ಎಚ್ಚರ; ವ್ಯಾಪಕವಾಗಿ ಹರಡುತ್ತಿದೆ ಇಲಿಜ್ವರ, ಕೇರಳ- ಕಾಸರಗೋಡಲ್ಲಿ 5308 ಮಂದಿಗೆ ರೋಗ ಬಾಧೆ
ಕೇರಳ ರಾಜ್ಯದಲ್ಲಿ ಇಲಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 11 ತಿಂಗಳಲ್ಲಿ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲೂ ಪ್ರಕರಣಗಳು ಹೆಚ್ಚಾಗಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಜ್ವರ, ತಲೆನೋವು, ನಿತ್ರಾಣ ಇದರ ಲಕ್ಷಣಗಳಾಗಿದ್ದು, ತಕ್ಷಣ ವೈದ್ಯರನ್ನು ಸಂಪರ್ಕಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
ಮಂಗಳೂರು | ಗಾಂಜಾ ಸೇವನೆ: ಯುವಕ ಸೆರೆ
ಮಂಗಳೂರು, ಡಿ.4: ನಗರದ ಕೋರ್ಟ್ ರಸ್ತೆಯಲ್ಲಿ ತೂರಾಡುತ್ತಾ ಸಾಗುತ್ತಿದ್ದ ಬೆಂಗಳೂರು ಅಂದ್ರಹಳ್ಳಿಯ 10ನೇ ಕ್ರಾಸ್ ನಿವಾಸಿ ದರ್ಶನ್ (25) ಎಂಬಾತನನ್ನು ಗಾಂಜಾ ಸೇವನೆ ಮಾಡಿದ ಆರೋಪದಡಿ ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಎಸ್ಸೈ ಫೈಜುನ್ನಿಸಾ ಕೋರ್ಟ್ ರಸ್ತೆಯಲ್ಲಿ ವಾಹನದಲ್ಲಿ ಸಾಗುತ್ತಿರುವಾಗ ತೂರಾಡುತ್ತಾ ಸಾಗುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಅದರಂತೆ ಆತನ ವಿರುದ್ಧ ಬಂದರು ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು | ಮೀನು ಕಾರ್ಮಿಕ ನಾಪತ್ತೆ
ಮಂಗಳೂರು, ಡಿ.5: ನಗರದ ಸುಲ್ತಾನ್ ಬತ್ತೇರಿಯ ಫಲ್ಗುಣಿ ನದಿ ತೀರದಲ್ಲಿ ಲಂಗರು ಹಾಕಿದ್ದ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾ ಮೂಲದ ಸುರೇಶ್ ಮಾಝಿ (27) ಗುರುವಾರ ನಾಪತ್ತೆಯಾಗಿದ್ದಾರೆ. ಡಿ.1ರಂದು ನಿಲ್ಲಿಸಲಾಗಿದ್ದ ಬೋಟ್ ನಲ್ಲಿ 29 ಮಂದಿ ಕಾರ್ಮಿಕರಿದ್ದರು ಎನ್ನಲಾಗಿದೆ. ಬೋಟ್ ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪ್ರಶಾಂತ್ ಡಿ.2ರಂದು ರಾತ್ರಿ 9ರ ವೇಳೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಕಾರ್ಮಿಕರು ಮಾತ್ರ ಬೋಟ್ ನಲ್ಲಿ ಉಳಿದುಕೊಂಡಿದ್ದರು. ಡಿ.3ರಂದು ತಡರಾತ್ರಿ 1:30ಕ್ಕೆ ಕಾರ್ಮಿಕರು ಕರೆ ಮಾಡಿ ಸುರೇಶ್ ಮಾಝಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಪ್ರಶಾಂತ್ ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸುಮಾರು 5 ಅಡಿ ಎತ್ತರದ, ಗೋಧಿ ಮೈ ಬಣ್ಣದ, ಸಾಧಾರಣ ಮೈಕಟ್ಟು ಹೊಂದಿರುವ ಸುರೇಶ್ ಮಾಝಿ ಹಿಂದಿ, ಒಡಿಸಿ ಭಾಷೆ ಮಾತನಾಡುತ್ತಾರೆ. ನಾಪತ್ತೆಯಾಗುವ ವೇಳೆ ಕಪ್ಪುಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ವಿಶ್ವ ಅಂಗವಿಕಲರ ದಿನಾಚರಣೆ : ಬೆಳುವಾಯಿ ಸ್ಫೂರ್ತಿ ವಿಶೇಷ ಮಕ್ಕಳಿಂದ ಜಾಗೃತಿ ಜಾಥಾ
ಮೂಡುಬಿದಿರೆ, ಡಿ.4: ವಿಶ್ವ ಅಂಗವಿಕಲರ ದಿನಾಚರಣೆಯ ಪ್ರಯುಕ್ತ ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್ ಬೆಳುವಾಯಿ ಹಾಗೂ ರಿಕ್ಷಾ ಚಾಲಕ, ಮಾಲಕರ ಸಂಘ ಬೆಳುವಾಯಿ ಇವುಗಳ ಸಹಕಾರದೊಂದಿಗೆ ಬೆಳುವಾಯಿ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಶಾಲೆಯ ವಿಶೇಷ ಚೇತನ ಮಕ್ಕಳಿಂದ ವಿಶೇಷ ಚೇತನರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜನಜಾಗೃತಿ ಜಾಥಾ ಗುರುವಾರ ನಡೆಯಿತು. ಬೆಳುವಾಯಿ ಷಣ್ಮುಖಾನಂದ ಹಾಲ್ ಬಳಿಯಿಂದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯವರೆಗೆ ನಡೆದ ಜಾಥಾಕ್ಕೆ ಬೆಳುವಾಯಿ ಷಣ್ಮುಖಾನಂದ ಹಾಲ್ನ ಮಾಲಕ ಅಣ್ಣಿ ಪೂಜಾರಿ ಆಣೆಬೆಟ್ಟು ಚಾಲನೆ ನೀಡಿದರು. ಬೆಳುವಾಯಿ ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಸುಭಾಸ್ ಪೈ, ವ್ಯವಸಾಯ ಸಹಕಾರಿ ಬ್ಯಾಂಕ್ ಬೆಳುವಾಯಿ ಇದರ ನಿರ್ದೇಶಕ ರಾಮ್ ಪ್ರಸಾದ್, ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್, ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ)ಮಂಗಳೂರು ಇದರ ಅರ್ಜುನ್ ಭಂಡಾರ್ಕರ್ ಅವರು ಎಲ್ಲಾ ಮಕ್ಕಳಿಗೆ ಉಡುಗೊರೆಯನ್ನು ನೀಡಿ ಪ್ರೋತ್ಸಾಹಿಸಿದರು. ಶಿಕ್ಷಕಿ ಅನಿತಾ ರೋಡ್ರಿಗಸ್ ಸ್ವಾಗತಿಸಿದರು. ಸುಚಿತ್ರಾ ನಿರೂಪಿಸಿದರು.
ಸುರತ್ಕಲ್ | ಮನೆಗೆ ಅಕ್ರಮವಾಗಿ ಪ್ರವೇಶಿಸಿ ಒಂಟಿ ವೃದ್ಧೆಯನ್ನು ಬೆದರಿಸಿ ನಗ-ನಗದು ಲೂಟಿ
ಸುರತ್ಕಲ್, ಡಿ.4: ಒಂಟಿ ವೃದ್ಧೆಯ ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ರಪಟ್ಣ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ. ಮಿತ್ರಪಟ್ಣ ನಿವಾಸಿ ಜಲಜಾ (86) ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಕಳ್ಳರು ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆಗಳು ಹಾಗೂ ಪರ್ಸ್ ನಲ್ಲಿಟ್ಟಿದ್ದ ಸುಮಾರು 14 ಸಾವಿರ ರೂ. ನಗದು ಕಳವುಗೈದಿದ್ದಾರೆ. ಜಲಜಾ ತಮ್ಮ ಮನೆಯಲ್ಲಿ ಮಲಗಿದ್ದ ವೇಳೆ ಸುಮಾರು 2:30ರ ಸುಮಾರಿಗೆ ಇಬ್ಬರು ಯುವಕರು ನೀರು ಕೊಡುವಂತೆ ಬಾಗಿಲು ತಟ್ಟಿದ್ದಾರೆ. ಆಗ ಎಚ್ಚರಗೊಂಡ ಜಲಜಾ ನೀರು ಮನೆಯ ಹೊರಗಡೆ ಇದೆ. ಕುಡಿದು ಹೋಗಿ ಎಂದು ಹೇಳಿ ಮಲಗುವ ಕೋಣೆಗೆ ಹೋಗಿ ಮಲಗಲು ಮುಂದಾದಾಗ ಹೆಂಚು ಬೀಳುವ ಶಬ್ದ ಕೇಳಿಸಿದೆ. ತಕ್ಷಣ ಮನೆಯ ಛಾವಡಿಗೆ ತೆರಳಿ ನೋಡಿದಾಗ ಯುವಕನೋರ್ವ ಮಾಡಿನ ಹೆಂಚು ತೆಗೆದು ಮನೆಯ ಒಳಗೆ ಬಂದು ಮುಂಬಾಗಿಲನ್ನು ತೆರೆದು ಮತ್ತೋರ್ವನನ್ನು ಒಳಗೆ ಕರೆದಿದ್ದ. ಚಿನ್ನಾಭರಣ ಎಲ್ಲಿದೆ ಎಂದು ವಿಚಾರಿಸಿದ ಕಳ್ಳರು ಜಲಜಾರ ಕುತ್ತಿಗೆಗೆ ಟವಲ್ ಸುತ್ತಿ ಹಿಡಿದು ಕೊಲೆ ಮಾಡುವುದಾಗಿ ಬೆದರಿಸಿ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು 14 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಜಲಜಾ ಸುರತ್ಕಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನುಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿ | ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ: ವರ್ತಕರಿಂದ ದೂರು
ಉಪ್ಪಿನಂಗಡಿ, ಡಿ.4: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ಭಾಗವಾಗಿ ಉಪ್ಪಿನಂಗಡಿಯಲ್ಲಿ ಸರ್ವೀಸ್ ರಸ್ತೆ ಕಾಮಗಾರಿಯು ತೀರಾ ಮಂದಗತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಸುದೀರ್ಘ ಕಾಲ ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಇಲ್ಲಿನ ವರ್ತಕ ಸಂಘವು ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ. ಮಳೆಗಾಲದ ಮೊದಲು ಶ್ಲಾಘನಾತ್ಮಕ ವೇಗದೊಂದಿಗೆ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದರೆ, ಮಳೆಗಾಲ ಮುಗಿದು ಮತ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆಯಾದರೂ ವೇಗ ಮಾತ್ರ ನಿರ್ಲಕ್ಷ್ಯದ ಪರಮಾವಧಿಯಂತಿದೆ. ಪರ್ಯಾಯವಾಗಿ ಕಲ್ಪಿಸಲಾದ ಮಾರ್ಗದಲ್ಲಿನ ವಾಹನ ಸಂಚಾರದಿಂದ ಪೇಟೆಯ ವ್ಯವಹಾರಿಕ ಕ್ಷೇತ್ರವನ್ನು ತಲ್ಲಣಗೊಳಿಸಿದ್ದು, ಕಾಮಗಾರಿಯನ್ನು ಆದ್ಯತೆಯ ನೆಲೆಯಲ್ಲಿ ಕ್ಷಿಪ್ರ ಗತಿಯಲ್ಲಿ ಪೂರ್ತಿಗೊಳಿಸಬೇಕೆಂದು ಅಗ್ರಹಿಸಿ ಬುಧವಾರ ಪಂಚಾಯತ್ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಕಾಮಗಾರಿ ನಿರತ ಕೆಎನ್ಆರ್ ಸಂಸ್ಥೆಯ ಇಂಜಿನಿಯರ್ಗಳನ್ನು ಗುರುವಾರ ಸ್ಥಳಕ್ಕೆ ಕರೆಯಿಸಿದ ಪಂಚಾಯತ್ ಆಡಳಿತ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಅಗ್ರಹಿಸಿತು. ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಲ್ಲದು : ಹಿರಿಯ ಉದ್ಯಮಿ ಯು.ರಾಮ, ವರ್ತಕ ಸಮೂಹ ಅನುಭವಿಸುತ್ತಿರುವ ಸಂಕಷ್ಠಗಳನ್ನು ಉಲ್ಲೇಖೀಸಿ, ಆಡಳಿತ ವ್ಯವಸ್ಥೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ರೀತಿಯ ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಸರಿಯಲ್ಲ. ಪೇಟೆಯ ಪ್ರಮುಖ ಭಾಗದ ರಸ್ತೆಯಲ್ಲಿ ಅಗೆತ ಮಾಡಿ ವಾರಗಟ್ಟಲೆ ಕಾಮಗಾರಿ ನಡೆಸಿದರೆ, ಪೇಟೆಗೆ ಜನ ಬರುವುದಾದರೂ ಹೇಗೆ ? ವ್ಯಾಪಾರಿಗಳಿಗೆ ವ್ಯಾಪಾರವಾಗುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು. ಜನರ ತಾಳ್ಮೆಯನ್ನು ಕೆಣಕಿದರೆ ಹೋರಾಟ ನಡೆಸುವುದು ಅನಿರ್ವಾಯ ಎಂದು ಎಚ್ಚರಿಸಿದರು. ಇಂಜಿನಿಯರ್ ರಘುನಾಥ್ ರೆಡ್ಡಿ ವರ್ತಕ ಸಮೂಹದ ಅಗ್ರಹವನ್ನು ಆಲಿಸಿ , ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಡಾ.ರಾಜಾರಾಮ ಕೆ.ಬಿ., ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಂಚಾಯತ್ ಸದಸ್ಯ ಅಬ್ದುಲ್ ರಶೀದ್, ವರ್ತಕರಾದ ಮಸೂದ್, ಕೈಲಾರ್ ರಾಜಗೋಪಾಲ ಭಟ್, ಅನೂಷ್ ಕುಲಾಲ್, ಅರವಿಂದ ಭಂಡಾರಿ, ಪ್ರಕಾಶ್ ಬಿ., ರೂಪೇಶ್ ರೈ ಅಲಿಮಾರ, ಕರಾಯ ಸತೀಶ್ ನಾಯಕ್, ವಸಂತ ಗೌಡ, ಚೇತನ್ ಶೆಣೈ ಉಪಸ್ಥಿತರಿದ್ದರು.
ಮಂಗಳೂರು | ಗಾಂಜಾ ಸೇವನೆ: ಆರೋಪಿಯ ಬಂಧನ
ಮಂಗಳೂರು, ಡಿ.4: ವರ್ಷದ ಹಿಂದೆ ಎನ್ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅದ್ಯಪಾಡಿ ನಿವಾಸಿ ಮಹೇಂದ್ರ ಪೈ (35) ಎಂಬಾತನನ್ನು ಕಾವೂರು ಪೊಲೀಸರು ಗುರುವಾರ ಠಾಣೆಗೆ ಕರೆಸಿಕೊಂಡಿದ್ದರು. ಈ ವೇಳೆ ಆತ ಮಾದಕ ವಸ್ತುವನ್ನು ಸೇವಿಸಿದ್ದಾನೆಯೇ ಎಂದು ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮತ್ತೆ ಗಾಂಜಾ ಸೇವಿಸಿ ಬಂದಿರುವುದಾಗಿ ವರದಿಯಾಗಿದೆ. ಈ ಸಂಬಂಧ ಆರೋಪಿ ಮಹೇಂದ್ರ ಪೈ ವಿರುದ್ಧ ಕಾವೂರು ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಯ, ಡಿ.4: ಐವರ್ನಾಡು ಸಹಕಾರಿ ಸಂಘದ ಮಾಜಿ ನಿರ್ದೇಶಕ ಉದ್ದಂಪಾಡಿ ರಾಮಣ್ಣ ನಾಯ್ಕ (88) ಗುರುವಾರ ನಿಧನರಾದರು. ಕಾಂಗ್ರೆಸ್ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಅವರು, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ಗ್ರಾಪಂ ಸದಸ್ಯರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸುಳ್ಯ, ಡಿ.4: ಸುಳ್ಯದ ಗಾಂಧಿನಗರ ಬಳಿಯ ಗುರಂಪು ನಿವಾಸಿ ಮುಸ್ತಫಾ ಅವರ ವಿಶೇಷ ಚೇತನ ಪುತ್ರ ಮುಹಮ್ಮದ್ ಆದಿಲ್ (13) ಬುಧವಾರ ನಿಧನರಾದರು. ಹುಟ್ಟಿನಿಂದಲೇ ವಿಶೇಷ ಚೇತನದಿಂದ ಅನಾರೋಗ್ಯಕ್ಕೀಡಾಗಿ ಮಲಗಿದ ಸ್ಥಿತಿಯಲ್ಲೇ ಇದ್ದರು. ಮೃತರು ತಂದೆ, ತಾಯಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಸುಳ್ಯ, ಡಿ.4: ಸುಳ್ಯ ಹಳೆಗೇಟು ನಿವಾಸಿ ಶ್ರೀ ದುರ್ಗಾ ಸೌಂಡ್ ಮತ್ತು ಲೈಟಿಂಗ್ ಸಂಸ್ಥೆಯ ಮಾಲಕ ರಕ್ಷಿತ್ ಸೆಂಡಾರ್ಕರ್ (40) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ತಾಯಿ, ಪತ್ನಿ, ಮಗು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸುಳ್ಯ, ಡಿ.4: ನಾಟಿವೈದ್ಯರಾಗಿ ಜನಮನ್ನಣೆಗಳಿಸಿದ್ದ ಶತಾಯುಷಿ, ತೊಡಿಕಾನ ಗ್ರಾಮದ ಗುಂಡಿಗದ್ದೆ ನಿವಾಸಿ ದಿ.ಬೊಳ್ಳೂರು ನಾಗಪ್ಪಗೌಡರ ಪತ್ನಿ ಪುಟ್ಟಮ್ಮ ಬೊಳ್ಳೂರು (101) ನಿಧನರಾದರು. ತೊಡಿಕಾನ ಗ್ರಾಮದ ಸುತ್ತಮುತ್ತ ಮನೆ ಮನೆಗೆ ತೆರಳಿ ನೂರಾರು ಮಂದಿಗೆ ಹೆರಿಗೆ ಮಾಡಿಸಿ, ತಾಯಿ, ಮಗುವಿಗೆ ನಾಟಿ ಔಷಧಿ ನೀಡುತ್ತಿದ್ದರು. ಹಲವು ಬಗೆಯ ರೋಗಗಳಿಗೆ ಹಳ್ಳಿಮದ್ದು ನೀಡಿ ಗ್ರಾಮದಲ್ಲಿ ಜನಪ್ರಿಯರಾಗಿದ್ದರು. ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಸುಳ್ಯ | ತೆರಿಗೆ ಹಣ ದುರುಪಯೋಗ ಆರೋಪ : ಪಂಜ ಗ್ರಾಪಂ ಸಿಬ್ಬಂದಿ ಅಮಾನತು
ಸುಳ್ಯ, ಡಿ.4: ಪಂಜ ಗ್ರಾಮ ಪಂಚಾಯತ್ನ ತೆರಿಗೆ ವಸೂಲಾತಿಯ ಹಣವನ್ನು ಬ್ಯಾಂಕ್ಗೆ ಪಾವತಿಸದೇ ದುರುಪಯೋಗ ಮಾಡಿರುವ ಆರೋಪದಲ್ಲಿ ಗ್ರಾಪಂ ಸಿಬ್ಬಂದಿ ಬಾಬು ಎಂಬವರನ್ನು ಗ್ರಾಪಂ ಆಡಳಿತ ಅಮಾನತುಗೊಳಿಸಿದೆ. ಪಂಚಾಯತ್ ಸಿಬ್ಬಂದಿಯಾಗಿರುವ ಬಾಬು ತಾವು ಸಂಗ್ರಹಿಸಿದ ತೆರಿಗೆ ಹಣವನ್ನು ಬ್ಯಾಂಕ್ಗೆ ಪಾವತಿಸದೆ ದುರುಪಯೋಗ ಮಾಡಿದ್ದಾರೆ. ಈ ವಿಚಾರ ಪಂಚಾಯತ್ ಆಡಳಿತ ಹಾಗೂ ಪಿಡಿಒ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬಾಬುರನ್ನು ವಿಚಾರಿಸಿದಾಗ ಹಣ ದುರುಪಯೋಗ ಮಾಡಿದನ್ನು ಒಪ್ಪಿಕೊಂಡಿದ್ದಾರೆ. ಡಿ.2ರಂದು ಪಂಚಾಯತ್ ಆಡಳಿತ ಬಾಬುರನ್ನು ಅಮಾನತು ಮಾಡಿ ಹಾಗೂ ಹಣ ದುರುಪಯೋಗದ ಕುರಿತು ಪೊಲೀಸ್ ದೂರು ನೀಡಿದ್ದಾರೆ.
ಮಂಗಳೂರು | ಭರವಸೆಗೆ ಸೀಮಿತಗೊಂಡ ಎನ್ಐಟಿಕೆ ಕೇಂದ್ರೀಯ ವಿದ್ಯಾಲಯ!
ಮಂಗಳೂರು, ಡಿ.4: ಸುರತ್ಕಲ್ನ ಎನ್ಐಟಿಕೆಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿ ಏಳೆಂಟು ವರ್ಷ ಕಳೆದಿದೆ. ಆದರೆ ಅದಿನ್ನೂ ಭರವಸೆಗೆ ಸೀಮಿತಗೊಂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈಗಾಗಲೇ ಮಂಗಳೂರಿನ ಎಕ್ಕೂರು ಮತ್ತು ಪಣಂಬೂರಿನಲ್ಲಿ ಎರಡು ಕೇಂದ್ರೀಯ ವಿದ್ಯಾಲಯಗಳಿವೆ. ಮೂರನೇ ಕೇಂದ್ರೀಯ ವಿದ್ಯಾಲಯವನ್ನು ಸುರತ್ಕಲ್ನ ಎನ್ಐಟಿಕೆ ಕ್ಯಾಂಪಸ್ನೊಳಗೆ ಆರಂಭಿಸುವ ಬಗ್ಗೆ ಘೋಷಿಸಲಾಗಿತ್ತು. ಅಂದರೆ 2018ರಲ್ಲಿ ಕೇಂದ್ರದ ಶಿಕ್ಷಣ ಸಚಿವಾಲಯ (ಎಂಇ) ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ಡಿ)ವು ಜಂಟಿಯಾಗಿ ಹಲವು ಕೇಂದ್ರೀಯ ವಿದ್ಯಾಲಯಗಳನ್ನು ಏಕಕಾಲದಲ್ಲಿ ಘೋಷಣೆ ಮಾಡಿತ್ತು. ಈ ವೇಳೆ ಮಂಗಳೂರಿಗೂ ಮೂರನೇ ಕೇಂದ್ರೀಯ ವಿದ್ಯಾಲಯ ಬರುತ್ತದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿತ್ತು. ಕೇಂದ್ರ ಶಿಕ್ಷಣ ಸಚಿವಾಲಯವು ಎನ್ಐಟಿಕೆಯ ನಿರ್ದೇಶಕರಿಗೆ ಎನ್ಐಟಿಕೆಯ ಕ್ಯಾಂಪಸ್ನಲ್ಲಿ ಐದು ಎಕರೆ ಜಾಗವನ್ನು ಕೇಂದ್ರೀಯ ವಿದ್ಯಾಲಯಕ್ಕೆ ಮೀಸಲಿಡಲು ಸೂಚನೆ ನೀಡಿತ್ತು. ಇದು ಕಾರ್ಯಗತಗೊಂಡಿದ್ದರೆ ಮೂಡುಬಿದಿರೆ, ಬೆಳ್ತಂಗಡಿ ಮತ್ತಿತರ ಪ್ರದೇಶಗಳ ಕೇಂದ್ರ ಸರಕಾರಿ ನೌಕರರ ಮಕ್ಕಳಿಗೆ ಹೆಚ್ಚಿನ ಸಹಾಯವಾಗುತ್ತಿತ್ತು ಎಂಬ ಮಾತು ಕೇಳಿ ಬಂದಿತ್ತು. ಮಂಗಳೂರಿನಲ್ಲಿ ಮೂರನೇ ಕೇಂದ್ರೀಯ ಶಾಲೆಗೆ ಬೇಡಿಕೆ ಹೆಚ್ಚುತ್ತಿದೆ. ಪ್ರಸಕ್ತ ಇರುವ ಎರಡು ಕೇಂದ್ರೀಯ ಶಾಲೆಗಳಲ್ಲಿ ಹೆಚ್ಚುವರಿ ಮಕ್ಕಳ ಸೇರ್ಪಡೆಗೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ಎಕ್ಕೂರು ಹಾಗೂ ಪಣಂಬೂರಿನಲ್ಲಿ ಕೇಂದ್ರೀಯ ವಿದ್ಯಾಲಯಗಳಿವೆ. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಸೀಟುಗಳ ಏರಿಕೆ ಆಗುತ್ತಿಲ್ಲ. ಮೂರನೇ ಕೆವಿ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಂಸದರು ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸುಳ್ಯ | ಡಿ.9ರಿಂದ ಉಬರಡ್ಕದಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ
ಸುಳ್ಯ, ಡಿ.4: ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು (ಮಾಸ್ ಲಿಮಿಟೆಡ್) ವತಿಯಿಂದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ಡಿ.9ರಂದು ಉಬರಡ್ಕ ಮಿತ್ತೂರಿನ ಸಿರಿ ಸಹಕಾರ ಸೌಧದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಗ್ಗೆ 10:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮಾಸ್ ಲಿಮಿಟೆಡ್ ಮಂಗಳೂರು ಅಧ್ಯಕ್ಷ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಉದ್ಘಾಟಿಸುವರು. ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸುವರು. ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಉಬರಡ್ಕ ಮಿತ್ತೂರು ಶ್ರೀ ನರಸಿಂಹ ದೇವಸ್ಥಾನದ ಮೊಕ್ತೇಸರ ಜತ್ತಪ್ಪಗೌಡ, ಮಿತ್ತೂರು ಜೋಡು ದೈವಗಳ ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವೀಂದ್ರ ಮುಖ್ಯ ಅತಿಥಿಗಳಾಗಿರುವರು. ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಸಹಕಾರ ರತ್ನ ಪುರಸ್ಕತ ಸಹಕಾರ ರತ್ನ ಪಿ.ಸಿ.ಜಯರಾಮರನ್ನು ಸಮ್ಮಾನಿಸಲಾಗುತ್ತದೆ ಎಂದು ಮಾಸ್ ಲಿಮಿಟೆಡ್ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಬೆಂಗಳೂರು : ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ದೇಶದ ಆರ್ಥಿಕ ವ್ಯವಸ್ಥೆ ಹಾಗೂ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದ ಮನೆ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು, ಈ ವೇಳೆ 40 ಲಕ್ಷ ಮೌಲ್ಯದ 28 ಸಿಮ್ ಬಾಕ್ಸ್ ಗಳು, ವಿವಿಧ ಕಂಪೆನಿಗಳ 1,193 ಸಿಮ್ ಕಾರ್ಡ್ಗಳು ಒಂದು ಲ್ಯಾಪ್ ಟಾಪ್, ಮೂರು ರೂಟರ್ಸ್, ಒಂದು ಸಿಸಿ ಕ್ಯಾಮೆರಾ ಸೇರಿದಂತೆ ಇನ್ನಿತರ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ನಾಯ್ಡು ಲೇಔಟ್ನಲ್ಲಿರುವ ಕಟ್ಟಡವೊಂದರ ನಾಲ್ಕನೇ ಮಹಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ಕೈಗೊಂಡು ಆರೋಪಿಗಳು ಮನೆ ಬಾಡಿಗೆ ಪಡೆದು ಕೃತ್ಯವೆಸಗುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಕೇರಳ ಮೂಲದ ಆರೋಪಿ ನೇತೃತ್ವದ ತಂಡವು ಹಿಂದಿನ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ಮಿನಿ ಟೆಲಿಫೋನ್ ಎಕ್ಸ್ ಚೇಂಜ್ ರೀತಿಯಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ಕಾಯಕದಲ್ಲಿ ತೊಡಗಿಸಿಕೊಂಡಿತ್ತು. ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೇರಳ ಮೂಲದ ಆರೋಪಿ ಜೊತೆಗೆ ಕೃತ್ಯ ನಡೆಸುತ್ತಿದ್ದ ಮನೆಯ ಮಾಲಕ ಸಹ ನಾಪತ್ತೆಯಾಗಿದ್ದಾನೆ ಎಂದು ಸಿಸಿಬಿ ತಿಳಿಸಿದೆ. ಆರೋಪಿಗಳು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ದೂರಸಂಪರ್ಕ ಇಲಾಖೆಗೆ ಆರ್ಥಿಕ ನಷ್ಟ ಹಾಗೂ ದೇಶದ ಭದ್ರತೆಗೆ ಅಡ್ಡಿ ಉಂಟು ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಈ ಕಾರ್ಯಾಚರಣೆಯ ತನಿಖಾ ವರದಿ ಬಂದ ಬಳಿಕ ಆರೋಪಿಗಳು ಎಷ್ಟು ಪ್ರಕರಣಗಳಲ್ಲಿ ಸಿಮ್ಕಾರ್ಡ್ ನಂಬರ್ಗಳನ್ನು ಬಳಸಿ ದುರ್ಬಳಕೆ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಲಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಉಡುಪಿ | 108 ಆಂಬುಲೆನ್ಸ್ ಸೇವೆಗೆ ಸಿಬ್ಬಂದಿ ಕೊರತೆ
►18 ಆಂಬುಲೆನ್ಸ್ಗಳಲ್ಲಿ ಏಕಕಾಲಕ್ಕೆ 6-7 ಮಾತ್ರ ಸಂಚಾರ ► ತುರ್ತು ಕರೆಗಳಿಗೆ ಸ್ಪಂದಿಸಲು ಪರದಾಟ
ದಲಿತ ಚಳವಳಿ ಎಲ್ಲ ಶೋಷಿತರನ್ನೂ ಒಳಗೊಂಡಿದೆ : ಹೆಣ್ಣೂರು ಶ್ರೀನಿವಾಸ್
ದಸಂಸ ವತಿಯಿಂದ ‘ಸಂವಿಧಾನ ಸಂರಕ್ಷಿಸಿ ಮನುಸ್ಮೃತಿ ಹಿಮ್ಮೆಟ್ಟಿಸೋಣ’ ಜಾಗೃತಿ ಸಮಾವೇಶ
ಮನೆಗೆ ಅಕ್ರಮ ಪ್ರವೇಶ ಆರೋಪ : ಕಡಬ ಠಾಣಾ ಹೆಡ್ ಕಾನ್ಸ್ಟೇಬಲ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಆರೋಪಿಯ ಅಮಾನತು
ಹಜ್ಯಾತ್ರೆ-2026 | ಸೌದಿ ಅರೇಬಿಯಾ ಸರಕಾರ ನೀಡಿರುವ ಸೂಚನೆಗಳನ್ನು ಪಾಲಿಸಿ : ಶೌಕತ್ ಅಲಿ ಸುಲ್ತಾನ್
ಬೆಂಗಳೂರು : ಸೌದಿ ಅರೇಬಿಯಾ ಸರಕಾರದ ಹಜ್ ಮತ್ತು ಉಮ್ರಾ ಸಚಿವಾಲಯದಿಂದ ಪ್ರಕಟಿಸಲಾದ ವೇಳಾಪಟ್ಟಿಯ ಪ್ರಕಾರ 2026ನೆ ಸಾಲಿನ ಹಜ್ ಯಾತ್ರೆಗೆ ಸಂಬಂಧಿಸಿದ ವಸತಿ ಹಾಗೂ ಸೇವಾ ಒಪ್ಪಂದಗಳನ್ನು ಅಂತಿಮಗೊಳಿಸುವ ದಿನಾಂಕ 2026ರ ಫೆಬ್ರವರಿ 1. ವಸತಿ, ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ಸೇವೆಗಳ ವ್ಯವಸ್ಥೆಗಾಗಿ ಈ ಕಡ್ಡಾಯ ಒಪ್ಪಂದಗಳು ಅತ್ಯಗತ್ಯವಾಗಿವೆ ಎಂದು ಕರ್ನಾಟಕ ರಾಜ್ಯ ಹಜ್ ಆಯೋಜಕರ ಸಂಘದ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮೇಲಿನ ವೇಳಾಪಟ್ಟಿಯನ್ನು ಹಾಗೂ ಹಜ್ ಗ್ರೂಪ್ ಆಯೋಜಕರು(ಎಚ್ಜಿಒ) ಮತ್ತು ಖಾಸಗಿ ಟೂರ್ ಆಪರೇಟರ್ಗಳು(ಪಿಟಿಒ) ಪೂರ್ಣಗೊಳಿಸಬೇಕಾದ ವಿವಿಧ ಪೂರ್ವ ಸಿದ್ಧತಾ ಅಗತ್ಯಗಳನ್ನು ಪರಿಗಣಿಸಿ, ಇವರ ಮೂಲಕ ಹಜ್ ನಿರ್ವಹಿಸಲು ಬಯಸುವ ಯಾತ್ರಿಕರು ತಮ್ಮ ಬುಕ್ಕಿಂಗ್ ಅನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವಂತೆ ಕೋರಿದ್ದಾರೆ. ಮೀನಾ ಮತ್ತು ಅರಫಾತ್ ಸೇವೆಗಳು, ಮಕ್ಕಾ ಮತ್ತು ಮದೀನಾದಲ್ಲಿ ವಸತಿ, ಹೊಟೇಲ್ಗಳು, ಕಟ್ಟಡಗಳು, ಸಾರಿಗೆ ಸಂಸ್ಥೆಗಳೊಂದಿಗೆ ಒಪ್ಪಂದಗಳು ಹಾಗೂ ಹಜ್ ಪರವಾನಗಿ (ಪರ್ಮಿಟ್) ಪಡೆಯಲು ಅಗತ್ಯವಿರುವ ಇತರೆ ಕಡ್ಡಾಯ ಸೇವೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಮಯದೊಳಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಯಾತ್ರಿಗಳಿಗೆ ಸಮಸ್ಯೆಗಳು ಎದುರಾಗಬಹುದು ಎಂದು ಶೌಕತ್ ಅಲಿ ಸುಲ್ತಾನ್ ತಿಳಿಸಿದ್ದಾರೆ. ಹಜ್ ಯಾತ್ರಿಕರಿಗೆ ತುರ್ತು ಸೂಚನೆ: ಯಾತ್ರಿಕರು ತಕ್ಷಣ ತಮ್ಮ ಹಜ್ ಯೋಜನೆಗಳನ್ನು ಅಂತಿಮಗೊಳಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ(ಹಜ್ ವಿಭಾಗ)ದಿಂದ ಅನುಮೋದಿತ ಮತ್ತು ಕೋಟಾ ಹಂಚಿಕೆ ಹೊಂದಿರುವ ಹಜ್ ಗ್ರೂಪ್ ಆಯೋಜಕರನ್ನು ತಕ್ಷಣ ಸಂಪರ್ಕಿಸಿ, ತಮ್ಮ ದಾಖಲಾತಿಗಳ ದೃಢೀಕರಣ ಮತ್ತು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ. 2026ರ ಹಜ್ ಯಾತ್ರೆಯ ವೇಳಾಪಟ್ಟಿಯಂತೆ ಸೌದಿ ಸಚಿವಾಲಯದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಸೇವೆಗಳನ್ನು ದೃಢೀಕರಿಸಿಕೊಳ್ಳಲು ಯಾತ್ರಿಕರು ಯಾತ್ರೆಯ ಮೊತ್ತದ ಮೊದಲನೆ ಕಂತನ್ನು ಡಿ.15, ಎರಡನೆ ಕಂತನ್ನು 2026ನೆ ಸಾಲಿನ ಜ.15ರೊಳಗೆ ಪಾವತಿಸಬೇಕು. ತಮ್ಮ ಆಯೋಜಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಹಜ್ ಯಾತ್ರೆಯನ್ನು ಸುಗಮ, ಸುರಕ್ಷಿತ ಮತ್ತು ಉತ್ತಮವಾಗಿ ಸಂಘಟಿಸಲು ಸಹಕರಿಸುವಂತೆ ಶೌಕತ್ ಅಲಿ ಸುಲ್ತಾನ್ ಮನವಿ ಮಾಡಿದ್ದಾರೆ.
ಉಪ್ಪಿನಂಗಡಿ | ಬಾಲಕಿಯ ಆತ್ಮಹತ್ಯೆಗೆ ಲೈಂಗಿಕ ಕಿರುಕುಳ ಕಾರಣ: ಪೊಲೀಸ್ ತನಿಖೆಯಿಂದ ಬಹಿರಂಗ
ಬಾಲಕ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು
Putin India Visit: ಭಾರತಕ್ಕೆ ಬಂದರು ರಷ್ಯಾ ಅಧ್ಯಕ್ಷ ಪುಟಿನ್, ಪಾಕಿಸ್ತಾನಕ್ಕೆ ಶುರು ಭಯ!
ಭಾರತ ಇಡೀ ಜಗತ್ತಿನಲ್ಲೇ ವಿಶೇಷವಾದ ದೇಶ, ಏಕೆಂದರೆ ತನ್ನದೇ ಆದ ಮೂಲ ನಿಯಮಗಳನ್ನ ಹೊಂದಿರುವ ಭಾರತ ಯಾವುದೇ ಕಲಹ ಅಂದರೆ ಯುದ್ಧ ಬಯಸದೇ ಅಭಿವೃದ್ಧಿ ಕಡೆಗೆ ಮಾತ್ರ ಗಮನ ಹರಿಸುತ್ತದೆ. ಭಾರತದ ಜೊತೆಗೆ ಸ್ನೇಹ ಬಯಸಲು ಪ್ರಪಂಚದ ಪ್ರತಿಯೊಂದು ದೇಶ ಕೂಡ ಮುಂದೆ ಬರುತ್ತದೆ. ಪಾಶ್ಚಿಮಾತ್ಯ ದೇಶಗಳೇ ಇರಲಿ ಅಥವಾ ಪಾಶ್ಚಿಮಾತ್ಯ ದೇಶಗಳ ಶತ್ರು ದೇಶವೇ ಇರಲಿ
ಚುನಾವಣಾ ಪ್ರಚಾರದ ವೇಳೆ ಸುಳ್ಳು ಹೇಳಿಕೆ ನೀಡಿದ ಆರೋಪ; ಎಚ್ಡಿಕೆ ವಿರುದ್ಧದ ಸಮನ್ಸ್ಗೆ ಹೈಕೋರ್ಟ್ ತಡೆ
ಬೆಂಗಳೂರು : ಕಳೆದ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಸುಳ್ಳು ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಚಾರಣಾ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು. ನಗರದ 42ನೇ ಎಸಿಜೆಎಂ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ಮತ್ತು ಆ ಸಂಬಂಧದ ಎಲ್ಲ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಜನವರಿ ತಿಂಗಳ ಮೂರನೇ ವಾರಕ್ಕೆ ಮುಂದೂಡಿದ ನ್ಯಾಯಾಲಯ, ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಇದಕ್ಕೂ ಮುನ್ನ ಕುಮಾರಸ್ವಾಮಿ ಪರ ವಕೀಲ ಎ.ವಿ.ನಿಶಾಂತ್ ವಾದ ಮಂಡಿಸಿ, ಅರ್ಜಿದಾರರು ಚುನಾವಣಾ ಪ್ರಚಾರದ ವೇಳೆ ತಮ್ಮ ಹೇಳಿಕೆಯಲ್ಲಿ ಪ್ರತಿಸ್ಪರ್ಧಿಯ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೂ, ಪೊಲೀಸರು ಸಲ್ಲಿಸಿದ್ದ ಬಿ ವರದಿಯನ್ನು ತಿರಸ್ಕರಿಸಿರುವ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಆದ್ದರಿಂದ, ಸಮನ್ಸ್ಗೆ ತಡೆ ನೀಡಬೇಕು ಎಂದು ಕೋರಿದರು. ಪ್ರಕರಣದ ಹಿನ್ನೆಲೆ: 2024ರ ಏಪ್ರಿಲ್ 14ರಂದು ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಸೋಮಣ್ಣ ಅವರ ಎದುರಾಳಿಯು ಗ್ಯಾಂಗ್ಸ್ಟರ್ ಕೊತ್ವಾಲ್ ರಾಮಚಂದ್ರನ ಅನುಯಾಯಿಯಾಗಿದ್ದರು. ಅಂಥವರಿಂದ ರಾಜ್ಯ ಹಾಗೂ ರಾಷ್ಟ್ರದ ಹಿತಾಸಕ್ತಿಯನ್ನು ರಕ್ಷಿಸಲು ಹೇಗೆ ಸಾಧ್ಯ ಎಂದು ಹೇಳಿಕೆ ನೀಡಿದ್ದರು. ಮರು ದಿನ ಆ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ, 2024ರ ಮಾರ್ಚ್ 16ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ, ಚುನಾವಣಾಧಿಕಾರಿಯು ಕುಮಾರಸ್ವಾಮಿ ವಿರುದ್ಧ ಚುನಾವಣಾ ಪ್ರಚಾರ ವೇಳೆ ಸುಳ್ಳು ಹೇಳಿಕೆ ನೀಡಿದ್ದಾರೆಂದು ಐಪಿಸಿ ಸೆಕ್ಷನ್ 171ಜಿ, 123(4) ಅಡಿ ಪ್ರಕರಣ ದಾಖಲಿಸಿದ್ದರು. ಅದನ್ನು ಆಧರಿಸಿ 42ನೇ ಎಸಿಜೆಎಂ ನ್ಯಾಯಾಲಯ ತನಿಖೆಗೆ ಆದೇಶ ನೀಡಿತ್ತು. ತನಿಖೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಬಿ ರಿಪೋರ್ಟ್ ತಿರಸ್ಕರಿಸಿದ್ದ ನ್ಯಾಯಾಲಯ, ಡಿಸೆಂಬರ್ 6ರಂದು ಖುದ್ದು ಹಾಜರಾಗುವಂತೆ ಕುಮಾರಸ್ವಾಮಿ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಚಿನ್ ತೆಂಡೂಲ್ಕರ್ 100 ಶತಕಗಳ ವಿಶ್ವದಾಖಲೆಯನ್ನು ಇನ್ನು ಮುರಿಯಬಲ್ಲರೇ ವಿರಾಟ್ ಕೊಹ್ಲಿ?: ಹೀಗಿದೆ ಲೆಕ್ಕಾಚಾರ
India Vs South Africa- ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಸತತ 2 ಶತಕ ಬಾರಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ಗಡಿ ತಲುಪುವ ಕನಸಿಗೆ ಮತ್ತೆ ರೆಕ್ಕೆ ಪುಕ್ಕ ಬಲಿತಿದೆ. 2027ರ ವಿಶ್ವಕಪ್ ವರೆಗೂ ಆಡುವ ಗುರಿ ಇರಿಸಿಕೊಂಡಿರುವ ಕೊಹ್ಲಿ, ತಮ್ಮ ಬ್ಯಾಟ್ ಮೂಲಕವೇ ಎಲ್ಲಾ ಟೀಕೆಗಳಿಗೂ ಉತ್ತರ ನೀಡುತ್ತಿದ್ದಾರೆ. ಸದ್ಯ 84 ಶತಕಗಳನ್ನು ಬಾರಿಸಿರುವ ಕೊಹ್ಲಿ ಅವರು 84 ಶತಕಗಳನ್ನು ಗಳಿಸಿದ್ದು ಸಚಿನ್ ಅವರ 100 ಶತಕಗಳ ದಾಖಲೆ ಮುರಿಯಲು 16 ಶತಕಗಳಷ್ಟೇ ಬೇಕಾಗಿವೆ.
ಎಸ್ಐಆರ್ ಕರ್ತವ್ಯ ಕಡ್ಡಾಯ, ಬಿಎಲ್ಒಗಳಿಗೆ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರಕಾರಿ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕರ್ತವ್ಯದ ಒತ್ತಡದಿಂದ ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರಕಾರಗಳು ಹೆಚ್ಚುವರಿ ಸಿಬ್ಬಂದಿ ನೇಮಿಸಿ, ಸಮಸ್ಯೆ ಪರಿಹರಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಸರಕಾರಿ ನೌಕರರು ಚುನಾವಣಾ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿದ್ದು, ಒತ್ತಡ ತಗ್ಗಿಸುವ ಜವಾಬ್ದಾರಿ ರಾಜ್ಯಗಳ ಮೇಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ಹಿಂದಿನ ಆರ್ಥಿಕ ವರ್ಷದಲ್ಲಿ ಭಾರತದ ಅಡಿಕೆ ಆಮದು ಪ್ರಮಾಣ ಏರಿಕೆ
2024-25ರಲ್ಲಿ 1,208.34 ಕೋಟಿ ರೂ. ಮೌಲ್ಯದ 42,236.02 ಟನ್ ಅಡಿಕೆ ಆಮದು
ವಿಜಯನಗರ| ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
ವಿಜಯನಗರ(ಹೊಸಪೇಟೆ): ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆಯ ವೇಳಾ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಪ್ರಕಟಿಸಿದ್ದಾರೆ. ಡಿ.21 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು. ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ಡಿ.9 ಕೊನೆಯ ದಿನವಾಗಿದೆ. ಡಿ.10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿ.12 ಕೊನೆಯ ದಿನವಾಗಿದೆ. ಮರುಮತದಾನ ಅವಶ್ಯವಿದ್ದರೆ ಡಿ.23 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮತಗಳ ಎಣಿಕೆಯು ಡಿ.24 ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ ಎಂದು ಹೇಳಿದರು. ಮಿಸಲಾತಿ ವಿವರ : ಸೀತಾರಾಮ ತಾಂಡದ 4 ಸ್ಥಾನಗಳ ಪೈಕಿ ಅನುಸೂಚಿತ ಜಾತಿಗೆ 2, ಅನುಸೂಚಿತ ಜಾತಿ(ಮಹಿಳೆ) 1 , ಅನುಸೂಚಿತ ಪಂಗಡ ಮಹಿಳೆ 1 ಸ್ಥಾನಗಳು, ಸೀತಾರಾಮ ತಾಂಡ (ನಲ್ಲಾಪುರ)ದ 3 ಸ್ಥಾನಗಳ ಪೈಕಿ ಅನುಸೂಚಿತ ಜಾತಿ (ಮಹಿಳೆ) 2, ಸಾಮಾನ್ಯ 01, ಸೀತಾರಾಮ ತಾಂಡ (ಹೊಸಚಿನ್ನಾಪುರ) ಸಾಮಾನ್ಯ ವರ್ಗಕ್ಕೆ 1 ಸ್ಥಾನ ಸೇರಿದಂತೆ ಒಟ್ಟು 8 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Haveri | ಹಿಜಾಬ್ ಧರಿಸಿದ್ದಕ್ಕೆ ಆಕ್ಷೇಪ; ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು!
ಹಾವೇರಿ : ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ ಎಂದು ಆರೋಪಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ತಾಲೂಕಿನ ಸಿ.ಜಿ.ಬೆಲ್ಲದ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದ ಹಿನ್ನಲೆಯಲ್ಲಿ ಇದಕ್ಕೆ ಪ್ರತೀಕಾರವಾಗಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಅಲ್ಲದೆ, ತರಗತಿ ಕೊಠಡಿಯಲ್ಲೇ ಕುಳಿತಿದ್ದಾರೆ. ಹಲವು ದಿನಗಳಿಂದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದರೂ ಈವರೆಗೆ ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೊಂದು ಸಮುದಾಯದ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ
ಉಡುಪಿ | ಡಿ.6ರಂದು ಅಖಿಲ ಭಾರತ ಗೃಹರಕ್ಷಕ ದಿನಾಚರಣೆ
ಉಡುಪಿ, ಡಿ.4: ಜಿಲ್ಲಾ ಗೃಹರಕ್ಷಕ ದಳ ಉಡುಪಿ ಜಿಲ್ಲೆ ವತಿಯಿಂದ ಅಖಿಲ ಭಾರತ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮ ಡಿ.6ರಂದು ಬೆಳಗ್ಗೆ 9:30ಕ್ಕೆ ನಗರದ ಜಿಲ್ಲಾ ಗೃಹ ರಕ್ಷಕ ದಳ ಕಚೇರಿ ಆವರಣದಲ್ಲಿ ನಡೆಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಆದರ್ಶ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎಂಚಂದ್ರಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕೊಣಾಜೆ | ಉತ್ತಮ ಶಿಕ್ಷಣದೊಂದಿಗೆ ಸಮಾಜಕ್ಕೆ ಕೊಡುಗೆ ನೀಡಿ : ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ಕೊಣಾಜೆ : ವಿದ್ಯಾರ್ಥಿಗಳು ಉತ್ತಮ ಶಿಕ್ಷಣ, ಪರಿಶ್ರಮ ಸಾಧನೆಯೊಂದಿಗೆ ಮುಂದೆ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅಭಿಪ್ರಾಯಪಟ್ಟರು. ಅವರು ನಾಟೆಕಲ್ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇದರ ಪ್ರಥಮ ಬ್ಯಾಚ್ನ ಶಿಷ್ಯೋಪನಯನೀಯ ಆಯುರ್ ಪ್ರವೇಶಿಕಾ ಹಾಗೂ ಎನ್ ಎ ಬಿ ಹೆಚ್ ಅಕ್ರಿಡೇಷನ್ ಅನುಮತಿ ಪತ್ರದ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಸ್ಟೇಟ್ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಫರೀದ್ ಮಾತನಾಡಿ , ಮಂಗಳೂರು ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜುಗಳು ಹಾಗೂ ವೈದ್ಯಕೀಯ ಕಾಲೇಜುಗಳು, ಮೂರು ವಿಶ್ವವಿದ್ಯಾನಿಲಯಗಳು ಇರುವುದು ಶಿಕ್ಷಣ ಕ್ರಾಂತಿಯ ಜೊತೆಗೆ ಸಮಾಜಸೇವೆಯ ಭಾಗವಾಗಿದೆ. ಶೀಘ್ರದಲ್ಲೇ ಕಣಚೂರು ವಿಶ್ವವಿದ್ಯಾನಿಲಯ ಆಗಿ ಹೊರಹೊಮ್ಮಲಿದೆ ಎಂದರು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಗಳ ಕುಲಸಚಿವ ಅರ್ಜುನ್ ಎಸ್.ಒಡೆಯರ್ ಮಾತನಾಡಿ, ಕಾಯಿಲೆ ಬರುವ ಮೊದಲು ತಡೆಯುವ ಸಾಮರ್ಥ್ಯ ಹೊಂದಿರುವ ಅಪೂರ್ವ ತತ್ತ್ವಶಾಸ್ತ್ರ. ಇಂದಿನ ಜಾಗತಿಕ ಆರೋಗ್ಯ ಸವಾಲುಗಳಿಗೆ ಆಯುರ್ವೇದ ಪರಿಣಾಮಕಾರಿ ಪರಿಹಾರ ನೀಡುತ್ತಿದೆ. ವೈದ್ಯಕೀಯ ವೃತ್ತಿಯ ಮಹಾನ್ ಮಾನವೀಯ ಕರ್ತವ್ಯವಾಗಿರುವುದರಿಂದ ಅಂಗಾಂಗ ದಾನಗಳಿಗೆ ಹೆಚ್ಚಿನ ಒಲವು ನೀಡುತ್ತಿದೆ ಎಂದರು. ಎನ್ ಎ ಬಿ ಹೆಚ್ ಅಕ್ರಿಡೇಷನ್ ಅನುಮತಿ ಪತ್ರವನ್ನು ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಅವರಿಗೆ ಹಸ್ತಾಂತರಿಸಲಾಯಿತು. ಶಿಷ್ಯೋಪನಯನೀಯ ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ಅತಿಥಿಗಳು ನಡೆಸಿಕೊಟ್ಟರು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡಾ.ವಿದ್ಯಾಪ್ರಭಾ ಆರ್. ಉಪಸ್ಥಿತರಿದ್ದರು. ಈ ಸಂದರ್ಭ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಡಾ.ಸುರೇಶ್ ನೆಗಲಗುಳಿ ವಂದಿಸಿದರು.
Iphone: ಪ್ರಿಯ ಕರ್ನಾಟಕದ ಓದುಗ ಸ್ನೇಹಿತರೇ, ಹೃದಯಪೂರ್ವಕ ಸ್ವಾಗತ.
ಪ್ರಿಯ ಕರ್ನಾಟಕದ ಓದುಗ ಸ್ನೇಹಿತರೇ, ಹೃದಯಪೂರ್ವಕ ಸ್ವಾಗತ. ಇಂದು ಒಂದು ಹೊಸ ಬೆಳಗಿನೊಂದಿಗೆ ಕರ್ನಾಟಕ ಟೈಮ್ಸ್ ನಿಮ್ಮ ಮುಂದೆ ಬಂದಿದೆ. ನಿಮಗೆ ಸತ್ಯ, ಸ್ಪಷ್ಟ ಮತ್ತು ನಂಬಿಕಾರ್ಹ ಸುದ್ದಿಗಳನ್ನು ತಲುಪಿಸುವ ಏಕೈಕ ಉದ್ದೇಶದೊಂದಿಗೆ ನಾವು ಈ ಪಯಣ ಶುರು ಮಾಡುತ್ತಿದ್ದೇವೆ. ನಾವು ಯಾರು, ಏನು ಮಾಡುತ್ತೇವೆ? ಕರ್ನಾಟಕ ಟೈಮ್ಸ್ ಒಂದು ಸ್ವತಂತ್ರ ಕನ್ನಡ ಸುದ್ದಿ ವೇದಿಕೆ. ರಾಜ್ಯದ ಎಲ್ಲೆಡೆ ನಡೆಯುವ ಘಟನೆಗಳು, ರಾಜಕಾರಣ, ಆರ್ಥಿಕತೆ, ಶಿಕ್ಷಣ, ಕ್ರೀಡೆ, ಸಂಸ್ಕೃತಿ – ಎಲ್ಲವನ್ನೂ ಸರಳವಾಗಿ, ಆಳವಾಗಿ ಮತ್ತು ಪ್ರಾಮಾಣಿಕವಾಗಿ ... Read more
ಜನಸಂಖ್ಯೆ ಹೆಚ್ಚಿಸಲು ಚೀನಾ ಸರ್ಕಾರದ ಹೊಸ ತಂತ್ರ; 32 ವರ್ಷಗಳ ಬಳಿಕ ಕಾಂಡೋಮ್ ಮೇಲಿನ ತೆರಿಗೆ ಹೆಚ್ಚಳ
ತೀವ್ರ ಜನಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆ ಚೀನಾ ಸರ್ಕಾರ ಹೊಸ ತಂತ್ರವನ್ನು ಹೂಡಿದೆ. ಕಾಂಡೋಮ್ ಮತ್ತು ಇತರೆ ಗರ್ಭನಿರೋಧಕಗಳ ಮೇಲಿದ್ದ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿದೆ. ಮೂವತ್ತು ವರ್ಷಗಳ ನಂತರ ಇವುಗಳ ಮೇಲಿನ ತೆರಿಗೆ ಹೆಚ್ಚಿಸಲು ಚೀನಾ ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ಮಕ್ಕಳ ಪಾಲನೆ ಮತ್ತು ವೃದ್ಧರ ಆರೈಕೆ ಸೇವೆಗಳಿಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಮುಂದಾಗಿದೆ.
124 ಜೂನಿಯರ್ ಅಸಿಸ್ಟಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸಿಬಿಎಸ್ಇ
ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಜೂನಿಯರ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸಿಬಿಎಸ್ಇ ಯ ಅಧಿಕೃತ ವೆಬ್ಸೈಟ್ cbse.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಸಂದರ್ಭದಲ್ಲಿ ಸಂಸ್ಥೆಯಲ್ಲಿ 124 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಡಿಸೆಂಬರ್ 2025. ಹುದ್ದೆಯ ವಿವರಗಳು: 1. ಸಹಾಯಕ ಕಾರ್ಯದರ್ಶಿ: 8 ಹುದ್ದೆಗಳು 2. ಸಹಾಯಕ ಪ್ರಾಧ್ಯಾಪಕರು ಮತ್ತು ಸಹಾಯಕ ನಿರ್ದೇಶಕರು: 27 ಹುದ್ದೆಗಳು 3. ಲೆಕ್ಕಪತ್ರ ಅಧಿಕಾರಿ: 2 ಹುದ್ದೆಗಳು 4. ಸೂಪರಿಂಟೆಂಡೆಂಟ್: 27 ಹುದ್ದೆಗಳು 5. ಜೂನಿಯರ್ ಅನುವಾದ ಅಧಿಕಾರಿ: 9 ಹುದ್ದೆಗಳು 6. ಜೂನಿಯರ್ ಅಕೌಂಟೆಂಟ್: 16 ಹುದ್ದೆಗಳು 7. ಜೂನಿಯರ್ ಅಸಿಸ್ಟೆಂಟ್: 35 ಹುದ್ದೆಗಳು ಅರ್ಹತಾ ಮಾನದಂಡಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಹ ಅಭ್ಯರ್ಥಿಗಳು https://www.cbse.gov.in/cbsenew/cbse.html ನಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು. ಆಯ್ಕೆ ಪ್ರಕ್ರಿಯೆ ಆಯ್ಕೆ ಪ್ರಕ್ರಿಯೆಯು ಹುದ್ದೆಯಿಂದ ಹುದ್ದೆಗೆ ಬದಲಾಗುತ್ತದೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ಆಯ್ಕೆ ಪ್ರಕ್ರಿಯೆಯನ್ನು ಪರಿಶೀಲಿಸಬೇಕಾಗುತ್ತದೆ. ಪರೀಕ್ಷಾ ಶುಲ್ಕ ಪರೀಕ್ಷಾ ಶುಲ್ಕವನ್ನು 2 ರೀತಿಯಲ್ಲಿ ವಿಧಿಸಲಾಗಿದೆ: (i) ಅರ್ಜಿ ಶುಲ್ಕವು ಎಸ್ಸಿ /ಎಸ್ಟಿ /ವಿಕಲಚೇತನರು/ ಮಾಜಿ ಸೈನಿಕರು / ಮಹಿಳೆಯರಿಗೆ ಅನ್ವಯಿಸುವುದಿಲ್ಲ. (ii) ಎಲ್ಲರಿಗೂ ಪ್ರಕ್ರಿಯೆ ಶುಲ್ಕ ಅನ್ವಯಿಸುತ್ತದೆ (ಕಡ್ಡಾಯ). ಎಸ್ಸಿ/ ಎಸ್ಟಿ/ ವಿಕಲಚೇತನರು/ ಮಾಜಿ ಸೈನಿಕರು / ಮಹಿಳಾ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ರೂ 250/- ಪಾವತಿಸಬೇಕಾಗುತ್ತದೆ ಮತ್ತು ಮೀಸಲಾತಿ ಇಲ್ಲದ/ ಒಬಿಸಿ/ಇಡಬ್ಲ್ಯುಎಸ್ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಗುಂಪು A ಗೆ ರೂ 1750/- ಮತ್ತು ಗುಂಪು B ಮತ್ತು C ಗೆ ರೂ 1050 ಪಾವತಿಸಬೇಕಾಗುತ್ತದೆ. ಡೆಬಿಟ್ ಕಾರ್ಡ್ಗಳು (ರೂಪೇ/ವೀಸಾ/ಮಾಸ್ಟರ್ಕಾರ್ಡ್/ಮಾಸ್ಟ್ರೊ), ಕ್ರೆಡಿಟ್ ಕಾರ್ಡ್ಗಳು (ಯುಪಿಐ, ಪಿಪಿಐ ವ್ಯಾಲೆಟ್ ಮತ್ತು ಕ್ರೆಡಿಟ್ ಲೈನ್ನಲ್ಲಿ ರೂಪೇ ಸಿಸಿ ಹೊರತುಪಡಿಸಿ), ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಬಳಸಿ ಪಾವತಿ ಮಾಡಬಹುದು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಸಿಬಿಎಸ್ಸಿಯ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಬಹುದು.
ಮುಂದಿನ ವರ್ಷ ಟಿಪ್ಪು ಸುಲ್ತಾನ್ ಪುತ್ಥಳಿ ನಿರ್ಮಿಸಿ ಜಯಂತಿ ಆಚರಣೆ: ಶಾಸಕ ಹೆಚ್.ಆರ್. ಗವಿಯಪ್ಪ
ವಿಜಯನಗರ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲ ವ್ಯಕ್ತಿ ಟಿಪ್ಪು ಸುಲ್ತಾನ್, ಅಂತಹ ಮಹಾನ್ ಹೋರಾಟಗಾರ ಟಿಪ್ಪುಸುಲ್ತಾನ್ ರವರ ಪುತ್ತಳಿಯನ್ನು ಹೊಸಪೇಟೆ ನಗರದಲ್ಲಿ ಮುಂದಿನ ಜಯಂತಿ ಒಳಗೆ ನಿರ್ಮಿಸಲಾಗುವುದು ಎಂದು ಶಾಸಕ ಹೆಚ್.ಆರ್. ಗವಿಯಪ್ಪ ಹೇಳಿದರು. ನಗರದ ಉಮರ್ ಪಂಕ್ಷನ್ ಹಾಲ್ ನಲ್ಲಿ ಮಜಲೀಸ್ ಎ ಟಿಪ್ಪು ಸುಲ್ತಾನ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 275 ನೇ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹೆಚ್.ಆರ್. ಗವಿಯಪ್ಪ, ಟಿಪ್ಪು ಸುಲ್ತಾನ್ ಅವರ ದೇಶ ಕಂಡ ಅಪ್ರತಿಮ ಹೋರಾಟಗಾರ. ಭಾರತಕ್ಕೆ ಸ್ವತಂತ್ರ ಸಿಗುವುದಕ್ಕೆ ಅವರ ಪಾತ್ರ ಬಹು ಮುಖ್ಯವಾದುದು.ಅಂತಹ ವ್ಯಕ್ತಿಯ ಜಯಂತಿಗೆ ಯಾರೇ ವಿರೋಧ ಮಾಡಿದರೂ ಸಹ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಶಾಸಕರು ಟಿಪ್ಪು ಸುಲ್ತಾನ್ ಅವರ ಪರವಾಗಿ ಇರುತೇವೆ ಎಂದು ಹೇಳಿದರು. ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯರಾದ ಪ್ರೊಫೆಸರ್ ಸಾದಿಯಾ ಮಾತನಾಡಿ ಟಿಪ್ಪು ಸುಲ್ತಾನ್ ರವರ ಜೀವನ ಚರಿತ್ರೆ ಬಗ್ಗೆ ತಿಳಿಸಿದರು. ಈ ವೇಳೆ ಮಜಲೀಸ್ -ಎ- ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಇರ್ಫಾನ್ ಕಟಕಿ, ಸಮಾಜಸೇವಕ ಹೆಚ್. ಜಿ.ವಿರೂಪಾಕ್ಷ, ಇತಿಹಾಸಕರ ಚಂದ್ರಶೇಖರ್ ಶಾಸ್ತ್ರಿ, ಮಾಜಿ ನಗರ ಸಭ ಸದಸ್ಯ ಬಡವಲಿ, ಖಾದರ್ ರಾಫಾಯಿ, ಅಬ್ದುಲ್, ಖೈಫ್, ಸದ್ದಾಂ ಹಂಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಳಿಕೆಯಾಗುತ್ತಾ ಬಡ್ಡಿ ದರ? ಸಾಲಗಾರರಿಗೆ ಸಿಗುತ್ತಾ ಇಯರ್ ಎಂಡ್ ಗಿಫ್ಟ್? ಆರ್ಬಿಐ ತೀರ್ಮಾನದತ್ತ ಎಲ್ಲರ ಚಿತ್ತ
ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ಇದೆ. ಹಣದುಬ್ಬರ ಕುಸಿತ ಮತ್ತು ಜಿಡಿಪಿ ಏರಿಕೆಗಳು ಇದಕ್ಕೆ ಪ್ರಮುಖ ಕಾರಣವಾಗಿವೆ. ಹಣಕಾಸು ನೀತಿ ಸಮಿತಿಯ ಸಭೆ ನಡೆಯುತ್ತಿದ್ದು, ಶುಕ್ರವಾರ ತೀರ್ಮಾನ ಪ್ರಕಟವಾಗಲಿದೆ. ರೆಪೋ ದರದಲ್ಲಿ ಶೇಕಡಾ 0.25ರಷ್ಟು ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಇದು ಗೃಹ ಸಾಲಗಾರರಿಗೆ ಅನುಕೂಲ ತರಲಿದೆ.
ಕೊಪ್ಪಳ|ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಸ್ಪರ್ಧಾ ಕಾರ್ಯಕ್ರಮ
ಯಲಬುರ್ಗಾ: ತಾಲೂಕು ಮಟ್ಟದ ಸರಕಾರಿ ಹಾಗೂ ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮವು ಹೊಸಳ್ಳಿಯ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಪಾಠೋಪಕರಣ ತಯಾರಿಕಾ ಸ್ಪರ್ಧೆ, ಆಶುಭಾಷಣ, ಭಕ್ತಿ ಗೀತೆ, ರಸಪ್ರಶ್ನೆ ಸಾಮಾನ್ಯ ಜ್ಞಾನ ಹಾಗೂ ವಿಜ್ಞಾನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಗೌಡ, ಶಿಕ್ಷಕರಲ್ಲಿ ಅಡಗಿರುವ ಪ್ರತಿಭೆಯನ್ನು ವೇದಿಕೆಗೆ ತರುವುದು ಈ ಸ್ಪರ್ಧೆಗಳ ಉದ್ದೇಶ. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಕೂಡ ಸ್ಫೂರ್ತಿ ಆಗುತ್ತವೆ ಎಂದು ಹೇಳಿದರು. ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಅಬ್ಬಿಗೇರಿ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಧರಣ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ಹೊಸದಿಲ್ಲಿ: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಸಲ್ಲಿಕೆಯಾಗಿದ್ದ ಮಾನಹಾನಿ ಮೊಕದ್ದಮೆ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ಹಾಗೂ ಬಿಜೆಪಿಯ ನಾಯಕ ಸುರೇಶ್ ನಖುವಾ ಮತ್ತೊಂದು ಬಾರಿ ವಿಚಾರಣೆಯ ಮುಂದೂಡಿಕೆಗಾಗಿ ಮನವಿ ಮಾಡಿದ್ದರಿಂದ, ದಿಲ್ಲಿಯ ನ್ಯಾಯಾಲಯವೊಂದು ಅವರಿಗೆ ಐದು ಸಾವಿರ ರೂ. ದಂಡ ವಿಧಿಸಿದೆ ಎಂದು barandbench.com ವರದಿ ಮಾಡಿದೆ. ಜುಲೈ 5, 2024ರಲ್ಲಿ ಯೂಟ್ಯೂಬರ್ ಧ್ರುವ್ ರಾಠಿ ಪೋಸ್ಟ್ ಮಾಡಿದ್ದ My reply to Godi Youtubers/Elvish Yadav/Dhruv Rather ಎಂಬ ಶೀರ್ಷಿಕೆಯ ವಿಡಿಯೊ ವಿರುದ್ಧ ಮುಂಬೈ ಬಿಜೆಪಿ ಘಟಕದ ವಕ್ತಾರ ಸುರೇಶ್ ನಖುವಾ ಮಾನಹಾನಿ ಮೊಕದ್ದಮೆ ಹೂಡಿದ್ದರು. ನನ್ನನ್ನು ನಿಂದಕ ಟ್ರೋಲ್ಗಳಿಗೆ ಹೋಲಿಸಲಾಗಿದೆ ಹಾಗೂ ಈ ಆರೋಪಗಳನ್ನು ಯಾವುದೇ ಅಧಾರ ಅಥವಾ ಕಾರಣವಿಲ್ಲದೆ ಮಾಡಲಾಗಿದೆ. ಇದರಿಂದಾಗಿ ನನ್ನ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ ಎಂದು ಸುರೇಶ್ ನಖುವಾ ಆರೋಪಿಸಿದ್ದರು. ಧ್ರುವ್ ರಾಠಿಯ ಆರೋಪದಿಂದಾಗಿ ನಾನು ವ್ಯಾಪಕ ಖಂಡನೆ ಹಾಗೂ ವ್ಯಂಗ್ಯಕ್ಕೆ ಗುರಿಯಾಗಬೇಕಾಯಿತು ಎಂದೂ ಅವರು ಆರೋಪಿಸಿದ್ದರು. ಸೆಪ್ಟೆಂಬರ್ 2024ರಲ್ಲಿ ಈ ವಿಷಯದ ಕುರಿತು ಸುರೇಶ್ ನಖುವಾ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಲೋಪವೊಂದನ್ನು ಪತ್ತೆ ಹಚ್ಚಿದ್ದ ನ್ಯಾಯಾಲಯ, ಆ ಲೋಪವನ್ನು ಸರಿಪಡಿಸಿದ ನಂತರ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಅವರಿಗೆ ಸೂಚಿಸಿತ್ತು. ಅದರಂತೆ ಸುರೇಶ್ ನಖುವಾ ನ್ಯಾಯಾಲಯಕ್ಕೆ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಈ ಬಾರಿಯೂ ಧ್ರುವ್ ರಾಠಿ ಪರ ವಕೀಲರು ತಿದ್ದುಪಡಿ ಮಾಡಲಾದ ಪ್ರಮಾಣ ಪತ್ರದಲ್ಲೂ ಲೋಪವಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಹೀಗಾಗಿ, ಸದರಿ ಪ್ರಮಾಣ ಪತ್ರವನ್ನು ದೃಢೀಕರಿಸಿದ ನೋಟರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಮೂಳೆ ಮುರಿತದ ಕಾರಣವೊಡ್ಡಿ ಇಲ್ಲಿಯವರೆಗೆ ನೋಟರಿ ನ್ಯಾಯಾಲಯದೆದುರು ಹಾಜರಾಗಿಲ್ಲ. ಇಂದಿನ ವಿಚಾರಣೆಯ ಸಂದರ್ಭದಲ್ಲಿ ಸುರೇಶ್ ನಖುವಾ ಪರ ಹಾಜರಾಗಿದ್ದ ನೂತನ ವಕೀಲ ಜಗದೀಶ್ ತ್ರಿವೇದಿ, ನನ್ನ ವಕಾಲತ್ತು ದಾಖಲಾಗುವವರೆಗೂ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಧ್ರುವ್ ರಾಠಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಸಾತ್ವಿಕ್ ವರ್ಮ ಹಾಗೂ ವಕೀಲ ನಕುಲ್ ಗಾಂಧಿ ವಿಚಾರಣೆಯ ಮುಂದೂಡಿಕೆಗೆ ಆಕ್ಷೇಪಿಸಿದರಲ್ಲದೆ, ಇಲ್ಲಿಯವರೆಗಿನ ಸುರೇಶ್ ನಖುವಾರ ವರ್ತನೆಯನ್ನು ಪ್ರಶ್ನಿಸಿದರು. ಧ್ರುವ್ ರಾಠಿ ಪರ ವಕೀಲರ ವಾದವನ್ನು ಮನ್ನಿಸಿದ ನ್ಯಾ. ಪ್ರೀತಂ ಸಿಂಗ್, ಪ್ರಕರಣದ ವಿಚಾರಣೆಯ ಮುಂದೂಡಿಕೆಗೆ ಕೋರಿದ ಸುರೇಶ್ ನಖುವಾರಿಗೆ ಐದು ಸಾವಿರ ರೂ. ದಂಡ ವಿಧಿಸಿ, ಮಾರ್ಚ್ 11, 2026ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.
ಕಲಬುರಗಿ| ರೈತರಿಗೆ ಸಮರ್ಪಕವಾಗಿ ಪರಿಹಾರ ಒದಗಿಸಲು ಎಐಕೆಕೆಎಮ್ಎಸ್ ಆಗ್ರಹ
ಕಲಬುರಗಿ: ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ಸಮರ್ಪಕವಾಗಿ ಪರಿಹಾರ ಬಂದಿಲ್ಲ.ಕೆಲವು ರೈತರಿಗೆ ಕಡಿಮೆ ಪರಿಹಾರ ಬಂದಿದೆ.ಕೂಡಲೇ ರೈತರಿಗೆ ಸರಿಯಾದ ಪರಿಹಾರ ಒದಗಿಸಬೇಕು ಮತ್ತು ತೊಗರಿ ಕೇಂದ್ರಗಳನ್ನು ತೆರೆಯುವುದರ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಕಾ. ಗಣಪತರಾವ ಕೆ. ಮಾನೆ ಆಗ್ರಹಿಸಿದರು. ಬುಧವಾರ ಶಹಾಬಾದ ನಗರದ ತಹಶೀಲ್ದಾರ್ ಕಚೇರಿಯ ಮುಂದೆ ನೆರೆ ಹಾವಳಿಯಿಂದ ಸಂಕಷ್ಟದಲ್ಲಿರುವ ಎಲ್ಲಾ ರೈತರಿಗೂ ಬೆಳೆ ನಷ್ಟ ಸಮರ್ಪಕ ಪರಿಹಾರಕ್ಕಾಗಿ ಒತ್ತಾಯಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆಯ ತಾಲೂಕು ಸಮಿತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರದಲ್ಲಿ ಬಂಡವಾಳಶಾಹಿ ಪರ ನಿಂತು ರೈತರ ಬದುಕಿಗೆ ಪ್ರಹಾರ ಮಾಡುವಂತಹ ನೀತಿಗಳನ್ನು ಒಂದರ ನಂತರ ಮತ್ತೊಂದು ಜಾರಿ ಮಾಡುತ್ತಿರುವುದರಿಂದ ನಮ್ಮ ರೈತರು ನಿರ್ಗತಿಕರಾಗುತ್ತಿದ್ದಾರೆ. ಅಂಬಾನಿ-ಆದಾನಿಗಳoತಹ ಬಂಡವಾಳಶಾಹಿಗಳ ಸೇವೆಯಲ್ಲಿರುವ ಈ ಸರಕಾರಗಳ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ಬೆಳಸಬೇಕಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾದ ತೊಗರಿ ಬೆಳೆಯು ಅತಿಯಾದ ಮಳೆಯಿಂದ ನಷ್ಟವಾಗಿ ರೈತರ ಬದುಕು ಬೀದಿಗೆ ಬಂದoತಾಗಿದೆ. ಮುಂಗಾರು ಬಿತ್ತನೆಯು ಎರಡು, ಮೂರು ಬಾರಿ ಮಾಡಿದರೂ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಸರಕಾರವು ವಿತರಿಸಿದ ಪರಿಹಾರ ಅವೈಜ್ಞಾನಿಕ ಹಾಗೂ ಸಮರ್ಪಕವಾಗಿಲ್ಲ. ಕೆಲ ರೈತರಿಗೆ ಅತ್ಯಂತ ಕಡಿಮೆ ಹಣ ಜಮಾ ಆಗಿರುವುದು ಹಾಗೂ ಕೆಲವು ರೈತರಿಗೆ ಹಣ ಜಮಾ ಆಗದೇ ಇರುವುದು ಕಂಡುಬoದಿದೆ. ಇದನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೆವೆ. ಈ ಕೂಡಲೇ ಕಷ್ಟದಲ್ಲಿರುವ ರೈತರಿಗೆ ಸಮರ್ಪಕ ಪರಿಹಾರಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು. ಎಐಕೆಕೆಎಮ್ಎಸ್ ಜಿಲ್ಲಾ ನಾಯಕರಾದ ಕಾ. ಭಾಗಣ್ಣ ಬುಕ್ಕ ಮಾತನಾಡಿ, ನೆರೆ ಹಾವಳಿಯಿಂದಾಗಿ ಹಲವಾರು ಹಳ್ಳಿಗಳು ನೀರಿನಲ್ಲಿ ಮುಳುಗಿರುವ ವಿಷಯ ಸರಕಾರಕ್ಕೆ ಗೊತ್ತಿದ್ದರೂ ಇಲ್ಲಿಯವರೆಗೆ ಶಾಶ್ವತ ಪರಿಹಾರದ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕೂಡಲೇ ಶಾಶ್ವತ ವಸತಿ ಯೋಜನೆಯನ್ನು ರೂಪಿಸಿ ಅವರಿಗೆ ಶಾಶ್ವತ ಮನೆಗಳನ್ನು ಕಟ್ಟಿಕೊಡಬೇಕೆಂದು ಆಗ್ರಹಿಸಿದರು. ಎಐಕೆಕೆಎಮ್ಎಸ್ ನ ಶಹಾಬಾದ ತಾಲೂಕಿನ ಕಾರ್ಯದರ್ಶಿ ರಾಜೇಂದ್ರ ಆತ್ನೂರ್ ಮಾತನಾಡಿ, ಸರಕಾರದಿಂದ ಸರ್ವೆ ಕಾರ್ಯ ಮುಗಿಸಿ ಹಲವು ತಿಂಗಳುಗಳು ಕಳೆದರೂ ಸಹ ಇನ್ನೂ ಕೆಲವು ರೈತರಿಗೆ ನಷ್ಟ ಪರಿಹಾರ ತಲುಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸರಕಾರವು ಕೂಡಲೇ ಇದರ ಬಗ್ಗೆ ಗಮನಹರಿಸಿ, ಸಂಕಷ್ಟದಲ್ಲಿದ್ದರುವ ಎಲ್ಲಾ ರೈತರಿಗೆ ಪರಿಹಾರ ದೊರೆಯುವಂತೆ ಮಾಡಬೇಕು ಹಾಗೂ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಸಹಕಾರ್ಯದರ್ಶಿ ನೀಲಕಂಠ ಹುಲಿ, ಎ.ಐ.ಕೆ.ಕೆ.ಎಂ.ಎಸ್. ಅಧ್ಯಕ್ಷ ಮಹಾದೇವ ಸ್ವಾಮಿ, ಮಲ್ಲಣ್ಣಗೌಡ ತೊನಸಿನಹಳ್ಳಿ, ಸುಗಣ್ಣಗೌಡ ತರನಳ್ಳಿ, ಮಹಾದೇವ ಸೌಕಾರ ತರನಳ್ಳಿ, ಶಂಕರ ತರನಳ್ಳಿ, ಶಿವಕುಮಾರ ಬುರ್ಲಿ, ಚಂದ್ರು ಮರಗೋಳ, ನಿಂಗಪ್ಪ ಹೊನಗುಂಟಾ, ಮಹೆಬೂಬ ಪಟೇಲ್ ಮುತ್ತಗಾ, ಗುರುಲಿಂಗಯ್ಯ ಸ್ವಾಮಿ, ಹಣಮಂತರಾಯ ಭಂಕೂರ, ಮಲ್ಲಿಕಾರ್ಜುನ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಓದಿನ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು : ಡಾ. ಸುಭಾಷ್ ಚಂದ್ರ ದೊಡ್ಡಮನಿ
ಕಲಬುರಗಿ : ವಿದ್ಯಾರ್ಥಿ ಜೀವನ ಶ್ರೇಷ್ಟ ಜೀವನ ಎಷ್ಟೇ ಓದಿದರು ಕಡಿಮೆಯೇ, ಕಾರಣ ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡದೆ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಿ ಎಂದು ಶ್ರೀಮತಿ ವೀರಮ್ಮಗಂಗಸಿರಿ ಮಹಿಳ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸುಭಾಷ ಚಂದ್ರ ದೊಡ್ಡಮನಿ ಹೇಳಿದರು. ನಗರದ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಕಲಬುರಗಿಯ ಪ್ರತಿಷ್ಠಿತ ಕಾಯಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಬರಿ ಅಂಕಗಳಿಗಾಗಿ ಮಾತ್ರ ಓದದೆ ಓದಿನ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಕೌಶಲ್ಯಯುತ ಶಿಕ್ಷಣದಿಂದ ಒಂದಿಷ್ಟು ಸಂಪಾದನೆ ಮಾಡಿದರೆ ತಂದೆ ತಾಯಿಯರಿಗೂ ಸಹಾಯ ಮಾಡಿದಂತಾಗುತ್ತದೆ ಎಂದರು. ನಾವು ಮಾಡುವ ಕೆಲಸವೇ ಆಗಿರಲಿ ಶಿಕ್ಷಣವೇ ಆಗಿರಲಿ ಛಲದಿಂದ ಮಾಡಿ, ಜೀವನದಲ್ಲಿ ಉನ್ನತವಾದ ಗುರಿಯನ್ನು ಇಟ್ಟು ಅದನ್ನು ಮುಟ್ಟಲು ಕಠಿಣ ಪರಿಶ್ರಮದಿಂದ ಓದಿನ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು. ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ತಂದೆ ತಾಯಿಯರು ಕಷ್ಟ ಪಟ್ಟು ಶಾಲೆ, ಕಾಲೇಜಿಗೆ ಕಳಿಸಿರುತ್ತಾರೆ ಅವರ ಭರವಸೆಯನ್ನು ಹುಸಿಗೊಳಿಸದೆ ಶ್ರಮ ಪಡಿ ಎಂದರು. ಸಧ್ಯಕ್ಕೆ ಸಾಮಾಜಿಜ ಜಾಲತಾಣಗಳ ಕಾಲವಾಗಿದ್ದು, ಅನಾವಶ್ಯಕ ರೀಲ್ಸ್ ನೋಡಲು ಮೊಬೈಲ್ ಬಳಸದೆ ಅದರಿಂದ ಉಪಯೋಗವಾಗುವಂತಹವುಗಳನ್ನೆ ನೋಡಿ ನಿಮ್ಮ ಜೀವನ ಉಜ್ವಲಗೊಳಿಸಿಕೊಳ್ಳಿ ಎಂದರು. ಬರಿ ಓದಿನಿಂದ ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ತಂದೆ ತಾಯಿಯರ ಹೆಸರಿಗೆ ಕಳಂಕ ಬರದಂತೆ ಜೀವನ ಸಾಗಿಸಿ ಎಂದರು. ಸಾಧಕರ ಜೀವನ ಚರಿತ್ರೆಯನ್ನು ಓದಿ ಪ್ರೇರಣೆಯನ್ನು ಪಡೆದುಕೊಂಡು ಮುಂದೆ ಸಾಗಿ ಎಂದ ತಿಳಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ಅಧ್ಯಕ್ಷರಾದ ಪ್ರಭುಲಿಂಗ ಮುಲಗೆ ಮಾತನಾಡಿ, ನಮ್ಮ ಸಾಧನೆಯ ಹಾದಿಯಲ್ಲಿ ನಿಂದಕರು ಇದ್ದೇ ಇರುತ್ತಾರೆ. ಅದನ್ನು ಕಿವಿಗೆ ಹಾಕಿಕೊಳ್ಳದೆ ಮುಂದೆ ಸಾಗಿ ಎಂದರು. ತಂದೆ ತಾಯಿಯರು ಕಷ್ಟ ಪಟ್ಟು ಶಿಕ್ಷಣ ಕಲಿಸಲು ಕಳಿಸಿರುವಾಗ ಅವರ ಆಸೆ, ಭರವಸೆಯನ್ನು ಹುಸಿಗೊಳಿಸದೆ ಸಾಧನೆ ಕಡೆಗೆ ಹೆಚ್ಚು ಗಮನ ಕೊಡಲು ಸಲಹೆ ನೀಡಿದರು. ವೇದಿಕೆ ಮೇಲೆ ಆರಾಧನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚೇತನಕುಮಾರ ಗಾಂಗಜಿ, ಕಸಾಪ ಉತ್ತರ ವಲಯ ಕಾರ್ಯದರ್ಶಿಗಳಾದ ಹಣಮಂತರಾಯ ದಿಂಡೂರೆ, ಅರ್ಥಶಾಸ್ತ್ರ ಉಪನ್ಯಾಸಕರಾದ ಕಾಶಿನಾಥ ಪಾಟೀಲ್, ಸಾಯಿಕುಮಾರ ಕಲ್ಲೂರ, ಕಾಲೇಜಿನ ಅಧ್ಯಕ್ಷರಾದ ಡಾ.ಅಂಬಾರಾಯ ಹಾಗರಗಿ, ಪ್ರಾಂಶುಪಾಲರಾದ ನಾಗೇಶ ತಿಮ್ಮಾಜಿ, ಎನ್.ಎಸ್. ಎಸ್. ಅಧಿಕಾರಿ ರಾಜೇಶ್ವರಿ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ಉಡುಪಿ, ಡಿ.4: ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಗುಂಡು ಶೆಟ್ಟಿ ಕಂಬಳ ಮನೆ ಕಪ್ಪೆಟ್ಟು (88 ) ಅವರು ಡಿ.4ರಂದು ಸ್ವಗೃಹದಲ್ಲಿ ನಿಧನರಾದರು. ಕಳೆದ ಐದು ದಶಕಗಳಿಂದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಪ್ಪೆಟ್ಟು ಇದರ ಶೆಟ್ಟಿ ಬಾಲೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಗುಂಡು ಶೆಟ್ಟಿ ಕಪ್ಪೆಟ್ಟು ಅವರು, ತನ್ನ ನೇರ ನಡೆ-ನುಡಿಗಳಿಂದ ಜನಾನುರಾಗಿಯಾಗಿದ್ದು, ದೈವಾರಾಧನೆ ಸಹಿತ ದೈವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರ ಸಹಿತ ಬಂಧು ವರ್ಗ ಮತ್ತು ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.
ಕಲಬುರಗಿ| ಡಿಸಿಸಿ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರಿಗೆ ಅಭಿನಂದನಾ ಸಮಾರಂಭ
ಕಲಬುರಗಿ: ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ವತಿಯಿಂದ ನೂತನವಾಗಿ ಆಯ್ಕೆಯಾದ ಕಲಬುರಗಿ - ಯಾದಗಿರಿ ಜಿಲ್ಲಾ ಸಹಕಾರಿ ಬ್ಯಾಂಕ್(ಡಿಸಿಸಿ) ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಅಭಿನಂದನಾ ಸಮಾರಂಭವನ್ನು ಕೈಲಾಸ ನಗರದಲ್ಲಿ ಹಮ್ಮಿಕೊಳ್ಳಲಾಯಿತು. ಕಲಬುರಗಿ - ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷ ವಿಠ್ಠಲ್. ವಿ. ಯಾದವ್, ನಿರ್ದೇಶಕರಾದ ಸುರೇಶ.ಆರ್. ಸಜ್ಜನ, ಬಸವರಾಜ ಪಾಟೀಲ್ ನರಬೋಳ, ಬಸವರಾಜ ಪಾಟೀಲ್ ಚಿಂಚೋಳ್ಳಿ, ಅಶೋಕ್. ಕೆ. ಸಾವಳೇಶ್ವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ, ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ನಿರ್ದೇಶಕರು ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು. ಕಲಬುರಗಿ - ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಠ್ಠಲ್. ವಿ. ಯಾದವ್ ಮಾತನಾಡಿ, ನಮ್ಮ ಅವಧಿಯಲ್ಲಿ ಉತ್ತಮವಾಗಿ ಅಭಿವೃದ್ಧಿ ಪಡಿಸುತ್ತೇವೆ. ರೈತರಿಗೆ ಸಾಲ ವಿತರಣೆ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಶರಣು ಭೂಸನೂರ, ಮಲ್ಲನಗೌಡ ಪೊಲೀಸ್ ಪಾಟೀಲ್ ಕಲ್ಲಹಂಗರಗ, ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಪ್ರಿನ್ಸ್ ಅನಿಲ್ ನೆನೆಗಾರ, ಮಹಿಳಾ ಘಟಕದ ಕಲ್ಬುರ್ಗಿ ಜಿಲ್ಲಾಧ್ಯಕ್ಷೆ ಭಾಗ್ಯಶ್ರೀ .ಎಮ್. ಪಾಟೀಲ್, ಸಿದ್ದಲಿಂಗರೆಡ್ಡಿ ಯಾದಗಿರಿ, ಪ್ರತೀಕ್ ಮಠಪತಿ ಉಪಸ್ಥಿತರಿದ್ದರು.
ಡಿ.5ರಂದು ʼಮಾದರಿ ಮದುವೆ ಅಭಿಯಾನ’ : ಕಲ್ಲಡ್ಕದಲ್ಲಿ ಸಮಾವೇಶ
ಕಲ್ಲಡ್ಕ, ಡಿ.4: ಮದುವೆಗಳನ್ನು ಅನಾಚಾರ ಮುಕ್ತಗೊಳಿಸುವ ಮತ್ತು ಮದುವೆಯ ಆರ್ಥಿಕ ಭಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘವು ಹಮ್ಮಿಕೊಂಡ ’ಮಾದರಿ ಮದುವೆ: ಶತದಿನ ಅಭಿಯಾನ’ದ ಪ್ರಯುಕ್ತ ಜಾಗೃತಿ ಸಮಾವೇಶವು ಡಿ.5ರ ಸಂಜೆ 7ಕ್ಕೆ ಕಲ್ಲಡ್ಕ ಸಮೀಪದ ಸುರಿಬೈಲು ದಾರುಲ್ ಅಶ್ಅರಿಯ ಅಷ್ಟೇಯ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ. ಅಭಿಯಾನದ ಪ್ರೊಮೋಶನ್ ಕೌನ್ಸಿಲ್ ಕನ್ವೀನರ್ ಡಾ.ಎಮ್ಮೆಸ್ಸಂ ಝೈನಿ ಕಾಮಿಲ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಸ್ಥೆಯ ಆಡಳಿತ ನಿರ್ದೇಶಕ ಮುಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಶಿಹಾಬುದ್ದೀನ್ ತಂಞಳ್ ಮದಕ ನೇತೃತ್ವದಲ್ಲಿ ಬುರ್ದಾ ಮತ್ತು ಪ್ರಾರ್ಥನಾ ಮಜ್ಲಿಸ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಕೊಲೆ ಪ್ರಕರಣ; ಸಾಕ್ಷ್ಯ ನುಡಿಯಲು ರೇಣುಕಾಸ್ವಾಮಿ ಪಾಲಕರಿಗೆ ಸಮನ್ಸ್ ಜಾರಿ ಮಾಡಿದ ಸೆಷನ್ಸ್ ಕೋರ್ಟ್
ಬೆಂಗಳೂರು : ನಟ ದರ್ಶನ್ ಆರೋಪಿಯಾಗಿರುವ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಕೊಲೆಯಾದ ರೇಣುಕಾಸ್ವಾಮಿಯ ಪಾಲಕರಿಗೆ ಸಮನ್ಸ್ ಜಾರಿಗೊಳಿಸಿರುವ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಡಿಸೆಂಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ. ಪ್ರಕರಣ ಸಂಬಂಧ ಸಾಕ್ಷ್ಯ ನುಡಿಯಲು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮಗೆ (ಸಾಕ್ಷಿ ಸಂಖ್ಯೆ 7 ಹಾಗೂ 8) ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿ ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್) ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಪುರಸ್ಕರಿಸಿರುವ ನ್ಯಾಯಾಧೀಶ ಐ.ಪಿ.ನಾಯಕ್ ಅವರು ಈ ಆದೇಶ ಮಾಡಿದ್ದಾರೆ. ದರ್ಶನ್ ಸೇರಿ ಪ್ರಕರಣದ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ, ಹಲ್ಲೆ, ಅಪರಾಧಿಕ ಒಳಸಂಚು, ಅಕ್ರಮ ಕೂಟ ರಚನೆ, ಹಣ ವಸೂಲಿ, ಅಕ್ರಮ ಬಂಧನ ಇನ್ನಿತರ ಆರೋಪಗಳನ್ನು ನಿಗದಿಪಡಿಸಿ ನವೆಂಬರ್ 3ರಂದು ನ್ಯಾಯಾಲಯ ಆದೇಶಿಸಿತ್ತು. ಜತೆಗೆ ನವೆಂಬರ್ 10ರಿಂದ ಪ್ರಕರಣದ ಮುಖ್ಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಅದಾದ ಬಳಿಕ ಪ್ರಕರಣ ಕುರಿತು ನ್ಯಾಯಾಲಯ ನಡೆಸುತ್ತಿರುವ ಮೊದಲ ಸಾಕ್ಷಿ ವಿಚಾರಣೆ ಇದೇ ಆಗಿದೆ. ಕೋರ್ಟ್ ಸೂಚನೆಯಂತೆ ಡಿಸೆಂಬರ್ 17ರಂದು ರೇಣುಕಾಸ್ವಾಮಿಯ ತಂದೆ-ತಾಯಿ ವಿಚಾರಣೆಗೆ ಖುದ್ದು ಹಾಜರಾಗಿ, ಸಾಕ್ಷ್ಯ ನುಡಿಯಬೇಕಿದೆ. ರೇಣುಕಾಸ್ವಾಮಿ ಪಾಲಕರ ಸಾಕ್ಷ್ಯ ದಾಖಲಿಸಬೇಕೆಂಬ ಪ್ರಾಸಿಕ್ಯೂಷನ್ ಮನವಿಗೆ ಆಕ್ಷೇಪಿಸಿದ್ದ ದರ್ಶನ್ ಮತ್ತಿತರ ಆರೋಪಿಗಳ ಪರ ವಕೀಲರು, ಮೊದಲಿಗೆ ದೂರುದಾರರು, ಪ್ರತ್ಯಕ್ಷ ದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷಿ ವಿಚಾರಣೆ ನಡೆಸುವುದು ಕಡ್ಡಾಯ. ನಂತರವಷ್ಟೇ ಪ್ರಕರಣದ ಸಾಕ್ಷಿಗಳು ಅಂದರೆ ಮೃತನ ತಂದೆ-ತಾಯಿಯ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಆದ್ದರಿಂದ, ತನಿಖಾಧಿಕಾರಿಗಳ ಮನವಿ ತಿರಸ್ಕರಿಸಬೇಕು. ಮೊದಲಿಗೆ ದೂರುದಾರರು, ಪ್ರತ್ಯಕ್ಷ ದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷಿಗಳ ವಿಚಾರಣೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಮನವಿ ತಳ್ಳಿಹಾಕಿದ ಕೋರ್ಟ್: ಆರೋಪಿಗಳ ಪರ ವಕೀಲರ ಮನವಿ ಒಪ್ಪದ ನ್ಯಾಯಾಲಯ, ಪ್ರಾಸಿಕ್ಯೂಷನ್ ಮನವಿಯಂತೆ ಸಾಕ್ಷಿಗಳ ವಿರುದ್ಧ ಸಮನ್ಸ್ ಹೊರಡಿಸಿ, ನಂತರ ಅವರ ಸಾಕ್ಷ್ಯ ದಾಖಲಿಸಿಕೊಳ್ಳುವುದು ಕೋರ್ಟ್ನ ಕರ್ತವ್ಯ. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 131(1) ಪ್ರಕಾರ ಪ್ರಾಸಿಕ್ಯೂಷನ್ ಪರವಾಗಿ ಹಾಜರುಪಡಿಸಬಹುದಾದಂತಹ ಸಾಕ್ಷಿಯನ್ನು ತೆಗೆದುಕೊಳ್ಳಬಹುದಾಗಿದೆ. ಅದರರ್ಥ ಆ ಸಾಕ್ಷಿಯನ್ನು ಅಥವಾ ಈ ಸಾಕ್ಷಿಯನ್ನು ಮೊದಲಿಗೆ ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್ಗೆ ನ್ಯಾಯಾಲಯ ನಿರ್ದೇಶನ ನೀಡುವಂತಿಲ್ಲ. ಆದ್ದರಿಂದ, ಆರೋಪಿಗಳ ವಾದಕ್ಕೆ ಮಾನ್ಯತೆ ಇಲ್ಲವಾಗಿದೆ. ಆದರೆ, ತಮ್ಮ ಪ್ರತಿವಾದದ (ಡಿಫೆನ್ಸ್) ರಕ್ಷಣೆಗಾಗಿ ಸಾಕ್ಷಿಗಳ ಪಾಟಿ ಸವಾಲು ಪ್ರಕ್ರಿಯೆ ಮುಂದೂಡಲು ಕೋರಿ ಅರ್ಜಿ ಸಲ್ಲಿಸಲು ಆರೋಪಿಗಳು ಸ್ವತಂತ್ರರಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ. ಪ್ರಾಸಿಕ್ಯೂಷನ್ ಸಾಕ್ಷಿಯನ್ನು ವಿಚಾರಣೆ ನಡೆಸಿದ ದಿನವೇ ಆರೋಪಿಗಳು ಪಾಟಿ ಸವಾಲು ಪ್ರಕ್ರಿಯೆ ನಡೆಸಬಹುದು. ಒಂದೊಮ್ಮೆ ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸಿದ ನಂತರ, ಅದು ಆರೋಪಿಗಳ ಪ್ರತಿವಾದದ (ಡಿಫೆನ್ಸ್) ಮೇಲೆ ಪರಿಣಾಮ ಉಂಟು ಮಾಡುವಂತಿದ್ದರೆ, ಆಗ ನ್ಯಾಯಾಲಯವು ತನ್ನ ವಿವೇಚನಾಧಿಕಾರ ಬಳಸಿ ಪಾಟಿ ಸವಾಲು ಪ್ರಕ್ರಿಯೆ ಮುಂದೂಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರದೂಷ್ ರಾವ್ಗೆ 4 ದಿನ ಜಾಮೀನು: ಇತ್ತೀಚೆಗೆ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ತಿಥಿ ಕಾರ್ಯ ನೆರವೇರಿಸಲು ಡಿಸೆಂಬರ್ 4ರಿಂದ 23ರವರೆಗೆ ಜಾಮೀನು ನೀಡಬೇಕು ಎಂದು ಕೋರಿ ಪ್ರಕರಣದ 14ನೇ ಆರೋಪಿ ಪ್ರದೂಷ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯ, ಡಿಸೆಂಬರ್ 4ರಿಂದ 7ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಮೃತರಿಗೆ ಪ್ರದೂಷ್ ಏಕೈಕ ಪುತ್ರನಾಗಿದ್ದು, ತಂದೆ ಮರಣದ ನಂತರ ತನ್ನ ಮೇಲಿನ ಹೊಣೆಗಾರಿಕೆಯನ್ನು ಅವರು ನಿರ್ವಹಿಸಬೇಕಿದೆ. ಆದ್ದರಿಂದ, ಮಧ್ಯಂತರ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ. ಟಿವಿ ವೀಕ್ಷಣೆಗೆ ಅನುಮತಿ: ಖಿನ್ನತೆಯಿಂದ ಹೊರಬರಲು ಸೆಲ್ನಲ್ಲಿ ಟಿವಿ ಅಳವಡಿಸಬೇಕು ಎಂದು ಪ್ರಕರಣದ 12ನೇ ಆರೋಪಿ ಲಕ್ಷ್ಮಣ್ ಬುಧವಾರ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಜೈಲು ಕೈಪಿಡಿ ಮತ್ತು ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಲ್ಲಿಸಿರುವ ವರದಿ ಪ್ರಕಾರ, ಪ್ರಕರಣದ ಆರೋಪಿಗಳಾದ ದರ್ಶನ್, ಜಗದೀಶ್, ಅನುಕುಮಾರ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೂಷ್ ರಾವ್ ಅವರಿರುವ ಜೈಲಿನ ಸೆಲ್ನಲ್ಲಿ ಟಿ.ವಿ ಅಳವಡಿಸಿ, ವೀಕ್ಷಿಸಲು ಅನುಮತಿಸಬೇಕು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿದೆ.
ದೇಶ ಕಾಯುವ ಸೈನಿಕರೇ ದೇಶದ ಆಸ್ತಿ: ಪ್ರೊ.ಸಿದ್ದಪ್ಪ ಎಸ್.ಕಾಂತ
ಕಲಬುರಗಿ: `ದೇಶದ ಗಡಿ ಕಾಯುವ ಸೈನಿಕರು ದೇಶದ ಆಸ್ತಿ. ದೇಶ ಸೇವೆಗೆ ಸೈನಿಕ ಹುದ್ದೆ ಅಪರೂಪದ ಅವಕಾಶ. ಅಂತಹ ಸೈನಿಕ ಹುದ್ದೆಗೆ ಆಯ್ಕೆಯಾಗಲು ಸದೃಢ ದೇಹ ಸದೃಢ ಮನಸ್ಸು ಬೇಕಾಗುತ್ತದೆ’ ಎಂದು ಪ್ರೊ.ಸಿದ್ದಪ್ಪ ಎಸ್.ಕಾಂತ ಅಭಿಪ್ರಾಯಪಟ್ಟರು. ನಗರದ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾರತದ ಸೈನ್ಯಕ್ಕೆ ಕ್ರೀಡಾ ಕೋಟದಲ್ಲಿ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿ ಪವನ್ ಬಲಿರಾಮ ಚವ್ಹಾಣ್ ಅವರನ್ನು ಸನ್ಮಾನಿಸಿ ಮಾತನಾಡಿದ ಪ್ರೊ.ಸಿದ್ದಪ್ಪ, ಪವನ್ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾನೆ ಎಂದು ಹೇಳಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾದ ಡಾ.ಕರಿಬಸಪ್ಪ ಅವರು ಮಾತನಾಡಿ, ಕ್ರೀಡೆ ಉದ್ಯೋಗ ದೊರಕಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಪವನ್ ನಿದರ್ಶನ ಎಂದು ಹೇಳಿದರು. ಸೈನ್ಯಕ್ಕೆ ಆಯ್ಕೆಯಾದ ವಿದ್ಯಾರ್ಥಿ ಪವನ್ ಮಾತನಾಡಿ ತನ್ನ ಬಡತನದ ಹಿನ್ನೆಲೆ ಮತ್ತು ಕಠಿಣ ಶ್ರಮ ಮತ್ತು ಕಾಲೇಜಿನ ಅಧ್ಯಾಪಕರ ಪ್ರೋತ್ಸಾಹವೇ ಈ ಆಯ್ಕೆಗೆ ಕಾರಣ ಎಂದು ಕಾಲೇಜಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ.ಸಿದ್ದಾರ್ಥ ಮದನಕರ್, ಪ್ರಾಧ್ಯಾಪಕರಾದ ಡಾ.ಸುದರ್ಶನ್ ಮದನಕರ್, ಡಾ.ಅರುಣ್ ಜೋಳದಕೂಡ್ಲಿಗಿ, ಡಾ. ನಿರ್ಮಲ ಸಿರಗಾಪುರ, ಡಾ.ವಸಂತ ನಾಸಿ, ಡಾ.ದತ್ತೂರಾಯ, ಡಾ.ಶಿವಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಡಿತ ಮದನಕರ್ ನಿರೂಪಿಸಿದರು.
ಕಲಬುರಗಿ: ಆಳಂದ ತಾಲೂಕಿನ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಗೊಂದಲದ ಗೂಡಾಗಿದೆ. ಚುನಾವಣಾ ಅಧಿಕಾರಿಗಳು ಒಂದು ಪಕ್ಷದ ಪ್ರತಿನಿಧಿಯಂತೆ ನಡೆದುಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಒಂದು ಗುಂಪಿಗೆ ಸಹಾಯ ಮಾಡಲು ಚುನಾವಣಾ ಅಕ್ರಮ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ್ ಆರೋಪಿಸಿದ್ದಾರೆ. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರೈತರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸುಭಾಷ್ ಆರ್ ಗುತ್ತೇದಾರ್, ಬುಧವಾರ ನಡೆದಿದ್ದ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಉದ್ದೇಶಪೂರ್ವಕವಾಗಿ ನಕಲಿ ಮತಪತ್ರಗಳು ಹಂಚುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದು, ಬೂತ್ ಕ್ರ. 01 ರಲ್ಲಿರುವ 350 ಮತದಾರರಲ್ಲಿ ಗರಿಷ್ಠ ಮತದಾರರು ಆಡಳಿತ ಪಕ್ಷದ ಶಾಸಕರ ಬೆಂಬಲಿತ ಪ್ಯಾನೆಲ್ ವಿರುದ್ದ ಮತ ಚಲಾವಣೆ ಮಾಡುವವರಿದ್ದರಿಂದ ಶಾಸಕರ ಒತ್ತಡದಿಂದ ಚುನಾವಣಾಧಿಕಾರಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು. ಮತದಾರ ಪಟ್ಟಿಯಲ್ಲಿ ಅಕ್ರಮ ನಡೆಸಲು ಯತ್ನಿಸಿದ ಸಕ್ಕರೆ ಕಾರ್ಖಾನೆ ಸಂಜು ಕರ್ಪೂರ, ಮೇಲ್ವಿಚಾರಕ ಶಿವಾನಂದ ಅಷ್ಟಗಿ ನೇರವಾಗಿ ಭಾಗಿಯಾಗಿದ್ದಾರೆ ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡ ಚಂದ್ರಶೇಖರ್ ಹಿರೇಮಠ ಮಾತನಾಡಿ, ಮತದಾರರನ್ನು ದಿಕ್ಕು ತಪ್ಪಿಸಲು ಚುನಾವಣಾಧಿಕಾರಿಗಳು ಉದ್ದೇಶಪೂರ್ವಕವಾಗಿ ಜನತಾ ಬಜಾರ ಚುನಾವಣೆಯ ಬ್ಯಾಲೆಟ್ ಪೇಪರ ಬಳಸಿದ್ದಾರೆ. ಮತಪತ್ರ ಬದಲಾವಣೆಯಲ್ಲಿ ಭಾಗಿಯಾದ ಚುನಾವಣಾ ಅಧಿಕಾರಿಯನ್ನು ಬಂಧಿಸಿ ಚುನಾವಣಾ ಅಕ್ರಮಕ್ಕೆ ಪಿತೂರಿ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು. ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಮಾತನಾಡಿ, ಸಕ್ಕರೆ ಕಾರ್ಖಾನೆ ಆವರಣದಲ್ಲಿಯೇ ಚುನಾವಣೆ ನಡೆಸಬೇಕು. ಕಲಬುರಗಿಯಲ್ಲಿರುವ ಸಕ್ಕರೆ ಕಾರ್ಖಾನೆಯ ಕಾರ್ಯಾಲಯ ಕಾರ್ಖಾನೆ ಆವರಣದಲ್ಲಿ ಪ್ರಾರಂಭಿಸಬೇಕು. ಮತದಾರರ ಪಟ್ಟಿ ಮರು ಪರಿಶೀಲನೆ ಆಗಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾಲಾವಕಾಶ ಕೊಡಬೇಕು. ರೈತರು ತಮ್ಮ ಶೇರು ಮೌಲ್ಯದ ವ್ಯತ್ಯಾಸ ಹಣ ಭರಿಸಿದ್ದು, ಅಂತಹ ರೈತರಿಗೆ ಮತದಾನದ ಹಕ್ಕನ್ನು ಕೊಡಬೇಕು. ಚುನಾವಣೆ ಪ್ರಕ್ರಿಯೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಬೇಕು. ಮತದಾರರ ಪಟ್ಟಿಯಲ್ಲಿ ಆಗಿರುವ ಅಕ್ರಮದ ಕುರಿತು ತನಿಖೆ ಆಗಬೇಕು ಎಂದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ, ಧರ್ಮಣ್ಣಾ ಇಟಗಾ, ಅವ್ವಣ್ಣಾ ಮ್ಯಾಕೇರಿ, ವೀರಣ್ಣಾ ಮಂಗಾಣೆ, ಅಣ್ಣಾರಾವ ಪಾಟೀಲ್ ಕವಲಗಾ, ಬಾಬುಗೌಡ ಪಾಟೀಲ್, ಚಂದ್ರಕಾoತ ಭೂಸನೂರ, ಶಿವಪ್ಪ ವಾರಿಕ, ಬಸವರಾಜ ಬಿರಾದಾರ, ಸಂತೋ ಹಾದಿಮನಿ, ಸಿ ಕೆ ಪಾಟೀಲ, ಆನಂದರಾವ ಗಾಯಕವಾಡ, ಶರಣಪ್ಪ ನಾಟೀಕಾರ, ಶಾಂತಕುಮಾರ ಪರೀಟ, ವಿಜಯಕುಮಾರ ಹುಲಸೂರೆ, ಅಶೋಕ ಗುತ್ತೇದಾರ, ಮಲ್ಲಣ್ಣಾ ನಾಗೂರೆ, ಸುನೀತಾ ಪೂಜಾರಿ, ಗೌರಿ ಚಿಚಕೋಟಿ, ಮಲ್ಲಿಕಾರ್ಜುನ ಕಂದಗೂಳೆ, ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಸುನೀಲ ಹಿರೋಳಿಕರ, ನಾಗರಾಜ ಶೇಗಜಿ, ಗುಂಡಪ್ಪ ಪೂಜಾರಿ, ರವಿ ಮದನಕರ, ಶಿವಪ್ರಕಾಶ ಹೀರಾ, ಶರಣಗೌಡ ಪಾಟೀಲ ದೇವಂತಗಿ, ರುದ್ರಯ್ಯ ಸ್ವಾಮಿ, ಅಶೋಕ ಹತ್ತರಕಿ, ರಮೇಶ ಬಿರಾದರ, ಎಂ ಎಸ್ ಪಾಟೀಲ, ಪ್ರಕಾಶ ಸಣಮನಿ, ಮಹೇಶ ಗೌಳಿ, ಈರಣ್ಣಾ ಮೇತ್ರೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್; ಸಮನ್ಸ್ ಜಾರಿಗೆ ಹೈಕೋರ್ಟ್ ತಡೆ
ಲೋಕಸಭೆ ಚುನಾವಣೆ ವೇಳೆ ಸುಳ್ಳು ಹೇಳಿಕೆ ಆರೋಪ ಪ್ರಕರಣದಲ್ಲಿ ಎಚ್ಡಿ ಕುಮಾರಸ್ವಾಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸ್ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ. ಪೊಲೀಸರು ಸಲ್ಲಿಸಿದ್ದ 'ಬಿ' ರಿಪೋರ್ಟ್ ತಿರಸ್ಕರಿಸಿ ಸಮನ್ಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಎಚ್ಡಿಕೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಫ್ಲೈಯಿಂಗ್ ಸ್ಕ್ವಾಡ್ಗೆ ನೋಟಿಸ್ ಜಾರಿ ಮಾಡಿದೆ.
ಸೇಡಂ| ಇಂದಿರಾ ಗಾಂಧಿ ವಸತಿ ನಿಲಯದಲ್ಲಿ ಅವ್ಯವಸ್ಥೆ: ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹ
ಕಲಬುರಗಿ: ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ, ಶೌಚಾಲಯ ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ವಿಫಲರಾದ ಹಾಸ್ಟೆಲ್ ವಾರ್ಡನ್, ತಾಲೂಕು ಅಧಿಕಾರಿಗಳಿಂದ ಬೇಸತ್ತು ವಸತಿ ನಿಲಯದ ವಿದ್ಯಾರ್ಥಿಗಳು ಮುಧೋಳ ಪೊಲೀಸ್ ಠಾಣೆಗೆ ತೆರಳಿ ಮೌಖಿಕ ದೂರು ಸಲ್ಲಿಸಿದರು. ಸಮಸ್ಯೆಗಳ ಬಗ್ಗೆ ಅರಿತ ಊರಿನ ಹಿರಿಯ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಕೂಡಲೇ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿ, ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು. ವಸತಿ ನಿಲಯದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಹದಗೆಟ್ಟು ಹೋಗಿವೆ. ಊಟದ ವ್ಯವಸ್ಥೆ ಸಹ ಸರಿಯಾಗಿಲ್ಲ. ಒಂದು ವರ್ಷದ ಹಿಂದಿನ ಹಳೆಯ ಗೋಧಿ, ಕಳಪೆ ಆಹಾರ ಒದಗಿಸುತ್ತಿರುವುದರಿಂದ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್ ಸಹ ಸ್ವಚ್ಛತೆ ಇಲ್ಲದೆ ಹಾಗೇನೇ ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ವಸತಿ ನಿಲಯಕ್ಕೆ ಅನುದಾನ ಬಂದರೂ ಕೂಡ ಮೂಲಭೂತ ಸೌಲಭ್ಯದಿಂದ ವಂಚಿತಗೊಂಡಿದ್ದು, ಕೂಡಲೇ ಸರಿ ಪಡಿಸಬೇಕು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಾಗರೆಡ್ಡಿ ಪೊಲೀಸ್ ಪಾಟೀಲ್, ತಮ್ಮಪ್ಪ ಬಾಗಳಿ, ವಿಜಯಕುಮಾರ್ ಖೇವುಜಿ, ಲಕ್ಷ್ಮಿಕಾಂತ್ ಹೊನಕೇರಿ, ರಾಘವೇಂದ್ರ ಕಿಟ್ಟದ್, ಬಸಪ್ಪ ಸೇಡಂ, ಲಕ್ಷ್ಮಪ್ಪ, ಶ್ರೀನಿವಾಸ್ ಬೋಯಿನಿ, ಶ್ರೀನಿವಾಸ್ ಗುತ್ತೇದಾರ್, ಮೋಹನ್, ವೆಂಕಟೇಶ್, ಬಸಪ್ಪ ಪ್ಯಾಟೆ, ಅಶೋಕ್ ಬೋಯಿನಿ, ಕೀಶನ್ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಕ್ಟೋಬರ್ನಲ್ಲಿ ರಶ್ಯದ ತೈಲ ಆಮದಿನಲ್ಲಿ ಶೇ.38ರಷ್ಟು ದಾಖಲೆಯ ಕುಸಿತ
ಹೊಸದಿಲ್ಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತವು ಈ ವರ್ಷದ ಆಕ್ಟೋಬರ್ ತಿಂಗಳಲ್ಲಿ ರಶ್ಯದಿಂದ ಆಮದು ಮಾಡಿಕೊಂಡ ತೈಲದ ಮೌಲ್ಯದಲ್ಲಿ ಶೇ.38ರಷ್ಟು ಹಾಗೂ ಪ್ರಮಾಣದಲ್ಲಿ ಶೇ.31ರಷ್ಟು ಕಡಿತಗೊಳಿಸಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಅಧಿಕೃತ ದತ್ತಾಂಶ ತಿಳಿಸಿದೆ. ಈ ವರ್ಷದ ಆಕ್ಟೋಬರ್ನಲ್ಲಿ ಭಾರತವು ರಶ್ಯದ 3.55 ಶತಕೋಟಿ ಡಾಲರ್ ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. 2024ರ ಆಕ್ಟೋಬರ್ನಲ್ಲಿ ಐತಿಹಾಸಿಕವಾಗಿ ಗರಿಷ್ಠ ಅಂದರೆ 5.8 ಶತಕೋಟಿ ಡಾಲರ್ ಮೌಲ್ಯದ ಕಚ್ಚಾತೈಲ ಆಮದು ಮಾಕೊಳ್ಳಲಾಗಿದ್ದು, ಅದಕ್ಕೆ ಹೋಲಿಸಿದರೆ ಈ ಸಲ ರಶ್ಯದಿಂದ ತೈಲ ಖರೀದಿಯಲ್ಲಿ ಗಣನೀಯ ಇಳಿಕೆಯಾಗಿದೆ. ಭಾರತವು ರಶ್ಯದಿಂದ ಅಕ್ಟೋಬರ್ 71.6 ಲಕ್ಷ ಟನ್ ಪ್ರಮಾಣದ ತೈಲ ಆಮದು ಮಾಡಿಕೊಂಡಿದೆ. 2024ರ ಆಕ್ಟೋಬರ್ನಲ್ಲಿ 103.8 ಲಕ್ಷ ಟನ್ ಗರಿಷ್ಠ ಪ್ರಮಾಣದ ತೈಲವನ್ನು ಭಾರತವು ರಶ್ಯದಿಂದ ಖರೀದಿಸಿತ್ತು. ಈ ವರ್ಷ ಇದೇ ಅವಧಿಯಲ್ಲಿ ರಶ್ಯನ್ ತೈಲದ ಆಮದಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 2025ರ ಸೆಪ್ಟೆಂಬರ್ನಲ್ಲಿ ರಶ್ಯನ್ ತೈಲದ ಆಮದು ಮೌಲ್ಯದಲ್ಲಿ ಶೇ. 29ರಷ್ಟು ಇಳಿಕೆಯಾಗಿದ್ದರೆ, ಪ್ರಮಾಣದಲ್ಲಿ ಶೇ.17ರಷ್ಟು ಕುಸಿತವಾಗಿದೆ. ಆದಾಗ್ಯೂ ಭಾರತದ ಒಟ್ಟು ತೈಲ ಆಮದಿನಲ್ಲಿ ಮೌಲ್ಯ ಹಾಗೂ ಪ್ರಮಾಣಗಳೆರಡರಲ್ಲೂ ಈಗಲೂ ರಶ್ಯವು ಶೇ.32ರಷ್ಟು ಪಾಲನ್ನು ಹೊಂದಿದೆ. ಅಕ್ಟೋಬರ್ 2025ರಲ್ಲಿ ಭಾರತದ ಒಟ್ಟು ತೈಲ ಆಮದು ಶುಲ್ಕದಲ್ಲಿ ಶೇ.15.4 ಶೇಕಡ ಇಳಿಕೆಯಾಗಿರುವುದು ಗಮನಾರ್ಹವಾಗಿದೆ. ಇದೇ ವೇಳೆ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಆಕ್ಟೋಬರ್ನಲ್ಲಿ ಅಮೆರಿಕದಿಂದ ಭಾರತದ ತೈಲ ಆಮದಿನ ಪ್ರಮಾಣದಲ್ಲಿ ಶೇ.40ರಷ್ಟು ಹಾಗೂ ಮೌಲ್ಯದಲ್ಲಿ 18.3 ಶೇ. ಹೆಚ್ಚಳವಾಗಿದೆ. ರಶ್ಯದಿಂದ ಭಾರತವು ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಅಮೆರಿಕದ ಟ್ರಂಪ್ ಆಡಳಿತವು ಆಗಸ್ಟ್ನಲ್ಲಿ ಭಾರತೀಯ ಉತ್ಪನ್ನಗಳಿಗೆ ಶೇ.25ರಷ್ಟು ಹೇರಿರುವ ಹಿನ್ನೆಲೆಯಲ್ಲಿ ರಶ್ಯನ್ ತೈಲ ಖರೀದಿಯನ್ನು ಕಡಿಮೆಗೊಳಿಸುವ ಕಾರ್ಯತಂತ್ರವನ್ನು ಭಾರತವು ಅನುಸರಿಸುತ್ತಿದೆಯೆಂದು ‘ದಿ ಹಿಂದೂ ದೈನಿಕ’ದ ವರದಿಯೊಂದು ತಿಳಿಸಿದೆ.
ʼಗ್ರೇಟರ್ ಅಫ್ಘಾನಿಸ್ತಾನ' ನಕ್ಷೆ: ಪಾಕಿಸ್ತಾನಕ್ಕೆ ಸವಾಲೆಸೆದ ತಾಲಿಬಾನ್
ಕಾಬೂಲ್: ಪ್ರಸಿದ್ಧ ಕವಿ ಮತಿಯುಲ್ಲಾ ತುರಾಬ್ ಅವರ ಸಮಾಧಿಯ ಮೇಲೆ `ಗ್ರೇಟರ್ ಅಫ್ಘಾನಿಸ್ತಾನ' ನಕ್ಷೆಯನ್ನು ಇರಿಸುವ ಮೂಲಕ ತಾಲಿಬಾನ್ ಪಾಕಿಸ್ತಾನಕ್ಕೆ ಬಲವಾದ ರಾಜಕೀಯ ಸಂದೇಶವನ್ನು ರವಾನಿಸಿದೆ ಎಂದು ವರದಿಯಾಗಿದೆ. ಈ ನಕ್ಷೆಯಲ್ಲಿ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಮತ್ತು ಬಲೂಚಿಸ್ತಾನದ ಭಾಗಗಳು ಒಳಗೊಂಡಿದ್ದು ಇವುಗಳನ್ನು ` ಐತಿಹಾಸಿಕ ಅಫ್ಘಾನ್ ಭೂಮಿ' ಎಂದು ಗುರುತಿಸಿರುವುದು ಪಾಕಿಸ್ತಾನದ ಸಾರ್ವಭೌಮತೆಗೆ ನೇರವಾಗಿ ಸವಾಲು ಹಾಕುವ ಕ್ರಮವಾಗಿದೆ. ಇದು ಉದ್ದೇಶಪೂರ್ವಕ ಮತ್ತು ಸಾಂಕೇತಿಕ ಕೃತ್ಯವಾಗಿದ್ದು ಡ್ಯುರಾಂಡ್ ಗೆರೆಯನ್ನು ತಿರಸ್ಕರಿಸುವ ಅಫ್ಘಾನಿಸ್ತಾನದ ದೃಢ ನಿಲುವಿಗೆ ಅನುಗುಣವಾಗಿದೆ ಎಂದು ತಾಲಿಬಾನ್ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ. 1893ರಲ್ಲಿ ಗುರುತಿಸಲಾದ ಡ್ಯುರಾಂಡ್ ಗೆರೆಯನ್ನು ಅಫ್ಘಾನಿಸ್ತಾನ ಯಾವತ್ತೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. `ಗ್ರೇಟರ್ ಅಫ್ಘಾನಿಸ್ತಾನದ ನಕ್ಷೆಯು ಡ್ಯುರಾಂಡ್ ಗೆರೆ ನಮಗೆ ಒಪ್ಪಿಗೆಯಿಲ್ಲದ ಗಡಿ ಗುರುತಾಗಿದೆ ಎಂಬ ನಮ್ಮ ದೀರ್ಘಾವಧಿಯ ನಿಲುವನ್ನು ಪ್ರತಿಬಿಂಬಿಸಿದೆ ಎಂದು ಮೂಲಗಳು ಹೇಳಿವೆ.
Bengaluru | ಅನಾರೋಗ್ಯ ಪೀಡಿತ ಪತ್ನಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ!
ಬೆಂಗಳೂರು : ವ್ಹೀಲ್ಚೇರ್ನಲ್ಲಿ ಕುಳಿತಿದ್ದ ಅನಾರೋಗ್ಯ ಪೀಡಿತ ಪತ್ನಿಯನ್ನು ಬಟ್ಟೆ ಒಣಗಿಸುವ ನೈಲಾನ್ ದಾರದಿಂದ ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬೇಬಿ(60) ಹತ್ಯೆಗೊಳಗಾಗಿದ್ದು, ಈಕೆ ಪತಿ ವೆಂಕಟೇಶನ್ ಕೃತ್ಯವೆಸಗಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿ.2ರಂದು ಘಟನೆ ನಡೆದಿದ್ದು ದಂಪತಿ ಪುತ್ರ ಅನಿಲ್ ಎಂಬುವರು ನೀಡಿದ ದೂರಿನ ಮೇರೆಗೆ ಸುಬ್ರಮಣ್ಯಪುರ ಠಾಣೆಯಲ್ಲಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಬ್ರಮಣ್ಯಪುರದ ಚಿಕ್ಕಗೌಡನಪಾಳ್ಯದಲ್ಲಿ ವೃದ್ಧ ದಂಪತಿ ವಾಸವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಮಗ ಅನಿಲ್ಗೆ ಮದುವೆಯಾಗಿದ್ದು, ಪತ್ನಿಯೊಂದಿಗೆ ಇದೇ ಮನೆಯಲ್ಲಿದ್ದರು. ವೆಂಕಟೇಶನ್ ಬಿಎಂಟಿಸಿಯಲ್ಲಿ ಬಸ್ ಚಾಲಕರಾಗಿ ನಿವೃತ್ತರಾಗಿದ್ದರು. ಪತ್ನಿ ಬೇಬಿ ಅವರಿಗೆ ನಾಲ್ಕು ವರ್ಷಗಳ ಹಿಂದೆ ಪಾಶ್ರ್ವವಾಯು ಆಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮನೆಯಲ್ಲಿ ಮಗ ಹಾಗೂ ಸೊಸೆಯೊಂದಿಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ. ವೃದ್ಧ ದಂಪತಿ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಇಬ್ಬರು ಜಗಳವಾಡುತ್ತಿದ್ದರು. ಡಿ.2ರಂದು ಮಧ್ಯಾಹ್ನ ಯಾರು ಇಲ್ಲದಿದ್ದಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ, ಬಟ್ಟೆ ಒಣಗಿಸುವ ದಾರದಿಂದ ವ್ಹೀಲ್ಚೇರ್ನಲ್ಲಿ ಕುಳಿತಿದ್ದ ಪತ್ನಿಯನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಅದೇ ದಾರದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.
RCB ಖರೀದಿಗೆ ಆಸಕ್ತಿ ತೋರಿಸಿದ್ರಾ ಅಮೆರಿಕದ ಟೆಕ್ ಬಿಲಿಯನೇರ್? ಎಲ್ಲಿವರೆಗೆ ಬಂತು ಮಾರಾಟ ಪ್ರಕ್ರಿಯೆ?
RCB On Sale- ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ದೊಡ್ಡ ಬ್ರಾಂಡ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟದ ಬಗ್ಗೆ ಕಳೆದ ತಿಂಗಳಿನಿಂದ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಅಮೇರಿಕನ್ ಟೆಕ್ ಬಿಲಿಯನೇರ್ ಒಬ್ಬರ RCB ಫ್ರಾಂಚೈಸಿಯನ್ನು ಖರೀದಿಸಲು ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದ. ಸುಮಾರು 17,763 ಕೋಟಿ ರೂಪಾಯಿ ಮೌಲ್ಯದ RCBಯನ್ನು ಖರೀದಿಸಲು ಅವರು ಮುಂದಾಗಿದ್ದು ಡಿಯಾಜಿಯೊ ಕಂಪನಿ ತನ್ನ ಹೂಡಿಕೆಯ ಕಾರ್ಯತಂತ್ರವನ್ನು ಪರಿಶೀಲಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ಶರಣಬಸವ ವಿಶ್ವವಿದ್ಯಾಲಯದಿಂದ ಅಶ್ವಿನಿ ರೆಡ್ಡಿಗೆ ಪಿಎಚ್ಡಿ ಪದವಿ
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅಶ್ವಿನಿ ಸಿದ್ದರಾಮ ರೆಡ್ಡಿ ಅವರು ಪಿಹೆಚ್ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. “ಎನ್ ಎನಲೈಸಿಸ್ ಆಫ್ ದ್ ಥೀಮ್ಸ್ ಆ್ಯಂಡ್ ಟೆಕ್ನಿಕ್ಸ್ ಇನ್ ಸೆಲೆಕ್ಟ್ ನಾವೆಲ್ಸ್ ಆಫ್ ಅಮಿತಾವ್ ಘೋಷ್” ಎಂಬ ಮಹಾಪ್ರಬಂಧವನ್ನು ಮಂಡಿಸುವ ಮೂಲಕ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಿಂದ ಅಶ್ವಿನಿ ಸಿದ್ದರಾಮ ರೆಡ್ಡಿ ಪಿಎಚ್. ಡಿ. ಪದವಿ ಪಡೆದಿದ್ದಾರೆ. ಆಂಗ್ಲ ಅಧ್ಯಯನ ಹಾಗೂ ಸಂಶೋಧನ ವಿಭಾಗದ ಡಾ. ಎಲೆನೋರೆ ಗೀತಮಾಲಾ ಇವರ ಮಾರ್ಗದರ್ಶನದಲ್ಲಿಅಶ್ವಿನಿ ಸಿದ್ದರಾಮ ರೆಡ್ಡಿ ಸಂಶೋಧನೆ ಕೈಗೊಂಡಿದ್ದರು.
ಕಲಬುರಗಿ| ಪತ್ರಕರ್ತನ ಮೇಲೆ ಹಲ್ಲೆ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪತ್ರಕರ್ತರ ಸಂಘ ಆಗ್ರಹ
ಕಲಬುರಗಿ: ಯಡ್ರಾಮಿ ತಾಲೂಕಿನ ಪತ್ರಕರ್ತ ಪ್ರಶಾಂತ್ ಚವ್ಹಾಣ ಮೇಲೆ ಹಲ್ಲೆ ಮಾಡಿದ್ದು ಖಂಡನಿಯ, ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಯಡ್ರಾಮಿ ವರದಿಗಾರ ಪ್ರಶಾಂತ್ ಚವ್ಹಾಣ್ ಅವರ ಮೇಲೆ ಹಲ್ಲೆ ಮಾಡಿದ ಕೀಡಿಗೇಡಿಗಳನ್ನು 24 ಗಂಟೆ ಒಳಗಾಗಿ ಬಂಧಿಸಿ ಶಿಕ್ಷೆ ನೀಡದೆ ಹೊದರೆ, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ. ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಪತ್ರಕರ್ತರಿಗೆ ಯಾವುದೇ ತೊಂದರೆ ಆಗದಂತೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರ ಸಂಘ ಆಗ್ರಹಿಸಿದೆ. ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಆಲೂರು, ಗೌರವಾಧ್ಯಕ್ಷ ಪ್ರಕಾಶ್ ಆಲಬಾಳ, ರವೀಂದ್ರ ವಕೀಲ, ವಿಜಯಕುಮಾರ್ ಕಲ್ಲಾ, ಶರಣಪ್ಪ ಎನ್. ನೆರಡಗಿ, ರಾಜು ಮುದ್ದಡಗಿ, ಮೊಹ್ಮದ್ ಗೌಸ್ ಇನಾಮ್ದಾರ್, ಶರಣಪ್ಪ ಬಡಿಗೇರ್, ನಾಗರಾಜ ಶಹಾಬಾದಕರ್, ಸಿದ್ದು ಕಾಮನಕೆರಿ, ಲಕ್ಷ್ಮಿಕಾಂತ್ ಕುಲಕರ್ಣಿ ಉಪಸ್ಥಿತರಿದ್ದರು.
ಉಕ್ರೇನ್ ಯುದ್ಧ ಕೊನೆಗೊಳಿಸುವುದು ಕಷ್ಟದ ಕೆಲಸ: ರಶ್ಯ ಅಧ್ಯಕ್ಷ ಪುಟಿನ್
ಮಾಸ್ಕೋ: ಉಕ್ರೇನ್ನಲ್ಲಿ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕಾದ ರಾಯಭಾರಿಯೊಂದಿಗೆ ತಾನು ನಡೆಸಿದ ಐದು ಗಂಟೆಗಳ ಮಾತುಕತೆ ಅಗತ್ಯ ಮತ್ತು ಉಪಯುಕ್ತವಾಗಿತ್ತು. ಆದರೆ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವುದು ಕಷ್ಟದ ಕೆಲಸ. ಕೆಲವು ಪ್ರಸ್ತಾಪಗಳು ರಶ್ಯಕ್ಕೆ ಸ್ವೀಕಾರಾರ್ಹವಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಕ್ರೆಮ್ಲಿನ್ನಲ್ಲಿ ನಡೆದ ಮಾತುಕತೆಯಲ್ಲಿ ಅಮೆರಿಕಾದ ಶಾಂತಿ ಪ್ರಸ್ತಾಪದ ಪ್ರತಿಯೊಂದೂ ಅಂಶದ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಆದ್ದರಿಂದಲೇ ಇದು ತುಂಬಾ ಸಮಯವನ್ನು ತೆಗೆದುಕೊಂಡಿತು. ಆದರೆ ಇದು ಅಗತ್ಯವಾದ ಮತ್ತು ವಾಸ್ತವಿಕ ಮಾತುಕತೆಯಾಗಿತ್ತು. ಇದು ತುಂಬಾ ಕಷ್ಟದ ಕೆಲಸ ಎಂದು ಪುಟಿನ್ ಹೇಳಿರುವುದಾಗಿ ರಶ್ಯದ ಸರ್ಕಾರಿ ಸ್ವಾಮ್ಯದ `ತಾಸ್' ಮತ್ತು ಆರ್ ಐಎ ನೊವಾಸ್ತಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಈ ಮಧ್ಯೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜರೇಡ್ ಕುಷ್ನರ್ ಮಿಯಾಮಿಯಲ್ಲಿ ಉಕ್ರೇನ್ನ ಮುಖ್ಯ ಸಮಾಲೋಚಕ ರುಸ್ತೆಮ್ ಉಮೆರೋವ್ರನ್ನು ಭೇಟಿಯಾಗಿ ಮಾತುಕತೆ ನಡೆಸಲಿರುವುದಾಗಿ ಶ್ವೇತಭವನದ ಮೂಲಗಳು ಹೇಳಿವೆ. ಯುದ್ದ ಕೊನೆಗೊಳಿಸಲು ಪುಟಿನ್ ಬಯಸುತ್ತಾರೆ: ಡೊನಾಲ್ಡ್ ಟ್ರಂಪ್ ಮಾಸ್ಕೋದಲ್ಲಿ ನಡೆದ ಮಾತುಕತೆ ಫಲಿತಾಂಶ ರಹಿತವಾಗಿದ್ದರೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತಿರುವುದಾಗಿ ತಾನು ನಂಬುತ್ತೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜರೆಡ್ ಕುಷ್ನರ್ ಕ್ರೆಮ್ಲಿನ್ನಲ್ಲಿ ಪುಟಿನ್ ಜೊತೆ ಮಾತುಕತೆ ನಡೆಸಿದ್ದರೂ ಉಕ್ರೇನ್ ಯುದ್ದವನ್ನು ಕೊನೆಗೊಳಿಸುವ ವಿಷಯದಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ ಎಂದು ರಶ್ಯ ಅಧ್ಯಕ್ಷರ ಕಚೇರಿ ಬುಧವಾರ ಹೇಳಿದೆ. ಮಾತುಕತೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ` ನಮ್ಮ ಪ್ರತಿನಿಧಿ ರಶ್ಯ ಅಧ್ಯಕ್ಷ ಪುಟಿನ್ರೊಂದಿಗೆ ಸಮಂಜಸವಾದ ಉತ್ತಮ ಸಭೆ ನಡೆಸಿದ್ದಾರೆ ಎಂದು ಹೇಳಬಲ್ಲೆ. ಪುಟಿನ್ ಯುದ್ದ ಕೊನೆಗೊಳಿಸಲು ಬಯಸಿದ್ದಾರೆ ಎಂದು ಅವರಿಗೆ ಅನಿಸಿದೆ. ಆದರೆ ಏನಾಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಮೈಸೂರು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಸೇವೆಗೆ ಪ್ರತ್ಯೇಕ ದರ: ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ನಿರ್ಧಾರ
ಚಾಮುಂಡಿಬೆಟ್ಟದ ದೇವಾಲಯಗಳಲ್ಲಿ ಸೇವೆಗಳ ಆದಾಯ ಸೋರಿಕೆ ತಡೆಗಟ್ಟಲು ಹಾಗೂ ವಿಶೇಷ ಸೇವೆಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ. ವಿವಿಧ ಸೇವೆಗಳಿಗೆ ಏಕರೂಪದ ದರ ನಿಗದಿಪಡಿಸಿ, ಭಕ್ತರಿಗೆ ಕಾಣುವಂತೆ ಪ್ರದರ್ಶಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಆದಾಯ ಸೋರಿಕೆಯನ್ನು ತಡೆಯಲು ಮತ್ತು ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.
ಹೊಸದಿಲ್ಲಿ: 2020ರ ಬಳಿಕ, ಭಾರತದಲ್ಲಿ 99,000 ಹೆಕ್ಟೇರ್ಗೂ ಅಧಿಕ ಅರಣ್ಯಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗಾಗಿ ಬಳಸಲಾಗಿದೆ ಎಂದು ಕೇಂದ್ರ ಪರಿಸರ ಖಾತೆಯ ಸಹಾಯಕ ಸಚಿವ ಕೀರ್ತಿವರ್ಧನ್ ಸಿಂಗ್ ಗುರುವಾರ ರಾಜ್ಯಸಭೆಗೆ ತಿಳಿಸಿದರು. ಈ ಪೈಕಿ ಹೆಚ್ಚಿನ ಭೂಮಿ ರಸ್ತೆಗಳು, ಗಣಿಗಾರಿಕೆ, ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳಿಗೆ ಹೋಗಿದೆ ಎಂದರು. 2020-21 ಮತ್ತು 2024-25ರ ನಡುವಿನ ಅವಧಿಯಲ್ಲಿ 22,233 ಹೆಕ್ಟೇರ್ ಅರಣ್ಯಭೂಮಿಯನ್ನು ರಸ್ತೆ ಯೋಜನೆಗಳಿಗಾಗಿ ಉಪಯೋಗಿಸಲಾಗಿದೆ ಎಂದು ಅವರು ತಿಳಿಸಿದರು. ಈ ಅವಧಿಯಲ್ಲಿ, 18,914 ಹೆಕ್ಟೇರ್ ಕಾಡು ಪ್ರದೇಶವನ್ನು ಗಣಿಗಾರಿಕೆ ಮತ್ತು ಕೋರೆಗಳಿಗೆ ಹಾಗೂ 17,434 ಹೆಕ್ಟೇರ್ ಕಾಡನ್ನು ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳಿಗೆ ಒದಗಿಸಲಾಗಿದೆ ಎಂದು ರಾಜ್ಯಸಭೆಗೆ ನೀಡಿರುವ ಮಾಹಿತಿ ತಿಳಿಸಿದೆ. ಅರಣ್ಯ ಗ್ರಾಮ ಪರಿವರ್ತನೆ, ಕುಡಿಯುವ ನೀರಿನ ಯೋಜನೆಗಳು, ಪುನರ್ವಸತಿ ಕಾಮಗಾರಿಗಳು, ಕಾಲುವೆಗಳು, ರಕ್ಷಣಾ ಯೋಜನೆಗಳು, ಆಪ್ಟಿಕಲ್ ಫೈಬರ್ ಕೇಬಲ್ಗಳ ಅಳವಡಿಕೆ, ಕೈಗಾರಿಕೆಗಳು ಮತ್ತು ಹೊಸ ಪೆಟ್ರೋಲ್ ಪಂಪ್ಗಳಿಗಾಗಿಯೂ ಗಣನೀಯ ಪ್ರಮಾಣದಲ್ಲಿ ಅರಣ್ಯ ಭೂಮಿಯನ್ನು ಬಳಸಲಾಗಿದೆ.
ಭಾರತದ ಕುಶ್ವಾಹ ಫಿಡೆ ರೇಟಿಂಗ್ ಗಳಿಸಿದ ಅತ್ಯಂತ ಕಿರಿಯ ಆಟಗಾರ
ಹೊಸದಿಲ್ಲಿ: ಭಾರತದ ಸರ್ವಜ್ಞ ಸಿಂಗ್ ಕುಶ್ವಾಹ ಚೆಸ್ ಇತಿಹಾಸದಲ್ಲೇ ಅಧಿಕೃತ ಫಿಡೆ ರೇಟಿಂಗ್ ಗಳಿಸಿದ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ. ಅವರು ತನ್ನ ಮೂರು ವರ್ಷ ಏಳು ತಿಂಗಳು ಮತ್ತು 20 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಕುಶ್ವಾಹ ಕೋಲ್ಕತಾದ ಅನೀಶ್ ಸರ್ಕಾರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಅವರು ಈ ದಾಖಲೆಯನ್ನು ಕಳೆದ ವರ್ಷದ ನವೆಂಬರ್ನಲ್ಲಿ ತನ್ನ ಮೂರು ವರ್ಷ, ಎಂಟು ತಿಂಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ನಿರ್ಮಿಸಿದ್ದರು. ಈಗ ನರ್ಸರಿ ಶಾಲೆಗೆ ಹೋಗುತ್ತಿರುವ ಕುಶ್ವಾಹ 1,572 ರ್ಯಾಪಿಡ್ ರೇಟಿಂಗ್ ಹೊಂದಿದ್ದಾರೆ. ‘‘ನಮ್ಮ ಮಗ ಫಿಡೆ ರೇಟಿಂಗ್ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರನಾಗಿದ್ದಾನೆ ಎನ್ನುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವನು ಗ್ರಾಂಡ್ಮಾಸ್ಟರ್ ಆಗಬೇಕೆಂದು ನಾವು ಬಯಸುತ್ತೇವೆ’’ ಎಂದು ಕುಶ್ವಾಹನ ತಂದೆ ಸಿದ್ಧಾರ್ಥ ಸಿಂಗ್ ‘ಇಟಿವಿ ಭಾರತ್’ನೊಂದಿಗೆ ಮಾತನಾಡುತ್ತಾ ಹೇಳಿದರು. ಫಿಡೆ ರ್ಯಾಂಕಿಂಗ್ ಗಳಿಸಬೇಕಾದರೆ, ಓರ್ವ ಆಟಗಾರ ಕನಿಷ್ಠ ಒಬ್ಬ ಅಂತರ್ರಾಷ್ಟ್ರೀಯ ಆಟಗಾರನನ್ನು ಸೋಲಿಸಬೇಕಾಗುತ್ತದೆ. ಕುಶ್ವಾಹ ಮಧ್ಯಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಇಂಥ ಮೂವರು ಆಟಗಾರರನ್ನು ಸೋಲಿಸಿದ್ದಾನೆ.
ರಾಜ್ಯದಲ್ಲಿ 334 ಆಯುಷ್ಮಾನ್ ಆರೋಗ್ಯ ಮಂದಿರ, 6 ಜಿಲ್ಲೆಗಳಲ್ಲಿ ವೈದ್ಯಕೀಯ ಲ್ಯಾಬ್ ನಿರ್ಮಾಣಕ್ಕೆ ಸಚಿವ ಸಂಪುಟ ನಿರ್ಣಯ
ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯು ಗುರುವಾರ ಸಂಜೆ ವಿಧಾನಸೌಧದಲ್ಲಿ ನಡೆಸಿದೆ. ವೈದ್ಯಕೀಯ, ಆರೋಗ್ಯ, ನಗರಾಭಿವೃದ್ಧಿ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಸುರಂಗ ರಸ್ತೆ ನಿರ್ಮಾಣಕ್ಕೆ ರೂ.2215.00 ಕೋಟಿ ರೂಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಸಭೆಯ ಪ್ರಮುಖ ಅಂಶಗಳು ಏನು? ಎಲ್ಲಾ ನಿರ್ಣಯಗಳನ್ನು ಕೈಗೊಂಡಿದ್ದಾರೆ? ಈ ಬಗ್ಗೆ ವಿವರ ಇಲ್ಲಿದೆ.
ಉಡುಪಿ | ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನ ಸೌಲಭ್ಯ: ಅರ್ಜಿ ಆಹ್ವಾನ
ಉಡುಪಿ, ಡಿ.4: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ಕೆಳಕಂಡ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೈಬ್ರಿಡ್ ತರಕಾರಿ ಪ್ರದೇಶ ವಿಸ್ತರಣೆ ಕೈಗೊಂಡ ರೈತರಿಗೆ ಶೇ.50ರ ಸಹಾಯಧನ, ಕೃಷಿ ಯಾಂತ್ರೀಕರಣ ಉಪಅಭಿಯಾನ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ಅನುಮೋದಿತ ಯಂತ್ರೋಪಕರಣಗಳಿಗೆ ಶೇ.40/50ರ ಸಹಾಯಧನ ಸಿಗಲಿದೆ. ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ಶೇ.90ರಷ್ಟು ಸಹಾಯಧನ ಲಭ್ಯವಿದೆ. ಸಹಾಯಧನ ಪಡೆಯಲು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕಾರ್ಯಾದೇಶ ಪಡೆದು ಇಲಾಖೆಯಿಂದ ಅನುಮೋದಿತ ಡೀಲರ್ ಗಳ ಮೂಲಕ ರೈತರು ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಬಹುದು. ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆ ಬೆಳೆ ಯೋಜನೆಯಡಿ ಹೊಸದಾಗಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಉಚಿತ ವಿತರಣೆಯೊಂದಿಗೆ 4 ವರ್ಷಗಳ ಕಾಲ ನಿರ್ವಹಣಾ ವೆಚ್ಚ ಪಾವತಿ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್, ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಹಾಗೂ ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿದೆ. ಈ ಎಲ್ಲಾ ಯೋಜನೆಗಳ ಪ್ರಯೋಜನೆ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ ಮತ್ತು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಇಲಾಖಾ ಮಾರ್ಗಸೂಚಿಯಂತೆ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ಅಧಿಕಾರಿಗಳನ್ನು ಹಾಗೂ ತೋಟಗಾರಿಕೆ ಇಲಾಖೆ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದುಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ನಲ್ಲಿ ಮುಗಿಯದ ನಾಯಕತ್ವ ಗೊಂದಲ?; ಮತ್ತೆ ದೆಹಲಿಗೆ ತೆರಳಿದ ಬಿಕೆ ಹರಿಪ್ರಸಾದ್
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಿದ್ದಾರೆ. ರಾಜ್ಯ ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಎರಡನೇ ಬಾರಿಗೆ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಿಂದ ಮರಳಿದ ಬೆನ್ನಲ್ಲೇ, ಹರಿಪ್ರಸಾದ್ ಅವರು ಸಚಿವರಾದ ಜಿ.ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿ ಹೈಕಮಾಂಡ್ ಭೇಟಿಗೆ ತೆರಳಿರುವುದು ಭಾರಿ ಕುತೂಹಲ ಮೂಡಿಸಿದೆ.
ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪ: ಮಾಜಿ ಸೈನಿಕ ಅಜಯ್ ಕುಮಾರ್ ಸಿಂಗ್, ಮಹಿಳೆಯ ಬಂಧನ
ಅಹ್ಮದಾಬಾದ್: ಭಾರತೀಯ ಸೇನಾ ಸಂಸ್ಥೆಗಳು ಹಾಗೂ ಸಿಬ್ಬಂದಿ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನ ಏಜೆಂಟರಿಗೆ ರವಾನಿಸುತ್ತಿದ್ದ ಆರೋಪದಲ್ಲಿ ಮಾಜಿ ಸೈನಿಕ ಹಾಗೂ ಮಹಿಳೆಯೊಬ್ಬರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಬಂಧಿಸಿದೆ. ಬಿಹಾರ ಮೂಲದ ಮಾಜಿ ಸುಬೇದಾರ್ ಮೇಜರ್ ಅಜಯ್ ಕುಮಾರ್ ಸಿಂಗ್ (47)ನನ್ನು ಗೋವಾದಲ್ಲಿ ಹಾಗೂ ಉತ್ತರಪ್ರದೇಶ ಮೂಲದ ರಶ್ಮನಿ ಪಾಲ್(35)ಳನ್ನು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ತಿಳಿಸಿದೆ. ಅಜಯ್ ಕುಮಾರ್ ಸಿಂಗ್ 2022ರಲ್ಲಿ ನಾಗಾಲ್ಯಾಂಡ್ನ ಧಿಮಾಪುರದಲ್ಲಿ ಭಾರತೀಯ ಸೇನೆಯ ಸುಬೇದಾರ್ ಆಗಿದ್ದ. ಈ ಸಂದರ್ಭ ಅಂಕಿತಾ ಶರ್ಮಾ ಎಂಬ ಹೆಸರಿಲ್ಲಿ ಪಾಕಿಸ್ತಾನದ ಬೇಹುಗಾರಿಕೆ ಅಧಿಕಾರಿಯೊಬ್ಬರು ಆತನನ್ನು ಬಲೆಗೆ ಬೀಳಿಸಿಕೊಂಡಿದ್ದರು. ಅಜಯ್ ಕುಮಾರ್ ಸಿಂಗ್ನೊಂದಿಗೆ ಈ ಅಧಿಕಾರಿ ನಿರಂತರ ಸಂಪರ್ಕದಲ್ಲಿದ್ದಳು. ಸೇನೆಯಿಂದ ನಿವೃತ್ತನಾದ ಬಳಿಕ ಸಿಂಗ್ ಗೋವಾದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ಸಂದರ್ಭ ಪಾಕಿಸ್ತಾನದ ಬೇಹುಗಾರಿಕಾ ಅಧಿಕಾರಿ ಸಿಂಗ್ನ ನಂಬಿಕೆ ಗಳಿಸಿದ್ದಳು ಹಾಗೂ ಭಾರತೀಯ ಸೇನೆಯ ರೆಜಿಮೆಂಟ್ನ ಚಲನವಲನ, ಮುಖ್ಯ ಸೇನಾಧಿಕಾರಿಗಳ ವರ್ಗಾವಣೆ ಕುರಿತು ಮಾಹಿತಿ ನೀಡುವಂತೆ ಕೋರಿದ್ದಳು. ಅವರ ಮನವಿಯಂತೆ ಸಿಂಗ್ ಪಠ್ಯ, ಫೋಟೊ ಹಾಗೂ ವೀಡಿಯೊಗಳ ರೂಪದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ. ಆ ಬೇಹುಗಾರಿಕಾ ಅಧಿಕಾರಿ ಸಿಂಗ್ನ ಮೊಬೈಲ್ ಫೋನ್ಗೆ ಟ್ರೋಜನ್ ಮಾಲ್ವೇರ್ ಫೈಲ್ ಕಳುಹಿಸಿದ್ದರು. ಅದನ್ನು ಸೇವ್ ಮಾಡುವಂತೆ ಹಾಗೂ ಅಳವಡಿಸುವಂತೆ ಸೂಚನೆ ನೀಡಿದ್ದರು. ಇದರಿಂದ ಅತಿಸೂಕ್ಷ್ಮ ಮಾಹಿತಿಗಳನ್ನು ವ್ಯಾಟ್ಸ್ ಆ್ಯಪ್ ಮೂಲಕ ಹಂಚಿಕೊಳ್ಳುವ ಅಗತ್ಯತೆ ಇಲ್ಲ. ಮಾಲ್ವೇರ್ ಸಿಂಗ್ ಮೊಬೈಲ್ನಿಂದ ಮಾಹಿತಿಯನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ ಎಂದು ಅವರು ತಿಳಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ರಶ್ಮನಿ ಪಾಲ್ ಕುರಿತ ಪ್ರಶ್ನೆಗೆ ಉತ್ತರಿಸಿದ ಎಟಿಎಸ್ ಅಧಿಕಾರಿಗಳು, ರಶ್ಮನಿ ಪಾಲ್ ಹಣಕ್ಕಾಗಿ ಪಾಕಿಸ್ತಾನದ ಏಜೆಂಟರಾದ ಅಬ್ದುಲ್ ಸತ್ತಾರ್ ಹಾಗೂ ಖಾಲಿದ್ ಪರವಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಳು. ಅಬ್ದುಲ್ ಸತ್ತಾರ್ ಹಾಗೂ ಖಾಲಿದ್ ನಿರ್ದೇಶನದಂತೆ ಆಕೆ ಪ್ರಿಯಾ ಠಾಕೂರ್ ಎಂಬ ನಕಲಿ ಗುರುತು ಸೃಷ್ಟಿಸಿದ್ದಳು. ಬಳಿಕ ಭಾರತೀಯ ಸೇನೆಯ ಸಿಬ್ಬಂದಿಯೊಂದಿಗೆ ಗೆಳೆತನ ಮಾಡಿಕೊಂಡಳು. ಅವರಿಂದ ಪಡೆದುಕೊಂಡ ರಹಸ್ಯ ಸೇನಾ ಮಾಹಿತಿಯನ್ನು ಸತ್ತಾರ್ ಹಾಗೂ ಖಾಲಿದ್ಗೆ ರವಾನಿಸುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ. ನಿರ್ದಿಷ್ಟ ಸೇನಾ ಘಟಕಗಳು, ಅವರ ಸಮರಾಭ್ಯಾಸಗಳು ಹಾಗೂ ಚಲನವಲನಗಳ ಕುರಿತು ಮಾಹಿತಿ ಸಂಗ್ರಹಿಸಲು ಏಜೆಂಟರು ಪಾಲ್ಗೆ ಸೂಚಿಸಿದ್ದರು. ಪಾಕಿಸ್ತಾನದ ಮೊಬೈಲ್ ಸಂಖ್ಯೆ ಮೂಲಕ ಪಾಲ್ ನೇರವಾಗಿ ಅಬ್ದುಲ್ ಸತ್ತಾರ್ನೊಂದಿಗೆ ಸಂಪರ್ಕದಲ್ಲಿದ್ದಳು. ಹಣ ಸ್ವೀಕರಿಸಲು ಹಾಗೂ ರವಾನಿಸಲು ಆಕೆ ಬ್ಯಾಂಕ್ನಲ್ಲಿ ಹೊಸ ಖಾತೆ ತೆರೆದಿದ್ದಳು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಡಕಟ್ಟು ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಶಿಶು ಮರಣ: ಲೋಕಸಭೆಯಲ್ಲಿ ಉತ್ತರಿಸದೆ ನುಣುಚಿಕೊಂಡ ಕೇಂದ್ರ ಸರಕಾರ
ಹೊಸದಿಲ್ಲಿ: ದೇಶದ ಬುಡಕಟ್ಟು ಸಮುದಾಯದ ಪ್ರದೇಶಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಅಪೌಷ್ಟಿಕತೆಯಿಂದಾಗಿ ಮೃತಪಟ್ಟ ಶಿಶುಗಳ ಸಂಖ್ಯೆಯ ಕುರಿತು ಲೋಕಸಬೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸರಕಾರವು ಗುರುವಾರ ಉತ್ತರಿಸದೆ ನುಣುಚಿಕೊಂಡಿದೆ. ತೃಣಮೂಲ ಕಾಂಗ್ರೆಸ್ ಸದಸ್ಯ ಸೌಗತಾ ರೇ ಅವರು ಈ ಬಗ್ಗೆ ನೇರವಾಗಿ ಕೇಳಿದ ಪ್ರಶ್ನೆಗೆ, ಕೇಂದ್ರ ಬುಡಕಟ್ಟು ಖಾತೆಯ ಸಹಾಯಕ ಸಚಿವ ದುರ್ಗಾದಾಸ್ ಉಯಿಕೆ ಅವರು ನೀಡಿದ ನಾಲ್ಕು ಪುಟಗಳ ಉತ್ತರದಲ್ಲಿ, ಸರಕಾರವು ಎಲ್ಲಾ ವರ್ಗದ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಹಮ್ಮಿಕೊಂಡಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ವಿವರಿಸಿದ್ದಾರೆ. ಇದರ ಜೊತೆಗೆ ಈಗಾಗಲೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್)ಯ ಮೂಲಕ ಲಭ್ಯವಿರು ಶಿಶುಗಳ ಕುಬ್ಜತೆ, ಕಡಿಮೆ ದೇಹತೂಕದ ಕುರಿತ ದತ್ತಾಂಶಗಳು ಮತ್ತು ಅಪೌಷ್ಟಿಕತೆಯಿಂದಾಗಿ ಸಂಭವಿಸುವ ಶಿಶುಗಳ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಲು ಜಾರಿಗೊಳಿಸಲಾದ ಮಾರ್ಗಸೂಚಿಗಳನ್ನ್ನು ವಿವರಿಸಿದರು. ಆದರೆ ಬುಡಕಟ್ಟು ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಸಾವನ್ನಪ್ಪಿದ ಶಿಶುಗಳ ಸಂಖ್ಯೆಯ ಬಗ್ಗೆ ಬುಡಕಟ್ಟು ವ್ಯವಹಾರಗಳ ಖಾತೆಯ ಸಹಾಯಕ ಸಚಿವ ದುರ್ಗಾದಾಸ್ ಉಯಿಕೆ ಸದನಕ್ಕೆ ಯಾವುದೇ ಮಾಹಿತಿ ನೀಡಲಿಲ್ಲ. 1990-91ರಿಂದೀಚೆಗೆ ಎಲ್ಲಾ ಮಕ್ಕಳ ಅಪೌಷ್ಟಿತೆಯ ಸೂಚಕಗಳಲ್ಲಿ ಸುಧಾರಣೆ ಕಂಡುಬಂದಿರುವುದಾಗಿ ದುರ್ಗಾದಾಸ್ ಅವರು ಎನ್ಎಫ್ಎಚ್ಎಸ್ ಸಮೀಕ್ಷೆಯ ದತ್ತಾಂಶಗಳನ್ನು ಉಲ್ಲೇಖಿಸುತ್ತಾ ತಿಳಿಸಿದರು. ಅಕ್ಟೋಬರ್ 2025ರವರೆಗೆ ದೇಶಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಐದು ವರ್ಷದೊಳಗಿನ ಕೇವಲ 6.60 ಕೋಟಿ ಮಕ್ಕಳು ದಾಖಲಾಗಿದ್ದು, ಈವರ ಪೈಕಿ ಆರೋಗ್ಯ ತಪಾಸಣೆಗೊಳಗಾದ 6.44 ಕೋಟಿ ಮಕ್ಕಳಲ್ಲಿ ಕನಿಷ್ಠ ಶೇ.52ರಷ್ಟು ಮಂದಿ ಕುಬ್ಜತೆ ಅಥವಾ ಕಡಿಮೆ ದೇಹತೂಕವನ್ನು ಹೊಂದಿದ್ದಾರೆಂದು ಸಚಿವರು ತಿಳಿಸಿದರು. ಎನ್ಎಫ್ಎಚ್ಎಸ್ ದತ್ತಾಂಶ ಹಾಗೂ ಪೋಷಣ್ ಟ್ರ್ಯಾಕರ್ನ ದತ್ತಾಂಶಗಳ ವಿಶ್ಲೇಷಣೆಯಿಂದ ದೇಶಾದ್ಯಂತ ಮಕ್ಕಳ ಅಪೌಷ್ಟಿಕತೆಯ ಸೂಚಕಗಳಲ್ಲಿ ಸುಧಾರಣೆಯಾಗಿರುವುದು ಕಂಡುಬಂದಿದೆ’’ ದುರ್ಗಾದಾಸ್ ಉಯಿಕೆ ಸದನಕ್ಕೆ ತಿಳಿಸಿದರು.
ಗದಗದ ತೋಂಟದಾರ್ಯ ಮಠದ ಬಳಿ ಇರುವಂತಹ ಶಾಂತಾದುರ್ಗಾ ಜ್ಯುವೇಲರ್ಸ್ ಎಂಬ ಚಿನ್ನದಂಗಡಿಯಲ್ಲಿ ಗುಜರಾತ್ ಮೂಲದ ದರೋಡೆಕೋರನೊಬ್ಬ ಕಳ್ಳತನ ಮಾಡಿದ್ದ ಘಟನೆ ನಡೆದಿತ್ತು. ಆ ಭಾರಿ ಕಳ್ಳತನ ಪ್ರಕರಣವನ್ನು ಪೊಲೀಸರು ದಾಖಲೆಯ ಕೇವಲ ಆರು ಗಂಟೆಗಳಲ್ಲಿ ಭೇದಿಸಿದ್ದಾರೆ. ಸಿನಿಮಾ ಶೈಲಿಯಲ್ಲಿ ದರೋಡೆ ನಡೆಸಿದ್ದ ಪ್ರಮುಖ ಆರೋಪಿಯನ್ನು ಮಹಾರಾಷ್ಟ್ರದ ಗಡಿಯಲ್ಲಿ ಬಂಧಿಸಲಾಗಿದೆ. ಆರೋಪಿಯಿಂದ ಪೊಲೀಸರು ಸುಮಾರು 80.47 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಉಕ್ರೇನಿಯನ್ ಮಕ್ಕಳನ್ನು ತಕ್ಷಣ ಹಿಂದಿರುಗಿಸಿ: ರಶ್ಯಕ್ಕೆ ವಿಶ್ವಸಂಸ್ಥೆ ಆಗ್ರಹ
ನಿರ್ಣಯ ಅನುಮೋದನೆ
ಉಡುಪಿ | ಹಿರಿಯಡ್ಕದಲ್ಲಿ ಕಿಶೋರ ಯಕ್ಷ ಸಂಭ್ರಮ ಉದ್ಘಾಟನೆ
ಉಡುಪಿ, ಡಿ.4: ಯಕ್ಷಗಾನ ನಮ್ಮ ಹಿರಿಯರು ನಮಗೆ ನೀಡಿರುವ ಸರ್ವಾಂಗ ಸುಂದರ ಕಲಾಪ್ರಕಾರ. ಇದು ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯ, ಪುರಾಣಜ್ಞಾನ, ಆತ್ಮಸ್ಥೈರ್ಯವನ್ನು ಬೆಳೆಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಕಾರವಂತರನ್ನಾಗಿ ಮಾಡುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ. ಹಿರಿಯಡ್ಕದಲ್ಲಿ ಕಾಪು ಕ್ಷೇತ್ರದ ನಾಲ್ಕು ಶಾಲೆಗಳ ಪ್ರದರ್ಶನಗಳನ್ನು ಉದ್ಘಾಟಿಸಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ಶ್ರೀವೀರಭದ್ರ ದೇವಸ್ಥಾನ ಹಿರಿಯಡಕ, ಪ್ರದರ್ಶನ ಸಂಘಟನಾ ಸಮಿತಿ ಹಿರಿಯಡಕ ಹಾಗೂ ಯಕ್ಷಗಾನ ಕಲಾರಂಗ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಸಮಾರಂಭದಲ್ಲಿ ಸೆಲ್ಕೋ ಸೋಲಾರ್ ಲೈಟ್ಸ್ನ ಹಿರಿಯ ಅಧಿಕಾರಿ ಗುರುಪ್ರಕಾಶ್ ಶೆಟ್ಟಿ, ಉದ್ಯಮಿ ಶ್ರೀನಿವಾಸ್ ರಾವ್, ಹಿರಿಯಡಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಮಣಿಪುರ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪರೇಖಾ ಅತಿಥಿಗಳಾಗಿ ಭಾಗವಹಿಸಿದ್ದರು. ಟ್ರಸ್ಟಿ ವಿ.ಜಿ.ಶೆಟ್ಟಿ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಮತ್ತು ಡಾ. ರಾಜೇಶ್ ನಾವುಡ ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯದರ್ಶಿ ಮುರಲಿ ಕಡೆಕಾರ್ ವಂದಿಸಿದರು. ಮೊದಲ ದಿನದಂದು ಸರಕಾರಿ ಪ್ರೌಢಶಾಲೆ ಮಣಿಪುರ ಇಲ್ಲಿನ ವಿದ್ಯಾರ್ಥಿ ಗಳಿಂದ ಕೃಷ್ಣಾರ್ಜುನ ಕಾಳಗ, ಬಳಿಕ ಹಿರಿಯಡ್ಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.
Bengaluru | ಕರ್ತವ್ಯ ಲೋಪ, ನಿರ್ಲಕ್ಷ್ಯ ತೋರಿದ ಆರೋಪ; ಇಬ್ಬರು ಎಎಸ್ಸೈ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು
ಬೆಂಗಳೂರು : ಕರ್ತವ್ಯ ಲೋಪ, ನಿರ್ಲಕ್ಷ್ಯ ವಹಿಸಿದ ಆರೋಪದಡಿ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಯನ್ನು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಎಎಸ್ಸೈ ಶ್ರೀನಿವಾಸ್ ಮೂರ್ತಿ(ನಂದಿನಿ ಲೇಔಟ್ ಪೊಲೀಸ್ ಠಾಣೆ), ಎಎಸ್ಸೈ ಜಯರಾಮೇಗೌಡ, ಹೆಡ್ಕಾನ್ಸ್ಟೇಬಲ್ ಧರ್ಮ(ಸುಬ್ರಮಣ್ಯನಗರ ಪೊಲೀಸ್ ಠಾಣೆ), ಕಾನ್ಸ್ಟೇಬಲ್ ನಜೀರ್(ಸಂಜಯನಗರ ಪೊಲೀಸ್ ಠಾಣೆ) ಅಮಾನತ್ತಾದ ಸಿಬ್ಬಂದಿ. ಪ್ರಕರಣಗಳ ಹಿನ್ನೆಲೆ: ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ನಿತ್ಯಾನಂದ ಎಂಬುವರು ದೂರು ನೀಡಲು ಬಂದಿದ್ದರು. ಎಎಸ್ಸೈ ಶ್ರೀನಿವಾಸ್ ಮೂರ್ತಿ ಅವರು ಸರಿಯಾಗಿ ಸ್ಪಂದಿಸದೆ ದೂರು ದಾಖಲಿಸಿಕೊಳ್ಳದೆ, ನಿರ್ಲಕ್ಷ್ಯ ವಹಿಸಿದ್ದರು ಎಂದು ನಿತ್ಯಾನಂದ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಸುಬ್ರಮಣ್ಯನಗರ ಪೊಲೀಸ್ ಠಾಣೆಯ ಎಎಸ್ಸೈ ಜಯರಾಮೇಗೌಡ ಹಾಗೂ ಹೆಡ್ಕಾನ್ಸ್ಟೇಬಲ್ ಧರ್ಮ ಅವರಿಗೆ ಪ್ರಕರಣವೊಂದರ ಸಾಕ್ಷಿಗಳನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸಮನ್ಸ್ ನೀಡಿತ್ತು. ಆದರೆ, ಅವರು ಸಕಾಲಕ್ಕೆ ಸಾಕ್ಷಿಗಳನ್ನು ಹಾಜರುಪಡಿಸದೆ ಲೋಪವೆಸಗಿದ್ದರು. ಸಂಜಯನಗರ ಠಾಣೆಯ ಕಾನ್ಸ್ಟೇಬಲ್ ನಜೀರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಂದೋಬಸ್ತ್ ಗೆ ನಿಯೋಜಿಸಿದ್ದರೂ ಕರ್ತವ್ಯಕ್ಕೆ ಗೈರಾಗಿ ನಿರ್ಲಕ್ಷ್ಯ ವಹಿಸಿದ್ದರು. ಈ ಸಂಬಂಧ ಡಿಸಿಪಿ ನೇಮಗೌಡ ಅವರು ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ಆಡಳಿತಾತ್ಮಕ ಕಾರಣಗಳಿಗಾಗಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯುದ್ಧ ಪ್ರಚೋದಿಸಲು ಪಹಲ್ಗಾಮ್ ದಾಳಿ ಸಂಯೋಜಿಸಿದ್ದ ಆಸಿಮ್ ಮುನೀರ್: ಇಮ್ರಾನ್ ಖಾನ್ ಆಪ್ತ ಸಲ್ಮಾನ್ ಹೇಳಿಕೆ
ಇಸ್ಲಮಾಬಾದ್, ಡಿ.4: ಪಾಕಿಸ್ತಾನಿ-ಅಮೆರಿಕನ್ ರಾಜಕೀಯ ಕಾರ್ಯಕರ್ತ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟವರ್ತಿ ಸಲ್ಮಾದ್ ಅಹ್ಮದ್ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಭಾರತದೊಂದಿಗೆ ಮಿಲಿಟರಿ ಘರ್ಷಣೆಯನ್ನು ಪ್ರಚೋದಿಸಲು ಮತ್ತು ಮುಖಾಮುಖಿಯಿಂದ ಲಾಭ ಪಡೆಯಲು ಪಹಲ್ಗಾಮ್ ದಾಳಿಯನ್ನು ಆಯೋಜಿಸಲಾಗಿದೆ ಎಂದಿದ್ದಾರೆ. ಮುನೀರ್ ಅವರ ನಡವಳಿಕೆ ಮತ್ತು ಆಪಾದಿತ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪರಿಶೀಲಿಸುವಂತೆ ವಿದೇಶಾಂಗ ಇಲಾಖೆಯನ್ನು ಒತ್ತಾಯಿಸಿ ಅಮೆರಿಕಾದ 42 ಸಂಸದರು ಸಹಿ ಹಾಕಿದ ಪತ್ರದ ಬಗ್ಗೆ ನಡೆದ ಚರ್ಚೆಯಲ್ಲಿ ಅಹ್ಮದ್ ಈ ಪ್ರತಿಪಾದನೆ ಮಾಡಿದ್ದಾರೆ. 2022ರ ಎಪ್ರಿಲ್ನಲ್ಲಿ ಇಮ್ರಾನ್ ಖಾನ್ರನ್ನು ಪದಚ್ಯುತಗೊಳಿಸಿದಂದಿನಿಂದ ಪಾಕಿಸ್ತಾನದ ಮಿಲಿಟರಿ ವ್ಯವಸ್ಥೆಯು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂದು ಪಾಕಿಸ್ತಾನಿ-ಅಮೆರಿಕನ್ ಗುಂಪುಗಳು ವರ್ಷಗಳಿಂದ ಅಮೆರಿಕಾ ಆಡಳಿತಕ್ಕೆ ಎಚ್ಚರಿಕೆ ನೀಡುತ್ತಾ ಬಂದಿವೆ. ಮುನೀರ್ ಈ ವಲಯಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಸಲ್ಮಾನ್ ಅಹ್ಮದ್ರನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್18 ವರದಿ ಮಾಡಿದೆ. ಪಾಕಿಸ್ತಾನವು ಪರಮಾಣು ಶಸ್ತ್ರ ರಾಷ್ಟ್ರವಾಗಿದೆ. ಇಲ್ಲಿ ಮಿಲಿಟರಿ ಸರಕಾರ, ಸರ್ವಾಧಿಕಾರಿ ಇರಬಾರದು. ಆಸಿಮ್ ಮುನೀರ್ ಓರ್ವ ಮಾನಸಿಕವಾಗಿ ಗೊಂದಲದ ವ್ಯಕ್ತಿ. ಅವರು ನಿವೃತ್ತರಾಗಿದ್ದರಿಂದ ಸಶಸ್ತ್ರ ಪಡೆಯ ನೇತೃತ್ವ ವಹಿಸಬಾರದು. ಅವರು ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ, ಈ ವಲಯಕ್ಕೇ ಅಪಾಯಕಾರಿಯಾಗಿದ್ದಾರೆ ಎಂದು ಅಹ್ಮದ್ ಆರೋಪಿಸಿದ್ದಾರೆ.
ಉಡುಪಿ | ಬಾಲಕಿಯರ ಬಾಲಮಂದಿರ ಸ್ಥಳಾಂತರ
ಉಡುಪಿ, ಡಿ.4: ಜಿಲ್ಲೆಯ ನಿಟ್ಟೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಬಾಲಕಿಯರ ಬಾಲಮಂದಿರ ಉಡುಪಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅಪೂರ್ವ ಕಾಂಪ್ಲೆಕ್ಸ್, ಮೊದಲನೇ ಮಹಡಿ, ಶಿವಳ್ಳಿ ಗ್ರಾಮ, ಕುಂಜಿಬೆಟ್ಟು ಪೋಸ್ಟ್, ದೊಡ್ಡಣಗುಡ್ಡೆ, ಉಡುಪಿ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ:9481766735, 9482137220ನ್ನು ಸಂಪರ್ಕಿಸಬಹುದು ಎಂದು ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
‘ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ವೃತ್ತ’ 2215 ಕೋಟಿ ರೂ.ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ : ಸಚಿವ ಸಂಪುಟ ನಿರ್ಣಯ
ಬೆಂಗಳೂರು : ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ವೃತ್ತದವರೆಗೂ ಸ್ಥಳೀಯ ವಾಹನ ದಟ್ಟಣೆಯನ್ನು ನಿರ್ವಹಿಸಲು ನಿರ್ಮಾಣ ಮಾಡಲು ಉದ್ದೇಶಿಸಿರುವ ಮೂರು ಪಥದ ಅವಳಿ ಸುರಂಗ ಮಾರ್ಗವನ್ನು ಕಟ್ ಅಂಡ್ ಕವರ್ ಮಾದರಿಯಲ್ಲಿ ಹಾಗೂ ಇದಕ್ಕೆ ಪೂರಕವಾಗಿ ಎಲಿವೇಟೆಡ್ ಕಾರಿಡಾರ್ ಜೊತೆಗೆ ಅಪ್ ಅಂಡ್ ಡೌನ್ ರ್ಯಾಂಪ್ ಅನ್ನು 2215 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ‘ಬಂಡವಾಳ ಹೂಡಿಕೆದಾರರ ಸಮಾವೇಶ-ಇನ್ವೆಸ್ಟ್ ಕರ್ನಾಟಕ 2025’ರ ಪರಿಷ್ಕೃತ ವೆಚ್ಚ 100.70 ಕೋಟಿ ರೂ.ಗಳಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಪುರಷ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಲ್ಲಿ 5491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ(ಪ್ಯಾಕ್ಸ್) ಗಣಕೀಕರಣವನ್ನು ಪೂರ್ಣಗೊಳಿಸಲು ಸತ್ರಾ ಸರ್ವೀಸ್ ಅಂಡ್ ಸಲ್ಯೂಷನ್ಸ್ ಪ್ರೈ.ಲಿ.ಗೆ 4453 ಪ್ಯಾಕ್ಸ್ ಗಳನ್ನು 57.88 ಕೋಟಿ ರೂ.ಮೊತ್ತದಲ್ಲಿ ಹಾಗೂ ಚಾಯ್ಸ್ ಕನ್ಸಲ್ಟೆನ್ಸಿ ಸರ್ವೀಸೆಸ್ ಪ್ರೈ.ಸಂಸ್ಥೆಗೆ 1038 ಪ್ಯಾಕ್ಸ್ ಗಳನ್ನು 13.49 ಕೋಟಿ ರೂ.ಮೊತ್ತದಲ್ಲಿ ಹಂಚಿಕೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಇತರ ನಿರ್ಣಯಗಳು : ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಕಲಬುರಗಿ, ಗದಗ, ದಾವಣಗೆರೆ, ಮಂಗಳೂರು, ಭೀಮನಕುಪ್ಪೆ (ಬೆಂಗಳೂರಿನ ಕೆಂಗೇರಿ ಹತ್ತಿರ) ಮತ್ತು ಮೈಸೂರಿನಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳನ್ನು 452.89 ಕೋಟಿ ರೂ.ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ. ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ಜಿಲ್ಲಾಸ್ಪತ್ರೆ ಆವರಣದಲ್ಲಿ 50 ಹಾಸಿಗೆ ಸಾಮರ್ಥ್ಯ ದ ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಿಸುವ ಕಾಮಗಾರಿಯನ್ನು 28.69 ಕೋಟಿ ರೂ., ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣವನ್ನು 304 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಅತ್ಯಾಧುನಿಕ ಲಸಿಕಾ ತಯಾರಿಕಾ ಪ್ರಯೋಗಾಲಯವನ್ನು 27 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಿ, ಕುರಿ ಮತ್ತು ಮೇಕೆಗಳ ನೀಲಿ ನಾಲಿಗೆ ರೋಗ ಹಾಗೂ ಇನ್ನಿತರ ರೋಗಗಳಿಗೆ ಲಸಿಕೆಯನ್ನು ತಯಾರಿಸಲು ಆಡಳಿತಾತ್ಮಕ ಅನುಮೋದನೆ. ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದ ಸಜ್ಜೆಪಾಳ್ಯ ಗ್ರಾಮದ 3 ಎಕರೆ ಜಮೀನನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ “ನೆಫ್ರೋ-ಯುರಾಲಜಿ ಸಂಸ್ಥೆಗೆ” ಪ್ರತಿ ಎಕರೆಗೆ ಪ್ರತಿ ವರ್ಷ 1 ಲಕ್ಷ ರೂ.ಗಳ ಗುತ್ತಿಗೆ ದರದಂತೆ ಆಸ್ಪತ್ರೆ ನಿರ್ಮಾಣಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಹಾಗೂ ಆ ಆಸ್ಪತ್ರೆಯಲ್ಲಿ ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದ ನಿರಾಶ್ರಿತರಿಗೆ ಉಚಿತ ಚಿಕಿತ್ಸೆ ನೀಡಲು ಕನಿಷ್ಟ ಹಾಸಿಗೆಗಳನ್ನು ಕಾಯ್ದಿರಿಸುವ ಷರತ್ತಿಗೊಳಪಟ್ಟು ಮಂಜೂರು ಮಾಡಲು ನಿರ್ಧರಿಸಲಾಗಿದೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಯಡೋಣಿಯಲ್ಲಿನ ವಾಲ್ಮೀಕಿ ಆಶ್ರಮ ಶಾಲೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯ ಮಾದರಿಯಲ್ಲಿ ಶಾಲಾ ಸಂಕೀರ್ಣವನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಹಾಗೂ 2024-2026ನೆ ಸಾಲಿಗೆ ಪಿಎಂ-ಅಭಿಮ್ ಯೋಜನೆಯಡಿ ರಾಜ್ಯದಾದ್ಯಂತ 334 ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಅಂದಾಜು ಮೊತ್ತ 217.10 ಕೋಟಿ ರೂ.ಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ. 2024-25ನೆ ಸಾಲಿನಲ್ಲಿ 15ನೆ ಹಣಕಾಸು ಆಯೋಗದ ಅನುದಾನದಡಿ ರಾಜ್ಯದಾದ್ಯಂತ ಪ್ರತಿ ಘಟಕಕ್ಕೆ ಅಂದಾಜು ಒಂದು ಕೋಟಿ ರೂ.ಗಳಂತೆ ಒಟ್ಟು 22 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 22 ಕೋಟಿ ರೂ.ಗಳಲ್ಲಿ ಹಾಗೂ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು 80 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ. ಗುತ್ತಿಗೆ ಆಧಾರದ ಮೇಲೆ 400 ಫಾರ್ಮಸಿಸ್ಟ್ ಬದಲಾಗಿ ಕಳೆದ ಎರಡು ವರ್ಷಗಳಲ್ಲಿ ಫಾರ್ಮಸಿ ಡಿಪ್ಲೋಮಾ ಪದವಿ ಪಡೆದ ಡಿಪ್ಲೋಮಾ ವಿದ್ಯಾರ್ಥಿಗಳನ್ನು ಮಂಜೂರಾದ ಖಾಲಿಯಿರುವ ಹುದ್ದೆಗಳ ಎದುರಾಗಿ ಪಾರದರ್ಶಕ ಆಯ್ಕೆ ವಿಧಾನದ ಮೂಲಕ 11 ತಿಂಗಳ ಅವಧಿಗೆ ನಿಗದಿತ ಮೊತ್ತದ ಸ್ಟೈಫೆಂಡ್ ಪಾವತಿಯ ಮೇಲೆ ಅಪ್ರೆಂಟಿಸ್ಗಳಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಗೂಡೇಹೊಸಹಳ್ಳಿ ಬಳಿ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲೂಕು ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕುಗಳ ಕೆರೆ ತುಂಬಿಸುವ ಯೋಜನೆ (ಹಂತ-2)ಯ 67 ಕೋಟಿ ರೂ.ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ. ಭಕ್ತರಹಳ್ಳಿ ಮತ್ತು ಕುಣಿಗಲ್ ತಾಲೂಕಿನ ಇತರ 21 ಕೆರೆಗಳನ್ನು ತುಂಬಿಸಲು ಕೊತ್ತಗೆರೆ ಗ್ರಾಮದ ಸಮೀಪವಿರುವ ಕೊತ್ತಗೆರೆ ಕೆರೆಯಿಂದ ನೀರು ಎತ್ತುವ ಯೋಜನೆಯನ್ನು 34 ಕೋಟಿ ರೂ.ಗಳ ಮೊತ್ತದಲ್ಲಿ ಹಾಗೂ ಚಳ್ಳಕೆರೆ ನಗರಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ 198 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ 9.215 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರೂಪಿಸಲಾದ ಚಡಚಣ ಏತ ನೀರಾವರಿ ಯೋಜನೆಯ 485 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಉಡುಪಿ | ಡಿ.5ರಂದು ಜಿಲ್ಲಾ ರೆಡ್ ಕ್ರಾಸ್ ನಲ್ಲಿ ಒಂದು ದಿನದ ತರಬೇತಿ ಶಿಬಿರ
ಉಡುಪಿ, ಡಿ.4: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ ಶಾಖೆ, ಮಂಗಳೂರು ವಿಶ್ವವಿದ್ಯಾನಿಲಯ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ರೆಡ್ಕ್ರಾಸ್ ಅಧಿಕಾರಿಗಳು ಮತ್ತು ವಿದ್ಯಾರ್ಥಿ ನಾಯಕರುಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಶಿಬಿರ ಮತ್ತು ವಿಶ್ವ ಸ್ವಯಂಸೇವಕರ ದಿನವನ್ನು ನಾಳೆ ಡಿ.5ರಂದು ಬೆಳಗ್ಗೆ 10ಗಂಟೆಗೆ ಅಜ್ಜರಕಾಡಿನ ರೆಡ್ ಕ್ರಾಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ವಿವಿಧ ಕಾಲೇಜುಗಳ ರೆಡ್ಕ್ರಾಸ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ ಮತ್ತು ಸಿಪಿಆರ್ ಬಗ್ಗೆ ಮಾಹಿತಿಗಳನ್ನು ತಜ್ಞ ತರಬೇತುದಾರರು ನೀಡಲಿದ್ದಾರೆ ಎಂದು ರೆಡ್ ಕ್ರಾಸ್ ನ ಪ್ರಕಟಣೆ ತಿಳಿಸಿದೆ.
ಬ್ಯಾಂಕ್ ಆಫ್ ಬರೋಡಾದಿಂದ ಅಂತರರಾಷ್ಟ್ರೀಯ ಅಂಗವಿಕಲರ ದಿನಾಚರಣೆ
ಮುಂಬೈ, ಡಿ.4: ದೇಶದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಸ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಬ್ಯಾಂಕ್ ಅಬಿಲಿಟೀಸ್ ಭಿನ್ನ ಸಾಮರ್ಥ್ಯ ಹೊಂದಿರುವವರ ಸಾಮರ್ಥ್ಯಗಳ ಬ್ಯಾಂಕಿಂಗ್ ಎಂಬ ಥೀಮ್ನಡಿ ಅಂಗವಿಕಲರ ಅಂತರರಾಷ್ಟ್ರೀಯ ದಿನವನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಿತು. ಉದ್ಯೋಗಿಗಳು ಮತ್ತು ಸಮುದಾಯದೊಳಗೆ ಅಂಗವಿಕಲರ ಬಗ್ಗೆ ಅರಿವು, ಒಳಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಬ್ಯಾಂಕ್ಸ್ನ ಬದ್ಧತೆಯನ್ನು ಈ ಕಾರ್ಯಕ್ರಮ ಸಾರಿತು. ಬ್ಯಾಂಕ್ನ ಒಟ್ಟು ಕಾರ್ಯಬಲದ ಸುಮಾರು ಶೇ.3 ಪ್ರತಿನಿಧಿಸುವ 2,325ಕ್ಕೂ ಅಧಿಕ ಅಂಗವಿಕಲ ಉದ್ಯೋಗಿಗಳೊಂದಿಗೆ ಬ್ಯಾಂಕ್ ಆಫ್ ಬರೋಡಾ ಸುಲಭ ಪ್ರವೇಶಯೋಗ್ಯ ಕೆಲಸದ ಸ್ಥಳಗಳು, ಸಹಾಯಕ ಸಾಧನಗಳು, ಕಸ್ಟಮೈಸ್ಡ್ ಪಾತ್ರಗಳು ಹಾಗೂ ಸಮಾನ ಬೆಳವಣಿಗೆ ಅವಕಾಶಗಳನ್ನು ಒದಗಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕಿ ಬೀನಾ ವಹೀದ್ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ಸದಸ್ಯರಿಂದ ನಾಟಕ, ಪ್ರೇರಣಾದಾಯಕ ಅಂಗವಿಕಲ ಸಾಧಕಿ, ದೃಷ್ಟಿಹೀನ ಉದ್ಯಮಿ ಸುಶ್ಮೀತಾ ಬಿ. ಬುಬ್ನಾ ಹಾಗೂ ದೇಶೀಯ ವೀಲ್ಚೇರ್ ಬಾಸ್ಕೆಟ್ಬಾಲ್ ಗೋಲ್ಡ್ ಮೆಡಲಿಸ್ಟ್ ಪ್ರೇರಣಾ ಧೋನ್ ಅವರನ್ನು ಸನ್ಮಾನಿಸಲಾಯಿತು. ದೃಷ್ಟಿಹೀನರ ಬಳಗ ಬಾಂಸುರಿ ಬ್ಲಿಸ್ ಅವರ ಸಂಗೀತ ಕಾರ್ಯಕ್ರಮ ಹಾಗೂ ಭಿನ್ನ ಸಾಮರ್ಥ್ಯ ಕಲಾವಿದರಿಂದ ವಸ್ತುಗಳ ಪ್ರದರ್ಶನ ನಡೆಯಿತು.
ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣ: ಹನಿ ಬಾಬುಗೆ ಬಾಂಬೆ ಹೈಕೋರ್ಟ್ ಜಾಮೀನು
ಮುಂಬೈ: ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣದಲ್ಲಿ ಬಂಧಿತರಾದ ಐದು ವರ್ಷಗಳ ಬಳಿಕ ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಹನಿ ಬಾಬು ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಹಾಗೂ ರಂಜಿತ್ ಸಿನ್ಹ ಭೋಸ್ಲೆ ಅವರ ವಿಭಾಗೀಯ ಪೀಠ ಹನಿ ಬಾಬು ಅವರಿಗೆ ಜಾಮೀನು ನೀಡಿತು. ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಜಾಮೀನಿಗೆ ತಡೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮನವಿ ಮಾಡಿತು. ಆದರೆ, ಎನ್ಐಎಯ ಮನವಿಯನ್ನು ಉಚ್ಚ ನ್ಯಾಯಾಲಯ ನಿರಾಕರಿಸಿತು. ವಿಚಾರಣೆ ಇಲ್ಲದೆ, ತಾನು ಬಹು ಕಾಲದಿಂದ ಜೈಲಿನಲ್ಲಿದ್ದೇನೆ. ಆದುದರಿಂದ ಜಾಮೀನು ನೀಡುವಂತೆ ಹನಿ ಬಾಬು ಮನವಿ ಮಾಡಿದ್ದರು.
`ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ವಿಚಾರವಾಗಿ ತಮಾಷೆ ಬೇಡ': ರವಿಶಾಸ್ತ್ರಿ ಖಡಕ್ ಎಚ್ಚರಿಕೆ ನೀಡಿದ್ದು ಯಾರಿಗೆ?
Ravi Shastri Statement- ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಪದೇ ಪದೇ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಸಾಬೀತು ಪಡಿಸುತ್ತಿದ್ದರೂ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತ್ರ ನಿರಂತರ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಇಂತಹ ದೊಡ್ಡ ಆಟಗಾರರ ಜೊತೆ ಮಸ್ತಿ ಮಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ ಅವರು ಹೇಳಿದ್ದೇನು?
Bengaluru : ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರ ಅಳವಡಿಕೆ - 90 ನಿಮಿಷದಲ್ಲಿ ರೋಗಾಣು ಪತ್ತೆ
Advanced TB Detection Machine : ಕ್ಷಯರೋಗವನ್ನು ಪತ್ತೆಹಚ್ಚುವ ಅತ್ಯಾಧುನಿಕ ಮೆಷಿನ್ ಅನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಒಂದೊಂದು ಯಂತ್ರ ಸುಮಾರು ಒಂದೂವರೆ ಕೋಟಿ ರೂಪಾಯಿ ಮೊತ್ತದ್ದಾಗಿರುತ್ತದೆ ಎಂದು ಕರ್ನಾಟಕ ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹಸ್ತಪ್ರತಿ ಕಾಪಾಡಲು ಕಾನೂನು ರೂಪಿಸುವ ಅಗತ್ಯವಿದೆ : ಎಚ್.ಕೆ. ಪಾಟೀಲ್
ಬೆಂಗಳೂರು : ಮುಂದಿನ ಪೀಳಿಗೆಗೆ ಹಸ್ತಪ್ರತಿಗಳನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು, ಹಸ್ತಪ್ರತಿಗಳನ್ನು ಕಾಪಾಡಲು ಹೊಸ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಗುರುವಾರ ಇಲ್ಲಿನ ವೆಂಕಟಪ್ಪ ಚಿತ್ರಶಾಲೆ ಸಭಾಂಗಣದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಪ್ರಾಚ್ಯವಿದ್ಯಾ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯವು ಜಂಟಿಯಾಗಿ ಹಮ್ಮಿಕೊಳ್ಳಲಾದ ‘ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಮಾರಕಗಳನ್ನು ರಕ್ಷಣೆ ಮಾಡಲು ಕಾನೂನು ರೂಪಿಸಿದರೂ, ರಾಜ್ಯದಲ್ಲಿನ 25 ಸಾವಿರ ಸ್ಮಾರಕಗಳ ಪೈಕಿ ಕೇವಲ 800 ಸ್ಮಾರಕಗಳನ್ನು ರಕ್ಷಿಸಲಾಗಿದೆ. ಹೀಗಾಗಿ ಈ ಸರಕಾರ ಅವಧಿಯಲ್ಲಿ ಐದು ಸಾವಿರ ಸ್ಮಾರಕವನ್ನು ರಕ್ಷಿಸಬೇಕು ಎಂಬ ಗುರಿ ಹೊಂದಿದ್ದೇವೆ. ಆ ಮೂಲಕ ಸ್ಮಾರಕ ರಕ್ಷಣೆ ಮಾಡಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಹಸ್ತಪ್ರತಿಗಳನ್ನು ರಕ್ಷಣೆ ಮಾಡಲು ಸರಕಾರ ಗಮನ ನೀಡಲಿಲ್ಲ, ಪಂಡಿತರು ಒತ್ತಾಯ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿ ತಾಲೂಕಿನಲ್ಲಿ ಕನಿಷ್ಟ 50 ಹಸ್ತಪ್ರತಿಗಳು ಸಿಗಲಿವೆ, ಅವುಗಳನ್ನು ಸಂಗ್ರಹಿಸಬೇಕು. ಅಂದರೆ ಯಾರಿಂದಲೂ ಕಿತ್ತುಕೊಳ್ಳಬೇಕೆಂದಲ್ಲ, ಹಸ್ತಪ್ರತಿ ಇಟ್ಟುಕೊಂಡಿದ್ದಾರೆ ಅಂದರೆ ಸಂಸ್ಥೆ ಅಥವಾ ಮನೆಯವರಿಗೆ ಹಸ್ತಪ್ರತಿಗಳ ಮೇಲೆ ಸರಕಾರಕ್ಕಿಂತ ಆಸಕ್ತಿ, ಶದ್ಧೆಯನ್ನಿಟ್ಟುಕೊಂಡಿದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. ಹೀಗಾಗಿ ಅವರಿಂದ ಕಿತ್ತುಕೊಳ್ಳುವುದಿಲ್ಲ, ಅದನ್ನು ನಕಲು ಮಾಡಿ ಕೊಡಲಿ, ಇಲ್ಲದಿದ್ದರೆ ಸರಕಾರದಿಂದಲೇ ನಕಲು ಮಾಡಿ ಹಿಂತಿರುಗಿಸಲಾಗುವುದು ಎಂದು ಅವರು ತಿಳಿಸಿದರು. ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಹಾಗಾಗಿ ಪ್ರಸ್ತುತ 1 ಲಕ್ಷ ಹಸ್ತಪ್ರತಿಗಳನ್ನು ಸಂಗ್ರಹಣೆ ಮಾಡುವ ಗುರಿ ಹೊಂದಿದ್ದೇವೆ. ಆ ನಂತರ ಆ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಸರಕಾರದ ಕಾರ್ಯದರ್ಶಿ ಡಾ.ತ್ರಿಲೋಕ್ ಚಂದ್ರ ಕೆ.ವಿ ಸೇರಿದಂತೆ ಮತ್ತಿತರರು ಇದ್ದರು.
ಬಾಡಿಗೆ ಮನೆ ಹೊಸ ನಿಯಮ ಜಾರಿ: ಅಡ್ವಾನ್ಸ್, ಬಾಡಿಗೆ ಹೆಚ್ಚಳ ಕುರಿತು ಹಲವು ಮಹತ್ವದ ಬದಲಾವಣೆ! ಏನೆಲ್ಲಾ?
ಬಾಡಿಗೆ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ವರ್ಷದಿಂದ ಹಲವು ಮಹತ್ವದ ಬದಲಾವಣೆ ಆಗಲಿವೆ. ಕಡ್ಡಾಯ ಒಪ್ಪಂದ ಮಾಡಿಕೊಳ್ಳುವುದು, ಮನೆ ಅಡ್ವಾನ್ಸ್ ಆಗಿ 2 ತಿಂಗಳ ಬಾಡಿಗೆ ಮೊತ್ತ ಮಾತ್ರ ಪಡೆಯುವುದು, ಬಾಡಿಗೆ ಹೆಚ್ಚಳಕ್ಕೆ 3 ತಿಂಗಳ ಮುಂಚೆ ಮಾಹಿತಿ ನೀಡುವುದು ಸೇರಿದೆ. ಇದರಿಂದ ಬಾಡಿಗೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.
2023-24ರಲ್ಲಿ 67,615 ಆರ್ಟಿಐ ಅರ್ಜಿಗಳ ತಿರಸ್ಕಾರ: ಕೇಂದ್ರ ಸರಕಾರ
ಹೊಸದಿಲ್ಲಿ: 2023-24ರ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ 17.5 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಗುರುವಾರ ರಾಜ್ಯಸಭೆಗೆ ತಿಳಿಸಲಾಯಿತು. ಒಟ್ಟು 17,50,863 ಅರ್ಜಿಗಳ ಪೈಕಿ 67,615 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಮತ್ತು 14,30,031 ಅರ್ಜಿಗಳಿಗೆ ಉತ್ತರಿಸಲಾಗಿದೆ ಎಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. 2022-23ರ ಅವಧಿಯಲ್ಲಿ, 16,38,784 ಆರ್ಟಿಐ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆ ಪೈಕಿ, 52,662 ಅರ್ಜಿಗಳನ್ನು ತಿರಸ್ಕರಿಸಲಾಯಿತು ಮತ್ತು 13,15,222 ಅರ್ಜಿಗಳಿಗೆ ಉತ್ತರಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಬಳಕೆದಾರರನ್ನು ಖಚಿತಪಡಿಸಲು ಮತ್ತು ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ರಕ್ಷಿಸಲು ಜನವರಿ 2ರಂದು ಆರ್ಟಿಐ ಆನ್ಲೈನ್ ವೆಬ್ಸೈಟ್ನಲ್ಲಿ ‘ಒಂದು ಬಾರಿಯ ಪಾಸ್ವರ್ಡ್’ (ಒಟಿಪಿ) ವ್ಯವಸ್ಥೆಗೆ ಚಾಲನೆ ನೀಡಲಾಯಿತು ಎಂದು ಪ್ರತ್ಯೇಕ ಉತ್ತರದಲ್ಲಿ ಸಚಿವರು ತಿಳಿಸಿದರು.
ಡಿ.6ರಂದು ಬುದ್ದ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ: ಅನಿಲ್ ಬೆಲ್ದಾರ್
ಬೀದರ್ : ಡಿ.6 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ವಿಶ್ವಜ್ಞಾನಿ, ಮಹಾಮಾನವತವಾದಿ, ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನಾಚರಣೆ ಪ್ರಯುಕ್ತ 'ಬುದ್ಧ ಭಾರತ ನಿರ್ಮಾಣ ಹಾಗೂ ಸಂಕಲ್ಪ ಸಮಾವೇಶ' ಆಯೋಜಿಸಲಾಗಿದೆ ಎಂದು ದಲಿತ ಮುಖಂಡ ಅನಿಲ್ ಬೆಲ್ದಾರ್ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಬೆಲ್ದಾರ್, ಕಾರ್ಯಕ್ರಮದಲ್ಲಿ ಅಣದೂರಿನ ವೈಶಾಲಿನಗರದ ಭಂತೆ ಜ್ಞಾನಸಾಗರ್ ಥೇರೊ, ಬೌದ್ದ ಭಿಕ್ಕುಗಳು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್, ಬಂಡೆಪ್ಪ ಖಾಶೆಂಪುರ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಗಿರೀಶ್ ಬದೋಲೆ, ಎಸ್ಪಿ ಪ್ರದೀಪ್ ಗುಂಟಿ ಭಾಗವಹಿಸುವರು. ಖ್ಯಾತ ಚಿಂತನಕಾರ್ತಿ ಕೆ.ನೀಲಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿಲ್ಲೆಯ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು, ಬೌದ್ದ ಉಪಾಸಕ, ಉಪಾಸಕಿಯರು, ಸಮಾಜದ ಚಿಂತಕರು, ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು, ದಲಿತ ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಹೇಳಿದರು. 69ನೇ ಪರಿನಿಬ್ಬಾಣ ಕಾರ್ಯಕ್ರಮದ ಅಧ್ಯಕ್ಷ ರಮೇಶ್ ಡಾಕುಳಗಿ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಜನ ಸಮುದಾಯಗಳ ವಿಮೋಚನೆಗಾಗಿ ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಹೋರಾಡಿ ತಮ್ಮ ಜೀವವನ್ನೇ ಸಮರ್ಪಿಸಿದ್ದಾರೆ. ಅಸ್ಪಶ್ಯತೆ, ಅಪಮಾನ, ಕೀಳರಿಮೆ, ಜಾತಿ ಪದ್ದತಿ, ಲಿಂಗಬೇಧ, ಧಾರ್ಮಿಕ ಮೂಢ ನಂಬಿಕೆ, ಭ್ರಷ್ಟಚಾರ, ಅಸಮಾನತೆಯಿಂದ ನೊಂದು, ಅಂಬೇಡ್ಕರ್ ಅವರು ಅ. 14, 1956ರಂದು ನಾಗಪುರದಲ್ಲಿ ತಮ್ಮ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧಧಮ್ಮ ಸ್ವೀಕರಿಸಿದ್ದರು ಎಂದು ವಿವರಿಸಿದರು. ಡಾ. ಅಂಬೇಡ್ಕರ್ ಅವರು ಕಂಡ ಸಮಾನತೆಯ ಕನಸನ್ನು ನನಸು ಮಾಡಲು ನಾವೆಲ್ಲರೂ ಸೇರಿ ಸಂಕಲ್ಪ ಮಾಡೋಣ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಅನುಯಾಯಿಗಳು, ದಲಿತ, ಶೋಷಿತ, ಹಿಂದುಳಿದ ವರ್ಗದವರು, ಧಾರ್ಮಿಕ ಅಲ್ಪಸಂಖ್ಯಾತರು, ಜನಪರ ಸಂಘಟನೆಯ ಮುಖಂಡರು ಹಾಗೂ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಗೋರನಾಳಕರ್, ಸಮಿತಿಯ ಪದಾಧಿಕಾರಿಗಳಾದ ಬಾಬುರಾವ್ ಪಾಸ್ವಾನ್, ಡಾ.ಕಾಶಿನಾಥ್ ಚಲ್ವಾ, ಶ್ರೀಪತರಾವ್ ದೀನೆ, ರಮೇಶ್ ಮಂದಕನಳ್ಳಿ, ಶಿವಕುಮಾರ್ ನೀಲಿಕಟ್ಟಿ, ಪ್ರಕಾಶ್ ಮಾಳಗೆ, ಸಂದೀಪ್ ಕಾಂಟೆ ಹಾಗೂ ಪ್ರದೀಪ್ ನಾಟೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು : ಸೈಬರ್ ವಂಚನೆ ಪ್ರಕರಣದ ಆರೋಪಿಯನ್ನು ವಿಚಾರಣೆಗೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಬಂದಿದ್ದ ವೇಳೆ, ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ನಗದನ್ನು ಪೊಲೀಸ್ ಸಿಬ್ಬಂದಿಯೊಬ್ಬ ಕಳ್ಳತನ ಮಾಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಜಬಿವುಲ್ಲಾ ಎಂಬಾತನೇ ಕಳ್ಳತನ ಕೃತ್ಯ ಎಸಗಿದ ಪೊಲೀಸ್ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಈತ ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಸೈಬರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿತ್ತು. ಆರೋಪಿ ಜೊತೆಗೆ ಆತನ ಕಾರನ್ನು ಸಿಸಿಬಿ ಅಧಿಕಾರಿಗಳು ನಗರ ಪೊಲೀಸ್ ಆಯುಕ್ತರ ಕಚೇರಿ ತೆಗೆದುಕೊಂಡು ಬಂದಿದ್ದರು. ಈ ವೇಳೆ ಕಾರಿನಲ್ಲಿ 11 ಲಕ್ಷ ರೂ. ಹಣವಿತ್ತು. ಆರೋಪಿಯನ್ನು ಪೊಲೀಸ್ ಆಯುಕ್ತರ ಕಚೇರಿಯೊಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಹೊರಗಡೆ ಕಾರಿನಲ್ಲಿದ್ದ 11 ಲಕ್ಷ ಹಣವನ್ನು ಹೆಡ್ ಕಾನ್ಸ್ಟೇಬಲ್ ಜಬಿವುಲ್ಲಾ ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ, ಸೈಬರ್ ಪ್ರಕರಣದ ಆರೋಪಿಯನ್ನು ಬಂಧಿಸಿದ್ದ ಇನ್ಸ್ಪೆಕ್ಟರ್ ಉಮೇಶ್ ಮತ್ತು ತಂಡ ಆತನನ್ನ ಜೈಲಿಗೆ ಕಳುಹಿಸಿತ್ತು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ತನ್ನ ಕಾರಿನಲ್ಲಿ ಇದ್ದ ಹಣದ ಬ್ಯಾಗ್ ನಾಪತ್ತೆ ಆಗಿರುವುದರ ಬಗ್ಗೆ ಸೈಬರ್ ಪೊಲೀಸರ ಬಳಿ ಪ್ರಶ್ನಿಸಿದ್ದಾನೆ ಎನ್ನಲಾಗಿದೆ. ಆರೋಪಿಯ ಪ್ರಶ್ನೆಗೆ ಗಾಬರಿಗೊಂಡು ಪರಿಶೀಲನೆ ಮಾಡಿದಾಗ ಕಾರಿನಲ್ಲಿದ್ದ ಹಣವನ್ನು ಹೆಡ್ ಕಾನ್ಸ್ಟೇಬಲ್ ಜಬೀವುಲ್ಲಾ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಹಣ ಕಳೆದುಕೊಂಡ ವ್ಯಕ್ತಿಯಿಂದ ದೂರನ್ನು ಪಡೆದುಕೊಂಡು ಹೆಡ್ ಕಾನ್ಸ್ಟೇಬಲ್ ಜಬೀವುಲ್ಲಾನ ಮನೆ ಸರ್ಚ್ ಮಾಡಲು ಸಿಸಿಬಿ ಅಧಿಕಾರಿಗಳು ತೆರಳಿದಾಗ ಮನೆಯ ಬಳಿ ಜಬೀವುಲ್ಲಾ ಹೈಡ್ರಾಮಾ ಮಾಡಿದ್ದಾನೆ ಎನ್ನಲಾಗಿದೆ. ಕಳ್ಳತನದ ಬಗೆಗೆ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದಾನೆ. ಮನೆಯೊಳಗೆ ಸಿಸಿಬಿ ಅಧಿಕಾರಿಗಳನ್ನು ಬಿಡದೆ ಗಲಾಟೆ ಮಾಡಿದ್ದಾನೆ. ಕೊನೆಗೆ ಜಬೀವುಲ್ಲಾನನ್ನು ತಡೆದು ಮನೆ ಸರ್ಚ್ ಮಾಡಿದಾಗ ತನ್ನ ಕೋಣೆಯ ಹಾಸಿಗೆ ಕೆಳಗೆ ಒಂದಷ್ಟು ಹಣ ಪತ್ತೆಯಾಗಿದೆ. ಅಲ್ಲದೇ, ಕಳವು ಮಾಡಿದ ಹಣದಿಂದಲೇ ಪತ್ನಿಗೆ ಚಿನ್ನಾಭರಣಗಳನ್ನೂ ಕೊಡಿಸಿದ್ದ ಎನ್ನಲಾಗಿದೆ. ಸದ್ಯ ಹೆಡ್ ಕಾನ್ಸ್ಟೇಬಲ್ ಜಬಿವುಲ್ಲಾನಿಂದ 2 ಲಕ್ಷ ರೂ. ಹಣ ವಾಪಸ್ ಪಡೆಯಲಾಗಿದ್ದು, ಉಳಿದ ಹಣವನ್ನು ತಕ್ಷಣವೇ ಹಿಂತಿರುಗಿಸುವಂತೆ ಸಿಸಿಬಿ ಹಿರಿಯ ಅಧಿಕಾರಿಗಳು ಆದೇಶ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್. ರೈಲು ಕಾಯುವ ಅವಧಿಯನ್ನು ಇಳಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ಪ್ರತಿ 4 ನಿಮಿಷಕ್ಕೊಂದು ರೈಲು ಓಡಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ಬಿಇಎಂಎಲ್ ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಹಳದಿ ಮಾರ್ಗಕ್ಕಾಗಿ ಹೆಚ್ಚುವರಿ ಆರು ರೈಲುಗಳನ್ನು ನೀಡುವ ಗುತ್ತಿಗೆ ನೀಡಿದೆ. ಈ ಬಗ್ಗೆ ವಿವರ ಇಲ್ಲಿದೆ.
ಬೀದರ್| ಬಸವಕಲ್ಯಾಣ ತಾಲೂಕು ಪಂಚಾಯತ್ ಕೆಡಿಪಿ ಸಭೆ ಪೂರ್ಣಗೊಳಿಸಲು ಮನವಿ
ಬೀದರ್ : ನ. 28ರಂದು ಬಸವಕಲ್ಯಾಣ ತಾಲೂಕು ಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆಯು ಅಪೂರ್ಣವಾಗಿ ಕೊನೆಗೊಂಡಿದೆ. ಆದ್ದರಿಂದ ಇನ್ನೊಂದು ದಿನಾಂಕ ನಿಗದಿಪಡಿಸಿ ಕೆಡಿಪಿ ಸಭೆಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಬಸವಕಲ್ಯಾಣ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ನ.28ರಂದು ಬಸವಕಲ್ಯಾಣ ತಾಲೂಕು ಪಂಚಾಯತ್ ನಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಾಲೂಕಿನ 45 ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಬೇಕಿತ್ತು. ಆದರೆ 45 ಇಲಾಖೆಗಳ ಪೈಕಿ ಕೇವಲ 7 ಇಲಾಖೆಗಳ ಪ್ರಗತಿ ಪರಿಶಿಲನೆ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕೆಡಿಪಿ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದೂಡಿದ ಕಾರಣ, ಇನ್ನುಳಿದ ಇಲಾಖೆಗಳ ಪ್ರಗತಿ ಪರಿಶಿಲನೆ ಬಗ್ಗೆ ಚರ್ಚೆ ಮಾಡಲಿಲ್ಲ. ಆದ್ದರಿಂದ ಇನ್ನೊಂದು ದಿನಾಂಕ ನಿಗದಿಪಡಿಸಿ ಇನ್ನುಳಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸಿದ್ದರಾಮ್ ಕಾಮಣ್ಣ, ಆನಂದ್ ಪಾಟೀಲ್, ವಿಶ್ವನಾಥ್ ಕಾಂಬಳೆ, ಶಿವಕುಮಾರ್ ಶಟಕಾರ್, ಅನ್ನಪೂರ್ಣಬಾಯಿ, ಸೈಯ್ಯದ್ ನವಾಜ್ ಖಾಜಿ ಹಾಗೂ ಸಂದೀಪ್ ಬುಯೇ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಿಸಿಎಂ ಡಿಕೆ ಶಿವಕುಮಾರ್ ಹಿಂಬಾಲಕರ ವಿರುದ್ಧ ಭೂಕಬಳಿಕೆ ಆರೋಪ; ನಕಲಿ ದಾಖಲೆ ಸೃಷ್ಟಿಸಿ ಅಕ್ರಮ, ಅಧಿಕಾರಿಗಳು ಶಾಮೀಲು?
ಡಿಸಿಎಂ ಡಿ.ಕೆ. ಶಿವಕುಮಾರ್ ಹಿಂಬಾಲಕರು ವಿರುದ್ಧ ಸದ್ಯ ಗಂಭೀರ ಆರೋಪ ಕೇಳಿಬಂದಿದೆ.ರಾಮನಗರದ ಹಾರೋಹಳ್ಳಿಯಲ್ಲಿ ಎರಡು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ಕಾರಿ ಜಮೀನು ಕಬಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹಾರೋಹಳ್ಳಿಯ ತಹಶೀಲ್ದಾರ್ ಅಮಾನತುಗೆ ಆಗ್ರಹಿಸಿದ್ದಾರೆ.
ರಬ್ಬರ್ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರ
ಬೆಂಗಳೂರು : ರಬ್ಬರ್ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಕೇಂದ್ರ ಸರಕಾರವು ರಬ್ಬರ್ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಮಾಡಲು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಪ್ರಯತ್ನಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ. ಗುರುವಾರ ಕೇಂದ್ರ ಸಚಿವರಾದ ವಿ.ಸೋಮಣ್ಣ, ಪ್ರಹ್ಲಾದ್ ಜೋಷಿ, ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದಿರುವ ಅವರು, ರಬ್ಬರ್ ಬೆಳೆಗಾರರ ಸಂಕಷ್ಟಕಾಲದಲ್ಲಿ ತಾವು ತಕ್ಷಣವೇ ವೈಯಕ್ತಿಕವಾಗಿ ಸ್ಪಂದಿಸಿ, ದಿಲ್ಲಿಯಲ್ಲಿ ರಾಜ್ಯದ ಪಕ್ಷಾತೀತ ಪ್ರತಿನಿಧಿಗಳಾಗಿ ರಬ್ಬರ್ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಮಾಡಬೇಕು ಎಂದಿದ್ದಾರೆ. ಕೇಂದ್ರ ಸರಕಾರವು ವಾಣಿಜ್ಯ ಬೆಳೆ ಎಂಬ ಕಾರಣ ನೀಡಿ ರಬ್ಬರನ್ನು ಕನಿಷ್ಟ ಬೆಂಬಲ ಬೆಲೆ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಹೀಗಾಗಿ ರಾಜ್ಯದ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಗಾರರ ಬವಣೆಗಳ ಬಗ್ಗೆ ಕೇಂದ್ರದ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಗೋಯಲ್ ಅವರ ಗಮನ ಸೆಳೆಯಲು ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 1947ರ ಭಾರತೀಯ ರಬ್ಬರ್ ಕಾಯ್ದೆಯಂತೆ ರಬ್ಬರ್ ಉದ್ಯಮದ ಸಮಗ್ರ ಮತ್ತು ಏಕೀಕೃತ ನಿಯಂತ್ರಣ ಕೇಂದ್ರ ಸರಕಾರಕ್ಕೆ ಇದ್ದು, ಇದರಲ್ಲಿ ರಾಜ್ಯಗಳಿಗೆ ಹಸ್ತಕ್ಷೇಪ ಮಾಡುವ ಯಾವ ಅವಕಾಶವೂ ಇರುವುದಿಲ್ಲ. ಬೆಂಬಲ ಬೆಲೆ ಸೇರಿ ರಬ್ಬರ್ ಉದ್ಯಮದ ಬಗ್ಗೆ ಎಲ್ಲ ನಿರ್ಣಯಗಳನ್ನೂ ಕೇಂದ್ರ ಸರಕಾರವೇ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ರಬ್ಬರ್ ಬೆಳೆಗಾರರು ಎಲ್ಲ ಸಂಕಷ್ಟಗಳಿಗೂ ಕೇಂದ್ರ ಸರಕಾರವನ್ನು ಮಾತ್ರ ಆಶ್ರಯಿಸಬೇಕಿದೆ ಎಂದು ಅವರು ವಿವರಿಸಿದ್ದಾರೆ. ಕುಗ್ಗಿದ ಬೇಡಿಕೆ, ಹೊರದೇಶಗಳಿಂದ ಆಮದಾಗುವ ಕಡಿಮೆ ಬೆಲೆಯ ನೈಸರ್ಗಿಕ ರಬ್ಬರ್, ಹೇರಳವಾಗಿ ಲಭ್ಯವಾಗುವ ಕೃತಕ ರಬ್ಬರ್, ನಾಮಮಾತ್ರಕ್ಕೆ ಇರುವ ಕೇಂದ್ರ ಸರಕಾರದ ಸಂಶೋಧನಾ ಕೇಂದ್ರ, ಇಳಿಯುತ್ತಿರುವ ಮಾರುಕಟ್ಟೆ ಖರೀದಿ ದರ ಮುಂತಾದವುಗಳ ಮಧ್ಯೆ ಹಣ್ಣಾಗುತ್ತಿರುವ ರಬ್ಬರ್ ಬೆಳೆಗಾರರಿಗೆ ಪ್ರಜಾಪ್ರತಿನಿಧಿ ಮತ್ತು ಕೇಂದ್ರದ ಸಚಿವರಾಗಿ ನಿಮ್ಮ ನೆರವಿನ ಅಗತ್ಯ ಇದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೇಂದ್ರ ಸರಕಾರದ ಅಧೀನದ ಕೃಷಿ ವೆಚ್ಚ ಮತ್ತು ಧಾರಣೆ ಆಯೋಗ(ಸಿಎಸಿಪಿ) ತಕ್ಷಣ ನೈಸರ್ಗಿಕ ರಬ್ಬರಿಗೆ ಬೆಂಬಲ ಬೆಲೆ ಘೋಷಿಸಬೇಕು. ಜೊತೆಗೆ ಈಗಾಗಲೇ ಜಾರಿಯಲ್ಲಿರುವ ರಾಷ್ಟ್ರೀಯ ರಬ್ಬರ್ ನೀತಿಯಂತೆ ನೂತನ ತಂತ್ರಜ್ಞಾನ, ರಫ್ತು ಮಾರುಕಟ್ಟೆ, ಹೊಸ ಬಳಕೆಗಳ ಆವಿಷ್ಕಾರಗಳನ್ನು ಪೂರೈಸುವಂತೆ ಮಾಡಲು ಕೇಂದ್ರ ವಾಣಿಜ್ಯ ಇಲಾಖೆಯಲ್ಲಿ ತಮ್ಮ ಪ್ರಭಾವವನ್ನು ಬಳಸಬೇಕು ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಅಮೆರಿಕದಿಂದ ಈ ವರ್ಷ 3258 ಭಾರತೀಯರ ಗಡಿಪಾರು: ರಾಜ್ಯಸಭೆಗೆ ಸಚಿವ ಜೈಶಂಕರ್ ಮಾಹಿತಿ
ವಾಶಿಂಗ್ಟನ್: ಈ ವರ್ಷದಲ್ಲಿ 3258 ಮಂದಿ ಸೇರಿದಂತೆ, ಅಮೆರಿಕವು 2009ರಿಂದೀಚೆಗೆ ಸುಮಾರು 18,822 ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಿದೆ ಎಂದು ಕೇಂದ್ರ ಸರಕಾರ ಗುರುವಾರ ತಿಳಿಸಿದೆ. ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿ ಸಂದರ್ಭ ವಿದೇಶಾಂಗ ವ್ಯವಹಾರಗಳಸಚಿವ ಎಸ್.ಜೈಶಂಕರ್ ಈ ಮಾಹಿತಿಯನ್ನು ನೀಡಿದ್ದಾರೆ. ವಿದೇಶಗಳಿಗೆ ಮಾನವಕಳ್ಳಸಾಗಣೆಯ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ತನಿಖೆಯನ್ನು ನಡೆಸುತ್ತಿದೆ. ಪಂಜಾಬ್ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾನವಕಳ್ಳಸಾಗಣೆಯ ಪ್ರಕರಣಗಳು ವರದಿಯಾಗಿವೆ ಎಂದವರು ಸದನಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 2023ರಲ್ಲಿ 617 ಹಾಗೂ2024ರಲ್ಲಿ 1368 ಮಂದಿ ಭಾರತೀಯರು ಅಮೆರಿಕದಿಂದ ಗಡಿಪಾರಾಗಿದ್ದಾರೆಂದು ಅವರು ತಿಳಿಸಿದರು. ‘‘2025ರ ಜನವರಿಯಿಂದೀಚೆಗೆ ಒಟ್ಟು 3258 ಮಂದಿ ಭಾರತೀಯರನ್ನು ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಅವರಲ್ಲಿ 2032 ಮಂದಿಯನ್ನು ನಿಯಮಿತವಾದ ವಾಣಿಜ್ಯ ವಿಮಾನಗಳಲ್ಲಿ ಗಡಿಪಾರು ಮಾಡಲಾಗಿದ್ದರೆ, ಉಳಿದ 1226 (37.6 ಶೇ.) ಮಂದಿ ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ ಇಲಾಖೆ (ಐಸಿಇ) ಅಥವಾ ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ಸಂರಕ್ಷಣಾ ಇಲಾಖೆ (ಸಿಬಿಪಿ)ಯ ವಿಮಾನಗಳಲ್ಲಿ ಸ್ವದೇಶಕ್ಕೆ ಆಗಮಿಸಿದ್ದಾರೆ’’ ಎಂದು ಸಚಿವರು ಹೇಳಿದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೇಶಾದ್ಯಂತ 27 ಮಾನವಕಳ್ಳಸಾಗಣೆಯ ಪ್ರಕರಣಗಳನ್ನು ದಾಖಲಿಸಿಕೊಂಡು,ತನಿಖೆ ನಡೆಸಿದೆ. ಈ ಸಂಬಂಧವಾಗಿ 169 ಮಂದಿಯನ್ನು ಬಂಧಿಸಿದ್ದು, 132 ವ್ಯಕ್ತಿಗಳ ವಿರುದ್ಧ ದೋಷಾರೋಪ ದಾಖಲಿಸಿದೆ. ಎನ್ಐಎ ಆಗಸ್ಟ್ 7ರಂದು ಹರ್ಯಾಣ ಹಾಗೂ ಪಂಜಾಬ್ನಲ್ಲಿ ಇಬ್ಬರು ಪ್ರಮುಖ ಮಾನವಕಳ್ಳಸಾಗಣೆದಾರರನ್ನು ಮತ್ತು ಆನಂತರ ಆಕ್ಟೋಬರ್ 2ರಂದು ಹಿಮಾಚಲಪ್ರದೇಶದಲ್ಲಿ ಇನ್ನಿಬ್ಬರನ್ನು ಬಂಧಿಸಿದೆ. ಪಂಜಾಬ್ನಲ್ಲಿ ಗರಿಷ್ಠ ಮಾನವಕಳ್ಳಸಾಗಣೆಯ ಪ್ರಕರಣಗಳು ವರದಿಯಾಗಿದ್ದು, ರಾಜ್ಯ ಸರಕಾರವು ಈ ನಿಟ್ಚಿನಲ್ಲಿ ವಿಶೇಷ ತನಿಖಾ ತಂಡ ಹಾಗೂ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. 58 ಮಂದಿ ಅಕ್ರಮ ಏಜೆಂಟರ ವಿರುದ್ಧ 25 ಎಫ್ಐಆರ್ ದಾಖಲಾಗಿದ್ದರೆ, 16 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಗಡಿಪಾರುಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಗಡಿಪಾರುಗೊಂಡವರನ್ನು ಮಾನವೀಯವಾಗಿ ನಡೆಸಿಕೊಳ್ಳುವುದನ್ನು ಖಾತರಿಪಡಿಸಲು ವಿದೇಶಾಂಗ ಸಚಿವಾಲಯವು ಅಮೆರಿಕದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ. ಗಡಿಪಾರುಗೊಂಡವರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಕೋಳಗಳನ್ನು ತೊಡಗಿಸಲಾಗುತ್ತಿರುವ ಬಗ್ಗೆ ತನ್ನ ಸಚಿವಾಲಯವು ತನ್ನ ಗಾಢವಾದ ಕಳವಳವನ್ನು ವ್ಯಕ್ತಪಡಿಸಿದೆ ಎಂದು ಜೈಶಂಕರ್ ಸದನಕ್ಕೆ ತಿಳಿಸಿದರು.
ಎಸ್ಐಆರ್ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಆದೇಶ
ಬಿಎಲ್ಒಗಳ ಕಾರ್ಯಒತ್ತಡ ಕಡಿಮೆಗೊಳಿಸಲು ಕ್ರಮ
ಅದಾನಿ ಗ್ರೂಪ್ ಕಂಪನಿಗಳಲ್ಲಿ ಎಲ್ಐಸಿಯಿಂದ 48,284 ಕೋಟಿ ರೂ. ಹೂಡಿಕೆ: ಸಂಸತ್ತಿಗೆ ತಿಳಿಸಿದ ಕೇಂದ್ರ ಸರ್ಕಾರ
ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಅದಾನಿ ಗ್ರೂಪ್ ನ ವಿವಿಧ ಕಂಪನಿಗಳಲ್ಲಿ ಒಟ್ಟು 48,284.62 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಎಲ್ಐಸಿಯ ಹಣವನ್ನು ಬಳಸಿ ಅದಾನಿ ಗುಂಪನ್ನು ಸಾಲದ ಸುಳಿಯಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯೋಜನೆ ರೂಪಿಸಿದೆ ಎಂಬ ವರದಿ ಬೆಳಕಿಗೆ ಬಂದ ಕೆಲ ವಾರಗಳ ಬಳಿಕ ಈ ವಿವರ ಹೊರಬಿದ್ದಿದೆ. ಸಚಿವರ ಪ್ರಕಾರ, ಸೆಪ್ಟೆಂಬರ್ 30ರವರೆಗೆ ಲಭ್ಯವಿರುವ ಡೇಟಾ ಆಧಾರದಲ್ಲಿ, ಎಲ್ಐಸಿಯ ಹೂಡಿಕೆಗಳಲ್ಲಿ ಈಕ್ವಿಟಿಯಲ್ಲಿ 38,658.85 ಕೋಟಿ ರೂಪಾಯಿ ಮತ್ತು ಸಾಲವಾಗಿ 9,625.77 ಕೋಟಿ ರೂಪಾಯಿ ಸೇರಿವೆ. ಜೊತೆಗೆ, ಎಲ್ಐಸಿ ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಇಕನಾಮಿಕ್ ಝೋನ್(APSEZ) ಹೊರಡಿಸಿದ 5,000 ಕೋಟಿ ರೂಪಾಯಿ ಸುರಕ್ಷಿತ ಪರಿವರ್ತಿಸಲಾಗದ ಡಿಬೆಂಚರ್ಗಳನ್ನು ಖರೀದಿಸಿದೆ. ಸಂಸದರಾದ ಮುಹಮ್ಮದ್ ಜಾವೇದ್ ಮತ್ತು ಮಹುವಾ ಮೊಯಿತ್ರಾ ಅವರು ಕೇಳಿದ ಪ್ರಶ್ನೆಗೆ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದ್ದು, ಎಲ್ಐಸಿಗೆ ಹೂಡಿಕೆ ಕುರಿತಂತೆ ಸರ್ಕಾರ ಅಥವಾ ಡಿಎಫ್ಎಸ್ ಯಾವುದೇ ನಿರ್ದೇಶನ ನೀಡಿಲ್ಲ. ಹೂಡಿಕೆ ನಿರ್ಧಾರಗಳು ಎಲ್ಐಸಿಯೇ ಅನುಸರಿಸುವ ಸರಿಯಾದ ಶ್ರದ್ಧೆ, ಅಪಾಯ ಮೌಲ್ಯಮಾಪನ ಮತ್ತು ವೈಧಾನಿಕ ಅನುಸರಣೆಯ ಪ್ರಕ್ರಿಯೆಗಳ ಆಧಾರದಲ್ಲೇ ತೆಗೆದುಕೊಳ್ಳಲಾಗುತ್ತವೆ ಎಂದು ಉತ್ತರಿಸಿದೆ. ಹೂಡಿಕೆಗಳನ್ನು ವಿಮೆ ಕಾಯಿದೆ – 1938 ಮತ್ತು ಐಆರ್ಡಿಎಐ, ಆರ್ಬಿಐ, ಸೆಬಿ ಹೊರಡಿಸುವ ನಿಯಮಾವಳಿ ನಿಯಂತ್ರಿಸುತ್ತವೆ. ಎಲ್ಐಸಿಯ ಹೂಡಿಕೆ ಕಾರ್ಯಗಳು ಸಮಕಾಲೀನ, ಶಾಸನಬದ್ಧ, ಸಿಸ್ಟಮ್ ಲೆಕ್ಕಪರಿಶೋಧಕರು, ಐಎಫ್ಸಿ ತಂಡ ಮತ್ತು ವಿಜಿಲೆನ್ಸ್ ಘಟಕಗಳಿಂದ ಪರಿಶೀಲನೆಯಾಗುತ್ತವೆ. ಜೊತೆಗೆ, ಐಆರ್ಡಿಎಐ ಕೂಡ ನಿಯತಕಾಲಿಕ ಪರಿಶೀಲನೆಗಳನ್ನು ನಡೆಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಎಲ್ಐಸಿ ಹೂಡಿಕೆ ಮಾಡಿರುವ ಎಲ್ಲಾ ಖಾಸಗಿ ಕಂಪೆನಿಗಳ ವಿವರ ಕೇಳಿದಾಗ, ಸರ್ಕಾರ “ಅಂತಹ ಸಮಗ್ರ ಪಟ್ಟಿ ಒದಗಿಸುವುದು ವಾಣಿಜ್ಯಿಕವಾಗಿ ಸೂಕ್ತವಲ್ಲ ಮತ್ತು ಮಾರುಕಟ್ಟೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಸ್ಪಷ್ಟಪಡಿಸಿದೆ. ಎಲ್ಐಸಿಯ ಹೂಡಿಕೆಗಳು ಅದಾನಿ ಗ್ರೂಪ್ ನ ಏಳು ಕಂಪೆನಿಗಳಾದ ಅದಾನಿ ಎಂಟರ್ಪ್ರೈಸಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸೊಲ್ಯೂಷನ್ಸ್, ಎಪಿಎಸ್ಇಝಡ್, ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಗಳಲ್ಲಿ ಹರಡಿಕೊಂಡಿವೆ. ಅದಾನಿ ಪೋರ್ಟ್ಸ್ ಎಲ್ಐಸಿಯ ಖಾಸಗಿ ವಲಯದಲ್ಲಿ ಐದನೇ ಅತಿ ಹೆಚ್ಚು ಸಾಲ ಹೂಡಿಕೆ ಪಡೆದ ಕಂಪೆನಿ ಎಂದು ಸರ್ಕಾರ ತಿಳಿಸಿದೆ. ಮಾರುಕಟ್ಟೆ ಹೂಡಿಕೆಗಳ ಹಿನ್ನೆಲೆಯಲ್ಲಿ, NSE–BSE ಪಟ್ಟಿ ಟಾಪ್ 500 ಕಂಪೆನಿಗಳಲ್ಲೇ ಎಲ್ಐಸಿಯ ಹೆಚ್ಚಿನ ಹೂಡಿಕೆ ಇರುತ್ತದೆ. ನಿಫ್ಟಿ 50 ಕಂಪೆನಿಗಳಲ್ಲಿನ ಎಲ್ಐಸಿಯ ಹೂಡಿಕೆಗಳ ಪುಸ್ತಕ ಮೌಲ್ಯ 4,30,776.97 ಕೋಟಿ ರೂಪಾಯಿ ಆಗಿದೆ. ಇದು ಸಂಸ್ಥೆಯ ಒಟ್ಟು ಈಕ್ವಿಟಿ ಹೂಡಿಕೆಯ 45.85% ಆಗಿದೆ ಎಂದು ತಿಳಿದು ಬಂದಿದೆ.
ಡಿ.7ರಂದು ಬಸವಕಲ್ಯಾಣದಲ್ಲಿ ಸೂಫಿ ಸಂತ ಸಮ್ಮೇಳನ: ಸಲೀಂ ಅಹಮ್ಮದ್
ಬೀದರ್ : ಡಿ.7ರಂದು ಶರಣರ ನಾಡು ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ ಸಂತರ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಲೀಂ ಅಹಮ್ಮದ್, ಡಿ. 7 ರ ಸಾಯಂಕಾಲ 6 ಗಂಟೆಗೆ ಬಸವಕಲ್ಯಾಣದ ಅಲ್ಫಾ ಕಾಲೋನಿಯ ಮೈದಾನದಲ್ಲಿ ಸೂಫಿ ಸಂತರ ಸಮಾವೇಶ ಆಯೋಜಿಸಲಾಗಿದೆ. ಪ್ರವಾದಿಯವರ 1,500ನೇ ವಾರ್ಷಿಕೋತ್ಸವ ಆಚರಣೆ ಈಗಾಗಲೇ ಹುಬ್ಬಳ್ಳಿ ಮತ್ತು ಕೊಪ್ಪಳದಂತಹ ನಗರಗಳಲ್ಲಿ ಆಚರಿಸಲಾಗಿದ್ದು ಇದು ಮೂರನೇ ಸಮಾವೇಶವಾಗಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಖ್ಯಾತಿಯ ಮೌಲಾನಾ ಮುಹಮ್ಮದ್ ಒಬೈದುಲ್ಲಾ ಖಾನ್ ಆಝ್ಮಿ, ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ, ಮಂಡಳಿಯ ಸದಸ್ಯ ಮೌಲಾನಾ ಅಬು ತಾಲಿಬ್ ರಹಮಾನಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಕ್ಫ ಕಮಿಟಿ ಅಧ್ಯಕ್ಷ ಹಾಗೂ ಹಜರತ್ ಹಫೀಜ್ ಅಲಿ ಮುಹಮ್ಮದ್ ಅಲ್ ಹುಸೈನಿ, ಖ್ವಾಜಾ ಬಂದೆ ನವಾಜ್ ದರ್ಗಾದ ಸಜ್ಜಾದಾ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಎಂಎಲ್ಸಿ ಅರವಿಂದಕುಮಾರ್ ಅರಳಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸಿರ್ ಹುಸೇನ್, ಉತ್ತರ ಪ್ರದೇಶದ ಉಸ್ತುವಾರಿ ಸಂಸದ ಇಮ್ರಾನ್ ಮಸೂದ್, ತೆಲಂಗಾಣದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹಮ್ಮದ್ ಅಝರೋದ್ದೀನ್ ಮತ್ತು ಕೆ ಕೆ ಆರ್ ಡಿ ಬಿ ಅಧ್ಯಕ್ಷ ಮತ್ತು ಶಾಸಕ ಡಾ. ಅಜಯ್ ಸಿಂಗ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಸೂಫಿ ಸಂತರ ಸಮಾವೇಶ ಕಾರ್ಯಕ್ರಮವು ಈಗಾಗಲೇ ಹುಬ್ಬಳ್ಳಿ ಹಾಗೂ ಕೊಪ್ಪಳದಲ್ಲಿ ಯಶಸ್ವಿಯಾಗಿ ನಡೆದಿದೆ. ಈಗ ನಮ್ಮ ಶರಣರ ನಾಡು ಬಸವಕಲ್ಯಾಣದಿಂದ ನಾಡಿಗೆ ಸನ್ಮಾರ್ಗದ ಸಂದೇಶ ಸಾರುವ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಆದ್ದರಿಂದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಸಯ್ಯದ್ ಅಲಿ ಖಾದ್ರಿ ಮತ್ತು ಇತರರು ಉಪಸ್ಥಿತರಿದ್ದರು.
ಉಡುಪಿ | ಬೆಳೆ ವಿಮಾ ಕಂಪನಿಯಿಂದ ರೈತರಿಗೆ ಮೋಸ : ಸಂಸದ ಕೋಟರಿಂದ ಕೃಷಿಸಚಿವರಿಗೆ ಮನವಿ
ಉಡುಪಿ, ಡಿ.4: ಕರ್ನಾಟಕ ರಾಜ್ಯದಲ್ಲಿ ಹವಾಮಾನಾಧಾರಿತ ಬೆಳೆ ವಿಮೆಯ ಸಮಸ್ಯೆಯಿಂದ ರೈತ ಸಂಕಷ್ಟದಲ್ಲಿದ್ದಾರೆ. ಅಡಿಕೆ, ಕಾಳುಮೆಣಸು, ಸೇರಿದಂತೆ ಹವಾಮಾನ ಆಧಾರಿತ ಬೆಳೆವಿಮೆಗೆ ರೈತರು ಹಣ ಪಾವತಿಸಿ ನೊಂದಾಯಿಸಿಕೊಂಡಿದ್ದು, ಈಗ ಬೆಳೆ ವಿಮೆ ಪಾವತಿಯಲ್ಲಿ ವಿಮಾ ಕಂಪನಿಗಳ ತಾರತಮ್ಯ ಮತ್ತು ಬೇಜವಾಬ್ದಾರಿಯಿಂದ ರೈತರಿಗೆ ನಷ್ಟವಾಗಿದೆ. ಹೀಗಾಗಿ ಕೇಂದ್ರ ಸರಕಾರ ತಕ್ಷಣ ರೈತರ ನೆರವಿಗೆ ಬರಬೇಕೆಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ರಿಗೆ ಮನವಿ ಅರ್ಪಿಸಿ ಆಗ್ರಹಿಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದಿರುವ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಕೋಟ ಈ ಸಂದರ್ಭದಲ್ಲಿ ಕೃಷಿ ಮಂತ್ರಾಲಯದ ಕಚೇರಿಯಲ್ಲಿ ಕೃಷಿ ಸಚಿವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯತ್ ಗಳಲ್ಲೂ ಮಳೆಮಾಪಕಗಳನ್ನು ಅಳವಡಿಸಿದ್ದರೂ, ಅಸಮರ್ಪಕ ನಿರ್ವಹಣೆಯಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗದೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮಳೆ ದಾಖಲೆಗಳಲ್ಲೂ ಅನ್ಯಾಯವಾಗಿದೆ ಎಂದು ಸಂಸದ ಕೋಟ ಮನವಿಯಲ್ಲಿ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 39,507 ಮಂದಿ ರೈತರು ಬೆಳೆ ವಿಮೆ ಪಾವತಿಸಿದ್ದರೂ ಕೇವಲ 9,000 ಮಂದಿಗಷ್ಟೇ ಅತ್ಯಂತ ಕಡಿಮೆ ಮೊತ್ತದ ಪರಿಹಾರ ಪಾವತಿಯಾಗಿದೆ. ಕೆಲವು ರೈತರ ಖಾತೆಗಳಿಗೆ ಕಟ್ಟಿದ ವಿಮಾ ಪ್ರೀಮಿಯಂಗಿಂತಲೂ ಕಡಿಮೆ ಪರಿಹಾರ ಬಂದಿದೆ ಎಂದು ಕೋಟ ಮನವಿಯಲ್ಲಿ ವಿವರಿಸಿದ್ದಾರೆ. ವಿಮಾ ಕಂಪನಿ ರೈತರಿಗೆ ನ್ಯಾಯ ಕೊಡದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆಯ ಮಾರ್ಗ ಹಿಡಿದಿದ್ದು, ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ವಿಮಾ ವಂಚಿತ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದ ಕೋಟ ಸಚಿವರಿಗೆ ಕೊಟ್ಟ ಮನವಿ ಪತ್ರದಲ್ಲಿ ತಿಳಿಸಿದ್ದು, ಮನವಿ ಸ್ವೀಕರಿಸಿದ ಸಚಿವರು ಕೂಡಲೇ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆಂದು ಸಂಸದ ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Udupi | ಹಾಸ್ಟೆಲ್ನಿಂದ ಓಡಿಹೋದ ಬಾಲಕ ಕಾರವಾರದಲ್ಲಿ ಪತ್ತೆ
ಉಡುಪಿ, ಡಿ.4: ಉಡುಪಿಯ ಬೋರ್ಡಿಂಗ್ ಹಾಸ್ಟೆಲ್ ಒಂದರಿಂದ ಏಕಾಂಗಿಯಾಗಿ ಓಡಿಹೋಗುತಿದ್ದ 13 ವರ್ಷ ಪ್ರಾಯದ ಶಾಲಾ ಬಾಲಕನೊಬ್ಬನನ್ನು ಕೊಂಕಣ ರೈಲ್ವೆಯ ಹೆಡ್ ಟಿಟಿಇ ಕಾರವಾರದಲ್ಲಿ ಪತ್ತೆ ಹಚ್ಚಿ ಮರಳಿ ಉಡುಪಿಗೆ ಕಳುಹಿಸಿದ್ದಾರೆ. ಬುಧವಾರ ರೈಲು ನಂ.12133 ಮಂಗಳೂರು ಎಕ್ಸ್ಪ್ರೆಸ್ ಕಾರವಾರ ತಲುಪಿದಾಗ, ರೈಲಿನ ಬೋಗಿ ಎಸ್3ಯಲ್ಲಿ ಬಾಲಕನೊಬ್ಬ ಏಕಾಂಗಿಯಾಗಿ ಕುಳಿತಿರುವುದನ್ನು ಅಲ್ಲಿನ ಹೆಡ್ ಟಿಟಿಇ ರಾಘವೇಂದ್ರ ಶೆಟ್ಟಿ ಗಮನಿಸಿ, ಆತನಲ್ಲಿ ಮಾತನಾಡಿ ವಿವರಗಳನ್ನು ಕೇಳಿದರು. ಆತ ಯಾವುದೇ ಪ್ರಶ್ನೆಗೆ ಸರಿಯಾಗಿ ಉತ್ತರಿಸದಿದ್ದಾಗ, ಆತನ ಬ್ಯಾಗ್ ಅನ್ನು ಪರಿಶೀಲಿಸಿದರು. ಅದರಲ್ಲಿ ಶಾಲೆಯ ಐಡಿ ಕಾರ್ಡ್ ಸಿಕ್ಕಿತ್ತು. ಕೂಡಲೇ ರಾಘವೇಂದ್ರ ಶೆಟ್ಟಿ ಅವರು ಸಂಬಂಧಿತ ಶಾಲೆಯ ಅಧಿಕಾರಿಗಳನ್ನು ಸಂಪರ್ಕಿಸಿ ಹುಡುಗನ ಕುರಿತು ವಿಚಾರಿಸಿದರು. ಆಗ ಆತ ಹಾಸ್ಟೆಲ್ನಿಂದ ಓಡಿ ಹೋಗಿರುವುದು ತಿಳಿದುಬಂತು. ಆತ ತಾಯಿಯೊಂದಿಗೆ ವಾಸಿಸುತ್ತಿದ್ದು, ಆಕೆ ಮನೆಗೆಲಸ ಮಾಡಿ ಮಗನನ್ನು ಓದಿಸುತ್ತಿರುವುದು ಸಹ ತಿಳಿದು ಬಂತು. ತಕ್ಷಣ ತಾಯಿಯನ್ನು ಸಂಪರ್ಕಿಸಿದ ಅವರು ಮಗ ಸುರಕ್ಷಿತವಾಗಿರುವುದನ್ನು ತಿಳಿಸಿದರು. ಬಳಿಕ ಹುಡುಗನನ್ನು ಉಡುಪಿಯ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಪೊಲೀಸರು ಬಾಲಕ ಸುರಕ್ಷಿತವಾಗಿ ಮನೆ ಸೇರುವ ತನಕ ಆತನನ್ನು ಉಡುಪಿಯ ಮಕ್ಕಳ ಪಾಲನಾ ಕೇಂದ್ರದಲ್ಲಿ ಇರಿಸಿದರು. 5,000 ರೂ.ಬಹುಮಾನ : ಓಡಿಹೋಗುತಿದ್ದ ಬಾಲಕನೊಬ್ಬನನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ತಾಯಿ ಮಡಿಲಿಗೆ ಸೇರಿಸಿದ ರಾಘವೇಂದ್ರ ಶೆಟ್ಟಿ ಅವರ ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸಿದ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ ಕುಮಾರ್ ಝಾ ಅವರು 5,000ರೂ. ನಗದು ಬಹುಮಾನವನ್ನು ಘೋಷಿಸಿದರು.
ಜಾರ್ಖಂಡ್ |ಕಲ್ಲಿದ್ದಲು ಗಣಿಗಾರಿಕೆ ಪ್ರದೇಶದಲ್ಲಿ ವಿಷಾನಿಲ ಸೋರಿಕೆ: ಇಬ್ಬರ ಮೃತ್ಯು; ಹಲವರು ಆಸ್ಪತ್ರೆಗೆ ದಾಖಲು
ರಾಂಚಿ: ಜಾರ್ಖಂಡ್ನ ಧನಬಾದ್ ಜಿಲ್ಲೆಯ ಕೆಂದೌದಿಹ್ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟು, ಹಲವರು ಆಸ್ಪತ್ರೆಗೆ ದಾಖಲಾಗಿದ್ದು, ವಿಷಾನಿಲ ಸೋರಿಕೆಯ ಶಂಕೆ ವ್ಯಕ್ತವಾಗಿದೆ ಎಂದು hindustantimes.com ವರದಿಯಾಗಿದೆ. ಅನಿಲ ಸೋರಿಕೆಯ ಮೂಲ ಹಾಗೂ ಕಾರಣಗಳನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಸ್ಥಳೀಯರಿಂದ ಪ್ರತಿಭಟನೆ ಪ್ರಾರಂಭವಾಗಿದೆ. ಬುಧವಾರ ಸಂಜೆ ಪ್ರಿಯಾಂಕಾ ದೇವಿ ಹಾಗೂ ಗುರುವಾರ ಮುಂಜಾನೆ ಲಲಿತಾ ದೇವಿ ಎಂಬ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದಾರೆ. ವಿಷಾನಿಲ ಸೋರಿಕೆಯಿಂದ ಈ ಸಾವುಗಳು ಸಂಭವಿಸಿವೆ ಎಂದು ಸ್ಥಳೀಯರು ಆರೋಪಿಸಿದ್ದರೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪ್ರದೇಶವು ಸರಕಾರಿ ಸ್ವಾಮ್ಯದ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ನ ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವಾಗಿದೆ. ಈ ಘಟನೆಯ ಬೆನ್ನಿಗೇ ಈ ಸಂಸ್ಥೆ ಸ್ಥಳೀಯರನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ. ಕೆಂದೌದಿಹ್ ಬಸ್ತಿ ಪ್ರದೇಶದಿಂದ ನೂರಾರು ಕುಟುಂಬಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ. ವಿಷಾನಿಲ ಸೋರಿಕೆಯ ಪರಿಣಾಮವು ರಜಪೂತ್ ಬಸ್ತಿ, ಮಸ್ಜಿದ್ ಮೊಹಲ್ಲಾ ಹಾಗೂ ಆಫೀಸರ್ ಕಾಲನಿ ಸೇರಿದಂತೆ ಅಂದಾಜು 10,000 ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಆಗಿದೆ ಎಂದು ಹೇಳಲಾಗಿದೆ.
ಉಡುಪಿ | ಜನ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸುವಂತೆ ವೆಲ್ಫೇರ್ ಪಾರ್ಟಿಯಿಂದ ಮುಖ್ಯಮಂತ್ರಿಗೆ ಮನವಿ
ಉಡುಪಿ: ಜನ ವಿರೋಧಿ ಮತ್ತು ಅಲ್ಪಸಂಖ್ಯಾತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಉಡುಪಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ, 2021 (ಮತಾಂತರ ನಿಷೇಧ ಕಾಯ್ದೆ) ಇದರ ನೆಪವನ್ನು ಇಟ್ಟುಕೊಂಡು ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಯಾವುದೇ ಒತ್ತಡವಿಲ್ಲದೆ, ತಮಗೆ ಬೇಕಾದ ಧರ್ಮವನ್ನು ಒಪ್ಪಿ, ಆ ಪ್ರಕಾರ ನಡೆದುಕೊಂಡು ಹೋಗಲು ಅವಕಾಶ ಕಲ್ಪಿಸಿದೆ. ಆದರೆ ಈ ಕಾನೂನು ಚಾಲ್ತಿಯಲ್ಲಿರುವುದು ಸಂವಿಧಾನ ವಿರೋಧಿಯಾಗಿದೆ ಮತ್ತು ಇದು ಸಂಘ ಪರಿವಾರದ ಕೋಮು ಅಜೆಂಡಾದ ಭಾಗವಾಗಿದೆ. 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಒಂದು ವರ್ಷದ ಒಳಗೆ ಇಂತಹ ಕರಾಳ ಮತ್ತು ಜನವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಸ್ಪಷ್ಟವಾದ ಆಶ್ವಾಸನೆಯನ್ನು ನೀಡಿತ್ತು. ಆದ್ದರಿಂದ, ಪ್ರಸ್ತುತ ಸರಕಾರವು ತನ್ನ ಭರವಸೆಯನ್ನು ಈಡೇರಿಸುವ ತುರ್ತು ಅವಶ್ಯಕತೆಯಿದೆ. ಕಳೆದ ಸರಕಾರವು ರದ್ದುಪಡಿಸಿದ ಶೇ.4 ಮುಸ್ಲಿಂ ಮೀಸಲಾತಿಯನ್ನು ತಕ್ಷಣವೇ ಮರುಸ್ಥಾಪಿಸಬೇಕು. ಇದು ಮುಸ್ಲಿಂ ಸಮುದಾಯದ ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ, ಉದ್ಯೋಗದಲ್ಲಿ ಸಮಾನ ಅವಕಾಶವನ್ನು ಖಾತರಿಪಡಿಸಲು ಅತ್ಯವಶ್ಯಕವಾಗಿದೆ. ಕಳೆದ ಬಿಜೆಪಿ ಸರಕಾರವು ಜಾರಿಗೆ ತಂದ ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ, 2021 ಮತ್ತು ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ, 2021 ಅತಿ ವಿವಾದಿತ, ಕೋಮು ಪ್ರಚೋದಿತ ಮತ್ತು ಸಂವಿಧಾನ ವಿರೋಧಿ ಕಾನೂನುಗಳಾಗಿವೆ. ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆಯ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಭಯದ ವಾತಾವರಣ ಉಂಟಾಗಿದೆ. ಗೋ ಸಾಗಾಣಿಕದಾರರ ಮೇಲೆ ಪೊಲೀಸರಿಂದ ಶೂಟೌಟ್, ಮನೆ-ಮುಗ್ಗಟ್ಟುಗಳ ಜಪ್ತಿ ಮುಂತಾದ ಕಳವಳಕಾರಿ ಘಟನೆಗಳು ನಡೆದಿರುವುದು ಆತಂಕಕಾರಿಯಾಗಿದೆ.ಈ ಕರಾಳ ಕಾನೂನಿನಿಂದಾಗಿ ರೈತರು ತಾವು ಬೆಳೆಸಿದ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ, ತಮ್ಮ ನೆಚ್ಚಿನ ಕೃಷಿಯಾದ ಜಾನುವಾರು ಸಾಕಾಣಿಕೆಯನ್ನು ಮುಂದುವರೆಸಲಾಗದೆ ಕಂಗಾಲಾಗಿದ್ದಾರೆ. ಇದು ರೈತ ಸಮುದಾಯಕ್ಕೆ ಅನ್ಯಾಯವನ್ನುಂಟು ಮಾಡಿದೆ. ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಕ್ರಮ ಕೈಗೊಂಡು ರಾಜ್ಯದಲ್ಲಿ ರೈತರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಎಲ್ಲ ನಾಗರಿಕರಿಗೆ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಇದ್ರೀಸ್ ಹೂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ, ಶಹಜಹಾನ್ ತೋನ್ಸೆ ,ಅಫ್ವಾನ್ ಹೂಡೆ, ಝಕ್ರಿಯಾ ಉಪಸ್ದಿತರಿದ್ದರು

20 C