ರೈತರ ವಿಚಾರ ಬಂದಾಗ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು : ಶಾಸಕಿ ಕರೆಮ್ಮ ಜಿ ನಾಯಕ್
ದೇವದುರ್ಗ: ರೈತರ ವಿಚಾರದಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು. ಹತ್ತಿ ಖರೀದಿ ಕೇಂದ್ರದಲ್ಲಿರುವ ಹಲವು ಸಮಸ್ಯೆಗಳನ್ನು ರೈತರು ಪರಿಹರಿಸಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು. ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ರೈತರು ಹಾಗೂ ಜಿನ್ನಿಂಗ್ ಫ್ಯಾಕ್ಟರಿಗಳ ಮಾಲೀಕರ ಸಭೆಯಲ್ಲಿ ಮಾತನಾಡಿದ ಶಾಸಕಿ ಕರೆಮ್ಮ ಜಿ. ನಾಯಕ, ಆನ್ಲೈನ್ ಮೂಲಕ ಅಪ್ಲೋಡ್ ಮಾಡಲು ತಾಂತ್ರಿಕ ಸಮಸ್ಯೆಯಿಂದ ರೈತರು ಬೇಸೆತ್ತಿದ್ದಾರೆ. ಹಲವು ರೈತರು ಸಮಸ್ಯೆ ಕುರಿತು ನನ್ನ ಬಳಿ ಹೇಳಿಕೊಂಡಿದ್ದಾರೆ. ಹತ್ತಿ ಖರೀದಿ ಕೇಂದ್ರದಲ್ಲಿರುವ ಸಮಸ್ಯೆಗಳು ಕೂಡಲೇ ಸರಿಪಡಿಸಬೇಕು. ಪದೇ-ಪದೇ ರೈತರು ನನ್ನ ಹತ್ತಿರ ಬರದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು. ಬೆಳಿಗ್ಗೆಯಿಂದ ಸಂಜೆವರೆಗೆ ಹತ್ತಿ ಖರೀದಿ ಕೇಂದ್ರದಲ್ಲಿ ಹತ್ತಿ ತುಂಬಿದ ವಾಹನಗಳು ನಿಲ್ಲಿಸಿಕೊಂಡು ಸಂಜೆ ನಂತರ ವಾಪಸ್ ಕಳುಹಿಸುವುದು ಏಕೆ ಎಂದು ರೈತ ಮುಖಂಡ ನರಸಣ್ಣ ನಾಯಕ ಜಾಲಹಳ್ಳಿ ಅಧಿಕಾರಿಗಳಿಗೆ ಪ್ರಶ್ನಿಸಿದರು. ಹೇರುಂಡಿ ಗ್ರಾಮದ ಕಂದಾಯ ವಿಎ ರೈತರಿಗೆ ಪರಿಹಾರ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂ.ವಂಚನೆ ಮಾಡಿದ್ದಾರೆ. ಅವರನ್ನು ಅಮಾನತು ಮಾಡುವ ಜೊತೆಗೆ ಹಣ ವಸೂಲಿ ಮಾಡಬೇಕು. ಅತಿವೃಷಿಯಲ್ಲಿ ಬೆಳೆ ಹಾನಿಯಾಗಿ ಬಹುತೇಕ ರೈತರಿಗೆ ಪರಿಹಾರ ಬಂದಿಲ್ಲ. ಕೂಡಲೇ ರೈತರಿಗೆ ಪರಿಹಾರದ ಹಣ ಬರುವಂತೆ ತಹಶೀಲ್ದಾರಿಗೆ ಸೂಚನೆ ನೀಡಿದರು. ರೈತರಿಗೆ ಮೋಸ ಮಾಡುವ ಅಧಿಕಾರಿಗಳ ವಿರುದ್ಧ ಮುಲ್ಲಾಜಿಲ್ಲದೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಶಾಸಕಿ ಕರೆಮ್ಮ ನಾಯಕ್ ಹೇಳಿದರು.
ಹೊಸದಿಲ್ಲಿ,ಡಿ.5: ಭಾರತದ ಅತ್ಯಂತ ದೊಡ್ಡ ಪರಮಾಣು ಸ್ಥಾವರವಾಗಿರುವ ಕೂಡಂಕುಳಂನಲ್ಲಿ ರಷ್ಯಾ ಭಾರತದೊಂದಿಗೆ ಸಹಕರಿಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ತಮಿಳುನಾಡಿನ ಕೂಡಂಕುಳಂ ಪರಮಾಣು ಸ್ಥಾವರದಲ್ಲಿಯ ಆರು ರಿಯಾಕ್ಟರ್ ಗಳ ಪೈಕಿ ಎರಡು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಅದು ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಬದ್ಧತೆಯನ್ನು ರಷ್ಯಾ ಹೊಂದಿದೆ. ‘ಕೂಡಂಕುಳಂನಲ್ಲಿ ಭಾರತದ ಅತ್ಯಂತ ದೊಡ್ಡ ಪರಮಾಣು ಸ್ಥಾವರ ನಿರ್ಮಾಣಕ್ಕೆ ಪ್ರಮುಖ ಯೋಜನೆಯೊಂದನ್ನು ನಾವು ಕಾರ್ಯಗತಗೊಳಿಸುತ್ತಿದ್ದೇವೆ. ಆರು ರಿಯಾಕ್ಟರ್ ಗಳ ಪೈಕಿ ಎರಡು ಈಗಾಗಲೇ ವಿದ್ಯುತ್ ಜಾಲದೊಂದಿಗೆ ಸಂಪರ್ಕಗೊಂಡಿದ್ದು, ನಾಲ್ಕು ರಿಯಾಕ್ಟರ್ ಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಈ ಪರಮಾಣು ಸ್ಥಾವರವು ಅದರ ಪೂರ್ಣ ಸಾಮರ್ಥ್ಯವನ್ನು ತಲುಪುವಂತೆ ಮಾಡುವುದು ಭಾರತದ ವಿದ್ಯುತ್ ಅಗತ್ಯಗಳಿಗೆ ಪ್ರಭಾವಶಾಲಿ ಕೊಡುಗೆಯನ್ನು ನೀಡುತ್ತದೆ ’ಎಂದು ಪುಟಿನ್ ಹೇಳಿದರು. ರಷ್ಯಾದ ಸರಕಾರಿ ಸ್ವಾಮ್ಯದ ಪರಮಾಣು ನಿಗಮ ರೋಸಾಟಮ್ ಕೂಡಂಕುಳಂ ಸ್ಥಾವರದ ಮೂರನೇ ರಿಯಾಕ್ಟರ್ ಗಾಗಿ ಪರಮಾಣು ಇಂಧನದ ಮೊದಲ ಕಂತಿನ ಪೂರೈಕೆಯನ್ನು ದೃಢಪಡಿಸಿದ ಬಳಿಕ ಪುಟಿನ್ ಹೇಳಿಕೆಗಳು ಹೊರಬಿದ್ದಿವೆ. ಶುಕ್ರವಾರ ನಡೆದ ದ್ವಿಪಕ್ಷೀಯ ಮಾತುಕತೆಗಳಲ್ಲಿ ಪುಟಿನ್ ಮತ್ತು ಮೋದಿ ಇಂಧನ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆ ಸೇರಿದಂತೆ ಹಲವಾರು ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಿದರು. ‘ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳು ಮತ್ತು ತೇಲುವ ಪರಮಾಣು ವಿದ್ಯುತ್ ಸ್ಥಾವರಗಳ ಕುರಿತು ಹಾಗೂ ಔಷಧಿ ಅಥವಾ ಕೃಷಿಯಂತಹ ಪರಮಾಣು ತಂತ್ರಜ್ಞಾನಗಳ ಇಂಧನೇತರ ಅನ್ವಯಿಕೆಗಳ ಬಗ್ಗೆ ಉಭಯ ದೇಶಗಳು ಮಾತನಾಡಬಹುದು ಎಂದು ನಾವು ಭಾವಿಸಿದ್ದೇವೆ’ ಎಂದೂ ಪುಟಿನ್ ನುಡಿದರು. ರಷ್ಯಾ ತೈಲ, ಅನಿಲ, ಕಲ್ಲಿದ್ದಲು ಮತ್ತು ಭಾರತದ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ಅಗತ್ಯವಿರುವ ಪ್ರತಿಯೊಂದರ ವಿಶ್ವಾಸಾರ್ಹ ಪೂರೈಕೆದಾರನಾಗಿದೆ ಎಂದು ಹೇಳಿದ ಪುಟಿನ್, ವೇಗವಾಗಿ ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಗಾಗಿ ನಿರಂತರ ಇಂಧನ ರವಾನೆಯ ಭರವಸೆಯನ್ನು ನೀಡಿದರು. ದೇಶದ ದಕ್ಷಿಣ ತುದಿಯಲ್ಲಿರುವ ಕೂಡಂಕುಳಂ ಪರಮಾಣು ಸ್ಥಾವರವು 6,000 ಮೆಗಾವ್ಯಾಟ್ ಗಳ ಒಟ್ಟು ಸಾಮರ್ಥ್ಯದೊಂದಿಗೆ ಆರು ವಿವಿಇಆರ್-1000 ರಿಯಾಕ್ಟರ್ ಗಳನ್ನು ಹೊಂದಲು ಸಜ್ಜಾಗಿದೆ. ಮೊದಲ ಎರಡು ರಿಯಾಕ್ಟರ್ ಗಳನ್ನು 2013 ಮತ್ತು 2016ರಲ್ಲಿ ವಿದ್ಯುತ್ ಜಾಲದೊಂದಿಗೆ ಸಂಪರ್ಕಿಸಲಾಗಿದ್ದು, ಇತರ ನಾಲ್ಕು ರಿಯಾಕ್ಟರ್ ಗಳು ಇನ್ನೂ ನಿರ್ಮಾಣಗೊಳ್ಳುತ್ತಿವೆ. ರಷ್ಯಾ ದೀರ್ಘಾವಧಿಯ ಆಧಾರದಲ್ಲಿ ಪರಮಾಣು ಸ್ಥಾವರಕ್ಕೆ ಯುರೇನಿಯಂ ಇಂಧನವನ್ನು ಪೂರೈಸುತ್ತಿದೆ. ರೋಸಾಟಮ್ ಮೂರನೇ ರಿಯಾಕ್ಟರ್ ಗಾಗಿ ಇಂಧನ ಜೋಡಣೆಗಳನ್ನು ಶುಕ್ರವಾರ ಕಾರ್ಗೋ ವಿಮಾನದ ಮೂಲಕ ಭಾರತಕ್ಕೆ ತಲುಪಿಸಿದೆ. ಮೂರನೇ ಮತ್ತು ನಾಲ್ಕನೇ ರಿಯಾಕ್ಟರ್ ಗಳಿಗೆ ಅವುಗಳ ಸಂಪೂರ್ಣ ಸೇವಾವಧಿಗೆ ಇಂಧನ ಪೂರೈಕೆಗಾಗಿ 2024ರಲ್ಲಿ ಮಾಡಿಕೊಳ್ಳಲಾಗಿರುವ ಒಪ್ಪಂದದಡಿ ರಷ್ಯಾದಿಂದ ಸಂಪೂರ್ಣ ಪೂರೈಕೆಯು ಏಳು ವಿಮಾನಗಳಲ್ಲಿ ಭಾರತವನ್ನು ತಲುಪಲಿದೆ.
ಸುಳ್ಯ | ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು
ಸುಳ್ಯ : ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗುತ್ತಿಗಾರಿನ ಚಿಕ್ಕುಳಿಯಲ್ಲಿ ನಡೆದಿದೆ. ಗುತ್ತಿಗಾರಿನ ಚಿಕ್ಕುಳಿ ಬಳಿಯ ನಿವಾಸಿ ಕುಕ್ಕೆ ಸುಬ್ರಹ್ಮಣ್ಯ ಪದವಿ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಪೂಜಾ (19) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಪೂಜಾ ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿದ್ದರು. ಅಸ್ವಸ್ಥಗೊಂಡ ಆಕೆಯನ್ನು ಎರಡು ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎMದು ತಿಳಿದು ಬಂದಿದೆ. ಅವರಿಗೆ ತಂದೆ, ತಾಯಿ, ಸಹೋದರ, ಸಹೋದರಿ ಇದ್ದಾರೆ.
ಉಡುಪಿ | ಡಿ.21ರಂದು ವಿದ್ಯಾರ್ಥಿವೇತನಕ್ಕೆ ಪ್ರತಿಭಾನ್ವೇಷಣಾ ಪರೀಕ್ಷೆ
ಉಡುಪಿ, ಡಿ.5: ನಗರದ ಕಿದಿಯೂರು ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹೈದರಾಬಾದಿನ ಆರ್ಜಿಎಫ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೂರಿನ ಲಾರ್ಡ್ಸ್ ಇಂಟರ್ನೇಷನಲ್ ರೆಸಿಡೆನ್ಷಿಯಲ್ ಸ್ಕೂಲ್ನ ಆಶ್ರಯದಲ್ಲಿ ಉಡುಪಿ ಆಸುಪಾಸಿನ ಒಂದರಿಂದ 9ನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ವೇತನಕ್ಕಾಗಿ ಇದೇ ಡಿ.21ರಂದು ಬೆಳಗ್ಗೆ 10ರಿಂದ 12ಗಂಟೆಯವರೆಗೆ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ. ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊಟೇಲ್ ಉದ್ಯಮಿಯೂ ಆಗಿರುವ ಭುವನೇಂದ್ರ ಕಿದಿಯೂರು ಉಡುಪಿ, ಆಸುಪಾಸಿನಲ್ಲಿರುವ ಎಲ್ಲಾ ಶಾಲೆಗಳ, ಎಲ್ಲಾ ಪಠ್ಯಕ್ರಮಗಳಲ್ಲಿ ಕಲಿಯುತ್ತಿರುವ ಒಂದರಿಂದ 9ನೇ ತರಗತಿಯ ವಿದ್ಯಾಥಿಗಳು ಇದರಲ್ಲಿ ಭಾಗವಹಿಸಬಹುದು ಎಂದರು. ಒಟ್ಟು ಮೂರು ಕೋಟಿ ರೂ. ವಿದ್ಯಾರ್ಥಿ ವೇತನ ನೀಡುವ ಗುರಿಯಿದ್ದು, ಪ್ರತಿ ವಿಭಾಗದಿಂದ ತಲಾ 10 ಮಂದಿ ಟಾಪರ್ಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯೂ ಹತ್ತನೇ ತರಗತಿ ಉತ್ತೀರ್ಣರಾಗುವವರೆಗೆ ವಿದ್ಯಾರ್ಥಿ ವೇತನ ಪ್ರತಿವರ್ಷ ನೀಡಲಾಗುವುದು ಎಂದು ಅವರು ವಿವರಿಸಿದರು. ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಸಭಾಂಗಣದಲ್ಲಿ ಡಿ.21ರಂದು ಈ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಮೊದಲೇ ಹೆಸರು ನೊಂದಾಯಿಸಬಹುದು ಅಥವಾ ಪರೀಕ್ಷಾ ಸ್ಥಳದಲ್ಲಿ ಅದೇ ದಿನ ಹೆಸರು ನೊಂದಾಯಿಸಿ ನೇರವಾಗಿ ಪರೀಕ್ಷೆ ಬರೆಯಬಹುದು ಎಂದರು. ಒಟ್ಟು ಸುಮಾರು 3000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ ಎಂದರು. ಹೈದರಾಬಾದ್ನ ಆರ್ಜಿಎಫ್ ಸಂಸ್ಥೆಯ ಸಿಇಓ ರವೀಂದ್ರ ನಾಯ್ದು ಮಾತನಾಡಿ, ಅದೇ ದಿನ ಮಕ್ಕಳ ಹೆತ್ತವರು ಹಾಗೂ ಪೋಷಕರಿಗೂ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿದೆ. ಮಕ್ಕಳ ಪಾಲನಾ ಕೌಶಲ್ಯ, ಮಾಹಿತಿ ಹಾಗೂ ಅರಿವು ಕಾರ್ಯಾಗಾರ ನಡೆಯಲಿದೆ ಎಂದರು. ಲಾರ್ಡ್ಸ್ ಇಂಟರ್ನೇಷನಲ್ ರೆಸಿಡೆನ್ಷಿಯಲ್ ಸ್ಕೂಲ್ನಲ್ಲಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಸ್ಪಾರ್ಕ್ ಕಾರ್ಯಕ್ರಮ ಹಾಗೂ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಟೆಗ್ರೇಟೆಡ್ ಫೌಂಡೇಷನ್ ಕೋಚಿಂಗ್ನ್ನು ನೀಡಲಾಗುತ್ತಿದೆ. ಇದರಿಂದ 10ನೇ ತರಗತಿಯಿಂದ ಹೊರಬರುವ ವಿದ್ಯಾರ್ಥಿ ಮುಂದಿನ ಗುರಿಯ ಕುರಿತು ಸ್ಪಷ್ಟತೆಯನ್ನು ಹೊಂದಿರುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನವೀನ್ ಶೆಟ್ಟಿ, ವಿಲಾಸ್ಕುಮಾರ್ ಹಾಗೂ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ನೆರವು ಕಡಿತದಿಂದ ಮಕ್ಕಳ ಸಾವು ಹೆಚ್ಚಳ: ಬಿಲ್ ಗೇಟ್ಸ್ ಎಚ್ಚರಿಕೆ
ನ್ಯೂಯಾರ್ಕ್, ಡಿ.5: ಶ್ರೀಮಂತ ರಾಷ್ಟ್ರಗಳು ಅಂತರಾಷ್ಟ್ರೀಯ ನೆರವನ್ನು ತೀವ್ರವಾಗಿ ಕಡಿತಗೊಳಿಸಿರುವುದರಿಂದ ಜಾಗತಿಕ ಮಕ್ಕಳ ಸಾವಿನ ಪ್ರಮಾಣ ಹೆಚ್ಚಲಿದೆ. 2000ದ ಆರಂಭದಿಂದ ಸಾಧಿಸಿದ ಪ್ರಗತಿ ಈಗ ಅಪಾಯದಲ್ಲಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮತ್ತು ದಾನಿ ಬಿಲ್ ಗೇಟ್ಸ್ ಹೇಳಿದ್ದಾರೆ. ಅಮೆರಿಕಾ ಅಂತರಾಷ್ಟ್ರೀಯ ನೆರವಿನಲ್ಲಿ ಅತ್ಯಧಿಕ ಕಡಿತ ಮಾಡಿದ ರಾಷ್ಟ್ರವಾಗಿದೆ. ಎಲಾನ್ ಮಸ್ಕ್ ಅವರ ನೇತೃತ್ವದ `ಸರಕಾರದ ಕಾರ್ಯದಕ್ಷತೆ ಇಲಾಖೆ'ಯು ಯುಎಸ್ಎಯ್ಡ್(ಅಂತರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕಾದ ಏಜೆನ್ಸಿ) ಅನುದಾನವನ್ನು ಥಟ್ಟನೆ ನಿಲ್ಲಿಸಿದ್ದು ಈ ಕ್ರಮವು ಬಹಳಷ್ಟು ಸಾವಿಗೆ ಕಾರಣವಾಗಿದೆ. ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಕೂಡಾ ಸಾಗರೋತ್ತರ ನೆರವನ್ನು `ಅಸಮಾನವಾಗಿ' ಕಡಿತಗೊಳಿಸಿದೆ ಎಂದು ಗೇಟ್ಸ್ ಹೇಳಿರುವುದಾಗಿ AFP ಸುದ್ದಿಸಂಸ್ಥೆ ವರದಿ ಮಾಡಿದೆ. ಗೇಟ್ಸ್ ಪ್ರತಿಷ್ಠಾನದ ವರದಿಯ ಪ್ರಕಾರ 2025ರಲ್ಲಿ 5ರ ಕೆಳಹರೆಯದ ಮಕ್ಕಳ ಸಾವಿನ ಪ್ರಮಾಣ 4.8 ದಶಲಕ್ಷಕ್ಕೆ ಏರಿಕೆಯಾಗಲಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 2 ಲಕ್ಷದಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಿನ ಪ್ರಮಾಣದಲ್ಲಿ 27% ಇಳಿಕೆಯಾಗಿರುವುದು ಎಚ್ಐವಿ, ಮಲೇರಿಯಾ, ಪೋಲಿಯೊ ಹಾಗೂ ಇತರ ತಡೆಯಬಹುದಾದ ರೋಗಗಳ ನಿಯಂತ್ರಣದಲ್ಲಿ ಮಾಡಿರುವ ಪ್ರಗತಿಗೆ ಬೆದರಿಕೆ ಒಡ್ಡಿದೆ. ಸುಮಾರು 30%ದಷ್ಟು ಕಡಿತವು ಮುಂದುವರಿದರೆ 2045ರ ವೇಳೆಗೆ 16 ದಶಲಕ್ಷ ಹೆಚ್ಚುವರಿ ಸಾವು ಸಂಭವಿಸಬಹುದು ಎಂದು ಗೇಟ್ಸ್ ಎಚ್ಚರಿಸಿದ್ದಾರೆ. ಯುಎಸ್ಎಯ್ಡ್ ನೆರವು ಸ್ಥಗಿತಗೊಳಿಸಿದ ಬಳಿಕ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದೆ ಎಂದವರು ಟೀಕಿಸಿದ್ದು ಸಹಾಯವನ್ನು ಮರುಸ್ಥಾಪಿಸುವ ಬಗ್ಗೆ ಅಧ್ಯಕ್ಷ ಟ್ರಂಪ್ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಭಾರತ-ರಶ್ಯ ಶೃಂಗಸಭೆ | ಭಾರತವು ತಟಸ್ಥವಲ್ಲ,ಅದು ಶಾಂತಿಯ ಪರವಾಗಿದೆ: ಮೋದಿ
ಉಭಯ ದೇಶಗಳ ನಡುವಿನ ಆಳವಾದ ಸಂಬಂಧವನ್ನು ಪ್ರಶಂಸಿಸಿದ ಪುಟಿನ್
ಉತ್ತರ ಪ್ರದೇಶ: ‘ಅಕ್ಬರ್ಪುರ’ದ ಮೇಲೆ ‘ರಘುವರಪುರ’ ಎಂದು ಬರೆದ ಕಿಡಿಗೇಡಿಗಳು
ಲಕ್ನೋ, ಡಿ. 5: ದಿಲ್ಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮಥುರಾ ಜಿಲ್ಲೆಯ ಗ್ರಾಮವೊಂದರ ನಾಮಫಲಕವನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳು, ‘ಅಕ್ಬರ್ಪುರ’ ಹೆಸರಿನ ಮೇಲೆ ಬಣ್ಣ ಬಳಿದು ಅದರ ಮೇಲೆ ‘ರಘುವರಪುರ’ ಎಂಬುದಾಗಿ ಬರೆದಿದ್ದಾರೆ. ಇದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ, ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ತಿಂಗಳು ಬಾಗೇಶ್ವರ ಧಾಮ ದೇವಸ್ಥಾನದ ಪ್ರಧಾನ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ದಿಲ್ಲಿಯಿಂದ ವೃಂದಾವನಕ್ಕೆ ಪಾದಯಾತ್ರೆಯಲ್ಲಿ ಹೋಗಿದ್ದು, ದಾರಿಯಲ್ಲಿ ‘ಅಕ್ಬರ್ಪುರ’ ನಾಮಫಲಕವನ್ನು ನೋಡಿ ಅದನ್ನು ‘ರಘುವರಪುರ’ ಎಂಬುದಾಗಿ ಬದಲಾಯಿಸಬೇಕು ಎಂದು ಹೇಳಿದ್ದರು. ಅವರ ಮಾತಿಗೂ, ನಾಮಫಲಕ ವಿರೂಪಕ್ಕೂ ಸಂಬಂಧವಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರ ಮಾತುಗಳಿಂದ ಪ್ರೇರಿತರಾಗಿ ಅಜ್ಞಾತ ವ್ಯಕ್ತಿಗಳು ನಾಮಫಲಕವನ್ನು ವಿರೂಪಗೊಳಿಸಿರಬಹುದಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸಹಕಾರಿ ಬ್ಯಾಂಕ್ ಗಳನ್ನು ಉಳಿಸಲು ದೇವಸ್ಥಾನದ ಹಣವನ್ನು ಬಳಸಬಾರದು: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಡಿ. 5: ದೇವಸ್ಥಾನಕ್ಕೆ ಸೇರಿದ ಹಣವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಹಕಾರಿ ಬ್ಯಾಂಕ್ ಗಳನ್ನು ಮೇಲೆತ್ತಲು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಕೆಲವು ಸಹಕಾರಿ ಬ್ಯಾಂಕ್ ಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನೊಳ ನ್ಯಾಯಪೀಠವೊಂದು ಈ ಆದೇಶ ನೀಡಿದೆ. ಕೇರಳ ಹೈಕೋರ್ಟ್ ಈ ಸಹಕಾರಿ ಬ್ಯಾಂಕ್ ಗಳಿಗೆ ತಿರುನೆಲ್ಲಿ ದೇವಸ್ಥಾನ ದೇವಸ್ವಮ್ ನ ಠೇವಣಿಗಳನ್ನು ಹಿಂದಿರುಗಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಬ್ಯಾಂಕ್ ಗಳು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದವು. ‘‘ಬ್ಯಾಂಕನ್ನು ಉಳಿಸಲು ದೇವಸ್ಥಾನದ ಹಣವನ್ನು ಬಳಸಲು ನೀವು ಬಯಸಿದ್ದೀರಾ? ದೇವಸ್ಥಾನದ ಹಣವು ಕಷ್ಟದಲ್ಲಿ ಉಸಿರಾಡುತ್ತಿರುವ ಸಹಕಾರಿ ಬ್ಯಾಂಕ್ ನಲ್ಲಿ ಇರುವ ಬದಲು ಗರಿಷ್ಠ ಬಡ್ಡಿ ನೀಡಬಲ್ಲ ಆರೋಗ್ಯಕರ ರಾಷ್ಟ್ರೀಕೃತ ಬ್ಯಾಂಕೊದಕ್ಕೆ ಹೋಗಬೇಕು ಎಂಬ ಆದೇಶದಲ್ಲಿ ಏನು ತಪ್ಪಿದೆ’’ ಎಂದು ಮುಖ್ಯ ನ್ಯಾಯಾಧೀಶರು ಪ್ರಶ್ನಿಸಿದರು. ‘‘ದೇವಸ್ಥಾನದ ಹಣ ದೇವರಿಗೆ ಸೇರಿದ್ದು. ಹಾಗಾಗಿ, ಹಣವನ್ನು ರಕ್ಷಿಸಿಡಬೇಕು ಮತ್ತು ದೇವಸ್ಥಾನದ ಉದ್ದೇಶಗಳಿಗಾಗಿ ಮಾತ್ರ ಉಪಯೋಗಿಸಬೇಕು. ಅದು ಸಹಕಾರಿ ಬ್ಯಾಂಕೊಂದರ ಆದಾಯದ ಮೂಲ ಅಥವಾ ಅದನ್ನು ಉಳಿಸುವ ಸಾಧನವಾಗಬಾರದು’’ ಎಂದು ಅವರು ಹೇಳಿದರು. ಅವಧಿ ಮುಗಿದ ಠೇವಣಿಗಳನ್ನು ಹಿಂದಿರುಗಿಸುವಂತೆ ದೇವಸ್ವಮ್ ಪದೇ ಪದೇ ಕೇಳಿಕೊಂಡರೂ, ಐದು ಸಹಕಾರಿ ಬ್ಯಾಂಕ್ ಗಳು ಹಣ ಹಿಂದಿರುಗಿಸಲು ನಿರಾಕರಿಸಿದ್ದವು ಎನ್ನಲಾಗಿದೆ. ದೇವಸ್ವಮ್ ನ ನಿರಖು ಠೇವಣಿಗಳನ್ನು ಎರಡು ತಿಂಗಳೊಳಗೆ ಹಿಂದಿರುಗಿಸುವಂತೆ ಬಳಿಕ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಕೋಮು ಹಿಂಸೆ ನಿಯಂತ್ರಣಕ್ಕೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಗಣೇಶ ಹಬ್ಬದ ಮೆರವಣಿಗೆ ವೇಳೆ ನಡೆದ ಅವಘಡ ಪರಿಗಣಿಸಿ ಇದೀಗ ಮಂಡ್ಯದಲ್ಲೂ ಇಂತಹ ಪಡೆ ರಚನೆಗೆ ಗೃಹ ಇಲಾಖೆ ನಿರ್ಧರಿಸಿದೆ. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಅಳವಡಿಕೆ, ನಾಗರಿಕರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ ನೀಡಿದರು.
ದುಬೈ-ಹೈದರಾಬಾದ್ ವಿಮಾನಕ್ಕೆ ಬಾಂಬ್ ಬೆದರಿಕೆ
ಹೈದರಾಬಾದ್, ಡಿ. 5: ದುಬೈ-ಹೈದರಾಬಾದ್ ಎಮಿರೇಟ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಒಡ್ಡಿದ ಈಮೇಲ್ ಅನ್ನು ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ವಿಮಾನ ಇಳಿದ ಬಳಿಕ ವಿಮಾನ ನಿಲ್ದಾಣ ಸ್ಥಾಪಿತ ಸುರಕ್ಷಾ ಶಿಷ್ಟಾಚಾರವನ್ನು ಅನುಸರಿಸಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇಕೆ526 ವಿಮಾನ ದುಬೈಯಿಂದ ಮುಂಜಾನೆ 3.15ಕ್ಕೆ ಹಾರಾಟ ಆರಂಭಿಸಿತ್ತು. ಅದು ಬೆಳಗ್ಗೆ 8.30ಕ್ಕೆ ಇಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ. ‘‘ದುಬೈಯಿಂದ ಹೈದರಾಬಾದ್ಗೆ ತೆರಳುತ್ತಿದ್ದ ಇಕೆ526 ವಿಮಾನಕ್ಕೆ ಬೆದರಿಕೆ ಒಡ್ಡಿದ ಇಮೇಲ್ ಅನ್ನು ಹೈದರಾಬಾದ್ ವಿಮಾನ ನಿಲ್ದಾಣದ ಗ್ರಾಹಕ ನೆರವು ಐಡಿ 2025 ಡಿಸೆಂಬರ್ 5ರಂದು ಬೆಳಗ್ಗೆ 7.30ಕ್ಕೆ ಸ್ವೀಕರಿಸಿತ್ತು. ಆದರೆ, ವಿಮಾನ ಹೈದರಾಬಾದ್ ನಲ್ಲಿ ಬೆಳಗ್ಗೆ 8.30ಕ್ಕೆ ಸುರಕ್ಷಿತವಾಗಿ ಇಳಿಯಿತು. ಸ್ಥಾಪಿತ ಸುರಕ್ಷಿತ ಶಿಷ್ಟಾಚಾರವನ್ನು ಅನುಸರಿಸಲಾಯಿತು’’ ಎಂದು ಮೂಲಗಳು ತಿಳಿಸಿವೆ. ಗುರುವಾರ ವಿಮಾನ ನಿಲ್ದಾಣ ಇಂಡಿಗೊದ ಮದಿನಾ-ಹೈದರಾಬಾದ್ ಹಾಗೂ ಶಾರ್ಜಾ-ಹೈದರಾಬಾದ್ ವಿಮಾನಗಳನ್ನು ಪ್ರತ್ಯೇಕವಾಗಿ ಗುರಿಯಾಗಿರಿಸಿದ ಇದೇ ರೀತಿಯ ಎರಡು ಇಮೇಲ್ ಗಳನ್ನು ಸ್ವೀಕರಿಸಿತ್ತು. ಅನಂತರ ಮದಿನಾ-ಹೈದರಾಬಾದ್ ವಿಮಾನವನ್ನು ಅಹ್ಮದಾಬಾದ್ಗೆ ಪಥ ಬದಲಾಯಿಸಲಾಗಿತ್ತು.
ಭ್ರಷ್ಟಾಚಾರದ 'ಪಾಪದ ಗಂಟು' ಬಿಜೆಪಿ ಸರಕಾರದ್ದೇ, ನಮ್ಮದಲ್ಲ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ʼಆರ್.ಅಶೋಕ್ ಅವರು ಉಪ ಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ಟ್ರಾನ್ಸ್ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ ನವರು 2019ರ ನವೆಂಬರ್ನಲ್ಲಿ ನೀಡಿರುವ ವರದಿಯಲ್ಲಿ ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಎಂಬುದಾಗಿತ್ತು. ಅದೇ ವರದಿಯನ್ನು ಆಧರಿಸಿ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಇಂದು ಮಾತನಾಡಿದ್ದಾರೆ. ಈ ವರದಿ ಹೊರಬರುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಆಡಳಿತದಲ್ಲಿ ಇತ್ತು ಎಂದು ಅವರು ಉಲ್ಲೀಖಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳು ಒಂದೇ, ಎರಡೇ. ಕೊರೊನಾ ಕಾಲದಲ್ಲಿ ಜನ ಹಾದಿಬೀದಿಯಲ್ಲಿ ಸಾಯುವಾಗಲೂ ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್, ಐಸಿಯು ಖರೀದಿ ಎನ್ನದೆ ಎಲ್ಲದರಲ್ಲಿಯೂ ನಿರ್ಲಜ್ಜರಾಗಿ ಲೂಟಿ ಮಾಡಲಾಗಿತ್ತು. ಪ್ರತಿ ಇಲಾಖೆಯಲ್ಲಿ ಕನಿಷ್ಠ 40% ಕಮಿಷನ್ ಚಾಲ್ತಿಯಲ್ಲಿ ಇತ್ತು. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವವರು ಅಂದಿನ ಸಚಿವ ಈಶ್ವರಪ್ಪನವರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು. ನೀರಾವರಿ ಇಲಾಖೆಯ ಭದ್ರಾ ಮೇಲ್ದಂಡೆ ಹಾಗೂ ಕಾವೇರಿ ನೀರಾವರಿ ನಿಗಮದಲ್ಲಿ ಭಾರೀ ಅಕ್ರಮ ನಡೆದಿದ್ದು, ಸುಮಾರು 20,000 ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಸ್ವತಃ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅವರು ಇಂದಿನ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ವಿರುದ್ಧ ನೇರಾನೇರ ಆರೋಪ ಮಾಡಿದ್ದರು. ಪಿಎಸ್ಐ ನೇಮಕಾತಿಯಲ್ಲಿ ಹಗರಣ ಮಾಡಿ ನಿಮ್ಮ ಹಲವು ಬಂಧು ಮಿತ್ರರು ಜೈಲು ಸೇರಿ ಬಂದಿದ್ದಾರೆ. ಇವೆಲ್ಲಾ ಮರೆತು ಹೋಯಿತೇ? ಹೀಗೆ ಬಿಜೆಪಿ ಕಾಲದ ಹಗರಣಗಳನ್ನು ಪಟ್ಟಿಮಾಡುತ್ತಾ ಹೋದರೆ ಒಂದು ಮಹಾಗ್ರಂಥವನ್ನೇ ಬರೆಯಬಹುದು ಎಂದು ಲೇವಡಿ ಮಾಡಿದ್ದಾರೆ. ಇಂದು ನ ಖಾವೂಂಗಾ, ನ ಖಾನೆದೂಂಗ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಭ್ರಷ್ಟಾಚಾರದಲ್ಲೇ ಮುಳುಗೇಳುತ್ತಿದೆ. ಇದಕ್ಕೆ ಟ್ರಾನ್ಸ್ಪರೆಸಿ ಇಂಟರ್ನ್ಯಾಷನಲ್ ನವರು ಬಿಡುಗಡೆ ಮಾಡಿರುವ ಜಾಗತಿಕ ಭ್ರಷ್ಟಾಚಾರಯುಕ್ತ ದೇಶಗಳ ಪಟ್ಟಿಯಲ್ಲಿ ಭಾರತ 96ನೇ ಸ್ಥಾನದಲ್ಲಿ ಇರುವುದು ಸಾಕ್ಷಿ. ಮೊದಲು ಆರ್.ಅಶೋಕ್ ಅವರು ತಮ್ಮ ಪ್ರಧಾನ ಸೇವಕರ ಬಳಿ ಭಾರತದ ಈ ದಯನೀಯ ಸ್ಥಿತಿಗೆ ಕಾರಣವೇನು ಎಂಬ ಪ್ರಶ್ನೆಯನ್ನೆತ್ತಲಿ. ಬಿ.ವೀರಪ್ಪನವರ ಮಾತುಗಳನ್ನು ನಮ್ಮ ಸರಕಾರಕ್ಕೆ ಅನ್ವಯಿಸಿ ಹೇಳುವ ಆರ್.ಅಶೋಕ್ ಅವರ ಮತಿಗೇಡಿತನಕ್ಕೆ ಏನೆನ್ನಬೇಕು? ನಮ್ಮ ಸರಕಾರದಲ್ಲಿ ನೇಮಕಾತಿಯಿಂದ ಹಿಡಿದು ವರ್ಗಾವಣೆಯ ವರೆಗೆ ಎಲ್ಲವನ್ನೂ ಪಾರದರ್ಶಕವಾಗಿಸುವ, ಯಾವುದೇ ರೀತಿಯ ಹಣ, ಅಧಿಕಾರದ ದುರ್ಬಳಕೆಯಾಗದಂತೆ ತಡೆಯುವ ಪ್ರಯತ್ನ ಜಾರಿಯಲ್ಲಿದೆ. ಆರ್.ಅಶೋಕ್ ಅವರೇ, ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎರಡೂವರೆ ವರ್ಷದಲ್ಲಿ ಸ್ವಚ್ಚ ಮಾಡುವುದು ಅಸಾಧ್ಯ. ಸ್ವಲ್ಪ ಸಮಯ ಕೊಡಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದಿದ್ದಾರೆ. ನ್ಯಾ.ವೀರಪ್ಪ ಉಲ್ಲೇಖಿಸಿದ ವರದಿ ನಿಮ್ಮ ಸರಕಾರದ ಅವಧಿಯದ್ದು: ಆರ್.ಅಶೋಕ್ ನ್ಯಾಯಮೂರ್ತಿ ಬಿ.ವೀರಪ್ಪ ಉಲ್ಲೇಖಿಸಿರುವ ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಶನಲ್ ವರದಿಯು 2019ರ ನವೆಂಬರ್ ನಲ್ಲಿ ಬಿಡುಗಡೆಯಾಗಿತ್ತು, ಆದರೆ ಅದು ಹಿಂದಿನ ವರ್ಷದ ಭ್ರಷ್ಟಾಚಾರದ ಕುರಿತು ನಡೆಸಿದ ಸಮೀಕ್ಷೆ ಆಗಿತ್ತು. ಇದರ ಅರ್ಥ, ಆ ವರದಿಯ ದತ್ತಾಂಶವು 2018ರ ಅವಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಶುಕ್ರವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, 2018ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ಯಾರು? ಸಿದ್ದರಾಮಯ್ಯ ಅವರೇ, ಅದು ತಾವೇ ಹೊರತು ಬೇರೆ ಯಾರೂ ಅಲ್ಲ. ಆದುದರಿಂದ, ಈ ವರದಿಯನ್ನು ಬಿಜೆಪಿ ಕಡೆಗೆ ತಿರುಚುವ ಬದಲು, ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕದ ಶೇ.63ರಷ್ಟು ನಾಗರಿಕರು ಏಕೆ ಲಂಚ ನೀಡಬೇಕಾಯಿತು ಎಂಬುದನ್ನು ನೀವೇ ಮೊದಲು ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೆ ಇದೊಂದೇ ವರದಿ ನಿಮ್ಮ ಸರಕಾರದ ಭ್ರ ಷ್ಟಾ ಚಾರವನ್ನು ಬಯಲಿಗೆಳೆದಿಲ್ಲ. 2017ರಲ್ಲಿ ಮತ್ತೊಂದು ರಾಷ್ಟ್ರೀಯ ಸಮೀಕ್ಷೆಯು ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರಕಾರವನ್ನು ಭಾರತದ ಅತ್ಯಂತ ಭ್ರಷ್ಟ ರಾಜ್ಯ ಎಂದು ಘೋಷಿಸಿತ್ತು. ಕರ್ನಾಟಕ ಕಂಡ ಅತ್ಯಂತ ಭ್ರ ಷ್ಟಾ ತಿ ಭ್ರಷ್ಟ ಸರಕಾರಗಳನ್ನು ಮುನ್ನಡೆಸಿದ, ಮುನ್ನಡೆಸುತ್ತಿರುವ ತಾವು ಇನ್ನೊಬ್ಬರಿಗೆ ನೀತಿ ಪಾಠ ಹೇಳುವುದು ಹಾಸ್ಯಾಸ್ಪದ ಮತ್ತು ಉದ್ಧಟತನ ಎಂದು ಅಶೋಕ್ ಟೀಕಿಸಿದ್ದಾರೆ. ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಮೂರ್ಖತನವನ್ನು ದೇಶವು ಕ್ಷಮಿಸಬಹುದು, ಆದರೆ ಕರ್ನಾಟಕದ ಜನತೆ ರಾಜ್ಯದ ಇತಿಹಾಸದಲ್ಲೆ ಅತ್ಯಂತ ಭ್ರಷ್ಟ ಸರಕಾರಗಳನ್ನು ಮುನ್ನಡೆಸಿದ ನಿಮ್ಮನ್ನ, ನಿಮ್ಮ ಕಾಂಗ್ರೆಸ್ ಪಕ್ಷದ ನಿರ್ಲಜ್ಜತೆಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಇತರರತ್ತ ಬೆರಳು ತೋರಿಸುವ ಮೊದಲು ನಿಮ್ಮದೆ ಘನ ಸರಕಾರ ವರ್ಷದಿಂದ ವರ್ಷಕ್ಕೆ ಕರ್ನಾಟಕವನ್ನು ಭ್ರ ಷ್ಟಾ ಚಾರದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಲು ಕಾರಣವೇನು ಎಂಬುದಕ್ಕೆ ಮೊದಲು ಉತ್ತರಿಸಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಈಡಿಯಿಂದ ಅನಿಲ್ ಅಂಬಾನಿ ಕಂಪೆನಿಗಳಿಗೆ ಸೇರಿದ 1,120 ಕೋಟಿ ರೂ. ಸೊತ್ತು ಮುಟ್ಟುಗೋಲು
ಹೊಸದಿಲ್ಲಿ, ಡಿ. 5: ರಿಲಾಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್ಎಚ್ಎಫ್ಎಲ್), ರಿಲಾಯನ್ಸ್ ಕಮರ್ಶಿಯಲ್ ಫೈನಾನ್ಸ್ ಲಿಮಿಟೆಡ್ (ಆರ್ಸಿಎಫ್ಎಲ್) ಹಾಗೂ ಯೆಸ್ ಬ್ಯಾಂಕ್ ಭಾಗಿಯಾಗಿರುವ ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ರಿಲಾಯನ್ಸ್ ಅನಿಲ್ ಅಂಬಾನಿ ಸಮೂಹದ ಸಂಸ್ಥೆಗಳಿಗೆ ಸೇರಿದ 1,120 ಕೋಟಿರೂ. ಮೌಲ್ಯದ ಸೊತ್ತುಗಳನ್ನು ಜಾರಿ ನಿರ್ದೇಶನಾಲಯ (ಈಡಿ) ಮುಟ್ಟುಗೋಲು ಹಾಕಿಕೊಂಡಿದೆ. ಮುಟ್ಟುಗೋಲು ಹಾಕಿಕೊಳ್ಳಲಾದ ಸೊತ್ತುಗಳಲ್ಲಿ 18 ಆಸ್ತಿ, ಸ್ಥಿರ ಠೇವಣಿ, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಬಹಿರಂಗಪಡಿಸದ ಹೂಡಿಕೆಗಳು ಸೇರಿವೆ. ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ನ 7 ಆಸ್ತಿ, ರಿಲಾಯನ್ಸ್ ಪವರ್ ಲಿಮಿಟೆಡ್ನ 2 ಆಸ್ತಿ, ರಿಲಾಯನ್ಸ್ ವ್ಯಾಲ್ಯು ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ಮಾಲಕತ್ವದ 9 ಆಸ್ತಿಗಳು ಸೇರಿವೆ. ಇದಲ್ಲದೆ, ರಿಲಾಯನ್ಸ್ ವ್ಯಾಲ್ಯೂ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ರಿಲಾಯನ್ಸ್ ವೆಂಚರ್ ಎಸೆಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್, ಫಿ ಮ್ಯಾನೇಜ್ಮೆಂಟ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್, ಆಧಾರ್ ಪ್ರಾಪರ್ಟಿ ಕನ್ಸೆಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಹಾಗೂ ಗಮೇಶಾ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿದ ಸ್ಥಿರ ಠೇವಣಿ ಹಾಗೂ ಹೂಡಿಕೆಗಳನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಇದಕ್ಕಿಂತ ಮುನ್ನ ಜಾರಿ ನಿರ್ದೇಶನಾಲಯ ರಿಲಾಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್ ಹಾಗೂ ಆರ್ಸಿಎಫ್ಎಲ್ ಹಾಗೂ ಆರ್ಎಚ್ಎಫ್ಎಲ್ಗೆ ಸಂಬಂಧಿಸಿದ ಹಿಂದಿನ ವಂಚನೆ ಪ್ರಕರಣಗಳಲ್ಲಿ 8,997 ಕೋಟಿ. ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇತ್ತೀಚೆಗೆ ಮುಟ್ಟುಗೋಲು ಸೇರಿದಂತೆ ಅನಿಲ್ಅಂಬಾನಿ ಸಮೂಹದ ವಿರುದ್ಧದ ಮುಟ್ಟುಗೋಲು ಹಾಕಲಾದ ಸೊತ್ತಿನ ಒಟ್ಟು ಮೌಲ್ಯ 10,117 ಕೋಟಿ ರೂ. ಆರ್ಕಾಮ್, ಆರ್ಎಚ್ಎಫ್ಎಲ್, ಆರ್ಸಿಎಫ್ಎಲ್, ರಿಲಾಯನ್ಸ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಹಾಗೂ ರಿಲಾಯನ್ಸ್ ಪವರ್ ಲಿಮಿಟೆಡ್ ಸೇರಿದಂತೆ ರಿಲಾಯನ್ಸ್ ಎಡಿಎ ಸಮೂಹದ ಹಲವು ಕಂಪೆನಿಗಳು ಸಾರ್ವಜನಿಕರ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿರುವುದನ್ನು ತನಿಖೆ ಬಹಿರಂಗಪಡಿಸಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ನ್ಯಾಯಾಂಗದಲ್ಲಿ ಕೃತಕ ಬುದ್ಧಿ ಮತ್ತೆ ಬಳಕೆಗೆ ನಿಯಂತ್ರಣ ಕೋರಿದ ಅರ್ಜಿ ಸುಪ್ರೀಂ ಕೋರ್ಟ್ ನಿಂದ ತಿರಸ್ಕೃತ
ಹೊಸದಿಲ್ಲಿ, ಡಿ. 5: ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿ ಮತ್ತೆ (ಎಐ)ಯನ್ನು ‘ಅನಿಯಂತ್ರಿತ’ ಬಳಕೆ ನಿಯಂತ್ರಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಾಂಗದಲ್ಲಿ ಕೃತಕ ಬುದ್ಧಿ ಮತ್ತೆ (ಎಐ) ಹಾಗೂ ಮೆಷಿನ್ ಲರ್ನಿಂಗ್ (ಎಂಎಲ್) ಸಾಧನಗಳ ದುಷ್ಪರಿಣಾಮಗಳ ಕುರಿತು ತನಗೆ ತಿಳಿದಿದೆ. ಆದರೆ, ಈ ಸಮಸ್ಯೆಗಳನ್ನು ನ್ಯಾಯಾಲಯಗಳ ಆದೇಶಗಳ ಮೂಲಕ ಪರಿಹರಿಸುವ ಬದಲು ಆಡಳಿತದ ಮೂಲಕ ಸಮರ್ಪಕವಾಗಿ ಪರಿಹರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೃತಕ ಬುದ್ಧಿ ಮತ್ತೆಯಿಂದ ಉತ್ಪಾದಿತ ವಿಷಯದಿಂದ ಉಂಟಾಗುವ ಅಪಾಯಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಅದರ ದುರುಪಯೋಗದ ವಿರುದ್ಧ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ ದೂರುದಾರ ಕಾರ್ತಿಕೇಯ ರಾವಲ್ ಅವರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಅನುಪಮ್ ಲಾಲ್ ದಾಸ್ ಅವರ ವಾದವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯಮಾಲ್ಯ ಭಾಗಚಿ ಅವರ ಪೀಠ ಆಲಿಸಿತು. ಕಾನೂನಿನಲ್ಲಿ ಅನಿರ್ಬಂಧಿತ ಕೃತಕ ಬುದ್ಧಿ ಮತ್ತೆಯ ಬಳಕೆಯ ವಿರುದ್ಧ ಐಐಟಿ ಮದ್ರಾಸ್ನ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಈ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ಅವರು ‘ಲೀಗಲ್ ಸೇಫ್ಟಿ ಸ್ಕೋರ್’ ಎಂಬ ಕಲ್ಪನೆಯನ್ನು ಮುಂದಿರಿಸಿದ್ದಾರೆ. ಕೃತಕ ಬುದ್ಧಿ ಮತ್ತೆಯ ಪರಿಕರಗಳು ಅಸ್ತಿತ್ವದಲ್ಲಿಲ್ಲದ ತೀರ್ಪುಗಳು ಮತ್ತು ಪೂರ್ವನಿದರ್ಶನಗಳನ್ನು ಸೃಷ್ಟಿಸುತ್ತವೆ. ಈ ನಕಲಿ ತೀರ್ಪಗಳು ಕೆಲವೊಮ್ಮೆ ನಿಜವಾದ ನ್ಯಾಯಾಲಯದ ತೀರ್ಪುಗಳಲ್ಲಿ ಸೇರ್ಪಡೆಯಾಗಬಹುದು ಎಂದು ಹಿರಿಯ ವಕೀಲರು ಹೇಳಿದರು. ನಮ್ಮ ನ್ಯಾಯಾಂಗ ನಿರ್ಧಾರಗಳನ್ನು ನಿಯಂತ್ರಿಸಲು ಅಥವಾ ಪರಿಣಾಮ ಬೀರಲು ನಾವು ಬಯಸುವುದಿಲ್ಲವಾದುದರಿಂದ ನಾವು ಅದನ್ನು ಬಹಳ ಎಚ್ಚರಿಕೆಯಿಂದ ಬಳಸುತ್ತೇವೆ. ಕೃತಕ ಬುದ್ದಿ ಮತ್ತೆ ನ್ಯಾಯಾಂಗ ಕಾರ್ಯಗಳಿಗೆ ಸಹಾಯ ಮಾಡಬಹುದು. ಆದರೆ, ಅದು ನ್ಯಾಯಾಂಗ ತಾರ್ಕಿಕತೆಯ ಸ್ಥಾನ ತುಂಬಲು ಅಥವಾ ಪ್ರಭಾವಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ವಿಶಾಖಪಟ್ಟಣದಲ್ಲೂ ಟಾಸ್ ಗೆದ್ದೋರು ಫೀಲ್ಡಿಂಗ್ ಮಾಡೋದು ಖಚಿತ; ಲಕ್ ಕೈಹಿಡಿಯದಿದ್ದಾಗ ಹೇಗಾಡುವುದು ಉಚಿತ?
India Vs South Africa- ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಕಹಿ ಉಂಡಿರುವ ಭಾರತ ತಂಡ ಇದೀಗ ವಿಶಾಖಪಟ್ಟಣದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿರುವುದರಿಂದ 3ನೇ ಪಂದ್ಯ ನಿರ್ಣಾಯಕವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿ ಇರುವುದುರಿಂದ ಕ್ರಿಕೆಟ್ ಪ್ರೇಮಿಗಳು ಸಹ ಪಂದ್ಯದ ಬಗ್ಗೆ ಬಹಳ ಕುತುೂಹಲಗೊಂಡಿದ್ದಾರೆ. ಇಲ್ಲಿನ ವಾತಾವರಣದಲ್ಲೂ ರಾತ್ರಿ ವೇಳೆ ಇಬ್ಬನಿಯ ಪ್ರಭಾವ ಹೆಚ್ಚಿರಲಿದ್ದು ಟಾಸ್ ಗೆಲುವು ಮುಖ್ಯವಾಗಲಿದೆ.
ನಾಳೆ ಡಿ.6ರಂದು ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯ; ಟ್ರೋಫಿ ಗೆಲ್ಲಲು ಭಾರತ-ದಕ್ಷಿಣ ಆಫ್ರಿಕಾ ಹಣಾಹಣಿ
ವಿಶಾಖಪಟ್ಟಣ, ಡಿ.5: ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ಶನಿವಾರ ಕೊನೆಯ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದು, ಸದ್ಯ ಮೂರು ಪಂದ್ಯಗಳ ಸರಣಿಯು 1-1ರಿಂದ ಸಮಬಲದಲ್ಲಿದೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಪಂದ್ಯವು ಸರಣಿ ವಿಜೇತರನ್ನು ನಿರ್ಧರಿಸಲಿದೆ. ಉಭಯ ತಂಡಗಳು ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದವು. ರಾಂಚಿಯಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ ಗೆದ್ದುಕೊಂಡಿತ್ತು. ರಾಯ್ಪುರದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯವನ್ನು ಜಯಿಸಿದ್ದ ದಕ್ಷಿಣ ಆಫ್ರಿಕಾ ಸರಣಿಯನ್ನು ಸಮಬಲಗೊಳಿಸಿತ್ತು. ಮೊದಲೆರಡು ಪಂದ್ಯಗಳಲ್ಲಿ ರನ್ ಹೊಳೆಯೇ ಹರಿದಿದ್ದು, ಪಿಚ್ ಬ್ಯಾಟರ್ ಗಳ ಸ್ನೇಹಿಯಾಗಿತ್ತು. ಈ ಗರಿಷ್ಠ ಮೊತ್ತದ ಪಂದ್ಯಗಳಲ್ಲಿ ಹಲವು ದಾಖಲೆಗಳು ಪತನಗೊಂಡಿವೆ. ದ್ವಿತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 359 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಏಕದಿನ ಕ್ರಿಕೆಟ್ ನಲ್ಲಿ ಭಾರತ ವಿರುದ್ಧ ಮೊದಲ ಬಾರಿ ಈ ಸಾಧನೆ ಮಾಡಿತ್ತು. ಭಾರತ ತಂಡವು ಮೊದಲ ಪಂದ್ಯದಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 349 ರನ್ ಗಳಿಸಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಎರಡನೇ ಗರಿಷ್ಠ ಸ್ಕೋರ್ ಗಳಿಸಿತ್ತು. ಆ ನಂತರ 2ನೇ ಪಂದ್ಯದಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 358 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿತ್ತು. ಭಾರತ ತಂಡವು 2021-22ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದ್ವಿಪಕ್ಷೀಯ ಸರಣಿಯ ವೇಳೆ ಟೆಸ್ಟ್ ಹಾಗೂ ಏಕದಿನ ಸರಣಿ ಎರಡನ್ನೂ ಕಳೆದುಕೊಂಡಿತ್ತು. ಆದರೆ ಸ್ವದೇಶದಲ್ಲಿ 1986-87ರ ನಂತರ ಎರಡೂ ಸರಣಿಗಳನ್ನು ಸೋತಿಲ್ಲ. 1986-87ರಲ್ಲಿ ಪಾಕಿಸ್ತಾನ ತಂಡವು ಟೆಸ್ಟ್ನಲ್ಲಿ 1-0 ಹಾಗೂ ಏಕದಿನ ಪಂದ್ಯದಲ್ಲಿ 5-1 ಅಂತರದಿಂದ ಜಯ ಸಾಧಿಸಿತ್ತು. ದಕ್ಷಿಣ ಆಫ್ರಿಕಾ ತಂಡವು ಅಪರೂಪದ ಡಬಲ್ ಸಾಧನೆಗೈಯುವ ಅದಮ್ಯ ವಿಶ್ವಾಸದೊಂದಿಗೆ ವಿಶಾಖಪಟ್ಟಣಕ್ಕೆ ಆಗಮಿಸಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ಪಂದ್ಯದಲ್ಲಿ ಮಂಜಿನ ಹನಿಯು ಗೆಲುವು-ಸೋಲಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. ಸತತ 20 ಬಾರಿ ಟಾಸ್ ನಲ್ಲಿ ಸೋತಿರುವ ಭಾರತ ತಂಡವು ಈ ಬಾರಿ ಟಾಸ್ ಗೆಲ್ಲುವ ವಿಶ್ವಾಸದಲ್ಲಿದೆ. 2023ರ ಏಕದಿನ ವಿಶ್ವಕಪ್ ನ ಸೆಮಿ ಫೈನಲ್ ನಲ್ಲಿ ಕೊನೆಯ ಬಾರಿ ಟಾಸ್ ಗೆದ್ದಿತ್ತು. ►ಟೀಮ್ ನ್ಯೂಸ್ ಎರಡು ಬಾರಿ ಟಾಸ್ ಸೋತ ಹೊರತಾಗಿಯೂ ಮೊದಲ ಪಂದ್ಯವನ್ನು ಜಯಿಸಿ, ಎರಡನೇ ಪಂದ್ಯವನ್ನು ಕೂದಲೆಳೆ ಅಂತರದಿಂದ ಸೋತಿರುವ ಭಾರತ ತಂಡದ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಋತುರಾಜ್ ಗಾಯಕ್ವಾಡ್ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ನಾಲ್ಕನೇ ಕ್ರಮಾಂಕಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಸಿದ್ಧ ಕೃಷ್ಣ ಎರಡನೇ ಏಕದಿನ ಪಂದ್ಯದಲ್ಲಿ ದುಬಾರಿ ಬೌಲರ್ ಆಗಿದ್ದರು. ಆದರೆ, ಭಾರತ ತಂಡದಲ್ಲಿ ಬದಲಿ ಬೌಲರ್ ಲಭ್ಯವಿಲ್ಲ. ಸ್ಪೆಷಲಿಷ್ಟ್ ಬೌಲರ್ ಬದಲಿಗೆ ಆಲ್ ರೌಂಡರ್ ರನ್ನು ಆಡಿಸುವ ಸಾಧ್ಯತೆ ಇಲ್ಲ. ಎರಡನೇ ಏಕದಿನ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಆಟಗಾರರಾದ ನಾಂಡ್ರೆ ಬರ್ಗೆರ್ ಹಾಗೂ ಟೋನಿ ಡಿ ರೆರ್ಝಿ ಗಾಯಗೊಂಡಿದ್ದರು. ಈ ಇಬ್ಬರು ಮೂರನೇ ಪಂದ್ಯ ಆಡುವ ಸಾಧ್ಯತೆ ಇಲ್ಲ. ಈ ಇಬ್ಬರನ್ನು ಕಾಡುತ್ತಿರುವ ಮಂಡಿರಜ್ಜು ಸಮಸ್ಯೆ ಶೀಘ್ರ ಗುಣಮುಖವಾಗುವ ಸಾಧ್ಯತೆ ಇಲ್ಲ.ಹೀಗಾಗಿ ಬರ್ಗೆರ್ ಹಾಗೂ ಟೋನಿ ಡಿ ರೆರ್ಝಿ ಬದಲಿಗೆ ಒಟ್ನೀಲ್ ಬಾರ್ಟ್ಮನ್ ಹಾಗೂ ರಯಾನ್ ರಿಕೆಲ್ಟನ್ ಆಡುವ ನಿರೀಕ್ಷೆ ಇದೆ. ►ಪಿಚ್ ಹಾಗೂ ವಾತಾವರಣ ವಿಶಾಖಪಟ್ಟಣದಲ್ಲಿ ನಡೆದ ಕಳೆದ ಎರಡು ಪಂದ್ಯಗಳಲ್ಲಿ ಭಾರತ ಏಕರೂಪದ ಪ್ರದರ್ಶನ ನೀಡಿಲ್ಲ. 2019ರ ಡಿಸೆಂಬರ್ ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ 387 ರನ್ ಗಳಿಸಿದ್ದ ಭಾರತ ತಂಡವು 2023ರ ಮಾರ್ಚ್ ನಲ್ಲಿ ಆಸ್ಟ್ರೇಲಿಯ ತಂಡದ ಎದುರು 117 ರನ್ ಗೆ ಆಲೌಟಾಗಿತ್ತು. ವಿಶಾಖಪಟ್ಟಣದ ತಾಪಮಾನವು ರಾಂಚಿ ಹಾಗೂ ರಾಯ್ಪುರಕ್ಕಿಂತ ಹೆಚ್ಚಾಗಿದೆ. ಆದರೆ ಇದು ಕ್ರಿಕೆಟಿಗೆ ಆಹ್ಲಾದಕರವಾಗಿರಲಿದೆ. ►ತಂಡಗಳು ಭಾರತ(ಸಂಭಾವ್ಯ): 1.ಯಶಸ್ವಿ ಜೈಸ್ವಾಲ್, 2. ರೋಹಿತ್ ಶರ್ಮಾ, 3. ವಿರಾಟ್ ಕೊಹ್ಲಿ, 4. ಋತುರಾಜ್ ಗಾಯಕ್ವಾಡ್, 5. ಕೆ.ಎಲ್.ರಾಹುಲ್(ನಾಯಕ, ವಿಕೆಟ್ ಕೀಪರ್), 6. ವಾಶಿಂಗ್ಟನ್ ಸುಂದರ್, 7. ರವೀಂದ್ರ ಜಡೇಜ, 8. ಹರ್ಷಿತ್ ರಾಣಾ, 9. ಕುಲದೀಪ ಯಾದವ್, 10. ಅರ್ಷದೀಪ ಸಿಂಗ್, 11. ಪ್ರಸಿದ್ಧ ಕೃಷ್ಣ ದಕ್ಷಿಣ ಆಫ್ರಿಕಾ(ಸಂಭಾವ್ಯ): 1. ಏಡೆನ್ ಮರ್ಕ್ರಮ್, 2. ಕ್ವಿಂಟನ್ ಡಿಕಾಕ್(ವಿಕೆಟ್ ಕೀಪರ್),3. ಟೆಂಬಾ ಬವುಮಾ(ನಾಯಕ), 4. ಮ್ಯಾಥ್ಯೂ ಬ್ರೀಝ್ಕೆ, 5. ರಯಾನ್ ರಿಕೆಲ್ಟನ್, 6. ಡೆವಾಲ್ಡ್ ಬ್ರೆವಿಸ್, 7. ಮಾರ್ಕೊ ಜಾನ್ಸನ್, 8. ಕಾರ್ಬಿನ್ ಬಾಷ್, 9. ಕೇಶವ ಮಹಾರಾಜ್, 10.ಲುಂಗಿ ಗಿಡಿ, 11. ಒಟ್ನೀಲ್ ಬಾರ್ಟ್ಮನ್ ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:30
ಬೀದರ್| ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳೆ ಸಮೀಕ್ಷೆದಾರರಿಂದ ಶಾಸಕರಿಗೆ ಮನವಿ
ಬೀದರ್ : ಕರ್ನಾಟಕ ರಾಜ್ಯದ ಬೆಳೆ ಸಮೀಕ್ಷೆದಾರರಿಗೆ (ಪಿ.ಆರ್) ಸೇವಾ ಭದ್ರತೆ ಜೀವವಿಮೆ ನೀಡಬೇಕು. ನಮ್ಮನ್ನು ಖಾಯಂಗೊಳಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಿಆರ್ ಸಮೀಕ್ಷೆದಾರರಿಂದ ಬಸವಕಲ್ಯಾಣ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಬೆಳೆ ಸಮೀಕ್ಷೆದಾರರು ಸುಮಾರು 7 ರಿಂದ 8 ವರ್ಷಗಳಿಂದ ಪ್ರತಿವರ್ಷ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ನಿಗದಿತ ಸಮಯದಲ್ಲಿ ಅನೇಕ ಸಮಸ್ಯೆಗಳ ನಡುವೆ ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ. ಆದರೆ ನಮಗೆ ಯಾವುದೇ ರೀತಿಯಲ್ಲಿ ರಕ್ಷಣೆ ಇಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ರೈತರು ಪಹಣಿ ಪತ್ರದಲ್ಲಿ ಬೆಳೆ ನಮೂದು ಮಾಡಲು, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಲಾಭ ಪಡೆಯಲು, ಬೆಳೆ ವಿಮೆ ಪಡೆಯಲು, ಬೆಳೆ ಹಾನಿ ಪರಿಹಾರ ಪಡೆಯಲು, ಸರ್ಕಾರದ ಮಾರುಕಟ್ಟೆಯಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಮೀಕ್ಷೆ ಅತ್ಯಗತ್ಯವಾಗಿದೆ. ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಆದರೆ ನಾವು ರೈತರ ಬೆನ್ನಲುಬಾಗಿದ್ದೇವೆ. ನಾವು ನಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಸಮೀಕ್ಷೆ ಮಾಡುತ್ತೇವೆ. ಕಲ್ಲು, ಮುಳ್ಳುಗಳೆನ್ನದೆ ಹೋಗುತ್ತೇವೆ. ಬೆಳೆದ ಬೆಳೆಗಳಲ್ಲಿ ಅಡಗಿ ಕುಳಿತಿರುವ ಹಾವುಗಳ, ಕೆಸರಿನಲ್ಲಿ ಸಿಕ್ಕಿ ಬೀಳುವ, ಕಾಡುಪ್ರಾಣಿಗಳ ದಾಳಿಯ ಹೆದರಿಕೆಯಲ್ಲಿ ಕೆಲಸ ಮಾಡುತ್ತೇವೆ. ಆದರೆ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಲಾಗಿದೆ. ಕೆಲವು ರೈತರು ಅವಾಚ್ಯ ಪದಗಳಿಂದ ನಿಂದಿಸಿದರೂ ಕೂಡ ತಾಳ್ಮೆಯಿಂದ ಸಮೀಕ್ಷೆ ಮಾಡುತ್ತೇವೆ. ಆದರೆ ಯಾವ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ನಮ್ಮ ಮೇಲೆ ಕರುಣೆ ತೋರದೆ ಮಲತಾಯಿ ಧೋರಣೆ ತೋರುತ್ತಿದೆ. ಆದರೆ ನಾವು ಸಹನೆಯಿಂದಿದ್ದೇವೆ. ಆದ್ದರಿಂದ ಸರಕಾರ ನಮ್ಮ ಕೂಗನ್ನು ಕೇಳಿ, ಪರಿಶೀಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೋಹನ್ ಮಾನೆ, ಭಾಲ್ಕಿ ತಾಲೂಕು ಅಧ್ಯಕ್ಷ ಏಕನಾಥ ಮೇತ್ರೆ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕಾಂಬ್ಳೆ, ಹುಲಸೂರು ತಾಲೂಕು ಅಧ್ಯಕ್ಷ ಪರಮೇಶ್ವರ್ ಬಿರಾದಾರ್, ಬಸವಕಲ್ಯಾಣ ತಾಲೂಕು ಅಧ್ಯಕ್ಷ ಶಂಕರಲಿಂಗ, ಜಿಲ್ಲಾ ಖಜಾಂಚಿ ಮಹೇಶ್ ಗೊರಟೆ, ದಿಲೀಪ್ ಗೋರ್ಟಾ, ಬಸವರಾಜ್ ಎಳ್ಳುರೆ, ವಿಕಾಸ್ ಉಪಸ್ಥಿತರಿದ್ದರು.
ODIನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ವಿರಾಟ್ ಕೊಹ್ಲಿ ಚಿತ್ತ
ವಿಶಾಖಪಟ್ಟಣ, ಡಿ.5: ಎರಡೂ ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿದ್ದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದಾರೆ. ಶನಿವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಸತತ ಮೂರನೇ ಬಾರಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳುವ ಅಪೂರ್ವ ಅವಕಾಶ ಕೊಹ್ಲಿಗೆ ಒದಗಿಬಂದಿದೆ. ಇದೀಗ ಕೊಹ್ಲಿ ಹಾಗೂ ರೋಹಿತ್ ಅವರು ತಲಾ ಒಂದು ಬಾರಿ ಸತತ ಶತಕಗಳನ್ನು ಸಿಡಿಸಿದ್ದಾರೆ.ಕೊಹ್ಲಿ ತನ್ನ ವೃತ್ತಿಜೀವನದಲ್ಲಿ 11 ಬಾರಿ ಸತತ ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಅವರು ‘ಹ್ಯಾಟ್ರಿಕ್’ ಶತಕ ಗಳಿಸುವಲ್ಲಿ ಶಕ್ತರಾದರೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸತತ ನಾಲ್ಕು ಏಕದಿನ ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸಕ್ತ ಸರಣಿಗಿಂತ ಮೊದಲು 2023ರ ಕ್ರಿಕೆಟ್ ವಿಶ್ವಕಪ್ ನ ವೇಳೆ ದಕ್ಷಿಣ ಆಫ್ರಿಕಾದ ವಿರುದ್ಧ ಕೊಹ್ಲಿ ಶತಕ ಗಳಿಸಿದ್ದರು. ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ ನಲ್ಲಿ ಹೆಚ್ಚು ಬಾರಿ 100 ರನ್ ಜೊತೆಯಾಟ ನಡೆಸಿದ ಜೋಡಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಜೋಡಿ ಕುಮಾರ ಸಂಗಕ್ಕರ ಹಾಗೂ ಟಿ.ಎಂ. ದಿಲ್ಶನ್ 20 ಬಾರಿ 100 ರನ್ ಜೊತೆಯಾಟ ನಡೆಸಿದ್ದರು. ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ 26ನೇ ಬಾರಿ ಶತಕದ ಜೊತೆಯಾಟ ನಡೆಸಿ ದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾಗೆ ದಕ್ಷಿಣ ಆಫ್ರಿಕಾದ ಲೆಜೆಂಡ್ ಜಾಕಸ್ ಕಾಲಿಸ್ ದಾಖಲೆ ಮುರಿದು ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಲು 120 ರನ್ಗಳ ಅಗತ್ಯವಿದೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18 ಇಂಡಿಗೋ ವಿಮಾನಗಳ ಹಾರಾಟ ರದ್ದು
ಪ್ರಯಾಣಿಕರ ಪರದಾಟ
ಮದುವೆಯಾಗುವ ವಯಸ್ಸಾಗದಿದ್ದರೂ ವಯಸ್ಕರು ಸಹಜೀವನ ನಡೆಸಬಹುದು: ರಾಜಸ್ಥಾನ ಹೈಕೋರ್ಟ್
ಜೈಪುರ, ಡಿ. 5: ಕಾನೂನು ಪ್ರಕಾರ ಮದುವೆಯಾಗುವ ವಯಸ್ಸು ಆಗದಿದ್ದರೂ, ಇಬ್ಬರು ವಯಸ್ಕರು ಸಹಮತದಿಂದ ಸಹಜೀವನ ನಡೆಸುವ ಹಕ್ಕು ಹೊಂದಿದ್ದಾರೆ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದರು. ಅವರಿಗೆ ಮದುವೆಯಾಗುವ ವಯಸ್ಸು ಆಗಿಲ್ಲ ಎಂಬ ಕಾರಣಕ್ಕಾಗಿ ಅವರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಕ್ಷಣೆ ನೀಡಬೇಕೆಂದು ಕೋರಿ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ಸಲ್ಲಿಸಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಧೀಶ ಅನೂಪ್ ದಂಡ್ ಈ ತೀರ್ಪು ನೀಡಿದರು. ತಾವು ತಮ್ಮ ಸ್ವಂತ ಇಚ್ಛೆಯಿಂದ ಸಹಜೀವನ ನಡೆಸುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಜೋಡಿಯು ಅಕ್ಟೋಬರ್ 27ರಂದು ತಾವು ಸಹಜೀವನ ಒಪ್ಪಂದ ಮಾಡಿಕೊಂಡಿದ್ದೇವೆ ಎಂದಿತು. ಯುವತಿಯ ಕುಟುಂಬವು ಈ ಸಂಬಂಧವನ್ನು ವಿರೋಧಿಸಿದ್ದು, ತಮ್ಮನ್ನು ಕೊಲ್ಲುವ ಬೆದರಿಕೆ ಹಾಕಿದೆ ಎಂದು ಅರ್ಜಿದಾರರು ಆರೋಪಿಸಿದರು. ಈ ಬಗ್ಗೆ ತಾವು ಕೊಟ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು. ಅರ್ಜಿಯನ್ನು ವಿರೋಧಿಸಿದ ಸರಕಾರಿ ವಕೀಲ ವಿವೇಕ್ ಚೌಧರಿ, ಯುವಕನಿಗೆ ಕಾನೂನು ಪ್ರಕಾರ ಮದುವೆಯಾಗಬಹುದಾದ 21 ವರ್ಷ ಆಗಿಲ್ಲದಿರುವುದರಿಂದ ಅವರಿಗೆ ಸಹಜೀವನ ನಡೆಸಲು ಅವಕಾಶ ನೀಡಬಾರದು ಎಂದು ವಾದಿಸಿದರು. ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಅರ್ಜಿದಾರರು ಮದುವೆಯಾಗುವ ವಯಸ್ಸಿನವರು ಅಲ್ಲ ಎಂಬ ಏಕೈಕ ಕಾರಣಕ್ಕಾಗಿ ಸಂವಿಧಾನದ 21ನೇ ವಿಧಿಯಡಿಯಲ್ಲಿ ಬರುವ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಅವರಿಗೆ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿತು. ಅವರಿಗೆ ರಕ್ಷಣೆ ನೀಡಲು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಧೀಶರು ಪೊಲೀಸರಿಗೆ ನಿರ್ದೇಶನ ನೀಡಿದರು.
ವೆನೆಝುವೆಲಾದ ಮೇಲೆ ಅಮೆರಿಕದ ಒತ್ತಡ ತಂತ್ರ: ವಿಶ್ವಸಂಸ್ಥೆ ತಜ್ಞರ ಕಳವಳ
ಜಿನೆವಾ, ಡಿ.5: ವೆನೆಝುವೆಲಾದ ಮೇಲೆ ಅಮೆರಿಕದಿಂದ ಹೆಚ್ಚುತ್ತಿರುವ ಒತ್ತಡದ ಬಗ್ಗೆ ವಿಶ್ವಸಂಸ್ಥೆಯ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದು ವೆನೆಝುವೆಲಾದ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಪರಿಗಣಿಸಬೇಕೆಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಘೋಷಣೆ ಅಪಾಯಕಾರಿ ಬೆಳವಣಿಗೆಯ ಸೂಚನೆಯಾಗಿರಬಹುದು ಎಂದಿದ್ದಾರೆ. `ಅಂತರಾಷ್ಟ್ರೀಯ ಕಾನೂನು ಸ್ಪಷ್ಟವಾಗಿದೆ. ರಾಷ್ಟ್ರಗಳು ತಮ್ಮ ಪ್ರದೇಶದ ಮೇಲಿನ ವಾಯುಪ್ರದೇಶದ ಮೇಲೆ ಸಂಪೂರ್ಣ ಮತ್ತು ವಿಶೇಷ ಸಾರ್ವಭೌಮತ್ವವನ್ನು ಹೊಂದಿದೆ. ಮತ್ತೊಂದು ದೇಶದ ವಾಯುಪ್ರದೇಶವನ್ನು ನಿಯಂತ್ರಿಸಲು, ನಿರ್ಬಂಧಿಸಲು ಅಥವಾ ಮುಚ್ಚಲು ಪ್ರಯತ್ನಿಸುವ ಎಲ್ಲಾ ಕ್ರಮಗಳೂ ಚಿಕಾಗೋ ನಿರ್ಣಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಂತರಾಷ್ಟ್ರೀಯ ನಾಗರಿಕ ವಾಯುಯಾನ ಸಮ್ಮೇಳನದ ಆರ್ಟಿಕಲ್ 1 ಅನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ತಜ್ಞರು ಹೇಳಿದ್ದಾರೆ. `ಯಾವುದೇ ರಾಷ್ಟ್ರದ ರಾಜಕೀಯ ಸ್ವಾತಂತ್ರ್ಯ ಅಥವಾ ಪ್ರಾದೇಶಿಕ ಸಮಗ್ರತೆಯ ವಿರುದ್ಧ ಬೆದರಿಕೆ ಅಥವಾ ಬಲಪ್ರಯೋಗವನ್ನು ವಿಶ್ವಸಂಸ್ಥೆಯ ಚಾರ್ಟರ್ (ಸನದು) ನಿಷೇಧಿಸಿದೆ. ಮತ್ತೊಂದು ದೇಶದ ವಾಯುಪ್ರದೇಶದ ಮೇಲೆ ಪರಿಣಾಮ ಬೀರುವ ಕ್ರಮಗಳು ಸಾರ್ವಭೌಮತೆಯ ಉಲ್ಲಂಘನೆಯಾಗಬಹುದು ಮತ್ತು ಬಲ ಪ್ರಯೋಗದ ಕಾನೂನು ಬಾಹಿರ ಬೆದರಿಕೆಯನ್ನು ರೂಪಿಸಬಹುದು. ಬಲ ಪ್ರಯೋಗಿಸದಿರುವುದು, ಹಸ್ತಕ್ಷೇಪ ಮಾಡದಿರುವುದು ಮತ್ತು ಪ್ರಾದೇಶಿಕ ಉಲ್ಲಂಘನೆ ನಿಷೇಧಿಸುವ ತತ್ವಗಳು ಅಂತರಾಷ್ಟ್ರೀಯ ಕಾನೂನು ವ್ಯವಸ್ಥೆಯ ಮೂಲಾಧಾರವಾಗಿದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯ ದೃಢಪಡಿಸಿದೆ. `ರಾಷ್ಟ್ರವೊಂದರ ಪ್ರಾದೇಶಿಕ ವ್ಯಾಪ್ತಿಯಲ್ಲಿ(ವಾಯು ಪ್ರದೇಶ ಸೇರಿದಂತೆ) ಹಸ್ತಕ್ಷೇಪದ ಏಕಪಕ್ಷೀಯ ಕ್ರಮವು ಪ್ರಾದೇಶಿಕ ಸ್ಥಿರತೆಯನ್ನು ಸಂಪೂರ್ಣವಾಗಿ ಹಾಳುಮಾಡುವ ಅಪಾಯವಿದೆ ಮತ್ತು ವೆನೆಝುವೆಲಾದ ಆರ್ಥಿಕತೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ ' ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದು ಮತ್ತೊಂದು ರಾಷ್ಟ್ರದ ವಾಯುಪ್ರದೇಶವನ್ನು ಮುಚ್ಚಲು ಅಮೆರಿಕ ಯಾವುದೇ ಕಾನೂನು ಅಧಿಕಾರವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೆನೆಝುವೆಲಾದ ವಾಯುಪ್ರದೇಶದಲ್ಲಿ `ಸಂಭಾವ್ಯ ಅಪಾಯಕಾರಿ ಸ್ಥಿತಿ'ಯ ಬಗ್ಗೆ , ವೆನೆಝುವೆಲಾದಲ್ಲಿ ಭದ್ರತೆ ಹದಗೆಡುತ್ತಿರುವ ಬಗ್ಗೆ ಅಮೆರಿಕದ ಫೆಡರಲ್ ವಾಯುಯಾನ ಪ್ರಾಧಿಕಾರ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ 6 ಅಂತರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳು ವೆನೆಝುವೆಲಾ ರಾಜಧಾನಿ ಕ್ಯಾರಕಸ್ಗೆ ವಿಮಾನಗಳನ್ನು ಅಮಾನತುಗೊಳಿಸಿವೆ. ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಕ್ರಮಗಳಿಂದ ದೂರವಿರುವಂತೆ ಮತ್ತು ಕೈಗೊಳ್ಳುವ ಯಾವುದೇ ಕ್ರಮಗಳು ವಿಶ್ವಸಂಸ್ಥೆಯ ಚಾರ್ಟರ್, ಚಿಕಾಗೋ ನಿರ್ಣಯ ಮತ್ತು ಸಾಂಪ್ರದಾಯಿಕ ಅಂತರಾಷ್ಟ್ರೀಯ ಕಾನೂನಿನ ಸಂಬಂಧಿತ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ವಿಶ್ವಸಂಸ್ಥೆ ತಜ್ಞರು ಅಮೆರಿಕವನ್ನು ಆಗ್ರಹಿಸಿದ್ದಾರೆ.
ಉಪ್ಪಿನಂಗಡಿಯ ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು
ಮಂಗಳೂರು, ಡಿ.5: ನಗರದ ಪೊಲೀಸ್ ಲೇನ್ನಲ್ಲಿ ವಾಸವಾಗಿರುವ ಪೊಲೀಸ್ ಅಧಿಕಾರಿಯ ಮನೆಗೆ ಬಂದಿದ್ದ ಉಪ್ಪಿನಂಗಡಿಯ ಮಠ ಹಿರ್ತಡ್ಕ ನಿವಾಸಿ ಮುಹಮ್ಮದ್ ಅಶ್ರಫ್ (49) ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.2ರಂದು ಬೆಳಗ್ಗೆ 6:30ಕ್ಕೆ ತನ್ನ ಸ್ಕೂಟರ್ನಲ್ಲಿ ಪೊಲೀಸ್ ಲೇನ್ನ ಮನೆಗೆ ಬಂದಿದ್ದ ಅಶ್ರಫ್ 7 ಗಂಟೆಗೆ ಉಪ್ಪಿನಂಗಡಿಗೆ ಹೋಗುವುದಾಗಿ ತೆರಳಿದ್ದಾರೆ. ಆದರೆ ಅಲ್ಲಿಂದ ಮನೆಗೆ ಹೋಗದೆ ನಾಪತ್ತೆಯಾಗಿರುವುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಶ್ರಫ್ರನ್ನು ನಗರದ ವಿವಿಧೆಡೆ ಹುಡುಕಲಾಗಿದ್ದು, ಅವರ ಸ್ಕೂಟರ್ ರೈಲ್ವೇ ಸ್ಟೇಷನ್ ಬಳಿ ಪತ್ತೆಯಾಗಿದೆ. 5.4 ಅಡಿ ಎತ್ತರದ, ಸಪೂರ ಶರೀರದ, ಗೋಧಿ ಮೈ ಬಣ್ಣದ, ಸಾಧಾರಣ ಮೈಕಟ್ಟು ಹೊಂದಿರುವ ಅಶ್ರಫ್ ಉದ್ದ ತೋಳಿನ ಚೆಕ್ಸ್ ಶಟ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ತುಳು, ಬ್ಯಾರಿ ಭಾಷೆ ಬಲ್ಲ ಅಶ್ರಫ್ರನ್ನು ಕಂಡವರು ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಬೀದಿ ನಾಯಿ ನಿರ್ವಹಣೆಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿ ಪ್ರಕಟ; ಏನೆಲ್ಲಾ ನಿಯಮ? ಎಷ್ಟು ಆಹಾರ ಒದಗಿಸಬೇಕು?
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಬೀದಿ ನಾಯಿಗಳ ನಿರ್ವಹಣೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಕಡಿತ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳು ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಬೇಕು. ನಾಯಿಗಳ ತೂಕಕ್ಕೆ ಅನುಗುಣವಾಗಿ ಆಹಾರ ನೀಡಬೇಕು. ಸ್ವಚ್ಛತೆ ಮತ್ತು ನೀರಿನ ವ್ಯವಸ್ಥೆ ಕಡ್ಡಾಯವಾಗಿದೆ. ಈ ಮಾರ್ಗಸೂಚಿಗಳನ್ನು ಎಲ್ಲ ರಾಜ್ಯಗಳು ಪಾಲಿಸಬೇಕು.
ರಾಜಘಾಟ್ ಗೆ ಪುಟಿನ್ ಭೇಟಿ: ಗಾಂಧೀಜಿಯವರಿಗೆ ನಮನ
ಹೊಸದಿಲ್ಲಿ,ಡಿ.5: ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿರುವ ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ದಿಲ್ಲಿಯ ರಾಜಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿಯವರ ಸ್ಮಾರಕಕ್ಕೆ ನಮನಗಳನ್ನು ಸಲ್ಲಿಸಿದರು. ಪುಟಿನ್ ಬಳಿಕ ಅಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ, ಗಾಂಧಿ ಆಧುನಿಕ ಸ್ವತಂತ್ರ ಭಾರತದ ಸ್ಥಾಪಕರಾಗಿದ್ದಾರೆ. ಜೊತೆಗೆ ಮಾನವತಾವಾದಿ ಮತ್ತು ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದಾರೆ ಎಂದು ಬಣ್ಣಿಸಿದ್ದಾರೆ. ‘ಮಹಾತ್ಮಾ ಗಾಂಧಿಯವರು ಅಹಿಂಸೆ ಮತ್ತು ಸತ್ಯ ಮಾರ್ಗದ ಮೂಲಕ ನಮ್ಮ ಈ ಭೂಮಿಯಲ್ಲಿ ಶಾಂತಿ ನೆಲೆಸಲು ಅಮೂಲ್ಯಕೊಡುಗೆಯನ್ನು ನೀಡಿದ್ದಾರೆ ಮತ್ತು ಅದರ ಪ್ರಭಾವವು ಇಂದಿಗೂ ಪ್ರಸ್ತುತವಾಗಿದೆ. ಅವರು ಈಗ ರೂಪುಗೊಳ್ಳುತ್ತಿರುವ ಹೊಸ,ನ್ಯಾಯಯುತ ಮತ್ತು ಬಹುಧ್ರುವೀಯ ವಿಶ್ವ ವ್ಯವಸ್ಥೆಗೆ ಮಾರ್ಗವನ್ನು ತೋರಿಸಿದ್ದರು. ಸಮಾನತೆ, ಪರಸ್ಪರ ಗೌರವ ಮತ್ತು ಸಹಕಾರ ಕುರಿತು ಅವರ ಬೋಧನೆಗಳಿಂದಾಗಿ ಇಂದು ಭಾರತವು ಜಗತ್ತಿನ ಇತರರೊಂದಿಗೆ ಸೇರಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಈ ತತ್ವಗಳು ಮತ್ತು ಮೌಲ್ಯಗಳನ್ನು ಸಮರ್ಥಿಸುತ್ತಿದೆ. ರಷ್ಯ ಕೂಡ ಇದನ್ನೇ ಮಾಡುತ್ತಿದೆ ’ಎಂದು ಪುಟಿನ್ ರಷ್ಯನ್ ಭಾಷೆಯಲ್ಲಿ ಬರೆದಿದ್ದಾರೆ.
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿದ ಪಿಐಎಲ್; ಮಾರ್ಚ್ 5ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್
ಬೆಂಗಳೂರು : ರಾಜ್ಯದ ನಾಗರಿಕರ ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್ 2026ರ ಮಾರ್ಚ್ 5ಕ್ಕೆ ನಿಗದಿಪಡಿಸಿದೆ. ಸಮೀಕ್ಷೆಗಾಗಿ 2025ರ ಆಗಸ್ಟ್ 13ರಂದು ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್ಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಒಕ್ಕಲಿಗರ ಸಂಘದ ಪರ ವಕೀಲ ಕೆ.ಅಭಿಷೇಕ್ ವಾದ ಮಂಡಿಸಿ, ಹಾಲಿ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ದತ್ತಾಂಶಗಳನ್ನು ಸಂರಕ್ಷಿಸಿಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಅದರಂತೆ ರಾಜ್ಯ ಸರಕಾರ ದತ್ತಾಂಶ ರಕ್ಷಿಸಿರುವುದರ ಸಂಬಂಧ ಪ್ರಮಾಣಪತ್ರ ಸಲ್ಲಿಸಿದೆ. ನಾಲ್ಕು ವಾರಗಳಲ್ಲಿ ಸರಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತ್ತು. ಆದರೆ, ಸರಕಾರ ಅದನ್ನು ಅನುಪಾಲಿಸಿಲ್ಲ ಎಂದರು. ರಾಜ್ಯ ಸರಕಾರ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಆಕ್ಷೇಪಣೆ ಸಿದ್ಧವಾಗಿದ್ದು, ಇಂದು ಸಲ್ಲಿಸಲಾಗುವುದು ಎಂದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಭಾರತೀಯ ಜನಗಣತಿ ಆಯೋಗ ಮತ್ತು ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿತು. ಜತೆಗೆ, ಎಲ್ಲ ಪಕ್ಷಕಾರರಿಗೆ ವಾದಾಂಶ ಸಲ್ಲಿಸಲು ನಿರ್ದೇಶಿಸಿದ ನ್ಯಾಯಪೀಠ ಅಂತಿಮ ವಿಚಾರಣೆಯನ್ನು ಮಾರ್ಚ್ 5ಕ್ಕೆ ನಿಗದಿಪಡಿಸಿತು. ಇದೇ ವೇಳೆ, ತೃತೀಯ ಲಿಂಗಿಗಳಿಗೆ ಸಂಬಂಧಿಸಿದ ಸಮೀಕ್ಷೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿದೆಯೇ ವಿನಾ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿಲ್ಲ. ಆದ್ದರಿಂದ, ಅವುಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕು ಎಂಬ ಅಡ್ವೊಕೇಟ್ ಜನರಲ್ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಪ್ರಶ್ನಿಸಿದ ಅರ್ಜಿಗಳಿಂದ ತೃತೀಯ ಲಿಂಗಿಗಳ ಸಮೀಕ್ಷೆ ಪ್ರಶ್ನಿಸಿದ ಅರ್ಜಿಗಳನ್ನು ಪ್ರತ್ಯೇಕಿಸಿ, ವಿಚಾರಣೆಯನ್ನು ಮಾರ್ಚ್ 8ಕ್ಕೆ ಮುಂದೂಡಿತು. ಪ್ರಕರಣವೇನು? ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೆಪ್ಟೆಂಬರ್ 22ರಿಂದ ರಾಜ್ಯದ ನಾಗರಿಕರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ರಾಜ್ಯ ಸರಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೆಪ್ಟೆಂಬರ್ 25ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತಾದರೂ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಮಾಹಿತಿ ಒದಗಿಸುವಂತೆ ಸಮೀಕ್ಷೆ ನಡೆಸುವವರು ಒತ್ತಾಯಿಸಬಾರದು, ಸಂಗ್ರಹಿಸಲಾಗುವ ದತ್ತಾಂಶವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹೊರತುಪಡಿಸಿ ಬೇರಾರಿಗೂ ಸೋರಿಕೆಯಾಗದಂತೆ ಗೌಪ್ಯತೆ ಕಾಯ್ದುಕೊಳ್ಳಬೇಕು ಮತ್ತು ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್ ಮೊದಲ ವಾರಕ್ಕೆ ಮುಂದೂಡಿತ್ತು.
ಇಂಡಿಗೋ ಬಿಕ್ಕಟ್ಟು | ಪೈಲಟ್ ಗಳ ವಾರದ ವಿಶ್ರಾಂತಿ ಆದೇಶ ಹಿಂದೆಗೆದುಕೊಂಡ DGCA
ಹೊಸದಿಲ್ಲಿ,ಡಿ.5: ದೇಶದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋವನ್ನು ಕಾಡುತ್ತಿರುವ ಕಾರ್ಯಾಚರಣೆ ಬಿಕ್ಕಟ್ಟನ್ನು ಪರಿಹರಿಸಲು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯವು (DGCA) ಹಾರಾಟ ಕರ್ತವ್ಯ ಸಮಯ ಮಿತಿ (ಎಫ್ಡಿಟಿಎಲ್) ನಿಯಮಾವಳಿಯ ‘ವಾರದ ವಿಶ್ರಾಂತಿಗಾಗಿ ರಜೆಯನ್ನು ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ’ ಎಂಬ ನಿಬಂಧನೆಯನ್ನು ಶುಕ್ರವಾರ ಹಿಂದೆಗೆದುಕೊಂಡಿದೆ. ಈ ನಿಯಮಾವಳಿಯ ಮೊದಲ ಹಂತ ಜು.1ರಂದು ಮತ್ತು ಎರಡನೇ ಹಂತ ನ.1ರಂದು ಜಾರಿಗೊಂಡಿದ್ದವು. ಪ್ರಸಕ್ತ ಕಾರ್ಯಾಚರಣೆಯಲ್ಲಿ ಉಂಟಾಗಿರುವ ವ್ಯತ್ಯಯಗಳು ಹಾಗೂ ಕಾರ್ಯಾಚರಣೆಗಳ ನಿರಂತರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯ ಕುರಿತು ವಿವಿಧ ವಿಮಾನಯಾನ ಸಂಸ್ಥೆಗಳ ಅಹವಾಲುಗಳ ಹಿನ್ನೆಲೆಯಲ್ಲಿ ಸದ್ರಿ ನಿಬಂಧನೆಯನ್ನು ಪುನರ್ ಪರಿಶೀಲಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ ಎಂದು DGCA ಶುಕ್ರವಾರ ಅಪರಾಹ್ನ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ರಾತ್ರಿ ವೇಳೆಯ ವಿಮಾನಯಾನಗಳಿಗೆ ಫೆ.10ರವರೆಗೆ ವಿನಾಯಿತಿಯ ಪ್ರಸ್ತಾವವನ್ನೂ ಮುಂದಿರಿಸಿರುವ DGCA, ಆದರೆ ವಿಮಾನಯಾನ ಸಂಸ್ಥೆಯು ಪ್ರತಿ 15 ದಿನಗಳಿಗೊಮ್ಮೆ ಪುನರ್ಪರಿಶೀಲನೆಯನ್ನು ಎದುರಿಸಬೇಕು ಮತ್ತು ನಿಯಮಗಳಿಗೆ ‘ಸಂಪೂರ್ಣ ಅನುಸರಣೆ’ಯನ್ನು ತೋರಿಸಲು 30 ದಿನಗಳ ಮಾರ್ಗಸೂಚಿಯನ್ನು ಸಲ್ಲಿಸಬೇಕು ಎಂದು ಹೇಳಿದೆ. ಇಂದಿನ ಎಫ್ಡಿಟಿಎಲ್ ನಿಯಮಗಳ ಪರಿಷ್ಕರಣೆಯಿಂದಾಗಿ ವಿಮಾನಯಾನ ಸಂಸ್ಥೆಗಳು ಪೈಲಟ್ ಗಳು ಮತ್ತು ಹಾರಾಟ ಸಿಬ್ಬಂದಿಯನ್ನು ನಿಯೋಜಿಸುವಾಗ ರಜೆ ಮತ್ತು ಸಾಪ್ತಾಹಿಕ ವಿಶ್ರಾಂತಿ ಅವಧಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಿಲ್ಲ. ನೂತನ ನಿಯಮಗಳ ಪ್ರಕಾರ 48 ಗಂಟೆಗಳ ಗಳಿಕೆ ರಜೆಯನ್ನು ಪಡೆದ ಪೈಲಟ್ ವಾರದ ವಿಶ್ರಾಂತಿಯನ್ನೂ ಪಡೆದಿದ್ದಾರೆ ಎಂದು ಪರಿಗಣಿಸಲಾಗುವುದು. ಗುರುವಾರ ರಾತ್ರಿ ಓರ್ವ ಪೈಲಟ್ ಹಾರಾಟ ನಡೆಸಬಹುದಾದ ನಿರಂತರ ಗಂಟೆಗಳನ್ನು 12ರಿಂದ 14ಕ್ಕೆ ಹೆಚ್ಚಿಸಲಾಗಿತ್ತು. ಇದರ ಬೆನ್ನಲ್ಲೇ ಇಂದಿನ ಪರಿಷ್ಕರಣೆಗಳು ಹೊರಬಿದ್ದಿವೆ. 2,200ಕ್ಕೂ ಅಧಿಕ ದೇಶೀಯ ಮತ್ತು ಅಂತರರಾಷ್ಟ್ರೀಯ ಯಾನಗಳನ್ನು ನಿರ್ವಹಿಸುತ್ತಿರುವ ಇಂಡಿಗೋದ ಕಾರ್ಯಾಚರಣೆಗಳು ಸಿಬ್ಬಂದಿ ಕೊರತೆಯಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ನೂತನ ಎಫ್ಡಿಟಿಎಲ್ ನಿಯಮಗಳಡಿ ಅಗತ್ಯವಿರುವ ಪೈಲಟ್ಗಳ ಸಂಖ್ಯೆಯನ್ನು ತಾನು ತಪ್ಪಾಗಿ ನಿರ್ಧರಿಸಿದ್ದೆ ಎಂದು ಇಂಡಿಗೋ ಬುಧವಾರ ಒಪ್ಪಿಕೊಂಡಿತ್ತು. ಈ ನಿಯಮಗಳು ವಾರದ ವಿಶ್ರಾಂತಿ ಅವಧಿಯನ್ನೂ 36 ಗಂಟೆಗಳಿಂದ 48 ಗಂಟೆಗಳಿಗೆ ಹೆಚ್ಚಿಸಿದ್ದವು. ಇಂಡಿಗೋ ಗುರುವಾರ ದಿಲ್ಲಿ ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ ತನ್ನ 550 ಯಾನಗಳನ್ನು ರದ್ದುಗೊಳಿಸಿತ್ತು. ಇಂಡಿಗೋ ಈವರೆಗೆ ಒಟ್ಟೂ ಸುಮಾರು 1,300 ಯಾನಗಳನ್ನು ರದ್ದುಗೊಳಿಸಿದ್ದು, ಅಲ್ಪಾವಧಿಯಲ್ಲಿ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಇಂಡಿಗೋ ಈಗಾಗಲೇ ಕನಿಷ್ಠ ಡಿ.8ರವರೆಗೆ ಇನ್ನಷ್ಟು ವ್ಯತ್ಯಯಗಳುಂಟಾಗುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ದಿಲ್ಲಿ ವಿಮಾನ ನಿಲ್ದಾಣವು ಶುಕ್ರವಾರ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಇಂಡಿಗೋದ ಎಲ್ಲ ನಿರ್ಗಮನ ಯಾನಗಳನ್ನು ರದ್ದುಗೊಳಿಸಿದ್ದು, ಸಂಸ್ಥೆಯ ತಪ್ಪುನಿರ್ಧಾರ ಎಷ್ಟೊಂದು ದುಬಾರಿಯಾಗಿ ಪರಿಣಮಿಸಿದೆ ಎನ್ನುವುದನ್ನು ಇದು ತೋರಿಸಿದೆ. ಕಾರ್ಯಾಚರಣೆ ಸಮಸ್ಯೆಯಿಂದಾಗಿ ಚೆನ್ನೈನಿಂದ ಬೆಂಗಳೂರು, ಮುಂಬೈ, ದಿಲ್ಲಿ, ಕೋಲ್ಕತಾ ಮತ್ತು ಹೈದರಾಬಾದ್ ಗೆ ಇಂಡಿಗೋ ಯಾನಗಳನ್ನು ಶುಕ್ರವಾರ ಸಂಜೆ ಆರು ಗಂಟೆಯವರೆಗೆ ರದ್ದುಗೊಳಿಸಲಾಗಿತ್ತು. ಶುಕ್ರವಾರ ಸಂಜೆ ಇಂಡಿಗೋ ಮತ್ತೊಮ್ಮೆ ತನ್ನ ಗ್ರಾಹಕರಲ್ಲಿ ಕ್ಷಮೆ ಯಾಚಿಸಿದೆ.
ಉಡುಪಿ | ರಂಗಭೂಮಿ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ : ಸುಮನಸಾ ಕೊಡವೂರು ‘ಈದಿ’ಗೆ ಪ್ರಥಮ ಬಹುಮಾನ
ಶಿವೋಹಂಗೆ ದ್ವಿತೀಯ, ಪ್ರಾಣಪದ್ಮಿನಿಗೆ ತೃತೀಯ ಬಹುಮಾನ
ಉಡುಪಿ | ಲಾರಿ- ಕಾರು ಢಿಕ್ಕಿ: ನಾಲ್ವರಿಗೆ ಗಾಯ
ಉಡುಪಿ, ಡಿ.5: ಲಾರಿಯೊಂದು ಕಾರಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸಹಿತ ನಾಲ್ವರು ಗಾಯಗೊಂಡ ಘಟನೆ ಡಿ.4ರಂದು ಸಂಜೆ ವೇಳೆ ಸಂತೆಕಟ್ಟೆ ಅಂಡರ್ ಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಗಾಯಗೊಂಡವರನ್ನು ಕಲ್ಯಾಣಪುರದ ಬಡಗುನಯಂಪಳ್ಳಿ ನಿವಾಸಿ ವರುಣ್ ಕುಮಾರ್ ಎಸ್.ಜಿ.(40), ಅವರ ಅತ್ತೆ ಜಯಂತಿ ಬಲ್ಲಾಳ್ (72), ಮಕ್ಕಳಾದ ತೇಜಸ್(12) ದೀಕ್ಷಾ(7) ಎಂದು ಗುರುತಿಸಲಾಗಿದೆ. ಇದರಲ್ಲಿ ತೀವ್ರವಾಗಿ ಗಾಯಗೊಂಡ ಜಯಂತಿ ಬಲ್ಲಾಳ್ ಹಾಗೂ ವರುಣ್ ಕುಮಾರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಲಾರಿಯು ರಸ್ತೆಯ ಬಲಬದಿಗೆ ಬಂದು ಅದೇ ರಸ್ತೆಯ ಮಧ್ಯೆ ಡೈವರ್ಶನ್ ಬಳಿ ಕುಂದಾಪುರ- ಉಡುಪಿ ರಸ್ತೆಗೆ ತಿರುಗಿಸಲು ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರಿನಲ್ಲಿ ನಾಲ್ವರು ಗಾಯಗೊಂಡರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ | ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಕಾರ್ಕಳ, ಡಿ.5: ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನ.27ರಂದು ಮನೆಯಲ್ಲಿ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.4ರಂದು ಮೃತಪಟ್ಟಿದ್ದಾರೆ. ಮೃತರನ್ನು ಈದು ಗ್ರಾಮದ ಕಂಠಾವು ನಿವಾಸಿ ಗಂಗಯ್ಯ ದೇವಾಡಿಗ ಎಂದು ಗುರುತಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಕಾಪು | ಮನೆಗೆ ನುಗ್ಗಿ 3.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಕಾಪು, ಡಿ.5: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮಲ್ಲಾರು ಎಂಬಲ್ಲಿ ಡಿ.4ರಂದು ಬೆಳಗ್ಗೆ ನಡೆದಿದೆ. ಪಾದೂರಿನಲ್ಲಿರುವ ಐಎಸ್ಪಿಆರ್ಎಲ್ನಲ್ಲಿ ಹೌಸ್ ಕೀಪರ್ ಆಗಿರುವ ಮಲ್ಲಾರಿನ ರಾಘವೇಂದ್ರ ಕಿಣಿ ಎಂಬವರು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು, ನಂತರ ಇವರ ಪತ್ನಿ ಮಕ್ಕಳ ಶಾಲಾ ವಾರ್ಷಕೋತ್ಸವ ಕಾರ್ಯಕ್ರಮಕ್ಕೆ ಮನೆಗೆ ಬೀಗ ಹಾಕಿ ಕೀಯನ್ನು ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿ ಹೋಗಿದ್ದರು. ಈ ವೇಳೆ ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿದ್ದ ಕೀಯಿಂದ ಮನೆಯ ಎದುರಿನ ಬಾಗಿಲನ್ನು ತೆರೆದು ಒಳನುಗ್ಗಿದ ಕಳ್ಳರು, ಬೆಡ್ರೂಂನ ಕಪಾಟಿನಲ್ಲಿದ್ದ 28 ಗ್ರಾಂ ತೂಕದ ಹವಳದ ಸರ, 8ಗ್ರಾಂ ತೂಕದ ಚಿನ್ನದ ಚೈನ್, 10 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 8 ಗ್ರಾಂ ತೂಕದ ಉಂಗುರ ಮತ್ತು ಚಿಕ್ಕ ಮಕ್ಕಳ 2 ಉಂಗುರ, 8 ಗ್ರಾಂ ತೂಕದ ಒಂದು ಜೊತೆ ಕಿವಿಯ ಜುಮುಕಿ ಮತ್ತು ಬೆಂಡೋಲೆೆ, 8ಗ್ರಾಂ ತೂಕದ ಕೂರ್ಗಿಸ್ ಚೈನ್, ಬೆಳ್ಳಿಯ ಬಟ್ಟಲು, 2 ಬೆಳ್ಳಿ ದೀಪಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಒಟ್ಟು 72 ಗ್ರಾಂ ತೂಕದ ಚಿನ್ನಾಭರಣಗಳ ಮೌಲ್ಯ 3,90,000 ರೂ. ಹಾಗೂ ಬೆಳ್ಳಿಯ ಸೊತ್ತುಗಳ ಮೌಲ್ಯ 1,500 ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಏರ್ಪೋರ್ಟ್ ಸಂಪರ್ಕಿಸುವ ನಮ್ಮ ಮೆಟ್ರೋ ನೀಲಿ ಮಾರ್ಗ ಪರಿಶೀಲಿಸಿದ ಡಿಕೆ ಶಿವಕುಮಾರ್; ಸಂಚಾರ ಯಾವಾಗ ಆರಂಭ?
ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲಿಸಿ, ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಉದ್ದದ 15 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಯನ್ನು 2027ರ ಜೂನ್ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ.
Mangaluru | ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಕಂಕನಾಡಿ ಶಾಖೆಯ ಉದ್ಘಾಟನೆ
ಮಂಗಳೂರು,ಡಿ.5 : ಎಂಸಿಸಿ ಬ್ಯಾಂಕ್, ಮಂಗಳೂರು ಇದರ ನವೀಕೃತ ಕಂಕನಾಡಿ ಶಾಖೆಯನ್ನು ಶುಕ್ರವಾರ ಪಂಪ್ವೆಲ್ ರಸ್ತೆಯಲ್ಲಿರುವ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು. ನವೀಕರಿಸಿದ ಶಾಖೆಯನ್ನು ಅನಿವಾಸಿ ಭಾರತೀಯ ಉದ್ಯಮಿ ಮತ್ತು ವಿಷನ್ ಕೊಂಕಣಿಯ ಪ್ರವರ್ತಕ ಮೈಕಲ್ ಡಿಸೋಜಾ ಉದ್ಘಾಟಿಸಿ, ತಮ್ಮ ಭಾಷಣದಲ್ಲಿ ಅವರು ಬ್ಯಾಂಕಿನ ಪ್ರಗತಿಗೆ ಕಾರಣಕರ್ತರಾದ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಗ್ರಾಹಕರ ನಿರಂತರ ಬೆಂಬಲದೊಂದಿಗೆ ನಿರ್ದೇಶಕರು ಮತ್ತು ಸಿಬ್ಬಂದಿಯ ಸಂಯೋಜಿತ ಪ್ರಯತ್ನಗಳ ಮೂಲಕ ಉತ್ತಮ ಸಾಲ ನೀಡುವಿಕೆ ಮತ್ತು ಸಕಾಲಿಕ ಸಾಲ ವಸೂಲಾತಿ ಪ್ರಕ್ರಿಯೆ ಕೈಗೊಳ್ಳಲು ಅವರು ಸಲಹೆ ನೀಡಿದರು. ಅಧ್ಯಕ್ಷರಾದ ಅನಿಲ್ ಲೋಬೊ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಕಂಕನಾಡಿ ಶಾಖೆಯ ನವೀಕರಣದ ಹಿಂದಿನ ಉದ್ದೇಶ ಮತ್ತು ದೃಷ್ಟಿಕೋನವನ್ನು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆಧುನೀಕರಣ ಮತ್ತು ಹೊಸ ಆಲೋಚನೆಗಳನ್ನು ನಿರೀಕ್ಷಿಸುತ್ತಾರೆ. ನಮ್ಮ ಬ್ಯಾಂಕ್ ಅದನ್ನು ಹೇಗೆ ಸಾಧಿಸುವುದು ಎಂಬುದರ ಸ್ಪಷ್ಟ ದೃಷ್ಟಿಕೋನದೊಂದಿಗೆ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಎಲ್ಲಾ 16 ಶಾಖೆಗಳನ್ನು ನವೀಕರಿಸಿದೆ. ಗ್ರಾಹಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ ಎಂದರು. ಕಂಕನಾಡಿ ಶಾಖೆಯು 54 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಗ್ರಾಹಕರು ತಮ್ಮ ವಹಿವಾಟುಗಳನ್ನು ಸಂತೋಷದಾಯಕವಾಗಿ ನಡೆಸಲು ಅನುಕೂಲವಾಗುವಂತೆ ಶಾಖೆಯನ್ನು ನವೀಕರಿಸಲಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ಕೇವಲ 16 ಶಾಖೆಗಳಿದ್ದು, ಕಳೆದ 7 ವರ್ಷಗಳಲ್ಲಿ, 22 ವರ್ಷಗಳ ನಂತರ ಐದು ಹೊಸ ಶಾಖೆಗಳನ್ನು ತೆರೆಯಲಾಗಿದೆ. ಆರ್ಬಿಐ ಹೆಚ್ಚುವರಿ ಶಾಖೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ಪ್ರಸ್ತುತ ಆಡಳಿತ ಮಂಡಳಿಯು 2018 ರಲ್ಲಿ ಬ್ಯಾಂಕಿನ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳನ್ನು ಪೂರೈಸಿದ್ದು, ಇಂದು ಒಟ್ಟು 21 ಶಾಖೆಗಳು ಮತ್ತು 15 ಎಟಿಎಂಗಳನ್ನು ಹೊಂದಿದೆ ಎಂದರು. ಮುಂದಿನ ಹಣಕಾಸು ವರ್ಷದಲ್ಲಿ ದೇರಳಕಟ್ಟೆ, ಕಟಪಾಡಿ, ಪಡೀಲ್ ಮತ್ತು ಮುಡಿಪು ಅಥವಾ ವಾಮಂಜೂರಿನಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು ತೆರೆಯಲು ಯೋಜನೆಯನ್ನು ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ರಾಷ್ಟ್ರಾದ್ಯಂತ ಬ್ಯಾಂಕ್ ಬೆಳೆಯಲು ಅನುವು ಮಾಡಿಕೊಡಲು ಗ್ರಾಹಕರ ಬೆಂಬಲ ಮತ್ತು ಆಶೀರ್ವಾದವನ್ನು ಕೋರಿ ಸ್ವಾಗತಿಸಿದರು. ಬೆಂದೂರಿನ ಸೇವಾನಿಲಯ ಕಾನ್ವೆಂಟ್ನ ಸುಪೀರಿಯರ್ನ ಸಿಸ್ಟರ್ ಸಿಂತಿಯಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬ್ಯಾಂಕಿನ ಬೆಳವಣಿಗೆಗೆ ಅಧ್ಯಕ್ಷರನ್ನು ಅಭಿನಂದಿಸಿ, ಗಣ್ಯರು, ಸಿಬ್ಬಂದಿ ಮತ್ತು ಗ್ರಾಹಕರ ಉಪಸ್ಥಿತಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮುಖ್ಯ ಅತಿಥಿ ವಂ.ಜೆ.ಬಿ.ಕ್ರಾಸ್ತಾ ಅವರು ತಮ್ಮ ಭಾಷಣದಲ್ಲಿ, ಗ್ರಾಹಕರಿಗೆ ಬ್ಯಾಂಕ್ ನೀಡುವ ಅನುಕರಣೀಯ ಸೇವೆ ಮತ್ತು ಸುರಕ್ಷತೆಗಾಗಿ ಸಂತೋಷ ವ್ಯಕ್ತಪಡಿಸಿದರು. ವಂ ಫೌಸ್ಟಿನ್ ಲೋಬೊ ತಮ್ಮ ಭಾಷಣದಲ್ಲಿ, ಸಮಾಜಕ್ಕೆ ಸೇವೆ ಸಲ್ಲಿಸಲು ಬ್ಯಾಂಕ್ ತನ್ನ ಸೌಲಭ್ಯಗಳು ಮತ್ತು ಸೇವೆಗಳನ್ನು ಸುಧಾರಿಸುವ ಮೂಲಕ ಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಮುಂದುವರಿಯಬೇಕು ಎಂದು ಹೇಳಿ ಬ್ಯಾಂಕಿನ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿದರು. ಬೆಂದೂರಿನ ಸೇವಾನಿಲಯ ಕಾನ್ವೆಂಟ್ನ ಸುಪೀರಿಯರ್ನ ಸಿಸ್ಟರ್ ಸಿಂತಿಯಾ ಡಿಸೋಜಾ ಶುಭ ಹಾರೈಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ದಿ ವೈಟ್ ಡವ್ಸ್ ಸೈಕಿಯಾಟ್ರಿಕ್ ನರ್ಸಿಂಗ್ & ಡೆಸ್ಟಿಟ್ಯೂಟ್ ಹೋಂನ ಸಂಸ್ಥಾಪಕಿ ಕೊರಿನ್ ರಸ್ಕಿನ್ಹಾ ಅವರನ್ನು ಶಾಲು, ಹಣ್ಣು ಹಂಪಲು, ಸ್ಮರಣಿಕೆ, ಸನ್ಮಾನ ಪತ್ರ ಮತ್ತು ಹೂವಿನ ಪುಷ್ಪಗುಚ್ಛದೊಂದಿಗೆ ಸನ್ಮಾನಿಸಲಾಯಿತು. ಮೈಕೆಲ್ ಡಿಸೋಜಾ ಅವರನ್ನು ಗೌರವಿಸಲಾಯಿತು. ಡಿ.11 ರಂದು ಚಂಡೀಗಢದಲ್ಲಿ ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ 20 ಪಂದ್ಯದಲ್ಲಿ ಎಸ್ಬಿಐ ಲೈಫ್ ಪರವಾಗಿ ಕ್ರಿಕೆಟ್ ತಾರೆಯೊಬ್ಬರಿಗೆ ಪಂದ್ಯ ಶೇಷ್ಟ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯ್ಕೆಯಾಗಿದ್ದಕ್ಕಾಗಿ ಐವಾನ್ ಫ್ರಾಂಕ್ ಅವರನ್ನು ಗೌರವಿಸಲಾಯಿತು. ಇತ್ತೀಚೆಗೆ ಬಿಡುಗಡೆಯಾದ ಕೊಂಕಣಿ ಚಲನಚಿತ್ರ ‘ಬಾಪಾಚೆ ಪುತಾಚೆ ನಾವಿ’ ದಲ್ಲಿ ನಟಿಸಿರುವ ಮೆಲ್ವಿನ್ ಡಿಅಲ್ಮೇಡಾ ಅವರನ್ನು ಸಹ ಸನ್ಮಾನಿಸಲಾಯಿತು. ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಕಂಕನಾಡಿ ಶಾಖಾ ನಿರ್ದೇಶಕರಾದ ಹೆರಾಲ್ಡ್ ಮೊಂತೇರೊ, ನಿರ್ದೆಶಕರಾದ ಮೆಲ್ವಿನ್ ವಾಸ್, ಸಿ.ಜಿ.ಪಿಂಟೊ, ಜೆ.ಪಿ.ರೊಡ್ರಿಗಸ್, ಐರೀನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಶ ರೋಶನ್ ಡಿಸೋಜ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಮೊಂತೇರೊ, ಜನರಲ್ ಮ್ಯಾನೇ ಜರ್ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕಿ ಐಡಾ ಪಿಂಟೊ, ಸಿಬ್ಬಂದಿ ಸದಸ್ಯರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮಹಾನಗರಗಳ್ಲಿ ಹೆಚ್ಚುತ್ತಿರುವ ಮಾಲಿನ್ಯ; ತವರಿಗೆ ಮರಳುತ್ತಿರುವ ಕರಾವಳಿಗರು!
ಒಂದು ಕಾಲದಲ್ಲಿ ಪ್ರಗತಿ ಮತ್ತು ಏಳಿಗೆಯ ಪ್ರತೀಕವಾಗಿದ್ದ ಮಹಾನಗರಗಳು ಇದೀಗ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತಿವೆ. ಇತ್ತೀಚೆಗೆ ತೀವ್ರ ಮಳೆ ಮತ್ತು ವಾಯುಗುಣಮಟ್ಟದ ಸೂಚ್ಯಂಕ ಕುಸಿಯುತ್ತಿರುವುದರಿಂದ ಮಹಾನಗರಗಳಲ್ಲಿ ನೆಲೆಸಿರುವ ಕರ್ನಾಟಕದ ಜನತೆ ತವರಿನ ಕಡೆಗೆ ಮರಳುತ್ತಿದ್ದಾರೆ. ಮಹಾನಗರಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ನಿವಾಸಿಗರಿಗೆ ಸ್ವಚ್ಛ ಹವಾಮಾನವಿರುವ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಹೊಸ ಕಾರಣವಾಗುತ್ತಿದೆ. ವಾಯುಮಾಲಿನ್ಯ ಮತ್ತು ಗಾಳಿಯ ಗುಣಮಟ್ಟದ ಕೊರತೆಯಿಂದಾಗಿ ವರ್ಷಾನುಗಟ್ಟಲೆ ದಿಲ್ಲಿ ಮತ್ತು ಮುಂಬೈಗಳಲ್ಲಿ ನೆಲೆಸಿದ್ದ ಕರ್ನಾಟಕದ ಜನತೆ ತವರಿಗೆ ಮರಳುತ್ತಿದ್ದಾರೆ. ಇಂತಹ ವಾಪಾಸಾತಿ ಟ್ರೆಂಡ್ನಲ್ಲಿ ಮೂರು ಮುಖ್ಯ ಅಂಶಗಳನ್ನು ಗುರುತಿಸಬಹುದು. ಮೊದಲನೆಯದಾಗಿ ವರ್ಕ್ ಫ್ರಂ ಹೋಮ್ ಆಯ್ಕೆಗಳು ಇತ್ತೀಚೆಗೆ ಜನಪ್ರಿಯವಾಗಿರುವುದು. ಎರಡನೆಯದು ದೂರದ ಊರಿನಲ್ಲಿ ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯದ ಕೊರತೆ ಕಂಡುಬರುತ್ತಿರುವುದು ಮತ್ತು ಮೂರನೆಯದು ಹೊಸ ತಲೆಮಾರಿನ ಪ್ರಯಾಣದ ಹಸಿವು. ವರ್ಕ್ ಫ್ರಂ ಹೋಂ ಆರಿಸುತ್ತಿರುವ ಜನತೆ ಇತ್ತೀಚೆಗೆ ಕಾರ್ಪೋರೇಟ್ ಕಂಪೆನಿಗಳಲ್ಲಿ ವಾರಕ್ಕೆ ಮೂರು ದಿನ ಕಚೇರಿ ಮತ್ತು ಉಳಿದ ದಿನ ಮನೆಯಿಂದ ಕೆಲಸ ಮಾಡುವ ಅವಕಾಶ ಕೊಡಲಾಗುತ್ತಿದೆ. ಇನ್ನು ಕೆಲವು ಕಡೆ ತಿಂಗಳಲ್ಲಿ ಎರಡು ವಾರ ಕಚೇರಿ ಮತ್ತು ಇನ್ನೆರಡು ವಾರ ಮನೆಯಿಂದ ಕೆಲಸ ಮಾಡುವ ಅವಕಾಶವಿದೆ. ಮೂಲತಃ ಕೊಡಗಿನ ನಿವಾಸಿಯಾಗಿದ್ದು, ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಕಿಶನ್ ವಾರಕ್ಕೆ ಮೂರೇ ಬಾರಿ ಕಚೇರಿಗೆ ಹೋಗುವುದು. ಉಳಿದ ಮೂರು ದಿನ ಬೆಂಗಳೂರಿನ ಮನೆಯಿಂದಲೇ ಕೆಲಸ ಮಾಡುತ್ತಾರೆ. ಕೋವಿಡ್ ಸಂದರ್ಭದಲ್ಲಿ ಅವರು ಸಂಪೂರ್ಣವಾಗಿ ಕೊಡಗಿನಲ್ಲಿ ನೆಲೆಸಿ ಕೆಲಸ ಮಾಡಿದ್ದರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ನಿವಾಸಿಯೊಬ್ಬರು ಇಂತಹುದೇ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ವರ್ಷಾನುಗಟ್ಟಲೆ ನೆಲೆಸಿದ್ದ ಅವರು ಇದೀಗ ತಮ್ಮ ಕಚೇರಿಯಲ್ಲಿ ತಿಂಗಳ ಮೊದಲೆರಡು ವಾರ ಮಾತ್ರ ಕೆಲಸ ಮಾಡುತ್ತಾರೆ. ಮುಂದಿನ ಎರಡು ವಾರ ತಮ್ಮ ಊರಿನಲ್ಲೇ ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಉಡುಪಿಯಿಂದ ಮುಂಬೈಗೆ ಪ್ರಯಾಣ ಬೆಳೆಸುವುದು ಸುಲಭವಾಗಿರುವುದರಿಂದ ಅವರಿಗೆ ಈ ಆಯ್ಕೆ ಇಷ್ಟವಾಗಿದೆ. ಮೂಲತಃ ಮಂಗಳೂರಿನವರಾದ ಕಳೆದ ಎರಡು ದಶಕಗಳಿಂದ ದಿಲ್ಲಿಯಲ್ಲಿ ವೃತ್ತಿಪರರಾಗಿರುವ ಪ್ರಕಾಶ್ ಶೆಟ್ಟಿ ಪ್ರಕಾರ, “ನನ್ನ ಸಂಪೂರ್ಣ ಕುಟುಂಬ ಅಲಿಗಢ್ನಲ್ಲಿದೆ. ನಾನು ವಾರಾಂತ್ಯದಲ್ಲಿ ಅಲ್ಲಿಗೆ ಹೋಗಿ ಬರುತ್ತೇನೆ. ವಾಯುಮಾಲಿನ್ಯ, ಮಳೆ ಮೊದಲಾಗಿ ದಿಲ್ಲಿಯ ಪರಿಸರ ಕೆಟ್ಟು ಹೋಗಿರುವ ಕಾರಣದಿಂದಾಗಿ ನನ್ನ ಹತ್ತು ವರ್ಷ ವಯಸ್ಸಿನ ಮಗ ನನ್ನನ್ನೂ ಪೂರ್ಣವಾಗಿ ಅಲಿಗಢ್ಗೆ ಬಂದು ನೆಲೆಸುವಂತೆ ಒತ್ತಾಯಿಸುತ್ತಿರುತ್ತಾನೆ. ಆದರೆ ಕೆಲಸದ ಕಾರಣದಿಂದ ನಾನು ಇನ್ನೂ ದಿಲ್ಲಿಯಲ್ಲಿ ಉಳಿದಿರುವೆ” ಎನ್ನುತ್ತಾರೆ. ಮುಂದಿನ ತಲೆಮಾರಿನ ಭವಿಷ್ಯದ ಚಿಂತೆ ಈ ಹಿಂದೆ ದಿಲ್ಲಿ ಮತ್ತು ಮುಂಬೈ ಓದು ಮತ್ತು ವೃತ್ತಿಗೆ ಬಹಳ ಅನುಕೂಲಕರ ಆಯ್ಕೆಯಾಗಿತ್ತು. ಆದರೆ ವಾಯುಮಾಲಿನ್ಯ ಮತ್ತು ಮಳೆಯಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳು ಜನರನ್ನು ತವರಿನತ್ತ ಮರಳಿ ಕರೆಯುತ್ತಿದೆ. ದಿಲ್ಲಿಯಲ್ಲಿ ಸುಮಾರು 2 ದಶಕಗಳ ಕಾಲ ನೆಲೆಸಿದ್ದ ರಾಘವ ಶರ್ಮ ತಮ್ಮ ಕುಟುಂಬದ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತವರಿಗೆ ಮರಳಿದ್ದಾರೆ. “ದಿಲ್ಲಿಯಲ್ಲಿ ಪ್ರತಿ ವರ್ಷ ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಆಡಳಿತ ಪಕ್ಷ-ವಿಪಕ್ಷಗಳು ಈ ವಿಷಯದಲ್ಲಿ ಕಿತ್ತಾಡುತ್ತವೆಯೇ ವಿನಃ ಪರಿಹಾರ ಕಂಡುಕೊಳ್ಳಲು ಕೆಲಸ ಮಾಡುವುದಿಲ್ಲ. ಸುಪ್ರೀಂಕೋರ್ಟ್ ನಲ್ಲೂ ಇದು ಚರ್ಚೆಗೆ ಬರುತ್ತದೆ, ಆದರೆ ಅಂತಿಮವಾಗಿ ಸಾಧಿಸುವುದು ಏನೂ ಇಲ್ಲ. ಅವರು ಸರ್ಕಾರಕ್ಕೆ ಬಯ್ಯುತ್ತಾರೆ, ಸರ್ಕಾರ ಕೂಳೆ ಸುಡುವುದರಿಂದ ಹೀಗಾಗುತ್ತದೆ ಎಂದು ಕೈತೊಳೆದು ಕೂರುತ್ತದೆ. ದಿಲ್ಲಿ ಈಗಾಗಲೇ ಬದುಕಲು ಯೋಗ್ಯವಲ್ಲದ ನಗರ ಎಂಬ ಕುಖ್ಯಾತಿಗೆ ಗುರಿಯಾಗಿದೆ” ಎನ್ನುತ್ತಾರೆ ನಿಡ್ಲೆ ನಿವಾಸಿಯಾಗಿರುವ ಪತ್ರಕರ್ತರಾದ ರಾಘವ ಶರ್ಮ. ಅವರ ಪ್ರಕಾರ, “ನವೆಂಬರ್-ಡಿಸೆಂಬರ್-ಜನವರಿ ತಿಂಗಳಲ್ಲಿ ಆವರಿಸುವ ದಟ್ಟ ಮಾಲಿನ್ಯ ಕಂಡಾಗ ಭಯವಾಗುತ್ತದೆ. ಮಕ್ಕಳಿಗೆ, ವೃದ್ಧರಿಗೆ ಬಿಡಿ, ಈಗ ಯುವಕರಿಗೂ ಈ ಮಾಲಿನ್ಯ ಅನಾರೋಗ್ಯ ತಂದಿಡುತ್ತಿದೆ. ನಾವು ದಿಲ್ಲಿ ಬಿಡಲು ಮಾಲಿನ್ಯ ಕೂಡ ಕಾರಣ. 18 ವರ್ಷಗಳ ವಾಸ್ತವ್ಯ ನಮ್ಮ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಬೀರಿದೆಯೋ ದೇವರೇ ಬಲ್ಲ. ನಾನು ಊರಿಗೆ ವಾಪಸ್ ಆಗಲು ಯೋಚಿಸಿದ್ದರ ಹಿಂದೆ ಮಗಳ ಆರೋಗ್ಯ ಕಾಪಾಡುವುದು ಕೂಡ ಒಂದು ಕಾರಣ ಆಗಿತ್ತು.” ಅವರಂತೆ ದಿಲ್ಲಿ ಮತ್ತು ಮುಂಬೈನಿಂದ ತವರಿಗೆ ಮರಳುವವರ ಸಂಖ್ಯೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹೊಸ ತಲೆಮಾರಿನ ಪ್ರಯಾಣದ ಹಸಿವು ದಿಲ್ಲಿ ನಿವಾಸಿಯಾಗಿರುವ ರೂಪಾಲಿ ಹೇಳುವ ಪ್ರಕಾರ, ವರ್ಷಕ್ಕೆ ಒಂದು ಬಾರಿ ಒಂದು ವಾರ ದಿಲ್ಲಿಯಿಂದ ದೂರ ಹೋಗುವುದನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದೇನೆ. ಕಳೆದ ವರ್ಷ ಕರ್ನಾಟಕದ ಕರಾವಳಿಗಳಲ್ಲಿ ಸುತ್ತಾಡಿದ್ದೇನೆ. ಈ ವರ್ಷ ಉದಯ್ಪುರಕ್ಕೆ ತೆರಳಿದ್ದೇನೆ. ಮುಂದಿನ ವರ್ಷ ಮಹಾರಾಷ್ಟ್ರ ಅಥವಾ ಈಶಾನ್ಯ ಪ್ರದೇಶಗಳಿಗೆ ಹೋಗುವ ಆಸಕ್ತಿ ಇದೆ. ಇತ್ತೀಚೆಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ತೆಗೆದುಕೊಂಡು ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆಯಂತೂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ರೆಸಾರ್ಟ್ಗಳಲ್ಲಿ ಒಂದೆರಡು ವಾರ ಬಂದು ನೆಲೆಸಿ ಅತ್ತ ಕೆಲಸವೂ ಸರಿ ಮತ್ತು ಇತ್ತ ಪ್ರಯಾಣವೂ ಆದಂತಾಗುತ್ತದೆ ಎಂದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಕಾಶ್ ಶೆಟ್ಟಿಯವರು ಇತ್ತೀಚೆಗೆ ಸುರತ್ಕಲ್- ಮುಲ್ಕಿ ನಡುವೆ ಇರುವ ಸಸಿಹಿತ್ಲು ಕಡಲತೀರದ ರೆಸಾರ್ಟ್ ಒಂದಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸಿಬ್ಬಂದಿಗಳು ಹೇಳುವ ಪ್ರಕಾರ, “ಇತ್ತೀಚೆಗೆ ದಿಲ್ಲಿ ಮತ್ತು ಮುಂಬೈನಲ್ಲಿ ನೆಲೆಸಿರುವಂತಹ ಬಹುತೇಕ ಕರಾವಳಿ ನಿವಾಸಿಗರು ವಾರಗಟ್ಟಲೆ ರೆಸಾರ್ಟ್ನಲ್ಲಿ ಬಂದು ಉಳಿಯುತ್ತಿದ್ದಾರೆ. ರೆಸಾರ್ಟ್ನಿಂದಲೇ ಕೆಲಸ ಮಾಡುವುದು ಮತ್ತು ಸುಂದರ ಪ್ರಕೃತಿಯ ಮಡಲಿನ ಅನುಭವವನ್ನು ಪಡೆದು ಮರಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.”
ರಾಯಚೂರು: ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಬಿಜೆಪಿ ಪಕ್ಷದ ಹಿನ್ನಲೆ ಉಳ್ಳವರಿಗೆ ಪಕ್ಷದ ಪ್ರಮುಖ ಹುದ್ದೆಗಳನ್ನು ನೀಡಿರುವುದರಿಂದ ಅವರಿಗೆ ಕಾಂಗ್ರೆಸ್ ಪಕ್ಷದ ಗಂಧ ಗಾಳಿಯೂ ತಿಳಿದಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿ ಗೋಷ್ಠಿ ನಡೆಸಿ ಮಾತನಾಡಿದ ಪಾಮಯ್ಯ ಮುರಾರಿ, ಹೂಲಗೇರಿಯವರು ಸಹ ಬಿಜೆಪಿ ಮೂಲದವರೆ, ಆದ್ದರಿಂದ ಅವರ ಮನಸ್ಸು ಆ ಕಡೆಯೇ ಸೆಳೆಯುತ್ತದೆ. ನಾವು ಕಾಂಗ್ರೆಸ್ ರಾಜ್ಯ ಮುಖಂಡರ ಆದೇಶದ ಮೇರೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಮೂಲ ಕಾಂಗ್ರೆಸ್ ನವರ ಶ್ರಮದಿಂದಲೇ ತಾವು ಶಾಸಕರಾಗಿದ್ದೀರಿ. ಆದರೆ ಕಳೆದ ಚುನಾವಣೆ ವಲಸೆ ಬಂದವರಿಗೆ ಮಣೆ ಹಾಕಿದ್ದರಿಂದ ಸೋಲಬೇಕಾಯಿತು. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚಿಸಲು ಸಿದ್ದರಿದ್ದೇವೆ. ತಮಗೆ ಸಾಧ್ಯವಾದರೆ ಈ ಕುರಿತು ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಹೇಳಿದರು. ಮೀಸಲು ಕ್ಷೇತ್ರ, ಮೀಸಲು ಕ್ಷೇತ್ರ ಎಂದು ಬೊಬ್ಬೆ ಹೊಡೆಯುವ ಗೋವಿಂದ ನಾಯಕರವರಿಗೆ ಮೀಸಲು ಎಂದರೆ ಪ್ರಾತಿನಿಧ್ಯವೇ ಹೊರತು ಪಟ್ಟಾಭಿಷೇಕವಲ್ಲ ಎಂದು ಡಿಜಿ ಗುರಿಕಾರ ಹೇಳಿದರು. ಮೀಸಲು ಕ್ಷೇತ್ರದಲ್ಲಿ ಮೀಸಲು ಪಡೆದವರಿಗೆ ಮಾತ್ರ ಹಕ್ಕು ಅಧಿಕಾರ ಇಲ್ಲವೇ? ಅವರಿಗೆ ಎಷ್ಟು ಹಕ್ಕು ಅಧಿಕಾರ ಇದೆಯೋ ಅಷ್ಟೇ ಹಕ್ಕು ಅಧಿಕಾರ ಸಾಮಾನ್ಯ ಜನರಿಗೂ ಇದೆ. ನಾವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಮಾಡುವ ಅಧಿಕಾರವಿದೆ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅದನ್ನು ಅರಿತು ಮಾತನಾಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಭೂಪನಗೌಡ ಕರಡಕಲ್, ಗುಂಡಪ್ಪ ನಾಯಕ, ಹನಿಸ್ ಪಾಷಾ, ಶರಣಪ್ಪ ಚಲುವಾದಿ, ಜಗದೀಶ್ ಗೌಡ, ಮಲ್ಲಯ್ಯ, ಈರಪ್ಪ ಗೌಡೂರು ಸೇರಿ ಹಲವರು ಉಪಸ್ಥಿತರಿದ್ದರು.
ಮಂಡ್ಯ ಜಿಲ್ಲೆಗೂ ‘ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ’ : ಗೃಹ ಸಚಿವ ಡಾ.ಜಿ.ಪರಮೇಶ್ವರ್
‘ಬೆಳ್ತಂಗಡಿಯಲ್ಲಿ ಸಿಐಡಿ ಉಪವಿಭಾಗ ಸ್ಥಾಪನೆ’
ಬೆಂಗ್ರೆ ವೀರಭಾರತಿ ವ್ಯಾಯಾಮ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ
ಬೆಂಗ್ರೆ, ಡಿ. 5 : ಮಂಗಳೂರಿನ ಸ್ಯಾಂಡ್ಸ್ ಪಿಟ್ ಬೆಂಗರೆಯಲ್ಲಿರುವ ವೀರ ಭಾರತಿ ವ್ಯಾಯಾಮ ಶಾಲೆಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ನೂತನ ಕಟ್ಟಡಕ್ಕೆ ಶುಕ್ರವಾರ ಶ್ಯಾಮಿಲಿ ಫೌಂಡೇಶನ್ ಟ್ರಸ್ಟ್ ಸ್ಥಾಪಕರು, ಮೊಗವೀರ ಸಮಾಜದ ಮುಖಂಡರಾದ ನಾಡೋಜ ಡಾ.ಜಿ.ಶಂಕರ್ ಶಿಲಾನ್ಯಾಸಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಗವೀರ ಬಾಂಧವರು, ಗ್ರಾಮಸ್ಥರು ಹಾಗೂ ಶಾಸಕರು ದಾನಿಗಳ ಸಹಕಾರದಲ್ಲಿ ವ್ಯಾಯಾಮ ಶಾಲೆಯ ನೂತನ ಕಟ್ಟಡ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಸರಕಾರದಿಂದಲೂ ಸಹಾಯಧನ ಒದಗಿಸುವ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದರು. ಮೊಗವೀರ ಸಮಾಜವನ್ನು ಓಬಿಸಿ ವರ್ಗಕ್ಕೆ ಸೇರಿಸುವ ಕುರಿತಂತೆ ನಮ್ಮ ಪ್ರಯತ್ನ ಮುಂದುವರಿದಿದೆ. ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು. ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತನಾಡಿ, ನಾಡೋಜ ಡಾ.ಜಿ.ಶಂಕರ್ ಅವರ ನೇತೃತ್ವದಲ್ಲಿ, ಮೊಗವೀರ ಮುಖಂಡರ ಸಹಕಾರದಲ್ಲಿ ಜೀರ್ಣೋದ್ದಾರಕ್ಕೆ ಇಳಿಯಲಾಗಿದೆ. ನನ್ನಿಂದಾದ ಎಲ್ಲಾ ಸಹಕಾರಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಹಕಾರ ರತ್ನ ಚೇತನ್ ಬೆಂಗ್ರೆ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನೂತನ ವ್ಯಾಯಾಮ ಶಾಲಾ ಕಟ್ಟಡದ ವಿನ್ಯಾಸವನ್ನು ಅನಾವರಣಗೊಳಿಸಲಾಯಿತು. ಧನಸಹಾಯ ಹೊಂದಿಸುವ ಸಲುವಾಗಿ ವಿಜ್ಞಾಪನಾ ಪತ್ರದ ಬಿಡುಗಡೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಮುಂಬೈ ಮಂಡಳಿಯ ಅಧ್ಯಕ್ಷರಾದ ಅಜಿತ್ ಜಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ವೇದಮೂರ್ತಿ ಶಿವಪ್ರಸಾದ್ ತಂತ್ರಿ ಅವರು ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಶ್ರೀ ಮಹಾವಿಷ್ಣು ವಿಶೇಷಯನ ಭಜನಾ ಮಂದಿರ ಬೆಂಗ್ರೆ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರಾದ ಶಶಿಕುಮಾರ್ ಬೆಂಗ್ರೆ, ಬೆಂಗರೆ ಮಹಾಜನ ಸಭಾ ಅಧ್ಯಕ್ಷರಾದ ಸಂಜಯ್ ಸುವರ್ಣ, ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ವರದರಾಜ ಬಂಗೇರ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮೋಹನ್ ಬೆಂಗ್ರೆ, ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಆನಂದ ಅಮೀನ್, ಪ್ರಮುಖರಾದ ಹರಿಚಂದ್ರ ಪುತ್ರನ್, ಗಿರಿಧರ ಎಸ್ ಸುವರ್ಣ, ಲಕ್ಷ್ಮಣ ,ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಕೊಣಾಜೆ | ನರಿಂಗಾನ ಕಂಬಳೋತ್ಸವ'ದ ಪೂರ್ವಭಾವಿ ಸಭೆ
ಕೊಣಾಜೆ : ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ನಡೆಯಲಿರುವ ನಾಲ್ಕನೇ ವರ್ಷದ ಲವ-ಕುಶ ಜೋಡುಕರೆ 'ನರಿಂಗಾನ ಕಂಬಳೋತ್ಸವ'ದ ಪ್ರಯುಕ್ತ ಶುಕ್ರವಾರ ಕಂಬಳಕರೆಯ ಬಳಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ, ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಪ್ರತೀವರ್ಷ ಕಂಬಳ ಯೋಜನೆಯಲ್ಲಿ ಅಭಿವೃದ್ಧಿ ಕಾಣುತ್ತಿದ್ದು, ಈ ಬಾರಿ ಊರಿಗೇ ಹೆಸರು ಬರುವ ರೀತಿಯಲ್ಲಿ ಸರ್ವರ ಪ್ರಶಂಸೆಗೆ ಪಾತ್ರವಾಗುವ ನಿಟ್ಟಿನಲ್ಲಿ ಕಂಬಳ ನಡೆಯಲಿದೆ. ಶಾಶ್ವತ ವೇದಿಕೆ ನಿರ್ಮಾಣ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಸರ್ವ ಧರ್ಮೀಯರನ್ನು ಒಂದೇ ವೇದಿಕೆಗೆ ತರುವ ಹಾಗೂ ದಕ್ಷಿಣ ಜಿಲ್ಲೆಯ ಇತಿಹಾಸ, ಪರಂಪರೆ ಸಾರುವ ನಿಟ್ಟಿನಲ್ಲಿ ಕಂಬಳ ಸಹಕಾರಿಯಾಗಲಿದೆ. ಈ ಬಾರಿ ರಾಜ್ಯ, ರಾಷ್ಟ್ರ ಮಟ್ಟದ ರಾಜಕೀಯ, ಧಾರ್ಮಿಕ, ಸಾಮಾಜಿಕ ಹೆಸರಾಂತ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಮಾತನಾಡಿ, ಜ.10ಕ್ಕೆ ಕಂಬಳ ನಡೆಯಲಿದ್ದು, ವೇದಿಕೆಗೆ ಹೆಚ್ಚಿನ ಖರ್ಚು ತಗಲುವುದರಿಂದ ಶಾಶ್ವತ ವೇದಿಕೆ ನಿರ್ಮಿಸಬೇಕಿದೆ. ಅದರಿಂದ ಘನತೆ ಹೆಚ್ಚಿಸಲು ಸಾಧ್ಯ. ಗಡಿನಾಡಿನಲ್ಲಿ ನಡೆಯುವ ಕಂಬಳದಲ್ಲಿ 260 ಜೋಡಿ ಕೋಣಗಳು ಬರುವುದು ವಿಶೇಷ. ಈ ಬಾರಿ ಎರಡೂ ಕಡೆ ಗ್ಯಾಲರಿ ವ್ಯವಸ್ಥೆ ಇರಲಿದೆ. ಅತಿಹೆಚ್ಚು ಬಹುಮಾನ ನೀಡುವ ಕಂಬಳ ನರಿಂಗಾನ ಕಂಬಳವಾಗಿದೆ ಎಂದು ತಿಳಿಸಿದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷರುಗಳಾದ ಚಂದ್ರಹಾಸ್ ಶೆಟ್ಟಿ ಮೋರ್ಲ, ಕರುಣಾಕರ್ ಶೆಟ್ಟಿ ಮೋರ್ಲ, ಮ್ಯಾಕ್ಸಿಮ್ ಡಿಸೋಜ, ಗಿರೀಶ್ ಆಳ್ವ ಮೋರ್ಲ, ವಿಜೇಶ್ ನಾಯ್ಕ್ ನಡಿಗುತ್ತು, ಅಬ್ದುಲ್ ಜಲೀಲ್, ಜೋಸೆಫ್ ಕುಟ್ಟಿನ್ಹ, ಪ್ರೇಮಾನಂದ ರೈ, ಮುರಲೀಧರ ಶೆಟ್ಟಿ ಮೋರ್ಲ, ವೈಭವ್ ಶೆಟ್ಟಿ ತಲಪಾಡಿ, ವಿನಯ್ ಶೆಟ್ಟಿ ತಲಪಾಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ ಸ್ವಾಗತಿಸಿದರು.
18ನೇ ವರ್ಷದ ಮಿಡ್ನೈಟ್ ಮ್ಯಾರಥಾನ್, ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ
ಬೆಂಗಳೂರಿನಲ್ಲಿ 18ನೇ ಮಿಡ್ನೈಟ್ ಮ್ಯಾರಥಾನ್ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 3 ರಿಂದ ಭಾನುವಾರ ಮುಂಜಾನೆ 5 ಗಂಟೆಯವರೆಗೆ ಕೆಟಿಪಿಒ ಮತ್ತು ಇಪಿಐಪಿ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೂರ್ವ ವಿಭಾಗದ ಸಂಚಾರ ಡಿಸಿಪಿ ಸಾಹಿಲ್ ಬಾಗ್ಲಾ ಮನವಿ ಮಾಡಿದ್ದಾರೆ.
ಬೆಳ್ತಂಗಡಿ | ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಮಾಡಲು ಮತ್ತೆ ನೋಟಿಸ್?
ಬೆಳ್ತಂಗಡಿ : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮತ್ತೆ ಗಡಿಪಾರು ಮಾಡುವ ಬಗ್ಗೆ ನೋಟೀಸ್ ನೀಡಲಾಗಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಅವರು ಆದೇಶ ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಗಡಿಪಾರು ಆದೇಶವನ್ನು ರದ್ದುಪಡಿಸಿ ಆದೇಶ ನೀಡಿತ್ತು. ಹಾಗೂ ಅವರನ್ನು ಗಡಿಪಾರು ಮಾಡಬೇಕಾದರೆ ಮತ್ತೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದೀಗ ಮತ್ತೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡುವ ಬಗ್ಗೆ ಪುತ್ತೂರು ಸಹಾಯಕ ಕಮಿಷನರ್ ಅವರು ಮತ್ತೆ ನೋಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲಭ್ಯ ಮಾಹಿತಿಯಂತೆ ಮಹೇಶ್ ಶೆಟ್ಟಿ ಅವರಿಗೆ ಡಿ.8 ರಂದು ಪುತ್ತೂರು ಎಸಿ ಮುಂದೆ ಹಾಜರಾಗಲು ನೋಟಿಸ್ ಜಾರಿ ಮಾಡಿದೆ. ಈಗ ನೀಡಿರುವ ನೋಟೀಸ್ ನಲ್ಲಿ ಹೊಸದಾಗಿ ದಾಖಲಾಗಿರುವ ಪ್ರಕರಣಗಳನ್ನು ಸೇರಿಸಿ ನೋಟೀಸ್ ನೀಡಲಾಗಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ.
ಚಿತ್ರದುರ್ಗದಲ್ಲಿ ತಂದೆಯೊಬ್ಬ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮಕ್ಕಳ ಮೇಲೆ ಮಾತ್ರವಲ್ಲದೇ ಹೆತ್ತ ತಾಯಿಯ ಮೇಲೆಯೂ ಲೈಂಗಿ ದೌರ್ಜನ್ಯ ಎಸಗಿದ ಆರೋಪ ಎಸಗಿದ್ದಾರೆ ಎಂದು ಅವರ ತಾಯಿಯೇ ದೂರು ನೀಡಿದ್ದಾರೆ. ಮಕ್ಕಳಿಗೆ ಏನೂ ಮಾಡೋದಿಲ್ಲ ಎಂದು ನಾನು ಭಾವಿಸಿದ್ದೆ ಆದರೆ, ಅವರನ್ನು ಬಿಟ್ಟಿಲ್ಲ ಆತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಹಾಲಿವುಡ್ನಲ್ಲೊಂದು ಮೆಗಾ ಡೀಲ್, ನೆಟ್ಫ್ಲಿಕ್ಸ್ ತೆಕ್ಕೆಗೆ ವಾರ್ನರ್ ಬ್ರದರ್ಸ್, ₹6.5 ಲಕ್ಷ ಕೋಟಿಗೆ ಖರೀದಿ
ಮನರಂಜನಾ ಕ್ಷೇತ್ರದ ದೈತ್ಯ ಸಂಸ್ಥೆಯಾದ ನೆಟ್ಫ್ಲಿಕ್ಸ್, ಮತ್ತೊಂದು ಪ್ರಮುಖ ಸಂಸ್ಥೆಯಾದ ವಾರ್ನರ್ ಬ್ರದರ್ಸ್ ಡಿಸ್ಕವರಿಯ ಟಿವಿ, ಚಲನಚಿತ್ರ ಮತ್ತು ಸ್ಟ್ರೀಮಿಂಗ್ ವಿಭಾಗವನ್ನು ಬರೋಬ್ಬರಿ 72 ಬಿಲಿಯನ್ ಡಾಲರ್ಗಳಿಗೆ ಖರೀದಿಸಲು ಒಪ್ಪಿಕೊಂಡಿದೆ. ಹಲವು ವಾರಗಳ ಕಾಲ ನಡೆದ ತೀವ್ರ ಪೈಪೋಟಿಯಲ್ಲಿ ಪ್ಯಾರಾಮೌಂಟ್ ಸ್ಕೈಡ್ಯಾನ್ಸ್ ಸಂಸ್ಥೆಯನ್ನು ಹಿಂದಿಕ್ಕಿದ ನೆಟ್ಫ್ಲಿಕ್ಸ್, ಪ್ರತಿ ಷೇರಿಗೆ ಸುಮಾರು 28 ಡಾಲರ್ನಂತೆ ನೀಡಿ ಈ ಬೃಹತ್ ಒಪ್ಪಂದವನ್ನು ತನ್ನದಾಗಿಸಿಕೊಂಡಿದೆ.
4 ನೇ ದಿನವೂ ಹಾರಲು ಚಡಪಡಿಸಿದ ಇಂಡಿಗೋ!
ರೀಫಂಡ್ ಮಾಡಿ ಕೈತೊಳೆದುಕೊಂಡ ವಿಮಾನಯಾನ ಸಂಸ್ಥೆ
ದೇವನಹಳ್ಳಿಯ 1,777 ಎಕರೆ ಇನ್ನು ʼಶಾಶ್ವತ ವಿಶೇಷ ಕೃಷಿ ವಲಯʼ : ಎಚ್.ಕೆ.ಪಾಟೀಲ್
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777ಎಕರೆ ಭೂಮಿಯನ್ನು `ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸಲು ಗುರುವಾರ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಿತವನ್ನು ಪರಿಗಣಿಸಿ, ಅವರಿಗೆ ಪೂರಕವಾಗಿ ಸ್ಪಂದಿಸಲಾಗಿದೆ. 1996ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ 4ರ ಅಡಿಯಲ್ಲಿರುವ ಅಧಿಕಾರವನ್ನು ಬಳಸಿಕೊಂಡು, 1,777ಎಕರೆಯನ್ನು ಪ್ರಾಥಮಿಕ ಅಧಿಸೂಚನೆಯಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇಷ್ಟು ಭೂಮಿಯನ್ನು ಶಾಶ್ವತ ವಿಶೇಷ ಕೃಷಿ ವಲಯವೆಂದು ಘೋಷಿಸಲು ಅಗತ್ಯವಿರುವ ರೂಪುರೇಷೆ ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಲಾಗುವುದು ಮತ್ತು ನಗರಾಭಿವೃದ್ಧಿ ಇಲಾಖೆಯ ಸಂಬಂಧಿತ ಸಮವರ್ತಿ ಅಧಿಸೂಚನೆ ಹೊರಡಿಸಲಾಗುವುದು. ಜೊತೆಗೆ, ಈ ಜಮೀನಿನ ಪಹಣಿಗಳಲ್ಲಿನ ಕಾಲಂ 11ರಲ್ಲಿ `ಶಾಶ್ವತ ವಿಶೇಷ ಕೃಷಿ ವಲಯ’ವೆಂದು ನಮೂದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು. ಒಂದು ವೇಳೆ ಈ 13 ಗ್ರಾಮಗಳ ರೈತರೆ ಸ್ವಯಂಪ್ರೇರಿತವಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ತಮ್ಮ ಜಮೀನುಗಳನ್ನು ಬಿಟ್ಟುಕೊಡಲು ಮುಂದೆ ಬಂದಲ್ಲಿ ಅಂತಹ ಜಮೀನುಗಳನ್ನು ಅಗತ್ಯಾನುಸಾರ ಮತ್ತು ನಿಯಮಾನುಸಾರ ಸ್ವಾಧೀನ ಪಡಿಸಿಕೊಳ್ಳಲಾಗುವುದು. ಇದಕ್ಕಾಗಿ ರೈತರಿಗೆ 3 ತಿಂಗಳ ಕಾಲಾವಕಾಶ ನೀಡಲಾಗುವುದು. ಇಂತಹ ಪ್ರಕರಣಗಳಲ್ಲಿ ಭೂ ದರ ನಿರ್ಧರಣಾ ಸಮಿತಿಯ ತೀರ್ಮಾನದಂತೆ ಸೂಕ್ತ ಪರಿಹಾರವನ್ನೂ ನೀಡಲಾಗುವುದು ಎಂದು ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.
ಕಲಬುರಗಿ: ಬುಧವಾರ ನಡೆದಿದ್ದ ಆಳಂದ ತಾಲೂಕಿನ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಉದ್ದೇಶಪೂರ್ವಕವಾಗಿ ಚುನಾವಣಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಆರ್.ಕೆ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಕೆ ಪಾಟೀಲ್, ಆಳಂದದಲ್ಲಿ ನಡೆದಿದೆ ಎನ್ನಲಾಗಿರುವ ಮತಗಳ್ಳತನ ಪ್ರಕರಣವನ್ನು ದಿಕ್ಕುತಪ್ಪಿಸಲು ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಿಜೆಪಿಗರು ಗಲಭೆ ನಡೆಸಿದ್ದಾರೆ. ಚುನಾವಣಾಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ಮತಗಟ್ಟೆ ಸಂಖ್ಯೆ 1ರಲ್ಲಿ ಮತಪತ್ರ ಜೋಡಣೆಯ ಪುಸ್ತಕದಲ್ಲಿ 'ಜನತಾ ಬಜಾರ್' ಚುನಾವಣೆಯ ಮತಪತ್ರಗಳು ಕಂಡುಬಂದಿರುವುದು ನಿಜ. ಈ ಕುರಿತಾಗಿ ರೈತ ಪೆನಲ್ ನ ಅಭ್ಯರ್ಥಿಗಳೇ ಖುದ್ದಾಗಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದನ್ನು ಒಪ್ಪಿ ಸರಿಪಡಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಇದೇ ವೇಳೆ ಬಿಜೆಪಿ ಮುಖಂಡರು, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅವರೇ ಚುನಾವಣೆ ನಿಲ್ಲಿಸಲು ಮತ ಪೆಟ್ಟಿಗೆಯಲ್ಲಿ ನೀರು ಸುರಿದಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ಶಾಸಕ ಬಿ.ಆರ್.ಪಾಟೀಲ್ ಬೆಂಬಲಿಗರು ಕಾರ್ಖಾನೆಯ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ 12.50 ಕೋಟಿಯಷ್ಟು ಠೇವಣಿ ಇಟ್ಟಿದ್ದಾರೆ. ಇಂತಹ ಅನೇಕ ಯೋಜನೆಗಳು ಮಾಡಿದ್ದರಿಂದ ಮತದಾರರು ರೈತ ಪೆನಲ್ ಅನ್ನು ಬೆಂಬಲಿಸಿದ್ದರು. ಸೋಲು ಅನುಭವಿಸುವ ಸಾಧ್ಯತೆ ಹೆಚ್ಚಾಗಿದ್ದರಿಂದ ಹೇಗಾದರೂ ಮಾಡಿ ಮತದಾನವನ್ನು ಸ್ಥಗಿತಗೊಳಿಸಬೇಕು ಎಂದು ಯೋಜನೆ ರೂಪಿಸಿದ ಹರ್ಷಾನಂದ ಗುತ್ತೇದಾರ್ ಹಾಗೂ ಅವರ ಬೆಂಬಲಿಗರು ಈ ಗಲಾಟೆ ಸೃಷ್ಟಿಸಿದ್ದಾರೆ. ಬಳಿಕ ಹೆದ್ದಾರಿಯನ್ನು ತಡೆದು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ ಎಂದು ಆರ್.ಕೆ.ಪಾಟೀಲ್ ಆರೋಪಿಸಿದರು. ಮತಪತ್ರ ಅಲ್ಲಿ ಹೇಗೆ ಬಂದಿದೆ? ಯಾರು ಅಲ್ಲಿ ತಂದಿಟ್ಟಿದ್ದಾರೆ ಎನ್ನುವುದರ ಬಗ್ಗೆ ತನಿಖೆಯಾಗಲಿ. ಆದರೆ ಬಿಜೆಪಿ ಮುಖಂಡರು ಯಾವುದೇ ಆಧಾರವಿಲ್ಲದೆ ಎಲ್ಲದ್ದಕ್ಕೂ ಶಾಸಕ ಬಿ.ಆರ್ ಪಾಟೀಲ್, ಆರ್.ಕೆ.ಪಾಟೀಲ್ ಕಾರಣ ಎಂದು ಆರೋಪಿಸುತ್ತಿದ್ದಾರೆ. ಅವರ ಆರೋಪಗಳೆಲ್ಲವೂ ಸುಳ್ಳು. ಸತ್ಯವನ್ನು ಮಾತನಾಡುವುದನ್ನು ಅವರು ಕಲಿಯಲಿ ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಸಿದ್ದರಾಮ ಪ್ಯಾಟೆ, ಶಿವಪುತ್ರಪ್ಪ ಪಾಟೀಲ್, ಅಶೋಕ್ ಸಾವಳೇಶ್ವರ್, ಗುರುಲಿಂಗಮಜಂಗಮ ಮಾಲಿಪಾಟೀಲ್, ಬಸವರಾಜ ಉಪ್ಪಿನ, ಧರ್ಮರಾಜ ಸಾಹು, ಶ್ರೀಮಂತ ವಗ್ದರ್ಗಿ, ಸಿದ್ದರಾಮ ಸಾಲಿಮನಿ, ಸುಭಾಷ್, ಶಾಂತೇಶ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಡುಪಿ | ಕೇರಳ ಮೂಲದ ಮನೋರೋಗಿ ಪದವೀಧರೆಯ ರಕ್ಷಣೆ
ಉಡುಪಿ ಡಿ.5: ಪ್ರತಿಷ್ಟಿತ ಕಚೇರಿಯಲ್ಲಿ ಉದ್ಯೋಗದಲ್ಲಿರುವ ಮೂರು ಪದವಿ ಪಡೆದ ಕೇರಳ ಮೂಲದ ಯುವತಿಯೊಬ್ಬಳು ಉಡುಪಿ ನಗರದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಓಡಾಡುತ್ತಿದ್ದ ಯುವತಿಯನ್ನು ಸಾರ್ವಜನಿಕರು ಹಾಗೂ ಮಹಿಳಾ ಪೋಲಿಸರ ಸಹಾಯದಿಂದ ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿ ರಕ್ಷಿಸಿ ಉಡುಪಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ರೇಷ್ಮ ಎಂದು ಗುರುತಿಸಲಾಗಿದೆ. ಬಿಎಸ್ಸಿ, ಎಂಎಸ್ಸಿ, ಎಂಬಿ.ಎ ಪದವಿ ಪಡೆದಿದ್ದ ಈಕೆ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ವೇತನ ಪಡೆಯುತ್ತಿದ್ದರು. ಮಗಳ ಈ ಸ್ಥಿತಿ ತಿಳಿದು ಹೆತ್ತವರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಇದೀಗ ಯುವತಿಯ ತಂದೆ ಪತ್ತೆಯಾಗಿದ್ದು, ಆಕೆಯನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಆಕೆಯನ್ನು ಕ್ಲಿಪ್ತ ಸಮಯದಲ್ಲಿ ರಕ್ಷಿಸಿದ್ದರಿಂದ ಸಂಭವನೀಯ ದುರಂತ ತಪ್ಪಿದೆ ಎಂದು ತಂದೆ ವಿಶುಶೆಟ್ಟಿಯವರಲ್ಲಿ ಹೇಳಿಕೆ ನೀಡಿದ್ದಾರೆ. ರಾತ್ರಿ ಹೊತ್ತು ದುರಂತ ತಪ್ಪಿಸಿ ಆಸ್ಪತ್ರೆಗೆ ದಾಖಲಿಸಿದ ವಿಶುಶೆಟ್ಟಿ ಪೋಲಿಸ್ ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಷಯ ತಿಳಿದ ಕೂಡಲೆ ಯುವತಿಯ ತಂದೆ ಕೇರಳದಿಂದ ಕಾರಿನ ಮೂಲಕ ತಕ್ಷಣ ಹೊರಟು ಉಡುಪಿಗೆ ಬಂದಿದ್ದಾರೆ. ಇದೀಗ ತುರ್ತು ಚಿಕಿತ್ಸೆಯನ್ನು ಬಾಳಿಗಾ ಆಸ್ಪತ್ರೆಯಲ್ಲಿ ಮುಂದುವರೆಸಿದ್ದಾರೆ.
ಪೆರ್ಡೂರು | ಡಿ.7ರಂದು ರಾಜ್ಯಮಟ್ಟದ ಸಂಗೀತ ಸ್ಪರ್ಧೆಯ ಸೆಮಿಫೈನಲ್
ಪೆರ್ಡೂರು, ಡಿ.5: ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರು, ಉದಯ ಕೃಷ್ಣಯ್ಯ ಶೆಟ್ಟ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಹೆಬ್ರಿ ಚಾಣಕ್ಯ ಮ್ಯೂಸಿಕ್ ಅಕಾಡೆಮಿ ನೇತೃತ್ವದಲ್ಲಿ ವಾಯ್ಸ್ ಆಫ್ ಚಾಣಕ್ಯ -2025 ರಾಜ್ಯ ಮಟ್ಟದ ಟ್ರ್ಯಾಕ್ ಸಂಗೀತ ಸಮರದ ಸೆಮಿಫೈನಲ್ ಡಿ.7ರಂದು ಮಧ್ಯಾಹ್ನ 1.30ರಿಂದ ಪೆರ್ಡೂರು ಎಪಿಟಿ ಶಾಲೆ ಎದುರಿರುವ ಅನಂತ ಸೌರಭ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭವನ್ನು ಪೆರ್ಡೂರು ಬಂಟರ ಸಂಘ ಅಧ್ಯಕ್ಷ ಕೆ.ಶಾಂತರಾಮ ಸೂಡ ಉದ್ಘಾಟಿಸಲಿದ್ದು, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 30ಗಾಯಕರು ಸ್ಪರ್ಧಿಸಲಿದ್ದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಣೆ ಹಾಗೂ ಕಾರ್ಯಕ್ರಮದ ನಡುವೆ ಚಾಣಕ್ಯ ಡ್ಯಾನ್ಸ್ ಅಕಾಡೆಮಿ ಪೆರ್ಡೂರು ತಂಡದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ | ಡಿ.13ರಂದು ವಿಶ್ವ ಶಾಂತಿ ಸಮಾವೇಶ
ಉಡುಪಿ, ಡಿ.5: ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠ ಆಶ್ರಯದಲ್ಲಿ ವಿಶ್ವಗೀತಾ ಪರ್ಯಾಯ ಮಹೋತ್ಸವದ ಪ್ರಯುಕ್ತ ವಿಶ್ವಶಾಂತಿ ಸಮಾವೇಶವನ್ನು ಡಿ.13ರಂದು ಬೆಳಗ್ಗೆ 10 ಗಂಟೆಗೆ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಮಠದ ಗೀತಾ ಮಂದಿರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಅಮೇರಿಕಾದ ವರ್ಲ್ಡ್ ರಿಲೀಜಿಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್.ವಿಂಡ್ಲೆ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸಂಸ್ಥಾಪಕ ಸದ್ಗುರು ಶ್ರೀಮಧುಸೂದನ ಸಾಯಿ, ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿರುವರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರನ್ನು ಸನ್ಮಾನಿಸಲಾಗುವುದೆಂದು ಅವರು ಮಾಹಿತಿ ನೀಡಿದರು. ಕೋಟಿ ಗೀತಾ ಲೇಖನ ಯಜ್ಞಕ್ಕೆ ಸಂಬಂಧಿಸಿ ಭಕ್ತಾಧಿಗಳಿಂದ ಸಾಕಷ್ಟು ಬೇಡಿಕೆಗಳಿದ್ದು, ಈ ಯೋಜನೆ ಮುಂದಿನ ಎರಡು ವರ್ಷ ಕಾಲ ಮುಂದುವರಿಯಲಿದೆ. ಆನ್ಲೈನ್ ಗೀತಾ ರಸಪ್ರಶ್ನೆ ನಡೆಯುತ್ತಿದ್ದು, 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
ವಿಜಯನಗರ| ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆ: ನೋಡಲ್ ಅಧಿಕಾರಿಗಳನ್ನು ನೇಮಿಸಿದ ಜಿಲ್ಲಾಧಿಕಾರಿ
ವಿಜಯನಗರ: ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡ ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿ ಮತ್ತು ತಂಡವನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗಳಾದ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ. ಹಡಗಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ಡಿ.ಆಲಂ ಬಾಷಾ ಅವರನ್ನು ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿ ಹಾಗೂ ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ನಾಯ್ಕ ಮತ್ತು ಕಮಲಾಪುರ ಗ್ರಾಮ ಆಡಳಿತ ಅಧಿಕಾರಿ ಗಂಗಾಧರ ಇವರನ್ನು ಅಧೀನ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಉಡುಪಿ | ಡಿ.6ರಂದು ವಿಶ್ವ ಏಡ್ಸ್ ದಿನ
ಉಡುಪಿ, ಡಿ.5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವಿದ್ಯಾರತ್ನ ಸ್ಕೂಲ್ ಕಾಲೇಜ್ ಆಫ್ ನರ್ಸಿಂಗ್, ನ್ಯೂ ಸಿಟಿ ಕಾಲೇಜ್ ಆಫ್ ನರ್ಸಿಂಗ್, ರಾಷ್ಟ್ರೀಯ ಸೇವಾ ಯೋಜನೆ ಮುನಿಯಾಲು ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸ್, ಗಾರ್ಡ್ ಸಂಸ್ಥೆ, ದೀಪ ಜ್ಯೋತಿ ನೆಟ್ವರ್ಕ್, ಆಸರೆ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಮತ್ತು ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಡುಪಿ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಪ್ರಗತಿಸೌಧ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನ -ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ಶನಿವಾರ ಡಿ.6ರಂದು ಬೆಳಗ್ಗೆ 10:00 ಗಂಟೆಗೆ ಅಂಬಲಪಾಡಿಯಲ್ಲಿರುವ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಸಭಾಂಗಣ- ಪ್ರಗತಿಸೌಧ ಇಲ್ಲಿ ನಡೆಯಲಿದೆ. ಇದರೊಂದಿಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಉದ್ಘಾಟಿಸಲಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಜಿ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಎಸ್ಕೆಆರ್ಡಿಪಿ ಕರಾವಳಿ ಪ್ರಾದೇಶಿಕ ವಿಭಾಗದ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷೆ ತಾರಾ ಆಚಾರ್ಯ, ಉಡುಪಿ ದೀಪಜ್ಯೋತಿ ನೆಟ್ವರ್ಕ್ ಅಧ್ಯಕ್ಷ ಸಂತೋಷ್ ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಬೋರ್ಡ್ ಹೈಸ್ಕೂಲ್ ಆವರಣದಿಂದ ಕೆ.ಎಂ.ಮಾರ್ಗವಾಗಿ ಅಂಬಲಪಾಡಿಯ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಸಭಾಂಗಣದವರೆಗೆ ನಡೆಯುವ ಜಾಥಾ ಕಾರ್ಯಕ್ರಮಕ್ಕೆ ಬೆಳಗ್ಗೆ 9:00 ಗಂಟೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
‘ಧರ್ಮಸ್ಥಳ ಪ್ರಕರಣ’ ತನಿಖೆ ಇನ್ನೂ ಪೂರ್ಣಗೊಂಡಿಲ್ಲ : ಪ್ರಣಬ್ ಮೊಹಾಂತಿ
ಬೆಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸರಕಾರಕ್ಕೆ ಸಲ್ಲಿಕೆ ಆಗಿರುವುದು ಈವರೆಗಿನ ವರದಿ ಮಾತ್ರ, ದೋಷಾರೋಪ ಪಟ್ಟಿ(ಚಾರ್ಜ್ಶೀಟ್) ಅಲ್ಲ ಎಂದು ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಬೆಂಗಳೂರಿನ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಅಂತಿಮ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ ಅಥವಾ ಸಿದ್ಧಗೊಂಡಿದೆ ಎಂದು ಹೇಳಿದವರ್ಯಾರು? ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗ ಸಲ್ಲಿಕೆ ಆಗಿರುವುದು ದೋಷಾರೋಪ ಪಟ್ಟಿ ಅಲ್ಲ, ತನಿಖೆಯ ವರದಿ ಅಷ್ಟೇ ಎಂದರು. ಈ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನನ್ನು ಮಾತ್ರ ಗುರಿಯಾಗಿಸಿ ಬಂಧಿಸಲಾಯಿತು, ಇದಕ್ಕೆ ಸಂಬಂಧಿಸಿದ ಉಳಿದವರನ್ನೇಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಣಬ್ ಮೊಹಾಂತಿ, ಎಲ್ಲರನ್ನು ಬಂಧನ ಮಾಡುವುದೇ ತನಿಖೆಯಲ್ಲ. ಸದ್ಯ ಪ್ರಕರಣದ ತನಿಖೆ ಉತ್ತಮ ಹಂತದಲ್ಲಿದೆ ಎಂದರು.
ಮೈ ಶುಗರ್ ಕಾರ್ಖಾನೆಗೆ ಹೊಸ ಬಾಯ್ಲಿಂಗ್ ಹೌಸ್: ಮಂಡ್ಯ ರೈತರಿಗೆ ಸಿಎಂ ಸಿಹಿಸುದ್ದಿ
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ರೈತರಿಗೆ ಸಿಎಂ ಸಿದ್ದರಾಮಯ್ಯ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಮಂಡ್ಯದ ವಿ.ಸಿ ಫಾರಂ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮೇಳ 2025 ಕಾರ್ಯಕ್ರಮದಲ್ಲಿ ಸಿಎಂ ಈ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಸರ್ಕಾರಿ ಸ್ವಾಮ್ಯದಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆಯಾದ ಮೈ ಶುಗರ್ ಅನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ 50 ಕೋಟಿ ರೂಪಾಯಿ ನೀಡಿದೆ. ಮೈ
ಡಿಕೆಶಿ ಪರ ಜೈಕಾರ : ಕಾಂಗ್ರೆಸ್ನಲ್ಲಿ ‘ನೋಟಿಸ್’ ಗೊಂದಲ !
ಮಂಗಳೂರು,ಡಿ.5: ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಬೆಂಬಲಿಗರು ಉಪಮುಖ್ಯ ಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಮುಜುಗರವನ್ನುಂಟು ಮಾಡಿದ ಘಟನೆಗೆ ಸಂಬಂಧಿಸಿ ಮಿಥುನ್ ರೈಗೆ ಎಐಸಿಸಿಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ. ನೋಟಿಸ್ ಜಾರಿಯಾದ ವಿಚಾರವನ್ನು ದೃಢಪಡಿಸಲು ಸುದ್ದಿಗಾರರು ಕೆಪಿಸಿಸಿ ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಲು ಯತ್ನಿಸಿದಾಗ ಯಾರಲ್ಲೂ ನೋಟಿಸ್ ಬಗ್ಗೆ ಮಾಹಿತಿ ಇಲ್ಲ. ಮಿಥುನ್ ರೈ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ನ ಯಾರೂ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿದ್ದರಿಲ್ಲ. ಮಿಥುನ್ ರೈ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾದ ಕರ್ನಾಟಕದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ರೋಜಿ ಎಂ.ಜಾನ್ ಅವರನ್ನು ವಾರ್ತಾ ಭಾರತಿ ಸಂಪರ್ಕಿಸಿದಾಗ‘ ನೀವು ಕೆಪಿಸಿಸಿಯನ್ನು ಸಂಪರ್ಕಿಸಿ .. ಅವರು ಸ್ಪಷ್ಟನೆ ನೀಡುತ್ತಾರೆ’ ಎಂದಷ್ಟೇ ಉತ್ತರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಈ ಬಗ್ಗೆ ತಮಗೇನು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರನ್ನು ಈ ಸಂಬಂಧ ಸುದ್ದಿಗಾರರು ಸಂಪರ್ಕಿಸಲು ಯತ್ನಿಸಿದರೂ, ಫಲಕಾರಿಯಾಗಲಿಲ್ಲ. ಅವರು ಯಾರ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಮಂಗಳೂರಿನಲ್ಲಿ ಸಿಎಂ ಹಾಗೂ ವೇಣುಗೋಪಾಲ್ ಎದುರು ಡಿಕೆ ಡಿಕೆ ಅಂತ ಘೋಷಣೆ ಕೂಗಿರುವ ವಿಚಾರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ‘ ಅಭಿಮಾನಿಗಳು ಘೋಷಣೆ ಕೂಗಿರಬಹುದು. ರಾಜಕೀಯದಲ್ಲಿ ಎಲ್ಲಾ ತರಹದ ಜೈಕಾರ, ಧಿಕ್ಕಾರ ಇರುತ್ತೆ. ಕೆಲವರು ಮೋದಿ ಅಂತಾರೆ, ಕೆಲವರು ಡಿಕೆ ಎನ್ನುತ್ತಾರೆ, ಕೆಲವರು ರಾಹುಲ್ ಅಂತಾರೆ, ಇನ್ನು ಕೆಲವರು ಸಿದ್ದು ಎನ್ನುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ ’ ಎಂದು ಸಮರ್ಥಿಸಿಕೊಂಡಿದ್ದರು.
ವಿಜಯನಗರ| ಸಿರಿಧಾನ್ಯಗಳ ನಡಿಗೆ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ
ವಿಜಯನಗರ(ಹೊಸಪೇಟೆ): ದೈನಂದಿನ ಆಹಾರದಲ್ಲಿ ಪ್ರತಿಯೊಬ್ಬರು ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಸ್ತುತದಲ್ಲಿ ಆಹಾರವೇ ಆರೋಗ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು. ನಗರದ ಕನಕದಾಸರ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ವತಿಯಿಂದ ಅಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯ ನ್ಯೂಟ್ರಿ ಸಿರಿಧಾನ್ಯಗಳ ಕಾರ್ಯಕ್ರಮದಲ್ಲಿ ಆಹಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳದ ಪ್ರಯುಕ್ತ ಏರ್ಪಡಿಸಿದ್ದ ಸಿರಿಧಾನ್ಯಗಳ ನಡಿಗೆ, ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ದೇಶದಲ್ಲಿನ ಸಿರಿಧಾನ್ಯಗಳು ಸಾಂಪ್ರದಾಯಿಕ ಭಾರತೀಯ ಕೃಷಿಯಲ್ಲಿ ಅತ್ಯಂತ ಪೌಷ್ಠಿಕಾಂಶಯುಕ್ತವಾದ ಧಾನ್ಯಗಳಾಗಿವೆ. ಇವುಗಳನ್ನು ಆಹಾರ ಪದ್ದತಿಯಲ್ಲಿ ಹೆಚ್ಚಾಗಿ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಸಿರಿಧಾನ್ಯಗಳಲ್ಲಿ ನಾರು, ಕಬ್ಬಿಣದ ಅಂಶಗಳು ಹಾಗೂ ಕಾರ್ಬೋಹೈಡ್ರೇಟ್ಗಳು ಹೆಚ್ಚಾಗಿವೆ ಎಂದು ಹೇಳಿದರು. ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಶಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ್, ಕೃಷಿ ಇಲಾಖೆ ಉಪನಿರ್ದೇಶಕ ನೂರ್ಭಾಷಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ | ಇಎಸ್ಐ, ಇಪಿಎಫ್ ಸೌಲಭ್ಯದಿಂದ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ : ಜಿಪಂ ಸಿಇಓ ಪ್ರತೀಕ್ ಬಾಯಲ್
ಉಡುಪಿ, ಡಿ.5: ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಿಷ್ಯನಿಧಿ ಸಂಸ್ಥೆಯು, ಉದ್ಯೋಗಿಗಳಿಗೆ ನಿವೃತ್ತಿ ನಂತರ ಆರ್ಥಿಕ ಭದ್ರತೆ ಒದಗಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಪಂಚಾಯತ್ ಗಳ ಸಿಬ್ಬಂದಿಗಳಾದ ಕ್ಲರ್ಕ್, ಕ್ಲರ್ಕ್ ಕಂ ಡಿಇಓ, ಕರ ವಸೂಲಿಗಾರ, ಪಂಪು ಚಾಲಕ, ಜವಾನ, ಸ್ವಚ್ಛತಾಗಾರ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಇಎಸ್ಐ ಮತ್ತು ಇಪಿಎಫ್ ಸೌಲಭ್ಯದ ಕುರಿತಂತೆ ಶುಕ್ರವಾರ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಸುತ್ತಿರುವ ಪ್ರತಿಯೊಬ್ಬ ನೌಕರರಿಗೂ ಆರ್ಥಿಕ ಸೌಲಭ್ಯವನ್ನು ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಒದಗಿಸುತ್ತಿವೆ. ಇವುಗಳ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದವರು ನುಡಿದರು. ಉದ್ಯೋಗಿಗಳ ರಾಜ್ಯ ವಿಮೆ (ಇಎಸ್ಐ) ಯೋಜನೆಯಡಿ ಅನಾರೋಗ್ಯ, ಅಂಗವೈಕಲ್ಯ ಸೇರಿದಂತೆ ಅಸ್ವಾಸ್ಥ್ಯದ ವಿವಿಧ ಸಂದರ್ಭಗಳಲ್ಲಿ ಕಾರ್ಮಿಕರಿಗೆ ವೈದ್ಯಕೀಯ ಮತ್ತು ಆರ್ಥಿಕ ಪ್ರಯೋಜನಗಳನ್ನು ಒದಗಿಸಲಿದೆ. ಈ ಎಲ್ಲಾ ಮಾಹಿತಿಗಳ ಬಗ್ಗೆ ಅರಿವು ಮೂಡಿಸಲು ಇಎಸ್ಐ ಹಾಗೂ ಇಪಿಎಫ್ಓ ಖಾತೆದಾರರಿಗೆ ಕಾರ್ಯಾಗಾರ ಆಯೋಜಿಸಲಾಗಿದ್ದು, ಕಾರ್ಯಾಗಾರದ ಸದುಪಯೋಗ ಎಲ್ಲಾ ಸಿಬ್ಬಂದಿಗಳು ಪಡೆದುಕೊಳ್ಳುವಂತೆ ತಿಳಿಸಿದರು. ಇಎಸ್ಐ ಹಾಗೂ ಇಪಿಎಫ್ಓ ಯೋಜನೆಯ ನಿಯಮಾವಳಿಗಳಲ್ಲಿ ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುತ್ತವೆ. ಇವುಗಳಿಂದ ದೊರಕುವ ಸೌಲಭ್ಯ ಗಳನ್ನು ಬಳಸುವ ಬಗ್ಗೆ ಪ್ರತಿಯೊಬ್ಬ ಖಾತೆದಾರರು ಸಮಗ್ರ ಮಾಹಿತಿ ಹೊಂದಿರಬೇಕು ಎಂದ ಪ್ರತೀಕ್ ಬಾಯಲ್, ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಮತ್ತು ಇಪಿಎಫ್ ಸೌಲಭ್ಯಗಳ ಕುರಿತಂತೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು. ಮುಖ್ಯ ಯೋಜನಾಧಿಕಾರಿ ಉದಯ್ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣಾಭಿವೃದ್ಧಿಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಗ್ರಾಮಪಂಚಾಯತ್ ಸಿಬ್ಬಂದಿಗಳು ಸದೃಢರಾಗಿದ್ದಾಗ ಮಾತ್ರ ಗ್ರಾಪಂಗಳು ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಪಂ ಸಿಬ್ಬಂದಿಗಳ ಒಳಿತಿಗಾಗಿ ಹಾಗೂ ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಿಪಂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಪಂ ಸಿಬ್ಬಂದಿಗಳು ಇಎಸ್ಐ ಹಾಗೂ ಇಪಿಎಫ್ಓ ಯೋಜನೆಗಳ ಮಾಹಿತಿ ಪಡೆದಾಗ ಮಾತ್ರ ಅದರ ಲಾಭ ಸಮರ್ಪಕವಾಗಿ ದೊರಕುತ್ತದೆ ಎಂದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಎಸ್.ಕಾದ್ರೊಳ್ಳಿ ಮಾತನಾಡಿ, ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಗ್ರಾಪಂ ಸಿಬ್ಬಂದಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಗಳ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದ್ದು, ಕಾರ್ಯಾಗಾರದ ಪ್ರಯೋಜನವನ್ನು ಪ್ರತಿಯೊಬ್ಬ ಸಿಬ್ಬಂದಿಯೂ ಪಡೆಯುವಂತಾಗಬೇಕು ಎಂದರು. ಜಿಲ್ಲಾ ಇ.ಪಿ.ಎಫ್.ಓ ಎನ್ಫೋರ್ಸ್ಮೆಂಟ್ ಆಫೀಸರ್ ಸಂತೋಷ್ ಅವರು ಇಪಿಎಫ್ಓ ಯೋಜನೆಯ ಬಗ್ಗೆ ಹಾಗೂ ಇಎಸ್ಐ ಸೌಲಭ್ಯದ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನಿಟ್ಟೂರು ಎನ್ಸಿಹೆಚ್ಆರ್ ಸೊಲ್ಯೂಷನ್ಸ್ ನ ಮಾನವ ಸಂಪನ್ಮೂಲ ಸಲಹೆಗಾರ ನವೀನಚಂದ್ರ, ಜಿಲ್ಲೆಯ ವಿವಿಧ ಗ್ರಾಪಂಗಳ ಕ್ಲರ್ಕ್, ಕ್ಲರ್ಕ್ ಕಂ ಡಿಇಓ, ಕರವಸೂಲಿಗಾರರು, ಪಂಪುಚಾಲಕರು, ಜವಾನರು, ಸ್ವಚ್ಛತಾಗಾರರು, ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿ ನಿಶ್ಚಿತ್ ಹೆಗ್ಡೆ ಸ್ವಾಗತಿಸಿ, ಪಿಡಿಓ ಅನಿಲ್ ಕುಮಾರ್ ಶೆಟ್ಟಿ ನಿರೂಪಿಸಿದರು. ರವಿರಾಜ್ ವಂದಿಸಿದರು. ‘ನೌಕರರ ಭವಿವಷ್ಯನಿಧಿ ಯೋಜನೆಯಲ್ಲಿ ಮುಂಗಡ ಪಡೆಯುವ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದ್ದು, ಖಾತೆದಾರರು ಒಂದು ವರ್ಷದ ಸೇವೆಯ ನಂತರ ಮನೆ ನಿರ್ಮಾಣ, ಉನ್ನತ ಶಿಕ್ಷಣ, ಮದುವೆ, ಅನಾರೋಗ್ಯ ಸೇರಿದಂತೆ ಇತರೆ ಕಾರಣಗಳಿಗೆ ಮುಂಗಡ ಆರ್ಥಿಕ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.’ -ಪ್ರತೀಕ್ ಬಾಯಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಪಂ ಉಡುಪಿ.
ವಿಜಯನಗರ| ಯುವತಿ ನಾಪತ್ತೆ: ಪ್ರಕರಣ ದಾಖಲು
ವಿಜಯನಗರ(ಹೊಸಪೇಟೆ): ಹೊಸಪೇಟೆ ತಾಲೂಕಿನ 9ನೇ ವಾರ್ಡ್ ಆಂಜನೇಯ ಗುಡಿ ಸಮೀಪದ ಯುವತಿಯೋರ್ವರು ನಾಪತ್ತೆಯಾಗಿದ್ದಾರೆ. ಗಿರಿಜಾ(27) ನಾಪತ್ತೆಯಾದ ಯುವತಿ. ನ.22ರಂದು ಈಕೆ ನಾಪತ್ತೆಯಾಗಿದ್ದು, ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಿರಿಜಾ ಅವರು 5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣವನ್ನು ಹೊಂದಿದ್ದಾರೆ. ಕನ್ನಡ ಭಾಷೆ ಬಲ್ಲವರಾಗಿದ್ದು, ಅವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2025 ರಲ್ಲಿ ಅತಿ ಹೆಚ್ಚು ಗೂಗಲ್ ಮಾಡಲ್ಪಟ್ಟ IPL ತಂಡ ಯಾವುದು? RCBಯೂ ಅಲ್ಲ, CSKಯೂ ಪಟ್ಟಿಯಲ್ಲಿಲ್ಲ!
Punjab Kings And Delhi Capitals- ಗೂಗಲ್ 2025 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾ ತಂಡಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಫುಟ್ಬಾಲ್ ತಂಡಗಳಾದ ಪ್ಯಾರಿಸ್ ಸೇಂಟ್-ಜರ್ಮೈನ್, ಎಸ್ ಎಲ್ ಬೆನ್ಫಿಕಾ ಮೊದಲೆರಡು ಸ್ಥಾನಗಳಲ್ಲಿವೆ. ಬೇಸ್ ಬಾಲ್ ತಂಡವಾಗಿರುವ ಟೊರೊಂಟೊ ಬ್ಲೂ ಜೇಸ್ ಮೂರನೇ ಸ್ಥಾನದಲ್ಲಿದೆ. 4ನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ಇದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 5ನೇ ಸ್ಥಾನ ಪಡೆದಿದೆ. ಆರ್ ಸಿಬಿ ಮತ್ತು ಸಿಎಸ್ಕೆ ತಂಡಗಳು ಟಾಪ್ ಐದರಲ್ಲಿ ಇಲ್ಲ ಎಂಬುದೇ ಇದೀಗ ಅಚ್ಚರಿಗೆ ಕಾರಣವಾಗಿದೆ.
ಉಡುಪಿ | ರೆಡ್ಕ್ರಾಸ್ ಅಧಿಕಾರಿ, ಸ್ವಯಂಸೇವಕರಿಗೆ ತರಬೇತಿ ಶಿಬಿರ
ಉಡುಪಿ, ಡಿ.6: ಪ್ರಥಮ ಚಿಕಿತ್ಸೆ ಮತ್ತು ಪ್ರಕೃತಿ ಕೋಪದ ಕುರಿತಾದ ತರಬೇತಿಯ ಮೂಲಕ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಮಾಜ ಮುಖಿಯಾಗಲು ಉತ್ತಮ ಅವಕಾಶ. ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಸರಕಾರವು ಕಡ್ಡಾಯಗೊಳಿಸಬೇಕು ಎಂದು ಭಾರತೀಯ ರೆಡ್ಕ್ರಾಸ್ ರಾಜ್ಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ. ಭಾರತೀಯ ರೆಡ್ಕ್ರಾಸ್ ರಾಜ್ಯ ಘಟಕ ಮತ್ತು ಉಡುಪಿ ಜಿಲ್ಲಾ ಘಟಕ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಯುವ ರೆಡ್ಕ್ರಾಸ್ ಘಟಕ ವತಿಯಿಂದ ಜಿಲ್ಲಾ ರೆಡ್ಕ್ರಾಸ್ ಸಭಾಂಗಣದಲ್ಲಿ ನಡೆದ ರೆಡ್ ಕ್ರಾಸ್ ಅಧಿಕಾರಿಗಳು ಮತ್ತು ಸ್ವಯಂಸೇವಕರಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕುಂದಾಪುರ ರೆಡ್ಕ್ರಾಸ್ ಸಭಾಪತಿ ಜಯಕರ ಎಸ್.ಶೆಟ್ಟಿ ಮಾತಾನಾಡಿ, ಉಡುಪಿ ಜಿಲ್ಲೆಯು ರಕ್ತದಾನಿಗಳ ಜಿಲ್ಲೆ ಎಂದು ಗುರುತಿಸಲ್ಪಟ್ಟಿದೆ. ಈ ಪರಂಪರೆಯನ್ನು ರಕ್ತದಾನ ಮಾಡುವ ಮೂಲಕ ಮುಂದುವರೆಸುವ ಅಗತ್ಯದೆ ಎಂದರು. ಮಂಗಳೂರು ವಿಶ್ವವಿದ್ಯಾನಿಲಯ ಯುವ ರೆಡ್ಕ್ರಾಸ್ ನೋಡಲ್ ಅಧಿಕಾರಿ ಡಾ.ಗಾಯತ್ರಿ ಎನ್. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಯುವ ರೆಡ್ಕ್ರಾಸ್ ಅನುಷ್ಠಾನದ ಬಗ್ಗೆ ಮಾತಾನಾಡಿದರು. ರೆಡ್ ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಟಿ.ಚಂದ್ರಶೇಖರ್ ಉಪಸ್ಥಿತರಿದ್ದರು. ಡಾ.ಕೀರ್ತಿ, ಅಶ್ವಿನ್ ಕುಮಾರ್, ಡಾ.ಸುರೇಶ್ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ರೆಡ್ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ರೆಡ್ ಕ್ರಾಸ್ ಖಜಾಂಚಿ ರಮಾದೇ ವಂದಿಸಿದರು. ರೆಡ್ ಕ್ರಾಸ್ ಸದಸ್ಯರಾದ ರಾಘವೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಡುಪಿ ಜಿಲ್ಲಾ ವ್ಯಾಪ್ತಿಯ ರೆಡ್ ಕ್ರಾಸ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಉಡುಪಿ | ಹೆನಿಟಾ ಜೋಸ್ನಾ ಮಿನೇಜಸ್ಗೆ ಪಿಎಚ್ಡಿ ಪದವಿ
ಉಡುಪಿ, ಡಿ.5: ಹೃದಯ ರಕ್ತನಾಳದ ಕಾಯಿಲೆ ಇರುವ ಮಹಿಳೆಯರಿಗೆ ತಂತ್ರಜ್ಞಾನ-ಆಧಾರಿತ ಸಮಗ್ರ ಹೃದಯ ಪುನರ್ವಸತಿ ಚಿಕಿತ್ಸೆಯ ಕುರಿತು ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಸಂಶೋಧನಾ ಅಧ್ಯಯನ ನಡೆಸಿ ಮಂಡಿಸಿರುವ ಮಹಾಪ್ರಬಂಧಕ್ಕೆ, ಕಾಪು ತಾಲೂಕು, ಬೆಳ್ಳೆ ಗ್ರಾಮದ, ಪಾಂಬೂರಿನ ಹೆನಿಟಾ ಜೋಸ್ನಾ ಮಿನೇಜಸ್ ಅವರಿಗೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಲಭಿಸಿದೆ. ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ನ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥೆ ಡಾ.ಸೋನಿಯಾ ಆರ್.ಬಿ. ಡಿಸೋಜ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಆಗಿರುವ ಡಾ.ಪದ್ಮಕುಮಾರ್ ಆರ್. ಅವರಿಗೆ ಮಾರ್ಗದರ್ಶಕರಾಗಿದ್ದರು. ಹೆನಿಟಾ ಅವರು ಪಾಂಬೂರು ಮಾನಸ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಹೆನ್ರಿ ಹಾಗೂ ಜೆಸಿಂತಾ ಮಿನೇಜಸ್ ಅವರ ಪುತ್ರಿ.
ರಾಯಚೂರು| ಉಚಿತ್ರ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ: 400ಕ್ಕೂ ಹೆಚ್ಚು ಜನರು ನೋಂದಣೆ
ಲಿಂಗಸುಗೂರು: ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಬಯ್ಯಾಪೂರ ಅಭಿಮಾನಿಗಳ ಬಳಗ, ಸ್ಥಾಮಿ ವಿವೇಕಾನಂದ ಸೇವಾಶ್ರಮ ಬೆಂಗಳೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಘ ರಾಯಚೂರು ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರಾ ಚಿಕಿತ್ಸಾ ಶಿಬಿರ ಯಶಸ್ವಿಯಾಯಿತು. ಶಿಬಿರದಲ್ಲಿ ಇದುವರೆಗೆ 400ಕ್ಕೂ ಅಧಿಕ ಜನರು ನೋಂದಣೆ ಮಾಡಿಸಿದ್ದಾರೆ. 500ರ ಗಡಿ ದಾಟಿದರೂ ನೋಂದಣೆ ಮಾಡಿಕೊಳ್ಳುತ್ತೇವೆ. ಅವರಿಗೆ ಇನ್ನೊಂದು ದಿನಾಂಕ ನಿಗದಿಪಡಿಸಿ ಶಸ್ತ್ರ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಬಿರದ ಆಯೋಜಕರಾದ ಡಾ.ನಾಗನಗೌಡ ಪಾಟೀಲ್ ಬಯ್ಯಾಪುರ, ಮುಖಂಡ ಬಸವರಾಜಗೌಡ ಗಣೇಕಲ್ ಹೇಳಿದರು. ಈ ಉಚಿತ ನೇತ್ರಾ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಕಣ್ಣು ಎನ್ನುವುದು ಮನುಷ್ಯನಿಗೆ ಅತ್ಯಂತ ಮಹತ್ವದ ಅಂಗ. ಜಗವ ನೋಡುವ ಜೀವಿಗಳು ಕೊನೆಯವರೆಗೂ ಸುಖವಾಗಿರಬೇಕು. ನೇತ್ರ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಳ್ಳುವ ವಯೋವೃದ್ದರು ನೆಮ್ಮದಿಯಾಗಿ ಬದುಕು ಕಳೆಯುವಂತಾಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ, ಡಿ.ಜಿ.ಗುರಿಕಾರ, ಶಶಿಧರ ಆಶಿಹಾಳ, ಶರಣಪ್ಪ ಹುನಕುಂಟಿ, ನಾಗರಾಜ ಆಸ್ಕಿಹಾಳ, ಚಂದ್ರು ಗೊರೇಬಾಳ ಸೇರಿ ಹಲವರು ಉಪಸ್ಥಿತರಿದ್ದರು.
ಖೇಲೋ ಇಂಡಿಯಾ ಅಂತರ ವಿವಿ ಗೇಮ್ಸ್ : ಸತತ ಮೂರನೇ ಬಾರಿಗೆ ಆಳ್ವಾಸ್ ಗೆ ಸಮಗ್ರ ಚಾಂಪಿಯನ್
ಮೂಡುಬಿದಿರೆ: ರಾಜಸ್ಥಾನದಲ್ಲಿ ನ.24 ರಿಂದ ಡಿ.5 ರವರೆಗೆ ನಡೆದ 'ಖೇಲೋ ಇಂಡಿಯಾ ಅಂತರ ವಿಶ್ವವಿದ್ಯಾಲಯ ಗೇಮ್ಸ್'ನಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಪುರುಷರ ತಂಡವು ಸತತ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಮೂರು ಚಿನ್ನ ಮತ್ತು ಒಂದು ಕಂಚಿನ ಪದಕವನ್ನು ಗೆಲ್ಲುವ ಮೂಲಕ ಈ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಪದಕ ವಿಜೇತರು : ನಾಗೇಂದ್ರ ಅವರು ಡಿಸ್ಕಸ್ ಥ್ರೋನಲ್ಲಿ ಚಿನ್ನ, ಅಮನ್ ಅವರು ಪೋಲ್ ವಾಲ್ಟ್ನಲ್ಲಿ ಚಿನ್ನ., ಚಮನ್ ಅವರು ಡೆಕಥ್ಲಾನ್ನಲ್ಲಿ ಚಿನ್ನ, ಪ್ರದೀಪ್ ಕುಮಾರ್ ಅವರು ಟ್ರಿಪಲ್ ಜಂಪ್ನಲ್ಲಿ ಕಂಚು ಪಡೆದರು. ಆಳ್ವಾಸ್ ತಂಡವು ಸಮಗ್ರ ಚಾಂಪಿಯನ್ಶಿಪ್ ಪಟ್ಟವನ್ನು ಅಲಂಕರಿಸಿತು. ಮಹಿಳಾ ವಿಭಾಗದಲ್ಲಿ ನಾಲ್ಕನೇ ಸ್ಥಾನ : ಇದೇ ಕ್ರೀಡಾಕೂಟದ ಮಹಿಳಾ ವಿಭಾಗದಲ್ಲಿ ಆಳ್ವಾಸ್ ತಂಡವು ಒಂದು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನ ಗಳಿಸಿತು. ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ಮಂಗಳೂರು ವಿ.ವಿ. ಒಟ್ಟು 4 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಸೇರಿ ಒಟ್ಟು 7 ಪದಕಗಳನ್ನು ಗಳಿಸಿತು. ಆಳ್ವಾಸ್ ಕೊಡುಗೆ : ಮಂಗಳೂರು ವಿಶ್ವವಿದ್ಯಾಲಯದ ತಂಡದಲ್ಲಿ ಒಟ್ಟು 43 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ 39 ವಿದ್ಯಾರ್ಥಿಗಳು ಆಳ್ವಾಸ್ನ ಕ್ರೀಡಾಪಟುಗಳಾಗಿದ್ದಾರೆ. ವಿವಿಯು ಪಡೆದ 7 ಪದಕಗಳಲ್ಲಿ ಒಂದು ಬೆಳ್ಳಿ ಪದಕವನ್ನು ಹೊರತುಪಡಿಸಿ, ಉಳಿದ 6 ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆಯಾಗಿದೆ. ದಕ್ಷಿಣ ಕನ್ನಡದ ಊರು ಪ್ರಥಮ ದರ್ಜೆ ಕಾಲೇಜಿನ ಶ್ರೀ ದೇವಿ ಅವರು ಒಂದು ಬೆಳ್ಳಿ ಪದಕವನ್ನು ಪಡೆದಿದ್ದರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಅವರು ಅಭಿನಂದಿಸಿದ್ದಾರೆ.
ಮೂಡುಬಿದಿರೆ | ಬಸ್ ಡಿಜಿಟಲ್ ವೇಳಾಪಟ್ಟಿ ಸಾವ೯ಜನಿಕರಿಗೆ ಹೆಚ್ಚು ಪ್ರಯೋಜನಕಾರಿ : ಮಾಜಿ ಸಚಿವ ಅಭಯಚಂದ್ರ
ಮೂಡುಬಿದಿರೆ : ಅವಿಭಜಿತ ದ.ಕ., ಉಡುಪಿ ಜಿಲ್ಲೆಯಲ್ಲಿ ಮೊದಲಿಗೆ ಖಾಸಗಿ ಬಸ್ಸುಗಳೇ ಸೇವೆಯನ್ನು ಆರಂಭಿಸಿದ್ದು, ಸರ್ಕಾರಿ ಬಸ್ಸುಗಳಿಗೆ ಸರಿಸಮಾನವಾಗಿ ಖಾಸಗಿ ಬಸ್ ಗಳು ಸೇವೆ ನೀಡುತ್ತಿದೆ. ಇದೀಗ ಆಧುನಿಕ ತಂತ್ರಜ್ಞಾನದ ಮೂಲಕ ಅಳವಡಿಸಿರುವ ಡಿಜಿಟಲ್ ಬಸ್ ವೇಳಾಪಟ್ಟಿ ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಅವರು ಎಸ್.ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ ಮತ್ತು ಲಯನ್ಸ್ ಕ್ಲಬ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಮತ್ತು ಖಾಸಗಿ ಬಸ್ಸು ನಿಲ್ದಾಣದಲ್ಲಿ ಆಳವಡಿಸಲಾಗಿರುವ ಡಿಜಿಟಲ್ ವೇಳಾಪಟ್ಟಿಯನ್ನು ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಶಾಸಕನಾಗಿರುವ ವೇಳೆ ಸರ್ಕಾರಿ ಬಸ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇನೆ. ಮೂಡುಬಿದಿರೆಯಲ್ಲಿ ಸುಸಜ್ಜಿತ ಸರ್ಕಾರಿ ಬಸ್ ನಿಲ್ದಾಣ ಹಾಗೂ ಡಿಪೋ ನಿರ್ಮಾಣಕ್ಕೆ ಪ್ರಯತ್ನಗಳಾಗುತ್ತಿವೆ ಎಂದರು. ಮಾಲಕರ ಸಂಘದ ವಲಯಾಧ್ಯಕ್ಷ ನಾರಾಯಣ ಪಿ.ಎಂ. ಅವರು ಮಾತನಾಡಿ, ಖಾಸಗಿ ಬಸ್ಗಳು ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅಧುನಿಕ ತಂತ್ರಜ್ಞಾನಗಳಿಂದ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದೇವೆ. ಈ ಡಿಜಿಟಲ್ ವೇಳಾಪಟ್ಟಿ ಬಸ್ ಸಿಬ್ಬಂದಿಗಳಿಗೂ ಪ್ರಯೋಜನವಾಗಲಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಯೋಜನೆಗೆ ಶುಭ ಹಾರೈಸಿದರು. ಎಸ್.ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ನ ಪ್ರಾಂಶುಪಾಲೆ ನೊರೊನ್ಹ ತರೀನಾ ರೀಟಾ, ಪುರಸಭೆ ಸದಸ್ಯ, ಲಯನ್ಸ್ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಪರಿಸರ ಅಭಿಯಂತರೆ ಶಿಲ್ಪಾ ಎಸ್., ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಉಪನ್ಯಾಸಕರಾದ ಪ್ರದೀಪ್ ಸಿ.ಎಸ್., ಶ್ರೀ ಹರ್ಷ, ಗೋಪಾಲಕೃಷ್ಣ ಕೆ.ಎಸ್., ಹಿರಿಯ ಲಯನ್ಸ್ ಸದಸ್ಯ ಕೆ.ಶ್ರೀಪತಿ ಭಟ್, ತಿಮ್ಮಯ್ಯ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಸದಸ್ಯರಾದ ಆಲ್ವಿನ್ ಮಿನೇಜಸ್, ಮುನ್ನಾರಾವ್, ಎಂ.ಕೆ. ದಿನೇಶ್, ವಿನೋದ್ ಡೇಸಾ, ಸಿರಿಲ್, ಬಸ್ ಏಜೆಂಟರಾದ ಸಂತೋಷ್ ಶೆಟ್ಟಿ, ಶಶಿಧರ ಮತ್ತಿತರರು ಉಪಸ್ಥಿತರಿದ್ದರು. ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ರಾಯಚೂರು| ಜಾತಿ ನಿಂದನೆ, ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ರಾಯಚೂರು : ನಗರದ ಹರಿಜನವಾಡ ಬಡಾವಣೆಯ ಮಾದಿಗ ಸಮುದಾಯದ ದಶವಂತ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಎಂದು ಆಗ್ರಹಿಸಿ ಭೀಮ್ ಆರ್ಮಿ, ದಲಿತ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ನಗರಸಭೆ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಬಿ.ತಿಮ್ಮಾರೆಡ್ಡಿ ಮತ್ತು ಆತನ ಸಹಚರರು ವಿನಾ ಕಾರಣ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಪರಿಣಾಮ ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 6ರಂದು ಬಿ. ತಿಮ್ಮಾರೆಡ್ಡಿ ಸೇರಿದಂತೆ ಇತರೆ ಐವರ ವಿರುದ್ಧ ವಿವಿಧ ಕಲಂಗಳಡಿಯಲ್ಲಿ ಜಾತಿ ನಿಂದನೆ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು. ಜಾಮೀನು ರಹಿತವಾದ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರೂ ಈವರೆಗೆ ಯಾವುದೇ ಆರೋಪಿಗಳನ್ನು ಬಂಧನ ಮಾಡಲಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಕ್ಕಾಗಿ ಆಗ್ರಹಿಸಿ ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ಮುಖಂಡರಿಗೂ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬೆದರಿಕೆ ಹಾಕಿದ್ದಾನೆ. ಈ ಆರೋಪಿಗಳ ವಿರುದ್ಧ ಈ ಮೊದಲು ಕೂಡ ಪ್ರಕರಣ ದಾಖಲಾಗಿರುತ್ತದೆ. ಈ ಆರೋಪಿಗಳ ವಿರುದ್ಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ನಾಲ್ಕೈದು ಪ್ರಕರಣಗಳು ದಾಖಲಾಗಿದೆ. ಕೆಲವರ ಮೇಲೆ ಗೂಂಡಾ ಪ್ರಕರಣ ಕೂಡ ದಾಖಲಾಗಿದೆ. ಈ ಆರೋಪಿಗಳು ನ್ಯಾಯಾಲಯದಲ್ಲಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯು ಕೂಡ ತಿರಸ್ಕೃತಗೊಂಡಿದೆ. ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರೂ, ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡು 15 ದಿನಗಳು ಗತಿಸಿದರೂ ಇಲ್ಲಿಯವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೂಡಲೇ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಕೊಲೆಯಾದ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಅಗತ್ಯ ನೆರವು ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಬೃಹತ್ ಪ್ರತಿಭಟನೆಯ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ವಕೀಲರಾದ ಶಿವಕುಮಾರ ಮ್ಯಾಗಳಮನಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಎಲ್.ವಿ. ಸುರೇಶ್, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಎಸ್. ನರಸಿಂಹಲು, ಮುಖಂಡರಾದ ಹನುಮೇಶ್ ಆರೋಲಿ, ರಂಜಿತ್ ದಂಡೋರಾ, ದೂಳ್ಳಯ್ಯ ಗುಂಜಳ್ಳಿ, ಹನುಮೇಶ್ ಭೇರಿ, ಶಾಂತಕುಮಾರ್, ಜಯರಾಜ್ ಭಂಡಾರಿ, ಪ್ರಸಾದ್, ಅನೀಲ ಕುಮಾರ್, ನೀಲಕಂಠ, ರಾಜು, ಸುರೇಶ್, ಚಿದಾನಂದ, ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಸ್ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್ಐನ ಹಿಂಬಾಗಿಲ ರಾಜಕೀಯ ಪ್ರವೇಶ : ಕ್ಯಾಪ್ಟನ್ ಚೌಟ
ಹೊಸದಿಲ್ಲಿ,ಡಿ.5: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ ) ಸಂಘಟನೆಯು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ ) ಕಾರ್ಯಕರ್ತರ ಸೋಗಿನಲ್ಲಿ ಚುನಾವಣಾ ವ್ಯವಸ್ಥೆಯೊಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶುಕ್ರವಾರ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ. ಜಾರಿ ನಿರ್ದೇಶನಾಲಯದ(ಈಡಿ) 2025ರ ನ.8ರ ಪತ್ರಿಕಾ ಪ್ರಕಟನೆೆಯನ್ನು ಉಲ್ಲೇಖಿಸಿ ಸದನದಲ್ಲಿ ಮಾತನಾಡಿದ ಕ್ಯಾ.ಚೌಟ ಅವರು, ಎಸ್ಡಿಪಿಐ ನಿಷೇಧಿತ ಪಿಎಫ್ಐನ ರಾಜಕೀಯ ಮುಖವಾಣಿಯಾಗಿ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ಈ ಪಿಎಫ್ಐಯು ಎಸ್ಡಿಪಿಐ ರಾಜಕೀಯ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ಜತೆಗೆ ಅದಕ್ಕೆ ಫಂಡಿಂಗ್ ಮಾಡುವ ಅತ್ಯಂತ ಗಂಭೀರ ವಿಚಾರವನ್ನೂ ಈಡಿ ಉಲ್ಲೇಖಿಸಿದೆ. ಹೀಗಿರುವಾಗ, ಪಿಎಫ್ಐ ಒಂದು ನಿಷೇಧಿತ ಸಂಘಟನೆಯಾಗಿರುವ ಕಾರಣ ಚುನಾವಣೆಯ ಮೇಲೆ ಪ್ರಭಾವ ಬೀರಲು ಅದು ಬಳಸುವ ಯಾವುದೇ ಗುಪ್ತ ಮಾರ್ಗವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಹೇಳಿದರು. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಪ್ರದೇಶಗಳು ನಿಷೇಧಿತ ಪಿಎಫ್ಐ ಸಂಘಟನೆಯ ದುಷ್ಕೃತ್ಯಗಳಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿದ್ದು, ಕೇಂದ್ರ ಗೃಹ ಸಚಿವರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಪ್ರಸ್ತುತ ಈ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ನಮ್ಮ ಪ್ರದೇಶವು ಇಂಥಹ ದುಷ್ಟ ಶಕ್ತಿಗಳ ಅಕ್ರಮಣಕ್ಕೆ ನಿರಂತರ ತುತ್ತಾಗುವ ಅಪಾಯವಿದೆ ಎಂಬುದಕ್ಕೆ ಈ ಕೊಲೆ ಪ್ರಕರಣ ಒಂದು ನಿದರ್ಶನ ಎಂದು ಕ್ಯಾ.ಚೌಟ ಆತಂಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಿಷೇಧಿತ ಪಿಎಫ್ಐ ಹಾಗೂ ಎಸ್ಡಿಪಿಐ ನಡುವಿನ ರಾಜಕೀಯ ಲಿಂಕ್ ನ ಬಗ್ಗೆ ತುರ್ತು ಗಮನಹರಿಸುವ ಅಗತ್ಯವಿದೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡದ ಸ್ಥಳೀಯ ಸಂಸ್ಥೆಗಳಲ್ಲಿ ಎಸ್ಡಿಪಿಐ ಹಲವು ಸ್ಥಾನಗಳನ್ನು ಪಡೆದುಕೊಂಡಿದೆ. ಅಲ್ಲದೆ ಕಳೆದ ವರ್ಷ ನಡೆದ ಬಂಟ್ವಾಳ ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿಯೂ ಎಸ್ಡಿಪಿಐ ಪ್ರಮುಖ ಸ್ಥಾನಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿತ್ತು ಎಂದು ಹೇಳಿದರು. ನಿಷೇಧಿತ ಸಂಘಟನೆಗಳು ಹೊಸ ರೂಪದಲ್ಲಿ ತನ್ನ ಚಟುವಟಿಕೆ ಮುಂದುವರಿಸಲು ಅಥವಾ ರಾಜಕೀಯ ಪಕ್ಷಗಳನ್ನು ಮುಂದಿಟ್ಟು ಚುನಾವಣಾ ನ್ಯಾಯಸಮ್ಮತತೆ ಪಡೆಯುವ ಯತ್ನವನ್ನು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ನೀಡಿದೆ. ಆದರೆ, ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಕ್ಯಾ.ಚೌಟ ಅವರು ಸದನದಲ್ಲಿ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.
ಒಂದೇ ದಿನ ಸಾವಿರಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು, ನಿಯಮಗಳನ್ನು ತಾತ್ಕಾಲಿಕವಾಗಿ ಹಿಂಪಡೆದ DGCA
ಭಾರತದ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಶುಕ್ರವಾರ ತುರ್ತಾಗಿ ವಿಮಾನ ಚಾಲಕರ ಕರ್ತವ್ಯ ಸಮಯ ಮತ್ತು ವಿಶ್ರಾಂತಿ ನಿಯಮಗಳನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣಾ ಬಿಕ್ಕಟ್ಟನ್ನು ಪರಿಹರಿಸಲು ಈ ಮೂಲಕ ಪ್ರಯತ್ನಿಸಿದೆ. ಶುಕ್ರವಾರ ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ಶನಿವಾರ ಸಾವಿರಕ್ಕಿಂತ ಕಡಿಮೆ ವಿಮಾನಗಳು ರದ್ದಾಗಲಿವೆ ಎಂದು ತಿಳಿಸಿದೆ.
Bengaluru | ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ; ನಿಲ್ಲದ ಪ್ರಯಾಣಿಕರ ಸಂಕಷ್ಟ
ಬೆಂಗಳೂರು : ತಾಂತ್ರಿಕ ಕಾರಣದಿಂದಾಗಿ ‘ಇಂಡಿಗೋ’ ವಿಮಾನಯಾನ ಸಂಸ್ಥೆಯ ವಿಮಾನಗಳ ಹಾರಾಟದಲ್ಲಿ ಸತತ ನಾಲ್ಕನೇ ದಿನವೂ ವ್ಯತ್ಯಯವಾಗಿದ್ದು, ಇದರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕರು 12 ತಾಸು ಕಾದು ಕಾದು ಸುಸ್ತಾಗಿ, ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಮಾಹಿತಿ ಪ್ರಕಾರ ಶುಕ್ರವಾರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 102 ವಿಮಾನ ಹಾರಾಟ ರದ್ದಾಗಿದೆ. 52 ಆಗಮನ ಮತ್ತು 50 ನಿರ್ಗಮನ ವಿಮಾನಗಳು ರದ್ದಾಗಿರುವುದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಾಸುಗಟ್ಟಲೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇತ್ತ ಸೂಕ್ತ ಮಾಹಿತಿ ನೀಡದ ಇಂಡಿಗೋ ಸಂಸ್ಥೆ ವಿರುದ್ಧ ಪ್ರಯಾಣಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಸನ್ನಿವೇಶ ಕುರಿತು ಮಾಹಿತಿ ನೀಡಿ ತೀವ್ರ ಬೇಸರ ವ್ಯಕ್ತಪಡಿಸಿದರು. ನಿತೀನ್ ಮಲ್ಪಾನಿ ಎಂಬವರು ಈ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಇಂಡಿಗೋ ಸಿಬ್ಬಂದಿಗಳೇ ನೀವು ಏನು ಮಾಡುತ್ತಿದ್ದಿರಾ? ಕಳೆದ ರಾತ್ರಿ 8 ಗಂಟೆಯಿಂದ ಈಗಿನವರೆಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಇದ್ದೀವೆ. ಸರಳವಾಗಿ ಸಿಬ್ಬಂದಿಯ ಕೆಲಸದ ಅವಧಿ ವೇಳಾಪಟ್ಟಿ ಬದಲಾಯಿಸಲು ಮಕ್ಕಳು, ವೃದ್ಧರು, ರೋಗಿಗಳ ಜೊತೆ ಆಟವಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯದಿಂದ ದೇಶಾದ್ಯಂತ 500ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. 4ನೇ ದಿನವೂ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಕಾದು ಕಾದು ಸುಸ್ತಾಗಿ ಎಲ್ಲೆಂದರಲ್ಲಿ ನಿದ್ದೆ ಮಾಡುತ್ತಿರುವ ಪ್ರಯಾಣಿಕರು, ಒಳಗೆ ಇರಲಾಗದೇ ಹೊರಗೂ ಬರಲಾಗದ ಸ್ಥಿತಿ ಅನುಭವಿಸಿದ್ದಾರೆ. ವಿಮಾನಕ್ಕಾಗಿ ಕಾದು ಕಾದು ಸುಸ್ತಾದ ಪ್ರಯಾಣಿಕರ ತಂಡವೊಂದು ವಿಮಾನ ನಿಲ್ದಾಣದಲ್ಲಿಯೇ ಭಜನೆ ಮಾಡುತ್ತಾ ಸಮಯ ಕಳೆಯುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನ ದರ ದುಪ್ಪಟ್ಟು : ಶುಕ್ರವಾರ ಪ್ರಮುಖ ನಗರಗಳಿಗೆ ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಿದಾಗ, ಇತರೆ ವಿಮಾನ ಕಂಪೆನಿಗಳು, ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸುವ ದರಗಳನ್ನು ನಿಗದಿಪಡಿಸಿವೆ. ಹೊಸದಿಲ್ಲಿ- ಚೆನ್ನೈ ಏಕಮುಖ ಟಿಕೆಟ್ 65,985 ರೂಪಾಯಿಗಳಿಗೆ ಏರಿಕೆ ಕಂಡಿತು. ಇತ್ತ ಮುಂಬೈ ಮಾರ್ಗವು ಒಂದೇ ಪ್ರಯಾಣಕ್ಕೆ 38,676 ರೂ.ಗಳಿಗೆ ಏರಿತು. ಹೊಸದಿಲ್ಲಿ-ಕೋಲ್ಕತ್ತಾ ಮಾರ್ಗವು ಸಹ 38,699 ರೂ., ದಾಟಿದೆ. ಕೇವಲ ಬೆರಳೆಣಿಕೆಯಷ್ಟು ಸೀಟುಗಳು ಮಾತ್ರ ಉಳಿದಿವೆ. ಇನ್ನೂ ಶನಿವಾರ ಸಂಜೆ 7.30ಕ್ಕೆ ಬೆಂಗಳೂರಿನಿಂದ ಹೊಸದಿಲ್ಲಿಗೆ ಹೋಗುವ ಏರ್ ಇಂಡಿಯಾ ವಿಮಾನದ ಟಿಕೆಟ್ ದರ 33,838 ರೂಪಾಯಿಗೆ ಏರಿಕೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.
ಬೀದರ್|ಡಿ.6ರಂದು ಮನೆ ಮನೆಗೆ ಅಂಬೇಡ್ಕರ್ ಅಭಿಯಾನಕ್ಕೆ ಚಾಲನೆ
ಬೀದರ್ : ಡಿ.6ರಂದು ಡಾ. ಅಂಬೇಡ್ಕರ್ ಪರಿನಿಬ್ಬಾಣ ದಿನದ ಹಿನ್ನೆಲೆ ಬೀದರ್ ನ ಡಾ.ಅಂಬೇಡ್ಕರ್ ವೃತ್ತದಲ್ಲಿ ಮನೆ ಮನೆಗೆ ಅಂಬೇಡ್ಕರ್ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಹಾಗೂ ಅಭಿಯಾನದ ಸಂಚಾಲಕ ಮಹೇಶ್ ಗೋರನಾಳಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೀದರ್ ನ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಡಿ.6 ರಿಂದ 2026ರ ಏ.14ರವರೆಗೆ 'ಮನೆ ಮನೆಗೆ ಅಂಬೇಡ್ಕರ್ ಅಭಿಯಾನ' ನಡೆಸಲಾಗುವುದು. ಹಾಗಾಗಿ ನಾಳೆ ಆ ಅಭಿಯಾನದ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ದೊರೆಯಲಿದೆ ಎಂದು ಹೇಳಿದ್ದಾರೆ. ಅಭಿಯಾನಕ್ಕೆ ಭಂತೆ ವರಜ್ಯೋತಿ ಅವರು ಚಾಲನೆ ನೀಡುವರು. ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ಕಾಶಿನಾಥ್ ಚೆಲ್ವಾ ಅವರು ಅಧ್ಯಕ್ಷತೆ ವಹಿಸುವರು. ಅಭಿಯಾನ ಅನುಷ್ಠಾನ ಸಮಿತಿಯ ಸರ್ವ ಪದಾಧಿಕಾರಿಗಳು ಅತಿಥಿಯಾಗಿ ಭಾಗವಹಿಸುವರು. ಆದ್ದರಿಂದ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳು, ಹೋರಾಟಗಾರರು, ಸಾಹಿತಿಗಳು, ಚಿಂತಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಹೇಶ್ ಗೋರನಾಳಕರ್ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ: ಪೂರ್ವಭಾವಿ ಸಭೆ
ಉಡುಪಿ, ಡಿ.5: ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಆಶ್ರಯದಲ್ಲಿ 500 ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಡಿ.13ರಂದು ಸಂಜೆ 5.45ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ವಾಹನ ನಿಲುಗಡೆ ಆವರಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ. ಉಡುಪಿಯ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜನೆ ಜೊತೆ ಸಂದೇಶ ಸಾರುವ ಕಾರ್ಯ ಮಾಡಲಾಗುವುದು. ನಮ್ಮ ದೇಶದಲ್ಲಿರುವಷ್ಟು ಸಾಂಸ್ಕೃತಿಕ ಕಲೆ ಬೇರೆ ಯಾವ ದೇಶದಲ್ಲೂ ಇಲ್ಲ. ಅದೇ ರೀತಿ ಮಾನವ ಸಂಪತ್ತಿನಲ್ಲಿ 52ಕೋಟಿ 25ವರ್ಷದೊಳಗಿನ ಯುವಜನತೆ ಇದ್ದಾರೆ. ಈ ರೀತಿಯ ಮಾನವ ಸಂಪತ್ತು ಜಗತ್ತಿನಲ್ಲಿ ಎಲ್ಲೂ ಇಲ್ಲ. ಇವರನ್ನು ಬಳಸಿಕೊಂಡು ನಮ್ಮ ಕಲೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬಹುದು ಎಂದರು. ಆಳ್ವಾಸ್ ಸಂಸ್ಥೆಯಲ್ಲಿ ದತ್ತು ಸ್ವೀಕರಿಸಿದ 3,000 ಮಕ್ಕಳ ಪೈಕಿ 500 ಮಕ್ಕಳಿಗೆ ದೇಶದ ವಿವಿಧ ಕಲೆಗಳ ಬಗ್ಗೆ ತರಬೇತಿ ನೀಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಆಳ್ವಾಸ್ ನುಡಿಸಿರಿ ವಿರಾಸತ್ನ 88 ಘಟಕಗಳನ್ನು ದೇಶ ವಿದೇಶಗಳಲ್ಲಿ ಆರಂಭಿಸಲಾಗಿದೆ. ಈ ವರ್ಷ 50 ಕಡೆಗಳಲ್ಲಿ ಈ ಸಾಂಸ್ಕೃತಿಕ ವೈಭವವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಸೌಂದರ್ಯ ಪ್ರಜ್ಞೆ ಸೃಷ್ಠಿಸುವುದು ನಮ್ಮ ಉದ್ದೇಶವಾಗಿದೆ. ಸೌಂದರ್ಯ ಪ್ರಜ್ಞೆ ಉಳ್ಳವರು ಕಲೆ, ದೇಶವನ್ನು ಪ್ರೀತಿಸುತ್ತಾರೆ. ಅದು ಇಲ್ಲದವರು ಈ ದೇಶಕ್ಕೆ ಅಪಾಯಕಾರಿ ಎಂದು ಅವರು ಅಭಿಪ್ರಾಯ ಪಟ್ಟರು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಸಂಘಟಕ ದಾಮೋದರ್ ಶರ್ಮ, ವೈದ್ಯ ಡಾ.ಕಿರಣ್ ಆಚಾರ್ಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ನಿವೃತ್ತ ಪ್ರಾಂಶುಪಾಲ ಎಂ.ಎಲ್.ಸಾಮಗ, ಪ್ರಮುಖರಾದ ಸುಪ್ರಸಾದ್ ಶೆಟ್ಟಿ, ಮನೋಹರ್ ಶೆಟ್ಟಿ, ಭುವನಪ್ರಸಾದ್ ಹೆಗ್ಡೆ, ವಿ.ಜಿ.ಶೆಟ್ಟಿ, ರಮಣ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ | ತ್ರಾಸಿ-ಮರವಂತೆಯಲ್ಲಿ ಇಲ್ಲವಾಗಿದೆ ವಾಟರ್ ಗೇಮ್ಸ್!
ಕುಂದಾಪುರ, ಡಿ.5: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ತ್ರಾಸಿ- ಮರವಂತೆ ಬೀಚ್ ನಲ್ಲಿ ಕಳೆದ ಜೂನ್ ನಲ್ಲಿ ಸ್ಥಗಿತಗೊಳಿಸಲಾದ ಜಲಸಾಹಸ (ವಾಟರ್ ಗೇಮ್ಸ್) ಕ್ರೀಡೆಗಳು ಡಿಸೆಂಬರ್ ತಿಂಗಳಾದರೂ ಇನ್ನೂ ಆರಂಭ ಗೊಂಡಿಲ್ಲ. ಇದರಿಂದ ವರ್ಷಾಂತ್ಯಕ್ಕೆ, ಕ್ರಿಸ್ಮಸ್ ರಜೆಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ಮನೋರಂಜನೆಯೇ ಇಲ್ಲದಂತಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಜಲ ಸಾಹಸ ಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿದೆ. ಅದಾಗಿ ಬರೋಬ್ಬರಿ 5 ತಿಂಗಳುಗಳೇ ಕಳೆದಿದೆ. ಮಳೆಗಾಲ ಮುಗಿದೇ 2 ತಿಂಗಳಾಗಿವೆ. ಮಲ್ಪೆ ಸಹಿತ ಇನ್ನಿತರೆಡೆಗಳ ಬೀಚ್ಗಳಲ್ಲಿ ಈಗಾಗಲೇ ವಾಟರ್ ಗೇಮ್ಸ್ ಗಳು ಅಕ್ಟೋಬರ್ ನಿಂದಲೇ ಆರಂಭಗೊಂಡಿವೆ. ಆದರೆ ರಾಜ್ಯದ ಅತ್ಯಂತ ಸುಂದರ ಬೀಚ್ ಗಳಲ್ಲಿ ಒಂದಾದ, ವಿಶ್ವ ಪ್ರಸಿದ್ಧ ತಾಣವೆಂದು ಕರೆಯಿಸಿಕೊಳ್ಳುತ್ತಿರುವ ತ್ರಾಸಿ-ಮರವಂತೆ ಬೀಚ್ ನಲ್ಲಿ ಮಾತ್ರ ಇನ್ನೂ ವಾಟರ್ ಗೇಮ್ಸ್ ಆರಂಭಕ್ಕೆ ಜಿಲ್ಲಾಡಳಿತವಾಗಲಿ, ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿಲ್ಲ. ತ್ರಾಸಿ-ಮರವಂತೆ ಬೀಚ್ ನಲ್ಲಿ ಹಿಂದೆ ಯಾವುದೇ ಜಲಸಾಹಸ ಅಥವಾ ಮನೋರಂಜನಾ ಕ್ರೀಡೆಗಳು ಇರಲಿಲ್ಲ. ಕೆಲ ವರ್ಷಗಳ ಹಿಂದಷ್ಟೇ ಇಲ್ಲಿ ವಾಟರ್ ಗೇಮ್ಸ್ ಗಳನ್ನು ಆರಂಭಿಸಲಾಗಿತ್ತು. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಕೂಡ ಸಿಕ್ಕಿತ್ತು. ಇಲ್ಲಿ ಕಳೆದ ಬಾರಿ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಕರೆದು ಬೇರೆ ಬೇರೆಯವರಿಗೆ ವಿವಿಧ ವಾಟರ್ ಗೇಮ್ಸ್ ಗಳನ್ನು ನಡೆಸಲು ಗುತ್ತಿಗೆ ನೀಡಿತ್ತು. ಜಸ್ಕಿ, ಬನಾನ ರೈಡ್, ಬಂಪರ್ ರೈಡ್, ಸ್ಪೀಡ್ ಬೋಟ್, ಎ ಟಿವಿ ಬೈಕ್ ರೈಡ್, ಕುದುರೆ ಸವಾರಿ ಸಹಿತ ಹೆಚ್ಚಿನ ಎಲ್ಲ ಬೋಟುಗಳ ಜಲಸಾಹಸ ಕ್ರೀಡೆಗಳು ಇಲ್ಲಿದ್ದವು. ಕಳೆದ ವರ್ಷ ಸ್ಕೈ ಡೈನಿಂಗ್ ಸಹ ಇತ್ತು. ಆದರೆ ಈ ಬಾರಿ ಅದೂ ಸಹ ಇಲ್ಲವಾಗಿದೆ. ಹೊರಗಡೆಯ ಪ್ರವಾಸಿಗರು ಮಾತ್ರವಲ್ಲದೆ ವಾರಾಂತ್ಯಗಳು, ರಜಾ ದಿನಗಳಲ್ಲಿ, ಸಂಜೆಯ ವೇಳೆ ಕುಂದಾಪುರ, ಬೈಂದೂರು ತಾಲೂಕಿನ ವಿವಿಧೆಡೆಗಳಿಂದ ಆಗಮಿಸುವ ಪ್ರವಾಸಿಗರು ಸಹ ಇಲ್ಲಿ ಜಲ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರವಾಸೋದ್ಯಮ ಇಲಾಖೆಯಿಂದ ತ್ರಾಸಿ-ಮರವಂತೆ ಬೀಚ್ ನಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲು ಎರಡೆರಡು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಕೂಡ ಆಸಕ್ತಿ ತೋರಿಸದ ಕಾರಣ, ಮತ್ತೆ ಹೊಸದಾಗಿ ಟೆಂಡರ್ ಕರೆಯಬೇಕಾಗಿದೆ. ಆದರೆ ಟೆಂಡರ್ ಗೆ ವರ್ಷಕ್ಕೆ 20 ಲಕ್ಷ ರೂ. ಹಣ ನಿಗದಿಪಡಿಸಿರುವುದು ದುಬಾರಿಯಾಗಿದ್ದು, ಇಲ್ಲಿರುವುದು ಬರೀ ಶೌಚಾಲಯ, ಪಾರ್ಕಿಂಗ್ ಮಾತ್ರ. ಅದಕ್ಕೆ ಇಷ್ಟೊಂದು ಹಣ ಯಾಕೆ? ಅನ್ನುವುದು ವಾಟರ್ ಗೇಮ್ಸ್ ಗುತ್ತಿಗೆ ಪಡೆಯುವವರೊಬ್ಬರ ವಾದವಾಗಿದೆ. ವಿಶಿಷ್ಟವಾದ ತ್ರಾಸಿ-ಮರವಂತೆ ಬೀಚ್ ಸಹಜ ಸೊಬಗಿನ ಪ್ರಾಕೃತಿಕ ಸೌಂದರ್ಯದಿಂದ ಪ್ರಸಿದ್ಧಿಯಾಗಿದೆ. ವಿಶಾಲವಾದ ಅರಬ್ಬಿ ಸಮುದ್ರ, ಇನ್ನೊಂದೆಡೆ ಸೌಪರ್ಣಿಕಾ ನದಿಯ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66. ಇಂತಹ ಅದ್ಭುತ ದೃಶ್ಯವು ದೇಶದ ಬೇರೆ ಕಡೆ ಇಲ್ಲ. ರಾಜ್ಯದ ಸುಂದರ ಬೀಚ್ ಎಂದು ಕರೆಯುವ ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ಸೌಂದರ್ಯವನ್ನು ನೋಡಿ ಆನಂದಿಸುವ ಜತೆಗೆ ಮನೋರಂಜನೆಗೆ, ಸಮಯ ಕಳೆಯಲು ಕೆಲವು ಜಲಸಾಹಸ ಕ್ರೀಡೆಗಳಿದ್ದರೆ ಇನ್ನಷ್ಟು ಜನರನ್ನು ಆಕರ್ಷಿಸಬಹುದು. ಇಲ್ಲದಿದ್ದರೆ ಪ್ರವಾಸಿಗರಿಗೆ ಇಲ್ಲಿ ಬಂದು ಕುಳಿತು, ಬರೀ ನೋಡುವುದಕ್ಕಷ್ಟೇ ಸೀಮಿತವಾಗಲಿದೆ ಅನ್ನುವ ಅಭಿಪ್ರಾಯ ಸ್ಥಳೀಯರದ್ದಾಗಿದೆ. ‘ತ್ರಾಸಿ-ಮರವಂತೆ ಬೀಚ್ ನಲ್ಲಿ ಪ್ರವಾಸಿಗರಿಗೆ ಮನೋರಂಜನೆ ನೀಡುವಂತಹ ವಾಟರ್ ಗೇಮ್ಸ್ ಸುರಕ್ಷತೆಯೊಂದಿಗೆ ಶೀಘ್ರ ಆರಂಭವಾಗಬೇಕು. ಟೆಂಡರ್ ಹಣ ದುಬಾರಿಯಾಗಿದ್ದು, ಇಲಾಖೆ ಅದನ್ನು ಕಡಿಮೆ ಮಾಡಲಿ. ಅದರೊಂದಿಗೆ ಪಾರ್ಕಿಂಗ್ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಯನ್ನು ಕಾಪಾಡಬೇಕು. ಇಲ್ಲಿ ಸ್ವಲ್ಪ ಆಳ ಇರುವುದರಿಂದ ಕಡಲಿಗೆ ಇಳಿಯುವ ಎಲ್ಲರಿಗೂ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕು. ಪ್ರವಾಸಿ ಮಿತ್ರರು, ಲೈಫ್ ಗಾರ್ಡ್, ಮುಳುಗು ತಜ್ಞರನ್ನು ಕಡ್ಡಾಯವಾಗಿ ನಿಯೋಜಿಸಬೇಕು. - ಮಿಥುನ್ ದೇವಾಡಿಗ, ಅಧ್ಯಕ್ಷರು, ತ್ರಾಸಿ ಗ್ರಾಪಂ
ಮಂಡ್ಯ ಜಿಲ್ಲೆಗೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ: ಸರ್ಕಾರ
ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜನರಿಗೆ ಕೇಂದ್ರಿಕೃತವಾಗಿ ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ 'ಹೈಜಿನ್ ಆನ್ ಗೋ'
ಬುಧವಾರದಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡಿದಂತಾಯ್ತು. ಪ್ರಯಾಣಿಕರೊಬ್ಬರು ಸಿಬ್ಬಂದಿಯ ಮೇಲೆ ಸಿಸ್ಟರ್, ಮೇರೆ ಭೇಟಿಕೋ ಪ್ಯಾಡ್ ಚಾಯಿಯೇ ಎಂದು ಕೂಗಾಡಿದ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಕೇರಳ ಕಾಂಗ್ರೆಸ್ ಕಿಡಿಕಾರಿದೆ. ಸರ್ ನಿಮ್ಮ ಪೌರುಷವನ್ನು ಸರ್ಕಾರದ ಮೇಲೆ ತೋರಿಸಿ, ಆ ಹೆಣ್ಮಗಳಿಂದ ನಿಮ್ಮ ಫ್ಲೈಟ್ ಪ್ರಯಾಣಕ್ಕೆ ಸಮಸ್ಯೆಯಾಗಿಲ್ಲ ಎಂದು ಕಿಡಿಕಾರಿದೆ. ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಉತ್ತಮ ತರಬೇತಿ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಾಧ್ಯ : ಸುರೇಶ್ ಇಟ್ನಾಳ
ಕೊಪ್ಪಳ: ಮಕ್ಕಳಿಗೆ ಅವರ ಬಾಲ್ಯದ ಹಂತದಲ್ಲಿಯೇ ಬಹುಮುಖ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ತರಬೇತಿ ನೀಡುವುದರಿಂದ ಅವರ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ ಹೇಳಿದರು. ಶುಕ್ರವಾರ ಕೊಪ್ಪಳ ನಗರದ ಹೊಸಪೇಟ ರಸ್ತೆಯ ಅಗ್ನಿಶಾಮಕ ಠಾಣೆಯ ಹತ್ತಿರದ ಕಲ್ವಾರಿ ಚಾಪೆಲ್ ಟ್ರಸ್ಟ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಹಾಗೂ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಕ್ಕಳ ರಕ್ಷಣಾ ನಿರ್ದೇಶನಾಲ, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಮಕ್ಕಳ ಪಾಲನಾ ಸಂಸ್ಥೆಗಳು ಹಾಗೂ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ, ಕೊಪ್ಪಳ ಮಕ್ಕಳ ಜಾಗೃತಿ ಸಂಸ್ಥೆ, ಕಲ್ವಾರಿ ಚಾಪೆಲ್ ಟ್ರಸ್ಟ್, ಬೆಂಗಳೂರು, ಅಭಿನವ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ, ಕೊಪ್ಪಳ ಮತ್ತು ಸ್ಪೂರ್ತಿಧಾಮ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಕುಣಿಕೇರಿ ಇದರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನಮ್ಮ ಮಕ್ಕಳ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಡಾ.ಸುರೇಶ್ ಬಿ. ಇಟ್ನಾಳ ಮಾತನಾಡಿದರು. ಮಕ್ಕಳು ತಮ್ಮ ಬಾಲ್ಯ ಜೀವನವನ್ನು ಕೇವಲ ಆಟೋಟಗಳಿಗೆ ಸೀಮಿತಗೊಳಿಸದೆ, ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿದ್ಯಾಭ್ಯಾಸ, ಸಂಗೀತ, ಕಲೆ, ಮಾತುಗಾರಿಕೆಯ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಅವರವರ ಇಚ್ಛೆಯ ಮೇರೆಗೆ ಒಂದೊಂದು ವೃತ್ತಿಯನ್ನು ಆರಿಸಿಕೊಳ್ಳಬಹುದು. ಪ್ರತಿಯೊಬ್ಬ ಮಗುವಿಗೂ ವಿಭಿನ್ನ ಆಸಕ್ತಿಗಳಿದ್ದು ಅದನ್ನು ಗುರುತಿಸಬೇಕು. ಕೆಲವರಿಗೆ ಓದುವುದರಲ್ಲಿ ಆಸಕ್ತಿ ಕಡಿಮೆ ಇದ್ದರೂ, ಅವರಿಗೆ ಬೇರೆ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಇರುತ್ತದೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಹೆಚ್ಚಿದೆಯೊ ಅವರನ್ನು ಅದರಲ್ಲಿ ಹೆಚ್ಚಾಗಿ ತೊಡಗಿಸಿ ಅವರ ಭವಿಷ್ಯವನ್ನು ರೂಪಿಸಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಮಕ್ಕಳ ಕೈಯಲ್ಲಿ ನಿರೂಪಣೆ ಮಾಡಿಸಿ ಅವರಿಗೆ ವೇದಿಕೆ ಭಯವನ್ನು ಹೋಗಲಾಡಿಸಲು ಒಂದು ಪ್ರಯತ್ನ ಮಾಡಿರುವುದು ತುಂಬಾ ಸಂತೋಷವಾಗಿದೆ. ಈ ಒಂದು ಕಾರ್ಯಕ್ರಮದ ಮೂಲಕ ಎಲ್ಲಾ ಮಕ್ಕಳಿಗೆ ಉತ್ತಮ ಭವಿಷ್ಯದ ಕಲ್ಪನೆ ಮೂಡಿಸುವಲ್ಲಿ ಒಂದು ಒಳ್ಳೆಯ ಪ್ರಯತ್ನವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಹಾಂತಸ್ವಾಮಿ ಪೂಜಾರ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳದ ವ್ಯವಸ್ಥಾಪಕರಾದ ಹರೀಶ್ ಜೋಗಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಬಿ. ಜಾಬಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಡಿಸೆಂಬರ್ 5ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಪ್ರಮಾಣ ಹೆಚ್ಚಾಗುತ್ತಲಿದೆ. ಈ ನಡುವೆಯೇ ಚಂಡಮಾರುತ ಹಿನ್ನೆಲೆ ಹಲವೆಡೆ ಧಾರಾಕಾರ ಮಳೆ ಮುಂದುವರೆದಿದೆ. ಇನ್ನೂ ಈಗಾಗಲೇ ಮುಂಗಾರು ಮಳೆ ವೇಳೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ಡಿಸೆಂಬರ್ 5) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜಸಾಗರ (ಕೆಆರ್ಎಸ್) ಸೇರಿದಂತೆ ಉಳಿದ ಪ್ರಮುಖ
WTL 2025- ಬೆಂಗಳೂರಿನಲ್ಲಿ ರೋಚಕ ವಿಶ್ವ ಟೆನಿಸ್ ಲೀಗ್ ಟೂರ್ನಿ; ಯಾವಾಗ ಪಂದ್ಯ? ಟಿಕೆಟ್ ಎಲ್ಲಿ ಲಭ್ಯ?
World Tennis League 2025- ಬೆಂಗಳೂರಿನಲ್ಲಿ ಮೊದಲ ಬಾರಿಗೆ ವರ್ಲ್ಡ್ ಟೆನಿಸ್ ಲೀಗ್ (WTL) ಆಯೋಜನೆಯಾಗಿದ್ದು, ಡಿಸೆಂಬರ್ 17 ರಿಂದ 20 ರವರೆಗೆ ನಡೆಯಲಿದೆ. ಕನ್ನಡಿಗ ರೋಹನ್ ಬೋಪಣ್ಣ ಸೇರಿದಂತೆ ವಿಶ್ವದ ಹಲವು ಖ್ಯಾತನಾಮ ಟೆನಿಸಿಗರು ಪಾಲ್ಗೊಳ್ಳಲಿದ್ದಾರೆ. ನಾಲ್ಕು ಸೆಟ್ಗಳ ಈ ಟೂರ್ನಿಯಲ್ಲಿ ಪುರುಷರ, ಮಹಿಳೆಯರ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳಿದ್ದು, ಲೀಗ್ ಹಂತದ ನಂತರ ಅಗ್ರ ಎರಡು ತಂಡಗಳು ಫೈನಲ್ಗೆ ತಲುಪಲಿವೆ. ಟಿಕೆಟ್ಗಳು ಈಗ ಲಭ್ಯವಿದ್ದು ಈ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ.
Putin Visit India: ರಷ್ಯಾ - ಭಾರತ ಪ್ರಮುಖ ಒಪ್ಪಂದ: ಅಮೇರಿಕಾಗೆ ಮಾಸ್ಟರ್ ಸ್ಟ್ರೋಕ್!
Putin Visit India: ಭಾರತ ಹಾಗೂ ರಷ್ಯಾ ಎರಡೂ ದೇಶಗಳು ಅಮೇರಿಕಾಗೆ ಕ್ಯಾರೇ ಎನ್ನದ ಗಟ್ಟಿಯಾದ ನಿರ್ಧಾರವೊಂದನ್ನು ತೆಗೆದುಕೊಂಡಿವೆ. ಅಮೇರಿಕಾದ ನಿರಂತರ ಒತ್ತಡದ ನಡುವೆಯೂ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಭಾರತದ ನಡುವೆ ಮಹತ್ವದ ಮಾತುಕತೆ ನಡೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ತಡೆರಹಿತ ಇಂಧನ ಸರಬರಾಜು /
ಕಟಾ, ಕುಮಿಟೆ ವಿಭಾಗದಲ್ಲಿ ಶಹಾದ್ ಗೆ 3ನೇ ಸ್ಥಾನ
ಮೈಸೂರು, ಡಿ.5: ಮೈಸೂರಿನ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 8ನೇ ಜಿಕೆಎ ಮುಕ್ತ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮುಹಮ್ಮದ್ ಶಹಾದ್ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಶಹಾದ್ ಬಜ್ಪೆ ಮಾರ್ನಿಂಗ್ ಸ್ಟಾರ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸೆನ್ಸಿ ಕೇವಲ್ ಕುಮಾರ್ ಅವರಿಂದ ತರಬೇತಿ ಪಡೆದಿರುತ್ತಾನೆ.
ಮಂಗಳೂರು | ಪ್ರವಾಸೋದ್ಯಮ ಇಲಾಖೆ ಕಚೇರಿ ಸ್ಥಳಾಂತರ
ಮಂಗಳೂರು,ಡಿ.5: ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಡಿ.1ರಿಂದ ನಗರದ ಪಡೀಲ್ ನಲ್ಲಿರುವ ಪ್ರಜಾ ಸೌಧದ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದೆ. ಹಾಗಾಗಿ ಸಾರ್ವಜನಿಕರು ಯಾವುದೇ ಪತ್ರ ವ್ಯವಹಾರವನ್ನು ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಕೊಠಡಿ ಸಂಖ್ಯೆ: 205 ಎರಡನೇ ಮಹಡಿ, ಪ್ರಜಾ ಸೌಧ, ದ.ಕ. ಜಿಲ್ಲಾ ಆಡಳಿತ ಕೇಂದ್ರ, ಪಡೀಲ್, ಮಂಗಳೂರು -575007- ಈ ವಿಳಾಸದೊಂದಿಗೆ ವ್ಯವಹರಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ| ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವನಾಥರೆಡ್ಡಿಗೆ ಸನ್ಮಾನ
ಯಾದಗಿರಿ: ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಜಿಲ್ಲಾ ಸಹಕಾರಿ ಒಕ್ಕೂಟ ಯೂನಿಯನ್ ಅಧ್ಯಕ್ಷರಾದ ವಿಶ್ವನಾಥರೆಡ್ಡಿ ದರ್ಶನಾಪುರ ಅವರಿಗೆ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಧ್ಯಕ್ಷರಾದ ಸಿದ್ದಪ್ಪ. ಎಸ್ ಹೊಟ್ಟಿ ಅವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವನಾಥರೆಡ್ಡಿ, ಸಹಕಾರಿ ಕ್ಷೇತ್ರದಲ್ಲಿ ನಾನು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇದರಿಂದ ಜವಾಬ್ದಾರಿ ಹೆಚ್ಚಿದೆ. ಜಿಲ್ಲೆಯು ಸಹಕಾರಿ ರಂಗದಲ್ಲಿ ಹಿಂದುಳಿದಿದ್ದು ಸಹಕಾರಿ ಕ್ಷೇತ್ರವನ್ನು ಬಲವರ್ಧನಗೊಳಿಸಲು ಶ್ರಮಿಸುವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿದ್ದಪ್ಪ ಹೊಟ್ಟಿ ಅವರು ಮಾತನಾಡಿ, ವಿಶ್ವನಾಥರೆಡ್ಡಿ ದರ್ಶನಾಪುರವರು ಸಹಕಾರಿ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಹೊಂದಿದ್ದು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಡಿಸಿಸಿ ಬ್ಯಾಂಕ್ ತರುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಿ ಎಂದು ಹೇಳಿದರು. ಈ ವೇಳೆ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಪ್ರಕಾಶ ಅಂಗಡಿ ಕನ್ನೆಳ್ಳಿ, ಮಹದೇವಪ್ಪ ಅಬ್ಬೆತುಮಕೂರ, ಚನ್ನಪ್ಪ ಠಾಣಗುಂದಿ, ಅಯ್ಯನಗೌಡ ಕಾಶಪ್ಪನಳ್ಳಿ , ದೇವರಾಜ ವರ್ಕನಳ್ಳಿ, ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ ಹಾಗೂ ಶಹಪುರ ತಾಲೂಕ ಕ.ಸಾ. ಪ ಅಧ್ಯಕ್ಷ ಡಾ. ರವೀಂದ್ರ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಗಳೂರು | ಅಕ್ರಮ ಮಾನವ ಕಳ್ಳ ಸಾಗಣೆ ನಿವಾರಣೆಗೆ ಜಾಗೃತಿ ಅಗತ್ಯ: ಜೈಬುನ್ನಿಸಾ
ಮಂಗಳೂರು,ಡಿ.5: ಅಕ್ರಮ ಮಾನವ ಕಳ್ಳ ಸಾಗಣೆಯು ಸಾಮಾಜಿಕ ಪಿಡುಗಾಗಿದೆ. ಮಕ್ಕಳು ಮತ್ತು ಮಹಿಳೆಯರು ಈ ಜಾಲಕ್ಕೆ ಸಿಲುಕುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಎಷ್ಟೇ ಕಾನೂನು ರೂಪಿಸಿದರೂ ಕೂಡ ಸಾರ್ವಜನಿಕರು ಜಾಗೃತರಾಗಬೇಕು. ಇಲ್ಲದಿದ್ದರೆ ಇಂತಹವುಗಳಿಗೆ ಕಡಿವಾಣ ಹಾಕಲು ಸುಲಭವಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಕ್ರಮ ಸಾಗಾಣಿಕ ತಡೆ ಕುರಿತು ಮಂಗಳೂರು ತಾಪಂ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಡಾ. ಅಕ್ಷತಾ ಆದರ್ಶ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ರೋಹಿತ್ ಸಿ.ಜೆ. ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಕೆ.ಎಂ, ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ, ಮಂಗಳೂರು ತಾಪಂ ಇಒ ಮಹೇಶ್ ಹೊಳ್ಳ ಮತ್ತಿತರರು ಭಾಗವಹಿಸಿದ್ದರು. ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ ಕಾರಗಿ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ. ವಂದಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು | ಡಿ.7ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ; ನಿಷೇಧಾಜ್ಞೆ ಜಾರಿ
ಮಂಗಳೂರು,ಡಿ.5: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಳು ನಡೆಯಲಿರುವ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಮತ್ತು ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಪರೀಕ್ಷೆಗಳನ್ನು ಸುಸೂತ್ರವಾಗಿ, ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ಡಿ.7ರಂದು ಎಲ್ಲಾ 19 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ.ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ನಿಷೇಧಾಜ್ಞೆ ಜಾರಿಗೊಳಿಸಿ ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್. ಆದೇಶಿಸಿದ್ದಾರೆ. ಪರೀಕ್ಷೆ ಪ್ರಾರಂಭವಾಗುವ 1 ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳು ಹಾಗೂ ಸೈಬರ್ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ನಿಷೇಧಿಸಿದೆ ಎಂದು ಆದೇಶಿಸಲಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಅವರ ಗೌರವಾರ್ಥ ಕೇಂದ್ರ ಸರ್ಕಾರ ಆಯೋಜಿಸಿದ್ದ ಭೋಜನಕೂಟಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ಆಹ್ವಾನವಿಲ್ಲ. ಬದಲಿಗೆ, ಕಾಂಗ್ರೆಸ್ನ ಶಶಿ ತರೂರ್ ಅವರಿಗೆ ಆಹ್ವಾನ ನೀಡಿದ್ದು, ಇದು ಗಾಂಧಿ ಕುಟುಂಬಕ್ಕೆ ಅಸಮಾಧಾನ ತಂದಿದೆ. ಈ ಹಿಂದೆ ಪುಟಿನ್ ಭೇಟಿಗೂ ವಿಪಕ್ಷ ನಾಯಕರಿಗೆ ಅವಕಾಶ ಸಿಕ್ಕಿರಲಿಲ್ಲ. ಭೋಜನಕೂಟದಲ್ಲಿ ಉಭಯ ದೇಶಗಳ ಸಾಂಪ್ರದಾಯಿಕ ಖಾದ್ಯಗಳಿರುತ್ತವೆ.
ಮಂಗಳೂರು | ಅಂತರ್ ರಾಜ್ಯ ವಾಹನ, ಸರಗಳ್ಳತನ ಆರೋಪಿಯ ಬಂಧನ
ನಾಲ್ಕು ದ್ವಿಚಕ್ರ ವಾಹನ, ಎರಡು ಚಿನ್ನದ ಸರ ವಶ
ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿದೆ: ಶಂಶಾದಬೇಗಂ
ಕನಕಗಿರಿ: ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವ, ಜ್ಞಾನ ವಿಕಸನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ ಯಾಗಿದೆ ಎಂದು ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶಂಶಾದಬೇಗಂ ಹೇಳಿದರು. ಪಟ್ಟಣದ ಕೆರೆ ರಸ್ತೆಯಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ, ಕನಕಗಿರಿ ಉತ್ತರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವವನ್ನುದ್ದೇಶಿಸಿ ಮಾತನಾಡಿದ ಶಂಶಾದಬೇಗಂ, ಪ್ರತಿ ಮಕ್ಕಳಲ್ಲಿ ಒಂದು ವಿಶೇಷ ಪ್ರತಿಭೆ ಇರುತ್ತದೆ. ಅದರ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಸಿಆರ್ ಪಿ ರಾಜೀವ್ ಅವರು ಮಾತನಾಡಿ ಕಲಿಕೆ ಎಂದರೆ ಕೇವಲ ಅಂಕ ಗಳಿಕೆ ಅಲ್ಲ. ಕಲಿಕೆ ಜೊತೆ ವಿವಿಧ ಚಟುವಟಿಕೆ ಮೂಲಕ ಮಕ್ಕಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಅನುಕೂಲವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಶಿವಕುಮಾರ್ ವಹಿಸಿದರು. ಎಸ್ಡಿಎಂಸಿ ಅಧ್ಯಕ್ಷ ಹೊನ್ನೂರ ಸಾಬ, ಶಿಕ್ಷಣ ಸಂಯೋಜಕ ಅಂಜಿನಯ್ಯ, ಕೆಪಿಎಸ್ ಶಾಲೆಯ ಪ್ರಾಂಶುಪಾಲ ಜಗದೀಶ ಹಾದಿಮನಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ್ ಕಂದಕೂರು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬಿ ಚಳ್ಳಮರದ್, ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯ ಹನುಮಂತ ಬಸರಿಗಿಡದ, ಪ್ರಮುಖರಾದ ನಾಗರಾಜ ಬಾವಿಕಟ್ಟಿ, ಬೀರಪ್ಪ, ವೀರಭದ್ರ, ಮಕ್ತುಮ್ ಸಾಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು : ‘ನಮ್ಮ ನೆಲದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಕೋರಿ ಕೇಂದ್ರ ಸರಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಪತ್ರ ಬರೆದಿದ್ದಾರೆ. ‘ನಿಷ್ಕಾಮ ಕರ್ಮದ ಕಾಲಾತೀತ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ನೈತಿಕ ಶಕ್ತಿಯು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಹೆಚ್ಚು ಉತ್ಕೃಷ್ಟಗೊಳಿಸುತ್ತದೆ ಮತ್ತು ನಮ್ಮ ಯುವಜನರು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪ್ರಜೆಗಳಾಗಿ ರೂಪುಗೊಂಡು ಜಾಗತಿಕವಾಗಿ ಶ್ರೇಷ್ಠರಾಗಲು ಸ್ಫೂರ್ತಿ, ಪ್ರೇರಣೆ ನೀಡುತ್ತದೆ. ಶ್ರೇಷ್ಠ, ಮಾನವೀಯತೆಯ ಭಾರತೀಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಪ್ರಧಾನಿ ಮೋದಿ ಅವರ ಸಂಕಲ್ಪಕ್ಕೆ ಅನುಗುಣವಾಗಿ ಭಗವದ್ಗೀತೆ ಬೋಧನೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ನಮ್ಮ ನೆಲದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು, ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕೇಂದ್ರ ಸರ್ಕಾರದ ಗೌರವಾನ್ವಿತ ಶಿಕ್ಷಣ ಸಚಿವರಾದ ಶ್ರೀ @dpradhanbjp ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ. ನಿಷ್ಕಾಮ ಕರ್ಮದ ಕಾಲಾತೀತ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ನೈತಿಕ ಶಕ್ತಿಯು ರಾಷ್ಟ್ರೀಯ… pic.twitter.com/Iocy3XkK4d — ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) December 5, 2025
ಕನ್ನಡ ಜಾನಪದ ಪರಿಷತ್ ಜೇವರ್ಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಡಾ.ಖಾಜಾವಲಿ ಈಚನಾಳ ನೇಮಕ
ಕಲಬುರಗಿ: ಕನ್ನಡ ಜಾನಪದ ಪರಿಷತ್ ಜೇವರ್ಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಖಾಜಾವಲಿ ಈಚನಾಳ ಅವರನ್ನು ನೇಮಕ ಮಾಡಲಾಗಿದೆ. ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಎಸ್. ಬಾಲಾಜಿಯವರ ಆದೇಶದ ಮೇರೆಗೆ ಈ ನೇಮಕಾತಿ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಜಾನಪದ ಪರಿಷತ್ತು ರಾಜ್ಯಾದ್ಯಂತ ಜಾನಪದ ಸಾಹಿತ್ಯದ ಸಂಗ್ರಹ, ಜಾನಪದ ಕಲೆಗಳ ತರಬೇತಿ ಹಾಗೂ ಹಿರಿಯ ಜಾನಪದ ಕಲಾವಿದರಿಗೆ ಗೌರವ ಸತ್ಕಾರ ಮಾಡುವ ಮೂಲಕ ಜಾನಪದ ಸಂಸ್ಕೃತಿ, ಸಾಹಿತ್ಯ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತದೆ.
ದೇರಳಕಟ್ಟೆ | ಪತ್ರಿಕಾ ವಿತರಕ ಇಸ್ಮಾಯೀಲ್ ಸಹಿತ ನಾಲ್ವರಿಗೆ ಸನ್ಮಾನ
ದೇರಳಕಟ್ಟೆ, ಡಿ.5: ಇಲ್ಲಿನ ಟೀಮ್ ತತ್ವಮಸಿ ಮತ್ತು ತತ್ವಮಸಿ ಯಕ್ಷಗಾನ ಸಮಿತಿ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ನಡೆದ ಚತುರ್ಥ ವರ್ಷದ ಬೊಳ್ಮದಾಟ-2025 ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀಶ ಬೈಪಾಡಿತ್ತಾಯ, ನಿವೃತ್ತ ಶಿಕ್ಷಕ ರಾಜೀವ ಮುಗುಳ್ಯ, ಯಕ್ಷಗಾನ ಪ್ರೇಮಿ, ಹಿರಿಯ ಪತ್ರಿಕಾ ವಿತರಕ ಇಸ್ಮಾಯಿಲ್ ಕಾನೆಕೆರೆ, ಪಾವಂಜೆ ಮೇಳದ ಭಾಗವತ, ಶಿಕ್ಷಕ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ತತ್ವಮಸಿ ಯಕ್ಷಗಾನ ಸಮಿತಿಯ ಗೌರವಾಧ್ಯಕ್ಷರಾದ ವಸಂತ ಶೆಟ್ಟಿ ಅಸೈಗೋಳಿ, ಚೇತನ್ ಶೆಟ್ಟಿ ದೇರಳಕಟ್ಟೆ, ಶರತ್ರಾಜ್ ಶೆಟ್ಟಿ ದೇರಳಕಟ್ಟೆ, ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಗುಡ್ಡೆಮಾರ್, ಉಪಾಧ್ಯಕ್ಷ ಸಾಕೇತ್ ನಿತ್ಯಾನಂದ ನಗರ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ದೇರಳಕಟ್ಟೆ, ಜೊತೆ ಕಾರ್ಯದರ್ಶಿ ಸುರೇಶ್ ಕುಂಪಲ, ಸಂಘಟನಾ ಕಾರ್ಯದರ್ಶಿ ಗಣೇಶ್ ಕುಕ್ಕುದಕಟ್ಟೆ, ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಜಗದೀಶ್ ರೈ ಬೆಳ್ಮ ಹೊಸಮನೆ, ಮೊಕ್ತೇಸರ ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿ ಉಳಿದೊಟ್ಟು, ಪಾವಂಜೆ ಮೇಳದ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದೇರಳಕಟ್ಟೆ | ‘ಬೊಳ್ಮದಾಟ–2025’ ಅಂಗವಾಗಿ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ
ದೇರಳಕಟ್ಟೆ : ಟೀಮ್ ತತ್ವಮಸಿ ದೇರಳಕಟ್ಟೆ ಮತ್ತು ತತ್ವಮಸಿ ಯಕ್ಷಗಾನ ಸಮಿತಿ ದೇರಳಕಟ್ಟೆ ಹಾಗೂ ಊರ ಹತ್ತು ಸಮಸ್ತರ ಸಹಕಾರದೊಂದಿಗೆ, ನ.28ರಂದು ನಾಲ್ಕನೇ ವರ್ಷದ ಬೊಳ್ಮದಾಟ–2025 ಕಾರ್ಯಕ್ರಮದ ಅಂಗವಾಗಿ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ಭವ್ಯವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀಶ ಬೈಪಾಡಿತ್ತಾಯ, ನಿವೃತ್ತ ಶಿಕ್ಷಕರಾದ ರಾಜೀವ ಮುಗುಳ್ಯ, ಯಕ್ಷಗಾನ ಪ್ರೇಮಿ ಮತ್ತು ಹಿರಿಯ ದಿನಪತ್ರಿಕೆ ವಿತರಕರಾದ ಇಸ್ಮಾಯಿಲ್ ಕಾನೆಕೆರೆ, ಪಾವಂಜೆ ಮೇಳದ ಭಾಗವತರೂ ಜೊತೆಗೆ ಶಿಕ್ಷಕರಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತತ್ವಮಸಿ ಯಕ್ಷಗಾನ ಸಮಿತಿಯ ಗೌರವಾಧ್ಯಕ್ಷರು ಶ್ರೀ ವಸಂತ ಶೆಟ್ಟಿ ಅಸೈಗೋಳಿ, ಚೇತನ್ ಶೆಟ್ಟಿ ದೇರಳಕಟ್ಟೆ, ಶರತ್ ರಾಜ್ ಶೆಟ್ಟಿ ದೇರಳಕಟ್ಟೆ, ಅಧ್ಯಕ್ಷ ಶ್ರೀ ಮೋಹನ್ ದಾಸ್ ಶೆಟ್ಟಿ ಗುಡ್ಡೆಮಾರ್, ಉಪಾಧ್ಯಕ್ಷ ಸಾಕೇತ್ ನಿತ್ಯಾನಂದ ನಗರ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ದೇರಳಕಟ್ಟೆ, ಜೊತೆ ಕಾರ್ಯದರ್ಶಿ ಸುರೇಶ್ ಕುಂಪಲ, ಸಂಘಟನಾ ಕಾರ್ಯದರ್ಶಿ ಗಣೇಶ್ ಕುಕ್ಕುದಕಟ್ಟೆ, ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಜಗದೀಶ್ ರೈ ಬೆಳ್ಮ ಹೊಸ ಮನೆ, ಮೊಕ್ತೇಸರ ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿ ಉಳಿದೊಟ್ಟು, ಪಾವಂಜೆ ಮೇಳದ ಪ್ರಧಾನ ಭಾಗವತರ ಪಟ್ಲ ಸತೀಶ್ ಶೆಟ್ಟಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ - ಖಾತಾ ಪಡೆಯುವುದು ಮತ್ತಷ್ಟು ಸುಲಭ; ಗೊಂದಲಗಳಿಗೆ ಸಹಾಯವಾಣಿ ಪರಿಹಾರ!
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯುವುದು ಈಗ ಸುಲಭವಾಗಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಆಸ್ತಿಗಳ ಭದ್ರತೆಗಾಗಿ ಇ-ಸ್ವತ್ತು ಅಭಿಯಾನ ಪ್ರಾರಂಭಿಸಲಾಗಿದೆ. ಸಹಾಯವಾಣಿ 9483476000 ಮೂಲಕ ಯಾವುದೇ ಗೊಂದಲಗಳಿಗೆ ಪರಿಹಾರ ಪಡೆಯಬಹುದು. ಚಿಕ್ಕಬಳ್ಳಾಪುರದಲ್ಲಿಯೂ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ವ್ಲಾದಿಮಿರ್ ಪುಟಿನ್ ಭೇಟಿ ಸಂದರ್ಭದಲ್ಲೇ ರಷ್ಯಾ ಪ್ರವಾಸಿಗರಿಗೆ ಭರ್ಜರಿ ಕೊಡುಗೆ ಘೋಷಿಸಿದ ಪ್ರಧಾನಿ ಮೋದಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಪ್ರವಾಸಿಗರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್ ವೀಸಾ ಮತ್ತು ಗ್ರೂಪ್ ಟೂರಿಸ್ಟ್ ವೀಸಾ ನೀಡುವುದಾಗಿ ಘೋಷಿಸಿದ್ದಾರೆ. 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಈ ಕ್ರಮವು ಉಭಯ ದೇಶಗಳ ನಡುವಿನ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.
\ಜೈಲುಗಳಲ್ಲೇ ಗಾಂಜಾ, ಅಫೀಮು ಮಾರಾಟ\
ಬೆಂಗಳೂರು, ಡಿಸೆಂಬರ್ 05: ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಅಧಿಕವಾಗಿದೆ. ಗಡಿಭಾಗದಲ್ಲಿ ಬಂದೋಬಸ್ತ್ ಬಿಗಿ ಮಾಡಿದರೆ ಇದನ್ನು ತಡೆಗಟ್ಟಬಹುದು. ಜೈಲುಗಳಲ್ಲೇ ಗಾಂಜಾ, ಅಫೀಮು ಮಾರಾಟವಾಗುತ್ತಿದೆ. ಸರ್ಕಾರ ಕೂಡಲೇ ಸಭೆ ಕರೆದು ಎಲ್ಲ ಕಡೆ ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಬೇಕು. ಇಲ್ಲವಾದರೆ ಕರ್ನಾಟಕ ರಾಜ್ಯ ಡ್ರಗ್ ಮಾಫಿಯಾದ ಹೆದ್ದಾರಿಯಾಗಲಿದೆ ಎಂದು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಹೇಳಿದರು.
Bhagavad Gita: ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಬೋಧಿಸಿ: ಕೇಂದ್ರಕ್ಕೆ HD ಕುಮಾರಸ್ವಾಮಿ ಪತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಬಂದಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಹೆಚ್.ಡಿ.ಕುಮಾರಸ್ವಾಮಿ ಅವರು ಭಗವದ್ಗೀತೆ ವಿಚಾರದಲ್ಲಿ ಮಹತ್ವದ ಮನವಿಯೊಂದನ್ನು ಕೇಂದ್ರ ಸರ್ಕಾರಕ್ಕೆ ಮಾಡಿದ್ದಾರೆ. ನಮ್ಮ ನೆಲದ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ
KSDL ಭ್ರಷ್ಟಾಚಾರ ಆರೋಪ: ʻಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿʼ; JDS ಶಾಸಕರಿಗೆ ಸಚಿವ ಎಂಬಿ ಪಾಟೀಲ್ ವಾರ್ನಿಂಗ್
ಕರ್ನಾಟಕದಲ್ಲಿ ಅರವತ್ಮೂರು ಪರ್ಸೆಂಟ್ ಭ್ರಷ್ಟಾಚಾರವಾಗಿದೆ ಎಂದು ಉಪಲೋಕಯುಕ್ತರು ಹೇಳಿಕೆ ಕೊಟ್ಟ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕೆಎಸ್ಡಿಎಲ್ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸ್ಫೋಟಕ ಹೇಳಿಕೆ ಕೊಟ್ಟ ಬಗ್ಗೆ ಎಂಬಿ ಪಾಟೀಲ್ ಅವರು ಕಿಡಿಕಾರಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಪಾಟೀಲ್, ಸುಳ್ಳು ಆರೋಪ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

21 C