ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ; ಎ.16ರವರೆಗೆ ಅನುಷ್ಠಾನಗೊಳಿಸದಂತೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶವನ್ನು ಎಪ್ರಿಲ್ 16ರವರೆಗೆ ಅನುಷ್ಠಾನಗೊಳಿಸದಂತೆ ರಾಜ್ಯ ಸರ್ಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ ಹೈಕೋರ್ಟ್ ಮಧ್ಯಂತರ ನಿರ್ದೇಶನ ನೀಡಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ (ಮೂರನೇ ಬಾರಿ) ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರ ಪರ ವಕೀಲರು ಹಾಜರಾಗಿ, ಅರ್ಜಿ ವಿಚಾರಣೆಯನ್ನು ಏಪ್ರಿಲ್ 24 ಅಥವಾ 27ಕ್ಕೆ ಮುಂದೂಡಬೇಕು. ಅಲ್ಲಿಯವರೆಗೆ ಗಡಿಪಾರು ಆದೇಶ ಜಾರಿಗೆ ತಾತ್ಕಾಲಿಕ ತಡೆ ನೀಡಿ ಹೊರಡಿಸಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಬೇಕು ಎಂದು ಕೋರಿದರು. ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಇದು ಮೂರನೇ ಸುತ್ತಿನ ವ್ಯಾಜ್ಯವಾಗಿದೆ. ಅರ್ಜಿದಾರರನ್ನು ಗಡಿಪಾರು ಮಾಡಿ ಮೂರನೇ ಬಾರಿಗೆ ಆದೇಶ ಹೊರಡಿಸಲಾಗಿದೆ. ಪ್ರಕರಣ ಸಂಬಂಧ ಮೇಲ್ಮನವಿ ಪ್ರಾಧಿಕಾರದಲ್ಲಿ ಪರಿಹಾರ ಕಂಡುಕೊಳ್ಳಲು ಅರ್ಜಿದಾರರಿಗೆ ಅವಕಾಶವಿದೆ. ಅರ್ಜಿದಾರರು ರೌಡಿ ಶೀಟರ್ ಆಗಿದ್ದು, ಅವರ ವಿರುದ್ಧ 26 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಗಡಿಪಾರು ವಿಚಾರವಾಗಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶ ಮಾಡಿದೆ ಎಂದು ತಿಳಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಗಡಿಪಾರು ಆದೇಶ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿ ಮಧ್ಯಂತರ ಆದೇಶ ಮಾಡಲಾಗಿದೆ. ಆ ಆದೇಶವನ್ನು ಸುಖಾಸುಮ್ಮನೆ ಮುಂದುವರಿಸಲಾಗದು. ಅನಗತ್ಯವಾಗಿ ವಿಚಾರಣೆ ಮುಂದೂಡಿಕೆಗೆ ಕೋರಬಾರದು. ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಬೇಕಾದರೆ, ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗುವುದು ಎಂದು ಕಟುವಾಗಿಯೇ ನುಡಿಯಿತು. ಆಗ ಅರ್ಜಿದಾರರ ಪರ ವಕೀಲರು, ಅರ್ಜಿ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ನಿಗದಿಪಡಿಸಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಅರ್ಜಿ ವಿಚಾರಣೆಯ್ನು ಏಪ್ರಿಲ್ 16ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧದ ಗಡಿಪಾರು ಆದೇಶ ಜಾರಿಗೊಳಿಸದಂತೆ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು. ಜತೆಗೆ, ಏಪ್ರಿಲ್ 16ರಂದು ವಾದ ಮಂಡಿಸಲು ಸಂಪೂರ್ಣವಾಗಿ ಸಿದ್ಧವಾಗಿ ಬರುವಂತೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಮೌಖಿಕವಾಗಿ ಸೂಚಿಸಿತು.
ವಿಜಯಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ; ವೈದ್ಯರ ನಿಯೋಜನೆಗೆ ಆರೋಗ್ಯ ಇಲಾಖೆಗೆ ನಿರ್ದೇಶನ
ʼವಾರ್ತಾಭಾರತಿʼ ಫಲಶ್ರುತಿ
ಅರಣ್ಯ ಭೂಮಿ ಒತ್ತುವರಿ ವಿಚಾರ | ರಮೇಶ್ ಕುಮಾರ್ಗೆ ಹಿನ್ನಡೆ; 63 ಎಕರೆ ಜಮೀನು ತೆರವುಗೊಳಿಸಲು ಆದೇಶ
ಕೋಲಾರ : ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ಗೆ ತೀವ್ರ ಹಿನ್ನಡೆ ಉಂಟಾಗಿದೆ. 20 ವರ್ಷಗಳಿಂದ ನಡೆಸಿದ ಸುದೀರ್ಘ ಹೋರಾಟಕ್ಕೆ ಹಿನ್ನಡೆಯಾಗಿದೆ. ಇಂದು ಅರಣ್ಯ ಇಲಾಖೆ ಸಿ.ಸಿ.ಎಫ್ ಅವರು ಮಹತ್ವದ ಆದೇಶ ನೀಡಿದ್ದು ಅರಣ್ಯ ಇಲಾಖೆಗೆ ಸೇರಿದ 63 ಎಕರೆ ಜಮೀನನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ. ಅರಣ್ಯ ಕಾಯ್ದೆ, 1963 ರ ಸೆಕ್ಷನ್ 64-ಂ(3) ರ ಅಡಿಯಲ್ಲಿ ಸಿಸಿಎಫ್ ಮೇಲ್ಮನವಿ ನ್ಯಾಯವ್ಯಾಪ್ತಿ ಮತ್ತು ಅಧಿಕಾರಗಳನ್ನು ಚಲಾಯಿಸಿ, ಹೊಸಹುಡ್ಯ ಬಳಿ ಒತ್ತುವರಿಯಾಗಿರುವ 63 ಎಕರೆ ಜಮೀನು ತೆರವಿಗೆ ಆದೇಶ ಹೊರಡಿಸಲಾಗಿದೆ. ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 2011 ರಂದು ಹೊರಡಿಸಿದ ತೆರವು ಆದೇಶದ ಅನ್ವಯ ಹೊಸಹುಡ್ಯ ಗ್ರಾಮದ ಸ ನಂ. 1 ರಲ್ಲಿ 6 ಎಕರೆ ಮತ್ತು ಸ. ನಂ. 2 ರಲ್ಲಿ 54 ಎಕರೆ 23 ಗುಂಟೆ ಒತ್ತುವರಿ ತೆರವಿಗೆ ಆದೇಶ ಮಾಡಲಾಗಿತ್ತು, ಆದರೆ, ಈ ಸಂಬಂಧ ಕೆ.ಆರ್. ರಮೇಶ್ ಕುಮಾರ್ ಸಲ್ಲಿಸಿದ ಮೇಲ್ಮನವಿ ಅರ್ಹತೆ ಇಲ್ಲದ ಕಾರಣ ವಜಾ ಮಾಡಲಾಗಿದೆ. 15 ಹಾಗೂ 16 ಜನವರಿ 2025 ರಂದು ನಡೆಸಿದ ಜಂಟಿ ಸಮೀಕ್ಷೆಯಿಂದ ನಿರ್ಣಾಯಕವಾಗಿದ್ದು, ಈ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 30 (ಮೂವತ್ತು) ದಿನಗಳ ಒಳಗೆ ಮೇಲ್ಮನವಿದಾರರು ಅತಿಕ್ರಮಣ ಮಾಡಲಾದ ಭೂಮಿಯನ್ನು ತೆರವುಗೊಳಿಸಲು ಆದೇಶಿಸಲಾಗಿದೆ. ಶಾಂತಿಯುತವಾಗಿ ಹಸ್ತಾಂತರಿಸಬೇಕೆಂದು ನಿರ್ದೇಶಿಸಲಾಗಿದೆ. ನಿಗದಿತ ಅವಧಿಯೊಳಗೆ ಪಾಲಿಸಲು ವಿಫಲವಾದರೆ, ಕೋಲಾರದ ಅರಣ್ಯ ಸಂರಕ್ಷಣಾಧಿಕಾರಿಗಳು ಅತಿಕ್ರಮಣವನ್ನು ತೆರವುಗೊಳಿಸಲು. ಸದರಿ ಅರಣ್ಯದ ಸ್ವಾಧೀನವನ್ನು ಪಡೆದುಕೊಳ್ಳುವಂತೆ ಆದೇಶ ಮಾಡಲಾಗಿದೆ.
ನಾಡೋಜ ಡಾ.ಎಸ್.ಆರ್.ರಾಮಸ್ವಾಮಿ ನಿಧನ
ಬೆಂಗಳೂರು : ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷ, ನಾಡೋಜ ಡಾ.ಎಸ್.ಆರ್.ರಾಮಸ್ವಾಮಿ (88) ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಶಂಕರಪುರಂನ ರಂಗರಾವ್ ರಸ್ತೆಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ನಗರದ ಚಾಮರಾಜಪೇಟೆ ಕೆಂಪೇಗೌಡನಗರದ ಪರಿಷತ್ತಿನ ಕೇಶವಶಿಲ್ಪಾದಲ್ಲಿ ಬೆಳಗ್ಗೆ 10.30 ರಿಂದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ, ಲೇಖಕ ಬಾಬು ಕೃಷ್ಣಮೂರ್ತಿ, ಚಿಂತಕರಾದ ಜಿ.ಬಿ.ಹರೀಶ, ಸೂರ್ಯಪ್ರಕಾಶ ಪಂಡಿತ್, ವಿ.ಬಿ.ಆರತಿ, ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ್, ಪರಿಷತ್ ಸದಸ್ಯ ಸಿ.ಟಿ.ರವಿ, ಕಸಾಪ ಮಾಜಿ ಅಧ್ಯಕ್ಷ ಮಹೇಶ್ ಜೋಶಿ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಅನಂತರ, ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು. ’ ಆರು ದಶಕಗಳ ಕಾಲ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಡಾ.ಎಸ್.ಆರ್. ರಾಮಸ್ವಾಮಿ ಅವರು 1966ರಿಂದ ರಾಷ್ಟ್ರೋತ್ಥಾನ ಪರಿಷತ್ ನ ಜೊತೆಗೆ ನಿಕಟ ಸಂಪರ್ಕ ಹೊಂದಿದವರು. ಕಳೆದ 47 ವರ್ಷಗಳಿಂದ (1979) ಉತ್ಥಾನ ಮಾಸಪತ್ರಿಕೆಯ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ. 1972-1979ರ ಅವಧಿಯಲ್ಲಿ ‘ಸುಧಾ’ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಗುವಾಹಟಿಯಲ್ಲಿ ಸರಿಸಾಟಿಯಿಲ್ಲದ ವೈಭವ್ ಸೂರ್ಯವಂಶಿ! ಹಾಲಿ ಚಾಂಪಿಯನ್ RCB `ಜೋಶ್' ಗೇ ಪೆಟ್ಟು ಕೊಟ್ಟ 15ರ ಬಾಲಕ
ವಿಶ್ವದ ಅತ್ಯಂತ ಕರಾರುವಾಕ್ ಬೌಲರ್ ಗಳಲ್ಲಿ ಒಬ್ಬರಾಗಿರುವ ಜೋಶ್ ಹೇಜಲ್ವುಡ್ ಅವರು ಗಾಯದಿಂದ ಚೇತರಿಸಿ ಯಾವಾಗ ಆಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದರು ಕ್ರಿಕೆಟ್ ಪ್ರೇಮಿಗಳು. ಬೀಡುಬೀಸು ಬ್ಯಾಟಿಂಗ್ ಗೆ ಹೆಸರಾಗಿರುವ ಬಾಲಕ ವೈಭವ್ ಸೂರ್ಯವಂಶಿ ಮಾತ್ರ ಒಂದೇ ಓವರ್ ನಲ್ಲಿ 19 ರನ್ ಬಾಚುವ ಮೂಲಕ ಅವರನ್ನೂ ಲೆಕ್ಕಕ್ಕಿಲ್ಲದಂತೆ ಮಾಡಿಬಿಟ್ಟ! 15ರ ಹರೆಯದ ಪೋರನ ಬ್ಯಾಟಿಂಗ್ ವೈಭವದ ಮುಂದೆ ಮಂಕಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ ಗಳಿಂದ ಪರಾಭವಗೊಂಡಿತು. ಈ ಮೂಲಕ ಸೀಸನ್ ನಲ್ಲಿ ನಿರಂತರ ನಾಲ್ಕನೇ ಜಯ ಸಂಪಾದಿಸಿದ ರಾಜಸ್ಥಾನ ರಾಯಲ್ಸ್ 8 ಅಂಕಗಳೊಂದಿಗೆ ಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು. ಸೋಲನುಭವಿಸಿದರೂ ಆರ್ ಸಿಬಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲೇ ಮುಂದುವರಿದಿದೆ. ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಏಪ್ರಿಲ್ 10ರ ಶುಕ್ರವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 201 ರನ್ ಕಲೆ ಹಾಕಿದರು. ಉತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 12 ಎಸೆತಗಳು ಬಾಕಿ ಉಳಿದಿದ್ದಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ()ರಾಜಸ್ಥಾನ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(8 ಎಸೆತದಲ್ಲಿ 13 ರನ್) ಅವರ ವಿಕೆಟ್ ಅನ್ನು ಜೋಶ್ ಹೇಜಲ್ವುಡ್ ಅವರು ಪಡೆದಾಗ ಆರ್ ಸಿಬಿ ಪಾಳಯದಲ್ಲಿ ಸಡಗರ, ಸಂಭ್ರಮವಿತ್ತು. ಆದರೆ ಅದನ್ನು ಕೆಲವೇ ನಿಮಿಷಗಳಲ್ಲಿ ಕಿತ್ತುಕೊಂಡದ್ದು ವೈಭವ್ ಸೂರ್ಯವಂಶಿ. ಸೀಸನ್ ನಲ್ಲಿ ಎರಡನೇ ಬಾರಿಗೆ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅವರು ಔಟಾಗುವ ಮುಂಚೆ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ಗಳನ್ನು ಒಳಗೊಂಡ 71 ರನ್ ಬಾರಿಸಿದರು. ಹೇಜಲ್ವುಡ್ ವಿರುದ್ಧ ಆಕ್ರಮಣಕಾರಿ ಆಟ ವಿಶೇಷವೆಂದರೆ ಈ ಹಿಂದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಸವಾರಿ ನಡೆಸಿದ್ದ ವೈಭವ್ ಈ ಬಾರಿ ಆರ್ ಸಿಬಿಯ ಪ್ರಧಾನ ವೇಗಿ ಜೋಶ್ ಹೇಜಲ್ವುಡ್ ಅವರ ಮೇಲೆ ಏರಿ ಹೋದರು. ಮೊದಲ ಬಾರಿ ಆಸ್ಟ್ರೇಲಿಯಾದ ವೇಗಿಯನ್ನು ಎದುರಿಸಿದ ಅವರು ಒಂದೇ ಓವರ್ ನಲ್ಲಿ 19 ರನ್ ಬಾರಿಸಿದರು. 3 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಅಲ್ಲಿಗೆ ಆರ್ ಸಿಬಿಯ ಜಂಘಾಬಲವೇ ಉಡುಗಿಹೋಯಿತು. ಪಂದ್ಯ ಸಂಪೂರ್ಣವಾಗಿ ಆರ್ ಸಿಬಿ ಕೈತಪ್ಪಿ ಹೋಯಿತು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ತಂಡದ ವಿಕೆಟ್ ಗಳು ತರಗೆಲೆಯಂತೆ ಬೀಳುತ್ತಿದ್ದ ಸಂದರ್ಭದಲ್ಲಿ ಆಸರೆಯಾದವರು ನಾಯಕ . ಕೇವಲ 40 ಎಸೆತಗಳನ್ನು ಎದುರಿಸಿದ ಅವರು 4 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ ಗಳನ್ನು ಒಳಗೊಂಡ 63 ರನ್ ಗಳಿಸಿ ಔಟಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಅವರು 15 ಎಸತೆದಲ್ಲಿ 29 ರನ್ ಬಾರಿಸಿದರು. ಅವರು ಕೊನೇ ಓವರ್ ನಲ್ಲಿ 21 ರನ್ ಬಾಚಿದ್ದರಿಂದ ತಂಡದ ಮೊತ್ತ 200 ದಾಟಿತು. ಸಂಕ್ಷಿಪ್ತ ಸ್ಕೋರ್ ಆರ್ ಸಿಬಿ 20 ಓವರ್ ಗಳಲ್ಲಿ 201/8, ಪಾಟೀದಾರ್ 63(40), ಕೊಹ್ಲಿ 32(16), ವೆಂಕಟೇಶ್ ಅಯ್ಯರ್ 29(15), ಶೆಫರ್ಡ್ 22(11), ಆರ್ಚರ್ 33ಕ್ಕೆ 2, ಬಿಷ್ಣೋಯಿ 32ಕ್ಕೆ 2, ಬ್ರಿಜೇಶ್ 37ಕ್ಕೆ 2. ರಾಜಸ್ಥಾನ ರಾಯಲ್ಸ್ 18 ಓವರ್ ಗಳಲ್ಲಿ 202/4, ಧ್ರುವ್ ಜ್ಯುರೆಲ್ ಅಜೇಯ 81(43), ವೈಭವ್ ಸೂರ್ಯವಂಶಿ 81(43), ರವೀಂದ್ರ ಜಡೇಜಾ 24(25), ಜೋಶ್ ಹೇಜಲ್ವುಡ್ 44ಕ್ಕೆ 2, ಕೃನಾಲ್ ಪಾಂಡ್ಯ 30ಕ್ಕೆ 2
ಗ್ಯಾಸ್ ಇಲ್ವಾ?....ಇಂಡಕ್ಷನ್ ಪ್ಲೇಟ್ ತಗೊಂಡ್ಬಿಡಿ
ದೇಶದಲ್ಲಿ ತಿಂಗಳಿಗೆ 1,000-2,000 ಯೂನಿಟ್ಗಳಷ್ಟೇ ಮಾರಾಟ ಇದ್ದ ಇಂಡಕ್ಷನ್ ಪ್ಲೇಟ್ಗಳು ಈಗ ಏಕಾಏಕಿ, ದಿನಕ್ಕೆ ಎರಡು ಲಕ್ಷಕ್ಕೂ ಮಿಕ್ಕಿ ಯೂನಿಟ್ಗಳಷ್ಟು ಪ್ರಮಾಣದಲ್ಲಿ ಮಾರಾಟ ಆಗತೊಡಗಿವೆಯಂತೆ. ಬೇಸಿಕ್ ಮಾಡೆಲ್ಗೆ ಅಂದಾಜು 1,800-2,000 ರೂ.ಗಳ ಬೆಲೆ ಇದ್ದದ್ದು, ಈಗ ಕಾಳಸಂತೆಯಲ್ಲಿ ಹಲವು ಪಟ್ಟು ಹೆಚ್ಚು ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಆಪತ್ತಿನ ಕಾಲದಲ್ಲಿ ಒಂದು ಸರಕಾರ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದು, ಆ ಸರಕಾರದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ನಾಯಕತ್ವದ ಅಥವಾ ಆ ನಾಯಕತ್ವಕ್ಕೆ ಸಲಹೆ ನೀಡುವ ಥಿಂಕ್ ಟ್ಯಾಂಕ್ನ ಬುದ್ಧಿ ಸಾಮರ್ಥ್ಯ, ದೂರದೃಷ್ಟಿ, ಸನ್ನಿವೇಶದ ಸಮಗ್ರ ಗೃಹಿಕೆ... ಇತ್ಯಾದಿ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಈ ಪ್ರಕ್ರಿಯೆಯಲ್ಲಿ ‘‘ಗ್ಯಾಲರಿಯಲ್ಲಿ ಕುಳಿತವರ ಬೇಡಿಕೆಗಳನ್ನು ಮನ್ನಿಸಿ ಸಿಕ್ಸರ್ ಹೊಡೆಯುವ’’ ಆಟಕ್ಕೆ ಜಾಗವೇ ಇಲ್ಲ; ಇರಬಾರದು. ಈ ಗ್ಯಾಲರಿ ಖುಷಿಪಡಿಸುವ ಆಟ ಪುನರಾವರ್ತಿಸತೊಡಗಿದರೆ, ಆಗಿರುವ ಲೋಪಗಳಿಂದ ಕಲ್ಲಿಯುವುದಕ್ಕೇನೂ ಉಳಿದಿಲ್ಲ ಎಂಬ ಮನೋಸ್ಥಿತಿ ಬಂದೊದಗಿದರೆ, ಅದು ಆತಂಕದ ಸ್ಥಿತಿ. ಆಗ, ಅಲ್ಲಿ ಗ್ಯಾಲರಿಯಲ್ಲಿ ಕುಳಿತಿರುವವರು ಯಾರು? ಎಂದು ಗುರುತಿಸಿಕೊಳ್ಳುವುದು ಅಗತ್ಯ. ಪಶ್ಚಿಮ ಏಶ್ಯ ಯುದ್ಧ ಸನ್ನಿವೇಶದ ಅಡ್ಡ ಪರಿಣಾಮಗಳನ್ನು ತಗ್ಗಿಸಿಕೊಳ್ಳುವುದಕ್ಕೋಸ್ಕರ ಭಾರತ ಸರಕಾರವು ದೇಶದ ಅಡುಗೆಮನೆಗಳಲ್ಲಿ ವಿದ್ಯುತ್ ಚಾಲಿತ ಅಡುಗೆಗೆ (ಇಂಡಕ್ಷನ್ ಪ್ಲೇಟ್) ಪ್ರೋತ್ಸಾಹ ನೀಡಲು ತೀರ್ಮಾನಿಸಿದೆ ಮತ್ತು ಅದಕ್ಕಾಗಿ, ಬಡವರು ಮತ್ತು ದುರ್ಬಲರಿಗೆ ಶೂನ್ಯ ಬಡ್ಡಿ ದರದಲ್ಲಿ ಮಾಸಿಕ ಕಂತಿನ ಮೇಲೆ ಇಂಡಕ್ಷನ್ ಪ್ಲೇಟ್ಗಳನ್ನು ಒದಗಿಸುವ ಯೋಚನೆ ಆರಂಭಗೊಂಡಿದೆಯಂತೆ; ಅದಕ್ಕಾಗಿ ಸರಕಾರ ಈಗಾಗಲೇ ವಿಶ್ವ ಬ್ಯಾಂಕ್, ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್ಗಳ ಜೊತೆ ಮಾತುಕತೆಗಳನ್ನು ಆರಂಭಿಸಿದೆಯಂತೆ. ಬಲ್ಲ ಮೂಲಗಳನ್ನು ಉಲ್ಲೇಖಿಸಿ, ‘ದಿ ಮಿಂಟ್’ ಪತ್ರಿಕೆ ಈ ಬಗ್ಗೆ ವರದಿ (ಎಪ್ರಿಲ್ 07) ಮಾಡಿತ್ತು. ದೇಶದಲ್ಲಿ ತಿಂಗಳಿಗೆ 1,000-2,000 ಯೂನಿಟ್ಗಳಷ್ಟೇ ಮಾರಾಟ ಇದ್ದ ಇಂಡಕ್ಷನ್ ಪ್ಲೇಟ್ಗಳು ಈಗ ಏಕಾಏಕಿ, ದಿನಕ್ಕೆ ಎರಡು ಲಕ್ಷಕ್ಕೂ ಮಿಕ್ಕಿ ಯೂನಿಟ್ಗಳಷ್ಟು ಪ್ರಮಾಣದಲ್ಲಿ ಮಾರಾಟ ಆಗತೊಡಗಿವೆಯಂತೆ. ಬೇಸಿಕ್ ಮಾಡೆಲ್ಗೆ ಅಂದಾಜು 1,800-2,000ರೂ.ಗಳ ಬೆಲೆ ಇದ್ದದ್ದು, ಈಗ ಕಾಳಸಂತೆಯಲ್ಲಿ ಹಲವು ಪಟ್ಟು ಹೆಚ್ಚು ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಗಮನಾರ್ಹ ಸಂಗತಿ ಎಂದರೆ, ಈ ಇಂಡಕ್ಷನ್ ಪ್ಲೇಟ್ಗಳು ಬಹುತೇಕ ಚೀನಾದಲ್ಲೇ ತಯಾರಾಗಿ ಬರುವಂತಹವು ಅಥವಾ ಬಹುತೇಕ ಶೇ. 60ರಷ್ಟು ಬಿಡಿಭಾಗಗಳು ಚೀನಾದಿಂದ ಆಮದಾಗಿ, ಇಲ್ಲಿ ಅಸೆಂಬ್ಲಿ ಮಾಡಿಸಿಕೊಂಡು, ಸ್ಥಳೀಯ ಬ್ರ್ಯಾಂಡ್ ಸೀಲು ಒತ್ತಿಸಿಕೊಂಡು ಮಾರಾಟವಾಗುವಂತಹವು. ಭಾರತ ಸರಕಾರವು ದೇಶದ ಒಳಗೆ ಇಂಧನ ಕ್ಷಮತೆಗೆ ಸಂಬಂಧಿಸಿ, ದಿಕ್ಕುದಿಸೆ ಇಲ್ಲದಂತೆ ಕಾರ್ಯಾಚರಿಸುತ್ತಿದೆ ಎಂಬುದಕ್ಕೆ ಈ ಬೆಳವಣಿಗೆ ಜೀವಂತ ಉದಾಹರಣೆ. 2023 ನವೆಂಬರ್ 2ರಂದು ವಿದ್ಯುತ್ ಮತ್ತು ನವೀಕರಿಸಬಲ್ಲ ಇಂಧನ ಇಲಾಖೆಯ ಸಚಿವರಾಗಿದ್ದ ಆರ್.ಕೆ. ಸಿಂಗ್ ಅವರು, ತಮ್ಮ ಇಲಾಖೆ ಹಾಗೂ ಸರಕಾರಿ ಸ್ವಾಮ್ಯದ ಎನರ್ಜಿ ಎಫೀಷಿಯನ್ಸಿ ಸರ್ವೀಸಸ್ ಲಿಮಿಟೆಡ್ (EESL) ವತಿಯಿಂದ ದೇಶದ ಬಡ ಕುಟುಂಬಗಳಿಗೆ 20 ಲಕ್ಷ ಇಂಡಕ್ಷನ್ ಪ್ಲೇಟ್ಗಳನ್ನು ವಿತರಿಸುವ ಉದ್ದೇಶವುಳ್ಳ ದಿ ನ್ಯಾಷನಲ್ ಎಫೀಷಿಯಂಟ್ ಕುಕಿಂಗ್ ಪ್ರಾಜೆಕ್ಟ್ (NECP)ಗೆ ಚಾಲನೆ ನೀಡಿದ್ದರು. (ಆಧಾರ: PIB Release ID: 1974191). ಸಾರ್ವಜನಿಕರಿಂದ ಬೇಡಿಕೆ ಇಲ್ಲದೆ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಆದರೆ ಈಗ, ಏಕಾಏಕಿ ಬೇಡಿಕೆ ಏರಿರುವ ಹಿನ್ನೆಲೆಯಲ್ಲಿ, ಸರಕಾರವು ಈ ಯೋಜನೆಗೆ ಮರುಜೀವ ನೀಡುವ ಚಿಂತನೆ ಆರಂಭಿಸಿರುವಂತಿದೆ. ಭಾರತ ತನ್ನ ಮನೆವಾರ್ತೆಯ ಇಂಧನಕ್ಕೆ ಸಂಬಂಧಿಸಿದಂತೆ ವಾರ್ಷಿಕ ಎಲ್ಪಿಜಿ ಬೇಡಿಕೆಯ ಶೇ. 65ರಷ್ಟಕ್ಕೆ ಆಮದನ್ನು ಅವಲಂಬಿಸಿದೆ. ಆ ಆಮದಿನ ಶೇ. 90 ಭಾಗ ಈಗ ಕದನ ಕೋಲಾಹಲ ನಡೆಯುತ್ತಿರುವ ಪಶ್ಚಿಮ ಏಶ್ಯದಿಂದಲೇ ಬರಬೇಕಿದೆ. ಯುದ್ಧದ ವಾತಾವರಣ ಮುಂದುವರಿದರೆ, ಭಾರತಕ್ಕೆ ಪರ್ಯಾಯ ಅಡುಗೆ ಇಂಧನ ಮೂಲಗಳನ್ನು ಗುರುತಿಸಿಟ್ಟುಕೊಳ್ಳುವುದು ಅನಿವಾರ್ಯ ಆಗಲಿದೆ. ಅದಕ್ಕಾಗಿಯೇ ಏಕಾಏಕಿ LNG ಬಳಕೆಗೆ ಒತ್ತಾಯ, ಸೀಮೆ ಎಣ್ಣೆಗೆ ಮರುಜೀವ, ಕಟ್ಟಿಗೆ ಬಳಕೆಗೂ ಅವಕಾಶ, ಇಂಡಕ್ಷನ್ ಪ್ಲೇಟ್ಗಳತ್ತ ದೃಷ್ಟಿ... ಮೊದಲಾದ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದಿವೆ. ಕೋವಿಡ್ ಕಾಲದ ನೆನಪುಗಳು ಕೋವಿಡ್ ಜಗನ್ಮಾರಿಯ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯೊಂದು ಸದ್ದು ಮಾಡಿತ್ತು. ಮೇ 12, 2020ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು ದೇಶವು ಹೇಗೆ ಆಪತ್ತನ್ನು ಅವಕಾಶವಾಗಿ ಬದಲಿಸಿಕೊಂಡಿತು (ಆಪದಾ ಕೋ ಅವಸರ್ ಮೇ ಬದಲಾ) ಎಂದು ವಿವರಿಸಿದ್ದರು. ಕೋವಿಡ್ ಬರುವ ಮುನ್ನ ದೇಶದಲ್ಲಿ ಒಂದೇ ಒಂದು PPE ಕಿಟ್ ಅಥವಾ ಎನ್95 ಮಾಸ್ಕ್ ತಯಾರಾಗುತ್ತಿರಲಿಲ್ಲ, ಆದರೆ ಈಗ ಪ್ರತಿದಿನ ಎರಡು ಲಕ್ಷದಷ್ಟು ತಯಾರಾಗುತ್ತಿವೆ ಎಂದು ಭಾರತದ ಆತ್ಮನಿರ್ಭರತೆಯ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಧಾನಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈಗ ಹಿಂದಿರುಗಿ ನೋಡಿದರೆ, ಅಂದಿನ ಆ ಬೀಸುವ ಕತ್ತಿ ತಪ್ಪಿಸಿಕೊಳ್ಳುವ ತೀರ್ಮಾನಗಳು ಆ ಬಳಿಕ ಎತ್ತ ತಲುಪಿದವು ಎಂಬುದನ್ನು ಯಾರೂ ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ಅಂತಹ ಕೆಲವು ಐಟಂಗಳನ್ನು ಒಂದೊಂದಾಗಿ ಗಮನಿಸಿದರೆ, ಹೆಚ್ಚಿನಂಶ ಈಗ ಈ ಚೀನಾ ಮಾಲು ಇಂಡಕ್ಷನ್ ಪ್ಲೇಟುಗಳು, ಅಂತಿಮವಾಗಿ ನಮ್ಮ ಉದ್ಯಮಗಳನ್ನು ಈ ಬೀಸುವ ಕತ್ತಿ ತಪ್ಪಿಸಿಕೊಳ್ಳುವ ತಂತ್ರದ ಹಾದಿಯಲ್ಲಿ ಎಲ್ಲಿಗೆ ತಲುಪಿಸಲಿವೆ ಎಂಬ ಚಿತ್ರಣ ಸಿಕ್ಕೀತು. ಎಥನಾಲ್ ಕೋವಿಡ್ ಕಾಲದಲ್ಲಿ ಸ್ಯಾನಿಟೈಸರ್ ಆಗಿ ಪರಿಚಿತವಾಗಿದ್ದ ಎಥನಾಲ್ 2019ಕ್ಕಿಂತ ಮೊದಲು ಭಾರತದಲ್ಲಿ ಉತ್ಪಾದನೆ ಆಗುತ್ತಿದ್ದುದು, ವರ್ಷಕ್ಕೆ ಕೇವಲ 10 ಲಕ್ಷ ಲೀಟರ್. ಕೋವಿಡ್ ಕಾಲದಲ್ಲಿ ಅದು ದಿನಕ್ಕೆ 30 ಲಕ್ಷ ಲೀಟರ್ಗಳಿಗೆ ಏರಿತು. ಇದ್ದಬದ್ದ ಸಕ್ಕರೆ ಕಾರ್ಖಾನೆಗಳೆಲ್ಲ ಎಥನಾಲ್ ಉತ್ಪಾದನೆಗೆ ತೊಡಗಿಕೊಂಡವು. ಕಡೆಗೆ ಸ್ಯಾನಿಟೈಸರ್ ಬೇಡಿಕೆ ಕಡಿಮೆ ಆದಾಗ, ಉತ್ಪಾದನೆ ಹೆಚ್ಚಾಗಿರುವ ಎಥನಾಲ್ ಸಂಗ್ರಹವನ್ನು ಖರ್ಚು ಮಾಡಲು, ಅದನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡುವ ಯೋಜನೆ ಚುರುಕು ಪಡೆಯಿತು. ಇದು ಇನ್ನೊಂದು ವಿಕೋಪಕ್ಕೆ ಹೋಗಿ, ಫುಡ್ ಕಾರ್ಪೊರೇಷನ್ (FCI) ಬಳಿ ಇರುವ ಅಕ್ಕಿ ದಾಸ್ತಾನನ್ನೂ ಈ ಎಥನಾಲ್ ಉತ್ಪಾದನೆಗೆ ಬಳಸಲಾರಂಭಿಸಲಾಯಿತು. (ರಾಜ್ಯಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2848, ದಿನಾಂಕ 18-08-2025). ಅತಿಯಾಗಿ ನೀರು ಬಳಸಿ ಬೆಳೆಯುವ ಅಕ್ಕಿ, ಈಗ ಮನುಷ್ಯರ ಆಹಾರ ಆಗುವ ಬದಲಿಗೆ, ವಾಹನಗಳ ಪೆಟ್ರೋಲಿಗೆ ಮಿಶ್ರಣ ಆಗಿ ಬದಲಾಗಿದೆ. ಹೀಗೆ, ಒಂದು ಸಮಸ್ಯೆ ಪರಿಹರಿಸಲು ಹೊರಟ ಸರಕಾರ, ನೂರು ಸಮಸ್ಯೆಗಳನ್ನೀಗ ತಲೆಯ ಮೇಲೆ ಎಳೆದುಕೊಂಡಿದೆ. ಎನ್95 ಮಾಸ್ಕ್ ಭಾರತದಲ್ಲಿ 2020 ಮಾರ್ಚ್ ಹೊತ್ತಿಗೆ ಉತ್ಪಾದನೆ ಆಗುತ್ತಿದ್ದುದು, ಇಲ್ಲಿನ ಬೇಡಿಕೆ ಪೂರೈಸಲು ಅಗತ್ಯವಿರುವಷ್ಟೇ, ಅಂದರೆ ತಿಂಗಳಿಗೆ ಅಂದಾಜು 20 ಲಕ್ಷ ಮಾಸ್ಕ್ಗಳು. ಕೋವಿಡ್ ಕಾಲದಲ್ಲಿ ದೇಶದಾದ್ಯಂತ 241 ಹೊಸ, ಆತ್ಮನಿರ್ಭರ ಮಾಸ್ಕ್ ಕಾರ್ಖಾನೆಗಳು 2021 ಮೇ ಹೊತ್ತಿಗೆ ತಿಂಗಳಿಗೆ ಮೂರು ಕೋಟಿ ಎನ್95 ಮಾಸ್ಕ್ ಉತ್ಪಾದನೆ ಮಾಡತೊಡಗಿದ್ದವು. ಈಗ ಕೋವಿಡ್ ಇಲ್ಲ. ಆರೋಗ್ಯ ವ್ಯವಸ್ಥೆಯ ಹೊರಗೆ ಮಾಸ್ಕ್ ಬಳಸುವವರಿಲ್ಲ. ರಫ್ತು ಮಾಡೋಣವೆಂದರೆ ಯಾರಿಗೂ ಬೇಡ. ಹಾಗಾಗಿ ಮಾಸ್ಕ್ ಕಾರ್ಖಾನೆ ಎಂದು ಹಣ ಹೂಡಿದವರ ಸ್ಥಿತಿ ಉಗುಳುವಂತಿಲ್ಲ-ನುಂಗುವಂತಿಲ್ಲ ಆಗಿದೆ. 2022ರ ಹೊತ್ತಿಗಾಗಲೇ ಅರ್ಧಕ್ಕರ್ಧ ಮಾಸ್ಕ್ ಕೈಗಾರಿಕೆಗಳು ನಷ್ಟದಲ್ಲಿ ಬಾಗಿಲು ಹಾಕಿಕೊಂಡಿವೆ. PPE ಕಿಟ್ 2020 ಜನವರಿ ಹೊತ್ತಿಗೆ ಭಾರತದಲ್ಲಿ, ಆಮದು ಮಾಡಿಕೊಂಡಿದ್ದ 2.75 ಲಕ್ಷ PPE ಕಿಟ್ಗಳು ಮಾತ್ರ ಲಭ್ಯವಿದ್ದವು. ಇಲ್ಲಿ ಉತ್ಪಾದನೆ ಇರಲಿಲ್ಲ. 2020 ಜುಲೈ ಹೊತ್ತಿಗೆ ಭಾರತದಲ್ಲಿ 109 PPE ಕಿಟ್ ತಯಾರಕ ಕಂಪೆನಿಗಳು ದಿನಕ್ಕೆ 4.5 ಲಕ್ಷ PPE ಕಿಟ್ ಉತ್ಪಾದಿಸತೊಡಗಿದ್ದವು. ಕೋವಿಡ್ ಮುಗಿದ ಬಳಿಕ, PPE ಕಿಟ್ ದೊಡ್ಡ ಪ್ರಮಾಣದ ಉತ್ಪಾದಕರು ಬೆರಳೆಣಿಕೆಯಲ್ಲಿ ಉಳಿದುಕೊಂಡಿದ್ದಾರೆ. ಬಹುತೇಕ ಎಲ್ಲ ಸಣ್ಣ ಕಾರ್ಖಾನೆಗಳು ನಷ್ಟ ಅನುಭವಿಸಿ ಬಾಗಿಲು ಮುಚ್ಚಿಕೊಂಡಿವೆ. ತಮಾಷೆ ಎಂದರೆ, ಇವು ಮತ್ತು ಇಂತಹ ಹಲವು ಕೋವಿಡ್ ಕಾಲದ ಆಣಬೆ ಉತ್ಪಾದನೆಗಳಲ್ಲಿ ಭರಪೂರ ಲಾಭ ಮಾಡಿಕೊಂಡಿರುವುದು, ಇವಕ್ಕೆಲ್ಲ ಕಚ್ಚಾವಸ್ತುಗಳನ್ನು ಸರಬರಾಜು ಮಾಡುತ್ತಿರುವ ಚೀನಾ! ಇಂತಹ ಸಾಲುಸಾಲು ಕೋವಿಡ್ ಕಾಲದ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಇವೆಲ್ಲ ಕೋವಿಡ್ ಆತಂಕದ ಹೊತ್ತಿನಲ್ಲಿ ಅಗತ್ಯವಿದ್ದ ಸಂಗತಿಗಳಲ್ಲವೆ? ಇವು ಇಲ್ಲದಿದ್ದರೆ ದೇಶ ಇನ್ನಷ್ಟು ಕಂಗೆಡಬೇಕಿತ್ತಲ್ಲವೆ? ಎಂಬ ಪ್ರಶ್ನೆಗಳು ಏಳಬೇಕಾದುದು ಸಹಜ. ಆದರೆ ಒಂದು ಸರಕಾರ ತನ್ನ ಮಟ್ಟದಲ್ಲಿ ಯೋಚಿಸುವಾಗ-ಯೋಜಿಸುವಾಗ, ನಾವು ಸಾಮಾನ್ಯ ಮನುಷ್ಯರಂತೆ ನಮ್ಮ ಅಳವಿನ ವ್ಯಾಪ್ತಿಯೊಳಗೆ ಕಾರ್ಯಾಚರಿಸುವುದಿಲ್ಲ. ಪರಿಸ್ಥಿತಿಯ ಸಮಗ್ರ ಚಿತ್ರಣವನ್ನು ಗಣನೆಗೆ ತೆಗೆದುಕೊಂಡು, ಅದಕ್ಕನುಗುಣವಾಗಿ ವರ್ತಿಸುವುದು ಮತ್ತು ಆ ತೀರ್ಮಾನಗಳಲ್ಲಿ ಏನಾದರೂ ಲೋಪಗಳಿದ್ದರೆ, ಅವಕ್ಕೂ ಪರಿಹಾರದ ಹಾದಿ ತೆರೆದಿರಿಸುವುದು - ಒಂದು ಸರಕಾರದಿಂದ ಅದರ ಪ್ರಜೆಗಳು ನಿರೀಕ್ಷಿಸುವ ಕನಿಷ್ಠ ಜವಾಬ್ದಾರಿ. ಸರಕಾರ ಇಂತಹ ವಿಚಾರಗಳಲ್ಲಿ ಕರ್ತವ್ಯಲೋಪ ತೋರಿಸಿದಾಗ ಅಥವಾ ಇಂತಹ ಸನ್ನಿವೇಶಗಳಲ್ಲೂ ಖಾಸಗಿ ಲಾಭಬಡುಕತನಕ್ಕೆ ಅವಕಾಶ ತೆರೆದುಕೊಟ್ಟು, ಏನೂ ಆಗೇ ಇಲ್ಲ ಎಂಬಂತೆ ವರ್ತಿಸಿದಾಗ, ಅದು ಬೇಜವಾಬ್ದಾರಿ ಅನ್ನಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಗಳ ಬಗ್ಗೆ ಸರಕಾರದ ಮುಖಕ್ಕೆ ಕನ್ನಡಿ ಹಿಡಿಯಬೇಕಾಗಿದ್ದ ಮಾಧ್ಯಮಗಳೂ ಈಗ ನಿಷ್ಕ್ರಿಯ. ಇಂತಹ ಸಂಗತಿಗಳನ್ನೆಲ್ಲ ಸಾರ್ವಜನಿಕರ ಗಮನ ಸೆಳೆಯದಂತೆ ಮುಚ್ಚಿಹಾಕಿರುವ ಕಾರಣದಿಂದಾಗಿ, ಯಾರೂ ಈ ಘಟನೆಗಳಿಂದ ಪಾಠ ಕಲಿಯುತ್ತಿಲ್ಲ. ಹಾಗಾಗಿಯೇ ಈಗ ಅಮೆರಿಕ-ಇಸ್ರೇಲ್-ಇರಾನ್ ಕದನದ ಹೊತ್ತಿನಲ್ಲಿ ಇಂಡಕ್ಷನ್ ಪ್ಲೇಟ್ ಉತ್ಪಾದನೆಯ ಸಾಧ್ಯತೆಗಳು ಭುಗಿಲೇಳತೊಡಗಿವೆ. ದೇಶದಲ್ಲಿ ನೆಟ್ ಝೀರೊ ಸಾಧಿಸಲು ನವೀಕರಿಸಬಲ್ಲ ಇಂಧನ ಮೂಲಗಳು ಬೇಕು ಎನ್ನುತ್ತಲೇ, ಉಷ್ಣವಿದ್ಯುತ್ ಸ್ಥಾವರಗಳನ್ನು ಹೆಚ್ಚಿಸುತ್ತಿರುವುದು, ಯಾರದ್ದೋ ಡೇಟಾ ದಾಸ್ತಾನಿಗೆಂದು ಇಲ್ಲಿ ಇನ್ನೂ ಇಲ್ಲದ ವಿದ್ಯುತ್ತನ್ನು ನಂಬಿ ಡೇಟಾ ಸೆಂಟರುಗಳಿಗೆ ಅಬ್ಬರತಾಳ ಹಾಕುತ್ತಿರುವುದು, ಪರಮಾಣು ವಿದ್ಯುತ್ ಹೆಸರಿನಲ್ಲಿ ಮುಂಗೈಗೆ ಬೆಲ್ಲ ಹಚ್ಚಿ, ಅಪರೂಪದ ಖನಿಜಗಳ ಗಣಿಗಾರಿಕೆಗೆ ಹಾದಿ ತೆರೆಯುತ್ತಿರುವುದು, ಇದೆಲ್ಲದಕ್ಕೆ ತುರಾಯಿಯ ರೂಪದಲ್ಲಿ ವಿದ್ಯುತ್ ವಲಯದ ಖಾಸಗೀಕರಣ.... ಈ ಎಲ್ಲ ಗೊಂದಲದ ಸಿಗ್ನಲ್ಗಳು ತೋರಿಸುತ್ತಿರುವುದು ಗ್ಯಾಲರಿಯತ್ತಲೇ - ಗ್ಯಾಲರಿಯಲ್ಲಿ ಕುಳಿತಿರುವವರು ಅಂತಿಮವಾಗಿ ಮ್ಯಾಚು ಗೆಲ್ಲಲಿರುವ ಲಾಭಬಡುಕ ಕಾರ್ಪೊರೇಟ್ಗಳು.
ಹೇಮಂತ್ ಕರ್ಕರೆ ಸಾವು ‘ಕರ್ಮಫಲ’: ಕರ್ನಲ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿಗೆ ಶೆಫಾಲಿ ವೈದ್ಯ ಸಮರ್ಥನೆ
ಹೊಸದಿಲ್ಲಿ, ಎ.10: ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಸಾವನ್ನು “ಕರ್ಮಫಲ” ಎಂದು ಹೇಳಿರುವ ಅಂಕಣಕಾರ್ತಿ ಶೆಫಾಲಿ ವೈದ್ಯ, ಕರ್ನಲ್ ಶ್ರೀಕಾಂತ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿ ನೀಡಿರುವುದನ್ನು ಸಮರ್ಥಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ವೈದ್ಯ, “ಬ್ರಿಗೇಡಿಯರ್ ಆಗಿ ಕರ್ನಲ್ ಪುರೋಹಿತ್ ನೇಮಕ ಮಾಡಲಾಗುತ್ತಿದೆ. ತಪ್ಪಾಗಿ ಆರೋಪಿಸಲ್ಪಟ್ಟು, ಸುಳ್ಳು ಪ್ರಕರಣಗಳಲ್ಲಿ ಸಿಲುಕಿ, ಊಹಿಸಲಾಗದ ಮಟ್ಟದ ಕಿರುಕುಳ ಅನುಭವಿಸಿ, ತಮ್ಮ ಜೀವನದ ಹಲವು ವರ್ಷಗಳನ್ನು ಕಳೆದುಕೊಂಡ ಅಧಿಕಾರಿಯೊಬ್ಬರ ಘನತೆಯನ್ನು ಮರುಸ್ಥಾಪಿಸಲು ಭಾರತೀಯ ಸೇನೆ ಕೈಗೊಂಡಿರುವುದು ಮಹತ್ವದ ಹೆಜ್ಜೆ. ದೇಶವಿರೋಧಿ ಕಾಂಗ್ರೆಸ್ ಗೆ ಧನ್ಯವಾದ” ಎಂದು ಹೇಳಿದ್ದಾರೆ. “ಕಸಬ್ ಕೈಯಲ್ಲಿ ಕರ್ಕರೆ ಮೃತಪಟ್ಟದ್ದು ಬಹುತೇಕ ಕರ್ಮಫಲ. ಕರ್ನಲ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಇತರರನ್ನು ಸುಳ್ಳು ಭಯೋತ್ಪಾದನೆ ಪ್ರಕರಣಗಳಲ್ಲಿ ಕಿರುಕುಳ ನೀಡಿದ ಪರಿಣಾಮ ಇದಾಗಿದೆ. ಇದೇ ಮಾತು ಪರಂಬೀರ್ ಸಿಂಗ್ ಗೂ ಅನ್ವಯಿಸುತ್ತದೆ” ಎಂದು ಅವರು ಹೇಳಿದ್ದಾರೆ. 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಳೆದ ವರ್ಷ ಖುಲಾಸೆಯಾಗಿದ್ದ ಕರ್ನಲ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿ ನೀಡಲು ಅನುಮೋದನೆ ದೊರೆತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಹೊರಬಿದ್ದಿವೆ. ‘The Indian Express’ ವರದಿ ಪ್ರಕಾರ, Armed Forces Tribunal (AFT) ಅವರ ನಿವೃತ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿದ ಕೆಲವೇ ಅವಧಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವರದಿಯ ಪ್ರಕಾರ, ಪುರೋಹಿತ್ ಕನಿಷ್ಠ ಇನ್ನೂ ಎರಡು ವರ್ಷಗಳ ಕಾಲ ಸೇವೆಯಲ್ಲಿ ಮುಂದುವರಿಯಲಿದ್ದಾರೆ. ಕರ್ನಲ್ ಹುದ್ದೆಯ ನಿವೃತ್ತಿ ವಯಸ್ಸು 54 ವರ್ಷವಾಗಿದ್ದರೆ, ಬ್ರಿಗೇಡಿಯರ್ ಹುದ್ದೆಯಲ್ಲಿ 56 ವರ್ಷ ವರೆಗೆ ಸೇವೆ ಸಲ್ಲಿಸಲು ಅವಕಾಶವಿದೆ. 17 ವರ್ಷಗಳ ಸುದೀರ್ಘ ವಿಚಾರಣೆಯಿಂದ ತನ್ನ ವೃತ್ತಿ ಜೀವನದ ಪ್ರಗತಿಗೆ ತೊಂದರೆ ಉಂಟಾಗಿದೆ ಎಂದು ಪುರೋಹಿತ್ ಸಶಸ್ತ್ರ ಪಡೆಗಳ ನ್ಯಾಯಾಧಿಕರಣದ ಮೊರೆ ಹೋಗಿದ್ದರು. 2017ರಲ್ಲಿ ಅವರಿಗೆ ಜಾಮೀನು ಮಂಜೂರಾದರೂ, ಶಿಸ್ತು ಮತ್ತು ನಿಯಂತ್ರಣದ ಅಡಿಯಲ್ಲಿ ಇರಿಸಲಾಗಿತ್ತು. ಜುಲೈ 2020ರಲ್ಲಿ ಈ ನಿರ್ಬಂಧ ತೆರವುಗೊಳ್ಳುತ್ತಿದ್ದಂತೆ, 2021ರಲ್ಲಿ ಭಡ್ತಿ ಪ್ರಕ್ರಿಯೆ ಮುಂದುವರಿಯಿತು. ಹೇಮಂತ್ ಕರ್ಕರೆ ಕುರಿತು ವಿವಾದಾತ್ಮಕ ಹೇಳಿಕೆಗಳು ಹೊಸದಲ್ಲ. ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಹುತಾತ್ಮ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದನ್ನು ಯೂಟ್ಯೂಬರ್ ಧ್ರುವ್ ರಾಠಿ ಗಮನಕ್ಕೆ ತಂದಿದ್ದರು. 1982ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ಹೇಮಂತ್ ಕರ್ಕರೆ, ಮುಂಬೈ ಎಟಿಎಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ತನಿಖೆಗೆ ನೇತೃತ್ವ ವಹಿಸಿದ್ದರು. 2008ರ ನವೆಂಬರ್ 26ರಂದು ನಡೆದ ಮುಂಬೈ ಉಗ್ರ ದಾಳಿಯ ವೇಳೆ ಕಾಮಾ ಆಸ್ಪತ್ರೆ ಬಳಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಅವರು ಹುತಾತ್ಮರಾದರು. ಅವರಿಗೆ 2009ರಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಲಾಗಿದೆ. ಮುಂಬೈ ಪೊಲೀಸರ ಆರೋಪಪಟ್ಟಿಯ ಪ್ರಕಾರ, ಅಜ್ಮಲ್ ಅಮೀರ್ ಕಸಬ್ ಹಾಗೂ ಅಬು ಇಸ್ಮಾಯಿಲ್ ಖಾನ್ ಸೇರಿದಂತೆ ಪಾಕಿಸ್ತಾನ ಮೂಲದ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ಕರೆ ಅವರೊಂದಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಹಾಗೂ ಇನ್ಸ್ಪೆಕ್ಟರ್ ವಿಜಯ್ ಸಲಸ್ಕರ್ ಮೃತಪಟ್ಟಿದ್ದರು. ಕಾಮಾ ಆಸ್ಪತ್ರೆಗೆ ತೆರಳುವಾಗ ರಂಗ್ ಭವನ್ ಲೇನ್ ಬಳಿ ಹೊಂಚು ಹಾಕಿ ದಾಳಿ ನಡೆಸಲಾಗಿತ್ತು. ಇದೇ ವಿಚಾರದಲ್ಲಿ ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಈ ಹಿಂದೆ “ಶಾಪದ ಪರಿಣಾಮ” ಎಂದು ಹೇಳಿಕೆ ನೀಡಿದ್ದರೆ, ಮಹಾರಾಷ್ಟ್ರ ವಿಪಕ್ಷ ನಾಯಕ ವಿಜಯ್ ವಡೆಟ್ಟಿವಾರ್ ಅವರು “RSS ಸಂಪರ್ಕ ಹೊಂದಿದ್ದ ಪೊಲೀಸ್ ಅಧಿಕಾರಿ ಕರ್ಕರೆ ಸಾವಿಗೆ ಕಾರಣ” ಎಂದು ಆರೋಪಿಸಿದ್ದರು.
ದ್ವಿತೀಯ ಪಿಯುಸಿ ಫಲಿತಾಂಶ| ವಿಜ್ಞಾನ ವಿಭಾಗದಲ್ಲಿ ಕೀರ್ತಿ ರಮೇಶ ಸುಲೇಕರ್ ಗೆ 96.18% ಅಂಕ
ಅಫಜಲಪುರ: ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿನಿ ಕೀರ್ತಿ ರಮೇಶ ಸುಲೇಕರ್ ಅವರು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 96.18% ಅಂಕಗಳನ್ನು ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಧಾರವಾಡದ ವಿದ್ಯಾ ಪಿ. ಹಂಚಿನಾಳ ಕಾಲೇಜಿನ ವಿದ್ಯಾರ್ಥಿನಿಯಾದ ಕೀರ್ತಿ ಅವರು, ತಮ್ಮ ಪರಿಶ್ರಮ, ನಿಯಮಿತ ಅಭ್ಯಾಸ ಹಾಗೂ ಶಿಕ್ಷಕರ ಸೂಕ್ತ ಮಾರ್ಗದರ್ಶನದಿಂದ ಈ ಯಶಸ್ಸನ್ನು ಸಾಧಿಸಿದ್ದಾರೆ. ಇವರ ಈ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದು ಜನಸೇವೆ ಮಾಡುವುದು ತನ್ನ ಮುಖ್ಯ ಗುರಿಯಾಗಿದೆ ಎಂದು ಕೀರ್ತಿ ತಿಳಿಸಿದ್ದಾರೆ.
LPG: ಎಲ್ಪಿಜಿ ಹೆಚ್ಚಿನ ದರಕ್ಕೆ ಮಾರಿದರೆ ಕಂಪನಿಗಳಿಗೆ ಬೀಗ: ಸಚಿವ ಕೆ.ಎಚ್.ಮುನಿಯಪ್ಪ ಖಡಕ್ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಎಚ್ಚರಿಸಿದ್ದಾರೆ. ಶುಕ್ರವಾರ ವಿವಿಧ ತೈಲ ಕಂಪನಿಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ಅಡುಗೆ ಅನಿಲ ವಿತರಣಾ ವ್ಯವಸ್ಥೆಯ ಕುರಿತು ಸಮಗ್ರ
ದಾವಣಗೆರೆ ಅಭ್ಯರ್ಥಿಯನ್ನು ಸೋಲಿಸಲು ಮುಸ್ಲಿಂ ನಾಯಕರ ಷಡ್ಯಂತ್ರ : ಕಾಂಗ್ರೆಸ್ ಹೈಕಮಾಂಡ್ಗೆ ದೂರು
ಬೆಂಗಳೂರು : ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಗೆ ತೀವ್ರ ಪ್ರತಿಷ್ಠೆಯಾಗಿದ್ದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಿನ್ನೆ ಮುಗಿದಿದ್ದು, ಫಲಿತಾಂಶ ಮೇ.4ರಂದು ಪ್ರಕಟವಾಗಲಿದೆ. ಈ ಮಧ್ಯೆ ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಷಡ್ಯಂತ್ರ ನಡೆಸಿದ್ದರು ಎಂದು ಆರೋಪಿಸಿ ಮೂವರು ಮುಸ್ಲಿಂ ನಾಯಕರ ವಿರುದ್ಧ ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ದೂರು ಸಲ್ಲಿಕೆಯಾಗಿವುದಾಗಿ ವರದಿಯಾಗಿದೆ. ʼಸಚಿವ ಝಮೀರ್ ಅಹ್ಮದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಸೋಲಿಸಲು ಷಡ್ಯಂತ್ರ ನಡೆಸಿದ್ದರು. ತಾವು ಹೇಳಿದ ಹಾಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಇಂತಹ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ’ ಎಂದು ಮೂಲಗಳು ತಿಳಿಸಿದೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರದಲ್ಲಿ ಅವರ ಮೊಮ್ಮಗ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ಗೆ ಟಿಕೆಟ್ ನೀಡಬೇಕು ಎಂದು ಅವರ ಕುಟುಂಬ ಪಟ್ಟು ಹಿಡಿದಿತ್ತು. ಆದರೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಸಚಿವ ಝಮೀರ್ ಅಹ್ಮದ್ ಅವರು ಒತ್ತಾಯ ಮಾಡಿದ್ದರು. ಆ ಬಳಿಕ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಲವು ಸುತ್ತಿನ ಸಭೆ ನಡೆಸಿ, ಸಮರ್ಥ್ ಹೆಸರು ಅಂತಿಮಗೊಳಿಸಿದ್ದರು. ಇದರಿಂದ ಝಮೀರ್ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬರುತ್ತಾರೋ ಇಲ್ಲವೋ ಎನ್ನುವ ಅನುಮಾನ ಕೂಡ ವ್ಯಕ್ತವಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಝಮೀರ್ ಅಹ್ಮದ್ ಅವರು ದಾವಣಗೆರೆಗೆ ಆಗಮಿಸಿದ್ದರು. ಆದರೆ ಅದು ಕೇವಲ ಸುದ್ದಿಗೋಷ್ಠಿಗೆ ಸೀಮಿತವಾಗಿತ್ತು.
ಕೆಕೆಸಿಸಿಐ ವಜ್ರಮಹೋತ್ಸವಕ್ಕೆ ಸಜ್ಜು: ವಿಮಾನ ಸೇವೆ ಪುನರಾರಂಭಕ್ಕೆ ಭರವಸೆ
ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ತನ್ನ 60 ವರ್ಷಗಳ ಪಯಣವನ್ನು ಅವಿಸ್ಮರಣೀಯವಾಗಿಸಲು ನವೆಂಬರ್ 27, 28 ಮತ್ತು 29ರಂದು ವಜ್ರಮಹೋತ್ಸವ ಆಚರಿಸುವ ನಿಮಿತ್ತವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಮಹತ್ವದ ವಿಚಾರಗಳನ್ನು ಚರ್ಚಿಸಿತು. ಕಲಬುರಗಿ ವಿಮಾನ ಸೇವೆ ಪುನರಾರಂಭಿಸುವುದು, ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಕಾಮಗಾರಿಯನ್ನು ತ್ವರಿತಗೊಳಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಚಿವರು ತಕ್ಷಣವೇ ನಾಗರಿಕ ವಿಮಾನಯಾನ ಸಚಿವರಾದ ಕಿಂಜಾರಪು ರಾಮ್ಮೋಹನ್ ನಾಯುಡು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಒಂದು ತಿಂಗಳೊಳಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆಯನ್ನು ಪುನರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಸಂಪುಟ ಮಟ್ಟದಲ್ಲಿ ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳುವುದಾಗಿ ಪ್ರಹ್ಲಾದ್ ಜೋಶಿ ಆಶ್ವಾಸನೆ ನೀಡಿದರು. ಅದೇ ವೇಳೆ, ನವೆಂಬರ್ನಲ್ಲಿ ನಡೆಯಲಿರುವ ವಜ್ರಮಹೋತ್ಸವಕ್ಕೆ ಸಚಿವರಿಗೆ ಆಹ್ವಾನ ನೀಡಲಾಗಿದ್ದು, ಅವರು ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಸಂತೋಷ ಸುರೇಶ್ ನಂದ್ಯಾಲ್ ಮತ್ತು ಸಂಪತ್ ವಿ ಇದ್ದರು.
ಸ್ವಾರ್ಥ ಬಿಟ್ಟು ಇತರರಿಗಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಿ: ಡಾ.ನೀಲಾಂಬಿಕಾ ಶೇರಿಕಾರ
ಗೋದುತಾಯಿ ಕಾಲೇಜಿನಲ್ಲಿ ಎನ್ಎಸ್ಎಸ್ ಶಿಬಿರ ಸಮಾರೋಪ
ಪಾಕಿಸ್ತಾನ-ISI ಬೇಹುಗಾರಿಕೆ ಜಾಲ ಬಯಲು; 11 ಮಂದಿಯ ಬಂಧನ; ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಸಂಘಟನೆಯ ನಂಟು
ಹೊಸದಿಲ್ಲಿ: ಪಾಕಿಸ್ತಾನದ ಏಜೆಂಟ್ ಗಳು ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲಿತ ಬೇಹುಗಾರಿಕೆ ಜಾಲವನ್ನು ದಿಲ್ಲಿಯ ವಿಶೇಷ ಘಟಕ ಭೇದಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ರಾಜಸ್ಥಾನ ಮತ್ತು ಪಂಜಾಬ್ ನಾದ್ಯಂತ ಸೂಕ್ಷ್ಮ ಸೇನಾ ನೆಲೆಗಳ ಬಳಿ ಗೋಪ್ಯವಾಗಿ ಅಳವಡಿಸಲಾಗಿದ್ದ ಸೌರಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಪತ್ತೆಹಚ್ಚುವ ಮೂಲಕ ಈ ಜಾಲವನ್ನು ಭೇದಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಎರಡು ಸಮನ್ವಯ ದಾಳಿಗಳ ಮೂಲಕ ಈ ಕಾರ್ಯಾಚರಣೆ ನಡೆಸಲಾಗಿದ್ದು, 11 ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ, ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಸಂಘಟನೆಯ ದೊಡ್ಡ ಪ್ರಮಾಣದ ಪಿತೂರಿಯೊಂದಿಗೆ ಸಂಪರ್ಕ ಹೊಂದಿರುವುದು ಬಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಜಾಲವು ಬೇಹುಗಾರಿಕೆ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಹಾಗೂ ಮಹತ್ವದ ಸೇನಾ ನೆಲೆಗಳ ಸ್ಥಳ ಪರಿಶೀಲನೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯೊಡ್ಡಿದೆ. ಆರೋಪಿಗಳು ಸೇನೆ ಮತ್ತು ಅರೆಸೇನಾ ಪಡೆಗಳ ಪದೇಪದೇ ಚಲನವಲನ ಇರುವ ಪ್ರದೇಶಗಳು ಸೇರಿದಂತೆ ವ್ಯೂಹಾತ್ಮಕವಾಗಿ ಮಹತ್ವದ್ದಾದ ಸ್ಥಳಗಳಲ್ಲಿ ಕನಿಷ್ಠ ಒಂಭತ್ತು ಸೌರಚಾಲಿತ ಸಿಮ್ಗಳನ್ನು ಸಿಸಿಟಿವಿ ಕ್ಯಾಮೆರಾಗಳಿಗೆ ಅಳವಡಿಸಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿದೆ. “ಈ ಸ್ಥಳಗಳಲ್ಲಿ ಪಂಜಾಬ್ನ ಕಪುರ್ತಲಾ, ಜಲಂಧರ್, ಪಠಾಣ್ಕೋಟ್, ಪಟಿಯಾಲ ಮತ್ತು ಮೋಗಾ; ಹರ್ಯಾಣದ ಅಂಬಾಲ; ಜಮ್ಮು ಮತ್ತು ಕಾಶ್ಮೀರದ ಕಠುವಾ; ರಾಜಸ್ಥಾನದ ಬಿಕನೇರ್ ಮತ್ತು ಅಲ್ವಾರ್ ಸೇರಿವೆ” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ವಿಶೇಷ ಘಟಕ) ಪ್ರಮೋದ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ. ಸೇನಾ ತುಕಡಿಗಳ ನಿಯಮಿತ ಚಲನವಲನ, ಅಂತಾರಾಷ್ಟ್ರೀಯ ಗಡಿಗೆ ಸಮೀಪದಲ್ಲಿರುವುದು ಹಾಗೂ ಸಾಗಾಣಿಕೆ ಕಾರಿಡಾರ್ಗಳ ಕಾರಣಕ್ಕೆ ಈ ಸ್ಥಳಗಳನ್ನು ಅತ್ಯಂತ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ನೈಜ ಸಮಯದಲ್ಲಿ ಪಾಕಿಸ್ತಾನ ಮೂಲದ ಏಜೆಂಟ್ಗಳಿಗೆ ನಕಲಿ ಗುರುತಿನಲ್ಲಿ ಪಡೆದ ಸಿಮ್ಗಳನ್ನು ಬಳಸಿ ಮೊಬೈಲ್ ತಂತ್ರಾಂಶಗಳ ಮೂಲಕ ಈ ಜಾಲ ರವಾನಿಸುತ್ತಿತ್ತು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಮೂಲದ ಏಜೆಂಟ್ಗಳ ನೇರ ನಿರ್ದೇಶನದನ್ವಯ ಈ ಜಾಲ ಕಾರ್ಯನಿರ್ವಹಿಸುತ್ತಿದ್ದು, ಗೋಪ್ಯ ಸಂವಹನ ವೇದಿಕೆಗಳ ಮೂಲಕ ಬೇಹುಗಾರಿಕೆ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. “ಆರೋಪಿಗಳಿಗೆ ರಕ್ಷಣಾ ಸಂಸ್ಥೆಗಳು, ಸೇನಾ ತುಕಡಿಗಳ ಚಲನವಲನದ ದೃಶ್ಯಾವಳಿಗಳನ್ನು ಸೆರೆಹಿಡಿಯುವುದು ಹಾಗೂ ಗಡಿಯಾದ್ಯಂತದ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳುವ ಗುರಿ ನೀಡಲಾಗಿತ್ತು” ಎಂದು ಅವರು ಹೇಳಿದ್ದಾರೆ.
ಕಾಯಕ ಶರಣರ ಸಂದೇಶಗಳು ಸಮಾಜದ ಕೈಗನ್ನಡಿ: ಪ್ರೊ. ಶಶಿಕಾಂತ ಎಸ್. ಉಡಿಕೇರಿ
ದೇವರ ದಾಸಿಮಯ್ಯ, ಕಾಯಕ ಶರಣರ ಜಯಂತಿ ಆಚರಣೆ
ಭಾರತದ ವಿದೇಶಿ ವಿನಿಮಯ ಮೀಸಲು 9 ಶತಕೋಟಿ ಡಾಲರ್ ನಿಂದ 697.12 ಶತಕೋಟಿಗೆ ಜಿಗಿತ: RBI
ಮುಂಬೈ: ಎಪ್ರಿಲ್ 3, 2026ಕ್ಕೆ ಅಂತ್ಯಗೊಂಡಂತೆ ಭಾರತದ ವಿದೇಶಿ ವಿನಿಮಯ ಮೀಸಲು ಪ್ರಮಾಣ 9.063 ಶತಕೋಟಿ ಡಾಲರ್ ನಿಂದ 697.12 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ ಎಂದು ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಮಾರ್ಚ್ 27, 2026ಕ್ಕೆ ಅಂತ್ಯಗೊಂಡಂತೆ ಭಾರತದ ಒಟ್ಟಾರೆ ವಿದೇಶಿ ವಿನಿಮಯ ಮೀಸಲು 688.058 ಶತಕೋಟಿ ಡಾಲರ್ನಿಂದ 10.288 ಶತಕೋಟಿ ಡಾಲರ್ಗೆ ಕುಸಿದಿತ್ತು. ಪಶ್ಚಿಮ ಏಶ್ಯ ಬಿಕ್ಕಟ್ಟು ಪ್ರಾರಂಭಗೊಳ್ಳುವುದಕ್ಕೂ ಮುನ್ನ, ಈ ವರ್ಷದ ಫೆಬ್ರವರಿ 27ರಂದು ಸಾರ್ವಕಾಲಿಕ ಏರಿಕೆ ಕಂಡಿದ್ದ ವಿದೇಶಿ ವಿನಿಮಯ ಮೀಸಲು ಪ್ರಮಾಣ 728.494 ಶತಕೋಟಿ ಡಾಲರ್ಗೆ ಏರಿಕೆಯಾಗಿತ್ತು. ಪಶ್ಚಿಮ ಏಶ್ಯ ಬಿಕ್ಕಟ್ಟು ಪ್ರಾರಂಭಗೊಂಡ ಬಳಿಕ ಕುಸಿತದ ಹಾದಿ ಹಿಡಿದಿತ್ತು. ಪಶ್ಚಿಮ ಏಶ್ಯ ಬಿಕ್ಕಟ್ಟು ಪ್ರಾರಂಭಗೊಂಡಾಗಿನಿಂದ ರೂಪಾಯಿ ಮೌಲ್ಯ ಒತ್ತಡಕ್ಕೆ ಸಿಲುಕಿತ್ತು. ಹೀಗಾಗಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಡಾಲರ್ ಮಾರಾಟಕ್ಕೆ ಮುಂದಾಗಿತ್ತು ಹಾಗೂ ರೂಪಾಯಿ ಕುಸಿತವನ್ನು ತಡೆಗಟ್ಟಲು ಕೆಲವು ಅಚ್ಚರಿದಾಯಕ ನೀತಿ ಕ್ರಮಗಳನ್ನು ಕೈಗೊಂಡಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ನ ದತ್ತಾಂಶದ ಪ್ರಕಾರ, ಎಪ್ರಿಲ್ 3ಕ್ಕೆ ಅಂತ್ಯಗೊಂಡಂತೆ ವಿದೇಶಿ ವಿನಿಮಯ ಸ್ವತ್ತಿನಲ್ಲಿ ಪ್ರಮುಖ ಭಾಗವಾದ ಮೀಸಲು ಪ್ರಮಾಣವು 1.784 ಶತಕೋಟಿಯಷ್ಟು ಏರಿಕೆಯಾಗಿ 552.856 ಶತಕೋಟಿಗೆ ತಲುಪಿತ್ತು. ಇದೇ ಅವಧಿಯಲ್ಲಿ ಚಿನ್ನದ ಮೀಸಲು ಪ್ರಮಾಣ 7.221 ಶತಕೋಟಿ ಡಾಲರ್ನಷ್ಟು ಏರಿಕೆಯಾಗಿ 120.742 ಶತಕೋಟಿ ಡಾಲರ್ಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ವಿಶೇಷ ಹಿಂಪಡೆಯುವ ಹಕ್ಕುಗಳು 58 ದಶಲಕ್ಷ ಡಾಲರ್ನಷ್ಟು ಏರಿಕೆಯಾಗಿ 18.707 ಶತಕೋಟಿ ಡಾಲರ್ಗೆ ತಲುಪಿದೆ ಎಂದು ಅದು ಹೇಳಿದೆ. ಎಪ್ರಿಲ್ 3ಕ್ಕೆ ಅಂತ್ಯಗೊಂಡಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ ಭಾರತದ ಮೀಸಲು ಪ್ರಮಾಣ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, 4.816 ಶತಕೋಟಿ ಡಾಲರ್ನಷ್ಟಿದೆ ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶಗಳಿಂದ ತಿಳಿದು ಬಂದಿದೆ.
Epstein ನಂಟು ನಿರಾಕರಿಸಿದ ಮೆಲನಿಯಾ ಟ್ರಂಪ್; ವಿಚಾರಣೆಗೆ ಡೆಮಾಕ್ರಾಟರ ಆಗ್ರಹ
ವಾಶಿಂಗ್ಟನ್, ಎ.10: ಲೈಂಗಿಕ ಅಪರಾಧಿ ಜೆಫ್ರಿ ಎಪ್ ಸ್ಟೀನ್ ಜೊತೆ ತನಗೆ ನಂಟಿರುವುದನ್ನು ಹಾಗೂ ಆತನ ಅಪರಾಧಕೃತ್ಯಗಳ ಬಗ್ಗೆ ತಾನು ಅರಿತಿರಲಿಲ್ಲವೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲನಿಯಾ ಟ್ರಂಪ್ ಗುರುವಾರ ತಿಳಿಸಿದ್ದಾರೆ. ಎಪ್ ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿ ತನ್ನ ಬಗ್ಗೆ ಹರಿದಾಡುತ್ತಿರುವ ಕಥೆಗಳು ಸಂಪೂರ್ಣ ಸುಳ್ಳು ಎಂದು ಹೇಳಿರುವ ಅವರು, ತನಗೆ ಕಳಂಕ ಹಚ್ಚುವ ಉದ್ದೇಶದಿಂದಲೇ ಈ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ. ಅಪರೂಪವೆಂಬಂತೆ ಗುರುವಾರ ಶ್ವೇತಭವನದಲ್ಲಿ ಹೇಳಿಕೆಯೊಂದನ್ನು ನೀಡಿದ ಅವರು, ಈಗ ಮೃತಪಟ್ಟಿರುವ ಎಪ್ ಸ್ಟೀನ್ ಜೊತೆ ತನಗೆ ನಂಟಿತ್ತೆಂಬ ಪೊಳ್ಳು ಹಾಗೂ ಆಧಾರರಹಿತ ಆರೋಪಗಳ ವಿರುದ್ಧ ತನ್ನ ನ್ಯಾಯವಾದಿಗಳು ಕಾನೂನು ಹೋರಾಟ ನಡೆಸಲಿದ್ದಾರೆಂದು ಹೇಳಿದರು. ಕಳಂಕಿತ ಎಪ್ ಸ್ಟೀನ್ ಜೊತೆ ನನಗೆ ನಂಟನ್ನು ಕಲ್ಪಿಸುವಂತಹ ಸುಳ್ಳುಗಳು ಇಂದಿಗೇ ಕೊನೆಗೊಳ್ಳಬೇಕು ಎಂದು ಮೆಲನಿಯಾ ಆಗ್ರಹಿಸಿದರು. “ನನ್ನ ಬಗ್ಗೆ ಸುಳ್ಳುಗಳನ್ನು ಹರಡುವವರು ನೈತಿಕ ಮಾನದಂಡಗಳು, ವಿನಮ್ರತೆ ಹಾಗೂ ಗೌರವ ಇಲ್ಲದವರಾಗಿದ್ದಾರೆ. ಅವರ ಅಮಾಯಕತೆಯನ್ನು ನಾನು ಆಕ್ಷೇಪಿಸುವುದಿಲ್ಲ. ಆದರೆ ಇದೇ ವೇಳೆ ನನ್ನ ಪ್ರತಿಷ್ಠೆಗೆ ಕಳಂಕ ತರುವ ಈ ಕೀಳುಮಟ್ಟದ ಪ್ರಯತ್ನಗಳನ್ನು ನಾನು ತಿರಸ್ಕರಿಸುತ್ತೇನೆ,” ಎಂದು ಮೆಲನಿಯಾ ಹೇಳಿದ್ದಾರೆ. ಸುಮಾರು ಐದು ನಿಮಿಷಗಳ ಕಾಲ ಹೇಳಿಕೆಯನ್ನು ಓದಿದ ಮೆಲನಿಯಾ ಅವರು ನಂತರ ಪತ್ರಕರ್ತರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡದೆ ನಿರ್ಗಮಿಸಿದರು. ಆದರೆ ತನ್ನ ವಿರುದ್ಧದ ಆರೋಪಗಳ ಬಗ್ಗೆ ಅವರು ವಿಸ್ತೃತ ವಿವರಣೆಗಳನ್ನು ನೀಡುವುದರಿಂದ ದೂರವಿದ್ದರು. ಕೆಲವರು ವ್ಯಕ್ತಿಗಳು ಹಾಗೂ ಸಂಸ್ಥೆಗಳು ತನ್ನ ಹೆಸರಿಗೆ ಹಾನಿ ಉಂಟು ಮಾಡಲು ಪ್ರಯತ್ನಿಸುತ್ತಿವೆ ಎಂದು ಮೆಲನಿಯಾ ಆಪಾದಿಸಿದರು. ಎಪ್ ಸ್ಟೀನ್ ಅಪರಾಧಗಳ ಸಂತ್ರಸ್ತರ ಕುರಿತು ಸಾರ್ವಜನಿಕ ಆಲಿಕೆಯನ್ನು ನಡೆಸುವಂತೆ ಮೆಲನಿಯಾ ಅವರು ಆಗ್ರಹಿಸಿದರು. ಎಪ್ ಸ್ಟೀನ್ ದೌರ್ಜನ್ಯಗಳ ಸಂತ್ರಸ್ತ ಮಹಿಳೆಯರು ಇಚ್ಛಿಸಿದಲ್ಲಿ ತಮ್ಮ ಕಥೆಗಳನ್ನು ಬಹಿರಂಗವಾಗಿ ಹೇಳಲು ಅವಕಾಶ ನೀಡಬೇಕು; ಹಾಗಿದ್ದಲ್ಲಿ ಮಾತ್ರ ನಿಜವಾದ ಸತ್ಯ ಬಯಲಾಗುತ್ತದೆ ಎಂದು ಅವರು ಹೇಳಿದರು. ► ಮೆಲನಿಯಾ ವಿಚಾರಣೆಗೆ ಡೆಮಾಕ್ರಾಟರ ಆಗ್ರಹ ಮೆಲನಿಯಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ಡೆಮಾಕ್ರಾಟ್ ನಾಯಕರು, ಎಪ್ ಸ್ಟೀನ್ ಪ್ರಕರಣದ ಕುರಿತಾಗಿ ಅಮೆರಿಕ ಕಾಂಗ್ರೆಸ್ ನಡೆಸಲಿರುವ ವಿಚಾರಣೆಗೆ ಅವರನ್ನು ಆಹ್ವಾನಿಸಲು ಸಮ್ಮತಿಸಿದ್ದಾರೆ. ಎಪ್ ಸ್ಟೀನ್ ಪ್ರಕರಣದ ತನಿಖೆ ನಡೆಸುತ್ತಿರುವ ಸದನ ಮೇಲ್ವಿಚಾರಣಾ ಸಮಿತಿಯ ಸದಸ್ಯ, ಡೆಮಾಕ್ರಾಟ್ ನಾಯಕ ರಾಬರ್ಟ್ ಗ್ರಾಸಿಯಾ ಅವರು ತಕ್ಷಣವೇ ಸಾರ್ವಜನಿಕ ಆಲಿಕೆಯನ್ನು ನಡೆಸುವಂತೆ ಸಮಿತಿಯ ಅಧ್ಯಕ್ಷ ರಿಪಬ್ಲಿಕನ್ ನಾಯಕ ಜೇಮ್ಸ್ ಕೋಮರ್ ಅವರನ್ನು ಆಗ್ರಹಿಸಿದ್ದಾರೆ. ಮೆಲನಿಯಾ ಅವರನ್ನು ಡೊನಾಲ್ಡ್ ಟ್ರಂಪ್ ಗೆ ಪರಿಚಯಿಸುವಲ್ಲಿ ಎಪ್ ಸ್ಟೀನ್ ಪಾತ್ರವಹಿಸಿದ್ದಾನೆಂದು ಪ್ರಕಾಶನ ಸಂಸ್ಥೆ ಹಾರ್ಪರ್ ಕಾಲಿನ್ಸ್ ಪ್ರಕಟಿಸಿದ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು. ನಂತರ ಈ ಬಗ್ಗೆ ಹಾರ್ಪರ್ ಕಾಲಿನ್ಸ್ ಕ್ಷಮೆಯಾಚಿಸಿತ್ತು.
ಹಾರ್ಮುಝ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಹೊಸ ಹಂತಕ್ಕೆ: ಮುಜ್ತಾಬಾ ಖಾಮಿನೈ
ಟೆಹರಾನ್, ಎ.10: ಅಮೆರಿಕ ಹಾಗೂ ಇಸ್ರೇಲ್ ಜೊತೆ ಇರಾನ್ ಯುದ್ಧವನ್ನು ಬಯಸುವುದಿಲ್ಲ. ಆದರೆ ಒಂದು ರಾಷ್ಟ್ರವಾಗಿ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳುತ್ತದೆ ಎಂದು ಇರಾನ್ ನ ನೂತನ ಸರ್ವೋಚ್ಚ ನಾಯಕ ಮುಜ್ತಾಬಾ ಖಾಮಿನೈ ಹೇಳಿದ್ದಾರೆ. ಅವರ ಲಿಖಿತ ಹೇಳಿಕೆಯನ್ನು ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯಲ್ಲಿ ವಾಚಿಸಲಾಗಿದೆ. ನಾವು ಯುದ್ಧವನ್ನು ಬಯಸುವುದಿಲ್ಲ; ಅದು ನಮಗೆ ಬೇಡವಾದದ್ದು. ಆದರೆ ಯಾವುದೇ ಸಂದರ್ಭದಲ್ಲೂ ನಾವು ನಮ್ಮ ನ್ಯಾಯಬದ್ಧ ಹಕ್ಕುಗಳನ್ನು ತ್ಯಜಿಸುವುದಿಲ್ಲ. ಈ ನಿಟ್ಟಿನಲ್ಲಿ ಇಡೀ ಪ್ರತಿರೋಧ ರಂಗವನ್ನು ಸಮಗ್ರವಾಗಿ ಕಾಣುತ್ತೇವೆ ಎಂದು ಹೇಳುವ ಮೂಲಕ ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಹಾರ್ಮುಝ್ ಜಲಸಂಧಿಯ ನಿರ್ವಹಣೆಯಲ್ಲಿ ಇರಾನ್ ಹೊಸ ಹಂತದತ್ತ ಸಾಗುತ್ತಿದೆ ಎಂದು ಹೇಳಿದ ಮುಜ್ತಾಬಾ ಅವರು, ಈ ಆಯಕಟ್ಟಿನ ಜಲಸಂಧಿಯ ಮೇಲೆ ಇರಾನ್ ತನ್ನ ನಿಯಂತ್ರಣವನ್ನು ಬಿಗಿಗೊಳಿಸುವ ಸುಳಿವು ನೀಡಿದ್ದಾರೆ.
ಅಮೆರಿಕ, ಇಸ್ರೇಲ್ ತೈಲ ಟ್ಯಾಂಕರ್ ಗಳಿಗೆ ಹಾರ್ಮುಝ್ ಬಂದ್ ಗೆ ಇರಾನ್ ಸಂಸತ್ ನಿರ್ಣಯ?
ಟೆಹರಾನ್, ಎ.10: ಅಮೆರಿಕ ಹಾಗೂ ಇಸ್ರೇಲ್ ಜೊತೆ ನಂಟು ಹೊಂದಿರುವ ತೈಲ ಟ್ಯಾಂಕರ್ ಹಡಗುಗಳಿಗೆ ಹಾರ್ಮುಝ್ ಜಲಸಂಧಿ ಹಾದುಹೋಗುವುದನ್ನು ನಿಷೇಧಿಸುವ ಕುರಿತು ಸಂಸದೀಯ ಪ್ರಸ್ತಾವನೆಯನ್ನು ಇರಾನ್ ಅಂಗೀಕರಿಸಲಿದೆ ಎಂದು ಇರಾನ್ ನ ಹಿರಿಯ ಸಂಸದ ಇಬ್ರಹಾಂ ಅಜೀಝಿ ತಿಳಿಸಿದ್ದಾರೆ. ಅಜೀಝಿ ಅವರ ಈ ಹೇಳಿಕೆ ಇಸ್ಲಾಮಾಬಾದ್ನಲ್ಲಿ ಆರಂಭಗೊಂಡಿರುವ ಅಮೆರಿಕ–ಇರಾನ್ ಶಾಂತಿ ಮಾತುಕತೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ. ಈ ಮಧ್ಯೆ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಸಂಚಾರವನ್ನು ಖಾತರಿಪಡಿಸುವ ಯೋಜನೆಗಳು ಹಾಗೂ ಸೇನಾ ಸಾಮರ್ಥ್ಯಗಳ ಕುರಿತು ಬ್ರಿಟನ್ ಹಾಗೂ ಅಮೆರಿಕ ಚರ್ಚಿಸಿರುವುದಾಗಿ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಶುಕ್ರವಾರ ತಿಳಿಸಿದ್ದಾರೆ.
ಲೆಬನಾನ್ನಲ್ಲಿ ಕದನ ವಿರಾಮ ಜಾರಿಯಾಗದೆ ಅಮೆರಿಕದೊಂದಿಗೆ ಶಾಂತಿ ಮಾತುಕತೆಯಿಲ್ಲ: ಇರಾನ್
ಟೆಹ್ರಾನ್: ಲೆಬನಾನ್ನಲ್ಲಿ ಕದನ ವಿರಾಮ ಜಾರಿಯಾಗದೆ ಅಮೆರಿಕದೊಂದಿಗೆ ಶಾಂತಿ ಮಾತುಕತೆ ಆರಂಭವಾಗುವುದಿಲ್ಲ ಎಂದು ಇರಾನ್ ಸಂಸತ್ ಸ್ಪೀಕರ್ ಮುಹಮ್ಮದ್-ಬಾಘರ್ ಘಾಲಿಬಾಫ್ ಹೇಳಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಘಾಲಿಬಾಫ್, ಅಮೆರಿಕದೊಂದಿಗೆ ಕದನ ವಿರಾಮ ಮಾತುಕತೆ ಪ್ರಾರಂಭಿಸಲು ಪ್ರಮುಖ ಎರಡು ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಎರಡೂ ಪಕ್ಷಗಳ ನಡುವಿನ ಒಪ್ಪಂದದ ಎರಡು ಷರತ್ತುಗಳು ಇನ್ನೂ ಜಾರಿಯಾಗಿಲ್ಲ ಎಂದು ಹೇಳಿದ್ದಾರೆ. ಲೆಬನಾನ್ನಲ್ಲಿ ತಕ್ಷಣ ಕದನ ವಿರಾಮ ಜಾರಿಯಾಗಬೇಕು ಮತ್ತು ಇರಾನ್ನ ಫ್ರೀಝ್ ಮಾಡಿದ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಎಂದು ಘಾಲಿಬಾಫ್ ಆಗ್ರಹಿಸಿದ್ದಾರೆ. ಇರಾನ್ ಮತ್ತು ಅಮೆರಿಕ ಎರಡು ವಾರಗಳ ಕದನ ವಿರಾಮ ಒಪ್ಪಂದವನ್ನು ಮಾಡಿದೆ. ಇಸ್ಲಾಮಾಬಾದ್ನಲ್ಲಿ ಕದನ ವಿರಾಮದ ಕುರಿತು ಮುಂದಿನ ಮಾತುಕತೆಗಳು ನಡೆಯಲಿದೆ.
Tamil Nadu | BJP ವಿರೋಧಿ ಆಂದೋಲನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಭಾಗಿ
ಚೆನ್ನೈ, ಎ.10: ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಜ್ಜಾಗಿರುವಂತೆಯೇ ಇತ್ತ ‘ಶೂನ್ಯ ಬಿಜೆಪಿ ಆಂದೋಲನ’ವು ರಾಜ್ಯಾದ್ಯಂತ ಹೊಸ ರಾಜಕೀಯ ಅಲೆಯನ್ನು ಸೃಷ್ಟಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಅವರು ಈ ಬಿಜೆಪಿ ವಿರೋಧಿ ಆಂದೋಲನದಲ್ಲಿ ಭಾಗಿಯಾಗಿ ಅದನ್ನು ಮುನ್ನಡೆಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆಲ್ಲದಂತೆ ನೋಡಿಕೊಳ್ಳುವುದು ಈ ಆಂದೋಲನದ ಏಕೈಕ ಗುರಿಯಾಗಿದೆ. ಈ ಆಂದೋಲನವನ್ನು ದ್ರಾವಿಡ ಸಿದ್ಧಾಂತಗಳು ಮತ್ತು ತಮಿಳು ರಾಷ್ಟ್ರೀಯತೆ ಈಗಾಗಲೇ ಆಳವಾಗಿ ಬೇರೂರಿರುವ ತಮಿಳುನಾಡಿನಲ್ಲಿ ಬಿಜೆಪಿಯ ಬೆಳವಣಿಗೆಯನ್ನು ತಡೆಯುವ ಗುರಿಯನ್ನು ಹೊಂದಿರುವ ಸೈದ್ಧಾಂತಿಕ ಉಪಕ್ರಮವನ್ನಾಗಿ ವ್ಯಾಪಕವಾಗಿ ಪರಿಗಣಿಸಲಾಗುತ್ತಿದೆ. ‘ಶೂನ್ಯ ಬಿಜೆಪಿ ಆಂದೋಲನ’ವು ತಳಮಟ್ಟದಲ್ಲಿ ಪ್ರಭಾವಿ ಅಲೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ವಿದ್ಯಾವಂತ ಯುವಜನರಲ್ಲಿ ಮತ್ತು ಪ್ರಭಾವಿ ವ್ಯಕ್ತಿಗಳಲ್ಲಿ ಅರಿವು ಮೂಡಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ಗೆಲ್ಲುವ ಅವಕಾಶವಿರುವ ಕ್ಷೇತ್ರಗಳಲ್ಲಿ ಮತಗಳನ್ನು ವಿಭಜಿಸುವುದು ಅಥವಾ ಬಿಜೆಪಿ ವಿರೋಧಿ ಮತಗಳನ್ನು ಕ್ರೋಡೀಕರಿಸುವ ಮೂಲಕ ಆಂದೋಲನದ ತಳಮಟ್ಟದ ಶಕ್ತಿಯು ವ್ಯಕ್ತವಾಗುವ ನಿರೀಕ್ಷೆಯಿದೆ.
IPL 2026 | RCB ತಂಡಕ್ಕೆ ಮರಳಿದ ಹೇಝಲ್ವುಡ್
ಗುವಾಹಟಿ, ಎ.10: RCB ತಂಡವು 2025ರಲ್ಲಿ ತನ್ನ ಚೊಚ್ಚಲ IPL ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಝಲ್ವುಡ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಟಾಸ್ ನಂತರ RCB ನಾಯಕ ರಜತ್ ಪಾಟಿದಾರ್ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಹೇಝಲ್ವುಡ್ ಅವರು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಫಿಟ್ನೆಸ್ ಅನುಮತಿ ಪಡೆದಿದ್ದಾರೆ. ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಜೇಕಬ್ ಡಫಿ ಅವರು ಹೇಝಲ್ವುಡ್ ಗೆ ಸ್ಥಾನ ಬಿಡಲಿದ್ದಾರೆ. RCB ತಂಡವು ಕಳೆದ ವರ್ಷ ತವರು ಮೈದಾನದಿಂದ ಹೊರಗೆ ಆಡಿದ ಎಲ್ಲ ಏಳು ಪಂದ್ಯಗಳಲ್ಲೂ ಜಯ ಸಾಧಿಸಿತ್ತು. ಬಳಿಕ ಫೈನಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಮೊದಲ ಬಾರಿಗೆ IPL ಚಾಂಪಿಯನ್ ಆಗಿತ್ತು.
Sri Lanka ಕ್ರಿಕೆಟ್ ಮಂಡಳಿಯ ಬಳಿ ಕ್ಷಮೆಯಾಚಿಸಿದ RCB ಆಟಗಾರ ತುಷಾರ
ಕೊಲಂಬೊ, ಎ.10: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಅವಕಾಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ, ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಬಳಿ ಕ್ಷಮೆಯಾಚಿಸಿದ್ದಾರೆ. ಐಪಿಎಲ್ನಲ್ಲಿ ನುವಾನ್ ತುಷಾರ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಬೇಕಾಗಿತ್ತು. ಆದರೆ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಿಲ್ಲವೆಂದು ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲು SLC ನಿರಾಕರಿಸಿತ್ತು. ಐಪಿಎಲ್ನಲ್ಲಿ ಆಡಲು ಅವಕಾಶ ನೀಡುವಂತೆ ಕೋರಿ 31 ವರ್ಷದ ತುಷಾರ ಅವರು ಅಲ್ಲಿನ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು SLC ನ್ಯಾಯಾಲಯಕ್ಕೆ ತಿಳಿಸಿದ ನಂತರ ತುಷಾರಗೆ ಹಿನ್ನಡೆಯಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಎ.23ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ. ಇದೀಗ ಪ್ರಕರಣವನ್ನು ಹಿಂಪಡೆಯಲು ಮುಂದಾಗಿರುವುದಾಗಿ ತಿಳಿಸಿರುವ ನುವಾನ್ ತುಷಾರ, SLC ಬಳಿ ಕ್ಷಮೆಯಾಚಿಸಿದ್ದಾರೆ. ತುಷಾರ ಅವರು ಇ-ಮೇಲ್ ಮೂಲಕ ಕ್ಷಮಾಪಣೆ ಕೋರಿದ್ದು, ಆಡಳಿತ ಮಂಡಳಿಗೆ ಅನಾನುಕೂಲ ಉಂಟುಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು SLC ಮೂಲಗಳು ತಿಳಿಸಿವೆ. 2025ರ ಆವೃತ್ತಿಯಲ್ಲಿ ತುಷಾರ ಅವರು RCB ಪರ ಕೇವಲ ಒಂದು ಪಂದ್ಯವಷ್ಟೇ ಆಡಿದ್ದರು.
RCB ಇನ್ನಿಂಗ್ಸ್ ನ ಮಾನ ಉಳಿಸಿದ ರಜತ್ ಪಾಟೀದಾರ್; Impact ಮಾಡಿದ ವೆಂಕಟೇಶ್ ಅಯ್ಯರ್!
ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಔಟ್! ಅಲ್ಲಿಂದ ಶುರುವಾದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ತಂಡದ ಅವಸ್ಥೆ 11 ಓವರ್ ಮುಗಿಯುವುದರೊಳಗೆ 6ನೇ ವಿಕೆಟ್ ಪತನ! ಈ ಹಂತದಲ್ಲಿ ತಂಡದ ಇನ್ನಿಂಗ್ಸ್ ನ ಮಾನ ಕಾಪಾಡಿದ್ದು ರಜತ್ ಪಾಟೀದಾರ್ ಅವರ ನಾಯಕನಾಟ. ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆರ್ ಸಿಬಿ ಪರ ಚೊಚ್ಚಲ ಪಂದ್ಯವನ್ನಾಡಿದ ವೆಂಕಟೇಶ್ ಅಯ್ಯರ್ ಅವರ ಹೊಡೆಬಡಿ ಆಟ. ಪರಿಣಾಮ ಕಡಿಮೆ ಮೊತ್ತಕ್ಕೆ ಆಲೌಟ್ ಆಗಬಹುದಾಗಿದ್ದ ಆರ್ ಸಿಬಿ ಇನ್ನಿಂಗ್ಸ್ 200ರ ಗಡಿ ದಾಟಿತು. ಪಂದ್ಯದಲ್ಲಿ ತೀವ್ರ ಪೈಪೋಟಿಗೆ ಕಾರಣವಾಯಿತು. ಟಾಸ್ ಸೋತು ಬ್ಯಾಟಿಂಗ್ ಗೆಇಳಿಸಲ್ಪಟ್ಟ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. () ಸಂಕ್ಷಿಪ್ತ ಸ್ಕೋರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು 201/8, ರಜತ್ ಪಾಟೀದಾರ್ 63(40), ವಿರಾಟ್ ಕೊಹ್ಲಿ 32(16), ವೆಂಕಟೇಶ್ ಅಯ್ಯರ್ 29(15), ರೊಮಾರಿಯೋ ಶೆಫರ್ಡ್ 22(11), ಜೋಫ್ರಾ ಆರ್ಚರ್ 33ಕ್ಕೆ 2, ರವಿ ಬಿಷ್ಣೋಯಿ 32ಕ್ಕೆ 2, ಬ್ರಿಜೇಶ್ ಶರ್ಮಾ 37ಕ್ಕೆ 2.
ಮುಕುಲ್ ಚೌಧರಿ ಬ್ಯಾಟಿಂಗ್ ಶೈಲಿ ಎಂ.ಎಸ್. ಧೋನಿಗೆ ಹೋಲಿಸಿದ ಡು ಪ್ಲೆಸಿಸ್
ಹೊಸದಿಲ್ಲಿ, ಎ.10: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗುರುವಾರ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿರುವ ಲಕ್ನೊ ಸೂಪರ್ ಜಯಂಟ್ಸ್ನ ಯುವ ವಿಕೆಟ್ ಕೀಪರ್-ಬ್ಯಾಟರ್ ಮುಕುಲ್ ಚೌಧರಿ ಅವರನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್. ಡು ಪ್ಲೆಸಿಸ್ ಶ್ಲಾಘಿಸಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ಆಡಿದ ಚೌಧರಿ ಕೇವಲ 27 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಎರಡು ಬೌಂಡರಿಗಳ ಸಹಿತ ಔಟಾಗದೆ 54 ರನ್ ಸಿಡಿಸುವುದರೊಂದಿಗೆ ಲಕ್ನೊ ತಂಡವು ಕೊನೆಯ ಎಸೆತದಲ್ಲಿ ರೋಚಕ ಜಯ ಗಳಿಸುವಲ್ಲಿ ನೆರವಾಗಿದ್ದರು. IPL ನಲ್ಲಿ ಸಿಎಸ್ಕೆ, RCBಯನ್ನು ಪ್ರತಿನಿಧಿಸಿದ್ದ ಪ್ಲೆಸಿಸ್, ಚೌಧರಿ ಅವರು ಒತ್ತಡದಲ್ಲೂ ಶಾಂತಚಿತ್ತದಿಂದ ಆಡಿದ್ದನ್ನು ಶ್ಲಾಘಿಸಿದರು. ಚೌಧರಿಯ ಬ್ಯಾಟಿಂಗ್ ಶೈಲಿಯನ್ನು, ಅದರಲ್ಲೂ ಮುಖ್ಯವಾಗಿ ಫ್ಲಿಕ್ ಶಾಟ್ ಗಳನ್ನು ಎಂ.ಎಸ್. ಧೋನಿಯ ಶೈಲಿಗೆ ಹೋಲಿಸಿದರು. “ಎಂತಹ ಅದ್ಭುತ ಕ್ರಿಕೆಟ್! ಸಾಕಷ್ಟು ಏರಿಳಿತಗಳು, ಕೊನೆಯಲ್ಲಿ ಎದುರಾಳಿಯಿಂದ ಗೆಲುವನ್ನು ಕಸಿದುಕೊಂಡದ್ದು. ಕೆಲವು ಹೊಡೆತಗಳು ನನಗೆ ಎಂ.ಎಸ್. ಧೋನಿ ಬ್ಯಾಟಿಂಗ್ ನೆನಪಿಸಿತು. ವಿಶೇಷವಾಗಿ ಆ ಫ್ಲಿಕ್ ಶಾಟ್ ಗಳು ತುಂಬಾ ಶಕ್ತಿಶಾಲಿಯಾಗಿದ್ದವು” ಎಂದು ಪ್ಲೆಸಿಸ್ ಅಭಿಪ್ರಾಯಪಟ್ಟರು. KKR ತಂಡ ಪ್ರಸಕ್ತ IPL ನಲ್ಲಿ ಮೂರರಲ್ಲಿ ಸೋಲನುಭವಿಸಿದ್ದು, ಒಂದು ಪಂದ್ಯ ಮಳೆಗೆ ಆಹುತಿಯಾಗಿದೆ. ಯಾವುದೂ KKR ತಂಡ ಯೋಚಿಸಿದಂತೆ ನಡೆಯುತ್ತಿಲ್ಲ. “ನಿರ್ಣಾಯಕ ಕ್ಷಣದಲ್ಲಿ ಸುಲಭ ರನ್ ಗಳಿಸದೇ ಇರುವಂತಹ ಸಣ್ಣ ತಪ್ಪುಗಳು ಪಂದ್ಯ ಸೋಲಲು ಕಾರಣವಾಗುತ್ತವೆ. ತೀವ್ರ ಪೈಪೋಟಿಯಿಂದ ಕೂಡಿರುವ ಪಂದ್ಯದಲ್ಲಿ ಗೆಲ್ಲಬೇಕಾದರೆ ತಂಡಗಳು ಚುರುಕಾಗಿರಬೇಕಾಗುತ್ತದೆ” ಎಂದು ಡು ಪ್ಲೆಸಿಸ್ ಹೇಳಿದ್ದಾರೆ.
ತಳವಾರ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡದ ಆರೋಪ: ತಹಸೀಲ್ದಾರರ ಅಮಾನತ್ತಿಗೆ ಒತ್ತಾಯ
ಅಫಜಲಪುರ: ಅಫಜಲಪುರ ತಾಲೂಕಿನ ಗ್ರೇಡ್-2 ತಹಸೀಲ್ದಾರ ಶರಣಬಸಪ್ಪ ಅವರ ವಿರುದ್ಧ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಜಾತಿ ಪ್ರಮಾಣಪತ್ರಗಳನ್ನು ನೀಡದ ಆರೋಪ ಕೇಳಿ ಬಂದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾ ಹಾಗೂ ಅಫಜಲಪುರ ತಾಲೂಕು ಘಟಕದ ವತಿಯಿಂದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು. ಕಲಬುರಗಿ ಜಿಲ್ಲಾ ತಳವಾರ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಕಾಂತ ತಳವಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಿರುವ ಬಗ್ಗೆ ಸ್ಪಷ್ಟ ಆದೇಶಗಳನ್ನು ಹೊರಡಿಸಿವೆ. 2020ರ ತಿದ್ದುಪಡಿ ಕಾಯ್ದೆ ಮತ್ತು ನಂತರದ ಸರ್ಕಾರಿ ಆದೇಶಗಳ ಪ್ರಕಾರ “Naikada / Nayak (including Parivar and Talawar)” ಎಂಬ ಹೆಸರಿನಲ್ಲಿ ಎಸ್ಟಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, 2022ರ ಸರ್ಕಾರಿ ಆದೇಶದ ಮೂಲಕ ತಳವಾರ ಜಾತಿಯನ್ನು ಹಿಂದಿನ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಎಲ್ಲ ದಾಖಲೆಗಳಿದ್ದರೂ, ಅಫಜಲಪುರ ತಾಲೂಕಿನಲ್ಲಿ ಕಳೆದ ಒಂದು ವರ್ಷದಿಂದ ತಳವಾರ ಸಮುದಾಯದ ಜನರಿಗೆ ಜಾತಿ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದರು. ಈ ಕ್ರಮದಿಂದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜು ಪ್ರವೇಶ, ಉದ್ಯೋಗ ಅವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸರ್ಕಾರಿ ಸೌಲಭ್ಯಗಳಲ್ಲಿ ತೀವ್ರ ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಳವಾರ ಸಮಾಜದ ಮುಖಂಡ ಶಿವಪುತ್ರ ಕೋಣಿನ್ ಹಾಗೂ ಸಂತೋಷ ತಳವಾರ ಮಾತನಾಡಿದರು. ಈ ಸಂದರ್ಭದಲ್ಲಿ ತಳವಾರ ಮಹಾಸಭಾ ಅಫಜಲಪುರ ತಾಲೂಕಾಧ್ಯಕ್ಷ ಗುರು ತಳವಾರ ಹಾವನೂರ, ಕಲಬುರಗಿ ನಗರದ ತಳವಾರ ಸಮಾಜದ ಅಧ್ಯಕ್ಷ ರವಿ ದೊಂಗರಗಾಂವ್, ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜದ ತಾಲೂಕಾಧ್ಯಕ್ಷ ಸಂತೋಷ ತಳವಾರ, ಮುಖಂಡರಾದ ಮಹಾಂತ ಗೌಡ ಪಾಟೀಲ್ ತಳವಾರ್, ಬಿಜೆಪಿ ಓಬಿಸಿ ಮೋರ್ಚಾದ ತಾಲೂಕು ಅಧ್ಯಕ್ಷ ಶರಣು ದೀವಾಣಜಿ, ಸಿದ್ರಾಮ ಚುಕ್ಕವಲಗಿ, ಬಸವರಾಜ ಜಮಾದಾರ ಸೇರಿದಂತೆ ಅನೇಕರಿದ್ದರು. ತಹಸೀಲ್ದಾರ ಸಂಜೀವಕುಮಾರ ದಾಸರ ಮೂಲಕ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಹಿಳಾ ಮೀಸಲಾತಿ: ಪ್ರಧಾನ ಮಂತ್ರಿ ಮೋದಿಯ ಯೂ-ಟರ್ನ್ಗೆ ಕಾಂಗ್ರೆಸ್ ಟೀಕೆ
ಹೊಸದಿಲ್ಲಿ, ಎ.10: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನದ ಕುರಿತು ಮೋದಿ ಸರ್ಕಾರದ ಯೂ-ಟರ್ನ್ ಆಡಳಿತದಲ್ಲಿನ ಗಂಭೀರ ವೈಫಲ್ಯಗಳು ಮತ್ತು ವಿದೇಶಾಂಗ ನೀತಿಯಲ್ಲಿನ ತೀವ್ರ ಹಿನ್ನಡೆಗಳನ್ನು ಮುಚ್ಚಿಹಾಕುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ಇದಕ್ಕಾಗಿ ಪ್ರಧಾನ ಮಂತ್ರಿಗಳು ದೇಶದ ಮಹಿಳೆಯರ ಬಳಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್, 2023ರ ನಾರಿ ಶಕ್ತಿ ವಂದನ ಅಧಿನಿಯಮವನ್ನು 2024ರ ಚುನಾವಣೆಯಿಂದಲೇ ಜಾರಿಗೊಳಿಸಬೇಕೆಂಬ ತನ್ನ ಬೇಡಿಕೆಯನ್ನು ಅವರು ಒಪ್ಪಿಕೊಂಡಿರಲಿಲ್ಲ ಎಂದು ಹೇಳಿದೆ. ಪ್ರಧಾನ ಮಂತ್ರಿಗಳು ಕಾಂಗ್ರೆಸ್ನ ಪ್ರಸ್ತಾವವನ್ನು ಸ್ವೀಕರಿಸಿರಲಿಲ್ಲ. ಅವರು ಕಾನೂನಿನ ಅನುಷ್ಠಾನವನ್ನು ಕ್ಷೇತ್ರ ಪುನರ್ವಿಂಗಡಣೆ ಮತ್ತು ಜನಗಣತಿಯ ಮೇಲೆ ಅವಲಂಬಿತವಾಗಿರುವಂತೆ ಮಾಡಿದ್ದರು. ಆದರೆ ಅವೆರಡನ್ನೂ ನಡೆಸುವಲ್ಲಿ ಅವರು ವಿಫಲಗೊಂಡಿದ್ದರು ಮತ್ತು ಹಲವಾರು ವರ್ಷಗಳ ಕಾಲ ಮುಂದೂಡಿದ್ದರು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ರಾಜಕೀಯ ಒತ್ತಡದ ನಡುವೆ ಸರ್ಕಾರವು ಈಗ ತನ್ನ ನಿಲುವನ್ನು ಬದಲಿಸಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗವು ಕೇಂದ್ರ ಗೃಹ ಸಚಿವಾಲಯದ ಅಧೀನ ಕಚೇರಿಯಂತೆ ಕಾರ್ಯನಿರ್ವಹಿಸುತ್ತಿದ್ದರೂ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಿರುವ ಪ್ರಧಾನ ಮಂತ್ರಿ ಮೋದಿ ಈಗ ತಮ್ಮ ಮನಸ್ಸನ್ನು ಬದಲಿಸಿಕೊಂಡು ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನದ ಕುರಿತು ಯೂ-ಟರ್ನ್ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯಸಭೆಯ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ
ಹೊಸದಿಲ್ಲಿ, ಎ. 10: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆಯ ಸದಸ್ಯರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರಿಗೆ ರಾಜ್ಯಸಭೆಯ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವ ಜೆ.ಪಿ. ನಡ್ಡಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆಯ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘವಲ್ ಅವರ ಉಪಸ್ಥಿತಿಯಲ್ಲಿ ನಿತೀಶ್ ಕುಮಾರ್ ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. JDU ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, BJP ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ರಾಜೀವ್ ಪ್ರತಾಪ್ ರೂಢಿ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯಸಭೆಯ ಸದಸ್ಯನಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ನಿತೀಶ್ ಕುಮಾರ್ ಅವರ ಬಿಹಾರ್ ಮುಖ್ಯಮಂತ್ರಿ ಅಧಿಕಾರಾವಧಿ ಅಂತ್ಯಗೊಂಡಿದೆ. NDA ಏಪ್ರಿಲ್ 14ರಂದು ಬಿಹಾರಕ್ಕೆ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
“ಹಾವನ್ನಾದರೂ ನಂಬಬಹುದು, BJPಯನ್ನಲ್ಲ”: ಮಮತಾ ಬ್ಯಾನರ್ಜಿ
“Assam ವಿಧಾನಸಭಾ ಚುನಾವಣೆಗೆ BJP ಹೊರಗಿನಿಂದ ಜನರನ್ನು ತಂದಿದೆ”
West Bengal S I R | ಮತದಾರರ ಪಟ್ಟಿಗಳ ಸ್ಥಗಿತದ ವಿರುದ್ಧ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಅಸ್ತು
ಹೊಸದಿಲ್ಲಿ, ಎ.10: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಗಳನ್ನು ಚುನಾವಣಾ ಆಯೋಗವು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಡೆಸಲಿದೆ. ಗುರುವಾರ ಚುನಾವಣಾ ಆಯೋಗವು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಸ್ಥಗಿತಗೊಳಿಸಿ ಅಂತಿಮಗೊಳಿಸಿತ್ತು. ಇದರಿಂದ ಅಳಿಸಲ್ಪಟ್ಟಿರುವ ಮತದಾರರ ಹೆಸರುಗಳನ್ನು ಮುಂಬರುವ ಚುನಾವಣೆಗೆ ಪಟ್ಟಿಯಲ್ಲಿ ಮರುಸೇರಿಸಲು ಸಾಧ್ಯವಾಗುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಎ.23 ಮತ್ತು ಎ.29ರಂದು ಚುನಾವಣೆಗಳು ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಆಯೋಗದ ದತ್ತಾಂಶಗಳ ಪ್ರಕಾರ, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (S I R) ಬಳಿಕ ಪಶ್ಚಿಮ ಬಂಗಾಳದಲ್ಲಿ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. S I R ಆರಂಭಕ್ಕೂ ಮುನ್ನ ರಾಜ್ಯದಲ್ಲಿ 7.6 ಕೋಟಿ ಮತದಾರರಿದ್ದು, ಈ ಪೈಕಿ ಸುಮಾರು ಶೇ.11.9ರಷ್ಟು ಹೆಸರುಗಳನ್ನು ತೆಗೆದುಹಾಕಲಾಗಿದೆ. ನ್ಯಾಯಾಂಗ ಅಧಿಕಾರಿಗಳು ಹಕ್ಕು ಕೋರಿಕೆಗಳು ಮತ್ತು ಆಕ್ಷೇಪಣೆಗಳ ಕುರಿತು ತೀರ್ಪುಗಳನ್ನು ನೀಡಿದ ಬಳಿಕ S I R ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದರೂ ಪಟ್ಟಿಯಿಂದ ಹೆಸರುಗಳನ್ನು ಅಳಿಸಲ್ಪಟ್ಟವರು ಇದಕ್ಕಾಗಿ ಸ್ಥಾಪಿಸಲಾಗಿರುವ 19 ನ್ಯಾಯಮಂಡಳಿಗಳ ಮುಂದೆ ಮೇಲ್ಮನವಿಗಳನ್ನು ಸಲ್ಲಿಸಬಹುದು.
ಕೋಲ್ಕತಾ, ಎ. 10: ಮುಂಬರುವ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಗೆ BJPಯ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಿಡುಗಡೆಗೊಳಿಸಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, ಅದರ 15 ವರ್ಷಗಳ ಆಡಳಿತಾವಧಿಯು ರಾಜ್ಯಕ್ಕೆ ಹಾನಿಕರವಾಗಿತ್ತು ಎಂದು ಆರೋಪಿಸಿದರು. ಸುಳ್ಳು ಭರವಸೆಗಳ ಮೂಲಕ ಟಿಎಂಸಿ 2016ರಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂತು. ಭ್ರಷ್ಟಾಚಾರ ಹಾಗೂ ಒಳನುಸುಳುಕೋರರೊಂದಿಗೆ ಹೊಂದಾಣಿಕೆ ಮೂಲಕ 2021ರಲ್ಲಿ ಅದು ಅಧಿಕಾರವನ್ನು ಉಳಿಸಿಕೊಂಡಿತು ಎಂದು ಅವರು ಹೇಳಿದರು. BJPಯ ಪ್ರಣಾಳಿಕೆಯನ್ನು ‘ಬದಲಾವಣೆಗೆ ಮಾರ್ಗನಕ್ಷೆ’ ಎಂದು ಪರಿಚಯಿಸಿದ ಶಾ ಅವರು, ಪಶ್ಚಿಮಬಂಗಾಳದಲ್ಲಿ BJP ಸರ್ಕಾರ ರೂಪುಗೊಂಡ 6 ತಿಂಗಳಲ್ಲಿ ಏಕರೂಪದ ನಾಗರಿಕ ಸಂಹಿತೆಯನ್ನು ಪಕ್ಷ ಅನುಷ್ಠಾನಗೊಳಿಸಲಿದೆ ಎಂದರು. BJP ಸರ್ಕಾರ ರಾಜ್ಯದ ಪ್ರತಿಯೊಬ್ಬ ಮಹಿಳೆಯ ಬ್ಯಾಂಕ್ ಖಾತೆಗೆ ನೇರವಾಗಿ 3,000 ರೂ. ಜಮಾ ಮಾಡಲಿದೆ ಎಂದು ಶಾ ಘೋಷಿಸಿದರು. ಅಲ್ಲದೆ, ಪೊಲೀಸ್ ಪಡೆ ಸೇರಿದಂತೆ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಲಾಗುವುದು ಎಂದು ಹೇಳಿದರು. ಒಳನುಸುಳುವಿಕೆ ಹಾಗೂ ಗಡಿ ಭದ್ರತೆಯನ್ನು ಬಲಪಡಿಸುವ ವಿಚಾರದಲ್ಲಿ BJP ಶೂನ್ಯ ಸಹಿಷ್ಣುತೆ ಅನುಸರಿಸಲಿದೆ. ಅಲ್ಲದೆ, ಜಾನುವಾರು ಸಾಗಾಟವನ್ನು ತಡೆಗಟ್ಟಲಿದೆ ಎಂದು ಅವರು ಹೇಳಿದರು. BJP ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಒತ್ತಿ ಹೇಳಿದರು. BJP ಅಧಿಕಾರಕ್ಕೆ ಬಂದ 45 ದಿನಗಳಲ್ಲಿ 7ನೇ ವೇತನ ಆಯೋಗವನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಸರ್ಕಾರಿ ಉದ್ಯೋಗಿಗಳಿಗೆ ಭರವಸೆ ನೀಡಿದರು.
ಪಿಯುಸಿ ಫಲಿತಾಂಶ: ಇಸ್ಮಾಯಿಲ್ ಅನ್ಸಾರ್ ಮೊಹಮ್ಮದ್ಗೆ ವಾಣಿಜ್ಯ ವಿಭಾಗದಲ್ಲಿ 555 ಅಂಕ
ಮಂಗಳೂರು : ಸೂರಿಂಜೆ ನಿವಾಸಿ ಮಂಗಳೂರಿನ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಇಸ್ಮಾಯಿಲ್ ಅನ್ಸಾರ್ ಮೊಹಮ್ಮದ್ ಅವರು ವಾಣಿಜ್ಯ ವಿಭಾಗದಲ್ಲಿ 555 ಅಂಕಗಳನ್ನು ಪಡೆದು ಶೇ. 92.5 ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸೂರಿಂಜೆ ನಿವಾಸಿ ಜೆ ಮುಹಮ್ಮದ್ ಅಶ್ರಫ್ ಮತ್ತು ಸಬ್ರೀನಾ ಅವರ ಪುತ್ರ.
Bengaluru | ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ವರದಿಯಾಗಿದೆ. ಮನೋರಾಯನಪಾಳ್ಯದ ನಿವಾಸಿ ತನುಶ್ರೀ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಎ.9ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ತನುಶ್ರೀ ಮೂರು ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವುದು ತಿಳಿದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲ ಸಮಯದ ಬಳಿಕ ತಾಯಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದು ಹೆಬ್ಬಾಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಮೃತದೇಹವನ್ನು ನಗರದ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಊರಿನ ಹಿರಿಮೆ ಹೆಚ್ಚಿಸಲು ಬೆದ್ರ ಉತ್ಸವ ಕಾಯ೯ಕ್ರಮ ಮಾದರಿ : ಸಂಸದ ಬ್ರಿಜೇಶ್ ಚೌಟ
ಮೂಡುಬಿದಿರೆ: ಕರಾವಳಿ ಕರ್ನಾಟಕದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯಕ್ರಮವೂ ಉತ್ಸವದ ಸ್ವರೂಪ ಪಡೆದುಕೊಳ್ಳುವುದು ಇಲ್ಲಿನ ವಿಶೇಷತೆ. ಈ ನಿಟ್ಟಿನಲ್ಲಿ ಊರಿನ ಹಿರಿಮೆ ಹೆಚ್ಚಿಸಲು ಬೆದ್ರ ಉತ್ಸವದಂತಹ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದು ದ.ಕ. ಸಂಸದ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು. ಅವರು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಎ.12ರ ವರೆಗೆ ನಡೆಯಲಿರುವ ಮನರಂಜನಾ ಆಟಗಳು, ಆಹಾರ ಮಳಿಗೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದ 'ಬೆದ್ರ ಉತ್ಸವ'ವನ್ನು ಶುಕ್ರವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ಕೆಲಸಕ್ಕೆ ಎಲ್ಲರೂ ಕೈಜೋಡಿಸುವ ಗುಣ ನಮ್ಮ ಹಿರಿಯರು ಬೆಳೆಸಿಕೊಂಡು ಬಂದ ಪರಂಪರೆಯಾಗಿದೆ. ಈ ವೇದಿಕೆಯಲ್ಲಿರುವ ಅತಿಥಿಗಳನ್ನು ಮತ್ತು ಸಂಘಟನೆಯನ್ನು ನೋಡುವಾಗ ಊರಿನ ಹಬ್ಬವನ್ನು ಒಟ್ಟಾಗಿ ಆಚರಿಸುವ ಸಂಕಲ್ಪ ಸ್ತುತ್ಯರ್ಹವಾಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ 'ಬ್ಯಾಕ್ ಟು ಊರು' ಅಭಿಯಾನ ಪ್ರಾರಂಭಿಸಲಾಗಿದ್ದು, ಯಶಸ್ವಿ ಉದ್ಯಮಿಗಳು ಹಾಗೂ ಹೊರಗಿನ ಉದ್ಯೋಗಸ್ಥರು ತಮ್ಮ ಅನುಭವ ಮತ್ತು ಸಂಪನ್ಮೂಲವನ್ನು ಊರಿನ ಏಳಿಗೆಗೆ ಬಳಸಬೇಕು ಎಂಬುದು ಈ ಯೋಜನೆಯ ಆಶಯವಾಗಿದೆ ಎಂದರು. ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿದ ಅವರು, ಬೆದ್ರ ಉತ್ಸವ ಎನ್ನುವುದು ಕೇವಲ ಆಚರಣೆಯಲ್ಲ, ಅದು ಇಲ್ಲಿನ ಸಾಂಸ್ಕೃತಿಕ ಚೌಕಟ್ಟುಗಳ ಪ್ರತೀಕವಾಗಿದೆ. ಆಧುನಿಕ ಪ್ರಜ್ಞೆ ಬೆಳೆದಂತೆ ಮೂಡುಬಿದಿರೆ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಾದರಿಯಾಗಿ ಬೆಳೆದಿದೆ. ಈ ಉತ್ಸವವು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮನಸ್ಸನ್ನು ಅರಳಿ ಸುವ ಕೆಲಸ ಮಾಡಲಿ. ಜಾತಿ-ಮತ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಈ ಹಬ್ಬವನ್ನು ಆಚರಿಸುತ್ತಿರುವುದು ಸಾಮರಸ್ಯದ ಸಂಕೇತವಾಗಿದೆ ಎಂದು ಶುಭಹಾರೈಸಿದರು. ಕಟಪಾಡಿ ದ್ವಾರಕಮಯಿ ಮಠದ ಸಾಯಿ ಈಶ್ವರ ಗುರೂಜಿ ಸಂದೇಶ ನೀಡಿ ಮಾತನಾಡಿ, ಇಡೀ ವಿಶ್ವವೇ ಇಂದು ಬೆದ್ರ ಉತ್ಸವವನ್ನು ಕುತೂಹಲದಿಂದ ನೋಡುತ್ತಿದೆ. ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಇಲ್ಲಿ ನಡೆಯು ತ್ತಿದೆ. ಸಮಾಜದ ಹಿತಕ್ಕಾಗಿ ಕೆಲಸ ಮಾಡುವಾಗ ಭಗವಂತನ ಕೃಪೆ ಲಭಿಸುತ್ತದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಜವಾದ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಎಂ. ಸಿ. ಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರೋತ್ಸಾಹಕ ಅಬುಲ್ ಅಲಾ ಪುತ್ತಿಗೆ, ಪುರಸಭೆಯ ಮಾಜಿ ಸದಸ್ಯರಾದ ರಾಜೇಶ್ ನಾಯ್ಕ್, ಕೊರಗಪ್ಪ, ಸುರೇಶ್ ಕೋಟ್ಯಾನ್, ಉದ್ಯಮಿ ಗಳಾದ ತಿಮ್ಮಯ್ಯ ಶೆಟ್ಟಿ, ಶ್ರೀಪತಿ ಭಟ್, ನಾರಾಯಣ ಪಿ. ಎಂ, ನಂದಕುಮಾರ್ ಕುಡ್ವ, ಬಿಜೆಪಿ ಮುಖಂಡರಾದ ಕೆ. ಪಿ.ಜಗದೀಶ್ ಅಧಿಕಾರಿ, ಕೃಷ್ಣರಾಜ್ ಹೆಗ್ಡೆ, ರಂಜಿತ್ ಪೂಜಾರಿ, ಮೇಘನಾದ್ ಶೆಟ್ಟಿ, ಬೆದ್ರ ಮಾರಿಗುಡಿಯ ಸುಂದರ್ ಭೋವಿ, ವಕೀಲ ಮಯೂರಕೀರ್ತಿ, ತ್ರಿವೇಣಿ ಗಣೇಶ್ ಶೆಟ್ಟಿ, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಆನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಬೆದ್ರ ಉತ್ಸವ ಸಮಿತಿಯ ಸಂಚಾಲಕ ಹರೀಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್, ಕೋಶಾಧಿಕಾರಿ ನಾಗೇಶ್ ಬಂಗೇರ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಮಿತಿಯ ಉಪಾಧ್ಯಕ್ಷ ಸುದರ್ಶನ್ ಎಂ. ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಚೇತನ್ ಜೈ ನ್ ಅವರ ಆಂಗಿಕಂ ತಂಡದಿಂದ ನೃತ್ಯ ಪ್ರದರ್ಶನ ಹಾಗೂ ಮೋಹನ್ ಹೊಸ್ಮಾರ್ ತಂಡದಿಂದ ಸಾಂಸ್ಕೃತಿಕ ವೈಭವ ನಡೆಯಿತು.
ಯುವಕರಲ್ಲಿ ಸಂವಿಧಾನದ ಜಾಗೃತಿ ಮೂಡಿಸುವುದು ಅವಶ್ಯಕ : ಸಂಸದ ಸಾಗರ್ ಖಂಡ್ರೆ
ಬೀದರ್ : ಅಂಬೇಡ್ಕರ್ ಅವರ ತತ್ವ ಸಿದ್ಧಾಂತ, ಸಂವಿಧಾನದ ಬಗ್ಗೆ ಮುಂದಿನ ಯುವ ಪೀಳಿಗೆಗೆ ಇನ್ನು ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಅವರು ಹೇಳಿದರು. ಡಾ. ಅಂಬೇಡ್ಕರ್ ಅವರ ಜಯಂತ್ಯೋತ್ಸವದ ನಿಮಿತ್ಯ 'ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್' ಎನ್ನುವ ಧ್ಯಯ ವಾಕ್ಯದೊಂದಿಗೆ ನಗರದ ಬರೀದಶಾಹಿ ಉದ್ಯಾನವನದಿಂದ ಅಂಬೇಡ್ಕರ್ ವೃತ್ತದ ವರೆಗೆ ಶುಕ್ರವಾರ ನಡೆದ ಮ್ಯಾರಾಥಾನ್ ನಲ್ಲಿ ಅವರು ಮಾತನಾಡಿದರು. ಬಹಳಷ್ಟು ಜನರಿಗೆ ಸಂವಿಧಾನದಲ್ಲಿ ಯಾವ ಹಕ್ಕುಗಳು ಇದ್ದಾವೆ ಎನ್ನುವುದರ ಅರಿವಿಲ್ಲ. ಸಂವಿಧಾನದ ಬಗ್ಗೆ ನಾವು ಇನ್ನು ಹೆಚ್ಚು ತಿಳಿದುಕೊಳ್ಳಬೇಕು. ಹಳ್ಳಿ ಹಳ್ಳಿಯಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಅಂಬೇಡ್ಕರ್ ಅವರ ಕನಸು ನನಸು ಆಗುವುದಕ್ಕೆ ಸಾಧ್ಯ. ಇಂತಹ ಕಾರ್ಯಕ್ರಮಗಳಿಗೆ ಯುವಪೀಳಿಗೆಗೆ ಜೋಡಣೆ ಮಾಡಬೇಕು ಎಂದರು. ಸಚಿವ ರಹೀಂ ಖಾನ್ ಅವರು ಮಾತನಾಡಿ, ಸಂವಿಧಾನದ ಬಗ್ಗೆ ಒಳ್ಳೆ ರೀತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂವಿಧಾನದಿಂದಲೇ ನಾವೆಲ್ಲರೂ ಒಳ್ಳೆ ರೀತಿಯಿಂದ ಬದುಕುತಿದ್ದೇವೆ. ಸಂವಿಧಾನ ಇಲ್ಲದಿದ್ದರೆ ನಾವು ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಸಾಧ್ಯವಿರಲಿಲ್ಲ. ಯುವಜನರಿಗೆ ಇದು ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸೂರ್ಯಕಾಂತ್ ನಾಗಮಾರಪಳ್ಳಿ, ಆಯೋಜಕರಾದ ಅನಿಲಕುಮಾರ್ ಬೆಲ್ದಾರ್, ರಮೇಶ್ ಡಾಕುಳಗಿ, ಬಾಬುರಾವ್ ಪಾಸ್ವಾನ್, ಶ್ರೀಪತರಾವ್ ದಿನೆ, ಶಿವಕುಮಾರ್ ನಿಲಿಕಟ್ಟಿ, ಪ್ರದೀಪ್ ನಾಟೆಕರ್ ಹಾಗೂ ಸಂದೀಪ್ ಕಾಂಟೆ ಸೇರಿದಂತೆ ನೂರಾರು ಯುವಕರು, ಮಹಿಳೆಯರು ಭಾಗವಹಿಸಿದ್ದರು.
ದ್ವಿತೀಯ ಪಿಯುಸಿ | ಕ್ರೈಸ್ ವಸತಿ ಕಾಲೇಜುಗಳ ಫಲಿತಾಂಶ ಶೇ.97.22ಕ್ಕೆ ಏರಿಕೆ : ಎಚ್.ಸಿ.ಮಹದೇವಪ್ಪ
ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದ ವ್ಯಾಪ್ತಿಯ ವಸತಿ ಕಾಲೇಜು ಕಾಲೇಜುಗಳಲ್ಲಿ 2025-26ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಶೇ.97.22ಕ್ಕೆ ಏರಿಕೆಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಶುಕ್ರವಾರ ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ಗಳಾದ ವೈದ್ಯಕೀಯ, ಇಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿಯನ್ನು ಪಡೆಯುವ ಉದ್ದೇಶದಿಂದ ವಿಜ್ಞಾನ ಸಂಯೋಜನೆಯ ವಸತಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. 2025-26ನೆ ಸಾಲಿನಲ್ಲಿ 72 ಕಾಲೇಜುಗಳ 5,103 ವಿದ್ಯಾರ್ಥಿಗಳು ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 4,961 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವಸತಿ ಕಾಲೇಜುಗಳ ಒಟ್ಟಾರೆ ಶೇಕಡವಾರು ಫಲಿತಾಂಶ ಶೇ.97.22 ಆಗಿದೆ. ಕಳೆದ ವರ್ಷದ ಫಲಿತಾಂಶ (ಶೇ. 91.64)ಕ್ಕಿಂತ ಶೇ.5.58 ರಷ್ಟು ಫಲಿತಾಂಶದಲ್ಲಿ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು. ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ (ಶೇ.85 ಅಥವಾ ಅದಕ್ಕಿಂತ ಹೆಚ್ಚು ಅಂಕ) 2,321,ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ(ಶೇ.60-85ರಷ್ಟು) 2,487, ದಿತೀಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ(ಶೇ.50-60ರಷ್ಟು) 160 ಹಾಗೂ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ(ಶೇ.35-50ರಷ್ಟು) 14 ಎಂದು ಮಹದೇವಪ್ಪ ವಿವರಿಸಿದರು. 2025-26ನೆ ಸಾಲಿನಲ್ಲಿ ಗುಣಮಟ್ಟದ ಫಲಿತಾಂಶ ಬಂದಿದ್ದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ 2024-25ನೆ ಸಾಲಿಗೆ ಹೋಲಿಸಿದರೆ ಶೇ.22ರಷ್ಟು ಹೆಚ್ಚಳ ಕಂಡುಬಂದಿದೆ. ಶೇ.50.13ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ.97 ರಷ್ಟು (4808) ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಪ್ರಥರ್ಮ ದರ್ಜೆ ಪಡೆದಿದ್ದರೆ ಎಂದು ಅವರು ಹೇಳಿದರು. 72 ವಸತಿ ಕಾಲೇಜುಗಳ ಪೈಕಿ 34 (ಶೇ.47.22) ವಸತಿ ಕಾಲೇಜುಗಳು ಶೇ.100ರಷ್ಟು ಫಲಿತಾಂಶವನ್ನು ಪಡೆದಿವೆ. ವಸತಿ ಕಾಲೇಜುಗಳಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಅಂಬೇಡ್ಕರ್ ಜಯಂತಿಯಂದು ಸನ್ಮಾನಿಸಲಾಗುವುದು ಎಂದು ಮಹದೇವಪ್ಪ ತಿಳಿಸಿದರು. ಕ್ರೈಸ್ ವ್ಯಾಪ್ತಿಯ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ಗಳಾದ ವೈದ್ಯಕೀಯ, ಇಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆಯುವ ದಿಸೆಯಲ್ಲಿ 2025-26ನೆ ಸಾಲಿನಲ್ಲಿ ಎಲ್ಲ 72 ವಸತಿ ಕಾಲೇಜುಗಳಲ್ಲಿ ಜೆಇಇ/ನೀಟ್/ಕೆ-ಸೆಟ್ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. 2025-26ನೆ ಸಾಲಿನ ಜೆಇಇ ಪರೀಕ್ಷೆಯಲ್ಲಿ 106 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಮಹದೇವಪ್ಪ ಹೇಳಿದರು. 5 ಲಕ್ಷ ರೂ.ನಗದು ಬಹುಮಾನ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯಲ್ಲಿರುವ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 598/600 ಪಡೆದು ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿರುವ ಅಂಕಿತ್ ಭೀಮಪ್ಪ ಅವರಿಗೆ 5 ಲಕ್ಷ ರೂ.ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಸರಕಾರಿ ಕಾಲೇಜುಗಳಲ್ಲಿ ರ್ಯಾಂಕ್ ಪಡೆದ ಏಕೈಕ ವಿದ್ಯಾರ್ಥಿ ಇವರಾಗಿದ್ದಾರೆ ಎಂದು ಡಾ.ಎಚ್.ಸಿ.ಮಹದೇವಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
SSLC ಪರೀಕ್ಷೆ ಹಿಂದಿ ಗ್ರೇಡ್ ಪ್ರಶ್ನಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನೆ ಮಾಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಪೀಠ ವಿಚಾರಣೆ ಮಾಡಿ ಅರ್ಜಿದಾರರಿಗೆ ದಂಡ ಹಾಕಿದೆ. ಸರ್ಕಾರದ ಅಧಿಕೃತ ಆದೇಶದ ದಾಖಲೆಗಳನ್ನು ಒದಗಿಸಿಲ್ಲ, ಪ್ರಚಾರಕ್ಕಾಗಿ ಅರ್ಜಿ ಎಂದು ಕೋರ್ಟ್ ದಂಡ ವಿಧಿಸಿದೆ.
Belagavi | ಎಇಇ ಅಜಯಸಿಂಗ್ ರಜಪೂತ ನಿವಾಸದ ಮೇಲೆ ಲೋಕಾಯುಕ್ತ ದಾಳಿ : 14 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ
ಬೆಳಗಾವಿ : ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ಹಿನ್ನೆಲೆ, ಲೋಕಾಯುಕ್ತ ಪೊಲೀಸರು ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಅಜಯಸಿಂಗ್ ಬಾಪುಸಿಂಗ್ ರಜಪೂತ ಅವರ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಜಪೂತ ಅವರ ಮನೆ, ಕಚೇರಿ ಹಾಗೂ ಬ್ಯಾಂಕ್ ಲಾಕರ್ ಸೇರಿದಂತೆ ಒಟ್ಟು ಏಳು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಬೆಳಗಾವಿ ನಗರದಲ್ಲಿ ಮೂರು ಮನೆಗಳು, ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿ ನಗರಗಳಲ್ಲಿ ಐದು ನಿವೇಶನಗಳು ಪತ್ತೆಯಾಗಿವೆ. ಇದರೊಂದಿಗೆ 5 ಕೆಜಿ 960 ಗ್ರಾಂ ಚಿನ್ನ ಮತ್ತು ವಜ್ರಾಭರಣಗಳು, 5 ಕೆಜಿ ಬೆಳ್ಳಿ ವಸ್ತುಗಳು, ಸುಮಾರು 3.12 ಕೋಟಿ ರೂ. ಮೌಲ್ಯದ ಬ್ಯಾಂಕ್ ಸ್ಥಿರ ಠೇವಣಿಗಳು (ಎಫ್ಡಿಗಳು), ಒಂದು ಕಾರು ಹಾಗೂ ಒಂದು ಬೈಕ್ನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 14 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ದೌರ್ಜನ್ಯ ತಡೆಯಲು ಕಾನೂನು ವ್ಯವಸ್ಥೆ ಬಲಗೊಂಡು ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು : ಸಂಸದ ಸಾಗರ್ ಖಂಡ್ರೆ
ಬೀದರ್ : ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಾನೂನು ವ್ಯವಸ್ಥೆ ಬಲಗೊಳ್ಳಬೇಕು ಮತ್ತು ಅಪರಾಧ ಸಾಬೀತಾಗಿ ಶಿಕ್ಷೆಯಾಗುವ ಪ್ರಮಾಣ ಹೆಚ್ಚಾಗಬೇಕು ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು. ನಗರದ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ತಮ್ಮ ರಕ್ಷಣೆಗೆ ಆತ್ಮರಕ್ಷಣಾ ಕಲೆಗಳನ್ನು ಕಳೆಯುವ ಮೂಲಕ ಧೈರ್ಯದಿಂದ ಕೆಲಸ ಮಾಡಲು ಮುಂದಾಗಬೇಕು. ಗ್ರಾಮ ಪಂಚಾಯತ್ಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿಯಿದ್ದರೂ, ಹಲವೆಡೆ ಅವರ ಪರವಾಗಿ ಪುರುಷರೇ (ಪತಿ ಅಥವಾ ಸಂಬಂಧಿಕರು) ಆಡಳಿತ ನಡೆಸುತ್ತಿರುವುದು ಕಂಡುರುತ್ತಿದೆ . ಇದನ್ನು ಬದಲಿಸಿ ಮಹಿಳೆಯರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು ಎಂದರು. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಮಸೂದೆಯಿಂದ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲಿದೆ. ರಾಜ್ಯದಲ್ಲಿರುವ ನಮ್ಮ ಸರ್ಕಾರ ಭಾರತದಲ್ಲೇ ಮೊದಲ ಬಾರಿಗೆ ತಿಂಗಳಿಗೆ ಒಂದು ದಿನ ಋತುಚಕ್ರದ ರಜೆ ನೀಡುವ ನಿರ್ಧಾರ ಕೈಗೊಂಡಿದೆ. ಎಲ್ಲರು ಸೇರಿ ಮಹಿಳೆಯರ ಅಭಿವೃದ್ಧಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಇಂದಿರಾ ಗಾಂಧಿಯವರಂತಹ ಶಕ್ತಿಯುತ ಮಹಿಳೆಯರನ್ನು ಆದರ್ಶವಾಗಿಟ್ಟುಕೊಂಡು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಮಹಿಳೆಯರಿಗೆ ಕೇವಲ ಒಂದು ದಿನ ಗೌರವ ನೀಡುವುದಕ್ಕಿಂತ, ಪ್ರತಿದಿನವೂ ಸಮಾನ ಅವಕಾಶ ಮತ್ತು ಗೌರವ ನೀಡುವ ವಾತಾವರಣ ನಿರ್ಮಾಣವಾಗಬೇಕು. ಮಹಿಳೆ ಮನೆಗೇಲಸದ ಜೊತೆಗೆ ದೇಶ ಆಳುವ ಶಕ್ತಿ ಹೊಂದಿದ್ದಾಳೆ. ಆದ್ದರಿಂದ ಮಹಿಳೆಯರು ತಮ್ಮ ಶಕ್ತಿಯನ್ನು ಅರೆತು ಕೆಲಸ ಮಾಡಿ ಉನ್ನತ ಹುದ್ದೆಗೆರಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರನ್ನು ಸ್ವಸಹಾಯ ಸಂಘಗಳ ಮೂಲಕ ಸಂಘಟಿಸಿ, ಅವರಿಗೆ ಉದ್ಯೋಗಾವಕಾಶ ಮತ್ತು ಆರ್ಥಿಕ ಸ್ವತಂತ್ರ ಒದಗಿಸುವಲ್ಲಿ ಈ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರು ಕೇವಲ ಸಾಂಪ್ರದಾಯಿಕ ಕೆಲಸಗಳಿಗೆ ಸೀಮಿತವಾಗದೆ, ಡಿಜಿಟಲ್ ಪಾವತಿಗಳು, ಆನ್ಲೈನ್ ಬ್ಯಾಂಕಿಂಗ್ ಮತ್ತು ಸ್ಮಾರ್ಟ್ಫೋನ್ಗಳ ಬಳಕೆಯನ್ನು ಕಲಿಯುವತ್ತ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣ ಅವರು ಮಾತನಾಡಿದರು. ಅಕ್ಕ ಮಹಾದೇವಿ ಮಹಾವಿದ್ಯಾಲಯದ ಪ್ರಧ್ಯಾಪಕಿ ಧನಲಕ್ಷ್ಮೀ ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಒಕ್ಕೂಟ ಹಾಗೂ ಸ್ವ ಸಹಾಯ ಗುಂಪುಗಳಿಗೆ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಪುರಸ್ಕಾರ ಹಾಗೂ ಸ್ವ ಸಹಾಯ ಗುಂಪು ಪುರಸ್ಕಾರ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ. ಆರ್, ಚಿಟಗುಪ್ಪ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ಬಿರಾದಾರ್, ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕಿ ಶಿವಲೀಲಾ ಹಾಗೂ ಯೋಜನಾ ನಿರ್ದೇಶಕ ಸೂರ್ಯಕಾಂತ್ ಬಿರಾದಾರ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.
Raichur | ಆಕಸ್ಮಿಕ ಬೆಂಕಿ; ನಾಲ್ಕು ಬಣವೆಗಳು ಭಸ್ಮ
ರಾಯಚೂರು: ಆಕಸ್ಮಿಕವಾಗಿ 4 ಬಣವೆಗಳಿಗೆ ಬೆಂಕಿ ತಗುಲಿ ಲಕ್ಷಾಂತರ ನಷ್ಟ ಉಂಟಾಗಿರುವ ಘಟನೆ ರಾಯಚೂರು ತಾಲೂಕಿನ ಮನ್ಸಲಾಪೂರ ಗ್ರಾಮದಲ್ಲಿ ಗುರುವಾರ ನಡೆದಿದೆ. ಗ್ರಾಮದ ಜಂಬಲಮ್ಮ ದೇವಸ್ಥಾನದ ಸಮೀಪದಲ್ಲಿ ರೈತ ಯಂಕಪ್ಪ ಅವರ ಎರಡು ಬಣವೆಗಳು ಹಾಗೂ ಭೀಮಯ್ಯ ಎಂಬವರಿಗೆ ಸೇರಿದ ಎರಡು ಬಣವೆಗಳಿಗೆ ಬೆಂಕಿ ತಗುಲಿ ಸಂಪೂರ್ಣ ಬಣವೆಗಳು ಬೆಂಕಿ ಕೆನ್ನಾಲಿಗೆಗೆ ಭಸ್ಮವಾಗಿವೆ. ಹತ್ತಿರದಲ್ಲಿದ್ದ ಹನುಮೇಶ ಎಂಬವರ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಬೆಂಕಿ ಹೊತ್ತಿದ ಬಳಿಕ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರೂ ಅವರು ಬರುವಷ್ಟರಲ್ಲಿ ನಾಲ್ಕು ಬಣವೆಗಳಿಗೆ ತಗುಲಿ ಸಂಪೂರ್ಣ ಭಸ್ಮವಾಗಿವೆ ಎನ್ನಲಾಗಿದೆ. ಹತ್ತಿರದಲ್ಲಿ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಹರ ಸಾಹಸ ಪಟ್ಟು ಬೆಂಕಿಯನ್ನು ನಂದಿಸಿದರು. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಝಾಂಬಿ ಡ್ರಗ್ ಅಥವಾ ಝೈಲಾಜಿನ್ ಅಂದರೆ ಏನು? ಆರೋಗ್ಯದ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ?
ವ್ಯಕ್ತಿಯೊಬ್ಬ ಝಾಂಬಿ ಡ್ರಗ್ಸ್ ಸೇವಿಸಿದ್ದಾನೆಂದು ತಪ್ಪು ಮಾಹಿತಿಯುಳ್ಳ ವಿಡಿಯೊವೊಂದನ್ನು ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಗಲೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ವಿಚಿತ್ರವಾಗಿ ಕೈ ಕಾಲುಗಳನ್ನು ಆಡಿಸುತ್ತಾ ನಿಂತಿದ್ದ. ಇದನ್ನು ಗಮನಿಸಿದ ಹೇಮಂತ್ ಎಂಬ ವ್ಯಕ್ತಿ ವಿಡಿಯೊ ಮಾಡಿ ಈ ವ್ಯಕ್ತಿ ‘ಝಾಂಬಿ’ ಡ್ರಗ್ಸ್ ಸೇವನೆ ಮಾಡಿ ಈ ರೀತಿ ವಿಚಿತ್ರ ವರ್ತನೆ ಮಾಡುತ್ತಿರಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಮಾಡಿ ಹಂಚಿಕೊಂಡಿದ್ದರು. ವಿಡಿಯೊ ವೈರಲ್ ಆದ ಬೆನ್ನಲ್ಲೇ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದರು. ವಿಡಿಯೊದಲ್ಲಿ ಇರುವ ವ್ಯಕ್ತಿಯನ್ನು ಪತ್ತೆ ಮಾಡಿ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತನ ರಕ್ತದ ಮಾದರಿಯಲ್ಲಿ ಯಾವುದೇ ರೀತಿಯ ಡ್ರಗ್ಸ್ ಅಥವಾ ಅಮಲು ಪದಾರ್ಥಗಳ ಅಂಶ ಪತ್ತೆಯಾಗಿರಲಿಲ್ಲ. ವಿಡಿಯೊದಲ್ಲಿರುವ ವ್ಯಕ್ತಿ ಹೊರಗಿನಿಂದ ಬೆಂಗಳೂರಿಗೆ ಬಂದಿದ್ದ. ಆತ ಅನಾರೋಗ್ಯದಿಂದ ಬಳಲುತ್ತಿದ್ದು ಕೆಲವು ಔಷಧಿಗಳನ್ನು ಸೇವಿಸಿದ್ದ. ಇದರ ಜತೆಗೆ ಮದ್ಯ ಸೇವನೆಯೂ ಮಾಡಿದ್ದರಿಂದ ಆ ನಶೆಗೆ ಆತನ ದೇಹದ ಸಮತೋಲನ ತಪ್ಪಿತ್ತು. ಆತ ವಿಚಿತ್ರವಾಗಿ ವರ್ತಿಸುತ್ತಿದ್ದುದಕ್ಕೆ ಸೇವಿಸಿದ ಔಷಧದ ಅಡ್ಡ ಪರಿಣಾಮ ಮತ್ತು ಮದ್ಯದ ಅಮಲು ಎಂಬುದು ಕಂಡು ಬಂದಿದೆ. ಈ ಮಧ್ಯೆ, ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಪೊಲೀಸರು ವಿದ್ಯಾರಣ್ಯಪುರದ ನಿವಾಸಿ ಹೇಮಂತ್ ಅವರನ್ನು ಬಂಧಿಸಿದ್ದಾರೆ. ಗುರುವಾರ ಹೇಮಂತ್ ಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದು, ಇದನ್ನು ಅರಿತ ಹೇಮಂತ್ ಸಾಮಾಜಿಕ ಮಾಧ್ಯಮದ ಮೂಲಕ ಕ್ಷಮೆ ಕೇಳಿದ್ದರು. ಈ ರೀತಿ ‘ಅಪಪ್ರಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿ ಗೃಹ ಸಚಿವ ಜಿ. ಪರಮೇಶ್ವರ ಅವರು, ವಿಡಿಯೊದಲ್ಲಿರುವ ಆ ವ್ಯಕ್ತಿ ಕೆಲಸಕ್ಕಾಗಿ ನಗರಕ್ಕೆ ಬಂದು ಮದ್ಯ ಸೇವಿಸಿದ್ದರು ಎಂದು ಸ್ಪಷ್ಟಪಡಿಸಿದರು. ಆತ ಪಂಜಾಬ್ನವರು. ಅವರು ಔಷಧಿಗಳ ಜೊತೆಗೆ ಮದ್ಯ ಸೇವಿಸಿದ್ದರು, ಇದು ಅವರ ದೇಹದ ಮೇಲೆ ಪರಿಣಾಮ ಬೀರಿತು. ಅಂತಹ ಯಾವುದೇ ಝಾಂಬಿ ಡ್ರಗ್ ಇದರಲ್ಲಿ ಒಳಗೊಂಡಿಲ್ಲ. ವಿಡಿಯೊ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ. ಕಳೆದ ತಿಂಗಳು, ಚಂಡೀಗಢದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಅಲ್ಲಿ ಬ್ಲಿಂಕಿಟ್ ಡಿಲಿವರಿ ಬಾಯ್ ಸುಮಾರು ಎರಡು ಗಂಟೆಗಳ ಕಾಲ ವಸತಿ ಪ್ರದೇಶದಲ್ಲಿ ಚಲನೆ ಇಲ್ಲದೆ ನಿಂತಿರುವುದು ಕಂಡುಬಂದಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಅವನು ಯಾವುದೇ ಪ್ರತಿಕ್ರಿಯೆ ನೀಡದೆ, ಬಾಯಿಯಲ್ಲಿ ಬೀಡಿ ಇಟ್ಟುಕೊಂಡು ಸುಮ್ಮನೆ ನೋಡುತ್ತಿದ್ದನು. ಆತನಿಗೆ ಸುತ್ತಮುತ್ತಲಿನ ಬಗ್ಗೆ ಯಾವುದೇ ಅರಿವಿರಲಿಲ್ಲ. ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಆದರೆ ಆತನ ಆ ಸ್ಥಿತಿಗೆ ನಿಖರವಾದ ಕಾರಣ ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲಿವರೆಗೆ ಸಿಕ್ಕಿಲ್ಲ. ►ಏನಿದು ಝಾಂಬಿ ಡ್ರಗ್? ಝಾಂಬಿ ಡ್ರಗ್ ಅಥವಾ ಝೈಲಾಜಿನ್ ಎಂದು ಕರೆಯಲ್ಪಡುವ ಈ ಔಷಧವು ಅಕ್ರಮ ಡ್ರಗ್ ಸರಬರಾಜುಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ. ಇದು ತೀವ್ರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಮೂಲತಃ ಪ್ರಾಣಿಗಳ ಟ್ರ್ಯಾಂಕ್ವಿಲೈಜರ್ (ದೊಡ್ಡ ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವು ನಿವಾರಿಸಲು ಬಳಸುವ ಔಷಧಿ) ಆಗಿದ್ದ ಝೈಲಾಜಿನ್, ಇತರ ಡ್ರಗ್ಸ್ ಜತೆ ಬೆರೆಸಿದರೆ ತೀವ್ರ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಇದನ್ನು ಮಾನವ ಬಳಕೆಗೆ ಅನುಮೋದಿಸಲಾಗಿಲ್ಲ. ಆದರೂ ಇದನ್ನು ಅಕ್ರಮ ಮಾರುಕಟ್ಟೆಗಳಲ್ಲಿ ಹೆರಾಯಿನ್ ಅಥವಾ ಫೆಂಟನಿಲ್ ನಂತಹ ಒಪಿಯಾಡ್ ಗಳೊಂದಿಗೆ ಬೆರೆಸಲಾಗುತ್ತಿದೆ. ಈ ಸಂಯೋಜನೆಯು ಅಮಲಾಗಿಸುತ್ತಿದ್ದು ಇದು ಹೆಚ್ಚು ಅಪಾಯಕಾರಿಯಾಗಿದೆ. ಝಾಂಬಿ ಡ್ರಗ್ ಎಂಬ ಅಡ್ಡಹೆಸರು ಅದರ ಅಡ್ಡಪರಿಣಾಮಗಳಿಂದ ಬಂದಿದೆ. ಇದನ್ನು ಸೇವಿಸಿದ ವ್ಯಕ್ತಿಗಳು ದಿಗ್ಭ್ರಮೆಗೊಂಡು, ಪ್ರತಿಕ್ರಿಯಿಸದ ಅಥವಾ ಟ್ರಾನ್ಸ್-ತರಹದ ಸ್ಥಿತಿಯಲ್ಲಿ ಕಾಣಿಸಿಕೊಳ್ಳಬಹುದು. ►ಭಾರತದಲ್ಲಿ ಪ್ರಕರಣಗಳು ಹೆಚ್ಚುತ್ತಿವೆಯೇ? ಭಾರತದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಬಹುದಾದ ಯಾವುದೇ ಮಟ್ಟಗಳು ಇನ್ನೂ ಕಂಡುಬಂದಿಲ್ಲ. ಇಲ್ಲಿಯವರೆಗೆ ಯಾವುದೇ ಪ್ರಕರಣಗಳನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಇದನ್ನು ಮಾದಕವಸ್ತು ಕಳ್ಳಸಾಗಣೆದಾರರು ಒಪಿಯಾಯ್ಡ್ ಗಳ ಪರಿಣಾಮಗಳನ್ನು ಹೆಚ್ಚಿಸಲು ಅಥವಾ ನಶೆ ಹೆಚ್ಚು ಹೊತ್ತು ಇರುವುದಕ್ಕಾಗಿ ಬಳಸುತ್ತಾರೆ. ಪ್ರಮಾಣಿತ ಡ್ರಗ್ ಟೆಸ್ಟ್ಗಳು ಹೆಚ್ಚಾಗಿ ಝೈಲಾಜಿನ್ ಅನ್ನು ಗುರುತಿಸುವಲ್ಲಿ ವಿಫಲವಾಗುತ್ತವೆ. ಹೆಚ್ಚುತ್ತಿರುವ ಮಾದಕವಸ್ತು ದುರುಪಯೋಗವು ಅದರ ಹರಡುವಿಕೆಗೆ ಕೊಡುಗೆ ನೀಡುತ್ತದೆ. ►ಝೈಲಾಜಿನ್ ಗೆ ಸಂಬಂಧಿಸಿದ ಆರೋಗ್ಯ ಅಪಾಯಗಳು ಝೈಲಾಜಿನ್ ಗೆ ಸಂಬಂಧಿಸಿದ ಆರೋಗ್ಯ ಅಪಾಯಗಳು ತೀವ್ರವಾಗಿರುತ್ತವೆ ಮತ್ತು ಹೆಚ್ಚಾಗಿ ಜೀವಕ್ಕೆ ಅಪಾಯಕಾರಿಯಾಗಿರುತ್ತವೆ. ಅದರ ಸೇವನೆಯಿಂದ ಚರ್ಮದಲ್ಲಿ ಭಾರೀ ನೋವಿನ ಗಾಯಗಳುಂಟಾಗಬಹುದು. ಇದು ಬೇಗನೆ ಉಲ್ಬಣವಾಗುತ್ತದೆ. ತೀವ್ರತರವಾದ ಸಂದರ್ಭಗಳಲ್ಲಿ ಅಂಗವನ್ನೇ ಕತ್ತರಿಸಬೇಕಾಗುತ್ತದೆ. ►ವೈದ್ಯರ ಪ್ರಕಾರ ಇದರ ಸೇವನೆಯಿಂದಾಗಿ ಈ ರೀತಿ ಪರಿಣಾಮಗಳು ಕಾಣಿಸುತ್ತವೆ: ಅಮಲು ಮತ್ತು ಪ್ರಜ್ಞಾಹೀನತೆ ನಿಧಾನಗೊಂಡ ಉಸಿರಾಟ ಮತ್ತು ಹೃದಯ ಬಡಿತ ತೀವ್ರ ಚರ್ಮದ ಹುಣ್ಣುಗಳು ಮತ್ತು ಸೋಂಕುಗಳು ಹೆಚ್ಚೆಚ್ಚು ಸೇವನೆಗೆ ತುಡಿತ ಹೆಚ್ಚಿನ ಅವಲಂಬನೆ ಮತ್ತು ಅದಿಲ್ಲದೆ ಆಗುವುದೇ ಇಲ್ಲ ಎನ್ನುವ ಸ್ಥಿತಿ ►ಚಿಕಿತ್ಸೆ ನೀಡುವುದು ಏಕೆ ಕಷ್ಟ? ತಜ್ಞರ ಪ್ರಕಾರ, ಒಪಿಯಾಯ್ಡ್ ಗಳಂತಲ್ಲದೆ ಝೈಲಾಜಿನ್ ಮಿತಿಮೀರಿದ ಸೇವನೆಯನ್ನು ಹಿಮ್ಮೆಟ್ಟಿಸಲು ಬಳಸುವ ಪ್ರಮಾಣಿತ ಔಷಧಿಯಾದ ನಲೋಕ್ಸೋನ್ ಗೆ ಪ್ರತಿಕ್ರಿಯಿಸುವುದಿಲ್ಲ. ಇದು ತುರ್ತು ಚಿಕಿತ್ಸೆಯನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ ಮತ್ತು ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಬಳಕೆದಾರರು ತಾವು ಝೈಲಾಜಿನ್ ಅನ್ನು ಸೇವಿಸುತ್ತಿದ್ದೇವೆ ಎಂದು ತಿಳಿದಿರುವುದಿಲ್ಲ, ಏಕೆಂದರೆ ಇದನ್ನು ಹೆಚ್ಚಾಗಿ ಇತರ ಔಷಧಿಗಳೊಂದಿಗೆ ತಿಳಿಯದೆ ಬೆರೆಸಲಾಗುತ್ತದೆ. ►ಝೈಲಾಜಿನ್ ಸೇವಿಸಿದ ವ್ಯಕ್ತಿಯಲ್ಲಿ ಕಾಣುವ ಲಕ್ಷಣಗಳು ಅಸಾಮಾನ್ಯ ಅರೆನಿದ್ರಾವಸ್ಥೆ ಅಥವಾ ನಶೆ ಗೊಂದಲ ಅಥವಾ ದಿಗ್ಭ್ರಮೆ ನಿಧಾನ ಉಸಿರಾಟ ತೆರೆದ ಚರ್ಮದ ಹುಣ್ಣುಗಳು ಅಥವಾ ಅಲ್ಸರ್ಸ್ ಪ್ರಜ್ಞೆ ತಪ್ಪುವುದು ಈ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣದ ವೈದ್ಯಕೀಯ ಆರೈಕೆ ನಿರ್ಣಾಯಕವಾಗಿದೆ. ಬಲವಾದ ಔಷಧ ಕಣ್ಗಾವಲು ವ್ಯವಸ್ಥೆಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳು, ಸುಧಾರಿತ ಪರೀಕ್ಷಾ ವಿಧಾನಗಳು, ವ್ಯಸನ ಚಿಕಿತ್ಸೆ ಮತ್ತು ಪುನರ್ವಸತಿಗೆ ಪ್ರವೇಶ ಮೊದಲಾದ ತುರ್ತು ಕ್ರಮಗಳ ಅಗತ್ಯವನ್ನು ತಜ್ಞರು ಒತ್ತಿ ಹೇಳುತ್ತಾರೆ. ಜನರು ಈ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಅಪರಿಚಿತ ಪದಾರ್ಥಗಳನ್ನು ಪ್ರಯೋಗ ಮಾಡುವುದನ್ನು ತಪ್ಪಿಸಿ ಅಂತಾರೆ ಆರೋಗ್ಯ ತಜ್ಞರು. ಝಾಂಬಿ ಡ್ರಗ್ಸ್ ನಿರ್ಲಕ್ಷಿಸಲಾಗದ ಗಂಭೀರ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ. ಅದರ ಅನಿರೀಕ್ಷಿತ ಪರಿಣಾಮಗಳು ಮತ್ತು ತೊಡಕುಗಳೊಂದಿಗೆ ಹೆಚ್ಚಿನ ಅಪಾಯದ ಹಿನ್ನೆಲೆ, ಝೈಲಾಜಿನ್ ಮಾದಕವಸ್ತು ದುರುಪಯೋಗದ ವಿರುದ್ಧದ ಹೋರಾಟದಲ್ಲಿ ಹೊಸ ಸವಾಲನ್ನು ಒಡ್ಡುತ್ತದೆ.
ಭಾರತದೊಂದಿಗೆ ವಿದೇಶಾಂಗ ಸಚಿವ ಮಟ್ಟದ ಸಭೆ; ಶೇಖ್ ಹಸೀನಾ ಹಸ್ತಾಂತರ ವಿಷಯವನ್ನೆತ್ತಿದ ಬಾಂಗ್ಲಾದೇಶ
ಹೊಸದಿಲ್ಲಿ, ಎ.10: ಬಾಂಗ್ಲಾದೇಶವು ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ತನ್ನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹಸ್ತಾಂತರದ ವಿಷಯವನ್ನೆತ್ತಿದೆ. ಕಳೆದ ಫೆಬ್ರವರಿಯಲ್ಲಿ ಬಾಂಗ್ಲಾದೇಶದಲ್ಲಿ ಚುನಾಯಿತ BNP ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ದೇಶಗಳ ನಡುವಿನ ಇದು ಮೊದಲ ವಿದೇಶಾಂಗ ಸಚಿವ ಮಟ್ಟದ ಮಾತುಕತೆಯಾಗಿದೆ. ಬಾಂಗ್ಲಾದೇಶದ ವಿದೇಶಾಂಗ ಸಚಿವ ಖಲಿಯುರ್ ರಹಮಾನ್ ಅವರು ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ತಾರಿಕ್ ರಹಮಾನ್ ನೇತೃತ್ವದ BNP ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉಭಯ ದೇಶಗಳ ನಡುವಿನ ಅತ್ಯುನ್ನತ ಮಟ್ಟದ ದ್ವಿಪಕ್ಷೀಯ ಸಂಪರ್ಕ ಇದಾಗಿದೆ. ‘ಬಾಂಗ್ಲಾದೇಶ ಮೊದಲು’ ಎಂಬ ತತ್ವವು ‘ಪರಸ್ಪರ ನಂಬಿಕೆ, ಗೌರವ ಮತ್ತು ಪರಸ್ಪರ ಲಾಭ’ದ ಆಧಾರದಲ್ಲಿ ನೂತನ ಸರ್ಕಾರದ ವಿದೇಶಾಂಗ ನೀತಿಗೆ ಮಾರ್ಗದರ್ಶಿಯಾಗಲಿದೆ ಎಂದು ರಹಮಾನ್ ಅವರು ಜೈಶಂಕರ್ ಅವರಿಗೆ ತಿಳಿಸಿದ್ದಾರೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಬಾಂಗ್ಲಾದೇಶದ ನಿಯೋಗವು ಶೇಖ್ ಹಸೀನಾ ಮತ್ತು ಅವರ ಗೃಹ ಸಚಿವ ಅಸದುಝ್ಝಮಾನ್ ಖಾನ್ ಕಮಾಲ್ ಅವರನ್ನು ಹಸ್ತಾಂತರಿಸುವಂತೆ ತನ್ನ ಮನವಿಯನ್ನು ಪುನರುಚ್ಚರಿಸಿದೆ ಎಂದು ಹೇಳಿಕೆ ತಿಳಿಸಿದೆ. ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಕಳೆದ ವರ್ಷದ ನವೆಂಬರ್ ನಲ್ಲಿ ಹಸೀನಾ ಮತ್ತು ಕಮಾಲ್ ಅವರ ಅನುಪಸ್ಥಿತಿಯಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿ ಇಬ್ಬರಿಗೂ ಮರಣದಂಡನೆ ವಿಧಿಸಿದೆ. ಜೈಶಂಕರ್-ರಹಮಾನ್ ಭೇಟಿ ಕುರಿತು ಸಂಕ್ಷಿಪ್ತ ಹೇಳಿಕೆಯನ್ನು ಹೊರಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಸ್ತಾಂತರ ಮನವಿ ಅಥವಾ ಇತರ ನಿರ್ದಿಷ್ಟ ವಿಷಯಗಳ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಬಾಂಗ್ಲಾದೇಶದ ಹೊಸ ಸರ್ಕಾರದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸುವ ಭಾರತದ ಬಯಕೆಯನ್ನು ಜೈಶಂಕರ್ ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ. ಸಂಬಂಧಿತ ದ್ವಿಪಕ್ಷೀಯ ಕಾರ್ಯವಿಧಾನಗಳ ಮೂಲಕ ಪಾಲುದಾರಿಕೆಯನ್ನು ಗಾಢಗೊಳಿಸಲು ಅವಕಾಶಗಳನ್ನು ಅನ್ವೇಷಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿಕೆ ತಿಳಿಸಿದೆ. ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದ ಹೇಳಿಕೆಯು ಹೆಚ್ಚು ವಿವರಣಾತ್ಮಕವಾಗಿದ್ದು, ಡೀಸೆಲ್ ಪೂರೈಕೆ, ವೀಸಾ ಸೌಲಭ್ಯ, ಶರೀಫ್ ಉಸ್ಮಾನ್ ಹಾದಿ ಹತ್ಯೆ ಪ್ರಕರಣದಲ್ಲಿನ ಶಂಕಿತ ಆರೋಪಿಗಳ ಹಸ್ತಾಂತರ ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಕುರಿತು ಸಮಾಲೋಚನೆಗಳನ್ನು ಉಲ್ಲೇಖಿಸಿದೆ. 2024ರ ವಿದ್ಯಾರ್ಥಿ ದಂಗೆಯ ನಾಯಕ ಹಾದಿಯನ್ನು ಕಳೆದ ವರ್ಷದ ಡಿಸೆಂಬರ್ನಲ್ಲಿ ಢಾಕಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶಂಕಿತ ಆರೋಪಿಗಳಾದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳದ ಬೊಂಗಾಂವ್ ನಲ್ಲಿ ಬಂಧಿಸಲಾಗಿದ್ದು, ನ್ಯಾಯಾಲಯವು ಅವರನ್ನು ಎನ್ಐಎ ಕಸ್ಟಡಿಗೆ ಒಪ್ಪಿಸಿತ್ತು. ವಿದೇಶಾಂಗ ವ್ಯವಹಾರಗಳ ಕುರಿತು ಬಾಂಗ್ಲಾದೇಶದ ಪ್ರಧಾನಿಗೆ ಸಲಹೆಗಾರರಾಗಿರುವ ಹುಮಾಯೂನ್ ಕಬೀರ್ ಅವರನ್ನು ಒಳಗೊಂಡ ನಿಯೋಗವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದೆ.
ಕೈಗಾರಿಕಾ LPG ಪೂರೈಕೆಗೆ ಶೇ.70ರ ಮಿತಿ ಹೇರಿದ ಕೇಂದ್ರ, ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ
ಹೊಸದಿಲ್ಲಿ, ಎ.10: ಬದಲಾಗುತ್ತಿರುವ ಪೂರೈಕೆ ಸ್ಥಿತಿಗಳ ನಡುವೆಯೇ ಕೈಗಾರಿಕಾ ಬಳಕೆಗಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ(LPG)ದ ನಿರಂತರ ಮತ್ತು ಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆದೇಶ ಹೊರಡಿಸಿದ್ದು, ಕೈಗಾರಿಕಾ ಬಳಕೆಗಾಗಿ LPG ಪೂರೈಕೆಯ ಮೇಲೆ ಶೇ.70ರ ಮಿತಿಯನ್ನು ವಿಧಿಸಿದೆ. ಈ ಸಂಬಂಧ ಸಚಿವಾಲಯದ ಕಾರ್ಯದರ್ಶಿ ನೀರಜ್ ಮಿತ್ತಲ್ ಅವರು ಭಾರತ ಸರ್ಕಾರದ ಎಲ್ಲ ಕಾರ್ಯದರ್ಶಿಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಔಷಧಿ, ಆಹಾರ ಸಂಸ್ಕರಣೆ, ಪಾಲಿಮರ್, ಕೃಷಿ, ಪ್ಯಾಕೇಜಿಂಗ್, ಬಣ್ಣ, ಉಕ್ಕು, ಲೋಹಗಳು, ಸಿರಾಮಿಕ್ಸ್, ಗಾಜು, ಎರೋಸೋಲ್ಗಳು, ಫೌಂಡ್ರಿ, ಫೋರ್ಜಿಂಗ್, ಭಾರಜಲ, ಯುರೇನಿಯಂ ಮತ್ತು ಬೀಜಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಕೈಗಾರಿಕಾ ಘಟಕಗಳು 2026ರ ಮಾರ್ಚ್ಗೂ ಮುನ್ನ ತಮ್ಮ ಸಗಟು LPG ಬಳಕೆಯ ಶೇ.70ರಷ್ಟನ್ನು ಪಡೆಯಲಿದ್ದು, ಇದು ದೈನಂದಿನ 0.2 ಟಿಎಂಟಿ ಒಟ್ಟು ಕ್ಷೇತ್ರ ಮಿತಿಗೆ ಒಳಪಟ್ಟಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ LPG ನಿರ್ಣಾಯಕ ಹಾಗೂ ಬದಲಿಸಲಾಗದ ಅಗತ್ಯವಾಗಿರುವ ಕೈಗಾರಿಕೆಗಳಿಗೆ ಪೂರೈಕೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಇಂತಹ ಕ್ಷೇತ್ರಗಳಿಗೆ ಪೈಪ್ಡ್ ನೈಸರ್ಗಿಕ ಅನಿಲ (PNG) ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯವನ್ನು ಮನ್ನಾ ಮಾಡಲಾಗಿದ್ದು, ನಿಗದಿತ ಷರತ್ತುಗಳನ್ನು ಪಾಲಿಸುವ ಮೂಲಕ ಕೈಗಾರಿಕಾ ಕಾರ್ಯಾಚರಣೆಗಳು ಅಬಾಧಿತವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. LPGಯನ್ನು ಇಂಧನವಾಗಿ ಬಳಸುವ ಮತ್ತು ಕ್ರಮೇಣ PNGಗೆ ಪರಿವರ್ತನೆಗೊಳ್ಳಬಹುದಾದ ಕೈಗಾರಿಕೆಗಳು ಹಾಗೂ LPG ಬದಲಿಸಲಾಗದ ಅಗತ್ಯವಾಗಿರುವ ಕೈಗಾರಿಕೆಗಳ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಸಚಿವಾಲಯ ಗುರುತಿಸಿದೆ. ಭಾರತವು ತನ್ನ ಶೇ.60ರಷ್ಟು LPGಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಈ ಪೈಕಿ ಶೇ.90ರಷ್ಟು ಸಾಮಾನ್ಯವಾಗಿ ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಈ ಜಲಮಾರ್ಗವು ಒತ್ತಡಕ್ಕೊಳಗಾದಾಗ ಮಾರ್ಚ್ ನಲ್ಲಿ ಮಾಸಿಕ ಆಮದು ಫೆಬ್ರವರಿಯ 2.04 ಮಿಲಿಯನ್ ಟನ್ನಿಂದ 1.12 ಮಿಲಿಯನ್ ಟನ್ ಗೆ ಕುಸಿದಿತ್ತು.
ಕೊಲ್ಲೂರು: ರೌಡಿಶೀಟರ್ ಕಾರ್ತಿರ್ ಆಚಾರ್ ಗಡಿಪಾರು
ಕೊಲ್ಲೂರು, ಎ.10: ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ರೌಡಿ ಶೀಟರ್ ಕಾರ್ತಿಕ್ ಆಚಾರ್ ವಿರುದ್ಧ ಗಡಿಪಾರು ಆದೇಶವನ್ನು ಹೊರಡಿಸಲಾಗಿದೆ. ಕುಂದಾಪುರ ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಹೊಸಿಮನೆ ಕಾರ್ತಿಕ್ ನಿಲಯದ ಕಾರ್ತಿಕ್ ಆಚಾರ್ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಉಡುಪಿ ಪೊಲೀಸ್ ಅಧೀಕ್ಷಕರು ಎಪ್ರಿಲ್ 9ರಂದು ಗಡಿಪಾರು ಆದೇಶ ಹೊರಡಿಸಿದ್ದಾರೆ. ಈತನ ವಿರುದ್ಧ ಒಟ್ಟು 4 ಪ್ರಕರಣ ದಾಖಲಾಗಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ರೌಡಿಶೀಟ್ ತೆರೆಯಲಾಗಿದೆ. ಈತನನ್ನು ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.
Raichur | ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೆರೆ
ಸಿರವಾರ: ಲಂಚ ಸ್ವೀಕರಿಸಿದ ಬಳಿಕ ಲೋಕಾಯುಕ್ತ ಪೊಲೀಸರ ಕಣ್ಣಿಗೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸ ಬಡಾವಣೆಯ ನಿವೇಶನಕ್ಕೆ ಇ-ಖಾತೆ (ಫಾರಂ ನಂ.3) ನೀಡಲು ಸುರೇಶ ಶೆಟ್ಟಿ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಸಂಬಂಧ ಸಿರವಾರದ ಜಿ. ರಘುರಾಮರೆಡ್ಡಿ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಗುರುವಾರ ಸಂಜೆ ದೂರುದಾರರಿಂದ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಹಿಡಿಯಲು ಮುಂದಾದಾಗ, ಆತ ಕಾರಿನಲ್ಲಿ ಪರಾರಿಯಾಗಿದ್ದನು. ಬೈಕ್ನಲ್ಲಿ ಹಿಂಬಾಲಿಸಿದರೂ ಆತ ತಪ್ಪಿಸಿಕೊಂಡಿದ್ದನು. ಇದಾದ ಬಳಿಕ ಕಲ್ಮಠ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಸುಳಿವಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿ, ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಕವಿತಾಳದ ಸ್ನೇಹಿತನ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಲಂಚದ ಹಣ ಸಮೇತ ಶುಕ್ರವಾರ ನಸುಕಿನ ಜಾವದಲ್ಲಿ ಬಂಧಿಸಿದರು. ಬಂಧಿತನನ್ನು ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಿ, ನಂತರ ಆರೋಗ್ಯ ತಪಾಸಣೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಲೋಕಾಯುಕ್ತ ಡಿವೈಎಸ್ಪಿ ಪುರುಷೋತ್ತಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಿಬ್ಬಂದಿ ಸಹಕರಿಸಿದ್ದರು.
ನೂರ್ ಖಾನ್ ಏರ್ಬೇಸ್ಗೆ ಬಂದಿಳಿದ ಯುಎಸ್ ವಿಮಾನ; ಭಾರತದ ಹೊಡೆತದ ಕುರುಹು ಮುಚ್ಚಿ ಹಾಕಿತಾ ಪಾಕಿಸ್ತಾನ?
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿದೂತನಾಗಿ ಮೆರೆಯುತ್ತಿರುವ ಪಾಕಿಸ್ತಾನ, ನಾಳೆ (ಏ.11-ಶನಿವಾರ) ಉಭಯ ರಾಷ್ಟ್ರಗಳ ನಡುವಿನ ಇಸ್ಲಾಮಾಬಾದ್ ಟಾಕ್ಸ್ಗೆ ಚಾಲನೆ ನೀಡಲಿದೆ. ಈ ಮಾತುಕತೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಅಮೆರಿಕ ನಿಯೋಗ ಇದೆ ಎನ್ನಲಾದ ಅಮೆರಿಕದ ಮಿಲಿಟರಿ ವಿಮಾನ ಇಂದು (ಏ.10-ಶುಕ್ರವಾರ) ಸಂಜೆ ನೂರ್ ಖಾನ್ ವಾಯುನೆಲೆಗೆ ಬಂದಿಳಿದಿದೆ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ, ಭಾರತವು ಇದೇ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದನ್ನು ನಾವು ಸ್ಮರಿಸಬಹುದು. ಇಲ್ಲಿದೆ ಮಾಹಿತಿ.
ಬೀಜಾಡಿ: ಸ್ಕೂಟಿಗೆ ಟಿಪ್ಪರ್ ಡಿಕ್ಕಿ; ಮಹಿಳೆ ಸ್ಥಳದಲ್ಲೇ ಮೃತ್ಯು
ಕುಂದಾಪುರ, ಎ.10: ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿಯೊಂದು ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ಬೀಜಾಡಿ ಡಿವೈಡರ್ ಬಳಿ ನಡೆದಿದೆ. ಮೃತರನ್ನು ವಡ್ಡರ್ಸೆ ನೀರುಕೊಡ್ಲು ನಿವಾಸಿ ದಿ. ಮಂಜುನಾಥ್ ಆಚಾರಿ ಎಂಬವರ ಪತ್ನಿ ಶಾರದಾ (55) ಎಂದು ಗುರುತಿಸಲಾಗಿದೆ. ಘಟನೆ ವಿವರ: ಶಾರದಾ ಅವರು ಕೋಟೇಶ್ವರ ಅಂಕದಕಟ್ಟೆಯಲ್ಲಿರುವ ತಮ್ಮ ತಂಗಿಯ ಮನೆಗೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಈ ವೇಳೆ ಸ್ಕೂಟಿಯನ್ನು ಅವರ ಮಗ ಚಾಲನೆ ಮಾಡುತ್ತಿದ್ದು, ಅಪಘಾತದ ತೀವ್ರತೆಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟಿ ಓಡಿಸುತ್ತಿದ್ದ ಮಗ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
LSG Vs GT ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ ಎಂಬ ಪ್ರಶ್ನೆಗೆ ನಾಚಿ ನೀರಾಗಿ ನಕ್ಕ ಸಾರಾ ತೆಂಡೂಲ್ಕರ್!
Sara Tendulkar- ಏಪ್ರಿಲ್ 12ರಂದು ನಡೆಯಲಿರುವ ಲಖನೌ ಸೂಪರ್ ಜೈಂಟ್ಸ್ (LSG) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಪಂದ್ಯದಲ್ಲಿ ಯಾರಿಗೆ ನಿಮ್ಮ ಬೆಂಬಲ ಎಂದು ಸಾರಾ ತೆಂಡೂಲ್ಕರ್ ಗೆ ಕೇಳಿದರೆ ಉತ್ತರ ಏನಿರಬಹುದು? ಪಾಪರಾಝಿಯೊಬ್ಬ ಈ ಬಗ್ಗೆ ಕೇಳಿದಾಗ ಅವರು ನಾಚಿ ನಕ್ಕರೇ ಹೊರತು ಉತ್ತರ ಮಾತ್ರ ಹೇಳಲಿಲ್ಲ. ಪಕ್ಕದಲ್ಲೇ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಅವರ ಪತ್ನಿ ಸಾನಿಯಾ ಚಂದೋಕ್ ಅವರೂ ಇದ್ದರು. ಸಾರಾ ಅವರ ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮಂಗಳೂರು| ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ
ಮಂಗಳೂರು, ಎ.10: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿದ್ದಲ್ಲದೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಮುನ್ನೂರು ನಿವಾಸಿ ಮಹೇಶ ಮಾದರ (20) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ ಸಿ-2 (ಪೊಕ್ಸೊ) ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನಗರ ಹೊರವಲಯದಲ್ಲಿ ಬಾಡಿಗೆ ಮನೆಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯು ಹೋಮ್ ನರ್ಸ್ ಕೆಲಸ ಮಾಡಿಕೊಂಡಿದ್ದಳು. ಆರೋಪಿ ಮಹೇಶ ಮಾದರ ಕೂಡಾ ಪಕ್ಕದ ಮನೆಯಲ್ಲಿ ವಾಸವಾಗಿದ್ದ. ಇವರ ಮಧ್ಯೆ ಪರಿಚಯವಾಗಿ ಸ್ನೇಹಬೆಳೆದಿತ್ತು. 2015ರ ಮೇ 19ರಂದು ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರೆ ಮಾಡಿದ್ದ ಆರೋಪಿ ಮಹೇಶ ಬಲ್ಲಾಳ್ಬಾಗ್ಗೆ ಕರೆಸಿ ಅಲ್ಲಿಂದ ಆಟೋದಲ್ಲಿ ಕಾವೂರು ಬಳಿಯ ಶೆಡ್ಗೆ ಕರೆದುಕೊಂಡು ಹೋಗಿದ್ದ. ಅಂದು ರಾತ್ರಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಮರುದಿನ ಪೂ.11ಕ್ಕೆ ಸರಕಾರಿ ಬಸ್ಸಿನಲ್ಲಿ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದ. ಅಲ್ಲೂ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರಲಾಗಿತ್ತು. ಬಾಲಕಿ ಕೆಲಸ ಮಾಡುತ್ತಿದ್ದ ಸಂಸ್ಥೆಯವರು ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿದ್ದರು. ಅಲ್ಲದೆ ಆರೋಪಿ ವಿರುದ್ಧ ಬಿಎನ್ಎಸ್ ಕಲಂ 137(2), , 65(1) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣ ಅಧಿನಿಯಮ ಮತ್ತು ನಿಯಮ 2012 (ಪೊಕ್ಸೊ) ಕಲಂ 52 ಮತ್ತಯ 6ರಡಿ ಶಿಕ್ಷಾರ್ಹ ಅಪರಾಧ ಎಸಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಆಗಿನ ಎಸ್ಸೈ ರೇಖಾ ಆರ್. ತನಿಖೆ ಪೂರ್ಣಗೊಳಿಸಿದ್ದರೆ ಇನ್ಸ್ಪೆಕ್ಟರ್ ಗುರುರಾಜ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ -2 (ಪೋಕ್ಸೋ) ನ್ಯಾಯಾಲದ ನ್ಯಾಯಾಧೀಶ ಮಾನು ಕೆ.ಎಸ್. ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಪೊಕ್ಸೊ ಕಲಂ 6 ಮತ್ತು ಬಿಎನ್ಎಸ್ ಕಲಂ 65 (1) ರಡಿ 20 ವರ್ಷ ಕಠಿಣ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದ್ದಾರೆ. ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ ಅನುಭವಿಸಲು ಆದೇಶಿಸಿದ್ದಾರೆ. ಆಕೆಯ ಅಪಹರಣ ಮಾಡಿರುವ ಬಗ್ಗೆ ಬಿಎನ್ಎಸ್ ಕಲಂ 137(2)ರಡಿ 3 ವರ್ಷ ಶಿಕ್ಷೆ, 5 ಸಾವಿರ ರೂ.ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಅನುಭವಿಸಲು ತಿಳಿಸಿದ್ದಾರೆ. ದಂಡ ಮೊತ್ತ 35 ಸಾವಿರ ರೂ.ವನ್ನು ಸಂತ್ರಸ್ತೆಗೆ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರವಾಗಿ 3.65 ಲಕ್ಷ ರೂ. ಸಂತ್ರಸ್ತೆಗೆ ಪಾವತಿಸಬೇಕು ಎಂದು ನಿರ್ದೇಶಿಸಿದ್ದಾರೆ. ಪೊಕ್ಸೊ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.
ಹಾರ್ಮುಝ್ ಜಲಸಂಧಿ ದಾಟಬೇಕಾದರೆ ಇರಾನ್ ವಿಧಿಸಿರುವ ನಿಬಂಧನೆಗಳು ಏನು? ಇತರ ರಾಷ್ಟ್ರಗಳು ಅದನ್ನು ಸ್ವೀಕರಿಸುತ್ತವೆಯೇ?
ಗಲ್ಫ್ ಅನ್ನು ಒಮಾನ್ ಕೊಲ್ಲಿಗೆ ಸಂಪರ್ಕಿಸುವ ಹಾರ್ಮುಝ್ ಜಲಸಂಧಿಯು ಫೆಬ್ರವರಿಯಲ್ಲಿ ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಜಾಗತಿಕ ಗಮನ ಸೆಳೆದಿದೆ. ಹೋರಾಟ ಪ್ರಾರಂಭವಾಗುವವರೆಗೂ, ಶಾಂತಿಕಾಲದಲ್ಲಿ ವಿಶ್ವದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸರಬರಾಜುಗಳಲ್ಲಿ ಶೇಕಡಾ 20 ರಷ್ಟು ರವಾನೆಯಾಗುವ ಈ ಮಾರ್ಗ ಹಡಗುಗಳಿಗೆ ಸುರಕ್ಷಿತವಾಗಿತ್ತು. ಈ ಜಲಸಂಧಿಯನ್ನು ಇರಾನ್ ಮತ್ತು ಒಮಾನ್ ಹಂಚಿಕೊಂಡಿದ್ದು, ಇದು ಅಂತರರಾಷ್ಟ್ರೀಯ ನೀರಿನ ವರ್ಗಕ್ಕೆ ಸೇರುವುದಿಲ್ಲ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ಪ್ರಾರಂಭಿಸಿದ ನಂತರ, ಇರಾನ್ ಜಲಸಂಧಿಯಲ್ಲಿ ಶತ್ರು ದೇಶದ ವ್ಯಾಪಾರಿ ಹಡಗುಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ತದನಂತರ ಎಲ್ಲರಿಗೂ ಮಾರ್ಗವನ್ನು ಸ್ಥಗಿತಗೊಳಿಸಿತು. ಇದು ಹಡಗು ಸಾಗಣೆಯಲ್ಲಿ ಅಡಚಣೆಯುಂಟು ಮಾಡಿದ್ದು, ಇದುವರೆಗಿನ ಅತ್ಯಂತ ಕೆಟ್ಟ ಜಾಗತಿಕ ಇಂಧನ ವಿತರಣಾ ಬಿಕ್ಕಟ್ಟನ್ನು ಸೃಷ್ಟಿಸಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರೂ, ಈ ವಾರದ ಆರಂಭದಲ್ಲಿ ಟೆಹ್ರಾನ್ ಜಲಸಂಧಿಯನ್ನು ಎಲ್ಲಾ ಸಂಚಾರಕ್ಕೆ ಮತ್ತೆ ತೆರೆಯಲು ನಿರಾಕರಿಸುತ್ತಲೇ ಇತ್ತು. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಿಸಿದಾಗ, ಟ್ರಂಪ್ ಮಂಗಳವಾರ ರಾತ್ರಿ ತಮ್ಮ ಬೆದರಿಕೆಯಿಂದ ಹಿಂದೆ ಸರಿದರು. ಇರಾನ್ ನಿಂದ ಬಂದ 10 ಅಂಶಗಳ ಶಾಂತಿ ಪ್ರಸ್ತಾವನೆಗೆ ಟ್ರಂಪ್ ಒಪ್ಪಿದ ನಂತರ ಈ ಕದನ ವಿರಾಮ ಬಂದಿದೆ. ಒಪ್ಪಂದದ ಭಾಗವಾಗಿ, ಟೆಹ್ರಾನ್ ಈಗ ಅಧಿಕೃತ ನಿಯಮಗಳನ್ನು ಹೊರಡಿಸಿದ್ದು, ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಮುಂದುವರಿಸಲು ಮಾರ್ಗದರ್ಶನ ನೀಡುತ್ತದೆ ಎಂದು ಹೇಳುತ್ತದೆ. ಶುಕ್ರವಾರ ಇಸ್ಲಾಮಾಬಾದ್ನಲ್ಲಿ ಪ್ರಾರಂಭವಾಗಲಿರುವ ಮಾತುಕತೆಗೆ ಮುಂಚಿತವಾಗಿ ಅಮೆರಿಕವು ಷರತ್ತುಗಳನ್ನು ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಟೆಹ್ರಾನ್ ನ ನಿರಂತರ ನಿಯಂತ್ರಣವು ವಾಷಿಂಗ್ಟನ್ ಮತ್ತು ಇತರ ದೇಶಗಳಿಗೆ ಇಷ್ಟವಾಗುವುದಿಲ್ಲ ಅಂತಾರೆ ವಿಶ್ಲೇಷಕರು. ಬಿಕ್ಕಟ್ಟಿನ ಸಮಯದಲ್ಲಿ, ಇರಾನ್ ನ ಸ್ನೇಹಿತ ಎಂದು ಪರಿಗಣಿಸಲಾದ ನಿರ್ದಿಷ್ಟ ದೇಶಗಳ ಮತ್ತು ಟೋಲ್ ಪಾವತಿಸುವ ಕೆಲವು ಹಡಗುಗಳಿಗೆ ಮಾತ್ರ ಹಾರ್ಮುಜ್ನಲ್ಲಿ ಸುರಕ್ಷಿತ ಮಾರ್ಗವನ್ನು ನೀಡಲಾಗಿದೆ. ಹಡಗುಗಳು ಕನಿಷ್ಠ ಎರಡು ಟೋಲ್ ಗಳನ್ನು ಚೀನೀ ಯುವಾನ್ ನಲ್ಲಿ ಪಾವತಿಸಿವೆ ಎಂದು ನಂಬಲಾಗಿದೆ. ಇದು ಯುಎಸ್ ಡಾಲರ್ ಅನ್ನು ದುರ್ಬಲಗೊಳಿಸುವ ಮತ್ತು ಯುಎಸ್ ನಿರ್ಬಂಧಗಳನ್ನು ತಪ್ಪಿಸುವ ತಂತ್ರವಾಗಿದೆ. ಇರಾನ್ ನ ತೈಲದ 80 ಪ್ರತಿಶತವನ್ನು ಖರೀದಿಸುವ ಚೀನಾ ಈಗಾಗಲೇ ಟೆಹ್ರಾನ್ಗೆ ಯುವಾನ್ ನಲ್ಲಿ ಪಾವತಿಸುತ್ತದೆ. ►ಜಲಸಂಧಿಯನ್ನು ಈಗ ಯಾರು ನಿಯಂತ್ರಿಸುತ್ತಿದ್ದಾರೆ? ಮಂಗಳವಾರ, ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಇರಾನ್ ನ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯದಿಂದ ಮತ್ತು ತಾಂತ್ರಿಕ ಮಿತಿಗಳನ್ನು ಪರಿಗಣಿಸಿ ಕದನ ವಿರಾಮದ ಸಮಯದಲ್ಲಿ ಇರಾನ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ನೀಡುತ್ತದೆ ಎಂದು ಹೇಳಿದರು. ಬುಧವಾರ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಡಗುಗಳು ಅನುಸರಿಸಲು ಸುರಕ್ಷಿತ ಮಾರ್ಗವನ್ನು ತೋರಿಸುವ ಜಲಸಂಧಿಯ ನಕ್ಷೆಯನ್ನು ಬಿಡುಗಡೆ ಮಾಡಿದೆ. ನಕ್ಷೆಯು ಹಡಗುಗಳನ್ನು ಇರಾನಿನ ಕರಾವಳಿಯ ಕಡೆಗೆ ಮತ್ತಷ್ಟು ಉತ್ತರಕ್ಕೆ ನಿರ್ದೇಶಿಸುತ್ತದೆ. ಇವು ಒಮಾನ್ ಕರಾವಳಿಗೆ ಹತ್ತಿರವಿರುವ ಸಾಂಪ್ರದಾಯಿಕ ಮಾರ್ಗದಿಂದ ದೂರವಿಡುತ್ತದೆ. ಮುಖ್ಯ ಸಂಚಾರ ವಲಯದಲ್ಲಿ ವಿವಿಧ ರೀತಿಯ ಹಡಗು ವಿರೋಧಿ ಸ್ಫೋಟಕಗಳ ಉಪಸ್ಥಿತಿಯ ಸಾಧ್ಯತೆ ಇರುವುದರಿಂದ ಎಲ್ಲಾ ಹಡಗುಗಳು ನ್ಯಾವಿಗೇಷನ್ ಗೆ ಹೊಸ ನಕ್ಷೆಯನ್ನು ಬಳಸಬೇಕು ಎಂದು IRGC ಹೇಳಿಕೆಯಲ್ಲಿ ತಿಳಿಸಿದೆ. ಕದನ ವಿರಾಮದ ಅವಧಿಯಲ್ಲಿ ಇರಾನ್ ಟೋಲ್ ಶುಲ್ಕವನ್ನು ಸಂಗ್ರಹಿಸುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮಂಗಳವಾರ ಟ್ರಂಪ್ ಯುಎಸ್ ಜಲಸಂಧಿಯಲ್ಲಿ ಸುಗಮ ಸಂಚಾರಕ್ಕೆ ಸಹಾಯ ಮಾಡುತ್ತದೆ ಮತ್ತು ಮಾತುಕತೆಗಳು ನಡೆಯುತ್ತಿರುವಾಗ ಯುಎಸ್ ಸೈನ್ಯವು ಸುತ್ತಲೂ ಇರುತ್ತದೆ ಎಂದು ಹೇಳಿದರು. ಗುರುವಾರ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಸೈಟ್ನಲ್ಲಿ ಜಲಸಂಧಿಯು ಮುಕ್ತ ಮತ್ತು ಸುರಕ್ಷಿತವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಯುಎಸ್ ಪಡೆಗಳು ಈ ಪ್ರದೇಶವನ್ನು ಬಿಡುವುದಿಲ್ಲ. ಮಾತುಕತೆಗಳು ಸರಿಯಾಗಿ ನಡೆಯದಿದ್ದರೆ ದಾಳಿಗಳನ್ನು ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಯುಎಸ್ ಪಡೆಗಳು ಈಗ ಜಲಸಂಧಿಯಲ್ಲಿ ಏನಾಗುತ್ತಿದೆ ಎಂಬುದನ್ನು ಎಷ್ಟರ ಮಟ್ಟಿಗೆ ನಿರ್ದೇಶಿಸುತ್ತಿವೆ ಎಂಬುದು ತಿಳಿದಿಲ್ಲ ಎಂದು aljazeera ವರದಿ ಮಾಡಿದೆ. ಜಲಸಂಧಿಯ ಮೂಲಕ ಯಾರು ಪ್ರಯಾಣಿಸಬಹುದು ಎಂಬುದರ ಕುರಿತು ಸಾಕಷ್ಟು ಅನಿಶ್ಚಿತತೆ ಇದೆ. ಯುದ್ಧವನ್ನು ವಿರಾಮಗೊಳಿಸಿದಾಗಿನಿಂದ ಮೂರರಿಂದ ಐದು ಹಡಗುಗಳು ಮಾತ್ರ ಸಾಗಿವೆ ಎಂದು ದಿಲ್ಲಿ ಮೂಲದ ಕಡಲ ವಿಶ್ಲೇಷಕ ಸಿ. ಉದಯ್ ಭಾಸ್ಕರ್ ಅವರು aljazeeraಗೆ ತಿಳಿಸಿದ್ದಾರೆ. ►ಇರಾನ್ ನ 10-ಅಂಶಗಳ ಯೋಜನೆಯು ಜಲಸಂಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಟೆಹ್ರಾನ್ ನ 10-ಅಂಶಗಳ ಯೋಜನೆಯಲ್ಲಿ ಪಟ್ಟಿ ಮಾಡಲಾದ ಪ್ರಮುಖ ಬೇಡಿಕೆಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲಿನ ಎಲ್ಲಾ ದಾಳಿಗಳು, ವಿಶೇಷವಾಗಿ ಲೆಬನಾನ್ ಮೇಲಿನ ದಾಳಿಯನ್ನು ಶಾಶ್ವತವಾಗಿ ನಿಲ್ಲಿಸಬೇಕು. ಇರಾನ್ ಹಾರ್ಮುಝ್ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದೆ. ಈ ಯೋಜನೆಯನ್ನು ಸಂಪೂರ್ಣವಾಗಿ ಪ್ರಕಟಿಸಲಾಗಿಲ್ಲ, ಆದರೆ ಮಾತುಕತೆಗೆ ಆರಂಭಿಕ ಹಂತವೆಂದು ತಿಳಿಯಲಾಗಿದೆ. ಜಲಸಂಧಿಯ ಎದುರು ಭಾಗದಲ್ಲಿ ಒಮಾನ್ನೊಂದಿಗೆ ಹಂಚಿಕೊಳ್ಳಲು ಪ್ರತಿ ಹಡಗಿಗೆ 2 ಮಿಲಿಯನ್ ಡಾಲರ್ ವರೆಗೆ ಶುಲ್ಕ ವಿಧಿಸುವ ಯೋಜನೆಯನ್ನು ಇರಾನ್ ಪರಿಗಣಿಸುತ್ತಿದೆ ಎಂದು ಇರಾನ್ ಮಾಧ್ಯಮಗಳು ಹೇಳುತ್ತವೆ. ಇತರ ವರದಿಗಳು ಇರಾನ್ ಸಾಗಿಸಲಾಗುವ ತೈಲಕ್ಕೆ ಪ್ರತಿ ಬ್ಯಾರೆಲ್ ಗೆ 1 ಡಾಲರ್ ಶುಲ್ಕ ವಿಧಿಸಬಹುದು ಎಂದು ಸೂಚಿಸುತ್ತವೆ. ಯುಎಸ್-ಇಸ್ರೇಲಿ ದಾಳಿಯಿಂದ ಹಾನಿಗೊಳಗಾದ ಮಿಲಿಟರಿ ಮತ್ತು ನಾಗರಿಕ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು ಸಂಗ್ರಹಿಸಿದ ಆದಾಯವನ್ನು ಬಳಸಲಾಗುವುದು ಎಂದು ಟೆಹ್ರಾನ್ ಹೇಳಿದೆ. ಒಮಾನ್ ಈ ವಿಚಾರವನ್ನು ತಿರಸ್ಕರಿಸಿದೆ. ಒಮಾನಿಗಳು ಈ ಹಿಂದೆ ಶುಲ್ಕ ಪಡೆಯುವುದನ್ನು ನಿಷೇಧಿಸುವ ಎಲ್ಲಾ ಅಂತರರಾಷ್ಟ್ರೀಯ ಸಮುದ್ರ ಸಾರಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ಸಾರಿಗೆ ಸಚಿವ ಸೈದ್ ಅಲ್-ಮಾವಲಿ ಬುಧವಾರ ಹೇಳಿದ್ದಾರೆ. ಸಾಗಣೆಯ ಮೇಲಿನ ಸುಂಕಗಳ ಬಗ್ಗೆ ಅಂತರರಾಷ್ಟ್ರೀಯ ಕಾನೂನು ಏನು ಹೇಳುತ್ತದೆ? ಇರಾನ್ ಟೋಲ್ ಗಳನ್ನು ವಿಧಿಸುವ ಯೋಜನೆಯು ಸುರಕ್ಷಿತ ಸಮುದ್ರ ಮಾರ್ಗವನ್ನು ಮಾರ್ಗದರ್ಶಿಸುವ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ. ಇದು ಅಂತಿಮ ಕದನ ವಿರಾಮ ಒಪ್ಪಂದದ ಭಾಗವಾಗಿರಬಾರದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಅಂತರರಾಷ್ಟ್ರೀಯ ಜಲಸಂಧಿಗಳು ಅಥವಾ ಪ್ರಾದೇಶಿಕ ಸಮುದ್ರಗಳ ಮೂಲಕ ಪ್ರಯಾಣಿಸುವ ಹಡಗುಗಳ ಮೇಲೆ ಸುಂಕಗಳನ್ನು ವಿಧಿಸಲಾಗುವುದಿಲ್ಲ ಎಂದು ವಿಶ್ವಸಂಸ್ಥೆಯ ಸಮುದ್ರ ಕಾನೂನು ಸಮಾವೇಶ (UNCLOS) ಹೇಳುತ್ತದೆ. ಕರಾವಳಿ ರಾಜ್ಯಗಳು ನ್ಯಾವಿಗೇಷನ್ ನೆರವು ಅಥವಾ ಬಂದರು ಬಳಕೆಯಂತಹ ಸೇವೆಗಳಿಗೆ ಶುಲ್ಕವನ್ನು ಸಂಗ್ರಹಿಸಲು ಕಾನೂನು ಅನುಮತಿಸುತ್ತದೆ, ಆದರೆ ಸಾಗಣೆಗೆ ಅಲ್ಲ. ಈ ಮಧ್ಯೆ, ಯುಎಸ್ ಅಥವಾ ಇರಾನ್ ಆ ನಿರ್ದಿಷ್ಟ ವಿಷಯವನ್ನು ಅಂಗೀಕರಿಸಿಲ್ಲ. ಅವರು ಅಂಗೀಕರಿಸಿದ್ದರೂ ಸಹ, ಈ ಕಾನೂನಿನಿಂದ ತಪ್ಪಿಸಿಕೊಳ್ಳಲು ಮಾರ್ಗಗಳಿರಬಹುದು. ಇರಾನ್ ಜಲಸಂಧಿಯಲ್ಲಿ ಸಾಗಣೆ ಸುರಕ್ಷಿತವಾಗಿಸಲು ಶುಲ್ಕವನ್ನು ವಿಧಿಸಿದರೆ, ಅದು ಕಡಲ ಕಾನೂನುಗಳ ಅಡಿಯಲ್ಲಿ ಅನುಮತಿಸಬಹುದು ಎಂದು ವಿಶ್ಲೇಷಕ ಭಾಸ್ಕರ್ ಅವರು aljazeeraಗೆ ತಿಳಿಸಿದ್ದಾರೆ. ಇತ್ತೀಚಿನ ಇತಿಹಾಸದಲ್ಲಿ ದೇಶಗಳು ಅಂತರರಾಷ್ಟ್ರೀಯ ಜಲಸಂಧಿಗಳು ಅಥವಾ ಜಲಮಾರ್ಗಗಳ ಮೂಲಕ ಸಾಗಣೆಗೆ ಅಧಿಕೃತವಾಗಿ ತೆರಿಗೆ ವಿಧಿಸುವ ಯಾವುದೇ ಪೂರ್ವನಿದರ್ಶನವಿಲ್ಲ. ಅಕ್ಟೋಬರ್ 2024ರಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯು ಯೆಮೆನ್ ನಲ್ಲಿರುವ ಇರಾನ್ ಬೆಂಬಲಿತ ಹೌತಿಗಳು ಹಡಗು ಕಂಪನಿಗಳಿಂದ ಅಕ್ರಮ ಶುಲ್ಕ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದೆ. ಇದರಿಂದಾಗಿ ಯೆಮೆನ್ ನಲ್ಲಿ ಗಾಝಾ ಯುದ್ಧದ ಸಮಯದಲ್ಲಿ ಅವರು ಇಸ್ರೇಲ್ ಗೆ ಸಂಬಂಧಿಸಿದ ಹಡಗುಗಳನ್ನು ಗುರಿಯಾಗಿಸಿಕೊಂಡು ಕೆಂಪು ಸಮುದ್ರ ಮತ್ತು ಬಾಬ್-ಎಲ್-ಮಂಡೇಬ್ ಜಲಸಂಧಿಯ ಮೂಲಕ ಹಡಗುಗಳನ್ನು ಹಾದುಹೋಗಲು ಅವಕಾಶ ನೀಡುತ್ತಿದ್ದರು. ಕಳೆದ ವಾರ, ಪರಮೋನ್ನತ ನಾಯಕ ಮೊಜ್ತಾಬಾ ಖಾಮಿನೈ ಅವರ ಉನ್ನತ ಸಲಹೆಗಾರರೊಬ್ಬರು ಇರಾನ್ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ಹೌತಿಗಳು ಬಾಬ್ ಅಲ್-ಮಂಡೇಬ್ ಹಡಗು ಮಾರ್ಗವನ್ನು ಮತ್ತೆ ಮುಚ್ಚಬಹುದು ಎಂದು ಸೂಚಿಸಿದ್ದರು.
ತಳಮಟ್ಟದ ಕಾರ್ಯಕರ್ತರ ಶ್ರಮವೇ ಗೆಲುವಿಗೆ ಶ್ರೀರಕ್ಷೆ: ಮಾಜಿ ಸಚಿವ ರಾಜುಗೌಡ
ಹುಣಸಗಿ: ಪ್ರತಿ ಗ್ರಾಮ, ಪಟ್ಟಣ, ನಗರ ಪ್ರದೇಶಗಳ ತಳಮಟ್ಟದ ಹಂತದ ಕಾರ್ಯಕರ್ತರ ಶ್ರಮವೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ(ರಾಜುಗೌಡ) ಹೇಳಿದರು. ಹುಣಸಗಿ ಪಟ್ಟಣದ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ(ಯುಕೆಪಿ) ಭಾರತೀಯ ಜನತಾ ಪಾರ್ಟಿ, ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ಮಂಡಲ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಪ್ರಶಿಕ್ಷಣ ಮಹಾಭಿಯಾನ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಪಂಡಿತ್ ದೀನದಯಾಳ್ ಅವರು ಸಮಾಜದ ಕೊನೆಯ ವ್ಯಕ್ತಿಯ ಏಳಿಗೆಗೆ ಅಂತ್ಯೋದಯ ತತ್ವವನ್ನು ಪ್ರತಿಪಾದಿಸಿದರು. ಅವರ ಹಾದಿಯಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ನೀತಿಯಲ್ಲಿ ಜಪಾನ್, ಯುರೋಪ್ ಸೇರಿ ಮುಂತಾದ ದೇಶಗಳೊಂದಿಗೆ ಆರ್ಥಿಕ ಹಾಗೂ ತಂತ್ರಜ್ಞಾನ ಸಹಕಾರ ಬಲಪಡಿಸಿದ್ದು, ಜನಸಾಮಾನ್ಯರು, ರೈತರ ಪರ ಅಭಿವೃದ್ಧಿಯೊಂದಿಗೆ ಭಾರತವು ಜಾಗತಿಕ ಸ್ಥಾನಮಾನ ಬಲಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ದೇಶವೇ ತಿರುಗಿ ನೋಡುವಂತೆ ಸುಭದ್ರ ಆಡಳಿತ ಬಿಜೆಪಿ ಪಕ್ಷ ನಡೆಸಿದೆ ಎಂದು ಅವರು ತಿಳಿಸಿದರು. ಸ್ಥಳೀಯ ಪ್ರಸ್ತುತ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮರಳು ಮಾಫಿಯಾ ನಿಯಂತ್ರಣವಿಲ್ಲ. ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದೆ. ರಸ್ತೆ ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬಿಜೆಪಿ ಅಧಿಕಾರದ ಅವಧಿಯಲ್ಲಿನ ಕಾಮಗಾರಿಗಳೇ ಇನ್ನೂ ನಡೆದಿವೆ ಹೊರತಾಗಿ ಹೊಸದಾಗಿ ಯಾವುದೇ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಆಗಿಲ್ಲ ಎಂದು ಆರೋಪಿಸಿದ ಅವರು ಅಭಿವೃದ್ಧಿಗಾಗಿ ಇರುವ ಸುಮಾರು 600ಕ್ಕೂ ಹೆಚ್ಚು ಕೋಟಿ ಅನುದಾನ ವಾಪಸ್ಸು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ವಿಭೂತಿಹಳ್ಳಿ ಮಾತನಾಡಿ, ಸಮಾಜದ ಕೊನೆಯ ಸ್ಥಾನದಲ್ಲಿರುವ ಪ್ರತಿಯೊಬ್ಬರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಬಿಜೆಪಿ ಪಕ್ಷ ಹಾಗೂ ಪಂಡಿತ್ ದೀನದಯಾಳ್ ಅವರ ನಿಲುವು, ಉದ್ದೇಶವಾಗಿತ್ತು. ಗ್ರಾಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಕೆಲಸ ನಮ್ಮಿಂದಾಗಬೇಕಾಗಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ಪ್ರಸ್ತಾವಿಕ ಮಾತನಾಡಿ, ಸಮಾಜದ ತುದಿಯಲ್ಲಿರುವ ಬಡವ, ದಲಿತ, ಹಿಂದುಳಿದವರ ಸೇರಿದಂತೆ ಎಲ್ಲರ ಅಭಿವೃದ್ಧಿಯ ಫಲಗಳು ತಲುಪಿಸುವ ಪರಿಕಲ್ಪನೆ ಪಂಡಿತ್ ದೀನದಯಾಳ್ ಅವರದಾಗಿತ್ತು. ಈ ಸಿದ್ದಾಂತದೊಂದಿಗೆ ಬಿಜೆಪಿ ಪಕ್ಷವು ತಾರತಮ್ಯತೆ ಇಲ್ಲದೆ ಸರ್ವ ಜನಾಂಗದ ಹಿತವನ್ನು ಬಯಿಸುತ್ತಾ ಸಾಧನೆಗಳೇ ಮಾತನಾಡಬೇಕೆಂಬ ನಿಲುವಿನೊಂದಿಗೆ ಅತ್ಯುತ್ತಮ ಆಡಳಿತ ನೀಡಿಕೊಂಡು ಬರುತ್ತಿದೆ ಎಂದು ಪಕ್ಷದ ಸಾಧನೆ ಕುರಿತು ವಿವರಿಸಿದರು. ನಂತರ ಕಾರ್ಯವಿಸ್ತರಣೆ ಮತ್ತು ದೃಷ್ಟಿಕೋನ(ಮೌನೇಶ ಹೈಯಾಳಕರ್), ಇತಿಹಾಸ ಮತ್ತು ವಿಕಾಸ(ವೇಣುಗೋಪಾಲ ಜೇವರ್ಗಿ), ಸೈದ್ಧಾಂತಿಕ ಅಡಿಪಾಯ(ಲಕ್ಷ್ಮಿಕಾಂತ ಬಿರಾದಾರ), ನಮ್ಮ ಕಾರ್ಯ ಪದ್ಧತಿ(ಎಚ್.ಸಿ.ಪಾಟೀಲ), ನಮ್ಮ ಸರಕಾರದ ಸಾಧನೆಗಳು( ಶ್ರೀನಿವಾಸ ಹ.ಮಡ್ಡಿ), ಬೂತ್ ನಿರ್ವಹಣೆ(ನಿಂಗಾ ನಾಯ್ಕ), ಸಾಮಾಜಿಕ ಜಾಲತಾಣ(ಆನಂದ ಬಾರಿಗಿಡದ) ಮಂಡಲ ಪ್ರಶಿಕ್ಷಣ ಕಾರ್ಯಕರ್ತರಿಗೆ ನೀಡಲಾಯಿತು. ಈ ಸಂದರ್ಭ ಹುಣಸಗಿ ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹುಕಾರ ವೈಲಿ, ಜಿ.ಪಂ.ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ವೇಣುಗೋಪಾಲ ಜೇವರ್ಗಿ, ಎಚ್.ಸಿ.ಪಾಟೀಲ, ವೀರೇಶ ಸಾಹುಕಾರ ಚಿಂಚೋಳಿ, ಪಾರ್ವತಿ ಕೊಡೇಕಲ್, ಗದ್ದೆಪ್ಪ ಪೂಜಾರಿ, ಕಿಡಗಣ್ಣಯ್ಯ ದೇಸಾಯಿಗುರು, ಸಿದ್ದನಗೌಡ ಪಾಟೀಲ ಕರಿಬಾವಿ, ವೆಂಕಟೇಶ ಸಾಹುಕಾರ, ದಶರಥ ಆರ್ಯಶಂಕರ, ವೀರಸಂಗಪ್ಪ ಹಾವೇರಿ, ಶರಣಪ್ಪ ದೇಸಾಯಿ, ಭೀಮರಾಯ ದೊಡ್ಡಮನಿ, ಮೋಹನ ಪಾಟೀಲ್, ಸೋಮಣ್ಣ ಮೇಟಿ, ಪ್ರಭು ನೀಲಗಾರ, ಭೀಮನಗೌಡ ತೀರ್ಥ, ಕನಕು ಜೀರಾಳ, ಬಸನಗೌಡ ಹಣಮರಡ್ಡಿ ಕುಪ್ಪಿ, ಶಿವರಾಜ್ ದೇಶಮುಖ, ಹಣಮಂತ್ರಾಯಗೌಡ ಎಚ್.ಕುಪ್ಪಿ, ಮಲ್ಲೇಶಿ ನಾಗರಾಳ, ನಂದಪ್ಪ ಪೀರಾಪುರ, ಅಮಲಪ್ಪ ಹಳ್ಳಿ, ಮಹಾಂತೇಶ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು. ಉಪೇಂದ್ರ ದೇಶಪಾಂಡೆ ಒಂದೇ ಮಾತರಂ ಗೀತೆ ಹಾಡಿದರು. ಆನಂದ ಬಾರಿಗಿಡದ ಸ್ವಾಗತಿಸಿ, ನಿರೂಪಿಸಿದರು.
ಎ.13: ಆಟೋ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಉಳ್ಳಾಲ: ಜಿಲ್ಲೆಯ ಆಟೋ ರಿಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎ. 13ರಂದು ಬೃಹತ್ ಪ್ರತಿಭಟನೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆಟೋ ರಾಜಾಕನ್ಮಾರ್ ಯೂನಿಯನ್ ದಕ್ಷಿಣ ಕನ್ನಡ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ. ತಿಳಿಸಿದರು. ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾದ್ಯಂತ ಏಕರೂಪದ ಸಂಚಾರ ಪರವಾನಗಿ ಹಾಗೂ ದರ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ಬೇಡಿಕೆ ಗಳನ್ನು ಮುಂದಿರಿಸಿ ಈ ಪ್ರತಿಭಟನೆ ನಡೆಯಲಿದ್ದು ಈ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಟೋ ಚಾಲಕರು ಭಾಗವಹಿಸಲಿದ್ದಾರೆ. ಸರ್ಕಾರ ತಕ್ಷಣವೇ ಆಟೋ ಚಾಲಕರ ಸಮಸ್ಯೆಗಳತ್ತ ಗಮನ ಹರಿಸಬೇಕು. ಒಂದು ಜಿಲ್ಲೆ–ಒಂದು ಪರವಾನಗಿ ಜಾರಿಗೊಳಿಸಿ ಜಿಲ್ಲಾದ್ಯಂತ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದರು. ನಗರ ವ್ಯಾಪ್ತಿಯಲ್ಲಿ ಗ್ರಾಮಾಂತರ ಭಾಗದ ಆಟೋಗಳಿಗೆ ದುಡಿಯಲು ಅವಕಾಶ ನೀಡುವುದು ಬೇಡ, ಗ್ರಾಮಾಂತರ ಭಾಗದ ಆಟೋಗಳು ನಗರಕ್ಕೆ ಬಂದು ದುಡಿದರೆ ನಿಯಮಾನುಸಾರ ದಂಡ ವಿಧಿಸಲಿ. ಆದರೆ ನಮ್ಮ ಮನೆ ಯವರನ್ನು ನಮ್ಮ ಆಟೋದಲ್ಲಿ ಕರೆದುಕೊಂಡು ಹೋದರೆ ಅಥವಾ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರು ಆಟೋವನ್ನು ತಡೆ ಹಿಡಿದು 10ಸಾವಿರ ರೂ. ಗಳಷ್ಟು ದಂಡ ವಿಧಿಸುವುದು ನ್ಯಾಯಸಮ್ಮತವೇ ಎಂದು ಪ್ರಶ್ನಿಸಿದರು. ಗ್ರಾಮಾಂತರ ಪಾಸ್ ಹೊಂದಿರುವ ವಾಹನಗಳಿಗೆ ಅಪಘಾತವಾದರೆ ಇನ್ಸುರನ್ಸ್ ಸಮಸ್ಯೆ ಉಂಟಾಗಬಹುದು. ನಾವು ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದೇವೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಎಸ್.ಪಿ. ಅವರಿಗೆ ನೇರವಾಗಿ ಮನವಿ ಸಲ್ಲಿಸಿದ್ದೇವೆ. ನಮ್ಮ ಸಮಸ್ಯೆಗೆ ಅವರು ಸ್ಪಂದಿಸುವರೆಂಬ ವಿಶ್ವಾಸ ನಮ್ಮದಲ್ಲಿದೆ. ಗ್ಯಾಸ್ ಭರ್ತಿ ಮಾಡುವ ವಿಚಾರದಲ್ಲಿಯೂ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವು ಗ್ಯಾಸ್ ಪಂಪ್ಗಳಲ್ಲಿ ಗ್ಯಾಸ್ ಇದೆ ಆದರೆ ಕೆಲ ಆಟೋಗಳಿಗೆ ನೀಡಲಾಗುತ್ತಿಲ್ಲ ಎಂಬ ಆರೋಪ ಇದೆ. ಪಂಪ್ ಮಾಲೀಕರು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ನಡೆದುಕೊಳ್ಳ ಬಾರದು ಎಂದರು. ಆಟೋ ರಾಜಾಕನ್ಮಾರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಬೋಳಿಯಾರ್ ಮಾತನಾಡಿದರು. ಹೋರಾಟ ಸಮಿತಿ ಸಂಚಾಲಕ ಸಿದ್ದೀಕ್ ಕೊಡಕ್ಕಲ್, ಕರಾವಳಿ ಆಟೋ ಪಾರ್ಕ್ ಮುಡಿಪು ಅಧ್ಯಕ್ಷ ಹರೀಶ್ ಗಿಂಡೆಪೇರ್ , ಆಟೋ ರಾಜಾಕನ್ಮಾರ್ ಯೂನಿಯನ್ ಉಪಾಧ್ಯಕ್ಷ ಮನ್ಸೂರ್ ಮಲಾರ್, ಜೊತೆ ಕಾರ್ಯದರ್ಶಿ ಶಖೀಕ್ ಸಾಲೆತ್ತೂರು, ಸದಸ್ಯರಾದ ಶರೀಫ್ ಮಂಚಿ, ನಿಸಾರ್ ದೇರಳಕಟ್ಟೆ, ತಹ್ಸೀನ್ ತೊಕ್ಕೊಟ್ಟು, ಇಮ್ರಾನ್ ಉಳ್ಳಾಲ, ರಿಜ್ವಾನ್ ಕಣಚೂರ್ ಹಾಗೂ ಉಸ್ಮಾನ್ ಸಜಿಪ ಉಪಸ್ಥಿತರಿದ್ದರು.
40 ದಿನಗಳ ಯುದ್ಧದ ನಂತರ ಎರಡು ವಾರಗಳ ಕದನ ವಿರಾಮಕ್ಕೆ ಅಮೆರಿಕ ಮತ್ತು ಇರಾನ್ ಬುಧವಾರ ಒಪ್ಪಿಕೊಂಡಿದ್ದು, ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಮಾತುಕತೆಗಳು ಪ್ರಾರಂಭವಾಗಲಿವೆ. ಆದರೆ ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ಬಾಂಬ್ ದಾಳಿ ಮಾಡಲು ಪ್ರಾರಂಭಿಸಿದ ನಂತರ, ಇಸ್ರೇಲ್ ಬಹುತೇಕ ಪ್ರತಿದಿನ ಲೆಬನಾನ್, ಗಾಝಾ ಮತ್ತು ಆಕ್ರಮಿತ ಪಶ್ಚಿಮ ದಂಡೆಯ ಮೇಲೆ ದಾಳಿ ನಡೆಸಿದೆ. ►ಕಳೆದ 40 ದಿನಗಳಲ್ಲಿ 36 ದಿನಗಳೂ ಗಾಝಾ ಮೇಲೆ ನಡೆದಿತ್ತು ದಾಳಿ! ಆರು ತಿಂಗಳ ಹಿಂದೆ ಗಾಝಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆಯಾದಾಗಿನಿಂದ, ಇಸ್ರೇಲ್ ಸಾವಿರಾರು ಬಾರಿ ಒಪ್ಪಂದವನ್ನು ಉಲ್ಲಂಘಿಸಿದೆ. ಅಲ್ಲಿ ಇಸ್ರೇಲ್ ಬಹುತೇಕ ಪ್ರತಿದಿನ ದಾಳಿ ನಡೆಸುತ್ತಿದೆ. ಕಳೆದ 40 ದಿನಗಳಲ್ಲಿ, ಇಸ್ರೇಲ್ ಗಾಝಾದ ಮೇಲೆ ಬಾಂಬ್ ದಾಳಿಯನ್ನು ಮುಂದುವರೆಸಿದೆ. ರಫಾ ಕ್ರಾಸಿಂಗ್ ಅನ್ನು ಮುಚ್ಚಿದ್ದು, ಜೀವ ಉಳಿಸುವ ಆಹಾರ ಮತ್ತು ವೈದ್ಯಕೀಯ ಸರಬರಾಜುಗಳನ್ನು ತಡೆಹಿಡಿದಿದೆ. aljazeera ವಿಶ್ಲೇಷಣೆಯ ಪ್ರಕಾರ, ಕಳೆದ 40 ದಿನಗಳಲ್ಲಿ 36 ದಿನಗಳು ಇಸ್ರೇಲ್ ಗಾಝಾದ ಮೇಲೆ ದಾಳಿ ಮಾಡಿದೆ. ಅಂದರೆ ಇಲ್ಲಿ ಕೇವಲ ನಾಲ್ಕು ದಿನ ಮಾತ್ರ ಯಾವುದೇ ಹಿಂಸಾತ್ಮಕ ದಾಳಿಗಳು, ಸಾವುಗಳು ಅಥವಾ ಗಾಯಗಳು ವರದಿಯಾಗಿಲ್ಲ. ►ಈ ಸಮಯದಲ್ಲಿ ಇಸ್ರೇಲ್ ಎಷ್ಟು ಜನರನ್ನು ಕೊಂದಿದೆ? ಫೆಬ್ರವರಿ 28 ಮತ್ತು ಏಪ್ರಿಲ್ 8 ರ ನಡುವೆ, ಇಸ್ರೇಲಿ ದಾಳಿಗಳಲ್ಲಿ ಗಾಝಾದಲ್ಲಿ ಕನಿಷ್ಠ 107 ಜನರು ಸಾವಿಗೀಡಾಗಿದ್ದು, 342 ಜನರು ಗಾಯಗೊಂಡಿದ್ದಾರೆ. ಆರು ತಿಂಗಳ ಹಿಂದೆ ಗಾಝಾದಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ, ಇಸ್ರೇಲಿ ದಾಳಿಗಳಿಗೆ ಕನಿಷ್ಠ 738 ಜನರು ಬಲಿಯಾಗಿದ್ದಾರೆ, 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಝಾದಲ್ಲಿ ನಡೆದ ನರಮೇಧದಲ್ಲಿ, ಇಸ್ರೇಲ್ ಇಲ್ಲಿನ ಜನಸಂಖ್ಯೆಯ ಕನಿಷ್ಠ 10 ಪ್ರತಿಶತವನ್ನು ಕೊಂದಿದೆ ಅಥವಾ ಗಾಯಗೊಳಿಸಿದೆ. ಒಟ್ಟು 72,000 ಕ್ಕೂ ಹೆಚ್ಚು ಜನರು ಇಸ್ರೇಲ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಕನಿಷ್ಠ 172,000 ಜನರು ಗಾಯಗೊಂಡಿದ್ದಾರೆ; ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ ಮತ್ತು ಸತ್ತಿದ್ದಾರೆಂದು ಭಾವಿಸಲಾಗಿದೆ. ಬುಧವಾರ, ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ದಾಳಿಯಲ್ಲಿ ಬಹುನಿರೀಕ್ಷಿತ ವಿರಾಮಕ್ಕಾಗಿ ಜಗತ್ತು ಕಾಯುತ್ತಿದ್ದಾಗ, ಇಸ್ರೇಲ್ ಗಾಝಾದಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ Aljazeera ದ ವರದಿಗಾರ ಮೊಹಮ್ಮದ್ ವಿಸ್ವಾಶ್ ಸಾವಿಗೀಡಾಗಿದ್ದಾರೆ. ಅದೇ ದಿನ, ಇಸ್ರೇಲ್ ಲೆಬನಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿತು. ಈ ದಾಳಿಯಲ್ಲಿ ಕನಿಷ್ಠ 254 ಜನರು ಸಾವಿಗೀಡಾಗಿದ್ದು, 1,165 ಜನರು ಗಾಯಗೊಂಡರು. ►ವೈದ್ಯಕೀಯ ಚಿಕಿತ್ಸೆಗಾಗಿ ಶೇ.8 ಜನರ ಸ್ಥಳಾಂತರ ಫೆಬ್ರವರಿ 28 ರಂದು, ಇಸ್ರೇಲ್ ಮತ್ತು ಯುಎಸ್ ಇರಾನ್ ಮೇಲೆ ದಾಳಿಗಳನ್ನು ಪ್ರಾರಂಭಿಸಿದ ದಿನ, ಇಸ್ರೇಲಿ ಅಧಿಕಾರಿಗಳು ಗಾಝಾಗೆ ಎಲ್ಲಾ ಕ್ರಾಸಿಂಗ್ಗಳನ್ನು ಮುಚ್ಚಿದರು. ಇಲ್ಲಿ ಗಾಯಗೊಂಡ ರೋಗಿಗಳನ್ನು ವಿದೇಶಗಳಿಗೆ ಕರೆದೊಯ್ಯುವುದನ್ನು ನಿಲ್ಲಿಸಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸುವಿಕೆಯನ್ನು ಸ್ಥಗಿತಗೊಳಿಸಿದರು. ಅವುಗಳಲ್ಲಿ ರಫಾ ಕ್ರಾಸಿಂಗ್ ಕೂಡ ಸೇರಿದೆ. ಇದು ಈಜಿಪ್ಟ್ ಮೂಲಕ ಗಾಝಾದ ಹೊರಗಿನ ಪ್ರಪಂಚಕ್ಕೆ ಏಕೈಕ ಪ್ರವೇಶದ್ವಾರವಾಗಿದೆ. ಇದು ಯುಎಸ್ ಮಧ್ಯಸ್ಥಿಕೆಯ 20-ಪಾಯಿಂಟ್ ಕದನ ವಿರಾಮ ಯೋಜನೆಯಡಿಯಲ್ಲಿ ಗಾಝಾದ ಜನರಿಗಾಗಿ ತೆರೆಯಬೇಕಿತ್ತು. ಒಪ್ಪಂದದ ಆಧಾರದ ಮೇಲೆ ದಿನಕ್ಕೆ 50 ರೋಗಿಗಳು ಜೊತೆಗೆ ಅವರ ಕುಟುಂಬದವರು—ಸಾಮಾನ್ಯವಾಗಿ ಪ್ರತಿ ರೋಗಿಗೆ ಒಬ್ಬರು ಅಥವಾ ಇಬ್ಬರು ಆಪ್ತರು—ಚಿಕಿತ್ಸೆಗಾಗಿ ಎನ್ಕ್ಲೇವ್ ನಿಂದ ಹೊರಗೆ ಹೋಗಲು ಅವಕಾಶ ನೀಡಬೇಕಿತ್ತು. ಎರಡು ವರ್ಷಗಳಿಗೂ ಹೆಚ್ಚು ಕಾಲದ ಇಸ್ರೇಲಿ ದಾಳಿಯಿಂದ ಸಾವಿರಾರು ಜನರು ಗಾಯಗೊಂಡಿದ್ದಾರೆ. ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. OCHA ಪ್ರಕಾರ, 4,000 ಮಕ್ಕಳು ಸೇರಿದಂತೆ 18,500 ಕ್ಕೂ ಹೆಚ್ಚು ರೋಗಿಗಳಿಗೆ ವೈದ್ಯಕೀಯ ನೆರವು ಅಗತ್ಯವಿದೆ. ಮಾರ್ಚ್ 19 ರಂದು, ಇಸ್ರೇಲಿ ಅಧಿಕಾರಿಗಳು ರಫಾ ಮೂಲಕ ಸೀಮಿತ ವೈದ್ಯಕೀಯ ಸ್ಥಳಾಂತರಿಸುವಿಕೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದರು. ಗಾಝಾ ಮಾಧ್ಯಮ ಕಚೇರಿಯ ಪ್ರಕಾರ, ಫೆಬ್ರವರಿ 28 ರಿಂದ 7,800 ಪ್ರಯಾಣಿಕರಲ್ಲಿ 625 ಜನರಿಗೆ ಚಿಕಿತ್ಸೆಗಾಗಿ ಗಾಝಾದಿಂದ ಹೊರಡಲು ಅನುಮತಿ ನೀಡಲಾಗಿದೆ. ಇದು ಒಪ್ಪಿದ ಸಂಖ್ಯೆಯ ಸುಮಾರು 8 ಪ್ರತಿಶತದಷ್ಟಿದೆ. ►ಗಾಝಾಗೆ ಪ್ರವೇಶಿಸಲು ಶೇ 20 ಟ್ರಕ್ ಗಳಿಗೆ ಅನುಮತಿ ಇಸ್ರೇಲ್ ತುರ್ತು ಆಹಾರ ಮತ್ತು ವೈದ್ಯಕೀಯ ಸರಬರಾಜುಗಳನ್ನು ಮಿತಿಗೊಳಿಸುವುದನ್ನು ಮುಂದುವರೆಸಿದೆ. ಇದು ತೀವ್ರ ಕೊರತೆಯನ್ನುಂಟು ಮಾಡಿದ್ದು, ಜನರು ಆಹಾರ ಸಮಸ್ಯೆಯಿಂದ ಬಳಲುವಂತಾಗಿದೆ. ಜಾಗತಿಕ ಹಸಿವಿನ ಮೇಲ್ವಿಚಾರಕ ಇಂಟಿಗ್ರೇಟೆಡ್ ಫೇಸ್ ಕ್ಲಾಸಿಫಿಕೇಶನ್ (IPC) ಪ್ರಕಾರ, ಗಾಝಾದ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು (77 ಪ್ರತಿಶತ) ಜನರು ಹೆಚ್ಚಿನ ಮಟ್ಟದ ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ►ಐಪಿಸಿ ವಿಶ್ಲೇಷಿಸಿದ 1.6 ಮಿಲಿಯನ್ ಜನರಲ್ಲಿ: 475,000 ಜನರು ಹಂತ 2 ರಲ್ಲಿದ್ದಾರೆ ; ಇವರಿಗೆ ಆಹಾರ ಸಿಗುತ್ತಿದೆ ಆದರೆ ಬೇಕಾದ ಪೋಷಕಾಂಶಗಳು ಸಿಗುತ್ತಿಲ್ಲ 1,027,790 ಜನರು ಹಂತ 3 ರಲ್ಲಿದ್ದಾರೆ ; ಇವರಿಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ 570,980 ಜನರು ಹಂತ 4 ರಲ್ಲಿದ್ದಾರೆ ; ಇವರಿಗೆ ತುರ್ತಾಗಿ ಆಹಾರ ಬೇಕಿದೆ 1,885 ಜನರು ಹಂತ 5 ರಲ್ಲಿದ್ದಾರೆ ; ಅಂದರೆ ಇಲ್ಲಿ ಕ್ಷಾಮವಿದೆ ಗಾಝಾ ಮಾಧ್ಯಮ ಕಚೇರಿಯ ಪ್ರಕಾರ, ಇರಾನ್ ವಿರುದ್ಧ ಯುಎಸ್-ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ, ಇಸ್ರೇಲ್ ಕದನ ವಿರಾಮ ಒಪ್ಪಂದದಲ್ಲಿ ನಿಗದಿಪಡಿಸಿದ 23,400 ಟ್ರಕ್ ಗಳಲ್ಲಿ ಕೇವಲ 4,999 ಮಾತ್ರ ಪಟ್ಟಿಗೆ ಪ್ರವೇಶಿಸಲು ಅವಕಾಶ ನೀಡಿದೆ. ಅಂದರೆ ಭರವಸೆ ನೀಡಿದ ವಿತರಣೆಗಳಲ್ಲಿ ಕೇವಲ ಐದನೇ ಒಂದು ಭಾಗ. ಶಾಂತಿ ಮಂಡಳಿಯ ರಾಯಭಾರಿ ನಿಕೊಲಾಯ್ ಮ್ಲಾಡೆನೋವ್ ಅವರು ದಿನವೊಂದರಲ್ಲಿ ಮಾನವೀಯ ನೆರವು ನೀಡುವ 602 ಟ್ರಕ್ ಗಳು ಗಾಝಾಕ್ಕೆ ಪ್ರವೇಶಿಸಿವೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ತಿರಸ್ಕರಿಸಿದ ಗಾಝಾದ ಸರ್ಕಾರಿ ಮಾಧ್ಯಮ ಕಚೇರಿ, ಕೇವಲ 207 ಟ್ರಕ್ ಗಳು ಮಾತ್ರ ಗಾಝಾವನ್ನು ಪ್ರವೇಶಿಸಿವೆ; ಕೇವಲ 79 ಟ್ರಕ್ ಗಳು ಮಾನವೀಯ ನೆರವು ನೀಡಿವೆ ಎಂದು ಹೇಳಿದೆ. ನೆರವು ಅಗತ್ಯವಿರುವ ಮಾನವೀಯ ಪ್ರತಿಕ್ರಿಯೆಯ ಮಟ್ಟವನ್ನು ಪೂರೈಸುವುದಿಲ್ಲ ಎಂದು ಕಚೇರಿ ಹೇಳಿದೆ. ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ಮಾನವೀಯ ಪ್ರೋಟೋಕಾಲ್ ಅನ್ನು ಅನುಷ್ಠಾನಗೊಳಿಸುವುದು ಒಪ್ಪಿದ ಮಟ್ಟಗಳ 38 ಪ್ರತಿಶತವನ್ನು ಮೀರಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸತ್ಯಗಳನ್ನು ತಿರುಚುವುದರಿಂದ ದುರಂತದ ಪ್ರಮಾಣವನ್ನು ಮರೆಮಾಡಲು ಸಾಧ್ಯವಿಲ್ಲ. ಹೀಗೆ ಮಾಡುವುದರಿಂದ ಯಾವುದೇ ಪಕ್ಷವು ಅದರ ಕಾನೂನು ಮತ್ತು ಮಾನವೀಯ ಜವಾಬ್ದಾರಿಗಳಿಂದ ಮುಕ್ತವಾಗುವುದಿಲ್ಲ ಎಂದು ಕಚೇರಿ ಹೇಳಿದ್ದು, ಫೆಲೆಸ್ತೀನಿನ ನಾಗರಿಕರನ್ನು ರಕ್ಷಿಸಲು ಅಂತರರಾಷ್ಟ್ರೀಯ ಹಸ್ತಕ್ಷೇಪಕ್ಕೆ ಕರೆ ನೀಡಿದೆ.
ಶಹಾಪುರದಲ್ಲಿ ಕೆಎಸ್ಸಾರ್ಟಿಸಿ ಬಸ್-ಟ್ಯಾಂಕರ್ ಢಿಕ್ಕಿ: 20 ಮಂದಿಗೆ ಗಾಯ
ಶಹಾಪುರ: ಭೀಮರಾಯನಗುಡಿ ಕೃಷಿ ಕಾಲೇಜು ಸಮೀಪ ಶುಕ್ರವಾರ ಕೆಎಸ್ಸಾರ್ಟಿಸಿ ಬಸ್ ಹಾಗೂ ಇಂಧನ ಸಾಗಾಟದ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹಾಪುರದಿಂದ ಬೀದರ್ ಗೆ ಹೊರಟಿದ್ದ ಬಸ್ ಮತ್ತು ಎದುರುಗಡೆಯಿಂದ ಬರುತ್ತಿದ್ದ ಇಂಧನ ಟ್ಯಾಂಕರ್ ನಡುವೆ ಕೃಷಿ ಕಾಲೇಜಿನ ತಿರುವಿನ ಬಳಿ ಈ ಅಪಘಾತ ನಡೆದಿದೆ. ಢಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಜಜ್ಜಲ್ಪಟ್ಟಿದ್ದು, ಕೂಡಲೇ ಸ್ಥಳೀಯರು ಹಾಗೂ ದಾರಿಹೋಕರು ರಕ್ಷಣಾ ಕಾರ್ಯಕ್ಕೆ ಧಾವಿಸಿ, ಗಾಯಾಳುಗಳನ್ನು ಬಸ್ಸಿನಿಂದ ಹೊರತೆಗೆದಿದ್ದಾರೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಇಂಧನ ಟ್ಯಾಂಕರ್ನಿಂದ ಯಾವುದೇ ಸೋರಿಕೆ ಉಂಟಾಗದ ಕಾರಣ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಡಿಕೆಎಸ್ಸಿ ದ.ಕ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ
ಮಂಗಳೂರು: ಡಿಕೆಎಸ್ಸಿ ದ.ಕ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಗರದ ಕಂಕನಾಡಿಯ ನೂತನ ಕಚೇರಿಯಲ್ಲಿ ನಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕೇಂದ್ರ ಕಾರ್ಯದರ್ಶಿ ಇಸ್ಮಾಯಿಲ್ ಅರಮೆಕ್ಸ್ ಭಾಗವಹಿಸಿದ್ದರು. ಅಧ್ಯಕ್ಷ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ ಕುಂಬೋಳ್ರ ದುಆ ಹಾಗೂ ನೂರುಲ್ ಈಮಾನ್ ಮಜ್ಲಿಸ್ನೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ದ್ವಿವಾರ್ಷಿಕ ವರದಿ ಮತ್ತು ಅನ್ವರ್ ಹುಸೈನ್ ಗೂಡಿನ ಬಳಿ ಲೆಕ್ಕ ಪತ್ರವನ್ನು ಮಂಡಿಸಿದರು. 2026-27 ನೇ ಸಾಲಿನ ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಅಲ್ಹಾಜ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಅಧ್ಯಕ್ಷರಾಗಿ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಳ್, ಕಾರ್ಯಾಧ್ಯಕ್ಷರಾಗಿ ಮನ್ಸೂರ್ ರಯ್ಯಾನ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಇಸಾಕ್ ಬೊಳ್ಳಾಯಿ, ಹಣಕಾಸು ಕಾರ್ಯದರ್ಶಿಯಾಗಿ ಅಹ್ಮದ್ ಶರೀಫ್ ಬಜ್ಪೆ, ಉಪಾಧ್ಯಕ್ಷರಾಗಿ ಅಬ್ಬಾಸ್ ಹಾಜಿ ಎಲಿಮಲೆ, ಉಮರುಲ್ ಫಾರೂಕ್ ಸುರತ್ಕಲ್, ಸಂಘಟನಾ ಕಾರ್ಯದರ್ಶಿ ಯಾಗಿ ಶಂಸುದ್ದೀನ್ ಬಳ್ಕುಂಜೆ, ಕಾರ್ಯದರ್ಶಿಗಳಾಗಿ ಇ.ಕೆ. ಇಬ್ರಾಹಿಂ ಕಿನ್ಯ, ಇಬ್ರಾಹಿಂ ದುಬಲ್ ಆಯ್ಕೆಯಾಗಿದ್ದಾರೆ. ಲೆಕ್ಕ ಪರಿಶೋಧಕರಾಗಿ ಅನ್ವರ್ ಹುಸೈನ್ ಗೂಡಿನ ಬಳಿ, ಅನ್ಸಾರ್ ಕೃಷ್ಣಾಪುರ, ಸಲಹೆಗಾರರಾಗಿ ಉಮರ್ ಹಾಜಿ ಮುಕ್ವೆ, ಇಸ್ಮಾಯಿಲ್ ಹಾಜಿ ಕಿನ್ಯ, ಹುಸೈನ್ ಹಾಜಿ ಕಿನ್ಯ, ಎಂ.ಎಂ. ಕುಂಞ ಮೊಂಟೆಪದವು, ಯು.ಡಿ. ಇಬ್ರಾಹಿಂ ಉಳ್ಳಾಲ, ಬದ್ರುದ್ದೀನ್ ಹಾಜಿ ಬಜ್ಪೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿಯ ಅಧೀನದಲ್ಲಿರುವ ಉತ್ತಮ ಕಾರ್ಯ ಕೆಲಸ ಮಾಡಿದ ಎಲ್ಲಾ ಘಟಕಗಳಿಗೂ ಪುರಸ್ಕಾರ ಫಲಕವನ್ನು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಅಬ್ದುಲ್ ಹಮೀದ್ ಅರಮೆಕ್ಸ್, ಅಬೂಬಕರ್ ಅಜಿಲಮೊಗರು, ಇಕ್ಬಾಲ್ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.
ಸುರಪುರ | ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಗಿಡ ಪತ್ತೆ; ಆರೋಪಿಯ ಬಂಧನ
ಸುರಪುರ: ತಾಲೂಕಿನ ಕೆಂಭಾವಿ ಹೋಬಳಿಯ ನಗನೂರ ಗ್ರಾಮದ ವ್ಯಕ್ತಿ ತನ್ನ ಜಮೀನಿನಲ್ಲಿ ನಿಷೇಧಿತ ಗಾಂಜಾ ಬೆಳೆದಿದ್ದು ಅಬಕಾರಿ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ನಗನೂರ ಗ್ರಾಮದ ಬಸವರಾಜ ಬೆಳ್ಳಿ ಪರಸನಹಳ್ಳಿ ಸೀಮಾಂತರದ ತನ್ನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 4 ಕೆಜಿ 900 ಗ್ರಾಂ ತೂಕದಷ್ಟು 30 ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಗಾಂಜಾ ಬೆಳೆದಿದ್ದ ಬಸವರಾಜ್ ಬೆಳ್ಳಿಯನ್ನು ಕೂಡ ಅಬಕಾರಿ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೂ ಒಪ್ಪಿಸಿದ್ದಾರೆ. ಕಲ್ಬುರ್ಗಿಯ ಅಬಕಾರಿ ಜಂಟಿ ಆಯುಕ್ತರು ಹಾಗೂ ಯಾದಗಿರಿ ಅಬಕಾರಿ ಉಪ ಆಯುಕ್ತರಾದ ಶಾರದಾ ಸಿ ಕೋಲಕಾರ್ ಅವರ ನಿರ್ದೇಶನದ ಮೇರೆಗೆ ಹರ್ಷ ರಾಜ್ ಬಿ ಅಬಕಾರಿ ಉಪ ಅಧೀಕ್ಷಕರು ಉಪವಿಭಾಗ ಶಹಾಪುರ ಇವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿಯನ್ನು ನಡೆಸಿದರೆ. ಈ ಸಂದರ್ಭದಲ್ಲಿ ಸುರಪುರ ವಲಯದ ಅಬಕಾರಿ ನಿರೀಕ್ಷಕ ಕೇದಾರನಾಥ ಎಸ್.ಟಿ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ವಸಂತಕುಮಾರ್, ಅನಿಲ ಕುಮಾರ್ ಅಬಕಾರಿ ಉಪ ನಿರೀಕ್ಷಕರು ಸುರಪುರ ವಲಯ ಹಾಗೂ ಅಬಕಾರಿ ಮುಖ್ಯ ಪೇದೆಗಳಾದ ಯಮನಪ್ಪ ಸಂಪತ್ ಕುಮಾರ ಸಂದೀಪ ನಾಯಕ ರಮೇಶ ದೇಸಾಯಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಭಾಗವಹಿಸಿದ್ದರು.
LPG ಸ್ಟೌ ಮಾದರಿಯಲ್ಲೇ ವಿದ್ಯುತ್ ಸ್ಟೌ ಪರಿಚಯಿಸಿದ ಕೇಂದ್ರ ಸಚಿವ ಜೋಶಿ : ಏನಿದರ ವಿಶೇಷತೆ?
Electric Stove : ಎಲ್ಪಿಜಿ ಬಳಸದೆ ಜ್ವಾಲೆಯನ್ನು ಉತ್ಪಾದಿಸುವ ಈ ಸ್ಟೌವ್ ಅಂದುಕೊಂಡಂತೆ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ತಯಾರಾದರೆ ಪ್ರಧಾನಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ ಭಾರತ' ಸಾಕಾರಕ್ಕೆ ಮತ್ತೊಂದು ಗರಿ ಎನ್ನುತ್ತಾರೆ ಸಚಿವ ಪ್ರಲ್ಹಾದ ಜೋಶಿ. ಮಧ್ಯಪ್ರಾಚ್ಯ ಯುದ್ದದಿಂದ ವಿಶ್ವದೆಲ್ಲಡೆ ಗ್ಯಾಸ್ ಸಮಸ್ಯೆ ಎದುರಾಗಿದೆ. ಇದಕ್ಕೆ ಪರ್ಯಾಯವಾಗಿ ಇದನ್ನು ಬೆಳೆಸಬೇಕಿದೆ ಎಂದು ಜೋಶಿ ಹೇಳಿದ್ದಾರೆ.
ಬಹುಸಂಖ್ಯಾತರ ಭಾಷೆಗಳ ಪ್ರಾಬಲ್ಯದಿಂದ ಸಣ್ಣ ಭಾಷೆಗಳ ದಮನ : ಪ್ರೊ.ಪುರುಷೋತ್ತಮ ಬಿಳಿಮಲೆ
ರಾಜ್ಯ ಮಟ್ಟದ ವಿಚಾರ ಸಂಕಿರಣ
Mukul Choudhary: ಐಪಿಎಲ್ 2026ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ 54 ರನ್ ಚಚ್ಚಿ ಲಕ್ನೋ ಸೂಪರ್ ಜೈಂಟ್ಸ್ಗೆ ರೋಚಕ ಜಯ ತಂದುಕೊಟ್ಟ ಮುಕುಲ್ ಚೌಧರಿ ಈಗ ದೇಶದಾದ್ಯಂತ ಚರ್ಚೆಯಲ್ಲಿದ್ದಾರೆ. ಆದರೆ, ಈ ಯುವ ಆಟಗಾರನ ಈ ಸ್ಫೋಟಕ ಬ್ಯಾಟಿಂಗ್ ಹಿಂದೆ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಬಾಲ್ಯದ
ಪಿಯುಸಿ: ಉಡುಪಿ ಜಿಲ್ಲೆಯಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಸಾಧನೆ
ಉಡುಪಿ, ಎ.10: ಗುರುವಾರ ಪ್ರಕಟಗೊಂಡ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಹಲವು ಖಾಸಗಿ ಶಾಲೆಗಳು ಅತ್ಯುತ್ತಮ ಸಾಧನೆ ತೋರಿಸಿವೆ. ಈ ಪೈಕಿ ಕಾರ್ಕಳದ ಕ್ರಿಯೆಟೀವ್ ಪದವಿ ಪೂರ್ವ ಕಾಲೇಜಿನಿಂದ ಒಟ್ಟು 951 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆಗೊಳ್ಳುವ ಮೂಲಕ ಶೇ.100 ಫಲಿತಾಂಶ ಪಡೆದಿದೆ. ಹಾಗೆಯೇ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜಿನಿಂದ ಪರೀಕ್ಷೆಗೆ ಕುಳಿತ ಎಲ್ಲಾ 649 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.100 ಫಲಿತಾಂಶ ಪಡೆದಿದೆ. ಅಲ್ಲದೇ ಕಾಲೇಜಿನಿಂದ ಮೂವರು ರಾಜ್ಯದ ಟಾಪರ್ಗಳಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಕಾರ್ಕಳದ ಜ್ಞಾನಸುಧಾ ಕಾಲೇಜಿನಿಂದ ಪರೀಕ್ಷೆ ಬರೆದ 575 ಮಂದಿಯೂ ಉತ್ತೀರ್ಣರಾಗಿದ್ದರೆ, ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನಿಂದ ಪರೀಕ್ಷೆ ಬರೆದ ಎಲ್ಲಾ 538 ಮಂದಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನಲ್ಲಿ 568 ಮಂದಿ ಪರೀಕ್ಷೆ ಬರೆದಿದ್ದು 566 ಮಂದಿ ತೇರ್ಗಡೆಗೊಂಡು ಶೇ.99.65 ಫಲಿತಾಂಶ ಪಡೆದಿದೆ. ಉಡುಪಿಯ ವಿದ್ಯೋದಯ ಪಿಯು ಕಾಲೇಜಿನಲ್ಲಿ 368 ಮಂದಿ ವಿದ್ಯಾರ್ಥಿಗಳೆಲ್ಲರೂ ತೇರ್ಗಡೆಗೊಂಡಿದ್ದಾರೆ. ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆದ 689 ಮಂದಿಯ ಪೈಕಿ 686 ಮಂದಿ (ಶೇ.99.56) ತೇರ್ಗಡೆಗೊಂಡಿದ್ದಾರೆ. ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನಲ್ಲಿ 596 ಮಂದಿ ಪರೀಕ್ಷೆ ಬರೆದವರ ಪೈಕಿ 548 ಮಂದಿ (ಶೇ.91.96), ಉಡುಪಿಯ ಎಂಜಿಎಂ ಪ.ಪೂ. ಕಾಲೇಜಿನಲ್ಲಿ 591 ಮಂದಿ ವಿದ್ಯಾರ್ಥಿಗಳ ಪೈಕಿ 584 ಮಂದಿ (ಶೇ.98.82) ತೇರ್ಗಡೆಗೊಂಡಿದ್ದಾರೆ.
Koppal | ವಾದ ಮಂಡಿಸುವಾಗ ಕುಸಿದು ಬಿದ್ದು ವಕೀಲ ಮೃತ್ಯು
ಕೊಪ್ಪಳ: ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿಯೊಬ್ಬರು ತಮ್ಮ ಪ್ರಕರಣವೊಂದರಲ್ಲಿ ವಾದ ಮಂಡಿಸುತ್ತಿರುವಾಗ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಕುಷ್ಟಗಿ ನ್ಯಾಯಾಲಯದಲ್ಲಿ ನಡೆದಿದೆ. ತಾವರಗೇರಾ ಮೂಲದ ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ (50) ಮೃತಪಟ್ಟವರು. ಅವರು ಕುಷ್ಟಗಿ ನ್ಯಾಯಾಲಯದಲ್ಲಿ ಭೂವಿವಾದದ ಕೇಸ್ ವೊಂದರಲ್ಲಿ ನ್ಯಾಯಾಧೀಶರ ಎದುರು ತಮ್ಮ ವಾದ ಮಂಡಿಸುತ್ತಿರುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಮೃತ ನಿಂಗಪ್ಪ ಅವರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಗಂಗಾವತಿ ಮತ್ತು ಕುಷ್ಟಗಿ ನ್ಯಾಯಾಲಯಗಳಲ್ಲಿ ತಮ್ಮ ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಜೊತೆಗೆ ರಂಗಭೂಮಿ ಕಲಾವಿದರಾಗಿ ತಾವರಗೇರಾ ಸುತ್ತಲಿನ ಪ್ರದೇಶಗಳಲ್ಲಿ ಚಿರಪರಿಚಿತರಾಗಿದ್ದರು. ಅವರ ಅಕಾಲಿಕ ಸಾವಿಗೆ ಕುಷ್ಟಗಿ ಹಾಗೂ ಗಂಗಾವತಿ ತಾಲೂಕು ನ್ಯಾಯವಾದಿಗಳ ಸಂಘ ಮತ್ತು ತಾವರಗೇರಾ ಭಾಗದ ಜನತೆ ಕಂಬನಿ ಮಿಡಿದಿದೆ.
ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಪ್ರಚಾರಕ್ಕೆ ಡಿಜಿಟಲ್ ಸ್ಪರ್ಶದ ಗುರಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ
ಉಡುಪಿ, ಎ.10: ಒನ್ ಟ್ಯಾಕ್, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್ ಮತ್ತು ಉಡುಪಿ ಟೂರಿಸಂ ಸಹಭಾಗಿ ತ್ವದಲ್ಲಿ ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪ್ರವಾಸೋದ್ಯ ಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ವಿನೂತನ, ವಿಶಿಷ್ಟ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ಇಂದು ಕರೆದ ಜಿಲ್ಲೆಯ ಪ್ರವಾಸೋದ್ಯಮದ ಎಲ್ಲಾ ಸಕ್ರಿಯ ಪಾಲುದಾರರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಉಡುಪಿಯ ಸಂಸ್ಕೃತಿ, ಪರಂಪರೆ, ಆಹಾರ ಶೈಲಿ ಮತ್ತು ಧಾರ್ಮಿಕತೆ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಲು ಉದ್ದೇಶಿ ಸಲಾಗಿದ್ದು, ಇದಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗುವುದು ಎಂದರು. ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್ ಕಂಟೆಂಟ್ಗಳನ್ನು ತಯಾರಿಸುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್ಸ್ ಭಾಗವಹಿಸಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವ ಅವಕಾಶ ಇದೆ. ವಿಶೇಷವಾಗಿ ಕಾಲೇಜು ಮಟ್ಟದಲ್ಲಿ ಲ್ಯಾಬ್ಗಳನ್ನು ಅಳವಡಿಸಿ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದರು. ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಬಗ್ಗೆ ಅತ್ಯಪೂರ್ವ ಕಥಾವಸ್ತು, ಸಾಂಸ್ಕೃತಿಕ ಸಾಕ್ಷ್ಯಚಿತ್ರ, ಫೋಟೋಗಳು ಅಥವಾ ವೀಡಿಯೋಗಳನ್ನು ತಯಾರಿಸಿ ಹಂಚಿಕೊಳ್ಳಬಹುದು. ಅತ್ಯುತ್ತಮ ಗುಣಮಟ್ಟದ ಕಂಟೆಂಟ್ಗಳಿಗೆ ಬೆಸ್ಟ್ ವಿಡಿಯೋ, ಫೋಟೋ ಮೆಮೊಯಿರ್ ಮತ್ತು ಬೆಸ್ಟ್ ಸ್ಟೋರಿ ವಿಭಾಗದಲ್ಲಿ ಪ್ರತಿ ತಿಂಗಳೂ ಪ್ರಶಸ್ತಿ ನೀಡುವ ಜೊತೆ ಸ್ಟೋರಿ ಆಫ್ ದ ಇಯರ್, ಎಮಜಿರ್ಂಗ್ ಸ್ಟೋರಿ ಟೆಲ್ಲರ್ ಹಾಗೂ ಕಲ್ಚರಲ್ ಡಾಕ್ಯುಮೆಂಟೇಶನ್ ವಿಭಾಗದಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ನೀಡಲಾಗುತ್ತದೆ. ಮೊದಲಿಗೆ ಒಂದು ಕಾಲೇಜಿನಲ್ಲಿ ಕ್ರಿಯೇಟರ್ಸ್ ಲ್ಯಾಬ್ ಅನ್ನು ಸ್ಥಾಪಿಸಲಾಗು ವುದು. ಮುಂದಿನ ದಿನಗಳಲ್ಲಿ ಅದನ್ನು ಇತರ ಕಾಲೇಜುಗಳಿಗೆ ವಿಸ್ತರಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇಲ್ಲಿನ ಬೀಚ್ ಗಳಲ್ಲಿ ಜಲಕ್ರೀಡೆ, ಆಯುರ್ವೇದ ಪ್ರವಾಸೋದ್ಯಮ, ಸ್ಥಳೀಯ ಆಹಾರ ಪದ್ಧತಿ, ಪ್ರಾಕೃತಿಕ ಸ್ಥಳಗಳು, ಧಾರ್ಮಿಕ ಸ್ಥಳಗಳ ಬಗ್ಗೆ ವಿದೇಶಿಗರಿಗೆ ಹೆಚ್ಚು ಪ್ರಚಾರ ನೀಡುವ ಅಗತ್ಯವಿದೆ. ಆಯುರ್ವೇದ ಪ್ರವಾಸೋದ್ಯಮಕ್ಕೂ ಒತ್ತು ನೀಡಲು ತರಬೇತಿಗಳನ್ನು ಆಯೋಜಿಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ನುರಿತ ಗೈಡ್ ಗಳನ್ನೂ ನಿಯೋಜಿಸುವ ಕುರಿತು ಯೋಜಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ವಿಂಧ್ಯಾ, ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ತನ್ಮಯ ಗೋಸ್ವಾಮಿ, ಮಾಹೆ ಎಂಐಸಿ ನಿರ್ದೇಶಕಿ ಶುಭಾ ಎಚ್ ಎಸ್ ಮತ್ತಿತರರು ಪಾಲ್ಗೊಂಡಿದ್ದರು.
ಪದವೀಧರರಿಗೆ ಅಣುಸ್ಥಾವರಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ; ಯಾರು ಅರ್ಜಿ ಸಲ್ಲಿಸಬಹುದು?
ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ 330 ಕಾರ್ಯನಿರ್ವಾಹಕ ತರಬೇತಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವವರಿಗೆ ಉತ್ತಮ ಅವಕಾಶ ಲಭ್ಯವಾಗಿದೆ. ಭಾರತ ಸರ್ಕಾರದ ಉದ್ಯಮವಾಗಿರುವ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಕಾರ್ಯನಿರ್ವಾಹಕ ತರಬೇತಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 330 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 2026ರ ಏಪ್ರಿಲ್ 10ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ಲಿಂಕ್ನಲ್ಲಿ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು: https://www.npcilcareers.co.in/ETHQ10042026/candidate/default.aspx ಪ್ರಮುಖ ದಿನಾಂಕಗಳು ಅಧಿಸೂಚನೆ ದಿನಾಂಕ – 2026ರ ಏಪ್ರಿಲ್ 10 ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – 2026ರ ಏಪ್ರಿಲ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 2026ರ ಏಪ್ರಿಲ್ 30, ಸಂಜೆ 4 ಗಂಟೆಯೊಳಗೆ ಆನ್ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ – 2026ರ ಏಪ್ರಿಲ್ 30 ಒಟ್ಟು ಹುದ್ದೆಗಳು 330 ಅಪ್ಲಿಕೇಶನ್ ಶುಲ್ಕ * ಜನರಲ್/ಒಬಿಸಿ/ಇಡಬ್ಲ್ಯುಎಸ್: 500 ರೂ. * ಎಸ್ಸಿ/ಎಸ್ಟಿ/ಪಿಎಚ್: ಶುಲ್ಕವಿಲ್ಲ * ಮಹಿಳೆಯರಿಗೆ: ಶುಲ್ಕವಿಲ್ಲ * ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ಮೊಬೈಲ್ ವಾಲೆಟ್ ಮೂಲಕ ಪಾವತಿಸಬಹುದು ಪ್ರಮುಖ ವಿವರಗಳು ನೇಮಕಾತಿ ಸಂಸ್ಥೆ: ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (NPCIL), ಭಾರತ ಸರ್ಕಾರದ ಉದ್ಯಮ ಹುದ್ದೆಗಳು: ಮೆಕಾನಿಕಲ್, ಕೆಮಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಇನ್ಸ್ಟ್ರುಮೆಂಟೇಶನ್ ಮತ್ತು ಸಿವಿಲ್ ವಿಭಾಗಗಳಲ್ಲಿ ಕಾರ್ಯನಿರ್ವಾಹಕ ತರಬೇತುದಾರರು. ಆಯ್ಕೆ ಆಧಾರ: ಮಾನ್ಯತೆ ಹೊಂದಿದ ಗೇಟ್ ಅಂಕಗಳು (2024, 2025 ಅಥವಾ 2026) ಮತ್ತು ನಂತರ ಸಂದರ್ಶನ ಹುದ್ದೆಗಳ ಹಂಚಿಕೆ * ಮೆಕಾನಿಕಲ್ – 125 * ಕೆಮಿಕಲ್ – 40 * ಎಲೆಕ್ಟ್ರಿಕಲ್ – 65 * ಎಲೆಕ್ಟ್ರಾನಿಕ್ಸ್ – 50 * ಇನ್ಸ್ಟ್ರುಮೆಂಟೇಶನ್ – 15 * ಸಿವಿಲ್ – 35 ವಿದ್ಯಾರ್ಹತೆ * ಶಿಕ್ಷಣ: AICTE/UGC ಮಾನ್ಯತೆ ಪಡೆದ ಸಂಸ್ಥೆಗಳಿಂದ ಕನಿಷ್ಠ 60% ಅಂಕಗಳೊಂದಿಗೆ BE/B.Tech/B.Sc (ಎಂಜಿನಿಯರಿಂಗ್)/ಇಂಟಿಗ್ರೇಟೆಡ್ M.Tech * ಗೇಟ್ ಸ್ಕೋರ್: ಸಂಬಂಧಿತ ವಿಭಾಗದಲ್ಲಿ (2024/2025/2026) ವಯೋಮಿತಿ ವಯಸ್ಸಿನ ಮಿತಿ 2026ರ ಏಪ್ರಿಲ್ 30ರಂತೆ ನಿಗದಿಪಡಿಸಲಾಗಿದೆ * ಸಾಮಾನ್ಯ/ಇಡಬ್ಲ್ಯುಎಸ್: ಗರಿಷ್ಠ 26 ವರ್ಷ * ಒಬಿಸಿ (ಕೆನೆರಹಿತ ಪದರ): ಗರಿಷ್ಠ 29 ವರ್ಷ * ಎಸ್ಸಿ/ಎಸ್ಟಿ: ಗರಿಷ್ಠ 31 ವರ್ಷ * ಪಿಡಬ್ಲ್ಯೂಬಿಡಿ: ಸಂಬಂಧಿತ ವರ್ಗದ ಮಿತಿಗೆ 10 ವರ್ಷಗಳವರೆಗೆ ಸಡಿಲಿಕೆ ಆಯ್ಕೆ ಪ್ರಕ್ರಿಯೆ * ಶಾರ್ಟ್ಲಿಸ್ಟ್: ಗೇಟ್ ಅಂಕಗಳ ಆಧಾರದ ಮೇಲೆ (ಅನುಪಾತ 1:12) * ಸಂದರ್ಶನ: 2026ರ ಜೂನ್ 8ರಿಂದ 19ರವರೆಗೆ ಮುಂಬೈ, ನರೋರಾ (ಉತ್ತರ ಪ್ರದೇಶ), ಮದ್ರಾಸ್ (ತಮಿಳುನಾಡು) ಮತ್ತು ಕೈಗಾ (ಕರ್ನಾಟಕ)ಗಳಲ್ಲಿ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ * ಅಂತಿಮ ಆಯ್ಕೆ: ಸಂದರ್ಶನದ ಕಾರ್ಯಕ್ಷಮತೆ ಮತ್ತು ವೈದ್ಯಕೀಯ ಫಿಟ್ನೆಸ್ ಆಧರಿಸಿ * ಕಟ್-ಆಫ್ ಮತ್ತು ಫಲಿತಾಂಶ: NPCIL ಪೋರ್ಟಲ್ನಲ್ಲಿ ಪ್ರಕಟಿಸಲಾಗುತ್ತದೆ ತರಬೇತಿ ಮತ್ತು ಅಧಿಕಾರಾವಧಿ ತರಬೇತಿ ಅವಧಿ: ಪರಮಾಣು ತರಬೇತಿ ಕೇಂದ್ರಗಳಲ್ಲಿ (PHWR ಅಥವಾ LWR ಯೋಜನೆಗಳು) 1 ವರ್ಷ ಸ್ಟೈಫಂಡ್: ತಿಂಗಳಿಗೆ 74,000 ರೂ. + 30,000 ರೂ. ಒಂದು ಬಾರಿ ಪುಸ್ತಕ ಭತ್ಯೆ + ಉಚಿತ ವಸತಿ ಮತ್ತು ಆಹಾರ ಬಾಂಡ್: 9.18 ಲಕ್ಷ ರೂ.; ತರಬೇತಿಯ ನಂತರ ಕನಿಷ್ಠ 3 ವರ್ಷಗಳ ಸೇವಾ ಬದ್ಧತೆ ವೃತ್ತಿ ಮತ್ತು ಲಾಭಗಳು ತರಬೇತಿ ನಂತರದ ನೇಮಕಾತಿ: ವೈಜ್ಞಾನಿಕ ಅಧಿಕಾರಿ/ಸಿ (ಗುಂಪು ಎ, ಹಂತ 10) ವೇತನ ಶ್ರೇಣಿ: 56,100 ರೂ.+ DA (ಜುಲೈ 2025ರಂತೆ 58%) + ಇತರೆ ಭತ್ಯೆಗಳು (ಸಾರಿಗೆ, ವಸತಿ, ವೃತ್ತಿಪರ ಇತ್ಯಾದಿ) ಸವಲತ್ತುಗಳು: ವೈದ್ಯಕೀಯ ಸೌಲಭ್ಯಗಳು, ಮಕ್ಕಳಿಗೆ ಶಿಕ್ಷಣ ಬೆಂಬಲ, ನಿವೃತ್ತಿ ಪ್ರಯೋಜನಗಳು, ಕಾರ್ಯಕ್ಷಮತೆ ಪ್ರೋತ್ಸಾಹಕಗಳು, ಸಾಲಗಳು ಮತ್ತು ಪಿಂಚಣಿ ಯೋಜನೆಗಳು
ಸಕಾರಾತ್ಮಕ ಚಿಂತನೆಯುಳ್ಳ ಯುವ ಜನರೇ ದೇಶದ ನಿಜವಾದ ಶಕ್ತಿ: ಸ್ಪೀಕರ್ ಯು.ಟಿ ಖಾದರ್
ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಸಮ್ಮೇಳನ
ಅಂತೂ ಎಂಟು ವರ್ಷಕ್ಕೆ ನನ್ನ ಮಗ ದಂಟು ಎಂದ ಎಂಬಂತೆ ಪಾಕಿಸ್ತಾನವು ಜಾಗತಿಕ ವೇದಿಕೆಯಲ್ಲಿ ಅಷ್ಟು, ಇಷ್ಟು ಗುರುತಿಸಿಕೊಳ್ಳಲಾರಂಭಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗೆ ಆತಿಥ್ಯವಹಿಸಿರುವ ಪಾಕಿಸ್ತಾನ, ಇಸ್ಲಾಮಾಬಾದ್ ಒಪ್ಪಂದದ ಬಗ್ಗೆ ಜಾಗತಿಕ ಮಟ್ಟದಲ್ಲಿ ತಮಟೆ ಬಾರಿಸುತ್ತಿದೆ. ಪಾಕಿಸ್ತಾನದ ಮಧ್ಯಸ್ಥಿಕೆ ಪಾತ್ರದ ಅಗತ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೂ, ಅಮೆರಿಕ ಮತ್ತು ಇರಾನ್ ನಿಯೋಗ ರಾಜಧಾನಿ ಇಸ್ಲಾಮಾಬಾದ್ಗೆ ಬಂದಿಳಿದಿವೆ. ಹಾಗಿದ್ದರೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಮಾಡಿಸಿ ಪಾಕಿಸ್ತಾನಕ್ಕೆ ಸಿಗುವುದೇನು? ಇಲ್ಲಿದೆ ಮಾಹಿತಿ.
ಮುದ್ದಾಗಿ ಕಾಣುವ ಈ ಪ್ರಾಣಿಗಳ ಕರಾಳ ರಹಸ್ಯ ನಿಮಗೆ ಗೊತ್ತೆ?
ಮುದ್ದಾಗಿ ಕಾಣುವ ಈ ಪ್ರಾಣಿಗಳು ಪ್ರಕೃತಿಯ ಅತಿ ಕ್ರೂರ ಬೇಟೆಗಾರರಾಗಿರಬಹುದು ಎನ್ನುವುದು ನಿಮಗೆ ಗೊತ್ತೆ? ಪ್ರಕೃತಿಗೆ ಅದರದ್ದೇ ಆದ ನಿಗೂಢತೆ ಇರುತ್ತದೆ. ಅತ್ಯಂತ ಮುದ್ದಾಗಿ ಕಾಣುವ ಪ್ರಾಣಿಗಳೂ ಮಾರಕವಾಗಿ ಪರಿಣಮಿಸಬಹುದು. ಮಕ್ಕಳ ಪುಸ್ತಕಗಳಲ್ಲಿ ಮುದ್ದಾಗಿ ಕಾಣುವ ಪ್ರಾಣಿಗಳು ಪ್ರಕೃತಿಯ ಅತಿ ಕ್ರೂರ ಬೇಟೆಗಾರರಾಗಿರಬಹುದು. ಅಂತಹ ಐದು ಪ್ರಾಣಿಗಳ ವಿವರ ಇಲ್ಲಿದೆ. 1. ಸಮುದ್ರ ನೀರು ನಾಯಿಗಳು ಸೀ ಒಟ್ಟರ್ (Sea otter) ಅಥವಾ ಸಮುದ್ರ ನೀರು ನಾಯಿಗಳು ಜೊತೆಗೂಡಿ ತೇಲುವಾಗ ಕೈ ಹಿಡಿದು ಸಾಗುವುದು ನೋಡಲು ಚೆನ್ನಾಗಿರುತ್ತದೆ. ಚಿಪ್ಪು ಮೀನುಗಳನ್ನು ತಿನ್ನಲು ಕಲ್ಲುಗಳನ್ನು ಹಿಡಿದು ಒಡೆಯುವುದು ನೋಡಲು ಮುದ್ದಾಗಿರುತ್ತದೆ. ಆದರೆ ಅವು ಅಸಾಧಾರಣವಾದ ಆಕ್ರಮಣಕಾರಿ ಪ್ರವೃತ್ತಿಯನ್ನು ತೋರಿಸುತ್ತವೆ. ಗಂಡು ಪ್ರಾಣಿಗಳು ಹೆಣ್ಣು ಪ್ರಾಣಿಗಳ ಮುಖಕ್ಕೆ ಕಚ್ಚುವುದು, ಹಲ್ಲೆ ನಡೆಸುವುದು ಮತ್ತು ನಿರಂತರವಾಗಿ ಕಿರುಕುಳ ನೀಡುವುದು ಕಂಡುಬರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಸೀಲ್ ಮರಿಗಳ ಮೇಲೂ ಹಲ್ಲೆ ನಡೆಸುತ್ತವೆ. 2. ಕೋಲಾಗಳ ರೌದ್ರ ಘರ್ಜನೆ ಕೋಲಾಗಳು 18–20 ಗಂಟೆಗಳ ಕಾಲ ನೀಲಗಿರಿ ಮರಗಳ ಮೇಲೆ ನಿದ್ರಿಸುವುದನ್ನು ನೋಡಿದಾಗ ನಿರುಪದ್ರವಿ, ಮುದ್ದು ಪ್ರಾಣಿಗಳೆಂದು ಕಾಣಿಸುತ್ತವೆ. ಆದರೆ ಸಂಯೋಗದ ಋತುವಿನಲ್ಲಿ ಗಂಡು ಕೋಲಾಗಳು ದೊಡ್ಡ ಧ್ವನಿಯಲ್ಲಿ ಘರ್ಜಿಸುತ್ತವೆ ಮತ್ತು ಶತ್ರುಗಳನ್ನು ಉಗ್ರವಾಗಿ ಓಡಿಸುತ್ತವೆ. ಅವುಗಳ ಶಾಂತ ನಿದ್ರೆಯ ಹಿಂದೆ ಈ ವರ್ತನೆ ಅಡಗಿದೆ. 3. ಡಾಲ್ಫಿನ್ ಗಳು ಮಾನವ ಸ್ನೇಹಿಯೇ? ಮುದ್ದಾದ ಮತ್ತು ಸ್ನೇಹಪರ ಪ್ರಾಣಿಗಳ ಬಗ್ಗೆ ಬರೆಯುವಾಗ ಡಾಲ್ಫಿನ್ಗಳ ಉಲ್ಲೇಖ ಸದಾ ಆಗುತ್ತದೆ. ಮಾನವರೊಂದಿಗೆ ಮುದ್ದಾಗಿ ಆಟವಾಡುವ ಈ ಸಸ್ತನಿಗಳು ಬಹಳ ಉಗ್ರವಾಗಿ ಬೇಟೆಯಾಡುತ್ತವೆ. ಸೀಲ್ ಗಳು ಅಥವಾ ಪಿನ್ನಿಪೆಡ್ ಗಳನ್ನು ಎತ್ತಿ ಎಸೆಯುತ್ತವೆ. ಇತರ ಪ್ರಭೇದಗಳೊಂದಿಗೆ ಉಗ್ರವಾಗಿ ಹೋರಾಡುತ್ತವೆ. ಕೆಲವೊಮ್ಮೆ ಮರಿಗಳನ್ನು ಸಹ ಕೊಲ್ಲುತ್ತವೆ. ಸಾಮಾಜಿಕ ಶ್ರೇಣಿ ಮತ್ತು ಸ್ಪರ್ಧೆಯ ನಡುವೆ ಇವು ಉಗ್ರವಾಗಿ ವರ್ತಿಸುತ್ತವೆ. 4. ನಮಸ್ಕಾರಿ ಮಿಡತೆಗಳನ್ನು ಗಮನಿಸಿದ್ದೀರಾ? ನಮಸ್ಕಾರಿ ಮಿಡತೆಯನ್ನು ನಾವೆಲ್ಲರೂ ನೋಡಿದ್ದೇವೆ. ಇವುಗಳ ತೂಗಾಡುವ ಕೈಕಾಲುಗಳು ಮತ್ತು ನಿಶ್ಚಲತೆ ಪ್ರಶಾಂತವಾಗಿ ಕಾಣುತ್ತದೆ. ಆದರೆ ಸಂಯೋಗದ ಸಮಯದಲ್ಲಿ ಹೆಣ್ಣು ಮಿಡತೆಗಳು ಗಂಡು ಮಿಡತೆಗಳನ್ನೇ ತಿನ್ನುತ್ತವೆ. ಇದರಿಂದ ತಮ್ಮ ಮೊಟ್ಟೆಗಳಿಗೆ ಪೋಷಕಾಂಶಗಳು ಸಿಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 5. ಸತ್ತ ಇಲಿಯನ್ನು ಉಡುಗೊರೆ ನೀಡುವ ಬೆಕ್ಕುಗಳು ನೀವು ಬೆಕ್ಕನ್ನು ಸಾಕಿದ್ದರೆ ಒಂದು ವಿಷಯ ಖಚಿತವಾಗಿ ಗೊತ್ತಿರುತ್ತದೆ. ಬೆಕ್ಕುಗಳು ತಮ್ಮ ಮಾಲೀಕರಿಗೆ ಅಥವಾ ಸಂಗಾತಿಗಳಿಗೆ ಅರ್ಧ ಸತ್ತ ಇಲಿಗಳನ್ನು ಉಡುಗೊರೆಯಾಗಿ ತರುತ್ತವೆ. ಬೇಟೆಯನ್ನು ಹೀಗೆ ಹಂಚುವುದು ಅಥವಾ ತಮ್ಮ ಪ್ರದೇಶದಲ್ಲಿ ಪಾರಮ್ಯವನ್ನು ತೋರಿಸುವುದು ಬೆಕ್ಕುಗಳ ಸಹಜ ಗುಣವಾಗಿದೆ.
ಕಲಬುರಗಿ: ವಸತಿ ನಿಲಯ ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲಬುರಗಿ ನಗರದ ಮೋಹನ್ ಲಾಡ್ಜ್ ಬಳಿ ಸಮಾಜ ಕಲಾಣ ಇಲಾಖೆಯಿಂದ ಎಸ್.ಸಿ.ಪಿ. ಯೋಜನೆಯಡಿ ನಿರ್ಮಿಸಲಾದ 650 ಲಕ್ಷ ರೂ. ವೆಚ್ಚದ 100 ವಿದ್ಯಾರ್ಥಿ ಸಾಮರ್ಥ್ಯದ ಮೆಟ್ರಿಕ್ ನಂತರ ಬಾಲಕೀಯರ ವಸತಿ ನಿಲಯ ಮತ್ತು 536 ಲಕ್ಷ ರೂ. ವೆಚ್ಚದ 100 ವಿದ್ಯಾರ್ಥಿ ಸಾಮರ್ಥ್ಯದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ಶುಕ್ರವಾರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಡಿ.ಸಿ. ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಒ ಭಂವರ್ ಸಿಂಗ್ ಮೀನಾ, ಸಹಾಯಕ ಆಯುಕ್ತೆ ಸಾಹಿತ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಲೋಕೋಪಯೋಗಿ ಇಲಾಖೆಯ ಕಲಬುರಗಿ ವಲಯ ಮುಖ್ಯ ಇಂಜಿನಿಯರ್ ಶರಣಪ್ಪಾ ಸುಲಗುಂಟೆ, ಇ.ಇ. ರಾಹುಲ ಕಾಂಬಳೆ ಇದ್ದರು.
ಒಂದನೇ ತರಗತಿ ದಾಖಲಾತಿಗೆ 60 ದಿನಗಳ ವಯೋಮಿತಿ ಸಡಿಲಿಕೆ: ರಾಜ್ಯ ಸರಕಾರ ಆದೇಶ
ಬೆಂಗಳೂರು : ರಾಜ್ಯ ಸರಕಾರವು 2026-27ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯವಾಗುವಂತೆ ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಕಡ್ಡಾಯವಾಗಿ ಆರು ವರ್ಷ ತುಂಬಿರಲೇಬೇಕು ಎಂಬ ನಿಯಮವನ್ನು ತಿದ್ದುಪಡಿ ಮಾಡಲಾಗಿದ್ದು, 60 ದಿನಗಳ ಸಡಲಿಕೆ ನೀಡಿ ಆದೇಶ ಹೊರಡಿಸಿದೆ. ಸರಕಾರವು ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸನ್ನು ಪರಿಗಣಿಸಿ 2025-26ನೇ ಸಾಲಿನಿಂದ ಶೈಕ್ಷಣಿಕ ವರ್ಷದ ಜೂ.1ಕ್ಕೆ ಅನ್ವಯವಾಗುವಂತೆ ವಯೋಮಿತಿಯನ್ನು ಕಡ್ಡಾಯವಾಗಿ 6 ವರ್ಷಗಳಿಗೆ ನಿಗದಿ ಮಾಡಲಾಗಿತ್ತು. ಆದರೆ ಆದೇಶವನ್ನು ತಿದ್ದುಪಡಿ ಮಾಡಲಾಯಿತು. ಈಗ 2026-27ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಆದೇಶವನ್ನು ತಿದ್ದುಪಡಿ ಮಾಡಲಾಗಿದೆ. ಶೈಕ್ಷಣಿಕ ವರ್ಷದ ಜೂ.1ರಿಂದ ಗರಿಷ್ಟ 60 ದಿನಗಳ ಸಡಿಲಿಕೆಯನ್ನು ನೀಡಿ ಮಗುವಿನ ವಯಸ್ಸನ್ನು ಲೆಕ್ಕಹಾಕಿ ಶಾಲಾ ದಾಖಲಾತಿಗೆ ಪರಿಗಣಿಸಬೇಕು ಎಂದು ಆದೇಶಿಸಿದೆ.
ಲೈಫು ಇಷ್ಟೇನೆ ಅನಿಸಿದಾಗ, ಫೀನಿಕ್ಸ್ ನಂತೆ ಮತ್ತೆ ಎದ್ದೇಳಲು ಏನು ಮಾಡಬೇಕು?
ಜೀವನ ಕಠಿಣವಾದಾಗ ಸರಳಗೊಳಿಸಲು ಕ್ಲಿನಿಕಲ್ ಹಿಪ್ನೊಥೆರಪಿಸ್ಟ್ ಆಗಿರುವ ಜನಿಕಾ ಗ್ಯಾಲೋವೇ ಅವರು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಐದು ಸಲಹೆಗಳನ್ನು ನೀಡಿದ್ದಾರೆ. ಜೀವನದಲ್ಲಿ ಎಲ್ಲೋ ಸಿಕ್ಕಿಬಿದ್ದಿರುವ ಭಾವನೆಯಿದೆಯೆ? ಸಂತೋಷ ಎಲ್ಲೋ ಕಳೆದು ಹೋಗಿ ಮರಳಿ ಹಿಂದಿರುಗಲಾಗದ ಭಾವಪ್ರಪಂಚದಲ್ಲಿ ತೇಲಿ ಹೋಗಿದ್ದೀರಾ? ಹಾಗಿದ್ದರೆ ಸ್ವಲ್ಪ ಭಾವ ಬದಲಿಸಿಕೊಂಡರೆ ಸಾಕು. ಉದ್ದೇಶಪೂರ್ವಕವಾಗಿ ಮಾಡಿಕೊಂಡ ಬದಲಾವಣೆಗಳು ನಿಧಾನವಾಗಿ ನಿಮಗೆ ಹಿಂತಿರುಗಲು ಅವಕಾಶ ಕೊಡುತ್ತವೆ. ಕ್ಲಿನಿಕಲ್ ಹಿಪ್ನೊಥೆರಪಿಸ್ಟ್ ಆಗಿರುವ ಜನಿಕಾ ಗ್ಯಾಲೋವೇ ಅವರು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಐದು ಸಲಹೆಗಳನ್ನು ನೀಡಿದ್ದಾರೆ. ಈ ಐದು ಸಲಹೆಗಳು ನಿಮ್ಮ ಜೀವನದಲ್ಲಿ ಸಂತೋಷವನ್ನು ಮರಳಿ ಕಂಡುಕೊಳ್ಳಲು ನೆರವಾಗಲಿವೆ. ►ನಿಮಗೆ ಸಂತೋಷಕೊಡುವ 50 ವಿಷಯಗಳನ್ನು ಬರೆಯಿರಿ ಮೊದಲಿಗೆ ಇದು ಅತಿಯಾದಂತೆ ಅನಿಸಬಹುದು. ಅದೇ ಮುಖ್ಯ ವಿಷಯ. ನಿಮ್ಮದೇ ಸಂತೋಷದ ವಿಷಯಕ್ಕೆ ಬಂದಾಗ ನಿಮ್ಮ ಮನಸ್ಸು ತಡೆದು ನಿಲ್ಲುವುದರಲ್ಲಿ ಒಗ್ಗಿಕೊಂಡಿರುತ್ತದೆ, ವಿಶೇಷವಾಗಿ ಸ್ವಂತ ಸಂತೋಷದ ವಿಷಯದಲ್ಲಿ. ನೀವು ಈ ಪ್ರತಿರೋಧವನ್ನು ದಾಟಿದಾಗ, ಆಸಕ್ತಿದಾಯಕವಾದ ಏನಾದರೂ ಸಂಭವಿಸಬಹುದು. ನೀವು ಮರೆತುಹೋದ ನಿಮ್ಮದೇ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತೀರಿ. ನೀವೇನು ಬರೆಯುತ್ತಿದ್ದೀರಿ ಎನ್ನುವುದನ್ನು ಗಮನಿಸಿ—ಕೆಲವು ಮಂದಿ, ಸಂಗೀತ, ಚಲನೆ ಅಥವಾ ಮೌನವಾದ ಕ್ಷಣಗಳು. ಈ ಪಟ್ಟಿಯು ಮತ್ತೆ ಏನನ್ನೋ ನೈಜವಾಗಿ ಅನುಭವಿಸಲು ನಿಮ್ಮ ವೈಯಕ್ತಿಕ ನಕ್ಷೆಯಾಗಲಿದೆ. ►ವೇಳಾಪಟ್ಟಿ ರಚಿಸಿ ಮತ್ತು ಸ್ವಂತಕ್ಕಾಗಿ ಸಮಯ ಮೀಸಲಿಡಿ ಸಮಯವಿದ್ದರೆ ಹೊಂದಿಸಿಕೊಳ್ಳುವುದು ನಿಮಗೆ ಅಭ್ಯಾಸವಾಗಿರಬಹುದು. ಆದರೆ ನಿಮಗಾಗಿ ಹೆಚ್ಚುವರಿ ಸಮಯ ಎಂದೂ ಇರುವುದಿಲ್ಲ, ಅಲ್ಲವೆ? ಬದಲಾಗಿ ನಿಮ್ಮ ಬದುಕಿನಲ್ಲಿ ಸ್ವಯಂ ಅನ್ನು ಮೊದಲಿಗೆ ಇಟ್ಟು ಕ್ಯಾಲೆಂಡರ್ ರಚಿಸಿ. ನಿಮ್ಮ ಯೋಗಕ್ಷೇಮಕ್ಕೆ ಮೊದಲ ಆದ್ಯತೆ ನೀಡಿ. ಬಳಲಿಕೆಯ ನಂತರ ನೀವು ಗಳಿಸುವ ಪ್ರತಿಫಲವಲ್ಲ ಇದು. ನೀವು ಇದನ್ನು ಮಾಡಲು ಆರಂಭಿಸಿದರೆ ನಿಮ್ಮ ಶಕ್ತಿ ಬದಲಾಗಲು ಆರಂಭವಾಗುತ್ತದೆ. ಸಂತೋಷಗೊಳ್ಳಲು ಅನುಮತಿಗಾಗಿ ಕಾಯದೆ, ಆಯ್ಕೆ ಮಾಡಿಕೊಳ್ಳುವುದನ್ನು ಕಲಿಯುತ್ತೀರಿ. ►ನಿಮ್ಮಿಂದ ಆಗದ ವಿಷಯಕ್ಕೆ ಕೈ ಹಾಕಿ ಎಲ್ಲದರಲ್ಲೂ ನೀವು ತಜ್ಞರಾಗಿರಬೇಕೆಂದಿಲ್ಲ. ಮುಖ್ಯವಾಗಿ ಜಯ ಸಾಧಿಸಬೇಕಾದ ಒತ್ತಡವಿಲ್ಲದಿದ್ದಾಗಲೇ ಸಂತೋಷ ಇರುತ್ತದೆ. ಅನುಭವಕ್ಕಾಗಿ ಏನಾದರೂ ಹೊಸದನ್ನು ಪ್ರಯತ್ನಿಸಿ—ನೃತ್ಯ, ಚಿತ್ರಕಲೆ, ಭಾಷೆ ಕಲಿಯುವುದು ಅಥವಾ ಹೊಸ ಅಡುಗೆ ಕಲಿಯುವುದು ಇತ್ಯಾದಿ. ಆರಂಭದ ಕಲಿಕೆಗೆ ನಿಮ್ಮನ್ನು ಒಡ್ಡಿಕೊಂಡಾಗ ನೀವು ಪ್ರಸ್ತುತದೊಂದಿಗೆ ಮರಳಿ ಸಂಪರ್ಕ ಸಾಧಿಸುತ್ತೀರಿ. ಅಲ್ಲೇ ನಿಮ್ಮ ಸಂತೋಷ ಮರಳಿ ಸಿಗಲಿದೆ. ►ಶಕ್ತಿ ಮರಳಿ ಕೊಡುವವರನ್ನು ಮರು ಸಂಪರ್ಕಿಸಿ ಪ್ರಯತ್ನಿಸದೆ ನಿಮ್ಮ ಶಕ್ತಿಯನ್ನು ಬದಲಿಸುವ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ. ಅವರ ಸುತ್ತ ಇರುವುದು ಖುಷಿಕೊಡಬಹುದು—ಸುಲಭ, ಸರಳ ಮತ್ತು ನೈಜ. ಅವರನ್ನು ಸಂಪರ್ಕಿಸಿ, ಅವರ ಜೊತೆ ಸಮಯ ಕಳೆಯಿರಿ. ಕೆಲವೊಮ್ಮೆ ಸಲಹೆ ಅಥವಾ ಪರಿಹಾರಗಳ ಅಗತ್ಯವಿರುವುದಿಲ್ಲ. ಒತ್ತಡದ ಆಳದಲ್ಲಿ ನೀವು ಯಾರು ಎಂಬುದನ್ನು ನೆನಪಿಸುವ ಶಕ್ತಿಯ ಜೊತೆಗೆ ನೀವಿರಬೇಕಾಗುತ್ತದೆ. ►ನಿಮ್ಮದಲ್ಲದದ್ದನ್ನು ತೊರೆಯಿರಿ ನೀವು ಭಾವಿಸುವ ಎಲ್ಲವೂ ನಿಮಗೆ ಸೇರಿಲ್ಲ. ನಿಮ್ಮ ಜಗತ್ತಿನ ಸುತ್ತಲಿನಿಂದ ಒತ್ತಡ, ನಿರೀಕ್ಷೆ ಮತ್ತು ಭಾವನಾತ್ಮಕ ತೂಕವನ್ನು ಅರಿವಿಲ್ಲದೆ ತೆಗೆದುಕೊಳ್ಳುತ್ತೀರಿ. ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮನ್ನೇ ಪ್ರಶ್ನಿಸಿ: ನಾನು ಹಿಡಿದಿಟ್ಟುಕೊಂಡಿರುವುದು ವಾಸ್ತವದಲ್ಲಿ ನನಗೆ ಸೇರಿದೆಯೆ? ಆ ತೂಕದಿಂದ ದೂರವಾದ ಅಲ್ಪ ಜಾಗವನ್ನು ಸೃಷ್ಟಿಸುವುದೂ ಪರಿಹಾರವಾಗಬಹುದು. ಆ ಅಲ್ಪ ಜಾಗದಲ್ಲಿ ಮೃದುವಾದ ಮರಳುವಿಕೆಗೆ ಅವಕಾಶ ಸಿಗುತ್ತದೆ. ಅಗಾಧವಾದ ಸಂತೋಷವನ್ನು ನೀವು ಬೆನ್ನಟ್ಟುವ ಅಗತ್ಯವಿಲ್ಲ. ಕೆಲವೊಮ್ಮೆ ನಿಮ್ಮ ನಿರೀಕ್ಷೆಯ ಮಟ್ಟವನ್ನು ಕಡಿಮೆ ಮಾಡಿದರೆ ಸರಳವಾದ ಸಂತೋಷ ಸಿಗುತ್ತದೆ. ಕೃಪೆ: hindustantimes.com
2029 ರಿಂದಲೇ ಮಹಿಳಾ ಮೀಸಲಾತಿ ಜಾರಿಗೊಳಿಸುವ ಇಚ್ಛಾಶಕ್ತಿ ಮೋದಿ ಸರ್ಕಾರಕ್ಕಿಲ್ಲ: ಕೆ. ನೀಲಾ
ಕಲಬುರಗಿ: ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೊಸ ಪ್ರಸ್ತಾವನೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಪಿಐ(ಎಂ) ಪಕ್ಷವು, ಈ ವಿಷಯದಲ್ಲಿ ಎಲ್ಲಾ ರಾಜ್ಯಗಳು ಹಾಗೂ ರಾಜಕೀಯ ಪಕ್ಷಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ಅಗತ್ಯವಿದೆ ಎಂದು ಒತ್ತಾಯಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಮಹಿಳಾ ಮೀಸಲಾತಿಯನ್ನು 2011ರ ಜನಗಣತಿ ಆಧಾರಿತ ಕ್ಷೇತ್ರ ಮರುವಿಂಗಡಣೆಯೊಂದಿಗೆ ಕೊಂಡಿ ಹಾಕಿರುವುದು ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ. ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಕ್ರಿಯೆಯ ಜೊತೆಗೆ ಮೀಸಲಾತಿಯನ್ನು ಜೋಡಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡುವ ಬದ್ಧತೆಯನ್ನು ಸಿಪಿಐ(ಎಂ) ಸದಾ ಹೊಂದಿದ್ದು, 2023ರಲ್ಲಿ ಮಂಡಿಸಲಾದ ಮಸೂದೆಗೆ ತಾತ್ವಿಕ ವಿರೋಧ ಇದ್ದರೂ, ಮಹಿಳಾ ಪ್ರತಿನಿಧಿತ್ವ ಹೆಚ್ಚಿಸುವ ಉದ್ದೇಶದಿಂದ ಬೆಂಬಲ ನೀಡಲಾಗಿತ್ತು. ಆದರೆ, ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಮೀಸಲಾತಿಯನ್ನು ತಳುಕು ಹಾಕುವುದರಿಂದ 2024 ಹಾಗೂ 2029ರ ಚುನಾವಣೆಯಲ್ಲಿಯೂ ಮಹಿಳೆಯರಿಗೆ ನ್ಯಾಯ ಸಿಗುವುದಿಲ್ಲ ಎಂಬ ಆತಂಕವನ್ನು ಆಗಲೇ ವ್ಯಕ್ತಪಡಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಇದಲ್ಲದೆ, ಎರಡು ವರ್ಷಗಳಾದರೂ ಜನಗಣತಿ ಪ್ರಕ್ರಿಯೆ ಪ್ರಾರಂಭವಾಗದಿರುವುದು ಹಾಗೂ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ರಚಿಸದಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಸರ್ವಪಕ್ಷ ಸಭೆ ನಡೆಸಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಗೂ ಸ್ಪಂದಿಸದೇ, ಚುನಾವಣೆ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಇಂತಹ ಪ್ರಸ್ತಾವನೆಗಳನ್ನು ಮುಂದಿಡುತ್ತಿರುವುದು ಆಕ್ಷೇಪಾರ್ಹ ಎಂದರು. ಮಹಿಳಾ ಮೀಸಲಾತಿಯನ್ನು 2029ರ ಸಾರ್ವತ್ರಿಕ ಚುನಾವಣೆಯಿಂದಲೇ ಜಾರಿಗೆ ತರಲು ಸಾಧ್ಯವಿದ್ದು, ಅದಕ್ಕಾಗಿ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯಿಂದ ಅದನ್ನು ಬೇರ್ಪಡಿಸುವ ತಿದ್ದುಪಡಿ ತರಬೇಕು. ಆದರೆ, ಈ ದಿಶೆಯಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಗತ್ಯವಾದ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪಕ್ಷದ ಪೊಲಿಟ್ಬ್ಯುರೋ ಅಭಿಪ್ರಾಯಪಟ್ಟಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆನ್ಸಾರ್ ಮಂಡಳಿ ಮುಂದೆ ಸಿಲುಕಿರುವ ‘ಜನನಾಯಗನ್’ ಪೈರಸಿ ಸೈಟ್ ಗಳಲ್ಲಿ ಬಿಡುಗಡೆ
ಬಿಡುಗಡೆಗೆ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿರುವ ವಿಜಯ್ ಅವರ ಸಿನಿಮಾ ‘ಜನನಾಯಗನ್’ ಪೈರಸಿ ವೆಬ್ಸೈಟ್ ಗಳಲ್ಲಿ ಸೋರಿಕೆಯಾಗಿದೆ. ದಳಪತಿ ವಿಜಯ್ ಅವರ ಕೊನೆಯ ಚಿತ್ರ ‘ಜನನಾಯಗನ್’ನ ಹೈ ಡೆಫಿನಿಷನ್ (HD) ಮುದ್ರಣವು ಪೈರಸಿ ಸೈಟ್ ಗಳಲ್ಲಿ ಸೋರಿಕೆಯಾಗಿದೆ. ಈ ಸಿನಿಮಾಗೆ ಸೆನ್ಸರ್ ಪ್ರಮಾಣಪತ್ರ ನೀಡದೇ ಇರುವುದರಿಂದ, ಜನವರಿಯಲ್ಲಿ ಪೊಂಗಲ್ ಹಬ್ಬದ ಸಂದರ್ಭ ಬಿಡುಗಡೆಯಾಗಬೇಕಿದ್ದ ಚಿತ್ರ ಇನ್ನೂ ತೆರೆಕಂಡಿಲ್ಲ. ಚಿತ್ರ ಸೋರಿಕೆಯಾಗುವ ಮೊದಲು ಚಿತ್ರದ ಶೀರ್ಷಿಕೆ ಕ್ರೆಡಿಟ್ ಗಳು, ಪರಿಚಯಾತ್ಮಕ ದೃಶ್ಯ ಹಾಗೂ ಕ್ಲೈಮಾಕ್ಸ್ ಸೇರಿ ಕೆಲವು ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದ್ದವು. ನಂತರ ಪೂರ್ಣ ಸಿನಿಮಾವೇ ಸೋರಿಕೆಯಾಗಿದೆ. ವಿಜಯ್ ಅವರ ಅಭಿಮಾನಿಗಳು ಸಿನಿಮಾ ಸೋರಿಕೆ ಕುರಿತು ಆಘಾತ ವ್ಯಕ್ತಪಡಿಸಿದ್ದು, ದೂರು ದಾಖಲಿಸಲು ನಿರ್ಮಾಣ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಪ್ರಾರಂಭದಲ್ಲಿ ನಿರ್ಮಾಣ ಸಂಸ್ಥೆ ತ್ವರಿತ ಕ್ರಮ ಕೈಗೊಂಡು ‘ಎಕ್ಸ್’ ಸಾಮಾಜಿಕ ಜಾಲತಾಣ ಸೇರಿದಂತೆ ಇತರ ವೇದಿಕೆಗಳಿಂದ ಪ್ರಸಾರವಾಗುತ್ತಿದ್ದ ಕ್ಲಿಪ್ಗಳನ್ನು ತೆಗೆದು ಹಾಕಿತ್ತು. ಆದರೆ ನಂತರ ಇಡೀ ಸಿನಿಮಾದ HD ಆವೃತ್ತಿ ಪೈರಸಿ ಸೈಟ್ ಗಳಲ್ಲಿ ಬಿಡುಗಡೆಯಾಯಿತು. ಶುಕ್ರವಾರ ಬೆಳಗಿನ ವೇಳೆಗೆ ಚಿತ್ರದ ವಿಕಿಪೀಡಿಯ ಪುಟದಲ್ಲಿ ಸೋರಿಕೆಯಾದ ಯುಆರ್ಎಲ್ ಕೂಡ ಕಾಣಿಸಿಕೊಂಡಿತ್ತು. ಆದರೆ ಅದು ವೈರಸ್ ಅಥವಾ ದುರುದ್ದೇಶಪೂರಿತ ಲಿಂಕ್ ಆಗಿರುವ ಸಾಧ್ಯತೆಯೂ ಇದೆ. ಈ ನಡುವೆ ತಮಿಳು ಸಿನಿಮಾಗಳನ್ನು ಪೈರಸಿಯಲ್ಲಿ ಬಿಡುಗಡೆ ಮಾಡುವಲ್ಲಿ ಕುಖ್ಯಾತವಾಗಿರುವ ‘ತಮಿಳುಎಂವಿ’ ಎಂಬ ಸೈಟ್ ತಾವು ವಿಜಯ್ ಅವರ ಸಿನಿಮಾವನ್ನು ಸದ್ಯ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ. “ವಿಜಯ್ ಸುತ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಮಗೆ ತಿಳಿದಿದೆ. ನಮ್ಮ ನಿಯಮಗಳ ಪ್ರಕಾರ ನಾವು ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆಯಾದ ನಂತರ ಮಾತ್ರ ಅಪ್ಲೋಡ್ ಮಾಡುತ್ತೇವೆ. ಅಧಿಕೃತ ಬಿಡುಗಡೆಯ ಮೊದಲು ಚಲನಚಿತ್ರವನ್ನು ಇಲ್ಲಿ ಅಪ್ಲೋಡ್ ಮಾಡಲಾಗುವುದಿಲ್ಲ” ಎಂದು ತಿಳಿಸಿದೆ. ಜನನಾಯಗನ್ ವರ್ಸಸ್ ಸೆನ್ಸಾರ್ ಮಂಡಳಿ ‘ಜನನಾಯಗನ್’ ಅನ್ನು ವಿಜಯ್ ಅವರು ಚಿತ್ರರಂಗವನ್ನು ತೊರೆಯುತ್ತಿರುವ ಸಂದರ್ಭದಲ್ಲಿ ವಿದಾಯ ಹೇಳುವ ಕೊನೆಯ ಚಿತ್ರವೆಂದು ಪ್ರಚಾರ ಮಾಡಲಾಗಿತ್ತು. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಜನರ ಭಾವನೆಗಳಿಗೆ ನೋವುಂಟು ಮಾಡುವ ಕೆಲವು ದೃಶ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆ, ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಕೆಲವು ದಿನಗಳ ಕಾಲ ಮುಂದೂಡಲಾಗಿತ್ತು. ಇದಾದ ನಂತರ ಪ್ರಮಾಣೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೋರಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಒಂದು ತಿಂಗಳ ಕಾನೂನು ಬಿಕ್ಕಟ್ಟಿನ ಬಳಿಕ ತಂಡವು ಪ್ರಕರಣವನ್ನು ಹಿಂತೆಗೆದುಕೊಂಡು ಚಿತ್ರವನ್ನು ಪರಿಷ್ಕರಣಾ ಸಮಿತಿಗೆ (Revising Committee) ಸಲ್ಲಿಸಲು ಒಪ್ಪಿಕೊಂಡಿತು. ಸಿನಿಮಾ ಈಗ ಪರಿಷ್ಕರಣಾ ಸಮಿತಿಯ ಮುಂದೆ ಇದೆ. ಅದನ್ನು ಸದಸ್ಯರಿಗೆ ಪ್ರದರ್ಶಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾದ ನಂತರ ಸಮಿತಿಯ ಪ್ರದರ್ಶನವನ್ನು ರದ್ದುಪಡಿಸಲಾಗಿತ್ತು. ಅದರ ಬಳಿಕ ಸಮಿತಿ ಸಿನಿಮಾ ನೋಡಿದೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದ ನಂತರವೇ ಚಿತ್ರಕ್ಕೆ ಅನುಮತಿ ದೊರೆಯುವ ಸಾಧ್ಯತೆಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ತಮ್ಮ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪರವಾಗಿ ಸ್ಪರ್ಧಿಸುತ್ತಿರುವುದು ವಿಳಂಬಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಜನನಾಯಗನ್’ ರಾಜಕೀಯ ಹಿನ್ನೆಲೆಯ ಸಿನಿಮಾ ಆಗಿದೆ. ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ನಟಿಸಿದ್ದಾರೆ.
ಅಫಜಲಪುರ | ಪ್ರಾಧಿಕಾರ ಅಧ್ಯಕ್ಷರಾಗಿ ಚಂದ್ರಶೇಖರ ಕರಜಗಿ ಅಧಿಕಾರ ಸ್ವೀಕಾರ
ಅಫಜಲಪುರ: ಅಫಜಲಪುರ ಮತ್ತು ದೇವಲ ಗಾಣಗಾಪುರ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಕರಜಗಿ, ಸದಸ್ಯರಾಗಿ ಮಾರುತಿ ಮೂರನೆತ್ತಿ, ಗುಂಡಪ್ಪ ಹೊಸಮನಿ, ಮಹಿಬೂಬ ಮನಿಯಾರ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು. ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಶಾಸಕ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ತಹಶೀಲ್ದಾರ್ ಸಂಜೀವಕುಮಾರ ದಾಸರ, ಜಿಪಂ ಮಾಜಿ ಸದಸ್ಯ ಮತೀನ ಪಟೇಲ್, ಲಚ್ಚಪ್ಪ ಜಮಾದಾರ, ಕಂಟೇಪ್ಪ ಬಳೂರ್ಗಿ, ಶರಣು ಕುಂಬಾರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇರಾನ್ ವಿರುದ್ಧ ಜನಾಂಗೀಯ ಹತ್ಯೆ ಬೆದರಿಕೆ ಬಳಿಕ ಡೊನಾಲ್ಡ್ ಟ್ರಂಪ್ ಪದಚ್ಯುತಿಗೆ ಡೆಮೋಕ್ರಾಟ್ ಗಳಿಂದ ಹೆಚ್ಚಿದ ಆಗ್ರಹ
ವಾಶಿಂಗ್ಟನ್: ಇರಾನ್ ಅನ್ನು ಸರ್ವನಾಶ ಮಾಡುವ, ಜನಾಂಗೀಯ ಹತ್ಯೆ ನಡೆಸುವ ಬೆದರಿಕೆ ಮತ್ತು ಸೇನಾ ಕಾರ್ಯಾಚರಣೆ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ನ 70ಕ್ಕೂ ಹೆಚ್ಚು ಡೆಮಾಕ್ರಾಟ್ ಸದಸ್ಯರು, ಟ್ರಂಪ್ ಅವರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾಮಾನ್ಯವಾಗಿ ಟ್ರಂಪ್ ಕ್ರಮಗಳ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದ ಡೆಮಾಕ್ರಾಟ್ ಶಾಸಕರು, ಇದೀಗ ಒಟ್ಟಾಗಿ ಹೊಣೆಗಾರಿಕೆ ಬಗ್ಗೆ ಬೇಡಿಕೆ ಮುಂದಿಟ್ಟಿದ್ದಾರೆ. ಅವರು ಅಮೆರಿಕ ಅಧ್ಯಕ್ಷರ ಹೇಳಿಕೆಗಳು, ಅಂತಾರಾಷ್ಟ್ರೀಯ ಹಾಗೂ ಫೆಡರಲ್ ಕಾನೂನುಗಳ ಉಲ್ಲಂಘನೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಟ್ರಂಪ್ ಅವರ ಆತಂಕಕಾರಿ ಹೇಳಿಕೆಗಳ ನಂತರ, ಹಲವಾರು ಡೆಮಾಕ್ರಟಿಕ್ ಪ್ರತಿನಿಧಿಗಳು ಅಮೆರಿಕ ಅಧ್ಯಕ್ಷರನ್ನು ದೋಷಾರೋಪಣೆಯ ಮೂಲಕ ಅಥವಾ 25ನೇ ತಿದ್ದುಪಡಿಯ ಮೂಲಕ ಅಧಿಕಾರದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ. ಅಧ್ಯಕ್ಷರ ಭಾಷಣದಿಂದ ಆತಂಕಗೊಂಡ ಜನರು ಅನೇಕ ಕರೆಗಳು ಮತ್ತು ಇಮೇಲ್ ಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅನೇಕ ಡೆಮಾಕ್ರೆಟ್ಗಳು ಆಗ್ರಹಿಸಿದ್ದಾರೆ. ಕ್ಯಾಲಿಫೋರ್ನಿಯಾದ ಪ್ರತಿನಿಧಿ ಸಾರಾ ಜೇಕಬ್ಸ್ ಅವರು ತಮ್ಮ ಪಕ್ಷದ ಅನೇಕರು ಹಂಚಿಕೊಂಡ ಅಭಿಪ್ರಾಯವನ್ನು ವ್ಯಕ್ತಪಡಿಸಿ, “ಅಧ್ಯಕ್ಷರು ಹೇಳಿದ ಮಾತುಗಳನ್ನು ಮಾತುಕತೆ ತಂತ್ರ ಎಂದು ನಾವು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಟ್ರಂಪ್ ನೀಡಿದ ಬೆದರಿಕೆಗಳಿಗೆ ಅವರನ್ನು ಹೊಣೆಗಾರರನ್ನಾಗಿಸಬೇಕೆಂಬ ಅಗತ್ಯವನ್ನು ಜೇಕಬ್ಸ್ ಆಗ್ರಹಿಸಿದರು. ಇವು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ, ಅದರ ಪರಿಣಾಮಗಳು ಅಂತಾರಾಷ್ಟ್ರೀಯ ಸಂಬಂಧಕ್ಕೆ ಮಾತ್ರವಲ್ಲದೆ ಯುದ್ಧ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಮಾನದಂಡಗಳ ಮೇಲೂ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. ಸೆನೆಟರ್ ಆಂಡಿ ಕಿಮ್ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊ ಕ್ಲಿಪ್ ನಲ್ಲಿ “ಟ್ರಂಪ್ ಕಮಾಂಡರ್ ಇನ್ ಚೀಫ್ ಆಗಲು ಯೋಗ್ಯರಲ್ಲ ಎಂದು ಹೇಳಿದ್ದಾರೆ ಮತ್ತು ಅವರ ರಿಪಬ್ಲಿಕನ್ ಸಹೋದ್ಯೋಗಿಗಳು ಅವರ ವಿರುದ್ಧ ನಿಲ್ಲುವಂತೆ ಒತ್ತಾಯಿಸಿದ್ದಾರೆ. ಮಿಚಿಗನ್ನ ಪ್ರತಿನಿಧಿ ಥಾನೆದಾರ್ ಅವರು ವಿಷಯವನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡಿದ್ದು, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಟ್ರಂಪ್ ಸಚಿವ ಸಂಪುಟದ ಸದಸ್ಯರಿಗೆ ನೇರವಾಗಿ ಪತ್ರ ಬರೆದು, 25ನೇ ತಿದ್ದುಪಡಿ ಜಾರಿಗೆ ತಂದು ಟ್ರಂಪ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸುವಂತೆ ಆಗ್ರಹಿಸಿದ್ದಾರೆ.
ಉಪಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು, ಎ.10: ರಾಜ್ಯದ ಉಪಚುನಾವಣೆಯ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಈಗಾಗಲೆ ಸ್ಪಷ್ಟಪಡಿಸಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ನಾಯಕತ್ವ ಬದಲಾವಣೆ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಉಪ ಚುನಾವಣೆ ನಡೆದ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು. *ಔಷಧಗಳ ಕೊರತೆ: ಮಧ್ಯಪ್ರಾಚ್ಯ ಯುದ್ಧದ ಹಿನ್ನಲೆಯಲ್ಲಿ ಭಾರತಕ್ಕೆ ಆಮದಾಗುತ್ತಿದ್ದ ಕೆಲವು ಔಷಧಗಳು ಬಂದಿಲ್ಲ. ಔಷಧದ ಪೂರೈಕೆಗೆ ಸ್ವಲ್ಪಸಮಯವಕಾಶ ಕೇಳಿದ್ದಾರೆ. ಈ ಹಿಂದೆ ಕೊಟ್ಟಿರುವ ಆರ್ಡರ್ಗಳ ಡೆಲಿವರಿ ಮಾಡಲು ಆಗುತ್ತಿಲ್ಲ. ಮೆಡಿಸಿನ್ ತಯಾರಿಕೆ ಮಾಡುವವರಿಗೂ ಕಚ್ಚಾವಸ್ತುಗಳು ಬಾರದೆ ಸಮಸ್ಯೆಯಾಗಿದೆ. ಕೆಲವು ಔಷಧಗಳ ಬೆಲೆಯಲ್ಲೂ ಏರಿಕೆಯಾಗಿದೆ. ಮೆಡಿಸಿನ್ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಇದು ಹೆಚ್ಚಾಗದಂತೆ ಕೇಂದ್ರ ಸರಕಾರ ನೋಡಿಕೊಳ್ಳಬೇಕು. ಸ್ಥಳೀಯ ತಯಾರಿಕರಿಗೆ ಗ್ಯಾಸ್, ಇಂಧನ ಕೊರತೆಯಾದರೆ ಸಮಸ್ಯೆ ಯಾಗಬಹುದು. ಆಯಿಲ್, ಪೆಟ್ರೋಲಿಯಂ ಸೆಕ್ಟರ್ನ ಎಲ್ಲಾ ಕಂಪನಿಗಳಿಗೆ ಸಮಸ್ಯೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. *ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಇದೆ: ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಇದೆ ಎಂದು ಸ್ಪಷ್ಟವಾಗಿ ಹೇಳಬೇಕು. ಸಮಸ್ಯೆ ಇಲ್ಲ ಎಂದು ಸುಮ್ಮನೆ ಹೇಳಬಾರದು. ಅನೇಕ ಕಡೆ ಆಹಾರ ತಯಾರಿಕೆಯನ್ನು ಶೇ.50ಕ್ಕೆ ಇಳಿಸಲಾಗಿದೆ. ಕೋವಿಡ್ ಸಂದರ್ಭದ ಪರಿಸ್ಥಿತಿ ಉಂಟಾಗಿದೆ. ಎಲ್ಲಾ ಚೆನ್ನಾಗಿದೆ ಎನ್ನುತ್ತಾ ಜನರನ್ನು ದಾರಿ ತಪ್ಪಿಸಬಾರದು. ಇದಕ್ಕೆ ಕೇಂದ್ರ ಸರಕಾರವೇ ಹೊಣೆ ಎಂದು ಹೇಳಲಾಗದು. ಸಮಸ್ಯೆ ಇಲ್ಲ ಎಂದು ಹೇಳುವ ಬದಲು ಪರ್ಯಾಯ ಕ್ರಮ ಮತ್ತು ಸತ್ಯ ಸಂಗತಿಯನ್ನು ಜನರಿಗೆ ತಿಳಿಸಬೇಕು. ಎಲ್ಲಾ ಕಡೆ ವಾಣಿಜ್ಯ ಅನಿಲಕ್ಕೆ ತೊಂದರೆ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪಿಯುಸಿ ಫಲಿತಾಂಶ: ಮರಿಯಂ ಮಿಶಾ, ಆಯಿಶಾ ಮಿನ್ಹಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಮಂಗಳೂರಿನ ಯೆನೆಪೊಯ ಕಾಲೇಜಿನ ವಿದ್ಯಾರ್ಥಿನಿಯರಾದ ಮರಿಯಂ ಮಿಶಾ 588 (ಶೇ.98) ಮತ್ತು ಆಯಿಶಾ ಮಿನ್ಹಾ 587 (ಶೇ.97.8) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವಳಿ-ಜವಳಿಗಳಾಗಿರುವ ಇವರು ಉಳ್ಳಾಲ ಮುಕ್ಕಚೇರಿಯ ಇಬ್ರಾಹೀಂ ಖಲೀಲ್ ಜಮಾಲಿಯಾ - ರೈಹಾನ ದಂಪತಿಯ ಪುತ್ರಿಯರು.
ಜೇವರ್ಗಿ, ಯಡ್ರಾಮಿಯಲ್ಲಿ ಕಳಪೆ ಕಾಮಗಾರಿ ಆರೋಪ: ಉನ್ನತ ತನಿಖೆಗೆ ಆಗ್ರಹ
ಕಲಬುರಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಿಂದ ಕಳಪೆ ಕಾಮಗಾರಿಯಾಗಿದ್ದು, ಭ್ರಷ್ಟಾಚಾರದಿಂದ ಕೂಡಿರುವ ಕಾಮಗಾರಿಯನ್ನು ಕೂಡಲೇ ಉನ್ನತ ತನಿಖೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಆಗ್ರಹಿಸಿದ್ದಾರೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಪ್ರಥಮ ತನಿಖೆಯಲ್ಲಿ 55 ಲಕ್ಷ ಮೌಲ್ಯದ ಕಳಪೆ ಗುಣಮಟ್ಟದ ಕಾಮಗಾರಿಯಾಗಿದೆ ಎಂದು ಪ್ರಥಮ ತನಿಖೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ, ಎರಡನೇ ಹಂತದ ತನಿಖೆ ನಡೆಸಲು ತನಿಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರೆ ಕೆಲವು ಗೂಂಡಾಗಳು ಅವರಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಿಂದ ಅಸಹಕಾರ ತೋರಿದ್ದಾರೆ. ಹಾಗಾಗಿ ತನಿಖಾಧಿಕಾರಿಗಳು ಈ ತನಿಖೆಯಿಂದ ಬಿಡುಗಡೆಗೊಳಿಸಬೇಕೆಂದು ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ. ತನಿಖಾಧಿಕಾರಿಗಳಿಗೂ ನಿಷ್ಪಕ್ಷಪಾತ ತನಿಖೆ ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ. ಹಾಗಾಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಮೂಲಕ ಉನ್ನತ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ 8 ದಿನಗಳ ಒಳಗಾಗಿ ತನಿಖೆಗೆ ಕ್ರಮ ಕೈಗೊಳ್ಳದೆ ಇದ್ದರೆ ಸಚಿವರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಹಾಂತಗೌಡ ನಂದಿಹಳ್ಳಿ ಎಚ್ಚರಿಸಿದ್ದಾರೆ.
Uttar Pradesh | ಯಮುನಾ ನದಿಯಲ್ಲಿ ದೋಣಿ ಮಗುಚಿ ಬಿದ್ದು ಕನಿಷ್ಠ 10 ಮಂದಿ ಯಾತ್ರಾರ್ಥಿಗಳು ಮೃತ್ಯು
ಲಕ್ನೋ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕೇಶಿ ಘಾಟ್ನಲ್ಲಿ ಯಮುನಾ ನದಿಯಲ್ಲಿ 30ಕ್ಕೂ ಹೆಚ್ಚು ಪಂಜಾಬ್ ಮೂಲದ ಯಾತ್ರಾರ್ಥಿಗಳಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ದೋಣಿಯಲ್ಲಿದ್ದ ಇತರ 22 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಲುಧಿಯಾನ ಮೂಲದ 30ಕ್ಕೂ ಯಾತ್ರಾರ್ಥಿಗಳು ಯಮುನಾ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಲು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ತ್ವರಿತ ಸಹಾಯವನ್ನು ನೀಡುವಂತೆ ಸಿಎಂ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದೋಣಿ ದುರಂತದಲ್ಲಿ 10ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದನ್ನು ಆಗ್ರಾ ವಲಯದ ಡಿಐಜಿ ಶೈಲೇಶ್ ಪಾಂಡೆ ದೃಢಪಡಿಸಿದ್ದಾರೆ. ಹೆಚ್ಚಿನ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ
ನಂಜನಗೂಡು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ವಿಡಿಯೋ ಕೇಂದ್ರ ಸಚಿವರನ್ನು ಹಳ್ಳಿಯೊಂದರ ಬಡ ಕುಟುಂಬದ ಮನೆ ಬಾಗಿಲಿಗೆ ಕರೆತಂದಿದೆ. ತೀವ್ರ ಅನಾರೋಗ್ಯ ಮತ್ತು ಬಡತನದಿಂದ ಕಂಗೆಟ್ಟಿದ್ದ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದ ಪೂಜಾ ಎಂಬುವವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಭರವಸೆ ನೀಡಿದರು. ವಿಡಿಯೋ ನೋಡಿ ಆಗಮನ
ಕುಡಿಯುವ ನೀರು ಯೋಜನೆಗಳನ್ನು ತ್ವರಿತ ಪೂರ್ಣಗೊಳಿಸಿ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು : ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ನೀರು ಪೂರೈಕೆಗೆ ಒತ್ತು ನೀಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಬೇಸಿಗೆಯ ಸಂದರ್ಭ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಿಲ್ಲೆಯಲ್ಲಿ ಬೇಸಿಗೆಯಿಂದ ತಲೆ ದೋರುವ ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿ ಪೂರ್ಣಗೊಂಡರೆ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಗೊಳ್ಳಲಿದೆ. ಕೆಲವೆಡೆ ಅರಣ್ಯ ಭೂಮಿ ಸಮಸ್ಯೆ ಕಂಡುಬಂದಿದ್ದು, ಅರಣ್ಯ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕೆಂದು ಸಚಿವರು ತಿಳಿಸಿದರು. ದ.ಕ.ಜಿಪಂ ಸಿಇಒ ನರ್ವಾಡೆ ನಾಯಕ ಕಾರ್ಬಾರಿ ಮಾತನಾಡಿ ಬೆಳ್ತಂಗಡಿ ತಾಲೂಕಿನ ಇಳಂತಿಲ, ಕಡಬ ತಾಲೂಕಿನ ಅಲಂಕಾರು, ಮತ್ತು ಕುಟ್ರುಪ್ಪಾಡಿ, ಬಂಟ್ವಾಳ ತಾಲೂಕಿನ ಅಳಿಕೆ, ಉಳ್ಳಾಲ ತಾಲೂಕಿನ ಕೈರಂಗಳ ದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ತ್ವರಿತಗೊಳಿಸಲು ಸೂಚಿಸಲಾಗಿದ್ದು, ಮುಂದಿನ 6-7 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಮರವೂರು ಅಣೆಕಟ್ಟಿನ ಗೇಟ್ಗಳನ್ನು ಬದಲಾಯಿಸಲು 1 ಕೋ.ರೂ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರನಾಯಕ್ ಮಾತನಾಡಿ ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ 5.5 ಮೀ.ನೀರು ಲಭ್ಯವಿದೆ. ನಗರದಲ್ಲಿ ನೀರು ಸರಬರಾಜು ಉತ್ತಮ ಸ್ಥಿತಿಯಲ್ಲಿದೆ. ಎತ್ತರದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣ ಪ್ರದೇಶದ ಹಾಗೂ ನಗರ ಪಟ್ಟಣ ಪ್ರದೇಶಗಳ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು. ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. **ಜಲಸಿರಿ ಕಾಮಗಾರಿ: ಸಚಿವರ ಅಸಮಾಧಾನ ಮಂಗಳೂರಿನಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿ ಅನುಷ್ಠಾನ ಪ್ರಕ್ರಿಯೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಸ್ತುವಾರಿ ಸಚಿವರು ಪೈಪ್ಗಳನ್ನು ಅಳವಡಿಸಲು ಮುಖ್ಯ ರಸ್ತೆಗಳನ್ನು ಅಗೆದು, ದೀರ್ಘ ಕಾಲ ರಸ್ತೆ ಯನ್ನು ಯಥಾಸ್ಥಿತಿಗೆ ತಾರದೆ, ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಅಗೆದಿರುವ ರಸ್ತೆಗಳನ್ನು ಕೂಡಲೇ ಆದ್ಯತೆಯಲ್ಲಿ ಪುನಶ್ಚೇತನಗೊಳಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಯುಐಡಿಎಫ್ಸಿ ಅಧಿಕಾರಿಗಳು ರಸ್ತೆಯನ್ನು ಯಥಾಸ್ಥಿತಿಗೆ ತರಲು ಅಭಿಯಾನ ಮಾಡಿ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪಮತ್ತಿತರರು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ಫಲಿತಾಂಶ: ತಸ್ನೀಂಗೆ ವಿಜ್ಞಾನ ವಿಭಾಗದಲ್ಲಿ 592 ಅಂಕ
ಮಂಗಳೂರು, ಎ.10: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ (ಪಿಸಿಎಂಬಿ) ವಿಭಾಗದಲ್ಲಿ ಮೂಡುಬಿದಿರೆಯ ನ್ಯೂ ವೈಬ್ರಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ತಸ್ನೀಂ ಎಸ್.ಎಂ. 592 ಅಂಕ ಗಳಿಸಿ ರಾಜ್ಯದಲ್ಲಿ 8ನೇ ರ್ಯಾಂಕ್ ಪಡೆದಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿರುವ ಪ್ರಸಕ್ತ ಬಿ.ಸಿ.ರೋಡ್ ಕೈಕಂಬದಲ್ಲಿ ನೆಲೆಸಿರುವ ಮುಹಮ್ಮದ್ ಕೆ.ಪಿ.- ಜೈಬುನ್ನೀಸಾ ಸಂಪಾಜೆ ದಂಪತಿಯ ಪುತ್ರಿ ಹಾಗೂ ಸುಳ್ಯ ತಾಲೂಕಿನ ಸಂಪಾಜೆ ನಿವೃತ್ತ ಶಾಲಾ ಮುಖ್ಯಶಿಕ್ಷಕ ಕೆ. ಇಬ್ರಾಹಿಂ ಮಾಸ್ಟರ್ರ ಮೊಮ್ಮಗಳಾಗಿರುವ ಈಕೆ ಎಸೆಸ್ಸೆಲ್ಸಿ ಪರೀಕ್ಷೆಯಲ್ಲೂ 619 ಅಂಕ ಗಳಿಸಿ ಸಾಧನೆ ಮಾಡಿದ್ದರು.
Adani Group: ಅದಾನಿ ನಾಯಕತ್ವದ ಮೇಲೆ ಜೈಪ್ರಕಾಶ್ ಗೌರ್ ಭರವಸೆ: ₹14,535 ಕೋಟಿಯ ಬೃಹತ್ ಡೀಲ್ಗೆ ಗ್ರೀನ್ ಸಿಗ್ನಲ್.
Adani Group: ದಿವಾಳಿಯಾಗಿರುವ ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ನ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಶಸ್ವಿ ಬಿಡ್ದಾರರಾಗಿ ಅದಾನಿ ಗ್ರೂಪ್ ಅನ್ನು ಆಯ್ಕೆ ಮಾಡಿದ ಸಾಲದಾತರ ನಿರ್ಧಾರಕ್ಕೆ ಜೈಪ್ರಕಾಶ್ ಅಸೋಸಿಯೇಟ್ಸ್ ಸಂಸ್ಥಾಪಕ ಜೈಪ್ರಕಾಶ್ ಗೌರ್ ಅವರು ಶುಕ್ರವಾರ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವು ಕಂಪನಿಯ ಪ್ರಸ್ತುತ ದಿವಾಳಿ ಪರಿಹಾರ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಜೈಪ್ರಕಾಶ್ ಗೌರ್ ಅವರು ವಿಸ್ತೃತ
ಸುಲ್ತಾನ್ ಬತ್ತೇರಿ ನದಿ ಒತ್ತುವರಿ ಕೂಡಲೇ ತೆರವುಗೊಳಿಸಿ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು, ಎ.10: ನಗರದ ಸುಲ್ತಾನ್ ಬತ್ತೇರಿ ಪರಿಸರದಲ್ಲಿ ನದಿ ತೀರಕ್ಕೆ ಕಟ್ಟಡ ತ್ಯಾಜ್ಯಗಳನ್ನು ಹಾಕಿ ನದಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ನಂದಿನಿ, ಫಲ್ಗುಣಿ ಮತ್ತು ಶಾಂಭವಿ ಕಲುಷಿತಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಲ್ತಾನ್ ಬತ್ತೇರಿಯಲ್ಲಿ ನದಿ ತೀರಕ್ಕೆ ಕಟ್ಟಡಗಳ ತ್ಯಾಜ್ಯಗಳನ್ನು ತಂದು ಸುರಿದು ಅಕ್ರಮವಾಗಿ ಒತ್ತುವರಿ ಮಾಡುತ್ತಿ ರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ನಿಟ್ಟಿನಲ್ಲಿ ತಕ್ಷಣವೇ ಕ್ರಮಕೈಗೊಂಡು ನದಿಯ ಮೂಲ ಜಾಗವನ್ನು ನದಿಗೆ ಸೇರುವಂತೆ ಮಾಡಿ, ನದಿ ವ್ಯಾಪ್ತಿಯನ್ನು ಮೂಲ ಸ್ವರೂಪಕ್ಕೆ ತರಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಬಗ್ಗೆ ಮಾಹಿತಿ ನೀಡಿದ ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್, ಕಟ್ಟಡ ತ್ಯಾಜ್ಯ ಸುರಿದು ನದಿ ತೀರ ಅಕ್ರಮಿಸಿದವರ ವಿರುದ್ಧ ಈಗಾಗಲೇ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಸಂಬಂಧಿಸಿದವರಿಗೆ ವರದಿ ನೀಡಲಾಗಿದೆ ಎಂದು ಪರಿಸರ ಮಂಡಳಿ ಹಾಗೂ ಸಿ.ಆರ್.ಝಡ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸುರತ್ಕಲ್ ಮುಕ್ಕ ನಂದಿನಿ ನದಿಯಲ್ಲಿ ಈಗಾಗಲೇ ಮಾಲಿನ್ಯ ನಿಯಂತ್ರಿಸಲಾಗಿದೆ. ಮಹಾನಗರಪಾಲಿಕೆ ತ್ಯಾಜ್ಯ ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಲಾಗಿದೆ. ಖಾಸಗಿ ಸಂಸ್ಥೆಗಳಿಂದ ಬರುವ ಕಲುಷಿತ ನೀರು ಕಡಿಮೆಯಗಿದೆ ಎಂದು ಮಾಲಿನ್ಯ ಮಂಡಳಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೂಳೂರು ನದಿಗೆ ಸೇರಿ ಮಾಲಿನ್ಯವಾಗುತ್ತಿರುವ ಸಾರ್ವಜನಿ ಕರ ದೂರಿನ ಕುರಿತು ಸಚಿವರು ಮಾಹಿತಿ ಕೇಳಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆಗೆಫ ಶುದ್ಧೀಕರಣ ಘಟಕ ನಿರ್ಮಿಸಲು 39 ಕೋ. ರೂ. ವೆಚ್ಚದ ಟೆಂಡರ್ ಆಗಿದೆ. ಇದಕ್ಕೆ ಜಮೀನು ಕೂಡ ಕಾದಿರಿಸಲಾ ಗಿದೆ ಎಂದು ಕೆ.ಐ.ಎ.ಡಿ.ಬಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿರುವ ಅಂಗರಗುಂಡಿ ಮತ್ತು ಕುಡುಂಬೂರು ಜನವಸತಿ ಪ್ರದೇಶ ಗಳಲ್ಲಿ ಒಳಚರಂಡಿ (ಯುಜಿಡಿ) ಸೌಲಭ್ಯ ಒದಗಿಸಿ, ಅಲ್ಲಿನ ತ್ಯಾಜ್ಯವನ್ನು ಈಗಾಗಲೇ ತೋಕೂರು ಬಗ್ಗುಂಡಿ ಸಮೀಪ ನಿರ್ಮಿಸಿರುವ ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ಸಭೆಗೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು.ಕೆ, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು. ಸುಲ್ತಾನ್ ಬತ್ತೇರಿ ಸಮೀಪದ ಬೋಳೂರು ಪಾರ್ಕ್ ಬಳಿ ಫಲ್ಗುಣಿ ನದಿಯ ತೀರದಲ್ಲಿ ಕಟ್ಟಡ ತ್ಯಾಜ್ಯ ಸುರಿದು ಒತ್ತುವರಿ ಮಾಡಿರುವ ಕುರಿತಂತೆ ಎ. 8ರಂದು ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ ಬುಧವಾರವೇ ಸೂಚನೆ ನೀಡಿದ್ದರು. ಈ ನಡುವೆ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪತ್ರಿಕೆಗಳ ವರದಿಯನ್ನು ಉಲ್ಲೇಖಿಸಿ ಉಸ್ತುವಾರಿ ಸಚಿವರು ಈ ವಿಷಯವನ್ನು ಪ್ರಸ್ತಾವಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಸುಲ್ತಾನ್ ಬತ್ತೇರಿಯ ಫಲ್ಗುಣಿ ನದಿ ಬಳಿಯ ಮೊಗವೀರ ಮಹಾಸಭಾದ ಕಟ್ಟಡ ಬಳಿ ಲಾರಿಯಲ್ಲಿ ಕಟ್ಟಡ ತ್ಯಾಜ್ಯ ಹಾಗೂ ಮಣ್ಣು ತುಂಬಿಸಿ ಸುಮಾರು 15ರಿಂದ 20 ಸೆಂಟ್ಸ್ ಸರಕಾರಿ ಜಮೀನನ್ನು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಸ್ಥಳೀಯ ಮೊಗವೀರ ಮಹಾಸಭಾದ ಅಧ್ಯಕ್ಷರು ಹಾಗೂ ಲಾರಿ ಮಾಲಕರ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪ್ರಿವೆನ್ಸನ್ ಆಫ್ ಡಿಸ್ಟ್ರಕ್ಷನ್ ಮತ್ತು ಲಾಸ್ ಆಫ್ ಪ್ರಾಪರ್ಟಿ ಕಾಯೆಯಡಿ ಪ್ರಕರಣ ದಾಖಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾಧಿಕಾರಿಯವರು ಎ. 10ರಂದು ನೀಡಿದ ದೂರಿನ ಅನ್ವಯ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫಲ್ಗುಣಿ ನದಿಗೆ ಕಟ್ಟಡ ತ್ಯಾಜ್ಯ ಮತ್ತು ಮಣ್ಣು ಸುರಿಯಲು ಬಳಸಿದ ಲಾರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
ಸಿರಿವಾರ: ಗುತ್ತಿಗೆ ಪದ್ಧತಿ ರದ್ದು, ಕನಿಷ್ಠ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಸ್ತೆ ತಡೆ
ಸಿರಿವಾರ: ರಾಜ್ಯ ಹಾಗೂ ದೇಶದಾದ್ಯಂತ ಕಾರ್ಮಿಕರ ಬದುಕು ದಿನೇದಿನೇ ಸಂಕಷ್ಟಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ವೇತನವನ್ನು ತಕ್ಷಣ ಪರಿಷ್ಕರಿಸಿ ತಿಂಗಳಿಗೆ ಕನಿಷ್ಠ ₹42,000 ನಿಗದಿ ಮಾಡಬೇಕು, ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ಸಿರಿವಾರ ವಿಭಾಗದ ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ಅವರು, ರಾಜ್ಯ ಸರ್ಕಾರವು ಕನಿಷ್ಠ ವೇತನ ಪರಿಷ್ಕರಣೆಯಲ್ಲಿ ವಿಫಲವಾಗಿದೆ ಸಂಘಟನೆಗಳು ಆರೋಪಿಸಿವೆ. ಕಾನೂನು ಪ್ರಕಾರ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕಾದರೂ ಕೊನೆಯದಾಗಿ 2017ರಲ್ಲಿ ಮಾತ್ರ ಪರಿಷ್ಕರಣೆ ನಡೆದಿದ್ದು, ಬಳಿಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. 2025ರಲ್ಲಿ ಸುಮಾರು ₹25,000ಕ್ಕೆ ಹೆಚ್ಚಿಸುವ ಪ್ರಾಥಮಿಕ ಅಧಿಸೂಚನೆ ಹೊರಬಂದಿದ್ದರೂ ಅದನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಅವರು ಹೇಳಿದರು. ಪ್ರಸ್ತುತ ವೇತನದಲ್ಲಿ ಆಹಾರ, ಬಟ್ಟೆ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಅಸಾಧ್ಯವಾಗಿದೆ. ಒಬ್ಬ ಕಾರ್ಮಿಕನು ಗೌರವಯುತ ಜೀವನ ನಡೆಸಲು ಕನಿಷ್ಠ ₹42,000 ವೇತನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸುಪ್ರೀಂ ಕೋರ್ಟ್ನ ಪ್ರಕಾರ ಕನಿಷ್ಠ ವೇತನ ನೀಡದಿರುವುದು ಬಲವಂತದ ಕೆಲಸಕ್ಕೆ ಸಮಾನವಾಗುತ್ತದೆ. ಆದಾಗ್ಯೂ ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಗ್ರಂಥಾಲಯಗಳು ಸೇರಿದಂತೆ ಅನೇಕ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ಕಾನೂನುಬದ್ಧ ವೇತನ ನೀಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಈ ಸಂದರ್ಭದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕೆ ನಾಗಲಿಂಗ ಸ್ವಾಮಿ, ವಿಭಾಗದ ಅಧ್ಯಕ್ಷ ರಾಜಾಸಾಬ್, ಉಪ ವಿಭಾಗದ ಅಧ್ಯಕ್ಷರಾದ ವೆಂಕಟೇಶ್ ಕೋರಿ, ಈಶಪ್ಪ ಗೌಡ, ಚಂದು ಸಾಬ್, ಗೋಪಾಲ ರಾವ್, ನಾಗರಾಜ್ ಮಡಿವಾಳ, ಶಿವಪುತ್ರಪ್ಪ, ಹನುಮಂತ ನಾಯಕ, ನಾಗಲಿಕರ್ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಂತ್ರಜ್ಞಾನದ ಜತೆ ರೋಗಿ ಕೇಂದ್ರಿತ ಕಾಳಜಿ ಮರೆಯದಿರಿ: ಫಿಸಿಯೋಕಾನ್ ಸಮ್ಮೇಳನದಲ್ಲಿ ಸಚಿವ ಡಾ. ಶರಣ ಪ್ರಕಾಶ್ ಕರೆ
ಮಂಗಳೂರು, ಎ.10: ಆಧುನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ (ಎಐ), ದತ್ತಾಂಶ ವಿಶ್ಲೇಷಣೆ ಮತ್ತು ನಿಖರ ವೈದ್ಯಕೀಯ ತಂತ್ರಜ್ಞಾನಗಳೊಂದಿಗೆ ವೇಗವಾಗಿ ಬದಲಾಗುತ್ತಿದೆ. ಆದರೆ, ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಾಗ ವೈದ್ಯರು ಸಹಾನುಭೂತಿ, ನೈತಿಕ ಮೌಲ್ಯಗಳು ಮತ್ತು ರೋಗಿ ಕೇಂದ್ರಿತ ಕಾಳಜಿಯನ್ನು ಮರೆಯಬಾರದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಆರ್. ಪಾಟೀಲ್ ಹೇಳಿದ್ದಾರೆ. ಶುಕ್ರವಾರ ನಗರದ ಸೌತ್ ಕೆನರಾ ಫಿಸಿಯೋಥೆರಫಿ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ ಮಂಗಳೂರು ಫಿಸಿಯೋಕಾನ್ 2026 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವೀಯತೆಯಿಲ್ಲದ ವಿಜ್ಞಾನ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಸಹಾನುಭೂತಿ ಇಲ್ಲದ ಆರೋಗ್ಯ ಸೇವೆಯು ತನ್ನ ನೈಜ ಉದ್ದೇಶವನ್ನು ಕಳೆದುಕೊಳ್ಳುತ್ತದೆ ಎಂದವರು ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಫಿಸಿಯೋಥೆರಪಿ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ವಿಶ್ವದ ಹಲವು ದೇಶಗಳಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಫಿಸಿಯೋಥೆರಪಿಸ್ಟ್ಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಲಿದೆ. ಅಲ್ಲದೆ ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳದಿಂದಲೂ ಫಿಸಿಯೋಥೆರಪಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎಂದರು. ಅಲೈಡ್ ಮತ್ತು ಹೆಲ್ತ್ಕೇರ್ ಪ್ರೊಫೆಷನ್ನ ರಾಷ್ಟ್ರೀಯ ಆಯೋಗದ (ಎನ್ಸಿಎಎಚ್ಪಿ) ಅಧ್ಯಕ್ಷೆ ಡಾ. ಯಜ್ಞ ಉನ್ಮೇಶ್ ಶುಕ್ಲಾ ಮಾತನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ., ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಸಹಕುಲಪತಿ ಡಾ.ದಿಲೀಪ್ ನಾಯಕ್, ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಫಿಸ್ಟ್ನ ಅಂತಾರಾಷ್ಟ್ರೀಯ ವ್ಯವಹಾರಗಳ ಚೇರ್ ಮೆನ್ ಡಾ. ಅಲಿ ಇರಾನಿ, ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ನ ಅಧ್ಯಕ್ಷ ಡಾ. ಸಂಜೀವ್ ಕೆ. ಝಾ, ದಿ ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೇಥೆರಪಿಸ್ಟ್ ರಾಷ್ಟ್ರೀಯ ಮಹಿಳಾ ವಿಭಾಗದ ಮುಖ್ಯಸ್ಥೆ ಡಾ. ರುಚಿ ವರ್ಸ್ನೇಯಿ, ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.
ಮನಪಾದಿಂದ 149.68 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ: ರವಿಚಂದ್ರ ನಾಯ್ಕ್
ಮಂಗಳೂರು, ಎ.10: ಮಂಗಳೂರು ಮಹಾನಗರ ಪಾಲಿಕೆಯು 2025-26ರ ಸಾಲಿನಲ್ಲಿ 149.68 ಕೋಟಿ ರೂ. ದಾಖಲೆಯ ಆಸ್ತಿ ತೆರಿಗೆ ಸಂಗ್ರಹಣೆ ಮಾಡಿದೆ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್ ಹೇಳಿದರು. ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2024-25ರಲ್ಲಿ 137 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿತ್ತು. 2023-24ರಲ್ಲಿ 117 ಕೋ.ರೂ. ಆಸಕ್ತಿ ತೆರಿಗೆ ಸಂಗ್ರಹಿಸಿದ್ದೆವು. ಆಸ್ತಿ ತೆರಿಗೆ ಸಂಗ್ರಹ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಮುಂದಿನ ವರ್ಷ ಇನ್ನಷ್ಟು ಹೆಚ್ಚಳ ಮಾಡುವ ಮೂಲಕ ಪಾಲಿಕೆ ವ್ಯಾಪ್ತಿ ಅಭಿವೃದ್ಧಿಗೊಳಿಸುವ ಸಂಕಲ್ಪಕೈಗೊಳ್ಳುತ್ತೇವೆ ಎಂದರು. ಪಾಲಿಕೆಯ 60 ವಾರ್ಡ್ಗಳಲ್ಲಿ 1,75,724 ವಸತಿ ಆಸ್ತಿ ಹೊಂದಿದ್ದು, 44,074 ವಾಣಿಜ್ಯ ಆಸ್ತಿ, 1,175 ಕೈಗಾರಿಕಾ ಆಸ್ತಿ, 1283 ವಸತಿ ರಹಿತ-ವಾಣಿಜ್ಯ ರಹಿತ ಆಸ್ತಿ ಸೇರಿ ಒಟ್ಟು 2,22,256 ಆಸ್ತಿಗಳನ್ನು ಹೊಂದಿದ್ದೇವೆ. ಈ ಅಸ್ತಿಗಳ ಮೂಲಕ ತೆರಿಗೆ ಪಾವತಿ ಮಾಡಿಕೊಂಡು 2026ರ ಮಾರ್ಚ್ 31ರವರೆಗೆ 149.68 ಕೋ.ರೂ. ತೆರಿಗೆ ಸಂಗ್ರಹ ಮಾಡಲಾಗಿದೆ ಎಂದರು. ವ್ಯವಸ್ಥಿತ ಅಸ್ತಿ ತೆರಿಗೆ ಸಂಗ್ರಹ ಮಾಡುವ ಉದ್ದೇಶದಿಂದ ಪಾಲಿಕೆಯ ಅತ್ತಾವರ, ಪದವು, ಹಂಪನಕಟ್ಟೆ ವಾರ್ಡ್ ಗಳಲ್ಲಿ ಪೈಲಟ್ ಆಗಿ ಸಮೀಕ್ಷೆ ಕಾರ್ಯ ನಡೆಸಲಾಗಿದೆ. ಅದರಂತೆ ಕಂದಾಯ ಅಧಿಕಾರಿಗಳು, ಕಂದಾಯ ಸಹಾಯಕರು, ಬಿಲ್ ಕಲೆಕಲೆಕ್ಟರ್ಸ್, ಇನ್ನಿತರ ಸಿಬಂದಿ ಈ ಮೂರು ವಾರ್ಡ್ಗಳ ಶೇ. 50ರಷ್ಟು ಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಇದರಿಂದಾಗಿ ಈ ವಾರ್ಡ್ಗಳಲ್ಲಿ 55.33 ಲಕ್ಷ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ಆಗಿದೆ. ಶೇ. 100ರಷ್ಟು ಸರ್ವೆ ಆದಲ್ಲಿ 3 ಕೋಟಿ ರು. ವರೆಗೆ ಹೆಚ್ಚುವರಿ ತೆರಿಗೆ ಸಂಗ್ರಹವಾಗಬಹುದು. ಪೈಲಟ್ ಯೋಜನೆಯನ್ನು ಮುಂದೆ ಪಾಲಿಕೆಯ ಎಲ್ಲಾ ವಾರ್ಡ್ಗಳಿಗೂ ವಿಸ್ತರಿಸುವ ಉದ್ದೇಶದಿಂದ ಬಜೆಟ್ನಲ್ಲಿ ಅನುದಾನ ಕಾಯ್ದಿರಿಸಲಾಗಿದೆ ಎಂದು ಹೇಳಿದರು. ಎಪ್ರಿಲ್ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಿಯಾಯಿತಿ: ಸಾರ್ವಜನಿಕರು ಮುಂದಿನ ಸಾಲಿನ ಆಸ್ತಿ ತೆರಿಗೆಯನ್ನು ಎಪ್ರಿಲ್ ಅಂತ್ಯದೊಳಗೆ ಪಾವತಿಸಿದರೆ ಶೇ.5 ರಿಯಾಯಿತಿ ನೀಡಲಾಗುವುದು. ಪ್ರತಿ ವರ್ಷ ಆಸ್ತಿ ತೆರಿಗೆಯನ್ನು ಮುಂಗಡವಾಗಿ ಪಾವತಿಸಿದರೆ ಶೇ.5ರ ರಿಯಾಯ್ತಿ ನೀಡಲಾಗುತ್ತಿದೆ. ಪಾಲಿಕೆವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ರವಿಚಂದ್ರ ನಾಯ್ಕ್ ಹೇಳಿದರು. ಗೋಷ್ಟಿಯಲ್ಲಿ ಪಾಲಿಕೆಯ ಉಪ ಆಯುಕ್ತೆ (ಕಂದಾಯ) ಅಕ್ಷತಾ ಉಪಸ್ಥಿತರಿದ್ದರು. ನೀರಿನ ಅಭಾವ ಇಲ್ಲ ನಗರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಅಭಾವವಿಲ್ಲ. ತುಂಬೆಯಲ್ಲಿ ಶೇಖರಣೆಗೊಂಡ ನೀರಿನಿಂದ ನಗರಕ್ಕೆ 30 ದಿನಗಳಿಗೆ ನೀರುಣಿಸಬಹುದು. ಮತ್ತೆಯೂ ಅಭಾವ ಬಂದರೆ ಹರೇಕಳ ಡ್ಯಾಂನಿಂದ ನೀರನ್ನು ಪಂಪಿಂಗ್ ಮೂಲಕ ಮೇಲೆತ್ತುವ ಕಾರ್ಯ ನಡೆಯಲಿದೆ. ಇದರಿಂದ 110 ದಿನಗಳವರೆಗೆ ಈಗಿರುವ ನೀರನ್ನು ಪಾಲಿಕೆಯ ಜನರಿಗೆ ಪೂರೈಕೆ ಮಾಡಲು ಸಾಧ್ಯವಾಗಲಿದೆ ಎಂದು ಆಯುಕ್ತರಾ ರವಿಚಂದ್ರ ನಾಯ್ಕ್ ತಿಳಿಸಿದರು. ಲಾಲ್ಬಾಗ್ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣವನ್ನು 24 ವರ್ಷದ ಬಳಿಕ ಹೊಸದಾಗಿ ಏಲಂ ನಡೆಸಲಾಗಿದೆ. ಈ ಹಿಂದೆ ಒಂದು ವರ್ಷಕ್ಕೆ 17,93,256 ರೂ. ಅದಾಯ ಬರುತ್ತಿತ್ತು. ಸದ್ಯ ಹೊಸ ಏಲಂನಿಂದಾಗಿದ್ದು, 71.43 ಲಕ್ಷ ರೂ. ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗಿದೆ. ಪಾಲಿಕೆ ಆದಾಯ ವನ್ನು ವೃದ್ಧಿಸುವ ನಿಟ್ಟಿನಲ್ಲಿ ಪಾಲಿಕೆ ಅಧೀನದದ ಎಲ್ಲಾ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣಗಳಿಗೆ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಾಹೀರಾತು ಹೋರ್ಡಿಂಗ್ಗಳ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗಿದ್ದು, ಕ್ಯುಆರ್ ಕೋಡ್ ಮೂಲಕ ಫಲಕಗಳ ಗುರುತಿಸುವಿಕೆ ಖಚಿತ ಪಡಿಸುವ ತಂತ್ರಜ್ಞಾನ ವನ್ನು ಬಳಸಿಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್ ಹೇಳಿದರು. ಆರ್ಥಿಕ ವರ್ಷ ಗುರಿ (ಕೋಟಿ) ತೆರಿಗೆ ಸಂಗ್ರಹ (ಕೋಟಿ) 2022-23 88.45 94.59 2023-24 99.84 117.03 2024-25 108.00 137.03 2025-26 112.00 149.68
ಪಿಎಂ ಸೂರ್ಯಘರ್ ಯೋಜನೆ: ಉಡುಪಿ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ
ಸಂಸದ ಕೋಟ ಶ್ರೀನಿವಾಸ ಪೂಜಾರಿ
ಗಂಗೊಳ್ಳಿ: ತೌಹೀದ್ ಬಾಲಕಿಯರ ಪಿಯು ಕಾಲೇಜಿಗೆ ಶೇ.100 ಫಲಿತಾಂಶ
ಗಂಗೊಳ್ಳಿ, ಎ.10: ಗಂಗೊಳ್ಳಿಯ ತೌಹೀದ್ ಬಾಲಕಿಯರ ಪದವಿ ಪೂರ್ವ ಕಾಲೇಜು 2025-26 ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಶೇ.100 ಉತ್ತೀರ್ಣತೆಯನ್ನು ದಾಖಲಿಸಿದೆ. ಕಾಲೇಜಿನಿಂದ ಒಟ್ಟು 25 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಯಶಸ್ವಿಯಾಗಿ ಉತ್ತೀರ್ಣರಾಗಿ ದ್ದಾರೆ. ಇದು ಸಂಸ್ಥೆಯ ಗುಣಮಟ್ಟ ದ ಶಿಕ್ಷಣ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇವರಲ್ಲಿ 12 ಮಂದಿ ವಿದ್ಯಾರ್ಥಿನಿ ಯರು ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದರೆ, 12 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಓರ್ವ ವಿದ್ಯಾರ್ಥಿನಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವೈಯಕ್ತಿಕ ಸಾಧನೆಗಳಲ್ಲಿಯೂ ಕಾಲೇಜು ಗಮನಾರ್ಹ ಫಲಿತಾಂಶ ದಾಖಲಿಸಿದೆ. ಮೊಹಮ್ಮದ್ ಗಜಾಲಿ ನಾಖುದಾ ಮತ್ತು ರೂಹಿ ನಾಝ್ ಅವರ ಪುತ್ರಿ ಆಯಿಷಾ ಝೂಬಿಯಾ ನಾಖುದಾ 590 ಅಂಕಗಳನ್ನು (ಶೇ.98.33) ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಂತರ ನಯೀಮ್ ಮೌಲಾನಾ ಮತ್ತು ಶಂಶಾದ್ ಇವರ ಪುತ್ರಿ ಸಮಾರಾ ಮೌಲಾನಾ 586 ಅಂಕಗಳು (ಶೇ.97.6) ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನವನ್ನು ಅಬ್ದುಲ್ ಬಾಕಿ ಮತ್ತು ಶಾಹಿಸ್ತಾ ಅವರ ಪುತ್ರಿ ಮಾರಿಯಾ ನಾಖುದಾ 579 ಅಂಕ (ಶೇ.96.5) ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ನಿರ್ವಹಣಾ ಮಂಡಳಿ, ಪ್ರಾಂಶುಪಾಲ ರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ವಿದ್ಯಾರ್ಥಿನಿಯರ ಪರಿಶ್ರಮ ಮತ್ತು ಸಮರ್ಪಣೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಟಪಾಡಿ: ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತ
ಉಡುಪಿ, ಎ.10: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಟಪಾಡಿ ಜಂಕ್ಷನ್ ಬಳಿ ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಹೆದ್ದಾರಿಯ ಅಂಡರ್ಪಾಸ್ ಕಾಮಗಾರಿಯಲ್ಲಿ ರಸ್ತೆಯ ಒಂದು ಭಾಗವನ್ನು ಇಂದು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಕಟಪಾಡಿ ಜಂಕ್ಷನ್ ಬಳಿ ಈಗಾಗಲೇ ಅಂಡರ್ಪಾಸ್ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶುಕ್ರವಾರ ಬೆಳಗ್ಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಜೊತೆ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದರು. ಇದೀಗ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗದ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಇಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಾಹನ ಸಂಚಾರಕ್ಕೆ ಈ ಭಾಗವನ್ನು ಮುಕ್ತಗೊಳಿಸಿದರು. ಇನ್ನೊಂದು ಭಾಗದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಅತಿ ಶೀಘ್ರದಲ್ಲೇ ಅದನ್ನು ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಜಿಪಂನ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ಕಟಪಾಡಿ ಗ್ರಾಪಂ ಮಾಜಿ ಸದಸ್ಯರಾದ ಶ್ರೀನಿವಾಸ್ ಕಿಣಿ, ಕವಿತಾ ಸುವರ್ಣ, ಕುರ್ಕಾಲು ಗ್ರಾಪಂನ ಮಾಜಿ ಸದಸ್ಯರಾದ ಸುದರ್ಶನ್ ಭಟ್, ಎಂ.ಜಿ ನಾಗೇಂದ್ರ, ಏಣಗುಡ್ಡೆ ಶಕ್ತಿ ಕೇಂದ್ರದ ಸಂತೋಷ್, ಕೋಟೆ ಶಕ್ತಿ ಕೇಂದ್ರದ ಹರ್ಷಿತ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಮಾ ಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷ ವೀಣಾ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
Bengaluru | ‘ಝಾಂಬಿ’ ಡ್ರಗ್ಸ್; ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶದ ವಿಡಿಯೋ ಹಂಚಿಕೊಂಡಿದ್ದ ಆರೋಪಿಯ ಬಂಧನ
ಬೆಂಗಳೂರು : ಸಾಮಾಜಿಕ ಜಾಲತಾಣದ ಮೂಲಕ ತಪ್ಪು ಸಂದೇಶದ ವಿಡಿಯೋ ಹಂಚಿಕೊಂಡಿದ್ದ ಆರೋಪಿಯೊಬ್ಬನನ್ನು ಇಲ್ಲಿನ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೇಮಂತ್(29) ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಾಗಲೂರು ರಸ್ತೆಯಲ್ಲಿ ಎಪ್ರಿಲ್ 7ರಂದು ವ್ಯಕ್ತಿಯೊಬ್ಬ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ವಿಚಿತ್ರವಾಗಿ ಕೈ ಕಾಲುಗಳನ್ನು ಆಡಿಸುತ್ತಾ ನಿಂತಿದ್ದ. ಆತ ಎಲ್ಲಿಗೆ ಹೋಗುತ್ತಿದ್ದಾನೆ ಅಥವಾ ಏನು ಮಾಡುತ್ತಿದ್ದಾನೆ ಎಂಬ ಅರಿವಿಲ್ಲದಂತೆ ವರ್ತಿಸುತ್ತಿದ್ದುದನ್ನು ಕಂಡ ಆರೋಪಿ, ವಿದೇಶಗಳಲ್ಲಿ ಕಂಡುಬರುವ ‘ಝಾಂಬಿ’ ಡ್ರಗ್ಸ್ ಅಥವಾ ‘ಝೈಲಾಜಿನ್’ ನಶೆಯಲ್ಲಿ ಈ ವ್ಯಕ್ತಿ ವಿಚಿತ್ರವಾಗಿ ವರ್ತನೆ ಮಾಡುತ್ತಿರಬಹುದು ಎಂದು ಶಂಕಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ. ಈ ಸಂಬಂಧ ಬಾಗಲೂರು ಠಾಣೆಯ ಪೊಲೀಸರು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಸಂಸ್ಥೆ ಸಮೀಪದಲ್ಲಿ ಆ ವ್ಯಕ್ತಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯಕೀಯ ವರದಿಗಳ ಪ್ರಕಾರ, ಆ ವ್ಯಕ್ತಿಯು ಯಾವುದೇ ಮಾದಕವಸ್ತು ಅಥವಾ ಮನೋಪ್ರೇರಕ ಪದಾರ್ಥಗಳನ್ನು ಸೇವಿಸಿರುವುದಿಲ್ಲ ಎಂದು ದೃಢಪಟ್ಟಿರುತ್ತದೆ. ವಿಚಾರಣೆ ವೇಳೆಯಲ್ಲಿ ಆ ವ್ಯಕ್ತಿಗೆ ಸಂಧಿವಾತ (ಆರ್ಥೈಟಿಸ್) ಇರುವುದಾಗಿ ತಿಳಿದುಬಂದಿದ್ದು, ವೈದ್ಯರು ನೀಡಿದ ನೋವು ನಿವಾರಕ ಔಷಧಗಳೊಂದಿಗೆ ಮದ್ಯ ಸೇವಿಸಿದ್ದರಿಂದ ಒಂದೇ ಕಡೆ ನಿಂತಿರುವ ಸ್ಥಿತಿಯಲ್ಲಿರುವಂತೆ ವಿಡಿಯೋದಲ್ಲಿ ಕಂಡುಬಂದಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಈ ಬಗ್ಗೆ ತಪ್ಪು ಮಾಹಿತಿ ನೀಡುವ ವಿಡಿಯೋ ಪ್ರಕಟಿಸಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದು, ‘ತಾನು ಮಾಡಿದ್ದು ತಪ್ಪು’ ಎಂದು ಒಪ್ಪಿಕೊಂಡಿರುವ ಆತ, ಈಗ ಕ್ಷಮೆ ಯಾಚಿಸಿ ಮತ್ತೊಂಡು ವಿಡಿಯೋ ಮಾಡಿದ್ದಾನೆ. ವಿದೇಶಗಳಲ್ಲಿ ‘ಝಾಂಬಿ’ ಅಥವಾ ‘ಝೈಲಾಜಿನ್’ನಂತಹ ಡ್ರಗ್ಸ್ ಇದೆ ಎಂಬ ಕಾರಣಕ್ಕೆ ಆ ವ್ಯಕ್ತಿ ಇಲ್ಲೂ ಅದೇ ರೀತಿ ಇರಬಹುದು ಎಂದು ಊಹಿಸಿ ಆರೋಪಿ ವಿಡಿಯೋ ಮಾಡಿದ್ದಾನೆ. ಯಾರೇ ಆಗಲಿ ಆಧಾರರಹಿತ ಮಾಹಿತಿ ಅಥವಾ ವಿಡಿಯೋಗಳನ್ನು ಶೇರ್ ಮಾಡಬಾರದು. ಈ ಸುಳ್ಳು ವಿಡಿಯೋವನ್ನು ಯಾರೆಲ್ಲಾ ಶೇರ್ ಮಾಡಿದ್ದಾರೋ, ಅವರೆಲ್ಲರಿಗೂ ನೋಟಿಸ್ ನೀಡಲಿದ್ದೇವೆ. ಸಾರ್ವಜನಿಕರು ಇಂತಹ ಯಾವುದೇ ದೃಢೀಕರಿಸದ ವಿಡಿಯೋಗಳನ್ನು ನಂಬಬಾರದು ಮತ್ತು ಶೇರ್ ಮಾಡಬಾರದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
Viral Video: ಬೈಕ್ ಮೇಲೆ ಕುಳಿತಿದ್ದ ಮಹಿಳೆಯ ಖಾಸಗಿ ಭಾಗ ಮುಟ್ಟಿ ಲೈಂಗಿಕ ಕಿರುಕುಳ: ಪುಂಡರ ವಿಡಿಯೋ ವೈರಲ್
ಜನನಿಬಿಡ ರಸ್ತೆಯಲ್ಲಿ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಬೈಕ್ ಸವಾರನೊಬ್ಬ ಬಹಿರಂಗವಾಗಿಯೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಇಡೀ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿರುವ ಈ ಘಟನೆಗೆ ಕಾನೂನು ಸುವ್ಯವಸ್ಥೆಯನ್ನು ಅಣಕಿಸುವಂತಿದೆ ಎಂಬ ಖಂಡನೆ ವ್ಯಕ್ತವಾಗುತ್ತಿದೆ. ನಡುರಸ್ತೆಯಲ್ಲೇ ಕೃತ್ಯ ವೈರಲ್ ವಿಡಿಯೋದಲ್ಲಿ ಕಂಡುಬರುವಂತೆ, ಮಹಿಳೆಯೊಬ್ಬರು ಬೈಕ್ನಲ್ಲಿ
Raichur | ಶರಣಬಸವ ಕೊಲೆ ಪ್ರಕರಣ: 10 ಮಂದಿಗೆ ಜೀವಾವಧಿ ಶಿಕ್ಷೆ
ಲಿಂಗಸುಗೂರು: ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ 2021 ರಲ್ಲಿ ನಡೆದ ಶರಣಬಸವ ಎಂಬವರ ಕೊಲೆ ಪ್ರಕರಣದಲ್ಲಿ 10 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಶುಕ್ರವಾರ ವಾದವಿವಾದ ಆಲಿಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು, ಪೀಠಾಸಿನ ಲಿಂಗಸುಗೂರು ನ್ಯಾಯಾಲಯದ ನ್ಯಾಯಾದೀಶರಾದ ಬಿ.ಬಿ. ಜಕಾತಿಯವರು ಆರೋಪಿಗಳಾದ ಜಗದೀಶ, ಯಮನೂರ, ಮಹಾಂಕಾಳಪ್ಪ, ಬಸವರಾಜ, ಹನುಮಂತಿ , ದುರುಗಪ್ಪ, ಶರಣಬಸವ, ಕೆಂಚವ್ಟ, ಯಲ್ಲವ್ವ, ನಿಂಗಪ್ಪಗೆ ಜೀವಾವಧಿ ಶಿಕ್ಷೆ ಹಾಗೂ 19, 500 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಂಜುನಾಥ ಬೇರ್ಗಿ ವಾದ ಮಂಡಿಸಿದರು. ಸಿಪಿಐಗಳಾದ ಮಹಾಂತೇಶ ಸಜ್ಜನ್ ಹಾಗೂ ರಮೇಶ ಕುಲಕರ್ಣಿ ತನಿಖೆ ಕೈಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

25 C