SENSEX
NIFTY
GOLD
USD/INR

Weather

21    C
...

ಜಮ್ಕೊ : ಜಾಗತಿಕ ಪ್ರಮುಖ ಕಂಪೆನಿಯಿಂದ ರಾಜ್ಯದಲ್ಲಿ ವಹಿವಾಟು ವಿಸ್ತರಣೆ

ಬೆಂಗಳೂರು : ವಿಮಾನ ಕ್ಯಾಬಿನ್ ಒಳಾಂಗಣ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆ ಜಮ್ಕೊ (Jamco) ಬೆಂಗಳೂರಿನಲ್ಲಿ ತನ್ನ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವುದಾಗಿ ಪ್ರಕಟಿಸಿದೆ. ಈ ಪೂರ್ಣ ಪ್ರಮಾಣದ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವ ಮೂಲಕ ಜಮ್ಕೊ, ಕರ್ನಾಟಕದಲ್ಲಿ ತನ್ನ ಎಂಜಿನಿಯರಿಂಗ್ ವಹಿವಾಟನ್ನು ಬಲಪಡಿಸಲಿದೆ. ‘ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯರಿರುವ ಪರಿಣತ ಎಂಜಿನಿಯರಿಂಗ್ ಉದ್ಯೋಗಿಗಳು ಮತ್ತು ಭದ್ರವಾಗಿ ನೆಲೆವೂರಿರುವ ವೈಮಾಂತರಿಕ್ಷ ವಲಯವು ಜಾಗತಿಕ ಹೂಡಿಕೆ ಆಕರ್ಷಿಸುತ್ತಿರುವುದಕ್ಕೆ ಜಮ್ಕೊದ ಹೂಡಿಕೆಯು ಮತ್ತೊಂದು ನಿದರ್ಶನವಾಗಿದೆ’ ಎಂದು ಕೈಗಾರಿಕಾ ಆಯುಕ್ತೆ ಗುಂಜನ್ ಕೃಷ್ಣ ತಿಳಿಸಿದ್ದಾರೆ. ಕಂಪೆನಿಯ ಸಿಒಒ ಸಂಜೀವ್ ಸೆನ್ ಮತ್ತು ನಿರ್ದೇಶಕ ಮಂಡಳಿ ಅಧ್ಯಕ್ಷೆ ಕೇಟ್ ಷೆಫರ್ ನೇತೃತ್ವದ ತಂಡ ಆಯುಕ್ತರನ್ನು ಭೇಟಿ ಮಾಡಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದರು. ಭೇಟಿ ಬಳಿಕ ಬೆಂಗಳೂರಿನಲ್ಲಿ ಕಂಪೆನಿಯ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವ ನಿರ್ಧಾರವನ್ನು ಆಯುಕ್ತರು ಪ್ರಕಟಿಸಿದ್ದಾರೆ. ಬೆಂಗಳೂರಿನ ಈ ಎಂಜಿನಿಯರಿಂಗ್ ಕೇಂದ್ರವು ಬೋಯಿಂಗ್, ಏರ್‍ಬಸ್ ಮತ್ತು ಇತರ ಜಾಗತಿಕ ವಿಮಾನಯಾನ ಸಂಸ್ಥೆಗಳ ವಿಮಾನಗಳ ಒಳಾಂಗಣದಲ್ಲಿ ಬಳಕೆಯಾಗುವ ಪರಿಕರಗಳನ್ನು ಪೂರ್ಣ ಪ್ರಮಾಣದಲ್ಲಿ ತಯಾರಿಸಲಿದೆ. ‘ಜಾಗತಿಕವಾಗಿ ಪ್ರಮಾಣಿಕೃತ ವೈಮಾಂತರಿಕ್ಷ ಉತ್ಪನ್ನ ತಯಾರಿಸುವ ಸಾಮಥ್ರ್ಯ ವೃದ್ಧಿಸಲು ರಾಜ್ಯದಲ್ಲಿ ಮಾಡುತ್ತಿರುವ ಈ ಹೂಡಿಕೆಯು ಕರ್ನಾಟಕದ ಬಗೆಗಿನ ನಮ್ಮ ದೀರ್ಘಕಾಲೀನ ಬದ್ಧತೆಗೆ ನಿದರ್ಶನವಾಗಿದೆ. ಭಾರತದ ವಿಮಾನಯಾನ ಮಾರುಕಟ್ಟೆ ಕ್ಷಿಪ್ರಗತಿಯಲ್ಲಿ ವಿಸ್ತರಣೆಯಾಗುತ್ತಿದೆ. ಕರ್ನಾಟಕವು ಈ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಜಮ್ಕೊದ ನೆರವಿನಿಂದ ವಿಮಾನಗಳಲ್ಲಿ ಹೊಸ ತಲೆಮಾರಿನ ಕ್ಯಾಬಿನ್ ನಾವೀನ್ಯತೆ ರೂಪಿಸಲು ನೆರವಾಗುತ್ತಿದೆ. ಜೊತೆಗೆ ವಿಶ್ವದ ಅತ್ಯಾಧುನಿಕ ವೈಮಾಂತರಿಕ್ಷ ಎಂಜಿನಿಯರಿಂಗ್ ಕೇಂದ್ರವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ’ ಎಂದು ಅವರು ಹೇಳಿದ್ದಾರೆ. ಕರ್ನಾಟಕ ಸರಕಾರವು ನೀಡುತ್ತಿರುವ ಬೆಂಬಲ ಮತ್ತು ವೈಮಾಂತರಿಕ್ಷ ಕ್ಷೇತ್ರದಲ್ಲಿನ ರಾಜ್ಯದ ನಾಯಕತ್ವವನ್ನು ಕೇಟ್ ಷೆಫರ್ ಅವರು ಶ್ಲಾಘಿಸಿದ್ದಾರೆ.

ವಾರ್ತಾ ಭಾರತಿ 17 Feb 2026 12:40 am

ರಾಜ್ಯದಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ : ಸಚಿವ ಮಹದೇವಪ್ಪ

ಬೆಂಗಳೂರು : ನಾಯಕತ್ವ ಬದಲಾವಣೆ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಹೈಕೋರ್ಟ್ ತೀರ್ಪುನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಮಹದೇವಪ್ಪ, ‘ಇಲ್ಲಿ ನಾಯಕತ್ವದ ಚರ್ಚೆ ಎಲ್ಲಿದೆ?. ಹೈಕೋರ್ಟ್ ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಎಂದು ಪದೇ ಪದೆ ಹೇಳುತ್ತಿದೆ. ರಾಜ್ಯದಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ’ ಎಂದು ಉಲ್ಲೇಖಿಸಿದ್ದು, ಈ ಕುರಿತು ಆಕ್ಷೇಪಕ್ಕೆ ಕಾರಣವಾಗಿದೆ. ಹೈಕೋರ್ಟ್ ಹೇಳಿದ್ದನ್ನು ನಾನು ಉಲ್ಲೇಖಿಸಿದೆ. ನಾನು ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ. ಹೈಕಮಾಂಡ್‍ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಬಾಲವೇ ಶ್ವಾನವನ್ನು ಅಲ್ಲಾಡಿಸಿದರೆ ಹೇಗೇ?. ಹೈಕಮಾಂಡ್‍ನವರನ್ನು ಅಲ್ಲಾಡಿಸಲು ಸಾಧ್ಯವೇ? ಎಂದು ಮಹದೇವಪ್ಪ ವಿವರಣೆ ನೀಡಿದರು. ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆಗೆ ಅವಕಾಶ ಕಲ್ಪಿಸುವ ‘ಸೆಕ್ಷನ್ 7 ಡಿ’ ತೆಗೆದು ಹಾಕಲಾಗಿದೆ ಎಂದ ಅವರು, ಅಧ್ಯಯನ ನಿಮಿತ್ತ ಪಕ್ಷದ ಕೆಲ ಶಾಸಕರು ವಿದೇಶಿ ಪ್ರವಾಸ ತೆರಳುತ್ತಿದ್ದಾರೆ. ಇದರಲ್ಲಿ ವಿಶೇಷವೇನು ಇಲ್ಲ ಎಂದು ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 17 Feb 2026 12:34 am

400 ಕೋಟಿ ರೂ. ದರೋಡೆ ಪ್ರಕರಣ | ಎಸ್‌ಐಟಿ ತನಿಖೆ ಪಾರದರ್ಶಕವಾಗಿಲ್ಲ : ಎಸ್‌ಪಿಗೆ ದೂರುದಾರನ ಪತ್ರ

ಬೆಳಗಾವಿ : ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ತಿರುವು ಸಿಕ್ಕಿದೆ. ಪ್ರಕರಣದ ದೂರುದಾರ ಸಂದೀಪ್ ದತ್ತಾ ಪಾಟೀಲ್ ಬೆಳಗಾವಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದ ಎಸ್‌ಐಟಿ ತನಿಖೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿರುವ ಸಂದೀಪ್ ಪಾಟೀಲ್, ಘಟನೆಗೆ ಸಂಬಂಧಿಸಿದ ಕೆಲವು ಆಡಿಯೊ ದಾಖಲೆಗಳು ನಮ್ಮ ಬಳಿ ಇರುವುದಾಗಿ ತಿಳಿಸಿದ್ದಾರೆ. ಆ ದಾಖಲೆಗಳ ಆಧಾರದ ಮೇಲೆ ಬೆಳಗಾವಿ ಪೊಲೀಸರು ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 17 Feb 2026 12:24 am

ಎಪ್‌ಸ್ಟೀನ್ ಫೈಲ್: ಪ್ರಧಾನಿ ಮೋದಿ ರಾಜೀನಾಮೆ ನೀಡಲಿ : ಎಸ್.ಬಾಲನ್

ಬೆಂಗಳೂರು : ಎಪ್‌ಸ್ಟೀನ್ ಫೈಲ್‌ನಲ್ಲಿ ಹೆಸರಿರುವ ಬೇರೆ ದೇಶಗಳ ನಾಯಕರು ರಾಜೀನಾಮೆ ಕೊಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ರಾಜೀನಾಮೆ ಕೊಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಜೀನಾಮೆ ನೀಡಬೇಕು. ಯಾಕೆಂದರೆ ಅವರ ಹೆಸರು ಕೂಡ ಎಪ್‌ಸ್ಟೀನ್ ಫೈಲ್‌ನಲ್ಲಿ ಬರುತ್ತಿದೆ ಎಂದು ಹಿರಿಯ ವಕೀಲ ಎಸ್.ಬಾಲನ್ ತಿಳಿಸಿದ್ದಾರೆ. ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಡಿಪಿಐ ವತಿಯಿಂದ ಆಯೋಜಿಸಿದ್ದ ‘ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್’ ಜನಾಗ್ರಹ ಸಮಾವೇಶದಲ್ಲಿ ಅವರು ಮಾತನಾಡಿದರು. ಎಪ್‌ಸ್ಟೀನ್ ಜೊತೆಗೆ ಸೇರಿಕೊಂಡು ಅಪರಾಧಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವವರು ಪೆಟ್ರೋಲಿಯಂ ಸಚಿವರಾಗಿದ್ದಾರೆ. ರಷ್ಯಾ, ಇರಾನ್‌ನಿಂದ ಕಡಿಮೆ ಬೆಲೆಗೆ ಪೆಟ್ರೋಲ್ ಕೊಟ್ಟರೆ ಬೇಡ ಎನ್ನುತ್ತಾರೆ. ಡೊನಾಲ್ಡ್ ಟ್ರಂಪ್ ಹೇಳುತ್ತಾರೆ. ಪೆಟ್ರೋಲಿಯಂ ಅನ್ನು ಅಮೇರಿಕಾದಿಂದಲೇ ಖರೀದಿ ಮಾಡಬೇಕೆಂದು, ಅದಕ್ಕೆ ನಮ್ಮ ದೇಶದ ಪ್ರಧಾನಿ ಕೂಡ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಕೇಂದ್ರ ಬಜೆಟ್‌ನಲ್ಲಿ ಎಲ್ಲ ಕಾರ್ಮಿಕರಿಗೆ 100 ಗ್ರಾಂ ಹಲ್ವಾ ಕೊಟ್ಟಿದ್ದಾರೆ. ರಾಜ್ಯದಲ್ಲಿ 1 ಲಕ್ಷದ 14 ಸಾವಿರ ಮಂದಿ ಬಿಸಿಯೂಟ ಕಾರ್ಯಕರ್ತರು ಇದ್ದಾರೆ. ಅದು ಐಸಿಡಿಎಸ್ ಯೋಜನೆ, ಬಿಸಿಯೂಟ ಕಾರ್ಯಕರ್ತೆಯರಿಗೆ ಕೇಂದ್ರ ಸರಕಾರ ತಿಂಗಳಿಗೆ ಕೇವಲ 600 ರೂ. ಕೊಡುತ್ತಿದೆ. ಅದಕ್ಕೆ ರಾಜ್ಯ ಸರಕಾರ 4000 ರೂ. ಸೇರಿಸಿ 4,600 ರೂ. ನೀಡುತ್ತದೆ ಎಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆರಿಗೆ, ನರ್ಸ್‌ಗಳಿಗೆ ಬಜೆಟ್‌ನಲ್ಲಿ ಏನಾದರೂ ಸಿಕ್ಕಿದೆಯಾ? ಎಂದರೆ ಏನೂ ಇಲ್ಲ. ದೇಶದ ಎಲ್ಲ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡಿದ್ದಾರೆ. ದೇಶದ ಸಂಪತ್ತು ಪೂರ್ತಿ ಅದಾನಿ, ಅಂಬಾನಿಗೆ ಕೊಟ್ಟಿದ್ದಾರೆ ಎಂದು ಹೇಳಿದರು. ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಬಡವರನ್ನು ಕೊನೆವರೆಗೂ ಬಡವರನ್ನಾಗಿ ಮಾಡುವುದು ಕಾಂಗ್ರೆಸ್ ಕೆಲಸ, ಧರ್ಮದ ಗಲಾಟೆಗಳನ್ನು ಹಚ್ಚುವುದೇ ಬಿಜೆಪಿ ಕೆಲಸ, ದೇಶದಲ್ಲಿ ಬಹುಸಂಖ್ಯಾತರಾದ ಮುಸ್ಲಿಮರು, ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳನ್ನು ಗುಲಾಮಗಿರಿ ಮಾಡಲು ಹಾಗೂ ಮತ ಹಾಕಲು ಮಾತ್ರ ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿ ಅಪ್ಸರ್, ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ದಲಿತ ಮುಖಂಡ ಆರ್.ಮೋಹನ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು. ಪ್ರಮುಖ ಆಗ್ರಹಗಳು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ 15 ಸಾವಿರ ಕೋಟಿ ರೂ. ಮೀಸಲಿಡಬೇಕು. ಉರ್ದು ಶಾಲೆಗಳು ಸುಧಾರಣೆ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕು. ರಾಜ್ಯದ ಎಲ್ಲ ಉರ್ದು ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಿ ಎಂದು ಆಗ್ರಹಿಸಲಾಯಿತು.

ವಾರ್ತಾ ಭಾರತಿ 17 Feb 2026 12:20 am

ವಿಜಯನಗರ | ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ

ವಿಜಯನಗರ/ಹೊಸಪೇಟೆ : ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ. 2022ರ ಜನವರಿ 19ರಂದು ಹೊಸಪೇಟೆ ಪಟ್ಟಣದಲ್ಲಿ ನಡೆದ ಘಟನೆಯ ವೇಳೆ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೆಲವರು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿತ್ತು. ಈ ಕುರಿತು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಂಡ ನಂತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 353, 341, 504, 506 ಸೇರಿದಂತೆ ವಿವಿಧ ವಿಧಿಗಳಡಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆಯಲ್ಲಿ ಸಲ್ಲಿಸಲಾದ ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಸಿಬ್ಬಂದಿಗೆ ಅಡ್ಡಿಪಡಿಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ ಎಂದು ಪೊಲೀಸ್ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 12:20 am

ಕೋಮುವಾದ ಪರಿಣಾಮ ‘ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಹಿಂದೇಟು’ : ಪ್ರಿಯಾಂಕ್ ಖರ್ಗೆ ಹೇಳಿಕೆಗೆ ದಿನೇಶ್ ಗುಂಡೂರಾವ್ ಸಮರ್ಥನೆ

ಬೆಳಗಾವಿ, ಫೆ.16: ಕೋಮುವಾದದ ಕಾರಣ ಕರಾವಳಿಯಲ್ಲಿ ಐಟಿ-ಬಿಟಿ ಕಂಪೆನಿಗಳು ಬಂಡವಾಳ ಹಾಕಲು ಹೆದರುತ್ತಿವೆ ಎಂಬ ಪ್ರಿಯಾಂಕ್ ಖರ್ಗೆ ಅವರ ಅಭಿಪ್ರಾಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಬೈಲಹೊಂಗಲದಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸೋಮವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮು ಸೌಹಾರ್ದವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರಕಾರದ ಹಲವು ಕ್ರಮಗಳ ನಂತರ ಪರಿಸ್ಥಿತಿ ಸುಧಾರಿಕೊಂಡಿವೆ, ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದು ಸರಿಯಿದೆ. ಪರಿಸ್ಥಿತಿ ಸುಧಾರಿಸಿದರೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಜನ ಬರುತ್ತಾರೆ ಎಂದು ಹೇಳಿದರು. ಸರಕಾರವು ಕಾನೂನು ಸುವ್ಯವಸ್ಥೆಯ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ, ಕಾಂಗ್ರೆಸ್ ಸರಕಾರವು ಯಾರ ಪರವಾಗಿಯೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಯಾರೇ ಆಗಲಿ ಕಾನೂನಿನ ವಿರುದ್ದ ಕೆಲಸ ಮಾಡಿದರೆ ಅಂತವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಹಾಗು ಇದರಿಂದಾಗಿ ಕೆಲವು ಸುಧಾರಣೆಗಳು ಯಾಗಿವೆ, ಇನ್ನು ಪ್ರವಾಸೋದ್ಯಮದ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರಕಾರ ಇದರ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಒತ್ತು ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರಾವಳಿ ಕರ್ನಾಟಕಕ್ಕೆ ಭೇಟಿ ನೀಡಿ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿದ್ದರು. ಮಂಗಳೂರಿನಲ್ಲಿ ಫೈವ್ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಕರಾವಳಿ ಭಾಗದ ಮಂಗಳೂರಿನಲ್ಲಿ ಹೂಡಿಕೆಯಿಂದ ಸಾಕಷ್ಟು ಆಕರ್ಷಿಸಿಸುವ ಪ್ರಯತ್ನ ಮಾಡಬಹುದಾಗಿದೆ. ಆದರೆ ಇಲ್ಲಿ ಕೋಮವಾದ ವಾತಾವರಣ ಇರುವುದರಿಂದ ಈ ಪ್ರದೇಶವು ಸ್ವಲ್ಪಮಟ್ಟಿಗೆ ಹಿಂದುಳಿದಿರುವುದಕ್ಕೆ ಕಾರಣವಾಗಿದೆ. ಇದರ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮೊದಲು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 17 Feb 2026 12:16 am

ಬಳ್ಳಾರಿ | ಬೇಸಿಗೆಯಲ್ಲಿ ವಾಂತಿ-ಬೇಧಿ ತಡೆಗೆ ಕುದಿಸಿ ಆರಿಸಿದ ನೀರು ಕುಡಿಯಿರಿ: ಡಾ. ಯಲ್ಲಾ ರಮೇಶ್‌ಬಾಬು

ಬಳ್ಳಾರಿ : ಸಾರ್ವಜನಿಕರು ಕುದಿಸಿ ಆರಿಸಿ ಸೋಸಿದ ನೀರನ್ನು ಮಾತ್ರ ಕುಡಿಯಬೇಕು. ಇದರಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್‌ಬಾಬು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಾತ್ರೆ ಹಾಗೂ ಉತ್ಸವಗಳ ಸಂದರ್ಭದಲ್ಲಿ ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ವಾಂತಿ-ಬೇಧಿ, ಟೈಫಾಯಿಡ್, ಕಾಲರಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ. ವಾಂತಿ-ಬೇಧಿ ಲಕ್ಷಣಗಳು ಕಂಡುಬಂದಲ್ಲಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಓಆರ್‌ಎಸ್ (ಜೀವಜಲ) ತಯಾರಿಸುವಾಗ 1 ಲೀಟರ್ ನೀರಿಗೆ ಆರೋಗ್ಯ ಇಲಾಖೆಯಿಂದ ನೀಡುವ ಸಂಪೂರ್ಣ ಪೊಟ್ಟಣದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ದ್ರಾವಣವನ್ನು 24 ಗಂಟೆಗಳೊಳಗೆ ಬಳಸಬೇಕು ಎಂದು ತಿಳಿಸಿದ್ದಾರೆ. ಕಲುಷಿತ ನೀರಿನಿಂದ ವಾಂತಿ-ಬೇಧಿ, ಕಾಲರಾ, ಟೈಫಾಯಿಡ್, ಹೆಪಟೈಟಿಸ್-ಎ, ಗಿಯಾರ್ಡಿಯಾ, ಸಾಲ್ಮೋನೆಲ್ಲಾ, ಶಿಗೆಲ್ಲೋಸಿಸ್, ಅಮೀಬಿಯಾಸಿಸ್, ಇ-ಕೋಲಿ ಮುಂತಾದ ರೋಗಗಳು ಹರಡುತ್ತವೆ. ಸಾರ್ವಜನಿಕರು ಶುದ್ಧೀಕರಿಸಿದ ನೀರನ್ನೇ ಬಳಸಬೇಕು ಎಂದು ಸೂಚಿಸಿದ್ದಾರೆ. ಮಲ-ಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೇ ಬಳಸಬೇಕು. ತಾಜಾ ಆಹಾರವನ್ನು ಮಾತ್ರ ಸೇವಿಸಬೇಕು. ತಯಾರಿಸಿದ ಆಹಾರವನ್ನು ಮುಚ್ಚಿ ಇಡಬೇಕು. ಕುಡಿಯುವ ನೀರಿನ ಪಾತ್ರೆಗಳಿಗೆ ಮುಚ್ಚಳ ಹಾಕಿ, ನಳ ಇರುವ ಪಾತ್ರೆಗಳನ್ನು ಬಳಸಬೇಕು. ನೀರಿನಲ್ಲಿ ಕೈ ಅದ್ದುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ. ರಸ್ತೆ ಬದಿಯಲ್ಲಿ ತೆರೆದಿಟ್ಟ ಅಥವಾ ಕತ್ತರಿಸಿದ ಹಣ್ಣುಗಳನ್ನು ತಿನ್ನಬಾರದು. ವಾಂತಿ-ಬೇಧಿ ಅಥವಾ ಕಾಲರಾ ಸೋಂಕಿತರಿಗೆ ಗಂಜಿ, ಬೇಳೆ ತಳಿ, ನಿಂಬು ಪಾನಕ ಹಾಗೂ ಎಳೆನೀರು ನೀಡುವುದು ಒಳಿತು. ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು ಎಂದು ಅವರು ಹೇಳಿದ್ದಾರೆ. ಮೇಲ್ಕಂಡ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಾರ್ವಜನಿಕರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಡಾ. ಯಲ್ಲಾ ರಮೇಶ್‌ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 12:11 am

ಶಾಸಕರ ಪ್ರವಾಸದಲ್ಲಿ ತಪ್ಪಿಲ್ಲ, ನಾವು ಒಂದಾಗಿದ್ದೇವೆ : ದಿನೇಶ್ ಗುಂಡೂರಾವ್

ಬೆಳಗಾವಿ : ‘ನಮ್ಮ ಶಾಸಕರು ‘‘ಹಾಲಿಡೇ’’ ಪ್ರವಾಸಕ್ಕೆ ಹೋದರೆ ತಪ್ಪೇನು? ಅದು ಅವರವರ ಇಷ್ಟದ ಪ್ರವಾಸ. ನಾವೆಲ್ಲ ಒಂದಾಗಿದ್ದೇವೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ‘ಸಾವಿರ ದಿನ ಪೂರೈಸಿದ ಕಾರ್ಯಕ್ರಮವನ್ನು ಹಾವೇರಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ನಡೆಸಿದ್ದೇವೆ. ಅದೇ ನಮ್ಮ ಏಕತೆಯ ಸಾಕ್ಷಿ’ ಎಂದರು. ಯತೀಂದ್ರ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೈಕ್ ಮುಂದೆ ಬಂದಾಗ ಕೆಲವೊಮ್ಮೆ ಅನಿರೀಕ್ಷಿತವಾಗಿ ಕೆಲವು ಮಾತುಗಳು ಬರುತ್ತವೆ. ಅದೇ ರೀತಿಯ ಹೇಳಿಕೆಯನ್ನು ಯತೀಂದ್ರ ನೀಡಿರಬಹುದು. ಈ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ಅವರೇ ಅಂತಿಮವಾಗಿ ಹೇಳಿಕೆ ನೀಡಿದ್ದಾರೆ’ ಎಂದು ತಿಳಿಸಿದರು. ಕರಾವಳಿಯಲ್ಲಿ ಕೋಮು ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆಗೆ ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಆರೋಪದ ಕುರಿತು ಪ್ರಶ್ನಿಸಿದಾಗ, ‘ನಮ್ಮ ಸರಕಾರ ಬಂದ ನಂತರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗ ಅಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಬಂಡವಾಳ ಹೂಡಿಕೆ ಆಗುವಂತೆ ಪ್ರಯತ್ನಿಸುತ್ತಿದ್ದೇವೆ’ ಎಂದರು. ‘ಆರೆಸ್ಸೆಸ್ ದೆವ್ವ ಇದ್ದಂತೆ’ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಕೇಳಿದಾಗ, ‘ಆ ವಿಷಯದ ಬಗ್ಗೆ ಅವರನ್ನೇ ಕೇಳಿ. ನನಗೆ ಪೂರ್ಣ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ವಾರ್ತಾ ಭಾರತಿ 17 Feb 2026 12:06 am

ವಿಜಯನಗರ | ಹಂಪಿ ಉತ್ಸವದ ಯಶಸ್ಸಿಗೆ ಶ್ರಮಿಸಿದ 134 ಪೌರಕಾರ್ಮಿಕರಿಗೆ ಹೆಲಿಕಾಪ್ಟರ್ ಸವಾರಿ

ವಿಜಯನಗರ / ಹಂಪಿ: ವಿಶ್ವಪ್ರಸಿದ್ಧ ಹಂಪಿ ಉತ್ಸವದ ಯಶಸ್ಸಿಗೆ ಮಹತ್ವದ ಪಾತ್ರವಹಿಸಿದ 134 ಪೌರಕಾರ್ಮಿಕರಿಗೆ ವಿಶೇಷ ಗೌರವವಾಗಿ ಹೆಲಿಕಾಪ್ಟರ್ ಸವಾರಿ ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ಉತ್ಸವದ ಅವಧಿಯಲ್ಲಿ ಹಂಪಿ ಪ್ರದೇಶವನ್ನು ಸ್ವಚ್ಛವಾಗಿಡಲು ದಿನರಾತ್ರಿ ಶ್ರಮಿಸಿ ಕಸ ವಿಲೇವಾರಿ ಸೇರಿದಂತೆ ವಿವಿಧ ಸ್ವಚ್ಛತಾ ಕಾರ್ಯಗಳನ್ನು ನಿಭಾಯಿಸಿದ ಪೌರಕಾರ್ಮಿಕರ ಸೇವೆಯನ್ನು ಮೆಚ್ಚಿ ಈ ಗೌರವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ ಅವರ ಪ್ರೇರಣೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೆರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ನಿರ್ದೇಶಕ ಮನೋಹರ್ ಹಾಗೂ ನಗರಸಭೆ ಪೌರಾಯುಕ್ತ ಶಿವಕುಮಾರ್ ಅವರ ನೇತೃತ್ವದಲ್ಲಿ ಈ ವಿಶೇಷ ಗೌರವ ನೀಡಲಾಯಿತು. ಹಂಪಿ ಉತ್ಸವದಲ್ಲಿ ಸೇವೆ ಸಲ್ಲಿಸಿದ 134 ಪೌರಕಾರ್ಮಿಕರಿಗೆ ಹೆಲಿಕಾಪ್ಟರ್ ಮೂಲಕ ಹಂಪಿ ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಇದು ಅವರ ಜೀವನದಲ್ಲಿ ಮರೆಯಲಾಗದ ಅನುಭವವಾಗಿ ಪರಿಣಮಿಸಿತು. ಪೌರಕಾರ್ಮಿಕರ ಪರಿಶ್ರಮಕ್ಕೆ ಸಮಾಜ ಕೃತಜ್ಞತೆ ಸಲ್ಲಿಸುವ ಸಂದೇಶವನ್ನು ಈ ಕಾರ್ಯಕ್ರಮ ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಉತ್ಸವದ ಯಶಸ್ಸಿಗೆ ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರ ಶ್ರಮವನ್ನು ಗುರುತಿಸಿ ಗೌರವಿಸುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು. ಹೆಲಿಕಾಪ್ಟರ್ ಸವಾರಿ ಅವಕಾಶ ಪಡೆದ ಪೌರಕಾರ್ಮಿಕರು ಸಂತಸ ವ್ಯಕ್ತಪಡಿಸಿ, ತಮ್ಮ ಸೇವೆಯನ್ನು ಮತ್ತಷ್ಟು ನಿಷ್ಠೆಯಿಂದ ಮುಂದುವರಿಸುವುದಾಗಿ ಹೇಳಿದರು. ಹಂಪಿ ಉತ್ಸವದಲ್ಲಿ ಪೌರಕಾರ್ಮಿಕರಿಗೆ ನೀಡಿದ ಈ ವಿಶಿಷ್ಟ ಗೌರವ ಕಾರ್ಯಕ್ರಮ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು.

ವಾರ್ತಾ ಭಾರತಿ 17 Feb 2026 12:01 am

ಬಳ್ಳಾರಿ | ಯಾದಗಿರಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ವಿಜಯ್ ಭರತ್ ನೇಮಕ

ಬಳ್ಳಾರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಯಾದಗಿರಿ ಜಿಲ್ಲೆಗೆ ಅಧ್ಯಕ್ಷರಾಗಿ ವಿಜಯ್ ಭರತ್ ಅವರನ್ನು ನೇಮಕ ಮಾಡಲಾಗಿದೆ. ವಿಜಯ್ ಭರತ್ ಅವರು ಹಲವು ವರ್ಷಗಳಿಂದ ರೈತ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದು, ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿದ್ದಾರೆ. ಕಳಪೆ ಬೀಜ ಮತ್ತು ಗೊಬ್ಬರದಿಂದ ರೈತರು ಅನುಭವಿಸುತ್ತಿರುವ ನಷ್ಟ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾಗುತ್ತಿರುವ ಸಂಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ತೊಗರಿ, ಕಬ್ಬು, ಸೇಂಗಾ ಸೇರಿದಂತೆ ವಿವಿಧ ಆಹಾರ ಮತ್ತು ವಾಣಿಜ್ಯ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಹೋರಾಟಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ವಿಜಯ್ ಭರತ್ ಅವರ ರೈತ ಪರ ಕಾಳಜಿಯನ್ನು ಗಮನಿಸಿ ಅವರನ್ನು ಯಾದಗಿರಿ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಸಂಘದ ಅಧ್ವರ್ಯರು ತಿಳಿಸಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ವರುಣ ಮತಕ್ಷೇತ್ರದ ತಾಂಡವಪುರ ಗ್ರಾಮದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 90ನೇ ಜನ್ಮದಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಭರತ್ ಅವರಿಗೆ ಈ ಜವಾಬ್ದಾರಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಎಂ. ಸುಬೇದಾರ ಸಗರ, ರಾಜ್ಯ ಉಪಾಧ್ಯಕ್ಷ ಶಿವಾನಂದ ಮುಗಳಿಹಾಳ, ರಾಜ್ಯ ಉಪಾಧ್ಯಕ್ಷ ವಿದ್ಯಾಸಾಗರ ರಾಮೇಗೌಡ ಇಮ್ಮಾವು, ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 11:59 pm

ಕೊಟ್ಟೂರು | ಸಂತ ಸೇವಾಲಾಲ್ ಜಯಂತಿ ಆಚರಣೆ

ವಿಜಯನಗರ/ಕೊಟ್ಟೂರು: ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ “ಶ್ರೀ ಸಂತ ಸೇವಾಲಾಲ್ ಜಯಂತಿ” ಕಾರ್ಯಕ್ರಮವನ್ನು ಆಚರಿಸಲಾಯಿತು. ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಹಶೀಲ್ದಾರ್ ಅಮರೇಶ್ ಜಿ.ಕೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿ ಸಂತ ಸೇವಾಲಾಲ್ ಅವರ ಸಮಾಜ ಸೇವೆ ಮತ್ತು ತತ್ವಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ದೂಪದಹಳ್ಳಿ ಹಟ್ಟಿ ನಾಯ್ಕ ಸೋಮ್ಲನಾಯ್ಕ, ಕೊಟ್ಟೂರಿನ ದೇವೇಂದ್ರನಾಯ್ಕ, ತಿಮ್ಮಲಾಪುರ ತಾಂಡದ ಶೇಖರನಾಯ್ಕ, ಕೃಷ್ಣನಾಯ್ಕ, ಬಾಲಾನಾಯ್ಕ, ರಮೇಶನಾಯ್ಕ, ಶಿರಸ್ತೇದಾರ್ ಚಂದ್ರನಾಯ್ಕ, ಉಪ ತಹಶೀಲ್ದಾರ್ ಅನ್ನದಾನೇಶ ಬಿ. ಪತ್ತಾರ್, ಕಂದಾಯ ನಿರೀಕ್ಷಕ ಡಿ. ಶಿವಕುಮಾರ್, ಗ್ರಾಮ ಆಡಳಿತಾಧಿಕಾರಿ ಹರೀಶ್, ಭೂಮಾಪನ ಸಿಬ್ಬಂದಿ ಬಸವರಾಜ, ನಾಗರಾಜ, ಗೌರಮ್ಮ ಪ್ರದಸ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಿ.ಎಂ. ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.

ವಾರ್ತಾ ಭಾರತಿ 16 Feb 2026 11:55 pm

ಐಎಎಸ್, ಐಪಿಎಸ್ ಮತ್ತು IFSಗಳಲ್ಲಿ 2,800 ಕ್ಕೂ ಹೆಚ್ಚು ಹುದ್ದೆಗಳು ಖಾಲಿ; 2020ರಿಂದ ಈ ಹುದ್ದೆಗಳಿಗೆ ನೇಮಕಗೊಂಡಿರುವ SC, ST ಮತ್ತು OBC ಅಧಿಕಾರಿಗಳೆಷ್ಟು?

ಕೇಂದ್ರ ಸರ್ಕಾರ ಗುರುವಾರ ಸಂಸತ್ತಿನ ಮುಂದೆ ಅನುಮೋದಿತ ಹುದ್ದೆ, ಹುದ್ದೆಯಲ್ಲಿರುವ ಅಧಿಕಾರಿಗಳ ಸಂಖ್ಯೆ ಮತ್ತು ವರ್ಗವಾರು ನೇರ ನೇಮಕಾತಿಯ ನವೀಕರಿಸಿದ ಡೇಟಾವನ್ನು ಮಂಡಿಸಿದೆ. ಕೇಂದ್ರ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜನವರಿ 1, 2025 ರಂದು ಸಂಗ್ರಹಿಸಲಾದ ನಾಗರಿಕ ಪಟ್ಟಿಯ ಪ್ರಕಾರ ಭಾರತದ ನಾಗರಿಕ ಸೇವೆಗಳಲ್ಲಿ ಪ್ರಸ್ತುತ ಒಟ್ಟು 2,834 ಹುದ್ದೆಗಳು ಖಾಲಿ ಇವೆ. ಇಲಾಖೆವಾರು ವಿವರ ಹೀಗಿದೆ: ಐಎಎಸ್ - 1,300 ಹುದ್ದೆಗಳು , ಐಎಫ್‌ಎಸ್ - 1,029 ಹುದ್ದೆಗಳು, ಐಪಿಎಸ್ - 505 ಹುದ್ದೆಗಳು ಅನುಬಂಧ A ಪ್ರಕಾರ 6,877 ಐಎಎಸ್ ಹುದ್ದೆಗಳಲ್ಲಿ 5,577 ಭರ್ತಿಯಾಗಿವೆ. 5,099 ಐಪಿಎಸ್ ಹುದ್ದೆಗಳಲ್ಲಿ 4,594 ಭರ್ತಿಯಾಗಿದೆ ಮತ್ತು ಐಎಫ್‌ಎಸ್ 3,193 ಹುದ್ದೆಗಳಲ್ಲಿ 2,164 ಭರ್ತಿಯಾಗಿವೆ. ಇದು ಸೇವೆಗಳು ಮತ್ತು ರಾಜ್ಯಗಳಲ್ಲಿ ಮಂಜೂರಾದ ಮತ್ತು ಭರ್ತಿಯಾದ ಹುದ್ದೆಗಳ ನಡುವಿನ ಒಟ್ಟಾರೆ ಅಂತರವನ್ನು ತೋರಿಸುತ್ತವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು AGMUT ಕೇಡರ್ (ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ-ಕೇಂದ್ರಾಡಳಿತ ಪ್ರದೇಶಗಳು) ಐಎಎಸ್ ಮತ್ತು ಐಪಿಎಸ್‌ಗಳಲ್ಲಿ ಅತಿ ಹೆಚ್ಚು ಅನುಮೋದಿತ ಹುದ್ದೆಗಳನ್ನು ಹೊಂದಿವೆ. ಐಎಫ್‌ಎಸ್‌ನಲ್ಲಿ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು AGMUT ಹಲವಾರು ಇತರ ಕೇಡರ್‌ಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಹೆಚ್ಚಿನ ಹುದ್ದೆಗಳನ್ನು ತೋರಿಸುತ್ತವೆ. https://docs.google.com/spreadsheets/d/1sSYWHo7kGA6H9jbXb_bbPkoFa0SUNy-BZ-M5m7gJ0Gw/edit?usp=sharing ► ಮೀಸಲು ವರ್ಗಗಳಿಂದ ನೇರ ನೇಮಕಾತಿ CSE 2020 ರಿಂದ CSE 2024 ರವರೆಗೆ ನಾಗರಿಕ ಸೇವಾ ಪರೀಕ್ಷೆಯ ಮೂಲಕ IAS, IPS ಮತ್ತು IFS ಗೆ ನೇರ ನೇಮಕಾತಿಗಳಾಗಿ ನೇಮಕಗೊಂಡ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳ ಡೇಟಾವನ್ನು ಅನುಬಂಧ B ಒದಗಿಸುತ್ತದೆ. ಇದರ ಪ್ರಕಾರ ಐಎಎಸ್‌ನಲ್ಲಿ 245 ಒಬಿಸಿ, 135 ಎಸ್‌ಸಿ ಮತ್ತು 67 ಎಸ್‌ಟಿ ಅಭ್ಯರ್ಥಿಗಳನ್ನು ನೇಮಿಸಲಾಯಿತು. ಐಪಿಎಸ್‌ನಲ್ಲಿ255 ಒಬಿಸಿ, 141 ಎಸ್‌ಸಿ ಮತ್ತು 71 ಎಸ್‌ಟಿ ಅಭ್ಯರ್ಥಿಗಳು ಮತ್ತು ಐಎಫ್‌ಎಸ್‌ನಲ್ಲಿ 231 ಒಬಿಸಿ, 95 ಎಸ್‌ಸಿ ಮತ್ತು 48 ಎಸ್‌ಟಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ► 66% ನೈರ್ಮಲ್ಯ ಕಾರ್ಮಿಕರು ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರು ಕೇಂದ್ರ ಸರ್ಕಾರದಾದ್ಯಂತ ನೇಮಕಗೊಂಡಿರುವ ಗ್ರೂಪ್ ಸಿ ಸಫಾಯಿ ಕರ್ಮಚಾರಿಗಳಲ್ಲಿ ಶೇ.66 ಕ್ಕಿಂತ ಹೆಚ್ಚು ಜನರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಅಥವಾ ಇತರ ಹಿಂದುಳಿದ ವರ್ಗದವರು (OBC) ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) 2024-25ರ ವಾರ್ಷಿಕ ವರದಿಯ ಮೀಸಲಾತಿ ದತ್ತಾಂಶ ತೋರಿಸಿದೆ. ಕೇಂದ್ರ ಸರ್ಕಾರದ ಎಲ್ಲಾ ಗುಂಪುಗಳ ಹುದ್ದೆಗಳಿಗೆ ನೇರ ನೇಮಕಾತಿಯ ಕುರಿತಾದ ಡಿಒಪಿಟಿ ನಿಯಮಗಳ ಪ್ರಕಾರ ಎಸ್‌ಸಿಗಳಿಗೆ 15%, ಎಸ್‌ಟಿಗಳಿಗೆ 7.5%, ಒಬಿಸಿಗಳಿಗೆ 27% ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಸ್ಥಾನಗಳನ್ನು ಮೀಸಲಿಡಬೇಕಾಗುತ್ತದೆ. 2026 ಜನವರಿಯಲ್ಲಿ ಬಿಡುಗಡೆಯಾದ ವರದಿಯಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಎಲ್ಲಾ ಗ್ರೂಪ್ ಎ ಹುದ್ದೆಗಳಲ್ಲಿ 14.20% ಎಸ್‌ಸಿಗಳು, 6.54% ಎಸ್‌ಟಿಗಳು ಮತ್ತು 19.14% ಒಬಿಸಿಗಳು ಇದ್ದಾರೆ ಎಂದು ಇದು ತೋರಿಸಿದೆ. ಕೇಂದ್ರ ಸರ್ಕಾರದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ನೌಕರರ ಪ್ರಾತಿನಿಧ್ಯದ ಕುರಿತಾದ 2024-25 ರ ಡಿಒಪಿಟಿ ವಾರ್ಷಿಕ ವರದಿಯ ದತ್ತಾಂಶವು, ಗ್ರೂಪ್ ಸಿ ಹುದ್ದೆಗಳಲ್ಲಿ (ಸಫಾಯಿ ಕರ್ಮಚಾರಿಗಳನ್ನು ಹೊರತುಪಡಿಸಿ) 16.75% ಎಸ್‌ಸಿಗಳು, 8.94% ಎಸ್‌ಟಿಗಳು ಮತ್ತು 27.29% ಒಬಿಸಿಗಳು ಎಂದು ತೋರಿಸಿದೆ. ಗ್ರೂಪ್ ಬಿ ಹುದ್ದೆಗಳಲ್ಲಿ, ಎಸ್‌ಸಿಗಳು 16.20%, ಎಸ್‌ಟಿಗಳು 7.63% ಮತ್ತು ಒಬಿಸಿಗಳು 21.95% ಇದ್ದಾರೆ. ಒಟ್ಟಾರೆಯಾಗಿ, ಇತ್ತೀಚಿನ ವರದಿಯು 80 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 32.52 ಲಕ್ಷ ಕೇಂದ್ರ ಸರ್ಕಾರಿ ನೌಕರರಲ್ಲಿ, ಎಸ್‌ಸಿಗಳ ಪ್ರಾತಿನಿಧ್ಯ 16.84%, ಎಸ್‌ಟಿಗಳ ಪ್ರಾತಿನಿಧ್ಯ 8.70% ಮತ್ತು ಒಬಿಸಿಗಳ ಪ್ರಾತಿನಿಧ್ಯ 26.32% ಇದೆ ಎಂದು ತೋರಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರದಲ್ಲಿ ಇಡಬ್ಲ್ಯೂಎಸ್ ಉದ್ಯೋಗಿಗಳ ಪ್ರಾತಿನಿಧ್ಯದ ಕುರಿತು ವರದಿಯು ಯಾವುದೇ ಡೇಟಾವನ್ನು ಒದಗಿಸಿಲ್ಲ. 2018-19ರ ವಾರ್ಷಿಕ ವರದಿಯ ನಂತರ ಇದೇ ಮೊದಲ ಬಾರಿಗೆ ಡಿಒಪಿಟಿ ತನ್ನ ಹೆಚ್ಚಿನ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಪ್ರಾತಿನಿಧ್ಯದ ಡೇಟಾವನ್ನು ಬಿಡುಗಡೆ ಮಾಡಿದೆ. 2019 ರಿಂದ ವಾರ್ಷಿಕ ವರದಿಗಳಲ್ಲಿ, ಡಿಒಪಿಟಿ ಕೇಂದ್ರ ಸರ್ಕಾರಿ ನೌಕರರ ಭಾಗಶಃ ಡೇಟಾವನ್ನು ಲೆಕ್ಕ ಹಾಕುತ್ತಿದೆ. ಇದು ಒಟ್ಟು 19-20 ಲಕ್ಷ ಉದ್ಯೋಗಿಗಳ ಪ್ರಾತಿನಿಧ್ಯ ಅಂಕಿಅಂಶಗಳನ್ನು ತೋರಿಸುತ್ತದೆ. ಸಂಸದೀಯ ಸಮಿತಿಗಳಿಗೆ ನೀಡಿದ ಹೇಳಿಕೆಗಳಲ್ಲಿ, ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಸಮಯಕ್ಕೆ ಸರಿಯಾಗಿ ಡೇಟಾವನ್ನು ಒದಗಿಸಲು ಸಾಧ್ಯವಾಗದ ಕಾರಣ ಈ ಕೊರತೆ ಉಂಟಾಗುತ್ತಿದೆ ಎಂದು ಡಿಒಪಿಟಿ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ, 2018-19ರ ದತ್ತಾಂಶಕ್ಕೆ ಹೋಲಿಸಿದರೆ ಕೇಂದ್ರ ಸರ್ಕಾರದಲ್ಲಿ ವಿವಿಧ ಸಾಮಾಜಿಕ ಗುಂಪುಗಳ ಪ್ರಾತಿನಿಧ್ಯ ಬದಲಾಗಿದೆ. 78 ಸಚಿವಾಲಯಗಳಲ್ಲಿ 3.2 ಮಿಲಿಯನ್ ಉದ್ಯೋಗಿಗಳ ಸಂಖ್ಯೆ ದೊಡ್ಡದಾಗಿದ್ದರೂ, ಸಿಬ್ಬಂದಿಗಳ ಶೇಕಡಾವಾರು ಪ್ರಮಾಣವು ಈ ಕೆಳಗಿನಂತೆ ಬದಲಾಗಿದೆ: ಎಸ್‌ಸಿ ಪ್ರಾತಿನಿಧ್ಯ: 17.49% ರಿಂದ 16.84% ಕ್ಕೆ ಇಳಿದಿದೆ. ಎಸ್‌ಟಿ ಪ್ರಾತಿನಿಧ್ಯ: 8.47% ರಿಂದ 8.94% ಕ್ಕೆ ಸ್ವಲ್ಪ ಹೆಚ್ಚಾಗಿದೆ. ಒಬಿಸಿ ಪ್ರಾತಿನಿಧ್ಯ: 21.57% ರಿಂದ 26.32% ಕ್ಕೆ ಏರಿದೆ ಕೇಂದ್ರ ಸರ್ಕಾರದ ಎಲ್ಲಾ ಗುಂಪುಗಳ ಹುದ್ದೆಗಳಿಗೆ ನೇರ ನೇಮಕಾತಿ ಕುರಿತಾದ DoPT ನಿಯಮಗಳ ಪ್ರಕಾರ, SC ಗಳಿಗೆ 15%, ST ಗಳಿಗೆ 7.5%, OBC ಗಳಿಗೆ 27% ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಸೀಟುಗಳನ್ನು ಮೀಸಲಿಡಬೇಕು ಈ ಹಿಂದೆ ಶೌಚಗುಂಡಿ ಕೆಲಸದಲ್ಲಿ ತೊಡಗಿರುವ ಶೇ. 97 ರಷ್ಟು ಜನರು ಪರಿಶಿಷ್ಟ ಜಾತಿಗಳಿಂದ ಬಂದವರು ಎಂದು ಸರ್ಕಾರ ಸಂಸತ್ತಿಗೆ ತಿಳಿಸಿತ್ತು. 2021 ಡಿಸೆಂಬರ್ ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿರುವವರ ಧರ್ಮ ಮತ್ತು ಜಾತಿ ಹಿನ್ನೆಲೆಯ ಬಗ್ಗೆ ಸರ್ಕಾರ ಯಾವುದೇ ನಿರ್ದಿಷ್ಟ ಅಧ್ಯಯನವನ್ನು ನಡೆಸಿಲ್ಲವಾದರೂ ಕೈಯಿಂದ ಶೌಚಗುಂಡಿಗಳ ಕೆಲಸ ಮಾಡುವುದನ್ನು ನಿಷೇಧಿಸುವ ಮತ್ತು ಅವರ ಪುನರ್ವಸತಿ ಕಾಯ್ದೆ, 2013 ರ ನಿಬಂಧನೆಗಳ ಅಡಿಯಲ್ಲಿ ಕೈಯಿಂದ ಶೌಚಗುಂಡಿ ಸ್ವಚ್ಛ ಮಾಡುವ 58,098 ಕಾರ್ಮಿಕರನ್ನು ಗುರುತಿಸಲಾಗಿದೆ ಎಂದು ಹೇಳಿದ್ದರು. ಈ ಪೈಕಿ 43,797 ವ್ಯಕ್ತಿಗಳ ಜಾತಿ ದತ್ತಾಂಶ ಲಭ್ಯವಿದ್ದು, ಅವರಲ್ಲಿ 42,594 ಎಸ್‌ಸಿಗಳು, 421 ಎಸ್‌ಟಿಗಳು, 431 ಒಬಿಸಿಗಳು ಮತ್ತು 351 ಇತರರು ಸೇರಿದ್ದಾರೆ. ►ಕೇಂದ್ರದಲ್ಲಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯ 2022ರಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಡೇಟಾ ಪ್ರಕಾರ ಭಾರತ ಸರ್ಕಾರದಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ ಹುದ್ದೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಧಿಕಾರಿಗಳ ಪ್ರಾತಿನಿಧ್ಯ ಕ್ರಮವಾಗಿ ಶೇ. 4 ಮತ್ತು ಶೇ. 4.9 ರಷ್ಟಿದೆ. ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ ಕೇಂದ್ರ ಸಿಬ್ಬಂದಿ ಯೋಜನೆಯಡಿ ಜಂಟಿ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಹುದ್ದೆಗಳನ್ನು ಹೊಂದಿರುವ ಒಟ್ಟು 322 ಅಧಿಕಾರಿಗಳಲ್ಲಿ ಎಸ್‌ಸಿ 16, ಎಸ್‌ಟಿ 13, ಇತರ ಹಿಂದುಳಿದ ವರ್ಗಗಳು (ಒಬಿಸಿ )39 ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದವರು 254 ಅಧಿಕಾರಿಗಳು ಇದ್ದಾರೆ. 75 ಸಚಿವಾಲಯಗಳು ಮತ್ತು ಇಲಾಖೆಗಳಿಂದ ಬಂದ ಮಾಹಿತಿಯ ಪ್ರಕಾರ, ಗ್ರೂಪ್ ಎ ಹುದ್ದೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಧಿಕಾರಿಗಳ ಶೇಕಡಾವಾರು ಪ್ರಮಾಣ ಕ್ರಮವಾಗಿ 13.21%, 6.01% ಮತ್ತು 18.07% ಇದೆ.

ವಾರ್ತಾ ಭಾರತಿ 16 Feb 2026 11:52 pm

ಸಾಮಾಜಿಕ ನ್ಯಾಯದ ಹಾದಿಯಲ್ಲಿ ಕಾಂಗ್ರೆಸ್ ಸರಕಾರ: ಸಚಿವ ಶರಣಬಸಪ್ಪಗೌಡ ದರ್ಶನಾಪುರ

ಕೆಂಭಾವಿಯಲ್ಲಿ 6ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ

ವಾರ್ತಾ ಭಾರತಿ 16 Feb 2026 11:47 pm

Kalaburagi | ಶುಕ್ಲಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ

ಕಲಬುರಗಿ : ನಗರದ ಶಹಬಜಾರ್ ನಾಕದಲ್ಲಿರುವ ಶುಕ್ಲಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಬತ್ತನೇ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ಹಾಗೂ ಶಿಕ್ಷಕಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪರಿತೋಷಕ ನೀಡಿ ಸತ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ವಿನಯ್ ಶುಕ್ಲಾ, ಸಂಸ್ಥೆಯ ಕಾರ್ಯದರ್ಶಿ ವರ್ಷಾ ಶುಕ್ಲಾ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಜಪೂತ ಸಮಾಜದ ಜಿಲ್ಲಾ ಅಧ್ಯಕ್ಷ ಸಂಜಯ್ ಸಿಂಗ್, ಇಂದಿನ ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚುತ್ತಿರುವುದರಿಂದ ಓದಿನಲ್ಲಿ ಹಿನ್ನಡೆಯಾಗುತ್ತಿದೆ. ಪಾಲಕರು ಮಕ್ಕಳ ಮೊಬೈಲ್ ಬಳಕೆಯ ಮೇಲೆ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಅತಿಥಿಗಳಾಗಿ ಪ್ರಮೋದ್ ತಿವಾರಿ, ರಾಜೇಶ್ ಪಾಂಡೆ, ಮುಖ್ಯಗುರು ವಸಂತರಾವ ಹಾಗೂ ಶಾಲೆಯ ಸಿಬ್ಬಂದಿಗಳಾದ ಸ್ವರೂಪ ರಾಣಿ, ಕವಿತಾ ಘನಾತೆ, ಅಶ್ವಿನಿ, ಸಂಗೀತಾ, ಶಿವಾನಿ, ಪೂಜಾ ಪಾಟೀಲ್, ಸ್ನೇಹ, ಸುಷ್ಮಾ, ಭಾಗ್ಯಶ್ರೀ, ಸೌಮ್ಯ, ಗಿರಿಜಾ, ಶೀತಲ್, ಶೀಲಾ ಸೇರಿದಂತೆ ಹಲವಾರು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಾರ್ತಾ ಭಾರತಿ 16 Feb 2026 11:39 pm

ಕಲಬುರಗಿಯನ್ನು ಉಪರಾಜಧಾನಿಯನ್ನಾಗಿ ಘೋಷಿಸಿ : ಸಾಹಿತಿ ಮುಡುಬಿ ಗುಂಡೇರಾವ್‌

22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ವಾರ್ತಾ ಭಾರತಿ 16 Feb 2026 11:35 pm

ವಿಟ್ಲ| ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ 'ಅಹ್ಲನ್ ರಮದಾನ್' ಕಾರ್ಯಕ್ರಮ

ವಿಟ್ಲ,: ಜಮಾಅತೆ ಇಸ್ಲಾಮೀ ಹಿಂದ್, ವಿಟ್ಲ ವತಿಯಿಂದ ಇಲ್ಲಿನ ಬ್ರೈಟ್ ಆಡಿಟೋರಿಯಂನ ಸಭಾಂಗಣದಲ್ಲಿ 'ಅಹ್ಲನ್ ರಮದಾನ್' ಹೆಸರಿನಲ್ಲಿ ಪವಿತ್ರ ಮಾಸದ ಸಿದ್ಧತೆಗಾಗಿ ರಮಝಾನ್ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಮಾಅತೆ ಇಸ್ಲಾಮೀ ಹಿಂದ್, ಸ್ಥಾನೀಯ ಸಮಿತಿಯ ಅಧ್ಯಕ್ಷರಾಗಿರುವ ಜನಾಬ್ ಯಾಸೀನ್ ಬೇಗ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಜನಾಬ್ ಉಮರ್ ಮೌಲವಿ ಮಡಿಕೇರಿ - ಪವಿತ್ರ ರಮದಾನ್ ತಿಂಗಳಿಗೆ ನಾವು ಯಾವ ರೀತಿಯಲ್ಲಿ ನಮ್ಮನ್ನು ಸಜ್ಜುಗೊಳಿಸಬೇಕು ಎಂಬುವುದರ ಕುರಿತು ವಿಶೇಷ ಪ್ರವಚನವನ್ನು ನೀಡಿದರು. ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ನೀಡಿದ ಅಬ್ದುಲ್ ಖಾದರ್ ಕುಕ್ಕಾಜೆಯವರು ಕಾರ್ಯಕ್ರಮಕ್ಕೆ ಆಗಮಿಸಿರುವ ಅತಿಥಿ ಅಭ್ಯಾಗತರುಗಳನ್ನು ಸ್ವಾಗತಿಸಿದರು. ಜಮಾಅತೆ ಇಸ್ಲಾಮೀ ವಿಟ್ಲ ಇದರ ಅಧೀನದಲ್ಲಿರುವ ಮದ್ರಸ ‘ವ್ಯಾಲ್ಯೂ ಎಡುಕೇಷನ್ ಸೆಂಟರ್ ‘ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ರಾಬಿಯಾ ಅಬ್ದುಲ್ ರಹೀಮ್ ಅವರು ಈ ಮದ್ರಸದ ಮಕ್ಕಳ ಅರಬಿ ಭಾಷಾ ಜ್ಞಾನ ಸೇರಿದಂತೆ ಶೈಕ್ಷಣಿಕ ವೈವಿಧ್ಯತೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮವನ್ನು ನಿರೂಪಿಸಿದ, ಜ.ಇ. ಹಿಂದ್ ಇದರ ಸ್ಥಾನೀಯ ಅಧ್ಯಕ್ಷರು ಮತ್ತು ಅನುಗ್ರಹ ಮಹಿಳಾ ವಿದ್ಯಾಸಂಸ್ಥೆ, ಕಲ್ಲಡ್ಕ ಇದರ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಜನಾಬ್ ಯಾಸೀನ್ ಬೇಗ್ ರವರು ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಅಧ್ಯಯನ ಕೋರ್ಸ್ ಗಳ ಬಗ್ಗೆ ವಿವರಣೆಯನ್ನು ನೀಡಿದರು. ಈಗಾಗಲೇ 2026-27 ರ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭಿಸಿದ್ದು ಆಸಕ್ತ ವಿದ್ಯಾಥಿಗಳು ತ್ವರೆ ಮಾಡಿಕೊಳ್ಳು ವಂತೆ ಕೇಳಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದವಿತ್ತರು.

ವಾರ್ತಾ ಭಾರತಿ 16 Feb 2026 11:30 pm

ಮಕ್ಕಳ ನೈತಿಕ ವಿಕಸನಕ್ಕೆ ‘ಯಮಾನಿ ಲ್ಯಾಪ್‌ಟಾಪ್’ ಲೋಕಾರ್ಪಣೆ

ಭಟ್ಕಳ: ಡಿಜಿಟಲ್ ಯುಗದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್‌ ವ್ಯಸನ ಹಾಗೂ ಅನಗತ್ಯ ವಿಷಯಗಳ ಪ್ರಭಾವವನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿನ ‘ಇದಾರ ಅದಾಬ್-ಎ-ಅತ್ಫಾಲ್’ ಸಂಸ್ಥೆಯು ‘ಯಮಾನಿ ಲ್ಯಾಪ್‌ಟಾಪ್’ ಎಂಬ ವಿಶೇಷ ಶೈಕ್ಷಣಿಕ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಗರದ ರಬಿತಾ ಹಾಲ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿವಿಧ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಲ್ಯಾಪ್‌ಟಾಪ್ ಅನ್ನು ಲೋಕಾರ್ಪಣೆ ಮಾಡಿದರು. ಇಲ್ಮಿ ಬಾಕ್ಸ್ ಕಂಪನಿಯ ಸಹಯೋಗದಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸಂಸ್ಥೆಯ ಅಧ್ಯಕ್ಷ ಮೌಲಾನಾ ಡಾ. ಅಬ್ದುಲ್ ಹಮೀದ್ ಅಥರ್ ನದ್ವಿ ಮಾತನಾಡಿ, “ಇಂದಿನ ಪೀಳಿಗೆ ಡಿಜಿಟಲ್ ಲೋಕದ ಫಿತೂರಿಗಳಲ್ಲಿ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ತಂತ್ರಜ್ಞಾನವನ್ನು ದೂರವಿಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಒಳಗೊಂಡ ಧನಾತ್ಮಕ ಪರ್ಯಾಯ ವೇದಿಕೆ ಒದಗಿಸುವುದು ಕಾಲದ ಅಗತ್ಯ” ಎಂದು ಹೇಳಿದರು. ಉರ್ದು ಭಾಷೆಯಲ್ಲಿ ಗುಣಮಟ್ಟದ ಶೈಕ್ಷಣಿಕ ವಿಷಯಗಳ ಕೊರತೆಯನ್ನು ಈ ಲ್ಯಾಪ್‌ಟಾಪ್ ನೀಗಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಖಲೀಫಾ ಜಮಾಅತ್-ಉಲ್-ಮುಸ್ಲಿಮೀನ್‌ನ ಖಾಜಿ ಮೌಲಾನಾ ಖ್ವಾಜಾ ಮುಇನುದ್ದೀನ್ ನದ್ವಿ ಮದನಿ ಮಾತ ನಾಡಿ, “ಬಾಲ್ಯವು ಕಲಿಕೆಯ ಸೂಕ್ಷ್ಮ ಹಂತ. ಈ ಅವಧಿಯಲ್ಲಿ ರೂಪುಗೊಳ್ಳುವ ಚಿಂತನೆಗಳು ಜೀವನಪೂರ್ತಿ ಪ್ರಭಾವ ಬೀರುತ್ತವೆ. ಪಾಶ್ಚಾತ್ಯ ಜಗತ್ತು ತನ್ನ ಮೌಲ್ಯಗಳಿಗೆ ಅನುಗುಣವಾಗಿ ಮಕ್ಕಳಿಗಾಗಿ ಅಪಾರ ಡಿಜಿಟಲ್ ವಿಷಯಗಳನ್ನು ಸಿದ್ಧಪಡಿಸಿದೆ. ಇಸ್ಲಾಮಿಕ್ ದೃಷ್ಟಿಕೋನದಿಂದ ಮೌಲ್ಯಯುತ ವಿಷಯಗಳನ್ನು ನೀಡುವುದು ನಮ್ಮ ಜವಾಬ್ದಾರಿ” ಎಂದು ಹೇಳಿದರು. ಈ ಯೋಜನೆ ವಿಶ್ವದಾದ್ಯಂತ ಇರುವ ಉರ್ದು ಭಾಷಿಕರಿಗೆ ಸಹ ಉಪಯುಕ್ತವಾಗಲಿದೆ ಎಂದರು. ಲ್ಯಾಪ್‌ಟಾಪ್‌ನ ವಿಶೇಷತೆಗಳು: ‘ಯಮಾನಿ ಲ್ಯಾಪ್‌ಟಾಪ್’ನಲ್ಲಿ ಆಯ್ದ ಕುರಾನ್ ಪಠಣಗಳು, ಹದೀಸ್‌ಗಳು, ದಿನನಿತ್ಯದ ಪ್ರಾರ್ಥನೆಗಳು (ದುವಾ), ಇಸ್ಲಾಮಿಕ್ ಕವಿತೆಗಳು ಹಾಗೂ ಜ್ಞಾನವರ್ಧಕ ವಿಷಯಗಳನ್ನು ಅಳವಡಿಸಲಾ ಗಿದೆ. ಮಕ್ಕಳಿಗೆ ಆಟವಾಡುತ್ತಲೇ ಧಾರ್ಮಿಕ ಮತ್ತು ನೈತಿಕ ಶಿಕ್ಷಣ ನೀಡುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿ ಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸಮಾರಂಭದಲ್ಲಿ ರಾಬಿತಾ ಸೊಸೈಟಿ ಅಧ್ಯಕ್ಷ ಉಮರ್ ಫಾರೂಕ್ ಮುಸ್ಬಾ, ಮಜ್ಲಿಸ್-ಎ-ಇಸ್ಲಾಹ್ ವ- ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದರಿ, ಮೌಲಾನಾ ಅಬ್ದುಲ್ ರಕೀಬ್ ಎಂ.ಜೆ. ನದ್ವಿ ಅಲ್ತಾಫ್ ಖರೂರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮೌಲಾನಾ ಅಬ್ದುಲ್ಲಾ ಗಾಝಿ ನದ್ವಿ ಕಾರ್ಯಕ್ರಮ ನಿರೂಪಿಸಿದರು.    

ವಾರ್ತಾ ಭಾರತಿ 16 Feb 2026 11:26 pm

ಕುಂದಾಪುರ, ಬೈಂದೂರಿನಲ್ಲಿ 241 ‘ಬಿ’ಖಾತೆದಾರರಿಗೆ ‘ಎ’ ಖಾತೆ

ಕಟ್ ಕನ್ವರ್ಷನ್‌ನಲ್ಲಿ 500 ಅರ್ಜಿಗೆ ಏಕವಿನ್ಯಾಸ ನಕ್ಷೆಗೆ ಅವಕಾಶ

ವಾರ್ತಾ ಭಾರತಿ 16 Feb 2026 11:23 pm

ಮೂಳೆಯನ್ನು ಆಹಾರವಾಗಿ ಸೇವಿಸುವ ರಣಹದ್ದುವನ್ನು ಬಲ್ಲಿರಾ?

ಅಪೂರ್ವ ಜೀರ್ಣಕ್ರಿಯೆಯ ಶೈಲಿಯಿಂದಾಗಿ ಈ ರಣಹದ್ದು ಇತರ ಬೇಟೆಗಾರರಿಗೆ ತ್ಯಾಜ್ಯವಾಗಿರುವ ವಸ್ತುವನ್ನು ನುಂಗಿ ಆಹಾರವಾಗಿ ಬದಲಿಸಲು ಸಾಧ್ಯವಾಗಿದೆ. ನಾಯಿಗಳನ್ನು ಹೊರತುಪಡಿಸಿ ಇನ್ಯಾವುದೇ ಪ್ರಾಣಿ-ಪಕ್ಷಿಗಳು ಆಹಾರದಲ್ಲಿ ಮೂಳೆಗಳನ್ನು ಸೇವಿಸಲು ಬಯಸುವುದಿಲ್ಲ ಎಂದು ನಾವು ನಂಬಿದ್ದೇವೆ. ಹೀಗಾಗಿ ಮೂಳೆಗಳನ್ನು ಕಚ್ಚಿ ತಿನ್ನುವ ಜೀವಿ ಎನ್ನುವಾಗ ನಾಯಿ ಮಾತ್ರ ನೆನಪಾಗುತ್ತದೆ. ಬಹುತೇಕ ಜೀವಿಗಳು ಮೂಳೆಗಳನ್ನು ಸೇವಿಸುವುದಿಲ್ಲ. ಏಕೆಂದರೆ ಅವುಗಳನ್ನು ಕಚ್ಚುವುದು ಮತ್ತು ನುಂಗುವುದು ಬಹಳ ಕಷ್ಟ. ಆದರೆ ಜಗತ್ತಿನಲ್ಲಿ ಒಂದು ಜೀವಿ ಬರೀ ಮೂಳೆಗಳನ್ನೇ ಸೇವಿಸಿ ಬದುಕುತ್ತಿದೆ ಎನ್ನುವುದು ನಿಮಗೆ ಗೊತ್ತೆ? ಬಿಯರ್ಡೆಡ್ ವಲ್ಚರ್ ಅಥವಾ ಗಡ್ಡವಿರುವ ರಣಹದ್ದುವನ್ನು ಲ್ಯಾಮರ್ಜಿಯರ್ ಎಂದೂ ಕರೆಯಲಾಗುತ್ತದೆ. ಈ ವಿಶೇಷ ಪಕ್ಷಿಯು ಶೇ 70–90ರಷ್ಟು ಮೂಳೆಗಳನ್ನೇ ತಿಂದು ಬದುಕುತ್ತವೆ. ಇತರ ಯಾವುದೇ ಜೀವಿಯು ಇಂತಹ ಆಹಾರ ಕ್ರಮವನ್ನು ಹೊಂದಿಲ್ಲ. ಈ ಪ್ರಬೇಧದ ರಣಹದ್ದುಗಳು ಯುರೋಪ್, ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚು ಕಂಡುಬರುತ್ತವೆ. ಇವು ತಿನ್ನುವ ವಿಚಾರದಲ್ಲಿ ಬಹಳ ಜಾಗರೂಕವಾಗಿರುತ್ತದೆ. ಮೂಳೆ ಕಂಡರೆ ಹೇಗೇ ಇದ್ದರೂ ನುಂಗಿಬಿಡುತ್ತವೆ. ಕೊಳೆತ ಮಾಂಸ ತಿನ್ನುವ ಇತರ ಜೀವಿಗಳು ಮಾಂಸಕ್ಕಾಗಿ ಹುಡುಕಿದರೆ, ಈ ರಣಹದ್ದು ಮಾಂಸ ತಿಂದು ಉಳಿದ ಮೂಳೆಯನ್ನು ಹುಡುಕುತ್ತದೆ. ಇದು ಒಂದು ರೀತಿಯಲ್ಲಿ ಉಳಿವಿನ ಹೋರಾಟ. ಮಾಂಸ ತಿಂದು ಎಸೆದ ಮೂಳೆಗಳಲ್ಲಿ ಸಮೃದ್ಧ ಪೌಷ್ಠಿಕಾಂಶಗಳು ಇರುತ್ತವೆ. ಮುಖ್ಯವಾಗಿ ಕೊಬ್ಬು ಮತ್ತು ಪ್ರೊಟೀನ್ಗಳು ಇರುತ್ತವೆ. ಹೀಗೆ ಮೂಳೆಗಳನ್ನು ತಿನ್ನುವ ಕಾರಣ ಆಹಾರದಲ್ಲಿ ಇತರ ಸಮಾನಮನಸ್ಕರಿಗೆ ಹೋಲಿಸಿದಲ್ಲಿ ಕಡಿಮೆ ಸ್ಪರ್ಧೆಯನ್ನು ಎದುರಿಸುತ್ತದೆ. ಮೂಳೆಗಳು ಕಠಿಣವಾಗಿರುತ್ತವೆ ಮತ್ತು ಅವುಗಳನ್ನು ನುಂಗುವುದು ಸುಲಭದ ವಿಷಯವೇನಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಗಡ್ಡವಿರುವ ರಣಹದ್ದುಗಳು ಪ್ರಕೃತಿಯ ಅತಿ ವಿಶಿಷ್ಟ ತಂತ್ರವನ್ನು ಬಳಸುತ್ತವೆ. ಮೂಳೆ ನುಂಗಲು ಅತಿ ಉದ್ದವಿದ್ದು ನುಂಗಲು ಕಷ್ಟವಾದಲ್ಲಿ, ಆಗಸದೆತ್ತರಕ್ಕೆ ಹಾರಿ ಕೆಲವೊಮ್ಮೆ ಬಂಡೆಗಳ ಪ್ರದೇಶದಲ್ಲಿ ನೂರಾರು ಮೀಟರ್ಗಳಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ. ನಂತರ ಅತಿ ನಿಖರವಾಗಿ ಬಂಡೆಯ ಮೇಲೆ ಮೂಳೆಯನ್ನು ಬೀಳಿಸುತ್ತದೆ. ಹೀಗೆ ಬಿದ್ದಾಗ ಮೂಳೆಗಳು ಮುರಿದು ಹೋಗುತ್ತವೆ. ನಂತರ ರಣಹದ್ದುಗಳು ಕೆಳಗೆ ಬಂದು ನೆಲದ ಮೇಲೆ ಮುರಿದು ಬಿದ್ದ ತುಂಡುಗಳನ್ನು ತಿನ್ನುತ್ತವೆ. ಕೆಲವೊಮ್ಮೆ ನುಂಗಲು ಸಾಧ್ಯವಾಗುವಷ್ಟು ಸಣ್ಣದು ಮಾಡಬೇಕೆಂದರೆ ಅನೇಕ ಸಲ ಮೇಲಿಂದ ಕೆಳಗೆ ಬೀಳಿಸಬೇಕಾಗುತ್ತದೆ. ರಣಹದ್ದುಗಳು ಮೂಳೆಯನ್ನು ಸೇವಿಸಿದ ನಂತರ ಬಹುತೇಕ ಜೀವಿಗಳಂತೆ ಮೂಳೆ ಹೊಟ್ಟೆಯಲ್ಲಿ ನಿಂತುಬಿಡುವುದಿಲ್ಲ. ಗಡ್ಡವಿರುವ ರಣಹದ್ದು ಅತಿ ಬಲಿಷ್ಠ ಜಠರದ ಆಮ್ಲವನ್ನು ಹೊಂದಿದೆ. ಅದು ಕಠಿಣ ವಸ್ತುವನ್ನೂ ಕರಗಿಸುತ್ತದೆ. ಹೀಗೆ ಪಕ್ಷಿಯು ಮೂಳೆಯಲ್ಲಿ ಸಮೃದ್ಧವಾಗಿರುವ ಪೌಷ್ಠಿಕಾಂಶವನ್ನು ಸೇವಿಸಲು ಸಾಧ್ಯವಾಗುತ್ತದೆ. ಇಂತಹ ಅಪೂರ್ವ ಜೀರ್ಣಕ್ರಿಯೆಯ ಹೊಂದಾಣಿಕೆಯಿಂದಾಗಿ ಈ ರಣಹದ್ದು ಇತರ ಬೇಟೆಗಾರರಿಗೆ ತ್ಯಾಜ್ಯವಾಗಿರುವ ವಸ್ತುವನ್ನು ನುಂಗಿ ಆಹಾರವಾಗಿ ಬದಲಿಸಲು ಸಾಧ್ಯವಾಗಿದೆ. ತನ್ನ ಅಸಹಜವಾದ ಆಹಾರ ಕ್ರಮದ ಹೊರತಾಗಿಯೂ ರಣಹದ್ದು ಸಿಕ್ಕಿದ್ದನ್ನೆಲ್ಲ ತಿನ್ನುವುದಿಲ್ಲ. ಅದರ ಬೇಟೆ ಮತ್ತು ಆಹಾರ ಸೇವನೆಯ ವಿಧಾನಕ್ಕೆ ಕೌಶಲ್ಯ, ಬುದ್ಧಿವಂತಿಕೆ ಮತ್ತು ಸಹನೆಯ ಅಗತ್ಯವಿರುತ್ತದೆ. ನಿಖರವಾಗಿ ಮೇಲಿನಿಂದ ಕೆಳಗೆ ಬೀಳಿಸುವುದು ಮತ್ತು ಪರಿಪೂರ್ಣವಾಗಿ ಮುರಿಯುವುದು ಒಂದು ರೀತಿಯಲ್ಲಿ ಪ್ರಕೃತಿಯ ಚಾತುರ್ಯವನ್ನು ನೆನಪಿಸುತ್ತದೆ. ಬಹಳಷ್ಟು ಸಲ ಹೊಂದಾಣಿಕೆಯೇ ಉಳಿವಿಗೆ ಅತಿ ಮುಖ್ಯವಾಗಿರುವ ಜಗತ್ತಿನಲ್ಲಿ ಸರಿಯಾದ ಸಾಧನವಿದ್ದಲ್ಲಿ ಕಠಿಣ ಆಹಾರವನ್ನೂ ಸೇವನೆಗೆ ಯೋಗ್ಯವನ್ನಾಗಿ ಮಾಡಬಹುದು ಎನ್ನುವುದಕ್ಕೆ ಈ ಗಡ್ಡವಿರುವ ರಣಹದ್ದುವಿನ ಕೌಶಲ್ಯವೇ ಸಾಕ್ಷಿಯಾಗಿದೆ. ಕೃಪೆ: indianexpress.com

ವಾರ್ತಾ ಭಾರತಿ 16 Feb 2026 11:20 pm

ಬಿಡುಗಡೆಗೆ ಸಜ್ಜಾಗುತ್ತಿರುವ ಸತೀಶ್ ನೀನಾಸಾಂ ಮತ್ತು ಸಪ್ತಮಿ ಗೌಡ ನಟನೆಯ ‘ದಿ ರೈಸ್ ಆಫ್ ಅಶೋಕ’

2022ರಲ್ಲಿ ಚಿತ್ರೀಕರಣ ಆರಂಭಿಸಿದ್ದ ಸಿನಿಮಾ ಅನೇಕ ಅಡೆತಡೆಗಳನ್ನು ದಾಟಿ ಫೆಬ್ರವರಿ 27ರಂದು ತೆರೆ ಮೇಲೆ ಬರುತ್ತಿದೆ. ಸತೀಶ್ ನೀನಾಸಾಂ ಮತ್ತು ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ಫೆಬ್ರವರಿ 27 ರಂದು ಬಿಡುಗಡೆಯಾಗಲಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಆಂಧ್ರಪ್ರದೇಶ, ತೆಲಂಗಾಣ ವಿತರಣಾ ಹಕ್ಕನ್ನು ಕಲಾ ಸೃಷ್ಟಿ ತಂಡ ತೆಗೆದುಕೊಂಡಿದೆ. ಈ ಬಗ್ಗೆ ಸ್ವತಃ ಸತೀಶ್ ನೀನಾಸಾಂ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ನೀಡಿದ್ದಾರೆ. ಆಂಧ್ರ, ತೆಲಂಗಾಣ,ವಿತರಣ ಹಕ್ಕು ಕಲಾ ಸೃಷ್ಟಿಯವರಿಗೆ Turn the Volume up- Feel the Fire #TheRiseofAshoka IN CINEMAS FEB 27 Kannada - Tamil - Telugu #ROAINCINEMASFEB27 #RebelForACause #TheLegendRises @SathishNinasam @gowda_sapthami @Ravishankar_66 #GopalKrishnaDeshapande … pic.twitter.com/5uo7yU6Ha8 — Sathish Ninasam (@SathishNinasam) February 16, 2026 ‘ದಿ ರೈಸ್ ಆಫ್ ಅಶೋಕ’ 70ರ ಕಾಲಘಟ್ಟದಲ್ಲಿ ನಡೆಯುವ ಕತೆ. ಕ್ರಾಂತಿಕಾರಿ ಯುವಕನ ಹೋರಾಟ, ಬದುಕು, ಸಂಘರ್ಷ ಸಿನಿಮಾದಲ್ಲಿದೆ. ಮನು ಶೇಡ್ಗಾರ್ ಸಿನಿಮಾದ ನಿರ್ದೇಶಕರು. ನಿರ್ದೇಶಕ ವಿನೋದ್ ವಿ ಧೋಂಡಾಳೆ ಅಕಾಲಿಕ ಮರಣದ ನಂತರ ಮನು ನಿರ್ದೇಶಕದ ಜವಾಬ್ದಾರಿ ಹೊತ್ತಿದ್ದಾರೆ. ವೃದ್ಧಿ ಕ್ರಿಯೇಶನ್ ಮತ್ತು ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ಸತೀಶ್ ನೀನಾಸಂ ಹಾಗೂ ವರ್ಧನ್ ಹರಿ, ಜೈಷ್ಣವಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸಿನಿಮಾ 2022ರಲ್ಲಿ ಸೆಟ್ಟೇರಿತ್ತು. ಅನೇಕ ಅಡೆತಡಗಳನ್ನು ದಾಟಿ ಫೆಬ್ರವರಿ 27ರಂದು ತೆರೆ ಮೇಲೆ ಬರುತ್ತಿದೆ. ಈ ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸುದ್ದಿಯಲ್ಲಿವೆ. ಸಿನಿಮಾಗೆ ನಟನೆಯ ಜೊತೆಗೆ ಸಾಹಿತ್ಯ, ಗಾಯನ ಹಾಗೂ ನಿರ್ಮಾಣದಲ್ಲೂ ಸತೀಶ್ ತೊಡಗಿಸಿಕೊಂಡಿದ್ದಾರೆ. ಸಪ್ತಮಿ ಗೌಡ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಿ. ಸುರೇಶ್, ಸಂಪತ್, ಮೈತ್ರೇಯ, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಯಶ್ ಶೆಟ್ಟಿ ಅಭಿನಯಿಸಿದ್ದಾರೆ.

ವಾರ್ತಾ ಭಾರತಿ 16 Feb 2026 11:12 pm

Telangana | ಕರೀಂನಗರ ಮೇಯರ್ ಹುದ್ದೆ ಗೆದ್ದ ಬಿಜೆಪಿ; AIMIM ಬೆಂಬಲದೊಂದಿಗೆ ನಿಝಾಮಾಬಾದ್ ಮೇಯರ್ ಹುದ್ದೆ ಕಾಂಗ್ರೆಸ್ ಪಾಲು

ಹೈದರಾಬಾದ್: ಇತ್ತೀಚೆಗೆ ನಡೆದ ಕರೀಂನಗರ ನಗರ ಪಾಲಿಕೆ ಚುನಾವಣೆಯಲ್ಲಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ, ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಕರೀಂನಗರ ಮೇಯರ್ ಹುದ್ದೆಯನ್ನು ತನ್ನ ಪಾಲಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ನಿಝಾಮಾಬಾದ್ ನಗರ ಪಾಲಿಕೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ, ಎಐಎಂಐಎಂ ಕಾರ್ಪೊರೇಟರ್ ಗಳ ಬೆಂಬಲದೊಂದಿಗೆ ಮೇಯರ್ ಹುದ್ದೆಯನ್ನು ಪಡೆಯಲು ಕಾಂಗ್ರೆಸ್ ಯಶಸ್ವಿಯಾಗಿದೆ. ಇನ್ನುಳಿದ ಐದು ನಗರ ಪಾಲಿಕೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಿಜೆಪಿ ಕೂಡಾ ನಾರಾಯಣಪೇಟ್ ಮತ್ತು ಭೈಸಾನಾ ನಗರ ಸಭೆಗಳ ಅಧ್ಯಕ್ಷ ಹುದ್ದೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೋಮವಾರ ನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಹುದ್ದೆ ಹಾಗೂ ನಗರಸಭೆಗಳ ಅಧ್ಯಕ್ಷ ಮತ್ತು ಉಪಾಧ್ಯಪಕ್ಷ ಹುದ್ದೆಗಳಿಗೆ ಚುನಾವಣೆ ನಡೆಯಿತು. ಅತಂತ್ರ ಫಲಿತಾಂಶ ಹೊರಹೊಮ್ಮಿದ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಆರ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತು. ಮತದಾನಕ್ಕೂ ಮುನ್ನ ರಾಜ್ಯಾದ್ಯಂತ ನಾಟಕೀಯ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕರೀಂನಗರ ನಗರ ಪಾಲಿಕೆಯಲ್ಲಿ ಬಿಜೆಪಿಯ ಕೊಲಗಾನಿ ಶ್ರೀನಿವಾಸ್ ಹಾಗೂ ಸುನೀಲ್ ರಾವ್ ಕ್ರಮವಾಗಿ ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾದರು. BRS ಪಕ್ಷ ಮತದಾನವನ್ನು ಬಹಿಷ್ಕರಿಸಿತು. ನಿಝಾಮಾಬಾದ್ ನಲ್ಲಿ ಬಿಜೆಪಿ ಅತಿ ಹೆಚ್ಚು 28 ವಿಭಾಗಗಳಲ್ಲಿ ಗೆಲುವು ಸಾಧಿಸಿದ್ದರೂ, 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್, 14 ಸ್ಥಾನಗಳನ್ನು ಹೊಂದಿರುವ ಎಐಎಂಐಎಂ ಹಾಗೂ ಓರ್ವ BRS ಸದಸ್ಯನ ಬೆಂಬಲದೊಂದಿಗೆ ಮೇಯರ್ ಹುದ್ದೆಯನ್ನು ಗಿಟ್ಟಿಸಿತು. ಅದಕ್ಕೆ ಪ್ರತಿಯಾಗಿ ಉಪ ಮೇಯರ್ ಹುದ್ದೆಯನ್ನು ಎಐಎಂಐಎಂ ಪಕ್ಷಕ್ಕೆ ಬಿಟ್ಟುಕೊಟ್ಟಿತು. ಮತದಾನದ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮಾರಾಣಿ 34 ಮತಗಳನ್ನು ಪಡೆದರೆ, ಬಿಜೆಪಿ 31 ಮತಗಳನ್ನು ಪಡೆಯಲಷ್ಟೇ ಶಕ್ತವಾಯಿತು. ಈ ಪೈಕಿ ಐವರು ಪದನಿಮಿತ್ತ ಸದಸ್ಯರಿದ್ದರು. ಇಬ್ಬರು ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೆ, ಮೂವರು ಸದಸ್ಯರು ಬಿಜೆಪಿಗೆ ಸೇರಿದ್ದರು. ಈ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ತೆಲಂಗಾಣ ನೀರಾವರಿ ಮತ್ತು ನಾಗರಿಕ ಸರಬರಾಜು ಸಚಿವ ಎನ್.ಉತ್ತಮ್ ಕುಮಾರ್ ರೆಡ್ಡಿ, ನಿಝಾಮಾಬಾದ್ ಫಲಿತಾಂಶವು ಉತ್ತರ ತೆಲಂಗಾಣದಲ್ಲಿ ಬಿಜೆಪಿಯ ಧಾರ್ಮಿಕ ಧ್ರುವೀಕರಣ ಪ್ರಯತ್ನದ ದೃಢ ನಿರಾಕರಣೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 16 Feb 2026 11:10 pm

Kalaburagi | ಮುಸ್ಲಿಮರಿಂದ ಪುಷ್ಪಾಲಂಕಾರ ವಿರೋಧಿಸಿ ಗೋಮೂತ್ರದಿಂದ ಶಿವಲಿಂಗ ʼಶುದ್ಧೀಕರಿಸಿದʼ ಹಿಂದೂ ಜಾಗೃತಿ ಸೇನೆ!

ಕಲಬುರಗಿ: ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದಲ್ಲಿರುವ ರಾಮತೀರ್ಥ ಮಂದಿರದ ಗರ್ಭಗುಡಿಯ ಶಿವಲಿಂಗಕ್ಕೆ ಮುಸ್ಲಿಮರು ಪುಷ್ಪಾಲಂಕಾರ ಮಾಡಿರುವುದನ್ನು ವಿರೋಧಿಸಿ ಹಿಂದೂ ಜಾಗೃತಿ ಸೇನೆ ಮುಖಂಡರು ಕ್ಷೀರಾಭಿಷೇಕ, ಜಲಾಭಿಷೇಕ, ಗೋಮೂತ್ರದಿಂದ ‘ಶುದ್ದೀಕರಣ’ ಮಾಡಿರುವ ಘಟನೆ ಸೋಮವಾರ ವರದಿಯಾಗಿದೆ. ಮಹಾಶಿವರಾತ್ರಿ ಅಂಗವಾಗಿ ಮುಸ್ಲಿಮರು ಶಿವಲಿಂಗವನ್ನು ಪುಷ್ಪಾಲಂಕಾರ ಮಾಡಿದ ವಿಡಿಯೊ ರವಿವಾರ ಎಲ್ಲೆಡೆ ವೈರಲ್ ಆಗಿತ್ತು ಎನ್ನಲಾಗಿದೆ. ಇದರ ಬೆನ್ನಲ್ಲೇ ‘ಗೋವನ್ನು ತಾಯಿಯಾಗಿ ಪೂಜಿಸುವ ಧರ್ಮ ನಮ್ಮದು. ಆದರೆ, ದೇವಸ್ಥಾನದ ಟ್ರಸ್ಟ್‌ನವರು ಗೋಮಾಂಸ ತಿನ್ನುವವರಿಂದ ಮಂದಿರದ ಗರ್ಭ ಗುಡಿಯೊಳಗೆ ಪುಷ್ಪಾಲಂಕಾರ ಮಾಡಿಸಿದ್ದಾರೆ. ಹಾಗಾಗಿ ಐತಿಹಾಸಿಕ ಶಿವಲಿಂಗ ಅಪವಿತ್ರವಾಗಿದೆ. ಇದನ್ನು ಶುದ್ಧೀಕರಣ ಮಾಡಲಾಗಿದೆ’ ಎಂದು ಹಿಂದೂ ಜಾಗೃತಿ ಸೇನೆ ಮುಖಂಡ ಲಕ್ಷ್ಮಿಕಾಂತ ಸ್ವಾದಿ ಹೇಳಿದ್ದಾರೆ.

ವಾರ್ತಾ ಭಾರತಿ 16 Feb 2026 11:08 pm

ಪಶ್ಚಿಮದಂಡೆ ಭೂ ನೋಂದಣಿಗೆ ಇಸ್ರೇಲ್ ಕ್ಯಾಬಿನೆಟ್ ಅನುಮೋದನೆ; ಫೆಲೆಸ್ತೀನ್ ಪ್ರಾಧಿಕಾರ ಸೇರಿದಂತೆ ವ್ಯಾಪಕ ಖಂಡನೆ

ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯ ಮೇಲೆ ಇಸ್ರೇಲ್‍ನ ನಿಯಂತ್ರಣವನ್ನು ಬಿಗಿಗೊಳಿಸುವ ಕ್ರಮಗಳನ್ನು ಅನುಮೋದಿಸಿದ್ದು ಇದು ವಸಾಹತುಗಾರರಿಗೆ ಭೂಮಿಯನ್ನು ಖರೀದಿಸಲು ಸುಲಭಗೊಳಿಸುತ್ತದೆ. ಇದು ವಾಸ್ತವಿಕ ಸಂಯೋಜನೆಯ ಕ್ರಮ ಎಂದು ಫೆಲೆಸ್ತೀನೀಯರು ಖಂಡಿಸಿದ್ದಾರೆ. ಭವಿಷ್ಯದ ಸ್ವತಂತ್ರ ರಾಷ್ಟ್ರಕ್ಕಾಗಿ ಫೆಲೆಸ್ತೀನಿಯರು ಬಯಸುವ ಪ್ರದೇಶಗಳಲ್ಲಿ ಪಶ್ಚಿಮದಂಡೆ ಕೂಡಾ ಸೇರಿದೆ. ಇದರ ಬಹಳಷ್ಟು ಭಾಗ ಇಸ್ರೇಲ್‍ನ ನಿಯಂತ್ರಣದಲ್ಲಿದ್ದರೆ, ಸೀಮಿತ ಭಾಗಗಳಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ) ಆಡಳಿತವಿದೆ. ಯಾವುದೇ ಫೆಲೆಸ್ತೀನಿಯನ್ ರಾಷ್ಟ್ರದ ಸ್ಥಾಪನೆಯು ಭದ್ರತೆಗೆ ಬೆದರಿಕೆಯಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಪಾದಿಸುತ್ತಿದ್ದಾರೆ. 1967ರ ಮಧ್ಯಪ್ರಾಚ್ಯ ಯುದ್ದದಲ್ಲಿ ಇಸ್ರೇಲ್ ವಶಪಡಿಸಿಕೊಂಡಿರುವ ಪಶ್ಚಿಮದಂಡೆ ಪ್ರದೇಶವನ್ನು ಸ್ವಾಧೀನಕ್ಕೆ ಪಡೆಯಬೇಕೆಂದು ಇಸ್ರೇಲ್‍ನ ಆಡಳಿತಾರೂಢ ಸಮ್ಮಿಶ್ರ ಸರಕಾರದ ಹಲವು ಸದಸ್ಯರು ಒತ್ತಡ ಹೇರುತ್ತಿದ್ದಾರೆ. ಇದೀಗ 1967ರಿಂದ ಮೊದಲ ಬಾರಿಗೆ ಭೂಮಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಪರವಾಗಿ ಸಚಿವರು ಮತ ಚಲಾಯಿಸಿದ್ದಾರೆ. ಭೂ ನೋಂದಣಿಯು ನಿಯಂತ್ರಣಗಳನ್ನು ವಿಸ್ತರಿಸಲು ಈ ತಿಂಗಳ ಆರಂಭದಲ್ಲಿ ತೆಗೆದುಕೊಂಡ ಕ್ರಮಗಳ ಸರಣಿಗೆ ಹೊಸ ಸೇರ್ಪಡೆಯಾಗಿದೆ. ನಾವು ವಸಾಹತು ಕ್ರಾಂತಿಯನ್ನು ಮುಂದುವರಿಸುತ್ತಿದ್ದೇವೆ ಮತ್ತು ನಮ್ಮ ಭೂಮಿಯ ಎಲ್ಲಾ ಭಾಗಗಳಲ್ಲಿ ನಮ್ಮ ಹಿಡಿತವನ್ನು ಬಲಪಡಿಸುತ್ತಿದ್ದೇವೆ ಎಂದು ನೆತನ್ಯಾಹು ಸರಕಾರದ ಕಟ್ಟಾ ಬಲಪಂಥೀಯ ಸದಸ್ಯ, ವಿತ್ತ ಸಚಿವ ಬೆಝಲೆಲ್ ಸ್ಮೊಟ್ರಿಚ್ ಹೇಳಿದ್ದಾರೆ. ಭೂ ನೋಂದಣಿಯು ತನ್ನ ನಾಗರಿಕರನ್ನು ರಕ್ಷಿಸಲು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು, ಪ್ರದೇಶದಲ್ಲಿ ಇಸ್ರೇಲ್‍ನ ನಿಯಂತ್ರಣ, ಜಾರಿ ಮತ್ತು ಸಂಪೂರ್ಣ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಿದ ಪ್ರಮುಖ ಭದ್ರತಾ ಕ್ರಮವಾಗಿದೆ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಸ್ ಹೇಳಿದ್ದಾರೆ. ನೋಂದಣಿಯು ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ)ದಿಂದ ಉತ್ತೇಜಿಸಲ್ಪಟ್ಟ ಕಾನೂನುಬಾಹಿರ ಭೂ ನೋಂದಣಿ ಪ್ರಕ್ರಿಯೆಗಳಿಗೆ ಸೂಕ್ತ ಪ್ರತಿಕ್ರಿಯೆಯಾಗಿದೆ ಮತ್ತು ವಿವಾದಗಳನ್ನು ಕೊನೆಗೊಳಿಸುತ್ತದೆ ಎಂದು ಸಂಪುಟದ ಹೇಳಿಕೆ ತಿಳಿಸಿದೆ. ಪಿಎ ಅಧ್ಯಕ್ಷರ ಕಚೇರಿಯು ಸಂಪುಟದ ನಿರ್ಧಾರವನ್ನು ತಿರಸ್ಕರಿಸಿದ್ದು ಇದು ಫೆಲೆಸ್ತೀನಿಯನ್ ಪ್ರದೇಶದ ವಾಸ್ತವಿಕ ಸ್ವಾಧೀನ ಮತ್ತು ಅಕ್ರಮ ವಸಾಹತು ಚಟುವಟಿಕೆಯ ಮೂಲಕ ಸ್ವಾಧೀನ ಪ್ರಕ್ರಿಯೆಯನ್ನು ಭದ್ರಪಡಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಪ್ರಾರಂಭಿಸುವ ಘೋಷಣೆಯಾಗಿದೆ' ಎಂದು ಖಂಡಿಸಿದೆ. ಪಶ್ಚಿಮ ದಂಡೆಯ ಇಸ್ರೇಲ್ ಸ್ವಾಧೀನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ. ಆದರೆ ಇಸ್ರೇಲ್‍ನ ವಸಾಹತು ವಿಸ್ತರಣೆ ಕ್ರಮವನ್ನು ನಿಗ್ರಹಿಸಲು ಟ್ರಂಪ್ ಆಡಳಿತ ಮುಂದಾಗಿಲ್ಲ. ಫೆಲೆಸ್ತೀನಿಯನ್ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದು ಮತ್ತು ಅಲ್ಲಿ ವಸಾಹತು ನಿರ್ಮಿಸುವುದು ಕಾನೂನುಬಾಹಿರ ಮತ್ತು ಸಾಧ್ಯವಾದಷ್ಟು ಬೇಗ ಕೊನೆಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ 2024ರಲ್ಲಿ ಅಭಿಪ್ರಾಯಪಟ್ಟಿದೆ. ಬೃಹತ್ ಭೂ ಕಬಳಿಕೆ: ಅರಬ್ ರಾಷ್ಟ್ರಗಳ ಖಂಡನೆ ಇಸ್ರೇಲ್ ಸರ್ಕಾರವು ಪಶ್ಚಿಮ ದಂಡೆಯಲ್ಲಿ ಭೂಮಿಯನ್ನು ನೋಂದಾಯಿಸುವ ಪ್ರಕ್ರಿಯೆಗೆ ಅನುಮೋದನೆ ನೀಡಿರುವುದು ಬೃಹತ್ ಭೂ ಕಬಳಿಕೆ ಯೋಜನೆಯ ಭಾಗವಾಗಿದೆ ಎಂದು ಅರಬ್ ರಾಷ್ಟ್ರಗಳು ಖಂಡಿಸಿವೆ. ಈ ಕ್ರಮವು ಕಾನೂನು ವಿವಾದಗಳನ್ನು ಪರಿಹರಿಸಲು ಹಕ್ಕುಗಳ ಪಾರದರ್ಶಕ ಮತ್ತು ಸಂಪೂರ್ಣ ಸ್ಪಷ್ಟೀಕರಣವನ್ನು ಸಕ್ರಿಯಗೊಳಿಸುತ್ತದೆ. ಫೆಲೆಸ್ತೀನಿಯನ್ ಪ್ರಾಧಿಕಾರದಿಂದ ನಿಯಂತ್ರಿಸಲ್ಪಡುವ ಪ್ರದೇಶಗಳಲ್ಲಿ ಕಾನೂನುಬಾಹಿರ ಭೂ ನೋಂದಣಿಯ ಹಿನ್ನೆಲೆಯಲ್ಲಿ ಈ ಕ್ರಮದ ಅಗತ್ಯವಿದೆ ಎಂದು ಇಸ್ರೇಲ್‍ನ ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ ಈ ಕ್ರಮವು ಅಂತರಾಷ್ಟ್ರೀಯ ಕಾನೂನಿನಡಿ ಕಾನೂನುಬಾಹಿರ ಎಂದು ಈಜಿಪ್ಟ್, ಖತರ್ ಮತ್ತು ಜೋರ್ಡಾನ್ ಟೀಕಿಸಿವೆ. `ಇದು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳ ಮೇಲೆ ಇಸ್ರೇಲ್‍ನ ನಿಯಂತ್ರಣವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿರುವ ಅಪಾಯಕಾರಿ ಉಲ್ಬಣ' ಎಂದು ಈಜಿಪ್ಟ್ ಸರಕಾರ ಖಂಡಿಸಿದೆ. ಈ ಕ್ರಮವು ಫೆಲೆಸ್ತೀನಿಯನ್ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಖತರ್ ವಿದೇಶಾಂಗ ಇಲಾಖೆ ಖಂಡಿಸಿದೆ. ಸ್ವಾಧೀನ ಪ್ರಕ್ರಿಯೆಯ ವಾಸ್ತವಿಕ ಪ್ರಾರಂಭ ಮತ್ತು ಫೆಲೆಸ್ತೀನಿಯನ್ ರಾಷ್ಟ್ರದ ಅಡಿಪಾಯವನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ತಡೆಯಲು ಅಂತರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಫೆಲೆಸ್ತೀನಿಯನ್ ಪ್ರಾಧಿಕಾರ ಒತ್ತಾಯಿಸಿದೆ.

ವಾರ್ತಾ ಭಾರತಿ 16 Feb 2026 11:01 pm

Kalaburagi | ಸ್ಥಳೀಯ-ವಿರಳ ಪಕ್ಷಿಗಳ ವೀಕ್ಷಣಾ ಕಾರ್ಯಕ್ರಮ

ಕಲಬುರಗಿ, ಫೆ.16: ಸ್ಥಳೀಯ ಹಾಗೂ ವಿರಳ ಪಕ್ಷಿಗಳ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಗ್ರೇಟ್ ಬ್ಯಾಕ್ ಯಾರ್ಡ್ ಬರ್ಡ್ ಕೌಂಟ್ ಕಾರ್ಯಕ್ರಮವನ್ನು ಸೋಮವಾರ ನಗರದ ಹೊರವಲಯದ ಬುದ್ಧ ವಿಹಾರ ಹಾಗೂ ಗುಲ್ಬರ್ಗಾ ವಿವಿಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ವಿಶೇಷವಾಗಿ ಕಾಪರ್ಸ್ಮಿತ್ ಬರ್ಬೆಟ್ ಮರದಲ್ಲಿ ಹೊಳ್ಳೆ ಮಾಡುವ ದೃಶ್ಯ, ಮರಿಗಳೊಂದಿಗೆ ಕಾಣಿಸಿಕೊಂಡ ಪಕ್ಷಿಗಳು ಹಾಗೂ ವಿಭಿನ್ನ ಪಕ್ಷಿಗಳ ವರ್ತನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಪಕ್ಷಿಗಳ ವಿಶಿಷ್ಟ ಭಂಗಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು. ದಾಖಲಾದ ಪ್ರಮುಖ ಪಕ್ಷಿಗಳಲ್ಲಿ ಬೂದು-ಕತ್ತಿನ ಬಂಟಿಂಗ್, ಗುಲಾಬಿ ಸ್ಟಾರ್ಲಿಂಗ್, ಭಾರತೀಯ ಚುಕ್ಕೆ-ಬಿಲ್ಲಿನ ಬಾತುಕೋಳಿ, ಸಾಮಾನ್ಯ ಮೂರ್ಹೆನ್, ಗ್ರೇಟ್ ಕಾರ್ಮೊರಂಟ್, ಭಾರತೀಯ ಬೂದು ಹಾರ್ನ್‌ಬಿಲ್, ಭಾರತೀಯ ಗೋಲ್ಡನ್ ಓರಿಯೊಲ್ ಹಾಗೂ ಸಿನೆರಿಯಸ್ ಟಿಟ್ ಸೇರಿವೆ. ಪಕ್ಷಿ ಅಧ್ಯಯನಕಾರರ ತಂಡದ ಕೆ.ಎಸ್. ಐಶ್ವರ್ಯ ಅವರು, ಪಕ್ಷಿಗಳನ್ನು ವೀಕ್ಷಿಸಿ ಅವುಗಳ ವೈಶಿಷ್ಟ್ಯತೆ, ವರ್ತನೆ ಮತ್ತು ಕುತೂಹಲಕರ ಸಂಗತಿಗಳನ್ನು ದಾಖಲಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ಪಕ್ಷಿಗಳ ಹೆಸರು ಮತ್ತು ವಿಶೇಷತೆಗಳನ್ನು ತಿಳಿದುಕೊಂಡರು. ಪ್ರಾಣಿ ಶಾಸ್ತ್ರ ಪ್ರಾಧ್ಯಾಪಕರಾದ ಐಶ್ವರ್ಯ, ಅಭಿಷೇಕ್ ಉಪ್ಪಾರ, ಪವನ್ ಮೋಹನ್ ರಾವ್, ಡಾ. ರಾಜಶೇಖರ, ಡಾ. ಅನಿಲ್ ಹಾಗೂ ಮಹೇಶ್ ಅವರು ಪಕ್ಷಿಗಳ ವಿಭಿನ್ನ ವರ್ತನೆ ಮತ್ತು ಪರಿಸರದಲ್ಲಿನ ಅವುಗಳ ಪಾತ್ರವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಪ್ರತಿ ವರ್ಷ ಫೆ.13ರಿಂದ 16ರವರೆಗೆ ವಿಶ್ವದಾದ್ಯಂತ ನಡೆಯುವ ಈ ಕಾರ್ಯಕ್ರಮವು ಪಕ್ಷಿ ವೀಕ್ಷಣೆ ಮತ್ತು ದಾಖಲಾತಿ ಕಾರ್ಯಕ್ಕೆ ಮೀಸಲಾಗಿದೆ. ಗುಲ್ಬರ್ಗಾ ವಿವಿಯ ಕ್ಯಾಂಪಸ್‌ನಲ್ಲಿ ಸೋಮವಾರ ಬೆಳಗ್ಗೆ 6.30ರಿಂದ 9:30ರವರೆಗೆ ನಡೆದ ಪಕ್ಷಿ ವೀಕ್ಷಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಆಸಕ್ತ ಪಕ್ಷಿ ವೀಕ್ಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸುಮಾರು 35ಕ್ಕೂ ಹೆಚ್ಚು ವೈವಿಧ್ಯಮಯ ಜಾತಿಯ ಪಕ್ಷಿಗಳನ್ನು ಗುರುತಿಸಿ, ದಾಖಲಿಸಲಾಯಿತು. ಛಾಯಾಚಿತ್ರ ಕೃಪೆ: ಡಾ. ಅನಿಲ್        

ವಾರ್ತಾ ಭಾರತಿ 16 Feb 2026 10:56 pm

ಮಕ್ಕಳಿಗಾಗಿ ಕಟ್ಟುನಿಟ್ಟಿನ ಸಾಮಾಜಿಕ ಮಾಧ್ಯಮ ಕಾನೂನು ಘೋಷಿಸಿದ ಬ್ರಿಟನ್

ಲಂಡನ್: ಆನ್‍ಲೈನ್‍ನಲ್ಲಿ ಮಕ್ಕಳ ಸುರಕ್ಷತೆಯನ್ನು ಬಲಪಡಿಸಲು ಟೆಕ್ ಫ್ಲ್ಯಾಟ್‍ಫಾರ್ಮ್‍ಗಳು ಹಾನಿಕಾರಕ ವಿಷಯಗಳಿಗೆ ಸಂಪೂರ್ಣ ಜವಾಬ್ದಾರರಾಗಿರುವುದನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಕ್ರಮಗಳ ಪ್ಯಾಕೇಜ್ ಅನ್ನು ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ನೇತೃತ್ವದ ಬ್ರಿಟನ್ ಸರ್ಕಾರ ಘೋಷಿಸಿದೆ. ಇದು ಕಾನೂನು ಲೋಪದೋಷಗಳನ್ನು ಮುಚ್ಚುವುದರಿಂದ ಎಲ್ಲಾ ಎಐ(ಕೃತಕ ಬುದ್ದಿಮತ್ತೆ) ಚಾಟ್‍ಬಾಟ್ ಪೂರೈಕೆದಾರರು ಆನ್‍ಲೈನ್ ಸುರಕ್ಷಾ ಕಾಯ್ದೆಗಳನ್ನು ಅನುಸರಿಸಬೇಕಾಗುತ್ತದೆ. ಈ ಕ್ರಮವು ಕಾನೂನುಬಾಹಿರ ಅಥವಾ ಅಪಾಯಕಾರಿ ವಿಷಯಗಳ ವಿರುದ್ದ ತ್ವರಿತವಾಗಿ ಕಾರ್ಯನಿರ್ವಹಿಸಲು ನಿಯಂತ್ರಕರಿಗೆ ಸ್ಪಷ್ಟ ಅಧಿಕಾರವನ್ನು ನೀಡುತ್ತದೆ ಮತ್ತು ಮಕ್ಕಳ ಡಿಜಿಟಲ್ ಹಿತಚಿಂತನೆ ಸಮಾಲೋಚನೆಯ ಪ್ರಸ್ತಾಪಗಳ ಮೇಲೆ ತ್ವರಿತ ಕ್ರಮಕ್ಕೆ ಅಡಿಪಾಯ ಹಾಕುತ್ತದೆ. ಸಾಮಾಜಿಕ ಮಾಧ್ಯಮಗಳಿಗೆ ಕನಿಷ್ಠ ವಯಸ್ಸನ್ನು ನಿಗದಿ ಪಡಿಸುವುದು, ವ್ಯಸನಕಾರಿ ವೈಶಿಷ್ಟ್ಯಗಳನ್ನು ನಿರ್ಬಂಧಿಸುವುದು, ಎಐ ಚಾಟ್‍ಬಾಟ್‍ಗಳನ್ನು ಬಳಸುವುದಕ್ಕೆ ಮಕ್ಕಳ ವಯಸ್ಸನ್ನು ನಿಗದಿಪಡಿಸುವುದು ಇತ್ಯಾದಿ ಆಯ್ಕೆಗಳನ್ನು ಈ ಪ್ರಸ್ತಾಪ ಹೊಂದಿದೆ.

ವಾರ್ತಾ ಭಾರತಿ 16 Feb 2026 10:55 pm

ಬೆಳುವಾಯಿ| ಬಾಯಾರಿಕೆಯಿಂದ ಬಳಲುವವರಿಗೆ ನೀಡುವ ಅಮೃತವೇ ಶುದ್ಧ ಕುಡಿಯುವ ನೀರು: ಸುರೇಶ್ ಗೋಳಾರ

ಖಲಂದರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ವಾರ್ತಾ ಭಾರತಿ 16 Feb 2026 10:54 pm

ಪರಮಾಣು ಮಾತುಕತೆ ವಿಫಲವಾದರೆ ಇರಾನ್ ಮೇಲಿನ ಇಸ್ರೇಲ್ ದಾಳಿ ಬೆಂಬಲಿಸುವುದಾಗಿ ಟ್ರಂಪ್ ಹೇಳಿದ್ದರು: ವರದಿ

ವಾಷಿಂಗ್ಟನ್: ಒಂದು ವೇಳೆ ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಮಾತುಕತೆ ವಿಫಲವಾದರೆ ಇರಾನ್‍ನ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಯ ಮೇಲಿನ ಇಸ್ರೇಲ್ ದಾಳಿಯನ್ನು ಬೆಂಬಲಿಸುವುದಾಗಿ ಕಳೆದ ಡಿಸೆಂಬರ್ ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ನಡೆಸಿದ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದರು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಒಂದು ವೇಳೆ ದಾಳಿ ನಡೆದರೆ ಇಸ್ರೇಲ್‍ಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬ ಬಗ್ಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯೊಳಗೆ ನಡೆದ ಚರ್ಚೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಉನ್ನತ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿನ ಚರ್ಚೆಗಳು ಅಮೆರಿಕ ಯಾವ ಬೆಂಬಲವನ್ನು ನೀಡಬಹುದು ಎಂಬ ಬಗ್ಗೆ ಹೆಚ್ಚು ಕೇಂದ್ರೀಕೃತಗೊಂಡಿತ್ತು. ಇಸ್ರೇಲಿ ವಿಮಾನಗಳಿಗೆ ಇಂಧನ ಮರು ತುಂಬಿಸುವುದು, ಸಂಭವನೀಯ ವಿಮಾನ ಮಾರ್ಗದಲ್ಲಿ ದೇಶಗಳಿಂದ ವಿಮಾನ ಹಾರಾಟಕ್ಕೆ ಅನುಮತಿ ಪಡೆಯುವ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿ ಹೇಳಿದೆ. ಆದರೆ ಯಾವ ದೇಶಗಳು ತಮ್ಮ ವಾಯುಪ್ರದೇಶಗಳ ಬಳಕೆಗೆ ಅವಕಾಶ ನೀಡಬಹುದು ಎಂಬುದು ಸ್ಪಷ್ಟವಾಗಿಲ್ಲ. ಇರಾನ್‍ನ ಮೇಲೆ ದಾಳಿ ನಡೆಸಲು ಅಥವಾ ಇರಾನ್‍ನಿಂದ ದಾಳಿ ನಡೆಸಲು ತಮ್ಮ ವಾಯುಪ್ರದೇಶ ಬಳಸಲು ಅವಕಾಶ ನೀಡುವುದಿಲ್ಲ ಎಂದು ಜೋರ್ಡಾನ್, ಸೌದಿ ಅರೆಬಿಯಾ ಮತ್ತು ಯುಎಇ ಬಹಿರಂಗವಾಗಿ ಹೇಳಿಕೆ ನೀಡಿವೆ. ಇರಾನ್‍ನ ಪರಮಾಣು ಕಾರ್ಯಕ್ರಮಗಳ ಬಗ್ಗೆ ಇರಾನ್-ಅಮೆರಿಕ ಪರೋಕ್ಷ ಮಾತುಕತೆ ಪುನರಾರಂಭಗೊಂಡಿರುವ ಸಂದರ್ಭದಲ್ಲಿ ಈ ವರದಿ ಪ್ರಕಟಗೊಂಡಿದೆ.

ವಾರ್ತಾ ಭಾರತಿ 16 Feb 2026 10:53 pm

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: ಸಂಚರಿಸುವಾಗಲೇ ರೈಲು ಕ್ಲೀನ್; AI ತಂತ್ರಜ್ಞಾನದ ಮೂಲಕ ನಿಗಾ

ನವದೆಹಲಿ: ಭುವನೇಶ್ವರ-ಬೆಂಗಳೂರು ಪ್ರಶಾಂತಿ ಎಕ್ಸ್‌ಪ್ರೆಸ್ ಸೇರಿದಂತೆ ಅದರ ವಿವಿಧ ಆರು ಪ್ರಮುಖ ದೀರ್ಘ-ದೂರದ ರೈಲು ಸೇವೆಗಳನ್ನು ಹೊಸ ರಾಷ್ಟ್ರೀಯ ಸುಧಾರಣೆಗೆ ಆಯ್ಕೆ ಆಗಿವೆ. ಇದರ ಬೆನ್ನಲ್ಲೆ ಪೂರ್ವ ಕರಾವಳಿ ರೈಲ್ವೆಯು (ECoR) ರೈಲುಗಳು ಶುಚೀಕರಣ, ನೈರ್ಮಲ್ಯ ಕಾಪಾಡಲು ಪ್ರಮುಖ ಬದಲಾವಣೆ ತರಲು ಸಜ್ಜಾಗಿದೆ. ಇದಕ್ಕೆ ಸಂಬಂಧಿಸಿದ ಉಪಕ್ರಮಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಿದ್ದಾರೆ.

ಒನ್ ಇ೦ಡಿಯ 16 Feb 2026 10:49 pm

T20 ವಿಶ್ವಕಪ್ | ನಿಸ್ಸಾಂಕ ಶತಕ ಅಂತಿಮ-8ರ ಘಟ್ಟಕ್ಕೆ ಶ್ರೀಲಂಕಾ

ಪಲ್ಲೆಕೆಲೆ : ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕ(ಔಟಾಗದೆ 100, 52 ಎಸೆತ, 10 ಬೌಂಡರಿ, 5 ಸಿಕ್ಸರ್)ಶತಕ ಹಾಗೂ ಕುಸಾಲ್ ಮೆಂಡಿಸ್ ಅರ್ಧಶತಕದ(51 ರನ್‌, 38 ಎಸೆತ, 6 ಬೌಂಡರಿ,1 ಸಿಕ್ಸರ್)ಸಹಾಯದಿಂದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ‘ಬಿ’ಗುಂಪಿನ 30ನೇ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸಿತು. ಈ ಗೆಲುವಿನ ಮೂಲಕ ಶ್ರೀಲಂಕಾ ತಂಡ ಪಂದ್ಯಾವಳಿಯ ಸೂಪರ್-8ರ ಹಂತಕ್ಕೇರಿದೆ. ಸೋಮವಾರ ತನ್ನ ನಿರ್ಣಾಯಕ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ಆಸ್ಟ್ರೇಲಿಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಕಾಂಗರೂ ಪಡೆ ನಿಗದಿತ 20 ಓವರ್‌ಗಳಲ್ಲಿ 181 ರನ್‌ ಗಳಿಸಿ ಆಲೌಟಾಯಿತು. ಗೆಲ್ಲಲು 182 ರನ್‌ ಗುರಿ ಬೆನ್ನಟ್ಟಿದ ಲಂಕಾ ಪಡೆ ನಿಸ್ಸಾಂಕ ಗಳಿಸಿದ ಎರಡನೇ ಟಿ-20 ಶತಕದ ಬಲದಿಂದ 18 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 184 ರನ್‌ ಗಳಿಸಿದೆ. ನಾಯಕ ಮಿಚೆಲ್ ಮಾರ್ಷ್(54 ರನ್‌, 27 ಎಸೆತ, 8 ಬೌಂಡರಿ, 2 ಸಿಕ್ಸರ್)ಹಾಗೂ ಟ್ರಾವಿಸ್ ಹೆಡ್(56 ರನ್‌, 29 ಎಸೆತ, 7 ಬೌಂಡರಿ, 3 ಸಿಕ್ಸರ್)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ‘ಬಿ’ಗುಂಪಿ? 30ನೇ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡದ ಗೆಲುವಿಗೆ 182 ರನ್‌ ಗುರಿ ನೀಡಿತು.

ವಾರ್ತಾ ಭಾರತಿ 16 Feb 2026 10:44 pm

Raichur | ಪತ್ರಕರ್ತ ಸೈಯದ್ ನಸೀಮ್ ಆಶ್ರಫ್ ಕುಟುಂಬಕ್ಕೆ ಚೆಕ್ ವಿತರಣೆ

ಪತ್ರಕರ್ತರು ಸಮಾಜದ ಹಾಗೂ ಸರ್ಕಾರದ ಎರೆಡು ಕಣ್ಣುಗಳು: ಸಲೀಂ ಅಹ್ಮದ್

ವಾರ್ತಾ ಭಾರತಿ 16 Feb 2026 10:44 pm

CM Change Row: ವಿದೇಶ ಪ್ರವಾಸ ಹೊರಟ ಕಾಂಗ್ರೆಸ್‌ ಶಾಸಕರ ತಂಡ; ಸಂಭಾವ್ಯ 9 ಹೆಸರು! ಯಾರೆಲ್ಲಾ?

ಕರ್ನಾಟಕ ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಕಾಂಗ್ರೆಸ್‌ ಹಲವು ಶಾಸಕರು ವಿದೇಶಕ್ಕೆ ಪ್ರವಾಸ ಹೊರಟಿದ್ದಾರೆ. ಮಂಗಳವಾರ ಪ್ರಯಾಣ ಬೆಳಸಲಿದ್ದಾರೆ. ಈ ಪೈಕಿ ಎಂಎಲ್‌ಎಗಳು ಹಾಗೂ ಎಂಎಲ್‌ಸಿಗಳು ಇದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗೆ ತೆರಳಲಿದ್ದು, ಮಾರ್ಚ್‌ ಮೊದಲ ವಾರ ವಾಪಸ್‌ ಬರಲಿದ್ದಾರೆ ಎನ್ನಲಾಗಿದೆ. ಪ್ರವಾಸ ಹೊರಟ ಕೆಲ ಶಾಸಕರ ಹೆಸರು ಇಲ್ಲಿವೆ.

ವಿಜಯ ಕರ್ನಾಟಕ 16 Feb 2026 10:20 pm

178 ಖಾಸಗಿ ಆಸ್ಪತ್ರೆಗಳ ಪರವಾನಿಗೆ ರದ್ದುಗೊಳಿಸಿದ ಉತ್ತರಪ್ರದೇಶ ಸರಕಾರ

ಲಕ್ನೋ: ದೂರುಗಳು ಹಾಗೂ ತಪಾಸಣೆಗಳ ಬಳಿಕ ಉತ್ತರಪ್ರದೇಶ ಸರಕಾರ 178 ಖಾಸಗಿ ಆಸ್ಪತ್ರೆಗಳ ಪರವಾನಿಗೆಗಳನ್ನು ರದ್ದುಗೊಳಿಸಿದೆ. ಸಕ್ಷಮ ಪ್ರಾಧಿಕಾರದ ಮುಂದೆ ವಿಚಾರಣೆ ನಡೆದ ಬಳಿಕ 59 ಆಸ್ಪತ್ರೆಗಳ ಪರವಾನಿಗೆಯನ್ನು ಮರು ಸ್ಥಾಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ವಿಧಾನ ಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳ ವಿರುದ್ಧದ ದೂರುಗಳು ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಸಮಾಜವಾದಿ ಪಕ್ಷದ ಶಾಸಕ ಅತುಲ್ ಪ್ರಧಾನ್ ಅವರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ಇದಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಆರೋಪದಲ್ಲಿ 281 ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. ಸುಮಾರು 500 ದೂರುಗಳನ್ನು ಸ್ವೀಕರಿಸಲಾಗಿದೆ. 178 ಆಸ್ಪತ್ರೆಗಳ ಪರವಾನಿಗೆಗಳನ್ನು ರದ್ದುಗೊಳಿಸಿದ್ದೇವೆ. ಪರವಾನಿಗೆಗಳನ್ನು ರದ್ದುಗೊಳಿಸಿದ ಬಳಿಕ ಹಲವು ಆಸ್ಪತ್ರೆಗಳು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದವು. ಪ್ರಾಧಿಕಾರವು ಮೇಲ್ಮನವಿಗಳನ್ನು ಆಲಿಸಿತು. ವಿಚಾರಣೆಯ ನಂತರ ಅದು 59 ಆಸ್ಪತ್ರೆಗಳ ಪರವಾನಿಗೆಗಳನ್ನು ಮರು ಸ್ಥಾಪಿಸಿತು ಎಂದು ಅವರು ಹೇಳಿದ್ದಾರೆ. ವೈದ್ಯಕೀಯ ಆರೋಗ್ಯ ಖಾತೆಯನ್ನು ಕೂಡ ನಿರ್ವಹಿಸುತ್ತಿರುವ ಬ್ರಜೇಶ್ ಪಾಠಕ್, 533 ಆಸ್ಪತ್ರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಿಯಮಗಳ ಅನುಸರಣೆಯನ್ನು ಸುಧಾರಿಸುವಂತೆ ನಿರ್ದೇಶಿಸಿ 1,542 ಆಸ್ಪತ್ರೆಗಳಿಗೆ ನೋಟಿಸು ನೀಡಲಾಗಿದೆ ಎಂದರು. ಖಾಸಗಿ ಆಸ್ಪತ್ರೆಗಳ ಅತಿಯಾದ ಬಿಲ್ ಅನ್ನು ನಿಯಂತ್ರಿಸಲು, ಸಮಾಲೋಚನಾ ಶುಲ್ಕ, ವೈದ್ಯಕೀಯ ಪರೀಕ್ಷೆಯ ಶುಲ್ಕಗಳಲ್ಲಿ ಏಕರೂಪತೆ ತರಲು ಹಾಗೂ ಅನಿಯಂತ್ರಿತ ಬೆಲೆ ಏರಿಕೆಯನ್ನು ತಡೆಯಲು ಯೋಜನೆ ಇದೆಯೇ ಎಂದು ಕೂಡ ಅತುಲ್ ಪ್ರಧಾನ್ ಅವರು ಸರಕಾರವನ್ನು ಕೇಳಿದರು. ಇದಕ್ಕೆ ಪಾಠಕ್, ರಾಜ್ಯದಲ್ಲಿ ಪ್ರಸ್ತುತ ಖಾಸಗಿ ವೈದ್ಯರ ಸಮಾಲೋಚನಾ ಶುಲ್ಕ ಅಥವಾ ವೈದ್ಯಕೀಯ ಪರೀಕ್ಷೆಗಳಿಗೆ ಪ್ರಮಾಣೀಕೃತ ದರಗಳನ್ನು ನಿಗದಿಪಡಿಸುವ ಯಾವುದೇ ನೀತಿ ಇಲ್ಲ ಎಂದರು.

ವಾರ್ತಾ ಭಾರತಿ 16 Feb 2026 10:20 pm

Madhya Pradesh | ಮೂಲ ಸೌಕರ್ಯಗಳಿಲ್ಲದೆ ಒಂದೇ ದಿನದಲ್ಲಿ 175 ಬುಡಕಟ್ಟು ಮಹಿಳೆಯರಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ !

ಧಾರ್(ಮಧ್ಯಪ್ರದೇಶ): ಇಲ್ಲಿನ ಬುಡಕಟ್ಟು ಪ್ರದೇಶದಲ್ಲಿ ನಡೆದ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮೂಲ ಭೂತ ಸೌರ್ಕರ್ಯಗಳಿಲ್ಲದೆ 175ಕ್ಕೂ ಅಧಿಕ ಮಹಿಳೆಯರಿಗೆ ಒಂದೇ ದಿನದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ವರದಿಯಾಗಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಮಧ್ಯಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ. ಬಾಘ್ ಸಮುದಾಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕುಟುಂಬ ನಿಯಂತ್ರಣ ಶಿಬಿರದಲ್ಲಿ ಈ ಘಟನೆ ನಡೆದಿದೆ. ಸುಮಾರು 180 ಬುಡಕಟ್ಟು ಮಹಿಳೆಯರು ಬೆಳಗ್ಗೆ ಬಂದಿದ್ದರು. ಆದರೆ, ಅಲ್ಲಿ ಅವರಿಗೆ ಕುಡಿಯುವ ನೀರು, ಆಸನ, ಬೆಡ್‌ನಂತಹ ಮೂಲಭೂತ ಅವಶ್ಯಕತೆಗಳು ಕೊರತೆ ಇತ್ತು. ಪ್ರತ್ಯಕ್ಷದರ್ಶಿಗಳು ಹಾಗೂ ಸ್ಥಳೀಯ ದಾಖಲೆಗಳ, ಪ್ರಕಾರ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದವರನ್ನು ತೆರದ ಸ್ಥಳದಲ್ಲಿ ಬಿಸಿಲಿನಲ್ಲಿ ಇನ್ನು ಕೆಲವರನ್ನು ತೇವವಿರುವ ಸ್ಥಳದಲ್ಲಿ ಮಲಗಿಸಲಾಗಿದೆ. ಬಿಸಿಲು ಹಾಗೂ ಅಸ್ವಸ್ಥತೆಯಿಂದ ಅವರು ನೋವಿನಿಂದ ನರಳುತ್ತಿದ್ದರು. ಅವರ ಕುಟುಂಬದ ಸದಸ್ಯರು ಬಟ್ಟೆಯಿಂದ ಗಾಳಿ ಬೀಸುತ್ತಿದ್ದರು. ನಮಗೆ ಬೆಳಗ್ಗೆ 8 ಗಂಟೆಗೆ ಬರಲು ಹೇಳಲಾಗಿತ್ತು. ಆದರೆ, ಇಡೀ ದಿನ ನೀರು ಆಹಾರ ನೀಡಲಿಲ್ಲ ಎಂದು ಹಲವು ಮಹಿಳೆಯರು ಆರೋಪಿಸಿದ್ದಾರೆ.

ವಾರ್ತಾ ಭಾರತಿ 16 Feb 2026 10:16 pm

ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ವಿಶ್ವ ದಾಖಲೆ

ಹೊಸದಿಲ್ಲಿ: ಪುರುಷರ ಟಿ20 ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಆಗಿ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಸೋಮವಾರ ಕ್ರಿಕೆಟ್ ಇತಿಹಾಸಕ್ಕೆ ಸೇರ್ಪಡೆಗೊಂಡಿದ್ದಾರೆ. ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಮ್‌ನಲ್ಲಿ ಸೋಮವಾರ ನಡೆದ ಯುಎಇ ವಿರುದ್ಧದ ಅಫ್ಘಾನಿಸ್ತಾನದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅವರು ಈ ದಾಖಲೆಯನ್ನು ನಿರ್ಮಿಸಿದರು. ಈ ಪಂದ್ಯದಲ್ಲಿ ಪಡೆದ ಒಂದು ವಿಕೆಟ್ ಅವರಿಗೆ ಈ ಮೈಲಿಗಲ್ಲನ್ನು ಸ್ಥಾಪಿಸಲು ನೆರವು ನೀಡಿತು. ರಶೀದ್ ಈಗಾಗಲೇ ಅಂತರ್‌ರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದಿರುವ ಬೌಲರ್ ಆಗಿದ್ದಾರೆ.

ವಾರ್ತಾ ಭಾರತಿ 16 Feb 2026 10:13 pm

‘ಧುರಂಧರ್’ ಚಿತ್ರದಲ್ಲಿ ಕರೆನ್ಸಿ ಪ್ಲೇಟ್‌ಗಳ ದೃಶ್ಯ| “ಇದು ನಿಜವಾಗಿದ್ದರೆ ಸರ್ಕಾರದ ಬಳಿ ದಾಖಲೆಗಳಿರಬೇಕಲ್ಲವೇ?: ಕಾರ್ತಿ ಚಿದಂಬರಂ ಪ್ರಶ್ನೆ

ಹೊಸದಿಲ್ಲಿ: ‘ಧುರಂಧರ್’ ಚಿತ್ರದಲ್ಲಿ ತಮ್ಮ ತಂದೆ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಹಾಗೂ ತನ್ನನ್ನು ನಕಲಿ ಕರೆನ್ಸಿ ಒಪ್ಪಂದಕ್ಕೆ ಸಂಪರ್ಕಿಸಲಾಗಿದೆ ಎಂಬ ಆರೋಪಗಳ ಕುರಿತು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೇಳಿಕೆಗಳನ್ನು ಅವರು ತಳ್ಳಿಹಾಕಿದ್ದಾರೆ. ಇತ್ತೀಚೆಗೆ ANI ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಕಾರ್ತಿ ಚಿದಂಬರಂ, ಆರೋಪಗಳು “ಸತ್ಯ, ಮಿಥ್ಯ ಮತ್ತು ವಾಟ್ಸಾಪ್ ಫಾರ್ವರ್ಡ್‌ಗಳ ಮಿಶ್ರಣ”ವಾಗಿವೆ ಎಂದು ಹೇಳಿದರು. “ಇಲ್ಲ, ನಾನು ‘ಧುರಂಧರ್’ ಚಿತ್ರವನ್ನು ನೋಡಿಲ್ಲ. ಆದರೆ ಅದರಲ್ಲಿ ನನಗೆ ಅತಿಥಿ ಪಾತ್ರವಿದೆ ಎಂದು ಕೇಳಿದ್ದೇನೆ. ಅದು ಮೂರು ಗಂಟೆಗಳ ಅವಧಿಯ ಚಿತ್ರ ಎಂದು ತಿಳಿದುಬಂದಿದೆ. ಬಹುಶಃ ಅನೇಕ ವಿಮಾನ ಪ್ರಯಾಣಗಳಲ್ಲಿ ಅದನ್ನು ನೋಡಬೇಕಾಗಬಹುದು,” ಎಂದು ಅವರು ಹಾಸ್ಯಮಿಶ್ರಿತವಾಗಿ ಹೇಳಿದರು. “ನಿರ್ಮಾಪಕರು ನನ್ನ ಅತಿಥಿ ಪಾತ್ರದಲ್ಲಿ ಯಾರನ್ನು ನಟಿಸಬೇಕು ಎಂದು ಕೇಳಿದ್ದರೆ, ನಾನು ಕೆಲವು ಸಲಹೆಗಳನ್ನು ನೀಡುತ್ತಿದ್ದೆ,” ಎಂದೂ ಅವರು ಉಲ್ಲೇಖಿಸಿದರು. ತಮ್ಮ ಪಾತ್ರವನ್ನು ಯಾರು ನಿರ್ವಹಿಸಬೇಕು ಎಂಬ ಪ್ರಶ್ನೆಗೆ, “ನನ್ನ ಪಾತ್ರಕ್ಕೆ ಪಿಯರ್ಸ್ ಬ್ರಾನ್ಸನ್ ಹಾಗೂ ನನ್ನ ತಂದೆಯ ಪಾತ್ರಕ್ಕೆ ಮೈಕೆಲ್ ಕೇನ್ ಸೂಕ್ತರು,” ಎಂದು ವ್ಯಂಗ್ಯವಾಗಿ ಅವರು ಉತ್ತರಿಸಿದರು. “ಜನರು ಸತ್ಯ, ಮಿಥ್ಯ ಮತ್ತು ವಾಟ್ಸಾಪ್ ಫಾರ್ವರ್ಡ್‌ಗಳನ್ನು ಮಿಶ್ರಣ ಮಾಡಿಕೊಳ್ಳಲು ಮುಂದಾದರೆ, ನಾನು ಏನು ಮಾಡಬಹುದು?” ಎಂದು ಅವರು ನಗುತ್ತಾ ಪ್ರಶ್ನಿಸಿದರು. ಚಿತ್ರದಲ್ಲಿ ಉಲ್ಲೇಖಿಸಲಾದ ಲಂಡನ್ ಒಪ್ಪಂದದ ದೃಶ್ಯವನ್ನು ಕುರಿತು ಪ್ರತಿಕ್ರಿಯಿಸಿದ ಅವರು, ಭಾರತೀಯ ಸಚಿವರು ಮತ್ತು ಅವರ ಪುತ್ರ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗೆ ಕರೆನ್ಸಿ ಮುದ್ರಣ ಟೆಂಪ್ಲೇಟ್‌ಗಳನ್ನು ಹಸ್ತಾಂತರಿಸಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿ, “ಅದು ನಿಜವಾಗಿದ್ದರೆ ಭಾರತ ಸರ್ಕಾರದ ಬಳಿ ಅದರ ದಾಖಲೆಗಳಿರಬೇಕಲ್ಲವೇ?” ಎಂದು ಪ್ರಶ್ನಿಸಿದರು. “ದುರದೃಷ್ಟವಶಾತ್, ವಾಟ್ಸಾಪ್ ಮತ್ತು ಮಾರ್ಕ್ ಝುಕರ್‌ಬರ್ಗ್‌ಗೆ ಧನ್ಯವಾದಗಳು, ಜನರು ಸತ್ಯ ಮತ್ತು ಮಿಥ್ಯಗಳನ್ನು ತಮ್ಮ ಇಚ್ಛೆಯಂತೆ ಪರಿಶೀಲಿಸಬಹುದು,” ಎಂದ ಅವರು, ಕೃತಕ ಬುದ್ಧಿಮತ್ತೆ (AI) ಸುಳ್ಳು ಮಾಹಿತಿಯ ಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು

ವಾರ್ತಾ ಭಾರತಿ 16 Feb 2026 10:08 pm

ಭಾರತ ತಂಡದ ಕುಲ್ದೀಪ್‌ ಯಾದವ್‌, ಹಾರ್ದಿಕ್ ಪಾಂಡ್ಯ ನಡುವೆ ಗಲಾಟೆ: ಕಾರಣ ಇಲ್ಲಿದೆ ತಿಳಿಯಿರಿ

Team India Players: ಕೊಲೊಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ 2026 ಗುಂಪು ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 61 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಟೀಂ ಇಂಡಿಯಾ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಆದರೆ, ಪಂದ್ಯ ಮುಕ್ತಾಯವಾದ ಬಳಿಕ ಮೈದಾನದಲ್ಲಿ ಕಂಡುಬಂದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಒನ್ ಇ೦ಡಿಯ 16 Feb 2026 10:06 pm

ಮಂಗಳೂರು: ಆರ್ ಎಸ್ ಎಸ್ ವಿರುದ್ಧ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಬಿಜೆಪಿ ಖಂಡನೆ

ಮಂಗಳೂರು: ಆರ್ ಎಸ್ ಎಸ್ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ನೀಡಿದ ಹೇಳಿಕೆಯನ್ನು ಖಂಡಿಸುವುದಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಸಚಿವ ಪ್ರೀಯಾಂಕ್‌ ಖರ್ಗೆ ದಕ್ಷಿಣ ಕನ್ನಡದ ಅಭಿವೃದ್ಧಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಸಚಿವನಾಗಿ ಮಾಡಿರುವ ಕೆಲಸಗಳ ಬಗ್ಗೆ ಜನರ ಮುಂದಿಡಲಿ ಎಂದರು. ಪುತ್ತೂರು ಶಾಸಕರು ಚಲವಾದಿ ನಾರಾಯಣ ಸ್ವಾಮಿಯವರನ್ನು ನಿಂದಿಸಿರುವ ಬಗ್ಗೆ ನೀಡಿದ ಹೇಳಿಕೆಗೆ ಬಿಜೆಪಿ ಖಂಡಿಸುವುದಾಗಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ, ಬಿಜೆಪಿಯ ಪದಾಧಿಕಾರಿಗಳಾದ ಪೇಮಾ ನಂದ ಶೆಟ್ಟಿ, ಸಂಜಯ ಪ್ರಭು, ವಸಂತ ಪೂಜಾರಿ, ಯತೀಶ್ ಆಳ್ವ , ದಿನೇಶ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 10:05 pm

ಆರೋಗ್ಯ ಕವಚ ಸೇವೆಯ ತಂತ್ರಜ್ಞ, ಪೈಲೆಟ್‍ಗಳಿಗೆ ಬೋನಸ್ ನೀಡಲು ಆದೇಶ

ಬೆಂಗಳೂರು : ರಾಜ್ಯ ಸರಕಾರವು ಆರೋಗ್ಯ ಕವಚ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ತುರ್ತು ವೈದ್ಯಕೀಯ ತಂತ್ರಜ್ಞ(ಇಎಂಟಿಎಸ್) ಹಾಗೂ ಪೈಲೆಟ್‍ಗಳಿಗೆ ಅನುಭವ ಬೋನಸ್ ಹಾಗೂ ಪ್ರೋ ತ್ಸಾಹ ಧನವನ್ನು ನೀಡಲಾಗುವುದು ಎಂದು ಆದೇಶ ಹೊರಡಿಸಿದೆ. ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು 108 ಆರೋಗ್ಯ ಕವಚ ಹಾಗೂ ಆರೋಗ್ಯ ಸಹಾಯವಾಣಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ನಿರ್ವಹಿಸಲು 1,700 ತಂತ್ರಜ್ಞರು ಹಾಗೂ 1,700 ಪೈಲಟ್ಸ್ ಹುದ್ದೆಗಳನ್ನು ಒಳಗೊಂಡಂತೆ ಒಟ್ಟಾರೆ 3,600 ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿತ್ತು. ಈಗ ಈ ಸಿಬ್ಬಂದಿಗೆ ಬೋನಸ್ ಹಾಗೂ ಪ್ರೋತ್ಸಾಹ ಧನ ನೀಡಲು ಕ್ರಮವಹಿಸಿದೆ. 108 ಆರೋಗ್ಯ ಕವಚ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ಇ.ಎಂ.ಟಿ ಮತ್ತು ಪೈಲೆಟ್‍ಗಳಿಗೆ ಕನಿಷ್ಟ ವೇತನ ದರದಲ್ಲಿ ಪ್ರತಿ ವರ್ಷಕ್ಕೆ ಶೇ.2ರಷ್ಟು 15 ವರ್ಷಗಳಿಗೆ ಗರಿಷ್ಠ ಶೇ.30ರಷ್ಟು ಅನುಭವ ಬೋನಸ್ ಅನ್ನು ನೀಡಲಾಗುತ್ತದೆ. ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನವನ್ನು ಶೇ.10ರವರೆಗೆ ನೀಡಲಾಗುವುದು. ಇದಕ್ಕೆ ಆರೋಗ್ಯ ಇಲಾಖೆಯು ಮಾನದಂಡಗಳನ್ನು ಸಿದ್ಧಪಡಿಸಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 16 Feb 2026 10:04 pm

ಕಂಬಳಪದವು: ಹಿಟ್ ಆ್ಯಂಡ್‌ ರನ್; ಕಾರ್ಮಿಕ ಮೃತ್ಯು

ಕೊಣಾಜೆ: ಕಂಬಳಪದವು ಬಳಿ ಸ್ಕೂಟರೊಂದು ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ರವಿವಾರ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಚತ್ತೀಸ್ ಗಡ ನಿವಾಸಿ ಪರಶುರಾಮ(39) ಎಂದು ಗುರುತಿಸಲಾಗಿದೆ. ಕಂಬಳಪದವು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ರವಿವಾರ ರಾತ್ರಿ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು ಈ ವೇಳೆ ಅತೀ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದು ಪರಾರಿಯಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಅವರು ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Feb 2026 10:01 pm

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ: ಎಫ್‍ಐಆರ್

ಬೆಂಗಳೂರು : ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದಿದ್ದ ದುಷ್ಕರ್ಮಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪೊಲೀಸ್ ಆಯುಕ್ತರ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ನಕಲಿ ಫೇಸ್‍ಬುಕ್ ಖಾತೆ ಸೃಷ್ಟಿಸಿ ಗಣ್ಯರ ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಪೊಲೀಸ್ ಆಯುಕ್ತರದ್ದೇ ಅಸಲಿ ಖಾತೆಯೆಂದು ಸಾಕಷ್ಟು ಜನ ಸಂದೇಶ ಕಳುಹಿಸಿದ್ದಾರೆ. ಬಳಿಕ ವಂಚನೆಯ ಮೂಲಕ ಹಣ ಪಡೆದಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಸಂಬಂಧ ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶ್ರೀಶೈಲ್ ಬಾಗಲೂರ ಭೀಮರಾಯ್ ನೀಡಿರುವ ದೂರಿನ ಅನ್ವಯ ಎಫ್‍ಐಆರ್ ದಾಖಲಾಗಿದೆ.

ವಾರ್ತಾ ಭಾರತಿ 16 Feb 2026 10:01 pm

ಬೆಂಗಳೂರಿನ ನಾಯಂಡಹಳ್ಳಿಯಲ್ಲಿ 4 ಪ್ರಮುಖ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ; ಯಾವೆಲ್ಲಾ?

ಬೆಂಗಳೂರು ದಕ್ಷಿಣ, ಪಶ್ಚಿಮ ಭಾಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿಯೇ 4 ಪ್ರಮುಖ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಜತೆಗೆ ರೈಲ್ವೆ ಮೇಲ್ಸೇತುವೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಫೆ.17 ಕ್ಕೆ ಉದ್ಘಾಟಿಸಲಿದ್ದಾರೆ.

ವಿಜಯ ಕರ್ನಾಟಕ 16 Feb 2026 9:56 pm

ಮಾಹಿತಿ ಆಯೋಗದ ನಿರ್ದೇಶನದಂತೆ ಕಾರ್ಯಪಾಲನ ವರದಿ ನಾಪತ್ತೆ ಕುರಿತ ತನಿಖೆಗೆ ಸಮಿತಿ ರಚನೆ

ಬೆಂಗಳೂರು : ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಯ 2012-13ನೇ ಸಾಲಿನ ಕಾರ್ಯಪಾಲನ ವರದಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಾಹಿತಿ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದೆ. ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಬಾಲಸುಬ್ರಮಣ್ಯ ಪ್ರಸಾದ್ ಅವರು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‍ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಅವಧಿಯ ಕಾರ್ಯಪಾಲನ ವರದಿ ನೀಡುವಂತೆ ಪ್ರವಾಸೋದ್ಯಮ ಸಚಿವಾಲಯಕ್ಕೆ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದ್ದರು. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‍ನಿಂದ ಅಧಿಕಾರಿ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿರುವ ಪತ್ರ ಬಾಲಸುಬ್ರಮಣ್ಯ ಪ್ರಸಾದ್ ಅವರ ಬಳಿಯಲ್ಲಿ ಇದೆ. ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಿದ ಅರ್ಜಿಗೆ ಪ್ರವಾಸೋದ್ಯಮ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಕಾರ್ಯಪಾಲನ ವರದಿ ಲಭ್ಯವಿಲ್ಲವೆಂಬ ಉತ್ತರ ನೀಡಿದ್ದರು. ಬಾಲಸುಬ್ರಮಣ್ಯ ಪ್ರಸಾದ್ ಕರ್ನಾಟಕ ಮಾಹಿತಿ ಆಯೋಗದಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಹಾಗೂ ಅರಣ್ಯ ಇಲಾಖೆಯಲ್ಲಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದರು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಎರಡು ಕಡೆ ಪತ್ರ ಬರೆದು ಕೋರಿದಾಗ ಅಲ್ಲಿಯೂ ಕಾರ್ಯಪಾಲನ ವರದಿ ಲಭ್ಯವಿಲ್ಲವೆಂಬ ಉತ್ತರ ಸಿಕ್ಕಿತ್ತು. ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ಮೊಹಮ್ಮದ್ ಇಬ್ರಾಹಿಂ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ಹಾಗೂ ಅರ್ಜಿದಾರರಿಗೆ 3 ಸಾವಿರ ರೂ. ಪರಿಹಾರಕ್ಕೂ ಆದೇಶ ನೀಡಲಾಗಿತ್ತು. ನಿವೃತ್ತ ನೌಕರರೊಬ್ಬರ ಕಾರ್ಯಪಾಲನ ವರದಿಯೇ ಲಭ್ಯವಿಲ್ಲವೆಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ ಚಂದ್ರ ಅವರಿಗೆ ಈ ಬಗ್ಗೆ ತನಿಖೆ ಮಾಡಿ ಅನುಪಾಲನ ವರದಿ ಸಲ್ಲಿಸಲು ಉನ್ನತ ಅಧಿಕಾರಿಗಳ ನೇತೃತ್ವದ ಸಮಿತಿ ರಚನೆ ಮಾಡುವಂತೆ ನಿರ್ದೇಶನ ನೀಡಿದ್ದರು. ಮಾಹಿತಿ ಆಯೋಗದ ನಿರ್ದೇಶನದಂತೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯಲ್ಲಿ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು, ಅರಣ್ಯ ಇಲಾಖೆ ಜಂಟಿ ಕಾರ್ಯದರ್ಶಿ, ಕಾನೂನು ಇಲಾಖೆ ಉಪ ಕಾರ್ಯದರ್ಶಿ, ಡಿಪಿಎಆರ್‍ನ ಉಪ ಕಾರ್ಯದರ್ಶಿ ಸದಸ್ಯರಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಶಾಖಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಮಿತಿಯು 30 ದಿನಗಳ ಕಾಲಾವಕಾಶವನ್ನು ಕೋರಿದೆ ಎಂದು ಪ್ರಕಟನೆ ತಿಳಿಸಿದೆ.  

ವಾರ್ತಾ ಭಾರತಿ 16 Feb 2026 9:55 pm

ಕಟಪಾಡಿ ಓವರ್‌ಪಾಸ್ ಕಾಮಗಾರಿ: ಸಂಸದರಿಂದ ಪರಿಶೀಲನೆ

ಕಾಪು, ಫೆ.16: ಕಟಪಾಡಿ ಜಂಕ್ಷನ್ ಬಳಿ ಈಗಾಗಲೇ ಓವರ್ ಪಾಸ್ ಕಾಮಗಾರಿ ಆರಂಭವಾಗಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಸ್ಥಳಕ್ಕೆ ಇಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಮಾರ್ಚ್ ತಿಂಗಳ ಅಂತ್ಯದೊಳಗೆ ಒಂದು ಭಾಗದ ಓವರ್ ಪಾಸ್ ಕಾಮಗಾರಿ ಪೂರ್ಣಗೊಳಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀನಿವಾಸ್ ಕಿಣಿ, ಸುಭಾಸ್ ಬಲ್ಲಾಳ್, ಪವಿತ್ರ ಶೆಟ್ಟಿ, ಕೋಟೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹರ್ಷಿತ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕೃಷ್ಣ ರಾವ್, ಮೂಡಬೆಟ್ಟು ಮಹಾಶಕ್ತಿ ಕೇಂದ್ರದ ನಿತಿನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 9:55 pm

ಐವರು ಸಾಹಿತಿಗಳಿಗೆ ಬ್ಯಾರಿವಾರ್ತೆ ಗೌರವ ಪ್ರಶಸ್ತಿ

ಮಂಗಳೂರು: ಬ್ಯಾರಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಮಾಸಿಕ 'ಬ್ಯಾರಿವಾರ್ತೆ' ತನ್ನ ದಶಮಾನೋತ್ಸವ ಸಂಭ್ರಮ ಆಚರಿಸುತ್ತಿದ್ದು, ಈ ಸಂದರ್ಭ 5 ಬ್ಯಾರಿ ಸಾಹಿತಿಗಳಿಗೆ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದೆ. ಬ್ಯಾರಿ ವಾರ್ತೆಯಲ್ಲಿ ಕಳೆದ 5 ವರ್ಷಗಳಿಂದ ನಿರಂತರ 63 ಅಂಕಣಗಳನ್ನು ಬರೆದ ಹಫ್ಸಾ ಬಾನು ಬೆಂಗಳೂರು, ಜನಪ್ರಿಯ ಬ್ಯಾರಿ ಬರಹಗಾರ, ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಅನಿವಾಸಿ ಪತ್ರಕರ್ತ ಅಬ್ದುಲ್ ಸಲಾಮ್ ದೇರಳಕಟ್ಟೆ, ಜನಪ್ರಿಯ ಕವಿ, ಅಂಕಣಗಾರ ಯು.ಕೆ. ಖಾಲಿದ್ ಉಳ್ಳಾಲ್ಕಾರ್ ಮತ್ತು ಬ್ಯಾರಿವಾರ್ತೆ ಪತ್ರಿಕೆಗಾಗಿ ಕಳೆದ ಹತ್ತು ವರ್ಷಗಳಿಂದ 75ಕ್ಕೂ ಹೆಚ್ಚು ಲೇಖನಗಳನ್ನು ಬರೆದ ಝುಲೇಖ ಮುಮ್ತಾಝ್ ಇವರು ಬ್ಯಾರಿವಾರ್ತೆ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಪಾದಕ ಬಶೀರ್ ಬೈಕಂಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Feb 2026 9:53 pm

ಏರೋ ಎಂಜಿನ್ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸಲು ಸರಕಾರ ಬದ್ಧ : ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಒ)ಯು ಭಾರತದ ಕಾರ್ಯತಂತ್ರ ಸಾಮಥ್ರ್ಯದ ಭದ್ರ ಬುನಾದಿಯಾಗಿದೆ. ವೇಗವಾಗಿ ವಿಕಸನಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಆಯಾಮದಲ್ಲಿ ಏರೋ ಎಂಜಿನ್ ತಂತ್ರಜ್ಞಾನದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವ ಅಗತ್ಯವಿದೆ. ಭಾರತದಲ್ಲಿ ಏರೋ ಎಂಜಿನ್‍ಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಸೋಮವಾರ ನಗರದಲ್ಲಿರುವ ಡಿಆರ್‍ಡಿಒದ ಗ್ಯಾಸ್ ಟರ್ಬೈನ್ ಸಂಶೋಧನಾ ಸ್ಥಾಪನೆ( ಜಿಟಿಆರ್‍ಇ)ಗೆ ಭೇಟಿ ನೀಡಿದ ಅವರು, ದೇಶೀಯ ಮಿಲಿಟರಿ ಅನಿಲ ಟರ್ಬೈನ್ ಎಂಜಿನ್ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿ, ಸಂಸ್ಥೆಯ ಸ್ಥಾಪನೆಯ ಯೋಜನೆಗಳು, ಭಾರತೀಯ ಕೈಗಾರಿಕೆ, ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳೊಂದಿಗಿನ ಸಂವಹನ ಮತ್ತು ರಕ್ಷಣಾ ಪಡೆಗಳಿಗೆ ಒದಗಿಸಲಾದ ಬೆಂಬಲದ ಬಗ್ಗೆ ಮಾಹಿತಿ ಪಡೆದುಕೊಂಡರು. ವಿವಿಧ ದೇಶೀಯ ಎಂಜಿನ್‍ಗಳು ಮತ್ತು ಅವುಗಳ ಭಾಗಗಳನ್ನು ಪ್ರದರ್ಶಿಸುವ ಪ್ರದರ್ಶನಕ್ಕೆ ಭೇಟಿ ನೀಡಿದಲ್ಲದೆ, ಕಾವೇರಿ ಎಂಜಿನ್‍ನ ಸಂಪೂರ್ಣ ಆಫ್ಟರ್ ಬರ್ನರ್ ಎಂಜಿನ್ ಪರೀಕ್ಷೆಯನ್ನು ವೀಕ್ಷಿಸಿದರು. ಅಲ್ಲದೇ, ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ರಕ್ಷಣಾ ಸಚಿವರು, ಸ್ವಾವಲಂಬನೆಯ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಟಿಆರ್‌ಇ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಪೂರೈಕೆ ಸರಣಿಗಳು ಮುರಿಯುತ್ತಿವೆ ಮತ್ತು ಹೊಸ ಪೂರಕ ವ್ಯವಸ್ಥೆಗಳು ಅಭಿವೃದ್ಧಿ ಹೊಂದುತ್ತಿವೆ. ಸ್ಥಳೀಯ ನಿರ್ಣಾಯಕ ತಂತ್ರಜ್ಞಾನಗಳನ್ನು ಹೊಂದಿರುವ ರಾಷ್ಟ್ರಗಳು ಸುರಕ್ಷಿತವಾಗಿ, ಸುಭದ್ರವಾಗಿ ಮತ್ತು ತಮ್ಮನ್ನು ತಾವು ಉಳಿಸಿಕೊಳ್ಳುತ್ತವೆ ಎಂದು ಹೇಳಿದ ರಾಜನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆಯನ್ನು ಸಾಧಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಏರೋ ಎಂಜಿನ್‍ಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವಾಗ, ರಾಷ್ಟ್ರವ್ಯಾಪಿ ಸದೃಢವಾದ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಯ ಎಂಜಿನ್‍ಗಳ ಮೇಲೆ ಶ್ರಮಿಸಲು ಮತ್ತು ಗಮನಹರಿಸಲು ಪ್ರಯೋಗಾಲಯವನ್ನು ಪ್ರೋತ್ಸಾಹಿಸಬೇಕಿದೆ. ನಾವು ಅತ್ಯಾಧುನಿಕ ಮಧ್ಯಮ ಕಾಂಬ್ಯಾಟ್ ಏರ್‍ಕ್ರಾಫ್ಟ್ (ಎಎಂಸಿಎ) ನ ವಿನ್ಯಾಸ ಮತ್ತು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು. ಏರೋ ಎಂಜಿನ್‍ಗಳ ಕ್ಷೇತ್ರದಲ್ಲಿ ಪರಿಣಿತಿಯನ್ನು ಸಾಧಿಸಲು ನಾವು ಹಿಂದೆ ಹಲವು ಪ್ರಯತ್ನಗಳನ್ನು ಮಾಡಿದ್ದೇವೆ. ಈಗ ಆ ಪ್ರಯತ್ನಗಳನ್ನು ಪೂರ್ಣಗೊಳಿಸುವ ಸಮಯ ಬಂದಿದೆ. ನಾವು ನಮ್ಮನ್ನು ಕೇವಲ 5ನೆ ತಲೆಮಾರಿನ ಎಂಜಿನ್‍ಗಳಿಗೆ ಸೀಮಿತಗೊಳಿಸಲಾಗುವುದಿಲ್ಲ. ನಾವು 6ನೆ ತಲೆಮಾರಿನ, ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಸಾಧ್ಯವಾದಷ್ಟು ಬೇಗ ಆರಂಭಿಸಬೇಕು. ಅವುಗಳ ಕುರಿತು ಸಂಶೋಧನೆಯು ಹೆಚ್ಚು ಅಗತ್ಯವಿದೆ ಎಂದು ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ಕೃತಕ ಬುದ್ಧಿಮತ್ತೆ ಯಂತ್ರ ಕಲಿಕೆ ಮತ್ತು ಹೊಸ ಸಾಮಗ್ರಿಗಳ ಬಳಕೆ ಹೆಚ್ಚುತ್ತಿದೆ. ವಾಯು ಎಂಜಿನ್ ಅಭಿವೃದ್ಧಿಯನ್ನು ಉಷ್ಣಬಲ ವಿಜ್ಞಾನ, ಮೆಟೀರಿಯಲ್ ಸೈನ್ಸ್, ಫ್ಲೂಯಿಡ್ ಮ್ಯಾಕ್ಯಾನಿಕ್ಸ್ ಮತ್ತು ಮುಂದುವರಿದ ಯಾಂತ್ರಿಕ ಎಂಜಿನಿಯರಿಂಗ್ ಅನ್ನು ಸಂಯೋಜಿಸುವ ಅತ್ಯಂತ ಸಂಕೀರ್ಣ ಪ್ರಯತ್ನ ಎಂದು ಅವರು ಬಣ್ಣಿಸಿದರು. ಆಪರೇಷನ್ ಸಿಂಧೂರ್ ಬಗ್ಗೆ ಉಲ್ಲೇಖಿಸಿದ ರಾಜನಾಥ್ ಸಿಂಗ್, ಕಾರ್ಯಾಚರಣೆಯ ಸಮಯದಲ್ಲಿ ರಕ್ಷಣಾ ಪಡೆಗಳು ರಕ್ಷಣಾ ವಲಯದಲ್ಲಿ ಭಾರತದ ಬೆಳೆಯುತ್ತಿರುವ ಆತ್ಮನಿರ್ಭರತೆಯನ್ನು ಪ್ರದರ್ಶಿಸಿದವು. ಸಂವಹನ ವ್ಯವಸ್ಥೆ, ಕಣ್ಗಾವಲು ಉಪಕರಣಗಳು, ದಾಳಿ ಆಯುಧಗಳೆಲ್ಲವೂ ಸ್ಥಳೀಯವಾಗಿದ್ದವು ಎಂದು ತಿಳಿಸಿದರು. ಏರೋ ಎಂಜಿನ್ ಅಭಿವೃದ್ಧಿಗಾಗಿ ಯುಕೆ ಜೊತೆ ಜಂಟಿ ಅಧ್ಯಯನಕ್ಕಾಗಿ ಜಿಟಿಆರ್‍ಇಯನ್ನು ಶ್ಲಾಘಿಸಿದ ರಾಜನಾಥ್ ಸಿಂಗ್, ರಾಷ್ಟ್ರೀಯ ಏರೋ ಎಂಜಿನ್ ಮಿಷನ್ ಅಡಿಯಲ್ಲಿ ಏರೋ ಎಂಜಿನ್‍ಗಳಿಗಾಗಿ ಫ್ರಾನ್ಸ್‌ ನೊಂದಿಗೆ ಈ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು. ಜಿಟಿಆರ್‍ಇ ಹೆಚ್ಚಿನ-ತಾಪಮಾನದ ಸಂಯೋಜನೆಗಳನ್ನು ತಯಾರಿಸುತ್ತಿದೆ, ಇದು ಭವಿಷ್ಯದಲ್ಲಿ ನಾಗರಿಕ ವಿಮಾನಯಾನ, ವಿದ್ಯುತ್ ಉತ್ಪಾದನೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೆ ಗಮನಾರ್ಹ ಪ್ರಯೋಜನ ಒದಗಿಸುತ್ತದೆ. ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವೈಮಾನಿಕ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ರಕ್ಷಣಾ ಏರೋ ಎಂಜಿನ್‍ಗಳಲ್ಲಿ ಸಾಧಿಸಲಾದ ತಾಂತ್ರಿಕ ಪ್ರಗತಿಗಳು ಭವಿಷ್ಯದ ನಾಗರಿಕ ವಿಮಾನಯಾನ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸಬಹುದು ಎಂದು ಅವರು ಹೇಳಿದರು. 18 ವರ್ಷಗಳಿಂದ ಬಾಕಿ ಉಳಿದಿದ್ದ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಈಗ ಪೂರ್ಣಗೊಂಡಿದೆ. ಈ ವ್ಯಾಪಾರ ಒಪ್ಪಂದವು ಭಾರತದ ಬೆಳೆಯುತ್ತಿರುವ ಆರ್ಥಿಕ ಮತ್ತು ರಾಜಕೀಯ ಶಕ್ತಿಯ ಗುರುತಾಗಿದೆ. ಇತ್ತೀಚೆಗೆ ಗ್ರೀಸ್‍ನ ರಕ್ಷಣಾ ಸಚಿವರೊಂದಿಗಿನ ತಮ್ಮ ಸಭೆಯನ್ನು ಉಲ್ಲೇಖಿಸಿದ ಅವರು, ಭಾರತವನ್ನು ಉದಯೋನ್ಮುಖ ಶಕ್ತಿಯಾಗಿ ಅಲ್ಲ, ಬದಲಾಗಿ ಸೂಪರ್‌ ಪವರ್ ಎಂದು ನೋಡುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಆರ್ ಅಂಡ್ ಡಿ ಮತ್ತು ಡಿಆರ್‍ಡಿಒ ಅಧ್ಯಕ್ಷ ಡಾ.ಸಮೀರ್ ವಿ ಕಾಮತ್ ಮತ್ತು ಜಿಟಿಆರ್‌ಇಯ ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 9:51 pm

ಕುಕನೂರು | ಬೆಳಿಗ್ಗೆ 5 ಗಂಟೆಯ ವಿದ್ಯುತ್ ಪೂರೈಕೆಗೆ ವಿರೋಧ: ಉಪಕೇಂದ್ರಕ್ಕೆ ರೈತರ ಮುತ್ತಿಗೆ

ಕುಕನೂರು: ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದ ಎದುರು ಭೈರನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತರ ಪಂಪ್‌ಸೆಟ್‌ಗಳಿಗೆ ಬೆಳಿಗ್ಗೆ 5 ಗಂಟೆಗೆ ವಿದ್ಯುತ್ ಪೂರೈಕೆ ನೀಡುತ್ತಿರುವ ಕ್ರಮದಿಂದ ತೀವ್ರ ಅನಾನುಕೂಲತೆ ಉಂಟಾಗಿದೆ ಎಂದು ಆರೋಪಿಸಿದರು. ಕರಡಿ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಿರುವ ಪ್ರದೇಶದಲ್ಲಿ ಮುಂಜಾನೆ ಹೊಲಗಳಿಗೆ ತೆರಳುವುದು ಅಪಾಯಕಾರಿಯಾಗಿದೆ. ರೈತರ ಜೀವ ಭದ್ರತೆಯನ್ನು ಗಮನದಲ್ಲಿಟ್ಟು ಬೆಳಿಗ್ಗೆ 9 ಗಂಟೆಯಿಂದ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಗೆ ಜೆಡಿಎಸ್ ಜಿಲ್ಲಾ ವಕ್ತಾರ ಜಿಲ್ಲಾ ವಕ್ತಾರ ಮಲ್ಲನಗೌಡ ಎಸ್. ಕೋನನಗೌಡ್ರ ನೇತೃತ್ವ ವಹಿಸಿದ್ದರು. ಈ ವೇಳೆ ರೈತರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಣ್ಣಾಹನುಮಂತ ಸಣ್ಣಳ್ಳಿ, ಶಿವಾನಂದಪ್ಪ ಚಿಂಚರ್, ಮಾರುತಿ ಹಿರೇಹಳ್ಳಿ, ಶಂಕ್ರಪ್ಪ ಚಿಂಚರ್, ಗವಿಸಿದ್ದಪ್ಪ ಜಿನ್ನಾಪುರ, ಬಸವರಾಜ ಕೊರಮದಾರ, ಹನುಮಂತಪ್ಪ ಮಾಮನಿ, ಮುನಿಯಪ್ಪ ದನದಮನಿ, ಶಿವನಗೌಡ ದನದಮನಿ, ಅಂಬ್ರಪ್ಪ ಮದ್ಲೂರ್, ಗವಿಸಿದ್ದಪ್ಪ ಕನಗಣ್ಣನವರ್, ಮಲ್ಲಪ್ಪ ಕಲ್ಗುಡಿ, ಮಲ್ಲಪ್ಪ ಗೌಡ್ರು, ಗವಿಸಿದ್ದಪ್ಪ ಚಿಂಚರ್, ಮರಿಯಪ್ಪ ಹರಿಜನ, ಈರಪ್ಪ ಮಂಗಳೂರು, ವಿರುಪಾಕ್ಷಿ ಹರಿಜನ, ಚೆನ್ನಪ್ಪ ಜಿನ್ನಾಪುರ, ಷಣ್ಮುಖಪ್ಪ ದನದಮನಿ, ಹನುಮಂತಪ್ಪ ಡಗ್ಗಿ, ದ್ಯಾಮಣ್ಣ ದನದಮನಿ, ಶಿವೂ ಸಣ್ಣಹಳ್ಳಿ, ಹನುಮಂತಪ್ಪ ಚಿಂಚರ್ ಹಾಗೂ ಶರಣಪ್ಪ ಮಾಲಿಗೌಡ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 16 Feb 2026 9:43 pm

ಪೊಲೀಸರ ವೀಲ್ ಲಾಕ್ ಕಳವು ಮಾಡಿದ ಆರೋಪ: ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲು

ಮಣಿಪಾಲ, ಫೆ.16: ಪೊಲೀಸರು ಕಾರಿನ ಚಕ್ರಗಳಿಗೆ ಹಾಕಲಾದ ವೀಲ್ ಲಾಕ್‌ಗಳನ್ನು ಚಾಲಕ ಕಳವು ಮಾಡಿದ್ದಾನೆ ಎನ್ನಲಾದ ಘಟನೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಫೆ.16ರಂದು ನಸುಕಿನ ವೇಳೆ ನಡೆದಿದೆ. ಪೊಲೀಸರು ಕಾರೊಂದನ್ನು ತಡೆದು ತಪಾಸಣೆ ಮಾಡಿದಾಗ ಚಾಲಕ ಕಾಸರಗೋಡು ಉಪ್ಪಳದ ಮೊಹಮ್ಮದ್ ರಿಫಾಝ್ ಮದ್ಯ ಸೇವಿಸಿರುವುದು ಕಂಡುಬಂದಿದೆ. ಈ ಬಗ್ಗೆ ಆತನಲ್ಲಿ ವಾಹನವನ್ನು ಠಾಣೆಗೆ ತಂದು ಇರಿಸುವಂತೆ, ನ್ಯಾಯಾಲಯದಲ್ಲಿ ದಂಡ ಪಾವತಿಸಿದ ಬಳಿಕ ವಾಹನವನ್ನು ತೆಗೆದುಕೊಂಡು ಹೋಗುವಂತೆ ಪೊಲೀಸರು ತಿಳಿಸಿದರು. ಆದರೆ ಆತ ವಾಹನವನ್ನು ಠಾಣೆಯಲ್ಲಿ ಇರಿಸುವುದಿಲ್ಲ ಮತ್ತು ಕೀಯನ್ನು ಕೊಡುವುದಿಲ್ಲ ಎಂಬುದಾಗಿ ತಕರಾರು ಮಾಡಿದನು. ಅದಕ್ಕೆ ಪೊಲೀಸರು ಸ್ಥಳದಲ್ಲಿಯೇ ಕಾರಿನ ವೀಲ್ ಲಾಕ್ ಮಾಡಿದರು. ನಂತರ ಮೊಹಮ್ಮದ್ ರಿಫಾಝ್ ಕಾರಿನ ಎರಡೂ ಚಕ್ರಗಳಿಗೆ ಹಾಕಿದ ಇಲಾಖಾ ವೀಲ್ ಲಾಕ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವು ಮಾಡಿದ ವೀಲ್ ಲಾಕ್‌ಗಳ ಮೌಲ್ಯ 12,000‌ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Feb 2026 9:42 pm

T20 ವಿಶ್ವಕಪ್ | ಮಿಂಚಿದ ವಿಲ್ ಜಾಕ್ಸ್: ಸೂಪರ್-8 ಹಂತಕ್ಕೇರಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ಕೋಲ್ಕತಾ: ಸರ್ವಾಂಗೀಣ ಪ್ರದರ್ಶನ ನೀಡಿದ ವಿಲ್ ಜಾಕ್ಸ್ (ಔಟಾಗದೆ 53, 1/34)ಸಹಾಯದಿಂದ ಇಟಲಿ ಕ್ರಿಕೆಟ್ ತಂಡವನ್ನು 24 ರನ್‌ಗಳ ಅಂತರದಿಂದ ಮಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ಐಸಿಸಿ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್-8 ಹಂತದಲ್ಲಿ ಸ್ಥಾನ ಪಡೆದಿದೆ. ಈಡನ್‌ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡವು 7 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿತು. ಬಿರುಸಿನ ಬ್ಯಾಟಿಂಗ್(ಔಟಾಗದೆ 53, 22 ಎಸೆತ, 4 ಸಿಕ್ಸರ್, 3 ಬೌಂಡರಿ)ಮಾಡಿದ ವಿಲ್ ಜಾಕ್ಸ್ ಅವರು ಪ್ರಸಕ್ತ ಆವೃತ್ತಿಯ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಮೊದಲ ಬಾರಿ 200ಕ್ಕೂ ಅಧಿಕ ರನ್ ಗಳಿಸುವಲ್ಲಿ ನೆರವಾದರು. ಒಂದು ಹಂತದಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್‌ಗಳ ನಷ್ಟಕ್ಕೆ 105 ರನ್ ಗಳಿಸಿತು. ಆಗ ತಂಡವನ್ನು ಆಧರಿಸಿದ ಜಾಕ್ಸ್ಸ್ ಅವರು ಸ್ಯಾಮ್ ಕರನ್(25 ರನ್, 19 ಎಸೆತ)ಅವರೊಂದಿಗೆ ಆರನೇ ವಿಕೆಟ್‌ಗೆ ಕೇವಲ 25 ಎಸೆತಗಳಲ್ಲಿ 54 ರನ್ ಜೊತೆಯಾಟ ನಡೆಸಿದರು. ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ 15 ಎಸೆತಗಳಲ್ಲಿ 28 ರನ್ ಗಳಿಸಿ ಇಂಗ್ಲೆಂಡ್ ತಂಡವು ಐದು ಓವರ್‌ನೊಳಗೆ 50 ರನ್ ಗಳಿಸಲು ನೆರವಾದರು. ಗ್ರ್ಯಾಂಟ್ ಸ್ಟೀವರ್ಟ್‌ಗೆ ವಿಕೆಟ್ ಒಪ್ಪಿಸಿದ ಜೋಸ್ ಬಟ್ಲರ್(3 ರನ್) ಕಳಪೆ ಪ್ರದರ್ಶನ ಮುಂದುವರಿಸಿದರು. ಸಾಲ್ಟ್, ಜೇಕಬ್ ಬೆಥೆಲ್(23 ರನ್, 20 ಎಸೆತ) ಹಾಗೂ ನಾಯಕ ಹ್ಯಾರಿ ಬ್ರೂಕ್(14 ರನ್, 9 ಎಸೆತ)ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರು. ಟಾಮ್ ಬಾಂಟನ್ 21 ಎಸೆತಗಳಲ್ಲಿ 30 ರನ್ ಕಲೆ ಹಾಕಿದರು. ಗೆಲ್ಲಲು 203 ರನ್ ಗುರಿ ಬೆನ್ನಟ್ಟಿದ ಇಟಲಿ ತಂಡವು 22 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಮಧ್ಯಮ ಸರದಿಯ ಬ್ಯಾಟರ್ ಬೆನ್ ಮಾನೆಂಟಿ(60 ರನ್, 25 ಎಸೆತ, 4 ಬೌಂಡರಿ, 6 ಸಿಕ್ಸರ್) ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸುವ ಮೂಲಕ ಪ್ರತಿರೋಧ ಒಡ್ಡಿದರು. ಮಾನೆಂಟಿ ಅವರು ಪಂದ್ಯಾವಳಿಯಲ್ಲಿ ಐದನೇ ಜಂಟಿ ವೇಗದ ಅರ್ಧಶತಕ ಹಾಗೂ ಅಸೋಸಿಯೇಟ್ ದೇಶದ ಪರ ಎರಡನೇ ಜಂಟಿ ವೇಗದ ಅರ್ಧಶತಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಜಾಕ್ಸ್ ಓವರ್‌ನಲ್ಲಿ 21 ರನ್ ಗಳಿಸಿದ ಮಾನೆಂಟಿ ಇನಿಂಗ್ಸ್‌ನಲ್ಲಿ ಐದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳಿದ್ದವು. ಆರಂಭಿಕ ಬ್ಯಾಟರ್ ಜಸ್ಟಿನ್ ಮೋಸ್ಕಾ(43 ರನ್, 34 ಎಸೆತ)ಹಾಗೂ ಮಾನೆಂಟಿ ನಾಲ್ಕನೇ ವಿಕೆಟ್‌ಗೆ 48 ಎಸೆತಗಳಲ್ಲಿ 92 ರನ್ ಸೇರಿಸಿ ಗೆಲುವಿನ ಆಸೆ ಮೂಡಿಸಿದರು. ಮಾನೆಂಟಿ ವಿಕೆಟನ್ನು ಕಬಳಿಸಿದ ಜಾಕ್ಸ್ ಈ ಜೋಡಿಯನ್ನು ಬೇರ್ಪಡಿಸಿದರು. ಗ್ರ್ಯಾಂಟ್ ಸ್ಟೀವರ್ಟ್ 23 ಎಸೆತಗಳಲ್ಲಿ ಐದು ಸಿಕ್ಸರ್‌ಗಳ ಸಹಿತ 45 ರನ್ ಗಳಿಸಿದರು. ಎರಡು ಎಸೆತಗಳಲ್ಲಿ ಎರಡು ವಿಕೆಟನ್ನು ಪಡೆದ ಸ್ಯಾಮ್ ಕರ‌್ರನ್(3-22)ಇಟಲಿಯ ರನ್ ವೇಗಕ್ಕೆ ಕಡಿವಾಣ ಹಾಕಿದರು. ಜಮೀ ಓವರ್ಟನ್(3-18)ಕೂಡ ಮೂರು ವಿಕೆಟ್ ಕಬಳಿಸಿದ್ದು, ಅಂತಿಮವಾಗಿ ಇಟಲಿ ತಂಡ 20 ಓವರ್‌ಗಳಲ್ಲಿ 178 ರನ್ ಗಳಿಸಿ ಆಲೌಟಾಯಿತು. ಇಂಗ್ಲೆಂಡ್ ತಂಡವು ಸೂಪರ್-8ರಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡಿತು.

ವಾರ್ತಾ ಭಾರತಿ 16 Feb 2026 9:40 pm

ಭಾರತವು ಇಂದು AI ರೂಪಾಂತರದ ಮುಂಚೂಣಿಯಲ್ಲಿದೆ: ಪ್ರಧಾನಿ ನರೇಂದ್ರ ಮೋದಿ

AI ಇಂಪ್ಯಾಕ್ಟ್ ಶೃಂಗಸಭೆ ಉದ್ಘಾಟನೆ

ವಾರ್ತಾ ಭಾರತಿ 16 Feb 2026 9:37 pm

ಬೈಕ್ ಸ್ಕಿಡ್ : ಸಹಸವಾರೆ ಮೃತ್ಯು

ಕಾರ್ಕಳ, ಫೆ.16: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸಹಸವಾರೆ ಯೊಬ್ಬರು ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ಜಯಂತಿನಗರ ಹಿಂದೂ ರುದ್ರಭೂಮಿಯ ಬಳಿ ಫೆ.16ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಕುಕ್ಕಂದೂರು ಪರಪು ನಾಗನಕಟ್ಟೆ ಬಳಿ ನಿವಾಸಿ ಜಯಲಕ್ಷ್ಮಿ ಪ್ರಭು ಎಂದು ಗುರುತಿಸಲಾಗಿದೆ. ಇವರು ಕೃಷ್ಣದಾಸ ಮಲ್ಯ ಎಂಬವರ ಬೈಕ್‌ನಲ್ಲಿ ಸರ್ವಜ್ಞ ಸರ್ಕಲ್‌ನಿಂದ ನಕ್ರೆ ಕಡೆಗೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲಿ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಗಂಭೀರವಾಗಿ ಗಾಯ ಗೊಂಡ ಜಯಲಕ್ಷ್ಮೀ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Feb 2026 9:33 pm

ಕಾಂಗ್ರೆಸ್‌ ನಲ್ಲಿ ಭಿನ್ನಮತ - ಶಿಸ್ತಿನ ಕೊರತೆಯಿದೆ: ಮಣಿಶಂಕರ್ ಅಯ್ಯರ್ ವಾಗ್ದಾಳಿ

'ಪವನ್ ಖೇರಾ ಕೈಗೊಂಬೆ' ಎಂದ ಕಾಂಗ್ರೆಸ್ ನಾಯಕ

ವಾರ್ತಾ ಭಾರತಿ 16 Feb 2026 9:31 pm

Hardik Pandya: ಹೋಟೆಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಜೊತೆ ಕಾಣಿಸಿಕೊಂಡ ಹುಡುಗಿ ಯಾರು? ಫೋಟೋ ಭಾರೀ ವೈರಲ್‌

Hardik Pandya: ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ 2026 ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಈ ಗೆಲುವಿನ ಸಂಭ್ರಮದ ನಡುವೆಯೇ ಟೀಂ ಇಂಡಿಯಾ ಆಟಗಾರರೊಂದಿಗೆ ಯುವತಿಯೊಬ್ಬಳು ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರ ಮಧ್ಯೆ ಹಾರ್ದಿಕ್ ಪಾಂಡ್ಯ ಅವರಿಗೆ

ಒನ್ ಇ೦ಡಿಯ 16 Feb 2026 9:30 pm

ಮಟ್ಕಾ ಜುಗಾರಿ ನಡೆಸುತ್ತಿದ್ದ ಆರೋಪ: ಮೂವರು ವಶಕ್ಕೆ

ಪಡುಬಿದ್ರಿ, ಫೆ.16: ಪಡುಬಿದ್ರೆ ಪೇಟೆಯಲ್ಲಿ ಫೆ.15ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಚೇತನ್ ಕುಮಾರ್, ದಿವಾಕರ ಹಾಗೂ ಮನೋಜ್ ಕೋಟ್ಯಾನ್ ಎಂಬವರನ್ನು ಪಡುಬಿದ್ರೆ ಪೊಲೀಸರು 10320 ರೂ. ನಗದು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Feb 2026 9:28 pm

ಟ್ರಕ್ ನಿಂದ 400 ಕೋಟಿ ರೂ. ದರೋಡೆ ಪ್ರಕರಣ: ಆರೋಪವೇ ಸುಳ್ಳು ಎಂದ ಪೊಲೀಸರು!

ನಾಶಿಕ್: ಏಳು ಮಂದಿ ದುಷ್ಕರ್ಮಿಗಳು ತನ್ನನ್ನು ಅಪಹರಿಸಿ, ತನ್ನ ಮೇಲೆ ಹಲ್ಲೆ ನಡೆಸಿ, ನಗದನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ನಿಂದ 400 ಕೋಟಿ ರೂ. ಹಣವನ್ನು ದರೋಡೆ ಮಾಡಿದ್ದಾರೆ ಎಂದು ಟ್ರಕ್ ಚಾಲಕನೊಬ್ಬ ನೀಡಿದ್ದ ದೂರು ಸುಳ್ಳಾಗಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸೋಮವಾರ ಮಹಾರಾಷ್ಟ್ರದ ನಾಶಿಕ್ ಗ್ರಾಮಾಂತರ ಪೊಲೀಸರು ವಿಸ್ತೃತ ತನಿಖೆಯ ನಂತರ ಸ್ಪಷ್ಟಪಡಿಸಿದ್ದಾರೆ. ಬಂಧಿತರಾಗಿದ್ದ ಎಲ್ಲ ಏಳು ಮಂದಿ ಆರೋಪಿಗಳನ್ನು ಇಗಟ್ಪುರಿ ನ್ಯಾಯಾಲಯ ಬಿಡುಗಡೆಗೊಳಿಸಿದ್ದು, ಸುಳ್ಳು ದೂರು ನೀಡಿದ ಆರೋಪದ ಮೇಲೆ ಟ್ರಕ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಅಕ್ಟೋಬರ್ 22ರಂದು ಸದ್ಯ ಚಲಾವಣೆಯಿಂದ ಹಿಂಪಡೆಯಲಾಗಿರುವ 2000 ರೂ. ಮುಖಬೆಲೆಯ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಅನ್ನು ದಾರಿ ಮಧ್ಯೆ ತಡೆಹಿಡಿದ ಏಳು ಮಂದಿ ದುಷ್ಕರ್ಮಿಗಳು, ನನ್ನನ್ನು ಅಪಹರಿಸಿ, ನನ್ನ ಮೇಲೆ ಹಲ್ಲೆ ನಡೆಸಿ, ಟ್ರಕ್ ನಲ್ಲಿದ್ದ 400 ಕೋಟಿ ರೂ. ಮೊತ್ತವನ್ನು ದರೋಡೆ ಮಾಡಿದ್ದಾರೆ ಎಂದು ಸಂದೀಪ್ ಪಾಟೀಲ್ ಎಂಬ ಟ್ರಕ್ ಚಾಲಕ ನೀಡಿದ್ದ ದೂರನ್ನು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು ಎಂದು ಘೋಟಿ ಪೊಲೀಸರು ತಿಳಿಸಿದ್ದಾರೆ. ನೆರೆಯ ರಾಜ್ಯವಾದ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್ ನಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದ ಏಳು ಮಂದಿ ದುಷ್ಕರ್ಮಿಗಳು, ಬಳಿಕ ಅಲ್ಲಿಂದ ಪರಾರಿಯಾಗಿದ್ದರು ಎಂದು ಸಂದೀಪ್ ಪಾಟೀಲ್ ದೂರು ನೀಡಿದ್ದ. ಇದರ ಬೆನ್ನಿಗೇ, ಕರ್ನಾಟಕ ರಾಜ್ಯ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಟ್ರಕ್ ನಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹವಾಲಾ ಹಣವನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಸಂದೀಪ್ ಪಾಟೀಲ್ ದೂರು ನೀಡಿದ್ದ. ಅಲ್ಲದೆ, ಆತ ತಾನು ಅನುಭವಿಸಿದ ತೊಂದರೆಯನ್ನು ವಿವರಿಸಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಅಪ್ಲೋಡ್ ಕೂಡಾ ಮಾಡಿದ್ದ. ಈ ದೂರನ್ನು ಆಧರಿಸಿ ನಾವು ಏಳು ಮಂದಿಯನ್ನು ಬಂಧಿಸಿದ್ದೆವು. ಆದರೆ, ಸಂದೀಪ್ ಪಾಟೀಲ್ ಹೇಳಿದ ಕತೆ, ಮಾರ್ಗ, ಕರೆ ದಾಖಲೆಗಳು, ಸಮಯ ಎಲ್ಲದರಲ್ಲೂ ವ್ಯತ್ಯಯ ಕಂಡು ಬಂದಿತು” ಎಂದು ಅವರು ಹೇಳಿದ್ದಾರೆ. ಘೋಟಿ ಪೊಲೀಸರು ಬಂಧಿಸಿದ್ದ ಎಲ್ಲ ಏಳು ಮಂದಿ ಆರೋಪಿಗಳನ್ನು ಇಗಟ್ಪುರಿ ನ್ಯಾಯಾಲಯ ಬಿಡುಗಡೆಗೊಳಿಸಿದ್ದು, ಸುಳ್ಳು ದೂರಿಗೆ ಸಂಬಂಧಿಸಿದಂತೆ ನಾಶಿಕ್ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Feb 2026 9:19 pm

ಉಡುಪಿ ಜಿಲ್ಲೆಯ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಫ್ಲೈಓವರ್: ಸಂಸದ ಕೋಟ

ರಾ.ಹೆದ್ದಾರಿ ಸರ್ವೀಸ್ ರಸ್ತೆ ಕಾಮಗಾರಿ ಪರಿಶೀಲನೆ

ವಾರ್ತಾ ಭಾರತಿ 16 Feb 2026 9:18 pm

Yadgiri | ಕಾರ್ಮಿಕರು ಕೆಲಸದ ವೇಳೆ ಎಚ್ಚರಿಕೆ ಅಗತ್ಯ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

50 ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ

ವಾರ್ತಾ ಭಾರತಿ 16 Feb 2026 9:15 pm

Gold-Silver: ಬೆಳ್ಳಿ ಬೆಲೆ ಭಾರಿ ಕುಸಿತ, ಬಂಗಾರದ ದರವೂ ಜಾರುತ್ತಿದೆ: ಏರುತ್ತೆ ಅಂತ ತಗೊಂಡೋರು ಕಂಗಾಲು

ನವದೆಹಲಿ: ಭಾರತ ಮಾತ್ರವಲ್ಲದೇ, ಜಾಗತಿಕವಾಗಿ ಒಂದಷ್ಟು ಲಾಭವನ್ನೂ ನೀಡಿರುವ ಚಿನ್ನ ಮತ್ತು ಬೆಳ್ಳಿಯ ದರಗಳು ಸಾಕಷ್ಟು ಏರಿಳಿತದಿಂದ ಕೂಡಿವೆ. ಗರಿಷ್ಠ ಮಟ್ಟದಲ್ಲಿ ಹೆಚ್ಚಳ ಕಂಡಿದ್ದ ಈ ಎರಡೂ ಲೋಹಗಳು ಅಷ್ಟೇ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯ ಹಾದಿ ಹಿಡಿದಿವೆ. ಕಡಿಮೆ ವಹೀವಾಟು ನಡೆಸುವ ಮೂಲಕ ಹೂಡಿಕೆದಾರರನ್ನು ಸಂಕಷ್ಟಕ್ಕೆ ನೂಕಿವೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆಯ ಗ್ರಾಫ್, ದರ

ಒನ್ ಇ೦ಡಿಯ 16 Feb 2026 9:12 pm

ಎಸ್‌ಐಆರ್ ವಿರುದ್ಧ ಜನಾಂದೋಲನ ಅತ್ಯಗತ್ಯ: ಡಾ. ವಾಸು ಎಚ್.ವಿ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ವಿಚಾರ ಸಂಕಿರಣ

ವಾರ್ತಾ ಭಾರತಿ 16 Feb 2026 9:10 pm

Vijayanagara | ಹಂಪಿ ಉತ್ಸವದ ನಡುವೆ ಚಿರತೆ ಪ್ರತ್ಯಕ್ಷ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ವಿಜಯನಗರ: ಜಿಲ್ಲೆಯ ಐತಿಹಾಸಿಕ ಹಂಪಿ ಉತ್ಸವದ ಎರಡನೇ ದಿನದ ಸಂಭ್ರಮದ ನಡುವೆ ಹಂಪಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶನಿವಾರ ರಾತ್ರಿ ಸುಮಾರು 12.30ರ ಸುಮಾರಿಗೆ ವಿರೂಪಾಕ್ಷ ದೇವಸ್ಥಾನದ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ಬೀದಿ ನಾಯಿಯನ್ನು ಬೇಟೆಯಾಡಿದ ದೃಶ್ಯ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದೆ. ಉತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಜನರು ಸಂಚರಿಸುತ್ತಿರುವ ಸಂದರ್ಭದಲ್ಲೇ ದೇವಸ್ಥಾನದ ಪಕ್ಕದಲ್ಲಿರುವ ಮನೆಯ ಹತ್ತಿರ ಚಿರತೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಸ್ಥಳೀಯರ ಪ್ರಕಾರ, ಕಳೆದ ಕೆಲವು ದಿನಗಳಿಂದಲೇ ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸಂಚರಿಸುತ್ತಿರುವ ಅನುಮಾನ ವ್ಯಕ್ತವಾಗಿದೆ. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಚಿರತೆಯನ್ನು ಶೀಘ್ರದಲ್ಲೇ ಸೆರೆ ಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕಾರ್ಯಾಚರಣೆ ನಡೆಸದಿದ್ದರೆ ಅರಣ್ಯ ಇಲಾಖೆ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಹಂಪಿ ಉತ್ಸವದ ಸಂದರ್ಭದಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ವಾರ್ತಾ ಭಾರತಿ 16 Feb 2026 9:09 pm

ಟಿ-20 ವಿಶ್ವಕಪ್‌ : ಆಸ್ಟ್ರೇಲಿಯ ತಂಡಕ್ಕೆ ಸ್ಟೀವ್ ಸ್ಮಿತ್ ಸೇರ್ಪಡೆಗೆ ICC ಅನುಮತಿ

ಹೊಸದಿಲ್ಲಿ: ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಬದಲಿಗೆ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಸೇರ್ಪಡೆಗೆ ಐಸಿಸಿ ಪುರುಷರ ಟಿ-20 ವಿಶ್ವಕಪ್‌ನ ಈವೆಂಟ್ ಟೆಕ್ನಿಕಲ್ ಕಮಿಟಿ ಸೋಮವಾರ ಅನುಮೋದನೆ ನೀಡಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಹೇಝಲ್‌ವುಡ್ ಕಳೆದ ತಿಂಗಳು ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದು, ಆ ಸಮಯದಲ್ಲಿ ಆಸ್ಟ್ರೇಲಿಯ ತಕ್ಷಣವೇ ಬದಲಿ ಆಟಗಾರರನ್ನು ನೇಮಿಸಿರಲಿಲ್ಲ. ಬಲಗೈ ಬ್ಯಾಟರ್ ಸ್ಮಿತ್ ಇತ್ತೀಚೆಗೆ ಶ್ರೀಲಂಕಾಕ್ಕೆ ಆಗಮಿಸಿದ ನಂತರ ರವಿವಾರ ಕ್ಯಾಂಡಿಯಲ್ಲಿ ತನ್ನ ತಂಡದೊಂದಿಗೆ ಅಭ್ಯಾಸ ನಡೆಸಿದರು. ಗಾಯದ ಸಮಸ್ಯೆಯ ಕಾರಣಕ್ಕೆ ಆಸ್ಟ್ರೇಲಿಯ ಆಡಿದ್ದ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಬದಲಿಗೆ ಸ್ಮಿತ್ ತಂಡವನ್ನು ಸೇರಿಕೊಂಡಿದ್ದರು. ಮಾರ್ಷ್ ರವಿವಾರ ಅಭ್ಯಾಸದಲ್ಲಿ ಭಾಗಿಯಾಗಿದ್ದು, ರನ್ನಿಂಗ್ ಹಾಗೂ ಫೀಲ್ಡಿಂಗ್ ಕಸರತ್ತಿನ ವೇಳೆ ಸಲೀಸಾಗಿ ಓಡುತ್ತಿರುವುದು ಕಂಡುಬಂದಿದೆ. ಝಿಂಬಾಬ್ವೆ ತಂಡದ ವಿರುದ್ಧ ಸೋತಿರುವ ಆಸ್ಟ್ರೇಲಿಯ ತಂಡವು ‘ಬಿ’ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಸೂಪರ್-8 ಹಂತಕ್ಕೇರುವ ಉತ್ತಮ ಅವಕಾಶಕ್ಕಾಗಿ ಉಳಿದಿರುವ ಎರಡೂ ಗ್ರೂಪ್ ಪಂದ್ಯಗಳಲ್ಲಿ ಗೆಲ್ಲುವ ಅವಶ್ಯಕತೆ ಇದೆ. ಪಂದ್ಯಕ್ಕಿಂತ ಮೊದಲು ತಂಡದಲ್ಲಿ ಯಾವುದೇ ಬದಲಾವಣೆ ಮಾಡಲು ಈವೆಂಟ್ ಟೆಕ್ನಿಕಲ್ ಕಮಿಟಿಯ ಅನುಮೋದನೆ ಅಗತ್ಯವಿದೆ ಎಂದು ಐಸಿಸಿ ಪಂದ್ಯಾವಳಿಯ ನಿಯಮಗಳು ಹೇಳುತ್ತವೆ. ಹೀಗಾಗಿ ಸ್ಮಿತ್ ಇದೀಗ ಆಸ್ಟ್ರೇಲಿಯದ 15 ಸದಸ್ಯರ ತಂಡಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದಾರೆ.

ವಾರ್ತಾ ಭಾರತಿ 16 Feb 2026 9:09 pm

T20 ವಿಶ್ವಕಪ್ | ಯುಎಇ ವಿರುದ್ಧ ಅಫ್ಘಾನಿಸ್ತಾನಕ್ಕೆ ಜಯ; ಸೂಪರ್-8 ವಿಶ್ವಾಸ ಜೀವಂತ

ಅಝ್ಮತುಲ್ಲಾ ಉಮರ್‌ಝೈ ಆಲ್‌ರೌಂಡ್ ಆಟ

ವಾರ್ತಾ ಭಾರತಿ 16 Feb 2026 9:04 pm

ಬೆಂಗಳೂರಿನ ಪಿಜಿಗಳು ನಿಯಮ ಪಾಲಿಸುತ್ತಿವೆಯೇ ಅಥವಾ ಇಲ್ಲವೇ? ಪರಿಶೀಲಿಸಿ 2 ವಾರದಲ್ಲಿ ವರದಿ ಕೊಡಿ - ಹೈಕೋರ್ಟ್ ಸೂಚನೆ

ಬೆಂಗಳೂರಿನ ಪಿಜಿಗಳು ನಿಯಮ ಪಾಲನೆ ಮಾಡುತ್ತವೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಿ 2 ವಾರದಲ್ಲಿ ವರದಿ ಕೊಡುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ. 6 ತಿಂಗಳ ಹಿಂದೆ ಪಿಜಿಗಳಿಗೆ ಹಲವು ಷರತ್ತು ವಿಧಿಸಲಾಗಿತ್ತು. ಅವುಗಳ ಪಾಲನೆ ಬಗ್ಗೆ ತಿಳಿದುಕೊಳ್ಳಲು ಕೋರ್ಟ್‌ ಸೂಚಿಸಿದೆ.

ವಿಜಯ ಕರ್ನಾಟಕ 16 Feb 2026 9:02 pm

ಪಶ್ಚಿಮ ಬಂಗಾಳ SIR : ಅಧಿಕಾರ ದುರ್ಬಳಕೆ ಆರೋಪದಲ್ಲಿ ಏಳು ಚುನಾವಣಾ ಅಧಿಕಾರಿಗಳ ಅಮಾನತು

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಗಂಭೀರ ದುರ್ನಡತೆ,ಕರ್ತವ್ಯಲೋಪ ಮತ್ತು ಶಾಸನಬದ್ಧ ಅಧಿಕಾರಗಳ ದುರುಪಯೋಗದ ಆರೋಪದಲ್ಲಿ ಚುನಾವಣಾ ಆಯೋಗವು ರಾಜ್ಯದ ಏಳು ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ಸುದ್ದಿಸಂಸ್ಥೆಯು ಸೋಮವಾರ ವರದಿ ಮಾಡಿದೆ. ಅಮಾನತುಗೊಂಡವರು ರಾಜ್ಯ ಸರಕಾರಿ ನೌಕರರಾಗಿದ್ದು,ಚುನಾವಣಾ ಆಯೋಗಕ್ಕಾಗಿ ಸಹಾಯಕ ನೋಂದಣಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು. ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ಪರಿಷ್ಕರಣೆ ಸೇರಿದಂತೆ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಲು ಅವರನ್ನು ನಿಯೋಜಿಸಿತ್ತು. ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಆರಂಭಿಸುವಂತೆ ಚುನಾವಣಾ ಆಯೋಗವು ಪ.ಬಂಗಾಳದ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿಯವರಿಗೆ ಸೂಚಿಸಿದೆ.

ವಾರ್ತಾ ಭಾರತಿ 16 Feb 2026 9:02 pm

Yadgiri | ರಕ್ತದಾನ ಶಿಬಿರ ಕಾರ್ಯಕ್ರಮ

ದಾನಧರ್ಮ ಸಮಾಜಕ್ಕೆ ದಿಕ್ಕು ತೋರಿಸುವುದು : ಖಾಸಮಠ ಶ್ರೀ

ವಾರ್ತಾ ಭಾರತಿ 16 Feb 2026 8:59 pm

ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆ: 25 ಲಕ್ಷ ಮಹಿಳೆಯರಿಗೆ ತಲಾ 10,000 ರೂ. ವರ್ಗಾಯಿಸಿದ ಬಿಹಾರ ಸಿಎಂ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ವಯಂ ಉದ್ಯೋಗದ ಮೂಲಕ ಜೀವನೋಪಾಯ ಕಂಡುಕೊಳ್ಳುವುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆಯ ಭಾಗವಾಗಿ ಸೋಮವಾರ 25 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಗಳನ್ನು ವರ್ಗಾವಣೆಗೊಳಿಸಿದರು. ನೇರ ಲಾಭ ವರ್ಗಾವಣೆಯ ಒಟ್ಟು ಮೊತ್ತ 2,500 ಕೋಟಿ ರೂ.ಗಳಾಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೆ.2025ರಲ್ಲಿ ಚಾಲನೆ ನೀಡಿದ್ದ ಯೋಜನೆಯಡಿ ಈ ಹಿಂದೆ 1.81 ಕೋಟಿ ಮಹಿಳೆಯರು ತಲಾ 10,000 ರೂ.ಗಳನ್ನು ಸ್ವೀಕರಿಸಿದ್ದಾರೆ. ಸಣ್ಣ ಉದ್ಯಮಗಳು,ವೃತ್ತಿ ತರಬೇತಿ ಮತ್ತು ಇತರ ಜೀವನೋಪಾಯ ಚಟುವಟಿಕೆಗಳಿಗೆ ಮೂಲಧನವನ್ನು ಒದಗಿಸುವ ಮೂಲಕ ಮಹಿಳೆಯರ ಸಬಲೀಕರಣ ಈ ಯೋಜನೆಯ ಉದ್ದೇಶವಾಗಿದೆ. ವ್ಯವಹಾರ ಸ್ಥಾಪನೆಗಾಗಿ ಈ ಮೂಲಧನವನ್ನು ಬಳಸಿ ಯಶಸ್ಸು ಸಾಧಿಸುವ ಆಯ್ದ ಫಲಾನುಭವಿಗಳು ಹೆಚ್ಚುವರಿಯಾಗಿ ಎರಡು ಲಕ್ಷ ರೂ.ಗಳ ಆರ್ಥಿಕ ನೆರವನ್ನು ಪಡೆಯಲು ಅರ್ಹರಾಗಬಹುದು ಎಂದು ಅಧಿಕಾರಿಗಳು ತಿಳಿಸಿದರು.

ವಾರ್ತಾ ಭಾರತಿ 16 Feb 2026 8:57 pm

ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ

ಶಿರ್ವ: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ತಾಲೂಕು ಘಟಕದ ವತಿಯಿಂದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಜೇತ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ಪೋಷಕರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ಕಟಪಾಡಿ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಅಧ್ಯಕ್ಷತೆಯನ್ನು ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ ವಸಿದ್ದರು. ಕಾರ್ಯಕ್ರಮವನ್ನು ಕಟಪಾಡಿ ಎಸ್‌ವಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸತ್ಯೇಂದ್ರ ಪೈ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಅಮೆಚೂರ್ ಅತ್ಲೇಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಸಮಾಜ ಸೇವಕ ಯೋಗೀಶ್ ಶೆಟ್ಟಿ, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ, ಕಾಪು ತಾಲೂಕು ಕನ್ನಡ ಸಾತ್ಯ ಪರಿಷತ್ತು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ನಿವೃತ್ತರಾದ ದೈ.ಶಿ.ಶಿಕ್ಷಕ ಪ್ರವೀಣ್ ಕುಮಾರ್ ಕಡಿಯಾಳಿ, ಕಮಲಾ ಬಾ ಪ್ರೌಢ ಶಾಲಾ ದೈ.ಶಿ.ಶಿಕ್ಷಕ ಸುದರ್ಶನ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ ವಲಯದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ವಿಜೇತ ಕ್ರೀಡಾ ಪಟುಗಳಿಗೆ ಹಾಗೂ ಕ್ರೀಡಾ ಪೋಷಕರಿಗೆ ಸನ್ಮಾನಿಸಲಾಯಿತು. ಕಾಪು ತಾಲೂಕು ಯುವಜನ ಸೇವಾ ಕ್ರೀಡಾ ಇಲಾಖೆ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ಎಸ್‌ವಿಎಸ್ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಶಾನುಭೋಗ್, ಗ್ರೇಡ್ 2 ಸಂಘದ ಜಯಲಕ್ಷ್ಮೀ, ಗ್ರೇಡ್ 1 ಸಂಘದ ಕಾರ್ಯದರ್ಶಿ ಪ್ರಸಾದ್ ಸುವರ್ಣ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿ ರವೀಂದ್ರ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಶಿವನಗೌಡ ಹಿರೇಗೌಡರ ವಂದಿಸಿದರು. ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 16 Feb 2026 8:57 pm

Yadgiri | ಕೃಷಿ, ಗ್ರಾಮೀಣ ಕಾರ್ಮಿಕರ ಸಂಘದ 9ನೇ ರಾಜ್ಯ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ

ಶಹಾಪುರ: ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ 9ನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಸಭೆ ಫೆ.15ರಂದು ಶಹಾಪುರದ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು. ಸಭೆಗೆ ಚೆನ್ನಪ್ಪ ಆನೆಗುಂದಿ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೋಸ್ಕೆರ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಕೂಲಿಕಾರರ ವಿರೋಧಿ ನೀತಿಗಳಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅವರು ವಿವರಿಸಿದರು. ಉದ್ಯೋಗ ಖಾತ್ರಿ ಯೋಜನೆಯನ್ನು ಪುನರ್‌ಸ್ಥಾಪಿಸಿ, ಜಿ ರಾಮ್ ಜಿ ಸ್ಕೀಂ ಕೈಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಮೂರು ವರ್ಷಕ್ಕೊಮ್ಮೆ ನಡೆಯುವ ರಾಜ್ಯ ಸಮ್ಮೇಳನಗಳ ಮಹತ್ವ, ಸಂಘಟನೆ ವಿಸ್ತರಣೆ ಹಾಗೂ ಕೃಷಿ ಕೂಲಿಕಾರರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಸಂಘ ಹೋರಾಟ ನಡೆಸುತ್ತಿರುವುದನ್ನು ಅವರು ತಿಳಿಸಿದರು. ಈ ವೇಳೆ 9ನೇ ರಾಜ್ಯಮಟ್ಟದ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಹಣಮೇಗೌಡ ಬಿರನಕಲ್, ಪ್ರಧಾನ ಕಾರ್ಯದರ್ಶಿಯಾಗಿ ದಾವಲ್ ಸಾಬ್ ನದಾಫ್, ಗೌರವಾಧ್ಯಕ್ಷರಾಗಿ ಗಿರಿಯಪ್ಪ ಗೌಡ ಬಾಣತಿಯಾಳ್, ಮಹಾಪೋಷಕರಾಗಿ ಚೆನ್ನಪ್ಪ ಆನೆಗುಂದಿ, ಉಪಾಧ್ಯಕ್ಷರಾಗಿ ಆರ್. ಚನ್ನಬಸ್ಸು ಹಾಗೂ ಖಜಾಂಚಿಯಾಗಿ ಅಯ್ಯಪ್ಪ ಅನಸೂರ್ ಅವರನ್ನು ಆಯ್ಕೆ ಮಾಡಲಾಯಿತು. ಸ್ವಾಗತ ಸಮಿತಿಯ ಸದಸ್ಯರಾಗಿ ಅವದಬಿನ್ ಅಮರ್ ಚಾವುಸ್, ಮುಸ್ತಫಾ ದರ್ಪನ್, ಬಸಲಿಂಗಮ್ಮ ನಾಟಕಕಾರ, ಈರಮ್ಮ ಹಯ್ಯಳಕರ್, ರಂಗಣ್ಣ ಹಯ್ಯಳಕರ್, ರಂಗಮ್ಮ ಕಟ್ಟಿಮನಿ, ಮಮ್ತಾಜ್ ಬೇಗಂ, ಮಾದೇವಪ್ಪ ಪ್ಯಾಪ್ಲಿ, ಮುದುಕಮ್ಮ ಪೂಜಾರಿ, ನಿಂಗಪ್ಪ ಕುರ್ಕುಂದ, ದೇವಪ್ಪ ಹಳ್ಳಿ, ಆಂಬ್ಲಯ್ಯ ಬೇವಿನಕಟ್ಟಿ, ಶಿವಪ್ಪ ಭಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 8:55 pm

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ: ಎ.7ರಿಂದ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠದಿಂದ ವಿಚಾರಣೆ ಆರಂಭ

ಹೊಸದಿಲ್ಲಿ: ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ತಾಣಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗಾಗಿ ಸರ್ವೋಚ್ಚ ನ್ಯಾಯಾಲಯವು ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠವನ್ನು ರಚಿಸಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಆದೇಶದ ಮೇರೆಗೆ ರಚನೆಯಾಗಲಿರುವ ಸಂವಿಧಾನ ಪೀಠವು ಎ.7ರಿಂದ ಅರ್ಜಿಗಳ ವಿಚಾರಣೆಯನ್ನು ಆರಂಭಿಸಲಿದೆ. ನ್ಯಾಯಾಲಯವು ಮಾ.14,2026ರಂದು ಅಥವಾ ಅದಕ್ಕೂ ಮುನ್ನ ತಮ್ಮ ಲಿಖಿತ ವಾದಗಳನ್ನು ಸಲ್ಲಿಸುವಂತೆ ಕೇರಳ ಸರಕಾರ ಸೇರಿದಂತೆ ಎಲ್ಲ ಕಕ್ಷಿದಾರರಿಗೆ ನಿರ್ದೇಶನ ನೀಡಿದೆ. ವಿಷಯವನ್ನು ವಿಶಾಲ ಪೀಠಕ್ಕೆ ಉಲ್ಲೇಖಿಸುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆಕ್ಷೇಪಗಳು ವ್ಯಕ್ತವಾಗಿದ್ದವು ಎನ್ನುವುದನ್ನು ಸರ್ವೋಚ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿದೆ. ಆದಾಗ್ಯೂ ಫೆ.2020ರಲ್ಲಿ ಒಂಭತ್ತು ನ್ಯಾಯಾಧೀಶರ ಪೀಠವು ಸರ್ವೋಚ್ಚ ನ್ಯಾಯಾಲಯವು ಪರಿಶೀಲನಾ ಹಂತದಲ್ಲಿಯೂ ವಿಶಾಲ ಪೀಠಕ್ಕೆ ಪ್ರಕರಣಗಳನ್ನು ಉಲ್ಲೇಖಿಸಬಹುದು ಎಂದು ನಿರ್ಣಾಯಕವಾಗಿ ಎತ್ತಿ ಹಿಡಿದಿದೆ ಎನ್ನುವುದನ್ನು ಬೆಟ್ಟು ಮಾಡಿದೆ. ಪ್ರಕರಣದ ಸ್ವೀಕಾರಾರ್ಹತೆಯ ವಿಷಯವು ಅಂತಿಮಗೊಂಡಿದ್ದು,ವಿಶಾಲ ಪೀಠಕ್ಕೆ ಒಪ್ಪಿಸಲು ಮಾರ್ಗವು ಮುಕ್ತಗೊಂಡಿದೆ ಎಂದು ಸೋಮವಾರದ ತನ್ನ ಆದೇಶದಲ್ಲಿ ಹೇಳಿದೆ. ತನ್ನ ಫೆ.10,2020ರ ಆದೇಶವನ್ನು ಉಲ್ಲೇಖಿಸಿದ ನ್ಯಾಯಾಲಯವು ಒಂಭತ್ತು ನ್ಯಾಯಾಧೀಶರ ಪೀಠದಿಂದ ನಿರ್ಣಯಕ್ಕಾಗಿ ಏಳು ಪ್ರಶ್ನೆಗಳನ್ನು ರೂಪಿಸಲಾಗಿತ್ತು ಎಂದು ನೆನಪಿಸಿತು. ಮುಂಬರುವ ವಿಚಾರಣೆಗಳು ಈ ವಿಷಯದಲ್ಲಿ ಬಾಕಿಯುಳಿದಿರುವ ಕಾನೂನು ಸಮಸ್ಯೆಗಳನ್ನು ಅಂತಿಮವಾಗಿ ಇತ್ಯರ್ಥಗೊಳಿಸುವ ಗುರಿಯನ್ನು ಹೊಂದಿವೆ.

ವಾರ್ತಾ ಭಾರತಿ 16 Feb 2026 8:54 pm

ಏಕಕಾಲಕ್ಕೆ ರಾಜ್ಯದ ಹಲವು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಬೆಂಗಳೂರು : ರಾಜ್ಯದ ಧಾರವಾಡ ಹೈಕೋರ್ಟ್ ಪೀಠ, ಹಾವೇರಿ, ಕೊಡಗು, ರಾಮನಗರ ಸೇರಿದಂತೆ ಹಲವು ನ್ಯಾಯಾಲಯಗಳಿಗೆ ಸೋಮವಾರ ಏಕಕಾಲಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಕೆಲ ಕಾಲ ಕೋರ್ಟಿನ ಕಲಾಪಗಳನ್ನು ಮೊಟಕುಗೊಳಿಸಲಾಯಿತು. ಇಲ್ಲಿನ ಧಾರವಾಡ ಹೈಕೋರ್ಟ್ ಪೀಠಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಗರಗ ಠಾಣೆ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ, ಅಗ್ನಿಶಾಮಕ ದಳದ ಸಿಬ್ಬಂದಿ, ಹಾಜರಿದ್ದ ಕಕ್ಷಿದಾರರು, ವಕೀಲರನ್ನು ಹೊರ ಕಳುಹಿಸಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿವೊಬ್ಬರು, ಇ-ಮೇಲ್ ಸಂದೇಶದಲ್ಲಿ ಮಧ್ಯಾಹ್ನ 1.15 ಗಂಟೆ ಸುಮಾರಿಗೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಲಾಗಿದೆ. ಜತೆಗೆ, ಎಫ್‍ಐಆರ್ ದಾಖಲು ಮಾಡಲಾಗಿದ್ದು ತನಿಖೆ ಕೈಗೊಳ್ಳಲಾಗುವುದು ಎಂದರು. ಇನ್ನೊಂದೆಡೆ, ಧಾರವಾಡದ ಜಿಲ್ಲಾ ಕೋರ್ಟ್‍ಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿ ಹಿನ್ನೆಲೆ ಅಲ್ಲಿಯೂ ವಕೀಲರು, ನ್ಯಾಯಾಧೀಶರು, ಹಾಗೂ ಕಕ್ಷಿದಾರರನ್ನು ಹೊರಗೆ ಕಳುಹಿಸಿ, ಪೊಲೀಸರು ತಪಾಸಣೆ ನಡೆಸಿದರು. ಇದೇ ಮಾದರಿಯಲ್ಲಿ ಸೋಮವಾರ ಕೊಡಗಿನ ಜಿಲ್ಲಾ ನ್ಯಾಯಾಲಯಕ್ಕೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯದ ಆವರಣವನ್ನು ಪರಿಶೀಲನೆ ನಡೆಸಿದರು. ಕೊಡಗಿನ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಇಡಲಾಗಿದೆ ಎಂದು ಇ–ಮೇಲ್ ಮೂಲಕ ಬೆದರಿಕೆ ಬಂದಿದ್ದು, ಇದರಿಂದ ನ್ಯಾಯಾಧೀಶರು ಹಾಗೂ ವಕೀಲರು ಭಯಭೀತರಾಗಿ ನ್ಯಾಯಾಲಯದಿಂದ ಹೊರಗೆ ಬಂದರು. ತಕ್ಷಣ ಬಾಂಬ್ ನಿಷ್ಕ್ರೀಯ ದಳ ಹಾಗೂ ಪೊಲೀಸರು ನ್ಯಾಯಾಲಯಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ಕಲಾಪ ಸ್ಥಗಿತ: ಇತ್ತ ದಾವಣಗೆರೆ ಜಿಲ್ಲಾ ಕೋರ್ಟ್‍ಗೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದ ಕಾರಣ ಕೋರ್ಟ್ ಕಲಾಪ ಸದ್ಯಕ್ಕೆ ಸ್ಥಗಿತಗೊಳಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು, ನ್ಯಾಯಾಧೀಶರಿಗೆ ಬಂದ ಇ-ಮೇಲ್ ಸಂದೇಶದಲ್ಲಿ ನಿಮ್ಮ ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಯಲ್ಲಿ 12 ಆರ್‍ಡಿಎಕ್ಸ್ ಐಇಡಿಗಳನ್ನು ಇರಿಸಲಾಗಿದೆ. ಅದು ಶೀಘ್ರದಲ್ಲೇ ಸ್ಪೋಟಗೊಳ್ಳಲಿದೆ ಎಂದು ತಿಳಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಕೋರ್ಟ್ ಬಳಿ ಬಡಾವಣೆ ಠಾಣೆಯ ಪೊಲೀಸರು ಜಮಾಯಿಸಿ, ಶ್ವಾನದಳದಿಂದ ತಪಾಸಣೆ ನಡೆಸಲಾಯಿತು. ಕೌಟುಂಬಿಕ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಮೇಲ್ ಬಂದಿದೆ ಎಂದರು. ಮಂಡ್ಯ ನಗರದ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ವಕೀಲರು ಹಾಗೂ ಕಕ್ಷಿದಾರರು ಕೆಲ ಕಾಲ ನ್ಯಾಯಾಲಯದ ಹೊರಗೆ ಬಂದು ಕಲಾಪದಿಂದ ದೂರ ಉಳಿದರು. ಬಾಂಬ್ ಬೆದರಿಕೆಯಿಂದ ಸ್ಥಳದಲ್ಲಿದ್ದ ನೂರಾರು ವಕೀಲರು, ಕಕ್ಷಿದಾರರದಲ್ಲಿ ಆತಂಕ ಮನೆ ಮಾಡಿತ್ತು. ತಕ್ಷಣ ಮಾಹಿತಿ ತಿಳಿದ ಪೊಲೀಸರು, ಸ್ಥಳೀಯ ಶ್ವಾನದಳ, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಫ್ಯಾಕ್ಸ್ ಮೂಲಕ ಬಾಂಬ್ ಬೆದರಿಕೆ: ಹಾವೇರಿ ಜಿಲ್ಲಾ ಕೋರ್ಟ್‍ಗೂ ಫ್ಯಾಕ್ಸ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಕೂಡಲೇ ಸಿಬ್ಬಂದಿಯನ್ನು ಹೊರ ಕಳುಹಿಸಿದ ಪೊಲೀಸರು, ಪರಿಶೀಲನೆ ನಡೆಸಿದರು. ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರೀಯ ದಳ ತಂಡ ಆವರಣ, ಹಾಗೂ ಕೋರ್ಟ್ ಕಟ್ಟಡವನ್ನು ಪರಿಶೀಲನೆ ನಡೆಸಿದರು.

ವಾರ್ತಾ ಭಾರತಿ 16 Feb 2026 8:54 pm

ಸಾಲಿಹಾತ್ ಶಿಕ್ಷಣ ಸಂಸ್ಥೆಯ ಫುಡ್ ಕೋರ್ಟ್ ಉದ್ಘಾಟನೆ

ಉಡುಪಿ, ಫೆ.16: ತೋನ್ಸೆ - ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಹಾರದ ವ್ಯವಸ್ಥೆ ನೀಡಲು ಹೊಸದಾಗಿ ನಿರ್ಮಿಸಿರುವ ಫುಡ್ ಕೋರ್ಟ್‌ನ ಉದ್ಘಾಟನೆ ಇತ್ತೀಚೆಗೆ ನಡೆಯಿತು. ನೂತನ ಕಟ್ಟಡವನ್ನು ಉದ್ಘಾಟಿಸಿದ ಜಮಾಆತೇ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷ ಅಮೀನುಲ್ ಹಸನ್ ಮಾತನಾಡಿ, ಮಕ್ಕಳು ಹಸಿದಾಗ ಸೂಕ್ತ ಸಮಯದಲ್ಲಿ ಆಹಾರ ಒದಗಿಸಿದರೆ, ಪಾಠವನ್ನು ಸರಿಯಾಗಿ ಆಲಿಸುತ್ತಾರೆ. ಆಗ ಮಾತ್ರ ಶಿಕ್ಷಣ ಪರಿಪೂರ್ಣವಾಗುತ್ತದೆ ಎಂದು ಹೇಳಿದರು. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಹಿರಿಯ ಟ್ರಸ್ಟಿ ಮೌಲಾನ ಆದಂ ಸಾಹೇಬ್, ಖಜಾಂಚಿ ಜನಾಬ್ ಅಬ್ದುಲ್ ಕಾದರ್, ಜಮಾಆತೇ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾ ಸಂಚಾಲಕ ಡಾ.ಅಬ್ದುಲ್ ಅಜೀಜ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಎಂ.ಎ.ಮೌಲಾ, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಮುಂತಾದವರು ಉಪಸ್ಥಿತರಿದ್ದರು. ಶಾಲಾ ವಿಭಾಗದ ಅಕಾಡೆಮಿ ಮುಖ್ಯಸ್ಥ ಹಾಸಿಬ್ ತರಫ್ ದರ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ನಿಹಾಲ್ ಕಿದಿಯೂರ್ ವಂದಿಸಿದರು.

ವಾರ್ತಾ ಭಾರತಿ 16 Feb 2026 8:50 pm

‘ಇಂಡಿಯಾ’ ಮೈತ್ರಿಕೂಟವನ್ನು ಮಮತಾ ಬ್ಯಾನರ್ಜಿ ಮುನ್ನಡೆಸಬೇಕು: ಮನಮೋಹನ್ ಸಿಂಗ್‌ರ ಮಾಜಿ ಸಲಹೆಗಾರ

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ವನ್ನು ಮುನ್ನಡೆಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಹೇಳಿದ್ದಾರೆ. ‘‘ಪ್ರಸಕ್ತ ಒಂದು ರಾಜಕೀಯ ಪಕ್ಷ ಮತ್ತು ಸರಕಾರವೊಂದರ ಮುಖ್ಯಸ್ಥರಾಗಿರುವ ಏಕೈಕ ಮಹಿಳೆಯಾಗಿರುವ ಮಮತಾ ಬ್ಯಾನರ್ಜಿ, ರಾಷ್ಟ್ರ ಮತ್ತು ಪ್ರಾದೇಶಿಕ ಮಟ್ಟಗಳಲ್ಲಿ ಹಾಲಿ ತಲೆಮಾರಿನ ನಾಯಕರಿಗಿಂತ ಭಿನ್ನವಾಗಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ‘‘ಸಂಪೂರ್ಣವಾಗಿ ಸ್ವಂತ ಪರಿಶ್ರಮದಿಂದ ರೂಪುಗೊಂಡಿರುವ ಮೊದಲ-ತಲೆಮಾರಿನ ನಾಯಕಿ’’ಯಾಗಿದ್ದಾರೆ ಎಂಬುದಾಗಿ ಬಣ್ಣಿಸಿರುವ ಸಂಜಯ ಬಾರು, ‘‘ಸೋನಿಯಾ ಗಾಂಧಿ-ಮನಮೋಹನ್ ಸಿಂಗ್ ಮಾದರಿಯನ್ನು ರಾಹುಲ್ ಗಾಂಧಿ-ಮಲ್ಲಿಕಾರ್ಜುನ ಖರ್ಗೆ ಮೂಲಕ ಪನರಾವರ್ತಿಸಿರುವುದರಿಂದ ಯಾವುದೇ ಪ್ರಯೋಜನವಾಗಿಲ್ಲ’’ ಎಂದು ಅವರು ‘ಟೆಲಿಗ್ರಾಫ್’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಲೇಖನವನ್ನು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

ವಾರ್ತಾ ಭಾರತಿ 16 Feb 2026 8:50 pm

ಐದು ಮಂದಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ಐದು ಮಂದಿ ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿತ ಸ್ಥಳಕ್ಕೆ ತಕ್ಷಣವೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಲಾವಣ್ಯ ಅವರನ್ನು ಮುಖ್ಯ ಆಡಳಿತಾಧಿಕಾರಿ ಬೆಂಗಳೂರಿನ ಸಂಜಯ್ ಗಾಂಧಿ ಟ್ರಾಮ ಮತ್ತು ಆಸ್ಥಿ ಚಿಕಿತ್ಸಾ ಸಂಸ್ಥೆ, ಪ್ರಮೋದ್ ಸಿ. ಅವರನ್ನು ಆಡಳಿತಾಧಿಕಾರಿ ಆಯುಕ್ತಾಲಯ ಬೆಂಗಳೂರಿನ ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಧಾರವಾಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ದೇವರಾಜ್ ಆರ್. ಅವರನ್ನು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಹುದ್ದೆಗೆ, ಮೈಸೂರು ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಎನ್.ವೆಂಕಟೇಸ್ ಅವರನ್ನು ಬೆಂಗಳೂರಿನ ಆರೋಗ್ಯ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ಹಾಗೂ ಬೆಂಗಳೂರು ಆರೋಗ್ಯ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಮುಖ್ಯ ಆಡಳಿತಾಧಿಕಾರಿ ಜಿ.ಎಚ್.ನಾಗಹನುಮಯ್ಯ ಅವರನ್ನು ಮೈಸೂರು ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ವಾರ್ತಾ ಭಾರತಿ 16 Feb 2026 8:47 pm

ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಹರ್ಯಾಣ, ರಾಜಸ್ಥಾನದಿಂದ ಐವರ ಬಂಧನ

ಮುಂಬೈ: ಇಲ್ಲಿನ ಜುಹುವಿನಲ್ಲಿರುವ ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಐದು ಸುತ್ತು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಶೂಟರ್ ಸೇರಿದಂತೆ 6 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಶೂಟರ್ ದೀಪಕ್ ಶರ್ಮಾ ಹಾಗೂ ಇತರ ಐವರನ್ನು ಹರ್ಯಾಣ ಹಾಗೂ ರಾಜಸ್ಥಾನದಿಂದ ನಗರ ಪೊಲೀಸ್‌ನ ಸುಲಿಗೆ ವಿರೋಧಿ ಘಟಕ ರವಿವಾರ ರಾತ್ರಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಹು ಪ್ರದೇಶದಲ್ಲಿರುವ ಶೆಟ್ಟಿ ಅವರ 9 ಮಹಡಿಯ ಕಟ್ಟಡದ ಮೇಲೆ ಫೆಬ್ರವರಿ 1ರಂದು ಅಪರಾಹ್ನ 12.45ಕ್ಕೆ ಕನಿಷ್ಠ 5 ಸುತ್ತು ಗುಂಡು ಹಾರಿಸಲಾಗಿತ್ತು. ಇದರಿಂದ ಒಂದು ಗುಂಡು ಕಟ್ಟಡದ ಒಳಗಿನ ಜಿಮ್‌ನ ಗ್ಲಾಸ್‌ನಲ್ಲಿ ಸಿಲುಕಿಕೊಂಡಿತ್ತು. ಇತ್ತೀಚೆಗೆ ಬಂಧಿತರಾದ ಆರೋಪಿಗಳು ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಇದುವರೆಗೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Feb 2026 8:47 pm

Yadgiri | ಸೂರತ್–ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿಯಿಂದ ತೊಂದರೆ; ತಕ್ಷಣ ಪರಿಹಾರಕ್ಕೆ ಡಾ.ಭೀಮಣ್ಣ ಮೇಟಿ ಆಗ್ರಹ

ಯಾದಗಿರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಸೂರತ್–ಚೆನ್ನೈ ಎಕ್ಸ್‌ಪ್ರೆಸ್ ವೇ ರಸ್ತೆಯ ಕಾಮಗಾರಿಯಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಆಗ್ರಹಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಎಕ್ಸ್‌ಪ್ರೆಸ್ ವೇ ರಸ್ತೆ ವಡಗೇರಾ ತಾಲ್ಲೂಕಿನ ಅನೇಕ ಗ್ರಾಮಗಳ ಮೂಲಕ ಹಾದು ಹೋಗುತ್ತಿದೆ. ಕಾಮಗಾರಿಯಿಂದಾಗಿ ಸಂಪರ್ಕ ರಸ್ತೆಗಳು ಹದಗೆಟ್ಟಿದ್ದು, ಅವುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದರು. ವಡಗೇರಾ ತಾಲ್ಲೂಕು ಕೇಂದ್ರವಾಗಿದ್ದು, ಪಟ್ಟಣದ ಸಮೀಪವೇ ಎಕ್ಸ್‌ಪ್ರೆಸ್ ವೇ ಹಾದು ಹೋಗುತ್ತಿದೆ. ಇಲ್ಲಿ ಮೇಲ್ಸೇತುವೆ ನಿರ್ಮಾಣ ಅಗತ್ಯವಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಭಾರಿ ಪ್ರಮಾಣದಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ತಕ್ಷಣ ಸಂಪರ್ಕ ರಸ್ತೆಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ವಿಳಂಬ ಮಾಡಿದಲ್ಲಿ ಪ್ರತಿ ಗ್ರಾಮದ ರೈತರೊಂದಿಗೆ ಸೇರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ವಾರ್ತಾ ಭಾರತಿ 16 Feb 2026 8:43 pm

ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಎಐ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ

ಬೆಂಗಳೂರು : ರಾಜ್ಯ ಸರಕಾರವು 2026-27ನೇ ಶೈಕ್ಷಣಿಕ ಸಾಲಿನ ಪ್ರಾರಂಭದಿಂದಲೇ ಸರಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಆದೇಶಿಸಿದೆ. ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷಾಧಿಕಾರಿ ಶುಭಮಂಗಳ ಆರ್.ವಿ. ಆದೇಶ ಹೊರಡಿಸಿದ್ದು, 2.16 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಹಾಜರಾತಿ ವ್ಯವಸ್ಥೆಯ ಮೊಬೈಲ್ ಅಪ್ಲಿಕೇಷನ್ ಅನ್ನು ಮೇ ತಿಂಗಳ ಒಳಗೆ ಅಭಿವೃದ್ಧಿಪಡಿಸಲಾಗುತ್ತದೆ. ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪದವಿ ಪೂರ್ವ ವಿಭಾಗದ ನಿರ್ದೇಶಕರನ್ನು ಅನುಷ್ಠಾನಾಧಿಕಾರಿಗಳಾಗಿ ನೇಮಿಸಲಾಗುತ್ತದೆ ಎಂದಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಎಲ್ಲಾ ರೀತಿಯ ಸಂದರ್ಭಗಳಲ್ಲಿ ಹಾಗೂ ಯಾವುದೇ ವಿದ್ಯಾರ್ಥಿಯ ಹಾಜರಾತಿಯು ತಪ್ಪದಂತೆ ಸೆರೆಹಿಡಿಯಲು ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗುತ್ತದೆ. ವಿದ್ಯಾರ್ಥಿಗಳ ನೋಂದಣಿಯನ್ನು ಸ್ಯಾಟ್ ತಂತ್ರಾಂಶದೊಂದಿಗೆ ಕಡ್ಡಾಯವಾಗಿ ದೃಢೀಕರಣ ಮಾಡಬೇಕು. ಇದಕ್ಕೆ ಅವಶ್ಯಕವಿರುವ ದತ್ತಾಂಶವನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಇ-ಆಡಳಿತ ಕೇಂದ್ರಕ್ಕೆ ಒದಗಿಸಬೇಕು ಎಂದು ಅವರು ಹೇಳಿದ್ದಾರೆ. ಹಾಜರಾತಿ ವಿವರಗಳು ತಂತ್ರಾಂಶದ ಮೂಲಕ ಸಾರ್ವಜನಿಕ ವೀಕ್ಷಣೆಗೆ ಲಭ್ಯಗೊಳಿಸಲಾಗುತ್ತದೆ. ಶಾಲಾ-ಕಾಲೇಜಿಗೆ ಗೈರುಹಾಜರಾಗುವ ವಿದ್ಯಾರ್ಥಿಗಳನ್ನು ಟ್ರ್ಯಾಕ್ ಮಾಡಲು ಹಾಗೂ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ತಂತ್ರಾಂಶದ ನೆರವಿನಿಂದ ಕ್ರಮವಹಿಸಲಾಗುತ್ತದೆ. ವಿವಿಧ ಪ್ರೋತ್ಸಾಹಕ ಯೋಜನೆಗಳಿಗೆ ಮಕ್ಕಳ ದಾಖಲಾತಿಯನ್ನು ಹೆಚ್ಚಾಗಿ ತೋರಿಸುವುದನ್ನು ಕಾನೂನು ಬಾಹಿರ ಕೃತ್ಯ ಎಂದು ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ವಾರ್ತಾ ಭಾರತಿ 16 Feb 2026 8:43 pm

Rajasthan | ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 7 ಮಂದಿ ಸಾವು

ಜೈಪುರ: ರಾಜಸ್ಥಾನದ ಭಿವಾಡಿಯ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕನಿಷ್ಠ 7 ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಭಿವಾಡಿಯ ಖುಶ್ಕೇರಾ-ಕರೋಲಿ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ದಿನನಿತ್ಯದ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಈ ಬಗ್ಗೆ ತಿಳಿಯಿತು. ಅವರು ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಮಿತಾ ಮಿಶ್ರಾ ತಿಳಿಸಿದ್ದಾರೆ. ‘‘ದುರಂತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಇದು ಗಾರ್ಮೆಂಟ್ಸ್ ಕಾರ್ಖಾನೆಯಾಗಿತ್ತು. ಆದರೆ, ಇದರ ಒಳಗೆ ಕಾನೂನುಬಾಹಿರವಾಗಿ ಪಟಾಕಿ ಉತ್ಪಾದಿಸಲಾಗುತ್ತಿತ್ತು’’ ಎಂದು ಅವರು ತಿಳಿಸಿದ್ದಾರೆ. ಕಾರ್ಖಾನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಇದ್ದರು. ಬೆಂಕಿ ಕಾಣಿಸಿಕೊಂಡ ಕೂಡಲೇ ಹಲವು ಕಾರ್ಮಿಕರು ಹೊರಗೆ ಓಡಿ ಬಂದರು. ಆದರೆ, 9 ಮಂದಿ ಸಿಲುಕಿದರು. ಅವರಲ್ಲಿ 7 ಮಂದಿ ಜೀವಂತ ದಹನವಾದರು. ಒಂದೂವರೆ ಗಂಟೆಗಳ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಪ್ರಾಥಮಿಕ ವರದಿ ತಿಳಿಸಿದೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ಹಾಗೂ ಪರಿಹಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ವಾರ್ತಾ ಭಾರತಿ 16 Feb 2026 8:42 pm

ಫೆ.18: ಮಂಗಳೂರಿಗೆ ಸಿಐಎಸ್‌ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್

ಮಂಗಳೂರು : ಸಿಐಎಸ್‌ಎಫ್ ವತಿಯಿಂದ ಸಿಐಎಸ್‌ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್-2026 ಎಂಬ ಐತಿಹಾಸಿಕ ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಫೆ.18ರಂದು ಮಂಗಳೂರಿಗೆ ಆಗಮಿಸಲಿದೆ. ವಂದೇ ಮಾತರಂ 150ನೇ ವಾರ್ಷಿಕೋತ್ಸವದ ಅಂಗವಾಗಿ ಸೈಕ್ಲೋಥಾನ್-2026 ಹಮ್ಮಿಕೊಳ್ಳಲಾಗಿದೆ. ಜ.28ರಂದು ಆರಂಭಗೊಂಡ ಸೈಕ್ಲೋಥಾನ್ ಫೆ,21ರಂದು ಕೊಚ್ಚಿಯಲ್ಲಿ ಸಮಾರೋಪಗೊಳ್ಳಲಿದೆ. ರಾಷ್ಟ್ರೀಯ ಏಕತೆ, ಕರಾವಳಿ ಭದ್ರತೆ ಹಾಗೂ ಕರಾವಳಿ ಪ್ರದೇಶಗಳ ಸದೃಢ ಮತ್ತು ಸತತ ಅಭಿವೃದ್ಧಿಯತ್ತ ಸಾಗಲು ಇದು ಪ್ರಯತ್ನಿಸಲಿದೆ. ವಷರ್ಪೂರ್ತಿ ನಡೆಯುವ ಈ ಜನಜಾಗೃತಿ ಕಾರ್ಯಕ್ರಮದಲ್ಲಿ ದೈಹಿಕ ಸಾಮರ್ಥ್ಯದ ಜೊತೆಗೆ ಸಾಮಾಜಿಕ ಜಾಗೃತಿ, ಪರಿಸರ ಸಂರಕ್ಷಣೆ ಹಾಗೂ ಭಾರತದ ವಿಶಾಲ ಕರಾವಳಿಯ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ನೀಡಲಾಗುತ್ತದೆ. ಇದರಲ್ಲಿ 65 ಮಹಿಳಾ ಸೈಕ್ಲಿಸ್ಟ್‌ಗಳ ಸಹಿತ 130 ಸಿಐಎಸ್‌ಎಫ್ ಸಿಬ್ಬಂದಿ ವರ್ಗ ಭಾಗವಹಿಸುತ್ತಿದೆ. ಈ ಸೈಕ್ಲೋಥಾನ್ ಭೇಟಿಯ ಸಂದರ್ಭ ಕರಾವಳಿ ಕೇಂದ್ರೀಕೃತ 52 ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾ ಗಿದೆ. ಮುಖ್ಯವಾಗಿ, ಕರಾವಳಿ ಭದ್ರತೆ, ಕೌಶಲಾಭಿವೃದ್ಧಿ, ಜೀವನೋಪಾಯವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಫೆ.18ರಂದು ಸಂಜೆ 7ಕ್ಕೆ ಸೈಕ್ಲೋಥಾನ್ ತಂಡವನ್ನು ಪಣಂಬೂರು ಬೀಚ್‌ನಲ್ಲಿ ಸ್ವಾಗತಿಸಲಾಗುತ್ತದೆ. ಫೆ.19ರಂದು ಮಂಗಳೂರಿನಿಂದ ಸೈಕ್ಲೋಥಾನ್ ಮುಂದುವರೆಯಲಿದೆ ಎಂದು ಸಿಐಎಸ್‌ಎಫ್ ಎನ್‌ಎಂಪಿಎ ಘಟಕದ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Feb 2026 8:40 pm

ಚಿನ್ನದ ದರ 1 ಲಕ್ಷ ರೂ.ಗಿಂತ ಕೆಳಕ್ಕೆ ಇಳಿಯುತ್ತೆ! 'ರಷ್ಯಾ - ಅಮೆರಿಕ ಡೀಲ್‌' ಕಾರಣ ಕೊಟ್ಟ ಆರ್ಥಿಕ ತಜ್ಞರು; ಯಾವಾಗ?

ಚಿನ್ನಾಭರಣ ಖರೀದಿ ಮಾಡುವವರಿಗೆ ಸಂತಸದ ಸುದ್ದಿ. ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ 1 ಲಕ್ಷಕ್ಕಿಂತ ಕಡಿಮೆಯಾಗಲಿದ ಎಂದು ತಜ್ಞರು ಅಂದಾಜಿಸಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನೂ ನೀಡಿದ್ದು, ಬದ್ದವೈರಿಗಳಾಗಿದ್ದ ಅಮೆರಿಕ ಹಾಗೂ ರಷ್ಯಾ ನಡುವಿನ ಬಿರುಕು ತಗ್ಗಿ ವ್ಯಾಪಾರ ವಹಿವಾಟು ನಡೆಸಲು ಮುಂದಾಗಿವೆ. ಇದರಿಂದ ಚಿನ್ನದ ಬೆಲೆ 1 ಲಕ್ಷ ರೂಪಾಯಿಗಿಂತ ಕೆಳಗೆ ಬರುತ್ತೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ವಿಜಯ ಕರ್ನಾಟಕ 16 Feb 2026 8:38 pm

Raichur | ಯರಗೇರಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತಾಯ

ರಾಯಚೂರು: ತಾಲ್ಲೂಕಿನ ಯರಗೇರಾ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂದು ಒತ್ತಾಯಿಸಿ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಪದಾಧಿಕಾರಿಗಳು ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಅವರಿಗೆ ಮನವಿ ಸಲ್ಲಿಸಿದರು. ಯರಗೇರಾ ಹೋಬಳಿಯಲ್ಲಿ 20ಕ್ಕೂ ಹೆಚ್ಚು ಗ್ರಾಮಗಳಿದ್ದು, ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯವಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳಿಲ್ಲ. ಸಮೀಪದ ಗುಂಜಹಳ್ಳಿ ಗ್ರಾಮದಲ್ಲಿ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ, ಅಲ್ಲಿ ಸಹ ಅಧಿಕಾರಿಗಳು ನಿಯಮಿತವಾಗಿ ಲಭ್ಯರಾಗುತ್ತಿಲ್ಲ ಎಂದು ದೂರಿದರು. ಯರಗೇರಾ ಹೋಬಳಿಗೆ ಸೇರುವ ಪ್ರತಿಯೊಂದು ಗ್ರಾಮಕ್ಕೂ ಈ ಕೇಂದ್ರದಿಂದ ಅನುಕೂಲವಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಹಾಗೂ ವೃದ್ಧರು ಆಸ್ಪತ್ರೆಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಬಡಜನರು ಆರೋಗ್ಯ ಸೇವೆಗಳ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು. ಯರಗೇರಾ ಗ್ರಾಮದಲ್ಲಿ ಕೆಲ ಖಾಸಗಿ ಕ್ಲಿನಿಕ್‌ಗಳು ಇದ್ದು, ಹೆಚ್ಚಿನ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿರುವುದಾಗಿ ಆರೋಪಿಸಿದರು. ಗ್ರಾಮದಲ್ಲೇ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ವಾಹನ ಸಂಚಾರ ಹೆಚ್ಚು. ಅಪಘಾತಗಳು ಸಂಭವಿಸಿದಾಗ ತುರ್ತು ಚಿಕಿತ್ಸೆ ಸಿಗುವುದಿಲ್ಲ. ಸರಿಯಾದ ಆಂಬುಲೆನ್ಸ್ ಸೌಲಭ್ಯವೂ ಇಲ್ಲದ ಕಾರಣ, ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಕಾರ್ಯಕರ್ತ ಅಜೀಜ್ ಜಹಾಗೀರದಾರ ಹಾಗೂ ತಾಲ್ಲೂಕು ಕಾರ್ಯದರ್ಶಿ ಜಿಲಾನಿ ಯರಗೇರಾ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 8:38 pm

ಫೆ.17: ತಣ್ಣೀರುಬಾವಿಯಲ್ಲಿ ರಾಸಾಯನಿಕ ಸೋರಿಕೆ ಅಣಕು ಪ್ರದರ್ಶನ

ಮಂಗಳೂರು, ಫೆ.16: ಅಪಾಯಕಾರಿ ರಾಸಾಯನಿಕ ಘಟಕಗಳಲ್ಲಿ ಅಪಘಾತಗಳ ನಿರ್ವಹಣೆ ಕುರಿತು ಅಣಕು ಪ್ರದರ್ಶನವು ಫೆ.17ರಂದು ತಣ್ಣೀರುಬಾವಿ ಐಎಂಸಿ ಘಟಕದಲ್ಲಿ ನಡೆಯಲಿದೆ. ಈ ಕುರಿತು ಪೂರ್ವಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ತೈಲ ಮತ್ತು ಅಪಾಯಕಾರಿ ರಾಸಾಯನಿಕ ಸಂಗ್ರಹಣಾ ಘಟಕಗಳಲ್ಲಿ ಅಪಘಾತಗಳ ನಿರ್ವಹಣೆಯನ್ನು ಬಲಗೊಳಿಸಿ ಸಂಬಂಧಿಸಿದ ಕೈಗಾರಿಕಾ ಘಟಕಗಳು, ವಿವಿಧ ಸರಕಾರಿ ಇಲಾಖೆಗಳು ಹಾಗೂ ವಿವಿಧ ಭಾಗೀದಾರಿ ಸಂಸ್ಥೆಗಳ ನಡುವೆ ಸಮನ್ವಯತೆಗೊಳಿಸಲು ಈ ಅಣಕು ಪ್ರದರ್ಶನವು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಶ್ರಕೋಟಿ, ಎನ್‌ಡಿಆರ್‌ಎಫ್ ಮುಖ್ಯಸ್ಥ ಅಜಯ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 8:38 pm

ಮಾನಸಿಕ ಅಸ್ವಸ್ಥ ಮಹಿಳೆ ನಾಪತ್ತೆ

ಉಡುಪಿ, ಫೆ.16: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮ ಚೋರಾಡಿ ನಿವಾಸಿ ರತಿ (37) ಎಂಬ ಮಹಿಳೆ ಜನವರಿ 31ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ದಪ್ಪ ಶರೀರ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 16 Feb 2026 8:35 pm

ವಿವಾಹಿತ ಮಹಿಳೆ ನಾಪತ್ತೆ

ಉಡುಪಿ : ಬೈಂದೂರು ತಾಲೂಕು ಕಿರಿಮಂಜೇಶ್ವರದ ಬಾಡಿಗೆ ಮನೆಯೊಂದರಲ್ಲಿ ಗಂಡ ಹಾಗೂ ಮಕ್ಕಳೊಂದಿಗೆ ವಾಸವಿದ್ದ ಮಲ್ಲಿಕಾ (31) ಎಂಬ ಮಹಿಳೆ, ಫೆಬ್ರವರಿ 5ರಂದು ಅಪರಾಹ್ನ 3  ಗಂಟೆ ಸುಮಾರಿಗೆ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು, ಈವರೆಗೂ ವಾಪಾಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. 5 ಅಡಿ 3 ಇಂಚು ಎತ್ತರ. ಕೋಲು ಮುಖ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-251033, ಮೊ.ನಂ: 9480805459, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ: 9480805434 ಹಾಗೂ ಕಂಟ್ರೋಲ್ ರೂಂ.100, ದೂ.ಸಂಖ್ಯೆ: 0820- 2526444 ಅನ್ನು ಸಂಪರ್ಕಿಸಬಹುದು ಎಂದು ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 16 Feb 2026 8:33 pm

ಸಿರವಾರ | ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ವಿಶೇಷ ತರಗತಿ ಆರಂಭ

ಸಿರವಾರ: ಸತತವಾಗಿ ಎಸೆಸೆಲ್ಸಿ ಫಲಿತಾಂಶ ಕುಸಿತ ಕಂಡ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿನೂತನ ಹೆಜ್ಜೆ ಇಟ್ಟಿದ್ದು, ಇಂದಿನಿಂದ 30 ದಿನಗಳ ಕಾಲ ಪ್ರತಿದಿನ ಸಂಜೆ 6ರಿಂದ 9 ಗಂಟೆಯವರೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆರಂಭಿಸಲಾಗಿದೆ ಎಂದು ವಲಯ ಸಂಪನ್ಮೂಲ ಅಧಿಕಾರಿ ಮಹೇಶ್ ತಿಳಿಸಿದ್ದಾರೆ. ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಭೇಟಿ ನೀಡಿ ಮೊದಲ ದಿನದ ವಿಶೇಷ ತರಗತಿಯನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಆಧಾರಿತ ಪ್ರಶ್ನೋತ್ತರಗಳ ಮೇಲೆ ವಿಶೇಷ ಬೋಧನೆ ನೀಡಲಾಗುತ್ತದೆ. ಇದರಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗುವ ಜೊತೆಗೆ ಶಾಲೆಯ ಒಟ್ಟು ಫಲಿತಾಂಶವೂ ಹೆಚ್ಚಳವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಉತ್ತಮ ಫಲಿತಾಂಶಕ್ಕಾಗಿ ಈ ಪ್ರಯತ್ನ ಕೈಗೊಂಡಿದ್ದು, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ನಿಯಮಿತವಾಗಿ ಅಭ್ಯಾಸ ಮಾಡಿ ಶೇ.100 ಫಲಿತಾಂಶ ತರುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವೆಂಕಟೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್ ರಫೀ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 8:32 pm

ವ್ಯಕ್ತಿ ನಾಪತ್ತೆ

ಉಡುಪಿ, ಫೆ.16:ತಾಲೂಕಿನ ಮೂಡುತೋನ್ಸೆ ಗ್ರಾಮದ ನೇಜಾರು ರಾಜೀವ ನಗರದ ನಿವಾಸಿ ಸತೀಶ್ (43) ಎಂಬವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮನೆಯಿಂದ ಕೆಲಸಕ್ಕೆಂದು ತೆರಳಿದ್ದವರು ವಾಪಸು ಬರದೆ ನಾಪತ್ತೆಯಾಗಿದ್ದಾರೆ. 5 ಅಡಿ 6 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು ತುಳು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2537999, ಮಲ್ಪೆ ಪಿಎಸ್‌ಐ ನಂ:9480805447, ಮಲ್ಪೆ ವೃತ್ತ ನಿರೀಕ್ಷಕರು ಮೊ.ನಂ: 9480805430ನ್ನು ಸಂಪರ್ಕಿಸಬಹುದು ಎಂದು ಮಲ್ಪೆ ಪೊಲೀಸ್ ಠಾಣಾ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 16 Feb 2026 8:31 pm

ಮಾನವ ಹಕ್ಕು ಉಲ್ಲಂಘನೆ: ಸಾರ್ವಜನಿಕರಿಂದ ದೂರು ಸ್ವೀಕಾರ

ಉಡುಪಿ, ಫೆ.16: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯನಿರ್ವಹಣಾ ಅಧ್ಯಕ್ಷರಾದ ಡಾ.ಟಿ. ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಫೆ.18 ಮತ್ತು 19ರಂದು ಜಿಲ್ಲೆಗೆ ಭೇಟಿ ನೀಡ ಲಿದ್ದು, ಆಯೋಗದ ಮುಂದೆ ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ನಡೆಸುವ ಜೊತೆಗೆ ಮಾನವ ಹಕ್ಕು ಉಲ್ಲಂಘನೆಗಳಿಗೆ ಸಂಬಂಧಿಸಿದ ಹೊಸ ದೂರುಗಳನ್ನು ಸ್ವೀಕರಿಸಲಿದ್ದಾರೆ. ಫೆ.19ರಂದು ಅಪರಾಹ್ನ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಸಂಬಂಧಿ ಸಿದಂತೆ ಸಾರ್ವಜನಿಕರಿಂದ ಹೊಸ ದೂರುಗಳನ್ನು ಸ್ವೀಕರಿಸಲಿದ್ದಾರೆ. ಜಿಲ್ಲೆಯ ಸಾರ್ವಜನಿಕರು ಹಾಗೂ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಅಂದು ಸಲ್ಲಿಸಬಹುದಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 16 Feb 2026 8:30 pm

55 ಕೋಟಿ ರೂ. ವೆಚ್ಚದಲ್ಲಿ ಕಂಡ್ಲೂರು ಸೇತುವೆ ಪುನರ್‌ ನಿರ್ಮಾಣ

ಕುಂದಾಪುರ, ಫೆ.13: ನಾಲ್ಕು ದಶಕಗಳ ಹಿಂದೆ ನಿರ್ಮಾಣಗೊಂಡು ಶಿಥಿಲ ಗೊಂಡಿರುವ ತಾಲೂಕಿನ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ 79.00ಕಿ.ಮೀ.ನಲ್ಲಿ ಬಳ್ಕೂರು- ಕಂಡ್ಲೂರು ಮಧ್ಯದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಸೇತುವೆಯನ್ನು 55 ಕೋಟಿ ರೂ.ವೆಚ್ಚದಲ್ಲಿ ಪುನರ್ ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಕುರಿತಂತೆ ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅವರು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದೀಗ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅತಿ ಹತ್ತಿರದ ಈ ಮಾರ್ಗದಲ್ಲಿ ಕಿ.ಮೀ 79.00ರಲ್ಲಿರುವ ಬಳ್ಕೂರು - ಕಂಡ್ಲೂರು ಮಧ್ಯದ ಸೇತುವೆಯ ಪುನರ್ ನಿರ್ಮಾಣಕ್ಕೆ ಸಚಿವರು ಮಂಜೂರಾತಿ ನೀಡಿದ್ದಾರೆ. 1972ರಲ್ಲಿ ನಿರ್ಮಾಣಗೊಂಡ ಈ ಸೇತುವೆ 10 ಅಂಕಣಗಳನ್ನು ಒಳಗೊಂಡಿದ್ದು ಒಟ್ಟು 312ಮೀ. ಉದ್ದವಿದೆ. ಈ ಸೇತುವೆ ಶಿಥಿಲಗೊಂಡಿರುವ ಕಾರಣ ಇದರ ಮೇಲೆ ಅಧಿಕ ಭಾರ ಹೊತ್ತ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಸೇತುವೆ ಕುಸಿಯುವ ಸಾಧ್ಯತೆಯೊಂದಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಸಂಭವವೂ ಇತ್ತು. ಹೀಗಾಗಿ ಸೇತುವೆಯ ಮರುನಿರ್ಮಾಣಕ್ಕೆ ಅಂದಾಜು 40 ಕೋಟಿ ರೂ. ಅನುದಾನವನ್ನು ಮಂಜೂರು ಮಾಡುವಂತೆ ಕೊಡ್ಗಿ, ಸಚಿವ ಸತೀಶ್ ಜಾರಕಿಹೊಳೆ ಅವರಲ್ಲಿ ವಿನಂತಿಸಿದ್ದರು. ಶಾಸಕರ ಮನವಿಗೆ ಸಚಿವರು ಶೀಘ್ರವಾಗಿ ಸ್ಪಂದಿ ಸಿದ್ದು ಸೇತುವೆಯ ಮರು ನಿರ್ಮಾಣಕ್ಕೆ 55 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಬಳ್ಕೂರು - ಕಂಡ್ಲೂರು ನಡುವಿನ ಸೇತುವೆಯ ಪುನರ್‌ನಿರ್ಮಾಣ ಮತ್ತು ಪುನಶ್ವೇತನ ಕಾಮಗಾರಿಗಳಿಗೆ ಅನುಮೋದನೆ ನೀಡಿರುವುದಕ್ಕೆ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಪ್ರಕಟಣೆ ಮೂಲಕ ಹರ್ಷ ವ್ಯಕ್ತಪಡಿಸಿದ್ದು ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 16 Feb 2026 8:27 pm

ಜಡ್ಕಲ್: ಸ್ವಸ್ತಿಕ್ ಕುಟುಂಬಕ್ಕೆ ಕಲಾರಂಗದ 88ನೇ ಮನೆ ಹಸ್ತಾಂತರ

ಉಡುಪಿ, ಫೆ.16: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಎಸ್. ನಾಯ್ಕ್ ಇವರ ಬಡ ಕುಟುಂಬಕ್ಕೆ ಬೈಂದೂರು ತಾಲೂಕಿನ ಜಡ್ಕಲ್ ಬಳಿ ಸೆಲ್ಕೋಡ್‌ನಲ್ಲಿ ಶಿರ್ವದ ನಿವೃತ್ತ ಉಪನ್ಯಾಸಕಿ ಶಾರದಾ ಎಂ. ಇವರು ತಮ್ಮ ಪತಿ ಕೃಷ್ಣಮೂರ್ತಿ ಕೆ. ಇವರ ನೆನಪಿನಲ್ಲಿ ನಿರ್ಮಿಸಿದ ನೂತನ ಮನೆ ‘ಛಂದೋಗತಿ’ ಯನ್ನು ಶಾರದಾ ಅವರೇ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶನಿವಾರ ಕುಟುಂಬಕ್ಕೆ ಹಸ್ತಾಂತರಿಸಿದರು. ಸೆಲ್ಕೋಡ್‌ನ ಶಂಕರನಾಯ್ಕ್ ಹಾಗೂ ಚಿಕ್ಕಮ್ಮ ದಂಪತಿ ಪುತ್ರ ಸ್ವಸ್ತಿಕ್, ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ. ಈತನ ಬಡ ಕುಟುಂಬಕ್ಕೆ ಯಕ್ಷಗಾನ ಕಲಾರಂಗ ದಾನಿಗಳಾದ ಉಪನ್ಯಾಸಕಿ ಶಾರದಾ ಅವರ ಮೂಲಕ ಸುಮಾರು ಏಳು ಲಕ್ಷ ರೂ.ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿತ್ತು. ಮನೆಯನ್ನು ಶಂಕರ ನಾಯ್ಕ್ ಕುಟುಂಬಕ್ಕೆ ಹಸ್ತಾಂತರಿಸಿ ಮಾತನಾಡಿದ ಶಾರದಾ, ನನ್ನ ಪತಿ ಕೃಷ್ಣಮೂರ್ತಿ ಅವರ ಹಲವು ಆಸಕ್ತಿಗಳಲ್ಲಿ ಛಂದಸ್ಸಿನ ಕುರಿತ ಆಳವಾದ ಅಧ್ಯಯನವೂ ಒಂದು. ಅವರಿಗೆ ’ಛಂದೋಗತಿ’ ಎಂಬ ಪುಸ್ತಕ ವನ್ನು ಬರೆಯಬೇಕೆಂಬ ಕನಸಿತ್ತು. ಅದು ಈಡೇರಿರಲಿಲ್ಲ. ಹಾಗಾಗಿ ಅವರ ಸ್ಮತಿಯಲ್ಲಿ ನೀಡಿದ ಈ ಮನೆಗೆ ಅದೇ ಹೆಸರಿಟ್ಟಿದ್ದೇನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿದರು. ಕೃಷ್ಣಮೂರ್ತಿ ಅವರ ಶಿಷ್ಯ, ಸಹೋದ್ಯೋಗಿ ವಿಷ್ಣುಮೂರ್ತಿ ಪ್ರಭು ಗುರುಗಳ ಬಹುಭಾಷಾ ಪಾಂಡಿತ್ಯ ಮತ್ತು ವಿದ್ವತ್‌ನ್ನು ಪರಿಚಯಿಸಿದರು. ವೇದಿಕೆಯಲ್ಲಿ ಖ್ಯಾತ ವಕೀಲ ರಾಮಚಂದ್ರ ಅಡಿಗ, ಬಿ.ಹರೀಶ್ ತಂತ್ರಿ, ಶಾರದಾ ಎಂ. ಸಹೋದರ ಕೃಷ್ಣ ಭಟ್, ಪತ್ನಿ ಪರಮೇಶ್ವರೀ, ಸರೋಜ ಮುಂತಾದವರು ಉಪಸ್ಥಿತರಿದ್ದರು. ಕಲಾರಂಗದ ಯು.ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಡಾ.ರಾಘವೇಂದ್ರ ರಾವ್ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 16 Feb 2026 8:26 pm

2024 ರ ಆಂಧ್ರಪ್ರದೇಶ ಚುನಾವಣೆಯ ಮತಗಳ ಸಂಖ್ಯೆಯಲ್ಲಿ ಅಸಾಮಾನ್ಯ ಏರಿಕೆ; ʼಮೋಸʼ ಅಥವಾ ʼಪವಾಡʼ?

ಆರ್ಥಿಕ ತಜ್ಞ ಡಾ. ಪರಕಾಲ ಪ್ರಭಾಕರ್ ವಿಶ್ಲೇಷಣೆ - thewire.in

ವಾರ್ತಾ ಭಾರತಿ 16 Feb 2026 8:23 pm

ವಿಜಯೇಂದ್ರ ಬಿಜೆಪಿ ಬಾಲ ಭವನದ ನಾಯಕ : ರಮೇಶ್ ಬಾಬು ವ್ಯಂಗ್ಯ

ಬೆಂಗಳೂರು : ರಾಜ್ಯ ಬಿಜೆಪಿ ಬಾಲ ಭವನದ ನಾಯಕ ವಿಜಯೇಂದ್ರ ತನ್ನ ಪಟಾಲಾಂ ಜೊತೆ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬದ ಮೇಲೆ ಅವಲತ್ತುಕೊಂಡಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಬಿಜೆಪಿ ಮತ್ತು ಆರೆಸ್ಸೆಸ್‍ಗೆ ತಮ್ಮ ಸಮರ್ಥನೆಗೆ ಇಂತಹ ಬಾಲಂಗೋಚಿ ನಾಯಕರ ಅವಶ್ಯಕತೆ ಬಂದಿರುವುದು ವ್ಯವಸ್ಥೆಯ ದೌರ್ಬಲ್ಯ ಎಂದು ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ. ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಪದೇ ಪದೇ ದಿಲ್ಲಿ ದಂಡೆಯಾತ್ರೆ ಮಾಡುತ್ತಿರುವ ವಿಜಯೇಂದ್ರಗೆ, ಆರೆಸ್ಸೆಸ್ ಸಮರ್ಥಿಸುವ ಅನಿವಾರ್ಯತೆ ಸೃಷ್ಟಿ ಆಗಿರುವುದು ದೊಡ್ಡ ವಿಪರ್ಯಾಸ ಎಂದು ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಸೈದ್ಧಾಂತಿಕವಾಗಿ ಸಂಘ ಪರಿವಾರದ ಅಸ್ತಿತ್ವ, ನೋಂದಾವಣೆ ಕಾರ್ಯ ಮತ್ತು ಚಟುವಟಿಕೆಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅವರು ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ತಡ ಬಡಾಯಿಸಿರುವ ಆರೆಸ್ಸೆಸ್, ಸ್ವತಃ ಮೋಹನ್ ಭಾಗವತ್ ರವರನ್ನು ಬೆಂಗಳೂರಿಗೆ ಕರೆತಂದು ಆ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಅತ್ಯಂತ ಭ್ರಷ್ಟಾಚಾರದ ಆರೋಪವನ್ನು ಸ್ವಪಕ್ಷದಿಂದಲೇ ಎದುರಿಸಿ ಪಲಾಯನ ಗೈದಂತಹ ಕಳಂಕಿತ ನಾಯಕ ವಿಜಯೇಂದ್ರ, ಸಂಘ ಪರಿವಾರದ ಪ್ರತಿಪಾದನೆಗೆ ಅಥವಾ ಸಮರ್ಥನೆಗೆ ನಿಲ್ಲುವ ಮೂಲಕ ಸಂಘ ಪರಿವಾರದ ಮತ್ತೊಂದು ಮುಖವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ ಎಂದು ರಮೇಶ್ ಬಾಬು ಟೀಕಿಸಿದ್ದಾರೆ. ಈ ದೇಶದ ಕಾನೂನಿನ ಅನ್ವಯ ಯಾವುದೇ ಸಂಘ ಸಂಸ್ಥೆ ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೊಂದಾವಣೆ ಆಗದ ಸಂಘ ಸಂಸ್ಥೆಯ ಲೆಕ್ಕಪತ್ರಗಳನ್ನು ಅಥವಾ ಹಣಕಾಸು ವ್ಯವಹಾರಗಳನ್ನು ಅನುಮಾನದಿಂದ ನೋಡಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಏಕಾಂಗಿ ಪ್ರಯತ್ನದ ಮೂಲಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ತಂದು ಕೊಟ್ಟಿದ್ದಾರೆ. ಅದರ ಜೊತೆಗೆ ಆ ಭಾಗದಲ್ಲಿ ಕಾರ್ಮಿಕ ಆಸ್ಪತ್ರೆ, ವಿಶೇಷವಾಗಿ ರೈಲ್ವೆ ಸಂಪರ್ಕಗಳು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಕಲ್ಯಾಣ ಕರ್ನಾಟಕದ ಜನರಿಗೆ ಉದ್ಯೋಗಗಳ ಅವಕಾಶ ಮುಂತಾದ ಸಾರ್ವಜನಿಕ ಕೆಲಸಗಳಿಗೆ ಬುನಾದಿ ಹಾಕಿ ಇತರ ನಾಯಕರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಖಾತೆಯ ಮುಖಾಂತರ ರಾಜ್ಯದ ಅಭಿವೃದ್ಧಿಗೆ ತಾವು ಮಾಡಿರುವ ಸಾಧನೆಯನ್ನು ವಿಧಾನಸಭೆಯ ಅಧಿವೇಶನದಲ್ಲಿ ಅಂಕಿ ಅಂಶಗಳ ಸಮೇತವಾಗಿ ತೆಗೆದಿಟ್ಟಿದ್ದಾರೆ. ತಮ್ಮ ತಂದೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಸಹಿಯನ್ನು ನಕಲು ಮಾಡಿದ ಆರೋಪವನ್ನು ಹೊತ್ತಿರುವ ವಿಜಯೇಂದ್ರ ಇಂದಿಗೂ ಅದರ ಬಗ್ಗೆ ಸಾರ್ವಜನಿಕವಾಗಿ ಉತ್ತರವನ್ನು ನೀಡಿಲ್ಲ ಎಂದು ರಮೇಶ್ ಬಾಬು ಹೇಳಿದ್ದಾರೆ. ನೀರಾವರಿ ಇಲಾಖೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳ ಅವ್ಯವಹಾರ ಕುರಿತು ಅವರದೇ ಪಕ್ಷದ ಶಾಸಕರು ಆರೋಪಗಳನ್ನು ಮಾಡಿದಾಗ ಮನೆ ಸೇರಿದ ವ್ಯಕ್ತಿ ಇದೇ ವಿಜಯೇಂದ್ರ. ವರ್ಗಾವಣೆ ದಂಧೆ ಮತ್ತು ಅಕ್ರಮ ಟೆಂಡರ್ ಗಳ ಆರೋಪವನ್ನು ಹೊತ್ತಿದ್ದರು. ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ವೈಯಕ್ತಿಕವಾಗಿ ಇವರ ಕುಟುಂಬ ಮಾಡಿರುವ ಆಸ್ತಿಯ ಕುರಿತು ಅವರದೇ ಪಕ್ಷದ ನಾಯಕ ಈಶ್ವರಪ್ಪ ಆರೋಪ ಮಾಡಿದ್ದಾರೆ. ಕೇವಲ ತಂದೆಯ ಹೆಸರಿನಲ್ಲಿ ರಾಜಕೀಯ ಆಶ್ರಯವನ್ನು ಪಡೆದಿರುವ ವಿಜಯೇಂದ್ರ, ಪ್ರಿಯಾಂಕ್ ಖರ್ಗೆ, ಅವರ ಕುಟುಂಬವನ್ನಾಗಲಿ ಅವರ ಸಿದ್ಧಾಂತವನ್ನಾಗಲಿ ಅಥವಾ ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳನ್ನಾಗಲಿ ಪ್ರಶ್ನಿಸುವ ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ರಮೇಶ್ ಬಾಬು ಹೇಳಿದ್ದಾರೆ.

ವಾರ್ತಾ ಭಾರತಿ 16 Feb 2026 8:22 pm