ಅಂಬೇಡ್ಕರ್ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ : ಚೇತನ್ ಅಹಿಂಸಾ
ಮಂಡ್ಯ: ಅಂಬೇಡ್ಕರ್ ವಿಚಾರಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ವೈಜ್ಞಾನಿಕ ಮತ್ತು ಪ್ರಜಾಸತ್ತಾತ್ಮಕ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಚಲನಚಿತ್ರ ನಟ ಚೇತನ್ ಅಹಿಂಸಾ ಹೇಳಿದ್ದಾರೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ವತಿಯಿಂದ ಅಂಬೇಡ್ಕರ್ ಜಯಂತಿ ಅಂಗವಾಗಿ ಬುಧವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ ಎಂದು ವಿಷಾದಿಸಿದರು. ಸಮಿತಿಯ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್ರಾಜ್ ಮಾತನಾಡಿ, ಇಂದಿನ ವಿದ್ಯಮಾನಗಳಲ್ಲಿ ದಲಿತರ ಏಕತೆ ಅತ್ಯವಶ್ಯಕ. ದಲಿತ ಚಳವಳಿಗಳು ಚದುರಿ ಹೋಗಬಾರದು ಮತ್ತು ಎಲ್ಲಾ ಒಳಪಂಗಡಗಳು ಒಗ್ಗೂಡಿ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ನೀಡಿದರು. ಸಂವಿಧಾನಕ್ಕೆ ಧಕ್ಕೆ ತರುವ ಯತ್ನಗಳು ನಡೆಯುತ್ತಿದೆ. ಸಂವಿಧಾನ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಿತಿಯ ಜಿಲ್ಲಾಧ್ಯಕ್ಷ ವ್ಯವಸಾಯ ಕಾಲನಿ ಚನ್ನಕೇಶವ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಶ್ರೀನಿವಾಸ್, ಮೈಸೂರು ವಿಭಾಗೀಯ ಸಂಚಾಲಕ ಚಂದ್ರಶೇಖರ್ ಆಲಗೂಡು, ಮಹಿಳಾ ಅಧ್ಯಕ್ಷೆ ರಾಣಿ, ಬಲರಾಮು, ಎಸ್.ಕುಮಾರ್, ಆರ್ಮುಗಂ, ಇತರ ಮುಖಂಡರು ಉಪಸ್ಥಿತರಿದ್ದರು. ಅಂದಿನ ಕಾಲದ ಜಾತಿವಾದಿ ಶಕ್ತಿಗಳ ಮತ್ತು ರಾಜಕೀಯ ಅಡೆತಡೆಗಳ ನಡುವೆಯೂ ಬಾಬಾಸಾಹೇಬರು ನಮಗಾಗಿ ಹಕ್ಕುಗಳನ್ನು ಮತ್ತು ಸಂವಿಧಾನವನ್ನು ತಂದುಕೊಟ್ಟರು. ಆ ಹಕ್ಕುಗಳನ್ನು ಉಳಿಸಿಕೊಳ್ಳಲು ನಾವು ಇಂದು ಹೋರಾಡಬೇಕಿದೆ. ಅಹಿಂಸಾ ಚೇತನ್,ನಟ ಹಾಗೂ ಸಾಮಾಜಿಕ ಹೋರಾಟಗಾರ
ಜಾಲತಾಣಗಳಲ್ಲಿ ಮಾನಹಾನಿಕರ ಕಮೆಂಟ್ ಮಾಡುವವರ ವಿರುದ್ಧ ದೂರು : ಟಿ.ಎ.ನಾರಾಯಣಗೌಡ
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ, ಮಾನಹಾನಿಕರ, ಬೆದರಿಕೆಯ ಕಮೆಂಟ್ಗಳನ್ನು ಮಾಡುವವರ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದು, ಈಗಾಗಲೇ ಹಲವರ ವಿರುದ್ಧ ದೂರುಗಳನ್ನು ದಾಖಲಿಸಿದ್ದೇವೆ. ಬಹುತೇಕ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ. ಬುಧವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಾಲತಾಣಗಳಲ್ಲಿ ಆರೋಗ್ಯಕರ ಚರ್ಚೆ, ಟೀಕೆ, ವಿಮರ್ಶೆಯನ್ನು ಕರವೇ ಸ್ವಾಗತಿಸುತ್ತದೆ. ಇಂತಹ ಚರ್ಚೆಗಳಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ. ಆದರೆ ಚರ್ಚೆಯ ಹೆಸರಿನಲ್ಲಿ ಕೀಳುಮಟ್ಟದ ತೇಜೋವಧೆ, ಬೆದರಿಕೆಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ. ಅಂಥವರ ವಿರುದ್ಧ ನಮ್ಮ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. ಜಾಲತಾಣದಲ್ಲಿ ಮಹಿಳಾ ಮುಖಂಡರೊಬ್ಬರಿಗೆ ವ್ಯಕ್ತಿಯೋರ್ವ ಖಾಸಗಿ ಅಂಗವನ್ನು ಬಳಸಿ ಕೆಟ್ಟದಾಗಿ ಕಾಮೆಂಟ್ ಮಾಡಿರುವುದಲ್ಲದೇ, ಅತ್ಯಾಚಾರದ ಬೆದರಿಕೆಯನ್ನೂ ಒಡ್ಡಿದ್ದ. ಇಂಥ ಮಾತುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನಾವು ನೋಡಬೇಕೆ? ಇಂಥವರ ಕುರಿತು ಕಾನೂನು ಕೂಡ ಮೃದುಧೋರಣೆ ಹೊಂದಲು ಸಾಧ್ಯವೇ? ಈ ನಿಟ್ಟಿನಲ್ಲಿ ನಾವು ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಫೆಲೆಸ್ತೀನಿಗೆ ಬೆಂಬಲ ಸೂಚಿಸಲು ಇನ್ ಸ್ಟಾಗ್ರಾಮ್ ಪ್ರೊಫೈಲ್ ಚಿತ್ರ ಬದಲಿಸಿದ NBA ತಾರೆ ಕೈರಿ ಇರ್ವಿಂಗ್
ಇಸ್ರೇಲಿ ಸೈನಿಕರಿಂದ ಶಾಲೆಗೆ ಹೋಗಲು ನಿರ್ಬಂಧಿಸಲ್ಪಟ್ಟಿರುವ ಫೆಲೆಸ್ತೀನಿನ ಬಾಲಕನ ಚಿತ್ರ
ಸ್ಟಾರ್ಟ್ಅಪ್ ಸ್ಪಾರ್ಕ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ
ಬೆಂಗಳೂರು : ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಉದ್ಯಮಶೀಲತೆ ಕೇಂದ್ರಿತ ಕಾರ್ಯಕ್ರಮ ‘ಸ್ಟಾರ್ಟ್ಅಪ್ ಸ್ಪಾರ್ಕ್-2026’ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಬಂದ 150ಕ್ಕೂ ಹೆಚ್ಚು ಯುವ ಉದ್ಯಮಿಗಳು, ಕೈಗಾರಿಕಾ ಪರಿಣಿತರು ಮತ್ತು ಮಾರ್ಗದರ್ಶಕರು ಭಾಗವಹಿಸಿ, ಚರ್ಚೆ, ಕಲಿಕೆ ಮತ್ತು ನೆಟ್ವರ್ಕಿಂಗ್ನ ವೇದಿಕೆಯಾಯಿತು. ಈ ಕಾರ್ಯಕ್ರಮವನ್ನು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಉದ್ಯಮಶೀಲತೆ ಹಾಗೂ ಸ್ಟಾರ್ಟ್ಅಪ್ ಮಾರ್ಗದರ್ಶನ ದ ಯೋಜನೆಯಾದ ‘ರಿಪ್ಪಲ್’ ವತಿಯಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸ್ಪಾರ್ಕ್ ಸಂಯೋಜಕ ಮುಹಮ್ಮದ್ ಸುಹೈಲ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ಟಾರ್ಟ್ಅಪ್ ಸ್ಥಾಪನೆ ಮತ್ತು ವಿಸ್ತರಣೆ ಸಂಬಂಧಿತ ಪ್ರಮುಖ ಅಂಶಗಳನ್ನು ಒಳಗೊಂಡ ಚರ್ಚೆಗಳು ನಡೆದವು. ವಕ್ತಾರರು ಸ್ಥಿರತೆ, ಆರ್ಥಿಕ ಶಿಸ್ತು ಮತ್ತು ದೀರ್ಘಕಾಲಿಕ ಬೆಳವಣಿಗೆ ತಂತ್ರಗಳ ಕುರಿತು ಪ್ರಾಯೋಗಿಕ ಅನುಭವಗಳನ್ನು ಹಂಚಿಕೊಂಡರು. ಮೊದಲ ಅಧಿವೇಶನ ‘ಸ್ಟಾರ್ಟ್ಅಪ್ ಪ್ರಯಾಣ: ಕಲ್ಪನೆಯಿಂದ ಮೊದಲ ಮೈಲಿಗಲ್ಲುವರೆಗೆ’ ಎಂಬ ವಿಷಯದ ಮೇಲೆ ಮುಹಮ್ಮದ್ ಅಬ್ರಾರ್ ಆಸಿಫ್ ಅವರ ಸಂಚಾಲನೆಯಲ್ಲಿ ನಡೆಯಿತು. ಈ ಪ್ಯಾನೆಲ್ನಲ್ಲಿ ಡಾ. ಶೈಮಾ ಸೋಹೇನ್ವರ್ಡಿ (ಇಂಟೆಗ್ರೋ ಆಸ್ಪತ್ರೆ), ಸಮೀರ್ ಖಾನ್ (ಸಿಎ ಇಂಡಿಯಾ), ಅಬ್ದುಲ್ ಖದೀರ್ ಶಿರಹಟ್ಟಿ (ಲಾರಿಷ್ ಎಕ್ಸ್ಪಿರಿಯೆನ್ಷಿಯಲ್ ಟಾಯ್ಸ್ ಎಲ್ಎಲ್ಪಿ), ಹಾಗೂ ಹಮ್ಝಾ ಮೊಅಝ್ಝಂ ಅಲಿ (ಸ್ಟ್ಯಾಂಡರ್ಡ್ ಟಚ್) ಭಾಗವಹಿಸಿ ಆರಂಭಿಕ ಹಂತದ ಸವಾಲುಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಿದರು. ಎರಡನೇ ಅಧಿವೇಶನ ಸ್ಟಾರ್ಟ್ಅಪ್ ವಿಸ್ತರಣೆ ಮತ್ತು ನಿಧಿ ಸಂಗ್ರಹಣೆಯ ನೈಜ ಸವಾಲುಗಳು ಎಂಬ ವಿಷಯದ ಮೇಲೆ ಅಬ್ದುಲ್ ಖದೀರ್ ಶಿರಹಟ್ಟಿ ಮತ್ತು ಗೌಸ್ ಗಡಾದ್ ಅವರ ಸಂಚಾಲನೆಯಲ್ಲಿ ನಡೆಯಿತು. ಈ ಚರ್ಚೆಯಲ್ಲಿ ಮುಹಮ್ಮದ್ ಅಲಿ ಶರೀಫ್ (ಮೌಂಟ್ ಜುಡಿ), ಸಯ್ಯದ್ ಮುಮ್ತಾಝ್ ಮನ್ಸೂರಿ (ರಗ್ರೆಲ್ ಪ್ರೈವೇಟ್ ಲಿಮಿಟೆಡ್), ಮತ್ತು ಮುಹಮ್ಮದ್ ಖಿಝರ್ (ಇಕೊ ಕ್ರೆವ್) ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಮಾತನಾಡಿ, ನೈತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿದ ವ್ಯವಹಾರ ಪದ್ಧತಿಗಳೇ ದೀರ್ಘಕಾಲಿಕ ಯಶಸ್ಸಿನ ಕೀಲಿಕೈ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಸಂಪರ್ಕಜಾಲದ ಅವಕಾಶಗಳು ಮತ್ತು ಸಂವಾದಾತ್ಮಕ ಅಧಿವೇಶನಗಳೂ ಸೇರಿದ್ದು, ಭಾಗವಹಿಸಿದವರು ತಮ್ಮ ಆಲೋಚನೆಗಳು ಮತ್ತು ಸವಾಲುಗಳನ್ನು ಮಾರ್ಗದರ್ಶಕರೊಂದಿಗೆ ನೇರವಾಗಿ ಚರ್ಚಿಸಲು ಅವಕಾಶ ದೊರಕಿತು. ಬೆಂಗಳೂರಿನ ನಗರಾಧ್ಯಕ್ಷರಾದ ಸುಹೈಲ್ ಅಹ್ಮದ್ ಧನ್ಯವಾದ ಅರ್ಪಿಸಿದರು.
ಅಂಬೇಡ್ಕರ್ ಚೌದಾರ್ ಕೆರೆಯ ನೀರು ಮುಟ್ಟಿರುವುದು ದೊಡ್ಡ ಕ್ರಾಂತಿ : ಲೇಖಕ ರವಿಕುಮಾರ್ ನೀಹಾ
ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಚೌದಾರ್ ಕೆರೆಯ ನೀರನ್ನು ಮುಟ್ಟಿರುವುದು ಒಂದು ದೊಡ್ಡ ಕ್ರಾಂತಿ ಎಂದು ಲೇಖಕ ಡಾ.ರವಿಕುಮಾರ್ ನೀಹಾ ಹೇಳಿದ್ದಾರೆ. ಬುಧವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಆಕಾಶವಾಣಿ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ದಮನಿತ ಸಮುದಾಯಗಳಿಗೆ ನೀರಿಗಾಗಿ ನಲ್ಲಿ, ಬಾವಿ ಇರಲಿಲ್ಲ. ಯಾವುದೋ ಸ್ಮಶಾನದಲ್ಲಿರುವ ಬಾವಿಗೆ ಹೋಗಿ ನೀರು ತರಬೇಕಿತ್ತು. ಮೇಲ್ಜಾತಿಯ ಕೇರಿಗಳಲ್ಲಿ ನೀರು ತರಲು ಹೋದರೆ, ಮೇಲ್ಜಾತಿಯವರು ನೀರು ಹಾಕುವವರೆಗೆ ಕಾಯಬೇಕಿತ್ತು. ಇದನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಅರಿತುಕೊಂಡು ಮೊದಲು ನೀರನ್ನು ಮುಟ್ಟಬೇಕು ಎಂದು ನಿರ್ಧರಿಸಿದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಕಮಲಾ ಬಾಯಿ ಬಿ., ಜಿಎಸ್ಟಿಯ ಸಹಾಯಕ ಆಯುಕ್ತ ಕೆ.ಮಂಜಪ್ಪನ್, ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಹನುಮಂತ್ ಎ., ಆಕಾಶವಾಣಿ ಬೆಂಗಳೂರು ಕ್ಲಸ್ಟರ್ ಉಪ ಮಹಾನಿರ್ದೇಶಕ ಕೆ.ಪಿ.ಸಂಜೀವ್, ಸಹಾಯಕ ನಿರ್ದೇಶಕ ಡಾ.ಎ.ಎಸ್.ಶಂಕರನಾರಾಯಣ, ಆಕಾಶವಾಣಿ ಎಸ್ಸಿ-ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಸಿದ್ದಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ಗುಪ್ತರ ಕಾಲವನ್ನು ಅಂಬೇಡ್ಕರ್ ಅವರು ಹೊಸ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಅಸ್ಪೃಶ್ಯ ಎಂಬ ಪದವು ಗುಪ್ತರ ಕಾಲದಲ್ಲಿ ಕಾಣಿಸಿದೆ. ಆಗ ಬುದ್ಧ ಧಮ್ಮ ಹೆಚ್ಚು ಪ್ರಚಲಿತದಲ್ಲಿತ್ತು. ಧಮ್ಮವನ್ನು ತುಳಿಬೇಕಿತ್ತು ಹಾಗೂ ಧಮ್ಮವನ್ನು ದೂರವಿಡಬೇಕಿತ್ತು. ಅದಕ್ಕಾಗಿ ಬುದ್ಧನ ಅನುಯಾಯಿಗಳಾಗಿರುತ್ತಾರೋ, ಅವರನ್ನು ಹಾಗೂ ದನ ಮಾಂಸ ತಿನ್ನುವವರನ್ನು ಅಸ್ಪಶ್ಯರು ಎಂದು ಕರೆಯಲಾಗುತ್ತಿತ್ತು. -ಡಾ.ರವಿಕುಮಾರ್ ನೀಹಾ, ಲೇಖಕ
ರಾಯಚೂರು । ಭೀಕರ ರಸ್ತೆ ಅಪಘಾತ: ಯುವಕ ಮೃತ್ಯು
ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ರಾಗಿಮಾನಗಡ್ಡೆ ಬಡಾವಣೆಯ ನಿವಾಸಿ ಆಕಾಶ್(20) ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದ ವೇಳೆ ಯುವಕ ಲಾರಿಯ ಚಕ್ರದ ಕೆಳಗೆ ಸಿಲುಕಿದ್ದಾನೆ. ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
RR Vs LSG- ಬೌಲರ್ ಗಳ ಮೆರೆದಾಟದ ನಡುವೆ ರವೀಂದ್ರ ಜಡೇಜಾ ಆಲ್ರೌಂಡ್ ಆಟ; ಏಕಾನಾದಲ್ಲಿ ಲಖನೌ ಗೆ ಮುಖಭಂಗ
ರವೀಂದ್ರ ಜಡೇಜಾ ಅವರ ಅಲ್ರೌಂಡ್ ಆಟ ಮತ್ತು ಜೋಫ್ರಾ ಆರ್ಚರ್ ಅವರ ಮಾರಕ ಬೌಲಿಂಗ್ ನ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 40 ರನ್ ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಆಢಿದ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 10 ಅಂಕಗಳನ್ನು ಕಲೆ ಹಾಕಿರುವ ರಿಯಾನ್ ಪರಾಗ್ ಬಳಗ ಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಇದೇವೇಳೆ ಸೀಸನ್ ನಲ್ಲಿ ನಿರಂತರ 4 ಸೋಲು ಕಂಡ ಲಖನೌ ಸೂಪರ್ ಜೈಂಟ್ಸ್ ತಂಡ 9ನೇ ಸ್ಥಾನದಲ್ಲಿದೆ. ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಖನೌ ಸೂಪರ್ ಜೈಂಟ್ಸ್ 18 ಓವರ್ ಗಳಲ್ಲಿ 119 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.()ಲಖನೌ ಪರ ಆರಂಭಿಕ ಮಿಚೆಲ್ ಮಾರ್ಷ್(41 ಎಸೆತದಲ್ಲಿ 55 ರನ್) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಹೋರಾಟದ ಮನೋಭಾವ ಪ್ರದರ್ಶಿಸಲಿಲ್ಲ. ಆಯುಶ್ ಬದೋನಿ, ರಿಷಬ್ ಪಂತ್ ಮತ್ತು ಐಡನ್ ಮಾರ್ಕಂ ಅವರು ಶೂನ್ಯ ರನ್ ಗೆ ಔಚಾಗಿದ್ದು ತಂಡಕ್ಕೆ ಮುಳುವಾಯಿತು. ರಾಜಸ್ಥಾನ ತಂಡದ ಪರ ಜೋಫ್ರಾ ಆರ್ಚರ್ 3 ವಿಕೆಟ್ ಕಬಳಿಸಿದರು. ನ್ಯಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ ತಲಾ 2 ವಿಕೆಟ್ ಗಳಿಸಿದರು. ಉಳಿದೆರಡು ವಿಕೆಟ್ ಗಳನ್ನು ರವೀಂದ್ರ ಜಡೇಜಾ ಮತ್ತು ರವಿ ಬಿಷ್ಣೋಯಿ ಹಂಚಿಕೊಂಡರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. 4 ಓವರ್ ಗಳಲ್ಲಿ ತಂಡದ ಮೊತ್ತ 32 ಅಗುವುದರೊಳಗೆ ಯಶಸ್ವಿ ಜೈಸ್ವಾಲ್, ಧ್ರುವ್ ಜ್ಯುರೆಲ್ ಮತ್ತು ವೈಭವ್ ಸೂರ್ಯವಂಶಿ ಅವರ ವಿಕೆಟ್ ಅನ್ನು ತಂಡ ಕಳೆದುಕೊಂಡಿತು. ವೈಭವ್ ಸೂರ್ಯವಂಶಿ ಅವರು ಈ ಹಂತದಲ್ಲಿ ಗಳಿಸಿದ ದಾಖಲೆಯನ್ನು ಬರೆದರು. ಈ ಹಿಂದೆ ಈ ದಾಖಲೆ ಗ್ಲೆನ್ ಮ್ಯಾಕ್ಸ್ ವೆಲ್ ಹೆಸರಿನಲ್ಲಿತ್ತು. ವೈಭವ್ ಸೂರ್ಯವಂಶಿ ಅವರ ವಿಕೆಟ್ ಪತನದ ಬಳಿಕ ನಾಯಕ ರಿಯಾನ್ ಪರಾಗ್ (19 ಎಸೆತದಲ್ಲಿ 22), ಶಿಮ್ರಾನ್ ಹೆಟ್ಮೇಯರ್ (18 ಎಸೆತದಲ್ಲಿ 22), ರವೀಂದ್ರ ಜಡೇಜಾ(29 ಎಸೆತಗಳಲ್ಲಿ ಅಜೇಯ 43) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರಿಂದ ತಂಡ 150ರ ಗಡಿ ದಾಟುವಂತಾಯಿತು. ಸಂಕ್ಷಿಪ್ತ ಸ್ಕೋರ್ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 159/6, ರವೀಂದ್ರ ಜಡೇಜಾ 43(29), ಜೈಸ್ವಾಲ್ 22(12), ಹೆಟ್ಮೇಯರ್ 22(18), ಮೊಹ್ಸಿನ್ 17ಕ್ಕೆ 2, ಪ್ರಿನ್ಸ್ ಯಾದವ್ 29ಕ್ಕೆ 2, ಮೊಹಮ್ಮದ್ ಶಮಿ 30ಕ್ಕೆ 2. ಲಖನೌ ಸೂಪರ್ ಜೈಂಟ್ಸ್ 18 ಓವರ್ ಗಳಲ್ಲಿ 119/10, ಮಿಚೆಲ್ ಮಾರ್ಷ್ 55(41), ನಿಕೋಲಸ್ ಪೂರನ್ 22(25), ಹಿಮ್ಮತ್ ಸಿಂಗ್ 15(15), ಜೋಫ್ರಾ ಆರ್ಚರ್ 20ಕ್ಕೆ 3, ಬರ್ಗರ್ 27ಕ್ಕೆ2, ಬ್ರಿಜೇಶ್ 18ಕ್ಕೆ2, ರವೀಂದ್ರ ಜಡೇಜಾ 29ಕ್ಕೆ1, ರವಿ ಬಿಷ್ಣೋಯಿ 23ಕ್ಕೆ1.
Belagavi : ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ಚಿಂಚಲಿ ಪ.ಪಂ. ಮುಖ್ಯಾಧಿಕಾರಿ ಮೃತ್ಯು
ಬೆಳಗಾವಿ : ರಾಜ್ಯದಲ್ಲಿ ತೀವ್ರ ಬಿಸಿಲಿನ ತಾಪ ಹೆಚ್ಚಳವಾಗಿದೆ. ಈ ನಡುವೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಿಸಿಲಿ ತಾಪದಿಂದ ಕುಸಿದುಬಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರನ್ನು ರಾಯಬಾಗ ಪಟ್ಟಣದ ನಿವಾಸಿ ವೆಂಕಟೇಶ್ ಬಳ್ಳಾರಿ (35)ಎಂದು ಗುರುತಿಸಲಾಗಿದೆ. ಸೋಮವಾರ ಬಸವೇಶ್ವರ ಜಯಂತಿ ಅಂಗವಾಗಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಅವರು ಏಕಾಏಕಿ ಸುಸ್ತಾಗಿ ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ತೀವ್ರ ಬಿಸಿಲಿನ ತಾಪದಿಂದ ಉಂಟಾದ ಹೀಟ್ ಸ್ಟ್ರೋಕ್ ಅಥವಾ ಸಂಬಂಧಿತ ಆರೋಗ್ಯ ಸಮಸ್ಯೆಯೇ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಧಿಕೃತ ಮರಣ ಕಾರಣ ವೈದ್ಯಕೀಯ ವರದಿ ಬಳಿಕ ತಿಳಿದುಬರುವ ನಿರೀಕ್ಷೆಯಿದೆ. ಕಳೆದ 48 ಗಂಟೆಗಳಲ್ಲಿ ರಾಜ್ಯದಲ್ಲಿ ಇದು ಎರಡನೇ ಹೀಟ್ ಸ್ಟ್ರೋಕ್ ಅನುಮಾನಿತ ಸಾವು ಎನ್ನಲಾಗಿದೆ. ವೆಂಕಟೇಶ್ ನಿಧನಕ್ಕೆ ಸಾರ್ವಜನಿಕರು ಹಾಗೂ ಸಹೋದ್ಯೋಗಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆರೋಗ್ಯ ಇಲಾಖೆ ಎಚ್ಚರಿಕೆ: ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನವು 40ರಿಂದ 45 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುತ್ತಿರುವ ಹಿನ್ನೆಲೆ, ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು ಮಧ್ಯಾಹ್ನ ಸಮಯದಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸುವಂತೆ ಹಾಗೂ ಸಾಕಷ್ಟು ನೀರು ಸೇವಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
IPL 2026 | ಲಕ್ನೊ ವಿರುದ್ಧ ರಾಜಸ್ಥಾನಕ್ಕೆ ಜಯ; ಮಾರ್ಷ್ ಹೋರಾಟ ವ್ಯರ್ಥ
ಲಕ್ನೊ, ಎ. 22: ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (55 ರನ್, 41 ಎಸೆತ, 6 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ ಆತಿಥೇಯ ಲಕ್ನೊ ಸೂಪರ್ ಜಯಂಟ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 40 ರನ್ ಗಳ ಅಂತರದಿಂದ ಸೋಲುಂಡಿತು. ಈ ಗೆಲುವಿನೊಂದಿಗೆ ರಾಜಸ್ಥಾನ ತಂಡವು ತಾನಾಡಿದ ಏಳನೇ ಪಂದ್ಯದಲ್ಲಿ ಐದನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಲಕ್ನೊ ತಂಡವು ಏಳನೇ ಪಂದ್ಯದಲ್ಲಿ ಐದನೇ ಸೋಲು ಅನುಭವಿಸಿ 9ನೇ ಸ್ಥಾನದಲ್ಲಿದೆ. ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ 32ನೇ ಐಪಿಎಲ್ ಪಂದ್ಯದಲ್ಲಿ ಲಕ್ನೊ ತಂಡದ ನಾಯಕ ರಿಷಭ್ ಪಂತ್ ಟಾಸ್ ಗೆದ್ದು ರಾಜಸ್ಥಾನ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ರವೀಂದ್ರ ಜಡೇಜ (ಔಟಾಗದೆ 43, 29 ಎಸೆತ, 2 ಬೌಂಡರಿ, 1 ಸಿಕ್ಸರ್) ಅವರ ಸಾಹಸದಿಂದ ರಾಜಸ್ಥಾನ ತಂಡವು ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ಗಳ ನಷ್ಟಕ್ಕೆ 159 ರನ್ ಗಳಿಸಿತು. ಗೆಲ್ಲಲು 160 ರನ್ ಗುರಿ ಪಡೆದ ಲಕ್ನೊ ತಂಡವು 18 ಓವರ್ ಗಳಲ್ಲಿ ಕೇವಲ 119 ರನ್ ಗಳಿಸಿ ಆಲೌಟ್ ಆಯಿತು. ಲಕ್ನೊ ತಂಡವು 2.5 ಓವರ್ ಗಳಲ್ಲಿ 11 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತು. ಆಯುಷ್ ಬದೋನಿ, ನಾಯಕ ರಿಷಭ್ ಪಂತ್ ಹಾಗೂ ಮರ್ಕ್ರಮ್ ಶೂನ್ಯಕ್ಕೆ ಔಟಾದರು. ಮಾರ್ಷ್ ಹಾಗೂ ಪೂರನ್ ನಾಲ್ಕನೇ ವಿಕೆಟ್ ಗೆ 43 ರನ್ ಸೇರಿಸಿ ಇನ್ನಿಂಗ್ಸ್ನ್ನು ಪುನರ್ನಿರ್ಮಿಸಲು ಯತ್ನಿಸಿದರು. ರಾಜಸ್ಥಾನದ ಪರವಾಗಿ ಜೋಫ್ರಾ ಆರ್ಚರ್ (3-20) ಯಶಸ್ವಿ ಪ್ರದರ್ಶನ ನೀಡಿದರು. ನಾಂಡ್ರೆ ಬರ್ಗರ್ (2-27) ಹಾಗೂ ಬ್ರಿಜೇಶ್ ಶರ್ಮಾ (2-18) ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ರಾಜಸ್ಥಾನ ತಂಡಕ್ಕೆ ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ (8 ರನ್) ಹಾಗೂ ಯಶಸ್ವಿ ಜೈಸ್ವಾಲ್ (22 ರನ್) 2.5 ಓವರ್ ಗಳಲ್ಲಿ 32 ರನ್ ಗಳಿಸಿ ಸಾಧಾರಣ ಆರಂಭ ಒದಗಿಸಿದರು. ಮುಹಮ್ಮದ್ ಶಮಿ ಅವರು ಜೈಸ್ವಾಲ್ ವಿಕೆಟ್ ಉರುಳಿಸಿದ ತಕ್ಷಣವೇ ಧ್ರುವ್ ಜುರೆಲ್ (0) ಹಾಗೂ ಸೂರ್ಯವಂಶಿ ಪೆವಿಲಿಯನ್ ಗೆ ಮರಳಿದರು. ನಾಲ್ಕನೇ ವಿಕೆಟ್ ಗೆ 30 ರನ್ ಸೇರಿಸಿದ ನಾಯಕ ರಿಯಾನ್ ಪರಾಗ್ (20 ರನ್, 19 ಎಸೆತ) ಹಾಗೂ ಶಿಮ್ರೊನ್ ಹೆಟ್ಮೆಯರ್ (22 ರನ್, 18 ಎಸೆತ) ತಂಡವನ್ನು ಆಧಾರಿಸಿದರು. ಪರಾಗ್ ಹಾಗೂ ಹೆಟ್ಮೆಯರ್ ಬೆನ್ನುಬೆನ್ನಿಗೆ ಔಟಾದರು. ಆಗ ಆರನೇ ವಿಕೆಟ್ ಗೆ 33 ರನ್ ಜೊತೆಯಾಟ ನಡೆಸಿದ ರವೀಂದ್ರ ಜಡೇಜ ಹಾಗೂ ಡೊನೋವನ್ ಫೆರೇರಾ (20 ರನ್, 19 ಎಸೆತ, 2 ಬೌಂಡರಿ) ರಾಜಸ್ಥಾನದ ಸ್ಕೋರ್ ಅನ್ನು 100ರ ಗಡಿ ದಾಟಿಸಿದರು. ಫೆರೇರಾ ಔಟಾದ ನಂತರ ಬಂದ ಶುಭಮ್ ದುಬೆ (ಔಟಾಗದೆ 19, 11 ಎಸೆತ) ಜಡೇಜ ಜೊತೆಗೂಡಿ ಏಳನೇ ವಿಕೆಟ್ ಗೆ ಕೇವಲ 25 ಎಸೆತಗಳಲ್ಲಿ 49 ರನ್ ಸೇರಿಸಿ ತಂಡದ ಸ್ಕೋರ್ ಅನ್ನು 159ಕ್ಕೆ ತಲುಪಿಸಿದರು. ಲಕ್ನೊ ತಂಡದ ಪರವಾಗಿ ಮುಹ್ಸಿನ್ ಖಾನ್ (2-17), ಪ್ರಿನ್ಸ್ ಯಾದವ್ (2-29) ಹಾಗೂ ಮುಹಮ್ಮದ್ ಶಮಿ (2-30) ತಲಾ ಎರಡು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ರಾಜಸ್ಥಾನ ರಾಯಲ್ಸ್: 20 ಓವರ್ ಗಳಲ್ಲಿ 159/6 (ರವೀಂದ್ರ ಜಡೇಜ ಔಟಾಗದೆ 43, ಯಶಸ್ವಿ ಜೈಸ್ವಾಲ್ 22, ಹೆಟ್ಮೆಯರ್ 22, ಪರಾಗ್ 20, ಫೆರೇರಾ 20, ಶುಭಮ್ ದುಬೆ ಔಟಾಗದೆ 19, ಮುಹ್ಸಿನ್ ಖಾನ್ 2-17, ಪ್ರಿನ್ಸ್ ಯಾದವ್ 2-29, ಮುಹಮ್ಮದ್ ಶಮಿ 2-30) ಲಕ್ನೊ ಸೂಪರ್ ಜಯಂಟ್ಸ್: 18 ಓವರ್ ಗಳಲ್ಲಿ 119 ರನ್ ಗೆ ಆಲೌಟ್ (ಮಿಚೆಲ್ ಮಾರ್ಷ್ 55, ನಿಕೊಲಸ್ ಪೂರನ್ 22, ಆರ್ಚರ್ 3-20, ನಾಂಡ್ರೆ ಬರ್ಗರ್ 2-27, ಬ್ರಿಜೇಶ್ ಶರ್ಮಾ 2-18, ಜಡೇಜ 1-29)
ಕಾಂಗ್ರೆಸ್ ಭವನ ಟ್ರಸ್ಟ್ಗೆ ಜಮೀನು ಮಂಜೂರಾತಿ ಪ್ರಶ್ನಿಸಿ ಪಿಐಎಲ್; ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ತುಮಕೂರು ನಗರದ ಹೊರವಲಯದಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರಕಾರಿ ಜಮೀನನ್ನು 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂಬ ವಿಚಾರ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ಎನ್.ಎನ್. ಗೋಪಾಲಕೃಷ್ಣ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಪೌರಾಡಳಿತ ನಿರ್ದೇಶನಾಲಯ ಹಾಗೂ ಕಾಂಗ್ರೆಸ್ ಭವನ ಟ್ರಸ್ಟ್ಗೆ ನೊಟೀಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು. ಅರ್ಜಿದಾರರ ಆಕ್ಷೇಪವೇನು? ತುಮಕೂರು ಹೋಬಳಿಯ ಮಾರಲೂರು ಗ್ರಾಮದ ಸರ್ವೆ ನಂಬರ್ 87/1 ಮತ್ತು 87/2 ರಲ್ಲಿರುವ ಸುಮಾರು 4 ಎಕರೆ ಜಮೀನನ್ನು 1942ರಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ (ನಗರದ ಕಸ ವಿಲೇವಾರಿಗಾಗಿ) ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಈ ಜಮೀನಿನಲ್ಲಿ 2 ಎಕರೆ ಪ್ರದೇಶವನ್ನು 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ರಾಜೀವ್ ಗಾಂಧಿನಗರ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹೆಸರಿನಲ್ಲಿ ಜಮೀನಿಗಾಗಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಮಂಜೂರಾತಿ ನೀಡುವಾಗ ಯಾವುದೇ ಅರ್ಜಿ ಸಲ್ಲಿಸದ 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ಜಮೀನು ನೀಡಲಾಗಿದೆ. ಜಮೀನು ಮಂಜೂರಾಗುವ ಸಂದರ್ಭದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಅಸ್ತಿತ್ವದಲ್ಲೇ ಇರಲಿಲ್ಲ. ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಈ ಖಾಸಗಿ ಸಂಸ್ಥೆಯ ಉದ್ದೇಶವೇ ಬಹಿರಂಗವಾಗಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಮಾರುಕಟ್ಟೆ ದರದ ಪ್ರಕಾರ ಈ ಜಮೀನಿನ ಮೌಲ್ಯ ಸುಮಾರು 23 ಕೋಟಿ ರೂ. ಆಗಿದ್ದರೂ, ಸರ್ಕಾರ ಇದನ್ನು ಕೇವಲ 17 ಲಕ್ಷ ರೂ.ಗಳಿಗೆ (ಮಾರ್ಗದರ್ಶಿ ದರದ ಶೇ. 5 ರಷ್ಟು) ನೀಡಿದೆ. ಇದರಿಂದ, ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ. ಸರ್ಕಾರಿ ಸುತ್ತೋಲೆಗಳ ಪ್ರಕಾರ ಇಂಥ ಜಮೀನುಗಳನ್ನು ಮಾರುಕಟ್ಟೆ ದರದಲ್ಲಿ ಮಾತ್ರ ಮಾರಾಟ ಮಾಡಬೇಕೆಂಬ ನಿಯಮವಿದ್ದು, ಅದನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಆದ್ದರಿಂದ, ಕಾಂಗ್ರೆಸ್ ಭವನ ಟ್ರಸ್ಟ್ಗೆ ಜಮೀನು ಮಂಜೂರು ಮಾಡಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಹಿಂದೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದಾಗ ಕೆಎಲ್ ರಾಹುಲ್ ಅವರಿಗೆ ತಂಡದ ಮಾಲೀಕ ನಿಧಾನಗತಿಯ ಆಟ ಎಂದು ತರಾಟೆಗೆ ತೆಗೆದುಕೊಂಡಿದ್ದು ದೊಡ್ಡ ವಿವಾದವಾಗಿತ್ತು. ಇದೀಗ ದಿಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ವಿರುದ್ಧ 47 ರನ್ ಗಳ ಪರಾಭವ ಅನುಭವಿಸಿದ ಬಳಿಕ ಕೆಎಲ್ ರಾಹುಲ್ ಅವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ಅವರು ಮತ್ತು ಮತ್ತೊಬ್ಬ ಬ್ಯಾಟರ್ ನಿತೀಶ್ ರಾಣಾ ಅವರ ಬ್ಯಾಟಿಂಗ್ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಏಪ್ರಿಲ್ 21ರ ಮಂಗಳವಾರದಂದು ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ದಿಲ್ಲಿ ಕ್ಯಾಪಿಟಲ್ಸ್ ತಂಡವನ್ನು . ಈ ಪಂದ್ಯದಲ್ಲಿ 2413 ರನ್ ಗಳ ಗುರಿ ಪಡೆದಿದ್ದರೂ ಕೆಎಲ್ ರಾಹುಲ್(23 ಎಸೆತಗಳಲ್ಲಿ 37) ಮತ್ತು ನಿತೀಶ್ ರಾಣಾ(30 ಎಸೆತಗಳಲ್ಲಿ 57) ಅವರು ಅಮೆಗತಿಯಲ್ಲಿ ಆಡಿದರು ಎಂಬ ಟೀಕೆ ಕೇಳಿ ಬಂದಿದೆ. ()ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ತಂಡದ ನಿರ್ದೇಶಕ ವೇಣುಗೋಪಾಲ ರಾವ್ ಅವರು ಪವರ್ ಪ್ಲೇನಲ್ಲಿ ಆಕ್ರಮಣಕಾರಿಯಾಗಿ ರನ್ ಪೇರಿಸಲು ವಿಫಲರಾಗಿದ್ದೇ ತಂಡದ ಸೋಲಿಗೆ ಕಾರಣ ಎಂದರು, ನಮ್ಮ ಬ್ಯಾಟರ್ಗಳು ಲಯ ಕಂಡುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಂಡರು. ಇಂತಹ ಬೃಹತ್ ಗುರಿ ಇರುವಾಗ ಪ್ರತಿಯೊಂದು ಎಸೆತವೂ ಮುಖ್ಯ. ನಾವು ಆರಂಭದಲ್ಲೇ ಆಕ್ರಮಣಕಾರಿಯಾಗಿ ಆಡಬೇಕಿತ್ತು. ಕೆ.ಎಲ್. ರಾಹುಲ್ ಅವರಂತಹ ಅನುಭವಿ ಆಟಗಾರನಿಗೆ ಪವರ್ಪ್ಲೇನಲ್ಲಿ ಸರಿಯಾದ ಬೆಂಬಲ ಸಿಗಲಿಲ್ಲ ಮತ್ತು ನಿತೀಶ್ ರಾಣಾ ಅವರ ನಿಧಾನಗತಿಯ ಆರಂಭ ನಮಗೆ ಮುಳುವಾಯಿತು, ಎಂದು ವೇಣುಗೋಪಾಲ್ ರಾವ್ ವಿಶ್ಲೇಷಿಸಿದರು. ಪವರ್ ಪ್ಲೇನಲ್ಲಿ 25-30 ರನ್ ವ್ಯತ್ಯಾಸ 240ಕ್ಕೂ ಅಧಿಕ ರನ್ಗಳನ್ನು ಬೆನ್ನಟ್ಟುವಾಗ ಮೊದಲ 6 ಓವರ್ಗಳಲ್ಲಿ ಕನಿಷ್ಠ 80 ರಿಂದ 90 ರನ್ ಗಳಿಸುವುದು ಅತ್ಯಗತ್ಯ. ಆದರೆ ನಾವು ಕೇವಲ 59 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ 25-30 ರನ್ಗಳ ವ್ಯತ್ಯಾಸವೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು, ಎಂದು ಅವರು ಬೇಸರ ವ್ಯಕ್ತಪಡಿಸಿದರು.ಕೆ.ಎಲ್. ರಾಹುಲ್: ಪವರ್ಪ್ಲೇನಲ್ಲಿ ರಾಹುಲ್ ಅವರಿಗೆ ಹೆಚ್ಚಿನ ಸ್ಟ್ರೈಕ್ ಸಿಗಲಿಲ್ಲ. ಆರಂಭಿಕ ಜೊತೆಗಾರ ಪಥುಮ್ ನಿಸ್ಸಾಂಕ ಬೇಗನೇ ಔಟಾದ ನಂತರ, ರಾಹುಲ್ ಅಬ್ಬರಿಸಬೇಕಿತ್ತು. ಆದರೆ ನಿತೀಶ್ ರಾಣಾ ಕ್ರೀಸ್ಗೆ ಬಂದಾಗ ರನ್ ಗತಿ ಮತ್ತಷ್ಟು ಕುಸಿಯಿತು. ನಿತೀಶ್ ರಾಣಾ: ರಾಣಾ ಅವರು ತಮ್ಮ ಇನಿಂಗ್ಸ್ನ ಆರಂಭದ 15-20 ಎಸೆತಗಳಲ್ಲಿ ರನ್ ಗಳಿಸಲು ಪರದಾಡಿದರು. ಇದು ರಾಹುಲ್ ಅವರ ಮೇಲೂ ಒತ್ತಡ ಹೇರಿತು. ನಂತರ ರಾಣಾ ದೊಡ್ಡ ಹೊಡೆತಗಳನ್ನು ಬಾರಿಸಿದರೂ, ಅಷ್ಟರಲ್ಲೇ ಅಗತ್ಯ ರನ್ ರೇಟ್ 15ಕ್ಕಿಂತಲೂ ಅಧಿಕವಾಗಿತ್ತು. ಜಾಲತಾಣಗಳಲ್ಲಿ ಟ್ರೋಲ್ 'ಎಕ್ಸ್'ನಲ್ಲಿ ಅಭಿಮಾನಿಗಳು ವಿವಿಧ ಮೀಮ್ಗಳ (Memes) ಮೂಲಕ ರಾಹುಲ್ ಅವರನ್ನು ಲೇವಡಿ ಮಾಡುತ್ತಿದ್ದಾರೆ. ಅವರು ಟೆಸ್ಟ್ ಪಂದ್ಯದಂತೆ ಐಪಿಎಲ್ ಆಡುತ್ತಿದ್ದಾರೆ, ವೈಯಕ್ತಿಕ ದಾಖಲೆಗಳಿಗಾಗಿ ಆಡುತ್ತಿದ್ದಾರೆ ಎಂಬಂತಹ ಕಮೆಂಟ್ಗಳು ಹರಿದಾಡುತ್ತಿವೆ. ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್ ಗಳಿಸಿದರೂ, ತಂಡ ಸೋತಾಗ ಅವರ ಇನ್ನಿಂಗ್ಸ್ನ ವೇಗದ ಬಗ್ಗೆ ಚರ್ಚೆಗಳು ನಡೆದಿದ್ದವು.
ಸಮಗ್ರ ಮಹಿಳಾ ಮೀಸಲಾತಿಯನ್ನು ಕೋರಿದ ವಿಮ್; ತಿರಸ್ಕೃತ ಮಸೂದೆಗೆ ಸ್ವಾಗತ: ಯಾಸ್ಮಿನ್ ಇಸ್ಲಾಂ
ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಸಂಸತ್ತಿನಲ್ಲಿ ಸಂವಿಧಾನ (131ನೇ ತಿದ್ದುಪಡಿ ) ಮಸೂದೆ, 2026ಯ ತಿರಸ್ಕಾರವನ್ನು ಸ್ವಾಗತಿಸಿದೆ. ಪ್ರಸ್ತಾಪಿತ ಕ್ಷೇತ್ರ ಪುನರ್ವಿಂಗಡನೆ ಸಮಾನ ಪ್ರತಿನಿಧಿತ್ವದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟು ಹಾಕಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಹೇಳಿದರು. ಈ ಕ್ರಮವನ್ನು ರಾಜಕೀಯ ಪ್ರೇರಿತ ಎಂದು WIM ಪರಿಗಣಿಸಿದ್ದು, ಮುಂಬರುವ ಚುನಾವಣೆಗಳ ಮುನ್ನ ಜನರ ಗ್ರಹಿಕೆಯನ್ನು ರೂಪಿಸಲು ಮತ್ತು ಮಹಿಳಾ ಹಕ್ಕುಗಳ ರಕ್ಷಕ ಎಂದು ಆಡಳಿತ ವ್ಯವಸ್ಥೆಯನ್ನು ಬಿಂಬಿಸಲು ಇದನ್ನು ಬಳಸಲಾಗಿದೆ ಎಂದು ಆರೋಪಿಸಿದರು. ಆದರೆ ಇಲ್ಲಿ ನಿಜವಾದ ಸಬಲೀಕರಣದ ಪ್ರಶ್ನೆಯನ್ನು ಪರಿಹರಿಸಲಾಗಿಲ್ಲ ಎಂದು ಅವರು ಹೇಳಿದರು. ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡನೆ ಅಥವಾ ಸ್ಥಾನ ವಿಸ್ತರಣೆಗೆ ಹೊಂದಿಸಿಕೊಳ್ಳುವ ಮೂಲಕ ಅನಿಶ್ಚಿತತೆಗೆ ಅಥವಾ ಪ್ರಕ್ರಿಯಾತ್ಮಕ ವಿಳಂಬಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು WIM ಒತ್ತಿ ಹೇಳಿದೆ. ಮಹಿಳಾ ಪ್ರತಿನಿಧಿತ್ವದ ದೀರ್ಘಕಾಲದ ಬೇಡಿಕೆಯನ್ನು ಯಾವುದೇ ಷರತ್ತುಗಳಿಲ್ಲದೆ, ತಕ್ಷಣ ಮತ್ತು ಸ್ವತಂತ್ರವಾಗಿ ಮುಂದುವರಿಸಬೇಕು. ಭಾರತದ ಸಾಮಾಜಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ, ಅರ್ಥಪೂರ್ಣ ಪ್ರತಿನಿಧಿತ್ವವನ್ನು ಖಚಿತಪಡಿಸುವ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಲು WIM ಒತ್ತಾಯಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು.
Bengaluru | ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ವ್ಯಕ್ತಿ ಸಾವು: ಆರೋಪ
ಬೆಂಗಳೂರು : ನಗರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮರ್ಮಾಂಗದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನವಾಜ್ಗೆ ಚಿಕಿತ್ಸೆ ನೀಡಿದರೂ, ಗಾಯಕ್ಕೆ ಹೊಲಿಗೆ ಹಾಕಿರಲಿಲ್ಲ. ಹೀಗಾಗಿ ನೋವು ತಾಳಲಾರದೆ ನರಳಿ ಅವರು ಪ್ರಾಣಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ 45 ವರ್ಷದ ನವಾಜ್ ಮರ್ಮಾಂಗ ದಲ್ಲಿ ಗಡ್ಡೆ ಕಾಣಿಸಿಕೊಂಡ ಹಿನ್ನೆಲೆ ಒಂದೂವರೆ ತಿಂಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ವಿಭಾಗಕ್ಕೆ ದಾಖಲಾಗಿದ್ದರು. ಸೋಂಕಿನ ಕಾರಣ ಆತನ ಮರ್ಮಾಂಗ ಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು, ಮುಂದಿನ ಚಿಕಿತ್ಸೆಗಾಗಿ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಆಪರೇಷನ್ ವಿಭಾಗ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ನಡುವೆ ಸಮನ್ವಯತೆಯ ಕೊರತೆಯ ಕಾರಣದಿಂದ, ಗಾಯ ಆರುವ ಮುನ್ನವೇ ರೋಗಿಯನ್ನು ಡಿಸ್ಚಾರ್ಜ್ ಆಗುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಡ ಹೇರಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ಜಾಗಕ್ಕೆ ಹೊಲಿಗೆಯನ್ನೂ ಹಾಕದೆ ಅವರನ್ನು ಆಸ್ಪತ್ರೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತೆ ದಾಖಲಿಸಿಕೊಳ್ಳಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅನಿವಾರ್ಯವಾಗಿ ಪತ್ನಿ ತನ್ನ ಗಂಡ ನವಾಜ್ ಅವರನ್ನು ಮೂರು ದಿನಗಳ ಕಾಲ ಆಸ್ಪತ್ರೆಯ ಹೊರಗಿನ ಫುಟ್ಪಾತ್ನಲ್ಲೇ ಇರಿಸಿದ್ದರು. ರಕ್ತಸ್ರಾವ, ತೀವ್ರ ನೋವಿನಿಂದ ನರಳಿ ನವಾಜ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ನವಾಜ್ ಅವರ ಪತ್ನಿ ಮತ್ತು ನಾಲ್ವರು ಮಕ್ಕಳು ಬೀದಿಗೆ ಬಿದ್ದಿದ್ದಾರೆ. ‘ಪ್ರಕರಣದ ತನಿಖೆಗಾಗಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ. ರೋಗಿಯನ್ನು ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪ ನಮ್ಮ ಗಮನಕ್ಕೆ ಬಂದಿದೆ. ಸಮಿತಿಯ ವರದಿಯ ಆಧಾರದ ಮೇಲೆ ವೈದ್ಯರು ಅಥವಾ ಸಿಬ್ಬಂದಿಯ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ -ಡಾ. ದೀಪಕ್, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ
ʼವಿದ್ಯಾರ್ಥಿಗಳ ಚುನಾವಣೆʼ ನಾಯಕತ್ವ ರೂಪಿಸಿಕೊಳ್ಳಲು ಅತ್ಯುತ್ತಮ ಹೆಜ್ಜೆ: ಡಾ. ಎಂ.ಸಿ ಸುಧಾಕರ್
ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾದ ಚುನಾವಣೆಗಳು ಅನಿವಾರ್ಯವಾಗಿದ್ದು, ಕಾಲೇಜುಗಳಲ್ಲಿ ನಡೆಯುವ ವಿದ್ಯಾರ್ಥಿಗಳ ಚುನಾವಣೆ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ನಾಯಕತ್ವ ರೂಪಿಸಿಕೊಳ್ಳಲು ಅತ್ಯುತ್ತಮ ಹೆಜ್ಜೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಇಲ್ಲಿನ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ಪ್ರಕ್ರಿಯೆ ಸಂಬಂಧಪಟ್ಟಂತೆ ಆಯೋಜಿಸಿದ್ದ ‘ರಾಜ್ಯದ ವಿದ್ಯಾರ್ಥಿ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ನಿವೃತ್ತ ಕೇಂದ್ರ ಚುನಾವಣಾ ಆಯುಕ್ತ ಲಿಂಗ್ಡೊ ಸಮಿತಿ ನೀಡಿರುವ ಶಿಫಾರಸುಗಳ ಆಧಾರದ ಮೇಲೆ ದೇಶದ ಕೆಲವು ವಿಶ್ವವಿದ್ಯಾಲಯಗಳು ಚುನಾವಣೆ ನಡೆಸುತ್ತಿವೆ. ಈ ಮಾನದಂಡದ ಆಧಾರದ ಮೇಲೆಯೇ ರಾಜ್ಯದಲ್ಲಿಯೂ ಚುನಾವಣೆಯನ್ನು ನಡೆಸಲಾಗುವುದು ಎಂದರು. ಅಧ್ಯಾಪಕರ ಬೆಂಬಲ: ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಸ್ಥೆಗಳ ಅಧ್ಯಾಪಕರು ಮತ್ತು ಶಿಕ್ಷಕರ ಸಂಘಗಳ ಪ್ರತಿನಿಧಿಗಳು ವಿದ್ಯಾರ್ಥಿ ಚುನಾವಣೆಗಳ ಆರಂಭಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು. ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕಾಲೇಜು ಆಡಳಿತ ಮಂಡಳಿಗಳ ವಿರೋಧ: ಸಭೆಯಲ್ಲಿ ಭಾಗವಹಿಸಿದ್ದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿ ಚುನಾವಣೆಗೆ ವಿರೋಧ ವ್ಯಕ್ತಪಡಿಸಿವೆ. ಚುನಾವಣೆ ನಡೆದಲ್ಲಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ವ್ಯವಸ್ಥೆಗೆ ತೊಡಕು ಉಂಟಾಗುತ್ತದೆ ಎಂಬ ಅಭಿಪ್ರಾಯವನ್ನು ಕೆಲವು ಆಡಳಿತ ಮಂಡಳಿಯ ಸದಸ್ಯರು ವ್ಯಕ್ತಪಡಿಸಿದರು. ವಿದ್ಯಾರ್ಥಿ ಸಂಘಟನೆಗಳಾದ ಎಸ್.ಎಫ್.ಐ, ಎ.ಬಿ.ವಿ.ಪಿ, ಎನ್.ಎಸ್.ಯು.ಐ, ಎ.ಐ.ಡಿ.ಎಸ್.ಒ, ಎ.ಐ.ಎಸ್.ಎಫ್, ಮತ್ತು ಎ.ಐ.ಎಸ್.ಒನ ಪ್ರತಿನಿಧಿಗಳು ಭಾಗವಹಿಸಿದ್ದರು.
ಬಿಜೆಪಿಗೆ ರಾಜಕೀಯ ಅಸ್ತ್ರವಾಗಿರುವ ಮಹಿಳಾ ಮೀಸಲಾತಿ : ಡಾ.ಆರತಿ ಕೃಷ್ಣ ಆಕ್ರೋಶ
ಬೆಂಗಳೂರು : ನಾರಿ ಶಕ್ತಿ ವಂದನ ಅಧಿನಿಯಮ-2023ರ ಅನುಷ್ಠಾನ ವಿಧೇಯಕ ಲೋಕಸಭೆಯ ಅನುಮೋದನೆ ಪಡೆಯುವಲ್ಲಿ ವಿಫಲವಾಗಿರುವುದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳೇ ಕಾರಣ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಹಿಳಾ ಮೀಸಲಾತಿಯು ರಾಜಕೀಯ ಅಸ್ತ್ರವಾಗಿದೆಯೆ ಹೊರತು, ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಡೆ ಗಮನವಿಲ್ಲ ಎಂದು ವಿಧಾನಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಿಳೆಯರಿಗೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಿದ್ದೇ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ. ಇದು ಬಿಜೆಪಿಯವರಿಗೆ ತಿಳಿದರಲಿ. ಈಗ ಮಂಡನೆಯಾಗಿರುವ ವಿಧೇಯಕದಲ್ಲಿರುವ ಲೋಪಗಳನ್ನು ಸರಿಪಡಿಸಿಬೇಕೆಂಬುದು ಕಾಂಗ್ರೆಸ್ ಪಕ್ಷದ ಆಗ್ರಹ ಎಂದು ಹೇಳಿದ್ದಾರೆ. ಕ್ಷೇತ್ರ ಮರು ವಿಂಗಡಣೆ ಕಡ್ಡಾಯ ಮಸೂದೆಯ ಪ್ರಕಾರ ಮೀಸಲಾತಿಯು ಜನಗಣತಿ ಮತ್ತು ಕ್ಷೇತ್ರ ಮರು ವಿಂಗಡಣೆ ನಂತರವೇ ಜಾರಿಗೆ ಬರುತ್ತದೆ. ಇದು ಜಾರಿಯಲ್ಲಾಗುವ ವಿಳಂಬ ನೀತಿ. ಮಸೂದೆ ತಕ್ಷಣ ಜಾರಿಯಾಗದೆ 2029ಕ್ಕೆ ಜಾರಿಯಾದಲ್ಲಿ, ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಅನ್ಯಾಯವಾಗುತ್ತದೆ, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ ಎಂದು ಆರತಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಇಲ್ಲದಿರುವುದು ಮತ್ತು ಆರ್ಥಿಕವಾಗಿ ಬಲಾಢ್ಯರಿಗೆ ಮಾತ್ರ ಅವಕಾಶಗಳಿರುವುದರಿಂದ ಸೂಕ್ತ ಮಾನದಂಡಗಳನ್ನು ಅಳವಡಿಸಿ ಸಮಾಜದ ಎಲ್ಲ ವರ್ಗದ ಹೆಣ್ಣು ಮಕ್ಕಳು ಶೇ.33ರ ಮೀಸಲಾತಿಯೊಳಗೆ ಬರಬೇಕೆಂಬ ಸಂಕಲ್ಪ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಅವರು ಹೇಳಿದ್ದಾರೆ. ಹಾಗಾಗಿ, ಕಾಂಗ್ರೆಸ್ ವಿರೋಧಿಸುತ್ತಿರುವುದು ಮಸೂದೆಯನ್ನಲ್ಲ, ಬದಲಾಗಿ ಅದರಲ್ಲಿರುವ ಅನ್ಯಾಯದ ಸರಮಾಲೆಗಳನ್ನು ನ್ಯಾಯಯುತವಾಗಿ ಸರಿಪಡಿಸಿದ್ದಲ್ಲಿ ಕಾಂಗ್ರೆಸ್ ಯಾವುದೆ ಕಾರಣಕ್ಕೂ ಈ ಮಸೂದೆಯನ್ನು ವಿರೋಧಿಸುವುದಿಲ್ಲ. ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಪರಿಕಲ್ಪನೆ ಆರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದಲೆ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ ಎಂದು ಆರತಿ ಕೃಷ್ಣ ತಿಳಿಸಿದ್ದಾರೆ.
Kalaburagi | ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಅತ್ಯಾಧುನಿಕ ಪರೀಕ್ಷಾ ಕಟ್ಟಡ ಉದ್ಘಾಟನೆ
ಕಲಬುರಗಿ: ಖಾಜಾ ಬಂದಾನವಾಝ್ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಪರೀಕ್ಷಾ ಕಟ್ಟಡವನ್ನು ಕುಲಪತಿ ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರು ಬುಧವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ.ಸೈಯದ್ ಮುಸ್ತಫಾ ಅಲ್-ಹುಸೈನಿ, ಉಪಕುಲಪತಿಗಳಾದ ಪ್ರೊ. ಅಲಿ ರಝಾ ಮೂಸವಿ, ಪ್ರೋಕುಲಪತಿಗಳಾದ ಪ್ರೊ.ಅಶ್ಫಾಕ್ ಅಹ್ಮದ್, ರಿಜಿಸ್ಟ್ರಾರ್ ಮಿರ್ ವಿಲಾಯತ್ ಅಲಿ ಸೇರಿದಂತೆ ವಿವಿಧ ವಿಭಾಗಗಳ ಡೀನ್ಗಳು ಮತ್ತು ಹಿರಿಯ ಶೈಕ್ಷಣಿಕ ಅಧಿಕಾರಿಗಳು ಉಪಸ್ಥಿತರಿದ್ದರು. ಹೊಸ ಪರೀಕ್ಷಾ ಕಟ್ಟಡದಲ್ಲಿ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಹಾಗೂ ಭಾರತದ ಮೊದಲ ಸಾಫ್ಟ್ವೇರ್ ಆಧಾರಿತ ಸ್ವಯಂಚಾಲಿತ ಪ್ರಶ್ನೆಪತ್ರಿಕೆ ರಚನಾ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ವ್ಯವಸ್ಥೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಗೌಪ್ಯತೆ ಮತ್ತು ಭದ್ರತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುವುದಾಗಿ ತಿಳಿಸಲಾಗಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಯೋಜನೆಯನ್ನು ಪರೀಕ್ಷಾ ಆಡಳಿತದಲ್ಲಿ ನೂತನ ಮಾನದಂಡಗಳನ್ನು ಸ್ಥಾಪಿಸುವ ಪರಿವರ್ತನಾ ಹೆಜ್ಜೆಯಾಗಿ ಬಣ್ಣಿಸಿದ್ದಾರೆ. ಈ ವೇಳೆ ಪರೀಕ್ಷಾ ನಿಯಂತ್ರಕರು ಹಾಗೂ IQAC ನಿರ್ದೇಶಕರಾದ ಡಾ.ಎಂ.ಎ.ಬಶೀರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಸಹಾಯಕ ಪರೀಕ್ಷಾ ನಿಯಂತ್ರಕ (ACOE) ಡಾ. ಅಮ್ರೀನ್ ಸಬಾ ಹಾಗೂ ವಿಶೇಷ ಕರ್ತವ್ಯಾಧಿಕಾರಿಗಳಾದ (OSDs) ಡಾ.ಎಂ.ಎ. ಮುಜೀಬ್ ಮತ್ತು ಝಮೀರ್ ಇದ್ದರು.
ಭಟ್ಕಳ: ಅಕ್ರಮ ಒಂಟೆ ಸಾಗಾಟ ಪ್ರಕರಣ; ಮೂವರು ಬಂಧನ
ಭಟ್ಕಳ: ಅಕ್ರಮವಾಗಿ ಒಂಟೆಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶದ ಕರಣ ಬಾಬರ (26), ಕೊಲ್ಲಾಪುರ ಜಿಲ್ಲೆಯ ಶಿರೋಡ್ನ ಸುಹಾಸ ಸೂರ್ಯವಂಶಿ (22) ಹಾಗೂ ಯಶ ಗೋಟಕಿಂಡೆ (19) ಎಂದು ಗುರುತಿಸಲಾಗಿದೆ. ಪ್ರಕರಣದ ವಿವರ:- ಶಿರಾಲಿ ಭಾಗದಿಂದ ಮಂಗಳೂರಿನ ಉಳ್ಳಾಲ ಕಡೆಗೆ ಲಾರಿಯ ಮೂಲಕ ಸುಮಾರು 3.75 ಲಕ್ಷ ರೂ. ಮೌಲ್ಯದ 8 ಒಂಟೆಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆರೋಪಿಗಳು ಒಂಟೆಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ಯಾವುದೇ ನೀರು ಅಥವಾ ಮೇವು ನೀಡದೆ ಸಾಗಾಟ ಮಾಡುತ್ತಿದ್ದರು. ಜಾನುವಾರು ಸಾಗಾಟಕ್ಕೆ ಅಗತ್ಯವಿರುವ ಮಾನ್ಯ ಪರವಾನಗಿ ಕೂಡ ಆರೋಪಿಗಳ ಬಳಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಂದೇಹದ ಮೇರೆಗೆ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಈ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಪೊಲೀಸರು ಲಾರಿ ಹಾಗೂ ಒಂಟೆಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
Vijayanagara | ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿಖರ ತೈಲಾಭಿಷೇಕ
ಕೊಟ್ಟೂರು (ವಿಜಯನಗರ): ಕೊಟ್ಟೂರಿನ ಸಮೀಪದ ಉಜ್ಜಯಿನಿ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಸಂಜೆ ವೈಭವದ ಶಿಖರ ತೈಲಾಭಿಷೇಕ ಭಕ್ತಿಭಾವದಿಂದ ನೆರವೇರಿತು. ಸಂಜೆ ಸುಮಾರು 5.58ಕ್ಕೆ ಅಭಿಷೇಕ ನಡೆಯುತ್ತಿದ್ದು, ಸಂಜೆ 5.50ರ ಸುಮಾರಿಗೆ ಆರಂಭವಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಸ್ವಾಮಿಗೆ ಜಯಘೋಷಗಳೊಂದಿಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ದೇವಾಲಯಗಳಲ್ಲಿ ಸಾಮಾನ್ಯವಾಗಿ ರುದ್ರಾಭಿಷೇಕ, ಕ್ಷೀರಾಭಿಷೇಕ, ಜಲಾಭಿಷೇಕ ನಡೆಯುವ ಪದ್ಧತಿ ಇದ್ದರೂ, ಇಲ್ಲಿ ತೈಲಾಭಿಷೇಕ ನಡೆಯುವುದು ವಿಶೇಷತೆಯಾಗಿದೆ. ಸ್ವಾಮಿಯ ರಥೋತ್ಸವದ ನಂತರದ ಎರಡನೇ ದಿನದ ಸದ್ಧರ್ಮ ಪೀಠದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮವಾಗಿ ಈ ತೈಲಾಭಿಷೇಕವನ್ನು ಆಚರಿಸಲಾಯಿತು. ಜಮ್ರಳಿ ಪಾಲೇಗಾರರ ವಂಶಸ್ಥರು ಮಣ್ಣಿನ ಕುಡಿಕೆಗಳಲ್ಲಿ ತೈಲವನ್ನು ಹೊತ್ತುಕೊಂಡು ಬಂದು ಶಿಖರದ ಮೇಲೆ ಸುರಿದು ಸಂಪ್ರದಾಯವನ್ನು ಮುಂದುವರಿಸಿದರು. ಬಳಿಕ ಇತರ ಭಕ್ತರೂ ಭಕ್ತಿಯಿಂದ ತೈಲ ಅರ್ಪಿಸಿದರು. ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಹಾಗೂ ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ ಸಂಜೆ 5.55ಕ್ಕೆ ಅಭಿಷೇಕ ಆರಂಭಕ್ಕೆ ಸೂಚನೆ ನೀಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ಅಭಿಷೇಕದ ವೇಳೆ ದೇವಸ್ಥಾನದ ಶಿಖರ ಸಂಪೂರ್ಣ ತೈಲದಿಂದ ಒದ್ದೆಯಾಗಿತ್ತು. ಅಪಾಯವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ಭಕ್ತರ ಸೇವಾಭಾವ ಗಮನಸೆಳೆಯಿತು. ಹರಪನಹಳ್ಳಿ ಸೇರಿದಂತೆ ವಿವಿಧ ಮಠಗಳ ಶಿವಾಚಾರ್ಯರು ಹಾಗೂ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಸ್ಥಾಪನೆಗೆ ಆಗ್ರಹಿಸಿ ನ್ಯಾಯಮೂರ್ತಿಗಳ ಭೇಟಿಯಾದ ಐವನ್ ಡಿಸೋಜ
ಮಂಗಳೂರು, ಎ.21; ಕರಾವಳಿ ಭಾಗದ ಮಂಗಳೂರಿನಲ್ಲಿ ಉಚ್ಛ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪನೆಗೆ ಅಗತ್ಯದ ಕ್ರಮ ಕೈಗೊಳ್ಳುವಂತೆ ಮಂಗಳೂರಿನ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟ ಸಮಿತಿಯು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಮಾಡಿದೆ. ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟ ಸಮಿತಿಯ ಸಂಚಾಲಕ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರು ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ರಾಜೇಶ್ ರೈ ಮತ್ತು ಜಿಲ್ಲೆಯ ಆಡಳಿತ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರನ್ನು ಬುಧವಾರ ಭೇಟಿಯಾಗಿ ಮನವಿ ಮಾಡಿದರು. ದ.ಕ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಹೈಕೋರ್ಟ್ ಪೀಠ ಸ್ಥಾಪನೆ ಮಾಬೇಕೆಂಬ ಬಹುದಿನಗಳ ಹೋರಾಟಕ್ಕೆ ಪೂರಕವಾಗಿ ಸಂಚಾರಿ ಪೀಠವನ್ನು ಸ್ಥಾಪಿಸಿ ಹೈಕೋರ್ಟ್ ಪೀಠದ ಮೊದಲ ಹೆಜ್ಜೆ ಇಡಬೇಕಾಗಿರುವುದರಿಂದ ಸಂಚಾರಿ ಪೀಠಕ್ಕೆ ಬೇಕಾಗುವ ಮೂಲಭೂತ ಸೌಕರ್ಯವಾದ ನ್ಯಾಯಾಲಯದ ಹಾಲ್, ನ್ಯಾಯಾಧೀಶರಿಗೆ ಬೇಕಾಗುವ ವಸತಿ ಗೃಹ, ಕಚೇರಿಗೆ ಸ್ಥಳವಕಾಶ ಒದಗಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಹಳೆಯ ಜಿಲ್ಲಾಧಿಕಾರಿ ಕಚೇರಿ ಮತ್ತು ನ್ಯಾಯಾಧೀಶರು ಗಳಿಗೆ ವಸತಿ ವ್ಯವಸ್ಥೆ ಬಗ್ಗೆ ಸ್ಥಳಾವಕಾಶ ಮೀಸಲಿಡುವಂತೆ ತಿಳಿಸಲಾಗಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಕೂಡಲೇ ಉಚ್ಚ ನ್ಯಾಯಾಲಯ ಸಮಿತಿಯೊಂದು ಜಿಲ್ಲೆಗೆ ಭೇಟಿ ನೀಡಿ, ಮೂಲಭೂತ ಸೌಕರ್ಯ ಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ರಾಜೇಶ್ ರೈ ಮತ್ತು ಎಚ್.ಟಿ. ನರೇಂದ್ರ ಪ್ರಸಾದ್ ಅವರ ಮೂಲಕ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಮಾಡಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
Madhya Pradesh | ವಾರೆಂಟ್ ನೀಡುವ ನೆಪದಲ್ಲಿ ಉದ್ಯಮಿಯ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ: ಐವರು ಪೊಲೀಸರು ಅಮಾನತು
ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ವಾರೆಂಟ್ ಜಾರಿ ಮಾಡುವ ನೆಪದಲ್ಲಿ ಉದ್ಯಮಿಯೋರ್ವರ ಮನೆಗೆ ನುಗ್ಗಿದ ಪೊಲೀಸರು ಮನೆಮಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ. ಇದೀಗ ಈ ಆರೋಪಕ್ಕೆ ಸಂಬಂಧಿಸಿ ಕನಿಷ್ಠ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಎಪ್ರಿಲ್ 1ರಂದು ರಾತ್ರಿ ಈ ಘಟನೆ ನಡೆದಿದೆ. ಐದರಿಂದ 6 ಮಂದಿ ಪೊಲೀಸರು ಮನೆಯೊಂದಕ್ಕೆ ಬಲವಂತವಾಗಿ ನುಗ್ಗಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ದೂರು ಬಂದಿದೆ. ಈ ಕುರಿತು ಇಲಾಖಾ ತನಿಖೆಗೆ ಚಾಲನೆ ನೀಡಲಾಗಿದ್ದು, ನಂತರ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಪ್ರಸ್ತುತ ವಿಜಯನಗರ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖಾ ವರದಿಯ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಕುಮಾರ್ ಪ್ರತೀಕ್ ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ನಿವೃತ್ತ ಎಸಿಪಿ ರಾಕೇಶ್ ಗುಪ್ತಾ ಅವರೊಂದಿಗಿನ ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ಗೌರವ್ ಜೈನ್ ಎಂಬಾತನಿಗೆ ವಾರಂಟ್ ನೀಡಲು ಪೊಲೀಸರು ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ. ಮನೆಯಲ್ಲಿದ್ದ ಸುಮಾರು 233 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಪೊಲೀಸರು ಕಳ್ಳತನ ಮಾಡಿದ್ದಾರೆ ಎಂದು ಮನೆ ಮಾಲಕರು ಆರೋಪಿಸಿದ್ದಾರೆ.
ಕಲಬುರಗಿ| ಶಿಕ್ಷಣ ಎಲ್ಲರ ಹಕ್ಕು : ಡಾ.ಸೈಯದ್ ಮುಸ್ತಫಾ ಹುಸೈನಿ
ಕಲಬುರಗಿ: ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಶಿಕ್ಷಣದಲ್ಲಿದ್ದು, ಉತ್ತಮ ಶಿಕ್ಷಣ ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಕೆಬಿಎನ್ ವಿವಿಯ ಕ್ಯಾಂಪಸ್ ನಿರ್ದೇಶಕ ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಹೇಳಿದರು. ಬುಧವಾರ ಸೈಯದ್ ಅಕ್ಬರ್ ಹುಸೈನಿ ಅಕಾಡೆಮಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪಿಯುಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ವಿದ್ಯಾರ್ಥಿಗಳು ಬೇರೆ ಊರುಗಳಿಗೆ ತೆರಳಿ ಹೆಚ್ಚಿನ ವೆಚ್ಚ ಮಾಡಬೇಕಾಗಿಲ್ಲ. ಗುಲ್ಬರ್ಗಾದಲ್ಲಿಯೇ ಅಕಾಡೆಮಿ ಮೂಲಕ ಪಿಯುಸಿ ಹಂತದಿಂದಲೇ ಸಿಇಟಿ, ಜೆಇಇ, ನೀಟ್ ತರಬೇತಿಯನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಕೆಬಿಎನ್ ವಿವಿಯ ಉಪಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಮಾತನಾಡಿ, 10ನೇ ತರಗತಿಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 100% ವಿದ್ಯಾರ್ಥಿವೇತನ, 90ರಿಂದ 94% ಅಂಕ ಪಡೆದವರಿಗೆ 50% ರಿಯಾಯಿತಿ ನೀಡಲಾಗುತ್ತದೆ ಎಂದರು. ಕಠಿಣ ಪರಿಶ್ರಮ, ಸಮಯ ಪಾಲನೆ ಮತ್ತು ಕೇಂದ್ರೀಕರಣದಿಂದ ಯಾವುದೇ ಗುರಿ ಸಾಧಿಸಬಹುದು ಎಂದು ಹೇಳಿದರು. ಸಮ ಉಪಕುಲಪತಿ ಪ್ರೊ.ಅಶ್ಫಾಕ್ ಅಹ್ಮದ್ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕೋರ್ಸ್ಗಳು ಹಾಗೂ ನುರಿತ ಉಪನ್ಯಾಸಕರನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರೊ.ಪಠಾಣ ಅವರು ಖಾಜಾ ಶಿಕ್ಷಣ ಸಂಸ್ಥೆಯ ಬೆಳವಣಿಗೆ ಹಾಗೂ ಸಮಾಜದಲ್ಲಿ ಶಿಕ್ಷಣ ಹರಡುವಲ್ಲಿ ಅದರ ಪಾತ್ರ ಕುರಿತು ಮಾತನಾಡಿ, ದಿವಂಗತ ಡಾ.ಸೈಯದ್ ಶಾಹ್ ಖುಸ್ರೋ ಹುಸೈನಿ ಸಾಹೇಬರ ಕನಸು ಸಾಕಾರವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಫಿರೋಜ್ ಸೇರಿದಂತೆ ಹಲವರು ಮಾತನಾಡಿದರು. ತರಬೇತಿಗೆ ನೇಮಕ ಮಾಡಲಾದ ಅಧ್ಯಾಪಕರನ್ನು ಉಪನ್ಯಾಸಕ ಶಾರುಖ್ ಪರಿಚಯಿಸಿದರು. ಸಾಧನೆಗೈದ ಹಳೆಯ ವಿದ್ಯಾರ್ಥಿಗಳಿಗೆ ಮೆಮೆಂಟೋ ಸನ್ಮಾನಿಸಲಾಯಿತು. ಮೌಲನಾ ನಸೀರ್ ಪ್ರಾರ್ಥಿಸಿದರು. ಇಂಗ್ಲೀಷ್ ಉಪನ್ಯಾಸಕಿ ಹುಮೆರಾ ಸುಲ್ತಾನಾ ನಿರೂಪಿಸಿ ಸ್ವಾಗತಿಸಿದರು. ಡಾ ಫಿರೋಜ ಪ್ರಸ್ತಾವಿಕ ನುಡಿದರು. ಫಿಸಿಕ್ಸ್ ಉಪನ್ಯಾಸಕಿ ಸಬೀನಾ ವಂದಿಸಿದರು.
ಇರಾನ್ ನೊಂದಿಗೆ ಮಾತುಕತೆಯಲ್ಲಿ ಶುಕ್ರವಾರದ ವೇಳೆಗೆ ಶುಭಸುದ್ದಿ ಬರಬಹುದು: ಟ್ರಂಪ್
ವಾಶಿಂಗ್ಟನ್, ಎ.22: ಇರಾನ್ನೊಂದಿಗೆ ಎರಡನೇ ಸುತ್ತಿನ ಮಾತುಕತೆ ಕುರಿತು ಶುಕ್ರವಾರದ ವೇಳೆಗೆ ಒಳ್ಳೆಯ ಸುದ್ದಿ ಬರಬಹುದು. 36ರಿಂದ 72 ಗಂಟೆಗಳೊಳಗೆ ಶಾಂತಿ ಮಾತುಕತೆ ಪುನರಾರಂಭಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಬುಧವಾರ ವರದಿ ಮಾಡಿದೆ. ‘ಇರಾನ್ನ ನಾಯಕರು ಮತ್ತು ಪ್ರತಿನಿಧಿಗಳು ಏಕೀಕೃತ ಪ್ರಸ್ತಾಪವನ್ನು ಮಂಡಿಸುವವರೆಗೆ ಇರಾನ್ ದೇಶದ ಮೇಲೆ ದಾಳಿ ನಡೆಸದಂತೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೋರಿದ್ದಾರೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಇರಾನ್ನ ಮಾಧ್ಯಮಗಳು, ‘ಟ್ರಂಪ್ ಮತ್ತೆ ಸುಳ್ಳು ಹೇಳುತ್ತಿದ್ದಾರೆ. ಮಾತುಕತೆಯ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ’ ಎಂದು ವರದಿ ಮಾಡಿವೆ.
I-PAC ಪ್ರಕರಣ | ಮಮತಾ ಬ್ಯಾನರ್ಜಿ ವರ್ತನೆ ಪ್ರಜಾಪ್ರಭುತ್ವವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು: ಸುಪ್ರೀಂ ಕೋರ್ಟ್ ಕಿಡಿ
ಹೊಸದಿಲ್ಲಿ, ಎ.22: I-PAC ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹಸ್ತಕ್ಷೇಪದ ಬಗ್ಗೆ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು, ತಮ್ಮ ವರ್ತನೆಯ ಮೂಲಕ ಅವರು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಿದ್ದರು ಎಂದು ಕಿಡಿಕಾರಿದೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆಗೆ ಒಂದು ದಿನ ಮುನ್ನ ನ್ಯಾಯಾಲಯದ ಈ ಕಟು ಹೇಳಿಕೆ ಹೊರಬಿದ್ದಿದೆ. ಟಿಎಂಸಿಗಾಗಿ ಕೆಲಸ ಮಾಡುವ I-PAC ಕುರಿತು ತನ್ನ ತನಿಖೆ ಮತ್ತು ಅದರ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆಗಳಲ್ಲಿ ಬ್ಯಾನರ್ಜಿ ಮತ್ತು ರಾಜ್ಯದ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದರು ಎಂದು ಇಡಿ ಆರೋಪಿಸಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜನವರಿ ಆರಂಭದಲ್ಲಿ ಈ ದಾಳಿಗಳು ನಡೆದಿದ್ದವು. ಇದು ರಾಜ್ಯ ಮತ್ತು ಕೇಂದ್ರದ ನಡುವಿನ ವಿವಾದವಲ್ಲ. ಯಾವುದೇ ರಾಜ್ಯದ ಮುಖ್ಯಮಂತ್ರಿ ತನಿಖೆಯ ನಡುವೆ ಪ್ರವೇಶಿಸುವಂತಿಲ್ಲ; ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸುವಂತಿಲ್ಲ ಮತ್ತು ಬಳಿಕ ಇದನ್ನು ರಾಜ್ಯ-ಕೇಂದ್ರ ವಿವಾದವನ್ನಾಗಿ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಕುಟುಕಿತು. ಇಡಿ ಪ್ರಕಾರ, ಅಧಿಕಾರಿಗಳೊಂದಿಗೆ I-PAC ಕಚೇರಿ ಮತ್ತು ಅದರ ಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸವನ್ನು ಪ್ರವೇಶಿಸಿದ್ದ ಬ್ಯಾನರ್ಜಿ ಲ್ಯಾಪ್ಟಾಪ್, ಫೋನ್ ಮತ್ತು ಹಲವಾರು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ಇಡಿ ದಾಳಿಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ಚುನಾವಣೆಗೆ ಮುನ್ನ ಟಿಎಂಸಿಯನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿವೆ ಎಂದು ಸರ್ಕಾರ ಆರೋಪಿಸಿತ್ತು. ಸಂವಿಧಾನ ನಿರ್ಮಾತೃರೂ ಇಂತಹ ಕೃತ್ಯವನ್ನು ಒಪ್ಪುತ್ತಿರಲಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯ, ಒಂದು ದಿನ ದೇಶದ ಹಾಲಿ ಮುಖ್ಯಮಂತ್ರಿಯೋರ್ವರು ತನಿಖೆ ನಡೆಯುವ ವೇಳೆ ಮಧ್ಯೆ ಪ್ರವೇಶಿಸುವ ಸ್ಥಿತಿ ಬರುತ್ತದೆ ಎಂದು ಅವರಲ್ಲಿ ಒಬ್ಬರೂ ಊಹಿಸಿರಲಿಲ್ಲ ಎಂದು ಕುಟುಕಿತು.
ಹುಣಸಗಿ | ಕಳ್ಳತನ ಪ್ರಕರಣ : 41 ಲಕ್ಷ ರೂ. ಮೌಲ್ಯದ ಬಂಗಾರ, ನಗದು ವಶ
ಆರೋಪಿಗಳ ಬಂಧನ
Nepal | ನೂತನ ಸರ್ಕಾರದ ವಿರುದ್ಧ ಪ್ರತಿಭಟನೆ
ಕಠ್ಮಂಡು, ಎ.22: ನೇಪಾಳದಲ್ಲಿ ಬಾಲೆನ್ ಶಾ ನೇತೃತ್ವದಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳು ಹಾಗೂ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ. ರಾಜಧಾನಿ ಕಠ್ಮಂಡು ಹಾಗೂ ಇತರ ನಗರಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಭಾರತದಿಂದ ಆಮದಾಗುವ 100 ರೂ.ಗಿಂತ ಅಧಿಕ ಮೌಲ್ಯದ ಸರಕುಗಳಿಗೆ ಕಸ್ಟಮ್ಸ್ ಸುಂಕ ವಿಧಿಸುವ ಸರ್ಕಾರದ ಹೊಸ ನಿಯಮವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಗಡಿಭಾಗದ ಸಮೀಪ ನೆಲೆಸಿರುವ ಜನರು ದೈನಂದಿನ ಬಳಕೆಯ ವಸ್ತುಗಳನ್ನು ಗಡಿಯಾಚೆಯಿಂದ ಖರೀದಿಸುತ್ತಾರೆ. ಹೊಸ ನಿಯಮವು ತಮ್ಮ ಖರ್ಚುಗಳನ್ನು ಹೆಚ್ಚಿಸುತ್ತದೆ ಮತ್ತು ಜೀವನವನ್ನು ಕಷ್ಟಕರವಾಗಿಸುತ್ತದೆ ಎಂಬ ಅಸಮಾಧಾನ ಹೆಚ್ಚಿದೆ. ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವಿದ್ಯಾರ್ಥಿ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರದ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದಾಗಿ ವರದಿಯಾಗಿದೆ.
West Bengal | ವಿಧಾನಸಭೆ ಚುನಾವಣೆ: ನಾಳೆ(ಎ.23) ಮೊದಲ ಹಂತದ ಮತದಾನ
ಕೋಲ್ಕತಾ, ಎ.22: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಮತದಾನ ಗುರುವಾರ ನಡೆಯಲಿದೆ. ಮೊದಲ ಹಂತದಲ್ಲಿ 294 ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಹಂತದಲ್ಲಿ 1,478 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 2,407 ತುಕಡಿಗಳನ್ನು ನಿಯೋಜಿಸಿದೆ. ಈ ಚುನಾವಣೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಬಿಜೆಪಿಯ ನಡುವಿನ ನೇರ ಸ್ಪರ್ಧೆಯಾಗಿದೆ. ಉಳಿದ 142 ಕ್ಷೇತ್ರಗಳಿಗೆ ಎಪ್ರಿಲ್ 29ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಮುಂದಿನ 4-5 ದಿನಗಳಲ್ಲಿ ಭಾರತದ ಹಲವು ಭಾಗಗಳಲ್ಲಿ ಬಿಸಿ ಗಾಳಿ: ಐಎಂಡಿ ಎಚ್ಚರಿಕೆ
ಹೊಸದಿಲ್ಲಿ, ಎ.22: ಮುಂದಿನ ನಾಲ್ಕು-ಐದು ದಿನಗಳಲ್ಲಿ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳಲ್ಲಿ ಬಿಸಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ಐಎಂಡಿ ಬಿಡುಗಡೆ ಮಾಡಿದ ವರದಿ ಪ್ರಕಾರ, ಪಂಜಾಬ್, ಹರಿಯಾಣ, ಚಂಡಿಗಢ ಮತ್ತು ದಿಲ್ಲಿಯ ಕೆಲವು ಭಾಗಗಳಲ್ಲಿ ಎಪ್ರಿಲ್ 24 ಮತ್ತು 25ರಂದು ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಎಪ್ರಿಲ್ 23ರಿಂದ 25ರವರೆಗೆ ಪಶ್ಚಿಮ ಉತ್ತರಪ್ರದೇಶ ಹಾಗೂ ಎಪ್ರಿಲ್ 22ರಿಂದ 26ರವರೆಗೆ ಪೂರ್ವ ಉತ್ತರಪ್ರದೇಶ ಬಿಸಿ ಗಾಳಿ ಅನುಭವಿಸಲಿದೆ. ರಾಜಸ್ಥಾನ (ಎಪ್ರಿಲ್ 24–26) ಮತ್ತು ಮಧ್ಯ ಪ್ರದೇಶ (ಎಪ್ರಿಲ್ 23–26) ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಲಿದೆ. ವಿದರ್ಭ, ಛತ್ತೀಸ್ಗಢ ಹಾಗೂ ಮಧ್ಯ ಮತ್ತು ಪೂರ್ವ ವಲಯಗಳಲ್ಲಿ ಎಪ್ರಿಲ್ 24ರಿಂದ 27ರವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದ ಗಂಗಾ ತೀರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ನಲ್ಲಿ ಎಪ್ರಿಲ್ 22 ಮತ್ತು 23ರಂದು ಬಿಸಿ ಗಾಳಿ ಬೀಸಲಿದೆ. ಇದೇ ವೇಳೆ, ಒಡಿಶಾ, ಆಂಧ್ರಪ್ರದೇಶ ಕರಾವಳಿ, ಯಾನಂ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ, ಕರ್ನಾಟಕ ಕರಾವಳಿ ಮತ್ತು ಗುಜರಾತ್ ಕರಾವಳಿಯಲ್ಲಿ ಬಿಸಿ ಹಾಗೂ ಆರ್ದ್ರ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಹರಿಯಾಣ, ಚಂಡಿಗಢ, ದಿಲ್ಲಿ, ಒಡಿಶಾ ಮತ್ತು ಕೊಂಕಣ-ಗೋವಾ ಭಾಗಗಳಲ್ಲಿ ರಾತ್ರಿ ವೇಳೆಯೂ ಬೆಚ್ಚಗಿನ ವಾತಾವರಣ ಇರಲಿದೆ ಎಂದು ಐಎಂಡಿ ತಿಳಿಸಿದೆ.
ಬಿಜೆಪಿ ದೂರಿನ ಮರುದಿನವೇ ಪ್ರಧಾನಿ ಮೋದಿ ಕುರಿತು ‘ಭಯೋತ್ಪಾದಕ’ ಹೇಳಿಕೆಗಾಗಿ ಖರ್ಗೆಗೆ EC ನೋಟಿಸ್
ಹೊಸದಿಲ್ಲಿ, ಎ.22: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದಂತೆ ಇತ್ತೀಚಿನ ಹೇಳಿಕೆಗಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣಾ ಆಯೋಗ (EC) ಶೋಕಾಸ್ ನೋಟಿಸ್ ಹೊರಡಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ಬುಧವಾರ ವರದಿ ಮಾಡಿದೆ. ಮೋದಿ ಕುರಿತು ಖರ್ಗೆಯವರ ‘ಭಯೋತ್ಪಾದಕ’ ಹೇಳಿಕೆಯನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಅವರಿಗೆ ‘ಕಠಿಣ ನೋಟಿಸ್’ ನೀಡಿದೆ ಎಂದು ವರದಿ ತಿಳಿಸಿದೆ. 24 ಗಂಟೆಗಳೊಳಗೆ ತನ್ನ ನಿಲುವನ್ನು ವಿವರಿಸುವಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆಗೆ ಸೂಚಿಸಲಾಗಿದೆ. ಮಂಗಳವಾರ ಆಯೋಗಕ್ಕೆ ಅಹವಾಲು ಸಲ್ಲಿಸಿದ್ದ ಬಿಜೆಪಿ, ಖರ್ಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಖರ್ಗೆಯವರ ಹೇಳಿಕೆಗಾಗಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಮ್ಗಳಡಿ ಅವರ ವಿರುದ್ಧ ‘ಸೂಕ್ತ ದಂಡನೀಯ ಮತ್ತು ನಿಯಂತ್ರಕ ಕ್ರಮಗಳನ್ನು’ ಕೈಗೊಳ್ಳುವಂತೆ ಹಾಗೂ ‘ಸೂಕ್ತ ಪ್ರಚಾರ ನಿರ್ಬಂಧಗಳನ್ನು’ ವಿಧಿಸುವಂತೆಯೂ ಬಿಜೆಪಿ ಆಗ್ರಹಿಸಿದೆ. ತಮಿಳುನಾಡಿನಲ್ಲಿ ಪ್ರಚಾರದ ಕೊನೆಯ ದಿನವಾಗಿದ್ದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಖರ್ಗೆ, ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿಯನ್ನು ಟೀಕಿಸುವ ವೇಳೆ ಮೋದಿಯವರನ್ನು ‘ಭಯೋತ್ಪಾದಕ’ ಎಂದು ಉಲ್ಲೇಖಿಸಿದ್ದಾಗಿ ಆರೋಪಿಸಲಾಗಿದೆ. ನಂತರ ಸುದ್ದಿಗಾರರು ಈ ಬಗ್ಗೆ ಸ್ಪಷ್ಟನೆ ಕೇಳಿದಾಗ, ಖರ್ಗೆ ‘ಪ್ರಧಾನಿಯವರು ದೇಶದ ಪ್ರಜಾಸತ್ತಾತ್ಮಕ ಸ್ವರೂಪಕ್ಕೆ ಭೀತಿ ಉಂಟುಮಾಡುತ್ತಿದ್ದಾರೆ’ ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾಳೆ ಭಾರತದ ಸಮಯ ಬರಬಹುದು: ರಾಜ್ ನಾಥ್
ಹೊಸದಿಲ್ಲಿ, ಎ. 22: ಪಶ್ಚಿಮ ಏಶ್ಯ ಬಿಕ್ಕಟ್ಟು ಸೇರಿದಂತೆ ಜಾಗತಿಕ ಸಂಘರ್ಷಗಳನ್ನು ಪರಿಹರಿಸುವಲ್ಲಿ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಮತೋಲಿತ ರಾಜತಾಂತ್ರಿಕ ನೀತಿಯನ್ನು ಅನುಸರಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಬುಧವಾರ ಹೇಳಿದ್ದಾರೆ. ಬರ್ಲಿನ್ ನ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಮೆರಿಕ-ಇರಾನ್ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಭಾರತವು ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದರು. ಆದರೆ, ಫಲಿತಾಂಶವು ಸಮಯ ಮತ್ತು ಜಾಗತಿಕ ಸ್ಥಿತಿಗತಿಗಳನ್ನು ಅವಲಂಬಿಸಿದೆ ಎಂದರು. ‘‘ಭಾರತ ಪ್ರಯತ್ನಿಸಿದೆ. ಆದರೆ ಪ್ರತಿಯೊಂದಕ್ಕೂ ಅದರದ್ದೇ ಆದ ಸಮಯವಿದೆ. ನಾಳೆ ಆ ಸಮಯ ಬರಬಹುದು ಹಾಗೂ ಭಾರತವು ಈ ಶಾಂತಿ ಪ್ರಕ್ರಿಯೆಯಲ್ಲಿ ತನ್ನ ಪಾತ್ರ ವಹಿಸಿ ಯಶಸ್ಸು ಗಳಿಸಬಹುದು. ಈ ಸಾಧ್ಯತೆಯನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಯುದ್ಧವನ್ನು ನಿಲ್ಲಿಸುವಂತೆ ಪ್ರಧಾನಿ ಉಭಯ ಬಣಗಳಿಗೂ ಮನವಿ ಮಾಡಿದ್ದಾರೆ. ನಮ್ಮ ಪ್ರಧಾನಿ ರಾಜತಾಂತ್ರಿಕ ವಿಷಯಗಳಲ್ಲಿ ಅತ್ಯಂತ ಸಮತೋಲಿತ ದೃಷ್ಟಿಕೋನ ಹೊಂದಿದ್ದಾರೆ’’ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಪಣಂಬೂರು: ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ಸೆರೆ
ಪಣಂಬೂರು: ಸುಳಿಗೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ಓರ್ವನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕಸಬಾ ಬೆಂಗ್ರೆ ನಿವಾಸಿ ಚಂದು ಹರೀಶ್ (33) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿಕೇರಿ ಜಿಲ್ಲೆಯ ಸೋಮವಾರ ಪೇಟೆಯ ಮೂವರು ಸ್ನೇಹಿತರು ತಣ್ಣೀರು ಬಾವಿ ಬೀಚ್ ಗೆ ಬಂದಿದ್ದರು. ಆಗ ದಾರಿ ತಪ್ಪಿದ್ದ ಕಾರಣ ರಸ್ತೆ ಬದಿ ಇದ್ದ ವ್ಯಕ್ತಿಯೊಬ್ಬರೊಂದಿಗೆ ವಿಳಾಸ ಕೇಳಲು ವಾಹನ ನಿಲ್ಲಿಸಿದಾಗ ಆರೋಪಿ ಗಳಾದ ಕಸಬಾ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಸಿನಾನ್ (24) ಝಹೀರ್ ನಿಸಾರ್( 22) ಮತ್ತು ಚಂದ್ರು ಹರೀಶ್ ಎಂಬವರು ಸ್ಕ್ರೂ ಡ್ರೈವರ್ ಬಳಸಿ ಚುಚ್ಚುವ ಬೆದರಿಕೆ ಹಾಕಿ ಸುಮಾರು 34,500 ರೂ. ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮಡಿಕೇರಿ ಸೋಮವಾರಪೇಟೆ ನಿವಾಸಿ ಅಜಯ್ ಕೆ. ಎಂಬವರು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ತನಿಖೆ ನಡೆಸಿದ ಪಣಂಬೂರು ವೃತ್ತ ನಿರೀಕ್ಷಕ ಸಲೀಮ್ ಅಬ್ಬಾಸ್ ನೇತೃತ್ವದ್ ಪೊಲೀಸ್ ತಂಡ ಮುಹಮ್ಮದ್ ಸಿನಾನ್ ಮತ್ತು ಝಹೀರ್ ನಿಸಾರ್ ನನ್ನು ಬಂಧಿಸಿತ್ತು. ಈ ಪ್ರಕರಣ ಸೇರಿ ಬಂಧನಕ್ಕೆ ಬಾಕಿಯಿದ್ದು ಮೂರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದ ಚಂದುನನ್ನು ಎ.22ರಂದು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚಿನ ಪ್ರಕರಣ ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಪಕ್ಷಗಳು ಮಹಿಳಾ ವಿರೋಧಿ ಮನಃಸ್ಥಿತಿಯನ್ನು ಹೊಂದಿವೆ : ಶಾಸಕಿ ಭಾಗೀರಥಿ ಮುರುಳ್ಯ ಆರೋಪ
ಮಂಗಳೂರು: ವಿರೋಧ ಪಕ್ಷಗಳು ಮಹಿಳಾ ವಿರೋಧಿ ಮನಃಸ್ಥಿತಿಯನ್ನು ಹೊಂದಿವೆ. ಹೀಗಾಗಿ ನಾರಿಶಕ್ತಿ ವಂದನ ಮಸೂದೆ ಪರವಾಗಿ ನಿಂತಿಲ್ಲ. ಈ ಮಸೂದೆಯನ್ನು ಸೋಲಿಸುವ ಮೂಲಕ ವಿಪಕ್ಷಗಳು ಸಮಾಜದ ನಂಬಿಕೆಯನ್ನು ಕಳೆದುಕೊಂಡಿವೆ ಎಂದು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಮಹಿಳೆಯರ ಸಬಲೀಕರಣ ಸಮಾನತೆ ಹಾಗೂ ನ್ಯಾಯದ ಕುರಿತು ಜಾಗೃತಿ ಮೂಡಿಸಲು ನಾರಿ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಬುಧವಾರ ನಡೆದ ಜನಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು. ಮಹಿಳೆ ಅಬಲೆಯಲ್ಲ, ಸಬಲೆ ಎಂದು ತೋರಿಸುವ ನಿಟ್ಟಿನಲ್ಲಿ, ಮಸೂದೆ ಪರವಾಗಿ ವಿಧಾನಸೌಧ, ಸಂಸತ್ತಿನಲ್ಲಿಯೂ ಪ್ರತಿಭಟನೆ ನಡೆಸಲು ನಾವು ಸಿದ್ದರಾಗಿದ್ದೇವೆ ಎಂದು ಹೇಳಿದರು. ಮಹಿಳೆಯರು ಸಬಲರಾಗಲು ವಿರೋಧ ಪಕ್ಷದವರಿಗೆ ಸಹಮತ ಇಲ್ಲ. ಶೇ.33ರಷ್ಟು ಮಹಿಳೆಯರು ಜನಪ್ರತಿ ನಿಧಿಗಳಾಗಿ ಆಯ್ಕೆಯಾದರೆ, ಪುರುಷರು ಮೂಲೆಗುಂಪಾಗುತ್ತಾರೆ ಎಂಬ ಭಯ ಅವರಲ್ಲಿ ಹುಟ್ಟಿದೆ. ಈ ಮಸೂದೆ ಅಂಗೀಕಾರ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು. ವಕೀಲೆ ಸಹನಾ ಕುಂದರ್ ಮಾತನಾಡಿ, ಕಳೆದ ಶುಕ್ರವಾರ ದೇಶಕ್ಕೆ ಕರಾಳ ದಿನ. ಅದೆಷ್ಟೋ ಮಹಿಳೆಯರ ಆಸೆ ಯನ್ನು ವಿರೋಧ ಪಕ್ಷಗಳು ನಿರಾಸೆಗೊಳಿಸಿವೆ. ಇದು ಈ ದೇಶದ 71 ಕೋಟಿ ಮಹಿಳೆಯರಿಗೆ ಆಗಿರುವ ಸೋಲು, ವಿಪಕ್ಷಗಳು ಮಹಿಳೆಯರಿಗೆ ಮಾಡಿರುವ ಅವಮಾನ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದರು.
ವಿಟ್ಲ: ಮಹಿಳೆಗೆ ಜಾತಿ ನಿಂದನೆ, ಮಾನಸಿಕ ಕಿರುಕುಳ ಪ್ರಕರಣ; ಸಹಕಾರಿ ಸಂಘದ ಕಚೇರಿ ಮುಂಭಾಗ ಪ್ರತಿಭಟನೆ
ವಿಟ್ಲ: ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಸಿಬ್ಬಂದಿ ವರ್ಗದವರು ಕಳೆದ 24 ವರ್ಷಗಳಿಂದ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರಕರಣ ದಾಖಲಾಗಿದ್ದು, ಇದೀಗ ದಲಿತ ಸಂಘಟನೆಗಳ ನೇತೃತ್ವದಲ್ಲಿ ನೇರಳಕಟ್ಟೆ ಸಹಕಾರಿ ಸಂಘದ ಕಚೇರಿಯ ಮುಂಭಾಗದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ಪ್ರತಿಭಟನೆ ನಡೆಸಿದೆ. ನೇರಳಕಟ್ಟೆ ಸಹಕಾರಿ ಸಂಘದಲ್ಲಿ ಸುಮಾರು ಎರಡು ದಶಕಗಳಿಂದ ಕ್ಲರ್ಕ್ ಕೆಲಸ ಮಾಡುತ್ತಿದ್ದ ಸೇಸಮ್ಮ ಎಂಬ ಮಹಿಳೆಯ ಮೇಲೆ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ ಮತ್ತು ಪ್ರಭಾರ ಮ್ಯಾನೇಜರ್ ಯತೀಶ್ ಗೌಡ ಅವರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಜೊತೆಗೆ ಸೇಸಮ್ಮ ಅವರಿಗೆ ಕೆಲಸಕ್ಕೆ ಬರದಂತೆ ಸೂಚಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಸಲಾಗಿದೆ. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘಟನೆಯ ಮುಖ್ಯಸ್ಥರಾದ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ “ಕೋರ್ಟ್ ಆದೇಶದ ಬಗ್ಗೆ ನಮಗೆ ಗೌರವವಿದೆ, ಆದರೆ ತನಿಖೆಗೆ ತಡೆ ನೀಡಬಾರದು. 24 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ ಮಹಿಳೆಗೆ ಅನ್ಯಾಯವಾಗಿದೆ. ಮೇಲಾಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಸೇಸಮ್ಮ ಅವರಿಗೆ ಮೌಖಿಕವಾಗಿ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಿದ ಮೇಲೆಯೂ ಅವರಿಗೆ ಕೆಲಸ ಮಾಡಲು ಅವಕಾಶ ನೀಡದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಮತ್ತು ನೊಂದ ಮಹಿಳೆಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶವನ್ನು ನೀಡಬೇಕು ಎಂದು ಆಗ್ರಹಿಸಿದರು. ದೂರು ತಡೆಯಾಜ್ಞೆಯ ಬಗ್ಗೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಸೂರತ್ ನಿಂದ ಪಶ್ಚಿಮ ಬಂಗಾಳಕ್ಕೆ ಮತದಾರರನ್ನು ಸಾಗಿಸಲು ಬಿಜೆಪಿಯಿಂದ ವಿಶೇಷ ರೈಲು: TMC ಆರೋಪ
ಕೋಲ್ಕತಾ, ಎ. 22: ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಹಂತದ ಮತದಾನಕ್ಕೆ ಪೂರ್ವದ 48 ಗಂಟೆಗಳ ಅವಧಿಯಲ್ಲಿ ಬಿಜೆಪಿಯು ಸೂರತ್ ನಿಂದ ಪಶ್ಚಿಮ ಬಂಗಾಳಕ್ಕೆ ವಿಶೇಷ ರೈಲುಗಳನ್ನು ಏರ್ಪಡಿಸಿದೆ ಎಂಬುದಾಗಿ ಆರೋಪಿಸಿ ತೃಣಮೂಲ ಕಾಂಗ್ರೆಸ್ (TMC) ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮತಗಳನ್ನು ಹಾಕುವುದಕ್ಕಾಗಿ ಪಶ್ಚಿಮ ಬಂಗಾಳಕ್ಕೆ ವಾಪಸಾಗುವ ವಲಸೆ ಕಾರ್ಮಿಕರಿಗಾಗಿ ಬಿಜೆಪಿ ಮತ್ತು ಅದರ ಗುಜರಾತ್ ಘಟಕವು ವಿಶೇಷ ರೈಲು ಸೇವೆಗಳನ್ನು ಒದಗಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ TMC ಸಂಸದ ಡೆರೆಕ್ ಒಬ್ರಿಯನ್ ಆರೋಪಿಸಿದ್ದಾರೆ. ಬಿಜೆಪಿಯು ಪಶ್ಚಿಮ ಬಂಗಾಳಕ್ಕೆ ಮರಳುವ ಮತದಾರರಿಗೆ ಉಚಿತ ಟಿಕೆಟ್, ಆಹಾರ ಮತ್ತು ತಿಂಡಿ-ತಿನಿಸುಗಳನ್ನು ನೀಡಿದೆ ಎಂದು ಆರೋಪಿಸಿರುವ ಅವರು, ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೂರತ್ ನಿಂದ ಹೊರಡುತ್ತಿರುವ ರೈಲೊಂದರ ಚಿತ್ರವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಒಬ್ರಿಯನ್, ಇದು ಮತದಾರರನ್ನು ಪಶ್ಚಿಮ ಬಂಗಾಳಕ್ಕೆ ಸಾಗಿಸಲು ಬಿಜೆಪಿ ಮಾಡಿರುವ ಏರ್ಪಾಡಾಗಿದೆ ಎಂದು ಹೇಳಿದ್ದಾರೆ. ಈ ಮತದಾರರ ಜೊತೆಗೆ ಗುಜರಾತ್ ಬಿಜೆಪಿ ಸದಸ್ಯರು ಪ್ರಯಾಣಿಸುತ್ತಿದ್ದು, TMC ವಿರುದ್ಧ ಮತ ಚಲಾಯಿಸುವಂತೆ ಅವರು ಮತದಾರರನ್ನು ಒತ್ತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ರೈಲ್ವೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವಂತಿಲ್ಲ ಎಂದು TMC ನಾಯಕರು ತಿಳಿಸಿದ್ದಾರೆ.
ಬೆಂಗಳೂರು ಜೈಲಿನಲ್ಲಿ ತೀವ್ರಗಾಮಿ ಪ್ರಕರಣ | 7 ಆರೋಪಿಗಳಿಗೆ ಶಿಕ್ಷೆ ವಿಧಿಸಿದ NIA ಕೋರ್ಟ್
ಹೊಸದಿಲ್ಲಿ, ಎ.22: ವಿಶೇಷ NIA ನ್ಯಾಯಾಲಯವು 2023ರ ಬೆಂಗಳೂರು ಜೈಲಿನ ತೀವ್ರಗಾಮಿ ಚಟುವಟಿಕೆಗಳ ಪ್ರಕರಣದಲ್ಲಿ ಸಂಚಿನ ರೂವಾರಿ ಹಾಗೂ ಲಷ್ಕರೆ ತೈಬಾ (LET) ಉಗ್ರ ಟಿ. ನಸೀರ್ ಸೇರಿದಂತೆ ಏಳು ಆರೋಪಿಗಳಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಸೈಯದ್ ಸುಹೈಲ್ ಖಾನ್, ಮುಹಮ್ಮದ್ ಉಮರ್, ಝಾಹಿದ್ ತಬ್ರೇಜ್, ಸೈಯದ್ ಮುದಾಸ್ಸಿರ್ ಪಾಷಾ, ಮುಹಮ್ಮದ್ ಫೈಸಲ್ ರಬ್ಬಾನಿ ಮತ್ತು ಸಲ್ಮಾನ್ ಖಾನ್ ಅವರು ನಸೀರ್ ಜೊತೆ ಶಿಕ್ಷೆಗೆ ಗುರಿಯಾದವರು. ಎಲ್ಲರಿಗೂ ತಲಾ 48,000 ರೂ. ದಂಡ ವಿಧಿಸಲಾಗಿದೆ. ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಸೀರ್ ರೂಪಿಸಿದ್ದ ಲಷ್ಕರೆ ತೈಬಾ ನಂಟಿನ ಭಯೋತ್ಪಾದನಾ ಸಂಚಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಜೈಲಿನಲ್ಲಿರುವ ಸುಲಭವಾಗಿ ಸೆಳೆಯಬಹುದಾದ ಯುವಕರನ್ನು ಗುರುತಿಸಿ ನೇಮಕಾತಿ, ತರಬೇತಿ, ಮತಾಂತರ ಮತ್ತು ಮೂಲಭೂತೀಕರಣ ನಡೆಸುವ ಸಂಚು ಇದಾಗಿತ್ತು ಎಂದು NIA ತಿಳಿಸಿದೆ. ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಜುಲೈ 2023ರಲ್ಲಿ ಪ್ರಕರಣ ದಾಖಲಿಸಿತ್ತು. ಅಪರಾಧಿಗಳು ನಿಷೇಧಿತ LET ಸಂಘಟನೆಯ ಭಾರತ ವಿರೋಧಿ ಅಜೆಂಡಾವನ್ನು ಮುಂದುವರಿಸಲು ಬೆಂಗಳೂರು ನಗರದಲ್ಲಿ ದಾಳಿಗಳನ್ನು ನಡೆಸಲು ಯೋಜಿಸಿದ್ದರು. NIA ತನಿಖೆ ಬಳಿಕ, ಹಲವಾರು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಸೀರ್ ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಸಾಗಿಸುವ ವೇಳೆ ಪರಾರಿಯಾಗಿಸಲು ರೂಪಿಸಿದ್ದ ದೊಡ್ಡ ಸಂಚು ಬಹಿರಂಗವಾಯಿತು. 11 ಬಂಧಿತ ಆರೋಪಿಗಳು ಮತ್ತು ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ವಿರುದ್ಧ NIA ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಸಲ್ಮಾನ್ ಖಾನ್ ಅವರನ್ನು ರಿಪಬ್ಲಿಕ್ ಆಫ್ ರ್ವಾಂಡಾದಿಂದ ಗಡಿಪಾರು ಮಾಡಿದ ಬಳಿಕ ಬಂಧಿಸಲಾಗಿದೆ. ಜುನೈದ್ ಅಹ್ಮದ್ ಪತ್ತೆ ಮತ್ತು ಬಂಧನಕ್ಕಾಗಿ ಪ್ರಯತ್ನಗಳು ಮುಂದುವರಿದಿವೆ ಎಂದು NIA ತಿಳಿಸಿದೆ.
ಪಹಲ್ಗಾಮ್ ದಾಳಿಗೆ ಒಂದು ವರ್ಷ: 11 ಜೀವಗಳನ್ನು ಉಳಿಸಿದ್ದನ್ನು ನೆನಪಿಸಿಕೊಂಡ ಕಾಶ್ಮೀರಿ ಯುವಕ
ಹೊಸದಿಲ್ಲಿ, ಎ.22: ಕಳೆದ ವರ್ಷದ ಇದೇ ದಿನ ‘ಮಿನಿ ಸ್ವಿಟ್ಝರ್ಲ್ಯಾಂಡ್’ ಎಂದೇ ಹೆಸರಾಗಿರುವ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದಿದ್ದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಓರ್ವ ಸ್ಥಳೀಯ ಕುದುರೆ ಸವಾರ ಸೇರಿ 26 ಜನರು ಸಾವನ್ನಪ್ಪಿದ್ದರು. ಗುಂಡುಗಳು ಹಾರಲು ಆರಂಭವಾಗುತ್ತಿದ್ದಂತೆ ಭಯಭೀತರಾದ ಜನರು ರಕ್ಷಣೆಗಾಗಿ ಓಡುತ್ತಿದ್ದರು. ಆದರೆ ವಿಶಾಲವಾದ ಬಯಲು ಪ್ರದೇಶದಲ್ಲಿ ಅವರಿಗೆ ಅಡಗಿಕೊಳ್ಳಲು ಸ್ಥಳವಿರಲಿಲ್ಲ. ಕೋಲಾಹಲದ ನಡುವೆಯೇ ಅಲ್ಲೊಬ್ಬ ಹೀರೋ ಉದಯಿಸಿದ್ದ; ಛತ್ತೀಸ್ಗಡದ 11 ಪ್ರವಾಸಿಗಳನ್ನು ಉಳಿಸಲು ತನ್ನ ಜೀವವನ್ನೇ ಅಪಾಯಕ್ಕೊಡ್ಡಿದ್ದ ನಝಾಕತ್ ಅಲಿ. ಪಹಲ್ಗಾಮ್ ದಾಳಿ ನಡೆದು ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ನಝಾಕತ್ ಅಲಿ(30) ದಾಳಿಯ ಭಯಾನಕತೆಯನ್ನು ನೆನಪಿಸಿಕೊಂಡಿದ್ದಾರೆ. ಛತ್ತೀಸ್ಗಡದ ಪ್ರವಾಸಿಗರ ಗುಂಪಿನೊಂದಿಗೆ ಸ್ಥಳೀಯ ಮಾರ್ಗದರ್ಶಿಯಾಗಿ ಪ್ರವಾಸಿ ಗೈಡ್ ಮತ್ತು ಕಾಶ್ಮೀರಿ ಶಾಲುಗಳ ವ್ಯಾಪಾರಿಯಾಗಿರುವ ಅಲಿ ಇದ್ದರು. ಎ.22ರಂದು ಅಲಿ ಪ್ರವಾಸಿಗಳನ್ನು ಬೈಸರನ್ ಕಣಿವೆಗೆ ಕರೆದೊಯ್ದಿದ್ದರು. ಪ್ರವಾಸಿಗಳು ಅಲ್ಲಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದರೆ, ಅಲಿ ಝಿಪ್ ಲೈನ್ ನ ನಿರ್ಗಮನದ ಬಳಿ ಕೆಲವು ಮಕ್ಕಳೊಂದಿಗೆ ಇನ್ಸ್ಟಾಗ್ರಾಂ ರೀಲ್ಗಳನ್ನು ಮಾಡುತ್ತಿದ್ದರು. ಈ ವೇಳೆ ಯಾವುದೇ ಮುನ್ಸೂಚನೆಯಿಲ್ಲದೆ ಭಯೋತ್ಪಾದಕರು ದಾಳಿ ನಡೆಸಿದರು. “ನನಗೆ ಗುಂಡಿನ ಶಬ್ದ ಕೇಳಿಸಿತು. ಆದರೆ ಅದು ಸೇನೆ ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಕಾಳಗ ಎಂದು ಆರಂಭದಲ್ಲಿ ಭಾವಿಸಿದ್ದೆ. ಆದರೆ ಓರ್ವ ಭಯೋತ್ಪಾದಕ ಏಕಾಏಕಿ ಪ್ರವಾಸಿಗಳ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದ,” ಎಂದು ಅಲಿ ಹೇಳಿದ್ದಾರೆ. ಅಲಿ ತನ್ನ ಜೊತೆಯಲ್ಲಿದ್ದ 11 ಪ್ರವಾಸಿಗಳನ್ನು ತಕ್ಷಣ ನೆಲದ ಮೇಲೆ ಮಲಗುವಂತೆ ಸೂಚಿಸಿದರು. ಕಣಿವೆಯ ಪ್ರತಿಯೊಂದು ಗುಪ್ತ ಮಾರ್ಗವನ್ನು ತಿಳಿದಿದ್ದ ಅಲಿ, ಪ್ರವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಮುಂದಾದರು. ಅವರು ದಟ್ಟ ಕಾಡಿನ ಮೂಲಕ ಸುಮಾರು ಏಳು ಕಿ.ಮೀ ದೂರ ಪಹಲ್ಗಾಮ್ ಗೆ ಕರೆದೊಯ್ದರು. ಅಲ್ಲಿಗೆ ತಲುಪಿದ ಬಳಿಕ ಇಬ್ಬರು ಮಹಿಳೆಯರು ಕಾಡಿನಲ್ಲೇ ಉಳಿದಿರುವುದು ಗಮನಕ್ಕೆ ಬಂತು. ಧೈರ್ಯದಿಂದ ಅಪಾಯ ವಲಯಕ್ಕೆ ಮರಳಿದ ಅಲಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ದಾಳಿಯಲ್ಲಿ ಅಲಿಯವರ ಸಂಬಂಧಿಕ ಸೈಯದ್ ಆದಿಲ್ ಶಾ ಬಲಿಯಾಗಿದ್ದರು. ಅಲಿಯನ್ನು ಮಂಗಳವಾರ ಛತ್ತೀಸ್ ಗಡದಲ್ಲಿ ಸಚಿವರು ಸನ್ಮಾನಿಸಿದ್ದು, ಈ ವೇಳೆ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಉಪಸ್ಥಿತರಿದ್ದರು. ದಾಳಿಯ ಒಂದು ವರ್ಷದ ಬಳಿಕ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಮರಳುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಕೇವಲ ಒಬ್ಬ ನಝಾಕತ್ ಅಲ್ಲ, ನೂರಾರು ನಝಾಕತ್ ಗಳು ಸಜ್ಜಾಗಿದ್ದಾರೆ ಎಂದು ಅಲಿ ಹೇಳಿದರು.
ಹೊಸದಿಲ್ಲಿ, ಎ.22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಎ.22, 2025ರಂದು ನಡೆದಿದ್ದ ಪಾಕ್ ಬೆಂಬಲಿತ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗೌರವ ಸಲ್ಲಿಸಿದರು. ದಾಳಿಯಲ್ಲಿ ಪ್ರಾಣ ತೆತ್ತ 26 ಅಮಾಯಕ ಜೀವಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಎಕ್ಸ್ ಪೋಸ್ಟ್ ನಲ್ಲಿ ಅವರು ಹೇಳಿದ್ದಾರೆ. Remembering the innocent lives lost in the gruesome Pahalgam terror attack on this day last year. They will never be forgotten. My thoughts are also with the bereaved families as they cope with this loss. As a nation, we stand united in grief and resolve. India will never bow to… — Narendra Modi (@narendramodi) April 22, 2026 “ಕಳೆದ ವರ್ಷದ ಇದೇ ದಿನ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಮುಗ್ಧ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಕುಟುಂಬಗಳ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಒಂದು ರಾಷ್ಟ್ರವಾಗಿ ನಾವು ದುಃಖ ಮತ್ತು ದೃಢಸಂಕಲ್ಪದಲ್ಲಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ಭಯೋತ್ಪಾದಕರ ಹೇಯ ಸಂಚುಗಳು ಎಂದಿಗೂ ಯಶಸ್ವಿಯಾಗುವುದಿಲ್ಲ,” ಎಂದು ಮೋದಿ ಪೋಸ್ಟ್ ನಲ್ಲಿ ಬರೆದಿದ್ದಾರೆ. 2025ರ ಏಪ್ರಿಲ್ 22ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದಿದ್ದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಓರ್ವ ಸ್ಥಳೀಯ ಕುದುರೆ ಸವಾರ ಸೇರಿ 26 ಜನರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಭತ್ತು ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ’ ಆರಂಭಿಸಿತ್ತು ಮತ್ತು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತ್ತು. ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥ ಲಿಡ್ಡರ್ ನದಿ ದಂಡೆಯಲ್ಲಿರುವ ಹಿಲ್ ರೆಸಾರ್ಟ್ ನಲ್ಲಿ ಅವರ ಹೆಸರುಗಳ ಸ್ಮಾರಕವನ್ನು ಸ್ಥಾಪಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ದಾಳಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, “ನಮ್ಮ ದೇಶಕ್ಕೆ ಆಗಿರುವ ಗಾಯಗಳನ್ನು ನಾವೆಂದಿಗೂ ಮರೆಯುವುದಿಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ,” ಎಂದು ಹೇಳಿದ್ದಾರೆ.
ಮಂಗಳೂರು: ಅಕ್ಕಪಕ್ಕದ ಮನೆಮಂದಿ ಪರಸ್ಪರ ಹಲ್ಲೆ; ಮೂವರಿಗೆ ಗಾಯ
ಮಂಗಳೂರು, ಎ.22: ನಗರದ ಬಜಿಲಕೇರಿಯಲ್ಲಿ ಅಕ್ಕಪಕ್ಕದ ಎರಡು ಮನೆಮಂದಿ ಕ್ಲುಲ್ಲಕ ಕಾರಣಕ್ಕೆ ಪರಸ್ಪರ ದೊಣ್ಣೆ, ತಲವಾರು ಹಿಡಿದು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ಮಹಿಳೆ ಸಹಿತ ಮೂವರಿಗೆ ಗಾಯ ವಾಗಿದೆ. ಘಟನೆಯ ಬಗ್ಗೆ ಬಂದರ್ ಠಾಣೆಯಲ್ಲಿ ಇತ್ತಂಡಗಳ ದೂರಿನಂತೆ ಪ್ರಕರಣ ದಾಖಲಾಗಿದೆ. ಬಜಿಲಕೇರಿಯ ರಮಾನಂದ ಶೆಟ್ಟಿ ಪ್ರತಿದಿನ ಅವಾಚ್ಯವಾಗಿ ಬೈದುಕೊಂಡು ಹೋಗುತ್ತಿದ್ದು, ಈ ಬಗ್ಗೆ ಕೇಳಿದಾಗ ರಮಾನಂದ ಶೆಟ್ಟಿ ಮತ್ತವರ ಪುತ್ರರಾದ ಮಹೇಶ್ ಶೆಟ್ಟಿ ಮತ್ತು ಪ್ರೀತಮ್ ಶೆಟ್ಟಿ ತಲವಾರು ಹಾಗೂ ದೊಣ್ಣೆಯಿಂದ ತನಗೆ ಮತ್ತು ತನ್ನ ಪತಿ ಲೋಕೇಶ್, ಪುತ್ರ ತೇಜಸ್ಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅನಿತಾ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಕದ ಮನೆಯ ತೇಜಸ್, ಲೋಕೇಶ್, ಅನಿತಾ ಕಲ್ಲು, ಮರದ ದೊಣ್ಣೆ ಮತ್ತು ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸುನಿತಾ ಶೆಟ್ಟಿ ದೂರು ನೀಡಿದ್ದಾರೆ.
ಪರ್ಕಳ: ಶೆಟ್ಟಿಬೆಟ್ಟಿಗೆ ನರ್ಮ್ ಬಸ್ ಸಂಚಾರ ವಿಸ್ತರಣೆ
ಉಡುಪಿ, ಎ.22: ಪರ್ಕಳದ ಹೆರ್ಗಾವರೆಗೆ ಬರುತ್ತಿದ್ದ ನರ್ಮ್ ಬಸ್ನ್ನು ಜಿಲ್ಲಾಡಳಿತ ಇದೀಗ ಶೆಟ್ಟಿಬೆಟ್ಟುವರೆಗೆ ವಿಸ್ತರಿಸಿದ್ದು, ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಮಂದಿಗೆ ಅನುಕೂಲವಾಗಿದೆ. ಹೆರ್ಗಾ ಗ್ರಾಮಕ್ಕೆ ನರ್ಮ್ ಬಸ್ ದಿನದಲ್ಲಿ ನಾಲ್ಕು ಟ್ರಿಪ್ ಓಡಾಟ ನಡೆಸುತ್ತಿತ್ತು. ಇದರಿಂದ ಸಾರ್ವಜನಿಕರಿಗೆ, ಈ ಭಾಗದಲ್ಲಿ ಕೆಲಸಕ್ಕೆ ಹೋಗುವವರಿಗೆ, ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲ ವಾಗುತ್ತಿತ್ತು. ಈ ಬಸ್ ಸೇವೆ ಇನ್ನೂ ಹೆಚ್ಚಾಗಿ ಶೆಟ್ಟಿಬೆಟ್ಟು ಪರಿಸರಕ್ಕೂ ಓಡಾಟ ನಡೆಸುತ್ತಿದ್ದು. ಸಾರ್ವಜನಿಕರಿಗೆ ಖುಷಿ ಕೊಟ್ಟಿದೆ, ಶೆಟ್ಟಿಬಿಟ್ಟು ಶಾಲೆಯ ವರೆಗೆ ಖಾಸಗಿ ಸಿಟಿ ಬಸ್ಗಳಿಗೆ ಪರವಾನಿಗೆ ಇದ್ದರೂ ಅವು ಪರ್ಕಳದ ಗ್ಯಾಟ್ಸನ್ ಸರ್ಕಲ್ನಲ್ಲಿ ತಿರುಗಿ ವಾಪಾಸ್ಸು ಹೋಗುತ್ತಿತ್ತು. ಇದರಿಂದ ಶೆಟ್ಟಿಬೆಟ್ಟು ಪರಿಸರದ ಜನ ತೀರಾ ಸಮಸ್ಯೆ ಅನುಭವಿಸುತ್ತಿದ್ದರು. ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಆರ್ಟಿಎ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆಗ ಬಸ್ ಮಾಲಕರು, ರಸ್ತೆ ಸರಿ ಇಲ್ಲ ಎಂಬ ಸಬೂಬು ನೀಡಿದ್ದರು. ಆದರೆ ಇದೀಗ ರಸ್ತೆ ದುರಸ್ತಿಯಾದರೂ ಖಾಸಗಿ ಸಿಟಿ ಬಸ್ಗಳು ಸಂಚಾರ ಆರಂಭಿಸಿಲ್ಲ. ಇದರಿಂದ ಶಾಲಾ ಮಕ್ಕಳು, ಶಿಕ್ಷಕರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಅರಿತ ಜಿಲ್ಲಾಡಳಿತ ಹೆರ್ಗವರೆಗೆ ಬರುತ್ತಿದ್ದ ನರ್ಮ್ ಬಸ್ಸನ್ನು ಶೆಟ್ಟಿಬೆಟ್ಟುವರೆಗೆ ವಿಸ್ತರಿಸಿದೆ. ಇದರಿಂದ ಪರಿಸರದ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಸ್ಥಳೀಯರಾದ ಗಣೇಶ್ರಾಜ್ ಸರಳೆಬೆಟ್ಟು, ರಾಜೇಶ್ ಪ್ರಭು ಪರ್ಕಳ, ಸುಧೀರ್ ಶೆಟ್ಟಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
Delhi | ಹಿರಿಯ ಅಧಿಕಾರಿಯ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ
ಹೊಸದಿಲ್ಲಿ, ಎ. 22: ಹಿರಿಯ ಸರಕಾರಿ ಅಧಿಕಾರಿಯೊಬ್ಬರ 22 ವರ್ಷದ ಪುತ್ರಿ ಆಗ್ನೇಯ ದಿಲ್ಲಿಯ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಬುಧವಾರ ಬೆಳಗ್ಗೆ ಕೊಲೆಯಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಯ ಪುತ್ರಿ ಎಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹತ್ಯೆಗೈಯುವ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯುವತಿಯ ಕತ್ತು ಹಿಸುಕಿ ಹತ್ಯೆಗೈಯಲು ಮೊಬೈಲ್ ಚಾರ್ಜರ್ ನ ಕೇಬಲ್ ಬಳಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ನಡೆಯುವ ಸಂದರ್ಭ ಮನೆಯಲ್ಲಿ ಯುವತಿ ಮಾತ್ರ ಇದ್ದಳು. ಆಕೆಯ ಪೋಷಕರು ಜಿಮ್ ಗೆ ಹೋಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಮಾರು ಒಂದೂವರೆ ತಿಂಗಳ ಹಿಂದೆ ಕೆಲಸದಿಂದ ವಜಾ ಮಾಡಲಾದ ಮನೆಯ ಕೆಲಸದಾಳುವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಂಕಿತನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಿದ್ದಾರೆ.
ಕೇವಲ 227 ಎಸೆತಗಳಲ್ಲಿ 500 ರನ್! ಐಪಿಎಲ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಬಾಲಕ ವೈಭವ್ ಸೂರ್ಯವಂಶಿ
ಐಪಿಎಲ್ ನ ಅಚ್ಚರಿಯ ಬಾಲಕ 15 ವರ್ಷದ ವೈಭವ್ ಸೂರ್ಯವಂಶಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ಗೂ ಔಟಾದರೂ ಹೊಸ ಸಾಧನೆಯೊಂದನ್ನು ಮಾಡಿದರು. ಆಸ್ಟ್ರೇಲಿಯಾದ ವೈಟ್ ಬಾಲ್ ಸ್ಪೆಷಲಿಸ್ಟ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರು 12 ವರ್ಷಗಳ ಹಿಂದೆ ನಿರ್ಮಿಸಿದ್ದ ಅತಿ ವೇಗದ 500 ರನ್ ಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಗ್ಲೆನ್ ಮ್ಯಾಕ್ಸ್ ವೆಲ್ ಅವರು ಈ ಸಾಧನೆಗಾಗಿ 260 ಎಸೆತಗಳನ್ನು ತೆಗೆದುಕೊಂಡಿದ್ದರು. ಆದೇ ವೈಭವ್ ಗೆ ಕೇವಲ 227 ಎಸೆತಗಳು ಸಾಕಾಯಿತು! ಲಖನೌನ ಏಕನಾ ಕ್ರೀಡಾಂಗಣದಲ್ಲಿ ಏಪ್ರಿಲ್ 22ರ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಬ್ ಪಂತ್ ಅವರು ರಾಜಸ್ಥಾನ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಉತ್ತಮ ಲಯದಲ್ಲಿದ್ದಂತೆ ಕಂಡಿದ್ದ ಯಶಸ್ವಿ ಜೈಸ್ವಾಲ್(12 ಎಸೆತದಲ್ಲಿ 22 ರನ್) ಅವರು ಬೇಗನೇ ಪೆವಿಲಿಯನ್ ಸೇರಿಕೊಂಡರು. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಹೀಗಾಗಿ ತಂಡ 20 ಓವರ್ ಗಳು ಮುಗಿದಾಗ 6 ವಿಕೆಟ್ ಕಳೆದುಕೊಂಡು 159 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ()ವೈಭವ್ ಸೂರ್ಯವಂಶಿ ಅವರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷೆ ಇತ್ತು. ಜೈಸ್ವಾಲ್ ಬಳಿಕ ಧ್ರುವ್ ಜ್ಯುರೆಲ್ ಅವರ ವಿಕೆಟ್ ಪಟಪಟನೆ ಬಿದ್ದದ್ದ್ದರಿಂದ ವೈಭವ್ ಸೂರ್ಯವಂಶಿ ಮೇಲೆ ಒತ್ತಡ ಬಿತ್ತು. ಅವರು 11 ಎಸೆತಗಳನ್ನು ಎದುರಿಸಿ 2 ಬೌಂಡರಿಗಳಿದ್ದ 8 ರನ್ ಗಳನ್ನು ಗಳಿಸಿದ್ದರು. ಮೊಹ್ಸಿನ್ ಖಾನ್ ಅವರು ಎಸೆದ 4ನೇ ಓವರ್ ನ ಕೊನೆ ಎಸೆತದಲ್ಲಿ ಅವರು ವಿಗ್ನೇಷ್ ರಾಠಿ ಅವರಿಗೆ ಕ್ಯಾಚಿತ್ತು ಔಟಾದರು. ಆದರೆ ಅವರು ಅಷ್ಟರಲ್ಲೇ ಅತ್ಯಂತ ವೇಗವಾಗಿ 500 ರನ್ ಗಳ ಗಡಿ ತಲುಪಿದ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾದರು. ಮಾತ್ರವಲ್ಲದೆ 500 ರನ್ ಗಳ ಗಡಿ ತಲುಪಿದ ಅತಿ ಕಿರಿಯ ಆಟಗಾರ ಎಂಬ ಅಭಿದಾನಕ್ಕೂ ಅವರು ಪಾತ್ರರಾದರು. ಈ ಗೌರವ ಹಿಂದೆ ಪೃಥ್ವಿ ಶಾ ಅವರ ಹೆಸರಲ್ಲಿತ್ತು. ಅವರಿಗೆ ಆಗ 19 ವರ್ಷ ವಯಸ್ಸಾಗಿತ್ತು. ಸಂಕ್ಷಿಪ್ತ ಸ್ಕೋರ್ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 159/6, ರವೀಂದ್ರ ಜಡೇಜಾ43(29), ಯಶಸ್ವಿ ಜೈಸ್ವಾಲ್ 22(12), ಶಿಮ್ರಾನ್ ಹೆಟ್ಮೇಯರ್ 22(18), ಮೊಹ್ಸಿನ್ ಖಾನ್ 17ಕ್ಕೆ 2, ಪ್ರಿನ್ಸ್ ಯಾದವ್ 29ಕ್ಕೆ 2, ಶಮಿ 30ಕ್ಕೆ 2.
ನಾಗರಮಠ: ಮರಳುಗಾರಿಕೆ ವಿರುದ್ಧ ಪ್ರತಿಭಟನೆಗೆ ಅನುಮತಿ ನಿರಾಕರಣೆ; ಏಳನೇ ದಿನ ನಡೆಯದ ಧರಣಿ
► ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ತೀರ್ಮಾನ: ಹೋರಾಟಗಾರರ ಹೇಳಿಕೆ
Manipur | ಜನಾಂಗೀಯ ಹಿಂಸಾಚಾರದಲ್ಲಿ 58,800ಕ್ಕೂ ಅಧಿಕ ಜನರು ನಿರ್ವಸಿತ: ಸರಕಾರ
ಇಂಫಾಲ, ಎ. 22: 2023 ಮೇ 3ರಿಂದ ಈ ವರ್ಷ ಮಾರ್ಚ್ 30ರ ವರೆಗೆ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಒಟ್ಟು 58.821 ಜನರು ನಿರ್ವಸಿತರಾಗಿದ್ದಾರೆ ಎಂದು ರಾಜ್ಯ ಸರಕಾರ ತಿಳಿಸಿದೆ. ಮಣಿಪುರ ಕಾಂಗ್ರೆಸ್ ನಾಯಕ ಹರೇಶ್ವರ ಗೋಸ್ವಾಮಿ ಸಲ್ಲಿಸಿದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ಗೃಹ ಇಲಾಖೆಯ ಕಾರ್ಯಾಲಯ ಎಪ್ರಿಲ್ 20ರಂದು ಈ ಅಂಕಿ-ಅಂಶಗಳನ್ನು ನೀಡಿದೆ. 2023 ಮೇಯಿಂದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿ ಸಾವನ್ನಪ್ಪಿದವರು ಹಾಗೂ ಗಾಯಗೊಂಡವರ ಸಂಖ್ಯೆಗೆ ಸಂಬಂಧಿಸಿ ಇಲಾಖೆ, ಮೃತಪಟ್ಟವರ 217 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದೆ. 2026 ಮಾರ್ಚ್ 10ರ ವರೆಗೆ 174 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ ಎಂದು ಅದು ಹೇಳಿದೆ. ಮಣಿಪುರ ಪೊಲೀಸ್ ವಸತಿ ನಿಗಮ ಲಿಮಿಟೆಡ್ 3,000 ಸಿದ್ಧ ಮನೆಗಳನ್ನು ನಿರ್ಮಾಣ ಮಾಡಿದೆ ಎಂದು ಅದು ತಿಳಿಸಿದೆ. 2023 ಮೇ 3ರಿಂದ 7,894 ಶಾಶ್ವತ ಮನೆಗಳನ್ನು ನಾಶಗೊಳಿಸಲಾಗಿದೆ ಮತ್ತು 2,646 ಮನೆಗಳನ್ನು ಭಾಗಶಃ ನಾಶಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಆಂತರಿಕವಾಗಿ ನಿರ್ವಸಿತರಾದ ವ್ಯಕ್ತಿಗಳ (ಐಡಿಪಿಎಸ್) ಮಾಹಿತಿಯನ್ನು ಪಡೆಯಲು ತಾನು ಏಳು ತಿಂಗಳು ಪ್ರಯತ್ನಿಸಬೇಕಾಯಿತು ಎಂದು ಗೋಸ್ವಾಮಿ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ಹೇಳಿದ್ದಾರೆ. ಮಣಿಪುರದಲ್ಲಿ 2023 ಮೇಯಲ್ಲಿ ಮೈತೈ ಹಾಗೂ ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು.
ಡಾ.ಡಿ ವೀರೇಂದ್ರ ಹೆಗ್ಗಡೆಗೆ ಸೇರಿದ ಜಮೀನು ಭೂಸ್ವಾಧೀನ ಅಧಿಸೂಚನೆ ರದ್ದು - ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಮೈಸೂರಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜಮೀನು ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿದೆ. 460 ದಿನಗಳ ವಿಳಂಬದೊಂದಿಗೆ ಮುಡಾ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ, ಅಧಿಕಾರಿಗಳ ನಿರ್ಲಕ್ಷ್ಯವನ್ನು ಕಟುವಾಗಿ ಟೀಕಿಸಿತು. ಸೂಕ್ತ ಕಾರಣವಿಲ್ಲದ ವಿಳಂಬವು ಸಾರ್ವಜನಿಕ ನೀತಿಗೆ ವಿರುದ್ಧ ಮತ್ತು ಭೂಮಾಲೀಕರಿಗೆ ಮಾಡುವ ಅನ್ಯಾಯವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ದೇವಳದ ಕಾಣಿಕೆ ಹುಂಡಿ ಕಳವು: ಪ್ರಕರಣ ದಾಖಲು
ಶಂಕರನಾರಾಯಣ, ಎ.22: ಆಜ್ರಿ ಶ್ರೀಉಮಾಮಹೇಶ್ವರ ದೇವಸ್ಥಾನಕ್ಕೆ ಎ.20ರಂದು ಬೆಳಗ್ಗೆ ನುಗ್ಗಿದ ಕಳ್ಳರು, ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಹೆಲ್ಮೇಟ್ ಧರಿಸಿದ ವ್ಯಕ್ತಿಯೊಬ್ಬ ದೇವಸ್ಥಾನದ ಹೊರ ಪೌಳಿಗೆ ಬಂದು ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಯಲ್ಲಿ ಕಂಡುಬಂದಿದೆ. ಈ ಕಾಣಿಕೆ ಹುಂಡಿಯಲ್ಲಿ ಸುಮಾರು 10,000ರೂ. ಹಣ ಇರುವು ದಾಗಿ ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ, ಎ.22: ಮೋಟಾರ್ ಪಂಪ್ ಹಾಕುವಾಗ ವಿದ್ಯುತ್ ಹರಿದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಎ.21ರಂದು ಸಂಜೆ ವೇಳೆ ಸಿದ್ಧಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಸಿದ್ಧಾಪುರ ಗ್ರಾಮದ ಗಾಂಧಿ ಶೆಟ್ಟಿ(77) ಎಂದು ಗುರುತಿಸಲಾಗಿದೆ. ಇವರು ತೋಟಕ್ಕೆ ನೀರು ಬಿಡಲು ಮನೆಯ ಹಿಂಬದಿಯಲ್ಲಿರುವ ಶೆಡ್ಗೆ ಹೋಗಿದ್ದು, ಅಲ್ಲಿ ಮೋಟಾರು ಪಂಪ್ ಹಾಕುವಾಗ ಆಕಸ್ಮಿಕವಾಗಿ ಕರೆಂಟ್ ಹರಿದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ನಿಷೇಧ ಮೇ 24ರವರೆಗೆ ವಿಸ್ತರಿಸಿದ ಪಾಕ್
ಇಸ್ಲಮಾಬಾದ್, ಎ.22: ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ (ಪಿಎಎ) ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶ ನಿಷೇಧವನ್ನು ಮೇ 24ರವರೆಗೆ ವಿಸ್ತರಿಸಿದೆ. ಪಾಕಿಸ್ತಾನದ ವಾಯುಪ್ರದೇಶವು ಭಾರತೀಯ ನೋಂದಾಯಿತ ವಿಮಾನಗಳು ಅಥವಾ ಭಾರತೀಯ ವಿಮಾನಯಾನ ಸಂಸ್ಥೆಗಳು/ನಿರ್ವಾಹಕರಿಗೆ (ಮಿಲಿಟರಿ ವಿಮಾನಗಳು ಸೇರಿದಂತೆ) ಮುಚ್ಚಿರುತ್ತದೆ. ಈ ನಿಷೇಧವು ಈಗ 2026ರ ಮೇ 24ರ ಬೆಳಿಗ್ಗೆ 4:59ರವರೆಗೆ ಜಾರಿಯಲ್ಲಿರುತ್ತದೆ. ಈ ನಿರ್ಬಂಧವು ಕರಾಚಿ ಮತ್ತು ಲಾಹೋರ್ ವಿಮಾನ ಮಾಹಿತಿ ವಲಯಗಳನ್ನು ಒಳಗೊಂಡಿರುತ್ತದೆ ಎಂದು ಪಿಎಎ ತಿಳಿಸಿದೆ. ಪಹಲ್ಗಾಮ್ ದಾಳಿಯ ಬಳಿಕ ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಈ ನಿಷೇಧವು ಎಪ್ರಿಲ್ 24ರಂದು ಕೊನೆಗೊಳ್ಳಲಿದ್ದು, ಇದೀಗ ಅದನ್ನು ಮೇ 24ರವರೆಗೆ ವಿಸ್ತರಿಸಲಾಗಿದೆ. ಭಾರತವೂ ಪಾಕಿಸ್ತಾನದ ವಿರುದ್ಧ ಇದೇ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಮಧ್ಯಪ್ರಾಚ್ಯ ಸಂಘರ್ಷ | ಗಲ್ಫ್ ರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ
ಟೆಹರಾನ್, ಎ.22: ಇರಾನ್ ವಿರುದ್ಧದ ದಾಳಿಗಳಿಗೆ ತಮ್ಮ ಪ್ರದೇಶವನ್ನು ಬಳಸಲು ಅವಕಾಶ ನೀಡಿದರೆ, ಮಧ್ಯಪ್ರಾಚ್ಯದಾದ್ಯಂತ ತೈಲ ಉತ್ಪಾದನೆ ಅಪಾಯಕ್ಕೆ ಸಿಲುಕಲಿದೆ ಎಂದು ಇರಾನ್ ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾಪ್ರ್ಸ್ (IRGC) ಗಲ್ಫ್ ರಾಷ್ಟ್ರಗಳಿಗೆ ಕಟುವಾದ ಎಚ್ಚರಿಕೆ ನೀಡಿದೆ. ಈ ಪ್ರದೇಶದ ರಾಷ್ಟ್ರಗಳು ತಮ್ಮ ಭೂಮಿ ಅಥವಾ ಸೌಲಭ್ಯಗಳನ್ನು ಇರಾನ್ ನ ವಿರೋಧಿಗಳು ಬಳಸಲು ಅನುಮತಿಸಬಾರದು. ಶತ್ರುಗಳು ಇರಾನ್ ಮೇಲೆ ದಾಳಿ ನಡೆಸಲು ತಮ್ಮ ಭೌಗೋಳಿಕತೆ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳಲು ದಕ್ಷಿಣ ನೆರೆಹೊರೆಯವರು ಅವಕಾಶ ನೀಡಿದರೆ, ಅವರು ಮಧ್ಯಪ್ರಾಚ್ಯದಲ್ಲಿ ತೈಲ ಉತ್ಪಾದನೆಗೆ ವಿದಾಯ ಹೇಳಬೇಕಾಗುತ್ತದೆ ಎಂದು IRGC ಕಮಾಂಡರ್ ಎಚ್ಚರಿಕೆ ನೀಡಿದ್ದಾರೆ ಎಂದು ಇರಾನ್ ನ ಫಾರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಸೌದಿ ಅರೇಬಿಯಾ, ಯುಎಇ ಮತ್ತು ಖತರ್ ನಂತಹ ದೇಶಗಳು ಅಮೆರಿಕದ ಪ್ರಮುಖ ಕಾರ್ಯತಂತ್ರದ ಪಾಲುದಾರರಾಗಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
Bengaluru | ಕಳ್ಳಸಾಗಣೆ ಮಾಡಲಾಗಿದ್ದ 9ನೇ ಶತಮಾನದ ವಿಗ್ರಹ ವಶ
ಬೆಂಗಳೂರು : ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೇಪಾಳದಿಂದ ಕಳ್ಳಸಾಗಣೆ ಮಾಡಲಾಗಿದ್ದ 9ನೇ ಶತಮಾನದ ಅಪರೂಪ ಪದ್ಮಪಾಣಿ ವಿಗ್ರಹವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಏರ್ ಕಾರ್ಗೋ ವಿಭಾಗಕ್ಕೆ ಆಸ್ಟ್ರೀಯಾದ ವಿಯೆನ್ನಾದಿಂದ ಕಲ್ಲಿನ ವಿಗ್ರಹ ಬಂದಿದೆ. ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಬೂದು ಬಣ್ಣದ ಶಿಲೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಈ ಶಿಲೆ 9ನೇ ಶತಮಾನದ ಸೇರಿದ ನೇಪಾಳದ ಪದ್ಮಪಾಣಿ ಎಂದು ದೃಢಪಟ್ಟಿದೆ. ಕಲ್ಲಿನ ಶಿಲೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಸ್ಟಮ್ಸ್ ಅಧಿಕಾರಿಗಳು ಭಾರತದ ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಪದ್ಮಪಾಣಿ ವಿಗ್ರಹ ನೇಪಾಳಕ್ಕೆ ದೇಶಕ್ಕೆ ಸೇರಿದ್ದು, 9ನೇ ಶತಮಾನದ ಅಪರೂಪದ ವಿಗ್ರಹ ಎಂದು ಖಚಿತಪಡಿಸಿದ್ದಾರೆ. ಕಠ್ಮಂಡುವಿನ ಅಧಿಕಾರಿಗಳ ಗಮನಕ್ಕೆ ತಂದಾಗ, ಈ ವಸ್ತು ನೇಪಾಳದಿಂದ ಕಳ್ಳಸಾಗಣೆ ಮಾಡಲಾಗಿದೆ, ದೇಶದ ಸಾಂಸ್ಕೃತಿ ಕ ಸಂಪತ್ತು ಇದು ಎಂದು ತಿಳಿಸಿದ್ದಾರೆ. ಸದ್ಯ, ವಿಗ್ರಹ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದು, ನೇಪಾಳಕ್ಕೆ ಕಳುಹಿಸುವ ಬಗ್ಗೆ ಮತ್ತು ಹಸ್ತಾಂತರ ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ತೆಂಕನಿಡಿಯೂರು ಕಾಲೇಜಿನಲ್ಲಿ ಬಜೆಟ್-2026 ಕುರಿತ ಕಾರ್ಯಾಗಾರ
ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ವತಿಯಿಂದ ‘ಬಜೆಟ್ 2026: ವಿಶ್ಲೇಷಣೆ ಮತ್ತು ಒಳನೋಟ ಗಳು’ ಎಂಬ ವಿಷಯದ ಕುರಿತ ಕಾರ್ಯಾಗಾರವನ್ನು ಕಾಲೇಜಿನ ಎವಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವ್ಕರ್ ಮಾತನಾಡಿ, ಬಜೆಟ್ ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಸಾಧನವಾಗಿದ್ದು, ವಿದ್ಯಾರ್ಥಿಗಳು ಅದರ ಪರಿಣಾಮ ಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯವೆಂದು ತಿಳಿಸಿದರು. ಕಾರ್ಯಾಗಾರದ ನೇತೃತ್ವ ವಹಿಸಿದ್ದ ಅಂಕಿಅಂಶ ಶಾಸ್ತ್ರ ಪ್ರಾಧ್ಯಾಪಕರಾದ ಉಮೇಶ್ ಪೈ ವಹಿಸಿ ವಿದ್ಯಾರ್ಥಿಗಳಿಗೆ ಬಜೆಟ್ನ ಸಮಗ್ರ ಮಾಹಿತಿಗಳನ್ನು ನೀಡಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸಿಎ ಎಸ್. ಎಸ್. ನಾಯಕ್ ಅವರು ಎಂಎಸ್ಎಂಇ ಹಾಗೂ ಸ್ಟಾರ್ಟ್ಅಪ್ ಕ್ಷೇತ್ರದ ಮೇಲೆ ಬಜೆಟ್ನ ಪರಿಣಾಮಗಳನ್ನು ವಿಶ್ಲೇಷಿಸಿದರು. ಬಜೆಟ್ನಲ್ಲಿ ಉದ್ಯಮ ಶೀಲತೆಗೆ ದೊರೆಯುವ ಅವಕಾಶಗಳು, ತೆರಿಗೆ ಸಡಿಲಿಕೆಗಳು ಮತ್ತು ಹೊಸ ನೀತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ರಾಜೇಶ್ ರಾವ್ ಎಂ ಅವರು ಬ್ಯಾಂಕಿಂಗ್ ಮತ್ತು ಆರ್ಥಿಕ ಕ್ಷೇತ್ರದ ದೃಷ್ಟಿಯಿಂದ ಬಜೆಟ್ನ ಪ್ರಮುಖ ಅಂಶಗಳನ್ನು ವಿವರಿಸಿ, ಹಣಕಾಸು ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳನ್ನು ವಿವರಿಸಿದರು. ಕಾರ್ಯಕ್ರಮವನ್ನು ಎಂ.ಕಾಂ ವಿದ್ಯಾರ್ಥಿ ಹನುಮಂತ ನಿರೂಪಿಸಿದರು. ಅಮೂಲ್ಯ ಸ್ವಾಗತಿಸಿ, ಯಜ್ಞ ಅತಿಥಿಗಳನ್ನು ಪರಿಚಯಿಸಿದರು. ಕೊನೆಯಲ್ಲಿ ಶ್ರೀಲಕ್ಷ್ಮೀ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ರಘು ನಾಯಕ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಬಿಂದು ಟಿ., ಡಾ. ದತ್ತ ಕುಮಾರ್, ಮರ್ವಿನ್ ಡಿಸೋಜಾ, ಬಾಲರಾಜ್ ಡಿ.ಬಿ., ಸ್ಮಿತಾ ಹಾಗೂ ಅರವಿಂದ್ ಭಟ್ ಉಪಸ್ಥಿತರಿದ್ದರು.
ಅಮೆರಿಕದ ವಿರುದ್ಧ ವಿಶ್ವಸಂಸ್ಥೆಗೆ ಪತ್ರ ಬರೆದ ಇರಾನ್; ಸರಕು ನೌಕೆ ಜಪ್ತಿ ಘಟನೆಯಲ್ಲಿ ಮಧ್ಯಪ್ರವೇಶಕ್ಕೆ ಆಗ್ರಹ
ಟೆಹರಾನ್, ಎ.22: ಇರಾನ್ ನ ಸರಕು ನೌಕೆಯನ್ನು ವಶಪಡಿಸಿಕೊಂಡ ಅಮೆರಿಕದ ಕ್ರಮವನ್ನು ಖಂಡಿಸುವಂತೆ ಹಾಗೂ ನೌಕೆಯನ್ನು ಬಿಡುಗಡೆಗೊಳಿಸಲು ಅಮೆರಿಕಕ್ಕೆ ಸೂಚಿಸಬೇಕೆಂದು ಆಗ್ರಹಿಸಿ ಇರಾನ್ ವಿಶ್ವಸಂಸ್ಥೆಗೆ ಪತ್ರ ಬರೆದಿದೆ. ಅಮೆರಿಕದ ಈ ಕ್ರಮವು ಕಡಲ್ಗಳ್ಳತನದ ಕೃತ್ಯವಾಗಿದ್ದು, ಉಭಯ ದೇಶಗಳ ನಡುವಿನ ಕದನ ವಿರಾಮದ ಉಲ್ಲಂಘನೆಯಾಗಿದೆ ಎಂದು ಟೀಕಿಸಿದೆ. ಒಮಾನ್ ಸಮುದ್ರದ ಬಳಿ ಇರಾನ್ ಧ್ವಜ ಹೊಂದಿದ್ದ ‘ಟೌಸ್ಕ’ ಎಂಬ ಸರಕು ನೌಕೆಯನ್ನು ಅಮೆರಿಕದ ನೌಕಾಪಡೆ ವಶಕ್ಕೆ ಪಡೆದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ಇದನ್ನು ಪ್ರತಿಭಟಿಸಿ ಇರಾನ್ ವಿಶ್ವಸಂಸ್ಥೆಗೆ ಪತ್ರ ಬರೆದಿದೆ. ಅಮೆರಿಕದ ಕಾರ್ಯಾಚರಣೆ ಅಪಾಯಕಾರಿ ಉಲ್ಬಣವಾಗಿದ್ದು, ಪ್ರಮುಖ ಸಮುದ್ರ ಮಾರ್ಗಗಳಿಗೆ ಬೆದರಿಕೆ ಉಂಟುಮಾಡುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ವಿಶ್ವಸಂಸ್ಥೆಯಲ್ಲಿನ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವಾನಿ ಕಳವಳ ವ್ಯಕ್ತಪಡಿಸಿದ್ದಾರೆ. ನೌಕೆಯನ್ನು ವಶಪಡಿಸಿಕೊಂಡಿರುವುದು ವಿಶ್ವಸಂಸ್ಥೆಯ ಸನದಿನ (ಚಾರ್ಟರ್) ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗೂ ಪ್ರಮುಖ ಜಲಮಾರ್ಗಗಳ ಸುರಕ್ಷತೆ ಮತ್ತು ಭದ್ರತೆಯನ್ನು ತೀವ್ರವಾಗಿ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಹೇಳಿದ್ದಾರೆ. ಈ ಕ್ರಮವನ್ನು ವಿಶ್ವಸಂಸ್ಥೆ ಔಪಚಾರಿಕವಾಗಿ ಖಂಡಿಸಬೇಕು ಮತ್ತು ನೌಕೆಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಬೇಕೆಂದು ಇರಾನ್ ಒತ್ತಾಯಿಸಿದೆ.
ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕ್ಫೆಸ್ಟ್-2026
ಕಾರ್ಕಳ: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಫೈನೈಟ್ ಲೂಪ್ ಕ್ಲಬ್ (ಎಫ್ಎಲ್ಸಿ) ಮೂರು ದಿನಗಳ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಉತ್ಸವ ‘ಹ್ಯಾಕ್ ಫೆಸ್ಟ್-2026’ ಯಶಸ್ವಿಯಾಗಿ ನಡೆಯಿತು. ಇದು ರಾಷ್ಟ್ರೀಯ ಮಟ್ಟದಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ಸಹಯೋಗವನ್ನು ಒಟ್ಟುಗೂಡಿಸುವ ವೇದಿಕೆ ಯಾಗಿದ್ದು, ಉತ್ಸವದಲ್ಲಿ 36 ಗಂಟೆಗಳ ಪ್ರಮುಖ ಹ್ಯಾಕಥಾನ್ ಸಹ ನಡೆಯಿತು. ಒಟ್ಟು ನಾಲ್ಕು ಲಕ್ಷ ರೂ. ಬಹುಮಾನ ಮೊತ್ತವನ್ನು ಹೊಂದಿದ್ದ ಈ ಸ್ಪರ್ಧೆಯಲ್ಲಿ ದೇಶಾದ್ಯಂತದ 50ಕ್ಕೂ ಅಧಿಕ ಇಂಜಿನಿಯರಿಂಗ್ ಕಾಲೇಜು ತಂಡಗಳು ಸ್ಪರ್ಧಿಸಿದವು. ಇದರೊಂದಿಗೆ, ಸೈಬರ್ ಸೆಕ್ಯುರಿಟಿ-ಕೇಂದ್ರಿತ ‘ಕ್ಯಾಪ್ಚರ್ ದಿ ಫ್ಲ್ಯಾಗ್ (ಸಿಟಿಎಫ್) ಈವೆಂಟ್ನ್ನು ನಡೆಸಲಾಯಿತು. ಇದು ಭದ್ರತೆ ಮತ್ತು ನೈತಿಕ ಹ್ಯಾಕಿಂಗ್ ಡೊಮೇನ್ಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರದರ್ಶಿಸಿತು. ಹ್ಯಾಕ್ ಫೆಸ್ಟ್ನ್ನು ಎನ್ಟಿಟಿ ಡೇಟಾದ ಭಾಗವಾದ ನಿವಿಯಸ್ ಸೊಲ್ಯೂಷನ್ಸ್ನ ಹಿರಿಯ ವ್ಯವಸ್ಥಾಪಕ ಹರಿಪ್ರಸಾದ್ ಪಾಂಗಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ನಿಟ್ಟೆ ವಿವಿಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ, ಮತ್ತು ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಡಾ.ನಾಗೇಶ್ ಪ್ರಭು ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲುಂಕರ್, ತಾಂತ್ರಿಕ ಪರಿಣತಿ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಹೆಚ್ಚಿಸಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಇದೇ ಸಂದರ್ಭದಲ್ಲಿ ಕ್ಲಬ್ನ ನಿಯತಕಾಲಿಕದ ಎರಡನೇ ಆವೃತ್ತಿ ‘ಇನ್ಫಿನೈಟ್ ಇನ್ ಸೈಡರ್ 2.0’ ಅನ್ನು ಅಧಿಕೃತವಾಗಿ 10 ವರ್ಷಗಳ ವಿಶೇಷ ವಾರ್ಷಿಕೋತ್ಸವ ಆವೃತ್ತಿಯಾಗಿ ಬಿಡುಗಡೆಗೊಳಿಸಲಾಯಿತು. 10 ರಾಜ್ಯಗಳ 121 ಕಾಲೇಜುಗಳಿಂದ 547 ನವೀನ ಯೋಜನೆಗಳು ಹ್ಯಾಕ್ ಫೆಸ್ಟ್ 2026 ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಕಠಿಣ ಮೌಲ್ಯಮಾಪನ ಪ್ರಕ್ರಿಯೆಯ ನಂತರ, 5 ರಾಜ್ಯಗಳ 31 ಕಾಲೇಜುಗಳ 189 ವಿದ್ಯಾರ್ಥಿ ಗಳನ್ನು ಒಳಗೊಂಡ 50 ತಂಡಗಳನ್ನು ಅಂತಿಮ 36 ಗಂಟೆಗಳ ಹ್ಯಾಕಥಾನ್ಗೆ ಆಯ್ಕೆ ಮಾಡಲಾಯಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಮತ್ತು ಎಫ್ಎಲ್ಸಿ ಅಧ್ಯಾಪಕ ಸಂಯೋಜಕ ಡಾ.ಶಶಾಂಕ್ ಶೆಟ್ಟಿ ಸ್ವಾಗತಿಸಿದರು. ಎಫ್ಎಲ್ಸಿಯ ವಿದ್ಯಾರ್ಥಿ ಅಧ್ಯಕ್ಷ ನಂದನ್ ಪೈ ಹ್ಯಾಕ್ಫೆಸ್ಟ್ -2026ರ ಅವಲೋಕನವನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿನಿ ಚಲನಾ ಎ ಶೆಟ್ಟಿ ವಂದಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಎಫ್ಎಲ್ಸಿ ಅಧ್ಯಾಪಕ ಸಂಯೋಜಕ ಡಾ.ಪುನೀತ್ ಆರ್.ಪಿ.ಮತ್ತು ವಿದ್ಯಾರ್ಥಿ ಸಂಘಟಕ ಸಂಪನ್ನಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆರ್ಯ ಜಿ. ಭಟ್ ಮತ್ತು ಪ್ರಕ್ಯಾತ್ ಯಾದವ್ ಸುವರ್ಣ ನಿರೂಪಿಸಿದರು.
ಎ.27ಕ್ಕೆ ಉದ್ಯಾವರದಲ್ಲಿ ನಿಧಿ ಆಪ್ಕೆ ನಿಕಟ್
ಉಡುಪಿ, ಎ.22: ಭವಿಷ್ಯ ನಿಧಿ ಸದಸ್ಯರ ಮತ್ತು ಪಿಂಚಣಿದಾರರ ಕುಂದುಕೊರತೆಗಳನ್ನು ಪರಿಹರಿಸಲು ಹಾಗೂ ಜಾಗೃತಿ ಮೂಡಿಸಲು ಭವಿಷ್ಯ ನಿಧಿ ಸಂಘಟನೆಯ ಹೊಸದಿಲ್ಲಿಯ ಪ್ರಧಾನ ಕಚೇರಿ ಪ್ರಾರಂಭಿಸಿದ ಜಿಲ್ಲಾ ಮಾಸಿಕ ಕಾರ್ಯಕ್ರಮವೇ ‘ನಿಧಿ ಆಪ್ಕೆ ನಿಕಟ್/ ಭವಿಷ್ಯ ನಿಧಿ ನಿಮ್ಮ ಹತ್ತಿರ’. ಎಪ್ರಿಲ್ ತಿಂಗಳ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಎ.27ರಂದು ಬೆಳಗ್ಗೆ 11:00ಗಂಟೆಯಿಂದ ಉದ್ಯಾವರ ಪಿತ್ರೋಡಿಯಲ್ಲಿರುವ ‘ಯಶಸ್ವಿ ಫಿಶ್ಮಿಲ್ ಆ್ಯಂಡ್ ಆಯಿಲ್ ಕಂಪೆನಿಯಲ್ಲಿ (9-184ಬಿ) ನಡೆಯಲಿದೆ. ನಿಧಿ ಆಪ್ಕೆ ನಿಕಟ್ ಎಂಬುದು ತನ್ನ ಲಕ್ಷಾಂತರ ಚಂದಾದಾರರಿಗೆ ತನ್ನ ವಿವಿಧ ಸೇವೆಗಳು ಅವರ ಮನೆ ಬಾಗಿಲಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭವಿಷ್ಯ ನಿಧಿ ಸಂಸ್ಥೆಯ ಪ್ರಯತ್ನವಾಗಿದೆ. ಕಾರ್ಯಕ್ರಮದ ಪ್ರಾಥಮಿಕ ಗಮನ ಜಿಲ್ಲೆಯನ್ನು ಕೇಂದ್ರೀಕರಿಸಿ ನಡೆಯುತ್ತದೆ. ಇದು ಉದ್ಯೋಗದಾತರರು ಹಾಗೂ ಉದ್ಯೋಗಿಗಳಿಗೆ ಸಹಭಾಗಿತ್ವದ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಸದಸ್ಯರ ಕುಂದುಕೊರತೆ ಪರಿಹಾರ ಹಾಗೂ ಮಾಹಿತಿಗಳ ವಿನಿಮಯ ವೇದಿಕೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಪಿಎಫ್ನ ಎಲ್ಲಾ ಚಂದಾದಾರರು, ಇಪಿಎಸ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಉದ್ಯೋಗದಾತರು, ಟ್ರೇಡ್ ಯೂನಿಯನ್ ಮುಖಂಡರು ಮತ್ತು ಸದಸ್ಯರು ಎ.27ರ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರ ಪ್ರಯೋಜನ ಪಡೆದುಕೊಳ್ಳುವಂತೆ ಉಡುಪಿ ಪ್ರಾದೇಶಿಕ ಕಾರ್ಯಾಲಯದ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ನಿಂದ ಕಾಂಗ್ರೆಸ್ಗೆ ಕರೆತಂದ್ರು: ಈಗ ವಾಪಸ್ ಹೋದ್ರೆ ಕರೆದುಕೊಂಡು ಹೋಗಲೇಬೇಕು: ಜಮೀರ್ಗೆ ಮಾಗಡಿ MLA ಮನವಿ
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಚಿವ ಜಮೀರ್ ಅಹ್ಮದ್ ಜೆಡಿಎಸ್ಗೆ ಮರಳುವ ವದಂತಿಯನ್ನು ವ್ಯಂಗ್ಯವಾಡಿದ್ದಾರೆ. ನಮ್ಮನ್ನು ಕಾಂಗ್ರೆಸ್ಗೆ ಕರೆತಂದ ಜಮೀರ್ ವಾಪಸ್ ಹೋಗುವುದಾದರೆ ನಮ್ಮನ್ನೂ ಕರೆದುಕೊಂಡು ಹೋಗಲಿ ಎಂದಿದ್ದಾರೆ. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರಿಗೆ ಮಾಟ-ಮಂತ್ರ ಮಾಡಿಸಲಾಗಿದೆ ಎಂಬ ಕೆ.ಎನ್. ರಾಜಣ್ಣ ಅವರ ಹೇಳಿಕೆಯನ್ನು 'ಮೂರ್ಖತನ' ಎಂದು ಬಾಲಕೃಷ್ಣ ಲೇವಡಿ ಮಾಡಿ ತಳ್ಳಿಹಾಕಿದ್ದಾರೆ.
ಕೋಲ್ಕತ್ತಾ: ಎಪ್ರಿಲ್ 23 ಹಾಗೂ ಎಪ್ರಿಲ್ 29ರ ಪಶ್ಚಿಮ ಬಂಗಾಳ ಚುನಾವಣೆಗೆ ಮುನ್ನ 800 ಟಿಎಂಸಿ ಕಾರ್ಯಕರ್ತರನ್ನು ಗುರುತಿಸಲು ಚುನಾವಣಾ ಆಯೋಗ ಹೊರಡಿಸಿದ್ದ ಆದೇಶಕ್ಕೆ ಬುಧವಾರ ಕಲ್ಕತ್ತಾ ಹೈಕೋರ್ಟ್ ತಡೆ ನೀಡಿದ್ದು, ಜೂನ್ 30ರವರೆಗೆ ಅವರನ್ನು ಪ್ರತಿಬಂಧಕಾತ್ಮಕವಾಗಿ ಬಂಧಿಸುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪೌಲ್ ಮತ್ತು ನ್ಯಾ. ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ, ಮುನ್ನೆಚ್ಚರಿಕಾ ಕ್ರಮವಾಗಿ ಬಂಧನಕ್ಕೆ ಪ್ರಾಧಿಕಾರಗಳನ್ನು ನಿರ್ಬಂಧಿಸಿದೆ. ಆದರೆ ಯಾರಾದರೂ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. “ಅವರನ್ನು ಮುಂಚಿತವಾಗಿ ಬಂಧಿಸುವಂತಿಲ್ಲ” ಎಂದು ಹೇಳಿದ ನ್ಯಾಯಪೀಠ, ನಿರ್ದಿಷ್ಟ ಪ್ರಕರಣಗಳಲ್ಲಿ ಕಾನೂನು ಜಾರಿ ಪ್ರಾಧಿಕಾರಗಳು ಕಾನೂನಿನ ಪ್ರಕಾರ ಮುಂದುವರಿಯಬಹುದಾಗಿದೆ ಎಂದೂ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗ ನೀಡಿರುವ ನಿರ್ದೇಶನದನ್ವಯ 800 ಟಿಎಂಸಿ ಕಾರ್ಯಕರ್ತರನ್ನು ಗುರುತಿಸಿ, ಅವರನ್ನು ಪ್ರತಿಬಂಧಕಾತ್ಮಕವಾಗಿ ಬಂಧಿಸುವ ಸಾಧ್ಯತೆ ಇದೆ ಎಂದು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಪೀಠ ಈ ನಿರ್ದೇಶನ ನೀಡಿದೆ. “ಚುನಾವಣೆಯ ವೇಳೆ ಯಾವುದೇ ಸಂಭವನೀಯ ಅಡಚಣೆಯನ್ನು ತಪ್ಪಿಸಲು ಮಾತ್ರ ಈ ಪಟ್ಟಿಯನ್ನು ತಯಾರಿಸಲಾಗಿದೆಯೇ ಹೊರತು, ಯಾರನ್ನಾದರೂ ಬಂಧಿಸಲು ಅಲ್ಲ” ಎಂದು ವಿಚಾರಣೆಯ ವೇಳೆ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ, ಈ ನಡೆಯ ಹಿಂದಿನ ತರ್ಕವನ್ನು ಪ್ರಶ್ನಿಸಿದ ನ್ಯಾ. ಪೌಲ್, “ತಟಸ್ಥ ಮತದಾನಕ್ಕೆ ಚುನಾವಣಾ ಆಯೋಗ ಈಗಾಗಲೇ ವ್ಯಾಪಕ ವ್ಯವಸ್ಥೆಗಳನ್ನು ಮಾಡಿದೆ. ಶಾಂತಿಯುತ ಮತ್ತು ತಟಸ್ಥ ಚುನಾವಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹೀಗಿರುವಾಗ ಇಂತಹ ನಿರ್ದೇಶನದ ಹಿಂದಿರುವ ತರ್ಕವೇನು?” ಎಂದು ಆಕ್ಷೇಪಿಸಿದರು. ನ್ಯಾಯಾಲಯದ ಮುಂದೆ ತುರ್ತು ವಿಚಾರಣೆಗಾಗಿ ಅರ್ಜಿ ಸಲ್ಲಿಸಿದ್ದ ಟಿಎಂಸಿ ಪರ ವಕೀಲ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ, ಮತದಾನಕ್ಕೂ ಮುನ್ನ ತಮ್ಮನ್ನು ಪ್ರತಿಬಂಧಕಾತ್ಮಕವಾಗಿ ಬಂಧಿಸಬಹುದು ಎಂಬ ವ್ಯಾಪಕ ಅನುಮಾನ ಟಿಎಂಸಿ ಕಾರ್ಯಕರ್ತರಲ್ಲಿ ಮನೆಮಾಡಿದೆ ಎಂದು ವಾದಿಸಿದರು. ಎಪ್ರಿಲ್ 23 ಹಾಗೂ ಎಪ್ರಿಲ್ 29ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪ್ರಕ್ಷುಬ್ಧತೆ ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಅರ್ಜಿ ವಿಚಾರಣೆ ನಡೆದಿದೆ.
AI ವಿಡಿಯೊಗಳು, ಭಯ ಮತ್ತು ಕೋಮು ಧ್ರುವೀಕರಣ: ಹೀಗಿದೆ ಬಂಗಾಳದಲ್ಲಿ ಬಿಜೆಪಿಯ ದ್ವೇಷಪೂರಿತ ಡಿಜಿಟಲ್ ಅಭಿಯಾನ
ಪ್ರಸ್ತುತ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ರಾಜಕೀಯ ಹೋರಾಟವು ರಾಜ್ಯವನ್ನು ಹೇಗೆ ನಡೆಸುವುದು ಎಂಬುದರ ಕುರಿತಾದ ಚರ್ಚೆಗಳಿಂದ ಭಿನ್ನವಾಗಿ ಧಾರ್ಮಿಕ ಗುರುತಿನ ಮೇಲೆ ಹೆಚ್ಚಿನ ಗಮನ ಹರಿಸುವತ್ತ ಸಾಗಿದೆ. ಇದು ಹೊಸದಲ್ಲ; 2021ರಿಂದ ಇದು ಮತ್ತಷ್ಟು ಪ್ರಬಲವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 75% ಮತ್ತು ಬಿಜೆಪಿ ಸುಮಾರು 7% ಮುಸ್ಲಿಂ ಮತಗಳನ್ನು ಪಡೆದುಕೊಂಡಿತು. ನಂತರದ ವರ್ಷಗಳಲ್ಲಿ, ಆ ಧ್ರುವೀಕರಣವು ಮತ್ತಷ್ಟು ತೀಕ್ಷ್ಣವಾಗಿದೆ. ಇದು ಮತದಾರರನ್ನು ಕಠಿಣ ರಾಜಕೀಯ ಮತ್ತು ಧಾರ್ಮಿಕ ಬಣಗಳಾಗಿ ಮರುರೂಪಿಸಿದೆ. ಇತ್ತೀಚಿನ ವಿಶೇಷ ತೀವ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಗಳು ಈ ಆತಂಕಗಳಿಗೆ ಹೊಸ ಪ್ರಚೋದನೆಯನ್ನು ನೀಡಿವೆ. ಬಹು ವರದಿಗಳು ಮತ್ತು ಅಧ್ಯಯನಗಳು ಈ ಪ್ರಕ್ರಿಯೆಯ ಸಮಯದಲ್ಲಿ ಮುಸ್ಲಿಮರನ್ನು ಅಸಮಾನವಾಗಿ ಗುರಿಯಾಗಿಸಿಕೊಂಡಿವೆ ಎಂದು ಸೂಚಿಸಿವೆ. ಇದು ಹೊರಗಿಡುವಿಕೆಯ ಭಯವನ್ನು ಬಲಪಡಿಸುತ್ತದೆ ಮತ್ತು ಕೋಮು ಅನುಮಾನವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಈ ಚುನಾವಣೆಗೆ ಮುಂಚಿತವಾಗಿ, ಈ ವಿಭಜನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು ಬಿಜೆಪಿಯ ಸಾಮಾಜಿಕ ಮಾಧ್ಯಮ ಪ್ರಚಾರದಲ್ಲಿನ AI ವಿಡಿಯೊಗಳು. ಈ ವಿಡಿಯೊಗಳಲ್ಲಿ ಹಲವು ಮುಸ್ಲಿಮರನ್ನು ಹಿಂಸೆಯನ್ನು ಉಂಟುಮಾಡುವವರು, ಹೊರಗಿನವರು ಮತ್ತು ಬಂಗಾಳದ ಸಾಂಸ್ಕೃತಿಕ ರಚನೆಗೆ ಅಸ್ತಿತ್ವವಾದದ ಬೆದರಿಕೆಗಳಾಗಿ ಚಿತ್ರಿಸುವ ಸ್ಟೀರಿಯೊಟೈಪ್ಗಳನ್ನು ಅವಲಂಬಿಸಿವೆ. ಉದಾಹರಣೆಗೆ, ಮಾರ್ಚ್ 30ರಂದು ಬಿಜೆಪಿ ಪಶ್ಚಿಮ ಬಂಗಾಳದ ಅಧಿಕೃತ ಹ್ಯಾಂಡಲ್ನಿಂದ ಹಂಚಿಕೊಳ್ಳಲಾದ ಈ ಪೋಸ್ಟ್ ನೋಡಿ: ಈ ವಿಡಿಯೊ ಮುಸ್ಲಿಮರನ್ನು ಹೊರಗಿನವರು ಎಂದು ಸೂಕ್ಷ್ಮವಾಗಿ ಮರುರೂಪಿಸುತ್ತದೆ. ಅವರ ಉಪಸ್ಥಿತಿಯು ಬಂಗಾಳದ ಅಸ್ಮಿತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಬಿಜೆಪಿ ವಿರುದ್ಧದ ಮತವು ಭಾಷೆ, ಸಂಸ್ಕೃತಿ ಮತ್ತು ವಿಸ್ತರಣೆಯಿಂದ ಬಹುಸಂಖ್ಯಾತ ಸಮುದಾಯದ ಸ್ಥಳಾಂತರಕ್ಕೆ ಮತವಾಗಿದೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತದೆ. ನಮಗೆ ಮತ ನೀಡಿ ಅಥವಾ ನಾಶವಾಗಿ, ಬಂಗಾಳಿ ಹಿಂದೂಗಳಿಗೆ ಬಿಜೆಪಿಯ ಸಂದೇಶ ಬಿಜೆಪಿಯ ಅಧಿಕೃತ ಹ್ಯಾಂಡಲ್ಗಳು ತಮ್ಮ ಸಾಮಾಜಿಕ ಮಾಧ್ಯಮ ಅಭಿಯಾನದ ಭಾಗವಾಗಿ ಹಲವಾರು AI ವಿಡಿಯೊಗಳನ್ನು ಪೋಸ್ಟ್ ಮಾಡಿವೆ, ಇದು ಪಾಲ್ಟಾನೋ ದೋರ್ಕರ್, ಚಾಯ್ ಬಿಜೆಪಿ ಸೊರ್ಕರ್ (ಬದಲಾವಣೆ ಅಗತ್ಯ, ನಮಗೆ ಬಿಜೆಪಿ ಸರ್ಕಾರ ಬೇಕು) ಎಂಬ ವೈರಲ್ ಘೋಷಣೆಯನ್ನು ಬಳಸಿವೆ. ಬಿಜೆಪಿಯ ಪಶ್ಚಿಮ ಬಂಗಾಳದ ಇನ್ಸ್ಟಾಗ್ರಾಮ್ ಖಾತೆಯು ಇತ್ತೀಚೆಗೆ ಟಿಎಂಸಿ ಮತ್ತೆ ಗೆದ್ದರೆ ಏನಾಗಬಹುದು ಎಂಬುದರ ಕುರಿತು ಭಯಾನಕ, ಕಾಲ್ಪನಿಕ ಸನ್ನಿವೇಶವನ್ನು ರಚಿಸಲು AI ಬಳಸಿ ವಿಡಿಯೊವನ್ನು ಪೋಸ್ಟ್ ಮಾಡಿದೆ. ವಿಡಿಯೊದಲ್ಲಿ, ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರ AI ಆವೃತ್ತಿಯು ರಾಜ್ಯಾದ್ಯಂತ ಮಿನಿ ಪಾಕಿಸ್ತಾನಗಳನ್ನು ರಚಿಸುವ ಭರವಸೆ ನೀಡುವುದನ್ನು ಕಾಣಬಹುದು. ನಂತರ ಅದು ಬಂಗಾಳಕ್ಕೆ ಅಕ್ರಮವಾಗಿ ಪ್ರವೇಶಿಸುವ ಮುಸ್ಲಿಂ ಒಳನುಸುಳುವವರ ಗುಂಪು ಮತ್ತು ಕೋಲ್ಕತ್ತಾದ ಬೀದಿಗಳನ್ನು ಆಕ್ರಮಿಸಿಕೊಳ್ಳುವ ಹಿಂಸಾತ್ಮಕ ಗುಂಪುಗಳನ್ನು ತೋರಿಸುತ್ತದೆ. ಬಿಜೆಪಿಯ ಸಂದೇಶ ಸ್ಪಷ್ಟ ಮತ್ತು ಉದ್ದೇಶಪೂರ್ವಕವಾಗಿದೆ. ಇದು ಟಿಎಂಸಿಗೆ ಮತ ಚಲಾಯಿಸುವುದನ್ನು ಸಾಮಾನ್ಯ ರಾಜಕೀಯ ಆಯ್ಕೆಯಾಗಿ ಅಲ್ಲ, ಬದಲಾಗಿ ಬೃಹತ್ ಜನಸಂಖ್ಯಾ ಬದಲಾವಣೆಗಳಿಗೆ ಕಾರಣವಾಗುವ ಅಪಾಯಕಾರಿ ನಡೆಯಾಗಿ ರೂಪಿಸುತ್ತದೆ. ಟಿಎಂಸಿ ಗೆದ್ದರೆ, ಹಿಂದೂಗಳನ್ನು ಹೊರಹಾಕಲಾಗುತ್ತದೆ ಮತ್ತು ರಾಜ್ಯದ ಗುರುತೇ ನಾಶವಾಗುತ್ತದೆ ಎಂದು ವಿಡಿಯೊ ಸೂಚಿಸುತ್ತದೆ. ಮೂಲಭೂತವಾಗಿ, ಇದು ಚುನಾವಣೆಯನ್ನು ಭಯ ಮತ್ತು ಧಾರ್ಮಿಕ ವಿಭಜನೆಯಿಂದ ಉತ್ತೇಜಿಸಲ್ಪಟ್ಟ ಉಳಿವಿಗಾಗಿ ಹತಾಶ ಹೋರಾಟವೆಂದು ಚಿತ್ರಿಸುತ್ತದೆ. ಏಪ್ರಿಲ್ 2ರಂದು Xನಲ್ಲಿನ ಮತ್ತೊಂದು ಪೋಸ್ಟ್ನಲ್ಲಿ, ಪಕ್ಷವು ಸಂಪೂರ್ಣ ವ್ಯತಿರಿಕ್ತತೆಯನ್ನು ನಿರ್ಮಿಸಲು AI ರಚಿತ ದೃಶ್ಯಗಳನ್ನು ನಿಯೋಜಿಸುತ್ತದೆ. ಈ ವಿಡಿಯೊವು ಹಿಂದೂ ಕುಟುಂಬಗಳು ದೈನಂದಿನ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು, ಪೂಜೆ ಸಲ್ಲಿಸುವುದು, ಭಜನೆ ಕೂಟಗಳಲ್ಲಿ ಭಾಗವಹಿಸುವುದು ಮತ್ತು ಪ್ರಸಾದ ಹಂಚಿಕೊಳ್ಳುವುದು — ಶಾಂತ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುವ ದೃಶ್ಯಗಳೊಂದಿಗೆ ಪ್ರಾರಂಭವಾಗುತ್ತದೆ. ನಂತರ ಈ ಶಾಂತ ಪರಿಸ್ಥಿತಿ ಮುಸ್ಲಿಂ ಟೋಪಿ ಧರಿಸಿದ ಪುರುಷರ ಹಠಾತ್ ಆಗಮನದಿಂದ ಹಿಂಸಾತ್ಮಕವಾಗಿ ಭಂಗಗೊಳ್ಳುತ್ತದೆ; ಅವರು ರಾತ್ರಿಯಲ್ಲಿ ನೆರೆಹೊರೆಯ ಮೂಲಕ ನುಗ್ಗಿ ಮನೆಗಳಿಗೆ ಬೆಂಕಿ ಹಚ್ಚುವುದನ್ನು ತೋರಿಸಲಾಗಿದೆ. 'ಅವರಿಗೆ ಬೇಕಾಗಿರುವುದು ಶಾಂತಿ ಮತ್ತು ಸಮೃದ್ಧಿ, ಸುರಕ್ಷತೆ ಮತ್ತು ಭದ್ರತೆ ಮಾತ್ರ' ಎಂಬ ಸಾಲಿನಲ್ಲಿ ನಿರೂಪಣೆಯನ್ನು ಒತ್ತಿಹೇಳಲಾಗಿದೆ. ಇದು ಪ್ರೇಕ್ಷಕರನ್ನು ವಿಭಜಿಸುವ, ಒಂದು ಧಾರ್ಮಿಕ ಗುಂಪನ್ನು ಶಾಂತಿಯುತ ಸಂತ್ರಸ್ತರು ಮತ್ತು ಇನ್ನೊಂದು ಗುಂಪನ್ನು ಹಿಂಸಾತ್ಮಕ ಆಕ್ರಮಣಕಾರರು ಎಂದು ಚಿತ್ರಿಸುವ ಲೆಕ್ಕಾಚಾರದ ಕ್ರಮವಾಗಿದೆ. ಈ ಚಿತ್ರಗಳನ್ನು ರಚಿಸಲು AI ಬಳಸುವ ಮೂಲಕ, ವಿಡಿಯೊ ಜನರನ್ನು ಭಯಭೀತರನ್ನಾಗಿ ಮತ್ತು ಬೆದರಿಕೆಗೆ ಒಳಪಡಿಸಲು ಆಕ್ರಮಣಕಾರಿ ಸ್ಟೀರಿಯೊಟೈಪ್ ಗಳನ್ನು ಅವಲಂಬಿಸಿದೆ. ಮತ್ತೊಂದು ವಿಡಿಯೊ ಟಿಎಂಸಿಗೆ ಮತ ಚಲಾಯಿಸುವುದರಿಂದ ಗುರುತು, ಆಸ್ತಿ ಮತ್ತು ಉದ್ಯೋಗಾವಕಾಶಗಳ ನಷ್ಟಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ತೋರಿಸುತ್ತದೆ. ಒಬ್ಬ ಮಹಿಳೆ ಟಿಎಂಸಿಗೆ ಮತ ಚಲಾಯಿಸುವ ಗುಂಡಿಯನ್ನು ಒತ್ತಿದಾಗ, ಆಕೆಯ ಸೀರೆ ಹಿಜಾಬ್ ಆಗಿ ಬದಲಾಗುವುದನ್ನು ಅದು ತೋರಿಸುತ್ತದೆ. ಈ ವಿಡಿಯೊಗಳು ನಿರ್ದಿಷ್ಟ ಸಂದೇಶವನ್ನು ಮುಂದಿಡಲು ದೃಶ್ಯ ಸೂಚನೆಗಳನ್ನು ಬಳಸುತ್ತವೆ. ಹಿಂದೂ ಮನೆಗಳನ್ನು ದಟ್ಟ ಬೆಳಕು ಮತ್ತು ಸಮೃದ್ಧಿಯಿಂದ ಕೂಡಿರುವಂತೆ ತೋರಿಸಲಾಗುತ್ತದೆ; ಇದರಿಂದ ಸಮಾಧಾನ ಮತ್ತು ಸಾಂಪ್ರದಾಯಿಕ ಭಾವನೆ ಉಂಟಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಮುಸ್ಲಿಮರನ್ನು ಚಿತ್ರಿಸುವಾಗ ಚಿತ್ರಣವು ಬದಲಾಗುತ್ತದೆ. ಇಲ್ಲಿ ಬಣ್ಣಗಳು ಕಪ್ಪಾಗುತ್ತವೆ. ವ್ಯಕ್ತಿಗಳನ್ನು ಮುಖವಿಲ್ಲದ, ಅಸ್ತವ್ಯಸ್ತ ಜನಸಮೂಹವಾಗಿ ತೋರಿಸಲಾಗುತ್ತದೆ. ಸೀರೆಗಳನ್ನು ಹಿಜಾಬ್ಗಳಿಗೆ ಬದಲಾಯಿಸುವ ಮೂಲಕ ಮತ್ತು ವೈಯಕ್ತಿಕ ವಿವರಗಳನ್ನು ತೆಗೆದುಹಾಕುವ ಮೂಲಕ, ವಿಡಿಯೊ ಜನರ ಗುರುತನ್ನು ತೆಗೆದುಹಾಕುತ್ತದೆ ಮತ್ತು ಅವರನ್ನು ಸಾಮೂಹಿಕ ಬೆದರಿಕೆಯಾಗಿ ಚಿತ್ರಿಸುತ್ತದೆ. ಬಿಜೆಪಿ ಬಂಗಾಳದ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾದ ಮತ್ತೊಂದು ವಿಡಿಯೊದಲ್ಲಿ ಬಾಂಗ್ಲಾದೇಶದ ಮುಸ್ಲಿಮರು ರಾಜ್ಯವನ್ನು ಮೌನವಾಗಿ ವಶಪಡಿಸಿಕೊಳ್ಳುತ್ತಿದ್ದಾರೆ ಮತ್ತು ಟಿಎಂಸಿ ಅದನ್ನು ತಡೆಯಲು ಏನನ್ನೂ ಮಾಡುತ್ತಿಲ್ಲ ಎಂಬ ಕಲ್ಪನೆಯನ್ನು ತೋರಿಸಿದೆ. ಬಂಗಾಳಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅದು ಹೇಳುತ್ತದೆ. ಈ ಒಳಹರಿವು ನೆರೆಹೊರೆಗಳನ್ನು ತುಂಬಾ ಬದಲಾಯಿಸುತ್ತಿದೆ. ನೀವು ಬೆಳೆದ ಬಾಲ್ಯಗಳು, ನೀವು ಬೆಳೆದ ನೆರೆಹೊರೆಗಳು — ಎಲ್ಲವೂ ಬದಲಾಗುತ್ತಿದೆ ಎಂದು ಎಚ್ಚರಿಸುವ ವಿಡಿಯೊವಾಗಿದೆ ಇದು. ಮಾರ್ಚ್ನಲ್ಲಿ, ಬಿಜೆಪಿಯ ಪಶ್ಚಿಮ ಬಂಗಾಳದ ಯುವ ಘಟಕವು ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಲು ಕ್ಲಾಸಿಕ್ ಬಂಗಾಳಿ ಜಾನಪದ ಕಥೆಗಳನ್ನು ತಿರುಚಿದ ಕೃತಕ ಬುದ್ಧಿಮತ್ತೆಯ ವಿಡಿಯೊವನ್ನು ಹಂಚಿಕೊಂಡಿತು. ಇದು ಅವರನ್ನು ದುಷ್ಟ ರಾಣಿ ಎಂದು ಚಿತ್ರಿಸುತ್ತದೆ, ಅದರಲ್ಲಿ ಅವರು ತಮ್ಮ ಮುಸ್ಲಿಂ ಬೆಂಬಲಿಗರೊಂದಿಗೆ ಬಂಗಾಳಿ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ. ಈ ಸ್ವಾಧೀನವನ್ನು ತೋರಿಸಲು ವಿಡಿಯೊ ಸರಳ ಚಿಹ್ನೆಗಳನ್ನು ಬಳಸುತ್ತದೆ. ಅದೇನೆಂದರೆ ಖೀರ್ ನಂತಹ ಸಾಂಪ್ರದಾಯಿಕ ಆಹಾರವು ಸೇವಾಯ್ ಆಗಿ ಬದಲಾಗುತ್ತದೆ; ನೀರಿಗೆ ಬಂಗಾಳಿ ಪದ (ಜೊಲ್) ಉರ್ದು-ಪ್ರಭಾವಿತ ಪಾನಿ ಆಗುತ್ತದೆ ಮತ್ತು ಸಾಂಪ್ರದಾಯಿಕ ಧೋತಿಗಳನ್ನು ಧರಿಸಿದ ಪುರುಷರು ಲುಂಗಿಗಳಲ್ಲಿ ಗಡ್ಡಧಾರಿ ಪುರುಷರಾಗಿ ಬದಲಾಗುತ್ತಾರೆ. ಇದು ಬಂಗಾಳಿ ಗುರುತನ್ನು ಆಕ್ರಮಣಕ್ಕೆ ಒಳಪಡಿಸಲಾಗಿದೆ ಎಂದು ಹೇಳುತ್ತದೆ; ಮುಸ್ಲಿಮರನ್ನು ಆ ಸಂಸ್ಕೃತಿಯ ಶತ್ರು ಎಂದು ಚಿತ್ರಿಸುತ್ತದೆ. ಇದು ದುಷ್ಟ ರಾಣಿ ಮತ್ತು ಅವರ ಬೆಂಬಲಿಗರನ್ನು ಭಾರತದಿಂದ ಮತ್ತು ಗಡಿಯುದ್ದಕ್ಕೂ ಬಾಂಗ್ಲಾದೇಶಕ್ಕೆ ಓಡಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ಬಿಜೆಪಿಯ ಸಾಮಾಜಿಕ ಮಾಧ್ಯಮ ಅಭಿಯಾನವು ಸಾಂಸ್ಕೃತಿಕ ನಾಸ್ಟಾಲ್ಜಿಯಾವನ್ನೂ ಬಳಸಿದೆ; ಉಪೇಂದ್ರಕಿಶೋರ್ ರೇ ಚೌಧುರಿ ರಚಿಸಿದ ಮತ್ತು ಸತ್ಯಜಿತ್ ರೇ ಅವರಿಂದ ಪರದೆಯ ಮೇಲೆ ಅಮರಗೊಳಿಸಲ್ಪಟ್ಟ ಗೂಪಿ ಮತ್ತು ಬಾಘಾ ಅವರ ಐಕಾನಿಕ್ ಜೋಡಿಯ ಸುತ್ತ AI ಕಂಟೆಂಟ್ ಸೃಷ್ಟಿಯಾಗಿದೆ. ಈ ಕ್ಲಿಪ್ನಲ್ಲಿ, ಪಶ್ಚಿಮ ಬಂಗಾಳಕ್ಕೆ ಮುಂದೆ ಏನಾಗಲಿದೆ ಎಂಬುದನ್ನು ನೋಡಲು ಇಬ್ಬರೂ ಭವಿಷ್ಯದಲ್ಲಿ ಪ್ರಯಾಣಿಸುತ್ತಾರೆ, ಆದರೆ ಮುಸ್ಲಿಮರು ಆಕ್ರಮಿಸಿದ ನೆರೆಹೊರೆಯನ್ನು ಕಂಡುಕೊಳ್ಳುತ್ತಾರೆ. ಬಂಗಾಳಿ ಸಂಸ್ಕೃತಿಯನ್ನು ಅಳಿಸಿಹಾಕಲಾಗುತ್ತಿದೆ ಎಂದು ಸೂಚಿಸಲು ವಿಡಿಯೊ ನಿರ್ದಿಷ್ಟ ಚಿಹ್ನೆಗಳನ್ನು ಬಳಸುತ್ತದೆ. ಅವುಗಳೆಂದರೆ ಉರ್ದು ಪಠ್ಯವು ಗೋಡೆಗಳ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಟಿಎಂಸಿ ನಾಯಕ ಫಿರ್ಹಾದ್ ಹಕೀಮ್ ಅವರ ಪೋಸ್ಟರ್ಗಳು ಎಲ್ಲೆಡೆ ಇವೆ. ಈ ಪಾತ್ರಗಳನ್ನು ಬಳಸುವ ಮೂಲಕ, ಬಿಜೆಪಿ ತನ್ನ ಸಂದೇಶವನ್ನು ಬಂಗಾಳಿ ಮತದಾರರಿಗೆ ಪರಿಚಿತ ಮತ್ತು ಹೆಚ್ಚು ನಂಬಲರ್ಹವೆಂದು ಭಾವಿಸಲು ಪ್ರಯತ್ನಿಸುತ್ತಿದೆ. ಮತ್ತೊಂದು AI ವಿಡಿಯೊದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಟೋಪಿ ಧರಿಸಿದ ಮುಸ್ಲಿಮರು ಸುತ್ತುವರೆದಿರುವುದನ್ನು ತೋರಿಸುತ್ತದೆ. ಈ ಗುಂಪುಗಳು ತಮ್ಮ ಪ್ರಮುಖ ಮತದಾರರು ಎಂದು ಅವರು ನಂಬುವುದರಿಂದ ಅವರನ್ನು ರಾಷ್ಟ್ರ ವಿರೋಧಿ ಅಥವಾ ಅಕ್ರಮ ವಲಸಿಗರ ರಕ್ಷಕಿ ಎಂದು ಕರೆಯಲು ಅಭ್ಯಂತರವಿಲ್ಲ ಎಂದು ಶೀರ್ಷಿಕೆ ಸೂಚಿಸುತ್ತದೆ. ಪಶ್ಚಿಮ ಬಂಗಾಳವು ಪಶ್ಚಿಮ ಬಾಂಗ್ಲಾದೇಶವಾಗಿ ರೂಪಾಂತರಗೊಳ್ಳುತ್ತಿದೆ ಎಂದು ಒಂದು ವಿಡಿಯೊ ಹೇಳುತ್ತದೆ. ಇದು ಟೋಪಿ, ಗಡ್ಡ ಮತ್ತು ಲುಂಗಿ ಧರಿಸಿದ ಮುಸ್ಲಿಂ ವ್ಯಕ್ತಿಯೊಬ್ಬ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆಗಳಾದ ಮಾ ದುರ್ಗಾ ಮತ್ತು ಮಾ ಕಾಳಿ ಹೆಸರುಗಳನ್ನು ಉಲ್ಲೇಖಿಸುವುದನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ ಎಂದು ಘೋಷಿಸುವ ಸ್ಟೀರಿಯೊಟೈಪಿಕಲ್ ಚಿತ್ರಣವನ್ನು ಒಳಗೊಂಡಿದೆ. ಮತ್ತೊಂದು ಫೇಸ್ಬುಕ್ ವಿಡಿಯೊದಲ್ಲಿ, ಟಿಎಂಸಿ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೋಹಿಂಗ್ಯಾಗಳ ಅಕ್ರಮ ಮತಗಳನ್ನು ಬಳಸಿಕೊಂಡು ಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಸೂಚಿಸಲಾಗಿದೆ. ಈಗ ಈ ಮತದಾರರು ಓಡಿಹೋಗಿರುವುದರಿಂದ, ಮಮತಾ ಬ್ಯಾನರ್ಜಿ ಸಿಪಿಐ(ಎಂ)ನ ಹಿರಿಯ ನಾಯಕ ಎಂಡಿ ಸಲೀಂ ಅವರಿಂದ ಸಹಾಯ ಪಡೆಯುತ್ತಿದ್ದಾರೆ ಎಂದು ತೋರಿಸಲಾಗಿದೆ. ಇದಲ್ಲದೆ, ಮತಗಳಿಗೆ ಬದಲಾಗಿ ಹಣವನ್ನು ವರ್ಗಾಯಿಸುವ ಕಾರ್ಯವನ್ನು ಹೊಂದಿರುವವರು ಲುಂಗಿ ಧರಿಸುತ್ತಾರೆ, ಇದು ಅವರು ಕೂಡ ಮುಸ್ಲಿಂ ಎಂದು ಸೂಚಿಸುತ್ತದೆ. ನಾಯಕರು ಏನಂತಾರೆ? AI-ರಚಿತ ದೃಶ್ಯವಾಗಿ ಆನ್ಲೈನ್ನಲ್ಲಿ ಪ್ರಸಾರವಾಗುತ್ತಿರುವ ವಿಷಯಗಳು ಬಿಜೆಪಿ ನಾಯಕರ ಹೇಳಿಕೆಗಳಲ್ಲಿಯೂ ಪ್ರತಿಧ್ವನಿಸಿವೆ. ರಿಪಬ್ಲಿಕ್ ಬಾಂಗ್ಲಾದಲ್ಲಿ ನಡೆದ ಟಾಕ್ ಶೋವೊಂದರಲ್ಲಿ, ಬಾರಾನಗರದ ಬಿಜೆಪಿ ಅಭ್ಯರ್ಥಿ ಸಜಲ್ ಘೋಷ್, ಚುನಾವಣೆ ಹಿಂದೂ ಬಂಗಾಳಿಗಳಿಗೆ ಕೊನೆಯ ರೈಲು; ಅದನ್ನು ಮಿಸ್ ಮಾಡಿದರೆ ಬಂಗಾಳಿಗಳು ತಮ್ಮ ಹೆಸರಿನ ಮೊದಲು ಶೇಖ್ ಅಥವಾ ಮೊಹಮ್ಮದ್ ಅನ್ನು ಸೇರಿಸಬೇಕಾಗಿ ಬರುತ್ತದೆ ಎಂದಿದ್ದರು. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಬಾಂಗ್ಲಾದೇಶಿ ಒಳನುಸುಳುವವರ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿದ್ದಾರೆ; ತೃಣಮೂಲ ಕಾಂಗ್ರೆಸ್ ಸರ್ಕಾರವು ನಕಲಿ ಗುರುತಿನ ದಾಖಲೆಗಳ ಮೂಲಕ ಚುನಾವಣೆಯಲ್ಲಿ ಭಾಗವಹಿಸಲು ಅವರಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಅವರು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಮತ್ತು ಅಸ್ಸಾಂ ನ ಹಿಮಂತ ಬಿಸ್ವಾ ಶರ್ಮಾ ಅವರಂತಹ ನಾಯಕರು ಇದೇ ರೀತಿಯ ಹೇಳಿಕೆಗಳನ್ನು ಪುನರಾವರ್ತಿಸಿದ್ದಾರೆ. ಬಿಜೆಪಿಯ ಸಂದೇಶ ಸ್ಪಷ್ಟವಾಗಿದೆ. ಬಿಜೆಪಿಯ ಆನ್ಲೈನ್ ಮತ್ತು ಆಫ್ಲೈನ್ ಅಭಿಯಾನವು ಅಕ್ರಮ ನುಸುಳುಕೋರರ ಭಯದ ಮೇಲೆ ನಿರ್ಮಿಸಲಾಗಿದೆ. ಬಿಜೆಪಿಗೆ ಮತ ಹಾಕಿ, ಇಲ್ಲದಿದ್ದರೆ ಹೊರಗಿನವರು ಆಕ್ರಮಿಸಿಕೊಳ್ಳುವ ಅಪಾಯವಿದೆ ಎಂದು ಬಿಜೆಪಿ ಮತದಾರರಿಗೆ ಎಚ್ಚರಿಕೆ ನೀಡುತ್ತದೆ. ಇದು ಕೇವಲ ವಲಸಿಗರ ಮೇಲೆ ನಡೆಸುವ ವಾಗ್ದಾಳಿಯಲ್ಲ; ಇದು ಇಡೀ ಮುಸ್ಲಿಂ ಸಮುದಾಯವನ್ನು ರಾಜ್ಯದ ಸಂಸ್ಕೃತಿ, ಭದ್ರತೆ ಮತ್ತು ಜನಸಂಖ್ಯಾ ಸಮತೋಲನಕ್ಕೆ ಬೆದರಿಕೆ ಎಂದು ಚಿತ್ರಿಸುತ್ತದೆ. ಇದು ಜನರನ್ನು ವಿಭಜಿಸಲು ವಿನ್ಯಾಸಗೊಳಿಸಲಾದ ಅಭಿಯಾನವಾಗಿದೆ. ರಾಜ್ಯವನ್ನು ಹೇಗೆ ನಡೆಸುವುದು ಅಥವಾ ನೀತಿಗಳನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಚರ್ಚಿಸುವ ಬದಲು, ಚುನಾವಣೆಯನ್ನು ಉಳಿವಿಗಾಗಿ ಹತಾಶ ಹೋರಾಟವಾಗಿ ಪ್ರಸ್ತುತಪಡಿಸಲಾಗುತ್ತಿದೆ. ಪಶ್ಚಿಮ ಬಂಗಾಳ ಮತದಾನವನ್ನು ಪ್ರಾರಂಭಿಸುತ್ತಿದ್ದಂತೆ, ಬಿಜೆಪಿ ಚುನಾವಣೆಯನ್ನು ಧಾರ್ಮಿಕ ಗುರುತಿನ ಪರೀಕ್ಷೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ; ಮತದಾರರನ್ನು ಗೆಲ್ಲಲು ರಾಜಕೀಯ ವಿಚಾರಗಳಿಗಿಂತ ಭಯವನ್ನು ಹುಟ್ಟುಹಾಕುತ್ತಿದೆ.
ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಟಿ.ಎ.ನಾರಾಯಣಗೌಡರಿಗೆ ʼಸೌಹಾರ್ದ ಸಿರಿ ಪ್ರಶಸ್ತಿʼ ಪ್ರದಾನ
ಮಂಡ್ಯ : ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ವತಿಯಿಂದ ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರಿಗೆ 2026ನೇ ಸಾಲಿನ ʼಸೌಹಾರ್ದ ಸಿರಿ ಪ್ರಶಸ್ತಿʼ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾರಾಯಣಗೌಡರು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿಂದಾಗಿ ಜಾತಿ ಧರ್ಮಗಳ ಭೇದವಿಲ್ಲದೆ ಸಾವಿರಾರು ಕಾರ್ಯಕರ್ತರು ನಾಡು ನುಡಿಗಾಗಿ ಶ್ರಮಿಸುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಲಕ್ಷಕ್ಕೂ ಮಿಗಿಲಾದ ಮುಸ್ಲಿಂ ಕಾರ್ಯಕರ್ತರು ಇದ್ದಾರೆ. ನಾಡಿಗೆ ಮುಸ್ಲಿಂ ಸಮುದಾಯದ ಕಾಣಿಕೆಯನ್ನು ಯಾರಿಂದಲೂ ನಗಣ್ಯವಾಗಿಸಲಾಗದು. ಶಿಶುನಾಳ ಶರೀಫ, ಎಸ್.ಕೆ.ಕರೀಂ ಖಾನ್, ಕೆ.ಎಸ್.ನಿಸಾರ್ ಅಹ್ಮದ್ ಮುಂತಾದ ಮುಸ್ಲಿಂ ವ್ಯಕ್ತಿತ್ವಗಳು ಈ ನಾಡನ್ನು ಶೃಂಗರಿಸಿವೆ. ಕನ್ನಡ ಭಾಷೆಯ ಮೇಲೆ ಪ್ರೀತಿ ಇರುವ ಯಾರೇ ಆಗಲಿ, ಜಾತಿ ಧರ್ಮಗಳ ಮೇಲಾಟಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು. ಭಾಷೆಯನ್ನು ಪ್ರೀತಿಸುವ ಒಲವಿರುವ ಎಲ್ಲರೂ ಕೂಡ ನಮ್ಮ ಸಹೋದರರೇ. ಕೋಮುವಾದಿಗಳು ಕೆಲವು ಬಾರಿ ಮುಸ್ಲಿಮರ ವಿಚಾರ ಮುಂದಿಟ್ಟುಕೊಂಡು ನನ್ನನ್ನು ತಿವಿಯಲು ಪ್ರಯತ್ನಿಸುತ್ತಾರೆ. ಆದರೆ ನಾಡು ನುಡಿಗೆ ಮುಸ್ಲಿಂ ಸಮುದಾಯದ ಕೊಡುಗೆಗಳನ್ನು ಉಲ್ಲೇಖಿಸುವ ಮೂಲಕ ನಾನು ಇದೆಲ್ಲವನ್ನು ಹಿಮ್ಮೆಟ್ಟಿಸುತ್ತೇನೆ. ಮುಸ್ಲಿಂ ಬಾಂಧವ್ಯ ವೇದಿಕೆಯವರು ನೀಡಿದ ಈ ಪ್ರಶಸ್ತಿ ಕನ್ನಡಪರ ಹೋರಾಟಗಾರರು ಮತ್ತು ಕನ್ನಡದ ಮೇಲೆ ಅವರಿಗಿರುವ ಅಭಿಮಾನವನ್ನು ಪ್ರದರ್ಶಿಸುತ್ತದೆ. ಏಕತೆ ಮತ್ತು ಭಾವೈಕ್ಯತೆ ಇಲ್ಲದ ಸಮಾಜದಲ್ಲಿ ಭಾಷೆಯು ಕೂಡ ಬಡವಾಗುತ್ತದೆ. ಭಾಷೆ ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಲ್ಲ. ಅದು ಎಲ್ಲರ ಆಸ್ತಿ ಮತ್ತು ಎಲ್ಲರ ಸ್ವತ್ತು. ಇದನ್ನು ಅರಿತಾಗಲೇ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನಗೈದ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ನಾರಾಯಣಗೌಡರ ಕನ್ನಡದ ಸೇವೆಯನ್ನು ರಾಜ್ಯ ಎಂದಿಗೂ ಮರೆಯಬಾರದು. ಅವರಿಗೆ ಪ್ರಶಸ್ತಿಯನ್ನು ನೀಡುವುದರ ಮೂಲಕ ಮುಸ್ಲಿಂ ಬಾಂಧವ್ಯ ವೇದಿಕೆ ಉತ್ತಮ ಕೆಲಸ ಮಾಡಿದೆ. ಸಾಮರಸ್ಯ ಮತ್ತು ಭಾವೈಕ್ಯತೆಗೆ ಪೂರಕವಾಗುವ ಇಂತಹ ಕಾರ್ಯಕ್ರಮಗಳು ಒಂದೆರಡು ದಶಕಗಳ ಹಿಂದೆ ಆರಂಭವಾಗಿದ್ದರೆ, ಇಂದು ಈ ರೀತಿಯ ಕೋಮು ಧ್ರುವೀಕೃತ ರಾಜಕಾರಣ ಮತ್ತು ಸಾಮಾಜಿಕ ವ್ಯವಸ್ಥೆ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಒರಿಸ್ಸಾದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ರಾಜ್ಯ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು, ಮುಸ್ಲಿಂ ಬಾಂಧವ್ಯ ವೇದಿಕೆಯವರ ಸೌಹಾರ್ದ ಸಮಾಜ ನಿರ್ಮಾಣದ ಕಾರ್ಯಗಳನ್ನು ಮೆಚ್ಚಿ, ಪ್ರಶಸ್ತಿ ಪುರಸ್ಕೃತ ನಾರಾಯಣಗೌಡರನ್ನು ಅಭಿನಂದಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಸ್ಲಿಂ ಬಾಂಧವ್ಯ ವೇದಿಕೆ ಗೌರವಾಧ್ಯಕ್ಷ ಡಾ.ಮುಹಮ್ಮದ್ ಶಫಿ ಮುಲ್ಲಾ ವಹಿಸಿದರು. ವೇದಿಕೆಯಲ್ಲಿ ನಿವೃತ್ತ ನ್ಯಾಯಾಧೀಶ ನಬಿರಸೂಲ್ ಮಹಮದಾಪುರ, ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಹಯಾತ್ ಕಾರ್ಗಲ್, ಮುಸ್ಲಿಂ ಬಾಂಧವ್ಯ ವೇದಿಕೆಯ ಅಧ್ಯಕ್ಷ ಝಾಕೀರ್ ಹುಸೇನ್ ಉಚ್ಚಿಲ, ಮಾಜಿ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್, ಸದಸ್ಯರಾದ ಅನುಪಮಾ ಮಾಸಿಕದ ಸಂಪಾದಕಿ ಶೆಹನಾಜ್, ಮಂಡ್ಯ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಕ್ತಾರ್ ಅಹ್ಮದ್ ಉಪಸ್ಥಿತರಿದ್ದರು. ಮುಷ್ತಾಕ್ ಹೆನ್ನಾಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಅನೀಶ್ ಪಾಷಾ ಸ್ವಾಗತಿಸಿ, ಕಾರ್ಯದರ್ಶಿ ರಹಮತ್ ದಾವಣಗೆರೆ ಧನ್ಯವಾದ ಸಮರ್ಪಿಸಿದರು. ಡಾ.ನೂರ್ ಸಮದ್ ಅಬ್ಬಲಗೆರೆ ನಿರೂಪಿಸಿದರು.
ಅಮೆರಿಕ-ಇರಾನ್ ಕದನ ವಿರಾಮ ಮುಕ್ತಾಯಗೊಳ್ಳುವ ಕೆಲವು ಗಂಟೆಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದರು. ಪ್ರಸ್ತುತ ಆಂತರಿಕವಾಗಿ ವಿಭಜನೆಯಾಗಿರುವ ಇರಾನ್ ನ ನಾಯಕತ್ವಕ್ಕೆ ಏಕೀಕೃತ ಪ್ರಸ್ತಾವನೆಯನ್ನು ಮಂಡಿಸಲು ಸಮಯ ನೀಡಲು ಬಯಸುವುದಾಗಿ ಟ್ರಂಪ್ ಹೇಳಿದ್ದಾರೆ. ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್ನಲ್ಲಿ ಟ್ರಂಪ್, ಪಾಕಿಸ್ತಾನವನ್ನು ಉಲ್ಲೇಖಿಸಿದ್ದು, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ಕೋರಿಕೆಯ ಮೇರೆಗೆ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ. ಕೆಲವೇ ಗಂಟೆಗಳ ಮೊದಲು, ಮಾತುಕತೆಗಳ ಸ್ಥಿತಿಯ ಬಗ್ಗೆ ಸಂಪೂರ್ಣ ಗೊಂದಲವಿತ್ತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ಲಾಮಾಬಾದ್ ಗೆ ತೆರಳುತ್ತಾರೆ ಎಂದು ಟ್ರಂಪ್ ಈ ಹಿಂದೆ ಘೋಷಿಸಿದ್ದರು. ಇರಾನದ ಹಡಗನ್ನು ಅಮೆರಿಕ ವಶಪಡಿಸಿಕೊಂಡಿದೆ, ಇರಾನ್ ಬೆದರಿಕೆಗಳ ನೆರಳಿನಲ್ಲಿ ಮಾತುಕತೆ ನಡೆಸಲು ನಿರಾಕರಿಸುತ್ತಿದೆ. ವ್ಯಾನ್ಸ್ ಅವರ ಭೇಟಿಯನ್ನು ರದ್ದುಗೊಳಿಸಲಾಯಿತು. ಶಾಂತಿಯುತ ಪರಿಹಾರದ ಭರವಸೆ ತಪ್ಪಿಹೋಗುತ್ತಿರುವಂತೆ ತೋರುತ್ತಿತ್ತು. ಇರಾನ್ ವಿರುದ್ಧ ನೇರ ದಾಳಿಯನ್ನು ವಿಳಂಬಗೊಳಿಸಲು ಪಾಕಿಸ್ತಾನವು ಅಧ್ಯಕ್ಷ ಟ್ರಂಪ್ ಅವರನ್ನು ಯಶಸ್ವಿಯಾಗಿ ಮನವೊಲಿಸಿದರೆ, ಅದು ಪ್ರಮುಖ ರಾಜತಾಂತ್ರಿಕ ಮಧ್ಯವರ್ತಿಯಾಗಿ ಇಸ್ಲಾಮಾಬಾದ್ ನ ಪಾತ್ರವನ್ನು ದೃಢಪಡಿಸುತ್ತದೆ. ಇದಕ್ಕೂ ಮೊದಲು, ಇರಾನ್ ನಾಯಕರು ಷರೀಫ್ ಮತ್ತು ಮುನೀರ್ ಅವರ ಪ್ರಯತ್ನಗಳಿಗೆ ಹಲವಾರು ಬಾರಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ►ಇರಾನ್-ಅಮೆರಿಕ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನ ಏಕೆ ಶ್ರಮಿಸುತ್ತಿದೆ? ಪಾಕಿಸ್ತಾನಕ್ಕೆ, ಇರಾನ್ ಯುದ್ಧವನ್ನು ಕೊನೆಗೊಳಿಸುವುದು ಅನಿವಾರ್ಯವಾಗಿದೆ. ಅದರ ಆರ್ಥಿಕತೆಯು ಹಾರ್ಮುಝ್ ಜಲಸಂಧಿ ಮಾರ್ಗದಿಂದ ಇಂಧನ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈಗಾಗಲೇ, ಇಂಧನ ಬಿಕ್ಕಟ್ಟಿನಿಂದಾಗಿ ಅನೇಕ ಕಚೇರಿಗಳು ಮತ್ತು ಶಾಲೆಗಳಲ್ಲಿ ಮನೆಯಿಂದ ಕೆಲಸ ಮಾಡುವ ನೀತಿಗಳನ್ನು ಅಳವಡಿಸಬೇಕಾಗಿದೆ. ಲಕ್ಷಾಂತರ ಪಾಕಿಸ್ತಾನಿಗಳು ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಾರೆ, ಅವರು ಮನೆಗೆ ಹಣ ಕಳುಹಿಸುತ್ತಾರೆ. ಅಲ್ಲದೆ, ಹೆಚ್ಚುತ್ತಿರುವ ಇಂಧನ ವೆಚ್ಚಗಳು ಪ್ರತಿ ದೇಶಕ್ಕೂ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಆದರೆ ಪಾಕಿಸ್ತಾನಕ್ಕೆ ಇನ್ನೊಂದು ಸಮಸ್ಯೆ ಇದೆ. ಅದೇನೆಂದರೆ ಪಾಕಿಸ್ತಾನ ಪ್ರಸ್ತುತ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲ ಕಾರ್ಯಕ್ರಮದಲ್ಲಿದೆ, ಅದರ ಭಾಗವಾಗಿ ಅದು ಒಂದು ನಿರ್ದಿಷ್ಟ ಮಟ್ಟದಲ್ಲಿ ವಿದೇಶಿ ಕರೆನ್ಸಿ ನಿಕ್ಷೇಪಗಳನ್ನು ನಿರ್ವಹಿಸಬೇಕಾಗಿದೆ. ತೈಲಕ್ಕಾಗಿ ಹೆಚ್ಚು ಖರ್ಚು ಮಾಡುವುದರಿಂದ ಈ ನಿಕ್ಷೇಪವು ಖಾಲಿಯಾಗುತ್ತದೆ. ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಎಕನಾಮಿಕ್ಸ್ (PIDE) ಇತ್ತೀಚಿನ ವರದಿಯಲ್ಲಿ, ಏರುತ್ತಿರುವ ತೈಲ ಬೆಲೆಗಳು ಆಮದು ವೆಚ್ಚವನ್ನು ಹೆಚ್ಚಿಸುತ್ತವೆ. ಹಣದುಬ್ಬರದ ಒತ್ತಡಗಳನ್ನು ತೀವ್ರಗೊಳಿಸುತ್ತವೆ ಮತ್ತು ವಿನಿಮಯ ದರದ ಮೇಲೆ ಕೆಳಮುಖ ಒತ್ತಡವನ್ನು ಬೀರುತ್ತವೆ. ಇದರಿಂದಾಗಿ ಆರ್ಥಿಕ ಚಟುವಟಿಕೆ ನಿಧಾನವಾಗುತ್ತದೆ. ಹಾರ್ಮುಝ್ ಜಲಸಂಧಿಯ ಅಸ್ತಿತ್ವದಲ್ಲಿರುವ ಮುಚ್ಚುವಿಕೆಯು ದೀರ್ಘಕಾಲದವರೆಗೆ ಇದ್ದರೆ, ಕೈಗಾರಿಕಾ ಇನ್ಪುಟ್ ವೆಚ್ಚವನ್ನು ಹೆಚ್ಚಿಸಬಹುದು. ಇದಲ್ಲದೆ, ಹೆಚ್ಚಿನ ಇಂಧನ ಬೆಲೆಗಳು ವ್ಯಾಪಾರ ಕೊರತೆಯನ್ನು ಹೆಚ್ಚಿಸಬಹುದು ಮತ್ತು ಬಾಹ್ಯ ಹಣಕಾಸಿನ ಅಗತ್ಯಗಳನ್ನು ತಗ್ಗಿಸಬಹುದು ಎಂದು ಹೇಳಿದೆ. ಇದರಲ್ಲಿ ಭೌಗೋಳಿಕ ರಾಜಕೀಯ ಕಾಳಜಿಗಳೂ ಇವೆ. ಅಮೆರಿಕದೊಂದಿಗೆ ಹೆಚ್ಚುತ್ತಿರುವ ಆತ್ಮೀಯತೆ ಪಾಕಿಸ್ತಾನಕ್ಕೆ ಲಾಭದಾಯಕವಾಗಿದ್ದರೂ, ಅದು ಇರಾನ್ ನೊಂದಿಗೆ ಆಳವಾದ ಸಂಬಂಧಗಳನ್ನು ಮತ್ತು 900 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಇರಾನ್ ದಾಳಿ ಮಾಡಿದ ಎಲ್ಲಾ ಗಲ್ಫ್ ರಾಷ್ಟ್ರಗಳೊಂದಿಗೆ, ವಿಶೇಷವಾಗಿ ಪ್ರಮುಖ ದಾನಿ ಸೌದಿ ಅರೇಬಿಯಾದೊಂದಿಗೆ ರಕ್ಷಣಾ ಒಪ್ಪಂದವನ್ನು ಹೊಂದಿದೆ. ಅದರ ಮತ್ತೊಂದು ಪ್ರಮುಖ ದಾನಿ ಚೀನಾ, ಯುದ್ಧದಿಂದಾಗಿ ಆರ್ಥಿಕವಾಗಿ ಬಳಲುತ್ತಿದೆ. ಹೀಗಾಗಿ, ಪಾಕಿಸ್ತಾನವು ತನ್ನ ಯಾವುದೇ ಸಂಬಂಧಗಳನ್ನು ಹೆಚ್ಚು ತೀವ್ರವಾದ ಪರೀಕ್ಷೆಗೆ ಒಳಪಡಿಸುವ ಮೊದಲು ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ. ಪಾಕಿಸ್ತಾನದ ಗುರಿ ಸ್ಥಿರ ಇರಾನ್, ಗಡಿ ಅಶಾಂತಿಗೆ ಕಾರಣವಾಗುವ ದುರ್ಬಲಗೊಂಡ ಇರಾನ್ ಅಲ್ಲ ಮತ್ತು ಸೌದಿ ನೇತೃತ್ವದ ಆದೇಶಕ್ಕೆ ಬೆದರಿಕೆ ಹಾಕುವ ಪ್ರಬಲ ಇರಾನ್ ಅಲ್ಲ. ಯಾವುದೇ ತೀವ್ರತೆಯು ಇಸ್ಲಾಮಾಬಾದ್ ಗೆ ಕಾರ್ಯತಂತ್ರದ ವಿಪತ್ತಾಗಿರುತ್ತದೆ. ಪಾಕಿಸ್ತಾನದ ಕಳವಳಗಳು ಎರಡು ಭಾಗಗಳಾಗಿದ್ದವು: ಇರಾನ್ ನಲ್ಲಿರುವ ಯಾವುದೇ ಇಸ್ರೇಲಿ ಪ್ರಭಾವಿತ ಸರ್ಕಾರವು ತನ್ನ ರಾಷ್ಟ್ರೀಯ ಭದ್ರತೆಗೆ ವಿನಾಶಕಾರಿಯಾಗಬಹುದು ಮತ್ತು ಪಾಕಿಸ್ತಾನದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳಿಗಾಗಿ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು. ಪಾಕಿಸ್ತಾನವು ಇರಾನ್ ಆರ್ಥಿಕವಾಗಿ, ತನ್ನ ಇಂಧನ ಭದ್ರತೆಗಾಗಿ ತೆರೆದುಕೊಳ್ಳಬೇಕೆಂದು ಬಯಸುತ್ತದೆ. ಆದ್ದರಿಂದ ಮಾತುಕತೆಯ ಪ್ರಯತ್ನಗಳು ಪಾಕಿಸ್ತಾನಕ್ಕೆ ಬದುಕುಳಿಯುವ ತಂತ್ರಗಳಾಗಿವೆ. ಎಂದು ಪಾಕಿಸ್ತಾನದ ರಕ್ಷಣಾ ಮತ್ತು ಭದ್ರತಾ ತಜ್ಞ ಅಲಿ ಚಿಶ್ತಿ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ಉಲ್ಲೇಖಿಸಿದೆ. ►ಸಂಭಾವ್ಯ ಲಾಭಗಳು ಮತ್ತು ಅಪಾಯಗಳು ನಾಲ್ಕು ವರ್ಷಗಳ ಹಿಂದೆ, 2022 ಅಕ್ಟೋಬರ್ ತಿಂಗಳಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಪಾಕಿಸ್ತಾನವು ಯಾವುದೇ ಒಗ್ಗಟ್ಟು ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿರಬಹುದು ಎಂದಿದ್ದರು. ಅನೇಕ ಭಾಗಗಳಲ್ಲಿ ಅದರ ಇಮೇಜ್ ಭಯೋತ್ಪಾದಕರನ್ನು ಬೆಂಬಲಿಸುವ ವಿಫಲ ಆರ್ಥಿಕತೆಯಾಗಿತ್ತು. ಅಲ್ಲಿಂದ ಜಾಗತಿಕ ಆರ್ಥಿಕತೆಗೆ ಬೆದರಿಕೆ ಹಾಕುವ ಯುದ್ಧವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಸಾಕಷ್ಟು ಬದಲಾವಣೆಯಾಗಿದೆ. ಎರಡು ವಾರಗಳ ಹಿಂದೆ ಮೊದಲು ಕದನ ವಿರಾಮವನ್ನು ಘೋಷಿಸಿದಾಗ, ಯುರೋಪಿಯನ್ ಒಕ್ಕೂಟ ಮತ್ತು ಗಲ್ಫ್ ಕೌನ್ಸಿಲ್ ದೇಶಗಳು ಕೂಡಾ ಪಾಕಿಸ್ತಾನದ ಪಾತ್ರವನ್ನು ಮೆಚ್ಚಿಕೊಂಡವು. ಅಂತಹ ಸಾರ್ವತ್ರಿಕ ಅನುಮೋದನೆ, ಶಾಂತಿ ಮಂಡಳಿಯ ಸದಸ್ಯತ್ವದೊಂದಿಗೆ, ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ಪಾಕಿಸ್ತಾನ ಆಶಿಸಬಹುದು. ಸರಳವಾಗಿ ಹೇಳುವುದಾದರೆ ಪಾಕಿಸ್ತಾನದ ಆರ್ಥಿಕತೆಗೆ ಸಾಲಗಳು ಮತ್ತು ವಿದೇಶಿ ಹೂಡಿಕೆಗಳ ಅಗತ್ಯವಿದೆ. ಇದಕ್ಕೆ ಒಂದು ಉತ್ತಮ ರಾಜತಾಂತ್ರಿಕ ಚಿತ್ರಣವೂ ಸಹಾಯ ಮಾಡುತ್ತದೆ. ಇಲ್ಲಿ ಎಚ್ಚರಿಕೆಯ ಸಂಗತಿಗಳೂ ಇವೆ. ಮಾತುಕತೆಯಲ್ಲಿ ಭಾಗವಹಿಸುವವರಲ್ಲಿ ಒಬ್ಬರು ಟ್ರಂಪ್ ರಂತೆ ವರ್ತಿಸಿದರೆ, ಮಾತುಕತೆಗಳು ನಿಲ್ಲಬಹುದು ಮತ್ತು ಪಾಕಿಸ್ತಾನವು ಕೆಲವು ಆರೋಪಗಳಿಗೆ ಗುರಿಯಾಗಬೇಕಾಗುತ್ತದೆ ಎಂದು ಕೆಲವು ತಜ್ಞರು ಹೇಳುತ್ತಾರೆ. ಪಾಕಿಸ್ತಾನವು ತಟಸ್ಥ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಅಮೆರಿಕದ ಹಿತಾಸಕ್ತಿಗಳನ್ನು ಹೆಚ್ಚಿಸುತ್ತಿದೆ ಎಂಬ ಹೇಳಿಕೆಗಳು ಈಗಾಗಲೇ ಬಂದಿವೆ. ಅಂತಹ ಅನಿಸಿಕೆ ಅಮೆರಿಕವನ್ನು ಒಪ್ಪದ ಪಾಕಿಸ್ತಾನದೊಳಗಿನ ವಿಭಾಗಗಳಿಗೆ ಇಷ್ಟವಾಗುವುದಿಲ್ಲ. ►ಭಾರತಕ್ಕೇನು ಲಾಭ? ತಕ್ಷಣದ ಅವಧಿಯಲ್ಲಿ, ಯಾರು ಮಧ್ಯಸ್ಥಿಕೆ ವಹಿಸಿದರೂ ಸಹ ಯುದ್ಧದ ಅಂತ್ಯವು ಭಾರತಕ್ಕೆ ಒಳ್ಳೆಯದು. ದೀರ್ಘಾವಧಿಯಲ್ಲಿ ಕೆಲವು ಕಳವಳಗಳಿವೆ. ರಾಜತಾಂತ್ರಿಕವಾಗಿ ಪ್ರತ್ಯೇಕವಾಗಿರುವ ಪಾಕಿಸ್ತಾನವು ಭಾರತದ ಹಿತಾಸಕ್ತಿಗಳಲ್ಲಿದ್ದರೆ, ಆ ಪರಿಸ್ಥಿತಿ ಬದಲಾಗುತ್ತಿದೆ. ಮುಖ್ಯವಾಗಿ, ಮಾತುಕತೆಗಳನ್ನು ಕೆಲವರು ಪಾಕಿಸ್ತಾನದ ಹೈಬ್ರಿಡ್ ಆಡಳಿತದ ವಿಜಯವೆಂದು ನೋಡಿದ್ದಾರೆ. ಶೆಹಬಾಝ್ ಷರೀಫ್ ಗಲ್ಫ್ ಮತ್ತು ಇತರ ಪ್ರಾದೇಶಿಕ ದೇಶಗಳೊಂದಿಗೆ ಮಾತನಾಡುತ್ತಿದ್ದರೆ, ಮುನೀರ್ ಅಮೆರಿಕವನ್ನು ನಿಭಾಯಿಸಿದ್ದಾರೆ. ಮುನೀರ್, ಗೂಢಚಾರ ಸಂಸ್ಥೆ ಐಎಸ್ಐನಲ್ಲಿ ಈ ಹಿಂದೆ ಇರಾನ್ ನೊಂದಿಗೆ ಕೆಲಸ ಮಾಡಿದ್ದರು, ಟ್ರಂಪ್ ಅವರ ದೇಶದ ಜ್ಞಾನದಿಂದ ಪ್ರಭಾವಿತರಾಗಿದ್ದರು. ಅಲಿ ಚಿಶ್ತಿ ಅವರ ಪ್ರಕಾರ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಝ್ ಷರೀಫ್ ನಡುವಿನ 'ಹೈಬ್ರಿಡ್' ಪಾಲುದಾರಿಕೆಯು ಅಂತಿಮವಾಗಿ ಪಾಕಿಸ್ತಾನಕ್ಕೆ ಗೆಲುವಿನ ಸೂತ್ರವನ್ನು ಒದಗಿಸಿದೆ. ಮುನೀರ್ ಅವರ ಗುಪ್ತಚರ ಕ್ಷೇತ್ರದಲ್ಲಿನ ಅನುಭವವು ತೀಕ್ಷ್ಣವಾದ ಕಾರ್ಯತಂತ್ರವನ್ನು ಒದಗಿಸುತ್ತದೆ, ಇದು ಷರೀಫ್ ಅವರ ರಾಜತಾಂತ್ರಿಕ ಕುಶಲತೆಯೊಂದಿಗೆ ಸೇರಿಕೊಂಡಾಗ, ಪಾಕಿಸ್ತಾನಕ್ಕೆ ಅದರ ಭೌಗೋಳಿಕ, ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಾದ್ಯಂತ ಗೆಲುವನ್ನು ನೀಡುತ್ತದೆ. ಮಿಲಿಟರಿಯನ್ನು ಬಲಪಡಿಸುವುದು ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲದೆ ಭಾರತದ ಮೇಲೂ ಪರಿಣಾಮಗಳನ್ನು ಬೀರುತ್ತದೆ. ನಾಗರಿಕ ನಾಯಕತ್ವವು ತುಲನಾತ್ಮಕವಾಗಿ ಪ್ರಬಲವಾಗಿದ್ದಾಗ ಪಾಕಿಸ್ತಾನವು ಭಾರತಕ್ಕೆ ಶಾಂತಿ ಪ್ರಸ್ತಾಪಗಳನ್ನು ಮಾಡಿದೆ. ಸೇನೆಯು ಭಾರತಕ್ಕೆ ಪ್ರತಿಕೂಲವಾಗಿದೆ. ಭಾರತ 'ಶಾಂತಿಪ್ರಿಯ' ರಾಷ್ಟ್ರವಾಗಿರುವುದರಿಂದ ಪಾಕಿಸ್ತಾನ ಉತ್ತಮ ನೆರೆಯ ರಾಷ್ಟ್ರವಾಗುತ್ತದೆಯೇ? ಅಥವಾ ಸೇನೆಯು ಈ ಜಾಗತಿಕ ಖ್ಯಾತಿಯನ್ನು (ಮತ್ತು ಸಂಭಾವ್ಯ ಹೊಸ ಶಸ್ತ್ರಾಸ್ತ್ರಗಳನ್ನು) ಇನ್ನಷ್ಟು ಆಕ್ರಮಣಕಾರಿಯಾಗಿ ಬಳಸಿಕೊಳ್ಳುತ್ತದೆಯೇ? ಎಂಬುದನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣ; ನಟಿ ರನ್ಯಾರಾವ್ ಜೈಲಿನಿಂದ ಬಿಡುಗಡೆ
ಬೆಂಗಳೂರು : ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ನಟಿ ರನ್ಯಾರಾವ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಬಿಡುಗಡೆಯಾಗಿದ್ದಾರೆ. ಎ.22ರ ಬುಧವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ತಮ್ಮ ಪರ ವಕೀಲರ ಕಾರಿನಲ್ಲಿ ಜೈಲು ಆವರಣದಿಂದ ಮಾಧ್ಯಮ ಪ್ರತಿನಿಧಿಗಳ ಕಣ್ತಪ್ಪಿಸಿ ರನ್ಯಾರಾವ್ ಹೊರಬಂದಿದ್ದಾರೆ. ರನ್ಯಾರಾವ್ ವಿರುದ್ಧ ಹೇರಲಾಗಿದ್ದ ಕಠಿಣ ಕಾಫಿಪೋಸಾ ಕಾಯ್ದೆಯ ಒಂದು ವರ್ಷದ ಅವಧಿಯು ಎ.22ರಂದು ಪೂರ್ಣಗೊಂಡಿದೆ. ಈ ಹಿಂದೆಯೇ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ್ದರೂ, ಕಾಫಿಪೋಸಾ ಕಾಯ್ದೆಯಡಿ ಅವರು ಜೈಲಿನಲ್ಲೇ ಇರಬೇಕಾಗಿತ್ತು. 14.80 ಕೆ.ಜಿ. ಚಿನ್ನದ ಕಳ್ಳಸಾಗಣೆ ಮಾಡಿದ ಆರೋಪವನ್ನು ಎದುರಿಸುತ್ತಿರುವ ನಟಿ ರನ್ಯಾರಾವ್, 2025ರ ಮಾರ್ಚ್ ತಿಂಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳಿಂದ ಬಂಧನಕ್ಕೊಳಪಟ್ಟಿದ್ದರು. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಏನಿದು ಕಾಫಿಪೋಸಾ ಕಾಯ್ದೆ..?: ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ. ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೆ ನಿರಂತರವಾಗಿ ಮತ್ತೆ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ, ಜೈಲಿನಿಂದ ಬಂದ ಬಳಿಕ ತಪ್ಪಿಸಿಕೊಳ್ಳಬಹುದು. ತನಿಖೆಗೆ ಸರಿಯಾಗಿ ಸಹಕಾರ ಕೊಡದೇ, ನಿರಂತರವಾಗಿ ಕಳ್ಳಸಾಗಣೆಯಲ್ಲಿ ಮುಂದುವರೆಯುತ್ತಾರೆ ಎಂದು ಕಾಯ್ದೆ ಜಾರಿಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಈ ಕಾಯ್ದೆಯಡಿ ಬಂಧನಕ್ಕೊಳಗಾದವರನ್ನು 1 ವರ್ಷದವರೆಗೆ ಜೈಲಿನಲ್ಲಿ ಇರಿಸಬಹುದು. ಗಂಭೀರ ಪ್ರಕರಣಗಳಲ್ಲಿ ಇದನ್ನು 2 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ.
`Sorry ರೋಹಿತ್ ಶರ್ಮಾ, ಕಾರಣವಿತ್ತು': 2011ರ ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ದಕ್ಕೆ ಕ್ಷಮೆ ಕೇಳಿದ ಕೆ ಶ್ರೀಕಾಂತ್!
ಭಾರತ ತಂಡದ ಮಾಜಿ ನಾಯಕ, ಪ್ರಸ್ತುತ ವೈಟ್ ಬಾಲ್ ಕ್ರಿಕೆಟ್ ನ ಅಪ್ರತಿಮ ಬ್ಯಾಟರ್ ರೋಹಿತ್ ಶರ್ಮಾ ಅವರು 2011ರ ವಿಶ್ವಕಪ್ ಆಡಿದ್ದ ಭಾರತ ತಂಡದಲ್ಲಿ ಏಕಿರಲಿಲ್ಲ ಎಂಬುದು ಇಂದಿಗೂ ಕಾಡುವ ದೊಡ್ಡ ಪ್ರಶ್ನೆ. ಈ ಬಗ್ಗೆ ಇದೀಗ ಅಂದು ಬಿಸಿಸಿಐ ಮುಖ್ಯ ಆಯ್ಕೆದಾರರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಮಾತನಾಡಿದ್ದಾದೆ. 2011ರ ಏಕದಿನ ವಿಶ್ವಕಪ್ ತಂಡದಿಂದ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟಿದ್ದಕ್ಕಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಜೊತೆಗೆ ರೋಹಿತ್ ಅಂದು ತಂಡದಲ್ಲಿ ಸ್ಥಾನ ಪಡೆಯಲು ಸಂಪೂರ್ಣ ಅರ್ಹರಾಗಿದ್ದರು ಎಂದು ಅವರು ಒಪ್ಪಿಕೊಂಡಿದ್ದಾರೆ.ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೀಕಾಂತ್ ಅವರು, ರೋಹಿತ್ ಶರ್ಮಾ ಅವರನ್ನು ತಂಡದಿಂದ ಹೊರಗಿಟ್ಟಿದ್ದು ಯಾವುದೇ ವೈಯಕ್ತಿಕ ಕಾರಣಕ್ಕಲ್ಲ, ಬದಲಾಗಿ ತಂಡದ ಸಮತೋಲನದ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿತ್ತು, ತಂಡದಲ್ಲಿ ಆಲ್ರೌಂಡರ್ ಗಳಿಗೆ ಸ್ಥಾನ ನೀಡಲು ನಿರ್ಧರಿಸಿದ್ದರಿಂದ ರೋಹಿತ್ ಗೆ ಸ್ಥಾನ ಕಲ್ಪಿಸಲು ಸಾಧ್ಯ ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು. ರೋಹಿತ್ ಅವರನ್ನು ಕೈಬಿಟ್ಟಿದ್ದು ಉದ್ದೇಶಪೂರ್ವಕವಾಗಿರಲಿಲ್ಲ. ಆದರೆ ತಂಡಕ್ಕೆ ಒಬ್ಬ ಹೆಚ್ಚುವರಿ ಬೌಲಿಂಗ್ ಆಯ್ಕೆಯ ಅಗತ್ಯವಿದ್ದಿದ್ದರಿಂದ ಅನಿವಾರ್ಯವಾಗಿ ಆ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಅವರು ವಿವರಿಸಿದರು. 1983ರ ವಿಶ್ವಕಪ್ ಮಾದರಿಯನ್ನೇ ಅನುಸರಿಸಿದ್ದ ಆಯ್ಕೆ ಸಮಿತಿಯು, ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡಬಲ್ಲ 'ಹಾಫ್ ಆಲ್-ರೌಂಡರ್'ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿತ್ತು. ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ಯೂಸುಫ್ ಪಠಾಣ್ ಅವರಂತಹ ಬ್ಯಾಟರ್ ಗಳು ಬೌಲಿಂಗ್ ಆಯ್ಕೆಯನ್ನು ಒದಗಿಸುತ್ತಿದ್ದ ಕಾರಣ ರೋಹಿತ್ ಅವರನ್ನು ಕೈಬಿಡಲಾಗಿತ್ತು ಎಂದು ಶ್ರೀಕಾಂತ್ ತಿಳಿಸಿದರು. ನೇರ ಕ್ಷಮೆಯಾಚನೆ ನಾನು ರೋಹಿತ್ ಅವರನ್ನು 2020ರಲ್ಲಿ ಎದುರುಗೊಂಡಾಗ ಈ ವಿಚಾರವಾಗ ನೇರವಾಗಿಯೇ ಕ್ಷಮೆ ಕೇಳಿದ್ದೇನೆ. 'ಸಾರಿ ಬಾಸ್, ನಾನು ನಿನ್ನನ್ನು ತಂಡಕ್ಕೆ ಆಯ್ಕೆ ಮಾಡಬೇಕಿತ್ತು' ಎಂದು ಹೇಳಿದ್ದೇನೆ. ರೋಹಿತ್ ಈಗಲೂ ಪ್ರತಿ ಸಂದರ್ಶನದಲ್ಲಿ 2011ರ ವಿಶ್ವಕಪ್ ಮಿಸ್ ಮಾಡಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸುವುದನ್ನು ನೋಡಿದಾಗ ನನಗೆ ನೋವಾಗುತ್ತದೆ, ಎಂದು ಶ್ರೀಕಾಂತ್ ತಿಳಿಸಿದ್ದಾರೆ.38 ವರ್ಷದ ರೋಹಿತ್ ಶರ್ಮಾ ಅವರು ಪ್ರಸ್ತುತ ಟೆಸ್ಟ್ ಮತ್ತು ಅಂತಾರಾಷ್ಚ್ರೀಯ ಟಿ20 ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. 282 ಏಕದಿನ ಪಂದ್ಯಗಳನ್ನು ಆಡಿರುವ ಅವರು 11577 ರನ್ ಕಲೆ ಹಾಕಿದ್ದಾರೆ. ಇನ್ನು 67 ಟೆಸ್ಟ್ ಪಂದ್ಯಗಳಲ್ಲಿ 4301 ರನ್, 159 ಟಿ20 ಪಂದ್ಯಗಳಲ್ಲಿ 4231 ರನ್ ಕಲಂ ಹಾಕಿದ್ದಾರೆ. ನಿರಾಸೆಗೊಂಡಿದ್ದ ಹಿಟ್ ಮ್ಯಾನ್ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ರೋಹಿತ್ ಶರ್ಮಾ ಅವರು 2011ರ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂಬ ದೊಡ್ಡ ನಿರೀಕ್ಷೆ ಇತ್ತು. ಆದರೆ ತಂಡ ಪ್ರಕಟವಾದಾಗ ಅವರ ಹೆಸರಿರಲಿಲ್ಲ. ಇದು ಅವರ ವೃತ್ತಿಜೀವನದ ಅತ್ಯಂತ ಕಠಿಣ ಘಟ್ಟವಾಗಿತ್ತು ಎಂದು ರೋಹಿತ್ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ ಅವರು ಏಕದಿನ ಕ್ರಿಕೆಟ್ ನಲ್ಲಿ ಡಬಲ್ ಸೆಂಚುರಿಗಳ ರಾಜಾ ಎಂದು ಅನ್ನಿಸಿಕೊಂಡರು. ಏಕದಿನ ಕ್ರಿಕೆಟ್ ನಲ್ಲಿ ವಿಶ್ದಾದಾಖಲೆಯ ವೈಯಕ್ತಿಕ ಮೊತ್ತ ಗಳಿಸಿದರು. 2015ರ ಏಕದಿನ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು 2019ರ ಏಕದಿನ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿದ್ದರು. ಭಾರತ ತಂಡದ ನಾಯಕನಾಗಿಯೂ ಮಿಂಚಿದರು. 2023ರ ಏಕದಿನ ವಿಶ್ವಕಪ್ ನಲ್ಲಿ ತಂಡವನ್ನು ಫೈನಲ್ ವರೆಗೂ ಕೊಂಡೊಯ್ದ ಅವರು 2024ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
Mamata Banerjee Sentiment Card : ಸತತವಾಗಿ ಮೂರು ಟರ್ಮ್’ನಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ, ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಗೆ 24 ಗಂಟೆ ಮುನ್ನ, ನಾನಿಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೆಂಟಿಮೆಂಟ್ ಕಾರ್ಡ್ ಪ್ಲೇ ಮಾಡಿದ್ದಾರೆ.
Harapanahalli | ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಪುಣಭಘಟ್ಟ ಗ್ರಾಮ ಮಹಿಳೆಯರಿಂದ ಆಗ್ರಹ
ಹರಪನಹಳ್ಳಿ: ತಾಲೂಕಿನ ಪುಣಭಘಟ್ಟ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಸ್ಥಳೀಯ ಮಹಿಳೆಯರು ಬುಧವಾರ ಅರಸೀಕೆರೆ ಪೊಲೀಸ್ ಠಾಣೆ ಹಾಗೂ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು. ಗ್ರಾಮದ ಭೋವಿ ಕಾಲೋನಿ ಮತ್ತು ಹರಿಜನ ಕಾಲೋನಿಯ ಶೆಡ್ ಅಂಗಡಿಗಳಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಗ್ರಾಮದಲ್ಲಿ ಶಾಂತಿ ಭಂಗವಾಗುತ್ತಿದೆ ಎಂದು ಮಹಿಳೆಯರು ಆರೋಪಿಸಿದರು. ಪ್ರತಿದಿನ ದುಡಿದು ಬರುವ ಹಣವನ್ನು ಯುವಕರು, ಕಾರ್ಮಿಕರು ಹಾಗೂ ರೈತರು ಮದ್ಯಪಾನಕ್ಕೆ ವ್ಯಯಿಸುತ್ತಿದ್ದು, ಇದರಿಂದ ಕುಟುಂಬಗಳಲ್ಲಿ ಕಲಹಗಳು ಹೆಚ್ಚುತ್ತಿವೆ. ಜೊತೆಗೆ ಸಾರ್ವಜನಿಕ ಅಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆಯರು, ಗ್ರಾಮದಲ್ಲಿ ಶಾಂತಿ ಸ್ಥಾಪನೆಗಾಗಿ ಅಕ್ರಮ ಮದ್ಯ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜಪ್ಪ ಮಾತನಾಡಿ, “ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಶಾಂತಿ ಹೆಚ್ಚುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳೂ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಗ್ರಾಮವನ್ನು ಮದ್ಯಮುಕ್ತವಾಗಿ ಘೋಷಿಸಲು ಇಲಾಖೆ ಮುಂದಾಗಬೇಕು” ಎಂದು ಆಗ್ರಹಿಸಿದರು. ಈ ವೇಳೆ ಶಾರದಮ್ಮ, ಲೋಕಮ್ಮ, ಗೌರಮ್ಮ, ಲಕ್ಷ್ಮಿ, ಚಂದನ, ಸವಿತಾ, ಅರುಣ, ಉಚ್ಚಂಗೆಮ್ಮ, ಹುಲಿಗೆಮ್ಮ, ದುರ್ಗಮ್ಮ, ಪಾರ್ವತಿ, ಅನಿತಾ ಸೇರಿದಂತೆ ಹಲವಾರು ಮಹಿಳೆಯರು ಉಪಸ್ಥಿತರಿದ್ದರು.
ಆ್ಯಪಲ್ ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಟಿಮ್ ಕುಕ್; ಭವಿಷ್ಯದ ಪೀಳಿಗೆಗೆ ನಾಯಕತ್ವದ ಬೇರು
ಇದೀಗ ಸಿಇಒ ಸ್ಥಾನದಿಂದ ಹಿಂದೆ ಸರಿಯುತ್ತಿರುವ ಟಿಮ್ ಕುಕ್ ಅವರು ಕಂಪೆನಿಯು ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಆಳವಾಗಿ ಬೇರುಬಿಡಲು ಕಾರಣರಾದರು. ಇದೀಗ ಆ್ಯಪಲ್ ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಟಿಮ್ ಕುಕ್ ಸುಮಾರು 15 ವರ್ಷಗಳ ಕಾಲ ಅಧಿಕಾರವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗೆಂದೇ ಟಿಮ್ ಕುಕ್ ಆ್ಯಪಲ್ ಕಂಪೆನಿಯಿಂದ ಸಂಪೂರ್ಣವಾಗಿ ಹೊರ ಹೋಗುತ್ತಿಲ್ಲ. ಅವರು ಆ್ಯಪಲ್ ಕಂಪೆನಿಯ ನಿರ್ದೇಶಕರ ಮಂಡಳಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ವರ್ಗಾವಣೆಯಾಗುತ್ತಿದ್ದಾರೆ ಎಂದು ಕಂಪೆನಿ ಸೋಮವಾರ ಘೋಷಿಸಿದೆ. ಆದರೆ ಈ ಬದಲಾವಣೆ ಕಂಪೆನಿಯ ಒಂದು ಶಕೆಯ ಅಂತ್ಯವನ್ನು ಮತ್ತು ಟೆರ್ನಸ್ ನಾಯಕತ್ವದಲ್ಲಿ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. 2011 ಆಗಸ್ಟ್ 24ರಂದು ಟಿಮ್ ಕುಕ್ ಸಿಇಒ ಆಗಿ ಆಯ್ಕೆಯಾಗಿದ್ದರು. ಅವರು ಆ್ಯಪಲ್ ಸಂಸ್ಥೆಯ ಸಹ ಸಂಸ್ಥಾಪಕರಲ್ಲ, ಆದರೆ ಕಂಪೆನಿಯ ಮುಖವಾಗಿ ಬದಲಾಗಿದ್ದರು. ಕುಕ್ ಅವರ ಅವಧಿಯಲ್ಲಿ ಕಂಪೆನಿಯ ಸರಬರಾಜು ಸರಪಳಿ (supply chain) ಸುಧಾರಣೆಯಾಗಿದ್ದು, ದಾಖಲೆಯ ಪ್ರಗತಿ ಸಾಧಿಸಿತು. 15 ವರ್ಷಗಳ ಅವಧಿಯಲ್ಲಿ ಐಫೋನ್ 5ರಿಂದ ಆರಂಭಿಸಿ ಸ್ಮಾರ್ಟ್ಫೋನ್ ಸರಣಿಯನ್ನು ಅಭಿವೃದ್ಧಿಪಡಿಸಿದರು. ಮಾತ್ರವಲ್ಲದೆ, ಆ್ಯಪಲ್ ವಾಚ್ ಮತ್ತು ಹೋಂ ಪಾಡ್ ನಂತಹ ಉತ್ಪನ್ನಗಳು ಹಾಗೂ ಆ್ಯಪಲ್ ಮ್ಯೂಸಿಕ್, ಆ್ಯಪಲ್ ಟಿವಿ ಪ್ಲಸ್ ಮತ್ತು ಆ್ಯಪಲ್ ಫಿಟ್ನೆಸ್ ಪ್ಲಸ್ ನಂತಹ ಸೇವೆಗಳನ್ನು ಪರಿಚಯಿಸಿದರು. ಟಿಮ್ ಕುಕ್ ನೇತೃತ್ವದಲ್ಲಿ ಆ್ಯಪಲ್ ಸಂಸ್ಥೆ 2018ರಲ್ಲಿ ಟ್ರಿಲಿಯನ್ ಡಾಲರ್ ಕಂಪೆನಿಯಾಗಿ ಬೆಳೆದಿದ್ದು, ಈ ಮಟ್ಟ ತಲುಪಿದ ಅಮೆರಿಕದ ಮೊದಲ ಕಂಪೆನಿಯಾಗಿದೆ. 2022ರಲ್ಲಿ ಕಂಪೆನಿ 3 ಟ್ರಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪಿಟಲ್ ದಾಟಿತು. ಕಳೆದ ಅಕ್ಟೋಬರ್ನಲ್ಲಿ ಆ್ಯಪಲ್ ಕಂಪೆನಿ 4 ಟ್ರಿಲಿಯನ್ ಡಾಲರ್ ಮೌಲ್ಯವನ್ನು ತಲುಪಿತು. ಎ.1ರಂದು 50ನೇ ವಾರ್ಷಿಕೋತ್ಸವ ಆಚರಿಸುವ ಮೊದಲು ಕಂಪೆನಿ ಈ ಮಟ್ಟಿಗೆ ಬೆಳೆಯಲು ಟಿಮ್ ಕುಕ್ ಕಾರಣರಾಗಿದ್ದಾರೆ. ಇದೀಗ ಸಿಇಒ ಸ್ಥಾನದಿಂದ ಹಿಂದೆ ಸರಿಯುತ್ತಿರುವ ಟಿಮ್ ಕುಕ್ ಅವರು ಕಂಪೆನಿಯು ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಆಳವಾಗಿ ಬೇರುಬಿಡಲು ಪ್ರಮುಖ ಪಾತ್ರವಹಿಸಿದ್ದಾರೆ. ಮುಖ್ಯವಾಗಿ ಐಫೋನ್ ಅಸೆಂಬ್ಲಿ ಕಾರ್ಖಾನೆಗಳನ್ನು ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸ್ಥಾಪಿಸಲಾಗಿದೆ. ಫಾಕ್ಸ್ಕಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಜೊತೆ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 1ರಿಂದ ಕುಕ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಬದಲಾಗಲಿದ್ದಾರೆ. ಅವರ ಸ್ಥಾನಕ್ಕೆ ಜಾನ್ ಟೆರ್ನಸ್ ನೇಮಕಗೊಂಡಿದ್ದಾರೆ. ಇದೀಗ ಆ್ಯಪಲ್ ಕಂಪೆನಿ ಜಾಗತಿಕವಾಗಿ ಮಾರಾಟವಾಗುವ ನಾಲ್ಕು ಐಫೋನ್ ಗಳಲ್ಲಿ ಒಂದನ್ನು ಭಾರತದಲ್ಲಿ ತಯಾರಿಸುತ್ತಿದ್ದು, ಇದು ಭಾರತದ ಒಟ್ಟು ರಫ್ತು ಬೆಳವಣಿಗೆಗೆ ಸಹ ಕಾರಣವಾಗಿದೆ. ಈ ಸರಬರಾಜು ಸರಪಳಿ ಬೆಳವಣಿಗೆಯನ್ನು ಕುಕ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದು ಕಂಪೆನಿಯ ಉತ್ಪನ್ನಗಳಿಗೆ ಅಲ್ಯೂಮಿನಿಯಂ ಕೇಸಿಂಗ್ಗಳು ಮತ್ತು ಚಾರ್ಜರ್ಗಳನ್ನು ತಯಾರಿಸುವ ತೃತೀಯ ಪಕ್ಷದ ಪೂರೈಕೆದಾರರನ್ನು ಒಳಗೊಂಡಂತೆ ವಿಸ್ತರಿಸಿದೆ. ಚೀನಾ ಮತ್ತು ಅಮೆರಿಕದ ಒತ್ತಡಗಳನ್ನು ಎದುರಿಸಿ ಟಿಮ್ ಕುಕ್ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಚೀನಾ ಆ್ಯಪಲ್ನ ಒಪ್ಪಂದ ತಯಾರಕರಿಗೆ ಬಂಡವಾಳ ಉಪಕರಣಗಳಿಗೆ ಪ್ರವೇಶವನ್ನು ನಿರಾಕರಿಸಿದರೆ, ಅಮೆರಿಕ ಉತ್ಪಾದನೆಯನ್ನು ತನ್ನ ದೇಶಕ್ಕೆ ಹಿಂದಿರುಗಿಸಲು ಒತ್ತಡ ಹೇರಿತ್ತು. ಭಾರತಕ್ಕೆ ಆಗಮಿಸಿದಾಗ ಟಿಮ್ ಕುಕ್ ಅವರು ಹಲವು ಸಂದರ್ಭಗಳಲ್ಲಿ ಆ್ಯಪಲ್ ಭಾರತಕ್ಕೆ ಬಹಳ ಕಡಿಮೆ ಆದ್ಯತೆ ನೀಡಿರುವುದನ್ನು ಒಪ್ಪಿಕೊಂಡಿದ್ದರು. ಭಾರತದಲ್ಲಿ ಆ್ಯಪಲ್ ಉತ್ಪನ್ನಗಳನ್ನು ಖರೀದಿಸುವುದು ಉತ್ಸಾಹಿ ಗ್ರಾಹಕರು ಪಶ್ಚಿಮ ಏಷ್ಯಾದ ಹಬ್ ವಿಮಾನ ನಿಲ್ದಾಣಗಳಿಗೆ ತೆರಳಿ ಖರೀದಿಸುವುದು ಹೆಚ್ಚು ಅಗ್ಗವಾಗುತ್ತಿತ್ತು ಎಂಬ ಮಾತು ಕೇಳಿಬರುತ್ತಿತ್ತು. ಆಫ್ಟರ್-ಸೇಲ್ಸ್ ಸೇವೆಯ ಮೇಲೆಯೂ ಅಸಮಾಧಾನ ವ್ಯಕ್ತವಾಗುತ್ತಿತ್ತು. 2016ರಲ್ಲಿ ರಿಲಯನ್ಸ್ ಜಿಯೋ ಪ್ರವೇಶದೊಂದಿಗೆ ಕಡಿಮೆ ಸೆಲ್ಫೋನ್ ಸುಂಕಗಳು ಪರಿಚಯವಾಗುವ ಮೊದಲು ಟಿಮ್ ಕುಕ್ ಭಾರತಕ್ಕೆ ತಮ್ಮ ಮೊದಲ ಪ್ರಮುಖ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಐಒಎಸ್ ಡೆವಲಪರ್ಗಳನ್ನು ಮತ್ತು ಬಾಲಿವುಡ್ ತಾರೆಯರನ್ನು ಭೇಟಿ ಮಾಡುವ ಮೂಲಕ ವೈಯಕ್ತಿಕ ಸಂಪರ್ಕಗಳನ್ನು ಬೆಳೆಸಿದರು. ಚೀನಾದಲ್ಲಿ ಆ್ಯಪಲ್ ಎದುರಿಸಿದ ಗೌಪ್ಯತೆ ಆಧಾರಿತ ಪರಿಶೀಲನೆಯನ್ನು ಟಿಮ್ ಕುಕ್ ನಯವಾಗಿ ನಿರ್ವಹಿಸಿದರು. ಐಮೆಸೇಜ್ ಅನ್ನು ವಾಟ್ಸ್ಆಪ್ನಂತೆ ನಿಯಂತ್ರಿಸುವ ಅಗತ್ಯವಿಲ್ಲ ಎಂದು ಯಶಸ್ವಿಯಾಗಿ ವಾದಿಸಿದರು. ಇದರಿಂದ ಆ್ಯಪಲ್ ಕಂಪೆನಿಯ ಮೌಲ್ಯವನ್ನು ರಕ್ಷಿಸಿದರು. ಆ್ಯಪಲ್ ಭಾರತದಲ್ಲಿ ಡಜನ್ಗಟ್ಟಲೆ ಬಳಕೆದಾರರಿಗೆ ‘ರಾಜ್ಯ ಪ್ರಾಯೋಜಿತ’ ಸೈಬರ್ ದಾಳಿಯ ಪ್ರಯತ್ನಗಳ ಬಗ್ಗೆ ಎಚ್ಚರಿಕೆ ನೀಡಿದಾಗ ಸರ್ಕಾರದ ಒತ್ತಡಕ್ಕೂ ತಲೆಬಾಗಲಿಲ್ಲ. ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ ಈ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾಗಿಸಲಾದ ಸಾಧನಗಳಲ್ಲಿ ಆ್ಯಪಲ್ ಪಾಲು ಶೇ 9ರಷ್ಟಿದೆ. ಒಟ್ಟಿನಲ್ಲಿ ಹೇಳುವುದಾದರೆ, ಕಂಪೆನಿಯ ನಾಯಕತ್ವ ಹೇಗೆ ಇರಬೇಕು ಎನ್ನುವುದಕ್ಕೆ ಭವಿಷ್ಯದ ಪೀಳಿಗೆಗೆ ದಾರಿದೀಪವಾಗುವಂತೆ ಅವರು ಬಲವಾದ ಅಡಿಪಾಯವನ್ನು ಹಾಕಿದ್ದಾರೆ.
Madhya Pradesh | ಮದುವೆಯ ಮೆರವಣಿಗೆಯ ವೇಳೆ ದಲಿತ ವರನನ್ನು ಕುದುರೆಯಿಂದ ಕೆಳಗಿಳಿಸಿ ಹಲ್ಲೆ
ಭೋಪಾಲ್: ವಿವಾಹ ಪೂರ್ವ ಮೆರವಣಿಗೆಯ ವೇಳೆ ಪರಿಶಿಷ್ಟ ಜಾತಿಗೆ ಸೇರಿದ 23 ವರ್ಷದ ಅಂಗವಿಕಲ ವರ ಗೋಲು ಅಹಿರ್ವರ್ ಅವರನ್ನು ಹಿಂದುಳಿದ ವರ್ಗಗಳಿಗೆ ಸೇರಿದ ಲೋಧಿ ಸಮುದಾಯದ ಕೆಲ ದುಷ್ಕರ್ಮಿಗಳು ಕುದುರೆಯಿಂದ ಕೆಳಗಿಳಿಸಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಬುಂದೇಲ್ ಖಂಡ್ ಪ್ರಾಂತ್ಯದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಮಂಗಳವಾರ ಸಂಜೆ, ವರನ ಸಾಂಪ್ರದಾಯಿಕ ವಿವಾಹ ಪೂರ್ವ ಮೆರವಣಿಗೆ ನಡೆಯುವಾಗ ಹಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೋರಿ ಪಾಠಕ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತ ವರನ ಮೆರವಣಿಗೆ ಗ್ರಾಮದಲ್ಲಿ ಸಾಗುವ ವೇಳೆ, ಅದನ್ನು ತಡೆಹಿಡಿದ ಲೋಧಿ ಸಮುದಾಯದ ಕೆಲ ವ್ಯಕ್ತಿಗಳು ಮೆರವಣಿಗೆ ಮುಂದುವರಿಯದಂತೆ ಅಡ್ಡಲಾಗಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ, ವಿಶ್ವನಾಥ್ ಲೋಧಿ, ಬಿಚ್ಚು, ಚಿನ್ನು ಹಾಗೂ ಪಲ್ಟು ಲೋಧಿ ಎಂದು ಗುರುತಿಸಲಾದ ನಾಲ್ವರು ದುಷ್ಕರ್ಮಿಗಳು ವರನನ್ನು ಕುದುರೆಯಿಂದ ಕೆಳಗೆಳೆದಿದ್ದು, ಆತನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೊವನ್ನು ವರನ ಕುಟುಂಬದ ಸದಸ್ಯರು ಚಿತ್ರೀಕರಿಸಿಕೊಂಡಿದ್ದಾರೆ. “ನನ್ನ ಪುತ್ರ ಅಂಗವಿಕಲನಾಗಿದ್ದರೂ, ಹಲ್ಲೆಕೋರರು ಆತನಿಗೆ ಯಾವುದೇ ಕರುಣೆ ತೋರಲಿಲ್ಲ. ಅವರು ಆತನನ್ನು ನಿರ್ದಯವಾಗಿ ಥಳಿಸಿದರು. ನನ್ನ ಪುತ್ರಿ ಮನಿಶಾಳನ್ನೂ ಬಿಡಲಿಲ್ಲ. ತನ್ನ ಸಹೋದರನ ಮೇಲಿನ ಹಲ್ಲೆಗೆ ಪ್ರತಿರೋಧ ತೋರಲು ಯತ್ನಿಸಿದಾಗ, ಆಕೆಯನ್ನೂ ಥಳಿಸಲಾಯಿತು” ಎಂದು ವರನ ತಾಯಿ ವಿದ್ಯಾ ಅಹಿರ್ವರ್ ಆರೋಪಿಸಿದ್ದಾರೆ. ಈ ಘಟನೆಯ ಬಳಿಕ ಹಟ್ಟಾ ಪೊಲೀಸ್ ಠಾಣೆಗೆ ಧಾವಿಸಿದ ದಲಿತ ಕುಟುಂಬ, ಇಡೀ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದೆ. ಈ ಘಟನೆ ದೃಢಪಡಿಸಿರುವ ಹಟ್ಟಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಧೀರ್ ಕುಮಾರ್, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನತೆ ತಡೆಯಲು ಹಾಗೂ ವಿವಾಹ ಸಂಪ್ರದಾಯಗಳು ಅಡೆತಡೆ ಇಲ್ಲದೆ ಮುಂದುವರಿಯಲು ಗ್ರಾಮದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ವೈದ್ಯಕೀಯ ಪರೀಕ್ಷೆಗಳ ಬಳಿಕ, ವಿವಾಹದ ಸಂಪ್ರದಾಯಗಳನ್ನು ಪೂರ್ಣಗೊಳಿಸಲು ವರ ಹಾಗೂ ಕುಟುಂಬದ ಸದಸ್ಯರು ಛತರ್ಪುರ್ ಜಿಲ್ಲೆಗೆ ಹೊಂದಿಕೊಂಡಿರುವ ಬುಧಿ ಸೆಮ್ರಾ ಗ್ರಾಮಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
Kalaburagi | ಕಾಂಗ್ರೆಸ್ ವಿರುದ್ಧ ಜೆಡಿಎಸ್ನಿಂದ ಬೃಹತ್ ಪ್ರತಿಭಟನೆ
ಕಲಬುರಗಿ: ಮಹಿಳಾ ಮೀಸಲಾತಿ ವಿಧೇಯಕ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಡೆ ಖಂಡಿಸಿ ಜಾತ್ಯತೀತ ಜನತಾದಳ (ಜೆಡಿಎಸ್) ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು, “1996ರಿಂದ 2026ರವರೆಗೆ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನೋಭಾವದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮಹಿಳಾ ಮೀಸಲಾತಿ ಮಸೂದೆ ವಿಷಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಿದೆ” ಎಂದು ಟೀಕಿಸಿದರು. ಎಚ್.ಡಿ.ದೇವೇಗೌಡರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆ ಮಂಡಿಸಲಾಗಿದ್ದರೂ, ಕಾಂಗ್ರೆಸ್ ಅದನ್ನು ವಿಫಲಗೊಳಿಸಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣಕ್ಕಾಗಿ ತೆಗೆದುಕೊಂಡಿರುವ ಹೆಜ್ಜೆಗೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಮತ್ತೆ ಅಡ್ಡಿಯಾಗಿವೆ ಎಂದು ಆರೋಪಿಸಿದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ ಮಾತನಾಡಿ, “ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಸಂಭ್ರಮಾಚರಣೆಗೆ ಸಿದ್ಧರಾಗಿದ್ದೇವೆ. ಆದರೆ ಇದೀಗ ಅದು ಆಕ್ರೋಶಕ್ಕೆ ತಿರುಗಿದೆ. ಕಾಂಗ್ರೆಸ್ ಮಹಿಳೆಯರ ಹಕ್ಕನ್ನು ನಿರ್ಲಕ್ಷ್ಯ ಮಾಡಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ್ ಬೀರಬಿಟ್ಟೆ, ಶಂಕರ ಗೌಡ ಪಾಟೀಲ್, ಮಲ್ಲಿಕಾರ್ಜುನ್ ಸಂಗಣಿ, ಮಹಾಂತಪ್ಪ ಮದರಿ, ವಿಠ್ಠಲ್ ಜಾಧವ, ರವಿಶಂಕರ್ ರೆಡ್ಡಿ, ಮಂಜುಗೌಡ ಪಾಟೀಲ್, ರಿಜವಾನ್ ಅಹಮದ್, ಪ್ರವೀಣ್ ಜಾಧವ್, ರಾಜೇ ಪಟೇಲ್, ಕಿರಣ್ ಪಾಟೀಲ್, ಶಿವಲಿಂಗಪ್ಪ ಪಾಟೀಲ್, ಅನ್ವರ್ ಪಟೇಲ್, ಸಾಬೀರ್ ಗನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಟ್ರಂಪ್ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಿಗೇ ಮೂರನೇ ಕಂಟೈನರ್ ಹಡಗು ವಶಪಡಿಸಿಕೊಂಡ ಇರಾನ್
ಟೆಹರಾನ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಿಗೇ, ಬುಧವಾರ ಹಾರ್ಮುಝ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಮೂರು ಕಂಟೈನರ್ ಹಡಗುಗಳನ್ನು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ, ಬುಧವಾರ ಬೆಳಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC), ಎರಡು ಹಡಗುಗಳನ್ನು ವಶಪಡಿಸಿಕೊಂಡಿರುವುದನ್ನು ದೃಢಪಡಿಸಿತ್ತು. “ಇಂದು ಬೆಳಗ್ಗೆ ಹಾರ್ಮುಝ್ ಜಲಸಂಧಿಯನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದ ಎರಡು ಹಡಗುಗಳನ್ನು ಗುರುತಿಸಿ, ಅವನ್ನು ತಡೆಹಿಡಿಯಲಾಗಿದೆ,” ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ. “ಉಲ್ಲಂಘನೆ ಮಾಡಿದ ಎರಡು ಹಡಗುಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ನೌಕಾಪಡೆ ವಶಪಡಿಸಿಕೊಂಡಿದ್ದು, ಅವನ್ನು ಇರಾನ್ ಕರಾವಳಿಯತ್ತ ಕಳುಹಿಸಲಾಗಿದೆ,” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. “ವಶಪಡಿಸಿಕೊಂಡ ಎರಡು ಹಡಗುಗಳ ಪೈಕಿ ಒಂದು ‘MSC-FRANCESCA’ ಆಗಿದ್ದು, ಇದು ಇಸ್ರೇಲ್ಗೆ ಸೇರಿದ ಹಡಗು. ‘EPAMINONDAS’ ಮತ್ತೊಂದು ಹಡಗಾಗಿದೆ. ಈ ಎರಡು ಹಡಗುಗಳು ನೌಕಾಯಾನ ವ್ಯವಸ್ಥೆಗೆ ಧಕ್ಕೆ ತಂದು, ಸಾಗರ ಭದ್ರತೆಗೆ ಅಪಾಯ ಉಂಟುಮಾಡಿದ್ದವು,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಪ್ರಕಟಣೆಯ ಬೆನ್ನಿಗೇ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ನೌಕಾಪಡೆಯು ‘ಯುಫೋರಿಯಾ’ ಎಂಬ ಮತ್ತೊಂದು ಹಡಗಿನ ಮೇಲೆ ದಾಳಿ ನಡೆಸಿದೆ ಎಂದು Nour News, Fars ಮತ್ತು Mehr ಸುದ್ದಿ ಸಂಸ್ಥೆಗಳು ಸೇರಿದಂತೆ ಇರಾನ್ ನ ಮಾಧ್ಯಮಗಳು ವರದಿ ಮಾಡಿವೆ. ಆ ಹಡಗನ್ನು ಇರಾನ್ ಕರಾವಳಿಯಲ್ಲಿ ನಿಲುಗಡೆ ಮಾಡಲಾಗಿದೆ ಎಂದು ಅವು ತಿಳಿಸಿವೆ. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.
Kalaburagi | ಕುಸನೂರಲ್ಲಿ ಕಾರ್ಮಿಕನ ಸಂಶಯಾಸ್ಪದ ಸಾವು : ಪ್ರಕರಣ ದಾಖಲು
ಕಲಬುರಗಿ: ನಗರದ ಹೊರವಲಯದ ಕುಸನೂರ ಗ್ರಾಮದಲ್ಲಿ 29 ವರ್ಷದ ಕಾರ್ಮಿಕನೊಬ್ಬ ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಗ್ರಾಮದ ನಿವಾಸಿ, ಸೆಂಟರಿಂಗ್ ಕೆಲಸ ಮಾಡುತ್ತಿದ್ದ ಸಾಯಿಬಣ್ಣ ಎಂದು ಗುರುತಿಸಲಾಗಿದೆ. ಮಂಗಳವಾರವೂ ಪ್ರತಿದಿನದಂತೆ ಕೆಲಸಕ್ಕೆ ತೆರಳಿದ್ದ ಸಾಯಿಬಣ್ಣ ರಾತ್ರಿ ಮನೆಗೆ ಮರಳದಿದ್ದ ಹಿನ್ನೆಲೆಯಲ್ಲಿ, ಮದ್ಯಪಾನ ಮಾಡುವ ಹವ್ಯಾಸವಿದ್ದ ಕಾರಣ ಎಲ್ಲಾದರೂ ಬಿದ್ದಿರಬಹುದು ಎಂದು ಕುಟುಂಬಸ್ಥರು ಭಾವಿಸಿ ಹುಡುಕಾಟ ನಡೆಸಿದ್ದರು. ಆದರೆ ಬುಧವಾರ ಬೆಳಗ್ಗೆ ಗ್ರಾಮದ ಹೋಟೆಲ್ವೊಂದರ ಎದುರು ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ಹಾಗೂ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿದು ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಳೆ(ಎ.23) ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
ಬೆಂಗಳೂರು : ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ (ಎ.23) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಗೊಳ್ಳಲಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದ್ದು, ಸದರಿ ಫಲಿತಾಂಶವನ್ನು https://karresults.nic.in ಲಿಂಕ್ ಮೂಲಕ ಹಾಗೂ KarnatakaOne Mobile App ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗುವುದು.
West Bengal S I R | ಜ್ಞಾನೇಶ್ ಕುಮಾರ್ ಅವರು ರಾಷ್ಟ್ರೀಯ ಅವಮಾನ: ಕಪಿಲ್ ಸಿಬಲ್ ವಾಗ್ದಾಳಿ
ಮುಖ್ಯ ಚುನಾವಣಾ ಆಯುಕ್ತರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ರಾಜ್ಯಸಭಾ ಸಂಸದ
ಕನಕಗಿರಿ: ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ತಮ್ಮ ಪುತ್ರ ವೇದಿಕೆ ಹಂಚಿಕೊಂಡಿರುವುದು ತಪ್ಪು. ಈ ಬಗ್ಗೆ ಮಗನನ್ನು ಕರೆದು ಬುದ್ಧಿ ಹೇಳುತ್ತೇನೆ. ಇಂತಹ ಘಟನೆಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಬೆನಕನಾಳ ಗ್ರಾಮದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಗ ವೇದಿಕೆಯ ಮೂಲೆಯಲ್ಲಿ ಕುಳಿತಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಸಂಕನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಗ್ರಾಮದಲ್ಲಿ ನೀರಿನ ಕೊರತೆ ಇಲ್ಲ ಎಂದು ಹೇಳಿದರು. ಕಾರಟಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಆಧಾರದಲ್ಲಿ ಬಳಸಲಾಗುತ್ತಿದೆ ಎಂದು ವಿವರಿಸಿದರು. ಮಹಿಳೆಯರು ಕೊಡಗಳನ್ನು ಹಿಡಿದು ಹೊಸ ಬೋರ್ವೆಲ್ ಕೊರೆಸುವಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ ತಾಲೂಕು ಪಂಚಾಯತ್ ಪ್ರಭಾರ ಇಒ ರಾಜಶೇಖರ್ ಅವರು, ಗ್ರಾಮದಲ್ಲಿ ನೀರಿನ ಪೂರೈಕೆ ವ್ಯವಸ್ಥೆ ಸಮರ್ಪಕವಾಗಿರುವುದಾಗಿ ಸ್ಪಷ್ಟಪಡಿಸಿದರು.
ಕುಕನೂರಿನಲ್ಲಿ ಬಸವೇಶ್ವರ ಜಯಂತಿ ಆಚರಣೆ : ವಿದ್ಯಾರ್ಥಿಗಳಿಗೆ ಸನ್ಮಾನ
ಕುಕನೂರು: ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಸಾಮಾಜಿಕ ಕ್ರಾಂತಿ ಯೋಗಿ ಬಸವೇಶ್ವರ ಜಯಂತೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಮಹಾದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ, “ನಮ್ಮ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೊಡ್ಡ ಸಾಧನೆ ಮಾಡಬೇಕು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ನಡೆತೆಯಿಂದ ಶ್ರೇಷ್ಠರಾಗುತ್ತಾರೆ. ಅಸ್ಪೃಶ್ಯತೆ ವಿರುದ್ಧ ಹೋರಾಡಿ ಕೆಳವರ್ಗದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಬಸವಣ್ಣನವರ ಪಾತ್ರ ಅನನ್ಯವಾಗಿದೆ” ಎಂದು ಹೇಳಿದರು. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿದು, ತಮ್ಮ ಆದಾಯದಲ್ಲಿ ಒಂದು ಭಾಗವನ್ನು ಸಮಾಜದ ಒಳಿತಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಮಾಜ ಸೇವಕ ಕಳಕಪ್ಪ ಕಂಬಳಿ, “ಬಸವಣ್ಣನವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗಬಾರದು. ‘ತನ್ನಂತೆ ಪರರ ಬಗೆ’ ಎಂಬ ಅವರ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು. ಜೊತೆಗೆ, ಮಠವನ್ನು ಅಭಿವೃದ್ಧಿಪಡಿಸಿ ಜನಸೇವೆ ಮಾಡುತ್ತಿರುವ ಮಹಾದೇವ ಮಹಾಸ್ವಾಮಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಠದ ಸೇವಾ ಸಮಿತಿ ಅಧ್ಯಕ್ಷ ಸಂಗಮೇಶ ಕಲ್ಮಠ, ಅರವಿಂದಗೌಡ ಪೊಲೀಸ್ ಪಾಟೀಲ್, ಬಸನಗೌಡ ಪಾಟೀಲ್, ಅಶೋಕ ತೋಟಾದ, ವೀರಯ್ಯ ತೋಂಟದಾರ್ಯಮಠ, ಅಂದಲ್ಲ ಜವಳಿ, ಈರಣ್ಣ ಅಣ್ಣಿಗೇರಿ, ಖಾಸಿಂ ಸಾಬ ಸಂಗಟಿ ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಮಹಿಳಾ ಮೀಸಲು ಮಸೂದೆ; ಬಿಜೆಪಿಯ ರಾಜಕೀಯ ಪ್ರಸಹನ ನಾಚಿಕೆಗೇಡಿನ ಸಂಗತಿ : ಕವಿತಾ
ಬೆಂಗಳೂರು : ‘ಕೇಂದ್ರದ ಬಿಜೆಪಿ ಸರಕಾರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಮಹಿಳಾ ಮೀಸಲು ಮಸೂದೆ ಮಂಡನೆ ಮಾಡುವ ಮೂಲಕ ರಾಜಕೀಯ ಪ್ರಹಸನಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಜೋಡಿದಾರ್ ಟೀಕಿಸಿದ್ದಾರೆ. ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಈಗಾಗಲೇ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆಯನ್ನು ಮನಮೋಹನ್ ಸಿಂಗ್ ಅವಧಿಯಲ್ಲೇ ಮಂಡನೆ ಮಾಡಲಾಗಿತ್ತು. ರಾಜ್ಯಸಭೆಯಲ್ಲಿ ಅನುಮೋದನೆಯೂ ದೊರಕಿದ್ದು, ಲೋಕಸಭೆಯಲ್ಲಿ ಒಮ್ಮತದ ಕೊರತೆ ಹಿನ್ನೆಲೆಯಲ್ಲಿ ಅಂಗೀಕಾರ ಆಗಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಕನಿಷ್ಟ ರಾಜಕೀಯ ಸಾಮಾನ್ಯ ಜ್ಞಾನ ಇರುವ ಎಲ್ಲರಿಗೂ ಮೇಲ್ಕಂಡ ವಿಚಾರ ಗೊತ್ತಿದೆ. ಆದರೆ, ಬಿಜೆಪಿ, ಆರೆಸ್ಸೆಸ್ ನ ವಾಟ್ಸ್ ಅಪ್ ಯೂನಿವರ್ಸಿಟಿ ಬಾಲ ‘ಪ್ರತಿಭೆ’ಗಳು, ಗೋಬೆಲ್ಸ್ ಥಿಯರಿಯನ್ನೆ ಹೊತ್ತು ಮೆರೆಸುವ ಆ ಪಕ್ಷದ ಐಟಿ ಸೆಲ್ನವರು ‘ಕಾಂಗ್ರೆಸ್ ಪಕ್ಷದಿಂದ ಮಹಿಳಾ ಮೀಸಲಾತಿ ಮಸೂದೆ ಬಿದ್ದು ಹೋಯಿತು, ಕಾಂಗ್ರೆಸ್ ಮಹಿಳಾ ವಿರೋಧಿ’ ಎಂದು ಬಿಂಬಿಸುವ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಬಿಜೆಪಿಯವರಿಗೆ ನಿಜಕ್ಕೂ ಮಹಿಳಾ ಸಬಲೀಕರಣದ ಬಗ್ಗೆ ಕನಿಷ್ಟ ಬದ್ದತೆ ಇದ್ದರೇ, ಕಾನೂನು ರೂಪಿಸಲು ಹೋಗದೆ ನೇರವಾಗಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್ಗಳನ್ನು ಕೊಡಬಹುದಲ್ಲವೇ?. ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳಂತೆ ಬಿಜೆಪಿಯು ಮಹಿಳೆಯರಿಗೆ ಶೇ.12ರಿಂದ ಶೇ.15ಕ್ಕಿಂತ ಹೆಚ್ಚಿನ ಟಿಕೆಟ್ಗಳನ್ನು ನೀಡುತ್ತಿಲ್ಲವೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ: ಸರಕಾರಿ ಕಾಲೇಜುಗಳ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿ ಸರಕಾರಿ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯುವ ಮೂಲಕ ಹೆತ್ತವರು, ಪೋಷಕರು ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮಕ್ಕಳ ಸಾಧನೆಗಳ ಹಿಂದೆ ಮನೆಯವರ ಕೊಡುಗೆಯೂ ಇದೆ. ವಿದ್ಯಾರ್ಥಿಗಳು ವಿದ್ಯೆಯ ಹಿಂದೆ ಹೋಗಬೇಕು, ಹಣದ ಹಿಂದೆ ಹೋಗಬಾರದು. ವಿದ್ಯೆಯ ಹಿಂದೆ ಹೋದರೆ ಹಣ ತಾನಾಗಿಯೇ ಬರುತ್ತದೆ. ಸರಕಾರಿ ಕಾಲೇಜುಗಳ ಸೀಮಿತ ಸವಲತ್ತುಗಳ ಮಧ್ಯೆ ವಿದ್ಯಾರ್ಥಿಗಳು ಸಾಧನೆ ಗೈದಿರುವುದು ಶ್ಲಾಘನೀಯ ಎಂದರು. *ಸನ್ಮಾನಿತ ವಿದ್ಯಾರ್ಥಿಗಳ ವಿವರ :ಕಲಾ ವಿಬಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಶ್ಮಿತಾ - 582 ಅಂಕ. ವಾಣಿಜ್ಯ ವಿಭಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನೇಹಾ ಎಂ.ಡಿ -591, ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ದಕ್ಷಾ - 591, ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜಿನ ಮಾನ್ವಿಕಾ -589 ಅಂಕ. ವಿಜ್ಞಾನ ವಿಬಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪವಿತ್ರ ಎಸ್.ಪಿ -586, ಪುಂಜಾಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಸಾತ್ವಿ ಬಾಳಿಗ- 583 ಅಂಕ ಗಳಿಸಿದ್ದರು. *ಪ್ರಾಂಶುಪಾಲರಿಗೆ ಸನ್ಮಾನ: ಈ ಸಂದರ್ಭ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಬೆಳ್ಳಾರೆ, ಗುತ್ತಿಗಾರು, ಕೊಯ್ಯೂರು, ಐವರ್ನಾಡು ನಾಲ್ಯಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ರಾಜು ಕೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ರಾಜೇಶ್ವರಿ ಮತ್ತಿತ್ತರರು ಉಪಸ್ಥಿತರಿದ್ದರು.
Kalaburagi | ವಿದ್ಯುತ್ ಗುತ್ತಿಗೆದಾರರ ಸಂಘದ ಕ್ರೀಡಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಒಡೆಯರ್ ನೇಮಕ
ಕಲಬುರಗಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಅವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕ್ರೀಡಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಬಸವರಾಜ ಒಡೆಯರ್ ಅವರನ್ನು ಎರಡನೇ ಬಾರಿಗೆ ನೇಮಕ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬ್ ತಿಳಿಸಿದ್ದಾರೆ. ಬಸವರಾಜ ಒಡೆಯರ್ ಅವರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಇವರು ಬಸವ ಎಲೆಕ್ಟಿಕಲ್ಸ್ ಸಂಸ್ಥೆಯ ಮಾಲಕರಾಗಿದ್ದು, ಸಮಾಜದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಹೊಸ ಜವಾಬ್ದಾರಿಯಂತೆ, ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಮತ್ತು ಉಪಸಮಿತಿಗಳೊಂದಿಗೆ ಸಂಪರ್ಕ ಸಾಧಿಸಿ ಕ್ರೀಡಾ ಸಮಿತಿಗಳನ್ನು ರಚಿಸುವುದು ಹಾಗೂ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಹೊಣೆಗಾರಿಕೆ ಇವರ ಮೇಲಿದೆ. ಸಂಘ ಹಾಗೂ ಸದಸ್ಯರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರಿ ಆಸ್ಪತ್ರೆ - ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ: ದಕ ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಮೂಡುಬಿದಿರೆ ಆರೋಗ್ಯ ಕೇಂದ್ರ, ವಿಟ್ಲ ಸಮುದಾಯ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆ ಗಳೊಂದಿಗೆ ಕರಾರು ಒಪ್ಪಂದ ನಡೆಸಲು ಸರಕಾರ ಅನುಮೋದನೆಯನ್ನು ನೀಡಿದೆ. ಆದರೆ ಕೆಲವು ಸಂಘಟನೆಗಳು ಈ ಕುರಿತು ನಕಾರಾತ್ಮಕ ವಿಷಯಗಳನ್ನು ಹರಡುತ್ತಿದ್ದು, ಇದು ಸತ್ಯಾಂಶದಿಂದ ದೂರವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ಜನರಿಗೆ ವಿವಿಧ ತಜ್ಞ ವೈದ್ಯರ ಸೇವೆಗಳನ್ನು ನೀಡಲು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಸಲುವಾಗಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳೊಂದಿಗೆ ಒಪ್ಪಂದ/ಒಡಂಬಡಿಕೆ ಮಾಡಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಒಪ್ಪಂದದಡಿ ಖಾಸಗಿ ವೈದ್ಯಕೀಯ ಕಾಲೇಜುಗಳು ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ನುರಿತ ತಜ್ಞರ ಸೇವೆಯನ್ನು, ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ಹಾಗೂ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸ ಲಿದೆ. ಇದರ ನೇರ ಲಾ ಜನ ಸಾಮಾನ್ಯರಿಗೆ ಸಿಗಲಿದೆ. ಸ್ಥಳೀಯ ಮಟ್ಟದಲ್ಲೇ ತಜ್ಞ ವೈದ್ಯರ ಚಿಕಿತ್ಸೆ ಮತ್ತು ಸುಧಾರಿತ ರೋಗ ನಿರ್ಣಯ ಸೌಲ್ಯಗಳು ಉಚಿತವಾಗಿ ದೊರೆಯಲಿದೆ. ಒಡಂಬಡಿಕೆಗೆ ಒಳಪಡುವ ಆರೋಗ್ಯ ಕೇಂದ್ರದ ಅಧಿಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿದ್ದು, ಖಾಸಗಿ ಸಂಸ್ಥೆಯವರು ಕೇವಲ ವೈದ್ಯಕೀಯ ಸೇವೆಯನ್ನು ನೀಡುತ್ತಾರೆ. ಇಲಾಖೆಯ ಯಾವುದೇ ಸಂಸ್ಥೆ/ಸ್ವತ್ತುಗಳನ್ನು ಮಾರಾಟ ಮಾಡುತ್ತಿಲ್ಲ. ಈಗಾಗಲೇ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಸರಕಾರಿ ಲೇಡಿಗೋಷನ್ ಆಸ್ಪತ್ರೆಯು ಕೆಎಂಸಿ ವೈದ್ಯಕೀಯ ಆಸ್ಪತ್ರೆ ಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವೆನ್ಲಾಕ್ ಆಸ್ಪತ್ರೆಯನ್ನು ರಾಜ್ಯದ ಯಾವುದೇ ಇತರೆ ಜಿಲ್ಲಾ ಆಸ್ಪತ್ರೆಗಳಿಗೆ ಹೋಲಿಸಿದ್ದಲ್ಲಿ ಉತ್ತಮ ಗುಣಮಟ್ಟದ ಸೂಪರ್ ಸ್ಪೆಷಾಲಿಟಿ ಮಟ್ಟದ ಆಸ್ಪತ್ರೆಗಳಲ್ಲಿ ಲಭ್ಯವಿರುವ ನುರಿತ ತಜ್ಞರ ಮತ್ತು ಇತರೆ ಅರೆ ವೈದ್ಯಕೀಯ ಸಿಬ್ಬಂದಿಗಳ ಸೇವೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ಖಾಸಗಿ ವಲಯದಲ್ಲಿ ನುರಿತ ತಜ್ಞರ ಸೇವೆಯನ್ನು ದುಬಾರಿ ಮೊತ್ತವನ್ನು ಪಾವತಿಸಿ ಪಡೆಯಬೇಕಾಗಿದೆ. ಆದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾರ್ವಜನಿಕರು ಉಚಿತವಾಗಿ ಸೇವೆಯನ್ನು ಪಡೆಯಬಹುದಾಗಿದೆ. ವೆನ್ಲಾಕ್ ಆಸ್ಪತ್ರೆಯಿಂದ ರಾಜ್ಯದ ಸುಮಾರು 15 ಜಿಲ್ಲೆಗಳಿಂದಲ್ಲದೆ ಕೇರಳದ ರೋಗಿಗಳು ಸೇವೆಯನ್ನು ಪಡೆಯುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಹೃದ್ರೋಗಕ್ಕೆ ಸಂಬಂಧಪಟ್ಟ ಕ್ಯಾತ್ಲ್ಯಾಬ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಇದುವರೆಗೆ 741 ರೋಗಿಗಳು ವೆನ್ಲಾಕ್ ಆಸ್ಪತ್ರೆಯಲ್ಲಿ ಇದರ ಪ್ರಯೋಜನವನ್ನು ಪಡೆದಿರುತ್ತಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಉಳ್ಳಾಲ ಆರೋಗ್ಯ ಕೇಂದ್ರವು ನಗರ ಸಮುದಾಯ ಆರೋಗ್ಯ ಕೇಂದ್ರ ವಾಗಿ ಕಾರ್ಯಾಚರಿಸುತ್ತಿದ್ದು, ಖಾಸಗಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ನಡೆಸುವ ಮೊದಲು ಆಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 46 ರೋಗಿಗಳು ಇದ್ದು, ಪ್ರಸ್ತುತ ಎಲ್ಲಾ ತಜ್ಞರ ಸೇವೆಯು ಲಭ್ಯವಿದೆ. ಪ್ರತಿದಿನ ಸರಾಸರಿ 400ರಿಂದ 500 ರೋಗಿಗಳು ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಪ್ರಸಕ್ತ ಚಾಲ್ತಿಯಲ್ಲಿರುವ ಖಾಸಗಿ-ಸರಕಾರಿ ಆಸ್ಪತ್ರೆಗಳ ಒಡಂಬಡಿಕೆಯಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಯನ್ನು ಒದಗಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಜಿಲ್ಲೆಯ ಐದು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆ ಯೊಂದಿಗೆ ಒಡಂಬಡಿಕೆಯನ್ನು ನಡೆಸಿ, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆುಂನ್ನು ಉಚಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
Kalaburagi | ಶಿಷ್ಟಾಚಾರ ಪಾಲಿಸದವರು ಇತರರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ಹರ್ಷಾ ಗುತ್ತೇದಾರ್ ಟೀಕೆ
ಕಲಬುರಗಿ: ಸ್ವತಃ ಶಿಷ್ಟಾಚಾರ ಪಾಲಿಸದ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಇತರರ ಶಿಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ್ ಟೀಕಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಆಳಂದ ತಾಲೂಕಿನಲ್ಲಿ ಶಿಷ್ಟಾಚಾರದ ಪದ್ಧತಿ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು. ತಾಲೂಕಿನ ಹಲವು ಸರ್ಕಾರಿ ಕಾಮಗಾರಿಗಳಿಗೆ ಜನರಿಂದ ನೇರವಾಗಿ ಆಯ್ಕೆಯಾಗದ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಗುದ್ದಲಿ ಪೂಜೆ ನೆರವೇರಿಸುತ್ತಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದರು. ಶಾಸಕ ಬಿ.ಆರ್. ಪಾಟೀಲರ ಸಂಬಂಧಿಯಾದ ಆರ್.ಕೆ. ಪಾಟೀಲ ಅವರು ಶಾಸಕರಲ್ಲದಿದ್ದರೂ ಕ್ಷೇತ್ರದ ವಿವಿಧ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅಧಿಕಾರಿಗಳು ಇದರಲ್ಲಿ ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ದೂರಿದರು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಬೇಕಾದ ಬೀಜಗಳು ಮತ್ತು ಸ್ಪ್ರಿಂಕ್ಲರ್ ಪೈಪುಗಳ ವಿತರಣೆಯಲ್ಲಿಯೂ ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದರು. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಹಿಂದೆಯೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಗುಮುಲ್ನಲ್ಲಿ ಕೋಟ್ಯಾಂತರ ರೂಪಾಯಿ ನೇಮಕಾತಿ ಹಗರಣ ನಡೆದಿದೆ. ಆದರೆ ಅದರ ಬಗ್ಗೆ ಮಾತನಾಡಲು ಶಾಸಕರಿಗೆ ಸಮಯವಿಲ್ಲ. ಕೇವಲ ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವುದರಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಶಾಸಕ ಬಿ.ಆರ್. ಪಾಟೀಲ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯದೇ ಇರುವುದಕ್ಕೆ ಅವರ ಸಾಮಾಜಿಕ ಜಾಲತಾಣಗಳೇ ಸಾಕ್ಷಿಯಾಗಿದೆ. ವಿವಿಧ ಕಾಮಗಾರಿಗಳ ಸಂದರ್ಭದಲ್ಲಿ ಆರ್.ಕೆ. ಪಾಟೀಲ ಸ್ವತಃ ಹಾಜರಿದ್ದು ಪೂಜೆ ನೆರವೇರಿಸಿರುವುದು ಮಾಧ್ಯಮಗಳಲ್ಲೂ ವರದಿಯಾಗಿದೆ. ಹೀಗಾಗಿ ಶಿಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಹರ್ಷಾ ಗುತ್ತೇದಾರ ಹೇಳಿದರು.
ಶಹಾಬಾದ್ನಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಎಸ್ಯುಸಿಐ(ಸಿ)ನಿಂದ ಮನವಿ
ಶಹಾಬಾದ್: ನಗರದ ಮುಖ್ಯ ರಸ್ತೆಗಳ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಸ್ಯುಸಿಐ(C) ಮುಖಂಡರು ನಗರಸಭೆ ಪೌರಾಯುಕ್ತರಿಗೆ ಮನವಿಪತ್ರ ಸಲ್ಲಿಸಿದರು. ಮುಖಂಡ ಗಣಪತರಾವ ಮಾನೆ ಮಾತನಾಡಿ, ಬಸವೇಶ್ವರ ವೃತ್ತದಿಂದ ನೆಹರು ಚೌಕವರೆಗೆ ಹಾಗೂ ರೈಲ್ವೇ ಸ್ಟೇಷನ್ನಿಂದ ವಿ.ಪಿ. ಚೌಕ್ವರೆಗೆ ತುರ್ತಾಗಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಈ ಮುಖ್ಯರಸ್ತೆಗಳ ಎರಡೂ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ನಗರದ ಎಲ್ಲಾ ಬಡಾವಣೆಗಳಲ್ಲಿ ವ್ಯವಸ್ಥಿತ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ತಕ್ಷಣ ನಿರ್ಮಿಸಬೇಕು. ಜನರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಒದಗಿಸುವುದರ ಜೊತೆಗೆ, ಪ್ರಮುಖ ರಸ್ತೆ ಹಾಗೂ ಬಡಾವಣೆಗಳಲ್ಲಿ ಸಮರ್ಪಕ ಬೀದಿದೀಪಗಳನ್ನು ಅಳವಡಿಸಬೇಕು ಎಂದು ಹೇಳಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ಹಾಗೂ ಮೂತ್ರಾಲಯಗಳ ನಿರ್ಮಾಣ, ಉದ್ಯಾನವನಗಳಿಗೆ ಸ್ಥಳ ಗುರುತಿಸಿ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಇನ್ನೂ, ಬೀದಿನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದು, ಗಿಡಗಂಟೆ ಹಾಗೂ ಮುಳ್ಳುಕಂಟಿಗಳನ್ನು ತೆರವುಗೊಳಿಸುವುದು, ಆಧುನಿಕ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಬಸ್ ನಿಲ್ದಾಣಗಳಲ್ಲಿ ತಂಗುದಾಣ ನಿರ್ಮಾಣ ಹಾಗೂ ನಗರಾದ್ಯಂತ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ ರಾಘವೇಂದ್ರ ಎಂ.ಜಿ., ಜಗನ್ನಾಥ ಎಸ್.ಎಚ್., ನೀಲಕಂಠ ಹುಲಿ, ತಿಮ್ಮಯ್ಯ ಮಾನೆ, ರಮೇಶ್ ದೇವಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kalaburagi | ಮಹಿಳಾ ಮೀಸಲಾತಿ ಮಸೂದೆ ವಿರೋಧಕ್ಕೆ ಕಾಂಗ್ರೆಸ್ ವಿರುದ್ಧ ಉಮೇಶ್ ಜಾಧವ್ ಆಕ್ರೋಶ
ಕಲಬುರಗಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ‘ನಾರಿ ಶಕ್ತಿ ವಂದನ್’ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ವಿರುದ್ಧ ಮಾಜಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಡಿಸಲಾದ ಮಹಿಳಾ ಮೀಸಲಾತಿ ಪ್ರಸ್ತಾಪವನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ದೇಶದ ಮಹಿಳಾ ಶಕ್ತಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದ್ದು, ಅದನ್ನು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ವಿರೋಧಿಸಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದಲ್ಲದೆ, ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾಪಕ್ಕೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದನ್ನು ಅವರು ಟೀಕಿಸಿದರು. ಇಂತಹ ನಿಲುವುಗಳು ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಹಿಂದಿನ ಸಂದರ್ಭಗಳಲ್ಲಿಯೂ ಕಾಂಗ್ರೆಸ್ ಹಲವು ಮಹತ್ವದ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿದ ಅವರು, ಮಹಿಳಾ ಸಬಲೀಕರಣದ ದಾರಿಯಲ್ಲಿ ಈ ಮಸೂದೆ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ಮಹಿಳಾ ಮೀಸಲಾತಿ ಮತ್ತು ಅಭಿವೃದ್ಧಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ದೇಶದ ಜನತೆ ಬೆಂಬಲಿಸಲಿದ್ದಾರೆ ಎಂದು ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.
5ನೇ ತರಗತಿ ಮದ್ರಸ ಪಬ್ಲಿಕ್ ಪರೀಕ್ಷೆ : ದ.ಕ.ಜಿಲ್ಲೆಗೆ ಶಹೀಮಾ ಫಾತಿಮಾ ಪ್ರಥಮ
ಉಳ್ಳಾಲ : ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಕಳೆದ ಜನವರಿ ತಿಂಗಳಲ್ಲಿ ನಡೆಸಿದ ಐದನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕಿನ ಪಜೀರು ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿನಿ ಶಹೀಮಾ ಫಾತಿಮಾ 99% ಅಂಕಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇಸಾಮೀ ಕರ್ಮ ಶಾಸ್ತ್ರ, ಅರೆಬಿಕ್ ಭಾಷಾ ಅಧ್ಯಯನ ಮತ್ತು ವ್ಯಾಕರಣದಲ್ಲಿ ತಲಾ 100 ಅಂಕಗಳು, ಆಧ್ಯಾತ್ಮ ಶಾಸ್ತ್ರ ಮತ್ತು ಖುರ್ಆನ್ ಕಂಠಪಾಟದಲ್ಲಿ ತಲಾ 99 ಅಂಕಗಳು ಮತ್ತು ಇಸ್ಲಾಮೀ ಇತಿಹಾಸ ಅಧ್ಯಯನದಲ್ಲಿ 97 ಅಂಕಗಳನ್ನು ಗಳಿಸಿರುತ್ತಾರೆ. ಈಕೆ ಲೇಖಕ ಇಸ್ಮತ್ ಪಜೀರ್ ಮತ್ತು ಕವಯತ್ರಿ ಮಿಸ್ರಿಯಾ ಐ. ಪಜೀರ್ ದಂಪತಿಯ ಪುತ್ರಿ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಮಸ್ತ ಬೋರ್ಡ್ 5ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಒಟ್ಟು 5486 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಪ್ರಕಟನೆ ತಿಳಿಸಿದೆ.
ಪಹಲ್ಗಾಮ್ ದಾಳಿಗೆ ಒಂದು ವರ್ಷ; ಭಾರತೀಯರ ಜೊತೆ ಅಮೆರಿಕ ಸದಾ ನಿಂತಿದೆ ಎಂದ ರಾಯಭಾರಿ ಸೆರ್ಗಿಯೊ ಗೋರ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದು (ಏ.22-ಬುಧವಾರ) ಭರ್ತಿ ಒಂದು ವರ್ಷವಾಗಿದ್ದು, ಸಮಸ್ತ ಭಾರತೀಯರು ಈ ದಾಳಿಯಲ್ಲಿ ಮೃತಪಟ್ಟ 26 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತದ ದು:ಖದಲ್ಲಿ ಜಗತ್ತಿನ ಅನೇಕ ದೇಶಗಳು ಭಾಗಿಯಾಗಿದ್ದು, ಈ ದಾಳಿಯನ್ನು ಮತ್ತೊಮ್ಮೆ ತೀವ್ರವಾಗಿ ಖಂಡಿಸಿವೆ. ಅದೇ ರೀತಿ ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಕೂಡ, ಪಹಲ್ಗಾಮ್ ಸಂತ್ರಸ್ತರಿಗೆ ಕಂಬನಿ ಮಿಡಿದಿದ್ದು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಅಮೆರಿಕ ಪಾಲುದಾರ ರಾಷ್ಟ್ರ ಎಂದು ಭರವಸೆ ನೀಡಿದ್ದಾರೆ.
ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂಬುದರಲ್ಲಿ ಸಂಶಯವಿಲ್ಲ : ಎಚ್.ಸಿ.ಬಾಲಕೃಷ್ಣ
ಬೆಂಗಳೂರು : ಕಾಂಗ್ರೆಸ್ ಪಕ್ಷದ ಮುಸ್ಲಿಮ್ ನಾಯಕರು ತಪ್ಪು ಮಾಡಿದ್ದರೆ ನಿಯಮದಡಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಎಂದೂ ಯಾವುದೇ ನಿರ್ಧಾರವನ್ನು ಜಾತಿಯ ಆಧಾರದ ಮೇಲೆ ತೆಗೆದುಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಮತ್ತು ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ತುಂಬಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಾವು ಬೆನ್ನೆಲುಬಾಗಿದ್ದೇವೆ ಎಂಬ ಕಾರಣಕ್ಕೆ ಪಕ್ಷದ ಚೌಕಟ್ಟು ಮೀರಿ ಏನು ಬೇಕಾದರೂ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು. ಪ್ರಸ್ತುತ ಮುಸ್ಲಿಮ್ ನಾಯಕರ ವಿಚಾರದಲ್ಲಿ ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಅವರು ಯಾವುದೇ ತಪ್ಪು ಮಾಡದಿದ್ದರೆ. ಅವರಿಗೆ ಸಿಗಬೇಕಾದ ಗೌರವ ಮತ್ತು ಸ್ಥಾನಮಾನಗಳು ಖಂಡಿತವಾಗಿಯೂ ಮರಳಿ ಸಿಗಲಿವೆ ಎಂದ ಅವರು, ಪಕ್ಷದ ಅಧ್ಯಕ್ಷರ ತೀರ್ಮಾನಗಳನ್ನು ಪ್ರಶ್ನಿಸುವ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಯಾರು ಬೇಕಾದರೂ ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಪಕ್ಷದ ಅಧ್ಯಕ್ಷರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಪ್ಯಾಟ್ ಕಮಿನ್ಸ್ ವಾಪಸಾತಿ ವೇಳೆ ಏನಾಗುತ್ತೆ ಇಶಾನ್ ಕಿಶನ್ ನಾಯಕತ್ವದ ಕತೆ?: ಇನ್ನಿಲ್ಲದ ಗೊಂದಲದಲ್ಲಿ ಸನ್ ರೈಸರ್ಸ್!
Pat Cummins And Ishan Kishan- ಗಾಯದಿಂದ ಚೇತರಿಸಿಕೊಂಡಿರುವ ಪ್ಯಾಟ್ ಕಮಿನ್ಸ್ ಮತ್ತು ಹಂಗಾಮಿ ನಾಯಕನಾಗಿ ಯಶಸ್ಸು ಕಂಡಿರುವ ಇಶಾನ್ ಕಿಶನ್ ನಡುವೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಯಾರಿಗೆ ಎಂಬ ಗೊಂದಲ ಸೃಷ್ಟಿಯಾಗಿದೆ. ಇಶಾನ್ ಕಿಶನ್ ನೇತೃತ್ವದಲ್ಲಿ ತಂಡವು ಅರಂಭದ ಪಂದ್ಯಗಳಲ್ಲಿ ಸೋಲಿನ ಕಹಿಯುಂಡರೂ ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ ಲಯ ಕಂಡುಕೊಂಡಿದ್ದಾರೆ. ಹೀಗಾಗಿ ಅವರನ್ನೇ ನಾಯಕನನ್ನಾಗಿ ಮುಂದುವರಿಸಲು ಹರ್ಭಜನ್ ಸಿಂಗ್ ಮತ್ತು ಸಂಜಯ್ ಬಂಗಾರ್ ಬೆಂಬಲಿಸಿದ್ದಾರೆ. ಸಂದಿಗ್ಧತೆಯಲ್ಲಿದೆ ಎಸ್ಆರ್ಎಚ್ ತಂಡದ ಮ್ಯಾನೇಜ್ಮೆಂಟ್.
ಡ್ರಗ್ಸ್ ವ್ಯಸನಿಗಳ ಎಚ್ಐವಿ ಪರೀಕ್ಷೆ ನಡೆಸಲು ದ.ಕ. ಜಿಲ್ಲಾಧಿಕಾರಿ ದರ್ಶನ್ ಸೂಚನೆ
ಮಂಗಳೂರು: ಮಾದಕ ವಸ್ತು ವ್ಯಸನಿಗಳಿಗೆ ಎಚ್ಐವಿ ರೋಗದ ಪರೀಕ್ಷೆ ನಡೆಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಗುರಿಗಳನ್ನು ಜಿಲ್ಲಾಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಮಿಷನ್ ಏಡ್ಸ್ ಅಭಿಯಾನದಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ, ಆಸ್ಪತ್ರೆಗಳು ಎಚ್ಐವಿ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪ್ರಮುಖ ಜನಸಂದಣಿ ಘಟಕ, ಕೈಗಾರಿಕೆಗಳು, ವಲಸೆ ಕಾರ್ಮಿಕರಲ್ಲಿ ಎಚ್ಐವಿ ತಪಾಸಣೆ ಬಗ್ಗೆ ಸಹಕರಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಖತೀಜಾ ದಿಲ್ಶಾದ್ ಮಾತನಾಡಿ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದಡಿ ಎಚ್ಐವಿ ಬಾಧಿತರ ಪೈಕಿ ಶೇ.95ರಷ್ಟು ಮಂದಿಗೆ ಎಚ್ಐವಿ ಸ್ಥಿತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸೂಕ್ತ ಚಿಕಿತ್ಸೆ ನೀಡುವುದು ಮತ್ತು ವೈರಸ್ ನಿಯಂತ್ರಿಸುವುದು ಅಭಿಯಾನದ ಆದ್ಯತೆಯಾಗಿದೆ. ಜಿಲ್ಲೆಯಲ್ಲಿ ಮಾರ್ಚ್ ಅಂತ್ಯದವರೆಗೆ ಎಚ್ಐವಿ ಬಾಧಿತರಲ್ಲಿ ಶೇ.85.23ರಷ್ಟು ಮಂದಿ ಚಿಕಿತ್ಸೆ ಪಡೆದಿರುತ್ತಾರೆ ಎಂದರು. ಜಿಲ್ಲೆಯಲ್ಲಿ 21 ಕೌನ್ಸಿಲಿಂಗ್ ಮತ್ತು ಪರೀಕ್ಷಾ ಕೇಂದ್ರಗಳು, 9 ಎಆರ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಜಿಲ್ಲೆಯಲ್ಲಿ 4,663 ಎಚ್ಐವಿ ಸಕ್ರಿಯ ಪ್ರಕರಣಗಳು ಇವೆ. ಕಳೆದ ವರ್ಷ ಜಿಲ್ಲೆಯಲ್ಲಿ 84,893 ಎಚ್ಐವಿ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 293 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಎಚ್ಐವಿಯಿಂದ 2,972 ಮರಣ ಪ್ರಕರಣಗಳು ವರದಿಯಾಗಿದೆ ಎಂದು ಡಾ. ಖತೀಜಾ ದಿಲ್ಶಾದ್ ಮಾಹಿತಿ ನೀಡಿದರು. ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ, ದ.ಕ. ಜಿಪಂ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ್, ಅಪರ ಜಿಲ್ಲಾಧಿಕಾರಿ ರಾಜು ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಉಪಸ್ಥಿತರಿದ್ದರು.
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನೇಮಕಾತಿ; ಅರ್ಜಿ ಆಹ್ವಾನ
ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು 11 ತಿಂಗಳ ಅವಧಿಗೆ ಅಥವಾ ಖಾಯಂ ನೇಮಕಾತಿ ಆಗುವವರೆಗೆ ನೇಮಿಸಿಕೊಳ್ಳಲಾಗುತ್ತದೆ. ಬೆಂಗಳೂರಿನ ಪ್ರತಿಷ್ಠಿತ ‘ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ’ (IGICH)ಯು ಖಾಲಿ ಇರುವ ವಿವಿಧ ವಿಭಾಗಗಳ ಒಟ್ಟು 75 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ ನಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಮೇ 08, 2026 ರೊಳಗೆ ಸಲ್ಲಿಸಬೇಕಿದೆ. ಗ್ರೂಪ್ ‘ಎ’ ವೃಂದದ ವೈದ್ಯಾಧಿಕಾರಿಗಳು (ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಮಾಲೋಚಕರು ಇತ್ಯಾದಿ) ಹಾಗೂ ಗ್ರೂಪ್ ‘ಸಿ’ ವೃಂದದ ಶುಶ್ರೂಷಕಾಧಿಕಾರಿ ಹುದ್ದೆಗಳು ಇದರಲ್ಲಿ ಸೇರಿವೆ. ವೈದ್ಯಕೀಯ ಹುದ್ದೆಗಳಿಗೆ ರೂ. 75,000 ರಿಂದ ಗರಿಷ್ಠ ರೂ. 2.5 ಲಕ್ಷ ವರೆಗೆ ಆಕರ್ಷಕ ವೇತನ ನಿಗದಿಪಡಿಸಲಾಗಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು 11 ತಿಂಗಳ ಅವಧಿಗೆ ಅಥವಾ ಖಾಯಂ ನೇಮಕಾತಿ ಆಗುವವರೆಗೆ ನೇಮಿಸಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯ ಜೊತೆಗೆ ನಿಗದಿತ ಅರ್ಜಿ ಶುಲ್ಕ ಹಾಗೂ ಅಗತ್ಯ ವಿದ್ಯಾರ್ಹತೆ, ವಯೋಮಿತಿ ಮತ್ತು ಅನುಭವದ ದೃಢೀಕೃತ ದಾಖಲೆಗಳನ್ನು ಲಗತ್ತಿಸಿ, 2026 ಮೇ 08 ರ ಸಂಜೆ 5.30 ರೊಳಗೆ ಸಂಸ್ಥೆಯ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪುವಂತೆ ಸಲ್ಲಿಸಬೇಕು. ಪ್ರಮುಖ ದಿನಾಂಕಗಳು: * ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18 ಏಪ್ರಿಲ್ 2026 * ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 08 ಮೇ 2026 ರ ಸಂಜೆ 5.30 ರೊಳಗೆ ಸಂಕ್ಷಿಪ್ತ ವಿವರ * ನೇಮಕಾತಿ ಸಂಸ್ಥೆ: ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು (IGICH) * ವೇತನ ಶ್ರೇಣಿ: ರೂ. 33,350 – ರೂ. 2,50,000 * ಹುದ್ದೆಗಳ ಸಂಖ್ಯೆ: 75 (ಗ್ರೂಪ್ ಎ – 25 ಹಾಗೂ ಗ್ರೂಪ್ ಸಿ – 50) * ಉದ್ಯೋಗ ಸ್ಥಳ: ಬೆಂಗಳೂರು ಹುದ್ದೆಯ ವಿವರ ಗ್ರೂಪ್-ಎ ಹುದ್ದೆಗಳು (ಒಟ್ಟು 25): * ಸಹ ಪ್ರಾಧ್ಯಾಪಕರು (01) * ವಿವಿಧ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರು (17) * ಬ್ಲಡ್ ಸೆಂಟರ್ ಆಫೀಸರ್ (01) * ಸಮಾಲೋಚಕರು (02) * ಸ್ಪೆಷಲಿಸ್ಟ್ (01) * ಸೀನಿಯರ್ ರೆಸಿಡೆಂಟ್ (03) ಅರ್ಜಿ ಶುಲ್ಕ * ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ರೂ. 2,000/- * ಒಬಿಸಿ (OBC) ವರ್ಗದ ಅಭ್ಯರ್ಥಿಗಳಿಗೆ: ರೂ. 1,500/- * ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ. 500/- ಗ್ರೂಪ್-ಸಿ ಹುದ್ದೆಗಳು (ಒಟ್ಟು 50): ಶುಶ್ರೂಷಕಾಧಿಕಾರಿಗಳು (Nursing Officers) ಶೈಕ್ಷಣಿಕ ಅರ್ಹತೆ * ಗ್ರೂಪ್-ಎ (ವೈದ್ಯಕೀಯ ಹುದ್ದೆಗಳು): ಆಯಾ ವಿಷಯಗಳಿಗೆ ಅನುಗುಣವಾಗಿ ಎನ್ಎಂಸಿ (NMC) ನಿಯಮಾವಳಿಗಳ ಪ್ರಕಾರ ನಿಗದಿತ ವೈದ್ಯಕೀಯ ಅರ್ಹತೆ ಹೊಂದಿರಬೇಕು. * ಗ್ರೂಪ್-ಸಿ (ನರ್ಸಿಂಗ್ ಹುದ್ದೆಗಳು): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್ (B.Sc. Nursing) ಪದವಿ ಪಡೆದಿರಬೇಕು ಹಾಗೂ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿರಬೇಕು. ಮಕ್ಕಳ ನರ್ಸಿಂಗ್ (Paediatric Nursing) ನಲ್ಲಿ ತರಬೇತಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವೇತನ ಶ್ರೇಣಿ * ಗ್ರೂಪ್-ಎ ವೈದ್ಯಕೀಯ ಹುದ್ದೆಗಳಿಗೆ: ಮಾಸಿಕ ರೂ. 75,000 ರಿಂದ ಗರಿಷ್ಠ ರೂ. 2,50,000 (ಹುದ್ದೆಗನುಸಾರವಾಗಿ) * ಗ್ರೂಪ್-ಸಿ ಶುಶ್ರೂಷಕಾಧಿಕಾರಿ ಹುದ್ದೆಗಳಿಗೆ: ಮಾಸಿಕ ರೂ. 33,350/- ವಯೋಮಿತಿ: * ಗ್ರೂಪ್-ಎ: ಸಹ ಪ್ರಾಧ್ಯಾಪಕರಿಗೆ 46 ರಿಂದ 53 ವರ್ಷ ಗರಿಷ್ಠ ವಯೋಮಿತಿ. ಸಹಾಯಕ ಪ್ರಾಧ್ಯಾಪಕರು ಹಾಗೂ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ 43 ರಿಂದ 48 ವರ್ಷ. ಸಮಾಲೋಚಕ (Consultant) ಹುದ್ದೆಗಳಿಗೆ ಗರಿಷ್ಠ 60 ವರ್ಷ. * ಗ್ರೂಪ್-ಸಿ: ಸಾಮಾನ್ಯ ವರ್ಗಕ್ಕೆ 40 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ವಯೋಮಿತಿ. ಅರ್ಜಿ ಸಲ್ಲಿಸುವ ವಿಧಾನ: * ಅರ್ಜಿ ಡೌನ್ಲೋಡ್: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. * ಅರ್ಜಿ ಭರ್ತಿ: ಡೌನ್ಲೋಡ್ ಮಾಡಿದ ಅರ್ಜಿಯ ಪ್ರಿಂಟ್ ತೆಗೆದುಕೊಂಡು, ಕೇಳಲಾಗಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಬೇಕು. * ಅರ್ಜಿ ಸಲ್ಲಿಕೆ: ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯ ಜೊತೆಗೆ ನಿಗದಿತ ಶುಲ್ಕ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಮೇ 08, 2026 ರ ಸಂಜೆ 5.30 ರೊಳಗೆ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪುವಂತೆ ಸಲ್ಲಿಸಬೇಕು. * ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯ (ಪೂರ್ವಾಹ್ನ 10.30 ರಿಂದ ಅಪರಾಹ್ನ 5.30 ರವರೆಗೆ) ಸಂಪರ್ಕಿಸಬಹುದು ಅಥವಾ ಇ-ಮೇಲ್: ihealthchild@yahoo.in
ಎ.23, 24ರಂದು ಸಿಇಟಿ ಪರೀಕ್ಷೆ: 745 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 3.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಎ.23 ಮತ್ತು ಎ.24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು(ಸಿಇಟಿ) ನಡೆಸುತ್ತಿದ್ದು, ರಾಜ್ಯಾದ್ಯಂತ ಒಟ್ಟು 3,30,479 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಈ ಬಾರಿ 1,44,380 ಹುಡುಗರು, 1,86,099 ಹುಡುಗಿಯರು ಮತ್ತು 970 ವಿಶೇಷಚೇತನರು ಪರೀಕ್ಷೆಗೆ ನೊಂದಣಿಯಾಗಿದ್ದಾರೆ. ಪ್ರಾಧಿಕಾರವು ಪ್ರತಿ ವರ್ಷ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಈ ಬಾರಿ ಎ.23ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಹಾಗೂ ಎ.24ರಂದು ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ನೇಮಕಾತಿ ಪರೀಕ್ಷೆಗಳಿಗೆ ಮಾಡುವಂತೆ ಈ ಪರೀಕ್ಷೆಗೂ ಕ್ಯಾಮರಾ ಕಣ್ಗಾವಲು ಇರುತ್ತದೆ. ವೆಬ್ ಕಾಸ್ಟಿಂಗ್ ಮೂಲಕ ಎಲ್ಲ 745 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿದ್ದು, ಕಟ್ಟೆಚ್ಚರವಹಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ನಡೆಸಲಿದ್ದಾರೆ. ಬೆಂಗಳೂರಿನ 163 ಕೇಂದ್ರಗಳಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರ ಕಮಾಂಡ್ ಸೆಂಟರ್ ಕೆಇಎ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಒಟ್ಟು 970 ವಿಶೇಷಚೇತನ ಮಕ್ಕಳು ಸಿಇಟಿ ಬರೆಯುತ್ತಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶ್ರವಣ ಸಾಧನ ಬಳಸಿಕೊಂಡು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿರುವ ಕಾರಣ ಅಂತಹವರು ಎರಡು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಬರಬೇಕಾಗುತ್ತದೆ. ವಸ್ತ್ರ ಸಂಹಿತೆ: ಅನಗತ್ಯ ಗೊಂದಲ ತಪ್ಪಿಸಲು ಇದೇ ಮೊದಲ ಬಾರಿಗೆ ಪ್ರತಿ ಕೇಂದ್ರಕ್ಕೆ ಒಬ್ಬ ವಸ್ತ್ರ ಸಂಹಿತೆ ಅಧಿಕಾರಿಯನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಬರುವ ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿಕೊಂಡು ಬಂದರೆ ಉತ್ತಮ. ಪುರುಷರು, ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಟ್ಗೆ ಅವಕಾಶ ಇರುವುದಿಲ್ಲ. ಶೂ ನಿಷೇಧಿಸಲಾಗಿದೆ. ಮೊಬೈಲ್, ಬ್ಲೂಟೂತ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಭ್ಯರ್ಥಿಯ ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ, ಸಂಬಂಧಿಸಿದ ವೃತ್ತಗಳನ್ನು ತುಂಬಬೇಕು. ಈ ಹಿಂದೆ ಈ ಮಾಹಿತಿ ಸರಿಯಾಗಿ ಭರ್ತಿ ಮಾಡದಿರುವ ಕಾರಣ ಫಲಿತಾಂಶ ಪ್ರಕಟಣೆಗೂ ಸಮಸ್ಯೆ ಆಗಿತ್ತು. ಹೀಗಾಗಿ ಅಭ್ಯರ್ಥಿಗಳು ಎಚ್ಚರವಹಿಸಬೇಕು. ಅಭ್ಯಾಸ ಮಾಡಲಿ ಎನ್ನುವ ಕಾರಣಕ್ಕೆ ಕರಡು ಓಎಂಆರ್ ಸೀಟ್ ಪ್ರವೇಶ ಪತ್ರದ ಜತೆ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಅದನ್ನು ಅಭ್ಯಾಸ ಮಾಡುವುದರ ಮೂಲಕ ಅನಗತ್ಯ ತಪ್ಪುಗಳನ್ನು ತಡೆಯಬೇಕು ಎಂದು ಪ್ರಾಧಿಕಾರ ಸಲಹೆ ನೀಡಿದೆ. ‘ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಅಥವಾ ಅನುತ್ತೀರ್ಣರಾಗಿರುವವರಿಗೆ ಇನ್ನೂ ಫಲಿತಾಂಶವನ್ನು ಉತ್ತಮ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಯಾರೂ ಸಿಇಟಿ ಬರೆಯುವುದನ್ನು ತಪ್ಪಿಸಿಕೊಳ್ಳಬಾರದು. ಯಾರೆಲ್ಲ ಶುಲ್ಕ ಪಾವತಿಸಿದ್ದೀರೊ ಅವರೆಲ್ಲರೂ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಸಿಇಟಿ ಪರೀಕ್ಷೆ ಬರೆಯಬೇಕು. ಎರಡನೇ ಪರೀಕ್ಷೆಯ ಅಂಕಗಳನ್ನೂ ಸಿಇಟಿ ಫಲಿತಾಂಶಕ್ಕೆ ಪರಿಗಣಿಸಲಾಗುವುದು’ -ಎಸ್. ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ‘ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರದೊಳಗೆ ಬಿಡುವ ಕಾರಣಕ್ಕೆ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಅವರು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಯಾರದ್ದೊ ಪರೀಕ್ಷೆಯನ್ನು ಇನ್ಯಾರೊ ಬರೆಯುವುದನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿ ಮಾಡಿದ್ದು, ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ಪ್ರವೇಶ ಆಗುವ ಸಂದರ್ಭದಲ್ಲಿಯೂ ಅಭ್ಯರ್ಥಿಯ ಭಾವಚಿತ್ರವನ್ನು ಹೋಲಿಕೆ ಮಾಡಿಯೇ ಪ್ರವೇಶ ನೀಡುವ ವ್ಯವಸ್ಥೆ ಮಾಡಿದ್ದು, ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಒಮ್ಮೆ ಕೆಇಎ ವೆಬ್ಸೈಟ್ನಲ್ಲಿ ಇರುವ ವಸ್ತ್ರ ಸಂಹಿತೆಯ ವಿವರಗಳನ್ನು ಓದಿಕೊಂಡು, ಆ ಪ್ರಕಾರ ಪರೀಕ್ಷೆಗೆ ಬರಬೇಕು’ - ಎಚ್.ಪ್ರಸನ್ನ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ
Raichur | ಮಹಿಳಾ ಮೀಸಲಾತಿ ವಿಫಲಕ್ಕೆ ವಿಪಕ್ಷಗಳೇ ಕಾರಣ: ಎಂ.ವಿರುಪಾಕ್ಷಿ ಆರೋಪ
ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಲು ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಕಾಯ್ದೆಗಳಿಗೆ ವಿರೋಧ ಪಕ್ಷಗಳು ಬೆಂಬಲಿಸದಿರುವುದೇ ಕಾರಣ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರುಪಾಕ್ಷಿ ಆರೋಪಿಸಿದರು. ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 77 ವರ್ಷಗಳಿಂದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ನಡೆದ ಪ್ರಯತ್ನಗಳು ಪುರುಷ ಪ್ರಧಾನ ಮನೋಭಾವದಿಂದ ವಿಫಲವಾಗುತ್ತಲೇ ಬಂದಿವೆ ಎಂದು ಹೇಳಿದರು. ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಬಿ.ಆರ್.ಅಂಬೇಡ್ಕರ್ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಕನಸು ಹೊಂದಿದ್ದರು ಎಂದು ಸ್ಮರಿಸಿದರು. 2023ರಲ್ಲಿ ಮಹಿಳಾ ಮೀಸಲು ಮಸೂದೆ ಮಂಡನೆಯಾಗಿದ್ದರೂ ಅದು ಜಾರಿಗೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಪೂರ್ವಭಾವಿ ಚರ್ಚೆ ನಡೆಸಿ ಬೆಂಬಲ ಕೋರಿದರೂ, ಅನೇಕ ಪಕ್ಷಗಳು ಬೆಂಬಲ ನೀಡಲಿಲ್ಲ ಎಂದು ದೂರಿದರು. 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ದೇಶದ ರಾಜಕೀಯ ಚಿತ್ರಣವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಮಹಿಳಾ ಮೀಸಲಾತಿ ಜಾರಿಗೆ ಅಡ್ಡಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪಕ್ಷ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು , ನಗರ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ, ರಮಾಬಾಯಿ, ಸಣ್ಣ ನರಸಿಂಹನಾಯಕ, ಎನ್.ಶಿವಶಂಕರ, ಅಮರೇಶ ಪಾಟೀಲ್ ಆಶಾಪುರು, ಹಂಪಣ್ಣ ಸೇರಿ ಅನೇಕರಿದ್ದರು.
SSLC Result: ಏಪ್ರಿಲ್ 23ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ; ಮಧು ಬಂಗಾರಪ್ಪ
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. 2026ರ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ನಾಳೆ, ಅಂದರೆ ಏಪ್ರಿಲ್ 23 ರಂದು ಮಧ್ಯಾಹ್ನ ಪ್ರಕಟವಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ವಿಶೇಷವೆಂದರೆ, ಈ ಹಿಂದೆ ನಿಗದಿಪಡಿಸಿದ್ದ ದಿನಾಂಕಕ್ಕಿಂತ ಒಂದು ದಿನ
Raichur | ಎ.24ರಂದು ಜಿಲ್ಲಾ ಮಟ್ಟದ ಗುತ್ತಿಗೆ ಕಾರ್ಮಿಕರ ಸಮಾವೇಶ
ರಾಯಚೂರು: ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಎ.24ರಂದು ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎಂ. ಗಂಗಾಧರ ಹೇಳಿದರು. ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಪದ್ಧತಿ ಕಾರ್ಮಿಕರ ಪರವಲ್ಲ, ಅದು ರಾಜಕೀಯ ಹಾಗೂ ಏಜೆನ್ಸಿಗಳ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ದಶಕಗಳಿಂದ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ, ಅವರಿಗೆ ಸೂಕ್ತ ಭದ್ರತೆ ಹಾಗೂ ಹಕ್ಕುಗಳು ದೊರೆಯುತ್ತಿಲ್ಲ ಎಂದು ಹೇಳಿದರು. ಖಾಯಂ ಹುದ್ದೆಗಳಲ್ಲಿಯೇ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವುದು ದುರ್ಬಳಕೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಎ.24ರಂದು ಬೆಳಗ್ಗೆ 9 ಗಂಟೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಮಾವೇಶ ನಡೆಯಲಿದ್ದು, ಸುಮಾರು 1500ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಸಮಾವೇಶದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಜಿಲ್ಲಾಧಿಕಾರಿ ಕೆ. ನಿತೀಶ್ ಸೇರಿದಂತೆ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್. ಮಾನಸಯ್ಯ, ರಾಜ್ಯಾಧ್ಯಕ್ಷ ಎಂ.ಡಿ. ಅಮಿರ್ ಅಲಿ ಹಾಗೂ ಇತರ ಮುಖಂಡರು ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಇಲಾಖೆಗಳಾದ ಕೃಷಿ, ವಸತಿ ಶಾಲೆ, ಕಂದಾಯ, ಗಣಿ, ನೀರಾವರಿ, ಆರೋಗ್ಯ, ಇಂಧನ ಮತ್ತು ಜಿಲ್ಲಾ ಪಂಚಾಯತ್ ಇಲಾಖೆಯ ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿ.ಅಡವಿರಾವ್, ಮುಹಮ್ಮದ್ ಶಫಿ, ನಾಗರಾಜ, ಎಂ.ನಿರಂಜನ ಸೇರಿ ಇತರಿದ್ದರು.
ಎ.24: ವರನಟ ಡಾ. ರಾಜ್ಕುಮಾರ್ ಜಯಂತಿ
ಉಡುಪಿ, ಎ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವರನಟ ಡಾ.ರಾಜ್ಕುಮಾರ್ ಅವರ ಜಯಂತಿ ಕಾರ್ಯಕ್ರಮ ಎ.24ರ ಶುಕ್ರವಾರ ಬೆಳಗ್ಗೆ 10:30ಕ್ಕೆ ನಗರದ ಬ್ರಹ್ಮಗಿರಿಯ ರೆಡ್ಕ್ರಾಸ್ ಸಭಾಂಗಣ ದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಇದರಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮಂಗಳೂರು ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಭಾರತೀಯ ರೆಡ್ಕ್ರಾಸ್ ರಾಜ್ಯ ಸಭಾಪತಿ ಬಸರೂರು ರಾಜೀವ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಇತರರು ಭಾಗವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟಿ ಪ್ರತಿಮಾ ನಾಯಕ್ ಡಾ.ರಾಜ್ಕುಮಾರ್ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ತೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಆ್ಯಪಲ್ ಸಿಇಒ ಯಾರು? ಜಾನ್ ಟೆರ್ನಸ್ ಆಯ್ಕೆಯ ನಂತರ ಟಿಮ್ ಕುಕ್ ಭವಿಷ್ಯವೇನು?
ನಾಯಕತ್ವ ಪರಿವರ್ತನೆಗೆ ನೆರವಾಗಲು ಟಿಮ್ ಅವರು ಸೆಪ್ಟೆಂಬರ್ ವರೆಗೆ ಆ್ಯಪಲ್ ಸಿಇಒ ಆಗಿ ಉಳಿಯಲಿದ್ದಾರೆ. ದೀರ್ಘಕಾಲದಿಂದ ಆ್ಯಪಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅನುಭವಿ ಜಾನ್ ಟೆರ್ನಸ್ ಅವರನ್ನು ಆ್ಯಪಲ್ ಕಂಪೆನಿ ತನ್ನ ಮುಂದಿನ ಸಿಇಒ ಆಗಿ ಘೋಷಿಸಿದೆ. ಪ್ರಸ್ತುತ ಸಿಇಒ ಟಿಮ್ ಕುಕ್ ಅವರು ಈ ವರ್ಷದ ಕೊನೆಯಲ್ಲಿ ಆ್ಯಪಲ್ ನ ನಿರ್ದೇಶಕರ ಮಂಡಳಿಯ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ವರ್ಗಾವಣೆಯಾಗಲಿದ್ದಾರೆ. ಆ್ಯಪಲ್ ಗೆ ಹೊಸ ನಾಯಕತ್ವ ಜಾನ್ ಟೆರ್ನಸ್ ಅವರು ಸೆಪ್ಟೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾರ್ಡ್ವೇರ್ ಎಂಜಿನಿಯರಿಂಗ್ ಕಾರ್ಯನಿರ್ವಾಹಕರಾಗಿದ್ದ ಜಾನ್ ಟೆರ್ನಸ್ ಆ್ಯಪಲ್ ಕಂಪೆನಿಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಟಿಮ್ ಕುಕ್ ಅವರ ನಾಯಕತ್ವದಲ್ಲಿ ಕಂಪೆನಿ ದಾಖಲೆಯ ಲಾಭದಲ್ಲಿ ಮುಂದುವರಿದಿತ್ತು. ಇದೀಗ ಹೊಸ ನಾಯಕತ್ವದಲ್ಲೂ ಅದೇ ಹಾದಿಯಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಜಾನ್ ಟೆರ್ನಸ್ ಅವರನ್ನು ಸಿಇಒ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಆ್ಯಪಲ್ ಕಂಪೆನಿಯ ವಾರ್ಷಿಕ ಲಾಭವು ಈಗ 100 ಶತಕೋಟಿ ಡಾಲರ್ ಮೀರಿದೆ. ಚೀನಾದಲ್ಲಿ ಹೆಚ್ಚಾಗಿರುವ ಬೇಡಿಕೆಯಿಂದಾಗಿ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪೆನಿ ಜನವರಿಯಲ್ಲಿ ತಿಳಿಸಿತ್ತು. “ಆ್ಯಪಲ್ ನ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುವ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಸಂಪೂರ್ಣ ವೃತ್ತಿಜೀವನವನ್ನು ಆ್ಯಪಲ್ ನಲ್ಲಿ ಕಳೆದಿದ್ದೇನೆ. ಸ್ಟೀವ್ ಜಾಬ್ಸ್ ಅವರ ಅಡಿಯಲ್ಲಿ ಮತ್ತು ಟಿಮ್ ಕುಕ್ ಅವರನ್ನು ಮಾರ್ಗದರ್ಶಕರಾಗಿ ಹೊಂದಲು ಅವಕಾಶ ದೊರೆತಿದೆ. ನಾವು ಜಾಗತಿಕವಾಗಿ ಮತ್ತು ಪರಸ್ಪರ ಹೇಗೆ ಸಂವಹನ ನಡೆಸುತ್ತೇವೆ ಎಂಬುದನ್ನು ಬದಲಿಸಿದ ಉತ್ಪನ್ನಗಳು ಮತ್ತು ಅನುಭವಗಳನ್ನು ರೂಪಿಸಲು ನೆರವಾಗಿರುವುದು ನನಗೆ ಹೆಮ್ಮೆಯ ವಿಷಯ” ಎಂದು ಅವರು ಹೇಳಿದ್ದಾರೆ. ನಾಯಕತ್ವ ಪರಿವರ್ತನೆಗೆ ನೆರವಾಗಲು ಟಿಮ್ ಅವರು ಸೆಪ್ಟೆಂಬರ್ ವರೆಗೆ ಸಿಇಒ ಆಗಿ ಉಳಿಯಲಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಅವರು “ಒಬ್ಬ ಎಂಜಿನಿಯರ್ ಮನಸ್ಸು, ನವೀನತೆ ತರುವ ಆತ್ಮ ಮತ್ತು ಸಮಗ್ರತೆ ಹಾಗೂ ಗೌರವದಿಂದ ಮುನ್ನಡೆಸುವ ಹೃದಯ ಹೊಂದಿರುವವರು” ಎಂದು ಹೊಗಳಿದ್ದಾರೆ. ಆ್ಯಪಲ್ ಕಂಪೆನಿಯ ಹಳೆಯ ತಲೆ ಜಾನ್ ಟೆರ್ನಸ್ ಅವರು 2001ರಲ್ಲಿ ಆ್ಯಪಲ್ ಕಂಪೆನಿಯಲ್ಲಿ ಕೆಲಸ ಪ್ರಾರಂಭಿಸಿದರು. 2013ರಲ್ಲಿ ಹಾರ್ಡ್ವೇರ್ ಎಂಜಿನಿಯರಿಂಗ್ ಉಪಾಧ್ಯಕ್ಷರಾಗಿ ಮತ್ತು 2021ರಲ್ಲಿ ವಿಭಾಗ ಮುಖ್ಯಸ್ಥರಾಗಿ ಪದೋನ್ನತಿ ಹೊಂದಿದರು. ಅವರು ಆ್ಯಪಲ್ ಉತ್ಪನ್ನಗಳ ಭೌತಿಕ ಘಟಕಗಳ ಅಭಿವೃದ್ಧಿಗೆ ಹೊಣೆ ಹೊತ್ತಿದ್ದರು. ಅವರ ಗಮನಾರ್ಹ ಸಾಧನೆಗಳಲ್ಲಿ ಮ್ಯಾಕ್ ಕಂಪ್ಯೂಟರ್ ಗಳಿಗೆ ಆ್ಯಪಲ್ ಸ್ವಾಮ್ಯದ ಸಿಲಿಕಾನ್ ಚಿಪ್ಗಳ ಅಭಿವೃದ್ಧಿ ಮತ್ತು ಬಿಡುಗಡೆ ಸೇರಿವೆ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, 2020ರಲ್ಲಿ ಇಂಟೆಲ್ ಚಿಪ್ ಗಳನ್ನು ಬದಲಿಸಿದ ನಂತರ ಮಾರಾಟವು ಗಣನೀಯವಾಗಿ ಏರಿಕೆಯಾಯಿತು. ಹಾರ್ಡ್ವೇರ್ ವಿಭಾಗದ ಅವರ ನಾಯಕತ್ವದಲ್ಲಿ ಪ್ರಾರಂಭವಾದ ಉತ್ಪನ್ನಗಳಲ್ಲಿ ಆ್ಯಪಲ್ ವಾಚ್ ಮತ್ತು ಏರ್ ಪಾಡ್ಸ್ ಶೈಲಿಯ ಹೆಡ್ಫೋನ್ಗಳು ಸೇರಿವೆ. ಇವೆರಡೂ ಆ್ಯಪಲ್ ನ ಪ್ರಮುಖ ಲಾಭದಾಯಕ ವ್ಯವಹಾರ ಮಾರ್ಗಗಳಾಗಿ ಬೆಳೆದಿವೆ, ಆದರೆ ವಿಷನ್ ಪ್ರೊ ಹೆಡ್ಸೆಟ್ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಿಲ್ಲ. ►ಪ್ರಶಂಸಿಸಿದ ಆ್ಯಪಲ್ ಮುಖ್ಯಸ್ಥ ಟೆರ್ನಸ್ ಅವರನ್ನು “ಒಬ್ಬ ಸ್ನೇಹಪರ ಮೆಕ್ಯಾನಿಕಲ್ ಎಂಜಿನಿಯರ್” ಎಂದು ವರ್ಣಿಸಲಾಗಿದೆ. ಅವರು ಸ್ಫೂರ್ತಿದಾಯಕ ಆದರೆ ಚಂಚಲರಾಗಿದ್ದ ಸ್ಟೀವ್ ಜಾಬ್ಸ್ ಅವರಿಗಿಂತ ಹೆಚ್ಚು ಶಾಂತ ಹಾಗೂ ಸಮತೋಲನಯುತ ನಿರ್ವಹಣಾ ಶೈಲಿಯನ್ನು ಹೊಂದಿದ್ದಾರೆ, ಇದು ಟಿಮ್ ಕುಕ್ ಅವರ ಶೈಲಿಗೆ ಹತ್ತಿರವಾಗಿದೆ. ಟೆರ್ನಸ್ ಸಿಇಒ ಸ್ಥಾನ ಅಲಂಕರಿಸಿದ ಬಳಿಕ ಜಾನಿ ಸ್ರೌಜಿ ಅವರ ಪಾತ್ರದಲ್ಲಿ ಬದಲಾವಣೆ ಸಾಧ್ಯವಿದೆ. ಅವರು ಈ ಹಿಂದೆ ಆ್ಯಪಲ್ ನ ಹಾರ್ಡ್ವೇರ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. 1998ರಲ್ಲಿ ಆ್ಯಪಲ್ ಗೆ ಸೇರಿ, 2011ರಲ್ಲಿ ಜಾಬ್ಸ್ ನಂತರ ಸಿಇಒ ಆಗಿ ನೇಮಕಗೊಂಡ ಟಿಮ್ ಕುಕ್ ಅವರು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಸುಮಾರು ಒಂದು ವರ್ಷ ಸಮಯ ಮೀಸಲಿಟ್ಟಿದ್ದರು ಎಂದು ವರದಿಯಾಗಿದೆ. ಕಳೆದ ವರ್ಷ ಅವರು ಕಡಿಮೆ ಕೆಲಸ ಮಾಡಲು ಬಯಸುವುದಾಗಿ ಮಂಡಳಿ ಮತ್ತು ಹಿರಿಯ ನಾಯಕರಿಗೆ ತಿಳಿಸಿದ್ದರು. ಕುಕ್ ಅವರ ಬದಲಿಗೆ ಆಯ್ಕೆಯಾದ ಟೆರ್ನಸ್ ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು. ►ಯಾರು ಈ ಜಾನ್ ಟೆರ್ನಸ್? ಕ್ಯಾಲಿಫೋರ್ನಿಯಾ ಮೂಲದ ಟೆರ್ನಸ್ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಕಾಲೇಜು ಅವಧಿಯಲ್ಲಿ ವಾರ್ಸಿಟಿ ಈಜು ತಂಡದ ಸದಸ್ಯರಾಗಿದ್ದು, ಹಲವು ಸ್ಪರ್ಧೆಗಳಲ್ಲಿ ಜಯಗಳಿಸಿದ್ದರು. 1997ರಲ್ಲಿ ಪದವಿ ಪಡೆದ ನಂತರ ಅವರು ವರ್ಚುವಲ್ ರಿಯಾಲಿಟಿ ಸ್ಟಾರ್ಟ್ಅಪ್ ‘ವರ್ಚುವಲ್ ರಿಸರ್ಚ್ ಸಿಸ್ಟಮ್ಸ್’ನಲ್ಲಿ ಸ್ವಲ್ಪಕಾಲ ಕೆಲಸ ಮಾಡಿದರು. ಟೆರ್ನಸ್ ಅವರು ಲಾಭದ ಹಾದಿಯಲ್ಲಿ ಟಿಮ್ ಕುಕ್ ಅವರ ಮಾರ್ಗದಲ್ಲೇ ಮುಂದುವರಿಯುವ ಸಾಧ್ಯತೆ ಇದ್ದರೂ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವರಿಗೆ ಸವಾಲು ಎದುರಾಗಲಿದೆ. ವಿಶೇಷವಾಗಿ ಸಿರಿ ವರ್ಚುವಲ್ ಅಸಿಸ್ಟೆಂಟ್ ಅನ್ನು ನವೀಕರಿಸುವ ಹೊಣೆಗಾರಿಕೆ ಅವರ ಮೇಲಿದೆ. AI ಕ್ಷೇತ್ರದಲ್ಲಿ ಆ್ಯಪಲ್ ಗೆ ಸ್ಪಷ್ಟವಾದ ಗುರುತು ಇಲ್ಲದಿರುವುದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಗಮನಾರ್ಹವಾಗಿದೆ. ►ಜಾನ್ ಟೆರ್ನಸ್ ವೇತನ ಎಷ್ಟು? ಜಾನ್ ಟೆರ್ನಸ್ ಅವರ ವೇತನದ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆಗಳು ನಡೆಯುತ್ತಿದ್ದರೂ, ಕಂಪೆನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ►ಆ್ಯಪಲ್ ಸಂಸ್ಥೆ ಏನು ನಿರೀಕ್ಷಿಸಬಹುದು? ದೀರ್ಘಕಾಲದ ಹಾರ್ಡ್ವೇರ್ ಮುಖ್ಯಸ್ಥರಾದ ಜಾನ್ ಟೆರ್ನಸ್ ಆಯ್ಕೆಯ ಮೂಲಕ ಆ್ಯಪಲ್ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದೆ. ಮ್ಯಾಕ್ ಮತ್ತು ಐಫೋನ್ನಂತಹ ಉತ್ಪನ್ನಗಳ ಹೊಸ ಮಾದರಿಗಳ ಮಾರಾಟವನ್ನು ಹೆಚ್ಚಿಸುವತ್ತ ಕಂಪೆನಿ ಗಮನ ಹರಿಸಬಹುದು.
Raichur | ಎ.24ರಂದು ‘ನಿನ್ನ ಮರೆಯಲಾರೆ’ ಸಂಗೀತ ರಸಮಂಜರಿ
ರಾಯಚೂರು: ನಟ ಡಾ.ರಾಜ್ಕುಮಾರ್ ಅವರ ಜನ್ಮದಿನದ ಅಂಗವಾಗಿ ‘ನಿನ್ನ ಮರೆಯಲಾರೆ’ ಎಂಬ ಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಎ.24ರಂದು ಸಂಜೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಕಾರ್ಯದರ್ಶಿ ಡಿ. ವೀರೇಶ ತಿಳಿಸಿದ್ದಾರೆ. ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ರಾಗ ತರಂಗಿಣಿ ಮೆಲೋಡಿಯಸ್ ಹಾಗೂ ಸೌಜನ್ಯ ಶ್ರೀ ಸ್ಟಾರ್ ಗೋಲ್ಡ್ ಕಂಪನಿಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಸಂಜೆ 5 ಗಂಟೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಬಸವರಾಜ ಕಳಸ ಉದ್ಘಾಟಿಸಲಿದ್ದು, ಕೃಷ್ಣಮೂರ್ತಿ ವಕೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ಗಾಯಕರು ಡಾ. ರಾಜ್ಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಮೂರ್ತಿ, ನರೇಂದ್ರ, ಶ್ರೀನಿವಾಸರಾವ್, ಕೃಷ್ಣ, ರಮೇಶ, ಗುರುರಾಜ ಸೇರಿದಂತೆ ಅನೇಕರಿದ್ದರು.

28 C