SENSEX
NIFTY
GOLD
USD/INR

Weather

21    C
...

ಝಕರಿಯಾ ಜೋಕಟ್ಟೆಗೆ Entrepreneur Middle Eastನ ʼThe 100 NRIʼs ಪಟ್ಟಿಯಲ್ಲಿ ಸ್ಥಾನ

ಜುಬೈಲ್ (ಸೌದಿ ಅರೇಬಿಯ): ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಮೂಲದ ಉದ್ಯಮಿ ಹಾಗೂ ALMUZAIN ಗಲ್ಫ್ ಸೌದಿ ಕಾಂಟ್ರಾಕ್ಟಿಂಗ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಸ್ಥಾಪಕರಾದ ಝಕರಿಯಾ ಜೋಕಟ್ಟೆ ಅವರು Entrepreneur Middle Eastನ ಈ ವರ್ಷದ ಮಧ್ಯಪ್ರಾಚ್ಯದ ಪ್ರತಿಷ್ಠಿತ “The 100 NRIʼSʼ ” ಪಟ್ಟಿಯಲ್ಲಿಸ್ಥಾನ ಪಡೆದಿದ್ದಾರೆ. ಎಂಟ್ರಪ್ರೈನರ್ ಮಿಡ್ಲ್ ಈಸ್ಟ್ ಪ್ರಕಟಿಸುವ ವಾರ್ಷಿಕ ವಿಶೇಷ ಪಟ್ಟಿಯಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಸಾಧನೆ ಮಾಡಿರುವ 100 ಅತ್ಯುತ್ತಮ ಅನಿವಾಸಿ ಭಾರತೀಯ ಉದ್ಯಮಿಗಳನ್ನು ಗುರುತಿಸಲಾಗುತ್ತದೆ. ಈ ಪಟ್ಟಿಯಲ್ಲಿ ಝಕರಿಯಾ ಜೋಕಟ್ಟೆ ಅವರು ಸ್ಥಾನ ಪಡೆದಿದ್ದಾರೆ. ಝಕರಿಯಾ ಜೋಕಟ್ಟೆ ಅವರೊಂದಿಗೆ ಡಾ. ವಿವೇಕ್ ಒಬೆರಾಯ್, ಪ್ರಶಾಂತ್ ಗೋಯೆಂಕಾ, ಡಾ. ತುಂಬೆ ಮೊಯಿದೀನ್ ಹಾಗೂ ಫೈಝಲ್ ಇ. ಕೊಟ್ಟಿಕೊಲ್ಲನ್ ಸೇರಿದಂತೆ ಹಲವು ಪ್ರಮುಖ NRI ಉದ್ಯಮಿಗಳ ಹೆಸರು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬ್ಯಾರಿ ಸಮುದಾಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿರುವ ಕನ್ನಡಿಗರ ವಲಯದಲ್ಲಿಯೂ ಝಕರಿಯಾ ಜೋಕಟ್ಟೆ ಖ್ಯಾತರಾಗಿದ್ದಾರೆ. View this post on Instagram A post shared by Entrepreneur Middle East (@entmagazineme) ಝಕರಿಯಾ ಜೋಕಟ್ಟೆ ಅವರು ಮೇ 10, 1958ರಂದು ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆಯಲ್ಲಿ ಹಾಜಿ ಶೇಕುಂಞ ಮತ್ತು ಖತಿಜಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ತಮ್ಮ ಅಜ್ಜ ದಿವಂಗತ ಝಕರಿಯಾ ಹಾಜಿ ಅವರ ಹೆಸರನ್ನೇ ಅವರಿಗೆ ಇಡಲಾಗಿತ್ತು. ಗೇಣಿ ಗುತ್ತು ಕುಟುಂಬದವರಾದ ಅವರು ಈಗಿನ ಬಜ್ಪೆಯಲ್ಲಿ ಹೆಸರುವಾಸಿಯಾಗಿದ್ದರು. ಝಕರಿಯಾ ಅವರು ಪ್ರಸಿದ್ಧ ಕುಟುಂಬ ಹಿನ್ನೆಲೆಯಿಂದ ಬಂದಿದ್ದರೂ ಆರ್ಥಿಕ ಸಂಕಷ್ಟದಿಂದ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು. ಪೋಷಕರು ಹಾಗೂ ಒಡಹುಟ್ಟಿದವರ ಜವಾಬ್ದಾರಿ ಹೊತ್ತುಕೊಂಡ ಅವರು ಮೊದಲಿಗೆ ಮನೆ–ಮನೆಗೆ ಬೆಲ್ಲ ಮಾರಾಟ ಮಾಡುವ ಸಣ್ಣ ವ್ಯಾಪಾರ ಆರಂಭಿಸಿದರು. ಬಳಿಕ 1971ರಲ್ಲಿ ನ್ಯೂ ಮಂಗಳೂರು ಬಂದರಿನಲ್ಲಿ ವೆಲ್ಡಿಂಗ್ ಸಹಾಯಕರಾಗಿ ಕೇವಲ 4 ರೂ.ಸಂಬಳಕ್ಕೆ ಕೆಲಸಕ್ಕೆ ಸೇರಿದರು. ಇದೇ ಅನುಭವವು ಸೌದಿ ಮೂಲದ ಡ್ರೆಡ್ಜಿಂಗ್ ಕಂಪೆನಿಯಲ್ಲಿ ಅವಕಾಶ ಒದಗಿಸಿ, ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸಿಗೆ ದಾರಿ ಮಾಡಿಕೊಟ್ಟಿತು. ಸೌದಿ ಅರೇಬಿಯಾದ ಆರಂಭಿಕ ದಿನಗಳಲ್ಲಿ 21 ಮಹಡಿಗಳ ಕಟ್ಟಡಗಳಿಗೆ ಸಿಮೆಂಟ್ ಹೊರುವುದು, ರಸ್ತೆ ಕಾಂಕ್ರೀಟ್ ಕೆಲಸಗಳಲ್ಲಿ ಸಹಾಯ ಮಾಡುವುದು ಸೇರಿದಂತೆ ಕಠಿಣ ಕೆಲಸಗಳನ್ನು ಝಕರಿಯಾ ಅವರು ಮಾಡಿದರು. ಸವಾಲುಗಳ ನಡುವೆಯೂ ಹೊಸ ಕೌಶಲ್ಯಗಳನ್ನು ಕಲಿಯುತ್ತಾ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಮುಂದುವರಿದರು. ನಂತರ ಡಚ್ ಕೈಗಾರಿಕಾ ಸೇವಾ ಕಂಪೆನಿಗೆ ಸೇರ್ಪಡೆಗೊಂಡ ಅವರು 500 ಅರ್ಜಿದಾರರಲ್ಲಿ ಆಯ್ಕೆಯಾದ 13 ಮಂದಿಯಲ್ಲಿ ಒಬ್ಬರಾಗಿದ್ದರು. ಆರು ತಿಂಗಳಲ್ಲಿ ಹಾಲೆಂಡ್ ನಲ್ಲಿ ತರಬೇತಿ ಪಡೆದು, ಮುಂದಿನ ಎರಡು ವರ್ಷಗಳಲ್ಲಿ ಐದು ಬಡ್ತಿಗಳನ್ನು ಗಳಿಸಿ ಸಂಸ್ಥೆಯ ಉನ್ನತ ಹುದ್ದೆ ತಲುಪಿದರು. ಈ ಅನುಭವವೇ 1996ರಲ್ಲಿ ALMUZAIN ಸಂಸ್ಥೆ ಸ್ಥಾಪಿಸಲು ಪ್ರೇರಣೆಯಾಯಿತು. ಇಂದು ಈ ಸಂಸ್ಥೆ ಸೌದಿ ಅರೇಬಿಯಾದ ಪೆಟ್ರೋಕೆಮಿಕಲ್ ಮತ್ತು ರಿಫೈನರಿ ವಲಯಗಳಿಗೆ ಸೇವೆ ಸಲ್ಲಿಸುವ ಪ್ರಮುಖ ಕೈಗಾರಿಕಾ ಸಂಸ್ಥೆಯಾಗಿ ಬೆಳೆದಿದೆ. ಪ್ರಸ್ತುತ ALMUZAIN ಸಂಸ್ಥೆಯಲ್ಲಿ ಸುಮಾರು 7,000 ಗುತ್ತಿಗೆ ಕಾರ್ಮಿಕರು ಉದ್ಯೋಗದಲ್ಲಿದ್ದು, ಅವರಲ್ಲಿ ಹಲವರು ದೇಶದ ಕರಾವಳಿ ಭಾಗದವರೇ ಆಗಿದ್ದಾರೆ. 2026ರೊಳಗೆ ಸಂಸ್ಥೆಯು 15,000 ಉದ್ಯೋಗಿಗಳನ್ನು ಹೊಂದುವ ಗುರಿ ಹೊಂದಿದೆ. ಝಕರಿಯಾ ಜೋಕಟ್ಟೆ ಈಗಾಗಲೇ ಸುಮಾರು 1,500 ಕನ್ನಡಿಗರಿಗೆ ಉದ್ಯೋಗಾವ ಕಾಶ ಕಲ್ಪಿಸಿದ್ದು, 200ಕ್ಕೂ ಹೆಚ್ಚು ಕಂಪೆನಿಗಳಿಗೆ ಸಹಾಯ ಮಾಡಿದ್ದಾರೆ. ಉದ್ಯಮದ ಹೊರತಾಗಿಯೂ ಝಕರಿಯಾ ಜೋಕಟ್ಟೆ ಅವರು ಸೌದಿ ಅರೇಬಿಯಾದ ಅನಿವಾಸಿ ಭಾರತೀಯರ ಕಲ್ಯಾಣ ಹಾಗೂ ಮಹಿಳೆಯರ ಉದ್ಯೋಗಾವಕಾಶ ಹೆಚ್ಚಾಗುವಂತೆ ಮಾಡಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಝರಾ ಚಾರಿಟೇಬಲ್ ಫೌಂಡೇಶನ್ ಮೂಲಕ ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿ ರುವ ಅವರು ಮಂಗಳೂರಿನ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ ಖಾದಿಸಾ ಸ್ಥಾಪನೆಗೆ ಕೊಡುಗೆ ನೀಡಿರುವ ಅವರು ಹಿದಾಯ ಟ್ರಸ್ಟ್ ನ ಮಾಜಿ ಅಧ್ಯಕ್ಷರು. ಕೊಡುಗೈ ದಾನಿಯಾಗಿರುವ ಅವರಿಗೆ ಸ್ಟಾರ್ ಆಫ್ ಬ್ಯಾರೀಸ್ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಯಶಸ್ವಿ ಅನಿವಾಸಿ ಭಾರತೀಯ ಉದ್ಯಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಯುವಜನ ಶಿಕ್ಷಣ ಹಾಗೂ ಸಮುದಾಯ ಜಾಗೃತಿಗೆ ಒತ್ತು ನೀಡುವ ಅವರು ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಮುಸ್ಲಿಂ ಕುಟುಂಬಗಳು ಮಕ್ಕಳಿಗೆ ಧಾರ್ಮಿಕ ಹಾಗೂ ಜಾತ್ಯತೀತ ಶಿಕ್ಷಣ ಎರಡಕ್ಕೂ ಆದ್ಯತೆ ನೀಡುವಂತೆ ಪ್ರೋತ್ಸಾಹಿಸುತ್ತಾರೆ. ಝಕರಿಯಾ ಜೋಕಟ್ಟೆ ಅವರಿಗೆ 2025ರಲ್ಲಿ ಅನಿವಾಸಿ ಭಾರತೀಯ ವಿಭಾಗದಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ವಾರ್ತಾ ಭಾರತಿ 18 Feb 2026 11:07 pm

ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯವನ್ನೆ ಘಟಕವಾಗಿಸಲು ನಿರ್ಧಾರ : ಎಚ್.ಸಿ.ಮಹದೇವಪ್ಪ

ಬೆಂಗಳೂರು : ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹತ್ತಾರು ಭಿನ್ನ ಅಭಿಪ್ರಾಯಗಳು ಬಲವಾಗಿ ಅಸ್ತಿತ್ವದಲ್ಲಿ ಇರುವ ಸಂದರ್ಭದಲ್ಲೇ ನಮ್ಮ ಸರಕಾರವು ಸುಪ್ರಿಂ ಕೋರ್ಟ್ ನ ಆದೇಶಕ್ಕೆ ಅನ್ವಯವಾಗಿ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸುವ ಕೆಲಸವನ್ನು ಮಾಡಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 101 ಪರಿಶಿಷ್ಟ ಸಮುದಾಯಗಳನ್ನು ಎ.ಬಿ.ಸಿ ಎಂದು ವರ್ಗೀಕರಿಸಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಿದ ನಂತರದಲ್ಲಿ ಇನ್ನಷ್ಟು ತಾಂತ್ರಿಕ ಸವಾಲುಗಳು ಎದುರಾಗಿದ್ದು, ಈ ಬಗ್ಗೆ ವಿವಿಧ ಪರಿಶಿಷ್ಟ ಜಾತಿಯ ಯುವಕರು ಮತ್ತು ತಜ್ಞರು ನಿಯಮಿತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ, ಮತ್ತೆ ಕೆಲವರು ರಾಜಕೀಯ ಪ್ರೇರಿತವಾಗಿ ಪರಿಶಿಷ್ಟ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ, ನ್ಯಾಯದ ಪ್ರಶ್ನೆ ಬಂದಾಗ, ಸಮಚಿತ್ತವಾಗಿ ಎಲ್ಲವನ್ನೂ ಕೇಳಿ, ಪರಾಮರ್ಶಿಸಿ, ನ್ಯಾಯವನ್ನು ನಿರ್ಧರಿಸಬೇಕಾದ್ದು ಯಾವುದೇ ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ ಎಂಬ ಸಂಗತಿಯನ್ನು ನಾನು ಸದಾ ನಂಬುತ್ತೇನೆ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ನೇಮಕಾತಿಯ ವಿಷಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಹಲವು ವಿದ್ಯಾರ್ಥಿಗಳು ಮತ್ತು ಯುವಕರು ಎತ್ತಿರುವ ತಾಂತ್ರಿಕ ಸವಾಲುಗಳು ನ್ಯಾಯಯುತವಾಗಿದ್ದು, ಒಳ ಮೀಸಲಾತಿಯ ಸಂದರ್ಭದಲ್ಲಿ ಆಗುತ್ತಿರುವ ತೊಂದರೆಗಳನ್ನು ವಿವರಿಸಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.  ಈಗ ಒಳ ಮೀಸಲಾತಿ ಹಂಚಿಕೆಯಲ್ಲಿ ಎ.ಬಿ.ಸಿ ಎಂದು ವಿಭಾಗ ಮಾಡಿ, ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ವಿಷಯ ವಿಭಾಗವಾರು (Department wise recruitment) ನೇಮಕಾತಿ ಸಂದರ್ಭದಲ್ಲಿ, ಒಂದೊಂದೇ ಹುದ್ದೆಗಳು ಇರುವೆಡೆ ಕೇವಲ ಒಳ ಮೀಸಲಾತಿ ಗುಂಪಿನ ಎ ವರ್ಗಕ್ಕೆ ಮಾತ್ರವೇ ಉದ್ಯೋಗ ದೊರೆತು, ಮಿಕ್ಕ ಎರಡೂ ವರ್ಗವು ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೀಗಾಗಿ ನ್ಯಾಯ ಹಂಚಿಕೆಯಲ್ಲಿ ಎಲ್ಲರನ್ನೂ ಒಳಗೊಳ್ಳಬೇಕು ಎಂದು ಹಂಚಿಕೆ ಮಾಡಲಾಗಿರುವ ಒಳ ಮೀಸಲಾತಿಯ ಮೂಲ ಆಶಯಕ್ಕೇ ಇಲ್ಲಿ ಧಕ್ಕೆ ಆಗುತ್ತಿದ್ದು ಇದನ್ನು ಸರಿಪಡಿಸಬೇಕೆಂಬುದು ಬಿ ಮತ್ತು ಸಿ ವರ್ಗದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ಬೇಡಿಕೆ ಆಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯವನ್ನೇ ಒಂದು ಘಟಕವನ್ನಾಗಿ ಪರಿಗಣಿಸಿದರೆ, ಆಗ ಮೂರೂ ವರ್ಗಗಳಿಗೂ ಕೂಡ ಅವಕಾಶ ದೊರೆಯುತ್ತದೆ ಎಂಬುದು ಪರಿಶಿಷ್ಟ ಸಮುದಾಯಗಳ ಬೇಡಿಕೆ ಆಗಿದ್ದು, ಅದು ನ್ಯಾಯ ಸಮ್ಮತವೂ ಆಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಹೀಗಾಗಿ ಸಂಪುಟ ಉಪ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜನರ ಉದ್ಯೋಗ ಭವಿಷ್ಯಕ್ಕೆ ನ್ಯಾಯಯುತವಾಗಿ ಅನುಕೂಲ ಆಗುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವನ್ನು ಘಟಕವಾಗಿಸುವ ಬಗ್ಗೆ ತಾತ್ವಿಕವಾಗಿ ಒಪ್ಪಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳ ರೂಪುರೇಷೆಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಸಮಾನವಾದ ನ್ಯಾಯ ಹಂಚಿಕೆಗೆ ಪರ್ಯಾಯ ಇಲ್ಲದ ಕಾರಣದಿಂದ ಇದೇ ಮಾರ್ಗದ ಅನುಸರಣೆಯು ಸೂಕ್ತವಾಗಿದ್ದು ಯಾರಿಗೂ ತೊಂದರೆ ಆಗದಂತೆ ಪರಿಶಿಷ್ಟ ಸಮುದಾಯಗಳ ಸಮಾನ ನ್ಯಾಯ ಹಂಚಿಕೆಗೆ ಸರಕಾರ ಬದ್ಧವಾಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 11:06 pm

ಸಿಂಧನೂರು: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶಕ್ಕೆ; ಐವರ ವಿರುದ್ಧ ಪ್ರಕರಣ ದಾಖಲು

ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿ ಬರುವ ಕುರಿ ಸಂತೆ ಮಾರುಕಟ್ಟೆ ಆವರಣದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆಯ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು 120 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಐವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ದಾಖಲಾತಿಗಳಿಲ್ಲದೇ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಒಂದು ಲಾರಿಯಿಂದ ಮತ್ತೊಂದಿಗೆ ಲಾರಿಗೆ ಲೋಡ್ ಮಾಡಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ 120 ಕ್ವಿಂಟಲ್ ತೂಕದ ಬಾಯಿಕಟ್ಟಿದ ಚೀಲ ಹಾಗೂ ಅಕ್ರಮ ಸಾಗಾಣಿಕೆಗೆ ಬಳಕೆಯಾದ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಆಹಾರ ನಿರೀಕ್ಷಕ ಹನುಮೇಶ ಅವರು ನೀಡಿದ ದೂರಿನ ಹಿನ್ನಲೆಯಲ್ಲಿ ಇಮಾಮ್‌ಸಾಬ್, ಗುರುರಾಜ್ ಶೆಟ್ಟಿ ಪೋತ್ನಾಳ, ಲಾರಿ ಚಾಲಕ ಮಿರಜಾ ಖಾಸೀಂಉಲ್‌ಹಖ್ ಹಾಗೂ ಎರಡು ಲಾರಿಗಳ ಮಾಲಕರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 18 Feb 2026 11:03 pm

ರಾಯಚೂರು | ಜೆಡಿಎಸ್‌ ಮುಖಂಡರ ಮೇಲೆ ಸುಳ್ಳು ಪ್ರಕರಣ ಆರೋಪ: ಪ್ರತಿಭಟನೆ

ರಾಯಚೂರು: ಜೆಡಿಎಸ್ ಮುಖಂಡರ ವಿರುದ್ಧ ಸುಳ್ಳು ಹಾಗೂ ರಾಜಕಿಯ ಪ್ರೇರಿತ ಪ್ರಕರಣವನ್ನು ದಾಖಲು ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಹಾಗೂ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು. ನಗರದ ಗಂಜ್‌ ವೃತ್ತದ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಎಸ್ ಪಿ ಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ ವಿರುದ್ದ ಕಾಂಗ್ರೆಸ್ ಮುಖಂಡ ಜಿ.ತಿಮ್ಮಾರೆಡ್ಡಿ ಅವರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆಮೂಲಕ ಮುಂದಿನ ಮಹಾನಗರ ಪಾಲಿಕೆ ಚುನಾವಣೆ ಸ್ಪರ್ಧಿಸದಂತೆ ಭಯ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು. ಕೆಲ ಯುವಕರನ್ನು ಬಳಸಿಕೊಂಡು ಬಿ ತಿಮ್ಮಾರೆಡ್ಡಿ ಅವರು ಸುಳ್ಳು ದೂರುಗಳು ದಾಖಲಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಜೆಡಿಎಸ್ ಮುಖಂಡರ ಮೇಲೆ ನಿರಂತರವಾಗಿ ಸುಳ್ಳು ದೂರುಗಳು ದಾಖಲಿಸುತ್ತಿದ್ದು, ಮುಂದಿನ ಮಹಾ ನಗರ ಪಾಲಿಕೆ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ, ಮಾನಸಿಕವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುಳ್ಳು ದೂರುಗಳನ್ನು ದಾಖಲಿಸಲು ಕಾಂಗ್ರೆಸ್ ಮುಖಂಡರ ತಂಡ ಪೋಲಿಸರ ಮೇಲೆ ಒತ್ತಡ ಹಾಕುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದರು. ಜಿಲ್ಲೆಯಲ್ಲಿ ಮಟಕಾ, ಅಕ್ರಮ ಮರಳು, ಗಾಂಜಾ ನಡೆಯುತ್ತಿದ್ದು ತಡೆಗೆ ಪೋಲಿಸರು ವಿಫಲರಾಗಿದ್ದಾರೆ. ಇಂತಹವುಗಳಿಗೆ ಕಡಿವಾಣ ಹಾಕದೇ ಸುಳ್ಳು ಪ್ರಕರಣ ದಾಖಲಿಸುವಲ್ಲಿ ನಿರತರಾಗಿದ್ದ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಜಿಲ್ಲಾ ಕಾರ್ಯಾಧ್ಯಕ್ಷ ಎನ್. ಶಿವಶಂಕರ ವಕೀಲ, ರಾಮನಗೌಡ ಏಗನೂರು, ಸಣ್ಣ ನರಸಿಂಹ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ನರಸಪ್ಪ, ಜಂಬುನಾಥ ಯಾದವ್, ಎಸ್ ರಾಜು, ಈರಣ್ಣ ಯಾದವ್ ಇದ್ದರು.

ವಾರ್ತಾ ಭಾರತಿ 18 Feb 2026 10:52 pm

ದಕ್ಷಿಣ ಕೊರಿಯದ ‘ಸಾಕರ್‌ಡ್ರೋನ್’ ಅನ್ನು ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿ ಮತ್ತೊಂದು ವಿವಾದದಲ್ಲಿ ಗ್ಯಾಲ್ಗೋಟಿಯಾ ವಿವಿ!

ಹೊಸದಿಲ್ಲಿ,ಫೆ.19: ಚೀನಿ ನಿರ್ಮಿತ ರೊಬೊಡಾಗ್ಸ್ ವಿವಾದದ ಹಿನ್ನೆಲೆಯಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಹೊರದಬ್ಬಲ್ಪಟ್ಟ ನೊಯ್ಡಾ ಮೂಲದ ಗಾಲ್ಗೋಟಿಯಾ ವಿಶ್ವವಿದ್ಯಾನಿಲಯವು ದಕ್ಷಿಣ ಕೊರಿಯದಲ್ಲಿ ತಯಾರಾಗಿದ್ದೆನ್ನಲಾದ ಸಾಕರ್‌ಡ್ರೋನ್ ಅನ್ನು ತಾನೇ ನಿರ್ಮಿಸಿರುವುದಾಗಿ ಹೇಳಿ ಇನ್ನೊಂದು ವಿವಾದದ ಸುಳಿಗೆ ಸಿಲುಕಿದೆ. ರೊಬೊಡಾಗ್ಸ್ ವಿವಾದದಲ್ಲಿಯೂ ಶಾಮೀಲಾಗಿದ್ದ ವಿವಿಯ ಪ್ರಾಧ್ಯಾಪಕಿ ನೇಹಾಸಿಂಗ್ ಅವರು, ಎಐ ಎಕ್ಸ್‌ಪೋ ಮೇಳದಲ್ಲಿ ಸಾಕರ್‌ಡ್ರೋನ್ ಬಗ್ಗೆ ವಿವರಿಸುತ್ತಿರುವ ವೀಡಿಯೊ ವೈರಲ್ ಆಗಿತ್ತು. ವಿವಿ ಕ್ಯಾಂಪಸ್‌ನಲ್ಲಿ ನಿರ್ಮಿತವಾದ ಭಾರತದ ಚೊಚ್ಚಲ ಸಾಕರ್ ಡ್ರೋನ್ ಇದಾಗಿದ್ದು,ಸುಧಾರಿತವಾದ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಅವರು ವಿವರಿಸಿದ್ದರು. ಇದರ ಎಂಡ್ ಟು ಎಂಡ್ ಅಪ್ಲಿಕೇಶನ್ ಎಲ್ಲವನ್ನೂ ಭಾರತದಲ್ಲೇ ತಯಾರಿಸಲಾಗಿದೆ. ಇದರಲ್ಲಿ ಮಕ್ಕಳು ಗೇಮ್ಸ್ ಆಡಬಹುದು ಮತ್ತು ಅದನ್ನು ಹಾರಿಸಲೂಬಹುದು ಎಂದು ಅವರು ಹೇಳಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಆದರೆ ನೆಟ್ಟಿಗರು ಗೊಲ್ಗೊಟಿಯಾ ವಿವಿ ನಿರ್ಮಿಸಿದ ಈ ಡ್ರೋನ್, ದಕ್ಷಿಣ ಕೊರಿಯಾದ ಹೆಲ್ಸೆಲ್ ಗ್ರೂಪ್ ಅಭಿವೃದ್ಧಿಪಡಿಸಿದ ಸ್ಟ್ರೈಕರ್ ವಿ3 ಎಆರ್‌ಎಫ್ ಡ್ರೋನ್ ಅನ್ನು ನಿಕಟವಾಗಿ ಹೋಲುತ್ತದೆಯೆಂದು ಗಮ ಸೆಳೆದಿದ್ದರು. ಅಲ್ಲದೆ ಈ ಉತ್ಪನ್ನವು ಮಾರುಕಟ್ಟೆಯಲ್ಲಿ ಸುಮಾರು 40,800 ರೂ.ಗೆ ಲಭ್ಯವಿರುವುದಾಗಿಯೂ ಮಾಧ್ಯಮವೊಂದು ವರದಿ ಮಾಡಿದೆ. ಗೊಲ್ಗೊಟಿಯಾ ವಿವಿ ಕ್ಷಮೆಯಾಚನೆ ಚೀನಾ ನಿರ್ಮಿತ ರೊಬೊಟಿಕ್ ಡಾಗ್ ಗೊಲ್ಗೊಟಿಯಾ ವಿಶ್ವವಿದ್ಯಾನಿಲಯದ ಸೃಷ್ಟಿಯೆಂಬ ತನ್ನ ಪ್ರೊಫೆಸರ್ ಹೇಳಿಕೆಗೆ ವಿವಿಯು ಕ್ಷಮೆಯಾಚಿಸಿದೆ. ಎಐ ಎಕ್ಸ್‌ಪೊದಲ್ಲಿರುವ ತನ್ನ ಪೆವಿಲಿಯನ್‌ನ ಉಸ್ತುವಾರಿ ಹೊಂದಿದ್ದ ಪ್ರೊಫೆಸರ್ ನೇಹಾಸಿಂಗ್ ಅವರಿಗೆ ರೊಬೊಟ್ ಬಗ್ಗೆ ಮಾಹಿತಿಯ ಕೊರತೆಯಿತ್ತು ಮತ್ತು ಮಾಧ್ಯಮಗಳ ಮುಂದೆ ಮಾತನಾಡುವ ಅಧಿಕಾರವನ್ನು ಅವರಿಗೆ ನೀಡಲಾಗಿರಲಿಲ್ಲವೆಂದು ತಿಳಿಸಿದೆ.

ವಾರ್ತಾ ಭಾರತಿ 18 Feb 2026 10:49 pm

ನೈಜೀರಿಯಾ| ಗಣಿಯಲ್ಲಿ ಸ್ಫೋಟ; 38 ಮಂದಿ ಮೃತ್ಯು

ಅಬುಜ, ಫೆ.18: ನೈಜೀರಿಯಾದ ಪ್ಲ್ಯಾಟ್ಯೂ ರಾಜ್ಯದ ಬಷರ್ ಜಿಲ್ಲೆಯ ಸೀಸದ ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದು ಇತರ 27 ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ. ಗಣಿಯ ಆಳದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಣಿ ಕುಸಿದಿದೆ. ಕನಿಷ್ಠ 38 ಮಂದಿ ಮೃತಪಟ್ಟಿದ್ದು ಗಾಯಗೊಂಡಿದ್ದ 27 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರ್ತಾ ಭಾರತಿ 18 Feb 2026 10:46 pm

ಸ್ತನ ಹಿಡಿಯುವುದು, ಪೈಜಾಮದ ದಾರ ಎಳೆಯುವುದು ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 17: ಸ್ತನ ಹಿಡಿಯುವುದು ಹಾಗೂ ಪೈಜಾಮದ ದಾರವನ್ನು ಎಳೆಯುವುದು ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಕೇವಲ ‘ಅತ್ಯಾಚಾರಕ್ಕೆ ನಡೆಸಿದ ಸಿದ್ಧತೆ’ ಎಂಬ ಅಲಹಾಬಾದ್ ಉಚ್ಚ ನ್ಯಾಯಾಲಯದ ವಿವಾದಾತ್ಮಕ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ ಹಾಗೂ ಎನ್.ವಿ. ಅಂಜಾರಿಯ ಅವರನ್ನು ಒಳಗೊಂಡ ಪೀಠ, ಕ್ರಿಮಿನಲ್ ನ್ಯಾಯಶಾಸ್ತ್ರದ ಸ್ಥಿರ ತತ್ವಗಳ ತಪ್ಪಾದ ಅನ್ವಯದ ಕಾರಣದಿಂದಾಗಿ ಈ ಆಕ್ಷೇಪಾರ್ಹ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ. ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ಮರು ದಾಖಲಿಸುವಂತೆ ಸೂಚಿಸಿತು.

ವಾರ್ತಾ ಭಾರತಿ 18 Feb 2026 10:39 pm

ಸಂಚಾರ ಅಡ್ಡಿ, ನಮಾಝ್ ನಡುವೆ ನಂಟು ಕಲ್ಪಿಸಿ ವೀಡಿಯೊ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಹೊಸದಿಲ್ಲಿ, ಫೆ. 17: ಜಮ್ಮು ಹಾಗೂ ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆಯನ್ನು ಟ್ರಕ್ ಚಾಲಕರೊಬ್ಬರು ನಮಾಝ್ ಮಾಡುವುದಕ್ಕೆ ತಪ್ಪಾಗಿ ನಂಟು ಕಲ್ಪಿಸುವ ಪರಿಶೀಲಿಸದ ವೀಡಿಯೊವನ್ನು ಪ್ರಸಾರ ಮಾಡಿರುವುದಕ್ಕೆ ಸುದ್ದಿ ಪ್ರಸಾರ ಹಾಗೂ ಡಿಜಿಟಲ್ ಗುಣಮಟ್ಟಗಳ ಪ್ರಾಧಿಕಾರ ಝೀ ನ್ಯೂಸ್‌ಗೆ 1 ಲಕ್ಷ ರೂ. ತಂಡ ವಿಧಿಸಿದೆ. ಮುಸ್ಲಿಂ ಟ್ರಕ್ ಚಾಲಕನೊಬ್ಬ ಪ್ರಾರ್ಥನೆ ಮಾಡಲು ಹೆದ್ದಾರಿಯ ಮಧ್ಯದಲ್ಲಿ ತನ್ನ ವಾಹನವನ್ನು ನಿಲ್ಲಿಸಿದ್ದಾನೆ. ಇದರಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪ್ರತಿಪಾದಿಸುವ ವೀಡಿಯೊವನ್ನು ಚಾನೆಲ್ ಪ್ರಸಾರ ಮಾಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಆದರೆ, ಸತ್ಯ ಶೋಧನೆ ಹಾಗೂ ಸಂಚಾರ ಸಲಹೆಗಳ ಪ್ರಕಾರ, ತೀವ್ರ ಹವಾಮಾನ ವೈಪರಿತ್ಯ ಹಾಗೂ ಭೂಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಝೀ ಟಿವಿಯು ದಿನನಿತ್ಯದ ಸಂಚಾರ ಅಡಚಣೆಯನ್ನು ಕೋಮವಾದೀಕರಿಸಿತು. ಪರಿಶೀಲಿಸದ ಸಾಮಾಜಿಕ ಮಾಧ್ಯಮದ ವೀಡಿಯೊ ತುಣಕನ್ನು ಕಾರಣವೆಂದು ಪ್ರಸಾರ ಮಾಡಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಝೀ ನ್ಯೂಸ್, ಪ್ರಸಾರದ ಸಂದರ್ಭ ವೀಡಿಯೊ ವೈರಲ್ ಆಗಿತ್ತು ಹಾಗೂ ಪರಿಶೀಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ಸಾಮಾಜಿಕ ಮಾಧ್ಯಮದ ಅಂಶವನ್ನು ವರದಿ ಮಾಡಿರುವುದಾಗಿ ಝೀ ನ್ಯೂಸ್ ಒಪ್ಪಿಕೊಂಡಿದೆ. ಅಲ್ಲದೆ, ನಕಲಿ ಎಂದು ಕಂಡು ಬಂದ ಕೂಡಲೇ ವೀಡಿಯೊವನ್ನು ಅಳಿಸಲಾಗಿದೆ ಎಂದು ಅದು ತಿಳಿಸಿದೆ. ಪ್ರಸಾರಕರು ಪರಿಶೀಲಿಸದ ಸಾಮಾಜಿಕ ಮಾಧ್ಯಮದ ವಿಷಯವನ್ನು ಬಳಸಿರುವುದು ಗಂಭೀರ ಲೋಪವಾಗಿದೆ ಹಾಗೂ ಇದು ನೀತಿ ಸಂಹಿತೆ ಅಡಿಯಲ್ಲಿ ನಿಖರತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಡಿಜಿಟಲ್ ಮಾನದಂಡ ಪ್ರಾಧಿಕಾರ ಅಭಿಪ್ರಾಯಿಸಿದೆ.

ವಾರ್ತಾ ಭಾರತಿ 18 Feb 2026 10:37 pm

Bengaluru | ʼನಾನು ಸತ್ತರೆ ನಿನ್ನ ನೋಡಿಕೊಳ್ಳುವರು ಯಾರುʼ ಎಂದು ಪತ್ನಿಯ ಹತ್ಯೆಗೈದ ಇಸ್ರೋ ನಿವೃತ್ತ ನೌಕರ

ಬೆಂಗಳೂರು : ಇಸ್ರೋ ನಿವೃತ್ತ ನೌಕರನೊಬ್ಬ ತನ್ನ ಪತ್ನಿಯನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಾಥಮಿಕ ವಿಚಾರಣೆ ವೇಳೆ ‘ನಾನು ಸತ್ತರೆ ನಿನ್ನ ನೋಡಿಕೊಳ್ಳುವರು ಯಾರು’ ಎನ್ನುವ ಭೀತಿಯಿಂದ ಕೃತ್ಯವೆಸಗಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಗೊತ್ತಾಗಿದೆ. ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, ಬೊಮನಹಳ್ಳಿಯ ಬಿದರಹಳ್ಳಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿದ್ದ ಸಂಧ್ಯಾಶ್ರೀ (65) ಪತಿಯಂದಲೇ ಕೊಲೆಯಾದವರು. ಮೂಲತಃ ಆಂಧ್ರಪ್ರದೇಶದ ವಿಜಯವಾಡ ಮೂಲದ ನಾಗೇಶ್ವರ್ ರಾವ್ (72) ಇಸ್ರೋ ನಿವೃತ್ತ ನೌಕರ ಆಗಿದ್ದಾರೆ. ಹಲವು ವರ್ಷಗಳಿಂದ ಪತ್ನಿ ಸಂಧ್ಯಾಶ್ರೀ ಅವರೊಂದಿಗೆ ಬೊಮನಹಳ್ಳಿಯ ಬಿದರಹಳ್ಳಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿದ್ದರು. ಬುಧವಾರ ಬೆಳಗ್ಗೆ ದಂಪತಿ ನಡುವೆ ಯಾವುದೋ ವಿಚಾರವಾಗಿ ಜಗಳವಾಗಿದೆ. ಕೋಪದಲ್ಲಿ ತಾಳ್ಮೆ ಕಳೆದುಕೊಂಡ ನಾಗೇಶ್ವರ್ ರಾವ್ ಟವಲ್‍ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ನಂತರ ಆತ್ಮಹತ್ಯೆ ಮಾಡಿಕೊಳ್ಳಲು ನಾಗೇಶ್ವರ್ ರಾವ್ ಯೋಚಿಸಿ ವಿಫಲಗೊಂಡು ಪತ್ನಿ ಕೊಲೆ ಮಾಡಿರುವ ವಿಷಯವನ್ನು ಪಕ್ಕದ ಮನೆಗೆ ಕರೆ ಮಾಡಿ ತಿಳಿಸಿದ್ದಾನೆ. ನೆರೆಮನೆ ನಿವಾಸಿ ಬಂದು ನೋಡಿ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ನಾಗೇಶ್ವರ್ ರಾವ್‍ನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿದಾಗ, ನಾನು ಸತ್ತರೆ ಪತ್ನಿಯನ್ನು ಯಾರು ನೋಡುಕೊಳ್ಳುತ್ತಾರೆ, ಯಾರೂ ಸಂಬಂಧಿಕರು ಇಲ್ಲ. ಆಕೆಯ ಮುಂದಿನ ಜೀವನ ಹೇಗೆ? ಹಾಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ. ನಾಗಲೇಶ್ವರ ರಾವ್ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ದಂಪತಿಯ ಓರ್ವ ಮಗಳು ಅಮೆರಿಕದಲ್ಲಿದ್ದಾರೆಂಬ ಮಾಹಿತಿ ಗೊತ್ತಾಗಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 10:36 pm

ರಷ್ಯಾ ವಿರುದ್ಧ ರೊಚ್ಚಿಗೆದ್ದು ಮಹತ್ವದ ಘೋಷಣೆ ಹೊರಡಿಸಿದ ಉಕ್ರೇನ್ | Ukraine And Russia

ಉಕ್ರೇನ್ ಈಗ ರೊಚ್ಚಿಗೆದ್ದು, ರಷ್ಯಾ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದು ಕೂತಿದೆ. ತಮ್ಮ ಮೇಲೆ ಈ ರೀತಿ ಘೋರವಾಗಿ ದಾಳಿ ಮಾಡುತ್ತಿರುವ ರಷ್ಯಾಗೆ ಹೇಗಾದರೂ ಮಾಡಿ ಸೂಕ್ತ ಪಾಠ ಕಲಿಸಬೇಕು, ಆ ಮೂಲಕ ರಿವೇಂಜ್ ತೆಗೆದುಕೊಳ್ಳಬೇಕು ಎಂಬುದು ಉಕ್ರೇನ್ ಪ್ಲಾನ್. ಆದರೆ ಪದೇ ಪದೇ ಉಕ್ರೇನ್‌ನ ಈ ಪ್ಲಾನ್ ಕೈಕೊಡುತ್ತಿದೆ. ಇಷ್ಟೆಲ್ಲದರ ನಡುವೆ ಒತ್ತಡದ ಪರಿಣಾಮ ರಷ್ಯಾ

ಒನ್ ಇ೦ಡಿಯ 18 Feb 2026 10:36 pm

ರಣಜಿ ಟ್ರೋಫಿ ಮೊದಲ ಸೆಮಿಫೈನಲ್: ಕರ್ನಾಟಕಕ್ಕೆ 802 ರನ್‌ಗಳ ಬೃಹತ್ ಮುನ್ನಡೆ

ಲಕ್ನೋ, ಫೆ. 18: ರಣಜಿ ಟ್ರೋಫಿ ಮೊದಲ ಸೆಮಿಫೈನಲ್‌ನ ನಾಲ್ಕನೇ ದಿನವಾದ ಬುಧವಾರ ಉತ್ತರಾಖಂಡದ ವಿರುದ್ಧ ಕರ್ನಾಟಕ ಸಂಪೂರ್ಣ ಮೇಲುಗೈ ಸಾಧಿಸಿದೆ. ದಿನದಾಟದ ಕೊನೆಯಲ್ಲಿ ಕರ್ನಾಟಕ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 299 ರನ್ ಗಳಿಸಿದೆ ಹಾಗೂ ಒಟ್ಟಾರೆ 802 ರನ್‌ಗಳ ಬೃಹತ್ ಮುನ್ನಡೆಯಲ್ಲಿದೆ. ಬುಧವಾರ ಉತ್ತರಾಖಂಡವು ತನ್ನ ಮೊದಲ ಇನಿಂಗ್ಸನ್ನು ಐದು ವಿಕೆಟ್‌ಗಳ ನಷ್ಟಕ್ಕೆ 149 ಇದ್ದಲ್ಲಿಂದ ಮುಂದುವರಿಸಿತು. 52 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಲಕ್ಷ್ಯ ರೈಚಂದಾನಿ 55 ರನ್ ಗಳಿಸಿ ನಿರ್ಗಮಿಸಿದರು. 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಸೌರಭ್ ರಾವತ್ ಕೂಡ 14 ರನ್ ಗಳಿಸಿ ಬೇಗನೇ ನಿರ್ಗಮಿಸಿದರು. ಜಗದೀಶ ಸುಚಿತ್ 21 ರನ್‌ಗಳ ದೇಣಿಗೆಯನ್ನು ನೀಡಿದರು. ಕೊನೆಯಲ್ಲಿ ಪ್ರತಿಹೋರಾಟದ ನೇತೃತ್ವವನ್ನು ವಹಿಸಿಕೊಂಡ ಆದಿತ್ಯ ರಾವತ್ 45 ರನ್ ಗಳಿಸಿ ಔಟಾಗದೆ ಉಳಿದರು. ಕರ್ನಾಟಕದ ಪರವಾಗಿ ವಿದ್ಯಾಧರ ಪಾಟೀಲ್ ಮತ್ತು ವಿಜಯಕುಮಾರ್ ವೈಶಾಖ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಶ್ರೇಯಸ್ ಗೋಪಾಲ್ ಎರಡು ವಿಕೆಟ್‌ಗಳನ್ನು ಉರುಳಿಸಿದರು. ಬಳಿಕ, ಕರ್ನಾಟಕವು ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ನಾಲ್ಕನೇ ದಿನದಾಟದ ಕೊನೆಯ ವೇಳೆಗೆ ರವಿಚಂದ್ರನ್ ಸ್ಮರಣ್‌ರ ಶತಕದ ನೆರವಿನಿಂದ ಆರು ವಿಕೆಟ್‌ಗಳ ನಷ್ಟಕ್ಕೆ 299 ರನ್ ಗಳಿಸಿತು. ಕೃತಿಕ್ ಕೃಷ್ಣ 52 ರನ್‌ಗಳನ್ನು ಗಳಿಸಿದರೆ, ಕೆ.ಎಲ್. ರಾಹುಲ್ 70 ರನ್‌ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ಉತ್ತರಾಖಂಡದ ಪರವಾಗಿ ಅಭಯ್ ನೇಗಿ ಮತ್ತು ಮಯಾಂಕ್ ಮಿಶ್ರಾ ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು. ಕರ್ನಾಟಕವು ತನ್ನ ಮೊದಲ ಇನಿಂಗ್ಸ್‌ನಲ್ಲಿ ನಾಯಕ ದೇವದತ್ತ ಪಡಿಕ್ಕಲ್‌ರ 232 ರನ್‌ಗಳ ನೆರವಿನಿಂದ 736 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿದೆ. ಈಗ ಅದು ಒಟ್ಟಾರೆ 802 ರನ್‌ಗಳ ಬೃಹತ್ ಮುನ್ನಡೆಯಲ್ಲಿದೆ.

ವಾರ್ತಾ ಭಾರತಿ 18 Feb 2026 10:29 pm

ಕೋಝಿಕ್ಕೋಡ್ ಮೂಲದ ಕಂಪನಿ ಸಿಬ್ಬಂದಿಗೆ ಕೋಟ್ಯಾಂತರ ರೂ. ಮೌಲ್ಯದ ಉಡುಗೊರೆ ನೀಡಿದೆ

ಕೋಝಿಕ್ಕೋಡ್: ನಿಷ್ಠಾವಂತ ಉದ್ಯೋಗಿಗಳನ್ನು ಗೌರವಿಸುವ ವಿಚಾರದಲ್ಲಿ ಕೇರಳ ಮೂಲದ 'ಹೈಲೈಟ್ ಗ್ರೂಪ್' ಹೊಸ ಇತಿಹಾಸ ಬರೆದಿದೆ. ತನ್ನ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸಂಸ್ಥೆಯು ತನ್ನ ಸಿಬ್ಬಂದಿಗೆ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಉದ್ಯೋಗಿಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ: ರೇಂಜ್ ರೋವರ್ ನಿಂದ ಕ್ರೆಟಾವರೆಗೆ ಬಿಸಿನೆಸ್ ಲೈನ್

ಒನ್ ಇ೦ಡಿಯ 18 Feb 2026 10:29 pm

ರಾಯಚೂರು | ಗಣೇಕಲ್ ಜಲಾಶಯದ ಕಾಲುವೆಗಳ ಸುತ್ತ ನಿಷೇಧಾಜ್ಞೆ ಜಾರಿ

ರಾಯಚೂರು: ಗಣೇಕಲ್ ಜಲಾಯಶದಿಂದ ರಾಂಪೂರ ಕುಡಿಯುವ ನೀರಿನ ಜಲಾಶಯಕ್ಕೆ ನೀರನ್ನು ಹರಿಸುವ ವಿತರಣಾ ಕಾಲುವೆ 95, 96, 98, 98ಎ, 98ಬಿ, 99ಎ, 99 ಮತ್ತು 100ರವರೆಗೆ ಕಾಲುವೆಯ ಸುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಫೆ.17ರಿಂದ ಮಧ್ಯರಾತ್ರಿ 12 ಗಂಟೆಯಿAದ ಫೆ.21ರ ಮಧ್ಯೆರಾತ್ರಿ 12 ಗಂಟೆವರೆಗೆ 100 ಮೀಟರಗಳ ವಿತರಣಾ ಕಾಲುವೆಗಳ ಸುತ್ತುವರೆದ ಪ್ರದೇಶದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಆದೇಶ ಹೊರಡಿಸಿದ್ದಾರೆ.

ವಾರ್ತಾ ಭಾರತಿ 18 Feb 2026 10:29 pm

ಟಿ20 ವಿಶ್ವಕಪ್| ನಮೀಬಿಯ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು

ಕೊಲಂಬೊ, ಫೆ. 18: ನಮೀಬಿಯ ವಿರುದ್ಧದ ಟಿ20 ವಿಶ್ವಕಪ್ ಲೀಗ್ ಪಂದ್ಯವನ್ನು ಪಾಕಿಸ್ತಾನ ಬುಧವಾರ 102 ರನ್‌ಗಳ ಭರ್ಜರಿ ಅಂತರದಿಂದ ಗೆದ್ದಿದೆ ಹಾಗೂ ಆ ಮೂಲಕ ಸೂಪರ್ ಎಂಟು ಹಂತಕ್ಕೆ ತೇರ್ಗಡೆಗೊಂಡಿದೆ. ಪಾಕಿಸ್ತಾನವು ಸೂಪರ್ 8ಕ್ಕೆ ಅರ್ಹತೆ ಗಳಿಸಿದ ಕೊನೆಯ ತಂಡವಾಗಿದೆ. ಸಾಹಿಬ್‌ಝಾದ ಫರ್ಹಾನ್ ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಶತಕದ ಮೂಲಕ ಪಾಕಿಸ್ತಾನದ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಹಾಗೂ ಪಾಕಿಸ್ತಾನದ ಸ್ಪಿನ್ನರ್‌ಗಳು ಶಿಸ್ತುಬದ್ಧ ಬೌಲಿಂಗ್‌ನಿಂದ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಫರ್ಹಾನ್ 58 ಎಸೆತಗಳಲ್ಲಿ 100 ರನ್‌ಗಳನ್ನು ಗಳಿಸಿ ಔಟಾಗದೆ ಉಳಿದರು. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಗೆಲ್ಲಲು 20 ಓವರ್‌ಗಳಲ್ಲಿ 200 ರನ್‌ಗಳನ್ನು ಗಳಿಸುವ ಗುರಿಯನ್ನು ಪಡೆದ ನಮೀಬಿಯ ತಂಡವು 17.3 ಓವರ್‌ಗಳಲ್ಲಿ 97 ರನ್‌ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ, ಆರಂಭಿಕ ಬ್ಯಾಟರ್ ಲೋರನ್ ಸ್ಟೀನ್‌ಕಂಪ್ (22 ಎಸೆತಗಳಲ್ಲಿ 23 ರನ್) ಮತ್ತು ಅಲೆಕ್ಸಾಂಡರ್ ಬಸಿಂಗ್ ವೋಲ್ಶೆಂಕ್ (20 ಎಸೆತಗಳಲ್ಲಿ 20 ರನ್)ರನ್ನು ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳಿಗೆ ಎರಡಂಕಿಯ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಪರವಾಗಿ ಶದಬ್ ಖಾನ್ 19 ರನ್‌ಗಳನ್ನು ಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದರೆ, ಉಸ್ಮಾನ್ ತಾರಿಖ್ 16 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಇದಕ್ಕೂ ಮೊದಲು, ಟಾಸ್ ಗೆದ್ದ ಪಾಕಿಸ್ತಾನ ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು ಹಾಗೂ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 199 ರನ್ ಗಳಿಸಿತು. ಫರ್ಹಾನ್ 38 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರೈಸಿದರು. ಆದರೆ, ನಂತರ ಕೇವಲ 20 ಎಸೆತಗಳಲ್ಲಿ ಶತಕವನ್ನು ತಲುಪಿದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. ಫರ್ಹಾನ್ ಪುರುಷರ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ಎರಡನೇ ಕ್ರಿಕೆಟಿಗನಾದರು. ಇದಕ್ಕೂ ಮೊದಲು ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿರುವ ಪಾಕಿಸ್ತಾನದ ಆಟಗಾರನೆಂದರೆ ಅಹ್ಮದ್ ಶೆಹ್ಝಾದ್. ಅವರು 2014ರಲ್ಲಿ ಮೀರ್‌ಪುರದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಫರ್ಹಾನ್‌ರ ಇನಿಂಗ್ಸ್‌ನಲ್ಲಿ 11 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳಿದ್ದವು. ಅವರು ನಾಯಕ ಸಲ್ಮಾನ್ ಅಲಿ ಅಘ (23 ಎಸೆತಗಳಲ್ಲಿ 38 ರನ್) ಮತ್ತು ಶದಬ್ ಖಾನ್ (22 ಎಸೆತಗಳಲ್ಲಿ 36 ರನ್ ಔಟಾಗದೆ) ಜೊತೆಗೆ ಕ್ರಮವಾಗಿ 67 ಮತ್ತು 81 ರನ್‌ಗಳ ಜೊತೆಯಾಟವಾಡಿದರು.

ವಾರ್ತಾ ಭಾರತಿ 18 Feb 2026 10:26 pm

ಉಕ್ರೇನ್ ಮೇಲೆ ಟ್ರಂಪ್ ಅನಗತ್ಯ ಒತ್ತಡ ಹೇರುತ್ತಿದ್ದಾರೆ : ವೊಲೊದಿಮಿರ್ ಝೆಲೆನ್‍ಸ್ಕಿ

ಕೀವ್, ಫೆ.18: ರಶ್ಯದೊಂದಿಗೆ ಶಾಂತಿ ಮಾತುಕತೆಯಲ್ಲಿ ಕೆಲವು ರಿಯಾಯಿತಿಗಳನ್ನು ನೀಡಲು ಉಕ್ರೇನ್ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಗತ್ಯ ಒತ್ತಡ ಹೇರುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಬುಧವಾರ ಹೇಳಿದ್ದು, ಹೆಚ್ಚಿನ ಪ್ರದೇಶಗಳನ್ನು ಬಿಟ್ಟುಕೊಡಲು ಉಕ್ರೇನಿಯನ್ನರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಹೊಂದಾಣಿಕೆ ಮಾಡುವಂತೆ ಟ್ರಂಪ್ ಪದೇ ಪದೇ ಉಕ್ರೇನ್‍ಗೆ ಆಗ್ರಹಿಸುವುದು ಸರಿಯಲ್ಲ. ರಶ್ಯದ ಮೇಲೆಯೂ ಅವರು ಒತ್ತಡ ಹೇರಬೇಕು ಎಂದು ಝೆಲೆನ್‍ಸ್ಕಿ ಆಗ್ರಹಿಸಿರುವುದಾಗಿ `ಆಕ್ಸಿಯೊಸ್' ವರದಿ ಮಾಡಿದೆ. ಒಪ್ಪಂದದತ್ತ ಉಕ್ರೇನ್ ತ್ವರಿತವಾಗಿ ಸಾಗಬೇಕು. ಯುದ್ದ ನಿಲ್ಲಬೇಕಾದರೆ ಉಕ್ರೇನ್ ವೇಗವಾಗಿ ಮಾತುಕತೆ ನಡೆಸಬೇಕು ಎಂಬ ಟ್ರಂಪ್ ಹೇಳಿಕೆಗೆ ಝೆಲೆನ್‍ಸ್ಕಿ `ಇದು ಅವರ ತಂತ್ರಗಳು. ನಿರ್ಧಾರವಲ್ಲ ಎಂದು ಭಾವಿಸುತ್ತೇನೆ' ಎಂದು ಪ್ರತಿಕ್ರಿಯಿಸಿದರು. ರಶ್ಯಕ್ಕಿಂತ ಉಕ್ರೇನ್‍ನ ಮೇಲೆ ಒತ್ತಡ ಹೇರುವುದು ರಾಜಕೀಯವಾಗಿ ಅಮೆರಿಕಕ್ಕೆ ಸುಲಭವಾಗಿರಬಹುದು. ಆದರೆ ತಾನು ಒತ್ತಡಕ್ಕೆ ಬಾಗುವುದಿಲ್ಲ. ಪೂರ್ವ ಡೊನ್ಬಾಸ್ ವಲಯದಲ್ಲಿ ಹೆಚ್ಚುವರಿ ಪ್ರದೇಶವನ್ನು ಉಕ್ರೇನ್ ಬಿಟ್ಟುಕೊಡಬೇಕೆಂಬ ಯಾವುದೇ ಪ್ರಸ್ತಾಪವನ್ನು ಸ್ಥಳೀಯರು ತಿರಸ್ಕರಿಸುತ್ತಾರೆ. ಭಾವನಾತ್ಮಕವಾಗಿ ಅಲ್ಲಿನ ಜನರು ಇದನ್ನು ಎಂದಿಗೂ ಕ್ಷಮಿಸುವುದಿಲ್ಲ. ಅವರು ಅಮೆರಿಕವನ್ನು ಕ್ಷಮಿಸುವುದಿಲ್ಲ. ರಶ್ಯ ಈಗಾಗಲೇ ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಮೀರಿ ಇನ್ನಷ್ಟು ಭೂಮಿಯನ್ನು ಉಕ್ರೇನಿಯನ್ನರು ಏಕೆ ಒಪ್ಪಿಸಬೇಕು ಎಂದು ಅರ್ಥವಾಗುತ್ತಿಲ್ಲ. ಇದು ನಮ್ಮ ದೇಶದ ಭಾಗವಾಗಿದೆ. ಇವರು ನಮ್ಮ ಪ್ರಜೆಗಳು, ನಮ್ಮ ಧ್ವಜ, ನಮ್ಮ ಭೂಮಿ' ಎಂದು ಝೆಲೆನ್‍ಸ್ಕಿ ಹೇಳಿದ್ದು ಪ್ರಸ್ತುತ ಮುಂಚೂಣಿಯಲ್ಲಿ ಯುದ್ದವನ್ನು ಸ್ಥಗಿತಗೊಳಿಸುವ ಶಾಂತಿ ಒಪ್ಪಂದವು ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಂಗೀಕರಿಸಲ್ಪಟ್ಟರೆ ಸ್ವೀಕಾರಾರ್ಹವಾಗಿರುತ್ತದೆ ಎಂದಿದ್ದಾರೆ.

ವಾರ್ತಾ ಭಾರತಿ 18 Feb 2026 10:20 pm

ತಾಲೂಕು ಘೋಷಣೆಗೆ ಆಗ್ರಹಿಸಿ ಮುದಗಲ್ ಬಂದ್

ಲಿಂಗಸುಗೂರು: ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಬುಧುವಾರ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು. ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ,ಕೆಲಕಾಲ ರಸ್ತೆ ತಡೆ ನಡೆಸಿದರು. ಬಂದ್ ಕರೆಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸದಸ್ಯ ಅಶೋಕಗೌಡ ಪಾಟೀಲ್, ಪಟ್ಟಣ ಸುತ್ತ ಮುತ್ತಲಿನ 60 ಗ್ರಾಮಗಳು, 18 ತಾಂಡಾಗಳಿಗೆ ಕೇಂದ್ರ ಬಿಂದುವಾಗಿದ್ದು, ಎರಡು ರಾಜ್ಯ ಹೆದ್ದಾರಿ ಹೊಂದಿದೆ. ತಾಲೂಕು ಕೇಂದ್ರವಾಗಲು ಬೇಕಾದ ಮೂಲ ಅರ್ಹತೆ ಹೊಂದಿದ್ದು, ಪುರಸಭೆ, ಕಷಿ ಉತ್ಪನ್ನ ಮಾರುಕಟ್ಟೆ, ವಿದ್ಯುತ್ ಪ್ರಸಾರಣಾ ಕೇಂದ್ರ, ಪದವಿ ಕಾಲೇಜು, ಬಸ್ ನಿಲ್ದಾಣ, ಟ್ರಜರಿ ಆಫೀಸ್, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ನಾಡ ತಹಸಿಲ್ ಕಚೇರಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳು ಇಲ್ಲಿವೆ. ಪಟ್ಟಣ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಈ ಹಿಂದೆ ಹುಂಡೆಕಾರ್, ಗದ್ದಿಗೌಡರ್, ವಾಸುದೇವ ಸಮಿತಿಗಳು ಪಟ್ಟಣ ತಾಲೂಕು ಕೇಂದ್ರವಾಗಲು ಯೋಗ್ಯವಾಗಿದ್ದು,ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಮಾಜಿ ಶಾಸಕ ದಿ.ಎಂ.ಗಂಗಣ್ಣನವರ ನೇತೃತ್ವದಲ್ಲಿ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಸ್ವಾಭಿಮಾನಿ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ವ್ಯಾಪಾರಸ್ಥರ ಸಂಘ,ಕಾರ್ಮಿಕ ಸಂಘಟನೆ, ಕಾಂಗ್ರೇಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಬಂದ್ ಗೆ ಬೆಂಬಲಿಸಿದರು. ಮನವಿ ಸ್ವೀಕರಿಸಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಕಾಂಗ್ರೆಸ್ ಸರಕಾರ ಮುದಗಲ್ ಅನ್ನು ಹೊಸ ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕು ಹಾಗೂ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಅನುಧಾನ ಮೀಸಲಿಡಬೇಕು ಎಂದು ಈಗಾಗಲೇ ಅಧಿವೇಶನದಲ್ಲಿ ಹಲವು ಬಾರಿ ಪ್ರಸ್ತಾಪಿಸಿದರೂ ಸರಕಾರ ಕಿಂಚಿತ್ತೂ ಗಮನಹರಿಸಿಲ್ಲ. ಬಜೆಟ್ ಅಧೀವೇಶನಕ್ಕೂ ಮುಂಚೆ ಹೋರಾಟಗಾರ ಜತೆ ನಾನು ಕೂಡಾ ಭಾಗವಹಿಸಿ ಮುಖ್ಯಮಂತ್ರಿಗಳಲ್ಲಿ ಹಾಗೂ ಕಂದಾಯ ಸಚಿವರಲ್ಲಿ ಮನವಿಗೂ ಸಿದ್ದ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪುರುರಾಜಸಿಂಗ್ ಸೊಲಂಕಿ, ಕೃಷ್ಣಾ ಚಲುವಾದಿ, ಮೈಬೂಬಸಾಬ, ಕಡ್ಡಿಪುಡಿ, ಶರಣಪ್ಪ ಕಟ್ಟಿಮನಿ, ಮೌನೇಶ ಶಿವನಗುತ್ತಿ, ರಹೀಮ್ ಷಾ, ಬಸವರಾಜ ಬಂಕ ದಮನಿ ಸೇರಿ ಇತರರು ಇದ್ದರು.

ವಾರ್ತಾ ಭಾರತಿ 18 Feb 2026 10:20 pm

T20 World Cup- ಸೂಪರ್ 8 ಹಂತಕ್ಕೆ ವೇದಿಕೆ ಸಿದ್ಧ; ಟೀಂ ಇಂಡಿಯಾ ಪಂದ್ಯಗಳು ಯಾವಾಗ? ಹೀಗಿದೆ ವೇಳಾಪಟ್ಟಿ

ಐಸಿಸಿ ನ ಗುಂಪು ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಾ ಬಂದಿದ್ದು ನಾಲ್ಕೂ ಬಣಗಳ ಮೊದಲೆರಡು ಸ್ಥಾನಿಗಳು ಯಾರಾಗುತ್ತಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೀಗಾಗಿ ಸೂಪರ್ 8 ಹಂತದ ಯೂ ಬಿಡುಗಡೆಯಾಗಿದೆ. ಎ ಬಣದಿಂದ ಪ್ರಥಮ ಸ್ಥಾನಿಯಾಗಿ ಭಾರತ ತಂಡ ಮತ್ತು ದ್ವಿತೀಯ ಸ್ಥಾನಿಯಾಗಿ ಪಾಕಿಸ್ತಾನ ಸೂಪರ್ 8 ಹಂತಕ್ಕೇರಿವೆ. ಅದೇ ರೀತಿಯ ಬಿ ಗುಂಪಿನಿಂದ ಕ್ರಮವಾಗಿ ಶ್ರೀಲಂಕಾ, ಜಿಂಬಾಬ್ವೆ, ಸಿ ಗುಂಪಿನಿಂದ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಡಿ ಗುಂಪಿನಿಂದ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಗಳು ಮೊದಲೆರಡು ಸ್ಥಾನಗಳಲ್ಲಿ ಸೂಪರ್ 8 ಹಂತಕ್ಕೇರಿ ನಿಂತಿವೆ. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಬಲಿಷ್ಠ ತಂಡವಾಗಿರುವ . ಇದೀಗ ಸೂಪರ್ 8 ಹಂತಕ್ಕೇರಿದ 8 ತಂಡಗಳನ್ನು 2 ಬಣಗಳಲ್ಲಿ ವಿಂಗಡಿಸಲಾಗಿದೆ. ಎಕ್ಸ್ ಬಣದಲ್ಲಿ ಭಾರತ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳಿವೆ. ಅದೇ ರೀತಿ ವೈ ಬಣದಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಇರಲಿವೆ. ಪ್ರತಿಯೊಂದು ತಂಡ ತನ್ನ ಬಣದಲ್ಲಿರುವ ಉಳಿದ ಮೂರು ತಂಡಗಳ ವಿರುದ್ಧ ಆಡಬೇಕಿದೆ. ಅಂದರೆ ಸೂಪರ್ 8 ಹಂತದಲ್ಲಿ ಪ್ರತಿಯೊಂದು ತಂಡಕ್ಕೂ 3 ಪಂದ್ಯಗಳು ಸಿಗಲಿವೆ. ಬಣದಲ್ಲಿ ಮೊದಲೆರಡು ಸ್ಥಾನ ಪಡೆದವರು ಸೆಮಿಫೈನಲ್ ಪ್ರವೇಶಿಸಲಿದ್ದಾರೆ. ಎ ಬಣದಲ್ಲಿ ಪ್ರಥಮ ಸ್ಥಾನಿಯಾಗಿರುವ ಭಾರತ ತಂಡ ದಕ್ಷಿಣ ಆಫ್ರಿಕಾ, ಜಿಂಬಾಬ್ನೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯಗಳನ್ನು ಆಡಬೇಕಿದೆ. () ಸೂಪರ್ 8 ಹಂತದ ವೇಳಾಪಟ್ಟಿ ದಿನಾಂಕ ಪಂದ್ಯ ಸಮಯ ಸ್ಥಳ ಪೆಬ್ರವರಿ 21 ಶನಿವಾರ ನ್ಯೂಜಿಲೆಂಡ್ Vs ಪಾಕಿಸ್ತಾನ ಸಂಜೆ 7.00 ಕೊಲಂಬೊ ಫೆಬ್ರವರಿ 22 ಭಾನುವಾರ ಶ್ರೀಲಂಕಾ Vs ಇಂಗ್ಲೆಂಡ್ ಮಧ್ಯಾಹ್ನ 3.00 ಕ್ಯಾಂಡಿ * ಫೆಬ್ರವರಿ 22 ಭಾನುವಾರ ಭಾರತ Vs ದಕ್ಷಿಣ ಆಫ್ರಿಕಾ ಸಂಜೆ 7.00 ಅಹ್ಮದಾಬಾದ್ ಫೆಬ್ರವರಿ 23 ಸೋಮವಾರ ವೆಸ್ಟ್ ಇಂಡೀಸ್ Vs ಜಿಂಬಾಬ್ವೆ ಸಂಜೆ 7.00 ಮುಂಬೈ ಫೆಬ್ರವರಿ 24 ಮಂಗಳವಾರ ಇಂಗ್ಲೆಂಡ್ Vs ಪಾಕಿಸ್ತಾನ ಸಂಜೆ 7.00 ಕ್ಯಾಂಡಿ ಫೆಬ್ರವರಿ 25 ಬುಧವಾರ ಶ್ರೀಲಂಕಾ Vs ನ್ಯೂಜಿಲೆಂಡ್ ಸಂಜೆ 7.00 ಕೊಲಂಬೊ ಫೆಬ್ರವರಿ 26 ಗುರುವಾರ ದಕ್ಷಿಣ ಆಫ್ರಿಕಾ Vs ವೆಸ್ಟ್ ಇಂಡೀಸ್ ಸಂಜೆ 3.00 ಅಹ್ಮದಾಬಾದ್ * ಫೆಬ್ರವರಿ 26 ಗುರುವಾರ ಭಾರತ Vs ಜಿಂಬಾಬ್ವೆ ಸಂಜೆ 7.00 ಚೆನ್ನೈ ಫೆಬ್ರವರಿ 27 ಶುಕ್ರವಾರ ಇಂಗ್ಲೆಂಡ್ Vs ನ್ಯೂಜಿಲೆಂಡ್ ಸಂಜೆ 7.00 ಕೊಲಂಬೊ ಫೆಬ್ರವರಿ 28 ಶನಿವಾರ ಶ್ರೀಲಂಕಾ Vs ಪಾಕಿಸ್ತಾನ ಸಂಜೆ 7.00 ಕ್ಯಾಂಡಿ ಮಾರ್ಚ್ 1 ಭಾನುವಾರ ದಕ್ಷಿಣ ಆಫ್ರಿಕಾ Vs ಜಿಂಬಾಬ್ವೆ ಸಂಜೆ 3.00 ದಿಲ್ಲಿ * ಮಾರ್ಚ್ 1 ಭಾನುವಾರ ಭಾರತ vs ವೆಸ್ಟ್ ಇಂಡೀಸ್ ಸಂಜೆ 7.00 ಕೋಲ್ಕತಾ ಭಾರತದ ಪಂದ್ಯಗಳು ಯಾವಾಗ? ವೇಳಾಪಟ್ಟಿಯ ಪ್ರಕಾರ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 22ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇನ್ನು ಪೆಬ್ರವರಿ 26ರಂದು ಜಿಂಬಾಬ್ವೆ ಮತ್ತು ಮಾರ್ಚ್ 1ರಂದು ಕೊನೇ ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಪ್ರತಿಯೊಂದು ಸೂಪರ್ 8 ಬಣದಲ್ಲೂ ಕನಿಷ್ಠ 2 ಪಂದ್ಯ ಗೆದ್ದ ತಂಡ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳಲಿದೆ. ಅಂಕಗಳು ಸಮನಾದರೆ ರನ್ ರೇಟ್ ಪ್ರಮುಖ ಪಾತ್ರ ವಹಿಸಲಿದೆ. ಮಾರ್ಚ್ 4ರಂದು ಮೊದಲ ಸೆಮಿಫೈನಲ್, ಮಾರ್ಚ್ 5ರಂದು ದ್ವಿತೀಯ ಸೆಮಿಫೈನಲ್ ಮತ್ತು ಮಾರ್ಚ್ 8ರಂದು ಫೈನಲ್ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳೂ ಸ್ಟಾರ್ ಸ್ಪೋರ್ಟ್ಸ್ ನೆಟವರ್ಕ್ ಮತ್ತು ಜಿಯೋ ಸ್ಟಾರ್ ಆ್ಯಪ್ ಗಳಲ್ಲಿ ನೇರಪ್ರಸಾರ ಆಗಲಿವೆ.

ವಿಜಯ ಕರ್ನಾಟಕ 18 Feb 2026 10:15 pm

ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ ಸ್ಟೀರಿಂಗ್ ಹಿಡಿದ ಅಪ್ರಾಪ್ತರು; ಐಷಾರಾಮಿ ಕಾರುಗಳ ವೇಗಕ್ಕೆ ಬಲಿಯಾದ ಅಮಾಯಕರ ಜೀವಗಳು

ತಲೆಗೆ ಗಂಭೀರ ಗಾಯವಾಗಿದ್ದರಿಂದ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದೆ. ತೋಳುಗಳು, ಪಕ್ಕೆಲುಬುಗಳು ಮುರಿದಿವೆ. ಕಳೆದ ವಾರ ಅಪ್ರಾಪ್ತ ವಯಸ್ಕ ಚಲಾಯಿಸುತ್ತಿದ್ದ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ 23 ವರ್ಷದ ಸಾಹಿಲ್ ಧನೇಶ್ರಾ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾದ ವಿಷಯ ಇದು. ಫೆಬ್ರವರಿ 3ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ದಿಲ್ಲಿಯ ದ್ವಾರಕಾ ನಿವಾಸಿ ಸಾಹಿಲ್ ಸಾವಿಗೀಡಾಗಿದ್ದರು. ಮಗನ ಸಾವಿನ ಬಗ್ಗೆ ಕಣ್ಣೀರಿಟ್ಟ ತಾಯಿ, “ನಾನು ನನ್ನ ಮಗ ಸಾಹಿಲ್ ಧನೇಶ್ರಾನನ್ನು ಕಳೆದುಕೊಂಡೆ. 23 ವರ್ಷದ ಪ್ರತಿಭಾನ್ವಿತ ಹುಡುಗ ಆತ. ನಾನು ಸಿಂಗಲ್ ಮದರ್. ನನ್ನ ಮಗನನ್ನು ಸ್ಕಾರ್ಪಿಯೋ ಬಲಿತೆಗೆದುಕೊಂಡಿತು. ಕಾರು ಚಲಾಯಿಸುತ್ತಿದ್ದವನಿಗೆ ಚಾಲನಾ ಪರವಾನಗಿ ಇರಲಿಲ್ಲ. ಅವನ ಸಹೋದರಿ ಕಾರಿನಲ್ಲಿ ರೀಲ್ಗಳನ್ನು ಮಾಡುತ್ತಿದ್ದಾಗ ಅವನು ವೇಗವಾಗಿ ಕಾರು ಚಲಾಯಿಸುತ್ತಿದ್ದ. ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ತನಿಖೆಯ ಭಾಗವಾಗಿ ಈ ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 3ರಂದು ಅಪಘಾತವಾದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಾಹಿಲ್ ಅವರನ್ನು ಇಂದಿರಾ ಗಾಂಧಿ ಆಸ್ಪತ್ರೆಗೆ ಕರೆತರಲಾಯಿತು. ಮಧ್ಯಾಹ್ನ 1.54ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸಾಹಿಲ್ಗೆ ಅಪಘಾತದಲ್ಲಿ ಹಲವು ಗಾಯಗಳಾಗಿವೆ ಎಂದು ಕಂಡುಬಂದಿದೆ. ಆತನ ಹೊಟ್ಟೆ, ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ. ತೀವ್ರ ರಕ್ತಸ್ರಾವ ಮತ್ತು ಪ್ರಮುಖ ಅಂಗಗಳಿಗೆ ಗಂಭೀರ ಗಾಯಗಳಾಗಿದ್ದ ಕಾರಣ ಸಾಹಿಲ್ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ. ►ಅಪಘಾತ ಸಂಭವಿಸಿದ್ದು ಹೇಗೆ? ಪೊಲೀಸರ ಪ್ರಕಾರ, ಫೆಬ್ರವರಿ 3ರಂದು ಬೆಳಿಗ್ಗೆ 11.57ರ ಸುಮಾರಿಗೆ ಅಪಘಾತದ ಬಗ್ಗೆ ಅವರಿಗೆ ಪಿಸಿಆರ್ ಕರೆ ಬಂದಿದೆ. ಸ್ಥಳಕ್ಕೆ ತಲುಪಿದಾಗ ಸ್ಕಾರ್ಪಿಯೋ, ಸ್ವಿಫ್ಟ್ ಡಿಜೈರ್ ಟ್ಯಾಕ್ಸಿ ಮತ್ತು ಮೋಟಾರ್ ಸೈಕಲ್ ಅಪಘಾತವಾಗಿರುವುದು ಕಂಡಿದೆ. ಈ ಅಪಘಾತದಲ್ಲಿ ಸಾಹಿಲ್ ಎಂದು ಗುರುತಿಸಲಾದ ಮೋಟಾರ್ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು, ನಂತರ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ಡಿಝೈರ್ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಟ್ಯಾಕ್ಸಿ ಚಾಲಕ ಅಜಿತ್ ಸಿಂಗ್ ಅವರನ್ನು ಇಂದಿರಾ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಕಾರ್ಪಿಯೋ ಚಾಲಕನನ್ನು 17 ವರ್ಷದ ಬಾಲಕ ಎಂದು ಗುರುತಿಸಲಾಗಿದ್ದು, ಆತನಿಗೆ ಚಾಲನಾ ಪರವಾನಗಿ ಇರಲಿಲ್ಲ. ಆತ ಅಪ್ರಾಪ್ತ ವಯಸ್ಕ. ಹಾಗಾಗಿ ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ ಅಬ್ಸರ್ವೇಷನ್ ಹೋಮ್ಗೆ ಕಳುಹಿಸಲಾಗಿತ್ತು. ಫೆಬ್ರವರಿ 10ರಂದು ಆತನಿಗೆ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಮಧ್ಯಂತರ ಜಾಮೀನು ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ವಾಹನಗಳನ್ನು ವಶಪಡಿಸಿಕೊಂಡು ಅವುಗಳ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ವೈದ್ಯಕೀಯ–ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ನಂತರ ಸಾಹಿಲ್ ಅವರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಷಾದ ವ್ಯಕ್ತಪಡಿಸಿದ ಆರೋಪಿಯ ಅಪ್ಪ ಸಾಹಿಲ್ ಧನೇಶ್ರಾ ಸಾವಿನ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ ಎಂದು ಆರೋಪಿಯ ಅಪ್ಪ ಹೇಳಿದ್ದಾರೆ. ಅಪಘಾತಕ್ಕೀಡಾದ ವಾಹನವು ತಮ್ಮ ವಾಣಿಜ್ಯ ಸಾರಿಗೆ ವ್ಯವಹಾರಕ್ಕೆ ಸೇರಿದ್ದಾಗಿದೆ. “ನನ್ನ 17ರ ಹರೆಯದ ಮಗ ವಾಹನ ಚಾಲನೆ ಮಾಡಿದ್ದ. ನನ್ನ ಮಗ ಕಾರು ಚಲಾಯಿಸುತ್ತಿದ್ದಾನೆಂದು ನನಗೆ ತಿಳಿದಿರಲಿಲ್ಲ. ನನ್ನ ಮಗಳನ್ನು ಡ್ರಾಪ್ ಮಾಡಲು ಆತ ಹೋಗುತ್ತಿದ್ದ. ಅಪಘಾತ ಸಂಭವಿಸಿದ್ದರ ಬಗ್ಗೆ ನನಗೆ ವಿಷಾದವಿದೆ. ಸಂತ್ರಸ್ತರ ಕುಟುಂಬ ಎಷ್ಟು ನೋವು ಅನುಭವಿಸುತ್ತಿರಬಹುದು ಎಂದು ನಾನು ಊಹಿಸಬಲ್ಲೆ. ನನ್ನ ಮಗ ಮತ್ತು ಮಗಳು ಕಾರಿನಲ್ಲಿದ್ದರು. ಘಟನೆ ನಡೆದಾಗ ನಾನು ಊರಲ್ಲಿರಲಿಲ್ಲ. ನನ್ನ ಮಗ ತುಂಬಾ ನೊಂದಿದ್ದಾನೆ. ನಾವು ಪೊಲೀಸರೊಂದಿಗೆ ಸಹಕರಿಸಿದ್ದೇವೆ. ಪೊಲೀಸರು ನನ್ನಿಂದ ದಾಖಲೆಗಳನ್ನು ಕೇಳಿದರು. ನಾವು ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ನನ್ನ ಮಗಳು ರೀಲ್ ಮಾಡುತ್ತಿರಲಿಲ್ಲ, ಅದೊಂದು ಸಣ್ಣ ವೀಡಿಯೋ ಆಗಿತ್ತು. ನಡೆದಿರುವ ಘಟನೆ ಬಗ್ಗೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ. ಅಪಘಾತಕ್ಕೆ ಕಾರಣವಾದ ಸ್ಕಾರ್ಪಿಯೋ ಚಲಾಯಿಸುತ್ತಿದ್ದ ಅಪ್ರಾಪ್ತನನ್ನು ಘಟನಾ ಸ್ಥಳದಲ್ಲೇ ವಶಕ್ಕೆ ತೆಗೆದುಕೊಂಡಿದ್ದು, ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 281 (ನಿರ್ಲಕ್ಷ್ಯದ ಚಾಲನೆ), 106(1) (ಸಾವಿಗೆ ಕಾರಣವಾಗುವ ನಿರ್ಲಕ್ಷ್ಯ) ಮತ್ತು 125(ಎ) (ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಉಪ ಪೊಲೀಸ್ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ಅವರು ಅಪ್ರಾಪ್ತ ಚಾಲಕನ ತಂದೆಯ ವಿರುದ್ಧ 1988ರ ಎಂವಿ ಕಾಯ್ದೆಯ ಸೆಕ್ಷನ್ 199ಎ (ಅಪ್ರಾಪ್ತ ವಯಸ್ಕ ಸಂಚಾರ ಅಪರಾಧ ಎಸಗಿದಾಗ ಪೋಷಕರು ಅಥವಾ ವಾಹನ ಮಾಲೀಕರು ಹೊಣೆಗಾರರು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ದೇಶದಲ್ಲಿ ನಡೆದ ಐಷಾರಾಮಿ ಕಾರು ಅಪಘಾತಗಳು 1. 1999 BMW ಪ್ರಕರಣ 1999 ಜನವರಿ 10ರಂದು ದಿಲ್ಲಿಯಲ್ಲಿ BMW E38 ಕಾರಿನ ಹಿಟ್ ಅಂಡ್ ರನ್ ಅಪಘಾತದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಜನರು ಸಾವಿಗೀಡಾಗಿದ್ದರು. ನೌಕಾಪಡೆ ಮುಖ್ಯಸ್ಥರ ಮೊಮ್ಮಗ ಹಾಗೂ ಪ್ರಸಿದ್ಧ ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ ಅವರ ಪುತ್ರ ಸಂಜೀವ್ ನಂದಾ ಲೋಧಿ ರಸ್ತೆಯಲ್ಲಿ ಕಾರು ಚಲಾಯಿಸಿ ಏಳು ಜನರಿಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ನಂತರ ನಂದಾ ಸ್ಥಳದಿಂದ ಪರಾರಿಯಾಗಿದ್ದರು. ಸಹ–ಆರೋಪಿ ರಾಜೀವ್ ಗುಪ್ತಾ ಮತ್ತು ಇತರರು ಸಾಕ್ಷ್ಯವನ್ನು ನಾಶಮಾಡಲು ಕಾರನ್ನು ತೊಳೆಯುತ್ತಿದ್ದರು ಎಂಬುದು ಪುರಾವೆಗಳಿಂದ ತಿಳಿದುಬಂದಿತ್ತು. 2008ರಲ್ಲಿ ವಿಚಾರಣಾ ನ್ಯಾಯಾಲಯವು ನಂದಾ ಅವರನ್ನು ಸೆಕ್ಷನ್ 304(II) IPC ಅಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ಸಾಕ್ಷ್ಯ ತಿರುಚಿದ್ದಕ್ಕಾಗಿ ಇತರರಿಗೂ ಶಿಕ್ಷೆ ವಿಧಿಸಲಾಯಿತು. 2009ರಲ್ಲಿ ಮೇಲ್ಮನವಿ ಬಳಿಕ ದಿಲ್ಲಿ ಹೈಕೋರ್ಟ್ 304A IPC ಪ್ರಕಾರ ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿತು. ಪ್ರಕರಣದ ಸ್ಥಿತಿ: 2012ರಲ್ಲಿ ಸುಪ್ರೀಂ ಕೋರ್ಟ್ ಎರಡು ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿದು, 50 ಲಕ್ಷ ರೂ. ದಂಡ ಮತ್ತು ಎರಡು ವರ್ಷಗಳ ಸಮುದಾಯ ಸೇವೆ ಮಾಡುವಂತೆ ನಿರ್ದೇಶಿಸಿತು. 2. ಒಂದು ದಿನದಲ್ಲಿ ಜಾಮೀನು ಪಡೆದ ಲಂಬೋರ್ಗಿನಿ ಚಾಲಕ 2025 ಮಾರ್ಚ್ 30ರಂದು ನೋಯ್ಡಾದ ಸೆಕ್ಟರ್ 94ರಲ್ಲಿ ನಿರ್ಮಾಣ ಹಂತದ ಸಂಕೀರ್ಣದ ಪಕ್ಕದ ಫುಟ್ಪಾತ್ನಲ್ಲಿ ಕೆಂಪು ಲಂಬೋರ್ಗಿನಿ ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿತ್ತು. ವೀಡಿಯೋ ವೈರಲ್ ಆಗಿತ್ತು. ಚಾಲಕ “ಇಲ್ಲಿ ಯಾರಾದರೂ ಸತ್ತಿದ್ದಾರೆಯೇ?” ಎಂದು ಉಡಾಫೆಯಿಂದ ಕೇಳುತ್ತಿರುವ ದೃಶ್ಯ ಗಮನ ಸೆಳೆದಿತ್ತು. ನಂತರ ತಾನು ಕಾರನ್ನು ಪರೀಕ್ಷಿಸುತ್ತಿದ್ದೆ ಎಂದಿದ್ದ. ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದರು. ಪ್ರಕರಣದ ಸ್ಥಿತಿ: ಮಾರ್ಚ್ 31, 2025ರಂದು ಆರೋಪಿಗೆ ಜಾಮೀನು ನೀಡಲಾಯಿತು. 3. BMW ಹಿಟ್–ಅಂಡ್–ರನ್ ಪ್ರಕರಣ (ಮುಂಬೈ) ಜುಲೈ 9, 2024ರಂದು ಮುಂಬೈನ ವರ್ಲಿಯಲ್ಲಿ BMW ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಕರಣದಲ್ಲಿ ಶಿವಸೇನಾ ನಾಯಕನ ಮಗ ಮಿಹಿರ್ ಶಾ ಬಂಧಿತರಾದರು. ಕಾವೇರಿ ನಖ್ವಾ (45) ಸಾವಿಗೀಡಾಗಿ ಪತಿ ಪ್ರದೀಪ್ ನಖ್ವಾ ಗಾಯಗೊಂಡಿದ್ದರು. ಮಹಿಳೆಯನ್ನು ಸುಮಾರು 1.5 ಕಿಮೀ ದೂರ ಕಾರಿನ ಬಾನೆಟ್ ಮೇಲೆ ಎಳೆದೊಯ್ಯಲಾಗಿದೆ ಎಂದು ಆರೋಪವಿತ್ತು. ಪ್ರಕರಣದ ಸ್ಥಿತಿ: ಮಿಹಿರ್ ಶಾ ಮತ್ತು ಚಾಲಕ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಿಸೆಂಬರ್ 2025ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. 4. 2024 ಪುಣೆ ಪೋರ್ಷೆ ಕಾರು ಅಪಘಾತ 2024 ಮೇ 19ರಂದು ಪುಣೆಯ ಕಲ್ಯಾಣಿ ನಗರದಲ್ಲಿ 17 ವರ್ಷದ ಬಾಲಕ ಮದ್ಯದ ಅಮಲಿನಲ್ಲಿ ಪೋರ್ಷೆ ಕಾರು ಚಲಾಯಿಸಿ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಸಾವಿಗೀಡಾದರು. ಆರಂಭದಲ್ಲಿ ಜೆಜೆಬಿ ಸೌಮ್ಯ ಷರತ್ತುಗಳೊಂದಿಗೆ ಜಾಮೀನು ನೀಡಿತ್ತು. ರಾಷ್ಟ್ರವ್ಯಾಪಿ ಆಕ್ರೋಶದ ಬಳಿಕ ಜಾಮೀನು ರದ್ದು ಮಾಡಿ ಅಬ್ಸರ್ವೇಷನ್ ಹೋಮ್ಗೆ ಕಳುಹಿಸಲಾಯಿತು. ಪೋಷಕರು ಹಾಗೂ ಬಾರ್ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಯಿತು. ಪ್ರಕರಣದ ಸ್ಥಿತಿ: “ಘೋರ ಅಪರಾಧ” ಎಂದು ಪರಿಗಣಿಸದ ಕಾರಣ ಅಪ್ರಾಪ್ತನಾಗಿ ವಿಚಾರಣೆ ಮುಂದುವರಿಯಿತು. ನವೆಂಬರ್ 2025ರಲ್ಲಿ ಆರೋಪಿಯ ತಾಯಿಗೆ ಮಧ್ಯಂತರ ಜಾಮೀನು ನೀಡಲಾಯಿತು. ರಕ್ತದ ಮಾದರಿ ತಿರುಚಿದ ಆರೋಪದ ಮೂವರಿಗೆ ಫೆಬ್ರವರಿಯಲ್ಲಿ ಜಾಮೀನು ನೀಡಲಾಯಿತು. 5. ಕಾನ್ಪುರ ಲಂಬೋರ್ಗಿನಿ ಅಪಘಾತ 2026 ಫೆಬ್ರವರಿ 8ರಂದು ಕಾನ್ಪುರದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಲಂಬೋರ್ಗಿನಿ ರೆವೆಲ್ಟೊ ಪಾದಚಾರಿಗಳು ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡರು. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಹೊರಬಿದ್ದವು. ಪ್ರಕರಣದ ಸ್ಥಿತಿ: ಆರಂಭದಲ್ಲಿ “ಅಪರಿಚಿತ ವ್ಯಕ್ತಿ” ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ನಂತರ ಶಿವಂ ಮಿಶ್ರಾ ಹೆಸರು ಸೇರಿಸಲಾಯಿತು. ತನಿಖೆ ಮುಂದುವರಿದಿದೆ.

ವಾರ್ತಾ ಭಾರತಿ 18 Feb 2026 10:14 pm

ಪೌರ ಕಾರ್ಮಿಕರ ಶ್ರಮದ ಮೇಲೆ ಆಡಳಿತದ ನಿರ್ಲಕ್ಷ್ಯ ಬೇಡ: ಅಧಿಕಾರಿಗಳಿಗೆ ಪಿ.ರಘು ಕಠಿಣ ಎಚ್ಚರಿಕೆ

ಯಾದಗಿರಿ: ನಗರಗಳ ಸ್ವಚ್ಛತೆ ಪೌರ ಕಾರ್ಮಿಕರ ಶ್ರಮದ ಮೇಲೆ ನಿಂತಿದೆ. ಆದರೆ ಅವರ ವೇತನ, ಮೂಲ ಸೌಲಭ್ಯಗಳ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದು ಅಕ್ಷಮ್ಯ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬುಧವಾರ ಇಲ್ಲಿನ ಜಿಲ್ಲಾ ಆಡಿಟೋರಿಯಂ ಸಭಾಂಗಣದಲ್ಲಿ ಪೌರ ಕಾರ್ಮಿಕರು, ಸರ್ವೇಕ್ಷಣಾ ಸಮಿತಿ ಸದಸ್ಯರು, ಪೌರ ಕಾರ್ಮಿಕ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಸ್ವಚ್ಛತಾಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು. ಶಹಾಪುರ ಹಾಗೂ ಸುರಪುರ ನಗರಸಭೆಗಳಲ್ಲಿ ಪೌರ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಪಿ. ರಘು, ಸುರಪುರ ನಗರಸಭೆಯಲ್ಲಿ ಸುಮಾರು 2 ಕೋಟಿ ರೂ. ಬಿಲ್ ಬಾಕಿ ಇದ್ದರೂ ಕೇವಲ 20 ಲಕ್ಷ ರೂ. ತೆರಿಗೆ ಸಂಗ್ರಹವಾಗಿರುವುದನ್ನು ಉಲ್ಲೇಖಿಸಿ, “ಇಂತಹ ಆಡಳಿತ ವೈಫಲ್ಯದಿಂದ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ” ಎಂದು ನಗರಸಭೆ ಆಯುಕ್ತರನ್ನು ಪ್ರಶ್ನಿಸಿದರು. ಗುರುಮಠಕಲ್ ಪುರಸಭೆಯಲ್ಲಿ ಪೌರ ಕಾರ್ಮಿಕರಿಗೆ ರೆಸ್ಟ್ ರೂಮ್ ಸೇರಿದಂತೆ ಮೂಲ ಸೌಲಭ್ಯಗಳೇ ಇಲ್ಲದಿರುವುದು, ಸುರಪುರ ನಗರಸಭೆಯಲ್ಲಿ ವೇತನ ಪಾವತಿ ಸಂಪೂರ್ಣ ವಿಳಂಬವಾಗಿರುವುದು ಸಭೆಯಲ್ಲಿ ಬೆಳಕಿಗೆ ಬಂತು. ಒಟ್ಟು 42 ಲಕ್ಷ ರೂ. ವೇತನ ಬಾಕಿ ಇರುವುದಾಗಿ ತಿಳಿದುಬಂದಿದ್ದು, ಗುರುಮಠಕಲ್ ಪುರಸಭೆಯಲ್ಲಿ 2025ರ ಜುಲೈ ತಿಂಗಳಿಂದಲೇ ವೇತನ ಪಾವತಿ ಆಗಿಲ್ಲ ಎಂಬ ವಿಚಾರ ತಿಳಿದ ಪಿ. ರಘು, ಕಾರಣ ಕೇಳಿ ತಕ್ಷಣ ನೋಟಿಸ್ ನೀಡಬೇಕು ಹಾಗೂ ದಾಖಲೆ ಸಮೇತ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದುಡಿಯುವ ಸಫಾಯಿ ಕಾರ್ಮಿಕರಿಗೆ ಗ್ರಾಮಸ್ಥರಿಂದ ಕಿರುಕುಳ ನೀಡಲಾಗುತ್ತಿದ್ದು, ಪಿಡಿಒಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಸಭೆಯಲ್ಲಿ ಕೇಳಿಬಂದವು. ಸಭಾಂಗಣದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಪೌರ ಕಾರ್ಮಿಕರು ಹಾಜರಿದ್ದುದನ್ನು ಕಂಡ ಪಿ. ರಘು, ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆಯೇ ಸಿಡಿಮಿಡಿಗೊಂಡರು. ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರಿಲ್ಲದೆ ನಗರ, ತಾಲೂಕುಗಳು ಸ್ವಚ್ಛವಾಗಿರಲು ಸಾಧ್ಯವೇ ಇಲ್ಲ. ಆದರೆ ಅವರನ್ನೇ ನಿರ್ಲಕ್ಷ್ಯ ಮಾಡುವ ಮನಸ್ಥಿತಿ ಬದಲಾಗಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಸಂಶೋಧನಾ ಅಧಿಕಾರಿ ಮಹಾದೇವಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲಕ್ಷ್ಮಿಕಾಂತರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಸೇರಿದಂತೆ ಶಹಾಪುರ, ಸುರಪುರ ನಗರಸಭೆ ಆಯುಕ್ತರು ಹಾಗೂ ಜಿಲ್ಲೆಯ ವಿವಿಧ ಪುರಸಭೆಗಳ ಆಯುಕ್ತರು ಉಪಸ್ಥಿತರಿದ್ದರು. ಕಾರ್ಮಿಕರಿಗೆ ವಿಮಾ ಸೌಲಭ್ಯ, ಹೊರಗುತ್ತಿಗೆ ನೌಕರರಿಗೂ ವಿಮೆ ಕಲ್ಪಿಸುವುದು, ಬಳಿಚಕ್ರ ಗ್ರಾಮದಲ್ಲಿ ಪೌರ ಕಾರ್ಮಿಕರ ಕಾರ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸುವುದು, ವಡಗೇರಾ ಗ್ರಾಮದಲ್ಲಿ ಮಹಿಳಾ ಪೌರ ಕಾರ್ಮಿಕರಿಂದ ಅಕ್ರಮವಾಗಿ ಕಸ ಹೊರಿಸುವ ಪ್ರಕರಣ, ರಾಮಸಮುದ್ರದಲ್ಲಿ ವೇತನ ವಿಳಂಬ, ಐಡಿ ವಿತರಣೆ, ಗೃಹಭಾಗ್ಯ ಯೋಜನೆಯಡಿ ಮನೆ-ನಿವೇಶನ ಬೇಡಿಕೆ ಸೇರಿದಂತೆ ಹಲವು ದೂರುಗಳು ಸಭೆಯಲ್ಲಿ ದಾಖಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. -ಪಿ ರಘು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ

ವಾರ್ತಾ ಭಾರತಿ 18 Feb 2026 10:08 pm

ತಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಪತ್ನಿಯ ಕೊಂದ ಇಸ್ರೋ ನಿವೃತ್ತ ನೌಕರ! ಬೆಂಗಳೂರಿನಲ್ಲಿ ಘಟನೆ

ಇಸ್ರೋ ಮಾಜಿ ನೌಕರನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, 70 ವರ್ಷದ ನಾಗಲೇಶ್ವರರಾವ್‌ ಕೊಲೆ ಆರೋಪಿ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರರಾವ್ ತಾನು ಸತ್ತರೇ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ವಿಜಯ ಕರ್ನಾಟಕ 18 Feb 2026 10:07 pm

ಮುಸ್ಲಿಂ ಸಮುದಾಯಕ್ಕೆ ನೀಡಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ; ಹೊಸ ಆದೇಶದಲ್ಲೇನಿದೆ?

ಮಹಾರಾಷ್ಟ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ಮಂಗಳವಾರ ಸರ್ಕಾರಿ ನಿರ್ಣಯವನ್ನು ಹೊರಡಿಸಿದ್ದು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಹಾಗೂ ಅರೆಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಂ ಸಮುದಾಯಕ್ಕೆ 5% ಮೀಸಲಾತಿ ನೀಡಿದ್ದ 2014ರ ಆದೇಶವನ್ನು ರದ್ದುಗೊಳಿಸಿದೆ. ಜುಲೈ 2014ರಲ್ಲಿ ಮುಸ್ಲಿಮರನ್ನು ವಿಶೇಷ ಹಿಂದುಳಿದ ವರ್ಗ–ಎ (SBC-A) ಅಡಿಯಲ್ಲಿ ವರ್ಗೀಕರಿಸುವ ಸುಗ್ರೀವಾಜ್ಞೆಯ ಮೂಲಕ ಮೀಸಲಾತಿಯನ್ನು ಪರಿಚಯಿಸಲಾಗಿತ್ತು. ಆದಾಗ್ಯೂ, ಈ ನೀತಿಯನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಬಳಿಕ 2014ರ ನವೆಂಬರ್ನಲ್ಲಿ ಅದರ ಅನುಷ್ಠಾನಕ್ಕೆ ನ್ಯಾಯಾಲಯ ತಡೆ ನೀಡಿತ್ತು. ಡಿಸೆಂಬರ್ 2014ರಲ್ಲಿ ನಿಗದಿತ ಗಡುವಿನೊಳಗೆ ರಾಜ್ಯ ಶಾಸಕಾಂಗವು ಈ ಸುಗ್ರೀವಾಜ್ಞೆಯನ್ನು ಕಾನೂನಾಗಿ ಜಾರಿಗೆ ತರದ ಕಾರಣ, ಅದು ಸ್ವಯಂಚಾಲಿತವಾಗಿ ರದ್ದಾಗಿತ್ತು. ಇತ್ತೀಚಿನ ಆದೇಶದೊಂದಿಗೆ, SBC-A ಅಡಿಯಲ್ಲಿ ಪ್ರಯೋಜನಗಳನ್ನು ಬಯಸುವ ಮುಸ್ಲಿಮರಿಗೆ ಜಾತಿ ಪ್ರಮಾಣಪತ್ರಗಳನ್ನು ನೀಡುವುದಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಒಳಗೊಂಡಂತೆ, ಈ ವಿಷಯದ ಕುರಿತು ಹೊರಡಿಸಲಾದ ಎಲ್ಲಾ ಹಿಂದಿನ ನಿರ್ಣಯಗಳನ್ನು ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿದೆ. 2008ರಲ್ಲಿ ಕಾಂಗ್ರೆಸ್–ಎನ್ಸಿಪಿ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಮೆಹಮೂದ್ ಉರ್ ರೆಹಮಾನ್ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿನ ಮುಸ್ಲಿಮರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸಿದಾಗ ಮುಸ್ಲಿಂ ಮೀಸಲಾತಿ ಬೇಡಿಕೆ ಸಾಂಸ್ಥಿಕ ಸ್ವರೂಪ ಪಡೆದಿತ್ತು. ಐದು ವರ್ಷಗಳ ಅಧ್ಯಯನದ ನಂತರ, ಮಹಾರಾಷ್ಟ್ರದಲ್ಲಿ ಸುಮಾರು 60 ಪ್ರತಿಶತ ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಸಮಿತಿ ವರದಿ ಮಾಡಿತ್ತು. ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯ 4.4 ಶೇಕಡಾ ಹಾಗೂ ಸಮುದಾಯದಲ್ಲಿ ಪದವೀಧರರ ಪ್ರಮಾಣ ಕೇವಲ 2.2 ಶೇಕಡಾ ಎಂದು ವರದಿ ಹೇಳಿತ್ತು. ಹೀಗಾಗಿ, ಸಮಿತಿಯು ರಾಜ್ಯ ಉದ್ಯೋಗ, ಶಿಕ್ಷಣ ಮತ್ತು ವಸತಿಗಳಲ್ಲಿ 8 ಶೇಕಡಾ ಮೀಸಲಾತಿಯನ್ನು ಶಿಫಾರಸು ಮಾಡಿದ್ದು, ಹಿಂದುಳಿದಿರುವಿಕೆಯನ್ನು ಪರಿಹರಿಸಲು ದೃಢವಾದ ಕ್ರಮ ಅಗತ್ಯ ಎಂದು ವಾದಿಸಿತ್ತು. ಸಮಿತಿಯ ವಾದವನ್ನು ಆಲಿಸಿದ ಕಾಂಗ್ರೆಸ್–ಎನ್ಸಿಪಿ ಸರ್ಕಾರ ಜುಲೈ 2014ರಲ್ಲಿ ಮರಾಠರಿಗೆ 16 ಶೇಕಡಾ ಹಾಗೂ ಸರ್ಕಾರಿ ಉದ್ಯೋಗಗಳು ಮತ್ತು ಸರ್ಕಾರ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ 5 ಶೇಕಡಾ ಮೀಸಲಾತಿ ನೀಡುವ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಮುಸ್ಲಿಂ ಕೋಟಾ ಇಡೀ ಸಮುದಾಯಕ್ಕೆ ಅನ್ವಯಿಸಲಿಲ್ಲ. ಬದಲಾಗಿ, ಇದು ವಿಶೇಷ ಹಿಂದುಳಿದ ವರ್ಗ-A ಅನ್ನು ಸೃಷ್ಟಿಸಿತು. ಇದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸುಮಾರು 50 ಮುಸ್ಲಿಂ ಸಮುದಾಯಗಳನ್ನು ಒಳಗೊಂಡಿತ್ತು. ಇದರಲ್ಲಿ ಹೆಚ್ಚಾಗಿ ನೇಕಾರರು, ಮಾಂಸದ ವ್ಯಾಪಾರಿಗಳು, ಎಣ್ಣೆ ವ್ಯಾಪಾರಿಗಳು ಮತ್ತು ಮೀನುಗಾರರಂತಹ ವೃತ್ತಿಪರ ಹಾಗೂ ಕುಶಲಕರ್ಮಿ ಗುಂಪುಗಳು ಸೇರಿದ್ದವು. ಈ ಸಮುದಾಯಗಳ ವ್ಯಕ್ತಿಗಳು ಇತರ ಹಿಂದುಳಿದ ವರ್ಗಗಳ ಕಾರ್ಯವಿಧಾನಗಳಂತೆಯೇ ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರಗಳನ್ನು ಪಡೆಯಬೇಕಾಗಿತ್ತು. ನ್ಯಾಯಾಲಯದ ಹಸ್ತಕ್ಷೇಪ ಮತ್ತು ಸುಗ್ರೀವಾಜ್ಞೆಯ ರದ್ದತಿ ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. 2014ರ ನವೆಂಬರ್ 14ರ ತೀರ್ಪಿನಲ್ಲಿ ನ್ಯಾಯಾಲಯವು ಮರಾಠಾ ಮೀಸಲಾತಿಯನ್ನು ರದ್ದುಗೊಳಿಸಿತು. ಆದರೆ ಶಿಕ್ಷಣದಲ್ಲಿ ಮುಸ್ಲಿಮರಿಗೆ 5 ಶೇಕಡಾ ಮೀಸಲಾತಿಯನ್ನು ಅನುಮತಿಸಿತು. ಆದಾಗ್ಯೂ, ಈ ಸುಗ್ರೀವಾಜ್ಞೆಯನ್ನು ಸಾಂವಿಧಾನಿಕ ಸಮಯದ ಚೌಕಟ್ಟಿನೊಳಗೆ ಶಾಶ್ವತ ಕಾನೂನಾಗಿ ಪರಿವರ್ತಿಸಲಾಗಲಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2014ರ ಡಿಸೆಂಬರ್ 23ರಂದು ಅದನ್ನು ರದ್ದುಗೊಳಿಸಲು ಅವಕಾಶ ನೀಡಲಾಯಿತು. ಮರಾಠಾ ಮೀಸಲಾತಿಯನ್ನು ಪುನಃಸ್ಥಾಪಿಸಲು ಸರ್ಕಾರ ಕಾನೂನು ಪರಿಹಾರಗಳನ್ನು ಅನುಸರಿಸಿದರೂ, ಮುಸ್ಲಿಂ ಕೋಟಾ ಚೌಕಟ್ಟನ್ನು ಸಂರಕ್ಷಿಸಲು ಯಾವುದೇ ಶಾಸಕಾಂಗ ಪ್ರಯತ್ನಗಳು ನಡೆಯಲಿಲ್ಲ. ಪರಿಣಾಮವಾಗಿ, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ 5% ಮೀಸಲಾತಿ ನಿಂತುಹೋಯಿತು. ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಮತ್ತೆ ಮುನ್ನೆಲೆಗೆ ಬಂತು. ಫೆಬ್ರವರಿ 2020ರಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ 5 ಶೇಕಡಾ ಮೀಸಲಾತಿ ನೀಡಲು ಸರ್ಕಾರ ಕಾನೂನು ತರಲಿದೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ತಿಳಿಸಿದರು. ಆದರೆ ಒಂದು ವಾರದೊಳಗೆ ಅಂತಹ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದರು. ಹೊಸ ಆದೇಶದಲ್ಲೇನಿದೆ? ಇತ್ತೀಚಿನ ಸರ್ಕಾರಿ ನಿರ್ಣಯವು ಹಿಂದಿನ ನೀತಿಗೆ ಸಂಬಂಧಿಸಿದ ಎಲ್ಲಾ ನಿರ್ದೇಶನಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಔಪಚಾರಿಕವಾಗಿ ರದ್ದುಗೊಳಿಸುತ್ತದೆ. ಇದರಲ್ಲಿ ಮುಸ್ಲಿಂ ಸಮುದಾಯಗಳಿಗೆ SBC-A ಅಡಿಯಲ್ಲಿ ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರಗಳನ್ನು ನೀಡುವುದೂ ಸೇರಿದೆ. ಇದರರ್ಥ, ಶಿಕ್ಷಣ ವಲಯ ಸೇರಿದಂತೆ ಮಹಾರಾಷ್ಟ್ರದಲ್ಲಿ SEBC ಅಥವಾ ಯಾವುದೇ ವಿಶೇಷ ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ಈಗ 5 ಶೇಕಡಾ ಮೀಸಲಾತಿ ಇಲ್ಲ. ಮಹಾರಾಷ್ಟ್ರದಲ್ಲಿನ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಶಾಸಕ ರಯೀಸ್ ಶೇಖ್, “ಮುಸ್ಲಿಮರು ಯಾವುದೇ ಸಂದರ್ಭದಲ್ಲಿ ಮೀಸಲಾತಿಯ ಪ್ರಯೋಜನಗಳನ್ನು ಪಡೆಯುತ್ತಿರಲಿಲ್ಲ. ಆದ್ದರಿಂದ ಈ ಆದೇಶ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಆದರೆ ಇದು ಆಡಳಿತ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟ ರಾಜಕೀಯ ಸಂದೇಶವನ್ನು ರವಾನಿಸುತ್ತದೆ,” ಎಂದು ಹೇಳಿದ್ದಾರೆ. ಈ ನಿರ್ಧಾರವನ್ನು ಸಮರ್ಥಿಸಿಕೊಂಡ ಸಾಮಾಜಿಕ ನ್ಯಾಯ ಸಚಿವ ಸಂಜಯ್ ಶಿರ್ಸತ್, “ಚುನಾವಣೆಗೆ ಸ್ವಲ್ಪ ಮೊದಲು ಕಾಂಗ್ರೆಸ್ ಮೀಸಲಾತಿಯನ್ನು ಘೋಷಿಸಿತು. ಆದರೆ ಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳು ಪೂರ್ಣಗೊಳ್ಳಲಿಲ್ಲ. ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಘೋಷಣೆ ಮಾಡಿದ ಪರಿಣಾಮವೇ ಇಂದಿನ ಬೆಳವಣಿಗೆ,” ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಿಗುತ್ತದೆಯೇ? ಧರ್ಮದ ಆಧಾರದ ಮೇಲೆ ಮಾತ್ರ ಮುಸ್ಲಿಮರು ಮೀಸಲಾತಿಗೆ ಅರ್ಹರಲ್ಲ. ಆದರೆ ಅಸ್ತಿತ್ವದಲ್ಲಿರುವ OBC, VJNT ಅಥವಾ ಇತರ ಮಾನ್ಯತೆ ಪಡೆದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾದ ಮುಸ್ಲಿಂ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳು ಆ ವರ್ಗಗಳ ಅಡಿಯಲ್ಲಿ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅರ್ಹತೆಯನ್ನು ಧಾರ್ಮಿಕ ಗುರುತಿನಿಂದಲ್ಲ, ಸಮುದಾಯ ವರ್ಗೀಕರಣದಿಂದ ನಿರ್ಧರಿಸಲಾಗುತ್ತದೆ. ಈ ನಿರ್ದಿಷ್ಟ ನಿಬಂಧನೆಯನ್ನು ರದ್ದುಗೊಳಿಸುವ ಮೂಲಕ ಮಹಾರಾಷ್ಟ್ರ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಆಧಾರಿತ ಕೋಟಾದ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿದೆ. ಬದಲಾಗಿ, ಮುಸ್ಲಿಂ ವ್ಯಕ್ತಿಗಳು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು (SEBC) ಅಥವಾ OBC ಎಂದು ಈಗಾಗಲೇ ಗುರುತಿಸಲ್ಪಟ್ಟ ನಿರ್ದಿಷ್ಟ ಜಾತಿ/ಗುಂಪುಗಳಿಗೆ ಸೇರಿದವರಾಗಿದ್ದರೆ ಮಾತ್ರ ಮೀಸಲಾತಿ ಪ್ರಯೋಜನಗಳನ್ನು ಪಡೆಯಬಹುದಾದ ವ್ಯವಸ್ಥೆ ಮುಂದುವರಿದಿದೆ.

ವಾರ್ತಾ ಭಾರತಿ 18 Feb 2026 10:06 pm

AI ಶೃಂಗಸಭೆ | ಚೀನಾದಲ್ಲಿ ತಯಾರಾದ ರೋಬೋಡಾಗ್ ತನ್ನದೆಂದು ಪ್ರದರ್ಶಿಸಿದ ವಿವಾದ: ಕ್ಷಮೆಯಾಚಿದ ಗಾಲ್ಗೋಟಿಯಾಸ್ ವಿವಿ

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯಲ್ಲಿ ಚೀನಾದಲ್ಲಿ ತಯಾರಾದ ರೋಬೋಟಿಕ್ ನಾಯಿಯನ್ನು ತನ್ನದೇ ಸಾಧನೆಯೆಂಬಂತೆ ಪ್ರದರ್ಶಿಸಿದ್ದ ಆರೋಪಕ್ಕೆ ಗುರಿಯಾದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳದಿಂದ ಸ್ಟಾಲ್ ತೆರವುಗೊಳಿಸಿರುವುದಾಗಿ ಸಂಸ್ಥೆಯು ತಿಳಿಸಿದೆ. ಎರಡು ದಿನಗಳಲ್ಲಿ ಮೂರನೇ ಬಾರಿ ಸ್ಪಷ್ಟೀಕರಣ ನೀಡಿರುವ ವಿಶ್ವವಿದ್ಯಾಲಯ, ಈ ಬಾರಿ ತನ್ನ ಸಂವಹನ ವಿಭಾಗದ ಮುಖ್ಯಸ್ಥೆ ನೇಹಾ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಅವರು ತಿಳಿವಳಿಕೆ ಇಲ್ಲದವರು, ಮಾಧ್ಯಮಗಳೊಂದಿಗೆ ಮಾತನಾಡಲು ಅವರಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಆಮದು ಮಾಡಿಕೊಂಡ ಸಾಧನವನ್ನು ತನ್ನದೇ ಅವಿಷ್ಕಾರ ಎಂದು ತಪ್ಪಾಗಿ ಹೇಳಿಕೊಂಡ ಆರೋಪ ಎದುರಿಸುತ್ತಿರುವ ಸಂಸ್ಥೆ, ನೇಹಾ ಸಿಂಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಉತ್ಸಾಹದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು ಚೀನಾದ ಯುನಿಟ್ರೀ ಸಂಸ್ಥೆ ತಯಾರಿಸಿದ AI ಚಾಲಿತ ರೋಬೋಟಿಕ್ ನಾಯಿಯನ್ನು USD 2,800 (ಸುಮಾರು ₹2.3 ಲಕ್ಷ) ಬೆಲೆಗೆ ಮಾರಾಟ ಮಾಡಿದ್ದಾಗಿ ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿವಾದ ಉಂಟಾಯಿತು. ರೋಬೊಡಾಗನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನವೆಂದು ತಪ್ಪಾಗಿ ಪ್ರದರ್ಶಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. X ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹಿಂದಿನ ಹೇಳಿಕೆಯಲ್ಲಿ, ರೋಬೋಡಾಗ್ ಅನ್ನು ಯುನಿಟ್ರೀಯಿಂದ ಖರೀದಿಸಿ ಕಲಿಕೆಯ ಸಾಧನವಾಗಿ ಬಳಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿತ್ತು. ವಿದ್ಯಾರ್ಥಿಗಳು ಇದರೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ. ನಾವು ಈ ರೋಬೋಡಾಗ್ ನಿರ್ಮಿಸಿಲ್ಲ, ಹಾಗೆ ಎಂದಿಗೂ ಹೇಳಿಕೊಂಡಿಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ವಿವಾದದ ಹಿನ್ನೆಲೆ ವಿಶ್ವವಿದ್ಯಾಲಯವನ್ನು AI ಶೃಂಗಸಭೆಯಿಂದ ತಕ್ಷಣ ಸ್ಟಾಲ್ ಖಾಲಿಮಾಡಿಕೊಂಡು ತೆರಳುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಹೊರಬಂದಿದ್ದರೂ, ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಆಯೋಜಕರ ಭಾವನೆಗೆ ಗೌರವ ಸೂಚಿಸಿ ಆವರಣವನ್ನು ಖಾಲಿ ಮಾಡಿರುವುದಾಗಿ ಅದು ತಿಳಿಸಿದೆ. ವಿವಾದ ಹೆಚ್ಚುತ್ತಿದ್ದಂತೆ, AI ಶೃಂಗಸಭೆಯಲ್ಲಿ ಪ್ರದರ್ಶಕರು ತಮ್ಮದಲ್ಲದ ಉತ್ಪನ್ನಗಳನ್ನು ಪ್ರದರ್ಶಿಸಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 18 Feb 2026 10:03 pm

ʼವಿಕಸಿತ್‌ ಭಾರತ್‌- 2047’ ಸಾಕಾರಗೊಳಿಸಲು ಬ್ಯಾಂಕ್‌ಗಳ ಪಾತ್ರ ಪ್ರಮುಖ: ದೇಬಾಶೀಷ್‌ ಪಾಂಡ

ಮಂಗಳೂರು,ಫೆ.18; ಧೇಶದ ವಿಕಸಿತ್‌ ಭಾರತ್‌- 2047’ ಸಾಕಾರ. ಗೊಳಿಸಲು ಬ್ಯಾಂಕ್‌ಗಳ ಪಾತ್ರ ಮಹತ್ವ ದ್ದಾಗಿದ್ದು, ದೇಶದ ಆರ್ಥಿಕ ವಿಕಾಸದಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಮಾಜಿ ಐಎಎಸ್‌ ಅಧಿಕಾರಿ, ನೀತಿ ಸುಧಾರಕ ದೇಬಾಶೀಷ್‌ ಪಾಂಡ ಸಲಹೆ ನೀಡಿದ್ದಾರೆ. ಅವರು ಬುಧವಾರ ನಗರದ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಿಕಸಿತ್‌ ಭಾರತ್‌- 2047: ಹಣಕಾಸು ಸೇವೆಗಳ ಪಾತ್ರ’ ದ ಕುರಿತು ಪ್ರಧಾನ ಉಪನ್ಯಾಸ ನೀಡುತ್ತಾ, ಭಾರತವು ವಿಶ್ವದ 4ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ, ಈ ದೇಶ ವಿಶ್ವದ ವೇಗವಾಗಿ ಬೆಳೆಯು ತ್ತಿರುವ ಆರ್ಥಿಕತೆ ಆಗಲಿದೆ ಎಂದು ಹಿಂದೆ ನಾವು ಊಹಿಸಿರಲಿಲ್ಲ.ಆದರೆ ಈ ಸಾಧನೆ ಆಗಿದೆ. ನಾವು ವಿಕಸಿತ್‌ ಭಾರತ್‌ ಎಂಬ ಮಹಾ ದೃಷ್ಟಿಯತ್ತ ಸಾಗುತ್ತಿದ್ದೇವೆ. ಈ ಪರಿಕಲ್ಪನೆ ಯನ್ನು ಸಾಕಾರಗೊಳಿಸುವುದು ಸಂಘ ಸಂಸ್ಥೆ ಗಳು, ಉದ್ಯಮ ಕ್ಷೇತ್ರ, ಅಧಿಕಾರಿಗಳು ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕನೂ ಸರಕಾರದೊಂದಿಗೆ ಕೈ ಜೋಡಿಸಬೇಕಾಗಿದೆ. ಇದಕ್ಕೆ ದೀರ್ಘಕಾಲಿಕ, ಉನ್ನತ ವೇಗದ ಕಾರ್ಯೋನ್ಮುಖತೆಯೊಂದಿಗೆ ಉತ್ಪಾದಕತೆ, ಬಂಡವಾಳದ ದಕ್ಷತೆ ಮತ್ತು ಕಾರ್ಯಗತ ಸಾಮರ್ಥ್ಯ ಹೆಚ್ಚಳ, ಆರ್ಥಿಕ ಸ್ಥಿರತೆ, ಶಕ್ತಿಶಾಲಿಯಾದ ಹಣಕಾಸು ವ್ಯವಸ್ಥೆ ಮತ್ತು ಜಾಗತಿಕ ಆಘಾತಗಳನ್ನು ಎದುರಿಸುವ ಸಾಮರ್ಥ್ಯ ಬೇಕಾಗುತ್ತದೆ. ಈ ಸವಾಲು ಗಳನ್ನು ಎದುರಿಸಬೇಕಾ ಗಿದೆ ಎಂದು ದೇಬಾಶೀಷ್‌ ಹೇಳಿದರು. ಬ್ಯಾಂಕ್‌ಗಳು ಗುರಿ ಕೇವಲ ಲಾಭ ಗಳಿಕೆಯಲ್ಲ, ತನ್ನ ಮೂಲ ಧ್ಯೇಯ ವಾದ ಸಾಮಾಜಿಕ ಪರಿವರ್ತನೆಯ ಕೆಲಸ ಆಗಬೇಕಿವೆ. ದೇಶದ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಯ ಆಧಾರ ಸ್ತಂಭಗಳಾದ ಈ ಹಣಕಾಸು ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಏಕರೂಪದ ಕಾರ್ಯ ವಿಧಾನವನ್ನು ಪರಿವರ್ತಿಸಿ, ಹಣಕಾಸಿನ ವಿವಿಧ ಮಾದರಿ ಗಳ ಕಾರ್ಯಯೋಜನೆಯ ಅನುಷ್ಠಾನಕ್ಕೆ ಮುಂದಾಗಬೇಕಿದೆ ಎಂದರು.ಆಧುನಿಕ ಡಿಜಿಟಲ್ ಯುಗದಲ್ಲಿ ಚೆಕ್‌ಬುಕ್ ಇತಿಹಾಸ ಪುಟ ಸೇರಿದೆ. ಟೆಲಿಫೋನ್ ಡಯಲ್ ಮಾಡುವ ಕಾಲದಿಂದ ಇಂದಿನ ಮೊಬೈಲ್ ಮತ್ತು ವೀಡಿಯೊ ಸಂವಹನದ ಯುಗದವರೆಗೆ ತಲೆಮಾರುಗಳ ಪರಿವರ್ತನೆಯಾಗಿದೆ, ಕೃತಕ ಬುದ್ಧಿ ಮತ್ತೆ ಬಾಗಿಲು ತಟ್ಟುತ್ತಿದೆ. ಇಂತಹ ತಂತ್ರಜ್ಞಾನ ಹೇಗೆ ಬಳಕೆ ಮಾಡಬೇಕು ಎಂಬುದು ನಮ್ಮ ವಿವೇಚನೆಯ ಮೇಲಿದೆ. ಈ ಕಾಲಘಟ್ಟದಲ್ಲಿ ತಂತ್ರಜ್ಞಾನ ಅನಿವಾರ್ಯ; ಅದಕ್ಕೆ ಹೊಂದಿ ಕೊಳ್ಳ‌ ಬೇಕಾಗಿದೆ ಎಂದು ಅವರು ಹೇಳಿದರು. ಕರ್ಣಾಟಕ ಬ್ಯಾಂಕ್‌ನ ಕಳೆದ 102 ವರ್ಷಗಳ ಪಯಣ, ಮೈಲುಗಲ್ಲುಗಳ ಕಾಲಘಟ್ಟದಲ್ಲಿ ನಡೆದ ಬದಲಾವ ಣೆಗಳು ಪ್ರೇರಣಾದಾ ಯಕವಾಗಿವೆ. ಸಂಸ್ಥಾಪಕರ ದಿನವನ್ನು ನಾನು ಕೇವಲ ಒಂದು ಆಚರಣೆಯ ಮೈಲುಗಲ್ಲು ಎಂದು ನೋಡುವುದಲ್ಲ. ಇದು ಸಂಸ್ಥೆಯ ಬಗ್ಗೆ ಒಂದು ಕ್ಷಣಕಾಲ ನಿಂತು ಚಿಂತನೆ ಮಾಡುವ ದಿನ. ಈ ಮೂಲಕ ಒಂದು ಪರಂಪರೆಯನ್ನು ಗೌರವಿಸುತ್ತಿದ್ದೀರಿ. ಕರ್ಣಾಟಕ ಬ್ಯಾಂಕ್‌ನ ಮ್ಯೂಸಿಯಂಗೆ ಭೇಟಿ ನೀಡಿದಾಗ ಸ್ಥಾಪಕ ಮಹನೀಯರ ಜೀವನಯಾನ, ಅವರ ಮೌಲ್ಯ ವ್ಯವಸ್ಥೆ ಮತ್ತು ಬ್ಯಾಂಕಿನ ಆರಂಭದಿಂದ ಇಂದಿನ ಮಹತ್ತರ ಸಾಧನೆವರೆಗೆ ನಡೆದ ಬೆಳವಣಿಗೆ ಯನ್ನು ನೋಡುವ ಅವಕಾಶ ದೊರೆತದ್ದು ಸೌಭಾಗ್ಯ ಎಂದು ದೇಬಾಶೀಷ್‌ ಹೇಳಿದರು. ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌ ಮಾತನಾಡುತ್ತಾ, ವಿಕಸಿತ್‌ ಭಾರತ್‌ ದೃಷ್ಟಿಕೋನವು ಬ್ಯಾಂಕ್‌ಗಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಬೆಳವಣಿಗೆಯಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್‌ ಬದ್ಧತೆಯಿಂದ ಕಾರ್ಯ ನಿರ್ವಹಿಸಲಿದೆ. ಬ್ಯಾಂಕಿನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜತೆಗೆ ವಿಕಸಿತ್‌ ಭಾರತ್‌ ಕಾರ್ಯ ಸಾಧನೆಯಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೇವೆ ಎಂದರು. ಬ್ಯಾಂಕ್‌ನ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್‌. ಭಟ್‌ ಮಾತನಾಡುತ್ತಾ, ಕರ್ಣಾಟಕ ಬ್ಯಾಂಕ್‌ ಕರ್ಣಾಟಕ ಬ್ಯಾಂಕ್ ಭವಿಷ್ಯದ ಲ್ಲಿ ಇನ್ನಷ್ಟು ತಂತ್ರಜ್ಞಾನದ ಅಳವಡಿಕೆ ಯೊಂದಿಗೆ ಸಾಗಲಿದೆ,ಬ್ಯಾಂಕಿನ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಸ್ಥಾನಕ್ಕೇರಲು ಬ್ಯಾಂಕ್‌ನ ಸಂಸ್ಥಾಪಕರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಕಾರಣ ಎಂದು ಹೇಳಿದರು.ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕರ ಭಾವಚಿತ್ರಗಳಿಗೆ ಗೌರವ ಸಲ್ಲಿಸಿ,ಸಮಾರಂಭದಲ್ಲಿ ದೇಬಾಶೀಷ್‌ ಪಾಂಡರನ್ನು ವೇದಿಕೆ ಯಲ್ಲಿ ಸನ್ಮಾನಿಸ ಲಾಯಿತು ಬಳಿಕ ‘ನಾರಿ ತರಂಗಿಣಿ’ ಸಂಗೀತ ಕಛೇರಿ ನಡೆಯಿತು.

ವಾರ್ತಾ ಭಾರತಿ 18 Feb 2026 9:59 pm

ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಪರಿವರ್ತನೆ ಸಾಧ್ಯ: ಶಾಸಕ ತುನ್ನೂರ

ಯಾದಗಿರಿ: ಪ್ರಸಕ್ತ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಲ್ಲಿ ಕೂಡ ಹಲವಾರು ಪ್ರತಿಭೆಗಳಿರುತ್ತವೆ, ಅವರು ಮಹಿಳಾ ಸಂಘಗಳನ್ನು ಕಟ್ಟಿಕೊಂಡು ಸ್ವಾವಲಂಬನೆ ಬದುಕು ಸಾಗಿಸಲು ಶ್ರಮಿಸುತ್ತಿದ್ದಾರೆ, ಅವರು ಆರ್ಥಿಕವಾಗಿ ಸದೃಡರಾದಾಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು. ಬುಧವಾರ ನಗರದ ತಮ್ಮ ಜನಸಂಪರ್ಕ ಕಛೇರಿಯಲ್ಲಿ ಕೃಷಿ ಇಲಾಖೆ ಮತ್ತು ಜಲಾಯನ ಅಭಿವೃದ್ಧಿ ಇಲಾಖೆ ಯಾದಗಿರಿ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿಯಲ್ಲಿ ಮಂಜೂರಾದ ಯಾದಗಿರಿ ಮತಕ್ಷೇತ್ರದ 55 ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ತಲಾ 50 ಸಾವಿರ ರೂ. ಸುತ್ತು ನಿಧಿ ಪ್ರಮಾಣ ಪತ್ರಗಳನ್ನು ಮಹಿಳೆಯರಿಗೆ ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ನಮ್ಮ ಕಾಂಗ್ರೆಸ್ ಸರ್ಕಾರ ಈಗಾಗಲೇ ಎಲ್ಲಾ ವರ್ಗದ ಕುಟುಂಬಗಳ ಓರ್ವ ಮಹಿಳೆಗೆ ಗೃಹ ಲಕ್ಷ್ಮೀ ಯೋಜನೆ ಮೂಲಕ ತಿಂಗಳಿಗೆ ತಲಾ 2 ಸಾವಿರ ಕೌಟುಂಬಿಕ ನಿರ್ವಹಣೆಗಾಗಿ ನೀಡುತ್ತಿದೆ, ಜೊತೆಗೆ ಹಲವಾರು ಯೋಜನೆಗಳ ಮೂಲಕ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರೋತ್ಸಾಹ ಧನವನ್ನು ಕೂಡ ಮಹಿಳಾ ಸಂಘಗಳಿಗೆ ನೀಡುವ ಮೂಲಕ ಅವರಿಗೆ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು. ಎಲ್ಲಾ ಮಹಿಳೆಯರು ದಯವಿಟ್ಟು ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಒದಗಿಸಿ, ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಗಮನ ಹರಿಸಬೇಕು, ಅವರು ವಯಸ್ಕರಾಗುವ ಮುನ್ನ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬೇಡಿ ಎಂದು ಸಲಹೆ ನೀಡಿದರು. ಕೃಷಿ ಇಲಾಖೆ ಉಪ ನಿರ್ದೇಶಕ ಹಂಪಣ್ಣ ಮಾತನಾಡಿ, ಸರ್ಕಾರದ ಯೋಜನೆಗಳನ್ನು ರೈತರಿಗೆ ಹಾಗೂ ಮಹಿಳೆಯರಿಗೆ ಪ್ರಾಮಾಣಿಕವಾಗಿ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ್ ಸಹಾಯಕ ಕೃಷಿ ನಿರ್ದೇಶಕ ಸುರೇಶ, ಕೃಷಿ ಅಧಿಕಾರಿಗಳಾದ ಯಾಮರಡ್ಡಿ, ನರೇಶ, ಅಯಣ್ಣ ಸೇರಿದಂತೆ ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 9:57 pm

ಪ್ರಗತಿಪರ ಕೃಷಿಕ, ಸಂಶೋಧಕ ನಿಟಿಲೆ ಮಹಾಬಲೇಶ್ವರ ಭಟ್ ನಿಧನ

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕೋಡಪದವು ನಿಟಿಲೆ ನಿವಾಸಿ, ಪ್ರಗತಿಪರ ಕೃಷಿಕ, ಸಂಶೋಧಕ, ಮೊಕ್ತೇಸರ ನಿಟಿಲೆ ಮಹಾಬಲೇಶ್ವರ ಭಟ್(70) ಅವರು ಫೆ.18ರಂದು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕೋಡಪದವು ಶ್ರೀ ವೀರಾಂಜನೇಯ ಕ್ಷೇತ್ರದ ಮೊಕ್ತೇಸರರಾಗಿದ್ದ ಅವರು ಕಾಳುಮೆಣಸು ಬಿಡಿಸುವ ಯಂತ್ರವನ್ನು ಸಂಶೋಧನೆ ಮಾಡಿದ್ದರು. ಕೃಷಿಕರಿಗೆ ಬೇಕಾದ ಹಲವು ಯಂತ್ರ, ಶ್ರಮ ಉಳಿಸುವ ಉಪಕರಣಗಳ ಸಾಲನ್ನೇ ಕೊಟ್ಟ ಸಂಶೋಧಕ ನಿಟಿಲೆ ಮಹಾಬಲೇಶ್ವರ ಭಟ್ ಅವರು ತನ್ನ ಕೃಷಿ ಭೂಮಿಯಲ್ಲಿ ಅವಶ್ಯವಿರುವ ಸೇತುವೆಯನ್ನು ಸಿಮೆಂಟ್ ಪೈಪ್ ಆಧಾರಿತ ಸೇತುವೆಯಾಗಿ, ತಡೆಗಟ್ಟವಾಗಿ ನಿರ್ಮಿಸಿದ್ದು ಆಕರ್ಷಕ ಮತ್ತು ಉಪಯುಕ್ತವಾಗಿತ್ತು. ಕಾಸರಗೋಡು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಮೆಚ್ಚಿಕೊಂಡು, ಅದನ್ನು ಅನುಸರಿಸಿ, ಕಾಸರಗೋಡಿನಲ್ಲಿ ನೂರಾರು ಪೈಪುಗಟ್ಟಗಳ ರಚನೆ ಸಾಧ್ಯವಾಗಿದೆ. ಅವರು 2007ರಲ್ಲಿ ಕಾಳುಮೆಣಸು ಆಯುವ ಯಂತ್ರ, 2012ರಲ್ಲಿ ಕೊಕ್ಕೋ ಬೀಜ ಪ್ರತ್ಯೇಕಿಸುವ ಯಂತ್ರ, 2013ರಲ್ಲಿ ಅಡಿಕೆ ಸುಲಿಯುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದರು. ಕೇರಳ ಸರಕಾರದ ಖ್ಯಾತ ಕೃಷಿ ವಸ್ತುಪ್ರದರ್ಶನ 'ವೈಗಾ'ಕ್ಕಾಗಿಯೇ ಇವರು ತಯಾರಿಸಿದ ಎಲ್ಲ ಯಂತ್ರೋಪಕರಣಗಳನ್ನು ಮಳಿಗೆ ಇಟ್ಟಿದ್ದರು. ಇವರಿಗೆ 2007ರಲ್ಲಿ ಕೃಷಿ ಪಂಡಿತ ಪ್ರಶಸ್ತಿ, 2012ರಲ್ಲಿ ಸಮೃದ್ಧಿ ಪ್ರಶಸ್ತಿ, 2015ರಲ್ಲಿ ದ.ಕ.ಜಿ.ಕಸಾಪ ಪ್ರಶಸ್ತಿ, 2018ರಲ್ಲಿ ಹವ್ಯಕ ರತ್ನ ಪ್ರಶಸ್ತಿ, 2019ರಲ್ಲಿ ಕ್ಯಾಂಪ್ಕೋ ಪ್ರಶಸ್ತಿ ಮತ್ತು ಹಲವು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.

ವಾರ್ತಾ ಭಾರತಿ 18 Feb 2026 9:54 pm

ಪೌರ ಕಾರ್ಮಿಕರಿಗೆ ಮೂಲಸೌಕರ್ಯ, ನೇರ ನೇಮಕಕ್ಕೆ ಆಗ್ರಹ: ಡಿಎಸ್ಎಸ್ ಮನವಿ

ಯಾದಗಿರಿ: ಯಾದಗಿರಿ ನಗರಸಭೆ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಪಿ. ರಘು ಅವರಿಗೆ ಮನವಿ ಸಲ್ಲಿಸಿದರು. ಯಾದಗಿರಿ ಜಿಲ್ಲಾ ಕೇಂದ್ರದಲ್ಲಿಯೇ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹವೇ ಇಲ್ಲದೆ ಇರುವುದರಿಂದ ಕೂಡಲೇ ವಿಶ್ರಾಂತಿ ಗೃಹ ನಿರ್ಮಿಸಬೇಕು, ಅಲ್ಲದೆ, ಪೌರ ಕಾರ್ಮಿಕರಾಗಿ ಪರಿಶಿಷ್ಟ ಜಾತಿ-ಪರಿಶಿಷ್ಟ ಜನಾಂಗದವರನ್ನು ನೇರವಾಗಿ ನೇಮಕ ಮಾಡಬೇಕು. ಅನಕ್ಷರಸ್ಥರಾಗಿದ್ದರೂ ವರ್ಷಗಳಿಂದ ಮಲ-ಮೂತ್ರ ಎತ್ತುವಂತಹ ಕಠಿಣ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಏಜೆನ್ಸಿ ಮೂಲಕ ನೇಮಕ ಮಾಡುತ್ತಿರುವುದರಿಂದ ಅವರಿಗೆ ಸಮರ್ಪಕ ವೇತನ ಹಾಗೂ ಪಿಎಫ್ ಸೌಲಭ್ಯ ದೊರಕುತ್ತಿಲ್ಲ. ಹೀಗಾಗಿ ಇಲಾಖೆಯಿಂದಲೇ ನೇರ ನೇಮಕ ಮಾಡಬೇಕೆಂದು ಒತ್ತಾಯಿಸಿದರು. ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿ ಸಮವಸ್ತ್ರ ನೀಡಬೇಕು. ಜೊತೆಗೆ ಶೂ, ಹ್ಯಾಂಡ್ ಗ್ಲೋವ್ಸ್, ಸ್ಯಾನಿಟೈಸರ್, ಸೋಪ್ ಮುಂತಾದ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು. ಆದರೆ ಇದುವರೆಗೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ ಎಂದು ದೂರಿದರು. ಇನ್ನು ಕಾರ್ಮಿಕರಿಗೆ ನೀಡಬೇಕಾದ ಕುಡಿಯುವ ನೀರು, ಉಪಹಾರ ಮತ್ತು ಊಟ ಸರಿಯಾಗಿ ನೀಡುತ್ತಿಲ್ಲ; ಇದರಲ್ಲಿ ಅವ್ಯವಹಾರ ನಡೆಯುತ್ತಿದ್ದು, ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಕ್ಟೋಬರ್ 2ರಂದು ಗಾಂಧಿ ವೃತ್ತದಲ್ಲಿ ಸ್ವಚ್ಛತೆ ಹಾಗೂ ದೀಪಾಲಂಕಾರ ಕಾರ್ಯ ನಡೆದಿಲ್ಲ, ಸಂಬಂಧಪಟ್ಟ ಜವಾನರು ಹಾಗೂ ಎಸ್‌.ಐ. ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಪೌರ ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ನಿಂಗಣ್ಣ ಬೀರನಾಳ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಡಿಎಸ್ಎಸ್ ತಾಲೂಕು ಸಂಚಾಲಕರಾದ ಆಂಜನೇಯ ಬಳಿಚಕ್ರ, ಅನೀಲ್ ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 9:54 pm

Kalaburagi | ಅನ್ಯ ತಾಲೂಕಿಗೆ ಅನುದಾನ ವರ್ಗಾವಣೆ ಪ್ರಕರಣ: ಐವರು ಇಂಜಿನಿಯರ್‌ಗಳ ಅಮಾನತು

ಕಲಬುರಗಿ: ಕೆಕೆಆರ್‌ಡಿಬಿಯಿಂದ ಮಂಜೂರಾದ ಅನುದಾನ ಅನ್ಯ ತಾಲೂಕಿಗೆ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಐವರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಿಗಮದ ಎಇಇ ಅರುಣಕುಮಾರ ಅವರು ಚಿಂಚೋಳಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಿಳಿಸಿದರು. ಚಿಂಚೋಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅನುದಾನ ವರ್ಗಾವಣೆಯಿಂದ ಅಪೂರ್ಣವಾಗಿರುವ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದಿರುವ ಬಗ್ಗೆ ಚರ್ಚೆಯ ವೇಳೆಯಲ್ಲಿ ಅರುಣಕುಮಾರ ಅವರು ಮಾಹಿತಿ ನೀಡಿದರು. ಇದೇ ವೇಳೆಯಲ್ಲಿ ಮಾತನಾಡಿದ ಶಾಸಕ ಅವಿನಾಶ್ ಜಾಧವ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಾಗ ನಾನೇ ಖುದ್ದಾಗಿ ನಿಗಮದ ಎಂ.ಡಿ ಅವರನ್ನು ಭೇಟಿ ಮಾಡಿ ತಿಳಿಸಿದ್ದೇನೆ. ಯಾವ ಕ್ರಮವೂ ಜರುಗಿಸಿರಲಿಲ್ಲ. ಆಗ ಚಿಂಚೋಳಿ ಜನರೊಂದಿಗೆ ಸಿಎಂ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದಾಗ ತನಿಖೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಎಸ್‌ಐಟಿ ರಚನೆಯಾಗಿದ್ದು, ತನಿಖೆ ನಡೆಯುತ್ತಿದೆ ಎಂದರು. ಜಲ್ ಜೀವನ ಮಿಷನ್ ಯೋಜನೆಯಡಿ 108 ಕೋಟಿ ರೂ. ಖರ್ಚು ಮಾಡಿ ಸುಮಾರು 118 ಕಾಮಗಾರಿ ಮುಗಿಸಲಾಗಿದೆ. ಇದರಲ್ಲಿ ಒಂದಾದರೂ ನಮಗೆ ತೋರಿಸಿ ಎಂದಾಗ ಇಂಜಿನಿಯರ್‌ ಪ್ರತಿಕ್ರಿಯೆ ನೀಡಲಿಲ್ಲ. ಈ ವೇಳೆ ಶಾಸಕರು ಮತ್ತು ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಮಾಲಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ತಾ.ಪಂ ಇಒ ಸಂತೋಷ ಚವ್ಹಾಣ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ವಾರ್ತಾ ಭಾರತಿ 18 Feb 2026 9:49 pm

ಧ್ವನಿ ಇಲ್ಲದವರ ಪರ ಸಂಘಟನೆಗಳು ನಿಲ್ಲಬೇಕು: ಜೇರಟಗಿಯ ಶ್ರೀಗಳು

ಇಮ್ಮಡಿ ಪುಲಕೇಶಿ ಪ್ರಶಸ್ತಿ ಪ್ರದಾನ

ವಾರ್ತಾ ಭಾರತಿ 18 Feb 2026 9:45 pm

ತಳವಾರ ಜಾತಿ ಪ್ರಮಾಣ ನೀಡುವಂತೆ ಆಗ್ರಹಿಸಿ ಫೆ.23ರಂದು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ: ಸಂತೋಷ ತಳವಾರ

ಅಫಜಲಪುರ: ತಳವಾರ ಸಮಾಜದ ಅರ್ಹ ಜನರಿಗೆ ಪರಿಶಿಷ್ಟ ಪಂಗಡ (ಎಸ್.ಟಿ) ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಉಂಟಾಗುತ್ತಿರುವ ಆಡಳಿತಾತ್ಮಕ ವಿಳಂಬ ಮತ್ತು ಗೊಂದಲವನ್ನು ಖಂಡಿಸಿ ಫೆಬ್ರವರಿ 23ರಂದು ಅಫಜಲಪುರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜದ ತಾಲೂಕು ಅಧ್ಯಕ್ಷ ಸಂತೋಷ ತಳವಾರ ಹೇಳಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 88(ಎಚ್) ಅಡಿಯಲ್ಲಿ ಗುರುತಿಸಲ್ಪಟ್ಟಿರುವ ತಳವಾರ ಜಾತಿಗೆ ಕುಲಶಾಸ್ತ್ರೀಯ ಅಧ್ಯಯನದ ಆಧಾರದ ಮೇಲೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಮಾನ್ಯತೆ ದೊರೆತಿದ್ದರೂ ತಾಲೂಕು ಮಟ್ಟದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ನಿಜವಾದ ತಳವಾರರಿಗೆ ಎಸ್.ಟಿ ಪ್ರಮಾಣ ಪತ್ರ ನೀಡುವುದನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ತಾಲೂಕು ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ಶರಣು ದಿವಾಣಜಿ, ಮಾತನಾಡಿ, ಸರಕಾರಿ ನೌಕರರಿಗೆ ನೀಡಿರುವ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸೇವಾ ಪುಸ್ತಕದಲ್ಲಿ ತಿದ್ದುಪಡಿ ಮಾಡಿ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ವಾಲ್ಮೀಕಿ ನಿಗಮ ಮಂಡಳಿಯಲ್ಲಿನ ರೂ.187 ಕೋಟಿ ಅವ್ಯವಹಾರದ ಕುರಿತು ಸಂಪೂರ್ಣ ತನಿಖೆ ನಡೆಸಿ ಸಂಬಂಧಿತ ಅಧಿಕಾರಿಗಳನ್ನು ವಜಾಗೊಳಿಸಬೇಕು. ಮಹಾಂತೇಶ ಗೌರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಂತೋಷ ತಳವಾರ, ಶರಣು ದಿವಾಣಜಿ, ಮಹಾಂತೇಶ ಗೌರ, ಪುಂಡಲೀಕ್ ಆನೂರ, ಶರಣು ನಯ್ಕೋಡಿ, ಸಂತೋಷ ಗೂಳನೂರ, ಮರೆಪ್ಪ ಜಮಾದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೇಂದ್ರ ಸರ್ಕಾರದ ಗೆಜೆಟ್ ಪ್ರಕಾರ ಪರಿಶಿಷ್ಟ ಪಂಗಡ ಪಟ್ಟಿಯ ಕ್ರ.ಸಂ. 38ರಲ್ಲಿ ಸೇರಬೇಕಾದ ತಳವಾರ ಜಾತಿಯನ್ನು ಬೇರೆ ಬೇರೆ ಪರಿವಾರಗಳಾಗಿ ತಪ್ಪಾಗಿ ದಾಖಲಿಸಿರುವುದು ಸಂವಿಧಾನ ವಿರೋಧಿ ಕ್ರಮ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅವರ ಮೇಲೆ ಪ್ರಕರಣ ದಾಖಲಿಸಬೇಕು. - ಸಂತೋಷ ತಳವಾರ - ಮುಖಂಡರು, ಮಹರ್ಷಿ ವಾಲ್ಮೀಕಿ ತಳವಾರ ಸಮಾಜ

ವಾರ್ತಾ ಭಾರತಿ 18 Feb 2026 9:41 pm

ಸುರತ್ಕಲ್‌ ವಿಷನ್‌ ಕಮಿಟಿ ವತಿಯಿಂದ ರಂಝಾನ್‌ ಕಿಟ್‌ ವಿತರಣೆ

ಮಂಗಳೂರು: ಸುರತ್ಕಲ್‌ ವಿಷನ್‌ ಕಮಿಟಿ ವತಿಯಿಂದ ರಂಝಾನ್‌ ಕಿಟ್‌ ವಿತರಣೆ-2026 ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸುರತ್ಕಲ್‌ ಜಮಾತಿನ ಅರ್ಹ ಕುಟಂಬಗಳಿಗೆ ಹಾಗೂ ಜಮಾತಿನ ಅಧೀನದಲ್ಲಿರುವ ಎಲ್ಲಾ ಮಸೀದಿಗಳ ಉಸ್ತಾದರು ಗಳನ್ನೊಳಗೊಂಡು ಒಟ್ಟು 150 ರಂಝಾನ್‌ ಕಿಟ್‌ಗಳನ್ನು ವಿತರಿಸಲಾಯಿತು. ರಂಝಾನ್‌ ಕಿಟ್‌ಗೆ ಸಹಾಯ ನೀಡಿದ SVC ಯ ಸದಸ್ಯರಿಗೆ ಹಾಗೂ ಕಿಟ್ ವಿತರಣೆಗೆ ಸಹಕರಿಸಿದ ಊರಿನ ಸಹೋದರರಿಗೂ ಸುರತ್ಕಲ್‌ ವಿಷನ್‌ ಕಮಿಟಿ ಪರವಾಗಿ ಧನ್ಯವಾದ ಸಲ್ಲಿಸಲಾಯಿತು ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಮುಸ್ತಫ ಸುರತ್ಕಲ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ವಾರ್ತಾ ಭಾರತಿ 18 Feb 2026 9:36 pm

ಉಬಾರ್ ಡೋನರ್ಸ್‍ನಿಂದ ರಂಝಾನ್ ಕಿಟ್, ಹೊಲಿಗೆ ಯಂತ್ರ ವಿತರಣೆ

ಉಪ್ಪಿನಂಗಡಿ: ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ, ಈ ಬಾರಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಂಸ್ಥೆಯಾದ ಉಬಾರ್ ಸ್ಪೋರ್ಟಿಂಗ್ ಕ್ಲಬ್‍ನ ಅಂಗ ಸಂಸ್ಥೆಯಾದ ಉಬಾರ್ ಡೋನರ್ಸ್ ಹೆಲ್ಫ್ ಲೈನ್ ಉಪ್ಪಿನಂಗಡಿಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಂಜಾನ್ ಸಮಯದಲ್ಲಿ ಅರ್ಹರಿಗೆ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ಅನ್ನು ಹಾಗೂ ಎರಡನೇ ಹಂತದ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಉಪ್ಪಿನಂಗಡಿಯ ಕೆಂಪಿಮಜಲಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಲೀಕುದ್ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಅಧ್ಯಕ್ಷ ಎಚ್. ಯೂಸುಫ್ ಹಾಜಿ ಮಾತನಾಡಿ, ರಂಝಾನ್ ಸಮಯದಲ್ಲಿ ಅರ್ಹರಿಗೆ ಆಹಾರವನ್ನು ತಲುಪಿಸುತ್ತಿರುವ ಉತ್ತಮವಾದ ಕಾರ್ಯ. ಈ ಸಂಸ್ಥೆಯು ಕ್ರೀಡೆಯನ್ನು ಸಂಘಟಿಸುತ್ತಿರುವುದಲ್ಲದೆ, ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಜೊತೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಹೆಣ್ಣು ಮಕ್ಕಳ ಮದುವೆಯನ್ನು ಸಹ ಮುಂದಕ್ಕೆ ನೀವು ಮಾಡಿ ಅಲ್ಲಾಹುನ ಕೃಪೆಗೆ ಪಾತ್ರರಾಗಬೇಕೆಂದು ಅವರು ಹೇಳಿದರು. ಹಿರಿಯ ಸಹಕಾರಿ, ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡಿಸ್ ಮಾತನಾಡಿ, ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಇಂತಹ ಕಾರ್ಯಕ್ಕೆ ದೇವರ ಅನುಗ್ರಹ ಸದಾ ಇರುತ್ತದೆ ಎಂದರು. ಸಂಸ್ಥೆಯ ಸದಸ್ಯ ನಝೀರ್ ಹೊಸಮೊಗ್ರು ಮಾತನಾಡಿ, ಶೈಕ್ಷಣಿಕ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮಾಹಿತಿ ಶಿಬಿರವನ್ನು ಆಯೋಜಿಸಲು ಸಂಸ್ಥೆ ಹಾಕಿಕೊಂಡ ಯೋಜನೆಯ ಬಗ್ಗೆ ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ಶಬೀರ್ ಕೆಂಪಿ ಮಾತನಾಡಿ, ಉಬಾರ್ ಸ್ಪೋರ್ಟಿಂಗ್ ಕ್ಲಬ್‍ನ ಮೂಲಕ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ನಡೆಸಲಾಗುತ್ತಿದ್ದರೆ, ಉಬಾರ್ ಡೋನರ್ಸ್ ಮೂಲಕ ಕಳೆದ 11 ವರ್ಷಗಳಿಂದ ವಿವಿಧ ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಸಂಸ್ಥೆಯ ಸಮಾಜ ಮುಖಿ ಕಾರ್ಯಗಳಿಗೆ ಅನಿವಾಸಿ ಭಾರತೀಯರು ಸೇರಿದಂತೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ನಮ್ಮ ಸಂಸ್ಥೆಯ ಸಮಾಜಸೇವಾ ಚಟುವಟಿಕೆಗಳನ್ನು ಪರಿಗಣಿಸಿ ಕಳೆದ ಬಾರಿ ಸಂಸ್ಥೆಯು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ. ಬಡವರು ಆರ್ಥಿಕವಾಗಿ ಸಬಲರಾಗಬೇಕು. ಅವರಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ಬಾರಿ ನಾವು ಅರ್ಹರಿಗೆ ಉಚಿತವಾಗಿ ಟೈಲರಿಂಗ್ ಮೆಷಿನ್ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಎರಡನೇ ಹಂತವಾಗಿ ಈ ಬಾರಿಯೂ ಅರ್ಹರಿಗೆ ಅದನ್ನು ನೀಡಲಿದ್ದೇವೆ ಎಂದರು. ಬಿಲಾಲ್ ಮಸೀದಿ ಕಡವಿನಬಾಗಿಲು ಇದರ ಖತೀಬ್ ಇಸ್ಮಾಯಿಲ್ ರಿಝ್ವಿಯವರು ದುವಾಶೀರ್ವಚನಗೈದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ನಿಕಟಪೂರ್ವ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮಿ ಪ್ರಭು, ಮಾಲೀಕುದ್ದೀನಾರ್ ಮಸೀದಿಯ ಕಾರ್ಯದರ್ಶಿ ಶುಕೂರ್ ಹಾಜಿ, ಪ್ರಮುಖರಾದ ಇಸುಬು ಪೆದಮಲೆ, ಹಮೀದ್ ಎಂ.ಜಿ. ಸಿಟಿ ಸೆಂಟರ್, ಮುಸ್ತಫಾ ಡಬಲ್, ಇಸ್ಮಾಯಿಲ್ ತಂಙಳ್, ಅಶ್ರಫ್ ಹಾಜಿ ಸಿಟಿ, ಹಾರೂನ್ ಅಗ್ನಾಡಿ, ರವೂಫ್ ಹಾಜಿ ಯು.ಟಿ., ಅದ್ದು ಬಜಾರ್, ಮಹಮ್ಮದ್ ಕೆಂಪಿ, ಅಶ್ರಫ್ ಡಿಸೈನ್, ಬಶೀರ್ ಪೆರಿಯಡ್ಕ, ಸಿದ್ದೀಕ್ ನಿರಾಜೆ, ಶುಕೂರ್ ಕುಪ್ಪೆಟ್ಟಿ, ಇಸಾಕ್ ಹಳೆಗೇಟು, ಆಚಿ ಇಬ್ರಾಹಿಂ, ಖಲಂದರ್ ಕೊಳ್ಳೆಜಾಲ್, ರಹಿಮಾನ್ ಪೆÇರುಂಕಾಜೆ, ಮುನೀರ್ ಎನ್ಮಾಡಿ, ಜಮಾಲ್ ಕೆಂಪಿ, ಸಿದ್ದೀಕ್ ಕೆಂಪಿ, ಫೌಝರ್ ಯು.ಟಿ., ಇಕ್ಬಾಲ್ ಹಳೆಗೇಟು, ಅನೀಸ್ ಗಾಂಧಿಪಾರ್ಕ್, ಶಾನಿಲ್ ಬಸ್ತಿಕ್ಕಾರ್, ಮನ್ಸೂರ್ ಕುದ್ಲೂರ್, ರಫೀಕ್ ಮಾಸ್ಟರ್, ಸಿದ್ದೀಕ್ ಹ್ಯಾಪಿ ಟೈಮ್ಸ್, ಶುಕೂರ್ ಮೇದರಬೆಟ್ಟು, ಇಬ್ರಾಹಿಂ ಸಿಟಿ, ಸಮದ್ ಕೆಂಪಿ, ಲತೀಫ್ ಕುದ್ಲೂರ್, ಫಯಾಝ್ ಯು.ಟಿ., ಮಹಮ್ಮದ್ ಕಡವಿನಬಾಗಿಲು ಮತ್ತಿತರರು ಪಾಲ್ಗೊಂಡಿದ್ದರು. ಸಂಸ್ಥೆಯ ಗೌರವ ಸಲಹೆಗಾರ ಮಹಮ್ಮದ್ ತೌಸೀಫ್ ಯು.ಟಿ. ಮತ್ತು ಇರ್ಷಾದ್ ಯು.ಟಿ. ಹಾಗೂ ಜಲೀಲ್ ಮುಕ್ರಿಯವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಈ ಬಾರಿ ಉಪ್ಪಿನಂಗಡಿ, ಮಠ, ಬೆದ್ರೋಡಿ, ಗೋಳಿತ್ತೊಟ್ಟು, ಪೆರಿಯಡ್ಕ, ಕೆಮ್ಮಾರ, ಕೊಯಿಲ, ಆತೂರು, 34 ನೆಕ್ಕಿಲಾಡಿ, ಶಾಂತಿನಗರ, ಕೋಡಿಂಬಾಡಿ, ಕರ್ವೇಲು, ಬಿಳಿಯೂರು, ಕರಾಯ, ಕಲ್ಲೇರಿ, ತಣ್ಣೀರುಪಂಥ, ಕಳೆಂಜಿಬೈಲು, ತೆಕ್ಕಾರು, ಇಳಂತಿಲ, ಬಂದಾರು, ಅಂಡೆತ್ತಡ್ಕ, ಬಟ್ಲಡ್ಕ ಪ್ರದೇಶದ 624 ಅರ್ಹ ಮನೆಗಳಿಗೆ ತೆರಳಿ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ಅನ್ನು ವಿತರಿಸಲಾಯಿತು. ಎರಡನೇ ಹಂತವಾಗಿ ಈ ಬಾರಿ 24 ಮಂದಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ವಾರ್ತಾ ಭಾರತಿ 18 Feb 2026 9:31 pm

KSRTC ಸೇರಿ 4 ಸಾರಿಗೆ ನಿಗಮಗಳ ನೌಕರರಿಗೆ ಗುಡ್‌ನ್ಯೂಸ್‌: 26 ತಿಂಗಳ ಬಾಕಿ ವೇತನ ಬಿಡುಗಡೆಗೆ ಕರ್ನಾಟಕ ಸರ್ಕಾರ ಆದೇಶ

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ 4 ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 26 ತಿಂಗಳ ಹಿಂಬಾಕಿ ವೇತನ ಬಿಡುಗಡೆಗೆ ಆದೇಶ ಮಾಡಿದೆ. 2025 ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಚರ್ಚೆಗೆ ಮಾತುಕತೆಗೆ ಚಾಲನೆ ನೀಡಲು ನಿರ್ಧರಿಸಿದೆ. ಈ ಮೂಲಕ ಗುರುವಾರ ಕರೆಕೊಟ್ಟಿದ್ದ ಬೆಂಗಳೂರು ಚಲೋಯಿಂದ ಸಾರಿಗೆ ನೌಕರರು ಹಿಂದೆ ಸರಿಯುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 18 Feb 2026 9:29 pm

ದ್ವಿತೀಯ ಪಿಯುಸಿ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 37,337 ಮಂದಿ ಅಭ್ಯರ್ಥಿಗಳು

ಮಂಗಳೂರು, ಫೆ.18: ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ ಒಟ್ಟು 59 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 18,745 ವಿದ್ಯಾರ್ಥಿಗಳು ಮತ್ತು 18592 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 37,337 ಮಂದಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 15 ಸರಕಾರಿ, 22 ಖಾಸಗಿ ಮತ್ತು 22 ಅನುದಾನರಹಿತ ಖಾಸಗಿ ಕಾಲೇಜುಗಳು ಸೇರಿದಂತೆ 59 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು 21, ಬಂಟ್ವಾಳ 6, ಬೆಳ್ತಂಗಡಿ 8, ಪುತ್ತೂರು 5, ಸುಳ್ಯ 2, ಕಡಬ 5, ಮೂಡಬಿದ್ರೆ 6, ಉಳ್ಳಾಲ 4, ಮೂಲ್ಕಿ ತಾಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. *ವಿಜ್ಞಾನ ವಿಭಾಗದಲ್ಲಿ ಗರಿಷ್ಠ: ದ.ಕ. ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ 18,559 ಮಂದಿ (ವಿದ್ಯಾರ್ಥಿಗಳು 8983 ಮತ್ತು ವಿದ್ಯಾರ್ಥಿನಿಯರು 9,576) , ರೆಗ್ಯುಲರ್ 18401 (ಗಂ .8,901 ಮತ್ತು ಹೆ. 9,500), ರಿಪೀಟರ್ 158 ಮಂದಿ *ಕಲಾವಿಭಾಗ: 3,724: ಕಲಾವಿಭಾಗದಲ್ಲಿ 3,724 ಮಂದಿ. ಈ ಪೈಕಿ ವಿದ್ಯಾರ್ಥಿನಿಯರು 2,047 ಮತ್ತು ವಿದ್ಯಾರ್ಥಿಗಳು 1,677, ರೆಗ್ಯುಲರ್ 3,326 ಮಂದಿ , ರಿಪೀಟರ್ 92ಮತ್ತು ಖಾಸಗಿ 306 ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. *ವಾಣಿಜ್ಯ ವಿಭಾಗದಲ್ಲಿ 15,054: ವಾಣಿಜ್ಯ ವಿಭಾಗದಲ್ಲಿ 15,054 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿ ದ್ದಾರೆ. ವಿದ್ಯಾರ್ಥಿಗಳು 8,085 ಮತ್ತು ವಿದ್ಯಾರ್ಥಿನಿಯರು 6969ಮಂದಿ. ಖಾಸಗಿ 988 ಮತ್ತು ರಿಪೀಟರ್ 207 ಮಂದಿ ಎಂದು ಡಿಸಿ ದರ್ಶನ್ ಎಚ್‌ವಿ ಮಾಹಿತಿ ನೀಡಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳ ಸಾಗಾಣಿಕೆಗಾಗಿ ಒಟ್ಟು 16 ಮಾರ್ಗಗಳನ್ನು ಕಲ್ಪಿಸಲಾ ಗಿದೆ, ತ್ರಿಸದಸ್ಯ ಸಮಿತಿ ಸದಸ್ಯರನ್ನೊಳಗೊಂಡ 16 ತಂಡಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಪರೀಕ್ಷಾ ಕೇಂದ್ರಗಳ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣವನ್ನು ಪಡೆಯಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆಗಾಗಿ ತ್ರಿಸದಸ್ಯ ಸಮಿತಿ ನೇಮಕ ಮಾಡಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆ ಮತ್ತು ಜಿಲ್ಲಾ ಜಾಗೃತದಳದ ಸದಸ್ಯರುಗಳಿಗೆ ವಾಹನ ವ್ಯವಸ್ಥೆ ಹಾಗೂ ಜಿಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಕೆಎಸ್‌ಇಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿ, ಸಿಬ್ಬಂದಿವರ್ಗದ ಬಯೋಮೆಟ್ರಿಕ್ ಹಾಜರಾತಿಗೆ ನೋಂದಣಿ ವ್ಯವಸ್ಥೆ ಮಾಡಲಾಗಿದೆ.ಪರೀಕ್ಷಾ ಕೇಂದ್ರಗಳಿಗೆ ಗೌಪ್ಯವಸ್ತುಗಳನ್ನು ವಿತರಿಸುವ ಚಟುವಟಿಕೆಗಳನ್ನು ಖಜಾನೆಯ ಒಳಗೆ ಮತ್ತು ಹೊರಗೆ 24*7 ಸಿಸಿಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. 2026 ಫೆ. 28ರಿಂದ ಮಾ.17 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ರ ಜಿಲ್ಲಾ ವ್ಯಾಪ್ತಿಯ 59 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ನುಡಿದರು. ಪರೀಕ್ಷಾ ಅವಧಿಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. *ಎಸ್‌ಎಸ್‌ಎಲ್‌ಸಿಗೆ 29,397 ಅಭ್ಯರ್ಥಿಗಳು:ದ.ಕ. ಜಿಲ್ಲೆಯಲ್ಲಿ ಮಾ.18ರಿಂದ ಆರಂಭವಾಗಲಿರುವ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 29, 397 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ರೆಗ್ಯುಲರ್ 27,633, ಖಾಸಗಿ 979, ರೆಗ್ಯುಲರ್ ರಿಪೀಟರ್ 632, ರಿಪೀಟರ್ ಖಾಸಗಿ 153 ಆಗಿದ್ದು, ಜಿಲ್ಲೆಯ ಒಟ್ಟು 524 ಪ್ರೌಢಶಾಲೆಗಳ ಅಭ್ಯರ್ಥಿಗಳು 91 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಸಿ ದರ್ಶನ್ ಎಚ್‌ವಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. 22 ಕ್ಲಸ್ಟರ್ ಹಾಗೂ 38 ಕ್ಲಸ್ಟರ್ ರಹಿತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. 22 ಕ್ಲಸ್ಟರ್ ಗಳಲ್ಲಿ 53 ಪರೀಕ್ಷಾ ಕೇಂದ್ರಗಳಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರತೀ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಸುಮಾರು 1265 ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು. .ಪ್ರತೀ ಪರೀಕ್ಷಾ ಕೇಂದ್ರಕ್ಕೆ ಓರ್ವ ಕೇಂದ್ರ ಮುಖ್ಯ ಅಧೀಕ್ಷಕರು, ಓರ್ವ ಅಭಿರಕ್ಷಕರು, ಓರ್ವ ಸ್ಥಾನೀಯ ಜಾಗೃತ ದಳದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 350 ಕ್ಕಿಂತ ಹೆಚ್ಚು ಮಕ್ಕಳಿದ್ದ ಕೇಂದ್ರಗಳಿಗೆ ಓರ್ವ ಉಪ ಮುಖ್ಯ ಅಧೀಕ್ಷಕರನ್ನು ನಿಯೋಜಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ಗಾಳಿ ಬೆಳಕು ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಮಕ್ಕಳು ಪರೀಕ್ಷೆಯನ್ನು ಹಬ್ಬವೆಂದು ಪರಿಗಣಿಸಿ ಪರೀಕ್ಷೆಗೆ ಹಾಜರಾಗಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಲಾಗಿದೆ. ವಿಕಲ ಚೇತನ ಮಕ್ಕಳಿಗೆ ನೆಲ ಮಹಡಿಯಲ್ಲಿ ಆಸನ ವ್ಯವಸ್ಥೆ ಸೇರಿದಂತೆ, ಮಂಡಳಿ ನಿಗದಿಪಡಿ ಸಿದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಗತ್ಯ ಭದ್ರತಾ ವ್ಯವಸ್ಥೆ, ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ 2 ಪೂರ್ವಸಿದ್ಧತಾ ಪರೀಕ್ಷೆಗಳ ಮೂಲಕ ಮಕ್ಕಳಿಗೆ ಪರೀಕ್ಷೆಗೆ ತಯಾರಾಗಲು ಮಾರ್ಗದರ್ಶನ ನೀಡಲಾಗಿದ್ದು ಫೆ.23 ರಿಂದ 3ನೇ ಹಾಗೂ ಅಂತಿಮ ಸಿದ್ಧತಾ ಪರೀಕ್ಷೆ ನಡೆಯಲಿದೆ ಎಂದು ಡಿಸಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ದ.ಕ.ಜಿ.ಪಂ ಸಿಇಒ ವಿನಾಯಕ ನರ್ವಾಡೆ, ದ.ಕ.ಜಿಲ್ಲಾ ಎಸ್ಪಿ ಡಾ.ಅರುಣ್, ಡಿಡಿಪಿಐ ಶಶಿಧರ್ ಜಿ.ಎಸ್, ಡಿಡಿಪಿಯು ರಾಜೇಶ್ವರಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 9:28 pm

’ಅರಕಾನಟ್-ಹಿಸ್ಟರಿ, ಕಾನ್ಸ್ಟಿಟುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್’ ಕೃತಿ ಬಿಡುಗಡೆ

ಮಂಗಳೂರು: ’ಅರಕಾನಟ್-ಹಿಸ್ಟರಿ,ಕಾನ್ಸ್ಟಿಟುಯೆಂಟ್, ಕ್ಯಾನ್ಸರ್ ಆಂಡ್ ಬಿಯಾಂಡ್’ ಕೃತಿ ಬಿಡುಗಡೆ ಕಾರ್ಯಕ್ರಮವು ಬುಧವಾರ ಕ್ಯಾಂಪ್ಕೋ ಸಂಸ್ಥೆಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಡಿಕೆಯ ಬಗ್ಗೆ ವಿವಿಧ ಅಪಸ್ವರಗಳು ಕೇಳಿ ಬರುತ್ತಿರುವ ಸಂದರ್ಭ ಅಡಿಕೆಯ ಕುರಿತಂತೆ ನಡೆಯುವ ಸಂಶೋಧನೆಗಳಿಗೆ ಕ್ಯಾಂಪ್ಕೊ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ದೇಶದ 10 ಶ್ರೀಮಂತ ಜಿಲ್ಲೆಗಳಲ್ಲಿ ದ.ಕ. ಜಿಲ್ಲೆ ಎಂಟನೇ ಸ್ಥಾನದಲ್ಲಿದೆ ಎಂಬುದು ಇತ್ತೀಚೆಗೆ ವರದಿಯಾಗಿದೆ. ಈ ಸ್ಥಾನ ಪಡೆಯಲು ಅಡಿಕೆಯೇ ಪ್ರಮುಖವಾಗಿದೆ. ಇಲ್ಲಿನ ಜನ ಜೀವನ, ಸಂಸ್ಕೃತಿ, ಆಚಾರ-ವಿಚಾರ, ಶಿಕ್ಷಣ ಸಹಿತ ಇಡೀ ವ್ಯವಸ್ಥೆಯ ಹಿಂದೆ ಅಡಿಕೆ ಪ್ರಮುಖ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ಅರೆಕಾನಟ್ ಕೃತಿ ಪೂರಕವಾಗಿದೆ ಎಂದು ಎಸ್.ಆರ್. ಸತೀಶ್ಚಂದ್ರ ಹೇಳಿದರು. ಸಂಶೋಧಕ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ ಕೃತಿಯಲ್ಲಿ ಅಡಿಕೆಯ ಇತಿಹಾಸ, ಆರ್ಥಿಕ ಸ್ಥಿತಿಗತಿ, ಅಡಿಕೆಯ ಗುಣಗಳು, ಕ್ಯಾನ್ಸರ್‌ಕಾರಕವೋ ಅಲ್ಲವೋ ಎನ್ನುವ ಬಗ್ಗೆ ವಿವರವಿದೆ. ಈ ಕೃತಿಯು ಅಡಿಕೆ ಬೆಳೆಯ ಬಗ್ಗೆ ಸುಪ್ರೀಂಕೋರ್ಟ್, ವಿಶ್ವ ಆರೋಗ್ಯ ಸಂಸ್ಥೆಯ ಮುಂದೆ ವಾದ ಮಂಡಿಸಲು ನೆರವಾಗಲಿದೆ. ಈ ಸಂಶೋಧನೆ ಇಲ್ಲಿಗೆ ನಿಲ್ಲದೆ ಅಡಿಕೆ ಬೆಳಗಾರರ ಹಿತ ಕಾಯುವ ನಿಟ್ಟಿನಲ್ಲಿ ಮುಂದುವರೆಯಬೇಕು ಎಂದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಸೇರಿಸಬೇಕು. ಸರಕಾರ ಅಡಿಕೆ ಬೆಳೆಗಾರರ ಹಿತ ಕಾಯದಿದ್ದಲ್ಲಿ ರಾಜ್ಯದ 28 ಸಂಸದರನ್ನು ಕಳೆದುಕೊಳ್ಳುತ್ತೇವೆ ಎನ್ನುವ ವಿಚಾರ ಬಂದಾಗ ಈ ಸಮಸ್ಯೆಗೆ ಸರಕಾರ ಪರಿಹಾರ ನೀಡಲು ಸಾಧ್ಯ. ಅಡಕೆಯಿಂದ ಸರಕಾರಕ್ಕೆ ಆದಾಯ ಬರುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ, ಹಣದ ಚಲಾವಣೆಯಾಗುತ್ತದೆ. ದ.ಕ.ದಲ್ಲಿ ಬ್ಯಾಂಕ್, ಶಿಕ್ಷಣ ಸಂಸ್ಥೆಗಳು ಅಡಿಕೆಯಿಂದಾಗಿಯೇ ಬೆಳೆದಿದೆ. ಅಡಿಕೆ ಸೋತಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳು ಸೋಲಲಿವೆ ಎಂದು ಡಾ. ವಿಘ್ನೇಶ್ವರ ವರ್ಮುಡಿ ಅಭಿಪ್ರಾಯಪಟ್ಟರು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ. ರವಿ ಅಡಿಕೆ ದೇಶದಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿದೆ. ಅಡಿಕೆ ಕ್ಯಾನ್ಸರ್‌ಕಾರಕವೆಂಬ ಚರ್ಚೆಯ ಅನುಮಾನಗಳನ್ನು ಈ ಕೃತಿ ಹೋಗಲಾಡಿಸಲಿದೆ. ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಇದರಲ್ಲಿ ಅಡಕವಾಗಿದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆ ಗಳಿಗೆ ಎನ್‌ಐಟಿಕೆ ನೆರವಾಗಲಿದೆ ಎಂದರು. ಕೃತಿಕಾರ ಹಾಗೂ ಎನ್‌ಐಟಿಕೆ ಇಂಜಿನಿಯರ್ ಡಾ. ಪ್ರಸನ್ನ ಬೇಲೂರು ಮಾತನಾಡಿ, ನಾನು ಸ್ವತಃ ಅಡಿಕೆ ಬೆಳೆಗಾರನಾಗಿದ್ದು, ಆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದೇನೆ. ಅಡಿಕೆಯ ಬಗ್ಗೆ ಅಪಸ್ವರಗಳು ಕೇಳಿ ಬಂದಾಗ ಬೆಳೆಗಾರ ಹಾಗೂ ಸಂಶೋಧಕನಾಗಿ ಸುಮ್ಮನಿರಲು ಸಾಧ್ಯವಾಗಲಿಲ್ಲ. ಕೋವಿಡ್ ಸಂದರ್ಭ ಬಳಸಿಕೊಂಡು ಎನ್‌ಐಟಿಕೆ ಸಹಕಾರದೊಂದಿಗೆ ಸಂಶೋಧನೆ ನಡೆಸಲು ಆರಂಭಿಸಿದೆ. ರಾಜ್ಯದ ವಿವಿಧ ಕಡೆ ಅಧ್ಯಯನ ನಡೆಸಿ ಇಂಗ್ಲಿಷ್‌ನಲ್ಲಿ ಕೃತಿಯನ್ನು ಹೊರತಂದಿದ್ದೇನೆ. ಮುಂದೆ ಕನ್ನಡದಲ್ಲೂ ಕೃತಿಯನ್ನು ಹೊರ ತರುವ ಉದ್ದೇಶ ಇದೆ ಎಂದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಮಾತನಾಡಿದರು. ಗೋವಿಂದ ಭಟ್ ಕೃತಿಕಾರರ ಪರಿಚಯ ಮಾಡಿದರು. ಕ್ಯಾಂಪ್ಕೊ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ ಸ್ವಾಗತಿಸಿದರು. ಡಿಜಿಎಂ ಶ್ಯಾಮ್ ವಂದಿಸಿದರು. ಮುಖ್ಯ ವ್ಯವಸ್ಥಾಪಕ ಜಯ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 18 Feb 2026 9:24 pm

ಇರಾನ್ ನಾಯಕರಿಗೆ ಎಚ್ಚರಿಕೆ ನೀಡಲು ಶಕ್ತಿಶಾಲಿ ಯುದ್ಧ ವಿಮಾನಗಳನ್ನು ಕಳುಹಿಸಿದ ಅಮೆರಿಕ | US Military

ಇರಾನ್ ಕೊನೆಗೂ ಮಂಡಿಯೂರಿ ಕೂರುವಂತೆ ಮಾಡುತ್ತಿದೆ ಅಮೆರಿಕ, ಅದರಲ್ಲೂ ತನ್ನ ಬಳಿ ಇದ್ದ ಎಲ್ಲಾ ಶಕ್ತಿಶಾಲಿ ಅಸ್ತ್ರಗಳನ್ನು ಹೊರಗೆ ತೆಗೆಯಲು ಅಮೆರಿಕ ಸೇನೆ ಸಜ್ಜಾಗಿದೆ. ಈಗಾಗಲೇ ಯುದ್ಧ ನೌಕೆ ಹಾಗೂ ಶಕ್ತಿಶಾಲಿ ಕ್ಷಿಪಣಿಗಳನ್ನು ಇರಾನ್ ಹತ್ತಿರಕ್ಕೆ ಕಳುಹಿಸಿದ್ದ ಅಮೆರಿಕ ಮಿಲಿಟರಿ, ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಜಗತ್ತಿನ ಅತಿ ಶಕ್ತಿಶಾಲಿ ಯುದ್ಧ ವಿಮಾನಗಳು ಎಂದು ಕರೆಯುವ ಎಫ್-22

ಒನ್ ಇ೦ಡಿಯ 18 Feb 2026 9:23 pm

KSRTC STRIKE: ರಾಮಲಿಂಗಾ ರೆಡ್ಡಿ ಗುಡ್‌ನ್ಯೂಸ್; ನೌಕರರ ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಣೆಗೆ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸುವ ಒಂದು ಮುನ್ನವೇ ಸಂಧಾನಕ್ಕೆ ಸರ್ಕಾರ ಮುಂದಾಗಿದೆ. ಈವರೆಗೂ ಸಾರಿಗೆ ನೌಕರರ ಹಿಂಬಾಕಿ ನೀಡುವಲ್ಲಿ ವಿಳಂಬ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಹಿಂಬಾಕಿ ಪಾವತಿಗಾಗಿ ಬರೋಬ್ಬರಿ 1,239 ಕೋಟಿ ರೂಪಾಯಿ ಬಿಡುಗಡೆ ನಿರ್ಧರಿಸಿದೆ. ಜೊತೆಗೆ ವೇತನ ಪರಿಷ್ಕರಣೆಗೂ ಆದೇಶಿಸಿದೆ. ಗುರುವಾರ (ಫೆ.19) ಹಮ್ಮಿಕೊಂಡ ರಾಜ್ಯ ಸಾರಿಗೆ ಮುಷ್ಕರದ

ಒನ್ ಇ೦ಡಿಯ 18 Feb 2026 9:22 pm

ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಕಾಲ್ನಡಿಗೆ ಜಾಥ

ಮಂಗಳೂರು, ಫೆ.18: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಕೇಂದ್ರ ಸರಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯ ಬಗ್ಗೆ ಜನಜಾಗೃತಿ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಿಜೆಪಿ ಜಿಲ್ಲಾ ಕಚೇರಿ ಬಳಿಯಿಂದ ಮನಪಾ ಕಚೇರಿವರೆಗೆ ಬುಧವಾರ ಕಾಲ್ನಾಡಿಗೆ ಜಾಥಾ ನಡೆಯಿತು. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸ್ವತಃ ರಾಜೀವ್ ಗಾಂಧಿಯೇ ಸರಕಾರ ಒಂದು ರೂಪಾಯಿ ಕೊಟ್ರೆ ಅದರಲ್ಲಿ ಕೆಲವೇ ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದು ಹೇಳಿ ವೈಫಲ್ಯ ವ್ಯಕ್ತಪಡಿಸಿದ್ದರು. ಆದರೆ ಈಗ ಒಂದೇ ಒಂದು ರೂಪಾಯಿ ಭ್ರಷ್ಟಾಚಾರಕ್ಕೂ ಆಸ್ಪದವಿಲ್ಲದೆದೇ ನರೇಂದ್ರ ಮೋದಿ ಸರಕಾರ ಆಡಳಿತ ನಡೆಸುತ್ತಿದೆ. ಅದರ ಮುಂದುವರಿದ ಭಾಗವೇ ವಿಬಿ ಜಿ ರಾಮ್ ಜಿ. ಆಗಿದೆ. ಆದರೆ ವಿಧಿಯಿಲ್ಲದೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ವಿಬಿ-ಜಿ ರಾಮ್ ಜಿ ಕಾಯ್ದೆ ಮೂಲಕ ಬಡವರಿಗೆ ದುಡಿಯಲು ಹೆಚ್ಚಿನ ಅವಕಾಶ ನೀಡಿದರೂ ಕಾಂಗ್ರೆಸ್ಸಿಗರು ವಿರೋಧಿಸುತ್ತಿದ್ದಾರೆ ಎಂದರೆ ಅವರ ಉದ್ದೇಶ ಬೇರೆ ಏನೋ ಇದೆ. ದುಡಿಯುವ ದಿನವನ್ನು 100ರಿಂದ 125ಕ್ಕೆ ಏರಿಸಿದ್ದು ತಪ್ಪಾ? ಇದರಿಂದ ಕಾಂಗ್ರೆಸ್ಸಿಗೆ ಏನು ತೊಂದರೆ? ಬಡ ಜನರ ಅಭಿವೃದ್ಧಿಗಾಗಿರುವ ವಿಬಿ-ಜಿ ರಾಮ್ ಜಿ ಯೋಜನೆ ವಿರುದ್ದ ಸುಳ್ಳು ಸುದ್ದಿ ಹಬ್ಬಿಸುವ ಕಾಂಗ್ರೆಸ್ಸಿಗರನ್ನು ನಂಬಬೇಕಿಲ್ಲ ಎಂದರು. ಪಕ್ಷದ ಮುಖಂಡರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ತಿಲಕ್‌ರಾಜ್ ಕೃಷ್ಣಾಪುರ, ಪೂರ್ಣಿಮಾ ಎಂ., ಸಂಜಯ್ ಪ್ರಭು, ಶಾನವಾಝ್, ಜಗನ್ನಾಥ್, ಸುಧೀರ್ ಶೆಟ್ಟಿ ಕಣ್ಣೂರು, ನಂದನ್ ಮಲ್ಯ, ವಸಂತ್ ಜೆ.ಪೂಜಾರಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ರಾಜಗೋಪಾಲ್ ರೈ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 9:15 pm

ನಿಮ್ಮ ಕಸ, ಅನುದಾನ ಎರಡೂ ಬೇಡ; ಎಚ್ಚರಿಕೆ, ಬೆದರಿಕೆಗೆ ನಾನು ಜಗ್ಗಲ್ಲ - ಡಿಕೆ ಶಿವಕುಮಾರ್‌ಗೆ ಧೀರಜ್ ಮುನಿರಾಜು ಟಾಂಗ್

ಬೆಂಗಳೂರು ಕಸ ವಿಲೇವಾರಿ ಮಾಡುವುದನ್ನ ತಡೆ ಹಿಡಿದ ಬಿಜೆಪಿ ಶಾಸಕರ ವಿರುದ್ಧ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಪ್ರತಿಕ್ರಿಯೆ ನೀಡಿದ್ದು, ನಾವು ಯಾವ ಎಚ್ಚರಿಕೆ, ಬೆದರಿಕೆಗೂ ಜಗ್ಗಲ್ಲ ಎಂದು ಹೇಳಿದ್ದಾರೆ. ದೊಡ್ಡಬಳ್ಳಾಪುರಕ್ಕೆ ನಿಮ್ಮ ಕಸವೂ ಬೇಡ, ಅನುದಾನವು ಬೇಡ ಎಂದಿದ್ದಾರೆ.

ವಿಜಯ ಕರ್ನಾಟಕ 18 Feb 2026 9:14 pm

ಕಡಲ ತಟ ಭದ್ರತೆ ಬಗ್ಗೆ ಜಾಗೃತಿ ಉದ್ದೇಶ: ಸಂದೀಪ್ ಚಕ್ರವರ್ತಿ

ಉಡುಪಿ ಜಿಲ್ಲೆಯನ್ನು ಹಾದುಹೋದ ವಂದೇ ಮಾತರಂ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್-2026

ವಾರ್ತಾ ಭಾರತಿ 18 Feb 2026 9:11 pm

ಕೆಎಸ್ಸಾರ್ಟಿಸಿ ಕಾರ್ಮಿಕರ 38 ತಿಂಗಳ ವೇತನ ಹಿಂಬಾಕಿ ಪಾವತಿ ಮಾಡಲು ಆಗ್ರಹ

ಬೆಂಗಳೂರು : ರಾಜ್ಯದ ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು ಕಳೆದ 38 ತಿಂಗಳಿಂದ ತಮ್ಮ ನ್ಯಾಯಸಮ್ಮತ ವೇತನ ಹಿಂಬಾಕಿ ಪಡೆಯದೆ ಸಂಕಷ್ಟದ ಜೀವನ ನಡೆಸುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, 2024ರ ಜ.1 ರಿಂದ ಜಾರಿಗೆ ಬರಬೇಕಿದ್ದ ವೇತನ ಪರಿಷ್ಕರಣೆಯನ್ನು ಸರಕಾರ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿರುವುದು ಕಾರ್ಮಿಕ ವಿರೋಧಿ ಧೋರಣೆಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ(ರಿ) ಕೈಗೊಂಡಿರುವ ‘ಅಸಹಕಾರ ಚಳವಳಿ’ ಸಂಪೂರ್ಣ ನ್ಯಾಯಸಮ್ಮತವಾಗಿದ್ದು, ಅವರ ಹೋರಾಟಕ್ಕೆ ಬಿಜೆಪಿ ತನ್ನ ಪೂರ್ಣ ಬೆಂಬಲವನ್ನು ಘೋಷಿಸುತ್ತದೆ. ರಾಜ್ಯ ಸರಕಾರವು ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದು ಕೇವಲ ಆಡಳಿತ ವೈಫಲ್ಯವಲ್ಲ, ಇದು ಸಾಮಾಜಿಕ ನ್ಯಾಯದ ಅವಮಾನವೂ ಹೌದು ಎಂದು ವಿಜಯೇಂದ್ರ ಟೀಕಿಸಿದ್ದಾರೆ. ಕಾರ್ಮಿಕರ ಸಹನೆಗೆ ಮಿತಿ ಇದೆ ಎಂಬುದನ್ನು ಸರಕಾರ ಮನಗಾಣಬೇಕು. ತಕ್ಷಣವೇ 38 ತಿಂಗಳ ವೇತನ ಹಿಂಬಾಕಿಯನ್ನು ಬಿಡುಗಡೆ ಮಾಡದೆ ಮತ್ತು ವೇತನ ಪರಿಷ್ಕರಣೆಯನ್ನು ಜಾರಿಗೊಳಿಸದೆ ಇದ್ದಲ್ಲಿ, ಈ ಹೋರಾಟವು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 18 Feb 2026 9:06 pm

ಸಮಾಜದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗೆ ಪೂರಕ ವಾತಾವರಣ ಕಲ್ಪಿಸಿ: ನ್ಯಾ. ಮನು ಪಟೇಲ್

ಉಡುಪಿ, ಫೆ.18: ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಹೆಣ್ಣು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಅವರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿ ಸಬಲರನ್ನಾಗಿ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಹೇಳಿದ್ದಾರೆ. ಮಣಿಪಾಲ ಜಿಲ್ಲಾದಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ (ಹೆಣ್ಣು ಮಗಳನ್ನು ರಕ್ಷಿಸಿ ಹೆಣ್ಣು ಮಗಳನ್ನು ಓದಿಸಿ) ಯೋಜನೆಯಡಿ, ಪ್ರಸವ ಪೂರ್ವ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ನಿಷೇಧ ಕಾಯ್ದೆ, ‘ಸೀ-ಬಾಕ್ಸ್ ಪೋರ್ಟಲ್’ ಮತ್ತು ಜೀತ ಕಾರ್ಮಿಕ ಪದ್ಧತಿ (ರದ್ಧತಿ) ಕಾಯ್ದೆ-1976ರ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಡೆದ ಒಂದು ದಿನದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೆಲಸದ ಸ್ಥಳದಲ್ಲಿ ಮಹಿಳೆಯರು ಎದುರಿಸುವ ಲೈಂಗಿಕ ಕಿರುಕುಳಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಆಂತರಿಕ ದೂರು ಸಮಿತಿ ವ್ಯವಸ್ಥೆ ಇದ್ದು, ಇದರ ಪ್ರಯೋಜನವನ್ನು ಮಹಿಳಾ ಉದ್ಯೋಗಿಗಳು ಪಡೆದು ಕೊಳ್ಳಬೇಕು ಎಂದ ಅವರು, ಸಮಾಜದಲ್ಲಿ ಅಮಾನವೀಯವಾಗಿ ಕಾಡುತ್ತಿ ರುವ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲಾ ಅಧಿಕಾರಿಗಳು ಕೈಜೋಡಿಸಬೇಕು ಎಂದರು. ಸರಕಾರದ ಯಾವುದೇ ಕಾಯಿದೆ, ಕಾನೂನು ಅಥವಾ ಸುತ್ತೋಲೆಗಳನ್ನು ಅನುಷ್ಠಾನ ಮಾಡುವಾಗ, ಅವುಗಳ ರೂಪುರೇಷೆ ಬಗ್ಗೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಸ್ಪಷ್ಟ ಮಾಹಿತಿ ಹೊಂದಿರಬೇಕು. ಈ ನಿಟ್ಟಿನಲ್ಲಿ ಇಂದಿನ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇಲ್ಲಿ ಪಡೆದ ಮಾಹಿತಿ ಗಳನ್ನು ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಮಹಿಳೆಯರು ಹಾಗೂ ಪುರುಷರು ಸಮಾನರು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲೂ ಇದ್ದಾಗ ಮಾತ್ರ ಸಮಾಜದಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸ ಬಹುದು. ಹೆಣ್ಣು ಮಕ್ಕಳನ್ನು ಭ್ರೂಣಾವಸ್ಥೆಯಿಂದಲೇ ರಕ್ಷಿಸುವ ಕೆಲಸ ವಾಗಬೇಕಾಗಿದೆ. ಆಗ ಮಾತ್ರ ಲಿಂಗಾನುಪಾತದಲ್ಲಿ ಸುಧಾರಣೆ ತರಲು ಸಾಧ್ಯ ಎಂದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯು ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಹೊಂದಿರುವುದರಿಂದ ಲಿಂಗ ತಾರತಮ್ಯ ದಂತಹ ಪ್ರಕರಣಗಳು ಹೆಚ್ಚು ಕಂಡುಬರುತ್ತಿಲ್ಲ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಮಹಿಳೆಯರು ತಮ್ಮ ಪ್ರಾಬಲ್ಯ ತೋರಿಸುತ್ತಿದ್ದಾರೆ. ಪುರುಷರಿಗಿಂತ ಹೆಣ್ಣು ಮಕ್ಕಳು ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ ಎಂಬುವುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇಂದಿಗೂ ಇವೆ ಎಂದರು. ಸಮಾಜದಲ್ಲಿ ಯಾವುದೇ ರೀತಿಯ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಲಿಂಗ ತಾರತಮ್ಯ ಸೇರಿದಂತೆ ಎಲ್ಲಾ ದೌರ್ಜನ್ಯ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿಭಾಯಿಸಿ, ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಅನುಷ್ಠಾನ ಮಾಡುವಲ್ಲಿ ಇರುವ ಪ್ರಕ್ರಿಯೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಹೊಂದಿರಬೇಕು ಎಂದರು. ಕಾರ್ಯಕ್ರಮದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕುರಿತ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಗಳಾಗಿ ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಆಫೀಸರ್ ಡಾ. ರಾಮ್‌ರಾವ್ ಕೆ ಪ್ರಸವ ಪೂರ್ವ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆ ನಿಷೇಧ ಕಾಯ್ದೆ ಕುರಿತು, ನ್ಯಾಯವಾದಿ ರಾಜೇಶ್ ಪಿ., ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಬಗ್ಗೆ, ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕಿ ಡಾ. ನಿಕೇತನ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಮತ್ತು ಸೀ-ಬಾಕ್ಸ್ ಪೋರ್ಟಲ್ ಕುರಿತು ಹಾಗೂ ಮಂಗಳೂರು ಸೈಂಟ್ ಅಲೋಶಿಯಸ್ ಕಾನೂನು ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಾಯನ್ ಫರ್ನಾಂಡೀಸ್ ಜೀತ ಕಾರ್ಮಿಕ ಪದ್ಧತಿ (ರದ್ಧತಿ) ಕಾಯ್ದೆ -1976 ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ಯಾಮ್ ಎಸ್ ಕಾದ್ರೋಳ್ಳಿ, ಉಡುಪಿ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅನುರಾಧ ಬಿ ಹಾದಿಮನೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರೆ ದೀಪಾ ಕಾರ್ಯಕ್ರಮ ನಿರೂಪಿಸಿದರು. ಶಾರದ ವಂದಿಸಿದರು. ‘ಕೆಲಸದ ಸ್ಥಳಗಳಲ್ಲಿ, ಕೌಟುಂಬಿಕ ವಾತಾವರಣದಲ್ಲಿ ಮಹಿಳೆಯರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮಗೆ ಅರಿವಿಲ್ಲದಂತೆ ಲಿಂಗ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಸರಕಾರಿ, ಖಾಸಗಿ ಸೇರಿದಂತೆ ಇತರೆ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು, ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜ್ಯನ್ಯದಂತಹ ಪ್ರಕರಣಗಳನ್ನು ಎದುರಿಸಿ ದಾಗ ಆಂತರಿಕ ದೂರು ಸಮಿತಿಯಲ್ಲಿ ದೂರನ್ನು ದಾಖಲಿಸಬೇಕು. -ಪ್ರತೀಕ್ ಬಾಯಲ್, ಸಿಇಓ ಉಡುಪಿ ಜಿಪಂ. ‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಭಯಮುಕ್ತ, ಸುರಕ್ಷಿತ ವಾತಾವರಣ ಕಲ್ಪಿಸುವುದರೊಂದಿಗೆ ಅವರನ್ನು ಪುರುಷರಷ್ಟೆ ಸರಿ ಸಮಾನ ರೀತಿಯಲ್ಲಿ ಕಾಣಬೇಕು. ಹೆಣ್ಣು ಮಕ್ಕಳ ಪ್ರಾಮುಖ್ಯತೆಯ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿದಾಗ ಮಾತ್ರ ಲಿಂಗಾನುಪಾತದ ಅಸಮಾನತೆಯನ್ನು ಹೋಗಲಾ ಡಿಸಲು ಸಾಧ್ಯವಾಗುತ್ತದೆ. -ನ್ಯಾ.ಮನು ಪಟೇಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ.

ವಾರ್ತಾ ಭಾರತಿ 18 Feb 2026 9:06 pm

ಸಂಚಾರ ದಟ್ಟಣೆ ನಿರ್ವಹಣೆಗೆ ಉನ್ನತ ಮಟ್ಟದ ಸಮಿತಿ ರಚನೆಗೆ ಕೋರಿದ್ದ ಪಿಐಎಲ್ ಇತ್ಯರ್ಥ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿರ್ವಹಿಸಲು ಹೈಕೋರ್ಟ್‌ ಉಸ್ತುವಾರಿಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಇತ್ಯರ್ಥಪಡಿಸಿದೆ. ವಕೀಲ ಎ.ವಿ. ಅಮರನಾಥನ್‌ ಸಲ್ಲಿಸಿದ್ದ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು ಅರ್ಜಿದಾರೂ ಆದ ವಕೀಲ ಎ.ವಿ. ಅಮರನಾಥನ್ ವಾದ ಮಂಡಿಸಿ, ಬೆಂಗಳೂರು ವಿಶ್ವದಲ್ಲೇ 2ನೇ ಸಂಚಾರ ದಟ್ಟಣೆಯ ನಗರವಾಗಿದ್ದು, ಜನರು ದಿನನಿತ್ಯ ಪರದಾಡುತ್ತಿದ್ದಾರೆ. ಟ್ರಾಫಿಕ್‌ ಬಗ್ಗೆ ತಮ್ಮ ಮಕ್ಕಳೂ ದೂರಿದ್ದಾರೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಆದ್ದರಿಂದ, ಸಂಚಾರದಟ್ಟಣೆ ಪರಿಹಾರಕ್ಕೆ ಹೈಕೋರ್ಟ್‌ ಉಸ್ತುವಾರಿಯಲ್ಲಿ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ನ್ಯಾಯಪೀಠವನ್ನು ಕೋರಿದರು. ವಾದ ಆಲಿಸಿದ ನ್ಯಾಯಪೀಠ, ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ನಿರೀಕ್ಷಿಸುತ್ತೇವೆ. ಈ ವಿಚಾರದಲ್ಲಿ ಕೋರ್ಟ್‌ ನಿರ್ದೇಶನದ ನೀಡುವ ಅಗತ್ಯವಿಲ್ಲ ಎಂದು ತಿಳಿಸಿ, ಅರ್ಜಿ ವಿಲೇವಾರಿ ಮಾಡಿತು.

ವಾರ್ತಾ ಭಾರತಿ 18 Feb 2026 9:02 pm

ನಾಳೆ(ಫೆ.19) ಬಿಜೆಪಿ ರಾಜ್ಯ ಕಾರ್ಯಕಾರಿಣಿ : ಬಿ.ವೈ.ವಿಜಯೇಂದ್ರ

ಬೆಂಗಳೂರು : ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಾಳೆ(ಫೆ.19) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಬುಧವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಪೂರ್ವಸಿದ್ಧತೆ ಬಗ್ಗೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಬೆಳಗ್ಗೆ 8.30ರಿಂದ ರಾಜ್ಯದ ಮೂಲೆಮೂಲೆಗಳಿಂದ ನಮ್ಮ ಪ್ರತಿನಿಧಿಗಳು ಆಗಮಿಸುತ್ತಾರೆ. ಬೆಳಿಗ್ಗೆ 9.45ಕ್ಕೆ ಧ್ವಜಾರೋಹಣ ನೆರವೇರಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿ 1,250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ತಿಳಿಸಿದರು. ಮುಂದೆ ಬಾಗಲಕೋಟೆ, ದಾವಣಗೆರೆ ದಕ್ಷಿಣ, ಉಪ ಚುನಾವಣೆ, ವಿಧಾನಪರಿಷತ್, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಬಿಎ ಚುನಾವಣೆಗಳು ನಡೆಯಲಿವೆ. ಮುಂದಿನ ಆರು ತಿಂಗಳು ಚುನಾವಣಾ ಪರ್ವ ಎನ್ನಬಹುದು. ಈ ನಿಟ್ಟಿನಲ್ಲಿ ಸಂಘಟನೆಯನ್ನು ಸಜ್ಜುಗೊಳಿಸುವುದರ ಬಗ್ಗೆ ಸಮಗ್ರ ಚರ್ಚೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಬಹುತೇಕ 3 ವರ್ಷ ತುಂಬುತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯತೆಗಳಿಂದ ಜನರು ಬೇಸತ್ತಿದ್ದಾರೆ. ರೈತ ವಿರೋಧಿ, ಯುವಜನತೆಯ ವಿರೋಧಿ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಬಹಳ ಗಂಭೀರ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ಈ ನಾಡಿನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಾರ್ವಜನಿಕ ಜೀವನದ 50 ವರ್ಷಗಳನ್ನು ಪೂರೈಸಿದ್ದಾರೆ. ಜನಸಂಘ ಕಾಲದಿಂದ ಅವರು ಮಂಡ್ಯದಿಂದ ಶಿಕಾರಿಪುರಕ್ಕೆ ಹೋಗಿ ಇಲ್ಲಿನವರೆಗೆ ಅವರು ರಾಜ್ಯಕ್ಕೆ ಸೇವೆ ನೀಡಿದ್ದು, ನಗರಕ್ಕೆ ಸೀಮಿತವಾದ ಬಿಜೆಪಿಯನ್ನು ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ಎಲ್ಲ ಹಿರಿಯರ ಸಮ್ಮುಖದಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಲಿದೆ ಎಂದರು. ಬೆದರಿಕೆಗೆ ಹೆದರಲ್ಲ : ಕಸ ತಡೆದರೆ ಅದನ್ನು ವಿಜಯೇಂದ್ರ ಮತ್ತು ಆರ್.ಅಶೋಕ್ ಅವರ ಮನೆ ಮುಂದೆ ಸುರಿಯುವ ಕುರಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, ಆದರೆ, ಈ ರೀತಿಯ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪ್ರೀತಂಗೌಡ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಸೇರಿದಂತೆ ಪ್ರಮುಖರಿದ್ದರು.

ವಾರ್ತಾ ಭಾರತಿ 18 Feb 2026 9:01 pm

Strike: ಸಾರಿಗೆ ನೌಕರರ ಮುಷ್ಕರ ನಡೆಯುತ್ತೋ- ಇಲ್ಲವೋ? ಸರ್ಕಾರದಿಂದ ನೋ ವರ್ಕ್-ನೋ ಪೇ ಆದೇಶ, ಸಚಿವರು ಹೇಳಿದ್ದೇನು?

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 'ಬೆಂಗಳೂರು ಚಲೋ'ಗೆ ಕರೆ ನೀಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರಿಂದ ಗುರುವಾರ (ಫೆ.19) ಸಾರಿಗೆ ಮುಷ್ಕರ ನಡೆಯುತ್ತೋ-ಇಲ್ಲವೋ? ಅಥವಾ ಎಂದಿನಂತೆ ಸಾರಿಗೆ ಸೇವೆ ಸಿಗುತ್ತಾ ಎಂಬ ಗೊಂದಲ ಉಂಟಾಗಿದೆ. ಏಕೆಂದರೆ ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಸಂಸ್ಥೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದರೊಂದಿಗೆ ಮುಷ್ಕರ ಕುರಿತು

ಒನ್ ಇ೦ಡಿಯ 18 Feb 2026 8:59 pm

ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ಖರೀದಿಗಾಗಿ 30 ಕೋಟಿ ರೂ. ಅನುದಾನ ಮಂಜೂರು

ಬೆಂಗಳೂರು : ಸರಕಾರವು ರಾಜ್ಯದ ಸರಕಾರಿ ಆರೋಗ್ಯ ಸಂಸ್ಥೆಗಳಾದ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಇತರೆ ಆರೋಗ್ಯ ಸಂಸ್ಥೆಗಳಿಗೆ ಅಗತ್ಯ ಔಷಧಿಗಳ ಖರೀದಿಗಾಗಿ 30 ಕೋಟಿ ರೂ.ಗಳ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿದೆ. ಬುಧವಾರ ಆರೋಗ್ಯ ಇಲಾಖೆಯು ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ್ಯ ವೈದ್ಯಕೀಯ ಸರಕು ಸರಬರಾಜು ನಿಗಮ ನಿಯಮಿತದ(ಕೆಎಸ್‍ಎಂಎಸ್‍ಸಿಎಲ್) ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ 30 ಕೋಟಿ ರೂ.ಗಳನ್ನು ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ಅಗತ್ಯ ಔಷಧಿಗಳ ಸ್ಥಳೀಯ ಖರೀದಿಗಾಗಿ ಬಳಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. ಕೆಎಸ್‍ಎಂಎಸ್‍ಸಿಎಲ್ ಬ್ಯಾಂಕ್ ಖಾತೆಯಲ್ಲಿ 30 ಕೋಟಿ ರೂ.ಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಖಾತೆಗೆ ವರ್ಗಾಹಿಸಬೇಕು. ನಂತರ ಅಲ್ಲಿಂದ ಸಂಬಂಧಿತ ಸರಕಾರಿ ಆಸ್ಪತ್ರೆಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕೇವಲ ಅತ್ಯಾವಶ್ಯಕ ಔಷಧಿಗಳನ್ನು ಪ್ರಾಥಮಿಕತೆಯ ಆಧಾರದ ಮೇಲೆ ಮಾತ್ರ ಖರೀದಿಸಬೇಕು. ಬಿಡುಗಡೆಮಾಡಲಾದ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸಿ, ಬಳಕೆ ಪ್ರಮಾಣಪತ್ರವನ್ನು ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಿದೆ.

ವಾರ್ತಾ ಭಾರತಿ 18 Feb 2026 8:58 pm

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಪರಮೇಶಗೌಡ ಆಯ್ಕೆ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಹಾಗೂ ರಾಜ್ಯದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಬರೋಬ್ಬರಿ 12 ವರ್ಷಗಳ ಸುದೀರ್ಘ ವಿರಾಮದ ಬಳಿಕ ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಮಾಜ ಸೇವಕರಾದ ಕನಗೋನಹಳ್ಳಿಯ ಪರಮೇಶಗೌಡ ಅವರು ಸಮಿತಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಹಿಂದೆ ನಡೆದಿದ್ದ 'ವಜ್ರಾಂಗಿ' (ವಜ್ರದ ಕಿರೀಟ) ಅವ್ಯವಹಾರದ ಪ್ರಕರಣದಿಂದಾಗಿ ದೇವಾಲಯದ

ಒನ್ ಇ೦ಡಿಯ 18 Feb 2026 8:56 pm

ನಾಳೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳಿಂದ ‘ಬೆಂಗಳೂರು ಚಲೋ’

ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ವಾರ್ತಾ ಭಾರತಿ 18 Feb 2026 8:44 pm

ಕೊಪ್ಪಳ: ಗರ್ಭಿಣಿ ಸಹೋದರಿಯ ಹತ್ಯೆಗೆ ಯತ್ನಿಸಿದ ಅಣ್ಣ

ಕೊಪ್ಪಳ: ನಾಲ್ಕು ತಿಂಗಳ ಗರ್ಭಿಣಿಯಾಗಿರುವ ತಂಗಿಯನ್ನೇ ವ್ಯಕ್ತಿಯೋರ್ವ ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಬೇರೆ ಜಾತಿಯ ಯುವಕನ್ನು ಮದುವೆ ಆಗಿದಕ್ಕೆ ಸ್ವಂತ ತಂಗಿಯನ್ನೇ ಕೊಡಲಿಯಿಂದ ಸಹೋದರ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಚಿತ್ತಾಪುರದ ಮೀನಾಕ್ಷಿ ಗಂಭೀರವಾಗಿ ಗಾಯಗೊಂಡ ಮಹಿಳೆ. ಮಂಜುನಾಥ ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ಕುರುಬ ಜನಾಂಗಕ್ಕೆ ಸೇರಿದ ಯುವತಿ ಮೀನಾಕ್ಷಿ ಮತ್ತು ನಾಯಕ ಸಮುದಾಯಕ್ಕೆ ಸೇರಿದ ಯುವಕನ ಜೊತೆ ಮದುವೆ ಆಗಿದ್ದರು. ಒಂದು ವರ್ಷದಿಂದ ಬೇರೆ ಊರಲ್ಲಿ ವಾಸವಿದ್ದ ಇವರು, ಸಂಬಂಧಿಯ ಮದುವೆ ಇದ್ದ ಕಾರಣ ಊರಿಗೆ ಬಂದಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಆರೋಪಿ ಮಂಜುನಾಥ ಮನೆಯಲ್ಲಿ ಇದ್ದ ಮೀನಾಕ್ಷಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಗಾಬರಿಗೊಂಡ ಯುವತಿ ಮದುವೆ ವೇದಿಕೆಯತ್ತ ಓಡಿ ಬಂದಿದ್ದು, ಈ ವೇಳೆ ವೇದಿಕೆಯ ಮುಂದೆಯೇ ಕೊಡಲಿಯಿಂದ ತಲೆಗೆ, ಬೆನ್ನು ಮತ್ತು ಎಡಗೈಗೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಯುವತಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಆಸ್ಪತ್ರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವೈಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಅವರು ಭೇಟಿ ನೀಡಿ ವಿಚಾರಿಸಿದ್ದಾರೆ.

ವಾರ್ತಾ ಭಾರತಿ 18 Feb 2026 8:43 pm

ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಮೀಫ್ ವಿದ್ಯಾರ್ಥಿಗಳ ಪಥ ಸಂಚಲನಾ ಸ್ಪರ್ಧೆಯ ಫಲಿತಾಂಶ ಪ್ರಕಟ

ಮಂಗಳೂರು, ಫೆ.18: ರಾಷ್ಟೀಯ ಹಬ್ಬಗಳ ಸಂದರ್ಭ ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯಕ್ರಮ ಜರಗಿಸುವಾಗ ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಷ್ಠಾಚಾರ, ಪಥ ಸಂಚಲನೆ, ಗೌರವ ರಕ್ಷೆ ಸ್ವೀಕೃತಿ, ಧ್ವಜಾರೋಹಣ, ಒಗ್ಗೂಡುವಿಕೆ ಇತ್ಯಾದಿ ವಿಚಾರಗಳ ಬಗ್ಗೆ ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಏಕ ರೂಪತೆ ತಂದು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಹಾಗೂ ಕಾರ್ಯಕ್ರಮಗಳು ಸರಕಾರ ನಿಗದಿಪಡಿಸಿದ ಶಿಷ್ಠಾಚಾರದಂತೆ ನಡೆಸುವ ಸಲುವಾಗಿ ಏರ್ಪಡಿಸಲಾದ ಮೀಫ್ ವಿದ್ಯಾರ್ಥಿಗಳ ಪಥ ಸಂಚಲನಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ಮೀಫ್‌ನ 85 ವಿದ್ಯಾ ಸಂಸ್ಥೆಗಳ ಧೈಹಿಕ ಶಿಕ್ಷಕರಿಗೆ ಕಳೆದ ನವೆಂಬರ್‌ನಲ್ಲಿ ಧೈಹಿಕ ಶಿಕ್ಷಣ ಇಲಾಖೆಯ ಪರಿಣಿತರಿಂದ ತರಬೇತಿ ನೀಡಲಾಗಿತ್ತು. ಈ ತರಬೇತಿಯಲ್ಲಿ ನೀಡಲಾದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ ಮಂಗಳೂರು ಹ್ಯಾಟ್‌ಹಿಲ್‌ನ ಬ್ಯಾರೀಸ್ ಪಬ್ಲಿಕ್ ಸ್ಕೂಲ್, ಉಳ್ಳಾಲದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ, ಮುಡಿಪುವಿನ ಝೆನಿತ್ ಆಂಗ್ಲ ಮಾಧ್ಯಮ ಶಾಲೆ, ಉಡುಪಿ ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆ, ಬಜ್ಪೆಯ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ, ಮೂಲ್ಕಿಯ ಎಂ.ಸಿ.ಟಿ. ಪಬ್ಲಿಕ್ ಸ್ಕೂಲ್, ಬಂಟ್ವಾಳ ರಝಾ ನಗರದ ಬುರೂಜ್ ಆಂಗ್ಲ ಮಾಧ್ಯಮ ಶಾಲೆ, ಜೋಕಟ್ಟೆಯ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆ, ತೊಕ್ಕೊಟ್ಟು ಬಬ್ಬುಕಟ್ಟೆಯ ಹಿರಾ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಆಯ್ಕೆ ಸಮಿತಿಯು ಈ ಚಿತ್ರೀಕರಣಗಳನ್ನು ಪರಿಶೀಲಿಸಿ ಅಂತಿಮವಾಗಿ ಉಭಯ ಜಿಲ್ಲಾ ಮಟ್ಟಗಳಲ್ಲಿ ಉಡುಪಿ ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆ (ಪ್ರಥಮ), ಮುಡಿಪುವಿನ ಝೆನಿತ್ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ)ಗೆ ಬಹುಮಾನ ಘೋಷಿಸಿದೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 8:42 pm

ಚಿನ್ನಾಭರಣ ವಾಪಾಸ್ಸು ನೀಡದೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

ಕಾಪು, ಫೆ.18: ಮದುವೆಗೆ ಚಿನ್ನಾಭರಣ ಪಡೆದು, ವಾಪಾಸ್ಸು ನೀಡದೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಟಪಾಡಿಯ ಅವ್ವಮ್ಮ ಎಂಬವರ ನಾದಿನಿ ನಸೀಮಾ ಎಂಬಾಕೆ ವಿವಾಹ ಕಾರ್ಯಕ್ರಮಕ್ಕೆ ಹೋಗಲು ಇದೆ ಎಂದು ನಂಬಿಸಿ ಅವ್ವಮ್ಮ ಅವರ ಚಿನ್ನಾಭರಣಗಳನ್ನು ನಸೀಮಾ ಹಾಗೂ ಅವರ ಜೊತೆಗೆ ಬಂದಿದ್ದ ಆಯಿಶಾ ಮಿಶ್ರೀಯಾ, ಮತ್ತು ರಮೀಜ್ ಎಂಬವರು ತೆಗೆದುಕೊಂಡು ಹೊಗಿದ್ದರು. ಅದೇ ರೀತಿ ಐಫೋನ್ ಮೊಬೈಲ್, ವಾಷಿಂಗ್ ಮಿಷಿನ್‌ನನ್ನು ಖರೀದಿಸುವು ದಾಗಿ ತೆಗೆದುಕೊಂಡು ಹೋಗಿ ಹಣವನ್ನು ನೀಡಿರುವುದಿಲ್ಲ ಎಂದು ದೂರಲಾಗಿದೆ. ಅಲ್ಲದೆ ಸಾಲ ತೆಗೆಸಿಕೊಡುವುದಾಗಿ ನಂಬಿಸಿ ಅವ್ವಮ್ಮ ಅವರಿಂದ ಖಾಲಿ ಚೆಕ್ ಸಂಖ್ಯೆ ಸಹಿ ಪಡೆದು ಚೆಕ್ಕನ್ನು ಪಡೆದುಕೊಂಡು ಸಾಲ ತೆಗೆಸಿಕೊಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಚಿನ್ನವನ್ನು ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ತಿಳಿದು ಅಲ್ಲಿಗೆ ಹೋಗಿ ಮ್ಯಾನೇಜರ್ ಗಿರೀಶ್ ಬಳಿ ವಿಚಾರಿಸಿದರು. ಆಗ ಆತ ಚಿನ್ನವನ್ನು ನಮ್ಮ ಶಾಖೆಯಲ್ಲಿ ಅಡವಿಟ್ಟಿದ್ದು, ಅದನ್ನು ನಾನೇ ಬಿಡಿಸಿಕೊಂಡು ಖರೀದಿಸಿರುವುದಾಗಿ ಹೇಳಿದ್ದಾನೆ. ಈತನ ವರ್ತನೆಯು ಮೇಲ್ನೋಟಕ್ಕೆ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಆರೋಪಿಗಳೊಂದಿಗೆ ಸೇರಿರುವುದು ಕಂಡುಬರುತ್ತದೆಂದು ದೂರಲಾಗಿದೆ. ಅವ್ವಮ್ಮ, ಆರೋಪಿಗಳಲ್ಲಿ ಚಿನ್ನ, ಐಪೋನ್ ಹಾಗೂ ವಾಷಿಂಗ್ ಮಿಷನ್, ಚೆಕ್ಕನ್ನು ಮರಳಿ ನೀಡುವಂತೆ ಕೇಳಿದಾಗ ಅವರೆಲ್ಲ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಒಟ್ಟು 42,71,780ರೂ. ನಷ್ಟ ಉಂಟು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 18 Feb 2026 8:34 pm

Ranji Trophy- 802 ರನ್ ಮುನ್ನಡೆಯಿದ್ದರೂ ಡಿಕ್ಲೇರ್ ಮಾಡದ ಕರ್ನಾಟಕ! ಉತ್ತರಾಖಂಡಕ್ಕೆ ಗೆಲ್ಲುವ ದಾರಿ ಬಂದ್

ಲಖನೌ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಸರ್ವತೋಮುಖ ಪ್ರದರ್ಶನ ತೋರಿರುವ ಕರ್ನಾಟಕ ತಂಡ 503 ರನ್ ಗಳ ಬೃಹತ್ ಪ್ರಥಮ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್ ಟಿಕೆಟ್ ಪಕ್ಕಾ ಮಾಡಿಕೊಂಡಿದೆ. ಉತ್ತರಾಖಂಡ ತಂಡವನ್ನು ಫಾಲೋ ಆನ್ ಹೇರುವ ಎಲ್ಲಾ ಅವಕಾಶಗಳಿದ್ದರೂ 2ನೇ ಇನ್ನಿಂಗ್ಸ್ ಪ್ರಾರಂಬಿಸಿರುವ ದೇವದತ್ ಪಡಿಕ್ಕಲ್ ಬಳಗ ಬುಧವಾರ ನಾಲ್ಕನೇ ದಿನಾಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿದ್ದು ಒಟ್ಟಾರೆ ಪಂದ್ಯದಲ್ಲಿ 802 ರನ್ ಗಳ ಅಗಾಧ ಮುನ್ನಡೆ ಗಳಿಸಿದೆ. ಗುರುವಾರ ಪಂದ್ಯದ ಅಂತಿಮ ದಿನವಾಗಿದ್ದು ಇಷ್ಟು ದೊಡ್ಡ ಮೊತ್ತವನ್ನು ಬೆಂಬತ್ತಿ ಗೆಲುವು ಸಾಧಿಸುವುದು ಅಸಾಧ್ಯ. ಹೀಗಾಗಿ ಪಂದ್ಯ ಡ್ರಾ ಆದರೂ ಪ್ರಥಮ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ತಂಡ ಫೈನಲ್ ಪ್ರವೇಶ ಖಚಿತವಾಗಿದೆ. ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯ ಸಂಪೂರ್ಣ ಏಕಮುಖವಾಗಿ ಸಾಗುತ್ತಿದೆ. ಮುೂರನೇ ದಿನಾಂತ್ಯಕ್ಕೆ 149ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಉತ್ತರಾಖಂಡ ಬುಧವಾರ ಆ ಸ್ಕೋರ್ ಗೆ 84 ರನ್ ಸೇರಿಸುವುದರೊಳಗೆ ಆಲೌಟ್ ಆಯಿತು. ವಿಜಯಕುಮಾರ್ ವೈಶಾಖ್ ಮತ್ತು ವಿದ್ಯಾಧರ್ ಪಾಟೀಲ್ ತಲಾ 3 ವಿಕೆಟ್ ಗಳಿಸಿದರು. ಶ್ರೇಯಸ್ ಗೋಪಾಲ್ 2 ವಿಕೆಟ್ ಎಗರಿಸಿದರು. ಫಾಲೋ ಆನ್ ಹೇರದ ಕರ್ನಾಟಕ ಎದುರಾಳಿ ತಂಡವನ್ನು 233 ರನ್ ಗಳಿಗೆ ಕಟ್ಟಿಹಾಕಿದ ಕರ್ನಾಟಕಕ್ಕೆ 503 ರನ್ ಗಳ ಬೃಹತ್ ಮುನ್ನಡೆ ಸಿಕ್ಕಿದ್ದರೂ ಫಾಲೋ ಆನ್ ಹೇರಲಿಲ್ಲ. ಬದಲಾಗಿ ಎರಡನೇ ಇನ್ನಿಂಗ್ಸ್ ಮುಂದುವರಿಸಿತು. ಮಾಯಾಂಕ್ ಅಗರ್ವಾಲ್ (21) ಅವರ ಜೊತೆ ಆರಂಭಿಕನಾಗಿ ಕಣಕ್ಕಿಳಿದ ವಿಕೆಟ್ ಕೀಪರ್ ಕೃತಿಕ್ ಕೃಷ್ಣ(52) ಎರಡನೇ ಇನ್ನಿಂಗ್ಸ್ ನಲ್ಲೂ ಅರ್ಧಶತಕ ಗಳಿಸಿದರು. ಬಳಿಕ ಶ್ರೇಯಸ್ ಗೋಪಾಲ್ (0), ಕರುಣ್ ನಾಯರ್ (8) ವಿಫಲರಾದರೂ ರವಿಚಂದ್ರನ್ ಸ್ಮರಣ್ ಮತ್ತು ಕೆಎಲ್ ರಾಹುಲ್ ಅವರ ಶತಕದ ಜೊತೆಯಾಟದಿಂದಾಗಿ ಕರ್ನಾಟಕ ತಂಡ ಮುನ್ನಡೆಯನ್ನು 802 ರನ್ ಗಳಿಗೆ ಏರಿಸಿಕೊಂಡಿದೆ. ಅವರು ಎರಡನೇ ಇನ್ನಿಂಗ್ಸ್ ನಲ್ಲೂ 127 ರನ್ ಗಳಿಸಿ ಔಟಾದರು. ಈ ರಣಜಿ ಸೀಸನ್ ನಲ್ಲಿ ಇದು ಅವರ 4ನೇ ಶತಕವಾಗಿದೆ. ಮತ್ತೊಂದೆಡೆ ಕೆಎಲ್ ರಾಹುಲ್ ಅವರು ಅಜೇಯ 70 ರನ್ ಗಳಿಸಿದ್ದು ಗುರುವಾರಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಗುರುವಾರ ಪಂದ್ಯದ ಕೊನೇ ದಿನವಾಗಿದೆ. ಕರ್ನಾಟಕ ಬ್ಯಾಟಿಂಗ್ ಅಭ್ಯಾಸ ನಡೆಸುವ ಇರಾದೆಯಲ್ಲಿದ್ದಂತೆ ಕಾಣುತ್ತಿದ್ದು ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಸಾಧ್ಯತೆ ಕಡಿಮೆ. ದೇವದತ್ ಪಡಿಕ್ಕಲ್ ಇನ್ನೂ ಬ್ಯಾಟಿಂಗ್ ಗೆ ಆಗಮಿಸಿಲ್ಲ. ಹೀಗಾಗಿ ಪಂದ್ಯ ಡ್ರಾ ಆಗುವುದು ಖಚಿತವಾಗಿದೆ. ಮತ್ತೊಂದು ಸೆಮಿಫೈನಲ್ ನಲ್ಲಿ ಬಂಗಾಳದ ವಿರುದ್ಧ ಜಮ್ಮು ಕಾಶ್ಮೀರ 6 ವಿಕೆಟ್ ಗಳ ಜಯ ಸಾಧಿಸಿದ್ದು ಇದೇ ಮೊದಲ ಬಾರಿ ಫೈನಲ್ ತಲುಪಿದೆ. ಹೀಗಾಗಿ ಫೆಬ್ರವರಿ 24ರಂದು ಪಣಜಿಯಲ್ಲಿ ನಡೆಯುವ ಫೈನಲ್ ನಲ್ಲಿ ಜಮ್ಮು ಕಾಶ್ಮೀರ ಮತ್ತು ಕರ್ನಾಟಕಗಳ ನಡುವೆ ಫೈನಲ್ ನಡೆಯುವುದು ಖಚಿತವಾಗಿದೆ. ಸಂಕ್ಷಿಪ್ತ ಸ್ಕೋರ್ ಕರ್ನಾಟಕ ಪ್ರಥಮ ಇನ್ನಿಂಗ್ಸ್ 736, ಕೆಎಲ್ ರಾಹುಲ್ 141, ದೇವದತ್ ಪಡಿಕ್ಕಲ್ 232, ರವಿಚಂದ್ರನ್ ಸ್ಮರಣ್ 135, ಕರುಣ್ ನಾಯರ್ 60, ಕೃತಿಕ್ ಕೃಷ್ಣ 60, ವಿದ್ಯಾಧರ್ ಪಾಟೀಲ್ 54, ಆದಿತ್ಯ ರಾವತ್ 154ಕ್ಕೆ 3, ಮಾಯಾಂಕ್ ಮಿಶ್ರಾ 173ಕ್ಕೆ 3. ಉತ್ತರಾಖಂಡ ಪ್ರಥಮ ಇನ್ನಿಂಗ್ಸ್ 233, ಲಕ್ಷ್ಯ ರೈಚಂದನಿ 55, ಆದಿತ್ಯ ರಾವತ್ ನಾಟೌಟ್ 45, ಜಗದೀಶ್ ಸುಚೇತ್ 21, ವಿದ್ಯಾಧರ್ ಪಾಟೀಲ್ 40ಕ್ಕೆ 3, ವಿಜಯಕುಮಾರ್ ವೈಶಾಖ್ 45ಕ್ಕೆ 3, ಶ್ರೇಯಸ್ ಗೋಪಾಲ್ 41ಕ್ಕೆ 2. ಕರ್ನಾಟಕ ದ್ವಿತೀಯ ಇನ್ನಿಂಗ್ಸ್ 299/6, ರವಿಚಂದ್ರನ್ ಸ್ಮರಣ್ 127, ಕೆಎಲ್ ರಾಹುಲ್ ಅಜೇಯ 70, ಕೃತಿಕ್ ಕೃಷ್ಣಾ 52, ಆಭಯ್ ನೇಗಿ 53ಕ್ಕೆ 2, ಮಾಯಾಂಕ ಮಿಶ್ರಾ 57ಕ್ಕೆ 2.

ವಿಜಯ ಕರ್ನಾಟಕ 18 Feb 2026 8:27 pm

ಫೇಸ್‌ಬುಕ್‌ನಲ್ಲಿ ಸ್ನೇಹ: ಮಹಿಳೆಗೆ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು

ಉಡುಪಿ: ಫೇಸ್‌ಬುಕ್ ಮೂಲಕ ಸ್ನೇಹ ಬೆಳಸಿ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಣಿ(37) ಎಂಬವರಿಗೆ ಫೆ.4ರಂದು ಫೇಸ್ ಬುಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯೊಬ್ಬ ಸಂದೇಶ ಕಳುಹಿಸಿದ್ದು ನಂತರ ರಾಣಿ ಹಾಗೂ ಅಪರಿಚಿತ ವ್ಯಕ್ತಿಗಳು ಮೆಸೆಂಜರ್ ಹಾಗೂ ವಾಟ್ಯಾಪ್ ಮೂಲಕ ಚಾಟ್ ಮಾಡುತ್ತಿದ್ದರು. ಫೆ.8ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ಚಿನ್ನಾಭರಣ, ಮೊಬೈಲ್ ಹಾಗೂ ಇತರೇ ವಸ್ತುಗಳನ್ನು ಕಳುಹಿಸಿ ಕೊಡುವುದಾಗಿ ತಿಳಿಸಿದ್ದು, ಈ ಪಾರ್ಸೆಲ್‌ನಲ್ಲಿ ಡಾಲರ್ ಇರುವುದರಿಂದ ಅದಕ್ಕಾಗಿ 45,000ರೂ. ಹಣ ಪಾವತಿಸಬೇಕು ಎಂದು ತಿಳಿಸಿದ್ದನು. ಅದನ್ನು ನಂಬಿದ ರಾಣಿ, ಅಪರಿಚಿತನ ಖಾತೆಗೆ ಹಣ ಹಾಕಿದ್ದರು. ಬಳಿಕ ಅಪರಿಚಿತ ಕರೆ ಹಾಗೂ ಮೆಸೇಜ್ ಮೂಲಕ ಟ್ಯಾಕ್ಸ್ ಹಾಗೂ ಇತರೇ ಶುಲ್ಕ ಪಾವತಿ ಮಾಡುವಂತೆ ತಿಳಿಸಿದ್ದು, ಅದನ್ನು ಕೂಡ ನಂಬಿದ ರಾಣಿ, ತಮ್ಮ ಖಾತೆಯಿಂದ ಹಂತ ಹಂತವಾಗಿ ಒಟ್ಟು 7,10,000ರೂ. ಹಣವನ್ನು ಅಪರಿಚಿತನ ಖಾತೆಗೆ ವರ್ಗಾವಣೆ ಮಾಡಿದ್ದರು. ನಂತರವೂ ಅಪರಿಚಿತ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಇದರಿಂದ ಆತ ಮೋಸ ಮಾಡು ತ್ತಿರುವುದು ರಾಣಿ ಗಮನಕ್ಕೆ ಬಂತೆನ್ನಲಾಗಿದೆ.

ವಾರ್ತಾ ಭಾರತಿ 18 Feb 2026 8:27 pm

ಕೃಷಿಕ ನಾಪತ್ತೆ

ಕೋಟ, ಫೆ.18: ಕೃಷಿ ಮತ್ತು ಹೈನುಗಾರಿಕೆ ಕೆಲಸಮಾಡಿಕೊಂಡಿದ್ದ ಅಚ್ಲಾಡಿಯ ವಿಜಯ(38) ಎಂಬವರು ಫೆ.16ರಂದು ರಾತ್ರಿ ಸಾಸ್ತಾನದಲ್ಲಿರುವ ಅಣ್ಣನ ಮನೆಯಲ್ಲಿ ಬೈಕ್ ಇಟ್ಟು ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 18 Feb 2026 8:24 pm

ಕಂಟೈನರ್‌ - ಬೈಕ್ ಢಿಕ್ಕಿ: ಸವಾರ ಮೃತ್ಯು

ಗಂಗೊಳ್ಳಿ, ಫೆ.18: ಇಲ್ಲಿನ ಮರವಂತೆ ಯೂ ಟರ್ನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫೆ.17ರಂದು ಬೆಳಗ್ಗೆ ಬೈಕೊಂದು ಕಂಟೈನರ್ ಲಾರಿಯ ಚಕ್ರದಡಿಗೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಜೈರಾಮ ಬೈರು ಕಾತ್ರೋಟ ಎಂದು ಗುರುತಿಸಲಾಗಿದೆ. ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿಯ ಹಿಂದುಗಡೆಯಿಂದ ಬಂದ ಬೈಕ್, ಲಾರಿಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್, ಲಾರಿಯ ಹಿಂದಿನ ಟಯರ್‌ಗೆ ತಾಗಿತ್ತೆನ್ನಲಾಗಿದೆ. ಇದರಿಂದ ಬೈಕ್ ರಸ್ತೆಗೆ ಬಿದ್ದು, ಸವಾರ ಲಾರಿಯ ಹಿಂಬದಿಯ ಚಕ್ರದಡಿ ಸಿಲುಕಿ ಕೊಂಡರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 18 Feb 2026 8:23 pm

ಸೈಕಲ್‌ನಿಂದ ಬಿದ್ದು ಸವಾರ ಮೃತ್ಯು

ಕೋಟ, ಫೆ.18: ಸೈಕಲ್‌ನಿಂದ ಬಿದ್ದು ಸವಾರರೊಬ್ಬರು ಮೃತಪಟ್ಟ ಘಟನೆ ಫೆ.18ರಂದು ಬೆಳಗ್ಗೆ 8.30ರ ಸುಮಾರಿಗೆ ಸಾಲಿಗ್ರಾಮದ ಡಿವೈನ್ ಪಾರ್ಕ್ ಬಳಿ ನಡೆದಿದೆ. ಮೃತರನ್ನು ಮೂಡಹಡು ಗ್ರಾಮದ ನಾರಾಯಣ ಪೂಜಾರಿ(69) ಎಂದು ಗುರುತಿಸಲಾಗಿದೆ. ಮೇಸ್ತ್ರಿ ಕೆಲಸ ಮಾಡಿ ಕೊಂಡಿದ್ದ ಇವರು ಸೈಕಲ್‌ನಲ್ಲಿ ಕೆಲಸಕ್ಕೆ ಹೊರಟಿದ್ದರು. ದಾರಿ ಮಧ್ಯೆ ತಲೆ ತಿರುಗಿ ಸೈಕಲ್‌ನಿಂದ ಬಿದ್ದರೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 18 Feb 2026 8:20 pm

ಆರ್ಥಿಕ ಬಿಕ್ಕಟ್ಟು: ಸಂಸದರಿಗೆ ಪಿಂಚಣಿ ಸೌಲಭ್ಯ ರದ್ದತಿಗೆ ಶ್ರೀಲಂಕಾ ನಿರ್ಧಾರ

ಕೊಲಂಬೊ, ಫೆ.18: ದೀರ್ಘಕಾಲದಿಂದ ದೇಶವನ್ನು ಕಂಗೆಡಿಸಿರುವ ಆರ್ಥಿಕ ಬಿಕ್ಕಟ್ಟನ್ನು ನಿಯಂತ್ರಿಸುವ ಉದ್ದೇಶದ ಸರಣಿ ಉಪಕ್ರಮಗಳ ಭಾಗವಾಗಿ ರಾಜಕಾರಣಿಗಳ ಸವಲತ್ತುಗಳನ್ನು ಕಡಿಮೆಗೊಳಿಸಲು ಮತ್ತು ಸಂಸದರಿಗೆ ಪಿಂಚಣಿ ಸೌಲಭ್ಯವನ್ನು ರದ್ದುಗೊಳಿಸಲು ಶ್ರೀಲಂಕಾದ ಸಂಸತ್ತು ನಿರ್ಧರಿಸಿದೆ. ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯನ್ನು 225 ಸದಸ್ಯ ಬಲದ ಸಂಸತ್ತು 154-2 ಮತಗಳಿಂದ ಅನುಮೋದಿಸಿದೆ. 69 ಸದಸ್ಯರು ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ವರದಿಯಾಗಿದೆ. ` ಇದುವರೆಗಿನ ವ್ಯವಸ್ಥೆಯಂತೆ, ಐದು ವರ್ಷದ ಅವಧಿ ಪೂರೈಸಿದ ಸಂಸತ್ ಸದಸ್ಯರು ಪಿಂಚಣಿಗೆ ಅರ್ಹರು. ಅಲ್ಲದೆ ಸಂಸದರಿಗೆ ಇತರ ಹಲವು ಸವಲತ್ತುಗಳು ಲಭಿಸುತ್ತವೆ. ಆದರೆ ಇತರ ಸಾರ್ವಜನಿಕ ಉದ್ಯೋಗಿಗಳ ನಿಯಮಗಳಿಗೆ ಹೋಲಿಸಿದರೆ ಇದು ತೀರಾ ವಿಪರೀತವಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಹೊಸ ಕಾನೂನು ತಕ್ಷಣದಿಂದಲೇ ಜಾರಿಯಾಗುತ್ತದೆ ಮತ್ತು ಈಗಾಗಲೇ ಪಿಂಚಣಿ ಪಡೆಯುತ್ತಿದ್ದವರೂ ಸೇರಿದಂತೆ ಸಂಸದರ ಪಿಂಚಣಿ ಸೌಲಭ್ಯ ರದ್ದಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾರ್ತಾ ಭಾರತಿ 18 Feb 2026 8:20 pm

ಸಂಶೋಧನಗೆ ವಿಶ್ವವಿದ್ಯಾಲಯಗಳಿಂದ ಹೆಚ್ಚೆಚ್ಚು ಪ್ರೋತ್ಸಾಹ: ಪಾದೆಕಲ್ಲು

ಉಡುಪಿ, ಫೆ.18: ಇಂದು ಸಂಶೋಧನಗೆ ವಿಶ್ವವಿದ್ಯಾಲಯಗಳು ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿವೆ. ಆದುದರಿಂದ ಸಂಶೋಧನ ಕಾರ್ಯಕ್ಕೆ ಪೂರ್ವ ಸಿದ್ಧತೆಯು ಅತಿ ಅಗತ್ಯವಾಗಿದೆ ಎಂದು ಕನ್ನಡ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣುಭಟ್ ಹೇಳಿದ್ದಾರೆ. ಮಾಹೆ ವಿವಿಯ ಮಣಿಪಾಲ ಯುನಿವರ್ಸಲ್ ಪ್ರೆಸ್ ಹೊರ ತಂದಿರುವ 315ನೇ ಪ್ರಕಟನೆಯ ಪು.ಶ್ರೀನಿವಾಸ ಭಟ್ ಕಟೀಲು ಲೇಖನಗಳ ಸಂಪುಟ ಶ್ರೀಸಂಸ್ಕೃತ ಸಂಪದವನ್ನು ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು. ಪ್ರಸ್ತುತ ಸಂಶೋಧನೆಗಳಿಗೆ ಹಲವಾರು ಕ್ರಮಗಳಿವೆ. ಆದರೆ ಹಿಂದಿನ ಸಂಶೋಧನೆಗಳ ಸಂದರ್ಭದಲ್ಲಿ ಯಾವುದೇ ವಿಶ್ವವಿದ್ಯಾನಿಲಯ, ಉತ್ತಮ ವಾತಾವರಣ, ಆರ್ಥಿಕ ಬಲ ಇರಲಿಲ್ಲ. ಆದರೂ ಅನೇಕ ಮಂದಿ ಸಂಶೋಧನೆ ಮಾಡಿದ್ದಾರೆ ಎಂದರು. ಸಂಪಾದಕ ಡಾ.ಪ್ರಭಾಕರ ಜೋಷಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯ ಒಂದಷ್ಟು ಇತಿಹಾಸಗಳು ಹಾಗೂ ಯಕ್ಷಗಾನ ಪ್ರಸಂಗ ಸಾಹಿತ್ಯದ ಮೂಲಗಳು ಈ ಪುಸ್ತಕದಲ್ಲಿ ಅಡಕವಾಗಿವೆ. ಪು.ಶ್ರೀನಿವಾಸ ಭಟ್ ಅವರು ಪುಸ್ತಕ ಗಳ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಯಾರಿಗೂ ಪುಸ್ತಕ ನೀಡುತ್ತಿರಲಿಲ್ಲ ಎಂದು ಹೇಳಿದರು. ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಹಾರೈಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಇನ್ನೋರ್ವ ಸಂಪಾದಕ ಪು.ಗುರುಪ್ರಸಾದ್ ಭಟ್‌ ಉಪಸ್ಥಿತರಿದ್ದರು. ಡಾ.ಶ್ರೀನಿವಾಸ ಆಚಾರ್ಯ ಸ್ವಾಗತಿಸಿದರು. ಪ್ರತಿಮಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 18 Feb 2026 8:18 pm

ಆರೆಸ್ಸೆಸ್ ಮೊದಲು ರಾಷ್ಟ್ರದ ನಿಯಮದಂತೆ ನೋಂದಣಿ ಮಾಡಿಕೊಳ್ಳಲಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಷ್ಟ್ರದ ನಿಯಮಗಳನ್ನು ಪಾಲಿಸುವವರನ್ನು ರಾಷ್ಟ್ರೀಯವಾದಿಗಳು ಎನ್ನಬಹುದು, ಆರೆಸ್ಸೆಸ್ ಮೊದಲು ರಾಷ್ಟ್ರದ ನಿಯಮದಂತೆ ನೋಂದಣಿ ಮಾಡಿಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ರಾಷ್ಟ್ರದ ಕಾನೂನಿನ ಪ್ರಕಾರ ಆದಾಯ ತೆರಿಗೆ ಪಾವತಿಸಿ, ತಮಗೆ ಒದಗಿ ಬಂದ ನಿಧಿಯ ಕುರಿತು ರಾಷ್ಟ್ರಕ್ಕೆ ಪಾರದರ್ಶಕ ಮಾಹಿತಿಯನ್ನು ಒದಗಿಸುವವರನ್ನು ರಾಷ್ಟ್ರೀಯವಾದಿ ಸಂಸ್ಥೆ ಎನ್ನಬಹುದು, ಆರೆಸ್ಸೆಸ್ ಮೊದಲು ರಾಷ್ಟ್ರದ ಈ ಕಾನೂನಿನಂತೆ ನಡೆದುಕೊಳ್ಳಲಿ ಎಂದು ಹೇಳಿದ್ದಾರೆ. ರಾಷ್ಟ್ರದ ಲಾಂಚನಗಳನ್ನು, ರಾಷ್ಟ್ರದ ಗೀತೆಯನ್ನು ಗೌರವಿಸುವವರನ್ನು, ರಾಷ್ಟ್ರದ ಸಂವಿಧಾನವನ್ನು ಪುರಸ್ಕರಿಸುವವರನ್ನು ರಾಷ್ಟ್ರೀಯವಾದಿಗಳು ಎನ್ನಬಹುದು, ಆರೆಸ್ಸೆಸ್ ಮೊದಲು ರಾಷ್ಟ್ರದ ಪರಿಕಲ್ಪನೆಯನ್ನು ಗೌರಿಸುವುದನ್ನು ಕಲಿಯಲಿ ಎಂದು ಅವರು ಕಿವಿ ಮಾತು ಹೇಳಿದ್ದಾರೆ. ರಾಷ್ಟ್ರದ ವ್ಯಾಧಿಯಂತೆ ವರ್ತಿಸುವವರನ್ನು ರಾಷ್ಟ್ರವಾದಿಗಳೆಂದು ಕರೆಯುವುದು ರಾಷ್ಟ್ರಕ್ಕೆ ಮಾಡುವ ಅವಮಾನ. ಆರೆಸ್ಸೆಸ್ ಮತ್ತು ಬಿಜೆಪಿ ಮೊದಲು ದೇಶಕ್ಕೆ ಭಕ್ತಿ ತೋರುವುದನ್ನು ಕಲಿತು ನಂತರ ದೇಶಭಕ್ತಿಯ ಪಾಠ ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. - ರಾಷ್ಟ್ರದ ನಿಯಮಗಳನ್ನು ಪಾಲಿಸುವವರನ್ನು ರಾಷ್ಟ್ರೀಯವಾದಿಗಳು ಎನ್ನಬಹುದು, RSS ಮೊದಲು ರಾಷ್ಟ್ರದ ನಿಯಮದಂತೆ ನೋಂದಣಿ ಮಾಡಿಕೊಳ್ಳಲಿ. - ರಾಷ್ಟ್ರದ ಕಾನೂನಿನ ಪ್ರಕಾರ ಆದಾಯ ತೆರಿಗೆ ಪಾವತಿಸಿ, ತಮಗೆ ಒದಗಿ ಬಂದ ನಿಧಿಯ ಕುರಿತು ರಾಷ್ಟ್ರಕ್ಕೆ ಪಾರದರ್ಶಕ ಮಾಹಿತಿಯನ್ನು ಒದಗಿಸುವವರನ್ನು ರಾಷ್ಟ್ರೀಯವಾದಿ ಸಂಸ್ಥೆ ಎನ್ನಬಹುದು, RSS ಮೊದಲು… https://t.co/i0YuR7WYl6 pic.twitter.com/HaOc4HyflR — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 18, 2026

ವಾರ್ತಾ ಭಾರತಿ 18 Feb 2026 8:17 pm

ಕಲಬುರಗಿ | ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಮೃತ್ಯು

ಕಲಬುರಗಿ: ಮನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಹೋಗಿ ಇಬ್ಬರು ಮೃತಪಟ್ಟಿರುವ ಘಟನೆ ಹೀರಾಪೂರ ಪ್ರದೇಶದ ಬಬಲಾದ ರಸ್ತೆ ಸಮೀಪ ಮಾದರಸನಹಳ್ಳಿಯಲ್ಲಿ ಬುಧವಾರ ನಡೆದಿದೆ. ಹೀರಾಪೂರ ವ್ಯಾಪ್ತಿಯ ಮಾದರಸನಹಳ್ಳಿಯ ನಿವಾಸಿ ಆಗಿರುವ ಮನೆ ಮಾಲಕ ಶಿವಕುಮಾರ್ ನಂದುರಕರ(51) ಹಾಗೂ ಅವರ ಗೆಳೆಯ ಎನ್ನಲಾಗುತ್ತಿರುವ ಇಂದಿರಾ ನಗರದ ನಿವಾಸಿ ರತನ್ ಹೊಟ್ಕರ್ (58) ಮೃತಪಟ್ಟವರು ಎಂದು ತಿಳಿದುಬಂದಿದೆ. ಶಿವಕುಮಾರ್ ನಂದುರಕರ ಹಾಗೂ ರತನ್ ಹೊಟ್ಕರ್ ಇಬ್ಬರು ಸ್ನೇಹಿತರಾಗಿದ್ದು, ಆಗಾಗ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದರು ಎನ್ನಲಾಗಿದೆ. ಅದರಂತೆಯೇ ಮೃತ ಶಿವಕುಮಾರ್ ಅವರ ಮನೆ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಗೆ ಬುಧವಾರ ಬೆಳಗ್ಗೆ ಇಳಿದಿದ್ದರು ಎನ್ನಲಾಗಿದ್ದು, ಈ ವೇಳೆ ಉಸಿರುಗಟ್ಟಿ ಹೊರಗಡೆ ಬರಲಾರದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 18 Feb 2026 8:17 pm

ಎಪ್ಸ್ಟೀನ್ ಕಡತಗಳಲ್ಲಿ ಉಲ್ಲೇಖಿಸಿರುವ ಅಂಶ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಕಾರಣವಾಗಬಹುದು: ವಿಶ್ವಸಂಸ್ಥೆ ಸಮಿತಿ ವರದಿ

ವಿಶ್ವಸಂಸ್ಥೆ, ಫೆ.18: ಲೈಂಗಿಕ ಅಪರಾಧಿ ಜೆಫ್ರೀ ಎಪ್ಸ್ಟೀನ್‍ಗೆ ಸಂಬಂಧಿಸಿದ ಹೊಸದಾಗಿ ಬಿಡುಗಡೆಯಾದ ಫೈಲ್‍ಗಳಲ್ಲಿ ಉಲ್ಲೇಖಿಸಿರುವ ಅಂಶಗಳು ಮಾನವೀಯತೆಯ ವಿರುದ್ದದ ಅಪರಾಧಗಳಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ನೇಮಿಸಿರುವ ಸ್ವತಂತ್ರ ತಜ್ಞರ ಸಮಿತಿ ಹೇಳಿದೆ. ಅಮೆರಿಕದ ನ್ಯಾಯಾಂಗ ಇಲಾಖೆ ಸಾರ್ವಜನಿಕಗೊಳಿಸಿರುವ ವಿಷಯಗಳು ಆಪಾದಿತ ಅಪರಾಧಗಳು ಸರ್ವಾಧಿಕಾರದ ಸಿದ್ದಾಂತಗಳು, ವರ್ಣಭೇದ ನೀತಿ, ಬೇರೂರಿರುವ ಭ್ರಷ್ಟಾಚಾರ ಮತ್ತು ತೀವ್ರ ಸ್ತ್ರೀದ್ವೇಷದಿಂದ ರೂಪುಗೊಂಡ ವಿಶಾಲ ಸಂಸ್ಕೃತಿಯೊಳಗೆ ಸಂಭವಿಸಿರುವುದನ್ನು ಸೂಚಿಸುತ್ತದೆ. ದಾಖಲಿತ ನಿಂದನೆಯು ಮಹಿಳೆಯರು ಮತ್ತು ಯುವತಿಯರ ಘನತೆ, ಸಹಾನುಭೂತಿ ಮತ್ತು ಪ್ರತ್ಯೇಕತೆಯನ್ನು ಕಸಿದುಕೊಳ್ಳುವ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಜ್ಞರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರ ವಿರುದ್ದದ ಈ ದೌರ್ಜನ್ಯಗಳ ಪ್ರಮಾಣ, ಸ್ವರೂಪ, ವ್ಯವಸ್ಥಿತ ವಿಧಾನ ಮತ್ತು ದೇಶೀಯ ವ್ಯಾಪ್ತಿಯು ತೀವ್ರ ಗಂಭೀರವಾಗಿದ್ದು ಮಾನವೀಯತೆಯ ವಿರುದ್ದದ ಅಪರಾಧದ ಕಾನೂನು ಮಿತಿಯನ್ನು ಸಮಂಜಸವಾಗಿ ಪೂರೈಸಬಹುದು ಎಂದು ತಜ್ಞರು ಹೇಳಿದ್ದು ದಾಖಲೆಗಳಲ್ಲಿ ವಿವರಿಸಿರುವ ಅಪರಾಧಗಳ ಬಗ್ಗೆ ಸಮಗ್ರ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಎಪ್ಸ್ಟ್ರೀನ್ ಫೈಲ್‍ಗಳ ಬಿಡುಗಡೆಯು ಕಳೆದ ನವೆಂಬರ್‌ನಲ್ಲಿ ಅಮೆರಿಕದ ಸಂಸತ್ತು ಅನುಮೋದಿಸಿದ ಕಾನೂನನ್ನು ಅನುಸರಿಸುತ್ತದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಬಿಡುಗಡೆಯನ್ನು ಕಡ್ಡಾಯಗೊಳಿಸುತ್ತದೆ. ಆದರೆ ಗಂಭೀರ ಅನುಸರಣೆ ವೈಫಲ್ಯಗಳು ಮತ್ತು ದೋಷಪೂರಿತ ಪರಿಷ್ಕರಣೆ(ತಿದ್ದುಪಡಿ) ಬಲಿಪಶುಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ಕಾರಣವಾಗುತ್ತದೆ. ಇದುವರೆಗೆ 1,200ಕ್ಕೂ ಹೆಚ್ಚು ಬಲಿಪಶುಗಳನ್ನು ಗುರುತಿಸಲಾಗಿದೆ. ಮಾಹಿತಿಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು ಅಥವಾ ತನಿಖೆಗಳನ್ನು ವಿಸ್ತರಿಸಲು ಇಷ್ಟವಿಲ್ಲದಿರುವುದು ಹಲವು ಸಂತ್ರಸ್ತರನ್ನು ಮತ್ತೆ ಆಘಾತಕ್ಕೆ ಮತ್ತು `ಸಾಂಸ್ಥಿಕ ಗ್ಯಾಸ್‍ಲೈಟಿಂಗ್'ಗೆ (ಬಲಿಪಶುಗಳ ಆತ್ಮವಿಶ್ವಾಸವನ್ನು ಕುಗ್ಗಿಸುವ ಗುರಿ ಹೊಂದಿರುವ ತಂತ್ರ. ಬಲಿಪಶುಗಳು ಗೊಂದಲಕ್ಕೊಳಗಾಗುತ್ತಾರೆ, ಅಸುರಕ್ಷಿತರಾಗುತ್ತಾರೆ ಮತ್ತು ನಿರಂತರ ಕ್ಷಮೆ ಯಾಚಿಸುವಂತೆ ಮಾಡುವ ತಂತ್ರ) ಗುರಿಯಾಗಿಸಿದೆ ಎಂದು ವಿಶ್ವಸಂಸ್ಥೆ ನೇಮಿಸಿದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗ ಇಲಾಖೆಯು ಬಹಿರಂಗಪಡಿಸಿದ ದಾಖಲೆಗಳು ರಾಜಕೀಯ, ಹಣಕಾಸು, ಶೈಕ್ಷಣಿಕ ಮತ್ತು ವ್ಯವಹಾರ ಕ್ಷೇತ್ರದಲ್ಲಿನ ಪ್ರಭಾವೀ ವ್ಯಕ್ತಿಗಳೊಂದಿಗೆ ಎಪ್ಸ್ಟೀನ್ ಹೊಂದಿದ್ದ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿದೆ. ಲೈಂಗಿಕ ಅಪರಾಧ, ವೇಶ್ಯಾವಾಟಿಕೆ ಸಂಬಂಧಿತ ಆರೋಪದ ವಿಚಾರಣೆ ಎದುರಿಸುತ್ತಿದ್ದ ಎಪ್ಸ್ಟ್ರೀನ್ ನ್ಯೂಯಾರ್ಕ್ ಜೈಲಿನಲ್ಲಿ 2019ರಲ್ಲಿ ಮೃತಪಟ್ಟಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ವಾರ್ತಾ ಭಾರತಿ 18 Feb 2026 8:14 pm

ಶಕ್ತಿ ಯೋಜನೆ; ಸಾರಿಗೆ ನಿಗಮಗಳಿಗೆ ಸರಕಾರ ಪಾವತಿಸಬೇಕಿರುವ ಬಾಕಿ ಹಣದ ವಿವರ ಕೇಳಿದ ಹೈಕೋರ್ಟ್‌

ಬೆಂಗಳೂರು : ಮಹಿಳೆಯರಿಗೆ ಉಚಿತ ಬಸ್‌ ಸೇವೆ ಕಲ್ಪಿಸುತ್ತಿರುವ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಭಾಗವಾಗಿ ಸಾರಿಗೆ ನಿಗಮಗಳಿಗೆ ಎಷ್ಟು ಹಣವನ್ನು ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದೆ ಎಂಬ ಕುರಿತು ಮಾಹಿತಿ ನೀಡುವಂತೆ ಸಾರಿಗೆ ನಿಗಮಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಮೃತಪಟ್ಟ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಿಬ್ಬಂದಿಗೆ ತಲಾ 30 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ದಾವಣಗೆರೆಯ ತಾಹೀರ್‌ ಹುಸೇನ್‌ ಮತ್ತು ರಾಯಚೂರಿನ ಅಜೀಜ್‌ ಪಾಷಾ ಜಾಗೀರದಾರ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರ ವಕೀಲರು, ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟ ಸಿಬ್ಬಂದಿಗೆ ಪರಿಹಾರ ಪಾವತಿಸಲು ನಿಗಮಗಳ ಬಳಿ ಹಣವಿಲ್ಲ. ಅಲ್ಲದೇ, ಯಾವುದೇ ಸಂಪನ್ಮೂಲವೂ ಇಲ್ಲ. ನಿಗಮಗಳು ನಷ್ಟದಲ್ಲಿ ನಡೆಯುತ್ತಿದ್ದು, ಕರೊನಾ ಸಂದರ್ಭದಲ್ಲಿ ಸರಕಾರ ನೆರವು ನೀಡಿದ್ದರಿಂದ ವೇತನ ಪಾವತಿಸಲು ಸಾಧ್ಯವಾಗಿತ್ತು. ಅಲ್ಲದೇ, ಪರಿಹಾರ ಪಾವತಿ ಸಂಬಂಧ ಸರಕಾರ ಹೊರಡಿಸಿದ್ದ ನಿರ್ಣಯ ಜಾರಿಗೊಳಿಸದಿರಲು ನಿಗಮಗಳು ನಿರ್ಧರಿಸಿವೆ ಎಂದರು. ಆಗ ನ್ಯಾಯಪೀಠ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅಪಾರ ಪ್ರಮಾಣದಲ್ಲಿ ಉಚಿತ ಬಸ್‌ ಸೇವೆ ನೀಡಲಾಗುತ್ತಿದೆ. ಉಚಿತ ಟಿಕೆಟ್‌ ನೀಡಲಾಗುತ್ತಿದೆಯಲ್ಲ, ಅದು ಹೇಗೆ ಕೆಲಸ ಮಾಡುತ್ತಿದೆ? ಇದುವರೆಗೆ ಸರಕಾರ ಎಷ್ಟು ಹಣ ಬಿಡುಗಡೆ ಮಾಡಿದೆ? ಈ ಹಣ ಪಡೆದು ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಾವತಿಸಬಹುದಲ್ಲವೇ? ಪರಿಹಾರ ಪಾವತಿಸಲು ಸಂಪನ್ಮೂಲ ಇಲ್ಲ ಎನ್ನುತ್ತಿದ್ದೀರಿ. ರಾಜ್ಯ ಸರಕಾರ ನಿಗಮಗಳಿಗೆ ಎಷ್ಟು ಉಚಿತ ಟಿಕೆಟ್‌ ಹಣ ಕೊಡಬೇಕು? ಶಕ್ತಿ ಯೋಜನೆಯಡಿ ಸರಕಾರ ಎಷ್ಟು ಬಾಕಿ ಉಳಿಸಿಕೊಂಡಿದೆ? ಅದು ನಿಮ್ಮ ಸಂಪನ್ಮೂಲವೇ ಅಲ್ಲವೇ? ಎಂದು ಪ್ರಶ್ನಿಸಿತು. ಅಂತಿಮವಾಗಿ ನ್ಯಾಯಪೀಠ, ಶಕ್ತಿ ಯೋಜನೆಯಡಿ ಸರಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ ಮತ್ತು ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟ ಸರಕಾರಿ ಉದ್ಯೋಗಿಗಳಿಗೆ ಪರಿಹಾರ ನೀಡುವ ಕುರಿತಾದ ಯೋಜನೆಯನ್ನು (ಸ್ಕೀಮ್) ನ್ಯಾಯಾಲಯಕ್ಕೆ ದಾಖಲೆಯಲ್ಲಿ ಸಲ್ಲಿಸಬೇಕು. ಏಳು ಕುಟುಂಬಗಳಿಗೆ ಪರಿಹಾರ ನೀಡಿ ಉಳಿದವರಿಗೆ ನೀಡದೇ ತಾರತಮ್ಯ ಮಾಡಲಾಗದು ಎಂದು ತಿಳಿಸಿ, ಅರ್ಜಿ ವಿಚಾರಣೆಯನ್ನು ಮಾರ್ಚ್‌ 23ಕ್ಕೆ ಮುಂದೂಡಿತು. ಅರ್ಜಿದಾರರ ವಾದವೇನು? ಇದಕ್ಕೂ ಮುನ್ನ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಕೋವಿಡ್‌ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಕೆಲಸ ಮಾಡುವಂತೆ ಬಲವಂತ ಮಾಡಲಾಗಿದೆ. ಈ ಸಂದರ್ಭದಲ್ಲಿ ಮೃತಪಟ್ಟ ಏಳು ಮಂದಿಯ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಈ ಸಂಬಂಧ ನಿರ್ಣಯ ಹೊರಡಿಸಲಾಗಿದೆ. ನಿರ್ಣಯ ಹೊರಡಿಸಿ, ಆನಂತರ ಅದನ್ನು ಹಿಂಪಡೆಯಲಾಗದು. ಕೋವಿಡ್‌ ಸಂದರ್ಭದಲ್ಲಿ ಶಿಕ್ಷಕರು ಮುಂಚೂಣಿ ಆರೋಗ್ಯ ಕಾರ್ಯಕರ್ತರಾಗಿರಲಿಲ್ಲ. ಆದರೂ, ಅವರಿಗೆ ಯೋಜನೆ ವಿಸ್ತರಿಸಿ, ಪರಿಹಾರ ಪಾವತಿಸಲಾಗಿದೆ. ಆದರೆ, ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ಪಾವತಿಸಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು. ಪರಿಹಾರ ನೀಡಲು ಹಣವಿಲ್ಲ: ಸಾರಿಗೆ ನಿಗಮಗಳ ಪರ ವಕೀಲರು, ಕೋವಿಡ್‌ ಸಂದರ್ಭದಲ್ಲಿ ಸಾರಿಗೆ ನಿಗಮಗಳ ಹಣಕಾಸು ಸ್ಥಿತಿಯು ದಯನೀಯ ಸ್ಥಿತಿ ತಲುಪಿದ್ದು, ಎರಡು ವರ್ಷಗಳ ಕಾಲ ಪರಿಸ್ಥಿತಿ ಚಿಂತಾಜನಕವಾಗಿತ್ತು. ಉದ್ಯೋಗಿಗಳಿಗೆ ವೇತನ ಪಾವತಿಸಲೂ ಸಾಧ್ಯವಾಗಿರಲಿಲ್ಲ. ಪರಿಹಾರ ಪಾವತಿಸಲು ಸಂಪನ್ಮೂಲ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಏಕೆಂದರೆ, ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ನಿರ್ಣಯ ಹೊರಡಿಸಿರುವುದು ಸರ್ಕಾರ. ಇತರ ನಿಗಮಗಳು ಸರ್ಕಾರದ ನಿರ್ಣಯ ಜಾರಿಗೊಳಿಸಿಲ್ಲ. 2020ರ ಡಿಸೆಂಬರ್ 13ರಂದು ಸಚಿವರು ನೀಡಿರುವ ಭರವಸೆ ಇದಾಗಿದೆ. ನಾವು ಯೋಜನೆ ರೂಪಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಮುಂದುವರಿದು, ಕೋವಿಡ್‌ ಸಂದರ್ಭದಲ್ಲಿ 323 ಮಂದಿ ಮೃತಪಟ್ಟಿದ್ದು, ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ನಿಗಮವು ಸರ್ಕಾರಕ್ಕೆ ಪತ್ರ ಬರೆದಿದೆ. ಕೋವಿಡ್‌ ವೇಳೆ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರಿಗೆ ಪರಿಹಾರ ನೀಡಿದಂತೆ ಇವರಿಗೆ ನೀಡಲು ನಿಧಿ ನೀಡುವಂತೆ ಕೋರಿದ್ದೇವೆ. ಇದಕ್ಕೆ ರಾಜ್ಯ ಸರ್ಕಾರ ನಿರಾಕರಿಸಿದೆ. ನಿಮ್ಮ ಸಂಪನ್ಮೂಲದಲ್ಲಿ ಅದನ್ನು ಸರಿ ಹೊಂದಿಸಬೇಕು ಎಂದು ಸರ್ಕಾರ ಹೇಳಿದೆ. ಇದನ್ನು ಜಾರಿಗೊಳಿಸಲಾಗದು ಎಂದು ನಿಗಮವು ಮಂಡಳಿಯ ಸಭೆಯಲ್ಲಿ ನಿರ್ಧರಿಸಿದೆ ಎಂದರು. ಮೃತ 323 ಸಿಬ್ಬಂದಿಯ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪಾವತಿಸಬೇಕು. ಮೂರು ನಿಗಮಗಳು ಇದನ್ನು ಒಪ್ಪಿಕೊಂಡಿಲ್ಲ. ಆನಂತರ, ನಿಗಮದ ಉದ್ಯೋಗಿಗಳು ಬಂದ್‌ ನಡೆಸಿದ್ದಾರೆ. ಇದು ಕೈಗಾಕರಿಕಾ ವಿವಾದ ಇತ್ಯರ್ಥ ನ್ಯಾಯಾಲಯದಲ್ಲಿ ಬಾಕಿ ಇದೆ. ನಾಲ್ಕು ನಿಗಮಗಳೂ ನಷ್ಟದಲ್ಲಿ ನಡೆಯುತ್ತಿವೆ. ಎರಡು ವರ್ಷದಿಂದ ಬಿಎಂಟಿಸಿ ಉದ್ಯೋಗಿಗಳಿಗೆ ಗ್ರ್ಯಾಚುಟಿ ಹಣ ನೀಡಿಲ್ಲ. ಶಕ್ತಿ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣವನ್ನು ಗ್ರ್ಯಾಚುಟಿ ಮತ್ತಿತರ ವೆಚ್ಚಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವಾರ್ತಾ ಭಾರತಿ 18 Feb 2026 8:11 pm

ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ಖಂಡಿತಾ ತಡೆಯುತ್ತೇವೆ: ಅಮೆರಿಕ

ವಾಷಿಂಗ್ಟನ್, ಫೆ.18: ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ಅಮೆರಿಕ ಒಂದಲ್ಲ ಒಂದು ರೀತಿಯಲ್ಲಿ ತಡೆಯುವುದರಲ್ಲಿ ಸಂಶಯವೇ ಬೇಡ ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಬುಧವಾರ ಎಚ್ಚರಿಕೆ ನೀಡಿದ್ದಾರೆ. ಜಿನೆವಾದಲ್ಲಿ ಅಮೆರಿಕ-ಇರಾನ್ ನಿಯೋಗಗಳ ನಡುವೆ ಪರಮಾಣು ಮಾತುಕತೆ ನಡೆದ ಬಳಿಕ ಪ್ರತಿಕ್ರಿಯಿಸಿದ ಅವರು `ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಅವರು ತುಂಬಾ ಸ್ಪಷ್ಟವಾಗಿದ್ದಾರೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಆದ್ದರಿಂದ ಒಂದಲ್ಲ ಒಂದು ರೀತಿಯಲ್ಲಿ ನಾವು ಪರಮಾಣು ಶಸ್ತ್ರಗಳ ಕಡೆಗಿನ ಇರಾನ್‍ನ ಧಾವಂತವನ್ನು ತಡೆಯುತ್ತೇವೆ' ಎಂದಿದ್ದಾರೆ. ಜಿನೆವಾ ಮಾತುಕತೆಯ ಬಳಿಕ `ಸಂಘರ್ಷವನ್ನು ತಪ್ಪಿಸಲು ಒಪ್ಪಂದದ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ಒಪ್ಪಿಕೊಂಡಿರುವುದಾಗಿ' ಇರಾನ್ ಹೇಳಿದೆ. ಮಾತುಕತೆಯು ಈ ಹಿಂದಿನದಕ್ಕಿಂತ ಹೆಚ್ಚು ರಚನಾತ್ಮಕವಾಗಿತ್ತು. ಎರಡೂ ಕಡೆಯವರು ಈಗ ಸಂಭಾವ್ಯ ಒಪ್ಪಂದದ ಪಠ್ಯಗಳ ರಚನೆಯತ್ತ ಗಮನ ಹರಿಸಬಹುದು ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿಯನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ. ಉತ್ತಮ ಮುನ್ನಡೆ ಸಾಧಿಸಲಾಗಿದೆ. ಆದರೆ ಗಮನಾರ್ಹ ಕೆಲಸ ಉಳಿದಿದೆ ಎಂದು ಒಮಾನ್ ವಿದೇಶಾಂಗ ಸಚಿವರು ಹೇಳಿದ್ದಾರೆ. ಅಮೆರಿಕದ ಎಲ್ಲಾ `ಕೆಂಪು ಗೆರೆ'ಗಳನ್ನು ಇರಾನ್ ಇನ್ನೂ ಒಪ್ಪಿಕೊಂಡಿಲ್ಲ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.

ವಾರ್ತಾ ಭಾರತಿ 18 Feb 2026 8:11 pm

ಒಟ್ಟಪಾಲಂನಲ್ಲಿ ಧಗಧಗಿಸಿದ ಬಸ್‌: ಕೇವಲ 60 ಸೆಕೆಂಡುಗಳಲ್ಲಿ ಬೆಂಕಿಯಿಂದ ಬಸ್ ಪ್ರಯಾಣಿಕರ ರಕ್ಷಣೆ

ಪಾಲಕ್ಕಾಡ್: ಇಂದಿನ ದಿನಗಳಲ್ಲಿ ರಸ್ತೆಯಲ್ಲಿ ಯಾವುದೇ ಅಪಘಾತ ಅಥವಾ ದುರಂತ ಸಂಭವಿಸಿದರೆ, ಸಹಾಯ ಮಾಡಲು ಮುಂದಾಗುವವರಿಗಿಂತ ತಮ್ಮ ಮೊಬೈಲ್ ಫೋನ್‌ಗಳಲ್ಲಿ 'ರೀಲ್ಸ್' (Reels) ಅಥವಾ ವಿಡಿಯೋ ಮಾಡಲು ಮುಂದಾಗುವವರೇ ಹೆಚ್ಚು. ಆದರೆ, ಕೇರಳದ ಪಾಲಕ್ಕಾಡ್ ಜಿಲ್ಲೆಯ ಪುಟ್ಟ ಪಟ್ಟಣವಾದ 'ಒಟ್ಟಪಾಲಂ' (Ottapalam) ಜನರು ಇಡೀ ದೇಶಕ್ಕೆ ಮಾದರಿಯಾಗುವಂತಹ ಮಾನವೀಯ ಕಾರ್ಯ ಮಾಡಿದ್ದಾರೆ. ಚಲಿಸುತ್ತಿದ್ದ ಬಸ್ಸೊಂದಕ್ಕೆ ದಿಢೀರನೆ ಬೆಂಕಿ

ಒನ್ ಇ೦ಡಿಯ 18 Feb 2026 8:07 pm

ಪವರ್ ಪ್ಲೇ ನಲ್ಲಿ ಭಾರತಕ್ಕೆ ಆರಂಭಿಕ ಆಘಾತ; ಅಭಿಷೇಕ್ ಗೆ ಸತತ ಮೂರನೇ ಡಕ್

T20 ವಿಶ್ವಕಪ್ | ನೆದರ್ಲ್ಯಾಂಡ್ಸ್ ವಿರುದ್ಧದ ಗ್ರೂಪ್ ‘ಎ’ ಪಂದ್ಯ

ವಾರ್ತಾ ಭಾರತಿ 18 Feb 2026 7:58 pm

ಆರೆಸ್ಸೆಸ್ ಚಿವುಟಿದರೆ, ಬಿಜೆಪಿ ಅಳುವುದೇಕೆ?: ಪ್ರಿಯಾಂಕ್ ಖರ್ಗೆ

ಬೆಂಗಳೂರು : ಆರೆಸ್ಸೆಸ್ ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದ್ದೇ ತಡ, ಬಿಜೆಪಿಯ ಸಂಘಪ್ಪಗಳು ಆರೆಸ್ಸೆಸ್ ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆರೆಸ್ಸೆಸ್ ಸಮರ್ಥಿಸುವುದು ಅನಿವಾರ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಬುಧವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿ ನಾಯಕರು ತಾವು ಮಾಡಿದ ಟೀಕೆ, ತಾವು ನೀಡಿದ ಹೇಳಿಕೆಗಳೆಲ್ಲದರ ರಿಪೋರ್ಟ್ ಕಾರ್ಡನ್ನು ನಾಗಪುರಕ್ಕೆ ಕಳಿಸಿಕೊಡಬೇಕು, ಯಾರು ಹೆಚ್ಚು ತೀವ್ರವಾಗಿ ನನ್ನನ್ನು ನಿಂದಿಸಿರುತ್ತಾರೋ ಅವರಿಗೆ ಪ್ರಮೋಷನ್ ದೊರಕಲಿದೆ ಎಂದು ಹೇಳಿದ್ದಾರೆ. ಈ ಮೂಲಕ ‘ಆರೆಸ್ಸೆಸ್ ಹಾಗು ಬಿಜೆಪಿಗೆ ಸಂಬಂಧವಿಲ್ಲ’ ಎಂಬ ಮೋಹನ್ ಭಾಗವತರ ಹೇಳಿಕೆ ಶತಮಾನದ ಸುಳ್ಳು ಎಂಬುದನ್ನು ಬಿಜೆಪಿಯವರೇ ನಿರೂಪಿಸುತ್ತಿದ್ದಾರೆ. ಆರೆಸ್ಸೆಸ್ ಚಿವುಟಿದರೆ, ಬಿಜೆಪಿ ಅಳುವುದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. RSS ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದ್ದೇ ತಡ, ಬಿಜೆಪಿಯ ಸಂಘಪ್ಪಗಳು RSS ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು RSS ಸಮರ್ಥಿಸುವುದು ಅನಿವಾರ್ಯ. ಬಿಜೆಪಿ ನಾಯಕರು ತಾವು ಮಾಡಿದ ಟೀಕೆ, ತಾವು ನೀಡಿದ ಹೇಳಿಕೆಗಳೆಲ್ಲದರ ರಿಪೋರ್ಟ್ ಕಾರ್ಡನ್ನು ನಾಗಪುರಕ್ಕೆ ಕಳಿಸಿಕೊಡಬೇಕು, ಯಾರು ಹೆಚ್ಚು… pic.twitter.com/HdNmS7CMDJ — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 18, 2026

ವಾರ್ತಾ ಭಾರತಿ 18 Feb 2026 7:56 pm

AI ಇಂಪ್ಯಾಕ್ಟ್ ಶೃಂಗಸಭೆ| ಗೂಗಲ್ ಸಿಇಓ ಸುಂದರ್‌ಪಿಚೈ ಜೊತೆ ಮೋದಿ ಮಾತುಕತೆ: ಎಐ ಕ್ಷೇತ್ರದಲ್ಲಿ ದ್ವಿಪಕ್ಷೀಯ ಪಾಲುದಾರಿಕೆ ಬಗ್ಗೆ ಚರ್ಚೆ

ಹೊಸದಿಲ್ಲಿ,ಫೆ.19: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆ -2026ರ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಜಾಗತಿಕ ನಾಯಕರು ಹಾಗೂ ಕೈಗಾರಿಕಾ ವರಿಷ್ಠರನ್ನು ಭೇಟಿಯಾಗಿ ಉನ್ನತ ಮಟ್ಟದ ಸರಣಿ ಸಭೆಗಳನ್ನು ನಡೆಸಿದರು. ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುವುದು ಹಾಗೂ ದ್ವಿಪಕ್ಷೀಯ ಪಾಲುದಾರಿಕೆಯನ್ನು ಗಾಢವಾಗಿಸುವ ಬಗ್ಗೆ ಚರ್ಚಿಸಿದರು. ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಎಐ ಪರಿಸರ ವ್ಯವಸ್ಥೆಯ ಮೇಲೆ ಗಮನಕೇಂದ್ರೀಕರಿಸಿ ಗೂಗಲ್ ಸಿಇಓ ಸುಂದರ್ ಪಿಚೈ ಜೊತೆಗಿನ ಮಾತುಕತೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ‘‘ ಸುಂದರ್ ಪಿಚೈ ಅವರ ಜೊತೆಗಿನ ಮಾತುಕತೆಯಲ್ಲಿ ಎಐ ಕ್ಷೇತ್ರದಲ್ಲಿ ಭಾರತದ ಸಾಧನೆ ಹಾಗೂ ನಮ್ಮ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಆ ಕ್ಷೇತ್ರದಲ್ಲಿ ಗೂಗಲ್ ಜೊತೆ ಹೇಗೆ ಕೆಲಸ ಮಾಡಬಲ್ಲರು ಎಂಬ ಬಗ್ಗೆ ಮಾತನಾಡಿದ್ದೇನೆ’’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಶೃಂಗಸಭೆ ಸಂದರ್ಭ ಫಿನ್‌ಲ್ಯಾಂಡ್ ಪ್ರಧಾಇ ಪೆಟ್ಟೇರಿಓರ್ಪೊ ಜೊತೆಗೂ ಪ್ರಧಾನಿ ವಿಸ್ತೃತ ಮಾತುಕತೆ ನಡೆಸಿದ್ದು, ಭಾರತ-ಯುರೋಪ್ ಒಕ್ಕೂಟ ನಡುವಿನ ಆಯಕಟ್ಟಿನ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚಿಸಿದರು. ‘‘ಭಾರತ ಹಾಗೂ ಫಿನ್‌ಲ್ಯಾಂಡ್ ದೇಶಗಳು ವ್ಯಾಪಾರವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದ್ದು, ಆಮೂಲಕ ಆರ್ಥಿಕ ಸಂಪರ್ಕಗಳಿಗೆ ಬಲವಾದ ಉತ್ತೇಜನ ನೀಡಲಿವೆ’’ ಎಂದು ಮೋದಿಯವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಸಮಾವೇಶದಲ್ಲಿ ಪ್ರಧಾನಿಯವರು, ಸ್ಪೇನ್‌ನ ಅಧ್ಯಕ್ಷ ಪೆಡ್ರೊ ಸ್ಯಾಂಚೆಝ್ ಅವರನ್ನು ಭೇಟಿಯಾಗಿ ವಿವಿಧ ವಲಯಗಳಲ್ಲಿ ದ್ವ್ಪಿಪಕ್ಷೀಯ ಬಾಂಧ್ಯವನ್ನು ಗಾಢವಾಗಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 18 Feb 2026 7:50 pm

ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ| ವೈದ್ಯಕೀಯ ವರದಿ ತಿರುಚಲು ನೆರವಾಗಿದ್ದ ಆರೋಪಿಗೆ ಜಾಮೀನು

ಹೊಸದಿಲ್ಲಿ,ಫೆ.18: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ 2024ರ ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದ ಓರ್ವ ಆರೋಪಿಯನ್ನು ಸುಪ್ರೀಂಕೋರ್ಟ್ ಬುಧವಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. 2024ರ ಮೇ 19ರಂದು ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಹದಿನೇಳು ವರ್ಷ ವಯಸ್ಸಿನ ಬಾಲಕನೊಬ್ಬ ಪಾನಮತ್ತನಾಗಿ ಕಾರು ಚಲಾಯಿಸಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಐಟಿ ಉದ್ಯೋಗಿಗಳಿಗೆ ಡಿಕ್ಕಿ ಹೊಡೆಸಿದ್ದ. ಆರೋಪಿ ಅಶ್ಫಾಕ್ ಬಾಷಾ ಮಕಂದರ್ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕನ ರಕ್ತದ ಮಾದರಿಯನ್ನು ಆತನ ಪಾಲಕರ ರಕ್ತದ ಮಾದರಿಯೊಂದಿಗೆ ಬದಲಾಯಿಸುವ ಸಂಚು ನಡೆಸುವ ಮೂಲಕ ವೈದ್ಯಕೀಯ ಪುರಾವೆಯನ್ನು ತಿರುಚುವಲ್ಲಿ ನೆರವಾಗಿದ್ದನೆಂದು ಆರೋಪಿಸಲಾಗಿದೆ. ‘‘ಅರ್ಜಿದಾರನ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ಹಿರಿಯ ನ್ಯಾಯವಾದಿಯ್ಬೊರು, ಇದೇ ಪ್ರಕರಣದಲ್ಲಿ ಸಹಆರೋಪಿಗೆ ಜಾಮೀನು ನೀಡಲಾಗಿತುಇದೇ ಅದೇಶದ ನೆಲೆಯಲ್ಲಿ ಅಶ್ಫಾಕ್ ಭಾಷಾನಿಗೂ ಜಾಮೀನು ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಪ್ರಕರಣದ ಇತರ ಮೂವರು ಆರೋಪಿಗಳಾದ ಅಮರ್ ಸಂತೋಷ್ ಗಾಯಕ್ವಾಡ್ (ಮಧ್ಯವರ್ತಿ), ಆದಿತ್ಯ ಅವಿನಾಶ್ ಸೂದ್ ಹಾಗೂ ಆಶೀಶ್ ಸತೀಶ್ ಮಿತ್ತಲ್ ( ಕಾರಿನಲ್ಲಿದ್ದ ಇತರ ಇಬ್ಬರು ಬಾಲಪರಾಧಿಗಳ ಪಾಲಕರು) ಅವರಿಗೆ ಫೆಬ್ರವರಿ 2ರಂದು ಸರ್ವೋಚ್ಚ ನ್ಯಾಯಾಲಯವು ಜಾಮೀನು ಬಿಡುಗಡೆಗೊಳಿಸಿತ್ತು. ಈ ಪ್ರಕರಣದಲ್ಲಿ ಜಾಮೀನು ಬಿಡುಗಡೆ ಕೋರಿ ಗಾಯಕ್ವಾಡ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಕಾರಿನಲ್ಲಿದ್ದ ಬಾಲಕ ಪಾಲಕರಾದ ಸೂದ್ (52) ಹಾಗೂ ಮಿತ್ತಲ್ (37) ಕಳೆದ ವರ್ಷದ ಆಗಸ್ಟ್ 19ರಂದು ಬಂಧಿತರಾಗಿದ್ದರು. ತಮ್ಮ ರಕ್ತದ ಮಾದರಿಗಳನ್ನು ಅಪಘಾತ ನಡೆಸಿದ ಕಾರಿನಲ್ಲಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರ ರಕ್ತದ ಮಾದರಿಗಳೊಂದಿಗೆ ಬದಲಾಯಿಸಲು ಯತ್ನಿಸಿದ ಆರೋಪವನ್ನು ಅವರ ಮೇಲೆ ಹೊರಿಸಿತ್ತು.

ವಾರ್ತಾ ಭಾರತಿ 18 Feb 2026 7:50 pm

ಅರ್ಜಿಗಳನ್ನು ಬರೆಯಲು ವಕೀಲರಿಂದ AI ಬಳಕೆ : ಸುಪ್ರೀಂ ಕೋರ್ಟ್ ಕಳವಳ

ಹೊಸದಿಲ್ಲಿ,ಫೆ.18: ಕೃತಕಬುದ್ಧಿಮತ್ತೆ (ಎಐ) ಟೂಲ್ಸ್‌ಗಳ ಮೂಲಕ ಅರ್ಜಿಗಳನ್ನು ಬರೆದು ನ್ಯಾಯಾಲಯಕ್ಕೆ ಸಲ್ಲಿಸುವ ಪ್ರವೃತ್ತಿಯು ನ್ಯಾಯವಾದಿಗಳಲ್ಲಿ ಹೆಚ್ಚುತ್ತಿರುವುದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ. ಕೃತಕಬುದ್ಧಿ ಮತ್ತೆ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಾಗಿ ಹೊಸದಿಲ್ಲಿಯಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ-2026 ನಡೆಯುತ್ತಿರುವ ಸಮಯದಲ್ಲೇ ಈ ಅತ್ಯಾಧುನಿಕ ತಂತ್ರಜ್ಞಾನದ ಲೋಪಗಳ ಬಗ್ಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿರುವುದು ಗಮನಾರ್ಹವಾಗಿದೆ. ‘‘ಕೆಲವು ನ್ಯಾಯವಾದಿಗಳು ಪತ್ರದ ಕರಡುರಚಿಸಲು ಎಐ ಬಳಸಲು ಆರಂಭಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಖಂಡಿತವಾಗಿಯೂ ಅನಪೇಕ್ಷಣೀಯವಾದುದು’’ ಎಂದು ಸಿಜೆಐ ತಿಳಿಸಿದರು. ಸೂಕ್ತವಾದ ದೃಢೀಕರಣವಿಲ್ಲದೆ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸುವುದಕ್ಕೆ ಎಐ ಬಳಕೆ ಹೆಚ್ಚುತ್ತಿದೆ ಎಂದು ಸಿಜೆಐ ತಿಳಿಸಿದರು. ನ್ಯಾಯಪೀಠದ ಇತರ ಇಬ್ಬರು ನ್ಯಾಯಾಧೀಶರಾದ ಜಾಯ್‌ಮಾಲ್ಯಾ ಬಾಗ್‌ಚಿ ಆಹಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಕೂಡಾ ಅರ್ಜಿಗಳನ್ನು ಬರೆಯಲು ಎಐ ಬಳಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಭಾಷಣಗಳಿಗೆ ಸಂಬಂಧಿಸಿ ಮಾರ್ಗದರ್ಶಿಸೂತ್ರಗಳನ್ನು ರಚಿಸುವಂತೆ ಕೋರಿ ಶಿಕ್ಷಣತಜ್ಞೆ ರೂಪ ರೇಖಾ ವರ್ಮಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಯ ವಿಚಾರಣೆ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ

ವಾರ್ತಾ ಭಾರತಿ 18 Feb 2026 7:50 pm

ಟಿ20 ವಿಶ್ವಕಪ್‌| ಯುಎಇಯನ್ನು 6 ವಿಕೆಟ್‌ನಿಂದ ಸೋಲಿಸಿದ ದಕ್ಷಿಣ ಆಫ್ರಿಕ

ಹೊಸದಿಲ್ಲಿ, ಫೆ. 18: ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ, ‘ಡಿ’ ಗುಂಪಿನ ಲೀಗ್ ಪಂದ್ಯವೊಂದರಲ್ಲಿ ಬುಧವಾರ ದಕ್ಷಿಣ ಆಫ್ರಿಕ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಈಗಾಗಲೇ ಸೂಪರ್ ಎಂಟರ ಘಟ್ಟವನ್ನು ಪ್ರವೇಶಿಸಿರುವ ದಕ್ಷಿಣ ಆಫ್ರಿಕವು, ಈಗ ತನ್ನ ಗುಂಪಿನ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ತನ್ನ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿತಾದರೂ ಯಾವುದೇ ಓವರ್‌ಗಳು ಕಡಿತಗೊಳ್ಳಲಿಲ್ಲ. ಗೆಲುವಿಗೆ 123 ರನ್‌ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕವು, ಆಕ್ರಮಣಕಾರಿ ಆಟವನ್ನು ಆಡಿ ಇನ್ನೂ 40 ಎಸೆತಗಳು ಬಾಕಿಯಿರುವಂತೆಯೇ ಜಯವನ್ನು ಘೋಷಿಸಿತು. ಅದು 13.2 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 123 ರನ್ ಗಳಿಸಿತು. ಆರಂಭಿಕರಾದ ಏಡನ್ ಮರ್ಕ್ರಾಮ್ (11 ಎಸೆತಗಳಲ್ಲಿ 28 ರನ್) ಮತ್ತು ಕ್ವಿಂಟನ್ ಡಿ ಕಾಕ್ (16 ಎಸೆತಗಳಲ್ಲಿ 14 ರನ್) ದಕ್ಷಿಣ ಆಫ್ರಿಕ ಇನಿಂಗ್ಸ್‌ಗೆ ಆರಂಭಿಕ ವೇಗವನ್ನು ಒದಗಿಸಿದರು. ಬಳಿಕ ರಯಾನ್ ರಿಕೆಲ್ಟನ್ (16 ಎಸೆತಗಳಲ್ಲಿ 30 ರನ್) ಮತ್ತು ಡೆವಾಲ್ಡ್ ಬ್ರೆವಿಸ್ (25 ಎಸೆತಗಳಲ್ಲಿ 36 ರನ್) ತಂಡವನ್ನು ಗೆಲುವಿನ ಸಮೀಪ ತಂದರು. ಟ್ರೈಸ್ಟನ್ ಸ್ಟಬ್ಸ್ (ಔಟಾಗದೆ 6 ರನ್) ಮತ್ತು ಜಾಸನ್ ಸ್ಮಿತ್ (ಔಟಾಗದೆ 3) ವಿಜಯದ ವಿಧಿವಿಧಾನಗಳನ್ನು ಪೂರೈಸಿದರು. ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 122 ರನ್ ಗಳಿಸಿತು. ಯುಎಇ ಬ್ಯಾಟರ್‌ಗಳು ಮೊದಲ ನಾಲ್ಕು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 36 ರನ್‌ಗಳನ್ನು ಸೂರೆಗೈದರು. ಆರಂಭಿಕರಾದ ಆರ್ಯಾಂಶ್ ಶರ್ಮಾ ಮತ್ತು ನಾಯಕ ಮುಹಮ್ಮದ್ ವಸೀಮ್ ಕ್ರಮವಾಗಿ 13 ಮತ್ತು 22 ರನ್‌ಗಳ ದೇಣಿಗೆಗಳನ್ನು ನೀಡಿದರು. ಅಲಿಶಾನ್ ಶರಫು 45 ರನ್‌ಗಳನ್ನು ಗಳಿಸಿದರು. ದಕ್ಷಿಣ ಆಫ್ರಿಕದ ಪರವಾಗಿ ಆ್ಯನ್‌ರಿಕ್ ನೋರ್ಟ್‌ಯೆ ಎರಡು ವಿಕೆಟ್‌ಗಳನ್ನು ಕಿತ್ತರೆ, ಕಾರ್ಬಿನ್ ಬೋಶ್ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಸಂಕ್ಷಿಪ್ತ ಸ್ಕೋರ್ ಯುಎಇ (20 ಓವರ್‌ಗಳಲ್ಲಿ) 122-6 ಮುಹಮ್ಮದ್ ವಸೀಮ್ 22, ಅಲಿಶಾನ್ ಶರಫು 45 ಆ್ಯನ್‌ರಿಕ್ ನೋರ್ಟ್‌ಯೆ 2-28, ಕಾರ್ಬಿನ್ ಬೋಶ್ 3-12 ದಕ್ಷಿಣ ಆಫ್ರಿಕ (13.2 ಓವರ್‌ಗಳಲ್ಲಿ) 123-4 ಏಡನ್ ಮರ್ಕ್ರಾಮ್ 28, ರಯಾನ್ ರಿಕಲ್ಟನ್ 30, ಡೆವಾಲ್ಡ್ ಬ್ರೆವಿಸ್ 36

ವಾರ್ತಾ ಭಾರತಿ 18 Feb 2026 7:44 pm

ಅನುದಾನ ಬಳಸದೆ ಉಳಿಸಿದರೆ ಕ್ರಮ: ಕೆಡಿಪಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಎಚ್ಚರಿಕೆ

ಭಟ್ಕಳ: 2025–26ನೇ ಹಣಕಾಸು ವರ್ಷದ ಅಭಿವೃದ್ಧಿ ಅನುದಾನವನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಬಳಸದೆ ಉಳಿಸಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ತ್ರೈಮಾಸಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ್‌ ಅಂತ್ಯದೊಳಗೆ ಹಂಚಿಕೆ ಯಾದ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡುವಂತೆ ಎಲ್ಲಾ ಇಲಾಖೆಗಳಿಗೂ ಸೂಚಿಸಿದರು. “ಪಂಚಾಯಿತಿ ಅಥವಾ ತಾಲೂಕು ಮಟ್ಟದಲ್ಲಿ ಅನುದಾನ ಬಳಸದೆ ಹಿಂತಿರುಗಿಸಿದರೆ ಸಂಬಂಧಿತ ಅಧಿಕಾರಿಗಳು ಹೊಣೆಗಾರರಾಗುತ್ತಾರೆ” ಎಂದು ಸ್ಪಷ್ಟಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಉಂಟಾಗಬಾರದು. ಸ್ಥಳೀಯ ಆಡಳಿತದಲ್ಲಿ ಯಾವುದೇ ಲೋಪ ಕಂಡುಬಂದರೆ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ಸಚಿವರು ಎಚ್ಚರಿಸಿದರು. ತಾಲೂಕು ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧಿಗಳ ಲಭ್ಯತೆ ಖಚಿತಪಡಿಸಿಕೊಳ್ಳಬೇಕು. ರೋಗಿಗಳು ಹೊರಗಿನಿಂದ ಔಷಧಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದ ಅವರು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಅವಧಿಯಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದರು. ಭಟ್ಕಳ–ಹೊನ್ನಾವರ ‘ಜನಸ್ನೇಹಿ’ ಬಸ್‌ ಸೇವೆ ಸ್ಥಗಿತಗೊಂಡಿರುವ ಕುರಿತು ವಿವರ ಕೇಳಿ, ತಾವು ಶಾಸಕನಾಗಿದ್ದ ಅವಧಿಯಲ್ಲಿ ಒದಗಿಸಲಾಗಿದ್ದ 20 ಬಸ್‌ಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು. ಭಟ್ಕಳದಿಂದ ಕುಂದಾಪುರ ಹಾಗೂ ಮಂಗಳೂರಿಗೆ ಬಸ್‌ ಸೇವೆ ಆರಂಭಿಸುವ ಕುರಿತು ಪ್ರಸ್ತಾವನೆ ಸಿದ್ಧಪಡಿಸಬೇಕು. ವಾಹನ ದೋಷಗಳ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು. ಸೇವೆಗೆ ಅಯೋಗ್ಯವಾದ ಬಸ್‌ಗಳನ್ನು ಹಂತ ಹಂತವಾಗಿ ಬದಲಾಯಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು. ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ಕೋರಬೇಕು ಎಂದು ಸೂಚಿಸಿದರು. ಮಳೆಗಾಲಕ್ಕೂ ಮುನ್ನ ಕಾಲುವೆಗಳ ಶುದ್ಧೀಕರಣ ಹಾಗೂ ಹೂಳು ತೆಗೆಯುವ ಕಾರ್ಯ ಕೈಗೊಳ್ಳುವಂತೆ ನಿರ್ದೇಶಿಸಿದರು. ಪಶುಸಂಗೋಪನಾ ಇಲಾಖೆಗೆ ಸರ್ಕಾರದ ಲೀಟರ್‌ಗೆ 6 ರೂ. ಹಾಲು ಪ್ರೋತ್ಸಾಹಧನ ಯೋಜನೆ ಕುರಿತು ರೈತರಿಗೆ ಜಾಗೃತಿ ಮೂಡಿಸಲು ಹಾಗೂ ಹಾಲು ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಿದರು. 2026–27ರ ಅಂತ್ಯದೊಳಗೆ ತಾಲೂಕಿನ ಎಲ್ಲಾ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳೊಂದಿಗೆ ಸ್ವಂತ ಕಟ್ಟಡಗಳಿರಬೇಕು. ಅಗತ್ಯ ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಮಹತ್ವದ ಅನುದಾನಗಳೊಂದಿಗೆ ಬಜೆಟ್‌ ಸಿದ್ಧಪಡಿಸುತ್ತಿದ್ದು, ವಿವಿಧ ಇಲಾಖೆಗಳ ಖಾಲಿ ಹುದ್ದೆ ಗಳನ್ನು ಭರ್ತಿ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಮಳೆಗಾಲಕ್ಕೂ ಮುನ್ನ ಬೀಜ ಮತ್ತು ರಸಗೊಬ್ಬರಗಳ ಸಮರ್ಪಕ ಸಂಗ್ರಹ ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಶಿವಕ್ಕ ಎಂ., ಪ್ರಭಾರ ಸಹಾಯಕ ಆಯುಕ್ತ ಪ್ರವೀಣ್ ಕರಾಂದೆ, ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಎಂ. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 7:44 pm

ಧರ್ಮಸ್ಥಳ ವಿರುದ್ಧ ವಿಡಿಯೋ: ಯುಟ್ಯೂಬರ್‌ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌; ಸಂತೋಷ್‌ ಮರ್ದಾಳನ ಬಂಧಿಸಿದ ಪೊಲೀಸರು

ಧರ್ಮಸ್ಥಳದ ವಿರುದ್ಧ ಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ ವಿಡಿಯೋ ಮಾಡಿದ ಹಿನ್ನೆಲೆ ಸಂಚಾರಿ ಸ್ಟೂಡಿಯೋ ಯೂಟ್ಯೂಬ್‌ ಚಾನೆಲ್‌ನ ಸಂತೋಷ್‌ ಮರ್ಧಾಳ ಅವನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಕೋರ್ಟ್‌ 30 ದಿನ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ವಿಜಯ ಕರ್ನಾಟಕ 18 Feb 2026 7:38 pm

ಮಧ್ಯಾಹ್ನದ ಬಿಸಿಯೂಟ ಯೋಜನೆ ವಿತರಣೆಯಲ್ಲಿ ತಾರತಮ್ಯ: ಎಐಡಿಎಸ್‌ಒ ಖಂಡನೆ

ಮಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಪದವಿಪೂರ್ವ (ಪಿಯು) ವಿದ್ಯಾರ್ಥಿಗಳಿಗೆ ಮಾತ್ರ ವಿಸ್ತರಿಸಿ ಇತರ ಸರಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಈ ಯೋಜನೆಯಿಂದ ಹೊರಗಿಟ್ಟಿರುವ ರಾಜ್ಯ ಸರಕಾರದ ನಿರ್ಧಾರವನ್ನು ಎಐಡಿಎಸ್‌ಓ ಕರ್ನಾಟಕ ರಾಜ್ಯ ಸಮಿತಿಯು ಖಂಡಿಸುವುದಾಗಿ ದ.ಕ.ಜಿಲ್ಲಾ ಸಂಚಾಲಕ ವಿನಯ್ ಚಂದ್ರ ತಿಳಿಸಿದ್ದಾರೆ. ಶಿಕ್ಷಣ ಸಾಂವಿಧಾನಿಕ ಹಕ್ಕು. ಅದು ಆಯ್ದ ಕೆಲವರಿಗೆ ಮಾತ್ರ ಸೀಮಿತವಾದ ಸೌಕರ್ಯವಲ್ಲ. ಸರಕಾರವೇ ವಿವಿಧ ರೀತಿಯ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವಾಗ ಒಂದೇ ರೀತಿಯ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಲ್ಲಿ ಒಂದು ವರ್ಗಕ್ಕೆ ಮಾತ್ರ ಕಲ್ಯಾಣ ಯೋಜನೆಗಳನ್ನು ನೀಡಿ ಉಳಿದವರಿಗೆ ನಿರಾಕರಿಸುವುದು ಸ್ಪಷ್ಟ ತಾರತಮ್ಯವಾಗಿದೆ. ಸರಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಕಲಿಯುವ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಕಾರ್ಮಿಕ ವರ್ಗದ ಕುಟುಂಬಗಳಿಂದ ಬಂದವರಾಗಿದ್ದಾರೆ. ಅವರಿಗೆ ಮಧ್ಯಾಹ್ನದ ಊಟವು ಕೇವಲ ಸೌಲಭ್ಯವಲ್ಲ, ಬದಲಿಗೆ ಹಸಿವಿಲ್ಲದೆ ಶಿಕ್ಷಣವನ್ನು ಮುಂದುವರಿಸಲು ಇರುವ ಅತ್ಯಗತ್ಯ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ. ಸರಕಾರವು ಸಮಾನತೆಯನ್ನು ಉತ್ತೇಜಿಸುವುದಾಗಿ ಮತ್ತು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಇಂತಹ ಆಯ್ದ ಅನುಷ್ಠಾನವು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೊಳಗೆ ಒಂದು ಶ್ರೇಣೀಕೃತ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಹಣಕಾಸಿನ ಅಥವಾ ತಾಂತ್ರಿಕ ಅಡಚಣೆಗಳಿದ್ದಲ್ಲಿ, ಸರಕಾರವು ಅದನ್ನು ಪಾರದರ್ಶಕ ವಾಗಿ ಪರಿಹರಿಸಬೇಕೇ ಹೊರತು ಇಂತಹ ವಿಭಜಿಸುವ ಕ್ರಮಗಳನ್ನು ಅನುಸರಿಸಬಾರದು. ಇದು ಅಸಮಾನತೆ ಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ಸಮಾನ ಶಾಲಾ ಶಿಕ್ಷಣದ ಆಶಯವನ್ನು ದುರ್ಬಲಗೊಳಿಸುತ್ತವೆ ಎಂದು ತಿಳಿಸಿದೆ.

ವಾರ್ತಾ ಭಾರತಿ 18 Feb 2026 7:37 pm

ನಾಳೆಯಿಂದ ರಾಜ್ಯಾದ್ಯಂತ ರಮಝಾನ್ ಉಪವಾಸ ಆರಂಭ

ಬೆಂಗಳೂರು : ಪವಿತ್ರ ರಮಝಾನ್ ತಿಂಗಳ ಪ್ರಥಮ ಚಂದ್ರ ದರ್ಶನ ಬುಧವಾರ ಆದ ಕಾರಣ ಗುರುವಾರ(ಫೆ.19)ದಿಂದ ರಮಝಾನ್ ಉಪವಾಸ ಆರಂಭಗೊಳ್ಳಲಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿಯ ಸಂಚಾಲಕ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಘೋಷಿಸಿದ್ದಾರೆ. ಬುಧವಾರ ಸಂಜೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಮಂಡಳಿಯ ಕಚೇರಿಯಲ್ಲಿ ನಡೆದ ಚಂದ್ರ ದರ್ಶನ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಎಲ್ಲಿಯೂ ಚಂದ್ರ ದರ್ಶನವಾದ ಮಾಹಿತಿ ಲಭ್ಯವಾಗಿಲ್ಲ ಎಂದರು. ಆದರೆ, ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಓಡಿಶಾ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ, ದಿಲ್ಲಿಯಲ್ಲಿ ಚಂದ್ರ ದರ್ಶನವಾದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಗುರುವಾರದಿಂದಲೆ ರಮಝಾನ್ ವತ್ರಾಚರಣೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಮೌಲಾನಾ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನಾ ಏಜಾಝ್ ಅಹ್ಮದ್ ನದ್ವಿ ಸೇರಿದಂತೆ ಇನ್ನಿತರ ಉಲಮಾಗಳು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 18 Feb 2026 7:35 pm

ಪಕ್ಕಲಡ್ಕ: ರಮಝಾನ್ ಸ್ವಾಗತ ಕಾರ್ಯಕ್ರಮ

ಮಂಗಳೂರು: ಜಮಾಅತೇ ಇಸ್ಲಾಮಿ ಹಿಂದ್ ಪಕ್ಕಲಡ್ಕ ವರ್ತುಲದ ವತಿಯಿಂದ ರಮಝಾನ್ ಸ್ವಾಗತ ವಿಶೇಷ ಕಾರ್ಯಕ್ರಮವು ಸ್ನೇಹ ಸದನ ವಠಾರದಲ್ಲಿ ಸಾಜಿದ್ ಹಸನ್ ಆಲಿಯಾ ಅವರ ಕಿರಾಅತ್‌ನೊಂದಿಗೆ ಪ್ರಾರಂಭವಾಯಿತು. ಸಲೀಂ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮಝಾನ್ ಉಪವಾಸದಲ್ಲಿ ಪಾಲಿಸಬೇಕಾದ ಮರ್ಯಾದೆ ಗಳು ಎಂಬ ವಿಷಯದ ಮೇಲೆ ಸಈದ್ ಇಸ್ಮಾಯಿಲ್ ದಿಕ್ಸೂಚಿ ಭಾಷಣ ಮಾಡಿದರು. ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಪಕ್ಕಲಡ್ಕ ಮಹಿಳಾ ಘಟಕದ ಸಂಚಾಲಕಿ ಝೀನತ್ ಮೊಯಿದಿನ್ ಉಪಸ್ಥಿತರಿದ್ದರು. ಅಶೀರುದ್ದೀನ್ ಆಲಿಯಾ ಕಾರ್ಯಕ್ರಮ ನಿರೂಪಿಸಿದರು. ವರ್ತುಲ ಸಂಚಾಲಕ ಸುಲೈಮಾನ್ ಪಕ್ಕಲಡ್ಕ ವಂದಿಸಿದರು.

ವಾರ್ತಾ ಭಾರತಿ 18 Feb 2026 7:35 pm

ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ಕೇರಳ ಸರಕಾರ ತೀರ್ಮಾನ

ಕೇರಳ ರಾಜ್ಯ ಸಚಿವ ಸಂಪುಟ ಸಭೆ ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ನಿರ್ಧರಿಸಿದೆ. ​​​ಶಿಕ್ಷಕರು ಎರಡು ವರ್ಷದ ಒಳಗೆ ಕೆ-ಟೆಟ್‌ ಪಡೆದರೆ ಸಾಕು. ಕೆ-ಟೆಟ್‌ ಇಲ್ಲದಿದ್ದರೂ ಬಡ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಚುನಾವಣೆಗೆ ಸಮೀಪಿಸಿರುವಂತೆ ಕೆ- ಟೆಟ್‌ ಮತ್ತು ಹುದ್ದೆಗಳ ನಿರ್ಣಯದಲ್ಲಿ ಸರಕಾರ ನಿಲುವು ಬದಲಾಯಿಸಿದೆ.

ವಿಜಯ ಕರ್ನಾಟಕ 18 Feb 2026 7:33 pm

ಬಾಂಗ್ಲಾದೇಶದಲ್ಲಿ ಎಷ್ಟು ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ನೋಡಿ: ಚುನಾವಣಾ ಆಯೋಗದ ಗಮನ ಸೆಳೆದ ಮಮತಾ ಬ್ಯಾನರ್ಜಿ

ಕೋಲ್ಕತಾ, ಫೆ. 17: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರತದ ಚುನಾವಣಾ ಆಯೋಗವನ್ನು ಟೀಕಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಯನ್ನು ಅವರು ಉಲ್ಲೇಖಿಸಿದ್ದಾರೆ. ‘‘ಬಾಂಗ್ಲಾದೇಶ ಎಷ್ಟು ಶಾಂತಿಯುತವಾಗಿ ಚುನಾವಣೆಗಳನ್ನು ನಡೆಸುತ್ತದೆ ಎಂಬುದನ್ನು ನೋಡಿ’’ ಎಂದು ಅವರು ಹೇಳಿದ್ದಾರೆ. ರಾಜ್ಯ ಕಾರ್ಯಾಲಯ ನಬನ್ನಾದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬ್ಯಾನರ್ಜಿ, ‘‘ಬಾಂಗ್ಲಾದೇಶದಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲಾಗಿದೆ. ಅಲ್ಲಿ ಹಿಂಸಾಚಾರ ನಡೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ’’ ಎಂದರು. ಆದರೆ, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಚುನಾವಣಾ ಆಯೋಗ ಅದರ ಬೆದರಿಕೆ ಸಂಸ್ಕೃತಿಯಿಂದ ಪ್ರಜಾಪ್ರಭುತ್ವವನ್ನು ನಾಶ ಮಾಡಲಿದೆ ಎಂದರು. ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ ಧ್ವನಿ ಎತ್ತಿದರು. ಅಮಾನತುಗೊಂಡ 7 ಅಧಿಕಾರಿಗಳ ಕುರಿತು ಸರಕಾರದ ನಿಲುವನ್ನು ಸ್ಪಷ್ಟಪಡಿಸಿದ ಅವರು, ಅವರು ಕೆಲಸ ಮಾಡಲಿದ್ದಾರೆ. ಅವರು ಚುನಾವಣಾ ಕೆಲಸದೊಂದಿಗೆ ಇತರ ಕೆಲಸಗಳನ್ನೂ ಮಾಡಲಿದ್ದಾರೆ. ಅವರು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಲಿದ್ದಾರೆ. ಅವರನ್ನು ಕೆಲಸದಿಂದ ತೆಗೆದು ಹಾಕುತ್ತಿಲ್ಲ ಎಂದರು. ‘‘ಯಾರಾದರೂ, ಏನಾದರೂ ತಪ್ಪು ಮಾಡಿದ್ದರೆ, ಅದನ್ನು ಸರಕಾರಕ್ಕೆ ವರದಿ ಮಾಡಬಹುದಿತ್ತು’’ ಎಂದು ಮಮತಾ ಬ್ಯಾನರ್ಜಿ ಹೇಳಿದರು. ‘‘ನಾವು ಚುನಾವಣಾ ಆಯೋಗದ ಸೂಚನೆಯನ್ನು ನಯವಾಗಿ ಪಾಲಿಸುತ್ತೇವೆ. ಆದರೆ, ಶಿಕ್ಷೆ ಅನುಭವಿಸುವ ಮೊದಲು ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿಲ್ಲ’’ ಎಂದು ಅವರು ಹೇಳಿದ್ದಾರೆ. ಅಮಾನತುಗೊಂಡವರಲ್ಲಿ ಕೆಲವು ಅಧಿಕಾರಿಗಳು ತನಗೆ ವೈಯುಕ್ತಿಕವಾಗಿ ಪರಿಚಯವಿದೆ ಎಂದು ಹೇಳಿದ ಮಮತಾ, ಅವರು ರಾತ್ರಿ ಹಗಲು ಪರಿಶ್ರಮದಿಂದ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ವಾರ್ತಾ ಭಾರತಿ 18 Feb 2026 7:30 pm

ಜಾರ್ಖಂಡ್| ವಾಮಾಚಾರ ಆರೋಪ: ಮಹಿಳೆ, 1 ವರ್ಷದ ಮಗುವಿನ ಸಜೀವ ದಹನ

ಚೈಬಾಸಾ, ಫೆ. 17: ಮಾಟಗಾತಿಯೆಂಬ ಹಣಪಟ್ಟಿ ಹಚ್ಚಿ 32 ವರ್ಷದ ಮಹಿಳೆ ಹಾಗೂ ಆಕೆಯ 1 ವರ್ಷದ ಮಗುವನ್ನು ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ಜಾರ್ಖಂಡ್‌ನ ಪಶ್ಚಿಮ ಸಿಂಗಭೂಮ್ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಕುಮಾರ್ದುಂಗಿ ಪೊಲೀಸ್ ಠಾಣಾ ಪ್ರದೇಶದ ಗ್ರಾಮವೊಂದರಲ್ಲಿ ಮಂಗಳವಾರ ತಡ ರಾತ್ರಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದಾಳಿಯಲ್ಲಿ ಮಹಿಳೆಯ ಪತಿ ಕೂಡ ಗಾಯಗೊಂಡಿದ್ದಾನೆ. ಆದರೆ, ಆತ ಪರಾರಿಯಾಗುವುದರಲ್ಲಿ ಯಶಸ್ವಿಯಾಗಿದ್ದಾನೆ. ಆತ ತನ್ನ ಸಂಬಂಧಿಕರ ಮನೆಯಲ್ಲಿ ರಾತ್ರಿ ಕಳೆದಿದ್ದಾನೆ ಹಾಗೂ ಬುಧವಾರ ಬೆಳಗ್ಗೆ ಪೊಲೀಸ್ ಠಾಣೆಗೆ ತಲುಪಿ ದೂರು ದಾಖಲಿಸಿದ್ದಾನೆ. ‘‘ಕೆಲವರು ತನ್ನನ್ನು ಹಾಗೂ ತನ್ನ ಹೆಂಡತಿಯನ್ನು ಕರೆಯುತ್ತಿರುವುದು ಕೇಳಿ ಮಧ್ಯ ರಾತ್ರಿ ಎಚ್ಚರವಾಯಿತು’’ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ. ಆತ ಮನೆಯಿಂದ ಹೊರಗೆ ಇಳಿದಾಗ ಸುಮಾರು 12 ಜನರು ಸೇರಿದ್ದರು. ಆತನ ಪತ್ನಿ ವಾಮಾಚಾರ ಮಾಡುತ್ತಿದ್ದಾಳೆ ಎಂದು ಆರೋಪಿಸಿದರು. ಗದ್ದಲದ ನಡುವೆ ಗುಂಪು ಆತನ ಪತ್ನಿ ಹಾಗೂ ಆಕೆಯ ಕೈಯಲ್ಲಿದ್ದ 1 ವರ್ಷದ ಮಗುವಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ಆತ ಪೊಲೀಸ್ ದೂರು ದಾಖಲಿಸಿದ ಬಳಿಕ, ಕುಮಾರದುಂಗಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ದೂರಿನ ಹಿನ್ನೆಲೆಯಲ್ಲಿ ನಾವು ನಾಲ್ಕು ಮಂದಿಯನ್ನು ಬಂಧಿಸಿದ್ದೇವೆ. ಅಪರಾಧದಲ್ಲಿ ಭಾಗಿಯಾಗಿದ್ದ ಮಹಿಳೆಯೋರ್ವರನ್ನು ಕೂಡ ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ’’ ಎಂದು ಜಗನ್ನಾಥಪುರ ಎಸ್‌ಡಿಪಿಎ ರಫೇಲ್ ಮುರ್ಮು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದೆ ಹಾಗೂ ತನಿಖೆ ಆರಂಭವಾಗಿದೆ ಎಂದು ಮುರ್ಮು ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 7:30 pm

ಲಿಂಗಸಗೂರು | ಹೋಟೆಲ್ ಗೆ ನುಗ್ಗಿದ ಕಾರು; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಲಿಂಗಸಗೂರು: ಅತಿ ವೇಗದಿಂದ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೋಟೆಲೊಂದಕ್ಕೆ ಗೆ ನುಗ್ಗಿದ ಘಟನೆ ನಡೆದಿದೆ. ಲಿಂಗಸುಗೂರು ಪಟ್ಟಣದ ಬೆಳಗ್ಗೆ ಬೀದರ ಶ್ರೀರಂಗಪಟ್ಟಣ 150ಎ ರಾಷ್ಟಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗುರುಗುಂಟಾ ಕಡೆಯಿಂದ ಲಿಂಗಸಗೂರು ಪಟ್ಟಣಕ್ಕೆ ಬರುತ್ತಿರುವಾಗ ಕಾರನ್ನು ಅತೀವೇಗವಾಗಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಹೋಟೇಲ್ ಕಂಪೌಂಡ್ ಬಡಿದು ಹೊಟೇಲ್ ಒಳಗೆ ಬಿದ್ದಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯ ಪಾರಾಗಿದ್ದಾರೆ. ಕಾರ್ಯಕ್ರಮದ ನಿಮಿತ್ತ ಹೋಟೆಲ್ ಬಂದ್ ಮಾಡಲಾಗಿತ್ತು. ಆದ್ದರಿಂದ ಯಾವುದೆ ಅನಾಹುತಗಳ ಸಂಭವಿಸಿಲ್ಲ.

ವಾರ್ತಾ ಭಾರತಿ 18 Feb 2026 7:27 pm

T20 World Cup- ಅಭಿಷೇಕ್ ಶರ್ಮಾ `ಹ್ಯಾಟ್ರಿಕ್ ಶೂನ್ಯ'! ನೆದರ್ಲೆಂಡ್ ವಿರುದ್ಧವೂ ಭಾರತದ ಸ್ಫೋಟಕ ಬ್ಯಾಟರ್ ವಿಫಲ

ಐಸಿಸಿ 2026 ಟೂರ್ನಿಯಲ್ಲಿ ಭಾರತದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರ ದಯನೀಯ ವೈಫಲ್ಯ ಮುಂದುವರಿದಿದೆ. ಅಮೆರಿಕ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಶೂನ್ಯ ರನ್ ಗಳಿಗೆ ಒಟಾಗಿದ್ದ ಅವರು ಇದೀಗ ನೆದರ್ಲೆಂಡ್ ವಿರುದ್ಧವೂ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡಿದ್ದಾರೆ.ಬುಧವಾರ ಅಹ್ಮದಾಬಾದ್ ನ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಬ್ಯಾಟಿಂಗ್ ಆರಿಸಿಕೊಂಡರು. ಇಶಾನ್ ಕಿಶನ್ ಅವರೊಂದಿಗೆ ಆರಂಭಿಕನಾಗಿ ಕ್ರೀಸಿಗಿಳಿದ ಅಭಿಷೇಕ್ ಶರ್ಮಾ ಅವರು ಆಫ್ ಸ್ಪಿನ್ನರ್ ಆರ್ಯನ್ ದತ್ತ ಅವರು ಎಸೆದ ಮೊದಲ ಒವರ್ ನ ಮೂರನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಹೀಗಾಗಿ ಭಾರತ ತಂಡ ಶೂನ್ಯ ರನ್ ಗೇ ಮೊದಲ ವಿಕೆಟ್ ಕಳೆದುಕೊಂಡಿತು. ) ಅಭಿಷೇಕ್ ಶರ್ಮಾ ನಿರಂತರ ವೈಫಲ್ಯ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ರೂವಾಯಿಯಾಗಿ ಕಂಗೊಳಿಸಿದ್ದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಇತ್ತೀಚಿನ ದಿನಗಳಲ್ಲಿ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಟಿ20 ವಿಶ್ವಕಪ್ ಗೂ ಮುಂಚಿತವಾಗಿ ನ್ಯೂಜಿಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅವರು 84 ರನ್ ಗಳಿಸಿ ಮಿಂಚಿದ್ದರು. ಮುಂದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. 3ನೇ ಪಂದ್ಯದಲ್ಲಿ ಅಜೇಯ 68 ರನ್ ಗಳಿಸಿದ್ದರು. 4ನೇ ಪಂದ್ಯದಲ್ಲಿ ಮತ್ತೆ ಶೂನ್ಯ. 5ನೇ ಪಂದ್ಯದಲ್ಲಿ 30 ರನ್ ಗಳಿಸಿದ್ದರು. ಒಟ್ಟಾರೆ ಟೂರ್ನಿಯಲ್ಲಿ ಎರಡು ಅರ್ಧಶತಗಳನ್ನು ಬಾರಿಸಿದ್ದರೂ 2 ಬಾರಿ ಶೂನ್ಯಕ್ಕೆ ಔಟಾಗಿದ್ದರು.

ವಿಜಯ ಕರ್ನಾಟಕ 18 Feb 2026 7:23 pm

ಔಷಧ ಖರೀದಿಗೆ ರೂ.3 ಕೋಟಿ ಅನುದಾನ: ಆಸ್ಪತ್ರೆಗಳಲ್ಲಿ ಪರದಾಡುತ್ತಿದ್ದ ರೋಗಿಗಳಿಗೆ ನೆಮ್ಮದಿ

ಬೆಂಗಳೂರು: ಕರ್ನಾಟಕ ಸರ್ಕಾರ ಬುಧವಾರ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳ ಔಷಧಿಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳ ಅತ್ಯಗತ್ಯ ಔಷಧಿಗಳ ಖರೀದಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಬರೋಬ್ಬರಿ 03 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಔಷಧಿ ಸಂಬಂಧ ಕೆಲವು ಆಸ್ಪತ್ರೆಗಳಲ್ಲಿ ಪರದಾಡುತ್ತಿದ್ದ ರೋಗಿಗಳಿಗೆ ಸರ್ಕಾರದ ಆದೇಶ ನೆಮ್ಮದಿ ನೀಡಿದೆ. ಸರ್ಕಾರಿ ಆರೋಗ್ಯ

ಒನ್ ಇ೦ಡಿಯ 18 Feb 2026 7:07 pm

ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಕಳ್ಳತನವಾದ AI wearable ಮರಳಿ ಸಿಕ್ಕಿದೆ ಎಂದ ಬೆಂಗಳೂರು ಮೂಲದ ಉದ್ಯಮಿ

ನಿಮ್ಮ ಮೇಲೆ ಒತ್ತಡ ಹೇರಲಾಗಿದೆಯೇ ಎಂದು ಪ್ರಶ್ನಿಸಿದ ಸಾಮಾಜಿಕ ಜಾಲತಾಣಗಳ ಬಳಕೆದಾರರು

ವಾರ್ತಾ ಭಾರತಿ 18 Feb 2026 7:01 pm

ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ: ಉಡುಪಿ ಜಿಲ್ಲಾ ಸರ್ಜನ್ ಡಾ.ಅಶೋಕ್

ಉಡುಪಿ, ಫೆ.18: ಕರ್ಣಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿ ವತಿಯಿಂದ ಬ್ಯಾಂಕಿನ 102ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾಸ್ಪತ್ರೆ ರಕ್ತ ನೀಧಿ ಕೇಂದ್ರ ಮತ್ತು ಎನ್‌ಸಿಡಿ ವಿಭಾಗ ಮತ್ತು ಗಾಂಧಿ ಆಸ್ಪ ತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಅಂಬಾಗಿಲಿನಲ್ಲಿರುವ ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿಯಲ್ಲಿ ಬುಧವಾರ ಜರಗಿತು. ಉಡುಪಿ ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಮಾತನಾಡಿ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ತಿಳಿಸಿದರು. ಗಾಂಧಿ ಆಸ್ಪತ್ರೆಯ ಮುಖ್ಯಸ್ಥ ಡಾ.ಹರೀಶ್‌ಚಂದ್ರ ಮಾತನಾಡಿ, ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆ ಗಳಿದ್ದು ಹೋಗಲಾಡಿಸಬೇಕು. ಹೆಚ್ಚು ಜನರು ಸೇರುವ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿ ಸಬೇಕು. ಆ ಮೂಲಕ ಜನರಲ್ಲಿ ಅರಿವು ಮುಡಿಸಬೇಕು ಎಂದರು. ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕಿನ ನಿರ್ದೇಶಕ ಬಾಲಕೃಷ್ಣ ಹಲಸೆ ಉದ್ಘಾಟಿಸಿದರು. ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಕುಮಾರಿ ರಕ್ತದಾನ ಮಹತ್ವದ ಕುರಿತು ಮಾಹಿತಿ ನೀಡಿದರು.ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ಮತ್ತು ವಲಯ ಮುಖ್ಯಸ್ಥ ರಮೇಶ್ ವೈದ್ಯ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿದರ್ಶಕ ಡಾ.ವ್ಯಾಸರಾಜ ತಂತ್ರಿ ಮಾತನಾಡಿದರು. ಕರ್ನಾಟಕ ಬ್ಯಾಂಕಿನ ಮಖ್ಯ ಪ್ರಬಂಧಕ ಸುಬ್ರಹ್ಮಣ್ಯ ಬಾರ್ವೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಈ ಶಿಬಿರ ದಲ್ಲಿ ಸುಮಾರು 50 ಜನರು ರಕ್ತದಾನ ಮಾಡಿದರು ಹಾಗೂ ನೂರಾರು ಮಂದಿ ವಿವಿಧ ಪರೀಕ್ಷೆಗಳನ್ನು ಮಾಡಿದರು. ಉಚಿತ ಮಧುಮೇಹ ಪರೀಕ್ಷೆ ರಕ್ತದೊತ್ತಡ ಪರೀಕ್ಷೆ, ದಂತ ತಪಾಸಣೆ, ಇಸಿಜಿ ಪರೀಕ್ಷೆ, ಎಚ್‌ಬಿ ಪರೀಕ್ಷೆ, ಬ್ಲಡ್ ಗ್ರೂಪ್ ಪರೀಕ್ಷೆ ಹಾಗೂ ರಕ್ತದಾನವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಬ್ಯಾಂಕಿನ ಎಲ್ಲಾ ಗ್ರಾಹಕರು, ಸಾರ್ವಜನಿ ಕರು ಹಾಗೂ ಬ್ಯಾಂಕಿನ ನೌಕರರು ಈ ಉಚಿತ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡರು.

ವಾರ್ತಾ ಭಾರತಿ 18 Feb 2026 7:01 pm

ಬೆಳ್ವೆ: 53 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

ಕುಂದಾಪುರ, ಫೆ.18: ಟೀಮ್ ಮಲೆನಾಡು ಹ್ಯೂಮೇನಿಟರಿಯನ್ ಟ್ರಸ್ಟ್ ಬೆಳ್ವೆ ಇದರ ಆಶ್ರಯದಲ್ಲಿ ಹೆಬ್ರಿ ಹಾಲಾಡಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದ ಆಧಾರ ರಹಿತ 53 ಕುಟುಂಬಗಳಿಗೆ ರಂಝಾನ್ ತಿಂಗಳ ಪ್ರಯುಕ್ತ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಹಾಲ್‌ನಲ್ಲಿ ಜರಗಿತು. ಕಾರ್ಯಕ್ರಮವನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷ ನಕ್ವ ಯಾಹ್ಯ ಮಲ್ಪೆ ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು ಟೀಮ್ ಮಲೆನಾಡು ಹ್ಯೂಮೇನಿಟರಿಯನ್ ಟ್ರಸ್ಟ್‌ನ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು. ಪ್ರಮುಖರಾದ ಪೀರು ಸಾಹೇಬ್, ಅಬ್ದುಲ್ ಖಾದರ್ ಅಲ್ಬಾಡಿ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸದಸ್ಯ ಹರೂನ್ ರಶೀದ್ ಉಪಸ್ಥಿತರಿದ್ದರು ಉಡುಪಿ ಜಾಮಿಯಾ ಉಲ್ ಉಲೇಮಾ ಜಿಲ್ಲಾಧ್ಯಕ್ಷ ಹಾಗೂ ಟೀಮ್ ಮಲೆನಾಡು ಹ್ಯೂ ಮೇನಿಟರಿಯನ್ ಟ್ರಸ್ಟ್‌ನ ಟ್ರಸ್ಟಿ ಮೌಲಾನಾ ಜಮೀರ್ ಅಹ್ಮದ್ ರಷಾದಿ ಪ್ರಸ್ತಾವಿಕವಾಗಿ ಮಾತನಾಡಿದರು. ಬೆಳ್ವೆ ಜುಮ್ಮಾ ಮಸೀದಿ ಖತೀಬ್ ಮೌಲಾನಾ ಮೊಹಮ್ಮದ್ ರಫೀಕ್ ಕಿರಾತ್ ಪಠಿಸಿ ದುವಾ ನೆರವೇರಿಸಿದರು. ಟ್ರಸ್ಟಿ ಅರಾಫತ್ ಅಲ್ಬಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಅಬ್ದುಲ್ ಶುಕೂರ್ ಬೆಳ್ವೆ, ಕೋಶಾಧಿಕಾರಿ ಮೊಹಮ್ಮದ್ ಆಸಿಫ್ ಅಲ್ಬಾಡಿ ಸಹಕರಿಸಿದರು. ಟ್ರಸ್ಟಿ ಮೊಹಮ್ಮದ್ ರೇಯನ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು ವಂದಿಸಿದರು.

ವಾರ್ತಾ ಭಾರತಿ 18 Feb 2026 6:59 pm

ಉಡುಪಿ: ಯಕ್ಷಗಾನ ಕೇಂದ್ರಕ್ಕೆ ವಿದೇಶಿ ಅತಿಥಿಗಳ ಭೇಟಿ

ಉಡುಪಿ, ಫೆ.18: ನಗರದ ಇಂದ್ರಾಳಿಯಲ್ಲಿರುವ ಜಿಲ್ಲೆಯ ಜಾನಪದ ಕಲೆಯಾದ ಯಕ್ಷಗಾನದಲ್ಲಿ ತರಬೇತಿ ನೀಡುವ ಯಕ್ಷಗಾನ ಕೇಂದ್ರಕ್ಕೆ ಜಪಾನ್ ಹಾಗೂ ಕಾಂಬೋಡಿಯ ಅತಿಥಿಗಳನ್ನು ಭೇಟಿ ನೀಡಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಪಾನ್ ದೇಶದ ಅಂತಾರಾಷ್ಟ್ರೀಯ ಸಮುದಾಯ ಸೇವಾ ಕಾರ್ಯಗಳ (ಸಿಡಬ್ಲ್ಯುಸಿ) ಮುಖ್ಯಸ್ಥರಾದ ಪ್ರೊ. ಮಸಕ ಟೋಕಾ, ಕಾಂಬೋಡಿಯಾದ ಸಂಸ್ಕೃತಿ ಮತ್ತು ಕಲಾ ಮಂತ್ರಾಲಯದ ಸಹಾಯಕ ಸಚಿವ ಎಕ್ ಬುಂತಾ ಅವರು ಸಿಡಬ್ಲ್ಯುಸಿಯ ಸಲಹೆಗಾರರಾದ ಮನೋರಮ ಭಟ್ ಉಜಿರೆ, ಉಜಿರೆಯ ಉಪನ್ಯಾಸಕರಾದ ಶ್ರುತಕೀರ್ತಿ ಹಾಗೂ ಕಟೀಲು ಮೇಳದ ಕಲಾವಿದರೊಂದಿಗೆ ಇಂದ್ರಾಳಿಯ ಯಕ್ಷಗಾನ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರದ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ವಿ.ಜಿ ಶೆಟ್ಟಿ, ಕೇಂದ್ರದ ಗುರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 6:48 pm

ವಾಸ್ತವವಾದಿ ಸಿನೆಮಾ ಅಭಿರುಚಿ ಪ್ರೇಕ್ಷಕರಲ್ಲಿ ಬೆಳೆಸಬೇಕು: ಶೇಷಾದ್ರಿ

ಡಾ.ಕಾರಂತರ ಚಿತ್ರ ಪ್ರದರ್ಶನ, ಸಂವಾದ

ವಾರ್ತಾ ಭಾರತಿ 18 Feb 2026 6:47 pm

ಕೊಂಕಣ ರೈಲಿನಲ್ಲಿ ಟಿಟಿಇ ಸಕಾಲಿಕ ಕ್ರಮ: ಇಬ್ಬರು ಕಳ್ಳರ ಬಂಧನ; ಸೊತ್ತುಗಳು ವಶಕ್ಕೆ

ಉಡುಪಿ, ಫೆ.18: ರೈಲ್ವೆ ಸಿಬ್ಬಂದಿಗಳ ಸಕಾಲಿಕ ಎಚ್ಚರಿಕೆಯ ಕ್ರಮಗ ಳಿಂದಾಗಿ ಕೊಂಕಣ ರೈಲಿನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿ ರೈಲ್ವೆ ಪೊಲೀಸ್ ಪಡೆಗೆ ಹಸ್ತಾಂತರಿಸಿ, ಅವರು ಕದ್ದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಘಟನೆ ರೈಲು ನಂ.11004 ಟುಟಾರಿ ಎಕ್ಸ್‌ಪ್ರೆಸ್‌ನಲ್ಲಿ ರೋಹಾ ಮತ್ತು ರತ್ನಗಿರಿ ನಿಲ್ದಾಣದ ನಡುವೆ ಸೋಮವಾರ ನಡೆದಿದೆ. ರೈಲು ರೋಹಾ ನಿಲ್ದಾಣ ದಾಟಿದ ಬಳಿಕ ಬೆಳಗಿನ ಜಾವ 4:30ರ ಸುಮಾರಿಗೆ ಎಸ್‌2, ಎಸ್‌3, ಎಸ್‌4ರಲ್ಲಿ ಟಿಕೇಟ್ ಚೆಕ್ಕಿಂಗ್ ಮಾಡುತಿದ್ದ ರತ್ನಗಿರಿಯ ಟಿಟಿಇ ಸಚಿನ್ ಸಾವೇಕರ್ ಅವರಿಗೆ ಎಸ್‌2 ಕೋಚ್‌ನಲ್ಲಿ ಇಬ್ಬರು ಸಂಶಯಾಸ್ಪದವಾಗಿ ವರ್ತಿಸುತ್ತಿರು ವುದನ್ನು ಗಮನಿಸಿದರು. ಅವರಿಬ್ಬರ ಬಗ್ಗೆ ಸಂಶಯ ಬಲಗೊಳ್ಳುತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಸಚಿನ್, ಸಹ ಪ್ರಯಾಣಿಕರ ಸಹಕಾರರೊಂದಿಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದರು. ವಿಚಾರಣೆಯ ವೇಳೆಗೆ ಅವರ ಬಳಿ ಮಹಿಳೆಯರ ಹ್ಯಾಂಡ್‌ಬ್ಯಾಗ್ ಪತ್ತೆಯಾಗಿದ್ದು, ಅದು ರೈಲಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರದ್ದೆಂದು ಖಚಿತವಾಯಿತು. ಹ್ಯಾಂಡ್‌ಬ್ಯಾಗ್‌ನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಮಂಗಳಸೂತ್ರ, ಎರಡು ಜೊತೆ ಕಿವಿಯ ಬೆಂಡೋಲೆ, 4,750ರೂ. ನಗದು ಹಾಗೂ ಮೊಬೈಲ್ ಪೋನ್ ಪತ್ತೆಯಾಯಿತು. ಆದರೆ ಮಹಿಳೆ ತಿಳಿಸಿದಂತೆ ಒಂದು ಚಿನ್ನದ ಉಂಗುರ ಪತ್ತೆಯಾಗಲಿಲ್ಲ. ಬಳಿಕ ಆರೋಪಿಗಳಿಬ್ಬರನ್ನು ಪನ್ವೇಲ್‌ನ ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್)ಗೆ ಮುಂದಿನ ಕ್ರಮಕ್ಕೆ ಹಸ್ತಾಂತರಿಸಲಾಯಿತು. ಕರ್ತವ್ಯ ನಿರ್ವಹಣೆ ವೇಳೆ ತೋರಿದ ಎಚ್ಚರಿಕೆ, ಪರಿಸ್ಥಿತಿಯ ಸಮರ್ಪಕ ನಿರ್ವಹಣೆ, ಪ್ರಯಾಣಿಕರ ಸುರಕ್ಷತೆಗೆ ತೋರಿದ ಕಾಳಜಿಗಾಗಿ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಸಿಎಂಡಿ) ಸಂತೋಷ್ ಕುಮಾರ್ ಝಾ ಅವರು ಟಿಟಿಇ ಸಚಿನ್ ಸಾವೇಕರ್ ಅವರಿಗೆ 10,000ರೂ. ಗಳ ಪ್ರೋತ್ಸಾಹಕ ನಗದು ಬಹುಮಾನವನ್ನು ಘೋಷಿಸಿದರು.

ವಾರ್ತಾ ಭಾರತಿ 18 Feb 2026 6:44 pm

ಫೆ. 21 ರಿಂದ ‘ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ: ಶಶೀಲ್ ನಮೋಶಿ

ತಾಂತ್ರಿಕ ಪಾರ್ಕ್, AI ಕೇಂದ್ರ ಶಂಕುಸ್ಥಾಪನೆ

ವಾರ್ತಾ ಭಾರತಿ 18 Feb 2026 6:40 pm

ಬಂಡೀಪುರ-ನಾಗರಹೊಳೆ ಸಫಾರಿ ಹಂತಹಂತವಾಗಿ ಪುನಾರಂಭ : ಈಶ್ವರ್ ಖಂಡ್ರೆ

ಬೆಂಗಳೂರು : ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಳೆದ ನ.7ರಿಂದ ಸ್ಥಗಿತಗೊಳಿಸಲಾಗಿದ್ದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಯನ್ನು ತಾಂತ್ರಿಕ ಸಮಿತಿಯ ವರದಿ ಆಧರಿಸಿ ಹಂತ ಹಂತವಾಗಿ ಪುನಾರಂಭಿಸಲು ನಿರ್ಧರಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಬುಧವಾರ ವಿಕಾಸಸೌಧದಲ್ಲಿ ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮದ ಧಾರಣಾ ಸಾಮಥ್ರ್ಯವನ್ನು ವೈಜ್ಞಾನಿಕವಾಗಿ ನಿಗದಿ ಪಡಿಸಲು ರಚಿಸಲಾಗಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಾಂತ್ರಿಕ ಸಮಿತಿ ನೀಡಿರುವ ಪ್ರಾಥಮಿಕ ವರದಿಯ ಪರಾಮರ್ಶೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಹೆಗ್ಗಡ ದೇವನಕೋಟೆಯಲ್ಲಿ ರೈತರೂ ಸೇರಿದಂತೆ ಸಾವಿರಾರು ಸ್ಥಳೀಯರು, ರೆಸಾರ್ಟ್ ಸಿಬ್ಬಂದಿ ಪ್ರತಿಭಟನೆ ನಡೆಸಿ ಸಫಾರಿ ನಿಲ್ಲಿಸಿರುವುದರಿಂದ ತಮ್ಮ ಜೀವನೋಪಾಯಕ್ಕೆ ಅಡ್ಡಿಯಾಗಿದ್ದು, ಸಫಾರಿ ಪುನಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಮಾಧ್ಯಮಗಳಲ್ಲಿಯೂ ವರದಿಗಳು ಪ್ರಕಟವಾಗುತ್ತಿರುವುದರಿಂದ ಜೀವವೂ ಉಳಿಯಬೇಕು, ಜೀವನೋಪಾಯವೂ ಇರಬೇಕು ಎಂಬ ಕಾರಣಕ್ಕಾಗಿ ಸಫಾರಿಯನ್ನು ನಿಯಂತ್ರಿತವಾಗಿ ಮತ್ತು ಹಂತಹಂತವಾಗಿ ಪುನಾರಂಭ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು. ಬಂಡೀಪುರದಲ್ಲಿ ನವೆಂಬರ್ ವರೆಗೆ ನಡೆಯುತ್ತಿದ್ದ ಟ್ರಿಪ್, ಸಮಯ ಮತ್ತು ವಾಹನ ಸಂಖ್ಯೆಯಲ್ಲಿ ಕಡಿತ ಮಾಡಿ ಸಫಾರಿ ಪುನಾರಂಭಕ್ಕೆ ಸಮ್ಮತಿಸಲಾಗಿದೆ. ಈ ಹಿಂದೆ ಬಂಡೀಪುರದಲ್ಲಿ 8 ಗಂಟೆಗಳ ಕಾಲ ಸಫಾರಿ ನಡೆಯುತ್ತಿತ್ತು. ಈಗ ಅದನ್ನು 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿಸಲಾಗಿದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು. ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ನಿರ್ಧಾರ: ಕಳೆದ ಜ.2ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ತಾಂತ್ರಿಕ ಸಮಿತಿ ರಚಿಸಿ, ಅಧ್ಯಯನ ವರದಿಯ ಆಧಾರದಲ್ಲಿ ಹಂತಹಂತವಾಗಿ ಸಫಾರಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದರು. ಅದರಂತೆ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು, ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್ ವಿಜ್ಞಾನಿ, ಭೋಪಾಲ್‍ನ ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ಮಧ್ಯಂತರ ವರದಿಯ ಬಗ್ಗೆ ಇಂದು ಕೂಲಂಕಷವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಸಫಾರಿ ಆದಾಯದ ಮೂರನೇ ಒಂದು ಭಾಗ ಸ್ಥಳೀಯ ಅಭಿವೃದ್ಧಿಗೆ: ಪರಿಸರ ಪ್ರವಾಸೋದ್ಯಮ ಅಂದರೆ ಸಫಾರಿಯಿಂದ ಬರುವ ಒಟ್ಟು ಆದಾಯದ ಮೂರನೇ ಒಂದು ಭಾಗದಷ್ಟು ಹಣವನ್ನು ಅರಣ್ಯದಂಚಿನ ಗ್ರಾಮಗಳ ಸ್ಥಳೀಯ ಸಮುದಾಯದವರಿಗೆ ಕೌಶಲ್ಯ ಅಭಿವೃದ್ಧಿಗಾಗಿ, ಜಾನುವಾರುಗಳಿಗೆ ಮೇವು ಬೆಳೆಸಲು ಮತ್ತು ಪರಿಸರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಷರತ್ತಿನೊಂದಿಗೆ ಆರಂಭಿಸಲು ಮತ್ತು ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಸೂಕ್ತ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸುವ ಷರತ್ತಿನೊಂದಿಗೆ ಆರಂಭಿಸಲು ಸಮ್ಮತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದರ ಜೊತೆಗೆ ಸಫಾರಿ ವಾಹನಗಳನ್ನು ಕತ್ತಲಾದ ಬಳಿಕ ಓಡಿಸುವುದು, ಹೆಚ್ಚುವರಿ ಅವಧಿಗೆ ಓಡಿಸುವುದು ಮೊದಲಾದ ದುರ್ಬಳಕೆ ತಡೆಗಟ್ಟಲು ಕಡ್ಡಾಯವಾಗಿ ಮುಂದಿನ 2 ತಿಂಗಳೊಳಗಾಗಿ ಎಲ್ಲ ಸಫಾರಿ ವಾಹನಗಳಿಗೆ ಎಂಜಿನ್ ಸಂಪರ್ಕಿತ ಜಿಪಿಎಸ್ ಮತ್ತು ಡ್ಯಾಷ್‌ ಕ್ಯಾಮ್ ಅಳವಡಿಸಬೇಕು ಎಂದೂ ಸೂಚಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಹಿಂದಿನ ಮುಖ್ಯ ವನ್ಯಜೀವಿ ಪರಿಪಾಲಕರು ಕಳೆದ ಡಿ.28ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ, ಸರಗೂರು ಗಡಿ ಪ್ರದೇಶಗಳಲ್ಲಿ ಸ್ಥಾಪಿಸಿರುವ ಮಾನವ-ವನ್ಯಜೀವಿ ನಿರ್ವಹಣಾ ಶಿಬಿರಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದು, ಸಫಾರಿ ಸ್ಥಗಿತಗೊಳಿಸಿದ ಬಳಿಕ ಹೆಚ್ಚುವರಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಕಳೆದ 2 ತಿಂಗಳಲ್ಲಿ ಯಾವುದೇ ಪ್ರಮುಖ ಅಹಿತಕರ ಘಟನೆಗಳು ನಡೆಯದಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಸಫಾರಿ ಪುನಾರಂಭಿಸಬಹುದು ಎಂದು ಶಿಫಾರಸ್ಸು ಮಾಡಿದ್ದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036ಚದರ ಕಿಲೋ ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ ಆಗಿದೆ ಎಂದು ಅವರು ತಿಳಿಸಿದರು. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್ ಆಗಿದ್ದು, ಪರಿಸರ ಪ್ರವಾಸೋದ್ಯಮ ವಲಯ ಕೇವಲ 63 ಚದರ ಕಿಲೋ ಮೀಟರ್ ಅಂದರೆ ಶೇ.7.5 ಮಾತ್ರ. ಹೀಗಾಗಿ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು. ಸಿಬ್ಬಂದಿ ಕೊರತೆ ಬಗ್ಗೆ ಚರ್ಚೆ, ಶೇ.50ರಷ್ಟು ಸಫಾರಿ ವಾಹನ ಬಳಕೆ: ಬಂಡೀಪುರ, ಬಿ.ಆರ್.ಟಿ., ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ಮತ್ತು ವಾಹನಗಳ ಅಗತ್ಯದ ಬಗ್ಗೆ ಚರ್ಚಿಸಲಾಗಿದ್ದು, ನ.7ಕ್ಕೆ ಮುನ್ನ ಸಫಾರಿಯಲ್ಲಿ ಬಳಕೆ ಆಗುತ್ತಿದ್ದ ವಾಹನಗಳ ಪೈಕಿ ಪ್ರಥಮ ಹಂತದಲ್ಲಿ ಶೇ.50ರಷ್ಟು ವಾಹನಗಳನ್ನು ಮಾತ್ರವೇ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಉಳಿದ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಅರಣ್ಯದಂಚಿನ ಗ್ರಾಮಗಳ ಬಳಿ ಗಸ್ತು ಹೆಚ್ಚಿಸಲು ಬಳಸುವ ಮೂಲಕ ವನ್ಯ ಮೃಗಗಳು ನಾಡಿಗೆ ಬಾರದಂತೆ ತಡೆಯಲು ಸೂಚಿಸಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇವಲ ಶೇ.50ರಷ್ಟು ವಾಹನ ಬಳಕೆ ಮಾಡಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಎನ್.ಟಿ.ಸಿ.ಎ.ಗೆ ತಿಳಿಸಿಯೇ ಹುಲಿ ಸೆರೆ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ- ಎನ್.ಟಿ.ಸಿ.ಎ ರಾಜ್ಯದಲ್ಲಿ ಹುಲಿಗಳನ್ನು ಹಿಡಿಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ನಮ್ಮ ಇಲಾಖೆ ಪ್ರತಿಯೊಂದು ಹುಲಿಯನ್ನು ಹಿಡಿಯುವಾಗಲೂ ಎನ್.ಟಿ.ಸಿ.ಎ. ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಅನುಸರಿಸಿ, ಸಮಿತಿ ರಚಿಸಿ, ಸಮಿತಿ ಶಿಫಾರಸಿನಂತೆ ಹುಲಿ ಸೆರೆ ಕಾರ್ಯಾಚರಣೆ ನಡೆಸಿದೆ. ಈ ಸಮಿತಿಯಲ್ಲಿ ಎನ್.ಟಿ.ಸಿ.ಎ. ಪ್ರತಿನಿಧಿಯೂ ಇರುತ್ತಾರೆ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು. ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರಾ ಮತ್ತಿತರರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 18 Feb 2026 6:38 pm

ಈಶ್ವರ್ ಖಂಡ್ರೆ ಕೈಸೇರಿದ ತಜ್ಞರ ಸಮಿತಿ ಪ್ರಾಥಮಿಕ ವರದಿ: ಬಂಡೀಪುರ, ನಾಗರಹೊಳೆ ಸಫಾರಿ ಹಂತಹಂತವಾಗಿ ಪುನಾರಂಭ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036ಚದರ ಕಿಲೋ ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ ಆಗಿದೆ. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್ ಆಗಿದ್ದು, ಪರಿಸರ ಪ್ರವಾಸೋದ್ಯಮ ವಲಯ ಕೇವಲ 63 ಚದರ ಕಿಲೋ ಮೀಟರ್ ಅಂದರೆ ಶೇ.7.5 ಮಾತ್ರ. ಹೀಗಾಗಿ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ವಿಜಯ ಕರ್ನಾಟಕ 18 Feb 2026 6:34 pm