ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಕೋರಿ ಪಿಐಎಲ್; ಸರಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಅವಧಿ ಮುಗಿದು ಎರಡೂವರೆ ವರ್ಷ ಆಗಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರ, ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿತು. ಮನವಿ ಏನು? ಶಿವಮೊಗ್ಗ ಮಹಾನಗರ ಪಾಲಿಕೆಗೆ 2018ರ ಆಗಸ್ಟ್ 31ಕ್ಕೆ ಚುನಾವಣೆ ನಡೆದು ಅದರ ಐದು ವರ್ಷದ ಅವಧಿ 2023ರ ಆಗಸ್ಟ್ 30ಕ್ಕೆ ಮುಗಿದಿದೆ. ಅದೇ ವರ್ಷ ನವೆಂಬರ್ 27ಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಕಳೆದ ಎರಡೂವರೆ ವರ್ಷದಿಂದ ಪಾಲಿಕೆಯು ಆಡಳಿತಾಧಿಕಾರಿಯ ಆಡಳಿತದಲ್ಲಿದೆ. ಕಾಯ್ದೆ ಪ್ರಕಾರ ಅವಧಿ ಮುಗಿದ 6 ತಿಂಗಳಲ್ಲಿ ಚುನಾವಣೆ ನಡೆಸಬೇಕು. ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲದ ಕಾರಣ, ಆಡಳಿತ ಮತ್ತು ಅಭಿವೃದ್ದಿ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಆದ್ದರಿಂದ, 15 ದಿನಗಳಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸಲು ಸರಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Koppa | ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಆಟೋ ಚಾಲಕನ ಅಂಗಾಂಗ ದಾನ
ಕೊಪ್ಪ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನೊಬ್ಬನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಹಾತೂರು ಗ್ರಾಮದ ಕುಣಿಬೈಲ್ ನಿವಾಸಿ, ಆಟೋ ಚಾಲಕ ಮಂಜುನಾಥ್ ಶೆಟ್ಟಿ (35) ಅವರ ಅಂಗಾಂಗ ದಾನ ಪ್ರಕ್ರಿಯೆ ಗುರುವಾರ ಯಶಸ್ವಿಯಾಗಿ ನಡೆಯಿತು. ಫೆಬ್ರವರಿ 1ರಂದು ಆಟೋ ಪಲ್ಟಿಯಾದ ಪರಿಣಾಮ ಮಂಜುನಾಥ್ ಶೆಟ್ಟಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಬ್ರೈನ್ ಡೆಡ್ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಆ ಬಳಿಕ ಕುಟುಂಬದವರು ಅವರನ್ನು ಕೊಪ್ಪದ ಪ್ರಶಮನಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಮಣಿಪಾಲದ ತಜ್ಞ ವೈದ್ಯರ ತಂಡ ಪ್ರಶಮನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಲಿವರ್, ಕಣ್ಣುಗಳು ಹಾಗೂ ಕಿಡ್ನಿಗಳನ್ನು ಬೇರ್ಪಡಿಸಿದರು. ಲಿವರ್ ಮತ್ತು ಕಣ್ಣುಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು. ಕಿಡ್ನಿಗಳನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ರವಾನಿಸಲಾಯಿತು. ಅಂಗಾಂಗಗಳನ್ನು ಸಕಾಲದಲ್ಲಿ ತಲುಪಿಸಲು ಪೊಲೀಸರು ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಸಂಜೆ 5.45ಕ್ಕೆ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್ಗಳು ಗ್ರೀನ್ ಕಾರಿಡಾರ್ ಮೂಲಕ ನಿಯೋಜಿತ ಆಸ್ಪತ್ರೆಗಳನ್ನು ತಲುಪಿದವು. ಅಂಗಾಂಗ ದಾನ ಪ್ರಕ್ರಿಯೆ ಮುಗಿದ ನಂತರ ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ವಾಹನದಲ್ಲಿ ಮೆರವಣಿಗೆ ಮೂಲಕ ಮನೆಗೆ ಕೊಂಡೊಯ್ಯಲಾಯಿತು. ನೂರಾರು ಆಟೋ ಚಾಲಕರು ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮ ಸಹೋದ್ಯೋಗಿಗೆ ಅಂತಿಮ ನಮನ ಸಲ್ಲಿಸಿದರು. ಶಾಸಕ ಟಿ.ಡಿ. ರಾಜೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪ್ರಶಮನಿ ಆಸ್ಪತ್ರೆಯ ಡಾ. ಉದಯಶಂಕರ್ ಹಾಗೂ ಡಾ. ರೇಖಾ ಅವರ ತಂಡ ಇಡೀ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಿತು.
ಮೈಸೂರಿನಲ್ಲಿ ಏಳು ಕಡೆ ಲೋಕಾಯುಕ್ತ ದಾಳಿ; 60 ಲಕ್ಷ ರೂ.ನಗದು, ಚಿನ್ನಾಭರಣ ವಶ : ಮುಂದುವರಿದ ತನಿಖೆ
ಮೈಸೂರು : ನಗರದಲ್ಲಿ ಗುರುವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ಏಳು ಕಡೆ ದಾಳಿ ನಡೆಸಿದ್ದು, ಇಬ್ಬರು ಅಧಿಕಾರಿಗಳಿಗೆ ಸೇರಿದ ಮನೆ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಕಿರಿಯ ಎಂಜಿನಿಯರ್ ಕೆ.ಆರ್.ಚಂದ್ರ ಶೇಖರ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರು ಅಧಿಕಾರಿಗಳ ಕಚೇರಿ, ಮನೆ ಸಹಿತ ಏಳು ಕಡೆ ದಾಳಿ ನಡೆಸಿದ್ದಾರೆ. ವಿಜಯನಗರ ಮೊದಲ ಹಾಗೂ ಎರಡನೇ ಹಂತದಲ್ಲಿ ಆರು ಕಡೆ ಹಾಗೂ ತಿ.ನರಸೀಪುರದಲ್ಲಿ ಒಂದು ಕಡೆ ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರೆದಿದೆ. ಸದ್ಯ ಚಂದ್ರಶೇಖರ್ ಅವರ ಮನೆಯಲ್ಲಿ 60 ಲಕ್ಷ ಹಣ ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ಹಣ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆ ಡೆಫ್ಯುಟಿ ಇಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಜಕಾರ್ತಿಗೆ ಸೇರಿದ ಎರಡು ನಿವಾಸ ಹಾಗೂ ಕಚೇರಿಯಲ್ಲಿ ಲೊಕಾಯುಕ್ತ ಪೊಲೀಸರ ಶೋಧ ನಡೆಸುತ್ತಿದ್ದಾರೆ.
Tumakuru | ಜಮೀನಿಗೆ ರಸ್ತೆ ಮಾಡಿಕೊಡದ ಅಧಿಕಾರಿಗಳು; ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದ ರೈತ
ತುಮಕೂರು : ತನ್ನ ಜಮೀನಿಗೆ ರಸ್ತೆ ಮಾಡಿಕೊಡಲು ಅರ್ಜಿ ನೀಡಿ ಮನವಿ ಮಾಡಿದ್ದು, ಲೋಕಾಯುಕ್ತರೇ ಸೂಚಿಸಿದರೂ ಕ್ಯಾರೆ ಎನ್ನದ ಕಂದಾಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಅಲೆದಾಡಿಸಿದ್ದಕ್ಕೆ ಅಕ್ರೋಶಗೊಂಡ ರೈತನೊಬ್ಬ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ವರದಿಯಾಗಿದೆ. ಜಕ್ಕೇನಹಳ್ಳಿಯ ರೈತ ಪ್ರಸನ್ನಕುಮಾರ್ ಎಂಬವರು ಮಧುಗಿರಿ ತಾಲೂಕು ಕಚೇರಿಯ ಮುಂದೆ ಮೈಕ್ ಹಿಡಿದು ನನ್ನ ಬಳಿ ಲಂಚ ನೀಡಲು ಹಣವಿಲ್ಲ. ಬದಲಿಗೆ ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ. ಬನ್ನಿ ಬನ್ನಿ ಎಂದು ಘೋಷಣೆ ಕೂಗಿದ್ದಾರೆ. ಜಕ್ಕೇನಹಳ್ಳಿಯ ರೈತ ಪ್ರಸನ್ನ ಕುಮಾರ್ ಸರ್ವೇ ನಂ. 8/1ರ ಜಮೀನಿನಲ್ಲೇ ತರಕಾರಿ ಇತರೆ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಆದರೆ ಆತನ ಜಮೀನಿಗೆ ರಸ್ತೆಯಿಲ್ಲದ ಕಾರಣ ರಸ್ತೆಗಾಗಿ 2 ವರ್ಷದ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದರು. ಆದರೆ ಇತ್ತ ದಾರಿ ಒತ್ತುವರಿ ಬಿಡಿಸಿಕೊಡದೆ ಅತ್ತ ಹೊಸ ದಾರಿ ಮಾಡಿಕೊಡದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ನ್ಯಾಯಾಲಯ ರೈತನ ಜಮೀನಿಗೆ ಕಾನೂನು ಬದ್ಧವಾಗಿ 1 ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡಲು ಸೂಚಿಸಿತ್ತು. ಆದರೆ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಕಾನೂನು ಬದ್ಧ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳ ಈ ನಡೆಗೆ ಬೇಸತ್ತು ತಹಶೀಲ್ದಾರ್ಗೂ ಮನವಿ ಮಾಡಿದಾಗ ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಜಮೀನಿಗೆ ರಸ್ತೆ ಮಾಡಿಕೊಡುವ ಸಂಬಂಧ ಲಂಚ ನೀಡಲು ಹಣವಿಲ್ಲದೆ ತಾನು ಬೆಳೆದ ಮೂಲಂಗಿ ನೀಡಲು ನಾನು ಬಂದಿದ್ದೇನೆ. ಅದೂ ಸಾಲದಿದ್ದರೆ ನನ್ನ ಮನೆ ಬರೆದು ಕೊಡ್ತೀನಿ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ಪ್ರಸನ್ನ ಕುಮಾರ್, ಈ ಬಗ್ಗೆ ಸಿಎಂ ಬಳಿಗೂ ಹೋಗಿದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದ ಜಮೀನಿಗೆ ದಾರಿ ಬಿಡಿಸಿಕೊಡುವಂತೆ ಆದೇಶ ತಂದಿದ್ದೆ ಎಂದಿದ್ದಾರೆ. ʼರೈತನ ಸಮಸ್ಯೆಗೆ ಕಂದಾಯ ಇಲಾಖೆ ಪರಿಹಾರ ನೀಡಲಿದೆ. ನಮ್ಮದು ಎಂದಿಗೂ ಪಾರದರ್ಶಕ ಕೆಲಸಕ್ಕೆ ಬೆಲೆ ನೀಡುವ ಇಲಾಖೆ, ಈ ರೈತನ ಬಗ್ಗೆ ತಿಳಿದಿದ್ದು ನಮ್ಮ ಅಧಿಕಾರಿಗಳ ತಪ್ಪಿದ್ದರೆ ಕಾನೂನು ರೀತಿ ಕ್ರಮಕ್ಕೆ ಮುಂದಾಗುತ್ತೇವೆ ಹಾಗೂ ನಕಾಶೆ ರಸ್ತೆಯಿದ್ದರೆ ವಾರದೊಳಗೆ ರಸ್ತೆ ನಿರ್ಮಿಸುವ ಕೆಲಸ ಮಾಡಿಕೊಡುತ್ತೇವೆʼ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದ್ದಾರೆ.
ರಾಜ್ಯದ ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳ ಸಂರಕ್ಷಿಸಲು 15 ಕೋಟಿ ರೂ. ಯೋಜನೆಗೆ ಅನುಮೋದನೆ
ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ-2026ಕ್ಕೆ ಅನುಮೋದನೆ
ಏಶ್ಯನ್ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್ಶಿಪ್| ಕ್ವಾರ್ಟರ್ ಫೈನಲ್ ತಲುಪಿದ ಭಾರತ
ಹೊಸದಿಲ್ಲಿ, ಫೆ.5: ಏಶ್ಯನ್ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್ಶಿಪ್ನಲ್ಲಿ ‘ವೈ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಯುವ ಆಟಗಾರ್ತಿ ತನ್ವಿ ಶರ್ಮಾ ಗೆಲುವು ದಾಖಲಿಸಿದ್ದರೂ ಭಾರತ ತಂಡವು ಥಾಯ್ಲೆಂಡ್ ವಿರುದ್ಧ 2-3 ಅಂತರದಿಂದ ಸೋಲನುಭವಿಸಿತ್ತು. ಆದರೆ ಕ್ವಾರ್ಟರ್ ಫೈನಲ್ಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಭಾರತದ ಮಹಿಳಾ ತಂಡದ ಕ್ವಾರ್ಟರ್ ಫೈನಲ್ ಎದುರಾಳಿಯನ್ನು ಈ ತನಕ ಘೋಷಿಸಲಾಗಿಲ್ಲ. ಕ್ವಾರ್ಟರ್ ಫೈನಲ್ ಪಂದ್ಯವು ಫೆ.6ರಿಂದ ಆರಂಭವಾಗಲಿದೆ. ಭಾರತ ತಂಡವು ಬುಧವಾರ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಮೈನ್ಮಾರ್ ತಂಡವನ್ನು 5-0 ಅಂತರದಿಂದ ಮಣಿಸಿತ್ತು. ಐದು ಪಂದ್ಯಗಳ ನಂತರ ‘ವೈ ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದೆ. 2024ರಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತೀಯ ತಂಡದ ಭಾಗವಾಗಿದ್ದ ವಿಶ್ವದ ನಂ.42ನೇ ಆಟಗಾರ್ತಿ ತನ್ವಿ, ಒಂದು ಗಂಟೆ ಹಾಗೂ ಮೂರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂ.16ನೇ ಆಟಗಾರ್ತಿ ಬುಸನನ್ರನ್ನು 21-14, 17-21, 21-18 ಗೇಮ್ಗಳ ಅಂತರದಿಂದ ಮಣಿಸಿದರು. ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಡಬಲ್ಸ್ ವಿಭಾಗದಲ್ಲಿ ಗಾಯತ್ರಿ ಗೋಪಿಚಂದ್ ಹಾಗೂ ಟ್ರೀಸಾ ಜೋಲಿ ವಿಶ್ವದ ನಂ.65ನೇ ಆಟಗಾರ್ತಿಯರಾದ ಟಿಡಾಪ್ರೊನ್ ಕ್ಲೀಬಿಸನ್ ಹಾಗೂ ನಟ್ಟಾಮೊನ್ ಲೈಸುಯಾನ್ ಅವರನ್ನು 21-14, 20-22, 21-11 ಅಂತರದಿಂದ ಮಣಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ರಕ್ಷಿತಾ ರಾಮರಾಜ್ ಅವರು 19ರ ಹರೆಯದ ಪಿಚ್ಮೋನ್ ವಿರುದ್ಧ 19-21, 17-21 ಅಂತರದಿಂದ ಸೋಲನುಭವಿಸಿ ಭಾರತದ ಮುನ್ನಡೆಯನ್ನು ತಗ್ಗಿಸಿದರು. ಎರಡನೇ ಡಬಲ್ಸ್ ಪಂದ್ಯದಲ್ಲಿ ತನಿಷಾ ಕ್ರಾಸ್ಟೊ ಹಾಗೂ ಶ್ರುತಿ ಮಿಶ್ರಾ ಅವರು ಹಥೈತಿಪ್ ಮಿಜಾದ್ ಹಗೂ ನಪಾಪಕೊರ್ನ್ ವಿರುದ್ದ 21-19, 14-21, 15-21 ಅಂತರದಿಂದ ಸೋಲನುಭವಿಸಿದರು. ಹೀಗಾಗಿ ಭಾರತವು 2-3 ಅಂತರದಿಂದ ಸೋಲುಂಡಿತು.
Belagavi | ಪತ್ರಕರ್ತರ ಸೋಗಿನಲ್ಲಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್ಮೇಲ್; ಮೂವರ ಬಂಧನ
ಬೆಳಗಾವಿ : ಸರಕಾರಿ ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳ ವೀಡಿಯೊ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪತ್ರಕರ್ತರ ಸೋಗಿನಲ್ಲಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್ (32), ಅಬ್ದುಲ್ ರಶೀದ್ ಮಕಾನದಾರ (51) ಮತ್ತು ಮುಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಆರೋಪಿಗಳು ಮಹಿಳಾ ಅಧಿಕಾರಿ ಮನೆಯ ಕೊಠಡಿಯಲ್ಲಿ ರಹಸ್ಯ (ಹಿಡನ್) ಕ್ಯಾಮರಾ ಅಳವಡಿಸಿ ಖಾಸಗಿ ವೀಡಿಯೊ ಗಳನ್ನು ದಾಖಲಿಸಿಕೊಂಡು, ಆರಂಭದಲ್ಲಿ ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದು, ನಂತರ 50 ಲಕ್ಷ ರೂ. ನೀಡುವಂತೆ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮಹಿಳಾ ಅಧಿಕಾರಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಸಿಪಿಐ ಬಿ.ಆರ್. ಗಡ್ಡೇ ಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಸರ್ಫರಾಝ್ ಖಾನ್: ಕರ್ನಾಟಕ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಅಲಭ್ಯ?
ಮುಂಬೈ, ಫೆ.5: ಫಾರ್ಮ್ನಲ್ಲಿರುವ ಬ್ಯಾಟರ್ ಸರ್ಫರಾಝ್ ಖಾನ್ ವೈರಲ್ ಜ್ವರದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಕರ್ನಾಟಕ ತಂಡದ ವಿರುದ್ಧ ಮುಂಬೈನ ಎಂಸಿಎ ಮೈದಾನದಲ್ಲಿ ಶುಕ್ರವಾರ ಆರಂಭವಾಗಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ‘‘ಸರ್ಫರಾಝ್ ವೈರಲ್ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಲ್ಲಿ ವಿರುದ್ಧ ಮುಂಬೈ ಆಡಿರುವ ಈ ಹಿಂದಿನ ಪಂದ್ಯದಲ್ಲೂ ಮೈದಾನಕ್ಕೆ ಇಳಿದಿರಲಿಲ್ಲ. ಕರ್ನಾಟಕ ಪಂದ್ಯಕ್ಕೆ ಸರಿಯಾಗಿ ಸರ್ಫರಾಝ್ ಚೇತರಿಸಿಕೊಳ್ಳಲಿದ್ದಾರೆಂಬ ಬಗ್ಗೆ ಸ್ಪಷ್ಟತೆ ಇಲ್ಲ’’ ಎಂದು ಮೂಲಗಳು ತಿಳಿಸಿವೆ. ಲೆಜೆಂಡರಿ ಸಚಿನ್ ತೆಂಡುಲ್ಕರ್ ಬುಧವಾರ ಮುಂಬೈ ತಂಡದೊಂದಿಗೆ ವಿಶೇಷ ಸಂವಹನ ಕಾರ್ಯಕ್ರಮ ಏರ್ಪಡಿಸಿದ್ದಾಗ ಸರ್ಫರಾಝ್ ಹಾಜರಿದ್ದರು. ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಸರ್ಫೆರಾಝ್ ದಿಲ್ಲಿ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 24 ಎಸೆತಗಳಲ್ಲಿ 27 ರನ್ ಗಳಿಸಿ ಔಟಾಗಿದ್ದರು. ಸರ್ಫರಾಝ್ ಅನುಪಸ್ಥಿತಿಯು ಮುಂಬೈ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಲೀಗ್ ಹಂತದಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 219 ಎಸೆತಗಳಲ್ಲಿ 227 ರನ್ ಗಳಿಸಿದ್ದರು. ಈ ವೇಳೆ 28ರ ಹರೆಯದ ಸರ್ಫರಾಝ್ ಅವರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 5,000 ರನ್ ಪೂರೈಸಿದ್ದರು.
ಶನಿವಾರದಿಂದ ಟಿ-20 ವಿಶ್ವಕಪ್ ಆರಂಭ: ಹೋರಾಟಕ್ಕೆ 20 ತಂಡಗಳು ಸಜ್ಜು
ಹೊಸದಿಲ್ಲಿ, ಫೆ.5: ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಪುರುಷರ ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಮೆಂಟ್ ಶನಿವಾರದಿಂದ ಆರಂಭವಾಗಲಿದೆ. ಹತ್ತನೇ ಆವೃತ್ತಿಯ ಈ ಪಂದ್ಯಾವಳಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಒಟ್ಟು 55 ಪಂದ್ಯಗಳು ನಡೆಯಲಿವೆ. ಮಾರ್ಚ್ 8ರಂದು ಅಹ್ಮದಾಬಾದ್ನಲ್ಲಿ ಫೈನಲ್ ಪಂದ್ಯ ನಡೆಯುವ ಮೂಲಕ ಪಂದ್ಯಾವಳಿಗೆ ತೆರೆ ಬೀಳಲಿದೆ. ಭಾರತ ನೆಲದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದ್ದ ಬಾಂಗ್ಲಾದೇಶವನ್ನು ಪಂದ್ಯಾವಳಿಯಿಂದ ಹೊರ ಹಾಕಿರುವ ಐಸಿಸಿ, ಸ್ಕಾಟ್ಲ್ಯಾಂಡ್ ತಂಡಕ್ಕೆ ಅವಕಾಶ ನೀಡಿದೆ. ಕೊಲಂಬೊದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸುವ ಮೂಲಕ ಕಿರು ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. ವಿಶ್ವಕಪ್ನ ಗ್ರೂಪ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸದೇ ಇರುವ ಪಾಕಿಸ್ತಾನ ತಂಡದ ನಿರ್ಧಾರವು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಾತ್ರವಲ್ಲ ಇದು ವಿವಾದದ ಕಿಡಿಯನ್ನು ಹೆಚ್ಚಿಸಿದೆ. ಈ ಪಂದ್ಯವನ್ನು ಹೊರತುಪಡಿಸಿ ಇತರ ಎಲ್ಲ ಪಂದ್ಯಗಳು ನಿಗದಿಯಂತೆ ನಡೆಯುವುದು ಖಚಿತವಾಗಿದೆ. ತಂಡಗಳು ಈಗಾಗಲೇ ಅಭ್ಯಾಸ ಪಂದ್ಯಗಳನ್ನಾಡಲು ಆರಂಭಿಸಿದ್ದು, ಟಿ-20 ವಿಶ್ವಕಪ್ಗಾಗಿ ಪೂರ್ವ ತಯಾರಿ ನಡೆಸುತ್ತಿವೆ. ಪಂದ್ಯಾವಳಿಯ ಮಾದರಿ: 2026ರ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯ ಮಾದರಿಯು 2024ರ ಆವೃತ್ತಿಯನ್ನೇ ಹೋಲುತ್ತಿದೆ. ಈ ಬಾರಿಯೂ 20 ತಂಡಗಳು ಭಾಗವಹಿಸಲಿವೆ. 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತೀ ಗುಂಪಿನಲ್ಲಿ ಐದು ತಂಡಗಳಿವೆ. ಆಯಾ ತಂಡವು ತನ್ನ ಗುಂಪಿನ ಇತರ ತಂಡಗಳೊಂದಿಗೆ ಒಂದು ಪಂದ್ಯವನ್ನು ಆಡಲಿದೆ. ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-8 ಹಂತಕ್ಕೇರಲಿವೆೆ. ಸೂಪರ್-8ಕ್ಕಾಗಿ ಐಸಿಸಿ ರ್ಯಾಂಕಿಂಗ್ಗಳ ಪ್ರಕಾರ ತಂಡಗಳನ್ನು ವರ್ಗೀಕರಿಸಲಾಗಿದೆ. ಗ್ರೂಪ್ 1ರಲ್ಲಿ ಭಾರತ(ಎಕ್ಸ್1), ಆಸ್ಟ್ರೇಲಿಯ(ಎಕ್ಸ್ 2), ವೆಸ್ಟ್ಇಂಡೀಸ್(ಎಕ್ಸ್3) ಹಾಗೂ ದಕ್ಷಿಣ ಆಫ್ರಿಕಾ(ಎಕ್ಸ್ 4) ತಂಡಗಳು ಇರಲಿವೆ. ಗ್ರೂಪ್ 2ರಲ್ಲಿ ಇಂಗ್ಲೆಂಡ್(ವೈ1), ನ್ಯೂಝಿಲ್ಯಾಂಡ್(ವೈ2), ಪಾಕಿಸ್ತಾನ(ವೈ3) ಹಾಗೂ ಶ್ರೀಲಂಕಾ(ವೈ4) ತಂಡಗಳು ಭಾಗವಹಿಸುತ್ತವೆ. ಶ್ರೇಯಾಂಕ ಹೊಂದಿರುವ ತಂಡ ಮೊದಲ ಸುತ್ತಿನಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದರೆ, ಸೂಪರ್-8 ಹಂತದಲ್ಲಿ ಅರ್ಹತಾ ತಂಡವು ಅವಕಾಶ ಪಡೆಯಲಿದೆ. ಸೂಪರ್-8ರಿಂದ ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್ ಹಾಗೂ ಫೈನಲ್ ಅನ್ನು ಒಳಗೊಂಡಿರುವ ನಾಕೌಟ್ ಹಂತಕ್ಕೆ ಮುನ್ನಡೆಯಲಿವೆ. 2026ರ ಟಿ-20 ವಿಶ್ವಕಪ್ ಗುಂಪುಗಳು ಗ್ರೂಪ್ ಎ: ಭಾರತ(ಎಕ್ಸ್1), ನಮೀಬಿಯಾ, ನೆದರ್ಲ್ಯಾಂಡ್ಸ್, ಪಾಕಿಸ್ತಾನ(ವೈ3), ಅಮೆರಿಕ ಗ್ರೂಪ್ ಬಿ: ಆಸ್ಟ್ರೇಲಿಯ(ಎಕ್ಸ್2), ಐರ್ಲ್ಯಾಂಡ್, ಒಮಾನ್, ಶ್ರೀಲಂಕಾ(ವೈ4), ಝಿಂಬಾಬ್ವೆ ಗ್ರೂಪ್ ಸಿ: ಇಂಗ್ಲೆಂಡ್(ವೈ1), ಇಟಲಿ, ನೇಪಾಳ, ಸ್ಕಾಟ್ಲ್ಯಾಂಡ್, ವೆಸ್ಟ್ಇಂಡೀಸ್(ಎಕ್ಸ್3) ಗ್ರೂಪ್ ಡಿ: ಅಫ್ಘಾನಿಸ್ತಾನ, ಕೆನಡಾ, ನ್ಯೂಝಿಲ್ಯಾಂಡ್(ವೈ2), ದಕ್ಷಿಣ ಆಫ್ರಿಕಾ(ಎಕ್ಸ್4),ಯುಎಇ ಪ್ರತೀ ತಂಡಗಳಿಗೆ ಪಂದ್ಯಗಳು ಪ್ರತೀ ತಂಡಗಳು ಕನಿಷ್ಠ ನಾಲ್ಕು ಪಂದ್ಯಗಳನ್ನು ಆಡುವುದು ಖಚಿತ. ಸೂಪರ್-8ರಲ್ಲಿ ನಿರ್ಗಮಿಸುವ ತಂಡಗಳು ಏಳು ಪಂದ್ಯಗಳನ್ನು ಆಡುತ್ತವೆ. ಸೆಮಿ ಫೈನಲ್ಗೆ ತಲುಪುವ ತಂಡಗಳು 8 ಪಂದ್ಯಗಳನ್ನು ಆಡುತ್ತವೆ. ಫೈನಲ್ ಆಡುವ ತಂಡ 9 ಪಂದ್ಯಗಳನ್ನಾಡುತ್ತದೆ. ಹಾಲಿ ಚಾಂಪಿಯನ್ ಭಾರತ ತಂಡವು 2024ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಎಲ್ಲ 9 ಪಂದ್ಯಗಳನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಅಜೇಯ ದಾಖಲೆಯೊಂದಿಗೆ ಟಿ-20 ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ತಂಡ ಎನಿಸಿಕೊಂಡಿತ್ತು. ಭಾರತಕ್ಕೆ ಅಮೆರಿಕ ಮೊದಲ ಎದುರಾಳಿ ಹಾಲಿ ಚಾಂಪಿಯನ್ ಹಾಗೂ ಸಹ ಆತಿಥ್ಯದೇಶವಾದ ಭಾರತ ತಂಡವು ಮುಂಬೈನಲ್ಲಿ ಅಮೆರಿಕ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಸೂರ್ಯಕುಮಾರ ಯಾದವ್ ನಾಯಕತ್ವದ ಭಾರತ ತಂಡವು ತವರಿನಲ್ಲಿ ಅಭಿಮಾನಿಗಳ ಭಾರೀ ನಿರೀಕ್ಷೆಗಳ ಭಾರ ಹೊತ್ತು ಆಡಬೇಕಾಗಿದೆ. ಭಾರತವು ‘ಎ’ ಗುಂಪಿನಿಂದ ಮುಂದಿನ ಸುತ್ತಿಗೇರುವ ನೆಚ್ಚಿನ ತಂಡವಾಗಿದ್ದರೂ ಹಿಂದಿನ ಆವೃತ್ತಿಯಲ್ಲಿ ಪಾಕಿಸ್ತಾನ ತಂಡವನ್ನು ಸದೆಬಡಿದಿದ್ದ ಅಮೆರಿಕ ತಂಡವನ್ನು ಕಡೆಗಣಿಸುವಂತಿಲ್ಲ. ಭಾರತ ತಂಡವು ದಾಖಲೆಯ ಸತತ ಎರಡನೇ ಬಾರಿ ಟಿ-20 ವಿಶ್ವಕಪ್ ಎತ್ತದಂತೆ ತಡೆಯಲು ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳು ಸಜ್ಜಾಗಿವೆ. ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೇಝಲ್ವುಡ್ ಗಾಯಗೊಂಡಿರುವ ಕಾರಣ ಆಸ್ಟ್ರೇಲಿಯದ ಪೂರ್ವ ತಯಾರಿಗೆ ತೊಡಕಾಗಿದೆ. ಈ ಎಲ್ಲ ಸಮಸ್ಯೆಯ ನಡುವೆಯೂ ‘ಬಿ’ ಗುಂಪಿನಲ್ಲಿ ಮಿಚೆಲ್ ಮಾಷ್ ತಂಡವು ಆತ್ಮವಿಶ್ವಾಸದಲ್ಲಿದೆ. ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ತಂಡವು ಶ್ರೀಲಂಕಾ ವಿರುದ್ಧ ಟಿ-20 ಸರಣಿಯನ್ನು ಗೆದ್ದ ಹುಮ್ಮಸ್ಸಿನೊಂದಿಗೆ ವಿಶ್ವಕಪ್ ಪ್ರವೇಶಿಸಿದೆ. ಎರಡು ಬಾರಿಯ ಚಾಂಪಿಯನ್ ವೆಸ್ಟ್ಇಂಡೀಸ್ ತಂಡ ನೇಪಾಳ, ಇಟಲಿ ಹಾಗೂ ಸ್ಕಾಟ್ಲ್ಯಾಂಡ್ನೊಂದಿಗೆ ‘ಸಿ’ ಗುಂಪಿನಲ್ಲಿದೆ. ಬಾಂಗ್ಲಾದೇಶ ತಂಡ ಹಿಂದೆ ಸರಿದ ಕಾರಣ ಸ್ಕಾಟ್ಲ್ಯಾಂಡ್ ತಂಡ ಕೊನೆಯ ಕ್ಷಣದಲ್ಲಿ ವಿಶ್ವಕಪ್ ಆಡುವ ಅವಕಾಶ ಪಡೆದಿದೆ. ಇಟಲಿ ಇದೇ ಮೊದಲ ಬಾರಿ ವಿಶ್ವಕಪ್ನಲ್ಲಿ ಆಡುತ್ತಿದೆ. 2024ರ ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ ತಂಡವು ‘ಡಿ’ ಗುಂಪಿನಲ್ಲಿ ನ್ಯೂಝಿಲ್ಯಾಂಡ್ ಹಾಗೂ ಅಫ್ಘಾನಿಸ್ತಾನ ತಂಡದಿಂದ ಕಠಿಣ ಸವಾಲು ಎದುರಿಸಲಿದೆ. ಭಾರತದೊಂದಿಗೆ ಆಡದೇ ಇರುವ ಕುರಿತು ಪಾಕಿಸ್ತಾನ ತಂಡದ ನಿಲುವು ಅದರ ಅರ್ಹತೆಯ ವಿಶ್ವಾಸಕ್ಕೆ ಧಕ್ಕೆಯಾಗಲಿದೆ. ಪಂದ್ಯಾವಳಿಯ ಪ್ರಸಾರಕರ ಆದಾಯಗಳ ಮೇಲೂ ಪರಿಣಾಮ ಬೀರಲಿದೆ. ಪಂದ್ಯಾವಳಿ ಆರಂಭವಾದ ನಂತರ ತಂಡಗಳು ರಾಜಕೀಯದಿಂದ ತಮ್ಮ ಪ್ರದರ್ಶನದತ್ತ ಗಮನ ಹರಿಸಲಿವೆ. ಮಾರ್ಚ್ 8ರಂದು ಫೈನಲ್ ಪಂದ್ಯ ಅಹ್ಮದಾಬಾದ್ ಅಥವಾ ಕೊಲಂಬೊದಲ್ಲಿ ನಡೆಯಲಿದೆಯೇ? ಎಂಬುದು ಪಾಕಿಸ್ತಾನ ತಂಡ ಮುಂದಿನ ಸುತ್ತಿಗೇರುವುದನ್ನು ಅವಲಂಬಿಸಿದೆ.
Shivamogga | ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರ ದಾಳಿ; ಓರ್ವನ ಬಂಧನ
ಶಿವಮೊಗ್ಗ : ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ, ಮಾಲುಗಳ ಸಮೇತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರ ಪಟ್ಟಣ್ಣದ ಭದ್ರಾಪುರ ಗ್ರಾಮದ 3ನೇ ಕ್ರಾಸ್ ನಿವಾಸಿ ಲಕ್ಷ್ಮಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಈತ ತನ್ನ ಮನೆ ಪಕ್ಕದಲ್ಲಿರುವ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರು ಮಾಡಿಕೊಡುತ್ತಿದ್ದ, ಈ ಸಂಬಂಧ ಫೆ.4 ರಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ಈ ವೇಳೆ ಅಕ್ರಮವಾಗಿ ತಯಾರು ಮಾಡುತ್ತಿದ್ದ ಬಂದೂಕುಗಳು ಮತ್ತು ಅವುಗಳಿಗೆ ಬೇಕಿರುವ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಆರೋಪಿಯ ಮನೆಯಲ್ಲಿ 7 ಸಿಂಗಲ್ ಬ್ಯಾರಲ್ ನಾಡ ಬಂದೂಕು ಮತ್ತು ಅವುಗಳ ತಯಾರಿಕೆಗೆ ಸಂಬಂಧಿಸಿದ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಆರೋಪಿಯನ್ನು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಶಿಕಾರಿಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೇಶವ ಕೆ.ಇ, ಶಿಕಾರಿಪುರ ನಗರ ವೃತ್ತದ ಸಿಪಿಐ ಸಂತೋಷ್ ಎಂ ಪಾಟೀಲ್, ಠಾಣೆಯ ಪಿ.ಎಸ್.ಐ ಶರತ್ ಎಚ್ ಹಾಗೂ ಸಿಬ್ಬಂದಿಗಳಾದ ಕೊಟ್ರೇಶಪ್ಪ, ಪ್ರದೀಪ್ ಕೆ, ನಾಗರಾಜ, ರವಿನಾಯ್ಕ ಮತ್ತು ರವಿಕುಮಾರ್ ಪಾಲ್ಗೊಂಡಿದ್ದರು.
ನೇಪಾಳದಲ್ಲಿ ಕುಳಿತು ಭಾರತೀಯರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ 11 ಸೈಬರ್ ಕಳ್ಳರು ಮಂಗಳೂರು ಪೊಲೀಸರ ಬಲೆಗೆ
Mangalore CEN Police Operation- ಮಂಗಳೂರು ಸೈಬರ್ ಠಾಣೆ ಪೊಲೀಸರು ಇದೀಗ ಬಹುದೊಡ್ಡ ಆನ್ ಲೈನ್ ಜಾಲವೊಂದನ್ನು ಬೇಟೆಯಾಡಿದ್ದಾರೆ. ನೇಪಾಳದಲ್ಲಿಯೇ ಕುಳಿತು ಭಾರತೀಯರಿಗೆ ನೂರಾರು ಕೋಟಿ ಆನ್ ಲೈನ್ ವಂಚನೆ ಮಾಡುತ್ತಿದ್ದ 11ಮಂದಿ ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ. ಈ ಜಾಲದಲ್ಲಿ ಒಟ್ಟು 16 ವಂಚಕರಿದ್ದು ಐವರು ತಪ್ಪಿಸಿಕೊಂಡಿದ್ದಾರೆ. ಇತ್ತೀಚೆಗೆ ಮಂಗಳೂರು ಸೆನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ತನಿಖೆಯ ಜಾಡು ಹಿಡಿದು ಹೋದ ಪೊಲೀಸರಿಗೆ ಈ ಮಹಾ ವಂಚನಾ ಜಾಲ ಪತ್ತೆಯಾಗಿದೆ.
ನ್ಯೂಯಾರ್ಕ್,ಫೆ.5:ಭಾರತದಿಂದ ಕಾರ್ಯಾಚರಿಸುತ್ತಿರುವ ಅಂತರ್ರಾಷ್ಟ್ರೀಯ ಕ್ರಿಮಿನಲ್ ಗುಂಪುಗಳ ಜೊತೆ ನಂಟು ಹೊಂದಿದ್ದು, ಅಕ್ರಮವಾಗಿ ಆನ್ಲೈನ್ ಔಷಧ ವ್ಯಾಪಾರ ದಂಧೆಯಲ್ಲಿ ತೊಡಗಿದ್ದ 200ಕ್ಕೂ ಅಧಿಕ ಜಾಲತಾಣಗಳನ್ನು ಅಮೆರಿಕದ ಫೆಡರಲ್ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಈ ಅಕ್ರಮ ಆನ್ಲೈನ್ ಫಾರ್ಮಸಿಗಳು ಕನಿಷ್ಠ ಆರು ಮಾರಣಾಂತಿಕ ಓವರ್ಡೋಸ್ ಪ್ರಕರಣಗಳಿಗೆ ಕಾರಣವಾಗಿವೆಯೆಂದು ವರದಿ ತಿಳಿಸಿದೆ. ಅಮೆರಿಕದ ಔಷಧ ಇಲಾಖೆ (ಡಿಇಎ)ಯು ಕ್ಷೇತ್ರೀಯ ಕಚೇರಿಗಳು ದೇಶಾದ್ಯಂತ ಕಾರ್ಯಾಚರಣೆ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸಿವೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. ಕಾನೂನುಬಾಹಿರವಾಗಿ ಔಷಧ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿರುವ ಕ್ರಿಮಿನಲ್ ಸಂಘಟನೆಗಳನ್ನು ಗುರುತಿಸಲು, ತನಿಖೆ ನಡೆಸಲು ಹಾಗೂ ಅವುಗಳನ್ನು ನಿಷ್ಕ್ರಿಯಗೊಳಿಸಲು ತಾನು ಭಾರತ ಸರಕಾರದ ಕಾನೂನು ಅನುಷ್ಠಾನ ಸಂಸ್ಥೆಗಳ ಜೊತೆ ಸಕ್ರಿಯವಾಗಿ ಕಾರ್ಯಾಚರಿಸುವುದಾಗಿ ಡಿಇಎ ಹೇಳಿಕೆ ತಿಳಿಸಿದೆ. ಅಕ್ರಮ ಆನ್ಲೈನ್ ಫಾರ್ಮಸಿಗಳು ಸಾಮಾನ್ಯವಾಗಿ ಅಮೆರಿಕ ಮೂಲದ ವೆಬ್ಸೈಟ್ ವಿಳಾಸಗಳನ್ನು ಬಳಸಿಕೊಳ್ಳುತ್ತವೆ ಹಾಗೂ ತಾವು ಸಕ್ರಮವಾದ ಔಷಧಿ ವ್ಯಾಪಾರಿಗಳೆಂದು ತೋರಿಸಿಕೊಳ್ಳಲು ವೃತ್ತಿಪರವಾದ ಹಾಗೂ ಆಕರ್ಷಕವಾದ ವಿನ್ಯಾಸವನ್ನು ಹೊಂದಿರುತ್ತವೆ ಎಂದು ಡಿಇಎ ಹೇಳಿಕೆ ತಿಳಿಸಿದೆ.
ಗ್ರಾಮೀಣ ಅಂಚೆ ಸೇವಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
ಮಂಗಳೂರು, ಫೆ.5:ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆಪಾಲಕ ಮತ್ತು ಢಾಕ್ ಸೇವಕ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ನೇಮಕಾತಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಒಂದು ಬಾರಿ ನೋಂದಣಿ ದಿನಾಂಕ 2026 ಜ.31ರಿಂದ ಫೆ.14 (ಸಂಜೆ 5 ಗಂಟೆ ವರೆಗೆ), ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ದಿನಾಂಕ ಫೆ.2ರಿಂದ ಫೆ. 16 (5: 00 ಗಂಟೆ ವರೆಗೆ) ಆಗಿರುತ್ತದೆ. ಅರ್ಜಿಗಳನ್ನು ಆನ್ಲೈನ್ ನಲ್ಲಿ https://indiapost.gov.in/gdsonlineengagement ಮೂಲಕ ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಗ್ರಾಮೀಣ ಅಂಚೆ ಸೇವಕರ ನೇಮಕಾತಿಯು , ಅಖಿಲ ಭಾರತ ಮಟ್ಟದಲ್ಲಿ ಬೃಹತ್ ಸಂಖ್ಯೆಯ ಖಾಲಿ ಹುದ್ದೆಗಳೊಂದಿಗೆ ನಡೆಯುತ್ತಿದೆ.. ಮಂಗಳೂರು ವಿಭಾಗದಲ್ಲಿ ಒಟ್ಟು 22 ಹುದ್ದೆಗಳು ಖಾಲಿ ಇದ್ದು ಆನ್ ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ತುಂಬಲ್ಪಡುತ್ತದೆ. ಗ್ರಾಮೀಣ ಅಂಚೆ ಸೇವಕ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಮಾಹಿತಿ ಕೆಳಗಿನಂತಿದೆ. ಶಾಖಾ ಅಂಚೆ ಪಾಲಕ (ಆ) : ಗ್ರಾಮಾಂತರ ಪ್ರದೇಶದಲ್ಲಿ ಮತ್ತು ಕೆಲವು ಪಟ್ಟಣ ಪ್ರದೇಶದಲ್ಲಿ ಶಾಖಾ ಅಂಚೆ ಕಚೇರಿಗಳಿದ್ದು ಶಾಖಾ ಅಂಚೆ ಪಾಲಕರು ಅದರ ಮುಖ್ಯಸ್ಥರಾಗಿರುತ್ತಾರೆ. ಶಾಖಾ ಅಂಚೆ ಪಾಲಕರು ಅಂಚೆ ಸೇವೆಗಳಿಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯಿಂದ ನೀಡಲ್ಪಡುವ ಯೋಜನೆಗಳು ,ಗ್ರಾಮೀಣ ಅಂಚೆ ಜೀವ ವಿಮೆ, ಅಂಚೆ ಜೀವ ವಿಮೆ . ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಸ್ಪೀಡ್ ಪೋಸ್ಟ್ ಕಳುಹಿಸುವುದು, ಪತ್ರಗಳ ರವಾನೆ ಹೀಗೆ ವಿವಿಧ ಅಂಚೆ ಸೇವೆಗಳನ್ನು 4 ಅಥವ 5 ಗಂಟೆಗಳ ವರೆಗೆ ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸಹಾಯಕ ಅಂಚೆಪಾಲಕ : ಅವರ ಮುಖ್ಯವಾದ ಉದ್ಯೋಗ ಬಟವಾಡೆಗೆ ಸಂಬಂಧಿಸಿದ್ದಾಗಿರುತ್ತದೆ. ಸಾಮಾನ್ಯಅಂಚೆ ಪತ್ರಗಳು/ ಸ್ಪೀಡ್ ಪೋಸ್ಟ್ ಗಳು, ಮನಿ ಆರ್ಡರ್ ಗಳನ್ನು ಮನೆ ಮನೆಗೆ ಬಟವಾಡೆ ಮಾಡುವ ಜವಾಬ್ದಾರಿ ಇವರದ್ದಾಗಿರುತ್ತದೆ. ಜೊತೆಯಲ್ಲಿ ಹೊಸ ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿಗಳನ್ನು ಮಾಡಿಸು ವುದು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಮನೆ ಮನೆಗಳಿಗೆ ಬ್ಯಾಂಕಿಗ್ ಸೌಲಭ್ಯ ಹೀಗೆ ಹಲವಾರು ಜವಾಬ್ದಾರಿಗಳು ಇವರದ್ದಾಗಿರುತ್ತದೆ. ಢಾಕ್ ಸೇವಕ್ : ಈ ಹುದ್ದೆಯಲ್ಲಿ ಇವರು ಉಪ ಅಂಚೆ ಕಚೇರಿಗಳಲ್ಲಿ ಪ್ಯಾಕರ್ ಹುದ್ದೆಗಳನ್ನು ಅಥವಾ ಬಟವಾಡೆಗೆ ಸಂಬಧಿಸಿದ ಹುದ್ದೆಗಳನ್ನು ನಿರ್ವಹಿಸಬೇಕಾಗುತ್ತದೆ. ಮತ್ತು ಆಯಾ ಅಂಚೆ ಕಚೇರಿಗಳಿಗಿರುವ ಉಪ ಅಂಚೆ ಪಾಲಕರಿಗೆ ಕಚೇರಿಯ ನಿರ್ವಹಣೆಯಲ್ಲಿ ಹಾಗೂ ವ್ಯವಹಾರ ಅಭಿವೃದ್ಧಿಯಲ್ಲಿ ಸಹಕರಿಸುವ ಕೆಲಸವನ್ನು ಡಾಕ್ ಸೇವಕರು ಹೊಂದಿರುತ್ತಾರೆ. ಭತ್ಯೆಗಳು : ಶಾಖಾ ಅಂಚೆ ಪಾಲಕರಲ್ಲಿ 4 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಮತ್ತು 5 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಎಂಬ ಎರಡು ವಿಧಗಳಿದ್ದು ನಾಲ್ಕು ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 12000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಹಾಗೂ ಇತರೆ ವೇತನಗಳು . ಮತ್ತು 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 14500/- ಭತ್ಯೆ ಮೂಲ ವೇತನ ಹಾಗೂ ತುಟ್ಟಿ ಭತ್ಯೆ,ಇತರೆ ವೇತನಗಳು ಲಭಿಸುತ್ತದೆ. ಉಪ ಶಾಖಾ ಅಂಚೆ ಪಾಲಕರು ಹಾಗೂ ಢಾಕ್ ಸೇವಕ್ ಹುದ್ದೆಗಳಲ್ಲಿ 4 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 10000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಹಾಗೂ ಇತರೆ ವೇತನಗಳು . ಮತ್ತು 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 12000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಲಭಿಸುತ್ತದೆ. 01-07-2018 ರ ನಂತರ ಅಯ್ಕೆಗೊಂಡ ಅಭ್ಯರ್ಥಿಗಳಿಗೆ ಆರಂಭಿಕ ಹಂತದಲ್ಲಿ ಆಯಾ ವರ್ಗಕ್ಕೆ ಸಂಬಂಧಿಸಿದ 4 ಗಂಟೆ ಕೆಲಸದ ಅವಧಿಗೆ ನಿಗದಿಯಾದ ವೇತನ ಶ್ರೇಣಿಯೇ ಅನ್ವಯವಾಗುವುದು. ವಯೋಮಿತಿ: ಈ ಹುದ್ದೆಗೆ ಅರ್ಜಿ ಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಕೊನೆಯದಿನಾಂಕಕ್ಕೆ ಅನ್ವಯವಾಗುವ ಹಾಗೆ 18 ರಿಂದ 40 ವರ್ಷದ ವಯೋಮಿತಿಯೊಳಗಿರಬೇಕು. ಅನುಸೂಚಿತ ಜಾತಿ ಮತ್ತು ಇತರ ವರ್ಗಗಳಿಗೆ 5 ವರ್ಷಗಳ ವಿನಾಯಿತಿ, ಒ.ಬಿ.ಸಿ ಅಂದರೆ ಇತರ ಹಿಂದುಳಿದ ವರ್ಗದವರಿಗೆ 3 ವರ್ಷದ ವಿನಾಯಿತಿ ಅನ್ವಯಿಸುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗ ಅಂದರೆ ಉಖ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುವುದಿಲ್ಲ. ಇನ್ನು ವಿಕಲ ಚೇತನರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸಂಬಂಧ ಪಟ್ಟ ವಿಕಲಚೇತನರಿಗೆ ಒಟ್ಟು 13 ವರ್ಷಗಳು ಹಾಗೂ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳಿಗೆ ಸಂಬಂಧಪಟ್ಟ ವಿಕಲಚೇತನರಿಗೆ ವಯೋಮಿತಿಯಲ್ಲಿ15 ವರ್ಷಗಳ ಸಡಿಲಿಕೆ ಇರುತ್ತದೆ. ಶೈಕ್ಷಣಿಕ ಆರ್ಹತೆ: ಎಲ್ಲಾ ಹುದ್ದೆಗಳಿಗೆ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವುದು ಕಡ್ಡಾಯ. ಗಣಿತ ಮತ್ತು ಇಂಗ್ಲೀಷ್ನಲ್ಲಿ ಕನಿಷ್ಠ ತೇರ್ಗಡೆ ಅಂಕಗಳನ್ನು ಕೂಡ ಹೊಂದಿರಬೇಕು. ಮಾನ್ಯತೆ ಹೊಂದಿರುವ ಪ್ರೌಢ ಶಿಕ್ಷಣ ಮಂಡಳಿಯಿಂದ ನೀಡಲ್ಪಡುವ, 10ನೇ ತರಗತಿ ಪ್ರಮಾಣ ಪತ್ರ ಹೊಂದಿರಬೇಕು. ಅಲ್ಲದೆ ಅಭ್ಯರ್ಥಿಯು ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಒಂದು ವಿಷಯವಾಗಿ ಅಧ್ಯಯನ ನಡೆಸಿದವರೂ ಅರ್ಜಿ ಸಲ್ಲಿಸಬಹುದಾಗಿದೆ. ವಸತಿ: ಹುದ್ದೆಗೆ ಆಯ್ಕೆಗೊಂಡಲ್ಲಿ ಶಾಖಾ ಅಂಚೆ ಪಾಲಕರು ಕನಿಷ್ಠ 10*10 ಅಳತೆಯ ಅಂದರೆ ಸುಮಾರು 100 ಚದರ ಅಡಿ ವಿಸ್ತೀರ್ಣ ಹೊಂದಿರುವ ಪ್ರಮುಖ ಜಾಗದಲ್ಲಿರುವ ಒಂದು ಕಟ್ಟಡವನ್ನು ಶಾಖಾ ಅಂಚೆ ಕಚೇರಿ ನಡೆಸಲು ಕೊಡುವ ಭಾದ್ಯತೆಯನ್ನು ಹೊಂದಿರುತ್ತಾರೆ. ಅಲ್ಲದೇ ಸದ್ರಿ ಗ್ರಾಮದಲ್ಲಿ ವಾಸ ಮಾಡಬೇಕು. ಮತ್ತು ಆ ಕಟ್ಟಡಕ್ಕೆ ವಿದ್ಯುಚ್ಚಕ್ತಿಯ ಪೂರೈಕೆ ಕೂಡ ಇರಬೇಕು. ಇತ್ತೀಚಿನ ದಿನಗಳಲ್ಲಿ ಶಾಖಾ ಅಂಚೆ ಕಚೇರಿಗಳಲ್ಲಿ ಇಲೆಕ್ಟ್ರಾನಿಕ್ ದರ್ಪಣ್ ಉಪಕರಣದ ಮೂಲಕ ತಂತ್ರಜಾನ ಆಧಾರಿತ ಸೇವೆಗಳನ್ನು ನೀಡುತ್ತಿರುವುದರಿಂದ ಆ ಊರಿನಲ್ಲಿ ಅಂಚೆ ಪಾಲಕರು ನೀಡುವ ಕಟ್ಟಡದಲ್ಲಿ ಸರಿಯಾದ ರೀತಿಯ ನೆಟ್ ವರ್ಕ್ ಲಭ್ಯತೆಯು ಕೂಡ ಮುಖ್ಯ ಆಗಿರುತ್ತದೆ. ಅರ್ಜಿ ಶುಲ್ಕ : ಸಾಮಾನ್ಯ /ಹಿಂದುಳಿದ /ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ರೂಪಾಯಿ 100 ಅನ್ನು ಅರ್ಜಿ ಶುಲ್ಕವಾಗಿ ಸಲ್ಲಿಸಬೇಕಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಮತ್ತು EWS ಹಾಗೂ ಈ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ. ಎಲ್ಲಾ ಹುದ್ದೆಗಳಿಗೂ ಕೂಡ ಸ್ವತಂತ್ರವಾಗಿ ಸೈಕಲ್ ಚಲಾಯಿಸುವ ಅಥವಾ ಮೋಟರ್ ಸೈಕಲ್ ಚಲಾಯಿಸುವ ಸಾಮರ್ಥ್ಯ ವನ್ನು ಹೊಂದಿರಬೇಕು. ಈ ಎಲ್ಲಾ ಹುದ್ದೆಗಳಲ್ಲೂ 4 ಅಥವಾ 5 ಗಂಟೆ ಮಾತ್ರ ಕೆಲಸ ಮಾಡುವ ಹುದ್ದೆಗಳಾಗಿದ್ದು ಇನ್ನುಳಿದ ಅವಧಿಗಳಲ್ಲಿ ಪ್ರತೀ ಅಭ್ಯರ್ಥಿಯೂ ಕೂಡ ತನ್ನ ಜೀವನ ನಿರ್ವಹಣೆಗ ಬೇಕಾದ ಬೇರೆ ಬದಲಿ ಆದಾಯದ ಮೂಲವನ್ನು ಹೊಂದಿರಬೇಕು. ಅಭ್ಯರ್ಥಿಗಳು ಸ್ವಂತ ಸಕ್ರಿಯ eMail ID ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಗಳು https://indiapost.gov.in ವೆಬ್ ಸೈಟ್ನಲ್ಲಿ ಲಭ್ಯವಿದೆ. ಮಂಗಳೂರಿನಲ್ಲಿ ಸುಮಾರು 22 ಹುದ್ದೆಗಳಿರುವುದರಿಂದ ಹಾಗೂ ಆಯ್ಕೆಯು ಸಂಪೂರ್ಣವಾಗಿ ಅಂಕಗಳ ಆಧಾರದಲ್ಲಿ ಆನ್ ಲೈನ್ ಮೂಲಕ ಇರುವುದರಿಂದ ಮತ್ತೆ ಇದಕ್ಕೆ ಯಾವುದೇ ತರಹದ ಸಂದರ್ಶನವು ಇಲ್ಲದೇ ಇರುವುದರಿಂದ ಇದೊಂದು ಎಲ್ಲಾ ಐಅ ಮತ್ತು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಯೊಂದಿಗೆ ಕೆಲಸ ಮಾಡುವ ಒಂದು ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಇದನ್ನು ಅರ್ಹ ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಯು https://indiapostgdsonline.gov.in ಲಭ್ಯವಿದೆ ಹಾಗೂ ಯಾವುದೇ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗಳನ್ನು ಅಥವಾ ವಿಭಾಗೀಯ ಕಚೇರಿ, ಬಲ್ಮಠ ವನ್ನು ಸಂಪರ್ಕಿಸಬಹುದು. ನಮ್ಮ ಕಚೇರಿಯ ದೂರವಾಣಿ ಸಂಖ್ಯೆ 0824-2218400 ಇ-ಮೇಲ್ domangalore.ka@indiapost.gov.in| ಎಂದು ಪ್ರಕಟನೆ ತಿಳಿಸಿದೆ.
ಐಟಿ ವಲಯದಲ್ಲಿ ನಡುಕ ಹುಟ್ಟಿಸಿದ ಆಂಥ್ರೊಪಿಕ್ನ ಹೊಸ AI ಟೂಲ್; ಷೇರು ಪೇಟೆ ತತ್ತರಿಸಿದ್ದೇಕೆ?
ಜನವರಿ ತಿಂಗಳ ಆರಂಭದಲ್ಲಿ ಆಂಥ್ರೋಪಿಕ್ ‘ಕ್ಲೌಡ್ ಕೋವರ್ಕ್’ ಎಂಬ ಏಜೆಂಟಿಕ್ ಎಐ ಅಸಿಸ್ಟಂಟ್ ಅನ್ನು ಪರಿಚಯಿಸಿತ್ತು. ಇದನ್ನು ನಾನ್-ಟೆಕ್ನಿಕಲ್ ವೃತ್ತಿಪರರಿಗಾಗಿ ಮರುವಿನ್ಯಾಸಗೊಳಿಸಲಾಗಿದೆ. ಇದು ಫೈಲ್ಗಳನ್ನು ಓದಬಲ್ಲುದು, ಫೋಲ್ಡರ್ಗಳನ್ನು ಆರ್ಗನೈಸ್ ಮಾಡಬಲ್ಲುದು, ದಾಖಲೆಗಳನ್ನು ರಚಿಸಬಹುದು ಮತ್ತು ಬಳಕೆದಾರರ ಒಪ್ಪಿಗೆಯೊಂದಿಗೆ ಬಹು-ಹಂತದ ಕಾರ್ಯಗಳನ್ನು ನಿರ್ವಹಿಸಬಲ್ಲುದಾಗಿದೆ. ಜನವರಿ 30, ಶುಕ್ರವಾರ ಆಂಥ್ರೊಪಿಕ್ 11 ಓಪನ್ ಸೋರ್ಸ್ ಪ್ಲಗಿನ್ಗಳನ್ನು ಬಿಡುಗಡೆ ಮಾಡಿತ್ತು. ಇವು ಉತ್ಪಾದಕತೆ, ಮಾರಾಟ, ಮಾರ್ಕೆಟಿಂಗ್, ಫೈನಾನ್ಸ್, ಡೇಟಾ ಅನಾಲಿಸಿಸ್ ಮತ್ತು ಕಸ್ಟಮರ್ ಸಪೋರ್ಟ್ ಮೊದಲಾದ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುತ್ತವೆ. ಆದರೆ ಮಾರುಕಟ್ಟೆಗಳಲ್ಲಿ ತಲ್ಲಣ ಸೃಷ್ಟಿಸಿದ್ದು ಆಂಥ್ರೊಪಿಕ್ ಬಿಡುಗಡೆ ಮಾಡಿದ ಕಾನೂನು ಪ್ಲಗಿನ್ ಆಗಿತ್ತು. ಇದು ಒಪ್ಪಂದ ವಿಮರ್ಶೆ, NDA ಪರಿಶೀಲನೆ, ಅನುಸರಣೆ ಪರಿಶೀಲನೆಗಳು ಮತ್ತು ಲೀಗಲ್ ಬ್ರೀಫಿಂಗ್ಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ಆದರೆ ಎಲ್ಲಾ ಔಟ್ಪುಟ್ಗಳನ್ನು ಪರವಾನಗಿ ಪಡೆದ ವಕೀಲರು ಪರಿಶೀಲಿಸಬೇಕು. ಈ ಟೂಲ್ ಕಾನೂನು ಸಲಹೆಯನ್ನು ನೀಡುವುದಿಲ್ಲ ಎಂಬುದನ್ನು ಆಂಥ್ರೊಪಿಕ್ ಹೇಳಿದೆ. ಆಂಥ್ರೊಪಿಕ್ ಹೀಗೆ ಹೇಳಿದ್ದರೂ, ಈ ಎಐ ಟೂಲ್ ಎಲ್ಲ ಕೆಲಸವನ್ನೂ ಸ್ವಯಂಚಾಲಿತವಾಗಿ ಮಾಡುತ್ತದೆ ಎಂಬುದು ಹೂಡಿಕೆದಾರರಲ್ಲಿ ಭಯ ಹುಟ್ಟಿಸಿತು. ಅಂತಹ ಪರಿಕರಗಳು ಸಾಂಪ್ರದಾಯಿಕ ಕಾನೂನು ಸಂಶೋಧನಾ ಸಾಫ್ಟ್ವೇರ್ ಮತ್ತು ಸೇವೆಗಳ ಅಗತ್ಯವನ್ನು ಕಡಿಮೆ ಮಾಡಬಹುದು ಎಂದು ಹೂಡಿಕೆದಾರರು ಚಿಂತಿತರಾಗಿದ್ದು, ಇದು ಮಾರುಕಟ್ಟೆಯಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಯಿತು. ಮಾರುಕಟ್ಟೆಯಲ್ಲಿ ಭಯ ಆವರಿಸಿದ್ದೇಕೆ? ಅಮೆರಿಕದ ಕೃತಕ ಬುದ್ಧಿಮತ್ತೆ ಸಂಸ್ಥೆ ಆಂಥ್ರೊಪಿಕ್ ಕಾರ್ಪೊರೇಟ್ ಕಾನೂನು ತಂಡಗಳಿಗಾಗಿ ಹೊಸ AI ಟೂಲ್ ಬಿಡುಗಡೆ ಮಾಡಿದ ನಂತರ ಜಾಗತಿಕ ಷೇರು ಮಾರುಕಟ್ಟೆಗಳು ತತ್ತರಿಸಿವೆ. ಆಂಥ್ರೊಪಿಕ್ನ ಹೊಸದಾಗಿ ಬಿಡುಗಡೆಯಾದ AI ಟೂಲ್ ದಿನನಿತ್ಯದ ಕಾನೂನು ಕೆಲಸಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಟೂಲ್ನ ಘೋಷಣೆಯು ಯುರೋಪಿಯನ್ ಕಾನೂನು ಸಾಫ್ಟ್ವೇರ್ ಕಂಪನಿಗಳು, ಯುಎಸ್ ತಂತ್ರಜ್ಞಾನ ಸಂಸ್ಥೆಗಳು ಮತ್ತು ಭಾರತೀಯ ಐಟಿ ಷೇರುಗಳಲ್ಲಿ ತಲ್ಲಣ ಸೃಷ್ಟಿಸಿದ್ದು, ಸ್ಟಾಕ್ಗಳ ತೀವ್ರ ಮಾರಾಟಕ್ಕೆ ಕಾರಣವಾಯಿತು. ಹೊಸ AI ಟೂಲ್ ತಮ್ಮ ಪ್ರಮುಖ ವ್ಯವಹಾರಗಳಿಗೆ ಹೊಡೆತ ನೀಡಲಿದೆ ಎಂದು ಹೂಡಿಕೆದಾರರು ಚಿಂತಿತರಾಗಿದ್ದರು. ಇದರಿಂದಾಗಿ ಕಾನೂನು ಸಾಫ್ಟ್ವೇರ್, ವೃತ್ತಿಪರ ವಿಶ್ಲೇಷಣೆ ಮತ್ತು ಡೇಟಾ ಸೇವೆಗಳನ್ನು ಮಾರಾಟ ಮಾಡುವ ಕಂಪನಿಗಳ ಷೇರುಗಳು ಮಂಗಳವಾರ ಕುಸಿದವು. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು, ವಿಶ್ಲೇಷಕರು ಇದನ್ನು ‘ಸಾಸ್ಪೋಕ್ಯಾಲಿಪ್ಸ್’ (ಸಾಫ್ಟ್ವೇರ್ ಸೇವೆಗಳ ಅಂತ್ಯದ ಮುನ್ಸೂಚನೆ) ಎಂದು ಕರೆದಿದ್ದಾರೆ. ಆಂಥ್ರೊಪಿಕ್ ಸಂಸ್ಥೆಯು ಹೊಸ ಪ್ಲಗಿನ್ಗಳನ್ನು ಬಿಡುಗಡೆ ಮಾಡಿದ ತಕ್ಷಣವೇ ಹೂಡಿಕೆದಾರರು ಷೇರುಗಳನ್ನು ಆದಷ್ಟು ಬೇಗ ಮಾರಾಟ ಮಾಡಲು ಮುಗಿಬಿದ್ದರು. ಇದರ ಪರಿಣಾಮ ಥಾಮ್ಸನ್ ರಾಯಿಟರ್ಸ್, ಲೀಗಲ್ಜೂಮ್ ಮತ್ತು ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ನ ಷೇರುಗಳು ಶೇಕಡಾ 12 ಕ್ಕಿಂತ ಹೆಚ್ಚು ಕುಸಿದವು. ನಂತರ ಈ ನಷ್ಟಗಳು ಸಾಫ್ಟ್ವೇರ್ ವಲಯದಾದ್ಯಂತ ಹರಡಿದವು. ಪೇಪಾಲ್, ಎಕ್ಸ್ಪೀಡಿಯಾ ಗ್ರೂಪ್, ಇಪಿಎಎಂ ಸಿಸ್ಟಮ್ಸ್, ಇಕ್ವಿಫ್ಯಾಕ್ಸ್ ಮತ್ತು ಇಂಟ್ಯೂಟ್ ಎಲ್ಲವೂ ಶೇಕಡಾ 10 ಕ್ಕಿಂತ ಹೆಚ್ಚು ಕುಸಿದವು. ಕಾನೂನು ಸಂಶೋಧನೆ ಮತ್ತು ಸಾಫ್ಟ್ವೇರ್ ಸೇವೆಗಳಿಗೆ ಸಂಬಂಧಿಸಿದ ಯುಎಸ್ ಕಂಪನಿಗಳು ತೀವ್ರ ಹಾನಿಗೊಳಗಾದವು. S&P 500 ಶೇ. 0.84 ಮತ್ತು Nasdaq Composite ಶೇ. 1.43 ರಷ್ಟು ಕುಸಿದವು. ಟೆಕ್ ದೈತ್ಯರು ಕೂಡ ಇದರಿಂದ ಹೊರಗುಳಿಯಲಿಲ್ಲ. ಮೈಕ್ರೋಸಾಫ್ಟ್ ಮತ್ತು ಮೆಟಾ ಪ್ಲಾಟ್ಫಾರ್ಮ್ಗಳು ಶೇ. 2 ಕ್ಕಿಂತ ಹೆಚ್ಚು ಕುಸಿದವು. Nvidia ಶೇ. 3 ರಷ್ಟು ಕುಸಿದಿತು. ಸಾಫ್ಟ್ವೇರ್ ಷೇರುಗಳು 2026ರ ಕುಸಿತವನ್ನು ಮುಂದುವರೆಸಿದವು; ServiceNow ಮತ್ತು Salesforce ತಲಾ ಶೇ. 7 ರಷ್ಟು ಕುಸಿದವು. ಆಂಥ್ರೊಪಿಕ್ ತನ್ನ ಹೊಸ ಕಾನೂನು ಎಐ ಸಾಧನವನ್ನು ಗಿಟ್ಹಬ್ನಲ್ಲಿ ಬಿಡುಗಡೆ ಮಾಡಿದ ನಂತರ ಪ್ರಮುಖ ಯುರೋಪಿಯನ್ ಕಾನೂನು ಮತ್ತು ಪ್ರಕಾಶನ ಸಂಸ್ಥೆಗಳಾದ ಆರ್ಇಎಲ್ಎಕ್ಸ್ ಪಿಎಲ್ಸಿ ಮತ್ತು ವೋಲ್ಟರ್ಸ್ ಕ್ಲುವರ್ ಎನ್ವಿ ಷೇರುಗಳು ಶೇಕಡಾ 10 ಕ್ಕಿಂತ ಹೆಚ್ಚು ಕುಸಿದವು. ಪಿಯರ್ಸನ್ ಪಿಎಲ್ಸಿ ಕೂಡ ವಹಿವಾಟಿನಲ್ಲಿ ಕುಸಿತ ಕಂಡಿತು. ಈ ಪರಿಣಾಮ ಭಾರತೀಯ ಮಾರುಕಟ್ಟೆಗಳನ್ನು ಬುಧವಾರ ಬೆಳಗ್ಗೆ ತಲುಪಿತು. ಇಲ್ಲಿ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ಸಿಎಲ್ಟೆಕ್, ಟೆಕ್ ಮಹೀಂದ್ರಾ ಮತ್ತು ವಿಪ್ರೊ ಷೇರುಗಳು ತೀವ್ರವಾಗಿ ಕುಸಿದವು. ಭಾರತೀಯರಲ್ಲಿ ಭಯ ಯಾಕೆ? ಆಂಥ್ರೋಪಿಕ್ನ ಈ ಟೂಲ್ಗಳು ಬಹುರಾಷ್ಟ್ರೀಯ ಕಂಪನಿಗಳು ಸಾಮಾನ್ಯವಾಗಿ ಭಾರತೀಯ ಐಟಿ ಸೇವಾ ಪೂರೈಕೆದಾರರಿಗೆ ಹೊರಗುತ್ತಿಗೆ ನೀಡುವ ಕೆಲಸಗಳನ್ನು ಗುರಿಯಾಗಿರಿಸಿವೆ. ಇವುಗಳು ಅಗ್ಗದ ದರದಲ್ಲಿ, ವೇಗವಾಗಿ ಈ ಕೆಲಸಗಳನ್ನು ಮಾಡಬಲ್ಲವು. ಇಷ್ಟು ದಿನ ವಿಪ್ರೊ, ಇನ್ಫೋಸಿಸ್, ಟಿಸಿಎಸ್ ಮೊದಲಾದ ಐಟಿ ಕಂಪನಿಗಳಿಗೆ ಇಂಥ ಕೆಲಸಗಳಿಂದಲೇ ದೊಡ್ಡ ಆದಾಯ ಬರುತ್ತಿತ್ತು. ಆದರೆ ಆಂಥ್ರೊಪಿಕ್ ಎಐ ಟೂಲ್ ಬಿಡುಗಡೆ ಮಾಡಿದ ಕೂಡಲೇ, ಇನ್ನು ಮುಂದೆ ಇಂಥ ಕೆಲಸಗಳಿಗೆ ಮನುಷ್ಯರು ಬೇಕಿಲ್ಲ; AI ಮಾತ್ರ ಸಾಕು ಎಂಬ ಮಾತು ಎಲ್ಲೆಡೆ ಹರಡಲು ಶುರುವಾಯಿತು. ಇಲ್ಲಿಯವರೆಗೆ ಮನುಷ್ಯರಿಗೆ ಸಹಾಯ ಮಾಡುತ್ತಿದ್ದ ಎಐ, ಇನ್ನು ಮುಂದೆ ಮನುಷ್ಯನ ಸಹಾಯವಿಲ್ಲದೆ ಎಲ್ಲ ಕಾರ್ಯಗಳನ್ನು ಮಾಡಬಲ್ಲದು ಎಂಬ ಸಂದೇಶ ಹರಿದಾಡಿದ್ದೇ ಆತಂಕಕ್ಕೆ ಕಾರಣವಾಯಿತು. ಆದಾಗ್ಯೂ, ಈ ಆತಂಕ ತರ್ಕಬದ್ಧವಾಗಿದೆಯೇ ಎಂಬುದರ ಕುರಿತು ತಂತ್ರಜ್ಞಾನ ಜಗತ್ತಿನಲ್ಲಿ ಚರ್ಚೆ ನಡೆದಿದೆ. Nvidia ದ ಜೆನ್ಸೆನ್ ಹುವಾಂಗ್ ಮತ್ತು Google ನ ಸುಂದರ್ ಪಿಚೈ ಅವರಂತಹ ಉದ್ಯಮದ ದಿಗ್ಗಜರು ಇದು ತರ್ಕಬದ್ಧವಲ್ಲ ಎಂದು ವಾದಿಸುತ್ತಾರೆ. AI ಕೇವಲ ಒಂದು ಶಕ್ತಿಶಾಲಿ ಹೊಸ ಸಾಧನ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ. ಅದು ಅಂತಿಮವಾಗಿ ಅಸ್ತಿತ್ವದಲ್ಲಿರುವ ಸಾಫ್ಟ್ವೇರ್ ಪ್ಲಾಟ್ಫಾರ್ಮ್ಗಳನ್ನು ಬಳಕೆಯಲ್ಲಿಲ್ಲದಂತೆ ಮಾಡುವ ಬದಲು ವರ್ಧಿಸುತ್ತದೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ನಲ್ಲಿ ಇಂಡಿಗೋದಿಂದ ವಿಮಾನಗಳ ಹಾರಾಟ ರದ್ದು: ತನಿಖೆಗೆ ಸಿಸಿಐ ಆದೇಶ
ಹೊಸದಿಲ್ಲಿ, ಫೆ. 5: ಡಿಸೆಂಬರ್ನಲ್ಲಿ ಪೈಲೆಟ್ಗಳು ಹಾಗೂ ಸಿಬ್ಬಂದಿಯ ಕೊರೆತೆ ಉಲ್ಲೇಖಿಸಿ ವಿಮಾನಗಳನ್ನು ರದ್ದುಗೊಳಿಸುವ ಹಾಗೂ ವಿಳಂಬಗೊಳಿಸುವ ಮೂಲಕ ಇಂಡಿಗೋ ತನ್ನ ಪ್ರಾಬಲ್ಯವನ್ನು ದುರಪಯೋಗಪಡಿಸಿಕೊಂಡಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಭಾರತದ ಸ್ಫರ್ಧಾ ಆಯೋಗ ಬುಧವಾರ ಆದೇಶಿಸಿದೆ. ದೇಶೀಯ ವಿಮಾನ ಯಾನ ಮಾರುಕಟ್ಟೆಯಲ್ಲಿ ಸುಮಾರು ಶೇ. 65ರಷ್ಟು ಪಾಲು ಹೊಂದಿರುವ ಇಂಡಿಗೊ ತನ್ನ ಸೇವೆಯನ್ನು ತಡೆ ಹಿಡಿದಿದೆ. ಕೃತಕ ಕೊರತೆಯನ್ನು ಸೃಷ್ಟಿಸಿದೆ. ಗರಿಷ್ಠ ಬೇಡಿಕೆಯ ಸಮಯದಲ್ಲಿ ಗ್ರಾಹಕರ ವಿಮಾನ ಪ್ರಯಾಣದ ಲಭ್ಯತೆಯನ್ನು ಮಿತಿಗೊಳಿಸಿದೆ ಎಂದು ಅದು ಹೇಳಿದೆ. ಈ ಬಗ್ಗೆ 90 ದಿನಗಳ ಒಳಗೆ ತನಿಖಾ ವರದಿ ಸಲ್ಲಿಸುವಂತೆ ಭಾರತದ ಸ್ಪರ್ಧಾ ಆಯೋಗ ಇಂಡಿಗೋದ ಪ್ರಧಾನ ನಿರ್ದೇಶಕರಿಗೆ ಸೂಚಿಸಿದೆ. ಟಿಕೆಟ್ ಮುಂಗಡ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಕೊನೆಯ ಕ್ಷಣದ ರದ್ಧತಿಯನ್ನು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ ಎಂದು ಗಮನಿಸಲಾಗಿದೆ. ಅನಂತರ ಪ್ರಯಾಣಿಕರು ಹೆಚ್ಚಿನ ದರಕ್ಕೆ ಪರ್ಯಾಯ ವ್ಯವಸ್ಥೆಯನ್ನು ತಾವಾಗಿಯೇ ಕಂಡು ಕೊಳ್ಳಬೇಕಾಯಿತು ಎಂದು ಹೇಳಿದೆ.
ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿಯಾದ ಸಂಸದ ಬ್ರಿಜೇಶ್ ಚೌಟ
ದಕ್ಷಿಣ ಕನ್ನಡದಲ್ಲಿ ಪ್ರಗತಿಯಲ್ಲಿರುವ ಯೋಜನೆಗಳ ಕಾಮಗಾರಿ ವೇಗ ಹೆಚ್ಚಿಸಲು ಮನವಿ
ಮಣಿಪುರ| ಸರಕಾರ ರಚನೆಯಲ್ಲಿ ಭಾಗವಹಿಸದಂತೆ ತಮ್ಮ ಸಮುದಾಯದ ಶಾಸಕರಿಗೆ ಕುಕಿ ಸಂಘಟನೆ ಎಚ್ಚರಿಕೆ
ಮುಂಬೈ, ಫೆ. 5: ಮಣಿಪುರದಲ್ಲಿ ಸರಕಾರ ರಚನೆಯಲ್ಲಿ ಭಾಗಿಯಾಗದಂತೆ ಮಣಿಪುರದ ಹಲವು ಕುಕಿ ಸಂಘಟನೆಗಳು ತಮ್ಮ ಸಮುದಾಯದ ಕುಕಿ ಶಾಸಕರಿಗೆ ಎಚ್ಚರಿಕೆ ನೀಡಿವೆ. ಸರಕಾರ ರಚನೆಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಚುರಾಚಾಂದ್ಪುರ ಜಿಲ್ಲೆ ಮೂಲದ ಬುಡಕಟ್ಟು ಸಂಘಟನೆ ಜಾಯಿಂಟ್ ಫೋರಂ ಆಫ್ ಸೆವೆನ್ (ಜೆಎಫ್7) ಕುಕಿ ರೆ ಪ್ರಾಬಲ್ಯದ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಪೂರ್ಣ ಬಂದ್ಗೆ ಕರೆ ನೀಡಿದೆ. ಎಲ್ಲಾ ಸಮುದಾಯಗಳ ಸದಸ್ಯರು ಗ್ರಾಮಗಳಾದ್ಯಂತ ನಡೆಯುವ ಪ್ರತಿಭಟನೆಯಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪಾಲ್ಗೊಳ್ಳುವಂತೆ ಅದು ಆಗ್ರಹಿಸಿದೆ. ಅಲ್ಲದೆ, ಪ್ರತ್ಯೇಕ ಕುಕಿ ಆಡಳಿತದ ಆಗ್ರಹವನ್ನು ಪುನರುಚ್ಛರಿಸಿದೆ. ಕೆಲವು ಕುಕಿ ಸಂಘಟನೆಗಳು ಸಮುದಾಯದ ಸದಸ್ಯರು ಸರಕಾರ ರಚನೆಯಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿವೆ.
ವಿಜಯನಗರ | ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಹಮಾಲಿಗರ ಸಭೆ
ವಿಜಯನಗರ / ಹೊಸಪೇಟೆ: ಕ್ಷೇತ್ರದ ಶಾಸಕರಾದ ಎಚ್.ಆರ್.ಗವಿಯಪ್ಪ ಅವರ ಆದೇಶದಂತೆ, ಫೆ.5ರಂದು ಎಚ್.ಜಿ.ವಿರುಪಾಕ್ಷ ಅವರ ನೇತೃತ್ವದಲ್ಲಿ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಹಮಾಲಿಗರ ಸಭೆ ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ಭಾಗವಹಿಸಿದ ಹಮಾಲರು ತಮ್ಮ ತಮ್ಮ ಸಮಸ್ಯೆಗಳು ಹಾಗೂ ಅಭಿಪ್ರಾಯಗಳನ್ನು ಮುಂದಿಟ್ಟರು. ಈ ವೇಳೆ ಪ್ರತಿಕ್ರಿಯಿಸಿದ ಎಚ್.ಜಿ.ವಿರುಪಾಕ್ಷ ಅವರು, ಹಮಾಲರಿಂದ ಹವಾಲುಗಳನ್ನು ಸ್ವೀಕರಿಸಿ, ಅವುಗಳನ್ನು ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗ ಪರಿಹಾರ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರು, ಸಾರ್ವಜನಿಕರು ಹಾಗೂ ಹಮಾಲರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆ| ಎಲ್ಲಾ 294 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ
ಮುಂಬೈ, ಫೆ. 5: ಮುಂಬರುವ ಪಶ್ಚಿಮಬಂಗಾಳ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲಾ 294 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಾಗುವುದು ಎಂದು ಕಾಂಗ್ರೆಸ್ ಗುರುವಾರ ತಿಳಿಸಿದೆ. ಪಶ್ಚಿಮಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ (ಡಬ್ಲುಬಿಪಿಸಿಸಿ)ಯ ಹಿರಿಯ ನಾಯಕರೊಂದಿಗೆ ಪಕ್ಷದ ಉನ್ನತ ನಾಯಕತ್ವದ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಈ ಸಭೆ ನಡೆಸಲಾಯಿತು. ಸಭೆಯಲ್ಲಿ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್, ರಾಜ್ಯ ಘಟಕದ ಮುಖ್ಯಸ್ಥ ಶುಭಂಕರ್ ಸರ್ಕಾರ್, ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಹಾಗೂ ಸಂಸದರಾದ ಇಶಾ ಖಾನ್ ಚೌಧುರಿ ಮೊದಲಾದವರು ಪಾಲ್ಗೊಂಡಿದ್ದರು. ಕೆಲವು ನಾಯಕರು ವೀಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡರು. ‘‘ಎಲ್ಲರೊಂದಿಗೆ ಚರ್ಚಿಸಿದ ಬಳಿ ಪಶ್ಚಿಮಬಂಗಾಳದಲ್ಲಿ ಎಲ್ಲಾ 294 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ವತಂತ್ರ್ಯವಾಗಿ ಸ್ವರ್ಧಿಸಲು ನಿರ್ಧರಿಸಲಾಗಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ನಾವು ಸಿದ್ಧತೆ ನಡೆಸುತ್ತಿದ್ದೇವೆ’’ ಎಂದು ಗುಲಾಮ್ ಅಹ್ಮದ್ ಮಿರ್ ಹೇಳಿದ್ದಾರೆ.
ಇಂಧನ ಸ್ವಿಚ್ ದೋಷ| ಏರ್ ಇಂಡಿಯಾದಿಂದ ವಿವರಣೆ ಕೇಳಿದ ಬ್ರಿಟನ್
ಲಂಡನ್, ಫೆ.5: ಸುರಕ್ಷತಾ ತಪಾಸಣೆಗಾಗಿ ಭಾರತದಲ್ಲಿ ಬಂದಿಳಿದ ಬೋಯಿಂಗ್ ಡ್ರೀಮ್ಲೈನರ್ ಪ್ರಯಾಣಿಕರ ವಿಮಾನವು ಸಂಭಾವ್ಯ ದೋಷಪೂರಿತ ಇಂಧನ ಸ್ವಿಚ್ನ ಬಗ್ಗೆ ಕಳವಳದ ಹೊರತಾಗಿಯೂ ರವಿವಾರ ಲಂಡನ್ನಿಂದ ಹೇಗೆ ಹೊರಟಿತು ಎಂಬ ಬಗ್ಗೆ ವಿವರಣೆ ನೀಡುವಂತೆ ಏರ್ ಇಂಡಿಯಾವನ್ನು ಬ್ರಿಟನ್ನ ವಾಯುಯಾನ ಪ್ರಾಧಿಕಾರ ಕೋರಿದ್ದು ಸಂಭವನೀಯ ಕಾನೂನು ರೀತಿಯ ಕ್ರಮದ ಬಗ್ಗೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಫೆಬ್ರವರಿ 2ರಂದು ಲಂಡನ್ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಬೋಯಿಂಗ್ 787-8 ವಿಮಾನದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ ದೋಷದ ಬಗ್ಗೆ ಏರ್ ಇಂಡಿಯಾ ಪೈಲಟ್ ವರದಿ ಮಾಡಿದ್ದರು. ವಿಮಾನಯಾನ ಸಂಸ್ಥೆಯು ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆದ ಬಳಿಕ ಮುಂದಿನ ಸೂಚನೆಯವರೆಗೆ ವಿಮಾನವನ್ನು ಹಾರಾಟದಿಂದ ಅಧಿಕೃತವಾಗಿ ನಿಷೇಧಿಸಲಾಗಿದೆ. ಈ ಘಟನೆಯ ಬಗ್ಗೆ ಒಂದು ವಾರದ ಒಳಗೆ ಸಂಪೂರ್ಣ ವಿವರಣೆ ಒದಗಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬ್ರಿಟನ್ನ ನಾಗರಿಕ ವಿಮಾನಯಾನ ಪ್ರಾಧಿಕಾರ ಏರ್ ಇಂಡಿಯಾಗೆ ಎಚ್ಚರಿಕೆ ನೀಡಿರುವುದಾಗಿ `ರಾಯ್ಟರ್ಸ್' ವರದಿ ಮಾಡಿದೆ.
Royal Challengers Bengaluru WPL Champions- ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ಮೊತ್ತದ ಗುರಿಯನ್ನು ಮುಂದಿರಿಸಿದಾಗ ಆರ್ ಸಿಬಿ ಗೆಲ್ಲುತ್ತೋ ಇಲ್ಲವೋ ಎಂಬ ಸಂದೇಹ ಮೂಡಿತ್ತು. ಆದರೆ ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೋಲ್ ಅವರ ಶತಕದ ಜೊತೆಯಾಟ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೈಯಿಂದ ಪಂದ್ಯವನ್ನೇ ಕಸಿದು ಕೊಂಡಿತು. ಆರ್ ಸಿಬಿ ಮಹಿಳಾ ತಂಡ ಎರಡನೇ ಬಾರಿ ಚಾಂಪಿಯನ್ ಆಗಿ ಮೂಡಿ ಬಂತು. ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ಕನೇ ಬಾರಿ ಫೈನಲ್ ಗೇರಿದರೂ ಪ್ರಶಸ್ತಿ ಗಳಿಸುವಲ್ಲಿ ಸಫಲವಾಗಲಿಲ್ಲ.
ಅಮೆರಿಕಾ ಸರ್ವಾಧಿಕಾರದತ್ತ ಸಾಗುತ್ತಿದೆ: HRW ಎಚ್ಚರಿಕೆ
ವಾಷಿಂಗ್ಟನ್, ಫೆ.5: ಡೊನಾಲ್ಡ್ ಟ್ರಂಪ್ ಅಮೆರಿಕಾವನ್ನು ಸರ್ವಾಧಿಕಾರಿ ರಾಷ್ಟ್ರವಾಗಿ ಪರಿವರ್ತಿಸುತ್ತಿದ್ದಾರೆ ಎಂದು `ಹ್ಯೂಮನ್ ರೈಟ್ಸ್ ವಾಚ್(ಎಚ್ಆರ್ಡಬ್ಲ್ಯೂ) ಎಚ್ಚರಿಕೆ ನೀಡಿದ್ದು ಅಮೆರಿಕಾದಲ್ಲಿ ಪ್ರಜಾಪ್ರಭುತ್ವವು ನಾಲ್ಕು ದಶಕಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ ಎಂಬ ವರದಿಯನ್ನು ಉಲ್ಲೇಖಿಸಿದ್ದಾರೆ. ಶ್ವೇತಭವನಕ್ಕೆ ಟ್ರಂಪ್ ಹಿಂತಿರುಗಿರುವುದು ಈಗಾಗಲೇ ಚೀನಾ ಮತ್ತು ರಶ್ಯದಿಂದ ಒತ್ತಡದಲ್ಲಿದ್ದ ಮಾನವ ಹಕ್ಕುಗಳ ಸತತ ಅವನತಿಯನ್ನು ಪ್ರಚೋದಿಸಿದೆ. ನಿಯಮಾಧಾರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಹತ್ತಿಕ್ಕಲಾಗಿದೆ ಎಂದು ನ್ಯೂಯಾರ್ಕ್ ಮೂಲದ ವಕಾಲತ್ತು ಮತ್ತು ಸಂಶೋಧನಾ ಗುಂಪು ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಅಮೆರಿಕಾದಲ್ಲಿ ಟ್ರಂಪ್ ಮಾನವ ಹಕ್ಕುಗಳಿಗೆ ಸ್ಪಷ್ಟ ನಿರ್ಲಕ್ಷ್ಯ ತೋರಿದ ಜೊತೆಗೆ ತೀವ್ರ ಉಲ್ಲಂಘನೆ ನಡೆಸಿದ್ದಾರೆ ಎಂದು ವರದಿ ಹೇಳಿದ್ದು ಕೆಲವು ರಾಜ್ಯಗಳಲ್ಲಿ ನಿಯೋಜಿಸಿರುವ ವಲಸೆ ಮತ್ತು ಸುಂಕ ಜಾರಿ ಏಜೆನ್ಸಿ(ಐಸಿಇ)ಯ ಮಾಸ್ಕ್ ಧರಿಸಿದ ಸಶಸ್ತ್ರ ಸಿಬ್ಬಂದಿಗಳು ನೂರಾರು ಅನಗತ್ಯ ಹಿಂಸಾತ್ಮಕ ಮತ್ತು ನಿಂದನೀಯ ದಾಳಿಗಳನ್ನು ನಡೆಸಿದ್ದಾರೆ ಎಂದು ಉಲ್ಲೇಖಿಸಿದೆ. ಅಧಿಕಾರವನ್ನು ಕಸಿದುಕೊಳ್ಳುವ ಉದ್ದೇಶದಿಂದ ನ್ಯಾಷನಲ್ ಗಾರ್ಡ್ ಪಡೆಗಳ ದೇಶೀಯ ನಿಯೋಜನೆ, ರಾಜಕೀಯ ಶತ್ರುಗಳು ಮತ್ತು ಈಗ ತನ್ನನ್ನು ಟೀಕಿಸುತ್ತಿರುವ ಮಾಜಿ ಅಧಿಕಾರಿಗಳ ವಿರುದ್ಧ ಪ್ರತೀಕಾರದ ಪುನರಾವರ್ತಿತ ಕ್ರಮಗಳು, ಹಾಗೆಯೇ ಬೆದರಿಸುವ ಪ್ರಕ್ರಿಯೆಗಳಿಗೆ ಕಾರ್ಯಾಂಗದ ಅಧಿಕಾರವನ್ನು ವಿಸ್ತರಿಸುವ ಕ್ರಮಗಳು, ಇಲಾಖೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ತಟಸ್ಥಗೊಳಿಸಿರುವುದು ಅಮೆರಿಕಾ ನಿರಂಕುಶಾಧಿಕಾರದತ್ತ ಬದಲಾವಣೆಗೊಳ್ಳುತ್ತಿದೆ ಎಂಬುದನ್ನು ನಿರ್ಧರಿಸಲು ಆಧಾರವಾಗಿದೆ' ಎಂದು ವರದಿ ಹೇಳಿದೆ. ವೆನೆಝುವೆಲಾದ 252 ವಲಸಿಗರನ್ನು ಎಲ್ ಸಲ್ವದೋರ್ನಲ್ಲಿ ಗರಿಷ್ಠ ಭದ್ರತೆಯ ಜೈಲಿಗೆ ಕಳುಹಿಸುವ ಮೂಲಕ ಅಮೆರಿಕಾವು ಬಲವಂತದ ನಾಪತ್ತೆಗಳಲ್ಲಿ ತೊಡಗಿದ್ದು ಇದು ಅಂತಾರಾಷ್ಟ್ರೀಯ ಕಾನೂನಿನಡಿ ಅಪರಾಧವಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.
ಬಳ್ಳಾರಿ | ಜ್ಞಾನ ವಿಕಾಸ ಕಾರ್ಯಕ್ರಮದಡಿ ಶೌಚಾಲಯ ರಚನೆ–ಬಳಕೆ ಕುರಿತು ಜಾಗೃತಿ
ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ, ಶೌಚಾಲಯ ರಚನೆ ಹಾಗೂ ಬಳಕೆಯ ಮಹತ್ವದ ಕುರಿತು ಸೃಜನಶೀಲ ಜಾಗೃತಿ ಕಾರ್ಯಕ್ರಮವನ್ನು ಕಂಪ್ಲಿ ತಾಲೂಕಿನ ಯೋಜನಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಬಯಲು ವಿಸರ್ಜನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಹಾಗೂ ಮನೆಯಲ್ಲಿನ ಹಿರಿಯರು ಮತ್ತು ಸಣ್ಣ ಮಕ್ಕಳಿಗೆ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿದರು. ಈ ಸಮಸ್ಯೆಗಳಿಂದ ದೂರವಿರಲು ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿ, ಅದನ್ನು ನಿಯಮಿತವಾಗಿ ಬಳಸುವ ಜೊತೆಗೆ ಶುಚಿತ್ವದಿಂದ ನಿರ್ವಹಿಸುವುದು ಅಗತ್ಯ ಎಂದು ಅವರು ಸಲಹೆ ನೀಡಿದರು. ಈ ಕಾರ್ಯಕ್ರಮದ ಅಂಗವಾಗಿ 20 ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಶೌಚಾಲಯ ನಿರ್ಮಾಣ ಕುರಿತು ಮಾಹಿತಿ ನೀಡಲಾಯಿತು. ಅಲ್ಲದೆ ಯೋಜನೆಯ ಮೂಲಕ ಬೇಶನ್ ಖರೀದಿಗಾಗಿ ಪ್ರತಿ ಫಲಾನುಭವಿಗೆ 500 ರೂ. ಅನುದಾನದಂತೆ ಒಟ್ಟು 10,000 ರೂ. ಮೌಲ್ಯದ ಮಂಜೂರಾತಿ ಪತ್ರಗಳನ್ನು 20 ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಂಪ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿ ರಾಘವೇಂದ್ರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಖಾ, ಎಮ್ಮಿಗನೂರು ಹಾಗೂ ಕಂಪ್ಲಿ ವಲಯದ ಮೇಲ್ವಿಚಾರಕರು ಮಂಜಣ್ಣ, ಮಂಜುನಾಥ, ಸೇವಾ ಪ್ರತಿನಿಧಿಗಳು ಹಾಗೂ ಜ್ಞಾನ ವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಎನ್ಐಟಿಕೆ ಸುರತ್ಕಲ್ನಲ್ಲಿ ಐದು ದಿನಗಳ ವಿರಾಸತ್ಗೆ ಚಾಲನೆ
ಮಂಗಳೂರು, ಫೆ.5:ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿಕೆ ) ಭಾರತದ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಆಯೋಜಿಸಿರುವ ಐದು ದಿನಗಳ ಸಾಂಸ್ಕೃತಿಕ ಉತ್ಸವವಾ ಗಿರುವ ಸ್ಪಿಕ್ಮೆಕೆ ವಿರಾಸತ್ -2026 ಕ್ಕೆ ಬುಧವಾರ ಸಂಜೆ ಸುರತ್ಕಲ್ ಕ್ಯಾಂಪಸ್ನ ಸಿಲ್ವರ್ ಜುಬಿಲಿ ಆಡಿಟೋರಿಯಂ ನಲ್ಲಿ ಚಾಲನೆ ನೀಡಲಾಯಿತು. ಫೆ.8ರ ತನಕ ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲಾ ಪ್ರದರ್ಶನಗಳು ಮತ್ತು ಸಂಗೀತ ಕಚೇರಿಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಮುಖ್ಯ ಅತಿಥಿಯಾಗಿ ಕರ್ಣಾಟಕ ಬ್ಯಾಂಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್, ವಿಶೇಷ ಅತಿಥಿಯಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಐಟಿಕೆ ಉಪನಿರ್ದೇಶಕ ಪ್ರೊ. ಸುಭಾಷ್ ಸಿ. ಯರಗಲ್ ವಹಿಸಿದ್ದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಗೋವಿಂದ ರಾಜ್ ಎಂ ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಪಂಡಿತ್ ವೆಂಕಟೇಶ್ ಕುಮಾರ್ ಅವರು ಭಾವಪೂರ್ಣ ಹಿಂದೂಸ್ತಾನಿ ಗಾಯನ ಸಂಗೀತ ಕಚೇರಿಯನ್ನು ಪ್ರಸ್ತುತಪಡಿಸಿದರು. ಪ್ರತಿದಿನ ಸಂಜೆ 6:00 ಗಂಟೆಗೆ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನವಿರುತ್ತದೆ. ಎರಡನೇ ದಿನವಾಗಿರುವ ಇಂದು ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಆರ್.ಕೆ. ಶ್ರೀರಾಮ್ ಕುಮಾರ್ (ವಯಲಿನ್), ವಿದ್ವಾನ್ ಮನೋಜ್ ಶಿವ (ಮೃದಂಗಂ) ಮತ್ತು ವಿದ್ವಾನ್ ಅನಿರುದ್ಧ್ ಆತ್ರೇಯ (ಕಂಜಿರಾ) ಪ್ರದರ್ಶನ ನೀಡಿದರು. ಫೆ.6.ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪುರಸ್ಕೃತ ವಿದ್ವಾನ್ ಪ್ರವೀಣ್ ಕುಮಾರ್ (ಭರತನಾಟ್ಯ), ವಿದುಷಿ ಸ್ಮತಿ ಭಾಸ್ಕರ್ (ಗಾಯನ), ವಿದ್ವಾನ್ ವಿದ್ಯಾ ಶಕರ್ (ಮೃದಂಗಂ), ವಿದ್ವಾನ್ ರಘು ಸಿಂಹ (ಕೊಳಲು), ಮತ್ತು ವಿದ್ವಾನ್ ಜಗಧೀಶ್ವರ್ ಸುಕುಮಾರನ್ (ನಟುವಾಂಗಂ) ಭಾಗವಹಿಸಲಿದ್ದಾರೆ. ಫೆ.7: ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತೆ ವಿದುಷಿ ಡಾ. ಎಸ್. ಸೌಮ್ಯ ಇವರೊಂದಿಗೆ (ಕರ್ನಾಟಿಕ್ ಗಾಯನ), ವಿದ್ವಾನ್ ಎಂಬಾರ್ ಕಣ್ಣನ್ (ಪಿಟೀಲು), ವಿದ್ವಾನ್ ನೆಯ್ವೇಲಿ ನಾರಾಯಣನ್ (ಮೃದಂಗಂ), ಮತ್ತು ವಿದ್ವಾನ್ ಪಯ್ಯನ್ನೂರು ಗೋವಿಂದ ಪ್ರಸಾದ್ (ಮೋರ್ಸಿಂಗ್) ಭಾಗವಿಸುವರು. ಫೆ. 8 ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ, ವಿದುಷಿ ವೈಜಯಂತಿ ಕಾಶಿ (ಕೂಚಿಪುಡಿ), ವಿದ್ವಾನ್ ವಿನಯ್ ಮಾನ್ಯ (ಗಾಯನ), ವಿದ್ವಾನ್ ನಿತೀಶ್ ಕೆ (ಕೊಳಲು), ವಿದ್ವಾನ್ ಪೃಥ್ವಿ ಕೃಷ್ಣ (ಮೃದಂಗಂ), ಮತ್ತು ವಿದುಷಿ ಪ್ರತೀಕ್ಷಾ ಕಾಶಿ (ನಟುವಂಗಂ) ಭಾಗವಹಿಸಲಿರುವರು. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಶಾಲಾ ಮಕ್ಕಳು, ಕಾಲೇಜು ಯುವಕರು, ಕುಟುಂಬಗಳು ಮತ್ತು ವೃದ್ಧರು ಸೇರಿದಂತೆ ಜನಸಾಮಾನ್ಯರಿಗೆ ಅದನ್ನು ಹರಡುವ ಗುರಿಯನ್ನು ವಿರಾಸತ್ ಹೊಂದಿದೆ ಎಂದು ಎನ್ಐಟಿಕೆ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಗೋವಿಂದ ರಾಜ್ ಎಂ ಹೇಳಿದ್ದಾರೆ. ಡಾ. ಕಿರಣ್ ಸೇಠ್ ಸ್ಥಾಪಿಸಿದ ಸ್ಟಿಕ್ಮೆಕೆ (ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರ್ ಅಮಾಂಗ್ಸ್ಟ್ ಯೂತ್) 49 ವರ್ಷಗಳಿಂದ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಲಾಭರಹಿತ ಸಂಸ್ಥೆಯಾಗಿ ಸೇವೆಸಲ್ಲಿಸುತ್ತಿದೆ.
ಬಲೂಚಿಸ್ತಾನ ನೆಲ ಮತ್ತಷ್ಟು ಕೆಂಪು, ಈವರೆಗೂ 216 ಬಂಡುಕೋರರ ಕಥೆ ಮುಕ್ತಾಯ | Baloch Rebels
ಪಾಕಿಸ್ತಾನ ತಾನು ಮಾಡಿದ ಪಾಪ ತಾನೇ ಅನುಭವಿಸುವ ಪರಿಸ್ಥಿತಿ ಬಂದಿದ್ದು, ಬಲೂಚಿಸ್ತಾನದ ನೆಲದಲ್ಲಿ ಭುಗಿಲೆದ್ದ ಹಿಂಸಾಚಾರ ಕೈಮೀರಿ ಹೋಗಿದ್ದು ನೂರಾರು ಜನರ ಜೀವವೇ ಹೋಗಿದೆ. ಒಂದು ಕಡೆ ಪಾಕಿಸ್ತಾನ ಉಗ್ರರನ್ನು ಸಾಕುತ್ತಾ ಬೇರೆ ಬೇರೆ ದೇಶಗಳ ಮೇಲೆ ದ್ವೇಷ ಕಾರುತ್ತಿದ್ದು, ಇದರಿಂದ ಪಾಕಿಸ್ತಾನ ಅಕ್ಕಪಕ್ಕದ ದೇಶಗಳು ನೆಮ್ಮದಿ ಇಲ್ಲದೆ ನರಳುತ್ತಿವೆ. ಹೀಗೆಲ್ಲಾ ಪಾಕಿಸ್ತಾನ ತಾನು ಮಾಡಿದ ಪಾಪದ
WPL 2026 RCB: ಡಬ್ಲ್ಯೂಪಿಎಲ್ 2026 ಟ್ರೋಫಿ ಗೆದ್ದ ಆರ್ಸಿಬಿ
WPL 2026 RCB: ಡಬ್ಲ್ಯೂಪಿಎಲ್ 2026 ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿ ಚಾಂಪಿಯನ್ ಆಗಿದೆ. ಈ ಮೂಲಕ ಈವರೆಗೂ ಎರಡು ಟ್ರೋಫಿ ಎತ್ತಿದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ.
Bidar | ಡಾಕುಳಗಿ ಗ್ರಾಮದಲ್ಲಿ ಭೂಮಿಯಿಂದ ವಿಚಿತ್ರ ಶಬ್ದ : ಗ್ರಾಮಸ್ಥರಲ್ಲಿ ಆತಂಕ
ಬೀದರ್ : ಜಿಲ್ಲೆಯ ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಕಳೆದ 3–4 ದಿನಗಳಿಂದ ಭೂಮಿ ಒಳಗಡೆಯಿಂದ ವಿಚಿತ್ರ ಶಬ್ದ ಕೇಳಿಬರುತ್ತಿದೆ. ಭೂಮಿ ಕಂಪಿಸುತ್ತಿರುವ ಅನುಭವವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ಹಗಲು ಮಾತ್ರವಲ್ಲದೆ ತಡರಾತ್ರಿ ಸಮಯದಲ್ಲಿಯೂ ಭೂಮಿಯಿಂದ ಶಬ್ದ ಕೇಳಿಬರುತ್ತಿದ್ದು, ಕೆಲವೆಡೆ ಮನೆಗಳ ಗೋಡೆಗಳು ನಡುಗುತ್ತಿರುವ ಅನುಭವವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶಬ್ದ ಕೇಳಿಬಂದಾಗ ಮಕ್ಕಳು ಹಾಗೂ ವೃದ್ಧರನ್ನು ಕರೆದುಕೊಂಡು ಮನೆಗಳಿಂದ ಹೊರಬಂದು ತೆರವಾದ ಜಾಗದಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರು ನಿರಂತರ ಭಯ ಹಾಗೂ ಆತಂಕದಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಭೂಮಿಯಿಂದ ಅಸಹಜ ಶಬ್ದ ಕೇಳಿಬಂದು ಮನೆಗಳು ನಡುಗುತ್ತಿರುವ ಅನುಭವವಾಗುತ್ತಿರುವುದರಿಂದ, ಯಾವಾಗ ಏನಾಗುತ್ತದೆಯೋ ಎಂಬ ಭೀತಿ ನಮ್ಮಲ್ಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಹುಮನಾಬಾದ್ ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಡಾಕುಳಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈವರೆಗೂ ಈ ಪ್ರದೇಶದಲ್ಲಿ ಯಾವುದೇ ಭೂಕಂಪನ ದಾಖಲಾಗಿಲ್ಲ. ಆದರೂ ಭೂಮಿಯಿಂದ ಶಬ್ದ ಹಾಗೂ ಕಂಪನದ ಅನುಭವವಾಗುತ್ತಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ, ಕಾರಣ ಪತ್ತೆಹಚ್ಚಲು ತನಿಖಾ ತಂಡ ರಚಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾದಕ ವಸ್ತು ಮಾರಾಟಕ್ಕೆ ಯತ್ನ ಪ್ರಕರಣ: ಆರೋಪಿ ಸೆರೆ
ಮಂಗಳೂರು: ಮಾದಕ ವಸ್ತು ಎಂ.ಡಿ.ಎಂ.ಎ. ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ 1.5 ಲಕ್ಷ ರೂ. ಮೌಲ್ಯದ ಸುಮಾರು 15 ಗ್ರಾಂ ಮಾದಕ ದ್ರವ್ಯವನ್ನು ಮುಲ್ಕಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಹಳೆಯಂಗಡಿ ಸಾಗು ನಿವಾಸಿ ಮುಸಾಹಿದ್ (34) ಎಂದು ಪೊಲೀಸರು ಮಾಹಿತಿ ನೀಡಿದ್ದು, ಆತನ ಬಳಿ ಇದ್ದ 1.5 ಲಕ್ಷ ರೂ. ಮೌಲ್ಯದ ಎಂಡಿಎಂಎಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ಫೆ.4ರಂದು ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ವಸ್ತು ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ವಿರುದ್ಧ ಮುಲ್ಕಿ ಪೊಲೀಸರು ಕಲಂ:21(ಸಿ), 22(ಸಿ) ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದಾರೆ.
ನಾಡಿನ ವೈಭವ, ಇತಿಹಾಸ ಯುವಪೀಳಿಗೆಗೆ ಪರಿಚಯಿಸಲು ಉತ್ಸವಗಳು ಪೂರಕ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ
ಭಾರತದ ಶಿಕ್ಷಕಿ ರೂಬಲ್ ನಾಗಿಗೆ ಜಾಗತಿಕ ಶಿಕ್ಷಕ ಪ್ರಶಸ್ತಿ: ದುಬೈನಲ್ಲಿ 10 ಲಕ್ಷ ಡಾಲರ್ ಮೊತ್ತದ ಬಹುಮಾನ ಪ್ರದಾನ
ದುಬೈ,ಫೆ.5: ಭಾರತದಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗಾಗಿ ನೂರಾರು ಕಲಿಕಾ ಕೇಂದ್ರಗಳನ್ನು ನಿರ್ಮಾಣ ಹಾಗೂ ಕೊಳಗೇರಿಗಳ ಗೋಡೆಗಳಲ್ಲಿ ಶೈಕ್ಷಣಿಕ ಭಿತ್ತಿಚಿತ್ರಗಳ ರಚನೆಗಾಗಿ ಜನಪ್ರಿಯರಾಗಿರುವ ಭಾರತೀಯ ಶಿಕ್ಷಕಿ ರೂಬಲ್ ನಾಗಿ ಅವರು 10 ಲಕ್ಷ ಡಾಲರ್ ಮೊತ್ತದ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಯುಎಇನ ದುಬೈ ನಗರದಲ್ಲಿ ಗುರುವಾರ ನಡೆದ ಜಾಗತಿಕ ಸರಕಾರಗಳ ಶೃಂಗಸಭೆಯಲ್ಲಿ ಈ ಪ್ರತಿಷ್ಠಿತ ಪುರಸ್ಕಾರವನ್ನು ರೂಬಲ್ ನಾಗಿ ಅವರು ಸ್ವೀಕರಿಸಿದರು. ‘ರೂಬಲ್ ನಾಗಿ ಕಲಾ ಪ್ರತಿಷ್ಠಾನ’ವು ಭಾರತಾದ್ಯಂತ 800ಕ್ಕೂ ಅಧಿಕ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದೆ. ಶಾಲೆಯ ಮೆಟ್ಟಿ ಲೇರದ ಮಕ್ಕಳಿಗೆ ಸಂರಚನಾತ್ಮಕ ಕಲಿಕೆಯನ್ನು ಒದಗಿಸುವುದೇ ಈ ಪ್ರತಿಷ್ಠಾನದ ಉದ್ದೇಶವಾಗಿದೆ. ಶಾಲೆಗೆ ಹಾಜರಾಗುವ ಬಡಮಕ್ಕಳಿಗೂ ಅದು ಶಿಕ್ಷಣವನ್ನು ನೀಡುತ್ತಿದೆ. ನಾಗಿ ಅವರು ಸಾಕ್ಷರತೆ, ವಿಜ್ಞಾನ, ಗಣಿತ ಹಾಗೂ ಇತಿಹಾಸ ಮತ್ತಿತರ ಪಠ್ಯ ವಿಷಯಗಳನ್ನು ಕಲಿಸಲು ಗೋಡೆಗಳಲ್ಲಿ ಭಿತ್ತಿಚಿತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಈಜಿಪ್ಟ್, ಖತರ್ ಹಾಗೂ ಯುಎಇನಲ್ಲಿ ಹಲವಾರು ಶಾಲೆಗಳ್ನು ನಡೆಸುತ್ತಿರುವ ಜೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಯೋಜಕತ್ವದ ‘ವಾರ್ಕೆ ಪ್ರತಿಷ್ಠಾನ’ವು ಈ ಪ್ರಶಸ್ತಿಯನ್ನು ನೀಡುತ್ತಿದೆ. ‘‘ ಧೈರ್ಯ, ಸೃಜನಶೀಲತೆ, ಅನುಕಂಪ ಹಾಗೂ ಪ್ರತಿಯೊಂದು ಮಗುವಿನ ಸಾಮರ್ಥ್ಯದಲ್ಲಿ ಅಚಲ ನಂಬಿಕೆಯನ್ನು ಹೊಂದಿರುವ ರೂಬಲ್ ನಾಗಿ ಅವರು ಅತ್ಯುತ್ಕೃಷ್ಟ ಬೋಧನಾ ವಿಧಾನಕ್ಕೆ ಮಾದರಿಯಾಗಿದ್ದಾರೆ’’ ಎಂದು ಪ್ರತಿಷ್ಠಾನದ ಸ್ಥಾಪಕ ಸನ್ನಿ ವಾರ್ಕೆ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಕಡೆಗಣಿಸಲ್ಪಟ್ಟ ಸಮುದಾಯಗಳಿಗೆ ಶಿಕ್ಷಣವನ್ನು ತಲುಪಿಸುವ ಮೂಲಕ ರೂಬಲ್ ಅವರು ವ್ಯಕ್ತಿಯ ಬದುಕುಗಳನ್ನು ಮಾತ್ರವಲ್ಲ ಕುಟುಂಬಗಳು ಹಾಗೂ ಸಮುದಾಯಗಳನ್ನು ಬಲಪಡಿಸಿದ್ದಾರೆಂದು ಪ್ರತಿಷ್ಠಾನದ ಹೇಳಿಕೆ ತಿಳಿಸಿದೆ. ತನಗೆ ದೊರೆತ ಪ್ರಶಸ್ತಿಯ ಹಣದಿಂದ 10 ದಶಲಕ್ಷ ಡಾಲರ್ ವೆಚ್ಚದಲ್ಲಿ ಉಚಿತ ವೃತ್ತಿಪರ ತರಬೇತಿ ಸಂಸ್ಥೆಯನ್ನು ತೆರೆಯುವ ಉದ್ದೇಶವನ್ನು ನಾಗಿ ಹೊಂದಿದ್ದಾರೆ. 2015ರಿಂದ ಸನ್ನಿ ವಾರ್ಕಿ ಪ್ರತಿಷ್ಠಾನವು ಈ ಪುರಸ್ಕಾರವನ್ನು ನೀಡುತ್ತಾ ಬರುತ್ತಿದೆ.
ಲಿಂಗಸುಗೂರು | ಹುಲ್ಲಿನ ಬಣವೆಗೆ ಬೆಂಕಿ : ಅಪಾರಹಾನಿ
ಲಿಂಗಸುಗೂರು : ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದ ರೈತ ಮಾನಪ್ಪ ತಂ. ಹುಲಗಪ್ಪ ಅವರ ಹೊಲದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಪಕ್ಕದಲ್ಲಿದ್ದ ದನದ ಶಡ್ಗೆ ವ್ಯಾಪಿಸಿದ ಪರಿಣಾಮ ಹಸು ಹಾಗೂ ಎಮ್ಮೆ ಸಾವಿಗೀಡಾಗಿದ್ದು, ಇನ್ನೂ ಹಲವಾರು ಜಾನುವಾರುಗಳು ಗಾಯಗೊಂಡು ತೊಂದರೆಯಲ್ಲಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಮಾನಪ್ಪ ಅವರ ಹೊಲದಲ್ಲಿ ಸಂಗ್ರಹಿಸಿದ್ದ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿ ತೀವ್ರವಾಗಿ ಹರಡಿದ ಪರಿಣಾಮ ಪಕ್ಕದಲ್ಲಿದ್ದ ದನದ ಶಡ್ ಸಂಪೂರ್ಣವಾಗಿ ಸುಟ್ಟುಹೋಗಿದೆ. ಶಡ್ನಲ್ಲಿದ್ದ ಜಾನುವಾರುಗಳು ಬೆಂಕಿಗೆ ಸಿಲುಕಿ ಒಂದು ಹಸು ಹಾಗೂ ಒಂದು ಎಮ್ಮೆ ಸಾವನಪ್ಪಿವೆ. ಇನ್ನು ಕೆಲವು ಹಸು–ಎಮ್ಮೆಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಅಗ್ನಿ ಅವಘಡದಲ್ಲಿ ಕೃಷಿ ಉಪಕರಣಗಳು, ದನದ ಶೆಡ್ ಹಾಗೂ ಹುಲ್ಲಿನ ಬಣವೆ ಸಂಪೂರ್ಣವಾಗಿ ನಾಶವಾಗಿದ್ದು, ಅಂದಾಜು ಎಂಟು ಲಕ್ಷ ರೂ. ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತ ಮಾನಪ್ಪ ಅವರಿಗೆ ಅಪಾರ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸರಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ಕೆಡಿಪಿ ಮಾಜಿ ಸದಸ್ಯರಾದ ಬಂದೇನವಾಜ ಕೊಳೂರು ಅವರು ಆಗ್ರಹಿಸಿದ್ದಾರೆ.
ಜಾರ್ಖಂಡ್ ಸರಕಾರ ಘೋಷಿಸಿದ 2 ಲಕ್ಷ ರೂ. ಬಹುಮಾನ ನಿರಾಕರಿಸಿದ ‘ಮುಹಮ್ಮದ್ ದೀಪಕ್’!
ವೃದ್ಧ ಅಂಗಡಿ ಮಾಲಕನ ಪರ ನಿಂತಿದ್ದಕ್ಕೆ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದ ಯುವಕ
ಕಾರ್ಕಳದಲ್ಲಿ ಮಹಾಮಸ್ತಕಾಭಿಷೇಕ: ವಿಶೇಷ ಅನುದಾನಕ್ಕೆ ಡಿಸಿಎಂಗೆ ಮನವಿ
ಮಂಗಳೂರು , ಫೆ.5: ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ವಿಗ್ರಹಕ್ಕೆ 2027ರಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಮನವಿ ಮಾಡಿದ್ದಾರೆ. ಮಹಾಮಸ್ತಾಕಾಭಿಷೇಕದ ಸೊಬಗನ್ನು ಕಣ್ತುಂಬಿಸಲು ಲಕ್ಷಾಂತರ ಭಕ್ತ ಜನರು ಕಾರ್ಕಳಕ್ಕೆ ಬರುವವರಿದ್ದು ಈ ಸಂದರ್ಭ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು, ಇದಕ್ಕಾಗಿ ಗುರುವಾರ ಬೆಂಗಳೂರುನಲ್ಲಿ ಉಪ ಮುಖ್ಯಮಂತ್ರಿ ಡಿಕೆಶಿ ಅವರನ್ನು ಭೇಟಿಯಾದ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರು ಮಹಾಮಸ್ತಾಕಾಭಿ ಷೇಕದ ಸಂದರ್ಭದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವಿವಿಧ ಇಲಾಖೆಗಳ ಮೂಲಕ ನಡೆಯಬೇಕಾದ ಕಾಮಗಾರಿ ಗಳ ವಿವರ ಸಲ್ಲಿಸಿ , ಅನುದಾನಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮೇಘರಾಜ್ ಆರ್.ಜೈನ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯಿತ್ ಅಲಿ ಇದ್ದರು.
Mangaluru| ಮಾದಕ ವಸ್ತು ಮಾರಾಟಕ್ಕೆ ಯತ್ನ ಪ್ರಕರಣ: ವಿದ್ಯಾರ್ಥಿ ಸಹಿತ ಐವರ ಬಂಧನ
ಮಂಗಳೂರು: ಮುಲ್ಕಿ, ಉಳ್ಳಾಲ, ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕಾಲೇಜೊಂದರ ವಿದ್ಯಾರ್ಥಿ ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮುಲ್ಕಿಯಲ್ಲಿ ಎಂಡಿಎಅ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, 15 ಗ್ರಾಂ ಎಂಡಿಎಂಎ ವಶಪಡಿಸಿ ಕೊಳ್ಳಲಾಗಿದೆ. ಉಳ್ಳಾಲದಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಬಂಧಿಸಿ, 3.5 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಕೊಣಾಣೆಯಲ್ಲಿ ಆಂಧ್ರಪ್ರದೇಶ ಮೂಲಕ ಇಬ್ಬರು ಮಾದಕ ವಸ್ತು ಸಾಗಾಟಗಾರರನ್ನು ಬಂಧಿಸಿ, ಕಾರು ಸಹಿತ 80 ಕೆಜಿ ಗಾಂಜಾ ವಶಪಡಿಸಲಾಗಿದೆ. ಒಟ್ಟಾರೆ 24 ಗಂಟೆಯಲ್ಲಿ ಐದು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಕೆಲವರ ಬಂಧನ ನಡೆಯಲಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಅನ್ನು ಸೋಲಿಸಲು ಎನ್ಡಿಎ 40,000ಕೋಟಿ ರೂ. ವೆಚ್ಚ ಮಾಡಿದೆ: ತೇಜಸ್ವಿ ಯಾದವ್ ಆರೋಪ
ಪಾಟ್ನಾ, ಫೆ. 5: 2025ರ ವಿಧಾನ ಸಭೆ ಚುನಾವಣೆಯಲ್ಲಿ ತನ್ನ ನೇತೃತ್ವದ ಮಹಾಘಟಬಂಧನ್ ಅನ್ನು ಸೋಲಿಸಲು ಬಿಹಾರದ ಆಡಳಿತಾರೂಢ ಎನ್ಡಿಎ 40,000 ಕೋ.ರೂ. ಖರ್ಚು ಮಾಡಿದೆ ಎಂದು ಆರ್ಜೆಡಿಯ ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್ ಗುರುವಾರ ಪ್ರತಿಪಾದಿಸಿದ್ದಾರೆ. ವಿರೋಧ ಪಕ್ಷದ ನಾಯಕರಾದ ತೇಜಸ್ವಿ ಯಾದವ್ ಅವರು ಚುನಾವಣೆಗೆ ಮುನ್ನ ನಿತೀಶ್ ಕುಮಾರ್ ಸರಕಾರ ಘೋಷಿಸಿದ ಸರಣಿ ಉಚಿತ ಯೋಜನೆಗಳ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದರು. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು ಈ ಹೇಳಿಕೆಗಳನ್ನು ನೀಡಿದರು. ‘‘ನಮ್ಮನ್ನು ಸೋಲಿಸಲು ನೀವು 40,000 ಕೋ.ರೂ. ವೆಚ್ಚ ಮಾಡಿದಿರಿ. ಈಗ ಸಮಯ ನಿಮ್ಮ ಕಡೆ ಇರಬಹುದು. ಆದರೆ, ನಮಗೆ ಕೂಡ ಸಮಯ ಬರುತ್ತದೆ’’ ಎಂದು ಯಾದವ್ ಅವರು ಹೇಳಿದರು. ಮಹಿಳೆಯರ ಮತ ಕೇಳುವಾಗ ಅವರನ್ನು ಅವಮಾನಿಸಿದೆ ಎಂದು ಯಾದವ್ ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡರು. ಚುನಾವಣೆಗೆ ಮುನ್ನ ಬಿಹಾರದಲ್ಲಿ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ 10,000 ರೂ. ನೀಡುವ ಭರವಸೆಯನ್ನು ಅವರು ಪ್ರಸ್ತಾವಿಸಿದರು.
ಕನಕಗಿರಿ | ಆಸ್ತಿ ತೆರಿಗೆ ಪಾವತಿಸಿ ಗ್ರಾ.ಪಂ ಅಭಿವೃದ್ಧಿಗೆ ಸಹಕರಿಸಿ : ವೀರಣ್ಣ ನಕ್ರಳ್ಳಿ
ಕನಕಗಿರಿ: ಆಸ್ತಿ ತೆರಿಗೆ ಪಾವತಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಗೆ ಸಹಕರಿಸಬೇಕು ಎಂದು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ವೀರಣ್ಣ ನಕ್ರಳ್ಳಿ ಹೇಳಿದರು. ತಾಲೂಕಿನ ನವಲಿ ಗ್ರಾಮ ಪಂತಾಯತಿ 25-26 ಕರವಸೂಲಿ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಂದು ಗ್ರಾಮಗಳಲ್ಲಿ ತೆರಿಗೆ ಪಾವತಿದಾರರು ತಮ್ಮ ತೆರಿಗೆಯ ಪಾಲನ್ನು ನೀಡುವುದರಿಂದ ಗ್ರಾಮದ ಅಭಿವೃದ್ಧಿಗೆ ಸಹಾಯಕಾರಿಯಾಗುತ್ತದೆ ಮತ್ತು ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಕರ ವಸೂಲಿಗಾರ ಸಿದ್ದಪ್ಪ, ಸಿಬ್ಬಂದಿಗಳು ಇತರರು ಇದ್ದರು.
ಕಲಬುರಗಿ: ಆನೆಕಾಲು ರೋಗ (ಫಿಲೇರಿಯಾ) ತಡೆಗಟ್ಟುವ ಉದ್ದೇಶದಿಂದ ಫೆ.12ರಿಂದ 28ರವರೆಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಸಾಮೂಹಿಕ ಔಷಧಿ ಸೇವನೆಯ (ಎಂ.ಡಿ.ಎ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಾವೊಬ್ಬ ಅರ್ಹ ವ್ಯಕ್ತಿಯೂ ಗುಳಿಗೆ ಸೇವನೆಯಿಂದ ಹೊರಗುಳಿಯದಂತೆ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಕಲಬುರಗಿ ಗ್ರಾಮೀಣ, ಅಫಜಲಪೂರ, ಆಳಂದ, ಚಿಂಚೋಳಿ ಹಾಗೂ ಸೇಡಂ ತಾಲೂಕುಗಳ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 63 ಉಪ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 222 ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ 16,373 ಅಂಗನವಾಡಿ ಮಕ್ಕಳು, 63,350 ಶಾಲಾ ಮಕ್ಕಳು, 2,307 ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟು 3,14,689 ಜನರಿಗೆ ಡಿ.ಇ.ಸಿ., ಅಲ್ಬೆಂಡೋಜಾಲ್ ಮತ್ತು ಐವರಮೆಕ್ಟಿನ್ ತ್ರಿವಳಿ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಭಾಗಿದಾರ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಿಶೇಷವಾಗಿ ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜುಗಳು, ಹಾಸ್ಟೆಲ್ಗಳು ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಯಾವುದೇ ಆತಂಕ ಇಲ್ಲದೆ ಮಾತ್ರೆ ಸೇವನೆ ಬಗ್ಗೆ ಮುಂಚಿತ ಅರಿವು ಮೂಡಿಸಬೇಕು. ಮಾತ್ರೆ ಸೇವನೆಯಿಂದ ಯಾವುದೇ ಗಂಭೀರ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಾಮೂಹಿಕ ಔಷಧಿ ಸೇವನೆಯ ಕಾರ್ಯಕ್ರಮಕ್ಕಾಗಿ 8,55,133 ಡಿ.ಇ.ಸಿ., 8,55,133 ಐವರಮೆಕ್ಟಿನ್ ಹಾಗೂ 3,42,053 ಅಲ್ಬೆಂಡೋಜಾಲ್ ಮಾತ್ರೆಗಳನ್ನು ದಾಸ್ತಾನು ಮಾಡಲಾಗಿದೆ. ಮಾತ್ರೆ ನುಂಗಿಸುವ ಕಾರ್ಯಕ್ಕೆ 699 ತಂಡಗಳನ್ನು ರಚಿಸಲಾಗಿದ್ದು, 36 ಮಂದಿ ಮೇಲ್ವಿಚಾರಣೆ ವಹಿಸಲಿದ್ದಾರೆ. ಈ ಕಾರ್ಯದಲ್ಲಿ 41 ಅಂಗನವಾಡಿ ಕಾರ್ಯಕರ್ತೆಯರು ಮತ್ತು 304 ಆಶಾ ಕಾರ್ಯಕರ್ತೆಯರ ಸಹಕಾರ ಪಡೆಯಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು. ಮಾತ್ರೆ ಯಾರು ಸೇವಿಸಬೇಕು? ಹೇಗೆ? : 2 ರಿಂದ 5 ವರ್ಷದೊಳಗಿನವರಿಗೆ ಡಿ.ಇ.ಸಿ. 100 ಮಿ.ಗ್ರಾಂ ಒಂದು ಗುಳಿಗೆ, 6 ರಿಂದ 14 ವರ್ಷದೊಳಗಿನವರಿಗೆ ಡಿ.ಇ.ಸಿ. 100 ಮಿ.ಗ್ರಾಂ ಎರಡು ಗುಳಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಡಿ.ಇ.ಸಿ. 100 ಮಿ.ಗ್ರಾಂ ಮೂರು ಗುಳಿಗೆ ನೀಡಲಾಗುತ್ತಿದೆ. 2 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ 400 ಮಿ.ಗ್ರಾಂ ಚಪ್ಪರಿಸುವ ಅಲ್ಬೆಂಡಾಜೋಲ್ ಒಂದು ಗುಳಿಗೆ ನೀಡಲಾಗುತ್ತದೆ. ಇನ್ನು ಐವರಮೆಕ್ಟಿನ್ ಮಾತ್ರೆ ಎತ್ತರಕ್ಕನುಗುಣವಾಗಿ ನೀಡಲಾಗುತ್ತದೆ. 2 ವರ್ಷದೊಳಗಿನ ಮಕ್ಕಳಿಗೆ ಡಿ.ಇ.ಸಿ. ಮತ್ತು ಅಲ್ಬೆಂಡೋಜಾಲ್ ಮಾತ್ರೆ ನೀಡಬಾರದು. ಹಾಗೆಯೇ 5 ವರ್ಷದೊಳಗಿನ ಮಕ್ಕಳಿಗೆ ಐವರಮೆಕ್ಟಿನ್ ನೀಡಬಾರದು. ಗರ್ಭಿಣಿಯರು ಹಾಗೂ ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಂಬಂಧಿ ದೀರ್ಘಕಾಲೀನ ಕಾಯಿಲೆಗಳಿಂದ ಬಳಲುತ್ತಿರುವವರು ತ್ರಿವಳಿ ಮಾತ್ರೆ ಸೇವಿಸಬಾರದು ಎಂದು ತಿಳಿಸಲಾಯಿತು. ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಮನಿ ಅವರು ಸಾಮೂಹಿಕ ಔಷಧಿ ಸೇವನೆಯ ಹೆಚ್ಚುವರಿ ಸುತ್ತಿನ ಸಿದ್ಧತೆ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿದರು. ಸಭೆಯಲ್ಲಿ ಡಿ.ಎಚ್.ಓ. ಡಾ. ಶರಣಬಸಪ್ಪ ಕ್ಯಾತನಾಳ, ಆರ್.ಸಿ.ಎಚ್.ಓ. ಡಾ. ಸಿದ್ರಾಮ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ನಾ ರುಕಿಯಾ ರಬಾ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಮೂಹಿಕ ಔಷಧಿ ಸೇವನೆ (ಎಂ.ಡಿ.ಎ) ಹಾಗೂ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಪೋಸ್ಟರ್ಗಳನ್ನು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ಬಿಡುಗಡೆ ಮಾಡಿದರು.
ಯಾವುದೇ ದೇಶದಿಂದ ತೈಲ ಖರೀದಿಗೆ ಭಾರತ ಮುಕ್ತವಾಗಿದೆ: ರಶ್ಯ
ಮಾಸ್ಕೋ, ಫೆ.5: ಯಾವುದೇ ರಾಷ್ಟ್ರದಿಂದ ತೈಲವನ್ನು ಖರೀದಿಸಲು ಭಾರತ ಮುಕ್ತವಾಗಿದೆ ಮತ್ತು ತನ್ನ ಕಚ್ಛಾ ತೈಲ ಪೂರೈಕೆದಾರರನ್ನು ವೈವಿಧ್ಯಗೊಳಿಸುವ ಅವರ ನಿರ್ಧಾರದಲ್ಲಿ ಹೊಸತೇನೂ ಇಲ್ಲ ಎಂದು ರಶ್ಯ ಹೇಳಿದೆ. ಭಾರತವು ರಶ್ಯದ ತೈಲ ಖರೀದಿಯನ್ನು ಕೊನೆಗೊಳಿಸಲು ಒಪ್ಪಿದೆ ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ` ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ರಾಷ್ಟ್ರ ರಶ್ಯ ಅಲ್ಲ ಎಂದು ನಾವು ಹಾಗೂ ಇತರ ಅಂತರಾಷ್ಟ್ರೀಯ ಇಂಧನ ತಜ್ಞರು ಚೆನ್ನಾಗಿ ತಿಳಿದಿದ್ದೇವೆ. ಭಾರತ ಈ ಹಿಂದೆಯೂ ಈ ಉತ್ಪನ್ನಗಳನ್ನು ಇತರ ದೇಶಗಳಿಂದ ಖರೀದಿಸಿದೆ. ಆದ್ದರಿಂದ ಇದರಲ್ಲಿ ಹೊಸತೇನೂ ಇಲ್ಲ' ಎಂದು ಹೇಳಿದ್ದಾರೆ.
ಶಹಾಬಾದ್ | ಸಂಘಟನೆ ಮಾಡುವ ಮೂಲಕ ಪಕ್ಷ ಗಟ್ಟಿಗೊಳಿಸಿ: ಬಸವರಾಜ ಬೆಣ್ಣೂರಕರ್
ಶಹಾಬಾದ್ : ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ಅಪ್ಪಾರಾವ ಮಾಲಿಪಾಟೀಲ ಅವರಿಗೆ ಬುಧವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ಅವರು, ವಿಶ್ವದ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಪ್ರತಿಯೊಬ್ಬ ಸಕ್ರಿಯ ಕಾರ್ಯಕರ್ತನಿಗೆ ಒಂದಲ್ಲೊಂದು ಜವಾಬ್ದಾರಿಯನ್ನು ನೀಡುತ್ತಾ ಬಂದಿದೆ. ಪಕ್ಷ ನೀಡಿದ ಜವಾಬ್ದಾರಿಯನ್ನು ನಾವು ಸಕ್ರಿಯರಾಗಿ ಪರಿಣಾಮಕಾರಿಯಾಗಿ ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಭದ್ರಬುನಾದಿ ಗಟ್ಟಿಗೊಳಿಸಿ ಆ ನಿಟ್ಟಿನಲ್ಲಿ ಅಪ್ಪಾರಾವ ಪಾಟೀಲ ಅವರು ಕಾರ್ಯೋನ್ಮುಖರಾಗುತ್ತಾರೆ ಎಂಬ ಆಶಾಭಾವನೆ ನಮ್ಮಲಿದೆ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶರಣು ಜ್ಯೋತಿ, ಸನ್ಮಾನ ಸ್ವೀಕರಿಸಿ ಅಪ್ಪಾರಾವ ಮಾಲಿ ಪಾಟೀಲ, ಚಿತ್ತಾಪುರ ಬಿಜೆಪಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಜಿಲ್ಲಾ ವಕ್ತಾರ ಚಂದ್ರಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಿರೀಶ ಭಜಂತ್ರಿ , ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ ಮಾತನಾಡಿದರು. ನಾಗಯ್ಯ ಸ್ವಾಮಿ ಮಠಪತಿ ,ನಿಂಗಪ್ಪ ಮುದುಕಪ್ಪಗೋಳ,ಗ್ರಾಪಂ ಮಾಜಿ ಅಧ್ಯಕ್ಷ ಶರಣಪ್ಪ ಸಣಮೋ, ಮಲ್ಲಿಕಾರ್ಜುನ ಕುಲಕುಂದಿ, ಕಾಶಿನಾಥ ಸಣಮೋ, ಈಶ್ವರ ಯಾದಗೀರ, ರಾಜು ತಳವಾರ, ಶರಣಪ್ಪ ಹುಂಡೆಕರ್,ರಾಜು ಪಾಟೀಲ,ಶೀತಲ್ ಮಣಿ,ದ್ಯಾವಪ್ಪ ಷಣ್ಮುಖ,ದೇವಪ್ಪ ಕುಲುಕುಂದಿಕರ್, ಬಸವರಾಜ ಬಾಳಕ್, ಹರಿಶ್ಚಂದ್ರ ಕಟ್ಟಿ ಇತರರು ಇದ್ದರು. ಈಶ್ವರ ಮುಗುಳನಾಗಾವಿ ನಿರೂಪಿಸಿದರು, ರವಿ ಯರಗೋಳ ಸ್ವಾಗತಿಸಿದರು, ರಾಜು ಪಾಟೀಲ ವಂದಿಸಿದರು.
ರಶ್ಯ-ಅಮೆರಿಕ ಕೊನೆಯ ಪರಮಾಣು ಒಪ್ಪಂದ ಮುಕ್ತಾಯ: ಹೊಸ ಶಸ್ತ್ರಾಸ್ತ್ರ ಸ್ಪರ್ಧೆಯ ಭೀತಿಗೆ ನಾಂದಿ
ಮಾಸ್ಕೋ, ಫೆ.5: ರಶ್ಯ ಮತ್ತು ಅಮೆರಿಕಾ ನಡುವಿನ ಕೊನೆಯ ಪರಮಾಣು ಒಪ್ಪಂದ ಗುರುವಾರ ಮುಕ್ತಾಯಗೊಂಡಿದ್ದು ಅರ್ಧ ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಎರಡು ದೊಡ್ಡ ಪರಮಾಣು ಶಸ್ತ್ರಾಗಾರಗಳ ಮೇಲಿನ ಮುಚ್ಚಳವನ್ನು ತೆಗೆದು ಹಾಕಲಾಗಿದೆ. ಎರಡು ಜಾಗತಿಕ ಶಕ್ತಿಗಳ ನಡುವಿನ ಕೊನೆಯ ಪರಮಾಣು ಒಪ್ಪಂದ, `ನ್ಯೂ ಸ್ಟಾರ್ಟ್' ಒಪ್ಪಂದವು ಗುರುವಾರ ಕೊನೆಗೊಂಡಿದ್ದು ರಶ್ಯ ಮತ್ತು ಅಮೆರಿಕಾಗಳನ್ನು ತಮ್ಮ ಪರಮಾಣು ಶಸ್ತ್ರಾಗಾರಗಳ ಮೇಲಿನ ನಿರ್ಬಂಧಗಳ ನಿಯಂತ್ರಣದಿಂದ ಅಧಿಕೃತವಾಗಿ ಬಿಡುಗಡೆ ಮಾಡಿದೆ ಮತ್ತು ಜಾಗತಿಕ ಶಸ್ತ್ರಾಸ್ತ್ರ ಸ್ಪರ್ಧೆಯ ಭಯವನ್ನು ಪ್ರಚೋದಿಸಿದೆ. ಅಮೆರಿಕಾ ಸಿದ್ದವಿದ್ದರೆ ಒಪ್ಪಂದದ ಮಿತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲು ರಶ್ಯವೂ ಸಿದ್ದವಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ವರ್ಷ ಘೋಷಿಸಿದ್ದರು. ಆದರೆ ವಿಸ್ತರಿಸುವ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಂದಿಸಲಿಲ್ಲ. ಒಪ್ಪಂದ ಅಂತ್ಯಗೊಳ್ಳುವ ವಿಷಯದ ಬಗ್ಗೆ ಬುಧವಾರ ಪುಟಿನ್ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ರಶ್ಯವು ಭದ್ರತಾ ಪರಿಸ್ಥಿತಿಯ ಸಂಪೂರ್ಣ ವಿಶ್ಲೇಷಣೆಯ ಆಧಾರದ ಮೇಲೆ ಸಮತೋಲಿತ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ರಶ್ಯ ಅಧ್ಯಕ್ಷರ ಸಲಹೆಗಾರ ಯೂರಿ ಉಷಕೋವ್ ಹೇಳಿದ್ದಾರೆ. ಪ್ರಸ್ತುತ ಸಂದರ್ಭಗಳಲ್ಲಿ `ನ್ಯೂ ಸ್ಟಾರ್ಟ್(ಎಸ್ಟಿಎಆರ್ಟಿ) ಒಪ್ಪಂದದ ಪಕ್ಷಗಳು ಅದರ ಪ್ರಮುಖ ನಿಬಂಧನೆಗಳನ್ನು ಒಳಗೊಂಡಂತೆ ಒಪ್ಪಂದದ ಸಂದರ್ಭದಲ್ಲಿ ಯಾವುದೇ ಕಟ್ಟುಪಾಡುಗಳು ಮತ್ತು ಅಥವಾ ಸಮಸೂತ್ರತೆ ಘೋಷಣೆಗಳಿಗೆ ಇನ್ನು ಮುಂದೆ ಬದ್ಧರಾಗಿರುವುದಿಲ್ಲ ಮತ್ತು ಅವರ ಮುಂದಿನ ಹಂತಗಳನ್ನು ಆಯ್ಕೆ ಮಾಡಲು ಮೂಲಭೂತವಾಗಿ ಸ್ವತಂತ್ರರಾಗಿರುತ್ತಾರೆ ಎಂದು ನಾವು ಭಾವಿಸುತ್ತೇವೆ' ಎಂದು ರಶ್ಯದ ವಿದೇಶಾಂಗ ಇಲಾಖೆ ಹೇಳಿದೆ. 2010ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ರಶ್ಯದ ಅಧ್ಯಕ್ಷರಾಗಿದ್ದ ಡಿಮಿಟ್ರಿ ಮೆಡ್ವೆಡೇವ್ ಸಹಿ ಹಾಕಿದ್ದ `ನ್ಯೂ ಎಸ್ಟಿಎಆರ್ಟಿ ಒಪ್ಪಂದವು 700ಕ್ಕಿಂತ ಹೆಚ್ಚು ಕ್ಷಿಪಣಿ ಮತ್ತು ಬಾಂಬರ್ಗಳಲ್ಲಿ ಗರಿಷ್ಠ 1,550 ಪರಮಾಣು ಸಿಡಿತಲೆಗಳಿಗೆ ಎರಡೂ ರಾಷ್ಟ್ರಗಳನ್ನು ನಿರ್ಬಂಧಿಸಿದೆ. ಇದು ಮೂಲತಃ 2021ರಲ್ಲಿ ಮುಕ್ತಾಯಗೊಳ್ಳಬೇಕಿತ್ತು, ಆದರೆ ಐದು ವರ್ಷ ವಿಸ್ತರಿಸಲಾಗಿತ್ತು. ಒಪ್ಪಂದದ ಅನುಸರಣೆಯನ್ನು ಪರಿಶೀಲಿಸಲು ವ್ಯಾಪಕವಾದ ಆನ್ಸೈಟ್ (ಕಾರ್ಯಸ್ಥಳದಲ್ಲೇ) ತಪಾಸಣೆಗೆ ಅವಕಾಶವಿದೆ. ಆದರೆ 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆನ್ಸೈಟ್ ತಪಾಸಣೆ ಸ್ಥಗಿತಗೊಂಡಿದ್ದು ಬಳಿಕ ಪುನರಾರಂಭಗೊಂಡಿಲ್ಲ. ಐದು ದಶಕಗಳಿಗೂ ಹೆಚ್ಚು ಕಾಲ ಶಸ್ತ್ರಾಸ್ತ್ರ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಮುಖ ಒಪ್ಪಂದದ ಅವಸಾನವು ಜಾಗತಿಕ ಅಸ್ಥಿರತೆ ಹೆಚ್ಚುತ್ತಿರುವ ಸಮಯದಲ್ಲಿ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಜೊತೆಗೆ, ಈ ವರ್ಷ ಮರುಪರಿಶೀಲನೆಗೆ ಒಳಪಡಲಿರುವ 1970ರ `ಪರಮಾಣು ಪ್ರಸರಣ ತಡೆ ಒಪ್ಪಂದ' (ಎನ್ಪಿಟಿ)ಕ್ಕೂ ಬೆದರಿಕೆ ಒಡ್ಡಿದೆ. ಅಮೆರಿಕ-ರಶ್ಯ ಪರಮಾಣು ಒಪ್ಪಂದ ಅಂತ್ಯಕ್ಕೆ ವಿಶ್ವಸಂಸ್ಥೆ ಕಳವಳ ಅಮೆರಿಕ ಮತ್ತು ರಶ್ಯ ನಡುವಿನ ಪರಮಾಣು ಒಪ್ಪಂದ ಅಂತ್ಯಗೊಂಡಿರುವುದು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಗಂಭೀರ ಕ್ಷಣವಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದು ತಕ್ಷಣ ಪರಮಾಣು ಶಸ್ತ್ರ ನಿಯಂತ್ರಣದ ಕುರಿತ ಹೊಸ ಒಪ್ಪಂದಕ್ಕೆ ಸಹಿ ಹಾಕುವಂತೆ ಎರಡೂ ದೇಶಗಳನ್ನು ಆಗ್ರಹಿಸಿದ್ದಾರೆ. `ಅರ್ಧ ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ, ಮೊದಲ ಬಾರಿಗೆ ನಾವು ಜಾಗತಿಕ ಪರಮಾಣು ಶಸ್ತ್ರಾಸ್ತ್ರಗಳ ಬಹುಪಾಲು ಸಂಗ್ರಹವನ್ನು ಹೊಂದಿರುವ ಎರಡು ರಾಷ್ಟ್ರಗಳ ಕಾರ್ಯತಂತ್ರದ ಪರಮಾಣು ಶಸ್ತ್ರಾಗಾರಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲದ ಜಗತ್ತನ್ನು ಎದುರಿಸುತ್ತಿದ್ದೇವೆ' ಎಂದು ಗುಟೆರಸ್ ಹೇಳಿದ್ದಾರೆ. `ನ್ಯೂ ಸ್ಟಾರ್ಟ್(ಎಸ್ಟಿಎಆರ್ಟಿ) ಹಾಗೂ ಇತರ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಗಳು ಎಲ್ಲಾ ಜನರ ಭದ್ರತೆಯನ್ನು ಗಮನಾರ್ಹವಾಗಿ ಸುಧಾರಿಸಿವೆ. ದಶಕಗಳ ಸಾಧನೆಯನ್ನು ಪರಮಾಣು ಶಸ್ತ್ರ ಬಳಕೆಯ ಅಪಾಯ ದಶಕಗಳಲ್ಲೇ ಅತೀ ಹೆಚ್ಚಾಗಿರುವ ಈ ನಿರ್ಣಾಯಕ ಸಮಯದಲ್ಲಿ ವ್ಯರ್ಥಗೊಳಿಸಲು ಸಾಧ್ಯವಿಲ್ಲ' ಎಂದು ಗುಟೆರಸ್ ಹೇಳಿದ್ದು, ಉಕ್ರೇನ್ ಯುದ್ದದ ಆರಂಭದಲ್ಲಿ ಕಾರ್ಯತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ರಶ್ಯದ ಹೇಳಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ವಿಶ್ವದ ಪರಮಾಣು ಸಿಡಿತಲೆಗಳಲ್ಲಿ 80%ಕ್ಕಿಂತ ಹೆಚ್ಚು ರಶ್ಯ ಮತ್ತು ಅಮೆರಿಕಾದ ಹಿಡಿತದಲ್ಲಿದೆ. ತಡವಿಲ್ಲದೆ ಮಾತುಕತೆಯ ಮೇಜಿಗೆ ಮರಳಲು ಮತ್ತು ಉತ್ತರಾಧಿಕಾರಿ ಚೌಕಟ್ಟನ್ನು ಒಪ್ಪಿಕೊಳ್ಳುವಂತೆ ಗುಟೆರಸ್ ಎರಡೂ ದೇಶಗಳನ್ನು ಆಗ್ರಹಿಸಿದ್ದಾರೆ.
ಪುನೀತ್ ಕೆರೆಹಳ್ಳಿ ವಿರುದ್ಧ ಹೈಕೋರ್ಟ್ ಗರಂ! ರೀಲ್ಸ್ - ಪೋಸ್ಟ್ಗಾಗಿ ಹಲ್ಲೆ, ನಿಂದನೆ ಸಲ್ಲ ಎಂದು ಎಚ್ಚರಿಕೆ
ಪ್ರಕರಣವೊಂದರಲ್ಲಿ ರಿಲೀಫ್ ನೀಡದ ಬೆನ್ನಲ್ಲೆ ಪೊಲೀಸರನ್ನು ನಿಂದನೆ ಮಾಡಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿಡಿಯೋ ರೀಲ್ಸ್ ಮಾಡಿದ್ದಾರೆ. ಅವರ ಈ ನಡವಳಿಕೆಯನ್ನು ಹೈಕೋರ್ಟ್ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದೆ. ಪುನೀತ್ಗೆ ಸುಮ್ಮನಿರಲು ಆಗುವುದಿಲ್ಲವೇ? ಎಂದು ಪ್ರಶ್ನೆ ಮಾಡಿದೆ. ಜತೆಗೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆಯೇ ಹೊರತು ರದ್ದಾಗಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಪಂಚಾಯಿತಿ ಚುನಾವಣೆಗಳಿಗೆ ಇವಿಎಂ ಬದಲಾಗಿ ಮತಪತ್ರಗಳ ಬಳಕೆ : ಸಚಿವ ಸಂಪುಟ ತೀರ್ಮಾನ
ಬೆಂಗಳೂರು : ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ಬದಲಾಗಿ ಮತಪತ್ರ(ಬ್ಯಾಲೆಟ್ ಪೇಪರ್)ಗಳ ಮೂಲಕ ನಡೆಸಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು. ಪಂಚಾಯಿತಿ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸುವ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ)ವಿಧೇಯಕ-2026ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈಗಾಗಲೇ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ನಗರ ಪಾಲಿಕೆ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಿ ನಡೆಸುವ ಕುರಿತು ಸರಕಾರ ನಿರ್ಧಾರ ಕೈಗೊಂಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಕೃತಕ ಬುದ್ಧಿಮತ್ತೆ ಚಾಲಿತ ‘ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯೂಷನ್’ ತಂತ್ರಾಂಶವನ್ನ ಒಟ್ಟು 67.20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಳವಡಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಅಪಪ್ರಚಾರ ತಡೆಯಲು ಈಗಿರುವ ಸಾಂಪ್ರದಾಯಿಕ ವಿಧಾನ ಅಸಮರ್ಥವಾಗುತ್ತಿದೆ. ಕ್ಷಿಪ್ರ ವೇಗದಲ್ಲಿ ಡಿಜಿಟಲ್ ಬೆದರಿಕೆ ಗುರುತಿಸಲು ತಡೆಯಲು ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ಕೃತಕ ಬುದ್ಧಿಮತ್ತೆ ಚಾಲಿತ ಅನಾಲಿಟಿಕ್ಸ್ ಸಲ್ಯೂಷನ್ ಡಿಜಿಟಲ್ ಕಂಟೆಂಟ್ಗಳನ್ನು ಅವಲೋಕಿಸಿ, ಉಗ್ರಗಾಮಿ ಚಟುವಟಿಕೆಗಳು, ಮಕ್ಕಳ ಕಳ್ಳಸಾಗಣೆ ಮುಂತಾದ ಚಟುವಟಿಕೆಗಳ ಮೇಲೆ ನಿಗಾ ಇರಿಸಲಿದೆ. ಸುಳ್ಳು ಮಾಹಿತಿ ಹರಡುವುದಕ್ಕೆ ತಡೆ ಸೇರಿ ತಾತ್ವಿಕ ನಿರ್ಧಾರ ಕೈಗೊಳ್ಳಲು ಇದು ಕೇವಲ ಫ್ಯಾಕ್ಟ್ ಚೆಕ್ ಮಾತ್ರ ಅಲ್ಲ, ಅದರ ಮೂಲವನ್ನೆ ಪತ್ತೆ ಮಾಡುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 2013-14 ರಿಂದ 2018-19ನೆ ಸಾಲಿನವರೆಗೆ ವಿವಿಧ ಯೋಜನೆಗಳಡಿ ನೀಡಲಾಗಿರುವ 981 ಕೋಟಿ ರೂ. ಸಾಲವನ್ನು ಒ.ಟಿ.ಎಸ್ (ಒನ್ ಟೈಮ್ ಸೆಟಲ್ಮೆಂಟ್) ಯೋಜನೆಯ ಮೂಲಕ ವಸೂಲಾತಿ ಮಾಡಲು ಸಚಿವ ಸಂಪುಟ ಸಮ್ಮತಿಸಿದೆ ಎಂದು ಅವರು ಹೇಳಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಮೌಲಾನಾ ಆಝಾದ್ ಮಾದರಿ ಶಾಲೆಗಳ ಹಾಗೂ 18 ವಸತಿ ನಿಲಯಗಳ ನಿರ್ಮಾಣಕ್ಕಾಗಿ 17.71 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಾಗರಿಕ ಸೌಲಭ್ಯ ನಿವೇಶನಗಳನ್ನು ಸ್ಥಳೀಯ ಸಂಸ್ಥೆಗಳಿಂದ ಖರೀದಿಸಲು ಒಪ್ಪಿಗೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಕೃಷಿ ಇಲಾಖೆಯಡಿ ಬರುವ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮವನ್ನು ಸಮಾಪನಗೊಳಿಸಲು ನಿರ್ಧರಿಸಲಾಗಿದೆ. ಅನಗತ್ಯ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯದಲ್ಲಿ ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಒತ್ತುವರಿಯನ್ನು ತೆರವುಗೊಳಿಸಿ, ‘ಭೂ ವರಾಹ ದೇವಾಲಯಗಳ ಯೋಜನೆ’ಯಡಿ ಈ ದಾಖಲೀಕರಣಗೊಳಿಸುವ ಸ್ಥಿರಾಸ್ತಿಗಳನ್ನು 15 ಕೋಟಿ ರೂ.ಗಳ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ, ಸಾರಥಿ ಯೋಜನೆಯಡಿ ಆಟೋ ರಿಕ್ಷಾ ಅಥವಾ ಕಾರುಗಳನ್ನು ಖರೀದಿಸಲು ಒಟ್ಟು 19.18 ಕೋಟಿ ರೂ.ಗಳ ಸಹಾಯಧನವನ್ನು ಹಾಗೂ ಇ-ವೆಂಡಿಂಗ್ ಯೋಜನೆಯಡಿ ಇ-ವೆಂಡಿಂಗ್ ವಾಹನಗಳನ್ನು ಖರೀದಿಸಲು 42.84 ಕೋಟಿ ರೂ.ಗಳ ಸಹಾಯಧನವನ್ನು ಅರ್ಹ ಫಲಾನುಭವಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಒದಗಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಎಬಿ-ಎಆರ್ಕೆ ಯೋಜನೆಯಡಿ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಾಗುವ ಕ್ಲೇಮ್ ರೆವೆನ್ಯೂ ಉಪಯೋಗಕ್ಕೆ ಮಾನದಂಡಗಳ ಅನುಮೋದನೆ ಮತ್ತು ಪ್ರಾಯೋಗಿಕ ಅನುಷ್ಠಾನದ ನಂತರ ಇ-ವೌಚರ್ ವ್ಯವಸ್ಥೆ ಜಾರಿಗೆ ತರಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ 2026ಕ್ಕೆ ಅನುಮೋದನೆ. ರಾಜ್ಯದ ಕಾಡಾ(ಸಿಎಡಿಎ) ಪ್ರಾಧಿಕಾರಗಳ ಅಡಿಯಲ್ಲಿ ಯೋಜನಾ ಮಾರ್ಗಸೂಚಿಗಳ ಅನ್ವಯ ಕೈಗೊಳ್ಳಬೇಕಾದ ಪ್ರಾಯೋಜಿತ ಕೇಂದ್ರದ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಆಧುನೀಕರಣ (Modernization of Command Area Development) MCAD (ಸಮೃದ್ಧಿ) ಪ್ರಸ್ತಾವನೆಗಳನ್ನು (ಕೇಂದ್ರ-ಶೇ.60, ರಾಜ್ಯ-ಶೇ.40ರಷ್ಟು) ಕೈಗೊಳ್ಳಲು ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್)ನ ಯಲಹಂಕ ಕಂಬೈನ್ಸ್ ಸೈಕಲ್ ಪವರ್ ಪ್ಲಾಂಟ್ (ವೈಸಿಸಿಪಿಪಿ)ಗೆ ತೃತೀಯ ಸಂಸ್ಕರಿಸಿದ ನೀರನ್ನು ಪೂರೈಸಲು ಜಕ್ಕೂರಿನಲ್ಲಿರುವ 15 ಎಂಎಲ್ಡಿ ತೃತೀಯ ಸಂಸ್ಕರಿಸುವ ಘಟಕದ (ಟಿಟಿಪಿ) 5 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 39.10 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಯನ್ನು 11.65 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಹಾಗೂ ‘ಕರ್ನಾಟಕ ಪೊಲೀಸ್(ತಿದ್ದುಪಡಿ) ವಿಧೇಯಕ-2026’ಕ್ಕೆ ಅನುಮೋದನೆ ನೀಡಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲಾಗುವುದು ಎಂದು ಅವರು ತಿಳಿಸಿದರು. ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ನೂತನ ಸೌಪರ್ಣಿಕಾ ಅತಿಥಿಗೃಹ ನಿರ್ಮಾಣ ಕಾಮಗಾರಿಯನ್ನು 16 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರ ಮಲ್ಲೇಶ್ವರಂನಲ್ಲಿರುವ ಶ್ರೀಕಾಡುಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಸಿಟಿಎಸ್ ನಂ.1408 ರಲ್ಲಿನ 6000 ಚದರ ಅಡಿ ಜಾಗ ಹಾಗೂ ಸದರಿ ಜಾಗದಲ್ಲಿ ನಿರ್ಮಿಸಿರುವ ಸಾಯಿಮಂದಿರ ಪಕ್ಕದಲ್ಲಿರುವ ಅನೆಕ್ಸ್ ಕಟ್ಟಡವನ್ನು ‘ಶ್ರೀ ಸಾಯಿ ಮಂಡಳಿ ಸಂಸ್ಥೆ’ಯವರಿಗೆ ಗುತ್ತಿಗೆ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಕಲಬುರಗಿಯಲ್ಲಿ ಹೊಸದಾಗಿ ಜಿಲ್ಲಾ ಪಂಚಾಯತ್ ಕಟ್ಟಡವನ್ನು 49.65 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಹಾಗೂ ಸೇಡಂ ತಾಲೂಕಿನಲ್ಲಿ ಹೊಸ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ವನ್ನು 73.75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ನುಡಿದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ 37.80 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್ಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಭಾರತ ಚುನಾವಣಾ ಆಯೋಗವು ಉದ್ದೇಶಿಸಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಚರ್ಚೆ ನಡೆಸಲಾಗಿದ್ದು, ಇನ್ನೂ ಹೆಚ್ಚಿನ ಚರ್ಚೆ ನಡೆಸುವ ಉದ್ದೇಶದಿಂದ ವಿಷಯವನ್ನು ಮುಂದಿನ ಸಂಪುಟ ಸಭೆಗೆ ಮುಂದೂಡಲಾಗಿದೆ. ಎಚ್.ಕೆ.ಪಾಟೀಲ್, ಕಾನೂನು ಸಚಿವ
ಕಲಬುರಗಿ | ಬಜೆಟ್ನಲ್ಲಿ ಕ್ರೈಸ್ತ ಸಮುದಾಯಕ್ಕೆ ವಿಶೇಷ ಅನುದಾನಕ್ಕೆ ಒತ್ತಾಯ
ಕಲಬುರಗಿ: ಮುಂಬರುವ ರಾಜ್ಯ ಬಜೆಟ್ ನಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಸುಮಾರು 500 ಕೋಟಿ ರೂ. ಅನುದಾನ ಘೋಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಅಖಿಲ ಭಾರತ ಕ್ರೈಸ್ತ ಮಹಾಸಭಾದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 2025-26ನೇ ಸಾಲಿನಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ಮಾಡಿರುವುದಕ್ಕೆ ಸ್ವಾಗತಾರ್ಹ. ಆದರೆ ಅದಕ್ಕೆ ತಕ್ಕಂತೆ ಮುಂಬರುವ ಬಜೆಟ್ ನಲ್ಲಿ ಸಮರ್ಪಕ ಅನುದಾನ ನೀಡಬೇಕೆಂದು ಒತ್ತಾಯಿಸಿದರು. ಕ್ರೈಸ್ತ ಸಮುದಾಯದ ಧರ್ಮ ಗುರುಗಳಿಗೆ ಸರಕಾರದ ವತಿಯಿಂದ ಅಧಿಕೃತ ಲೈಸೆನ್ಸ್ ನೀಡುವುದು ಮತ್ತು ಮಾಸಿಕ ವೇತನ ನಿಗದಿಪಡಿಸುವುದು, ಅನುದಾನ ರಹಿತ ಕ್ರೈಸ್ತರ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಮಂಜೂರಾತಿ ಮಾಡುವುದು, ಜಿಲ್ಲಾ ಮಟ್ಟದಲ್ಲಿ ಕಚೇರಿಗಳನ್ನು ಸ್ಥಾಪಿಸಬೇಕೆಂದು ಒತ್ತಡ ಹೇರಿದರು. ಗಂಗಾ ಕಲ್ಯಾಣ ಯೋಜನೆಯ ಜೊತೆಗೆ ಎಸ್.ಇ.ಪಿ. ಮತ್ತು ಐ.ಎಸ್.ಬಿ. ಯೋಜನೆಯಡಿ ಟ್ರಾಕ್ಟರ್ ಖರೀದಿಗೆ ಅನುದಾನ ಕೊಡಬೇಕೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಹಾಸಭಾದ ಸಂಚಾಲಕ ಸಂಧ್ಯಾರಾಜ್ ಸ್ಯಾಮ್ಯುಯೆಲ್, ಇ.ಚಾರ್ಲಸ್, ಫಾಸ್ಟರ್ ಪಂಡಿತ್, ಫಾಸ್ಟರ್ ಏಸಪ್ಪ, ಫಾಸ್ಟರ್ ಬಸವರಾಜ್, ಶಾಂತಕುಮಾರ್, ಸೂರ್ಯಕಾಂತ, ಸೇರಿದಂತೆ ಹಲವರು ಇದ್ದರು.
ಎಚ್.ಡಿ. ರೇವಣ್ಣಗೆ ಮತ್ತೆ ಸಂಕಷ್ಟ: ಅಪಹರಣ ಪ್ರಕರಣ ಆರೋಪ ನಿಗದಿ ಮುಂದೂಡಿಕೆ ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್
ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಆರೋಪ ನಿಗದಿ ಮುಂದೂಡವಂತೆ ಈ ಹಿಂದೆ ಹೈರ್ಟ್ ವಿಚಾರಣಾಧೀನ ನ್ಯಾಯಾಲಸಯಕ್ಕೆ ನಿರ್ದೇಶನ ನೀಡಿತ್ತು. ಆದರೆ ಇದಕ್ಕೆ ಇದನ್ನು ತೆರವುಗೊಳಿಸಿದೆ.
ಜೇವರ್ಗಿ | ಕನ್ನಡ ಸಾಹಿತ್ಯಕ್ಕೆ ತತ್ವಪದಕಾರ ಕೊಡುಗೆ ಅಪಾರ : ಡಾ.ಸಿದ್ಧರಾಮ ಶಿವಾಚಾರ್ಯರು
ಪ್ರಥಮ ತತ್ವಪದಕಾರರ ಸಾಹಿತ್ಯ ಸಮ್ಮೇಳನ
ಪಡುಕೋಣೆ ಚರ್ಚ್ನಲ್ಲಿ ಭ್ರಾತೃತ್ವ ಬಾಂಧವ್ಯ ದಿನ
ಕುಂದಾಪುರ, ಫೆ.5: ಪಡುಕೋಣೆಯ ಸಂತ ಅಂತೋನಿ ಚರ್ಚ್ನಲ್ಲಿ ತೆರಾಲಿ ಹಬ್ಬದ ಆಚರಣೆ ಪ್ರಯುಕ್ತ ಪೂರ್ವ ಭಾವಿಯಾಗಿ ನಡೆಯುವ ಭ್ರಾತೃತ್ವ ಭಾಂದವ್ಯ (ಕೊಂಪ್ರಿ ಆಯ್ತಾರ್) ದಿನವನ್ನು ಆಚರಿಸಲಾಯಿತು. ಈ ಸಂದರ್ಭ ದಲ್ಲಿ ಏಸು ಕ್ರಿಸ್ತರ ಮುಖವನ್ನು ಬಡವ ಬಲ್ಲದರಲ್ಲಿ ನೋಡೋಣ ಎಂಬ ಸಂದೇಶ ಸಾರಲಾಯಿತು. ಮುಡಿಪು ಸಂತ ಜೋಸೆಫ್ ವಾಜ್ ಚರ್ಚ್ನ ವಂ. ಆಸಿಸಿ ರೆಬೆಲ್ಲೊ ಪ್ರಧಾನ ಯಾಜಕರಾಗಿ ಬಲಿದಾನ ಅರ್ಪಿಸಿದರು. ಯಾಜಕರಾದ ವಂ. ಪ್ರವೀಣ್ ಪಿಂಟೋ, ಸುಪೀರಿಯರ್, ಕಾರ್ಮೆಲ್, ಆಶ್ರಮ್ ಕಟ್ಕೇರೆ ವಂ. ಪ್ರವೀಣ್ ಪಿಂಟೋ ಪರಮ ಪ್ರಸಾದದ ಆರಾಧನೆ ನಡೆಸಿಕೊಟ್ಟರು. ಮಂಗಳೂರು ವಾಮಂಜೂರು ಚರ್ಚ್ನ ವಂ. ವಿಲಿಯಂ ಮಿನೇಜಸ್ ದಿಲ್ಲಿ ಜೆಸ್ನಾದ ಸಂತ ಭಾರ್ತೊಲೋಮಿಯಸ್ ಚರ್ಚ್ನ ವಂ. ನೊರ್ಬಟ್ ಲುವಿಸ್, ಮಂಗಳೂರಿನ ವಂ. ಪೀಟರ್ ಡಿ’ಸೋಜಾ, ಪಡುಕೋಣೆ ಚರ್ಚಿನ ಧರ್ಮಗುರು ವಂ. ಪ್ರಾನ್ಸಿಸ್ ಕರ್ನೆಲಿಯೊ ಭಕ್ತಾಧಿಗಳ ಜೊತೆಗೂಡಿ ಬಲಿದಾನ ಅರ್ಪಿಸಿದರು. ಬಳಿಕ ಭಕ್ತಿ ಪೂರ್ವಕವಾಗಿ ಬ್ಯಾಂಡ್, ಸಂಗೀತ, ಬಣ್ಣಬಣ್ಣದ ದೀಪಗಳೊಡನೆ ಗಾಯನದ ಜೊತೆ ಪರಮ ಪ್ರಸಾದದ ಮೆರವಣಿಗೆ ಮಾಡಲಾಯಿತು.
ಕಲಬುರಗಿ ವಿಮಾನ ಸೇವೆ ಪುನರಾರಂಭಕ್ಕೆ ಕೃಷ್ಣಾ ರೆಡ್ಡಿ ಮನವಿ
ಕಲಬುರಗಿ: ಕಲಬುರಗಿಯಲ್ಲಿ ಸ್ಥಗಿತಗೊಂಡಿರುವ ವಿಮಾನ ಸೇವೆಯನ್ನು ಪುನರಾರಂಭಿಸಬೇಕು ಎಂದು ದಕ್ಷಿಣದ ಜೆಡಿಎಸ್ ಮುಖಂಡರಾದ ಕೃಷ್ಣಾ ರೆಡ್ಡಿ ಅವರು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದರು. ರೋಗಿಗಳು, ಹಿರಿಯ ನಾಗರಿಕರು, ವೈದ್ಯರು, ಉದ್ಯಮಿಗಳು ಹಾಗೂ ರಾಜಕೀಯ ಮುಖಂಡರ ಹಿತದೃಷ್ಟಿಯಿಂದ ಕರ್ನಾಟಕದ ಧ್ವನಿಯಾಗಿ ಈ ವಿಷಯವನ್ನು ಪಾರ್ಲಿಮೆಂಟ್ನಲ್ಲಿ ಪ್ರಸ್ತಾಪಿಸಿ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಅಫಜಲಪುರ | ಸಿಎಂ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ : ಮಾಲೀಕಯ್ಯ ಗುತ್ತೇದಾರ
ಅಫಜಲಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಅವರೇ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಪ್ರಯತ್ನ ನಡೆದರೆ ನಡೆಯುವ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದರು. ತಾಲ್ಲೂಕಿನ ಬಂಕಲಗ ಗ್ರಾಮದ ಹೊಸ ಬಡಾವಣೆಯಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇನ್ನೆರಡು ವರ್ಷಗಳಲ್ಲಿ ತಾಲ್ಲೂಕು ರಾಜಕೀಯದಲ್ಲಿ ದೊಡ್ಡ ಬದಲಾವಣೆ ಗಾಳಿ ಬೀಸಲಿದೆ. ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ ಹಾಗೂ ನಾನು ಯಾವ ಪಕ್ಷದಲ್ಲಿರುತ್ತೇವೋ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ತಮ್ಮನ್ನು ಗುರುತಿಸಿ ಸಚಿವ ಸ್ಥಾನ ನೀಡದ ಕಾರಣ ಬೇಸತ್ತು ಬಿಜೆಪಿ ಸೇರಿದ್ದೆ. ಆದರೆ ಅಲ್ಲಿಯೂ ಸರಿಯಾದ ಗೌರವ ಸಿಗಲಿಲ್ಲ. ಹೀಗಾಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದೇನೆ. ಬೀರಲಿಂಗೇಶ್ವರನ ಆಶೀರ್ವಾದದಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಗುತ್ತೇದಾರ ಹೇಳಿದರು. ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 1 ಕೋಟಿ ರೂ. ಅನುದಾನ ಮಂಜೂರು ಮಾಡಿಸಿಕೊಡಲಾಗುವುದು ಎಂದು ಮಾಲೀಕಯ್ಯ ಗುತ್ತೇದಾರ ಭರವಸೆ ನೀಡಿದರು. ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ ಮಾತನಾಡಿದರು. ಹುಲಿಜಂತಿಯ ಮಾಳಿಂಗರಾಯ ದೇವಸ್ಥಾನದ ಮಾಳಿಂಗರಾಯ ಮಹಾರಾಜರು ಆಶೀರ್ವಚನ ನೀಡಿದರು. ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೆ.ಎಂ. ಕೊರಬು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ನಿತಿನ ಗುತ್ತೇದಾರ, ಸಿಂಡಿಕೇಟ್ ಸದಸ್ಯ ಮಹಾಂತೇಶ ಕೌಲಗಿ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಗುರುನಾಥ ಪೂಜಾರಿ, ತಾಲ್ಲೂಕು ಅಧ್ಯಕ್ಷ ಬೀರಣ್ಣ ಪೂಜಾರಿ, ಜಿಲ್ಲಾ ಕುರುಬ ಸಂಘದ ಕಾರ್ಯಾಧ್ಯಕ್ಷ ಸಾಹೇಬಣ್ಣ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಇನ್ನೂ 4 ಬ್ಲ್ಯಾಕ್ಸ್ಪಾಟ್ಗಳಲ್ಲಿ ಟ್ರಾಫಿಕ್ ಸಿಗ್ನಲ್: ಎಸ್ಪಿ ಹರಿರಾಮ್ ಶಂಕರ್
ಉಡುಪಿ, ಫೆ.5: ಜಿಲ್ಲೆಯಲ್ಲಿ ಅತೀ ಹೆಚ್ಚು ಅಪಘಾತ ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬ್ಲ್ಯಾಕ್ ಸ್ಪಾಟ್ಗಳೆಂದು ಗುರುತಿಸಿರುವ 6 ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ. ನಗರದ ಕಲ್ಸಂಕ ಮತ್ತು ಮಣಿಪಾಲ ಸಿಂಡಿಕೇಟ್ ಸರ್ಕಲ್ನಲ್ಲಿ ಈಗಾಗಲೇ ಸಿಗ್ನಲ್ಗಳನ್ನು ಅಳವಡಿಸಲಾಗಿದ್ದು ಅವುಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ದಕ್ಷಿಣ ಹಾಗೂ ಉತ್ತರ ದಿಕ್ಕಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನಗರ ಪ್ರವೇಶಿಸುವ ಅಂಬಾಗಿಲು ಹಾಗೂ ಬಲಾಯಿಪಾದೆಗಳಲ್ಲಿ ಸಿಗ್ನಲ್ ಅಳವಡಿಕೆ ಕಾರ್ಯಪ್ರಗತಿಯಲ್ಲಿದ್ದು, ಶೇ.60ರಷ್ಟು ಮುಗಿದಿದೆ. ಇನ್ನೆರಡು ಮೂರು ವಾರಗಳಲ್ಲಿ ಅವರು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಇವೆಲ್ಲವೂ ಉಡುಪಿ ನಗರಸಭೆಯ ವತಿಯಿಂದ ಅಳವಡಿಕೆಯಾಗುವ ಸಿಗ್ನಲ್ಗಳಾಗಿವೆ ಎಂದು ಎಸ್ಪಿ ತಿಳಿಸಿದರು. ಅದಲ್ಲದೇ ಹೆಚ್ಚುವರಿಯಾಗಿ ಅತೀ ಹೆಚ್ಚು ಅಪಘಾತ ಸಂಭವಿಸುವ ಪಡುಬಿದ್ರಿ ಜಂಕ್ಷನ್, ಬ್ರಹ್ಮಾವರದ ಆಕಾಶವಾಣಿ ಜಂಕ್ಷನ್, ಕೋಟ ಮೂರು ಕೈ ಮತ್ತು ಕುಂದಾಪುರ ಸಂಗಮ್ ಸರ್ಕಲ್ ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದವರು ಹೇಳಿದರು. ಈ ಆರು ಕಡೆಗಳಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುತ್ತವೆ. ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಎಲ್ಲ ಪಕ್ಷಗಳ ಮುಖಂಡರ ಜೊತೆ ಚರ್ಚಿಸಿ ಅವರ ಸಲಹೆಗಳನ್ನು ಪಡೆದು ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು.
SIR ವಿರುದ್ಧ ಹೋರಾಟ| ಮಮತಾ ಬ್ಯಾನರ್ಜಿಗೆ ಕಮಲ್ ಹಾಸನ್ ಬೆಂಬಲ
ಹೊಸದಿಲ್ಲಿ,ಫೆ.5: ನಟ-ರಾಜಕಾರಣಿ ಹಾಗೂ ಮಕ್ಕಳ್ ನೀಧಿ ಮೈಯಂ (ಎಂಎನ್ಎಫ್) ಮುಖ್ಯಸ್ಥ ಕಮಲ ಹಾಸನ್ ಅವರು ವಿವಾದಾತ್ಮಕ ಮತದಾರರ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಗುರುವಾರ ರಾಜ್ಯಸಭೆಯಲ್ಲಿ ತನ್ನ ಚೊಚ್ಚಲ ಭಾಷಣವನ್ನು ಮಾಡಿದ ಕಮಲ್ ಹಾಸನ್, ಎಸ್ಐಆರ್ ಮೂಲಕ ಮತಗಳ ಅಳಿಸುವಿಕೆಯು ದೇಶವನ್ನು ಕಾಡುತ್ತಿರುವ ರೋಗವಾಗಿದೆ. ಚುನಾವಣಾ ಆಯೋಗವು ಈ ರೋಗದ ಹರಡುವಿಕೆಯನ್ನು ಸುಗಮಗೊಳಿಸುತ್ತಿದೆ ಎಂದು ಕಿಡಿಕಾರಿದರು. ಎಸ್ಐಆರ್ ನಂತರದ ಮತದಾರರ ಅಂತಿಮ ಪಟ್ಟಿಯಲ್ಲಿಯ ಅಕ್ರಮಗಳನ್ನು ಉಲ್ಲೇಖಿಸಿದ ಅವರು ಬಿಹಾರವನ್ನು ‘ಜೀವಂತ ಶವಗಳ ನಾಡು’ ಎಂದು ಬಣ್ಣಿಸಿದರು. ಬಿಹಾರದಲ್ಲಿ ಜೀವಂತವಿರುವ ಮತದಾರರು ಮೃತಪಟ್ಟಿದ್ದಾರೆ ಎಂಬ ನೆಪವೊಡ್ಡಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ‘ಬಿಹಾರವು ಇಂದು ಜೀವಂತ ಶವಗಳ ನಾಡು ಆಗಿದೆ. ಈ ರೋಗ ದೇಶಾದ್ಯಂತ ಹರಡುವುದನ್ನು ನಾವು ಬಯಸುವುದಿಲ್ಲ. ಬಂಗಾಳದ ನನ್ನ ದೀದಿ (ಸೋದರಿ) ಕೂಡ ಚುನಾವಣಾ ಆಯೋಗದ ಕಚೇರಿಯಲ್ಲಿ ಈ ಬಗ್ಗೆ ವಿಷಾದಿಸಿದ್ದರು. ನಾವು ಈಗ ಇಲ್ಲಿ ಮಾತನಾಡುತ್ತಿರುವಂತೆ ಅತ್ತ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ. ಚುನಾವಣಾ ಆಯೋಗವು ಖಂಡಿತವಾಗಿಯೂ ಈ ರೋಗ ಹರಡುವಂತೆ ಮಾಡುತ್ತಿದೆ’ ಎಂದು ಹೇಳಿದರು. ತಮಿಳುನಾಡಿನಲ್ಲಿ ಮತದಾರರ ಹೆಸರುಗಳ ಅಳಿಸುವಿಕೆ ಕುರಿತು ಕಳವಳವನ್ನು ವ್ಯಕ್ತಪಡಿಸಿದ ಕಮಲ್, ಅಲ್ಲಿ ಶೀಘ್ರವೇ ಒಂದು ಕೋಟಿ ಜನರು ಬದುಕಿದ್ದೂ ದಾಖಲೆಗಳಲ್ಲಿ ಸಾಯಿಸಲ್ಪಡಬಹುದು ಎಂದರು. ಕಳೆದ ವರ್ಷದ ಡಿಸೆಂಬರ್ನಲ್ಲಿ ತಮಿಳುನಾಡಿನಲ್ಲಿ ಮೊದಲ ಹಂತದ ಎಸ್ಐಆರ್ ಬಳಿಕ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಗಳಿಂದ 97 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಸತ್ತವರು ಎಂದು ಹಣೆಪಟ್ಟಿ ಅಂಟಿಸಿಕೊಂಡು ಪಟ್ಟಿಯಿಂದ ಮಾಯವಾಗಿರುವ ಇಂತಹ ಹಲವಾರು ಮತದಾರರು ಜೀವಂತವಿರುವುದು ಕಂಡು ಬಂದಿದೆ. ಈ ಪೈಕಿ ಕೆಲವು ಮತದಾರರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ ಮತದಾರರ ಪಟ್ಟಿಗಳಿಂದ ತಮ್ಮ ಹೆಸರುಗಳನ್ನು ಅಳಿಸಿರುವ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ‘ಜೀವಂತ ಶವಗಳನ್ನು ಪುನರುತ್ಥಾನಗೊಳಿಸಬೇಕು’ ಎಂದು ಮತ್ತು ‘ಸನ್ನಿಹಿತ ವಿಪತ್ತು’ ತಡೆಯಲು ಕ್ರಮಕ್ಕಾಗಿ ಆಗ್ರಹಿಸಿದ ಕಮಲ್ ಹಾಸನ್, ಈ ಸನ್ನಿಹಿತ ವಿಪತ್ತನ್ನು ನಿವಾರಿಸುವಂತೆ ನಾನು ದೇವರನ್ನು ಪ್ರಾರ್ಥಿಸಲು ಸಾಧ್ಯವಿಲ್ಲ. ನನ್ನ ವೈಚಾರಿಕ ಮನಸ್ಸು ವರ್ಷಗಳ ಹಿಂದೆಯೇ ಈ ಕಲ್ಪನೆಯನ್ನು ತಿರಸ್ಕರಿಸಿದೆ. ನಾನು ಯಾವುದೇ ಸರಕಾರವನ್ನೂ ಪ್ರಾರ್ಥಿಸುವುದಿಲ್ಲ. ಬದುಕಿದ್ದೂ ಸತ್ತವರ ಪುನರುತ್ಥಾನಕ್ಕಾಗಿ ನಾನು ಆಗ್ರಹಿಸುತ್ತೇನೆ. ಪವಾಡಗಳ ಮೂಲಕವಲ್ಲ. ನಾವು ಪವಾಡಗಳಿಗಾಗಿ ಕಾಯಲಾಗುವುದಿಲ್ಲ, ನಮ್ಮ ಬದುಕುಗಳು ಚಿಕ್ಕದಾಗಿವೆ. ಈಗಲೇ ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಹೇಳಿದರು.
ಅಫಜಲಪುರ | ಮಿಣಜಗಿಯಲ್ಲಿ ಅಂಗನವಾಡಿ, ಗ್ರಾಮ ಪಂಚಾಯತ್ ಕಟ್ಟಡಗಳ ಲೋಕಾರ್ಪಣೆ
ಕಲಬುರಗಿ: ಅಫಜಲಪುರ ಮತಕ್ಷೇತ್ರದ ಕಲಬುರಗಿ ತಾಲೂಕಿನ ಮಿಣಜಗಿ ಗ್ರಾಮದಲ್ಲಿ 2023–24ನೇ ಸಾಲಿನ ವಿವಿಧ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಹಾಗೂ ಗ್ರಾಮ ಪಂಚಾಯತ್ ಕಟ್ಟಡಗಳನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು. ಕೆ.ಕೆ.ಆರ್.ಡಿ.ಬಿ. ಮೈಕ್ರೋ ಯೋಜನೆಯಡಿ 25.27 ಲಕ್ಷ ರೂ. ವೆಚ್ಚದಲ್ಲಿ ಮಕ್ಕಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ನೂತನ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ. ಅದೇ ರೀತಿ 2023–24ನೇ ಸಾಲಿನ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಗಳ ಒಗ್ಗೂಡಿಸುವಿಕೆಯಲ್ಲಿ 35.50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣಗೊಂಡಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಗ್ರಾಮೀಣ ಭಾರತ ಬಲಿಷ್ಠವಾಗದೇ ರಾಜ್ಯ ಹಾಗೂ ರಾಷ್ಟ್ರದ ಪ್ರಗತಿ ಸಾಧ್ಯವಿಲ್ಲ. ಮಕ್ಕಳ ಪೌಷ್ಟಿಕತೆ, ಮಹಿಳೆಯರ ಸಬಲೀಕರಣ ಮತ್ತು ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸುವುದು ನಮ್ಮ ಜನಸೇವೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಮಿಣಜಗಿ ಗ್ರಾಮದಂತಹ ಹಳ್ಳಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಜನರಿಗೆ ಗೌರವಯುತ ಜೀವನ ಸೌಲಭ್ಯ ಒದಗಿಸುವುದೇ ನಮ್ಮ ರಾಜಕೀಯ ಬದ್ಧತೆ ಎಂದು ತಿಳಿಸಿದ ಅವರು, ಅಫಜಲಪುರ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸಂಕಲ್ಪ ನಿರಂತರವಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಪಟೇಲ್, ಜಿಲ್ಲಾ ಪಂಚಾಯತ್ ಎಇಇ ಶರಣಯ್ಯ ಸ್ವಾಮಿ, ಪಿಡಿಒ ಸಿದ್ಧರಾಮ ಚಿಂಚೋಳಿ, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಕಳ: Instagramನಲ್ಲಿ ದ್ವೇಷ ಬರಹ; ಇಬ್ಬರು ಯುವಕರ ಬಂಧನ
ಕಾರ್ಕಳ, ಫೆ.5: ಸಾಮಾಜಿಕ ಜಾಲತಾಣದಲ್ಲಿ ವಿವಾಹಿತೆ ಹಿಂದೂ ಮಹಿಳೆ ಮತ್ತು ಮುಸ್ಲಿಂ ಯುವಕನ ಕುರಿತು ವ್ಯಂಗ್ಯವಾಗಿ ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುತ್ತೂರು ರಸ್ತೆಯ ನಿತೇಶ್ ಕೆ. (20) ಎಂಬಾತನನ್ನು ಪುತ್ತೂರು ತಾಲೂಕು ಕಲ್ಲಬ್ಬ ಜಂಕ್ಷನ್ ಬಳಿ ಜ.30ರಂದು ಹಾಗೂ ಕಡಬ ತಾಲೂಕು ಗುಂಡ್ಯ ಸಿರಿಬಾಗಿಲು ಗ್ರಾಮದ ಹಿತೇಶ್ ಎ.(19) ಎಂಬಾತನನ್ನು ಫೆ.1ರಂದು ಮಂಗಳೂರಿನ ಲಾಲ್ಬಾಗ್ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳ ಮೊಬೈಲ್ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್: ಬೀದರ್ವರೆಗೆ ವಿಸ್ತರಿಸುವಂತೆ ಮಾಜಿ ಪ್ರಧಾನಿ ದೇವೇಗೌಡ ಮನವಿ
Bengaluru-Hyderabad High-Speed Railway Corridor: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಈ ವೇಳೆ ರಾಷ್ಟ್ರದ ಅಗತ್ಯಗಳಿಗೆ ಮೀರಿ ರೈಲ್ವೆ ವಲಯಕ್ಕೆ ಹೆಚ್ಚು ಅನುದಾನ ಘೋಷಣೆ ಮಾಡಲಾಗಿದೆ. ಅದರಲ್ಲೂ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಸೇರಿದಂತೆ 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಿಸಲಾಗಿದ್ದು, ಈ ಯೋಜನೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಅಭಿನಂದಿದ್ದಾರೆ. ಜೊತೆಗೆ ಇದನ್ನು ಬೀದರ್ವರೆಗೆ ವಿಸ್ತರಣೆ ಮಾಡುವಂತೆ
ಬಿಜೆಪಿ ರಾಷ್ಟ್ರೀಯಾಧ್ಯಕ್ಷ ನಿತಿನ್ ನಬಿನ್ ಭೇಟಿ ಮಾಡಿದ ವಿಜಯೇಂದ್ರ
ಬೆಂಗಳೂರು : ವಿಧಾನ ಮಂಡಲ ಜಂಟಿ ಅಧಿವೇಶನದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪಕ್ಷದ ನೂತನ ರಾಷ್ಟ್ರೀಯಾಧ್ಯಕ್ಷ ನಿತಿನ್ ನಬಿನ್ ಅವರನ್ನು ಹೊಸದಿಲ್ಲಿಯಲ್ಲಿ ಗುರುವಾರ ಭೇಟಿ ಮಾಡಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸರಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ನಡೆಸಿದ ಹೋರಾಟಗಳ ಕುರಿತು ಹಾಗೂ ಮುಂಬರಲಿರುವ ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಹಾಗೂ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯಾಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯೇಂದ್ರ, ನಮ್ಮ ಪಕ್ಷದ ನೂತನ ರಾಷ್ಟ್ರೀಯಾಧ್ಯಕ್ಷ ನಿತಿನ್ ಅವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದೇನೆ ಎಂದರು. ಅಲ್ಲದೆ, ಮುಂಬರಲಿರುವ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ. ಜತೆಗೆ ಎಚ್.ವೈ.ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ತೆರವಾಗಿರುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಚುನಾವಣೆ ಕುರಿತು ಸಮಾಲೋಚನೆ ನಡೆಸಿದ್ದೇನೆ ಎಂದು ಅವರು ತಿಳಿಸಿದರು.
ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್| ಸುರುಚಿ ಸಿಂಗ್, ಸಾಮ್ರಾಟ್ ರಾಣಾಗೆ ಬೆಳ್ಳಿ
ಹೊಸದಿಲ್ಲಿ,ಫೆ.5: ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯ ಫೈನಲ್ನಲ್ಲಿ 479.6 ಅಂಕ ಗಳಿಸಿದ ಭಾರತದ ಸುರುಚಿ ಸಿಂಗ್ ಹಾಗೂ ಸಾಮ್ರಾಟ್ ರಾಣಾ ಬೆಳ್ಳಿ ಪದಕ ಗೆದ್ದಿದ್ದಾರೆ. 481.3 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದ ಉಜ್ಬೇಕಿಸ್ತಾನದ ನಿಗಿನ ಸೈದ್ಕುಲೋವ ಹಾಗೂ ಮುಖಮ್ಮದ್ ಕಮಲೋವ್ ಅವರು ಭಾರತೀಯ ಜೋಡಿಯನ್ನು ಮಣಿಸಿತು. ಚೈನೀಸ್ ತೈಪೆಯನ್ನು ಪ್ರತಿನಿಧಿಸಿದ ಚೆಂಗ್ ಯೆನ್-ಚಿಂಗ್ ಹಾಗೂ ಸೀಹ್ ಸಿಯಾಂಗ್-ಚೆಂಗ್ 412.2 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು. ಮೊದಲೆರಡು ಸೀರೀಸ್ನಲ್ಲಿ ಮುನ್ನಡೆ ಪಡೆದು ಉತ್ತಮ ಆರಂಭ ಪಡೆದ ಭಾರತವು ಉಜ್ಬೇಕಿಸ್ತಾನ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಆದರೆ ಉಜ್ಬೇಕಿಸ್ತಾನ ತಂಡವು ಮೂರನೇ ಸೀರೀಸ್ ನಂತರ ಸ್ಪರ್ಧೆಯೊಡ್ಡಲಾರಂಭಿಸಿತು. 583 ಅಂಕ ಗಳಿಸಿದ ಸುರುಚಿ ಹಾಗೂ ಸಾಮ್ರಾಟ್ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನದೊಂದಿಗೆ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಮಹಿಳೆಯರ ಜೂನಿಯರ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ತಂಡವು ಚಿನ್ನ ಹಾಗೂ ಬೆಳ್ಳಿ ಪದಕವನ್ನು ಜಯಿಸಿವೆ. ಫೈನಲ್ನಲ್ಲಿ ರಶ್ಮಿಕಾ ಸಹಗಲ್(237.9)ಹಾಗೂ ವಂಶಿಕಾ ಚೌಧರಿ(236.7)ಕ್ರಮವಾಗಿ ಮೊದಲನೇ ಹಾಗೂ ಎರಡನೇ ಸ್ಥಾನ ಪಡೆದಿದ್ದಾರೆ.
ಶಿವಮೊಗ್ಗ ಪಾಲಿಕೆಗೆ ಚುನಾವಣೆ ಕೋರಿ ಅರ್ಜಿ: ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್
ಶಿವಮೊಗ್ಗ ಪಾಲಿಕೆಗೆ ಚುನಾವಣೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಸಿಎಂ ಪೂಣಚ್ಚ ಇದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಇನ್ನೊಂದು ಹೆಜ್ಜೆ, ಇಲ್ಲಿದೆ ಮಹತ್ವದ ಬೆಳವಣಿಗೆ | Ukraine And Russia
ಯುದ್ಧ.. ಯುದ್ಧ.. ಯುರೋಪ್ ನೆಲದಲ್ಲಿ ಬರೀ ರಷ್ಯಾ ಮತ್ತು ಉಕ್ರೇನ್ ಯುದ್ಧದ ವಿಚಾರವೇ ಪ್ರಸ್ತಾಪ ಆಗುತ್ತಿದೆ. ಏಕೆಂದರೆ 2ನೇ ಮಹಾಯುದ್ಧ ಮುಗಿದ ನಂತರ ಯುರೋಪ್ ಕಂಡಿರುವ ಅತಿ ಭಯಾನಕ ಸಂಘರ್ಷ ಇದಾಗಿದೆ. ಮತ್ತೊಂದು ಕಡೆ ಈ ಯುದ್ಧವನ್ನು ನಿಲ್ಲಿಸಿ, ಯುರೋಪ್ನಲ್ಲಿ ಶಾಂತಿ ಸ್ಥಾಪನೆ ಮಾಡಬೇಕು ಎಂಬ ಜವಾಬ್ದಾರಿ ಅಮೆರಿಕ ಸೇರಿದಂತೆ ಹಲವು ದೇಶಗಳ ಮೇಲೆ ಈಗ ಇದೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ; ಸರಕಾರ ಈ ದರೋಡೆಯನ್ನು ನಿಲ್ಲಿಸಬೇಕು: ಆರ್.ಅಶೋಕ್
ಬೆಂಗಳೂರು : ‘ಬೆಂಗಳೂರು ಮೆಟ್ರೋ ದರ ಮತ್ತೆ ಹೆಚ್ಚಳ. ಕನ್ನಡಿಗರ ತೆರಿಗೆ ಹಣವನ್ನು ಲೂಟಿ ಮಾಡಿ ಖಜಾನೆ ಖಾಲಿ ಮಾಡಿರುವ ಭ್ರಷ್ಟ ಕಾಂಗ್ರೆಸ್ ಸರಕಾರ ಇದೀಗ ಪ್ರಯಾಣಿಕರ ಜೇಬಿನಿಂದ ರಾಜಾರೋಷವಾಗಿ ಪಿಕ್ ಪಾಕೆಟ್ ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಬೆಂಗಳೂರಿನ ಮೆಟ್ರೋ ಪ್ರಯಾಣ ದರ ಈಗಾಗಲೇ ಭಾರತದಲ್ಲಿಯೇ ಅತಿ ಹೆಚ್ಚಿನ ದರ ಹೊಂದಿದೆ. ಇನ್ನೆಷ್ಟು ಪಿಕ್ ಪಾಕೆಟ್ ಮಾಡುತ್ತೀರಾ?. ಮೆಟ್ರೋ ದರ ಏರಿಕೆ ಪ್ರಸ್ತಾವ ಮತ್ತು ದರ ಏರಿಕೆ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಾಗಿದ್ದು ಸರಕಾರ ಕೂಡಲೇ ಈ ದರೋಡೆಯನ್ನು ನಿಲ್ಲಿಸಬೇಕು’ ಎಂದು ಕೋರಿದ್ದಾರೆ. ‘ರಾಜ್ಯ ಕಾಂಗ್ರೆಸ್ ಸರಕಾರ ಅವೈಜ್ಞಾನಿಕವಾಗಿ ಮೆಟ್ರೋ ದರ ಏರಿಸಿರುವುದು ಬೆಂಗಳೂರಿನ ಪರಿಸ್ಥಿತಿಯನ್ನು ಬಿಗಡಾಯಿಸಲಿದೆ. ಕೇವಲ ಮೆಟ್ರೋ ದರ ಎಂದಲ್ಲ, ಎಲ್ಲ ವಲಯದಲ್ಲೂ ಬೆಲೆ ಏರಿಕೆ ಮಾಡಿದೆ’ -ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಸೈನಿಕರ ಕಲ್ಯಾಣ ಕಾಯ್ದೆ ಅಂಗೀಕಾರಕ್ಕೆ ಕಾನೂನು ಆಯೋಗ ಶಿಫಾರಸು
ಬೆಂಗಳೂರು : ರಾಜ್ಯದಲ್ಲಿರುವ ಸೈನಿಕರ, ಯುದ್ಧದಲ್ಲಿ ಮಡಿದ ಯೋಧರ ಕುಟುಂಬಸ್ಥರ ಮತ್ತು ಅವರ ಅವಲಂಬಿತರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯ ಸೈನಿಕರ ಮತ್ತು ಅರ್ಧ-ಸೈನಿಕರ ಕಲ್ಯಾಣ ಕಾಯ್ದೆ, 2025 ಅನ್ನು ಅಂಗೀಕರಿಸಬೇಕೆಂದು ಕರ್ನಾಟಕ ರಾಜ್ಯ ಕಾನೂನು ಆಯೋಗ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಗುರುವಾರ ವಿಧಾನಸೌಧದಲ್ಲಿ ಕಾನೂನು ಆಯೋಗದ ಅಧ್ಯಕ್ಷ ಡಾ.ಅಶೋಕ ಬಿ.ಹಿಂಚಗೇರಿ ಅವರು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ವರದಿಗಳನ್ನು ಸಲ್ಲಿಕೆ ಮಾಡಿದರು. ವಕೀಲರಿಗೆ ತಮ್ಮ ವೃತ್ತಿ ಜೀವನ ಪೂರ್ಣಗೊಂಡ ನಂತರ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಗೌರವ ನೀಡುವ ಉದ್ದೇಶದಿಂದ ವಕೀಲರಿಗೆ ನೀಡಲಾಗುವ ಕಲ್ಯಾಣ ನಿಧಿಯನ್ನು ಪರಿಷ್ಕರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ, ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯ್ದೆ-1983ಕ್ಕೆ ತಿದ್ದುಪಡಿ ಅನ್ನು ತಿದ್ದುಪಡಿ ಮಾಡಬೇಕೆಂದು ಮತ್ತೊಂದು ವರದಿಯಲ್ಲಿ ಆಯೋಗವು ಶಿಫಾರಸು ಮಾಡಿದೆ. ವಕೀಲರೊಂದಿಗೆ ಸೇವೆ ಸಲ್ಲಿಸುವ ಮತ್ತು ನ್ಯಾಯಾಲಯಗಳಲ್ಲಿ ವಕೀಲರು ನ್ಯಾಯದಾನ ವ್ಯವಸ್ಥೆಗೆ ನೆರವಾಗಲು ಮಹತ್ವದ ಪಾತ್ರ ವಹಿಸುವ ಕ್ಲರ್ಕಗಳಿಗೂ ಈ ಕಲ್ಯಾಣ ನಿಧಿಯನ್ನು ಹೆಚ್ಚಿಸಲು ಕರ್ನಾಟಕ ವಕೀಲರ ಕ್ಲರ್ಕ್ಗಳ ಕಲ್ಯಾಣ ನಿಧಿ ನಿಯಮಗಳು-2026 ಅನ್ನು ಸಹ ಕಾನೂನು ಆಯೋಗವು ಶಿಫಾರಸು ಮಾಡಿದೆ. ಈ ಕುರಿತು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಈ ಎರಡು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಕಾನೂನು ಆಯೋಗಕ್ಕೆ ಭರವಸೆ ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಕಾನೂನು ಆಯೋಗದ ಸದಸ್ಯ ಆರ್.ಬಿ.ಧರ್ಮಗೌಡರ ಸೇರಿದಂತೆ ಪ್ರಮುಖರಿದ್ದರು.
ಮಮತಾ ಬ್ಯಾನರ್ಜಿ vs ಚುನಾವಣಾ ಆಯೋಗ: ಸುಪ್ರೀಂ ಕೋರ್ಟ್ನಲ್ಲಿ ಬಂಗಾಳ ಸಿಎಂ ಖುದ್ದಾಗಿ ವಾದ ಮಾಡಿದ್ದೇಕೆ?
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರದಲ್ಲಿ ಪಶ್ಚಿಮ ಬಂಗಾಳವನ್ನೇ ಗುರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ, ವಿಪುಲ್ ಪಂಚೋಲಿ ಅವರಿದ್ದ ಪೀಠದ ಮುಂದೆ ಮಮತಾ ಬ್ಯಾನರ್ಜಿ ತಮ್ಮ ಪ್ರಕರಣವನ್ನು ಖುದ್ದಾಗಿ ವಾದಿಸಿದ್ದು, “ಬಂಗಾಳವೇ ಏಕೆ? ಅಸ್ಸಾಂ ಅಥವಾ ಇತರ ಈಶಾನ್ಯ ರಾಜ್ಯಗಳಲ್ಲಿ ಯಾಕೆ SIR ಇಲ್ಲ?” ಎಂದು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಮಮತಾ ಬ್ಯಾನರ್ಜಿ ವಾದಿಸಿದ್ದೇನು? ಅಪರೂಪವೆಂಬಂತೆ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ನಲ್ಲಿ ಹಾಲಿ ಮುಖ್ಯಮಂತ್ರಿಯೊಬ್ಬರು ಖುದ್ದಾಗಿ ವಾದ ಮಾಡಿದ್ದಾರೆ. ಬಿಳಿ ಬಣ್ಣದ ಸೀರೆ ಉಟ್ಟು, ಕಪ್ಪು ಬಣ್ಣದ ಸ್ಕಾರ್ಫ್ ಧರಿಸಿದ್ದ ಮಮತಾ ಬ್ಯಾನರ್ಜಿ, ತಮ್ಮ ವಕೀಲರೊಂದಿಗೆ ಬೆಳಿಗ್ಗೆ 10ಕ್ಕೆ ಸುಪ್ರೀಂ ಕೋರ್ಟ್ ಗೇಟ್ ತಲುಪಿದ್ದರು. ಅವರೊಂದಿಗೆ ಟಿಎಂಸಿ ಸಂಸದರೂ ಆದ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ಕೂಡ ಇದ್ದರು. ಮಮತಾ ಬ್ಯಾನರ್ಜಿ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರೂ, ಪೂರಕ ನಿವೇದನೆಗಳನ್ನು ನ್ಯಾಯಪೀಠದ ಮುಂದಿಡಲು ಮಮತಾ ಬ್ಯಾನರ್ಜಿ ಅವರಿಗೆ ಅವಕಾಶ ನೀಡಲಾಗಿತ್ತು. “ಪ್ರಜಾಪ್ರಭುತ್ವವನ್ನು ಉಳಿಸಿ” ಎಂದು ಕೈಮುಗಿದು ನ್ಯಾಯಪೀಠದ ಮುಂದೆ ನಿಂತ ಮಮತಾ, “ನನಗೆ ಐದು ನಿಮಿಷ ಅವಕಾಶ ಕೊಡಿ” ಎಂದು ನ್ಯಾಯಾಧೀಶರಲ್ಲಿ ಕೇಳಿದ್ದಾರೆ. ಇದಕ್ಕೆ ಸಿಜೆಐ, “ನಾವು ನಿಮಗೆ 15 ನಿಮಿಷಗಳನ್ನು ಕೊಡ್ತೀವಿ” ಎಂದಿದ್ದಾರೆ. ಹಿರಿಯ ವಕೀಲ ಶ್ಯಾಮ್ ದಿವಾನ್ ನೇತೃತ್ವದ ವಕೀಲರ ತಂಡದೊಂದಿಗೆ ಹಾಜರಾದ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ, ನ್ಯಾಯಾಧೀಶರು ಮತ್ತು ಬಾರ್ ಸದಸ್ಯರಿಗೆ ಧನ್ಯವಾದ ಹೇಳುವ ಮೂಲಕ ವಾದ ಪ್ರಾರಂಭಿಸಿದರು. ಪಶ್ಚಿಮ ಬಂಗಾಳದ ಜನರಿಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ ಎಂದ ಮಮತಾ, “ನ್ಯಾಯ ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದೆ. ಎಸ್ಐಆರ್ ಅಳಿಸುವಿಕೆಗೆ ಮಾತ್ರ, ಸೇರ್ಪಡೆಗೆ ಅಲ್ಲ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಆರು ಪತ್ರಗಳನ್ನು ಬರೆದಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನು ಒಬ್ಬ ಜೀತದಾಳು. ನಾನು ತುಂಬಾ ಕಡಿಮೆ ಪ್ರಾಮುಖ್ಯತೆ ಹೊಂದಿರುವ ವ್ಯಕ್ತಿ. ನಾನು ಸಾಮಾನ್ಯ ಕುಟುಂಬದಿಂದ ಬಂದವಳು” ಎಂದಿದ್ದಾರೆ. ಅದೇ ಸಮಯದಲ್ಲಿ, ಎಸ್ಐಆರ್ ಪ್ರಕ್ರಿಯೆಯ ವೇಳೆ ಆಧಾರ್ ಕಾರ್ಡ್ಗಳು ಮತ್ತು ಇತರ ದಾಖಲೆಗಳನ್ನು ಪರಿಗಣಿಸಲು ಅವಕಾಶ ನೀಡಿದ್ದಕ್ಕಾಗಿ ನ್ಯಾಯಾಲಯಕ್ಕೆ ಧನ್ಯವಾದ ಅರ್ಪಿಸಿದ ಮಮತಾ, “ಇದು ಸಾಮಾನ್ಯ ಮತದಾರರಿಗೆ ಒಂದು ಪರಿಹಾರ” ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯು ಅಸ್ತಿತ್ವದಲ್ಲಿರುವ 2025ರ ಮತದಾರರ ಪಟ್ಟಿಯನ್ನು ಆಧರಿಸಿರಬೇಕು. SIR ನಂತರ ಸಿದ್ಧಪಡಿಸಲಾದ ಹೊಸ ಪಟ್ಟಿಯನ್ನು ಆಧರಿಸಬಾರದು. ಯಾಕೆಂದರೆ ಇದರಿಂದ ಲಕ್ಷಾಂತರ ಕಾನೂನುಬದ್ಧ ಮತದಾರರು ಹೊರಗಿಡಲ್ಪಡುವ ಅಪಾಯವಿದೆ. ಎರಡು ವರ್ಷಗಳಲ್ಲಿ ಮುಗಿಯಬೇಕಾದ ಪ್ರಕ್ರಿಯೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಯತ್ನಿಸುತ್ತಿದ್ದಾರೆ. ಬಂಗಾಳವನ್ನು ಗುರಿಯಾಗಿಸಲಾಗಿದೆ. “ಅಸ್ಸಾಂನಲ್ಲಿ ಈ ಪ್ರಕ್ರಿಯೆಯನ್ನು ಏಕೆ ನಡೆಸುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗವು ಬಂಗಾಳದಲ್ಲಿ ನಿಯೋಜಿಸಿರುವ 8,300 ಸೂಕ್ಷ್ಮ ವೀಕ್ಷಕರನ್ನು “ಅಸಂವಿಧಾನಿಕ”, “ಬಿಜೆಪಿ ಅಧಿಕಾರಿಗಳು” ಎಂದು ಕರೆದ ಮಮತಾ, ಯಾವುದೇ ನಿಜವಾದ ಅಧಿಕೃತ ಅಧಿಕಾರವಿಲ್ಲದೆ ಅವರು ಹೆಸರುಗಳನ್ನು ಅಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ 2025ರ ಮತದಾರರ ಪಟ್ಟಿಯನ್ನು ಬಳಸುವಂತೆ ಕೋರುವುದರ ಜೊತೆಗೆ, ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ 1.4 ಕೋಟಿ ವಿವಾದಿತ ಮತದಾರರ ಹೆಸರುಗಳ ಪಟ್ಟಿಯನ್ನು ಹುಡುಕಬಹುದಾದ ಸ್ವರೂಪದಲ್ಲಿ ಪ್ರಕಟಿಸಬೇಕು. ಏನಾದರೂ ವ್ಯತ್ಯಾಸ ಕಂಡುಬಂದರೆ ಗುರುತಿನ ಪುರಾವೆಯಾಗಿ ಚುನಾವಣಾ ಆಯೋಗ ಆಧಾರ್ ಕಾರ್ಡ್ ಅನ್ನು ಸ್ವೀಕರಿಸಬೇಕು ಎಂದಿದ್ದಾರೆ ಮಮತಾ. ಫಾರ್ಮ್–7 ಮೂಲಕ ಮತದಾರರ “ರಹಸ್ಯ ಸಾಮೂಹಿಕ ಅಳಿಸುವಿಕೆ” ನಡೆಯುತ್ತಿದೆ, ಅದಕ್ಕೆ ತಡೆ ನೀಡಬೇಕು. ‘ತಾರ್ಕಿಕ ವ್ಯತ್ಯಾಸ’ (Logical Discrepancy–LD) ವರ್ಗದ ಅಡಿಯಲ್ಲಿ ವ್ಯಕ್ತಿಗಳ ವರ್ಗೀಕರಣದಲ್ಲಿ ಗಂಭೀರ ಅಕ್ರಮಗಳಿವೆ ಎಂದು ಮಮತಾ ಆರೋಪಿಸಿದ್ದಾರೆ. ‘ತಾರ್ಕಿಕ ವ್ಯತ್ಯಾಸ’ ಎಂದರೇನು? ಪೋಷಕರ ಸರ್ ನೇಮ್, ಸರ್ ನೇಮ್ ಕಾಗುಣಿತ, ತಾಯಿ ಮತ್ತು ಮಗುವಿನ ನಡುವಿನ ವಯಸ್ಸಿನ ಅಂತರ ಇತ್ಯಾದಿಗಳಲ್ಲಿ ಕುಟುಂಬದ ಸಂಬಂಧ ಅಥವಾ ಹೆಸರಿನಲ್ಲಿ ಹೊಂದಾಣಿಕೆಯಾಗದ ಕಾರಣ ಮತದಾರರ ಹೆಸರುಗಳನ್ನು ಅಳಿಸಿದಾಗ ಈ ಸಮಸ್ಯೆ ಉದ್ಭವಿಸುತ್ತದೆ. ಬಂಗಾಳದಲ್ಲಿ ಬಂಗಾಳಿ ಹೆಸರುಗಳನ್ನು ಇಂಗ್ಲಿಷ್ ನಲ್ಲಿ ಬರೆದಾಗ ಅನೇಕ ಉಪನಾಮಗಳನ್ನು ವಿಭಿನ್ನವಾಗಿ ಉಚ್ಚರಿಸುವ ಕಾರಣ ಈ ರೀತಿ ಸಂಭವಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. Datta ಅವರನ್ನು Dutta ಎಂದು ಉಚ್ಚರಿಸಬಹುದು; ಬಂಧೋಪಾಧ್ಯಾಯ ಎಂಬ ಪದದ ವಿಭಿನ್ನ ಕಾಗುಣಿತಗಳು ಅಸ್ತಿತ್ವದಲ್ಲಿವೆ. ಇದು ಅಳಿಸುವಿಕೆಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಮಗಳು ಮದುವೆಯಾದಾಗ ಸರ್ ನೇಮ್ ಬದಲಾಯಿಸಿದರೂ ಅದನ್ನು ಮಿಸ್ ಮ್ಯಾಚ್ ಎಂದು ಚುನಾವಣಾ ಆಯೋಗ ಹೇಳುತ್ತದೆ. ಇದನ್ನು ತೋರಿಸುವ ಸುದ್ದಿ ಪತ್ರಿಕೆಯ ಲೇಖನವನ್ನೂ ಮಮತಾ ನ್ಯಾಯಾಲಯದಲ್ಲಿ ಉಲ್ಲೇಖಿಸಿದ್ದಾರೆ. ಮದುವೆಯಾಗಿ ತವರು ಮನೆಯಿಂದ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳ ಹೆಸರನ್ನೂ ಅಳಿಸಲಾಗಿದೆ. ಕೆಲವೊಮ್ಮೆ ಬಡವರು ಮನೆಗಳನ್ನು ಬದಲಾಯಿಸುತ್ತಾರೆ ಅಥವಾ ಕೆಲಸಕ್ಕಾಗಿ ವಿಳಾಸ ಬದಲಾಯಿಸುತ್ತಾರೆ. ಆದರೆ ‘ತಾರ್ಕಿಕ ವ್ಯತ್ಯಾಸ’ ವರ್ಗದ ಅಡಿಯಲ್ಲಿ ಅವರ ಹೆಸರುಗಳನ್ನೂ ಅಳಿಸಲಾಗುತ್ತದೆ ಎಂದಿದ್ದಾರೆ. ಚುನಾವಣಾ ಸಂಸ್ಥೆ ಸಾಮಾನ್ಯ ನಾಗರಿಕರಿಗೆ ವಾಟ್ಸಾಪ್ನಲ್ಲಿ ನೋಟಿಸ್ ಕಳುಹಿಸುತ್ತಿರುವುದರಿಂದ ಅದನ್ನು “ವಾಟ್ಸಾಪ್ ಆಯೋಗ” ಎಂದು ಮಮತಾ ಕರೆದಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆಯನ್ನು ಕೈಗೊಳ್ಳಲು ಚುನಾವಣಾ ಆಯೋಗ ನೇಮಿಸಿದ ಬಿಎಲ್ಒಗಳು ಅಥವಾ ಬೂತ್ ಮಟ್ಟದ ಅಧಿಕಾರಿಗಳ ಸಾವಿನ ವಿಷಯವನ್ನೂ ಮಮತಾ ಉಲ್ಲೇಖಿಸಿದ್ದಾರೆ. ಚುನಾವಣಾ ಆಯೋಗದ ಕಿರುಕುಳದಿಂದಾಗಿ 100ಕ್ಕೂ ಹೆಚ್ಚು ಬಿಎಲ್ಒಗಳು ಸಾವನ್ನಪ್ಪಿದ್ದಾರೆ, ಇನ್ನೂ ಅನೇಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ. “ಸರ್, ಹೇಳಿ… ಈ ವರ್ಷ ಚುನಾವಣೆ ನಡೆಯುತ್ತಿರುವ ಅಸ್ಸಾಂನಲ್ಲಿ ಯಾಕೆ ಈ ಪ್ರಕ್ರಿಯೆ ಇಲ್ಲ?” ಎಂದು ಪ್ರಶ್ನಿಸಿದ ಮಮತಾ, ಮತದಾರರನ್ನು ವಿಚಾರಣೆಗೆ ಕರೆಯದೇ ‘ತಾರ್ಕಿಕ ವ್ಯತ್ಯಾಸ’ ಪಟ್ಟಿಯಲ್ಲಿರುವವರನ್ನು ಸ್ವಯಂಪ್ರೇರಿತವಾಗಿ ಸೇರ್ಪಡೆ ಮಾಡಬೇಕು ಎಂದು ವಿನಂತಿಸಿದ್ದಾರೆ. ಲಿಖಿತ ಸಲ್ಲಿಕೆಯಲ್ಲಿ ಏನಿದೆ? ಮಮತಾ ಬ್ಯಾನರ್ಜಿ ಪರ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್, ಅಂತಿಮ ಪಟ್ಟಿಯ ಪ್ರಕಟಣೆಗೆ ಕೇವಲ 11 ದಿನಗಳು ಉಳಿದಿವೆ. 1.36 ಕೋಟಿಗೂ ಹೆಚ್ಚು ಮತದಾರರಲ್ಲಿ ‘ತಾರ್ಕಿಕ ವ್ಯತ್ಯಾಸ’ ಪಟ್ಟಿಯಲ್ಲಿ ಸೇರಿಸಲಾದ 63 ಲಕ್ಷ ಜನರ ವಿಚಾರಣೆ ಇನ್ನೂ ಬಾಕಿ ಇದೆ ಎಂದು ವಾದಿಸಿದರು. ವಿಚಾರಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ ಈ ವಿಚಾರಣೆಗಳನ್ನು ಪೂರ್ಣಗೊಳಿಸುವುದು ಅಸಾಧ್ಯ. ‘ತಾರ್ಕಿಕ ವ್ಯತ್ಯಾಸ’ ಪಟ್ಟಿಯಲ್ಲಿ ಜನರನ್ನು ಸೇರಿಸಿದ ಕಾರಣಗಳನ್ನು ಚುನಾವಣಾ ಆಯೋಗ ಪ್ರದರ್ಶಿಸುತ್ತಿಲ್ಲ. ಶೇಕಡಾ 50ಕ್ಕೂ ಹೆಚ್ಚು ವ್ಯಕ್ತಿಗಳ ಹೆಸರುಗಳ ಸ್ಪೆಲಿಂಗ್ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ‘ತಾರ್ಕಿಕ ವ್ಯತ್ಯಾಸ’ ಪಟ್ಟಿಯಲ್ಲಿಡಲಾಗಿದೆ. ಬಂಗಾಳಿ ಹೆಸರುಗಳನ್ನು ಇಂಗ್ಲಿಷ್ನಲ್ಲಿ ಬರೆಯುವಾಗ ಮತ್ತು ಅನೇಕ ಉಪನಾಮಗಳನ್ನು ವಿಭಿನ್ನವಾಗಿ ಉಚ್ಚರಿಸುವ ಸಾಧ್ಯತೆ ಇರುವುದರಿಂದ ಸ್ಪೆಲಿಂಗ್ ಮಿಸ್ಮ್ಯಾಚ್ ಸಂಭವಿಸುತ್ತದೆ. ಕೇವಲ ಈ ಕಾರಣದಿಂದ ವ್ಯಕ್ತಿಗಳನ್ನು ಈ ಪಟ್ಟಿಯಲ್ಲಿ ಸೇರಿಸಬಾರದು ಎಂದು ದಿವಾನ್ ಹೇಳಿದ್ದಾರೆ. ಚುನಾವಣಾ ಆಯೋಗ ಹೇಳಿದ್ದೇನು ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ರಾಜ್ಯ ಸರ್ಕಾರವು SIR ಕೆಲಸಕ್ಕಾಗಿ ಸಾಕಷ್ಟು ಗ್ರೂಪ್–B ಅಧಿಕಾರಿಗಳನ್ನು ನೇಮಿಸದ ಕಾರಣ ಸೂಕ್ಷ್ಮ ವೀಕ್ಷಕರನ್ನು ನೇಮಿಸಬೇಕಾಯಿತು ಎಂದು ವಾದಿಸಿದರು. ಚುನಾವಣಾ ಆಯೋಗ ಪರವಾಗಿ ವಾದಿಸಿದ ಹಿರಿಯ ವಕೀಲ ದಾಮಾ ಶೇಷಾದ್ರಿ ನಾಯ್ಡು, ರಾಜ್ಯ ಸಹಕರಿಸುತ್ತಿಲ್ಲ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಹೇಳಿದ್ದೇನು? ಮಮತಾ ಬ್ಯಾನರ್ಜಿ ಎತ್ತಿರುವ ಪ್ರಶ್ನೆಗಳು “ನಿಜ” ಎಂದು ಸುಪ್ರೀಂ ಕೋರ್ಟ್ ಹೇಳಿ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ, ಮುಂದಿನ ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಸೂಕ್ಷ್ಮ ವೀಕ್ಷಕರ ವಿಷಯಕ್ಕೆ ಸಂಬಂಧಿಸಿ, ರಾಜ್ಯ ಸರ್ಕಾರವು ಎಸ್ಐಆರ್ ಕರ್ತವ್ಯ ನಿರ್ವಹಿಸಬಲ್ಲ ಗ್ರೂಪ್–B ಅಧಿಕಾರಿಗಳ ಪಟ್ಟಿಯನ್ನು ನೀಡಿದರೆ ಸೂಕ್ಷ್ಮ ವೀಕ್ಷಕರನ್ನು ತೆಗೆದುಹಾಕಬಹುದು ಎಂದು ಪೀಠ ಹೇಳಿದೆ. ಹೆಸರು–ಕಾಗುಣಿತ ಹೊಂದಾಣಿಕೆಯಾಗದ ಕುರಿತು ನೀಡಲಾದ ನೋಟಿಸ್ಗಳ ವಿಷಯದಲ್ಲಿ ಸಂವೇದನಾಶೀಲವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಚುನಾವಣಾ ಆಯೋಗವನ್ನು ಕೇಳಿದರು. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್, ಕವಿ ಜಾಯ್ ಗೋಸ್ವಾಮಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ದೀಪಕ್ ಅಧಿಕಾರಿ ಅಲಿಯಾಸ್ ದೇವ್ ಸೇರಿದಂತೆ ಪ್ರಮುಖರಿಗೆ ಸಮನ್ಸ್ ಕಳುಹಿಸಿರುವುದನ್ನೂ ಪೀಠ ಗಮನಿಸಿದೆ. ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ “ಹಗೆತನದ ವಾತಾವರಣ” ಇದೆ ಎಂದು ಹೇಳಿ ಅಧಿಕಾರಿಗಳಿಗೆ ರಕ್ಷಣೆ ಕೋರಿ ಸನಾತನ ಸಂಘ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಈ ವಿಚಾರದೊಂದಿಗೆ ವಿಚಾರಣೆ ಮಾಡಲು ಕೋರಿದರು. ಮಮತಾ ಮನವಿಯೊಂದಿಗೆ ಸೋಮವಾರ ಮುಂದಿನ ವಿಚಾರಣೆಯಲ್ಲಿ ಇದನ್ನೂ ವಿಚಾರಣೆ ಮಾಡಲು ನ್ಯಾಯಾಲಯ ಒಪ್ಪಿಕೊಂಡಿದೆ. ವಕೀಲರಾಗಿ ವಾದಿಸಿದ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮಮತಾ ಬ್ಯಾನರ್ಜಿ ಖುದ್ದಾಗಿ ವಾದಿಸಿದ್ದು ಸದ್ಯದ ಸುದ್ದಿ. ಇದಕ್ಕಿಂತ ಮುಂಚೆಯೂ ಅವರು ನ್ಯಾಯಾಲಯಗಳಲ್ಲಿ ವಾದಿಸಿದ್ದಾರೆ. 1982ರಲ್ಲಿ ಕಾನೂನು ಪದವಿ ಪಡೆದ ಮಮತಾ ಬ್ಯಾನರ್ಜಿ, ರಾಜಕೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ರಕ್ಷಿಸಲು ವಕೀಲರಾಗಿ ವಾದಿಸಿದ್ದಾರೆ. ಪ್ರಮುಖ ಕಾನೂನು ಹೋರಾಟಗಳು: 1984 (ಬಲೂರ್ಘಾಟ್ ನ್ಯಾಯಾಲಯ): ದಕ್ಷಿಣ ದಿನಾಜ್ಪುರದಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಹತ್ಯೆ ವಿರುದ್ಧದ ಪ್ರತಿಭಟನೆಯಲ್ಲಿ ಬಂಧಿಸಲ್ಪಟ್ಟ ಯುವ ಕಾಂಗ್ರೆಸ್ ಕಾರ್ಯಕರ್ತರ ಜಾಮೀನಿಗಾಗಿ ಮಮತಾ ವಾದಿಸಿ ಯಶಸ್ವಿಯಾಗಿದ್ದರು. 1990ರ ದಶಕ (ಅಲಿಪೋರ್ ನ್ಯಾಯಾಲಯ): ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆ ದರೋಡೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಕಾಂಗ್ರೆಸ್ ಕಾರ್ಯಕರ್ತರ (ದಿವಂಗತ ಪಂಕಜ್ ಬ್ಯಾನರ್ಜಿ ಸೇರಿದಂತೆ) ಜಾಮೀನಿಗಾಗಿ ವಾದಿಸಿದ್ದರು. 1996 (ಬ್ಯಾಂಕ್ಶಾಲ್ ನ್ಯಾಯಾಲಯ): 1993ರಲ್ಲಿ 13 ಜನರನ್ನು ಕೊಂದ ಪೊಲೀಸ್ ಗುಂಡಿನ ದಾಳಿ (ಈಗ ಟಿಎಂಸಿಯ ಹುತಾತ್ಮ ದಿನ) ನಂತರ ಬಂಧಿತ 40 ಕಾರ್ಯಕರ್ತರಿಗೆ ಜಾಮೀನು ಪಡೆಯಲು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದರು. 1997 (ಚಿನ್ಸುರಾ ನ್ಯಾಯಾಲಯ): ಹೂಗ್ಲಿಯ ಗುಪ್ತಿಪಾರದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ ಹಲಾಧರ್ ಮೊಂಡೋಲ್ ಅವರ ಕುಟುಂಬವನ್ನು ಪ್ರತಿನಿಧಿಸಿ ವಾದಿಸಿದ್ದರು.
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಡಾ.ಹಂಸಲೇಖ ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ
ಬೆಂಗಳೂರು : ‘ನಾದಬ್ರಹ್ಮ’ ಎಂದೇ ಜನಪ್ರಿಯರಾಗಿರುವ ಗೀತೆ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಅವರನ್ನು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಇಲಾಖೆಯ ಸರಕಾರದ ಉಪಕಾರ್ಯದರ್ಶಿ ಎಚ್.ಕೆ.ಸುರೇಶ್ಬಾಬು ತಿಳಿಸಿದ್ದಾರೆ. ಗುರುವಾರ ಈ ಸಂಬಂಧ ಆದೇಶ ಹೊರಡಿಸಿದ್ದು, 2026ರ ಜನವರಿ 13ರಂದು ಹೊರಡಿಸಿದ್ದ ಆದೇಶದಂತೆ ರಚಿಸಲಾಗಿದ್ದ ಆಯ್ಕೆ ಸಮಿತಿಯು, ಫೆ.4ರಂದು ಸಭೆ ಸೇರಿ ಚಿತ್ರರಂಗಕ್ಕೆ ಹಂಸಲೇಖ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ, ಸಮಿತಿಯು ಅವಿರೋಧವಾಗಿ ಶಿಫಾರಸು ಮಾಡಿದ ಮೂವರು ಗಣ್ಯರ ಪಟ್ಟಿಯಲ್ಲಿ ಡಾ.ಹಂಸಲೇಖ ಹೆಸರನ್ನು ಸರಕಾರವು ಅಂತಿಮಗೊಳಿಸಿದೆ ಎಂದು ಹೇಳಿದ್ದಾರೆ. ಬಹುಮುಖ ಪ್ರತಿಭೆಯುಳ್ಳ ಹಂಸಲೇಖ ಅವರು ಕೇವಲ ಸಂಗೀತ ನಿರ್ದೇಶನ ಮಾತ್ರವಲ್ಲದೆ, ಗೀತ ರಚನೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲೂ ಅವರು ತಮ್ಮ ಮುದ್ರೆ ಒತ್ತಿದ್ದಾರೆ. 80 ಮತ್ತು 90ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅವರು, ಜಾನಪದ ಸೊಗಡು ಮತ್ತು ಪಾಶ್ಚಾತ್ಯ ಸಂಗೀತದ ಸಮ್ಮಿಲನದ ಮೂಲಕ ಕ್ರಾಂತಿ ಮಾಡಿದವರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನಾಳೆ(ಫೆ.6) ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.
Budget Session| ಪ್ರಧಾನಿ ಭಾಷಣ ಇಲ್ಲದೆ ವಂದನಾ ನಿರ್ಣಯ ಲೋಕಸಭೆಯಲ್ಲಿ ಅಂಗೀಕಾರ
ಹೊಸದಿಲ್ಲಿ, ಫೆ.5: ವಿರೋಧ ಪಕ್ಷದ ಸದಸ್ಯರ ನಿರಂತರ ಘೋಷಣೆಗಳು ಮತ್ತು ಗದ್ದಲದ ನಡುವೆ ಲೋಕಸಭಾ ಕಲಾಪ ಗುರುವಾರ ಹಲವು ಬಾರಿ ಮುಂದೂಡಲ್ಪಟ್ಟಿದ್ದು, ರಾಷ್ಟ್ರಪತಿಗಳು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿಯವರ ಭಾಷಣವಿಲ್ಲದೆ ಅಂಗೀಕರಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾದ ಸದನದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ಗಂಟೆಯ ವಿರಾಮದ ಬಳಿಕ ಮಧ್ಯಾಹ್ನ 12ಕ್ಕೆ ಸದನ ಮತ್ತೆ ಸೇರಿದ್ದರೂ ಗದ್ದಲ ಶಮನವಾಗಲಿಲ್ಲ. ಈ ವೇಳೆ ದಾಖಲೆಪತ್ರಗಳನ್ನು ಮಂಡಿಸುವ ಪ್ರಕ್ರಿಯೆಗೆ ಮಾತ್ರ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಜನವರಿ 28ರಂದು ರಾಷ್ಟ್ರಪತಿಗಳು ಉಭಯ ಸದನಗಳನ್ನುದ್ದೇಶಿಸಿ ಮಾಡಿದ ಜಂಟಿ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯವನ್ನು ಗದ್ದಲದ ನಡುವೆಯೇ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಪ್ರಧಾನಿಯವರ ಉತ್ತರ ಇಲ್ಲದೇ ಧನ್ಯವಾದ ನಿರ್ಣಯ ಅಂಗೀಕಾರವಾದುದು ಗಮನಾರ್ಹವಾಗಿದೆ. ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮತ್ತೆ ಮುಂದೂಡಿದರು. ವಿರೋಧ ಪಕ್ಷದ ಸದಸ್ಯರು ಮಂಡಿಸಿದ್ದ ತಿದ್ದುಪಡಿಗಳನ್ನು ಮತಕ್ಕೆ ಹಾಕಿದರೂ ಅವು ತಿರಸ್ಕೃತವಾದವು. ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗಲೂ ಗದ್ದಲ, ಕೋಲಾಹಲ ಮುಂದುವರಿಯಿತು. ಹೀಗಾಗಿ ಕಲಾಪ ನಿರ್ವಹಣೆಯೇ ಆಸಾಧ್ಯವಾದ್ದರಿಂದ ಸ್ಪೀಕರ್ ಓಂ ಬಿಲಾ ಅವರು ಸದನವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡಿದರು. ಬುಧವಾರ ಲೋಕಸಭೆಯಲ್ಲಿ ಪ್ರಧಾನಿಯವರ ನಿಗದಿತ ಭಾಷಣಕ್ಕೆ ಮೊದಲು ಅವರ ಆಸನದೆಡೆಗೆ ಮಹಿಳಾ ಸಂಸದೆಯರು ಬ್ಯಾನರ್ಗಳನ್ನು ಹಿಡಿದು ಧಾವಿಸಿ, ಘೋಷಣೆಗಳನ್ನು ಕೂಗಿದ್ದರಿಂದ ಸದನವನ್ನು ದಿನದಮಟ್ಟಿಗೆ ಮುಂದೂಡಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದನದಲ್ಲಿ ಉಪಸ್ಥಿತರಿರಲಿಲ್ಲ. 2020ರಲ್ಲಿ ಭಾರತ - ಚೀನಾ ನಡುವಿನ ಸೇನಾ ಉದ್ವಿಗ್ನತೆಗೆ ಸಂಬಂಧಿಸಿ ಮಾಜಿ ಸೇನಾ ವರಿಷ್ಠ ಜ. ಎಂ.ಎಂ.ನರವಾಣೆಯವರ ಅಪ್ರಕಟಿತ ಆತ್ಮಕತೆಯಲ್ಲಿ ಬರೆಯಲಾದ ವಿಷಯಗಳನ್ನು ಲೋಕಸಭೆಯಲ್ಲಿ ಉಲ್ಲೇಖಿಸುವುದನ್ನು ತಡೆಯಲಾಗುತ್ತಿದೆಯೆಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು ಸಂಸತ್ನಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಯಚೂರಿನಲ್ಲಿ ಕೃಷಿ ಮೇಳಕ್ಕೆ ಭರ್ಜರಿ ಸ್ಪಂದನೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಉದ್ಘಾಟನೆ
ರಾಯಚೂರು : ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಕೃಷಿ ಮೇಳಕ್ಕೆ ರೈತರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ಕೃಷಿ ಮೇಳವನ್ನು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಗುರುವಾರ ಉದ್ಘಾಟಿಸಿದರು. ಕೃಷಿ ಮೇಳಕ್ಕೆ ನಿರ್ಮಿಸಲಾದ ಸ್ವಾಗತ ಕಮಾನು ವಿಶಿಷ್ಟ ವಿನ್ಯಾಸದಲ್ಲಿದ್ದು, ರೈತರನ್ನು ಕೈಬೀಸಿ ಆಹ್ವಾನಿಸುವಂತಿತ್ತು. ಮೇಳದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವೆಗಳ ಇಲಾಖೆ ಸೇರಿದಂತೆ ರೈತಪರ ಹಲವಾರು ಇಲಾಖೆಗಳು ಮಳಿಗೆಗಳನ್ನು ಸ್ಥಾಪಿಸಿ ಅಗತ್ಯ ಮಾಹಿತಿಯನ್ನು ರೈತರಿಗೆ ಒದಗಿಸುತ್ತಿವೆ. ಕೃಷಿ ವಿಶ್ವವಿದ್ಯಾಲಯವು ಮೇಳದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ರೈತ ಕೇಂದ್ರೀಕೃತ ಚಟುವಟಿಕೆಗಳನ್ನು ವ್ಯಾಪಕವಾಗಿ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಜಲಾನಯನ ಅಭಿವೃದ್ಧಿ ಯೋಜನೆಯಡಿ ವಿವಿಧ ಬಗೆಯ ಮಣ್ಣುಗಳ ಮಾದರಿ ಪ್ರದರ್ಶನ ಹಾಗೂ ಮಣ್ಣಿಗೆ ಹೊಂದುವ ಬೆಳೆ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣಾ ವಿಭಾಗದ ವತಿಯಿಂದ ಸವಳು–ಜವಳು ಮಣ್ಣನ್ನು ಫಲವತ್ತುಗೊಳಿಸುವ ವಿಧಾನಗಳು, ನೀರಿನ ಸಮರ್ಪಕ ಬಳಕೆ ಕುರಿತ ಮಾಹಿತಿ ನೀಡಲಾಗುತ್ತಿದೆ. ಭತ್ತ, ಹತ್ತಿ, ಬೇಳೆಕಾಳು, ಎಣ್ಣೆಕಾಳು, ಸಿರಿಧಾನ್ಯಗಳ ವಿವಿಧ ತಳಿಗಳು, ಸೂರ್ಯಕಾಂತಿ ಬೆಳೆಯನ್ನು ಲಾಭದಾಯಕವಾಗಿ ಬೆಳೆಯುವ ಕೃಷಿ ಕ್ರಮಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ನೈಸರ್ಗಿಕ ವಿಪತ್ತು ಹಾಗೂ ಕೃಷಿ ಹವಾಮಾನ ವಿಭಾಗದಿಂದ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ಕೃಷಿಗೆ ಸಂಬಂಧಿಸಿದ ನವೀನ ಮಾಹಿತಿಯನ್ನು ರೈತರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ವಿಶೇಷ ಆಕರ್ಷಣೆಯಾಗಿದ್ದು, ಕೀಟಗಳ ಜೀವವಿಧಾನ ಹಾಗೂ ವೈವಿಧ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ವಿವಿಧ ಬಗೆಯ ಉತ್ತಮ ಗುಣಮಟ್ಟದ ಬೀಜ ತಳಿಗಳು, ಕೀಟನಾಶಕಗಳು ಹಾಗೂ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನವೂ ರೈತರ ಗಮನ ಸೆಳೆಯುತ್ತಿದೆ. ಈ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸನಗೌಡ ದದ್ದಲ್, ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಪಾಮಯ್ಯ ಮುರಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಎಸ್ಪಿ ಅರುಣಾಂಗ್ಷು ಗಿರಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ, ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಕಳ: ಸ್ಫೋಟಕ ಬಳಸಿ ಅಕ್ರಮ ಬಂಡೆ ಸ್ಫೋಟ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಕಾರ್ಕಳ, ಫೆ.5: ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸ್ಪೋಟಕವನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಕ್ಕುಂದೂರು ಗ್ರಾಮ ಅಯ್ಯಪ್ಪ ನಗರ ನಿವಾಸಿ ಟಿ. ರವಿಚಂದ್ರ (55) ಹಾಗೂ ಆತನ ಮಗ ಪವನ್ ಕುಮಾರ್ (31) ಬಂಧಿತ ಆರೋಪಿಗಳು. ಇವರು ಅಕ್ರಮವಾಗಿ ಯಾವುದೇ ಪರವಾನಿಗೆ ಹೊಂದದೇ ಸ್ಪೋಟಕ ಬಳಸಿ ಕಲ್ಲುಗಳನ್ನು ಸ್ಫೋಟಿಸಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಳೆದ ಜ.21ರಂದು ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆಯನ್ನು ಕೈಗೊಂಡ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ರಾಯಚೂರಿನಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ನಾಟಕೋತ್ಸವಕ್ಕೆ ಚಾಲನೆ
ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ವಿದ್ಯಾರ್ಥಿಗಳು ಅರಿಯಬೇಕು: ತಹಶೀಲ್ದಾರ್ ಅಬ್ದುಲ್ ಮಹೀದ್
ಚೆನ್ನೈ,ಫೆ.5: ರಾಜ್ಯದ ದ್ವಿಭಾಷಾ ನೀತಿಯನ್ನು ಸಮರ್ಥಿಸುವ ಮತ್ತು ಉತ್ತರಭಾರತದ ರಾಜ್ಯಗಳ ವಲಸೆ ಕಾರ್ಮಿಕರು ತೀರಾ ಕೆಳಮಟ್ಟದ ಉದ್ಯೋಗಗಳಿಗಷ್ಟೇ ಸೀಮಿತರಾಗಿದ್ದಾರೆಂಬ ಹೇಳಿಕೆಗಳನ್ನು ನೀಡುವ ಮೂಲಕ ತಮಿಳುನಾಡು ಕೃಷಿ ಸಚಿವ ಎಂ.ಆರ್.ಕೆ. ಪನ್ನೀರ್ಸೆಲ್ವನ್ ಅವರು ವಿವಾದದ ಕಿಡಿ ಹಚ್ಚಿದ್ದಾರೆ. ಚೆನ್ನೈನಲ್ಲಿ ಗುರುವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಪನ್ನೀರ್ಸೆಲ್ವನ್, ‘‘ಉತ್ತರ ಭಾರತದ ಜನರು ಹಿಂದಿ ಭಾಷೆಯನ್ನು ಮಾತ್ರವೇ ಕಲಿತಿರುವುದರಿಂದ ಅವರಿಗೆ ತಮಿಳುನಾಡಿನಲ್ಲಿ ಸೀಮಿತ ಉದ್ಯೋಗಾವಕಾಶಗಳಷ್ಟೇ ಇವೆ ಮತ್ತು ಅವರು ಅತ್ಯಂತ ಕಡಿಮೆ ಆದಾಯ ತರುವ ಕೆಲಸಗಳನ್ನಷ್ಟೇ ಮಾಡಬೇಕಾಗುತ್ತದೆ. ಆದರೆ ತಮಿಳುನಾಡಿನ ವಿದ್ಯಾರ್ಥಿಗಳು ತಮಿಳು ಹಾಗೂ ಇಂಗ್ಲೀಷ್ ಕಲಿಯುವುದರಿಂದ ಭಾರೀ ಪ್ರಯೋಜನ ಪಡೆಯುತ್ತಿದ್ದಾರೆಂದು ಹೇಳಿದರು. ‘‘ಉತ್ತರಭಾರತದವರು ತಮಿಳುನಾಡಿಗೆ ಟೇಬಲ್ಗಳನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಬರುತ್ತಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಪಾನಿಪೂರಿ ಮಾರಾಟಗಾರರಾಗಿ ಕೆಲಸ ಮಾಡಲು ಇಲ್ಲಿಗೆ ಬರುವವರು ಕೇವಲ ಹಿಂದಿ ಭಾಷೆಯನ್ನು ಮಾತ್ರವೇ ಕಲಿತವರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ನಾವು ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿದ್ದು, ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಕಲಿತುಕೊಂಡಿದ್ದೇವೆ. ನಮ್ಮ (ತಮಿಳುನಾಡಿನ) ಮಕ್ಕಳು ವಿದೇಶಕ್ಕೆ ಹೋಗುತ್ತಿದ್ದಾರೆ ಮತ್ತು ಅಮೆರಿಕ, ಲಂಡನ್ಗಳಲ್ಲಿ ಕೋಟಿ ರೂ. ಸಂಪಾದಿಸುವಂತಹ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ’’ ಎಂದರು. ಎಂ.ಆರ್.ಕೆ. ಪನ್ನೀರ್ಸೆಲ್ವಂ ಅವರ ಹೇಳಿಕೆಯನ್ನು ಹೊರರಾಜ್ಯಗಳ ಪ್ರತಿಪಕ್ಷ ನಾಯಕರು ತೀವ್ರವಾಗಿ ಖಂಡಿಸಿದ್ದು, ಅವು ಸಂವೇದನಾರಹಿತವಾಗಿವೆ ಹಾಗೂ ವಿಭಜನವಾದಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಪನ್ನೀರ್ಸೆಲ್ವಂ ಅವರ ಹೇಳಿಕೆ ವಿವಾದಕ್ಕೆ ಗ್ರಾಸವಾದ ಬೆನ್ನಲ್ಲೇ ಡಿಎಂಕೆ ನಾಯಕರು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಪಕ್ಷದ ವಕ್ತಾರ ಡಾ.ಸೈಯದ್ ಹಫೀಝುಲ್ಲಾ ಅವರು ಹೇಳಿಕೆಯೊಂದನ್ನು ನೀಡಿ, ಕಾನೂನುಬದ್ಧವಾಗಿ ಮಾಡುವ ಯಾವುದೇ ಕೆಲಸ ಕೂಡಾ ಘನತೆಯದ್ದೇ ಆಗಿದೆ. ಡಿಎಂಕೆ ಪಕ್ಷವು ಹಿಂದಿ ಭಾಷಿಕರನ್ನಾಗಲಿ ಅಥವಾ ಅವರು ಮಾಡುವ ಕೆಲಸವನ್ನಾಗಲಿ ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಪನ್ನೀರ್ ಸೆಲ್ವಂ ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದ್ದು, ಉತ್ತರ ಭಾರತೀಯರನ್ನು ನಿಂದಿಸುವಂತಹ ಯಾವುದೇ ಉದ್ದೇಶ ಅವರಿಗಿರಲಿಲ್ಲ ಎಂದು ಡಿಎಂಕೆಯ ಲೋಕಸಭಾ ಸದಸ್ಯ ಟಿ.ಆರ್.ಬಾಲು ಹೇಳಿದ್ದಾರೆ. ಹಿಂದಿ ಹೇರಿಕೆಯನ್ನು ರಾಜ್ಯವು ದೀರ್ಘಕಾಲದಿಂದಲೂ ವಿರೋಧಿಸುತ್ತಾ ಬಂದಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ʼನಮ್ಮ ಮೆಟ್ರೋ ದರ ಏರಿಕೆʼ ನಮ್ಮ ವ್ಯಾಪ್ತಿಗೆ ಬರುವುದಿಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆಗೆ ಸರಕಾರ ಒಪ್ಪಿಗೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನನ್ನ ಬಳಿಗೆ ಇನ್ನು ಯಾವುದೇ ಕಡತ ಬಂದಿಲ್ಲ. ಕೇಂದ್ರ ಸರಕಾರದ ಕಾರ್ಯದರ್ಶಿ, ಬಿಎಂಆರ್ಸಿಎಲ್ ಮುಖ್ಯಸ್ಥರ ಒಂದು ಸಮಿತಿ ಇದೆ. ಅವರು ಬೆಲೆ ಏರಿಕೆ ತೀರ್ಮಾನ ಮಾಡಿದ್ದು, ನನಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ತಮ್ಮದೇ ಕೇಂದ್ರ ಸಚಿವರಿಗೆ ಈ ವಿಚಾರ ಹೇಳಬೇಕು. ಅವರು ಹೇಳಲು ಸಾಧ್ಯವೇ?. ನಮ್ಮ ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಸರಕಾರದ ವರೆಗೆ ಬರುವುದಿಲ್ಲ. ಕೇಂದ್ರದ ಸಚಿವಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿಗಳಿದ್ದರೂ ತೀರ್ಮಾನ ಮಾಡುವುದು’ ಎಂದು ತಿಳಿಸಿದರು. ಮೆಟ್ರೋ ದರ ಏರಿಕೆ ಹೇಗೆ ಬದಲಾವಣೆ ಮಾಡಲು ಸಾಧ್ಯ. ಬಿಜೆಪಿಯವರು ಕರ್ನಾಟಕದ ವರನ್ನೇ ಈ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಅನುಮತಿ ಕೊಡಿಸಲಿ. ಕೇಂದ್ರ ಸರಕಾರ ಮೆಟ್ರೋ ಯೋಜನೆಗೆ ನೀಡುವುದು ಕೇವಲ ಶೇ.12-13ರಷ್ಟು ಮಾತ್ರ ಎಂದು ಹೇಳಿದರು. ನಮ್ಮ ಮೆಟ್ರೋ ದರ ಏರಿಕೆ ವಿಚಾರ ನಮಗೆ ಸಂಬಂಧವಿಲ್ಲ. ಈ ಬಗ್ಗೆ ಅವರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ಹೀಗಾಗಿ ನಾನು ಸಂಪುಟದಲ್ಲಿ ಹಾಗೂ ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಲು ಆಗಿಲ್ಲ. ಮೆಟ್ರೋ ಪ್ರಯಾಣ ದರವನ್ನು ನಾನು ಬೇರೆ ನಗರಗಳ ದರದ ಜೊತೆ ಹೋಲಿಕೆ ಮಾಡಿ ನೋಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾಳೆ(ಫೆ.6) ಮಂಗಳೂರಿಗೆ ಹೋಗುತ್ತಿದ್ದೇನೆ, ನಾಡಿದ್ದು ರಾಯಚೂರು, ಅನಂತರ ಗದಗಕ್ಕೆ ಹೋಗುತ್ತಿದ್ದೇನೆ. ದಿಲ್ಲಿಗೆ ಹೋಗುವ ಸಂಬಂಧ ನಮ್ಮ ಕಾರ್ಯದರ್ಶಿ ಪ್ರವಾಸ ಪಟ್ಟಿ ಬಿಡುಗಡೆ ಮಾಡುತ್ತಾರೆಂದ ಅವರು, ನಾನು ಹೊಸದಿಲ್ಲಿಗೆ ಹೋದರೆ, ನಿಮಗೆ(ಮಾಧ್ಯಮ ಪ್ರತಿನಿಧಿಗಳಿಗೆ) ತಿಳಿಸಿಯೇ ಹೋಗುತ್ತೇನೆ ಎಂದು ಉತ್ತರಿಸಿದರು.
ಕುಂದಾಪುರ| ಶಾಲಾ ಬಾಲಕಿಗೆ ಲೈಂಗಿಕ ಪೀಡನೆ: ಇಬ್ಬರು ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ, ದಂಡ
ಕುಂದಾಪುರ, ಫೆ.5: ಕಳೆದ ವರ್ಷ ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ಆಟೋರಿಕ್ಷಾವೊಂದರಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಗೆ ಲೈಂಗಿಕ ಪೀಡನೆಯ ಆರೋಪ ಸಾಬೀತಾಗಿದ್ದು ಪ್ರಕರಣದಲ್ಲಿ ಇಬ್ಬರನ್ನು ದೋಷಿಗಳೆಂದು ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ತೀರ್ಪು ಪ್ರಕಟಿಸಿದ್ದಾರೆ. ರಿಕ್ಷಾ ಚಾಲಕ ಶರತ್ ಶೆಟ್ಟಿ (32) ಮತ್ತು ಆತನ ಸ್ನೇಹಿತ ಪ್ರಶಾಂತ ನಾಯ್ಕ್(28) ಈ ಪ್ರಕರಣದ ಆರೋಪಿಗಳಾಗಿದ್ದು , ಇವರಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ, 5 ಸಾವಿರ ದಂಡ, ದಂಡ ತೆರದಿದ್ದಲ್ಲಿ 5 ತಿಂಗಳ ಹೆಚ್ಚುವರಿ ಸಜೆ ವಿಧಿಸಿದ್ದು, ನೊಂದ ಬಾಲಕಿಗೆ ಸರಕಾರ 50 ಸಾವಿರ ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ. ಘಟನೆ ವಿವರ: ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಸಂತ್ರಸ್ಥ ಬಾಲಕಿ ಪ್ರತಿದಿನ ರಿಕ್ಷಾದಲ್ಲೇ ಶಾಲೆಗೆ ಬಂದು, ಹೋಗುತಿದ್ದು ಕಳೆದ ಜು.15ರಂದು ಶಾಲೆಯಿಂದ ಮನೆಗೆ ವಾಪಾಸು ಬರುವಾಗ ರಿಕ್ಷಾದಲ್ಲಿ ಶರತ್ ಶೆಟ್ಟಿ ಹಾಗೂ ಪ್ರಶಾಂತ್ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ನೊಂದ ಬಾಲಕಿ ಶಾಲೆಯ ಅಧ್ಯಾಪಕರಿಗೆ ವಿಷಯ ತಿಳಿಸಿದ್ದು, ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಅವರು ಕೇವಲ 15 ದಿನಗಳಲ್ಲೇ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಗಳಾದ ಮಚ್ಚಟ್ಟು ಗ್ರಾಮದವರಾದ ಶತ್ ಶೆಟ್ಟಿ ಹಾಗೂ ಪ್ರಶಾಂತ್ ವಿರುದ್ಧ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಒಟ್ಟು 32 ಸಾಕ್ಷ್ಯಾಧಾರಗಳಿದ್ದು ನ್ಯಾಯಾಲಯವು 7 ತಿಂಗಳಿನಲ್ಲಿ ತ್ವರಿತಗತಿಯಲ್ಲಿ ಪ್ರಕರಣದ ಕೂಲಂಕಷ ವಿಚಾರಣೆ ನಡೆಸಿ ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು, ಜಯರಾಮ ಶೆಟ್ಟಿ ಹಾಗೂ ವೈ.ಟಿ.ರಾಘವೇಂದ್ರ ವಾದಿಸಿದ್ದರು.
ಬೆಂಗಳೂರು ಬಿಸಿನೆಸ್ ಕಾರಿಡಾರ್: ಒಂದೂವರೆ ವರ್ಷದಲ್ಲಿ ಮೊದಲ ಹಂತದ ಪೂರ್ಣಗೊಳಿಸುತ್ತೇವೆ ಎಂದ ಡಿಕೆ ಶಿವಕುಮಾರ್
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಮುಂದಿನ ಒಂದೂವರೆ ವರ್ಷದೊಳಗೆ ಪೂರ್ಣ ಮಾಡುತ್ತೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈಗಾಗಲೇ 600 ಭೂಮಾಲೀಕರು ಭೂಮಿ ನೀಡಲು ಒಪ್ಪಿಗೆ ನೀಡಿದ್ದಾರೆ. ಹಲವರಿ ಪರಿಹಾರ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಮಹಿಳೆಯರ ಪ್ರೀಮಿಯರ್ ಲೀಗ್ | ಆರ್ಸಿಬಿಗೆ ಕಪ್ ಗೆಲ್ಲಲು ಬೇಕು 204 ರನ್
ವಡೋದರ : ವಿಮೆನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಆರ್ ಸಿ ಬಿ ತಂಡಕ್ಕೆ 204 ರನ್ ಬೇಕಾಗಿದೆ. ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಡೆಲ್ಲಿ 204 ರನ್ ಗಳ ಗುರಿ ನೀಡಿದೆ.
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯ ಭೂ ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಡಿ.ಕೆ.ಶಿವಕುಮಾರ್
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಚೇರಿಯಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಹಿಂದಿನ ಪಿಆರ್ಆರ್) ರಸ್ತೆ ಯೋಜನೆಯ ಭೂ ಸಂತ್ರಸ್ತರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಪರಿಹಾರ ಚೆಕ್ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು. ಕಾಳತಮ್ಮನಹಳ್ಳಿ ಗ್ರಾಮದ ಸರ್ವೆ ನಂ. 113/2ರಲ್ಲಿನ ಒಟ್ಟು 2 ಎಕರೆ 9 ಗುಂಟೆ ವಿಸ್ತೀರ್ಣದ ಭೂಮಾಲಕ ಎನ್. ವೆಂಕಟೇಶ್ ಬಿನ್ ನಂಜಪ್ಪ ಮತ್ತು ಎಸ್.ಎನ್. ಆನಂದ್ ಕುಮಾರ್ ಬಿನ್ ನಂಜಪ್ಪ ಅವರಿಗೆ 65:35 ಅನುಪಾತದ ಯೋಜನೆಯಡಿ, 18,657 ಚದರ ಅಡಿ ವಿಸ್ತೀರ್ಣದ ಅಭಿವೃದ್ಧಿ ಹೊಂದಿದ ಪ್ರದೇಶದ ಪ್ರಮಾಣ ಪತ್ರವನ್ನು ವಿತರಿಸಿದರು. ಅದೇ ರೀತಿ ವಾಸುದೇವಪುರ ಗ್ರಾಮದ ಸರ್ವೆ ನಂ. 21ರಲ್ಲಿನ 4 ಎಕರೆ 36 ಗುಂಟೆ ವಿಸ್ತೀರ್ಣದ ಭೂಮಾಲೀಕ ಗ್ರೀನ್ ಆರ್ಚಡ್ರ್ಸ್ ಫಾರ್ಮ್ ಹೌಸಸ್ ಅವರಿಗೆ 65:35 ಅನುಪಾತದ ಯೋಜನೆಯಡಿ 41086.5 ಚದರ ಅಡಿ ವಿಸ್ತೀರ್ಣದ ಅಭಿವೃದ್ಧಿ ಹೊಂದಿದ ಪ್ರದೇಶದ ಪ್ರಮಾಣ ಪತ್ರವನ್ನು ವಿತರಿಸಿದರು. ಬಿದರೇನ ಅಗ್ರಹಾರದ ಸರ್ವೆ ನಂ. 9/14 ಮತ್ತು ಸರ್ವೆ ನಂ. 14/9ರ ಜಮೀನಿನ ಭೂಮಾಲಕ ಸಿ.ಎ. ಬಾಲಕೃಷ್ಣ ಅವರಿಗೆ 1.86 ಕೋಟಿ ರೂ. ಪರಿಹಾರ ನೀಡಲಾಯಿತು. ಆವಲಹಳ್ಳಿ ಗ್ರಾಮದ ಸರ್ವೆ ನಂ. 32/1ರ 2-33 ಎಕರೆಗೆ ಭೂಮಾಲಕ ಸಿ.ಎ. ಚಂದ್ರಶೇಖರ್, ಪುರುಷೋತ್ತಮ ಮತ್ತು ಶಾರದ ಅವರಿಗೆ 24,69,59,761 ರೂ. ಪರಿಹಾರ ವಿತರಿಸಲಾಯಿತು. ಚೀಮಸಂದ್ರ ಗ್ರಾಮದ ಸರ್ವೆ ನಂ. 66ರ 1-36 ಎಕರೆಗೆ ಭೂಮಾಲಕ ಕೃಷ್ಣಮೂರ್ತಿ ಅವರಿಗೆ 15,67,50,000 ರೂ. ಪರಿಹಾರ ವಿತರಿಸಲಾಯಿತು. ಇದೇ ಗ್ರಾಮದ ಸರ್ವೆ ನಂ. 64/3ರ 0-36 ಎಕರೆ ಮತ್ತು 64/4ರ 0-30 ಎಕರೆಗೆ ಭೂಮಾಲಕ ಮುನಿಯಪ್ಪ ಅವರಿಗೆ ಕ್ರಮವಾಗಿ 13,61,25,000 ರೂ.ಗಳ ಚೆಕ್ ಗಳನ್ನು ವಿತರಿಸಿದರು. ಇದೇ ವೇಳೆ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಆಯುಕ್ತ ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.
‘ಸಚಿವ ತಿಮ್ಮಾಪುರ ರಾಜೀನಾಮೆ’ಗೆ ಆಗ್ರಹಿಸುವ ಹೋರಾಟ ಜನತಾ ನ್ಯಾಯಾಲಯಕ್ಕೆ : ಆರ್.ಅಶೋಕ್
ಬೆಂಗಳೂರು : ‘ಅಬಕಾರಿ ಇಲಾಖೆಯಲ್ಲಿನ ಲಂಚ ಆರೋಪ ಸಂಬಂಧ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸುವ ಹೋರಾಟವನ್ನು ‘ಜನತಾ ನ್ಯಾಯಾಲಯ’ಕ್ಕೆ ಕೊಂಡೊಯ್ಯಲಾಗುವುದು. ಕಾನೂನು ಹೋರಾಟ ನಡೆಸುವ ಬಗ್ಗೆಯೂ ಆಲೋಚನೆ ನಡೆಸಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಮಾತನಾಡಿದ ಅವರು, ಈ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಪ್ರಮುಖ ಸಾಕ್ಷ್ಯಗಳು ಸಿಗುವ ಸೂಚನೆಗಳಿವೆ. ಅವುಗಳ ಸಮೇತ ಸಾರ್ವಜನಿಕರ ಮುಂದೆ ಈ ಸರಕಾರದ ನಿಜಬಣ್ಣ ಬಯಲು ಮಾಡಲಾಗುವುದು. ಅಬಕಾರಿ ಇಲಾಖೆಯಲ್ಲಿ ನಡೆದಿರುವ 6 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಗರಣವನ್ನು ಅಧಿವೇಶನದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ ಎಂದರು. ತಿಮ್ಮಾಪುರ ರಾಜೀನಾಮೆ ಮತ್ತು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿದ್ದೆವು. ಆದರೆ, ಕಳಂಕಿತ ಸಚಿವರ ಬೆಂಬಲಕ್ಕೆ ಇಡೀ ಸಚಿವ ಸಂಪುಟವೇ ನಿಂತುಕೊಂಡಿತ್ತು. ರಾಜ್ಯದ ಇತಿಹಾಸದಲ್ಲಿ ಹಿಂದೆ ಎಂದೆಂದೂ ನಡೆದಿರಲಿಲ್ಲ. ಇಲ್ಲಿ ಲೂಟಿ ಮಾಡಿದ ಹಣವನ್ನು ನೆರೆ ರಾಜ್ಯಗಳ ಚುನಾವಣೆಗಳಿಗೆ ಬಳಕೆ ಮಾಡುತ್ತಿರುವುದು ಸ್ಪಷ್ಟ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಭ್ರಷ್ಟಾಚಾರದ ಮುಖವಾಡವನ್ನು ಅಧಿವೇಶನದಲ್ಲಿ ಕಳಚಿ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಹಗರಣಗಳ ಸುಳಿಯಲ್ಲೇ ಸಿಕ್ಕಿಕೊಂಡಿದೆ. ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಜತೆಗೆ ಖಜಾನೆ ಖಾಲಿಯಾಗಿದೆ. ತಮ್ಮ ಪಾಲಿನ ಶೇ.40ರಷ್ಟು ಹಣ ಭರಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಕೇಂದ್ರ ಸರಕಾರ ಜಾರಿಗೊಳಿಸಿರುವ ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ಧ ತಕರಾರು ತೆಗೆದಿದ್ದಾರೆ ಎಂದು ಟೀಕಿಸಿದರು. ಅಸಂಸದೀಯ ನಡುವಳಿಕೆ: ನಮ್ಮ ಶಾಸಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಶಾಸಕ ಶಿವಲಿಂಗೇಗೌಡ, ಅಸಂಸದೀಯವಾಗಿ ವರ್ತಿಸಿದ್ದು, ಸದನದಲ್ಲೇ ಅದನ್ನು ಖಂಡಿಸಿದ್ದೇವೆ. ಸರಿದಾರಿಯಲ್ಲಿ ಕಲಾಪ ನಡೆಸಬೇಕಿದ್ದ ಸ್ಪೀಕರ್ ಖಾದರ್ ಅವರು, ಕಾಂಗ್ರೆಸ್ ಪಕ್ಷದ ಪರ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ದೂರಿದರು.
ಮನರೇಗಾ ಬಚಾವೋ ಸಂಗ್ರಾಮ್| ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ
ಮಂಗಳೂರು, ಫೆ.5: ಮನರೇಗಾ ಬಚಾವೋ ಸಂಗ್ರಾಮ್ ಪ್ರಯುಕ್ತ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯ ವತಿಯಿಂದ ಗುರುವಾರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ನಡೆಯಿತು. ನಗರದ ಬಲ್ಮಠದಲ್ಲಿರುವ ಶಾಂತಿನಿಲಯ ಸಭಾಂಗಣ ಬಳಿಯ ಮೈದಾನದಿಂದ ಹೊರಟ ಪಾದಯಾತ್ರೆಯು ಮಂಗಳೂರು ಮಹಾನಗರ ಪಾಲಿಕೆ ಎದುರಿನ ಮಹಾತ್ಮಾ ಗಾಂಧೀಜಿ ಪ್ರತಿಮೆಯವರೆಗೆ ಸಾಗಿತು. ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಕೇಂದ್ರ ಸರಕಾರವು ಸರಿಯಾದ ಚರ್ಚೆ ನಡೆಸದೆ ತರಾತುರಿಯಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ಬಿಜೆಪಿಗೆ ಮಹಾತ್ಮ ಗಾಂಧೀಜಿ, ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಯೋಜನೆಯ ಬಗ್ಗೆ ಕಾಂಗ್ರೆಸ್ ನಿರಂತರ ಪ್ರತಿಭಟನೆ ನಡೆಸಲಿದೆ ಎಂದರು. ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ ಮಹಾತ್ಮ ಗಾಂಧೀಜಿ ರಾಮರಾಜ್ಯದ ಕನಸು ಕಂಡಿದ್ದರು. ಭಾರತವು ಈ ಮಟ್ಟಿಗೆ ಬೆಳೆಯಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದ ಮನರೇಗಾ ಯೋಜನೆಯೂ ಪ್ರಮುಖವಾಗಿದೆ. ಈ ಯೋಜನೆಯನ್ನು ವಿಶ್ವಸಂಸ್ಥೆಯೂ ಪ್ರಶಂಶಿಸಿತ್ತು. 100 ದಿನಗಳ ಉದ್ಯೋಗದ ಮೂಲಕ ಜನರಿಗೆ ಅದು ಆಧಾರವಾಗಿತ್ತು. ಇದೀಗ ಕೇಂದ್ರ ಸರಕಾರದ ವಿಬಿ-ಜಿ ರಾಮ್-ಜಿ ಯೋಜನೆಯ ಮೂಲಕ ಅಧಿಕಾರ ಕೇಂದ್ರೀಕೃತಗೊಳಿಸಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷೆ ಅಪ್ಪಿಮಾತನಾಡಿ ರಸ್ತೆ, ಕೆರೆ, ಬಾವಿ, ಶೌಚಾಲಯ ಸೇರಿದಂತೆ ಇಡೀ ಹಳ್ಳಿಗಳ ಅಭಿವೃದ್ಧಿ ಮನರೇಗಾದಿಂದ ಸಾಧ್ಯವಿತ್ತು. ಈಗ ಕೇಂದ್ರ ಸರಕಾರ ಹೆಸರು ಬದಲಾಯಿಸಿ ಬಡವರು, ರೈತರು, ಮಹಿಳೆಯರಿಗೆ ಅನ್ಯಾನ ಮಾಡಿದೆ ಎಂದರು. ಪಾದಯಾತ್ರೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ನಿಗಮ, ಮಂಡಳಿಗಳ ಅಧ್ಯಕ್ಷರಾದ ಶಾಲೆಟ್ ಪಿಂಟೋ, ವಿಶ್ವಾಸ್ದಾಸ್, ಮಾಜಿ ಶಾಸಕ ಜೆ. ಆರ್. ಲೋಬೊ, ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಕೆ., ಮುಖಂಡರುಗಳಾದ ಸುರೇಶ್ ಬಲ್ಲಾಳ್, ಅಬ್ದುಲ್ ಸಲೀಮ್, ಪ್ರಕಾಶ್ ಸಾಲ್ಯಾನ್, ಡೆನಿಸ್ ಡಿಸಿಲ್ವ, ಸುಹಾನ್ ಆಳ್ವ, ದಿನೇಶ್ ಮೂಳೂರ್, ಅಬ್ದುಲ್ ರವೂಫ್, ವಿನಯ್ರಾಜ್, ಪ್ರವೀಣ್ಚಂದ್ರ ಆಳ್ವ, ಅಶ್ರಫ್ ಬಜಾಲ್, ಟಿ.ಕೆ. ಸುಧೀರ್, ಮನೋರಾಜ್, ಚೇತನ್ ಬೆಂಗ್ರೆ, ಚಂದ್ರಕಲಾ ಜೋಗಿ, ರೂಪ ಚೇತನ್, ಆಸೀಫ್ ಬೆಂಗ್ರೆ, ಸಂಶುದ್ದಿನ್ ಕುದ್ರೋಳಿ, ಪ್ರಥ್ವಿರಾಜ್, ಹೊನ್ನಯ್ಯ, ಮೆಲ್ವಿನ್ ಕ್ಯಾಸ್ಟ್ತಲಿನೊ, ನಝೀರ್ ಬಜಾಲ್, ಶಾಂತಲಾ ಗಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
India Vs Pakistan- ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸಿರುವುದರ ವಿಚಾರವಾಗಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಈಗಾಗಲೇ ಮಾತನಾಡಿದ್ದರೂ ಭಾರತ ತಂಡ ನಾಯಕ ಸೂರ್ಯಕುಮಾರ್ ಯಾದವ್ ಅವರು ಈವರೆಗೂ ಮಾತನಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಅವರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆಡುವುದಿಲ್ಲ ಎಂದು ಹೇಳಿರುವವರು ಅವರು. ಹೀಗಾಗಿ ನಮ್ಮ ಯೋಜನೆಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ | ವಿವಿಧೆಡೆ ದಾಳಿ : ಇಬ್ಬರು ಬಾಲಕಾರ್ಮಿಕ ಮಕ್ಕಳ ರಕ್ಷಣೆ
ಬಳ್ಳಾರಿ: ನಗರದ ವಿವಿಧೆಡೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಕಾರದೊಂದಿಗೆ ಶುಕ್ರವಾರ ನಡೆಸಿದ ದಾಳಿಯಲ್ಲಿ ಇಬ್ಬರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ಅವರು ತಿಳಿಸಿದ್ದಾರೆ. ಪ್ಯಾನ್–ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನದ ಅಂಗವಾಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನೆ ಅವರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿ, ಈ ದಾಳಿಯನ್ನು ಕೈಗೊಳ್ಳಲಾಯಿತು. ನಗರದ ದುರ್ಗಮ್ಮ ದೇವಸ್ಥಾನದ ಹತ್ತಿರದ ಕಪ್ಪಗಲ್ಲು ರಸ್ತೆ, ತಾಳೂರು ರಸ್ತೆ, ರೇಣುಕ ನಗರ ಹಾಗೂ ದುರ್ಗಮ್ಮ ಗುಡಿ ಸಮೀಪದ ವಿವಿಧ ಸ್ಥಳಗಳಲ್ಲಿರುವ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ ಸೇರಿದಂತೆ ವಿವಿಧ ಉದ್ದಿಮೆಗಳಿಗೆ ಟಾಸ್ಕ್ಫೋರ್ಸ್ ಸಮಿತಿ ಭೇಟಿ ನೀಡಿತು. ಈ ವೇಳೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿಯೇ ಮಕ್ಕಳ ಹೇಳಿಕೆಗಳನ್ನು ದಾಖಲಿಸಲಾಯಿತು. ರಕ್ಷಿಸಲಾದ ಮಕ್ಕಳನ್ನು ಮುಖ್ಯವಾಹಿನಿ ಶಿಕ್ಷಣಕ್ಕೆ ಸೇರಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದ್ದು, ಸಂಬಂಧಿಸಿದ ಉದ್ದಿಮೆ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್ಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಬಳ್ಳಾರಿ ತಾಲ್ಲೂಕು ಗ್ರೇಡ್–2 ತಹಶೀಲ್ದಾರ ವಿನಾಯಕ, ಕಾರ್ಮಿಕ ನಿರೀಕ್ಷಕರಾದ ರಮೇಶ್ (1ನೇ ವೃತ್ತ) ಮತ್ತು ಪರಶುರಾಮ್ (2ನೇ ವೃತ್ತ), ಆರೋಗ್ಯ ಇಲಾಖೆಯ ಮುಸ್ತಾಕ್ ಅಹಮದ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರಶಾಂತ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನೂರಪ್ಪ, ಉಮೇಶ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಚಂದ್ರಕಲಾ, ರೀಚ್ ಸಂಸ್ಥೆಯ ಸಂಯೋಜಕಿ ಬಸಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮೇಘಾಲಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ: 16 ಮಂದಿ ಸಾವು
Meghalaya coal mine explosion: ಮೇಘಾಲಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೇಘಾಲಯದ ಈಸ್ಟ್ ಜೈನ್ಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಅನುಮಾನಾಸ್ಪದ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 16 ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನಿತರವರು ಸಿಲುಕಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.6: ಯುನಿವೆಫ್ನಿಂದ ರಮಝಾನ್ ಸ್ವಾಗತ ಕಾರ್ಯಕ್ರಮ
ಮಂಗಳೂರು, ಫೆ.5: ಯುನಿವೆಫ್ ಕರ್ನಾಟಕದ ವತಿಯಿಂದ ಫೆ.6ರ ಸಂಜೆ 7ಕ್ಕೆ ನಗರದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ನಲ್ಲಿ ರಮಝಾನ್ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ʼರಮಝಾನ್ ನಮ್ಮನ್ನು ಬದಲಿಸಲಿʼ ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಆಧ್ಯಾತ್ಮಿಕ ತರಗತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಫೆ.6: ಉಪಮುಖ್ಯಮಂತ್ರಿ ದ.ಕ.ಜಿಲ್ಲೆಗೆ ಭೇಟಿ
ಮಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫೆ.6ರಂದು ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 1:40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಪರಾಹ್ನ 3:30ಕ್ಕೆ ಪುತ್ತೂರು ತಾಲೂಕಿನ ಕಾಂಚನ ಬಜತ್ತೂರು ಶ್ರೀಲಕ್ಷ್ಮಿ ನಾರಾಯಣ ಸಂಗೀತ ಕಲಾ ಶಾಲೆ ವತಿಯಿಂದ ಆಯೋಜಿಸಿರುವ ನೂತನ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆ ಹಾಗೂ 72ನೇ ವಷರ್ದ ಕಾಂಚನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 6ಕ್ಕೆ ಪುತ್ತೂರು ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ನಗರದಲ್ಲಿ ವಾಸ್ತವ್ಯ ಹೂಡುವರು. ಫೆ.7ರಂದು ಬೆಳಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ರೀಲ್ಸ್, ಫೇಸ್ಬುಕ್ ಪೋಸ್ಟ್ಗಳಿಗಾಗಿ ಹಲ್ಲೆ, ಪೊಲೀಸರ ನಿಂದನೆ ಸಲ್ಲದು : ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಚಾಟಿ
ಬೆಂಗಳೂರು : ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಗೆ ತಡೆ ನೀಡಿರುವ ಹೈಕೋರ್ಟ್, ʼರೀಲ್ಸ್ ಮತ್ತು ಫೇಸ್ಬುಕ್ ಪೋಸ್ಟ್ಗಳಿಗಾಗಿ ಹಲ್ಲೆ ನಡೆಸುವುದು ಅಥವಾ ಪೊಲೀಸರನ್ನು ನಿಂದಿಸುವುದನ್ನು ಒಪ್ಪಲಾಗದುʼ ಎಂದು ಪುನೀತ್ ಕೆರೆಹಳ್ಳಿಗೆ ಚಾಟಿ ಬೀಸಿದೆ. ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪುನೀತ್ ಕೆರೆಹಳ್ಳಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಆರೋಪ ಪಟ್ಟಿಗೆ ತಡೆ ನೀಡಲಾಗಿದೆ. ಅರ್ಜಿದಾರರು ಎರಡು ವಾರದಲ್ಲಿ ಡಿಸಿಪಿ ಮುಂದೆ ಹಾಜರಾಗಿ ಬಾಂಡ್ ಒದಗಿಸಬೇಕು ಮತ್ತು ಹೇಳಿಕೆ ದಾಖಲಿಸಬೇಕು. ಇಲ್ಲವಾದಲ್ಲಿ ಈಗ ನೀಡಿರುವ ಮಧ್ಯಂತರ ಆದೇಶ ಸ್ವಯಂಚಾಲಿತವಾಗಿ ರದ್ದಾಗಲಿದೆ ಎಂದ ನ್ಯಾಯಪೀಠ, ನ್ಯಾಯಾಂಗದ ಪರಿಶೀಲನೆಯಲ್ಲಿರುವ ಪ್ರಕರಣಗಳ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂದು ಪುನೀತ್ ಕೆರೆಹಳ್ಳಿಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪಿ.ಎನ್. ಮನಮೋಹನ್ ವಾದ ಮಂಡಿಸಿ, ಪ್ರಕರಣ ದಾಖಲಿಸಿ, ಅರ್ಜಿದಾರರಿಗೆ ಜನವರಿ 13ರಂದು ಅಂತಿಮ ನೋಟಿಸ್ ನೀಡಿ, ಜನವರಿ 16ರಂದು ಹಾಜರಾಗಲು ಸೂಚಿಸಲಾಗಿದೆ. ಆದರೆ, ಮರು ದಿನವೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅರ್ಜಿದಾರರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗಿಲ್ಲ ಎಂದರು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಬೇರೊಂದು ಪ್ರಕರಣದಲ್ಲಿ ಜಾಮೀನು ಸಂಬಂಧ ಬಾಂಡ್ ಸಲ್ಲಿಸುವಂತೆ ಆದೇಶ ಮಾಡಿರುವುದನ್ನು ಪುನೀತ್ ಪಾಲಿಸಿಲ್ಲ. ಈ ಸಂಬಂಧ ಸಮನ್ವಯ ನ್ಯಾಯಪೀಠ ಆದೇಶ ಮಾಡಿದೆ. ಅದಕ್ಕಾಗಿ ಪುನೀತ್ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವರು ಹಾಜರಾಗಿ ಹೇಳಿಕೆ ನೀಡಲಿ. ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳವುದಿಲ್ಲ ಎಂದರಲ್ಲದೆ, ಸೋಲದೇವಹಳ್ಳಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧದ ಪ್ರಕರಣಗಳಿಗೆ ತಡೆ ನೀಡಿದ ಬಳಿಕ ಅವರು ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಗಳನ್ನು ಪೀಠದ ಮುಂದೆ ಇಡಲಾಗುವುದು ಎಂದರು. ಆಗ ನ್ಯಾಯಪೀಠ ಪುನೀತ್ ಪರ ವಕೀಲರನ್ನು ಕುರಿತು, ಮತ್ತೆ ಗಲಾಟೆ ಮಾಡಿದ್ದೀರಾ? ಸುಮ್ಮನೆ ಇರಲು ಆಗುವುದಿಲ್ಲವೇ? ಪ್ರಕರಣ ನ್ಯಾಯಾಂಗದ ಪರಿಶೀಲನೆಯಲ್ಲಿರುವಾಗ ನೀವು ಹಾಗೆ ಮಾಡಲು ಹೇಗೆ ಸಾಧ್ಯ, ಯಾಕೆ ಹೀಗೆಲ್ಲ ಮಾಡುತ್ತೀರಿ, ಎಚ್ಚರಿಕೆ ಇರಬೇಕಲ್ಲವೇ, ನಿಮ್ಮ ವಿರುದ್ಧ ಪ್ರಕರಣ ವಜಾ ಮಾಡಲಾಗಿಲ್ಲ, ತಡೆಯನ್ನಷ್ಟೇ ನೀಡಲಾಗಿದೆ ಎಂದು ಹೇಳಿತು. ಅದಕ್ಕೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರಿಗೆ ಸಲಹೆ ನೀಡಲಾಗುವುದು. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದರು. ಆಗ ನ್ಯಾಯಮೂರ್ತಿಗಳು, ಅಕ್ರಮ ವಲಸಿಗರ ವಿಚಾರವನ್ನು ಅರ್ಜಿದಾರರು ಎತ್ತಿದ್ದು, ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಯಾವುದೇ ವಿಚಾರವನ್ನು ಬಿಂಬಿಸುವ ರೀತಿಯಲ್ಲಿ ಬಿಂಬಿಸಬೇಕು ಎಂದರು ಬಿ.ಎನ್. ಜಗದೀಶ್ ಅವರು, ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿ ಸಲ್ಲಿಸಲಾಗಿದೆ. ಸರ್ಕಾರ ಕ್ರಮಕೈಗೊಂಡಿದೆ. ಸರ್ಕಾರ ಕ್ರಮ ಕೈಗೊಂಡಿಲ್ಲ ಎನ್ನುವುದನ್ನು ಅರ್ಜಿದಾರರು ತೋರಿಸಲಿ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ನ್ಯಾಯಪೀಠ, ದೂರು ನೀಡಿ, ಸರ್ಕಾರ ಕ್ರಮಕೈಗೊಳ್ಳದಿದ್ದರೆ ನೋಡೋಣ. ರೀಲ್ಸ್ ಮತ್ತು ಫೇಸ್ಬುಕ್ ಪೋಸ್ಟ್ಗೆ ಇದೆಲ್ಲವನ್ನೂ ಮಾಡಬಾರದು. ಅರ್ಜಿದಾರರು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿತು.
ಫೆ.9-12: ಸುಳ್ಯದಿಂದ ಮುಲ್ಕಿವರೆಗೆ ದ.ಕ. ಕಾಂಗ್ರೆಸ್ನಿಂದ ಪಾದಯಾತ್ರೆ
ಮಂಗಳೂರು, ಫೆ.5: ಕೇಂದ್ರ ಸರಕಾರವು ಮನ್ರೇಗಾ ಸ್ವರೂಪ ಬದಲಾವಣೆ ಹಾಗೂ ಮಹಾತ್ಮ ಗಾಂಧೀಜಿ ಹೆಸರು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದಿಂದ ಮುಲ್ಕಿ ವರೆಗೆ 4 ದಿನಗಳ 100 ಕಿಮೀ ಪಾದಯಾತ್ರೆಯನ್ನು ಫೆ.9ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಮತ್ತಿತರ ಪ್ರಮುಖರು ವಿವಿಧ ದಿನಗಳಲ್ಲಿ ಭಾಗವಹಿಸಲಿದ್ದಾರೆ ಎಂದರು. *ಸುಳ್ಯದಲ್ಲಿ ಚಾಲನೆ: ಫೆ.9ರಂದು ಬೆಳಗ್ಗೆ 8:30ಕ್ಕೆ ಸುಳ್ಯದ ಗಾಂಧಿನಗರದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾ ಗುವುದು. ಅಂದು ಸುಳ್ಯದ ಗಾಂಧಿನಗರದಿಂದ ಪುತ್ತೂರಿನ ಕುಂಬ್ರ ಜಂಕ್ಷನ್ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ವಿವರಿಸಿದರು. 2ನೇ ದಿನವಾದ ಫೆ.10ರಂದು ಕುಂಬ್ರ- ಮಾಣಿ, ಫೆ.11ರಂದು ಕಲ್ಲಡ್ಕ- ಫರಂಗಿಪೇಟೆ, ಫೆ.12ರಂದು ಮಂಗಳೂರಿನ ಲಾಲ್ಬಾಗ್ನಿಂದ ಮೂಲ್ಕಿವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಹರೀಶ್ ಕುಮಾರ್ ಮಾಹಿತಿ ನೀಡಿದರು. ಪ್ರತಿದಿನ 25- 28 ಕಿಮೀ ಪಾದಯಾತ್ರೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಉಪಹಾರ ಮುಗಿಸಿ, 8:30 ಗಂಟೆಗೆ ಪಾದಯಾತ್ರೆ ಆರಂಭಿಸಲಾಗುವುದು. ಮಧ್ಯಾಹ್ನ 2 ಗಂಟೆ ಭೋಜನ ವಿರಾಮದ ಬಳಿಕ ಸಂಜೆ 6 ಗಂಟೆವರೆಗೆ ಮುಂದುವರಿಯಲಿದೆ. ಪ್ರತಿದಿನ ಪಾದಯಾತ್ರೆಯ ಕೊನೆಯಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಫೆ.9ರಂದು ಕುಂಬ್ರ, ಫೆ.10ರಂದು ಮಾಣಿ, ಫೆ.11ರಂದು ಫರಂಗಿಪೇಟೆ, ಫೆ.12ರಂದು ಮೂಲ್ಕಿಯಲ್ಲಿ ಸಮಾವೇಶ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಪಾಲ್ಗೊ ಳ್ಳಲಿದ್ದಾರೆ. ಪಾದಯಾತ್ರೆಯ ಮೂಲಕ ಜನರಿಗೆ ಕೇಂದ್ರ ಸರಕಾರ ಮಾಡಿರುವ ಮೋಸವನ್ನು ಮನವರಿಕೆ ಮಾಡಲಾಗುವುದು ಎಂದು ಹೇಳಿದರು. *ತರಾತುರಿಯಲ್ಲಿ ಕಾಯ್ದೆ: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ, ಕೇಂದ್ರ ಸರಕಾರವು ಸರಿಯಾದ ಚರ್ಚೆಯನ್ನೇ ನಡೆಸದೆ ತರಾತುರಿಯಲ್ಲಿ ವಿಬಿ ಜಿರಾಮ್ಜಿ ಕಾಯ್ದೆ ಜಾರಿಗೆ ತಂದಿದೆ. ಜನಪ್ರಿಯ ಕಾರ್ಯಕ್ರಮದಿಂದ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆಸುವುದು ಮತ್ತು ಬಡವರನ್ನು ಮತ್ತಷ್ಟು ಬಡವರನ್ನಾಗಿ ಸುವುದೇ ಕೇಂದ್ರ ಸರಕಾರದ ಉದ್ದೇಶ. ಈ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ನಡೆಸಲಾಗುವುದು ಎಂದರು. ಮಾಜಿ ಶಾಸಕ ಜೆಆರ್ ಲೋಬೊ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಶಶಿಧರ ಹೆಗ್ಡೆ, ಭಾಸ್ಕರ ಕೆ., ಶುಭೋದಯ ಆಳ್ವ, ನವಾಝ್, ಸುಹಾನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ತವರು ಜಿಲ್ಲೆ ಹಾಸನಗೆ ಕೇಂದ್ರದಿಂದ ಭರ್ಜರಿ ಅನುದಾನ ಕೊಡಿಸಿದ HDK : ಒಂದು ಹಾಲು, ಇನ್ನೊಂದು ರೈಲು
Central Grant for Hassan District : ಕೇಂದ್ರದ ಇಬ್ಬರು ಸಚಿವರನ್ನು ಭೇಟಿಯಾದ ಎಚ್.ಡಿ.ಕುಮಾರಸ್ವಾಮಿ, ಹಾಸನ ಜಿಲ್ಲೆಗೆ ವಿಶೇಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾದ ವೇಳೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಶಾಸಕ್ ಎಚ್.ಡಿ.ರೇವಣ್ಣ ಅವರ ಜೊತೆಗಿದ್ದರು. ಹಾಸನ ಹಾಲು ಡೈರಿಗೆ ಅನುದಾನ ಕೇಂದ್ರದಿಂದ ಸಿಕ್ಕಿದೆ.
ಐದು ತೇಜಸ್ ವಿಮಾನಗಳು ಐಎಎಫ್ ವಿತರಣೆಗೆ ಸಿದ್ಧವಾಗಿವೆ: ಎಚ್ಎಎಲ್
ಹೊಸದಿಲ್ಲಿ,ಫೆ.5: ಹಿಂದುಸ್ಥಾನ ಎರೋನಾಟಿಕ್ಸ್ ಲಿ.(ಎಚ್ಎಎಲ್) ಅಮೆರಿಕದ ಜಿಇ ಎರೋಸ್ಪೇಸ್ನಿಂದ ಇಂಜಿನ್ಗಳ ಪೂರೈಕೆಯಲ್ಲಿ ವಿಳಂಬಗಳಾಗಿವೆೆಯಾದರೂ ಭಾರತೀಯ ವಾಯುಪಡೆಗೆ ವಿತರಿಸಲು ಐದು ತೇಜಸ್ ಲಘು ಯುದ್ಧ ವಿಮಾನಗಳು ಸಂಪೂರ್ಣವಾಗಿ ಸಿದ್ಧಗೊಂಡಿವೆ ಎಂದು ಗುರುವಾರ ತಿಳಿಸಿದೆ. ಐದು ಯುದ್ಧವಿಮಾನಗಳು ಐಎಎಫ್ ಸೂಚಿಸಿದ್ದ ಎಲ್ಲ ಅಗತ್ಯಗಳನ್ನು ಒಳಗೊಂಡಿವೆ ಎಂದು ಎಚ್ಎಎಲ್ ಹೇಳಿಕೆಯಲ್ಲಿ ತಿಳಿಸಿದೆ. ವಾಯುಪಡೆಯ ಯುದ್ಧವಿಮಾನಗಳ ಸೇರ್ಪಡೆ ಯೋಜನೆಯಲ್ಲಿ ಪ್ರಮುಖವಾಗಿರುವ ತೇಜಸ್ Mk1A ಕಾರ್ಯಕ್ರಮದಲ್ಲಿ ವಿಳಂಬಗಳ ಕುರಿತು ಕಳವಳಗಳ ನಡುವೆಯೇ ಎಚ್ಎಎಲ್ನ ಈ ಸ್ಪಷ್ಟನೆ ಹೊರಬಿದ್ದಿದೆ. ಒಂಭತ್ತು ಹೆಚ್ಚುವರಿ LCA Mk1A ಯುದ್ಧವಿಮಾನಗಳು ಈಗಾಗಲೇ ನಿರ್ಮಾಣಗೊಂಡಿದ್ದು, ಹಾರಾಟ ಪರೀಕ್ಷೆಯನ್ನು ನಡೆಸಲಾಗಿದೆ. ಎರೊಸ್ಪೇಸ್ ಜಿಇ ಇಂಜಿನ್ಗಳನ್ನು ಪೂರೈಸಿದ ಬಳಿಕ ಈ ವಿಮಾನಗಳನ್ನು ವಾಯುಪಡೆಗೆ ಹಸ್ತಾಂತರಿಸಲಾಗುವುದು. ಎಚ್ಎಎಲ್ ಈವರೆಗೆ ಐದು ಇಂಜಿನ್ಗಳನ್ನು ಸ್ವೀಕರಿಸಿದೆ ಮತ್ತು ಜಿಇಯಿಂದ ಒಟ್ಟಾರೆ ಪೂರೈಕೆ ಸ್ಥಿತಿಯು ಸುಧಾರಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. LCA Mk1A ತೇಜಸ್ ಯುದ್ಧ ವಿಮಾನದ ಸುಧಾರಿತ ಆವೃತ್ತಿಯಾಗಿದ್ದು, ಅತ್ಯಾಧುನಿಕ ವಿಮಾನ ವಿದ್ಯುನ್ಮಾನ ವ್ಯವಸ್ಥೆ, ರಾಡಾರ್, ಇಲೆಕ್ಟ್ರಾನಿಕ್ ಯದ್ಧ ವ್ಯವಸ್ಥೆಗಳು ಮತ್ತು ಹೆಚ್ಚುವರಿ ಕಾರ್ಯಾಚರಣೆ ಸಾಮರ್ಥ್ಯಗಳನ್ನು ಒಳಗೊಂಡಿದೆ. ಹಳೆಯ ಯುದ್ಧ ವಿಮಾನಗಳನ್ನು ಹಂತ ಹಂತವಾಗಿ ತೆಗೆದುಹಾಕುವ ವಾಯಪಡೆಯ ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
ಡ್ರಗ್ಸ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಜಾಗೃತಿ ಮೂಡಿಸಲು ಕ್ರಮ : ಜಿ.ಪರಮೇಶ್ವರ್
ಬೆಂಗಳೂರು : ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯದ ಎಲ್ಲ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಡ್ರಗ್ಸ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ. ಗುರುವಾರ ನಗರದ ಅರಮನೆ ಮೈದಾನದಲ್ಲಿ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ಇ-ಡಿಎಆರ್ ಅನುಷ್ಠಾನ ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026 ಸಮಾರೋಪ ಸಮಾರಂಭ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರವು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಪಣ ತೊಟ್ಟಿದ್ದು, ಡ್ರಗ್ಸ್ ಬಳಕೆಯಿಂದಾಗುವ ದುಷ್ಪರಿಣಾಮ ಮತ್ತು ಹಾನಿಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಮೈಸೂರು-ಬೆಂಗಳೂರು ಹೆದ್ದಾರಿ ಪ್ರಾರಂಭಿಸಿದ ಎರಡು ತಿಂಗಳಿಗೆ 120 ಜನ ಸಾವನ್ನಪ್ಪಿದರು. ಇದು ಆತಂಕ ಮೂಡಿಸಿತ್ತು. ರಸ್ತೆ ಸುರಕ್ಷತೆಯನ್ನು ಮರೆತುಬಿಟ್ಟಿದ್ದರು. ನಮ್ಮ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದಾಗ ಸುಮಾರು ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ತಿಳಿಸಿದಾಗ ಬ್ಲಾಕ್ ಸ್ಪಾಟ್ಗಳನ್ನು ಸರಿಪಡಿಸಿದರು. ಇದಾದ ಬಳಿಕ ಅಪಘಾತಗಳು ಸಂಭವಿಸುತ್ತಿಲ್ಲ. ರಸ್ತೆಗಳನ್ನು ಮಾಡುವ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯನ್ನು ಗಮನಿಸಬೇಕು ಎಂದು ಅವರು ಹೇಳಿದರು. ದೇಶದಲ್ಲಿ 4.70 ಲಕ್ಷ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಕರ್ನಾಟಕದಲ್ಲಿ 43 ಸಾವಿರ ಅಪಘಾತ ಪ್ರಕರಣಗಳು ವರದಿಯಾಗಿವೆ. ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ. ನಗರದಲ್ಲಿ ಲಕ್ಷಾಂತರ ಅಪಘಾತಗಳಾಗಿ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ದುಡಿಮೆಗೆ ಹೋಗುತ್ತಾನೆ. ಅಪಘಾತದಿಂದ ಸಾವನ್ನಪ್ಪುತ್ತಾನೆ. ಆ ಕುಟುಂಬ ಸಾಕುವ ವ್ಯಕ್ತಿ ಮೃತಪಟ್ಟರೆ ಕುಟುಂಬದ ಪರಿಸ್ಥಿತಿ ಏನಾಗಬೇಕು. ಇದೇ ಕಾರಣಕ್ಕೆ ಸುರಕ್ಷತೆ ಬಹಳ ಮುಖ್ಯ ಎಂದು ಅವರು ವಿವರಿಸಿದರು. ನಗರದಲ್ಲಿ 500 ಜಂಕ್ಷನ್ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಟಿಫಿಯಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಡೀ ಬೆಂಗಳೂರು ನಗರವನ್ನು ಕಮಾಂಡ್ ಸೆಂಟರ್ನಿಂದ ಗಮನಿಸಬಹುದು. ಪ್ರತಿ ಜಂಕ್ಷನ್ನಲ್ಲಿ ಏನಾಗುತ್ತಿದೆ ಎಂಬುದನ್ನು ಟ್ರಾಫಿಕ್ ಕಮಾಂಡ್ ಸೆಂಟರ್ನಿಂದ ನೋಡಬಹುದು. ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತಗಳು ಕಡಿಮೆಯಾಗಿವೆ ಎಂದು ಅವರು ಸ್ಪಷ್ಟಪಡಿಸಿದರು. ವಾಹನ ಸವಾರರ ಪ್ರಾಣ ರಕ್ಷಣೆ ಮತ್ತು ಕುಟುಂಬಗಳ ರಕ್ಷಣೆ ಮಾಡಬೇಕಾದ ಕೆಲಸ ಆಗಬೇಕಿದೆ. ರಸ್ತೆ ಸುರಕ್ಷತೆಯ ಕುರಿತ ವಸ್ತು ಪ್ರದರ್ಶನ ಮೂರು ದಿನ ನಡೆಸಬೇಕು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನೋಡಿ, ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಕುರಿತು ಅರ್ಥವಾಗುತ್ತದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಮತ್ತಿತರರು ಇದ್ದರು.
‘ಮಕ್ಕಳ ರಕ್ಷಣಾ ಕಾಯ್ದೆಯನ್ನು ತಳಮಟ್ಟದಿಂದಲೇ ಅನುಷ್ಠಾನಗೊಳಿಸಿ’
ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಮನು ಪಟೇಲ್ ಕರೆ
ಬಳ್ಳಾರಿ | VSKU ಸ್ನಾತಕೋತ್ತರ ಕೇಂದ್ರದಲ್ಲಿ 145.47 ಲಕ್ಷ ರೂ. ವೆಚ್ಚದ ‘ಸುವರ್ಣ ಮಹೋತ್ಸವ ಆಡಳಿತ ಭವನ’ ಉದ್ಘಾಟನೆ
ಬಳ್ಳಾರಿ / ಸಂಡೂರು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಂದಿಹಳ್ಳಿಯಲ್ಲಿ ಸ್ಥಿತಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ (VSKU) ಸ್ನಾತಕೋತ್ತರ ಕೇಂದ್ರಕ್ಕೆ ಅಭಿವೃದ್ಧಿಯ ಹೊಸ ಮೆಟ್ಟಿಲು ಏರಿದೆ. ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಕರ್ಯ ವೃದ್ಧಿಯ ಉದ್ದೇಶದಿಂದ 145.47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ‘ಸುವರ್ಣ ಮಹೋತ್ಸವ ಆಡಳಿತ ಭವನ’ವನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾದ ಈ. ತುಕಾರಾಮ್ ಅವರು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಈ. ತುಕಾರಾಮ್ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವಲ್ಲಿ ಈ ಸ್ನಾತಕೋತ್ತರ ಕೇಂದ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಒದಗಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮುನಿರಾಜು ಎಂ., ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ರವಿ ಬಿ. ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರ್ಕಾರದ ಖನಿಜ ನಿಗಮ ನಿಯಮಿತದ ಉಪಾಧ್ಯಕ್ಷ ಲಕ್ಷ್ಮಣ ಎಚ್., ಕಟ್ಟಡದ ಗುತ್ತೇದಾರರಾದ ಕೀರ್ತಿರಾಜ್ ಡಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನೂತನ ಆಡಳಿತ ಭವನದ ಉದ್ಘಾಟನೆಯಿಂದ ಕೇಂದ್ರದ ಆಡಳಿತ ಕಾರ್ಯಗಳು ಇನ್ಮುಂದೆ ಒಂದೇ ಸೂರಿನಡಿ ಸಮರ್ಪಕವಾಗಿ ನಡೆಯಲಿವೆ ಎಂಬ ವಿಶ್ವಾಸ ವ್ಯಕ್ತವಾಯಿತು.
ಉಡುಪಿ, ಫೆ.5: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬಹುಮಹಡಿ ವಸತಿ ಸಮುಚ್ಛಯಗಳ ಸಂಖ್ಯೆ ದಿನೇದಿನ ಹೆಚ್ಚುತ್ತಿವೆ. ಪ್ರಸ್ತುತ ನಗರಸಭಾ ವ್ಯಾಪ್ತಿ ಯಲ್ಲಿರುವ 376ಕ್ಕೂ ಅಧಿಕ ವಸತಿ ಸಮುಚ್ಛಯಗಳು ತಮ್ಮಲ್ಲಿನ ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದೇ ಮಳೆ ನೀರು ಹರಿಯುವ ತೋಡುಗಳಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ನಗರ ಸಭೆ ವತಿಯಿಂದ ನೋಟೀಸ್ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದ್ದಾರೆ. ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಬಹುಮಹಡಿ ವಸತಿ ಸಮುಚ್ಛಯಗಳ (ಅಪಾರ್ಟ್ಮೆಂಟ್ಸ್) ಮಾಲಕರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ನಗರದ ಈ 376ಕ್ಕೂ ಅಧಿಕ ವಸತಿ ಸಮುಚ್ಛಯಗಳಲ್ಲಿ 200 ಸಮುಚ್ಛಯ ಗಳು ಮಣಿಪಾಲದಲ್ಲೂ, 105 ಉಡುಪಿ ನಗರದೊಳಗೆ ಹಾಗೂ 70ರಷ್ಟು ಮಲ್ಪೆ ವ್ಯಾಪ್ತಿಯಲ್ಲಿದ್ದು, ಸಮುಚ್ಛಯಗಳ ಮಾಲಕರು ತ್ಯಾಜ್ಯದ ನಿರ್ವಹಣೆ ಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಮುಂದಾಗಬೇಕು ಎಂದು ಅವರು ಸೂಚನೆಗಳನ್ನು ನೀಡಿದರು. ಬಹುಮಹಡಿ ವಸತಿ ಸಮುಚ್ಚಾಲಯಗಳು ಕೊಳಚೆ ಹಾಗೂ ತ್ಯಾಜ್ಯದ ನೀರನ್ನು ಶುದ್ಧೀಕರಣದ ನಿರ್ವಹಣೆ ಮಾಡು ವುದರೊಂದಿಗೆ ಮರು ಬಳಕೆ ಮಾಡಬೇಕು. ಒಂದೊಮ್ಮೆ ಕೊಳಚೆ ನೀರನ್ನು ಶುದ್ಧೀಕರಿಸದೆ ಎಲ್ಲೆಂದರಲ್ಲಿ ನದಿ-ತೋಡುಗಳಿಗೆ ಬಿಟ್ಟು ಜಲಮಾಲಿನ್ಯ ಉಂಟು ಮಾಡಿದರೆ ಅಂತಹವರ ವಿರುದ್ಧ ಮುಂದಿನ ದಿನಗಳಲ್ಲಿ ನಿರ್ದಾಕ್ಷಿಣ್ಯ ವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಎಚ್ಚರಿಕೆ ನೀಡಿದರು. ನಗರಸಭಾ ವ್ಯಾಪ್ತಿಯ ಅಪಾರ್ಟ್ಮೆಂಟ್ಗಳಲ್ಲಿ ಕೊಳಚೆ ನೀರಿನ ಸಂಸ್ಕರಣ ಘಟಕಗಳು ಕೆಲವು ಅಪಾರ್ಟ್ ಮೆಂಟ್ಗಳಲ್ಲಿ ಮಾತ್ರ ಇವೆ. ಆದರೂ ಅವುಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೆಲವು ಅಪಾರ್ಟ್ ಮೆಂಟ್ಗಳಲ್ಲಿ ನಿರ್ವಹಣೆ ಘಟಕ ಇಲ್ಲದಿರುವುದು ಕಂಡು ಬಂದಿದೆ. ತ್ಯಾಜ್ಯ ನೀರು ನೇರವಾಗಿ ಜಲ ಮೂಲಗಳಿಗೆ ಸೇರಿ ಅದನ್ನು ಸಂಪೂರ್ಣ ಕಲ್ಮಶಗೊಳಿಸುತ್ತಿದೆ ಎಂದ ಅವರು, ನಮ್ಮ ಪರಿಸರವನ್ನು ಸ್ವಚ್ಛ ವಾಗಿ ಇಟ್ಟುಕೊಳ್ಳು ವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಅವುಗಳನ್ನು ಗಾರ್ಡನ್ ಸೇರಿದಂತೆ ಗಿಡಮರಗಳಿಗೆ ಮರುಬಳಕೆ ಮಾಡಿಕೊಳ್ಳಬಹುದು ಎಂದರು. ಎಲ್ಲಾ ಸಮುದಾಯಗಳು ನಗರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕೆಂಬ ಮನೋ ಭಾವವನ್ನು ಹೊಂದಿದ್ದು, ಇದರೊಂದಿಗೆ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು. ನಗರ ವ್ಯಾಪ್ತಿಯಲ್ಲಿ ಎಲ್ಲಾ ಬಹುಮಹಡಿ ವಸತಿ ಸಮುಚ್ಛಯ ಗಳು ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳನ್ನು ನಿರ್ಮಿಸುವುದರೊಂದಿಗೆ ಜಲಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದರು. ಆಯುಕ್ತರಿಗೆ ಸೂಚನೆ: ನಗರ ವ್ಯಾಪ್ತಿಯ ವಸತಿ ಸಮುಚ್ಚಯಗಳ ತ್ಯಾಜ್ಯ ನಿರ್ವಹಣಾ ಘಟಕಗಳ ಇರುವಿಕೆ, ಅವುಗಳ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಘಟಕ ಇಲ್ಲದೆ ಇರುವುದು ಹಾಗೂ ಮುಂದಿನ ದಿನಗಳಲ್ಲಿ ಅವು ವೈಜ್ಞಾನಿಕ ವಾಗಿ ತ್ಯಾಜ್ಯನೀರನ್ನು ನಿರ್ವಹಣೆ ಮಾಡುವ ಬಗ್ಗೆ ಸವಿಸ್ತಾರವಾದ ವಿವರವನ್ನು ಸರ್ವೇ ಮಾಡುವುದರ ಮೂಲಕ 20 ದಿನಗಳ ಒಳಗೆ ನೀಡುವಂತೆ ನಗರಸಭೆ ಆಯುಕ್ತರು ಹಾಗೂ ಪ್ರಾದೇಶಿಕ ಪರಿಸರ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್, ಬಹುಮಹಡಿ ವಸತಿ ಸಮುಚ್ಛಯಗಳ ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ‘ಈಗ ರಾತ್ರಿ ವೇಳೆಯಲ್ಲಿ ಕೆಲವರು ತ್ಯಾಜ್ಯ ನೀರನ್ನು ನದಿ- ತೋಡುಗಳಿಗೆ ಬಿಡುತ್ತಿದ್ದಾರೆಂಬ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇದರಿಂದ ಕೆಲ ಬಾವಿಗಳ ನೀರು ಸಹ ಕಲುಷಿತಗೊಂಡಿವೆ. ಹೀಗಾಗಿ ಎಲ್ಲರೂ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.’ -ಸ್ವರೂಪಾ ಟಿ.ಕೆ., ಉಡುಪಿ ಜಿಲ್ಲಾಧಿಕಾರಿ ಒಳಚರಂಡಿ ವ್ಯವಸ್ಥೆಗೆ 400 ಕೋಟಿ ರೂ.ಯೋಜನೆ ನಗರ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ನೈರ್ಮಲ್ಯ ಒಳಚರಂಡಿ ವ್ಯವಸ್ಥೆಗೆ ಈ ಹಿಂದೆ ಅಂದಾಜು 400 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿ, ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಸರಕಾರದಿಂದ ಈ ಬಗ್ಗೆ ಯಾವುದೇ ಒಪ್ಪಿಗೆ ದೊರೆತಿಲ್ಲ. ಇಲ್ಲಿನ ಭೂಪ್ರದೇಶ ಏರಿಳಿತದಿಂದ ಕೂಡಿದ್ದು, ಇದರಿಂದ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ರಸ್ತುತ ತ್ಯಾಜ್ಯಗಳನ್ನು ಕಡ್ಡಾಯವಾಗಿ ಸೇಫ್ಟಿಟ್ಯಾಂಕ್ಗಳ ಬಳಕೆಯೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಸಕ್ಕಿಂಗ್ ಯಂತ್ರಗಳ ಬಳಕೆ ಯೊಂದಿಗೆ ಘನ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿ ಮಾಡಬೇಕು ಎಂದು ಅವರು ಸೂಚನೆಗಳನ್ನು ನೀಡಿದರು.
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಕುಟುಂಬದಿಂದ ಬೃಹತ್ ಭೂ ಕಬಳಿಕೆ: ಕಾಂಗ್ರೆಸ್ ಆರೋಪ
ಗುವಾಹಟಿ,ಫೆ.5: ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕುಟುಂಬವು ರಾಜ್ಯಾದ್ಯಂತ ಸುಮಾರು 12,000 ಬಿಘಾಗಳಷ್ಟು (3,960 ಎಕರೆಗೂ ಹೆಚ್ಚು) ಭೂಮಿಯನ್ನು ಕಬಳಿಸಿದೆ ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೌರವ್ ಗೊಗೊಯಿ ಆರೋಪಿಸಿದ್ದಾರೆ. ಇದೇ ವೇಳೆ ಗೊಗೊಯಿ ಸೇರಿದಂತೆ ಅಸ್ಸಾಂ ಕಾಂಗ್ರೆಸ್ ನಾಯಕರ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸುವುದಾಗಿ ಶರ್ಮಾ ಬೆದರಿಕೆಯೊಡ್ಡಿದ್ದಾರೆ. ಶರ್ಮಾ ಹೆದರಿದ್ದಾರೆ ಎನ್ನುವುದನ್ನು ಅವರ ಪ್ರತಿಕ್ರಿಯೆ ತೋರಿಸಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಕುಟುಕಿರುವ ಗೊಗೊಯಿ, ‘ಅವರಿಗೆ ಧೈರ್ಯವಿದ್ದರೆ ನುಣುಚಿಕೊಳ್ಳುವ ಬದಲು ನಮ್ಮೊಂದಿಗೆ ಜನತಾ ನ್ಯಾಯಾಲಯದಲ್ಲಿ ಹೋರಾಡಲಿ ’ ಎಂದು ಸವಾಲೆಸೆದಿದ್ದಾರೆ. ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಗೊಗೊಯಿ,‘ ಭೂಹಗರಣವನ್ನು ಮುಚ್ಚಿಹಾಕಲು ಮುಖ್ಯಮಂತ್ರಿಗಳು ನಾನು ಪಾಕಿಸ್ತಾನದೊಂದಿಗೆ ಸಂಪರ್ಕಗಳನ್ನು ಹೊಂದಿದ್ದೇನೆ ಎಂದು ಆರೋಪಿಸಿದ್ದಾರೆ ’ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ಶರ್ಮಾರ ಆಸ್ತಿಗಳ ಕುರಿತು ತನಿಖೆ ನಡೆಸಿದ್ದು,ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬ ರಾಜ್ಯಾದ್ಯಂತ ಸುಮಾರು 12,000 ಬಿಘಾಗಳಷ್ಟು ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ‘‘ www.whoishbs.com ’ ಎಂಬ ವೆಬ್ಸೈಟ್ನ್ನು ಆರಂಭಿಸಿದ್ದು, ಅದರಲ್ಲಿ ಶರ್ಮಾರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮತ್ತು ಅವರ ಭೂ ಕಬಳಿಕೆ ವಿವರಗಳನ್ನು ಪ್ರಕಟಿಸಿದೆ. ಶರ್ಮಾರಿಗೆ ಸಂಬಂಧಿಸಿದ ಆಸ್ತಿಗಳ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಸಾರ್ವಜನಿಕರನ್ನು ಕೋರಿರುವ ಕಾಂಗ್ರೆಸ್, ಅದಕ್ಕಾಗಿ ದೂರವಾಣಿ ಸಂಖ್ಯೆಯನ್ನೂ ಒದಗಿಸಿದೆ. ಶರ್ಮಾರ ಭೂಕಬಳಿಕೆ ಕುರಿತು ಕಾಂಗ್ರೆಸ್ ತನಿಖೆ ಮುಂದುವರಿದಿದೆ ಎಂದು ಹೇಳಿದ ಗೊಗೊಯಿ, ‘ಅವರು ಕೃಷಿ ಭೂಮಿಯನ್ನು ವಶಪಡಿಸಿಕೊಂಡು, ನಂತರ ಕೈಗಾರಿಕಾ ಭೂಮಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಾವು ಈ ಎಲ್ಲ ಪ್ರಕರಣಗಳ ಕುರಿತು ತನಿಖೆ ನಡೆಸುತ್ತೇವೆ’ ಎಂದು ತಿಳಿಸಿದರು. ಶರ್ಮಾ ಅಸ್ಸಾಂ ಮಾರಾಟವನ್ನು ಕುಟುಂಬ ವ್ಯವಹಾರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದ ಗೊಗೊಯಿ, ಶರ್ಮಾ ಕುಟುಂಬವು 17 ಕಂಪನಿಗಳ ಒಡೆತನವನ್ನು ಹೊಂದಿದೆ. ಅವರು 40,000 ಬಿಘಾ ಜಮೀನನ್ನು ಅದಾನಿಗಳು, ಅಂಬಾನಿಗಳು ಮತ್ತು ಪತಂಜಲಿಗೆ ನೀಡಿದ್ದಾರೆ. ಯೋಜನೆಗಳ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣ; ಶಾಸಕ ಸತೀಶ್ ಸೈಲ್ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅದಿರು ಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾದ ಶಾಸಕ ಸತೀಶ್ ಸೈಲ್ ಅವರಿಗೆ ಯಕೃತ್ ಕಸಿ ಮಾಡುವ ಅಗತ್ಯವಿದೆ ಎಂಬ ವರದಿಯ ಆಧಾರದಲ್ಲಿ ಹೈಕೋರ್ಟ್ ಗುರುವಾರ ವೈದ್ಯಕೀಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಪ್ರಕರಣದ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಜಾಮೀನುರಹಿತ ಬಂಧನ ವಾರಂಟ್ (ಎನ್ಬಿಡಬ್ಲ್ಯು) ಹೊರಡಿಸಿದ ಹಾಗೂ ಜಾರಿ ನಿರ್ದೇಶನಾಲಯ (ಈಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು. ಅರ್ಜಿದಾರರನ್ನು ಹಲವು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ವೈದ್ಯರು, ಯಕೃತ್ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಸೈಲ್ ಅನುಭವಿಸುತ್ತಿದ್ದಾರೆ. ಅವರಿಗೆ ಯಕೃತ್ ಕಸಿ (ಲಿವರ್ ಟ್ರಾನ್ಸ್ಪ್ಲಾಂಟ್) ಮಾಡಬೇಕಿದೆ ಎಂದು ತಿಳಿಸಿ ನ್ಯಾಯಾಲಯಕ್ಕೆ ವರದಿ ಹಾಗೂ ದಾಖಲೆ ಸಲ್ಲಿಸಿದ್ದಾರೆ. ಅರ್ಜಿದಾರರು ಕಾರಾಗೃಹದಲ್ಲಿದ್ದುಕೊಂಡು, ಲಿವರ್ ಕಸಿಗೆ ಒಳಗಾಗಿ ನಂತರ ಕಾಲಕಾಲಕ್ಕೆ ಚಿಕಿತ್ಸೆ ಪಡೆಯುವುದು ಕಷ್ಟವಾಗಲಿದೆ. ಆದ್ದರಿಂದ, ಸೈಲ್ಗೆ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ, ಸತೀಶ್ ಸೈಲ್ ಅವರು 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ವೈದ್ಯಕೀಯ ಸ್ಥಿತಿಗತಿ ಕುರಿತು 8 ವಾರಕ್ಕೊಮ್ಮೆ ನ್ಯಾಯಾಲಯಕ್ಕೆ ತಿಳಿಸಬೇಕು. ಲಿವರ್ ಕಸಿ ಬಗ್ಗೆ 2 ವಾರದಲ್ಲಿ ಮಾಹಿತಿ ನೀಡಬೇಕು. ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸುವಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ನ್ಯಾಯಾಲಯದ ಈ ಆದೇಶ ಪ್ರತಿ ಲಭ್ಯವಾಗುವವರೆಗೆ ಅರ್ಜಿದಾರರಿಗೆ ಈಗಾಗಲೇ ಹೈಕೋರ್ಟ್ ಮಂಜೂರು ಮಾಡಿರುವ ಮಧ್ಯಂತರ ವೈದ್ಯಕೀಯ ಜಾಮೀನು ಮುಂದುವರಿಯಲಿದೆ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಬಿಡಿಎ ಕನಸಿನ ಯೋಜನೆ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರು ಭೂ ಮಾಲೀಕರು, ರೈತರಿಗೆ ಗುರುವಾರ ಪರಿಹಾರ ವಿತರಣೆ ಮಾಡಿದ್ದಾರೆ. ಕೆಲವರು ನಗದು ಪಡೆದಿದ್ದರೆ, ಇನ್ನೂ ಕೆಲವು ಅಭಿವೃದ್ಧಿ ಹೊಂದಿದ ಭೂಮಿಯನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಕುರಿತು ಹೇಳಿಕೆ: ಕುನಾಲ್ ಕಾಮ್ರಾಗೆ ಶಾಸಕಾಂಗ ಸಮಿತಿ ಸಮನ್ಸ್
ಮುಂಬೈ,ಫೆ.5: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ಅವಹೇನಕಾರಿ ಹೇಳಿಕೆಗಳಿಗಾಗಿ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಹಕ್ಕುಚ್ಯುತಿ ನಿರ್ಣಯಕ್ಕೆ ಸಂಬಂಧಿಸಿದಂತೆ ಫೆ.17ರಂದು ತನ್ನ ಮುಂದೆ ಖುದ್ದಾಗಿ ಹಾಜರಾಗಿ ಹೇಳಿಕೆ ನೀಡುವಂತೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಹಕ್ಕು ಸಮಿತಿಯು ಅವರಿಗೆ ಸೂಚಿಸಿದೆ. ಗುರುವಾರ ಸಮಿತಿಯ ಮುಂದೆ ಹಾಜರಾಗುವಂತೆ ಕಾಮ್ರಾ ಮತ್ತು ಶಿವಸೇನೆ (ಯುಬಿಟಿ) ನಾಯಕಿ ಸುಷ್ಮಾ ಅಂಧಾರೆ ಅವರಿಗೆ 15 ದಿನಗಳ ಹಿಂದೆ ನೋಟಿಸ್ಗಳನ್ನು ಹೊರಡಿಸಲಾಗಿತ್ತು ಎಂದು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದ ಸಮಿತಿಯ ಅಧ್ಯಕ್ಷ ಬಿಜೆಪಿಯ ಎಂಎಲ್ಸಿ ಪ್ರಸಾದ್ ಲಾಡ್ ಅವರು, ವಿಚಾರಣೆಗಾಗಿ ತನಗೆ ಮುಂಬೈಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಮ್ರಾ ತಿಳಿಸಿದ್ದರಿಂದ ಫೆ.17ರಂದು ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಅಂಧಾರೆ ಅವರೂ ತಾನು ಜಿಲ್ಲಾ ಪರಿಷತ್ ಚುನಾವಣೆ ಪ್ರಚಾರದಲ್ಲಿ ವ್ಯಸ್ತವಾಗಿರುವುದಾಗಿ ತಿಳಿಸಿದ ಬಳಿಕ ಸಮಿತಿಯು ಅವರ ವಿಚಾರಣೆಯನ್ನೂ ಫೆ.17ಕ್ಕೆ ನಿಗದಿಗೊಳಿಸಿದೆ. ಮಾರ್ಚ್ನಲ್ಲಿ ಬಿಜೆಪಿ ಎಂಎಲ್ಸಿ ಪ್ರವೀಣ ದಾರೇಕರ್ ಅವರು ಕಾಮ್ರಾ ಮತ್ತು ಅಂಧಾರೆ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು ಸಲ್ಲಿಸಿದ್ದರು. ಕಾಮ್ರಾ ಶಿಂದೆಯವರನ್ನು ಅಪಹಾಸ್ಯ ಮಾಡಿದ್ದಾರೆ ಮತ್ತು ಮಹಾರಾಷ್ಟ್ರ ಶಾಸಕಾಂಗವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದ್ದರೆ, ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದ ಆರೋಪವನ್ನು ಅಂಧಾರೆ ವಿರುದ್ಧ ಹೊರಿಸಲಾಗಿದೆ. ಕಾಮ್ರಾ ಮಾ.23ರಂದು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೊದಲ್ಲಿ ಹಿಂದಿ ಚಿತ್ರದ ಹಾಡೊಂದನ್ನು ವಿಡಂಬನಾತ್ಮವಾಗಿ ಮಂಡಿಸಿದ್ದು, ಅದರಲ್ಲಿ ಶಿಂಧೆಯವರನ್ನು ಪರೋಕ್ಷವಾಗಿ ಟೀಕಿಸಿದ್ದರು. 2022ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆಯವರ ಬಂಡಾಯ ಮತ್ತು ನಂತರದ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸುವಾಗ ಕಾಮ್ರಾ ಅವರನ್ನು ‘ದೇಶದ್ರೋಹಿ’ಗೆ ಹೋಲಿಸಿದ್ದರು. ಆದಾಗ್ಯೂ ಅವರು ಶಿಂಧೆಯವರ ಹೆಸರನ್ನು ಉಲ್ಲೇಖಿಸಿರಲಿಲ್ಲ. ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಶಿಂದೆ ನೇತೃತ್ವದ ಶಿವಸೇನೆ ಕಾರ್ಯಕರ್ತರು ಮಾ.23ರಂದು ರಾತ್ರಿ ವೀಡಿಯೊವನ್ನು ಚಿತ್ರೀಕರಿಸಲಾಗಿದ್ದ ಮುಂಬೈನ ಖಾರ್ ಪ್ರದೇಶದಲ್ಲಿಯ ದಿ ಹ್ಯಾಬಿಟಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು. ಮರುದಿನ ಮುಂಬೈ ಪೋಲಿಸರು ಕಾಮ್ರಾ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಎ.25ರಂದು ಬಾಂಬೆ ಉಚ್ಚ ನ್ಯಾಯಾಲಯವು ಕಾಮ್ರಾಗೆ ಬಂಧನದ ವಿರುದ್ಧ ರಕ್ಷಣೆಯನ್ನು ನೀಡಿತ್ತಾದರೂ ಅವರ ವಿರುದ್ಧ ತನಿಖೆ ಮುಂದುವರಿಸಲು ಅನುಮತಿಸಿತ್ತು.

17 C