SENSEX
NIFTY
GOLD
USD/INR

Weather

21    C
...

Chamarajanagar | ವಿದ್ಯುತ್‌ ಸ್ಪರ್ಶಿಸಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತ್ಯು; ಇಬ್ಬರಿಗೆ ಗಾಯ

ಚಾಮರಾಜನಗರ : ಕಟ್ಟಡ ಕಾಮಗಾರಿ ನಡೆಯುವ ವೇಳೆ ವಿದ್ಯುತ್ ತಂತಿ ತಗುಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ಚಾಮರಾಜನಗರ ಸಮೀಪದ ರಾಮಸಮುದ್ರದಲ್ಲಿ ವರದಿಯಾಗಿದೆ. ಚಾಮರಾಜನಗರ ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ ಕಟ್ಟಡ ಕಾಮಗಾರಿ ನಡೆಯುವಾಗ ಕಾಲಾವಧಿ ಹಾಕಿಕೊಂಡು ಮೊದಲ ಮಹಡಿಗೆ ಗಾರೆ ಕೆಲಸ ಮಾಡುವಾಗ ನಾಗಣ್ಣ (40) ಎಂಬ ಕಾರ್ಮಿಕನಿಗೆ ಮನೆಯ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು ಗೊತ್ತಾಗಿದ್ದು, ನಾಗೇಂದ್ರ ಹಾಗೂ ವಿಷಕಂಠ ಎಂಬವರಿಗೆ ಗಾಯವಾಗಿದ್ದು, ಗಾಯಗೊಂಡ ಕಾರ್ಮಿಕರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಮ್ಸ್ ಆಸ್ಪತ್ರೆಗೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಘಟನೆಗೆ ಸಂಬಂಧಪಟ್ಟಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 27 Feb 2026 2:02 am

Khanapur | ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ: ಆರೋಪಿ ಬಂಧನ

ಖಾನಾಪುರ: ಸರಕಾರದ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾದ 232 ಕೆ.ಜಿ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಗೆ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಖಾನಾಪುರದ ಅಜಾಜ್ ಸಿಕಂದರ ಶಿರಸಂಗಿ (25) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದಿಂದ ಬೆಳಗಾವಿ ಕಡೆಗೆ ಅಕ್ಕಿ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದಿದ್ದಾರೆ.

ವಾರ್ತಾ ಭಾರತಿ 27 Feb 2026 1:52 am

ಸುಲಲಿತ ವಾಣಿಜ್ಯ ಸಂಸ್ಕೃತಿಗೆ ರಾಜ್ಯ ಸರಕಾರದ ಸಂಕಲ್ಪ; ಬಾಕಿ ಇರುವ 28 ಸೇವೆಗಳ ತ್ವರಿತ ಅನುಷ್ಠಾನಕ್ಕೆ ಸೂಚನೆ: ಎಂ.ಬಿ.ಪಾಟೀಲ್

ಬೆಂಗಳೂರು, ಫೆ. 26: ರಾಜ್ಯದಲ್ಲಿ ಸುಲಲಿತ ವಾಣಿಜ್ಯ ಸಂಸ್ಕೃತಿಯನ್ನು ತರಲು ರಾಜ್ಯ ಸರಕಾರವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಬಾಕಿ ಇರುವ 28 ಸೇವೆಗಳನ್ನು ಸುಗಮಗೊಳಿಸಿ, ಕೈಗಾರಿಕಾ ಸ್ನೇಹಿಯನ್ನಾಗಿ ಮಾಡಲಾಗುವುದು. ಇದರ ಭಾಗವಾಗಿ ಅಗತ್ಯ ತಿದ್ದುಪಡಿಗಳನ್ನು ತ್ವರಿತವಾಗಿ ಮಾಡಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗುರುವಾರ ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ಸುಲಲಿತ ವಾಣಿಜ್ಯ ಸಂಸ್ಕೃತಿ ಮತ್ತು ಏಕಗವಾಕ್ಷಿ ಸಮಿತಿಗಳ ಮಹತ್ವದ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ನಮಗೆ ನೆರೆಹೊರೆ ರಾಜ್ಯಗಳಿಂದ ತೀವ್ರ ಸ್ಪರ್ಧೆ ಇದೆ. ನಾವು ಅಲ್ಲಿಯ ನೀತಿ-ನಿಯಮಾವಳಿಗಳನ್ನೂ ಅಧ್ಯಯನ ಮಾಡಿದ್ದು, ಅದಕ್ಕಿಂತ ಉತ್ತಮವಾದ ಮತ್ತು ಕೈಗಾರಿಕಾ ಸ್ನೇಹಿಯಾದ ವ್ಯವಸ್ಥೆಯನ್ನು ತರಲು ಪಣ ತೊಟ್ಟಿದ್ದೇವೆ’ ಎಂದರು. ಏಕಗವಾಕ್ಷಿ ಯೋಜನೆಯಡಿ ಇದುವರೆಗೆ 20 ಇಲಾಖೆಗಳ 115 ಸೇವೆಗಳನ್ನು ಜೋಡಣೆ ಮಾಡಿದ್ದು, ಬಾಕಿ ಇರುವ 28ಸೇವೆಗಳನ್ನು ಆದ್ಯತಾ ಕ್ಷೇತ್ರಗಳೆಂದು ಪರಿಗಣಿಸಿ ಕಾಲಮಿತಿಯಲ್ಲಿ ಅನುಷ್ಠಾ ನಗೊಳಿಸಲು ಸೂಚಿಸಲಾಗಿದೆ. ಇದರಲ್ಲಿ ಕಂದಾಯ, ಅರಣ್ಯ, ಗೃಹ, ಪರಿಸರ, ಪ್ರಾಥಮಿಕ ಶಿಕ್ಷಣ, ಅಗ್ನಿಶಾಮಕ ದಳ, ಇಂಧನ ಮುಂತಾದವನ್ನು ಗುರುತಿಸಲಾಗಿದೆ. ಒಟ್ಟಿನಲ್ಲಿ ಹೂಡಿಕೆದಾರರಿಗೆ ಸಮಯ ವ್ಯರ್ಥವಾಗದಂತೆ, ಅವರನ್ನು ರಾಜ್ಯಕ್ಕೆ ಸೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಎಲ್ಲ ಇಲಾಖೆಗಳ ಸಹಕಾರ ಮುಖ್ಯ ಎಂದು ಅವರು ಹೇಳಿದರು. ಐಟಿ ಕ್ಷೇತ್ರದಲ್ಲಿ ನಾವು ಮುಂಚೂಣಿಯಲ್ಲಿದ್ದೆವು. ಇದೀಗ ಎಐ ಬಂದಿರುವುದರಿಂದ ಇದರ ಭವಿಷ್ಯ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಆದುದರಿಂದ ಕೆಐಎಡಿಬಿ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಬೇಕಾಗಿದೆ. ವಿದ್ಯುತ್ ಸಂಪರ್ಕ, ಅಗ್ನಿಶಾಮಕ ಇಲಾಖೆ ಅನುಮತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಅನುಮತಿಗಳು ತ್ವರಿತವಾಗಿ ಸಿಗುವಂತೆ ಮಾಡಬೇಕು. ಈ ವಿಷಯದಲ್ಲಿ ಉದ್ಯಮಿಗಳಿಗೆ ಸತಾಯಿಸುವುದನ್ನು ತಪ್ಪಿಸಬೇಕು ಎಂದು ಅವರು ಸೂಚಿಸಿದರು. ಗೃಹ ಇಲಾಖೆಯಡಿ ಬರುವ ಅಗ್ನಿಶಾಮಕ ದಳದಿಂದ ಎನ್‍ಒಸಿ ಕೊಡಲು ಇದುವರೆಗೂ 60 ದಿನಗಳ ಅವಕಾಶವಿತ್ತು. ಇದನ್ನು ಈಗ 21 ದಿನಕ್ಕೆ ಇಳಿಸಲಾಗಿದೆ. ವಿದ್ಯುತ್ ಸೌಲಭ್ಯಕ್ಕೆ ಬೇಕಾದ ಅನುಮತಿಗೆ ಕಾಲಾವಕಾಶವನ್ನು 25 ದಿನದಿಂದ 10ದಿನಕ್ಕೆ, ಲಿಫ್ಟ್/ಎಸ್ಕಲೇಟರ್ ಬಳಕೆಗೆ ಬೇಕಾದ ಅನುಮತಿಗೆ 40 ದಿನದಿಂದ 20 ದಿನಕ್ಕೆ, ಹೊಸ ನಲ್ಲಿ ಸಂಪರ್ಕಕ್ಕೆ 42 ದಿನದಿಂದ 30 ದಿನಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಾರ್ಮಿಕ ಇಲಾಖೆಯು ಕೈಗಾರಿಕಾ ಯೋಜನೆ ಮತ್ತು ಲೈಸೆನ್ಸ್, ಬಾಯ್ಲರ್ ನೋಂದಣಿಗಳನ್ನು ಇನ್ನು ಮುಂದೆ 30 ದಿನಗಳ ಬದಲು 14 ದಿನಗಳಲ್ಲಿ ಕೊಡಲಿದೆ. ಈ ಸಂಬಂಧದ ತಿದ್ದುಪಡಿಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಇವು ಸದ್ಯದಲ್ಲೇ ಸಂಪುಟ ಸಭೆಯ ಮುಂದೆ ಚರ್ಚೆಗೆ ಬರಲಿದ್ದು, ಕ್ಷಿಪ್ರಗತಿಯಲ್ಲಿ ಕಾನೂನಿನ ರೂಪ ನೀಡಲಾಗುವುದು ಎಂದು ಅವರು ವಿವರಿಸಿದರು. ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ವಿವಿಧ ರೀತಿಯ ಅನುಮತಿಗಳಿಗೆ ಇದುವರೆಗೆ ಇದ್ದ ಕಾಲಾವಧಿಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಹಾಗೆಯೇ ಭೂಬಳಕೆ ಉದ್ದೇಶ ಪರಿವರ್ತನೆಗೆ ಅನುಮತಿ ನೀಡಲು ಬೆಂಗಳೂರಿನ ಪರಿಮಿತಿಯಲ್ಲಿ ಈವರೆಗೆ 120ದಿನಗಳ ಕಾಲಾವಕಾಶವಿತ್ತು. ಇನ್ನು ಮುಂದೆ ಇದು 45 ದಿನಗಳಲ್ಲಿ ಆಗಲಿದೆ ಎಂದು ಅವರು ತಿಳಿಸಿದರು. ರಾಜ್ಯದ ವಿವಿಧ ಕಡೆ ಒಟ್ಟು 32ಡೇಟಾ ಸೆಂಟರುಗಳಿವೆ. ಇವುಗಳಿಗೆ ಅಡೆತಡೆ ಇಲ್ಲದೆ ವಿದ್ಯುತ್ ಪೂರೈಕೆ ನಿರ್ಣಾಯಕವಾಗಿದೆ. ಆದುದರಿಂದ ಡೇಟಾ ಸೆಂಟರ್ ಕ್ಲಸ್ಟರ್ ಅಭಿವೃದ್ಧಿ ಪಡಿಸಿ, ಇವುಗಳಿಗೆ ಪ್ರತ್ಯೇಕ ಲೈನ್ ಮೂಲಕ ವಿದ್ಯುತ್ ಒದಗಿಸುವ ಅಗತ್ಯ ಇದೆ. ಎಲ್ಲೆಲ್ಲಿ ಹೊಸದಾಗಿ ಡೇಟಾ ಸೆಂಟರ್‍ಗಳು ಬರುತ್ತವೆ? ಅವುಗಳಿಗೆ ವಿದ್ಯುತ್ ಸಂಪರ್ಕ ಇತ್ಯಾದಿ ಮೂಲ ಸೌಲಭ್ಯ ಒದಗಿಸುವ ಸಂಬಂಧ ಸದ್ಯದಲ್ಲೇ ಸಚಿವರ ಮಟ್ಟದಲ್ಲಿ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಜೋಳನ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕಂದಾಯ ಆಯುಕ್ತೆ ಮೀನಾ ನಾಗರಾಜ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶಂಕರ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ವಾರ್ತಾ ಭಾರತಿ 27 Feb 2026 1:40 am

NCERT ಅಧ್ಯಾಯ ತೆಗೆದರೂ ತಣ್ಣಗಾಗದ ಸುಪ್ರೀಂ ಕೋರ್ಟ್‌; 8ನೇ ತರಗತಿಯ ವಿವಾದಿತ ಪಠ್ಯಪುಸ್ತಕಕ್ಕೆ ಸಂಪೂರ್ಣ ನಿಷೇಧ

Supreme Court Of India On NCERT Controversial Text- ನ್ಯಾಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಉಲ್ಲೇಖವಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದಿತ ಅಧ್ಯಾಯವನ್ನು ತೆಗೆದುಹಾಕುವುದಾಗಿ ರಾಷ್ಟ್ರೀಯ ಪ್ರೌಢ ಶಿಕ್ಷಣ ಮಂಡಳಿ ವಿನಂತಿಸಿದರೂ ಸುಪ್ರೀಂ ಕೋರ್ಟ್ ಸಮಾಧಾನಗೊಂಡಿಲ್ಲ. ಗುರುವಾರ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ಅವರು ವಿವಾದಿತ ಪಠ್ಯಪುಸ್ತಕವನ್ನೇ ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಈಗಾಗಲೇ ಮುದ್ರಿತವಾಗಿರುವ ಪಠ್ಯ ಪುಸ್ತಕವನ್ನು ಹಿಂದಕ್ಕೆ ಪಡೆಯುವಂತೆ, ಜೊತೆಗೆ ಸಾರ್ವಜನಿಕರಿಗೆ ಲಭ್ಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದೂ ಆದೇಶಿಸಿದ್ದಾರೆ.

ವಿಜಯ ಕರ್ನಾಟಕ 27 Feb 2026 1:02 am

ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟ ಆರೋಪ | ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ : ಎಚ್ಚರಿಕೆ

ಬೆಂಗಳೂರು, ಫೆ.17 : ಸುದ್ದಿ ಮಾಧ್ಯಮಗಳಲ್ಲಿ ‘ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟವಾಗುತ್ತಿದೆ’ ಎಂದು ಪ್ರಚುರಪಡಿಸಲಾಗಿದೆ. ಈ ಮಾಹಿತಿಯನ್ನು ಪರಿಶೀಲಿಸಲಾಗಿದ್ದು, ಯಾವುದೇ ಪೂರಕ ಪುರಾವೆಗಳು ಇರುವುದಿಲ್ಲ. ಇಂತಹ ಸುಳ್ಳು ಸುದ್ದಿ ಹರಡುವವರನ್ನು ಗುರುತಿಸಿ, ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಚ್ಚರಿಕೆ ನೀಡಿದೆ. ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟ ಎಂಬುದು ತಪ್ಪು ಮಾಹಿತಿಯಾಗಿದ್ದು, ವಿದ್ಯಾರ್ಥಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪಿಸುವ ಹುನ್ನಾರವಾಗಿದೆ. ಸಾರ್ವಜನಿಕರು, ಪಾಲಕ-ಪೋಷಕರು ಇಂತಹ ವದಂತಿಗಳಿಗೆ ಮಹತ್ವ ನೀಡದೆ, ತಮ್ಮ ಮಕ್ಕಳನ್ನು ಏಕಾಗ್ರತೆಯಿಂದ ಪರೀಕ್ಷಾ ಸಿದ್ಧತೆಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದೆ. ಈಗಾಗಲೇ ಮಂಡಳಿಯ ಜಾಲತಾಣ kseeb.karnataka.gov.in ನಲ್ಲಿ ಮಕ್ಕಳ ಪರೀಕ್ಷಾ ಸಿದ್ಧತೆಗಾಗಿ ಅಗತ್ಯವಾಗಿರುವ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳ ಅಂಕಣದಲ್ಲಿ ಒದಗಿಸಲಾಗಿದೆ. ಪ್ರಶ್ನೆಪತ್ರಿಕೆಯ ನೀಲಿನಕ್ಷೆ ಅಂದರೆ ವಿಷಯವಾರು, ಅಧ್ಯಾಯವಾರು ಅಂಕಗಳ ಹಂಚಿಕೆಯ ಮಾಹಿತಿ, ಮಾದರಿ ಪ್ರಶ್ನೆಪತ್ರಿಕೆ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ, ಮಾದರಿ ಉತ್ತರಗಳು, ಹಿಂದಿನ ವರ್ಷದಲ್ಲಿ ಶೇಕಡಾ 100 ಅಂಕ ಪಡೆದ ಉತ್ತರ ಪತ್ರಿಕೆಗಳನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಈ ಮೇಲಿನ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಸುಳ್ಳು ಸುದ್ದಿಗಳ ಆಮಿಷಗಳಿಗೆ ಒಳಗಾಗಿ ತಪ್ಪು ದಾರಿ ಹಿಡಿದು ಮೋಸಹೋಗಬಾರದು ಎಂದು ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 27 Feb 2026 12:53 am

ಮಾ.2ರ ಸಾರಿಗೆ ಕಾರ್ಮಿಕರ ಧರಣಿ ಮುಂದೂಡಿಕೆ : ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ

ಬೆಂಗಳೂರು, ಫೆ.26 : ಮಾ.2ರಂದು ನಡೆಸಲು ನಿರ್ಧರಿಸಲಾಗಿದ್ದ ಸಾರಿಗೆ ಕಾರ್ಮಿಕರ ಧರಣಿಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ. ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಜಂಟಿ ಕ್ರಿಯಾ ಸಮಿತಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಭಾಗಶಃ ಈಡೇರಿಸಿರುವ ಕಾರಣಕ್ಕೆ ಅಭಿನಂದಿಸಿ, ಉಳಿದ ಬಾಕಿ ಮೊತ್ತ ಹಾಗೂ 2024ರ ಜ.1ರಿಂದ ವೇತನ ಪರಿಷ್ಕರಣೆಯ ವಿಷಯದಲ್ಲಿ ಮನವಿ ಸಲ್ಲಿಸಲಾಯಿತು. ಹಾಗೂ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ನಿಗದಿ ಪಡಿಸುವಂತೆ ವಿನಂತಿಸಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಮಾ.2ರ ಮಧ್ಯಾಹ್ನ ಸಭೆ ನಿಗದಿಪಡಿಸಿದ್ದಾರೆ ಎಂದು ತಿಳಿಸಿದೆ. ಆದ್ದರಿಂದ ಗುರುವಾರ ಸಂಜೆ ನಡೆದ ಜಂಟಿ ಕ್ರಿಯಾ ಸಮಿತಿಯ ಸಭೆಯಲ್ಲಿ ಮಾ.2ರಿಂದ ಬೆಂಗಳೂರಿನಲ್ಲಿ ಪ್ರತಿ ಎರಡು ವಿಭಾಗಗಳ ಕಾರ್ಯಕರ್ತರು ಭಾಗವಹಿಸಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.

ವಾರ್ತಾ ಭಾರತಿ 27 Feb 2026 12:45 am

500ಕ್ಕೂ ಹೆಚ್ಚು ಒಬಿಸಿ ಅಭ್ಯರ್ಥಿಗಳಿಗೆ ಉಚಿತ ಯುಪಿಎಸ್ಸಿ ತರಬೇತಿ : ಸಚಿವ ಶಿವರಾಜ್ ಎಸ್.ತಂಗಡಗಿ

ಬೆಂಗಳೂರು: ಫೆ. 26 ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯದ ಹಿಂದುಳಿದ ಸಮುದಾಯದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದರೆ ಭವಿಷ್ಯದಲ್ಲಿ 500ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಇಲಾಖೆ ವತಿಯಿಂದ ಉಚಿತ ವಸತಿ ಸಹಿತ ತರಬೇತಿ ಕೊಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಭರವಸೆ ನೀಡಿದ್ದಾರೆ. ಗುರುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ನೀಡಲಾಗುವ ‘ಉಚಿತ ವಸತಿ ಸಹಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಕೇಂದ್ರ’ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ದಿಲ್ಲಿಯಲ್ಲಿ ತರಬೇತಿ ಕೇಂದ್ರ ತೆರೆಯಬೇಕೆಂದು ನಿರ್ಧಾರ ಮಾಡಲಾಗಿತ್ತು. ಆದರೆ ಸ್ಥಳ ಸಿಗದ ಕಾರಣ, ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ. ಪ್ರಸ್ತುತ 150 ಮಂದಿ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಸಹಿತ ಪರೀಕ್ಷೆಗೆ 10 ತಿಂಗಳು ತರಬೇತಿ ನೀಡಲಾಗುತ್ತಿದೆ ಎಂದರು. ನಾನು ಒಮ್ಮೆ ಖುದ್ದು ದಿಲ್ಲಿಯ ಯುಪಿಎಸ್ಸಿ ತರಬೇತಿ ಅಕಾಡಮಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಮುದ್ದೇಬಿಹಾಳದ ಯುವಕನೊಬ್ಬ ಅಲ್ಲಿನ ತರಬೇತಿ ಕೇಂದ್ರದಲ್ಲಿಯೇ ಕೆಲಸ ಮಾಡುತ್ತಾ, ಪರೀಕ್ಷೆಗೆ ತಯಾರಿ ನಡೆಸಿದ್ದ. ದಿಲ್ಲಿಯಲ್ಲಿ ವಸತಿ ಮತ್ತು ಊಟದ ವೆಚ್ಚವೆ ದುಬಾರಿ ಎಂದು ಅಳಲು ತೊಡಿಕೊಂಡಿದ್ದ. ಅಂದೇ ಪರೀಕ್ಷೆಗೆ ಸಿದ್ಧತೆ ನಡೆಸುವ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ಧರಿಸಿದ್ದೆ. ಅದನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಈ ಯೋಜನೆಯನ್ನು ಬಜೆಟ್‍ನಲ್ಲೂ ಕೂಡ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದರು. ದೇಶದಲ್ಲೇ ಉಚಿತವಾಗಿ ವಸತಿ ಸಹಿತ ಯುಪಿಎಸ್ಸಿ ಪರೀಕ್ಷೆಗೆ ಎರಡು ರಾಜ್ಯಗಳಲ್ಲಿ ಸರಕಾರದಿಂದ ತರಬೇತಿ ನೀಡಲಾಗುತ್ತಿದೆ. ಆ ರಾಜ್ಯಗಳ ಪಟ್ಟಿಗೆ ಇದೀಗ ಕರ್ನಾಟಕ ಕೂಡ ಸೇರಿದೆ. ಶ್ರಮ ಹಾಗೂ ತಪ್ಪಸ್ಸಿನಿಂದ ಯಾವುದೇ ಸಾಧನೆ ಸಾಧ್ಯ. ಇಲ್ಲಿರುವ ಪ್ರತಿಯೊಬ್ಬ ತಪ್ಪಸ್ಸಿನಿಂದ ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಏಕಾಗ್ರತೆಯಿಂದ ಓದಿ ಯಶಸ್ಸು ಪಡೆಯಿರಿ ಎಂದು ಸಚಿವರು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಕೆಂಗೇರಿಯ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಆಯುಕ್ತ ಕೆ.ಎ. ದಯಾನಂದ್, ಅಧಿಕಾರಿಗಳಾದ ಪ್ರದೀಪ್, ಜಗದೀಶ್, ಮಧುಸೂದನ್ ರೆಡ್ಡಿ, ಭವ್ಯ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 27 Feb 2026 12:19 am

ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿಗೆ ‘ರೇಸ್ ಫಾರ್-7' ರನ್‍ಗೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಬೆಂಗಳೂರು, ಫೆ. 26: ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿಗೆ ‘ನೋವೊ ನಾರ್ಡಿಸ್ಕ್ ಇಂಡಿಯಾ ಮತ್ತು ಆರ್ಗನೈಸೇಶನ್ ಫಾರ್ ರೇರ್ ಡಿಸೀಸ್ ಇನ್ ಇಂಡಿಯಾ ಸಂಸ್ಥೆಗಳ ಆಶ್ರಯದಲ್ಲಿ ‘ರೇಸ್ ಫಾರ್-7' ಓಟಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೋಗಿಗಳು, ಆರೈಕೆದಾರರು ಮತ್ತು ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರದ ಜನರು ಭಾಗವಹಿಸಿದ್ದರು. ಭಾರತದಲ್ಲಿ ಅಪರೂಪದ ಕಾಯಿಲೆಗಳೊಂದಿಗೆ ಬದುಕುತ್ತಿರುವವರಿಗೆ ಉತ್ತಮ ವೈದ್ಯಕೀಯ ಸೇವೆ ಮತ್ತು ಬೆಂಬಲವನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಧ್ವನಿ ಎತ್ತಿದರು. ನೋವೊ ನಾರ್ಡಿಸ್ಕ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರಿಯ ಮಾತನಾಡಿ, ‘ಭಾರತದಲ್ಲಿ ಅಪರೂಪದ ಕಾಯಿಲೆಗಳ ನಿರ್ವಹಣೆಗೆ ತಡೆಗಟ್ಟುವಿಕೆ ಮತ್ತು ನಿರಂತರ ಚಿಕಿತ್ಸೆ ಒದಗಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ವಿಜ್ಞಾನ ಮತ್ತು ಮಾನವೀಯತೆ ಒಂದಾಗಿ ಯಾವುದೇ ರೋಗಿಯು ಅಸಹಾಯಕನಾಗದಂತಹ ವೈದ್ಯಕೀಯ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಬದ್ಧತೆ’ ಎಂದು ಹೇಳಿದರು. ಈ ವೇಳೆ ಓಆರ್‍ಡಿಐ ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಶಿರೋಳ್, ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್‍ನ ನಿರ್ದೇಶಕಿ ಡಾ.ಮೀನಾಕ್ಷಿ ಭಟ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಾರ್ತಾ ಭಾರತಿ 27 Feb 2026 12:16 am

ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿ ವಂಚನೆ; ಕಡ್ಡಾಯವಲ್ಲದಿದ್ದರೂ ಆರೋಪಿಗಳ ಬಂಧಿಸುತ್ತಿರುವುದೇಕೆ? : ಹೈಕೋರ್ಟ್ ಪ್ರಶ್ನೆ

ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ ನಂತರ ವಂಚಿಸಿದ ಆರೋಪ ಎದುರಿಸುತ್ತಿರುವ ಆರೋಪಿಗಳನ್ನು ಬಂಧಿಸುವುದು ಕಡ್ಡಾಯವಿಲ್ಲದಿದ್ದರೂ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ಇಂತಹ ಬೆಳವಣಿಗೆ ತಡೆಯಲು ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅತ್ಯಾಚಾರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹೊಕ್ಕಳ್ಳಿ ಗ್ರಾಮದ ನಿವಾಸಿ ಎಚ್‌.ಜಿ. ಗಂಗ (29) ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೊಲೀಸರ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಿ, ಪ್ರಕರಣ ಸಂಬಂಧ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣಾ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೂರು ದಾಖಲಿಸುವಲ್ಲಿ ದೂರುದಾರೆ 1 ವರ್ಷ 3 ತಿಂಗಳು ವಿಳಂಬ ಮಾಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆರೋಪಿಯನ್ನು ಏಕೆ ಬಂಧಿಸಲಾಗಿದೆ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಅರ್ಜಿದಾರ ತಲೆಮರೆಸಿಕೊಂಡಿದ್ದರು. ಈಗ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಆಗ ನ್ಯಾಯಪೀಠ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರನ್ನು ಉದ್ದೇಶಿಸಿ, ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇಂತಹ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಏಕೆ ಬಂಧಿಸುತ್ತಿದ್ದಾರೆ? ಎಂಬುದು ಅರ್ಥವಾಗುತ್ತಿಲ್ಲ. ಆರೋಪಿಯನ್ನು ಬಂಧಿಸುವುದು ಕಡ್ಡಾಯವೇನಿಲ್ಲ. 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಂಧಿಸಲಾಗುತ್ತಿದೆ. ಇಂಥ ಪ್ರಕರಣ ಎದುರಿಸುತ್ತಿರುವ ಎಲ್ಲ ಆರೋಪಿಗಳು ಜೈಲಿನೊಳಗಿದ್ದಾರೆ. ಬಂಧನ ಮಾಡಬಾರದು ಎಂದು ಕೋರ್ಟ್‌ ಹೇಳುತ್ತಲೇ ಇದೆ. ಪೊಲೀಸರು ಮಾತ್ರ ಬಂಧನ ಮಾಡುತ್ತಲೇ ಇದ್ದಾರೆ ಎಂದು ಹೇಳಿತು. ಮುಂದುವರಿದು, ಸಂತ್ರಸ್ತೆಯೊಂದಿಗೆ ಐದು, ಆರು ವರ್ಷ ಸಂಬಂಧ ಹೊಂದಿರುವ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಅರ್ಜಿದಾರ ಆರೋಪಿ, ದೂರುದಾರೆಯೊಂದಿಗೆ ಎರಡೂವರೆ ವರ್ಷ ಸಂಬಂಧ ಹೊಂದಿದ್ದರು. ಕಾನೂನು ದುರ್ಬಳಕೆಗೆ ಈ ಪ್ರಕರಣ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ. ಈ ಅಪರಾಧ ಸಂಬಂಧ ಜಾರಿಗೆ ಬಂದಿರುವ ಹೊಸ ನಿಯಮ ಬಿಎನ್‌ಎಸ್‌ ಸೆಕ್ಷನ್‌ 69 ಅನ್ನು ಸಹ ದುರುಪಯೋಗ ಮಾಡಲಾಗುತ್ತಿದೆ. ಇಂತಹ ಬೆಳವಣಿಗೆಯನ್ನು ನಿಲ್ಲಿಸಲು ಏನಾದರೂ ಮಾಡಬೇಕು ಎಂದು ಸರಕಾರಿ ಅಭಿಯೋಜಕರಿಗೆ ನ್ಯಾಯಪೀಠ ಸೂಚಿಸಿತು. ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ, ದೂರುದಾರೆಯನ್ನು ಅರ್ಜಿದಾರರು ಮದುವೆ ಆಗುತ್ತಾರಾ? ಮದುವೆಯಾಗಿ ನಿಮ್ಮ ಭರವಸೆ ಉಳಿಸಿಕೊಳ್ಳಿ. ಆರೋಪಿ ಜೈಲಿಗೆ ಹೋಗಿದ್ದಾನಾಲ್ಲವೇ? ಜೈಲಿಗೆ ಹೋಗಿರುವುದರಿಂದ ಮದುವೆ ಆಗುವುದಿಲ್ಲ ಎನ್ನುತ್ತೀರಾ? ಎಂದು ನ್ಯಾಯಪೀಠ ಪ್ರಶ್ನಿಸಿತು. ಸರ್ಕಾರಿ ಅಭಿಯೋಜಕರು, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅರ್ಜಿದಾರರನ್ನು ಬಂಧಿಸಲಾಗಿದೆ. ಆದ್ದರಿಂದ, ಅರ್ಜಿ ಊರ್ಜಿತವಾಗುವುದಿಲ್ಲ. ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರು ಪರ ವಕೀಲರು, ಎಫ್‌ಐಆರ್‌ ರದ್ದು ಕೋರಿ ಈ ಅರ್ಜಿ ಸಲ್ಲಿಸಲಾಗಿದೆ. ಜಾಮೀನು ಅರ್ಜಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಅರ್ಜಿದಾರರು ಕೂಡಲೇ ಬಿಡುಗಡೆಯಾಗಬೇಕಿದೆ ಎಂದರು. ಅಂತಿಮವಾಗಿ ಅರ್ಜಿ ಹಿಂಪಡೆಯಲು ಅನುಮತಿ ನೀಡಿದ ನ್ಯಾಯಪೀಠ, ಹೊಸದಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತಲ್ಲದೆ, ಈ ಅರ್ಜಿದಾರ ಆರೋಪಿ ಜೈಲಿನಿಂದ ಹೊರಬರಬೇಕು ಎಂದು ಮೌಖಿಕವಾಗಿ ಹೇಳಿತು.

ವಾರ್ತಾ ಭಾರತಿ 27 Feb 2026 12:05 am

ಶಾಂತಿ ಮಾತುಕತೆ ಯಶಸ್ಸು ಕಂಡರೆ ಇರಾನ್ ಬಳಿ ಇರುವ ಅಮೆರಿಕ ಸೇನೆ ವಾಪಸ್ ಸಾಧ್ಯತೆ | USA And Iran

ಅಮೆರಿಕ ಮತ್ತು ಇರಾನ್ ಇದೀಗ ಶಾಂತಿ ಒಪ್ಪಂದಕ್ಕೆ ಕೂತಿದ್ದು, ಹೇಗಾದರೂ ಮಾಡಿ ಈಗ ಒಂದು ಹಂತಕ್ಕೆ ಬಂದು ನಿಲ್ಲಬೇಕು ಎಂದು ಒದ್ದಾಡುತ್ತಿದ್ದಾರೆ. ಒಂದು ಕಡೆ ಇರಾನ್ ದೇಶದ ವಿದೇಶಾಂಗ ಸಚಿವ ಹಾಗೂ ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸಚಿವರು ಬಂದು ಮಾತುಕತೆಗೆ ಕೂತಿದ್ದಾರೆ. ಕೆಲವೇ ಗಂಟೆಗಳಲ್ಲಿ ಮಾತುಕತೆ ಪೂರ್ಣಗೊಂಡು, ಅಮೆರಿಕ ಮತ್ತು ಇರಾನ್ ಪರಮಾಣು ಶಾಂತಿ

ಒನ್ ಇ೦ಡಿಯ 26 Feb 2026 11:56 pm

ಮೋದಿ ಇಸ್ರೇಲ್ ಭೇಟಿ: ಭಾರತ–ಇಸ್ರೇಲ್ ನಡುವೆ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ | 16 ಒಪ್ಪಂದಗಳಿಗೆ ಸಹಿ; 5 ವರ್ಷಗಳಲ್ಲಿ 50,000 ಭಾರತೀಯ ಕಾರ್ಮಿಕರಿಗೆ ಉದ್ಯೋಗವಕಾಶ

ಜೆರುಸಲೆಮ್, ಫೆ. 26: ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು “ವಿಶೇಷ ಕಾರ್ಯತಂತ್ರದ ಪಾಲುದಾರಿಕೆ” ಮಟ್ಟಕ್ಕೆ ಏರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಎರಡು ದಿನಗಳ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಮ್ಮುಖದಲ್ಲಿ ಗುರುವಾರ 16 ಒಪ್ಪಂದಗಳು ಹಾಗೂ ತಿಳುವಳಿಕೆ ಪತ್ರಗಳಿಗೆ (MoU) ಸಹಿ ಹಾಕಲಾಯಿತು. ಪ್ರಧಾನಿ ಮೋದಿ ಅವರು ಫೆ. 25ರಂದು ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಿದ್ದು, ಬಳಿಕ ಹಾಲೋಕಾಸ್ಟ್ ಸ್ಮಾರಕ ಯಾದ್ ವಾಶೆಮ್ಗೆ ಭೇಟಿ ನೀಡಿದರು. ಈ ಭೇಟಿ ಎರಡೂ ರಾಷ್ಟ್ರಗಳ ನಡುವಿನ ದೀರ್ಘಕಾಲೀನ ಕಾರ್ಯತಂತ್ರದ ಸಹಕಾರಕ್ಕೆ ಹೊಸ ಚೈತನ್ಯ ತುಂಬಿದೆ ಎಂದು DD News ವರದಿ ಮಾಡಿದೆ. ಕೃತಕ ಬುದ್ಧಿಮತ್ತೆ (AI), ಕೃಷಿ, ಸೈಬರ್ ಭದ್ರತೆ, ಫಿನ್ ಟೆಕ್, ಕಾರ್ಮಿಕ ಚಲನಶೀಲತೆ, ಶಿಕ್ಷಣ, ಮೀನುಗಾರಿಕೆ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ವ್ಯಾಪಕ ಕ್ಷೇತ್ರಗಳನ್ನು ಈ ಒಪ್ಪಂದಗಳು ಒಳಗೊಂಡಿವೆ. ಈ ಮೂಲಕ ದ್ವಿಪಕ್ಷೀಯ ಸಹಕಾರವನ್ನು ಕಾರ್ಯತಂತ್ರದ, ತಾಂತ್ರಿಕ ಹಾಗೂ ಆರ್ಥಿಕ ಆಯಾಮಗಳಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ದಿಶೆಯಲ್ಲಿ ಎರಡೂ ರಾಷ್ಟ್ರಗಳು ಹೆಜ್ಜೆ ಇಟ್ಟಿವೆ. ಗಡಿಯಾಚೆಗಿನ ವಿನಿಮಯಗಳನ್ನು ಸುಗಮಗೊಳಿಸಲು ಭಾರತದ NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) ಮತ್ತು ಇಸ್ರೇಲ್ನ ಮಾಸಾವ್ (MASAV) ನಡುವೆ ಒಪ್ಪಂದವಾಗಿದೆ. ಯುಪಿಐ (UPI) ಆಧಾರಿತ ಪಾವತಿ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶ. ಕೃಷಿ ಕ್ಷೇತ್ರದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಮಶಾವ್ (MASHAV) ಸಹಯೋಗದಲ್ಲಿ ಭಾರತ–ಇಸ್ರೇಲ್ ನವೀನ್ಯತಾ ಕೇಂದ್ರ (IINCA) ಸ್ಥಾಪನೆಗೆ ಒಪ್ಪಂದವಾಗಿದೆ. ನಿಖರ ಕೃಷಿ, ಉಪಗ್ರಹ ಆಧಾರಿತ ನೀರಾವರಿ, ಸುಧಾರಿತ ಯಂತ್ರೋಪಕರಣಗಳು, ಸಮಗ್ರ ಕೀಟ ನಿರ್ವಹಣೆ, ಜರ್ಮ್ಪ್ಲಾಸ್ಮ್ ವಿನಿಮಯ, ಕೊಯ್ಲಿನ ನಂತರದ ತಂತ್ರಜ್ಞಾನಗಳು ಹಾಗೂ ಸಾಮರ್ಥ್ಯ ವೃದ್ಧಿಗೆ ಈ ಕೇಂದ್ರ ಕೇಂದ್ರೀಕರಿಸಲಿದೆ. ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಸುಸ್ಥಿರ ಹಾಗೂ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ಉತ್ತೇಜಿಸಲು ಸಹಕಾರ ವಿಸ್ತರಿಸಲಾಗಿದೆ. ಸುಧಾರಿತ ಜಲಚರ ಸಾಕಣೆ, ರೋಗ ನಿರ್ವಹಣೆ, ಸಮುದ್ರ ಕೃಷಿ, ಕಡಲಕಳೆ ಕೃಷಿ, ಸಂಶೋಧನೆ ಮತ್ತು ಅಭಿವೃದ್ಧಿ, ತರಬೇತಿ ಹಾಗೂ ಶ್ರೇಷ್ಠತೆಯ ಕೇಂದ್ರಗಳ ಸ್ಥಾಪನೆ ಇದರ ಭಾಗವಾಗಿದೆ. ಖನಿಜ ಸಂಪನ್ಮೂಲಗಳಿಗಾಗಿ ಸುಧಾರಿತ ಭೂಭೌತಿಕ ಹಾಗೂ AI ತಂತ್ರಜ್ಞಾನ ಬಳಸಿ ಪರಿಶೋಧನೆಯಲ್ಲಿ ಸಹಕಾರ, ಗುಜರಾತ್ ನ ಲೋಥಾ ಲ್ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣದ ಅಭಿವೃದ್ಧಿ, 2026–2029ರ ಅವಧಿಗೆ ಸಂಗೀತ, ರಂಗಭೂಮಿ, ನೃತ್ಯ ಹಾಗೂ ದೃಶ್ಯಕಲೆಗಳನ್ನು ಒಳಗೊಂಡ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಶಿಕ್ಷಣದಲ್ಲಿ AI ಆಧಾರಿತ ಶಿಕ್ಷಣ, ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾನ ಪ್ರವೇಶಾವಕಾಶ, ಹಾರಿಝಾನ್ ಸ್ಕ್ಯಾನಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿಯೂ ಒಪ್ಪಂದಗಳು ಆಗಿವೆ. ಇಸ್ರೇಲ್ನ ವಾಣಿಜ್ಯ ಮತ್ತು ಸೇವಾ ವಲಯ (ಚಿಲ್ಲರೆ ವ್ಯಾಪಾರ, ಲಾಜಿಸ್ಟಿಕ್ಸ್, ಗೋದಾಮು, ಆಹಾರ ಸಂಸ್ಕರಣೆ, ಆತಿಥ್ಯ, ಮರುಬಳಕೆ), ಉತ್ಪಾದನಾ ವಲಯ (ಜವಳಿ, ಲೋಹಗಳು, ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳು, ಆಹಾರ ಸಂಸ್ಕರಣೆ, ಮರ ಮತ್ತು ಕಾಗದ, ಪ್ಲಾಸ್ಟಿಕ್ಗಳು, ರಬ್ಬರ್ ಮತ್ತು ಇತರೆ ಕೈಗಾರಿಕೆಗಳು) ಹಾಗೂ ರೆಸ್ಟೋರೆಂಟ್ ವಲಯಗಳಲ್ಲಿ (ರೆಸ್ಟೋರೆಂಟ್ಗಳು, ಕೆಫೆಗಳು ಮತ್ತು ಆಹಾರ ತಯಾರಿಕಾ ವ್ಯವಹಾರಗಳು) ಭಾರತೀಯ ಕಾರ್ಮಿಕರ ನಿಯಂತ್ರಿತ ನೇಮಕಾತಿಗೆ ಸಂಬಂಧಿಸಿದಂತೆ ಮೂರು ಅನುಷ್ಠಾನ ಪ್ರೋಟೋಕಾಲ್ ಗಳಿಗೆ ಸಹಿ ಹಾಕಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 50,000 ಭಾರತೀಯ ಕಾರ್ಮಿಕರಿಗೆ ಕೋಟಾ ನಿಗದಿಪಡಿಸಲಾಗಿದೆ. ಸೈಬರ್ ಸುರಕ್ಷತೆಯ ಅತ್ಯುತ್ತಮ ಅಭ್ಯಾಸಗಳು, ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಡಿಜಿಟಲ್ ಸ್ಥಿತಿಸ್ಥಾಪಕತೆಯನ್ನು ಉತ್ತೇಜಿಸಲು ಭಾರತದಲ್ಲಿ ಇಂಡೋ–ಇಸ್ರೇಲ್ ಸೈಬರ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ ಉದ್ದೇಶ ಪತ್ರ ವಿನಿಮಯಗೊಂಡಿದೆ. ಫಿನ್ಟೆಕ್, ರೆಗ್ಟೆಕ್ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ಸ್ ಅಥಾರಿಟಿ (IFSCA) ಮತ್ತು ಇಸ್ರೇಲ್ ಸೆಕ್ಯುರಿಟೀಸ್ ಅಥಾರಿಟಿ (ISA) ನಡುವೆ ಸಹಕಾರಕ್ಕೆ ಒಪ್ಪಂದವಾಗಿದೆ. ವಾಣಿಜ್ಯ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಇಸ್ರೇಲಿ ಇನ್ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಆರ್ಬಿಟ್ರೇಷನ್ (IICA) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಆರ್ಬಿಟ್ರೇಷನ್ (ICA) ನಡುವೆ ಒಪ್ಪಂದವಾಗಿದೆ. ಜೊತೆಗೆ ನಳಂದ ವಿಶ್ವವಿದ್ಯಾಲಯ ಮತ್ತು ಜೆರುಸಲೆಮ್ ನ ಹೀಬ್ರೂ ವಿಶ್ವವಿದ್ಯಾಲಯ ನಡುವೆ ಬೌದ್ಧ ಅಧ್ಯಯನಗಳು, ಪುರಾತತ್ತ್ವ ಶಾಸ್ತ್ರ, ಗಣಿತ ಹಾಗೂ ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗಗಳಲ್ಲಿ ಶೈಕ್ಷಣಿಕ ವಿನಿಮಯ ವಿಸ್ತರಿಸಲು ಸಹಿ ಹಾಕಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಜಂಟಿ ಸಮಿತಿಯನ್ನು ಸಚಿವರ ಮಟ್ಟಕ್ಕೆ ಏರಿಸುವುದು, ರಾಷ್ಟ್ರೀಯ ಭದ್ರತಾ ಸಲಹೆಗಾರರ ನೇತೃತ್ವದಲ್ಲಿ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಉಪಕ್ರಮ, ಹಣಕಾಸು ಸಂವಾದ, ಟೆಕ್–ಗೇಟ್ವೇ ಉಪಕ್ರಮ, ಕೃಷಿ ಸಂಶೋಧನೆಯಲ್ಲಿ 20 ಜಂಟಿ ಫೆಲೋಶಿಪ್ ಗಳು, ಜಂಟಿ ಸಂಶೋಧನೆಗೆ ಹೆಚ್ಚಿನ ಕೊಡುಗೆ, ಭಾರತ–ಇಸ್ರೇಲ್ ಶೈಕ್ಷಣಿಕ ಸಹಕಾರ ವೇದಿಕೆ ಹಾಗೂ ಭಾರತ–ಇಸ್ರೇಲ್ ಸಂಸದೀಯ ಸ್ನೇಹ ಗುಂಪು ಸ್ಥಾಪನೆಗಳನ್ನು ಎರಡೂ ದೇಶಗಳು ಘೋಷಿಸಿವೆ. ನವೆಂಬರ್ 2025ರಲ್ಲಿ ಇಸ್ರೇಲ್ ನಲ್ಲಿ ನಡೆದ ಸಭೆಯ ನಂತರ ಮಂಡಿಸಲಾದ ನಾಲ್ಕನೇ ಭಾರತ–ಇಸ್ರೇಲ್ ಸಿಇಒ ವೇದಿಕೆಯ ವರದಿಯು ಉದ್ಯಮದ ಪ್ರಗತಿಗಾಗಿ ಸಾರ್ವಜನಿಕ–ಖಾಸಗಿ ಸಹಯೋಗವನ್ನು ಬಲಪಡಿಸಲು ಶಿಫಾರಸುಗಳನ್ನು ನೀಡಿದೆ.

ವಾರ್ತಾ ಭಾರತಿ 26 Feb 2026 11:48 pm

ಇನ್ನು 48 ಗಂಟೆಯೊಳಗೆ ವಿಮಾನ ಟಿಕೆಟ್‌ ರದ್ದುಪಡಿಸಿದರೂ ಹೆಚ್ಚುವರಿ ಶುಲ್ಕವಿಲ್ಲದೆ ಹಣ ವಾಪಸ್‌!

ಇದೀಗ ವಿಮಾ ಟಿಕೆಟ್ ಕಾಯ್ದಿರಿಸುವಿಕೆಯ ನಿಯಮಗಳಲ್ಲಿ ಕೆಲ ಪರಿಷ್ಕರಣೆಗಳನ್ನು ತರಲಾಗಿದೆ. ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಗಳೊಳಗೆ ರದ್ದುಗೊಳಿಸಿದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪೂರ್ಣ ಹಣ ಮರುಪಾವತಿ ಪಡೆಯಬಹುದಾಗಿದೆ. ಈ ಸೌಲಭ್ಯವು ಪ್ರಯಾಣಕ್ಕೆ ಕನಿಷ್ಠ 7-15 ದಿನಗಳ ಮೊದಲು ಬುಕ್ ಮಾಡಿದವರಿಗೆ ಮಾತ್ರ ಅನ್ವಯವಾಗಲಿದೆ. ವೈದ್ಯಕೀಯ ತುರ್ತು ರದ್ದತಿಗೂ ಹಣ ವಾಪಸ್ ಸಿಗಲಿದ್ದು, ವಿಮಾನಯಾನ ಸಂಸ್ಥೆಗಳು ಮರುಪಾವತಿ ಪ್ರಕ್ರಿಯೆಯನ್ನು 14 ದಿನಗಳೊಳಗೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಹೊಸ ನಿಯಮ ಮಾರ್ಚ್ 26ರಿಂದ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

ವಿಜಯ ಕರ್ನಾಟಕ 26 Feb 2026 11:45 pm

ಉತ್ತರ ಕೊರಿಯಾ ನೆಲದಲ್ಲಿ ಮತ್ತೆ ಅಧಿಕಾರಕ್ಕೆ ತಿಕ್ಕಾಟ ಶುರು, ಮಗಳನ್ನು ಮರೆಸುತ್ತಿರುವ ಸರ್ವಾಧಿಕಾರಿ | Kim Jong Un

ಉತ್ತರ ಕೊರಿಯಾ ಅಂದ್ರೆ ಸಖತ್ ವಿವಾದಗಳ ನಾಡು, ಅದರಲ್ಲೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪದೇ ಪದೇ ವಿವಾದಗಳ ಸುಳಿಯಲ್ಲಿ ಸಿಲುಕಿ ಸದ್ದು ಮಾಡುತ್ತಲೇ ಇರುತ್ತಾರೆ. ಈ ರೀತಿ ಇದ್ದಾಗ ಕಿಮ್ ಜಾಂಗ್ ಉನ್ ನಂತರ ಉತ್ತರ ಕೊರಿಯಾದ ಮುಂದಿನ ಅಧ್ಯಕ್ಷರು ಯಾರು? ಎಂಬ ಚರ್ಚೆ ನಡೆಯುತ್ತಲೇ ಇದೆ. ಇನ್ನೊಂದು ಕಡೆ ತನ್ನ ಮಗಳನ್ನೇ

ಒನ್ ಇ೦ಡಿಯ 26 Feb 2026 11:45 pm

ಇರಾನ್ ಮತ್ತು ಅಮೆರಿಕ ಪರಮಾಣು ಶಾಂತಿ ಒಪ್ಪಂದ ಹಿನ್ನೆಲೆ ಮಹತ್ವದ ಸಭೆ ಆರಂಭ | USA And Iran

ಇರಾನ್ ಬದುಕಬೇಕು ಅಂದ್ರೆ ತಕ್ಷಣಕ್ಕೆ ಅಮೆರಿಕ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲವಾದರೆ ಯಾವಾಗ ಯುದ್ಧ ನಡೆದು ಹೋಗುತ್ತೋ ಅನ್ನೋದು ಕಾಡುತ್ತಿದೆ. ಹೀಗಿದ್ದಾಗ ಕೂಡಲೇ ಪರಮಾಣು ಶಾಂತಿ ಮಾತುಕತೆ ನಡೆಸಬೇಕು ಅಂತಾ ಒಮಾನ್ ದೇಶ ಮುಂದೆ ಬಂದಿದ್ದು, ದಿಢೀರ್ 3ನೇ ಸುತ್ತಿನಲ್ಲಿ ಸ್ವಿಝರ್ಲ್ಯಾಂಡ್‌ನ ಜಿನೇವಾದಲ್ಲಿ ಅಮೆರಿಕ &ಇರಾನ್ ನಡುವೆ ಇದೀಗ ಶಾಂತಿ ಮಾತುಕತೆ ಆರಂಭ ಆಗಿದೆ. ಈ

ಒನ್ ಇ೦ಡಿಯ 26 Feb 2026 11:30 pm

‘ದ್ವೇಷ ಭಾಷಣ’ ಆರೋಪ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾಗೆ ಗುವಾಹಟಿ ಹೈಕೋರ್ಟ್ ನೋಟಿಸ್

ಗುವಾಹಟಿ, ಫೆ. 26: ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗುವಾಹಟಿ ಹೈಕೋರ್ಟ್ ಗುರುವಾರ (ಫೆಬ್ರವರಿ 26, 2026) ನೋಟಿಸ್ ಜಾರಿ ಮಾಡಿದೆ. ಬಿಸ್ವ ಶರ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಹಾಗೂ ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲರ ವಾದಗಳನ್ನು ಆಲಿಸಿ, ಮುಖ್ಯಮಂತ್ರಿ ಸೇರಿದಂತೆ ಕೇಂದ್ರ ಹಾಗೂ ಅಸ್ಸಾಂ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿಪಡಿಸಲಾಗಿದೆ. ಅರ್ಜಿದಾರರಲ್ಲಿ ಕಾಂಗ್ರೆಸ್ ಪಕ್ಷ, ಅಸ್ಸಾಮಿ ವಿದ್ವಾಂಸ ಹಿರೇನ್ ಗೋಹೈನ್ ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸೇರಿದ್ದಾರೆ. ಆರಂಭದಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪೀಠವು ಹೈಕೋರ್ಟ್ಗೆ ತೆರಳುವಂತೆ ಸೂಚಿಸಲಾಗಿತ್ತು. ಅರ್ಜಿಯಲ್ಲಿ, “ಮಿಯಾ” ಎಂಬುದು ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಅಥವಾ ಬಂಗಾಳಿ ಮೂಲದ ಮುಸ್ಲಿಮರನ್ನು ಉಲ್ಲೇಖಿಸಲು ಸಾಮಾನ್ಯವಾಗಿ ಬಳಸುವ ಅವಹೇಳನಕಾರಿ ಪದವಾಗಿದ್ದು, ಅದರ ಅರ್ಥವನ್ನು “ಅಕ್ರಮ ವಲಸಿಗರು” ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅಭಿಷೇಕ್ ಮನು ಸಿಂಘ್ವಿ, ಚಂದರ್ ಉದಯ್ ಸಿಂಗ್ ಹಾಗೂ ಮೀನಾಕ್ಷಿ ಅರೋರಾ ಅವರು ಅರ್ಜಿದಾರರ ಪರವಾಗಿ ವಾದ ಮಂಡಿಸಿ, ಮುಖ್ಯಮಂತ್ರಿ ಶರ್ಮಾ ಅವರು ಅಸ್ಸಾಂನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಮತ್ತು ಬೆದರಿಕೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಟೋಪಿ ಧರಿಸಿದ ಜನರ ಮೇಲೆ ಗುಂಡು ಹಾರಿಸುವುದನ್ನು ತೋರಿಸುವ (ಈಗ ಅಳಿಸಲಾದ) X ಸಾಮಾಜಿಕ ಜಾಲತಾಣದ ವೀಡಿಯೊವನ್ನೂ ಅವರು ಉಲ್ಲೇಖಿಸಿದರು. ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವ ಯೋಜನೆಗಳು, ಮತದಾನದ ಹಕ್ಕುಗಳನ್ನು ನಿರ್ಬಂಧಿಸುವ ಬೆದರಿಕೆಗಳು ಹಾಗೂ ಸಮುದಾಯದ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿರುವ ವಿಷಯಗಳನ್ನೂ ನ್ಯಾಯಾಲಯಕ್ಕೆ ತಿಳಿಸಲಾಯಿತು. ಮುಖ್ಯಮಂತ್ರಿಗಳ ಪುನರಾವರ್ತಿತ ಹೇಳಿಕೆಗಳು “ ಪ್ರಚೋದನೆಯ ಅಭ್ಯಾಸ ಮಾದರಿ”ಯನ್ನು ತೋರಿಸುತ್ತವೆ ಮತ್ತು ರಾಜ್ಯದ ಮುಖ್ಯಸ್ಥರಾಗಿ ಅವರ ಕರ್ತವ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ವಕೀಲರು ವಾದಿಸಿದರು. ಹಿಮಂತ ಬಿಸ್ವ ಶರ್ಮ ಅವರ ಹೇಳಿಕೆಗಳು ಸಂವಿಧಾನದ ಜಾತ್ಯತೀತ ಆದೇಶ ಹಾಗೂ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಸಮಾನತೆಯ ತತ್ವಗಳನ್ನು ಉಲ್ಲಂಘಿಸುವ ಸಾಧ್ಯತೆಯಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಅವರು ವಾದಿಸಿದರು. ವಿಚಾರಣೆ ವೇಳೆ ಅರ್ಜಿದಾರರು ಉಲ್ಲೇಖಿಸಿದ ಹೇಳಿಕೆಗಳು “ವಿಭಜನಾ ಪ್ರವೃತ್ತಿ”ಯನ್ನು ತೋರಿಸುತ್ತವೆ ಎಂದು ನ್ಯಾಯಾಲಯ ಗಮನಿಸಿದ್ದು, ಅಂತಿಮ ತೀರ್ಮಾನಕ್ಕೆ ಬರುವ ಮೊದಲು ಸಲ್ಲಿಕೆಯಾದ ಎಲ್ಲಾ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸುವುದಾಗಿ ತಿಳಿಸಿದೆ.

ವಾರ್ತಾ ಭಾರತಿ 26 Feb 2026 11:18 pm

ಚೆನ್ನೈನಲ್ಲೊಂದು ರಮಝಾನ್ ಸೌಹಾರ್ದ ಸ್ಟೋರಿ; 40 ವರ್ಷಗಳಿಂದ ಮುಸ್ಲಿಮರಿಗೆ ದೇವಾಲಯದಿಂದಇಫ್ತಾರ್ ಆಯೋಜನೆ

ಚೆನ್ನೈ, ಫೆ. 26: ಚೆನ್ನೈ ನಗರದ ಮೈಲಾಪುರದಲ್ಲಿರುವ ಸೂಫಿದಾರ್ ದೇವಾಲಯವು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಮಝಾನ್ ತಿಂಗಳಲ್ಲಿ ಮುಸ್ಲಿಮರಿಗೆ ಪ್ರತಿದಿನ ಇಫ್ತಾರ್ ಆಯೋಜಿಸುವ ಮೂಲಕ ಅಂತರಧರ್ಮೀಯ ಸಾಮರಸ್ಯದ ಮಾದರಿಯಾಗಿ ಹೊರಹೊಮ್ಮಿದೆ ಎಂದು madhyamamonline.com ವರದಿ ಮಾಡಿದೆ. 1980ರ ದಶಕದ ಆರಂಭದಲ್ಲಿ ದಾದಾ ರತನ್ಚಂದ್ ಅಥವಾ ದಾದಾಜಿ ಎಂದು ಕರೆಯಲ್ಪಟ್ಟ ದಾದಾ ರತನ್ಚಂದ್ ಸಾಹಿಬ್ ಈ ಸಂಪ್ರದಾಯಕ್ಕೆ ಚಾಲನೆ ನೀಡಿದರು. 1926ರ ನವೆಂಬರ್ 4ರಂದು ಸಿಂಧ್ ನ ಹೈದರಾಬಾದ್ ನಲ್ಲಿ (ಈಗಿನ ಪಾಕಿಸ್ತಾನ) ರುಕ್ಮಿಣಿ ದೇವಿ ಹಾಗೂ ಭಾಯಿ ಪೆಸುಮಲ್ ದೋಡಾನಿ ದಂಪತಿಗೆ ಜನಿಸಿದ ರತನ್ಚಂದ್, 1947ರ ಭಾರತ ವಿಭಜನೆಯ ಸಂದರ್ಭದಲ್ಲಿ ಹಿಂದೂ ನಿರಾಶ್ರಿತರಾಗಿ ಚೆನ್ನೈಗೆ ವಲಸೆ ಬಂದಿದ್ದರು. ನಗರದಲ್ಲಿ ಬದುಕನ್ನು ಮರುನಿರ್ಮಿಸಿಕೊಂಡ ಬಳಿಕ ಅವರು ಸೂಫಿ ಸಂತ ಶಹೇನ್ ಶಾ ಬಾಬಾ ನೆಭ್ರಾಝ್ ಸಾಹಿಬ್ ಅವರ ಶಿಷ್ಯರಾದರು. ಧರ್ಮಗಳ ಗಡಿಗಳನ್ನು ಮೀರಿ ಏಕತೆ, ಪ್ರೀತಿ ಮತ್ತು ಸೇವೆಯನ್ನು ಒತ್ತಿಹೇಳಿದ ಅವರ ಬೋಧನೆಗಳಿಂದ ಪ್ರೇರಿತರಾಗಿ, ರತನ್ಚಂದ್ ‘ಸೂಫಿದಾರ್ ಟ್ರಸ್ಟ್’ ಅನ್ನು ಸ್ಥಾಪಿಸಿದರು. ಆರಂಭದಲ್ಲಿ ವಾಲ್ಟ್ಯಾಕ್ಸ್ ರಸ್ತೆಯಲ್ಲಿ 30–40 ಭಕ್ತರೊಂದಿಗೆ ಸಣ್ಣ ಆಧ್ಯಾತ್ಮಿಕ ಸಭಾಸ್ಥಳವಾಗಿ ಆರಂಭವಾದ ಈ ಕೇಂದ್ರ, ನಂತರ ಮೈಲಾಪುರದ ಡಾ. ರಾಧಾಕೃಷ್ಣನ್ ರಸ್ತೆಗೆ ಸ್ಥಳಾಂತರಗೊಂಡು ಎಲ್ಲ ಧರ್ಮಗಳ ಜನರನ್ನು ಸ್ವಾಗತಿಸುವ ವಿಶಿಷ್ಟ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದಿದೆ. ತಮ್ಮನ್ನು ಆಶ್ರಯಿಸಿದ ನಗರದ ಬಗ್ಗೆ ಕೃತಜ್ಞತೆಯಿಂದ ಮತ್ತು ಧಾರ್ಮಿಕ ವಿಭಜನೆಗಳನ್ನು ಮೀರುವ ತತ್ವಶಾಸ್ತ್ರದ ಮಾರ್ಗದರ್ಶನದಿಂದ ರತನ್ಚಂದ್ ರಮಝಾನ್ ಸಮಯದಲ್ಲಿ ಮುಸ್ಲಿಮರಿಗೆ ಸಸ್ಯಾಹಾರಿ ಇಫ್ತಾರ್ ಆಯೋಜಿಸುವ ಕಾರ್ಯಕ್ಕೆ ಮುಂದಾದರು. ವೈಯಕ್ತಿಕ ಕೃತಜ್ಞತೆಯ ಅಭಿವ್ಯಕ್ತಿಯಾಗಿ ಆರಂಭವಾದ ಈ ಕ್ರಮವು ಕ್ರಮೇಣ ವಾರ್ಷಿಕ ಸಂಪ್ರದಾಯವಾಗಿ ರೂಪಾಂತರಗೊಂಡು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆಯುತ್ತಿದೆ. ಪ್ರತಿ ರಮಝಾನ್ ನಲ್ಲಿ ಸಿಂಧಿ ಸಮುದಾಯದವರು, ಹಿಂದೂಗಳು, ಮುಸ್ಲಿಮರು ಸೇರಿದಂತೆ ವಿವಿಧ ಹಿನ್ನೆಲೆಯ 100ಕ್ಕೂ ಹೆಚ್ಚು ಸ್ವಯಂಸೇವಕರು ಒಟ್ಟಾಗಿ ಪ್ರತಿದಿನ ಸುಮಾರು 1,000ರಿಂದ 1,200 ಉಪವಾಸ ವೃತಾಚರಣೆ ಮಾಡುವವರಿಗೆ ಇಫ್ತಾರ್ ಸಿದ್ಧಪಡಿಸುತ್ತಾರೆ. ಬೆಳಿಗ್ಗೆ 7.30ರಿಂದಲೇ ದೇವಾಲಯದ ಅಡುಗೆಮನೆಯಲ್ಲಿ ಸಿದ್ಧತೆಗಳು ಆರಂಭವಾಗುತ್ತವೆ. ತರಕಾರಿ ಬಿರಿಯಾನಿ, ಫ್ರೈಡ್ ರೈಸ್, ಚನ್ನಾ ರೈಸ್, ಪಲಾವ್, ತರಕಾರಿ, ಉಪ್ಪಿನಕಾಯಿ, ಸಿಹಿತಿಂಡಿಗಳು, ಖರ್ಜೂರ, ತಾಜಾ ಹಣ್ಣುಗಳು ಹಾಗೂ ಕೇಸರಿ ಹಾಲು ಸೇರಿದಂತೆ ಬೇರ ಬೇರೆ ಮೆನುಗಳನ್ನು ತಯಾರಿಸಲಾಗುತ್ತದೆ. ಸಂಜೆ 5.30ರ ಸುಮಾರಿಗೆ ಸಿದ್ಧಪಡಿಸಿದ ಆಹಾರವನ್ನು ವಾಹನಗಳಲ್ಲಿ ಪ್ಯಾಕ್ ಮಾಡಿ ಟ್ರಿಪ್ಲಿಕೇನ್ ನಲ್ಲಿರುವ ವಲ್ಲಾಜಾ ದೊಡ್ಡ ಮಸೀದಿಗೆ ಸಾಗಿಸಲಾಗುತ್ತದೆ. 18ನೇ ಶತಮಾನದ ಅಂತ್ಯದಲ್ಲಿ ಆರ್ಕಾಟ್ ರಾಜಮನೆತನದಿಂದ ನಿರ್ಮಿಸಲ್ಪಟ್ಟ ಈ ಐತಿಹಾಸಿಕ ಮಸೀದಿಯಲ್ಲಿ ಸ್ವಯಂಸೇವಕರು ಸ್ವತಃ ಆಹಾರವನ್ನು ಬಡಿಸುತ್ತಾರೆ. ಕೆಲವರು ಗೌರವ ಸೂಚಕವಾಗಿ ತಲೆಗೆ ಟೋಪಿಗಳನ್ನು ಧರಿಸುವುದು ಪರಸ್ಪರ ನಂಬಿಕೆ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಉಪಕ್ರಮಕ್ಕೆ ಸ್ಥಳೀಯ ಮುಸ್ಲಿಂ ನಾಯಕತ್ವದಿಂದಲೂ ಬೆಂಬಲ ದೊರೆತಿದೆ. ಆರ್ಕಾಟ್ ರಾಜಕುಮಾರ ನವಾಬ್ ಮೊಹಮ್ಮದ್ ಅಬ್ದುಲ್ ಅಲಿ ಅವರು ಇದನ್ನು ಹಿಂದೂ–ಮುಸ್ಲಿಂ ಏಕತೆ ಮತ್ತು ಪರಸ್ಪರ ಗೌರವದ ಜೀವಂತ ಉದಾಹರಣೆ ಎಂದು ಪ್ರಶಂಸಿಸಿದ್ದಾರೆ. ದಾದಾ ರತನ್ಚಂದ್ ಅವರ ನಿಧನದ ಬಳಿಕವೂ ರಾಮ್ ದೇವ್ ಸೇರಿದಂತೆ ಸಮುದಾಯದ ನಾಯಕರು ಹಾಗೂ ಸಮರ್ಪಿತ ಸ್ವಯಂಸೇವಕರ ತಂಡವು ಸ್ಥಾಪಕರ ಸೇವಾ ಮನೋಭಾವವನ್ನು ಮುಂದುವರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಸಂಪ್ರದಾಯವು ಹೆಚ್ಚಿನ ಗಮನ ಸೆಳೆದಿದೆ. ಧ್ರುವೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದು ಸಾಮರಸ್ಯದ ರಹದಾರಿಯಾಗಿ ಗುರುತಿಸಲ್ಪಡುತ್ತಿದೆ. ಸಾರ್ವತ್ರಿಕ ಪ್ರೀತಿ, ಕೃತಜ್ಞತೆ ಮತ್ತು ಸೇವೆಯು ಸೂಫಿ ಆದರ್ಶಗಳಲ್ಲಿ ಬೇರೂರಿರುವ ಈ ರಮಝಾನ್ ಇಫ್ತಾರ್ ಉಪಕ್ರಮವು ಧಾರ್ಮಿಕ ವಿಭಜನೆಗಳನ್ನು ದೂರ ಮಾಡಬಲ್ಲವು ಎಂಬ ಸಂದೇಶವನ್ನು ಸಾರುತ್ತಿದೆ.

ವಾರ್ತಾ ಭಾರತಿ 26 Feb 2026 11:12 pm

ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ಸಂಪುಟ ಅಸ್ತು

ಮರ್ಯಾದೆಗೇಡು ಹತ್ಯೆಗೆ ಕಡಿವಾಣ, ರೋಹಿತ್ ವೇಮುಲಾ ವಿಧೇಯಕ ಕುರಿತು ಚರ್ಚೆ : ಎಚ್.ಕೆ.ಪಾಟೀಲ್

ವಾರ್ತಾ ಭಾರತಿ 26 Feb 2026 11:04 pm

ರಾಜ್ಯದಲ್ಲಿ 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ: 30 ದಿನದಲ್ಲಿ ಪ್ರಕ್ರಿಯೆ ಆರಂಭ - ಕರ್ನಾಟಕ ಸಚಿವ ಸಂಪುಟ ತೀರ್ಮಾನ

ಸರ್ಕಾರಿ ಉದ್ಯೋಗಕ್ಕೆ ಕಾದು ಕುಳಿತವರಿಗೆ ಕರ್ನಾಟಕ ಸರ್ಕಾರ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧಾರ ಮಾಡಲಾಗಿದೆ. ಮುಂದಿನ 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದರ ಜತೆಗೆ ಕಾವೇರಿ 6 ನೇ ಹಂತ, ಯುವ ನಮ್ಮವ ಮಸೂದೆ ಜಾರಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಒಟ್ಟಾರೆ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು ಇಲ್ಲಿದೆ.

ವಿಜಯ ಕರ್ನಾಟಕ 26 Feb 2026 10:58 pm

ಫೆಲೆಸ್ತೀನೀಯರಿಗೆ ಬೆಂಬಲ ಸೂಚಿಸುವ ಪ್ರತಿಜ್ಞೆ; ಇಂಗ್ಲೆಂಡ್ ನ ಸಾವಿರಕ್ಕೂ ಅಧಿಕ ಕೌನ್ಸಿಲರ್ಗಳು ಸಹಿ

ಲಂಡನ್, ಫೆ. 26: ಮೇ ತಿಂಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ, ಇಂಗ್ಲೆಂಡ್ ನಲ್ಲಿ 1,000ಕ್ಕೂ ಅಧಿಕ ಕೌನ್ಸಿಲರ್ಗಳು ಫೆಲೆಸ್ತೀನೀಯರಿಗೆ ಬೆಂಬಲ ಸೂಚಿಸುವ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ. ‘ಕೌನ್ಸಿಲರ್ ಪ್ಲೆಜ್ ಫಾರ್ ಫೆಲೆಸ್ತೀನ್’ ಎಂಬ ಅಭಿಯಾನವನ್ನು ಫೆಲೆಸ್ತೀನ್ ಸಾಲಿಡಾರಿಟಿ ಕ್ಯಾಂಪೇನ್ ಡಿಸೆಂಬರ್ ನಲ್ಲಿ ಆರಂಭಿಸಿದೆ. ಅದು ಫೆಲೆಸ್ತೀನೀಯರ ಹಕ್ಕುಗಳನ್ನು ಎತ್ತಿಹಿಡಿಯಲು, ಜನಾಂಗೀಯ ಹತ್ಯೆ ಮತ್ತು ವರ್ಣಭೇದದಲ್ಲಿ ತೊಡಗಿರುವ ಇಸ್ರೇಲ್ ಅನ್ನು ಎದುರಿಸಲು ಹಾಗೂ ತಮ್ಮ ಮುನಿಸಿಪಾಲಿಟಿಗಳು ಇದರಲ್ಲಿ ಶಾಮೀಲಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜಕಾರಣಿಗಳನ್ನು ಒತ್ತಾಯಿಸುತ್ತದೆ. ಈ ಪ್ರತಿಜ್ಞೆಗೆ 1,152 ಹಾಲಿ ಕೌನ್ಸಿಲರ್ಗಳು ಸಹಿ ಹಾಕಿದ್ದಾರೆ. ಈ ಪೈಕಿ 387 ಕೌನ್ಸಿಲರ್ಗಳು ಗ್ರೀನ್ ಪಾರ್ಟಿಯವರು, 375 ಆಡಳಿತಾರೂಢ ಲೇಬರ್ ಪಾರ್ಟಿಯವರು ಮತ್ತು 115 ಲಿಬರಲ್ ಡೆಮಾಕ್ರಟ್ ಗಳು ಎಂದು ಕ್ಯಾಂಪೇನ್ ತಿಳಿಸಿದೆ. ಕನ್ಸರ್ವೇಟಿವ್ ಪಕ್ಷದ ಐವರು ಕೌನ್ಸಿಲರ್ಗಳೂ ಪ್ರತಿಜ್ಞೆಗೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ. ಜೊತೆಗೆ, ಸ್ಕಾಟಿಶ್ ನ್ಯಾಶನಲ್ ಪಾರ್ಟಿ, ಪ್ಲೇಡ್ ಸೈಮ್ರು, ದ ಸ್ಕಾಟಿಶ್ ಗ್ರೀನ್ಸ್ ಹಾಗೂ ಸ್ಥಳೀಯ ಪಕ್ಷಗಳ ನೂರಾರು ಕೌನ್ಸಿಲರ್ಗಳು ಸಹಿ ಹಾಕಿದ್ದಾರೆ. ಕಡು ಬಲಪಂಥೀಯ ರಿಫಾರ್ಮ್ ಯುಕೆ ಪಕ್ಷದ ಯಾವುದೇ ಕೌನ್ಸಿಲರ್ ಸಹಿ ಹಾಕಿಲ್ಲ.

ವಾರ್ತಾ ಭಾರತಿ 26 Feb 2026 10:50 pm

Ind Vs Zim Highlights- ಬೃಹತ್ ಮೊತ್ತ ಪೇರಿಸಿ ಜಿಂಬಾಬ್ವೆಯ ಅದುಮಿದ ಭಾರತ; ವಿಂಡೀಸನ್ನೂ ಸೋಲಿಸಿದರಷ್ಟೇ ಸೆಮಿಫೈನಲ್ ಖಚಿತ

ಬ್ಯಾಟಿಂಗ್, ಬೌಲಿಂಗ್ ಗಳೆರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ ಜಿಂಬಾಬ್ವೆಯ ವಿರುದ್ಧ 72 ರನ್ ಗಳ ಅಧಿಕಾರಯುತ ಗೆಲುವು ಪಡೆಯುವ ಮೂಲಕ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಫೆಬ್ರವರಿ 1ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸೂಪರ್ 8 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಬಳಗ ಗೆಲುವು ಸಾಧಿಸಿದಲ್ಲಿ ಸೆಮಿಫೈನಲ್ ತಲುಪಲಿದೆ. ()ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ 8 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 4 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿತು. ಇದಕ್ಕುತ್ತರವಾಗಿ ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟರ್ ಬ್ರಯಾನ್ ಬೆನ್ನೆಟ್ ಅದ್ಭುತ ಆಟ ಆಡಿದರೂ ತಂಡವನ್ನು ದಡ ತಲುಪಿಸುವುದರಿಂದ ಬಹಳ ದೂರ ಉಳಿದರು. ಕೇವಲ 59 ಎಸೆತಗಳಿಂದ 8 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದ 97 ರನ್ ಬಾರಿಸಿದ ಅವರು ಕೊನೇವರೆಗೂ ನಾಟೌಟ್ ಆಗುಳಿದರು. ()ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಕೇವಲ 3.4 ಓವರ್ ಗಳಲ್ಲಿ 48 ರನ್ ಸೇರಿಸಿದರು. ಸಂಜು ಸ್ಯಾಮ್ಸನ್ ಔಟಾದ ಬಳಿಕ ಇಶಾನ್ ಕಿಶನ್(38) ಅವರ ಜೊತೆಗೂಡಿದ ಅಭಿಷೇಕ್ ಶರ್ಮಾ ಅರ್ಧಶತಕವನ್ನೂ ಪೂರೈಸಿಕೊಂಡರು. ಇವರಿಬ್ಬರ ಬ್ಯಾಟಿಂಗ್ ಅಬ್ಬರದಿಂದಾಗಿ ಭಾರತ 9.1 ಓವರ್ ನಲ್ಲಿ 100 ರನ್ ಗಡಿ ದಾಟಿತು. ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮ ಅವರು ಔಟಾದ ಬಳಿಕ ಸೂರ್ಯಕುಮಾರ್ ಯಾದವ್(13 ಎಸೆತದಲ್ಲಿ 33), ಹಾರ್ದಿಕ್ ಪಾಂಡ್ಯ(23 ಎಸೆತದಲ್ಲಿ 50), ತಿಲಕ್ ವರ್ಮಾ(16 ಎಸೆತದಲ್ಲಿ 44) ಅದೇ ವೇಗದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ದರಿಂದ ಭಾರತ ತಂಡ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡ ಗಳಿಸಿದ ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ಅದೇ ಭಾರತ ಗಳಿಸಿದ ಅತಿ ದೊಡ್ಡ ಮೊತ್ತವಾಗಿದೆ. ಪಂದ್ಯದಲ್ಲಿ ಚುರುಕಿನ ಅರ್ಧಶತಕ ಗಳಿಸಿದ ಹಾರ್ದಿಕ್ ಪಾಂಡ್ಯ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಸಂಕ್ಷಿಪ್ತ ಸ್ಕೋರ್ ಭಾರತ 20 ಓವರ್ ಗಳಲ್ಲಿ 256/4, ಅಭಿಷೇಕ್ ಶರ್ಮಾ 55(30), ಹಾರ್ದಿಕ್ ಪಾಂಡ್ಯ ಅಜೇಯ 50(23), ತಿಲಕ್ ವರ್ಮಾ 44(16), ಸಿಕಂದರ್ ರಝಾ 29ಕ್ಕೆ1. ಜಿಂಬಾಬ್ವೆ 20 ಓವರ್ ಗಳಲ್ಲಿ 184/6. ಬ್ರಯಾನ್ ಬೆನೆಟ್ ಅಜೇಯ 97(59), ಸಿಕಂದರ್ ರಝಾ 31(21), ತಾಡಿಮನಶೆ ಮರುಮನಿ 20(20), ಅರ್ಶದೀಪ್ ಸಿಂಗ್ 24ಕ್ಕೆ 3, ಅಕ್ಷರ್ ಪಟೇಲ್ 35ಕ್ಕೆ 1, ವರುಣ್ ಚಕ್ರವರ್ತಿ 35ಕ್ಕೆ 1, ಶಿವಂ ದುಬೆ 46ಕ್ಕೆ 1.

ವಿಜಯ ಕರ್ನಾಟಕ 26 Feb 2026 10:48 pm

2019 Easter attacks | ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥ ಸುರೇಶ್ ಸಲ್ಲೇ ಬಂಧನ

ಕೊಲಂಬೊ, ಫೆ. 26: 2019ರ ಈಸ್ಟರ್ ರವಿವಾರದ ಭೀಕರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಲಾಗಿದೆ. ದಾಳಿಗೆ ಪಿತೂರಿ ರೂಪಿಸಿದ್ದು ಹಾಗೂ ಸಹಕಾರ ನೀಡಿದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 2019ರ ಏಪ್ರಿಲ್ನಲ್ಲಿ ನಡೆದ ಈ ದಾಳಿಯಲ್ಲಿ 279 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 45 ವಿದೇಶಿ ಪ್ರಜೆಗಳೂ ಸೇರಿದ್ದರು. ದಾಳಿಯ ಪರಿಣಾಮವಾಗಿ ದೇಶದ ಪ್ರವಾಸೋದ್ಯಮ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿತ್ತು. ರಾಜಧಾನಿ ಕೊಲಂಬೊ ಉಪನಗರದಲ್ಲಿ ಸಲ್ಲೇ ಅವರನ್ನು ಮುಂಜಾನೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. “ಈಸ್ಟರ್ ರವಿವಾರದ ದಾಳಿಗೆ ಪಿತೂರಿ ಹಾಗೂ ಸಹಕಾರ ನೀಡಿದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ” ಎಂದು ತನಿಖಾ ಅಧಿಕಾರಿಯೊಬ್ಬರು AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಗೋಟಬಯ ರಾಜಪಕ್ಸೆ ಅಧ್ಯಕ್ಷರಾದ ನಂತರ 2019ರಲ್ಲಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥರಾಗಿ ಬಡ್ತಿ ಪಡೆದಿದ್ದ ಸಲ್ಲೇ, ಸಂಘಟಿತ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಆದರೆ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. ಈಸ್ಟರ್ ದಿನ ಬೆಳಿಗ್ಗೆ ಪ್ರಾರ್ಥನಾ ಸಭೆಗಳ ವೇಳೆ ಮೂರು ಚರ್ಚ್ಗಳಲ್ಲಿ ಹಾಗೂ ಉಪಾಹಾರದ ಸಮಯದಲ್ಲಿ ಮೂರು ಐಷಾರಾಮಿ ಹೋಟೆಲ್ ಗಳಲ್ಲಿ ಏಕಕಾಲದಲ್ಲಿ ಆರು ಆತ್ಮಹತ್ಯಾ ಬಾಂಬ್ ಸ್ಫೋಟಗಳು ನಡೆದಿದ್ದವು. ಈ ದಾಳಿಗಳು ದೇಶದ ಪ್ರಮುಖ ಪ್ರವಾಸೋದ್ಯಮ ವಲಯವನ್ನು ಸಂಕಷ್ಟಕ್ಕೆ ತಳ್ಳಿದ್ದವು. ಆರಂಭದಲ್ಲಿ ಆತ್ಮಹತ್ಯಾ ದಾಳಿಗಳಿಗೆ ಸ್ಥಳೀಯ ಸಶಸ್ತ್ರ ಗುಂಪನ್ನು ಅಧಿಕಾರಿಗಳು ಹೊಣೆಗಾರರನ್ನಾಗಿ ಘೋಷಿಸಿದ್ದರು. ಆದರೆ ನಂತರ ಸಲ್ಲೇ ಅವರ ಮೇಲೂ ದಾಳಿ ಮಾಡಿದ ಆರೋಪಗಳು ಕೇಳಿಬಂದವು. 2023ರಲ್ಲಿ ಬ್ರಿಟಿಷ್ ಚಾನೆಲ್ 4 ಪ್ರಕಟಿಸಿದ ವರದಿಯಲ್ಲಿ ಸಲ್ಲೇ ದಾಳಿಕೋರರೊಂದಿಗೆ ಸಂಪರ್ಕ ಹೊಂದಿದ್ದು, ದಾಳಿಗೆ ಮುನ್ನ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ರಾಜಪಕ್ಸೆ ಪರವಾಗಿ ಆ ವರ್ಷದ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ದಾಳಿಗೆ ಅವಕಾಶ ನೀಡಲಾಗಿದೆ ಎಂದು ವಿಶಲ್ ಬ್ಲೋವರ್ ಒಬ್ಬರು ತಿಳಿಸಿದ್ದಾರೆ ಎಂದು ವರದಿ ಹೇಳಿತ್ತು. ಬಾಂಬ್ ಸ್ಫೋಟಗಳ ಎರಡು ದಿನಗಳ ಬಳಿಕ ಗೋಟಬಯ ರಾಜಪಕ್ಸೆ ತಮ್ಮ ಅಧ್ಯಕ್ಷೀಯ ಉಮೇದುವಾರಿಕೆಯನ್ನು ಘೋಷಿಸಿದ್ದರು. ಹಿಂಸಾಚಾರವನ್ನು ಕಠಿಣವಾಗಿ ಹತ್ತಿಕ್ಕುವುದಾಗಿ ಭರವಸೆ ನೀಡಿದ ಅವರು, ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿದ್ದರು. ರಾಜಪಕ್ಸೆ ವಿಜಯದ ನಂತರ ಶ್ರೀಲಂಕಾದ ಪ್ರಮುಖ ಗುಪ್ತಚರ ಸಂಸ್ಥೆಯಾದ SIS ಮುಖ್ಯಸ್ಥರಾಗಿ ಸಲ್ಲೇ ಅವರನ್ನು ನೇಮಕ ಮಾಡಲಾಗಿತ್ತು. ಆದರೆ 2024ರಲ್ಲಿ ಅನುರ ಕುಮಾರ ದಿಸಾನಾಯಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸಲ್ಲೇ ಅವರನ್ನು ವಜಾಗೊಳಿಸಲಾಯಿತು. ದಾಳಿಯ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಿಸಾನಾಯಕ ಭರವಸೆ ನೀಡಿದ್ದರು. ಭಾರತೀಯ ಗುಪ್ತಚರ ಸಂಸ್ಥೆ ದಾಳಿ ಸನ್ನಿಹಿತವಾಗಿದೆ ಎಂಬ ಮುನ್ನೆಚ್ಚರಿಕೆ ನೀಡಿದ್ದರೂ, ಕ್ರಮ ಕೈಗೊಳ್ಳಲು ವಿಫಲವಾದ ಅಧಿಕಾರಿಗಳ ವಿರುದ್ಧ ಇತರ ತನಿಖೆಗಳು ಟೀಕೆ ವ್ಯಕ್ತಪಡಿಸಿವೆ. 2023ರಲ್ಲಿ ಶ್ರೀಲಂಕಾದ ಸುಪ್ರೀಂ ಕೋರ್ಟ್, ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಇತರ ನಾಲ್ವರು ಹಿರಿಯ ಅಧಿಕಾರಿಗಳು ಬಾಂಬ್ ಸ್ಫೋಟಗಳನ್ನು ತಪ್ಪಿಸಲು ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿತ್ತು. ಸಿವಿಲ್ ಮೊಕದ್ದಮೆ ದಾಖಲಿಸಿದ್ದ ಸಂತ್ರಸ್ತರ ಸಂಬಂಧಿಕರಿಗೆ ಸಿರಿಸೇನಾ ವೈಯಕ್ತಿಕವಾಗಿ 100 ಮಿಲಿಯನ್ ರೂಪಾಯಿಗಳನ್ನು (ಸುಮಾರು 273,300 ಡಾಲರ್) ಪರಿಹಾರವಾಗಿ ಪಾವತಿಸಲು ನ್ಯಾಯಾಲಯ ಆದೇಶಿಸಿತ್ತು. ಆಗಿನ ಪೊಲೀಸ್ ಮುಖ್ಯಸ್ಥ, ಇಬ್ಬರು ಹಿರಿಯ ಗುಪ್ತಚರ ಅಧಿಕಾರಿಗಳು ಹಾಗೂ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಜಂಟಿಯಾಗಿ ಇನ್ನೂ 210 ಮಿಲಿಯನ್ ರೂಪಾಯಿಗಳನ್ನು (ಸುಮಾರು 574,000 ಡಾಲರ್) ಪಾವತಿಸಲು ಸೂಚಿಸಲಾಗಿತ್ತು. ಇದೇವೇಳೆ, ಸಾರ್ವಜನಿಕರಿಂದ ತಡೆಹಿಡಿಯಲಾದ ಹಿಂದಿನ ತನಿಖೆಗಳ ಭಾಗಗಳನ್ನು ಬಹಿರಂಗಪಡಿಸುವಂತೆ ವಿಶ್ವಸಂಸ್ಥೆ ಶ್ರೀಲಂಕಾ ಸರ್ಕಾರವನ್ನು ಆಗ್ರಹಿಸಿದೆ.

ವಾರ್ತಾ ಭಾರತಿ 26 Feb 2026 10:47 pm

ಕುಲಶೇಖರ: ಬೈಬಲ್ ಅಧಿವೇಶನಕ್ಕೆ ಚಾಲನೆ

ಮಂಗಳೂರು, ಫೆ. 26: ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಹಾಗೂ ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಜಂಟಿ ಆಶ್ರಯದಲ್ಲಿ ಕುಲಶೇಖರದ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್‌ನ ವಠಾರದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ‘ಬೃಹತ್ ಬೈಬಲ್ ಅಧಿವೇಶನ’ಕ್ಕೆ ಗುರುವಾರ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು. ಪವಿತ್ರ ಬೈಬಲ್‌ನ ಭವ್ಯ ಮೆರವಣಿಗೆಯೊಂದಿಗೆ ಅಧಿವೇಶನವು ಆರಂಭವಾಯಿತು. ಬೈಬಲ್ ಮೆರವಣಿಗೆಯಲ್ಲಿ ಹೆಜ್ಜೆಹಾಕುವ ಮೂಲಕ ಮುಂದಿನ ಪೀಳಿಗೆಗೆ ನಂಬಿಕೆಯನ್ನು ಹಸ್ತಾಂತರಿಸುವ ಸುಂದರ ಸಂದೇಶವನ್ನು ಸಾರಿತು. ವಂ. ಮ್ಯಾಕ್ಸಿಂ ನೊರೋನ್ಹಾ ಅವರು ಧರ್ಮಗುರುಗಳು ಮತ್ತು ಕಾರಿಸ್ಮಾತಿಕ್ ಸಂಚಲನದ ಮುಂದಾಳು ಗಳೊಂದಿಗೆ ಅಧಿವೇಶನದ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಬಳಿಕ ಬಲಿಪೂಜೆಯನ್ನು ಅರ್ಪಿಸಲಾಯಿತು. ಬೋಂದೆಲ್ ಚರ್ಚ್‌ನ ಗಾಯನ ಮಂಡಳಿಯು ಸುಮಧುರ ಗಾಯನದ ಮೂಲಕ ಬಲಿಪೂಜೆಗೆ ಮೆರುಗು ನೀಡಿತು. ಅಧಿವೇಶನದ ಸ್ತುತಿ ಮತ್ತು ಆರಾಧನಾ ವಿಧಿಗಳನ್ನು ಬ್ರದರ್ ರೋನಿ ಡಿ ಸೋಜ ಮತ್ತು ಅವರ ತಂಡವು ಭಕ್ತಿಭಾವದಿಂದ ಮುನ್ನಡೆಸಿತು. ಹಳೆ ಒಡಂಬಡಿಕೆಯ ಹಿನ್ನೆಲೆ ಬಗ್ಗೆ ಮಡಂತ್ಯಾರು ಚರ್ಚ್‌ನ ಧರ್ಮಗುರು ವಂ. ಡಾ. ಸ್ಟ್ಯಾನಿ ಗೋವಿಯಸ್ ಮತ್ತು ಹೊಸ ಒಡಂಬಡಿಕೆಯ ಹಿನ್ನೆಲೆ ಬಗ್ಗೆ ಮುಲ್ಕಿಯ ಡಿವೈನ್ ಕಾಲ್ ಸೆಂಟರ್‌ನ ನಿರ್ದೇಶಕ ವಂ. ಅನಿಲ್ ಕಿರಣ್ ಫೆರ್ನಾಂಡಿಸ್ ಪ್ರವಚನ ನೀಡಿದರು. ಬಿಜೈ ಚರ್ಚ್‌ನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ..ಡಾ. ಜೆ.ಬಿ. ಸಲ್ಡಾನ್ಹಾ ಅವರು ದಿವ್ಯಸತ್ಪ್ರಸಾದದ ಆರಾಧನೆಯನ್ನು ಮುನ್ನಡೆಸಿದರು. ಉದ್ಘಾಟನಾ ಸಮಾರಂಭದಲ್ಲಿ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್‌ನ ಆಧ್ಯಾತ್ಮಿಕ ನಿರ್ದೇಶಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಬೈಬಲ್ ಆಯೋಗದ ಕಾರ್ಯದರ್ಶಿ ವಂ. ಡಾ. ವಿನ್ಸೆಂಟ್ ಸಿಕ್ವೇರಾ, ಮಂಗಳ ಜ್ಯೋತಿ ನಿರ್ದೇಶಕ ವಂ. ರೋಹಿತ್ ಡಿಕೋಸ್ಟಾ, ಸಿಬಿಇ ಕಾರ್ಯದರ್ಶಿ ವಂ. ಡಾ. ಲಿಯೋ ಲಸ್ರಾದೋ, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ವಂ. ಅನಿಲ್ ಇವಾನ್ ಫೆರ್ನಾಂಡಿಸ್ ಮತ್ತು ಸಿಒಡಿಪಿ ನಿರ್ದೇಶಕ ವಂ. ವಿನ್ಸೆಂಟ್ ಡಿ’ಸೋಜ , ಮುಂದಾಳುಗಳಾದ ಸಂಚಾಲಕ ಡೊಲ್ಫಿ ಲೋಬೊ, ಬ್ರ. ಜೊಕಿಮ್ ಪಿಂಟೊ, ಸಿಸ್ಟರ್ ಮರ್ಸಿ ಮಿನೇಜಸ್, ಬ್ರ.ರೊನಾಲ್ಡ್ ಡಿ ಸೋಜಾ ಮತ್ತು ಬ್ರ. ಎಲಿಯಾಸ್ ಕುವೆಲ್ಲೊ ಉಪಸ್ಥಿತರಿದ್ದರು. ವಂ. ರೋಹಿತ್ ಡಿ ಕೋಸ್ಟಾ ಕಾರ್ಯಕ್ರಮ ನಿರೂಪಿಸಿದರು. ಬೈಬಲ್ ಅಧಿವೇಶನವು ಅಧಿವೇಶನವು ಮಾರ್ಚ್ 1 ರವರೆಗೆ ಪ್ರತಿದಿನ ಸಂಜೆ 4 ರಿಂದ 8:30ರವರೆಗೆ ನಡೆಯಲಿದೆ. 

ವಾರ್ತಾ ಭಾರತಿ 26 Feb 2026 10:43 pm

ಶೇ.50ರಷ್ಟು ಮೀಸಲಾತಿ ಅಡಿಯಲ್ಲೇ 56 ಸಾವಿರ ಹುದ್ದೆಗಳ ನೇಮಕಾತಿಗೆ ಚಾಲನೆ : ಸಚಿವ ಸಂಪುಟ ಮಹತ್ವದ ತೀರ್ಮಾನ

ಬೆಂಗಳೂರು, ಫೆ.26 : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟವು ಶೇ.56ರ ಬದಲು, ಶೇ.50ರಷ್ಟು ಮೀಸಲಾತಿಯ ಆಧಾರದಲ್ಲೆ 56,432 ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲು ಹಸಿರು ನಿಶಾನೆ ತೋರಿಸಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು. ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ, ಒಳ ಮೀಸಲಾತಿ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಹೈಕೋರ್ಟ್‍ನಲ್ಲಿ ಹಲವು ಪ್ರಕರಣಗಳಲ್ಲಿ ಶೇ.56ಕ್ಕೆ ಹೆಚ್ಚಿಸಲ್ಪಟ್ಟಿದ್ದ 2022ರ ಮೀಸಲಾತಿ ಕಾಯ್ದೆಗೆ ತಡೆಯಾಜ್ಞೆ ಇದೆ. ಈ ಹಿನ್ನೆಲೆಯಲ್ಲಿ 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂದು ಅವರು ಹೇಳಿದರು. ನೇಮಕಾತಿ ಪ್ರಕ್ರಿಯೆಯನ್ನು ತುರ್ತಾಗಿ ಮುಂದುವರೆಸಬೇಕಿದೆ. ಆದುದರಿಂದ, ಹೈಕೋರ್ಟ್‍ನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ 2022ರ ಡಿ.28ರ ಪೂರ್ವದಲ್ಲಿ ಜಾರಿಯಲ್ಲಿದ್ದ ಮೀಸಲಾತಿ ಆದೇಶದಂತೆಯೆ ಶೇ.50ರಷ್ಟು ಮೀಸಲಾತಿ ಅಡಿಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು. ಅಲ್ಲದೇ, ಹೈಕೋರ್ಟ್ ಈ ಪ್ರಕರಣಗಳಲ್ಲಿ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟು, ಆಯಾ ಇಲಾಖೆಯ ಶೇ.6ರಷ್ಟು ಹುದ್ದೆಗಳು(ಎಸ್ಸಿ-ಶೇ.2, ಎಸ್ಟಿ-ಶೇ.4)ಕಾಯ್ದಿರಿಸಿ ಆದೇಶಿಸಲಾಗುವುದು. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದಿಂದ ಈ ಪ್ರಮಾಣ ಶೇ.56 ಆಗಿತ್ತು. ಆದರೆ, 2022ರ ಕಾಯ್ದೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಅಂತಿಮ ಆದೇಶಕ್ಕೆ ಒಳಪಟ್ಟು ಆಯಾ ಇಲಾಖೆಯ ಮುಂದಿನ ಅಧಿಸೂಚನೆಗಳಲ್ಲಿ ಶೇ.6ರಷ್ಟು ಹುದ್ದೆಗಳನ್ನು ಎಸ್ಸಿ, ಎಸ್ಟಿಗೆ ಕಾಯ್ದಿರಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 26 Feb 2026 10:37 pm

ರಣಜಿ ಟ್ರೋಫಿ: ಮಯಾಂಕ್‌ ಅಗರ್ವಾಲ್‌ ಶತಕ: ಕರ್ನಾಟಕದ ತಂಡಕ್ಕೆ ದೊಡ್ಡ ಸವಾಲು

Mayank Agarwal: ಹುಬ್ಬಳ್ಳಿಯಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2026ರ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ತೀವ್ರ ಒತ್ತಡದಲ್ಲಿದೆ. ಇನ್ನೂ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ ಹಿನ್ನೆಲೆ, ಕರ್ನಾಟಕದ ತಂಡಕ್ಕೆ ದೊಡ್ಡ ಸವಾಲು ಎದುರಾಗಿದೆ. ಮೂರನೇ ದಿನದ ಆಟದ ಅಂತ್ಯಕ್ಕೆ ಕರ್ನಾಟಕವು 69 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ

ಒನ್ ಇ೦ಡಿಯ 26 Feb 2026 10:36 pm

ಅಜಿತ್ ಪವಾರ್ ವಿಮಾನ ಅಪಘಾತ | ನ್ಯಾಯಾಲಯ ಮೇಲ್ವಿಚಾರಣೆಯ ತನಿಖೆ ಆಗ್ರಹಿಸಿ ಬಾಂಬೆ ಹೈಕೋರ್ಟ್ ಗೆ ಪಿಐಎಲ್

ಮುಂಬೈ, ಫೆ. 26: ಮಹಾರಾಷ್ಟ್ರದ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರರು ಸಾವನ್ನಪ್ಪಲು ಕಾರಣವಾದ ವಿಮಾನ ಅಪಘಾತದ ಕುರಿತಂತೆ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಕೋರಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಸಾಮಾಜಿಕ ಹೋರಾಟಗಾರ ಕೇತನ್ ತಿರೋಡ್ಕರ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ‘ಆಕಸ್ಮಿಕ ಸಾವು’ ಕುರಿತು ತನಿಖೆ ನಡೆಸಲು ಸಿಐಡಿಗೆ ನಿರ್ದೇಶನ ನೀಡುವಂತೆ ಅವರು ಅರ್ಜಿಯಲ್ಲಿ ಕೋರಿದ್ದಾರೆ. ಇದರೊಂದಿಗೆ ನಿವೃತ್ತ ಡಿಜಿಸಿಎ ನಿರ್ದೇಶಕರು ಹಾಗೂ ವಾಣಿಜ್ಯ ವಿಮಾನಯಾನ ಸಂಸ್ಥೆಯ ಮುಖ್ಯ ನಿರ್ವಹಣಾ ಎಂಜಿನಿಯರ್ ಸೇರಿದಂತೆ ವಿಮಾನಯಾನ ತಜ್ಞರನ್ನು ಒಳಗೊಂಡು, ಬಾಂಬೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಅವರು ಕೋರಿದ್ದಾರೆ. ವಿಮಾನ ಅಪಘಾತದ ಕುರಿತು ಸಿಐಡಿ ತನಿಖೆ ನಡೆಸುವಂತೆ ಕೋರಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರಿಗೆ ಫೆಬ್ರವರಿ 20ರಂದು ಪತ್ರ ಬರೆಯಲಾಗಿದೆ ಎಂದು ಕೂಡ ತಿರೋಡ್ಕರ್ ಪಿಐಎಲ್ನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 10:34 pm

T20 ವಿಶ್ವಕಪ್ ನಲ್ಲಿ ತನ್ನ ಗರಿಷ್ಠ ಮೊತ್ತ ಗಳಿಸಿದ ಭಾರತ ಕ್ರಿಕೆಟ್ ತಂಡ

ಚೆನ್ನೈ, ಫೆ. 26: ಭಾರತ ಕ್ರಿಕೆಟ್ ತಂಡವು ಝಿಂಬಾಬ್ವೆ ವಿರುದ್ಧ ಗುರುವಾರ ನಡೆದ ಸೂಪರ್-8 ಪಂದ್ಯದಲ್ಲಿ T20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಗರಿಷ್ಠ ಮೊತ್ತವನ್ನು ದಾಖಲಿಸಿದೆ. ಭಾರತ ತಂಡವು 4 ವಿಕೆಟ್ ಗಳ ನಷ್ಟಕ್ಕೆ 256 ರನ್ ಗಳಿಸಿದ್ದು, 2007ರಲ್ಲಿ ನಡೆದ ಮೊದಲ ಆವೃತ್ತಿಯ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ದಾಖಲಿಸಿದ್ದ ತನ್ನದೇ ಹಿಂದಿನ ಶ್ರೇಷ್ಠ ಸ್ಕೋರ್ (218/4) ಅನ್ನು ಉತ್ತಮಪಡಿಸಿಕೊಂಡಿದೆ. ಇದು T20 ವಿಶ್ವಕಪ್ ಇತಿಹಾಸದಲ್ಲಿ ದಾಖಲಾದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಕಳೆದ ವಾರ ಝಿಂಬಾಬ್ವೆ ವಿರುದ್ಧವೇ ವೆಸ್ಟ್ ಇಂಡೀಸ್ ತಂಡ ಗಳಿಸಿದ್ದ 254 ರನ್ಗಳ ದಾಖಲೆಯನ್ನು ಭಾರತ ಇಂದು ಹಿಂದಿಕ್ಕಿದೆ. 2007ರಲ್ಲಿ ಕೀನ್ಯಾ ವಿರುದ್ಧ T20 ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡವು 6 ವಿಕೆಟ್ ಗಳ ನಷ್ಟಕ್ಕೆ 260 ರನ್ ಗಳಿಸಿದ್ದು, ಇದು T20 ವಿಶ್ವಕಪ್ ಇತಿಹಾಸದ ಗರಿಷ್ಠ ಮೊತ್ತವಾಗಿದೆ. T20 ವಿಶ್ವಕಪ್ ನಲ್ಲಿ ಭಾರತದ ಗರಿಷ್ಠ ಮೊತ್ತಗಳು 1. 256/4: ಝಿಂಬಾಬ್ವೆ ವಿರುದ್ಧ, 2026 2. 218/4: ಇಂಗ್ಲೆಂಡ್ ವಿರುದ್ಧ, 2007 3. 210/2: ಅಫ್ಘಾನಿಸ್ತಾನ ವಿರುದ್ಧ, 2021 4. 209/9: ನಮೀಬಿಯಾ ವಿರುದ್ಧ, 2026 5. 205/5: ಆಸ್ಟ್ರೇಲಿಯಾ ವಿರುದ್ಧ, 2024

ವಾರ್ತಾ ಭಾರತಿ 26 Feb 2026 10:32 pm

ಜಾಗತಿಕ ನಿರ್ಲಕ್ಷ್ಯ ಪಶ್ಚಿಮ ದಂಡೆಯ ಅಕ್ರಮ ವಶಕ್ಕೆ ಉತ್ತೇಜನ ನೀಡುತ್ತದೆ: ಆ್ಯಮ್ನೆಸ್ಟಿ ಇಂಟರ್‌ ನ್ಯಾಶನಲ್

ಲಂಡನ್, ಫೆ. 26: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸುತ್ತಿರುವ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಗಳ ಬಗ್ಗೆ ಅದರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳಲು ಅಂತರರಾಷ್ಟ್ರೀಯ ಸಮುದಾಯ ವಿಫಲವಾಗಿರುವುದಕ್ಕೆ ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ ನ್ಯಾಶನಲ್ ಕಳವಳ ವ್ಯಕ್ತಪಡಿಸಿದೆ. ಇದು ಫೆಲೆಸ್ತೀನ್ ಭೂಭಾಗವನ್ನು ವಶಪಡಿಸಿಕೊಳ್ಳುವ ಇಸ್ರೇಲ್ ನ ನಿರ್ಧಾರವನ್ನು ‘‘ಬದಲಾಯಿಸಲು ಸಾಧ್ಯವಾಗದ’’ ವಾಸ್ತವವನ್ನಾಗಿಸಿದೆ ಎಂದು ಅದು ಹೇಳಿದೆ. ಜಾಗತಿಕ ಶಕ್ತಿಗಳು ಇಸ್ರೇಲ್‌ ಗೆ ನೀಡಿರುವ ವಿನಾಯಿತಿಯಿಂದ ಕಡುಬಲಪಂಥೀಯ ಬೆಂಜಮಿನ್ ನೆತನ್ಯಾಹು ಸರಕಾರ ಮತ್ತಷ್ಟು ಉತ್ತೇಜನಗೊಂಡಿದ್ದು, ಇದು ಪಶ್ಚಿಮ ದಂಡೆಯಾದ್ಯಂತ ಫೆಲೆಸ್ತೀನೀಯರನ್ನು ಹೊರದಬ್ಬುವ ಪ್ರಯತ್ನಗಳಿಗೆ ಬಲ ತುಂಬಿದೆ ಎಂದು ಗುರುವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಆ್ಯಮ್ನೆಸ್ಟಿ ಇಂಟರ್‌ ನ್ಯಾಶನಲ್ ತಿಳಿಸಿದೆ. ‘‘ಅಮೆರಿಕ ಸರಕಾರದ ನಿಶ್ಶರ್ತ ಬೆಂಬಲ ಹಾಗೂ ಗಾಝಾದಲ್ಲಿ ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯೆ, ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿ ದಶಕಗಳ ಕಾಲ ನಡೆದ ಕಾನೂನುಬಾಹಿರ ಆಕ್ರಮಣದ ಅವಧಿಯ ಅಪರಾಧಗಳು ಮತ್ತು ಅದರ ವರ್ಣಭೇದ ವ್ಯವಸ್ಥೆಗೆ ಅಂತರರಾಷ್ಟ್ರೀಯ ಉತ್ತರದಾಯಿತ್ವದ ಕೊರತೆಯು ತನ್ನ ಅಕ್ರಮ ಚಟುವಟಿಕೆಗಳನ್ನು ಹೆಚ್ಚಿಸಲು ಇಸ್ರೇಲ್‌ ಗೆ ಉತ್ತೇಜನ ನೀಡಿವೆ’’ ಎಂದು ಆ್ಯಮ್ನೆಸ್ಟಿ ಇಂಟರ್‌ ನ್ಯಾಶನಲ್ ನ ಹಿರಿಯ ಸಂಶೋಧನಾ, ನೀತಿ ಮತ್ತು ಅಭಿಯಾನ ನಿರ್ದೇಶಕಿ ಗೆವಾರಾ ರೊಸಾಸ್ ಹೇಳಿದ್ದಾರೆ.

ವಾರ್ತಾ ಭಾರತಿ 26 Feb 2026 10:30 pm

ಅಜಿತ್ ಪವಾರ್ ವಿಮಾನ ಅಪಘಾತ | ವಿಎಸ್ಆರ್ ವೆಂಚರ್ಸ್ ವಿರುದ್ಧ ದೂರು ದಾಖಲಿಸಿದ ರೋಹಿತ್ ಪವಾರ್

ಪುಣೆ, ಫೆ. 26: ತಮ್ಮ ಚಿಕ್ಕಪ್ಪ ಹಾಗೂ ಮಹಾರಾಷ್ಟ್ರದ ಆಗಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಜನವರಿ 28ರಂದು ಸಂಭವಿಸಿದ ವಿಮಾನ ಅಪಘಾತದ ಕುರಿತಂತೆ ವಿಎಸ್ಆರ್ ವೆಂಚರ್ಸ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಹಾಗೂ ಅವರ ಸೋದರ ಸಂಬಂಧಿ ಯುಗೇಂದ್ರ ಪವಾರ್ ಅವರು ಗುರುವಾರ ಬಾರಾಮತಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ವಿಎಸ್ಆರ್ ವೆಂಚರ್ಸ್ ಹಾಗೂ ಅದರ ನಿರ್ದೇಶಕರ ವಿರುದ್ಧ ಮುಂಬೈನ ಮರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ದಾಖಲಿಸಿದ ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಅಜಿತ್ ಪವಾರ್ ಹಾಗೂ ಇತರ ನಾಲ್ವರು ಇದ್ದ ಲಿಯರ್ಜೆಟ್-45 ವಿಮಾನವು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿತ್ತು. ಈ ವಿಮಾನವನ್ನು ವಿಎಸ್ಆರ್ ವೆಂಚರ್ಸ್ ನಿರ್ವಹಿಸುತ್ತಿತ್ತು. ಅಜಿತ್ ಪವಾರ್ ಅವರಿಗೆ ನ್ಯಾಯ ನೀಡುವಂತೆ ಆಗ್ರಹಿಸಿದ ಫಲಕಗಳನ್ನು ಹಿಡಿದುಕೊಂಡ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಗುರುವಾರ ಬೆಳಿಗ್ಗೆ ಆಗಮಿಸಿದ ರೋಹಿತ್ ಪವಾರ್ ಹಾಗೂ ಯುಗೇಂದ್ರ ಪವಾರ್ ಬಾರಾಮತಿ ತಾಲೂಕು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದರು. ‘‘ವಿಎಸ್ಆರ್ ವೆಂಚರ್ಸ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಾವು ಆಗ್ರಹಿಸುತ್ತೇವೆ. ಈ ಪ್ರಕರಣದಲ್ಲಿ ರೋಹಿತ್ ದಾದಾ ಅವರಿಗೆ ಬೆಂಬಲ ನೀಡಲು ನಾವು ಇಲ್ಲಿಗೆ ಆಗಮಿಸಿದ್ದೇವೆ. ಅಜಿತ್ ದಾದಾಗೆ ನ್ಯಾಯ ಸಿಗಬೇಕು. ವಿಮಾನ ಅಪಘಾತದ ತನಿಖೆಯನ್ನು ತ್ವರಿತಗೊಳಿಸಬೇಕು ಎಂಬುದು ನಮ್ಮ ಬೇಡಿಕೆ’’ ಎಂದು ಯುಗೇಂದ್ರ ಪವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 10:23 pm

ರಾಜಿ ಪ್ರಕ್ರಿಯೆ ಕುರಿತು ಎಚ್‌ಡಿಕೆ ಮೊದಲು ಲಿಖಿತ ವಿವರಣೆ ನೀಡಲಿ; ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪರ ವಕೀಲರ ವಾದ

ಬೆಂಗಳೂರು : ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್‌ ಮತ್ತವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಚಂದ್ರಶೇಖರ್ ಹಾಗೂ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ, ರಾಜಿ ಸಂಧಾನ ಪ್ರಕ್ರಿಯೆಗೆ ಮೊದಲು ಕುಮಾರಸ್ವಾಮಿ ಅವರೇ ನ್ಯಾಯಾಲಯಕ್ಕೆ ಲಿಖಿತ ವಿವರಣೆ ನೀಡಲಿ ಎಂದು ಚಂದ್ರಶೇಖರ್ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಚಂದ್ರಶೇಖರ್ ಪರ ವಕೀಲ ಎಂ.ಎಚ್‌. ಹಿದಾಯತ್‌ ಉಲ್ಲಾ ವಾದ ಮಂಡಿಸಿ, ಕುಮಾರಸ್ವಾಮಿ ಅವರು ಮೊದಲು ಲಿಖಿತ ವಿವರಣೆ ನೀಡಲಿ, ನಂತರ ನಮ್ಮ ಕಕ್ಷಿದಾರರು ಅದನ್ನು ಪರಿಶೀಲಿಸಿ ಮುಂದಡಿ ಇಡಲಿದ್ದಾರೆ ಎಂದರು. ಕುಮಾರಸ್ವಾಮಿ ಪರ ಹಾಜರಿದ್ದ ಹಿರಿಯ ವಕೀಲ ಹಷ್ಮತ್‌ ಪಾಷ, ರಾಜಿ ಪ್ರಕ್ರಿಯೆಗೆ ನಾವು ಸಿದ್ಧರಿದ್ದು, ಮುಂದಿನದನ್ನು ಕೋರ್ಟ್‌ ನಿರ್ಧಾರಕ್ಕೆ ಬಿಡಲು ಸಿದ್ಧರಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಬ್ಬರೂ ಕೂತು ಪರಸ್ಪರ ಚರ್ಚಿಸಿ ನಂತರ ಒಂದು ತೀರ್ಮಾನಕ್ಕೆ ಬನ್ನಿ. ನಂತರ ಕೋರ್ಟ್‌ ತನ್ನ ವಿವೇಚನಾಯುಕ್ತ ನಿರ್ಧಾರ ಪ್ರಕಟಿಸಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಿತು. ಪ್ರಕರಣವೇನು? ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ ಮುಖ್ಯಸ್ಥರಾದ ಎಂ. ಚಂದ್ರಶೇಖರ್‌ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದೆ) ಆರೋಪದಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣವನ್ನು ನಗರದ 42ನೇ ಎಸಿಎಂಎಂ ನ್ಯಾಯಾಲು ವಿಚಾರಣೆ ನಡೆಸುತ್ತಿದೆ. ಇದರಿಂದ, ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 26 Feb 2026 10:20 pm

ಪಣಂಬೂರು| ಲಾರಿ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

ಪಣಂಬೂರು: ಲಾರಿ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸಂಜೆ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಮುಂಭಾಗ ನಡೆದಿದೆ. ಮೃತ ಬೈಕ್ ಸವಾರನನ್ನು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕು ನಿವಾಸಿ ಸದ್ಯ ಮಂಗಳೂರು ಬಿಜೈಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಶಿವದಾಸ್ ಗಣಪತಿ ನಾಯ್ಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಿವದಾಸ್ ಗಣಪತಿ ನಾಯ್ಕ ಅವರು ಬೈಕಂಪಾಡಿಯ ಔಷಧಿ ತಯಾರಕ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಕೆಲಸ ಮುಗಿಸಿಕೊಂಡು ಬಿಜೈಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಲಾರಿಯೊಂದು ಹಿಂದಿನಿಂದ ಬಂದು ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಢಿಕ್ಕಿಯ ರಭಸಕ್ಕೆ ಅವರು ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಎಂ. ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ವಾರ್ತಾ ಭಾರತಿ 26 Feb 2026 10:16 pm

ಬೆಳಗಾವಿಯ ವ್ಯಕ್ತಿ ಮೂಡುಬಿದಿರೆಯಲ್ಲಿ ನಾಪತ್ತೆ

ಮೂಡುಬಿದಿರೆ: ಬೆಳಗಾವಿಯ ವ್ಯಕ್ತಿಯೊಬ್ಬರು ಮೂಡುಬಿದಿರೆಯಲ್ಲಿ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಗಾವಿಯ ರಾಯಬಾಗ್ ತಾಲ್ಲೂಕಿನ ಮುಗುಳಕೋಡ್ ಗ್ರಾಮದ ಸಿದ್ದಪ್ಪ ಮಾನಶೇಟ್ಟಿ(45)ಕಾಣೆಯಾದ ವ್ಯಕ್ತಿ. ಇವರು ಫೆ.21ರಂದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಪರೀಕ್ಷೆ ಬರೆಯಲು ತನ್ನಿಬ್ಬರು ಮಕ್ಕಳನನ್ನು ಊರಿನಿಂದ ಮೂಡುಬಿದಿರೆಗೆ ಕರೆದುಕೊಂಡು ಬಂದಿದ್ದರು. ತನಗೆ ಸ್ವಲ್ಪ ಕೆಲಸ ಇದೆ ಎಂದು ಮೂಡುಬಿದಿರೆಯುಲ್ಲಿ ಉಳಿದಿದ್ದ ಸಿದ್ಧಪ್ಪ ಪರೀಕ್ಷೆ ಬರೆದ ಮಕ್ಕಳನ್ನು ಊರಿಗೆ ಬಸ್ಸ್ ಹತ್ತಿಸಿ ಊರಿಗೆ ಕಳಿಸಿದ್ದ. ಕೆಲವು ದಿನಗಳಾದರೂ ಸಿದ್ದಪ್ಪ ಊರಿಗೆ ಹಿಂತಿರುಗಲಿಲ್ಲ ಎನ್ನಲಾಗಿದೆ. ಅವರ ಮೊಬೈಲ್ ಸ್ವಿಚ್ಚ್ಡ್ ಆಫ್ ಆಗಿದೆ. ಈತನಿಗಾಗಿ ಮನೆಯವರು ಹುಡುಕಾಡಿ ಸಿಗದೇ ಇದ್ದಾಗ ಅವರ ಸಂಬಂಧಿ ಮಲ್ಲಪ್ಪ ಮೂಡುಬದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ದಪ್ಪ ಮೈಕಟ್ಟು, ಕಪ್ಪುಬಣ್ಣವನ್ನು ಹೊಂದಿದ್ದು ನೀಲಿ ಬಣ್ಣದ ಅರ್ಧ ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ಇದ್ದರೆ ಮೂಡುಬಿದಿರೆ ಪೊಲೀಸರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ವಾರ್ತಾ ಭಾರತಿ 26 Feb 2026 10:08 pm

ಲಿಂಗಸುಗೂರು: ಹಣ ತೆಗೆದುಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ವಂಚನೆ

ಲಿಂಗಸುಗೂರು: ಎಟಿಎಂನಿಂದ ಹಣ ತೆಗೆದುಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ 54,000 ರೂಪಾಯಿಗಳನ್ನು ವಂಚಿಸಿದ ಘಟನೆ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಭೀಮಪ್ಪ ಎಂಬವರು ಹಣ ತೆಗೆದುಕೊಳ್ಳಲು ಎಟಿಎಂಗೆ ಹೋಗಿದ್ದಾರೆ. ಆದರೆ ಎಟಿಎಂನಲ್ಲಿ ಅಷ್ಟು ತಿಳಿವಳಿಕೆ ಇಲ್ಲದನ್ನು ಗಮನಿಸಿದ ವಂಚಕರು ಹಣ ತೆಗೆದು ಕೊಡುವ ನೆಪದಲ್ಲಿ ಕಾರ್ಡ್ ಬದಲಾಯಿಸಿದ್ದಾರೆ. ನಂತರ ಲಿಂಗಸುಗೂರಿಗೆ ಬಂದ ಕಳ್ಳರು ಲಿಂಗಸುಗೂರಿನ ವಿವಿಧ ಕಡೆ ಎಟಿಎಂ ಬಳಸಿ 54,000 ರೂ. ಹಣ ದೋಚಿದ್ದಾರೆ. ಈ ಕುರಿತು ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 26 Feb 2026 10:04 pm

ಮಂಗಳೂರು| ಹಿರಿಯ ವ್ಯಕ್ತಿಗೆ 1.77 ಕೋಟಿ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಮಂಗಳೂರು, ಫೆ.26: ಅಮೆರಿಕನ್ ಕಮೊಡಿಟೀಸ್‌ನಲ್ಲಿ ಆನ್‌ಲೈನ್ ಮೂಲಕ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಹಿರಿಯ ವ್ಯಕ್ತಿಗೆ 1.77 ಕೋಟಿ ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2025ರ ಡಿ.24ರಂದು ಯುನೈಟೆಡ್ ಕಿಂಗ್ಡಮ್ ಕೋಡ್ ಹೊಂದಿರುವ ಅಪರಿಚಿತ ನಂಬರ್‌ನಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಶೊಯಿಬ್ ಘೋರಿ ವೆಂಟ್ರೇಡ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆನ್‌ಲೈನ್ ಅಮೆರಿಕನ್ ಕಮೊಡಿಟೀಸ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುವುದಾಗಿ ನಂಬಿಸಿದ್ದ. ನೀವು ಭಾರತೀಯ ರೂಪಾಯಿಯಲ್ಲಿ ನಮಗೆ ಹಣ ವರ್ಗಾಯಿಸಿದರೆ ನಾವು ಅದನ್ನು ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿ ಹೂಡಿಕೆ ಮಾಡುವುದಾಗಿ ತಿಳಿಸಿದ್ದ. ನಂತರ ಇಮೇಲ್, ವಾಟ್ಸ್‌ಆ್ಯಪ್ ಮತ್ತು ಫೋನ್ ಕರೆ ಮಾಡಿ ಮಾತನಾಡುತ್ತಿದ್ದ. ಆತನ ಮಾತನ್ನು ನಂಬಿ ಮೊದಲಿಗೆ ಸ್ವಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದೆ. ಅದಕ್ಕೆ ಲಾಭಾಂಶವಾಗಿ ಖಾತೆಗೆ ಸ್ವಲ್ಪ ಹಣ ಜಮೆ ಆಗಿತ್ತು. ಇದರಿಂದ ನಂಬಿಕೆ ಬಂದು ಇನ್ನೂ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಜ.5ರಿಂದ ಫೆ.2ರವರೆಗೆ ಅಪರಿಚಿತ ವ್ಯಕ್ತಿ ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್, ನೆಫ್ಟ್ ಹಾಗೂ ಐಎಂಪಿಎಸ್ ಮೂಲಕ 1,77,64,668.22 ರೂ.ವನ್ನು ಹೂಡಿಕೆ ಮಾಡಿದ್ದೆ. ಬಳಿಕ ಹೂಡಿಕೆ ಮಾಡಿದ ಹಣ, ಲಾಭಾಂಶ ಯಾವುದನ್ನೂ ನೀಡದೆ ವಂಚಿಸಿದ್ದಾನೆ ಎಂದು 74ರ ಹರೆಯದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 26 Feb 2026 10:04 pm

ಸಿನಿಮಾ ನಿರ್ದೇಶಕನ ಅನೀಶ್‌ ಕಿಡ್ನಾಪ್ ಮಾಡಿ ಸುಲಿಗೆ! ಭೀಮಾ ಚಿತ್ರದ ನಟಿ ಸೇರಿ 11 ಮಂದಿ ಬಂಧನ

ಸಿನಿಮಾ ಶೈಲಿಯಲ್ಲಿಯೇ ಸಿನಿಮಾ ನಿರ್ದೇಶಕನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿರ್ದೇಶಕ ಟಿ.ಎ. ಅನೀಶ್‌ ಕಿಡ್ನಾಪ್‌ ಆದ ವ್ಯಕ್ತಿ. ಈ ಪ್ರಕರಣದಲ್ಲಿ ಭೀಮಾ ಸಿನಿಮಾದ ನಟಿ ಒಳಗೊಂಡಂತೆ 11 ಜನರನ್ನು ಬಂಧನ ಮಾಡಲಾಗಿದೆ. ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯ ಕರ್ನಾಟಕ 26 Feb 2026 10:01 pm

ಸ್ನೇಹಿತನ ಬ್ಯಾಂಕ್ ಖಾತೆ ಪಡೆದು ಸೈಬರ್ ವಂಚನೆಗೆ ದುರ್ಬಳಕೆ ಆರೋಪ: ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು,ಫೆ.26: ಸ್ನೇಹಿತನ ಬ್ಯಾಂಕ್ ಖಾತೆಯನ್ನು ಪಡೆದು ಸೈಬರ್ ವಂಚನೆ ಪ್ರಕರಣಕ್ಕೆ ಬಳಸಿ ಬಳಿಕ ಮೋಸ ಮಾಡಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರಲ್ಲಿ ತನ್ನ ವ್ಯವಹಾರಕ್ಕೆಂದು ಖಾಸಗಿ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ (ಕರೆಂಟ್ ಅಕೌಂಟ್) ತೆರೆದಿದ್ದೆ. ಎರಡು ವರ್ಷದ ಹಿಂದೆ ತನಗೆ ಪರಿಚಿತನಾಗಿದ್ದ ಇಬ್ರಾಹಿಂ ಎಂಬಾತ ಬಳಿಕ ಸ್ನೇಹಿತನೂ ಆದ. 2025ರ ಡಿಸೆಂಬರ್‌ನಲ್ಲಿ ಚಾಲ್ತಿ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ಬೇಕು ಎಂದು ಇಬ್ರಾಹೀಂ ಕೇಳಿಕೊಂಡಿದ್ದ. ಅದರಂತೆ ತಾನು ಬ್ಯಾಂಕ್ ಖಾತೆಯ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್‌ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ಸಿಮ್ ಕಾರ್ಡನ್ನು ಆತನಿಗೆ ನೀಡಿದ್ದೆ. ಕೆಲವು ದಿನಗಳ ಬಳಿಕ ಅನುಮಾನ ಬಂದು ಇಬ್ರಾಹಿಂ ಬಳಿ ವಿಚಾರಿಸಿ ಪಾಸ್‌ಬುಕ್ ಮತ್ತಿತರ ವಸ್ತುಗಳನ್ನು ವಾಪಸ್ ಪಡೆದುಕೊಂಡಿದ್ದೆ. ಹಾಗೇ ಬ್ಯಾಂಕ್‌ಗೆ ತೆರಳಿ ಮ್ಯಾನೇಜರ್ ಬಳಿ ವಿಚಾರಿಸಿದಾಗ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಖಾತೆಯ ಮೇಲೆ 5 ಸೈಬರ್ ಕ್ರೈಂ ದೂರುಗಳು ದಾಖಲಾಗಿದ್ದು, ಅದರಂತೆ ಖಾತೆ ಫ್ರೀಜ್ ಆಗಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಇಬ್ರಾಹಿಂ ಬಳಿ ವಿಚಾರಿಸಿದಾಗ ಆತ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ ಎಂದು ಮೋಸ ಹೋದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. *ಇದಾದ ಬಳಿಕ ವಿದೇಶಿ ನಂಬರ್ ಮತ್ತು ವಾಟ್ಸ್‌ಆ್ಯಪ್ ನಂಬರ್‌ಗಳಿಂದ ತನಗೆ ಕರೆ ಬರಲು ಆರಂಭವಾಗಿದ್ದು, ನೀನು ನಮ್ಮವರಿಗೆ ಪದೇ ಪದೇ ಫೋನ್ ಮಾಡಿರುವುದರಿಂದ ನೀನೇ ನಮಗೆ 1 ಲಕ್ಷ ರೂ. ನೀಡಬೇಕು. ಬಳಿಕ ಫೋನ್ ಮಾಡಿ 2 ಲಕ್ಷ ರೂ. ನೀಡಬೇಕು. ಇಲ್ಲವಾದಲ್ಲಿ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಖಾತೆಯನ್ನು ನೀಡಿರುವ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದಲ್ಲಿ ನಿನ್ನ ಮೇಲೆ ದೂರು ದಾಖಲಿಸಿ ನೀನೇ ನಮಗೆ ಹಣ ನೀಡುವಂತೆ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಮೋಸ ಹೋದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 10:01 pm

ಕ್ರೈಸ್ತ ಧರ್ಮ ಅವಹೇಳನ: ಕ್ಷಮೆಯಾಚಿಸಿದ ಮೇಘಾಲಯ ಬಿಜೆಪಿ ಮುಖಂಡ

ಇಂಫಾಲ, ಫೆ. 25: ಮೇಘಾಲಯದಲ್ಲಿ ನಡೆದ ಬುಡಕಟ್ಟು ಜನರ ಸಭೆಯೊಂದರಲ್ಲಿ ಕ್ರೈಸ್ತರು ಹಾಗೂ ಯೇಸುಕ್ರಿಸ್ತರ ಅವಹೇಳನ ಮಾಡಿದ್ದಕ್ಕಾಗಿ ವಿವಿಧೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಸುನೀಲ್ ದೇವಧರ್ ಅವರು ಕ್ಷಮೆಯಾಚಿಸಿದ್ದಾರೆ. ದೇವಧರ್ ಅವರ ವಿಭಜನವಾದಿ ಹೇಳಿಕೆಗಳನ್ನು ತಾನು ಖಂಡಿಸುವುದಾಗಿ ಆಡಳಿತಾರೂಢ ನ್ಯಾಶನಲ್ ಪೀಪಲ್ಸ್ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದ್ದರೆ, ಅದೇ ಪಕ್ಷದ ಯುವ ಘಟಕವು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ದೇವಧರ್ ಅವರು ಕ್ರೈಸ್ತ ಸಮುದಾಯವನ್ನು ಗುರಿ ಮಾಡುತ್ತಿದ್ದಾರೆಂದು ಆಪಾದಿಸಿದೆ. ಕಳೆದ ವಾರ ದೇವಧರ್ ಅವರು ಬುಡಕಟ್ಟು ಜನರ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮಾಡಿದ ವಿವಾದಿತ ಭಾಷಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕ್ರೈಸ್ತರು ಬಹುಸಂಖ್ಯಾತರಾಗಿರುವ ಮೇಘಾಲಯದಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಅವರ ಭಾಷಣವನ್ನು ತೀವ್ರವಾಗಿ ಖಂಡಿಸಿದ್ದವು. ಮೂಲತಃ ಮಹಾರಾಷ್ಟ್ರದವರಾದ ದೇವಧರ್ ಅವರು ಸ್ಥಳೀಯ ಖಾಸಿ ಭಾಷೆಯಲ್ಲಿ ಮಾಡಿದ ಭಾಷಣದಲ್ಲಿ ಚರ್ಚ್ ಗಳು ಹಾಗೂ ಯೇಸುಕ್ರಿಸ್ತರ ಅವಹೇಳನ ಮಾಡಿದ್ದರೆನ್ನಲಾಗಿದೆ. ದೇವಧರ್ ರಿಗೆ ಕ್ರೈಸ್ತರ ವಿರುದ್ಧ ತೀವ್ರ ಪೂರ್ವಾಗ್ರಹವಿರುವುದನ್ನು ಅವರ ಭಾಷಣವು ತೋರಿಸಿಕೊಟ್ಟಿದೆ ಮತ್ತು ಅವರು ಯೇಸುಕ್ರಿಸ್ತರನ್ನು ಹೊರಗಿನ ವ್ಯಕ್ತಿ ಎಂದು ಬಣ್ಣಿಸಿದ್ದಾರೆ ಎಂಬುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಬ್ಲ್ಯು. ಪೋಹಸನಾ ಅವರು ದೇವಧರ್ ಅವರಿಗೆ ಬರೆದ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್ಪಿಪಿ ಪಕ್ಷವು ದೇವಧರ್ರ ವಿವಾದಾತ್ಮಕ ಹೇಳಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಬಿಜೆಪಿ ಮುಖಂಡನ ಹೇಳಿಕೆಗಳು ವಾಸ್ತವಿಕವಾಗಿ ತಪ್ಪಾಗಿವೆ ಹಾಗೂ ಕೋಮುಭಾವನೆಗಳನ್ನು ಕೆರಳಿಸುವಂತಿವೆ ಎಂದು ಅವರು ಹೇಳಿದ್ದಾರೆ. ದೇವಧರ್ ಅವರ ಭಾಷಣದಿಂದ ರಾಜ್ಯ ಬಿಜೆಪಿ ನಾಯಕತ್ವವು ಅಂತರ ಕಾಯ್ದುಕೊಂಡಿದ್ದು, ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಅವರನ್ನು ಆಗ್ರಹಿಸಿದೆ. ಪಕ್ಷವು ಎಲ್ಲಾ ಧರ್ಮಗಳು ಹಾಗೂ ಸಮುದಾಯಗಳನ್ನು ಗೌರವಿಸುವುದಾಗಿ ಹೇಳಿದೆ. ತರುವಾಯ ದೇವಧರ್ ಅವರು ಈ ಬಗ್ಗೆ ಕ್ಷಮೆಯಾಚಿಸಿದ್ದು, ಯೇಸುಕ್ರಿಸ್ತನ ಬಗ್ಗೆ ತನಗೆ ಅಪಾರ ಗೌರವವಿದೆ ಎಂದಿದ್ದಾರೆ ಹಾಗೂ ತನ್ನ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿವೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 10:00 pm

ಹೊಸಪೇಟೆ | ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ವಿಜಯನಗರ (ಹೊಸಪೇಟೆ): ನಗರದ ಗವಿಸಿದ್ದೇಶ್ವರ ನಗರ, 24ನೇ ವಾರ್ಡ್ ನಿವಾಸಿ ದಾದಾ ಖಲಂದರ್ ವಸೀಂ ತಂದೆ ಲೇಟ್ ಸೈಯದ್ ಹಬೀಬ್ (ಸುಮಾರು 34 ವರ್ಷ) ಎಂಬವರು ನಾಪತ್ತೆಯಾಗಿದ್ದು, ಈ ಕುರಿತು 2025ರ ಅಕ್ಟೋಬರ್ 28 ರಂದು ಹೊಸಪೇಟೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ದಾದಾ ಖಲಂದರ್ ವಸೀಂ ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಕೋಲು ಮುಖ, ಗೋಧಿ ಮೈ ಬಣ್ಣ ಹೊಂದಿದ್ದು, ಕನ್ನಡ, ಇಂಗ್ಲೀಷ್, ತೆಲುಗು ಮತ್ತು ಹಿಂದಿ ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ಆರೆಂಜ್ ಬ್ಲ್ಯಾಕ್ ಮಿಕ್ಸ್ ಚೆಕ್ಸ್ ಫುಲ್ ಶರ್ಟ್, ಕ್ರೀಮ್ ಬಣ್ಣದ ಕಾರ್ಗೊ ಟೈಪ್ ಫ್ಯಾಂಟ್ ಧರಿಸಿರುತ್ತಾರೆ. ಈ ಮೇಲ್ಕಂಡ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯ ದೂ.ಸಂ: 08394-224033, 9480805745, 08394-224204, 9480805720, 9480805700 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 26 Feb 2026 10:00 pm

ಕಚ್ಚನತ್ತಮ್ ದಲಿತರ ಹತ್ಯೆ ಪ್ರಕರಣ | 26 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಮದುರೈ, ಫೆ. 26: 2018ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಕಚ್ಚನತ್ತಮ್ ನಲ್ಲಿ ನಡೆದ ಜಾತಿ ಘರ್ಷಣೆಯಲ್ಲಿ ಮೂವರು ದಲಿತರನ್ನು ಹತ್ಯೆಗೈದ ಪ್ರಕರಣದಲ್ಲಿ 26 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠವು ಗುರುವಾರ ಎತ್ತಿಹಿಡಿದಿದೆ. ಎಸ್ಸಿ/ಎಸ್ಟಿ (ಪಿಓಎ) ಕಾಯ್ದೆ ಪ್ರಕರಣಗಳಿಗಾಗಿನ ವಿಶೇಷ ನ್ಯಾಯಾಲಯವು ತಮ್ಮನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ 27 ಮಂದಿ ಆರೋಪಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ.ಕೆ. ಇಳಂತಿರೈಯಾನ್ ಹಾಗೂ ಆರ್. ಪೂರ್ಣಿಮಾ ಅವರಿದ್ದ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ. ಇನ್ನೋರ್ವ ಆರೋಪಿ ಇಳಯರಾಜ (31) ಅವರನ್ನು ದೋಷಮುಕ್ತಗೊಳಿಸಿದೆ. ಕಚ್ಚನತ್ತಮ್ ಗ್ರಾಮದಲ್ಲಿರುವ ಕರುಪ್ಪನಸಾಮಿ ದೇವಾಲಯದಲ್ಲಿ (ಕಾಲಾಂಜಿ) ಗೌರವ ಪಡೆಯುವ ವಿಚಾರದಲ್ಲಿ ಪರಿಶಿಷ್ಟ ಜಾತಿಯವರು ಹಾಗೂ ಸವರ್ಣೀಯ ಹಿಂದೂಗಳ ನಡುವೆ ಉಂಟಾದ ವಿವಾದವು ಘರ್ಷಣೆಗೆ ತಿರುಗಿತ್ತು. ದೇವಾಲಯವು ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದರಿಂದ ಕಾಲಾಂಜಿ ಗೌರವವನ್ನು ಆ ಸಮುದಾಯಕ್ಕೆ ನೀಡಲಾಗುತ್ತಿತ್ತು. ಇದರಿಂದ ಕೆರಳಿದ ಎಂ. ಚಂದ್ರಕುಮಾರ್ ಅವರು ಶಣ್ಮುಗನಾಥನ್ ಹಾಗೂ ಇತರ ಪರಿಶಿಷ್ಟ ಸಮುದಾಯದ ಸದಸ್ಯರಿಗೆ ಜೀವಬೆದರಿಕೆ ಒಡ್ಡಿದ್ದರು. ಈ ಬಗ್ಗೆ ದಲಿತರು ಚಂದ್ರಕುಮಾರ್ ವಿರುದ್ಧ ದೂರು ನೀಡಿದ್ದರು. ಆತನನ್ನು ಪೊಲೀಸರು ಬಂಧಿಸಿದ್ದರಾದರೂ, ಅದೇ ದಿನ ಆತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. 2018ರ ಮೇ 28ರಂದು ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಸವರ್ಣೀಯ ಹಿಂದೂಗಳು ಮಾರಕಾಯುಧಗಳೊಂದಿಗೆ ಹಲವಾರು ದಲಿತರ ಮೇಲೆ ದಾಳಿ ನಡೆಸಿ ಮೂವರನ್ನು ಹತ್ಯೆಗೈದಿದ್ದರು ಹಾಗೂ ಇತರ ಐವರನ್ನು ಗಾಯಗೊಳಿಸಿದ್ದರು. ಘಟನೆಯಲ್ಲಿ ದಲಿತರ ಹಲವಾರು ಸೊತ್ತುಗಳಿಗೆ ಹಾನಿಯಾಗಿತ್ತು. ಶಣ್ಮುಗನಾಥನ್, ಅರ್ಮುಗಂ ಹಾಗೂ ಚಂದ್ರಶೇಖರ್ ಅವರನ್ನು ಕಡಿದು ಹತ್ಯೆಗೈಯಲಾಗಿದೆ. ಸುಗುಮಾರನ್, ಮಾಲೈಸಾಮಿ, ಧನಶೇಖರನ್, ಮಹೇಶ್ವನ್ ಹಾಗೂ ದೇವೇಂದ್ರನ್ ಅವರಿಗೆ ಹಲ್ಲೆಯಿಂದ ಗಾಯಗಳಾಗಿದ್ದವು.

ವಾರ್ತಾ ಭಾರತಿ 26 Feb 2026 10:00 pm

ಮಲ್ಪೆ ಬಂದರಿನಲ್ಲಿ ಏಲಂ ವಿಚಾರಕ್ಕೆ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನು ಏಲಂ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಇಂದು ಬೆಳಗ್ಗೆ 7:30 ಸುಮಾರಿಗೆ ನಡೆದಿದೆ. ಹಲ್ಲೆಗೆ ಒಳಗಾದವರನ್ನು ಅಂಬಲಪಾಡಿಯ ಶೇಕ್ ಅಯ್ಯಬ್(52) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯ ಗೊಂಡಿರುವ ಇವರು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಮಲ್ಪೆಯಲ್ಲಿ ಮೀನು ಏಲಂ ಮಾಡುವ ಕೆಲಸ ಮಾಡಿಕೊಂಡಿದ್ದು ಇಂದು ಬೆಳಿಗ್ಗೆ ಬಾಲಕನೋರ್ವ ಆಯುಬ್ ಅವರಿಗೆ ಮೀನನ್ನು ತಂದು ಕೊಟ್ಟಿದ್ದನು ಅದರಂತೆ ಅವರು ಏಲಂ ಮಾಡುತ್ತಿರುವಾಗ ಅಲ್ಲಿಗೆ ಬಂದ ಮಿಥುನ್ ಕರ್ಕೇರಾ, ನೀನು ಯಾಕೆ ಮೀನು ತಂದಿ ? ಯಾಕೆ ಏಲಂ ಮಾಡುತ್ತಿದ್ದಿ ಎಂದು ಹೇಳಿ ಕೈಯಿಂದ ಮುಖ, ಕಣ್ಣಿಗೆ ಹೊಟ್ಟೆ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ ಎನ್ನಲಾಗಿದೆ. ಅಲ್ಲದೆ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ವಾರ್ತಾ ಭಾರತಿ 26 Feb 2026 9:57 pm

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ 'ಹೆಕ್ಸಾಗನ್ ಮೈತ್ರಿಕೂಟ' ಏನದು? ಇದರಲ್ಲಿ ಭಾರತದ ಪಾತ್ರವೇನು?

ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಗೆ ಸ್ವಲ್ಪ ಮೊದಲು ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಸ್ತಾವಿತ 'ಹೆಕ್ಸಾಗನ್ ಮೈತ್ರಿಕೂಟ' ರಚನೆಯನ್ನು ಘೋಷಿಸಿದ್ದರು. ಫೆ. 25 ಬುಧವಾರ ಮೋದಿ ಇಸ್ರೇಲ್ ಪ್ರವಾಸ ಆರಂಭಿಸಿದ್ದು, ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯಾದರು. ಎರಡು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಮತ್ತು ನೆತನ್ಯಾಹು ಇಬ್ಬರೂ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ನೆತನ್ಯಾಹು ಪಶ್ಚಿಮ ಏಷ್ಯಾದ ಹೊಸ ಕಾರ್ಯತಂತ್ರದ ಬಣವನ್ನು ಘೋಷಿಸಿದ್ದು, ಭಾರತವನ್ನು ಅದರ ಕೇಂದ್ರ ಸ್ಥಾನದಲ್ಲಿರಿಸಲಾಗಿದೆ. ►ಏನಿದು ಹೆಕ್ಸಾಗನ್ ಮೈತ್ರಿ? ಸಾಪ್ತಾಹಿಕ ಕ್ಯಾಬಿನೆಟ್ ಸಭೆಯ ಆರಂಭದಲ್ಲಿ ಮಾತನಾಡಿದ ನೆತನ್ಯಾಹು, ಭಾರತವನ್ನು ಜಾಗತಿಕ ಶಕ್ತಿ ಮತ್ತು ಮೋದಿಯನ್ನು ವೈಯಕ್ತಿಕ ಸ್ನೇಹಿತ ಎಂದು ಬಣ್ಣಿಸಿದರು. ಮಧ್ಯಪ್ರಾಚ್ಯದ ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ಭದ್ರತಾ ಚೌಕಟ್ಟನ್ನು ಸ್ಥಾಪಿಸುವ ಮೂಲಕ ಕಾರ್ಯತಂತ್ರದ ಮೈತ್ರಿಗಳ ಸಮಗ್ರ 'ಷಡ್ಭುಜಾಕೃತಿ'ಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಇದು ಭಾರತ, ಅರಬ್ ರಾಷ್ಟ್ರಗಳು, ಆಫ್ರಿಕನ್ ರಾಷ್ಟ್ರಗಳು, ಮೆಡಿಟರೇನಿಯನ್ ರಾಷ್ಟ್ರಗಳು (ಗ್ರೀಸ್ ಮತ್ತು ಸೈಪ್ರಸ್) ಹಾಗೂ ನಾನು ಈ ಸಮಯದಲ್ಲಿ ವಿವರಿಸದ ಏಷ್ಯಾದ ರಾಷ್ಟ್ರಗಳನ್ನು ಒಳಗೊಂಡಿರುತ್ತದೆ. ನಾನು ಇದನ್ನು ಸಂಘಟಿತ ರೀತಿಯಲ್ಲಿ ಪ್ರಸ್ತುತಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಆಧುನಿಕ ಭದ್ರತಾ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವ ಸಮಾನ ಮನಸ್ಕ ದೇಶಗಳ ಒಕ್ಕೂಟವನ್ನು ರೂಪಿಸುವುದು ಇದರ ಉದ್ದೇಶವಾಗಿದೆ. ಈ ಮೈತ್ರಿಕೂಟವು ಇರಾನ್ ನೇತೃತ್ವದ ಶಿಯಾ ನೆಟ್ವರ್ಕ್ ಮತ್ತು ಹೊಸ, ಉದಯೋನ್ಮುಖ ಉಗ್ರಗಾಮಿ ಸುನ್ನಿ ಗುಂಪುಗಳ ವಿರುದ್ಧ ನಿಲ್ಲುತ್ತದೆ. ನೆತನ್ಯಾಹು ಪ್ರಕಾರ, ಈ ಎಲ್ಲಾ ರಾಷ್ಟ್ರಗಳು ವಿಭಿನ್ನ ಗ್ರಹಿಕೆಯನ್ನು ಹಂಚಿಕೊಳ್ಳುತ್ತವೆ. ಅವರ ಸಹಕಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಸಹಜವಾಗಿ ಅವರ ಸ್ಥಿತಿಸ್ಥಾಪಕತೆ ಹಾಗೂ ಭವಿಷ್ಯವನ್ನು ಖಚಿತಪಡಿಸುತ್ತದೆ. ವಿವರಣೆಯು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC)ನ ಸಂಪರ್ಕ ದೃಷ್ಟಿಕೋನದೊಂದಿಗೆ ವಿಶಾಲವಾಗಿ ಹೊಂದಿಕೆಯಾಗುತ್ತದೆಯಾದರೂ, ನೆತನ್ಯಾಹು ಅದನ್ನು ಕೇವಲ ಆರ್ಥಿಕ ಕಾರಿಡಾರ್ ಆಗಿ ಅಲ್ಲ, ಬದಲಾಗಿ ಕಾರ್ಯತಂತ್ರದ ಮತ್ತು ರಾಜತಾಂತ್ರಿಕ ಜೋಡಣೆಯಾಗಿ ಪ್ರಸ್ತುತಪಡಿಸಿದರು. ►ಇನ್ನೂ ಔಪಚಾರಿಕ ಅನುಮೋದನೆ ಸಿಕ್ಕಿಲ್ಲ ನೆತನ್ಯಾಹು ತನ್ನ ಯೋಜನೆಯನ್ನು ವೈಭವೀಕರಿಸುತ್ತಿದ್ದರೂ, ಅವರು ಹೆಸರಿಸಿದ ಯಾವುದೇ ಸರ್ಕಾರವೂ ಇನ್ನೂ ಈ ಪ್ರಸ್ತಾವನೆಯನ್ನು ಸಾರ್ವಜನಿಕವಾಗಿ ಅನುಮೋದಿಸಿಲ್ಲ. ವಾಸ್ತವವಾಗಿ, ಅವರು ಉಲ್ಲೇಖಿಸಿದ ಎರಡು ದೇಶಗಳಾದ ಗ್ರೀಸ್ ಮತ್ತು ಸೈಪ್ರಸ್ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಸದಸ್ಯರಾಗಿವೆ. ಗಾಝಾದಲ್ಲಿ ನಡೆದ ಯುದ್ಧ ಅಪರಾಧಗಳ ಆರೋಪದ ಮೇಲೆ ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ಐಸಿಸಿ ಸದಸ್ಯರಾಗಿ, ಅವರು ತಮ್ಮ ಪ್ರದೇಶವನ್ನು ಪ್ರವೇಶಿಸಿದರೆ ಆ ವಾರಂಟ್ ನ ಮೇಲೆ ಕಾರ್ಯನಿರ್ವಹಿಸಲು ಕಾನೂನುಬದ್ಧವಾಗಿ ಬಾಧ್ಯರಾಗಿರುತ್ತಾರೆ. ನೆತನ್ಯಾಹು ಅವರ ಹೇಳಿಕೆಗಳು ಈ ಪ್ರದೇಶದಲ್ಲಿ ಟೀಕೆಗೆ ಗುರಿಯಾಗಿವೆ. ಕೆಲವು ದೇಶಗಳನ್ನು ಗುರಿಯಾಗಿಸಿಕೊಂಡು ಮೈತ್ರಿಕೂಟಗಳನ್ನು ರೂಪಿಸುವ ಇಸ್ರೇಲ್ ಯೋಜನೆಯನ್ನು ಖಂಡಿಸುವ ನಿರ್ಣಯವನ್ನು ಪಾಕಿಸ್ತಾನದ ಸೆನೆಟ್ ಅಂಗೀಕರಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಪಾಕ್ ನಿರ್ಣಯವು ಈ ಉಪಕ್ರಮವನ್ನು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಶಾಂತಿ ಹಾಗೂ ಸ್ಥಿರತೆಗೆ ಬೆದರಿಕೆ ಎಂದು ಕರೆದಿದೆ. ರಾಜಕೀಯ ಮತ್ತು ಸೈದ್ಧಾಂತಿಕ ಆಧಾರದ ಮೇಲೆ ಮುಸ್ಲಿಂ ಏಕತೆ ಹಾಗೂ ಸಮಗ್ರತೆಯನ್ನು ಕುಗ್ಗಿಸುವತ್ತ ಇಸ್ರೇಲ್ ಆಕ್ರಮಿತ ಶಕ್ತಿಯ ನಾಯಕತ್ವದ ದುಷ್ಟ ಪ್ರವೃತ್ತಿ ಎಂದು ಅದು ಈ ಪ್ರಸ್ತಾಪವನ್ನು ವಿವರಿಸಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸೆನೆಟರ್ ಪಲ್ವಾಶಾ ಖಾನ್ ಮಂಡಿಸಿದ ನಿರ್ಣಯವು, ಮೈತ್ರಿಕೂಟಗಳನ್ನು ರಚಿಸುವ ಬಗ್ಗೆ ಇತ್ತೀಚಿನ ಹೇಳಿಕೆ ಸೇರಿದಂತೆ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಶಾಂತಿ ಹಾಗೂ ಸ್ಥಿರತೆಗೆ ಬೆದರಿಕೆ ಹಾಕುವ ಇಸ್ರೇಲಿ ನಾಯಕತ್ವದ ನಿರಂತರ ಪ್ರಚೋದನಕಾರಿ ಕ್ರಮಗಳು ಮತ್ತು ಹೇಳಿಕೆಗಳನ್ನು ಖಂಡಿಸುತ್ತದೆ ಎಂದು ಹೇಳಿದೆ. ಅಂತರರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಕ್ಕಾಗಿ ಇಸ್ರೇಲ್ ಅನ್ನು ಖಂಡಿಸಿದ ಪಾಕ್, ಫೆಲೆಸ್ತೀನಿನ ರಾಜ್ಯತ್ವಕ್ಕಾಗಿ ಹೋರಾಟಕ್ಕೆ ತನ್ನ ಅಚಲ ಬದ್ಧತೆಯನ್ನು ಪುನರುಚ್ಚರಿಸಿದೆ. ►ಭಾರತದ ಪಾತ್ರ ಭಾರತವನ್ನು ಜಾಗತಿಕ ಶಕ್ತಿ ಎಂದು ಬಣ್ಣಿಸುವ ಮೂಲಕ ನೆತನ್ಯಾಹು ತಮ್ಮ ಪ್ರಸ್ತಾವಿತ ಪ್ರಾದೇಶಿಕ ಚೌಕಟ್ಟಿನಲ್ಲಿ ಭಾರತದ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತಾರೆ. ಭಾರತದ ಹೆಚ್ಚುತ್ತಿರುವ ಆರ್ಥಿಕ ಪ್ರಭಾವ, ಇಸ್ರೇಲ್ ನೊಂದಿಗಿನ ಅದರ ಬಲವಾದ ರಕ್ಷಣಾ ಪಾಲುದಾರಿಕೆ ಹಾಗೂ ಗಲ್ಫ್ ರಾಷ್ಟ್ರಗಳೊಂದಿಗಿನ ಸಂಬಂಧಗಳು ಈ ಮೈತ್ರಿಯಲ್ಲಿ ಭಾರತವನ್ನು ಪ್ರಮುಖ ಸೇತುವೆಯಾಗಿ ಇರಿಸುತ್ತವೆ. ಆದಾಗ್ಯೂ, ಭಾರತವು ಕಠಿಣ ಮಿಲಿಟರಿ ಬಣಗಳಿಂದ ದೂರವಿದ್ದು ಕಾರ್ಯತಂತ್ರದ ಸ್ವಾಯತ್ತತೆಯ ಸಾಂಪ್ರದಾಯಿಕ ಹಾದಿಯಲ್ಲಿ ಸಾಗುವುದನ್ನು ಮುಂದುವರೆಸಿದೆ. ಟೆಲ್ ಅವೀವ್ ನೊಂದಿಗೆ ಹೈಟೆಕ್ ಮತ್ತು ಭದ್ರತಾ ಸಹಕಾರವನ್ನು ಗಟ್ಟಿಗೊಳಿಸುತ್ತಿದ್ದರೂ ಸಹ, ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾ ಸೇರಿದಂತೆ ಜಾಗತಿಕ ಶಕ್ತಿಗಳೊಂದಿಗೆ ಸಕ್ರಿಯ, ಸಮತೋಲಿತ ನಿಶ್ಚಿತಾರ್ಥವನ್ನು ಕಾಯ್ದುಕೊಳ್ಳುತ್ತದೆ. ಭಾರತವು ಇರಾನ್ ನೊಂದಿಗೆ ತನ್ನ ದೀರ್ಘಕಾಲೀನ ಸಂಬಂಧವನ್ನು ಮುಂದುವರಿಸುವುದರ ಜೊತೆಗೆ ಸೌದಿ ಅರೇಬಿಯಾದೊಂದಿಗೆ ತನ್ನ ವ್ಯವಹಾರ ಮತ್ತು ಭದ್ರತಾ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತದೆ. ಈ ಸಮತೋಲನದ ಕ್ರಿಯೆ ಭಾರತಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಆದರೆ ಇದರರ್ಥ ಭಾರತವು ಎರಡೂ ಕಡೆಯ ವಿರುದ್ಧ ಬಹಿರಂಗವಾಗಿ ಇರುವ ಗುಂಪನ್ನು ಸೇರಲು ಸಾಧ್ಯವಿಲ್ಲ. ಲಂಡನ್ನ ಕಿಂಗ್ಸ್ ಕಾಲೇಜಿನ ತಜ್ಞ ಆಂಡ್ರಿಯಾಸ್ ಕ್ರೀಗ್, ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ, ನೆತನ್ಯಾಹು ಅವರ ಯೋಜನೆಯು ಈ ಪ್ರದೇಶದ ವಿಭಜನೆಗಳನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಹೇಳಿದ್ದಾರೆ. ಭಾರತವು ಹೆಚ್ಚಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು, ಹೊಸ ತಂತ್ರಜ್ಞಾನವನ್ನು ಪಡೆಯುವುದು ಮತ್ತು ವ್ಯಾಪಾರ ಮಾಡುವುದರ ಮೇಲೆ ಕೇಂದ್ರೀಕರಿಸಿದೆ. ಮಧ್ಯಪ್ರಾಚ್ಯಕ್ಕಾಗಿ ಇಸ್ರೇಲ್ನ ದೊಡ್ಡ ರಾಜಕೀಯ ಗುರಿಗಳಲ್ಲಿ ತೊಡಗಿಸಿಕೊಳ್ಳಲು ಭಾರತ ಆಸಕ್ತಿ ಹೊಂದಿಲ್ಲ ಎಂದಿದ್ದಾರೆ ಕ್ರೀಗ್.

ವಾರ್ತಾ ಭಾರತಿ 26 Feb 2026 9:57 pm

ಮೊಬೈಲ್ ಕ್ಯಾಂಟಿನ್ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ): ಪ್ರವಾಸೋದ್ಯಮ ಇಲಾಖೆಯಿಂದ 2025-26ನೇ ಸಾಲಿನ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮದಾರರನ್ನು ಉತ್ತೇಜಿಸಲು 1 ತಿಂಗಳ ಉದ್ಯಮಶೀಲತೆ ತರಬೇತಿ ನೀಡುವುದು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ನಡೆಸಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆ ವತಿಯಿಂದ ಮೊಬೈಲ್ ಕ್ಯಾಂಟಿನ್ ವಾಹನ ಖರೀದಿಸಲು ಇಲಾಖೆಯ ಸಹಾಯಧನ ಘಟಕ ವೆಚ್ಚದಲ್ಲಿ ಶೇ.70% ರಷ್ಟು ಹಾಗೂ ಗರಿಷ್ಠ ರೂ.5.00 ಲಕ್ಷ ನೀಡಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20 ರಿಂದ 55 ವರ್ಷದೊಳಗಿರಬೇಕು, ವಿಜಯನಗರ ಜಿಲ್ಲೆಯ ನಿವಾಸಿಯಾಗಿರಬೇಕು. ಕನಿಷ್ಠ ಹತ್ತನೇ ತರಗತಿ ವಿದ್ಯಾರ್ಹತೆ ಹೊಂದಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಲಘು ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ನಗರ ಪ್ರದೇಶದ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.2.00 ಲಕ್ಷ ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.1.50 ಲಕ್ಷ ಮೀರಿರಬಾರದು. ಯಾವುದೇ ಸರ್ಕಾರಿ ಇಲಾಖೆ ಅಥವಾ ಮಂಡಳಿಯಲ್ಲಿ ಖಾಯಂ ನೌಕರಿಯಲ್ಲಿರಬಾರದು. ಅರ್ಜಿದಾರರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹತ್ತನೇ ತರಗತಿ ಅಂಕಪಟ್ಟಿ ಮತ್ತು ವಾಸಸ್ಥಳ ದೃಢೀಕರಣ ಪತ್ರ ಮುಂತಾದ ಅಗತ್ಯ ದಾಖಲೆಯೊಂದಿಗೆ ಲೋಟಸ್ ಮಹಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಕಮಲಾಪುರ ಕಚೇರಿಗೆ ಮಾರ್ಚ್ 16 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 7892722443 ಗೆ ಸಂಪರ್ಕಿಸಲು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 9:51 pm

ದೇವದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಪಿಆರ್‌ಎಸ್‌ ಧರಣಿ

ದೇವದುರ್ಗ: ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಕರ್ನಾಟಕ ಪ್ರಾಂತ ರೈತ ಸಂಘ ಗುರುವಾರ ತಾಪಂ ಕಚೇರಿ ಮುಂದೆ ಪ್ರತಿಭಟಿಸಿ ಅಧಿಕಾರಿಗೆ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮಪರ್ಕವಾಗಿ ಜಾರಿಗೊಳಿಸಿ, ಕೆಲಸಕ್ಕೆ ಅರ್ಜಿ ಸಲ್ಲಿಸಿದ ಕೂಲಿ ಕಾರರಿಗೆ 15 ದಿನಗಳೊಳಗಾಗಿ ನಿರುದ್ಯೋಗ ಭತ್ಯೆ ನೀಡಬೇಕು. ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕಾಮಗಾರಿ ಗುಚ್ಛದಲ್ಲಿ ಸೇರಿಸಿ ತಕ್ಷಣ ಆರಂಭಿಸಬೇಕು. ಜಾಲಹಳ್ಳಿ ಗ್ರಾಪಂಯಲ್ಲಿ ಕೆಲಸ ನಿರ್ವಹಿಸಿದ ಕೂಲಿ ಕಾರರಿಗೆ ಕಡಿಮೆ ಹಣ ನೀಡಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ, ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ವಿವಿಧ ವಸತಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ಮನೆ ಹಾಗೂ ನಿವೇಶನಗಳನ್ನು ತಕ್ಷಣ ಒದಗಿಸಬೇಕು. ಬೇಸಿಗೆ ಆರಂಭವಾಗುತ್ತಿದ್ದು, ಪ್ರತಿಯೊಂದು ಹಳ್ಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು. ಸೂಲದಗುಡ್ಡ, ಮಂಡಲಗುಡ್ಡ ಮನೆ ಕಟ್ಟಿಕೊಂಡಿರುವ ಸಂತ್ರಸ್ತರಿಗೆ ಹಕ್ಕು ಪತ್ರಗಳು ವಿತರಣೆ ಮಾಡಬೇಕು. ರೈತರ ಹೊಲಗಳಿಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಬಂಡಿ ದಾರಿ ಹಾಗೂ ಸಿಸಿರಸ್ತೆ ನಿರ್ಮಿಸಬೇಕು. ಸರಕಾರಿ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳು ಕಲ್ಪಿಸಬೇಕು. ಪಂದ್ಯಾನ ಗ್ರಾಮದ ಮನೆಗಳ ಮೇಲೆ ಹಾದು ಹೋಗಿರುವ 11 ಕೆವಿ ತಂತಿಗಳನ್ನು ತೆರವುಗೊಳಿಸಿ, ಮನೆ ಸಮೀಪದ ವಿದ್ಯುತ್‌ ಪರಿವರ್ತಕ ಸ್ಥಳಾಂತರ ಮಾಡಬೇಕು. ಪಲಕನಮರಡಿ ಗ್ರಾಮದ ಶಿವರಾಜ ಹೊಲದಿಂದ ವಾಲ್ಮೀಕಿ ವೃತ್ತದವರೆಗೆ ಅರ್ಧಕ್ಕೆ ಬಿಟ್ಟಿರುವ ಡಾಂಬರ್‌ ರಸ್ತೆಯನ್ನು ಕೂಡಲೇ ಪ್ರಾರಂಭಿಸಬೇಕು. ಜಾಲಹಳ್ಳಿ ಗ್ರಾಮದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮಕ್ಕೆ ಹಲವು ಭಾರಿ ಗ್ರಾಪಂ ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳದ ಪಿಡಿಒ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿದರು. 2022-23 ಸಾಲಿನಲ್ಲಿ ಭಾಕಿ ಇರುವ ದನದ ಶೆಡ್‌ ಸೇರಿದಂತೆ ವಿವಿಧ ಕಾಮಗಾರಿಗಳ ಭಾಕಿ ಹಣ ಕೂಡಲೇ ಪಾವತಿಸಬೇಕು. 2024-25ನೇ ಸಾಲಿನಲ್ಲಿ ಜಾಲಹಳ್ಳಿ ಗ್ರಾಮದಲ್ಲಿ ಕೈಗೆತ್ತಿಕೊಂಡಿರುವ ನಾಲ್ಕು ಸಿಸಿರಸ್ತೆ ಮತ್ತು ಚರಂಡಿ ನಿರ್ಮಿಸಿದ ಭಾಕಿ ಹಣ ಪಾವತಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ ಜಾಲಹಳ್ಳಿ, ನರಸಣ್ಣ ನಾಯಕ, ಶಬ್ಬೀರ ಜಾಲಹಳ್ಳಿ, ಮಹಾಲಿಂಗ ದೊಡ್ಡಮನಿ, ಹನುಮಂತ ಮೂಂಡಲಗುಡ್ಡ, ಬಸವರಾಜ ವಂದಲಿ, ಹನುಮಂತ ಮಡಿವಾಳ, ರಂಗನಾಥ, ಮಲ್ಲಯ್ಯ, ರಾಮನಗೌಡ, ಮುಕ್ಕನಗೌಡ ಸೇರಿದಂತೆ ಇತರರು ಇದ್ದರು.

ವಾರ್ತಾ ಭಾರತಿ 26 Feb 2026 9:48 pm

ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು; ನೆತನ್ಯಾಹು ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ

ಜೆರುಸಲೇಮ್, ಫೆ. 26: ಸಂಘರ್ಷದಿಂದ ಮಾನವೀಯತೆ ಯಾವತ್ತೂ ನಶಿಸಬಾರದು ಎಂದು ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ಜೆರುಸಲೇಮ್ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಗಾಝಾದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತದ ನಿಲುವಿನ ಬಗ್ಗೆ ಮಾತನಾಡಿದ ಮೋದಿ, ಗಾಝಾ ಶಾಂತಿ ಯೋಜನೆಯ ಮೂಲಕ ಶಾಂತಿಯ ಮಾರ್ಗವೊಂದನ್ನು ಸೃಷ್ಟಿಸಲಾಗಿದೆ ಹಾಗೂ ಈ ಪ್ರಯತ್ನಗಳಿಗೆ ಭಾರತ ಸಂಪೂರ್ಣ ಬೆಂಬಲ ನೀಡಿದೆ ಎಂದು ಹೇಳಿದರು. ‘‘ಭಾರತದ ದೃಷ್ಟಿಕೋನ ಸ್ಪಷ್ಟವಾಗಿದೆ. ಒಂದು ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು. ಗಾಝಾ ಶಾಂತಿ ಯೋಜನೆಯು ಶಾಂತಿಯ ಮಾರ್ಗವೊಂದನ್ನು ತೆರೆದಿದೆ. ಇಂಥ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡಿದೆ. ಭವಿಷ್ಯದಲ್ಲಿಯೂ ಭಾರತ ಈ ನಿಟ್ಟಿನಲ್ಲಿ ಸಹಕರಿಸಲಿದೆ ಹಾಗೂ ಎಲ್ಲಾ ದೇಶಗಳೊಂದಿಗೆ ಮಾತುಕತೆ ನಡೆಸಲಿದೆ’’ ಎಂದು ಪ್ರಧಾನಿ ಮೋದಿ ಹೇಳಿದರು. ಭಯೋತ್ಪಾದನೆಯ ವಿರುದ್ಧ ಭಾರತ ಮತ್ತು ಇಸ್ರೇಲ್ ಒಂದಾಗಿವೆ ಎಂದೂ ಅವರು ಹೇಳಿದರು. ‘‘ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ ಎಂಬ ಸ್ಪಷ್ಟ ನಿಲುವನ್ನು ಭಾರತ ಮತ್ತು ಇಸ್ರೇಲ್ ಹೊಂದಿವೆ. ಭಯೋತ್ಪಾದನೆಯನ್ನು ಯಾವುದೇ ರೂಪದಲ್ಲಿ ಸ್ವೀಕರಿಸುವಂತಿಲ್ಲ. ನಾವು ಭಯೋತ್ಪಾದನೆ ಮತ್ತು ಅದರ ಬೆಂಬಲಿಗರ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇವೆ’’ ಎಂದು ಅವರು ನುಡಿದರು. ಇದು ಪ್ರಧಾನಿಯಾಗಿ ಮೋದಿಯ ಎರಡನೇ ಇಸ್ರೇಲ್ ಪ್ರವಾಸವಾಗಿದೆ. ಅವರು 2017ರಲ್ಲಿ ಮೊದಲ ಬಾರಿಗೆ ಇಸ್ರೇಲ್ ಪ್ರವಾಸ ಕೈಗೊಂಡಿದ್ದರು. ಅದಕ್ಕೆ ಪ್ರತಿಯಾಗಿ ಮಾರನೇ ವರ್ಷ ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತಕ್ಕೆ ಭೇಟಿ ನೀಡಿದ್ದರು.

ವಾರ್ತಾ ಭಾರತಿ 26 Feb 2026 9:47 pm

ಸಿರಿವಂತರು ಗ್ಯಾರಂಟಿಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ : ಡಿ.ಕೆ.ಶಿವಕುಮಾರ್

ಬೆಂಗಳೂರು, ಫೆ. 26: ಸಿರಿವಂತರು(ಶ್ರೀಮಂತರು) ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ. ಸರಕಾರಿ ನೌಕರರು, ದೊಡ್ಡ ದೊಡ್ಡ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಇರುವವರು ಸೇರಿದಂತೆ ಬಹಳ ಜನ ನಮಗೆ ಗ್ಯಾರಂಟಿ ಯೋಜನೆಗಳು ಬೇಡ ಎಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದಷ್ಟು ಸಿರಿವಂತರು ನಮಗೆ ಅವಶ್ಯಕತೆ ಇಲ್ಲ ಎಂದಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆಯೂ ಹೇಳಿದ್ದಾರೆ. ಅದಕ್ಕೆ ನಾವು ಆ ಬಗ್ಗೆ ವಿಮರ್ಶೆ ಮಾಡುತ್ತಿದ್ದೇವೆ ಎಂದು ಹೇಳಿದರು. ಮಾಧ್ಯಮಗಳು ಯಾವುದನ್ನೂ ತಿರುಚುವುದು ಬೇಡ. ಯಾವ ಕಾರಣಕ್ಕೂ ಯಾವ ಗ್ಯಾರಂಟಿಗಳೂ ನಿಲ್ಲುವುದಿಲ್ಲ. ಎಷ್ಟೇ ಕಷ್ಟ ಇದ್ದರೂ ಗ್ಯಾರಂಟಿಗಳನ್ನು ಕೊಡುತ್ತಾ ಇದ್ದೇವೆ ಎಂದು ಹೇಳಿದ್ದೇನೆ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎನ್ನುವ ಸುಳ್ಳಿನ ಬಗ್ಗೆಯೂ ಸ್ಪಷ್ಟನೆ ನೀಡಿದ್ದೇನೆ. ಈ ಬಜೆಟ್ ನಲ್ಲಿ ಒಳ್ಳೊಳ್ಳೆ ಅಭಿವೃದ್ಧಿ ಕೆಲಸಗಳನ್ನು ನಮ್ಮ ಸರಕಾರ ಘೋಷಣೆ ಮಾಡುತ್ತದೆ ಎಂದು ಅವರು ಹೇಳಿದರು. ಕೇಂದ್ರ ಬಿಜೆಪಿ ಸರಕಾರ ರಾಜ್ಯಕ್ಕೆ ಯಾವುದೇ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ಆದರೂ ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿ ನಿಭಾಯಿಸುತ್ತಿದ್ದೇವೆ. ಸರಕಾರವೂ ಅತ್ಯುತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದೆ. 21 ಕೋಟಿ ರೂ.ಗಳಷ್ಟು ಹಣ ಮೃತಪಟ್ಟಿರುವ ಮಹಿಳೆಯರ ಖಾತೆಗೆ ಹೋಗಿದೆ. ಇದರ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ವಾರ್ತಾ ಭಾರತಿ 26 Feb 2026 9:47 pm

ಎಪ್ಸ್ಟೀನ್ ನಂಟು | ವರ್ಲ್ಡ್‌ ಇಕನಾಮಿಕ್‌ ಫೋರಂ ಮುಖ್ಯಸ್ಥ ರಾಜೀನಾಮೆ

ಝೂರಿಕ್, ಫೆ. 26: ವರ್ಲ್ಡ್‌ ಇಕನಾಮಿಕ್‌ ಫೋರಂ (ಡಬ್ಲ್ಯುಇಎಫ್) ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರ್ಗೆ ಬ್ರೆಂಡ ಗುರುವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಅವರು ಹಿಂದೆ ಹೊಂದಿದ್ದ ನಂಟಿನ ಬಗ್ಗೆ ವೇದಿಕೆ ಸ್ವತಂತ್ರ ತನಿಖೆಗೆ ಚಾಲನೆ ನೀಡಿದ ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. 2017ರಿಂದ ವೇದಿಕೆಯ ಮುಖ್ಯಸ್ಥರಾಗಿರುವ ಬ್ರೆಂಡ ಗುರುವಾರ ಹೇಳಿಕೆಯೊಂದನ್ನು ಹೊರಡಿಸಿ ಹುದ್ದೆಯಿಂದ ಕೆಳಗಿಳಿಯುವ ತನ್ನ ನಿರ್ಧಾರವನ್ನು ಪ್ರಕಟಿಸಿದರು. ಎಪ್ಸ್ಟೀನ್ ಜೊತೆ ಬ್ರೆಂಡ ಮೂರು ಬಾರಿ ವಾಣಿಜ್ಯ ಸಂಬಂಧಿ ಭೋಜನ ಮಾಡಿದ್ದರು ಹಾಗೂ ಇಮೇಲ್ ಮತ್ತು ಟೆಕ್ಸ್ಟ್ ಸಂದೇಶಗಳ ಮೂಲಕ ಸಂಪರ್ಕ ಹೊಂದಿದ್ದರು ಎಂಬುದನ್ನು ಅಮೆರಿಕದ ಕಾನೂನು ಇಲಾಖೆ ಬಿಡುಗಡೆಗೊಳಿಸಿದ ದಾಖಲೆಗಳು ಸೂಚಿಸಿವೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ‘‘ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ, ವರ್ಲ್ಡ್‌ ಇಕನಾಮಿಕ್‌ ಫೋರಂಯ ಅಧ್ಯಕ್ಷ ಹಾಗೂ ಸಿಇಒ ಹುದ್ದೆಯಿಂದ ಕೆಳಗಿಳಿಯಲು ನಾನು ನಿರ್ಧರಿಸಿದ್ದೇನೆ. ಇಲ್ಲಿ ನಾನು ಕಳೆದ ಎಂಟೂವರೆ ವರ್ಷಗಳು ಅತ್ಯಂತ ಫಲಪ್ರದವಾಗಿವೆ’’ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 9:45 pm

ರಾಯಚೂರು | ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸುವ ಪ್ರಸ್ತಾವನೆಗೆ ಖಂಡನೆ

ರಾಯಚೂರು: ವಿಶ್ವವಿದ್ಯಾಲಯಗಳ ಹುದ್ದೆಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಮುಂದಾಗಿದ್ದು ಖಂಡನೀಯ. ಕೂಡಲೇ ಇದನ್ನು ರದ್ದುಗೊಳಿಸಬೇಕು ಎಂದು ಮಾದಿಗ ಪದವೀಧರರ ವೇದಿಕೆಯ ಜಿಲ್ಲಾಧ್ಯಕ್ಷ ಶರಣಪ್ಪ ಒತ್ತಾಯಿಸಿದರು. ಗುರುವಾರ ಪತ್ರಿಕಾಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳಮೀಸಲು ಹಂಚಿಕೆಯ ನಂತರ ನೇಮಕಾತಿಯಲ್ಲಿ ಗೊಂದಲ ಸೃಷ್ಟಿಸಲಾಗಿದೆ. ರೋಸ್ಟರ್ ಪದ್ದತಿಯಂತೆ ವಿಶ್ವವಿದ್ಯಾಲಯಳಲ್ಲಿ ನೇಮಕಾತಿ ನಡೆಸಿದರು ವಿಭಾಗವನ್ನು ಘಟಕವನ್ನಾಗಿ ಪರಿಗಣಿಸಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತದೆ. ಇಲ್ಲದೇ ಹೋದಲ್ಲಿ ಎಸ್ಸಿಎಸ್ಟಿ ಅಭ್ಯರ್ಥಿಗಳಿಗೆ ಮಾರಕವಾಗಲಿದೆ ಎಂದರು. ವಿಶ್ವವಿದ್ಯಾಲಯದಲ್ಲಿ ನೂರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ 25 ವಿಭಾಗಳಲ್ಲಿದ್ದಲ್ಲಿ ಪ್ರತಿವಿಭಾಗಕ್ಕೆ 5 ಹುದ್ದೆಗಳು ರೋಸ್ಟರ್ ಬಿಂದುವಿನಂತೆ ಒಂದು ಪರಿಶಿಷ್ಟ ಜಾತಿ, ಎರಡು ಸಾಮಾನ್ಯ ವರ್ಗ, ಮೂರು ಪರಿಶೀಷ್ಟ ಪಂಗಡ ಹಾಗೂ ನಾಲ್ಕು ಸಾಮಾನ್ಯ, ಐದು ಪ್ರವರ್ಗ-1 ರನ್ನು ಪರಿಗಣಿಸದರೆ ಸಮಾನ ಅವಕಾಶಗಳು ದೊರೆಯಲು ಸಾಧ್ಯವಿದೆ. ಡಾ.ಎಚ್.ಸಿ.ಮಹಾದೇವಪ್ಪ ಇವರು ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸಲು ನಿರ್ಧರಿಸಿದ್ದಾರೆ. ಪರಿಶಿಷ್ಟ ಜಾತಿಗಳಿಗೆ ಕೇವಲ 17 ಹುದ್ದೆಗಳು ಮಾತ್ರ ದೊರೆಯಲಿವೆ. ಎಸ್ಸಿಎಸ್ಟಿ ಅಭ್ಯರ್ಥಿಗಳು 26 ಹುದ್ದೆಗಳಿಂದ ವಂಚಿತವಾಗುವಂತಾಗುತ್ತದೆ. ಪರಿಶಿಷ್ಟರಲ್ಲದವರಿಗೆ ರೋಸ್ಟರ್ ಬಿಂದು ಮೀಸಲಾತಿ ಹಂಚುವ ಹುನ್ನಾರ ಅಡಗಿದೆ ಎಂದರು. ಯುಜಿಸಿ 2006 ರಲ್ಲಿ ವಿಶ್ವವಿದ್ಯಾಲಯ ಒಂದು ಘಟಕವನ್ನಾಗಿ ಮಾರ್ಗಸೂಚಿ ಹೊರಡಿಸಿದ್ದಾಗ ವಿವೇಕಾನಂದ ತಿವಾರಿ ಮತ್ತು ಬನಾರಸ್ ವಿಶ್ವವಿದ್ಯಾಲಯದ ಪ್ರಕರಣದಲ್ಲಿ ಅಲಹಾಬಾದ ಹೈಕೋರ್ಟ್ 2017 ರಲ್ಲಿ ತೀರ್ಪು ನೀಡಿ ವಿಶ್ವವಿದ್ಯಾಲಯಗಳು ಪ್ರತ್ಯೇಕ ವಿಭಾಗಳನ್ನು ಘಟಕವನ್ನಾಗಿಸುವ ತೀರ್ಪು ನೀಡಿದೆ. ಕಾರಣ ರಾಜ್ಯ ಸರ್ಕಾರ ಫೆ.17 ರಂದು ನಡೆದ ಬ್ಯಾಕ್ ಲಾಗ್ ಉಪಸಮಿತಿಯಲ್ಲಿ‌ ವಿಶ್ವವಿದ್ಯಾಲಯ ಘಟಕವನ್ನಾಗಿಸಲು ತಾತ್ವಿಕ ಒಪ್ಪಿಗೆ ನೀಡಿರುವದನ್ನು ಕೈ ಬಿಟ್ಟು ಪರಿಶಿಷ್ಟರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ತಾಯಪ್ಪ, ರವಿಕುಮಾರ, ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಇದ್ದರು.

ವಾರ್ತಾ ಭಾರತಿ 26 Feb 2026 9:43 pm

ಅಮೆರಿಕದೊಂದಿಗೆ ಸಂಬಂಧ ಸುಧಾರಣೆ ಬೇಕಾದರೂ ಮಾಡಿಕೊಳ್ಳುವೆವು, ದಕ್ಷಿಣ ಕೊರಿಯಾದೊಂದಿಗೆ ಸಾಧ್ಯವೇ ಇಲ್ಲ: ಕಿಮ್ ಜೊಂಗ್ ಉನ್

ಸಿಯೋಲ್, ಫೆ. 26: ಉತ್ತರ ಕೊರಿಯದ ಪರಮಾಣು ಸ್ಥಾನಮಾನವನ್ನು ಅಮೆರಿಕ ಒಪ್ಪಿಕೊಂಡರೆ ಅದರೊಂದಿಗೆ ಉತ್ತರ ಕೊರಿಯ ವ್ಯವಹರಿಸಬಹುದಾಗಿದೆ ಎಂದು ಆ ದೇಶದ ಮುಖ್ಯಸ್ಥ ಕಿಮ್ ಜೊಂಗ್ ಉನ್ ಹೇಳಿದ್ದಾರೆ ಎಂದು ಸರಕಾರಿ ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಆದರೆ, ‘‘ವಂಚಕ’’ ದಕ್ಷಿಣ ಕೊರಿಯ ಜೊತೆಗೆಗಿನ ಸಂಬಂಧವನ್ನು ಸುಧಾರಿಸುವ ಯಾವುದೇ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ. ಕಿಮ್ ಜೊಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಈ ವರ್ಷದ ಉತ್ತರಾರ್ಧದಲ್ಲಿ ಚೀನಾದಲ್ಲಿ ಶೃಂಗಸಭೆ ನಡೆಸುವ ಸಾಧ್ಯತೆ ಬಗ್ಗೆ ಉತ್ತರ ಕೊರಿಯದೊಂದಿಗೆ ಉನ್ನತ ಮಟ್ಟದ ಮಾತುಕತೆಗಳನ್ನು ಹೊಸದಾಗಿ ನಡೆಸಲು ಅಮೆರಿಕ ಮತ್ತು ದಕ್ಷಿಣ ಕೊರಿಯ ಪ್ರಯತ್ನಿಸುತ್ತಿರುವ ನಡುವೆಯೇ ಉತ್ತರ ಕೊರಿಯದ ಈ ನಿಲುವು ಹೊರಬಿದ್ದಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯದ ಪ್ರಯತ್ನಗಳ ಬಗ್ಗೆ ತಿಂಗಳುಗಳಿಂದ ಮೌನವಾಗಿದ್ದ ಕಿಮ್, ಕೊನೆಗೂ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪ್ಯಾಂಗ್ಯಾಂಗ್ನಲ್ಲಿ ನಡೆದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಅಪರೂಪದ ಸಮಾವೇಶದಲ್ಲಿ ನೆರೆದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ. ‘‘ನಮ್ಮ ದೇಶದ ಹಾಲಿ ಪರಮಾಣು ಸ್ಥಾನಮಾನವನ್ನು ಅಮೆರಿಕ ಗೌರವಿಸಿದರೆ ಹಾಗೂ ತನ್ನ ಪ್ರತಿಕೂಲ ನೀತಿಯನ್ನು ವಾಪಸ್ ಪಡೆದರೆ, ಅಮೆರಿಕದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದದಿರಲು ನಮಗೆ ಯಾವುದೇ ಕಾರಣವಿಲ್ಲ’’ ಎಂದು ಕಿಮ್ ಹೇಳಿರುವುದಾಗಿ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.

ವಾರ್ತಾ ಭಾರತಿ 26 Feb 2026 9:42 pm

ಕುಂಬಾರ ಸಮಾಜ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಮೀಸಲಿಡಲು ಆಗ್ರಹ

ಬೀದರ್ : 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಕುಂಬಾರ ಸಮಾಜ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ 100 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಜಿಲ್ಲಾ ಕುಂಬಾರ ಸಮಾಜದಿಂದ ಮನವಿ ಸಲ್ಲಿಸಲಾಯಿತು. ಈ ಸಂಬಂಧ ಅಪರ ಜಿಲ್ಲಾಧಿಕಾರಿ ಮೂಲಕ ಗುರುವಾರ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಇರುವ ಕುಂಬಾರ ಸಮುದಾಯದವರು ಸಮಾಜಕ್ಕೆ ಹಲವು ಕೊಡುಗೆಗಳು ನೀಡಿದ್ದಾರೆ. ಈ ಸಮುದಾಯದ ಅಭಿವೃದ್ಧಿಗಾಗಿ ಹಲವು ಬಾರಿ ಪ್ರತಿಭಟನೆಗಳು ನಡೆಸಿದರೂ ಕೂಡ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಕುಂಬಾರ ಸಮುದಾಯವು ಪ್ರಸ್ತುತ 2ಎ ಪ್ರವರ್ಗದಲ್ಲಿದೆ. ನೂರಕ್ಕೂ ಅಧಿಕ ಜಾತಿಗಳು ಈ ಪಟ್ಟಿಯಲ್ಲಿದ್ದು, ನಮ್ಮ ಜಾತಿಯವರಿಗೆ ಅವಕಾಶಗಳು ಕಡಿಮೆ ಆಗಿದೆ. ಹೀಗಾಗಿ ಸಮಾಜಕ್ಕೆ ವಿಶೇಷ ಮೀಸಲಾತಿ ಕಲ್ಪಿಸಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಕುಂಬಾರಿಕೆ ವೃತ್ತಿ ಮಾಡುವವರಿಗೆ ಪ್ರೋತ್ಸಾಹಿಸಿ ಅಗತ್ಯ ನೆರವು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕರ್ನಾಟಕ ಕುಂಬಾರ ಅಭಿವೃದ್ಧಿ ನಿಗಮಕ್ಕೆ ಪ್ರತಿವರ್ಷ ಕನಿಷ್ಠ 100 ಕೋಟಿ ರೂ. ಅನುದಾನ ನೀಡಬೇಕು. ಸಮುದಾಯದವರಿಗೆ ರಾಜಕೀಯ ಸ್ಥಾನ ಮಾನ ಒದಗಿಸಬೇಕು. ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸರ್ವಜ್ಞ ಭವನ ನಿರ್ಮಾಣ ಮಾಡಬೇಕು. ಕುಂಬಾರಿಕೆ ಕರಕುಶಲ ಉತ್ಪನ್ನಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು. ಪ್ರತಿ ವರ್ಷ ಕುಂಬಾರ ಸಮಾಜದ ವಿಶೇಷ ಸಾಧಕರಿಗೆ ಸರ್ಕಾರವೇ 'ಸರ್ವಜ್ಞ ಶ್ರೀ' ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ವಿಠಲ್ ಕುಂಬಾರ್, ಸಮಾಜದ ಪ್ರಮುಖರಾದ ಬಾಲಾಜಿ ಕುಂಬಾರ್, ಉಮೇಶ್ ನೌಬಾದ್, ಶಿವರಾಜ್ ಕಾಳಶೆಟ್ಟಿ, ಪವನ ಕೆ.ಆಣದೂರ್, ಪಂಡರಿ ಶ್ರೀಮಂಡಲ್, ಮಲ್ಲಿಕಾರ್ಜುನ್ ಕುಂಬಾರ್ ಹಾಗೂ ವಿರೇಶ್ ಬಾಳೂರ್ ಸೇರಿದಂತೆ ಇತರರು ಇದ್ದರು.

ವಾರ್ತಾ ಭಾರತಿ 26 Feb 2026 9:38 pm

ರಶ್ಯ, ಉಕ್ರೇನ್ ನಡುವೆ ಸೈನಿಕರ ಮೃತದೇಹಗಳ ವಿನಿಮಯ

ಮಾಸ್ಕೋ, ಫೆ. 26: ರಶ್ಯ ಒಂದು ಸಾವಿರ ಉಕ್ರೇನ್ ಸೈನಿಕರ ಮೃತದೇಹಗಳನ್ನು ಉಕ್ರೇನ್ ಗೆ ಹಸ್ತಾಂತರಿಸಿದೆ ಎಂದು ರಶ್ಯದ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ 35 ರಶ್ಯನ್ ಸೈನಿಕರ ಮೃತದೇಹಗಳನ್ನು ಹಸ್ತಾಂತರಿಸಿದೆ. ಯುದ್ಧದಲ್ಲಿ ಮೃತರಾದ ಸೈನಿಕರ ಮೃತದೇಹಗಳನ್ನು ಉಭಯ ದೇಶಗಳು ನಿಯಮಿತವಾಗಿ ವಿನಿಮಯ ಮಾಡಿಕೊಳ್ಳುತ್ತಿವೆ. ‘‘ಒಂದು ಸಾವಿರ ಉಕ್ರೇನ್ ಸೈನಿಕರ ಮೃತದೇಹಗಳನ್ನು ಉಕ್ರೇನ್ ಗೆ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ 35 ರಶ್ಯನ್ ಸೈನಿಕರ ಮೃತದೇಹಗಳನ್ನು ನೀಡಿದೆ’’ ಎಂದು ರಶ್ಯದ ಉನ್ನತ ಸಂಧಾನಕಾರ ವ್ಲಾದಿಮಿರ್ ಮೆಡಿನ್ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಬಿಳಿ ಬಟ್ಟೆ ಮತ್ತು ನೀಲಿ ಕೈಗವಸು ಧರಿಸಿರುವ ವ್ಯಕ್ತಿಗಳು ಶೀತಲೀಕೃತ ಟ್ರಕ್ ಒಂದರ ಹಿಂಭಾಗದಿಂದ ಮೃತದೇಹವನ್ನು ಒಳಗೊಂಡ ಬಿಳಿ ಬ್ಯಾಗೊಂದನ್ನು ಎತ್ತುತ್ತಿರುವ ಚಿತ್ರವೊಂದನ್ನು ಅವರು ಹಾಕಿದ್ದಾರೆ. ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಲಕ್ಷಾಂತರ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 2022ರ ಫೆಬ್ರವರಿಯಲ್ಲಿ ರಶ್ಯವು ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧವನ್ನು ಆರಂಭಿಸಿತು. ಯುದ್ಧವನ್ನು ನಿಲ್ಲಿಸುವ ಬಗ್ಗೆ ಅಮೆರಿಕದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುವುದಕ್ಕಾಗಿ ಎರಡೂ ದೇಶಗಳ ಸಂಧಾನಕಾರರು ಗುರುವಾರ ಜಿನೀವಾದಲ್ಲಿದ್ದಾರೆ.

ವಾರ್ತಾ ಭಾರತಿ 26 Feb 2026 9:38 pm

ಪಿಯು ಪ್ರಶ್ನೆಪತ್ರಿಕೆ ಮಾರಾಟ; ಸುಳ್ಳು ಸುದ್ದಿ ನಂಬಬೇಡಿ: ವಿದ್ಯಾರ್ಥಿಗಳು, ಹೆತ್ತವರಲ್ಲಿ ಇಲಾಖೆ ಮನವಿ

ಉಡುಪಿ, ಫೆ.26: ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆಗಳು ಮಾರಾಟ ವಾಗುತ್ತಿದೆ ಎಂಬ ಸುದ್ದಿಯನ್ನು ಕೆಲವು ಸುದ್ದಿ ಮಾಧ್ಯಮಗಳಲ್ಲಿ ಪ್ರಚುರ ಪಡಿಸಲಾಗಿದೆ. ಈ ಮಾಹಿತಿಯನ್ನು ಪರಿಶೀಲಿಸಲಾಗಿ ಯಾವುದೇ ಪೂರಕ ಪುರಾವೆಗಳು ಇರುವುದಿಲ್ಲ. ಇದು ತಪ್ಪು ಮಾಹಿತಿಯಾಗಿದ್ದು, ವಿದ್ಯಾರ್ಥಿ ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂತಹ ಸುಳ್ಳು ಸುದ್ದಿ ಹರಡುವವರನ್ನು ಗುರುತಿಸಿ ಅಂತಹವರ ವಿರುದ್ಧ ಕಾನೂನಾತ್ಮಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಸಾರ್ವಜನಿಕರು, ಪಾಲಕ, ಪೋಷಕರು ಇಂತಹ ವದಂತಿಗಳಿಗೆ ಮಹತ್ವ ನೀಡದೇ ತಮ್ಮ ಮಕ್ಕಳನ್ನು ಏಕಾಗ್ರತೆಯಿಂದ ಪರೀಕ್ಷಾ ಸಿದ್ಧತೆಗೆ ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದ್ದಾರೆ. ಈಗಾಗಲೇ ಮಂಡಳಿಯ ಜಾಲತಾಣದಲ್ಲಿ ಮಕ್ಕಳ ಪರೀಕ್ಷಾ ಸಿದ್ಧತೆಗಾಗಿ ಅಗತ್ಯವಾಗಿರುವ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳ ಅಂಕಣದಲ್ಲಿ ಒದಗಿಸಲಾಗಿದೆ. ಈ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಸುಳ್ಳು ಸುದ್ದಿಗಳ ಆಮಿಷಗಳಿಗೆ ಒಳಗಾಗಿ ತಪ್ಪು ದಾರಿ ಹಿಡಿದು ಮೋಸ ಹೋಗಬಾರದೆಂದು ಸಾರ್ವಜನಿಕರನ್ನು ಹಾಗೂ ಪಾಲಕ ಪೋಷಕರನ್ನು ಉಪನಿರ್ದೇಶಕರು ಕೋರಿದ್ದಾರೆ.

ವಾರ್ತಾ ಭಾರತಿ 26 Feb 2026 9:37 pm

ಮಲ್ಪೆ: ಬಂದರಿನಲ್ಲಿ ಮೀನು ಏಲಂ ಕಾರ್ಮಿಕನಿಗೆ ಹಲ್ಲೆ; ಸಹಬಾಳ್ವೆ ಸೇರಿ ವಿವಿಧ ಸಂಘಟನೆಗಳು ಖಂಡನೆ

ಉಡುಪಿ : ಮಲ್ಪೆ ಬಂದರಿನಲ್ಲಿ ದಿನನಿತ್ಯ ಬೆಳಿಗ್ಗೆ ಮೀನು ಏಲಂ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕಾರ್ಮಿಕ ಶೇಖ್ ಅಯ್ಯುಬ್ ಮೇಲೆ ಇಂದು ನಡೆದ ಮಾರಣಾಂತಿಕ ಹಲ್ಲೆಯನ್ನು ಉಡುಪಿ ಸಹಬಾಳ್ವೆ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಖಂಡಿಸಿವೆ. ಫೆ.26ರಂದು ಬೆಳಗಿನ 7:30ರ ಸುಮಾರಿಗೆ ಅಯ್ಯುಬ್ ಎಂದಿನಂತೆ ಮೀನು ಏಲಂ ಮಾಡುವ ತನ್ನ ಕೆಲಸದಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ಮಿಥುನ್ ಕರ್ಕೆರ ಎಂಬ ವ್ಯಕ್ತಿಯು ತನ್ನ ಬೋಟಿನಿಂದ ಕದ್ದ ಮೀನುಗಳನ್ನು ಏಲಂ ಮಾಡುತ್ತಿದ್ದೀಯ ಎಂದು ಆರೋಪಿಸಿ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಯ್ಯುಬ್ ತಮಗೆ ಬಂದ ಸರಕನ್ನು ಏಲಂ ಮಾಡುತ್ತಿದ್ದೇನೆಯೇ ಹೊರತು ಕಳ್ಳತನದ ವಿಷಯ ತಿಳಿದಿಲ್ಲವೆಂದು ಹೇಳಿದರೂ ಬಿಡದೆ ಓಡಾಡಿಸಿಕೊಂಡು ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಹೇಳಿಕೆಯೊಂದರಲ್ಲಿ ಘಟನೆಯನ್ನು ಖಂಡಿಸಿರುವ ಸಹಬಾಳ್ವೆ, ಅನೇಕ ದೈಹಿಕ ತೊಂದರೆಗಳಿಂದ ಬಳಲುತ್ತಿರುವ ಅಯ್ಯುಬ್ ತಾವು ಉಪವಾಸದಲ್ಲಿದ್ದೇನೆ, ಹೊಡೆಯ ಬೇಡ ಎಂದು ಬೇಡಿದರೂ ಎಚ್ಚರ ತಪ್ಪುವಷ್ಟು ಹಲ್ಲೆ ನಡೆಸಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆಲವು ತಿಂಗಳುಗಳ ಇದೇ ಮಲ್ಪೆ ಬಂದರಿನಲ್ಲಿ ಲಂಬಾಣಿ ಮಹಿಳೆಯೊಬ್ಬರ ಮೇಲೆ ಇದೇ ರೀತಿಯ ಆರೋಪ ಹೋರಿಸಿ ಸಾರ್ವಜನಿಕ ಹಲ್ಲೆ ನಡೆಸಿದ್ದು ದೊಡ್ಡ ಸುದ್ಧಿಯಾಗಿತ್ತು. ಆದರೂ ಈ ಬಗೆಯ ಹಿಂಸೆ ಬಂದರಿನಲ್ಲಿ ಯಾವ ತಡೆಯೂ ಇಲ್ಲದೆ ನಡೆಯುತ್ತಿದೆ. ಇಂಥ ಕಾನೂನುಬಾಹಿರ ಕೃತ್ಯ ಮಲ್ಪೆ ಬಂದರಿನಲ್ಲಿ ಮರುಕಳಿಸುತ್ತಿರುವುದು ಜಿಲ್ಲೆಯ ಕಾನೂನು ಆಡಳಿತಕ್ಕೊಂದು ಸವಾಲಿನಂತಿದೆ ಎಂದು ಅದು ಹೇಳಿದೆ. ಮಲ್ಪೆ ಬಂದರು ಎಲ್ಲಾ ಜಾತಿ, ಮತಗಳ ದುಡಿಯುವ ಜನರು ದಿನವಿಡೀ ದುಡಿದು ಬದುಕು ನಡೆಸುವ ಪ್ರದೇಶವಾ ಗಿದೆ. ಬಹುಪಾಲು ದುಡಿಯುವ ದುರ್ಬಲ ಜನರ ಮೇಲೆ, ಅಧಿಕಾರ ಹಾಗು ತೋಳ್ಬಲ ಉಳ್ಳ ಜನರು ನಡೆಸುವ ಹಿಂಸೆಯು ಶ್ರಮಿಕರ ಬದುಕುವ ಹಕ್ಕಿನ ಮೇಲೆ ನಡೆಸುವ ಕಾನೂನುಬಾಹಿರ ದೌರ್ಜನ್ಯವಾಗಿದೆ. ಅಯ್ಯುಬ್ ಮೇಲೆ ಇಂದು ನಡೆದಿ ರುವ ಈ ಹಿಂಸೆಯನ್ನು ನಮ್ಮ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ದುಡಿಯುವ ಜನರ ಬದುಕಿನ ಹಕ್ಕನ್ನು ರಕ್ಷಿಸಲೂ ಹಾಗು ಶಾಂತಿಯುತ ದುಡಿಮೆಯ ವಾತಾವರಣವನ್ನು ಕಾಪಾಡಲೂ, ಕಾನೂನಿನ ಹದ್ದು ಮೀರಿ ಹಿಂಸೆಗಿಳಿದವರ ಮೇಲೆ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕು ಎಂದು ಸಹಬಾಳ್ವೆಯ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಜಿಲ್ಲಾ ಪೋಲಿಸ್ ವರಿಷ್ಠ ರನ್ನು ಆಗ್ರಹಿಸಿದ್ದಾರೆ. ಸಿಐಟಿಯು ಖಂಡನೆ: ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕಾರ್ಮಿಕ ಶೇಖ್ ಅಯ್ಯುಬ್ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ (ಸಿಐಟಿಯು) ಖಂಡಿಸಿದೆ. ಇತ್ತೀಚೆಗೆ ಮಲ್ಪೆ ಬಂದರಿನಲ್ಲಿ ಸ್ಥಳೀಯ ಹಾಗೂ ಹೊರ ಜಿಲ್ಲೆಯಿಂದ ಬಂದ ಬಡ ಕಾರ್ಮಿಕರ ಮೇಲೆ ಹಲ್ಲೆ, ದಬ್ಬಾಳಿಕೆ, ದೌರ್ಜನ್ಯ ಹೆಚ್ಚುತ್ತಿದ್ದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮವನ್ನು ವಹಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಶೇಖ್ ಅಯ್ಯುಬ್ ಮೇಲೆ ಹಲ್ಲೆ ನಡೆಸಿದ ಮಿಥುನ್ ಕರ್ಕೇರನನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರ ಮತ್ತು ಮೀನು ಕಾರ್ಮಿಕರ ಸಂಘ(ಸಿಐಟಿಯು) ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್ ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 26 Feb 2026 9:36 pm

Podcast ಸಂದರ್ಶನದಲ್ಲಿ ‘ಜಾತಿವಾದಿ’ ಹೇಳಿಕೆ: JNU ಉಪಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ವಿರುದ್ಧ ಮುಂದುವರಿದ ಪ್ರತಿಭಟನೆ; ಇಲ್ಲಿಯವರೆಗೆ ಏನೇನಾಯ್ತು?

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಆವರಣದಲ್ಲಿ ರವಿವಾರ ತಡರಾತ್ರಿ ಭುಗಿಲೆದ್ದ ಪ್ರತಿಭಟನೆಗಳ ನಂತರ, ಪಾಡ್‌ ಕಾಸ್ಟ್ ಸಂದರ್ಶನದಲ್ಲಿ ಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ಮಾಡಿದ ಜಾತಿವಾದಿ ಹೇಳಿಕೆಗಳ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ (NCSC) ಕನಿಷ್ಠ ಎರಡು ದೂರುಗಳನ್ನು ಸಲ್ಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ದೂರುದಾರರಲ್ಲಿ ಒಬ್ಬರು 2024ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಮೊದಲ ದಲಿತ ಅಧ್ಯಕ್ಷರಾದ ಧನಂಜಯ್; ಮತ್ತೊಬ್ಬರು ಅಂಬೇಡ್ಕರ್ವಾದಿ ತತ್ವಶಾಸ್ತ್ರವನ್ನು ಉತ್ತೇಜಿಸಲು ಮೀಸಲಾಗಿರುವ ‘ಮಿಷನ್ ಅಂಬೇಡ್ಕರ್’ ಸಂಘಟನೆಯ ಸಂಸ್ಥಾಪಕ ಸೂರಜ್ ಕುಮಾರ್ ಬೌಧ್. ಯೂಟ್ಯೂಬ್ ಚಾನೆಲ್ “ದಿ ಸಂಡೇ ಗಾರ್ಡಿಯನ್”ನಲ್ಲಿ ಫೆಬ್ರವರಿ 16ರಂದು ಪ್ರಸಾರವಾದ 52 ನಿಮಿಷಗಳ ಪಾಡ್‌ ಕಾಸ್ಟ್ ಸಂದರ್ಶನದಲ್ಲಿ ಪಂಡಿತ್ ಅವರು ಕ್ಯಾಂಪಸ್ ನಲ್ಲಿನ ವಿದ್ಯಾರ್ಥಿ ಪ್ರತಿಭಟನೆ, ಜೆಎನ್ಯುಎಸ್ಯು ಪದಾಧಿಕಾರಿಗಳ ವಜಾ, ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಸಮಾನತೆಯ ನಿಯಮಗಳು ಹಾಗೂ ಜೆಎನ್ಯುನಲ್ಲಿ ಎಡಪಂಥೀಯ ರಾಜಕೀಯದ ಪಾತ್ರ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು, “ಯಾರೂ ಕೂಡ ಶಾಶ್ವತವಾಗಿ ಸಂತ್ರಸ್ತರಾಗಿ ಅಥವಾ ‘ವಿಕ್ಟಿಮ್ ಕಾರ್ಡ್’ ಬಳಸುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇದೇ ವಿಷಯವನ್ನು ವಿದೇಶಗಳಲ್ಲಿ ಕಪ್ಪು ಸಮುದಾಯದ ವಿಚಾರದಲ್ಲಿ ಮಾಡಲಾಗಿತ್ತು; ಈಗ ಅದೇ ವಿಚಾರವನ್ನು ಇಲ್ಲಿ ದಲಿತರ ವಿಚಾರದಲ್ಲೂ ತರಲಾಗಿದೆ” ಎಂದು ಹೇಳಿದ್ದರು. ಮಂಗಳವಾರ NCSC ಅಧ್ಯಕ್ಷರಿಗೆ ಸಲ್ಲಿಸಿದ ದೂರಿನಲ್ಲಿ, ಪಂಡಿತ್ ಅವರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕಬೇಕೆಂದು ಕೋರಲಾಗಿದೆ. ಉಪಕುಲಪತಿಯವರ ಮಾತು ದಲಿತ ಹಾಗೂ ಇತರ ಅಂಚಿನ ಸಮುದಾಯಗಳಿಗೆ ಸೇರಿದವರ ವಿರುದ್ಧ ದ್ವೇಷ ಮತ್ತು ಕೆಟ್ಟ ಭಾವನೆಗಳನ್ನು ಉತ್ತೇಜಿಸುತ್ತದೆ. ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಸೆಕ್ಷನ್ 3(1)(u) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಲಾಗಿದೆ. “ಜವಾಬ್ದಾರಿಯುತ ಶೈಕ್ಷಣಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯಾಗಿರುವ ಶಾಂತಿಶ್ರೀ ಡಿ. ಪಂಡಿತ್ ಅವರ ನಡವಳಿಕೆ ಕ್ರಿಮಿನಲ್ ಮತ್ತು ಖಂಡನೀಯ. ಶಿಕ್ಷಣ ಸಂಸ್ಥೆಗಳು ಒಳಗೊಳ್ಳುವಿಕೆ, ಜ್ಞಾನೋದಯ ಮತ್ತು ಸಾಂವಿಧಾನಿಕ ನೈತಿಕತೆಯ ಆಶ್ರಯ ತಾಣಗಳಾಗಿರಬೇಕು. ಉಪಕುಲಪತಿಯ ಹೇಳಿಕೆಗಳು ವಿದ್ಯಾರ್ಥಿಗಳು ಹಾಗೂ ದಲಿತ ಮತ್ತು ಅಂಚಿನ ಸಮುದಾಯದ ಸದಸ್ಯರ ನಡುವೆ ವಿಭಜನೆಯನ್ನು ಬಿತ್ತಿದ್ದು, ಭಾವನಾತ್ಮಕ ಯಾತನೆಯನ್ನು ಉಂಟುಮಾಡಿವೆ” ಎಂದು ಧನಂಜಯ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಂಡಿತ್ ಅವರ ಹೇಳಿಕೆಗಳು ಪ್ರಸಾರವಾದ ನಂತರ, ದಲಿತ ಹಾಗೂ ಅಂಚಿನ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳ ಮೇಲೆ ಕಿರುಕುಳದ ಘಟನೆಗಳು ನಡೆದಿವೆ; ಕ್ಯಾಂಪಸ್ ನಲ್ಲಿ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪಂಡಿತ್ ಈವರೆಗೆ ಕ್ಷಮೆಯಾಚಿಸಿಲ್ಲ. “ಈ ಹೇಳಿಕೆ ತಾರತಮ್ಯವನ್ನು ಸೃಷ್ಟಿಸಲು ಮತ್ತು ದ್ವೇಷ ಹಾಗೂ ಕೆಟ್ಟ ಭಾವನೆಗಳನ್ನು ಉತ್ತೇಜಿಸಲು ನೀಡಲಾಗಿದೆ” ಎಂದು ದೂರುದಾರರು ಹೇಳಿದ್ದಾರೆ. NCSC ಸ್ವತಂತ್ರ ತನಿಖೆಗೆ ನಿರ್ದೇಶಿಸಬೇಕು. ಜಾತಿವಾದಿ ಹೇಳಿಕೆ ನೀಡಿದ ಉಪಕುಲಪತಿಯನ್ನು ಅವರ ಸ್ಥಾನದಿಂದ ತಕ್ಷಣ ತೆಗೆದುಹಾಕುವುದು ಸೇರಿದಂತೆ ಕಠಿಣ ಶಿಸ್ತು ಮತ್ತು ಕಾನೂನು ಕ್ರಮವನ್ನು ಶಿಫಾರಸು ಮಾಡಬೇಕು ಎಂದು ಧನಂಜಯ್ ಒತ್ತಾಯಿಸಿದ್ದಾರೆ. ಇದಕ್ಕೂ ಮುನ್ನ ವಿವಾದಿತ ಹೇಳಿಕೆ ಕುರಿತು ಪಿಟಿಐಗೆ ಪ್ರತಿಕ್ರಿಯಿಸಿದ ಪಂಡಿತ್, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. “ನಾನು ಸ್ವತಃ ಬಹುಜನ; ನಾನು ಒಬಿಸಿ ಹಿನ್ನೆಲೆಯಿಂದ ಬಂದಿದ್ದೇನೆ” ಎಂದಿದ್ದಾರೆ. ಪಾಡ್‌ ಕಾಸ್ಟ್ ನಲ್ಲಿ ಕಳೆದ ತಿಂಗಳು ಸುಪ್ರೀಂ ಕೋರ್ಟ್ ತಡೆಹಿಡಿದ ಯುಜಿಸಿಯ ಇಕ್ವಿಟಿ ನಿಯಮಗಳ ಕುರಿತು ಮಾತನಾಡಿದ ಪಂಡಿತ್, ಅವುಗಳನ್ನು ಸಮರ್ಪಕ ಸಮಾಲೋಚನೆ ಇಲ್ಲದೆ ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ. “ಇದನ್ನು ರಹಸ್ಯವಾಗಿ ಮಾಡಲಾಗಿದೆ. ವ್ಯವಸ್ಥೆಯ ಭಾಗವಾಗಿರುವ ನಮ್ಮಲ್ಲಿ ಅನೇಕರಿಗೆ ಅದರಲ್ಲಿ ಏನಿದೆ ಎಂಬುದೇ ತಿಳಿದಿರಲಿಲ್ಲ” ಎಂದರು. ಇದೇ ವೇಳೆ ಅಂಬೇಡ್ಕರ್ ಗ್ರಂಥಾಲಯದಲ್ಲಿ ಕಣ್ಗಾವಲು ಉಪಕರಣಗಳನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಐದು ವಿದ್ಯಾರ್ಥಿ ನಾಯಕರನ್ನು ವಜಾಗೊಳಿಸಿದ ಜೆಎನ್ಯು ಆಡಳಿತದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು. “ಅವರು ಆಸ್ತಿಯನ್ನು ನಾಶಪಡಿಸಿದರು; ಅಕ್ಷರಶಃ ಒಡೆದುಹಾಕಿದರು. ಅದರ ಮೇಲೆ ಕುಳಿತು ಫೋಟೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದರು. ವಿದ್ಯಾರ್ಥಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ” ಎಂದಿದ್ದಾರೆ. ಆಡಳಿತವು ವಿದ್ಯಾರ್ಥಿಗಳನ್ನು ಎರಡು ಸೆಮಿಸ್ಟರ್ಗಳಿಗೆ ನಿಷೇಧಿಸಿ 20,000 ರೂ. ದಂಡ ವಿಧಿಸಿದೆ. “ಇದು ತೆರಿಗೆದಾರರ ಹಣ. ನಾನು ಉಪಕುಲಪತಿಯಾಗಿ ಸರ್ಕಾರಕ್ಕೆ, ಸಂಸತ್ತಿಗೆ ಮತ್ತು ಭಾರತದ ಜನರಿಗೆ ಉತ್ತರದಾಯಕ” ಎಂದು ಪಂಡಿತ್ ಹೇಳಿದ್ದಾರೆ. ►ಸಮತಾ ಜುಲೂಸ್ ವೇಳೆ ಕಲ್ಲು ತೂರಾಟ ವಿಸಿ ಹೇಳಿಕೆಯನ್ನು ಖಂಡಿಸಿ ಫೆ.23ರಂದು ತಡರಾತ್ರಿ ಜೆಎನ್ಯುದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿದೆ. ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕ್ಯಾಂಪಸ್ ಉದ್ವಿಗ್ನವಾಯಿತು. ಪಿಟಿಐ ಪ್ರಕಾರ, ಬೆಳಗಿನ ಜಾವ 1.30ರ ಸುಮಾರಿಗೆ ABVP ಮತ್ತು ಜೆ ಎನ್ ಯು ಎಸ್ ಯು ನಡುವೆ ಘರ್ಷಣೆ ನಡೆದು ಕಲ್ಲು ತೂರಾಟಕ್ಕೆ ಕಾರಣವಾಯಿತು. ಜೆ ಎನ್ ಯು ಎಸ್ ಯು “ಸಮತಾ ಜುಲೂಸ್”ಗೆ ಕರೆ ನೀಡಿತ್ತು. ಕ್ಯಾಂಪಸ್ ನ ಪೂರ್ವ ದ್ವಾರದ ಕಡೆಗೆ ಮೆರವಣಿಗೆ ನಡೆಸುವುದಾಗಿ ತಿಳಿಸಿತ್ತು. ಮೆರವಣಿಗೆ ವೇಳೆ ABVP ಕಲ್ಲು ತೂರಾಟ ನಡೆಸಿದೆ ಎಂದು ಜೆಎನ್ಯುಎಸ್ಯು ಆರೋಪಿಸಿದರೆ, ಎಡಪಂಥೀಯ ಗುಂಪುಗಳು ಘರ್ಷಣೆಯನ್ನು ಪ್ರಚೋದಿಸುತ್ತಿವೆ ಮತ್ತು ತಪ್ಪು ಮಾಹಿತಿ ಹರಡುತ್ತಿವೆ ಎಂದು ABVP ಪ್ರತಿಕ್ರಿಯಿಸಿದೆ. ಜೆಎನ್ಯು ಆವರಣದಲ್ಲಿ ರವಿವಾರ ತಡರಾತ್ರಿ ನಡೆದ ಸಂಘರ್ಷದಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಆಡಳಿತ ಮಂಡಳಿ, ಅಶಿಸ್ತು ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಕ್ಯಾಂಪಸ್ ನೊಳಗಿನ ಕೆಲವು ಕಟ್ಟಡಗಳಿಗೆ ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಬೀಗ ಹಾಕಿರುವುದು ಕಂಡುಬಂದಿದೆ. ಪ್ರತಿಭಟನಾಕಾರರು ಗ್ರಂಥಾಲಯ ಪ್ರವೇಶಿಸಿ, ಪ್ರತಿಭಟನೆಗೆ ಕೈಜೋಡಿಸುವಂತೆ ಅಲ್ಲಿದ್ದ ವಿದ್ಯಾರ್ಥಿಗಳಿಗೆ ಒತ್ತಡ ಹಾಕಿದರೆಂಬ ಆರೋಪವೂ ಕೇಳಿಬಂದಿದೆ. ಈ ವಿಚಾರವನ್ನು ಜೆ ಎನ್ ಯು ಆಡಳಿತ ಗಂಭೀರವಾಗಿ ಪರಿಗಣಿಸಿದೆ. ►ವಿದ್ಯಾರ್ಥಿಗಳ ಪ್ರತಿಭಟನೆ: ಜೆ ಎನ್ ಯು ಹೊರಗೆ ಆರ್ ಎ ಎಫ್ ನಿಯೋಜನೆ ಜೆಎನ್ಯುಎಸ್ಯು ಗುರುವಾರ “ಲಾಂಗ್ ಮಾರ್ಚ್”ಗೆ ಕರೆ ನೀಡಿತ್ತು. ಪ್ರತಿಭಟನೆ ಆರಂಭವಾಗುವ ಮುನ್ನ ಜೆ ಎನ್ ಯು ಹೊರಗೆ ಆರ್ಎಎಫ್ ಭಾರೀ ಪ್ರಮಾಣದಲ್ಲಿ ನಿಯೋಜಿಸಲಾಯಿತು. ಉಪಕುಲಪತಿಯ ಜಾತಿವಾದಿ ಹೇಳಿಕೆ ಹಾಗೂ ನಂತರದ ಬೆಳವಣಿಗೆಗಳಿಂದಾಗಿ ಆಡಳಿತದೊಂದಿಗೆ ಬಿಕ್ಕಟ್ಟು ಉಲ್ಬಣಗೊಂಡ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮೆರವಣಿಗೆಗೆ ಸಜ್ಜಾಗುತ್ತಿದ್ದಂತೆ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯೊಂದಿಗೆ ಯುಜಿಸಿ ನಿಯಮಗಳನ್ನು ಜಾರಿಗೆ ತರುವುದು, ಪ್ರಸ್ತಾವಿತ “ರೋಹಿತ್ ಕಾಯ್ದೆ” ಅನುಷ್ಠಾನ, ಉಪಕುಲಪತಿಯ ಕ್ಷಮೆಯಾಚನೆ ಮತ್ತು ರಾಜೀನಾಮೆ, ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಆರ್ಥಿಕ ಬೆಂಬಲ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಮೆರವಣಿಗೆಗೆ ಕರೆ ನೀಡಲಾಗಿದೆ. ಗುರುವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೆಎನ್ಯು ಸಬರಮತಿ ಟಿ ಪಾಯಿಂಟ್ನಿಂದ ಶಿಕ್ಷಣ ಸಚಿವಾಲಯದತ್ತ ಮೆರವಣಿಗೆ ನಡೆಸಲು ವಿದ್ಯಾರ್ಥಿಗಳು ಯೋಜಿಸಿದ್ದರು. ಆದರೆ ಭದ್ರತಾ ಸಿಬ್ಬಂದಿ ಗೇಟ್ಗಳನ್ನು ಲಾಕ್ ಮಾಡಿದ್ದರು. ವಿಶ್ವವಿದ್ಯಾಲಯದ ಹೊರಗೆ ಬ್ಯಾರಿಕೇಡ್ಗಳನ್ನು ಹಾಕಿ ಪ್ರತಿಭಟನೆಯನ್ನು ತಡೆಯಲಾಯಿತು. ಜೆಎನ್ ಯು ಎಸ್ ಯು ಹಾಗೂ ಎ ಐ ಎಸ್ ಎಫ್, ಎಸ್ ಎಫ್ ಐ, ಪಿಡಿಎಸ್ಯು, ಎನ್ಎಸ್ಯುಐ ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪೋಸ್ಟರ್ ಗಳು, ಒಕ್ಕೂಟದ ಧ್ವಜಗಳು ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟಿಸಿದರು. ಬೀಗ ಮುರಿದು ಬ್ಯಾರಿಕೇಡ್ ದಾಟಲು ಯತ್ನಿಸಿದ ವೇಳೆ ಪೊಲೀಸರು ತಡೆಯಲು ಮುಂದಾದರು. ಇದರಿಂದ ಘರ್ಷಣೆ ಮತ್ತಷ್ಟು ತೀವ್ರವಾಯಿತು. ಬಳಿಕ ಪೊಲೀಸರು ಮತ್ತು ಭದ್ರತಾ ಪಡೆಗಳು ವಿದ್ಯಾರ್ಥಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದವು. ವಿಶ್ವವಿದ್ಯಾಲಯದ ದ್ವಾರಗಳಿಗೆ ಬೀಗ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ. ಶೈಕ್ಷಣಿಕ ಮತ್ತು ವಿಶ್ವವಿದ್ಯಾಲಯ ಸಂಬಂಧಿತ ಬೇಡಿಕೆಗಳಿಗಾಗಿ ಪ್ರತಿಭಟಿಸುವ ಹಾಗೂ ಮೆರವಣಿಗೆ ನಡೆಸುವ ಹಕ್ಕುಗಳನ್ನು ಹತ್ತಿಕ್ಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ವಾರ್ತಾ ಭಾರತಿ 26 Feb 2026 9:35 pm

ಖಾಲಿ ಹುದ್ದೆಗಳ ಭರ್ತಿಗೆ ಸಿದ್ದಾರಾಮ ಸುಲ್ತಾನಪುರ ಆಗ್ರಹ

ಅಫಜಲಪೂರ: ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ, ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕರುನಾಡ ವಿಜಯಸೇನೆ ತಾಲೂಕ ಅಧ್ಯಕ್ಷ ಸಿದ್ದಾರಾಮ ಸುಲ್ತಾನಪುರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಲಬುರಗಿ, ವಿಜಯಪುರ, ಧಾರವಾಡ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಡ ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿ ಹಾಗೂ ಕೋಚಿಂಗ್ ಕೇಂದ್ರಗಳಲ್ಲಿ ಮೂರು ವರ್ಷಗಳಿಂದ ಕಷ್ಟಪಟ್ಟು ಓದುತ್ತಿದ್ದಾರೆ. ಆದರೆ ನೇಮಕಾತಿ ಪ್ರಕಟಣೆ ಹೊರಬಾರದಿರುವುದು ಹಾಗೂ ಪರೀಕ್ಷೆಗಳು ನಡೆಯದೆ ಇರುವುದರಿಂದ ಅವರ ಭವಿಷ್ಯ ಅನಿಶ್ಚಿತತೆಯಲ್ಲಿದೆ ಎಂದು ಅವರು ದೂರಿದರು. ತಕ್ಷಣವೇ ಸರ್ಕಾರ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸ್ಪಷ್ಟ ಕಾರ್ಯಯೋಜನೆ ಘೋಷಿಸಬೇಕು ಎಂದು ಆಗ್ರಹಿಸಿದರು.

ವಾರ್ತಾ ಭಾರತಿ 26 Feb 2026 9:34 pm

ರಂಗಚಟುವಟಿಕೆಗಳಿಂದ ಸೃಜನಶೀಲ ವ್ಯಕ್ತಿತ್ವ: ಹರಿಪ್ರಸಾದ್ ರೈ

ಸುಮನಸಾ ಕೊಡವೂರು ರಂಗಹಬ್ಬ-14

ವಾರ್ತಾ ಭಾರತಿ 26 Feb 2026 9:34 pm

ಚಿಂಚೋಳಿ: ಹಾರಕೂಡ ಚನ್ನಬಸವ ಶಿವಯೋಗಿಗಳ ರಥೋತ್ಸವ

ಚಿಂಚೋಳಿ: ಪಟ್ಟಣದ ಲಿಂ. ಸದ್ಗುರು ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪಂಚಲಿಂಗೇಶ್ವರ ಬುಗ್ಗಿ ಸಮೀಪದ ಮುಲ್ಲಾಮಾರಿ ನದಿ ತೀರದಲ್ಲಿ ಭವ್ಯ ರಥೋತ್ಸವ ಜರುಗಿತು. ಜಾತ್ರಾ ಮಹೋತ್ಸವಕ್ಕೆ ಚಿಂಚೋಳಿ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಷ.ಬ್ರ. ಡಾ. ಚನ್ನವೀರ ಶಿವಾಚಾರ್ಯರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಸಂಪ್ರದಾಯದಂತೆ ವಿಶಿಷ್ಟ ಟೋಪಿ ಧರಿಸಿ, ಕೈಯಲ್ಲಿ ಮಂತ್ರದಂಡ ಹಿಡಿದು ಸಂಜೆ 6 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವ ಮೈದಾನದಲ್ಲಿ ತಳಿರು ತೋರಣಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ರಥವನ್ನು ಎಳೆಯಲಾಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ಭಕ್ತರು ರಥದ ಮೇಲೆ ನಾಣ್ಯ, ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ತಮ್ಮ ಹರಕೆಗಳನ್ನು ಸಲ್ಲಿಸಿದರು. ನಂತರ ಭಕ್ತರು ಮಠದಲ್ಲಿ ಗದ್ದುಗೆ ಹಾಗೂ ಶಿವಾಚಾರ್ಯರ ದರ್ಶನ ಪಡೆದು ಆಶೀರ್ವಾದ ಪಡೆದರು. ರಥೋತ್ಸವದಲ್ಲಿ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳೊಂದಿಗೆ ಚಿಂಚೋಳಿ, ಚಂದಾಪುರ, ಐನೋಳ್ಳಿ, ದೇಗಲಮಡಿ, ಪೋಲಕಪಳ್ಳಿ, ಗಾರಂಪಳ್ಳಿ, ನೀಮಾಹೋಸಳ್ಳಿ, ಮುತ್ತಂಗಿ, ಕೋಳ್ಳೂರ, ಕಲ್ಲೂರ ರೋಡ್, ನಾಗಯಿದ್ಲಾಯಿ, ಅಣವಾರ, ಚಿಮ್ಮಾಯಿದ್ಲಾಯಿ, ದಸ್ತಾಪೂರ, ಸುಲೇಪೇಟ, ಕನಕಪುರ, ತಾದಲಾಪೂರ, ದೋಟಿಕೋಳ ಸೇರಿದಂತೆ ಅನೇಕ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ವಾರ್ತಾ ಭಾರತಿ 26 Feb 2026 9:31 pm

Bengaluru | ಹಣದ ವಿಚಾರಕ್ಕೆ ಮನಸ್ತಾಪ : ಸಿನಿಮಾ ನಿರ್ದೇಶಕನನ್ನು ಅಪಹರಿಸಿದ 11 ಮಂದಿಯ ಬಂಧನ

ಬೆಂಗಳೂರು, ಫೆ.26: ಹಣದ ವಿಚಾರವಾಗಿ ಮನಸ್ತಾಪಗೊಂಡು ಸಿನಿಮಾ ನಿರ್ದೇಶಕರೊಬ್ಬರನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿ ಹಣ, ಆಭರಣ ದೋಚಿದ ಪ್ರಕರಣ ಸಂಬಂಧ ಕಿರುತೆರೆ ನಟಿ ಸೇರಿದಂತೆ 11 ಮಂದಿಯನ್ನು ಇಲ್ಲಿನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಅನೀಶ್(35) ಎಂಬಾತ ಅಪಹರಣಕ್ಕೊಳಪಟ್ಟ ಸಿನಿಮಾ ನಿರ್ದೇಶಕ. ಕಿರುತೆರೆ ನಟಿ ಐಶ್ವರ್ಯ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿನಿಮಾ ನಿರ್ದೇಶಕ ಅನೀಶ್ ಅವರು ಹೊಸ ಚಲನಚಿತ್ರವೊಂದನ್ನು ನಿರ್ದೇಶಿಸಿದ್ದು ಅದು ಇನ್ನೂ ತೆರೆಕಂಡಿಲ್ಲ. ಈ ಚಲನಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದ ವ್ಯಕ್ತಿ ಹಾಗೂ ನಿರ್ದೇಶಕ ಅನೀಶ್ ಜೊತೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಹಣದ ವಿಚಾರವಾಗಿ ನಿರ್ದೇಶಕನ ಜೊತೆ ಮನಸ್ಥಾಪ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಎರಡು ತಿಂಗಳ ಹಿಂದೆ ನಿರ್ದೇಶಕ ಅನೀಶ್, ಸಿನಿಮಾ ನಿಲ್ಲಿಸಿ ಕಾರಣಾಂತರಗಳಿಂದ ಮುಂಬೈಗೆ ಸ್ಥಳಾಂತರವಾಗಿದ್ದರು. ಈ ವೇಳೆ ತನ್ನ ಕಾರು ಮಾರಾಟದ ಕುರಿತು ಪರಿಚಯದ ನಟಿ ಐಶ್ವರ್ಯಾಗೆ ಮಾಹಿತಿ ನೀಡಿದ್ದರು. ಆರೋಪಿಗಳು ಇದೇ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು, ಕಾರು ಖರೀದಿಸುವುದಾಗಿ ಹೇಳಿ ನಟಿ ಐಶ್ವರ್ಯಾ ಮೂಲಕ ನಿರ್ದೇಶಕನನ್ನು ಫೆ.9ರಂದು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಆಡುಗೋಡಿ ಠಾಣೆ ವ್ಯಾಪ್ತಿಗೆ ಕರೆದು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಅಲ್ಲಿ ಐದಾರು ಮಂದಿ ಸೇರಿಕೊಂಡು ನಿರ್ದೇಶಕ ಅನೀಶ್‍ಗೆ ಹಲ್ಲೆ ನಡೆಸಿದ್ದಲ್ಲದೇ ಅವರ ಬಳಿ ಇದ್ದ ಹಣ ಹಾಗೂ ಧರಿಸಿದ್ದ ಚಿನ್ನದ ಆಭರಣಗಳನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ತದ ನಂತರ ಕಾರಿನಲ್ಲಿ ಮತ್ತೆ ಅವರನ್ನು ಕರೆದುಕೊಂಡು ತುಮಕೂರು ಜಿಲ್ಲೆಯ ಪಂಡಿತನಹಳ್ಳಿಯಲ್ಲಿರುವ ಮಂದಾರಗಿರಿ ಬೆಟ್ಟದ ಬಳಿ ಹೋಗಿದ್ದು ಅಲ್ಲಿ ಇನ್ನಿಬ್ಬರು ಸೇರಿಕೊಂಡು ಮತ್ತೆ ಅನೀಶ್ ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಗಾಯಾಳು ಅನೀಶ್ ಅವರು ಆಡುಗೋಡಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಕಿರುತೆರೆ ನಟಿ ಐಶ್ವರ್ಯಾ ಸೇರಿದಂತೆ 11 ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ವಾರ್ತಾ ಭಾರತಿ 26 Feb 2026 9:29 pm

Ind Vs Zim- ಉತ್ತಮ ಆರಂಭದ ಬಳಿಕ ಸಂಜು ಸ್ಯಾಮ್ಸನ್ ಔಟ್; ವೈರಲ್ ಆಗಿದೆ ಇರ್ಫಾನ್ ಪಠಾಣ್ ಪೋಸ್ಟ್

India Vs Zimbabwe- ಸತತ ವೈಫಲ್ಯದ ಬಳಿಕವೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಮತ್ತೊಂದು ಚಾನ್ಸ್ ಪಡೆದ ಸಂಜು ಸ್ಯಾಮ್ಸನ್ ಅವರು ಭಾರತ ತಂಡಕ್ಕೆ ಬಿರುಸಿನ ಆರಂಭ ನೀಡಿದರು. ಕೇವಲ 15 ಎಸೆತಗಳಿಂದ 24 ರನ್ ಗಳಿಸಿ ಔಟಾದರು. ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಅವರ ಬ್ಯಾಟಿಂಗ್ ಬಗ್ಗೆ ಇದೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇರ್ಫಾನ್ ಪಠಾಣ್ ಅವರು ಮಾತ್ರ ಸಂಜು ಸ್ಯಾಮ್ಸನ್ ಅವರು ತಂಡ ಅವರಿಗೆ ಕೊಟ್ಟ ಕಾರ್ಯವನ್ನು ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 26 Feb 2026 9:29 pm

2 ಕೋಟಿಯ ಉದ್ಯೋಗಸೃಷ್ಟಿಯ ವಾಗ್ದಾನ ಈಡೇರಿಸದ ಮೋದಿ: ಸಿದ್ದಲಿಂಗ ಬಾಗೇವಾಡಿ

ಕಲಬುರಗಿ: ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಜೇಷನ್ (ಎಐಡಿವೈಒ) ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ನಗರದ ಕನ್ನಡ ಭವನದಲ್ಲಿ ಗುರುವಾರ ಉದ್ಯೋಗಕ್ಕಾಗಿ ಯುವಜನರ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ದೇಶದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಹಿಂದಿನ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ನೀತಿಗಳೇ ಕಾರಣ ಎಂದು ಆರೋಪಿಸಿದ ಅವರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಗ್ದಾನಗಳನ್ನು ಈಡೇರಿಸಿಲ್ಲ ಎಂದು ಟೀಕಿಸಿದರು. ಕಳೆದ ಆರು ತಿಂಗಳಿಂದ ರಾಜ್ಯದಲ್ಲಿರುವ ಖಾಲಿ ಹುದ್ದೆಗಳ ಭರ್ತಿಗಾಗಿ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ಕೂಡಲೇ 50,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಕೂಡಲೇ ಭರ್ತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 50 ಸಾವಿರ ಹುದ್ದೆಗಳ ಭರ್ತಿಗೆ ಹಣಕಾಸು ಅನುಮೋದನೆ ನೀಡಿರುವ ಹಿನ್ನೆಲೆ ತಕ್ಷಣ ಅಧಿಸೂಚನೆ ಹೊರಡಿಸಬೇಕು, ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕು ಹಾಗೂ ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಯೌವನವನ್ನು ಕೇವಲ ವಯಸ್ಸಿನ ಆಧಾರದ ಮೇಲೆ ಪರಿಗಣಿಸದೇ, ಮಾನಸಿಕ, ದೈಹಿಕ, ಸಾಮಾಜಿಕ ಹಾಗೂ ವೈಚಾರಿಕ ಜಾಗೃತಿಯೊಂದಿಗೆ ಸಂಘಟಿತ ಹೋರಾಟಕ್ಕೆ ತಯಾರಾಗಬೇಕು ಎಂದು ಅವರು ಕರೆ ನೀಡಿದರು. ಶೃಂಗೇರಿ ಕೆರಿಯರ್ ಅಕಾಡೆಮಿಯ ಉಪನ್ಯಾಸಕರಾದ ಘಾಳೇಶ್ ಎಂ. ಅತಿಥಿಗಳಾಗಿ ಮಾತನಾಡಿ, ಬಡ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಲ್ಲಿ ಕಷ್ಟಪಟ್ಟು ಓದುತ್ತಿದ್ದು, ಸರ್ಕಾರವು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು. ಜಿಲ್ಲಾ ಸಮಿತಿ ಸದಸ್ಯ ರಮೇಶ್ ದೇವಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಉಪನ್ಯಾಸಕರಾದ ಪ್ರಶಾಂತ್ ಆರ್. ಸಂಗೊಳಗಿ, ಸಚಿನ್ ಪವಾರ್ ಹಾಗೂ ಪ್ರಶಾಂತ್ ಹಾದಿಮನಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿವೈಓ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಹೆಚ್. ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಸಿದ್ದು ಚೌದ್ರಿ, ಜಿಲ್ಲಾ ಕಾರ್ಯದರ್ಶಿ ಈಶ್ವರ್ ಕೆ., ಸದಸ್ಯರಾದ ಗೌತಮ್ ಪರತೂರಕರ್, ರಘು ಪವಾರ್, ದೇವರಾಜ್ ಎಂ., ಸತೀಶ್ ಪಟ್ಟಣ, ಕಿರಣ್ ಮಾನೆ ಸೇರಿದಂತೆ ನೂರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಇದೇ ವೇಳೆಯಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯನ್ನು ರಚಿಸಲಾಯಿತು. ರಮೇಶ್ ದೇವಕರ್ ಅವರನ್ನು ಜಿಲ್ಲಾ ಸಂಚಾಲಕರಾಗಿ, ಸಚಿನ್ ಪವಾರ್ ಹಾಗೂ ಪ್ರಶಾಂತ್ ಹಾದಿಮನಿ ಅವರನ್ನು ಸಹ ಸಂಚಾಲಕರಾಗಿ ನೇಮಕ ಮಾಡಲಾಯಿತು. ಸದಸ್ಯರಾಗಿ ಸುರೇಶ್ ಮಠ, ಸಚಿನ್ ಸಾಗರ್, ಪ್ರಭಾಕರ್ ಚಿಂಚೋಳಿ, ತೇಜಸ್ ಆರ್. ಇಬ್ರಾಹಿಂಪುರ್, ಪ್ರದೀಪ್ ಕುಮಾರ್, ಅನು ಸಾಹುಕಾರ್ ಹಾಗೂ ಸಮರ್ಥ್ ಪುಲಾರಿ ಅವರನ್ನು ಆಯ್ಕೆ ಮಾಡಲಾಯಿತು.

ವಾರ್ತಾ ಭಾರತಿ 26 Feb 2026 9:28 pm

ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದು ತುಂಬಾ ಅಪಾಯಕಾರಿ: ವಿಶ್ವರಾಧ್ಯ ಶ್ರೀ

ಅಫಜಲಪುರ: ಪಟ್ಟಣದ ಶ್ರೀ ಶಿವಲಿಂಗೇಶ್ವರ ಬಾಲ ಭಾರತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಿವಲಿಂಗೇಶ್ವರ ಪ್ರೌಢ ಶಾಲೆಗಳ 37ನೇ ವಾರ್ಷಿಕ ಸ್ನೇಹ ಸಮ್ಮೇಳನವು ಗುರುವಾರ ಸಂಜೆ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ಜರುಗಿತು. ಅಫಜಲಪುರ ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿದ ಅವರು, “ಈ ಶಿಕ್ಷಣ ಸಂಸ್ಥೆ ಹೆಮ್ಮರದಂತೆ ಬೆಳೆದು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದು ಅಪಾಯಕಾರಿಯಾಗಿದೆ ಎಂದರು. ಮಕ್ಕಳಿಗೆ ಉತ್ತಮ ಸಂಸ್ಕಾರ, ವಿಚಾರಶೀಲತೆ, ಆಚಾರ-ವಿಚಾರ ಮತ್ತು ಒಳ್ಳೆಯ ಭಾವನೆಗಳನ್ನು ನೀಡುವುದು ತಂದೆ-ತಾಯಿಗಳ ಕರ್ತವ್ಯ,” ಎಂದು ಸ್ಪಷ್ಟ ಸಂದೇಶ ನೀಡಿದರು. ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಪೋಷಕರ ಮೆಚ್ಚುಗೆಗೆ ಪಾತ್ರವಾದವು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಿಂಬಾಳ, ಕಾರ್ಯದರ್ಶಿ ಮಳೇಪ್ಪ ಸಿ. ಡಾಂಗೆ, ಉಪಾಧ್ಯಕ್ಷ ಮಹಾದೇವಪ್ಪ ಕಲಕೇರಿ, ಸದಸ್ಯರಾದ ಶಂಕ್ರಯ್ಯ ಹಿರೇಮಠ, ಸಂಗಪ್ಪ ನೂಲಾ, ಮಲ್ಲಿಕಾರ್ಜುನ ಕಣ್ಣಿ, ಮಹಾಂತೇಶ ಮಸಳಿ, ಶಿಕ್ಷಣ ಇಲಾಖೆಯ ಸಂಪನ್ಮೂಲ ಅಧಿಕಾರಿ ಸಿದ್ದಪ್ಪ ಬಿರಾದಾರ ಹಾಗೂ ಬಿ.ಆರ್.ಪಿ. ವಿಠಲ ಹಡಪ, ಪ್ರಾಥಮಿಕ ಶಾಲೆ ಮುಖ್ಯ ಗುರು ಮನೋಜಕುಮಾರ ವಾಲಿ ಉಪಸ್ಥಿತಿರಿದ್ದರು. ಸಂಸ್ಥೆಯ ಆಡಳಿತ ಅಧಿಕಾರಿ ಅಂಬೇಡ್ಕರ್ ತಳಕೇರಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಬಿರಾದಾರ ಸ್ವಾಗತಿಸಿದರು. ಸಿದ್ದು ಉಡಚಣ ಹಾಗೂ ಅಣವೀರಯ್ಯ ಹಿರೇಮಠ ನಿರೂಪಿಸಿದರು. ಸುಜಾತ ಬಿರಾದಾರ ವಂದಿಸಿದರು.

ವಾರ್ತಾ ಭಾರತಿ 26 Feb 2026 9:20 pm

ಫೆ.28ರಿಂದ ದ್ವಿತೀಯ ಪಿಯುಸಿ ಪರೀಕ್ಷೆ | 1,217 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 7 ಲಕ್ಷ ವಿದ್ಯಾರ್ಥಿಗಳು

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿಯಲ್ಲಿ ಉಚಿತ ಪ್ರಯಾಣ

ವಾರ್ತಾ ಭಾರತಿ 26 Feb 2026 9:15 pm

ಬೀದರ್: 50 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಇಇ, ಸಿಬ್ಬಂದಿ

ಬೀದರ್: ಗುತ್ತಿಗೆದಾರನಿಂದ 50 ಸಾವಿರ ರೂ. ಲಂಚ ಪಡೆಯುವಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಲಿಂಗಪ್ಪ ಬಿರಾದರ್ ಮತ್ತು ಸಿಬ್ಬಂದಿ ಬಾಬು ಅವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಬೀದರ್ ಜಿಲ್ಲಾ ಪಂಚಾಯತಿ ಆವರಣದಲ್ಲಿರುವ ಕಚೇರಿ ಮೇಲೆ ಗುರುವಾರ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ಕಾಮಗಾರಿ ಬಿಲ್ ವಿಚಾರಕ್ಕೆ ಗುತ್ತಿಗೆದಾರನಿಂದ 50 ಸಾವಿರ ರೂ. ಲಂಚ ಪಡೆಯುವಾಗ ಇಇ ರಾಮಲಿಂಗಪ್ಪ ಬಿರಾದರ್ ಹಾಗೂ ಸಿಬ್ಬಂದಿ ಬಾಬು ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹನುಮಂತರಾಯ್ ನೇತೃತ್ವದ ತಂಡದಿಂದ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 26 Feb 2026 9:13 pm

ಗ್ಯಾರಂಟಿ ಯೋಜನೆಗಳಿಂದ ಸರಕಾರಕ್ಕೆ ಹೊರೆಯಾಗುತ್ತಿದೆ; ಆದರೂ ನಿಲ್ಲಿಸಲ್ಲ : ಡಿ.ಕೆ.ಶಿವಕುಮಾರ್

‘ಮೃತಪಟ್ಟಿರುವವರ ಹೆಸರಿನಲ್ಲಿ ಯೋಜನೆಗಳ ಹಣ ಪಡೆಯಲಾಗಿದೆ’

ವಾರ್ತಾ ಭಾರತಿ 26 Feb 2026 9:06 pm

ಮಂಗಳೂರಿನಲ್ಲಿ ಖಾಸಗಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ

ಮಂಗಳೂರು: ನಗರದಲ್ಲಿ ಖಾಸಗಿ ಬಸ್ ಮಾಲಕರ ಮೂಲಕ ಎಲೆಕ್ಟ್ರಿಕ್ ಬಸ್ ಸಂಚಾರವು ನಗರದ ಮೊರ್ಗನ್ ಗೇಟ್ ಪಾಲೆ ಮಾರ್ ಗಾರ್ಡನ್ ನಲ್ಲಿ ನಡೆದ ಸಮಾರಂಭದೊಂದಿಗೆ ಆರಂಭಗೊಂಡಿದೆ. ನಗರದ ನಡುವೆ ಸಂಚಾರ ಮಾಡುವ ರೂಟ್ ನಂಬರ್ 27 ಬಸ್ ಗಳ ಪೈಕಿ ಇದೀಗ ಪ್ರಥಮ ಬಾರಿಗೆ ಒಂದು ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಿದೆ. ಇದರೊಂದಿಗೆ ಮಂಗಳೂರಿನ ಖಾಸಗಿ ಬಸ್ ಸಂಚಾರ ದಲ್ಲಿ ಹೊಸ ಅಧ್ಯಾಯ ಆರಂಭಗೊಂಡಂತಾಗಿದೆ. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಬಸ್ ಗೆ ಚಾಲನೆ ನೀಡಿ ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ,ಬಸ್ ಮಾಲಕ ದಿಲ್ ರಾಜ್, ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.    

ವಾರ್ತಾ ಭಾರತಿ 26 Feb 2026 8:59 pm

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ: ಯುವಕ ಸೆರೆ

ಮಂಗಳೂರು : ನಗರದ ಬಂಗ್ರಕೂಳೂರು ಸಾರ್ವಜನಿಕ ರಸ್ತೆ ಬದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರಾಯೀಸ್ ಶೇಕ್ (28) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಫೆ.25ರಂದು ಮಧ್ಯಾಹ್ನ 12ಕ್ಕೆ ಪೊಲೀಸರು ಗಸ್ತಿನಲ್ಲಿದ್ದಾಗ ಬಂಗ್ರಕೂಳೂರು ಸಾರ್ವಜನಿಕ ಡಾಮಾರು ರಸ್ತೆಯ ಎಡಬದಿಯಲ್ಲಿದ್ದ ಸ್ಕೂಟರ್ ಬಳಿ ರಾಯೀಸ್ ಶೇಕ್ ಅನುಮಾನಾಸ್ಪವಾಗಿ ನಿಂತಿದ್ದು, ಅವನ ಬಳಿ ಹತ್ತಿರ ಹೋಗಿ ವಿಚಾರಿಸಿದಾಗ ಕುಂದಾಪುರದ ಸುಹಾನ ಎಂಬಾತ ತಿಳಿಸಿದ ಮೇರೆಗೆ ಮಂಗಳೂರಿನ ಒಬ್ಬ ವ್ಯಕ್ತಿಗೆ ಗಾಂಜಾ ಮಾರಾಟ ಮಾಡಲು ಕಾಯುತ್ತಿರುವುದಾಗಿ ತಿಳಿಸಿದ್ದಾನೆ. ರಾಯೀಸ್ ಶೇಖ್‌ನನ್ನು ವಶಪಡಿಸಿಕೊಂಡ ಪೊಲೀಸರು ಹೂ, ಕಾಂಡ, ಮೊಗ್ಗು, ಬೀಜಗಳನ್ನು ಒಳಗೊಂಡ ಘಾಟು ವಾಸನೆಯನ್ನು ಹೊಂದಿದ್ದ ಸುಮಾರು 560 ಗ್ರಾಂ ತೂಕದ ಗಾಂಜಾ ಪ್ಯಾಕೆಟ್-1, ಬಿಳಿ ಬಣ್ಣದ ಹರಳುನಂತಿರುವ 384 ಗ್ರಾಂ ತೂಕದ ಎಂಡಿಎಂಎ ಪ್ಯಾಕೆಟ್,  ಮೊಬೈಲ್ ಫೋನ್ -1 ಸಹಿತ 11,52,000 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 26 Feb 2026 8:55 pm

ಮಲ್ಲಿಕಾರ್ಜುನ ಮುತ್ಯಾ ಹೆಸರು ಕೆಡಿಸಲು ಷಡ್ಯಂತ್ರ ನಡೆಯುತ್ತಿದೆ: ಎಂಎಲ್ಸಿ ತಿಪ್ಪಣಪ್ಪ ಕಮಕನೂರ್

ಕಲಬುರಗಿ: ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ನಡೆಸಿದರೆಂಬ ಆರೋಪದ ಹಿನ್ನೆಲೆ ಮಲ್ಲಿಕಾರ್ಜುನ ಮುತ್ಯಾ ಸಂಬಂಧಿಸಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಎಂಎಲ್ಸಿ ತಿಪ್ಪಣಪ್ಪ ಕಮಕನೂರ್ ಅವರು, ಮುತ್ಯಾರ ಹೆಸರು ಕೆಡಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಪ್ರಾಪ್ತ ಬಾಲಕಿಯು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದಳು. ಮುತ್ಯಾರ ಆಶೀರ್ವಾದದಿಂದ ಆಕೆ ಗುಣಮುಖಳಾದ ಬಳಿಕ, ಪೋಷಕರೊಂದಿಗೆ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದಾಳೆ. ಇದೇ ಸಂದರ್ಭದಲ್ಲಿ ಮುತ್ಯಾರವರು ಬಾಲಕಿಯನ್ನು ಎತ್ತಿಕೊಂಡು ಪ್ರೀತಿ ತೋರಿಸಿದ್ದಾರೆ. ಈ ಘಟನೆಯನ್ನು ತಪ್ಪಾಗಿ ಅರ್ಥೈಸಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 26 Feb 2026 8:53 pm

Modi In Israel : ಮೋದಿ ವಿಮಾನದ ಮೇಲೆ ವಿಶ್ವದ ಕಣ್ಣು, ಸೌದಿ ಮೇಲೆ ಹಾರುತ್ತಿದ್ದಾಗ ಲೈವ್ ಟ್ರ್ಯಾಕರ್ಸ್ ವಿಶ್ವದಾಖಲೆ

Indian PM Modi visit to Israel : ಉಗ್ರರ ಭೇಟೆಯನ್ನು ಪ್ರಮುಖ ಅಜೆಂಡಾಗೆ ಇಟ್ಟುಕೊಂಡು, ಇಸ್ರೇಲ್ ದೇಶಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ ದೊರೆತಿದೆ. ಪಾಕಿಸ್ತಾನದ ವಾಯುನೆಲೆಯ ಮೇಲೆ ಹೋಗದೇ, ಸೌದಿ ಅರೇಬಿಯಾ ಕಡೆಗೆ ಸಾಗುತ್ತಿದ್ದ ವೇಳೆ, ವಿಮಾನದ ಟ್ರ್ಯಾಕಿಂಗ್ ಮಾಡಿದ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.

ವಿಜಯ ಕರ್ನಾಟಕ 26 Feb 2026 8:53 pm

ಭ್ರಷ್ಟಾಚಾರ ನಿಯಂತ್ರಣಕ್ಕೆ ಅಧಿಕಾರಿಗಳು, ಸಾರ್ವಜನಿಕರು ಬದಲಾಗಬೇಕು: ನ್ಯಾ.ಬಿ.ವೀರಪ್ಪ

ಉಪಲೋಕಾಯುಕ್ತರಿಂದ ಪ್ರಕರಣಗಳ ವಿಚಾರಣೆ, ವಿಲೇವಾರಿ ಸಭೆ

ವಾರ್ತಾ ಭಾರತಿ 26 Feb 2026 8:49 pm

ಪರಿಶಿಷ್ಟರ ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ

ವಾರ್ತಾ ಭಾರತಿ 26 Feb 2026 8:42 pm

ಕಲಬುರಗಿ: ಕಾರಾಗೃಹದ ಬಂದಿಗಳಿಗೆ ವೈಜ್ಞಾನಿಕ ಕುರಿ, ಮೇಕೆ ಸಾಕಾಣಿಕೆ ತರಬೇತಿ

ಕಲಬುರಗಿ: ಕಲಬುರಗಿ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಹಾಗೂ ಕೇಂದ್ರ ಕಾರಾಗೃಹ ಇವುಗಳ ಸಹಯೋಗದೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹದ 51 ಜನ ಕಾರಾಗೃಹದ ಬಂದಿಗಳಿಗೆ ಫೆಬ್ರವರಿ 25 ಹಾಗೂ 26 ರಂದು ಎರಡು ದಿನಗಳ ಕಾಲ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ “ವೈಜ್ಞಾನಿಕ ಕುರಿ ಮತ್ತು ಮೇಕೆ ತರಬೇತಿ ಸಾಕಾಣಿಕೆ ತರಬೇತಿ” ಕಾರ್ಯಕ್ರಮವನ್ನು ಕಲಬುರಗಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ದಯಾನಂದ ಅವರು ಬುಧವಾರ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಬಂದಿಗಳ ಮನಃ ಪರಿವರ್ತನೆ ಹಾಗೂ ಸ್ವಾವಲಂಭಿ ಬದುಕಿಗಾಗಿ ಪಶುಪಾಲನೆ ಇಲಾಖೆಯಿಂದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ನೀಡಲಾಗುತ್ತಿದ್ದು, ಬಂದಿಗಳು ಈ ತರಬೇತಿಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ಶರಣಬಸಪ್ಪ ನಿಂಗದಹಳ್ಳಿ ಹಾಗೂ ಡಾ. ವಿಜಯಕುಮಾರ ತೆಲಗಾರ ಅವರು, ಕರ್ನಾಟಕದಲ್ಲಿ 5 ತಳಿಯ ಕುರಿಗಳು ಅಲ್ಲದೇ ದೇಶಿಯ ತಳಿಯ ಮೇಕೆಗಳನ್ನು ಸಾಕಲಾಗುತ್ತಿದೆ. ಕುರಿ ಸಾಕಾಣಿಕೆಯು ವರ್ಷವಿಡಿ ನೀಡುವ ಉದ್ಯೋಗ ಇದಾಗಿದೆ. ಕುರಿ ಸಾಕಾಣಿಕೆಯು ಕಡಿಮೆ ಶ್ರಮ ಅಧಿಕ ಲಾಭವನ್ನು ತಂದುಕೊಡಲಿದ್ದು, ಈ ಕುರಿ ಸಾಕಾಣಿಕೆಯ ಬಗ್ಗೆ ತರಬೇತಿ ಪಡೆದು ಇದರ ಲಾಭ ಪಡೆಯಬೇಕು ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಅಧೀಕ್ಷಕ ಕೆ. ಸುರೇಶ್ ಅವರು, ಕುರಿ ಸಾಕಾಣಿಕೆ ಇಂದು ಒಂದು ಅತ್ಯುತ್ತಮ ಲಾಭದಾಯಕ ಕೃಷಿ ಉಪ ಕಸುಬು ಆಗಿದೆ. ಕಡಿಮೆ ಹೂಡಿಕೆ ಮತ್ತು ಹೆಚ್ಚು ಲಾಭ ಪಡೆಯಬಹುದಾಗಿದೆ ಎಂದರು. ಈ ತರಬೇತಿಯಲ್ಲಿ ಭಾಗವಹಿಸಿದ ಬಂದಿಗಳಿಗೆ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆಯ ತರಬೇತಿಯ ಕೈಪಿಡಿ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು. ಈ ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬಳೆ, ವೈದ್ಯಾಧಿಕಾರಿಗಳಾದ ಹಾಗೂ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್, ಭೀಮಾಶಂಕರ್ ಡಾಂಗೆ, ಸಹಾಯಕ ಆಡಳಿತಾಧಿಕಾರಿಗಳು, ಜೈಲರ್ ಆದ ಸಾಗರ್ ಪಾಟೀಲ ಹಾಗೂ ಫಾರುಖ್ ಸಿಬ್ಬಂದಿಗಳು ಪಾಲ್ಗೊಂಡಿದರು. ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ ಅವರು ಕಾರ್ಯಕ್ರಮದ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

ವಾರ್ತಾ ಭಾರತಿ 26 Feb 2026 8:41 pm

ಕಡಬ| ವಲಯ ಅರಣ್ಯಾಧಿಕಾರಿ ಕಚೇರಿಗೆ ಕರೆಸಿ ಯುವಕನಿಗೆ ಹಲ್ಲೆ; ಆರೋಪ

ಕಡಬ, ಫೆ.26. ಕಾಡುಕೋಣ ಬೇಟೆಗೆ ಸಂಬಂಧಿಸಿದಂತೆ ಜಾಮೀನಿನಲ್ಲಿದ್ದ ಯುವಕನ ಹೇಳಿಕೆ ಪಡೆಯಲೆಂದು ವಲಯ ಅರಣ್ಯಾಧಿಕಾರಿ ಕಚೇರಿಗೆ ಕರೆಸಿ ಆತನಿಗೆ ಅಮಾನುಷವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಯುವಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ತಾಲೂಕು ಐತ್ತೂರು ಗ್ರಾಮದ ಕೊಂಡೆ ಮನೆ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಜೀವನ್ (27) ಮತ್ತು ಕೆರ್ಮಾಯಿ ನಿವಾಸಿ ಜೈನ್ ವರ್ಕಿ (50) ಎಂಬವರ ವಿರುದ್ಧ ಇತ್ತೀಚೆಗೆ ಐತ್ತೂರು ಅರಣ್ಯದಲ್ಲಿ ಕಾಡುಕೋಣ ಬೇಟೆಯಾಡಿದ ಪ್ರಕರಣ ದಾಖಲಾಗಿದ್ದು, ಇವರಿಬ್ಬರು ಬುಧವಾರ ಹೇಳಿಕೆ ನೀಡಲೆಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಕಚೇರಿಗೆ ತೆರಳಿದ್ದರು ಎನ್ನಲಾಗಿದೆ. ಜೈನ್ ವರ್ಕಿ ಯನ್ನು ಹೊರಗಡೆ ಕಳುಹಿಸಿ ಜೀವನ್ ಮೇಲೆ ಅಮಾನುಷವಾಗಿ ಹಲ್ಲೆಗೈದಿದ್ದಲ್ಲದೆ, ವೈದ್ಯಕೀಯ ತಪಾಸಣೆಗೋಸ್ಕರ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಹಲ್ಲೆಯ ವಿಷಯ ತಿಳಿದ ಸಾರ್ವಜನಿಕರು ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿದ್ದು, ಅರಣ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಗೈದಿದ್ದಾರೆ ಎನ್ನಲಾದ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, ಸಿಬ್ಬಂದಿ ಪ್ರಕಾಶ್ ಹಾಗೂ ಆದರ್ಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಗಾಯಗೊಂಡಿರುವ ಯುವಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 26 Feb 2026 8:36 pm

ಗದಲೆಗಾಂವ್(ಬಿ) ಗ್ರಾಮಕ್ಕೆ ಪಂಚಾಯತ್ ಮೆಲ್ದರ್ಜೇಗೆರಿಸಲು ಮಾಲಾ ಬಿ. ನಾರಾಯಣರಾವ್ ಮನವಿ

ಬಸವಕಲ್ಯಾಣ : ಜಿಲ್ಲೆಯ ಬಸವಕಲ್ಯಾಣ ಮತಕ್ಷೇತ್ರದ ಗದಲೆಗಾಂವ್ (ಬಿ) ಗ್ರಾಮವನ್ನು ಗ್ರಾಮ ಪಂಚಾಯತ್ ಆಗಿ ಮೆಲ್ದರ್ಜೇಗೆರಿಸಬೇಕು ಎಂದು ಮಿನುಗಾರಿಕೆ ಅಭಿವೃದ್ಧಿ ಮಂಡಳಿಯ ರಾಜ್ಯಧಕ್ಷೆ ಮಾಲಾ ಬಿ. ನಾರಾಯಣರಾವ್ ಅವರು ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಗದಲೆಗಾಂವ್ ಬಿ.ಗ್ರಾಮದ ಅಕ್ಕಪಕ್ಕದಲ್ಲಿ ಶಿರಗಾಪುರ್, ಖೆರ್ಡಾ (ಕೆ), ಖೆರ್ಡಾ (ಕೆ) ವಾಡಿ, ಗದಲೆಗಾಂವ್ ತಾಂಡಾ ಈ ನಾಲ್ಕು ಗ್ರಾಮಗಳು ಸೆರಿ 6 ಸಾವಿರ ಜನಸಂಖ್ಯೆ ಹೊಂದಿದೆ. ಗದಲೆಗಾಂವ್ ಗ್ರಾಮ ಕೇಂದ್ರ ಸ್ಥಾನ ಹೊಂದಲು ಎಲ್ಲಾ ಮೂಲ ಸೌಕರ್ಯಗಳು ಹೊಂದಿರುತ್ತದೆ. 2014 -15ರಲ್ಲಿ ಗ್ರಾಮ ಪಂಚಾಯತ್ ಪುನರ್ ವಿಂಗಡಣೆಯಲ್ಲಿ ಈ ಗ್ರಾಮಕ್ಕೆ ಅನ್ಯಾಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಬಸವಕವಲ್ಯಾಣ ಮಾಜಿ ಶಾಸಕ ದಿ. ಬಿ. ನಾರಾಯಣರಾವ್ ಅವರು ಸುಮಾರು ವರ್ಷಗಳ ಕಾಲ ಸರ್ಕಾರದ ಮಟ್ಟದಲ್ಲಿ ಹೊರಾಟ ಮಾಡಿ ಕಾರ್ಯ ಹಂತಕ್ಕೆ ತಂದಿದ್ದರು. ಆದ್ದರಿಂದ ಇದನ್ನೆಲ್ಲ ಪರಿಶೀಲಿಸಿ ಕೂಡಲೇ ಗದಲೆಗಾಂವ್(ಬಿ) ಗ್ರಾಮವನ್ನು ಗ್ರಾಮ ಪಂಚಾಯತ್ ಕೇಂದ್ರವನ್ನಾಗಿ ಮಂಜೂರಾತಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 26 Feb 2026 8:36 pm

Bengaluru | ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ: ಆರೋಪಿಗಳ ಪತ್ತೆಗೆ ಶೋಧ

ಬೆಂಗಳೂರು, ಫೆ.26: ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಹೊಂದಿದ್ದ ರೌಡಿಶೀಟರ್‌ ನನ್ನು ಆರು ಮಂದಿ ಆರೋಪಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಥಣಿಸಂದ್ರದ ಅಮರಜ್ಯೋತಿ ಲೇಔಟ್‍ನಲ್ಲಿ ಫೆ.25ರ ತಡರಾತ್ರಿ ವರದಿಯಾಗಿದೆ. ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪವನ್ ಕುಮಾರ್(28) ಕೊಲೆಯಾದವ ಎಂದು ಗುರುತಿಸಲಾಗಿದೆ. ಹೆಲ್ಮೆಟ್ ಧರಿಸಿ ಮೂರು ದ್ವಿಚಕ್ರ ವಾಹನಗಳಲ್ಲಿ ಆರು ಮಂದಿ ಆರೋಪಿಗಳು ಪವನ್‍ನ ಮನೆ ಬಳಿ ಬಂದು ಆತನ ತಾಯಿಯ ಕಣ್ಣೆದುರೇ ಕೃತ್ಯ ಎಸಗಿದ್ದಾರೆ. ಮೂರು ವರ್ಷಗಳ ಹಿಂದೆ ನಡೆದಿದ್ದ ರೌಡಿಶೀಟರ್ ಕಪಿಲ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪವನ್ 2025ರ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದನು. ಒಂದೂವರೆ ತಿಂಗಳ ಹಿಂದಷ್ಟೇ ಬೇಕರಿಯನ್ನು ಆರಂಭಿಸಿದ್ದನು. ಆದರೆ, ಕಪಿಲ್‍ನ ಹತ್ಯೆಯಾದ ಮಾದರಿಯಲ್ಲೇ ಹೆಲ್ಮೆಟ್ ಧರಿಸಿದ್ದ ಆರೋಪಿಗಳ ಗುಂಪು ಪವನ್ ಕುಮಾರ್ ಹತ್ಯೆ ಮಾಡಿದೆ. ಕಪಿಲ್‍ನ ಸಹೋದರ ಸೇರಿದಂತೆ ಹಲವರ ವಿರುದ್ಧ ಈ ಹತ್ಯೆಯ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 8:35 pm

ಗುಲ್ಬರ್ಗಾ ವಿವಿ 43ನೇ ವಾರ್ಷಿಕ ಘಟಿಕೋತ್ಸವ: ಆಲಿಯಾ ಅಂಜುಮ್ ಗೆ ಚಿನ್ನದ ಪದಕ

ಬೀದರ್: ಫೆ.24 ರಂದು ನಡೆದ ಗುಲ್ಬರ್ಗಾ ವಿಶ್ವವಿದ್ಯಾಲಯದ 43ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಬಸವಕಲ್ಯಾಣದ ಸಕ್ಸಸ್ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ ಆಲಿಯಾ ಅಂಜುಮ್ ಅವರಿಗೆ ಚಿನ್ನದ ಪದಕ ದೊರೆತಿದೆ. ಅಬ್ದುಲ್ ರಶೀದ್ ಅವರ ಪುತ್ರಿ ಆಲಿಯಾ ಅಂಜುಮ್ ಅವರು ಸಿಬಿಝೆಡ್ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದುದಕ್ಕಾಗಿ ಅವರನ್ನು ಚಿನ್ನದ ಪದಕ ಲಭಿಸಿದೆ. ಸಕ್ಸೆಸ್ ಎಜುಕೇಶನ್ ಟ್ರಸ್ಟ್ ಹಾಗೂ ಸಕ್ಸೆಸ್ ಡಿಗ್ರಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಟ್ರಸ್ಟಿಗಳು ಆಲಿಯಾ ಅಂಜುಮ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದು, ಅವರು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಶೈಕ್ಷಣಿಕ ಸಾಧನೆ ಮಾಡಿ ಸಮಾಜಕ್ಕೆ ಹೆಮ್ಮೆ ತರುವಂತಾಗಲಿ ಎಂದು ಹಾರೈಸಿದ್ದಾರೆ.

ವಾರ್ತಾ ಭಾರತಿ 26 Feb 2026 8:33 pm

Bidar | ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ: ಮನ್ನಾಏಖೇಳ್ಳಿಯಲ್ಲಿ ಪ್ರತಿಭಟನೆ

ಬೀದರ್: ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಬಲಗೈ (ಹೊಲೆಯ) ಸಮುದಾಯಕ್ಕೆ ಆಗಿರುವ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಮನ್ನಾಏಖೇಳ್ಳಿ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಬೀದರ್ ರಸ್ತೆಯ ಮನ್ನಾಏಖೇಳ್ಳಿ ಕ್ರಾಸ್‌ನಿಂದ ಮನ್ನಾಏಖೇಳ್ಳಿ ಗ್ರಾಮದಲ್ಲಿರುವ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಮೊದಲೇ ಮನ್ನಾಏಖೇಳ್ಳಿ ಬಂದ್ ಗೆ ಕರೆ ಕೊಟ್ಟಿದ್ದರಿಂದ ಕೆಲ ಕಾಲ ಪಟ್ಟಣದಲ್ಲಿನ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್ ಮಾಡಲಾಗಿತ್ತು. ಚಿಟಗುಪ್ಪ ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಒಳ ಮೀಸಲಾತಿ ಜಾರಿಯಾದ ಮೇಲೆ ರೋಸ್ಟರ್ ಬಿಂದುಗಳ ನಿಗದಿಯಲ್ಲಿ ಅನೇಕ ಸಮಸ್ಯೆಗಳು ಕಂಡು ಬರುತ್ತಿದ್ದು, ಪ್ರವರ್ಗ-ಎ 1ನೇ ಸ್ಥಾನದಲ್ಲಿ, ಪ್ರವರ್ಗ-ಬಿ ಅನ್ನು 9ನೇ ಸ್ಥಾನದಲ್ಲಿ ಹಾಗೂ ಪ್ರವರ್ಗ-ಸಿ ಅನ್ನು 15ನೇ ಸ್ಥಾನದಲ್ಲಿ ನಿಗದಿಪಡಿಸಿದರಿಂದ ಸಮಾನ ಅವಕಾಶ ಸಿಗುತ್ತವೆ ಎಂಬ ಅನುಮಾನ ಹಾಗು ಪ್ರಶ್ನೆ ಉದ್ಭವಿಸಿದೆ. ಸಮತೋಲನ ಕಾಪಾಡದಿದ್ದರೆ ಪರಿಶಿಷ್ಟ ಜಾತಿಗಳಿಗೆ ಕಡಿಮೆ ಹುದ್ದೆಗಳ ನೇಮಕಾತಿ ನಡೆಯುವ ಸಂದರ್ಭದಲ್ಲಿ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಸಮುದಾಯಗಳು ಸಂಪೂರ್ಣವಾಗಿ ಅವಕಾಶದಿಂದ ವಂಚಿತರಾಗುವ ಅಪಾಯ ಎದ್ದು ಕಾಣುತ್ತಿದೆ ಎಂದು ಆರೋಪಿಸಲಾಗಿದೆ. ರೋಸ್ಟರ್ ಬಿಂದುವಿನಲ್ಲಿ ಇರುವ ನ್ಯೂನ್ಯತೆ ಹಾಗೂ ಸರ್ಕಾರ ತಮಗೆ ಕಳುಹಿಸಿರುವ ಒಳಮೀಸಲಾತಿಯ ವರದಿಯನ್ನು ಪ್ರವರ್ಗ-ಬಿ ಮತ್ತು ಸಿ ಅವರಿಗೆ ಮರಣ ಶಾಸನವಾಗಿದ್ದು, ಇದನ್ನು ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸಬೇಕು. ಪ್ರವರ್ಗ-ಎ, ಬಿ, ಸಿ ಅವರಿಗೆ ಸಮಾನ ಅವಕಾಶ ಕಲ್ಪಿಸುವ ಕಾಯ್ದೆ ರೂಪಿಸಬೇಕು. ಒಳಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ ಸರಿಪಡಿಸಬೇಕು ಎಂದು ಆಗ್ರಹಿಸಲಾಗಿದೆ. ಪ್ರವರ್ಗ-ಎ, ಬಿ, ಸಿ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳಮೀಸಲಾತಿ ವರದಿಯ ಸಮಸ್ಯೆಯು ಬಗೆಹರಿಯುವ ತನಕ ಪ್ರಸ್ತುತ ಶೈಕ್ಷಣಿಕ ವಲಯ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯ ಚಟುವಟಿಕೆಗಳನ್ನು ಶೀಘ್ರವೇ ತಡೆಹಿಡಿಯಬೇಕು. ಹೊಸ ಜಾತಿ ಪ್ರಮಾಣ ಪತ್ರ ವಿತರಿಸುವುದನ್ನು ತುರ್ತಾಗಿ ನಿಲ್ಲಿಸಿ, ಹಳೆ ಜಾತಿ ಪ್ರಮಾಣ ಪತ್ರ ನೀಡುವುದು ಮುಂದುವರೆಸಬೇಕು. ಒಳ ಮೀಸಲಾತಿಯ ಗೊಂದಲಗಳು ಹಾಗೂ ನ್ಯೂನ್ಯತೆಗಳು ಪರಿಹರಿಸುವ ತನಕ ಹಳೆ ಮೀಸಲಾತಿ ಅನ್ವಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಒಂದು ವೇಳೆ ಒಳಮೀಸಲಾತಿಯಲ್ಲಿನ ಗೊಂದಲಗಳು ನಿವಾರಣೆ ಮಾಡಿ, ಎಲ್ಲರಿಗೂ ಸಮಾನತೆ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಉಗ್ರ ರೂಪ ಪಡೆಯುತ್ತದೆ ಎಂದು ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಒಳಮೀಸಲಾತಿ ಸಮಿತಿಯ ಗೌರವ ಅಧ್ಯಕ್ಷ ದಿಲೀಪಕುಮಾರ್ ವರ್ಮಾ, ಅಧ್ಯಕ್ಷ ರಾಜಕುಮಾರ್ ಸಿಂಧೆ, ಉಪಾಧ್ಯಕ್ಷ ರಾಜಕುಮಾರ್ ಅಗಸಿ, ಕಾಶೀನಾಥ್ ಗುಜಗರೆ, ರಾಹುಲ್ ಭಂಗೂರೆ, ಶಿವಕುಮಾರ್ ಮುತ್ತಂಗಿ, ಶಾಂತಕುಮಾರ್ ಪಟ್ನೆ, ಸಂದೀಪ್ ಕಟ್ಟಿಮನಿ, ಓಂಕಾರ್ ಮಂಗಲಗಿ, ವಿದ್ಯಾಸಾಗರ್ ಅಲ್ಲಿಪುರ್, ಗೌತಮ್ ಬಗದಲಕರ್, ಶಿವಕಾಂತ್ ಹಾರೂರಗೆರಿಕರ್, ಬಸವರಾಜ್ ಹೊಚಕನಹಳ್ಳಿ, ಶಿವಕುಮಾರ್ ಮಂಗಲಗಿ, ಶ್ರೀಕಾಂತ್ ಹೊಸಮನಿ, ಮಿಥುನ್ ವರ್ಮಾ, ಓಂಕಾರ್ ಭಂಗೂರೆ ಸೇರಿದಂತೆ ನೂರಾರು ಮಹಿಳೆಯರು ಮತ್ತು ಯುವಕರು ಭಾಗವಹಿಸಿದ್ದರು.

ವಾರ್ತಾ ಭಾರತಿ 26 Feb 2026 8:30 pm

ಆಟೋ ಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಫೆ. 26: ಮಹಿಳೆಯರು ಮತ್ತು ಮಂಗಳಮುಖಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಉಚಿತ ಆಟೋರಿಕ್ಷಾ ಚಾಲನಾ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ಸರಕಾರದಿಂದಲೂ ಬೆಂಬಲ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಗುರುವಾರ ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಬಿಟಿಎಂ ಲೇಔಟ್‍ನಲ್ಲಿ ಆಯೋಜಿಸಿದ್ದ ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ಹಾಗೂ ಕೌಶಲ್ಯ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಹಾಗೂ ಮಂಗಳಮುಖಿಯರನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದರು. ಬೆಂಗಳೂರಿನ ಯಾವುದೇ ಜಾಗಕ್ಕೆ ತೆರಳಬೇಕಿದ್ದರೂ ಆಟೋರಿಕ್ಷಾ ಅನಿವಾರ್ಯವಾಗಿದ್ದು, ಬೆಂಗಳೂರು ನಗರದ ನಾಗರಿಕರ ಬೆನ್ನೆಲುಬಾಗಿ ನಿಂತಿದೆ. ಹೀಗಾಗಿ ಆಟೋ ಚಾಲಕರ ಸಮುದಾಯಕ್ಕೆ ಇನ್ನಷ್ಟು ಯೋಜನೆ ಹಾಗೂ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಸರಕಾರದೊಂದಿಗೆ ಚರ್ಚಿಸಿ ಬಜೆಟ್ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಬಿಪ್ಯಾಕ್ ಹಾಗೂ ಸಿಜಿಐ ಸಂಸ್ಥೆಯು ಸಿಎಸ್‍ಆರ್ ಅಡಿಯಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗಳು ವೃತ್ತಿಪರ ಆಟೋ ಚಾಲಕರಾಗಿ ರೂಪುಗೊಳ್ಳಲು ಉಚಿತ ತರಬೇತಿ ನೀಡುತ್ತಾ ಬಂದಿದ್ದು, ಇದುವರೆಗೂ 9 ಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲೂ ಈ ಕಾರ್ಯಕ್ರಮವನ್ನು ಮುಂದುವರೆಸುವ ಉದ್ದೇಶವನ್ನು ಹೊಂದಲಾಗಿದೆ. ಕಾರ್ಯಕ್ರಮದಲ್ಲಿ ಸಿಜಿಐ ಪ್ರತಿನಿಧಿ ಸುಧಾಕರ್ ಪೈ, ಶ್ರೀನಿವಾಸ ರಾಘವನ್, ಬಿ.ಪ್ಯಾಕ್ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಎಚ್.ಎಸ್., ನಮ್ಮ ಸಾರಥಿ ಅಧ್ಯಕ್ಷ ಸಂಪತ್ ಮತ್ತು ದೇವಿಕಾ, ಪೀಸ್ ಆಟೋ ಅಧ್ಯಕ್ಷ ರಘು ನಾರಾಯಣ ಗೌಡ ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Feb 2026 8:23 pm

ಜಮ್ಮು ಕಾಶ್ಮೀರ ವಿರುದ್ಧ ಪ್ರಥಮ ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಕರ್ನಾಟಕ; ಶತಕವೀರ ಮಾಯಾಂಕ್ ಅಗರ್ವಾಲ್ ಏಕೈಕ ಆಸರೆ

ಜಮ್ಮು ಕಾಶ್ಮೀರ ಬೃಹತ್ ಮೊತ್ತ ಗಳಿಸುವುದನ್ನು ಗಳಿಸಲಾಗದ ಕರ್ನಾಟಕ ಇದೀಗ ಬ್ಯಾಟಿಂಗ್ ನಲ್ಲೂ ಮುಗ್ಗರಿಸಿದ್ದು ರಣಜಿ ಟ್ರೋಫಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಪರಸ್ ದೋಗ್ರಾ ಬಳಗ ಪ್ರಥಮ ಇನ್ನಿಂಗ್ಸ್ ನಲ್ಲಿ ಗಳಿಸಿದ 584 ರನ್ ಗಳಿಗೆ ಉತ್ತರವಾಗಿ ಕರ್ನಾಟಕ 3ನೇ ದಿನಾಂತ್ಯಕ್ಕೆ 220 ರನ್ ಗಳಿಸುವಲ್ಲಿ 5 ವಿಕೆಟ್ ಕಳೆದುಕೊಂಡಿದೆ. ಕರ್ನಾಟಕ ಪ್ರಥಮ ಇನ್ನಿಂಗ್ಸ್ ಹಿನ್ನಡೆಯಿಂದ ತಪ್ಪಿಸಿಕೊಳ್ಳಬೇಕಾದರೆ ಇನ್ನೂ 364 ರನ್ ಗಳಿಸಬೇಕಿದೆ. ಒಂದೆಡೆಯಿಂದ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದೃಢವಾಗಿ ನಿಂತು ಅಜೇಯ ಶತಕ ಬಾರಿಸಿರುವ ಮಾಜಿ ನಾಯಕ ಮಾಯಾಂಕ್ ಅಗರ್ವಾಲ್ ಅವರೊಬ್ಬರೇ ಕರ್ನಾಟಕದ ಪಾಲಿನ ಏಕೈಕ ಆಶಾಕಿರಣವಾಗಿದ್ದಾರೆ. ಹುಬ್ಬಳ್ಳಿಯ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಅನುಭವಿ ಬ್ಯಾಟರ್ ಗಳು ಜಮ್ಮು ಕಾಶ್ಮೀರದ ಶಿಸ್ತುಬದ್ಧ ಬೌಲಿಂಗ್ ದಾಳಿ ಮುಂದೆ ನಿರುತ್ತರರಾದರು. ಅನುಭವಿ ಕೆಎಳ್ ರಾಹುಲ್ (13), ನಾಯಕ ದೇವದತ್ ಪಡಿಕ್ಕ್ (13), ಕರುಣ್ ನಾಯರ್ (0), ರವಿಚಂದ್ರನ್ ಸ್ಮರಣ್(0) ಅವರು ಬೇಗನೇ ಪೆವಿಲಿಯನ್ ಸೇರಿಕೊಂಡರು. ವೇಗಿ ಅಕಿಬ್ ನಬಿ ಅವರು ಕರುಣ್ ಮತ್ತು ಸ್ಮರಣ್ ವಿಕೆಟ್ ಗಳನ್ನು ನಿರಂತರವಾಗಿ ಪಡೆದು ಹ್ಯಾಟ್ರಿಕ್ ಅವಕಾಶ ಪಡೆದಿದ್ದರು. ಆದರೆ ಅದಕ್ಕೆ ಅವಕಾಶ ನೀಡದ ಶ್ರೇಯಸ್ ಗೋಪಾಲ್(27) ಅವರು ಮಾಯಾಂಕ್ ಅಗರವಾಲ್ ಅವರೊಂದಿಗೆ ಸೇರಿ ಶತಕದ ಜೊತೆಯಾಟ ಆಡಿದರು. ಹೀಗಾಗಿ ಕರ್ನಾಟಕದ ಇನ್ನಿಂಗ್ಸ್ ಕೊಂಚ ಮಟ್ಟಿಗೆ ಚೇತರಿಸಿಕೊಂಡಿತು. ಮಾಯಾಂಕ್ ದಿಟ್ಟ ಹೋರಾಟ ಈ ಹಂತದಲ್ಲಿ ಮಾಯಾಂಕ್ ಅಗರ್ವಾಲ್ ಅವರು ಸಹ ತಮ್ಮ ಶತಕವನ್ನು ಪೂರೈಸಿಕೊಂಡರು. ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್ ಗೋಪಾಲ್ ಅವರನ್ನು ಮಧ್ಯಮ ವೇಗಿ ಯದ್ವೀರ್ ಸಿಂಗ್ ಅವರು ಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸುವುದರೊಂದಿಗೆ ಕರ್ನಾಟಕಕ್ಕೆ ಐದನೇ ವಿಕೆಟ್ ಪತನಗೊಂಡಿತು. ಇದೀಗ ವಿಕೆಟ್ ಕೀಪರ್ ಬ್ಯಾಟರ್ ಕೃತಿಕ್ ಕೃಷ್ಣ (27 ನಾಟೌಟ್) ಅವರೊಂದಿಗೆ 6ನೇ ವಿಕೆಟ್ ಗೆ 58 ರನ್ ಜೊತೆಯಾಟ ಆಡಿರುವ ಅವರು ಶುಕ್ರವಾರಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 207 ಎಸೆತಗಳಿಂದ 17 ಬೌಂಡರಿಗಳಿದ್ದ 130 ರನ್ ಗಳಿಸಿದ್ದಾರೆ. ಸದ್ಯಕ್ಕೆ ಅವರನ್ನೇ ಕರ್ನಾಟಕ ಅವಲಂಬಿಸಿದೆ. ಅವರಿಗೆ ಕೃತಿಕ್ ಕೃಷ್ಣ ಅವರು ಸಾಥ್ ನೀಡಿ ದೊಡ್ಡ ಜೊತೆಯಾಟ ಕಟ್ಟಬೇಕಿದೆ. ಇದಕ್ಕೂ ಮೊದಲು ಗಳಿಸಿದ್ದ ಜಮ್ಮು ಕಾಶ್ಮೀರ ತಂಡ ಗುರುವಾರ ಆ ಮೊತ್ತಕ್ಕೆ 57 ರನ್ ಗಳನ್ನು ಪೇರಿಸಿ ಆಲೌಟ್ ಆಯಿತು. ಅಂತಿಮ ಹಂತದಲ್ಲಿ ಯುದ್ವೀರ್ ಸಿಂಗ್(30) ವೇಗವಾಗಿ ರನ್ ಗಳಿಸಿ ತಂಡದ ಮೊತ್ತವನ್ನು ಮತ್ತಷ್ಟು ಎತ್ತರಕ್ಕೊಯ್ದರು. ಕರ್ನಾಟಕದ ಪರ ಮಧ್ಯಮ ವೇಗಿ ಪ್ರಸಿದ್ಧ ಕೃಷ್ಣ ಅವರು 5 ವಿಕೆಟ್ ಗಳಿಸಿದರು. ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡ ಪ್ರಥಮ ಇನ್ನಿಂಗ್ಸ್ ಗಳಿಸಿದಲ್ಲಿ ಪಂದ್ಯವನ್ನು ಡ್ರಾಗೊಳಿಸಿದರೂ ಸಾಕು. ಅದೇ ಕರ್ನಾಟಕಕ್ಕೆ ಪ್ರಥಮ ಇನ್ನಿಂಗ್ಸ್ ಮುನ್ನಡೆ ಸ್ಥಾಪಿಸಲು ಸಾಧ್ಯವಾಗದೇ ಹೋದಲ್ಲಿ ಪಂದ್ಯವನ್ನು ಗೆಲ್ಲಲೇಬೇಕಿದೆ. ಇಲ್ಲವಾದಲ್ಲಿ ರಣಜಿ ಟ್ರೋಫಿ ಜಮ್ಮು-ಕಾಶ್ಮೀರದ ಪಾಲಾಗಲಿದೆ. ಸಂಕ್ಷಿಪ್ತ ಸ್ಕೋರ್ ಜಮ್ಮು ಮತ್ತು ಕಾಶ್ಮೀರ 584/10, ಯವಿರ್ ಹಸನ್ 88(150), ಶುಭಂ ಪುಂಡಿರ್ 121(247), ಪರಸ್ ದೋಗ್ರಾ 70(166), ಅಬ್ದುಲ್ ಸಮದ್ 61(104), ಕನಯ್ಯ ವಾಧವನ್ 70(109), ಸಾಹಿಲ್ ಲೋತ್ರಾ 72(138), ಪ್ರಸಿದ್ಧ ಕೃಷ್ಣ 98ಕ್ಕೆ 5, ವಿದ್ಯಾಧರ್ ಪಾಟೀಲ್ 16ಕ್ಕೆ1, ವಿಜಯಕುಮಾರ್ ವೈಶಾಕ್ 75ಕ್ಕೆ 1. ಕರ್ನಾಟಕ 220/5, ಮಾಯಾಂಕ್ ಅಗರ್ವಾಲ್ ಅಜೇಯ 130(207), ಶ್ರೇಯಸ್ ಗೋಪಾಲ್ 27(83), ಕೃತಿಕ್ ಕೃಷ್ಣ ನಾಟೌಟ್ 27(75), ಅಖಿಬ್ ನಬಿ 32ಕ್ಕೆ 3, ಯದ್ವಿರ್ ಸಿಂಗ್ 31ಕ್ಕೆ 1

ವಿಜಯ ಕರ್ನಾಟಕ 26 Feb 2026 8:22 pm

ಕಲ್ಬುರ್ಗಿ ವಿವಿ 43ನೇ ಘಟಿಕೋತ್ಸವ| ಚಿನ್ನದ ಪದಕ ಪಡೆದ ಪೂಜಾ ಅವರಿಗೆ ಸನ್ಮಾನ ಕಾರ್ಯಕ್ರಮ

ಹುಮನಾಬಾದ್ : ಕಲ್ಬುರ್ಗಿ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿನಿ ಪೂಜಾ ಅವರಿಗೆ ಸ್ನಾತಕೋತ್ತರ ಪದವಿಯ ಕನ್ನಡ ವಚನ ಸಾಹಿತ್ಯ ಪತ್ರಿಕೆಯಲ್ಲಿ ಹೆಚ್ಚು ಅಂಕ ಗಳಿಸಿದಕ್ಕಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದರಿಂದ, ಹುಮನಾಬಾದ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸನ್ಮಾನ ಮಾಡಲಾಯಿತು. ಈ ವೇಳೆ ಪ್ರಾಂಶುಪಾಲ ಡಾ. ವೀರಣ್ಣ ತುಪ್ಪದ್ ಅವರು ಮಾತನಾಡಿ, ನಮ್ಮ ಕಾಲೇಜಿಗೆ ಹಲವಾರು ಬಾರಿ ವಿಶ್ವವಿದ್ಯಾಲಯ ಮಟ್ಟದಲ್ಲಿ ರ‌್ಯಾಂಕ್ ಲಭಿಸಿದೆ. ಈ ಬಾರಿಯೂ ಸಹ ಬಿಬಿಎ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ರ‌್ಯಾಂಕ್ ಲಭಿಸಿತ್ತು. ಇಂದು ನಮ್ಮ ಕಾಲೇಜಿನ ವಿದ್ಯಾರ್ಥಿನಿ ಎಂ.ಎ ಕನ್ನಡ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದು ಬಹಳಷ್ಟು ಖುಷಿ ತಂದಿದೆ. ಇದಕ್ಕೆಲ್ಲ ನಮ್ಮ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರ ಪರಿಶ್ರಮವಿದೆ ಎಂದರು. ವಿದ್ಯಾರ್ಥಿನಿ ಪೂಜಾ ಅವರು ಮಾತನಾಡಿ, ಈ ನನ್ನ ಸಾಧನೆಗೆ ನನ್ನ ತಂದೆ ತಾಯಿ , ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿಶೇಷವಾಗಿ ಪ್ರಾಂಶುಪಾಲರ ಮಾರ್ಗದರ್ಶನವಿದೆ. ನಾನು ದಿನಾಲು ತಪ್ಪದೆ ಕಾಲೇಜಿಗೆ ಬರುತ್ತಿದ್ದೆ. ಪ್ರಾಧ್ಯಾಪಕರು ನೀಡುತ್ತಿರುವ ಪಠ್ಯ ಬೋಧನೆಯನ್ನು ಆಲಿಸುತ್ತಿದ್ದೆ. ಹಾಗಾಗಿ ಈ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಖಾಸಿಂಸಾಬ್ ಕುಲಾಲಿ, ಪೆದ್ದಪ್ಪಾ ನಾಯಕ್, ಶಿವಾನಂದ್ ಹಿರೇಮಠ್, ಅಪರ್ಣಾ ಶೆಟ್ಟಿ, ಡಾ.ಬಳಿರಾಮ್ ಹೂಡೆ, ಡಾ. ಮಲ್ಲಿಕಾರ್ಜುನ್ ಬಾಳಿ, ಅಮರ್ ಗಿರಿ, ಡಾ. ಸಚಿನ್ ಕುಲ್ಕರ್ಣಿ, ಸಂತೋಷ್ ಮಹಾಜನ್, ಹಸೀನಾ ಬೇಗಂ, ರಾಜಾಬಾಯಿ, ಸತೀಶ್ ಡೋಂಗ್ರೆ , ಶಿವಶರಣಪ್ಪಾ, ಅಶ್ವಿನಿ, ಡಾ. ರಾಜಶೇಖರ್, ವೆಂಕಟ್ ಜಾಧವ್, ಪ್ರಕಾಶ್ ಸೇಡೋಳ್ಕರ್ ಹಾಗೂ ಡಾ. ಸೈಯದ್ ಖಾಜಾ ಸೇರಿದಂತೆ ಸಿಬ್ಬಂದಿ ವರ್ಗದವರು ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Feb 2026 8:21 pm

ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ದಿಲ್ಲಿ ಪೊಲೀಸರನ್ನೇ ವಶಕ್ಕೆ ತೆಗೆದುಕೊಂಡ ಹಿಮಾಚಲ ಪ್ರದೇಶದ ಪೊಲೀಸರು; ಏನಿದು ಹೈಡ್ರಾಮಾ?

ಕಳೆದ ವಾರ ದಿಲ್ಲಿಯಲ್ಲಿ ನಡೆದ AI ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಶರ್ಟ್ಲೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲ್ಪಟ್ಟ ಮೂವರನ್ನು ದಿಲ್ಲಿ ಪೊಲೀಸರ ವಿಶೇಷ ಘಟಕದ ತಂಡ ಹಿಮಾಚಲದ ರೊಹ್ರುವಿನಲ್ಲಿ ಬಂಧಿಸಿತ್ತು. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಕೂಡಲೇ, ದಿಲ್ಲಿ ಪೊಲೀಸರು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ; ಅವರು ಶಂಕಿತರನ್ನು ಅಪಹರಿಸಿದ್ದಾರೆ ಎಂದು ಹಿಮಾಚಲ ಪೊಲೀಸರು ಆರೋಪಿಸಿದರು. ಅಷ್ಟೇ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರನ್ನು ರಾಜ್ಯದ ಹೊರಗೆ ಕರೆದೊಯ್ಯುವುದನ್ನು ತಡೆದರು. ದಿಲ್ಲಿ ಪೊಲೀಸರ ವಿರುದ್ಧ ಅವರು FIR ದಾಖಲಿಸಿದರು. ಆರೋಪಿಗಳನ್ನು ಕರೆದೊಯ್ಯುವ ವಿಚಾರದಲ್ಲಿ ಶಿಮ್ಲಾ–ಚಂಡೀಗಢ ಹೆದ್ದಾರಿಯಲ್ಲಿರುವ ಶೋಘಿ ಪೊಲೀಸ್ ಠಾಣೆಯಲ್ಲಿ ತಡರಾತ್ರಿಯವರೆಗೂ ಉಭಯ ಪಡೆಗಳ ನಡುವೆ ಬಿಕ್ಕಟ್ಟು ಉಂಟಾಯಿತು. ದಿಲ್ಲಿ ಪೊಲೀಸರು ಬಂಧಿಸಿದ್ದ ಶಂಕಿತರನ್ನು ಗುರುವಾರ ಬೆಳಿಗ್ಗೆ ಶಿಮ್ಲಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ದಿಲ್ಲಿ ಪೊಲೀಸರಿಗೆ ಟ್ರಾನ್ಸಿಟ್ ರಿಮಾಂಡ್ ಮಂಜೂರು ಮಾಡಿತು. ದಿಲ್ಲಿ ಪೊಲೀಸ್ ತಂಡವು ರಾಜಧಾನಿಗೆ ಹಿಂತಿರುಗಿದ್ದು, ಶಂಕಿತರನ್ನು ದಿಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ►ಏನಿದು ವಿಚಾರ? ಹಿಮಾಚಲದಲ್ಲಿ ಏನೇನಾಯಿತು? ಫೆಬ್ರವರಿ 20ರಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ (IYC) ಆಯೋಜಿಸಿದ್ದ ‘ಶರ್ಟ್ಲೆಸ್’ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಲು ಸಹಾಯಕ ಪೊಲೀಸ್ ಆಯುಕ್ತ (ACP) ನೇತೃತ್ವದ ದಿಲ್ಲಿ ಪೊಲೀಸರ 15 ಸದಸ್ಯರ ತಂಡ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳೆಸಿತ್ತು. ದಿಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಎಂಟು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದೆ. ದಿಲ್ಲಿ ಪೊಲೀಸ್ ತಂಡ ಬುಧವಾರ ಬೆಳಿಗ್ಗೆ ಶಿಮ್ಲಾದ ರೆಸಾರ್ಟ್ಗೆ ತಲುಪಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿತು. ಅವರು ರೆಸಾರ್ಟ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಡಿಜಿಟಲ್ ವಿಡಿಯೋ ರೆಕಾರ್ಡರ್ಗಳನ್ನು (DVR) ವಶಪಡಿಸಿಕೊಂಡರು. ಮೂವರು ವ್ಯಕ್ತಿಗಳು ಪ್ರಯಾಣಿಸುತ್ತಿದ್ದರು ಎನ್ನಲಾದ ಮಹೀಂದ್ರಾ ಥಾರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡರು. ಸುಮಾರು ಎರಡು ಗಂಟೆಗಳಲ್ಲಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ಬಳಿಕ, ದಿಲ್ಲಿ ಪೊಲೀಸ್ ತಂಡವು ಮೂರು ವಾಹನಗಳ ಬೆಂಗಾವಲಿನೊಂದಿಗೆ ರೆಸಾರ್ಟ್ನಿಂದ ದಿಲ್ಲಿಗೆ ಪ್ರಯಾಣ ಆರಂಭಿಸಿತು. ಆ ವೇಳೆ ಶಿಮ್ಲಾ ಪೊಲೀಸರು ಸೋಲನ್ ಬಳಿ ಪೊಲೀಸ್ ತಂಡವನ್ನು ತಡೆದು, ಬೇರೆ ರಾಜ್ಯದಿಂದ ಬಂದ ಅಧಿಕಾರಿಗಳು ಬಂಧನ ನಡೆಸಲು ಕಾನೂನು ವಿಧಾನವನ್ನು ಅನುಸರಿಸಬೇಕೆಂದು ಹೇಳಿದರು. “ಬಂಧನ ವಾರಂಟ್ ತೋರಿಸಿ. ಕಾರ್ಯಾಚರಣೆ ನಡೆಸುವ ಮೊದಲು ಸ್ಥಳೀಯ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ? ಟ್ರಾನ್ಸಿಟ್ ರಿಮಾಂಡ್ ಪಡೆಯಲು ಶಂಕಿತರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಯಾಕೆ ಹಾಜರುಪಡಿಸಲಿಲ್ಲ?” ಎಂದು ಶಿಮ್ಲಾ ಪೊಲೀಸರು ದಿಲ್ಲಿ ಪೊಲೀಸರನ್ನು ಪ್ರಶ್ನಿಸಿದರು. ದಿಲ್ಲಿ ಪೊಲೀಸರು ತಮ್ಮ ಪ್ರತಿವಾದದಲ್ಲಿ, ಆರೋಪಿಗಳನ್ನು ನೇರವಾಗಿ ದಿಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಕಷ್ಟು ಕಾನೂನು ಆಧಾರಗಳಿವೆ ಎಂದು ವಾದಿಸಿದರು. “ಆರೋಪಿಗಳನ್ನು ಟ್ರಾನ್ಸಿಟ್ ರಿಮಾಂಡ್ಗಾಗಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಪ್ರಯತ್ನಿಸಿದ್ದೇವೆ; ಆದರೆ ನ್ಯಾಯಾಧೀಶರು ಅಲ್ಲಿಲ್ಲ ಎಂದು ತಿಳಿಸಲಾಯಿತು,” ಎಂದು ದಿಲ್ಲಿ ಪೊಲೀಸ್ ತಂಡವು ಹಿಮಾಚಲ ಪ್ರದೇಶ ಪೊಲೀಸರಿಗೆ ತಿಳಿಸಿತು. ಇಲ್ಲಿ ಎರಡೂ ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಬಿಕ್ಕಟ್ಟು ಉಂಟಾಯಿತು. ಅದು ತಡರಾತ್ರಿಯವರೆಗೂ ಮುಂದುವರಿಯಿತು. ಕೊನೆಗೆ ದಿಲ್ಲಿ ಪೊಲೀಸ್ ಅಧಿಕಾರಿಗಳನ್ನು ಶೋಘಿ ಪೊಲೀಸ್ ಠಾಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಶಂಕಿತರನ್ನು ಕರೆದೊಯ್ಯಲಾದ ರೆಸಾರ್ಟ್ನ ಮಾಲೀಕರು ಸಲ್ಲಿಸಿದ ದೂರಿನ ಆಧಾರದ ಮೇಲೆ, ಚಿರ್ಗಾಂವ್ ಪೊಲೀಸ್ ಠಾಣೆಯಲ್ಲಿ ಅಪಹರಣ, ಮನೆ ಅತಿಕ್ರಮಣ ಮತ್ತು ಅಕ್ರಮ ಬಂಧನ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿಮಾಚಲ ಪ್ರದೇಶ ಪೊಲೀಸರು ದಿಲ್ಲಿ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದರು. ದಿಲ್ಲಿ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿ, ಅವರ ಗುರುತಿನ ವಿವರಗಳನ್ನು ಪರಿಶೀಲಿಸಲಾಯಿತು. ಗುರುವಾರ ಬೆಳಿಗ್ಗೆ, ದಿಲ್ಲಿ ಪೊಲೀಸರಿಗೆ ಶಿಮ್ಲಾದ ಸ್ಥಳೀಯ ನ್ಯಾಯಾಲಯದ ಮುಂದೆ ಆರೋಪಿಗಳಾದ ಸೌರವ್, ಅರ್ಬಾಜ್ ಮತ್ತು ಸಿದ್ಧಾರ್ಥ್ ಅವರನ್ನು ಹಾಜರುಪಡಿಸಲು ಅವಕಾಶ ನೀಡಲಾಯಿತು. ಅಲ್ಲಿ 18 ಗಂಟೆಗಳ ಟ್ರಾನ್ಸಿಟ್ ರಿಮಾಂಡ್ ಪಡೆದ ಬಳಿಕ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೊಲೀಸ್ ತಂಡವು ಆರೋಪಿಗಳೊಂದಿಗೆ ದಿಲ್ಲಿಗೆ ಹಿಂತಿರುಗಿತು. ►ಸರಿಯಾದ ಕಾನೂನು ವಿಧಾನ ಯಾವುದು? ಕಾನೂನು ಕಾರ್ಯವಿಧಾನ ಮತ್ತು ಶಿಷ್ಟಾಚಾರದ ಪ್ರಕಾರ, ಒಂದು ರಾಜ್ಯದ ಪೊಲೀಸ್ ಪಡೆ ಬೇರೆ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿದರೆ, ದಾಳಿ ನಡೆಸುವ ಮೊದಲು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಹಿಮಾಚಲದಲ್ಲಿ ಕಾರ್ಯಾಚರಣೆ ನಡೆಸುವ ಮೊದಲು ದಿಲ್ಲಿ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಪ್ರಕಾರ, ವಿಶೇಷವಾಗಿ ಕಾರ್ಯಾಚರಣೆಯ ಸಮಯದಲ್ಲಿ ಅಶಾಂತಿ ಅಥವಾ ಆಕ್ಷೇಪಣೆಗಳ ಸಾಧ್ಯತೆಯಿದ್ದರೆ, ಪೊಲೀಸ್ ತಂಡವು ಸಂಬಂಧಿತ ರಾಜ್ಯದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ಥಳೀಯ ಪೊಲೀಸರು ಭೇಟಿ ನೀಡುವ ತಂಡಕ್ಕೆ ಸಹಾಯ ಮಾಡುವ ನಿರೀಕ್ಷೆ ಇರುತ್ತದೆ. ಅಲ್ಲದೆ, ದಾಳಿ ವೇಳೆ ವಶಪಡಿಸಿಕೊಂಡ ವಸ್ತುಗಳ ವಿವರಗಳನ್ನು ಅಧಿಕೃತ ದಾಖಲೆಯ ಮೂಲಕ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ವಶಪಡಿಸಿಕೊಳ್ಳುವ ಜ್ಞಾಪಕ ಪತ್ರದ ಮೂಲಕ ಈ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಆದಾಗ್ಯೂ, ಕಾರ್ಯಾಚರಣೆ ಸೂಕ್ಷ್ಮ ಅಥವಾ ರಹಸ್ಯವಾಗಿದ್ದರೆ, ದಾಳಿ ತಂಡವು ಕ್ರಮದ ನಂತರ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬಹುದು. ನಂತರ ಆರೋಪಿಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್ ರಿಮಾಂಡ್ ಪಡೆಯಬಹುದು ಎಂದು ನಿವೃತ್ತ ದಿಲ್ಲಿ ಪೊಲೀಸ್ ಎಸಿಪಿ ವೇದ್ ಭೂಷಣ್ ತಿಳಿಸಿದ್ದಾರೆ. ಟ್ರಾನ್ಸಿಟ್ ರಿಮಾಂಡ್ ಎಂದರೆ, ಪ್ರಕರಣ ದಾಖಲಾಗಿರುವ ಬೇರೆ ರಾಜ್ಯಕ್ಕೆ ಆರೋಪಿಯನ್ನು ನಿರ್ದಿಷ್ಟ ಅವಧಿಯೊಳಗೆ ಕರೆದೊಯ್ಯಲು ಸ್ಥಳೀಯ ನ್ಯಾಯಾಲಯ ನೀಡುವ ಅನುಮತಿ. ಆದಾಗ್ಯೂ, ಆರೋಪಿಯನ್ನು 24 ಗಂಟೆಗಳ ಒಳಗೆ ಸಂಬಂಧಿತ ರಾಜ್ಯಕ್ಕೆ ಕರೆದೊಯ್ಯಲು ಸಾಧ್ಯವಾದರೆ, ಟ್ರಾನ್ಸಿಟ್ ರಿಮಾಂಡ್ ಪಡೆಯುವುದು ಕಡ್ಡಾಯವಲ್ಲ. ಈ ಪ್ರಕರಣದಲ್ಲಿ, ಆರೋಪಿಯನ್ನು ಶಿಮ್ಲಾದಿಂದ ರಸ್ತೆ ಮೂಲಕ ಕರೆದೊಯ್ಯಲು ಕೇವಲ ಏಳು ಗಂಟೆಗಳು ಸಾಕಾಗುತ್ತಿತ್ತು. ಆದ್ದರಿಂದ ಟ್ರಾನ್ಸಿಟ್ ರಿಮಾಂಡ್ ಕಡ್ಡಾಯವಲ್ಲ ಎನ್ನಲಾಗಿದೆ ಎಂದು ಭೂಷಣ್ ಹೇಳಿದ್ದಾರೆ. ಹಲವಾರು ಗಂಟೆಗಳ ಕಾಲ ಬಂಧನಕ್ಕೊಳಗಾದ ನಂತರ, ದಿಲ್ಲಿ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳ ವಿವರಗಳನ್ನು ನೀಡುವಂತೆ ಶಿಮ್ಲಾ ಪೊಲೀಸರು ಕೇಳಿದರು. ದಿಲ್ಲಿ ಪೊಲೀಸರ ಹೇಳಿಕೆಗಳನ್ನು ದಾಖಲಿಸಿದ ಬಳಿಕ, ಅವರನ್ನು ದಿಲ್ಲಿಗೆ ಹಿಂತಿರುಗಲು ಅನುಮತಿಸಲಾಯಿತು. ►ಮುಂದಿನ ಪ್ರಕ್ರಿಯೆ ►ಕಾನೂನು ಪ್ರಕ್ರಿಯೆ ಈ ಕೆಳಗಿನಂತಿರಬಹುದು: ದಿಲ್ಲಿ ಪೊಲೀಸರು ಮೂವರು ಶಂಕಿತರನ್ನು ದಿಲ್ಲಿಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬಹುದು. ಅವರು ಶಂಕಿತರ ಕಸ್ಟಡಿಗೆ ಕೋರಬಹುದು. ಕಸ್ಟಡಿಗೆ ಕೋರದಿದ್ದರೆ, ಮೂವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತದೆ. ಇನ್ನೊಂದೆಡೆ, ದಿಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಮ್ಲಾದಲ್ಲಿ FIR ದಾಖಲಾಗಿರುವುದರಿಂದ, ಶಿಮ್ಲಾ ಪೊಲೀಸರ ತಂಡವು ಸಂಬಂಧಿತ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲು ಅಥವಾ ವಿಚಾರಣೆಗಾಗಿ ದಿಲ್ಲಿಗೆ ಬರಬಹುದು. ಅವರು ದಿಲ್ಲಿ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆಯಬೇಕಾಗುತ್ತದೆ. ನಂತರ ಸಂಬಂಧಿತ ಪೊಲೀಸ್ ಸಿಬ್ಬಂದಿಯನ್ನು ಹಿಮಾಚಲ ಪ್ರದೇಶಕ್ಕೆ ಕರೆದೊಯ್ಯಿಸಿ ಶಿಮ್ಲಾದ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು.

ವಾರ್ತಾ ಭಾರತಿ 26 Feb 2026 8:16 pm

ಬೀದರ್ | ಫೇ. 27 ರಂದು ಪಶು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: ಪ್ರೋ. ಕೆ.ಸಿ ವೀರಣ್ಣ

ಶಿವಮೊಗ್ಗದ ಖುಷಿಗೆ 16, ಬೀದರ್ ನ ದೇವರಾಜ್ ಗೆ 4 ಚಿನ್ನದ ಪದಕ

ವಾರ್ತಾ ಭಾರತಿ 26 Feb 2026 8:14 pm

ಟೀಂ ಇಂಡಿಯಾ ಸೆಮಿಫೈನಲ್‌ ಹಾದಿ ಸುಗಮ ಮಾಡಿದ ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮಕ್ರಂ

T20 World Cup 2026: ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದಕ್ಕೆ ಪ್ರಮುಖ ಕಾರಣವೇ ಆರಂಭಿಕರಾಗಿ ಕಣ್ಣಕ್ಕಿಳಿದವರು ಉತ್ತಮ ಬ್ಯಾಟಿಂಗ್ ಮಾಡಿದ್ದು. ಮತ್ತೊಂದೆಡೆ, ಇದರಿಂದ ಟೀಂ ಇಂಡಿಯಾ ಸೆಮಿಫೈನಲ್‌ ಪ್ರವೇಶದ ಹಾದಿ ಸುಲಭ ಆದಂತಾಗಿದೆ. ಹಾಗಾದ್ರೆ,

ಒನ್ ಇ೦ಡಿಯ 26 Feb 2026 8:14 pm

ಪ್ರಯಾಣ ರದ್ದಾಗಿದೆಯೇ ಅಥವಾ ವಿಮಾನ ಬದಲಿಸಬೇಕೇ? ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ!

ಪ್ರಯಾಣಿಕರು ಈಗ ಟಿಕೆಟ್ ಬುಕ್ ಮಾಡಿದ 48 ಗಂಟೆಗಳೊಳಗೆ ಹೆಚ್ಚುವರಿ ಶುಲ್ಕ ಪಾವತಿಸದೆ ವಿಮಾನ ಟಿಕೆಟ್ ಗಳನ್ನು ರದ್ದುಗೊಳಿಸಬಹುದು ಅಥವಾ ದಿನಾಂಕ ಬದಲಿಸಬಹುದು. ಭಾರತದ ವಾಯುಯಾನ ನಿಯಂತ್ರಕ ಪ್ರಾಧಿಕಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ವು ವಿಮಾನ ಟಿಕೆಟ್ ಮರುಪಾವತಿ ಮಾನದಂಡಗಳನ್ನು ಪರಿಷ್ಕರಿಸಿದೆ. ಪ್ರಯಾಣಿಕರು ಈಗ ಟಿಕೆಟ್ ಬುಕ್ ಮಾಡಿದ 48 ಗಂಟೆಗಳೊಳಗೆ ಹೆಚ್ಚುವರಿ ಶುಲ್ಕ ಪಾವತಿಸದೆ ವಿಮಾನ ಟಿಕೆಟ್ ಗಳನ್ನು ರದ್ದುಗೊಳಿಸಬಹುದು ಅಥವಾ ದಿನಾಂಕ ಬದಲಿಸಬಹುದು. ವಿಮಾನಯಾನ ಸಂಸ್ಥೆಗಳು 14 ಕಾರ್ಯಕಾರಿ ದಿನಗಳೊಳಗೆ ಮರುಪಾವತಿಯನ್ನು ಪೂರ್ಣಗೊಳಿಸಬೇಕು. ಟಿಕೆಟ್ ಬುಕ್ ಮಾಡಿದ 24 ಗಂಟೆಗಳೊಳಗೆ ಸರಳ ಹೆಸರು ತಿದ್ದುಪಡಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಬದಲಾವಣೆಗಳು ಅನೇಕ ಪ್ರಯಾಣಿಕರಿಂದ, ವಿಶೇಷವಾಗಿ ಕಳೆದ ಡಿಸೆಂಬರ್ನಲ್ಲಿ ಇಂಡಿಗೋ ವಿಮಾನ ಅಡಚಣೆಯ ಸಮಯದಲ್ಲಿ ಉಂಟಾದ ವಿಳಂಬ ಮತ್ತು ಗೊಂದಲಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ನವೀಕೃತ ಟಿಕೆಟ್ ಮರುಪಾವತಿ ನಿಯಮಗಳ ಭಾಗವಾಗಿದೆ. ಮರುಪಾವತಿ ನಿಯಮಗಳಲ್ಲಿ ಹೊಸದೇನು? ಪ್ರಯಾಣಿಕರು ಈಗ ಟಿಕೆಟ್ ಖರೀದಿಸಿದ 48 ಗಂಟೆಗಳೊಳಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ರದ್ದುಗೊಳಿಸಬಹುದು ಅಥವಾ ಬದಲಾಯಿಸಬಹುದು. ಕೆಲವು ಷರತ್ತುಗಳನ್ನು ಪೂರೈಸಿದರೆ ವಿಮಾನಯಾನ ಸಂಸ್ಥೆಗಳೊಂದಿಗೆ ನೇರವಾಗಿ ಮಾಡಿದ ಬುಕ್ಕಿಂಗ್ಗಳಿಗೆ ಇದು ಅನ್ವಯಿಸುತ್ತದೆ. ಈ ನಿಯಮವು ಪ್ರಯಾಣಿಕರಿಗೆ ದಂಡವಿಲ್ಲದೆ ತಮ್ಮ ಪ್ರಯಾಣ ಯೋಜನೆಯನ್ನು ಪುನರ್ರೂಪಿಸಲು ಸಣ್ಣ ಗ್ರೇಸ್ ಅವಧಿಯನ್ನು ನೀಡುತ್ತದೆ. ಹೆಸರಿನಲ್ಲಿ ಕಾಗುಣಿತ ದೋಷ ಅಥವಾ ಅಂತಹ ತಪ್ಪು ಇದ್ದರೆ, ಪ್ರಯಾಣಿಕರು ಬುಕ್ಕಿಂಗ್ ಮಾಡಿದ 24 ಗಂಟೆಗಳೊಳಗೆ ತಿಳಿಸಿದರೆ ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಶುಲ್ಕವಿಲ್ಲದೆ ಅದನ್ನು ಸರಿಪಡಿಸಬೇಕು. ಆದರೆ, ವಿಮಾನಯಾನ ಸಂಸ್ಥೆಯ ವೆಬ್ಸೈಟ್ನಲ್ಲಿ ಮಾಡಿದ ಬುಕ್ಕಿಂಗ್ಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಟ್ರಾವೆಲ್ ಏಜೆಂಟ್ ಗಳು ಅಥವಾ ತೃತೀಯ ಪಕ್ಷದ ಪೋರ್ಟಲ್ ಗಳ ಮೂಲಕ ಟಿಕೆಟ್ ಗಳನ್ನು ಖರೀದಿಸಿದರೆ, ವಿಮಾನಯಾನ ಸಂಸ್ಥೆಗಳು ಮರುಪಾವತಿಗೆ ಜವಾಬ್ದಾರರಾಗಿರಬೇಕು ಮತ್ತು 14 ಕಾರ್ಯಕಾರಿ ದಿನಗಳೊಳಗೆ ಮರುಪಾವತಿಯನ್ನು ಪೂರ್ಣಗೊಳಿಸಬೇಕು. ಇದು ಹಳೆಯ ಮಾನದಂಡಗಳ ಮೇಲಿನ ಸುಧಾರಣೆಯಾಗಿದ್ದು, ರದ್ದತಿಯ ನಂತರ ಹಣ ಹಿಂತಿರುಗಿಸಲು ದೀರ್ಘ ಕಾಯುವಿಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಂದಾಗಿ ರದ್ದತಿಗೆ ಸಂಬಂಧಿಸಿದ ನಿಯಮಗಳಲ್ಲಿಯೂ ಬದಲಾವಣೆ ತರಲಾಗಿದೆ. ಆದರೆ DGCA ಈ ಬಗ್ಗೆ ಸಾರ್ವಜನಿಕ ಪ್ರಕಟಣೆಯಲ್ಲಿ ವಿವರ ನೀಡಿಲ್ಲ. ಆರೋಗ್ಯ ಸಮಸ್ಯೆಗಳ ಕಾರಣದಿಂದ ಯೋಜನೆಗಳನ್ನು ರದ್ದುಗೊಳಿಸಿದರೆ ಪ್ರಯಾಣಿಕರಿಗೆ ಹೆಚ್ಚಿನ ಹೊಂದಾಣಿಕೆ ನೀಡುವುದು ಉದ್ದೇಶವಾಗಿದೆ. ಪ್ರಯಾಣಿಕರು ಮರುಪಾವತಿ ವಿಷಯದಲ್ಲಿ ವಿಳಂಬ ಮತ್ತು ಗೊಂದಲಗಳನ್ನು ಎದುರಿಸುತ್ತಾರೆ, ವಿಶೇಷವಾಗಿ ಟಿಕೆಟ್ ಗಳನ್ನು ಬಹಳ ಮುಂಚಿತವಾಗಿ ಅಥವಾ ಏಜೆಂಟ್ ಗಳ ಮೂಲಕ ಬುಕ್ ಮಾಡಿದಾಗ. ಹೊಸ ಮಾನದಂಡಗಳ ಪ್ರಕಾರ, ಪ್ರಯಾಣ ಏಜೆಂಟ್ ಗಳ ಬದಲು ವಿಮಾನಯಾನ ಸಂಸ್ಥೆಯೇ ಮರುಪಾವತಿಗೆ ಜವಾಬ್ದಾರಿಯಾಗಿರುತ್ತದೆ. ಇದರಿಂದ ಗ್ರಾಹಕರು ತಮ್ಮ ಹಣವನ್ನು ಮರುಪಡೆಯಲು ಪ್ರಯತ್ನಿಸುವಾಗ ಬಹುಪಕ್ಷಗಳ ನಡುವೆ ಸಿಲುಕುವ ಪರಿಸ್ಥಿತಿ ತಪ್ಪುತ್ತದೆ. ಮರುಪಾವತಿಗಳು ಸಮಯಕ್ಕೆ ಸರಿಯಾಗಿ ದೊರಕದಿರುವ ಬಗ್ಗೆ ಅನೇಕ ದೂರುಗಳ ನಡುವೆ ಈ ನವೀಕರಣ ಬಂದಿದೆ. 2025 ಡಿಸೆಂಬರ್ನಲ್ಲಿ ಇಂಡಿಗೋ ಕಾರ್ಯಾಚರಣೆಯ ಬಿಕ್ಕಟ್ಟಿನ ಸಮಯದಲ್ಲಿ ಟಿಕೆಟ್ ಮರುಪಾವತಿ ಸಮಸ್ಯೆ ವಿಶೇಷವಾಗಿ ಗಮನಾರ್ಹವಾಗಿ ವರದಿಯಾಗಿತ್ತು. ಬುಕ್ ಮಾಡಿದ 48 ಗಂಟೆಗಳ ಅವಧಿಯಲ್ಲಿ ರದ್ದತಿ ಉಚಿತವಾಗಿದ್ದರೂ, ನಂತರದ ಅವಧಿಯಲ್ಲಿ ರದ್ದು ಮಾಡಿದರೆ ಪ್ರಯಾಣಿಕರು ವಿಮಾನಯಾನ ಸಂಸ್ಥೆಯ ನಿಯಮಗಳ ಪ್ರಕಾರ ರದ್ದತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ►ಪ್ರಯಾಣಿಕರು ತಿಳಿದಿರಬೇಕಾದ ವಿಷಯಗಳು: * 48 ಗಂಟೆಗಳ ನಂತರ ಮಾಡಿದ ಬದಲಾವಣೆಗಳಿಗೆ ವಿಮಾನಯಾನ ಸಂಸ್ಥೆಯ ನೀತಿಯ ಪ್ರಕಾರ ಮಾರ್ಪಾಡು ಶುಲ್ಕಗಳು ಮತ್ತು ದರ ವ್ಯತ್ಯಾಸ ಶುಲ್ಕಗಳು ವಿಧಿಸಬಹುದು. * ಬುಕ್ಕಿಂಗ್ ಮಾಡಿದ 48 ಗಂಟೆಗಳ ನಂತರ ಯಾವುದೇ ಟಿಕೆಟ್ ಮಾರ್ಪಾಡಿಗೆ ವಿಮಾನಯಾನ ದರ ನಿಯಮಗಳ ಪ್ರಕಾರ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. * ನಿಮ್ಮ ಹೆಸರಿನಲ್ಲಿ ತಪ್ಪಿದ್ದರೆ, ಯಾವುದೇ ವೆಚ್ಚವಿಲ್ಲದೆ ಸರಿಪಡಿಸಲು 24 ಗಂಟೆಗಳ ಅವಕಾಶವಿದೆ. * ಏಜೆಂಟ್ ಮೂಲಕ ಬುಕ್ ಮಾಡಿದರೂ ಸಹ ಮರುಪಾವತಿಯನ್ನು 14 ಕಾರ್ಯಕಾರಿ ದಿನಗಳೊಳಗೆ ಪೂರ್ಣಗೊಳಿಸಬೇಕು. * ನಿಯಮಗಳಲ್ಲಿ ವೈದ್ಯಕೀಯ ರದ್ದತಿಗೆ ಸಂಬಂಧಿಸಿದ ನಿಬಂಧನೆಗಳೂ ಒಳಗೊಂಡಿವೆ.

ವಾರ್ತಾ ಭಾರತಿ 26 Feb 2026 8:13 pm

ಬಂಟ್ವಾಳ| ಮಾದಕ ವಸ್ತು ಸೇವಿಸಿದ ಆರೋಪ; ಇಬ್ಬರ ಬಂಧನ

ಬಂಟ್ವಾಳ : ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ ಘಟನೆ ಬಿ ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಬುಧವಾರ ನಡೆದಿದೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ನಿವಾಸಿಗಳಾದ ಅಬ್ದುಲ್ ರಜಾಕ್ ಹಾಗೂ ಫೆಬಿಯಸ್ ಜೈಸನ್ ಪಿರೇರಾ (24) ಎಂದು ಗುರುತಿಸಲಾಗಿದೆ. ಫೆ 25 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು ಬಿ ಮೂಡಾ ಗ್ರಾಮದ ಪಲ್ಲಮಜಲು ಎಂಬಲ್ಲಿ, ಸಾರ್ವಜನಿಕ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿದ ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಅಲ್ಲದೆ ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 26 Feb 2026 8:10 pm

ಅತ್ಯಾಚಾರ ಸಂತ್ರಸ್ತೆಯ ಅಪಹರಣ; ಎಚ್.ಡಿ.ರೇವಣ್ಣ ವಿರುದ್ಧದ ವಿಚಾರಣೆ ಕಾನೂನು ಪ್ರಕಾರ ಮುಂದುವರಿಯಲಿ : ಹೈಕೋರ್ಟ್

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ವಿರುದ್ಧದ ವಿಚಾರಣೆಯನ್ನು ಕಾನೂನು ರೀತಿ ಮುಂದುವರಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ. ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ಮೈಸೂರು ಜಿಲ್ಲೆಯ ಕೆ.ಆರ್‌. ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ರದ್ದು ಕೋರಿ ಎಚ್‌.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ವಾದ ಮಂಡನೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಸರ್ಕಾರಿ ಅಭೀಯೋಜಕರು, ಪ್ರಕರಣದಲ್ಲಿ ದೋಷಾರೋಪ ಹೊರಿಸುವ ಪ್ರಕ್ರಿಯೆಗೆ ಈ ಹಿಂದೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಹೈಕೋರ್ಟ್‌ 2026ರ ಫೆಬ್ರವರಿ 5ರಂದು ಆದೇಶಿಸಿದೆ. ಈಗಾಗಲೇ ಜನಪ್ರತಿನಿಧಿಗಳವಿಶೇಷ ನ್ಯಾಯಾಲಯ ವಿಚಾರಣೆ ಆರಂಭಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ದೋಷಾರೋಪ ನಿಗದಿ ಪ್ರಕ್ರಿಯೆ ನಡೆಸುವುದಕ್ಕೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಇದರಿಂದ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾನೂನು ಪ್ರಕಾರ ವಿಚಾರಣೆ ಮುಂದುವರಿಸಲಿ ಎಂದು ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ವಾರ್ತಾ ಭಾರತಿ 26 Feb 2026 8:08 pm

ಹಣ ಅಕ್ರಮ ವರ್ಗಾವಣೆ ಪ್ರಕರಣ | ED ಮುಂದೆ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

ಹೊಸದಿಲ್ಲಿ, ಫೆ. 26: ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಕುರಿತು ರಿಲಾಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಗುರುವಾರ ಜಾರಿ ನಿರ್ದೇಶನಾಲಯದ ಮುಂದೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾದರು. 66 ವರ್ಷದ ಉದ್ಯಮಿ ಅನಿಲ್ ಅಂಬಾನಿ ಅವರು ಬೆಳಗ್ಗೆ ಸುಮಾರು 10.30ಕ್ಕೆ ಕೇಂದ್ರ ದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದರು. ‘‘ನಾವು ಅವರ ಹೇಳಿಕೆಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದಾಖಲಿಸಿಕೊಂಡಿದ್ದೇವೆ’’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅನಿಲ್ ಅಂಬಾನಿ ಅವರನ್ನು ಜಾರಿ ನಿರ್ದೇಶನಾಲಯವು 2025ರ ಆಗಸ್ಟ್ ನಲ್ಲಿ ಮೊದಲ ಬಾರಿಗೆ ವಿಚಾರಣೆ ನಡೆಸಿತ್ತು. ಈ ಪ್ರಕರಣವು ಅನಿಲ್ ಅಂಬಾನಿ ಅವರ ಕಂಪೆನಿ ಸಮೂಹವಾದ ರಿಲಾಯನ್ಸ್ ಕಮ್ಯೂನಿಕೇಷನ್ಸ್ (ಆರ್ಕಾಮ್) ಬ್ಯಾಂಕೊಂದಕ್ಕೆ 40,000 ಕೋಟಿ ರೂ. ವಂಚನೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದೆ.

ವಾರ್ತಾ ಭಾರತಿ 26 Feb 2026 8:06 pm

ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಂತೆ ಪ್ರಧಾನಿಗೆ ಒತ್ತಡ ಹೇರಲು ಟ್ರಂಪ್ರಿಂದ ಎಪ್‌ ಸ್ಟೀನ್ ಫೈಲ್ ಗಳ ಬಳಕೆ: ರಾಹುಲ್ ಗಾಂಧಿ ಆರೋಪ

ಕಣ್ಣೂರು, ಫೆ. 26: ಭಾರತೀಯ ರೈತರನ್ನು ಬಲಿಕೊಡುವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಪ್‌ ಸ್ಟೀನ್ ಫೈಲ್ ಗಳನ್ನು ಬಳಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದರು. ಅವರು ಕಣ್ಣೂರು ಜಿಲ್ಲೆಯ ಪೆರವೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ಮಾತನಾಡಿದರು. ರೈತರು ಭಾರತದ ಅಡಿಪಾಯ ಎಂಬ ಸರಳ ಸತ್ಯವನ್ನು ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಮಾಹಿತಿ ತಂತ್ರಜ್ಞಾನ ಹಾಗೂ ಇತರ ವಲಯಗಳ ಬಗ್ಗೆ ದೀರ್ಘ ಉಪನ್ಯಾಸಗಳನ್ನು ನೀಡಲಾಗುತ್ತಿದೆ. ಆದರೆ ಅಡಿಪಾಯವನ್ನು ಸದೃಢಗೊಳಿಸದೆ ಏನನ್ನೂ ನಿರ್ಮಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ‘‘ನೀವು ಅಡಿಪಾಯಕ್ಕೆ ಗೌರವ ನೀಡದೇ ಇದ್ದರೆ, ಏನನ್ನೂ ನಿರ್ಮಿಸಲು ಸಾಧ್ಯವಿಲ್ಲ. ಅಡಿಪಾಯ ನಿರ್ಮಿಸುವ ವ್ಯಕ್ತಿಗೆ ಗೌರವ ಅಥವಾ ರಕ್ಷಣೆ ಇಲ್ಲ. ನಾವು ಪ್ರತಿ ದಿನ ಆಹಾರ ಸೇವಿಸುತ್ತೇವೆ. ಆದರೆ ಅದನ್ನು ನಮ್ಮ ಮೇಜಿನ ಮೇಲೆ ಯಾರು ಇರಿಸಿದರು ಎಂಬುದನ್ನು ನಾವು ನೆನಪಿಸಿಕೊಳ್ಳುವುದಿಲ್ಲ’’ ಎಂದು ಅವರು ತಿಳಿಸಿದರು. ಪ್ರಧಾನಿ ಅವರು ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದ ದೇಶದ ಅಡಿಪಾಯವನ್ನು ನಾಶ ಮಾಡಿದಂತೆ ಎಂದು ಅವರು ಆರೋಪಿಸಿದರು. ‘‘ಭಾರತದ ರೈತರು ಸಣ್ಣ ರೈತರು. ಅವರು ಸಣ್ಣ ಮಟ್ಟದಲ್ಲಿ ಯಂತ್ರೋಪಕರಣಗಳನ್ನು ಬಳಸುತ್ತಾರೆ. ಅಮೆರಿಕದ ರೈತರು ದೊಡ್ಡ ರೈತರು. ಅವರು ದೊಡ್ಡ ಮಟ್ಟದಲ್ಲಿ ಯಂತ್ರೋಪಕರಣಗಳನ್ನು ಬಳಸುತ್ತಾರೆ. ಅಮೆರಿಕದ ರೈತರಿಗೆ ಭಾರತೀಯ ಕೃಷಿ ಮಾರುಕಟ್ಟೆಯಲ್ಲಿ ಅವಕಾಶ ನೀಡುವುದು ಕ್ರಿಮಿನಲ್ ಕೃತ್ಯ’’ ಎಂದು ಅವರು ಹೇಳಿದರು. ‘‘ನಾವು ಎಚ್ಚರಿಕೆಯಿಂದ ನಿರ್ಮಿಸಿದ ಅಡಿಪಾಯವನ್ನು ಈ ಒಪ್ಪಂದ ನಾಶಮಾಡಲಿದೆ. ನಮಗೆ ಕೃಷಿಯಲ್ಲಿ ಅಡಿಪಾಯ ಬೇಕು ಎಂದು ನಾವು ಭಾವಿಸಿದ್ದರಿಂದ ಹಸಿರು ಹಾಗೂ ಶ್ವೇತ ಕ್ರಾಂತಿಗಳು ಸಂಭವಿಸಿದವು’’ ಎಂದು ರಾಹುಲ್ ಗಾಂಧಿ ಹೇಳಿದರು.

ವಾರ್ತಾ ಭಾರತಿ 26 Feb 2026 8:02 pm

Virat Kohli ಇಲ್ಲದೆ ಭಾರತ ಈತನಕ 160 ರನ್ ಚೇಸ್ ಮಾಡಿಲ್ಲ: ಸೆಹ್ವಾಗ್

ಹೊಸದಿಲ್ಲಿ, ಫೆ. 26: ಟೀಮ್ ಇಂಡಿಯಾ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ-20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಆಸಕ್ತಿದಾಯಕ ಅಂಕಿ-ಅಂಶವನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ದಕ್ಷಿಣ ಆಫ್ರಿಕಾಕ್ಕೆ 187 ರನ್ ಬಿಟ್ಟುಕೊಟ್ಟ ಭಾರತ ತಂಡವು ರನ್ ಚೇಸ್ ವೇಳೆ ಕೇವಲ 111 ರನ್ ಗಳಿಸಿ ಆಲೌಟಾಯಿತು. ಈ ಮೂಲಕ 76 ರನ್ ಗಳಿಂದ ಸೋಲುಂಡಿತು. ಈ ಭಾರೀ ಅಂತರದ ಸೋಲಿನಿಂದಾಗಿ ಭಾರತ ತಂಡದ ಸೆಮಿಫೈನಲ್ ತಲುಪುವ ಅವಕಾಶಗಳಿಗೆ ಹಿನ್ನಡೆ ಉಂಟಾಗಿದೆ. ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ 160ಕ್ಕೂ ಅಧಿಕ ರನ್ ಚೇಸ್ ಮಾಡುವಾಗ ಪಂದ್ಯವನ್ನು ಗೆದ್ದಿಲ್ಲ ಎಂದು ಸೆಹ್ವಾಗ್ ಬೆಟ್ಟು ಮಾಡಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲಿ ಕೊಹ್ಲಿ ಅವರಂತೆ ಆಡಿದ್ದರೆ ತಂಡಕ್ಕೆ ಅವಕಾಶ ಇತ್ತು. ಆದರೆ ತಿಲಕ್ ವರ್ಮಾ, ಸೂರ್ಯಕುಮಾರ್ಯಾದವ್, ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ಈ ನಿಟ್ಟಿನಲ್ಲಿ ಪ್ರಯತ್ನಪಡಲಿಲ್ಲ ಎಂದು ಹೇಳಿದ್ದಾರೆ. “ವಿರಾಟ್ ಕೊಹ್ಲಿ ರನ್ ಗಳಿಸಿದ್ದಾಗ ಮಾತ್ರ ಭಾರತವು 160 ರನ್ ಗುರಿಯನ್ನು ಚೇಸ್ ಮಾಡಿ ಗೆಲುವು ಸಾಧಿಸಿತ್ತು. ವಿಶ್ವಕಪ್ ನಲ್ಲಿ ಭಾರತವು 160ಕ್ಕಿಂತ ಹೆಚ್ಚು ರನ್ ಚೇಸ್ ಮಾಡಿಲ್ಲ. ಬಹುತೇಕ ಪಂದ್ಯಗಳಲ್ಲಿ ಕೊಹ್ಲಿ ಔಟಾಗದೆ ಇರುತ್ತಿದ್ದರು. 80, 60 ಅಥವಾ ಔಟಾಗದೆ 50 ರನ್ ಗಳಿಸಿ ಪಂದ್ಯವನ್ನು ಮುಗಿಸುತ್ತಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಯಾವ ಆಟಗಾರ ಪಂದ್ಯವನ್ನು ಮುಗಿಸಿದ್ದಾನೆ? ಮೊನ್ನೆಯ ಪಂದ್ಯದಲ್ಲಿ ಹಲವು ಆಟಗಾರರಿಗೆ ಕೊಹ್ಲಿ ಅವರಂತೆ ಆಡುವ ಅವಕಾಶವಿತ್ತು” ಎಂದು ಸೆಹ್ವಾಗ್ ಹೇಳಿದ್ದಾರೆ. “ದಕ್ಷಿಣ ಆಫ್ರಿಕಾ ವಿರುದ್ಧ ಸೂರ್ಯಕುಮಾರ್ ಯಾದವ್ ತನ್ನ ಉತ್ತಮ ಪ್ರದರ್ಶನ ನೀಡಲಿಲ್ಲ. ಪಂದ್ಯವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಒತ್ತಡದಲ್ಲಿದ್ದಂತೆ ಕಂಡುಬಂದರು. ತನ್ನ ನೈಜ ಆಟವನ್ನು ಆಡಲಿಲ್ಲ. ಭಯದಿಂದ ಆಡಿದರೆ ಪ್ರಮುಖ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗದು. ವಿಶ್ವಕಪ್ ನಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಲು ಬಯಸಿದರೆ ನಿರ್ಭೀತಿಯ ಕ್ರಿಕೆಟ್ ಆಡಬೇಕು. ಕಠಿಣ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸದಿಂದ ಇರಬೇಕು” ಎಂದು ಸೆಹ್ವಾಗ್ ಹೇಳಿದ್ದಾರೆ. ಭಾರತೀಯ ತಂಡದ ಬಲಿಷ್ಠ ಬ್ಯಾಟಿಂಗ್ ಸರದಿಯ ಬಗ್ಗೆ ಮಾತನಾಡಿದ ಸೆಹ್ವಾಗ್, “ಆಟಗಾರರು ವಿರಾಟ್ ಕೊಹ್ಲಿ ಅವರಿಂದ ಸಾಕಷ್ಟು ಕಲಿಯಬೇಕಾಗಿದೆ. ಟಿ-20 ಕ್ರಿಕೆಟ್ ನಲ್ಲಿ ಸ್ಟ್ರೈಕ್ ರೇಟ್ ಅತ್ಯಂತ ಮುಖ್ಯ. ಆದರೆ ರನ್ ಚೇಸ್ ಮಾಡುವಾಗ ಅದು ಮುಖ್ಯವಾಗುವುದಿಲ್ಲ; ಕೊನೆಯ ತನಕ ಇದ್ದು ಪಂದ್ಯವನ್ನು ಗೆಲ್ಲಿಸುವುದು ಮುಖ್ಯ. ಒತ್ತಡ ಪರಿಸ್ಥಿತಿಯಲ್ಲಿ ಭಾರತೀಯ ಬ್ಯಾಟರ್ ಗಳು ಹೆಚ್ಚು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಕ್ಷಿಪ್ರವಾಗಿ ರನ್ ಗಳಿಸುವ ಬದಲು ಪಂದ್ಯ ಗೆಲ್ಲುವತ್ತ ಗಮನ ನೀಡಬೇಕು” ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 7:58 pm

ಇಬ್ಬರ ಮುಸುಕಿನ ಗುದ್ದಾಟದ ನಡುವೆ ಕಾಂಗ್ರೆಸ್ ಸರ್ಕಾರ ಪತನ ಸಾಧ್ಯತೆ: ಬಸನಗೌಡ ಪಾಟೀಲ್ ಯತ್ನಾಳ್

ರಾಯಚೂರು: ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒಳ ಜಗಳ ಮುಗಿಯುತ್ತಿಲ್ಲ, ಇಬ್ಬರ ಗುದ್ದಾಟದ ನಡುವೆ ಸರ್ಕಾರ ಪತನ ಆಗುವ ಸಾಧ್ಯತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ರಾಯಚೂರಿನಲ್ಲಿ ಡಾ.ನಾಗರಾಜ ಬಾಲ್ಕಿ ಅವರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಆಗೋದು ಸಾಧ್ಯವೇ ಇಲ್ಲ. ಮಾಡೋದಿದ್ರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೊದಲೇ ಮಾಡುತ್ತಿದ್ದರು ಎಂದು ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ಕೆಪಿಸಿಸಿ ಅಧ್ಯಕ್ಷ ಮಾಡಿದಾಗಲೇ ಎಸ್ಎಂ ಕೃಷ್ಣ ಅವರನ್ನು ಸಿಎಂ ಮಾಡಿದ್ದರು. ಅಂದ್ರೆ ಖರ್ಗೆ ಅವರಿಗೆ ಮೋಸ ಮಾಡಿದ ಪಕ್ಷದಲ್ಲಿ ದಲಿತರು ಎಲ್ಲಾಗ್ತಾರೆ ಸಿಎಂ. ಇವರಿಬ್ಬರೇ ಜಗಳ ಆಡುತ್ತಿದ್ದಾರೆ, ಸಿದ್ದರಾಮಯ್ಯ ಬಿಡಲ್ಲ, ಡಿಕೆ ಶಿವಕುಮಾರ್ ಕೇಳಲ್ಲ. ಇವರಿಬ್ಬರದ್ದೇ ನ್ಯಾಯ ಮುಗೀತಿಲ್ಲ, ಮೂರನೇ ನ್ಯಾಯ ಎಲ್ಲಿ ಕೊಡುತ್ತಾರೆ. ದಲಿತ ಸಿಎಂ ಪ್ರಶ್ನೆನೇ ಬರಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಳ: ಕರ್ನಾಟಕದಲ್ಲಿ ಭ್ರಷ್ಟಾಚಾರ ಬಿಟ್ಟು ಏನಿದೆ ನೀವೇ ಹೇಳಿ. ಮೊನ್ನೆ ಸಿಎಂ ಅವರಿಗೆ ವಿಧಾನಸಭೆಯಲ್ಲಿ ಹೇಳಿದ್ದೇನೆ. ನೀವು ಹೆಚ್ಚು ಅವಧಿಗೆ ಸಿಎಂ ಆಗಿ ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದೀರಿ, ಹೆಚ್ಚು ಬಜೆಟ್ ಕೊಟ್ಟಿದ್ದೆಲ್ಲ ಸರಿ. ಆದರೆ ಎಲ್ಲಕ್ಕಿಂತ ಹೆಚ್ಚು ಭ್ರಷ್ಟ ಮುಖ್ಯಮಂತ್ರಿಯಾಗಿ ಹೋಗ್ಬೇಡಿ ಅಂತ ಹೇಳಿದ್ದೀನಿ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಂಟ್ರೋಲ್ ಇಲ್ಲ, ಅಭಿವೃದ್ಧಿಗೆ ಹಣ ಇಲ್ಲ. ಒಟ್ಟಾರೆ ಕರ್ನಾಟಕದಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಹೀಗೆ ಮುಂದುವರೆದರೆ ಸಿಬ್ಬಂದಿಗಳಿಗೆ ಸಂಬಳ ಕೊಡುವುದಕ್ಕೂ ಹಣ ಇಲ್ಲದ ಪರಿಸ್ಥಿತಿ ಬರುತ್ತೆ ಸರ್ಕಾರಕ್ಕೆ ಎಂದು ಹೇಳಿದರು. ಸರ್ಕಾರದ ಹುದ್ದೆಗಳಲ್ಲಿ ಸುಮಾರು 2 ಲಕ್ಷ 80 ಸಾವಿರ ಹುದ್ದೆಗಳು ಖಾಲಿ ಇವೆ. ಅವು ಬರ್ತಿ ಮಾಡೋಕೆ ಯಾವುದು ಆಗ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ 20,000 ಹುದ್ದೆ ಖಾಲಿ, ಶಿಕ್ಷಕರು ಹುದ್ದೆ ಖಾಲಿದೆ. ಪಂಚಾಯತ್ ರಾಜ್ ನಲ್ಲಿ ಪಿಡಿಒಗಳೇ ಇಲ್ಲ. ಈ ಎಲ್ಲಾ ಹುದ್ದೆಗಳು ತುಂಬಿದ್ರೆ ಕರ್ನಾಟಕದಲ್ಲಿ 2 ಲಕ್ಷ 80 ಸಾವಿರ ಕುಟುಂಬಗಳಿಗೆ ಬಿಪಿಎಲ್ ಅನ್ನೋದೇ ಇರಲ್ಲ. ಉಳಿದ ಬಡ ಕುಟುಂಬಗಳಿಗೆ ರೇಷನ್ ಕೊಡ್ಲಿ‌ ಎಂದರು.

ವಾರ್ತಾ ಭಾರತಿ 26 Feb 2026 7:56 pm

ಪಿಡಿಓಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು, ಫೆ.26 : ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಗ್ರೂಪ್-ಸಿ ವೃಂದದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹೈ.ಕ ವೃಂದದ 97 ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಹಾಗೂ ಉಳಿಕೆ ಮೂಲ ವೃಂದದ-150 ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ. ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಫೆ.20ರಂದು ಆಯೋಗದ http://kpsc.kar.nic.in-Lists-Final Selection List  ಮತ್ತು ಕಟ್ ಆಫ್ ಅಂಕಗಳ ಪಟ್ಟಿಯನ್ನು ಆಯೋಗದ ಜಾಲತಾಣ http://kpsc.kar.nic.in-Lists-Cut-Off List  ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಸದರಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಆಯ್ಕೆಯಾಗಲು ಇಚ್ಛಿಸದಿದ್ದಲ್ಲಿ ಆಯೋಗದ ಅಂತರ್ಜಾಲದಲ್ಲಿ ಲಭ್ಯವಿರುವ ನಾಟ್‍ವಿಲ್ಲಿಂಗ್ ಸರ್ಟಿಫಿಕೇಟ್ ಅನ್ನು ಡೌನ್‍ಲೋಡ್ ಮಾಡಿಕೊಂಡು ಸ್ಟ್ಯಾಂಪ್ ಪೇಪರ್ ನಲ್ಲಿ ನೋಟರಿ ಮುಖಾಂತರ ದೃಢೀಕರಿಸಿರುವ ಪ್ರಮಾಣಪತ್ರ ಮತ್ತು ಪೂರಕ ದಾಖಲೆಗಳೊಂದಿಗೆ ಆಯೋಗಕ್ಕೆ ಖುದ್ದಾಗಿ ಹಾಜರಾಗಿ ಸ್ವ-ಇಚ್ಚಾ ಹೇಳಿಕೆಯನ್ನು ಸಲ್ಲಿಸಬೇಕು. ಹಾಗೂ ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿ ಸಂಬಂಧ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ, ಈ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದ 7 ದಿನಗಳ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ. ಬೆಂಗಳೂರು-560 001, ಇವರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 26 Feb 2026 7:55 pm

ಸ್ಪ್ಯಾನೀಶ್ ಕ್ಲಬ್ ಅಲ್ಮೇರಿಯಾದಲ್ಲಿ ಶೇ. 25 ಪಾಲು ಖರೀದಿಸಿದ ರೊನಾಲ್ಡೊ

ರಿಯಾದ್, ಫೆ. 26: ಸ್ಪ್ಯಾನೀಶ್ ಎರಡನೇ ಹಂತದ ತಂಡ ಯುಡಿ ಅಲ್ಮೇರಿಯಾದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಶೇ. 25ರಷ್ಟು ಪಾಲು ಪಡೆದುಕೊಂಡಿದ್ದಾರೆ ಎಂದು ಪೋರ್ಚುಗೀಸ್ ಸೂಪರ್ಸ್ಟಾರ್ ಅವರನ್ನು ಪ್ರತಿನಿಧಿಸುವ ಸಲಹಾ ಸಂಸ್ಥೆಯಾದ ಬ್ರನ್ಸ್ವಿಕ್ ಗ್ರೂಪ್ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ರೊನಾಲ್ಡೊ ಅವರು ಸ್ಪ್ಯಾನೀಶ್ ಕ್ಲಬ್ ಅಲ್ಮೇರಿಯಾದಲ್ಲಿ ಶೇ. 25ರಷ್ಟು ಪಾಲನ್ನು ಖರೀದಿಸಿರುವುದನ್ನು ಸಂಸ್ಥೆ ದೃಢಪಡಿಸಿದೆ. ಅಲ್ಮೇರಿಯಾ ಸದ್ಯ ಸೌದಿ ಅರೇಬಿಯಾದ ಹೂಡಿಕೆದಾರರ ಒಡೆತನದಲ್ಲಿದೆ. 41 ವರ್ಷದ ಫಾರ್ವರ್ಡ್ ಆಟಗಾರ ರೊನಾಲ್ಡೊ 2022ರ ಅಂತ್ಯದಲ್ಲಿ ಅಲ್ ನಸ್ರ್ ತಂಡವನ್ನು ಸೇರಿದ ನಂತರದಿಂದ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ. “ಮೈದಾನದ ಹೊರಗೆ ಫುಟ್ಬಾಲ್ಗೆ ಕೊಡುಗೆ ನೀಡುವುದು ನನ್ನ ಬಹುಕಾಲದ ಮಹತ್ವಾಕಾಂಕ್ಷೆ. ಯುಡಿ ಅಲ್ಮೇರಿಯಾ ಬಲಿಷ್ಠ ಅಡಿಪಾಯ ಹಾಗೂ ಬೆಳವಣಿಗೆಗೆ ಸ್ಪಷ್ಟ ಸಾಮರ್ಥ್ಯ ಹೊಂದಿರುವ ಸ್ಪ್ಯಾನೀಶ್ ಕ್ಲಬ್” ಎಂದು ರೊನಾಲ್ಡೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Feb 2026 7:53 pm