ಗಲ್ಫ್ನಲ್ಲಿ ಯುದ್ಧದ ಸನ್ನಿವೇಶ | ಮಧ್ಯಪ್ರಾಚ್ಯ ಬಿಟ್ಟು ತೆರಳಲು ದಾರಿಯಿಲ್ಲ; ಸಂಕಷ್ಟದಲ್ಲಿ ಸಾವಿರಾರು ಮಂದಿ
ದುಬೈ/ದೋಹಾ: ಗಲ್ಫ್ ಪ್ರದೇಶದಲ್ಲಿ ಯುದ್ಧದ ಸನ್ನಿವೇಶ ತೀವ್ರಗೊಂಡ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಅಲ್ಲಿಂದ ತೆರಳಲು ದಾರಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದ್ದಕ್ಕಿದ್ದಂತೆ ಉಲ್ಬಣಗೊಂಡ ದಾಳಿಗಳಿಂದ ಯುದ್ಧಾವೃತ ಪ್ರದೇಶವನ್ನು ತೊರೆಯಲು ಕೆಲವೇ ಆಯ್ಕೆಗಳು ಉಳಿದಿವೆ ಎಂದು Aljazeera ವರದಿ ಮಾಡಿದೆ. ಇರಾನ್ ಮೇಲೆ ಅಮೆರಿಕ–ಇಸ್ರೇಲ್ ದಾಳಿಗಳು ಆರಂಭವಾದ ನಂತರ ಖತರ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಇದರ ಪರಿಣಾಮವಾಗಿ ಇನ್ನೇನು ಪ್ರಯಾಣಿಸಬೇಕಿದ್ದ ಸುಮಾರು 8,000 ಪ್ರಯಾಣಿಕರು ಅಲ್ಲೇ ಸಿಲುಕಿಕೊಂಡಿದ್ದಾರೆ. ವಿಮಾನ ಸಂಚಾರ ಸ್ಥಗಿತಗೊಂಡ ಕಾರಣ ವಿಮಾನ ನಿಲ್ದಾಣಗಳಲ್ಲಿ ಅನಿಶ್ಚಿತತೆ ಮತ್ತು ಆತಂಕದ ವಾತಾವರಣ ಮನೆಮಾಡಿದೆ. ಸೋಮವಾರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಹೊರಡುವ ವಿಮಾನಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ. ಸೀಮಿತ ಸಂಖ್ಯೆಯ ವಿಮಾನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದ್ದು, ಉಳಿದವರು ಪರ್ಯಾಯ ವ್ಯವಸ್ಥೆಗಳಿಗಾಗಿ ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಇರಾನ್ ಗಲ್ಫ್ ಪ್ರದೇಶದಲ್ಲಿ ಪ್ರತಿದಾಳಿ ಆರಂಭಿಸಿದ ಪರಿಣಾಮ ಪ್ರವಾಸಿಗರು ಹಾಗೂ ವಲಸಿಗರು ಸುರಕ್ಷಿತ ದಾರಿ ಹುಡುಕುತ್ತ ಪರದಾಡುವಂತಾಗಿದೆ. ದುಬೈ ಹಾಗೂ ನೆರೆಯ ದೋಹಾ ನಗರಗಳು ಪೂರ್ವ–ಪಶ್ಚಿಮ ವಾಯು ಪ್ರಯಾಣದ ಪ್ರಮುಖ ಅಡ್ಡಹಾದಿಯಲ್ಲಿ ಇರುವುದರಿಂದ ಯುರೋಪ್–ಏಷ್ಯಾ ನಡುವಿನ ದೀರ್ಘ ದೂರದ ವಿಮಾನ ಸಂಚಾರಕ್ಕೆ ಕೇಂದ್ರೀಯ ಕೇಂದ್ರಗಳಾಗಿವೆ. ಪ್ರತಿದಿನ ಹತ್ತಾರು ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಈ ನಗರಗಳಲ್ಲಿ ವಾಯುಪ್ರದೇಶ ನಿರ್ಬಂಧದ ಪರಿಣಾಮ ಅಂತರರಾಷ್ಟ್ರೀಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಯುದ್ಧದ ಭೀತಿ ನಡುವೆ ಗಲ್ಫ್ನಿಂದ ತೆರಳಲು ಮಾಡಲು ಬಯಸುವ ಜನರಿಗೆ ಸ್ಪಷ್ಟ ಹಾಗೂ ಸುಗಮ ಮಾರ್ಗ ಲಭ್ಯವಿಲ್ಲದಿರುವುದು ಮಾನವೀಯ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ. ತಮ್ಮ ನಾಗರಿಕರ ಸುರಕ್ಷಿತ ವಾಪಸಾತಿಗಾಗಿ ಸಂಬಂಧಿತ ರಾಷ್ಟ್ರಗಳು ಏರ್ ಲಿಫ್ಟ್ ನಂತಹ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.
ಮಧ್ಯಪ್ರಾಚ್ಯ ಸಂಘರ್ಷ | ಖತರ್, ಯುಎಇ ನಾಯಕರೊಂದಿಗೆ ಝೆಲೆನ್ಸ್ಕಿ ಚರ್ಚೆ
ಇರಾನಿನ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದು ಹಾಕಲು ನೆರವಾಗಲಿರುವ ಉಕ್ರೇನ್
ದುಬೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ ನಡೆದಿದೆ. ರಾಯಭಾರಿ ಕಚೇರಿಯ ಸುತ್ತಮುತ್ತಲಿನ ಪ್ರದೇಶದಿಂದ ಹೊಗೆ ಏರುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶನಿವಾರ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಮಾರಕ ದಾಳಿಗಳ ನಂತರ ಇರಾನ್ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ. ಈ ಹಿನ್ನಲೆಯಲ್ಲಿ ದುಬೈಯಲ್ಲಿನ ಘಟನೆಯೂ ಸಂಭವಿಸಿರುವುದು ಗಮನ ಸೆಳೆದಿದೆ. ಈ ನಡುವೆ, ದುಬೈ ಮಾಧ್ಯಮ ಕಚೇರಿ ಪ್ರಕಟಣೆ ನೀಡಿದ್ದು, ಅಮೆರಿಕ ರಾಯಭಾರಿ ಕಚೇರಿ ಬಳಿ “ಡ್ರೋನ್ ದಾಳಿ ಘಟನೆ” ಸಂಭವಿಸಿರುವುದನ್ನು ದೃಢಪಡಿಸಿದೆ. “ಯುಎಸ್ ರಾಯಭಾರಿ ಕಚೇರಿಯ ಸಮೀಪ ಡ್ರೋನ್ ದಾಳಿ ಘಟನೆಯಿಂದ ಉಂಟಾದ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ತುರ್ತು ಸೇವಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ. ಯಾವುದೇ ಗಾಯಗಳು ವರದಿಯಾಗಿಲ್ಲ,” ಎಂದು ಸಾಮಾಜಿಕ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದುಬೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿಯಿಂದ ಹೊಗೆ ಏರುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊಗಳು ತೋರಿಸುತ್ತಿವೆ. ಇರಾನಿನ ದಾಳಿ ಕುರಿತ ವರದಿಗಳ ನಂತರ ಹೊರಬಂದ ಈ ವೀಡಿಯೊಗಳನ್ನು Aljazeera ಪರಿಶೀಲಿಸಿರುವುದಾಗಿ ತಿಳಿಸಿದೆ. ಇದಕ್ಕೂ ಮೊದಲು, ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೂ ದಾಳಿ ನಡೆದಿತ್ತು. ಆ ಘಟನೆಯಲ್ಲಿ ಆಸ್ತಿ ಹಾನಿ ಉಂಟಾಗಿದ್ದರೂ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಗ್ರಹಣವೂ ಮನುಷ್ಯನ ಮೇಲೆ ದುಷ್ಪರಿಣಾಮ ಬೀರಲ್ಲ : ಹುಲಿಕಲ್ ನಟರಾಜ್
‘ನಮ್ಮ ನಡಿಗೆ-ವಿಜ್ಞಾನದೆಡೆಗೆ, ಮೂಢನಂಬಿಕೆ ತೊಲಗಲಿ-ವೈಚಾರಿಕತೆ ಬೆಳೆಯಲಿ’ ವೈಜ್ಞಾನಿಕ ಕಾರ್ಯಕ್ರಮ
ಮಧ್ಯಪ್ರಾಚ್ಯದಲ್ಲಿ ಮಕ್ಕಳ ಮೇಲೆ ಯುದ್ಧದ ಪರಿಣಾಮ: ಅಮೆರಿಕ–ಇಸ್ರೇಲ್ ಕ್ರಮಗಳನ್ನು ಖಂಡಿಸಿದ ವಿಶ್ವಸಂಸ್ಥೆ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯ ನಡುವೆಯೇ ಮಕ್ಕಳ ಮೇಲಿನ ಪರಿಣಾಮದ ಬಗ್ಗೆ ವಿಶ್ವಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಇರಾನ್ ನ ಮಿಲಿಟರಿ ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಪ್ರದೇಶದ ಮಕ್ಕಳ ಭದ್ರತೆಯು ಗಂಭೀರ ಅಪಾಯಕ್ಕೆ ಒಳಗಾಗಿದೆ ಎಂದು ಸಂಸ್ಥೆ ಹೇಳಿದೆ ಎಂದು Aljazeera ವರದಿ ಮಾಡಿದೆ. “ಇರಾನ್ ಮತ್ತು ಪ್ರದೇಶದಾದ್ಯಂತ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳು ವಿನಾಶಕಾರಿ. ಇವು ಮಕ್ಕಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿವೆ,” ಎಂದು ವಿಶ್ವಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನಾಗರಿಕರು, ಶಾಲೆಗಳು ಹಾಗೂ ಆಸ್ಪತ್ರೆಗಳು ದಾಳಿಗೆ ಗುರಿಯಾಗಬಾರದು ಎಂದು ಹೇಳಿದ ಸಂಸ್ಥೆ, ಪ್ರತಿಯೊಬ್ಬ ಮಗುವಿಗೂ ಭಯವಿಲ್ಲದೆ ಬದುಕುವ ಹಕ್ಕು ಇದೆ ಎಂದು ಒತ್ತಿ ಹೇಳಿದೆ. ಇರಾನ್ ನ ದಕ್ಷಿಣ ಭಾಗದ ಮಿನಾಬ್ ನಗರದಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಅಮೆರಿಕ–ಇಸ್ರೇಲಿನಿಂದ ದಾಳಿ ನಡೆದಿದೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಲ್ಲಿ ಮೃತಪಟ್ಟ 165 ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗೆ ಮಂಗಳವಾರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಟೆಹ್ರಾನ್ ವಿರುದ್ಧ ನಡೆಯುತ್ತಿರುವ ಪ್ರಸ್ತುತ ಮಿಲಿಟರಿ ಅಭಿಯಾನದಲ್ಲಿ ಇದುವರೆಗಿನ ಅತ್ಯಂತ ಮಾರಕ ಘಟನೆ ಇದಾಗಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ. ಮೀಸಲಿಡಿ : ಮುಖ್ಯಮಂತ್ರಿಗೆ ಕೆಯುಡಬ್ಲೂಜೆ ಆಗ್ರಹ
ಬೆಂಗಳೂರು : ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲ ಪತ್ರಕರ್ತರಿಗೂ ವಿಸ್ತರಿಸಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ.ಅನುದಾನ ಬಜೆಟ್ನಲ್ಲಿ ಒದಗಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಒತ್ತಾಯಿಸಿದೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈ ಬಗ್ಗೆ ಮನವಿ ಸಲ್ಲಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ಧಿ ನಿಧಿಗೆ ತಲಾ 25ಲಕ್ಷ ರೂ. ಅನುದಾನ ಹಾಗೂ ತಾಲೂಕು ಪತ್ರಿಕಾ ಭವನಗಳಿಗೆ ತಲಾ 10ಲಕ್ಷ ರೂ.ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೃತ ಕುಟುಂಬಗಳಿಗೆ ತಲಾ 5ಲಕ್ಷ ರೂ.ಪರಿಹಾರವನ್ನು ಸರಕಾರದಿಂದ ಸಂತ್ರಸ್ತ ಕುಟುಂಬಗಳಿಗೆ ಕೊಡಿಸಲಾಗಿತ್ತು. ಅದೇ ರೀತಿಯಲ್ಲಿ ವೃತ್ತಿನಿರತ ಪತ್ರಕರ್ತರು ಮೃತಪಟ್ಟಲ್ಲಿ ಸಂತ್ರಸ್ತ ಕುಟುಂಬಗಳಿಗೆ 5ಲಕ್ಷ ರೂ.ಪರಿಹಾರ ನೀಡುವ ಯೋಜನೆಯನ್ನು ಜಾರಿ ಮಾಡಬೇಕು ಎಂದು ಅವರು ಕೋರಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಕರ್ತರಿಗೆ ಸೌಲಭ್ಯವಾಗಿ ನಿವೇಶನ/ಮನೆ ನೀಡುವ ಪ್ರಾಧಿಕಾರದಲ್ಲಿ ಬೋರ್ಡ್ ಮತ್ತು ಇತರ ಸಂಘಗಳಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲಿಡಬೇಕು. ಪತ್ರಕರ್ತರ ಸಂಘ ಶತಮಾನೋತ್ಸವ ಹೊಸ್ತಿಲಿಗೆ ಕಾಲಿಡುತ್ತಿದೆ. ಅದಕ್ಕಾಗಿ ಡಿವಿಜಿ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಲ್ಲಿ ಸರ್ಕಾರದಿಂದ ಆಚರಣೆ ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ.
ಖಾಸಗಿ ಶಾಲೆಗಳ ಶುಲ್ಕ ಶೇ.15ರಷ್ಟು ಹೆಚ್ಚಳ
ಬೆಂಗಳೂರು : ಶಾಲಾ ಶಿಕ್ಷಕರ ವೇತನ ಪರಿಷ್ಕರಣೆ, ಮಾನ್ಯತಾ ಶುಲ್ಕ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ಖಾಸಗಿ ಶಾಲೆಗಳು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಶೇ.15ರವರೆಗೆ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಖಾಸಗಿ ಶಾಲೆಗಳ ಸಂಘಗಳು ತಿಳಿಸಿವೆ. ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಪ್ರತಿ ವರ್ಷ ಶೇ. 8ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡಲಾಗುತ್ತಿತ್ತು. 2026-27ನೇ ಸಾಲಿಗೆ ಕೆಲವು ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಶುಲ್ಕ ಏರಿಕೆ ಮಾಡಲಿವೆ. ಕನಿಷ್ಠ ಶೇ.8 ರಿಂದ ಗರಿಷ್ಠ 15ರವರೆಗೂ ಶುಲ್ಕ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ. ಕೃಪಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಕಟನೆ ಹೊರಡಿಸಿದ್ದು, ಶಾಲಾ ಶಿಕ್ಷಕರು ತಮ್ಮ ವೇತನವನ್ನು ಶೇ.20ರಷ್ಟು ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು, ಅವರ ವೇತನವನ್ನು ಅಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ 2026-27ರಲ್ಲಿ ಶಿಕ್ಷಕ ವೇತನವನ್ನು ಪರಿಷ್ಕರಣೆ ಮಾಡಬೇಕಾಗಿದೆ. ಅಲ್ಲದೆ ಶಾಲೆಗಳ ನಿರ್ವಹಣೆಯನ್ನು ಮಾಡಬೇಕಾಗಿದೆ. ಹೀಗಾಗಿ ಖಾಸಗಿ ಶಾಲೆಗಳ ಶುಲ್ಕ ಶೇ.15ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದರು.
ಖಾಮಿನೈ ಹತ್ಯೆ ಖಂಡಿಸಿ ಪ್ರತಿಭಟನೆ | ನಿಗಾ ವಹಿಸುವ ಪರಿಸ್ಥಿತಿ ಸದ್ಯಕ್ಕೆ ಕಂಡು ಬಂದಿಲ್ಲ : ಜಿ.ಪರಮೇಶ್ವರ್
ಬೆಂಗಳೂರು : ಇರಾನ್ ದೇಶದ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ನಿಗಾ ವಹಿಸುವ ಪರಿಸ್ಥಿತಿ ಸದ್ಯಕ್ಕೆ ಕಂಡು ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯತುಲ್ಲಾ ಅಲಿ ಖಾಮಿನೈ ಹತ್ಯೆಯ ಬಳಿಕ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ನಿಗಾ ಇಡುವಂತೆ ಕೇಂದ್ರ ಸರಕಾರ ಸೂಚನೆ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಕೆಲ ಪತ್ರಿಕೆಗಳಲ್ಲಿ ಮಾತ್ರ ಸುದ್ದಿ ಬಂದಿದೆ. ಒಂದು ವೇಳೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾಹಿತಿ ಬಂದಿರಬಹುದು. ಆದರೆ, ಪೊಲೀಸ್ ಮಹಾನಿರ್ದೇಶಕರು ಇಲ್ಲಿಯವರೆಗೂ ಅಂತಹ ವಿಚಾರವನ್ನು ಗಮನಕ್ಕೆ ತಂದಿಲ್ಲ ಎಂದರು. ಕೆಲವೊಂದು ವಿಚಾರಗಳು ರಾಜನೀತಿಗಳಾಗಿವೆ. ಒಂದೊಂದು ಸರಕಾರಕ್ಕೆ ತನ್ನದೇ ಆದ ನೀತಿಗಳಿರುತ್ತವೆ. ಕಾಂಗ್ರೆಸ್ ಸರಕಾರ ಇದ್ದಾಗ ಒಂದು ರೀತಿಯ ವಿದೇಶಾಂಗ ನೀತಿಯಿತ್ತು. ಈಗ ಬಿಜೆಪಿ ಸರಕಾರ ಇದೆ. ಅವರದ್ದು ಒಂದು ರೀತಿಯ ವಿದೇಶಾಂಗ ನೀತಿ ಇರುತ್ತದೆ. ಅದರ ಆಧಾರದ ಮೇಲೆ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಮಾಹಿತಿ ನೀಡುತ್ತದೆ. ಸದ್ಯಕ್ಕೆ ಕೇಂದ್ರ ಸರಕಾರ ಸೂಚನೆ ನೀಡುವಂತಹ ಸನ್ನಿವೇಶಗಳು ಕಂಡು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಫ್ರೀಡಂಪಾರ್ಕ್ ಹೊರತು ಪಡಿಸಿ ಬೇರೆ ಕಡೆ ಪ್ರತಿಭಟನೆ ನಡೆಸಿರುವುದು ಹೈಕೋರ್ಟಿನ ತೀರ್ಪಿನ ಉಲ್ಲಂಘನೆಯಾಗಿದ್ದು, ಈ ಸಂಬಂಧ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈ ಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದ ಅವರು, ದುಬೈನಲ್ಲಿ ಕನ್ನಡಿಗರೊಬ್ಬರ ಸಾವಿನ ಬಗ್ಗೆ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಕನ್ನಡಿಗರ ರಕ್ಷಣೆ ಸಂಬಂಧ ಮುಖ್ಯಮಂತ್ರಿ ಅವರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆ ತರಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದರು.
Chikkaballapura| ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕ್ಟರ್, ಎಎಸ್ಐ
ಚಿಕ್ಕಬಳ್ಳಾಪುರ : ಪ್ರಕರಣವೊಂದಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಓರ್ವ ಎಎಸ್ಐ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಗಳು. ತಾಲೂಕಿನ ಮೊಟ್ಲೊರು ಗ್ರಾಮದ ರಾಘವೇಂದ್ರ ಎಂಬವರ ಪ್ರಕರಣ ಒಂದರ ಬಿ ರಿಪೋರ್ಟ್ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ರಾಘವೇಂದ್ರ ಅವರಿಂದ 1 ಲಕ್ಷ ರೂ.ಗ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ 80 ಸಾವಿರ ರೂ. ಪಡೆಯುವಾಗ ಕನ್ನಡ ಭವನದಲ್ಲಿ ಬಳಿ ವೆಂಕಟೇಶಪ್ಪ ಮತ್ತು ನಗರ ಹೊರವಲಯದ ಚಿತ್ರಾವತಿ ಬಳಿ ಶರಣಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್,ಡಿವೈಎಸ್ಪಿ ವಿಜಯೇಂದ್ರ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಈ ಇಬ್ಬರು ಪೊಲೀಸರನ್ನು ತನಿಖೆಗೆ ಒಳಪಡಿಸಿದ್ದಾರೆ.
Hassan | ನಿಧಾನವಾಗಿ ಕಾರು ಚಲಾಯಿಸುವಂತೆ ಸೂಚಿಸಿದ್ದಕ್ಕೆ ವ್ಯಕ್ತಿಯ ಹತ್ಯೆ
ಹಾಸನ : ಅತೀವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ‘‘ನಿಧಾನವಾಗಿ ಹೋಗು’’ ಎಂದು ಹೇಳಿದ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಕಾರನ್ನು ಹಿಂದಿರುಗಿಸಿ ನೇರವಾಗಿ ಯುವಕರ ಮೇಲೆ ಗುದ್ದಿದ ಪರಿಣಾಮ 27 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿರುವುದು ವರದಿಯಾಗಿದೆ. ಮೃತ ಯುವಕನನ್ನು ಮನು ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಸೋಮವಾರ ರಾತ್ರಿ ಮನು, ಅಭಿಷೇಕ್ ಸೇರಿದಂತೆ ಇನ್ನಿಬ್ಬರು ಯುವಕರು ಗ್ರಾಮದಲ್ಲಿ ರಸ್ತೆಬದಿಯಲ್ಲಿ ಮಾತನಾಡುತ್ತ ನಿಂತಿದ್ದರು. ಇದೇ ವೇಳೆ ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸಿದ ಮನು ಹಾಗೂ ಅಭಿಷೇಕ್ ಚಾಲಕನಿಗೆ ನಿಧಾನವಾಗಿ ಸಾಗುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಚಾಲಕ ಸ್ವಲ್ಪ ದೂರ ಹೋಗಿ, ಬಳಿಕ ಕಾರನ್ನು ತಿರುಗಿಸಿಕೊಂಡು ಬಂದು ಮಾತನಾಡುತ್ತಿದ್ದ ಯುವಕರ ಮೇಲೆ ಉದ್ದೇಶಪೂರ್ವಕವಾಗಿ ಗುದ್ದಿದನೆಂದು ತಿಳಿದುಬಂದಿದೆ. ಢಿಕ್ಕಿಯ ತೀವ್ರತೆಗೆ ಮನು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ಗಾಯಗೊಂಡಿದ್ದು, ಇವರಲ್ಲಿ ಅಭಿಷೇಕ್ ಮತ್ತು ರಾಕೇಶ್ ಅವರಿಗೆ ಗಂಭೀರ ಗಾಯಗಳಾಗಿವೆ. ಕುಶಾಲ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತೀವ್ರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಸಂಭಾವ್ಯ ಅಭ್ಯರ್ಥಿಗಳ ಹೆಸರು ಘೋಷಣೆ; ಯಡಿಯೂರಪ್ಪರಿಂದ ಶಿಷ್ಟಾಚಾರ ಉಲ್ಲಂಘನೆ : ಶಾಂತರಾಜು ಪಾಟೀಲ್
ದಾವಣಗೆರೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ ಸಂಭಾವ್ಯ ಅಭ್ಯರ್ಥಿಗಳ ಹೆಸರು ಘೋಷಿಸಿರುವುದನ್ನು ಬಿಜೆಪಿ ಮುಖಂಡ ಶಾಂತರಾಜು ಪಾಟೀಲ್ ಖಂಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿಯಲ್ಲಿ ನಡೆದ ಸಮಾರಂಭದಲ್ಲಿ ಯಡಿಯೂರಪ್ಪ ಅವರು ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿರುವುದು ಪಕ್ಷದ ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅತೃಪ್ತ ನಾಯಕರಿಂದ ಮಾ.5ರಂದು ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಸಭೆ ಕರೆಯಲಾಗಿದೆ ಎಂದರು. ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರ ಸಂಸದೀಯ ಮಂಡಳಿ ಮಾಡಬೇಕೇ ಹೊರತು ವೈಯಕ್ತಿಕವಾಗಿ ಘೋಷಿಸುವುದಲ್ಲ. ಯಡಿಯೂರಪ್ಪ ಅವರ ಈ ನಡೆ ಕಾರ್ಯಕರ್ತರ ಉತ್ಸಾಹ ಕುಗ್ಗಿಸುವಂತಿದೆ. ಅವರ ನಡೆ ನೋಡಿದರೆ ಬಿಜೆಪಿಯಿಂದ ಹೊರನಡೆದು ಪ್ರಾದೇಶಿಕ ಪಕ್ಷವೊಂದನ್ನು ಸಂಘಟಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ ಎಂದರು. ಬಿ.ವೈ. ವಿಜಯೇಂದ್ರ ಅವರು ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಜಿಲ್ಲೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಇತ್ತೀಚೆಗೆ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪಕ್ಷದ ಶಾಸಕ ಬಿ.ಪಿ. ಹರೀಶ್ ಹಾಗೂ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರಿಗೆ ಆಹ್ವಾನ ನೀಡದಿರುವುದು ಗುಂಪುಗಾರಿಕೆಗೆ ಸಾಕ್ಷಿಯಾಗಿದೆ. ವಿಜಯೇಂದ್ರ ಅವರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ದೂರಿದರು. ಜಿಎಂಐಟಿ ಅತಿಥಿಗೃಹದಲ್ಲಿ ನಡೆಯಲಿರುವ ಸಭೆಗೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇಲ್ಲಿ ನಡೆಯುವ ಚರ್ಚೆಯ ಸಾರಾಂಶವನ್ನು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗುವುದು ಎಂದು ಶಾಂತರಾಜು ತಿಳಿಸಿದ್ದಾರೆ. ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್ ಎಚ್.ಎಸ್., ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿದರು. ಹೊನ್ನಾಳಿಯಲ್ಲಿ ನಡೆದ ಮಾಜಿ ಶಾಸಕ ರೇಣುಕಾಚಾರ್ಯ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ. ಹೊನ್ನಾಳಿಗೆ ಎಂಪಿ ರೇಣುಕಾಚಾರ್ಯ, ಚನ್ನಗಿರಿ- ಮಾಡಾಳ್ ವಿರೂಪಾಕ್ಷಪ್ಪ , ಹರಿಹರ-ಚಂದ್ರಶೇಖರ ಪೂಜಾರ, ದಾವಣಗೆರೆ ಉತ್ತರ ಲೋಕಕೆರೆ ನಾಗರಾಜ್, ಜಗಳೂರು ಎಸ್ ವಿ ರಾಮಚಂದ್ರ ಹಾಗೂ ಹರಪನಹಳ್ಳಿ-ಕರುಣಾಕರ ರೆಡ್ಡಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದು ಇತರೆ ನಾಯಕರ ಆಕ್ರೊಶಕ್ಕೆ ಕಾರಣವಾಗಿದೆ.
ಕೊಯಿಲ| ಮುಂದಿನ ವರ್ಷದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಪ್ರಯತ್ನ: ಸಚಿವ ವೆಂಕಟೇಶ್
ಕಡಬ: ಕಡಬ ತಾಲೂಕು ಕೊಯಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಶ್ಮೆ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ. ಅವರು ಮಂಗಳವಾರದಂದು ಕೊಯಿಲ ಪಶುವೈದ್ಯಕೀಯ ಕಾಲೇಜು ಹಾಗೂ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಕೊಯಿಲ ಪಶುವೈದ್ಯಕೀಯ ಕಾಲೇಜು ಕಟ್ಟಡಕ್ಕೆ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದೆ. ಕಾಲೇಜಿಗೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮಂಜೂರುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ ತರಗತಿಗಳನ್ನು ಪ್ರಾರಂಭಿಸಲು ಗಂಭೀರವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಕಾಲೇಜು, ಹಾಸ್ಟೆಲ್ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು ಈಗಾಗಲೇ ಪೂರ್ಣಗೊಂಡಿದೆ. 13 ಉಪನ್ಯಾಸಕರ ಹುದ್ದೆ, 32 ಇತರೆ ಸಿಬ್ಬಂದಿ ಹುದ್ದೆಗಳು ಮಂಜೂರುಗೊಳಿಸಲಾಗಿದೆ. ಕಾಲೇಜಿಗೆ ಭಾರತೀಯ ಪಶುವೈದ್ಯಕೀಯ ಪರಿಷತ್ (ವಿ.ಸಿ.ಐ) ಅನುಮತಿ ದೊರಕುವುದು ಬಾಕಿ ಇದ್ದು, ಶೀಘ್ರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದಲ್ಲಿ ಅಪರೂಪದ ಜಾನುವಾರು ತಳಿಗಳನ್ನು ಬೆಳೆಸಲು ಹೆಚ್ಚು ಆದ್ಯತೆ ನೀಡಬೇಕು. ಜಾನುವಾರು ಮತ್ತು ಕುಕ್ಕುಟಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹೆಚ್ಚಿಸಬೇಕು. ಹೊಸ ಹೊಸ ತಳಿ ಗಳನ್ನು ಪರಿಚಯಿಸಬೇಕು ಎಂದು ಸಚಿವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರು ಸಾಕಾಣಿಕೆ ಸಂಖ್ಯೆಯು ಕುಸಿಯುತ್ತಿರುವುದರಿಂದ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಇಲಾಖೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ವಿವಿಧೆಡೆ ಮಂಜೂರುಗೊಂಡಿರುವ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಜಮೀನು ಲಭ್ಯವಿಲ್ಲದಿದ್ದಲ್ಲಿ ಅದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಚಿವರು ತಿಳಿಸಿದರು. ಜಾನುವಾರು ವಿಮೆಗಳ ಕ್ಲೈಮ್ ಸಂದರ್ಭದಲ್ಲಿ ವಿಮಾ ಕಂಪನಿಗಳು ರೈತರಿಗೆ ಸ್ಪಂದಿಸುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ, ಕೇಂದ್ರ ಕಚೇರಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ತಿಳಿಸಿದರು. ಪುತ್ತೂರಿಗೆ ಪಶುಸಂಗೋಪನೆ ಪಾಲಿ ಕ್ಲಿನಿಕ್ ಮಂಜೂರಾಗಿದ್ದು, ಶೀಘ್ರದಲ್ಲಿಯೇ ವಿವಿಧ ಕಟ್ಟಡ ಕಾಮಗಾರಿಗೆ ಚಾಲನೆ ನೀಡುವಂತೆ ಸಚಿವ ವೆಂಕಟೇಶ್ ತಿಳಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸುಳ್ಯ ತಾಲೂಕು ಗೋಶಾಲೆ ನಿರ್ಮಾಣಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇತರ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದರು. ಕೊೈಲ ಜಾನುವಾರು ಕೇಂದ್ರದಲ್ಲಿ ದೊರಕುವ ಹಾಲು ಸ್ಥಳೀಯರಿಗೆ ದೊರಕುವಂತಾಗಬೇಕು. ಪಶು ವೈದ್ಯಕೀಯ ಕಾಲೇಜಿನ ತರಗತಿಯನ್ನು ಆದಷ್ಟು ಶೀಘ್ರವೇ ಆರಂಭಿಸುವಂತೆ ಸಚಿವರಲ್ಲಿ ಆಗ್ರಹಿಸಿದರು. ಕೊೈಲ ಜಾನುವಾರು ಸಂವರ್ಧನಾ ಕೇಂದ್ರವು 1951 ರಲ್ಲಿ ಸ್ಥಾಪನೆಯಾಗಿದೆ. ಇಲ್ಲಿನ 247 ಎಕರೆ ಜಮೀನನ್ನು ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹಾಗೂ 98 ಎಕರೆ ಜಮೀನನ್ನು ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ನೀಡಲಾಗಿದೆ. ಜಿಲ್ಲಾ ಗೋಶಾಲೆಗೆ ರಾಜ್ಯ ಸರಕಾರದಿಂದ ಈವರೆಗೆ ರೂ.1.91 ಕೋಟಿ ಅನುದಾನ ಬಂದಿದೆ. ಪ್ರಸ್ತುತ ಈ ಗೋಶಾಲೆಯಲ್ಲಿ 154 ಜಾನುವಾರುಗಳು ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿನೋತ್ ಪ್ರಿಯಾ, ಪಶು ಸಂಗೋಪನೆ ಇಲಾಖೆ ಆಯುಕ್ತೆ ಶಿಲ್ಪಾ ನಾಗ್, ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ಸಿ. ವೀರಣ್ಣ, ಡಾ.ಸುಶಾಂತ್ ರೈ, ಮತ್ತಿತರರು ಉಪಸ್ಥಿತರಿದ್ದರು. ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಸಭೆಗೆ ಇಲಾಖಾ ಮಾಹಿತಿ ನೀಡಿದರು. ಜಾನುವಾರ ತಳಿ ಸಂವರ್ಧನ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಚಿದಾನಂದ ಸ್ವಾಗತಿಸಿದರು. ಇದಕ್ಕೂ ಮೊದಲು ಸಚಿವರು ಪಶು ವೈದ್ಯಕೀಯ ಕಾಲೇಜು ಕಟ್ಟಡ, ಜಿಲ್ಲಾ ಗೋಶಾಲೆ, ಹಾಗೂ ಜಾನುವಾರು ಸಂವರ್ಧನ ತರಬೇತಿ ಕೇಂದ್ರದ ವಿವಿಧ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ಅಂತಿಮ ವರದಿ ಸಲ್ಲಿಕೆಗೆ ನೀಡಿದ್ಧ ಮಧ್ಯಂತರ ತಡೆ ವಿಸ್ತರಿಸಿದ ಹೈಕೋರ್ಟ್
ಬೆಂಗಳೂರು: ಆರ್ಸಿಬಿ ವಿಜಯೋತ್ಸವ ಆಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ. ಎಫ್ಐಆರ್ ರದ್ದು ಕೋರಿ ಆರ್ಸಿಬಿ, ಕೆಎಸ್ಸಿಎ ಮತ್ತು ಡಿಎನ್ಎ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಪರ ಹಾಜರಿದ್ದ ಎಸ್ಪಿಪಿ ಬಿ.ಟಿ. ವೆಂಕಟೇಶ್ ಅವರು, ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರ ಮೆಮೊ ಸಲ್ಲಿಸಿದೆ. ಅದನ್ನು ಪರಿಗಣಿಸಿ ಅನುಮತಿ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಸರ್ಕಾರದ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆರ್ಸಿಬಿ ಪರ ವಕೀಲರು, ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶವಿದೆ. ಆದ್ದರಿಂದ, ಎಫ್ಐಆರ್ ರದ್ದು ಕೋರಿರುವ ನಮ್ಮ ವಾದ ಮೊದಲು ಪರಿಗಣಿಸಬೇಕು. ಕ್ರೀಡಾಂಗಣದ ಹೊರಗಿನ ಘಟನೆಗೆ ಸಂಸ್ಥೆಗಳನ್ನು ಹೊಣೆ ಮಾಡಬಾರದು. ನಮ್ಮ ಅರ್ಜಿ ತೀರ್ಮಾನಿಸದೇ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಬಾರದು ಎಂದು ಕೋರಿದರು. ಇದನ್ನು ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿತಲ್ಲದೆ, ಅಂತಿಮ ವರದಿ ಸಲ್ಲಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು. ಜತೆಗೆ ಮಾರ್ಚ್ 14ರೊಳಗೆ ಆಕ್ಷೇಪಣೆ ಮತ್ತು ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಯುದ್ಧ ಕ್ರಮಕ್ಕೆ ಬೆಂಬಲ ನೀಡಲು ಯುನೈಟೆಡ್ ಕಿಂಗ್ಡಮ್ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಶೇಷ ಸಂಬಂಧ” ಎಂದು ಕರೆಯಲ್ಪಡುವ ಅಮೆರಿಕ–ಯುಕೆ ಮೈತ್ರಿ ಇದೀಗ ಒತ್ತಡಕ್ಕೆ ಒಳಗಾಗಿದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ಯುಕೆಯ ನಿಲುವಿನ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದರು. ನಿಕಟ ಮಿತ್ರ ರಾಷ್ಟ್ರದಿಂದ ಇಂತಹ ಪ್ರತಿಕ್ರಿಯೆ ಬರುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲ ಎಂದರು. “ಅವರು ಸಹಕಾರಿಯಾಗಿಲ್ಲ. ಯುಕೆಯಿಂದ ಈ ರೀತಿಯ ನಿಲುವು ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ,” ಎಂದು ಹೇಳಿದರು. ಈ ಬೆಳವಣಿಗೆಯಿಂದ ಅಮೆರಿಕ–ಯುಕೆ ನಡುವಿನ ಪರಂಪರಾಗತ ಮೈತ್ರಿ ಸಂಬಂಧಕ್ಕೆ ಬಿರುಕು ಬಿದ್ದಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು. ಹಿಂದೆ ಅತ್ಯಂತ ಘನ ಮತ್ತು ನಿಕಟ ಸಹಕಾರ ಹೊಂದಿದ್ದ ಸಂಬಂಧ ಈಗ ಹಿಂದಿನಂತಿಲ್ಲ ಎಂದು ಅವರು ಹೇಳಿದರು. ಮಧ್ಯಪ್ರಾಚ್ಯದಲ್ಲಿ ತನ್ನ ಯುದ್ಧಗಳನ್ನು ನಡೆಸಲು ಅಮೆರಿಕ ಇನ್ನು ಮುಂದೆ ಯುಕೆಯನ್ನು ಅವಲಂಬಿಸಿಲ್ಲ ಎಂಬ ಸಂದೇಶವನ್ನೂ ಅವರು ನೀಡಿದರು. ಇದು ಅಪ್ರಸ್ತುತವಾಗಬಹುದು, ಆದರೆ ಅವರು ಮಾಡಬೇಕಾಗಿತ್ತು ಎಂದು ಟ್ರಂಪ್ ಪುನರುಚ್ಚರಿಸಿದರು.
ಖಮೇನಿ ಆಯ್ತು ಈಗ ಇರಾನ್ ನೂತನ ಸರ್ವಾಧಿಕಾರಿಗೂ ಜೀವಭಯ ಶುರು | Operation Roaring Lion
ಮಧ್ಯಪ್ರಾಚ್ಯ ಎಂಬುದು ಇದೀಗ ಕುಲುಮೆಗೆ ಬಿದ್ದ ಕಬ್ಬಿಣದ ರೀತಿ ಕೆಂಪಗೆ ಆಗಿದೆ, ಒಂದು ಕಡೆ ಈ ಜಾಗದಲ್ಲಿ ಅಮೆರಿಕ ದೊಡ್ಡ ಮಟ್ಟದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೊಂದು ಕಡೆ ತನ್ನ ಮೇಲೆ ದಾಳಿ ಮಾಡಿದರು ಎಂಬ ಕಾರಣಕ್ಕೆ ಇರಾನ್ ಕೂಡ ಕಂಡ ಕಂಡ ಅರಬ್ ದೇಶಗಳ ಮೇಲೆ ಅಟ್ಯಾಕ್ ಮಾಡುತ್ತಾ ಸೇಡು ತೀರಿಸಿಕೊಳ್ಳುತ್ತಿದೆ. ಇರಾನ್ ಸರ್ವಾಧಿಕಾರಿ ಖಮೇನಿ
ಇರಾನ್ ಮೇಲಿನ ದಾಳಿಗೆ ತನ್ನ ನೆಲೆ ಬಳಸಲು ನಿರಾಕರಿಸಿದ ಸ್ಪೇನ್ನೊಂದಿಗೆ ಎಲ್ಲಾ ವ್ಯಾಪಾರ ಕಡಿತಕ್ಕೆ ಮುಂದಾದ ಅಮೆರಿಕ
ಸ್ಪೇನ್ ನ ನಿಲುವು ಅಮೆರಿಕದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದ ಟ್ರಂಪ್
ʼಕಂದಾಯ ಇಲಾಖೆʼ ಹತ್ತಾರು ವರ್ಷಗಳ ಕೆಲಸ ಸಾವಿರ ದಿನದಲ್ಲಿ ಮುಗಿದಿದೆ : ಕೃಷ್ಣಭೈರೇಗೌಡ
ಬೆಂಗಳೂರು : ಕಂದಾಯ ಇಲಾಖೆ ವ್ಯಾಪ್ತಿಯೊಳಗೆ ಹತ್ತಾರು ವರ್ಷಗಳಿಂದ ಪೂರ್ಣಗೊಳ್ಳದ ಕೆಲಸಗಳು ಕಳೆದ ಒಂದು ಸಾವಿರ ದಿನಗಳಲ್ಲಿ ಮುಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ ಸೀಮಿತವಾಗಿರುವ ಎಲ್ಲ ಪ್ರಕ್ರಿಯೆ, ಸೇವೆಗಳನ್ನು ಆನ್ಲೈನ್ ವ್ಯಾಪ್ತಿಗೆ ತರಲಾಗಿದೆ. ಇದನ್ನು ಸಾಧ್ಯವಾಗಿಸಲು ಎಲ್ಲ ಜಿಲ್ಲಾಧಿಕಾರಿಗಳ ಪರಿಶ್ರಮ ಗಣನೀಯವಾಗಿದೆ ಎಂದು ಉಲ್ಲೇಖಿಸಿದರು. ಕಂದಾಯ ಇಲಾಖೆಯ ಪ್ರಗತಿ ಬಗ್ಗೆ ಜನರೇ ಮೆಚ್ಚುಗೆ ಮಾತುಗಳನ್ನಾಡುತ್ತಿರುವುದು ವಿಶೇಷ. ನಾವು ಇಲಾಖೆಯಲ್ಲಿ ತಂದಿರುವ ಸುಧಾರಣಾ ಕ್ರಮಗಳು ಜನರಿಗೆ ಅನುಕೂಲವಾಗಿವೆ. ಈ ಹಿಂದೆ ನಮ ಇಲಾಖೆಯ ಬಗ್ಗೆ ಜನರ ಮನಸ್ಸಿನಲ್ಲಿದ್ದಂತಹ ಭಾವನೆಗಳು ಈಗ ಬದಲಾಗಿದ್ದು, ಇಲಾಖೆಯನ್ನು ಗೌರವದಿಂದ ನೋಡುವಂತಾಗಿದೆ ಎಂದ ಅವರು, ಸಾವಿರ ದಿನಗಳಲ್ಲಿ ನಮೆಲ್ಲರ ಒಗ್ಗಟ್ಟಿನ ಕೆಲಸದ ಪರಿಣಾಮದಿಂದಾಗಿ ಜನರಲ್ಲಿ ಇಲಾಖೆಯ ಬಗ್ಗೆ ಗೌರವ ಭಾವನೆ ಮೂಡಿದೆ. ಇದು ಸಲೀಸಾಗಿ ಆಗಿದ್ದಲ್ಲ. ಸಾಕಷ್ಟು ಪರಿಶ್ರಮದಿಂದ ಈ ದೂರವನ್ನು ನಾವು ಸಾಗಿದ್ದೇವೆ. ಇಲಾಖೆಯಲ್ಲಿ ಬದಲಾವಣೆ ಆರಂಭ ಮಾಡಿದಾಗ ಯಾವ್ಯಾವ ಕೆಲಸಗಳು ಬಾಕಿ ಉಳಿದಿವೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ತಿಳಿಸಿದರು. ಪ್ರಾರಂಭದಲ್ಲಿ ಸರಕಾರಿ ಕಚೇರಿಗಳಲ್ಲಿ ಟಪಾಲು ವಿಭಾಗದಲ್ಲಿ ಸ್ವೀಕರಿಸುವ ಅರ್ಜಿಗಳೇ ಈ ಕಚೇರಿ ಮೂಲಕ ದಾಖಲಾಗಲಿ ಎಂದು ಹೇಳಿದಾಗ ಎಲ್ಲರೂ ದಿಗ್ಬ್ರಮೆಗೊಂಡಿದ್ದರು.ಈಗ ಗ್ರಾಮ ಲೆಕ್ಕಿಗರಿಂದ ಸರ್ವೆಯರ್ವರೆಗೂ ಎಲ್ಲವೂ ಈ ಕಚೇರಿಯಲ್ಲಿಯೇ ಆಡಳಿತ ನಡೆಯುತ್ತಿದೆ. ಈ ಮಟ್ಟದಲ್ಲಿ ಸುಧಾರಣೆಗಾಗಿ ಅಧಿಕಾರಿಗಳ ಪರಿಶ್ರಮ ಸಾಕಷ್ಟಿದೆ ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಮುನೀಶ್ ಮೌದ್ಗಿಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.
ವಿಮಾನ ರದ್ದು: ಗ್ರಾಹಕರಿಗೆ ಮರುಪಾವತಿ ಮಾಡುವಂತೆ ಮಲೇಶಿಯಾ ಏರ್ ಲೈನ್ಸ್ಗೆ ಆದೇಶ
ಮೇಕ್ ಮೈ ಟ್ರಿಪ್ಗೂ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ವಿಚಾರ, ಕೇಂದ್ರ ಸರ್ಕಾರಕ್ಕೆ ಡಿಸಿಎಂ ಮಹತ್ವದ ಮನವಿ | DK Shivakumar
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ಮೂಲಕ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಸರ್ಕಾರ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಇದಕ್ಕೆ ಪದೇ ಪದೇ ನೆರೆಯ ಆಂಧ್ರಪ್ರದೇಶ ದೊಡ್ಡ ಕಿರಿಕ್ ಮಾಡುತ್ತಾ ಬಂದಿದ್ದು, ಈಗಲೂ ಅದೇ ರೀತಿಯಾಗಿ ತೊಂದರೆ ಕೊಡಲು ನೋಡುತ್ತಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ
ಕಂದಾಯ ಸೇವೆಗಳನ್ನು ಆನ್ಲೈನ್ ಮಾಡಿದ್ದು ಸಾವಿರ ದಿನದ ಸಾಧನೆ: ಕೃಷ್ಣ ಬೈರೇಗೌಡ
ಬೆಂಗಳೂರು : ಪೋಡಿ ದುರಸ್ಥಿ, ಫೌತಿಖಾತಾ, ಭೂ ಸುರಕ್ಷಾ ಅಭಿಯಾನ ಸೇರಿದಂತೆ ಎಲ್ಲ ಕಂದಾಯ ಸೇವೆಗಳನ್ನೂ ಆನ್ಲೈನ್ ಡಿಜಿಟಲೀಕರಣ ಮಾಡಿ, ಆ ಮೂಲಕ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದು ನಮ್ಮ ಸಾವಿರ ದಿನಗಳ ಆಡಳಿತದ ಸಾಧನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಮಂಗಳವಾರ ವಿಕಾಸಸೌಧದಲ್ಲಿ ನಡೆದ ಎಲ್ಲ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಮೀನು ಮಂಜೂರು ಮಾಡಿದ್ದ ಸರಕಾರಗಳು ಕೇವಲ ಆರ್.ಟಿ.ಸಿ ಮಾತ್ರ ಮಾಡಿಕೊಟ್ಟು ರೈತರ ಜುಟ್ಟನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದವು. ಹೀಗಾಗಿ ಪಕ್ಕಾ ದಾಖಲೆ ಇಲ್ಲದೆ ರೈತರ ಬದುಕು ಅತಂತ್ರ ಸ್ಥಿತಿಯಲ್ಲೇ ಇತ್ತು ಎಂದು ಹೇಳಿದರು. ನಾನು ಕಂದಾಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಈ ವಿಚಾರವನ್ನು ಮನಗಂಡು ಬಡವರಿಗೆ ಪಕ್ಕಾ ದಾಖಲೆ ಮಾಡಿಕೊಡಲು ಸಂಕಲ್ಪ ಮಾಡಿದ್ದೆ. ಸರಕಾರದಿಂದ ಮಂಜೂರಾದ ಜಮೀನುಗಳಿಗೆ ದರಖಾಸ್ತು ಪೋಡಿ ದುರಸ್ತು ಮಾಡಿಕೊಡುವ ಅಭಿಯಾನ ಆರಂಭಿಸಿದ್ದೇವೆ. ಈ ಹಿಂದಿನ 5 ವರ್ಷಗಳ ಅವಧಿಯಲ್ಲಿ ಒಟ್ಟಾರೆಯಾಗಿ 8,500 ಮಂಜೂರಿ ಜಮೀನುಗಳಿಗೆ ಮಾತ್ರ ಪೋಡಿ ದುರಸ್ತು ಮಾಡಲಾಗಿತ್ತು ಎಂದು ಕೃಷ್ಣ ಬೈರೇಗೌಡ ಹೇಳಿದರು. ರೈತರು ಅರ್ಜಿ ಸಲ್ಲಿಸುವುದಕ್ಕೆ ಬದಲಾಗಿ, ಅಧಿಕಾರಿಗಳೇ ಮಂಜೂರಾಗಿರುವ ಎಲ್ಲ ರೈತರ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿ ಕಡತಗಳನ್ನು ಆನ್ಲೈನ್ ನಲ್ಲಿ ತಯಾರಿಸಿ, ರೈತರ ಜಮೀನಿಗೆ ತೆರಳಿ ಮಂಜೂರಾದ ಜಮೀನುಗಳಿಗೆ ಸರ್ವೆ ಮಾಡಿ, ಸ್ಕೇಚ್ ತಯಾರಿಸಿ, ಆರ್.ಟಿ.ಸಿ, ಇಂಡೀಕರಣ ಮಾಡಿ ಸಂಪೂರ್ಣ ಪಕ್ಕಾ ದಾಖಲೆಗಳನ್ನು ರೈತರಿಗೆ ನೀಡಿ ಮಾಲಕತ್ವದ ಭೂಗ್ಯಾರಂಟಿ ನೀಡುವ ಅಭಿಯಾನವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು. ಒಂದು ವರ್ಷದಲ್ಲಿ 2,05,757 ರೈತರ ಜಮೀನುಗಳ ಸರ್ವೆ ಕೈಗೆತ್ತಿಕೊಳ್ಳಲಾಗಿದೆ. ಬರುವ ಮೂರು ತಿಂಗಳಲ್ಲಿ ಒಂದು ಲಕ್ಷ ಜಮೀನುಗಳನ್ನು ಸರ್ವೆಗೆ ಕೈಗೆತ್ತಿಕೊಳ್ಳಬೇಕು. ಇದಲ್ಲದೆ, 1,07,217 ರೈತರ ಕಡತಗಳು ಮಿಸ್ಸಿಂಗ್ ರೇಕಾರ್ಡ್ ಕಮಿಟಿಗೆ ಕಳುಹಿಸಲಾಗಿದೆ. ಇಲ್ಲಿ ಈಗಾಗಲೇ 3,662 ರೈತರ ಕಡತಗಳನ್ನು ವಿಲೇ ಮಾಡಲಾಗಿದೆ. ಇನ್ನು 50 ಸಾವಿರ ಕಡತಗಳನ್ನು 3 ತಿಂಗಳಲ್ಲಿ ವಿಲೇಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಗಡುವು ನೀಡಿದರು. ಇದಲ್ಲದೇ 1.06 ಲಕ್ಷ ರೈತರ ದಾಖಲೆಗಳು ಮಂಜೂರು ವಿಸ್ತೀರ್ಣ ಲಭ್ಯ ಜಮೀನಿಗಿಂತ ಹೆಚ್ಚು ಇದ್ದು ಇವುಗಳನ್ನು ಕೂಡಲೇ ವಾಸ್ತವ ಅನುಭವವನ್ನು ಸ್ಥಳದಲ್ಲಿಯೇ ಸರ್ವೆ ಮಾಡಿ ಇತ್ಯರ್ಥ ಮಾಡಬೇಕು. ಇನ್ನೂ 3.50 ಲಕ್ಷ ರೈತರ ಮಂಜೂರು ಕಡತಗಳನ್ನು ತಯಾರಿಸಲು ಬಾಕಿ ಇದ್ದು ಅವುಗಳನ್ನು ಒಂದು ತಿಂಗಳೊಳಗೆ ತಯಾರಿಸಬೇಕು. ಹೀಗೆ 20-50 ವರ್ಷಗಳ ಹಿಂದೆ ಮಂಜೂರಾಗಿದ್ದ ಸುಮಾರು 11,74,226 ರೈತರ ದಾಖಲೆಗಳನ್ನು ತಯಾರಿಸಿ, ಅರ್ಹ ರೈತರಿಗೆ ಪಕ್ಕ ದಾಖಲೆಗಳನ್ನು ಒದಗಿಸುವ ಅಭಿಯಾನಕ್ಕೆ ವೇಗ ನೀಡಬೇಕು ಎಂದು ಅವರು ಸೂಚಿಸಿದರು. ಫೌತಿ ಖಾತಾ ಅಭಿಯಾನ: ರಾಜ್ಯದಲ್ಲಿ ಸುಮಾರು 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿರುವುದರಿಂದ ಅವರ ವಾರಸುದಾರು ಕ್ರಯ, ಸಾಲ, ವಿಭಾಗ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇ-ಫೌತಿ ಖಾತಾ ಅಭಿಯಾನವನ್ನು ಕಂದಾಯ ಇಲಾಖೆ ಜರುಗಿಸುತ್ತಿದೆ ಎಂದು ಅವರು ಹೇಳಿದರು. ಈಗಾಗಲೇ 13 ಲಕ್ಷ ಜಮೀನುಗಳನ್ನು ವಾರಸುದಾರರ ಮನೆ ಬಾಗಿಲಿಗೆ ಹೋಗಿ ಖಾತಾ ಮಾಡಿಕೊಡಲಾಗಿದೆ. ಕುಟುಂಬಗಳಲ್ಲಿ ವ್ಯಾಜ್ಯವಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಜಮೀನುಗಳನ್ನು ಫೌತಿ ಖಾತಾ ಮಾಡಬೇಕು. ಈ ಅಭಿಯಾನದ ಅಡಿ ಅತಿ ಹೆಚ್ಚು ಫೌತಿ ಖಾತಾ ಮಾಡಿರುವ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕರಿಗೆ 5 ಕೋಟಿ ರೂ. ಪೃಓ ತ್ಸಾಹಧನ ಸರಕಾರದಿಂದ ನೀಡುವುದಾಗಿಯೂ ಘೋಷಿಸಿದರು. ಭೂ ಸುರಕ್ಷಾ ಅಭಿಯಾನ: ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 71.19 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಇನ್ನೂ 30 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಈ ವರ್ಷದ ಎಪ್ರಿಲ್ ಕೊನೆಯ ಒಳಗೆ ಈ ಕೆಲಸವನ್ನು ಮುಗಿಸಬೇಕು. ಈಗಾಗಲೇ ಜನ ಸಾಮಾನ್ಯರಿಗೆ 52.70 ಲಕ್ಷ ಪುಟಗಳನ್ನು ಆನ್ಲೈನ್ ಮೂಲಕ ವಿತರಿಸಲಾಗಿದ್ದು, ಶೀಘ್ರದಲ್ಲಿ ಎಲ್ಲ ಭೂ ದಾಖಲೆಗಳೂ ಆನ್ಲೈನ್ ಮೂಲಕ ವಿತರಿಸುವಂತಾಗಬೇಕು ಎಂದು ಅವರು ತಾಕೀತು ಮಾಡಿದರು. ಸರ್ವೇ ಇಲಾಖೆಗೂ ಸರ್ಜರಿ: ಸರ್ವೇ ಇಲಾಖೆಗೂ ಚಿಕಿತ್ಸಕ ಬದಲಾವಣೆ ನೀಡುವ ಉದ್ದೇಶದಿಂದ ಇಡೀ ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ಸಂಬಂಧ ನೂತನ ಕಾರ್ಯ ಯೋಜನೆಯನ್ನು ಇಂದಿನ ಸಭೆಯಲ್ಲಿ ಸರ್ವೇ ಇಲಾಖೆ ನೂತನ ಆಯುಕ್ತ ವೆಂಕಟರಾಜು ಪ್ರಸ್ತುತಪಡಿಸಿದರು. ಬಳಿಕ ಮಾತನಾಡಿದ ಕೃಷ್ಣ ಬೈರೇಗೌಡ, ರೋವರ್ ಮೂಲಕ ಸರ್ವೇ ಪೂರ್ಣಗೊಳಿಸಿದರೆ ಸ್ಕೆಚ್, ಟಿಪ್ಪಣಿ, ಆಖಾರ್ ಬಂದ್, ಕೈಬರಹ ಸೇರಿ ಪ್ರತಿಯೊಂದೂ ಡಿಜಿಟಲ್ ಪ್ರತಿ ಲಭ್ಯವಾಗುತ್ತದೆ. ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆ ಮೂಲಕ ಈ ವರ್ಷಾಂ ತ್ಯದಲ್ಲಿ ಇಡೀ ಇಲಾಖೆಯನ್ನು ಸಂಪೂರ್ಣ ಕಾಗದ ರಹಿತಗೊಳಿಸಬೇಕು, ಎಂಡ್ ಟು ಎಂಡ್ ಡಿಜಿಟಲೀಕರಣಗೊಳಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೌನಿಶ್ ಮುದ್ಗಿಲ್, ಕಂದಾಯ ಆಯುಕ್ತ ಮೀನಾ ನಾಗರಾಜ್, ಭೂ ದಾಖಲೆಗಳು ಮತ್ತು ಸರ್ವೆ ಇಲಾಖೆಯ ಆಯುಕ್ತ ವೆಂಕಟರಾಜು ಉಪಸ್ಥಿತರಿದ್ದರು.
ವಾರಣಾಸಿ: ರೈಲುಗಳ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಬನಾರಸ್ ರೈಲು ಇಂಜಿನ್ ಕಾರ್ಖಾನೆಯಿಂದ ತಯಾರಾಗಲಿರುವ ಎಲ್ಲ ರೈಲು ಇಂಜಿನ್ ಗಳಿಗೂ ಮುಂದಿನ ಎಪ್ರಿಲ್ 1ರಿಂದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ 'ಕವಚ' ವನ್ನು ಅಳವಡಿಸಲಾಗುವುದು ಎಂದು ತಂಡ ಬನಾರಸ್ ರೈಲು ಇಂಜಿನ್ ಕಾರ್ಖಾನೆಯ (ಬಿಎಲ್ ಡಬ್ಯು) ಮಹಾಪ್ರಬಂಧಕರಾದ ಅಶುತೋಷ್ ಪಂತ್ ತಿಳಿಸಿದ್ದಾರೆ. ವಾರ್ತಾ ಮತ್ತು ಪ್ರಸಾರ ಬೆಂಗಳೂರು ವಾರ್ತಾ ಶಾಖೆಯ ನೇತೃತ್ವದಲ್ಲಿ ಉತ್ತರ ಭಾರತ ಅಧ್ಯಯನ ಪ್ರವಾಸ ಕೈಗೊಂಡಿರುವ ಕರ್ನಾಟಕದ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದರು. ತಂಡದಲ್ಲಿ ಪಿಐಬಿಯ ಇಬ್ಬರು ಅಧಿಕಾರಿಗಳು ಹಾಗೂ ರಾಜ್ಯದ 10 ಮಂದಿ ಪತ್ರಕರ್ತರು ಇದ್ದಾರೆ. ಬಿ.ಎಲ್.ಡಬ್ಲ್ಯೂ ಕೇವಲ ಭಾರತೀಯ ರೈಲ್ವೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವುದಲ್ಲದೆ, ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಂತ್ರಿಕ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದೆ ಎಂದು ಹೇಳಿದರು. 11 ದೇಶಗಳಿಗೆ ರಫ್ತು; ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್” ದೃಷ್ಟಿಕೋನದ ಸಾಕಾರವಾಗಿ ಬಿಎಲ್ಡಬ್ಲ್ಯೂ ಇದುವರೆಗೆ 11 ದೇಶಗಳಿಗೆ 182 ಡೀಸೆಲ್ ರೈಲು ಇಂಜಿನ್ ಗಳನ್ನು ಯಶಸ್ವಿಯಾಗಿ ರಫ್ತು ಮಾಡಿದೆ ಎಂದು ಮಾಹಿತಿ ನೀಡಿದರು. ಮೊಝಾಬಿಕ್ ಗೆ ಬಿಎಲ್ ಡಬ್ಲ್ಯುನ 10ನೇ 3300 ಎಚ್ ಪಿ ಎಸಿ ಡಿಸೇಲ್ -ಎಸಿ ಡಿಸೇಲ್ ಇಲೆಕ್ಟ್ರಿಕ್ ಲೋಕೋಮೋಟಿವ್ ವನ್ನು 2026 ಫೆ.21ರಂದು ಯಶಸ್ವಿಯಾಗಿ ರಫ್ತು ಮಾಡಲಾಗಿದೆ ಎಂದರು. ಬಿಎಲ್ ಡಬ್ಲ್ಯೂ ಕೇವಲ ಭಾರತೀಯ ರೈಲ್ವೆಯಲ್ಲಿ ಮಾತ್ರವಲ್ಲ ವಿಶ್ವದ ರೈಲ್ವೇ ಮಾರುಕಟ್ಟೆಯಲ್ಲಿ ಶಕ್ತಿಯಾಗಿ ತನ್ನ ಹೊರಹೊಮ್ಮಿದೆ. ಈವರೆಗೆ ಮೊಝಾಂಬಿಕಾ, ಸುಡಾನ್, ಅಂಗೊಲಾ, ಮಯನ್ಮಾರ್, ತಾಂಜಾನಿಯಾ, ವಿಯೆಟ್ನಾಂ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಸೆನೆಗಲ್, ಮಾಲಿ ಸೇರಿದಂತೆ 11 ದೇಶಗಳಿಗೆ ರೈಲು ಇಂಜಿನ್ ಗಳನ್ನು ರಫ್ತು ಮಾಡಲಾಗಿದೆ ಎಂದರು. ಬಿಎಲ್ ಡಬ್ಲ್ಯು ಪ್ಯಾಸೆಂಜರ್ ಲೋಕೋಮೋಟಿವ್ (ಡಬ್ಲ್ಯೂ ಎಪಿ 7), ಸರಕು ಸಾಗಣೆ ಇಲೆಕ್ಟ್ರಿಕ್ ಲೋಕೊಮೋಟಿವ್, ಅಮೃತ ಭಾರತ್ ಲೋಕೋಮೋಟಿವ್ ಸೇರಿದಂತೆ ಮೂರು ವಿಧದ ರೈಲು ಇಂಜಿನ್ ಗಳನ್ನು ತಯಾರಿಸುತ್ತದೆ ಎಂದು ವಿವರಿಸಿದರು. ಪ್ರಧಾನ ಮುಖ್ಯ ಇಲೆಕ್ಟ್ರಿಕ್ ಇಂಜಿನಿಯರ್ ಸುಶೀಲ್ ಕುಮಾರ್ ಶ್ರೀವಾಸ್ತವ, ಪ್ರಧಾನ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ವಿವೇಕ್ ಶೀಲ್, ಉಪ ಜನರಲ್ ಮ್ಯಾನೇಜರ್ ಸಾಗರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಕುಮಾರ್, ಬಿಎಲ್ ಡಬ್ಲ್ಯೂನ ಮುಖ್ಯ ವಿದ್ಯುತ್ ಇಂಜಿನಿಯರ್ (ಲೋಕೋ) ಅರವಿಂದ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಬಿ.ಎಲ್.ಡಬ್ಲೂನಲ್ಲಿ ಪ್ರಯಾಣಿಕರ ಎಲೆಕ್ಟ್ರಿಕ್ ಇಂಜಿನ್ WAP-7, ಸರಕು ಸಾಗಣೆ ಎಲೆಕ್ಟ್ರಿಕ್ ಇಂಜಿನ್ WAG-9, ಅಮೃತ್ ಭಾರತ್ ರೈಲು ಇಂಜಿನ್ ಮುಂತಾದ ಎಲೆಕ್ಟ್ರಿಕ್ ಇಂಜಿನ್ ಗಳ ತಯಾರಿಕಾ ಪ್ರಕ್ರಿಯೆಯನ್ನು ಪತ್ರಕರ್ತರು ಪಡೆದರು. ಲೊಕೋಮೋಟಿವ್ ಇಲೆಕ್ಟ್ರಿಕ್ ಇಂಜಿನಿಯರ್ ಅರವಿಂದ್ ಕುಮಾರ್ ಜೈನ್ ಅವರು ಮಾಹಿತಿ ನೀಡಿದರು. 10 ಮಂದಿ ಪತ್ರಕರ್ತರ ತಂಡವು ಡೀಸೆಲ್ ಇಂಜಿನ್ ಗಳ ಉತ್ಪಾದನೆ, ಚಾಲಕ ಸ್ನೇಹಿ ವಿನ್ಯಾಸ, ಡಿಜಿಟಲ್ ನಿಯಂತ್ರಣ ವ್ಯವಸ್ಥೆ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಆಧುನಿಕ ಇಂಜಿನ್ ಕ್ಯಾಬ್ ಗಳನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕರಾದ ಕರಿಷ್ಮಾ ಪಂತ್, ಬಿ.ಎಲ್.ಡಬ್ಲ್ಯೂನ ಅಧಿಕಾರಿಗಳು ಉಪಸ್ಥಿತರಿದ್ದರು.
ಎಸೆಸೆಲ್ಸಿ ಪರೀಕ್ಷೆ: ಅಂತಿಮ ಪ್ರವೇಶ ಪತ್ರಗಳನ್ನು ವಿತರಿಸುವಂತೆ ಸೂಚನೆ
ಬೆಂಗಳೂರು : ಇದೇ ಮಾ.18ರಿಂದ ಎಸೆಸೆಲ್ಸಿ ಪರೀಕ್ಷೆಯು ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಅಂತಿಮ ಪ್ರವೇಶ ಪತ್ರಗಳನ್ನು ವಿತರಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಶಾಲೆಗಳಿಗೆ ಸೂಚನೆ ನೀಡಿದೆ. ಮಂಗಳವಾರ ಮಂಡಳಿಯು ಸುತ್ತೋಲೆ ಹೊರಡಿಸಿದ್ದು, ಎಸೆಸೆಲ್ಸಿ ಪರೀಕ್ಷೆ-1ಕ್ಕೆ ಹಾಜರಾಗುತ್ತಿರುವ ವಿದಾ-್ಯರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಲಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸಬೇಕು ಎಂದು ತಿಳಿಸಿದೆ. ತಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆಯು ಡೌನ್ಲೋಡ್ ಮಾಡಿಕೊಂಡ ಪ್ರವೇಶ ಪತ್ರಗಳ ಸಂಖ್ಯೆಗೆ ಸರಿ ಹೊಂದುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲದಿದ್ದರೆ, ಆ ವಿದ್ಯಾರ್ಥಿಯ ವಿವರವನ್ನು ಸಮರ್ಥನೆ ಮತ್ತು ದಾಖಲೆಗಳೊಂದಿಗೆ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳನ್ನು ಕೂಡಲೇ ಸಂಪರ್ಕಿಸಬೇಕು ಎಂದು ಹೇಳಿದೆ. ಪರೀಕ್ಷೆಗೆ ಖಾಸಗಿಯಾಗಿ ನೋಂದಣಿಯಾಗಿರುವ ವಿದ್ಯಾರ್ಥಿಗಳು ತಮ್ಮದೇ ಲಾಗಿನ್ ಮೂಲಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿ ಲಾಗಿನ್ ಹಾಗೂ ಶಾಲಾ ಲಾಗಿನ್ ಮೂಲಕ ಲಭ್ಯಗೊಳಿಸಲಾಗಿದೆ. ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿದ ನಂತರ ಸಂಬಂದಿಸಿದ ಮುಖ್ಯಶಿಕ್ಷಕರಿಂದ ಸಹಿ ಮತ್ತು ಮೊಹರನ್ನು ಪಡೆದು ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ ಎಂದು ಮಂಡಳಿಯು ಸ್ಪಷ್ಟಪಡಿಸಿದೆ. ಇನ್ನು ವಿಭಿನ್ನ ಸಾಮಥ್ರ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ/ವಿನಾಯಿತಿ ನೀಡುವ ಸಂಬಂಧ ಉಪನಿರ್ದೇಶಕರ ಜ್ಞಾಪನದನ್ವಯ ದೈಹಿಕ ಸ್ಥಿತಿ, ಭಾಷಾ ವಿನಾಯಿತಿ, ಬದಲಿ ವಿಷಯಗಳ ಮಾಹಿತಿಗಳು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಬಗ್ಗೆ ಮುಖ್ಯಶಿಕ್ಷಕರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
1990ರ ಆಗಸ್ಟ್ನಲ್ಲಿ ಇರಾಕ್ ಕುವೈತ್ ಮೇಲೆ ಆಕ್ರಮಣ ಮಾಡಿದ ಸ್ವಲ್ಪ ಸಮಯದ ನಂತರ, ಆಗಿನ ವಿದೇಶಾಂಗ ಸಚಿವ ಐ.ಕೆ. ಗುಜ್ರಾಲ್ ಅವರು ಬಾಗ್ದಾದ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸದ್ದಾಂ ಹುಸೇನ್ ಅವರನ್ನು ಆಲಿಂಗಿಸಿದ್ದರು. ಈ ಆಲಿಂಗನಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಆದರೆ ಅದು ಕುವೈತ್ನಲ್ಲಿದ್ದ 1.7 ಲಕ್ಷ ಭಾರತೀಯರಿಗೆ ನಿರ್ಣಾಯಕ ಹಂತವಾಗಿತ್ತು. ಇರಾಕಿ ಅಧಿಕಾರಿಗಳು ಭಾರತೀಯರನ್ನು ಸ್ಥಳಾಂತರಿಸಲು ಅನುಮತಿ ನೀಡಿದರು. 63 ದಿನಗಳಲ್ಲಿ 488 ಏರ್ ಇಂಡಿಯಾ ವಿಮಾನಗಳು ‘ಆಪರೇಷನ್ ಏರ್ ಲಿಫ್ಟ್’ ಭಾಗವಾಗಿ 1 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕರೆತಂದವು. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇರಾನ್ ನ ರಾಜಧಾನಿ ಟೆಹ್ರಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಸುಮಾರು 10,000 ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಆತಂಕದಲ್ಲಿದ್ದಾರೆ. ಭಾರತದ ಯಶಸ್ವಿ ರಕ್ಷಣಾ ಕಾರ್ಯಾಚರಣೆಗಳ ಇತಿಹಾಸವು ಭರವಸೆ ನೀಡಿದರೂ, ಪ್ರಸ್ತುತ ಪರಿಸ್ಥಿತಿ ಭಿನ್ನವಾಗಿದೆ. ವಾಯುಪ್ರದೇಶ ಮುಚ್ಚಿರುವುದರಿಂದ ಅಲ್ಲಿನ ಭಾರತೀಯರನ್ನು ವಾಪಸ್ ಕರೆತರವುದು ಸವಾಲಾಗಿದೆ. ಇರಾನ್ ನಲ್ಲಿ ಪ್ರಸ್ತುತ ಎಷ್ಟು ಭಾರತೀಯರು ವಾಸಿಸುತ್ತಿದ್ದಾರೆ? ಪ್ರಸ್ತುತ ವಿದ್ಯಾರ್ಥಿಗಳು, ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ಉದ್ಯಮಿಗಳು ಹಾಗೂ ನಾವಿಕರು ಸೇರಿ ಸುಮಾರು 9,000–10,000 ಭಾರತೀಯರು ಇರಾನ್ ನ 16 ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಫೆಬ್ರವರಿ 6ರಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇರಾನ್ ನಲ್ಲಿನ ರಾಜಕೀಯ ಅಶಾಂತಿಯು ಅಲ್ಲಿ ವಾಸಿಸುವ ಭಾರತೀಯರ ಮೇಲೆ ಬೀರುವ ಪರಿಣಾಮ, ಅವರ ಸಂಭಾವ್ಯ ವಾಪಸಾತಿ ಹಾಗೂ ಪ್ರಸ್ತುತ ಸಂಖ್ಯೆಯ ಬಗ್ಗೆ ಸರ್ಕಾರ ಅಂದಾಜು ಮಾಡಿದ್ದೆಯೇ ಎಂಬುದರ ಕುರಿತು ರಾಯ್ ಮಾಹಿತಿ ಕೇಳಿದ್ದರು. ಕಳೆದ ಕೆಲವು ವರ್ಷಗಳಿಂದ ಇರಾನ್ ನಲ್ಲಿರುವ ಭಾರತೀಯರ ಸಂಖ್ಯೆಯಲ್ಲಿ ಸ್ಥಿರ ಏರಿಕೆ ದಾಖಲಾಗಿದೆ. ವಿದೇಶಾಂಗ ವ್ಯವಹಾರಗಳ ಸಮಿತಿಯ (2024–25) ಇತ್ತೀಚಿನ ದತ್ತಾಂಶವು ಇರಾನ್ ನಲ್ಲಿನ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ತೋರಿಸಿದೆ. ಕೇವಲ ಒಂದು ವರ್ಷದಲ್ಲಿ ಒಟ್ಟು ಸಂಖ್ಯೆ 4,700ಕ್ಕೂ ಹೆಚ್ಚು ಏರಿಕೆಯಾಗಿದೆ. ಜನವರಿ 2023ರಿಂದ ಜನವರಿ 2024ರ ನಡುವೆ ಅನಿವಾಸಿ ಭಾರತೀಯರ (NRI) ಸಂಖ್ಯೆ 5,600ರಿಂದ 10,320ಕ್ಕೆ ಏರಿಕೆಯಾಗಿ ಬಹುತೇಕ ದ್ವಿಗುಣವಾಗಿದೆ. ಭಾರತೀಯ ಮೂಲದ ವ್ಯಕ್ತಿಗಳ (PIO) ಸಂಖ್ಯೆಯಲ್ಲಿಯೂ ಸ್ವಲ್ಪ ಏರಿಕೆ ಕಂಡುಬಂದಿದೆ. ಈ ಬೆಳವಣಿಗೆಯಿಂದ ಒಟ್ಟು ಭಾರತೀಯ ಸಮುದಾಯದ ಸಂಖ್ಯೆ 10,765ಕ್ಕೆ ಏರಿಕೆಯಾಗಿದೆ. ಹಿಂದಿನ ವರ್ಷ ಇದು 6,018 ಆಗಿತ್ತು. ಗಲ್ಫ್ ದೇಶಗಳಲ್ಲಿ ಎಷ್ಟು ಭಾರತೀಯರು ಇದ್ದಾರೆ? ಸರ್ಕಾರಿ ಮೂಲಗಳ ಪ್ರಕಾರ, ಗಲ್ಫ್ ಪ್ರದೇಶದಲ್ಲಿ ಅಂದಾಜು 1 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ವಾಯುಪ್ರದೇಶ ಮುಚ್ಚುವಿಕೆ ಹಾಗೂ ಭದ್ರತಾ ಸವಾಲುಗಳ ನಡುವೆ ಇಷ್ಟೊಂದು ಜನರನ್ನು ಸ್ಥಳಾಂತರಿಸುವುದು ದೊಡ್ಡ ವ್ಯವಸ್ಥಾಪನಾ ಸವಾಲಾಗಿದೆ. ಆದ್ದರಿಂದ ಅವರ ಸುರಕ್ಷತೆಗಾಗಿ ಪರ್ಯಾಯ ಕ್ರಮಗಳನ್ನು ಅನ್ವಯಿಸುವ ಅಗತ್ಯ ಎದುರಾಗಬಹುದು. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದ ಭಾರತೀಯ ಕಾರ್ಮಿಕರಲ್ಲಿ 96% ಕ್ಕೂ ಹೆಚ್ಚು ಜನರು ಆರು ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದಾರೆ. ಜನವರಿ 2020ರಿಂದ ಜೂನ್ 2025ರವರೆಗೆ ವಲಸೆ ಪರಿಶೀಲನೆ ಅಗತ್ಯವಿರುವ (ECR) ಪಾಸ್ ಪೋರ್ಟ್ ಹೊಂದಿದ್ದ ಸುಮಾರು 16 ಲಕ್ಷ ಕಾರ್ಮಿಕರಲ್ಲಿ 15.4 ಲಕ್ಷ ಮಂದಿ ಸೌದಿ ಅರೇಬಿಯಾ, ಯುಎಇ, ಕುವೈತ್, ಬಹರೇನ್, ಒಮಾನ್ ಹಾಗೂ ಖತರ್ ದೇಶಗಳಲ್ಲಿ ನೆಲೆಸಿದ್ದಾರೆ. ಈ ಅವಧಿಯಲ್ಲಿ ಬಹರೇನ್ ಗೆ 40,407, ಇರಾನ್ ಗೆ 8,275, ಕುವೈತ್ಗೆ 2,01,959, ಒಮಾನ್ ಗೆ 1,16,840, ಖತರ್ಗೆ 1,53,501, ಸೌದಿ ಅರೇಬಿಯಾಕ್ಕೆ 6,95,269 ಹಾಗೂ ಯುಎಇಗೆ 3,41,365 ಮಂದಿ ವಲಸೆ ಪರಿಶೀಲನೆ ಪಡೆದಿದ್ದಾರೆ. ಸ್ಥಳಾಂತರ ಕಾರ್ಯಾಚರಣೆ ಯೋಜನೆಯಲ್ಲಿದೆಯೇ? ಪ್ರಸ್ತುತ ವಿದೇಶಾಂಗ ಸಚಿವಾಲಯವು ಯಾವುದೇ ಸ್ಥಳಾಂತರ ಕಾರ್ಯಾಚರಣೆ ಘೋಷಿಸಿಲ್ಲ. ಕಳೆದ ಎರಡು ದಿನಗಳಿಂದ ದುಬೈ ಮತ್ತು ಅಬುಧಾಬಿ ವಾಯುಪ್ರದೇಶ ಮುಚ್ಚಿರುವ ಹಿನ್ನೆಲೆಯಲ್ಲಿ ತಕ್ಷಣದ ಸ್ಥಳಾಂತರ ಕಾರ್ಯಸಾಧ್ಯವಾಗಿಲ್ಲ. ಯಾವುದೇ ವಾಪಸಾತಿ ಕ್ರಮ ಕೈಗೊಳ್ಳುವ ಮೊದಲು ಭಾರತ ಮುಂದಿನ ಎರಡು–ಮೂರು ದಿನಗಳವರೆಗೆ ಪರಿಸ್ಥಿತಿ ಗಮನಿಸುವ ಸಾಧ್ಯತೆಯಿದೆ. ಅಬುಧಾಬಿಯಲ್ಲಿ ಸೀಮಿತ ವಿಮಾನ ಸಂಚಾರ ಮರುಪ್ರಾರಂಭಗೊಂಡಿದ್ದರೂ, ಬಹರೇನ್, ಖತರ್ ಹಾಗೂ ಕುವೈತ್ನ ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿವೆ. ಆದರೆ ಒಮಾನ್ ವಾಯುಪ್ರದೇಶ ತೆರೆದಿರುವುದರಿಂದ, ದುಬೈ, ಶಾರ್ಜಾ ಹಾಗೂ ಅಬುಧಾಬಿಯಿಂದ ಕೆಲವು ಭಾರತೀಯರು ಮಸ್ಕತ್ ಮೂಲಕ ಪ್ರಯಾಣಿಸುತ್ತಿದ್ದಾರೆ. ಒಮಾನ್ ಮಾನ್ಯ ಯುಎಸ್/ಯುಕೆ ವೀಸಾ ಹೊಂದಿರುವ ಭಾರತೀಯರಿಗೆ ಆಗಮನದ ವೇಳೆ ವೀಸಾ ನೀಡುತ್ತದೆ; ಇತರರು ಆನ್ಲೈನ್ ಇ-ವೀಸಾ ಪಡೆಯಬೇಕು. ಪ್ರಯಾಣಿಕರು ರಸ್ತೆಮಾರ್ಗವಾಗಿ ಸುಮಾರು 200 ಕಿ.ಮೀ ದೂರದ ಹಟ್ಟಾ ಗಡಿಯನ್ನು ತಲುಪಿ, ಸುಮಾರು ಎರಡು ಗಂಟೆಗಳ ವಲಸೆ ಪ್ರಕ್ರಿಯೆ ಪೂರ್ಣಗೊಳಿಸಿ, ಇನ್ನೂ ನಾಲ್ಕು ಗಂಟೆಗಳಲ್ಲಿ ಮಸ್ಕತ್ ವಿಮಾನ ನಿಲ್ದಾಣ ತಲುಪಬಹುದು. ಇತ್ತೀಚಿನ ಕಾರ್ಯಾಚರಣೆಗಳು ಕಳೆದ ಐದು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ರಷ್ಯಾ–ಉಕ್ರೇನ್ ಯುದ್ಧದವರೆಗಿನ ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತವು ವಿಶ್ವದಾದ್ಯಂತ ನೆಲೆಸಿದ್ದ 3.2 ಕೋಟಿಗೂ ಹೆಚ್ಚು ನಾಗರಿಕರನ್ನು ವಾಪಸ್ ಕರೆತಂದಿದೆ. ‘ವಂದೇ ಭಾರತ್ ಮಿಷನ್’ ಭಾರತದ ಅತಿ ದೊಡ್ಡ ಸ್ಥಳಾಂತರ ಕಾರ್ಯಾಚರಣೆಯಾಗಿ ಗುರುತಿಸಲಾಗಿದೆ. ಕೋವಿಡ್ ಅವಧಿಯಲ್ಲಿ ಸಿಲುಕಿದ್ದ ನಾಗರಿಕರನ್ನು ವಾಪಸ್ ಕರೆತರಲು ಪ್ರಾರಂಭಿಸಲಾದ ಈ ಮಿಷನ್ ಮಾರ್ಚ್ 2022ರಲ್ಲಿ ಮುಕ್ತಾಯಗೊಂಡಿತು. ವಿಶೇಷ ವಿಮಾನಗಳು ಹಾಗೂ ‘ಏರ್ ಬಬಲ್’ ವ್ಯವಸ್ಥೆಯ ಮೂಲಕ 3.20 ಕೋಟಿ ಜನರಿಗೆ ಪ್ರಯಾಣ ಸೌಲಭ್ಯ ಕಲ್ಪಿಸಲಾಯಿತು. ಭಾರತೀಯ ಸಮುದಾಯ ಕಲ್ಯಾಣ ನಿಧಿಯಿಂದ ₹22.54 ಕೋಟಿ ವೆಚ್ಚ ಮಾಡಲಾಗಿದೆ. ಜೂನ್ 2025ರಲ್ಲಿ ನಡೆದ ‘ಆಪರೇಷನ್ ಸಿಂಧು’ ಮೂಲಕ ಇರಾನ್ನಿಂದ 3,597 ಹಾಗೂ ಇಸ್ರೇಲ್ನಿಂದ 818 ಸೇರಿ ಒಟ್ಟು 4,415 ಭಾರತೀಯರನ್ನು ರಕ್ಷಿಸಲಾಯಿತು. 19 ವಿಶೇಷ ವಿಮಾನಗಳು, ಅದರಲ್ಲೂ ಭಾರತೀಯ ವಾಯುಪಡೆಯ ಮೂರು ಸಿ-17 ಹೆವಿ-ಲಿಫ್ಟ್ ವಿಮಾನಗಳನ್ನು ಬಳಸಲಾಗಿತ್ತು. ಸ್ಥಳಾಂತರ ಕಾರ್ಯಾಚರಣೆಗಳನ್ನು ಹೇಗೆ ಯೋಜಿಸಲಾಗುತ್ತದೆ? ವಿದೇಶಾಂಗ ಸಚಿವಾಲಯದ ಪ್ರಕಾರ, ಸಂಘರ್ಷ ಅಥವಾ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ದೇಶದೊಳಗಿನ ಭಾರತೀಯರ ಸಂಖ್ಯೆ, ಅವರ ಭೌಗೋಳಿಕ ವಿಸ್ತರಣೆ, ನೆಲಮಟ್ಟದ ಭದ್ರತಾ ಪರಿಸ್ಥಿತಿ, ಲಭ್ಯ ನಿರ್ಗಮನ ಮಾರ್ಗಗಳು ಹಾಗೂ ನೆರೆಯ ರಾಷ್ಟ್ರಗಳ ಸಹಕಾರ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸ್ಥಳಾಂತರ ಯೋಜನೆ ರೂಪಿಸಲಾಗುತ್ತದೆ. ಅಗತ್ಯವಿದ್ದರೆ ಭಾರತೀಯರಿಗೆ ಸೂಕ್ತ ಸಲಹೆಗಳು ನೀಡಲಾಗುತ್ತದೆ. ಇತರ ಪ್ರಮುಖ ಕಾರ್ಯಾಚರಣೆಗಳು 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ‘ಆಪರೇಷನ್ ದೇವಿ ಶಕ್ತಿ’ ಮೂಲಕ 438 ಭಾರತೀಯರು ಸೇರಿ 565 ಮಂದಿಯನ್ನು ಅಫ್ಘಾನಿಸ್ತಾನದಿಂದ ರಕ್ಷಿಸಲಾಯಿತು. 2022ರಲ್ಲಿ ‘ಆಪರೇಷನ್ ಗಂಗಾ’ ಮೂಲಕ ಉಕ್ರೇನ್ ಯುದ್ಧದ ಸಂದರ್ಭದಲ್ಲಿ 18,282 ಭಾರತೀಯರನ್ನು 90 ವಿಮಾನಗಳ ಮೂಲಕ ಕರೆತರಲಾಯಿತು. 2023ರಲ್ಲಿ ‘ಆಪರೇಷನ್ ಕಾವೇರಿ’ ಮೂಲಕ ಸುಡಾನ್ ನಿಂದ 4,097 ಮಂದಿಯನ್ನು ರಕ್ಷಿಸಲಾಯಿತು. ಅದೇ ವರ್ಷ ಅಕ್ಟೋಬರ್ನಲ್ಲಿ ‘ಆಪರೇಷನ್ ಅಜಯ್’ ಮೂಲಕ ಇಸ್ರೇಲ್ ನಿಂದ 1,343 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಯಿತು. ಹಿಂದಿನ ವರ್ಷಗಳಲ್ಲಿ 2011ರಲ್ಲಿ ಲಿಬಿಯಾದಿಂದ 15,000 ಭಾರತೀಯರನ್ನು ‘ಆಪರೇಷನ್ ಸೇಫ್ ಹೋಮ್ಕಮಿಂಗ್’ ಮೂಲಕ ರಕ್ಷಿಸಲಾಗಿತ್ತು. 2006ರಲ್ಲಿ ಲೆಬನಾನ್ನಿಂದ 2,280 ಮಂದಿಯನ್ನು ಹಾಗೂ 2003ರಲ್ಲಿ ಇರಾಕ್ನಿಂದ 5,705 ಮಂದಿಯನ್ನು ಸ್ಥಳಾಂತರಿಸಲಾಗಿತ್ತು.
ಉಡುಪಿ: ಹಿಂದುತ್ವ ಸಂಘಟನೆಯ ಮುಖಂಡ ಮಂಜು ಕೊಳಗೆ ಚೂರಿ ಇರಿತ
ಉಡುಪಿ: ಪ್ರೀತಿಯ ವಿಚಾರದಲ್ಲಿ ರಾಜಿ ಪಂಚಾಯತಿ ನಡೆಸಲು ತೆರಳಿದ್ದ ವೇಳೆ ಹಿಂದುತ್ವ ಸಂಘಟನೆಯ ಮುಖಂಡ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜು ಕೊಳ ಅವರಿಗೆ ಯುವಕನೋರ್ವ ಚೂರಿ ಇರಿದ ಘಟನೆ ಮಲ್ಪೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಾಹಿತಿಗಳ ಪ್ರಕಾರ ಮಂಜು ಕೊಳ ಅವರು ಮಂಗಳವಾರ ಸಂಜೆ ಮಲ್ಪೆ ಬೀಚ್ ಬಳಿ ಪಲಿಮಾರು ಭಾಗ ಜೋಡಿಯೊಂದರ ಪ್ರೀತಿಯ ವಿಚಾರದಲ್ಲಿ ರಾಜಿ ಪಂಚಾಯತಿ ನಡೆಸಲು ಕರೆದಿದ್ದರು ಎನ್ನಲಾಗಿದೆ. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಯುವಕನೋರ್ವ ಮಂಜು ಕೊಳ ಅವರಿಗೆ ಚೂರಿ ಇರಿದಿದ್ದಾನೆ. ಹೊಟ್ಟೆಯ ಭಾಗಕ್ಕೆ ಇರಿದ ಪರಿಣಾಮ ಮಂಜು ಕೊಳ ಅವರು ಕುಸಿದು ಬಿದ್ದಿದ್ದು, ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕಲಬುರಗಿ | ವಿಶ್ವ ವನ್ಯಜೀವಿ ದಿನಾಚರಣೆ : ವೈಲ್ಡ್ ಲೈಫ್ ಫೋಟೋಗ್ರಾಫಿ ಪ್ರದರ್ಶನ
ಕಲಬುರಗಿ : ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ‘ಅಸೋಸಿಯೇಷನ್ ಆಫ್ ಜುವಾಲಜಿಸ್ಟ್’ ವತಿಯಿಂದ ವಿಶ್ವ ವನ್ಯಜೀವಿ ದಿನದ ಅಂಗವಾಗಿ ಮಂಗಳವಾರ ವೈಲ್ಡ್ ಲೈಫ್ ಫೋಟೋಗ್ರಾಫಿ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಅರಣ್ಯ ಇಲಾಖೆಯ ಉಪವಲಯ ಸಂರಕ್ಷಣಾಧಿಕಾರಿಗಳಾದ ರಮೇಶ್ ಹಾಳ್ಕೇರಿ ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಲಬುರಗಿಯ ವಿವಿಧ ಪರಿಸರ ವಲಯಗಳಲ್ಲಿ ಕ್ಲಿಕ್ ಮಾಡಲಾದ ಪಕ್ಷಿಗಳು, ಕೀಟಗಳು ಹಾಗೂ ಇತರ ವನ್ಯಜೀವಿಗಳ ಆಕರ್ಷಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ ಮಾತನಾಡಿದ ಪ್ರಾಂಶುಪಾಲರಾದ ಡಾ.ಬಿ.ರಾಮಕೃಷ್ಣ ರೆಡ್ಡಿ, ವನ್ಯಜೀವಿಗಳ ಉಳಿವು ನಮ್ಮೆಲ್ಲರ ಬದುಕಿನೊಂದಿಗೆ ಅವಿಭಾಜ್ಯವಾಗಿ ಸಂಬಂಧಿಸಿದೆ. ವನ್ಯಜೀವಿ ಸಂಪತ್ತಿನ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶ್ವ ವನ್ಯಜೀವಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು. ವನ್ಯಜೀವಿಗಳು ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಕುತೂಹಲದಿಂದ ಪ್ರಾಣಿ, ಪಕ್ಷಿ ಹಾಗೂ ಕೀಟಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಪಡೆದುಕೊಂಡರು. ಅಭಿಷೇಕ್ ಉಪ್ಪಾರ್, ಪವನ್ ಮೋಹನ್ ರಾವ್ ಹಾಗೂ ಕೆ.ಎಸ್. ಐಶ್ವರ್ಯ ಅವರು ಛಾಯಾಚಿತ್ರಗಳ ಕೊಡುಗೆ ನೀಡಿ ಮಾಹಿತಿಯನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಲತಾದೇವಿ ಕೆ, ಡಾ. ಜಗದೇವಿ ಗುಡ್ಡ, ಡಾ. ಬಸವರಾಜೇಶ್ವರಿ ಇಂದೂರ, ಡಾ. ಕರುಣಾ ಇಂಗನ್, ಪ್ರದೀಪ್ ಕುಮಾರ್ ಹಾಗೂ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯುದ್ಧ ಇನ್ನೂ ನಿಂತಿಲ್ಲ, ಇರಾನ್ ಸೇನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ | Operation Roaring Lion
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಭೀಕರ ಯುದ್ಧ ಸಾರಿದ್ದು, ದೊಡ್ಡದಾಗಿ ದಾಳಿ ನಡೆಸುತ್ತಿವೆ. ಇಂತಹ ಸಮಯದಲ್ಲೇ ಅಮೆರಿಕದ ಮುಂದಿನ ನಡೆ ಏನು? ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆ ನಂತ ಯುದ್ಧ ನಿಂತು ಹೋಗುತ್ತಾ? ಎನ್ನುವ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ದಿಢೀರ್ ಸುದ್ದಿಗೋಷ್ಠಿ ನಡೆಸಿರುವ ಅಮೆರಿಕ ಅಧ್ಯಕ್ಷರು ಇರಾನ್ ಸೇನೆಗೆ
ಚಿತ್ತಾಪುರ | ನನೆಗುದಿಗೆ ಬಿದ್ದಿರುವ ಸಮುದಾಯ ಭವನಗಳ ಪಟ್ಟಿ ಕೊಡಿ: ಸಚಿವ ಪ್ರಿಯಾಂಕ್ ಖರ್ಗೆ
ಚಿತ್ತಾಪುರ: ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಸಮುದಾಯ ಭವನಗಳ ಪಟ್ಟಿ ಸಲ್ಲಿಸಿ, ಬಾಕಿ ಅನುದಾನ ಬಿಡುಗಡೆ ಮಾಡಿ ಮೇ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ಪ್ರಜಾಸೌಧ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ವಿವಿಧ ಮಠಗಳಿಗೆ 8.5 ಕೋಟಿ ರೂ. ಅನುದಾನ ನೀಡಲಾಗಿದೆ. ಶಾಲೆಗಳ ಅಭಿವೃದ್ಧಿಗೆ 16 ಕೋಟಿ ರೂ. ಮೀಸಲಾಗಿದ್ದು, ಪ್ರಗತಿಪಥ ಯೋಜನೆಯಡಿ ಚಿತ್ತಾಪುರಕ್ಕೆ 110 ಕಿ.ಮೀ ರಸ್ತೆ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು. 100 ರೂ. ಮೌಲ್ಯದ ಕಾಮಗಾರಿಗೆ ಗುತ್ತಿಗೆದಾರರು 80 ರೂ. ಗೆ ಬೀಡ್ ಮಾಡುತ್ತಿದ್ದಾರೆ. ಲಾಭವಿಲ್ಲದೆ ಯಾರೂ ಕೆಲಸ ಮಾಡುವುದಿಲ್ಲ. ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕುವುದರಿಂದ ಗುಣಮಟ್ಟ ಕುಸಿಯುತ್ತದೆ. ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ನಡೆಯುವುದನ್ನು ಸಹಿಸುವುದಿಲ್ಲ ಎಂದು ಸೂಚನೆ ನೀಡಿದರು. ತಾಲೂಕಿನಾದ್ಯಂತ 400 ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಒಂದು ಶೌಚಾಲಯಕ್ಕೆ 30 ಲಕ್ಷ ರೂ. ಮೀಸಲಾಗಿದ್ದು, ಜಾಗದ ಕೊರತೆಯ ನೆಪ ಹೇಳಿ ವಿಳಂಬ ಮಾಡಬಾರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಗುತ್ತಿಗೆದಾರರ ಕೈಗೊಂಬೆಯಾಗಬಾರದು. ಗುತ್ತಿಗೆದಾರರನ್ನು ಹತೋಟಿಯಲ್ಲಿ ಇಟ್ಟು ಗುಣಮಟ್ಟದ ಕಾಮಗಾರಿ ನಡೆಸಬೇಕು. ಅಭಿವೃದ್ಧಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮಕೈಗೊಳ್ಳಿ. ಒಂದು ಹಳ್ಳಿಗೆ 1 ಕೋಟಿ ರೂ. ಅನುದಾನ ನೀಡಲಾಗಿದೆ. ಹಾಣಾದಿ ರಸ್ತೆ, ಸಂಪರ್ಕ ರಸ್ತೆ ಹಾಗೂ ಯುಜಿಡಿ ಕಾಮಗಾರಿಗಳಿಗೆ 47 ಕೋಟಿ ರೂ. ಬಂದಿದೆ. ಸಣ್ಣ ಕೆಲಸವೆಂದು ನಿರ್ಲಕ್ಷ್ಯ ಮಾಡಿದರೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ನಮ್ಮ ಸರ್ಕಾರ ಇರುವವರೆಗೆ ಯಾವುದೇ ಮುಲಾಜು ಬೇಡ. ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು. ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ದ್ವೀದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ್ ಚಿಸ್ತಿ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಜಿಪಂ ಸಿಇಒ ಭವರಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಶೀಲ್ದಾರ ನಾಗಯ್ಯ ಹಿರೇಮಠ, ಶಹಾಬಾದ ತಹಶೀಲ್ದಾರ್ ನೀಲಪ್ರಭಾ ಬಬಲಾದ್, ತಾಪಂ ಇಒ ಮಹ್ಮದ್ ಅಕ್ರಂ ಪಾಷಾ, ಬಿಇಒ ಶಶಿಧರ ಬಿರಾದಾರ, ಕೃಷಿ ಅಧಿಕಾರಿಗಳಾದ ಸಮದ್ ಪಟೇಲ್, ಸಂಜೀವಕುಮಾರ ಮಾನಕರ್, ಪಶು ವೈದ್ಯಾಧಿಕಾರಿ ಶಂಕರ್ ಕಣ್ಣಿ, ಅರಣ್ಯ ಇಲಾಖೆ ಅಧಿಕಾರಿ ವಿಜಯಕುಮಾರ ಬಡಿಗೇರ್, ಸಮಾಜ ಕಲ್ಯಾಣ ಅಧಿಕಾರಿ ಚೇತನ್ ಗುರಿಕಾರ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ವೀರನಾಥ, ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹ್ಮದ್ ಸಲಿಂ, ಸಿಡಿಪಿಓ ಆರತಿ ತುಪ್ಪದ್ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
ಶಹಾಬಾದ್ | ಶಾಸಕ ಮತ್ತಿಮಡು ಹುಟ್ಟು ಹಬ್ಬ : ಆಟೋ ಚಾಲಕರಿಗೆ, ಪತ್ರಕರ್ತರಿಗೆ ಹೆಲ್ಮೇಟ್ ವಿತರಣೆ
ಶಹಾಬಾದ್ : ಶಾಸಕ ಬಸವರಾಜ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ನಾವೆಲ್ಲರೂ ಆಟೋ ಚಾಲಕರಿಗೆ, ಟಿ-ಶರ್ಟ್, ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಹೆಲ್ಮೇಟ್ ವಿತರಣೆ ಮಾಡಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು. ಅವರು ಮಂಗಳವಾರ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಬಸವರಾಜ ಮತ್ತಿಮಡು ಅವರ ಜನ್ಮದಿನ ಪ್ರಯುಕ್ತ ನಗರದ ಶ್ರೀರಾಮ ವೃತ್ತದಲ್ಲಿ ಮತ್ತಿಮಡು ಅಭಿಮಾನಿ ಬಳಗದವರು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕರು ಮುಗಿದ ಕರವ, ಬಾಗಿದ ಶಿರವ ಎಂಬಂತೆ ಎಲ್ಲರೊಂದಿಗೆ ಬೆರೆಯುವ ಹಾಗೂ ಅಪ್ಪಿಕೊಳ್ಳುವ ವ್ಯಕ್ತಿತ್ವ. ಅಂತಹ ಜನಪ್ರಿಯ ಶಾಸಕರ ಹುಟ್ಟು ಹಬ್ಬವನ್ನು ನಮ್ಮ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಆಚರಿಸಿಕೊಂಡಿರುವುದು ನಿಜಕ್ಕೂ ಸಂತೋಷದಾಯಕ ಕ್ಷಣ ಎಂದರು. ಮುಖoಡರಾದ ಚಂದ್ರಕಾoತ ಗೊಬ್ಬೂರಕರ್, ಪಿಐ ಪರಶುರಾಮ ವನ್ನಂಜೆಕರ್, ರಮೇಶ ಭಟ್ಟ ಮಾತನಾಡಿದರು. ಮುಖಂಡರಾದ ಗೋರಖನಾಥ ಶಾಖಾಪುರೆ, ನರೇಂದ್ರ ವರ್ಮಾ, ಶಿವಕುಮಾರ ಇಂಗಿನಶೆಟ್ಟಿ, ಅರುಣ ಪಟ್ಟಣಕರ, ಭಾಗಿರಥಿ ಗುನ್ನಾಪೂರ ಇದ್ದರು. ದೇವದಾಸ ಜಾಧವ ನಿರೂಪಿಸಿದರು,ಸಿದ್ರಾಮ ಕುಸಾಳೆ ಸ್ವಾಗತಿಸಿದರು. ದಿನೇಶ ಗೌಳಿ ವಂದಿಸಿದರು.
ಆಳಂದ | ಕೇಂದ್ರೀಯ ವಿವಿ ವಿದ್ಯಾರ್ಥಿಗಳಿಗೆ ಭೂಮಿ ಫೌಂಡೇಶನ್ ಫೆಲೋಶಿಪ್
ಆಳಂದ : “ನಮ್ಮ ಎಲ್ಲಾ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರಡುವ ಮೊದಲು ಉದ್ಯೋಗ ಪಡೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಬಟ್ಟಸ್ ಸತ್ಯನಾರಾಯಣ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಚೆನ್ನೈ ಮೂಲದ ಭೂಮಿ ಫೌಂಡೇಶನ್ ನಲ್ಲಿ ಸ್ಥಾನ ಪಡೆದಿರುವ ಸಮಾಜ ವಿಜ್ಞಾನ (ಎಂಎಸ್ಡಬ್ಲ್ಯೂ) ಮತ್ತು ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪತ್ರ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡಿ ವಿಶ್ವವಿದ್ಯಾಲಯಕ್ಕೆ ಹೆಸರು ತರುವಂತೆ ಶ್ರಮಿಸಬೇಕು. ಇದರಿಂದ ಸಂಸ್ಥೆಗಳು ಮತ್ತೆ ಬಂದು ನಮ್ಮ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ಆಸಕ್ತಿ ತೋರುತ್ತವೆ. ಈ ಸಾಧನೆ ವಿಶ್ವವಿದ್ಯಾಲಯದ ಶೈಕ್ಷಣಿಕ ಶ್ರೇಷ್ಠತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕುಲಪತಿ ಹೇಳಿದರು. ಭೂಮಿ ಫೌಂಡೇಶನ್ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಸಂಸ್ಥೆಯಾಗಿದ್ದು, ಆಯ್ಕೆಯಾದ ಏಳು ಅಭ್ಯರ್ಥಿಗಳಲ್ಲಿ ನಾಲ್ವರು ಸಮಾಜ ಕಾರ್ಯ ವಿಭಾಗ (ಎಂಎಸ್ಡಬ್ಲ್ಯೂ) ಹಾಗೂ ಮೂವರು ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿದ್ದಾರೆ. ಆಯ್ಕೆಯಾದವರು ಎರಡು ವರ್ಷಗಳ ಕಾಲ ಪೂರ್ಣಾವಧಿ ಉದ್ಯೋಗಿಗಳಾಗಿ ತಿಂಗಳಿಗೆ ₹30,000 ಫೆಲೋಶಿಪ್ ಪಡೆಯಲಿದ್ದಾರೆ. ನಂತರ ಸಂಸ್ಥೆಯಲ್ಲಿ ಮುಂದುವರಿಯುವ ಅಥವಾ ಇತರ ಉದ್ಯೋಗ ಅವಕಾಶಗಳನ್ನು ಹುಡುಕುವ ಅವಕಾಶವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭೂಮಿ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕಿ ನಂದನ ಉಪಸ್ಥಿತರಿದ್ದರು. ಪ್ರೊ. ಚನ್ನವರ್ ಆರ್.ಎಂ., ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಪವಿತ್ರಾ ಆರ್. ಆಲೂರ್ ಹಾಗೂ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ವಿಜೇಂದ್ರ ಪಾಂಡೆ ಅವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ದೇವದುರ್ಗ | ಸಾಮಾನ್ಯ ಜನರಿಗೆ ಮನೆಕಟ್ಟಲು ಅಗತ್ಯ ಮರಳು ಪೂರೈಕೆ ಆಗಬೇಕು : ಶಾಸಕಿ ಕರೆಮ್ಮ ಜಿ.ನಾಯಕ
ದೇವದುರ್ಗ: ಅಕ್ರಮ ಮರಳು ಸಾಗಾಣೆಗೆ ತರಾಟೆ – ಮೂಲಸೌಕರ್ಯಕ್ಕೆ ಆದ್ಯತೆ ನೀಡಲು ಶಾಸಕಿ ಕರೆಮ್ಮ ನಾಯಕ್ ಸೂಚನೆ ದೇವದುರ್ಗ ಪಟ್ಟಣದ ಸಾಮಾನ್ಯ ಜನರಿಗೆ ಮೂಲಸೌಕರ್ಯ, ಕುಡಿಯುವ ನೀರು ಹಾಗೂ ಅಗತ್ಯ ಮರಳು ಪೂರೈಕೆ ತಕ್ಷಣ ಒದಗಿಸಬೇಕೆಂದು ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕಿಯರಾದ ಕರೆಮ್ಮ ಜಿ.ನಾಯಕ ಸೂಚಿಸಿದರು. ಸಭೆಯಲ್ಲಿ ಮಧ್ಯರಾತ್ರಿ ರಾಯಲ್ಟಿ ಇಲ್ಲದೆ ಅಕ್ರಮ ಮರಳು ಸಾಗಾಣೆ ನಡೆಯುತ್ತಿರುವ ಬಗ್ಗೆ ಸದಸ್ಯರು ಆಕ್ಷೇಪಿಸಿದರು. ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ರಾಮಣ್ಣ ನಾಯಕ್ ಮತ್ತು ಶಿವಪ್ಪ ದೂರಿದರು. ನಾಮಫಲಕ ಮತ್ತು ಪರವಾನಗಿ ಇಲ್ಲದ ಟಿಪ್ಪರ್ಗಳಿಗೆ ಹೇಗೆ ರಾಯಲ್ಟಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಪಟ್ಟಣದಿಂದ ಕೇವಲ 6 ಕಿ.ಮೀ. ದೂರದಲ್ಲಿ ಕೃಷ್ಣಾ ನದಿ ಇದ್ದರೂ ಸ್ಥಳೀಯರಿಗೆ ಮರಳು ಲಭ್ಯವಾಗುತ್ತಿಲ್ಲ. ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೆ ಅಕ್ರಮ ಸಾಗಾಟವಾಗುತ್ತಿದೆ. ಸ್ಥಳೀಯರು ಮರಳು ಕೇಳಿದರೆ ಒಂದು ಟಿಪ್ಪರ್ಗೆ ₹70 ಸಾವಿರ ಕೇಳಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆ ಅಧ್ಯಕ್ಷ ಲಕ್ಷ್ಮಣ ಜ್ಯೋತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳೀಯರಿಗೆ ಮರಳು ವ್ಯವಸ್ಥೆ ತಕ್ಷಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಶಾಸಕಿ ಕರೆಮ್ಮ ಜಿ. ನಾಯಕ್ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರು, ಸ್ವಚ್ಛತೆ, ಶಿಕ್ಷಣ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕು. ಯಾವುದೇ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಜಿಲ್ಲೆಗೆ ಉತ್ತಮ ಫಲಿತಾಂಶ ಬರಬೇಕು. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಡಿಪೊ ವ್ಯವಸ್ಥಾಪಕರಿಗೆ ಸೂಚಿಸಿದರು. ಒಟ್ಟಾರೆ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸಭೆಯಲ್ಲಿ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ತಾಲೂಕು ಪಂಚಾಯತ್, ಶರಣಬಸವರಾಜ, ತಹಶೀಲ್ದಾರ್ ನಾಗಮ್ಮಕಟ್ಟಿಮನಿ,ಕಾರ್ಯನಿರ್ವಾಕ ಅಧಿಕಾರಿ ಬಸವರಾಜ, ಅಣ್ಣಾರಾವ್,ವಲಯ ಅರಣ್ಯಾಧಿಕಾರಿ ಅಲಿಯುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಸಿ.ಡಿ.ಪಿ.ಓ ಮಹೇಶ್, ಆದನಗೌಡ ಬುಂಕಲದೊಡ್ಡಿ,ಶರಣಗೌಡ ಮದರಕಲ್,ಲಕ್ಷಣ ಜ್ಯೋತಿ,ಶರಣಗೌಡ ಹಂಚಿನಾಳ,ಶಿವಪ್ಪ,ರಾಮಣ್ಣ ನಾಯಕ,ಬಸನಗೌಡ ಮತ್ತಿತರು ಇದ್ದರು.
ಮಸ್ಕತ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು
ಮಂಗಳೂರು, ಮಾ.3: ಗಲ್ಫ್ ಯುದ್ಧದಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರವು ಮಂಗಳವಾರ ಮತ್ತೆ ಆರಂಭಗೊಂಡಿದೆ. ಮಂಗಳವಾರ ಸಂಜೆ ಸುಮಾರು 5:30ಕ್ಕೆ ಮಸ್ಕತ್ನಿಂದ 169 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ 818 ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಮಸ್ಕತ್ನಲ್ಲಿ ನಮಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ವಿಮಾನ ಸಂಚಾರ ರದ್ದಾಗಿದ್ದರಿಂದ ತುಂಬಾ ಆತಂಕವಾಗಿತ್ತು. ಮಂಗಳೂರು ವಿಮಾನ ಸಂಚಾರವು ಸೋಮವಾರ ರಾತ್ರಿ ಖಚಿತವಾಗಿತ್ತು ಎಂದು ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ಬೆಳಗ್ಗೆ 9:20ಕ್ಕೆ ಏರ್ಇಂಡಿಯಾ ಎಕ್ಸ್ಪ್ರೆಸ್ 817 ಮಂಗಳೂರಿನಿಂದ ಮಸ್ಕತ್ಗೆ 147 ಪ್ರಯಾಣಿಕರನ್ನು ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಸುಪ್ರಿಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲು ಆಡಳಿತ ಮಂಡಳಿ ನಿರ್ಧಾರ
ತಿರುವನಂತಪುರ: ಮಹಿಳೆಯರ ಶಬರಿಮಲೆ ದೇವಾಸ್ಥಾನ ಪ್ರವೇಶದ ಕುರಿತು ಅಸ್ತಿತ್ವದಲ್ಲಿರುವ ಸಂಪ್ರದಾಯಗಳನ್ನು ಸಂರಕ್ಷಿಸಲು ತಿರುವಾಂಕೂರು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಲಿದೆ. 10ರಿಂದ 50 ವರ್ಷದ ಒಳಗಿನ ಮಹಿಳೆಯರ ಪ್ರವೇಶ ನಿಷೇಧವನ್ನು ಮುಂದುವರಿಸಬೇಕು ಎಂದು ಸೋಮವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಜಯ ಕುಮಾರ್ ಸೋಮವಾರ ತಿಳಿಸಿದ್ದಾರೆ. ಋತುಸ್ರಾವವಾಗುವ ಮಹಿಳೆಯರಿಗೆ ಕೂಡ ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ 2018 ಸೆಪ್ಟಂಬರ್ನಲ್ಲಿ ತೀರ್ಪು ನೀಡಿತ್ತು.
ಹೋರಾಟಗಳ ಮೂಲಕ ಪಾಠ ಕಲಿತು ಬಂದವನು ನಾನು: ಡಿಸಿಎಂ ಡಿ.ಕೆ. ಶಿವಕುಮಾರ್ | DK Shivakumar
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಡೆ ಸಿಎಂ ಬದಲಾವಣೆ ವಿಚಾರ ದೊಡ್ಡ ಚರ್ಚೆಗೆ ವೇದಿಕೆಯನ್ನ ಒದಗಿಸಿದೆ. ಇದೇ ಸಮಯದಲ್ಲಿ ಒಂದು ಕಡೆ ಸಿಎಂ ಬಣ ಹಾಗೂ ಡಿಸಿಎಂ ಬಣ ಎಂದು ಕಾಂಗ್ರೆಸ್ ಪಕ್ಷ ಎರಡು ಭಾಗವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ &ಜೆಡಿಎಸ್ ನಾಯಕರು ಆರೋಪ ಮಾಡ್ತಾ ಇದ್ದಾರೆ. ಇಂತಹ ಸಮಯದಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್
ಭಟ್ಕಳ: ಶಾಲಾ ವಾಹನ ಪಲ್ಟಿ; 13 ವಿದ್ಯಾರ್ಥಿಗಳಿಗೆ ಗಾಯ
ಭಟ್ಕಳ: ತಾಲೂಕಿನ ಬೆಳಲಖಂಡ ಗ್ರಾಮದ ಕಡಸಲಗದ್ದೆ ಪುರಸಭೆ ಕಸ ಹಾಕುವ ಸ್ಥಳದ ಸಮೀಪದ ರಾಜ್ಯ ಹೆದ್ದಾರಿ–50 ಭಟ್ಕಳ–ಸಾಗರ ರಸ್ತೆಯಲ್ಲಿ ಶಾಲಾ ವಾಹನ ಪಲ್ಟಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಮಾಹಿತಿ ಪ್ರಕಾರ, ನಾಗುವಳ್ಳಿ ಹಾಗೂ ಹಾಡುವಳ್ಳಿ, ಕುಂಟವಾಣಿ ಭಾಗದ ಶಾಲಾ ಮಕ್ಕಳನ್ನು ಭಟ್ಕಳದತ್ತ ಕರೆದುಕೊಂಡು ಬರುತ್ತಿದ್ದ ವೇಳೆ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಲಾಗುತ್ತಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಪರಿಣಾಮವಾಗಿ ವಾಹನದಲ್ಲಿದ್ದ 13 ಮಂದಿ ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳಲ್ಲಿ ವಾಸುಕಿ (7), ಪ್ರದ್ವಿತ್ (12), ನಕ್ಷಾ (8), ಅಕಾಂಶ (11), ಅಭಿನಂದನ (6), ಜೋಸ್ಮಿನ್ (11), ಜಿಯೋನಾ ರೆಜಿ (12), ಟ್ರೇಸಾ (14), ದಿಶಾ (6), ತಮನ್ನಾ (10), ಸನಾತ್ (9), ಅರವ್ (5) ಹಾಗೂ ವಂಶಿತಾ (11) ಸೇರಿದ್ದಾರೆ. ಚಾಲಕನಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನೆಲ್ಲ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಾಗುವಳ್ಳಿ ಮೂಲದ ಚಾಲಕ ಮಂಜುನಾಥ ಜಟ್ಟಪ್ಪ ನಾಯ್ಕ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರಣಾಸಿ: ರೈಲುಗಳ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಬನಾರಸ್ ರೈಲು ಇಂಜಿನ್ ಕಾರ್ಖಾನೆಯಿಂದ ತಯಾರಾಗಲಿರುವ ಎಲ್ಲ ರೈಲು ಇಂಜಿನ್ ಗಳಿಗೂ ಮುಂದಿನ ಎಪ್ರಿಲ್ 1ರಿಂದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ 'ಕವಚ' ವನ್ನು ಅಳವಡಿಸಲಾಗುವುದು ಎಂದು ತಂಡ ಬನಾರಸ್ ರೈಲು ಇಂಜಿನ್ ಕಾರ್ಖಾನೆಯ (ಬಿಎಲ್ ಡಬ್ಯು) ಮಹಾಪ್ರಬಂಧಕರಾದ ಅಶುತೋಷ್ ಪಂತ್ ತಿಳಿಸಿದ್ದಾರೆ. ವಾರ್ತಾ ಮತ್ತು ಪ್ರಸಾರ ಬೆಂಗಳೂರು ವಾರ್ತಾ ಶಾಖೆಯ ನೇತೃತ್ವದಲ್ಲಿ ಉತ್ತರ ಭಾರತ ಅಧ್ಯಯನ ಪ್ರವಾಸ ಕೈಗೊಂಡಿರುವ ಕರ್ನಾಟಕದ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದರು. ತಂಡದಲ್ಲಿ ಪಿಐಬಿ ಯ ಇಬ್ಬರು ಅಧಿಕಾರಿಗಳು ಹಾಗೂ ರಾಜ್ಯದ 10 ಮಂದಿ ಪತ್ರಕರ್ತರು ಇದ್ದಾರೆ. ಬಿ.ಎಲ್.ಡಬ್ಲ್ಯೂ ಕೇವಲ ಭಾರತೀಯ ರೈಲ್ವೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವುದಲ್ಲದೆ, ಅಂತರ್ ರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತಾಂತ್ರಿಕ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದೆ ಎಂದು ಹೇಳಿದರು. 11 ದೇಶಗಳಿಗೆ ರಫ್ತು;ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್” ದೃಷ್ಟಿಕೋನದ ಸಾಕಾರವಾಗಿ ಬಿಎಲ್ಡಬ್ಲ್ಯೂ ಇದುವರೆಗೆ 11 ದೇಶಗಳಿಗೆ 182 ಡೀಸೆಲ್ ರೈಲು ಇಂಜಿನ್ ಗಳನ್ನು ಯಶಸ್ವಿಯಾಗಿ ರಫ್ತು ಮಾಡಿದೆ ಎಂದು ಮಾಹಿತಿ ನೀಡಿದರು. ಮೊಝಾಬಿಕ್ ಗೆ ಬಿಎಲ್ ಡಬ್ಲ್ಯುನ 10ನೇ 3300 ಎಚ್ ಪಿ ಎಸಿ ಡಿಸೇಲ್ -ಎಸಿ ಡಿಸೇಲ್ ಇಲೆಕ್ಟ್ರಿಕ್ ಲೋಕೋಮೋಟಿವ್ ವನ್ನು 2026 ಫೆ.21ರಂದು ಯಶಸ್ವಿಯಾಗಿ ರಫ್ತು ಮಾಡಲಾಗಿದೆ ಎಂದರು. ಬಿಎಲ್ ಡಬ್ಲ್ಯೂ ಕೇವಲ ಭಾರತೀಯ ರೈಲ್ವೆಯಲ್ಲಿ ಮಾತ್ರವಲ್ಲ ವಿಶ್ವದ ರೈಲ್ವೇ ಮಾರುಕಟ್ಟೆಯಲ್ಲಿ ಶಕ್ತಿ ಯಾಗಿ ತನ್ನ ಹೊರಹೊಮ್ಮಿದೆ. ಈವರೆಗೆ ಮೊಝಾಂಬಿಕಾ, ಸುಡಾನ್, ಅಂಗೊಲಾ, ಮ್ಯಾಯ್ನೆಮಾರ್, ತಾಂಜಾನಿಯಾ, ವಿಯೆಟ್ನಾಂ , ಬಾಂಗ್ಲಾದೇಶ, ಶ್ರೀಲಂಕಾ , ಮಲೇಷ್ಯಾ , ಸೆನೆಗಲ್, ಮಾಲಿ ಸೇರಿದಂತೆ 11 ದೇಶಗಳಿಗೆ ರೈಲು ಇಂಜಿನ್ ಗಳನ್ನು ರಫ್ತು ಮಾಡಲಾಗಿದೆ ಎಂದರು. ಬಿಎಲ್ ಡಬ್ಲ್ಯು ಪ್ಯಾಸೆಂಜರ್ ಲೋಕೋಮೋಟಿವ್ (ಡಬ್ಲ್ಯೂ ಎಪಿ 7), ಸರಕು ಸಾಗಣೆ ಇಲೆಕ್ಟ್ರಿಕ್ ಲೋಕೊಮೋಟಿವ್, ಅಮೃತ ಭಾರತ್ ಲೋಕೋಮೋಟಿವ್ ಸೇರಿದಂತೆ ಮೂರು ವಿಧದ ರೈಲು ಇಂಜಿನ್ ಗಳನ್ನು ತಯಾರಿಸುತ್ತದೆ ಎಂದು ವಿವರಿಸಿದರು. ಪ್ರಧಾನ ಮುಖ್ಯ ಇಲೆಕ್ಟ್ರಿಕ್ ಇಂಜಿನಿಯರ್ ಸುಶೀಲ್ ಕುಮಾರ್ ಶ್ರೀವಾಸ್ತವ, ಪ್ರಧಾನ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ವಿವೇಕ್ ಶೀಲ್, ಉಪ ಜನರಲ್ ಮ್ಯಾನೇಜರ್ ಸಾಗರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಕುಮಾರ್, ಬಿಎಲ್ ಡಬ್ಲ್ಯೂ ನ ಮುಖ್ಯ ವಿದ್ಯುತ್ ಇಂಜಿನಿಯರ್ (ಲೋಕೋ) ಶ್ರೀ ಅರವಿಂದ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಬಿ.ಎಲ್.ಡಬ್ಲೂನಲ್ಲಿ ಪ್ರಯಾಣಿಕರ ಎಲೆಕ್ಟ್ರಿಕ್ ಇಂಜಿನ್ WAP-7, ಸರಕು ಸಾಗಣೆ ಎಲೆಕ್ಟ್ರಿಕ್ ಇಂಜಿನ್ WAG-9, ಅಮೃತ್ ಭಾರತ್ ರೈಲು ಇಂಜಿನ್ ಮುಂತಾದ ಎಲೆಕ್ಟ್ರಿಕ್ ಇಂಜಿನ್ ಗಳ ತಯಾರಿಕಾ ಪ್ರಕ್ರಿಯೆಯನ್ನು ಪತ್ರಕರ್ತರು ಪಡೆದರು. ಲೊಕೋಮೋಟಿವ್ ಇಲೆಕ್ಟ್ರಿಕ್ ಇಂಜಿನಿಯರ್ ಅರವಿಂದ್ ಕುಮಾರ್ ಜೈನ್ ಅವರು ಮಾಹಿತಿ ನೀಡಿದರು. 10 ಮಂದಿ ಪತ್ರಕರ್ತರ ತಂಡವುಡೀಸೆಲ್ ಇಂಜಿನ್ ಗಳ ಉತ್ಪಾದನೆ, ಚಾಲಕ ಸ್ನೇಹಿ ವಿನ್ಯಾಸ, ಡಿಜಿಟಲ್ ನಿಯಂತ್ರಣ ವ್ಯವಸ್ಥೆ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಆಧುನಿಕ ಇಂಜಿನ್ ಕ್ಯಾಬ್ ಗಳನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕರಾದ ಕರಿಷ್ಮಾ ಪಂತ್, ಬಿ.ಎಲ್.ಡಬ್ಲೂನ ಅಧಿಕಾರಿಗಳು ಉಪಸ್ಥಿತರಿದ್ದರು.
IPL ವೇಳಾಪಟ್ಟಿ ಬಿಡುಗಡೆಗೆ ವಿಧಾನಸಭಾ ಚುನಾವಣೆ ತಡೆ
ಮುಂಬೈ: ಅಸ್ಸಾಮ್, ಪಶ್ಚಿಮಬಂಗಾಳ ಮತ್ತು ತಮಿಳುನಾಡು ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ವೇಳಾಪಟ್ಟಿಯ ಘೋಷಣೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ತಡೆಹಿಡಿದಿದೆ. ಮತದಾನ ನಡೆಯುವ ದಿನಾಂಕಗಳು ಮತ್ತು ಹಂತಗಳ ಬಗ್ಗೆ ಸ್ಪಷ್ಟತೆ ಲಭಿಸಿದ ಬಳಿಕ, ಎಷ್ಟು ಸಾಧ್ಯವೋ ಅಷ್ಟು ಬೇಗ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯ ‘ಸ್ಪೋರ್ಟ್ಸ್ಟಾರ್’ಗೆ ತಿಳಿಸಿದ್ದಾರೆ. ಅಲ್ಲಿಯವರೆಗೆ, ಆಟಗಾರರ ಪ್ರಯಾಣ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ತಂಡಗಳು ಕಾದು ನೋಡಬೇಕಾಗಿದೆ. ವಿಳಂಬವು ತಂಡಗಳ ವೇಳಾಪಟ್ಟಿಯನ್ನು ಅಸ್ತವ್ಯಸ್ತಗೊಳಿಸಿದೆ. ಹಾಗಾಗಿ, ಹಿಂದಿನ ಚುನಾವಣಾ ವರ್ಷಗಳ ಅನುಭವಗಳ ಆಧಾರದಿಂದ ತಂಡಗಳು ವಿಳಂಬಕ್ಕೆ ಹೊಂದಿಕೊಳ್ಳಲು ಆಂತರಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿವೆ. ಹಂತಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಕಾರ್ಯಾಚರಣಾ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗುತ್ತಿದೆ. ‘‘ಸಮಯದ ಮಿತಿ ಎದುರಾಗಿದೆ. ಆದರೆ ಇಂಥ ಸಂಗತಿಗಳು ಯಾರ ನಿಯಂತ್ರಣದಲ್ಲೂ ಇಲ್ಲ’’ ಎಂದು ತಂಡವೊಂದರ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಒಮ್ಮೆ ಚುನಾವಣಾ ವೇಳಾಪಟ್ಟಿ ಹೊರಬಿದ್ದ ಬಳಿಕ, ಸಿದ್ಧತೆಗಳು ಭರದಿಂದ ನಡೆಯುತ್ತವೆ ಎಂದು ಅವರು ಹೇಳುತ್ತಾರೆ. 2026ರ ಆವೃತ್ತಿಯ ಐಪಿಎಲ್ ಮಾರ್ಚ್ 28ರಂದು ಆರಂಭಗೊಳ್ಳಲಿದೆ.
Rajasthan | ದಲಿತ ವಿದ್ಯಾರ್ಥಿನಿಗೆ ಜಾತಿ ನಿಂದನೆ ಆರೋಪ: ಇಬ್ಬರು ಪ್ರಾದ್ಯಾಪಕರ ವಿರುದ್ಧ ಪ್ರಕರಣ ದಾಖಲು
ಚುರು (ರಾಜಸ್ಥಾನ): ರಾಜಸ್ಥಾನದ ಚುರುವಿನ ಸರಕಾರಿ ಕಾನೂನು ಕಾಲೇಜಿನ 30 ವರ್ಷದ ವಿದ್ಯಾರ್ಥಿನಿಯೋರ್ವಳು ತನ್ನ ಇಬ್ಬರು ಪ್ರಾದ್ಯಾಪಕರ ವಿರುದ್ಧ ಜಾತಿ ತಾರತಮ್ಯ ಎಸಗಿರುವುದಾಗಿ ಹಾಗೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿರುವುದಾಗಿ ಆರೋಪಿಸಿದ್ದಾಳೆ ಎಂದು ವರದಿಯಾಗಿದೆ. ಪ್ರಾದ್ಯಾಪಕರಾದ ಅಪೂರ್ವ ಶರ್ಮಾ ಹಾಗೂ ಅನಿಲ್ ಸಾರ್ವಜನಿಕ ಸ್ಥಳದಲ್ಲಿ ತನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಮೀನಾ ಮೇಘವಾಲ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 27ರಂದೂ ದೂರು ದಾಖಲಿಸಿದ್ದಾರೆ. ‘‘ನನ್ನನ್ನು ಅನುತ್ತೀರ್ಣಗೊಳಿಸುವುದಾಗಿ ಅವರು ಬೆದರಿಕೆ ಹಾಕಿದ್ದರು ಎಂದು ಮೇಘವಾಲ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಮೇಘವಾಲ್ ಅವರು ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ನ ವಿದ್ಯಾರ್ಥಿನಿ. 2025 ಡಿಸೆಂಬರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೇಘವಾಲ್ ಕೇಳಿದ ಪ್ರಶ್ನೆಯಿಂದ ಅಪೂರ್ವ ಶರ್ಮಾ ಅವರು ಕೋಪಗೊಂಡಿದ್ದರು. ಮೇಘವಾಲ್ ಅವರ ಹೇಳಿಕೆಯ ಪ್ರಕಾರ, ಅಪೂರ್ವ ಶರ್ಮಾ ಅವರು ಆಕೆಗೆ ತಿರಸ್ಕಾರದಿಂದ ಉತ್ತರ ನೀಡಿದರು ಹಾಗೂ ದೂರ ತಳ್ಳಿದರು. ಅಪೂರ್ವ ಶರ್ಮಾ ಅವರು ‘ಚಮಾರಿ’ಯಂತಹ ಜಾತಿ ನಿಂದನೆಯ ಪದ ಬಳಸಿದರು. ‘‘ನೀನು ಕೆಳ ಜಾತಿಯಿಂದ ಬಂದಿದ್ದೀಯ. ನೀನು ಎಲ್ಎಲ್ಬಿ ಮಾಡಲು ಸಾಧ್ಯವಿಲ್ಲ. ಇದು ನಿನ್ನ ಕೆಲಸವಲ್ಲ’’ ಎಂದು ಅವರು ಹೇಳಿದ್ದರು. ‘‘ಎಲ್ಲಾ ವಿದ್ಯಾರ್ಥಿಗಳ ಎದುರು ಚಮಾರಿ ಎಂದು ಕರೆದಿರುವುದರಿಂದ ನನಗೆ ಅವಮಾನವಾಯಿತು’’ ಎಂದು ಮೇಘವಾಲ್ ತಿಳಿಸಿದ್ದಾರೆ. ಪ್ರಾದ್ಯಾಪಕರಾದ ಅಪೂರ್ವ ಶರ್ಮಾ ಅವರು ತನ್ನ ವಿರುದ್ಧ ಜಾತಿ ದ್ವೇಷ ಹೊಂದಿದ್ದರು. ತನ್ನನ್ನು ನಿರಂತರ ಅವಮಾನಿಸುತ್ತಿದ್ದರು. ತನ್ನನ್ನು ಅನುತ್ತೀರ್ಣ ಕೂಡ ಮಾಡಿದರು ಎಂದು ಅವರು ಹೇಳಿದ್ದಾರೆ. ‘‘ಪ್ರಾಯೋಗಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡುವ ಮೂಲಕ ನಾನು ಅನುತ್ತೀರ್ಣವಾಗುವಂತೆ ಅವರು ಮಾಡಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ಮೇಘವಾಲ್ ಅವರ ದೂರಿನ ಆಧಾರದಲ್ಲಿ ಪೊಲೀಸರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತೆಲಂಗಾಣ: ಸರಕಾರಿ ಆಸ್ಪತ್ರೆಯ ಶವಾಗರದಲ್ಲಿರಿಸಿದ್ದ ಮೃತದೇಹ ಕಚ್ಚಿ ತಿಂದ ಬೀದಿ ನಾಯಿ!
ಜಡಚೇರ್ಲ: ತೆಲಂಗಾಣದ ಜಡಚೇರ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರ ದೇಹವನ್ನು ಕಚ್ಚಿ ತಿಂದ ಆಘಾತಕಾರಿ ಘಟನೆ ನಡೆದಿದೆ. ಇದು ಆಸ್ಪತ್ರೆಯ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಗಂಭೀರ ಲೋಪವನ್ನು ಬಹಿರಂಗಪಡಿಸಿದೆ. ಈ ಘಟನೆ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ಜಡಚೇರ್ಲ ಮಂಡಲದ ನಾಗಸಾಲಾ ಗ್ರಾಮದ ಲಾರಿ ಚಾಲಕ ಪೋಲೆ ಭೀಮೇಶ್ವರ್ (32) ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿತ್ತು. ಸಮರ್ಪಕ ವ್ಯವಸ್ಥೆಯ ಕೊರತೆಯಿಂದ ಮೃತದೇಹವನ್ನು ನೆಲದ ಮೇಲೆ ಇರಿಸಲಾಗಿತ್ತು. ಬೀದಿ ನಾಯಿಯೊಂದು ಶವಾಗಾರದ ಒಳಗೆ ಪ್ರವೇಶಿಸಿದೆ ಹಾಗೂ ಮೃತದೇಹದ ಕೈಯನ್ನು ಕಚ್ಚಿದೆ. ಸಿಸಿಟಿವಿ ಕೆಮರಾದಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನಂತರ ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ಸಿಬ್ಬಂದಿ ಆಗಮಿಸಿದಾಗ ನಾಯಿ ಓಡಿತು. ಆಸ್ಪತ್ರೆಯ ಸಿಬ್ಬಂದಿ ನಾಯಿಯನ್ನು ದೂರ ಓಡಿಸಿದರು ಎಂದು ಆಸ್ಪತ್ರೆಯ ಅಧೀಕ್ಷಕರಾದ ಚಂದ್ರಕಲಾ ಅವರು ತಿಳಿಸಿದ್ದಾರೆ.
“ದುಬೈ ಪರಿಸ್ಥಿತಿ ಕುರಿತು ಕನ್ನಡ ಟಿವಿ ಚಾನೆಲ್ ಗಳು ಬಿತ್ತರಿಸುತ್ತಿರುವ ಕಪೋಲಕಲ್ಪಿತ ಸುದ್ದಿಗಳನ್ನು ನಿಲ್ಲಿಸಿ”
'ವಾರ್ತಾ ಭಾರತಿ' ಚಾನಲ್ ಚರ್ಚೆಯಲ್ಲಿ ಡಾ.ರೊನಾಲ್ಡ್ ಕೊಲಾಸೊ ಮನವಿ
‘ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಆಂಧ್ರ ಅಡ್ಡಗಾಲು’; ಕೇಂದ್ರ ಸರಕಾರ ಮಧ್ಯ ಪ್ರವೇಶಿಸಲಿ : ಡಿ.ಕೆ.ಶಿವಕುಮಾರ್
‘ಸರ್ವಪಕ್ಷ ನಿಯೋಗ ಕೊಂಡೊಯ್ಯಲು ತಯಾರಿ’
ಪ್ರಶಸ್ತಿ ಪುರಸ್ಕೃತ ಇರಾಕ್ನ ಮಹಿಳಾ ಹಕ್ಕುಗಳ ಕಾರ್ಯಕರ್ತೆಯ ಗುಂಡಿಕ್ಕಿ ಹತ್ಯೆ
ಬಾಗ್ದಾದ್: ಪ್ರಶಸ್ತಿ ಪುರಸ್ಕೃತ ಇರಾಕ್ನ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯಾನಾರ್ ಮೊಹಮ್ಮದ್ ಅವರನ್ನು ಬಾಗ್ದಾದ್ನಲ್ಲಿ ಸೋಮವಾರ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಅವರು ನಡೆಸುತ್ತಿದ್ದ ಸಂಘಟನೆಯೊಂದು ತಿಳಿಸಿದೆ. ಬೆಳಗ್ಗೆ 9:00 ಗಂಟೆಯ ವೇಳೆಗೆ ಮೋಟಾರ್ಸೈಲ್ನಲ್ಲಿ ಆಗಮಿಸಸಿದ ಇಬ್ಬರು ಬಂದೂಕುಧಾರಿಗಳು ಆಕೆಯ ನಿವಾಸದ ಹೊರಗೆ ಗುಂಡುಹಾರಾಟ ನಡೆಸಿದರೆಂದು, ಇರಾಕ್ನಲ್ಲಿನ ಮಹಿಳಾ ಹಕ್ಕುಗಳ ಸಂಘಟನೆ (ಒಡಬ್ಲ್ಯುಎಫ್ಐ) ವರದಿ ಮಾಡಿದೆ. ಗುಂಡಿನ ದಾಳಿಯಲ್ಲಿ ಯಾನಾರ್ ಅವರಿಗೆ ಗಂಭೀರವಾದ ಗಾಯಗಳಾಗಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ,ಅಲ್ಲಿ ಅವರು ಕೊನೆಯುಸಿರೆಳೆದರೆಂದು’’ ಓಡಬ್ಲ್ಯುಎಫ್ಐ ಹೇಳಿಕೆ ತಿಳಿಸಿದೆ. ಹಿಂಸಾಚಾರದಿಂದ ಸಂತ್ರಸ್ತರಾದ ಮಹಿಳೆಯರಿಗೆ ರಕ್ಷಣೆನ್ನು ನೀಡುವ ಉದ್ದೇಶದೊಂದಿಗೆ 2003ರಲ್ಲಿ ಸ್ಥಾಪನೆಯಾದ ಓಡಬ್ಲ್ಯುಎಫ್ಐಗೆ ಯಾನಾರ್ ಅವರು ಸಹಸಂಸ್ಥಾಪಕಿಯಾಗಿದ್ದರು. ಇರಾಕ್ನಲ್ಲಿ ಅಲ್ಪಸಂಖ್ಯಾತರು ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವಾಗುವಲ್ಲಿ ಯಾನಾರ್ ಅವರ ಸಾಧನೆಯನ್ನು ಪರಿಗಣಿಸಿ 2016ರಲ್ಲಿ ನಾರ್ವೆಯ ಮಾನವಹಕ್ಕುಗಳಿಗಾಗಿನ ಪ್ರತಿಷ್ಠಿತ ರಾಫ್ಟೊ ಪ್ರಶಸ್ತಿಯನ್ನು ಯಾನಾರ್ ಅವರಿಗೆ ನೀಡಲಾಗ್ತಿು.
ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ರಮಝಾನ್ ಕಿಟ್ ವಿತರಣೆ
ಬಜ್ಪೆ: ಅಡ್ಡೂರು ಸೆಂಟ್ರಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಆಯ್ದ 350 ಕುಟುಂಬಗಳಿಗೆ ರವಿವಾರ ಅಡ್ಡೂರು ಕಮ್ಯೂನಿಟಿ ಸೆಂಟರ್ ನಲ್ಲಿ ರಮಝಾನ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷ ಇಬ್ರಾಹೀಂ ಅಲಕೆ, ರಂಝಾನ್ ತಿಂಗಳು ದಾನ, ಸಹಾನುಭೂತಿ ಮತ್ತು ಸಹೋದರತ್ವದ ಸಂಕೇತವಾಗಿದೆ. ಸಮಿತಿಯ ಸಮಾಜಮುಖಿ ಚಟುವಟಿಕೆಗಳ ಭಾಗವಾಗಿ ಅಡ್ಡೂರು ಆಸುಪಾಸಿನ ಒಟ್ಟು 350 ಅಗತ್ಯವಿರುವ ಕುಟುಂಬಗಳಿಗೆ ರಂಜಾನ್ ಕಿಟ್ಗಳನ್ನು ವಿತರಿಸಲಾಯಿತು. ಉಪವಾಸ ಆಚರಿಸುವ ಕುಟುಂಬಗಳಿಗೆ ಆಹಾರ ಮತ್ತು ದಿನನಿತ್ಯದ ಅವಶ್ಯಕ ವಸ್ತುಗಳ ನೆರವು ದೊರಕಬೇಕು ಎಂಬ ಆಶಯದಿಂದ ಯೋಜನೆ ರೂಪಿಸಿ, ಪ್ರತಿ ಕಿಟ್ ಕೂಡಾ ಒಂದು ಕುಟುಂಬಕ್ಕೆ ರಂಝಾನ್ ಅವಧಿಯಲ್ಲಿ ಉಪಯುಕ್ತವಾಗುವಂತೆ ಸಮರ್ಪಕ ಪ್ರಮಾಣದಲ್ಲಿ ಸಿದ್ಧಪಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸಮಿತಿ ಈ ಸೇವಾ ಕಾರ್ಯವನ್ನು ಕೈಗೊಳ್ಳುತ್ತಿದ್ದು, ನಿರಂತರವಾಗಿ ಈ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ನುಡಿದರು. ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಪದಾಧಿಕಾರಿಗಳಾದ ಅಬ್ದುಲ್ ಸಲಾಮ್, ಅಬ್ದುಲ್ ಅಝಾಕ್ ಮಂಜೆಟ್ಟಿ, ರಮ್ಲಾನ್, ಅಬ್ದುಲ್ ಖಾದರ್ ಎ.ಕೆ., ಅಬ್ದುಲ್ ಅಝಾಕ್ ಪಿ., ಮುಸ್ತಫಾ, ಕಮಲ್ ಮೊದಲಾದವರು ಉಪಸ್ಥಿತರಿದ್ದರು.
ಪಶ್ಚಿಮ ಏಶ್ಯಾ ಸಂಘರ್ಷ: ತನ್ನ ಮೊದಲ ಯಾನದಲ್ಲಿ ದುಬೈನಿಂದ 149 ಅತಂತ್ರ ಪ್ರಯಾಣಿಕರನ್ನು ದಿಲ್ಲಿಗೆ ಕರೆತಂದ ಏರ್ ಇಂಡಿಯಾ
ಹೊಸದಿಲ್ಲಿ: ಪಶ್ಚಿಮ ಏಶ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ಏರ್ಇಂಡಿಯಾ ಮಂಗಳವಾರ ದುಬೈನಲ್ಲಿ ಸಿಕ್ಕಿಹಾಕಿಕೊಂಡಿದ್ದ 149 ಪ್ರಯಾಣಿಕರನ್ನು ದಿಲ್ಲಿಗೆ ಕರೆತಂದಿದೆ. ಇದು ಕಳೆದ ಮೂರು ದಿನಗಳಲ್ಲಿ ಭಾರತೀಯ ವಾಯುಯಾನ ಸಂಸ್ಥೆಯಿಂದ ಪಶ್ಚಿಮ ಏಶ್ಯಾದಿಂದ ಭಾರತಕ್ಕೆ ಮೊದಲ ಯಾನವಾಗಿದ್ದು,ಏರ್ಇಂಡಿಯಾ ವಿಮಾನವು ಮಂಗಳವಾರ ಬೆಳಿಗ್ಗೆ 10:58ಕ್ಕೆ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಸಂಬಂಧಿತ ಬೆಳವಣಿಗೆಯೊಂದರಲ್ಲಿ ಕಳೆದೆರಡು ದಿನಗಳಿಂದ ದುಬೈನಲ್ಲಿ ಸಿಕ್ಕಿಹಾಕಿಕೊಂಡಿದ್ದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ 143 ಕಾಕ್ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿಗಳು ಇನ್ನೊಂದು ವಿಮಾನದ ಮೂಲಕ ದಿಲ್ಲಿಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ. ಏರ್ ಇಂಡಿಯಾ ಇತರ ವಿಮಾನಯಾನ ಸಂಸ್ಥೆಗಳು ಮಾಡಿದಂತೆ ಈ ವಿಶೇಷ ಯಾನಗಳ ಕುರಿತು ಯಾವುದೇ ಪೂರ್ವ ಪ್ರಕಟಣೆಯನ್ನು ನೀಡಿರಲಿಲ್ಲ. ‘ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾನವನ್ನು ನಿರ್ವಹಿಸಲು ಒಂದು ಅವಕಾಶ ಮಾತ್ರ ಲಭ್ಯವಿದೆ ಎಂದು ನಮಗೆ ಇಂದು ಬೆಳಿಗ್ಗೆ ಗೊತ್ತಾಯಿತು ಮತ್ತು ಅದನ್ನು ಈ ವಿಶೇಷ ಯಾನಕ್ಕಾಗಿ ಬಳಸಿಕೊಳ್ಳಲು ನಾವು ತಕ್ಷಣ ನಿರ್ಧರಿಸಿದ್ದೆವು ಎಂದು ಅಧಿಕಾರಿಯೋರ್ವರು ತಿಳಿಸಿದರು. ಏರ್ಇಂಡಿಯಾ ವಿಮಾನವು ಮೊದಲೇ ಟಿಕೆಟ್ಗಳನ್ನು ಬುಕ್ ಮಾಡಿದ್ದ,ಆದರೆ ಬಿಕ್ಕಟಿನಿಂದಾಗಿ ಪ್ರಯಾಣಿಸಲು ಸಾಧ್ಯವಾಗದಿದ್ದ ತನ್ನ ಪ್ರಯಾಣಿಕರನ್ನು ಮಾತ್ರ ಕರೆ ತಂದಿದೆ. ದಿಲ್ಲಿಗೆ ಆಗಮಿಸಿದ ಪ್ರಯಾಣಿಕರು ಸಂಘರ್ಷದಿಂದಾಗಿ ದುಬೈನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಪರಿಸ್ಥಿತಿ ಬಹುತೇಕ ಸಾಮಾನ್ಯವಾಗಿದೆ,ಹೆಚ್ಚಿನ ಉದ್ವಿಗ್ನತೆಯಿಲ್ಲ. ಆದರೆ ವಿಮಾನಗಳ ರದ್ದತಿ ಮತ್ತು ಇತರ ಸಮಸ್ಯೆಗಳಿಂದಾಗಿ ಜನರು ಆರ್ಥಿಕ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಉಳಿದುಕೊಳ್ಳುವುದು ತುಂಬ ದುಬಾರಿಯಾಗಿದೆ. ಏರ್ ಇಂಡಿಯಾ ನಮಗೆ ಸಂಪೂರ್ಣ ಮಾರ್ಗದರ್ಶನ ನೀಡಿತ್ತು. ಅಲ್ಲಿಯ ಸರಕಾರವೂ ಸಾಧ್ಯವಿದ್ದಷ್ಟು ನೆರವನ್ನು ಒದಗಿಸುತ್ತಿದೆ’ ಎಂದು ಪ್ರಯಾಣಿಕರೋರ್ವರು ತಿಳಿಸಿದರು.
ಐರೋಪ್ಯ ಒಕ್ಕೂಟಕ್ಕೂ ವಿಸ್ತರಿಸಿದ ಸಮರ ಭೀತಿ: ಅಮೆರಿಕ-ಇಸ್ರೇಲ್ಗೆ ಫ್ರಾನ್ಸ್, ಜರ್ಮನಿ, ಬ್ರಿಟನ್ ಸಾಥ್
ಟೆಹ್ರಾನ್: ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ ನಡೆಸಿದ ಜಂಟಿ ವಾಯುದಾಳಿ ನಂತರ ಭುಗಿಲೆದ್ದ ಸಂಘರ್ಷದ ಕಿಚ್ಚು ಮಧ್ಯಪ್ರಾಚ್ಯದ ನಂತರ ಈಗ ಐರೋಪ್ಯ ಒಕ್ಕೂಟಕ್ಕೂ ತಾಗುವ ಭೀತಿ ಎದುರಾಗಿದೆ. ಅಮೆರಿಕ- ಇಸ್ರೇಲ್ ಶನಿವಾರ ನಡೆಸಿದ 'ಆಪರೇಷನ್ ಎಪಿಕ್ ಫ್ಯೂರಿ' ಹೆಸರಿನ ಏರ್ಸ್ಟ್ರೈಕ್ನಲ್ಲಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಕುದಿಯುತ್ತಿರುವ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್ಜಿಸಿ) ಕೊಲ್ಲಿರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳು, ರಾಯಭಾರ ಕಚೇರಿಗಳನ್ನು ಗುರಿಯಾಗಿಸಿಕೊಂಡು ಮಂಗಳವಾರವೂ ದಾಳಿ ಮುಂದುವರಿಸಿದೆ. ದೋಹಾ, ಮನಾಮ, ದುಬೈನ ಹಲವು ಇರಾನ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ.ಇದರ ಮಧ್ಯೆ, ಕೊಲ್ಲಿರಾಷ್ಟ್ರಗಳ ಮೇಲಿನ ಇರಾನ್ ದಾಳಿಯನ್ನು ಖಂಡಿಸಿರುವ ಐರೋಪ್ಯ ಒಕ್ಕೂಟದ ಫ್ರಾನ್ಸ್, ಜರ್ಮನಿ, ಬ್ರಿಟನ್ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಅಮೆರಿಕ-ಇಸ್ರೇಲ್ಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ''ಇರಾನ್ ಕ್ಷಿಪಣಿ ಸಾಮರ್ಥ್ಯ ನಾಶಪಡಿಸಲು ಅಗತ್ಯ ರಕ್ಷಣಾತ್ಮಕ ಕ್ರಮ ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ. ನಮ್ಮ ಕೊಲ್ಲಿಮಿತ್ರ ರಾಷ್ಟ್ರಗಳನ್ನು ರಕ್ಷಿಸಲು ನಾವು ಅಗತ್ಯ ನೆರವು ನೀಡುತ್ತೇವೆ,'' ಎಂದು ಹೇಳಿವೆ. ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಯುಎಸ್ ಪರ ನಿಂತಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಅವಶ್ಯಕತೆ ಬಿದ್ದರೆ ಹಿಂದೂ ಮಹಾಸಾಗರದಲ್ಲಿರುವ ಡಿಯಾಗೋ ಗಾರ್ಸಿಯಾ ಮತ್ತು ಇಂಗ್ಲೆಂಡ್ನ ಗ್ಲೌಸೆಸ್ಟರ್ಶೈರ್ನಲ್ಲಿರುವ ಆರ್ಎಎಫ್ ವಾಯುನೆಲೆಗಳನ್ನು ಬಳಸಿಕೊಳ್ಳುವಂತೆ ಟ್ರಂಪ್ಗೆ ಅನುಮತಿ ನೀಡಿದ್ದಾರೆಂದೂ ವರದಿಗಳು ಹೇಳಿವೆ. 3 ರಫೇಲ್ ರವಾನಿಸಿದ ಫ್ರಾನ್ಸ್ ಇರಾನ್ ದಾಳಿಯಿಂದ ಯುಎಇಯಲ್ಲಿರುವ ತನ್ನ ವಾಯುನೆಲೆಗಳನ್ನು ರಕ್ಷಿಸಿಕೊಳ್ಳಲು ಫ್ರಾನ್ಸ್ ಅಬುಧಾಬಿ ಸಮೀಪದ ದಾಫ್ರಾ ಏರ್ಬೇಸ್ಗೆ ಮೂರು ರಫೇಲ್ ಫೈಟರ್ ಜೆಟ್ಗಳನ್ನು ರವಾನಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ರೊಚ್ಚಿಗೆದ್ದಿರುವ ಇರಾನ್ ವಿದೇಶಾಂಗ ಸಚಿವಾಲಯ, ''ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ನಮ್ಮ ಸಮರದಲ್ಲಿ ನೀವೇನಾದರೂ ಭಾಗಿಯಾದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ,'' ಎಂದು ಐರೋಪ್ಯ ಒಕ್ಕೂಟದ ಈ ಮೂರೂ ರಾಷ್ಟ್ರಗಳಿಗೆ ಎಚ್ಚರಿಸಿದೆ.ಲೆಬನಾನ್ ಮೇಲೆ ಭೂದಾಳಿ: ಹೆಜ್ಬುಲ್ಲಾಬಂಡುಕೋರರನ್ನು ಹೊಂದಿರುವ ಲೆಬನಾನ್ನಲ್ಲಿ ಹೆಚ್ಚುವರಿ ಕಾರ್ಯತಂತ್ರಗಳ ಸಾಧನ ಮೂಲಕ ಹಿಡಿತ ಸಾಧಿಸುವಂತೆ ಇಸ್ರೇಲ್ ರಕ್ಷಣಾ ಸಚಿವರು ಯೋಧರಿಗೆ ಸೂಚನೆ ನೀಡಿದ ಬೆನ್ನಲ್ಲೇ, ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್ ಗಡಿಯಲ್ಲಿಭೂದಾಳಿ ಆರಂಭಿಸಿವೆ. ಅಮೆರಿಕ ರಾಯಭಾರಿ ಕಚೇರಿ ಧ್ವಂಸ ಸೌದಿ ಅರೇಬಿಯಾದ ರಿಯಾದ್, ಕುವೈತ್ನ ಕುವೈತ್ ಸಿಟಿ, ಜೋರ್ಡಾನ್ನ ಅಮಾನ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳನ್ನು ಹಾಗೂ ಕುವೈತ್ನ ಅಮೆರಿಕ ಮಿಲಿಟರಿ ನೆಲೆ ಅರಿಫ್ಜನ್ ಕ್ಯಾಂಪ್ ಗುರಿಯಾಗಿಸಿಕೊಂಡು ಇರಾನ್ನ 'ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾಫ್ಸ್ರ್' ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಬೆನ್ನಲ್ಲೇ ರಾಯಭಾರ ಕಚೇರಿಗಳನ್ನು ಬಂದ್ ಮಾಡಲಾಗಿದ್ದು, ತುರ್ತು ಸೇವೆಗಳನ್ನಷ್ಟೇ ನೀಡಲಾಗುತ್ತಿದೆ. ಬಹರೇನ್, ಜೋರ್ಡಾನ್, ಕತಾರ್, ಕುವೈತ್, ಸೌದಿ ಅರೇಬಿಯಾ ಸೇರಿದಂತೆ ಕೊಲ್ಲಿರಾಷ್ಟ್ರಗಳಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ, ಇತರ ಇಲಾಖೆಯ ಅಧಿಕಾರಿಗಳೂ ಹಾಗೂ ಅಮೆರಿಕ ಪ್ರಜೆಗಳು ಅಲ್ಲಿಂದ ತೊರೆಯುವಂತೆ ಅಮೆರಿಕ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ. ಯುಎಸ್ ರೇಡಾರ್ ನಾಶ? ಕೊಲ್ಲಿರಾಷ್ಟ್ರ ಕತಾರ್ನಲ್ಲಿರುವ ಅಮೆರಿಕದ ಅತಿದೊಡ್ಡ 'ಎಎನ್/ಎಫ್ಪಿಎಸ್-132' ರೇಡಾರ್ಅನ್ನು ಇರಾನ್ ಸೇನೆ ಸಂಪೂರ್ಣ ನಾಶಪಡಿಸಿದೆ ಎಂದು 'ಟೆಹ್ರಾನ್ ಟೈಮ್ಸ್' 'ಎಕ್ಸ್'ನಲ್ಲಿ ಹೇಳಿಕೊಂಡಿದೆ. ಈ ರೇಡಾರ್ 5,000 ಕಿಲೋಮೀಟರ್ ವ್ಯಾಪ್ತಿಯವರೆಗೆ ಟ್ರ್ಯಾಕಿಂಗ್ ಮಾಡುವ ಸಾಮರ್ಥ್ಯ ಹೊಂದಿತ್ತು. ಕತಾರ್ನ ಅಲ್ ಉದೈದ್ ವಾಯುನೆಲೆಯಲ್ಲಿ ಅಮೆರಿಕವು 2013ರಲ್ಲಿ1.1 ಬಿಲಿಯನ್ ಡಾಲರ್ ವೆಚ್ಚದಲ್ಲಿಈ ರೇಡಾರ್ಅನ್ನು ನಿರ್ಮಿಸಿತ್ತು. ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಈ ರೇಡಾರ್ ಅತ್ಯಗತ್ಯವಾಗಿತ್ತು. ಇದರ ನಾಶದ ಕುರಿತು ಅಮೆರಿಕ ಯಾವುದೇ ಸ್ಪಷ್ಟನೆ ನೀಡಿಲ್ಲ.
ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು
ಉಳ್ಳಾಲ: ರೈಲು ಡಿಕ್ಕಿಯಾಗಿ ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸಂಭವಿಸಿದೆ. ಮೃತ ಪಟ್ಟ ವ್ಯಕ್ತಿ ಯನ್ನು ಕುಂಪಲ ಲಕ್ಷ್ಮಿಗುಡ್ಡೆ ನಿವಾಸಿ ಕಿರಣ(47) ಎಂದು ಗುರುತಿಸಲಾಗಿದೆ. ಅವರು ರೈಲು ಟ್ರ್ಯಾಕ್ ಬಳಿ ಕುಳಿತಿದ್ದ ವೇಳೆ ರೈಲು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ವೇಳೆ ಮೃತ ವ್ಯಕ್ತಿಯ ಕಿಸೆಯಲ್ಲಿ ಮೊಬೈಲ್ ಪತ್ತೆ ಆಗಿದೆ. ಈ ಮೊಬೈಲ್ ಆಧಾರದಲ್ಲಿ ಗುರುತು ಪತ್ತೆ ಹಚ್ಚಿದ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಗಲ್ಫ್ನಲ್ಲಿನ ಅಮೆರಿಕದ ಅತಿ ದೊಡ್ಡ ರಾಡಾರ್ ವ್ಯವಸ್ಥೆ ಧ್ವಂಸ: ಇರಾನ್
ಟೆಹರಾನ್,ಮಾ.3: ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಅತಿ ದೊಡ್ಡ ರಾಡಾರ್ ವ್ಯವಸ್ಥೆ ಎಎನ್/ಎಫ್ಪಿಎಸ್-132 ಅನ್ನು ನಾಶಪಡಿಸಿರುವುದಾಗಿ ಇರಾನ್ ಘೋಷಿಸಿದೆ. 5 ಸಾವಿರ ಕಿ.ಮೀ.ವರೆಗಿನ ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಈ ರಾಡಾರ್ ಹೊಂದಿತ್ತು. ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗೆ ಎಎನ್/ಎಫ್ಪಿಎಸ್-132ನಂತಹ ರಾಡಾರ್ಗಳು ಅತ್ಯಗತ್ಯವಾಗಿದೆ. 1.1 ಶತಕೋಟಿ ಡಾಲರ್ ವೆಚ್ಚದ ಈ ರಾಡಾರ್ ಅನ್ನು ಅಮೆರಿಕವು 2013ರಲ್ಲಿ ಸ್ಥಾಪಿಸಿತ್ತು. ನಿಖರವಾಗಿ ನಡೆಸಲಾದ ಕ್ಷಿಪಣಿ ದಾಳಿಯೊಂದರಲ್ಲಿ ರಾಡಾರ್ ಅನ್ನು ಸಂಪೂರ್ಣವಾಗಿ ನಾಶಪಡಿಸಿರುವುದಾಗಿ ಐಆರ್ಜಿಸಿಯು ಹೇಳಿಕೊಂಡಿದೆ. ಆನಂತರ ಕತಾರಿ ಅಧಿಕಾರಿಗಳು ಕೂಡಾ ಅದನ್ನು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಅಮೆರಿಕದ ಕಣ್ಗಾವಲು ಕಾರ್ಯಾಚರಣೆಯಲ್ಲಿ ತೀವ್ರ ವ್ಯತ್ಯಯವುಂಟಾಗಿರುವುದಾಗಿ ವರದಿಗಳು ತಿಳಿಸಿವೆ. ರಾಜಧಾನಿ ಟೆಹರಾನ್ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಕೆರ್ಮಾನ್ ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ 13 ಮಂದಿ ಇರಾನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಒಂದು ಮಿಲಿಟರಿ ಹೆಲಿಕಾಪ್ಟರ್ ಮೇಲೂ ದಾಳಿ ನಡೆಸಲಾಗಿದೆಯೆಂದು ವರದಿಗಳು ತಿಳಿಸಿವೆ.
ಕೊಟ್ಟೂರು | ರೇಣುಕಾಚಾರ್ಯ ಜಯಂತಿ ಆಚರಣೆ
ಕೊಟ್ಟೂರು : ರೇಣುಕಾಚಾರ್ಯರು ಮಹಾನ್ ಚೇತನ್ಯದ ಗುರುವಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಅಂಬರೀಶ್ ಜಿ.ಕೆ. ಹೇಳಿದರು. ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂಜ್ಯ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬೆಣ್ಣೆಹಳ್ಳಿ ಹಿರೇಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಉಪನ್ಯಾಸ ನೀಡಿದರು. ಕಟ್ಟಿಮನಿ ಹಿರೇಮಠದ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಅಡಿಕಿ ಮಂಜುನಾಥ, ಅಯ್ಯನಹಳ್ಳಿ ಕೊಟ್ರಯ್ಯ, ಎಂಎಂಜೆ ಮೂಗಣ್ಣ, ಕೆ.ಎಂ. ಮಲ್ಲಿಕಾರ್ಜುನ, ಆಟವಾಳಿಗೆ ಭೋಜರಾಜ, ಶಿರಸ್ತೇದಾರ್ ಅನ್ನದಾನೇಶ ಪತ್ತಾರ, ಚಂದ್ರ ನಾಯ್ಕ, ಕಂದಾಯ ನಿರೀಕ್ಷಕ ಡಿ. ಶಿವಕುಮಾರ, ಗ್ರಾಮ ಆಡಳಿತಾಧಿಕಾರಿ ಹರೀಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭೂಸೇನೆ ಬಳಕೆಯ ಸಾಧ್ಯತೆಯಿಲ್ಲ: ಇಸ್ರೇಲ್
ಟೆಹರಾನ್: ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಹಲವು ವಾರಗಳ ತನಕ ನಡೆಸಲು ಇಸ್ರೇಲ್ ಸೇನೆ ಸಜ್ಜಾಗಿದೆ. ಆದರೆ ಯುದ್ಧದಲ್ಲಿ ಭೂಸೇನೆಯನ್ನು ಬಳಸುವ ಸಾಧ್ಯತೆಯಿಲ್ಲವೆಂದು ಇಸ್ರೇಲ್ ಸೇನೆಯ ವಕ್ತಾರರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ಇರಾನ್ ವಿರುದ್ಧ ವಾರಗಟ್ಟಲೆ ಯುದ್ಧ ನಡೆಯುವ ಸಾಧ್ಯತೆಯಿದ್ದು, ಅದಕ್ಕಾಗಿ ಸನ್ನದ್ಧರಾಗಿದ್ದೇವೆ’’ ಎಂದು ಲೆ.ಕ. ನಾದನ್ ಷೋಷಾನಿ ತಿಳಿಸಿದ್ದಾರೆ.ಆದರೆ ಪರಿಸ್ಥಿತಿಯ ಬೆಳವಣಿಗೆಗಳನ್ನು ಅವಲಂಭಿಸಿ ಸೇನಾ ಕಾರ್ಯಾಚರಣೆಯ ಅವಧಿ ಬದಲಾಗಲೂ ಬಹುದು ಎಂದವರು ಹೇಳಿದ್ದಾರೆ.ಈವರೆಗೆ ಯುದ್ಧದಲ್ಲಿ ಇಸ್ರೇಲ್ ಸಾಧಿಸಿರುವ ಪ್ರಗತಿ ಸಕಾರಾತ್ಮಕವಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇರಾನ್ನಲ್ಲಿ ಭೂಸೇನೆಯನ್ನು ನಿಯೋಜಿಸುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘‘ ಸದ್ಯದ ಮಟ್ಟಿಗೆ ಇಸ್ರೇಲಿನ ಭೂಸೇನಾಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿಲ್ಲ. ಅದು ಈ ಹೊತ್ತಿಗೆ ಕಾರ್ಯಸಾಧ್ಯವೂ ಅಲ್ಲ’’ ಎಂದು ಅವರು ಹೇಳಿದರು.
ವಿಜಯನಗರ | ಮಾ.7ರಂದು ತುಂಗಭದ್ರಾ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ
ವಿಜಯನಗರ / ಹೊಸಪೇಟೆ : ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂಬ ಆಗ್ರಹದೊಂದಿಗೆ ಮಾರ್ಚ್ 7ರಂದು ರಾಯಚೂರು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ತಿಳಿಸಿದೆ. ಸಮಾವೇಶದ ಪೋಸ್ಟರ್ ಅನ್ನು ಹೊಸಪೇಟೆಯಲ್ಲಿ ಸಂಘದ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ಬಿಡುಗಡೆ ಮಾಡಿದರು. ಸಮಾವೇಶವನ್ನು ಮಾಜಿ ಕಾರ್ಮಿಕ ಸಚಿವರು ಹಾಗೂ ಹಿರಿಯ ಕಾರ್ಮಿಕ ನಾಯಕ ಎಸ್. ಕೆ. ಕಾಂತ್ ಉದ್ಘಾಟಿಸಲಿದ್ದು, ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ'ರೊಜಾರಿಯೊ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಖಾಯಂ ಹುದ್ದೆಗಳು ಇದ್ದರೂ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಸರ್ಕಾರದ ನಿರ್ದೇಶನ ಹಾಗೂ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆ ಇದ್ದರೂ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವ ಕ್ರಮ ಜಾರಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಕಳೆದ 25–30 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ನಿರಂತರ ಕೆಲಸ ನೀಡಿ ಖಾಯಂ ಕೆಲಸಗಾರರಾಗಿ ಪರಿಗಣಿಸಿ ಬದುಕುವ ವೇತನ ಸೇರಿದಂತೆ ಎಲ್ಲಾ ಹಕ್ಕುಗಳನ್ನು ರಕ್ಷಿಸಬೇಕು ಎಂಬುದು ಸಮಾವೇಶದ ಪ್ರಮುಖ ಒತ್ತಾಯವಾಗಿದೆ. ಸಿಲ್ಟ್ ತೆರವು ಮತ್ತು ಸೇವಾ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡುವ ಬದಲು ಕಾರ್ಮಿಕರ ಕೈಗಳಿಗೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ. ಯರಮರಸ್, ಸಿರಿವಾರ, ಸಿಂಧನೂರು, ವಡ್ಡರಟ್ಟಿ, ಬಳ್ಳಾರಿ, ಮುಂಡರಗಿ ಹಾಗೂ ಮುನಿರಾಬಾದ್ ವಿಭಾಗದ ಕಾರ್ಮಿಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘ ತಿಳಿಸಿದೆ.
ನಂದಿಕೂರು: ಎಂ11ಎನರ್ಜಿ ಘಟಕ ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ
ಪಡುಬಿದ್ರಿ, ಮಾ.3: ಇಲ್ಲಿಗೆ ಸಮೀಪದ ನಂದಿಕೂರಿನಲ್ಲಿ ಕಾರ್ಯಾಚರಿ ಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಹಾಗೂ ಗ್ಲಿಸರಿನ್ ಉತ್ಪಾದನಾ ಘಟಕ ಮೆಸರ್ಸ್ ಎಂ11 ಎನರ್ಜಿಟ್ರಾನ್ಸಿಸನ್ ಪ್ರೈವೆಟ್ ಲಿ.ನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ಕರ್ನಾಟಕ ವಾಟರ್ (ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ ಆಫ್ ಪೊಲ್ಯೂಶನ್) ಆ್ಯಕ್ಟ್ನ 34ನೇ ನಿಯಮದಡಿ ಈ ಘಟಕದ ಕಾರ್ಯಾಚರಣೆ ಯನ್ನು ನಿಲ್ಲಿಸಲು ಮಂಡಳಿ ನಿರ್ದೇಶನ ನೀಡಿದೆ. ನಂದಿಕೂರು ಕೈಗಾರಿಕಾ ಪ್ರದೇಶದ ಪ್ಲಾಟ್ ನಂ.155 ಮತ್ತು 169ರಲ್ಲಿ ಈ ಘಟಕ ಕಾರ್ಯಾಚರಿ ಸುತ್ತಿತ್ತು. ಕಾಯ್ದೆಯ ನಿಬಂಧನೆಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. ಘಟಕದಿಂದ ಆಗುತ್ತಿರುವ ವಿವಿಧ ರೀತಿಯ ಮಾಲಿನ್ಯ ಹಾಗೂ ಅದರಿಂದ ಹೊರಬರುತ್ತಿರುವ ದುರ್ವಾಸನೆಯಿಂದ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು, ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಕಳೆದ ಪಲಿಮಾರು ಗ್ರಾಮಸಭೆ ಯಲ್ಲೂ ಕಂಪೆನಿ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ದುರ್ವಾಸನೆ ಸಮಸ್ಯೆ ಕುರಿತು ಗುರ್ಮೆ ಸುರೇಶ್ ಶೆಟ್ಟಿ ಕಂಪೆನಿ ಪರಿಸರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸ್ಥಳೀಯರ ದೂರಿನ ಮೇರೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಲವು ಬಾರಿ ಘಟಕಕ್ಕೆ ಭೇಟಿ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕೊಂಡೊಯ್ದಿದ್ದರು. ತಜ್ಞರ ವರದಿ ಆಧರಿಸಿ ಕಂಪೆನಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮಂಡಳಿ ಆದೇಶಿಸಿದ್ದು, ಕಂಪೆನಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಫೆ.18ರಂದು ಆದೇಶವನ್ನು ಹೊರಡಿಸಿದೆ. ಮುಂದಿನ ಆದೇಶದವರೆಗೆ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಿ ಘಟಕವನ್ನು ಮುಚ್ಚುವಂತೆ ತಿಳಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಅವರು ಇಲ್ಲಿ ಯಾವುದೇ ಚಟುವಟಿಕೆ ನಡೆಯದಂತೆ ನೋಡಿ ಕೊಳ್ಳುವಂತೆ ಸೂಚಿಸಲಾಗಿದೆ. ಘಟಕದ ವಿದ್ಯುತ್ ಸಂಪರ್ಕವನ್ನು ಕೂಡಲೇ ನಿಲ್ಲಿಸುವಂತೆ ಮೆಸ್ಕಾಂನ ಆಡಳಿತ ನಿರ್ದೇಶಕರಿಗೂ ಸೂಚಿಸಲಾಗಿದೆ. ಪರಿಸರ ಮಂಡಳಿ ಪದೇ ಪದೇ ನೀಡಿದ ಆದೇಶವನ್ನು ಪಾಲಿಸದೇ ಉಲ್ಲಂಘಿಸಲಾಗಿದ್ದು, ಮಾಲಿನ್ಯವನ್ನು ತಡೆ ಯಲು, ಮಾಲಿನ್ಯಕಾರಕ ತ್ಯಾಜ್ಯದ ನೀರನ್ನು ಆವರಣದ ಹೊರಗೆ ಬಿಡದಂತೆ ಸೂಚಿಸಿದ್ದರೂ ಆದೇಶವನ್ನು ಉಲ್ಲಂಘಿಸಿ ತ್ಯಾಜ್ಯದ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ತ್ಯಾಜ್ಯದ ನೀರನ್ನು ಆವರಣದೊಳಗೆ ಮುಕ್ತವಾಗಿ ಸಂಗ್ರಹಿಸಿರುವುದು ಮಂಡಳಿಯ ಸ್ಥಳೀಯ ಅಧಿಕಾರಿಗಳು ತನಿಖೆಗಾಗಿ ಬಂದಾಗ ಕಂಡುಬಂದಿತ್ತು ಎಂದೂ ಮಂಡಳಿ ತಿಳಿಸಿದೆ.
ಪಾಕ್ ಪಡೆಗಳಿಂದ 67 ತಾಲಿಬಾನ್ ಯೋಧರ ಹತ್ಯೆ
ಕಾಬೂಲ್,ಮಾ.3: ಅಫ್ಘಾನ್ ಗಡಿಯಲ್ಲಿ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಪಾಕಿಸ್ತಾನಿ ಭದ್ರತಾ ಪಡೆಗಳು ಸೋಮವಾರ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ 67 ಅಫ್ಘಾನ್ ತಾಲಿಬಾನ್ ಯೋಧರನ್ನು ಹತ್ಯೆಗೈದಿವೆ ಹಾಗೂ 16 ಪ್ರದೇಶಗಳಲ್ಲಿ ದಾಳಿಗಳನ್ನು ಹಿಮ್ಮೆಟ್ಟಿಸಿವೆ. ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಅವರು ಅಫ್ಘಾನಿಸ್ತಾನದ ತಾಲಿಬಾನ್ ವಿರುದ್ಧ ಫೆಬ್ರವರಿ 26ರಿಂದ ಆರಂಭಿಸಿರುವ ‘ಆಪರೇಶನ್ ಗಝಬ್ಲಿಲ್ ಹಕ್’ ಕಾರ್ಯಾಚರಣೆಯ ವಿವರಗಳನ್ನು ಇಸ್ಲಾಮಾಬಾದ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೀಡಿದರು. ಖೈಬರ್ಪಖ್ತೂನ್ಖ್ವಾ ಪ್ರಾಂತದುದ್ದಕ್ಕೂ ರಾತ್ರೋರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 40 ತಾಲಿಬಾನ್ ಯೋಧರು ಸಾವನ್ನಪ್ಪಿರುವುದಾಗಿ ತರಾರ್ ತಿಳಿಸಿದ್ದಾರೆ. ಪಾಕಿಸ್ತಾನದ ಭದ್ರತಾಪಡೆಗಳು ಈವರೆಗೆ 435 ಅಫ್ಘಾನ್ ಬಂಡುಕೋರರನ್ನು ಹತ್ಯೆಗೆದಿದ್ದು, ಅವರಲ್ಲಿ 630 ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದರು.
ವಿಜಯನಗರ | 74 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ
ವಿಜಯನಗರ (ಹೊಸಪೇಟೆ) : ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ 74 ಫಲಾನುಭವಿಗಳಿಗೆ ಕಾನೂನುಬದ್ಧವಾಗಿ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ ಹಾಗೂ ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಪಾಪಿನಾಯಕನಹಳ್ಳಿಯ ಚಿಂದುಲ ನಾಗಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ಆದೇಶದಂತೆ ನಿವೇಶನ ರಹಿತರಿಗೆ ಮೂಲ ಸೌಕರ್ಯಗಳೊಂದಿಗೆ ನಿವೇಶನ ಒದಗಿಸುವುದರ ಜೊತೆಗೆ ಮನೆ ನಿರ್ಮಾಣ ವ್ಯವಸ್ಥೆಯೂ ಮಾಡಲಾಗಿದೆ. ಈ ಯೋಜನೆಯನ್ನು ಹೊರ ರಾಜ್ಯಗಳಿಂದ ಬಂದವರಿಗಷ್ಟೇ ಅಲ್ಲದೆ ಸ್ಥಳೀಯರಿಗೂ ಅವಕಾಶ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡುವಂತೆ ಪೋಷಕರಿಗೆ ಸಲಹೆ ನೀಡಿದರು. ಪಾಪಿನಾಯಕನಹಳ್ಳಿ ಗ್ರಾಮಸಭೆಯಲ್ಲಿ 97 ಫಲಾನುಭವಿಗಳು ಆಯ್ಕೆಯಾಗಿದ್ದು, ಈ ಪೈಕಿ 74 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ 23 ನಿವೇಶನಗಳಲ್ಲಿ 3 ಮಂದಿಗೆ ರೇಷನ್ ಕಾರ್ಡ್ ಇಲ್ಲದ ಕಾರಣ, 6 ಮಂದಿಗೆ ದಾಖಲೆಗಳ ಕೊರತೆಯಿಂದ ಹಾಗೂ 3 ಪ್ರಕರಣಗಳು ತಾಲ್ಲೂಕು ಪಂಚಾಯಿತಿಯಲ್ಲಿ ಬಾಕಿ ಇರುವುದರಿಂದ ಹಕ್ಕುಪತ್ರ ನೀಡಲಾಗಿಲ್ಲ. ಇವುಗಳಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಇನ್ನೂ 11 ಅರ್ಜಿಗಳು ಇತರ ವಸತಿ ಯೋಜನೆಗಳಡಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆಲಂ ಭಾಷಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀರಪ್ಪ, ವಸತಿ ಇಲಾಖೆಯ ನೋಡಲ್ ಅಧಿಕಾರಿ ಮಹೇಶ್, ಆಡಳಿತಾಧಿಕಾರಿ ಸಿಂಧು ಅಂಗಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಭಾರತದ ಬಳಿ 25 ದಿನಕ್ಕಾಗುವಷ್ಟು ಕಚ್ಚಾ ತೈಲ ಮತ್ತು ಸಂಸ್ಕರಿತ ತೈಲಗಳ ದಾಸ್ತಾನು: ವರದಿ
ಹೊಸದಿಲ್ಲಿ: ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ನಡೆಸುತ್ತಿರುವ ಜಂಟಿ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ. ಈ ನಡುವೆ, ಭಾರತದ ಬಳಿ 25 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಮತ್ತು ಸಂಸ್ಕರಿತ ತೈಲಗಳ ದಾಸ್ತಾನು ಇದೆ. ಕಚ್ಚಾ ತೈಲ, ಎಲ್ಪಿಜಿ ಹಾಗೂ ಎಲ್ಎನ್ಜಿ ಆಮದು ಮಾಡಲು ಪರ್ಯಾಯ ಮೂಲಗಳನ್ನು ಶೋಧಿಸಲಾಗುತ್ತಿದೆ ಎಂದು ಮಂಗಳವಾರ ಸರಕಾರಿ ಮೂಲಗಳು ತಿಳಿಸಿವೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂಲಗಳ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಲೆದೋರಿದ್ದರೂ, ಈಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಹೇಳಲಾಗಿದೆ. ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಅವರು ಸಚಿವಾಲಯ ಹಾಗೂ ಸಾರ್ವಜನಿಕ ವಲಯದ ಕಂಪನಿಗಳ ಹಿರಿಯ ಅಧಿಕಾರಿಗಳೊಂದಿಗೆ ಕಚ್ಚಾ ತೈಲ, ಎಲ್ಪಿಜಿ ಮತ್ತು ಇತರೆ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜು ಪರಿಸ್ಥಿತಿಯ ಕುರಿತು ಪರಾಮರ್ಶೆ ನಡೆಸಿದರು. ಬದಲಾಗುತ್ತಿರುವ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಡಲಾಗುತ್ತಿದ್ದು, ದೇಶದಲ್ಲಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಖಚಿತಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಭಾರತವು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶವಾಗಿದೆ.
ಬಳ್ಳಾರಿ | ಕೈವಾರ ತಾತಯ್ಯ ಜಯಂತಿ ಆಚರಣೆ
ಯುವಪೀಳಿಗೆ ಶಿಕ್ಷಣದಿಂದ ಮಾತ್ರ ಮುಂಚೂಣಿಗೆ ಬರಲು ಸಾಧ್ಯ : ಪಿ.ಗಾದೆಪ್ಪ
ಮೂಡುಬಿದಿರೆಯ ಗೃಹರಕ್ಷಕ ಪಾಂಡುರಾಜ್ ಗೆ ಮುಖ್ಯಮಂತ್ರಿ ಚಿನ್ನದ ಪದಕ
ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ತಾಲೂಕು ಗೃಹರಕ್ಷಕ ದಳ ಘಟಕದ ಹಿರಿಯ ಗೃಹ ರಕ್ಷಕ , ಘಟಕಾಧಿಕಾರಿ ಯಾಗಿಯೂ ಸೇವೆ ಸಲ್ಲಿಸಿರುವ ಪಾಂಡುರಾಜ ಅವರ ಸೇವೆಯನ್ನು ಗುರುತಿಸಿ 2024-25 ನೇ ಸಾಲಿನ ಮುಖ್ಯಮಂತ್ರಿಯವರ ಚಿನ್ನದ ಪದಕ ಗೌರವ ನೀಡಲಾಗಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ದಳ ಪೌರ ರಕ್ಷಣೆ ಮತ್ತು ಎಸ್.ಡಿ.ಆರ್.ಎಫ್ ಅವರಿಗೆ ನೀಡಲಾಗುವ ಗೌರವಕ್ಕೆ ದ.ಕ ಜಿಲ್ಲೆಯಿಂದ ಏಕೈಕ ಪ್ರತಿನಿಧಿಯಾಗಿ ಪಾಂಡುರಾಜ ಅವರು ಗೌರವ ಸ್ವೀಕರಿಸಿದ್ದಾರೆ. ಬೆಂಗಳೂರಿನ ಆರ್.ವಿ. ಮುಂಡ್ಕೂರ್ ಅಗ್ನಿಶಾಮಕ ತರಬೇತಿ ಅಕಾಡೆಮಿ ಅವರಣದಲ್ಲಿ ಕಳೆದ ಮಂಗಳವಾರ ಜರಗಿದ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್ ಅವರು ಸೇವಾಸಾಧಕರಿಗೆ ಪದಕ ಪ್ರದಾನ ಮಾಡಿ ಗೌರವಿಸಿದರು. ಗೃಹರಕ್ಷಕರಾಗಿ 1986 ರಿಂದ ಹಾಗೂ ಘಟಕಾಧಿಕಾರಿಯಾಗಿ 2015ರಿಂದ 2024 ರ ಅವಧಿಗೆ ಪಾಂಡುರಾಜ್ ಒಟ್ಟು 38 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸ್ಥಳೀಯ ಚುನಾವಣೆ ಸಹಿತ ಕೇರಳ, ಮಧ್ಯಪ್ರದೇಶ ಹಾಗೂ ತಮಿಳು ನಾಡು ವಿಧಾನ ಸಭಾ ಹಾಗೂ ಲೋಕ ಸಭಾ ಚುನಾವಣಾ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಣೆ, ಮೈಸೂರು, ಕೊಡಗು ದಸರಾ, ಧರ್ಮಸ್ಥಳ, ವೇಣೂರು, ಮಹಾಮಸ್ತಕಾಭಿಷೇಕ ಸಹಿತ ಮಹತ್ವದ ಕಾರ್ಯಕ್ರಮಗಳ ಸಂದರ್ಭ ದಲ್ಲಿ ಕಾನೂನು ಸುವ್ಯವಸ್ಥೆ ಬಂದೋಬಸ್ತು ಕರ್ತವ್ಯ, ಟ್ರಾಫಿಕ್ ವಾರ್ಡನ್, ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಣೆ, ಸಾಮಾಜಿಕ ಕಳಕಳಿ , ಕೋವಿಡ್ ಸಂಕಷ್ಟದ ಅವಧಿಯಲ್ಲಿ ಅವರು ಗಮನಾರ್ಹ ಸೇವೆ ಸಲ್ಲಿಸಿ 2024ರಲ್ಲಿ ನಿವೃತ್ತರಾಗಿದ್ದರು.
ಕಲಬುರಗಿ | ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ: ನೋಂದಣಿಗೆ ಅರ್ಜಿ ಅಹ್ವಾನ
ಕಲಬುರಗಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು Exploring Nature's Pharmacy: Potentials of Medicinal and Aromatic Plants for Health, Livelihoods, Bio-economy and Conservation ವಿಷಯದ ಕುರಿತು ಇದೇ ಮಾರ್ಚ್ 24 ರಿಂದ 26ರ ವರೆಗೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಮ್ಮೇಳನದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದಾರೆ. ಈ ಸಮ್ಮೇಳನದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು, ಯುವ ಉದ್ಯಮದಾರರು ಭಾಗವಹಿಸಬಹುದಾಗಿದೆ. ಅಲ್ಲದೇ, ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧವನ್ನು ಸಹ ಮಂಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆಯಾದ ಸಂಶೋಧನಾ ಪ್ರಬಂಧಕ್ಕೆ ನಗದು ಬಹುಮಾನವನ್ನು ನೀಡಲಾಗುತ್ತದೆ. ಆಸಕ್ತರು (Registration Link: https://forms.gle/xn1ek2pwuBTXmNyz7 )ಲಿಂಕ್ ಮೂಲಕ 2026ರ ಮಾರ್ಚ್ 20 ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಅಧಿಕಾರಿಗಳನ್ನು (ಮೊಬೈಲ್ ಸಂ. 9620767819 ಮತ್ತು 9743084194) ಸಂಪರ್ಕಿಸಲು ಅಥವಾ ಅಕಾಡೆಮಿಯ https: //kstacademy.in ವೆಬ್ಸೈಟ್ನ್ನು ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಆಸಕ್ತರು ಮೇಲ್ಕಂಡ ರಾಷ್ಟ್ರೀಯ ಸಮ್ಮೇಳನದ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಸುರಕ್ಷಿತ ವಾಯು ಮಾರ್ಗಗಳನ್ನು ತೆರೆದ UAE; ಗಂಟೆಗೆ 48 ವಿಮಾನಯಾನಗಳನ್ನು ನಿರ್ವಹಿಸುವ ಸಾಮರ್ಥ್ಯ: ಸಚಿವ ಅಲ್ ಮರ್ರಿ
ಅಬುಧಾಬಿ: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಸಂಘರ್ಷದಿಂದ ಗಲ್ಫ್ ಪ್ರದೇಶದಲ್ಲಿ ಉಂಟಾದ ಉದ್ವಿಗ್ನತೆಯ ನಡುವೆಯೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸುರಕ್ಷಿತ ವಾಯು ಮಾರ್ಗ ತೆರೆದಿದೆ ಎಂದು ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಮಂಗಳವಾರ ತಿಳಿಸಿದ್ದಾರೆ ಎಂದು gulfnews.com ವರದಿ ಮಾಡಿದೆ. ಪ್ರಸ್ತುತ ಈ ಮಾರ್ಗಗಳ ಮೂಲಕ ಗಂಟೆಗೆ 48 ವಿಮಾನಯಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗಲ್ಫ್ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಇದರ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದರು. ಇರಾನ್ನೊಂದಿಗಿನ ಅಮೆರಿಕ –ಇಸ್ರೇಲ್ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಪ್ರಾದೇಶಿಕ ಪರಿಣಾಮಗಳನ್ನು ಮನಗಂಡು ಸರ್ಕಾರ ಕ್ರಮೇಣ ಕಾರ್ಯಾಚರಣೆಗಳನ್ನು ಪುನರಾರಂಭಿಸುತ್ತಿದೆ. ಮಾರ್ಚ್ 1ರಿಂದ ಮಾರ್ಚ್ 3ರವರೆಗೆ 60 ವಿಮಾನಗಳ ಮೂಲಕ 17,498 ಪ್ರಯಾಣಿಕರು ಸಂಚರಿಸಿದ್ದಾರೆ. ಮುಂದಿನ ಹಂತದಲ್ಲಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೊಂದಿಗೆ 80 ವಿಮಾನಗಳನ್ನು ನಿಗದಿಪಡಿಸಲಾಗಿದ್ದು, 27,000 ಪ್ರಯಾಣಿಕರಿಗೆ ಸೇವೆ ನೀಡುವ ಯೋಜನೆ ಇದೆ ಎಂದು ಅಲ್ ಮರ್ರಿ ಮಾಹಿತಿ ನೀಡಿದರು.
ಬೆಂಗಳೂರು ಪೊಲೀಸರ ಬಲೆಗೆ ಬಿದ್ದ 31 ಪ್ರಕರಣಗಳ ನಟೋರಿಯಸ್ ಕಳ್ಳ: 1.40 ಕೋಟಿ ರೂ ಮೌಲ್ಯದ ಚಿನ್ನಾಭರಣ, ನಗದು ಜಪ್ತಿ
Bengaluru Police Operation - ಸಿಸಿಟಿವಿ ಫೂಟೇಜ್ ಆಧಾರವಾಗಿಟ್ಟುಕೊಂಡು ಬೆಂಗಳೂರು ಪೊಲೀಸರು ಮನೆಗಳಿಗೆ ಕನ್ನ ಹಾಕುತ್ತಿದ್ದ ನಟೋರಿಯಸ್ ಕಳ್ಳ ಮತ್ತು ಆತನ ಸಹಚರನನ್ನು ಬಲೆಗೆ ಬೀಳಿಸಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ದು ಅಲಿಯಾಸ್ ನಾಗರಾದ್ ಮತ್ತು ಮುನಿರಾಜು ಬಂಧಿತ ಆರೋಪಿಗಳು. ಇವರು ಬೀಗ ಹಾಕಿರುವ ಮನೆಯನ್ನೇ ಗುರಿಯಾಗಿರಿಸಿ ಚಿನ್ನಾಭರಣ, ನಗದು ಕಳ್ಳತನ ಮಾಡುತ್ತಿದ್ದರು. ಆರೋಪಿಗಳಿಂದ ಪೊಲೀಸರು ಸುಮಾರು 1.4 ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
ಮಸ್ಕಿ | ಸಂಘಟನಾ ಸ್ಫೂರ್ತಿ ಪ್ರಶಸ್ತಿ; ಹುಸೇನ್ ಸಾಬ್ ಗುರಿಕಾರರಿಗೆ ರಾಜ್ಯ ಮಟ್ಟದ ಸನ್ಮಾನ
ಮಸ್ಕಿ : ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹುಸೇನ್ ಸಾಬ್ ಗುರಿಕಾರ ಅವರು ಸಂಘಟನಾ ಕ್ಷೇತ್ರದಲ್ಲಿ ತೋರಿದ ವಿಶಿಷ್ಟ ಸೇವೆ ಹಾಗೂ ನಿಸ್ವಾರ್ಥ ಸಮರ್ಪಣೆಯ ಹಿನ್ನೆಲೆ ಅವರಿಗೆ ರಾಜ್ಯ ಮಟ್ಟದ “ಸಂಘಟನಾ ಸ್ಫೂರ್ತಿ ಪ್ರಶಸ್ತಿ” ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ.), ಬೆಂಗಳೂರು ವತಿಯಿಂದ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲಾಖೆಯ ನೌಕರರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯೊಂದಿಗೆ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ತಮ್ಮ ಸಮಯ, ಪರಿಶ್ರಮ ಹಾಗೂ ಸೇವಾ ಮನೋಭಾವದ ಮೂಲಕ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಸಂಘದ ಪದಾಧಿಕಾರಿಗಳು ಪ್ರಶಂಸಿಸಿದರು. ಹುಸೇನ್ ಸಾಬ್ ಗುರಿಕಾರ ಅವರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ ರೀತಿ ಗಮನಾರ್ಹವಾಗಿದ್ದು, ಅವರ ಶೈಕ್ಷಣಿಕ ಸಾಧನೆ ಹಾಗೂ ಸಂಘಟನಾ ಕೊಡುಗೆಯನ್ನು ಪರಿಗಣಿಸಿ ಈ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಅಭಿನಂದಿಸಲಾಗಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಮಾರಂಭದಲ್ಲಿ ಸಭಾಪತಿ ಯುಟಿ ಖಾದರ್, ರಾಜ್ಯಾಧ್ಯಕ್ಷ ಚೌಡಪ್ಪ, ಪ್ರಧಾನ ಕಾರ್ಯದರ್ಶಿ ರವಿ ಪ್ರಕಾಶ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಜಿಲ್ಲಾಧ್ಯಕ್ಷ ನಾಗೇಶ ಗೌಡ್ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಔರಾದ್ | ನಾಯಿಗಳ ದಾಳಿಯಿಂದ ಜಿಂಕೆ ರಕ್ಷಣೆ
ಔರಾದ್ : ತಾಲೂಕಿನ ಡೊಂಗರಗಾಂವ್ ಗ್ರಾಮದ ಸಮೀಪ ಮಂಗಳವಾರ ಜಿಂಕೆಯೊಂದನ್ನು ನಾಯಿಗಳು ದಾಳಿ ಮಾಡುತ್ತಿದ್ದ ವೇಳೆ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಧಾವಿಸಿ ರಕ್ಷಿಸಿದ ಘಟನೆ ನಡೆದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಆಕಾಶ್ ಕಡೆಮನಿ ಮತ್ತು ರವಿ ದರಬಾರೆ ಅವರು ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವುದನ್ನು ಗಮನಿಸಿ ನಾಯಿಗಳನ್ನು ಓಡಿಸಿದ್ದಾರೆ. ಅದೇ ವೇಳೆ ಅಲ್ಲಿಂದ ತೆರಳುತ್ತಿದ್ದ ಹೊಕ್ರಾಣಾ ಪೊಲೀಸ್ ಠಾಣೆಯ ಮುಖ್ಯ ಪೆದೆ ಸಾಯಿಲು ಗೌಡ ಹಾಗೂ ಉಮಾಕಾಂತ್ ಕಾಂಬೆಳೆ ಘಟನೆ ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದೇವೇಳೆ ಆ ಮಾರ್ಗದಿಂದ ಸಾಗುತ್ತಿದ್ದ ವೈದ್ಯ ಡಾ.ಯುನುಸ್ ಖಾನ್ ಅವರು ತಕ್ಷಣ ಧಾವಿಸಿ ಗಾಯಗೊಂಡ ಜಿಂಕೆಯ ಕಾಲಿಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಅರಣ್ಯ ಗಸ್ತು ಪಾಲಕ ಬಸವರಾಜ್ ಕುಂಬಾರ್ ಸ್ಥಳಕ್ಕೆ ಆಗಮಿಸಿ ಜಿಂಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದರು. ಅರಣ್ಯ ಇಲಾಖೆ ಸಿಬ್ಬಂದಿಗಳಾದ ನರಸಿಂಗ್, ಸುಭಾಷ್, ವಸಂತ್ ಸೇರಿದಂತೆ ಸ್ಥಳೀಯರು ಸಹಕರಿಸಿದರು. ಮಾನವೀಯತೆ ಮೆರೆದ ನಾಗರಿಕರು ಹಾಗೂ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಲ್ಫ್ ಯುದ್ಧ: ದುಬೈಯಲ್ಲಿ ಸಿಲುಕಿರುವ ಪ್ರವಾಸಿಗರು
ಮಂಗಳೂರು, ಮಾ.3: ಗಲ್ಫ್ ಯುದ್ಧದಿಂದ ವಿಮಾನ ಹಾರಾಟ ರದ್ದಾದ ಕಾರಣ 8 ಮಂದಿ ಪ್ರವಾಸಿಗರು ದುಬೈಯಲ್ಲಿ ಮತ್ತು ಉಮ್ರಾ ಯಾತ್ರೆ ಕೈಗೊಂಡಿರುವ ಓರ್ವ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದಾರೆ ಎಂದು ದ.ಕ.ಜಿಲ್ಲಾಡಳಿತ ತಿಳಿಸಿದೆ. ಮಂಗಳೂರಿನ ಶ್ರೀನಾಥ್ ಪಿ. ಶೆಟ್ಟಿ, ಸಾಧಿಕಾ ಶೆಟ್ಟಿ ಮತ್ತವರ ಪುತ್ರಿ ಶ್ರಿಯಾ, ಸುರತ್ಕಲ್ನ ಕಸ್ತೂರಿ ಸದಾಶಿವ ಪೈ, ಕಸ್ತೂರಿ ಸಂಧ್ಯಾಪೈ, ಕಸ್ತೂರಿ ಸುಬ್ರಹ್ಮಣ್ಯ ಪೈ, ಮಂಗಳೂರಿನ ಕೆ. ಪ್ರತಿಭಾ ನಾಯಕ್ ಮತ್ತು ಶಶಾಂಕ್ ಶಶಿಧರ ನಾಯಕ್ ದುಬೈನಲ್ಲಿ ಸಿಲುಕಿರುವ ಬಗ್ಗೆ ದ.ಕ.ಜಿಲ್ಲಾಡಳಿತ ಮಾಹಿತಿ ನೀಡಿದೆ. ಸುರತ್ಕಲ್ನ ಕಸ್ತೂರಿ ಸದಾಶಿವ ಪೈ ಕುಟುಂಬ, ಪ್ರತಿಭಾ ನಾಯಕ್ ಮತ್ತು ಶಶಾಂಕ್ ನಾಯಕ್ ಮಾ.5ರಂದು ಊರಿಗೆ ಮರಳಬೇಕಿತ್ತು. ಉಮ್ರಾ ಯಾತ್ರೆಗೆ ತೆರಳಿದ್ದ 28ರ ಹರೆಯದ ಮುಹಮ್ಮದ್ ಅತೀಕ್ ಕುರ್ಲೊಟ್ಟು ಅಬ್ದುಲ್ ಕೂಡ ಸೌದಿ ಅರೇಬಿಯಾ ದಲ್ಲಿ ಸಿಲುಕಿದ್ದಾರೆ. ಎಲ್ಲರೂ ಸುರಕ್ಷಿತರಾಗಿದ್ದು, ಊರಿಗೆ ಮರಳಲು ನೆರವಾಗುವಂತೆ ಕೋರಿರುವುದಾಗಿ ದ.ಕ. ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
Bengaluru | ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ; ತಾಯ್ನಾಡಿಗೆ ಮರಳಿದ 700ಕ್ಕೂ ಅಧಿಕ ಮಂದಿ
ಬೆಂಗಳೂರು : ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಹಿನ್ನೆಲೆ ಅಬುಧಾಬಿಯಲ್ಲಿ ಸಿಲುಕಿದ್ದ ಸುಮಾರು 220 ಕನ್ನಡಿಗರು ಸೇರಿದಂತೆ 700 ಮಂದಿ ರಾಜಧಾನಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಯುದ್ದಪೀಡಿತ ಮಧ್ಯಪ್ರಾಚ್ಯದಲ್ಲಿ ಸಿಲುಕಿದ್ದ ಕನ್ನಡಿಗರು ಸೇರಿದಂತೆ ಹಲವು ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಲು ನಡೆಸಿದ ಕಾರ್ಯಚರಣೆಯಲ್ಲಿ 2 ವಿಶೇಷ ವಿಮಾನಗಳ ಮೂಲಕ ಸುಮಾರು 700 ಮಂದಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಮೊದಲ ವಿಮಾನದಲ್ಲಿ 213 ಪ್ರಯಾಣಿಕರು ಆಗಮಿಸಿದರೆ, 2ನೆ ವಿಮಾನದಲ್ಲಿ 490 ಜನರು ಮರಳಿದ್ದಾರೆ. ಅಬುಧಾಬಿಯಿಂದ ಸುರಕ್ಷಿತವಾಗಿ ಬೆಂಗಳೂರುಗೆ ಆಗಮಿಸಿದ ಪ್ರಯಾಣಿಕ ಗಿರಿಮಲ್ಲಪ್ಪ ಮಾತನಾಡಿ, ಯುದ್ಧದಿಂದಾಗಿ ವಿಮಾನಯಾನ ಬಂದ್ ಆಗಿತ್ತು. ಸಹಜವಾಗಿ ನಾವು ಆತಂಕಗೊಂಡೆವು. ಸುರಕ್ಷಿತವಾಗಿ ಹೊಟೇಲ್ನಲ್ಲಿ ಇದ್ದೆವು. ಬಳಿಕ ವಿಮಾನಯಾನ ಪ್ರಾರಂಭವಾಯಿತು ಎಂದು ಹೇಳಿದರು. ಎರಡು ದಿನಗಳ ಹಿಂದೆ ನಾವು ಅಬುಧಾಬಿಗೆ ಬಂದಾಗ ಕ್ಷೀಪಣಿ ದಾಳಿ ನಡೆಯುತ್ತಿತ್ತು. ನಾವಿದ್ದ ಹೋಟೆಲ್ ಸುತ್ತಮುತ್ತ ಹಲವು ಸ್ಫೋಟಗಳು ಆಗುತ್ತಿರುವ ಶಬ್ದ ಕೇಳುತ್ತಿತ್ತು. ಜೊತೆಗೆ ವಿಮಾನ ನಿಲ್ದಾಣದ ಮೇಲಿಂದ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇದರಿಂದ ತುಂಬಾ ಭಯವಾಗಿತ್ತು. ಕೊನೆಗೂ ದೇಶಕ್ಕೆ ಬಂದಿರುವುದು ತುಂಬಾ ಖುಷಿಯಾಗುತ್ತಿದೆ ಎಂದು ಮತ್ತೋರ್ವ ಪ್ರಯಾಣಿಕ ಯೋಗನಂದ್ ತಿಳಿಸಿದರು. ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸೇರಿದಂತೆ ಜೆಡಿಎಸ್ ವಿಧಾನ ಪರಿಷತ್ತಿನ ಸದಸ್ಯ ಭೋಜೇಗೌಡ ಹಾಗೂ ಅವರ ಕುಟುಂಬದವರು ಸಹ ಬೆಂಗಳೂರಿಗೆ ಸುರಕ್ಷಿತವಾಗಿ ಬಂದಿಳಿದ್ದಾರೆ.
ಶಹಾಪುರ | ನಿವೇಶನ, ಸ್ಮಶಾನ ಭೂಮಿ ಮಂಜೂರಿಗೆ ಒತ್ತಾಯಿಸಿ ಪ್ರತಿಭಟನೆ
ಗ್ರಾಮೀಣ ನಿರಾಶ್ರಿತರನ್ನು ಪರಿಗಣಿಸಿ ಸೂಕ್ತ ಕ್ರಮ : ಸಚಿವ ದರ್ಶನಾಪುರ
ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ; ಪಕ್ಷದ ಒಳಗಲ್ಲ, ನನ್ನ ಹೋರಾಟ ಪಕ್ಷದ ಹೊರಗೆ : ಡಿ.ಕೆ.ಶಿವಕುಮಾರ್
► ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ► ‘ಕೆಪಿಸಿಸಿ ಅಧ್ಯಕ್ಷಗಿರಿ: ಹೊಸ ರಕ್ತ, ಹೊಸ ಆಲೋಚನೆ ಪಕ್ಷಕ್ಕೆ ಬೇಕು’
ಮಧ್ಯಪ್ರಾಚ್ಯ ಒಂದು ರೀತಿಯಲ್ಲಿ ಕುಲುಮೆಯಲ್ಲಿ ಬೇಯುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಇನ್ನೇನು ಇಡೀ ಮಿಡಲ್ ಈಸ್ಟ್ ಭವಿಷ್ಯವೇ ನಾಶವಾಗಿ ಹೋಗುವ ಹಂತಕ್ಕೆ ಬಂದು ನಿಂತಿದೆ. ಜಗತ್ತಿನ ಶೇಕಡಾ 20ಕ್ಕೂ ಹೆಚ್ಚು ಭಾಗ ಕಚ್ಚಾ ತೈಲ ಪೂರೈಕೆ ಮಾಡುವ ಹರ್ಮುಜ್ ಜಲಸಂಧಿ ಬಂದ್ ಆಗಿಬಿಟ್ಟಿದೆ, ಇನ್ನೊಂದು ಕಡೆ ಕುವೈತ್, ಯುಎಇ, ಕತಾರ್ ಸೇರಿ ಅಮೆರಿಕದ ಸೇನಾ ನೆಲೆಗಳು ಇರುವ
ವಿವಿಧ ಬೇಡಿಕೆಗಾಗಿ ದಲಿತ ಹಕ್ಕುಗಳ ಸಮಿತಿಯಿಂದ ಧರಣಿ
ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಲಾಯಿತು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ದಲಿತರಿಗೆ ದೇವಸ್ಥಾನ ಪ್ರವೇಶ ತಡೆ, ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರತಮ್ಯ ತಡೆಗಟ್ಟಲು ಜಿಲ್ಲೆಗೊಂದು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಉಪಯೋಜನೆಯ ಸಾಧಕ- ಬಾಧಕ ಕುರಿತು ವಿಧಾನ ಸಭೆಯ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.28ರಷ್ಟಿರುವ ದಲಿತ ಸಮುದಾಯ ಇಂದಿಗೂ ಅಪಮಾನ, ದೌರ್ಜನ್ಯ, ದಬ್ಬಾಳಿಕೆಗೆ ಬಲಿಯಾಗುತ್ತಿವೆ. ರಾಜ್ಯದಲ್ಲಿರುವ ಒಟ್ಟು ದಲಿತ ಕುಂಟುಂಬಗಳಲ್ಲಿ ಶೇ.9ರಷ್ಟು ಕುಟುಂಬಗಳು ಮಾತ್ರ ಕೃಷಿಭೂಮಿ ಹೊಂದಿವೆ. ಉಳಿದ ಶೇ.91ರಷ್ಟು ಕುಟುಂಬಗಳು ಕೃಷಿಕೂಲಿಕಾರರಾಗಿ ಮತ್ತು ಅಸಂಘಟಿತರಾಗಿ ಕೂಲಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್ ಬಡವರ ಮನೆಗಳಿಗೆ ತಲುಪುವಂತಾಗಬೇಕು ಎಂದರು. ಧರಣಿಯಲ್ಲಿ ಸಮಿತಿಯ ಮುಖಂಡರಾದ ರವಿ ವಿ.ಎಂ., ನಾಗರತ್ನ ನಾಡಾ, ಕೃಷ್ಣ ಇನ್ನಾ, ಸುಶೀಲಾ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.
ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಮಲ್ಪೆ, ಮಾ.3: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿರುವ ಘಟನೆ ಮಲ್ಪೆ ಕಲ್ಮಾಡಿ ಸಮೀಪ ನಡೆದಿದೆ. ಮೃತರನ್ನು ಅಂಬಾಗಿಲು ಸುಬ್ರಹ್ಮಣ್ಯ ನಗರ ನಿವಾಸಿ ಸುರೇಶ ಪೂಜಾರಿ (55) ಎಂದು ಗುರುತಿಸಲಾಗಿದೆ. ಉಡುಪಿ ಕಾರು ಶೋ ರೂಮ್ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿಕೊಂಡಿದ್ದ ಇವರು, ಮಾನಸಿಕ ಮಾನಸಿಕ ಖಿನ್ನತೆಯಿಂದ ಫೆ.21ರಂದು ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾ.2ರಂದು ಮಧ್ಯಾಹ್ನ ಮಲ್ಪೆಯ ಕಲ್ಮಾಡಿಯ ಸೇತುವೆ ಹತ್ತಿರ ಪಾಪ ನಾಶಿನಿ ನದಿಯ ನೀರಿನಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಾನ್: 200ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಟೆಹರಾನ್ನಿಂದ ಕೋಮ್ಗೆ ಸ್ಥಳಾಂತರ
ಹೊಸದಿಲ್ಲಿ: ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಜಂಟಿ ಆಕ್ರಮಣದ ಹಿನ್ನೆಲೆಯಲ್ಲಿ ಟೆಹರಾನ್ನ ವಿವಿಧ ವಿಶ್ವವಿದ್ಯಾಲಯಗಳ 200ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಕೋಮ್ ನಗರಕ್ಕೆ ಸ್ಥಳಾಂತರಿಸಲಾಗಿದೆ. ರಾಜಧಾನಿ ಟೆಹರಾನ್ನಿಂದ ದಕ್ಷಿಣಕ್ಕೆ ಸುಮಾರು 140 ಕಿ.ಮೀ. ದೂರದಲ್ಲಿರುವ ಕೋಮ್ ಇರಾನ್ನ ಇತರ ನಗರಗಳಿಗೆ ಹೋಲಿಸಿದರೆ ಸುರಕ್ಷಿತ ನಗರವಾಗಿದೆ. ಈ ವಿದ್ಯಾರ್ಥಿಗಳನ್ನು ಮಂಗಳವಾರ ಬೆಳಗ್ಗೆ ಬಸ್ಗಳಲ್ಲಿ ಕೋಮ್ ನಗರಕ್ಕೆ ಸಾಗಿಸಲಾಯಿತು. ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದವರು. ಅವರು ಟೆಹರಾನ್ನ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಾಹಿದ್ ಬಹೇಷ್ಟಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಟೆಹರಾನ್ನ ಇರಾನ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದರು. ಕೆಲವು ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಇರಾನ್ನಲ್ಲಿ ಕಲಿಯುತ್ತಿದ್ದಾರೆ. ‘‘ಟೆಹರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ವ್ಯವಸ್ಥೆಗಳನ್ನು ಮಾಡಿದೆ. ವಿದ್ಯಾರ್ಥಿಗಳನ್ನು ಐದು ಬಸ್ಗಳಲ್ಲಿ ಸಾಗಿಸಲಾಯಿತು. ಅವರು ಕೋಮ್ ನಗರವನ್ನು ಕ್ಷೇಮವಾಗಿ ತಲುಪಿದ್ದಾರೆ. ಇರಾನ್ನ ಇತರ ನಗರಗಳಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ’’ ಎಂದು ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಪ್ರತಿನಿಧಿ ಡಾ. ಮುಹಮ್ಮದ್ ಮುಮಿನ್ ಖಾನ್ ತಿಳಿಸಿದರು. ‘‘ಟೆಹರಾನ್ನಲ್ಲಿ ನಮಗೆ ನಿರಂತರವಾಗಿ ಸ್ಫೋಟಗಳ ಸದ್ದು ಕೇಳುತ್ತಿತ್ತು. ನಾವು ಕೋಮ್ ತಲುಪಿದ್ದೇವೆ. ಈಗ ನಮಗೆ ಸುರಕ್ಷತೆಯ ಭಾವನೆ ಬರುತ್ತಿದೆ’’ ಎಂದು ಸ್ಥಳಾಂತರಗೊಂಡವರ ಪೈಕಿ ಒಬ್ಬನಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿ ಸೈಯದ್ ಫಾಝಿಲ್ ಹೇಳಿದ್ದಾರೆ. ಭಾರತ ಸರಕಾರ ಮಧ್ಯಪ್ರವೇಶ ಮಾಡಬೇಕೆಂದು ಸಂಘವು ಪದೇ ಪದೇ ಮನವಿ ಮಾಡಿತ್ತು. ಈಗ ಹೇಳಿಕೆಯೊಂದರಲ್ಲಿ, ಅದು ಭಾರತೀಯ ರಾಯಭಾರ ಕಚೇರಿಗೆ ಕೃತಜ್ಞತೆ ಸಲ್ಲಿಸಿದೆ.
ಶಹಾಪುರ | ಹಳ್ಳಕ್ಕೆ ವಿಷ ಮಿಶ್ರಣ : ನೂರಾರು ಮೀನು ಸಾವು, ಗ್ರಾಮಸ್ಥರಲ್ಲಿ ಆತಂಕ
ಶಹಾಪುರ ತಾಲ್ಲೂಕಿನ ಮುನಮುಟಗಿ ಗ್ರಾಮದಲ್ಲಿ ಹರಿಯುವ ಹಳ್ಳಕ್ಕೆ ವಿಷ ಅನಿಲ/ವಿಷಕಾರಿ ಪದಾರ್ಥ ಮಿಶ್ರಣ ಮಾಡಿದ ಪರಿಣಾಮ ನೂರಾರು ಮೀನುಗಳು ಹಾಗೂ ನೀರು ಕುಡಿದ ಮೇಕೆಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕನ್ಯಾಕೋಳೂರಿನಿಂದ ಹರಿದು ಬರುವ ಈ ಹಳ್ಳವು ಮುನಮುಟಗಿ ಗ್ರಾಮದ ಮೂಲಕ ಹರಿದು ಹೋಗುತ್ತದೆ. ಹಳ್ಳದಲ್ಲಿ ವಿಷ ಮಿಶ್ರಣ ಮಾಡಿರುವ ಕಾರಣ ಮೀನುಗಳು ತೇಲಿಬಂದು ಸತ್ತಿರುವುದಾಗಿ ಗ್ರಾಮದ ಮುಖಂಡ ಸುರೇಶಗೌಡ ನಾಡಗೌಡರ್ ತಿಳಿಸಿದ್ದಾರೆ. ನೀರು ಕುಡಿದ ಮೂರ್ನಾಲ್ಕು ಮೇಕೆಗಳೂ ಮೃತಪಟ್ಟಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಹಾಗೂ ಜಾನುವಾರುಗಳು ಪ್ರತಿದಿನ ಇದೇ ಹಳ್ಳದ ನೀರನ್ನು ಉಪಯೋಗಿಸುತ್ತಿದ್ದು, ಕೆಲವರು ಅವಧಿ ಮೀರಿದ ಕೀಟನಾಶಕ ಔಷಧಿಗಳನ್ನು ಹಳ್ಳದಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಭದ್ರತೆ ಕುರಿತು ಭೀತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆ ಕುರಿತು ವಡಗೇರಾ ತಾಲ್ಲೂಕು ತಹಶೀಲ್ದಾರರಿಗೆ ಮಾಹಿತಿ ನೀಡಲಾಗಿದ್ದು, ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡು ವಿಷ ಮಿಶ್ರಣ ಮಾಡಿದವರನ್ನು ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
’ಘೋಷಣೆಗಳ ರಾಜಕಾರಣ ಅಲ್ಲ : VB-G RAM G ಈ ಬದಲಾವಣೆಯ ಜೀವಂತ ಸಾಕ್ಷಿ’
Union Government Scheme : ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಗ್ರಾಮೀಣ ಭಾಗದ ಸರ್ಕಾರೀ ಆಸ್ತಿಗಳ ರಕ್ಷಣೆ ಮತ್ತು ಅವುಗಳ ಸಮರ್ಪಕ ಬಳಕೆಯನ್ನು ಗಮನದಲ್ಲಿ ಇಟ್ಟುಕೊಂಡು, ವಿಬಿ-ಜಿ ರಾಮ್ ಜಿ ಸ್ಕೀಂ ಅನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಆದರೆ, ಇದರಲ್ಲಿ ಗೊಂದಲಗಳಿವೆ ಎನ್ನುವುದು ಕಾಂಗ್ರೆಸ್ಸಿನ ವಾದವಾಗಿದೆ.
ಇರಾನ್ ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ; ಕನಿಷ್ಠ ಏಳು ಮಂದಿಗೆ ಗಾಯ
ಟೆಲ್ ಅವೀವ್: ಮಧ್ಯ ಇಸ್ರೇಲ್ ನ ಹಲವು ಪ್ರದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಿಂದ ಕಟ್ಟಡಗಳು, ವಾಹನಗಳು ಹಾಗೂ ರಸ್ತೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಟೆಲ್ ಅವೀವ್ ನಗರದ ಪೂರ್ವ ಭಾಗದಲ್ಲಿರುವ ಬ್ನೀ ಬ್ರಾಕ್ ಮತ್ತು ರೋಶ್ ಹಾಯಿನ್ ನಗರಗಳಲ್ಲಿ ಈ ದಾಳಿ ಸಂಭವಿಸಿದೆ. ಕ್ಷಿಪಣಿಗಳ ಸ್ಫೋಟ ಮತ್ತು ಅವುಗಳ ಚೂರುಗಳಿಂದ ಅನೇಕ ಕಟ್ಟಡಗಳಿಗೆ ಭಾರೀ ಹಾನಿಯಾಗಿದ್ದು, ಕೆಲವು ಸ್ಥಳಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ತುರ್ತುಸೇವಾ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡ ಏಳು ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಕುಂದಾಪುರ, ಮಾ.3: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣ ಒಂದಕ್ಕೆ ಸಂಬಂಧಿಸಿ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಗ್ರಾಮದ ಅಕ್ಕುಂಜೆ ನಿವಾಸಿ ಶಶಿಕಾಂತ್ ಶೆಟ್ಟಿ(44) ಬಂಧಿತ ಆರೋಪಿ. ತಲೆಮರೆಸಿಕೊಂಡಿದ್ದ ಈತನನ್ನು ಎಎಸ್ಸೈ ಶಂಕರ್ ಎಸ್. ಹಾಗೂ ಸಿಬ್ಬಂದಿ ಅಶೋಕ್ ಶೆಟ್ಟಿ ಪಶ್ಚಿಮ ಬಂಗಾಲ ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯ ಬನಿನಾಥಪುರ ಎಂಬಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ಮಾ.1ರಂದು ಕುಂದಾಪುರದ ಎ.ಸಿ.ಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಿಜೆಪಿ ದ. ಕ. ಜಿಲ್ಲಾ ವಕ್ತಾರ ಸತೀಶ್ ಪ್ರಭು ನಿಧನ
ಮಂಗಳೂರು, ಮಾ.3: ಬಿಜೆಪಿ ದ. ಕ. ಜಿಲ್ಲಾ ವಕ್ತಾರ ಸತೀಶ್ ಎಂ.ಪ್ರಭು (60) ಮಂಗಳವಾರ ನಿಧನರಾದರು. ಸಂಘನಿಕೇತನ ಸಮೀಪದ ತನ್ನ ಮನೆಯಲ್ಲಿದ್ದಾಗ ಕುಸಿದು ಬಿದ್ದ ಅವರನ್ನು ತಕ್ಷಣ ಯೆನಪೋಯ ಆಸ್ಪತ್ರೆಗೆ ಒಯ್ಯಲಾಗಿತ್ತು. ವೈದ್ಯರು ಪರೀಕ್ಷಿಸಿ ಬ್ರೇನ್ ಹೇಮರೇಜ್ ಆಗಿರುವುದಾಗಿ ಹೇಳಿದ ಕೆಲವೇ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ನಿ ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ, ಮಂಗಳೂರು ನಗರ ದಕ್ಷಿಣ ಮಂಡಲದ ಮಾಜಿ ಅಧ್ಯಕ್ಷ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಂಘನಿಕೇತನ ಉಪಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ನ ಸಕ್ರಿಯ ಕಾರ್ಯಕರ್ತ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ರಿಟ್; ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಸೌಹಾರ್ದ ಸಹಕಾರಿ ಬ್ಯಾಂಕ್ಗಳು ತಮ್ಮ ಠೇವಣಿಯ ಶೇ. 20 ಪ್ರಮಾಣದ ಮೊತ್ತವನ್ನು ಪ್ರತಿ 3 ತಿಂಗಳಿಗೊಮ್ಮೆ ಅಪೆಕ್ಸ್ ಅಥವಾ ಡಿಸಿಸಿ ಬ್ಯಾಂಕ್ಗಳಲ್ಲಿ ಇರಿಸುವುದು, ಬ್ಯಾಂಕ್ಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿ ವರ್ಷ ತಮ್ಮ ಆಸ್ತಿ ಘೋಷಿಸುವುದು ಸೇರಿ ಹಲವು ಷರತ್ತುಗಳನ್ನು ಒಳಗೊಂಡ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಕಾಯ್ದೆ-2025ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ ಹಾಗೂ ನಿಯಮಿತದ ಸದಸ್ಯ ಸಂಸ್ಥೆಗಳಾಗಿರುವ ರಾಜ್ಯದ ವಿವಿಧ 12 ಸೌಹಾರ್ದ ಸಹಕಾರಿ ಸಂಘಗಳ ಸಿಇಒಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆ, ಸಹಕಾರ ಇಲಾಖೆ ಹಾಗೂ ಸಹಕಾರ ಸಂಘಗಳ ನಿಬಂಧಕರಿಗೆ ನೋಟಿಸ್ ಜಾರಿಗೊಳಿಸಿ, ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಒಂದೊಮ್ಮೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸದಿದ್ದರೆ ಕಾಯ್ದೆ ಜಾರಿಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಯನ್ನು ಪರಿಗಣಿಸಲಾಗುವುದು ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ. ಮನವಿ ಏನು? ತಿದ್ದುಪಡಿ ಕಾಯ್ದೆಯು ಸಹಕಾರ ತತ್ವಕ್ಕೆ ವಿರುದ್ಧವಾಗಿದ್ದು, ಸಹಕಾರ ಸಂಘಗಳ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ. ಅಲ್ಲದೆ, ತಿದ್ದುಪಡಿಯು ಸಹಕಾರ ಸಂಘಗಳ ಸ್ವಾಯತ್ತತೆ ಮತ್ತು ಸ್ವತಂತ್ರ ನಿರ್ವಹಣೆಗೆ ಅಡ್ಡಿ ಉಂಟು ಮಾಡಲಿದೆ. ಆದ್ದರಿಂದ, ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬಾಹಿರವೆಂದು ಘೋಷಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದ್ದು, ಅರ್ಜಿ ಇತ್ಯರ್ಥವಾಗುವವರೆಗೆ 2025ರ ಸೆಪ್ಟೆಂಬರ್ 12ರಂದು ಜಾರಿಗೆ ಬಂದಿರುವ ಕಾಯ್ದೆಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.
ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ: ಶಾಸಕ ವೇದವ್ಯಾಸ್ ಕಾಮತ್ ಆರೋಪ
ಮಂಗಳೂರು, ಮಾ.3: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ಕಾಮಗಾರಿಗೆ ಬಿಜೆಪಿ ಆಡಳಿತದಲ್ಲಿ ಅನುದಾನ ನೀಡಿದ್ದು, ಅದನ್ನು ಕಾಂಗ್ರೆಸ್ ಅವಧಿಯಲ್ಲಿ ಮಂಜೂರುಗೊಳಿಸಲಾಗಿದೆ ಎಂದು ಜನತೆಯ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ. ನಗರದ ಅಟಲ್ ಸೇವಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಲಿಕೆಯ ಬಿಜೆಪಿ ಆಡಳಿತ ಅವಧಿಯಲ್ಲಿ ನಗರದ ಕೊಡಿಯಾಲ್ಗುತ್ತು ವೆಟ್ವೆಲ್ನಿಂದ ಕುದ್ರೋಳಿ ವೆಟ್ವೆಲ್ ಸಂಪರ್ಕಿಸುವ ಪಂಪಿಂಗ್ ಕೊಳವೆಯನ್ನು ಕೊಡಿಯಾಲ್ಗುತ್ತಿನಿಂದ ಹಾಲ್ಮಾರ್ಕ್ ಅಪಾರ್ಟ್ಮಂಟ್ವರೆಗೆ ಬದಲಾಯಿಸಲು 3.42 ಕೋ.ರೂ.ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಈಗ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಾನೇ ಮಂಜೂರುಗೊಳಿಸಿದ್ದು ಎಂದು ತಪ್ಪುಮಾಹಿತಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳ ಪರಿಶೀಲನೆ ಕರೆಸುತ್ತಿದ್ದಾರೆ. ಕಾಮಗಾರಿಗೆ ಅನುಮೋದನೆ ಲಭಿಸಿದ ಬಳಿಕ ಪರಿಶೀಲಿಸುವ ವಿಚಾರ ಏನಿದೆ ಎಂದು ಪ್ರಶ್ನಿಸಿದರು. ಪಾಲಿಕೆ ವ್ಯಾಪ್ತಿಯ ಎಂ.ಜಿ.ರಸ್ತೆಯ ಬಲ್ಲಾಳ್ಬಾಗ್ ಸೇತುವೆ ಅಭಿವೃದ್ಧಿಗೆ 2 ಕೋ.ರೂ. ಮೀಸಲಿರಿಸಿದ್ದೆ. ಇದು ಕೂಡ ಪಾಲಿಕೆ ಬಿಜೆಪಿ ಆಡಳಿತದ ಅವಧಿಯಲ್ಲೇ ಮಂಜೂರುಗೊಂಡಿದೆ. ಆದರೆ ಇಲ್ಲಿ ಸೇತುವೆಯ ಅಗತ್ಯ ಇಲ್ಲ ಎಂದು ಉಸ್ತುವಾರಿ ಸಚಿವರು ದಿಢೀರ್ ತೀರ್ಮಾನಿಸಿ ಆ ಮೊತ್ತವನ್ನು ಪಡೀಲಿನ ಡಿಸಿ ಕಚೇರಿ ಸಂಕೀರ್ಣ ಪೂರ್ಣಗೊಳಿ ಸಲು ವರ್ಗಾಯಿಸಿದ್ದಾರೆ ಎಂದು ವೇದವ್ಯಾಸ್ ಕಾಮತ್ ಆರೋಪಿಸಿದರು. ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಶಾಸಕರನ್ನು ಕರೆಸಿ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಲು ಸಮಯವಿಲ್ಲ. ಆದರೆ ಕಾಂಗ್ರೆಸ್ನ ರಾಜಕೀಯ ಕಾರ್ಯಕ್ರಮ ಇದ್ದರೆ ಬಿಡುವು ಮಾಡಿಕೊಂಡು ಬರುತ್ತಾರೆ. ಹಾಗಾಗಿ ಇಲ್ಲಿಗೆ ಅವರು ಗೆಸ್ಟ್ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಮಂಗಳೂರು ನಗರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಇಲ್ಲದಿದ್ದರೂ ನನ್ನ ಪ್ರಯತ್ನದಿಂದ ಅನುದಾನ ಬಿಡುಗಡೆಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಬಾಕಿಯಾಗಿದ್ದ ಅನುದಾನ ಬಿಡುಗಡೆಗೊಳಿಸಿದ್ದರು. ಹಿಂದಿನ ಬಿಜೆಪಿ ಸರಕಾರ ಅನುಮೋದಿಸಿದ ಕಾಮಗಾರಿ ಹೊರತುಪಡಿಸಿದರೆ ಕಾಂಗ್ರೆಸ್ ಸರಕಾರ ಯಾವುದೇ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್ ಪಾಂಡೇಶ್ವರ, ಮಾಜಿ ಉಪಮೇಯರ್ ಶಕೀಲಾ ಕಾವ, ಬಿಜೆಪಿ ಮುಖಂಡರಾದ ಮನೋಹರ್ ಕದ್ರಿ, ಮೋಹನ ಪೂಜಾರಿ, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೋಡಿ, ಲಲ್ಲೇಶ್ ಉಪಸ್ಥಿತರಿದ್ದರು.
ಮಂಗಳೂರು,ಮಾ.3: ಎಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ಪರೀಕ್ಷಾ ಸಂಬಂಧಿ ಯಾವುದೇ ಸಮಸ್ಯೆ, ಸಿದ್ಧತೆ ಬಗ್ಗೆ ಭಯ, ಆತಂಕ, ಗೊಂದಲಗಳಿದ್ದರೆ ದೂ.ಸಂ: 0824-2451239ಕ್ಕೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10:30 ರಿಂದ ಸಂಜೆ 5 ಮತ್ತು ರವಿವಾರ ಬೆಳಗ್ಗೆ 10:30ರಿಂದ ಮಧ್ಯಾಹ್ನ 1ರೊಳಗೆ ಕರೆ ಮಾಡಿ ಪರಿಹಾರ ಪಡೆಯಬಹುದು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಸಹಾಯವಾಣಿ ವ್ಯವಸ್ಥೆಗೊಳಿಸಲಾಗಿದ್ದು ತಜ್ಞರ ನೆರವಿನಲ್ಲಿ ಪರಿಹಾರ ತಿಳಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ
ಉಡುಪಿ, ಮಾ.3: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಜೆಸಿಐ ಉಡುಪಿ ಸಿಟಿಯ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ ನಡೆಸಲಾಯಿತು. ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕ ಜೇಸಿ ಭಾಗ್ಯೇಶ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿವಿಧ ಪರೀಕ್ಷೆಗಳ ಮಾಹಿತಿ, ತಯಾರಿ ಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ವನಿತ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ, ಜೆಸಿಐ ಉಡುಪಿ ಸಿಟಿ ಅಧ್ಯಕ್ಷೆ ಜೇಸಿ ಪಲ್ಲವಿ ಕೊಡಗು, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಹಾಗೂ ಎನ್ಎಸ್ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್, ಎರಡನೇ ಘಟಕದ ಅಧಿಕಾರಿ ಡಾ.ರೇಖಾ ಎನ್.ಚಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತ್ರಿವೇಣಿ ಶೆಟ್ಟಿ ನಿರೂಪಿಸಿದರು.
ಮಾದಕ ವಸ್ತುಗಳ ಬಳಕೆಯಿಂದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಶಿಬಿರ
ಉಡುಪಿ : ಜನಸಂಖ್ಯಾ ಸ್ಫೋಟದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲೂ ಮಾದಕ ವಸ್ತುಗಳ ಹಾವಳಿ ಕಳವಳ ಉಂಟುಮಾಡುತ್ತಿದೆ. ಡ್ರಗ್ಸ್ ಚಟಕ್ಕೆ ಅಂಟಿದವರನ್ನು ಸಾಮಾನ್ಯ ಮನುಷ್ಯರಂತೆ ಮಾಡುವುದು ಅಷ್ಟು ಸುಲಭವಲ್ಲ ಎಂದು ಕುಂದಾಪುರ ರೋಟರಿ ಕ್ಲಬ್, ಸನ್ರೈಸ್ ಅಧ್ಯಕ್ಷ ಗುರುರಾಜ ಕೋತ್ವಾಲ್ ಹೇಳಿದ್ದಾರೆ. ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ, ಕುಂದಾಪುರ ರೋಟರಿ ಕ್ಲಬ್, ಸನ್ರೈಸ್ ಹಾಗೂ ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲು ಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಶಾಲೆಯಲ್ಲಿ ಆಯೋಜಿಸಲಾದ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮ ಗಳ ಕುರಿತ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸುಜ್ಞಾನ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ, ಜೇಸಿಐ ತರಬೇತಿದಾರರಾದ ಅನಿತಾ ನರೇಂದ್ರ ಕುಮಾರ್ ಮಾತನಾಡಿ, ಆಫೀಮು, ಗಾಂಜ, ಕೊಕೇನ್ ಮುಂತಾದ ವಸ್ತುಗಳನ್ನು ಅತೀ ಚಿಕ್ಕ ವಯಸ್ಸಿ ನಲ್ಲಿ ಬಳಸುತ್ತ ತಮ್ಮ ಅಮ್ಯೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವುದು ನಮ್ಮ ದೇಶದ ದೌರ್ಭಾಗ್ಯ. ಮಾದಕ ವಸ್ತುಗಳು ನಮ್ಮನ್ನು ಅಪೋಶನಗೈಯುವ ಮಟ್ಟಿಗೆ ಬೆಳೆದುಬಿಟ್ಟಿವೆ. ಅವುಗಳ ಕದಂಬ ಬಾಹುಗಳಿಂದ ನಾವು ಹೊರಬರಬೇಕಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢ ಶಾಲಾ ವಿಭಾಗದ ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಮಾದಕ ದ್ರವ್ಯ ವ್ಯಸನದ ವಿರುದ್ಧ ಪ್ರತಿಜ್ಞೆ ಭೋದಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಕಾರ್ಯದರ್ಶಿ ಭವಾನಿ ಶಂಕರ್, ಕೋಟೇಶ್ವರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ರಮಾನಂದ ನಾಯಕ್ ಸ್ವಾಗತಿಸಿದರು. ಧನ್ಯ ಬೆಳ್ಮಣ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ವಕ್ವಾಡಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.
ಕಂಬಳದ ಭೂಮಿಗಾಗಿ ಪೈಪೋಟಿ ನಡೆಸುತ್ತಿರುವುದು ನಾಚಿಕೆಗೇಡು: ಸುಂದರ್ ಮಾಸ್ತರ್ ಟೀಕೆ
ಉಡುಪಿ, ಮಾ.3: ಉಡುಪಿ ಜಿಲ್ಲೆಯಲ್ಲಿ ನಿವೇಶನ ರಹಿತ ಬಡವರು ನೂರಾರು ವರ್ಷಗಳಿಂದ ನೋವಿನ ಬದುಕು ಸಾಗಿಸುತ್ತಿರುವ ಬಗ್ಗೆ ಚಕಾರವೆತ್ತದ ಜನಪ್ರತಿನಿಧಿಗಳು ಈಗ ಉಡುಪಿ ಕಂಬಳಕ್ಕಾಗಿ ಭೂಮಿಗೆ ಪೈಪೋಟಿ ನಡೆಸು ತ್ತಿರುವುದು ನಾಚಿಕೆಗೇಡು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಟೀಕಿಸಿದ್ದಾರೆ. ಕಂಬಳ ಎನ್ನುವುದು ಕೆಲವೊಂದು ಕುಟುಂಬಗಳ ಸ್ವಂತ ಆಚರಣೆಯೇ ಹೊರತು ಅದು ಜಿಲ್ಲಾಡಳಿತದ ಅನಿವಾರ್ಯ ಕಾರ್ಯಕ್ರಮ ಅಲ್ಲ. ತಮ್ಮ ಸ್ವಪ್ರತಿಷ್ಟೆಯ ಪ್ರದರ್ಶನದ ಪ್ರತೀಕವಾದ ಕಂಬಳಕ್ಕೆ ಈಗ ಜಿಲ್ಲಾಡಳಿತದ ಶಿರೋನಾಮೆ ಕೊಟ್ಟು ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ವ್ಯವಸ್ಥಿತ ಸಂಚು ನಡೆಸುತ್ತಿದೆ. ಕಂಬಳಕ್ಕೆ ಜಾಗ ಕಾಯ್ದಿರಿಸಿ ಆಮೇಲೆ ರೆಸಾರ್ಟ್ ತೆರೆಯುವ ಹುನ್ನಾರ ಇದರ ಹಿಂದೆ ಇದೆ ಎಂದು ಅವರು ಆರೋಪಿಸಿದ್ದಾರೆ. ಕಂಬಳಕ್ಕೆ 6.30 ಎಕರೆ ಭೂಮಿ ಕಾದಿರಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಬಬ್ಬುಸ್ವಾಮಿ ದೈವಸ್ಥಾನಗಳಿಗೆ ಕೋಲ, ನೇಮೋತ್ಸವ ನಡೆಸಲು ಒಂದೊಂದು ಎಕರೆ ಸರಕಾರಿ ಭೂಮಿಯನ್ನು ಮಂಜೂರು ಮಾಡಿಸಲು ಈಗ ಗುದ್ದಲಿ ಪೂಜೆ ನಡೆಸಿದ ಜನಪ್ರತಿನಿದಿನಗಳು ಹೋರಾಟ ನಡೆಸುತ್ತಾರೆಯೇ? 80 ಬಡಗುಬೆಟ್ಟು ಗ್ರಾಮದ 6.30 ಎಕರೆ ಭೂಮಿಯನ್ನು ಕಂಬಳಕ್ಕಾಗಿ ಕಾದಿರಿಸಿರುವುದು ಜನವಿರೋಧಿ ನೀತಿ. ಲಕ್ಷಾಂತರ ಬಡವರು ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನವಿಲ್ಲದೇ ಕಣ್ಣೀರಿನ ಜೀವನ ನಡೆಸುತ್ತಿರುವಾಗ ಮೋಜು ಮಸ್ತಿಗಾಗಿ ಸರಕಾರಿ ಜಾಗವನ್ನು ಕಾದಿರಿಸಿರುವುದು ಅಕ್ಷಮ್ಯ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ. ‘ಜನಪ್ರತಿನಿದಿನಗಳ ನೈತಿಕ ಅಧಃಪತನ’ ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನ, ಸ್ವಂತ ಮನೆ, ಸ್ವಂತ ಬಾವಿ, ಉದ್ಯೋಗ ಇಲ್ಲದೇ ಲಕ್ಷಾಂತರ ಮೂಲ ನಿವಾಸಿಗಳು, ಬಡವರು ದಯನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಎಲ್ಲಾ ವಿಷಯಕ್ಕೆ ಕಿವುಡರಾಗಿ, ಕುರುಡರಾಗಿರುವ ಜನಪ್ರತಿನಿಧಿಗಳು ಈಗ ಕಂಬಳಕ್ಕೆ ಜಾಗ ಕೊಡಿ ಎಂದು ಕೂಗಾಡುವುದು, ನಿಷೇಧಾಜ್ಞೆಯನ್ನೂ ಉಲ್ಲಂಘಿಸಿ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ. ಇದು ಜನಪ್ರತಿನಿದಿನಗಳ ನೈತಿಕ ಅಧಃಪತನ, ಯೋಗ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ ತಿಳಿಸಿದ್ದಾರೆ. ದಲಿತರು ನೂರಾರು ವರ್ಷಗಳಿಂದ ಸ್ವಂತ ಸೂರಿಲ್ಲದೇ, ಸ್ವಂತ ನಿವೇಶನ ಇಲ್ಲದೇ, ತಮ್ಮ ಪೂರ್ವಜರ ಮನೆ ಯೊಳಗೆ ಹಲವಾರು ಕುಟುಂಬಗಳು ಒಟ್ಟಿಗೆ ಟಾರ್ಪಾಲು ಹಾಸಿಕೊಂಡು ಬದುಕುತಿದ್ದಾರೆ. ಇದನ್ನು ಈ ಜನಪ್ರತಿ ನಿಧಿಗಳಿಗೆ ಕಣ್ಣಾರೆ ಕಂಡರೂ 80 ಬಡಗುಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 13 ಎಕರೆ ಸರಕಾರಿ ಜಾಗದಲ್ಲಿ ಉಡುಪಿ ಕಂಬಳ ಎಂಬ ಒಂದು ಹೊಸ ಸಂಪ್ರಾದಾಯ ಹುಟ್ಟುಹಾಕಿ, ಪೈಪೋಟಿಗೆ ಬಿದ್ದಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಜಿಲ್ಲಾಡಳಿತ ಬಡವರಿಗೆ ನಿವೇಶನ ಕೊಡುವ ಬಗ್ಗೆ ಗಮನಹರಿಸಿ ಕಾಂಗ್ರೆಸ್, ಬಿಜೆಪಿಯವರ ಕೆಸರೆರಚಾಟದ ಕಂಬಳಕ್ಕೆ ಆದ್ಯತೆ ಕೊಡಬಾರದು. ಮೊದಲು ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಆಧ್ಯತೆ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಕೊಲ್ಲಿ ವಲಯದ ಮಾ. 5, 6ರ ಸಿಬಿಎಸ್ಇ ಪರೀಕ್ಷೆ ಮುಂದೂಡಿಕೆ
ಹೊಸದಿಲ್ಲಿ: ಪಶ್ಚಿಮ ಏಶ್ಯದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 5 ಮತ್ತು 6 ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯು ಮಂಗಳವಾರ ಮುಂದೂಡಿದೆ. ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸುತ್ತಿರುವ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಸಿಬಿಎಸ್ಇ ಈ ಕ್ರಮ ತೆಗೆದುಕೊಂಡಿದೆ. ‘‘ಬಹರೈನ್, ಇರಾನ್, ಕುವೈತ್, ಒಮಾನ್, ಖತರ್, ಸೌದಿ ಅರೇಬಿಯ ಮತ್ತು ಯುಎಇಯನ್ನು ಒಳಗೊಂಡ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಮಾರ್ಚ್ 5 ಮತ್ತು 6ರಂದು ನಡೆಯಬೇಕಾಗಿದ್ದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲು ಮಂಡಳಿಯು ನಿರ್ಧರಿಸಿದೆ’’ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ ತಿಳಿಸಿದ್ದಾರೆ. ನೂತನ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು ಹಾಗೂ ಮಾರ್ಚ್ 5ರಂದು ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ, ಇನ್ನುಳಿದ ಪರೀಕ್ಷೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುಗುವು ಎಂದು ಭಾರದ್ವಾಜ್ ಹೇಳಿದರು. ಇದಕ್ಕೂ ಮೊದಲು, ಈ ವಲಯದಲ್ಲಿ ಮಾರ್ಚ್ 2ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮಂಡಳಿಯು ರವಿವಾರ ಮುಂದೂಡಿತ್ತು.
ಕುರಿ/ಮೇಕೆ ಘಟಕ ಸ್ಥಾಪನೆಗೆ ಸಹಾಯಧನ: ಅರ್ಜಿ ಆಹ್ವಾನ
ಉಡುಪಿ, ಮಾ.3: ಕರ್ನಾಟಕ ಕುರಿ ಮತ್ತು ಎಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಚಿಕ್ಕಮಗಳೂರು ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ (10+1) ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಸಹಾಯಧನ ಸೌಲಭ್ಯ ಪಡೆಯಲು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವ 18 ರಿಂದ 60 ವರ್ಷ ವಯೋಮಿತಿಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಉಡುಪಿ ತಾಲೂಕು ಮೊ.ನಂ: 9448134852, ಕಾಪು ತಾಲೂಕು ಮೊ.ನಂ: 8217389838, ಬ್ರಹ್ಮಾವರ ತಾಲೂಕು ಮೊ.ನಂ: 9448623690, ಕುಂದಾಪುರ ತಾಲೂಕು ಮೊ.ನಂ: 9448163237, ಬೈಂದೂರು ತಾಲೂಕು ಮೊ.ನಂ: 9741993045, ಕಾರ್ಕಳ ತಾಲೂಕು ಮೊ.ನಂ: 9845753062 ಹಾಗೂ ಹೆಬ್ರಿ ತಾಲೂಕು ಮೊ.ನಂ: 9986764615 ಅನ್ನು ಅಥವಾ ಜಿಲ್ಲಾ ಅನುಷ್ಠಾನಾಧಿಕಾರಿ ಗಳು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ಚಿಕ್ಕಮಗಳೂರು ದೂರವಾಣಿ ಸಂಖ್ಯೆ: 9448157129 ಅನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ವಾಷಿಂಗ್ಟನ್: ಇರಾನ್ ಮೇಲೆ ಇಸ್ರೇಲ್ ಮೊದಲು ದಾಳಿ ನಡೆಸಲು ಮುಂದಾಗಿದ್ದರಿಂದ ಅಮೆರಿಕ ಕೈಜೋಡಿಸುವಂತಾಯಿತು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ಈ ಹೇಳಿಕೆ ಅಮೆರಿಕದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸೋಮವಾರ ಕ್ಯಾಪಿಟಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರುಬಿಯೊ, “ಇಸ್ರೇಲ್ ದಾಳಿ ನಡೆಯಲಿದೆ ಎಂಬುದು ನಮಗೆ ಮುಂಚಿತವಾಗಿ ತಿಳಿದಿತ್ತು. ಆ ದಾಳಿ ಅಮೆರಿಕದ ಪಡೆಗಳ ವಿರುದ್ಧ ಪ್ರತೀಕಾರಕ್ಕೆ ಕಾರಣವಾಗಬಹುದು ಎಂಬ ಅಂದಾಜೂ ಇತ್ತು. ನಾವು ಮುಂಚಿತ ಕ್ರಮ ಕೈಗೊಳ್ಳದಿದ್ದರೆ ಹೆಚ್ಚಿನ ಅಮೆರಿಕನ್ ಸೈನಿಕರು ಸಾವಿಗೀಡಾಗುತ್ತಿದ್ದರು” ಎಂದು ಹೇಳಿದ್ದಾರೆ. ಶನಿವಾರ ನಡೆದ ಅಮೆರಿಕ–ಇಸ್ರೇಲ್ ಜಂಟಿ ದಾಳಿಗಳ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ಏರಿದೆ. ಗಲ್ಫ್ ಪ್ರದೇಶದ ಹಲವು ರಾಷ್ಟ್ರಗಳು ಇರಾನಿನ ಪ್ರತೀಕಾರ ದಾಳಿಗಳಿಗೆ ತುತ್ತಾಗಿವೆ. ಯುದ್ಧ ಆರಂಭವಾದ ಬಳಿಕ ಇರಾನ್ನಲ್ಲಿ ಕನಿಷ್ಠ 787 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು, ಅಮೆರಿಕದ ಆರು ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೂರ್ವಭಾವಿ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು ಎಂದು ರುಬಿಯೊ ಹೇಳಿದ್ದಾರೆ. “ಇರಾನ್ ಯಾರೇ ದಾಳಿ ಮಾಡಿದರೂ ಪ್ರತಿಕ್ರಿಯಿಸಲಿದೆ ಎಂಬುದು ಸ್ಪಷ್ಟವಾಗಿತ್ತು. ಅಮೆರಿಕದ ಪಡೆಗಳ ಮೇಲೆ ದಾಳಿ ನಡೆಯುವ ಮುನ್ನವೇ ನಾವು ಕ್ರಮ ಕೈಗೊಂಡೆವು,” ಎಂದು ಅವರು ವಿವರಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಇರಾನ್ ವಿರುದ್ಧದ ಈ ಹೋರಾಟ ಜಾಗತಿಕ ಭದ್ರತೆಗೆ ಅಗತ್ಯ. ಅಮೆರಿಕ–ಇಸ್ರೇಲ್ ಸಹಕಾರವು ಜಗತ್ತನ್ನು ರಕ್ಷಿಸುವ ಪ್ರಯತ್ನ,” ಎಂದು ಹೇಳಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಟ್ರಂಪ್ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಸೆನೆಟ್ ಗುಪ್ತಚರ ಸಮಿತಿಯ ಡೆಮಾಕ್ರಟಿಕ್ ಉಪಾಧ್ಯಕ್ಷ ಮಾರ್ಕ್ ವಾರ್ನರ್, “ಇರಾನಿನಿಂದ ಅಮೆರಿಕಕ್ಕೆ ಯಾವುದೇ ಸನ್ನಿಹಿತ ಬೆದರಿಕೆ ಇರಲಿಲ್ಲ. ಇಸ್ರೇಲ್ಗೆ ಇದ್ದ ಅಪಾಯವನ್ನು ಅಮೆರಿಕದ ತುರ್ತು ಅಪಾಯವೆಂದು ಪರಿಗಣಿಸುವುದು ಅಪಾಯಕಾರಿ,” ಎಂದು ಹೇಳಿದ್ದಾರೆ. ಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯ ಜೋಕ್ವಿನ್ ಕ್ಯಾಸ್ಟ್ರೋ, “ಇಸ್ರೇಲ್ ದಾಳಿಯ ಪರಿಣಾಮವಾಗಿ ಅಮೆರಿಕದ ಪಡೆಗಳು ಅಪಾಯಕ್ಕೆ ಸಿಲುಕಿವೆ. ಆಡಳಿತವು ಅವರನ್ನು ತಡೆಯುವ ಬದಲು ಯುದ್ಧದಲ್ಲಿ ಪಾಲ್ಗೊಂಡಿದೆ,” ಎಂದು ಟೀಕಿಸಿದ್ದಾರೆ. ಇದಕ್ಕೂ ಮಧ್ಯೆ, CNN ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡಾ 60 ಮಂದಿ ಅಮೆರಿಕನ್ನರು ಟ್ರಂಪ್ ಅವರ ಬಳಿ ಸ್ಪಷ್ಟ ಯೋಜನೆ ಇಲ್ಲವೆಂದು ಭಾವಿಸಿದ್ದಾರೆ. ಶೇಕಡಾ 62 ಮಂದಿ ಯಾವುದೇ ಮುಂದಿನ ಸೈನಿಕ ಕ್ರಮಕ್ಕೆ ಕಾಂಗ್ರೆಸ್ ಅನುಮೋದನೆ ಪಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, “ನಾವು ಈ ಯುದ್ಧವನ್ನು ಪ್ರಾರಂಭಿಸಲಿಲ್ಲ. ಆದರೆ ಅದನ್ನು ಕೊನೆಗೊಳಿಸಲು ಬದ್ಧರಾಗಿದ್ದೇವೆ. ಗೆಲುವೇ ನಮ್ಮ ಗುರಿ,” ಎಂದು ಹೇಳಿದ್ದಾರೆ.
ಹಿರಿಯರ ತತ್ವಾದರ್ಶ ಪಾಲನೆಯಿಂದ ಮೌಲ್ಯಯುತ ಸಮಾಜ ನಿರ್ಮಾಣ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ
ಉಡುಪಿ, ಮಾ.3: ಶ್ರೀರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಸೇರಿದಂತೆ ವಿವಿಧ ದಾರ್ಶನಿಕರು ಸರಳವಾಗಿ ಬದುಕಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾಜ ಸುಧಾರಣೆಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಇಂತಹ ಮಹನೀಯರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದಲ್ಲಿ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ. ಮಂಗಳವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ಯೋಗಿ ನಾರೇಯಣ ಯತೀಂದ್ರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶ್ರೀರೇಣುಕಾಚಾರ್ಯ, ಯೋಗಿ ಯತೀಂದ್ರ ಸೇರಿದಂತೆ ವಿವಿಧ ದಾರ್ಶನಿಕರು ಸಮಾಜ ಸುಧಾರಣೆಗೆ ಶ್ರಮಿಸಿ ದ್ದಾರೆ.ಇಂಥವರು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಇಂಥ ಜಯಂತಿ ಕಾರ್ಯಕ್ರಮಗಳನ್ನು ಆಚರಿಸ ಲಾಗುತ್ತಿದೆ ಎಂದರು. ಇಬ್ಬರು ದಾರ್ಶನಿಕರ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನ ಪಚ್ಚಿನಡ್ಕ, 18ನೇ ಶತಮಾನದ ಕಾಲಜ್ಞಾನಿಗಳಾದ ಯೋಗಿ ನಾರೇಯಣ ಯತೀಂದ್ರರು, ತಮ್ಮ ಸಾಂಸಾರಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಬೇಸತ್ತು ಕುಟುಂಬವನ್ನು ತೊರೆದು, ಭಗವಂತನ ಇರುವಿಕೆಯನ್ನು ಕಂಡುಕೊಳ್ಳಲು ಆಧ್ಯಾತ್ಮದತ್ತ ಮುಖಮಾಡುತ್ತಾರೆ. ಕನ್ನಡ ಮತ್ತು ತೆಲುಗಿನಲ್ಲಿ ಭಕ್ತಿ ಗೀತೆಗಳು, ತತ್ವಪದಗಳು ಮತ್ತು ಭವಿಷ್ಯವಾಣಿಗಳನ್ನು(ಕಾಲಜ್ಞಾನ) ರಚಿಸುವುದರೊಂದಿಗೆ ಸುದೀರ್ಘ 110 ವರ್ಷಗಳ ಕಾಲ ಬದುಕಿ ಕೈವಾರ ತಾತಯ್ಯನಾಗಿ ಸಮಾಜಕ್ಕೆ ಭಕ್ತಿ ಮತ್ತು ಮಾನವೀಯತೆಯನ್ನು ಬೋಧಿಸಿದ್ದರು ಎಂದರು. ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರಾದ ಜಗದ್ಗುರು ರೇಣುಕಾಚಾರ್ಯರು ಸುಮಾರು 900-1000 ವರ್ಷಗಳ ಹಿಂದೆ ಬದುಕಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ಅವರ ತತ್ವ, ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು ತಮ್ಮ ಜೀವನವನ್ನು ಮೀಸಲಿರಿಸಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ಗಳಾದ ನವನೀತ್ ಹಾಗೂ ಜಯಲಕ್ಷ್ಮೀ, ಸಮುದಾಯದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ವರ್ಷಾ ಬಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಸಿದ್ಧಬಸಯ್ಯ ಚಿಕ್ಕಮಠ ವಂದಿಸಿದರು.
ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದೊಡ್ಡ ಮಟ್ಟದಲ್ಲಿ ಸೇನಾ ಕಾರ್ಯಾಚರಣೆ ಶುರು ಮಾಡಿದ ನಂತರ ತೈಲ ಸರಬರಾಜು ವ್ಯತ್ಯಯವಾಗಿದೆ. ಅದರಲ್ಲೂ ಭಾರತ ಸೇರಿ ಯುರೋಪ್ ದೇಶಗಳಿಗೆ ಇದೀಗ ಮಧ್ಯಪ್ರಾಚ್ಯ ಭಾಗದಿಂದ ಪ್ರತಿನಿತ್ಯ ಸಪ್ಲೈ ಆಗಬೇಕಿದ್ದ ತೈಲ ನಿಂತು ಹೋಗಿದೆ. ಇದರ ಪರಿಣಾಮ, ಜಗತ್ತಿನ ಹಲವು ದೇಶಗಳಲ್ಲಿ ತೈಲದ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಅರಬ್ &
ಉಡುಪಿ: ಮಾ.4ಕ್ಕೆ ರಂಗಭೂಮಿ ರಂಗೋತ್ಸವ ಉದ್ಘಾಟನೆ; ಪ್ರಸನ್ನರಿಗೆ ‘ರಂಗಭೂಮಿ ಪ್ರಶಸ್ತಿ’ ಪ್ರದಾನ
ಉಡುಪಿ, ಮಾ.3: ಉಡುಪಿಯ ರಂಗಭೂಮಿ ಸಂಸ್ಥೆಯ ಈ ವರ್ಷದ ರಂಗಭೂಮಿ ರಂಗೋತ್ಸವ ಕಾರ್ಯಕ್ರಮ ಮಾ.4ಕ್ಕೆ ಪ್ರಾರಂಭಗೊಳ್ಳಲಿದೆ. ರಂಗಭೂಮಿ ಪ್ರತಿವರ್ಷ ನಾಡಿನ ರಂಗಕರ್ಮಿಯೊಬ್ಬರಿಗೆ ನೀಡುವ ‘ರಂಗಭೂಮಿ ಪ್ರಶಸ್ತಿ-2026’ಕ್ಕೆ ನಾಡಿನ ಹಿರಿಯ ರಂಗಕರ್ಮಿ, ನಾಟಕಕಾರ ಹಾಗೂ ಚಿಂತಕ ಪ್ರಸನ್ನ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಉಡುಪಿ ಪ್ರೆಸ್ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಂಗಭೂಮಿ ರಂಗೋತ್ಸವ ಕಾರ್ಯಕ್ರಮ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಬುಧವಾರ ಸಂಜೆ 6:00ಗಂಟೆಗೆ ಅಂಬಲಪಾಡಿಯ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ಜಿ.ಶಂಕರ್ ರಂಗೋತ್ಸವನ್ನು ಉದ್ಘಾಟಿಸಲಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಲಿ ದ್ದಾರೆ. ದೇಸಿ ಚಿಂತನೆಗಳ ರಾಯಭಾರಿಯಾಗಿರುವ ಹಿರಿಯ ರಂಗಕರ್ಮಿ, ನಾಟಕಕಾರ, ನಿರ್ದೇಶಕ ಪ್ರಸನ್ನ ಅವರಿಗೆ 20,000ರೂ. ನಗದನ್ನು ಹೊಂದಿರುವ ರಂಗಭೂಮಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಹಿರಿಯ ಪತ್ರಕರ್ತ ರಾಜನ್ ಹುಣಸವಾಡಿ ಅವರು ಅಭಿನಂದನಾ ನುಡಿಯನ್ನು ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವನಿತಾ ಮಯ್ಯ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ಈಗಾಗಲೇ ಅಪಾರ ಜನಮನ್ನಣೆ ಪಡೆದಿರುವ ಕೇರಳದ ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ನ ಕಲಾವಿದರಿಂದ ಮಲಯಾಳಂ ನಾಟಕ ‘ಕುಹೂ...’ ಅರುಣ್ಲಾಲ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮರುದಿನ ಮಾ.5ರಂದು ಗುರುವಾರ ರಂಗಭೂಮಿ ಕಳೆದ 46 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಈ ಬಾರಿಯ ವಿಜೇತ ತಂಡಕ್ಕೆ ಹಾಗೂ ವೈಯಕ್ತಿಕ ಪ್ರಶಸ್ತಿ ಪಡೆದಿರುವ ಕಲಾವಿದರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಸಂಜೆ 6 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ತಲ್ಲೂರು ಶಿವರಾಮ ಶೆಟ್ಟಿ, ಅದಾನಿ ಗ್ರೂಪ್ನ ಕಿಶೋರ್ ಆಳ್ವ, ನಿವೃತ್ತ ಪ್ರಾಂಶುಪಾಲರಾದ ರಂಗಕರ್ಮಿ ನಟರಾಜ ದೀಕ್ಷಿತ್, ಉದ್ಯಮಿ ಮನೋಹರ ಎಸ್.ಶೆಟ್ಟಿ, ಎಂಜಿಎಂ ಕಾಲೇಜಿನ ಡಾ.ವಿಶ್ವನಾಥ ಪೈ ಉಪಸ್ಥಿತರಿರುವರು. ಕೊನೆಯಲ್ಲಿ ಈ ಬಾರಿಯ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಸುಮನಸಾ ಕೊಡವೂರು ತಂಡದ ‘ಈದಿ’ ನಾಟಕದ ಮರು ಪ್ರದರ್ಶನ ನಡೆಯಲಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ಎನ್.ರಾಜಗೋಪಾಲ ಬಲ್ಲಾಳ್, ಕೋಶಾಧಿಕಾರಿ ಭೋಜ ಯು. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.
ಕಲಬುರಗಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ : ಭಾರತದ ವೈಷ್ಣವಿ ಶುಭಾರಂಭ, ಅಮೋದಿನಿ ನಾಯಕ್ ನಿರಾಶೆ
ಡಬಲ್ಸ್ ನಲ್ಲಿ ಮುಂಚಿತ ಆತಿಥೇಯರು
ಗಲ್ಫ್ ಉದ್ವಿಗ್ನತೆ| ಮಂಗಳೂರು - ಗಲ್ಫ್ ರಾಷ್ಟ್ರಗಳ ನಡುವಿನ ಮತ್ತಷ್ಟು ವಿಮಾನಗಳ ಸಂಚಾರ ರದ್ದು
ಮಂಗಳೂರು, ಮಾ.3: ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಮತ್ತಷ್ಟು ವಿಮಾನಗಳ ಸಂಚಾರ ರದ್ದುಗೊಂಡಿವೆ ಎಂದು ವಿಮಾನ ನಿಲ್ದಾಣದ ವಕ್ತಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಾ.4ರ ಮಂಗಳೂರು-ಜೆದ್ದಾ (ಐಎಕ್ಸ್ 845), ಜೆದ್ದಾ-ಮಂಗಳೂರು (ಐಎಕ್ಸ್ 846), ಮಂಗಳೂರು-ದುಬೈ (ಐಎಕ್ಸ್ 831), ಮಾ.5ರ ದುಬೈ-ಮಂಗಳೂರು (ಐಎಕ್ಸ್ 832), ಮಾ.4ರ ಮಂಗಳೂರು-ದುಬೈ (ಐಎಕ್ಸ್ 813), ಮಾ.5ರ ದುಬೈ-ಮಂಗಳೂರು (ಐಎಕ್ಸ್ 814), ಮಾ.4ರ ಮಂಗಳೂರು-ಕುವೈತ್ (ಐಎಕ್ಸ್ 851), ಮಂಗಳೂರು-ದಮ್ಮಾಮ್ (ಐಎಕ್ಸ್ 847), ಮಾ.5ರ ದಮ್ಮಾಮ್-ಮಂಗಳೂರು (ಐಎಕ್ಸ್ 848), ಮಾ.4ರ ಮಂಗಳೂರು-ಅಬುಧಾಬಿ (ಐಎಕ್ಸ್ 815), ಮಾ.5ರ ಅಬುಧಾಬಿ- ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿವೆ ಎಂದು ತಿಳಿಸಿದ್ದಾರೆ.
‘ಜನತೆಗೆ ಬೇಕಿರುವುದು ಪಾರದರ್ಶಕತೆಯೇ ಹೊರತು, ರಾಜಕೀಯ ನಾಟಕವಲ್ಲ’: ಸಿದ್ದರಾಮಯ್ಯಗೆ ಆರ್.ಅಶೋಕ್ ತಿರುಗೇಟು
ಬೆಂಗಳೂರು : ‘ಮಾಧ್ಯಮ ವರದಿಯ ಆಧಾರದ ಮೇಲೆ ಉತ್ತರದಾಯಿತ್ವವನ್ನು ಪ್ರಶ್ನಿಸುವುದು ಹತಾಶೆಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ವಿಪಕ್ಷದ ಕರ್ತವ್ಯ. ನನ್ನ ಪ್ರಶ್ನೆಗಳು ತಮ್ಮನ್ನು ಮುಜುಗರಕ್ಕೀಡು ಮಾಡಿದರೆ, ಅದಕ್ಕೆ ನಾನು ಜವಾಬ್ದಾರನಲ್ಲ. ಕರ್ನಾಟಕದ ಜನತೆಗೆ ಬೇಕಿರುವುದು ಪಾರದರ್ಶಕತೆಯೇ ಹೊರತು ರಾಜಕೀಯ ನಾಟಕವಲ್ಲ’ ಎಂದು ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಪ್ರತಿಕ್ರಿಯೆಗೆ ತಿರುಗೇಟು ನೀಡಿದ್ದಾರೆ. ಮಂಗಳವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅಶೋಕ್, ‘ಸಿಎಂ ಸಿದ್ದರಾಮಯ್ಯನವರೇ, ಗುಪ್ತಚರ ಇಲಾಖೆಯ ದುರ್ಬಳಕೆ ಆಗುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಆರೋಪವಲ್ಲ. ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ತನ್ನ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕಟಿಸಿದೆ. ತಮಗೆ ಈ ವರದಿಯ ಬಗ್ಗೆ ಆಕ್ಷೇಪವಿದ್ದರೆ, ವರದಿ ಪ್ರಕಟಿಸಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು, ಆ ವರದಿಗೆ ಪ್ರತಿಕ್ರಿಯಿಸಿದ ವಿಪಕ್ಷದ ವಿರುದ್ಧವಲ್ಲ’ ಎಂದು ಹೇಳಿದ್ದಾರೆ. ‘ವರದಿಯಲ್ಲಿರುವ ಗಂಭೀರ ಅಂಶಗಳಿಗೆ ನೇರವಾಗಿ ಉತ್ತರಿಸುವ ಬದಲು, ತಾವು ಕ್ಷುಲ್ಲಕ, ಅಸಂಬದ್ಧ ರಾಜಕೀಯ ವಾಗ್ದಾಳಿ ನಡೆಸಲು ಮುಂದಾಗಿದ್ದೀರಿ. ನಿಮ್ಮ ಈ ಪ್ರತಿಕ್ರಿಯೆಯೇ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಒಂದು ವೇಳೆ ವರದಿ ಸುಳ್ಳಾಗಿದ್ದರೆ, ಅದನ್ನು ಸ್ಪಷ್ಟವಾಗಿ ನಿರಾಕರಿಸಿ ಪತ್ರಿಕೆಯಿಂದ ಸ್ಪಷ್ಟೀಕರಣ ಕೇಳಿ. ಅದನ್ನು ಬಿಟ್ಟು, ವಿಷಯಕ್ಕೆ ಸಂಬಂಧವೇ ಇಲ್ಲದಂತೆ ವಿರೋಧ ಪಕ್ಷದ ಮೇಲೆ ಹರಿಹಾಯುವುದು ಸಂಶಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ. ‘ಶಾಸಕರ ಚಟುವಟಿಕೆಗಳ ಬಗ್ಗೆ ನಿರಂತರ ಮಾಹಿತಿ ನೀಡುವಂತೆ ರಾಜ್ಯ ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಪದಗಳು ನಮ್ಮ ಸೃಷ್ಟಿಯಲ್ಲ, ಇವು ಸಾರ್ವಜನಿಕ ವಲಯದಲ್ಲಿರುವ ಮಾಧ್ಯಮ ವರದಿಯ ಭಾಗವಾಗಿದೆ. ಇಂತಹ ಗಂಭೀರ ವಿಷಯಗಳು ಮುನ್ನೆಲೆಗೆ ಬಂದಾಗ, ವಿಪಕ್ಷ ನಾಯಕನಾಗಿ ಅದರ ಬಗ್ಗೆ ಸ್ಪಷ್ಟತೆ ಕೇಳುವುದು ನನ್ನ ಸಾಂವಿಧಾನಿಕ ಜವಾಬ್ದಾರಿ. ಜನರ ಮುಂದೆ ಸತ್ಯಾಂಶಗಳನ್ನು ಇಡುವ ಬದಲು, ತಾವು ಯಾವುದೋ ಹಳೆಯ ಇತಿಹಾಸವನ್ನು ಕೆದಕಿ, ಸಂಬಂಧವಿಲ್ಲದ ರಾಷ್ಟ್ರೀಯ ನಾಯಕರನ್ನು ಎಳೆದು ತರುವ ಮೂಲಕ ವಿಷಯಾಂತರ ಮಾಡಲು ಯತ್ನಿಸುತ್ತಿರುವುದು ತಾವು ವರದಿಯಿಂದ ಗಲಿಬಿಲಿಗೊಂಡಿರುವುದನ್ನ ಸ್ಪಷ್ಟವಾಗಿ ತೋರಿಸುತ್ತದೆ’ ಎಂದು ಅಶೋಕ್ ಟೀಕಿಸಿದ್ದಾರೆ. ‘ಕರ್ನಾಟಕವು ಇಂದು ಡ್ರಗ್ಸ್ ಜಾಲ, ಕೋಮುದಳ್ಳುರಿಗಳು, ನಿರುದ್ಯೋಗದ ವಿರುದ್ಧ ಯುವಕರ ಹೋರಾಟ, ಸಾರಿಗೆ ನೌಕರರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರ ಮುಷ್ಕರ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವಾಗ, ಸರಕಾರದ ಮುಖ್ಯಸ್ಥರಾದ ತಮ್ಮ ಆದ್ಯತೆ ಆಡಳಿತದ ಮೇಲಿರಬೇಕೇ ಹೊರತು ಆಂತರಿಕ ಕಚ್ಚಾಟ, ರಾಜಕೀಯ ಮೇಲಾಟದ ಮೇಲಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ‘ನನ್ನ ಪ್ರಶ್ನೆ ನೇರ ಮತ್ತು ಸರಳವಾಗಿದೆ. ಗುಪ್ತಚರ ಇಲಾಖೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಳಸಲಾಗುತ್ತಿದೆಯೇ ಅಥವಾ ಕಾಂಗ್ರೆಸ್ ಪಕ್ಷದ ಆಂತರಿಕ ಬಣ ರಾಜಕೀಯವನ್ನು ನಿಭಾಯಿಸಲು ಬಳಸಿಕೊಳ್ಳಲಾಗುತ್ತಿದೆಯೇ? ಕರ್ನಾಟಕದ ಜನತೆಗೆ ಇದಕ್ಕೆ ನೇರ ಮತ್ತು ಪ್ರಾಮಾಣಿಕ ಉತ್ತರ ಬೇಕಿದೆ’ -ಆರ್.ಅಶೋಕ್, ಪ್ರತಿಪಕ್ಷ ನಾಯಕ
West Bengal Opinion Poll : ದೀದಿ ಕೋಟೆಯಲ್ಲಿ ಕಮಲದ ಅಬ್ಬರ - ಕೊನೇ ಕ್ಷಣದ ಟ್ವಿಸ್ಟೇ ಕುತೂಹಲ
Opinion Poll Of West Bengal Election : ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಈಗ ಚುನಾವಣೆ ನಡೆದರೆ, ಮತದಾರ ಯಾರ ಪರ ಎನ್ನುವ ಒಪಿನಿಯಲ್ ಪೋಲ್’ಒಂದು ಹೊರಬಿದ್ದಿದೆ. ಅದರ ಪ್ರಕಾರ, ಹಾಲೀ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಸಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಇನ್ನು, ಅಲ್ಲಿ ಕಾಂಗ್ರೆಸ್ ಪ್ರಭಾವ ಅಷ್ಟಕಷ್ಟೇ. ಬಿಜೆಪಿಗೆ ಮುನ್ನಡೆಯಾಗುವ ಸಾಧ್ಯತೆಯಿದೆ.
ಕಲಬುರಗಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ : ಮುಖ್ಯ ಪಂದ್ಯಾವಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ
ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಲಬುರಗಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಾವಳಿಗಳಿಗೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ, ಮತ್ತು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಮುಖ್ಯ ಪಂದ್ಯಾವಳಿಗಳ ಚಾಲನೆ ಕಾರ್ಯಕ್ರಮದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವವೃದ್ಧಿ ಇಲಾಖೆ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಹಾಗೂ ವಿಧಾನ ಪರಿಷತ್ ಸದಸ್ಯರಾಧ ಶಶೀಲ್ ಜಿ.ನಮೋಶಿ ಅವರು ಟೆನಿಸ್ ಆಡುವ ಮೂಲಕ ಅಧಿಕೃತವಾಗಿ ಮುಖ್ಯ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ನಗರದ ಪ್ರಾಧಿಕಾರದ ಅಧ್ಯಕ್ಷರಾದ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿಇಓ ಭವಂರಸಿಂಗ್ ಮೀನಾ, ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ವರ್ಷಾ ಜಾನೆ, ಪಾಲಿಕೆ ಆಯುಕ್ತರಾದ ಅವಿನಾಶ ಸಿಂಧೆ, ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಸಹಾಯಕ ಆಯುಕ್ತೆ ಸಾಹಿತ್ಯ, ಆಲದಕಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ಸೇರಿದಂತೆ ಐಟಿಎಫ್ ಪಂದ್ಯ ಆಯೋಜಕರು, ಆಟಗಾರರು, ಪ್ರೇಕ್ಷಕರು ಸೇರಿದಂತೆ ಹಲವರು ಇದ್ದರು.

23 C