ಖಂಡಿತವಾಗಿ ಯಶಶ್ಸು ಪಡಿಯಲು ಸಾಧ್ಯವಾಗುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾಗ್ಯಜ್ಯೋತಿ ಎ.ಎನ್., ಲಿಂಗರಾಜ ಪಡಶೆಟ್ಟಿ, ಡಾ.ಸಿ.ಆರ್.ಕಂಬಾರ, ಡಾ.ಉಮೇಶ್ ತೇಜಪ್ಪ, ಸಾಬರೆಡ್ಡಿ ಬಂಗಾರಿ, ಬಿ.ಆರ್,ಕೇತನ್ಕರ್, ಡಾ.ಜಯದೇವಿ ಗಾಯಕ್ವಾಡ್, ಪ್ರಹ್ಲಾದ್ ಜ್ಯೋಷಿ, ಬಸನ್ಗೌಡ, ನಾಗಪ್ಪ ಮಾನೇದರ್, ಡಾ.ಗೌರೀಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.
ರಾಜಸ್ಥಾನ| ಬಿಷ್ಣೋಯಿ ಗ್ಯಾಂಗ್ನ ಶಾರ್ಪ್ ಶೂಟರ್ ಬಂಧನ
ಜೈಪುರ,ಜ.18: ದಿಲ್ಲಿ ಕ್ರೈಂ ಬ್ರಾಂಚ್ನ ರೌಡಿ ನಿಗ್ರಹ ದಳವು (ಎಜಿಎಸ್) ಹಾಗೂ ರಾಜಸ್ಥಾನ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯೊಂದರಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆ ನಂಟು ಹೊಂದಿದ್ದಾನೆನ್ನಲಾದ ಶಾರ್ಪ್ಶೂಟರ್ ಒಬ್ಬನನ್ನು ಬಂಧಿಸಿದೆ. ಉತ್ತರಪ್ರದೇಶದ ಆಗ್ರಾ ನಿವಾಸಿ ಪ್ರದೀಪ್ ಶರ್ಮಾ ಯಾನೆ ಗೋಲು (23) ಬಂಧಿತ ಆರೋಪಿ. 2026ರ ಜನವರಿ 16ರಂದು ಲಭ್ಯವಾದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದಲ್ಲಿ ಆತನನ್ನು ದಿಲ್ಲಿಯ ಉತ್ತಮ ನಗರದಿಂದ ಬಂಧಿಸಲಾಗಿದೆ. ವಿಚಾರಣೆಗೊಳಪಡಿಸಿದ ಬಳಿಕ ಆತನನ್ನು ರಾಜಸ್ಥಾನ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಶರ್ಮಾನ ವಿರುದ್ಧ ಗಂಗಾನಗರ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಪೊಲೀಸರಿಗೆ ಬೇಕಾಗಿದ್ದ. ಬಿಷ್ಣೋಯಿ ಗ್ಯಾಂಗ್ 2025ರ ಮಾರ್ಚ್ನಲ್ಲಿ ಉದ್ಯಮಿಯೊಬ್ಬರಿಗೆ 4 ಕೋಟಿ ರೂ. ಹಣವನ್ನು ನೀಡುವಂತೆ ಬೆದರಿಕೆ ಹಾಕಿತ್ತು. ಆದರೆ ಉದ್ಯಮಿ ಹಣ ನೀಡದೆ ಇದ್ದಾಗ, ಆತನ ನಿವಾಸದಲ್ಲಿ ಗುಂಡಿನ ದಾಳಿ ನಡೆಸುವ ಕೆಲಸಕ್ಕೆ ಪ್ರದೀಪ್ ಶರ್ಮಾನನ್ನು ಬಿಷ್ಣೋಯಿ ಗ್ಯಾಂಗ್ ನಿಯೋಜಿಸಿತ್ತು. 2025ರ ಮೇ ತಿಂಗಳಲ್ಲಿ ಶರ್ಮಾ ಹಾಗೂ ಆತನ ಸಹಚರರು ಈ ಉದ್ಯಮಿಯ ನಿವಾಸದ ಮೇಲೆ ಗುಂಡು ಹಾರಾಟ ನಡೆಸಿದ್ದು, ಆನಂತರ ಪ್ರಕರಣ ದಾಖಲಾಗಿತ್ತು. ಜಾಮೀನು ಬಿಡುಗಡೆಗೊಂಡ ಆನಂತರವೂ ಆತ ಗ್ಯಾಂಗ್ ಜೊತೆಗಿನ ನಂಟನ್ನು ಮುಂದುವರಿಸಿದ್ದು, ಅಕ್ರಮ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡನ್ನು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ.
ಕಲಬುರಗಿ | ಜ.26ರಂದು ಸಂಗೊಳ್ಳಿ ರಾಯಣ್ಣ ಪುಣ್ಯತಿಥಿ : ಶಿವಲಿಂಗಪ್ಪ
ಕಲಬುರಗಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯತಿಥಿ ಹಾಗೂ ಅವರ ರಾಜ್ಯಾಭಿಷೇಕದ ವಾರ್ಷಿಕೋತ್ಸವ ಜ.26ರಂದು ನಂದಗಡ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ತಿಳಿಸಿದ್ದಾರೆ. ರಾಷ್ಟ್ರೀಯ ಸಮಾಜ ಪಕ್ಷದ ಕರ್ನಾಟಕ ಘಟಕ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಖಾನಾಪುರ ತಾಲೂಕಿನ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಮಹದೇವ್ ಜಾನ್ಕರ್ ಮುಖ್ಯಅತಿಥಿಯಾಗಿ ಆಗಮಿಸಲಿದ್ದಾರೆ. ಪಕ್ಷದ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಸಿದ್ದಪ್ಪ ಅಕ್ಕಿ ಸಾಗರ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕು ಎಂಬ ಬೇಡಿಕೆ ಸರಕಾರದ ಮುಂದಿಡಲಾಗುವುದು ಎಂದು ಶಿವಲಿಂಗಪ್ಪ ತಿಳಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ | ಜ.20ರಂದು ಪ್ರಾದೇಶಿಕ ಭವಿಷ್ಯನಿಧಿ ಕಚೇರಿಗೆ ಮುತ್ತಿಗೆ : ರಾಹುಲ್ ಉಪಾರೆ
ಕಲಬುರಗಿ : ಕಾರ್ಮಿಕರ ಪಿಎಫ್ ಹಣ ಭರಿಸದಿರುವ ಎಜೆನ್ಸಿಗೆ ಸೂಚನೆ ನೀಡಿದ್ದರೂ ಕ್ರಮ ಜರುಗಿಸದಿರುವ ಪ್ರಾದೇಶಿಕ ಆಯುಕ್ತರ ಭವಿಷ್ಯನಿಧಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಜೈ ಭೀಮ ಸೇನೆಯ ಜಿಲ್ಲಾಧ್ಯಕ್ಷ ರಾಹುಲ್ ಉಪಾರೆ ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಪ್ರಾದೇಶಿಕ ಆಯುಕ್ತರ ಭವಿಷ್ಯನಿಧಿಯ ಕಲಬುರಗಿ ಕಚೇರಿಗೆ ಹಲವು ಬಾರಿ ಮನವಿ ನೀಡಲಾಗಿದ್ದರೂ ಅರ್ಜಿಯ ಕುರಿತಾಗಿ ಯಾವುದೇ ಕ್ರಮವಾಗದ ಪ್ರಯುಕ್ತ ಜ.20ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಗುವುದು ಎಂದರು. ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಹಣಮಂತ ನಾಟಿಕಾರ, ರೇವಣ್ಣ ಭಾವಿಮನಿ, ಎಮ್.ಡಿ. ಸದ್ದಾಮ್, ಸಿದ್ದಾರ್ಥ ದಿಗಸಂಗಿಕರ, ದತ್ತು ಬುಕ್ಕನ, ಅಮಿತ ಮಾಲೆ, ಅಮಿತ ರೆಡ್ಡಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನೊಬೆಲ್ ಪ್ರಶಸ್ತಿ ಹಿಂತೆಗೆದುಕೊಳ್ಳಲು ಅವಕಾಶವಿದೆಯಾ? ನೊಬೆಲ್ ಪ್ರತಿಷ್ಠಾನದ ನಿಯಮಾವಳಿ ಏನು ಹೇಳುತ್ತದೆ?
ಪದಕ ಮಾರಾಟವಾದರೂ ಪ್ರಶಸ್ತಿ ವಿಜೇತರ ಗುರುತು ಶಾಶ್ವತ!
ಬಜಗೋಳಿ ಸೊಸೈಟಿಯಲ್ಲಿ ಕಳವಿಗೆ ಯತ್ನ ಪ್ರಕರಣ: ಆರೋಪಿ ಸೆರೆ
ಕಾರ್ಕಳ, ಜ.18: ಬಜಗೋಳಿ ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ ನುಗ್ಗಿ ಕಳವಿಗೆ ಯತ್ನಿಸಿದ್ದ ಆರೋಪಿ ಯನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಟ್ಟೆ ದರ್ಖಾಸು ನಿವಾಸಿ ಸುರೇಶ ಕೊರಗ ಪೂಜಾರಿ(53) ಬಂಧಿತ ಆರೋಪಿ. ಈತ ಜ.16ರಂದು ಸೊಸೈಟಿ ಬೀಗ ಮುರಿದು ಒಳಗೆ ನುಗ್ಗೆ ಕಳ್ಳತನಕ್ಕೆ ಪ್ರಯತ್ನಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನಕ್ಕೆ ಪ್ರಯತ್ನಿಸಿದ ವ್ಯಕ್ತಿ ಗುರುತು ಪತ್ತೆಯಾಗಿತ್ತು. ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜ.17ರಂದು ಆರೋಪಿಯನ್ನು ಬಂಧಿಸಿದರು. ಆರೋಪಿಗೆ ನ್ಯಾಯಾ ಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ಮೇಲೆ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಪಡುಬಿದ್ರೆ, ಬೆಳ್ತಂಗಡಿ, ಉಡುಪಿ ನಗರ, ಗೋವಾ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಕಾರ್ಕಳ, ಜ.18: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಖಾಲಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮಂಗಳೂರು ಗಂಜಿಮಠ ನಿವಾಸಿ ಮನೋತೋಷ್ ಕಾಯಲ್(39) ಬಂಧಿತ ಆರೋಪಿ. ಈತ ಬೆಳಿಗ್ಗೆ ಬೇರೆ ಬೇರೆ ಪ್ರದೇಶಗಳಲ್ಲಿ ಸಂಚರಿಸಿ ತುಂಬಾ ದಿನಗಳಿಂದ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ, ಬಳಿಕ ರಾತ್ರಿ ಬೀಗ ಒಡೆದು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಮನೆಯಲ್ಲಿನ ಬ್ಯಾಟರಿಯನ್ನು ಕದ್ದುಕೊಂಡು ಹೋಗಿರುವುದಾಗಿ ದೂರಲಾಗಿತ್ತು. ಈ ಸಂಬಂಧ ಕಾರ್ಕಳ ಗ್ರಾಮಾಂತರ ಎಸ್ಸೈಗಳಾದ ಪ್ರಸನ್ನ ಎಂ.ಎಸ್., ಸುಂದರ, ಎಎಸ್ಸೈಗಳಾದ ಪ್ರಕಾಶ, ಸುಂದರ ಗೌಡ, ಸಿಬ್ಬಂದಿ ರುದ್ರೇಶ್, ಚಂದ್ರಶೇಖರ್, ಸಂತೋಷ್, ಮಾಂತೇಶ್ ಮತ್ತು ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಅವರನ್ನು ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಆತನನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಇಂದೋರ್ ನಲ್ಲಿ ಸೋತರೂ ಮನಗೆದ್ದ ವಿರಾಟ್ - ಹರ್ಷಿತ್; ಮೊದಲ ಬಾರಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಕಿವೀಸ್!
ವಿರಾಟ್ ಕೊಹ್ಲಿ ್ತಮತ್ತು ಹರ್ಷಿತ್ ರಾಣಾ ಅವರ ಪ್ರತಿಹೋರಾಟದ ಹೊರತಾಗಿಯೂ ದೊಡ್ಡ ಮೊತ್ತವನ್ನು ಬೆಂಬತ್ತುವ ಹಾದಿಯಲ್ಲಿ ವಿಫಲವಾದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 41 ರನ್ ಗಳ ಪರಾಭವ ಅನುಭವಿಸಿದೆ. ಈ ಮೂಲಕ ಕಿವೀಸ್ ಬಳಗ ಮೊದಲ ಬಾರಿಗೆ ಭಾರತದ ನೆಲದಲ್ಲಿ ಏಕದಿನ ಸರಣಿ ಜಯಿಸಿ ಇತಿಹಾಸ ನಿರ್ಮಿಸಿದೆ. 2024ರಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಭಾರತಕ್ಕೆ ಆಘಾತ ನೀಡಿದ್ದ ನ್ಯೂಜಿಲೆಂಡ್ ತಂಡ ಇದೀಗ ಮತ್ತೊಮ್ಮೆ ಉತ್ತಮ ಆಟ ಪ್ರದರ್ಶಿಸಿ 2-1 ಅಂತರದಿಂದ ಏಕದಿನ ಸರಣಿ ತನ್ನದಾಗಿಸಿಕೊಂಡಿಸಿದೆ. ಇಂದೋರ್ ನ ಹೋಲ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಭಾರತ ತಂಡ 46 ಓವರ್ ಗಳಲ್ಲಿ 296 ರನ್ ಗಳಷ್ಟೇ ಪೇರಿಸಲು ಶಕ್ತವಾಯಿತು. ನಿರಂತರ ಎರಡನೇ ಶತಕ ಗಳಿಸುವ ಮೂಲಕ ಅವರು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು. ರೋಹಿತ್ ಶರ್ಮ(11), ಶುಭಮನ್ ಗಿಲ್(23), ಶ್ರೇಯಸ್ ಅಯ್ಯರ್ (3), ಕೆಎಲ್ ರಾಹುಲ್(1), ರವೀಂದ್ರ ಜಡೇಜಾ(12) ಅವರು ಸಾಲಾಗಿ ವಿಫಲರಾದ ಹೊತ್ತಲ್ಲಿ ವಿರಾಟ್ ಕೊಹ್ಲಿ ಅವರು ಎರಡು ದೊಡ್ಡ ಜೊತೆಯಾಟ ಆಡುವ ಮೂಲಕ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ವಿರಾಟ್ ಕೊಹ್ಲಿ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರು 5ನೇ ವಿಕೆಟ್ ಗೆ 88 ರನ್ ಗಳ ಜೊತೆಯಾಟ ಆಡಿದರು. ಉತ್ತಮವಾಗಿ ಆಡುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ ಅವರು 57 ಎಸೆತಗಳಲ್ಲ ತಲಾ 2 ಬೌಂಡರಿ ಮತ್ತು ಸಿಕ್ಸರ್ ಗಳನ್ನೊಳಗೊಂಡ 53 ರನ್ ಗಳಿಸಿ ಔಟಾದರು. ಆ ಬಳಿಕ ವಿರಾಟ್ ಕೊಹ್ಲಿ ಅವರು ಹರ್ಷಿತ್ ರಾಣಾ ಅವರೊಂದಿಗೆ 7ನೇ ವಿಕೆಟ್ ಗೆ 99 ರನ್ ಜೊತೆಯಾಟ ಆಡಿದರು. 54ನೇ ಏಕದಿನ ಶತಕ ಗಳಿಸಿದ ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ಬೌಲರ್ ಗಳ ಚೆಂಡನ್ನು ಮೈದಾನದ ಮೂಲೆ ಮೂಲೆಗಟ್ಟಿದರು. ಹರ್ಷಿತ್ ಔಟಾಗುವುದರೊಂದಿಗೆ ಕಿವೀಸ್ ಮೇಲುಗೈ ಕೇವಲ 43 ಎಸೆತಗಳಿಂದ ತಲಾ 4 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಒಳಗೊಂಡ 52 ರನ್ ಬಾರಿಸಿದ ಹರ್ಷಿತ್ ರಾಣಾ ಅವರು ಫಾಕ್ಸ್ ಅವರ ಬೌಲಿಂಗ್ ನಲ್ಲಿ ಔಟ್ ಆಗುವುದರೊಂದಿಗೆ ನ್ಯೂಜಿಲೆಂಡ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಸ್ಟೈಕ್ ಅನ್ನು ಉಳಿಸಿಕೊಂಡು ಹೋರಾಟ ಮುಂದುವರಿಸಿದರೂ ಯಶಸ್ವಿಯಾಗಲಿಲ್. ಅಂತಿಮವಾಗಿ ಅವರು 108 ಎಸೆತಗಳಿಂದ 10 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದವು. ಅವರು 9ನೇಯವರಾಗಿ ಔಟಾದ ಬಳಿಕ ನ್ಯೂಜಿಲೆಂಡ್ ಬೌಲರ್ ಗಳಿಗೆ ಭಾರತದ ಇನ್ನಿಂಗ್ಸ್ ಗೆ ಸಮಾಪ್ತಿ ಹಾಡಲು ಹೆಚ್ಚು ಸಮಯ ಬೇಕಾಗಲಿಲ್ಲ. ನ್ಯೂಜಿಲೆಂಡ್ ಪರ ಝಕ್ ಫಾಕ್ಸ್ ಮತ್ತು ಕ್ರಿಸ್ಟನ್ ಕ್ಲಾರ್ಕ್ ತಲಾ 3 ವಿಕೆಟ್ ಪಡೆದರು. ಜೇಡನ್ ಲೆನಾಕ್ಸ್ 2 ಮತ್ತು ಕೇಲ್ ಜಾಮಿಸನ್ 58ಕ್ಕೆ 1 ವಿಕಟ್ ಗಳಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ತಂಡ ಮೊದಲ ಓವರ್ ನಲ್ಲಿ ಹೆನ್ರಿ ನಿಕೋಲ್ಸ್(0) ಅನ್ನು ಕಳೆದುಕೊಂಡರೆ, ಎರಡನೇ ಓವರ್ ನಲ್ಲೇ ಡೆವೊನ್ ಕಾನ್ವೆ(5) ಅವರೂ ಔಟಾದರು. ನಿಕೋಲ್ಸ್ ಅವರನ್ನು ಅರ್ಶದೀಪ್ ಸಿಂಗ್ ಅವರು ಕ್ಲೀನ್ ಬೌಲ್ಡ್ ಮಾಡಿದರೆ, ಕಾನ್ವೆಯನ್ನು ಹರ್ಶಿತ್ ರಾಣಾ ಅವರು ರೋಹಿತ್ ಶರ್ಮಾ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ವಿಲ್ ಯಂಗ್ ಮತ್ತು ಡೆರಿಲ್ ಮಿಚೆಲ್ ಅವರು ತಾಳ್ನೆಯಿಂದ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಈ ಹಂತದಲ್ಲಿ ಹರ್ಷಿತ್ ರಾಣಾ ಅವರೇ ನ್ಯೂಜಿಲೆಂಡ್ ಗೆ ಆಘಾತ ನೀಡಿದರು. ತಂಡದ ಮೊತ್ತ 58 ಆಗಿದ್ದಾಗ 41 ಎಸೆತಗಳಿಂದ 30 ರನ್ ಗಳಿಸಿದ್ದ ವಿಲ್ ಯಂಗ್ ಅವರ ವಿಕೆಟ್ ಪಡೆದರು. ಇದಾದ ಬಳಿಕ ಜೊತೆಯಾದ ಡೆರಿಲ್ ಮಿಚೆಲ್ ಮತ್ತು ಗ್ರೆನ್ ಫಿಲಿಪ್ಸ್ ಭಾರತದ ಬೌಲರ್ ಗಳನ್ನು ಗೋಳು ಹೊಯ್ದುಕೊಂಡರು. ಆಡಿದರು. ಡೆರಿಲ್ ಮಿಚೆಲ್ ಅವರು 131 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 137 ರನ್ ಗಳಿಸಿದರು. ಅವರಿಗೆ ಉತ್ತಮವಾಗಿ ಸಾಥ್ ನೀಡಿದ ಗ್ಲೆನ್ ಫಿಲಿಪ್ಸ್ 88 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 88 ರನ್ ಗಳಿಸಿದರು. ಅಂತಿಮ ಹಂತದಲ್ಲಿ ನಾಯಕ ಮಿಚೆಲ್ ಬ್ರೇಸ್ ವೆಲ್ ಅವರು 18 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರು. ಭಾರತದ ಪರ ಅರ್ಶದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರು ತಲಾ 3 ವಿಕೆಟ್ ಎಗರಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ ಅವರು ಉಳಿದೆರಡು ವಿಕೆಟ್ ಗಳನ್ನು ಹಂಚಿದರು. ಸಂಕ್ಷಿಪ್ತ ಸ್ಕೋರ್ ನ್ಯೂಜಿಲೆಂಡ್ ಪ್ರಥಮ ಇನ್ನಿಂಗ್ಸ್ 337/8, ಡೆರಿಲ್ ಮಿಚೆಲ್ 137(131), ಗ್ಲೆನ್ ಫಿಲಿಪ್ಸ್ 106(88), ವಿಲ್ ಯಂಗ್ 30(41), ಮಿಚೆಲ್ ಬ್ರೇಸ್ ವೆಲ್ ನಾಟೌಟ್ 28(18), ಅರ್ಶದೀಪ್ ಸಿಂಗ್ 63ಕ್ಕೆ 3, ಹರ್ಷಿತ್ ರಾಣಾ 84ಕ್ಕೆ 3, ಸಿರಾಜ್ 43ಕ್ಕೆ 1
ಶಿರೂರು ಪರ್ಯಾಯ ಮಹೋತ್ಸವ: ವೈಭವದ ಶೋಭಯಾತ್ರೆ
ಉಡುಪಿ, ಜ.18: ಶಿರೂರು ಮಠಾಧೀಶ ಶ್ರೀವೇದವರ್ಧನ ತೀರ್ಥ ಸ್ವಾಮೀಜಿಯ ಪ್ರಥಮ ಪರ್ಯಾಯೋತ್ಸವದ ಶೋಭಾಯಾತ್ರೆಯು ಗುರುವಾರ ಮುಂಜಾನೆ ವೈಭವಪೂರ್ಣವಾಗಿ ಜರಗಿತು. ನಗರದ ಜೋಡುಕಟ್ಟೆ ಬಳಿಕ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಶೋಭಾಯಾತ್ರೆಗೆ ಚಾಲನೆ ನೀಡಿದರು. ಮೆರವಣಿಗೆಯು ಜೋಡುಕಟ್ಟೆ, ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಮಿತ್ರ ಆಸ್ಪತ್ರೆ ರಸ್ತೆ, ತೆಂಕಪೇಟೆ ಮಾರ್ಗವಾಗಿ ಶ್ರೀಕೃಷ್ಣಮಠದವರೆಗೆ ಸಾಗಿಬಂತು. ಜಾನಪದ ಡೋಲು, ತಿರುವನಂತಪುರದ ಆನೆ, ತಟ್ಟೀರಾಯ, ಸೋಮ ಕಾಸುರ, ಮರಕಾಲು, ಚಿಲಿಪಿಲಿ ಗೊಂಬೆ, ಕಂಸವಧೆ, ಸೋಮನ ಕುಣಿತ, ಬ್ರೆಜಿಲ್ ಗೊಂಬೆ ಡ್ಯಾನ್ಸ್, ಮಾಯಾವಿ ಅಜಗರ ಸಂಹಾರ, ಬೃಹತ ಕೊಕ್ಕರೆಗಳು, ಪುರಿ ಜಗನ್ನಾಥ, ಪಾಂಡುರಂಗ ವಿಠಲ, ಭಜನಾ ತಂಡ, ವಾದಿರಾಜರು ಮತ್ತು ಮಟ್ಟುಗುಳ್ಳ, ಯಕ್ಷಗಾನ, ಬೇಡರ ವೇಷ - ಗಂಡು ಕಲೆ ಶಿರಶಿ, ಶ್ರೀಕೃಷ್ಣ ಕುಚೇಲ, ಕಂಸಾಳೆ, ವಸುದೇವಕೃಷ್ಣ, ವೀರಗಾಸೆ, ಪಟ ಕುಣಿತ, ನರಸಿಂಹ ಅವತಾರ, ಹುಲಿವೇಷ, ಗೋವರ್ಧನಗಿರಿ, ಪೂಜಾ ಕುಣಿತ, ದೋಲ್ ತಾಶಾ, ಮಹಾಮಾಯ ಪುಣೆ, ವರಾಹ ಅವತಾರ, ಕರಗ ಕೋಲಾಟ, ದಾರಿಕಾಸುರ ಸಂಹಾರ, ಹೋಳಿ ಕುಣಿತ, ವಿಶ್ವರೂಪ ದರ್ಶನ, ನಾಗಸ್ವರ, ಸ್ಯಾಕ್ಸೋಫೋನ್, ನಾಗಸ್ವರ ಸೇರಿದಂತೆ ವಿವಿಧ ಟ್ಯಾಬ್ಲೋಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಮೊದಲಿಗೆ ಶಿರೂರು ಮಠಾಧೀಶ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಹೊದರೆ, ನಂತರ ಬಂದ ಕೃಷ್ಣಾಪುರ ಮಠಾಧೀಶರು, ಪಲಿಮಾರು ಮಠಾಧೀಶರು, ಪೇಜಾವರ ಮಠಾಧೀಶರು, ಕಾಣಿಯೂರು ಮಠಾಧೀಶರು, ಸೋದೆ ಮಠಾಧೀಶರು, ಅದಮಾರು ಮಠಾಧೀಶರು, ಪಲಿಮಾರು ಕಿರಿಯ ಯತಿಗಳು ಅಲಂಕೃತ ವಾಹನದಲ್ಲಿರಿಸಲಾದ ಪಲ್ಲಕಿಯಲ್ಲಿ ಕುಳಿತು ಸಾಗಿಬಂದರು. ಈ ಬಾರಿ ಮೆರವಣಿಗೆ ಯಲ್ಲಿ 90 ಸ್ತಬ್ಧ ಚಿತ್ರಗಳು ಇದ್ದವು. ಮೆರವಣಿಗೆ ಆರಂಭಕ್ಕೆ ಮೊದಲೇ ದಾರಿಯುದ್ದಕ್ಕೂ ಸಹಸ್ರಾರು ಮಂದಿ ಭಕ್ತರು ಕಾದು ಕುಳಿತಿದ್ದರು. ಅಭೂತ ಪೂರ್ವ ಈ ಮೆರವಣಿಗೆಯನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಪರ್ಯಾಯ ಮಹೋತ್ಸವ ಸಮಿತಿಯ ಅಧ್ಯಕ್ಷ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್, ಜಯಕರ ಶೆಟ್ಟಿ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು. ಕಿನ್ನಿಮೂಲ್ಕಿ, ಸರ್ವಿಸ್ ಬಸ್ ನಿಲ್ದಾಣ, ಹಳೆ ಕೆಎಸ್ಆರ್ಟಿಸಿ ಬಸ್ ತಂಗುದಾಣ, ತ್ರಿವೇಣಿ ಸರ್ಕಲ್, ಗಿರಿಜಾ ಸರ್ಜಿ ಕಲ್ ಬಳಿ, ಪುರಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಸಾಗುತ್ತಿದ್ದಂತೆ ಹಾಗೂ ನಗರ ದಿಂದ ಜನ ಖಾಲಿಯಾಗುತ್ತಿ ದ್ದಂತೆ ಉಡುಪಿ ನಗರಸಭೆಯಿಂದ ನಿಯೋಜಿಸಲಾದ ನೂರಾರು ಮಂದಿ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಶೋಭಾಯಾತ್ರೆಗೆ ಚಾಲನೆ: ಡಿಸಿ ಸ್ಪಷ್ಟನೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬೃಹತ್ ಭಾಗವ ಧ್ವಜವನ್ನು ಹಿಡಿದು ಶೋಭಾಯಾತ್ರೆಗೆ ಚಾಲನೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ. ‘ಶಿರೂರು ಪರ್ಯಾಯೋತ್ಸವದ ಅಂಗವಾಗಿ ಶೋಭಾಯಾತ್ರೆ ಕಾರ್ಯ ಕ್ರಮಕ್ಕೆ ಉಡುಪಿ ನಗರಸಭೆಯ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಚಾಲನೆಯನ್ನು ನೀಡಿದ್ದೇನೆ. ಅದೇ ರೀತಿ ನೂತನ ಯತಿಗಳಿಗೆ ಪೌರ ಸನ್ಮಾನ ಹಾಗೂ ಸರ್ವಜ್ಞ ಪೀಠ ಏರಿದ ನಂತರ ನಡೆಯುವ ದರ್ಬಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಹೊರತು ಯಾವುದೇ ರಾಜಕೀಯ ಪ್ರೇರಿತ ಭಾಗವಹಿಸುವಿಕೆ ಆಗಿರುವುದಿಲ್ಲ ಎಂಬ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತರಬಯಸುತ್ತೇನೆ’ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಅಬಕಾರಿ ಇಲಾಖೆ ಲಂಚ ಹಂಚಿಕೆ ಆಡಿಯೋ ಬಿಡುಗಡೆ; ಸಚಿವ ಆರ್ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ!
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಅವರ ಪುತ್ರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್-7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಆರೋಪಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ರಾಜಕೀಯ ಕ್ರೂರ ಸುಳ್ಳುಗಳನ್ನು ರಂಗಭೂಮಿ ಮಣಿಸಲಿ: ಚಿಂತಕ ಫಕೀರ್ ಮುಹಮ್ಮದ್ ಕಟಪಾಡಿ
ಕರಾವಳಿಯ ನಿರ್ದಿಗಂತ ಉದ್ಘಾಟಿಸಿದ ಸಾಹಿತಿ
ಹೆಬ್ರಿ: ಅಳುಪ ನಾಗದೇವರಸನ ಶಾಸನದ ಅಧ್ಯಯನ
ಉಡುಪಿ: ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಪಂ ವ್ಯಾಪ್ತಿಯ ಅಲ್ಬಾಡಿ ಪ್ರದೇಶದ ತೊನ್ನಾಸೆಯಲ್ಲಿ ಕೀರ್ತಿ ಎಂಬವರ ಗದ್ದೆಯಲ್ಲಿ ಪತ್ತೆಯಾಗಿದ್ದ ಶಾಸನದ ಅಧ್ಯಯನವನ್ನು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಹಾಗೂ ಇತಿಹಾಸಜ್ಞ ಡಾ.ಬಿ.ಜಗದೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕರಾದ ಮಹೇಶ್ ಶೆಟ್ಟಿ ಆರ್ಡಿ ಮಾಡಿದ್ದಾರೆ. ಕಣಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯ 26ಸಾಲುಗಳನ್ನು ಹೊಂದಿದ್ದು, ಮಧ್ಯಯು ಗೀನ ಆಳುಪ ಮನೆತನಕ್ಕೆ ಸೇರಿರುತ್ತದೆ. ಶಾಸನದಲ್ಲಿ ಆಳುಪ ದೊರೆ ನಾಗದೇವರಸನನ್ನು ‘ಶ್ರೀಮತು ಪಾಂಡ್ಯ ಚಕ್ರವರ್ತಿ ಅರಿರಾಯ ಬಸವ ಸಂಕರ’ ಎಂದು ಕರೆದಿದ್ದು, 1234ನೇ ಪರಿಧಾವಿ ಸಂವತ್ಸರದ ವೃಶ್ಚಿಕ ಮಾಸ 3ನೆಯ ಮಂಗಳವಾರ (ಸಾಮಾನ್ಯ ವರ್ಷ ನವೆಂಬರ್14, 1312)ದ ಕಾಲಮಾನದ್ದಾಗಿರುತ್ತದೆ. ಈ ಸಂದರ್ಭದಲ್ಲಿ ಆಳುಪರ ರಾಜಧಾನಿಯಾದ ಬಾರಹಕಂನ್ಯಾಪುರ (ಪ್ರಸ್ತುತ ಬಾರಕೂರು) ಅರಮನೆಯ ಸಂನಿಧಾನ ದಲ್ಲಿ ಮಹಾಪ್ರಧಾನ ದೆವಣ ದಂಣಾಯಕ, ಸಮಸ್ತ ಪ್ರಧಾನರೂ ಮಾತ್ರವಲ್ಲದೆ ನಾಗದೇವರಸ, ಸೋಯಿದೇವರಸ ಹಾಗೂ ಚಿಕ್ಕಾಯಿತಾಯಿ ಈ ಮೂವರು ತಮ್ಮೊಳಗೆ ಏಕಸ್ತರಾಗಿ ಸೋಮಗ್ರಹಣ (ಚಂದ್ರಗ್ರಹಣ) ದಂದು ಬೇಳುಂಜೆಯ ಹಿರಿಯ ಹರಿಹರನ ಮಗನಾದ ವಿಷ್ಣುವಿಗೆ ತೊಡುಸಿ (ಪ್ರಸ್ತುತ ತೊನ್ನಾಸೆ)ಯ ಒಳಗೆ ಮಾಡಿದ ಭೂದಾನದ ವಿಚಾರವನ್ನು ತಿಳಿಸುತ್ತದೆ. ಹಾಗೆಯೇ ದಾನ ಮಾಡಿದ ಭೂಮಿಗೆ ಮರಿಯಾದೆಯಲ್ಲಿ ನಡೆಯಬೇಕೆಂದು ಮತ್ತು ಶ್ರೀಕೋಟೇಶ್ವರ ದೇವರಿಗೆ ಕಂಚಿನ ದೀಪಮಾಲೆ ಹಾಗೂ ನಂದಾವೇಳೆಗೆ ನವರಂಗ ಮಾಲೆಯನ್ನು ಕೊಟ್ಟು ಬರಬೇಕೆಂದು ಕಲ್ಬರಹವು ದಾಖಲಿಸು ತ್ತದೆ. ಶಾಸನದ ಕೊನೆಯ ಭಾಗದಲ್ಲಿ ಶಾಪಾಶಯ ವಾಕ್ಯವಿದ್ದು, ಅಜರಾಮರವಾಗಿ ಹಾಕಿದ ಈ ಕಲ್ಬರಹವನ್ನು ಯಾರಾದರೂ ಹಾಳುಗೆಡವಿದರೇ ಬ್ರಾಹ್ಮಣ ಹತ್ಯೆ, ನರ್ಮದಾ ವಾರಣಾಸಿಯಲ್ಲಿ ಕವಿಲೆಯನ್ನು ಅಂದರೆ ಪವಿತ್ರವಾದ ಗೋವನ್ನು ವಧಿಸಿದ ಪಾಪ ದಕ್ಕುವುದಲ್ಲದೇ ಕೋಟೀಶ್ವರ ದೇವರನ್ನು ಕಿತ್ತ ದೋಷವು ತಟ್ಟುವುದೆಂದು ಹೇಳಲಾಗಿದೆ. ಈ ಕಲ್ಬರಹದ ಬರಹ ಸಿರಪತಿ (ಶ್ರೀಪತಿ) ಸೇನಭೋವ ಎಂಬಾತನದ್ದು ಎಂಬುದು ಇಲ್ಲಿ ತಿಳಿದುಬರುತ್ತದೆ. ಕಲ್ಬರದ ಮೇಲಿನ ಹಂತದಲ್ಲಿ ಶಾಸನ ಶಿಲ್ಪಗಳಿದ್ದು, ಮುಖ್ಯವಾಗಿ ಶಾಸನ ಉಲ್ಲೇಖಿತ ಕೋಟಿಶ್ವರ ದೇವರಾದ ಕೈಲಾಸವಾಸಿ ಪರಶಿವನನ್ನು ಲಿಂಗರೂಪಿಯಾಗಿ ದೀಪದಿಂದ ಕಂಗೊಳಿಸುತ್ತಿ ರುವಂತೆ ತೋರಿಸಲಾಗಿದೆ. ಕರುವಿಗೆ ಹಾಲುಣಿಸುತ್ತಿ ರುವ ಗೋವಿನ ಕೆತ್ತನೆಯಿದ್ದು, ದಾನದ ಪ್ರತೀಕವಾಗಿ ಅಥವಾ ದಾನ ನೀಡಿರುವ ಈ ಶಾಸನವನ್ನು ಹಾಳುಗೆಡವಿದರೆ ಇಂತಹ ಪವಿತ್ರವಾದ ಕವಿಲೆಯನ್ನು ನರ್ಮದಾ ಮತ್ತು ವಾರಣಾಸಿಯಲ್ಲಿ ವಧಿಸಿದ ದೋಷ ದಕ್ಕುತ್ತದೆ ಎಂಬುದನ್ನು ಇಲ್ಲಿ ಸಾಂಕೇತಿಕವಾಗಿ ತೋರಿಸಿರಬಹುದು. ಮುಖ್ಯವಾಗಿ ಈ ಕಲ್ಬರಹವು ಬೇಳುಂಜಿಯ ಹಿರಿಯ ಹರಿಹರನ ಮಗ ವಿಷ್ಣು ಎಂಬ ವ್ಯಕ್ತಿಗೆ ನೀಡಿದ ಭೂದಾನವನ್ನು ಉಲ್ಲೇಖಿಸಿರುವುದರಿಂದ ಈತನು ವಸ್ತ್ರವನ್ನು ಧರಿಸಿ, ಕೈಯಲ್ಲಿ ಖಡ್ಗವನ್ನು ಹಿಡಿದಿರುವಂತೆ ತೋರಿಸಲಾಗಿದೆ ಎಂದು ಊಹಿಸಬಹುದಾಗಿದೆ. ಕೊನೆಯದಾಗಿ ಈ ಶಾಸನ ಅಜರಾಮರವಾಗಿ ಉಳಿಯಬೇಕೆಂದು ಚಂದ್ರಾರ್ಕ್ಕರ (ಸೂರ್ಯ-ಚಂದ್ರ) ಕೆತ್ತನೆ ಮಾಡಲಾಗಿದೆ. ಶಾಸನದ ಮಹತ್ವ: ಪ್ರಸ್ತುತ ಅಧ್ಯಯನಕ್ಕೆ ಒಳಪಡಿಸಿದ ಈ ಶಾಸನವು ಮಧ್ಯಯುಗೀನ ಆಳುಪರ ಇತಿಹಾಸ ದಲ್ಲಿಯೇ ಕಾಲಮಾನದ ದೃಷ್ಟಿಯಿಂದ ಬಹು ಪ್ರಮುಖವಾಗಿದೆ. ಏಕೆಂದರೆ ಆಳುಪ ನಾಗದೇವರಸನ ಆಡಳಿತ ಅವಧಿಯು ಸಾಮಾನ್ಯ ವರ್ಷ 1292-1300 ಎಂದು ಈ ಮೊದಲು ದಾಖಲಾಗಿದ್ದು, ಪ್ರಸ್ತುತ ಬೆಳಕಿಗೆ ಬಂದಿರುವ ಕಲ್ಬರಹವು ಈತನು ಸಾ.ಶ.ವ 1292ರಿಂದ 1312ರವರೆಗೂ ಅಥವಾ 1312ರಲ್ಲಿಯೂ ಆಡಳಿತ ನಡೆಸಿದ್ದ ನೆಂದು ದೃಢಪಡಿಸುತ್ತದೆ. ಬಹುಮುಖ್ಯವಾಗಿ ಈ ಶಾಸನವು ಇದುವರೆಗೆ ತುಳುನಾಡಿನಲ್ಲಿ ದೊರಕಿರುವ ಚಿಕ್ಕಾಯಿತಾಯಿಯ ಉಲ್ಲೇಖವಿರುವ ಪ್ರಥಮ ಶಾಸನವಾಗಿದೆ ಎಂದು ಹೇಳಬಹುದು. ಈಕೆಯ ಆಡಳಿತ ಕಾಲವನ್ನು ಸಾ.ಶ.ವ 1333-48 ರವರೆಗೆ ಗುರುತಿಸಿದ್ದು, ಪ್ರಸ್ತುತ ಶಾಸನವು 1312ರ ಕಾಲಮಾನಕ್ಕೆ ಸೇರಿರುವುದರಿಂದ ಈಕೆ ಈ ಕಾಲದಲ್ಲಿಯೇ ರಾಜಕೀಯ ಪ್ರೌಢಿಮೆಯನ್ನು ಹೊಂದಿರಬಹುದೆಂದು ಊಹಿಸಬಹುದಾಗಿದೆ. ಈ ಕಲ್ಬರಹ ಓದಿಗೆ ಕುವೆಂಪು ವಿಶ್ವವಿದ್ಯಾಲಯಕೆಳದಿ ವಸ್ತುಸಂಗ್ರಹಾಲಯ ಇಲ್ಲಿನ ಕ್ಯುರೇಟರ್ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಸಹಕಾರ ನೀಡಿದ್ದರು. ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಆಶ್ಲೇಷ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿದ್ದರು ಎಂದು ಪ್ರಕಟಣೆ ತಿಳಿಸಿದೆ.
India vs New Zealand 3rd ODI: ಆಕರ್ಷಕ ಶತಕ ಬಾರಿಸಿದ ವಿರಾಟ್ ಕೊಹ್ಲಿ
ಏಕದಿನ ಕ್ರಿಕೆಟ್ನಲ್ಲಿ 54 ಶತಕಗಳ ದಾಖಲೆ
ದಾವೋಸ್ಗೆ ಪ್ರಯಾಣ ಬೆಳೆಸಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗ
ಬೆಂಗಳೂರು : ಸ್ವಿಟ್ಜರ್ಲೆಂಡ್ನ ದಾವೋಸ್-ಕ್ಲೋಸ್ಟರ್ಸ್ನಲ್ಲಿ ಇದೇ 19ರಿಂದ 23ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಲು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ರವಿವಾರ ಪ್ರಯಾಣ ಬೆಳೆಸಿದೆ. ಈ ಭೇಟಿ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರು, ಹೂಡಿಕೆದಾರರು ತ್ವರಿತವಾಗಿ ನಿರ್ಧಾರಕ್ಕೆ ಬರುವುದಕ್ಕೆ ನೆರವಾಗಲು ಹಾಗೂ ಯೋಜನೆಗಳನ್ನು ಶೀಘ್ರವಾಗಿ ಕಾರ್ಯಾರಂಭ ಮಾಡಲು ಉತ್ತೇಜನ ನೀಡುವ ಸ್ಪಷ್ಟ ಉದ್ದೇಶದಿಂದ ನಾಲ್ಕು ದಿನಗಳ ಕಾಲ 45ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳು, ದುಂಡುಮೇಜಿನ ಸಮಾಲೋಚನೆಗಳಲ್ಲಿ ಭಾಗವಹಿಸಲಿದ್ದಾರೆ. ತಯಾರಿಕೆ, ನವೀಕರಿಸಬಹುದಾದ ಇಂಧನ ಮೂಲಗಳು, ಎಲೆಕ್ಟ್ರಾನಿಕ್ಸ್/ಇಎಸ್ಡಿಎಂ, ಡೇಟಾ ಸೆಂಟರ್ಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಸ್ಥಾಪನೆ ಸಂಬಂಧ ಜಾಗತಿಕ ಹೂಡಿಕೆದಾರರು ಹಾಗೂ ಉದ್ಯಮ ದಿಗ್ಗಜರ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ. ಬಹುರಾಷ್ಟ್ರೀಯ ಪ್ರಮುಖ ಕಂಪನಿಗಳಾದ ಅಮೆಜಾನ್ ವೆಬ್ ಸರ್ವೀಸಸ್, ಲೆನೊವೊ, ವಾಸ್ಟ್ ಸ್ಪೇಸ್, ಕೋಕಾ-ಕೋಲಾ, ಫಿಲಿಪ್ ಮಾರಿಸ್, ಇಂಪೀರಿಯಲ್ ಕಾಲೇಜ್ ಲಂಡನ್, ಸಿಂಗಪುರ ಆರ್ಥಿಕ ಅಭಿವೃದ್ಧಿ ಮಂಡಳಿ ಜೊತೆ ರಾಜ್ಯದ ನಿಯೋಗವು ಮಾತುಕತೆ ನಡೆಸಲಿದೆ. ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆಗಳ ಸ್ಥಾಪನೆ-ವಿಸ್ತರಣೆಗೆ ರಾಜ್ಯದಲ್ಲಿ ಇರುವ ವಿಪುಲ ಅವಕಾಶಗಳು ಹಾಗೂ ಸೌಲಭ್ಯಗಳನ್ನು ಜಾಗತಿಕ ಹೂಡಿಕೆದಾರರಿಗೆ ನಿಯೋಗವು ಮನದಟ್ಟು ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ. ಹೂಡಿಕೆ ನಿರ್ಧಾರಗಳನ್ನು ಅನುಷ್ಠಾನಕ್ಕೆ ಪರಿವರ್ತಿಸುವುದು, ಕೈಗಾರಿಕೆಗಳ ಸ್ಥಾಪನೆಗೆ ಸನ್ನದ್ಧ ಸ್ಥಿತಿಯಲ್ಲಿ ಇರುವ ಭೂಮಿ, ಶಾಸನಬದ್ಧ ಅನುಮೋದನೆಗಳು, ಮೂಲಸೌಕರ್ಯಗಳ ಲಭ್ಯತೆ, ವಿವಿಧ ವಲಯಗಳ ಅಗತ್ಯ ಈಡೇರಿಸುವ ನಿರ್ದಿಷ್ಟ ಮೂಲಸೌಕರ್ಯಗಳು, ಪೂರೈಕೆ ಸರಪಳಿ ಸಂಪರ್ಕಗಳು, ಪರಿಣತ ಮಾನವ ಸಂಪನ್ಮೂಲದ ಲಭ್ಯತೆ ಹಾಗೂ ಉತ್ತೇಜನಗಳ ಬಗ್ಗೆ ಚರ್ಚೆ ಕೇಂದ್ರೀಕೃತಗೊಂಡಿರಲಿದೆ. ವಾಸ್ತವ ಹೂಡಿಕೆಗಳು ಮತ್ತು ಅದರ ಪರಿವರ್ತನೆಗೆ ರಾಜ್ಯ ಸರ್ಕಾರವು ಆದ್ಯತೆ ನೀಡಲಿದೆ ಎಂದು ಅವರು ವಿವರಿಸಿದ್ದಾರೆ. ‘ಕರ್ನಾಟಕದ ಪ್ರವರ್ಧಮಾನಕ್ಕೆ ಬರುತ್ತಿರುವ ಕೈಗಾರಿಕಾ ಅನುಕೂಲತೆಗಳಿಗೆ’ ಸಂಬಂಧಿಸಿದಂತೆ ಜಾಗತಿಕ ಹೂಡಿಕೆದಾರರನ್ನು ರಾಜ್ಯದತ್ತ ಆಕರ್ಷಿಸಲು ಪ್ರತ್ಯೇಕ ಅಧಿವೇಶನ ಆಯೋಜಿಸಲಾಗುವುದು. ಹೂಡಿಕೆಗೆ ಯೋಗ್ಯವಾಗಿರುವ ಅವಕಾಶಗಳು, ಕೈಗಾರಿಕೆಗಳನ್ನು ತ್ವರಿತವಾಗಿ ಕಾರ್ಯಾರಂಭ ಮಾಡಲು ನೆರವಾಗಲಿರುವ ರಾಜ್ಯದ ಸಾಮಥ್ರ್ಯದ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲಾಗುವುದು. ಜಾಗತಿಕ ಹೂಡಿಕೆದಾರರ ಪಾಲಿಗೆ ಕರ್ನಾಟಕವು ಅನುಷ್ಠಾನ ಕೇಂದ್ರಿತ ಗಮ್ಯಸ್ಥಾನ ಆಗಿರುವುದನ್ನೂ ಇದು ಮನದಟ್ಟು ಮಾಡಿಕೊಡಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಬಿಡಿಎ ಆಯುಕ್ತ ಮಣಿವಣ್ಣನ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ನಿಯೋಗದಲ್ಲಿ ತೆರಳಿದರು.
ದುಡಿಯುವ ಮನಸ್ಸುಗಳಿಗೆ ಸ್ಫೂರ್ತಿ ಈ ಬೆಂಗಳೂರು ಮಹಿಳೆ - ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ. ದುಡಿಯುತ್ತಿರುವ ಛಲಗಾತಿ
ಬೆಂಗಳೂರಿನಲ್ಲಿ ಮಹಿಳಾ ಆಟೋ ಚಾಲಕಿಯೊಬ್ಬರ ಅನುಭವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ನಮ್ಮ ಯಾತ್ರೆ'ಯಿಂದ ತರಬೇತಿ ಪಡೆದು, ಸಾಲ ಪಡೆದು ಎಲೆಕ್ಟ್ರಿಕ್ ಆಟೋ ಖರೀದಿಸಿ, ತಿಂಗಳಿಗೆ 45,000 ರೂ. ಸಂಪಾದಿಸುತ್ತಿರುವ ಇವರ ಸ್ವಾವಲಂಬನೆ ಮೆಚ್ಚುಗೆಗೆ ಪಾತ್ರವಾಗಿದೆ. ಸಾರ್ವಜನಿಕರ ಬೆಂಬಲ ಹಾಗೂ ಯುವತಿಯರೊಂದಿಗೆ ಮಾತನಾಡುವುದು ಇವರಿಗೆ ಸಂತಸ ನೀಡಿದೆ.
ಲಂಚಕ್ಕೆ ಬೇಡಿಕೆಯಿಟ್ಟ ಆರೋಪ | ಅಬಕಾರಿ ಉಪ ಆಯುಕ್ತ ಸಹಿತ ಮೂವರಿಗೆ ನ್ಯಾಯಾಂಗ ಬಂಧನ
ಬೆಂಗಳೂರು : ಹೋಟೆಲ್ ಮತ್ತು ವಸತಿ ಗೃಹಗಳಿಗೆ ಮದ್ಯ ಮಾರಾಟ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಅಬಕಾರಿ ಇಲಾಖೆಯ ಉಪ ಆಯುಕ್ತ, ಪೊಲೀಸ್ ಅಧೀಕ್ಷಕ ಸೇರಿದಂತೆ ಮೂವರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅಬಕಾರಿ ಡಿಸಿ ಜಗದೀಶ್, ಎಸ್ಪಿ ತಮ್ಮಣ್ಣ ಮತ್ತು ಕಾನ್ಸ್ಟೇಬಲ್ ಲಕ್ಕಪ್ಪ ಗಣಿಗೆ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆಹಾಕಿದ ಲೋಕಾಯುಕ್ತ ಪೊಲೀಸರು, ಜ.17ರ ತಡರಾತ್ರಿಯವರೆಗೂ ಸುದೀರ್ಘ ವಿಚಾರಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಕರ್ನಾಟಕದಲ್ಲಿ ಹೋಟೆಲ್ಗಳು ಮತ್ತು ವಸತಿ ಗೃಹಗಳು ತಮ್ಮ ಗ್ರಾಹಕರಿಗೆ ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆಯಿಂದ ಪಡೆಯಬೇಕಾದ ಕಡ್ಡಾಯ ಪರವಾನಗಿಯನ್ನು ಸಿಎಲ್-7 ಲೈಸೆನ್ಸ್ ಎನ್ನಲಾಗುತ್ತದೆ. ಈ ಪರವಾನಗಿ ಪಡೆಯಲು ಅಧಿಕಾರಿಗಳು ಭಾರಿ ಮೊತ್ತದ ಲಂಚದ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದೆ. ಲೋಕಾಯುಕ್ತರಿಂದ ಅಧಿಕೃತ ವರದಿ ಬಂದ ತಕ್ಷಣ, ಬಂಧಿತ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲು ಅಬಕಾರಿ ಆಯುಕ್ತರು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿವರಿಂದ ಆಂತರಿಕ ತನಿಖೆಗೆ ಸೂಚನೆ: ಈ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಬಕಾರಿ ಸಚಿವರು, ಇಡೀ ಪ್ರಕರಣದ ಕುರಿತು ಆಂತರಿಕ ತನಿಖೆ ನಡೆಸುವಂತೆ ಇಲಾಖೆಯ ಅಧಿಕಾರಿ ವೆಂಕಟೇಶ್ ಅವರಿಗೆ ಸೂಚಿಸಿದ್ದಾರೆ. ಪರವಾನಗಿ ಪ್ರಕ್ರಿಯೆಯನ್ನು ಈಗಾಗಲೇ ಆನ್ಲೈನ್ ಮಾಡಲಾಗಿದ್ದು, ಯಾರನ್ನೂ ಭೇಟಿ ಮಾಡುವ ಅಗತ್ಯವಿಲ್ಲ ಎಂಬುದು ಇಲಾಖೆಯ ವಾದ. ಆದರೂ, ಅಕ್ರಮ ನಡೆದಿರುವುದು ಹೇಗೆ ಎಂಬ ಬಗ್ಗೆ ವರದಿ ಕೇಳಲಾಗಿದೆ.
ಜೋಕಟ್ಟೆ| ಸಮಸ್ತ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಸಮಸ್ತ ಸಮ್ಮೇಳನ
ಮಂಗಳೂರು: ಮಂಗಳೂರು ವೆಸ್ಟ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಸಮಸ್ತ ಮದ್ರಸ ಮ್ಯಾನೇಜ್ ಮೆಂಟ್ನ ಜಂಟಿ ಆಶ್ರಯದಲ್ಲಿ ಸಮಸ್ತ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಸಮಸ್ತ ಸಮ್ಮೇಳನವು ಜೋಕಟ್ಟೆ ಹೊಸ ಮಸೀದಿ ವಠಾರದಲ್ಲಿ ರವಿವಾರ ಮಗ್ರಿಬ್ ನಮಾಝಿನ ಬಳಿಕ ನಡೆಯಿತು. ಸಮಾರಂಭವನ್ನು ದ.ಕ.ಜಿಲ್ಲೆಯ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಉದ್ಘಾಟಿಸಿದರು. ಜೋಕಟ್ಟೆ ಹಳೆ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಯಿ ದುಆ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವೈಟ್ ಸ್ಪೋನ್ ಮಾಲಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಎಂ.ಶರೀಫ್ ಹಾಜಿ ವಹಿಸಿದ್ದರು. ಕೇರಳ ಕಣ್ಣೂರಿನ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಭಾಷಣಗೈದರು. ಸ್ವಾಗತ ಸಮಿತಿಯ ಕನ್ವೀನರ್ ಪಿ.ಎಂ. ಅಬ್ದುಲ್ಲಾಹಿ ನಈಮಿ ಅಲ್ ಮುರ್ಶಿದಿ ಸ್ವಾಗತ ಭಾಷಣಗೈದರು. ಮಂಗಳೂರು ವೆಸ್ಟ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಫಝಲ್ ರಹ್ಮಾನ್ ನಿಝಾಮಿ ಅಲ್ ಫಾರೂಕಿ ಪ್ರಾಸ್ತಾವಿಕ ಭಾಷಣ ಮಾಡಿದರು. ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ, ಅಲ್ ಮುಝೈನ್ ಮಾಲಕ ಹಾಜಿ ಬಿ.ಎಂ. ಝಕರಿಯಾ ಜೋಕಟ್ಟೆ ಹಾಗೂ ವೈಟ್ ಸ್ಪೋನ್ ಮಾಲಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಎಂ.ಶರೀಫ್ ಹಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೋಕಟ್ಟೆ ಹೊಸ ಜುಮಾ ಮಸೀದಿಯ ಮುದರ್ರಿಸ್ ಇ.ಎಂ ಅಬ್ದುರ್ರಹ್ಮಾನ್ ದಾರಿಮಿ, ಜೋಕಟ್ಟೆ ಈದ್ಗಾ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಶರೀಫ್ ಹನೀಫಿ, ದ.ಕ. ಜಿಲ್ಲಾ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಸುದ್ದಿನ್ ದಾರಿಮಿ, ಎಸ್ಕೆಐಎಂವಿಬಿ ಮುಫತ್ತಶ್ ಹನೀಫ್ ಮುಸ್ಲಿಯಾರ್, ಎಸ್ಕೆಐಎಂವಿಬಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ, ಬೆಂಗರೆ ಹೆಡ್ ಜುಮಾ ಮಸೀದಿಯ ಖತೀಬ್ ಎಂ.ಐ. ಮುಹಮ್ಮದ್ ಅಶ್ರಫ್ ಫೈಝಿ, ತೋಟ ಬೆಂಗರೆ ಜುಮಾ ಮಸೀದಿಯ ಖತೀಬ್ ಅನೀಸ್ ಫೈಝಿ, ತಣ್ಣೀರು ಬಾವಿ ಜುಮಾ ಮಸೀದಿಯ ಖತೀಬ್ ಅಬ್ದುಲ್ ಸತ್ತಾರ್ ಫೈಝಿ, ಬೆಂಗರೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅನ್ಸಾರ್ ಇರ್ಫಾನಿ, ಬೆಂಗರೆ ಖಿಲ್ರಿಯಾ ಜುಮಾ ಮಸೀದಿಯ ಖತೀಬ್ ನಾಸಿರ್ ಕೌಸರಿ ಮೊದಲಾದವರು ಅನುಗ್ರಗ ಭಾಷಣಗೈದರು. ಸಮಾರಂಭದಲ್ಲಿ ಜೋಕಟ್ಟೆ ಹಳೆ ಜುಮಾ ಮದೀದಿಯ ಅಧ್ಯಕ್ಷ ಅಬ್ದುಲ್ ರಶೀದ್ ಕೊಪ್ಪ, ಕೋಶಾಧಿಕಾರಿ ಒ.ಎಂ. ಅಬ್ದುಲ್ ಕಾದರ್, ಹೊಸ ಜುಮಾ ಮಸೀದಿಯ ಕೋಶಾಧಿಕಾರಿ ಹಾಜಿ ಕೆ.ಕೆ. ಅಬ್ದುಲ್ ಕಾದರ್ ಎಚ್ಪಿಸಿಎಲ್ ಕಾಲನಿ, ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಮರುಲ್ ಫಾರೂಕ್, ಮಂಗಳೂರು ಮನಪಾ ನಿಕಟಪೂರ್ವ ಸದಸ್ಯ ಮುನೀಬ್ ಬೆಂಗರೆ, ದ.ಕ. ಜಿಲ್ಲಾ ಸಮಸ್ತ ಮದರಸ ಮೇನೇಜ್ ಮೆಂಟ್ ಅಧ್ಯಕ್ಷ ಹಾಜಿ ಎಂ.ಎಚ್. ಮೊದಿನಬ್ಬ, ಮಂಗಳೂರು ವೆಸ್ಟ್ ರೇಂಜ್ ಸಮಸ್ತ ಮದರಸ ಮೆನೆಜೈಂಟ್ ಅಧ್ಯಕ್ಷ ಬಿಲಾಲ್ ಮೊಯ್ದಿನ್ ಬೆಂಗರೆ, ಜೋಕಟ್ಟೆ ಅಂಜುಮನ್ ಕುವ್ವತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ಹಾಜಿ ಸುಲೈಮಾನ್ ಬೊಟ್ಟು, ತಣ್ಣೀರು ಬಾವಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಾಝಿಕ್, ತೋಟ ಬೆಂಗರೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರವೂಫ್, ಕಳವಾರು ಜುಮಾ ಮಸೀದಿಯ ಅಧ್ಯಕ್ಷ ಬಿ. ಆದಂ, ಉದ್ಯಮಿ ಹಾಜಿ ಮುಹಮ್ಮದ್ ಜತ್ತಬೆಟ್ಟು ಕೃಷ್ಣಾಪುರ, ಮಾಶಿತಾ ಹುಸೈನ್ ಹಾಜಿ, ಆಲಿ ಹಾಜಿ, ಮಜೀದ್ ಹಾಜಿ, ಫಕೀರಬ್ಬ ಮಾಸ್ಟರ್. ಜಿ. ಶಂಸುದ್ದೀನ್ ಹಾಜಿ ಬಿ.ಎಸ್. ಹುಸೈನಬ್ಬ, ಟಿ. ಮುಹಮ್ಮದ್ ಮುಸ್ಲಿಯಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಕನ್ವೀನರ್ ಪಿ.ಎಂ. ಅಬ್ದುಲ್ಲಾಹಿ ನಈಮಿ ಅಲ್ ಮುರ್ಶಿದಿ ಸ್ವಾಗತ ಭಾಷಣಗೈದರು. ಜೋಕಟ್ಟೆ ನೂರಾನಿಯಾ ಜುಮಾ ಮಸೀದಿಯ ಸದರ್ ಮುಅಲ್ಲಿಂ ಶರೀಫ್ ದಾರಿಮಿ ಖಿರಾಅತ್ ಪಠಿಸಿದರು. ಮಂಗಳೂರು ವೆಸ್ಟ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ನ ಜಂಟಿ ಆಶ್ರಯದಲ್ಲಿ, ಸಮಸ್ತ ನೂರನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಸ್ತ ಸಮ್ಮೇಳನದ ಪ್ರಯುಕ್ತ ಬೆಳಗ್ಗೆ 7ಕ್ಕೆ ವಲಿಯುಲ್ಲಾಹಿ ಶೇಖ್ ಹಾಜಿ ಮಖಾಂ ಝಿಯಾರತ್,7:30ಕ್ಕೆ ವಲಿಯುಲ್ಲಾಹಿ ಸೀವಾ ಇಮಾಮ್ ಮಖಾಂ ಝಿಯಾರತ್ ನಡೆದು ಬೆಳಗ್ಗೆ 8:30ಕ್ಕೆ ಹೊಸ ಮಸೀದಿ ವಠಾರದಲ್ಲಿ ಧ್ವಜಾರೋಹಣ ನಡೆಯಿತು. ಅಸರ್ ನಮಾಝ್ ಬಳಿಕ ಜೋಕಟ್ಟೆ ಹಳೇಯ ಮಸೀದಿಯಿಂದ ಈದ್ದಾ ಮಸೀದಿ ವರೆಗೆ ದಫ್, ಸೈಟ್, ಪ್ಲವರ್ ಶೋಗಳೊಂದಿಗೆ ಬೃಹತ್ ಸಮಸ್ತ ಸಂದೇಶ ಜಾಥಾ ನಡೆಯಿತು.
Bengaluru | ಯುವತಿಗೆ ಮದುವೆಯಾಗುವುದಾಗಿ ನಂಬಿಸಿ 1.53 ಕೋಟಿ ರೂ. ವಂಚನೆ : ಪ್ರಕರಣ ದಾಖಲು
ಬೆಂಗಳೂರು : ಸಾಫ್ಟ್ ವೇರ್ ಇಂಜಿನಿಯರ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ 1.53 ಕೋಟಿ ರೂ. ಹಣ ಪಡೆದು ವಂಚಿಸಿದ ಆರೋಪದಡಿ ವಿಜಯ್ರಾಜ್ ಗೌಡ ಸಹಿತ ಮೂವರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 29 ವರ್ಷದ ಯುವತಿಯೊಬ್ಬಳು ನೀಡಿದ ದೂರಿನನ್ವಯ ಪ್ರಮುಖ ಆರೋಪಿ ವಿಜಯ್ರಾಜ್ ಗೌಡ ಮತ್ತು ಆತನ ತಂದೆ ಬೊರೇಗೌಡ, ಆತನ ಪತ್ನಿ ಸೌಮ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿವಾಹಿತನಾಗಿದ್ದರೂ ಸಹ ಪತ್ನಿಯನ್ನು ಸಹೋದರಿ ಎಂದು ಪರಿಚಯಿಸಿ ವಂಚಿಸಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಆರೋಪಿಸಿದ್ದು, ಈ ಸಂಬಂಧವೂ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೈಟ್ಫೀಲ್ಡ್ ವ್ಯಾಪ್ತಿಯಲ್ಲಿ ವಾಸವಿದ್ದ ಯುವತಿಗೆ 2024ರ ಮಾರ್ಚ್ನಲ್ಲಿ ಮ್ಯಾಟ್ರಿಮೋನಿ ಮೂಲಕ ವಿಜಯ್ ರಾಜ್ ಗೌಡನ ಪರಿಚಯವಾಗಿತ್ತು. ‘ತಾನು ಓರ್ವ ಉದ್ಯಮಿ 715 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಜಾರಿ ನಿರ್ದೇಶನಾಲಯ(ಈ.ಡಿ.)ದಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜಾಮೀನು ದೊರೆತಿದೆ’ ಎಂದು ಹೇಳಿಕೊಂಡಿದ್ದ. ಬಳಿಕ ಯುವತಿಯ ಮನೆಯವರನ್ನೂ ಭೇಟಿಯಾಗಿದ್ದ ಆರೋಪಿ, ಸೌಮ್ಯ ಎಂಬಾಕೆಯನ್ನು ತನ್ನ ಸಹೋದರಿ ಹಾಗೂ ತಂದೆ ಬೊರೇಗೌಡ ನಿವೃತ್ತ ತಹಶೀಲ್ದಾರ್ ಎಂದು ಪರಿಚಯಿಸಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪರಿಚಯ ಗಟ್ಟಿಯಾದ ನಂತರ, ‘ತನ್ನ ಆಸ್ತಿಯ ಸಂಬಂಧ ಈ.ಡಿ.ಯಲ್ಲಿ ಪ್ರಕರಣ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ ಮತ್ತು ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣಗಳಿವೆ’ ಎಂದು ಸುಳ್ಳು ಹೇಳಿ ಕೆಲವು ನಕಲಿ ದಾಖಲೆಗಳು ಮತ್ತು ಕೋರ್ಟ್ ಪ್ರತಿಗಳನ್ನು ಯುವತಿಗೆ ತೋರಿಸಿದ್ದ. ಹಣದ ಅವಶ್ಯಕತೆ ಇದೆ ಎಂದು ಹೇಳಿ ಆರಂಭದಲ್ಲಿ 15 ಸಾವಿರ ರೂ. ಪಡೆದಿದ್ದ. ನಂತರ, ಒಟ್ಟಿಗೆ ವ್ಯವಹಾರ ಮಾಡೋಣ ಎಂದು ನಂಬಿಸಿ ಯುವತಿಯ ಹೆಸರಿನಲ್ಲಿ ಸಾಲ ಮಾಡಿಸಿದ್ದಲ್ಲದೆ, ಆಕೆಯ ಸ್ನೇಹಿತರ ಬಳಿಯೂ ಸಾಲ ಮಾಡಿಸಿದ್ದ. ಮದುವೆಗೆ ಹೆಣ್ಣು ನೋಡಲು ಬರುತ್ತೇವೆ ಎಂದು ಸುಳ್ಳು ಹೇಳಿ ಪುನಃ ಯುವತಿಯ ಸ್ನೇಹಿತರಿಗೆ ವ್ಯವಹಾರ ಮಾಡಲು ಪ್ರೇರೇಪಿಸಿ, ಲಕ್ಷ ಲಕ್ಷ ರೂಪಾಯಿ ಸಾಲ ಪಡೆದಿದ್ದ. ಹೀಗೆ ಹಂತ-ಹಂತವಾಗಿ, ಯುವತಿ, ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಂದ ಒಟ್ಟು 1.53 ಕೋಟಿ ರೂಪಾಯಿ ಹಣ ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣ ವಾಪಸ್ ನೀಡುವಂತೆ ಯುವತಿ ಮತ್ತು ಆಕೆಯ ಸ್ನೇಹಿತರು ಒತ್ತಾಯಿಸಿದಾಗ ಆರಂಭದಲ್ಲಿ ಸ್ವಲ್ಪ ಹಣ ಮರಳಿಸಿದ್ದ. ಆದರೆ, ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಲ್ಲದೆ, ಹಣ ಕೇಳಿದ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಲು ಶುರುಮಾಡಿದ್ದಾನೆ. ಹಣ ವಾಪಸ್ ಕೇಳಲು ಹೋದಾಗ, ವಿಜಯ್ರಾಜ್ ಗೌಡ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವೂ ಇರುವುದು ಗೊತ್ತಾಗಿದೆ. ಸಹೋದರಿ ಎಂದು ಪರಿಚಯಿಸಿದ್ದವರೇ ಆರೋಪಿಯ ಪತ್ನಿ ಎಂದು ತಿಳಿದಿದೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು ಏರ್ಪೋರ್ಟ್ ರಸ್ತೆಯ ಸಾದಹಳ್ಳಿ ಬಳಿ ಬರಲಿದೆ 6 ಲೈನ್ ಅಂಡರ್ಪಾಸ್! NHAI ಯೋಜನೆ; 35 ಕೋಟಿ ರೂ. ವೆಚ್ಚ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಸಾದಹಳ್ಳಿ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 750 ಮೀಟರ್ ಉದ್ದದ, ಆರು ಲೇನ್ಗಳ ಅಂಡರ್ಪಾಸ್ ನಿರ್ಮಿಸುತ್ತಿದ್ದು, ಫೆಬ್ರವರಿಯಲ್ಲಿ ಕಾಮಗಾರಿ ಆರಂಭವಾಗಲಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಟ್ರಾಫಿಕ್ ಸಿಗ್ನಲ್ನಲ್ಲಿ ನಿಲ್ಲುವ ಪ್ರಮೇಯ ಇರುವುದಿಲ್ಲ.
ಯಾದಗಿರಿ | ಲುಂಬಿನಿ ಉದ್ಯಾನವನದಲ್ಲಿ ವೈಜ್ಞಾನಿಕ ಜಾಗೃತಿ ಅಭಿಯಾನ
ಯಾದಗಿರಿ : ಧಾರ್ಮಿಕ ವ್ಯಕ್ತಿಗಳು ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆ ಮುಗ್ಧ ಜನರಲ್ಲಿದೆ. ಆದ್ದರಿಂದ ಸ್ವಾಮೀಜಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಬದಲಾದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಗುರುಮಠಕಲ್ ಖಾಸಮಠದ ಶಾಂತವೀರ ಗುರುಮುರುಘಾ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು. ನಗರದ ಲುಂಬಿನಿ ಉದ್ಯಾನವನದಲ್ಲಿ ದೆವ್ವವಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಮ್ಮಿಕೊಂಡಿದ್ದ ವೈಜ್ಞಾನಿಕ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ಕಳೆದ 17 ದಿನಗಳಿಂದ ಲುಂಬಿನಿ ಉದ್ಯಾನವನದಲ್ಲಿ ಭಯಾನಕ ಶಬ್ದ ಕೇಳಿಬರುತ್ತಿದೆ ಮತ್ತು ದೆವ್ವವಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಕುರಿತು ಮಾತನಾಡಿದ ಶ್ರೀಗಳು, ಯಾರೋ ಕಿಡಿಗೇಡಿಗಳು ಸುಳ್ಳು ವಿಡಿಯೋ ಸೃಷ್ಟಿಸಿ ಪ್ರವಾಸಿಗರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಸುಂದರವಾದ ಉದ್ಯಾನವನಕ್ಕೆ ಬರುವ ಜನರನ್ನು ತಡೆಯಲು ಇಂತಹ ಕೃತ್ಯ ಎಸಗಲಾಗುತ್ತಿದೆ. ಜನರು ಇಂತಹ ಮೂಢನಂಬಿಕೆಗಳಿಗೆ ಮರಳಾಗಬಾರದು ಎಂದು ತಿಳಿಸಿದರು. ಪ್ರಗತಿಪರ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ದೆವ್ವ-ದೇವರು ಎಂಬುದು ಮನುಷ್ಯನ ಭ್ರಮೆ ಮಾತ್ರ. ಇತ್ತೀಚೆಗೆ ನಡೆದ ವೈಜ್ಞಾನಿಕ ಸಮ್ಮೇಳನದಿಂದ ವಿಚಲಿತರಾದ ಪಟ್ಟಭದ್ರ ಹಿತಾಸಕ್ತಿಗಳು ಜನರನ್ನು ಮತ್ತೆ ಮೌಢ್ಯಕ್ಕೆ ತಳ್ಳಲು ದೆವ್ವದ ವದಂತಿ ಹಬ್ಬಿಸಿದ್ದಾರೆ. ಭಯ ಬಿಟ್ಟು ಎಂದಿನಂತೆ ಗಾರ್ಡನ್ಗೆ ಬನ್ನಿ ಎಂದು ಕರೆ ನೀಡಿದರು. ವಿಜ್ಞಾನ ಶಿಕ್ಷಕಿ ಮಧು ಸಿಂಘೆ ಮಾತನಾಡಿ, ದೆವ್ವ ಎಂಬುದು ಮನುಷ್ಯನ ಮನಸ್ಸಿನ ಭಯದಿಂದ ಸೃಷ್ಟಿಯಾಗುವ ಚಿತ್ರಣವಷ್ಟೇ. ಮನಸ್ಸಿನ ಭಯ ನಿವಾರಣೆಯಾದರೆ ಇಂತಹ ಕಾಲ್ಪನಿಕ ದೆವ್ವಗಳು ಮರೆಯಾಗುತ್ತವೆ ಎಂದು ವೈಜ್ಞಾನಿಕವಾಗಿ ವಿವರಿಸಿದರು. ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಲಿತ ಸಂಘಟನೆ ಹಿರಿಯ ಮುಖಂಡರಾದ ಮರೆಪ್ಪ ಚಟ್ಟರಕರ್, ಫಾಧರ ಮಿಧನ್, ವಿಶ್ವನಾಥರೆಡ್ಡಿ ಗೊಂದಡಗಿ, ಜಗದೀಶ ನೂಲಿನವರ್, ಸೈದಪ್ಪ ಕೊಯಿಲೂರ, ಭೀಮಣ್ಣ ಹೊಸಮನಿ, ಲಕ್ಷ್ಮಣ ರಾಠೋಡ್ ಸೇರಿದಂತೆಯೇ ಇತರರಿದ್ದರು.
ಬೀದರ್ | ಭೀಮಣ್ಣ ಖಂಡ್ರೆ ನಿಧನಕ್ಕೆ ಮುಹಮ್ಮದ್ ಆಸಿಫುದ್ದೀನ್ ಸಂತಾಪ
ಬೀದರ್ : ಹಿರಿಯ ರಾಜಕಾರಣಿ, ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ವಿಸ್ಡ್ಂ ಗ್ರೂಪ್ ಆಫ್ ಇನ್ಸಟಿಟ್ಯೂಷನ್ ಚೇರಮನ್ ಮುಹಮ್ಮದ್ ಆಸಿಫುದ್ದೀನ್ ಇವರು ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ.ಭೀಮಣ್ಣ ಖಂಡ್ರೆ ಅವರು ಒಬ್ಬ ಸಜ್ಜನ ರಾಜಕೀಯ ನಾಯಕರಾಗಿದ್ದರು. ಅವರು ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಕಲ್ಯಾಣ ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಭಾವ್ಯಕ್ಯತೆಯ ಸಂಕೇತ (ಐಕಾನ್) ವಾಗಿದ್ದರು. ಈ ಸಂದರ್ಭದಲ್ಲಿ ನಾವು ಅವರ ಕುಟುಂಬ ಬಂದು ಬಳಗದವರೊಂದಿಗೆ ಈ ನೋವಿನಲ್ಲಿ ಸಮಾನವಾಗಿ ಭಾಗಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಯತಿಗಳ ಮಾರ್ಗದರ್ಶನ, ಭಕ್ತರ ಸಹಕಾರ ಬೇಕು: ಶ್ರೀವೇದವರ್ಧನ ತೀರ್ಥರು
ಪರ್ಯಾಯ ದರ್ಬಾರ್
ಕೇರಳ| ಸಿಪಿಎಂ ಮಾಜಿ ಶಾಸಕ ಎಸ್.ರಾಜೇಂದ್ರನ್ ಬಿಜೆಪಿಗೆ ಸೇರ್ಪಡೆ
ತಿರುವನಂತಪುರಂ: ಮಾಜಿ ಶಾಸಕ ಹಾಗೂ ಇಡುಕ್ಕಿ ಜಿಲ್ಲೆಯ ಸಿಪಿಎಂ ನಾಯಕ ಎಸ್.ರಾಜೇಂದ್ರನ್ ರವಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತಿರುವನಂತಪುರಂನಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ಎಸ್.ರಾಜೇಂದ್ರನ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಸೇರುವ ಕುರಿತು ಈ ಮೊದಲು ಸಾರ್ವಜನಿಕವಾಗಿಯೇ ಬಯಕೆ ವ್ಯಕ್ತಪಡಿಸಿದ್ದ ಎಸ್.ರಾಜೇಂದ್ರನ್, ಕೆಲ ದಿನಗಳ ಹಿಂದೆ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ರಾಜಕೀಯ ಭವಿಷ್ಯದ ಕುರಿತು ಚರ್ಚಿಸಿದ್ದರು. ಎಸ್.ರಾಜೇಂದ್ರನ್ ಶೀಘ್ರದಲ್ಲೇ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿದೆ. ತಾನೇಕೆ ಸಿಪಿಎಂ ತೊರೆಯುವ ನಿರ್ಧಾರವನ್ನು ಕೈಗೊಂಡೆ, ಭವಿಷ್ಯದ ರಾಜಕಾರಣದಲ್ಲಿ ತನ್ನ ಪಾತ್ರವೇನು ಎಂದು ವಿವರಿಸಲಿದ್ದಾರೆ ಎಂದು ಹೇಳಲಾಗಿದೆ. ಸಿಪಿಎಂನಿಂದ ಮೂರು ಬಾರಿ ಶಾಸಕರಾಗಿದ್ದ ಎಸ್.ರಾಜೇಂದ್ರನ್ ಬಿಜೆಪಿ ಸೇರುವ ಕುರಿತು ಈ ಮೊದಲು ಸಾರ್ವಜನಿಕವಾಗಿಯೇ ಬಯಕೆ ವ್ಯಕ್ತಪಡಿಸಿದ್ದರು , ಕೆಲ ದಿನಗಳ ಹಿಂದೆ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ರಾಜಕೀಯ ಭವಿಷ್ಯದ ಕುರಿತು ಚರ್ಚಿಸಿದ್ದರು.
ದಿ.ಆಲ್ವಿನ್ ಜೆರೋಮ್ ಫೆರ್ನಾಂಡಿಸ್ ಸ್ಮರಣಾರ್ಥ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ
ಮಂಗಳೂರು, ಜ. 18: ದಿವಂಗತ ಆಲ್ವಿನ್ ಜೆರೋಮ್ ಫೆರ್ನಾಂಡಿಸ್ ಸ್ಮರಣಾರ್ಥ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ರವಿವಾರ ಮಂಗಳೂರಿನ ಮಿಲಾಗ್ರೆಸ್ ಚರ್ಚ್ ಹಾಲ್ನಲ್ಲಿ ನಡೆಯಿತು. ಕ್ಯಾಥೊಲಿಕ್ ಸಭಾ, ಲೇಡಿ ಆಫ್ ಮಿಲಾಗ್ರೆಸ್ ಚರ್ಚ್, ಭಾರತೀಯ ಕ್ಯಾಥೊಲಿಕ್ ಸಭಾ ಯುವ ಘಟಕ,ಭಾರತೀಯ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್, ಯುವ ರೆಡ್ ಕ್ರಾಸ್ ಘಟಕ, ಎನ್ಎಸ್ಎಸ್ ಘಟಕ ಮತ್ತು ಸಮಾಜಶಾಸ್ತ್ರ ಅರ್ಥಶಾಸ್ತ್ರ ವೇದಿಕೆ ರೋಶನಿ ನಿಲಯ (ಸ್ವಾಯತ್ತ), ಸೈಂಟ್ ಅಲೋಶಿಯಸ್ ಪರಿಗಣಿತ ವಿವಿ ಮತ್ತು ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರವನ್ನು ಲೇಡಿ ಆಫ್ ಮಿಲಾಗ್ರೆಸ್ ಚರ್ಚ್ನ ಧರ್ಮ ಗುರು ಫಾ. ಬೊನಾವೆಂಚರ್ ನಜರೆತ್ ಉದ್ಘಾಟಿಸಿದರು. ಸಮಾರಂಭದಲ್ಲಿ ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಡೇವಿಡ್ ಪಿರೇರಾ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರ ವೇದಿಕೆಯ ಸಂಯೋಜಕ ಡಾ. ಕಿರಣ್ ಪ್ರಸಾದ್.ಬಿ, ರೋಶನಿ ನಿಲಯದ ಸಮಾಜ ಕಾರ್ಯ ಶಾಲೆಯ ಎನ್ಎಸ್ಎಸ್ ಕಾರ್ಯ ಕ್ರಮ ಅಧಿಕಾರಿ ಡಾ. ಪ್ರಶಾಂತ್ ಭಟ್, ರೋಶನಿ ನಿಲಯದ ಸಮಾಜ ಕಾರ್ಯ ಶಾಲೆಯ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಅನುಸೂಯಾ ಕಾಮತ್, ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್ನ ಪ್ರಾಂಶುಪಾಲ ಡಾ. ಡಯಾನಾ ಲೋಬೊ, ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡಿಕ್ಸನ್ ಡಿ ಸೋಜ ಉಪಸ್ಥಿತರಿದ್ದರು. ದಿನಪೂರ್ತಿ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಧರ್ಮಗುರುಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಕ್ಯಾಥೊಲಿಕ್ ಸಭಾ ಮಿಲಾಗ್ರಿಸ್ ಘಟಕದ ಸಂಚಾಲಕ ವಲೇರಿಯನ್ ಡಿ ಸೋಜ ಸ್ವಾಗತಿಸಿದರು, ಕ್ಯಾಥೊಲಿಕ್ ಸಭಾ ಕಾರ್ಯದರ್ಶಿ ಸ್ಟೀಫನ್ ರಾಜೇಶ್ ಮೊಂತೆರೊ ವಂದಿಸಿದರು.
ಸಮಾಜದ ಕಷ್ಟಕ್ಕೆ ಮಿಡಿಯುವ ಅಕ್ಬರ್ ಪಾಷಾ ಅವರ ಕಾರ್ಯ ಶ್ಲಾಘನೀಯ : ಸಚಿವ ಎನ್.ಎಸ್.ಬೋಸರಾಜು
ದಾರುಸ್ಸಲಾಮ್ ಫೌಂಡೇಶನ್ ವತಿಯಿಂದ 121 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ
ವಿಜಯ್ ಹಝಾರೆ ಟ್ರೋಫಿ| ಒಂದೇ ವರ್ಷ ಮೂರನೇ ಗರಿಷ್ಠ ರನ್ಗಳಿಸಿದ ಅಮನ್ ಮೊಖಾಡೆ
ಬೆಂಗಳೂರು, ಜ.18: ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದ ವೇಳೆ ಅಮನ್ ಮೊಖಾಡೆ ಅವರು ಒಂದೇ ಆವೃತ್ತಿಯ ವಿಜಯ್ ಹಝಾರೆ ಟ್ರೋಫಿಯಲ್ಲಿ ಮೂರನೇ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದರು. ಎನ್.ಜಗದೀಶನ್ ಅವರು 2022-23ರ ಆವೃತ್ತಿಯ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ 830 ರನ್ ಹಾಗೂ 2020-21ರಲ್ಲಿ ಪೃಥ್ವಿ ಶಾ ಅವರು 827 ರನ್ ಕಲೆ ಹಾಕಿದ್ದರು. ಅಮನ್ ಮೊಖಾಡೆ ಅವರು ಪ್ರಸಕ್ತ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ 10 ಇನಿಂಗ್ಸ್ಗಳಿಂದ 814 ರನ್ ಕಲೆ ಹಾಕಿದ್ದಾರೆ. ರಾಜ್ಕೋಟ್ನಲ್ಲಿ ಬರೋಡಾ ತಂಡದ ವಿರುದ್ಧ ಗರಿಷ್ಠ 150 ರನ್ ಗಳಿಸಿದ್ದರು. ವಿಜಯ್ ಹಝಾರೆ ಟ್ರೋಫಿ ಟೂರ್ನಿಯೊಂದರಲ್ಲಿ ಐದು ಶತಕಗಳನ್ನು ಗಳಿಸಿರುವ ಮೊಖಾಡೆ ಅವರು ಜಗದೀಶನ್ ಹಾಗೂ ಕರುಣ್ ನಾಯರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಕರುಣ್ ನಾಯರ್ ಕಳೆದ ವರ್ಷ ವಿದರ್ಭದ ಪರ ಈ ಸಾಧನೆ ಮಾಡಿದ್ದರು. ಆರಂಭಿಕ ಬ್ಯಾಟರ್ ಅಮನ್ ಮೊಖಾಡೆ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಂಕುರ್ ಪನ್ವರ್ಗೆ ವಿಕೆಟ್ ಒಪ್ಪಿಸುವ ಮೊದಲು ನಾಲ್ಕು ಬೌಂಡರಿಗಳ ಸಹಿತ 45 ಎಸೆತಗಳಲ್ಲಿ 33 ರನ್ ಗಳಿಸಿದ್ದಾರೆ.
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ| ಮಹಿಳೆಯರ ಸಿಂಗಲ್ಸ್ ಪ್ರಶಸಿ ಗೆದ್ದ ಆ್ಯನ್ ಸೆ-ಯಂಗ್
ಹೊಸದಿಲ್ಲಿ, ಜ.18: ಎರಡು ಬಾರಿಯ ಏಶ್ಯನ್ ಚಾಂಪಿಯನ್ ಹಾಗೂ ತನ್ನ ಬದ್ಧ ಎದುರಾಳಿ ವಾಂಗ್ ಝಿಯಿ ಅವರನ್ನು ಮಣಿಸಿದ ಆ್ಯನ್ ಸೇ-ಯಂಗ್ 2026ರ ಆವೃತ್ತಿಯ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೇವಲ ವಾರದ ಹಿಂದೆ ಝಿಹಿ ಅವರನ್ನು ಮಣಿಸಿ ಮಲೇಶ್ಯ ಓಪನ್ ಜಯಿಸಿದ್ದ ಸೆ-ಯಂಗ್ ರವಿವಾರ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ 43 ನಿಮಿಷಗಳಲ್ಲಿ ಕೊನೆಗೊಂಡಿರುವ ಪಂದ್ಯದಲ್ಲಿ ಜಯ ಸಾಧಿಸಿ ಇಂಡಿಯಾ ಓಪನ್ ಫೈನಲ್ನಲ್ಲಿ 2-0 ಮುನ್ನಡೆ ಕಾಯ್ದುಕೊಂಡರು. ಸೆ-ಯಂಗ್ ಮೊದಲ ಗೇಮ್ ಅನ್ನು 21-13 ಹಾಗೂ ಎರಡನೇ ಗೇಮ್ ಅನ್ನು 21-11 ಅಂತರದಿಂದ ಗೆದ್ದುಕೊಂಡರು. 2025ರಲ್ಲಿ 11 ಪ್ರಶಸ್ತಿಗಳನ್ನು ಜಯಿಸಿದ್ದ ದಕ್ಷಿಣ ಕೊರಿಯಾದ ಸ್ಟಾರ್ ಸೆ-ಯಂಗ್, ಇಂಡಿಯಾ ಓಪನ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಟ್ರೋಫಿಯನ್ನು ಜಯಿಸಿದರು. ಈ ವರ್ಷ ಮಲೇಶ್ಯ ಓಪನ್ ಪ್ರಶಸ್ತಿಯನ್ನು ಗೆದ್ದಿರುವ ಸೆ-ಯಂಗ್ ಇದೀಗ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡರು. ಸೆ-ಯಂಗ್ ಅವರು ಚೀನಾದ ಝಿಹಿ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 18ರಲ್ಲಿ ಗೆಲುವು ಹಾಗೂ ನಾಲ್ಕರಲ್ಲಿ ಸೋಲನುಭವಿಸಿದ್ದಾರೆ. ಹಿಂದಿನ 10 ಪಂದ್ಯಗಳಲ್ಲಿ ಝಿಹಿ ವಿರುದ್ಧ ಸೆ-ಯಂಗ್ ಸೋತಿಲ್ಲ.
ಏಕದಿನ ಕ್ರಿಕೆಟ್| ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ ಡ್ಯಾರಿಲ್ ಮಿಚೆಲ್
ಹೊಸದಿಲ್ಲಿ, ಜ.18: ನ್ಯೂಝಿಲ್ಯಾಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಏಕದಿನ ಕ್ರಿಕೆಟ್ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಭಾರತ ವಿರುದ್ಧ ರವಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶತಕ ಸಿಡಿಸುವ ಮೂಲಕ ಮಿಚೆಲ್ ಅವರು 2023ರ ನಂತರ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ 50 ಪ್ಲಸ್ ಸ್ಕೋರ್ ಗಳಿಸಿದ ಬಾಬರ್ ಆಝಂ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಎಲೈಟ್ ಲಿಸ್ಟ್ನಲ್ಲಿ ಕೇವಲ ವಿರಾಟ್ ಕೊಹ್ಲಿ ಮಾತ್ರ ಅಗ್ರ ಸ್ಥಾನದಲ್ಲಿದ್ದಾರೆ. ಪ್ರವಾಸಿ ಕಿವೀಸ್ ತಂಡವು ಎರಡು ಓವರ್ನೊಳಗೆ 2 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿದ್ದು ಭಾರತೀಯ ಬೌಲರ್ಗಳು ಶಿಸ್ತುಬದ್ದ ಬೌಲಿಂಗ್ ಮೂಲಕ ಒತ್ತಡ ಸೃಷ್ಟಿಸಿದರು. ಇಂತಹ ಪರಿಸ್ಥಿತಿಯಲ್ಲಿ ಕ್ರೀಸಿಗಿಳಿದ ಮಿಚೆಲ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. 2023ರ ನಂತರ ಏಕದಿನ ಕ್ರಿಕೆಟ್ನಲ್ಲಿ ಸರ್ವಾಧಿಕ 50 ಪ್ಲಸ್ ಸ್ಕೋರ್ ಗಳಿಸಿದವರು ವಿರಾಟ್ ಕೊಹ್ಲಿ(22) ಶುಭಮನ್ ಗಿಲ್(20) ರೋಹಿತ್ ಶರ್ಮಾ(19) ಪಥುಮ್ ನಿಸ್ಸಾಂಕ(19) ಬಾಬರ್ ಆಝಂ(18) ಕುಸಾಲ್ ಮೆಂಡಿಸ್(18) ಡ್ಯಾರಿಲ್ ಮಿಚೆಲ್(18)
ಉಡುಪಿ: ಶ್ರೀವೇದವರ್ಧನ ತೀರ್ಥರಿಂದ ಸರ್ವಜ್ಞ ಪೀಠಾರೋಹಣ
ಶೀರೂರು ಪರ್ಯಾಯಕ್ಕೆ ಹರಿದುಬಂದ ಜನಸಾಗರ
‘ಮಹಾ ಜಂಗಲ್ ರಾಜ್’ಅನ್ನು ಅಂತ್ಯಗೊಳಿಸಲು ಬಂಗಾಳ ಬಯಸಿದೆ: ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಸಿಂಗೂರ್ (ಪ.ಬಂಗಾಳ),ಜ.18: ಬಿಜೆಪಿ ಮತ್ತು ಎನ್ಡಿಎ ಬಿಹಾರದಲ್ಲಿ ‘ಜಂಗಲ್ ರಾಜ್’ ಅನ್ನು ಅಂತ್ಯಗೊಳಿಸಿವೆ. ಈಗ ಪ.ಬಂಗಾಳವು ಟಿಎಂಸಿಯ ‘ಮಹಾ ಜಂಗಲ್ ರಾಜ್’ಗೆ ವಿದಾಯ ಹೇಳಲು ಸಜ್ಜಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಇಲ್ಲಿ ಹೇಳಿದರು. ತನ್ಮೂಲಕ ಅವರು ಈ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಇಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಪಲ್ಟಾನೊ ದೊರ್ಕಾರ್, ಚಾಯಿ ಬಿಜೆಪಿ ಸೊರ್ಕಾರ್ (ಬದಲಾವಣೆ ಅಗತ್ಯವಿದೆ, ಬಿಜೆಪಿ ಸರಕಾರ ಬೇಕು)’ ಎಂಬ ಶಪಥವನ್ನು ತೊಡುವಂತೆ ಜನರನ್ನು ವಿನಂತಿಸಿಕೊಂಡರು. ‘ದಿಲ್ಲಿಯ ಇಂಡಿಯಾ ಗೇಟ್ನ ಎದುರು ನೇತಾಜಿ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದು ಬಿಜೆಪಿ ಸರಕಾರ. ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ಆಜಾದ್ ಹಿಂದ್ ಫೌಜ್ನ ಕೊಡುಗೆಯನ್ನು ಗೌರವಿಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ದ್ವೀಪವೊಂದಕ್ಕೆ ನೇತಾಜಿಯವರ ಹೆಸರನ್ನಿರಿಸಲಾಗಿದೆ. ದಿಲ್ಲಿಯಲ್ಲಿ ಬಿಜೆಪಿ ಸರಕಾರವನ್ನು ನೀವು ಆಯ್ಕೆ ಮಾಡಿದಾಗ ಬಂಗಾಳಿ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸಿದೆ. ಬಿಜೆಪಿಯ ಪ್ರಯತ್ನಗಳಿಂದಾಗಿ ದುರ್ಗಾ ಪೂಜೆಗೆ ಯನೆಸ್ಕೋ ವಿಶ್ವ ಪರಂಪರೆ ಮಾನ್ಯತೆ ದೊರಕಿದೆ. ಟಿಎಂಸಿಯಲ್ಲಿಯ ಈ ಜನರು ಸೋನಿಯಾ ಗಾಂಧಿಯವರ ಸರಕಾರದಲ್ಲಿ (ಯುಪಿಎ II) ಪಾಲುದಾರರಾಗಿದ್ದರು. ಅವರು ಇದನ್ನೆಲ್ಲ ಮಾಡಲು ಸಾಧ್ಯವಿರಲಿಲ್ಲವೇ? ಅದನ್ನು ಮಾಡಿದ್ದು ಬಂಗಾಳದ ಮೇಲೆ ಇಷ್ಟೊಂದು ಪ್ರೀತಿಯನ್ನು ಹೊಂದಿರುವ ಮೋದಿ’ ಎಂದು ಪ್ರಧಾನಿ ನುಡಿದರು. ರಾಜಾರಾಮ್ ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರ ಮತ್ತು ಸ್ವಾಮಿ ವಿವೇಕಾನಂದರಂತಹ ಬಂಗಾಳಿ ದಿಗ್ಗಜರನ್ನು ರಾಷ್ಟ್ರಮಟ್ಟದಲ್ಲಿ ಗೌರವಿಸಿದ್ದು ತನ್ನ ಸರಕಾರ ಎಂದು ಹೇಳಿದ ಮೋದಿ,ಏಕೆಂದರೆ ಬಿಜೆಪಿ ಅಭಿವೃದ್ಧಿ ಮತ್ತು ಪರಂಪರೆಯ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದರು. ಬಂಗಾಳವು ಬೃಹತ್ ನದಿಗಳು, ಸುದೀರ್ಘ ಕರಾವಳಿ ಮತ್ತು ಫಲವತ್ತಾದ ಭೂಮಿ ಸೇರಿದಂತೆ ಹಲವು ಸಂಪನ್ಮೂಲಗಳನ್ನು ಹೊಂದಿದೆ. ಪ್ರತಿ ಜಿಲ್ಲೆಯೂ ಏನಾದರೊಂದು ವಿಶೇಷವನ್ನು ಹೊಂದಿದೆ. ಇಲ್ಲಿಯ ಜನರಲ್ಲಿ ಬುದ್ಧಿವಂತಿಕೆ, ಸಾಮರ್ಥ್ಯ ಮತ್ತು ನಿಷ್ಠೆ ಇದೆ. ಬಿಜೆಪಿ ಪ್ರತಿ ಜಿಲ್ಲೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಅವರು ಭರವಸೆ ನೀಡಿದರು. ಟಿಎಂಸಿ ಸರಕಾರವು ಕೇಂದ್ರದ ಯೋಜನೆಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದ ಪ್ರಧಾನಿ, ಅವರಿಗೆ ಮೋದಿ ಮತ್ತು ಬಿಜೆಪಿಯೊಂದಿಗೆ ಸಮಸ್ಯೆಯಿದ್ದರೆ ಅದು ತನಗೆ ಅರ್ಥವಾಗುತ್ತದೆ. ಆದರೆ ಟಿಎಂಸಿಯು ಬಂಗಾಳದ ಜನರು ತೊಂದರೆ ಅನುಭವಿಸುವಂತೆ ಮಾಡುತ್ತಿದೆ ಎಂದು ಹೇಳಿದರು.
ಯಾರಿಗೂ ನೋವನ್ನುಂಟುಮಾಡಲು ಬಯಸಿರಲಿಲ್ಲ: ಬಾಲಿವುಡ್ ಬಗ್ಗೆ ನೀಡಿದ್ದ ಹೇಳಿಕೆಗೆ ಎ.ಆರ್.ರೆಹಮಾನ್ ಸ್ಪಷ್ಟನೆ
ಹೊಸದಿಲ್ಲಿ,ಜ.18: ಕಳೆದ ಎಂಟು ವರ್ಷಗಳಲ್ಲಿ ಹಿಂದಿ ಚಿತ್ರೋದ್ಯಮದಲ್ಲಿ ಸಂಭಾವ್ಯ ‘ಕೋಮು’ ಪಕ್ಷಪಾತ ಬಗೆಗಿನ ತನ್ನ ಹೇಳಿಕೆ ಕುರಿತು ಟೀಕೆಗಳಿಗೆ ರವಿವಾರ ಉತ್ತರಿಸಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಯಾರದೇ ಭಾವನೆಗಳಿಗೆ ನೋವನ್ನುಂಟುಮಾಡಲು ತಾನೆಂದಿಗೂ ಉದ್ದೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದರೆ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಯಾವಾಗಲೂ ನನ್ನ ಉದ್ದೇಶವಾಗಿದೆ. ನಾನು ಎಂದಿಗೂ ಯಾರನ್ನೂ ನೋಯಿಸಲು ಬಯಸಿರಲಿಲ್ಲ ಮತ್ತು ನನ್ನ ಪ್ರಾಮಾಣಿಕತೆ ಟೀಕಾಕಾರರಿಗೆ ಅರ್ಥವಾಗುತ್ತದೆ ಎಂದು ಆಶಿಸಿದ್ದೇನೆ ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ರೆಹಮಾನ್ ಹೇಳಿದ್ದಾರೆ. ‘ನಾನು ಭಾರತೀಯನಾಗಿರುವುದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಏಕೆಂದರೆ ನನ್ನ ದೇಶವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತು ಬಹುಸಂಸ್ಕೃತಿಗಳ ಆಚರಣೆಗೆ ಅವಕಾಶ ನೀಡುತ್ತದೆ’ ಎಂದು ಹೇಳಿದ್ದಾರೆ. ಇತ್ತೀಚಿಗೆ ಬಿಬಿಸಿ ಏಷ್ಯನ್ ನೆಟ್ವರ್ಕ್ಗೆ ನೀಡಿದ್ದ ಸಂದರ್ಶನದಲ್ಲಿ ರೆಹಮಾನ್ ಕಳೆದ ಎಂಟು ವರ್ಷಗಳಲ್ಲಿ ತನಗೆ ಚಲನಚಿತ್ರಗಳಲ್ಲಿ ಅವಕಾಶಗಳು ಸಿಗದ್ದನ್ನು ಪ್ರಸ್ತಾವಿಸಿ, ಹಿಂದಿ ಚಲನಚಿತ್ರೋದ್ಯಮ ಬದಲಾಗಿದೆ. ಅದಕ್ಕೆ ಅಧಿಕಾರದಲ್ಲಿ ಬದಲಾವಣೆ ಮತ್ತು ಬಹುಶಃ ‘ಕೋಮು ವಿಷಯ’ವು ಕಾರಣವಾಗಿರಬಹುದು ಎಂದು ಹೇಳಿದ್ದರು. ರೆಹಮಾನ್ ಹೇಳಿಕೆಗಳು ರಾಜಕೀಯ ವಿವಾದವನ್ನು ಸೃಷ್ಟಿಸಿದ್ದವು. ಬಿಜೆಪಿ ಅವರ ಹೇಳಿಕೆಗಳನ್ನು ತಿರಸ್ಕರಿಸಿದ್ದರೆ ಪ್ರತಿಪಕ್ಷ ನಾಯಕರು ಕಳವಳ ವ್ಯಕ್ತಪಡಿಸಿದ್ದರು.
Bhadravathi | ಒಂದೇ ಕುಟುಂಬದ ನಾಲ್ವರು ನೀರುಪಾಲು
ಶಿವಮೊಗ್ಗ: ಕಾಲುಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲಾದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ನ ಭದ್ರಾ ನಾಲೆಯಲ್ಲಿ ನಡೆದಿರುವುದು ವರದಿಯಾಗಿದೆ. ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ನೀಲಾ ಬಾಯಿ(50), ಮಗ ರವಿ(23), ಮಗಳು ಶ್ವೇತಾ(24) ಮತ್ತು ಅಳಿಯ ಪರಶುರಾಮ(28) ಮೃತರು ಎಂದು ತಿಳಿದು ಬಂದಿದೆ. ಮಾರಿ ಹಬ್ಬಕ್ಕೆಂದು ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದಾರೆ. ಒಬ್ಬರು ಕಾಲು ಜಾರಿ ಭದ್ರಾ ನಾಲೆಗೆ ಬಿದ್ದಿದ್ದು, ಅವನ್ನು ರಕ್ಷಿಸಲು ಹೋಗಿ ನಾಲ್ವರೂ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಮೃತರು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮಸ್ಥರು. ಸದ್ಯ ಮೃತದೇಹಗಳಿಗಾಗಿ ಹೊಳೆಹೊನ್ನೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧಕಾರ್ಯ ನಡೆದಿದೆ.
ವಾಜಪೇಯಿ ಕಂಡ ಕನಸನ್ನು ನನಸು ಮಾಡಿದ್ದು ಮನಮೋಹನ್ ಸಿಂಗ್, ಮೋದಿ; ಈಗ ಆ ನನಸನ್ನು ಕಿತ್ತುಕೊಂಡ ಅಮೆರಿಕ!
ಭಾರತದ ಪ್ರಮುಖ ವ್ಯಾಪಾರಿ ತಾಣವಾದ ಚಬಾಹರ್ ಬಂದರಿನಿಂದ ಅಮೆರಿಕದ ಒತ್ತಡದಿಂದಾಗಿ ಭಾರತ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸುತ್ತಿದೆ. ಲಕ್ಷಾಂತರ ಕೋಟಿ ರೂ. ಮೌಲ್ಯದ ಭಾರತದ ಸರಕುಗಳು ಅಲ್ಲಿ ಸ್ಥಗಿತಗೊಂಡಿವೆ. ಈ ಬೆಳವಣಿಗೆ ಭಾರತದ ಆರ್ಥಿಕತೆಗೆ ದೊಡ್ಡ ನಷ್ಟ ತಂದಿದೆ. ಈ ಹಿಂದೆ ಪಾಕಿಸ್ತಾನದ ಮೂಲಕ ನಡೆಯುತ್ತಿದ್ದ ಕಳುವಾಗುವ ಸರಕುಗಳ ಸಮಸ್ಯೆಯನ್ನು ತಪ್ಪಿಸಲು ಚಬಾಹರ್ ಬಂದರನ್ನು ಅಭಿವೃದ್ಧಿಪಡಿಸಲಾಗಿತ್ತು.
ಸುರತ್ಕಲ್: ಕಾಂಗ್ರೆಸ್ ಸಮಿತಿ ವತಿಯಿಂದ ಸೌಹಾರ್ದ, ರಾಜಕೀಯ ವಿಚಾರಗಳ ಕಾರ್ಯಾಗಾರ
ಸುರತ್ಕಲ್ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಸೌಹಾರ್ದ ಮತ್ತು ರಾಜಕೀಯ ವಿಚಾರಗಳು ಕುರಿತು ವಿಚಾರ ಸಂಕಿರಣವು ರವಿವಾರ ಸುರತ್ಕಲ್ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳಾ ಕಾಂಗ್ರೆಸ್ ಯುವ ಕಾಂಗ್ರೆಸ್ ಗಟ್ಟಿಯಾಗಬೇಕು. ಮಹಿಳಾ ಘಟಕ ಗಟ್ಟಿಯಾಗಿದ್ದರೆ ಅಧಿಕಾರ ಶತಸಿದ್ಧ. ಸೌಹಾರ್ದತೆ ಮನೆಯಿಂದಲೇ ಆರಂಭವಾಗಬೇಕು. ನಾನೂ ಎರಡೂ ಪಕ್ಷಗಳಲ್ಲಿದ್ದು ಬಂದಿದ್ದರೂ, ನನ್ನ ಸಮಯದಲ್ಲಿ ಎಲ್ಲೂ ಕೋಮು ಸೌಹಾರ್ದಕ್ಕೆ ದಕ್ಕೆ ಬರಲು ಬಿಟ್ಟಿಲ್ಲ ಎಂದರು. ಕೆಪಿಸಿಸಿ ಪ್ರಾಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಸಂವಿಧಾನದ ಸಿದ್ದಾಂತಗಳೇ ಕಾಂಗ್ರೆಸ್ ಪಕ್ಷದ ಸಿದ್ದಾಂತ. ಹೊಸ ಮತದಾರರಿಗೆ ಪಕ್ಷದ ಸಿದ್ದಾಂತಗನ್ನು ತಿಳಿಹೇಳಿ ಪಕ್ಷದಲ್ಲಿ ಸೇರಿಸಿಕೊಳ್ಳುವಂತಾಗಬೇಕು. ರಾಜಕೀಯವು ಧರ್ಮ ಒಟ್ಟಾಗಿ ಬೆರೆತರೆ ದೇಶಕ್ಕೆ ಮಾರಕ. ರಾಜಕೀಯಕ್ಕೆ ಧರ್ಮ ಬೆರೆಸಿ ಜನರನ್ನು ಮಂಗ ಮಾಡುತ್ತಾ ಸಂವಿಧಾನಕ್ಕೆ ಕೊಡಲಿ ಏಟು ನೀಡುತ್ತಿದ್ದಾರೆ. ಮಂಗಳೂರು ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಇಸ್ಮಾಯಿಲ್ ಎನ್., ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊ. ಬಿ. ಶಿವರಾಮ್ ಶೆಟ್ಟಿ, ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಝೇವಿಯರ್ ಡಿಸೋಜ ಅವರು “ಸೌಹಾರ್ದ ಮತ್ತು ರಾಜಕೀಯ” ಉಪನ್ಯಾಸ ನಡೆಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಚಿತ್ರಾಪುರ ವಹಿಸಿ ಮಾತನಾಡಿದರು. ಮಂಗಳೂರು ನಗರ ಜಿಲ್ಲಾ ಮಹಿಳಾ ಅಧ್ಯಕ್ಷೆ ಅಪ್ಪಿ, ಕೆಪಿಸಿಸಿ ಮಹಿಳಾ ಸಮಿತಿ ಕಾರ್ಯದರ್ಶಿಮಂಜುಳಾ ನಾಯ್ಕ್, ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ, ಮನಪಾ ಮಾಜಿ ಸದಸ್ಯ ಅನಿಲ್ ಕುಮಾರ್, ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಕುಂತಲಾ ಕಾಮತ್, ನ್ಯಾಯವಾದಿ ಶೈಲಜಾ ರಾಜೇಶ್, ಕೆಪಿಸಿಸಿ ಸದಸ್ಯೆ ಗೀತಾ, ಪದ್ಮನಾಭ ಅಮೀಲ್, ರವಿ ಶಿಯಾನ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಥ್ವಿರಾಜ್, ಮುಲ್ಕಿ ನಗರ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಮೊದಲಾದವರು ಉಪಸ್ಥಿತರಿದ್ದರು. ಸುತತ್ಕಲ್ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೆಹಮಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.
IND Vs NZ- ಔಟಾದ ಡೆರಿಲ್ ಮಿಚೆಲ್ ಅನ್ನು ಬೌಂಡರಿ ರೋಪ್ ಬಳಿ ಮೃದುವಾಗಿ ತಳ್ಳಿದ ವಿರಾಟ್ ಕೊಹ್ಲಿ! ಏನಿದು ಘಟನೆ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ ಅದ್ಭುತ ಶತಕದ ಮೂಲಕ ಭಾರತದ ಸೋಲಿಗೆ ಕಾರಣವಾಗಿದ್ದ ಡೆರಿಲ್ ಮಿಚೆಲ್ ಅವರು ಮೂರನೇ ಏಕದಿನ ಪಂದ್ಯದಲ್ಲೂ ತಮ್ಮ ಅಮೋಘ ಬ್ಯಾಟಿಂಗ್ ಮಾಡಿದರು. ಅವರು ಮತ್ತು ಗ್ಲೆನ್ ಫಿಲಿಪ್ಸ್ ಅವರ ದ್ವಿಶತಕದ ಜೊತೆಯಾಟ ಭಾರತೀಯ ಬೌಲರ್ಗಳನ್ನು ಕಂಗೆಡಿಸಿತು. ಈ ಸರಣಿಯಲ್ಲಿ ನಿರಂತರ ಎರಡು ಶತಕಗಳನ್ನು ಸಿಡಿಸುವ ಮೂಲಕ ಪ್ರಸ್ತುತ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ 2ನೇ ಸ್ಥಾನದಲ್ಲಿರುವ ಅವರು ವಿರಾಟ್ ಕೊಹ್ಲಿ ಅವರನ್ನು ಕೆಳಕ್ಕೆ ತಳ್ಳಿ ಒಂದನೇ ಸ್ಥಾನಕ್ಕೇರುವ ಸಾಧ್ಯತೆಗಳಿವೆ. ಶತಕ ಬಾರಿಸಿದ ಡೆರಿಲ್ ಔಟಾಗಿ ಪೆವಿಲಿಯನ್ ಗೆ ಸಾಗುವ ವೇಳೆ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ ಅವರು ಬೆನ್ನುತಟ್ಟುತ್ತಾ ಬೌಂಡರಿ ರೋಪ್ ಬಳಿ ಮೃದುವಾಗಿ ತಳ್ಳಿ ಮೈದಾನದಿಂದ ಹೊರ ಕಳಿಸಿದ ದೃಶ್ಯ ಇದೀಗ ವೈರಲ್ ಆಗಿದೆ. ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾನುವಾರ ನಡೆದ ನಡುವಿನ ದಲ್ಲಿ ಡೆರಿಲ್ ಮಿಚೆಲ್ ಅವರು 131 ಎಸೆತಗಳಲ್ಲಿ 137 ರನ್ ಗಳಿಸಿ, ನ್ಯೂಜಿಲೆಂಡ್ಗೆ 337 ರನ್ಗಳ ಬೃಹತ್ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು. ಈ ಪ್ರದರ್ಶನದಿಂದಾಗಿ, ಮಿಚೆಲ್ ಅವರು ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ವಿಶ್ವ ನಂ.1 ಸ್ಥಾನವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ದಲ್ಲಿದ್ದರೂ, ಮಿಚೆಲ್ ಅವರ ನಿರಂತರ ಉತ್ತಮ ಪ್ರದರ್ಶನದಿಂದಾಗಿ ಕೊಹ್ಲಿ ತಮ್ಮ ಅಗ್ರಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ರೋಕೊ ಜೊತೆಗೆ ಮಿಚೆಲ್ ಸ್ಪರ್ಧೆ ಪ್ರಸ್ತುತ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ, ಡೆರಿಲ್ ಮಿಚೆಲ್ ಮತ್ತು ರೋಹಿತ್ ಶರ್ಮಾ ಅವರು ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಇವರಲ್ಲಿ ವಿರಾಟ್ ಮತ್ತು ಡೆರಿಲ್ ಮಧ್ಯೆ ಕಠಿಣ ಸ್ಪರ್ಧೆ ಇದೆ. ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಅವರು 785 ರೇಟಿಂಗ್ ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿದ್ದರೆ, 784 ರೇಟಿಂಗ್ ಅಂಕ ಹೊಂದಿರುವ ಡೆರಿಲ್ ಮಿಚೆಲ್ ಅವರು 2ನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನಿಯಾಗಿರುವ ರೋಹಿತ್ ಶರ್ಮಾ ಬಳಿ ಇರುವ ರೇಟಿಂಗ್ ಅಂಕ 775. ಅಂದರೆ ವಿರಾಟ್ ಮತ್ತು ಮಿಚೆಲ್ ನಡುವಿನ ರೇಟಿಂಗ್ ಅಂಕಗಳ ವ್ಯತ್ಯಾಸ ಕೇವಲ 1! ಇದೀಗ ಮೂರನೇ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿರುವ ಡೆರಿಲ್ ಮಿಚೆಲ್ ಅವರು 1ನೇ ಸ್ಥಾನಕ್ಕೇರಿದರೂ ಏನೂ ಅಚ್ಚರಿಯಿಲ್ಲ. ಇದಕ್ಕೂ ಮೊದಲು ರಾಜಕೋಟ್ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್ ಗಳಿಸಿ ಔಟಾಗಿದ್ದರು. ಆ ಪಂದ್ಯದಲ್ಲಿ ಮಿಚೆಲ್ ಅವರು ಅಜೇಯ 131 ರನ್ ಗಳಿಸಿ ಮಿಂಚಿದ್ದರು. ಮಾತ್ರವಲ್ಲದೆ ನ್ಯೂಜಿಲೆಂಡ್ ತಂಡದ 7 ವಿಕೆಟ್ಗಳ ಗೆಲುವಿಗೆ ಕಾರಣಕರ್ತರಾಗಿದ್ದರು. ಹೀಗಾಗಿ ಕಿವೀಸ್ ಸರಣಿಯಲ್ಲಿ 1-1 ರಿಂದ ಸಮಬಲ ಸ್ಥಾಪಿಸಲು ಸಾಧ್ಯವಾಗಿತ್ತು.. ಈಗ ಗಳಿಸಿರುವುದರಿಂದ, ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೂ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ. ಏನಿದು ವೈರಲ್ ವಿಡಿಯೋ? ಮೊಹಮ್ಮದ್ ಸಿರಾಜ್ ಅವರು ಎಸೆದ ಇನ್ನಿಂಗ್ಸ್ ನ 45ನೇ ಓವರ್ ನ ಮೊದಲ ಎಸೆತದಲ್ಲಿ ಡೆರಿಲ್ ಮಿಚೆಲ್ ಅವರು ಕುಲ್ದೀಪ್ ಯಾದವ್ ಅವರಿಗೆ ಕ್ಯಾಚಿತ್ತು ಔಟಾದರು. ಈ ವೇಳೆ ಡೆರಿಲ್ ಮಿಚೆಲ್ ಅವರು ಡ್ರೆಸ್ಸಿಂಗ್ ರೂಮ್ ಕಡೆಗೆ ಮರಳುತ್ತಿದ್ದಾಗ ಬೌಂಡರಿ ರೇಖೆ ಬಳಿ ನಿಂತಿದ್ದ ವಿರಾಟ್ ಕೊಹ್ಲಿ ಅವರು ಮಿಚೆಲ್ ಅವರ ಪ್ರದರ್ಶನವನ್ನು ಮೆಚ್ಚಿ ಚಪ್ಪಾಳೆ ತಟ್ಟಿದರು. ನಂತರ ಅವರ ಬಳಿ ತೆರಳಿ ಬೆನ್ನು ತಟ್ಟಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಮಿಚೆಲ್ ಅವರನ್ನು ಲಘುವಾಗಿ ಗಡಿಯಾಚೆ ತಳ್ಳಿದರು. ಈ ಕ್ಷಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ನಾನಾ ಅರ್ಥಗಳನ್ನು ಕಲ್ಪಿಸಿದ್ದಾರೆ. ಮೊದಲನೆಯದಾಗಿ ಕೊಹ್ಲಿ ಅವರು ಚಪ್ಪಾಳೆ ಹೊಡೆದು ಬೆನ್ನು ತಟ್ಟಿದ್ದು ಅವರ ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾಗಿದೆ.ಆದರೆ ಅದೇ ಹೊತ್ತಲ್ಲಿ ಲಘುವಾಗಿ ಬೌಂಡರಿ ಬಳಿ ಕಳುಹಿಸಿದ ದೃಶ್ಯಕ್ಕೆ ಮಾತ್ರ ಹಲವು ವಿಶ್ಲೇಷಣೆ ಮಾಡಲಾಗಿದೆ. ಇದು ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕಿತರ ನಡುವಿನ ಸ್ನೇಹಪೂರ್ವಕ ಸ್ಪರ್ಧೆ ಎಂದು ಹೇಳಲಾಗಿದೆ. ಡೆರಿಲ್ ಮಿಚೆಲ್ ಅವರು ಈ ಸರಣಿಯಲ್ಲಿ ರನ್ಗಳನ್ನು 176 ರನ್ನ ಸರಾಸರಿಯಲ್ಲಿ 352 ರನ್ ಗಳಿಸಿದ್ದಾರೆ. ಅದೇ ವಿರಾಟ್ ಕೊಹ್ಲಿ ಅವರು ಮೊದಲೆರಡು ಪಂದ್ಯಗಳಲ್ಲಿ 77ರ ಸರಾಸರಿಯಲ್ಲಿ 154 ರನ್ ಗಳಿಸಿದ್ದಾರೆ. ಗ್ಲೆನ ಫಿಲಿಪ್ಸ್ ಅವರು 75ರ ಸರಾಸರಿಯಲ್ಲಿ 150 ರನ್ ಗಳಿಸಿದ್ದರೆ, ಕೆಎಲ್ ರಾಹುಲ್ ಅವರು 142 ಸರಾಸರಿಯಲ್ಲಿ 142 ರನ್ ಗಳಿಸಿದ್ದಾರೆ.
ಕನ್ನಡ ಬಾವುಟ ಹಾಕಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ, ತಮಿಳುನಾಡು ಕಡೆಗೆ ನುಗ್ಗುತ್ತಿರುವ ಟಿಟಿ ವಾಹನಗಳು! Kannada
ಕನ್ನಡಿಗರನ್ನು ಕೆಣಕಿ ಉಳಿದವರಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗುತ್ತಿದೆ. ಅದರಲ್ಲೂ ಕನ್ನಡ ಬಾವುಟ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಕನ್ನಡಿಗ ಟಿಟಿ ಡ್ರೈವರ್ ಮೇಲೆ ಕೈಮಾಡಿ, ಹಲ್ಲೆ ಮಾಡಿದ್ದ ತಮಿಳುನಾಡಿನ ವ್ಯಕ್ತಿ ವಿರುದ್ಧ ಭಾರಿ ಆಕ್ರೋಶದ ಬೆಂಕಿಯೇ ಇದೀಗ ಮೊಳಗಿದೆ. ಕನ್ನಡಿಗರು ಮತ್ತು ತಮಿಳು ಭಾಷಿಗರು ಒಟ್ಟಾಗಿ ಬದುಕುವ ಸಮಯದಲ್ಲೇ ಕಿಡಿಗೇಡಿ ಒಬ್ಬ ಮಾಡಿರುವ ಕೃತ್ಯಕ್ಕೆ ಇದೀಗ ಎರಡೂ
ರಾಕೇಶ್ ಅಡ್ಕರಿಗೆ ಕಂಬಳ ಗುತ್ತು ಪ್ರಶಸ್ತಿ ಪ್ರದಾನ
ಮಂಗಳೂರು, ಜ.18: ಕಲಾವಿದನ ವಿನಯ ಶೀಲತೆ ಆತನ ಮೌಲ್ಯವನ್ನು ಹೆಚ್ಚಿಸುತ್ತದೆ. ಸಾಧನೆಯ ಪಥ ಸುಲಭ ವಾಗುತ್ತದೆ ಎಂದು ವೈದ್ಯ ಡಾ. ಜಯಶಂಕರ್ ಮಾರ್ಲ ನುಡಿದರು. ತೆಂಕುತಿಟ್ಟು ಯಕ್ಷಗಾನದ ಬಹುಮುಖ ಪ್ರತಿಭೆಯ ಯುವ ವೇಷಧಾರಿ, ಯಕ್ಷಗುರು, ಸಂಘಟಕ, ನಿರ್ದೇಶಕ ರಾಕೇಶ್ ರೈ ಅಡ್ಕ ಅವರಿಗೆ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮತಿ ಪ್ರಶಸ್ತಿಯನ್ನು ಉಷಾ ನವನೀತ ಶೆಟ್ಟಿಯ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಪ್ರದಾನ ಮಾಡಿ ಅವರು ಮಾತನಾಡಿದರು. ಡಾ. ಸುಧಾಕರ ಮಾರ್ಲ ಅಭಿನಂದಿಸಿ ಮಾತನಾಡಿದರು. ಮಾಜಿ ರೋಟರಿ ಗವರ್ನರ್ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಸತೀಶ್ ಶೆಟ್ಟಿ ಭಾಗವತರು, ಕಿಶೋರ್ ಡಿ. ಶೆಟ್ಟಿ, ರವೀಂದ್ರನಾಥ ಶೆಟ್ಟಿ, ಪ್ರದೀಪ ಆಳ್ವ ಕದ್ರಿ, ಮುಲ್ಕಿ ಕರುಣಾಕರ ಶೆಟ್ಟಿ, ಹರೀಶ್ ಕುಮಾರ್ ಕುಳಾಯಿ, ಸಂಜಯ ಕುಮಾರ್ ರಾವ್, ಕದ್ರಿ ಭಾಸ್ಕರ ಶೆಟ್ಟಿ, ಸಾಕೇತ್ ಶೆಟ್ಟಿ ಉಪಸ್ಥಿತರಿದ್ದರು. ಕದ್ರಿ ಕಂಬಳ ಗುತ್ತು ನವನೀತ ಶೆಟ್ಟಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ಆರ್ಥಿಕವಾಗಿ ಸಬಲರಾಗಿರುವವರು ಬಡವರ ನೆರವಿಗೆ ಧಾವಿಸುವುದು ಸಾಮಾಜಿಕ ಜವಾಬ್ದಾರಿ : ಸಚಿವ ಸತೀಶ್ ಜಾರಕಿಹೊಳಿ
► ಅಕ್ಬರ್ ಪಾಷಾ ಅವರಿಂದ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಯಲಿ ► ದಾರುಸ್ಸಲಾಮ್ ಫೌಂಡೇಶನ್ ವತಿಯಿಂದ 121 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ
ಬಾಂಬ್ ಬೆದರಿಕೆ| ಲಕ್ನೋದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ
ಹೊಸದಿಲ್ಲಿ, ಜ. 17: ದಿಲ್ಲಿಯಿಂದ ಪಶ್ಚಿಮಬಂಗಾಳದ ಬಾಗ್ಡೋಗ್ರಾಕ್ಕೆ ಹಾರಾಟ ನಡೆಸುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ರವಿವಾರ ಬೆಳಿಗ್ಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಸಂದರ್ಭ ಭದ್ರತಾ ಸಿಬ್ಬಂದಿ ‘‘ವಿಮಾನದಲ್ಲಿ ಬಾಂಬ್ ಇದೆ’’ ಎಂದು ಕೈಬರೆಹದಲ್ಲಿ ಬರೆದ ಟಿಶ್ಯೂ ಪೇಪರ್ ಅನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಡಿಗೋದ 6ಇ-6650 ವಿಮಾನ ಹೊಸದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 7.46ಕ್ಕೆ ಸಂಚಾರ ಆರಂಭಿಸಿತ್ತು. ಈ ವಿಮಾನದಲ್ಲಿ 8 ಮಕ್ಕಳು ಸೇರಿದಂತೆ 222 ಮಂದಿ ಪ್ರಯಾಣಿಕರಿದ್ದರು. ಇಬ್ಬರು ಪೈಲಟ್ಗಳು ಹಾಗೂ ಐವರು ಸಿಬ್ಬಂದಿ ಇದ್ದರು. ವಿಮಾನ ಸಂಚಾರ ನಿಯಂತ್ರಣ ಸರಿಸುಮಾರು ಬೆಳಗ್ಗೆ 8.46ಕ್ಕೆ ಬಾಂಬ್ ಬೆದರಿಕೆಯ ಮಾಹಿತಿ ಸ್ವೀಕರಿಸಿದ ಬಳಿಕ ವಿಮಾನ ಬೆಳಗ್ಗೆ ಸುಮಾರು 9.17ಕ್ಕೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತು. ಕೂಡಲೇ ವಿಮಾನವನ್ನು ‘ಐಸೋಲೇಶನ್ ಬೇ’ಯಲ್ಲಿ ಇರಿಸಲಾಯಿತು. ಅಲ್ಲಿ ಬಾಂಬ್ ನಿಷ್ಕ್ರಿಯ ದಳ, ಭದ್ರತಾ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸಿದರು. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ, ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ. ಅಗತ್ಯದ ಭದ್ರತಾ ತಪಾಸಣೆಗಳನ್ನು ಕೈಗೊಳ್ಳುವಲ್ಲಿ ವಿಮಾನ ಯಾನ ಸಂಸ್ಥೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಿದೆ ಎಂದು ಹೇಳಿದೆ.
ಎದುರುಪದವು ಮಸೀದಿ-ಮದ್ರಸ ಸಮಿತಿಯಿಂದ ಸ್ಪೀಕರ್ ಯು.ಟಿ. ಖಾದರ್ಗೆ ಸನ್ಮಾನ
ಮಂಗಳೂರು, ಜ.18: ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಎದುರುಪದವು ಮೂಡುಶೆಡ್ಡೆ ಇದರ 22ನೇ ಸ್ವಲಾತ್ ವಾರ್ಷಿಕದ ಪ್ರಯುಕ್ತ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್ರನ್ನು ಸನ್ಮಾನಿಸಲಾಯಿತು. ಈ ವೇಳೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ಆಡಳಿತ ಮಂಡಳಿ ಅಧ್ಯಕ್ಷ ಎ.ಪಿ. ಮುಹಮ್ಮದ್ ಇಕ್ಬಾಲ್, ಮಸೀದಿಯ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ, ಸದರ್ ಉಸ್ತಾದ್ ಝುಬೈರ್ ಯಮಾನಿ ಜೋಕಟ್ಟೆ, ಮುಅಲ್ಲಿಂ ಜಾಬಿರ್ ಜೌಹರಿ ಕಲ್ಲಡ್ಕ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ.ಆರ್., ಕಾರ್ಯದರ್ಶಿ ಸಾಜುದ್ದೀನ್, ಮಾಜಿ ಅಧ್ಯಕ್ಷ ಸೈಫುದ್ದೀನ್, ಮಾಜಿ ಉಪಾಧ್ಯಕ್ಷ ಮನ್ಸೂರ್, ಎಂ.ಡಿ. ಜಬ್ಬಾರ್, ಮಾಜಿ ಕಾರ್ಯದರ್ಶಿ ಅಬ್ದುಲ್ ಖಾದರ್, ಉದ್ಯಮಿ ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿ ಮುಹಮ್ಮದ್ ಆರೀಫ್, ಕೋಶಾಧಿಕಾರಿ ಇಮ್ರಾನ್ ಅಲಿ ಮತ್ತಿತರರು ಉಪಸ್ಥಿತರಿದ್ದರು.
ಗೂಂಡಾಗಿರಿ ಮಾಡುತ್ತಿದ್ದವರಿಂದ ನಾವು ಪಾಠ ಕಲಿಯಬೇಕಿಲ್ಲ: ಸಿದ್ದರಾಮಯ್ಯ
ಮೈಸೂರು: ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ, ಸರ್ವಾಧಿಕಾರ ಮನಸ್ಥಿತಿಯೇ ಹೆಚ್ಚು ಎಂದು ಬಿಜೆಪಿ ನಾಯಕರ ರಾಜಕೀಯ ನಡೆ ಹಾಗೂ ಹೇಳಿಕೆಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳು ಹಾಗೂ ಜನಾಂದೋಲನಗಳ ಹಿಂದಿರುವ ಉದ್ದೇಶಗಳ ಕುರಿತು ಮಾತನಾಡಿದ ಸಿಎಂ, ಬಿಜೆಪಿಯ ರಾಜಕೀಯ ಸಂಸ್ಕೃತಿಯನ್ನೇ ಪ್ರಶ್ನಿಸಿದ್ದಾರೆ.
ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ವಿರುದ್ಧದ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲ: ಗೀತಾಂಜಲಿ ಆಂಗ್ಮೊ
ಹೊಸದಿಲ್ಲಿ, ಜ. 17: ಪರಿಸರ ಹೋರಾಟಗಾರ ಸೋನಮ್ ವಾಗ್ಚುಕ್ ಅವರ ಬಂಧನ ದೇಶದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಯನ್ನು ಪ್ರತಿಬಿಂಬಿಸಿದೆ. ಇಲ್ಲಿ ಜನರನ್ನು ಅಕ್ರಮವಾಗಿ ಬಂಧಿಸಲು ಅಧಿಕಾರವನ್ನು ಬಳಸಲಾಗುತ್ತದೆ ಎಂದು ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಪ್ರತಿಪಾದಿಸಿದ್ದಾರೆ. ಸರಕಾರ ನ್ಯಾಯಾಲಯದಲ್ಲಿ ಪದೇ ಪದೇ ಹೊಸ ದಿನಾಂಕವನ್ನು ಕೇಳುತ್ತಿರುವುದರಿಂದ ಈ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲವೆಂದು ಅವರು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಆಂಗ್ಮೊ ಅವರು, ಸೋನಮ್ ವಾಂಗ್ಚುಕ್ ಈಗಾಗಲೇ ಬಿಡುಗಡೆಗೊಳ್ಳಬೇಕಿತ್ತು. ಆದರೆ, ಅಧಿಕಾರಿಗಳ ಕಾರ್ಯ ಲೋಪದಿಂದ ಅವರು ಬಿಡುಗಡೆಯಾಗಿಲ್ಲ. ಇದು ಮುಚ್ಚಿದ ಪ್ರಕರಣ ಎಂದರು. ಸೋನಮ್ ವಾಂಗ್ಚುಕ್ ಅವರ ಬಂಧನಕ್ಕೆ ಬಲವಾದ ವಿರೋಧ ವ್ಯಕ್ತವಾಗದಿರುವುದು ತನಗೆ ನಿರಾಶೆ ತಂದಿದೆ. ನಾವು ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ ಆಂಗ್ಮೊ, ಅವರ ಬಂಧನಕ್ಕೆ ಸಾಮೂಹಿಕ ಹಾಗೂ ತೀವ್ರ ಪ್ರತಿಭಟನೆಗೆ ಕರೆ ನೀಡಿದರು. ಇದು ಸೋನಮ್ ವಾಗ್ಚುಕ್ ಅವರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ದೇಶದ ಪ್ರಜಾಪ್ರಭುತ್ವದ ಸ್ಥಿತಿಗೆ ಸಂಬಂಧಿಸಿದ ವಿಷಯ ಕೂಡ ಆಗಿದೆ. ಸೋನಮ್ ವಾಂಗ್ಚುಕ್ ಅವರಂತಹ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾದರೆ, ಅದು ಮುಂದೆ ಯಾರನ್ನೂ ಬಂಧಿಸಬಹುದು ಎಂದು ಆಂಗ್ಮೊ ಹೇಳಿದರು. ಲಡಾಖ್ಗೆ ರಾಜ್ಯದ ಸ್ಥಾನ ಮಾನ ಹಾಗೂ 6ನೇ ಪರಿಚ್ಛೇದದಲ್ಲಿ ಸ್ಥಾನಕ್ಕೆ ಆಗ್ರಹಿಸಿ ಲಡಾಖ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು ಹಾಗೂ 90 ಮಂದಿ ಗಾಯಗೊಂಡಿದ್ದರು. ಅನಂತರ ಕಳೆದ ಸೆಪ್ಟಂಬರ್ 26ರಂದು ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಅಡಿಯಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ.
ಅಡುಗೆ ಎಣ್ಣೆಗಳನ್ನು ಮಿಶ್ರಣ ಮಾಡಿ ಬಳಸುವುದು ಉತ್ತಮವೆ?
ಸರಿಯಾದ ಮಿಶ್ರಣದಲ್ಲಿ ಬಳಸಿದರೆ ಅಥವಾ ಎಣ್ಣೆಯನ್ನು ಬದಲಿಸಿ ಬಳಸಿದರೆ ಅವುಗಳ ಲಾಭಗಳು ಸಿಗಲಿವೆ ಮತ್ತು ಸಮತೋಲಿತ ಕೊಬ್ಬು ಸೇವನೆಗೆ ನೆರವಾಗಲಿದೆ. ಭಾರತೀಯರು ಮನೆಗಳಲ್ಲಿ ವಿಭಿನ್ನ ಅಡುಗೆ ಎಣ್ಣೆಗಳನ್ನು ಬಳಸುತ್ತಾರೆ. ನೆಲಗಡಲೆ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಗಳನ್ನು ಬಳಸಲಾಗುತ್ತದೆ. ಇತ್ತ ಹೃದಯದ ಆರೋಗ್ಯದ ಜಾಗೃತಿ ಹೆಚ್ಚಾಗುತ್ತಿರುವಂತೆ ಬಹುತೇಕ ಮಂದಿ ಸೂರ್ಯಕಾಂತಿ ಮತ್ತು ಸಾಸಿವೆ ಎಣ್ಣೆಯನ್ನು ಮಿಶ್ರಮಾಡಿ ಆರೋಗ್ಯಕರ ಸಮತೋಲನ ತರಲು ಪ್ರಯತ್ನಿಸುತ್ತಿದ್ದಾರೆ. ► ಎಣ್ಣೆಗಳನ್ನು ಮಿಶ್ರಮಾಡುವುದು ಸರಿಯೆ? ಮುಂಬೈಯ ಥಾಣೆಯಲ್ಲಿ ಮುಖ್ಯ ಆಹಾರ ತಜ್ಞರಾಗಿರುವ ಅಮ್ರೀನ್ ಶೇಖ್ ಪ್ರಕಾರ ಸರಿಯಾಗಿ ಸಂಯೋಜನೆ ಮಾಡಿದರೆ ಸುರಕ್ಷಿತವಾಗಿರುತ್ತದೆ. “ಸೂರ್ಯಕಾಂತಿ ಹಗುರ ಮತ್ತು ತಟಸ್ಥ. ಸಾಸಿವೆ ವಿಶಿಷ್ಟ ರುಚಿ ಮತ್ತು ನೈಸರ್ಗಿಕ ಸಂಯುಕ್ತಗಳನ್ನು ತರುತ್ತದೆ. ಅವುಗಳನ್ನು ಅತಿಯಾಗಿ ಬಿಸಿ ಮಾಡಿರದೆ ಇದ್ದರೆ ಅಥವಾ ಅನೇಕ ಸಲ ಮರುಬಳಕೆ ಮಾಡದೆ ಇದ್ದರೆ ಬಳಸುವುದರಲ್ಲಿ ತಪ್ಪೇನಿಲ್ಲ.” “ಎಣ್ಣೆಯನ್ನು ಪದೇಪದೆ ಬಿಸಿ ಮಾಡುವುದರಿಂದ ಆಕ್ಸಿಡೇಟಿವ್ ಹಾನಿ ಸಂಭವಿಸುತ್ತದೆ ಮತ್ತು ಹಾನಿಕರ ಸಂಯುಕ್ತಗಳು ರೂಪುಗೊಳ್ಳುತ್ತವೆ. ಎಣ್ಣೆಯ ಬಿಸಿ ಮಾಡುವ ಸಹಿಷ್ಣುತೆಗಳು ವಿಭಿನ್ನವಾಗಿರುವಾಗ ಇದರ ಅಪಾಯ ಹೆಚ್ಚಿರುತ್ತದೆ. ವಿಭಿನ್ನ ಎಣ್ಣೆಗಳಲ್ಲಿ ಭಿನ್ನವಾದ ಕೊಬ್ಬಿನ ಆಮ್ಲದ ವಿವರಗಳಿರುತ್ತವೆ. ಕೆಲವು ಒಮೆಗಾ 3 ಅಥವಾ ಮೋನೋಸ್ಯಾಚುರೇಟೆಡ್ ಕೊಬ್ಬುಗಳಾಗಿರುತ್ತವೆ. ಸರಿಯಾದ ಮಿಶ್ರಣದಲ್ಲಿ ಬಳಸಿದರೆ ಅಥವಾ ಎಣ್ಣೆಯನ್ನು ಬದಲಿಸಿ ಬಳಸಿದರೆ ಅವುಗಳ ಲಾಭಗಳು ಸಿಗಲಿವೆ ಮತ್ತು ಸಮತೋಲಿತ ಕೊಬ್ಬು ಸೇವನೆಗೆ ನೆರವಾಗಲಿದೆ. ವರ್ಷವಿಡೀ ಒಂದೇ ಎಣ್ಣೆಯ ಮೇಲೆ ಅವಲಂಬಿತವಾಗುವ ಬದಲಾಗಿ ಎಣ್ಣೆಗಳನ್ನು ಬದಲಿಸುವುದು ಚಯಾಪಚಯ ಆರೋಗ್ಯ ಮತ್ತು ಹೃದಯದ ಆರೋಗ್ಯಕ್ಕೆ ನೆರವಾಗಲಿದೆ” ಎನ್ನುತ್ತಾರೆ. ►ಎಲ್ಲಾ ರೀತಿಯ ಮಿಶ್ರಣ ಸರಿಯೆ? ವೈದ್ಯರ ಪ್ರಕಾರ, ಎಲ್ಲಾ ಮಿಶ್ರಣಗಳು ಎಲ್ಲಾ ಅಡುಗೆ ವಿಧಾನಗಳಿಗೆ ಸೂಕ್ತವಲ್ಲ. ಹೆಚ್ಚಿನ ಉಷ್ಣತೆಯ ಅಡುಗೆಗಾಗಿ ಅತಿ ವಿಭಿನ್ನವಾಗಿರುವ ಸ್ಮೋಕ್ ಪಾಯಿಂಟ್ಗಳಿರುವ ಎಣ್ಣೆಗಳನ್ನು ಮಿಶ್ರ ಮಾಡುವುದನ್ನು ತಪ್ಪಿಸಬೇಕು. ಆಳವಾಗಿ ಹುರಿಯಲು ಸಂಸ್ಕರಿಸಿದ ಅಥವಾ ಸಂಸ್ಕರಿಸದ ಎಣ್ಣೆಗಳನ್ನು ಮಿಶ್ರಮಾಡಿ ಬಳಸುವುದರಿಂದ ಅವು ವೇಗವಾಗಿ ಒಡೆಯಬಹುದು. ಮಿಶ್ರ ಮಾಡಿದ ಎಣ್ಣೆಗಳನ್ನು ಅಗತ್ಯಕ್ಕಿಂತ ಹೆಚ್ಚು ಬಿಸಿ ಮಾಡುವುದು ಅಥವಾ ಮರು ಬಿಸಿ ಮಾಡುವುದು ಮಾಡಬಾರದು. ಹಾಗೆ ಮಾಡಿದರೆ ಜೀರ್ಣಾಂಗ ವ್ಯೂಹದಲ್ಲಿ ಉರಿಯೂತ ತರುವ ಸಂಯುಕ್ತಗಳನ್ನು ರೂಪಿಸಬಹುದು. ಅವು ದೀರ್ಘಕಾಲೀನ ಹೃದಯದ ಆರೋಗ್ಯಕ್ಕೆ ಸೂಕ್ತವಲ್ಲ. ತಾಪಮಾನವು ನಿರಂತರವಾಗಿ ಹೆಚ್ಚಿರುವ ಆಳವಾಗಿ ಹುರಿಯುವ ಸಂದರ್ಭದಲ್ಲಿ ಬಳಸುವ ಎಣ್ಣೆಗಳಿಗೆ ಇವು ಅನ್ವಯಿಸುತ್ತದೆ. ► ಎಣ್ಣೆ ಬದಲಿಸುವ ಬದಲು ಮಿಶ್ರ ಮಾಡುವುದು ಒಳಿತೆ? ಇದು ಸಾಮಾನ್ಯವಾಗಿ ಎದುರಿಸುವ ಗೊಂದಲ. ವೈದ್ಯರ ಪ್ರಕಾರ ಮಿಶ್ರಮಾಡಿ ಎಣ್ಣೆ ಬಳಸುವುದು ಅನುಕೂಲಕರ. ಹಾಗೆಯೇ ಬದಲಿಸಿ ಬಳಸುವುದೂ ಉತ್ತಮ. ದೇಹಕ್ಕೆ ವಿವಿಧ ಕೊಬ್ಬು ಮತ್ತು ಪೌಷ್ಠಿಕಾಂಶ ಕೊಡಬೇಕು ಎನ್ನುವುದು ಗುರಿಯಾಗಬೇಕು. ಉದಾಹರಣೆಗೆ ಸಾಸಿವೆ ಎಣ್ಣೆಯನ್ನು ಉಪ್ಪಿನಕಾಯಿಗೆ ಬಳಸಬಹುದು. ಸೂರ್ಯಾಕಾಂತಿ ಎಣ್ಣೆಯನ್ನು ಅಥವಾ ರೈಸ್ ಬಾರ್ನ್ ಎಣ್ಣೆಯನ್ನು ದಿನನಿತ್ಯದ ಅಡುಗೆಗೆ ಬಳಸಬಹುದು. ನೆಲಗಡಲೆ ಎಣ್ಣೆಯನ್ನು ಆಳವಾಗಿ ಹುರಿಯಲು ಬಳಸಬಹುದು. ಆಲಿವ್ ಎಣ್ಣೆಯನ್ನು ಸಲಾಡ್ಗಳು ಅಥವಾ ಕಡಿಮೆ ಕುದಿಸುವ ಕಡೆ ಬಳಸಬಹುದು.
ಹಣ, ಐಶ್ವರ್ಯ ಮುಖ್ಯವಲ್ಲ ಸಮಾಜಕ್ಕೆ ಹಂಚುವ ಹೃದಯವಂತಿಕೆ ಮುಖ್ಯ: ಸಭಾಧ್ಯಕ್ಷ ಯು.ಟಿ.ಖಾದರ್
ಅಕ್ಬರ್ ಪಾಷಾ ಅಧ್ಯಕ್ಷತೆಯ ದಾರುಸ್ಸಲಾಮ್ ಫೌಂಡೇಶನ್ ವತಿಯಿಂದ 121 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ
ಗ್ರೀನ್ಲ್ಯಾಂಡ್ ಮಾರಾಟಕ್ಕಿಲ್ಲ: ಟ್ರಂಪ್ ಸ್ವಾಧೀನ ಬೆದರಿಕೆ ವಿರುದ್ಧ ಬೀದಿಗಿಳಿದ ಸಹಸ್ರಾರು ಜನರು
ನೂಕ್,ಜ.18: ಗ್ರೀನ್ಲ್ಯಾಂಡ್ನ್ನು ವಶಪಡಿಸಿಕೊಳ್ಳುವುದಾಗಿ ಬೆದರಿಕೆಯೊಡ್ಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಶನಿವಾರ ಸಹಸ್ರಾರು ಗ್ರೀನ್ಲ್ಯಾಂಡ್ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಫಲಕಗಳನ್ನು ಹಿಡಿದಿದ್ದ ಅವರು ರಾಷ್ಟ್ರಧ್ವಜವನ್ನು ಬೀಸುತ್ತ ‘ಗ್ರೀನ್ಲ್ಯಾಂಡ್ ಮಾರಾಟಕ್ಕಿಲ್ಲ’ ಎಂಬ ಘೋಷಣೆಯನ್ನು ಕೂಗುತ್ತ ಹಿಮ ಮತ್ತು ಮಂಜುಗಡ್ಡೆಗಳ ನಡುವೆಯೇ ಜಾಥಾ ನಡೆಸಿದರು. ಗ್ರೀನ್ಲ್ಯಾಂಡ್ ರಾಜಧಾನಿ ನೂಕ್ನ ಹೃದಯಭಾಗದಿಂದ ಅಮೆರಿಕದ ದೂತಾವಾಸದವರೆಗೆ ನಡೆದ ಜಾಥಾ ಅಂತ್ಯಗೊಳ್ಳುತ್ತಿದ್ದಂತೆಯೇ ಟ್ರಂಪ್ ಅವರು ಗ್ರೀನ್ಲ್ಯಾಂಡ್ ಮೇಲೆ ಅಮೆರಿಕದ ನಿಯಂತ್ರಣವನ್ನು ವಿರೋಧಿಸುತ್ತಿರುವ ಎಂಟು ಐರೋಪ್ಯ ದೇಶಗಳ ಮೇಲೆ ಫೆ.1ರಿಂದ ಶೇ.10 ಆಮದು ಸುಂಕವನ್ನು ಹೇರುವುದಾಗಿ ಘೋಷಿಸಿದ ಸುದ್ದಿ ಹೊರಬಿದ್ದಿತ್ತು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗ್ರೀನ್ಲ್ಯಾಂಡ್ ನಿವಾಸಿ ಮಲಿಕ್ ಡಾಲ್ರೂಪ್-ಶೈಬೆಲ್ (21)‘ ಈ ದಿನವು ಇನ್ನಷ್ಟು ಕೆಟ್ಟದ್ದಾಗುವುದಿಲ್ಲ ಎಂದುಕೊಂಡಿದ್ದೆ, ಆದರೆ ಈಗ ಅದೇ ಸಂಭವಿಸಿದೆ. ಟ್ರಂಪ್ಗೆ ಈಗ ಯಾವುದೇ ಮಾನವೀಯತೆ ಉಳಿದಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ ’ಎಂದು ಹೇಳಿದರು. ದ್ವೀಪದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪ್ರತಿಭಟನೆಯಲ್ಲಿ ಗ್ರೀನ್ಲ್ಯಾಂಡ್ ಪ್ರಧಾನಿ ಜೆನ್ಸ್-ಫ್ರೆಡ್ರಿಕ್ ನೀಲ್ಸನ್ ಸೇರಿದಂತೆ ನೂಕ್ನ ಸುಮಾರು ಶೇ.25ರಷ್ಟು ನಿವಾಸಿಗಳು ಪಾಲ್ಗೊಂಡಿದ್ದರು. ಟ್ರಂಪ್ ಆಡಳಿತವು ಈ ಹುಚ್ಚು ಆಲೋಚನೆಯನ್ನು ಕೈಬಿಡುತ್ತದೆ ಎಂದು ತಾನು ಆಶಿಸಿರುವುದಾಗಿ ಹೇಳಿದ ಗ್ರೀನ್ಲ್ಯಾಂಡ್ ಸಂಸತ್ತಿನ ಮಾಜಿ ಸದಸ್ಯೆ ಟಿಲ್ಲೀ ಮಾರ್ಟಿನಸ್ಸೆನ್, ‘ಅವರು ಆರಂಭದಲ್ಲಿ ತಮ್ಮನ್ನು ನಮ್ಮ ಸ್ನೇಹಿತರು ಎಂದು ಬಣ್ಣಿಸಿಕೊಂಡಿದ್ದರು ಮತ್ತು ಗ್ರೀನ್ಲ್ಯಾಂಡ್ನ್ನು ಡೆನ್ಮಾರ್ಕಿಗರಿಗಿಂತ ಉತ್ತಮವಾಗಿ ಅಭಿವೃದ್ಧಿಗೊಳಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ಅವರು ನೇರವಾಗಿ ನಮಗೆ ಬೆದರಿಕೆಯೊಡ್ಡುತ್ತಿದ್ದಾರೆ. ನ್ಯಾಟೊ ಮತ್ತು ಗ್ರೀನ್ಲ್ಯಾಂಡ್ನ ಸ್ವಾಯತ್ತತೆಯ ರಕ್ಷಣೆ ಸುಂಕಕ್ಕಿಂತ ಮುಖ್ಯವಾಗಿದೆ ಎಂದು ಹೇಳಿದರು. ಆದರೆ, ಅದರ ಸಂಭಾವ್ಯ ಆರ್ಥಿಕ ಪರಿಣಾಮವನ್ನು ಅವರು ತಳ್ಳಿಹಾಕಲಿಲ್ಲ. ಕೋಪನ್ಹೇಗನ್ ಸೇರಿದಂತೆ ಡೆನ್ಮಾರ್ಕ್ ಆಡಳಿತ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಹಾಗೂ ಕೆನಡಾದ ಉತ್ತರ ತುದಿಯಲ್ಲಿಯ ಇನ್ಯೂಟ್ ಆಡಳಿತದ ನುನಾವಟ್ ಪ್ರದೇಶದ ರಾಜಧಾನಿಯಲ್ಲಿಯೂ ಗ್ರೀನ್ಲ್ಯಾಂಡ್ ನಿವಾಸಿಗಳಿಗೆ ಬೆಂಬಲವನ್ನು ಸೂಚಿಸಿ ರ್ಯಾಲಿಗಳು ನಡೆದವು. ಇದು ಇಡೀ ವಿಶ್ವಕ್ಕೇ ಮಹತ್ವದ್ದಾಗಿದೆ ಎಂದು ಹೇಳಿದ ಕೋಪನ್ ಹೇಗನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲಿಸ್ ರೀಚಿ ಅವರು, ಜಗತ್ತಿನಲ್ಲಿ ಅನೇಕ ಸಣ್ಣ ದೇಶಗಳಿವೆ. ಅವುಗಳಲ್ಲಿ ಯಾವುದೂ ಮಾರಾಟಕ್ಕೆ ಇಲ್ಲ ಎಂದು ಹೇಳಿದರು.
ಸುಬ್ರಹ್ಮಣ್ಯ| ಕುಮಾರಧಾರ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು
ಕಡಬ, ಜ.18. ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ. ಮೃತ ಯುವಕರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಹರಿಪ್ರಸಾದ್ (37) ಹಾಗೂ ಸುಜಿತ್ (26) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಅವಿವಾಹಿತರಾಗಿದ್ದು, ತಮ್ಮ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕುಮಾರಧಾರ ನದಿಗೆ ಕುಲ್ಕುಂದ ಬಳಿ ಇಳಿದಿದ್ದು, ಈ ವೇಳೆ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನೀರಲ್ಲಿ ಮುಳುಗಿದ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ | ಐಪಿಎಲ್ ಪಂದ್ಯಕ್ಕೂ ಮೊದಲು ಅಲ್ಪಾವಧಿ ಷರತ್ತು ಪೂರೈಸಬೇಕು : ಡಾ.ಜಿ.ಪರಮೇಶ್ವರ್
ಬೆಂಗಳೂರು : ಮಾರ್ಚ್ನಲ್ಲಿ ಐಪಿಎಲ್ ಬರುತ್ತದೆ, ಅಷ್ಟರಲ್ಲಿ ಅಲ್ಪಾವಧಿ ಷರತ್ತು ಪೂರೈಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಷರತ್ತು ಬದ್ಧ ಅನುಮತಿ ಕೊಟ್ಟಿದ್ದೇವೆ. ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ವಿಚಾರಣಾ ಸಮಿತಿ ರಚಿಸಿ ಕ್ರೀಡಾಂಗಣ ಪರಿಶೀಲನೆಗೆ ಹೇಳಿದ್ದೆವು. ಅವರು ಹಲವು ಶಿಫಾರಸುಗಳನ್ನು ನೀಡಿದ್ದರು. ಇದರ ಅನ್ವಯ ಸಂಪುಟದಲ್ಲಿ ಚರ್ಚಿಸಿ, ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದೆವು. ನಾವು ಡಿ. ಕುನ್ಹಾ ಅವರ ಶಿಫಾರಸುಗಳನ್ನು ಕೆಎಸ್ಸಿಎಗೆ ಕಳುಹಿಸಿ ಇದನ್ನು ಸರಿಪಡಿಸಿಕೊಳ್ಳಲು ತಿಳಿಸಿದ್ದೇವೆ ಎಂದು ಹೇಳಿದರು. ಚಿನ್ನಸ್ವಾಮಿ ಕ್ರೀಡಾಂಗಣದ ಸ್ಥಿತಿಗತಿ ಅಧ್ಯಯನಕ್ಕೆ ಮಹೇಶ್ವರ್ ರಾವ್ ಸಮಿತಿ ಮಾಡಿದ್ದೆವು. ಅವರು ವರದಿ ಕೊಟ್ಟಿದ್ದರು. ಕೆಎಸ್ಸಿಎ ಹೊಸ ಸಮಿತಿಯು ನಾವು ಷರತ್ತು ಪೂರೈಸುವುದಾಗಿ ಭರವಸೆ ನೀಡಿದ್ದರು. ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ದೀರ್ಘಾವಧಿ ಹಾಗೂ ಅಲ್ಪಾವಧಿಯಲ್ಲಿ ಷರತ್ತು ಪೂರೈಸುವುದಾಗಿ ಬರವಣಿಗೆಯಲ್ಲಿ ಕೊಟ್ಟಿದ್ದಾರೆ. ಅದನ್ನು ಮರುಪರಿಶೀಲನೆ ಮಾಡುತ್ತೇವೆ. ನಾವು ಅವರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ಕ್ರೀಡಾಂಗಣದ ಬಳಿ ಈಗಾಗಲೇ ಕೆಲಸ ಶುರುವಾಗಿದೆ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.
ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಹಣ ಕೊಟ್ಟು ಟಿಕೆಟ್ ಪಡೆಯಲು ನಿರಾಕರಿಸಿದ ಮಹಿಳೆಯೊಬ್ಬರು ಬಿಎಂಟಿಸಿ ಬಸ್ನಲ್ಲಿ ದರ್ಪ ತೋರಿದ್ದಾರೆ. ಚೆಕ್ಕಿಂಗ್ ಆಫೀಸರ್ ಬಂದರೆ ಸಮಸ್ಯೆ ಎಂದು ಕಂಡಕ್ಟರ್ ಮನವಿ ಮಾಡಿದರೂ, ಮಹಿಳೆ ಹಣ ನೀಡಲು ನಿರಾಕರಿಸಿದ್ದರಿಂದ ಪ್ರಯಾಣಿಕರು ಪರದಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಶಕ್ತಿ ಯೋಜನೆಯ ದುರುಪಯೋಗದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಜಾರಿಗೆ ತಂದ ಡಿಸಿಆರ್ಇ ಠಾಣೆಗಳು ಪರಿಣಾಮಕಾರಿಯಾಗಲಿ: ಡಾ.ಜಿ.ಪರಮೇಶ್ವರ್
ಬೆಂಗಳೂರು : ಪರಿಶಿಷ್ಟ ಜಾತಿ, ಪಂಗಡ(ಎಸ್ಸಿ-ಎಸ್ಟಿ)ದ ಜನರ ಮೇಲಿನ ದೌರ್ಜನ್ಯ ತಡೆಗಟ್ಟಿ, ಆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಡಿಸಿಆರ್ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಡಿಸಿಆರ್ಇ ಪೊಲೀಸ್ ಠಾಣೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಲಹೆ ನೀಡಿದ್ದಾರೆ. ರವಿವಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ‘ಹಿರಿಯ ಪೊಲೀಸ್ ಅಧಿಕಾರಿಗಳ 2ನೇ ದಿನದ ಸಮಾವೇಶ'ದಲ್ಲಿ ಪಾಲ್ಗೊಂಡು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅಂತರ್ಜಾತಿ ವಿವಾಹವಾದ ಯುವತಿಯನ್ನು ಆಕೆಯ ತಂದೆಯೇ ಕೊಲೆ ಮಾಡುತ್ತಾನೆಂದರೆ ಹೇಗೆ ಸಹಿಸುವುದು. ಎಸ್ಸಿ-ಎಸ್ಟಿ ಸಮುದಾಯದ ಜನರ ಮೇಲಾಗುತ್ತಿರುವ ಶೋಷಣೆಯನ್ನು ತಡೆಗಟ್ಟಲು ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಡಿಸಿಆರ್ಇ ಠಾಣೆಗಳನ್ನು ಮಾಡಲಾಗಿದೆ. ಶೋಷಿತರೊಂದಿಗೆ ನಾವಿದ್ದೇವೆಂಬ ಭರವಸೆ ಮೂಡಿಸಬೇಕಲ್ಲವೇ? ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಪೊಲೀಸ್ ಇಲಾಖೆಯ ಮೇಲೆ ಜವಾಬ್ದಾರಿ ಹೆಚ್ಚಿದೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಉತ್ತಮವಾಗಿದ್ದರೆ, ಆರ್ಥಿಕತೆ, ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲವೂ ಅಭಿವೃದ್ಧಿಯಾಗುತ್ತದೆ ಎಂದ ಅವರು, ಕೆಲವು ರಾಜ್ಯಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಆರ್ಥಿಕವಾಗಿ ಹಿಂದೆ ಉಳಿದಿವೆ. ಅಲ್ಲಿನ ಕಾನೂನು ಸುವ್ಯವಸ್ಥೆ ಉತ್ತಮವಾಗದಿರುವುದೇ ಇದಕ್ಕೆ ಕಾರಣ ಎಂದು ಜಿ.ಪರಮೇಶ್ವರ್ ತಿಳಿಸಿದರು. ದೇಶದಲ್ಲಿ 25 ವರ್ಷಗಳಿಂದ ಕರ್ನಾಟಕವನ್ನು ಬೇರೆಯೇ ದೃಷ್ಟಿಯಿಂದ ನೋಡಲಾಗುತ್ತಿದೆ. ರಾಜ್ಯದಲ್ಲಿ ವರ್ಷ 10 ಲಕ್ಷ ಕೋಟಿ ರೂ. ಹೂಡಿಕೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದು ಇದಕ್ಕೆ ಕಾರಣ ಎಂದು ಜಿ.ಪರಮೇಶ್ವರ್ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಮೂಡಿಸುವಂತ ವಿಚಾರಗಳನ್ನು ಪೊಸ್ಟ್ ಮಾಡಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿ ಗಲಭೆಗಳಾಗುತ್ತವೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಿ, ಆರಂಭಿಕ ಹಂತದಲ್ಲೇ ಮಟ್ಟ ಹಾಕಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದರು. ರಾಜ್ಯದಲ್ಲಿ ಲಕ್ಷಾಂತರ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ವರದಿಯಾಗುತ್ತಿದೆ. ಸ್ಥಳೀಯ ಪೊಲೀಸರು ಏನು ಮಾಡುತ್ತಿದ್ದಾರೆ? ಪ್ರತಿ ಏರಿಯಾದ ಮಾಹಿತಿ ಪೊಲೀಸರಿಗೆ ಗೊತ್ತಿರಬೇಕು ಎಂಬ ಉದ್ದೇಶದಿಂದ ‘ಮನೆಮನೆಗೆ ಪೊಲೀಸ್' ಕಾರ್ಯಕ್ರಮವನ್ನು ತರಲಾಗಿದೆ. ಯಾರು, ಎಲ್ಲಿಂದ ಬಂದಿದ್ದಾರೆ ಎಂದು ಪೊಲೀಸ್ ಠಾಣೆ ಹಂತದಲ್ಲಿ ತಿಳಿದುಕೊಳ್ಳಲು ಅಗುವುದಿಲ್ಲವೆ? ಎಂದು ಜಿ.ಪರಮೇಶ್ವರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಿರಿಯ ಪೊಲೀಸ್ ಅಧಿಕಾರಿಗಳು ಶಾಲಾ-ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಉಪನ್ಯಾಸ ನಡೆಸಬೇಕು. ಯುವ ಸಮೂಹದಲ್ಲಿ ಬದಲಾವಣೆ ಮೂಡುತ್ತದೆ. ಎಲ್ಲ ಅಧಿಕಾರಿಗಳು ಸಭೆಯಿಂದ ಹೋಗುವ ಮೊದಲು, ‘ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುತ್ತೇವೆ’ ಎಂದು ಆತ್ಮಸಾಕ್ಷಿಯಿಂದ ಪ್ರಮಾಣ ಮಾಡಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡದಿದ್ದರೆ ಜನಸಮುದಾಯ ಹಾಳಾಗುತ್ತದೆ. ಎಲ್ಲ ಐಪಿಎಸ್ ಅಧಿಕಾರಿಗಳ ಹಿನ್ನೆಲೆ ಗೊತ್ತಿದೆ. ಬಹುತೇಕರು ಒಂದಲ್ಲ ಒಂದು ರೀತಿಯಲ್ಲಿ, ಬಡತನ, ಕಷ್ಟಗಳಿಂದ ಬಂದಿದ್ದೀರಿ. ಸಮಾಜದ ಪರಿಸ್ಥಿತಿಯ ಬಗ್ಗೆ ನಿಮಗೆ ಹೆಚ್ಚಿನ ಅರಿವಿದೆ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನ ಪಡೆಯಬೇಕು ಎಂದು ಜಿ.ಪರಮೇಶ್ವರ್ ಹೇಳಿದರು. ರಾಜ್ಯದ ಎಫ್ಎಸ್ಎಲ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಹೆಮ್ಮೆ ಇದೆ. ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಅತ್ಯುತ್ತಮಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಸಮಾವೇಶದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಗುಪ್ತವಾರ್ತೆ ಎಡಿಜಿಪಿ ರವಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ನೋಡಿಕೊಂಡು ಸುಮ್ಮನಿರಬೇಕೆ..?: ‘ ಪೊ ಲೀಸರು ಸಮಜಾಘಾತುಕರೊಂದಿಗೆ ಕೈಜೋಡಿಸಬಾರದು ಎಂದು ಪ್ರತಿಸಭೆಯಲ್ಲಿಯೂ ಎಚ್ಚರಿಸಲಾಗುತ್ತದೆ. ಆದಾಗ್ಯೂ ಈ ವಿಚಾರ ಮರುಕಳಿಸುತ್ತಿದೆ. ಠಾಣೆಯಲ್ಲಿ ಕುಳಿತು ಅಕ್ರಮ ವ್ಯವಹಾರ ನಡೆಸುವುದನ್ನು ಸಹಿಸುವುದಿಲ್ಲ. ಅಂತಹವರ ಅನಿವಾರ್ಯತೆ ಪೊ ಲೀಸ್ ಇಲಾಖೆಗೆ ಇಲ್ಲ. ರೌಡಿಗಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪೊ ಲೀಸ್ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿಕೊಂಡು ಸುಮ್ಮನಿರಬೇಕೆ? ಈ ಬಗ್ಗೆ ಎಲ್ಲ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ’ -ಡಾ.ಜಿ.ಪರಮೇಶ್ವರ್, ಗೃಹ ಸಚಿವ
ಪ್ರಜಾಪ್ರಭುತ್ವವನ್ನು ರಕ್ಷಿಸುವಂತೆ ಕಾರ್ಯಕ್ರಮದ ವೇದಿಕೆಯಲ್ಲೇ ಸಿಜೆಐಗೆ ಮಮತಾ ಬ್ಯಾನರ್ಜಿ ಆಗ್ರಹ
ಕೋಲ್ಕತಾ,ಜ.18: ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಶನಿವಾರ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಸೂರ್ಯಕಾಂತ್ ಅವರಿಗೆ ಮನವಿ ಮಾಡಿಕೊಂಡ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಅವರನ್ನು ಎಚ್ಚರಿಸಿದರು. ಕಲ್ಕತ್ತಾ ಉಚ್ಚ ನ್ಯಾಯಾಲಯದ ನೂತನ ಜಲಪೈಗುರಿ ಸಂಚಾರ ಪೀಠದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ʼನಾಗರಿಕರನ್ನು ತಪ್ಪಾಗಿ ಗುರಿಯಾಗಿಸಿಕೊಳ್ಳಲಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸುವಂತೆ ಸಿಜೆಐ ಅವರನ್ನು ಒತ್ತಾಯಿಸಿದರು. ‘ದಯವಿಟ್ಟು ಸಂವಿಧಾನ, ಪ್ರಜಾಪ್ರಭುತ್ವ, ನ್ಯಾಯಾಂಗ, ಇತಿಹಾಸ, ಭೌಗೋಳಿಕತೆ ಮತ್ತು ದೇಶದ ಗಡಿಗಳನ್ನು ವಿನಾಶದಿಂದ ರಕ್ಷಿಸಿ’ ಎಂದು ಹೇಳಿದರು. ಸಿಜೆಐ ಅವರನ್ನು ‘ಸಂವಿಧಾನದ ರಕ್ಷಕ’ ಎಂದು ಬಣ್ಣಿಸಿದ ಮಮತಾ, ನ್ಯಾಯಾಂಗವು ನಿಷ್ಪಕ್ಷಪಾತವಾಗಿರಬೇಕು ಎಂದರು. ‘ಮಾಧ್ಯಮ ವಿಚಾರಣೆ’ಗಳ ವಿಷಯವನ್ನೂ ಪ್ರಸ್ತಾವಿಸಿದ ಅವರು, ನ್ಯಾಯಾಲಯಗಳು ತೀರ್ಪುಗಳನ್ನು ನೀಡುವ ಮೊದಲೇ ಪ್ರಕರಣಗಳನ್ನು ಸಾರ್ವಜನಿಕವಾಗಿ ಚರ್ಚಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಬೆಟ್ಟು ಮಾಡಿದರು. ‘ಪ್ರಕರಣಗಳು ಅಂತಿಮಗೊಳ್ಳುವ ಮುನ್ನ ಮಾಧ್ಯಮ ವಿಚಾರಣೆಗಳು ನಡೆಯಬಾರದು. ಇದು ಜನರನ್ನು ಅವಮಾನಿಸಲು ಒಂದು ಸಾಧನವಾಗಿದೆ. ದಯವಿಟ್ಟು ತನಿಖಾ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಅವಮಾನಿಸಲು ಯತ್ನಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿ. ನಾನು ನನಗಾಗಿ ಮಾತನಾಡುತ್ತಿಲ್ಲ. ಪ್ರಜಾಪ್ರಭುತ್ವ, ಜನತೆ, ನ್ಯಾಯಾಂಗ ಮತ್ತು ಸಂವಿಧಾನವನ್ನು ಉಳಿಸುವ ಸಲುವಾಗಿ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ. ನಾವು ನಿಮ್ಮ ರಕ್ಷಣೆಯಡಿಯಲ್ಲಿ ಇದ್ದೇವೆ. ನಿಮಗಿಂತ ಯಾರೂ ಮೇಲಲ್ಲ’ ಎಂದು ಮಮತಾ ನ್ಯಾ.ಸೂರ್ಯಕಾಂತ್ ಅವರನ್ನು ಉದ್ದೇಶಿಸಿ ಹೇಳಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಸೇರಿದಂತೆ 10 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಈ.ಡಿ.) ದಾಳಿಯ ಬಳಿಕ ಟಿಎಂಸಿ ಸರಕಾರ ಮತ್ತು ಈ.ಡಿ.ನಡುವೆ ಹೊಗೆಯಾಡುತ್ತಿರುವ ಉದ್ವಿಗ್ನತೆಯ ನಡುವೆ ಮುಖ್ಯಮಂತ್ರಿಗಳ ಈ ಹೇಳಿಕೆಗಳು ಹೊರಬಿದ್ದಿವೆ.
KSRLPSನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ (KSRLPS) ಅಧಿಕೃತ ಅಧಿಸೂಚನೆಯ ಮೂಲಕ ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್ಗೆ ಕ್ಲಸ್ಟರ್ ಸೂಪರ್ವೈಸರ್ ಮತ್ತು ಬ್ಲಾಕ್ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರಕಾರದಡಿಯಲ್ಲಿ ಕೋಲಾರ ಜಿಲ್ಲೆಯ ಕೋಲಾರ, ಮಾಲೂರು, ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರ ಮತ್ತಿತರ ಕಡೆಗೆ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 30ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್ ಅನ್ನು ಗಮನಿಸಬಹುದು: https://jobsksrlps.karnataka.gov.in/ ಹುದ್ದೆಗಳ ವಿವರ: ಕ್ಲಸ್ಟರ್ ಸೂಪರ್ವೈಸರ್, ಕ್ಲಸ್ಟರ್ ಸೂಪರ್ವೈಸರ್ ಸಿಲ್ಕ್, ಬ್ಲಾಕ್ ಮ್ಯಾನೇಜರ್- ನಾನ್ಫಾರ್ಮ್ ಲೈವ್ಲಿಹುಡ್, ಬ್ಲಾಕ್ ಮ್ಯಾನೇಜರ್- ಫಾರ್ಮ್ ಲೈವ್ಲಿಹುಡ್, ಕಚೇರಿ ಸಹಾಯಕ. ಶೈಕ್ಷಣಿಕ ಅರ್ಹತೆ: KSRLPS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ, 12 ನೇ ತರಗತಿ B.Sc, ಪದವಿ, M.Sc, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿ/ ಡಿಪ್ಲೊಮಾ, MBA, M.Com ಅನ್ನು ಪೂರ್ಣಗೊಳಿಸಿರಬೇಕು. ಹಾಗೆಯೇ ಕೆಲವು ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರಗಳಲ್ಲಿ ಸೂಕ್ತ ಅನುಭವವಿರಬೇಕು. ಅರ್ಜಿ ಸಲ್ಲಿಸುವುದು ಹೇಗೆ? • ಮೊದಲನೆಯದಾಗಿ KSRLPS ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ. • ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು https://jobsksrlps.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ. • KSRLPS ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್ಲೋಡ್ ಮಾಡಿ. • ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ Apply ಬಟನ್ ಮೇಲೆ ಕ್ಲಿಕ್ ಮಾಡಿ.
Ind Vs NZ- ಟೀಂ ಇಂಡಿಯಾವನ್ನು ಮತ್ತೆ ಕಾಡಿದ ಡೆರಿಲ್ ಮಿಚೆಲ್ ಶತಕ; ಜೊತೆಗೆ ಗ್ಲೆನ್ ಫಿಲಿಪ್ಸ್ ಆರ್ಭಟ!
ಡೆರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಪ್ರವಾಸಿ ನ್ಯೂಜಿಲೆಂಡ್ ಭಾರತ ತಂಡದ ವಿರುದ್ಧ 337 ರನ್ ಗಳ ಬೃಹತ್ ಮೊತ್ತ ಗಳಿಸಿದೆ. ರಾಜ್ ಕೋಟ್ ಪಂದ್ಯದಲ್ಲಿ ಶತಕ ಹೊಡೆದು ಮಿಂಚಿದ್ದ ಡೆರಿಲ್ ಮಿಚೆಲ್ ಅವರು ಈ ಪಂದ್ಯದಲ್ಲೂ ಶತಕ ಬಾರಿಸಿ ಭಾರತದ ಬೌಲಿಂಗ್ ಪಾಳಯಕ್ಕೆ ದೊಡ್ಡ ತಲೆನೋವಾಗಿ ಕಾಡಿದರು. ಜೊತೆಗೆ ಅವರಿಗೆ ಹೆಗಲೆಣೆಯಾಗಿ ಬ್ಯಾಟಿಂಗ್ ಮಾಡಿದ ಗ್ಲೆನ್ ಫಿಲಿಪ್ಸ್ ಅವರು 4ನೇ ವಿಕೆಟ್ ಗೆ 227 ರನ್ ಗಳ ಜೊತೆಯಾಟವಾಡಿದರು. ಇದು ನ್ಯೂಜಿಲೆಂಡ್ ನ ದೊಡ್ಡ ಮೊತ್ತಕ್ಕೆ ಕಾರಣವಾಗಿದೆ. ಇಂದೋರ್ ನಲ್ಲಿ ನಡೆದ ದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರು ನ್ಯೂಜಿಲೆಂಡ್ ಅನ್ನು ಬ್ಯಾಟಿಂಗ್ ಗೆ ಇಳಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತ ತಂಡದ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಆರಂಭಕಾರರಿಬ್ಬರನ್ನೂ 5 ರನ್ ಆಗುವುದರೊಳಗೆ ಪೆವಿಲಿಯನ್ ಗೆ ಅಟ್ಟುವಲ್ಲಿ ಯಶಸ್ವಿಯಾದರು. ಈ ಸರಣಿಯಲ್ಲಿ ಅವರು ಮೊದಲ ಓವರ್ ನ 4ನೇ ಎಸೆತದಲ್ಲೇ ಇನ್ನೂ ಖಾತೆ ತೆರೆಯದ ಹೆನ್ರಿ ನಿಕೋಲ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮುಂದಿನ ಓವರ್ ನ ಮೊದಲ ಎಸೆತದಲ್ಲೇ ಹರ್ಷಿತ್ ರಾಣಾ ಅವರು ಡೆವೋನ್ ಕಾನ್ವೆ(5) ಅವರನ್ನು ರೋಹಿತ್ ಶರ್ಮಾ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಎಚ್ಚರಿಕೆಯ ಆಟವಾಡಿದ ವಿಲ್ ಯಂಗ್ ಅವರು ಡೆರಿಲ್ ಮಿಚೆಲ್ ಅವರೊಂದಿಗೆ 3ನೇ ವಿಕೆಟ್ ಗೆ 53 ರನ್ ಗಳ ಜೊತೆಯಾಟವಾಡಿದರು. ಮಿಚೆಲ್-ಫಿಲಿಪ್ಸ್ ಜೊತೆಯಾಟ ಇದಾದ ಬಳಿಕ ಡೆರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರು ಆಡಿದ್ದೇ ಆಟವಾಯಿತು. ಬಾರಿಸಿ ಸರಣಿ ಸಮಬಲಗೊಳ್ಳಲು ಕಾರಣವಾಗಿದ್ದ ಡೆರಿಲ್ ಮಿಚೆಲ್ ಅವರು ಭಾನುವಾರದಂದು ನಿರಂತರ ಎರಡನೇ ಶತಕ ಗಳಿಸಿದರು. ತಂಡಕ್ಕೆ ಅಗತ್ಯವಾಗಿದ್ದ ಸಮಯದಲ್ಲಿ ಅವರು ಶತಕ ಬಾರಿಸಿದರು. 106 ಎಸೆತದಲ್ಲಿ ಶತಕ ಪೂರೈಸಿದರು. ಬಳಿಕ ಗ್ಲೆನ್ ಫಿಲಿಪ್ಸ್ ಅವರು 103 ಎಸೆತಗಳಲ್ಲಿ ಶತಕ ಗಳಿಸಿದರು. ಇವರಿಬ್ಬರು 4ನೇ ವಿಕೆಟ್ ಗೆ ಮಹತ್ವದ 219 ರನ್ ಗಳ ಜೊತೆಯಾಟವಾಡಿದರು. ಆ ಜೋಡಿಯನ್ನು ಅರ್ಶದೀಪ್ ಸಿಂಗ್ ಅವರು ಬೇರ್ಪಡಿಸಿದರು. 88 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್ ಗಳಿಂದ 106 ರನ್ ಗಳಿಸಿದ್ದ ಅವರನ್ನು ಕೀಪರ್ ಕಎಲ್ ರಾಹುಲ್ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಸಫಲರಾದರು. ಆಗ ತಂಡದ ಮೊತ್ತ 227. ಇದಾಗಿ 5 ರನ್ ಪೇರಿಸುವಷ್ಟರಲ್ಲೇ ಡೆರಿಲ್ ಮಿಚೆಲ್ ಅವರನ್ನು ಮೊಹಮ್ಮದ್ ಸಿರಾಜ್ ಅವರು ಕುಲ್ದೀಪ್ ಯಾದವ್ ಅವರಿಗೆ ಕ್ಯಾಚ್ ಕೊಡಿಸಿದರು. 131 ಎಸೆತಗಳನ್ನು ಎದುರಿಸಿದ ಅವರು 15 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದರು. ಆ ಬಳಿಕ ನಾಯಕ ಮೈಕಲ್ ಬ್ರೇಸ್ ವೆಲ್ (ಅಜೇಯ 28) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ತಂಡದ ಉತ್ತಮ ಮೊತ್ತ ಕಾಣುವಂತಾಯಿತು. ಭಾರತದ ಪರ ಅರ್ಶದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರು ತಲಾ 3 ವಿಕೆಟ್ ಗಳಿಸಿದರು. ಉಳಿದೆರಡು ವಿಕೆಟ್ ಗಳನ್ನು ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ ಅವರು ಹಂಚಿಕೊಂಡರು. ಸಂಕ್ಷಿಪ್ತ ಸ್ಕೋರ್ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 337/8, ಡೆರಿಲ್ ಮಿಚೆಲ್ 137(131), ಗ್ಲೆನ್ ಫಿಲಿಪ್ಸ್ 106(88), ವಿಲ್ ಯಂಗ್ 30(41), ಮಿಚೆಸ್ ಬ್ರೇಸ್ ವೆಲ್ 28(18). ಅರ್ಶದೀಪ್ ಸಿಂಗ್ 63ಕ್ಕೆ3, ಹರ್ಷಿತ್ ರಾಣಾ 84ಕ್ಕೆ 3.
ಇಂಗ್ಲೆಂಡ್ನ ಡೇವಿಡ್ ಲಾಯ್ಡ್, ಮಾರ್ಕ್ ವಾ ಅವರ ಕನಸಿನ ತಂಡದ ಬಗ್ಗೆ ಮಾತನಾಡುತ್ತಿದ್ದಾಗ ಸಚಿನ್ ತೆಂಡೂಲ್ಕರ್ಗೆ ತಮಾಷೆಯಾಗಿ ಫೋನ್ ಕರೆ ಮಾಡಿದರು. 'ಬಂಬಲ್' ಎಂದು ಪರಿಚಯಿಸಿಕೊಂಡು, ಸಚಿನ್ ಅವರನ್ನು ಗೊಂದಲಕ್ಕೀಡಾಗಿಸಿ, ಕರೆ ಕಟ್ ಮಾಡಿಸಿದರು. ಸಚಿನ್ ಅವರ ಕ್ರಿಕೆಟ್ ಸಾಧನೆಗಳೂ ಇಲ್ಲಿ ಉಲ್ಲೇಖಗೊಂಡಿವೆ.
ಕೊರಿಯದ ಜನರಂತೆ 3-3-3 ಶೈಲಿಯಲ್ಲಿ ಹಲ್ಲುಜ್ಜುವುದು ಅಗತ್ಯವೆ? ವೈದ್ಯರು ಏನು ಹೇಳುತ್ತಾರೆ?
ಜಾಗರೂಕವಾಗಿ ಹಲ್ಲುಜ್ಜುವುದು ಅಥವಾ ನಿಯಮಿತವಾಗಿ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳುವುದು ಮುಖ್ಯ ಗುರಿಯಾಗಿರಬೇಕು. ಕೊರಿಯನ್ನರು ಆರೋಗ್ಯಕಾರಿ ಆಹಾರ ಮತ್ತು ಜೀವನಕ್ಕೆ ಸುಪ್ರಸಿದ್ಧರು. ಪ್ರೊಬಯಾಟಿಕ್ಸ್ ಸಮೃದ್ಧವಾಗಿರುವ ಆಹಾರ ಸೇವನೆಯಲ್ಲಿ ಪ್ರಸಿದ್ಧಿ ಪಡೆದಿದೆ. ನಗರಗಳಲ್ಲಿ ವಾಕಿಂಗ್ ಲೇನ್ಗಳನ್ನು ಮಾಡಿ ನಡಿಗೆಗೆ ಪ್ರೋತ್ಸಾಹ ಕೊಡಲಾಗುತ್ತದೆ. ಚರ್ಮದ ಆರೈಕೆಯಲ್ಲಿನ ತಾಂತ್ರಿಕ ಪ್ರಗತಿಗೂ ಖ್ಯಾತಿಗಳಿಸಿದೆ. ಇದೀಗ ಕೊರಿಯಾದ ದಂತ ಆರೋಗ್ಯದ 3-3-3 ನಿಯಮವೂ ವೈರಲ್ ಆಗಿದೆ. ► ಏನಿದು ಹಲ್ಲುಜ್ಜುವ 3-3-3 ನಿಯಮ? 3-3-3 ನಿಯಮದ ಪ್ರಕಾರ, ನೀವು ದಿನಕ್ಕೆ ಮೂರು ಬಾರಿ ಬ್ರಷ್ ಮಾಡಬೇಕು. ಪ್ರತಿ ಬಾರಿ ಮೂರು ನಿಮಿಷ ಹಲ್ಲುಜ್ಜಬೇಕು. ಮುಖ್ಯವಾಗಿ ಆಹಾರ ಸೇವನೆಯ ಮೂರು ನಿಮಿಷಗಳ ನಂತರ ಹಲ್ಲುಜ್ಜಬೇಕು. ಹಾಗೆಯೇ ನಿಮ್ಮ ಟೂತ್ಬ್ರಷ್ ಅನ್ನು ಪ್ರತಿ 3 ತಿಂಗಳಿಗೊಮ್ಮೆ ಬದಲಿಸುವುದೂ ಸೇರಿದೆ. ಹಾಗಿದ್ದರೆ ಈ 3-3-3 ಅತಿಯಾದ ಹಲ್ಲುಜ್ಜುವುದು ಆಗುತ್ತಿದೆಯೇ ಅಥವಾ ಉತ್ತಮ ಕೌಶಲ್ಯವೆ? ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರಾದ ಡಾ ಸಾಕ್ಷಿ ಹಿಂದೂಜಾ ಅಭಿಪ್ರಾಯಪಡುವ ಪ್ರಕಾರ, ಇದು ಉತ್ತಮ ಮಾರ್ಗದರ್ಶನ. ಆದರೆ ಅತಿ ನಿಯಮಿತವಾಗಿ ಬಳಸುವುದು ಗೋಜಲಿನ ವಿಷಯವಾಗಲಿದೆ. ► 3 ನಿಮಿಷಗಳ ಕಾಲ ಹಲ್ಲುಜ್ಜುವುದು ನಿಮಗೆ ಅಗತ್ಯವೆ? ವೈದ್ಯರ ಪ್ರಕಾರ, ಸೂಕ್ತ ರೀತಿಯಲ್ಲಿ ಹಲ್ಲುಜ್ಜುವುದು ಅಗತ್ಯವಾಗಿರುತ್ತದೆ. ಹಲ್ಲುಜ್ಜುವುದರಿಂದ ಆಹಾರ ಕಣಗಳು, ಹಲ್ಲಿನ ಮೇಲಿನ ಲೋಳೆಯ ನಿಕ್ಷೇಪಗಳು, ಹಲ್ಲು ಕುಳಿಗಳು ಮತ್ತು ಒಸಡುಗಳ ಸಮಸ್ಯೆ ತರುವ ಬ್ಯಾಕ್ಟೀರಿಯಗಳನ್ನು ತೊಡೆದು ಹಾಕಬಹುದು. ಹೀಗಾಗಿ ಮೂರು ನಿಮಿಷ ಹಲ್ಲುಜ್ಜುವುದು ಉತ್ತಮ. ► ಆಹಾರದ 3 ನಿಮಿಷದ ನಂತರ ಉಜ್ಜುವುದು? ಊಟದ ನಂತರ ಹಲ್ಲುಜ್ಜುವ ನಿಯಮ ಆಹಾರಗಳು ಮತ್ತು ಪಾನೀಯಗಳಿಂದ ಆಮ್ಲದ ಹಾನಿಯನ್ನು ತಡೆಯಲು ನೆರವಾಗುತ್ತದೆ. ಆದರೆ ಲಿಂಬೆ ಅಥವಾ ಸೋಡಾದಂತಹ ಆಮ್ಲೀಯ ಆಹಾರ ಸೇವಿಸಿದ ತಕ್ಷಣ ಹಲ್ಲುಜ್ಜುವುದರಿಂದ ದಂತಕವಚಕ್ಕೆ ಹಾನಿಯಾಗುತ್ತದೆ. ಹೀಗಾಗಿ 20-30 ನಿಮಿಷ ಕಾದು ಹಲ್ಲುಜ್ಜುವುದು ಸುರಕ್ಷಿತ. ಹಲ್ಲುಜ್ಜುವ ಸಮಯ ಅಥವಾ ಉದ್ದ ಮುಖ್ಯವಾಗುವುದಿಲ್ಲ. ಸರಿಯಾಗಿ ಎಲ್ಲಾ ಹಲ್ಲುಗಳನ್ನೂ ಉಜ್ಜಿರುವುದು ಮುಖ್ಯ. ನಿಧಾನವಾಗಿ ವೃತ್ತಾಕಾರವಾಗಿ ಹೆಚ್ಚು ಒತ್ತದೆ ಹಲ್ಲುಜ್ಜಬೇಕು” ಎನ್ನುತ್ತಾರೆ ವೈದ್ಯರು. ಅವರ ಪ್ರಕಾರ, ಪೂರ್ಣ ಹಲ್ಲಿನ ಆರೋಗ್ಯಕ್ಕೆ ಫ್ಲ್ಯೂರೈಡ್ ಟೂತ್ಪೇಸ್ಟ್ ಬಳಕೆ ಮತ್ತು ಫ್ಲಾಸಿಂಗ್ (ಫ್ಲಾಸರ್ ಬಳಸಿ ಉಜ್ಜುವುದು) ಮುಖ್ಯವಾಗುತ್ತದೆ. ► 3 ತಿಂಗಳಿಗೊಮ್ಮೆ ಟೂತ್ಬ್ರಷ್ ಬದಲಿಸಬೇಕೆ? ವೈದ್ಯರ ಪ್ರಕಾರ, ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಮಾತ್ರವಲ್ಲ, ಟೂತ್ಪೇಸ್ಟ್ ಅನ್ನೂ ಬದಲಿಸಬೇಕು. ಇಲ್ಲದಿದ್ದರೆ ಅವುಗಳಲ್ಲಿ ಬ್ಯಾಕ್ಟೀರಿಯಗಳು ತುಂಬಿಕೊಂಡಿರುವ ಸಾಧ್ಯತೆ ಇರುತ್ತದೆ. ► ದಿನಕ್ಕೆ ಮೂರು ಬಾರಿ ಹಲ್ಲುಜ್ಜುವ ಅಗತ್ಯವಿದೆಯೆ? ಬಹುತೇಕರಿಗೆ ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳ ಕಾಲ ಹಲ್ಲುಜ್ಜಿದರೆ ಸಾಕಾಗುತ್ತದೆ. 3-3-3 ನಿಯಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ, ಆದರೆ ವಿವರಿಸಿದ ರೀತಿಯಲ್ಲಿಯೇ ಹಲ್ಲುಜ್ಜುವ ಅಗತ್ಯವಿರುವುದಿಲ್ಲ. ಕೆಲವೊಮ್ಮೆ ಇದು ಅತಿಯಾಗಿ ಉಜ್ಜುವುದು ಆಗಬಹುದು. ಪುಣೆಯ ಮಕ್ಕಳ ದಂತವೈದ್ಯರು ಹೇಳುವ ಪ್ರಕಾರ ಸಂಪೂರ್ಣ ಬಾಯಿ ಆರೋಗ್ಯ ಹಲ್ಲುಜ್ಜುವುದನ್ನು ಮೀರಿ ಇರುತ್ತದೆ. ಹಲ್ಲುಜ್ಜುವುದರಿಂದ ಒಸಡುಗಳು ಮತ್ತು ಹಲ್ಲುಗಳ ಮೇಲ್ಮೈಯನ್ನು ಸ್ವಚ್ಛಗೊಳಿಸುತ್ತದೆ. ಆದರೆ ಹಲ್ಲುಗಳ ನಡುವಿನ ಸ್ಥಳಗಳಿಗೆ ಬ್ರಷ್ ತಲುಪುವುದಿಲ್ಲ. ಬಾಯಿಯ ಹಿಂಭಾಗದಲ್ಲಿ ಮತ್ತು ನಾಲಗೆಯಲ್ಲೂ ಬ್ಯಾಕ್ಟೀರಿಯಗಳು ಬೆಳೆಯಬಹುದು. ಫ್ಲಾಸರ್ಗಳನ್ನು ಬಳಸಿ ಲೋಳೆಗಳು ಮತ್ತು ಆಹಾರದ ಕಣಗಳನ್ನು ಹಲ್ಲಿನ ಮಧ್ಯೆಯಿಂದ ತೊಡೆಯಬಹುದು. ಹೆಚ್ಚು ನೀರುಕುಡಿಯುವುದು ಅಥವಾ ಜಲಸಂಚಯನದಿಂದ ಬ್ಯಾಕ್ಟೀರಿಯಗಳನ್ನು ತೆಗೆದು ಹಾಕಬಹುದು. ನಾಲಗೆಯನ್ನೂ ನಯವಾಗಿ ಬ್ರಷ್ ಮಾಡುವುದು ಉತ್ತಮ. ಜಾಗರೂಕವಾಗಿ ಹಲ್ಲುಜ್ಜುವುದು ಅಥವಾ ನಿಯಮಿತವಾಗಿ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳುವುದು ಮುಖ್ಯ ಗುರಿಯಾಗಿರಬೇಕು.
ರಸ್ತೆಯಲ್ಲಿ 500 ರೂಪಾಯಿ ನೋಟ್ ಬಿದ್ದರೂ ಅದನ್ನ ಪ್ರಾಮಾಣಿಕವಾಗಿ ಮರಳಿಸದ ಜನರು ಇರುವ ಈ ಕಾಲಘಟ್ಟದಲ್ಲಿ, ತಮ್ಮ ಮನೆ ಕಟ್ಟಲು ಗುಂಡಿ ತೋಡುವಾಗ ತಮ್ಮದೇ ಜಾಗದಲ್ಲಿ ಸಿಕ್ಕಿದ್ದ ಸುಮಾರು 65,00,000 ರೂಪಾಯಿ ಬೆಲೆ ಬಾಳುವ ನಿಧಿಯನ್ನು ಸರ್ಕಾರಕ್ಕೆ ಮರಳಿಸಿತ್ತು ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಕುಟುಂಬ. ಇಷ್ಟೆಲ್ಲಾ ಮಾಡಿ ಪ್ರಮಾಣಿಕತೆ ಮೆರೆದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದ ಹಿನ್ನೆಲೆ ನಿಧಿ
ಡಿಜಿಟಲ್ ಲಂಚ: ಹೆತ್ತವರು ಮಕ್ಕಳಿಂದ ಕಸಿದುಕೊಳ್ಳುತ್ತಿರುವುದೇನು?
ತಮ್ಮ ಕೆಲಸ ಸುಗಮಗೊಳಿಸಲು ಮಕ್ಕಳಿಗೆ ಪರದೆ ವೀಕ್ಷಿಸಲು ಅನುವು ಮಾಡಿಕೊಡುವುದು ಅಲ್ಪಾವಧಿಯ ಶಾಂತಿ ದೊರೆತರೂ, ದೀರ್ಘಾವಧಿಯಲ್ಲಿ ಆರೋಗ್ಯ ವೆಚ್ಚಗಳಿಗೆ ಕಾರಣವಾಗಲಿದೆ. ಮೆದುಳು ಮತ್ತು ದೇಹ ಇನ್ನೂ ಪಕ್ವವಾಗಿರದ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ಪರದೆ ವೀಕ್ಷಣೆಗೆ ಅವಕಾಶ ಕೊಡುವ ಹೆತ್ತವರು ತಮ್ಮ ಬಳಲಿಕೆ ಮತ್ತು ಅನುಕೂಲತೆಯುನ್ನಷ್ಟೇ ಗಮನಿಸುತ್ತಿದ್ದಾರೆ. ಇಂತಹ ಪಾಲನೆಯು ಬಹಳ ಅಪಾಯಕಾರಿ. ಹೀಗೆ ತಮ್ಮ ಕೆಲಸ ಸುಗಮಗೊಳಿಸಲು ಮಕ್ಕಳಿಗೆ ಪರದೆ ವೀಕ್ಷಿಸಲು ಅನುವು ಮಾಡಿಕೊಡುವುದು ಅಲ್ಪಾವಧಿಯ ಶಾಂತಿ ದೊರೆತರೂ, ದೀರ್ಘಾವಧಿಯಲ್ಲಿ ಆರೋಗ್ಯ ವೆಚ್ಚಗಳಿಗೆ ಕಾರಣವಾಗಲಿದೆ. ► ಪರದೆ ನೋಡಿ ಮಕ್ಕಳು ಶಾಂತರಾಗುವುದು ಆರೋಗ್ಯಕರವೆ? ಕ್ಷಣಿಕ ಶಾಂತಿಗಾಗಿ ಪರದೆಯನ್ನು ತೋರಿಸುವ ಹೆತ್ತವರ ಅಭ್ಯಾಸದ ಮತ್ತೊಂದು ಮುಖವನ್ನು ಮಕ್ಕಳ ಚಿಕಿತ್ಸಾಲಯಗಳು ನೋಡುತ್ತಿವೆ. ಈ ಶಾಂತಿಯಿಂದಾಗಿ ಬಂದ ರೋಗ ಚಿಹ್ನೆಗಳು ಸ್ಪಷ್ಟ: ರಾತ್ರಿಯಿಡೀ ಮಲಗದ ಮಕ್ಕಳು, ಊಹಿಸಿರುವುದಕ್ಕಿಂತ ತಡವಾಗಿ ಮಾತನಾಡಲು ಪ್ರಾರಂಭಿಸಿದ ಮಕ್ಕಳು, ಗಮನ ಕೇಂದ್ರೀಕರಿಸಲು ಕಷ್ಟಪಡುವ ಮಕ್ಕಳು, ಕಿರಿಕಿರಿ ಅನುಭವಿಸುವ ಮಕ್ಕಳು, ಆತಂಕದ ನಡವಳಿಕೆ ತೋರಿಸುವವರು, ಚಯಾಪಚಯ ಸಮಸ್ಯೆ ಹೊಂದಿರುವವರು ಹಾಗೂ ದೃಷ್ಟಿ ಸಮಸ್ಯೆಯ ಆರಂಭಿಕ ಹಂತದಲ್ಲಿರುವವರು! ಆದರೆ ಈ ಸಮಸ್ಯೆಗಳು ಹೆತ್ತವರಿಗೆ ಹೆಚ್ಚು ದೊಡ್ಡದು ಎಂದು ಅನಿಸದೆ ಇರಬಹುದು. ಆದರೆ ಪದೇಪದೆ ಇಂತಹ ಸಮಸ್ಯೆಗಳನ್ನು ನೋಡುತ್ತಿರುವ ವೈದ್ಯರು ಚಿಂತೆ ವ್ಯಕ್ತಪಡಿಸುತ್ತಿದ್ದಾರೆ. ಮೊದಲ ಎರಡು ವರ್ಷಗಳ ಹಸುಗೂಸಿನ ಜೀವನ ಮೌನವಾಗಿ ರೂಪುಗೊಳ್ಳುತ್ತದೆ. ಮಕ್ಕಳ ಮೆದುಳು ಅತಿ ವೇಗದಲ್ಲಿ ಬೆಳೆಯುತ್ತದೆ. ಕಲಿಕೆ, ಭಾವನಾತ್ಮಕ ನಿಯಂತ್ರಣ, ವರ್ತನೆ ಮತ್ತು ದೀರ್ಘಕಾಲೀನ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ನರವ್ಯೂಹದ ಸಂಪರ್ಕಗಳನ್ನು ರೂಪಿಸುತ್ತದೆ. ಹೀಗಾಗಿ ಮೊಬೈಲ್ ಪರದೆ ತೋರಿಸುವುದು ದೊಡ್ಡ ಪರಿಣಾಮ ಬೀರುತ್ತದೆ. ► ವೈದ್ಯರು ವರ್ಸಸ್ ಆಧುನಿಕ ಪೋಷಕರು ಆಧುನಿಕ ಪಾಲನೆಯ ಕ್ರಮ ಉದ್ದೇಶಪೂರ್ವಕವಾಗಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅಡ್ಡಿಪಡಿಸುತ್ತಿದೆ ಎಂದು ಬಹುತೇಕ ಮಕ್ಕಳ ವೈದ್ಯರು ಅಭಿಪ್ರಾಯಪಡುತ್ತಾರೆ. “ಚಿಕ್ಕ ವಯಸ್ಸಿನಲ್ಲಿ ಮೊಬೈಲ್ ಪರದೆಯ ಕಡೆಗೆ ಅತಿಯಾಗಿ ಗಮನ ಹೊಂದಿರುವ ಮಕ್ಕಳ ಭಾಷಾ ಕಲಿಯುವ ಸಾಮರ್ಥ್ಯ ಕುಂದುತ್ತದೆ. ಗಮನ ಅವಧಿ ಕಡಿಮೆಯಾಗುತ್ತದೆ ಮತ್ತು ಸಾಮಾಜಿಕ ಸಂವಹನವೂ ಕುಸಿಯುತ್ತದೆ. ಅಸಮಂಜಸ ನಿದ್ರೆ, ಭಾವನಾತ್ಮಕವಾಗಿ ಆರೋಗ್ಯಕರ ಪ್ರತಿಸ್ಪಂದನೆ ಇಲ್ಲದಿರುವುದು ಮತ್ತು ಮೆದುಳಿನ ಪಕ್ವತೆಗೆ ಅಡ್ಡಿಯಾಗುವುದು ಕಂಡುಬರುತ್ತದೆ” ಎನ್ನುತ್ತಾರೆ ದಿಲ್ಲಿಯ ಸ್ತ್ರೀರೋಗತಜ್ಞೆ, ಮಕ್ಕಳ ತಜ್ಞೆ ಡಾ ಸೋಜ್ನಾ ಸೇಥಿ. ಮೊಬೈಲ್ ಪರದೆಗಳು ಪೋಷಕರಿಗೆ ಬಹಳ ಸರಳವಾಗಿ ಮಕ್ಕಳನ್ನು ನಿರ್ವಹಿಸಲು ನೆರವಾಗುತ್ತಿವೆ. ಹೆಚ್ಚು ನಾಟಕವಿಲ್ಲ, ಶಾಂತಿ ಇರುತ್ತದೆ. ಮಕ್ಕಳು ಮೌನವಾಗಿ ಆಹಾರ ಸೇವಿಸುತ್ತಾರೆ. ಕಾರುಗಳಲ್ಲಿ ಹೋಗುವಾಗ ಅಳುವುದಿಲ್ಲ. ಬೇಗನೇ ನಿದ್ರೆ ಹೋಗುತ್ತಾರೆ. ಹೀಗಾಗಿ ಪೋಷಕರು ತಮ್ಮ ಕೆಲಸಗಳಲ್ಲಿ ತೊಡಗಲು ಸಾಧ್ಯವಾಗುತ್ತಿದೆ. ಆರಂಭದಲ್ಲಿ ಸ್ವಲ್ಪ ಸಮಯಕ್ಕೆ ತೋರಿಸಲಾಗುತ್ತಿದ್ದ ಮೊಬೈಲ್ ಪರದೆಗಳು ನಂತರ ಅನಿಯಂತ್ರಿತವಾಗಿ ಬಳಕೆಯಾಗಿ ಬದಲಾಗಿದೆ. ಸ್ಕ್ರೀನ್ ತೋರಿಸುವುದರಿಂದ ಕೆಲಸವಾಗುತ್ತಿರುವ ಕಾರಣ ಹೆತ್ತವರು ಹೆಚ್ಚು ಆಲೋಚಿಸುವುದಿಲ್ಲ. ► ಪೋಷಕರು ಮಕ್ಕಳಿಗೆ ಮೊಬೈಲ್ ಲಂಚ ನೀಡುವುದೇಕೆ? “ಶೇ 85ರಿಂದ 90ರಷ್ಟು ಪೋಷಕರು ಹೇಳುವ ಪ್ರಕಾರ, ಮಹಿಳೆಯರೇ ಮಗುವಿನ ಪಾಲನೆಯ ಹೊಣೆ ಹೊತ್ತಿರುತ್ತಾರೆ. ವೃತ್ತಿಪರ ಹೊರೆ, ಮನೆಕೆಲಸದ ನಡುವೆ ಮಕ್ಕಳ ಕಡೆಗೆ ಗಮನಕೊಡುವುದು ಕಷ್ಟವಾಗುತ್ತದೆ. ಹೀಗಾಗಿ ಮಕ್ಕಳಿಗೆ ಮೊಬೈಲ್ ಲಂಚ ತೋರಿಸುವುದು ಸುಲಭವಾಗುತ್ತದೆ” ಎನ್ನುತ್ತಾರೆ ಮುಂಬೈನ ಮನಶ್ಶಾಸ್ತ್ರಜ್ಞೆ ರಿಧಿ ದೋಶಿ ಪಟೇಲ್. ನಟಿ ಪ್ರಿಯಾಂಕಾ ಚೋಪ್ರ ಮತ್ತು ಗಾಯಕ ನಿಕ್ ಜೋನ್ಸ್ ಅವರು ತಮ್ಮ ವೃತ್ತಿಯ ಜೊತೆಗೆ ಮಕ್ಕಳನ್ನು ಗಮನಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರೆ ಅವರ ಉತ್ತರ, “ಅಜ್ಜಿ-ತಾತ” ಎನ್ನುವುದಾಗಿತ್ತು. ಆದರೆ ಇತ್ತೀಚೆಗೆ ಅಜ್ಜಿ-ತಾತಂದಿರ ಜೊತೆಗೆ ನೆಲೆಸುವವರು ಅತಿ ಕಡಿಮೆ. ಹೀಗಾಗಿ ಅನುಕೂಲಕ್ಕೆ ಮೊಬೈಲ್ ಪರದೆ ಸುಲಭದ ಹಾದಿಯಾಗುತ್ತಿದೆ. ► ಡಿಜಿಟಲ್ ಪಾಲನೆ ಸಮಸ್ಯೆಗೆ ಪರಿಹಾರವೇನು? ವೈದ್ಯರು ಹೇಳುವ ಪ್ರಕಾರ ಯುವ ಮೆದುಳಿಗೆ ನಿತ್ಯವೂ ಸಂವಹನ ಅತಿ ಅಗತ್ಯವಾಗಿರುತ್ತದೆ. ಮಾತನಾಡುವುದು, ಹಾಡುವುದು, ಓದುವುದು ಮತ್ತು ಆಡುವುದು ಮಗುವಿನ ಭಾಷೆ, ಗಮನ ಮತ್ತು ಭಾವನಾತ್ಮಕ ಭದ್ರತೆಗೆ ಮುಖ್ಯವಾಗಿರುತ್ತದೆ. ಆದರೆ ಸ್ಮಾರ್ಟ್ಫೋನ್ನಿಂದ ಇವೆಲ್ಲವನ್ನೂ ಹೊರಗುತ್ತಿಗೆ ಪಡೆಯುವುದು ಮಕ್ಕಳ ಭಾವನಾತ್ಮಕ ಸಂವಹನದ ಮೇಲೆ ಬರೆ ಎಳೆದಂತಾಗುತ್ತದೆ. ಹಸುಗೂಸುಗಳಿಗೆ ಪ್ರತಿ ಬಾರಿಯೂ ಮನೋರಂಜನೆಯ ಅಗತ್ಯವಿರುವುದಿಲ್ಲ. ಅವರಿಗೆ ತಡೆಯಿಲ್ಲದ ನಿದ್ರೆ ಬೇಕು. ದೇಹದಲ್ಲಿ ಚಲನೆ ಹೆಚ್ಚಿರಬೇಕು. ಭಾವನಾತ್ಮಕವಾಗಿ ಹಿರಿಯರ ಜೊತೆಗೆ ಸಂವಹನ ಬೇಕಿದೆ. ಶಾಂತ ಪರದೆಯ ಸಮಯ ಅಂತಿಮವಾಗಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಕಾರಣವಾಗಲಿದೆ. “ಮನೆ ಕೆಲಸ ಮಾಡುವುದು, ಅಡುಗೆ ಮಾಡುವುದು, ಉದ್ಯಾನವನದಲ್ಲಿ ಕೆಲಸ ಮಾಡುವುದು, ಸಂಗೀತ ಕೇಳುವುದು ಮತ್ತು ಇತರ ವಯಸ್ಸಿಗೆ ಸೂಕ್ತವಾಗಿರುವ ಪಾತ್ರವನ್ನು ಮಕ್ಕಳ ಜೊತೆಜೊತೆಗೆ ನಿರ್ವಹಿಸಬಹುದು. ಮಕ್ಕಳ ಜೊತೆಗೆ ಆಹಾರ, ಸ್ಥಳಗಳು ಮತ್ತು ಪ್ರಕೃತಿಯ ಬಗ್ಗೆ ಮಾತನಾಡುವುದರಿಂದ ಭಾಷೆ, ಭಾವನಾತ್ಮಕ ಸಂವಹನ, ಚಲನೆಯ ಕೌಶಲ್ಯಗಳು, ಗಮನ ಮತ್ತು ಸಹಿಷ್ಣುತೆ ಬೆಳೆಯುತ್ತದೆ” ಎನ್ನುತ್ತಾರೆ ವೈದ್ಯರು. ಅಜ್ಜಿ-ತಾತಂದಿರ ನೆರವು ಸಿಗದೆ ಇರುವ ಕುಟುಂಬಗಳು ಕೆಲಸದ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು ಪರಸ್ಪರ ನೆರವು ನೀಡುವ ಮೂಲಕ ಮಗುವಿನ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ಅನುಕೂಲ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಮಕ್ಕಳು ಮೊಬೈಲ್ ನೋಡುವ ಅಭ್ಯಾಸ ಮಾಡಿಕೊಂಡಿದ್ದರೆ, ನಿಧಾನವಾಗಿ ಅದನ್ನು ಕಡಿಮೆ ಮಾಡುತ್ತಾ ಬಿಡಿಸಿಬಿಡಬೇಕು. ಪರದೆಗಳನ್ನು ಭಾವನಾತ್ಮಕವಾಗಿ ಬದಲಿಯಾಗಿ ಬಳಸುವುದು ಮಗುವಿನ ಆರೋಗ್ಯಕ್ಕೆ ಹಾನಿಕರವಾಗಿದೆ. ಕೃಪೆ: ಇಂಡಿಯಾ ಟುಡೆ

19 C