ಉದ್ಯೋಗ ಖಾತರಿ ಸೇರಿ ಹಲವು ಮಸೂದೆಗಳಿಗೆ ಕೇಂದ್ರ ಸಂಪುಟ ಅಸ್ತು
ಹೊಸದಿಲ್ಲಿ: ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಾಗುವ ಕೆಲಸದ ದಿನಗಳನ್ನು ಹೆಚ್ಚಿಸುವುದು ಸೇರಿದಂತೆ ಸಾಮಾಜಿಕ ಸುರಕ್ಷೆಯನ್ನು ಸುಧಾರಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಜತೆಗೆ ಅಣುವಿದ್ಯುತ್ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸುವುದು, ವಿಮಾ ಕ್ಷೇತ್ರದಲ್ಲಿ ಶೇ.100ರ ವಿದೇಶಿ ಹೂಡಿಕೆಗೆ ಅವಕಾಶ ನೀಡುವ ಮೂಲಕ ಮಾರುಕಟ್ಟೆಗಳನ್ನು ಮತ್ತು ಹಣಕಾಸು ವಲಯವನ್ನು ಬಲಪಡಿಸುವ ಮಸೂದೆಗೂ ಒಪ್ಪಿಗೆ ನೀಡಲಾಗಿದೆ. ಹಾಲಿ ಇರುವ ನರೇಗಾ ಯೋಜನೆಯ ಬದಲಾಗಿ ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಖಾತರಿ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಈ ಯೋಜನೆಯಡಿ ಹಾಲಿ ಇರುವ 100 ದಿನಗಳ ಬದಲಾಗಿ ಗ್ರಾಮೀಣ ಬಡವರಿಗೆ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತದೆ ಹಾಗೂ ಇದಕ್ಕೆ ದೊಡ್ಡ ಅನುದಾನ ಅಗತ್ಯವಾಗುತ್ತದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಈ ನಡೆಗೆ ಸರ್ಕಾರ ಉದ್ದೇಶಿಸಿದ್ದು, ಉದ್ಯೋಗ ಖಾತರಿ ಯೋಜನೆಯ ಹೆಗ್ಗಳಿಕೆ ಪಡೆಯುವ ಯುಪಿಎ ಪ್ರಯತ್ನವನ್ನು ವಿಫಲಗೊಳಿಸುವ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಳಿಗಾಲದ ಅಧಿವೇಶನ ಮುಕ್ತಾಯಕ್ಕೆ ಕೇವಲ ಒಂದು ವಾರ ಬಾಕಿ ಇರುವ ಹಿನ್ನೆಲೆಯಲ್ಲಿ, ಅಣುವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ 'ಭಾರತ ಪರಿವರ್ತನೆಗಾಗಿ ಅಣುವಿದ್ಯುತ್ ಮಸೂದೆ'ಯನ್ನು ಶೀಘ್ರದಲ್ಲೇ ಮಂಡಿಸಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿದು ಬಂದಿದೆ. ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡುವ ಪ್ರಸ್ತಾವಕ್ಕೆ ಕೂಡಾ ಸರ್ಕಾರ ಸಂಸತ್ತಿನ ಒಪ್ಪಿಗೆ ಬಯಸಿದೆ. ಇದರ ಜತೆಗೆ ವಿತರಣಾ ಜಾಲದಲ್ಲಿ ಸುಧಾರಣೆ ತರುವ ಮೂಲಕ ಹೆಚ್ಚಿನ ಕುಟುಂಬಗಳು ಮತ್ತು ಜನರು ಜೀವವಿಮೆಯನ್ನು ಮೀರಿ ಆರೋಗ್ಯ ಮತ್ತು ಆಸ್ತಿಯ ವಿಚಾರದಲ್ಲಿ ಅಪಾಯ ಸಾಧ್ಯತೆಗಳಿಗೆ ಸುರಕ್ಷೆ ಒದಗಿಸಲೂ ಉದ್ದೇಶಿಸಲಾಗಿದೆ. ಈ ಪ್ರಸ್ತಾವಿತ ಕಾನೂನುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ. ಮುಂದಿನ ವಾರ ಇವುಗಳನ್ನು ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಲಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ : ಪುನರ್ವಸತಿ ಪ್ಯಾಕೇಜ್ ನೀಡಲು ಸರಕಾರದ ಸಮ್ಮತಿ
ಸಂತ್ರಸ್ತರ ದಶಕಗಳ ಅರಣ್ಯರೋದನಕ್ಕೆ ಮುಕ್ತಿ ಸಿಗುವ ಭರವಸೆ
ವಾಯು ಮಾಲಿನ್ಯ: ಉಸಿರಾಡಲು ಒದ್ದಾಡುತ್ತಿರುವ ಸರಕಾರ
ಭಾರತದ ನಗರಗಳು ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯಗಳಿಗಾಗಿ ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿವೆೆ. ಅಂತರ್ರಾಷ್ಟ್ರೀಯ ವರದಿಗಳು ವಾಯುಮಾಲಿನ್ಯದಲ್ಲಿ ಭಾರತದ ಕಳಪೆ ಸಾಧನೆಗಳ ಕಡೆಗೆ ಬೆಟ್ಟು ಮಾಡುತ್ತಿವೆ. ಇತ್ತ, ಅಡಿಗೆ ಬಿದ್ದರೂ ಮೂಗು ಮೇಲೆ ಎಂಬಂತೆ, ಅಂತರ್ರಾಷ್ಟ್ರೀಯ ಸಂಸ್ಥೆಗಳು ಪ್ರಕಟಿಸುವ ವಾಯು ಗುಣಮಟ್ಟದ ಶ್ರೇಯಾಂಕಗಳಿಗೆ ಅಧಿಕೃತ ಮಾನ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಕೇಂದ್ರ ಸರಕಾರ ತನ್ನ ಮಾನ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನದಲ್ಲಿದೆ. ಇತ್ತೀಚೆಗೆ ಸ್ವಿಸ್ವಾಯು ಗುಣಮಟ್ಟ ಮೇಲ್ವಿಚಾರಣಾ ಸಂಸ್ಥೆಯ ದತ್ತಾಂಶವು ಭಾರತವು 2024ಕ್ಕೆ ವಿಶ್ವಸಂಸ್ಥೆಯ ವಾಯು ಗುಣಮಟ್ಟ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ ಎನ್ನುವುದನ್ನು ಬಹಿರಂಗಪಡಿಸಿತ್ತು. ಕಳೆದ ಮಾರ್ಚ್ನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ ಭಾರತವು ವಾಯು ಮಾಲಿನ್ಯದಲ್ಲಿ ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ. ವಿಶ್ವದ 20 ಅತಿ ಹೆಚ್ಚು ಮಾಲಿನ್ಯಗೊಂಡ ನಗರಗಳಲ್ಲಿ 13 ನಗರಗಳು ಭಾರತದಲ್ಲಿವೆ ಎಂದು ವರದಿ ಹೇಳುತ್ತಿದೆ. ಅಸ್ಸಾಮಿನ ಬರ್ನೀಹಾಟ್ ಅಗ್ರಸ್ಥಾನದಲ್ಲಿದ್ದರೆ, ಹೊಸದಿಲ್ಲಿಯನ್ನು ವಿಶ್ವದ ಅತಿ ಹೆಚ್ಚು ಮಾಲಿನ್ಯಗೊಂಡ ರಾಜಧಾನಿ ಎಂದು ಗುರುತಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ವಾಯುಮಟ್ಟ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಕುಸಿದಿರುವುದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಸಂಸತ್ನಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರಕಾರವು, ‘ದೇಶವು ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸಲು ತನ್ನದೇ ಆದ ಮಾನದಂಡಗಳನ್ನು ಹೊಂದಿದೆ. ಅಂತರ್ರಾಷ್ಟ್ರೀಯ ಮಾನದಂಡಗಳಿಗೆ ದೇಶ ಬದ್ಧವಾಗಿರಬೇಕಾಗಿಲ್ಲ ’ ಎನ್ನುತ್ತಾ ದೇಶದ ಕಳಪೆ ವಾಯು ಮಾಲಿನ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ. ಈ ಹಿಂದೆ ಭಾರತವು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದಾಗಲೂ ಸರಕಾರ ‘ಸೂಚ್ಯಂಕಕ್ಕೆ’ ಅನುಸರಿಸಿದ ಮಾನದಂಡವೇ ಸರಿಯಿಲ್ಲ ಎಂದು ಹೇಳಿ ವರದಿಯನ್ನು ನಿರಾಕರಿಸಿತ್ತು. ವಾಯು ಮಾಲಿನ್ಯಕ್ಕೆ ಸಂಬಂಧಿಸಿಯೂ ಸರಕಾರ ಅದೇ ವಾದವನ್ನು ಮುಂದಿಡುತ್ತಿದೆ. ಕಳೆದ ಡಿಸೆಂಬರ್ನಲ್ಲಿ ದಿಲ್ಲಿಯಲ್ಲಿ ಸಾರ್ವಜನಿಕರು ಹೆಚ್ಚುತ್ತಿರುವ ವಾಯುಮಾಲಿನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ ಎಂದು ಬೀದಿಗಿಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಆಕ್ರೋಶಿತ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತಡೆಯಲು ಯತ್ನಿಸಿದ ಪೊಲೀಸರ ವಿರುದ್ಧ ದಾಳಿ ನಡೆಸಿದರು. ಸುಮಾರು 20 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಇವರೆಲ್ಲರೂ ವಿಶ್ವಸಂಸ್ಥೆಯ ವರದಿಯನ್ನು ಮುಂದಿಟ್ಟು ಪ್ರತಿಭಟನೆ ನಡೆಸಿರುವುದಲ್ಲ. ಪರಿಸರ ಮಾಲಿನ್ಯದ ನೇರ ಸಂತ್ರಸ್ತರು ಇವರು. ವಿಶ್ವ ಸಂಸ್ಥೆ ಅನುಸರಿಸಿದ ಮಾನದಂಡದಲ್ಲಿ ತಪ್ಪಿದೆ ಎಂದು ಹೆಗಲು ಜಾರಿಸಿಕೊಳ್ಳಲು ನೋಡುತ್ತಿರುವ ಸರಕಾರ, ಪರಿಸರ ಮಾಲಿನ್ಯದ ನೇರ ಸಂತ್ರಸ್ತರಾಗಿರುವ ದಿಲ್ಲಿಯ ಜನರ ಆಕ್ರೋಶಕ್ಕೆ ಏನು ಉತ್ತರಿಸುತ್ತದೆ? ವಿಪರ್ಯಾಸವೆಂದರೆ ದಿಲ್ಲಿಯಲ್ಲಿ ವಾಯುಮಾಲಿನ್ಯದ ವಿರುದ್ಧ ಪ್ರತಿಭಟನೆ ಮಾಡಿದ ಜನರಿಗೆ ನಕ್ಸಲ್ ಸಂಪರ್ಕವಿದೆ ಎಂದು ಸರಕಾರ ಆರೋಪಿಸಲು ಮುಂದಾಯಿತು. ಪ್ರತಿಭಟನೆಯಲ್ಲಿ ಎನ್ಕೌಂಟರ್ಗೆ ಬಲಿಯಾಗಿರುವ ನಕ್ಸಲೀಯನ ಪರವಾಗಿ ಪೋಸ್ಟರ್ ಪ್ರದರ್ಶಿಸಲಾಗಿತ್ತು ಎಂದು ಆರೋಪಿಸುವ ಮೂಲಕ ಈ ಪ್ರತಿಭಟನೆಗೆ ನಕ್ಸಲ್ವಾದದ ಜೊತೆ ಸಂಬಂಧ ಜೋಡಿಸಿತು. ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ ಎಂಟು ಪಟ್ಟು ಹೆಚ್ಚು ವಾಯು ಮಾಲಿನ್ಯವಿದೆ. ಇದರಿಂದಾಗಿ ಭಾರತೀಯರ ಜೀವಿತಾವಧಿ 3.5 ವರ್ಷ ಕಡಿತವಾಗುತ್ತಿದೆ. ಅಸ್ತಮಾ ಸೇರಿದಂತೆ ಹಲವು ರೋಗಗಳಿಗೆ ಅವರು ಬಲಿಯಾಗುತ್ತಿದ್ದಾರೆ. ಮಾಲಿನ್ಯ ಕೇವಲ ಉಸಿರಾಟದ ಸಮಸ್ಯೆಯಾಗಿ ಉಳಿದಿಲ್ಲ. ದೇಹ ಮತ್ತು ಮೆದುಳುಗಳ ಮೇಲೆ ನೇರ ಪರಿಣಾಮಗಳನ್ನು ಬೀರುತ್ತಿದೆ. ಸ್ಟೇಟ್ ಆಫ್ ಗ್ಲೋಬಲ್ ಏರ್ 2025ರ ವರದಿಯ ಪ್ರಕಾರ, ಭಾರತದಲ್ಲಿ ದಾಖಲಾಗಿರುವ ಸುಮಾರು 20 ಲಕ್ಷ ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿದ್ದಾಗಿದೆ. 2000ದ ಬಳಿಕ ಇದು ಶೇ. 43ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ 186 ಸಾವುಗಳು ಸಂಭವಿಸುತ್ತಿವೆ. ಇದು ಹೆಚ್ಚು ಆದಾಯದ ದೇಶಗಳಿಗೆ ಹೋಲಿಸಿದರೆ ಸುಮಾರು 10 ಪಟ್ಟು ಅಧಿಕವಾಗಿದೆ. ಹೆಚ್ಚುತ್ತಿರುವ ವಾಯುಮಾಲಿನ್ಯಗಳ ವಿರುದ್ಧ ಸುಪ್ರೀಂಕೋರ್ಟ್ ಪದೇ ಪದೇ ಆದೇಶಗಳನ್ನು ನೀಡುತ್ತಾ ಬರುತ್ತಿದೆ. ಇದು ಕೇವಲ ದಿಲ್ಲಿಗೆ ಮಾತ್ರ ಸಂಬಂಧಿಸಿ ಸಮಸ್ಯೆಯಲ್ಲ. ಮುಂಬೈಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ವಿರುದ್ಧ ಹೈಕೋರ್ಟ್ ಕಳೆದ ಜನವರಿಯಲ್ಲಿ ಸೂಚನೆಗಳನ್ನು ನೀಡಿತ್ತು. ಬೆಂಗಳೂರಿನಲ್ಲೂ ವಾಯು ಗುಣಮಟ್ಟ ಕಳಪೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ವಾಯು ಮಾಲಿನ್ಯದ ಕಾರಣದಿಂದಾಗಿ ದಿಲ್ಲಿಯಲ್ಲಿ ನಡೆಯುತ್ತಿರುವ ಅಧಿವೇಶನವನ್ನೇ ಬೇರೆಡೆಗೆ ವರ್ಗಾಯಿಸುವ ಬಗ್ಗೆ ಸಲಹೆಗಳು ಸಂಸದರಿಂದಲೇ ಬರುತ್ತಿವೆೆ. ಸರಕಾರ ವಾಯುಮಾಲಿನ್ಯವನ್ನು ಮುಚ್ಚಿಡಲು ಪ್ರಯತ್ನ ನಡೆಸುತ್ತಿದ್ದರೂ, ಅದು ಸ್ವತಃ ಉಸಿರಾಡುವುದಕ್ಕೆ ಹೆಣಗಾಡುತ್ತಿರುವುದು, ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡುವ ಹೆಸರಿನಲ್ಲಿ ಕೆಮ್ಮುತ್ತಿರುವುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ. ದೇಶದ ಪ್ರಮುಖ ನದಿಗಳು ಈಗಾಗಲೇ ಕುಡಿಯುವುದಕ್ಕೆ ಅರ್ಹವಲ್ಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟಾದರೂ ಗಂಗಾನದಿಯೂ ಸೇರಿದಂತೆ ದೇಶದ ಪ್ರಮುಖ ನದಿಗಳ ಮಾಲಿನ್ಯ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಲು ಸರಕಾರ ವಿಫಲವಾಗಿದೆ. ಸರಕಾರದ ನೇತೃತ್ವದಲ್ಲೇ ನಡೆದ ಬೃಹತ್ ಕುಂಭಮೇಳ ನದಿಗಳನ್ನು ಇನ್ನಷ್ಟು ಕೆಡಿಸಿ ಹಾಕಿತು. ಇದೀಗ ವಾಯುಮಾಲಿನ್ಯದ ವಿಷಯದಲ್ಲೂ ಸರಕಾರ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದೆ. ಕನಿಷ್ಠ ಹಬ್ಬಗಳ ಹೆಸರಿನಲ್ಲಿ ಬಳಸುವ ಪಟಾಕಿಗಳಿಗೆ ಕಡಿವಾಣ ಹಾಕಿದರೂ ಈ ಮಾಲಿನ್ಯದಿಂದ ನಗರಗಳನ್ನು ಸಣ್ಣ ಪ್ರಮಾಣದಲ್ಲಿ ರಕ್ಷಿಸಿದಂತಾಗುತ್ತದೆ. ಕಳೆದ ವರ್ಷ ನವೆಂಬರ್ನಲ್ಲಿ ದೀಪಾವಳಿ ಹಬ್ಬದ ಬಳಿಕ ದಿಲ್ಲಿಯ ವಾಯುಮಾಲಿನ್ಯ ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷತಾ ಮಿತಿಗಿಂತ 14 ಪಟ್ಟು ಹೆಚ್ಚಳವಾಗಿತ್ತು. ನಿಷೇಧದ ನಡುವೆಯೇ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಿದ್ದರು. ಸರಕಾರ ಜನರ ಬೇಜವಾಬ್ದಾರಿಯ ಮುಂದೆ ಅಸಹಾಯಕವಾಗಿತ್ತು. ಪಟಾಕಿಗಳ ವಿರುದ್ಧ ನೀಡುವ ಆದೇಶಗಳನ್ನು ‘ಹಿಂದೂ ಧರ್ಮದ ವಿರುದ್ಧ ನೀಡುವ ಆದೇಶಗಳು’ ಎಂಬಂತೆ ರಾಜಕಾರಣಿಗಳೇ ಬಿಂಬಿಸಿದರು. ನಮ್ಮ ನೀರು, ಗಾಳಿ ಇತ್ಯಾದಿಗಳನ್ನು ಮಲಿನಗೊಳಿಸಿದಷ್ಟೂ ಈ ದೇಶ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದು ಇತರ ಆರ್ಥಿಕ ಸಾಮಾಜಿಕ ವಲಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಈ ನಿಟ್ಟಿನಲ್ಲಿ ಸರಕಾರ ಮಾಲಿನ್ಯಕ್ಕೆ ಸಂಬಂಧಿಸಿ ಭಾವನಾತ್ಮಕ ರಾಜಕೀಯಕ್ಕೆ ಬಲಿಯಾಗದೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ನಮ್ಮ ನೀರು, ನೆಲ, ವಾಯು ಇವುಗಳನ್ನು ಮಾಲಿನ್ಯಗೊಳ್ಳದಂತೆ ರಕ್ಷಿಸುವುದೇ ನಿಜವಾದ ದೇಶ ರಕ್ಷಣೆಯಾಗಿದೆ. ಆ ಮೂಲಕ ಭಾರತದ ಭವಿಷ್ಯವನ್ನು ರಕ್ಷಿಸಲು ಸರಕಾರ ಮುಂದಾಗಬೇಕಾಗಿದೆ. ಹಿಂದೂ ಧರ್ಮವೂ ಈ ನೆಲ, ಜಲ, ವಾಯುವಿನಲ್ಲಿ ದೇವರನ್ನು ಕಾಣುತ್ತಾ ಬಂದಿದೆ. ಇವುಗಳು ಕೆಟ್ಟರೆ ಧರ್ಮವೂ ಕೆಟ್ಟಂತೆ ತಾನೆ? ಆದುದರಿಂದ ಪರಿಸರ, ವಾಯು ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಧರ್ಮವನ್ನೂ, ದೇಶವನ್ನು ರಕ್ಷಿಸುವ ಕೆಲಸಕ್ಕೆ ಸರಕಾರ ಮುಂದಾಗಬೇಕಾಗಿದೆ.
Karnataka Weather: ರಾಜ್ಯಕ್ಕೆ ರಣಭೀಕರ ಚಳಿ ಮುನ್ನೆಚ್ಚರಿಕೆ! ಈ ಜಿಲ್ಲೆಗಳಿಗೆ ಆರೆಂಜ್ &ಯೆಲ್ಲೋ ಅಲರ್ಟ್
Karnataka Cold Wave Alert: ಕರ್ನಾಟಕದಾದ್ಯಂತ ಭೀಕರ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದ್ದ ಮೈಕೊರೆವ ಚಳಿಯು ದಕ್ಷಿಣ ಒಳನಾಡಿಗೂ ವಿಸ್ತರಿಸಿದೆ. ಶೀತ ಅಲೆಯ ಮುನ್ಸೂಚನೆ ನೀಡಿ ಯೆಲ್ಲೋ ಅಲರ್ಟ್ ನೀಡಿದ್ದ ಹವಾಮಾನ ಇಲಾಖೆಯು ಇದೀಗ ಥಂಡೀ ವಿಪರಿತವಾಗಿ ಹೆಚ್ಚಾಗಿರುವ ಹಿನ್ನೆಲೆ ಕಾರಣ ಈ ಕೆಳಗಿನ ವಿವಿಧ ಜಿಲ್ಲೆಗಳಿಗೆ 'ಆರೆಂಜ್' ಮತ್ತು 'ಯೆಲ್ಲೋ
ಥಂಡಿ ಗಾಳಿಗೆ ಥಂಡಾ ಹೊಡೆದ ಜನ! ರಾಜ್ಯದಲ್ಲೇ ಅತೀ ಕನಿಷ್ಠ ತಾಪಮಾನ ಬೀದರ್ನಲ್ಲಿ ದಾಖಲು
ಬೀದರ್ ಜಿಲ್ಲೆಯಲ್ಲಿ 7.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲೇ ಅತ್ಯಂತ ಚಳಿಯ ಜಿಲ್ಲೆಯಾಗಿದೆ. ಪಾಶ್ಚಿಮಾತ್ಯ ಶೀತಗಾಳಿ ಮತ್ತು ಜೆಟ್ ಸ್ಟ್ರೀಮ್ಗಳಿಂದ ಚಳಿ ಹೆಚ್ಚಾಗಿದ್ದು, ಮುಂದಿನ ವಾರ ತಾಪಮಾನ 5.5 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುವ ಸಾಧ್ಯತೆ ಇದೆ. ದಕ್ಷಿಣ ಕರ್ನಾಟಕದಲ್ಲೂ ಐದು ದಿನಗಳ ಕಾಲ ತೀವ್ರ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾಗ್ಯಲಕ್ಷ್ಮೀ ಯೋಜನೆ: 1 ಲಕ್ಷವಲ್ಲ, ಸಿಕ್ಕಿದ್ದು 32 ಸಾವಿರ ಮಾತ್ರ!
ಭಾಗ್ಯಲಕ್ಷ್ಮಿ ಯೋಜನೆ 18 ವರ್ಷ ಪೂರೈಸಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಆರಂಭಿಸಿದ್ದ ಈ ಯೋಜನೆಯ ಮೆಚ್ಯುರಿಟಿ ಹಣವು ಪೋಷಕರಿಗೆ ಸಿಗುತ್ತಿದ್ದು, 1 ಲಕ್ಷ ನಿರೀಕ್ಷೆ ಮಾಡಿದ್ದವರಿಗೆ ಕೇವಲ 32 ಸಾವಿರ ರೂಪಾಯಿ ನಿರಾಸೆ ತರಿಸಿದೆ.
ಅಹಮದಾಬಾದ್: ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಗುಜರಾತ್ ಶಿಕ್ಷಣ ಸಚಿವೆ ರಿವಾಬಾ ಜಡೇಜಾ, ವಿದೇಶ ಪ್ರವಾಸಗಳ ವೇಳೆ ಕೆಲವು ಕ್ರಿಕೆಟಿಗರು ದುಶ್ಚಟಗಳಲ್ಲಿ ತೊಡಗುತ್ತಾರೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ತಮ್ಮ ಪತಿ ಮಾತ್ರ ಇಂತಹ ಯಾವುದೇ ಅಭ್ಯಾಸಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗುಜರಾತಿ ಭಾಷೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ, ಆಟಗಾರರ ವೈಯಕ್ತಿಕ ನಡವಳಿಕೆಯನ್ನು ಉಲ್ಲೇಖಿಸಿ, “ಕ್ರಿಕೆಟಿಗರು ಸಾರ್ವಜನಿಕ ದೃಷ್ಟಿಯಿಂದ ದೂರ ಇರುವಾಗ ಏನನ್ನಾದರೂ ಮಾಡಲು ಆಯ್ಕೆ ಮಾಡುತ್ತಾರೆ. ಆದರೆ ನನ್ನ ಪತಿ ತನ್ನ ಜವಾಬ್ದಾರಿಯನ್ನು ಅರಿತಿರುವ ವ್ಯಕ್ತಿ. ಅವರ ಸುತ್ತಲಿನ ವಾತಾವರಣ ಬೇರೆ ರೀತಿಯದ್ದಾಗಿದ್ದರೂ, ಅವರು ಎಂದಿಗೂ ದುಶ್ಚಟಗಳತ್ತ ಮುಖಮಾಡಿಲ್ಲ,” ಎಂದು ಹೇಳಿರುವುದು ವಿಡಿಯೋದಲ್ಲಿದೆ. ಲಂಡನ್, ದುಬೈ, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೆ ಕ್ರಿಕೆಟ್ ಆಡಲು ಜಡೇಜಾ ಆಗಾಗ್ಗೆ ತೆರಳುವ ವಿಚಾರವನ್ನು ಪ್ರಸ್ತಾಪಿಸಿದ ಅವರು, “ಉಳಿದ ಹಲವರು ದುಶ್ಚಟಗಳಲ್ಲಿ ತೊಡಗಿದರೂ, ಅವರ ಕುಟುಂಬಗಳಿಂದ ಯಾವುದೇ ನಿರ್ಬಂಧವಿಲ್ಲ. ಆದರೆ ಜಡೇಜಾ ಎಂದಿಗೂ ಇಂತಹ ನಡವಳಿಕೆ ತೋರಿಲ್ಲ,” ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದರು. ರಿವಾಬಾ ಅವರ ಈ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರವೀಂದ್ರ ಜಡೇಜಾ ಭಾರತದ ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿದ್ದು, 2026ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ವಿದಾಯ ಹೇಳಿ ರಾಜಸ್ಥಾನ್ ರಾಯಲ್ಸ್ ಪರ ಅವರು ಆಡಲಿದ್ದಾರೆ. ಟಿ20 ವಿಶ್ವಕಪ್ ಜಯದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೂಡಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದ ಜಡೇಜಾ ಇತ್ತೀಚೆಗಷ್ಟೇ 37ನೇ ಹುಟ್ಟುಹಬ್ಬ ಆಚರಿಸಿದ್ದರು.
ಸೈಬರ್ ಆರ್ಥಿಕ ವಂಚನೆ ಪ್ರಕರಣಗಳಿಗೆ ಕರಡು ಎಸ್ಒಪಿ ಸಿದ್ಧಪಡಿಸಲಾಗಿದೆ: ಹೈಕೋರ್ಟ್ಗೆ ಕೇಂದ್ರದ ಮಾಹಿತಿ
ಬೆಂಗಳೂರು: ಆನ್ಲೈನ್ ಹಣಕಾಸು ವಂಚನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆ ಸ್ಥಗಿತ (ಫ್ರೀಜಿಂಗ್) ಮತ್ತು ಹಣ ಮರುಜಮೆ ಮಾಡುವುದು ಸೇರಿ ಸೈಬರ್ ಅಪರಾಧ ಪ್ರಕರಣಗಳನ್ನು ವ್ಯವಹರಿಸಲು ಕರಡು ಪ್ರಮಾಣೀಕೃತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಸೈಬರ್ ಅಪರಾಧಗಳ ಸಂಬಂಧ ಬ್ಯಾಂಕ್ ಖಾತೆಗಳನ್ನು ಸ್ಥಗತಿಗೊಳಿಸುವ ಮುನ್ನ ಖಾತೆದಾರರಿಗೆ ಶೋಕಾಸ್ ನೋಟಿಸ್ ನೀಡುವ ಪ್ರಕ್ರಿಯೆ ಕಡ್ಡಾಯ ಪಾಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ನಗರದ ಪವನ್ ವಿಜಯ್ ಶರ್ಮ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಹಾಜರಾಗಿ, ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್, ಸಿಟಿಜನ್ ಫೈನಾನ್ಸಿಯಲ್ ಫ್ರಾಡ್ ರಿಪೋರ್ಟಿಂಗ್ (ಸಿಎಫ್ಸಿಎಫ್ಆರ್), ಮ್ಯಾನೇಜ್ಮೆಂಟ್ ಸಿಸ್ಟಮ್ ಆ್ಯಂಡ್ ಪ್ರೊಟೋಕಾಲ್ಸ್ಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಕರಡು ಎಸ್ಒಪಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರಲ್ಲದೆ, ಈ ಎಸ್ಒಪಿಯನ್ನು ಸಂಬಂಧಪಟ್ಟ ಪಾಲುದಾರರ ಜತೆ ಹಂಚಿಕೊಳ್ಳಲಾಗಿದೆ. ಅವರಿಂದ ಅವಶ್ಯ ಅಭಿಪ್ರಾಯಗಳನ್ನು ಸ್ವೀಕರಿಸಿ, ಅಳವಡಿಸಿದ ಬಳಿಕ ಎಸ್ಒಪಿಯನ್ನು ಅಂತಿಮಗೊಳಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸೈಬರ್ ಅಪರಾಧ ನಡೆದ ನಂತರದ ಮೊದಲ ಒಂದು ಗಂಟೆಯ ಅವಧಿಯು ಗೋಲ್ಡನ್ ಅವರ್ ಆಗಿರುತ್ತದೆ. ಆಗ ಶೋಕಾಸ್ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಅಧಿಕಾರಿಗಳಿಂದ ನಿರೀಕ್ಷೆ ಮಾಡಲಾಗದು. ಕ್ರೆಡಿಟ್ ಕಾರ್ಡ್ ದುರುಪಯೋಗವಾಗಿ ಹಣ ವರ್ಗಾವಣೆಯಾದರೆ, ಹಣ/ಖಾತೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ನುಡಿಯಿತಲ್ಲದೆ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ತನ್ನ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡ ನಂತರ ಕಾನೂನು ಅಡಿಯಲ್ಲಿ ಸೂಕ್ತ ಪರಿಹಾರ ಕೋರಲು ಸ್ವತಂತ್ರರಿದ್ದಾರೆ. ಅದಕ್ಕೆ ಈ ಆದೇಶ ಅಡ್ಡಿಪಡಿಸುವುದಿಲ್ಲ ಎಂದು ತಿಳಿಸಿ, ಅರ್ಜಿ ಇತ್ಯರ್ಥಪಡಿಸಿತು. ಅರ್ಜಿದಾರರ ಆಕ್ಷೇಪವೇನು? ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ 2012ರಲ್ಲಿ 4.6 ಲಕ್ಷ ಮತ್ತು 2024ರಲ್ಲಿ 22.6 ಲಕ್ಷ ದೂರುಗಳು ದಾಖಲಾಗಿವೆ. ಸೈಬರ್ ಅಪರಾಧಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಇಂಥ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತಹ ಮಹತ್ವದ ಕ್ರಮ ಜರುಗಿಸುವ ಮುನ್ನ ಖಾತೆದಾರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವುದು ನ್ಯಾಯಸಮ್ಮತವಾದ ಕ್ರಮ. ಆ ಕುರಿತಂತೆ ಸೂಕ್ತ ಮಾರ್ಗಸೂಚಿ ರಚನೆ ಮಾಡಬೇಕಿದೆ ಎಂದು ಹೇಳಿದ್ದರು. ಅದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡುವ ಸಲುವಾಗಿ ಸಮಯ ಕಳೆದರೆ, ವಂಚನೆಗೆ ಒಳಗಾದ ಅಪರಾಧದ ಹಣ ಮರುಪಡೆಯಲು ಅಡ್ಡಿಯಾಗಬಹುದು ಎಂದಿದ್ದರು.
ಭದ್ರಾವತಿ | ಪ್ರೇಮಿಗಳಿಗೆ ಸಹಕರಿಸಿದ ಆರೋಪ: ಚಾಕುವಿನಿಂದ ಇರಿದು ಇಬ್ಬರ ಹತ್ಯೆ
ಶಿವಮೊಗ್ಗ: ಪ್ರೀತಿಗೆ ಸಹಕರಿಸಿದ್ದಾರೆಂದು ಆರೋಪಿಸಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಜೈಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ. ಕಿರಣ್ (25)ಮತ್ತು ಮಂಜುನಾಥ್( 65) ಮೃತಪಟ್ಟವರು. ಏನಿದು ಘಟನೆ: ಜೈಭೀಮ್ ನಗರದ ನಿವಾಸಿಯಾಗಿರುವ ಶೃತಿ ಮತ್ತು ನಂದೀಶ್ ಎಂಬವರು ಪ್ರೀತಿಸುತ್ತಿದ್ದು, ಎರಡು ದಿನಗಳ ಹಿಂದೆ ಈ ಜೋಡಿ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಶುಕ್ರವಾರ ಭದ್ರಾವತಿಗೆ ವಾಪಾಸ್ ಆದ ಈ ಜೋಡಿ ನೇರವಾಗಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ನಂದೀಶ್ ಜೊತೆ ಹೋಗುವುದಾಗಿ ಯುವತಿ ಹೇಳಿದ್ದಾಳೆ ಎನ್ನಲಾಗಿದೆ. ಈ ಜೋಡಿಗೆ ಮನೆ ಬಿಟ್ಟು ಹೋಗಲು ಸಹಕರಿಸಿದ್ದರು ಎಂದು ಆರೋಪಿಸಿ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ನಂದೀಶ್ ಸ್ನೇಹಿತ ಕಿರಣ್ ಜೊತೆ ಜಗಳವಾಡಿದ್ದಾರೆ. ಈ ವೇಳೆ ಕಿರಣ್ ಗೆ ಚಾಕು ಇರಿಯಲಾಗಿದ್ದು, ತೀವ್ರ ಗಾಯಗೊಂಡ ಕಿರಣ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಜಗಳ ಬಿಡಿಸಲು ಬಂದ ಸ್ಥಳೀಯರಾದ ಮಂಜುನಾಥ ಅವರಿಗೂ ಇರಿಯಲಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Pak PMರನ್ನು 40 ನಿಮಿಷ ಕಾಯಿಸಿದ ಪುಟಿನ್; ಹತಾಶರಾಗಿ ಸಭೆಗೆ ನುಗ್ಗಿದ ಶಹಬಾಜ್ ಷರೀಫ್
ಇಸ್ತಾಂಬುಲ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ನಿಗದಿತ ವೇಳೆಗೆ ಆಗಮಿಸಿದ್ದ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ, ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ಹೊರಗಡೆ ನಿಲ್ಲಬೇಕಾದ ಪರಿಸ್ಥಿತಿ ಎದುರಾದ ಬಳಿಕ, ಅವರು ಹತಾಶರಾಗಿ ನಡೆಯುತ್ತಿದ್ದ ಸಭೆಯೊಳಗೆ ನೇರವಾಗಿ ಪ್ರವೇಶಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತುರ್ಕಮೆನಿಸ್ತಾನದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ರಷ್ಯಾ, ಪಾಕಿಸ್ತಾನ, ಟರ್ಕಿ, ಇರಾನ್ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪುಟಿನ್–ಷರೀಫ್ ದ್ವಿಪಕ್ಷೀಯ ಮಾತುಕತೆಗೆ ಸಮಯ ನಿಗದಿಯಾಗಿತ್ತು. ಆದರೆ ಆ ವೇಳೆಗೆ ಪುಟಿನ್ ಅವರು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರೊಂದಿಗೆ ಚರ್ಚೆ ಮುಂದುವರಿಸಿಕೊಂಡಿದ್ದರಿಂದ, ಷರೀಫ್ಗೆ ಸಭಾಂಗಣಕ್ಕೆ ಪ್ರವೇಶ ಸಿಗದೆ ಹೊರಗಡೆ ಕಾಯಬೇಕಾಯಿತು. 40 ನಿಮಿಷ ದಾಟಿದರೂ ಕೂಡ ಸಭೆಯಿಂದ ಯಾವುದೇ ಸೂಚನೆ ಇಲ್ಲದಿರುವುದು ಪಾಕ್ ಪ್ರಧಾನಿಯ ಅಸಮಾಧಾನಕ್ಕೆ ಕಾರಣವಾಯಿತು. ಇದರಿಂದ ಬೇಸತ್ತ ಶಹಬಾಜ್ ಷರೀಫ್, ಅಂತಿಮವಾಗಿ ಅನುಮತಿಯಿಲ್ಲದೇ ಪುಟಿನ್–ಎರ್ಡೋಗನ್ ನಡೆಸುತ್ತಿದ್ದ ಮುಚ್ಚಿದ ಸಭಾ ಕೋಣೆಗೆ ನೇರವಾಗಿ ನುಗ್ಗಿದರು. ಕೇವಲ 10 ನಿಮಿಷದ ಬಳಿಕವೇ ಅವರು ಹೊರಬಂದಿದ್ದು, ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Viral Video: ರಷ್ಯಾ ಅಧ್ಯಕ್ಷ ಪುಟಿನ್ ಸಭೆಗೆ ಏಕಾಏಕಿ ನುಗ್ಗಿದ ಪಾಕ್ ಪ್ರಧಾನಿ ಷರೀಫ್!
Viral Video: ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗುವಂತಹ ಪ್ರಸಂಗವೊಂದು ನಡೆದಿದೆ. ಇದೀಗ ಶಹಬಾಜ್ ಷರೀಫ್ ಅವರು ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ನೆಟ್ಟಿಗರು ಪಾಕ್ ಪ್ರಧಾನಿಯನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಪಾಕ್ ಪ್ರಧಾನಿ ಮಾಡಿದ್ದೇನು, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು
ಉಡುಪಿ | ವಿದ್ಯಾರ್ಥಿಗೆ ಶಿಕ್ಷೆ: ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು
ಉಡುಪಿ, ಡಿ.12: ವಿದ್ಯಾರ್ಥಿಯೊಬ್ಬನನ್ನು ಮೂರು ತಾಸು ತರಗತಿಯ ಹೊರಗಡೆ ನಿಲ್ಲಿಸಿ ನೀರು ಕೊಡದೆ ಮಾನಸಿಕ ಹಿಂಸೆ ನೀಡಿರುವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ನಿಟ್ಟೂರಿನ ಸಿಲಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನ.3ರಂದು ಬೆಳಗ್ಗೆ 17ರ ಹರೆಯದ ನೊಂದ ವಿದ್ಯಾರ್ಥಿ ತರಗತಿಯಲ್ಲಿ ಇರುವಾಗ ಯಾರೋ ವಿದ್ಯಾರ್ಥಿಗಳು ಸಿಡಿಮದ್ದನ್ನು ಸಿಡಿಸಿದ್ದರೆನ್ನಲಾಗಿದೆ. ತರಗತಿಯಲ್ಲಿ ಸಿಡಿಮದ್ದನ್ನು ಸಿಡಿಸಿದ್ದ ವಿದ್ಯಾರ್ಥಿಗಳು ಅವರ ತಪ್ಪನ್ನು ಕಾಲೇಜಿನ ಪ್ರಾಂಶುಪಾಲರ ಮುಂದೆ ಒಪ್ಪಿಕೊಂಡಿದ್ದರು. ಆದರೂ ಕೂಡ ಪ್ರಾಂಶುಪಾಲರು ಯಾವುದೇ ತಪ್ಪನ್ನು ಮಾಡದ ನೊಂದ ವಿದ್ಯಾರ್ಥಿಯನ್ನು ತರಗತಿಯ ಹೊರಗಡೆ ಸುಮಾರು 3 ತಾಸು ನಿಲ್ಲಿಸಿ ನೀರು ಕೊಡದೆ ದಂಡಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಗೆ ಮಾನಸಿಕವಾಗಿ ನೊಂದು ಕಾಲೇಜಿಗೆ ಭಯಭೀತನಾಗಿ ಹೋಗುತ್ತಿರುವುದಾಗಿ ದೂರಲಾಗಿದೆ.
ಮೈಸೂರಿನಲ್ಲಿ ರಸ್ತೆ ಅಪಘಾತ : ಸುಳ್ಯದ ಯುವಕ ಮೃತ್ಯು
ಸುಳ್ಯ, ಡಿ.12: ಮೈಸೂರಿನ ಮಳವಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕಲ್ಟಾರ್ ನಿವಾಸಿ ಶೇಷಪ್ಪನಾಯ್ಕ ಎಂಬವರ ಪುತ್ರ ದೀಕ್ಷಿತ್ (25) ಮೃತಪಟ್ಟ ವರು. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕಿದ್ದ ದೀಕ್ಷಿತ್ ಬೆಂಗಳೂರಿನಿಂದ ಕಂದಡ್ಕದ ಕಲ್ಟಾರಿನ ತನ್ನ ಮನೆಗೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಸಮೀಪದ ಮಳವಳ್ಳಿಯಲ್ಲಿ ಅಪರಿಚಿತ ವಾಹನವೊಂದು ಬೈಕ್ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ದೀಕ್ಷಿತ್ರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಮೃತಪಟ್ಟಿದ್ದರೆನ್ನಲಾಗಿದೆ. ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬೆಳ್ತಂಗಡಿ | ಶಾಲಾ ವಾರ್ಷಿಕೋತ್ಸವದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ
ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿದ ಮುಖಂಡರು
ಕರ್ನಾಟಕದಲ್ಲಿ ಡ್ರಗ್ಸ್ ಮಾರಾಟಗಾರರ ವಿರುದ್ಧ ʻಬುಲ್ಡೋಜರ್ ನೀತಿʼ; ಯುಪಿ ಮಾದರಿ ಬೇಡ ಎಂದ ಪಿ ಚಿದಂಬರಂ
ಡ್ರಗ್ಸ್ ದಂಧೆ ನಡೆಸುತ್ತಿರುವ ವಿದೇಶಿ ಪ್ರಜೆಗಳ ವಿರುದ್ಧ ಹಾಗೂ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಸರ್ಕಾರ ಮುಂದಾಗಿದೆ. ಈ ಮಧ್ಯೆ ಡ್ರಗ್ಸ್ ಮಾರಾಟಗಾರರನ್ನು ಪತ್ತೆ ಹಚ್ಚಿ ಅವರಿಗೆ ನೆಲೆ ಕೊಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪರಮೇಶ್ವರ್ ಅವರು ಬೆಳಗಾವಿ ಅಧಿವೇಶನದಲ್ಲಿ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಇದು ಕಾನೂನು ಬಾಹಿರ ನೀತಿ ಕರ್ನಾಟಕ ಅಳವಡಿಸಿಕೊಳ್ಳೋದು ತಪ್ಪು ಎಂದು ಹೇಳಿದ್ದಾರೆ.
ಮೂಡಿಗೆರೆ | ಸಿಸಿ ಕ್ಯಾಮರದಲ್ಲಿ ಹುಲಿ ಸಂಚಾರ ಸೆರೆ; ಗ್ರಾಮಸ್ಥರಲ್ಲಿ ಆತಂಕ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮೂಡಿಗೆರೆ ತಾಲೂಕಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಸಿಸಿ ಟಿವಿ ಕ್ಯಾಮರದಲ್ಲಿ ಹುಲಿಯ ಚಲನವಲನ ಸೆರೆಯಾಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ಮೂಡಿಗೆರೆ ತಾಲೂಕಿನ ಭಾರತೀಬೈಲು, ಬಿ.ಹೊಸಳ್ಳಿ ಗ್ರಾಮದಲ್ಲಿ ಹುಲಿಯ ಚಲನವಲನ ಕಾಣಿಸಿಕೊಂಡಿದ್ದು ಇಲ್ಲಿನ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿದೆ. ಹುಲಿ ಹಸುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಭಾರತೀಬೈಲು ಗ್ರಾಮ ಸಮೀಪದ ಅರಣ್ಯದಲ್ಲಿ ಸಿಸಿ ಟಿವಿ ಕ್ಯಾಮಾರ ಅಳವಡಿಸಲಾಗಿತ್ತು. ಸಿಸಿ ಟಿವಿಯಲ್ಲಿ ಹುಲಿಯ ಚಲನವಲನ ಸೆರೆಯಾಗಿದೆ. ಹುಲಿ ಕಾಣಿಸಿಕೊಂಡ ಪರಿಣಾಮ ಇಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಕಾಫಿ, ಅಡಿಕೆ ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ, ಅನೇಕ ಮಂದಿ ರೈತರು, ಕಾರ್ಮಿಕರು ಕಾಡಾನೆಗಳ ದಾಳಿಯಿಂದಾಗಿ ಈಗಾಗಲೇ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಈ ಬೇಡಿಕೆಗೆ ಸರಕಾರ ಇದುವರೆಗೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ, ಈ ನಡುವೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹುಲಿ, ಚಿರತೆಗಳ ಹಾವಳಿ ಹೆಚ್ಚಾಗುತ್ತಿರುವುದು ರೈತರನ್ನು ನಿದ್ದೆ ಗೆಡುವಂತೆ ಮಾಡಿದೆ. ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ, ಕುದುರೆಮುಖ, ಹೊರನಾಡು ಭಾಗದಲ್ಲಿ ಚಿರತೆಯೊಂದು ಸಾಕು ನಾಯಿಗಳನ್ನು ಹೊತ್ತೊಯ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಸದ್ಯ ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ. ಮುಳ್ಳಯ್ಯನಗಿರಿ ಭಾಗದಲ್ಲೂ ಹುಲಿಗಳ ಸಂಚಾರ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುಳ್ಳಯ್ಯನಗಿರಿ ಭಾಗದಲ್ಲಿ ಶುಕ್ರವಾರ ಸ್ಥಳೀಯರಿಗೆ ಮೂರು ಹುಲಿಗಳು ಕಾಣಿಸಿಕೊಂಡಿದ್ದು, ಇದು ಸ್ಥಳೀಯರೂ ಸೇರಿದಂತೆ ಪ್ರವಾಸಿಗರು, ಕಾಫಿ ತೋಟಗಳ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಮುಳ್ಳಯ್ಯನ ಗಿರಿ ಸಮೀಪದ ಸೀತಾಳಯ್ಯನಗಿರಿ, ಪಾಂಡರವಳ್ಳಿ ಭಾಗದಲ್ಲಿ ಮರಿ ಹುಲಿ ಸೇರಿದಂತೆ ಒಟ್ಟು ಮೂರು ಹುಲಿಗಳು ಸಂಚಾರ ಮಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದು, ಆತಂಕಗೊಂಡಿರುವ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಹುಲಿಗಳು ಸಂಚರಿಸಿದ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿಗಳ ಸಂಚಾರವನ್ನು ಖಾತ್ರಿ ಪಡಿಸಿದ್ದಾರೆ. ಅಲ್ಲದೇ ಪ್ರವಾಸಿಗರು, ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಈ ಭಾಗದಲ್ಲಿ ಅನೇಕ ಕಾಫಿ ತೋಟಗಳಿದ್ದು, ಸದ್ಯ ಕಾಫಿ ಕಟಾವು ನಡೆಯುತ್ತಿರುವುದರಿಂದ ಹುಲಿಗಳ ಒಡಾಟದ ಸುದ್ದಿ ಕಾರ್ಮಿಕರಲ್ಲೂ ಆತಂಕ ಮೂಡಿಸಿದೆ. ಮುಳ್ಳಯ್ಯನಗಿರಿ ನೋಡಲು ವಾರಾಂತ್ಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದು ಸಾಮಾನ್ಯವಾಗಿದ್ದು, ಹುಲಿಗಳ ಸಂಚಾರ ಪ್ರವಾಸಿಗರಲ್ಲೂ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹುಲಿಗಳ ಸಂಚಾರದಿಂದ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಕಲಿ ವೋಟರ್ ಐಡಿ ತಯಾರಿಕೆ ಆರೋಪ: ರಾಜ್ಯ ಬಿಜೆಪಿ ವಿರುದ್ಧದ ಮಾನನಷ್ಟ ಮೊಕದ್ದಮೆ ಹಿಂಪಡೆದ ರಿಝ್ವಾನ್ ಅರ್ಷದ್
ಬೆಂಗಳೂರು: ಮತದಾರರ ನಕಲಿ ಗುರುತಿನ ಚೀಟಿ ತಯಾರಿಸುತ್ತಿದ್ದಾರೆಂದು ಆರೋಪಿಸಿ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾಡಲಾಗಿದ್ದ ಟ್ವೀಟ್ಗಳನ್ನು ಅಳಿಸಿ ಹಾಕಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಶಾಸಕ ರಿಝ್ವಾನ್ ಅರ್ಷದ್ ಹಿಂಪಡೆದಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಐಟಿ ಘಟಕದ ಅಧ್ಯಕ್ಷರ ವಿರುದ್ಧ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಷದ್ ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು ನಗರದ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಕೆ.ಎನ್. ಶಿವಕುಮಾರ್ ಅವರು ಶುಕ್ರವಾರ ವಿಚಾರಣೆ ನಡೆಸಿದರು. ರಿಝ್ವಾನ್ ಪರ ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಸಂಜಯ್ ಯಾದವ್ ಹಾಜರಾಗಿ, ದೂರುದಾರರ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿ ಟ್ವಿಟರ್ನಲ್ಲಿ ಪೋಸ್ಟ್ ಹಾಕಿದ್ದರಿಂದ ಈ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಇದೀಗ, ಆಕ್ಷೇಪಾರ್ಹ ಟ್ವೀಟ್ಗಳ ಲಿಂಕ್ಗಳನ್ನು ತೆಗೆದು ಹಾಕಲಾಗಿದ್ದು, ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಡಿಸೆಂಬರ್ 8ರಂದು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದಾರೆ. ಟ್ವೀಟ್ಗಳನ್ನು ತೆಗೆದುಹಾಕಿರುವುದರಿಂದ ಅದರಲ್ಲಿ ಮಾಡಲಾಗಿದ್ದ ಆರೋಪಗಳನ್ನೂ ಹಿಂಪಡೆದಂತಾಗಿದ್ದು, ದೂರುದಾರರು ಪ್ರಕರಣವನ್ನು ಮುಂದುವರಿಸುವ ಅಪೇಕ್ಷೆ ಹೊಂದಿಲ್ಲ. ಆದ್ದರಿಂದ, ಆರೋಪಿಗಳ ಮೆಮೊ ಪರಿಗಣಿಸಿ, ಖಾಸಗಿ ದೂರು ಹಿಂಪಡೆಯಲು ದೂರುದಾರರಿಗೆ ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು, ಖಾಸಗಿ ದೂರು ಹಿಂಪಡೆಯಲು ಶಾಸಕ ರಿಜ್ವಾನ್ ಅರ್ಷದ್ಗೆ ಅನುಮತಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದರು. ವಿಚಾರಣೆ ವೇಳೆ ರಿಜ್ವಾನ್ ಅರ್ಷದ್ ಖುದ್ದು ನ್ಯಾಯಾಲಯದಲ್ಲಿ ಹಾಜರಿದ್ದರು. ಆಕ್ಷೇಪಾರ್ಹ ಟ್ವೀಟ್ಗಳು ಡಿಲೀಟ್: ಖಾಸಗಿ ದೂರಿನ ಸಂಬಂಧ 2025ರ ಅಕ್ಟೋಬರ್ 28ರಂದು ನಡೆದ ವಿಚಾರಣೆ ವೇಳೆ ಬಿಜೆಪಿ ರಾಜ್ಯ ಘಟಕದ ಪರ ವಕೀಲರು, ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವ ವಿಚಾರವಾಗಿ ತಮ್ಮ ಕಕ್ಷಿದಾರರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿ, ಕಾಲಾವಕಾಶ ಪಡೆದುಕೊಂಡಿದ್ದರು. ಡಿಸೆಂಬರ್ 8ರಂದು ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ ರಿಜ್ವಾನ್ ಅರ್ಷದ್ ವಿರುದ್ಧ ಮಾಡಲಾಗಿದ್ದ ಮೂರು ಆಕ್ಷೇಪಾರ್ಹ ಟ್ವೀಟ್ಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿ, ಈ ಸಂಬಂಧ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದರು. ಪ್ರಕರಣವೇನು?
ಆಂಧ್ರದ ಸಿಮೆಂಟ್ ಕಾರ್ಖಾನೆಗೆ ಬೆಂಗಳೂರಿನ ಕಸ, ನಿತ್ಯ 300- 350 ಟನ್ ಲೋ ವ್ಯಾಲ್ಯೂ ಪ್ಲಾಸ್ಟಿಕ್ಗೆ ಬೇಡಿಕೆ
ಬೆಂಗಳೂರಿನಿಂದ ಕಡಪದ ಸಿಮೆಂಟ್ ಕಾರ್ಖಾನೆಗೆ ಪ್ರತಿದಿನ 300ರಿಂದ 350 ಟನ್ ಪ್ಲಾಸ್ಟಿಕ್ ತ್ಯಾಜ್ಯ ರವಾನೆಯಾಗಲಿದೆ. ಇದನ್ನು ಇಂಧನವಾಗಿ ಬಳಸಲಾಗುತ್ತದೆ. ಇದರಿಂದ ನಗರದಲ್ಲಿ ತ್ಯಾಜ್ಯ ವಿಂಗಡಣೆ ಹೆಚ್ಚಾಗಲಿದೆ. ಪ್ರತಿ ಟನ್ಗೆ 1000 ರೂಪಾಯಿ ಲಾಭ ನಿರೀಕ್ಷಿಸಲಾಗಿದೆ. ಇದು ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದ್ದು ನಾಗರಿಕರು ತ್ಯಾಜ್ಯ ವಿಂಗಡಣೆಯಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಕ್ವಿಂಟನ್ ಡಿ ಕಾಕ್ ವೈಟ್ ಏಕದಿನ ಕ್ರಿಕೆಟ್ ನಿವೃತ್ತಿ ಹಿಂಪಡೆಯಲು ಪ್ರೇರಣೆಯಾಗಿದ್ದೇನು? ಅವರೇ ಹೇಳಿದ್ದಾರೆ ನೋಡಿ!
ಕ್ವಿಂಟನ್ ಡಿ ಕಾಕ್ ಮೊದಲು ಏಕದಿನ ಮತ್ತು ಬಳಿಕ ಟಿ20 ಕ್ರಿಕೆಟ್ ಗೆ ನಿವೃತ್ತಿ ಸಾರಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಅವರು ಟಿ20 ನಿವೃತ್ತಿಯಿಂದ ಹೊರಬಂದು ಆಡಿ ಯಶಸ್ವಿಯಾದರು. ಬಳಿಕ ಇದೀಗ ಏಕದಿನ ಕ್ರಿಕೆಟೂ ಮರಳಿದ್ದು ಅದ್ಭುತ ಆಟ ಆಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಆಟವಾಡುವ ಪ್ರೇರಣೆ ಕಳೆದುಕೊಂಡಿದ್ದೆ, ಆದರೆ ವಿರಾಮದ ನಂತರ ಗೆಲ್ಲುವ ಹಸಿವು ಮರಳಿ ಬಂದಿದೆ. ಹೊಸ ಶಕ್ತಿಯೊಂದಿಗೆ ಪ್ರತಿ ಪಂದ್ಯವನ್ನು ಗೆಲ್ಲಲು ಆಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಎಚ್.ಎಂ.ರೇವಣ್ಣ ಪುತ್ರನ ಕಾರು ಅಪಘಾತ: ಬೈಕ್ ಸವಾರ ಸಾವು
ಬೆಂಗಳೂರು: ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಬಳಿ ಗುರುವಾರ ತಡರಾತ್ರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರ ಪುತ್ರ ಆರ್. ಶಶಾಂಕ್ಗೆ ಸೇರಿದ ಕಾರು ಢಿಕ್ಕಿಯಾದ ಪರಿಣಾಮ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾರೆ. ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ರಾಜೇಶ್(27) ಕಾರು ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ಯುವಕ. ಈ ಕಾರು ಆರ್. ಶಶಾಂಕ್ ಅವರ ಹೆಸರಿನಲ್ಲಿರುವುದು ದೃಢಪಟ್ಟಿದ್ದು, ಘಟನೆಯ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುದೂರು ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಅಪಘಾತದ ಸಂಬಂಧ ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ‘ಅಪಘಾತ ಸಂಭವಿಸಿದ ವೇಳೆ ನನ್ನ ಪುತ್ರ ಕಾರು ಚಲಾಯಿಸುತ್ತಿರಲಿಲ್ಲ. ಚಾಲಕ ಕಾರು ಓಡಿಸುತ್ತಿದ್ದಾಗ ಅಪಘಾತ ಸಂಭವಿಸಿದೆ' ಎಂದು ಹೇಳಿದ್ದಾರೆ.
ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ಗೆ ಪಾಕ್ ವಿರೋಧಿಯಾಗಿದ್ದಕ್ಕೆ ಆರು ಕೊಲ್ಲಿ ದೇಶಗಳಲ್ಲಿ ನಿಷೇಧ
ಮುಂಬೈ,ಡಿ.12: ರಣ್ವೀರ್ ಸಿಂಗ್ ಅವರು ನಾಯಕನಾಗಿ ನಟಿಸಿರುವ ಆದಿತ್ಯ ಧರ್ ಅವರ ಇತ್ತೀಚಿನ ಬಾಲಿವುಡ್ ಚಿತ್ರ ‘ಧುರಂಧರ್’ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನ ವಿರೋಧಿ ನಿರೂಪಣೆಯಿಂದಾಗಿ ಚಿತ್ರವನ್ನು ಬಹರೇನ್, ಕುವೈತ್,ಒಮಾನ್,ಖತರ್,ಯುಎಇ ಮತ್ತು ಸೌದಿ ಅರೇಬಿಯಗಳಲ್ಲಿ ನಿಷೇಧಿಸಲಾಗಿದೆ. ಗಡಿಯಾಚೆಯ ವಿಷಯವನ್ನು ಹೊಂದಿರುವ ಭಾರತೀಯ ಚಿತ್ರಗಳು ಕೊಲ್ಲಿ ದೇಶಗಳಲ್ಲಿ ಕಠಿಣ ಪರಿಶೀಲನೆಯನ್ನು ಎದುರಿಸುತ್ತಿರುವುದಕ್ಕೆ ಇದು ಇನ್ನೊಂದು ನಿದರ್ಶನವಾಗಿದೆ. ಬಾಲಿವುಡ್ ಚಿತ್ರವೊಂದು ಮಧ್ಯಪ್ರಾಚ್ಯದಲ್ಲಿ ನಿಷೇಧವನ್ನು ಎದುರಿಸಿದ್ದು ಇದೇ ಮೊದಲ ಸಲವೇನಲ್ಲ. ಈ ಹಿಂದೆ ಫೈಟರ್,ಸ್ಕೈ ಫೋರ್ಸ್,ದಿ ಡಿಪ್ಲೋಮ್ಯಾಟ್,ಆರ್ಟಿಕಲ್ 370,ಟೈಗರ್ 3 ಮತ್ತು ದಿ ಕಾಶ್ಮೀರ ಫೈಲ್ಸ್ ಸೇರಿದಂತೆ ಹಲವಾರು ಹೈ-ಪ್ರೊಫೈಲ್ ಚಿತ್ರಗಳು ಕೊಲ್ಲಿಯ ಕೆಲವು ದೇಶಗಳಲ್ಲಿ ನಿರ್ಬಂಧಗಳನ್ನು ಎದುರಿಸಿದ್ದವು. ಫೈಟರ್ನಂತಹ ಕೆಲವು ಪ್ರಕರಣಗಳಲ್ಲಿ ಚಿತ್ರವು ಯುಎಇಯಲ್ಲಿ ಬಿಡುಗಡೆಗೊಂಡಿದ್ದರೂ ಮರುದಿನವೇ ಅದರ ಪ್ರದರ್ಶನವನ್ನು ನಿಷೇಧಿಸಲಾಗಿತ್ತು. ಪರಿಷ್ಕೃತ ಆವೃತ್ತಿಯನ್ನೂ ತಿರಸ್ಕರಿಸಲಾಗಿತ್ತು. ಧುರಂಧರ್ ಚಿತ್ರದಲ್ಲಿ ರಣ್ವೀರ್ ಸಿಂಗ್, ಸಂಜಯ ದತ್, ಅಕ್ಷಯ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಧರ್ ಅವರು 2019ರ ಹಿಟ್ ಚಿತ್ರ ‘ಉಡಿ:ದಿ ಸರ್ಜಿಕಲ್ ಸ್ರೈಕ್’ನ ಆರು ವರ್ಷಗಳ ಬಳಿಕ ಈ ಸ್ಪೈಥ್ರಿಲ್ಲರ್ನ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರವು ನೈಜ ಜಗತ್ತಿನ ಭೌಗೋಳಿಕ ರಾಜಕೀಯ, ರಹಸ್ಯ ‘ರಾ’ ಕಾರ್ಯಾಚರಣೆಗಳು ಮತ್ತು ಪಾಕಿಸ್ತಾನದಲ್ಲಿಯ ಆಪರೇಷನ್ ಲಿಯಾರಿಯಿಂದ ಪ್ರೇರಿತವಾಗಿದ್ದು,ಇದು ವಾಸ್ತವಿಕ ಮತ್ತು ಆ್ಯಕ್ಷನ್ ಪ್ಯಾಕ್ಡ್ ಕಥೆಗಳನ್ನು ಬಯಸುವ ವೀಕ್ಷಕರನ್ನು ಹೆಚ್ಚಾಗಿ ಸೆಳೆದಿದೆ. ಕೊಲ್ಲಿ ದೇಶಗಳಲ್ಲಿ ನಿಷೇಧದ ಹೊರತಾಗಿಯೂ ಧುರಂಧರ್ ನ ಗಳಿಕೆ ಹೆಚ್ಚುತ್ತಲೇ ಇದೆ. ಚಿತ್ರದ ಆದಾಯವು ಭಾರತದಲ್ಲಿ ಒಂದು ವಾರದೊಳಗೆ 200 ಕೋ.ರೂ.ಗಳನ್ನು ದಾಟಿದ್ದು,ಕೊಲ್ಲಿ ಪ್ರದೇಶವನ್ನು ಹೊರತುಪಡಿಸಿ ವಿದೇಶಗಳಲ್ಲಿ 44.5 ಕೋ.ರೂ.ಗಳನ್ನು ಗಳಿಸಿದೆ. ಈ ನಡುವೆ ಒಟಿಟಿಯಲ್ಲಿ ಧುರಂಧರ್ ಬಿಡುಗಡೆಯ ಕುರಿತು ಊಹಾಪೋಹಗಳು ಹೆಚ್ಚುತ್ತಿವೆ. ವರದಿಗಳು ಸೂಚಿಸಿರುವಂತೆ ಭಾರತದ ಬೃಹತ್ ಒಟಿಟಿ ಪ್ಲ್ಯಾಟ್ಫಾರ್ಮ್ವೊಂದು ಧುರಂದರ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು 130 ಕೋ.ರೂ.ಗೆ ಖರೀದಿಸಿದೆ. ಚಿತ್ರದ ಒಟಿಟಿ ಸ್ಟ್ರೀಮಿಂಗ್ ದಿನಾಂಕಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Amritsar | ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ
ಅಮೃತಸರ, ಡಿ. 12: ಇಲ್ಲಿನ ಹಲವು ಶಾಲೆಗಳಿಗೆ ಶುಕ್ರವಾರ ಬಾಂಬ್ ಬೆದರಿಕೆಯ ಈ ಮೇಲ್ಗಳು ಬಂದಿವೆ. ಇದರಿಂದ ಮಕ್ಕಳನ್ನು ಸ್ಥಳಾಂತರಿಸಲಾಯಿತು. ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗಳಿಗೆ ಧಾವಿಸಿದರು. ಅನಂತರ ಜಿಲ್ಲಾಡಳಿತ ಅಮೃತಸರದಲ್ಲಿರುವ ಎಲ್ಲಾ ಶಾಲೆಗಳನ್ನು ಮುಚ್ಚಲು ಆದೇಶಿಸಿತು. ‘‘ನಗರ ಹಾಗೂ ಗ್ರಾಮೀಣ ವಲಯದಲ್ಲಿರುವ ಕೆಲವು ಶಾಲೆಗಳು ಶಂಕಾಸ್ಪದ ಇಮೇಲ್ಗಳನ್ನು ಸ್ವೀಕರಿಸಿವೆ. ಪ್ರತಿ ಶಾಲೆಯಲ್ಲಿ ಗೆಝೆಟೆಡ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಇಮೇಲ್ ನ ಮೂಲವನ್ನು ಪತ್ತೆ ಹಚ್ಚಲು ಸಮರೋಪಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅಮೃತಸರದ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಇಂತಹ ಕಿಡಿಗೇಡಿ ಕೃತ್ಯಕ್ಕೆ ಕೆಲವು ವಿದ್ಯಾರ್ಥಿಗಳು ಕಾರಣ ಎಂದು ತಿಳಿದು ಬಂದಿತ್ತು. ಪೊಲೀಸರು ಸಂಪೂರ್ಣವಾಗಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆದುದರಿಂದ ಆಂತಕಗೊಳ್ಳುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆ ತನ್ನ ಶಾಲೆಗೆ ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿರುವುದಕ್ಕೆ ಸ್ಥಳೀಯ ಡಿಎವಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆತ ಹಾಗೂ ಆತನ ಹೆತ್ತವರು ಲಿಖಿತ ಕ್ಷಮಾಪಣೆ ಪತ್ರ ಸಲ್ಲಿಸಿದ ಬಳಿಕ ಬಿಟ್ಟು ಬಿಡಲಾಗಿತ್ತು.
ಕಲಬುರಗಿ| ಡಿ.14ರಂದು ಶರಣಬಸವ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ 7ನೇ ವಾರ್ಷಿಕ ಘಟಿಕೋತ್ಸವ ಡಿಸೆಂಬರ್ 14 ರಂದು ನಗರದ ಶ್ರೀ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ತಿಳಿಸಿದರು. ನಗರದ ಶರಣಬಸವ ವಿಶ್ವವಿದ್ಯಾಲಯದ ಕಾನ್ಫರೆನ್ಸ್ ಹಾಲ್ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾತೋಶ್ರೀ ಡಾ. ಅವ್ವಾಜಿ, ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಹಾಗೂ ಹಿರಿಯ ಕೃಷಿ ವಿಜ್ಞಾನಿ ಪ್ರೊ. ಪಿ. ಎಲ್. ಪಾಟೀಲ್ ಅವರು ಘಟಿಕೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ. ಪದವಿಪೂರ್ವ, ಸ್ನಾತಕೋತ್ತರ, ಪಿಎಚ್ಡಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ ಪದವಿ ಪಡೆದವರಿಗೆ ಚಿನ್ನದ ಪದಕಗಳು ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲು ಸಮ್ಮತಿಸಿದ್ದಾರೆ ಎಂದು ತಿಳಿಸಿದರು. ಬೆಂಗಳೂರಿನ ಎಸ್ಎಪಿ ಇಂಡಿಯಾದ ಉನ್ನತ ಶಿಕ್ಷಣ ಕೌಶಲ್ಯ ವಿಭಾಗದ ಮುಖ್ಯಸ್ಥ ಫಿಲಿಪ್ ಸ್ಯಾಮ್ಯುಯೆಲ್ ಬಾಬು ಅವರು ಗೌರವ ಅಥಿತಿಗಳಾಗಿ ಪಾಲ್ಗೊಳ್ಳಲಿರುವರು. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ್ ಬಿಡವೆ ಅವರು ಘಟಿಕೋತ್ಸವದಲ್ಲಿ ಸ್ವಾಗತ ಭಾಷಣ ಮಾಡಲಿದ್ದಾರೆ. ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ಕುಲಸಚಿವ ಮೌಲ್ಯಮಾಪನ ಡಾ. ಎಸ್. ಎಚ್. ಹೊನ್ನಳ್ಳಿ ಘಟಿಕೋತ್ಸವದ ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ ಎಂದು ಡಾ. ಅವ್ವಾಜಿ ಹೇಳಿದರು. ಪ್ರೊ. ಅನಿಲಕುಮಾರ್ ಬಿಡವೆ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರು ಮಾತನಾಡಿ ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲೂ ಸಂಯೋಜಿತ ವಿಧಾನದಲ್ಲಿ ಘಟಿಕೋತ್ಸವ ನಡೆಯಲಿದೆ ಎಂದು ಹೇಳಿದರು. ಘಟಿಕೋತ್ಸವದಲ್ಲಿ ಖಾಜಾ ಬಂದಾ ನವಾಜ್ ದರ್ಗಾದ ಸಜ್ಜದಾ ನಶೀನ್, ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ, ಶ್ರೀ ಗುರು ಚೆನ್ನವೀರೇಶ್ವರ ವಿರಕ್ತಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು, ಮುತ್ಯಾನ್ ಬಬಲಾದ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರನ್ನು ಈ ಬಾರಿಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ಡಾ.ಅವ್ವಾಜಿ ವಿವರಿಸಿದರು. ಹಿರಿಯ ಕೃಷಿ ವಿಜ್ಞಾನಿ, ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಪ್ರೊ. ಪಿ. ಎಲ್. ಪಾಟೀಲ್ 7ನೇ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು. ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಹೆಸರಿನಲ್ಲಿ ಈ ವರ್ಷದಿಂದ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳಾ ಟಾಪರ್ಗಳಿಗೆ ತಲಾ 21,000 ರೂ.ಗಳ ಎರಡು ನಗದು ಪ್ರಶಸ್ತಿಗಳನ್ನು ಮತ್ತು ಪ್ರಮಾಣಪತ್ರವನ್ನು ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ಒಟ್ಟು 199 ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ರ್ಯಾಂಕ್ ಪಡೆದಿದ್ದಾರೆ ಮತ್ತು ಅವರಲ್ಲಿ 45 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಎಂದು ಹೇಳಿದರು. ಇದಲ್ಲದೆ, ನಮ್ಮ ವಿದ್ಯಾರ್ಥಿಗಳು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸ್ಥಾಪಿಸಲಾದ ನಗದು ಬಹುಮಾನಗಳನ್ನು ಗೆದ್ದಿದ್ದಾರೆ. ಘಟಿಕೋತ್ಸವದಲ್ಲಿ ಪಿಎಚ್ಡಿ ಪದವಿ ಪಡೆದ 21 ಪ್ರತಿಭಾನ್ವಿತ ವಿದ್ವಾಂಸರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು. ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1919 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಉಪಕುಲಪತಿ ಪ್ರೊ. ಅನಿಲಕುಮಾರ್ ಬಿಡವೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್, ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ್ ಬಿಡವೆ, ವಿವಿಯ ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ನಿರ್ದೇಶಕರಾದ ಪ್ರೊ. ವಿ. ಡಿ. ಮೈತ್ರಿ ಮತ್ತು ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಟಿ.ವಿ ಶಿವಾನಂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು| 1064 ಎಕರೆ ಭೂಮಿಯನ್ನು ಭೂಹೀನರಿಗೆ ಹಂಚಿಕೆ ಮಾಡುವಂತೆ ಸಿಪಿಐ(ಎಂಎಲ್) ಆಗ್ರಹ
ರಾಯಚೂರು: ಸಿಂಧನೂರು ತಾಲೂಕಿನ ಜವಳಗೇರ ಗ್ರಾಮದಲ್ಲಿ ನಾಡಗೌಡರ ಕುಟುಂಬ ಕಳೆದ 44 ವರ್ಷಗಳಿದ ಅಕ್ರಮವಾಗಿ ವಶಪಡಿಸಿಕೊಂಡಿರುವ ಭೂಮಿಯನ್ನು ಕೂಡಲೇ ಭೂಹೀನರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಾಲಿಟ್ ಬ್ಯುರೋ ಸದಸ್ಯ ಮಾನಸಯ್ಯ ನೇತೃತ್ವದಲ್ಲಿ ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ ಮನವಿ ಸಲ್ಲಿಸಿದರು. ಭೂ ಸುಧಾರಣೆ ಕಾಯ್ದೆ 74 ಹಾಗೂ 75ರ ಅಡಿಯಲ್ಲಿ ಸಿಂಧನೂರು ತಾಲೂಕಿನ ಸರ್ವೇ ನಂ. 48 ರಲ್ಲಿ 1064 ಎಕರೆ ಭೂಮಿ ಅಕ್ರಮ ವಹಿವಾಟು ಮಾಡಿರುವವರಿಗೆ ನೋಟಿಸ್ ನೀಡಬೇಕು. ಅಲ್ಲದೇ ಲಿಂಗಸುಗೂರು ತಾಲೂಕಿನಲ್ಲಿ 25 - 30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ 998 ಭೂ ಹೀನ ರೈತರಿಗೆ ಅಕ್ರಮ ಸಕ್ರಮ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಿ ಪಟ್ಟಾ ನೀಡಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ ಸಿಂಧನೂರು ಲಿಂಗಸುಗೂರು ತಾಲೂಕುಗಳಲ್ಲಿ ಏಕ ಕಾಲದಲ್ಲಿ ಹೋರಾಟ ಮಾಡಲಾಗುತ್ತದೆ. ಜನವರಿ ಮೊದಲ ವಾರದಲ್ಲಿ ಅಂಬಾಮಠಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೇರಾವು ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಮನವಿಗೆ ಸ್ಪಂದಿಸಿದ ಆಯುಕ್ತರು ಬುಧವಾರದೊಳಗೆ 48 ಗ್ರಾಮಗಳ 1064 ಎಕರೆ ಅಕ್ರಮ ವಹಿವಾಟು ಮಾಡಿದವರಿಗೆ ಭೂ ನ್ಯಾಯ ಮಂಡಳಿಯಿಂದ ನೋಟಿಸ್ ಜಾರಿ ಮಾಡಿಸಿ ವಿಚಾರಣೆ ಮಾಡಲಾಗುವುದು. ಲಿಂಗಸುಗೂರು ಅಕ್ರಮ ಸಕ್ರಮ ಭೂಪಟ್ಟಾ ಕುರಿತು ಭೂಮಿ ಸರ್ವೇ ಮಾಡಿ ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್, ಜಿಲ್ಲಾ ಸಮಿತಿಯ ಹೆಚ್ ಆರ್ ಹೊಸಮನಿ, ಆದೇಶ ಹಿರೇ ನಗನೂರ, ವೀರಭದ್ರಪ್ಪ ತೊರಲಬೆಂಚಿ, ಬಸವರಾಜ ಮುದುಗಲ್, ಹನುಮಂತ ಗೋಡಿಹಾಳ, ಚಿದಾನಂದ, ತಿಪ್ಪಣ್ಣ ಚಿಕ್ಕಹೆಸರೂರ, ಎಂ ನಿಸರ್ಗ ಗುಂಡಪ್ಪ ದೇವರಭೂಪುರ, ತಿಮ್ಮಣ್ಣ ಪೂಜಾರಿ, ಪರಸಪ್ಪ ಸುಣಕಲ್, ಹನುಮಂತ ಪೂಜಾರಿ, ದ್ಯಾಮಣ್ಣ ಸುಣಕಲ್ ಸೇರಿ ಹಲವರು ಉಪಸ್ಥಿತರಿದ್ದರು.
INDIA Vs UAE U19 Asia Cup Match- ರೈಸಿಂಗ್ ಏಷ್ಯಾ ಕಪ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ಏಷ್ಯಾ ಕಪ್ ನಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಶುಕ್ರವಾರ ಯುಎಇ ವಿರುದ್ಧ ನಡೆದ ಪಂದ್ಯದಲ್ಲಂತೂ ಅವರು ಚೆಂಡನ್ನು ಮೈದಾನದ ಮೂಲೆ ಮೂಲೆಗಟ್ಟಿದರು. ಅವರು 90 ರನ್ ಗಳಿಸಿದ್ದ ಸಂದರ್ಭದಲ್ಲಿ ಯುಎಇ ವಿಕೆಟ್ ಕೀಪರ್ ಸ್ಲೆಡ್ದಿಂಗ್ ಮಾಡಿದರು. ಈ ವೇಳೆ ವೈಭವ್ ನೀಡಿದ ಉತ್ತರ ಮಾತ್ರ ಭಾರೀ ಚೆನ್ನಾಗಿತ್ತು.
ಮಂಗಳೂರು | ಬೆಳೆ ವಿಮೆ ಪರಿಹಾರ ಅಸಮರ್ಪಕ : ಪರಿಷ್ಕರಿಸಲು ರೈತ ಮುಖಂಡರ ಆಗ್ರಹ
ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕೃಷಿ ಪತ್ತಿನ ಸಹಕಾರಿ ಮುಖಂಡರ ಸಭೆ
2026ರ ಎಪ್ರಿಲ್ನೊಳಗೆ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗೆ ಸಂಪುಟ ತೀರ್ಮಾನ?
ಬೆಳಗಾವಿ(ಸುವರ್ಣ ವಿಧಾನಸೌಧ): 2026ರ ಎಪ್ರಿಲ್ ತಿಂಗಳ ಒಳಗಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ. ಗುರುವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿನ ಸಚಿವ ಸಂಪುಟ ಸಭಾ ಮಂದಿರದಲ್ಲಿ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ 2016ರ ಎಪ್ರಿಲ್ನಲ್ಲಿ ಚುನಾವಣೆ ನಡೆದಿತ್ತು. ಅಂದು ಆಯ್ಕೆಯಾಗಿದ್ದ ಸದಸ್ಯರ ಅವಧಿ 2021ರ ಎಪ್ರಿಲ್ 27ಕ್ಕೆ ಮುಕ್ತಾಯವಾಗಿತ್ತು. ಅವಧಿ ಪೂರ್ಣಗೊಂಡ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ತಾಂತ್ರಿಕ ಕಾರಣಗಳಿಂದ ಚುನಾವಣೆ ನಡೆಸುವುದು ಐದು ವರ್ಷಗಳ ಕಾಲ ವಿಳಂಬವಾಗಿದ್ದು, 2026ರ ಎಪ್ರಿಲ್ ವೇಳೆ ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸಹಕಾರ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆಯೇ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡು ಪ್ರಕಟಿಸಿತ್ತು. ಆದರೆ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿತ್ತು. ಈ ಮಧ್ಯೆ ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು 'ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ'ಕ್ಕೆ ನೀಡಿತ್ತು. ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ರಾಜ್ಯ ಚುನಾವಣಾ ಆಯೋಗ, ಹೈಕೋರ್ಟ್ ಮೊರೆ ಹೋಗಿತ್ತು. ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ 2023ರ ಡಿಸೆಂಬರ್ನಲ್ಲೇ ಸರಕಾರ ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಅನಂತರ ಕ್ಷೇತ್ರಗಳ ಪುನರ್ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಧಿಸೂಚನೆ ಹೊರಡಿಸಿತ್ತು. ಆದರೆ, ಮೀಸಲಾತಿ ನಿಗದಿ ಅಂತಿಮಗೊಳಿಸಿರಲಿಲ್ಲ. ಇದೀಗ ಸಚಿವ ಸಂಪುಟದ ಒಪ್ಪಿಗೆ ಹಿನ್ನೆಲೆಯಲ್ಲಿ ಸುದೀರ್ಘ ಕಾಲ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡರಯುವುದು ಖಚಿತವಾದಂತೆ ಆಗಿದೆ.
ಪುಟಿನ್ ಭೇಟಿಗೆ 40 ನಿಮಿಷ ಕಾದ ಷರೀಫ್; ಪಾಕ್ ಪ್ರಧಾನಿಯತ್ತ ಕಣ್ಣೆತ್ತಿಯೂ ನೋಡದೇ ತೆರಳಿದ ರಷ್ಯಾ ಅಧ್ಯಕ್ಷ
ತುರ್ಕಮೆನಿಸ್ತಾನದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ 40 ನಿಮಿಷ ಕಾದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಎದುರಿಸಿದ್ದಾರೆ. ತಾಳ್ಮೆ ಕಳೆದುಕೊಂಡು ಪುಟಿನ್ ಮತ್ತು ಟರ್ಕಿ ಅಧ್ಯಕ್ಷ ಎರ್ದೊಗನ್ ನಡೆಸುತ್ತಿದ್ದ ಮೀಟಿಂಗ್ಗೆ ನುಗ್ಗಿದ್ದಾರೆ. ಆರ್ಟಿ ಇಂಡಿಯಾ ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪ್ರಧಾನಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Gujarat | ನಿರ್ಮಾಣ ಹಂತದ ಸೇತುವೆ ಕುಸಿತ; ಐವರು ಕಾರ್ಮಿಕರಿಗೆ ಗಾಯ
ಹೊಸದಿಲ್ಲಿ,ಡಿ.12: ಗುಜರಾತ್ ನ ವಲ್ಸಾಡ್ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನಿರ್ಮಾಣ ಹಂತದ ಸೇತುವೆಯೊಂದು ಕನಿಷ್ಠ ಐವರು ಕಾರ್ಮಿಕರು ಗಾಯಗೊಂಡಿದ್ದಾರೆ. ಔರಂಗಾ ನದಿಗೆ ನಿರ್ಮಿಸಲಾಗುತ್ತಿದ್ದ ಈ ಸೇತುವೆಯ ಕಾಮಗಾರಿಯನ್ನು ರಾಜ್ಯ ರಸ್ತೆ ಹಾಗೂ ಕಟ್ಟಡ ನಿರ್ಮಾಣ ಇಲಾಖೆ ವಹಿಸಿತ್ತು. ವಲ್ಸಾಡ್ ಪಟ್ಟಣವನ್ನು ಆಸುಪಾಸಿನ ಹಳ್ಳಿಗಳೊಂದಿಗೆ ಸಂಪರ್ಕಿಸುವುದಕ್ಕಾಗಿ 700 ಮೀಟರ್ ವಿಸ್ತೀರ್ಣದ ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. 2024ರಲ್ಲಿ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದರ ಪಕ್ಕದಲ್ಲೇ ಹಳೆಯದಾದ ಮತ್ತು ತಗ್ಗಾದ ಸೇತುವೆಯಿದೆ. ಆದರೆ ಆ ಸೇತುವೆ ಶಿಥಿಲಗೊಂಡಿರುವುದಲ್ಲದೆ, ಮಳೆಗಾಲದ ಸಂದರ್ಭದಲ್ಲಿ ನದಿ ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್ ಸರಕಾರವು 42 ಕೋಟಿ ರೂ. ವೆಚ್ಚದಲ್ಲಿ ಸೇತುವೆಯ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು ಹಾಗೂ 2026ರ ಜುಲೈಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಇರಿಸಿತ್ತು. ‘‘ಸೇತುವೆಯ ಸ್ತಂಭಗಳ ನಿರ್ಮಾಣ ಪೂರ್ಣಗೊಂಡಿದ್ದು, ಕಾಮಗಾರಿ ಕೆಲಸಕ್ಕಾಗಿ ಸ್ಥಾಪಿಲಾಗಿದ್ದ ಅಟ್ಟಳಿಗೆಗಳನ್ನು ತೆರವುಗೊಳಿಸಿದಿದ್ದಾಗ, ಅವು ಕುಸಿದಿವೆ. ಇದರಿಂದಾಗಿ ಸೇತುವೆಯ ಎರಡು ಸ್ತಂಭಗಳ ನಡುವಿನ ಪ್ರದೇಶಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ವಲ್ಸಾಡ್ ಜಿಲ್ಲಾಧಿಕಾರಿ ಭವ್ಯ ವರ್ಮಾ ತಿಳಿಸಿದ್ದಾರೆ. ಈ ಸೇತುವೆಯ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ರಾಯಲ್ ಇಂಜಿನಿಯರಿಂಗ್ ಇನ್ಫ್ರಾ ಸಂಸ್ಥೆಗೆ ನೀಡಲಾಗಿತ್ತು. ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದ್ದು, ವರದಿಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಅಮಾಸೆಬೈಲು | ಹೊಟೇಲ್ ವ್ಯವಹಾರದಲ್ಲಿ ನಷ್ಟ: ವ್ಯಕ್ತಿ ಆತ್ಮಹತ್ಯೆ
ಅಮಾಸೆಬೈಲು, ಡಿ.12: ಹೊಟೇಲ್ ವ್ಯವಹಾರದಲ್ಲಿ ನಷ್ಟ ಉಂಟಾದ ಚಿಂತೆಯಲ್ಲಿ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಚ್ಚಟ್ಟು ಗ್ರಾಮದ ಹಂಚಿಕಟ್ಟೆ ಹೆಬ್ಳಿ ಎಂಬಲ್ಲಿ ನಡೆದಿದೆ. ಮೃತರನ್ನು ಹಂಚಿಕಟ್ಟೆ ಹೆಬ್ಳಿಯ ಸಂತೋಷ ಶೆಟ್ಟಿ(40) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದ ಇವರು, ನಂತರ ಹೋಟೆಲ್ ವ್ಯವಹಾರದಲ್ಲಿ ನಷ್ಟ ಉಂಟಾಗಿ 3 ತಿಂಗಳ ಹಿಂದೆ ವಾಪಸ್ಸು ಊರಿಗೆ ಬಂದಿದ್ದರು. ತಾಯಿ ಮನೆಯಾದ ಬೆಳ್ಳಂಜೆಯಲ್ಲಿ ವಾಸವಾಗಿದ್ದ ಇವರು, ಕಾರ್ಕಳದಲ್ಲಿ ಕಾರ್ ಶೋರೂಂನಲ್ಲಿ ಕೆಲಸ ಮಾಡಿಕೊಂಡಿದ್ದರು. ಡಿ.11ರಂದು ಹಂಚಿಕಟ್ಟೆ ಹೆಬ್ಳಿ ಮನೆಗೆ ಬಂದಿದ್ದ ಇವರು, ರಾತ್ರಿ ಅಡುಗೆ ಮನೆಯ ಪಕ್ಕದ ರೂಮಿನಲ್ಲಿ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಉಡುಪಿ | ಅಪರಿಚಿತ ಗಂಡಸಿನ ಅಸ್ಥಿಪಂಜರ ಪತ್ತೆ
ಉಡುಪಿ, ಡಿ.12: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯ ಗಿಡಗಂಟಿಗಳ ನಡುವೆ ಅಪರಿಚಿತ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿ ಕೆಲವು ಸಮಯಗಳ ಹಿಂದೆ ಮೃತಪಟ್ಟಿದ್ದು, ಮೃತರ ಬಗ್ಗೆ ನಿಖರ ಕಾರಣ ಪೊಲೀಸ್ ತನಿಖೆ ಹಾಗೂ ವೈದ್ಯಕೀಯ ಪರೀಕ್ಷೆಯಿಂದ ತಿಳಿಯಬೇಕಾಗಿದೆ. ಮಾಹಿತಿ ಪಡೆದ ವಿಶು ಶೆಟ್ಟಿ, ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಶು ಶೆಟ್ಟಿ ಅಂಬಲಪಾಡಿ ಪೊಲೀಸರ ಸಮಕ್ಷಮ ರಾಮದಾಸ್ ಪಾಲನ್ ಉದ್ಯಾವರ ಸಹಾಯದಿಂದ ಮೃತ ವ್ಯಕ್ತಿಯ ಅಸ್ತಿ ಪಂಜರ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.
Kerala | ನಟಿಯ ಅತ್ಯಾಚಾರ ಪ್ರಕರಣ; ಪಲ್ಸರ್ ಸುನಿ ಸಹಿತ ಎಲ್ಲಾ ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಕೊಚ್ಚಿ, ಡಿ. 12: 2017ರ ನಟಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಪ್ರಧಾನ ಆರೋಪಿ ಪಲ್ಸರ್ ಸುನಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಕೇರಳ ನ್ಯಾಯಾಲಯ ಶುಕ್ರವಾರ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಮಲೆಯಾಳಂ ಚಿತ್ರ ನಟ ದಿಲೀಪ್ ರನ್ನು ನ್ಯಾಯಾಲಯ ಖುಲಾಸೆಗೊಳಿಸಿದ ದಿನಗಳ ಬಳಿಕ ಈ ತೀರ್ಪು ಹೊರ ಬಿದ್ದಿದೆ. ಎರ್ನಾಕುಳಂ ಜಿಲ್ಲಾ ಹಾಗೂ ಪ್ರಾಥಮಿಕ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ. ವರ್ಗೀಸ್ ಅವರು ಸುನಿ ಎನ್.ಎಸ್. (ಪಲ್ಸರ್ ಸುನಿ), ಮಾರ್ಟಿನ್ ಆ್ಯಂಟೊನಿ, ಮಣಿಕಂಠನ್ ಬಿ., ವಿಜೇಶ್ ವಿ.ಪಿ., ಸಲೀಂ ಎಚ್. ಹಾಗೂ ಪ್ರದೀಪ್ ತಪ್ಪಿತಸ್ಥರು ಎಂದು ಸೋಮವಾರ ಘೋಷಿಸಿದ್ದರು. ಎಲ್ಲಾ 6 ಆರೋಪಿಗಳಿಗೆ ನ್ಯಾಯಾಲಯ ತಲಾ 50 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ, 1 ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ. ಅಲ್ಲದೆ, ಸಂತ್ರಸ್ತೆ ನಟಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಕೂಡ ಅದು ನಿರ್ದೇಶಿಸಿದೆ. ಎಲ್ಲಾ ಆರೋಪಿಗಳಿಗೆ ಮುಖ್ಯವಾಗಿ ಸುನಿಗೆ ಜೀವಾವಾಧಿ ಶಿಕ್ಷೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ಬಲವಾಗಿ ಪ್ರತಿಪಾದಿಸಿತು. ಆದರೆ, ಈ ಪ್ರಕರಣ ಗರಿಷ್ಠ ಶಿಕ್ಷೆಗೆ ಅರ್ಹವಲ್ಲ ಎಂದು ನ್ಯಾಯಾಧೀಶರು ಹೇಳಿದರು. 2017 ಫೆಬ್ರವರಿ 17ರಂದು ಆರು ಮಂದಿ ನಟಿಯನ್ನು ಅಪಹರಿಸಿ ಕಾರಿನ ಒಳಗೆ ಅವರಿಗೆ 2 ಗಂಟೆಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದರು, ಅಲ್ಲದೆ, ಅವರನ್ನು ಬ್ಲಾಕ್ ಮೇಲ್ ಮಾಡಲು ಕೃತ್ಯದ ವೀಡಿಯೊವನ್ನು ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಅನಂತರ ಆರೋಪಿಗಳು ಅವರನ್ನು ಚಿತ್ರ ನಿರ್ದೇಶಕರೊಬ್ಬರ ನಿವಾಸದ ಸಮೀಪ ಬಿಟ್ಟು ಹೋಗಿದ್ದರು ಎಂದು ಹೇಳಲಾಗಿತ್ತು. ಆ ನಿರ್ದೇಶಕರು ಮಹಿಳೆಗೆ ಪೊಲೀಸರನ್ನು ಸಂಪರ್ಕಿಸಲು ಹಾಗೂ ಪ್ರಕರಣ ದಾಖಲಿಸಲು ನೆರವಾಗಿದ್ದರು. ಪ್ರಕರಣದಲ್ಲಿ ನಟ ದಿಲೀಪ್ ಸೇರಿದಂತೆ 10 ಮಂದಿ ಆರೋಪಿಗಳು ಎಂದು ಪರಿಗಣಿಸಲಾಗಿತ್ತು. ದಿಲೀಪ್ ಈ ಘಟನೆಯ ರೂವಾರಿ ಎಂದು ಹೇಳಲಾಗಿತ್ತು.
ಉಡುಪಿ | ಬಾರಾಡಿ ಕ್ರಾಸ್ನಲ್ಲಿ ತನಿಖಾ ಠಾಣೆ(ಚೆಕ್ ಪೋಸ್ಟ್) ಉದ್ಘಾಟನೆ
ಉಡುಪಿ, ಡಿ.12: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಕ್ರಾಸ್ ಎಂಬಲ್ಲಿ ಪೊಲೀಸ್ ಇಲಾಖೆಯ ಉಪಯೋಗಕ್ಕಾಗಿ ನಿರ್ಮಿಸಲಾದ ತನಿಖಾ ಠಾಣೆ(ಚೆಕ್ ಪೋಸ್ಟ್)ವನ್ನು ಶುಕ್ರವಾರ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಂವದಾ ಉದ್ಘಾಟಿಸಿದರು. ಕಾರ್ಕಳ ರಶ್ವಿ ಕನ್ಸ್ಟ್ರಕ್ಷನ್ ಮಾಲಕ ವಿನಿಶ್ ತನ್ನ ಮಾವ ದಿ.ಡಿ.ಆರ್. ರಾಜು ಇವರ ಸ್ಮರಣಾರ್ಥವಾಗಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ತನಿಖಾ ಠಾಣೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ರೋಟರಿ ಕ್ಲಬ್ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಹಾಗೂ ಇತರ ಸಾರ್ವಜನಿಕರು ಸಹಕರಿಸಿದರು. ಈ ತನಿಖಾ ಠಾಣೆಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.
ಕಾರ್ಕಳ ಕಾಂಗ್ರೆಸ್, ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ
ಕಾರ್ಕಳ : ಬ್ಲಾಕ್ ಕಾಂಗ್ರೆಸ್ ಕಾರ್ಕಳ ಮಾರ್ಗದರ್ಶನದಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ಆಯುರ್ವೇದ ಆಸ್ಪತ್ರೆ, ಆಳ್ವಾಸ್ ಪಿಸಿಯೋಥೆರಪಿ ಕಾಲೇಜು, ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಹಾಗೂ ಪ್ರಸಾದ್ ನೇತ್ರಾಲಯದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಡಿ.13 ಶನಿವಾರ ಬೆಳಿಗ್ಗೆ 9 ರಿಂದ1:30 ವರಗೆ ಕಾರ್ಕಳ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಗರ್ಭಕೋಶದ ಅರ್ಬುದ ಕಾಯಿಲೆ ತಪಾಸಣೆ, ಬಂಜೆತನ ತಪಾಸಣೆ, ವಿಶೇಷ ಫಿಜಿಯೋಥೆರಪಿ ಚಿಕಿತ್ಸೆ, ನೇತ್ರ ತಪಾಸಣೆ, ಇಸಿಜಿ, ರಕ್ತದಾನ, ರಕ್ತದಲ್ಲಿ ಸಕ್ಕರೆ ಅಂಶ ತಪಾಸಣೆ ಹಾಗೂ ಎಲ್ಲಾ ಸ್ರೀರೋಗ ಮತ್ತು ಪ್ರಸೂತಿ ಸಂಬಂಧಿಸಿದ ಸಮಸ್ಯೆಗಳಿಗೆ ಸಮಾಲೋಚನೆ ಮೊದಲಾದ ಸೇವೆಯನ್ನು ಉಚಿತವಾಗಿ ನಡೆಸಲಾಗುವುದು. ತಜ್ಞ ವೈದ್ಯರುಗಳಾದ ಡಾ.ಹಾನಾ ಶೆಟ್ಟಿ, ಡಾ.ಶವೀಝ್ ಫೈಝಿ, ಡಾ.ಅರ್ಜುನ್ ಬಲ್ಲಾಳ್, ಡಾ.ಹರ್ಷಿತ್ ಜಿ.ಸಿ, ಡಾ.ಶ್ರಾವ್ಯ ಆಳ್ವಾ, ಡಾ.ಐಶ್ವರ್ಯ, ಡಾ.ಶ್ವೇತ ಸಿ. ಪೂಜಾರಿ, ಡಾ. ರೀನಝ್ ಬೇಗಂ ಮೊದಲಾದವರ ಸೇವೆಯು ಶಿಬಿರದ ಲಭ್ಯವಿರುತ್ತದೆ. ಕಾರ್ಯಕ್ರಮವನ್ನು ಆಳ್ವಾಸ್ ಸಂಸ್ಥೆಯ ಡಾ.ಹಾನಾ ಶೆಟ್ಟಿ ಉದ್ಘಾಟಿಸಲಿದ್ದು, ಕಾಂಗ್ರೆಸ್ ಮುಖಂಡರಾದ ಉದಯ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಶ್ರೀ ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ, ಆಳ್ವಾಸ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ವಿನಯ್ ಆಳ್ವಾ, ಬ್ಲಾಕ್ ಅಧ್ಯಕ್ಷರಾದ ಶುಭದರಾವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜೋತಿ ಹೆಬ್ಬಾರ್ ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಭಾನು ಬಾಸ್ಕರ್ ಫೂಜಾರಿ ಹಾಗೂ ಪಕ್ಷದ ಹಿರಿಯ ಮುಂಡರುಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಯುದ್ಧ 3ನೇ ಮಹಾಯುದ್ದಕ್ಕೆ ಕಾರಣವಾಗಬಹುದು: ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, ಡಿ.12: ರಶ್ಯ ಮತ್ತು ಉಕ್ರೇನ್ ನಡುವೆ ಮುಂದುವರಿದಿರುವ ಯುದ್ದದಲ್ಲಿ ಕಳೆದ ತಿಂಗಳು ಎರಡೂ ಕಡೆ ಸುಮಾರು 25,000 ಮಂದಿ ಸಾವನ್ನಪ್ಪಿದ್ದು ಇದು ಮಹಾ ಯುದ್ಧವಾಗಿ ಉಲ್ಬಣಿಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಹತ್ಯೆಗಳು ನಿಲ್ಲಬೇಕು. ಇಂತಹ ವಿಷಯಗಳು ವಿಶ್ವಯುದ್ದವಾಗಿ ಕೊನೆಗೊಳ್ಳುತ್ತದೆ. ಉಕ್ರೇನ್ ನಲ್ಲಿನ ಯುದ್ದವನ್ನು ನಿಲ್ಲಿಸಲು ಅಮೆರಿಕ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದೆ. ಆದರೆ ಈ ಯುದ್ಧದಲ್ಲಿ ನಾವು ಒಳಗೊಂಡಿಲ್ಲ. ಕೇವಲ ಮಧ್ಯಸ್ಥಿಕೆ ವಹಿಸುತ್ತಿದ್ದೇವೆ ಎಂದು ಶ್ವೇತಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ.
ಥೈಲ್ಯಾಂಡ್ ಸಂಸತ್ತು ವಿಸರ್ಜನೆ: ಮುಂದಿನ ವರ್ಷಾರಂಭದಲ್ಲಿ ಚುನಾವಣೆ
ಬ್ಯಾಂಕಾಕ್, ಡಿ.12: ಥೈಲ್ಯಾಂಡ್ ಸಂಸತ್ತನ್ನು ಪ್ರಧಾನಿ ಅನುತಿನ್ ಚರ್ನ್ವಿರಾಕುಲ್ ಶುಕ್ರವಾರ ವಿಸರ್ಜಿಸುವ ಮೂಲಕ ಮುಂದಿನ ವರ್ಷಾರಂಭದಲ್ಲಿ ಸಾರ್ವತ್ರಿಕ ಚುನಾವಣೆಗೆ ದಾರಿ ಮಾಡಿಕೊಟ್ಟಿದ್ದಾರೆ. ಥೈಲ್ಯಾಂಡ್ ಮತ್ತು ಕಂಬೋಡಿಯಾ ನಡುವಿನ ಗಡಿಭಾಗದಲ್ಲಿ ಘರ್ಷಣೆ ಮರುಕಳಿಸಿದ ಬೆನ್ನಲ್ಲೇ ಪ್ರಧಾನಿ ಅವಧಿಗೂ ಮುನ್ನವೇ ಸಂಸತ್ತನ್ನು ವಿಸರ್ಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ನೈತಿಕತೆ ಉಲ್ಲಂಘನೆ ಪ್ರಕರಣದಲ್ಲಿ ಪೆಟೋಂಗ್ಟರ್ನ್ ಶಿನಾವತ್ರಾ ಪ್ರಧಾನಿ ಹುದ್ದೆಯಿಂದ ವಜಾಗೊಂಡ ಬಳಿಕ ಸೆಪ್ಟಂಬರ್ ನಲ್ಲಿ ಚರ್ನುವಿರಾಕಲ್ ಪ್ರಧಾನಿಯಾಗಿ ನೇಮಕಗೊಂಡಿದ್ದರು. ` ಸರಕಾರಕ್ಕೆ ಬಹುಮತದ ಕೊರತೆ ಇರುವುದರಿಂದ ಮತ್ತು ದೇಶೀಯ ರಾಜಕೀಯ ಪರಿಸ್ಥಿತಿಗಳು ಬಹು ಸವಾಲುಗಳಿಂದ ಕೂಡಿರುವುದರಿಂದ ಸರ್ಕಾರವು ನಿರಂತರವಾಗಿ, ಸಮರ್ಥವಾಗಿ ಮತ್ತು ಸ್ಥಿರತೆಯಿಂದ ದೇಶದ ವ್ಯವಹಾರಗಳ ನಿರ್ವಹಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ . ಆದ್ದರಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ವಿಸರ್ಜಿಸಿ ಹೊಸದಾಗಿ ಸಾರ್ವತ್ರಿಕ ಚುನಾವಣೆ ನಡೆಸುವುದು ಸೂಕ್ತ ಪರಿಹಾರ ಕ್ರಮವಾಗಿದೆ' ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ. ಥೈಲ್ಯಾಂಡ್ ನ ಕಾನೂನಿನಡಿ ಸಂಸತ್ತು ವಿಸರ್ಜನೆಗೊಂಡ 45ರಿಂದ 60 ದಿನಗಳೊಳಗೆ ಚುನಾವಣೆ ನಡೆಸಬೇಕು.
ತೆಂಗು ಬೆಳೆಗಾರರಿಗೆ ಗುಡ್ನ್ಯೂಸ್: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ! ಕ್ವಿಂಟಲ್ಗೆ ಎಷ್ಟು ದರ?
ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ. 2026ರ ಹಂಗಾಮಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಹೋಳು ಕೊಬ್ಬರಿಗೆ 445 ರೂ. ಮತ್ತು ಉಂಡೆ ಕೊಬ್ಬರಿಗೆ 400 ರೂ. ಏರಿಕೆಯಾಗಿದ್ದು, ರೈತರಿಗೆ ಆರ್ಥಿಕ ನೆರವು ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರಕ್ಕೆ ಸಚಿವ ವಿ ಸೋಮಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಜಮ್ಮುಕಾಶ್ಮೀರ 7,000 ವಕ್ಫ್ ಆಸ್ತಿಗಳನ್ನು ಕಳೆದುಕೊಂಡಿದೆ, ಇದು ಮುಸ್ಲಿಮರ ವಿರುದ್ಧ ಹೊಸ ದಾಳಿ: ಮೆಹಬೂಬ ಮುಫ್ತಿ
ಶ್ರೀನಗರ,ಡಿ.12: ಒಂದೇ ವರ್ಷದಲ್ಲಿ ಜಮ್ಮುಕಾಶ್ಮೀರವು 7,000ಕ್ಕೂ ಅಧಿಕ ವಕ್ಫ್ ನೋಂದಾಯಿತ ಆಸ್ತಿಗಳನ್ನು ಕಳೆದುಕೊಂಡಿದೆ ಎಂದು ಹೇಳಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿಯವರು, ಇದು ಮುಸ್ಲಿಮರ ವಿರುದ್ಧ ಹೊಸ ದಾಳಿಯಾಗಿದೆ ಎಂದು ಬಣ್ಣಿಸಿದ್ದಾರೆ. ಹೊಸ ಉಮೀದ್ ಡೇಟಾ ಬೇಸ್ ನಲ್ಲಿ ದೇಶಾದ್ಯಂತ 3.55 ಲಕ್ಷಕ್ಕೂ ಅಧಿಕ ವಕ್ಫ್ ಆಸ್ತಿಗಳು ಕಣ್ಮರೆಯಾಗಿದ್ದು, ಜಮ್ಮುಕಾಶ್ಮೀರವೊಂದೇ 7,240 ಆಸ್ತಿಗಳನ್ನು ಕಳೆದುಕೊಂಡಿದೆ. ಇದು ವಕ್ಫ್ ಆಸ್ತಿಗಳ ಪಾರದರ್ಶಕತೆ ಮತ್ತು ರಕ್ಷಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಮುಫ್ತಿ ಶುಕ್ರವಾರ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ‘ಹಿಂಸಾಚಾರ, ನೆಲಸಮಗಳು ಮತ್ತು ಹಕ್ಕು ನಿರಾಕರಣೆ ಬಳಿಕ ವಕ್ಫ್ ಭೂಮಿಗಳನ್ನು ಕಿತ್ತುಕೊಳ್ಳುತ್ತಿರುವುದು ಮುಸ್ಲಿಮರ ವಿರುದ್ಧದ ಹೊಸ ದಾಳಿ ಎಂಬಂತೆ ಭಾಸವಾಗುತ್ತಿದೆ. ಇದು ಎಲ್ಲಿ ಅಂತ್ಯಗೊಳ್ಳುತ್ತದೆ?’ ಎಂದು ಅವರು ಪ್ರಶ್ನಿಸಿದ್ದಾರೆ. ಡಿ.7ಕ್ಕೆ ಇದ್ದಂತೆ ದೇಶಾದ್ಯಂತ ನೋಂದಾಯಿತ ವಕ್ಫ್ ಆಸ್ತಿಗಳ ದತ್ತಾಂಶಗಳನ್ನು ಮುಫ್ತಿ ಹಂಚಿಕೊಂಡಿದ್ದಾರೆ. ಈ ದತ್ತಾಂಶಗಳ ಪ್ರಕಾರ ಡಿ.9, 2024ರಂದು ಜಮ್ಮುಕಾಶ್ಮೀರದಲ್ಲಿ 32,533 ನೋಂದಾಯಿತ ವಕ್ಫ್ ಆಸ್ತಿಗಳಿದ್ದರೆ ಈ ವರ್ಷದ ಡಿ.7ರ ವೇಳೆಗೆ ಅದು 7,240ರಷ್ಟು ಕಡಿಮೆಯಾಗಿದ್ದು, 25,293ಕ್ಕೆ ಕುಸಿದಿದೆ.
ಮಾಧ್ಯಮ ಅಕಾಡೆಮಿ, ಮದ್ಯಪಾನ ಸಂಯಮ ಮಂಡಳಿ ನೌಕರರು ಪಿಂಚಣಿಗೆ ಅರ್ಹರಲ್ಲ: ಹೈಕೋರ್ಟ್
ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಅಥವಾ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ನೌಕರರು ಸರ್ಕಾರಿ ನೌಕರರಾಗಿದ್ದರೂ ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಪಿಂಚಣಿ ಮತ್ತು ಭತ್ಯೆಗಳನ್ನು ಬಿಡುಗಡೆ ಮಾಡುವಂತೆ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ, ಅಕಾಡೆಮಿ ಮತ್ತು ಮಂಡಳಿಯ ಸಿಬ್ಬಂದಿ ಸರ್ಕಾರಿ ಸಿಬ್ಬಂದಿಯಾಗಿದ್ದರೂ ಸಂಬಂಧಿತ ನಿಯಮಗಳ ಅಡಿಯಲ್ಲಿ ಅವರ ಸೇವೆಯನ್ನು ಪಿಂಚಣಿಗೆ ಅರ್ಹಗೊಳಿಸುವ ಯಾವುದೇ ನಿಬಂಧನೆ ಇಲ್ಲ ಎಂದು ಆದೇಶಿಸಿದೆ. ಇದೇ ವೇಳೆ, ವಿಷಯದ ಎಲ್ಲ ಸಂಬಂಧಿತ ಅಂಶಗಳನ್ನು ಮತ್ತು ಇತರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶಗಳನ್ನು ಗಮನಿಸಿ, ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಅರ್ಜಿದಾರರ ಉದ್ಯೋಗವನ್ನು ಪಿಂಚಣಿಗೆ ಅರ್ಹಗೊಳಿಸಬೇಕೆ ಎಂದು ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದಿರುವ ನ್ಯಾಯಪೀಠ, ನಾಲ್ಕು ತಿಂಗಳ ಒಳಗೆ ಮಾಧ್ಯಮ ಅಕಾಡೆಮಿ ಮತ್ತು ಮದ್ಯಪಾನ ಸಂಯಮ ಮಂಡಳಿಯನ್ನು ಆಲಿಸಿದ ನಂತರ ಮಾಹಿತಿಯುಕ್ತ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ಸರ್ಕಾರಿ ನೌಕರರನ್ನು ಹೊರತುಪಡಿಸಿ ಇತರ ಉದ್ಯೋಗಿಗಳಿಗೆ ಪಿಂಚಣಿ ನಿಯಮಗಳನ್ನು ಅನ್ವಯಿಸುವಂತಹ ಆದೇಶಗಳನ್ನು ಸರ್ಕಾರವು ತನ್ನ ವಿವೇಚನೆ ಬಳಸಿ ಮಾಡಿದೆ. ಆದರೆ, ಅಂತಹ ಆದೇಶಗಳ ಅನುಪಸ್ಥಿತಿಯಲ್ಲಿ, ಮದ್ಯಪಾನ ಸಂಯಮ ಮಂಡಳಿ ಮತ್ತು ಮಾಧ್ಯಮ ಅಕಾಡೆಮಿಯಂತಹ ಸಂಸ್ಥೆಗಳ ನೌಕರರು ಪಿಂಚಣಿಗೆ ಅರ್ಹರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ: ಮಾಧ್ಯಮ ಅಕಾಡೆಮಿಯ ನಿವೃತ್ತ ಸಿಬ್ಬಂದಿ ಯಲಗಯ್ಯ, ಆರ್.ಜಿ. ಸಿದ್ದರಾಮೇಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಏಕಸದಸ್ಯಪೀಠ ಅರ್ಜಿದಾರರಿಗೆ ಪಿಂಚಣಿ ಮತ್ತು ಭತ್ಯೆಯನ್ನು ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಥವಾ ಮಾಧ್ಯಮ ಅಕಾಡೆಮಿಯ ನೌಕರರು ಸರ್ಕಾರದ ಸೇವೆಯಲ್ಲಿಲ್ಲ ಹಾಗೂ ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು (ಕೆಸಿಎಸ್ಆರ್) 1957 ಅಡಿಯಲ್ಲಿ ಒದಗಿಸಲಾದ ವ್ಯಾಖ್ಯಾನದ ಪ್ರಕಾರ ಅವರು ಸರ್ಕಾರಿ ನೌಕರರಲ್ಲ ಎಂದು ವಾದಿಸಿತ್ತು. 2014ರ ಜನವರಿ 29ರ ಅಧಿಸೂಚನೆಯಂತೆ ಕೆಸಿಎಸ್ಆರ್ ನಿಯಮಗಳಿಂದ ನಿಯಮ 2-ಅ ಅನ್ನು ಕೈಬಿಡುವ ಮೂಲಕ, ಸರ್ಕಾರಿ ನೌಕರರಲ್ಲದ ವ್ಯಕ್ತಿಗಳು ನಿವೃತ್ತಿ ಪಿಂಚಣಿಗೆ ಒದಗಿಸುವ ಕೆಸಿಎಸ್ಆರ್ ನಿಯಮ 285ರ ಪ್ರಯೋಜನ ಅಥವಾ ಅನ್ವಯಕ್ಕೆ ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸರ್ಕಾರ ಹೇಳಿತ್ತು.
ಡಾಲರ್ ನೆದುರು 90.5ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ!
ಹೊಸದಿಲ್ಲಿ,ಡಿ.12: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಕುರಿತು ಅನಿಶ್ಚಿತತೆಯ ನಡುವೆ ಶುಕ್ರವಾರ ಭಾರತೀಯ ರೂಪಾಯಿ ಅಮೆರಿಕದ ಡಾಲರ್ನೆದುರು 90.5ರ ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ರೂಪಾಯಿ ಗುರುವಾರ ಡಾಲರೆನೆದುರು 90.46 ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಶೇರು ಮಾರುಕಟ್ಟೆಯಿಂದ ವಿದೇಶಿ ಬಂಡವಾಳದ ನಿರಂತರ ಹೊರಹರಿವು ಕೂಡ ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿದೆ. 2025ರಲ್ಲಿ ರೂಪಾಯಿ ಡಾಲರ್ ನೆದುರು ಸುಮಾರು ಶೇ.6ರಷ್ಟು ಕುಸಿದಿದ್ದು, ಪ್ರಸಕ್ತ ವರ್ಷದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಏಷ್ಯನ್ ಕರೆನ್ಸಿಯಾಗಿದೆ. ರಾಯ್ಟರ್ಸ್ ಸುದ್ದಿಸಂಸ್ಥೆಯ ಪ್ರಕಾರ ಈ ವರ್ಷ ವಿದೇಶಿ ಹೂಡಿಕೆದಾರರು ಭಾರತೀಯ ಶೇರು ಮಾರುಕಟೆಯಿಂದ 18 ಶತಕೋಟಿ ಡಾಲರ್ ಗಳನ್ನು ಹಿಂದೆಗೆದುಕೊಂಡಿದ್ದಾರೆ. ಸರಕು ವ್ಯಾಪಾರ ಕೊರತೆ ಅಥವಾ ರಫ್ತಿಗಿಂತ ಆಮದುಗಳು ಹೆಚ್ಚಾದಾಗ ಉಂಟಾಗುವ ವ್ಯತ್ಯಾಸವೂ ಅಕ್ಟೋಬರ್ ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಅಮೆರಿಕದ ಜೊತೆ ಭಾರತದ ವ್ಯಾಪಾರ ಒಪ್ಪಂದ ಇನ್ನೂ ಏರ್ಪಡದ್ದರಿಂದ ಭಾರತೀಯ ಸರಕುಗಳು ಆ ದೇಶದಲ್ಲಿ ಶೇ.50ರಷ್ಟು ಒಟ್ಟು ಸುಂಕದರವನ್ನು ಎದುರಿಸುತ್ತಿವೆ. ರೂಪಾಯಿ ಮೌಲ್ಯ ಕುಸಿತಕ್ಕಾಗಿ ಪ್ರತಿಪಕ್ಷಗಳು ಕೇಂದ್ರ ಸರಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.
ಲೋಕಸಭೆಯಲ್ಲಿ ವಾಯು ಮಾಲಿನ್ಯದ ಕುರಿತು ಧ್ವನಿ ಎತ್ತಿದ ರಾಹುಲ್ ಗಾಂಧಿ; ಚರ್ಚೆಗೆ ಆಗ್ರಹ
ಹೊಸದಿಲ್ಲಿ, ಡಿ. 12: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಶುಕ್ರವಾರ ದೇಶದ ಪ್ರಮುಖ ನಗರಗಳಲ್ಲಿನ ವಾಯು ಮಾಲಿನ್ಯದ ಕುರಿತು ಪ್ರಸ್ತಾವಿಸಿದರು ಹಾಗೂ ಆ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ವಿರೋಧ ಪಕ್ಷ ಹಾಗೂ ಸರಕಾರ ಪರಸ್ಪರ ನಿಂದಿಸದ ರೀತಿಯಲ್ಲಿ ಚರ್ಚೆ ನಡೆಸಬೇಕು. ಪರಸ್ಪರ ನಿಂದಿಸುವ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕು ಎಂದರು. ‘‘ಇದು ಸೈದ್ಧಾಂತಿಕ ವಿಷಯ ಅಲ್ಲ. ವಾಯು ಮಾಲಿನ್ಯ ನಮ್ಮ ಜನರಿಗೆ ಹಾನಿ ಉಂಟು ಮಾಡುತ್ತಿದೆ ಎಂದು ಈ ಸದನದಲ್ಲಿರುವ ಎಲ್ಲರೂ ಒಪ್ಪುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ನಾವೆಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು. ವಾಯು ಮಾಲಿನ್ಯದ ಸಮಸ್ಯೆ ನಿಭಾಯಿಸಲು ಪ್ರಧಾನಿ ಅವರು ಒಂದು ಯೋಜನೆ ರೂಪಿಸಬಹುದು ಎಂದು ಅವರು ಹೇಳಿದರು. ಈ ವಿಷಯದ ಕುರಿತು ಚರ್ಚೆ ನಡೆಸಲು ಸರಕಾರ ಸಿದ್ಧವಿತ್ತು. ಲೋಕಸಭೆಯ ಕಲಾಪ ಸಲಹಾ ಸಮಿತಿಯು ಅದಕ್ಕೆ ಸಮಯ ನಿಗದಿಪಡಿಸಬಹುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು. ‘‘ನಮ್ಮ ಹೆಚ್ಚಿನ ಪ್ರಮುಖ ನಗರಗಳು ವಿಷಕಾರಿ ಗಾಳಿಯ ಹೊದಿಕೆಯ ಅಡಿ ಜೀವಿಸುತ್ತಿದೆ. ಲಕ್ಷಾಂತರ ಮಕ್ಕಳು ಶ್ವಾಸಕೋಸದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅವರ ಭವಿಷ್ಯ ಮಂಕಾಗುತ್ತಿದೆ. ಜನರು ಕಾನ್ಸರ್/ಗೆ ತುತ್ತಾಗುತ್ತಿದ್ದಾರೆ. ವೃದ್ಧರು ಉಸಿರಾಡಲು ಹೋರಾಡುತ್ತಿದ್ದಾರೆ, ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
Maharashtra | 3 ವರ್ಷಗಳಲ್ಲಿ 7 ಜಿಲ್ಲೆಗಳಲ್ಲಿ 14,526 ಮಕ್ಕಳು ಮೃತ್ಯು: ಸರಕಾರ
ನಾಗಪುರ, ಡಿ. 12: ಮೂರು ವರ್ಷಗಳಲ್ಲಿ ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ 14,526 ಮಕ್ಕಳ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಪ್ರಕಾಶ್ ಅಬಿತ್ಕರ್ ಶುಕ್ರವಾರ ವಿಧಾನಸಭೆಗೆ ತಿಳಿಸಿದರು. ಬಿಜೆಪಿ ಶಾಸಕಿ ಸ್ನೇಹಾ ದುಬೆ ಅವರು ಎತ್ತಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಅಬಿತ್ಕರ್ ಸರಕಾರದ ದತ್ತಾಂಶವನ್ನು ಹಂಚಿಕೊಂಡರು. 2022-23 ಹಾಗೂ 2024-25ರ ನಡುವೆ ಪುಣೆ, ಮುಂಬೈ, ಛತ್ರಪತಿ ಸಂಭಾಜಿನಗರ್, ನಾಗಪುರ, ಅಮರಾವತಿ, ಅಕೋಲಾ ಹಾಗೂ ಯುವತ್ಮಾಲ್ ಜಿಲ್ಲೆಗಳಲ್ಲಿ ಒಟ್ಟು 14,526 ಮಕ್ಕಳು ಮೃತಪಟ್ಟಿರುವುದು ವರದಿಯಾಗಿದೆ ಎಂದು ಅಬಿತ್ಕರ್ ತಿಳಿಸಿದರು. ಈ ಅಂಕಿ-ಅಂಶ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾದ ಶಿಶುಗಳು ಹಾಗೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಅಲ್ಲದೆ, ತೀವ್ರ ಅಪೌಷ್ಠಿಕತೆಯ ಪ್ರಕರಣಗಳನ್ನು ಒಳಗೊಂಡಿದೆ. ಬುಡಕಟ್ಟು ಪ್ರಾಬಲ್ಯದ ಪಾಲ್ಘಾರ್ ಜಿಲ್ಲೆಯಲ್ಲಿ 138 ಶಿಶುಗಳು ಸಾವನ್ನಪ್ಪಿರುವುದು ದಾಖಲಾಗಿದೆ. ಎಂದು ಸಚಿವರು ತಿಳಿಸಿದರು. 2025 ನವೆಂಬರ್ ವರೆಗಿಗೆ ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶವನ್ನು ಉಲ್ಲೇಖಿಸಿ ಅಬಿತ್ಕರ್, ತೀವ್ರ ಅಪೌಷ್ಠಿಕತೆಯ 203 ಮಕ್ಕಳು ಹಾಗೂ ಸಾಧಾರಣ ಅಪೌಷ್ಠಿಕತೆಯ 2,666 ಮಕ್ಕಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ. 0.3 ದಾಖಲಾಗಿದ್ದರೆ, ಮಧ್ಯಮ ತೂಕದ ಮಕ್ಕಳ ಪ್ರಮಾಣ ಶೇ. 1.48 ದಾಖಲಾಗಿದೆ ಎಂದು ಅಬಿತ್ಕರ್ ಹೇಳಿದರು.
ಬೆಳೆ ವಿಮೆ ಯೋಜನೆಯಿಂದ ಖಾಸಗಿ ಕಂಪೆನಿಗಳಿಗೆ ಲಾಭ: ಸಚಿವ ಈಶ್ವರ್ ಖಂಡ್ರೆ
ಬೆಳಗಾವಿ(ಸುವರ್ಣವಿಧಾನಸೌಧ): ಕೇಂದ್ರ ಸರಕಾರ 2016-17ರಲ್ಲಿ ಜಾರಿಗೆ ತಂದ ಬೆಳೆ ವಿಮೆ ಯೋಜನೆಯಿಂದ ಖಾಸಗಿ ವಿಮಾ ಕಂಪೆನಿಗಳಿಗೆ ಲಾಭ ಆಗುತ್ತಿದೆ. 2016ರಿಂದ 2024ರವರೆಗೆ ಖಾಸಗಿ ಕಂಪೆನಿಗಳು ಸಾವಿರಾರು ಕೋಟಿ ರೂ. ಲಾಭ ಮಾಡಿವೆ. ಇದರಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಉತ್ತರ ಕರ್ನಾಟಕದ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಮಳೆ, ಪ್ರವಾಹದಿಂದ ಬೆಳೆ ಹಾನಿ ಆದಾಗ 3 ದಿನಗಳ ಒಳಗಾಗಿ ವೆಬ್ ಲಿಂಕ್ ಅಥವಾ ದೂರವಾಣಿ ಮುಖಾಂತರ ಮಾಹಿತಿ ನೀಡಬೇಕು ಎಂಬ ಷರತ್ತಿದೆ. ಆದರೆ ಖಾಸಗಿ ಕಂಪೆನಿಗಳ ಫೋನ್ ಮತ್ತು ವೆಬ್ ಲಿಂಕ್ ಕಾರ್ಯ ನಿರ್ವಹಿಸುವುದಿಲ್ಲ. ಬೆಳೆ ಹಾನಿಯಾದವರು ಮಾಹಿತಿ ನೀಡಿಲ್ಲ ಎಂದು ಪರಿಹಾರ ನೀಡುವುದಿಲ್ಲ. ಇಂತಹ ಸಾಕಷ್ಟು ನ್ಯೂನತೆಗಳಿವೆ ಎಂದರು. ಬೆಳೆ ಕಟಾವು ಪ್ರಯೋಗದಲ್ಲಿ 7 ವರ್ಷದ ಅಂದಾಜಿನಲ್ಲಿ 5 ವರ್ಷದ ಇಳುವರಿಯ ಸರಾಸರಿ ತೆಗೆದುಕೊಳ್ಳುವ ವಿಚಾರದಲ್ಲೂ ವೈಜ್ಞಾನಿಕವಾಗಿ ನಿಗದಿ ಮಾಡುವುದಿಲ್ಲ ಮತ್ತು ಋತುಮಾನದ ಮಧ್ಯಕಾಲೀನ ವೈಪರೀತ್ಯ (ಮಿಡ್ ಸೀಸನ್ ಅಡ್ವರ್ಸಿಟಿ) ವಿಚಾರದಲ್ಲೂ ರೈತರಿಗೆ ಅನ್ಯಾಯ ಆಗುತ್ತಿದೆ. ಇಂತಹ ನ್ಯೂನತೆಗಳು ಇವೆ. ಒಟ್ಟಾರೆ ಬೆಳೆ ವಿಮೆ ನೀತಿ ಬದಲಾವಣೆ ಆದರೆ ಮಾತ್ರ ರೈತರಿಗೆ ಒಳ್ಳೆಯದಾಗುತ್ತದೆ. ಇದಕ್ಕೆ ಎಲ್ಲರೂ ಕೂಡಿ ಪ್ರಯತ್ನ ಮಾಡಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಕೇಂದ್ರ ಸರಕಾರ ಬೆಳೆ ವಿಮೆ ಯೋಜನೆಗೆ ಮಾಡಿರುವ ಮಾರ್ಗಸೂಚಿಗಳಲ್ಲಿ ಸಾಕಷ್ಟು ನ್ಯೂನತೆ ಇದೆ. ಇದನ್ನು ಪರಿಹರಿಸಲು ಕೃಷಿ ಸಚಿವರು ಸಭೆ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ, ಆದರೆ ಈವರೆಗೆ ಕೇಂದ್ರ ಸರಕಾರ ಮಾರ್ಗಸೂಚಿಗೆ ಬದಲಾವಣೆ ಮಾಡಿಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದರು. ಕೇಂದ್ರ ಸರಲಾರ 5-10 ಖಾಸಗಿ ವಿಮಾ ಕಂಪೆನಿಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು ಅವರೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಅವರು ರಾಜ್ಯದ 31 ಜಿಲ್ಲೆಗಳನ್ನು ಹಂಚಿಕೊಂಡು ತಮಗೆ ಲಾಭವಾಗುವ ರೀತಿಯಲ್ಲಿ ಟೆಂಡರು ಹಾಕಿ ಲಾಭ ಮಾಡಿಕೊಳ್ಳುತ್ತಿದ್ದಾರೆ. 2016ಕ್ಕೆ ಮುನ್ನ ಭಾರತೀಯ ಕೃಷಿ ನಿಗಮದ ವತಿಯಿಂದ ವಿಮೆ ಜಾರಿ ಮಾಡುತ್ತಿದ್ದರು, ಆಗ ನಿಗಮಕ್ಕೆ ನಷ್ಟ ಆಗುತ್ತಿತ್ತು. ಆ ನಷ್ಟವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಭರಿಸುತ್ತಿತ್ತು. ಈಗಲೂ ನಿಗಮಕ್ಕೆ ನಷ್ಟ ಆಗುತ್ತದೆ ಆದರೆ ಖಾಸಗಿ ಕಂಪೆನಿಗಳಿಗೆ ಮಾತ್ರ ಲಾಭ ಆಗುತ್ತಿದೆ. ಹೀಗಾಗಿ ಇಡೀ ನೀತಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಈಶ್ವರ್ ಖಂಡ್ರೆ ಪ್ರತಿಪಾದಿಸಿದರು.
ಸರಕಾರಿ ಸಿಬ್ಬಂದಿ ಆದರೂ ಇವರು ಪಿಂಚಣಿಗೆ ಅರ್ಹರಲ್ಲ! ಅಕಾಡೆಮಿ, ಮಂಡಳಿ ಸಿಬ್ಬಂದಿಗೆ ಹೈಕೋರ್ಟ್ ಶಾಕ್
ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಮದ್ಯಪಾನ ಸಂಯಮ ಮಂಡಳಿಯ ನೌಕರರು ಸರಕಾರಿ ನೌಕರರಾಗಿದ್ದರೂ ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಸಂಬಂಧಿತ ನಿಯಮಗಳಡಿಯಲ್ಲಿ ಪಿಂಚಣಿಗೆ ಅರ್ಹತೆ ನೀಡುವ ನಿಬಂಧನೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಬಗ್ಗೆ ಸರಕಾರ ಮಾಹಿತಿಪೂರ್ಣ ಆದೇಶ ಹೊರಡಿಸಲು ನಿರ್ದೇಶನ ನೀಡಿದೆ.
ಕಾಂಗೋದಲ್ಲಿ ತೀವ್ರಗೊಂಡ ಬಂಡುಕೋರ ಗುಂಪಿನ ದಾಳಿ; ಕನಿಷ್ಠ 400 ನಾಗರಿಕರು ಮೃತ್ಯು; 70 ಲಕ್ಷ ಜನರ ಪಲಾಯನ
ಗೊಮಾ, ಡಿ.12: ರವಾಂಡಾ ದೇಶದ ಬೆಂಬಲ ಪಡೆದಿರುವ ಎಂ23 ಬಂಡುಕೋರ ಪಡೆ ಪೂರ್ವ ಕಾಂಗೋ ಗಣರಾಜ್ಯದ ದಕ್ಷಿಣ ಕಿವು ಪ್ರಾಂತದಲ್ಲಿ ತನ್ನ ಆಕ್ರಮಣವನ್ನು ತೀವ್ರಗೊಳಿಸಿದ್ದು ಕನಿಷ್ಠ 413 ನಾಗರಿಕರು ಸಾವನ್ನಪ್ಪಿದ್ದಾರೆ. ರವಾಂಡಾದ ವಿಶೇಷ ಪಡೆಗಳು ಈಗಾಗಲೇ ಕಾಂಗೋದ ಆಯಕಟ್ಟಿನ ನಗರ ಉವಿರಾವನ್ನು ಪ್ರವೇಶಿಸಿವೆ ಎಂದು ಪ್ರಾದೇಶಿಕ ಅಧಿಕಾರಿಗಳು ಹೇಳಿದ್ದಾರೆ. ಉವಿರಾ ಮತ್ತು ಬುಕಾವು ನಡುವಿನ ಪ್ರದೇಶದಲ್ಲಿ ಬಂಡುಕೋರ ಪಡೆಯ ಬಾಂಬ್, ಗ್ರೆನೇಡ್ ಮತ್ತು ಗುಂಡಿನ ದಾಳಿ ತೀವ್ರಗೊಂಡಿದ್ದು ಮಹಿಳೆಯರು, ಮಕ್ಕಳು ಸೇರಿದಂತೆ 413ಕ್ಕೂ ಅಧಿಕ ನಾಗರಿಕರು ಸಾವನ್ನಪ್ಪಿದ್ದಾರೆ. ನಮಗೆ ದೊರೆತ ಮಾಹಿತಿಯ ಪ್ರಕಾರ, ಬಂಡುಕೋರ ಪಡೆಯ ಜೊತೆ ರವಾಂಡಾದ ವಿಶೇಷ ಪಡೆಗಳು, ರವಾಂಡಾದ ಬಾಡಿಗೆ ಸಿಪಾಯಿಗಳು ಕಾರ್ಯಾಚರಿಸುತ್ತಿದ್ದು, ಇದು ಕದನ ವಿರಾಮ ಮತ್ತು ದೋಹಾ ಹಾಗೂ ವಾಷಿಂಗ್ಟನ್ನಲ್ಲಿ ಸಹಿ ಹಾಕಲಾದ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ದಕ್ಷಿಣ ಕಿವು ಸರಕಾರದ ವಕ್ತಾರರು ಖಂಡಿಸಿದ್ದಾರೆ. ಪೂರ್ವ ಕಾಂಗೋದ ಆಯಕಟ್ಟಿನ ನಗರವಾದ ಉವಿರಾವನ್ನು ನಿಯಂತ್ರಣಕ್ಕೆ ಪಡೆದಿರುವುದಾಗಿ ಎಂ23 ಗುಂಪು ಬುಧವಾರ ಹೇಳಿದೆ. ಸುಮಾರು 2,500 ಹೋರಾಟಗಾರರನ್ನು ಹೊಂದಿರುವ ಎಂ23 ಗುಂಪಿಗೆ ನೆರೆ ರಾಷ್ಟ್ರ ರವಾಂಡಾದ ಬೆಂಬಲವಿದೆ. ಕಾಂಗೋದಲ್ಲಿ ರವಾಂಡಾದ ಸುಮಾರು 4,000 ಯೋಧರಿದ್ದಾರೆ ಎಂದು ಕಾಂಗೋ, ಅಮೆರಿಕಾ ಮತ್ತು ವಿಶ್ವಸಂಸ್ಥೆಯ ಪ್ರತಿನಿಧಿಗಳು ಆಪಾದಿಸಿದ್ದಾರೆ. ಇದನ್ನು ರವಾಂಡಾ ನಿರಾಕರಿಸಿದ್ದರೂ ಪೂರ್ವ ಕಾಂಗೋದಲ್ಲಿ ತನ್ನ ಕ್ಷಿಪಣಿ ವ್ಯವಸ್ಥೆ ಕಾರ್ಯಾಚರಿಸುತ್ತಿರುವುದನ್ನು ಒಪ್ಪಿಕೊಂಡಿದೆ. ಕಳೆದ ವಾರ ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಕಾಂಗೋ ಮತ್ತು ರವಾಂಡಾ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಈ ಮಾತುಕತೆಗೆ ಎಂ23 ಬಂಡುಕೋರ ಗುಂಪಿನ ಪ್ರತಿನಿಧಿಗೆ ಆಹ್ವಾನ ಇರಲಿಲ್ಲ. *ಖನಿಜ ಸಮೃದ್ಧಿ ಪ್ರದೇಶಕ್ಕಾಗಿ ಹೋರಾಟ ರವಾಂಡಾದ ಗಡಿಯ ಬಳಿ ಪೂರ್ವ ಕಾಂಗೋದಲ್ಲಿ ಖನಿಜ ಸಮೃದ್ಧಿ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು 100ಕ್ಕೂ ಹೆಚ್ಚು ಸಶಸ್ತ್ರ ಹೋರಾಟಗಾರರ ಗುಂಪು ಪ್ರಯತ್ನಿಸುತ್ತಿದ್ದು ಇದರಲ್ಲಿ ರವಾಂಡಾ ದೇಶದ ಬೆಂಬಲ ಪಡೆದಿರುವ ಎಂ23 ಗುಂಪು ಪ್ರಮುಖವಾಗಿದೆ. 7 ದಶಲಕ್ಷಕ್ಕೂ ಅಧಿಕ ಜನರು ನೆಲೆ ಕಳೆದುಕೊಂಡಿರುವ ಈ ಸಂಘರ್ಷವು ವಿಶ್ವದ ಅತ್ಯಂತ ಪ್ರಮುಖ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ. ಡಿಸೆಂಬರ್ 2ರ ಬಳಿಕ 2 ಲಕ್ಷಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದು ಕನಿಷ್ಠ 70 ಮಂದಿ ಸಾವನ್ನಪ್ಪಿರುವುದಾಗಿ ವಿಶ್ವಸಂಸ್ಥೆಯ ಪ್ರತಿನಿಧಿ ಹೇಳಿದ್ದಾರೆ.
ವಿ ಸೋಮಣ್ಣ - ಅಮಿತ್ ಶಾ ಭೇಟಿ ಫೋಟೋ ಚರ್ಚೆಗೆ ಗ್ರಾಸ! '75 ವರ್ಷದ ನೀವು ಕುರ್ಚಿಯಂಚಲಿ ಕೂತು ಬೇಡುವುದೇಕೆ?'
ಕೇಂದ್ರ ಸಚಿವ ವಿ. ಸೋಮಣ್ಣ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಫೋಟೋ ವೈರಲ್ ಆಗಿದೆ. 75 ವರ್ಷದ ಸೋಮಣ್ಣ ಕುರ್ಚಿಯಂಚಿನಲ್ಲಿ ಕುಳಿತು ಕೈಮುಗಿದು ಮನವಿ ಮಾಡುತ್ತಿರುವ ಚಿತ್ರ, ಹಲವು ಟೀಕೆಗಳಿಗೆ ಗುರಿಯಾಗಿದೆ. ಹೈಕಮಾಂಡ್ ಪ್ರಭಾವ, ನಾಯಕತ್ವ ಕೊರತೆ, ಅತಿಯಾದ ವಿನಯದ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಬೆಳಗಾವಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹಣವನ್ನು ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳ ಉಪಯೋಗಕ್ಕೆ ಹಿಂದಿನ ಬಿಜೆಪಿ ಸರಕಾರ ಬಳಸಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಶುಕ್ರವಾರ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಹಿಂದಿನ ಸರಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಎಂಬ ಸಾಂವಿಧಾನಿಕ ಸಂಸ್ಥೆಯನ್ನು ರಚಿಸಿತ್ತು. ಇದು 500 ಕೋಟಿ ರೂ. ಬಜೆಟ್ನೊಂದಿಗೆ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿತ್ತು ಎಂದು ತಿಳಿಸಿದ್ದಾರೆ. ಆದರೆ ವಾಸ್ತವದಲ್ಲಿ, ಈ ಪ್ರದೇಶದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ಉಪಯೋಗಕ್ಕಾಗಿ ಬಳಸಲಾಗಿತ್ತು. ಈ ಮೂಲಕ 322 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳುತ್ತವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಿವರ: ಬಹುಶಃ ಇದು ಆ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಅತಿದೊಡ್ಡ ಹಗರಣ / ವಂಚನೆ / ದುರುಪಯೋಗ / ಭ್ರಷ್ಟಾಚಾರ. ಬಿಜೆಪಿಗರು 5 ತಾಲೂಕುಗಳನ್ನು ಅನಧಿಕೃತವಾಗಿ 8ನೆ ಜಿಲ್ಲೆಯಂತೆ ಪರಿಗಣಿಸಿದ್ದರು. ಅಷ್ಟೇ ಅಲ್ಲದೆ, ಮನಬಂದಂತೆ ಹಣವನ್ನು ಹಂಚಿಕೆ ಮಾಡಿದ್ದರು ಎಂದು ಅವರು ದೂರಿದ್ದಾರೆ. ಸಮಾಜವು ರಾಜ್ಯ ಸರಕಾರದಿಂದ ಯಾವುದೇ ಅನುಮತಿ ಅಥವಾ ಮಾಹಿತಿಯಿಲ್ಲದೆ ಸಂಪೂರ್ಣವಾಗಿ ಕಾನೂನು ಬಾಹಿರವಾದ ಎಂಟನೆ ಘಟಕವಾಗಿ - ಕಲಬುರಗಿ-ಸೇಡಂ ಉಪ ಪ್ರದೇಶ ಸೃಷ್ಟಿಸಿತು. ಮತ್ತು ಸೇಡಂ ತಾಲೂಕು ಹಾಗೂ ಇತರ 4 ತಾಲೂಕುಗಳನ್ನು ಕಾನೂನುಬಾಹಿರವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ 8 ನೆ ಜಿಲ್ಲೆಯಂತೆ ಪರಿಗಣಿಸಿತು ಎಂದು ಅವರು ಹೇಳಿದ್ದಾರೆ. ಈ ವೇಳೆ ನಡೆದ ಹಣಕಾಸಿನ ಹಂಚಿಕೆಗಳಲ್ಲಿ, ಕಲ್ಯಾಣ ಕರ್ನಾಟಕ ಪ್ರದೇಶದ ಇತರ ಏಳು ಜಿಲ್ಲೆಗಳಲ್ಲಿ ಕೆಲವು ಜಿಲ್ಲೆಗಳಿಗೆ ಮಾಡಲಾದ ಹಂಚಿಕೆಗಿಂತಲೂ ಆ ಉಪ-ಪ್ರದೇಶಕ್ಕೆ ಅಧಿಕ ಮೊತ್ತ ಸಂದಾಯವಾಗಿದೆ. ಇಂದು, ಅದೇ ಬಿಜೆಪಿ ನಾಯಕರು ಬೆಳಗಾವಿ ವಿಧಾನಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ನಮಗೆ ಸುದೀರ್ಘ ಉಪದೇಶಗಳನ್ನು ನೀಡುತ್ತಿದ್ದಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ, ಜನರ ಹಣವನ್ನು ತಮ್ಮ ಸ್ವಂತ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದರು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಸದನದಲ್ಲಿ ಶಾಸಕ ಬಿ.ಆರ್.ಪಾಟೀಲ್ ಆಗ್ರಹ
ಬೆಳಗಾವಿ(ಸುವರ್ಣ ವಿಧಾನಸೌಧ),ಡಿ.12: ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಅವರು ಸದನದಲ್ಲಿ ಮನವಿ ಮಾಡಿದರು. ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಬಿ.ಆರ್.ಪಾಟೀಲ್, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ರಚಿಸುವ ಸಚಿವಾಲಯದ ಕಚೇರಿಯನ್ನು ಬೆಂಗಳೂರಿನ ಬದಲಾಗಿ ಕಲಬುರಗಿಯಲ್ಲಿ ಸ್ಥಾಪಿಸಬೇಕು. ಇದರಿಂದಾಗಿ, ಈ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ರಾಜ್ಯ ಸರಕಾರ ಪ್ರತಿ ಲೀಟರ್ ಹಾಲಿಗೆ 5 ರೂ.ಪ್ರೋತ್ಸಾಹ ಧನ ನೀಡುತ್ತಿದೆ. ಕಲಬುರಗಿಯಲ್ಲಿ ಹೈನುಗಾರಿಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದಾಗಿ, ಈ ಭಾಗದಲ್ಲಿನ ರೈತರು, ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ. ಹಾಗೆಯೇ, ಕುರಿ, ಕೋಳಿ ಸಾಕಾಣಿಕೆ ಮಾಡಲು ಅಗತ್ಯ ಸಾಲ ಸೌಲಭ್ಯ ಸಿಗುವಂತಾಗಬೇಕು ಎಂದು ಬಿ.ಆರ್.ಪಾಟೀಲ್ ಹೇಳಿದರು. ಬಡತನ ನಿವಾರಣೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆ ತರಲು ಜನರನ್ನು ಭಾಗಿದಾರರನ್ನಾಗಿಸಬೇಕು. ಕಲಬುರಗಿಯಲ್ಲಿ ಅರಣ್ಯೀಕರಣ ಕೇವಲ ಶೇ.6ರಷ್ಟು ಇದೆ. ತಾಪಮಾನ 44 ಡಿಗ್ರಿಗೆ ತಲುಪುತ್ತಿದೆ. ದೊಡ್ಡ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು ಅರಣ್ಯೀಕರಣ ಮಾಡುವತ್ತ ಗಮನಹರಿಸಬೇಕಿದೆ ಎಂದು ಹೇಳಿದರು. ಸರಕಾರದಿಂದ ಯಾವುದೇ ನೆರವು ಪಡೆಯದೆ ಮರಗಳನ್ನು ಬೆಳೆಸಿ ಜನಸಾಮಾನ್ಯರ ಮನಸ್ಸಿನಲ್ಲಿ ಅಜರಾಮರವಾಗಿರುವ ಸಾಲುಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು. ರಾಜ್ಯದ ಪ್ರತಿಯೊಂದು ಮನೆಯಲ್ಲಿ ಸಾಲುಮರದ ತಿಮ್ಮಕ್ಕ ಅವರಂತಹ ಪರಿಸರ ಪ್ರೇಮಿಗಳು ಹೊರ ಬರಬೇಕಿದೆ ಎಂದು ಬಿ.ಆರ್.ಪಾಟೀಲ್ ಹೇಳಿದರು. ಕರ್ನಾಟಕದಲ್ಲಿ ಮಾನವ ನಿರ್ಮಿತ ಅರಣ್ಯ ಸಂಪತ್ತು ಹೇರಳವಾಗಿದೆ. ಜಮೀನುಗಳ ವಿಸ್ತೀರ್ಣದ ಆಧಾರದ ಮೇಲೆ ಇಂತಿಷ್ಟು ಮರಗಳು ಇರಲೇಬೇಕು ಎಂಬ ನಿಯಮಗಳನ್ನು ರೂಪಿಸಬೇಕು. ಆಗ ಸಸ್ಯ ಸಂಪತ್ತನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಬಿ.ಆರ್.ಪಾಟೀಲ್ ಹೇಳಿದರು.
ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? ವೈರಲ್ ಸುದ್ದಿಯ ಹಿಂದಿನ ಸತ್ಯ ಇಲ್ಲಿದೆ!
ಮೊಟ್ಟೆ (Eggs) ಪ್ರೋಟೀನ್ನ ಆಗರ. ಜಿಮ್ಗೆ ಹೋಗುವವರಿಂದ ಹಿಡಿದು, ಶಾಲಾ ಮಕ್ಕಳವರೆಗೆ ಎಲ್ಲರೂ ದಿನಕ್ಕೊಂದು ಮೊಟ್ಟೆ ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಇದೇ ಮೊಟ್ಟೆ ನಿಮ್ಮ ದೇಹದಲ್ಲಿ ಕ್ಯಾನ್ಸರ್ (Cancer) ರೋಗವನ್ನು ಹುಟ್ಟುಹಾಕಬಲ್ಲದು ಎಂದು ಯಾರಾದರೂ ಹೇಳಿದರೆ ನೀವು ನಂಬುತ್ತೀರಾ? ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಒಂದು ಸುದ್ದಿ ಹರಿದಾಡುತ್ತಿದ್ದು, ಮೊಟ್ಟೆ ಪ್ರಿಯರನ್ನು ಬೆಚ್ಚಿಬೀಳಿಸಿದೆ. ನಿಜಕ್ಕೂ ಮೊಟ್ಟೆ ತಿನ್ನುವುದು ಅಪಾಯಕಾರಿಯೇ? ಕೋಳಿಗಳಿಗೆ ನೀಡುವ ಇಂಜೆಕ್ಷನ್ಗಳು ಮನುಷ್ಯರ ಪ್ರಾಣಕ್ಕೆ ಸಂಕಟ ತರುತ್ತವೆಯೇ? ಈ ಗೊಂದಲಗಳಿಗೆ ಕಾರಣವೇನು ... Read more The post ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? ವೈರಲ್ ಸುದ್ದಿಯ ಹಿಂದಿನ ಸತ್ಯ ಇಲ್ಲಿದೆ! appeared first on Karnataka Times .
ಕಡಬ | ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಸ್ತಾಂತರ
ಕಡಬ, ಡಿ.12. ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಲಾಸ್ ಆನ್ ವ್ಹೀಲ್ಸ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಯ ಪ್ರಮಾಣಪತ್ರ ವಿತರಣೆ ಮತ್ತು ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ಅಲಂಕಾರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಖಾಸಗಿ ಶಾಲೆಗಳಂತೆ ಕಂಪ್ಯೂಟರ್ ಪ್ರಯೋಗಾಲಯ ಸ್ಥಾಪಿಸಿ ಶಿಕ್ಷಣ ಕೊಡುವುದು ಕಷ್ಟ ಎಂಬುದನ್ನರಿತು ಬಸ್ನಲ್ಲಿ ಗ್ರಾಮೀಣ ಸರಕಾರಿ ಶಾಲೆಯ ಅಂಗಳಕ್ಕೆ ಬಂದು ಪ್ರಾಥಮಿಕ ಕಂಪ್ಯೂಟರ್ ಶಿಕ್ಷಣ ನೀಡುವ ಈ ಯೋಜನೆ ಮಾದರಿ ಹಾಗೂ ಅತ್ಯಂತ ವಿಶಿಷ್ಟ ಎಂದರು. ಶಾಲೆಯಲ್ಲಿ ಶಿಕ್ಷಣ ಕಲಿತು ಹೋದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಋಣ ಇರುತ್ತದೆ. ತಾನು ಕಲಿತ ಶಾಲೆಗೆ ಕಂಪ್ಯೂಟರ್ ನೀಡುವ ಮೂಲಕ ಸುಜಾಹ್ ಮುಹಮ್ಮದ್ ಅನುಕರಣೀಯ ಕಾರ್ಯ ಮಾಡಿದ್ದಾರೆ. ಇಂತಹ ಮನೋಭಾವ ಎಲ್ಲರಿಗೂ ಬಂದರೆ, ಊರ ಶಾಲೆಗಳು ಉದ್ಧಾರ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಶ್ಲಾಘಿಸಿದರು. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುಜಾಹ್ ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಎಂ.ಫ್ರೆಂಡ್ಸ್ ಅನಿವಾಸಿ ಭಾರತೀಯ ಟ್ರಸ್ಟಿ ನವಾಝ್ ಕೆ. ದುಬಾಯಿ, ಎಸ್ಡಿಎಂಸಿ ಅಧ್ಯಕ್ಷ ಎ.ಬಿ.ಸುಂದರ, ಉಪಾಧ್ಯಕ್ಷೆ ಪ್ರಮೀಳಾ, ಮಾತೃ ಸಂಘದ ಅಧ್ಯಕ್ಷೆ ಶೈಲ ಪ್ರಭಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು. ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ಹಳೆ ವಿದ್ಯಾರ್ಥಿ ಸುಜಾಹ್ ಮುಹಮ್ಮದ್, ಎಂಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ, ಕಂಪ್ಯೂಟರ್ ಬಸ್ಸಿನ ಶಿಕ್ಷಕರಾದ ಚೈತ್ರಾ ಎ.ಎಚ್., ಶಮಾ ಸಾನಿಹಾ, ಚಾಲಕ ಅಬೂಬಕರ್ ಬಿ., ಸಂಯೋಜಕ ಮುಹಮ್ಮದ್ ಸಫ್ವಾನ್ ಅವರನ್ನು ಸನ್ಮಾನಿಸಲಾಯಿತು. ಕಂಪ್ಯೂಟರ್ ಶಿಕ್ಷಣ ಪಡೆದ ಬಗ್ಗೆ ಶಿಕ್ಷಕಿ ಮಲ್ಲಿಕಾ, ವಿದ್ಯಾರ್ಥಿಗಳಾದ ಆಕಾಶ್, ಮಿಸ್ಬಾ ಫಾತಿಮಾ, ದೀಕ್ಷಿತ್, ಚರಣ್ ಅನಿಸಿಕೆ ವ್ಯಕ್ತಪಡಿಸಿದರು. ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಪ್ರಸಾದ್ ಎ. ಸ್ವಾಗತಿಸಿದರು. ಎಂಫ್ರೆಂಡ್ಸ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಭಾಗೀರತಿ ವಂದಿಸಿದರು. ಸಹಶಿಕ್ಷಕ ಚೆನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.
ಬಳ್ಳಾರಿ| ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ 106ನೇ ಸಂಸ್ಥಾಪನಾ ದಿನಾಚರಣೆ
ವಿಜಯನಗರ : ಬಳ್ಳಾರಿ ಡಿಸಿಸಿ ಬ್ಯಾಂಕಿನ 106ನೇ ಸಂಸ್ಥಾಪನಾ ದಿನಾಚರಣೆ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷರಾದ ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಿಪ್ಪೇಸ್ವಾಮಿ ಅವರು,106ನೇ ಸಂಸ್ಥಾಪನಾ ದಿನವನ್ನು ಕೇಂದ್ರ ಕಚೇರಿ ಸೇರಿದಂತೆ 33 ಶಾಖೆಗಳಲ್ಲಿ ಕೂಡ ಅದ್ದೂರಿ ಆಚರಣೆಗೆ ಕರೆ ನೀಡಲಾಗಿತ್ತು. ಬಳ್ಳಾರಿ ಡಿಸಿಸಿ ಬ್ಯಾಂಕನ್ನು ಇಲ್ಲಿಯವರೆಗೆ ನಡೆಸಿಕೊಂಡು ಬಂದಂತಹ ಎಲ್ಲಾ ಅಧ್ಯಕ್ಷರ ದೂರದೃಷ್ಟಿ, ಆಡಳಿತ ಮಂಡಳಿಗಳ ಸಹಕಾರ, ನೌಕರರ ಪರಿಶ್ರಮವನ್ನು ಸ್ಮರಿಸಿದರು. ಈ ವೇಳೆ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಜಯಪ್ರಕಾಶ್ ಬಿ ಹಾಗೂ ಕೇಂದ್ರ ಕಚೇರಿಯ ಎಲ್ಲಾ ವಿಭಾಗಗಳ ಉಪಪ್ರಧಾನ ವ್ಯವಸ್ಥಾಪಕರು, ನೌಕರರು ಹಾಗೂ ಸ್ಥಳೀಯ ಬ್ಯಾಂಕ್ ಮತ್ತು ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರರು ಉಪಸ್ಥಿತರಿದ್ದರು.
ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿ ಕೆಎಫ್ಡಿ ಪ್ರಕರಣಗಳು ಡಿಸೆಂಬರ್ನಲ್ಲೇ ಕಾಣಿಸಿಕೊಂಡಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಆರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಬಹುತೇಕರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹೊಸನಗರ ತಾಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ಪ್ರಕರಣಗಳು ದೃಢಪಟ್ಟಿವೆ. ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಬಳ್ಳಾರಿ| ಮೂರು ತಿಂಗಳ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಸರಕಾರಿ ಹೊರಗುತ್ತಿಗೆ ನೌಕರರ ಸಂಘದಿಂದ ಧರಣಿ
ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂಪ್ಲಿ ತಾಲೂಕು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ತಾಲೂಕಾಧ್ಯಕ್ಷ ಡಿ.ಆರ್.ಪಾಂಡುರಂಗ ನೇತೃತ್ವದಲ್ಲಿ ನೌಕರರು ಪಟ್ಟಣದ ನೀರಾವರಿ ಇಲಾಖೆಯ ಉಪವಿಭಾಗದ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಡಿ.ಆರ್.ಪಾಂಡುರಂಗ, ಕಂಪ್ಲಿ ನೀರಾವರಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ ತಿಂಗಳ ಹಾಗೂ 2025ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಸೇರಿದಂತೆ ಒಟ್ಟಾರೆಯಾಗಿ ಮೂರು ತಿಂಗಳ ಬಾಕಿ ವೇತನ ಬಾರದೆ ನೌಕರರ ಜೀವನ ನಿರ್ವಾಹಣೆ ಕಷ್ಟಕರವಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನೆ ಇಲ್ಲದಂತಾಗಿದೆ. ಆದ್ದರಿಂದ ಅನಿವಾರ್ಯವಾಗಿ ಧರಣಿ ಮಾಡಬೇಕಾಯಿತು. ಕೂಡಲೇ ಅಧಿಕಾರಿಗಳು ಹೊರಗುತ್ತಿಗೆ ನೌಕರರ ಸಂಕಷ್ಟವನ್ನಾಲಿಸಿ, ವೇತನ ಜಾರಿ ಮಾಡಬೇಕು. ಭವಿಷ್ಯ ನಿಧಿ, ಇಎಸ್ಐ ಕಟ್ಟಬೇಕು. ನಾಲ್ಕೈದು ದಿನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುನಿರಾಬಾದ್ನ ಮುಖ್ಯ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹೆಚ್.ಜಡೆಮೂರ್ತಿ, ಪದಾಧಿಕಾರಿಗಳಾದ ಎಂ.ಜಡೆಪ್ಪ, ಡಿ.ಸೋಮೇಶ್, ಗಂಗಯ್ಯಸ್ವಾಮಿ, ಯರ್ರೆಪ್ಪ, ಹೆಚ್.ಗಾದೆಪ್ಪ, ಸುಂದರರಾಜ್, ಸಿ.ಡಿ.ಜಡೇಶ, ಹನುಮನಾಯಕ, ವಿರುಪಣ್ಣ, ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ
ಮಂಗಳೂರು : ಬಹರೈನ್ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಮೊದಲ ಬಾರಿ ನೀಡಿದ ಪ್ರತಿಷ್ಠಿತ ' ಸಹಕಾರಿ ಸಾರ್ವಭೌಮ’ ಪ್ರಶಸ್ತಿ ಹಾಗೂ ಕರ್ನಾಟಕ ಮಾಧ್ಯಮ ಸಹಕಾರ ಹಾಗೂ ದಿ.ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಬೆಂಗಳೂರು ಇದರ ವತಿಯಿಂದ ನೀಡಲಾದ ಪ್ರತಿಷ್ಠಿತ ' ವಿಶ್ವ ಜಾಗತಿಕ ಪ್ರಭಾವಿ ನಾಯಕತ್ವ ಶ್ರೇಷ್ಠತಾ ಪ್ರಶಸ್ತಿ' ಯನ್ನು ಸ್ವೀಕರಿಸಿರುವ ಎಸ್ಸಿಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಸಹಕಾರ ರತ್ನ ಡಾ..ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಶುಕ್ರವಾರ ಎಸ್ಸಿಡಿಸಿಸಿ ಬ್ಯಾಂಕ್ ನಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಭಿವೃದ್ಧಿಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನವನ್ನು ಸಂಘದ ಅಧ್ಯಕ್ಷರಾದ ನವೀನ್ ಅಡ್ಯಂತಾಯ ಅವರು ಸ್ಮರಿಸಿದರು. ಈ ಸಂದರ್ಭದಲ್ಲಿ ಎಸ್ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ದಕ್ಷಿಣ ಕನ್ನಡ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್., ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಬೆಳಂಜೆ ಹರೀಶ್ ಪೂಜಾರಿ, ನಿರ್ದೇಶಕರಾದ ಪುಟ್ಟಣ್ಣ ಭಟ್ , ರಾಘವೇಂದ್ರ ನಾಯ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೀನ ನಾಯ್ಕ ಉಪಸ್ಥಿತರಿದ್ದರು.
ಉಡುಪಿ | ಮಾನವಹಕ್ಕುಗಳ ಅರಿವು ಅತಿ ಅಗತ್ಯ : ಪ್ರಶಾಂತ್ ನೀಲಾವರ
ಉಡುಪಿ, ಡಿ.12: ಮಾನವ ಹಕ್ಕುಗಳ ಹೋರಾಟಕ್ಕೆ ಒಂದು ಇತಿಹಾಸವಿದೆ. ಜಗತ್ತಿನ ಪ್ರತಿಯೊಬ್ಬ ಮನುಷ್ಯನಿಗೆ ಗೌರವಯುತವಾಗಿ ಬದುಕುವ ಹಕ್ಕು ಇದೆ. ಇದನ್ನೇ ನಮ್ಮ ಸಂವಿಧಾನದ ತತ್ವಗಳು ಪ್ರತಿಪಾದಿಸುತ್ತದೆ. ಈ ದೃಷ್ಟಿಯಿಂದ ಮಾನವಹಕ್ಕುಗಳ ಕುರಿತಾಗಿ ಅರಿವು ಮೂಡಿಸುವುದು ಅತಿ ಅಗತ್ಯ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ನೀಲಾವರ ಹೇಳಿದ್ದಾರೆ. ಭಾರತೀಯ ರೆಡ್ ಕ್ರಾಸ್ ವತಿಯಿಂದ ವಿಶ್ವ ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯ ರೆಡ್ ಕ್ರಾಸ್ ಸಭಾಪತಿಗಳಾದ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಚಟುವಟಿಕೆಗಳು ಮಾನವ ಹಕ್ಕುಗಳ ಹೋರಾಟದ ಒಂದು ಭಾಗ ಎಂದು ಹೇಳಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಗೋಪಾಲಕೃಷ್ಣ ಎಂ.ಗಾಂವ್ಕರ್ ವಹಿಸಿದ್ದರು. ರೆಡ್ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಟಿ.ಚಂದ್ರಶೇಖರ್, ಐಕ್ಯುಎಸಿ ಸಂಚಾಲಕಿ ರೋಶನಿ ಯಶವಂತ್, ರೆಡ್ ಕ್ರಾಸ್ ಸಂಚಾಲಕ ಡಾ.ರಾಘವ ನಾಯಕ್ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಪ್ರಾಸ್ತಾವಿಕವಾಗಿ ಮಾತಾನಾಡಿದರು. ಅಕ್ಷತಾ ಸ್ವಾಗತಿಸಿದರು. ಶಪಾ ವಂದಿಸಿದರು. ಮನೀಷ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಾವರ | ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ
ಬ್ರಹ್ಮಾವರ, ಡಿ.12: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ವತಿಯಿಂದ ಕೊಡಮಾಡುವ ಮುಂಗಾರು ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ವಡ್ಡರ್ಸೆ ಅವರ ಒಡನಾಡಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ. ಕಳೆದ 9 ವರ್ಷಗಳಿಂದ ನಾಡಿನ ಗಣ್ಯ ಪತ್ರಕರ್ತರಿಗೆ ಬ್ರಹ್ಮಾವರ ಪತ್ರಕರ್ತರ ಸಂಘ ಈ ಪ್ರಶಸ್ತಿ ನೀಡುತ್ತ ಬಂದಿದ್ದು, 2025ನೇ ಸಾಲಿನ ಪ್ರಶಸ್ತಿಗೆ ಬೈಕಂಪಾಡಿಯವರನ್ನು ಆಯ್ಕೆ ಮಾಡಿದೆ ಹಾಗೂ 2025 ಡಿ.27ರಂದು ಶನಿವಾರ ಸಂಜೆ ಬ್ರಹ್ಮಾವರ ಬಂಟರ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಬೈಕಂಪಾಡಿಯವರು ವಡ್ಡರ್ಸೆಯವರ ಒಡನಾಡಿಯಾಗಿ ಹತ್ತು ವರ್ಷ ಕಾಲ ಮುಂಗಾರು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ಅವರ ಆಶಯಗಳಿಗೆ ಜೀವ ತುಂಬಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಮೃತ ವಾರಪತ್ರಿಕೆಯಲ್ಲಿ 2 ವರ್ಷ, ದಿವ್ಯವಾಣಿ ವಾರಪತ್ರಿಕೆಯಲ್ಲಿ 3 ವರ್ಷ, ಮುಂಗಾರು ದಿನಪ್ರತಿಕೆ 10 ವರ್ಷ ಮುಖ್ಯ ವರದಿಗಾರರಾಗಿ, ಕನ್ನಡಪ್ರಭ ದಿನಪ್ರತಿಕೆಯಲ್ಲಿ 15 ವರ್ಷ ಪ್ರಧಾನ ವರದಿಗಾರರಾಗಿ ’ಬಿಂಬದ್ವನಿ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಹೀಗೆ ಹತ್ತು ಹಲವು ಮಜಲುಗಳಲ್ಲಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಮುಂಗಾರು ಎನ್ನುವ ಪತ್ರಿಕೋದ್ಯಮದ ಕುರಿತ ಪುಸ್ತಕ, ಪ.ಗೋ ಪ್ರಪಂಚ - ಪತ್ರಿಕೋದ್ಯಮ ಕುರಿತ ಪುಸ್ತಕ, ರಾಜಕೀಯ ಒಳಸುಳಿಗಳು ಲೇಖನಗಳು ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹಲವು ಕೃತಿ ಹೊರತಂದಿದ್ದಾರೆ. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದ ಇವರ ಸಾಧನೆ ಪರಿಗಣಿಸಿ ವಡ್ಡರ್ಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕಿರಣ್ ತುಂಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಡಿ.13ರಂದು ಉಡುಪಿ ಜಿಲ್ಲಾ ಪ್ರಚಾರ ಸಭೆ
ಪಡುಬಿದ್ರೆ, ಡಿ.12: ಸಮಸ್ತ ಶತಮಾನೋತ್ಸವ ಅಂತರ್ ರಾಷ್ಟ್ರೀಯ ಸಮ್ಮೇಳನದಲ್ಲಿ ಉಡುಪಿ ಜಿಲ್ಲಾ ಪ್ರಚಾರ ಸಭೆ ಡಿ.13ರಂದು ಸಂಜೆ ಎರ್ಮಾಲ್ ಜಾಮಿಯಾ ಮಸೀದಿ ವಠಾರದಲ್ಲಿ ನಡೆಯಲಿದೆ. ಸಮಸ್ತ ಕೇಂದ್ರೀಯ ಸಮಿತಿ ಸದಸ್ಯ ಹಾಗೂ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಸಯ್ಯದ್ ಝಯ್ ನುಲ್ ಅಬಿದೀನ್ ಜಿಫ್ರಿ ತಂಳ್, ಸಮಸ್ತ ಮುಷಾವರ ಕೇಂದ್ರೀಯ ಸದಸ್ಯರಾದ ಉಸ್ಮಾನ್ ಫೈಝಿ ತೋಡಾರ್, ಬಿ.ಕೆ.ಅಬ್ದುಲ್ ಖಾದರ್ ಖಾಸಿಮಿ, ಉಮರ್ ಮುಸ್ಲಿಯಾರ್ ಕೊಯ್ಯೋಡ್, ಆಝ್ಹರ್ ಫೈಝಿ ಬೊಳ್ಳೂರ್ ಉಸ್ತಾದ್, ಮುಫ್ತಿ ರಫೀಕ್ ಹುದವಿ ಕೋಲಾರಿ, ಯು.ಕೆ.ಅಬ್ದುಲ್ ಅಝೀಜ್ ದಾರಿಮಿ, ಸ್ವಲಾಹುದ್ದೀನ್ ಫೈಝಿ, ಇಸಾಕ್ ಫೈಝಿ, ಸೇರಿದಂತೆ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಕಳ | ಮುಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿ
ಕಾರ್ಕಳ: ಚಿರಾಯು ಕನ್ನಡ ಟಿವಿ, ನೆನಪು ಫೌಂಡೇಶನ್ (ರಿ.), ಕರ್ನಾಟಕ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಸಾಧಕರಿಗೆ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಮಾಜ ಸೇವಕ ಮುಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿಗೆ ನೀಡಿ ಗೌರವಿಸಲಾಗುವುದು. ಕನ್ನಡ ನಾಡು–ನುಡಿ, ಸಂಸ್ಕೃತಿ, ಸಾಹಿತ್ಯ, ಮಾಧ್ಯಮ, ಶಿಕ್ಷಣ, ಧಾರ್ಮಿಕ, ಕಲೆ ಹಾಗೂ ಸಮಾಜ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಇವರಿಗೆ ರವಿವಾರ ಅಂಗವಾಗಿ ಡಿ.14 ರಂದು ಗೋವಾದ ಮಡಗಾಂವ್ ನಲ್ಲಿ ಮಡಗಾಂವಿನ ರವೀಂದ್ರ ಭವನದಲ್ಲಿ ಭವ್ಯ ಕಾರ್ಯಕ್ರಮದಲ್ಲಿ ತಮ್ಮ ದೀರ್ಘಕಾಲದ ಪತ್ರಕರ್ತ ಸೇವೆ, ಸಾಮಾಜಿಕ ಚಟುವಟಿಕೆಗಳಲ್ಲಿ ನೀಡಿರುವ ಕೊಡುಗೆ ಹಾಗೂ ಸ್ಥಳೀಯ–ಪ್ರಾದೇಶಿಕ ವಿಚಾರಗಳನ್ನು ಜವಾಬ್ದಾರಿಯುತವಾಗಿ ಸಮಾಜದ ಮುಂದೆ ತಂದುಕೊಟ್ಟ ಸೇವೆಯನ್ನು ಪರಿಗಣಿಸಿ ಆಯೋಜಕರು ಪ್ರಶಸ್ತಿಯನ್ನು ಪ್ರಧಾನ ಮಾಡಲಿರುವರು ಎಂದು ಆಯೋಜಕರಾದ ಚಿರಾಯು ಕನ್ನಡ ಟಿವಿ ಸಂಸ್ಥಾಪಕರಾದ ಡಾ. ಮಂಜುನಾಥ್ ಶಿವಕ್ಕನವರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಅಪ್ಪಾಜಿ ಸುಕ್ಷೇತ್ರ ಮಹಲ್ ರೋಜ್, ಪ.ಪೂ.ಶ್ರೀ ಡಾ.ವಿದ್ಯಾನಂದ ಮಹಾಸ್ವಾಮಿಗಳು ಕಣವಿ ಹೊನ್ನಾಪುರ ಸಮ್ಮೇಳನಾಧ್ಯಕ್ಷ ಇಲ್ಯಾಸ್ ಇಬ್ರಾಹಿಂಸಾಬ್, ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯಅಧಿಕ್ಷಕರಾದ ಡಾ. ಅನಿತಾ ಆರ್., ರೇಣುಕಾ ಟ್ರ್ಯಾಕ್ಟರ್ಸ್ ಸ್ವರಾಜ್ ಕಂಪನಿ ಮಾಲಕ ಯುವ ಉದ್ಯಮಿ ವಾಯ್.ಎನ್.ಪಲ್ಲೇದ, ದಕ್ಷಿಣ ಗೋವಾ ಸಾಲಸೆಟ್ ತಾಲೂಕು ಕ.ಸಾ.ಪ. ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಸಾಮಾಜಿಕ ಹೋರಾಟಗಾರ್ತಿ ಪುಷ್ಪಾ ರಾಮಚಂದ್ರ ಕರಿಭೀಮಗೋಳ, ಬೆಂಗಳೂರು ಸಾಹಿತಿ ಡಾ. ಮಂಜುಳಾ ಶಂಕರ ಶಿರೂರ, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ(ರಿ) ಸಂಸ್ಥಾಪಕಿ, ಚೇತನ ಶಿವಕುಮಾರ್, ಸಿಂಧನೂರ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಭಾರತ್ ಸೈಟ್ ಗೈಡ್ಸ್ ಸಂಘಟನೆ, ಮುಖ್ಯಸ್ಥ ಬೀರಪ್ಪ ಶಂಭೋಜಿ, ಲೇಖಕಿ, ಛಾಯಾಗ್ರಾಹಕಿ ಕವಿತಾ ಗೋಪಾಲ್ ಚಿಕ್ಕಮಗಳೂರು, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರೀಟಾ ಎಮ್. ಡಿಸೋಜಾ, ಹುಬ್ಬಳ್ಳಿ ಆಯ್.ಬಿ.ಎಂ.ಆರ್. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿ.ಜಿ.ಪಾಟೀಲ, ಹುಬ್ಬಳ್ಳಿ ಶ್ರೇಯಾ ಜನಸೇವಾ ಪೌಂಡೇಶನ್ ಟ್ರಸ್ಟ್(ರಿ) ರಾಜ್ಯಾದ್ಯಕ್ಷ ಡಾ.ಆರ್. ನಾರಾಯಣಸ್ವಾಮಿ, ರಿಪಬ್ಲಿಕ್ ಕನ್ನಡ ಟಿ.ವಿ. ದಾವಣಗೆರೆ ಜಿಲ್ಲಾ ವರದಿಗಾರ ವಿಠಲ್ ಕ್ಯಾರವಾಡ, ಹಿರಿಯ ಪತ್ರಕರ್ತ ಚಿಗಟೇರಿ ಕೋಟ್ರೇಶಿ ಕೊಟ್ಟೂರು ಭಾಗವಹಿಸಲಿದ್ದಾರೆ
ಕಲಬುರಗಿ| ಕಾರು- ಜೀಪ್ ಮಧ್ಯೆ ಭೀಕರ ಅಪಘಾತ; ಓರ್ವ ಮೃತ್ಯು, 6 ಜನರಿಗೆ ಗಾಯ
ಕಲಬುರಗಿ: ಕಾರು ಮತ್ತು ಜೀಪ್ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹರಳಯ್ಯ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದವರು ಸೇಡಂನಿಂದ ಕಲಬುರಗಿಗೆ ತೆರಳುತ್ತಿದ್ದರು. ಜೀಪ್ನಲ್ಲಿದ್ದವರು ಕಲಬುರಗಿಯಿಂದ ಮಳಖೇಡ್ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮಾಡಬೂಳ ಪಿಎಸ್ಐಗಳಾದ ಗೌತಮ್, ಸಿದ್ಧಲಿಂಗ, ಪಿ.ಎಸ್ ವನಂಜಕರ್, ಸಿಬ್ಬಂದಿ ವೀರಶೆಟ್ಟಿ, ಪ್ರೇಮ್, ಕೊಟ್ರೇಶ, ಚಂದ್ರಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ 2 ಲಕ್ಷ ಮೌಲ್ಯದ ಅಪರೂಪದ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಉದ್ಯಮಿ
ಬೆಂಗಳೂರಿನ ಗಿರಿನಗರದಲ್ಲಿ ಹೃದಯ ವಿದ್ರಾವಕ ಘಟನೆನಡೆದಿದೆ. ಅಪರೂಪದ ಗಿಳಿಯೊಂದನ್ನು ರಕ್ಷಣೆ ಮಾಡಲು ಹೋಗಿ ಕರೆಂಟ್ ಶಾಕ್ ಹೊಡೆದು ಉದ್ಯಮಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮಂಡ್ಯದವರಾದ ಇವರು ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಅವರ ಚಿಕ್ಕಮ್ಮ ಖರೀದಿಸಿದ ಗಿಳಿ ಹೈಟೆನ್ಷನ್ ವೈರ್ ಮೇಲೆ ಕುಳಿತ್ತಿತ್ತು. ಅದನ್ನು ರಕ್ಷಣೆ ಮಾಡಲು ಹೋದಾಗ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕ್ಯಾರೆ ಎನ್ನದೆ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಕೋಲಾರ, ಬೀದರ್ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ
ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ಪರಿಶೀಲನೆ
ಉಡುಪಿ | ‘ಅನ್ವೇಷಣಮ್’ ಕಾಮರ್ಸ್ ಫೆಸ್ಟ್: ಹಿರಿಯಡ್ಕ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಉಡುಪಿ, ಡಿ.12: ಬದುಕಿನ ಸವಾಲುಗಳನ್ನು ಅವಕಾಶಗಳಾಗಿ ಸ್ವಾಗತಿಸುತ್ತ ಉತ್ಸಾಹದ ಜೊತೆಗೆ ತಿಳುವಳಿಕೆಯನ್ನೂ ವರ್ಧಿಸಿಕೊಳ್ಳುವ ಮೂಲಕ ಸದಾ ಚಲನೆಯಲ್ಲಿರಬೇಕು ಎಂದು ಶಿಕ್ಷಣ ತಜ್ಞ ಎನ್.ಶೆಟ್ಟಿ ಹೇಳಿದ್ದಾರೆ. ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಘಟಕ ಮತ್ತು ವಾಣಿಜ್ಯ ವಿಭಾಗಗಳ ವತಿಯಿಂದ ವಾಣಿಜ್ಯ ಸಂಘ ಹಾಗೂ ಕಾಮರ್ಸ್ ಫೆಸ್ಟ್ ಭಾಗವಾದ ‘ಅನ್ವೇಷಣಮ್’ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ವಹಿಸಿದ್ದರು. ಮಾಹೆಯ ಮಣಿಪಾಲ ಸ್ಕೂಲ್ ಆಫ್ ಕಾರ್ಮಸ್ ಮತ್ತು ಎಕಾನಾಮಿಕ್ಸ್ ನ ಸಹಾಯಕ ಪ್ರಾಧ್ಯಾಪಕ ಡಾ.ಸಂಕೇಚ್ ಲೇಡ್ವಾನಿ, ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾರ್ತಿ ಪೂರ್ಣಿಮಾ ಎಸ್. ಮುಖ್ಯ ಅತಿಥಿಗಳಾಗಿದ್ದರು. ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಾಣಿಜ್ಯಕೋಶದ ಅಧ್ಯಾಪಕ ಸಲಹೆಗಾರ ನಂದೀಶ್ ಕುಮಾರ್ ಸಿ. ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ.ಸೌಮ್ಯಲತಾ ಪಿ. ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ನಿಶ್ಚಿತ ಎಸ್.ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪರ್ಣ ಕೆ.ಯು. ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಿದ್ಧನಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅಭಿನಂದನ್ ಮಾತನಾಡಿದರು. ವಸಂತ ಶೆಟ್ಟಿ ಚಿನ್ನಿಬೆಟ್ಟು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ವಿದ್ಯಾರ್ಥಿನಿ ಪಲ್ಲವಿ ಸ್ವಾಗತಿಸಿದರು. ವಿಘ್ನೇಶ್ ವಂದಿಸಿದರು. ಹಿರಿಯಡಕ ಸರಕಾರಿ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಬೈಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ದ್ವಿತೀಯ ಸ್ಥಾನ ಪಡೆಯಿತು.
Zubeen Garg ಮೃತ್ಯು ಪ್ರಕರಣ | 3,500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ, ನಾಲ್ವರ ವಿರುದ್ಧ ಕೊಲೆ ಆರೋಪ
ಗುವಾಹಟಿ,ಡಿ.12: ಖ್ಯಾತ ಗಾಯಕ Zubeen Garg ಅವರ ಸಾವಿನ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಅಸ್ಸಾಂ ಸಿಐಡಿಯ ವಿಶೇಷ ತನಿಖಾ ತಂಡವು (ಸಿಟ್) ಶುಕ್ರವಾರ ಇಲ್ಲಿಯ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ನಾಲ್ವರನ್ನು ಕೊಲೆ ಆರೋಪಿಗಳೆಂದು ಹೆಸರಿಸಲಾಗಿದೆ. ಸಿಐಡಿಯ ವಿಶೇಷ ಡಿಐಜಿ ಮುನ್ನಾ ಪ್ರಸಾದ ಗುಪ್ತಾ ನೇತೃತ್ವದ ಸಿಟ್ ಚೀಫ್ ಜ್ಯುಡಿಷಿಯಲ್ ಮಾಜಿಸ್ಟ್ರೇಟ್, ಕಾಮರೂಪ (ಮೆಟ್ರೋ) ಅವರ ನ್ಯಾಯಾಲಯದಲ್ಲಿ 3,500ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಮತ್ತು ಸಂಬಂಧಿತ ದಾಖಲೆಗಳನ್ನು ಸಲ್ಲಿಸಿತು. ಅವುಗಳನು ನಾಲ್ಕು ಟ್ರಂಕ್ಗಳಲ್ಲಿ ನ್ಯಾಯಾಲಯಕ್ಕೆ ತರಲಾಗಿತ್ತು. ಜುಬೀನ್ ಅವರ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ, ಸಿಂಗಾಪುರದಲ್ಲಿ ಈಶಾನ್ಯ ಭಾರತ ಉತ್ಸವವನ್ನು ಆಯೋಜಿಸಿದ್ದ ಶ್ಯಾಮಕಾನು ಮಹಂತ,ಅವರ ಇಬ್ಬರು ಬ್ಯಾಂಡ್ ಸದಸ್ಯರಾದ ಶೇಖರ ಗೋಸ್ವಾಮಿ ಮತ್ತು ಅಮ್ರತಪ್ರಭಾ ಮಹಂತ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿದೆ. Zubeen Garg ಸೋದರ ಸಂಬಂಧಿ ಹಾಗೂ ಪೋಲಿಸ್ ಅಧಿಕಾರಿ ಸಾಂದೀಪನ್ ಗರ್ಗ್ ಅವರನ್ನು ಬಿಎನ್ಎಸ್ನ ಕಲಂ 105ರಡಿ (ಕೊಲೆಯಲ್ಲದ ನರಹತ್ಯೆ) ಆರೋಪಿಯನ್ನಾಗಿ ಮಾಡಲಾಗಿದೆ. ಶರ್ಮಾ, ಮಹಂತ ಹಾಗೂ Zubeen Garg ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳಾದ ನಂದೇಶ್ವರ ಬೋರಾ ಮತ್ತು ಪರೇಶ ಬೈಶಿಯಾ ವಿರುದ್ಧ ನಂಬಿಕೆ ದ್ರೋಹದ ಆರೋಪವನ್ನೂ ಹೊರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿರುವ ಸಿಟ್, Zubeen Garg ಕುಟುಂಬ ಸದಸ್ಯರು, ಸ್ನೇಹಿತರು, ಬ್ಯಾಂಡ್ ಸದಸ್ಯರು, ಅಭಿಮಾನಿಗಳು, ಸಿಂಗಾಪುರದಲ್ಲಿರುವ ಅಸ್ಸಾಮಿ ಎನ್ಆರ್ಐಗಳು ಮತ್ತು ಇತರರನ್ನು ತನಿಖೆ ಸಂದರ್ಭದಲ್ಲಿ ವಿಚಾರಣೆ ನಡೆಸಿತ್ತು.
ಅಕ್ರಮ ಕೆಮ್ಮಿನ ಸಿರಪ್ ಪ್ರಕರಣ | ಮೂರು ರಾಜ್ಯಗಳ 25 ಸ್ಥಳಗಳಲ್ಲಿ ED ದಾಳಿ
ಹೊಸದಿಲ್ಲಿ,ಡಿ.12: ಕೋಡಿನ್ ಆಧಾರಿತ ಕೆಮ್ಮಿನ ಸಿರಪ್ನ ತಯಾರಿಕೆ ಮತ್ತು ಮಾರಾಟದ ಬೃಹತ್ ಅಕ್ರಮ ಜಾಲಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Ed) ಶುಕ್ರವಾರ ಉತ್ತರ ಪ್ರದೇಶ,bಜಾರ್ಖಂಡ್ ಮತ್ತು ಗುಜರಾತ್ ರಾಜ್ಯಗಳ ಆರು ನಗರಗಳಲ್ಲಿಯ 25 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿಗಳನ್ನು ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದರು. ಲಕ್ನೋದಲ್ಲಿ ಅಮಾನತುಗೊಂಡಿರುವ ಪೋಲಿಸ್ ಕಾನ್ಸ್ಟೇಬಲ್ ಮತ್ತು ಇತರ ನಾಲ್ವರ ನಿವಾಸಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆ. ಇದೇ ವೇಳೆ ದುಬೈನಿಂದ ಈ ಜಾಲವನ್ನು ನಿರ್ವಹಿಸುತ್ತಿದ್ದಾನೆ ಎನ್ನಲಾಗಿರುವ ಪ್ರಮುಖ ರೂವಾರಿ ಶುಭಂ ಜೈಸ್ವಾಲ್ ಗೆ ಸೇರಿದ ವಾರಣಾಸಿಯಲ್ಲಿನ ಎರಡು ಮನೆಗಳ ಮೇಲೂ ದಾಳಿಗಳು ನಡೆದಿವೆ. ರಾಂಚಿ ಮತ್ತು ಅಹ್ಮದಾಬಾದ್ನಲ್ಲಿ ಅಬಟ್ ಫಾರ್ಮಾಸ್ಯುಟಿಕಲ್ಸ್,ಇತರ ಹಲವಾರು ಸಂಸ್ಥೆಗಳು ಮತ್ತು ಎರಡು ಪ್ರಮುಖ ಔಷಧಿ ತಯಾರಿಕೆ ಕಂಪನಿಗಳ ಕಚೇರಿಗಳ ಮೇಲೂ ದಾಳಿಗಳನ್ನು ನಡೆಸಲಾಗಿದೆ. ಸಹಾರನ್ ಪುರ ಮತ್ತು ಘಾಝಿಯಾಬಾದ್ನಲ್ಲೂ ದಾಳಿಗಳು ನಡೆದಿವೆ. ದಾಳಿ ಸಂದರ್ಭ ಹಲವಾರು ದಾಖಲೆಗಳು, ಮೊಬೈಲ್ ಫೋನ್ಗಳು ಮತ್ತು ಹಲವಾರು ಕಡತಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 2024,ಫೆಬ್ರವರಿಯಲ್ಲಿ ಲಕ್ನೋದಲ್ಲಿ ಭಾರೀ ಪ್ರಮಾಣದಲ್ಲಿ ಕಾನೂನುಬಾಹಿರ ಫೆನ್ಸೆಡಿಲ್ ಕೆಮ್ಮಿನ ಸಿರಪ್ನ್ನು ವಶಪಡಿಸಿಕೊಂಡಾಗ ಈ ಅಕ್ರಮ ಜಾಲವು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯು ತನಿಖೆಯ ಸಂದರ್ಭ ವಿಭೋರ ರಾಣಾ ಮತ್ತು ವಿಶಾಲ ರಾಣಾ ಎನ್ನುವವರನ್ನು ಬಂಧಿಸಿದ್ದು,ವಿಚಾರಣೆ ಸಮಯದಲ್ಲಿ ಬೃಹತ್ ಜಾಲದ ಸ್ವರೂಪವನ್ನು ಅವರು ಬಹಿರಂಗಗೊಳಿಸಿದ್ದರು. ಈ ವೇಳೆ ವಾರಣಾಸಿ ನಿವಾಸಿ ಶುಭಂ ಜೈಸ್ವಾಲ್ ಹೆಸರು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ತನಿಖೆ ಮುಂದುವರಿದಂತೆ ನ.27ರಂದು ಉ.ಪ್ರ.ಪೋಲಿಸ್ ಕಾನ್ಸ್ಟೇಬಲ್ ಅಲೋಕ ಸಿಂಗ್ ಮತ್ತು ಡಿ.2ರಂದು ಅಮಿತ್ ‘ಟಾಟಾ’ರನ್ನು ಬಂಧಿಸಿದ ಬಳಿಕ ಅಕ್ರಮ ದಂಧೆಯ ಪೂರ್ಣ ಪ್ರಮಾಣ ಬಹಿರಂಗಗೊಂಡಿತ್ತು. ಡಿ.1ರಂದು ED ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಕಳೆದ ಐದು ದಿನಗಳಿಂದ ED ಜೈಸ್ವಾಲ್, ಸಿಂಗ್, ವಿಭೋರ ರಾಣಾ, ವಿಶಾಲ ರಾಣಾ, ಅಮಿತ್ ಟಾಟಾ ಸೇರಿದಂತೆ 20ಕ್ಕೂ ಅಧಿಕ ಆರೋಪಿಗಳಿಗೆ ಸಂಬಂಧಿಸಿದ 80ಕ್ಕೂ ಹೆಚ್ಚಿನ ಸಂಸ್ಥೆಗಳ ವಿವರಗಳನ್ನು ಪರಿಶೀಲಿಸುತ್ತಿದೆ.
ಉಡುಪಿ | ಬಜೆಟ್ ತಯಾರಿ: ಸಲಹೆ ಸೂಚನೆಗೆ ಆಹ್ವಾನ
ಉಡುಪಿ, ಡಿ.12: ಕರ್ನಾಟಕ ಪುರಸಭಾ ಲೆಕ್ಕಪತ್ರ ಮತ್ತು ಬಜೆಟ್ ನಿಯಮ 2006ರನ್ವಯ ಉಡುಪಿ ನಗರಸಭೆಯ 2026-27ನೇ ಸಾಲಿನ ಬಜೆಟ್ ತಯಾರಿಯ ಬಗ್ಗೆ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಅವಶ್ಯಕ ಅಭಿವೃದ್ಧಿ ಕೆಲಸ ಕಾರ್ಯಗಳ ವಿಚಾರ ವಿನಿಮಯಗಳ ಕುರಿತು ಹಾಗೂ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಮೊದಲನೇ ಸುತ್ತಿನ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯು ಡಿ.17ರಂದು ಬೆಳಗ್ಗೆ 11 ಗಂಟೆಗೆ ನಗರಸಭೆಯ ಸಭಾಂಗಣದಲ್ಲಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Patanjali foods ಮೆಣಸಿನ ಹುಡಿಯ ಸ್ಯಾಂಪಲ್ ಡೇಂಜರ್: ಕೇಂದ್ರ ಸರಕಾರ
ಹೊಸದಿಲ್ಲಿ,ಡಿ.12: ಯುಗ ಗುರು ರಾಮದೇವ್ ಅವರ ಉತ್ತರಾಖಂಡ ಮೂಲದ ಪತಂಜಲಿ ಫುಡ್ಸ್ ತಯಾರಿಸಿರುವ ಮೆಣಸಿನ ಹುಡಿಯ ಸ್ಯಾಂಪಲ್ನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ ಎಂದು ಕೇಂದ್ರವು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದೆ. 2024-25ರಲ್ಲಿ ಮಸಾಲೆಗಳ ಸ್ಯಾಂಪಲ್ ಗಳನ್ನು ತಪಾಸಣೆಗೊಳಪಡಿಸಿದ ಸಂದರ್ಭ ಪತಂಜಲಿ ಫುಡ್ಸ್ ನಿಂದ ಸಂಗ್ರಹಿಸಲಾಗಿದ್ದ ಮೆಣಸಿನ ಹುಡಿಯ ಸ್ಯಾಂಪಲ್ನಲ್ಲಿ ಕೀಟನಾಶಕ ಅವಶೇಷ ಮಟ್ಟವು ಅನುಮತಿಸಲಾದ ಮಿತಿಗಿಂತ ಹೆಚ್ಚಿರುವುದು ಪತ್ತೆಯಾಗಿದ್ದು,ಅದನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ ಎಂದು ಸಹಾಯಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರತಾಪರಾವ್ ಜಾಧವ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು. ಪರೀಕ್ಷಾ ಫಲಿತಾಂಶಗಳ ಆಧಾರದಲ್ಲಿ ಸಂಬಂಧಿತ ಪ್ರಾಧಿಕಾರದ ಆದೇಶದ ಮೇರೆಗೆ ಪತಂಜಲಿ ಅಸುರಕ್ಷಿತ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂದೆಗೆದುಕೊಳ್ಳುತ್ತಿದೆ ಎಂದರು. ಅಮುಲ್ ಬ್ರ್ಯಾಂಡ್ನ ಉತ್ಪಾದನೆಗಳ ಯಾವುದೇ ಸ್ಯಾಂಪಲ್ಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳಡಿ ಅಸುರಕ್ಷಿತವಾಗಿರುವುದು ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು. ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಗುಣಮಟ್ಟ ಪರೀಕ್ಷಿತ ಮತ್ತು ಸುರಕ್ಷಿತ ಆಹಾರ ಉತ್ಪನ್ನಗಳು ಮಾತ್ರ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾನವ ಬಳಕೆಗೆ ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳಲು ಆಹಾರ ಉತ್ಪನ್ನಗಳಿಗೆ ವಿಜ್ಞಾನ ಆಧಾರಿತ ಗುಣಮಟ್ಟವನ್ನು ನಿಗದಿಗೊಳಿಸುವಂತೆ ಹಾಗೂ ಅವುಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಆಮದನ್ನು ನಿಯಂತ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಆದೇಶಿಸಲಾಗಿದೆ ಎಂದು ತಿಳಿಸಿದರು. 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಕಾಯ್ದೆಯ ಅನುಷ್ಠಾನವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹೊಣೆಗಾರಿಕೆಯಾಗಿದೆ. 2006ರ ಎಫ್ಎಸ್ಎಸ್ ಕಾಯ್ದೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳ ಅಡಿ ನಿಗದಿತ ಮಾನದಂಡಗಳು,ಮಿತಿಗಳು ಮತ್ತು ಇತರ ಶಾಸನಬದ್ಧ ಅಗತ್ಯಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಎಫ್ಎಸ್ಎಸ್ಎಐ ಮತ್ತು ಅದರ ಪ್ರಾದೇಶಿಕ ಕಚೇರಿಗಳು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಪ್ರಾಧಿಕಾರಗಳ ಮೂಲಕ ವರ್ಷವಿಡೀ ನಿಯಮಿತವಾಗಿ ತಪಾಸಣೆ ಮತ್ತು ಕಣ್ಗಾವಲು ಅಭಿಯಾನಗಳನ್ನು ನಡೆಸುತ್ತವೆ ಎಂದು ಜಾಧವ ತಿಳಿಸಿದರು. ಎಫ್ಎಸ್ಎಸ್ಆರ್ ಉಲ್ಲಂಘನೆಗಳು ಕಂಡುಬಂದರೆ ತಯಾರಕರ ವಿರುದ್ಧ 2006ರ ಕಾಯ್ದೆ ಮತ್ತು ಸಂಬಂಧಿತ ನಿಯಮಗಳಡಿ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದರು.
2027ರ ಜನಗಣತಿಗೆ 11,718 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರ ಸಂಪುಟ ಅಸ್ತು
ಹೊಸದಿಲ್ಲಿ,ಡಿ.12: 2027ನೇ ಸಾಲಿನ ಜನಗಣತಿ ಕಾರ್ಯಕ್ಕೆ ಕೇಂದ್ರ ಸಂಪುಟವು ಶುಕ್ರವಾರ 11,718 ಕೋಟಿ ರೂ.ಗಳ ಬಜೆಟ್ ಅನುದಾನ ಬಿಡುಗಡೆಗೆ ತನ್ನ ಅನುಮೋದನೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 2027ರ ಸಾಲಿನ ಜನಗಣತಿಯು ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಹಾಗೂ ಅಂಕಿಅಂಶ ಸಂಗ್ರಹ ಪ್ರಕ್ರಿಯೆ ಎಂದು ವೈಷ್ಣವ್ ತಿಳಿಸಿದರು. ಇದು ದೇಶದಲ್ಲಿ ನಡೆಯುವ 16ನೇ ಹಾಗೂ ಸ್ವಾತಂತ್ರ್ಯಾನಂತರದ 8ನೇ ಜನಗಣತಿಯಾಗಿದೆ ಎಂದರು. 10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತದೆ. ಕೋವಿಡ್ ಕಾರಣಕ್ಕೆ ಈ ಬಾರಿ ವಿಳಂಬವಾಗಿತ್ತು. ಈ ಬಾರಿ ನಡೆಯುವ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಮೊದಲ ಹಂತದಲ್ಲಿ ಮನೆಗಳನ್ನು ಪಟ್ಟಿ ಮಾಡುವ ಹಾಗೂ ಮನೆಗಳನ್ನು ಗಣತಿ ಮಾಡುವ ಕಾರ್ಯವನ್ನು 2026ರ ಏಪ್ರಿಲ್ ಹಾಗೂ ಸೆಪ್ಟೆಂಬರ್ ತಿಂಗಳ ನಡುವೆ ನಡೆಸಲಾಗುವುದು. ಎರಡನೇ ಹಂತದಲ್ಲಿ ನಡೆಸಲಾಗುವ ಜನಸಂಖ್ಯಾ ಗಣತಿಯು 2027ರ ಫೆಬ್ರವರಿಯಲ್ಲಿ ನಡೆಯಲಿದೆ. ಆದಾಗ್ಯೂ ಲಡಾಕ್, ಜಮ್ಮುಕಾಶ್ಮೀರ, ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡದ ಕೆಲವು ಭಾಗಗಳು ಸೇರಿದಂತೆ ಹಿಮಚ್ಛಾದಿತ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಜನಗಣತಿಯನ್ನು ಮುಂಚಿತವಾಗಿ ಅಂದರೆ 2026ರ ಸೆಪ್ಟೆಂಬರ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. 2027ರ ಜನಗಣತಿಯು ಭಾರತದಲ್ಲಿ ಕೈಗೊಳ್ಳಲಾಗುವ ಮೊತ್ತ ಮೊದಲ ಡಿಜಿಟಲ್ ಜನಗಣತಿಯಾಗಲಿದೆ. ಆಂಡ್ರಾಯ್ಡ್ ಹಾಗೂ ಐಓಎಸ್ ಪ್ಲ್ಯಾಟ್ಫಾರಂಗಳಿಗೆ ಹೊಂದಿಕೊಳ್ಳುವ ಮೊಬೈಲ್ ಆ್ಯಪ್ಲಿಕೇಶನ್ಗಳನ್ನು ಬಳಸಿಕೊಂಡು ದತ್ತಾಂಶಗಳನ್ನು ಸಂಗ್ರಹಿಸಲಾಗುವುದು. ಇಡೀ ಪ್ರಕ್ರಿಯೆಯ ನಿರ್ವಹಣೆ ಹಾಗೂ ನಿಗಾವಣೆಗೆ (ಸಿಎಂಎಂಎಸ್) ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ವೈಷ್ಣವ್ ತಿಳಿಸಿದರು.
IndiGo ಗೆ ಹೊಸ ಸಂಕಷ್ಟ; 58.75 ಕೋಟಿ ರೂ. ತೆರಿಗೆ ಪಾವತಿಗೆ ನೋಟಿಸ್
ಕಾನೂನು ಹೋರಾಟಕ್ಕೆ ಮುಂದಾದ ವಿಮಾನಯಾನ ಸಂಸ್ಥೆ
ಉಡುಪಿ | ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಯೋಜನೆ ಕಲ್ಪಿಸಿ: ಡಿಸಿ
ಉಡುಪಿ, ಡಿ.12: ಸಫಾಯಿ ಕರ್ಮಚಾರಿಗಳು, ಗುರುತಿಸಲ್ಪಟ್ಟ ಮಾನ್ಯುಯಲ್ ಸ್ಕ್ಯಾವೆಂಜರ್ ಗಳು ಹಾಗೂ ಮೃತಪಟ್ಟ ಮಾನ್ಯುಯಲ್ ಸ್ಕ್ಯಾವೆಂಜರ್ ಗಳ ಕುಟುಂಬದ ಅವಲಂಬಿತರಿಗೆ ಗುರುತಿನ ಚೀಟಿ ನೀಡುವ ಜೊತೆಗೆ ಪುನರ್ವಸತಿ ಯೋಜನೆಗಳೊಂದಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಶುಕ್ರವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ನಾಲ್ಕನೇ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಅವರ ತಿಂಗಳ ವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ವಿಳಂಬಲ್ಲದೇ ಪ್ರತಿ ತಿಂಗಳು ಪಾವತಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಲೋಡರ್, ಕ್ಲೀನರ್ಸ್ ಹಾಗೂ ವಾಹನ ಚಾಲಕರಿಗೆ ಪ್ರತಿ ತಿಂಗಳ ವೇತನವನ್ನು ಕಾಲಕಾಲಕ್ಕೆ ಸರಿಯಾಗಿ ಪಾವತಿಸಬೇಕು. ಹಾಗೂ ಅವರ ಪಿ.ಎಫ್ ಹಾಗೂ ಇ.ಎಸ್.ಐ ಕಟಾವಣೆ ಆಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಹೊರ ಗುತ್ತಿಗೆದಾರರಿಗೆ ಮಾಸಿಕ ಬಿಲ್ ಗಳನ್ನು ಪಾವತಿಸಬೇಕು ಎಂದು ಸೂಚಿಸಿದರು. ಮಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಗೆ ಈಗಾಗಲೇ ದೇಶಾದ್ಯಂತ ನಿಷೇಧ ವಿಧಿಸಲಾಗಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ ಗಳನ್ನು ನೇಮಿಸಿಕೊಂಡು ಅವರಿಂದ ಕೆಲಸ ಮಾಡಿಸಿಕೊಂಡಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಮಾನ್ಯುಯಲ್ ಸ್ಕ್ಯಾವೆಂಜರ್ ವೃತ್ತಿ ನಿಷೇಧದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಸಕ್ಕಿಂಗ್ ಹಾಗೂ ಜೆಟ್ಟಿಂಗ್ ಯಂತ್ರಗಳ ಬಳಕೆಯೊಂದಿಗೆ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು. ಮಲತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಎಫ್ಎಸ್ಎಂಎಸ್ ಘಟಕಗಳಲ್ಲಿ ವಿಲೇವಾರಿ ಮಾಡಬೇಕು. ಇವುಗಳೊಂದಿಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಎಫ್ಎಸ್ಎಂಎಸ್ ಘಟಕ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅವುಗಳ ಬಳಕೆಗೆ ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು ಎಂದರು. ಗುಣಮಟ್ಟದ ಆಹಾರ : ಪೌರ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಬೇಕು ಎಂದ ಜಿಲ್ಲಾಧಿಕಾರಿ, ದೈನಂದಿನ ಸ್ವಚ್ಛತಾ ಕಾರ್ಯದ ಕರ್ತವ್ಯ ನಿರ್ವಹಿಸುವಾಗ ಸುರಕ್ಷತಾ ಪರಿಕರಗಳನ್ನು ತಪ್ಪದೇ ಬಳಸಿ ಕರ್ತವ್ಯವನ್ನು ನಿರ್ವಹಿಸಬೇಕು. ಇದರಿಂದ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯವಿದೆ. ಇದರ ಮೇಲುಸ್ತುವಾರಿಯನ್ನು ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು. ಸಫಾಯಿ ಕರ್ಮಚಾರಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಹಾಗೂ ಮಾಸ್ಟರ್ ಹೆಲ್ತ್ ಚೆಕ್ಅಪ್ ನ ಆಗಾಗ್ಗೆ ಮಾಡಿಸಬೇಕು. ಅಗತ್ಯವಿದ್ದಲ್ಲಿ ಉನ್ನತ ಚಿಕಿತ್ಸೆಯನ್ನು ಸಹ ಕೊಡಿಸಬೇಕು ಎಂದ ಸ್ವರೂಪ ಟಿ.ಕೆ., ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ ಹಾಗೂ ಪೌರ ಕಾರ್ಮಿಕರ ಮಕ್ಕಳಿಗೆ ಶೇ.5ರಷ್ಟು ಪ್ರವೇಶ ಕಲ್ಪಿಸಲು ಮುಂದಾಗಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಎಸ್.ಕಾದ್ರೋಳ್ಳಿ, ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ | ಡಿ:13ರಂದು ಕಾರಂತರ ಅರಿವಿನ ಬೆಳಕು ಉಪನ್ಯಾಸ
ಉಡುಪಿ, ಡಿ.12: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಾರ್ಕಳದ ವೆಂಕಟರಮಣ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಅರಿವಿನ ಬೆಳಕು ಉಪನ್ಯಾಸ ಮಾಲೆ-11ನೇ ಕಾರ್ಯಕ್ರಮ ಡಿ.13ರ ಶನಿವಾರ ಬೆಳಿಗ್ಗೆ 10:30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಆಯೋಜನೆಗೊಂಡಿದೆ. ಕಾರ್ಯಕ್ರಮವನ್ನು ಕಾರ್ಕಳ ಎಸ್.ವಿ.ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಕೆ.ಪಿ.ಶೆಣೈ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲೆ ಪ್ರೊ. ಗೀತಾ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಆಶಯ ನುಡಿಗಳನ್ನಾಡಲಿದ್ದಾರೆ. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕಿ ಶಾಲಿನಿ ಯು.ಬಿ. ಕಾರಂತರ ಕಾದಂಬರಿಗಳ ಸಿನೆಮಾಗಳಲ್ಲಿ ಬದುಕಿನ ಅಭಿವ್ಯಕ್ತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
ಬೆಂಗಳೂರು- ಮಂಗಳೂರು- ಕಾರವಾರ ನಡುವೆ ವಂದೇ ಭಾರತ್ ರೈಲಿಗೆ ಮನವಿ
ಉಡುಪಿ, ಡಿ.12: ಕರಾವಳಿ ಕರ್ನಾಟಕದ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಬಹುಕಾಲದ ನಿರೀಕ್ಷೆಯ ಬೆಂಗಳೂರು- ಮಂಗಳೂರು- ಉಡುಪಿ- ಕಾರವಾರ ಮಾರ್ಗದಲ್ಲಿ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲನ್ನು ಶೀಘ್ರವಾಗಿ ಓಡಿಸಲು ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದ ಕರಾವಳಿಯ ಜಿಲ್ಲೆಗಳನ್ನು ರಾಜಧಾನಿಯೊಂದಿಗೆ ಸಂಪರ್ಕಿಸಲು ವಂದೇ ಭಾರತ್ ನ ಅವಶ್ಯಕತೆಯನ್ನು ಕೋಟ ಅವರು ರೈಲ್ವೆ ಸಚಿವರಿಗೆ ವಿವರಿಸಿದರು. ಹಾಸನ, ಸಕಲೇಶಪುರ ವಿಭಾಗದಲ್ಲಿ ವಿದ್ಯುದ್ಧೀಕರಣ ಕಾರ್ಯ ಮುಗಿಯುತ್ತಾ ಬಂದಿದ್ದು, ಬೆಂಗಳೂರು ಮತ್ತು ಕಾರವಾರವನ್ನು ವಂದೇ ಭಾರತ್ ಮೂಲಕ ಬೆಸೆಯಲು ಇದು ಸಕಾಲವಾಗಿದೆ ಎಂದು ಸಂಸದರು ಮನವರಿಕೆ ಮಾಡಿದರು. ಕಾರವಾರ, ಉಡುಪಿ, ಮಂಗಳೂರು ಪ್ರಯಾಣಿಕರಿಗೆ ವಂದೇ ಭಾರತ್ ಮೂಲಕ ಉತ್ತಮ ರೈಲ್ವೆ ಸೇವೆಗೆ ಅವಕಾಶವಾಗುತ್ತದೆ ಎಂದು ಕೋಟ ಮನವಿ ಮಾಡಿದ್ದು, ಘಾಟಿ ಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಕಾರವಾರದೊರೆಗಿನ ರೈಲ್ವೆ ಸೇವೆ ಉತ್ತಮಗೊಳಿಸಿ ವಂದೇ ಭಾರತ್ ಪರಿಚಯಿಸುವ ಭರವಸೆಯನ್ನು ರೈಲ್ವೆ ಸಚಿವರು ನೀಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ| ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮೂವರು ಹೆಣ್ಣುಮಕ್ಕಳಿಗೆ ಜೀವವಿಮೆ ಮಾಡಿಸಿದ ಮಹಿಳೆಗೆ ಸನ್ಮಾನ
ಕುಕನೂರು : ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣುಮಕ್ಕಳ ಜೀವವಿಮೆ ಮಾಡಿಸಿ ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಜ್ಯೋತಿ ಕನಕಪ್ಪ ಕಲ್ಲೂರು ಎಂಬ ಗೃಹಿಣಿ, ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯಿಂದ ಬರುವ ತಿಂಗಳ 2000 ರೂ. ಹಣವನ್ನು ತನ್ನ ಮೂವರು ಹೆಣ್ಣು ಮಕ್ಕಳ ಹೆಸರಿನ ಮೇಲೆ ಎಲ್ಐಸಿ ಪಾಲಿಸಿ ಮಾಡಿಸಿ ಗಮನ ಸೆಳೆದಿದ್ದಾರೆ. ಸರಕಾರಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡ ಜ್ಯೋತಿ ಅವರನ್ನು ತಾಲೂಕು ಪಂಚಾಯತಿ ಇಒ ಸಂತೋಷ್ ಬಿರಾದರ್ ಸನ್ಮಾನಿಸಿ ಗೌರವಿಸಿದ್ದಾರೆ. ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ, ಅನ್ನಭಾಗ್ಯ ಹಾಗೂ ಗೃಹ ಜ್ಯೋತಿ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಕಷ್ಟು ಬದಲಾವಣೆ ಹಾಗೂ ಅನುಕೂಲತೆ ಉಂಟಾಗಿವೆ. ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಪಂಚಾಯತಿ ಇಒ ಸಂತೋಷ್ ಬಿರಾದರ್, ಮಂಗಳೂರಿನ ಗೃಹಣಿಯೊಬ್ಬರು ಗ್ರಹಲಕ್ಷ್ಮಿ ಯೋಜನೆಯಿಂದ ಬರುವ 2000ರೂ. ಹಣವನ್ನು ತನ್ನ ಮೂವರು ಹೆಣ್ಣು ಮಕ್ಕಳ ಹೆಸರಿಗೆ ಎಲ್ಐಸಿ ಪಾಲಿಸಿ ಮಾಡಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಸ್ಪೂರ್ತಿದಾಯಕ ಕಾರ್ಯವಾಗಿದೆ ಎಂದು ಹೇಳಿದ್ದಾರೆ.
ಮಂಜನಾಡಿ: ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾ ಅಲ್ ಬುಖಾರಿ ಅವರ ಹೆಸರಿನಲ್ಲಿ ಡಿ.17 ರಿಂದ ಡಿ.27 ರ ವರೆಗೆ ಮಸೀದಿ ವಠಾರದಲ್ಲಿ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉರೂಸ್ ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮ ಶುಕ್ರವಾರ ನಡೆಯಿತು. ಮಸೀದಿಯ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಸೀದಿಯ ಕಾರ್ಯಕ್ರಮ ನಾವು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬೇಕು. ಅಭಿವೃದ್ದಿ ನಮ್ಮ ಗುರಿಯಾಗಿರುತ್ತದೆ. ಉರೂಸ್ ಕಾರ್ಯಕ್ರಮ ಯಶಸ್ಸು ಆಗಿ ನಡೆಯಲಿ ಎಂದು ಹಾರೈಸಿದರು. ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಉಪಾಧ್ಯಕ್ಷರಾದ ಆಲಿಕುಂಞಿ ಪಾರೆ, ಮೊಯ್ದಿನ್ ಕುಟ್ಟಿ, ಮುನೀರ್ ಬಾವ, ಕೋಶಾಧಿಕಾರಿ ಉಮರ್ ಕುಂಞಿ ಮೋರ್ಲ, ಕಾರ್ಯದರ್ಶಿ ಗಳಾದ ಹಮೀದ್ ಆರಂಗಡಿ, ಬಾಪಕುಂಞಿ, ಕುಂಞಿ ಬಾವ ಕಟ್ಟೆಮಾರ್, ನವಾಝ್ ನರಿಂಗಾನ, ಇಬ್ರಾಹಿಂ ಅಹ್ಸನಿ,ಎ.ಎಂ.ಇಬ್ರಾಹೀಂ, ಟಿ.ಮುಹಮ್ಮದ್, ಅಬ್ದುಲ್ ರಹ್ಮಾನ್ ರಝ್ವಿ ಮತ್ತಿತರರು ಉಪಸ್ಥಿತರಿದ್ದರು.
ಅಭಿವೃದ್ಧಿಯಲ್ಲಿ ಜಿಲ್ಲಾಡಳಿತ, ಪಂಚಾಯತ್ಗಳ ಪಾತ್ರ ಮಹತ್ವವಾದುದು : ರಾಜು ಮೊಗವೀರ
ಕೊಣಾಜೆ: ಅಭಿವೃದ್ದಿಯಲ್ಲಿ ಜಿಲ್ಲಾಡಳಿತ ಮತ್ತು ಪಂಚಾಯತ್ಗಳ ಪಾತ್ರ ಮಹತ್ವವಾದುದು. ಜಿಲ್ಲಾಡಳಿತವು ಸರ್ಕಾರದ ಎಲ್ಲಾ ಯೋಜನೆಗಳನ್ನು ಜಿಲ್ಲಾ ಮಟ್ಟದಲ್ಲಿ ಜಾರಿಗೆ ತರುವುದು, ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಜನರಿಗೆ ಅಗತ್ಯ ಸೇವೆಗಳನ್ನು ನೀಡುವ ಕೆಲಸ ಮಾಡುತ್ತದೆ. ಪ್ರವಾಹ, ಬರ, ಪ್ರಕೃತಿ ವಿಕೋಪಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಕೂಡ ಜಿಲ್ಲಾಡಳಿತವೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವರಾದ ರಾಜು ಮೊಗವೀರ ಅವರು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗುರುವಾರ ರಾಜ್ಯಶಾಸ್ತ್ರ ವಿಭಾಗ ಮತ್ತು ರಾಜ್ಯಶಾಸ್ತ್ರ ಸಂಘದ ವತಿಯಿಂದ ‘ಅಭಿವೃದ್ದಿಯಲ್ಲಿ ಜಿಲ್ಲಾ ಆಡಳಿತ ಮತ್ತು ಪಂಚಾಯತ್ಗಳ ಪಾತ್ರ’ ಕುರಿತಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಂಚಾಯತ್ ರಾಜ್ ವ್ಯವಸ್ಥೆ ಗ್ರಾಮೀಣಾಭಿವೃದ್ಧಿಯ ಮೂಲಸ್ತಂಭವಾಗಿದೆ. 73ನೇ ತಿದ್ದುಪಡಿ ನಂತರ ಗ್ರಾಮದಿಂದ ಜಿಲ್ಲೆ ಮಟ್ಟದ ಅಭಿವೃದ್ಧಿ ನಿರ್ಧಾರಗಳಲ್ಲಿ ನೇರವಾಗಿ ಭಾಗವಹಿಸುತ್ತವೆ. ಗ್ರಾಮ ನೀರು, ರಸ್ತೆ, ನೈರ್ಮಲ್ಯ, ಮನೆ-ಬೆಳಕು, ಕಸ ನಿರ್ವಹಣೆ ಮುಂತಾದ ಸೇವೆಗಳನ್ನು ಗ್ರಾಮ ಪಂಚಾಯತ್ ನೇರವಾಗಿ ನಿರ್ವಹಿಸುತ್ತದೆ. ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿರುವುದರಿಂದ ರಾಜಕೀಯ ಸಬಲೀಕರಣವೂ ಹೆಚ್ಚಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಜಯರಾಜ್ ಅಮೀನ್ ಅವರು ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಶಾನಿ ಕೆ.ಆರ್, ಉಪನ್ಯಾಸಕರಾದ ಡಾ.ಸಿ.ಎಮ್ ರಾಜ್ ಪ್ರವೀಣ್, ಡಾ.ವೆಂಕಟೇಶ್ ಹೆಚ್.ಎಸ್, ಹಾಗೂ ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದರು. ಡಾ.ಸಿ.ಎಮ್ ರಾಜ್ ಪ್ರವೀಣ್ ಸ್ವಾಗತಿಸಿದರು, ಲೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Indians: ಭಾರತೀಯರು ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪಡೆದು ವಾಪಸ್ ಹೋಗುವುದು ನಾಚಿಕೆಗೇಡು!
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿರುದ್ಧ ಕತ್ತಿ ಮಸಿಯುವುದನ್ನು ಮುಂದುವರಿಸಿದ್ದಾರೆ. ಭಾರತ ಮತ್ತು ರಷ್ಯಾ ಒಂದಾಗಿ ಸಾಗುತ್ತಿರುವುದು ಹಾಗೂ ಕಚ್ಚಾ ತೈಲ ಖರೀದಿ ವಿಚಾರದಲ್ಲಿ ಭಾರತವು ಅಮೇರಿಕಾ ಹೇಳಿದಂತೆ ರಾಜಿ ಆಗದೆ ಇರುವುದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಅದನ್ನು ಈಚೆಗೆ ಅವರು ಭಾರತದಿಂದ ಆಮದು ಆಗುತ್ತಿರುವ ಅಕ್ಕಿ ವಿಚಾರದಲ್ಲೂ
ಮಂಗಳೂರು ವಿವಿಯಲ್ಲಿ 'ಸ್ವಾಸ್ಥ್ಯ ಸಂಪದ-2025' ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ಕೊಣಾಜೆ: ಮಂಗಳೂರು ವಿಶ್ವ ವಿದ್ಯಾನಿಲಯದ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ವತಿಯಿಂದ ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡುಬಿದಿರೆ ಇದರ ಸಹಯೋಗದೊಂದಿಗೆ 'ಸ್ವಾಸ್ಥ್ಯ ಸಂಪದ-2025' ಔಷಧೀಯ ಸಸ್ಯಗಳ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯು ಶುಕ್ರವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸ್ಟೇಟ್ ಸ್ಯಾಂಡಲ್ ವುಡ್ ಆಂಡ್ ವನಕೃಷಿ ಗ್ರೋವರ್ಸ್ ಅಸೋಸಿಯೇಶನ್ ನ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ ಅಮರ್ ನಾರಾಯಣ್ ಅವರು, ಸಾಂಪ್ರದಾಯಿಕವಾದ ಔಷಧ ಪದ್ದತಿ, ಔಷಧೀಯ ಸಸ್ಯಗಳ ಕುರಿತು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಅಧ್ಯಯನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಅನೇಕ ಔಷಧೀಯ ಸಸ್ಯಗಳು ಸಮೃದ್ಧವಾಗಿದ್ದು, ಗಿಡ ಮೂಲಿಕೆಗಳು, ಔಷಧಿ ಸಸ್ಯಗಳ ಮೂಲಕ ಆರೋಗ್ಯ ನಿರ್ಮಾಣಕ್ಕೆ ಪಶ್ಚಿಮ ಘಟ್ಟಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಮಂಗಳೂರು ಹಾಗೂ ಕರಾವಳಿ ಪ್ರದೇಶ ಸಮುದ್ರತೀರಗಳು, ದೇವಾಲಯಗಳು, ಮಸೀದಿಗಳು, ಚರ್ಚ್ಗಳು ಸೇರಿದಂತೆ ವಿವಿಧ ಆಚಾರ ವಿಚಾರಗಳು, ಪ್ರಾಕೃತಿಕ ಸಸ್ಯ ಸಂಪತ್ತುಗಳಲ್ಲಿ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಔಷಧೀಯ ಸಸ್ಯಗಳು, ಪರಿಣಾಮಗಳ ಕುರಿತು ಮಂಗಳೂರು ವಿವಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಿಚಾರ ಸಂಕಿರಣವು ಅನೇಕ ಮಹತ್ವದ ವಿಚಾರಗಳಿಗೆ ವೇದಿಕೆಯಾಗಲಿದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರದ ಸೀನಿಯರ್ ಔಷಧೀಯ ಸಸ್ಯ ತಜ್ಞರಾದ ಡಾ.ಎಂ.ಜೆ.ಪ್ರಭು, ಆಯುರ್ವೇದ, ಯೋಗ, ಸಸ್ಯ ಮೂಲಗಳಿಂದ ಬೇರ್ಪಡಿಸುವ ರಾಸಾಯನಿಕ ವಸ್ತುಗಳು, ಸಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು, ಹೊಸ ರೀತಿಯ ವೈದ್ಯಕೀಯ ಔಷಧಗಳ ತಯಾರಿಕೆಗಳು, ಔಷಧೀಯ ಸಸ್ಯಗಳ ಮಹತ್ವಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಈ ರಾಷ್ಟ್ರೀಯ ಸಮ್ಮೇಳನವು ಬೆಳಕು ಚೆಲ್ಲಲಿದ್ದು, ಯುವ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧಗಳನ್ನು ಅರ್ಥೈಸಿಕೊಳ್ಳಬೇಕು. ಇಂದಿನ ಆಧುನಿಕತೆಯ ಹೆಸರಿನಲ್ಲಿ ಅರಣ್ಯ ಸೇರಿದಂತೆ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿವೆ. ಇದರ ಪರಿಣಾಮ ಹವಮಾನ ವೈಪರೀತ್ಯಗಳುಂಟಾಗುತ್ತಿವೆ. ಅನೇಕ ರೋಗ ರುಜಿನಗಳನ್ನು ಜನರನ್ನು ಬಾಧಿಸುವಂತಾಗಿದೆ. ಔಷಧೀಯ ಸಸ್ಯಗಳು, ಅರಣ್ಯ, ಪ್ರಕೃತಿಯ ಸಂರಕ್ಷಣೆಗೆ ಪಣತೊಡಬೇಕಿದೆ. ಪ್ರತಿಯೊಬ್ಬರ ಹುಟ್ಡುಹಬ್ಬವನ್ನು ಗಿಡನೆಡುವ ಮೂಲಕ ಆಚರಿಸುವಂತಾಗಬೇಕು ಎಂದರು. ಸಮಾರಂಭದಲ್ಲಿ ಹಿರಿಯ ವಿಜ್ಞಾನಿ ಡಾ.ಸುಲೈಮಾನ್ ಸಿ.ಟಿ, ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರದ ನಿರ್ದೆಶಕರಾದ ಡಾ.ಸುಬ್ರಹ್ಮಣ್ಯ ಪದ್ಯಾಣ, ಆರ್ಯುವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಸುಶೀಲ್ ಶೆಟ್ಟಿ, ಜೀವ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಪ್ರೊ.ತಾರಾವತಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿವಿ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ಜಯಶಂಕರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಉಪನ್ಯಾಸಕರಾದ ಡಾ.ಶರತ್ ಚಂದ್ರ ವಂದಿಸಿದರು. ಶ್ರೇಯಸ್ ಕಾರ್ಯಕ್ರಮ ನಿರೂಪಿಸಿದರು.
ಏನಿದು GPT-5.2? ಇದರಿಂದ ಉದ್ಯಮದಲ್ಲಿ ಏನು ಬದಲಾವಣೆ ತರಲಿದೆ?
ವೃತ್ತಿಪರ ಕೆಲಸಗಳನ್ನು ಹೆಚ್ಚು ಉತ್ತಮವಾಗಿ ನಡೆಸುವ ಸಾಮರ್ಥ್ಯ ಹೊಂದಿದ GPT- 5.2 ಅನ್ನು ಇದೀಗ Open AI ಬಿಡುಗಡೆ ಮಾಡಿದೆ. ಇದು Open AIನ ಪ್ರತಿಸ್ಪರ್ಧಿಯಾಗಿರುವ Google ನ Gemini 3ಯ ಬಿಡುಗಡೆಯ ನಂತರ ಬಂದಿರುವ ಹೊಸ ಆವೃತ್ತಿಯಾಗಿದೆ. ಇಂದು ಮಾಹಿತಿ, ವಿಚಾರ ಮತ್ತು ಗ್ರಹಿಕೆ ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳಿಂದ ತೊಡಗಿ ವೃತ್ತಿಪರರವರೆಗೆ ಸಾಮಾನ್ಯ ಮಾಹಿತಿಯಿಂದ ಆರಂಭಿಸಿ ವೃತ್ತಿಪರ ಮಾಹಿತಿಯವರೆಗೆ AI ಚಾಟ್ ಬಾಟ್ ಗಳನ್ನು ಅವಲಂಬಿಸಿದ್ದಾರೆ. ಇಂತಹ ಅವಲಂಬನೆಯ ಸಂದರ್ಭದಲ್ಲಿ ವೃತ್ತಿಪರರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು ಸಮರ್ಥ ಮತ್ತು ವಿಶ್ವಸನೀಯವಾದ ಹೊಸ ಆವೃತ್ತಿಯನ್ನು Open AI ಹೊರತಂದಿದೆ. Open AI ಈ ಮೊದಲು ChatGPT -4 ಮತ್ತು ChatGPT 4.0 ಅನ್ನು ಉಚಿತವಾಗಿ ಬಳಕೆಗೆ ನೀಡಿದೆ. ಅದರ ನಂತರದ ಆವೃತ್ತಿಗಳು ಪೇಯ್ಮೆಂಟ್ ಮೋಡ್ ನಲ್ಲಿವೆ. ಇದೀಗ ವೃತ್ತಿಪರರಿಗಾಗಿಯೇ Open AI ತನ್ನ ಹೊಸ ಅವೃತ್ತಿ GPT-5.2 ಅನ್ನು ಬಿಡುಗಡೆ ಮಾಡಿದೆ. Open AI ಹೇಳುವ ಪ್ರಕಾರ ಹೊಸ ಮಾಡೆಲ್ ವೃತ್ತಿಪರ ಜ್ಞಾನದ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಉದ್ಯಮಿಗಳಿಗೆಂದೇ ರೂಪಿಸಲಾಗಿರುವ ವೈಜ್ಞಾನಿಕ ಆವಿಷ್ಕಾರವೆಂದು ಹೇಳಿಕೊಂಡಿದೆ. ಈಗಿನ ಆವೃತ್ತಿ ವಿಜ್ಞಾನ ಮತ್ತು ಗಣಿತ ಎರಡರಲ್ಲೂ ನಡೆಸಿರುವ ಪರೀಕ್ಷೆಗಳಲ್ಲಿ ಸೈ ಎನಿಸಿಕೊಂಡಿದೆ. ಏನಿದು GPT-5.2? GPT-5.2 ಹೆಚ್ಚು ವೇಗ ಮತ್ತು ಸಮರ್ಥವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಪೇಯ್ಮೆಂಟ್ ಮೋಡ್ ನಲ್ಲಿಯೇ ಇರಿಸಲಾಗಿದೆ. ವೃತ್ತಿಪರರಿಗೆ ಹೆಚ್ಚು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ದೀರ್ಘ ದಾಖಲೆಗಳು, ಚೆಕ್ ಕೋಡ್, ಡ್ರಾಫ್ಟ್ ಪ್ರೆಸೆಂಟೇಶನ್, ಸ್ಪ್ರೆಡ್ಶೀಟ್ ಗಳಲ್ಲಿ ಡಾಟಾ ಸಂಗ್ರಹ ಇತ್ಯಾದಿ ಕೆಲಸಗಳನ್ನು ಮಾಡಲು ನೀವು AI ಬಳಸುತ್ತಿದ್ದರೆ, ಈ ಹೊಸ ಮಾಡೆಲ್ ಮಾನವರು ಮಾಡುವಂತೆಯೇ ಕೆಲಸ ಮಾಡಬಲ್ಲದು. ChatGPT ಎಂಟರ್ಪ್ರೈಸ್ ಬಳಸುತ್ತಿರುವವರು ತಮ್ಮ ನಿತ್ಯದ ಕೆಲಸದ ಅವಧಿಯಲ್ಲಿ ಒಂದು ಗಂಟೆಗಳಷ್ಟು ಕಡಿತ ಮಾಡಿದ್ದಾರೆ. ಅತಿಯಾಗಿ ಬಳಸುವವರು ವಾರಕ್ಕೆ 10 ಗಂಟೆಗಳನ್ನು ಉಳಿಸುತ್ತಿದ್ದಾರೆ. ಇದೀಗ GPT-5.2 ಬಳಸಿದರೆ ಇನ್ನಷ್ಟು ಸಮಯ ಉಳಿಸಬಹುದು. ಮುಖ್ಯವಾಗಿ ಹೇಳಬೇಕೆಂದರೆ ಇದನ್ನು ತುರ್ತು ಪ್ರಶ್ನೆಗಳಿಗಾಗಿ ವಿನ್ಯಾಸಗೊಳಿಸಲಾಗಿಲ್ಲ. ಬದಲಾಗಿ ನಿತ್ಯ ಜೀವನದ ಕೆಲಸದಲ್ಲಿ AI ಬಳಸುವವರಿಗೆ ನೆರವಾಗಲು ಅಭಿವೃದ್ಧಿಪಡಿಸಲಾಗಿದೆ. ನಿಯಮಿತ ChatGPTನಲ್ಲಿ GPT-5.2 ಮೂರು ಆವೃತ್ತಿಯಲ್ಲಿ ಬರುತ್ತದೆ- ಇನ್ಸ್ಟಂಟ್, ಥಿಂಕಿಂಗ್ ಮತ್ತು ಪ್ರೊ. ‘ಇನ್ಸ್ಟಂಟ್’ ನಿತ್ಯದ ಕೆಲಸಗಳಿಗೆ ವೇಗದ ಪ್ರತಿಸ್ಪಂದನೆ ನೀಡುತ್ತದೆ. ‘ಥಿಂಕಿಂಗ್’ ಸಂಕೀರ್ಣ ಕೆಲಸಕ್ಕೆ ಹೆಚ್ಚು ರಚನಾತ್ಮಕ ಮತ್ತು ವಿವರವಾದ ಕಾರಣಗಳನ್ನು ತಿಳಿಸುತ್ತದೆ. ‘ಪ್ರೊ’ ತಾಂತ್ರಿಕ ಸಮಸ್ಯೆಗಳಿಗೆ ಅತ್ಯುನ್ನತ ಗುಣಮಟ್ಟದ ಪರಿಹಾರಗಳನ್ನು ಒದಗಿಸುತ್ತದೆ. GPT-5.2 ಕಾರ್ಯನಿರ್ವಹಣೆ Open AI ಹೇಳುವ ಪ್ರಕಾರ, GPT-5.2 ಹಣಕಾಸು, ಮಾರಾಟ, ವಿನ್ಯಾಸ, ಎಂಜಿನಿಯರಿಂಗ್ ಮೊದಲಾಗಿ 44 ನಿಜ ಜೀವನದ ವೃತ್ತಿಗಳಲ್ಲಿ AI ಹೇಗೆ ಕೆಲಸ ಮಾಡುತ್ತದೆ ಎನ್ನುವ ಪರೀಕ್ಷೆಯಲ್ಲಿ ಇದು ಉತ್ತೀರ್ಣಗೊಂಡಿದೆ. ವಿವರವಾಗಿ ಹೇಳುವುದಾದರೆ ಥಿಂಕಿಂಗ್ ಆವೃತ್ತಿಯು ಸಮಕಾಲೀನ ಉದ್ಯಮದ ವೃತ್ತಿಪರರನ್ನು ಶೇ 70.9ರಷ್ಟು ಕೆಲಸದಲ್ಲಿ ಸರಿಹೊಂದಿಸಿದೆ ಅಥವಾ ಮೀರಿಸಿದೆ. ಅಂದರೆ GPT-5ಗೆ ಹೋಲಿಸಿದರೆ ಇದು ದುಪ್ಪಟ್ಟು ಪ್ರಮಾಣವಾಗಿದೆ. ಕೋಡಿಂಗ್ ವಿಚಾರಕ್ಕೆ ಬಂದರೆ ಇದು ನಾಲ್ಕು ಪ್ರೋಗ್ರಾಂಮಿಂಗ್ ಭಾಷೆಗಳಲ್ಲಿ ನಿಜ ಜೀವನದ ಎಂಜಿನಿಯರಿಂಗ್ ಕಾರ್ಯಗಳಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಈ ಮಾಡೆಲ್ ಡಿಬಗ್ಗಿಂಗ್, ಫೀಚರ್ಗಳನ್ನು ಅನುಷ್ಠಾನಗೊಳಿಸುವುದು, ಕೋಡ್ ವಿಮರ್ಶೆ ಮತ್ತು ಒಟ್ಟು ಇಂಜಿನಿಯರಿಂಗ್ ಕೆಲಸಗಳನ್ನು ನಿಭಾಯಿಸುವಲ್ಲಿ ಹೆಚ್ಚು ಸಮರ್ಥವಾಗಿದೆ. ಹೊಸ ಮಾಡೆಲ್ ಪರೀಕ್ಷಿಸಿದ ಡೆವಲಪರ್ಗಳ ಪ್ರಕಾರ ಮುನ್ನೆಲೆಯ ಕಾರ್ಯಗಳನ್ನು ಅತ್ಯುತ್ತಮವಾಗಿ ಮಾಡುತ್ತದೆ. ಪಠ್ಯ ಸಂಸ್ಕರಣೆ ಮತ್ತು ಮಲ್ಟಿ ಟಾಸ್ಕಿಂಗ್ ಹೊಸ ಮಾಡೆಲ್ ನೂರಾರು ಮತ್ತು ಸಾವಿರಾರು ಟೋಕನ್ ಗಳ ಅಡಿಯಿಂದಲೂ ಮಾಹಿತಿ ಹೆಕ್ಕಿ ಕೊಡಬಲ್ಲದು. ಪ್ರಸ್ತುತ ಮಾಹಿತಿಯನ್ನು ಬೃಹತ್ ಕಡತಗಳ ಅಡಿಯಲ್ಲಿ ಬಚ್ಚಿಟ್ಟಾಗಲೂ ಈ ಮಾಡೆಲ್ ಹೆಕ್ಕಿ ತೆಗೆದುಕೊಟ್ಟಿದೆ. ಪರೀಕ್ಷೆಯಲ್ಲಿ ಇದು ಸಂಕೀರ್ಣ ಗ್ರಾಹಕ-ಸೇವಾ ಪರಿಸ್ಥಿತಿಗಳನ್ನೂ ನಿಭಾಯಿಸಿದೆ. ಪ್ರಯಾಣವನ್ನು ಮರುಬುಕ್ ಮಾಡುವುದು, ಲಗೇಜ್ ಪತ್ತೆಹಚ್ಚುವುದು, ಹೊಟೇಲ್ ವ್ಯವಸ್ಥೆಗೊಳಿಸುವುದು ಮತ್ತು ಮೆಡಿಕಲ್ ಸೀಟ್ ಗೆ ವಿನಂತಿಸುವುದು ಇತ್ಯಾದಿ ಕೆಲಸವನ್ನು ಸ್ವತಃ ನಿಭಾಯಿಸಿದೆ. ಹೀಗಾಗಿ ಒಪ್ಪಂದಗಳು, ಸಂಶೋಧನಾ ವರದಿಗಳು, ಕಾನೂನು ದಾಖಲೆಗಳು, ಟ್ರಾನ್ಸ್ಕ್ರಿಪ್ಟ್ ಗಳು ಅಥವಾ ಇತರ ಬಹುಕಡತಗಳ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಈ ಮಾಡೆಲ್ ಆದರ್ಶಮಯವಾಗಿದೆ. ಇದರ ವಿಷನ್ ಕೂಡ ಚೆನ್ನಾಗಿದೆ. ಚಾರ್ಟ್ ಗಳು, ಡ್ಯಾಶ್ಬೋರ್ಡ್ ಗಳು, ತಾಂತ್ರಿಕ ಡಯಾಗ್ರಾಮ್ ಗಳು, ಯುಐ ಸ್ಕ್ರೀನ್ಶಾಟ್ಗಳು ಮತ್ತು ಕಡಿಮೆ ಗುಣಮಟ್ಟದ ಚಿತ್ರಗಳನ್ನೂ ಅರ್ಥಮಾಡಿಕೊಳ್ಳಬಲ್ಲದು. GPT-5.2 ಅತ್ಯಾಧುನಿಕ ವೈಜ್ಞಾನಿಕ ಮತ್ತು ಗಣಿತೀಯ ರೀಸನಿಂಗ್ ನಲ್ಲಿ ಹೆಚ್ಚು ಸಮರ್ಥವಾಗಿದೆ. ಪದವಿ ಮಟ್ಟದ ವಿಜ್ಞಾನ ಪ್ರಶ್ನೆಗಳಿಗೆ ಶೇ 92ರಷ್ಟು ನಿಖರವಾಗಿ ಉತ್ತರ ನೀಡಿದೆ. Open AIಗೆ ಇದು ಎಷ್ಟು ಅಗತ್ಯ? ಪ್ರತಿಸ್ಪರ್ಧಿ Google ನಿಂದ OpenAI ಸಂಸ್ಥೆ ದೊಡ್ಡ ಸ್ಪರ್ಧೆಯನ್ನು ಎದುರಿಸುತ್ತಿದೆ. ChatGPTಯ ಪ್ರತಿಸ್ಪರ್ಧಿಯಾಗಿರುವ Google ಇದೀಗ Gemini 3 ಘೋಷಿಸಿದ ನಂತರ Open AI ಮೇಲೆ ಒತ್ತಡವಿತ್ತು. Gemini 3ರ ಯಶಸ್ಸಿನ ನಂತರ Open AI ಸಂಸ್ಥೆಯೊಳಗೆ ಬಹಳ ತುರ್ತು ಅಭಿವೃದ್ಧಿಯ ಅಗತ್ಯವಿದೆ ಎನ್ನುವ ಸಂದೇಶ ರವಾನಿಸಲಾಗಿತ್ತು. ಹೀಗಾಗಿ GPT-5.2 ಯಶಸ್ಸು Open AIಗೆ ಬಹುಮುಖ್ಯವಾಗುತ್ತದೆ.
ಮಂಗಳೂರು | ಡಿ.16ರಂದು ತುಳು ನಾಡು ನುಡಿಗೆ ಜೈನರ ಕೊಡುಗೆ’ ಉಪನ್ಯಾಸ
ಮಂಗಳೂರು, ಡಿ.12: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ’ತುಳು ನಾಡು-ನುಡಿಗೆ ಜೈನರ ಕೊಡುಗೆ’ ಎಂಬ ವಿಷಯದ ಬಗ್ಗೆ (ಎಂ.ಕೆ. ರವೀಂದ್ರನಾಥ ದತ್ತಿ) ಉಪನ್ಯಾಸ ಮತ್ತು ತುಳು ತಾಳಮದ್ದಳೆ ಕಾರ್ಯಕ್ರಮ ಮೂಡುಬಿದಿರೆ ಜೈನ ಮಠದಲ್ಲಿ ಡಿ.16ರಂದು ಮಧ್ಯಾಹ್ನ 2ಕ್ಕೆ ನಡೆಯಲಿದೆ. ಮೂಡುಬಿದಿರೆ ಜೈನ ಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಉಜಿರೆ ಎಸ್ಡಿಎಂ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸನ್ಮತಿ ಕುಮಾರ್ ಉಪನ್ಯಾಸ ನೀಡುವರು. ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು | ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆ : ಧೃತಿ ಫೆರ್ನಾಂಡಿಸ್ ಚಿನ್ನದ ಪದಕ
ಮಂಗಳೂರು, ಡಿ.12: ಹೊಸದಿಲ್ಲಿಯಲ್ಲಿ ಶುಕ್ರವಾರದಿಂದ ಆರಂಭಗೊಂಡ ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆಯ ಬಾಲಕಿಯರ 19 ವಯೋಮಾನದ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ರಿಯಾನಾ ಧೃತಿ ಫರ್ನಾಂಡಿಸ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯ 50 ಮೀ. ಬ್ರೆಸ್ಟ್ ಸ್ಟ್ರೋಕ್ನ್ ನ 34.84 ಸೆಕೆಂಡ್ ನಲ್ಲಿ ಈಜಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈಕೆ ನಗರದ ಸಂತ ಅಲೋಷಿಯಸ್ ಕಾಲೇಜಿನ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದಾರೆ. ಅಲೋಶಿಯಸ್ ಪದವಿ ಕಾಲೇಜಿನ ಈಜುಕೊಳದಲ್ಲಿ ವೀ ವನ್ ಅಕ್ವಾ ಸೆಂಟರ್ ನಲ್ಲಿ ಮುಖ್ಯ ತರಬೇತುದಾರ ಲೋಕರಾಜ್ ವಿ.ಎಸ್. ವಿಟ್ಲ ಹಾಗೂ ತರಬೇತುದಾರರಾದ ಗಗನ್ ಜಿ. ಪ್ರಭು ಮತ್ತು ಸಂಜಯ್ ಉಳ್ಳವೇಕರ್ರಿಂದ ತರಬೇತಿ ಪಡೆಯುತ್ತಿದ್ದಾರೆ.
ವರ್ಷಾಂತ್ಯ ರಜೆಗೆ ಯಶವಂತಪುರ - ವಿಜಯಪುರ; ಹುಬ್ಬಳ್ಳಿ- ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ; ವೇಳಾಪಟ್ಟಿ ಏನು?
ಕ್ರಿಸ್ಮಸ್ ರಜೆ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಹುಬ್ಬಳ್ಳಿ-ಯಶವಂತಪುರ ಮತ್ತು ಯಶವಂತಪುರ-ವಿಜಯಪುರ ನಡುವೆ ಡಿಸೆಂಬರ್ 24 ರಂದು ಈ ರೈಲುಗಳು ಸಂಚರಿಸಲಿವೆ. ನೆಲಮಂಗಲ ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ಕೆಲವು ರೈಲುಗಳ ನಿಲುಗಡೆ ಅವಧಿಯನ್ನು ವಿಸ್ತರಿಸಲಾಗಿದೆ. ಪ್ರಯಾಣಿಕರು ಈ ಹೆಚ್ಚುವರಿ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.
ಮಂಗಳೂರು | ರಬ್ಬರ್ಗೆ ಬೆಂಬಲ ಬೆಲೆ: ಕ್ರಮಕ್ಕೆ ಕೇಂದ್ರ ಸಚಿವರ ಸೂಚನೆ
ಮಂಗಳೂರು,ಡಿ.12 : ರಬ್ಬರ್ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಕೇಂದ್ರ ಸರಕಾರ ಸೂಚಿಸಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರಕಾರಕ್ಕೆ ಬರೆದಿರುವ ಪತ್ರಕ್ಕೆ ಉತ್ತರಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ರಬ್ಬರ್ ಬೆಳೆಯನ್ನು ಕನಿಷ್ಟ ಬೆಂಬಲ ಬೆಲೆ ಒದಗಿಸುವ ಬೆಳೆೆಗಳ ಪಟ್ಟಿಗೆ ಸೇರಿಸುವ ಬೇಡಿಕೆ ಸಂಬಂಧ ಪತ್ರವನ್ನು ಸೂಕ್ತ ಕ್ರಮಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
'ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ'ಗೆ ಬೀದರ್ನ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ಆಯ್ಕೆ
ಬೀದರ್ : ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ(ಕೆಬಿವಿಎ) ಯಿಂದ ನೀಡುವ 'ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ'ಗೆ ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆ ಆಯ್ಕೆಯಾಗಿದೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ ಎ.ಬಬಲೇಶ್ವರ್ ಅವರು 2023–24ನೇ ಸಾಲಿನ ಪ್ರತಿಷ್ಠಿತ 'ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ'ಗೆ ಆಯ್ಕೆಯಾದ ಸಂಸ್ಥೆಯ ಹೆಸರನ್ನು ಘೋಷಿಸಿದ್ದಾರೆ. ಮಕ್ಕಳ ಸಾಹಿತ್ಯ, ಶಿಕ್ಷಣ, ರಂಗಭೂಮಿ, ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಏಳು ಪ್ರಶಸ್ತಿ ಪುರಸ್ಕೃತರಲ್ಲಿ ಬೀದರ್ನ ಶಾಹೀನ್ ಸಮೂಹ ಸಂಸ್ಥೆಯನ್ನು ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ನೀಡಿದ ಮಹತ್ವದ ಕೊಡುಗೆಗಾಗಿ ಆಯ್ಕೆ ಮಾಡಲಾಗಿದೆ. ವೈವಿಧ್ಯಮಯ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಶೈಕ್ಷಣಿಕ ಅವಕಾಶಗಳನ್ನು ಒದಗಿಸುವಲ್ಲಿನ ನಿರಂತರ ಪ್ರಯತ್ನಗಳಿಗಾಗಿ ಈ ಸಂಸ್ಥೆಯನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿ.16ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿದೆ. ಅಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸಂಪುಟ ಸಚಿವರು, ಅಧಿಕಾರಿಗಳು ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಔಪಚಾರಿಕವಾಗಿ ಗೌರವಿಸಲಾಗುತ್ತದೆ ಎಂದು ಸಂಗಮೇಶ್ ಎ.ಬಬಲೇಶ್ವರ್ ಮಾಹಿತಿ ನೀಡಿದ್ದಾರೆ.
ಮಂಗಳೂರು | ಡಿ.14ರಂದು ಮಣೇಲ್ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರ ಕೂಟ
ಮಂಗಳೂರು,ಡಿ.12: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಗಂಜಿಮಠ ಗ್ರಾಪಂ ವ್ಯಾಪ್ತಿಯ ಮಳಲಿ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ರಾಣಿ ಅಬ್ಬಕ್ಕನ ಕುರಿತಾಗಿ ’ಮಣೇಲ್ದ ಪೆರ್ಮೆ ರಾಣಿ ಅಬ್ಬಕ್ಕ’ ಎಂಬ ವಿಚಾರ ಕೂಟವನ್ನು ಸ್ಥಳೀಯ ರಾಣಿ ಅಬ್ಬಕ್ಕ ಚಾವಡಿಯ ಸಹಭಾಗಿತ್ವದಲ್ಲಿ ಡಿ.14ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು | ಡಿ.15ರಂದು ʼಎಚ್ಆರ್ಎಂಎಸ್-2.0ʼ ಕಾರ್ಯಾಗಾರ
ಮಂಗಳೂರು,ಡಿ.12:ಸರಕಾರಿ ಕಚೇರಿಗಳಲ್ಲಿ ʼಎಚ್ಆರ್ಎಂಎಸ್-2.0ʼ ತಂತ್ರಾಂಶಗಳ ನಿರ್ವಹಣೆ ಮತ್ತು ಬಳಕೆ ಕುರಿತ ಕಾರ್ಯಾಗಾರವು ಡಿ.15ರಂದು ಬೆಳಗ್ಗೆ 10:30ರಿಂದ ನಗರದ ಕ್ಲಾಕ್ ಟವರ್ ಹತ್ತಿರ ಇರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಂದಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಯೋಜನಾಧಿಕಾರಿ ಸುಧಾಮಣಿ ಮತ್ತು ತಾಂತ್ರಿಕ ತರಬೇತುಗಾರ ಸುಮಂತ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು ವಿ.ವಿ.44ನೇ ವಾರ್ಷಿಕ ಘಟಿಕೋತ್ಸವ : ಪದವಿ ಪ್ರಮಾಣ ಪತ್ರದ ಶುಲ್ಕ ಪಾವತಿಗೆ ಸೂಚನೆ
ಮಂಗಳೂರು,ಡಿ.12: ಮಂಗಳೂರು ವಿಶ್ವ ವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವವು 2026ರ ಮಾರ್ಚ್ ನಲ್ಲಿ ನಡೆಯಲಿದೆ. ಮಂಗಳೂರು ವಿವಿಯ ಎಲ್ಲಾ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿ ಡಿ.31ರೊಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಘಟಿಕೋತ್ಸವದಲ್ಲಿ ದೃಢೀಕರಿಸಲಾಗುತ್ತದೆ. 2025ರ ಅಕ್ಟೋಬರ್/ನವೆಂಬರ್/ಡಿಸೆಂಬರ್ ನಲ್ಲಿ ನಡೆಯುವ 1,3, ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಪುನಾರಾವರ್ತಿತ ಅಭ್ಯರ್ಥಿಗಳ ಯಾದಿಯು ಸೇರುವುದಿಲ್ಲ. ಈ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹರಾದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆ ನಡೆಯಲಿದೆ. ಪದವಿ 1,300 ರೂ, ಸ್ನಾತ್ತಕೋತ್ತರ ಪದವಿ 1,850 ರೂ, ಪಿಎಚ್ಡಿ 3,200 ರೂ., ಡಿಎಸ್ಸಿ/ಡಿಲಿಟ್ 10,200 ರೂ. ಪ್ರಮಾಣ ಪತ್ರದ ಶುಲ್ಕವಾಗಿದೆ. ಪಿಎಚ್ಡಿ/ಡಿಎಸ್ಸಿ/ಡಿಲಿಟ್ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು ಅರ್ಜಿಯೊಂದಿಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು. ಎಲ್ಲಾ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳ ಅರ್ಹ ವಿದ್ಯಾರ್ಥಿಗಳು ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್ ಶಾಖೆಗಳ ಮೂಲಕ ವಿಶ್ವವಿದ್ಯಾನಿಲಯದ ನಿಧಿಗೆ ಜಮೆ ಆಗುವಂತೆ ಚಲನ್ ಮೂಲಕ ಅಥವಾ ಲಿಂಕ್ https://onlinesbi.sbi.bank.in/sbicollect/icollecthome.htm (Educational institution- mangalore university) CxÀªÁ www.mangaloreuniversity.ac.in (online fees collection) ಮೂಲಕ ಪಾವತಿಸಿ ರಶೀದಿಯನ್ನು ವಿವಿಯಿಂದ ನೀಡಲ್ಪಟ್ಟ ಅಂತಿಮ ಸೆಮಿಸ್ಟರ್ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಕುಲಸಚಿವರ ಕಚೇರಿಗೆ ನಿಗದಿತ ನಮೂನೆಯಲ್ಲಿ ಡಿ.31ರೊಳಗೆ ಸಲ್ಲಿಸಬೇಕು ಎಂದು ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನನ್ನ ಹಿಂದೆ ಯಾರೂ ಬರುವುದು ಬೇಡ, ನನ್ನ ಪರವಾಗಿ ಯಾರು ಮಾತನಾಡುವುದು ಬೇಡ: ಡಿ ಕೆ ಶಿವಕುಮಾರ್ ಬೇಸರ
ಬೆಳಗಾವಿ, ಡಿಸೆಂಬರ್ 12: ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಡಿನ್ನರ್ ಮೀಟಿಂಗ್ ಮೂಲಕ ಬಲ ಪ್ರದರ್ಶನ ಅಗತ್ಯ ನನಗಿಲ್ಲ. ನನ್ನ ಹಿಂದೆ ಯಾರೂ ಬರುವುದು ಬೇಡ, ನನ್ನ ಪರವಾಗಿ ಯಾರು ಮಾತನಾಡುವುದೂ ಬೇಡ. ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳ
ನವಿಲೆ ಸಮಾನಾಂತರ ಜಲಾಶಯದ ಕಾಮಗಾರಿ ತ್ವರಿತವಾಗಿ ಪ್ರಾರಂಭಿಸಬೇಕು : ಶಾಸಕ ವೈ.ಎಂ.ಸತೀಶ್
ಬಳ್ಳಾರಿ(ಡಿ.12): ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ತುಂಗಭದ್ರ ಜಲಾಶಯಕ್ಕೆ ಸಮಾನಾಂತರವಾಗಿ ನವಿಲೆ ಜಲಾಶಯ ನಿರ್ಮಾಣಕ್ಕಾಗಿ 1,000 ಕೋಟಿ ರೂಪಾಯಿ ಅನುದಾನವನ್ನು ಮೀಸಲು ನೀಡಿದ್ದರು. ನವಿಲೆ ಸಮಾನಾಂತರ ಜಲಾಶಯದ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಶಾಸಕ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ. ಬೆಳಗಾವಿಯ `ಸುವರ್ಣ ಸೌಧ'ದಲ್ಲಿ ಶುಕ್ರವಾರ ಈ ಬಗ್ಗೆ ಪ್ರಸ್ತಾಪಿಸಿದ ಶಾಸಕ ವೈ.ಎಂ. ಸತೀಶ್, ತುಂಗಭದ್ರ ಜಲಾಶಯಕ್ಕೆ ನವಿಲೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿ ಭವಿಷ್ಯದಲ್ಲಿ ಅಕಾಲಿಕ ಮಳೆ ಮತ್ತು ನೀರಾವರಿಗೆ ನೀರಿನ ಕೊರತೆ ಆಗುವ ಸಮಸ್ಯೆಯನ್ನು ತಪ್ಪಿಸಲು ಪ್ರಯತ್ನಿಸಬೇಕು. ಆದರೆ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ - ಸಿರುಗುಪ್ಪ ಮತ್ತು ವಿಜಯನಗರ ವ್ಯಾಪ್ತಿಯಲ್ಲಿ ಎರಡನೇ ಬೆಳೆಗೆ 6 ರಿಂದ 7 ಟಿಎಂಸಿ (6.80 ಟಿಎಂಸಿ) ಪ್ರಮಾಣದ ನೀರನ್ನು ಹರಿಸಲು ಸಾಧ್ಯವಿತ್ತು. ಆದರೆ, ಅದು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಸಂಡೂರು ತಾಲೂಕಿನಲ್ಲಿ ಕೆರೆ ತುಂಬಿಸುವ ಕೆಲಸವನ್ನು ಮಾಡಬೇಕಿದೆ. ಪಾವಗಡಕ್ಕೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಮಾರ್ಗ ಮಧ್ಯದಲ್ಲಿ ಬರುವ ಕೊಟ್ಟೂರಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ. ಕಂಪ್ಲಿಯಲ್ಲಿ ಭಾಗಶಃ ಕೆರೆ ತುಂಬಿಸುವ ಕೆಲಸ ಮಾಡಬೇಕು. ನೀರು ನಿರ್ವಹಣೆ ಮತ್ತು ಸಂರಕ್ಷಣೆ ಕುರಿತು ಜನಸಾಮಾನ್ಯರಿಗೆ - ರೈತರಿಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲವಾದಲ್ಲಿ ಕೃಷಿ ಸಂಕಷ್ಟಕ್ಕೆ ಗುರಿಯಾಗಿ, ರೈತರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತುಂಗಭದ್ರ ಜಲಾಶಯಕ್ಕೆ ಸಮಾನಾಂತರವಾಗಿ ನವಿಲೆ ಸಮಾನಾಂತರ ಜಲಾಶಯವನ್ನು ತ್ವರಿತವಾಗಿ ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕು ಎಂದು ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.
ಮಂಗಳೂರು | ಸ್ಕೇಟಿಂಗ್ ನೃತ್ಯದ ಮೂಲಕ ವಿಶ್ವ ದಾಖಲೆಗೈದ ವಿದ್ಯಾರ್ಥಿನಿ ಸುಶ್ರವ್ಯಾ
ಮಂಗಳೂರು, ಡಿ.12: ನಗರದ ಸಂತ ಆಗ್ನೇಸ್ ಕಾಲೇಜಿನ (ಸ್ವಾಯತ್ತ) ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸುಶ್ರವ್ಯಾ ಸ್ಕೇಟಿಂಗ್ ನೃತ್ಯದ ಮೂಲಕ ವಿಶ್ವ ದಾಖಲೆಗೈದಿದ್ದಾರೆ. ಶುಕ್ರವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ನಿರಂತರ ಸ್ಕೇಟಿಂಗ್ ನಲ್ಲಿ ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಸೇರ್ಪಡಿಗೊಳಿಸಿದ್ದಾರೆ. ಮಂಗಳೂರು ಸಮೀಪದ ಚಿಲಿಂಬಿಯ ಉದಯ್ ಕುಮಾರ್ ಮತ್ತು ಶಶಿರೇಖಾ ಎಸ್. ಅವರ ಪುತ್ರಿ ಸುಶ್ರಾವ್ಯ ಪ್ರಸಕ್ತ ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಈಕೆಯ ಪರಿಶ್ರಮ ಮತ್ತು ಕಲಾಸಾಧನೆಗೆ ಜಾಗತಿಕ ಮಾನ್ಯತೆ ಲಭಿಸಿದೆ. ಶುಶ್ರಾವ್ಯ ಕಳೆದ 14 ವರ್ಷಗಳಿಂದ ಸ್ಕೇಟಿಂಗ್ ಕ್ಷೇತ್ರದಲ್ಲಿ ಗುರುಗಳಾದ ಸುಮನ್ ಶ್ರೀಕಾಂತ್ರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ ಭಾರತೀಯ ಶಾಸ್ತ್ರೀಯ ನೃತ್ಯದ ಜೂನಿಯರ್ ಪರೀಕ್ಷೆಯನ್ನು ಪ್ರಥಿಮಾ ಶ್ರೀಧರ್ ಮಾರ್ಗದರ್ಶನದಲ್ಲಿ ಹಾಗೂ ಸೀನಿಯರ್ ಪರೀಕ್ಷೆಯನ್ನು ಸುರೇಶ್ ಅಟ್ಟಾವರ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸ್ವತಃ ಕಲಾತ್ಮಕ ಸ್ಕೇಟಿಂಗ್ ಕಲಿತು ಅಭ್ಯಾಸ ಮಾಡುತ್ತಿದ್ದಾರೆ. ತಾಲೂಕು ಮಟ್ಟದ ವಿದ್ಯಾಭಾರತಿ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ನಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಜೊತೆಗೆ SGFI (School Games Federation of India) ಮಟ್ಟಕ್ಕೂ ಆಯ್ಕೆಯಾಗಿದ್ದರು. RSFI ಜಿಲ್ಲಾ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನಗಳು ಪಡೆದು ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿದ್ದಾರೆ. ಸಂತ ಆಗ್ನೆಸ್ ಪದವಿ ಕಾಲೇಜಿನಲ್ಲಿ ನಡೆದ Agnes Got Talent ಸ್ಪರ್ಧೆಯಲ್ಲೂ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ರೈಲ್ವೆ ಕಾಮಗಾರಿ: ಬೆಂಗಳೂರು ಅರಸೀಕೆರೆ ಹುಬ್ಬಳ್ಳಿ ಮಾರ್ಗದ 3 ರೈಲುಗಳು 12 ದಿನ ಸಂಚಾರ ಭಾಗಶಃ ರದ್ದು!
ಡಿಸೆಂಬರ್ 15 ರಿಂದ 27 ರವರೆಗೆ ಅರಸೀಕೆರೆ ಯಾರ್ಡ್ನಲ್ಲಿ ಪ್ಲಾಟ್ಫಾರ್ಮ್ ಶೆಲ್ಟರ್ ಕಾಮಗಾರಿ ನಡೆಯಲಿದೆ. ಇದರಿಂದಾಗಿ ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಎಕ್ಸ್ ಪ್ರೆಸ್, ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ ಮತ್ತು ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. ಕೆಲವು ರೈಲುಗಳು ಬೀರೂರು ಮತ್ತು ಹಾಸನದಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ.
ಡಿ.13: ಯುನಿವೆಫ್ನಿಂದ ಬೆಂಗಳೂರಿನಲ್ಲಿ ವಿಚಾರಗೋಷ್ಠಿ
ಮಂಗಳೂರು, ಡಿ.12: ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ 20ನೇ ವರ್ಷದ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಪ್ರಯುಕ್ತ ಡಿ.13ರ ಶನಿವಾರ ಸಂಜೆ 7ಕ್ಕೆ ಬೆಂಗಳೂರಿನ ಎಚ್.ಬಿ.ಆರ್. ಲೇ ಔಟ್ನ ಬಿಡಿಎ ಕಾಂಪ್ಲೆಕ್ಸ್ ಮುಂಭಾಗದ ಬ್ಯಾರಿ ಸೌಹಾರ್ದ ಭವನದಲ್ಲಿ ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಸಾಹಿತಿ, ನಿರ್ದೇಶಕ, ಆಪ್ತ ಸಮಾಲೋಚಕ ಯೋಗೇಶ್ ಮಾಸ್ಟರ್ ಹಾಗೂ ಸಿ.ಎಸ್.ಐ. ಬೆಂಗಳೂರು ಇದರ ಉಸ್ತುವಾರಿ ಪ್ರೆಸ್ಬಿಟರ್ ರೆ.ಡಾ.ಡಿ. ಮನೋಹರ್ ಚಂದ್ರಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ಬಿ. ಶಂಸುದ್ದೀನ್ ಅಡೂರು, ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಬಿ. ಶಬೀರ್ ಬ್ರಿಗೇಡ್, ಎಂಎಂವೈಸಿ ಅಧ್ಯಕ್ಷ ಬಿ. ಅಬೂಬಕರ್ ಎಚ್, ಸೀರತ್ ಅಭಿಯಾನದ ಸಂಚಾಲಕ ಯು. ಕೆ. ಖಾಲಿದ್, ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ಸೈಫುದ್ದೀನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

13 C