ಬೆಳಗಾವಿಯಲ್ಲಿ 593 ಕೋಟಿ ರೂ. ಮೌಲ್ಯದ ನಕಲಿ ಇನ್ವಾಯ್ಸ್ ಹಗರಣ ಪತ್ತೆ
ಜಿಎಸ್ಟಿ ಪ್ರಾಕ್ಟಿಷನರ್ ಬಂಧನ : 235 ಕೋಟಿ ರೂ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆ ಆರೋಪ
Napoklu | ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ; ಸಂಘ ಪರಿವಾರದಿಂದ ರಸ್ತೆ ತಡೆ ಪ್ರತಿಭಟನೆ
ಮಡಿಕೇರಿ : ಹಿಂದುತ್ವ ಸಂಘಟನೆಯ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮತ್ತು ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಸಂಘ ಪರಿವಾರ ಕಾರ್ಯಕರ್ತರು ಇಂದು ನಾಪೋಕ್ಲುವಿನಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಬಲ್ಲಮಾವಟಿಯಲ್ಲಿ ಫೆ.28 ರಂದು ನಡೆಯಲಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅಪ್ಪಚ್ಚಿರ ಗೌತಮ್ ಎಂಬುವವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಗೌತಮ್ ರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಲಾಗಿದೆ. ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ದೊಡ್ಡಪುಲಿಕೋಟು ಗ್ರಾಮದ ಕರವಂಡ ಪಿ.ಲವ ನಾಣಯ್ಯ ಅವರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸುಹೇಲ್, ಸಿದ್ದಿಕ್, ಶಾಫಿ ಹಾಗೂ ರಾಶಿದ್ ಪಿ.ಎ ಎಂಬುವವರ ವಿರುದ್ಧ ಹಲ್ಲೆ ಆರೋಪದ ದೂರು ದಾಖಲಿಸಿದ್ದಾರೆ. ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಪ್ರಮುಖ ಮನು ಮುತ್ತಪ್ಪ, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪಿ.ರಮೇಶ್ ಹಾಗೂ ವಿವಿಧ ಸಂಘಪರಿವಾರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಘಟನೆಯನ್ನು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಹಲ್ಲೆ ನಡೆಸಿದವರನ್ನು ಪೊಲೀಸರು ಶೀಘ್ರ ಬಂಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಹರಪನಹಳ್ಳಿ | ವಚನ ಸಾಹಿತ್ಯ ಸರ್ವಕಾಲಿಕ: ಭರಮಪ್ಪ
ಹರಪನಹಳ್ಳಿ : ಪ್ರಸಕ್ತ ಯುಗದಲ್ಲಿ ಜ್ಞಾನ ಹೆಚ್ಚಾದಂತೆ ನೈತಿಕ ಮೌಲ್ಯಗಳು ಕುಸಿಯುತ್ತಿರುವುದು ವಿಷಾದಕರ. ವಚನ ಸಾಹಿತ್ಯವು ಸರ್ವಕಾಲಕ್ಕೂ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದು ಮೈಸೂರು ನಿವೃತ್ತ ಶಿಕ್ಷಣಾಧಿಕಾರಿ ಭರಮಪ್ಪ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಗುರುವಾರ ನಡೆದ ಲಿಂ. ಮೈಸೂರು ಚಂದ್ರಮ್ಮ ಹಾಗೂ ಬಸವಲಿಂಗಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಪ್ರಕಾರಗಳ ನಿರಂತರ ಅಧ್ಯಯನ ಮತ್ತು ಅನುಕರಣೆಯಿಂದ ಸಾರ್ಥಕ ಬದುಕು ರೂಪಿಸಬಹುದು. 12ನೇ ಶತಮಾನದಲ್ಲಿ ದಲಿತ, ದಮನಿತ ವರ್ಗಗಳ ದನಿಯಾಗಿದ್ದದ್ದು ವಚನ ಸಾಹಿತ್ಯವೇ ಆಗಿದೆ. ಇಂದಿನ ವಿಜ್ಞಾನದ ಭರಾಟೆಯಲ್ಲಿ ನಮ್ಮತನವನ್ನು ಮರೆತು ಬದುಕುತ್ತಿರುವುದು ನೋವಿನ ಸಂಗತಿ ಎಂದರು. ವಚನಗಳು ಮಾತು, ಪ್ರಮಾಣ ಮತ್ತು ಆಣೆಗಳ ಸಮನ್ವಯವಾಗಿದ್ದು, ನುಡಿದಂತೆ ನಡೆಯಬೇಕು. ನಮ್ಮ ಮಾತುಗಳಿಂದ ಇತರರಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಶ್ರಮ ಸಂಸ್ಕೃತಿಯಿಂದಲೇ ಸುಖೀ ಜೀವನ ಸಾಧ್ಯ; ಭೌತಿಕ ವಸ್ತುಗಳಿಂದ ನೆಮ್ಮದಿ ನಿರೀಕ್ಷಿಸಲಾಗದು ಎಂದು ತಿಳಿಸಿದರು. ಜಾತಿ-ಮತ-ಪಂಥಗಳ ಎಲ್ಲೆಗಳನ್ನು ಮೀರಿ ಬದುಕಿದವರು ಶರಣರು. ಯುವಜನತೆ ಶರಣರ ವಚನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ಸಾಧ್ಯವೆಂದು ಹೇಳಿದರು. ಪ್ರಾಚಾರ್ಯ ಕೆ. ಸತೀಶ್ ಮಾತನಾಡಿ, ವಚನ ಸಾಹಿತ್ಯವು ವಿಶ್ವ ಶ್ರೇಷ್ಠತೆಯ ಮನ್ನಣೆಯನ್ನು ಪಡೆದಿದೆ. ಶರಣರು ನಿಷ್ಠೆ, ಪ್ರಾಮಾಣಿಕತೆ ಹಾಗೂ ನಡೆ-ನುಡಿಯ ಸಂಸ್ಕಾರಯುತ ಆದರ್ಶ ಜೀವನ ನಡೆಸಿದರು ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನ ರಾಜಶೇಖರ ಬಣಕಾರ್, ನಿವೃತ್ತ ಸಿಡಿಪಿಓ ಸಿದ್ದೇಶಪ್ಪ ಹಾಗೂ ಕದಳಿ ವೇದಿಕೆಯ ಅಧ್ಯಕ್ಷೆ ಜಯಶ್ರೀ ಬಿ.ಜಿ. ಸಹ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಎಸ್. ವೀರಭದ್ರಪ್ಪ, ಕೆ. ಉಮಾಪತಿ (ನಿವೃತ್ತ ಮುಖ್ಯೋಪಾಧ್ಯಾಯ), ಗುತ್ತಿಗೆದಾರ ಎ. ಕರಿಬಸವರಾಜ, ಹೇಮಪ್ಪ ಮೋರಿಗೆರೆ, ಸಿ. ಸಿದ್ದಪ್ಪ, ನೀಲಮ್ಮ, ಡಾ. ನಾಗರಾಜ, ಕವಿತಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಂಗಳೂರಿನಿಂದ ನೇಪಾಳಕ್ಕೆ ಹೊರಟವರು 2 ದಿನದಿಂದ ವಿಮಾನದಲ್ಲೇ ಒಡಾಟ! ಊಟ ಇಲ್ಲ, ನಿದ್ದೆ ಇಲ್ಲ, ಸುಸ್ತೋ ಸುಸ್ತು
ಕೋಲಾರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ ರಾಜಧಾನಿ ಕಾಠ್ಮಾಂಡುವಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಎರಡು ದಿನಗಳಿಂದ ಕಾಠ್ಮಾಂಡುವಿನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ವಿಮಾನದಲ್ಲೇ ಒಡಾಡುತ್ತಾ ಪರದಾಡುತ್ತಿರುವ ವಿಚಿತ್ರ ಘಟನೆ ವರದಿಯಾಗಿದೆ. ಇದರಲ್ಲಿ ಕೋಲಾರದ ಸುಮಾರು 29 ಪ್ರಯಾಣಿಕರು ಇದ್ದಾರೆಂದು ತಿಳಿದು ಬಂದಿದೆ. ಗುರುವಾರ ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ 10.30 ಕ್ಕೆ 188 ಪ್ರಯಾಣಿಕರನ್ನ ಹೊತ್ತು ಸಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಮಧ್ಯಾಹ್ನ 1.30 ಕ್ಕೆ ನೇಪಾಳದ ಕಾಟ್ಮಾಂಡುವಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಲ್ಯಾಂಡಿಂಗ್ ಗೆ ಅನುಮತಿ ಸಿಕ್ಕಿಲ್ಲವಂತೆ. ಈ ಕಾರಣಕ್ಕೆ ವಾರಾಣಸಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಹೀಗಾಗಿ ವಿಮಾನ ವಾರಾಣಸಿಯಿಂದ ಕಳೆದ ರಾತ್ರಿ 9.30 ಕ್ಕೆ ಬೆಂಗಳೂರಿಗೆ ವಾಪಸ್ ಆಗಿದೆ. ಕಳೆದ ರಾತ್ರಿ ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆ ಮಾಡಿಕೊಡಲಾಗಿದೆ.. ಯಾಕೆ ಪ್ರಯಾಣಿಕರ ಆಕ್ರೋಶ? ಬಳಿಕ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮತ್ತೆ ಕಾಟ್ಮಾಂಡುವಿಗೆ ವಿಮಾನ ಟೇಕಾಫ್ ಆಗಿದ್ದು ಹವಾಮಾನ ವೈಪರೀತ್ಯದಿಂದಾಗಿ ಕಾಠ್ಮಾಂಡುವಿನಲ್ಲಿ ಮತ್ತೆ ಲ್ಯಾಂಡಿಂಗ್ ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಉತ್ತರ ಪ್ರದೇಶದ ಲಖನೌನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿ, ಮರಳಿ ಅಲ್ಲಿಂದ ಬೆಂಗಳೂರಿಗೆ ವಾಪಸ್ ಬರಲಾಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆ ವಿರುದ್ದ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಏರ್ ಪೋರ್ಟ್ ಟರ್ಮಿನಲ್ 2 ಎಮಿಗ್ರೇಷನ್ ಚೆಕ್ ಇನ್ ಕೌಂಟರ್ ಬಳಿ ಇಂದೇ ಮರಳಿ ವಿಮಾನದ ವ್ಯವಸ್ಥೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ. ಅನೇಕ ಹೆಂಗಸರು ಸಹ ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಏರ್ ಪೋರ್ಟ್ ಸಿಬ್ಬಂದಿ ಧರಣಿನಿರತರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿರುವ ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇಷ್ಟೆಲ್ಲಾ ಆದರೂ ಏರ್ ಇಂಡಿಯಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯಾವುದೇ ರೀತಿಯ ಪರಿಹಾರ ಸೂಚಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಗುರುವಾರದಂದು ಸತತ 11 ಗಂಟೆ ಪ್ರಯಾಣ ಮಾಡಿ ಪ್ರಯಾಣಿಕರು ಸುಸ್ತಾಗಿದ್ದರು. ಶುಕ್ರವಾರ ಮತ್ತೆ ಪ್ರಯಾಣ ಮಾಡಿರುವುದರಿಂದ ವಿಪರೀತ ಆಯಾಸಗೊಂಡು ದಿಕ್ಕು ತೋಚದಾಗಿದ್ದಾರೆ. ಎರಡು ದಿನಗಳಿಂದ ಸರಿಯಾಗಿ ಊಟ ಸಿಗದೆ ಪ್ರಯಾಣಿಕರು ತೊಂದರೆಗೊಳಗಾಗಿದ್ದು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ವಿನಂತಿಸಿದ್ದಾರೆ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಕಂಪ್ಲಿ | ವಿದ್ಯಾರ್ಥಿನಿಯರು ಶಿಕ್ಷಣದ ಮೂಲಕ ಭವಿಷ್ಯ ರೂಪಿಸಿಕೊಳ್ಳಲಿ: ಮದ್ದಾನಪ್ಪ ಬಿಡನಾಳ
ಕಂಪ್ಲಿ : ಪಟ್ಟಣದ ಮದರ್ ತೆರೇಸಾ ಪ್ರಿ-ಯೂನಿವರ್ಸಿಟಿ ಕಾಲೆಜ್ ಹಾಗೂ ವಿನುಠನಾ ಮಹಿಳಾ ಪದವಿ ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡಿಗೆ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೇತೃತ್ವವಹಿಸಿ ಮಾತನಾಡಿದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಮದ್ದಾನಪ್ಪ ಬಿಡನಾಳ ಅವರು, ವಿದ್ಯಾರ್ಥಿನಿಯರು ಉತ್ತಮವಾಗಿ ಓದಿ ಶೈಕ್ಷಣಿಕ ಪ್ರಗತಿ ಸಾಧಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಶಿಕ್ಷಣವೇ ಭವಿಷ್ಯದ ದಾರಿ ದೀಪ ಎಂದು ಅಭಿಪ್ರಾಯಪಟ್ಟರು. ನಮ್ಮ ಸಂಸ್ಥೆ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ನೀಡಲು ಸದಾ ಶ್ರಮಿಸುತ್ತಿದೆ. ಶಿಕ್ಷಣವು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮೂಲ ಅಸ್ತ್ರವಾಗಿದೆ. ಶಿಸ್ತು, ತಾಳ್ಮೆ ಹಾಗೂ ಏಕಾಗ್ರತೆಯನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಶಾಸಕ ಜೆ.ಎನ್. ಗಣೇಶ್ ಉದ್ಘಾಟಿಸಿದರು. ಹೆಚ್. ವೀರಾಪುರದ ಶಿವಲಿಂಗ ಮಠದ ಜಡೇಶ್ ತಾತ ದಿವ್ಯಸಾನಿಧ್ಯ ವಹಿಸಿದ್ದರು. ವಿವಿಎಸ್ಎಸ್ ಟ್ರಸ್ಟ್ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಇಂದ್ರಜಾ, ಗೌಡ್ರು ರಷ್ಮಿ, ತುಂಗಭದ್ರ, ಕೆ.ಎಂ. ಪವಿತ್ರಾ, ಜಿ. ಸಿದ್ದೇಶ್ವರಿ, ಎಂ. ಸುನಂದಾ, ಎನ್. ಭಾಗ್ಯಮ್ಮ, ಎಂ. ಐಶ್ವರ್ಯ, ಕೆ. ಅಕ್ಷತಾ, ಕೆ. ಅಂಜಲಿ, ಶಮಾ ಪರ್ವಿನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಅದ್ಧೂರಿಯಾಗಿ ಬೀಳ್ಕೊಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕನ್ನಡ ಸೇರಿದಂತೆ ವಿವಿಧ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಅಕ್ಕಿ ಗಿರಣಿ ಮಾಲಿಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಪುರಸಭೆ ಮಾಜಿ ಸದಸ್ಯ ಸಿ.ಆರ್. ಹನುಮಂತ, ವಿವಿಎಸ್ಎಸ್ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ್ ನಾಯಕ, ಪ್ರಾಚಾರ್ಯ ಮಹಮ್ಮದ್ ಶಫಿ, ಬಸವರಾಜಸ್ವಾಮಿ, ಮಹಾಬಲೇಶ್ವರಪ್ಪ, ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪುರಸ್ಕೃತೆ ಶಾಂತ ಗಡ್ಡದ್, ವಸತಿ ನಿಲಯ ಪಾಲಕಿ ಎಂ.ಬಿ. ಶುಭಾ ಸೋಮಶೇಖರ, ವೈದ್ಯಕೀಯ ಕ್ಷೇತ್ರದ ಡಾ. ಶ್ರದ್ಧಾ ಭರತ್, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಶೋಭಾ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸಿರವಾರ | ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಎರಡು ಕೇಂದ್ರಗಳಲ್ಲಿ 695 ವಿದ್ಯಾರ್ಥಿಗಳು
ಸಿರವಾರ : ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಸಿರವಾರ ಪಟ್ಟಣದಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಫೆ.28ರಂದು ನಡೆಯುವ ಕನ್ನಡ ವಿಷಯ ಪರೀಕ್ಷೆಗೆ ಒಟ್ಟು 695 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 375 ವಿದ್ಯಾರ್ಥಿಗಳು ಹಾಗೂ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 320 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಟ್ಟುನಿಟ್ಟಿನ ಭದ್ರತಾ ಕ್ರಮ : ಪರೀಕ್ಷಾ ಕೇಂದ್ರಗಳ ಪ್ರತಿಯೊಂದು ಕೊಠಡಿಗಳಲ್ಲೂ ವೆಬ್ಕಾಸ್ಟಿಂಗ್ (ಸಿ.ಸಿ. ಕ್ಯಾಮೆರಾ) ವ್ಯವಸ್ಥೆ ಅಳವಡಿಸಲಾಗಿದ್ದು, ನಕಲು ತಡೆಗೆ ಸೂಕ್ತ ಕಟ್ಟೆಚ್ಚರ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ 144ನೇ ವಿಧಿಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹೋಳಿ ಹಬ್ಬ, ಬೇಸಿಗೆ ರಜೆಗಳಲ್ಲಿ ದೌಂಡ್-ಕಲಬುರಗಿ ವಿಶೇಷ ರೈಲುಗಳ ಸೇವೆ ಮುಂದುವರಿಕೆ
ಕಲಬುರಗಿ: ಹೋಳಿ ಹಬ್ಬ ಮತ್ತು ಬೇಸಿಗೆ ರಜೆಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ದೌಂಡ್-ಕಲಬುರಗಿ ವಿಶೇಷ ರೈಲುಗಳ ಸೇವೆಯನ್ನು ಕೇಂದ್ರ ರೈಲ್ವೆ ಮುಂದುವರಿಸಲಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೌಂಡ್-ಕಲಬುರಗಿ ವಿಶೇಷ ರೈಲುಗಳ ಸಂಚಾರ ವಿವರ ಇಂತಿದೆ : ದೌಂಡ್ - ಕಲಬುರಗಿ ವಾರಕ್ಕೆ 5 ದಿನಗಳು ಕಾಯ್ದಿರಿಸದ ವಿಶೇಷ ರೈಲುಗಳು (196 ಟ್ರಿಪ್ಗಳು)- ರೈಲು ಸಂಖ್ಯೆ 01421/01422 ದೌಂಡ್-ಕಲಬುರಗಿ ವಾರಕ್ಕೆ 5 ದಿನಗಳು (ಗುರುವಾರ ಮತ್ತು ಭಾನುವಾರ ಹೊರತುಪಡಿಸಿ) ಈಗ ದಿನಾಂಕ 15.07.2026 ರವರೆಗೆ ಸಂಚರಿಸಲಿದೆ. ದೌಂಡ್- ಕಲಬುರಗಿ ದ್ವಿ-ವಾರಕ್ಕೊಮ್ಮೆ ಕಾಯ್ದಿರಿಸದ ವಿಶೇಷ ರೈಲುಗಳು (78 ಟ್ರಿಪ್ಗಳು) : ರೈಲು ಸಂಖ್ಯೆ 01425/01426 ದೌಂಡ್-ಕಲಬುರಗಿ ಕಾಯ್ದಿರಿಸದ ದೈನಂದಿನ ವಿಶೇಷ ರೈಲುಗಳು ಪ್ರತಿ ಗುರುವಾರ ಮತ್ತು ಭಾನುವಾರ 15.07.2026 ರವರೆಗೆ ಸಂಚಾರ ಮುಂದುವರಿಸಲಾಗಿದೆ. ಮೇಲೆ ತಿಳಿಸಲಾದ ರೈಲುಗಳ ಸಮಯ, ಸಂಯೋಜನೆ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಮಾನ್ಯ ಟಿಕೆಟ್ಗಳೊಂದಿಗೆ ಪ್ರಯಾಣಿಸಲು ವಿನಂತಿಸಲಾಗಿದೆ. ಕಾಯ್ದಿರಿಸದ ಬೋಗಿಗಳಿಗೆ ಬುಕಿಂಗ್ ಅನ್ನು ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್ಗಳ ಮೂಲಕ ಮತ್ತು ರೈಲ್ಒನ್ ಅಪ್ಲಿಕೇಶನ್ ಮೂಲಕವೂ ಮಾಡಬಹುದು.
ಕುಕನೂರು | ಪ್ರೇಮ ವಿವಾಹವಾದ ದಂಪತಿಗೆ ಜೀವ ಬೆದರಿಕೆ : ಆರೋಪ
ಕುಕನೂರು : ತಾಲೂಕಿನ ತಳಕಲ ಗ್ರಾಮದ ಬಸವರಾಜ್ ಮೇಟಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ನನ್ನ ತಂದೆ ಹಾಗೂ ಕೆಲವರಿಂದ ಜೀವ ಬೆದರಿಕೆ ಇದೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಚಿನ್ಮಯಿ ವೈದ್ಯ ಎಂಬವರು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಪೊಲೀಸರಿಗೆ ನೀಡಿದ ಮನವಿಯಲ್ಲಿ, ಇದೇ ಜ.14ರಂದು ಹುಬ್ಬಳ್ಳಿಯ ಒಂಟಿ ಆಂಜನೇಯ ದೇವಸ್ಥಾನದಲ್ಲಿ ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ. ಬಳಿಕ ಫೆ.23ರಂದು ಯಲಬುರ್ಗಾ ಪಟ್ಟಣದ ವಿವಾಹ ನೋಂದಣಿ ಕಚೇರಿಯಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಿಕೊಂಡಿದ್ದೇವೆ. ರೆಡ್ಡಿ ಸಮುದಾಯದ ಬಸವರಾಜನನ್ನು ಪ್ರೀತಿ ಮಾಡುತ್ತಿರುವ ವಿಚಾರ ಮನೆಯವರಿಗೆ ಗೊತ್ತಿತ್ತು. ಈ ಮದುವೆಯಾದ ವಿಚಾರ ಗೊತ್ತಾದರೆ ಬ್ರಾಹ್ಮಣ ಸಮುದಾಯದ ನನ್ನ ತಂದೆಯಿಂದ ಹಲ್ಲೆ ಅಥವಾ ಜೀವ ಬೆದರಿಕೆ ಭಯವಿದೆ ಎಂದು ಚಿನ್ಮಯಿ ಆರೋಪಿಸಿದ್ದಾರೆ. ಈ ಕುರಿತು ವಕೀಲ ಸುರೇಶ್ ಗುಡದೂರು ಮಾಹಿತಿ ನೀಡಿ, ದಂಪತಿಗಳ ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
AI ಒಪ್ಪಂದದಿಂದ ಮಕ್ಕಳ ಗೌಪ್ಯತೆಗೆ ಅಪಾಯ; ರಾಜ್ಯಗಳಿಗೆ NHRC ನೋಟಿಸ್
ಹೊಸದಿಲ್ಲಿ, ಫೆ. 27: ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಕಂಪೆನಿ ಹಾಗೂ ಭಾರತೀಯ ಸರಕಾರೇತರ ಸಂಸ್ಥೆ ನಡುವಿನ ಸಹಯೋಗದಿಂದ ಮಕ್ಕಳ ಗೌಪ್ಯತೆಗೆ ಉಂಟಾಗುವ ಅಪಾಯಗಳ ಕುರಿತು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ನೋಟಿಸ್ ಜಾರಿ ಮಾಡಿದೆ. ಅಮೆರಿಕ ಮೂಲದ ಅಂಥ್ರೋಪಿಕ್ ಹಾಗೂ ಭಾರತದಲ್ಲಿ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರಕಾರೇತರ ಸಂಸ್ಥೆ (NGO) ಪ್ರಥಮ್ ನಡುವಿನ ಸಹಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿ ನಮೋ ಪ್ರತಿಷ್ಠಾನ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ NHRC ಈ ನೋಟಿಸ್ ನೀಡಿದೆ. ಎನಿಟೈಮ್ ಟೆಸ್ಟಿಂಗ್ ಮೆಷಿನ್ (ATM) ಮೂಲಕ ಮಕ್ಕಳ ಕೈಬರಹದ ಪ್ರತಿಕ್ರಿಯೆಗಳು ಹಾಗೂ ಶೈಕ್ಷಣಿಕ ದತ್ತಾಂಶವನ್ನು ಸಂಸ್ಕರಿಸಲು ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯನ್ನು ಬಳಸುವ ಉದ್ದೇಶವನ್ನು ಈ ಎರಡು ಸಂಸ್ಥೆಗಳ ಒಪ್ಪಂದ ಹೊಂದಿದೆ. ಅಪ್ರಾಪ್ತ ವಯಸ್ಕರ ವೈಯಕ್ತಿಕ ದತ್ತಾಂಶದ ಸಂಗ್ರಹಣೆ, ಸಂಸ್ಕರಣೆ, ದಾಸ್ತಾನು ಹಾಗೂ ಸಂಭಾವ್ಯ ಗಡಿಯಾಚೆ ವರ್ಗಾವಣೆಗೆ ಸಂಬಂಧಿಸಿದ ಲೋಪದೋಷಗಳು ದತ್ತಾಂಶ ಸೋರಿಕೆ ಹಾಗೂ ರಕ್ಷಣಾ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ದತ್ತಾಂಶ ರಕ್ಷಣೆಗಾಗಿ ಈ ವಿಷಯದಲ್ಲಿ ಆಯೋಗ ಮಧ್ಯಪ್ರವೇಶಿಸಬೇಕು ಎಂದು ನಮೋ ಪ್ರತಿಷ್ಠಾನ ದೂರಿನಲ್ಲಿ ಕೋರಿದೆ.
T20 ವಿಶ್ವಕಪ್ | ವಿಲ್ ಜಾಕ್ಸ್ ಆಲ್ ರೌಂಡ್ ಆಟ, ಕೊನೆಯಲ್ಲಿ ಮುಗ್ಗರಿಸಿದ ಕಿವೀಸ್
ಇಂಗ್ಲೆಂಡ್ ಗೆ ಹ್ಯಾಟ್ರಿಕ್ ಗೆಲುವು, ಪಾಕ್ ತಂಡಕ್ಕೆ ಜೀವದಾನ
ಕಂಪ್ಲಿ | ಕ್ರಿಸ್ಟಿಯನ್ ಪಾಸ್ಟರ್ಸ್ ವೆಲ್ಫೇರ್ ಅಸೋಸಿಯೇಶನ್ಗೆ ನೂತನ ಪದಾಧಿಕಾರಿಗಳ ಆಯ್ಕೆ
ಕಂಪ್ಲಿ : ಪಟ್ಟಣದ ಹೊಸ ಜೀವನ ಕ್ರೈಸ್ಟ್ ಚರ್ಚ್ ನಲ್ಲಿ ತಾಲೂಕು ಕ್ರಿಸ್ಟಿಯನ್ಸ್ ಪಾಸ್ಟರ್ಸ್ ವೆಲ್ಫೇರ್ ಅಸೋಸಿಯೇಶನ್ ಸಂಘಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಲ್. ಷಡ್ಡಾಯ ಚರ್ಚ್ ಪಾಸ್ಟರ್ ಪಾಲ್ ಪಂಪಾಪತಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಪಾಸ್ಟರ್ ಇಸ್ರಾಯಲ್, ಕಾರ್ಯದರ್ಶಿಯಾಗಿ ಡ್ಯಾನಿಯಲ್, ಖಜಾಂಚಿಯಾಗಿ ರಾಜು ಮೈತ್ರಿ, ಸಹ ಖಜಾಂಚಿಯಾಗಿ ರವಿಕುಮಾರ್ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಪಾಸ್ಟರ್ ಪ್ರಸಾದ್ರಾವ್, ಮತ್ತಾಯ, ಸಾಂಬಯ್ ರೆಡ್ಡಿ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ. ರಾಜು, ತಿಮೋತಿ ಯನ್ನಪ್ಪ, ಶ್ಯಾಲೋಂ, ಶ್ರೀನಿವಾಸ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪಾಸ್ಟರ್ ಬಿ. ರಾಜು ಕಾರ್ಯನಿರ್ವಹಿಸಿದರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
ಕಂಪ್ಲಿ | ಮಿಷನ್ ಪ್ರಕೃತಿ ಅಭಿಯಾನ: ಎಮ್ಮಿಗನೂರು ಶತಮಾನ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ
ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಸರ್ಕಾರಿ ಶತಮಾನ ಶಾಲೆಗೆ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ “ಮಿಷನ್ ಪ್ರಕೃತಿ” ಅಭಿಯಾನದಲ್ಲಿ ಕೈಗೊಂಡ ಚಟುವಟಿಕೆಗಳನ್ನು ಪರಿಗಣಿಸಿ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಫಲಕ ನೀಡಿ ಶಾಲೆಯನ್ನು ಗೌರವಿಸಿದರು. ಶಾಲೆಯ ಮುಖ್ಯಶಿಕ್ಷಕ ಬಿ.ಎಸ್. ಸದ್ಯೋಜಾತಪ್ಪ ಮಾತನಾಡಿ, ಎರಡು ತಿಂಗಳುಗಳ ಕಾಲ ನಡೆದ ಮಿಷನ್ ಪ್ರಕೃತಿ ಅಭಿಯಾನದಲ್ಲಿ ಇಕೋ ಕ್ಲಬ್ ಮೂಲಕ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡಿದ ಶಿಕ್ಷಕಿ ಶ್ರುತಿ, ಸಿಬ್ಬಂದಿ ಹಾಗೂ ಎಸ್ಡಿಎಂಸಿ ಸದಸ್ಯರಿಗೆ ಅವರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಡಯಟ್ನ ರಂಗಾರೆಡ್ಡಿ, ವಿಜ್ಞಾನ ಶಿಕ್ಷಕಿ ಶ್ರುತಿ, ಶಿಕ್ಷಕ ವೆಂಕಟೇಶ್, ವಿದ್ಯಾರ್ಥಿಗಳಾದ ರೆಹಮಾನ್ ಬಿ., ಮೇಘನಾ, ಅನೀಫ್, ಕೆಂಚಮಾಳಪ್ಪ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳ್ಳಾರಿ | ಸಂತೋಷ್ ಲಾಡ್ ಅವರ 52ನೇ ಹುಟ್ಟುಹಬ್ಬ: ಸಾಧಕರಿಗೆ ಸನ್ಮಾನ
ಬಳ್ಳಾರಿ : ನಗರದ ಮೋತಿ ಸರ್ಕಲ್ನ ಖಾದಿ ಬಂಡಾರದ ರಾಕ್ ವಿಲ್ಲೆ ಕರೋಕೆ ಕ್ಲಬ್ಬಿನಲ್ಲಿ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರ 52ನೇ ಹುಟ್ಟುಹಬ್ಬದ ಪ್ರಯುಕ್ತ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಎಮ್ಮಿಗನೂರು ಗ್ರಾಮದ ಸರ್ಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ಹಾಗೂ ನಿರೂಪಕ ಎಸ್. ರಾಮಪ್ಪ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಗೌರವಿಸಿ ಅಭಿನಂದಿಸಲಾಯಿತು. ಗಣ್ಯರ ಉಪಸ್ಥಿತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಿಷ್ಟಿ ರುದ್ರಪ್ಪ, ತೋರಣಗಲ್ಲಿನ ಬಂಡಾಯ ಸಾಹಿತಿ ಅಬ್ದುಲ್ ಹೈ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ರಾಜ್ಯ ಯುವ ಘಟಕದ ಅಧ್ಯಕ್ಷ ಪ್ರಸನ್ನ ಕುಮಾರ್, ಪದಾಧಿಕಾರಿಗಳಾದ ಡಿಜೆ ತಿರುಮಲ, ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೇರಳದಲ್ಲಿ ಯಾರು ಯಾವ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ? 2024ರ ಗೆಜೆಟ್ ಡೇಟಾ ಹೇಳ್ತಿದೆ ನಿಜವಾದ Kerala Story
2024ರಲ್ಲಿ 365 ಕೇರಳಿಗರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ
ಪೋಖ್ರಣ್ ನಲ್ಲಿ ‘ವಾಯುಶಕ್ತಿ’ ಕವಾಯತು | ತನ್ನ ಯುದ್ಧ ಸಾಮರ್ಥ್ಯವನ್ನು ಪ್ರದರ್ಶಿಸಿದ ಐಎಎಫ್
ಜೈಸಲ್ಮೇರ್ (ರಾಜಸ್ಥಾನ), ಫೆ.27: ಭಾರತೀಯ ವಾಯುಪಡೆಯು ಶುಕ್ರವಾರ ಪೋಖ್ರಣ್ ಫೀಲ್ಡ್ ಫೈರಿಂಗ್ ರೇಂಜ್ ನಲ್ಲಿ ನಡೆದ ‘ವಾಯುಶಕ್ತಿ’ ಕವಾಯತಿನಲ್ಲಿ ತನ್ನ ಯುದ್ಧ ಸಾಮರ್ಥ್ಯ ಮತ್ತು ಶಸ್ತ್ರಬಲವನ್ನು ಪ್ರದರ್ಶಿಸಿತು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ಅನುಕರಿತ ದಾಳಿಗಳ ಮೂಲಕ ‘ಆಪರೇಷನ್ ಸಿಂಧೂರ’ದಲ್ಲಿನ ತನ್ನ ಕಾರ್ಯಾಚರಣೆಗಳ ಝಲಕ್ಗಳನ್ನೂ ವಾಯುಪಡೆಯು ಪ್ರದರ್ಶಿಸಿತು. ರಾಜಸ್ಥಾನದಲ್ಲಿ ಭಾರತ–ಪಾಕಿಸ್ತಾನ ಗಡಿ ಸಮೀಪದ ಥಾರ್ ಮರುಭೂಮಿಯಲ್ಲಿ ದಿನವಿಡೀ ನಡೆದ ಸಾಮರ್ಥ್ಯ ಪ್ರದರ್ಶನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ವಾಯುಪಡೆಯ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಸಂಯೋಜಿತ ಕಾರ್ಯಾಚರಣೆ ನಡೆಸಿ ಮೂರು ಕಿ.ಮೀ. ಪ್ರದೇಶದಲ್ಲಿ ಹರಡಿಕೊಂಡಿದ್ದ ಗುರಿಗಳನ್ನು ಹೊಡೆದುರುಳಿಸಿದವು. ವೈಮಾನಿಕ ದಾಳಿ, ನಿಖರ ಬಾಂಬ್ ದಾಳಿ ಹಾಗೂ ಭೂಗುರಿಗಳ ಮೇಲಿನ ಸಂಯೋಜಿತ ದಾಳಿ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಕೃತಕವಾಗಿ ರೂಪಿಸಲಾಗಿದ್ದ ಗುರಿಗಳಲ್ಲಿ ಶತ್ರುದೇಶದ ರನ್ವೇ, ಪೆಟ್ರೋಲಿಯಂ ದಾಸ್ತಾನು ಸೌಲಭ್ಯ, ಬಂಕರ್ಗಳು, ರಾಡಾರ್ ತಾಣಗಳು, ಟ್ಯಾಂಕ್ಗಳು ಹಾಗೂ ಶಸ್ತ್ರಸಜ್ಜಿತ ಬೆಂಗಾವಲು ವಾಹನಗಳು, ಸಂವಹನ ಕೇಂದ್ರ, ಭಯೋತ್ಪಾದಕ ಶಿಬಿರ, ಮದ್ದುಗುಂಡುಗಳ ಸಂಗ್ರಹಾಗಾರ, ವಾಯುನೆಲೆಯ ಹ್ಯಾಂಗರ್ ಹಾಗೂ ಕಮಾಂಡ್-ಆ್ಯಂಡ್-ಕಂಟ್ರೋಲ್ ಕೇಂದ್ರ ಸೇರಿದ್ದವು. ಜಾಗ್ವಾರ್, ಮಿರಾಜ್ ಮತ್ತು ಸುಖೋಯ್ ಯುದ್ಧವಿಮಾನಗಳು ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದವು. ಸ್ವದೇಶಿ ನಿರ್ಮಿತ ಎಚ್ಎಎಲ್ ನ ‘ಪ್ರಚಂಡ’ ಹೆಲಿಕಾಪ್ಟರ್ ಕೃತಕ ಮರುಇಂಧನ ಕೇಂದ್ರದ ಮೇಲೆ ದಾಳಿ ನಡೆಸಿ ತನ್ನ ಸಾಮರ್ಥ್ಯವನ್ನು ಮೆರೆಯಿತು. ಅಪಾಚೆ ದಾಳಿ ಹೆಲಿಕಾಪ್ಟರ್ಗಳು ಮತ್ತು ಎಂಐ-17 ವಿ5 ಹೆಲಿಕಾಪ್ಟರ್ಗಳೂ ಕವಾಯತಿನಲ್ಲಿ ಪಾಲ್ಗೊಂಡಿದ್ದವು. ಬೆಳಿಗ್ಗೆ ಆಲಿವ್ ಹಸಿರು ಬಣ್ಣದ ಸಮವಸ್ತ್ರ ಮತ್ತು ಹೆಲ್ಮೆಟ್ ಧರಿಸಿದ್ದ ರಾಷ್ಟ್ರಪತಿಗಳು ಜೈಸಲ್ಮೇರ್ ವಾಯುಪಡೆ ನಿಲ್ದಾಣದಿಂದ ‘ಪ್ರಚಂಡ’ ಹೆಲಿಕಾಪ್ಟರ್ ನಲ್ಲಿ ಸಹಪೈಲಟ್ ಆಗಿ 25 ನಿಮಿಷಗಳ ಹಾರಾಟ ನಡೆಸಿದರು. ‘ವಾಯುಶಕ್ತಿ’ ಕವಾಯತು ಭಾರತೀಯ ವಾಯುಪಡೆಯ ಯುದ್ಧ ಸನ್ನದ್ಧತೆಯನ್ನು ಪ್ರದರ್ಶಿಸುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದರಲ್ಲಿ ಆಧುನಿಕ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತದೆ. LIVE TELECAST - EXERCISE VAYUSHAKTI 2026 https://t.co/OIDflqY4Hm — Indian Air Force (@IAF_MCC) February 27, 2026
ಹೊಸಪೇಟೆ | ಸಂತೋಷ್ ಲಾಡ್ ಅವರ ಹುಟ್ಟುಹಬ್ಬ ಆಚರಣೆ
ವಿಜಯನಗರ : ಜಿಲ್ಲೆಯ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂತೋಷ್ ಲಾಡ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಆಕಾರದ ಭಾವಚಿತ್ರವನ್ನು ರಂಗೋಲಿಯಲ್ಲಿ ವಿಶೇಷವಾಗಿ ನಿರ್ಮಿಸಲಾಯಿತು. ಒಂದು ಕ್ವಿಂಟಲ್ಗಿಂತ ಹೆಚ್ಚು ರಂಗೋಲಿ ಬಳಸಿ, 7 ಜನ ಕಲಾವಿದರು 14 ಗಂಟೆಗಳ ಕಾಲ ಶ್ರಮಿಸಿ 100 ಅಡಿ ಉದ್ದ ಮತ್ತು 100 ಅಡಿ ಅಗಲದ ಭಾವಚಿತ್ರವನ್ನು ರೂಪಿಸಿದರು. ಈ ಭವ್ಯ ರಂಗೋಲಿ ಚಿತ್ರಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ಸಿದ್ದು ಹಳ್ಳೇಗೌಡ್ರ ಅವರ ನೇತೃತ್ವದಲ್ಲಿ, ಯುವ ಕಾಂಗ್ರೆಸ್ ಮುಖಂಡ ಭರತ್ ಕುಮಾರ್ ಸಿಆರ್ ಅವರಿಂದ ರಂಗೋಲಿ ನಿರ್ಮಾಣ ಕಾರ್ಯ ನೆರವೇರಿಸಲಾಯಿತು. ಸಂತೋಷ್ ಲಾಡ್ ಅವರಿಗೆ ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹುಟ್ಟುಹಬ್ಬದ ನಿಮಿತ್ತ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲ್ತಾಫ್ ಸೇರಿದಂತೆ ಅರ್ಬಾಜ್ ಖಾನ್, ಶಿವಕುಮಾರ್, ಇಮ್ತೀಯಾಜ್, ಪ್ರದೀಪ್, ಸುಹೇಲ್, ಹಾರೂನ್, ರಿಯಾಜ್, ನವೀನ್ ಕುಮಾರ್ ಸಿಆರ್ ಮತ್ತು ಇತರರು ಉಪಸ್ಥಿತರಿದ್ದರು.
ಬ್ಯಾಂಕ್ ಖಾತೆಯಲ್ಲಿ 2.6 ಕೋಟಿ ರೂ. ವಹಿವಾಟು!
ರಿಕ್ಷಾ ಚಾಲಕನ ಪುತ್ರಿಯಿಂದ ಪೊಲೀಸರಿಗೆ ದೂರು
ಮಂಗಳೂರಿನಲ್ಲಿ ಚಿರತೆ ಹಾವಳಿ: ಅಧಿಕಾರಿಗಳ ಜೊತೆ ಶಾಸಕ ಕಾಮತ್ ಚರ್ಚೆ
ಮಂಗಳೂರು, ಫೆ,27: ನಗರದ ಕದ್ರಿ, ಶಕ್ತಿನಗರ ಪರಿಸರದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಶುಕ್ರವಾರ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಹಿತದೃಷ್ಟಿ ಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕದ್ರಿ ಕೈಬಟ್ಟಲ್, ಶಕ್ತಿನಗರದ ಕೋರ್ಡೆಲ್ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನುಗಳನ್ನು ಇಡಲಾಗಿದೆ. ಈ ಎರಡೂ ಭಾಗಗಳಲ್ಲಿ ಕಾಣಿಸಿಕೊಂಡ ಚಿರತೆ ಒಂದೇ ಆಗಿರುವ ಸಾಧ್ಯತೆಯೂ ಇದೆ. ಚಿರತೆ ಸಂಚಾರ ಮಾಡಿರುವ ಪ್ರದೇಶ ದಲ್ಲಿ ಹಗಲು ರಾತ್ರಿ ಗಸ್ತು ತಿರುಗಲು ಅರಣ್ಯ ಇಲಾಖೆ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದೇವೆ. ಸದ್ಯ ಚಿರತೆ ಇಲ್ಲೇ ಉಳಿದಿರದೆ, ಕಾಡಿಗೆ ಮರಳಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ಸಾರ್ವಜನಿಕರು ಚಿರತೆ ಸಹಿತ ಯಾವುದೇ ಅಪಾಯಕಾರಿ ಕಾಡುಪ್ರಾಣಿಗಳು ಕಂಡು ಬಂದಲ್ಲಿ ಕೂಡಲೇ ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆ 1926ಕ್ಕೆ ತಿಳಿಸಿದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ವಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ ತಿಳಿಸಿದ್ದಾರೆ.
ಬ್ರಿಟನ್ ಉಪಚುನಾವಣೆ | ಭದ್ರಕೋಟೆ ಕಳೆದುಕೊಂಡ ಲೇಬರ್ ಪಕ್ಷ
ಲಂಡನ್, ಫೆ.27: ಬ್ರಿಟನ್ನ ಸಂಸತ್ತಿಗೆ ನಡೆದ ಉಪಚುನಾವಣೆಯಲ್ಲಿ ಗ್ರೀನ್ ಪಾರ್ಟಿ ಆಫ್ ಇಂಗ್ಲೆಂಡ್ ಎದುರು ಆಡಳಿತಾರೂಢ ಪಕ್ಷ ಲೇಬರ್ ಪಾರ್ಟಿಗೆ ಸೋಲಾಗಿದ್ದು ಪ್ರಧಾನಿ ಕೀರ್ ಸ್ಟಾರ್ಮರ್ಗೆ ತೀವ್ರ ಹಿನ್ನಡೆಯಾಗಿದೆ. ಸುಮಾರು 1 ಶತಮಾನಗಳಿಂದ ಲೇಬರ್ ಪಕ್ಷದ ಭದ್ರಕೋಟೆ ಎನಿಸಿದ್ದ ಗ್ರೇಟರ್ ಮ್ಯಾಂಚೆಸ್ಟರ್ನ `ಗಾರ್ಟನ್ ಆ್ಯಂಡ್ ಡೆಂಟನ್' ಕ್ಷೇತ್ರದಲ್ಲಿ ಗ್ರೀನ್ ಪಾರ್ಟಿಯ ಅಭ್ಯರ್ಥಿ ಹನಾ ಸ್ಪೆನ್ಸರ್ 40.7% ಮತ ಪಡೆದು ಗೆಲುವು ಸಾಧಿಸಿದ್ದರೆ, ರಿಫಾರ್ಮ್ ಯುನೈಟೆಡ್ ಕಿಂಗ್ಡಮ್ ಪಕ್ಷ 28.7% ಮತಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಪ್ರಧಾನಿ ಸ್ಟಾರ್ಮರ್ ಅವರ ಲೇಬರ್ ಪಕ್ಷ 25.4% ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ.
ವಿಟ್ಲ| ಅಕ್ರಮ ಗೋ ಸಾಗಾಟ ಆರೋಪ: ವಾಹನ ವಶಕ್ಕೆ; ಪ್ರಕರಣ ದಾಖಲು
ವಿಟ್ಲ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ವಾಹನವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ವಿಟ್ಲ ಎಸೈ ರಾಮಕೃಷ್ಣ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಮಂಡ್ಯ ನಿವಾಸಿಗಳಾದ ಚಾಲಕ ನವೀನ ಹಾಗೂ ಚೇತನ್ ಎಂಬವರನ್ನು ವಿಚಾರಿಸಿದ್ದಾರೆ. ವಾಹನವೊಂದು ರಸ್ತೆ ಬದಿಯಲ್ಲಿ ನಿಂತಿದ್ದು, ಅದರಲ್ಲಿ ಎರಡೂ ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡಿಕೊಂಡು ಬಂದಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಾಹನದಲ್ಲಿದ್ದ ಮಂಡ್ಯ ನಿವಾಸಿಗಳಾದ ಚಾಲಕ ನವೀನ ಹಾಗೂ ಮತ್ತೋರ್ವ ಚೇತನ್ ಎಂಬವರಲ್ಲಿ ವಿಚಾರಿಸಲಾಗಿ, ಚನ್ನರಾಯಪಟ್ಟಣದಿಂದ ಶಂಕರ ಎಂಬವರು ಸಾಲೆತ್ತೂರಿನ ಶಾಫಿ ಎಂಬವರಿಗೆ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತುಂಬಿಸಿ ಕಳುಹಿಸಿದ್ದು, ಜಾನುವಾರುಗಳನ್ನು ಸಾಗಿಸಲು ಬೇರೆಯವರ ಹೆಸರಿನಲ್ಲಿ ದಾಖಲಾತಿಯನ್ನು ಪಡೆದು ಸಾಗಿಸುತ್ತಿರುವುದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Virat Kohli: ರಿಂಕು ಸಿಂಗ್ ಅವರ ತಂದೆ ನಿಧನಕ್ಕೆ ವಿರಾಟ್ ಕೊಹ್ಲಿ ಸಂತಾಪ
Virat Kohli: ಭಾರತೀಯ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರು ರಿಂಕು ಸಿಂಗ್ ಅವರ ತಂದೆ ಖಾಂಚಂದ್ ಸಿಂಗ್ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣ ತಮ್ಮ ಟ್ವಿಟರ್ ಖಾತೆ ಮೂಲಕ ಸಂತಾಪ ಸೂಚಿಸಿದ್ದಾರೆ. ಲಿವರ್ ಕ್ಯಾನ್ಸರ್ನಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ಖಾಂಚಂದ್ ಅವರು ಶುಕ್ರವಾರ (ಫೆಬ್ರವರಿ 27) ಬೆಳಗಿನ ಜಾವ ನಿಧನರಾದರು. ಖಾಂಚಂದ್ ಅವರ ಆರೋಗ್ಯ
ಉತ್ತರ ಕರ್ನಾಟಕದಲ್ಲಿ ಜನಪದ ಮಹಿಳಾ ಉತ್ಸವ ನಡೆಸಿದರೆ ಅನುದಾನ: ಶಿವರಾಜ್ ತಂಗಡಗಿ
ಬೆಂಗಳೂರು, ಫೆ.27: ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಜನಪದ ಮಹಿಳಾ ಉತ್ಸವ ನಡೆಸಿದರೆ ಅಗತ್ಯ ಅನುದಾನವನ್ನು ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ. ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ತಜ್ಞ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಿ ಅವರು ಮಾತನಾಡಿದರು. ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲಾಖೆಗೆ ಹೆಚ್ಚಿನ ಅನುದಾನ ಕೊಡುವ ನಿರೀಕ್ಷೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಅಕಾಡಮಿಗಳನ್ನು ಇನ್ನಷ್ಟು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಜಾನಪದ ಅಕಾಡಮಿಯಿಂದ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಜನಪದ ಮಹಿಳಾ ಉತ್ಸವ ನಡೆಸುವುದಾದರೆ ಸಮರ್ಪಕ ಅನುದಾನ ಕೊಡುತ್ತೇನೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು. ಪ್ರಶಸ್ತಿಗಳೆಂದರೆ ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತಲಿಗೆ ಸೀಮಿತ ಎನ್ನುವಂತಾಗಿದೆ. ಆದರೆ, ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು, ರಾಜ್ಯದ ಎಲ್ಲ ಜಿಲ್ಲೆಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಭಿನಂದನಾರ್ಹ. ಸಂವಿಧಾನದ ಹಾದಿಯಲ್ಲಿ ಗೊಲ್ಲಹಳ್ಳಿ ಶಿವಪ್ರಸಾದ್ ಸಾಗುತ್ತಿದ್ದಾರೆ ಎಂದು ಶಿವರಾಜ್ ತಂಗಡಗಿ ಹೇಳಿದರು. ಜನಪದ ಸಂಗೀತ, ನೃತ್ಯ ಪ್ರಕಾರಗಳು ಇದೇ ತಲೆ ಮಾರಿಗೆ ಕೊನೆಯಾಗಬಾರದು. ಮುಂದಿನ ಪೀಳಿಗೆಗೂ ಕಲಿಸಬೇಕು. ಉತ್ತರ ಕರ್ನಾಟಕದೊಳಗೆ ಜನಪದದ ದೊಡ್ಡ ಸಾಹಿತಿಗಳು, ವಿದ್ವಾಂಸರು ಇದ್ದಾರೆ. ಅವರಿಗೆ ಅವಕಾಶಗಳು ಸಿಗದೆ, ಸಮಾಜದ ಮುಖ್ಯವಾಹಿನಿಗೆ ಬರಲೇ ಇಲ್ಲ. ಅಂತಹವರಿಗೆ ಅವಕಾಶ ಸಿಗುವಂತಾಗಬೇಕು ಎಂದು ಶಿವರಾಜ್ ತಂಗಡಗಿ ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಅಕಾಡಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ, ಬಿಬಿಎಂಪಿ ಪಾಲಿಕೆ ಮಾಜಿ ಸದಸ್ಯ ಎಂ.ಶಿವರಾಜು, ಇಲಾಖೆ ನಿರ್ದೇಶಕ ಬಿ.ಎಸ್.ಮಂಜುನಾಥ್, ರಿಜಿಸ್ಟ್ರಾರ್ ನಮ್ರತ ಸೇರಿದಂತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ಒಳಮೀಸಲಾತಿ’ ಅನಾವಶ್ಯಕ ಹೇಳಿಕೆ ನೀಡಬೇಡಿ : ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಮನವಿ
ಬೆಂಗಳೂರು, ಫೆ. 27: ಒಳಮೀಸಲಾತಿ ಕುರಿತು ಯಾವುದೇ ಸಮುದಾಯದವರು ಗೊಂದಲಕ್ಕೆ ಒಳಗಾಗಬಾರದು ಮತ್ತು ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು. ಎಲ್ಲರಿಗೂ ನ್ಯಾಯ ಸಿಗುವಂತೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ. ಶುಕ್ರವಾರ ಈ ಕುರಿತು ಜಂಟಿ ಪ್ರಕಟನೆ ನೀಡಿರುವ ಅವರು, ಫೆ.26ರಂದು ನಡೆದ ಸಂಪುಟ ಸಭೆಯಲ್ಲಿ, ಮೂರು-ನಾಲ್ಕು, ತಿಂಗಳಿನಿಂದ ನಿಂತಿದ್ದ ಸರಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸುವ ಮಹತ್ವದ ತೀರ್ಮಾನ, ಕೈಗೊಳ್ಳಲಾಗಿದೆ. ಒಟ್ಟು 56,432 ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ. ಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಶೇ.50ರಷ್ಟು ಒಟ್ಟು ಮೀಸಲಾತಿ ಮೀರಬಾರದು ಎಂಬ ನಿಯಮವನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಅದರಂತೆ ಎಸ್ಸಿಗೆ ಶೇ.15 ಮತ್ತು ಎಸ್ಟಿಗೆ ಶೇ.3ರಷ್ಟು ಮೀಸಲಾತಿ ಜಾರಿಗೊಳಿಸಲಾಗುತ್ತದೆ. ಮೊದಲು ಶೇ.17ರ ಬಗ್ಗೆ ತೆಗೆದುಕೊಂಡ ತೀರ್ಮಾನದಲ್ಲಿ ಉಳಿದಿದ್ದ ಶೇ.6 ಅನ್ನು ತಾತ್ಕಾಲಿಕವಾಗಿ ಕಾಯ್ದಿರಿಸಲಾಗಿದೆ. ನ್ಯಾಯಾಲಯದ ಅಂತಿಮ ತೀರ್ಪಿನ ಆಧಾರದ ಮೇಲೆ ಶೇ6 ಅನ್ನು ಜನರಲ್ ವರ್ಗಕ್ಕೂ ಅಥವಾ ಎಸ್ಸಿ, ಎಸ್ಟಿ ವರ್ಗಕ್ಕೋ ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ಎಸ್.ಸಿಗೆ ಶೇ.2ರಷ್ಟು ಮತ್ತು ಎಸ್ಟಿಗೆ ಶೇ.4 ಪರಿಗಣನೆಯಲ್ಲಿದೆ ಎಂದು ತಿಳಿಸಿದ್ದಾರೆ. ಶೇ.15ರಷ್ಟು ಮಿತಿಯೊಳಗೆ ಒಳ ಮೀಸಲಾತಿಯನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಮುಖಂಡರೊಂದಿಗೆ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಡಾ. ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಶಿವರಾಜ ತಂಗಡಗಿ ಹಾಗೂ ರುದ್ರಪ್ಪ ಲಮಾಣಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ವಿಷಯ ತಿಳಿಸಲಾಗಿದ್ದು, ಅಧಿಸೂಚನೆ ನಂತರ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳುವ ಮೊದಲು ಒಳ ಮೀಸಲಾತಿ ಜಾರಿಗೊಳಿಸಲು ಸರಕಾರ ಬದ್ಧವಾಗಿದೆ. ಯಾವುದೇ ಸಮುದಾಯದವರು ಗೊಂದಲಕ್ಕೀಡಾಗಬಾರದು ಮತ್ತು ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು ಎಂದು ತಿಳಿಸಿದ್ದಾರೆ.
ಗುಂಪು ಹಲ್ಲೆ ಪ್ರಕರಣ: ಆರೋಪಿಗಳಿಗೆ ಸುಳ್ಯ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟ
ಸುಳ್ಯ: ಗುಂಪು ಹಲ್ಲೆ ನಡೆಸಿ ಕುಟುಂಬ ಒಂದರ ಸದಸ್ಯರಿಗೆ ಗಾಯಪಡಿಸಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸುಳ್ಯ ನ್ಯಾಯಾಲಯ ತಲಾ 25 ಸಾವಿರ ರೂ. ಗಳ ಒಂದು ವರ್ಷದ ಬಾಂಡ್ ಪಡೆಯುವಂತೆ ಆದೇಶ ನೀಡಿದೆ. 2018 ಮಾರ್ಚ್ 15 ರಂದು ಮುರುಳ್ಯ ಗ್ರಾಮದ ಕುಕ್ಕೆಟ್ಟಿ ಎಂಬಲ್ಲಿ ಗುಂಪು ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಗಳಾದ ಅರುಣ್ ರೈ, ವಸಂತ ಕುಮಾರ್, ಅನಿಲ್ ರೈ ಮತ್ತು ವಿನೋದ್ ಎಂಬುವರಿಗೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. 2018ರ ಮಾರ್ಚ್ 15 ರಂದು ರಂದು ಸಂಜೆ ಮೋಟಾರ್ ಸೈಕಲ್ನಲ್ಲಿ ನಿಂತಿಕಲ್ಲು ಕಡೆಯಿಂದ ಕುಕ್ಕಟ್ಟೆ ಎಂಬಲ್ಲಿನ ಮನೆಗೆ ಬರುತ್ತಿದ್ದ ಶಮೀರ್ ಮತ್ತು ಆತನ ಕುಟುಂಬದ ಸದಸ್ಯರ ಮೇಲೆಯೂ ಹಲ್ಲೆ ನಡೆಸಿ ಗಾಯಗೊಳಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ದಲ್ಲಿ ನ್ಯಾಯಾಧೀಶರಾದ ಶಿವಣ್ಣ ಹೆಚ್. ಆರ್. ಅವರ ಎದುರು ವಿಚಾರಣೆ ನಡೆದು ಆರೋಪಿತರ ಅಪರಾಧ ಸಾಬೀತಾಗಿ ಅವರುಗಳನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ನಾಲ್ಕು ಜನ ಆರೋಪಿಗಳಿಗೆ ತಲಾ 25,000 ರೂ ನ ಬಾಂಡನ್ನು ಕಾರ್ಯಗತಗೊಳಿಸಿ, ಆರೋಪಿ 1 ರಿಂದ 4 ರವೆರಗೆ ನ್ಯಾಯ ವ್ಯಾಪ್ತಿ ಪರಿಕ್ಷಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಇರಬೇಕು. ಹಾಗೂ ಅವರು ನಾಲ್ಕು ತಿಂಗಳಿಗೊಮ್ಮೆ ತಮ್ಮ ನಡವಳಿಕೆಯ ಬಗ್ಗೆ ವರದಿ ಸಲ್ಲಿಸಬೇಕು ಎಂದು ತೀರ್ಪು ನೀಡಿ ಆದೇಶ ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ ರವರು ವಾದ ಮಂಡಿಸಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯ ಅಂದಿನ ಪಿಎಸ್ಐ ಎಂ. ವಿ ಚೆಲುವಯ್ಯ ಅವರು ತನಿಖಾಧಿಕಾರಿ ಆಗಿ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆ ಪಿ ಎಸ್ ಐ ಈರಯ್ಯ ಅವರು ಹಾಗೂ ಬೆಳ್ಳಾರೆ ಪೊಲೀಸ್ ಕಾನ್ಸ್ಟೇಬಲ್ ಮನು ವಿ ಎಂ ಅವರು ಕೋರ್ಟ್ ಮಾನಿಟರಿಂಗ್ ಕರ್ತವ್ಯ ನಿರ್ವಹಿಸಿದರು.
ರಾಯಚೂರು | ನಾಳೆಯಿಂದ(ಫೆ.28) ದ್ವಿತೀಯ ಪಿಯುಸಿ ಪರೀಕ್ಷೆ : 22,442 ವಿದ್ಯಾರ್ಥಿಗಳು ಹಾಜರು
ರಾಯಚೂರು : ರಾಜ್ಯದಲ್ಲಿ ಶನಿವಾರದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಪದವಿ ಪೂರ್ವ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮೊದಲ ದಿನವೇ 22,442 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 22,442 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 18,419 ಮಂದಿ ಹೊಸ ವಿದ್ಯಾರ್ಥಿಗಳು, 560 ಮಂದಿ ಖಾಸಗಿ ಅಭ್ಯರ್ಥಿಗಳು ಹಾಗೂ 3,450 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಜಿಲ್ಲೆಯಾದ್ಯಂತ 43 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಕೇಂದ್ರಗಳು : ರಾಯಚೂರು ತಾಲೂಕಿನಲ್ಲಿ 13, ಲಿಂಗಸುಗೂರು 7, ದೇವದುರ್ಗ 5, ಸಿಂಧನೂರು 9, ಮಾನವಿ 05, ಮಸ್ಕಿ 2, ಸಿರವಾರ 2 ಸೇರಿದಂತೆ ಒಟ್ಟು 43 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಊರಿನಿಂದ ಸ್ಥಳೀಯ ಬಸ್ ನಿಲ್ದಾಣ, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಪರೀಕ್ಷೆ ಬರೆಯಲು ಹೋಗುವ ವೇಳೆ ಸರ್ಕಾರಿ ಬಸ್ಗಳಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕುಗಳಿಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರಪತ್ರಿಕೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 5.30ರಿಂದ ಸಿಂಧನೂರು, ಲಿಂಗಸುಗೂರು ಮತ್ತು ಮಸ್ಕಿಗೆ, ಬೆಳಿಗ್ಗೆ 7 ಗಂಟೆಯಿಂದ ರಾಯಚೂರು, ದೇವದುರ್ಗ ಮತ್ತು ಸಿರವಾರ ತಾಲೂಕುಗಳಿಗೆ ಕಳುಹಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಶುಶ್ರೂಷಕರನ್ನು ನೇಮಕ ಮಾಡಲಾಗಿದೆ ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ ತಿಳಿಸಿದ್ದಾರೆ.
ಬಾಡಿಗೆಗೆ ಇರುವ ವಿದೇಶಿಗರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ: ಸೀಮಂತ್ಕುಮಾರ್ ಸಿಂಗ್
ಬೆಂಗಳೂರು, ಫೆ.26: ಬಾಡಿಗೆಗೆ ವಾಸವಿರುವ ವಿದೇಶೀಯರ ಬಗ್ಗೆ ಯಾವುದೇ ಅನುಮಾನ ಇದ್ದಲ್ಲಿ ಮನೆ ಮಾಲಕರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮನವಿ ಮಾಡಿದ್ದಾರೆ. ಶುಕ್ರವಾರ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂಡಿಗೆ ಮಾತನಾಡಿದ ಅವರು, ನಗರದ ಎಲ್ಲಾ ಪ್ರದೇಶಗಳಲ್ಲಿ ವಾಸವಿರುವ ವಿದೇಶಿ ಪ್ರಜೆಗಳ ವೀಸಾ, ಫಾರಂ-ಸಿ ಮತ್ತು ಇತರೆ ದಾಖಲಾತಿಗಳ ಪರಿಶೀಲನೆಯನ್ನು ಸಿಸಿಬಿ ಒಳಗೊಂಡಂತೆ ಎಲ್ಲಾ ವಿಭಾಗದ ಉಪ ಪೊಲೀಸ್ ಆಯುಕ್ತರು ನಡೆಸುತ್ತಿದ್ದಾರೆ ಎಂದರು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ, ಲೈವ್ ಕ್ಯಾಮೆರಾಗಳನ್ನು ಬಳಸಿಕೊಂಡು ಪ್ರದೇಶವಾರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸೀಮಂತ್ಕುಮಾರ್ ತಿಳಿಸಿದರು. ಮನೆಯ ಮಾಲಕರು ತಮ್ಮ ಮನೆಗಳಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ಫಾರಂ-ಸಿ ಮಾಹಿತಿ ಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು ಕಡ್ಡಾಯವಾಗಿದೆ. ವೀಸಾ ಅವಧಿ ಮೀರಿರುವ ಹಾಗೂ ದಾಖಲಾತಿ ಇಲ್ಲದ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೀಮಂತ್ಕುಮಾರ್ ಹೇಳಿದರು. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ ಎಂದು ಸೀಮಂತ್ಕುಮಾರ್ ತಿಳಿಸಿದರು.
ನೌಕರರಿಗೆ ನೇಮಕಾತಿ ಆದೇಶ ವಿತರಣೆ
Govt Jobs: ಬಿಜೆಪಿ ಅವಧಿಯಲ್ಲಿ ಆಗಿರುವ ಸರ್ಕಾರಿ ನೇಮಕಾತಿ ವಿವರ ಕೊಟ್ಟ ವಿರೋಧ ಪಕ್ಷದ ನಾಯಕ ಆರ್. ಅಶೋಕ್
Govt Jobs: ಕರ್ನಾಟಕದಲ್ಲಿ ಸರ್ಕಾರಿ ನೇಮಕಾತಿ ಹಾಗೂ ವಿವಿಧ ಹುದ್ದೆಗಳ ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾಗಿರುವ ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಬಿಜೆಪಿ ಅವಧಿಯಲ್ಲಿ ಆಗಿರುವ ನೇಮಕಾತಿ ವಿವರ ಕೊಟ್ಟಿದ್ದಾರೆ. ಕುಣಿಯಲಾರದವನಿಗೆ ನೆಲ
2023ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಸ್ಥಿರಾಸ್ಥಿಗಳ ಮಾರ್ಗಸೂಚಿ ದರ ಹೆಚ್ಚಳವಾದ ಬಳಿಕ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಎರಡೂವರೆ ವರ್ಷಗಳ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 2500 ಕೋಚಿ ರೂ ಹೆಚ್ಚುವರಿ ಆದಾಯ ಬರುವ ನಿರೀಕ್ಷೆ ಇದೆ. ಈ ವರ್ಷ ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಮಾರ್ಗಸೂಚಿ ದರ ಪರಿಷ್ಕರಣೆಗೆ ಸಿದ್ಧತೆಗೆಳು ನಡೆಯುತ್ತಿದ್ದು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಬಾರ್ಡ್ ಆರೋಗ್ಯ ಜಾಗೃತಿ ಅಭಿಯಾನ ನಡೆಸಲಿ : ದಿನೇಶ್ ಗುಂಡೂರಾವ್
ಬೆಂಗಳೂರು, ಫೆ.27 : ಆರೋಗ್ಯ ಇಲಾಖೆಗೂ ನಬಾರ್ಡ್ ಸಾಕಷ್ಟು ಅನುದಾನ ನೀಡುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡುವುದಕ್ಕೆ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಅಭಿಯಾನದತ್ತಲೂ ನಬಾರ್ಡ್ ಕಾರ್ಯ ನಿರ್ವಹಿಸಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಶುಕ್ರವಾರ ಇಲ್ಲಿನ ನಬಾರ್ಡ್ ಪ್ರಾದೇಶಿಕ ಕಚೇರಿಯಲ್ಲಿ ‘ಕೃಷಿ ಸಂಸ್ಕರಣೆಯಲ್ಲಿ ಮಹಿಳಾ ರೈತರು ಮತ್ತು ಎಂಎಸ್ಎಂಇಗಳ ಬಲವರ್ಧನೆಗೆ ಸಮಗ್ರ ಸಾಲ ವ್ಯವಸ್ಥೆ’ ಕುರಿತು ನಡೆದ 'ರಾಜ್ಯ ಸಾಲ ವಿಚಾರ ಸಂಕಿರಣ -2026 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಅಭಿವೃದ್ಧಿಗೆ ನಬಾರ್ಡ್ ಕೊಡುಗೆ ಅನನ್ಯ. 1982ರಿಂದ ಕೆಲಸ ಮಾಡುತ್ತಿರುವ ನಬಾರ್ಡ್ ಶೇ.99ರಷ್ಟು ಗುರಿ ಸಾಧಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ, ರಸ್ತೆಗಳ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುವಲ್ಲಿ ನಬಾರ್ಡ್ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತದೆ ಎಂದರು. ನಬಾರ್ಡ್ ಇ-ಕೆಸಿಸಿ ಅನ್ನು ಬಳಕೆ ಮಾಡುವ ಮೂಲಕ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ಇದು ರೈತರಿಗೆ ತ್ವರಿತವಾಗಿ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗಿದೆ. ರಾಜ್ಯದ ಕಟ್ಟಕಡೆಯ ರೈತನಿಗೂ ಈ ಸೌಲಭ್ಯ ಸಿಗಬೇಕು ಎನ್ನುವುದು ನಮ್ಮ ಆಶಯ ಅಂದು ಅವರು ಹೇಳಿದರು. ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರ್ಬಿಐ ಜನರಲ್ ಮ್ಯಾನೇಜರ್ ಕಾರ್ತಿಕೇಯನ್, ಕೆನರಾ ಬ್ಯಾಂಕ್ನ ಭವೇಂದ್ರ ಕುಮಾರ್, ನಬಾರ್ಡ್ ಚೀಪ್ ಜನರಲ್ ಮ್ಯಾನೇಜರ್ ಸುರೇಂದ್ರ ಬಾಬು ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಯಚೂರು | ಐ.ಜಿ ಪೆಟ್ರೋಕೆಮಿಕಲ್ ಸಂಸ್ಥೆ ಸ್ಥಾಪನೆಗೆ ಅನುಮತಿ ನೀಡಬೇಡಿ: ಜಾವಿದ್ ಖಾನ್
ರಾಯಚೂರು : ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಸುಮಾರು 108 ಎಕರೆ ಸರ್ಕಾರಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆ 16-07-2013ರಂದು ಏಕಾಏಕಿ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು. ಇದರಿಂದ ಅನೇಕ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದವು. ಇದೀಗ ಕಂಪನಿಯು ತನ್ನ ಹೆಸರನ್ನು ಐಜಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಎಂದು ಬದಲಾಯಿಸಿ ಮರುಾರಂಭಕ್ಕೆ ಮುಂದಾಗಿದೆ. ಇದನ್ನು ತಡೆಯದಿದ್ದರೆ ಮಾರ್ಚ್ 16ರಂದು ಕಂಪನಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಎಚ್ಚರಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಭದಲ್ಲಿದ್ದ ಸಂಸ್ಥೆಯನ್ನು ನಷ್ಟದ ನೆಪದಲ್ಲಿ ಮುಚ್ಚಿ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಅಂತಿಮ ಹಂತದಲ್ಲಿದೆ. ಕಾರ್ಮಿಕರಿಗೆ ಬಾಕಿ ವೇತನ ಪಾವತಿಸದೇ, ಸ್ಥಳೀಯ ರೈತರಿಂದ ಸುಮಾರು 500 ಎಕರೆ ಜಮೀನನ್ನು ಲೀಸ್ ಪಡೆದು ಹುಲ್ಲು ಬೆಳೆಸಿ ಬಯೋಕೆಮಿಕಲ್ ಉತ್ಪಾದನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಿದರು. ವಿವಿಧ ಇಲಾಖೆಗಳ ಅಂತಿಮ ಅನುಮತಿ ಪಡೆಯದೇ ಚಟುವಟಿಕೆಗಳು ನಡೆಯುತ್ತಿವೆ. ಸರ್ಕಾರದ ಆದೇಶ, ಮಾಪನ ಹಾಗೂ ಲ್ಯಾಬ್ ಪರೀಕ್ಷೆಗಳಿಲ್ಲದೇ ರಾಸಾಯನಿಕ ಬಳಕೆ ನಡೆಯುತ್ತಿರುವುದರಿಂದ ಕೃಷಿ ಭೂಸಾರ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಸ್ಥೆ ಮರುಾರಂಭಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮಾರುತಿ ಚಿಕ್ಕಸೂಗೂರು ಸೇರಿದಂತೆ ಜಯಶ್ರೀ, ಬಾಬುರಾವ್, ಸುರೇಶ್, ಕೃಷ್ಣ, ಮಧುಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು.
ರಾಯಚೂರು | ಟ್ಯಾಗೋರ ಕಾಲೇಜಿನಲ್ಲಿ ಚಂದ್ರಶೇಖರ ಆಝಾದ್ ಹುತಾತ್ಮ ದಿನಾಚರಣೆ
ರಾಯಚೂರು : ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ 95ನೇ ಹುತಾತ್ಮ ದಿನದ ಅಂಗವಾಗಿ ಶುಕ್ರವಾರ ಟ್ಯಾಗೋರ್ ಶಿಕ್ಷಣ ಸಂಸ್ಥೆ ಸಂಚಾಲಿತ ಎಸ್ಆರ್ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ (ಎಐಡಿವೈಓ) ವತಿಯಿಂದ ಕಾರ್ಯಕ್ರಮ ನಡೆಯಿತು. ಎಐಡಿವೈಓ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಪಂಡಿತ್ ಜಿ ಎಂದೇ ಖ್ಯಾತರಾದ ಚಂದ್ರಶೇಖರ್ ಆಜಾದ್ ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲೂ ಬ್ರಿಟಿಷರ ವಿರುದ್ಧ ಸಿಂಹಸ್ವಪ್ನವಾಗಿ ಹೋರಾಟ ನಡೆಸಿದರು. ಹಲವು ಸಂಗಾತಿಗಳನ್ನು ಕಳೆದುಕೊಂಡರೂ ಎದೆಗುಂದದೆ ಹೋರಾಟ ಮುಂದುವರಿಸಿದರು ಎಂದು ಹೇಳಿದರು. ಅವರು ಬಾಲ್ಯದಲ್ಲೇ ಸಂಕಷ್ಟಗಳನ್ನು ಎದುರಿಸಿ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದರು. ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ನಂತರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್ಆರ್ಎ) ಸಂಘಟನೆಯೊಂದಿಗೆ ಕೈಜೋಡಿಸಿ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ಭಗತ್ ಸಿಂಗ್, ಸುಖದೇವ್ ಥಾಪರ್ ಅವರೊಂದಿಗೆ ಹೋರಾಟವನ್ನು ತೀವ್ರಗೊಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದಷ್ಟೇ ಅಲ್ಲ, ಶೋಷಣೆರಹಿತ ಸಮಾಜ ನಿರ್ಮಾಣ ಹಾಗೂ ಸಮಾಜವಾದಿ ವ್ಯವಸ್ಥೆ ಸ್ಥಾಪನೆ ಅವರ ಕನಸಾಗಿತ್ತು. ಯುವಜನತೆ ಅವರ ಕನಸಿನ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿರುಪಾಕ್ಷಿ ಬಿ.ಎಂ. ಅವರು, ಹುತಾತ್ಮ ಆಜಾದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಅದನ್ನು ಕಾಪಾಡಿಕೊಳ್ಳಲು ಯುವಕರು ವೈಚಾರಿಕ ಜಾಗೃತಿ ಹೊಂದಬೇಕು ಎಂದರು. ಉಪನ್ಯಾಸಕಿ ಡಾ. ಸವಿತಾ ಮಾತನಾಡಿ, ಹಿಂದೆ ಬ್ರಿಟಿಷರೇ ಶತ್ರುಗಳಾಗಿದ್ದರೆ, ಇಂದು ಅನೇಕ ರೂಪಗಳಲ್ಲಿ ಶತ್ರುಗಳಿದ್ದಾರೆ. ಮೊಬೈಲ್ ಕೂಡ ನಮ್ಮನ್ನು ನಿಯಂತ್ರಿಸುವ ಒಂದು ಸಾಧನವಾಗುತ್ತಿದೆ. ಅದರ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಋತು ಸ್ವಾಗತಿಸಿ ನಿರೂಪಿಸಿದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಡುಪಿಯ ಜನ ವಿದ್ಯಾವಂತರು; ಆದರೆ ಭಾರೀ ಮೋಸಗಾರರು: ನ್ಯಾ.ವೀರಪ್ಪ ಅಭಿಪ್ರಾಯ
ವಿವಿಧ ಸರಕಾರಿ ಕಚೇರಿಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತ
ಅಫ್ಘಾನಿಸ್ತಾನದ ಕಾಬೂಲ್ ಸೇರಿದಂತೆ ಹಲವು ನಗರಗಳ ಮೇಲೆ ಪಾಕಿಸ್ತಾನ ದಾಳಿ
ಹೊಸದಿಲ್ಲಿ, ಫೆ. 27: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿ ಘರ್ಷಣೆ ಸ್ಫೋಟಗೊಂಡಿದ್ದು, ಪಾಕಿಸ್ತಾನವು ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತು ಇತರ ನಗರಗಳ ಮೇಲೆ ವಾಯು ದಾಳಿಗಳನ್ನು ನಡೆಸಿದೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದೊಂದಿಗಿನ ನಮ್ಮ ಸಹನೆಯ ಕಟ್ಟೆಯೊಡೆದಿದೆ ಎಂದು ಶುಕ್ರವಾರ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸಿಫ್ ಹೇಳಿದರು ಹಾಗೂ ಈಗ ಎರಡು ದೇಶಗಳು ‘‘ಬಹಿರಂಗ ಯುದ್ಧದಲ್ಲಿ ತೊಡಗಿವೆ’’ ಎಂದು ಘೋಷಿಸಿದರು. ಎರಡು ದೇಶಗಳನ್ನು ಪ್ರತ್ಯೇಕಿಸುವ ‘ಡುರಾಂಡ್ ರೇಖೆ’ಯಲ್ಲಿ ಪಾಕಿಸ್ತಾನದ ಸೇನೆಯ ವಿರುದ್ಧ ಅಫ್ಘಾನಿಸ್ತಾನವು ‘‘ಬೃಹತ್ ಪ್ರಮಾಣದಲ್ಲಿ ಯುದ್ಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ’’ ಎಂಬುದಾಗಿ ತಾಲಿಬಾನ್ ವಕ್ತಾರ ಝಬುಉಲ್ಲಾ ಮುಜಾಹಿದ್ ಹೇಳಿದ ಗಂಟೆಗಳ ಬಳಿಕ ಪಾಕಿಸ್ತಾನ ಯುದ್ಧ ಘೋಷಣೆ ಮಾಡಿದೆ. ಗಡಿಯಲ್ಲಿ ವಾರಗಳ ಕಾಲ ಘರ್ಷಣೆ ನಡೆದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಘರ್ಷಣೆಯಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ ಎಂದು ಉಭಯ ದೇಶಗಳು ಹೇಳಿವೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ನಡುವಿನ ಉದ್ವಿಗ್ನತೆ ತಾರಕ್ಕೇರಿದ ಬಳಿಕ ಸೇನಾ ಸಂಘರ್ಷ ನಡೆದಿವೆ. ಅಫ್ಘಾನಿಸ್ತಾನದ ಸೈನಿಕರು ಗಡಿಗೆ ಸಮೀಪದಲ್ಲಿರುವ ತಮ್ಮ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಶುಕ್ರವಾರ ಹೇಳಿದರು. ಆಗ ಪಾಕಿಸ್ತಾನವೂ ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ಮತ್ತು ಇತರ ನಗರಗಳು ಸೇರಿದಂತೆ ಆ ದೇಶದ ಒಳಗಿನ ಗುರಿಗಳ ಮೇಲೆ ವಾಯು ದಾಳಿಗಳನ್ನು ನಡೆಸಿತು ಎಂದು ಅವರು ತಿಳಿಸಿದರು. ಪಾಕಿಸ್ತಾನದ ಮೊದಲ ದಾಳಿಯು ಶುಕ್ರವಾರ ಸ್ಥಳೀಯ ಸಮಯ ಮುಂಜಾನೆ 1:50ಕ್ಕೆ ನಡೆಯಿತು ಎಂದು ‘ಅಲ್ ಜಝೀರ’ ವರದಿಗಾರ ವರದಿ ಮಾಡಿದ್ದಾರೆ. ಕಾಬುಲ್, ಪಕ್ತಿಯ ರಾಜ್ಯ ಮತ್ತು ದಕ್ಷಿಣ ಕಂದಹಾರ್ನಲ್ಲಿರುವ ಅಫ್ಘಾನ್ನ ತಾಲಿಬಾನ್ ಸರಕಾರದ ರಕ್ಷಣಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನದ ವಾರ್ತಾ ಸಚಿವ ಅತಾವುಲ್ಲಾ ತರಾರ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಪಾಕಿಸ್ತಾನದ ವೈಮಾನಿಕ ದಾಳಿಗಳಿಂದ ಅಫ್ಘಾನಿಸ್ತಾನದಲ್ಲಿರುವ ಎರಡು ಬ್ರಿಗೇಡ್ ನೆಲೆಗಳು ಧ್ವಂಸಗೊಂಡಿವೆ ಎಂದು ಅಸೋಸಿಯೇಟಡ್ ಪ್ರೆಸ್ ವರದಿ ಮಾಡಿದೆ. ಪಾಕಿಸ್ತಾನಿ ಸೇನೆಯು ಕೆಲವೇ ಗಂಟೆಗಳಲ್ಲಿ ಹಲವಾರು ತಾಲಿಬಾನ್ ನೆಲೆಗಳನ್ನು ಧ್ವಂಸಗೊಳಿಸಿವೆ ಎಂದು ಪಾಕಿಸ್ತಾನದ ಸರಕಾರಿ ಟೆಲಿವಿಶನ್ ಪಾಕಿಸ್ತಾನ್ ಟಿವಿ ಹೇಳಿಕೊಂಡಿದೆ. ಕಂದಹಾರ್ನಲ್ಲಿರುವ ತಾಲಿಬಾನ್ ಬ್ರಿಗೇಡ್ ಪ್ರಧಾನ ಕಚೇರಿ ಮತ್ತು ಸ್ಫೋಟಕ ಸಂಗ್ರಹಾಲಯ ಹಾಗೂ ಶವಲ್ ಸೆಕ್ಟರ್ ಸಮೀಪದ ವಲಿ ಖಾನ್ ಸೆಕ್ಟರ್ ಹಾಗೂ ಅಂಗೂರ್ ಅಡ್ಡದ ಸಮೀಪದಲ್ಲಿರುವ ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನಿ ಪಡೆಯು ದಾಳಿ ನಡೆಸಿದೆ ಎಂದು ಅದು ಹೇಳಿದೆ. ಗಡಿ ವಿಚಾರದಲ್ಲಿ ಉಭಯ ದೇಶಗಳ ನಡುವೆ ಹಲವಾರು ತಿಂಗಳುಗಳಿಂದ ಉದ್ವಿಗ್ನತೆ ನೆಲೆಸಿದ್ದು, ಅದು ಈಗ ಪರಸ್ಪರ ಸೇನಾ ದಾಳಿಯಲ್ಲಿ ಸಮಾಪ್ತಿಗೊಂಡಿದೆ. ಅಕ್ಟೋಬರ್ನಲ್ಲಿ ಇದೇ ವಿಷಯದಲ್ಲಿ, ಉಭಯ ದೇಶಗಳು ಒಂದು ವಾರ ಭೀಕರ ಸಂಘರ್ಷದಲ್ಲಿ ತೊಡಗಿದ್ದವು. ಬಳಿಕ, ಖತರ್ ಮತ್ತು ತುರ್ಕಿಯ ದೇಶಗಳ ಮಧ್ಯಸ್ಥಿಕೆಯಲ್ಲಿ ಯುದ್ಧವಿರಾಮಕ್ಕೆ ಒಪ್ಪಿಕೊಂಡವು. 133 ತಾಲಿಬಾನ್ ಸೈನಿಕರು ಮೃತ್ಯು: ಪಾಕಿಸ್ತಾನ 55 ಪಾಕ್ ಸೈನಿಕರು ಮೃತ್ಯು: ಅಫ್ಘಾನ್ ಶುಕ್ರವಾರ ಮುಂಜಾನೆ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ, ಅಫ್ಘಾನಿಸ್ತಾನದ ತಾಲಿಬಾನ್ ಪಡೆಯ 133 ಸೈನಿಕರು ಮೃತಪಟ್ಟಿದ್ದಾರೆ ಹಾಗೂ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ಪಾಕಿಸ್ತಾನಿ ಪ್ರಧಾನಿಯ ವಕ್ತಾರ ಮುಷರ್ರಫ್ ಝೈದಿ ಶುಕ್ರವಾರ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಅದೇ ವೇಳೆ, 27 ಅಫ್ಘಾನ್ ತಾಲಿಬಾನ್ ಠಾಣೆಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಒಂಭತ್ತು ಠಾಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ‘‘80ಕ್ಕೂ ಅಧಿಕ ಟ್ಯಾಂಕ್ಗಳು, ಫಿರಂಗಿಗಳು ಮತ್ತು ಸಶಸ್ತ್ರ ಸಿಬ್ಬಂದಿಯ ವಾಹನಗಳನ್ನು ಧ್ವಂಸಗೊಳಿಸಲಾಗಿದೆ’’ ಎಂದು ಅವರು ಬರೆದಿದ್ದಾರೆ. ಈ ಘರ್ಷಣೆಯಲ್ಲಿ ಪಾಕಿಸ್ತಾನಿ ಸೇನೆಯ ಇಬ್ಬರು ಸೈನಿಕರು ಮೃತರಾಗಿದ್ದಾರೆ ಎಂದು ಪಾಕಿಸ್ತಾನದ ಪತ್ರಿಕೆ ‘ಡಾನ್’ ವರದಿ ಮಾಡಿದೆ. ಆದರೆ, ಕೇವಲ ಎಂಟು ತಾಲಿಬಾನ್ ಸೈನಿಕರು ಮೃತಪಟ್ಟಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರಕಾರ ಹೇಳಿದೆ. ಪಾಕಿಸ್ತಾನಿ ಪಡೆಗಳು ರವಿವಾರ ನಡೆಸಿದ ದಾಳಿಗಳಿಗೆ ಪ್ರತಿಯಾಗಿ, ಶುಕ್ರವಾರ ತನ್ನ ಸೇನೆಯು ಗಡಿಯಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳು ಮತ್ತು ಹೊರಠಾಣೆಗಳ ಮೇಲೆ ದಾಳಿ ನಡೆಸಿತು ಎಂದು ಅಫ್ಘಾನಿಸ್ತಾನ ಹೇಳಿದೆ. ತನ್ನ ಪಡೆಗಳು 55 ಪಾಕಿಸ್ತಾನಿ ಸೈನಿಕರನ್ನು ಕೊಂದಿವೆ ಹಾಗೂ ಅದರ ಎರಡು ಸೇನಾ ನೆಲೆಗಳು ಮತ್ತು 19 ಸೇನಾ ಠಾಣೆಗಳನ್ನು ವಶಪಡಿಸಿಕೊಂಡಿವೆ ಎಂಬುದಾಗಿಯೂ ಅದು ಹೇಳಿಕೊಂಡಿದೆ. ಈ ಹೇಳಿಕೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ.
ಮದುವೆ ಭರವಸೆ ನೀಡಿ ವಂಚಿಸಿದ ಕೇಸ್ಗಳಲ್ಲಿ ಬಂಧನ ಕಡ್ಡಾಯವಲ್ಲ: ಕರ್ನಾಟಕ ಹೈಕೋರ್ಟ್ ಆದೇಶ
ಮದುವೆ ಭರವಸೆ ನೀಡಿ ವಂಚನೆ ಎಸಗಿದ ಕೇಸ್ಗಳಲ್ಲಿ ಬಂಧನ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಜತೆಗೆ ಎಫ್ಐಆರ್ ರದ್ದುಗೊಳಿಸಲು ಸೂಚನೆ ನೀಡಿದೆ. ಪ್ರಕರಣ ಹೆಚ್ಚಳ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಡೆಯುಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Kalaburagi | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಕಲಬುರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ)ದ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು. ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ 15,000 ರೂ. ಗೌರವಧನ ನೀಡಬೇಕು, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಆಶಾ ಕಾರ್ಯಕರ್ತೆಯರ ಗೌರವಧನವನ್ನು 5,000 ರೂ. ನಿಂದ 8,000 ರೂ. ಹೆಚ್ಚಿಸಬೇಕು, ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು, ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡುವುದು, ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಜಿ.ದೇಸಾಯಿ, ಜಿಲ್ಲಾ ಅಧ್ಯಕ್ಷೆ ಶಿವಲಿಂಗಮ್ಮ ನಂದೂರು, ಕಾರ್ಯದರ್ಶಿ ಗೀತಾ ಬಡಗೇರ, ಎ.ಐ.ಯು.ಟಿ.ಯು.ಸಿ ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ, ಮುಖಂಡರಾದ ಶರಣು ದೇವಕರ್, ನಾಗಮಣಿ ಚಿಂಚೋಳ್ಳಿ, ತಾಯಮ್ಮ ನರಬೋಳ, ಸುಗಂಧ ಚಿತ್ತಾಪೂರ. ನಾಗಮ್ಮ ಸೇಡಂ, ಭಾರತಿ ಅಫಜಲಪುರ, ದೇವಮ್ಮ ಆಳಂದ, ಸಂಗೀತ ಸಾವಳಗಿ, ವಿಜಯಲಕ್ಷ್ಮೀ ಕಲಬುರಗಿ ಹಲವರು ಪಾಲ್ಗೊಂಡಿದ್ದರು.
ವಾಡಿ | ಶ್ರೀ ಯಲ್ಲಾಂಬಿಕಾ ದೇವಸ್ಥಾನ ಉದ್ಘಾಟನೆ
ವಾಡಿ: ನಿಮ್ಮ ಭಕ್ತಿ ಪವಿತ್ರವಾಗಿದ್ದರೆ ನೀವು ಜೀವನದಲ್ಲಿ ಪಾರಮಾರ್ಥವನ್ನು ಪಡೆಯಬಹುದು ಎಂದು ಹಲಕರ್ಟಿ ಕಟ್ಟಿಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯ ಮಹಾ ಸ್ವಾಮಿಗಳು ನುಡಿದರು. ಸಮೀಪದ ಲಾಡ್ಲಾಪುರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಯಲ್ಲಾಂಬಿಕಾ ದೇವಸ್ಥಾನ ಉದ್ಘಾಟನೆ, ದೇವಿಯ ನೂತನ ಮೂರ್ತಿಗೆ ಪ್ರಾಣ ಪ್ರತಿಷ್ಠಾನ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಧಾರ್ಮಿಕ ನಂಬಿಕೆಗಳ ಮೇಲೆ ಭಕ್ತಿ ಇಟ್ಟಿರುವ ಕಾರಣದಿಂದ ಇಂದು ಲಾಡ್ಲಾಪುರ ಗ್ರಾಮಸ್ಥರಿಂದ ದೇವಿಯ ಪೂರ್ತಿ ಪ್ರತಿಷ್ಠಾಪನೆ ಸಾಧ್ಯವಾಗಿದೆ ಎಂದರು. ಕಾರ್ಯಕ್ರಮ ಉದ್ದೇಶಿಸಿ ಸಾಮಾಜಿಕ ಕಾರ್ಯಕರ್ತೆ ಶಾಂತಿಯಮ್ಮ ಮಾತನಾಡಿದರು. ಹಿರಿಯ ಮುಖಂಡ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ವಿಶ್ವನಾಥ ಗಂಧಿ, ದೊಡ್ಡಪ್ಪಗೌಡ ಪೊಲೀಸ್ಪಾಟೀಲ, ಈರಣ್ಣ ಎನ್.ಮಲ್ಕಂಡಿ, ಸೋಮಶೇಖರ ಹಲಕರಟಿ, ಮರಲಿಂಗಪ್ಪ ಚಟ್ಟಿ, ಆನಂದ ಮುಕ್ತೇದಾರ, ಉಮರ್ ಪಟೇಲ್, ಭೀಮರಾಯ ಚೂರಿ, ಸಾಬಣ್ಣ ಕುಂಬಾರಳ್ಳಿ ಭಾಗಪ್ಪ ನಾಯ್ಕೋಡಿ, ಬಾಬು ದಂಡಬಾ, ಸಾಬಣ್ಣ ಹತ್ತಿಕುಣಿ, ಸಾಬಣ್ಣ ಮುಸ್ಲಾ, ಸಾಯಣ್ಣ ಗೋಡಗ, ಶೇಖಪ್ಪ ಗೊಡಗ, ನಾಗಪ್ಪ ಗೊಡಗ ಶಿವಶರಣಪ್ಪ ದಂಡಬಾ ಸೇರಿದಂತೆ ಹಲವರಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಸಾಬಣ್ಣ ಆನೇಮಿ ಸ್ವಾಗತಿಸಿದರು. ಮುಖಂಡ ಶಾಂತಕುಮಾರ ಎಣ್ಣಿ ನಿರೂಪಿಸಿದರು. ವಿದ್ಯಾರ್ಥಿನಿ ಐಶ್ವರ್ಯ ಪ್ರಾರ್ಥನೆ ಗೀತೆ ಹಾಡಿದರು. ಸ್ಥಳೀಯ ಕೆಪಿಎಸ್ಸಿ ಶಾಲೆಯ ವಿದ್ಯಾರ್ಥಿಗಳು ಭರತ್ಯ ನಾಟ್ಯ ಪ್ರದರ್ಶಿಸಿ ವೇದಿಕೆಯ ಗಮನ ಸೆಳೆದರು.
ಭಾರತ ಕ್ರಿಕೆಟ್ ತಂಡಕ್ಕೆ ಆಕಿಬ್ ನಬಿಗೆ ಅವಕಾಶ ನೀಡಬೇಕು: ಸೌರವ್ ಗಂಗುಲಿ
ಹೊಸದಿಲ್ಲಿ, ಫೆ.27: ಕರ್ನಾಟಕ ತಂಡದ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿರುವ ಜಮ್ಮು-ಕಾಶ್ಮೀರ ತಂಡದ ವೇಗದ ಬೌಲರ್ ಆಕಿಬ್ ನಬಿ ಬೆಂಬಲಕ್ಕೆ ನಿಂತಿರುವ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ, ನಬಿ ಅವರನ್ನು ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. ನಬಿ 23 ಓವರ್ಗಳಲ್ಲಿ 54 ರನ್ಗೆ 5 ವಿಟ್ಗಳನ್ನು ಕಬಳಿಸಿ ಕರ್ನಾಟಕ ತಂಡವನ್ನು 293 ರನ್ಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಈ ವರ್ಷ ಆಡಿರುವ 10 ರಣಜಿ ಪಂದ್ಯಗಳಲ್ಲಿ ಒಟ್ಟು 60 ವಿಕೆಟ್ಗಳನ್ನು ಕಬಳಿಸಿದ್ದು, 2025-26ರ ಸಾಲಿನ ರಣಜಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ‘‘2026ರ ಜುಲೈಗೆ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿರುವ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡಕ್ಕೆ ನಬಿ ಅವರನ್ನು ಆಯ್ಕೆಗೆ ಪರಿಗಣಿಸಬೇಕು. ಪ್ರಯತ್ನ ಹಾಗೂ ಉದ್ದೇಶದಿಂದ ಏನೂ ಕೂಡ ಮಾಡಬಹುದು ಎಂಬುದನ್ನು ಇಡೀ ಜಗತ್ತಿಗೆ ಜಮ್ಮು-ಕಾಶ್ಮೀರ ತಂಡ ತೋರಿಸಿಕೊಟ್ಟಿದೆ. ಕ್ರಿಕೆಟಿಗರು ಕಾಶ್ಮೀರ ಪ್ರದೇಶದ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಾರೆ. ಕಠಿಣ ವಾತಾವರಣವು ಜನರನ್ನು ಕಠಿಣಗೊಳಿಸುತ್ತದೆ. ಆಕಿಬ್ ನಬಿ ರಾಷ್ಟ್ರೀಯ ತಂಡದ ಜೆರ್ಸಿ ಧರಿಸುವ ಹಾದಿಯಲ್ಲಿದ್ದಾರೆ’’ ಎಂದು ಎಕ್ಸ್ನಲ್ಲಿ ಗಂಗುಲಿ ಬರೆದಿದ್ದಾರೆ. ಭಾರತ ತಂಡವು ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದ ವೇಳೆ ಐದು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಪೂರ್ವ ತಯಾರಿಯ ಭಾಗವಾಗಿದೆ. ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ನಡುವಿನ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇವಲ ಒಂದು ದಿನದಾಟ ಬಾಕಿ ಇದ್ದು, ಮೊದಲ ಇನಿಂಗ್ಸ್ ನಲ್ಲಿ 291 ರನ್ ಮುನ್ನಡೆಯ ಆಧಾರದಲ್ಲಿ ಜಮ್ಮು-ಕಾಶ್ಮೀರ ತನ್ನ ಚೊಚ್ಚಲ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಇದೆ.
Bidar | ರಾಶಿ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತ್ಯು
ಬೀದರ್ : ಕಡಲೆ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ ನಡೆದಿದೆ. ಮೃತರನ್ನು ಹಲಬರ್ಗಾ ಗ್ರಾಮದ ನಿವಾಸಿ ಕಮಲಬಾಯಿ (62) ಎಂದು. ಕಮಲಬಾಯಿಯು ಹೊಲದಲ್ಲಿ ಕಡಲೆ ರಾಶಿ ಮಾಡುತ್ತಿದ್ದರು. ರಾಶಿ ಮಾಡುವ ಸಮಯದಲ್ಲಿ ಅಚಾನಕ್ಕಾಗಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿದ್ದಾರೆ. ಪರಿಣಾಮವಾಗಿ ಅವರ ಕುತ್ತಿಗೆ ಭಾಗವು ಸಂಪೂರ್ಣವಾಗಿ ಯಂತ್ರಕ್ಕೆ ಸಿಲುಕಿ ಅವರ ದೇಹದಿಂದ ಬೆರ್ಪಟ್ಟಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯು ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್: ಶಾಸಕ ಬಾಲಕೃಷ್ಣ ಬರ್ತ್ ಡೇ ಪಾರ್ಟಿಯಲ್ಲಿ 32 ಶಾಸಕರು ಭಾಗಿ!
HC Balakrishna Birthday Party- ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಚಾರದ ಬಗ್ಗೆ ಹೈಕಮಾಂಡ್ ಮೌನವಾಗಿರುವುದರಿಂದ ಇದೀಗ ಬಣ ರಾಜಕೀಯ ಚುರುಕುಗೊಂಡಿದೆ. ಒಂದು ಬಣದ ಶಾಸಕರ ಗುಂಪು ವಿದೇಶ ಪ್ರವಾಸ ಹೋದದ್ದಕ್ಕೆ ತಿರುಗೇಟು ನೀಡಲು ಡಿಕೆ ಶಿವಕುಮಾರ್ ಅವರ ಜೊತೆ ಗುರ್ತಿಸಿಕೊಂಡಿರುವ ಮತ್ತೊಂದು ಶಾಸಕರ ಬಣ ಗುರುವಾರ ರಾತ್ರಿ ಔತಣಕೂಟ ನಡೆಸಿದೆ. ಶಾಸಕ ಎಚ್ ಸಿ ಬಾಲಕೃಷ್ಣ ಅವರ ಬರ್ತ್ ಡೇ ಪಾರ್ಟಿಯಲ್ಲಿ 32ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
Kalaburagi | ಕುರಿಗಾರರಿಗೆ ಉಣ್ಣೆ ಸಂಸ್ಕರಣೆ, ಆಧುನಿಕ ತಂತ್ರಜ್ಞಾನದ ತರಬೇತಿ: ಪ್ರಮಾಣ ಪತ್ರ ವಿತರಣೆ
ಕಲಬುರಗಿ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಕೇಂದ್ರ ಉಣ್ಣೆ ಅಭಿವೃದ್ಧಿ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಉಣ್ಣೆ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಯಾಂತ್ರಿಕೃತ ಉಣ್ಣೆ ಕಟಾವು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು 50 ಮಂದಿ ಕುರಿ ಸಾಕಾಣಿಕೆದಾರರು ಶಿಬಿರದಲ್ಲಿ ಭಾಗವಹಿಸಿ ತಾಂತ್ರಿಕ ಜ್ಞಾನ ಪಡೆದರು. ಪ್ರಮಾಣಪತ್ರ ವಿತರಣೆ : ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರ್ತೂರ ಅವರು ತರಬೇತಿದಾರರಿಗೆ ಪ್ರಮಾಣಪತ್ರ ಹಾಗೂ ವಲಸೆ ಕುರಿಗಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು. ಶೀಘ್ರದಲ್ಲೇ ಕುರಿಗಾರರಿಗೆ ಅಗತ್ಯವಿರುವ ಜಂತು ನಾಶಕ ಔಷಧಿ ಮತ್ತು ಪರಿಕರ ಕಿಟ್ಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಕುರಿ/ಮೇಕೆ ಸಾಕಾಣಿಕೆಗಾಗಿ ಸಹಾಯಧನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಸಂಜಯ್ ರೆಡ್ಡಿ ಅವರು ಕುರಿ ಮತ್ತು ಮೇಕೆಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು. ನಿಗಮದ ಉಪ ನಿರ್ದೇಶಕ ಡಾ. ರವೀಂದ್ರನಾಥ ಅವರು ತರಬೇತಿಯ ಉದ್ದೇಶ ಮತ್ತು ಕಾರ್ಯವಿಧಾನಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶುವೈದ್ಯಕೀಯ ಪರಿಕ್ಷಕರ ತರಬೇತಿ ಕೇಂದ್ರ ಉಪ ನಿರ್ದೇಶಕ ಡಾ. ದಯಾನಂದ ಹಕ್ಕಾಪಕ್ಕಿ ಅವರು ಹೊಸದಾಗಿ ಕುರಿ/ಮೇಕೆ ಸಾಕಾಣಿಕೆ ಆರಂಭಿಸಲು ಆಸಕ್ತಿ ಇರುವ ರೈತರು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೋರಿದರು. ಡಾ. ಶಂಕರ ಕಣ್ಣಿ ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆ ಮಾಡಿದರು.
ಕೇರಳ | ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಟ ದಿಲೀಪ್ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸರಕಾರ
ಕೊಚ್ಚಿ, ಫೆ. 27: 2017ರ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲೆಯಾಳಂ ಸಿನೆಮಾ ನಟ ದಿಲೀಪ್ ಹಾಗೂ ಇತರರ ಖುಲಾಸೆ ಪ್ರಶ್ನಿಸಿ ಕೇರಳ ಸರಕಾರ ಶುಕ್ರವಾರ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ. ಈ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾದ ಆರು ಜನರಿಗೆ ಶಿಕ್ಷೆಯನ್ನು ಹೆಚ್ಚಿಸುವಂತೆ ಕೂಡ ರಾಜ್ಯ ಸರಕಾರ ತನ್ನ ಮೇಲ್ಮನವಿಯಲ್ಲಿ ಕೋರಿದೆ. ಪ್ರಕರಣದ 8ನೇ ಆರೋಪಿ ದಿಲೀಪ್ ಅಲ್ಲದೆ, ಚಾರ್ಲಿ ತೋಮಸ್(ಎ7), ಸನಿಲ್ ಕುಮಾರ್ ಆಲಿಯಾಸ್ ಮೇಸ್ತ್ರಿ ಸನಿಲ್ (ಎ9) ಹಾಗೂ ಶರತ್ (ಎ15)- ಈ ಮೂವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣದ ಮೊದಲ ಆರು ಆರೋಪಿಗಳಾದ ಸುನಿ (ಪಲ್ಸರ್ ಸುನಿ), ಮಾರ್ಟಿನ್ ಆ್ಯಂಟನಿ, ಮಣಿಕಂಠನ್ ಬಿ., ವಿಜೇಶ್ ವಿ.ಪಿ, ಸಲೀಮ್ ಎಚ್. ಹಾಗೂ ಪ್ರದೀಪ್ನನ್ನು ವಿಚಾರಣಾ ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಈ ಮೇಲ್ಮನವಿ ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ರಾಜ್ಯ ಸರಕಾರದ ಪರ ವಕೀಲರು ತಿಳಿಸಿದ್ದಾರೆ.
ಒಡಿಶಾ ಗ್ರಾಮವನ್ನು ತಪ್ಪಾಗಿ ಪ್ರವೇಶಿಸಿದ ಪಶ್ಚಿಮ ಬಂಗಾಳದ ಅಧಿಕಾರಿಗಳ ಮೇಲೆ ಹಲ್ಲೆ : 72 ಜನರ ಬಂಧನ
ಬಾಲಾಸೋರ್,ಫೆ.27: ಪ.ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗಾಗಿ (ಎಸ್ಐಆರ್) ನಿಯೋಜಿತ ಇಬ್ಬರು ಅಧಿಕಾರಿಗಳು ತಪ್ಪಾಗಿ ನೆರೆಯ ಒಡಿಶಾದ ಗ್ರಾಮವನ್ನು ಪ್ರವೇಶಿಸಿದ್ದು, ಸ್ಥಳೀಯರು ಮಕ್ಕಳ ಕಳ್ಳತನದ ಗುಂಪಿನ ಸದಸ್ಯರೆಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಲಿಸರು ಶುಕ್ರವಾರ ತಿಳಿಸಿದರು. ಘಟನೆ ಬುಧವಾರ ನಡೆದಿದ್ದು,ಅಧಿಕಾರಿಗಳು ಪ.ಬಂಗಾಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ರಾಯ್ಬನಿಯಾ ಗ್ರಾಮವನ್ನು ಪ್ರವೇಶಿಸಿದ್ದರು. ಎಸ್ಐಆರ್ ಕೆಲಸಕ್ಕಾಗಿ ಅವರು ಪ.ಬಂಗಾಳದ ನಯಾಗ್ರಾಮ್ ಬ್ಲಾಕ್ನ ಗ್ರಾಮವೊಂದಕ್ಕೆ ಭೇಟಿ ನೀಡಬೇಕಿತ್ತು,ಆದರೆ ಅವರು ಬಾಡಿಗೆಗೆ ಪಡೆದಿದ್ದ ಆಟೋರಿಕ್ಷಾದ ಚಾಲಕನಿಗೆ ಆ ಗ್ರಾಮವನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ‘ತಪ್ಪಾಗಿ’ ನೆರೆಯ ಒಡಿಶಾದ ಗ್ರಾಮವನ್ನು ಪ್ರವೇಶಿಸಿದ್ದರು. ಸ್ಥಳೀಯರು ಅವರನ್ನು ಮಕ್ಕಳ ಕಳ್ಳತನ ತಂಡದ ಸದಸ್ಯರೆಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಗುಂಪು ಅವರ ಮೇಲೂ ಹಲ್ಲೆ ನಡೆಸಿತ್ತು. ಅಂತೂ ಕೊನೆಗೂ ಅಧಿಕಾರಿಗಳನ್ನು ಗುಂಪಿನಿಂದ ರಕ್ಷಿಸುವಲ್ಲಿ ಪೊಲೀಸರು ಸಫಲರಾಗಿದ್ದರು. ಕಾನೂನು ಉಲ್ಲಂಘನೆಗಾಗಿ ಎರಡು ಪ್ರಕರಣಗಳು ದಾಖಲಾಗಿದ್ದು,ಈವರೆಗೆ 72 ಜನರನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು. ಗಾಯಗೊಂಡಿದ್ದ ಅಧಿಕಾರಿಗಳನ್ನು ರಾಯ್ಬನಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಬಳಿಕ ಅದೇ ದಿನ ಬಿಡುಗಡೆಗೊಳಿಸಲಾಗಿದೆ.
ಮಾ.1ರಿಂದ ಮಂಗಳೂರು-ಮಸ್ಕತ್ ಮಧ್ಯೆ ನೇರ ವಿಮಾನಯಾನ ಸೇವೆ ಆರಂಭ: ಸಂಸದ ಬ್ರಿಜೇಶ್ ಚೌಟ
ಮಂಗಳೂರು, ಫೆ.27: ದ.ಕ., ಉಡುಪಿ ಹಾಗೂ ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್ ಮಧ್ಯೆ ನೇರ ವಿಮಾನಯಾನ ಸೇವೆಯು ಮಾ.1ರಿಂದ ಪುನರಾರಂಭಗೊಳ್ಳಲಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟನೆ ನೀಡಿರುವ ಅವರು ಕರಾವಳಿ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಮತ್ತು ವ್ಯಾಪಾರ ನಿಮಿತ್ತ ಮಸ್ಕತ್ಗೆ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆಗೆ ಹೆಚ್ಚಿನ ಒತ್ತಾಯ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ತಾನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ವ್ಯವಹಾರ ನಡೆಸಿ, ವಿಮಾನಯಾನ ಪುನಾರಂಭಿಸುವಂತೆ ಮನವಿ ಮಾಡಿದ್ದೆ. ಅದರಂತೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವತಿಯಿಂದ ಈ ವಿಮಾನ ಹಾರಾಟ ನಡೆಯಲಿದೆ ಎಂದಿದ್ದಾರೆ. ಸದ್ಯದ ವೇಳಾಪಟ್ಟಿಯ ಪ್ರಕಾರ ವಾರದಲ್ಲಿ ಎರಡು ದಿನ ಅಂದರೆ ಪ್ರತಿ ರವಿವಾರ ಮತ್ತು ಮಂಗಳವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಾರಾಟ ನಡೆಸಲಿದೆ. ಈ ನೇರ ಸೇವೆಯಿಂದಾಗಿ ಪ್ರಯಾಣದ ಸಮಯ ಉಳಿತಾಯವಾಗುವುದಲ್ಲದೆ ಅನಿವಾಸಿ ಭಾರತೀಯರಿಗೆ ತಮ್ಮ ಊರುಗಳಿಗೆ ನೇರವಾಗಿ ಪ್ರಯಾಣಿಸಲು ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆಯು ಹಠಾತ್ ಸ್ಥಗಿತಗೊಂಡ ಕಾರಣ ಮಸ್ಕತ್ನಲ್ಲಿ ನೆಲೆಸಿರುವ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾಗಿತ್ತು. ಮಸ್ಕತ್ನಿಂದ ಮಂಗಳೂರಿಗೆ ಬರಬೇಕಾದವರು ದೆಹಲಿ, ಮುಂಬೈ ಅಥವಾ ಕಣ್ಣೂರು ಮೂಲಕ ಸುತ್ತಿ ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಯನ್ನು ಮನಗಂಡು ನಾವು ನಡೆಸಿದ ನಿರಂತರ ಪ್ರಯತ್ನ ಹಾಗೂ ಮನವಿಗೆ ಸ್ಪಂದಿಸಿ, ಮಾ.1ರಿಂದ ಈ ಸೇವೆಯನ್ನು ಪುನರಾರಂಭಿಸಲು ಕ್ರಮ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪುಗೆ ಅಭಾರಿಯಾಗಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
IPL 2026 Schedule: ಟಿ20 ವಿಶ್ವಕಪ್ ಟೂರ್ನಿ ವೇಳೆಯೇ ಐಪಿಎಲ್ 2026 ಹೊಸ ವೇಳಾಪಟ್ಟಿ ಪ್ರಕಟ: ಇಲ್ಲಿದೆ ವರದಿ
IPL 2026 Schedule: ಪ್ರಸ್ತುತ ಇದೀಗ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಸೆಮಿಫೈನಲ್ ಸ್ಥಾನಕ್ಕಾಗಿ ಎಂಟು ತಂಡಗಳು ಭಾರೀ ಪೈಪೋಟಿ ನಡೆಸುತ್ತಿವೆ. ಈಗಾಗಲೇ ಇಂಗ್ಲೆಂಡ್ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಉಳಿದ ಮೂರು ಸ್ಥಾನಗಳಿಗೆ ಇನ್ನೂ ಏಳು ತಂಡಗಳು ಪೈಪೋಟಿ ನಡೆಸುತ್ತಿವೆ. ಇದರಲ್ಲಿ ಟೀಂ ಇಂಡಿಯಾ ಕೂಡ ಸೇರಿದೆ. ಈ ಬೆಳವಣಿಗೆಗಳ ಮಧ್ಯೆ ಐಪಿಎಲ್ 2026ರ
ಇರಾನ್ನಿಂದ ತಕ್ಷಣ ನಿರ್ಗಮಿಸಲು ಚೀನಾದ ನಾಗರಿಕರಿಗೆ ಸೂಚನೆ
ಬೀಜಿಂಗ್, ಫೆ.27: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಇರಾನ್ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಚೀನಾ ತನ್ನ ಪ್ರಜೆಗಳಿಗೆ ಸಲಹೆ ನೀಡಿದ್ದು ಇರಾನ್ನಲ್ಲಿ ಇರುವ ಚೀನೀ ಪ್ರಜೆಗಳು ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಕ್ಷಣ ನಿರ್ಗಮಿಸುವಂತೆ ಸೂಚಿಸಿರುವುದಾಗಿ ಸರಕಾರಿ ಸ್ವಾಮ್ಯದ ಕ್ಸಿನ್ಹುವ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ. ವಾಣಿಜ್ಯ ವಿಮಾನಗಳು ಈಗ ಲಭ್ಯವಿರುವ ಕಾರಣ ಆದಷ್ಟು ಬೇಗ ದೇಶದಿಂದ ನಿರ್ಗಮಿಸುವಂತೆ ಇರಾನ್ನಲ್ಲಿರುವ ಚೀನಾದ ನಾಗರಿಕರಿಗೆ ಇರಾನ್ನಲ್ಲಿನ ಚೀನಾದ ರಾಯಭಾರಿ ಕಚೇರಿ ಶುಕ್ರವಾರ ಸೂಚಿಸಿರುವುದಾಗಿ ವರದಿ ಹೇಳಿದೆ.
ಇಸ್ರೇಲ್ನಿಂದ ತಕ್ಷಣ ನಿರ್ಗಮಿಸಲು ರಾಯಭಾರಿ ಕಚೇರಿ ಸಿಬ್ಬಂದಿಗೆ ಅಮೆರಿಕ ಸೂಚನೆ
ವಾಷಿಂಗ್ಟನ್, ಫೆ.27: ಭದ್ರತಾ ಕಾಳಜಿಯ ಹಿನ್ನೆಲೆಯಲ್ಲಿ ದೇಶವನ್ನು ತಕ್ಷಣ ತೊರೆಯುವಂತೆ ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಅಮೆರಿಕದ ರಾಯಭಾರಿ ಮೈಕ್ ಹಕಾಬಿ ಗುರುವಾರ ಸೂಚಿಸಿರುವುದಾಗಿ ವರದಿಯಾಗಿದೆ. ಇಸ್ರೇಲನ್ನು ತೊರೆಯಲು ಇಚ್ಚಿಸುವವರು ತಕ್ಷಣ ನಿರ್ಗಮಿಸಬೇಕು. ತಕ್ಷಣ ಬೆನ್-ಗ್ಯುರಿಯೊನ್ ವಿಮಾನ ನಿಲ್ದಾಣದಿಂದ ತೆರಳುವ ವಿಮಾನಗಳಲ್ಲಿ ಟಿಕೆಟನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಇಸ್ರೇಲ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಸಿಬ್ಬಂದಿಗಳಿಗೆ ಗುರುವಾರ ತಡರಾತ್ರಿ ಇ-ಮೇಲ್ ಮೂಲಕ ಸೂಚನೆ ರವಾನಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. `ರಾಯಭಾರಿ ಕಚೇರಿಯು `ಅಧಿಕೃತ ನಿರ್ಗಮನ' ದರ್ಜೆಗೆ ಬದಲಾಗಿದ್ದು ತುರ್ತು ಅಗತ್ಯವಿಲ್ಲದ ಸಿಬ್ಬಂದಿ ಮತ್ತವರ ಕುಟುಂಬ ಸದಸ್ಯರನ್ನು ಸರಕಾರದ ವೆಚ್ಚದಲ್ಲಿ ನಿರ್ಗಮಿಸಲು ಅವಕಾಶವಿದೆ. ವಿದೇಶಾಂಗ ಇಲಾಖೆಯೊಂದಿಗೆ ಸಮಾಲೋಚಿಸಿದ ಬಳಿಕ ಈ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಆದರೆ ಗಾಭರಿಗೊಳ್ಳುವ ಅಗತ್ಯವಿಲ್ಲ ಎಂದು ಮೈಕ್ ಹಕಾಬಿ ಹೇಳಿದ್ದಾರೆ. ಅಮೆರಿಕವು ಇರಾನ್ ಮೇಲೆ ನಡೆಸಬಹುದಾದ ದಾಳಿಗೆ ಇಸ್ರೇಲ್ ಕೂಡಾ ಕೈಜೋಡಿಸಬಹುದು. ಆಗ ಇಸ್ರೇಲ್ ವಿರುದ್ದವೂ ಇರಾನ್ ಪ್ರತೀಕಾರದ ಕ್ರಮ ಕೈಗೊಳ್ಳಬಹುದು.
Kalaburagi | ಮಕ್ಕಳ ಜೊತೆ ಪಾಲಕರು ಬೆರೆತು ಸಾಗಬೇಕು: ಜಯಶ್ರೀ ಮತ್ತಿಮಡು
ಕಲಬುರಗಿ : ಈ ಶತಮಾನದ ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿದ್ದು, ಅವರ ಆಸಕ್ತಿಗೆ ಅನುಗುಣವಾಗಿ ಪಾಲಕರು ಮಕ್ಕಳ ಜೊತೆ ಬೆರೆಯಬೇಕು ಎಂದು ಸಮಾಜಸೇವಕಿ ಜಯಶ್ರೀ ಮತ್ತಿಮಡು ಅಭಿಪ್ರಾಯಪಟ್ಟರು. ನಗರದ ಗುಬ್ಬಿ ಕಾಲೋನಿಯಲ್ಲಿರುವ ಮಾತೋಶ್ರೀ ಸರೋಜಾ ಸುಭಾಷ್ ಗುತ್ತೇದಾರ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳ ಮುಂದೆ ಗಂಟೆಗಟ್ಟಲೆ ಮೊಬೈಲ್ ಬಳಕೆ ಮಾಡುತ್ತಿರುವುದು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಮೊದಲು ಪಾಲಕರು ಅತಿಯಾದ ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ, ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಢ್ಯ ಹಾಗೂ ಆರೋಗ್ಯವೂ ಅಗತ್ಯವೆಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿ, ನಾಗರಿಕ ಸಮಾಜದಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುವಂತೆ ಶಾಲಾ-ಕಾಲೇಜುಗಳಲ್ಲಿ ನಡೆಯುವ ವಾರ್ಷಿಕೋತ್ಸವಗಳು ಮಕ್ಕಳಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿಸುತ್ತವೆ. ಇಲ್ಲಿ ಎಲ್ಲಾ ಧರ್ಮಗಳ ಸಮನ್ವಯತೆಯನ್ನು ಕಾಣಬಹುದಾಗಿದ್ದು, ಮಕ್ಕಳ ಪ್ರತಿಭಾ ಪ್ರದರ್ಶನ ಪೋಷಕರಿಗೆ ಸ್ಪಷ್ಟವಾಗುತ್ತದೆ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವ ಶಾಲೆಗಳ ಪೈಕಿ ನಮ್ಮ ಶಾಲೆ ಪ್ರಥಮ ಸ್ಥಾನದಲ್ಲಿದೆ. ಪಠ್ಯ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಇದೇ ಕಾರಣದಿಂದ ಶಾಲೆಯಲ್ಲಿ ದಾಖಲಾತಿಗೆ ಕೊರತೆಯಿಲ್ಲ ಎಂದು ಹೇಳಿದರು. ಹಿರಿಯ ಸಮಾಜಸೇವಕಿ ಜ್ಯೋತಿ ಗುತ್ತೇದಾರ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕಿಯರಾದ ಪೂಜಾ, ಶಿವಲೀಲಾ ನಿರೂಪಿಸಿದರು. ಪ್ರಿಯಾಂಕಾ ಸ್ವಾಗತಿಸಿದರೆ, ಅರ್ಚನಾ ವಂದಿಸಿದರು. ಪ್ರಾಚಾರ್ಯೆ ಐಶ್ವರ್ಯಾ ದುರ್ಗೆ ಅಧ್ಯಕ್ಷತೆ ವಹಿಸಿದ್ದರು.
ಗೆಳೆಯನೊಂದಿಗೆ ತೆರಳಿದ್ದ ಯುವಕ ನಾಪತ್ತೆ
ಕಾಪು: ಗೆಳೆಯನೊಂದಿಗೆ ಮಂಗಳೂರಿಗೆ ಕಾರಿನಲ್ಲಿ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮಲ್ಲಾರು ಗ್ರಾಮದ ನಿವಾಸಿ ಮಣಿಕಂಠ(36) ಎಂಬವರು ಜಾಕೀರ್ ಎಂಬಾತನೊಂದಿಗೆ ಬಾಡಿಗೆ ವಿಚಾರವಾಗಿ ಮಂಗಳೂರಿಗೆ ಫೆ.24ರಂದು ರಾತ್ರಿ ವೇಳೆ ಕಾರಿನಲ್ಲಿ ಹೋಗಿದ್ದರು. ಮರುದಿನ ಮಣಿಕಂಠ ಅವರಿಗೆ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಮಣಿಕಂಠ ಪತ್ನಿ ಜಾಕೀರ್ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದಾಗ ಜಾಕೀರ್ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ನಂತರ ಉಚ್ಚಿಲ, ಪಡುಬಿದ್ರಿ ಕಡೆಗಳಲ್ಲಿ ಮಣಿಕಂಠ ಹಾಗೂ ಕಾರನ್ನು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಾನ್ ಸುತ್ತಲೂ ಪ್ರಾದೇಶಿಕ ಸಂಘರ್ಷ ಉಲ್ಬಣದ ಅಪಾಯ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಎಚ್ಚರಿಕೆ
ವಿಶ್ವಸಂಸ್ಥೆ, ಫೆ.27: ಅಮೆರಿಕದ ದಾಳಿಗಳ ಪುನರಾವರ್ತಿತ ಬೆದರಿಕೆಗಳ ಮಧ್ಯೆ ಇರಾನ್ನ ಸುತ್ತಲಿನ ಪ್ರಾದೇಶಿಕ ಉಲ್ಬಣಗೊಳ್ಳುವ ಅಪಾಯದ ಬಗ್ಗೆ ದಿಗ್ಬ್ರಮೆಗೊಂಡಿರುವುದಾಗಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಶುಕ್ರವಾರ ಹೇಳಿದ್ದಾರೆ. ಪ್ರಾದೇಶಿಕ ಮಿಲಿಟರಿ ಉಲ್ಬಣದ (ಸಂಘರ್ಷದ ತೀವ್ರತೆ, ವ್ಯಾಪ್ತಿ ಅಥವಾ ಹಿಂಸಾಚಾರದಲ್ಲಿ ಹೆಚ್ಚಳ, ಹೆಚ್ಚುವರಿ ಪಡೆ ಅಥವಾ ಶಸ್ತ್ರಾಸ್ತ್ರಗಳ ಜಮಾವಣೆ) ಸಂಭವನೀಯತೆ ಮತ್ತು ನಾಗರಿಕರ ಮೇಲೆ ಅದರ ಪ್ರಭಾವದ ಕಳವಳಗೊಂಡಿದ್ದು ಸಂಬಂಧಿಸಿದ ಎಲ್ಲಾ ಪಕ್ಷದವರು ಸಂಯಮ ಮತ್ತು ಸಮಂಜಸವಾಗಿ ವರ್ತಿಸುವರೆಂಬ ವಿಶ್ವಾಸವಿದೆ ಎಂದು ಟರ್ಕ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯ ಸಭೆಯಲ್ಲಿ ಹೇಳಿದ್ದಾರೆ. ವಿವಾದಗಳನ್ನು ಪರಿಹರಿಸಲು ಬಲದ ಬಳಕೆಯ ಸಾಮಾನ್ಯೀಕರಣದ ಬಗ್ಗೆ ಎಚ್ಚರಿಕೆ ನೀಡಿದ ಅವರು, ಘರ್ಷಣೆಗಳು ಮಾನವ ಹಕ್ಕುಗಳ ಪಾಳುಭೂಮಿಯನ್ನು ಸೃಷ್ಟಿಸುತ್ತದೆ. ಅಂತಾರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನಿನ ಸೌಧವು ನಮ್ಮ ಕಣ್ಣಮುಂದೆಯೇ ಕುಸಿದು ಬೀಳುವುದನ್ನು ಜಗತ್ತು ಮೂಕಪ್ರೇಕ್ಷಕನಂತೆ ನಿಲ್ಲಲು ಸಾಧ್ಯವಿಲ್ಲ. 2010ರ ಬಳಿಕ ಸಶಸ್ತ್ರ ಸಂಷರ್ಘದ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಜಗತ್ತು ನಿಜವಾಗಿಯೂ ಅತ್ಯಂತ ಅಪಾಯದ ಸ್ಥಳವಾಗುತ್ತಿದೆ. ಅಧಿಕಾರಕ್ಕಾಗಿ ನಿರಂತರ ಪೈಪೋಟಿ ನಡೆಯುತ್ತಿದ್ದು ಎಲ್ಲೆಡೆ ಹಕ್ಕುಗಳಿಗೆ ಹಾನಿಯಾಗುತ್ತಿದೆ. ಭೂಮಿ, ಇಂಧನ, ಜಾಗತಿಕ ಆರ್ಥಿಕತೆಯಲ್ಲಿ ಪ್ರಾಬಲ್ಯ ಸಾಧಿಸಲು, ಇನ್ನಷ್ಟು ಅಧಿಕಾರ ಸಂಗ್ರಹಿಸಲು ಎಲ್ಲೆಡೆ ಸ್ಪರ್ಧೆ, ಪೈಪೋಟಿ ಮುಂದುವರಿದಿದೆ. ಆದರೆ ಅಧಿಕಾರ, ಬಲವನ್ನು ಖಂಡಿತವಾಗಿಯೂ ಇತರ ಉದ್ದೇಶಗಳಿಗೆ ಬಳಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಕಾರ್ಮಿಕರ ಕಲ್ಯಾಣಕ್ಕಾಗಿ ಇನ್ನೂ ನಾಲ್ಕು ಮಸೂದೆಗಳ ಜಾರಿ : ಸಂತೋಷ್ ಲಾಡ್
ಬೆಂಗಳೂರು, ಫೆ.27 : ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯು ನಾಲ್ಕು ಮಸೂದೆಗಳನ್ನು ಈಗಾಗಲೇ ಜಾರಿ ಮಾಡಿದೆ. ಇದರೊಂದಿಗೆ ಇನ್ನೂ ನಾಲ್ಕು ಮಸೂದೆಗಳನ್ನು ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದ್ದಾರೆ. ಶುಕ್ರವಾರ ಇಲ್ಲಿನ ಅರಮನೆ ಮೈದಾನದಲ್ಲಿ ರಾಜ್ಯದ ವಿವಿಧ ಕೈಗಾರಿಕೆಗಳು, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ವಿಶೇಷಚೇತನರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನಗಳ ವಿತರಣಾ ಸಮಾರಂಭ’ದಲ್ಲಿ ಮಾತನಾಡಿದ ಅವರು, ಗಿಗ್ ಕಾರ್ಮಿಕರ ವಿಮಾ ಮಸೂದೆ, ಋತುಚಕ್ರ ರಜೆ, ಸಾರಿಗೆ ಕಾರ್ಮಿಕರಿಗೆ ಅಪಘಾತ ಮತ್ತು ವಿಮಾ ಯೋಜನೆ ಮತ್ತು ಸಿನಿಮಾ ಕಾರ್ಮಿಕರಿಗೆ ಮಸೂದೆ ಜಾರಿ ಮಾಡಲಾಗಿದೆ ಎಂದರು. ಮನೆಗೆಲಸದ ಕಾರ್ಮಿಕರು, ವಿಧವೆಯರು, ಅಂಗವಿಕಲರಿಗೆ ಸಂಬಂಧಿಸಿದ ಮಸೂದೆಗಳನ್ನು ಜಾರಿ ಮಾಡಲು ಉದ್ದೇಶಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸ್ವಲ್ಪಮಟ್ಟಿನ ಸುಂಕ ವಿಧಿಸಿ ಅಸಂಘಟಿತ ಕಾರ್ಮಿಕ ಕಲ್ಯಾಣಕ್ಕೆ ಬಳಸುವ ಉದ್ದೇಶವಿದೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೊಸ ಮಸೂದೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಕಾರ್ಮಿಕ ಇಲಾಖೆ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆ ಹೊಸ ಹೊಸ ಸೌಲಭ್ಯಗಳನ್ನು ಅನುಷ್ಠಾನ ಮಾಡಿದೆ. ವಿಶೇಷ ಚೇತನರಿಗೆ ತ್ರಿಚಕ್ರ ವಿತರಿಸುವ ನಮ್ಮ ಆಲೋಚನೆಯನ್ನು ವಿವಿಧ ಕಂಪನಿ ಹಾಗೂ ಸಂಸ್ಥೆಗಳ ಜೊತೆಗೆ ತಿಳಿಸಿದಾಗ ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿದರು. ಇದಕ್ಕಾಗಿ ವಿವಿಧ ಕಂಪೆನಿಗಳು ವಿಶಾಲ ಮನೋಭಾವದಿಂದ ಕೊಡುಗೆ ನೀಡಿವೆ. ರಾಜ್ಯದಾದ್ಯಂತ 1,608 ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ನಮ್ಮ ಸರಕಾರವು ಗ್ಯಾರಂಟಿಗಳ ಮೂಲಕ ನಾಡಿನ ಕೋಟ್ಯಾಂತರ ಜನರಿಗೆ ನೆರವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಗ್ಯಾರಂಟಿಗಳು ಸಹಾಯ ಮಾಡಿವೆ. ಈ ಬಾರಿಯ ಬಜೆಟ್ನಲ್ಲೂ ಅಸಂಘಟಿತ ಕಾರ್ಮಿಕರಿಗೆ ಇನ್ನಷ್ಟು ಅನುಕೂಲವಾಗುವ ಕಾರ್ಯಕ್ರಮಗಳಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಶಿವಮೊಗ್ಗ ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಬೋವಿಮಠದ ಸಿದ್ದರಾಮೇಶ್ವರ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ ಮತ್ತಿತರರ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ತುಕಾರಾಂ, ಕಾರ್ಮಿಕ ಆಯುಕ್ತ ಡಾ. ಎಚ್ ಎನ್ ಗೋಪಾಲಕೃಷ್ಣ, ಕಾರ್ಮಿಕ ಇಲಾಖೆಯ ಸರಕಾರದ ಕಾರ್ಯದರ್ಶಿಗಳಾದ ಸಲ್ಮಾ ಕೆ ಫಾಹೀಂ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಡಿ ಚೆನ್ನಣ್ಣವರ್, ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತ ಡಾ. ದಿನೇಶ್ ಕುಮಾರ್ ಜೈನ್, ಉಪ ಕಾರ್ಮಿಕ ಆಯುಕ್ತ ಡಾ. ರವಿ ಕುಮಾರ್, ಕಾರ್ಖಾನೆಗಳು ಮತ್ತು ಬಾಯ್ಲರುಗಳು, ಕೈಗಾರಿಕೆ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕ ಕೆ. ಶ್ರೀನಿವಾಸ್ ಮತ್ತಿತರರು ಇದ್ದರು. ‘ಕಾರ್ಮಿಕ ಇಲಾಖೆಯು ವಿಶೇಷ ಚೇತನರಿಗೆ ವಿವಿಧ ಸಂಸ್ಥೆಗಳ ಮೂಲಕ ತ್ರಿಚಕ್ರ ವಾಹನಗಳನ್ನು ನೀಡುವ ಕೆಲಸ ಮಾಡಿದೆ. ಸಂತೋಷ್ ಲಾಡ್ ಅವರಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಪಾರವಾದ ಅರಿವು ಇದೆ. ಇನ್ನೂ ಜಗತ್ತಿನಾದ್ಯಂತ 130 ಕೋಟಿ, ಭಾರತದಲ್ಲಿ 2.6 ಕೋಟಿ ಹಾಗೂ ಕರ್ನಾಟಕದಲ್ಲಿ 13.2 ಲಕ್ಷ ವಿಶೇಷಚೇತನರು ಇದ್ದಾರೆ. ವಿಶೇಷಚೇತನರು ಯಾರೂ ಮಾನಸಿಕವಾಗಿ ಧೃತಿಗೆಡಬಾರದು. ರಾಜ್ಯ ಸರಕಾರದಿಂದ ನಿಮಗೆ ಎಂದಿಗೂ ಬೆಂಬಲ ಇದೆ. ನಿಮ್ಮ ವಿಶ್ವಾಸ ಎಂದಿಗೂ ಕಡಿಮೆಯಾಗಬಾರದು’ -ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
Kalaburagi | ವಿಶೇಷ ಅಂಚೆ ಜೀವ ವಿಮಾ ಮೇಳ: 1.53 ಕೋಟಿ ರೂ. ಪ್ರೀಮಿಯಂ ಸಂಗ್ರಹ
ಕಲಬುರಗಿ : ಕಲಬುರಗಿ ಅಂಚೆ ವಿಭಾಗದ ವತಿಯಿಂದ ಗುರುವಾರ ವಿಶೇಷ ಅಂಚೆ ಜೀವ ವಿಮಾ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಜಿಲ್ಲೆಯಾದ್ಯಂತ ರಾಜ್ಯ ಸರ್ಕಾರಿ ನೌಕರರು, ಗ್ರಾಮೀಣ ಭಾಗದ ಅರೆ ಸರ್ಕಾರಿ ನೌಕರರು, ಆಟೋ ಚಾಲಕರು, ಸಣ್ಣ ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಸೇರಿದಂತೆ 356 ಮಂದಿ ಭಾಗವಹಿಸಿ ಒಟ್ಟು 1.53 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸುವ ಮೂಲಕ ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆದಿದ್ದಾರೆ. ಭಾರತ ಅಂಚೆ ವತಿಯಿಂದ ನೀಡಲಾಗುವ ಅಂಚೆ ಜೀವ ವಿಮೆ ಯೋಜನೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಬೋನಸ್ ನೀಡುವ ಸರಳ ಹಾಗೂ ವಿಶ್ವಾಸಾರ್ಹ ಯೋಜನೆಯಾಗಿದೆ. ಜನರ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಕಲಬುರಗಿ ಜಿಲ್ಲೆಯ ಇನ್ನಷ್ಟು ಜನರಿಗೆ ಯೋಜನೆಯ ಲಾಭ ತಲುಪಿಸುವ ಉದ್ದೇಶದಿಂದ, ಅಂಚೆ ಅಧೀಕ್ಷಕರಾದ ರವೀಂದ್ರ ಬಿ.ಎಲ್. ಅವರ ಮಾರ್ಗದರ್ಶನದಲ್ಲಿ ಮಾರ್ಚ್ 11ರಂದು ಮತ್ತೊಮ್ಮೆ ಅಂಚೆ ಜೀವ ವಿಮಾ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಅನುಮೋದಿತ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
1.60 ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಫೆ.27: ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾಸ್ಕರ (63) ಎಂಬವರು ಫೆ.24ರಂದು ಫೇಸ್ಬುಕ್ನಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಫೆ.26 ರಂದು ಅವರು ತನ್ನ ಮೊಬೈಲ್ನಲ್ಲಿ ಬ್ಯಾಂಕ್ ಅಪ್ಲಿಕೇಶನ್ನಲ್ಲಿ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ವೀಕ್ಷಿಸುತ್ತಿದ್ದಾಗ ಅವರ ಬ್ಯಾಂಕ್ ಖಾತೆ ಯಿಂದ ಹಂತಹಂತವಾಗಿ ಒಟ್ಟು 1,60,000ರೂ. ಕಡಿತಗೊಂಡಿರುವುದು ಕಂಡುಬಂದಿದೆ. ಅಪರಿಚಿತ ವ್ಯಕ್ತಿಗಳು ಭಾಸ್ಕರ ಅವರ ಮೊಬೈಲ್ನ ರಿಮೋಟ್ ಅಸ್ಸೆಸ್ ಕಂಟ್ರೋಲ್ ಪಡೆದು ಆನ್ಲೈನ್ ಮೂಲಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಭಾರತ Vs ವಿಂಡೀಸ್ ಪಂದ್ಯಕ್ಕೆ ಕ್ವಾರ್ಟರ್ ಫೈನಲ್ ಕಳೆ! ಕೋಲ್ಕತಾ ಪಿಚ್ ನಲ್ಲಿ ಹೀಗಿದೆ ಭಾರತ ಸಂಭಾವ್ಯ ಇಲೆವೆನ್
ಚೆನ್ನೈನಲ್ಲಿ ಜಿಂಬಾಬ್ನೆಯನ್ನು ಭರ್ಜರಿಯಾಗಿ 72 ರನ್ ಗಳಿಂದ ಪರಾಭವಗೊಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಇದೀಗ ಕೋಲ್ಕತಾದ ಈಡನ್ ಗಾರ್ಡನ್ಸ್ ಪಿಚ್ ನಲ್ಲಿ ವೆಸ್ಟ್ ಇಂಡೀಸ್ ಸವಾಲನ್ನು ಎದುರಿಸಲು ಸಿದ್ಧವಾಗಿದೆ. ಇತ್ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಲಿದ್ದು, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಭಾನುವಾರ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯಕ್ಕೆ ಅಕ್ಷರಶಃ ಕ್ವಾರ್ಟರ್ ಫೈನಲ್ ನ ಕಳೆ ಬಂದಿದೆ. ಇಬ್ಬನಿಯ ಪ್ರಭಾವ ಬೆಚ್ಚಿರುವ ಸಾಧ್ಯತೆ ಇರವುದರಿಂದ ಟಾಸ್ ಗೆದ್ದ ತಂಡ ಇಲ್ಲಿ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಇತ್ತಂಡಗಳ ಬಲಾಬಲವನ್ನು ಗಮನಿಸಿದಾಗ ಆತಿಥೇಯ ಭಾರತ ತಂಡವೇ ಬಲಶಾಲಿಯಾಗಿ ಗೋಚರಿಸುತ್ತಿದೆ. ಆದರೆ ವಿಂಡೀಸ್ ಸಾಮರ್ಥ್ಯವನ್ನು ಅಲ್ಲಗೆಳೆಯುವಂತೆ ಇಲ್ಲ. ಕಳೆದ ಪಂದ್ಯದಲ್ಲಿ ಚುಟುಕು ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರರಿಂದಲೇ ಕೂಡಿರುವ ಕೆರಿಬಿಯನ್ ತಂಡ ಪಂದ್ಯವನ್ನು ಯಾರೂ ಊಹಿಸದ ಮಟ್ಟಕ್ಕೆ ಕೊಂಡೊಯ್ಯಬಲ್ಲರು. ಶಿಮ್ರಾನ್ ಹೆಟ್ಮೇಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್ ಅವರ ಬಗ್ಗೆ ತಿಳಿದವವರು ಯಾರೇ ಆಗಲಿ ಇದು ಒಪ್ಪತಕ್ಕ ಮಾತು. ಹೀಗಾಗಿ ಭಾರತ ತಂಡ ಸೂಕ್ತ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಾದ ಅಗತ್ಯವಿದೆ. ಇನ್ನು ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪದೇ ಪದೇ ಬದಲಾವಣೆ ನಡೆದರೂ ಅದನ್ನು ತಡೆದುಕೊಂಡು ಹೊಂದಿಕೊಳ್ಳುತ್ತಿದೆ ಎಂಬುದು ಸಂತಸದ ಸಂಗತಿ. ಫಾರ್ಮ್ ನಲ್ಲಿಲ್ಲದ ಹೊಡೆದು ಫಾರ್ಮ್ ಗೆ ಮರಳಿರುವುದು ಟೀಂ ಇಂಡಿಯಾ ಪಾಲಗೆ ಶುಭಸಂಗತಿಯಾಗಿದೆ. ಇನ್ನು ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಅವರಂತೂ ಪರಿಸ್ಥಿತಿಗೆ ಹೊಂದಿಕೊಂಡು ವೇಗವಾಗಿ ರನ್ ಗಳಿಸುವುದರಲ್ಲೂ ನಿಸ್ಸೀಮರಾಗಿ ಗೋಚರಿಸುತ್ತಿದ್ದಾರೆ. ಅವರು ಮತ್ತೆ ತಂಡವನ್ನು ಸೇರಿಕೊಂಡು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆವರು ಆಡಲು ಸಾಧ್ಯವಿದ್ದಲ್ಲಿ ಸಂಜು ಸ್ಯಾಮ್ಸನ್ ಅವರು ಬೆಂಚು ಕಾಯಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಲ್ಲವಾದಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ್ದ ಪಂದ್ಯವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೇಗಿದೆ ಈಡನ್ ಗಾರ್ಡನ್ ಪಿಚ್? ಕೋಲ್ಕತಾದ ಈಡನ್ ಗಾರ್ಡನ್ ಪಿಚ್ ಬ್ಯಾಟಿಂಗ್ ಗೆ ಅನುಕೂಲಕಾರಿಯಾಗಿದೆ. ಟಿ20 ಪಂದ್ಯಗಳಲ್ಲಿ ಇಲ್ಲಿ ಸರಾಸರಿ 180 ರಂತೆ ರನ್ ಬಂದಿರುವುದರಿಂದ ಭಾನುವಾರ ಪಂದ್ಯ ಸಹ ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಇದೆ. ಇನ್ನು ರಾತ್ರಿ ವೇಳೆ ಇಬ್ಬನಿ ಪ್ರಭಾವ ಹೆಚ್ಚಿರುವುದರಿಂದ ಇಲ್ಲಿ ಬೌಲಿಂಗ್ ಮಾಡುವುದು ಸವಾಲಿನ ಸಂಗತಿಯಾಗಿದೆ. ಆದರೂ ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳು ಪಿಚ್ ನ ಲಾಭ ಪಡೆಯಬಹುದು. ವೇಗಿಗಳಿಗೆ ಉತ್ತಮ ಬೌನ್ಸ್ ಸಿಗಲಿದೆ ಎಂದು ವರದಿ ತಿಳಿಸಿದೆ. ಇತಿಹಾಸವನ್ನು ಕೆದಕಿದರೆ ಇಲ್ಲಿ ಮೊದಲು ಬ್ಯಾಟಿಂಗ್ ತೆಗೆದುಕೊಂಡ ತಂಡವೇ ಗೆದ್ದಿದ್ದು ಹೆಚ್ಚು. ಆದರೆ ಭಾನುವಾರ ಇಬ್ಬನಿಯ ಪ್ರಭಾವ ಹೆಚ್ಚಿರುವ ಸಾಧ್ಯತೆ ಇರುವುದರಿಂದ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಕೋಲ್ಕತಾದಲ್ಲಿ ಮಳೆ ಬರುತ್ತಾ? ಪಂದ್ಯದ ವೇಳೆ ಯಾವುದೇ ಕಾರಣಕ್ಕೂ ಮಳೆ ಬರಬಾರದು ಎಂದು ಇದೀಗ ಕ್ರಿಕಟ್ ಅಭಿಮಾನಿಗಳು ಪ್ರಾರ್ಥಿಸಿಸುತ್ತಿದ್ದಾರೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದುಗೊಂಡಲ್ಲಿ ಇತ್ತಂಡಗಳಿಗೂ ತಲಾ ಒಂದು ಅಂಕವನ್ನು ಹಂಚಲಾಗುತ್ತದೆ. ಆಗ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳೆರಡೂ 3 ಅಂಕಗಳನ್ನು ಗಳಿಸಿದಂತಾಗುತ್ತದೆ. ಅಂಕಗಳು ಸಮನಾಗಿರುವುದರಿಂದ ರನ್ ರೇಟ್ ಗಣನೆಗೆ ಬರುತ್ತದೆ. ಈ ವಿಚಾರದಲ್ಲಿ ವೆಸ್ಚ್ ಇಂಡೀಸ್(+1.79) ತಂಡ ಭಾರತ(0.100) ತಂಡಕ್ಕಿಂತ ಬಹಳ ಮುಂದಿದೆ. ಆದರೆ ಭಾನುವಾರ ಮಳೆಯ ಸಾಧ್ಯತೆ ಇಲ್ಲ ಎಂದು ಹವಾಮಾನ ವರದಿ ತಿಳಿಸಿರುವುದರಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಂತಸದಿಂದಿದ್ದಾರೆ. ಕೋಲ್ಕತ್ತಾ ನಗರದಲ್ಲಿ ಭಾನುವಾರದಂದು ಬಿಸಿಲಿನ ವಾತಾವರಣವಿರುತ್ತದೆ. ಹಗಲಿನ ತಾಪಮಾನವು ಗರಿಷ್ಠ 34 ಡಿಗ್ರಿ ತಲುಪುವ ಸಾಧ್ಯತೆಯಿದೆ. ಪಂದ್ಯದ ವೇಳೆಗೆ ಸುಮಾರು 25-26 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುವ ಸಾಧ್ಯತೆಯಿದೆ. ಮಳೆ ಬರುವ ಸಾಧ್ಯತೆ ಇಲ್ಲ. ಭಾರತ ಪ್ಲೇಯಿಂಗ್ ಸಂಭಾವ್ಯ ಇಲೆವೆನ್ ಸೂರ್ಯಕುಮಾರ್ ಯಾದವ್(ನಾಯಕ), ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ವೆಸ್ಟ್ ಇಂಡೀಸ್ ಸಂಭಾವ್ಯ ಇಲೆವೆನ್ ಶಾಯ್ ಹೋಪ್(ನಾಯಕ), ಬ್ರೆಂಡನ್ ಕಿಂಗ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ಅಕೇಲ್ ಹುಸೈನ್, ಗುದಕೇಶ್ ಮೋತಿ, ಶೆಮರ್ ಜೋಸೆಫ್.
Bengaluru | 5.24 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ; ಇಬ್ಬರು ಮಹಿಳೆಯರ ಸಹಿತ 16 ಮಂದಿಯ ಬಂಧನ
ಬೆಂಗಳೂರು, ಫೆ.27 : ನಗರಾದ್ಯಂತ ವಿವಿಧ ಮಾದಕ ವಸ್ತು ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರ ಸಹಿತ ಒಟ್ಟು 16 ಪೆಡ್ಲರ್ ಗಳನ್ನು ಬೆಂಗಳೂರು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಸಿಸಿಬಿ ಹಾಗೂ ನಗರದ ವಿವಿಧ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ ಹೊರ ರಾಜ್ಯದ 8 ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಸುಮಾರು 5.24 ಕೋಟಿ ರೂ. ಮೌಲ್ಯದ ಡ್ರಗ್ಸ್, ಮೂರು ಸಾವಿರ ಎಂಡಿಎಂ ಮಾತ್ರೆಗಳು ಮತ್ತು ಗಾಂಜಾವನ್ನು ಜಪ್ತಿ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇನ್ನು, ನೈಜೀರಿಯಾ ಪ್ರಜೆಯೊಬ್ಬನ ಡ್ರಗ್ಸ್ ವಹಿವಾಟಿಗೆ ಸಾಥ್ ಕೊಡುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆಕೆಯನ್ನು 30 ವರ್ಷದ ಸುಭಾಷಿಣಿ ಎಂದು ಗುರುತಿಸಲಾಗಿದೆ. ಈಕೆ ಬಾಗಲೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಬಂಧಿತ ಸುಭಾಷಿಣಿ, ನೈಜೀರಿಯನ್ ಪ್ರಜೆಯೊಬ್ಬನ ಜೊತೆ ಸೇರಿಕೊಂಡು ಡ್ರಗ್ಸ್ ವ್ಯವಹಾರ ಮಾಡುತ್ತಿದ್ದಳು. ವಿದೇಶಿ ಪ್ರಜೆ ನೈಜೀರಿಯಾದಿಂದ ಡ್ರಗ್ಸ್ ತರಿಸಿಕೊಂಡು ಸುಭಾಷಿಣಿ ಮನೆಯಲ್ಲಿ ಶೇಖರಿಸಿಟ್ಟಿದ್ದ. ಆತ ಸೂಚಿಸಿದ್ದ ವಿಳಾಸ, ಗ್ರಾಹಕರಿಗೆ ಸುಭಾಷಿಣಿ ತಲುಪಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಬಂಧಿತಳಿಂದ 2 ಕೋಟಿ ರೂ. ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.
ಸೇಡಂ | ಹಡಪದ ಸಮಾಜದ ಅಧ್ಯಕ್ಷರಾಗಿ ಅಂಬರೀಷ್ ಉಡಗಿ ನೇಮಕ
ಸೇಡಂ: ಹಡಪದ ಸಮಾಜದ ಸೇಡಂ ತಾಲೂಕು ಅಧ್ಯಕ್ಷರಾಗಿ ಅಂಬರೀಷ್ ಹಡಪದ ಉಡಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹಡಪದ ಬೆನಕನಹಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹಡಪದ ತಿಳಿಸಿದ್ದಾರೆ. ಇಲ್ಲಿನ ಶ್ರೀ ಕೋತ್ತಲ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಡಪದ ಸಮಾಜದ ಮುಖಂಡರು ಹಾಗೂ ಯುವಕರು ಸೇರಿಕೊಂಡು ಸಭೆ ನಡೆಸಿ ಹಡಪದ ಸಮಾಜದ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಮಾತನಾಡಿದ ಈರಣ್ಣ ಹಡಪದ, ತಾಲೂಕಿನ ಪ್ರತಿಯೊಬ್ಬ ಹಡಪದ ಸಮಾಜ ಬಾಂಧವರು ಒಗ್ಗಟ್ಟಾಗಿದರೆ ಮಾತ್ರ ಸಮಾಜ ಬಲಿಷ್ಠಗೊಳುತ್ತದೆ ಎಂದು ಕರೆ ನೀಡಿದರು. ಬಸವರಾಜ್ ಸೂಗೂರು, ರಮೇಶ್ ನಿಲೂರ, ಭಗವಂತ ಹೊನ್ನಕಿರಣಿ, ಮಲ್ಲಿಕಾರ್ಜುನ ಸಾವಳಗಿ, ವಿನೋದ್ ಅಂಬಲಗಾ, ನೀಲಕಂಠ ಸೇಡಂ, ವಾಸುದೇವ ಹಂದರಕಿ, ಸಾಬಣ್ಣ ಹಡಪದ, ಹಂಪಣಾ ಬುರಗಪಲಿ, ಲೋಕೇಶ್ ಹಡಪದ, ಮಲ್ಲಿಕಾರ್ಜುನ ಮಳಖೇಡ, ಸುರೇಶ್ ಹಡಪದ, ಮಹೇಶ್ ಹಡಪದ, ಕಾರ್ತಿಕ ಹಡಪದ, ಸಾಬಣ್ಣ ಕುಕ್ಕುಂದಾ, ಮಲ್ಲಿಕಾರ್ಜುನ ತೋನಸ್ನಳ್ಳಿ, ಶರಣಬಸವ ಹಂದರಕಿ ಸೇರಿ ಮತ್ತಿತರರು ಇದ್ದರು.
ನಾಳೆಯಿಂದ(ಫೆ.28) ದ್ವಿತೀಯ ಪಿಯುಸಿ ಪರೀಕ್ಷೆ
ಬೆಂಗಳೂರು, ಫೆ.27 : ನಾಳೆಯಿಂದ(ಫೆ.28) ರಾಜ್ಯದ 1,217 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-1 ನಡೆಯಲಿದ್ದು, ಈ ಬಾರಿ ರಾಜ್ಯದ 7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 6,46,801 ಹೊಸಬರು, 50,540 ಪುನರಾವರ್ತಿತ, 13,022 ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಈಗಾಗಲೇ ಮಕ್ಕಳ ಪರೀಕ್ಷಾ ಸಿದ್ಧತೆಗಾಗಿ ಅಗತ್ಯವಾಗಿರುವ ಸಮಗ್ರ ಮಾಹಿತಿಯನ್ನು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಾಲತಾಣ kseeb.karnataka.gov.in ನಲ್ಲಿ ನೀಡಲಾಗಿದೆ. ಪ್ರಶ್ನೆಪತ್ರಿಕೆಯ ನೀಲಿನಕ್ಷೆ ಅಂದರೆ ವಿಷಯವಾರು, ಅಧ್ಯಾಯವಾರು ಅಂಕಗಳ ಹಂಚಿಕೆಯ ಮಾಹಿತಿ, ಮಾದರಿ ಪ್ರಶ್ನೆಪತ್ರಿಕೆ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ, ಮಾದರಿ ಉತ್ತರಗಳು, ಹಿಂದಿನ ವರ್ಷದಲ್ಲಿ ಶೇಕಡಾ 100 ಅಂಕ ಪಡೆದ ಉತ್ತರ ಪತ್ರಿಕೆಗಳನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳು ಬಿಎಂಟಿಬಸ್ ಹಾಗೂ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಪ್ರವೇಶ ಪತ್ರಗಳನ್ನು ತೋರಿಸಿ ಪರೀಕ್ಷೆ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ‘ಫೆ.28ರಿಂದ ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸಲು ನಮ್ಮ ಇಲಾಖೆ ಸರ್ವಸನ್ನದ್ಧವಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಬೇಕು. ನಿಮ್ಮ ಉಜ್ವಲ ಭವಿಷ್ಯಕ್ಕೆ ನನ್ನ ಶುಭ ಹಾರೈಕೆಗಳು’ -ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ
ಹುಬ್ಬಳ್ಳಿಯಲ್ಲಿ ವಲಸೆ ಕಾರ್ಮಿಕನ ಎನ್ಕೌಂಟರ್ ಪ್ರಕರಣ; ನ್ಯಾಯಾಂಗ ತನಿಖೆಗೆ ರಾಜ್ಯ ಸರಕಾರದ ಸಲಹೆ
ಬೆಂಗಳೂರು : ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್ಕೌಂಟರ್ ಪ್ರಕರಣವನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ನ್ಯಾಯಾಂಗ) ತನಿಖೆಗೆ ವಹಿಸಬಹುದು ಎಂದು ರಾಜ್ಯ ಸರಕಾರ ಹೈಕೊರ್ಟ್ಗೆ ತಿಳಿಸಿದೆ. ರಿತೇಶ್ ಎನ್ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಬೇಕು. ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೋರಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಎನ್ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಘಟನೆ ಸಂಬಂಧ ಸ್ವತಂತ್ರ ತನಿಖೆ ನಡೆಸಬೇಕು ಎಂಬ ಕಾರಣದಿಂದ ಸಿಐಡಿಗೆ ವಹಿಸಲಾಗಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳ ಅನ್ವಯವೇ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಲ್ಲ ರೀತಿಯ ತನಿಖೆಗೂ ಸರ್ಕಾರ ಸಿದ್ಧವಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದರೂ ಅದನ್ನು ಸರಕಾರ ವಿರೋಧಿಸುವುದಿಲ್ಲ ಎಂದರು. ಮುಂದುವರಿದು, ಎನ್ಕೌಂಟರ್ ನಡೆಸಿದ ಅಧಿಕಾರಿಗಳನ್ನು ರಕ್ಷಣೆ ಮಾಡಲು ಸರಕಾರ ಪ್ರಯತ್ನಿಸುತ್ತಿಲ್ಲ. ಪ್ರಕರಣವನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸುವುದನ್ನೂ ವಿರೋಧಿಸುವುದಿಲ್ಲ. ಯಾವ ವಿಚಾರದಿಂದಲೂ ಸರಕಾರ ಅಂತರ ಕಾಯ್ದುಕೊಳ್ಳುವುದಿಲ್ಲ. ನ್ಯಾಯಾಲಯ ಪ್ರಕರಣವನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಬಹುದು. ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿ ಕೋರ್ಟ್ಗೆ ವರದಿ ಸಲ್ಲಿಸಲಿ. ಆದನ್ನು ಆಧರಿಸಿ ಹೈಕೋರ್ಟ್ ಮುಂದಿನ ನಿರ್ಧಾರ ತೆಗೆದಕೊಳ್ಳಬಹುದು ಎಂದು ತಿಳಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ಎನ್ಕೌಂಟರ್ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಅರ್ಜಿದಾರರು ಕೋರಿದ್ದಾರೆ. ಸರಕಾರ ಸಹ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಬಹುದು ಎಂದು ಹೇಳಿದ್ದು, ಇದು ಸೂಕ್ತ ಸಲಹೆಯಾಗಿದೆ. ಈ ಅಂಶಗಳನ್ನು ಪರಿಗಣಿಸಲಾಗುವುದು. ಸರಕಾರದ ಸಲಹೆಗೆ ಅರ್ಜಿದಾರರು ಪ್ರತಿಕ್ರಿಯೆ ಸಲ್ಲಿಸಲಿ ಎಂದು ಸೂಚಿಸಿ,ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿತು. ಪ್ರಕರಣದ ಹಿನ್ನೆಲೆ: ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್, ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದನು. 2025ರ ಏಪ್ರಿಲ್ 13ರಂದು ಆತನನ್ನು ಘಟನಾ ಸ್ಥಳಕ್ಕೆ ಮಹಜರು ಮಾಡಲು ಕರೆದೊಯ್ದಿದ್ದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದನೆಂಬ ಕಾರಣಕ್ಕೆ ಪೊಲೀಸರು ಹೊಡೆದ ಗುಂಡಿಗೆ ಬಲಿಯಾಗಿದ್ದನು.
ಹಣಕ್ಕೆ ಒತ್ತಾಯಿಸದೇ ಹಾವು, ನಾಯಿ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಿ : ಸಚಿವ ದಿನೇಶ್ ಗುಂಡೂರಾವ್
‘ಹಾವು ಕಡಿತ ತಡೆಗಟ್ಟುವಿಕೆ ಹಾಗೂ ರೇಬೀಸ್ ಮುಕ್ತ ಕರ್ನಾಟಕ’ ಕ್ರಿಯಾ ಯೋಜನೆಗೆ ಚಾಲನೆ
ಕಾರ್ಕಳ| ಪೋಕ್ಸೊ ಪ್ರಕರಣ: ರಿಕ್ಷಾ ಚಾಲಕನ ಬಂಧನ
ಕಾರ್ಕಳ, ಫೆ.27: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪದಲ್ಲಿ ರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬೋಳ ನಿವಾಸಿ ಅಮರನಾಥ್ ಪೂಜಾರಿ(31) ಬಂಧಿತ ಆರೋಪಿ. 16ವರ್ಷ ಪ್ರಾಯದ ಬಾಲಕಿ ಫೆ.25ರಂದು ಶಾಲೆ ಮುಗಿಸಿ ಮನೆಗೆ ತೆರಳಿದ್ದಾಗ ಅಮರನಾಥ್, ಮನೆಗೆ ಬಿಡುವುದಾಗಿ ನಂಬಿಸಿ ಆಕೆಯನ್ನು ಕರೆದು ಕೊಂಡು ಬಂದನು. ಬಳಿಕ ದಾರಿ ಮಧ್ಯೆ ಆಕೆಗೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದನು. ಆಗ ಆಕೆ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಫೆ.26ರಂದು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹುಮನಾಬಾದ್ | ಪರಿಸರ ನಿಯಮ ಉಲ್ಲಂಘನೆ ಆರೋಪ : ಮೂರು ಕಾರ್ಖಾನೆಗಳಿಗೆ ಬೀಗ
ಹುಮನಾಬಾದ್ : ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳ ಉಲ್ಲಂಘನೆ, ಪರಿಸರ ಹಾನಿ ಹಾಗೂ ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ಹಿನ್ನೆಲೆ ಮೂರು ಟೈರ್ ಪೈರೋಲಿಸಿಸ್ ಕಾರ್ಖಾನೆಗಳಿಗೆ ತಹಶೀಲ್ದಾರ್ ಅಂಜುಮ್ ತಬಸುಮ್ ಅವರ ನೇತೃತ್ವದಲ್ಲಿ ಬೀಗ ಜಡಿಸಲಾಯಿತು. ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದ ಎಂ.ಕೆ ಇಂಡಸ್ಟ್ರೀಸ್, ಓ.ಆರ್ ಪೈರೋಲಿಸಿಸ್ ಹಾಗೂ ಎಂ.ಬಿ ಇಂಡಸ್ಟ್ರೀಸ್ ಕಾರ್ಖಾನೆಗಳಿಗೆ ಬೀಗ ಹಾಕಲಾಗಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ತಹಸೀಲ್ದಾರ್ ಅಂಜುಮ್ ತಬಸುಮ್ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಚ್ಚುವ ಆದೇಶ ನೀಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ನಿಯಮಬಾಹಿರ ಚಟುವಟಿಕೆ ನಡೆಸುತ್ತಿರುವ ಕಾರ್ಖಾನೆಗಳನ್ನು ಪತ್ತೆಹಚ್ಚುವ ಜವಾಬ್ದಾರಿ ಸಂಬಂಧಿತ ಅಧಿಕಾರಿಗಳದ್ದು. ಅವರು ಸಮಯಕ್ಕೆ ತಕ್ಕಂತೆ ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಇನ್ನುಳಿದ ಕಾರ್ಖಾನೆಗಳು ಎಸ್ಓಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಪ್ರಕಾರ ಕಾರ್ಯನಿರ್ವಹಿಸುತ್ತಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಲಿಖಿತ ಮಾಹಿತಿ ನೀಡಿದೆ. ಯಾವುದೇ ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ಬಂದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮಾಣಿಕನಗರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಲವು ಕಾರ್ಖಾನೆಗಳು ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ. ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮೃತ್ಯಂಜಯ ಮಾತನಾಡಿ, ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಐದು ಟೈರ್ ಪೈರೋಲಿಸಿಸ್ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಫೆಬ್ರವರಿ 19ರಂದು ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಭೇಟಿ ನೀಡಿದ್ದು, ವರದಿ ಬರುವ ಹಂತದಲ್ಲಿದೆ. ಶೀಘ್ರದಲ್ಲೇ ಇನ್ನೂ ಕೆಲವು ಕಾರ್ಖಾನೆಗಳಿಗೆ ಮುಚ್ಚುವ ಆದೇಶ ಬರಬಹುದು ಎಂದು ತಿಳಿಸಿದ್ದಾರೆ. ಯಾವುದೇ ನೂತನ ಟೈರ್ ಪೈರೋಲಿಸಿಸ್ ಕಾರ್ಖಾನೆಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಸಹಾಯಕ ಇಂಜಿನಿಯರ್ ಅನೀಲಕುಮಾರ್, ಉಪ ಅಭಿವೃದ್ದಿ ಅಧಿಕಾರಿ ಪ್ರೇಮಲತಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೇವಿ, ಸಣ್ಣ ಕಾರ್ಖಾನೆಯ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕ ಮೋಹನದಾಸ್, ಪಿಎಸ್ಐ ಸುರೇಶಕುಮಾರ್, ಎಎಸ್ಐ ಅಂಬೇಡ್ಕರ್, ಜೆಸ್ಕಾಂ ಸಹಾಯಕ ಇಂಜಿನಿಯರ್ ರಮೇಶ್ ಮೈನಳ್ಳಿ, ಮಾದಕ ದ್ರವ್ಯಗಳ ಅಧಿಕಾರಿ ಧನಂಜಯ್, ಸೇಫ್ಟಿ ಹಾಗೂ ಬೈಲರ್ ಪ್ರಭಾರ ಅಧಿಕಾರಿ ಶಿವಣ್ಣ, ಕಂದಾಯ ನೀರಿಕ್ಷಕ ರಾಹುಲದೇವ್, ಮಲ್ಲು ಹಾಗೂ ಆನಂದ್ ಜಮಾಲೆ ಸೇರಿದಂತೆ ಅನೇಕರಿದ್ದರು.
ಉಡುಪಿ: ಹಲವು ಸರಕಾರಿ ಕಚೇರಿಗಳಿಗೆ ಉಪಲೋಕಾಯುಕ್ತ ತಂಡದ ಭೇಟಿ
► ಸೇವಾ ನ್ಯೂನ್ಯತೆ, ಯಾಮಾರಿಸುವ ಸಿಬ್ಬಂದಿಗಳ ಬಗೆ ಆಕ್ರೋಶ► ಹಲವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ಸೂಚನೆ
Bidar | ಹೋಳಿ, ರಮಝಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ : ಎಸ್ಪಿ ಪ್ರದೀಪ್ ಗುಂಟಿ
ಬೀದರ್ : ಹೋಳಿ ಹಾಗೂ ರಮಝಾನ್ ಹಬ್ಬದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಆಚರಿಸಬೇಕು ಎಂದು ಎಸ್ಪಿ ಪ್ರದೀಪ್ ಗುಂಟಿ ಅವರು ಹೇಳಿದರು. ನಗರದ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಸಾಯಂಕಾಲ ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಮಾ.2 ರಿಂದ 5ರವರಗೆ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ಮಾ.21 ರಂದು ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬಗಳ ಸಮಯದಲ್ಲಿ ಯಾವುದೇ ಆಹಿತಕರ ಘಟನೆ ಜರುಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪ್ರತಿಯೊಬ್ಬರು ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಯಾವುದೇ ಜಾತಿ, ಧರ್ಮದ ಜನರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಶಾಂತಿಯುತವಾಗಿ ಆಚರಿಸಬೇಕು. ಹಬ್ಬ ಆಚರಣೆಯ ಕಾಲಕ್ಕೆ ಯಾವುದೇ ರೀತಿಯ ಆಹಿತಕರ ಘಟನೆ ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಉಭಯ ಸಮಾಜದ ಮುಖಂಡರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬೀದರ್ ಉಪವಿಭಾಗದ ಉಪಾಧೀಕ್ಷಕ ದೂದ್ಪೀರ್ ಹೆಚ್ ಮುಲ್ಲಾ ಹಾಗೂ ಮಹಾನಗರ ಪಾಲಿಕೆಯ ಅಧ್ಯಕ್ಷ ಮಹಮ್ಮದ್ ಗೌಸುದ್ದಿನ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಹೊಸದಿಲ್ಲಿ, ಫೆ. 27: 2021ರ ಕೋರ್ಡೆಲಿಯಾ ಕ್ರೂಸ್ ಹಡಗಿನ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಮಾದಕ ದ್ರವ್ಯ ನಿಯಂತ್ರಣ ಬ್ಯುರೋದ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧದ ಶಿಸ್ತು ಕ್ರಮವನ್ನು ರದ್ದುಗೊಳಿಸುವುದಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ತಡೆ ನೀಡಿದೆ. ಕೋರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಾಂಖೆಡೆ ವಿರುದ್ಧ 25 ಕೋಟಿ ರೂ. ಲಂಚಕ್ಕೆ ಬೇಡಿಕೆ ಇರಿಸಿದ ಆರೋಪವಿದೆ. ಹಡಗಿನಿಂದ ಮಾದಕ ದ್ರವ್ಯ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಸಿಲುಕಿಸದಿರಲು ವಾಂಖೆಡೆ ಲಂಚ ಕೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದರೆ, ಇನ್ನು ಕೆಲವು ಮಾಧ್ಯಮಗಳು ವಾಂಖೆಡೆ ಹಡಗಿನ ಮಾಲಿಕರಲ್ಲಿ ಲಂಚದ ಬೇಡಿಕೆ ಒಡ್ಡಿದ್ದರು ಎಂದು ಹೇಳಿವೆ. ಕೇಂದ್ರ ಆಡಳಿತ ನ್ಯಾಯ ಮಂಡಳಿಯು ವಾಂಖೆಡೆ ವಿರುದ್ಧದ ಆರೋಪ ಪತ್ರವನ್ನು ಜನವರಿ 19ರಂದು ರದ್ದುಪಡಿಸಿತ್ತು. ಕೈಗೊಂಡ ಕ್ರಮದಲ್ಲಿ ಹಲವು ಕಾರ್ಯ ವಿಧಾನದ ಲೋಪಗಳಿವೆ ಎಂದು ಅದು ಹೇಳಿತ್ತು.
ಚಿಟಗುಪ್ಪ | ಕರಾಟೆ ಸ್ಪರ್ಧೆಯಲ್ಲಿ ಹಮೀದುಲ್ಲಾ ಶಾಲೆಗೆ ಚಾಂಪಿಯನ್ ಪಟ್ಟ
ಚಿಟಗುಪ್ಪ : ತಾಲ್ಲೂಕಿನ ಮಂಗಲಗಿ ಗ್ರಾಮದ ಹಮೀದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಪಡೆದಿದ್ದಾರೆ. ಕಲಬುರಗಿ ನಗರದ ಚಂದ್ರಶೇಖರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 2ನೇ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಮಂಗಲಗಿ ಗ್ರಾಮದ ಹಮೀದುಲ್ಲಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಅರನವ್ ಪ್ರಥಮ ಸ್ಥಾನ, 9ನೇ ತರಗತಿಯ ಅವೆಸೋದ್ದೀನ್ ಖಾದ್ರಿ ದ್ವೀತಿಯ ಸ್ಥಾನ, 7ನೇ ತರಗತಿಯ ಸಯ್ಯದ್ ಮೆಹಬೂಬ್ ಸೈಯದ್ ಅಲ್ತಾಫ್ ತೃತೀಯ ಸ್ಥಾನ ಪಡೆದುಕೊಂಡಿದ್ದು, ಬಾಲಕಿಯರ ವಿಭಾಗದಲ್ಲಿ 9ನೇ ತರಗತಿಯ ಪ್ರೀತಿ ದ್ವಿತೀಯ ಸ್ಥಾನ, 8ನೇ ತರಗತಿಯ ಮೀರಾ ಜಾಸ್ಮಿನ್ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸ್ಥಾಪಕರು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವಾಟ್ಸಾಪ್ ಬಳಕೆದಾರರಿಗೆ ಮಾರ್ಚ್ 1 ರಿಂದ ಹೊಸ ನಿಯಮ; ಸಿಮ್ ಕಾರ್ಡ್ ಇಲ್ಲದಿದ್ದರೆ ಆಪ್ ವರ್ಕ್ ಆಗಲ್ಲ!
ವಾಟ್ಸ್ಆಪ್ ಅಥವಾ ಬೇರೆ ಮೆಸೇಜಿಂಗ್ ಆಪ್ಗಳನ್ನು ಬಳಸುತ್ತಿದ್ದರೆ ಮಾರ್ಚ್ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಸಿಮ್ ಬೈಂಡಿಂಗ್ ನಿಯಮವು ಭಾರತದ ಡಿಜಿಟಲ್ ಸುರಕ್ಷತೆಯ ನಿಟ್ಟಿನಲ್ಲಿ ಒಂದು ಬಹುದೊಡ್ಡ ಹಾಗೂ ಐತಿಹಾಸಿಕ ಹೆಜ್ಜೆಯಾಗಿದೆ. ಕದ್ದ ಒಟಿಪಿಗಳನ್ನು ಬಳಸಿ, ದೇಶದ ಮೂಲೆ ಮೂಲೆಗಳಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಸೈಬರ್ ಖದೀಮರಿಗೆ ಈ ನಿಯಮ ಸಿಂಹಸ್ವಪ್ನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ದಿನದ 24 ಗಂಟೆಯೂ ಡೆಸ್ಕ್ಟಾಪ್ ಮೂಲಕ ಕಚೇರಿ ಕೆಲಸಗಳನ್ನು ಮಾಡುವವರಿಗೆ, ಅನೇಕ ಡಿವೈಸ್ಗಳಲ್ಲಿ ಒಂದೇ ನಂಬರ್ ಬಳಸುವ ಉದ್ಯಮಿಗಳಿಗೆ ಈ 6 ಗಂಟೆಗಳ ಲಾಗ್-ಔಟ್ ನಿಯಮ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ : ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮದ ಎಚ್ಚರಿಕೆ
ಮಂಗಳೂರು: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ಬೆಂಗಳೂರು ಇದರ ವತಿಯಿಂದ ಫೆ.28ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ನಡೆಯುತ್ತದೆ. ಪರೀಕ್ಷಾ ಮಂಡಲಿಯ ಜಾಲತಾಣದಲ್ಲಿ ಮಕ್ಕಳ ಪರೀಕ್ಷಾ ಸಿದ್ಧತೆಗಾಗಿ ಮಾಹಿತಿಯನ್ನು ಒದಗಿಸಲಾಗಿರುತ್ತದೆ. ಸಾಮಾಜಿಕ ತಾಣಗಳಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆಗಳು ಮಾರಾಟವಾಗುತ್ತಿವೆ ಎಂಬ ಸುದ್ದಿಗಳನ್ನು ಹರಡಲಾ ಗುತ್ತಿದೆ. ಪರೀಕ್ಷಾ ಮಂಡಳಿ ವತಿಯಿಂದ ಈ ಮಾಹಿತಿಯನ್ನು ಪರಿಶೀಲಿಸಲಾಗಿದ್ದು, ಯಾವುದೇ ಪೂರಕ ಪುರಾವೆಗಳು ಇರುವುದಿಲ್ಲ, ಇದು ತಪ್ಪು ಮಾಹಿತಿಯಾಗಿದೆ. ವಿದ್ಯಾರ್ಥಿಗಳನ್ನು ದಾರಿತಪ್ಪಿಸುವ ಹುನ್ನಾರವಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರನ್ನು ಗುರುತಿಸಿ ಅಂತಹವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳ ಲಾಗುತ್ತದೆ. ಇಂತಹ ವದಂತಿಗಳಿಗೆ ಸಾರ್ವಜನಿಕರು, ಪಾಲಕ ಪೋಷಕರು ಮಹತ್ವ ನೀಡದೆ ಮಕ್ಕಳನ್ನು ಏಕಾಗ್ರತೆ ಯಿಂದ ಪರೀಕ್ಷೆ ಸಿದ್ಧತೆಗೆ ಪ್ರೋತ್ಸಾಹಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟನೆ ಮೂಲಕ ಮನವಿ ಮಾಡಿದ್ದಾರೆ.
ಭಾಲ್ಕಿ | ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ : ಓಂಕಾರ್ ಕನಶೆಟ್ಟೆ
ಭಾಲ್ಕಿ : ಮನುಷ್ಯನ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗವು ಅತ್ಯಂತ ಸಹಕಾರಿಯಾಗಿದೆ ಎಂದು ಓಂ ಲಕ್ಷ್ಮೀ ಸೌಹಾರ್ದ ಬ್ಯಾಂಕ್ನ ಉಪಾಧ್ಯಕ್ಷ ಓಂಕಾರ್ ಓಂಕಾರ್ ಕನಶೆಟ್ಟೆ ಹೇಳಿದರು. ಪಟ್ಟಣದ ಮಹರ್ಷಿ ಪತಂಜಲಿ ಲೇಔಟ್ ನಲ್ಲಿ ಓಂ ಲಕ್ಷ್ಮೀ ಸೌಹಾರ್ದ ಬ್ಯಾಂಕ್, ಪತಂಜಲಿ ಯೋಗ ಸಮಿತಿ ಮತ್ತು ಜೈ ಗುರುದೇವ ಯೋಗ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಯಾವಾಗಲು ನಮ್ಮ ಮನಸ್ಸು ಪ್ರಫುಲ್ಲವಾಗಿರಲು ಧ್ಯಾನ ಹಾಗೂ ಯೋಗ ಸಹಕಾರಿಯಾಗುತ್ತದೆ. ಯೋಗದಿಂದಲೇ ನಮ್ಮ ದಿನಚರಿ ಪ್ರಾರಂಭವಾಗಬೇಕು ಎಂದರು. ತಾಲೂಕು ಪತಂಜಲಿ ಯೋಗ ಸಮಿತಿ ಸಂಚಾಲಕ ಹರಿದೇವ್ ರುದ್ರಮಣಿ ಅವರು ಮಾತನಾಡಿ, ಪತಂಜಲಿ ಯೋಗ ಸಮಿತಿ ಯೋಗದ ಮೂಲಕ ನಿರಂತರ ಜಾಗೃತಿ ಮೂಡಿಸುತ್ತಿದೆ. ಪ್ರತಿಯೊಬ್ಬರು ಸರಳ ಮತ್ತು ನಿಯಮಿತ ಯೋಗದ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಹಿರಿಯ ಯೋಗ ಶಿಕ್ಷಕ ಪಂಡಿತ್ ಪಾಟೀಲ್ ಹಾಗೂ ಜೈ ಗುರುದೇವ ಯೋಗ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಬಿಜಿ ಪಾಟೀಲ್ ಅವರು ಮಾತನಾಡಿ, ಮಾ.1ರ ವರೆಗೆ ಉಚಿತ ಯೋಗ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಓಂ ಲಕ್ಷ್ಮಿ ಸೌಹಾರ್ದ ಬ್ಯಾಂಕ್ನ ಅಧ್ಯಕ್ಷೆ ಲಕ್ಷ್ಮೀ ಕನಶೆಟ್ಟೆ, ನೀಲಕಂಠ್ ಬಿರಾದಾರ್, ಮಲ್ಲಿಕಾರ್ಜುನ್ ಕೌಡಗೆ, ಶಿವಕುಮಾರ್, ಪುಂಡಲಿಕ್ ಪೀರಗುಂಡೆ, ಸುಭಾಷ್ ಬಾವುಗೆ ಹಾಗೂ ಸಂಜೀವಕುಮಾರ್ ಪ್ರಭಾ ಸೇರಿದಂತೆ ಹಲವರು ಇದ್ದರು.
ದ.ಕ.ಜಿಲ್ಲಾ ಮಟ್ಟದ ವಿಕಸಿತ್ ಭಾರತ್ ಯುವ ಸಂಸತ್
ಮಂಗಳೂರು : ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ’ಮೈ ಭಾರತ್’ ದ.ಕ. ವಿಭಾಗ, ಮಂಗಳೂರು ವಿವಿಯ ಎನ್ಎಸ್ಎಸ್ ಘಟಕ ಹಾಗೂ ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ’ವಿಕಸಿತ್ ಭಾರತ್ ಯುವ ಸಂಸತ್ 2026’ ಜಿಲ್ಲಾ ಮಟ್ಟದ ಸ್ಪರ್ಧೆಯು ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಕಾಲೇಜಿನ ಉಪ ಪ್ರಾಂಶುಪಾಲೆ ಸಿಸ್ಟರ್ ಡಾ. ರೂಪಾ ರೋಡ್ರಿಗಸ್ ಎ.ಸಿ. ಕಾರ್ಯಕ್ರಮ ಉದ್ಘಾಟಿಸಿದರು. ಮೈ ಭಾರತ್ ದ.ಕ. ಜಿಲ್ಲೆಯ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಕಾಲೇಜು ಶಿಕ್ಷಣ ಕಚೇರಿಯ ವಿಶೇಷ ಅಧಿಕಾರಿಡಾ. ಶ್ರೀಧರ್ ಮಣಿಯಾಣಿ, ಮಂಗಳೂರು ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜಕ ಡಾ. ಶೇಷಪ್ಪಅಮೀನ್, ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಉದಯಕುಮಾರ್ ಬಿ. ಮತ್ತು ಮೈ ಭಾರತ್ ಮಂಗಳೂರು ವಿಭಾಗದ ಜಗದೀಶ್ ಕೆ. ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ರಾಮಚಂದ್ರ ಮಿಜಾರ್, ಸಹ ಪ್ರಾಧ್ಯಾಪಕ ಡಾ.ನಂದಕಿಶೋರ್, ಪ್ರಾಧ್ಯಾಪಕ ಯತೀಶ್ ಕುಮಾರ್, ಉಡುಪಿಯ ಯುವ ಐಕಾನ್ ಬಿ. ಮಾನ್ಯ ಶೆಟ್ಟಿ ಸಹಕರಿಸಿದ್ದರು. *ಜಿಲ್ಲೆಯ ನೂರಾರು ಯುವ ಪ್ರತಿಭೆಗಳು ಈ ಯುವ ಸಂಸತ್ನಲ್ಲಿ ಪಾಲ್ಗೊಂಡು ದೇಶದ ಅಭಿವೃದ್ಧಿಯ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಿದರು.ಅತ್ಯುತ್ತಮವಾಗಿ ಪ್ರದರ್ಶನ ನೀಡಿದ 5 ಮಂದಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯ ಮಟ್ಟದಲ್ಲಿ ವಿಜೇತರಾಗುವ 3 ಮಂದಿ ಹೊಸದಿಲ್ಲಿಯ ಭಾರತೀಯ ಸಂಸತ್ ಭವನದಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವ ಸಂಸತ್ನಲ್ಲಿ ಭಾಗವಹಿಸಲಿದ್ದಾರೆ.
ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು: ಶಾಹೀದ್ ತೆಕ್ಕಿಲ್
ಮಂಗಳೂರು,ಫೆ.27:ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಅವರಿಗೆ ಅರ್ಹವಾಗಿ ದೊರಕಬೇಕಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್ ಹೇಳಿದ್ದಾರೆ. ದ.ಕ.ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಸಹಯೋಗದಲ್ಲಿ ನಗರದ ಪದವಿನಂಗಡಿಯ ದೇವಿನಗರದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ವಿಕಲಚೇತನರಿಗೆ ವಿವಿಧ ಉದ್ಯೋಗದಾತರ ಪ್ರಾಯೋಜಿತ ಯಾಂತ್ರಿಕ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರು ಸಮಾಜದಲ್ಲಿ ಯಾವುದೇ ಕೊರತೆಯಾಗದಂತೆ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ವಿಕಲಚೇತನರ ಸೌಲಭ್ಯಗಳನ್ನು ವಿಳಂಬಲ್ಲದೆ ನೀಡಬೇಕು. ಇತರರಂತೆ ಅವರು ದುಡಿಯಲು ಹಾಗೂ ಸೇವೆಗೈಯಲು ಈ ಸೌಲಭ್ಯಗಳು ಪೂರಕವಾಗಬೇಕು ಎಂದು ಟಿ.ಎಂ. ಶಾಹೀದ್ ತೆಕ್ಕಿಲ್ ಹೇಳಿದರು. ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ,ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಕಾರ್ಖಾನೆಗಳ ಇಲಾಖೆಯ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ, ಎಂಆರ್ಪಿಎಲ್ ಆಡಳಿತ ಸಿಜಿಎಂ ಪ್ರಶಾಂತ್ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು. ಕಾರ್ಮಿಕ ಅಧಿಕಾರಿ ಕುಮಾರ್ ಸ್ವಾಗತಿಸಿದರು. ವಿಲ್ಮಾ ಎಲಿಜಬೆತ್ ವಂದಿಸಿದರು. *ಕಾರ್ಯಕ್ರಮದಲ್ಲಿ ಸುಮಾರು 90 ತ್ರಿಚಕ್ರ ಸ್ಕೂಟರ್ ವಿತರಿಸಲಾಯಿತು. ಎಂಆರ್ಪಿಎಲ್-50, ಎಂಸಿಎಫ್-27, ಬಿಎಸ್ಎಫ್ - 5, ಯೆನೆಪೋಯ ವಿಶ್ವವಿದ್ಯಾನಿಲಯ-3, ಅರವಿಂದ್, ಮಾಂಡೋ, ಕ್ಯಾಂಪ್ಕೋ, ಇನ್ವೆಂಜರ್ ಟೆಕ್ನಾಲಜಿ ಸಂಸ್ಥೆಗಳು ತಲಾ ಒಂದೊಂದು ತ್ರಿಚಕ್ರ ವಾಹನಗಳನ್ನು ಪ್ರಾಯೋಜಿಸಿದ್ದವು.
ಮಲ್ಪೆ ಬಂದರಿನಲ್ಲಿ ಕಾರ್ಮಿಕನಿಗೆ ಹಲ್ಲೆ ಪ್ರಕರಣ: ಎಸ್ಐಓ ಖಂಡನೆ
ಉಡುಪಿ, ಫೆ.27: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವುದನ್ನು ಎಸ್ಐಓ ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸಿದೆ. ಕಾರ್ಮಿಕರ ಭದ್ರತೆ ಮತ್ತು ಗೌರವವನ್ನು ಖಾತ್ರಿಪಡಿಸುವುದು ಆಡಳಿತದ ಜವಾಬ್ದಾರಿಯಾಗಿದೆ. ಘಟನೆಯ ಕುರಿತು ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳ ಬೇಕು. ಬಂದರಿನೊಳಗೆ ಕಾರ್ಮಿಕರ ರಕ್ಷಣೆಗೆ ಸಮರ್ಪಕ ಪೊಲೀಸ್ ಬಂದೋಬಸ್ತ್ ಒದಗಿಸಿ, ಇಂತಹ ಹಿಂಸಾಚಾರ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಎಸ್ಐಓ ಉಡುಪಿ ಜಿಲ್ಲೆ ಆಗ್ರಹಿಸಿದೆ. ಉಡುಪಿ ಎಸ್ಡಿಪಿಐ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಮಾಡುವ ಅಯ್ಯೂಬ್ ಎಂಬ ಕಾರ್ಮಿಕನ ಮೇಲೆ ಮಿಥುನ್ ಕರ್ಕೇರ ಎಂಬಾತ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಕ್ಷೇತ್ರ ಸಮಿತಿ ತೀವ್ರವಾಗಿ ಖಂಡಿಸಿದೆ. ದಸಂಸ ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡುವ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪಿ ವಿರುದ್ಧ ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯದೇ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸ ಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ ರಾಜ್ ಬಿರ್ತಿ ಆಗ್ರಹಿಸಿದ್ದಾರೆ ವೆಲ್ಫೇರ್ ಪಾರ್ಟಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಮಾಡಿಕೊಂಡಿದ್ದ ಕಾರ್ಮಿಕನಿಗೆ ಮಿಥುನ್ ಕರ್ಕೇರ ಎಂಬಾತ ದುರುದ್ದೇಶ ಪೂರ್ವಕವಾಗಿ ಕ್ರೂರವಾಗಿ ಹಲ್ಲೆ ನಡಿಸಿದ್ದಲ್ಲದೆ ನಿರಂತರ ಅವಾಚ್ಯ ಶಬ್ದಗಳಿಂದ ಅನಾಗರಿಕತೆ ಪ್ರದರ್ಶಿಸಿದ್ದಾನೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ದಾಳಿ ನಡೆಸಿದ ಮತ್ತು ಇದರ ಹಿಂದಿರುವ ವರಿಗೆ ಸೂಕ್ತ ಶಿಕ್ಷೆಯಾಗು ವಂತೆ ನೋಡಿಕೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಕೇಂದ್ರ ಬಜೆಟ್ ಕುರಿತ ಮಾಹಿತಿ -ಸಂವಾದ
ಉಡುಪಿ, ಫೆ.27: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಉಡುಪಿ ಶಾಖೆ ಮತ್ತು ಎಂಜಿಎಂ ಕಾಲೇಜಿನ ಸಹಯೋಗದಲ್ಲಿ 2026ರ ಕೇಂದ್ರ ಬಜೆಟ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ವಕ್ತಾರ ಸಿಎ ಗಣೇಶ್ ವೈ. 2026ರ ಕೇಂದ್ರ ಬಜೆಟ್ ಸಂಬಂಧಿತ ಅಂಶಗಳು, ತೆರಿಗೆ ಮತ್ತು ಆರ್ಥಿಕ ಪರಿಣಾಮಗಳ ಕುರಿತು ವಿವರಿಸಿದರು. ಈ ಬಜೆಟ್ ಅಭಿವೃದ್ಧಿ, ಉದ್ಯಮ, ಮೂಲಸೌಕರ್ಯ ಮತ್ತು ಮಧ್ಯಮ ವರ್ಗದ ರಿಯಾಯಿತಿಗಳ ಮೇಲೆ ಕೇಂದ್ರೀಕೃತವಾಗಿದೆ ಎಂದರು. ಈ ಸಂದರ್ಭದಲ್ಲಿ ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷ ಸಿಎ ರಾಘವೇಂದ್ರ ಮೊಗೇರಾಯ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಉಪಪ್ರಾಚಾರ್ಯ ಡಾ.ಎಂ.ವಿಶ್ವನಾಥ ಪೈ, ಎಂಜಿಎಂ ಕಾಲೇಜಿನ ಸಂಯೋಜಕಿ ಡಾ.ಮಲ್ಲಿಕಾ ಎ.ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿಎ ಕೆ.ಲಕ್ಷ್ಮೀಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವ ಅಧ್ಯಕ್ಷೆ ಸಿಎ ಅರ್ಚನಾ ಆರ್. ಮಯ್ಯ, ಎಸ್ಐಸಿಎಎಸ್ಎ ಅಧ್ಯಕ್ಷೆ ಸಿಎ ಮಾಧುರಿ ಪ್ರಭು ಸಹಕರಿಸಿದರು. ಕಾರ್ಯಕ್ರಮದಲ್ಲಿ 140ಕ್ಕೂ ಅಧಿಕ ವಿದ್ಯಾರ್ಥಿ ಗಳು ಭಾಗವಹಿಸಿದರು.
ವಯನಾಡ್, ಫೆ. 27: ಶಾಂತಿ, ಪ್ರೀತಿ, ಸಾಮಾಜಿಕ ಕಲ್ಯಾಣಕ್ಕೆ ಉತ್ತೇಜನ ನೀಡುವ ಸಿನೆಮಾಗಳನ್ನು ನಿರ್ಮಿಸುವಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಚಿತ್ರ ನಿರ್ಮಾಪಕರನ್ನು ಆಗ್ರಹಿಸಿದ್ದಾರೆ. ಕೇರಳ ಪ್ರವಾಸದಲ್ಲಿರುವ ಅವರು ‘ದಿ ಕೇರಳ ಸ್ಟೋರಿ-2’ ಸಿನೆಮಾ ಬಿಡುಗಡೆಗೆ ಕೆಳ ನ್ಯಾಯಾಲಯ ತಡೆ ನೀಡಿದ ಸಂದರ್ಭ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲನೆಯದಾಗಿ ಜನರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ. ಪ್ರಚೋದಕಾರಿ ಭಾಷಣ, ಕೋಪ, ದ್ವೇಷ ತುಂಬಿರುವ ಇಂದಿನ ಸನ್ನಿವೇಷದಲ್ಲಿ ಸಂತೋಷ, ಪ್ರೀತಿ, ಜನರ ಕಲ್ಯಾಣವನ್ನು ಉತ್ತೇಜಿಸುವ ಸಿನೆಮಾಗಳನ್ನು ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದ್ದಾರೆ. ನೂರಾರು ಜನರು ಮೃತಪಟ್ಟ ಚೂರಲ್ಮಲ-ಮುಂಡಕೈ ಭೂಕುಸಿತದ ನಂತರ ಕೇರಳದಲ್ಲಿ ಕಂಡುಬಂದ ಒಗ್ಗಟ್ಟಿನ ಮನೋಭಾವದ ಬಗ್ಗೆ ಅವರು ಗಮನ ಸೆಳೆದರು. ‘‘ಧರ್ಮ ಅಥವಾ ಜಾತಿಯನ್ನು ಪರಿಗಣಿಸದೆ ಪ್ರತಿಯೊಬ್ಬರೂ ಪರಸ್ಪರ ನೆರವು ನೀಡಿದರು. ಇದು ಭಾರತದ ಹಾಗೂ ಹಾಗೂ ಕೇರಳದ ನಿಜವಾದ ಸತ್ವ’’ ಎಂದು ಅವರು ಹೇಳಿದರು. ‘‘ಇದನ್ನು ಯಾಕೆ ತೋರಿಸುವುದಿಲ್ಲ ? ಇದರ ಬಗ್ಗೆ ಯಾಕೆ ಮಾತನಾಡಬಾರದು ? ಈ ಉದಾಹರಣೆಯಿಂದ ಇಡೀ ದೇಶ ಯಾಕೆ ಪಾಠ ಕಲಿಯಬಾರದು?’’ ಎಂದು ಪ್ರಿಯಾಂಕಾ ಗಾಂಧಿ ವಾದ್ರ ಪ್ರಶ್ನಿಸಿದ್ದಾರೆ.
ಸರಕಾರಿ ಶಾಲೆಗಳ ಎಸ್ಡಿಎಂಸಿ ಸದಸ್ಯರ ತರಬೇತಿ ಕಾರ್ಯಗಾರ
ಕುಂದಾಪುರ, ಫೆ.27: ಪ್ರಾಥಮಿಕ ಶಿಕ್ಷಣವು ಪ್ರತಿಯೊಂದು ಮಗುವಿನ ಜೀವನದ ಪ್ರಮುಖ ಘಟ್ಟ. ಮೌಲ್ಯಧಾರಿತ ಶಿಕ್ಷಣ ಮತ್ತು ಸಂಸ್ಕಾರಯುತ ವಾದ ಶಿಕ್ಷಣ ಮಗುವಿಗೆ ಸಿಗುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಸರಕಾರಿ ಶಾಲೆಗಳಲ್ಲಿ ಇಂತಹ ಶಿಕ್ಷಣ ದೊರೆಯಲು ಸಾಧ್ಯ. ಶಿಕ್ಷಕರ ಕೊರತೆ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಇಂದು ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವುದು ಬಹಳ ಆತಂಕಕಾರಿಯಾಗಿದ್ದು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಶ್ರಮಿಸುವುದು ಇಂದಿನ ಅನಿವಾರ್ಯವಾಗಿದೆ ಎಂದು ಗೀತಾ ಎಚ್.ಎಸ್.ಎನ್. ಫೌಂಡೇಶನ್ ಅಧ್ಯಕ್ಷ, ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಮಹಾಪೋಷಕ ಶಂಕರ ಐತಾಳ್ ಹೇಳಿದ್ದಾರೆ. ಕೋಟೇಶ್ವರ ಗೀತಾ ಎಚ್ಎಸ್ಎನ್ ಫೌಂಡೇಶನ್, ಕೋಟೇಶ್ವರ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಕುಂದಾಪುರ ತಾಲೂಕು ಘಟಕದ ವತಿಯಿಂದ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಭವನದಲ್ಲಿ ನಡೆದ ಕೋಟೇಶ್ವರ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಗಳ ಎಸ್ಡಿಎಂಸಿ ಸದಸ್ಯರ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಟೇಶ್ವರ ಕೆಪಿಎಸ್ನ ಉಪ ಪ್ರಾಂಶುಪಾಲ ಹರೀಶ್ ಕಾಮತ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತರಬೇತಿಗಳನ್ನು ಪಡೆಯುವ ಮೂಲಕ ತನ್ನ ಜೀವನದಲ್ಲಿ ವ್ಯಕ್ತಿತ್ವ ವಿಕಸನ ಹೊಂದಿ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸು ವಲ್ಲಿ ಯಶಸ್ವಿಯಾಗುತ್ತಾನೆ. ಈ ನಿಟ್ಟಿನಲ್ಲಿ ವೇದಿಕೆ ನೀಡುವ ಈ ತರಬೇತಿ ಯನ್ನು ಪಡೆದುಕೊಂಡು ಪ್ರತಿಯೊಬ್ಬರೂ ಕೂಡ ತಮ್ಮ ಶಾಲೆಗಳನ್ನು ಉಳಿಸಿ ಬೆಳೆಸಿ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರಗಳನ್ನಾಗಿ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಕೋಟೇಶ್ವರ ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ್, ಪುರಸಭಾ ಘಟಕದ ಅಧ್ಯಕ್ಷ ಅಶ್ವತ್ ಕುಮಾರ್, ಕಾಪು ತಾಲೂಕು ಉಸ್ತುವಾರಿ ಅಶ್ಪಾಕ್, ಕುಂದಾಪುರ ತಾಲೂಕು ಘಟಕದ ಉಪಾಧ್ಯಕ್ಷ ಕೃಷ್ಣಾನಂದ ಶಾನುಭಾಗ್, ಬೈಂದೂರು ತಾಲೂಕು ಅಧ್ಯಕ್ಷ ಸಾಧಿಕ್ ಮಾವಿನಕಟ್ಟೆ ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ, ತರಬೇತುದಾರ ಎಸ್.ವಿ. ನಾಗರಾಜ್ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು. ಸಮನ್ವಯ ಕೇಂದ್ರ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರ ತಾಲೂಕು ಘಟಕದ ಕಾರ್ಯದರ್ಶಿ ಪ್ರಮೋದ ಕೆ.ಶೆಟ್ಟಿ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ವರದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಬೈಂದೂರು ತಾಲೂಕು ಕಾರ್ಯದರ್ಶಿ ಶಾಂತ ಪೂಜಾರಿ, ಸಂಪನ್ಮೂಲ ವ್ಯಕ್ತಿ ಹೇಮಾ ಬೀಜಾಡಿ ಸಹಕರಿಸಿದರು. ಅತಿಯಾದ ಮೊಬೈಲ್ ಬಳಕೆ ಮತ್ತು ಮಾದಕದ್ರವ್ಯ ಸೇವನೆಯಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳು ಮತ್ತು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಎಸ್ಡಿಎಂಸಿಯವರ ಪಾತ್ರದ ಕುರಿತು ಕಾರ್ಯಾಗಾರ ನಡೆಯಿತು.
ಲಕ್ನೊ, ಫೆ. 27: ಉತ್ತರಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ಹತ್ತು ವರ್ಷದ ಬಾಲಕಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ 55 ವರ್ಷದ ವ್ಯಕ್ತಿಯೋರ್ವ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ನೀಡಿದ ಚಿತ್ರ ಹಿಂಸೆಯಿಂದ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಲೈಂಗಿಕ ದೌರ್ಜನ್ಯದ ದೂರಿನ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು ಗುರುವಾರ ಸಂಜೆ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಕಿರುಕುಳ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತಿದ್ದಾಗ ಆತನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಆತ ಸಹಜವಾಗಿ ಮೃತಪಟ್ಟಿಲ್ಲ. ಕಸ್ಟಡಿ ಚಿತ್ರಹಿಂಸೆಯಿಂದ ಆತ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬ ಆರೋಪಿಸಿದೆ. ಆತನ ಕುಟುಂಬದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ (ಎಸ್ಎಚ್ಒ), ಓರ್ವ ಕಾನ್ಸ್ಟೇಬಲ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸಿಬ್ಬಂದಿ ವರ್ಗಾವಣೆಗೆ 3 ತಿಂಗಳೊಳಗೆ ಮಾರ್ಗಸೂಚಿ ರೂಪಿಸುವಂತೆ ವಾಯುವ್ಯ ಸಾರಿಗೆ ನಿಗಮಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು : ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ 3 ತಿಂಗಳಲ್ಲಿ ಮಾರ್ಗಸೂಚಿಗಳನ್ನು ರೂಪಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಎನ್ಡಬ್ಲ್ಯುಕೆಆರ್ಟಿಸಿ) ನಿರ್ದೇಶಿಸಿರುವ ಹೈಕೋರ್ಟ್, ಮಾರ್ಗಸೂಚಿ ಅನುಪಸ್ಥಿತಿಯಲ್ಲಿ, ನೌಕರನ ಮನವಿಯೂ ಇಲ್ಲದೆ ಮಾಡಿದ್ದ ಚಾಲಕ ಕಂ ನಿರ್ವಾಹಕರೊಬ್ಬರ ವರ್ಗಾವಣೆಯನ್ನು ರದ್ದುಪಡಿಸಿದೆ. ಚಿಕ್ಕೋಡಿ ವಿಭಾಗದಿಂದ ಬೆಳಗಾವಿ/ಖಾನಾಪುರ ವಿಭಾಗಕ್ಕೆ ವರ್ಗಾವಣೆ ಮಾಡಿದ್ದ ಆದೇಶ ರದ್ದು ಕೋರಿ ಚಾಲಕ ಚಂದ್ರಕಾಂತ್ ವೈ. ತೊರವಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದ್ದು, ಪ್ರಸ್ತುತ ಮಾರ್ಗಸೂಚಿಗಳು ಇಲ್ಲದ ಕಾರಣ ಮಾರ್ಗಸೂಚಿ ರೂಪಿಸುವವರೆಗೆ ಆಡಳಿತಾತ್ಮಕ ಆಧಾರದ ಮೇಲೆ ವರ್ಗಾವಣೆಗಳನ್ನು ಮಾಡಿದರೆ ಅದಕ್ಕೆ ಸೂಕ್ತ ಕಾರಣಗಳನ್ನೂ ಸಹ ನೀಡಬೇಕಾಗುತ್ತದೆ ಎಂದು ಹೇಳಿದೆ. ಯಾವ ಮಾರ್ಗಸೂಚಿ ಅಥವಾ ಸುತ್ತೋಲೆ ಆಧಾರದಲ್ಲಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂಬ ಈ ನ್ಯಾಯಾಲಯದ ಪ್ರಶ್ನೆಗೆ ನಿಗಮದ ಪರ ವಕೀಲರು, 2015ರ ಸುತ್ತೋಲೆ ಆಧರಿಸಿ ಆಡಳಿತಾತ್ಮಕ ಕಾರಣಗಳನ್ನು ನೀಡಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಮಾರ್ಗಸೂಚಿಗಳಿಲ್ಲದೆ ವರ್ಗಾವಣೆ ಮಾಡುವುದು ಏಕಪಕ್ಷೀಯ ಕ್ರಮವಾಗುತ್ತದೆ ಎಂದು ಆದೇಶದಲ್ಲಿ ವಿವರಿಸಿದೆ. ಅರ್ಜಿದಾರರು ನಿಗಮದ ಉದ್ಯೋಗಿಯಾಗಿರುವುದರಿಂದ ವರ್ಗಾವಣೆ ಆದೇಶ ಪ್ರಶ್ನಿಸುವ ಅರ್ಹತೆ ಇಲ್ಲ. ಆದರೆ, ಸಂಸ್ಥೆಯ ದಕ್ಷತೆ, ಸಮಗ್ರತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಲು ನೌಕರರ ವರ್ಗಾವಣೆ ಒಂದು ಪ್ರಮುಖ ಆಡಳಿತಾತ್ಮಕ ಸಾಧನವಾಗಿದ್ದರೂ, ವರ್ಗಾವಣೆಗಳನ್ನು ಅನಿಯಂತ್ರಿತವಾಗಿ ಅಥವಾ ಏಕರೂಪದ ಮಾನದಂಡಗಳಿಲ್ಲದೆ ಮಾಡಿದಾಗ, ಅವು ಅಸಮಾಧಾನ ಮತ್ತು ದುರುದ್ದೇಶಪೂರಿತ ಆರೋಪಕ್ಕೆ ಕಾರಣವಾಗುತ್ತವೆ. ಆದ್ದರಿಂದ, ವರ್ಗಾವಣೆ ಮಾರ್ಗಸೂಚಿಗಳನ್ನು ರೂಪಿಸುವುದು ಮತ್ತು ಕಟ್ಟುನಿಟ್ಟಾಗಿ ಪಾಲಿಸುವುದು ಕೇವಲ ಆಡಳಿತಾತ್ಮಕ ಔಪಚಾರಿಕತೆಗಿಂತ ಅಗತ್ಯವಾಗಿದ್ದು, ವರ್ಗಾವಣೆ ಮಾರ್ಗಸೂಚಿಗಳನ್ನು ರೂಪಿಸಲು ಇದು ಸಕಾಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ವರ್ಗಾವಣೆ ರದ್ದು: ಅರ್ಜಿದಾರರು ಕಳೆದ 13 ವರ್ಷಗಳಿಂದ ಚಿಕ್ಕೋಡಿ ವಿಭಾಗದ ನಿಗಮದಲ್ಲಿ ಕೆಲಸ ಮಾಡುತ್ತಿರುವ ನಾಲ್ಕನೇ ದರ್ಜೆ ಉದ್ಯೋಗಿಯಾಗಿದ್ದು, 4ನೇ ದರ್ಜೆಯ ನೌಕರರ ಸಾಮಾನ್ಯ ವರ್ಗಾವಣೆಗಳು ಕೋರಿಕೆ ಮೇರೆಗೆ ನಡೆಯುತ್ತವೆ. ಆದರೆ, ಅರ್ಜಿದಾರರು ಯಾವುದೇ ವಿನಂತಿ ಮಾಡಿರದಿದ್ದರೂ, ವರ್ಗಾವಣೆ ಕೋರಿದ್ದ 43 ಉದ್ಯೋಗಿಗಳೊಂದಿಗೆ, ಅರ್ಜಿದಾರರನ್ನೂ ವರ್ಗಾಯಿಸಲಾಗಿದೆ. ಅರ್ಜಿದಾರರ ವರ್ಗಾವಣೆಯ ಹಿಂದೆ ಆಡಳಿತಾತ್ಮಕ ಕಾರಣವಿದೆ ಎಂದು ಭಾವಿಸಿದರೂ, ವರ್ಗಾವಣೆ ಆದೇಶ ಕಾರಣಗಳನ್ನು ಒಳಗೊಂಡಿರಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅಂಥ ಯಾವುದೇ ಕಾರಣಗಳಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ. ಅರ್ಜಿದಾರರನ್ನು ಹೊರತುಪಡಿಸಿ, ಆಡಳಿತಾತ್ಮಕ ಆಧಾರದ ಮೇಲೆ ಬೇರೆ ಯಾವುದೇ ಉದ್ಯೋಗಿಯನ್ನು ವರ್ಗಾಯಿಸಿಲ್ಲ. ನಿಗಮದ ವಕೀಲರು ಅವಲಂಬಿಸಿರುವ ಸುತ್ತೋಲೆಯು ಮನವಿ ಮೇರೆಯ ವರ್ಗಾವಣೆಗಳಿಗೆ ಅನ್ವಯಿಸುತ್ತದೆ ಮತ್ತು ಅರ್ಜಿದಾರರನ್ನು ಏಕೆ ವರ್ಗಾಯಿಸಲಾಗಿದೆ ಮತ್ತು ಅದಕ್ಕೆ ಕಾರಣಗಳು ಮತ್ತು ತುರ್ತುಸ್ಥಿತಿಗಳು ಯಾವುವು ಎಂಬುದರ ಕುರಿತು ಯಾವುದೇ ವಿವರಗಳನ್ನೂ ಸಹ ಒಳಗೊಂಡಿಲ್ಲ. ಆದ್ದರಿಂದ, ಅವರ ವರ್ಗಾವಣೆ ಆದೇಶ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣವೇನು? ಅರ್ಜಿದಾರರು 2006ರ ಮೇ 30ರಂದು ಚಾಲಕ ಕಂ ನಿರ್ವಾಹಕರಾಗಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ಅವರ ಸೇವೆಯನ್ನು 2012ರಲ್ಲಿ ಖಾಯಂಗೊಳಿಸಲಾಗಿತ್ತು. 13 ವರ್ಷಗಳಿಂದ ಅವರು ಚಿಕ್ಕೋಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದರು. ಈ ಮಧ್ಯೆ ಅರ್ಜಿದಾರರು ಯಾವುದೇ ಮನವಿ ಮಾಡದಿದ್ದರೂ 2014ರ ನವೆಂಬರ್ 30ರಂದು ಚಿಕ್ಕೋಡಿ ವಿಭಾಗದಿಂದ ಬೆಳಗಾವಿ/ಖಾನಾಪುರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಉಪ್ಪಿನಂಗಡಿ| ಅಕ್ರಮ ಗೋ ಹತ್ಯೆ ಆರೋಪ: ಮನೆಯ ಆವರಣ ಜಪ್ತಿ, ಮೂವರ ವಿರುದ್ಧ ಪ್ರಕರಣ ದಾಖಲು
ಉಪ್ಪಿನಂಗಡಿ: ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ ಮನೆಯೊಂದರ ಆವರಣದಲ್ಲಿ ಅಕ್ರಮ ಗೋ ಹತ್ಯೆ ಆರೋಪ ದಲ್ಲಿ ಪೊಲೀಸರು ಮನೆಯ ಆವರಣ ಜಪ್ತಿ ಮಾಡಿ ಆರೋಪಿ ದಂಪತಿ ಸಹಿತ 3 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆ. 26ರಂದು ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರು ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದಾಗ ಅಕ್ರಮ ಗೋ ಹತ್ಯೆ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಹೊಸವಕ್ಲು ನಿವಾಸಿ ಅಬ್ದುಲ್ ರಹಿಮಾನ್ ಮನೆ ಆವರಣಕ್ಕೆ ತೆರಳಿದಾಗ ಈ ವೇಳೆ ಇಬ್ಬರು ಪರಾರಿಯಾಗಿದ್ದು ಅಲ್ಲಿದ್ದ ಗೋ ಮಾಂಸ, ತೂಕದ ಯಂತ್ರ, ಮೊಬೈಲ್ ಹಾಗು ಅಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಅಬ್ದುಲ್ ರಹಿಮಾನ್ ಜಾನುವಾರು ವಧೆ ಮಾಡಲು ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿದ್ದು, ಅಬ್ದುಲ್ ರಹಿಮಾನ್, ಆತನ ಪತ್ನಿ ಹಾಗೂ ಇನ್ನೋರ್ವ ಅಪರಿಚಿತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15ಸಾವಿರ ರೂ.ಗೌರವಧನ ನೀಡಲು ಆಗ್ರಹ : ನಾಗಲಕ್ಷ್ಮಿ
ಬೆಂಗಳೂರು, ಫೆ.27: ಕೇಂದ್ರ ಸರಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರಕಾರದ ಗೌರವಧನ ಒಟ್ಟಿಗೆ ಸೇರಿಸಿ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಗೌರವಧನ ನೀಡಬೇಕು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಆಗ್ರಹಿಸಿದ್ದಾರೆ. ಶುಕ್ರವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸರಕಾರ ಈ ಹಿಂದೆ ಆಶಾ ಕಾರ್ಯಕರ್ತೆಯರಿಗೆ ಸಂಬಂಧಿಸಿದಂತೆ ನೀಡಿರುವ ವಾಗ್ದಾನಗಳು ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಜೆಟ್ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಮಾ.6 ರಂದು ನಡೆಯಲಿರುವ ಬಜೆಟ್ನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಆಶಾ ಕಾರ್ಯಕರ್ತೆಯರ ಗೌರವಧನವನ್ನು 5ಸಾವಿರ ರೂ.ನಿಂದ 8ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದರು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ತೀವ್ರತರ ರೋಗಿಗಳಿಗೆ ಚಿಕಿತ್ಸೆ ವೆಚ್ಚ ಕಾರ್ಪಸ್ ಫಂಡ್ ಮಾಡಿ, ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡಬೇಕು. ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚೇತರಿಕೆ ಅವಧಿಯಲ್ಲಿ ಮಾಸಿಕ ನಿಶ್ಚಿತ ಗೌರವಧನವನ್ನು ಪಾವತಿ ಮಾಡಬೇಕು. ಕೇಂದ್ರದ ಮಾರ್ಗಸೂಚಿಯನ್ನೇ ಉಲ್ಲಂಘಿಸಿ, ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು. 2024-25ರಲ್ಲಿ ಹೆಚ್ಚಳ ಆದ 1500 ರೂ. ಗೌರವಧನವನ್ನು ನೀಡಬೇಕು. ಆಶಾಗಳಿಗೆ ಬಾಕಿ ಇರುವ ಪ್ರೋತ್ಸಾಹಧನ ನೀಡಬೇಕು. ಹಲವು ವರ್ಷಗಳಿಂದ ಬಾಕಿ ಇರುವ ವಿವಿಧ ಕಂಪೋನೆಂಟ್ಗಳ ಹಣ ಬಿಡುಗಡೆ ಮಾಡಬೇಕು. ರಾಜ್ಯ ಸರಕಾರದ ಗ್ಯಾರಂಟಿ ಸರ್ವೆ ಮಾಡಿದ್ದಕ್ಕೆ ನಿಗದಿಯಾಗಿದ್ದ ಒಂದು ಸಾವಿರ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ನಾಗಲಕ್ಷ್ಮಿ ಆಗ್ರಹಿಸಿದರು. ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಕತ್ತರಿ ಹಾಕುವ ಇಲಾಖೆಯ ಕ್ರಮಕ್ಕೆ ಧಿಕ್ಕಾರ. ರಾಜ್ಯದಲ್ಲಿ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೈಬಿಡುವುದಾಗಿ ಹೊರಡಿಸಿರುವ ಆದೇಶ, ಸಂಪೂರ್ಣವಾಗಿ ಕೇಂದ್ರ ಸರಕಾರದ ಮಾರ್ಗಸೂಚಿಯ ಉಲ್ಲಂಘನೆ ಆಗಿರುತ್ತದೆ. ಇಡೀ ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಇಲ್ಲದಿರುವುದು ನಮ್ಮ ರಾಜ್ಯದ ಆರೋಗ್ಯ ಇಲಾಖೆ ಮಾಡಿದೆ. ನಿಯಮಬಾಹಿರವಾಗಿ ಜನಸಂಖ್ಯೆಯನ್ನು ತರ್ಕಬದ್ದಗೊಳಿಸುವ ಈ ಹುನ್ನಾರ ಆಶಾಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು. ಹೋರಾಟದಲ್ಲಿ ಸಂಘದ ಉಪಾಧ್ಯಕ್ಷರಾದ ಎಂ.ಉಮಾದೇವಿ, ರಮಾ ಟಿ.ಸಿ., ಮುಖಂಡರಾದ ಹನುಮೇಶ್, ಶ್ರೀಕಾಂತ್, ಮಂಜುಳಾ, ನಾಗಲಕ್ಷ್ಮಿ ಫರಾನಾ, ಲಕ್ಷ್ಮಿ ದೇವಮ್ಮ, ವೀಣಾ, ಶಾರದಾ ಶಶಿಕಲಾ, ಶಾಂತಮ್ಮ, ಸರಸ್ವತಿ, ರೇಖಾ, ನಿರ್ಮಲಾ, ವಸಂತಾ, ರೇಷ್ಮಾ, ವಾಣಿ, ಇತರರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಲ್ಪೆ ಬಂದರು ಪ್ರದೇಶದ ಕೊಳಚೆಗೆ ‘ದಿಗ್ಬ್ರಮೆ’
Bengaluru | ಕೆಲಸಕ್ಕಿದ್ದ ಕಚೇರಿಯಲ್ಲೇ ಹಣ ಕಳ್ಳತನ: ಇಬ್ಬರು ಸೆರೆ, 81.66 ಲಕ್ಷ ನಗದು ವಶ
ಬೆಂಗಳೂರು, ಫೆ.27 : ಕೆಲಸಕ್ಕಿದ್ದ ಕಚೇರಿಯಲ್ಲೇ ಬೀಗ ಮುರಿದು ಹಣ ಕಳವು ಮಾಡಿದ್ದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಸದಾಶಿವನಗರ ಠಾಣೆಯ ಪೊಲೀಸರು ಬಂಧಿಸಿ 81.66 ಲಕ್ಷ ನಗದು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಧನಂಜಯ ಮತ್ತು ಪ್ರವೀಣ್ನಾಯಕ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ನಗರದ ಬಿಇಎಲ್ ರಸ್ತೆಯಲ್ಲಿರುವ ಬಿಲ್ಡರ್ಸ್ ಅಂಡ್ ಮೈನಿಂಗ್ ಕಂಪೆನಿಯ ಮಾಲಕರು ಫೆ.19ರಂದು ಕೆಲಸ ಮುಗಿಸಿಕೊಂಡು ಕಚೇರಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಈ ವೇಳೆ ತಮ್ಮ ಕೈಚಳಕ ತೋರಿಸಿರುವ ಕಂಪೆನಿಯ ಮಾಜಿ ನೌಕರರಿಬ್ಬರು ಬೀಗ ಮುರಿದು ಹಣ ಕಳವು ಮಾಡಿ ಪರಾರಿಯಾಗಿದ್ದರು. ಫೆ.20ರಂದು ಬೆಳಗ್ಗೆ ಕಂಪೆನಿಯ ಮಾಲಕರು ಕಚೇರಿಗೆ ಬಂದು ನೋಡಿದಾಗ 91.76 ಲಕ್ಷ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಾಲಕರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಫೆ.22ರಂದು ಶಿವಮೊಗ್ಗದಲ್ಲಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪೊ ಪ್ಪಿಕೊಂಡಿದ್ದಾನೆ. ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಈ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಸದ್ಯ, ಆರೋಪಿಗಳಿಂದ 81.66 ಲಕ್ಷ ನಗದನ್ನು ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
‘ಮೀನು ತಿನ್ನುವ ಬಂಗಾಳಿಗಳು’ vs ಬಿಜೆಪಿ: ಪಶ್ಚಿಮ ಬಂಗಾಳದಲ್ಲಿ ಆಹಾರ ರಾಜಕೀಯ ಬಿಜೆಪಿಗೆ ದೊಡ್ಡ ಅಡಚಣೆಯಾಗಿದೆ, ಯಾಕೆ?
ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ, ಬಿಜೆಪಿಯನ್ನು ಮೂಲೆಗುಂಪಾಗಿಸಲು ತೃಣಮೂಲ ಕಾಂಗ್ರೆಸ್ (TMC) ಆಹಾರ ರಾಜಕೀಯವನ್ನು ಪ್ರಮುಖ ಅಸ್ತ್ರವಾಗಿಸಿಕೊಂಡಿದೆ. ಇತ್ತೀಚಿನ ವಿವಾದಕ್ಕೆ ಕಾರಣ ನೆರೆಯ ಬಿಹಾರಅಲ್ಲಿ ಎನ್ಡಿಎ ಸರ್ಕಾರವು ನಗರ ಪ್ರದೇಶಗಳಲ್ಲಿ ತೆರೆದ ಸ್ಥಳಗಳಲ್ಲಿ ಮತ್ತು ಪರವಾನಗಿ ಇಲ್ಲದೆ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸುವುದಾಗಿ ಘೋಷಿಸಿತು. ಬಿಜೆಪಿಯ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಘೋಷಿಸಿದ ಈ ನಿರ್ಧಾರವನ್ನು ಸರ್ಕಾರವು ಸ್ವಚ್ಛ ನಗರಗಳತ್ತ ಒಂದು ಹೆಜ್ಜೆ ಎಂದು ವಿವರಿಸಿತು. ಕೆಲವು ದಿನಗಳ ಬಳಿಕ ಸಿನ್ಹಾ ಅವರು, “ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಹಾಗೂ ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿಯನ್ನು ತಡೆಗಟ್ಟಲು ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳ ಬಳಿ ಮೀನು ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗುವುದು” ಎಂದು ಹೇಳಿದರು. ಇದನ್ನೇ ಅಸ್ತ್ರವಾಗಿಸಿಕೊಂಡ ಟಿಎಂಸಿ, “ನೀವು ಅವರಿಗೆ (ಬಿಜೆಪಿ) ಮತ ಹಾಕಿದರೆ, ಅವರು ಮಾರುಕಟ್ಟೆಯಲ್ಲಿ ಮೀನು ಮತ್ತು ಮಾಂಸ ಮಾರಾಟ ಮಾಡಲು ನಮಗೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದೆ. “ಸಸ್ಯಾಹಾರಿಗಳೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬಂಗಾಳದಲ್ಲಿ ಮೀನು ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲು ಸಾಧ್ಯವಿಲ್ಲ,” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಹೇಳಿಕೆ ಜನರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಭಾವಿಸಿದ ರಾಜ್ಯ ಬಿಜೆಪಿ ತಕ್ಷಣ ಪ್ರತಿಕ್ರಿಯಿಸಿತು. “ಅಂತಹ ಯಾವುದೇ ನಿಷೇಧ ಅಸ್ತಿತ್ವದಲ್ಲಿಲ್ಲ. ಬಿಹಾರ ಅಥವಾ ಪಶ್ಚಿಮ ಬಂಗಾಳದಲ್ಲಿ ಯಾರೂ ಅಂತಹ ನಿಷೇಧವನ್ನು ಪಾಲಿಸುತ್ತಿಲ್ಲ. ಬಂಗಾಳದಲ್ಲಿ ಮೀನು ಮತ್ತು ಮಾಂಸ ದೊರೆಯುತ್ತಲೇ ಇರುತ್ತವೆ,” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಪಕ್ಷವು “ಗೋಮಾಂಸದ ಮುಕ್ತ ಮಾರಾಟವನ್ನು ಮಾತ್ರ ವಿರೋಧಿಸುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಿನ್ಹಾ ಅವರ ಹೇಳಿಕೆಗಳ ನಂತರ ಟಿಎಂಸಿ, ಬಿಜೆಪಿ “ಆಹಾರ ಪದ್ಧತಿಗಳ ಮೇಲೆ ದಾಳಿ ಮಾಡುತ್ತಿದೆ” ಎಂದು ಮತ್ತೆ ಆರೋಪಿಸಿತು. “ಮೊದಲು ದೇವಾಲಯಗಳ ಬಳಿಯ ಮಾರುಕಟ್ಟೆಗಳಲ್ಲಿ ಮಾಂಸ ಮಾರಾಟ ನಿಷೇಧಿಸಿತು. ನಂತರ ತೆರೆದ ಸ್ಥಳಗಳಲ್ಲಿ ನಿಷೇಧಿಸಿತು. ಈಗ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಗಳು ಹಾಗೂ ಜನದಟ್ಟಣೆಯ ಪ್ರದೇಶಗಳ ಬಳಿ ನಿಷೇಧಿಸಿದೆ. ಮುಂದಿನ ಹಂತದಲ್ಲಿ ಮಾಂಸ ಮತ್ತು ಮೀನು ಸೇವನೆ ಮೇಲೆಯೇ ರಾಷ್ಟ್ರವ್ಯಾಪಿ ನಿಷೇಧ ತರಬಹುದು,” ಎಂದು ಟಿಎಂಸಿ ಹೇಳಿದೆ. “ಮಾಚೆ-ಭಾಟೆ ಬಂಗಾಳಿ” (ಮೀನು ಮತ್ತು ಅನ್ನ ತಿನ್ನುವ ಬಂಗಾಳಿಗಳು)ಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಬಂಗಾಳಿ ಗುರುತಿನ ಕೇಂದ್ರಬಿಂದುವಾಗಿರುವ “ಮೀನು ಮತ್ತು ಅನ್ನ” ಜೀವನಶೈಲಿ ಅಪಾಯದಲ್ಲಿದೆ ಎಂದು ಹೇಳುವ ಮೂಲಕ ಅದು ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಬಂಗಾಳದ ವೈವಿಧ್ಯಮಯ ಸಂಪ್ರದಾಯಗಳಿಗೆ ಅವಕಾಶವಿಲ್ಲದ ಕಠಿಣ, ಏಕರೂಪದ ಸಂಸ್ಕೃತಿಯನ್ನು ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದೆ. ಬಿಜೆಪಿಯ ಗೆಲುವು “ಪ್ಲೇಟ್ ಪೋಲೀಸಿಂಗ್”ಗೆ ಕಾರಣವಾಗಬಹುದು ಎಂದು ಅದು ಎಚ್ಚರಿಸಿದೆ. ಅವರ ಸಂಕುಚಿತ ಸಾಂಸ್ಕೃತಿಕ ಮಾನದಂಡ ಸ್ಥಳೀಯ ಜೀವನವಿಧಾನವನ್ನು ಅಳಿಸಿಹಾಕುತ್ತದೆ ಎಂದು ಟಿಎಂಸಿ ಆರೋಪಿಸಿದೆ. ಬಂಗಾಳ ರಾಜಕೀಯದಲ್ಲಿ ಈ ವಿಷಯ ಮುನ್ನೆಲೆಗೆ ಬಂದಿರುವುದು ಇದೇ ಮೊದಲಲ್ಲ. ಕಳೆದ ಡಿಸೆಂಬರ್ನಲ್ಲಿ ಕೋಲ್ಕತ್ತಾದಲ್ಲಿ ಗೀತಾ ಪಠಣ ಕಾರ್ಯಕ್ರಮದ ಸ್ಥಳದ ಬಳಿ ಮಾಂಸದ ಪಾಟೀಸ್ ಮಾರಾಟ ಮಾಡುತ್ತಿದ್ದ ಬೀದಿ ವ್ಯಾಪಾರಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್ ಆದ ನಂತರ ರಾಜಕೀಯ ವಿವಾದ ಭುಗಿಲೆದ್ದಿತು. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು. ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬಂಗಾಳ–ಅಸ್ಸಾಂ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಸಸ್ಯಾಹಾರಿ ಮೆನು ನೀಡಿರುವುದೂ ಟಿಎಂಸಿಯ ಆಕ್ರೋಶಕ್ಕೆ ಕಾರಣವಾಯಿತು. ಬಿಜೆಪಿ ಜನರ ತಟ್ಟೆಗಳ ಮೇಲೆ “ಗೂಂಡಾಗಿರಿ” ಮಾಡುತ್ತಿದೆ ಎಂದು ಅದು ಆರೋಪಿಸಿತು. ಆಕ್ರೋಶದ ನಂತರ ಮಾಂಸಾಹಾರವೂ ನೀಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿತು. 2024ರಲ್ಲಿ ನವರಾತ್ರಿ ಮತ್ತು ಸಾವನ್ ಮಾಸದಲ್ಲಿ ಮಾಂಸ ಮತ್ತು ಮೀನು ಸೇವಿಸುವ ವಿರೋಧ ಪಕ್ಷದ ನಾಯಕರನ್ನು “ಮೊಘಲರ ಮನಸ್ಥಿತಿ” ಹೊಂದಿರುವವರು ಎಂದು ಮೋದಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ಯಾರೇ ಮೀನು ತಿಂದರೂ ಬಿಜೆಪಿಗೆ ಸಮಸ್ಯೆ. ನಾವು ಏನು ತಿನ್ನಬೇಕು ಅಥವಾ ಏನು ಧರಿಸಬೇಕು ಎಂದು ನಿರ್ಧರಿಸಲು ನೀವು ಯಾರು?” ಎಂದು ಪ್ರಶ್ನಿಸಿದ್ದರು. ಬಿಜೆಪಿಯ “ರಾಜಕೀಯ ಕಾರ್ಯಸೂಚಿ” ಬಗ್ಗೆ ಜಾಗರೂಕರಾಗಿರಲು ಮತದಾರರಿಗೆ ಎಚ್ಚರಿಕೆ ನೀಡಿದ ಟಿಎಂಸಿ ವಕ್ತಾರ ಅರೂಪ್ ಚಕ್ರವರ್ತಿ, “ಕಾಳಿ ಪೂಜೆಯ ವೇಳೆ ದೇವರಿಗೆ ಮಾಂಸ ಮತ್ತು ತಾರಾ ಮಾ ಪೂಜೆಯ ವೇಳೆ ಮೀನು ಅರ್ಪಿಸುತ್ತೇವೆ. ಬಂಗಾಳದ ಸಂಸ್ಕೃತಿಯನ್ನು ಅವರು ಅರ್ಥಮಾಡಿಕೊಳ್ಳಬೇಕು. ವಂದೇ ಭಾರತ್ ರೈಲುಗಳಲ್ಲಿ ಮೊದಲು ಮೀನು ನಿಷೇಧಿಸಲಾಗಿತ್ತು. ಜನರ ಆಕ್ರೋಶದ ನಂತರವೇ ಅದನ್ನು ಪುನಃಸ್ಥಾಪಿಸಲಾಯಿತು,” ಎಂದು ಹೇಳಿದ್ದಾರೆ. ಸಾಂಸ್ಕೃತಿಕ ಯುದ್ಧ ಪ್ರಸ್ತುತ ವಿವಾದಕ್ಕೆ ಟಿಎಂಸಿಯ ಪ್ರತಿಕ್ರಿಯೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಸಾಂಸ್ಕೃತಿಕವಾಗಿ ಅನರ್ಹವೆಂದು ಬಿಂಬಿಸುವ ಅದರ ನಿರಂತರ ಪ್ರಯತ್ನಗಳನ್ನು ತೋರಿಸುತ್ತದೆ. ಆಹಾರ ಪದ್ಧತಿಯನ್ನು ಪ್ರಾದೇಶಿಕ ಹೆಮ್ಮೆಯ ವಿಷಯವಾಗಿ ಎತ್ತುವ ಮೂಲಕ ಆಡಳಿತ ಪಕ್ಷವು ಬಿಜೆಪಿಯನ್ನು ಸ್ಥಳೀಯ ಪದ್ಧತಿಗಳಿಗೆ ಅಸ್ತಿತ್ವದ ಬೆದರಿಕೆಯಾಗಿ ಚಿತ್ರಿಸುತ್ತಿದೆ. ಅದೇ ವೇಳೆ, ತಾನು ಬಂಗಾಳಿ ಹಿತಾಸಕ್ತಿಗಳ ರಕ್ಷಕ ಎಂದು ಟಿಎಂಸಿ ತೋರಿಸಿಕೊಳ್ಳುತ್ತಿದೆ. ಸಸ್ಯಾಹಾರ–ಮಾಂಸಾಹಾರ ಚರ್ಚೆ ವಸಾಹತುಶಾಹಿ ಬಂಗಾಳದಲ್ಲಿಯೂ ಅಸ್ತಿತ್ವದಲ್ಲಿತ್ತು. 2009ರಲ್ಲಿ ‘ಮಾಡರ್ನ್ ಏಷ್ಯನ್ ಸ್ಟಡೀಸ್’ ಜರ್ನಲ್ನಲ್ಲಿ ಪ್ರಕಟವಾದ ‘ನೇಷನ್ ಆನ್ ಎ ಪ್ಲ್ಯಾಟರ್: ದಿ ಕಲ್ಚರ್ ಅಂಡ್ ಪಾಲಿಟಿಕ್ಸ್ ಆಫ್ ಫುಡ್ ಅಂಡ್ ಕ್ಯೂಸಿನ್ ಇನ್ ಕೊಲೊನಿಯಲ್ ಬೆಂಗಾಲ್’ ಲೇಖನದಲ್ಲಿ ಇತಿಹಾಸಕಾರ ಜಯಂತ ಸೇನ್ಗುಪ್ತಾ, ಸ್ವಾಮಿ ವಿವೇಕಾನಂದರಿಗೆ ಸಸ್ಯಾಹಾರದ ಬಗ್ಗೆ ಹೆಚ್ಚಿನ ಕಾಳಜಿ ಇರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. “ಅವರ ಅಭಿಪ್ರಾಯದಲ್ಲಿ, ಮಾಂಸಾಹಾರವು ಉತ್ತಮ ಆರೋಗ್ಯಕ್ಕೆ ಅಗತ್ಯ. ಅದು ಸಮುದಾಯದ ‘ಗೌರವ’, ಕಾರ್ಮಿಕರ ಉತ್ಪಾದಕತೆ ಮತ್ತು ರಾಷ್ಟ್ರದ ‘ಪ್ರಗತಿ’ಗೆ ಸಂಬಂಧಿಸಿದೆ. ಸಸ್ಯಾಹಾರವನ್ನು ಅವರು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಡೆತಡೆಯಾಗುವ ದುರ್ಬಲ ಅಭ್ಯಾಸವೆಂದು ಪರಿಗಣಿಸಿದ್ದರು,” ಎಂದು ಸೇನ್ಗುಪ್ತಾ ಬರೆದಿದ್ದಾರೆ. ಆಹಾರದ ವಿವಾದದ ಹೊರತಾಗಿಯೂ, ಇತ್ತೀಚಿನ ಕೆಲವು ಘಟನೆಗಳು ಟಿಎಂಸಿಗೆ ಬಿಜೆಪಿಯನ್ನು “ಬಂಗಾಳಿ ವಿರೋಧಿ” ಎಂದು ಬಿಂಬಿಸಲು ಅವಕಾಶ ನೀಡಿವೆ. ಕಳೆದ ವರ್ಷ ವಂದೇ ಮಾತರಂ ಕುರಿತ ಸಂಸತ್ತಿನ ಚರ್ಚೆಯಲ್ಲಿ ರಾಜ್ಯಸಭಾ ಸಂಸದ ದಿನೇಶ್ ಶರ್ಮಾ, ಸ್ವಾತಂತ್ರ್ಯ ಹೋರಾಟಗಾರ್ತಿ ಮಾತಂಗಿನಿ ಹಜ್ರಾ ಅವರನ್ನು ಮುಸ್ಲಿಂ ಎಂದು ತಪ್ಪಾಗಿ ಹೇಳಿದ ಬಳಿಕ ಟಿಎಂಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಜನವರಿಯಲ್ಲಿ ಮೋಹನ್ ಬಗಾನ್ ಮತ್ತು ಈಸ್ಟ್ ಬಂಗಾಳ ಫುಟ್ಬಾಲ್ ಕ್ಲಬ್ಗಳ ಹೆಸರನ್ನು ಸರಿಯಾಗಿ ಉಚ್ಚರಿಸದ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಬಂಗಾಳದ ಫುಟ್ಬಾಲ್ ಪರಂಪರೆಯನ್ನು ಅಗೌರವಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿತು. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ರಾಮಕೃಷ್ಣ ಪರಮಹಂಸರನ್ನು “ಠಾಕೂರ್” ಎಂದು ಕರೆಯುವ ಬದಲು “ಸ್ವಾಮಿ” ಎಂದು ಉಲ್ಲೇಖಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಫುಟ್ಬಾಲ್ ಕ್ಲಬ್ಗಳ ಹೆಸರಿನ ಉಚ್ಚಾರಣಾ ತಪ್ಪುಗಳಿಂದ ಬಿಜೆಪಿ ಅಪಹಾಸ್ಯಕ್ಕೆ ಒಳಗಾದರೂ, ಆಹಾರ ರಾಜಕೀಯವು ಅದರ ಚುನಾವಣಾ ಅಭಿಯಾನಕ್ಕೆ ಗಂಭೀರ ಸವಾಲು ಒಡ್ಡುತ್ತಿದೆ. ಪಕ್ಷವು ತನ್ನ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಲು ವಿಫಲವಾದರೆ, ಆಹಾರ ಪದ್ಧತಿಗಳ ಕುರಿತು ಅದರ ನಿಲುವು ಬಂಗಾಳಿ ಮತದಾರರನ್ನು ದೂರ ಮಾಡಬಹುದು. ಆಹಾರ ಕುರಿತು ಬರೆಯುವ ಲೇಖಕಿ ಚಿತ್ರಿತಾ ಬ್ಯಾನರ್ಜಿ ತಮ್ಮ ‘ಈಟಿಂಗ್ ಇಂಡಿಯಾ’ ಕೃತಿಯಲ್ಲಿ, ಬಂಗಾಳದ ಭೌಗೋಳಿಕತೆಯು ವಿಶಾಲ ನದಿಗಳು, ಸರೋವರಗಳು ಮತ್ತು ಮ್ಯಾಂಗ್ರೋವ್ ಸಮೃದ್ಧ ಸುಂದರಬನಗಳಿಂದ ಕೂಡಿದೆ ಎಂದು ಉಲ್ಲೇಖಿಸಿದ್ದಾರೆ. ಸಿಹಿನೀರಿನ ಮೀನುಗಳು ಇಲ್ಲಿ ಆಹಾರದ ಪ್ರಮುಖ ಅಂಗವಾಗಿದೆ. ಚೀನಾದ ಕೆಲವು ಭಾಗಗಳಂತೆ, ಇಲ್ಲಿ ಮೀನು ಕೇವಲ ಆಹಾರವಲ್ಲ; ಸಮೃದ್ಧಿ ಮತ್ತು ಫಲವತ್ತತೆಯ ಸಂಕೇತವಾಗಿಯೂ, ವಿಧಿ-ವಿಧಾನ ಹಾಗೂ ಧಾರ್ಮಿಕ ಜೀವನದ ಭಾಗವಾಗಿಯೂ ಪರಿಗಣಿಸಲಾಗುತ್ತದೆ ಎಂದು ಅವರು ಬರೆಯುತ್ತಾರೆ. ಹೀಗಾಗಿ, “ಮೀನು ಮತ್ತು ಅನ್ನ ತಿನ್ನುವ ಬಂಗಾಳಿ” ಎಂಬ ಚಿತ್ರಣವು ಕೇವಲ ಕ್ಲೀಷೆ ಅಲ್ಲ; ಅದು ಪ್ರದೇಶದ ಗುರುತು. ಪಶ್ಚಿಮ ಬಂಗಾಳದಲ್ಲಿ ರಾಜಕೀಯವಾಗಿ ಯಶಸ್ವಿಯಾಗಲು ಈ ಸಾಂಸ್ಕೃತಿಕ ವಾಸ್ತವವನ್ನು ಅರ್ಥಮಾಡಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆ: ಬಿಜೆಪಿಯ 7 ಸದಸ್ಯರು ಗೈರು
ಉಚ್ಛಾಟಿತ ಸದಸ್ಯಗೆ ಪ್ರತಿಪಕ್ಷದವರ ಬೆಂಬಲ
ಎರಡನೇ ಏಕದಿನ | ಆಸ್ಟ್ರೇಲಿಯ ವಿರುದ್ಧ ಭಾರತದ ಮಹಿಳಾ ತಂಡಕ್ಕೆ 5 ವಿಕೆಟ್ ಸೋಲು
ಹೊಬರ್ಟ್, ಫೆ.27: ಜಾರ್ಜಿಯಾ ವೋಲ್ ಶತಕ(101 ರನ್)ಹಾಗೂ ಲಿಚ್ಫೀಲ್ಡ್ ಅರ್ಧಶತಕದ(80 ರನ್)ಕೊಡುಗೆಯ ನೆರವಿನಿಂದ ಆಸ್ಟ್ರೇಲಿಯದ ಮಹಿಳಾ ಕ್ರಿಕೆಟ್ ತಂಡವು ಭಾರತದ ಮಹಿಳೆಯರ ಕ್ರಿಕೆಟ್ ತಂಡವನ್ನು ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡವು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 251 ರನ್ ಗಳಿಸಿದೆ. ಗೆಲ್ಲಲು 252 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡವು ಇನ್ನೂ 13.5 ಓವರ್ಗಳ ಬಾಕಿ ಇರುವಾಗಲೇ ಐದು ವಿಕೆಟ್ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು. ಇನ್ನೊಂದು ಏಕದಿನ ಹಾಗೂ ಏಕೈಕ ಟೆಸ್ಟ್ ಪಂದ್ಯವನ್ನಾಡಲು ಬಾಕಿ ಉಳಿದಿದ್ದು, ಸದ್ಯ ಆಸ್ಟ್ರೇಲಿಯ ತಂಡವು ಎಲ್ಲ ಮಾದರಿಗಳ ಕ್ರಿಕೆಟ್ ಸರಣಿಯಲ್ಲಿ 6-4 ಮುನ್ನಡೆಯಲ್ಲಿದೆ. ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್(52 ರನ್, 81 ಎಸೆತ) ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್(54 ರನ್, 70 ಎಸೆತ)ಅರ್ಧಶತಕಗಳನ್ನು ಸಿಡಿಸುವ ಮೂಲಕ ಭಾರತ ತಂಡವು 251 ರನ್ ಗಳಿಸುವಲ್ಲಿ ನೆರವಾದರು. 81 ಎಸೆತಗಳನ್ನು ಎದುರಿಸಿ ಆರು ಬೌಂಡರಿಗಳನ್ನು ಬಾರಿಸಿದ ರಾವಲ್ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ(31 ರನ್, 37 ಎಸೆತ, 4 ಬೌಂಡರಿ)ಅವರೊಂದಿಗೆ ಮೊದಲ ವಿಕೆಟ್ಗೆ 78 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಸ್ವೀಪ್ ಮಾಡಲು ಯತ್ನಿಸಿದ ಮಂಧಾನ ಅವರು ಅಶ್ಲೆ ಗಾರ್ಡ್ನರ್ಗೆ(2-39)ಕ್ಲೀನ್ ಬೌಲ್ಡಾದರು. ಅದಕ್ಕೂ ಮೊದಲು ಅವರು ಎರಡು ಬಾರಿ ಜೀವದಾನ ಪಡೆದಿದ್ದರು. ಜೆಮಿಮಾ ರೋಡ್ರಿಗ್ಸ್(11 ರನ್, 15 ಎಸೆತ)ಅವರು ಅನಬೆಲ್ ಸದರ್ಲ್ಯಾಂಡ್ಸ್ಗೆ(2-37)ಹಾಗೂ ದೀಪ್ತಿ ಶರ್ಮಾ(1 ರನ್)ಅವರು ಅಲನಾ ಕಿಂಗ್(2-41)ಅವರಿಗೆ ವಿಕೆಟ್ ಒಪ್ಪಿಸಿದರು. ಅಲನಾ ಕಿಂಗ್ ವಿಕೆಟ್ಕೀಪರ್-ಬ್ಯಾಟರ್ ರಿಚಾ ಘೋಷ್ 22 ರನ್ ಗಳಿಸಿದ್ದಾಗ ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಹರ್ಮನ್ಪ್ರೀತ್ ಕೌರ್ 70 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 54 ರನ್ ಗಳಿಸಿದರು. ಕಾಶ್ವೀ ಗೌತಮ್(25 ರನ್, 34 ಎಸೆತ)ಅವರೊಂದಿಗೆ ಏಳನೇ ವಿಕೆಟ್ಗೆ 55 ರನ್ ಜೊತೆಯಾಟದಲ್ಲಿ ಭಾಗಿಯಾದರು. ಇದರೊಂದಿಗೆ ಭಾರತದ ಸ್ಕೋರನ್ನು 250ರ ಗಡಿ ದಾಟಿಸಿದರು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯ ತಂಡವು ಕಾಶ್ವೀ ಗೌತಮ್ ಇನ್ಸ್ವಿಂಗ್ ಎಸೆತಕ್ಕೆ ನಾಯಕಿ ಅಲಿಸಾ ಹೀಲಿ(6 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಜಾರ್ಜಿಯಾ ಹಾಗೂ ಲಿಚ್ಫೀಲ್ಡ್ ಎರಡನೇ ವಿಕೆಟ್ಗೆ 119 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಮೂರು ಬಾರಿ ಜೀವದಾನ ಪಡೆದ ಜಾರ್ಜಿಯಾ 82 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಒಟ್ಟು 101 ರನ್ ಗಳಿಸಿದ್ದಾರೆ. 62 ಎಸೆತಗಳಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ಗಳ ಸಹಾಯದಿಂದ ಲಿಚ್ಫೀಲ್ಡ್ ಅವರು 80 ರನ್ ಗಳಿಸಿ ಕ್ರಾಂತಿ ಗೌಡ್ಗೆ ವಿಕೆಟ್ ಒಪ್ಪಿಸಿದರು. ಭಾರತ ತಂಡವು ಕೊನೆಯಲ್ಲಿ ಎರಡು ವಿಕೆಟ್ಗಳನ್ನು ಉರುಳಿಸಿತು. ಆದರೆ ಆಸ್ಟ್ರೇಲಿಯ ತಂಡವು 36.1 ಓವರ್ಗಳಲ್ಲಿ ರನ್ ಚೇಸ್ ಮಾಡಿತು. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ರವಿವಾರ ಹೊಬರ್ಟ್ ಮೈದಾನದಲ್ಲಿ ನಡೆಯಲಿದೆ.
ಯಾದಗಿರಿ | ಸರಕಾರಿ ನೌಕರರಲ್ಲಿ ಸೇವಾ ಮನೋಭಾವನೆ, ನೈತಿಕತೆ ಬೆಳೆಸಲು ಕಾರ್ಯಕ್ರಮ : ಡಿ.ಶಿವಶಂಕರ
ಯಾದಗಿರಿ : ರಾಜ್ಯದ ಸರ್ಕಾರಿ ನೌಕರರಲ್ಲಿ ಸೇವಾ ಮನೋಭಾವನೆ ಮತ್ತು ನೈತಿಕ ಮೌಲ್ಯಗಳನ್ನು ಬಲಪಡಿಸಲು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷ ಡಿ.ಶಿವಶಂಕರ ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಅಸಮತೆಯನ್ನು ಕಡಿಮೆ ಮಾಡಲು ಸಂಘವು ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು. ರಾಜ್ಯದಲ್ಲಿ ಒಟ್ಟು 7,75,000 ಸರ್ಕಾರಿ ಹುದ್ದೆಗಳಿದ್ದು, ಅದರಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿಯಾಗಿದೆ. ಕೇವಲ 4 ಲಕ್ಷ ನೌಕರರು ಸೇವೆಯಲ್ಲಿ ಇದ್ದು, ಹೆಚ್ಚುವರಿ ಕೆಲಸದ ಒತ್ತಡದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಸರ್ಕಾರವು ವಾರ್ಷಿಕ 5,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತಿಳಿಸಿದ್ದರೂ ಇದುವರೆಗೂ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ಷೇಪಿಸಿದರು. ಹಳೆಯ ಪಿಂಚಣಿ ಯೋಜನೆಯ ಪರಿಣಾಮವಾಗಿ ನೌಕರರು ಒತ್ತಡದಲ್ಲಿದ್ದಾರೆ. ಅದನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಮೇ ತಿಂಗಳಲ್ಲಿ ಬೆಂಗಳೂರು ನಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದು. ನೌಕರರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಿವಶಂಕರ ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಆರ್. ಎಮ್. ನಾಟೇಕರ್, ಮುಖಂಡ ಆರ್. ಮೋಹನ್, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
2025-26ರ ರಣಜಿ ಋತುವಿನಲ್ಲಿ ಗರಿಷ್ಠ ವಿಕೆಟ್ಗಳನ್ನು ಕಬಳಿಸಿದ ಆಕಿಬ್ ನಬಿ
ಹುಬ್ಬಳ್ಳಿ, ಫೆ.27: ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡದ ವೇಗದ ಬೌಲರ್ ಆಕಿಬ್ ನಬಿ ಈಗ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಅಭಿಯಾನದಲ್ಲಿ ಗರಿಷ್ಠ ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಜಮ್ಮು-ಕಾಶ್ಮೀರದ ಮೊದಲ ಇನಿಂಗ್ಸ್ ಮೊತ್ತ 584ಕ್ಕೆ ಉತ್ತರಿಸ ಹೊರಟ ಕರ್ನಾಟಕ ತಂಡದ ವಿರುದ್ದ 54 ರನ್ಗೆ ಐದು ವಿಕೆಟ್ ಗೊಂಚಲು ಪಡೆದಿರುವ ನಬಿ ಒಟ್ಟು 60 ವಿಕೆಟ್ಗಳನ್ನು ಉರುಳಿಸಿ ಮಹತ್ವದ ಮೈಲಿಗಲ್ಲು ತಲುಪಿದರು. 92 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ 60 ವಿಕೆಟ್ಗಳನ್ನು ಕಬಳಿಸಿದ ಮೂರನೇ ವೇಗದ ಬೌಲರ್ ಎಂಬ ಹಿರಿಮೆಗೆ ಆಕಿಬ್ ನಬಿ ಪಾತ್ರರಾಗಿದ್ದಾರೆ. ನಬಿ ಅವರು ಪ್ರಸಕ್ತ ರಣಜಿ ಟೂರ್ನಿಯಲ್ಲಿ ಏಳನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ತನ್ನ ರಣಜಿ ವೃತ್ತಿಬದುಕಿನಲ್ಲಿ 15ನೇ ಬಾರಿ ಈ ಸಾಧನೆ ಮಾಡಿದ್ದಾರೆ. ಕರ್ನಾಟಕದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಮಯಾಂಕ್ ಅಗರ್ವಾಲ್(160 ರನ್)ವಿಕೆಟನ್ನು ಶುಕ್ರವಾರ ಪಡೆದಿರುವ ನಬಿ ಅವರು ಶಿಖರ್ ಶೆಟ್ಟಿ ವಿಕೆಟನ್ನು ಉರುಳಿಸಿದ ನಂತರ ಈ ಮೈಲಿಗಲ್ಲು ತಲುಪಿದರು.
ಹುಣಸಗಿ | ಸೊಸೆಗೆ ಕಿಡ್ನಿ ದಾನ ಮಾಡಿದ ಅತ್ತೆ
ಹುಣಸಗಿ : ಕುಟುಂಬಗಳಲ್ಲಿ ಅತ್ತೆ–ಸೊಸೆ ನಡುವಿನ ಕಲಹಗಳೇ ಸಾಮಾನ್ಯವೆಂದು ಹೇಳಲಾಗುತ್ತದೆ. ಆದರೆ ಹುಣಸಗಿ ತಾಲ್ಲೂಕಿನ ಮಾಳನೂರು ಗ್ರಾಮದಲ್ಲಿ ಅತ್ತೆಯೊಬ್ಬರು ಸೊಸೆಗೆ ಕಿಡ್ನಿ ದಾನ ಮಾಡಿ ಮಾನವೀಯತೆಗೆ ಮಾದರಿಯಾಗಿದ್ದಾರೆ. ಮಾಳನೂರು ಗ್ರಾಮದ ಶಾಂತಾಬಾಯಿ ಮೇಲಿನಮನಿ (62) ಅವರು ತಮ್ಮ ಸೊಸೆ ಬಸಮ್ಮ ಮೇಲಿನಮನಿ ಅವರಿಗೆ ಕಿಡ್ನಿ ದಾನ ಮಾಡುವ ಮೂಲಕ ಕುಟುಂಬ ಬಾಂಧವ್ಯಕ್ಕೆ ಹೊಸ ಅರ್ಥ ನೀಡಿದ್ದಾರೆ. ಶಾಂತಾಬಾಯಿ ಹಾಗೂ ಗುರಣ್ಣ ಮೇಲಿನಮನಿ ಅವರ ಪುತ್ರ ಪ್ರಕಾಶ ಅವರು 14 ವರ್ಷಗಳ ಹಿಂದೆ ತಾಳಿಕೋಟೆ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಬಸಮ್ಮ ಅವರೊಂದಿಗೆ ವಿವಾಹವಾಗಿದ್ದರು. ಪ್ರಕಾಶ ಖಾಸಗಿ ವಾಹನ ಚಾಲಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯ ನಂತರ ಬಸಮ್ಮ ಆರೋಗ್ಯವಾಗಿದ್ದರು. ಆದರೆ ಮೊದಲ ಮಗುವಾದ ಮಣಿಕಂಠ ಜನನದ ವೇಳೆ ಕಿಡ್ನಿ ಸಮಸ್ಯೆ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಬಳಿಕ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಿತು. ಇತ್ತೀಚೆಗೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕಿಡ್ನಿ ಬದಲಾವಣೆ ಅನಿವಾರ್ಯವಾಯಿತು. ಸಂಬಂಧಿಕರು ನೆರವು ನೀಡುವುದಾಗಿ ಹೇಳಿದರೂ, ಶಾಂತಾಬಾಯಿ ತಾವೇ ಕಿಡ್ನಿ ದಾನ ಮಾಡಲು ಮುಂದಾದರು ಎಂದು ಪ್ರಕಾಶ ತಿಳಿಸಿದ್ದಾರೆ. ಬಸಮ್ಮ ಅವರ ರಕ್ತಗುಂಪು ಓ ಪಾಸಿಟಿವ್ ಆಗಿದ್ದು, ಶಾಂತಾಬಾಯಿ ಅವರದು ಎ ಪಾಸಿಟಿವ್ ಆಗಿದ್ದರೂ ಅಗತ್ಯ ವೈದ್ಯಕೀಯ ಪರೀಕ್ಷೆಗಳ ಬಳಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು. ಆಸ್ಪತ್ರೆಯ ವೈದ್ಯರಾದ ಡಾ. ರವೀಂದ್ರ ಮದ್ದರಕಿ ಅವರ ತಂಡ ಸುಮಾರು 10 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಅತ್ತೆ–ಸೊಸೆ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ನಮ್ಮ ಸೊಸೆ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರ ಆರೋಗ್ಯವೇ ನಮ್ಮ ಕುಟುಂಬದ ಸುಖ. ಆತ್ಮಸಂತೋಷದಿಂದ ಕಿಡ್ನಿ ದಾನ ಮಾಡಿದ್ದೇನೆ ಎಂದು ಶಾಂತಾಬಾಯಿ ಹೇಳಿದರು. ಈ ಮಾದರಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಭುಗೌಡ ಗದಿಗೆಪ್ಪಗೋಳ, ತಿಪ್ಪಣ್ಣ ಕಾರನೂರು, ವೀರೇಶ ಸೇರಿದಂತೆ ಹಲವರು ಇಬ್ಬರೂ ಶೀಘ್ರ ಗುಣಮುಖರಾಗಿ ಗ್ರಾಮಕ್ಕೆ ಮರಳಲಿ ಎಂದು ಹಾರೈಸಿದ್ದಾರೆ.
ಪೊಕ್ಸೊ ಪ್ರಕರಣದಲ್ಲಿ ಸತ್ಯವನ್ನು ಸಾಬೀತುಪಡಿಸಲು ಮಂಪರು ಪರೀಕ್ಷೆಗೆ ಸಿದ್ಧ: ಸ್ವಾಮಿ ಅವಿಮುಕ್ತೇಶ್ವರಾನಂದ
ವಾರಣಾಸಿ,ಫೆ.27: ಮಂಪರು ಪರೀಕ್ಷೆಯು ಪೊಕ್ಸೊ ಕಾಯೆಯಡಿ ತನ್ನ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸತ್ಯವನ್ನು ಸಾಬೀತುಗೊಳಿಸಲು ನೆರವಾಗುವುದಾದರೆ ತಾನು ಅದಕ್ಕೆ ಸಿದ್ಧನಿದ್ದೇನೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮಂಪರು ಪರೀಕ್ಷೆಯ ಮೂಲಕ ಸತ್ಯವನ್ನು ಕಂಡುಕೊಳ್ಳಲು ಸಾಧ್ಯವಿದ್ದರೆ ಖಂಡಿತವಾಗಿಯೂ ಅದನ್ನು ನಡೆಸಬೇಕು. ಸತ್ಯವನ್ನು ಬಯಲಿಗೆಳೆಯಲು ಲಭ್ಯವಿರುವ ಎಲ್ಲ ವಿಧಾನಗಳನ್ನೂ ಬಳಸಬೇಕು ಎಂದು ಅವರು ಹೇಳಿದರು. ಈ ನಡುವೆ ಶ್ರೀಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಅಪರಾಹ್ನ ಕೈಗೆತ್ತಿಕೊಂಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದ್ದು, ಅಲ್ಲಿಯವರೆಗೆ ಅವರ ಬಂಧನಕ್ಕೆ ತಡೆಯಾಜ್ಞೆಯನ್ನು ನೀಡಿದೆ. ನ್ಯಾಯಾಲಯದ ಆದೇಶವು ಮಾರ್ಚ್ ಮೂರನೇ ವಾರದಲ್ಲಿ ಹೊರಬೀಳುವ ನಿರೀಕ್ಷೆಯಿದೆ. ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆಯಿದ್ದರೂ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಎಂದಿನಂತೆ ತನ್ನ ದಿನನಿತ್ಯದ ಧಾರ್ಮಿಕ ಚಟುವಟಿಕೆಗಳನ್ನು ಮುಂದುವರಿಸಿದರು ಮತ್ತು ಪೂಜಾ ಕಾರ್ಯವನ್ನು ನೆರವೇರಿಸಿದರು ಎಂದು ಅವರ ಶಿಷ್ಯಸಂಜಯ ಪಾಂಡೆ ತಿಳಿಸಿದರು. ಈ ವೇಳೆ ಮಠದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸುಳ್ಳು ಬಹುಕಾಲ ಉಳಿಯುವುದಿಲ್ಲ, ಸುಳ್ಳುಕಥೆಯನ್ನು ಹೆಣೆದವರ ಬಣ್ಣ ಬಯಲಾಗುತ್ತಿದೆ. ಈ ಕಪಟ ಪ್ರಕರಣದ ಬಗ್ಗೆ ಜನರಿಗೆ ತಿಳಿಯುತ್ತಿದ್ದಂತೆ ಸತ್ಯವು ಸ್ಪಷ್ಟವಾಗುತ್ತದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದರು. ವೈದ್ಯಕೀಯ ಪರೀಕ್ಷಾ ವರದಿಗಳಿಗೆ ಸಂಬಂಧಿಸಿದ ಪ್ರತಿಪಾದನೆಗಳನ್ನು ಪ್ರಶ್ನಿಸಿದ ಅವರು, ‘ವೈದ್ಯಕೀಯ ವರದಿಯು ನಮ್ಮ ಪಾಲ್ಗೊಳ್ಳುವಿಕೆಯನ್ನು ಹೇಗೆ ಸಾಬೀತುಗೊಳಿಸುತ್ತದೆ? ವರದಿಯು ದುಷ್ಕೃತ್ಯವನ್ನು ಸಾಬೀತುಗೊಳಿಸಿದೆ ಎಂದು ಹೇಳಲಾಗುತ್ತಿದೆ. ಅದು ಯಾರದೋ ಹೇಳಿಕೆಯಾಗಿರಬಹುದು. ಆದರೆ ಅಷ್ಟೊಂದು ದಿನಗಳ ಬಳಿಕ ನಡೆಸಲಾದ ವೈದ್ಯಕೀಯ ತಪಾಸಣೆ ವರದಿಗೆ ಏನು ಅರ್ಥ?’ ಎಂದು ಪ್ರಶ್ನಿಸಿದರು. ಯಾವುದೇ ತಪ್ಪು ನಡೆದಿದ್ದರೂ ಅದಕ್ಕೆ ಯಾರು ಹೊಣೆ ಎನ್ನುವುದು ಸ್ವಯಂಚಾಲಿತವಾಗಿ ಸಾಬೀತಾಗುವುದಿಲ್ಲ ಎಂದೂ ಹೇಳಿದ ಅವರು, ‘ನಮ್ಮ ಬಳಿಗೆ ಎಂದೂ ಬಂದಿರದ ಮಗುವಿನೊಂದಿಗೆ ನಮ್ಮ ಹೆಸರನ್ನು ಸುಲಭವಾಗಿ ಜೋಡಿಸಲು ಸಾಧ್ಯವಿಲ್ಲ’ ಎಂದರು. ಮಕ್ಕಳು ದೂರುದಾರ ಅಶುತೋಷ್ ಬ್ರಹ್ಮಚಾರಿ ಅಲಿಯಾಸ್ ಪಾಂಡೆ ಜೊತೆ ವಾಸವಾಗಿದ್ದಾರೆ ಎಂದು ಆರೋಪಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ, ಅವರನ್ನು ಏಕೆ ಬಾಲಗೃಹಕ್ಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದರು. ಮಕ್ಕಳನ್ನು ಹರ್ದೋಯಿಯ ಹೋಟೆಲ್ವೊಂದರಲ್ಲಿ ಇರಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನ ಪ್ರಸ್ತಾವಿಸಿದ ಅವರು, ಪತ್ರಕರ್ತರನ್ನು ಭೇಟಿಯಾಗಲು ಅವರಿಗೆ ಅವಕಾಶ ನೀಡಲಾಗಿಲ್ಲ ಎಂದು ಆರೋಪಿಸಿದರು. ಪೊಲೀಸರು ದೂರುದಾರನ್ನು ರಕ್ಷಿಸುತ್ತಿದ್ದಾರೆ ಮತ್ತು ತನ್ನ ವಿರುದ್ಧ ಹೇಳಿಕೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಟ್ಟುಕಥೆ ಎಷ್ಟೇ ದೊಡ್ಡದಾಗಿರಲಿ, ಅಂತಿಮವಾಗ ಸತ್ಯವು ಹೊರಬೀಳುತ್ತದೆ ಎಂದರು. ಪೊಕ್ಸೊ ಮತ್ತು ಬಿಎನ್ಎಸ್ ಅಡಿ ತನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಾಗಿದೆ ಎಂದು ಗುರುವಾರ ಹೇಳಿದ್ದ ಅವರು, ಇದು ತನ್ನ ಹೆಸರನ್ನು ಕೆಡಿಸಲು ಮತ್ತು ಜಾಗತಿಕವಾಗಿ ಚರ್ಚಿಸಲ್ಪಟ್ಟ ಎಪ್ಸ್ಟೀನ್ ಫೈಲ್ಸ್ಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಯಾದಗಿರಿ | ಪಿಡ್ಡಪ್ಪ ಸಾವು ಪ್ರಕರಣ : ಮರುತನಿಖೆಗೆ ಆಗ್ರಹ
ಯಾದಗಿರಿ : ನಾಯ್ಕಲ್ ಗ್ರಾಮದ ಪಿಡ್ಡಪ್ಪ ಅವರ ಅನುಮಾನಾಸ್ಪದ ಸಾವು ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಿರುವುದು ಖಂಡನೀಯವಾಗಿದೆ. ಇದು ಕೊಲೆ ಪ್ರಕರಣವಾಗಿದ್ದು, ನಿಜವಾದ ಆರೋಪಿಗಳನ್ನು ತಕ್ಷಣ ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯಮಟ್ಟದ ಕುರುಬರ ಸಂಘ ಜಿಲ್ಲಾ ಘಟಕ ಒತ್ತಾಯಿಸಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ರಾಜ್ಯದಲ್ಲಿ ಕುರುಬ ಸಮುದಾಯದ ಮೇಲೆ ಇತ್ತೀಚೆಗೆ ನಡೆಯುತ್ತಿರುವ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ಸಮುದಾಯದಲ್ಲಿ ಆತಂಕ ಮತ್ತು ಆಕ್ರೋಶ ಉಂಟುಮಾಡಿವೆ ಎಂದು ಹೇಳಿದರು. ವಡಿಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಪಿಡ್ಡಪ್ಪ ಅವರ ಸಾವು ಗ್ರಾಮಸ್ಥರ ಪ್ರಕಾರ ಸ್ಪಷ್ಟವಾದ ಕೊಲೆ ಪ್ರಕರಣವಾಗಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿದರು. ಪ್ರಕರಣದಲ್ಲಿ ಆರೋಪಿಗಳನ್ನು ಇನ್ನೂ ಬಂಧಿಸದಿರುವುದು ನ್ಯಾಯ ವ್ಯವಸ್ಥೆಯ ಮೇಲೆ ಪ್ರಶ್ನೆ ಎಬ್ಬಿಸಿದೆ ಎಂದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಹೇಳಿದರು. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಕುರಿಗಾಹಿ ವೃತ್ತಿಯಲ್ಲಿ ತೊಡಗಿದ್ದ ಕುರುಬ ಸಮುದಾಯದ ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವ ಘಟನೆ ಕೂಡ ಸಮುದಾಯದ ಸುರಕ್ಷತೆ ಬಗ್ಗೆ ಗಂಭೀರ ಆತಂಕ ಮೂಡಿಸಿದೆ ಎಂದು ತಿಳಿಸಿದರು. ಪಿಡ್ಡಪ್ಪ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮರುತನಿಖೆ ನಡೆಸಬೇಕು. ನಿಜವಾದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಮರಣೋತ್ತರ ವರದಿಯನ್ನು ಮರುಪರಿಶೀಲನೆ ಮಾಡಬೇಕು. ಕುರುಬ ಸಮುದಾಯದ ಮೇಲೆ ನಡೆಯುವ ದೌರ್ಜನ್ಯಗಳಿಗೆ ವಿಶೇಷ ತನಿಖಾ ತಂಡ ರಚಿಸಬೇಕು. ಕುರುಬರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿತು. ಕುರುಬ ಸಮುದಾಯದ ಸುರಕ್ಷತೆ, ನ್ಯಾಯ ಹಾಗೂ ಅಭಿವೃದ್ಧಿಗಾಗಿ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರ ಶಿವಕುಮಾರ ಮುನಗಲ್, ಜಿಲ್ಲಾ ಉಪಾಧ್ಯಕ್ಷ ರಾಘವಾಂಕ ಪಾಟೀಲ, ಜಿಲ್ಲಾ ಯೂತ್ ಅಧ್ಯಕ್ಷ ಎಸ್ ನಿಜಲಿಂಗಪ್ಪ , ಯಾದಗಿರಿ ತಾಲೂಕು ಅಧ್ಯಕ್ಷರು ಸಿದ್ದಪ್ಪ ಪೂಜಾರಿ, ಗುರುಮಿಠಕಲ್ ತಾಲೂಕು ಅಧ್ಯಕ್ಷರು ತಾಯಪ್ಪ ಕರಣಿಗಿ ಶಹಾಪುರ ತಾಲೂಕು ಅಧ್ಯಕ್ಷರು ರೇವಣ್ಣ ಸಿದ್ದಪ್ಪ ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ; ಯಾವ ಟೀಕೆಗೂ ಬಗ್ಗುವುದಿಲ್ಲ : ಜಿ.ಪರಮೇಶ್ವರ್
ತುಮಕೂರು. : ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಹಾಗೂ ಯಾವ ಟೀಕೆಗೂ ಸರಕಾರ ಬಗ್ಗುವುದಿಲ್ಲ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನ ಗಾಜಿನ ಮನೆ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಡತನ ನಿರ್ಮೂಲನೆ ಮಾಡಬೇಕು. ಕರ್ನಾಟಕದ ಜನತೆ ವಿದ್ಯಾವಂತರಾಗಬೇಕು. ಹಳ್ಳಿಯ ಹುಡುಗರು ವಿದ್ಯಾವಂತರಾಗಿ, ಉದ್ಯೋಗಸ್ಥರಾಗಿ ಸಮಾಜವನ್ನು ಕಟ್ಟಬೇಕು ಎಂಬ ಸದುದ್ದೇಶದಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜನಕಲ್ಯಾಣದ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಹಾಗೂ ಈ ಸಂಬಂಧ ಯಾವುದೇ ಟೀಕೆಗೂ ಸರಕಾರ ಬಗ್ಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಜನರಿಗೆ ಆರ್ಥಿಕ ಶಕ್ತಿ ನೀಡಬೇಕು. ದುಡಿಯುವ ಕೈಗೆ ಉದ್ಯೋಗ ಸಿಗಬೇಕು. ಜನರು ಹಸಿವಿನಿಂದ ಮುಕ್ತರಾಗಬೇಕೆಂಬ ಸದುದ್ದೇಶದಿಂದ ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಗಳಿಂದ ಜನರ ಬದುಕಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಹಿಂದಿನ ಅವಧಿಯ ಸರಕಾರದಲ್ಲಿ ಹಸಿವು ಮುಕ್ತ ಕರ್ನಾಟಕ ಘೋಷಣೆಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಪರಿಕಲ್ಪನೆಯನ್ನು ರಾಜ್ಯದ ಜನತೆ ಮೆಚ್ಚಿದ್ದರು. ಅದಲ್ಲದೆ, ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಇದು ದೇಶಾದ್ಯಂತ ಹಾಗೂ ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಜನರ ಕಷ್ಟ-ಸುಖಗಳನ್ನು ನಮ್ಮ ಸರಕಾರ ಅರ್ಥ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜನರ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು. ಮುಂಬರುವ ದಿನಗಳಲ್ಲಿ ತುಮಕೂರು ಜಿಲ್ಲೆಯನ್ನು ಬೆಂಗಳೂರಿಗೆ ಸಮಾನವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಈ ಹಿಂದೆ ದೇಶದಲ್ಲಿ ಗುಜರಾತ್ ಮಾದರಿ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಈಗ ಕರ್ನಾಟಕ ಮಾದರಿ ಎಂಬ ಹೆಸರು ದೇಶಾದ್ಯಂತ ಕೇಳಿ ಬರುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ರಾಜ್ಯವಾಗಿ ಪರಿಗಣಿಸಲ್ಪಟ್ಟಿದೆ ಎಂದರು ಜಾಗೃತ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ವಿ.ವಾಸು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ ಸ್ವಾಗತಿಸಿದರು. ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತ್ ರಾಜ್, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಗೌಡ, ಉಪಾಧ್ಯಕ್ಷರಾದ ನರಸೀಯಪ್ಪ, ಶಿವಪ್ರಸಾದ್, ಹನುಮಂತಪ್ಪ, ಪಂಚಾಕ್ಷರಪ್ಪ, ಬಸವರಾಜು, ಅಂಬರೀಷ್ ಹಾಗೂ ವಿವಿಧ ತಾಲ್ಲೂಕುಗಳ ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ವಿವಿಧ ತಾಲ್ಲೂಕುಗಳಿಂದ 4,000ಕ್ಕೂ ಹೆಚ್ಚು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಭಾಗವಹಿಸಿದ್ದರು. ಅಲ್ಲದೆ, ಜಿಲ್ಲಾ ಪಂಚಾಯತಿಯಿಂದ ವಿವಿಧ ಇಲಾಖೆಗಳ ಹಾಗೂ ಗ್ಯಾರಂಟಿ ಯೋಜನೆಗಳ ಮಳಿಗೆಗಳನ್ನು ತೆರೆಯಲಾಗಿತ್ತು. ಅಲ್ಲದೆ, ವಿವಿಧ ಗ್ಯಾರಂಟಿ ಯೋಜನೆಗಳ ಕುರಿತು ಮಹಿಳೆಯರಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು ವಿಶೇಷವಾಗಿತ್ತು.
ಹುಣಸಗಿ | ಬಾಲ ಮೇಳದ ಮೂಲಕ ಮಕ್ಕಳ ಕಲಿಕೆ ಗುರುತಿಸುವ ಪ್ರಯತ್ನ : ಜಯಶ್ರೀ ಬಿರದಾರ
ಹುಣಸಗಿ : ವರ್ಷವಿಡೀ ಅಂಗನವಾಡಿಗಳಲ್ಲಿ ಮಕ್ಕಳು ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಪಾಲಕರು ತಮ್ಮ ಮಕ್ಕಳ ಕಲಿಕೆಯನ್ನು ಗುರುತಿಸಲು ಬಾಲ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ವಲಯ ಮೇಲ್ವಿಚಾರಕಿ ಜಯಶ್ರೀ ಬಿರದಾರ ಹೇಳಿದರು. ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಝೀಂ ಪ್ರೇಮ್ಜಿ ಫೌಂಡೇಶನ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಬಾಲ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಶಿಕ್ಷಣವು ಪಠ್ಯಕ್ಕೆ ಮಾತ್ರ ಸೀಮಿತವಾಗಿರಬಾರದು. ಪಾಠಗಳ ಜೊತೆಗೆ ಆಟ, ಕಲೆ, ಸಂಸ್ಕೃತಿ, ಸಂಗೀತ ಮತ್ತು ನಾಟಕಗಳಂತಹ ಚಟುವಟಿಕೆಗಳನ್ನು ಒಳಗೊಂಡಾಗ ಮಾತ್ರ ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಬೆಳೆಯುತ್ತವೆ ಎಂದು ಹೇಳಿದರು. ಅಜೀಂ ಪ್ರೇಮಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಗುರುರಾಜ ಮಾತನಾಡಿ, ಭಾಷೆ, ಸಾಮಾಜಿಕ-ಭಾವನಾತ್ಮಕ, ದೈಹಿಕ ಹಾಗೂ ಸೃಜನಾತ್ಮಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯೇ ಅಂಗನವಾಡಿಯ ಮುಖ್ಯ ಉದ್ದೇಶವಾಗಿದೆ. ಆಟದ ಮೂಲಕ ಕಲಿಕೆ ನೀಡಿದರೆ ಮಕ್ಕಳ ವ್ಯಕ್ತಿತ್ವಕ್ಕೆ ಬಲವಾದ ಅಡಿಪಾಯ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗುಂಪು ಆಟಗಳು, ಪಾತ್ರಾಭಿನಯ, ಸರಳ ವ್ಯಾಯಾಮ ಮತ್ತು ಚಲನವಲನ ಚಟುವಟಿಕೆಗಳು ನಡೆಯಿತು. ಸಹಕಾರ, ಪರಸ್ಪರ ಗೌರವ, ಸಹಾನುಭೂತಿ ಹಾಗೂ ತಂಡಭಾವನೆ ಬೆಳೆಸುವ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಹೆಚ್ಚಿಸಿವೆ. ರಂಗಮ್ಮ ಬಿರಾದ ನಿರುಪಿಸಿದರು,ಸುಮಂಗಲಾ ಪ್ರಾರ್ಥಿಸಿದರು, ರೇಣುಕಾ ಸ್ವಾಗತಿಸಿದರು, ಗೌರಮ್ಮ ವಂದಿಸಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯ ಶರಣು ದಂಡಿನ್, ಗೌಡಪ್ಪ ಬಿರದಾರ, ಮಹಾದೇವಿ ಬೇವಿನಾಳಮಠ, ಮಲ್ಲಣ್ಣ ಬಿರದಾರ, ಕನಕಪ್ಪ ಸಿದ್ದಾಪೂರ, ಶರಣಮ್ಮ ಬೂದಿಹಾಳ, ಶ್ರೀದೇವಿ ಮೇಟಿ, ಶಿವಕುಮಾರ ಬಂಡೋಳಿ ಸೇರಿದಂತೆ ಇನ್ನಿತರರು ಇದ್ದರು.

24 C