ಎಸ್ಐಆರ್ ಹಂತ 2 ಚುನಾವಣಾ ಅಧಿಕಾರಿಗಳ ಸಾವುಗಳು: ಬಿಜೆಪಿಗೆ ಖರ್ಗೆ ತರಾಟೆ
ಹೊಸದಿಲ್ಲಿ,ನ.23: ಪ್ರಸಕ್ತ ನಡೆಯುತ್ತಿರುವ ಎರಡನೇ ಹಂತದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಕೆಲಸದ ಹೊರೆಯಿಂದಾಗಿ ಹಲವಾರು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ)ಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರವಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇರಳದ ಕಣ್ಣೂರಿನಲ್ಲಿ ಓರ್ವ ಬಿಎಲ್ಒ ಆತ್ಮಹತ್ಯೆ, ನಂತರ ಪಶ್ಚಿಮ ಬಂಗಾಳದಲ್ಲಿಯೂ ಇಂತಹುದೇ ಘಟನೆಯ ಬಳಿಕ ವಿವಾದ ಭುಗಿಲೆದ್ದಿದೆ. ಆರು ರಾಜ್ಯಗಳಲ್ಲಿ 16 ಬಿಎಲ್ಒಗಳು ಸಾವನ್ನಪಿದ್ದಾರೆ ಎಂದು ಹೇಳಿರುವ ಮಾಧ್ಯಮ ವರದಿಯನ್ನು ತನ್ನ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಖರ್ಗೆ, ಚುನಾವಣಾ ವಂಚನೆಯು ಈಗ ಮಾರಣಾಂತಿಕ ತಿರುವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ. ಎಸ್ಐಆರ್ ಪ್ರಕ್ರಿಯೆಯನ್ನು ‘ಬಲವಂತದ ಕ್ರಮ’ ಎಂದು ಬಣ್ಣಿಸಿರುವ ಅವರು ಅದನ್ನು ನೋಟು ನಿಷೇಧ ಮತ್ತು ಕೋವಿಡ್ ಲಾಕ್ಡೌನ್ ಸಮಯಗಳಿಗೆ ಹೋಲಿಸಿದ್ದಾರೆ. ಬಿಎಲ್ಒಗಳ ಸಾವುಗಳ ಕುರಿತು ಚುನಾವಣಾ ಆಯೋಗದ ಮೌನವನ್ನೂ ಅವರು ಪ್ರಶ್ನಿಸಿದ್ದಾರೆ. ‘ಬಿಜೆಪಿಯ ಮತಗಳ್ಳತನ ಈಗ ಮಾರಣಾಂತಿಕ ತಿರುವನ್ನು ಪಡೆದುಕೊಂಡಿದೆ. ಅತಿಯಾದ ಕೆಲಸದ ಹೊರೆಯಿಂದಾಗಿ ಬಿಎಲ್ಒಗಳು ಮತ್ತು ಮತಗಟ್ಟೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪೀತಿಪಾತ್ರನ್ನು ಕಳೆದುಕೊಂಡಿರುವ ಪ್ರತಿಯೊಂದೂ ಕುಟುಂಬಕ್ಕೆ ನನ್ನ ಗಾಢ ಸಂತಾಪಗಳು. ವಾಸ್ತವದಲ್ಲಿ ಸಾವಿನ ಸಂಖ್ಯೆ ವರದಿಯಾಗಿರುವುದಕ್ಕಿಂತ ಹೆಚ್ಚಾಗಿದ್ದು,ಇದು ಅತ್ಯಂತ ಆತಂಕಕಾರಿಯಾಗಿದೆ. ಈ ಕುಟುಂಬಗಳಿಗೆ ನ್ಯಾಯವನ್ನು ಒದಗಿಸುವವರು ಯಾರು? ಬಿಜೆಪಿ ಮತಗಳ್ಳತನದ ಮೂಲಕ ಅಧಿಕಾರದ ರುಚಿಯನ್ನು ಅನುಭವಿಸುವುದರಲ್ಲಿ ವ್ಯಸ್ತವಾಗಿದ್ದರೆ,ಚುನಾವಣಾ ಆಯೋಗವು ಮೂಕ ಪ್ರೇಕ್ಷಕನಾಗಿ ನೋಡುತ್ತಿದೆ. ಯಾವುದೇ ಪೂರ್ವ ಯೋಜನೆಯಿಲ್ಲದ ಅವಸರದ,ಬಲವಂತದ ಎಸ್ಐಆರ್ ನೋಟು ನಿಷೇಧ ಮತ್ತು ಕೋವಿಡ್ ಲಾಕ್ಡೌನ್ಗಳನ್ನು ನೆನಪಿಸಿದೆ ಎಂದಿದ್ದಾರೆ. ಆತ್ಮಹತ್ಯೆಗಳು ಬಿಜೆಪಿಯ ಅಧಿಕಾರದಾಹದ ಫಲಶ್ರುತಿ ಎಂದು ಬಣ್ಣಿಸಿರುವ ಖರ್ಗೆ, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಎಸ್ಐಆರ್ ವಿರುದ್ಧ ಧ್ವನಿಯೆತ್ತುವಂತೆ ಜನತೆಯನ್ನು ಆಗ್ರಹಿಸಿದ್ದಾರೆ.
ಮಧ್ಯಪ್ರದೇಶ: ಸೈಬರ್ ವಂಚನೆ ಹಣದ ಚಲಾವಣೆಗೆ ಜನಧನ್ ಖಾತೆಗಳ ಬಳಕೆ, ಮೂವರ ಬಂಧನ
ಭೋಪಾಲ,ನ.23: ಬ್ಯಾಂಕ್ ಖಾತೆಗಳು ಇಲ್ಲದವರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸಲು ಪಿಎಂ ಜನಧನ್ ಯೋಜನೆಯಡಿ ಸೃಷ್ಟಿಸಲಾಗಿದ್ದ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳನ್ನು ಈಗ ಮಧ್ಯಪ್ರದೇಶದಲ್ಲಿ ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಈವರೆಗೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇತರ ರಾಜ್ಯಗಳಲ್ಲಿ ಸೈಬರ್ ವಂಚನೆಗಳ ಮೂಲಕ ಲೂಟಿ ಮಾಡಿದ ಹಣದ ಚಲಾವಣೆಗಾಗಿ ವಂಚಕರು ಏಳು ಬ್ಯಾಂಕ್ ಖಾತೆಗಳ ದುರ್ಬಳಕೆ ಮಾಡಿಕೊಂಡಿದ್ದಾರೆ. ಓರ್ವ ಮೃತ ವ್ಯಕ್ತಿಯ ಖಾತೆ ಸೇರಿದಂತೆ ಈ ಪೈಕಿ ಐದು ಖಾತೆಗಳು ಜನಧನ್ ಬ್ಯಾಂಕ್ ಖಾತೆಗಳಾಗಿವೆ. ಇತ್ತೀಚಿಗೆ ದಿನಗೂಲಿ ಕಾರ್ಮಿಕ ಬಿಸ್ರಾಮ್ ಇವ್ನೆ (40),ಜೂನ್ 2025ರಿಂದ ತನ್ನ ಜನಧನ್ ಖಾತೆಯ ಮೂಲಕ ಸುಮಾರು ಎರಡು ಕೋಟಿ ರೂ.ಗಳ ವಹಿವಾಟುಗಳು ನಡೆದಿವೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತನ್ನ ಕೆವೈಸಿ ವಿವರಗಳ ನವೀಕರಣಕ್ಕಾಗಿ ಬ್ಯಾಂಕಿಗೆ ಭೇಟಿ ನೀಡಿದಾಗ ಈ ವಿಷಯ ಅವರಿಗೆ ಗೊತ್ತಾಗಿತ್ತು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬೇತುಲ್ ಜಿಲ್ಲಾ ಎಸ್ಪಿ ವೀರೇಂದ್ರ ಜೈನ್ ಅವರು,ಜಿಲ್ಲಾ ಪೋಲಿಸ್ನ ಸೈಬರ್ ಸೆಲ್ ಈ ಬಗ್ಗೆ ತನಿಖೆ ನಡೆಸಿದ್ದು,ಖಾತೆಯಲ್ಲಿ ಜೂನ್ನಿಂದ ಸುಮಾರು 1.5 ಕೋಟಿ ರೂ.ಗಳ ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು. ನಂತರ ಇಂತಹುದೇ ಇನ್ನೂ ಕೆಲವು ದೂರುಗಳ ಆಧಾರದಲ್ಲಿ ಪೋಲಿಸರು ನಡೆಸಿದ ತನಿಖೆಯಲ್ಲಿ ನಾಲ್ಕು ಜನಧನ್ ಖಾತೆಗಳು ಸೇರಿದಂತೆ ಇನ್ನೂ ಆರು ಬ್ಯಾಂಕ್ ಖಾತೆಗಳಲ್ಲಿ ಒಟ್ಟು 9.84 ಕೋಟಿ ರೂ.ಗಳ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಅಚ್ಚರಿಯ ವಿಷಯವೆಂದರೆ ಶಂಕಾಸ್ಪದ ಹಣಕಾಸು ವಹಿವಾಟುಗಳು ನಡೆದಿರುವ ಒಂದು ಜನಧನ್ ಖಾತೆಯು ರಾಜೇಂದ್ರ ವರ್ಡೆ ಎನ್ನುವವರ ಹೆಸರಿನಲ್ಲಿದ್ದು, ಅವರು ಜೀವಂತವಾಗಿಲ್ಲ. ಕಾಲೇಜು ವಿದ್ಯಾರ್ಥಿನಿ ನರ್ಮದಾ ಇವ್ನೆಯ ವಿದ್ಯಾರ್ಥಿ ವೇತನ ಖಾತೆಯಲ್ಲಿಯೂ ಅನುಮಾನಾಸ್ಪದ ವಹಿವಾಟುಗಳು ಪತ್ತೆಯಾಗಿವೆ. ಈ ಖಾತೆಗಳಲ್ಲಿ 9.84 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಇರಿಸಲಾಗಿತ್ತು ಎನ್ನುವುದು ತನಿಖೆಯಲ್ಲಿ ಕಂಡು ಬಂದಿದೆ. ವಂಚಕರು ಇವುಗಳನ್ನು ಮ್ಯೂಲ್ ಖಾತೆಗಳನ್ನಾಗಿ ಬಳಸಿಕೊಂಡಿದ್ದರು. ಮಹಾರಾಷ್ಟ್ರ,ಕರ್ನಾಟಕ,ದಿಲ್ಲಿ ಮತ್ತು ಹರ್ಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಸೈಬರ್ ವಂಚನೆಗಳ ಮೂಲಕ ದೋಚಲಾಗಿದ್ದ ಹಣವನ್ನು ಈ ಖಾತೆಗಳಲ್ಲಿ ಇರಿಸಲಾಗಿತ್ತು ಎಂದು ಎಸ್ಪಿ ಜೈನ್ ತಿಳಿಸಿದರು.
ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ, ರದ್ದುಗೊಳಿಸುವ ಪ್ರಯತ್ನ: ವಿಪಕ್ಷ
ಹೊಸದಿಲ್ಲಿ,ನ.23: ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷಗಳು,ಅದು ಇತ್ತೀಚಿಗೆ ತಂದಿರುವ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಮತ್ತು ರದ್ದುಗೊಳಿಸುವ ಪ್ರಯತ್ನವಾಗಿದ್ದು,ಉದ್ಯೋಗದಾತರ ಪರವಾಗಿವೆ ಎಂದು ಕಿಡಿಕಾರಿವೆ. ಎಕ್ಸ್ ಪೋಸ್ಟ್ನಲ್ಲಿ ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ನಿಯಮಗಳನ್ನು ಇನ್ನೂ ಅಧಿಸೂಚಿಸಿಲ್ಲವಾದರೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಸಂಬಂಧಿತ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮರು-ಪ್ಯಾಕ್ ಮಾಡಲಾಗಿದೆ ಮತ್ತು ಅವುಗಳನ್ನು ಏನೋ ಕ್ರಾಂತಿಕಾರಿ ಸುಧಾರಣೆಗಳೆಂಬಂತೆ ಮಾರ್ಕೆಟಿಂಗ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಭಾರೀ ಪ್ರಚಾರದೊಂದಿಗೆ ಪರಿಚಯಿಸಲಾಗಿರುವ ನೂತನ ಕಾರ್ಮಿಕ ಸಂಹಿತೆಗಳಡಿ ‘ಶ್ರಮಿಕ ನ್ಯಾಯ’ವನ್ನು ವಾಸ್ತವವನ್ನಾಗಿ ಮಾಡಲು ಮೋದಿ ಸರಕಾರವು ದಿನಕ್ಕೆ 400 ರೂ.ಗಳ ರಾಷ್ಟ್ರೀಯ ಕನಿಷ್ಠ ವೇತನ, 25 ಲಕ್ಷ ರೂ.ಗಳ ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ನಗರ ಪ್ರದೇಶಗಳಲ್ಲಿನ ಭಾರತೀಯ ಕಾರ್ಮಿಕರಿಗೆ ಉದ್ಯೋಗ ಖಾತರಿ ಕಾಯ್ದೆಯನ್ನು ಖಚಿತಪಡಿಸಬೇಕು ಎಂದಿರುವ ರಮೇಶ,ಆದರೆ ಈ ಸಂಹಿತೆಗಳು ನರೇಗಾ ಸೇರಿದಂತೆ ದಿನಕ್ಕೆ 400 ರೂ.ಗಳ ರಾಷ್ಟ್ರೀಯ ಕನಿಷ್ಠ ವೇತನ, 25 ಲಕ್ಷ ರೂಗಳ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸಲು ಆರೋಗ್ಯ ಹಕ್ಕು ಕಾನೂನು,ನಗರ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಕಾಯ್ದೆ,ಜೀವವಿಮೆ ಮತ್ತು ಅಪಘಾತ ವಿಮೆ ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಹಾಗೂ ಪ್ರಮುಖ ಸರಕಾರಿ ಕಚೇರಿಗಳಲ್ಲಿ ಗುತ್ತಿಗೆಯಾಧಾರಿತ ಉದ್ಯೋಗ ಪದ್ಧತಿಗೆ ಅಂತ್ಯ;ಶ್ರಮಿಕ ನ್ಯಾಯವನ್ನು ವಾಸ್ತವವಾಗಿಸಲು ಕಾರ್ಮಿಕರ ಈ ಐದು ಅಗತ್ಯ ಬೇಡಿಕೆಗಳನ್ನು ಈಡೇರಿಸುತ್ತವೆಯೇ ಎಂದು ಪ್ರಶ್ನಿಸಿದ್ದಾರೆ. ಕಷ್ಟ ಪಟ್ಟು ಪಡೆಯಲಾಗಿದ್ದ 29 ಕಾರ್ಮಿಕ ಕಾನೂನುಗಳು ಈವರೆಗೆ ಕಾರ್ಮಿಕರಿಗೆ ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ನೀಡಿದ್ದವು,ಆದರೆ ನೂತನ ಕಾರ್ಮಿಕ ಸಂಹಿತೆಗಳು ಈ ಕಾನೂನುಗಳನ್ನು ರದ್ದುಗೊಳಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಿಪಿಎಂ, ಹಲವು ಮಿತಿಗಳ ಹೊರತಾಗಿಯೂ ಸೂಕ್ತ ವೇತನ,ಕೆಲಸದ ಸಮಯ,ಸಾಮಾಜಿಕ ಭದ್ರತೆ,ಕೈಗಾರಿಕಾ ಸುರಕ್ಷತೆ ಮತ್ತು ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯೋಗದಾತರ ನಡುವೆ ಒಪ್ಪಂದಕ್ಕೆ ಅವಕಾಶ ಇವು ಸ್ವಲ್ಪ ಮಟ್ಟಿಗಾದರೂ ಅಸ್ತಿತ್ವದಲ್ಲಿದ್ದವು. ನೂತನ ಸಂಹಿತೆಗಳು ಸರಳೀಕರಣದ ಬದಲು ಅಸ್ತಿತ್ವದಲ್ಲಿರುವ ಹಕ್ಕುಗಳನ್ನು ದುರ್ಬಲಗೊಳಿಸಲು ಮತ್ತು ರದ್ದುಗೊಳಿಸಲು ಉದ್ದೇಶಿಸಿವೆ. ಅವು ಉದ್ಯೋಗದಾತರ ಪರವಾಗಿವೆ ಎಂದು ಹೇಳಿದೆ. ನೂತನ ಕಾರ್ಮಿಕ ಸಂಹಿತೆಗಳು ಉದ್ಯೋಗಗಳು ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತವೆ ಎಂಬ ಸರಕಾರದ ಹೇಳಿಕೆಯು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದೂ ಸಿಪಿಎಂ ಪ್ರತಿಪಾದಿಸಿದೆ.
ರಾವಣನ ಪತನಕ್ಕೆ ದುರಹಂಕಾರವೇ ಕಾರಣವಾಗಿತ್ತು: ಬಿಜೆಪಿ ವಿರುದ್ಧ ಏಕನಾಥ ಶಿಂದೆ ಪರೋಕ್ಷ ದಾಳಿ
ಮುಂಬೈ,ನ.23: ಶಿವಸೇನೆಯ ಶಾಸಕರನ್ನು ಬೇಟೆಯಾಡಲು ಪ್ರಯತ್ನಕ್ಕಾಗಿ ಮಿತ್ರಪಕ್ಷ ಬಿಜೆಪಿಯನ್ನು ಟೀಕಿಸಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆಯವರು, ತನ್ನ ಪಕ್ಷದ ಬೆನ್ನು ಬೀಳುತ್ತಿರುವವರಿಗೆ ರಾವಣನ ಗತಿಯೇ ಎದುರಾಗಲಿದೆ ಎಂದು ಹೇಳಿದ್ದಾರೆ. ಶಿಂದೆ ಅವರು ನಗರ ಪಂಚಾಯತ್ ಅಧ್ಯಕ್ಷ ಹುದ್ದೆಗೆ ತನ್ನ ಪಕ್ಷದ ಅಭ್ಯರ್ಥಿಯಾಗಿರುವ ಭರತ ರಾಜಪೂತ್ ಪರ ಪ್ರಚಾರಕ್ಕಾಗಿ ದಹನುಗೆ ಭೇಟಿ ನೀಡಿದ್ದ ಸಂದರ್ಭ ‘ರಾವಣನ ದುರಹಂಕಾರ’ದ ವಿರುದ್ಧ ಮತ ಚಲಾಯಿಸುವಂತೆ ಜನತೆಗೆ ಕರೆ ನೀಡಿದ ಶಿಂದೆ,‘ನಾವು ಸರ್ವಾಧಿಕಾರ ಮತ್ತು ನಿರಂಕುಶತೆಯ ವಿರುದ್ಧ ಒಂದಾಗಿ ಇಲ್ಲಿಗೆ ಬಂದಿದ್ದೇವೆ’ ಎಂದರು. ರಾಜಪೂತ್ ಪಾಲ್ಘರ್ ಜಿಲ್ಲಾ ಬಿಜೆಪಿಯ ಅಧ್ಯಕ್ಷರೂ ಆಗಿದ್ದಾರೆ. ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಕಣದಿಂದ ಹಿಂದೆಗೆದುಕೊಂಡಿದ್ದು,ಶಿವಸೇನೆ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯೇರ್ಪಟ್ಟಿದೆ. ‘ನಮ್ಮ ಸೋದರಿಯರು ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು ಮತ್ತು ಅದರ ಫಲಿತಾಂಶವನ್ನು ನಾವು ನೋಡಿದ್ದೇವೆ. ನಮ್ಮ ಸೋದರಿಯರು ಅದೇ ರೀತಿ ಮತ ಚಲಾಯಿಸಿದರೆ ಈ ಚುನಾವಣೆಗಳಲ್ಲಿ ನಾವು ಭಾರೀ ಗೆಲುವನ್ನು ಸಾಧಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಈ ಗೆಲುವು ಈ ಪ್ರದೇಶದಲ್ಲಿ ಪ್ರಮುಖ ಅಭಿವೃಧ್ಧಿಗೆ ಕಾರಣವಾಗಲಿದೆ ’ಎಂದು ಹೇಳಿದ ಶಿಂದೆ,‘ಭ್ರಷ್ಟಾಚಾರವನ್ನು ಬೇರು ಸಹಿತ ನಿರ್ಮೂಲನಗೊಳಿಸಲು ನಾವು ಬಯಸಿದ್ದೇವೆ,ಆದ್ದರಿಂದ ಈ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವುದು ತುಂಬ ಮುಖ್ಯವಾಗಿದೆ’ ಎಂದರು. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿನ ಆಂತರಿಕ ತಿಕ್ಕಾಟವನ್ನು ಕೇಸರಿ ಪಕ್ಷದ ಉನ್ನತ ನಾಯಕತ್ವದ ಗಮನಕ್ಕೆ ತರುವ ಶಿಂದೆ ಪ್ರಯತ್ನಗಳು ನಿರೀಕ್ಷಿತ ಫಲವನ್ನು ನೀಡಿಲ್ಲ. ತಾನು ತನ್ನ ವಿಸ್ತರಣಾ ಯೋಜನೆಯನ್ನು ಮುಂದುವರಿಸುವುದಾಗಿ ಬಿಜೆಪಿ ಅವರಿಗೆ ತಿಳಿಸಿದೆ ಎನ್ನಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮುನ್ನ ಶಿವಸೇನೆ ನಾಯಕರನ್ನು ಬೇಟೆಯಾಡಲು ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಅವರ ಪ್ರಯತ್ನಗಳು ಮತ್ತು ಮಹಾಯುತಿ ಸರಕಾರದಲ್ಲಿನ ಮಲತಾಯಿ ಧೋರಣೆಯ ಬಗ್ಗೆ ಶಿಂದೆ ಕಳವಳ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
44 ದಿನಗಳಲ್ಲಿ ಸುಮಾರು 500 ಸಲ ಗಾಝಾ ಕದನ ವಿರಾಮವನ್ನು ಉಲ್ಲಂಘಿಸಿ ನೂರಾರು ಜನರನ್ನು ಕೊಂದ ಇಸ್ರೇಲ್ !
ಗಾಝಾ,ನ.23: ಗಾಝಾ ಸರಕಾರದ ಮಾಧ್ಯಮ ಕಚೇರಿಯ ಪ್ರಕಾರ, ಅಕ್ಟೋಬರ್ 10ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಗಾಝಾ ಕದನ ವಿರಾಮ ಜಾರಿಗೊಂಡ ಬಳಿಕ 44 ದಿನಗಳಲ್ಲಿ ಕನಿಷ್ಠ 497 ಸಲ ಅದನ್ನು ಉಲ್ಲಂಘಿಸಿರುವ ಇಸ್ರೇಲ್ ನೂರಾರು ಫೆಲೆಸ್ತೀನಿಗಳನ್ನು ಕೊಂದಿದೆ. ದಾಳಿಗಳಲ್ಲಿ ಸುಮಾರು 342 ನಾಗರಿಕರು ಸಾವನ್ನಪ್ಪಿದ್ದು, ಬಲಿಯಾದವರಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರಾಗಿದ್ದಾರೆ. ‘ಇಸ್ರೇಲಿ ಅಧಿಕಾರಿಗಳಿಂದ ಕದನ ವಿರಾಮ ಒಪ್ಪಂದದ ನಿರಂತರ ಗಂಭೀರ ಮತ್ತು ವ್ಯವಸ್ಥಿತ ಉಲ್ಲಂಘನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಮಾಧ್ಯಮ ಕಚೇರಿಯು,ಇವು ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಒಪ್ಪಂದಕ್ಕೆ ಲಗತ್ತಾದ ಮಾನವೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಗಳಾಗಿವೆ. ಈ ಉಲ್ಲಂಘನೆಗಳ ಪೈಕಿ 27 ಇಂದು( ಶನಿವಾರ) ಸಂಭವಿಸಿದ್ದು, 24 ಜನರು ಹುತಾತ್ಮರಾಗಿದ್ದಾರೆ ಮತ್ತು 87 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ತನ್ನ ಉಲ್ಲಂಘನೆಗಳಿಂದ ಉಂಟಾಗುವ ಮಾನವೀಯ ಮತ್ತು ಭದ್ರತಾ ಪರಿಣಾಮಗಳಿಗೆ ಇಸ್ರೇಲ್ ಸಂಪೂರ್ಣವಾಗಿ ಹೊಣೆಯಾಗಿದೆ ಎಂದೂ ಅದು ಹೇಳಿದೆ. ಧ್ವಂಸಗೊಂಡಿರುವ ಗಾಝಾಕ್ಕೆ ತೀರ ಅಗತ್ಯವಿರುವ ನೆರವು ಹಾಗೂ ವೈದ್ಯಕೀಯ ಸಾಮಗ್ರಿಗಳ ಸಂಪೂರ್ಣ ಮತ್ತು ಮುಕ್ತ ಪೂರೈಕೆಯನ್ನು ಕದನ ವಿರಾಮ ಒಪ್ಪಂದದಲ್ಲಿ ಕಡ್ಡಾಯಗೊಳಿಸಿದ್ದರೂ ಇಸ್ರೇಲ್ ಅದನ್ನು ನಿರ್ಬಂಧಿಸುತ್ತಲೇ ಇದೆ. ಇಸ್ರೇಲ್ ಸೇನೆಯು ಶನಿವಾರ ಗಾಝಾದಾದ್ಯಂತ ಸರಣಿ ವಾಯುದಾಳಿಗಳನ್ನು ನಡೆಸಿದ್ದು,ಮಕ್ಕಳು ಸೇರಿದಂತೆ ಕನಿಷ್ಠ 24 ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದಾರೆ. ಗಾಝಾದ ‘ಹಳದಿ ರೇಖೆ’ಯಿಂದ ಒಳಗೆ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿ ಹಮಾಸ್ ಹೋರಾಟಗಾರನೋರ್ವ ಇಸ್ರೇಲಿ ಸೈನಿಕರ ಮೇಲೆ ದಾಳಿ ಮಾಡಿದ ಬಳಿಕ ಈ ದಾಳಿಗಳನ್ನು ನಡೆಸಲಾಗಿದ್ದು,ಐವರು ಹಿರಿಯ ಹಮಾಸ್ ಹೋರಾಟಗಾರರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರ ಕಚೇರಿಯು ತಿಳಿಸಿದೆ. ಇಸ್ರೇಲಿ ಸೇನೆಯು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ತನ್ನ ಪಡೆಗಳನ್ನು ತೀರ ಒಳಪ್ರದೇಶಗಳಿಗೆ ಸ್ಥಳಾಂತರಿಸಿರುವುದರಿಂದ ಉತ್ತರ ಗಾಝಾದಲ್ಲಿ ಡಝನ್ಗಟ್ಟಲೆ ಫೆಲೆಸ್ತೀನಿ ಕುಟುಂಬಗಳು ಮುತ್ತಿಗೆಯಡಿ ಇವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದದಲ್ಲಿ ನಿಗದಿಗೊಳಿಸಲಾಗಿರುವ ಹಳದಿ ರೇಖೆಯು ಗುರುತಿಸದ ಗಡಿಯನ್ನು ಸೂಚಿಸುತ್ತಿದ್ದು,ಕಳೆದ ತಿಂಗಳು ಕದನ ವಿರಾಮ ಒಪ್ಪಂದ ಜಾರಿಗೆ ಬಂದಾಗ ಇಸ್ರೇಲ್ ಸೇನೆಯು ಅಲ್ಲಿ ಮರುಸ್ಥಾಪನೆಗೊಂಡಿತ್ತು. ಇದು ಗಡಿ ರೇಖೆಯನ್ನು ಸಮೀಪಿಸುವ ಫೆಲೆಸ್ತೀನಿಯರನ್ನು ಗುಂಡಿಕ್ಕಿ ಕೊಲ್ಲುತ್ತಿರುವ ಇಸ್ರೇಲ್ಗೆ ಅರ್ಧಕ್ಕೂ ಹೆಚ್ಚಿನ ಕರಾವಳಿ ಪ್ರದೇಶದ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವಕಾಶ ಒದಗಿಸಿದೆ. ಇಸ್ರೇಲ್ ‘ಕಲ್ಪಿತ ನೆಪಗಳಡಿ’ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂದು ಶನಿವಾರ ಆರೋಪಿಸಿರುವ ಹಮಾಸ್,ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ, ಈಜಿಪ್ಟ್ ಮತ್ತು ಖತರ್ ತಕ್ಷಣ ಮಧ್ಯ ಪ್ರವೇಶಿಸುವಂತೆ ಕರೆ ನೀಡಿದೆ.
ಕೊಪ್ಪಳ | ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ದುರುಪಯೋಗ : ಪಿಡಿಒ ಅಮಾನತು
ಗಂಗಾವತಿ : ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಹಣವಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಗೌಸ್ ಸಾಬ ಮುಲ್ಲಾ ಅಮಾನತಾದ ಅಧಿಕಾರಿ. ಇವರು ಗ್ರಾಮ ಪಂಚಾಯತ್ ಸದಸ್ಯರ 1.32 ಲಕ್ಷ ರೂ. ಗೌರವಧನ ಬೇರೆ ಕಾಮಗಾರಿಗೆ ಬಳಕೆ ಮಾಡಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಲ್ಲಪ್ಪ ದಾನಶೆಟ್ಟಿ ಎಂಬವರು ದೂರು ನೀಡಿದ್ದರು. ಈ ಕುರಿತು ತನಿಖೆಗೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಅವರನ್ನು ನಿಯೋಜಿಸಲಾಗಿತ್ತು. ಇಒ ಅವರ ವರದಿಯ ಆಧಾರದ ಮೇಲೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವರ್ಣೀತ್ ನೇಗಿ ಅವರು ಗೌಸ್ ಸಾಬ ಮುಲ್ಲಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕಂಪ್ಲಿ: ಕುಡತಿನಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಹಣಕಾಸು ಇಲಾಖೆ ಅನುಮತಿ ನೀಡದಿರುವುದರಿಂದ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕುಡತಿನಿ ಪಟ್ಟಣದ ನಿವಾಸಿಗಳು ಸಂಸದ ಈ ತುಕಾರಾಂ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಟಿ.ಕೆ.ಕಾಮೇಶ್ ಮಾತನಾಡಿ, ಕುಡತಿನಿ ಪಟ್ಟಣವು ಮೂವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇದು ಹತ್ತಾರು ಹಳ್ಳಿಗಳ ಕೇಂದ್ರ ಸ್ಥಾನವಾಗಿದೆ. ಕುಡತಿನಿ ಪಟ್ಟಣದ ಸುತ್ತಮುತ್ತ ವಿದ್ಯುತ್ ಉತ್ಪಾದನೆ, ಕಬ್ಬಿಣ ಹಾಗೂ ಮೆದು ಕಬ್ಬಿಣ ಉತ್ಪಾದನೆಯ ಹಲವಾರು ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಇವುಗಳಿಂದ ಹೊರಬಿಡುವ ವಿಷಾನಿಲ, ಕಪ್ಪು ಧೂಳು, ಕುಡತಿನಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಅಸ್ತಮಾ, ಕ್ಷಯ, ಕ್ಯಾನ್ಸರ್, ಗರ್ಭ ಕೋಶ ಸಮಸ್ಯೆ, ಚರ್ಮ ರೋಗ ಇತರೆ ಹಲವಾರು ಭಯಾನಕ ರೋಗಗಳು ಹರಡುತ್ತದೆ ಎಂದು ಹೇಳಿದರು. ಈ ಭಾಗದ ಹಳ್ಳಿಗಳ ರೋಗಿಗಳಿಗೆ ಸಹಾಯವಾಗುವಂತೆ ಕೂಡಲೇ ಆಸ್ಪತ್ರೆಗೆ ಮೀಸಲಿರುವ ಜಮೀನಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ವಸಂತಕುಮಾರ್, ತಿಪ್ಪೇಸ್ವಾಮಿ, ತಿಮ್ಮಪ್ಪ, ಮನೋಜ್, ಹನುಮಂತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಂಗಳೂರು | ಮಾನವರಲ್ಲಿ ಸೌಹಾರ್ದ, ಸದ್ಭಾವನೆ ರಕ್ತಗತವಾಗಿರಬೇಕು : ಡಾ.ಶಿಖಾರಿಪುರ ಕೃಷ್ಣಮೂರ್ತಿ
ಸದ್ಭಾವನಾ ವೇದಿಕೆಯಿಂದ ದೀಪಾವಳಿ, ಈದ್, ಕ್ರಿಸ್ಮಸ್ ಸೌಹಾರ್ದ ಕೂಟ
ʼಸಂಪುಟ ಪುನರ್ ರಚನೆʼ: ಖರ್ಗೆ ನಿವಾಸಕ್ಕೆ ಸಚಿವರು, ಶಾಸಕರು ದೌಡು!
ʼನಾಯಕತ್ವ ಬದಲಾವಣೆʼ ವದಂತಿಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ಏನು?
ʻಕಾಂಗ್ರೆಸ್ ಸರ್ಕಾರ ಬೀಳಲ್ಲ, ಕುರ್ಚಿ ಪೈಪೋಟಿ ಮಧ್ಯೆ ಲೂಟಿ ಬಗ್ಗೆ ಯೋಚನೆ ಮಾಡ್ತಿರ್ತಾರೆʼ: ಎಚ್ಡಿ ಕುಮಾರಸ್ವಾಮಿ
ರಾಜ್ಯ ಸರಕಾರದ ಪತನದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿಯಿಂದಾಗಿ ಸರಕಾರ ಅಸ್ಥಿರಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಐದು ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನತೆಯ ಮೇಲೆ ದಾಖಲೆಯ ತೆರಿಗೆ ವಿಧಿಸಲಾಗಿದೆ ಎಂದು ಅವರು ಟೀಕಿಸಿದರು. ಬಿಜೆಪಿ ಜತೆಗಿನ ಮೈತ್ರಿ ಬಗ್ಗೆಯೂ ಅವರು ಮಾತನಾಡಿದರು. ಸಂಸದ ಜಗದೀಶ ಶೆಟ್ಟರ ಅವರು ಕೂಡ ಸರಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.
ರಾಯಚೂರು | ಜಿಲ್ಲಾಡಳಿತದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ಆರಂಭ
ರಾಯಚೂರು : ರಾಯಚೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಉಚಿತ ತರಬೇತಿಯ ತರಗತಿಗಳು ಯಶಸ್ವಿಯಾಗಿ ಆರಂಭವಾದವು. ತರಬೇತಿಯ ಮೊದಲ ದಿನವಾದ ನವೆಂಬರ್ 22ರಂದು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು, ತರಬೇತಿಗೆ ಆಯ್ಕೆಯಾದ 120 ವಿದ್ಯಾರ್ಥಿಗಳೊಂದಿಗೆ ನೇರ ಸಂವಹನ ನಡೆಸಿದರು. ರಾಯಚೂರು ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಗಜಾನನ ಬಾಳೆ, ತರಬೇತಿಯ ಅವಧಿ, ತರಬೇತಿಯ ಪಾಠಗಳು, ತರಬೇತಿಯ ಪ್ರತಿದಿನದ ಸಮಯ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚಿಸಿದರು. ಈ ವೇಳೆ ತರಬೇತಿಯ ನೋಡಲ್ ಅಧಿಕಾರಿಗಳು ಆಗಿರುವ ತಹಶೀಲ್ದಾರರಾದ ಸುರೇಶ ವರ್ಮಾ, ಅಮರೇಶ್ ಬಿರಾದಾರ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಪ್ರವೀಣ್ ಕುಮಾರ್, ಜಿಲ್ಲಾ ಗ್ರಂಥಾಲಯ ಇಲಾಖೆಯ ಅಧಿಕಾರಿಗಳಾದ ಡಾ.ಕಲಾಲ್, ನಿರ್ಮಲಾ ಹೆಚ್ ಹೊಸೂರ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಈರೇಶ್ ನಾಯಕ, ಆಹಾರ ಇಲಾಖೆಯ ಅಧಿಕಾರಿ ನಝೀರ್ ಅಹ್ಮದ್, ಹಟ್ಟಿ ಚಿನ್ನದ ಗಣಿ ಕಂಪೆನಿಯ ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಕೃಷ್ಣ ಶಾವಂತಗೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ಇಲಾಖೆಯ ಚಂದಪ್ಪ, ಅರಣ್ಯ ಇಲಾಖೆಯ ಮಹೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ, ಪ್ರತಿಭೆಯು ಪ್ರತಿಯೊಬ್ಬರಲ್ಲೂ ಇರುತ್ತದೆ. ಪರಿಸರ ಮತ್ತು ಪ್ರಯತ್ನದಿಂದ ಗುರಿ ಸಾಧನೆ, ಯಶಸ್ಸು ಸಾಧ್ಯವಾಗುತ್ತದೆ. ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ, ಬೀದರ, ಬಳ್ಳಾರಿ, ವಿಜಯನಗರ, ಕೊಪ್ಪಳ ಭಾಗದ ವಿದ್ಯಾರ್ಥಿಗಳು ಯಾವುದೇ ಸಾಧನೆಯಲ್ಲಿ ಹಿಂದೆ ಉಳಿದಿಲ್ಲ. ಬಡತನ, ತಿಳಿವಳಿಕೆ ಕೊರತೆಯಿಂದ ಹಿಂದೆ ಬೀಳುವ ರಾಯಚೂರು ಸೇರಿದಂತೆ ರಾಜ್ಯದ ಯಾವುದೇ ಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಪರಿಸರ ಮೂಡಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಬಾವಿ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಈ ತರಬೇತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ರಾಯಚೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜನೆ ಮಾಡಿರುವ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಯ ಕಾರ್ಯಕ್ರಮವನ್ನು ರಾಯಚೂರು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕಾಗಿ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ನಾನಾ ಸಮಿತಿಗಳನ್ನು ರಚಿಸಿ ಹಲವು ದಿನಗಳಿಂದ ಮಾರ್ಗದರ್ಶನ ಮಾಡಿದ್ದಾರೆ. ತಹಶೀಲ್ದಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ತಯಾರಿಸುವುದು, ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು, ತರಬೇತಿಗಳ ಹಾಲ್ ಸಿದ್ಧಪಡಿಸುವುದು ಸೇರಿದಂತೆ ಹತ್ತಾರು ಮಹತ್ವದ ಕಾರ್ಯಗಳನ್ನು ತಿಂಗಳುಗಟ್ಟಲೇ ನಿರಂತರ ನಡೆಸಿ ಶ್ರಮಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು ತಪ್ಪದೇ ತರಗತಿಗೆ ಹಾಜರಾಗಿ ತರಬೇತಿ ಪಡೆದುಕೊಂಡಲ್ಲಿ ಜಿಲ್ಲಾಡಳಿತದ ಕಾರ್ಯಕ್ಕೆ ಅರ್ಥ ಬರಲಿದೆ ಎಂದು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಹೇಳಿದ್ದಾರೆ.
ಮಹಾರಾಷ್ಟ್ರ | ಮತ ನೀಡಿದರಷ್ಟೇ ಅನುದಾನದ ಬೆದರಿಕೆ ಹಾಕಿದ ಅಜಿತ್ ಪವಾರ್: ಕ್ರಮಕ್ಕೆ ಆಗ್ರಹಿಸಿದ ಎನ್ಸಿಪಿ ಶರದ್ ಬಣ
ನಾಗ್ಪುರ: ಮತದಾರರ ಬೆಂಬಲಕ್ಕಾಗಿ ಅಭಿವೃದ್ಧಿ ಅನುದಾನಗಳನ್ನು ಸಂಪರ್ಕಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರಂತಹವರ ಹೇಳಿಕೆಯ ಮೇಲೆ ಚುನಾವಣಾ ಆಯೋಗ ನಿಗಾವಹಿಸಬೇಕು ಎಂದು ಎನ್ಸಿಪಿ (ಶರದ್ ಬಣ) ಸಂಸದೆ ಸುಪ್ರಿಯಾ ಸುಳೆ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಪ್ರಿಯಾ ಸುಳೆ, “ಇಂತಹ ಹೇಳಿಕೆಗಳ ಮೇಲೆ ನಿಗಾವಹಿಸುವುದು ಒಂದು ಬಲಿಷ್ಠ ಪ್ರಜಾತಂತ್ರದಲ್ಲಿ ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹದ್ದು ಆಗುತ್ತಿರುವುದನ್ನು ನಾವು ಕಾಣುತ್ತಿಲ್ಲ. ನಾನೇ ನನ್ನ ಪ್ರಕರಣವೊಂದರಲ್ಲಿ ಚುನಾವಣಾ ಆಯೋಗದಲ್ಲಿ ಹೋರಾಟ ನಡೆಸಿದ್ದೆ. ಆದರೆ, ಎಲ್ಲ ದಾಖಲೆಗಳಿದ್ದರೂ ನಮಗೆ ನ್ಯಾಯ ದೊರೆಯಲಿಲ್ಲ” ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಎನ್ಸಿಪಿ (ಶರದ್ ಬಣ)ದ ವಕ್ತಾರ ಮಹೇಶ್ ತಾಪಸೆ, ಈ ಹೇಳಿಕೆಗಾಗಿ ಅಜಿತ್ ಪವಾರ್ ಸಾರ್ವಜನಿಕ ಕ್ಷಮೆ ಕೋರಬೇಕು ಎಂದೂ ಒತ್ತಾಯಿಸಿದ್ದಾರೆ. ಶುಕ್ರವಾರ ಪುಣೆ ಜಿಲ್ಲೆಯ ಬಾರಾಮತಿ ತಾಲ್ಲೂಕಿನ ಮಾಲೇಗಾಂವ್ ನಗರ ಪಂಚಾಯತ್ ಗೆ ನಡೆಯುತ್ತಿರುವ ಚುನಾವಣೆಯ ಭಾಗವಾಗಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅಜಿತ್ ಪವಾರ್, ಒಂದು ವೇಳೆ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಖಾತರಿಗೊಳಿಸಿದರೆ, ನಗರದ ಅಭಿವೃದ್ಧಿಗೆ ಯಾವುದೇ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಅದೇ ಒಂದು ವೇಳೆ ನಮ್ಮನ್ನು ತಿರಸ್ಕರಿಸಿದರೆ, ನಾನೂ ಕೂಡಾ ನಿಮ್ಮನ್ನು ತಿರಸ್ಕರಿಸುತ್ತೇನೆ ಎಂದು ಮತದಾರರಿಗೆ ಬೆದರಿಕೆ ಒಡ್ಡಿದ್ದರು. ಇದು ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಮಂಡ್ಯ | ತೆರೆದ ಬಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ ಪತ್ತೆ
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಅಘಲಯ- ದೊಡ್ಡಸೋಮನಹಳ್ಳಿ ತಿರುವಿನಲ್ಲಿರುವ ತೆರೆದ ಬಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಶವ ಶನಿವಾರ ಪತ್ತೆಯಾಗಿದೆ. ವಿದ್ಯಾರ್ಥಿಯು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಳೆಸಿದ್ದರಹಳ್ಳಿ( ಎಮ್ಮೆದೊಡ್ಡಿ) ಗ್ರಾಮದ ಸಿದ್ದಪ್ಪ ಅವರ ಪುತ್ರ ಎಸ್. ಕರಣ್ (22). ಈತ ಹಾಸನ ಜಿಲ್ಲೆಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಎಂದು ತಿಳಿದು ಬಂದಿದೆ. ಬಾವಿಯ ದಡದಲ್ಲಿ ಸುಮಾರು 3 ಲಕ್ಷ ಬೆಲೆ ಬಾಳುವ ಬೈಕ್, 50 ಸಾವಿರ ಬೆಲೆ ಬಾಳುವ ಮೊಬೈಲ್, ಕಾಲೇಜು ಬ್ಯಾಗ್ ದೊರೆತಿದ್ದು, ಯುವಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಯ ಮುಖದ ಭಾಗಕ್ಕೆ ಗಾಯಗಳಾಗಿದ್ದು, ಸಾವಿನ ನಿಖರತೆಗೆ ಕಾರಣ ತಿಳಿಯುವ ಬಗ್ಗೆ ಕೆ.ಆರ್.ಪೇಟೆ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಸುಮಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಪೋಷಕರಿಗೆ ನೀಡಲಾಯಿತು.
ಯಾದಗಿರಿ | ನೂತನ ಆಂಬುಲೆನ್ಸ್ಗಳ ಲೋಕಾರ್ಪಣೆ
ಸುರಪುರ : ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹುಣಸಗಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾಗಿರುವ ಆಂಬುಲೆನ್ಸ್ಗಳನ್ನು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್ ವಿ ನಾಯಕ್, ನಮ್ಮ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ತಾಯಿ ಮಕ್ಕಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಎರಡು ದಿನಗಳಿಂದ ವಿವಿಧ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇದಲ್ಲದೆ ಇನ್ನು ಮುಂದೆ ಸುರಪುರದಲ್ಲಿ ಆಂಬುಲೆನ್ಸ್ ಸೇವೆ ದೊರೆಯಲಿದೆ. ಹುಣಸಗಿಯ ಸಮುದಾಯ ಆರೋಗ್ಯ ಕೇಂದ್ರಕ್ಕೂ ಆಂಬುಲೆನ್ಸ್ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್ ವಿ ನಾಯಕ್, ಕೆವೈಡಿಸಿಸಿ ಅಧ್ಯಕ್ಷ ವಿಠಲ ಯಾದವ್, ತಾಲೂಕು ವಕ್ಕಲುತನ ಹುಟ್ಟುವಳಿ ಮಾರಾಟಗಾರ ಸಹಕಾರ ಸಂಘದ ಅಧ್ಯಕ್ಷ ರಾಜಾ ಸಂತೋಷ್ ನಾಯಕ್, ಯೂಥ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜಾ ಕುಮಾರ್ ನಾಯಕ್, ಮಲ್ಲಣ್ಣ ಸಾಹುಕಾರ್ ನರಸಿಂಗಪೇಟ, ದೊಡ್ಡ ದೇಸಾಯಿ ದೇವರಗೋನಾಲ, ಗುಂಡಪ್ಪ ಸೋಲಾಪುರ, ಬೀರಲಿಂಗ ಬಾದ್ಯಾಪೂರ, ರಾಘವೇಂದ್ರ ಗೆದ್ದಲಮರಿ, ಶಕೀಲ್ ಅಹ್ಮದ್ ಖುರೇಶಿ, ಗೋಪಾಲ ಗುತ್ತೇದಾರ್, ನಾಸೀರ್ ಕುಂಡಾಲೆ, ಅಬ್ದುಲ್ ಅಲಿಮ್ ಗೋಗಿ, ಮಾರ್ಥಂಡಪ್ಪ ದೇವರಗೋನಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಧಾನಿ ಉಡುಪಿ ಭೇಟಿ: ಜಿಲ್ಲಾಧಿಕಾರಿಗಳಿಂದ ಪರಿಶೀಲನೆ
ಉಡುಪಿ, ನ.23: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಪರಿಶೀಲನೆ ನಡೆಸಿದರು. ಅಧಿಕಾರಿಗಳೊಂದಿಗೆ ಆದಿಉಡುಪಿ ಹೆಲಿಪ್ಯಾಡ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿನ ಸುರಕ್ಷತ ಕ್ರಮ, ಕಾಮಗಾರಿಗಳನ್ನು ವೀಕ್ಷಿಸಿದರು. ಬಳಿಕ ಮಠದ ರಾಜಾಂಗಣ ಪಾರ್ಕಿಂಗ್ ಸಮೀಪ ಹಾಕಲಾದ ಚಪ್ಪರವನ್ನು ವೀಕ್ಷಿಸಿ, ಮಠದವರಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಡಿವೈಎಸ್ಪಿ ಪ್ರಭು ಡಿ.ಟಿ., ಪೌರಾಯುಕ್ತ ಮಹಾಂತೇಶ್ ಹಂಗರಗಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಕಲಬುರಗಿ | ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಕಲಬುರಗಿ : ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಅಲ್ಲಮಪ್ರಭು ದೇಶಮುಖ್ ಮಾತನಾಡಿ, ಡಾ. ಶರಣಬಸಪ್ಪ ಅಪ್ಪಾಜಿ ಅವರ ಕನಸಿನಂತೆ ಶರಣಬಸವೇಶ್ವರ ಸಂಸ್ಥೆಯಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಬದುಕುತ್ತೇನೆ, ಓದುತ್ತೇನೆ, ಪ್ರಯತ್ನಿಸುತ್ತೇನೆ, ಸ್ವತಂತ್ರವಾಗಿ ಚಿಂತನೆಯನ್ನು ಮಾಡುತ್ತೇನೆ ಎನ್ನುವ ಕಲ್ಪನೆ ಬೆಳೆಯಬೇಕು. ವಿದ್ಯಾರ್ಥಿಗಳು ಉತ್ತಮ ಜ್ಞಾನವನ್ನು ಪಡೆದು, ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಹಿಂಗುಲಾಂಬಿಕಾ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಸಂಶೋಧನಾ ಸಂಸ್ಥೆಯ ಪ್ರಾಚಾರ್ಯ ಡಾ. ಅಲ್ಲಮ ಪ್ರಭು ಗುಡ್ಡ ಮಾತನಾಡಿ, ಪ್ರಕೃತಿಯನ್ನು ಆರಾಧಿಸಬೇಕು. ಪ್ರಕೃತಿ ದೇವತೆಯನ್ನು ನಾವು ರಕ್ಷಿಸಬೇಕು. ಪ್ರಕೃತಿಯಲ್ಲಿರುವ ಹಲವಾರು ಆಯುರ್ವೇದಿಕ್ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ಕಾಪಾಡಲು ಹಾಗೂ ರಕ್ಷಣೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ ರಾಮಕೃಷ್ಣ ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ನೀವು ಆಯ್ಕೆ ಮಾಡಿಕೊಂಡ ವಿಷಯವನ್ನು ಆಳವಾಗಿ ಅಧ್ಯಯನ ಮಾಡಬೇಕು. ಆ ವಿಷಯದಲ್ಲಿ ವಿದ್ಯಾರ್ಥಿ ಆಸಕ್ತಿ ಹೊಂದಿರಬೇಕು. ನಿರಂತರ ಪ್ರಯತ್ನವಿದ್ದಾಗ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ.ಗಿರೀಶ್ ಜನ್ನಿ, ಡಾ. ರಾಮಗೋಲ್ ರಾಯ್, ಡಾ. ಲತಾದೇವಿ ಕರಿಕಲ್, ಪ್ರದೀಪ್, ಡಾ. ಅಮಿತ್ ಹೆಗಡೆ, ಡಾ. ಖನೀಝಾ ಫಾತಿಮಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಎನ್.ವಿ ಕಾಲೇಜಿನ ವಿದ್ಯಾರ್ಥಿಗಳು, ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಂಕರನಾರಾಯಣ | ವ್ಯಕ್ತಿ ಆತ್ಮಹತ್ಯೆ : ಪ್ರಕರಣ ದಾಖಲು
ಶಂಕರನಾರಾಯಣ, ನ.23: ಮದ್ಯ ಬಿಟ್ಟು ಕೆಲಸಕ್ಕೆ ಹೋಗದೆ ಮಾನಕಸಿವಾಗಿ ಖಿನ್ನತೆ ಒಳಗಾಗಿದ್ದ ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿ ನಾಗೇಂದ್ರ ಎಂಬವರು ನ.22ರಂದು ಬೆಳಗ್ಗೆ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಬಿವೈ ವಿಜಯೇಂದ್ರ ದೆಹಲಿಗೆ ತೆರಳಿ ಅಮಿತ್ ಶಾ, ಬಿಎಲ್ ಸಂತೋಷ್ ಭೇಟಿಯಾಗಿ ಚರ್ಚೆ; ರಾಜ್ಯಾಧ್ಯಕ್ಷ ಸ್ಥಾನ ಗಟ್ಟಿ?
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಕರ್ನಾಟಕ ರಾಜಕಾರಣದ ಪ್ರಸಕ್ತ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದರು. ಪಕ್ಷ ಸಂಘಟನೆಗೆ ಅಮಿತ್ ಶಾ ಅವರಿಂದ ಮಾರ್ಗದರ್ಶನ ಪಡೆದರು. ಬಿಹಾರ ಚುನಾವಣೆಯಲ್ಲಿ ಎನ್ಡಿಎ ಗೆಲುವಿಗೆ ಅಮಿತ್ ಶಾ ಅವರ ಪಾತ್ರವನ್ನು ಶ್ಲಾಘಿಸಿದರು. ಶನಿವಾರ ಬಿಎಲ್ ಸಂತೋಷ್ ಅವರನ್ನೂ ಭೇಟಿಯಾಗಿ ಚರ್ಚಿಸಿದ್ದರು.
Priyank Kharge: ನನ್ನ ನಿರ್ಧಾರ ಒಪ್ಪಿ ಗೌರವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ: ಸಚಿವ ಪ್ರಿಯಾಂಕ್ ಖರ್ಗೆ
Priyank Kharge: ಪ್ರತಿ ವರ್ಷದಂತೆ ಈ ವರ್ಷವೂ ಹುಟ್ಟುಹಬ್ಬವನ್ನು ಆಚರಿಸದಿರುವ ನನ್ನ ನಿರ್ಧಾರವನ್ನು ಒಪ್ಪಿ ಗೌರವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ನಮ್ಮನ್ನು ಪ್ರೀತಿಸುವವವರು ತೋರುವ ವಾತ್ಸಲ್ಯ, ಅಭಿಮಾನ ಹಾಗೂ ಕಾಳಜಿ ನಾನೆಂದಿಗೂ ಚಿರಋಣಿ.ನಿಮ್ಮೆಲ್ಲರ ಈ ಅದಮ್ಯ ಪ್ರೀತಿಯೇ ನನ್ನ ಕೆಲಸಗಳಿಗೆ ಪ್ರೇರಣೆ
ಕಲಬುರಗಿ | ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಮುಖ್ಯ ಶಿಕ್ಷಕರ ಪಾತ್ರ ಮುಖ್ಯ : ಬಿಇಓ ಶಶಿಧರ್
ಕಲಬುರಗಿ: ಒಂದು ಶಾಲೆಯ ನಾಯಕನೆಂದರೆ ಮುಖ್ಯ ಶಿಕ್ಷಕ. ಅವರು ತಮ್ಮ ಜವಾಬ್ದಾರಿ ಅರಿತು ಸರಿಯಾಗಿ ಕಾರ್ಯನಿರ್ವಹಿಸಿದರೆ ಆ ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಬರಲಿದೆ ಎಂದು ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ ಹೇಳಿದರು. ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮಜಿ ಪೌಂಡೇಶನ ವತಿಯಿಂದ ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಆಯೋಜಿಸಲಾದ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ತಾಪುರ ತಾಲೂಕಿನ ಫಲಿತಾಂಶ ಹೆಚ್ಚಳವಾಗಬೇಕಾದರೆ ಆ ತಾಲೂಕಿನಲ್ಲಿರುವ ಎಲ್ಲಾ ಶಾಲೆಯ ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ. ಅವರು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅಲ್ಲಿನ ಮುಖ್ಯಶಿಕ್ಷಕರು ತಮ್ಮ ಶಾಲೆಯ ಸಹಶಿಕ್ಷಕರಿಗೆ ಸರಿಯಾಗಿ ನಿರ್ದೇಶನ ನೀಡಬೇಕಾಗುತ್ತದೆ. ಈ ಬಾರಿ ಪ್ರತಿಯೊಂದು ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಬರಬೇಕು. ಅದಕ್ಕಾಗಿ ಸಾಕಷ್ಟು ಶ್ರಮ ಈ ಮೂರು ತಿಂಗಳಲ್ಲಿ ಆಗಬೇಕಿದೆ ಎಂದು ಹೇಳಿದರು. ಈ ವೇಳೆ ಅಜೀಂ ಪ್ರೇಮಜಿ ಪೌಂಡೇಶನ್ನ ಸಂಪನ್ಮೂಲ ವ್ಯಕ್ತಿಗಳು ವಿಷಯವಾರು ಯಾವ ರೀತಿ ಕಾರ್ಯನಿರ್ವಹಿಸಿದರೆ ಫಲಿತಾಂಶ ಉತ್ತಮಪಡಿಸಬಹುದು ಎಂಬ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಅಜೀಂ ಪ್ರೇಮಜಿ ಪೌಂಡೇಶನ್ ಸಂಯೋಜಕಿ ಅನನ್ಯ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಸಿದ್ದಮ್ಮ, ತಾಲೂಕು ಮುಖ್ಯಗುರುಗಳ ಸಂಘದ ಕಾರ್ಯದರ್ಶಿ ರಮೇಶ್ ಬಟಗೇರಿ, ಇಸಿಓ ರವೀಂದ್ರ , ಅಬ್ಬಿಗೇರಿ ಶರಣಪ್ಪ ಹಾಗೂ ತಾಲೂಕಿನ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಶಂಕರನಾರಾಯಣ | ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ: ಸವಾರ ಮೃತ್ಯು
ಶಂಕರನಾರಾಯಣ, ನ.23: ಬೈಕೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಶಂಕರನಾರಾಯಣ ಗ್ರಾಮದ ಕಲ್ಲಗದ್ದೆ ಎಂಬಲ್ಲಿ ನ.22ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಸಚಿನ್ ಕಲ್ಲಪ್ಪ್ ಸಂಕ್ರಟ್ಟಿ(28) ಎಂದು ಗುರುತಿಸಲಾಗಿದೆ. ಇವರು ಶಂಕರನಾರಾಯಣ ಪದವಿ ಕಾಲೇಜಿನಲ್ಲಿ ನಡೆಯುತ್ತಿದ್ದ ಹುಟ್ಟೂರು ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದು, ನಂತರ ಸ್ನೇಹಿತ ಬಸವ ಕಿರಣ ಎಂಬವರನ್ನು ಬೆಳಗಾಂಗೆ ಬಸ್ಸಿಗೆ ಬಿಡಲು ಕುಂದಾಪುರಕ್ಕೆ ಬೈಕಿನಲ್ಲಿ ಹೊರಟಿದ್ದರು. ಅಂಪಾರು ಮಾರ್ಗವಾಗಿ ಕುಂದಾಪುರಕ್ಕೆ ಹೊಗುತ್ತಿದ್ದ ಬೈಕ್, ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸಚಿನ್ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ | ಸಾಧಕ ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ
ಉಡುಪಿ, ನ.23: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ನೀಡುವ ಯಕ್ಷಗಾನ ಕಲಾರಂಗದ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸವಾರಂಭವು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ಜರಗಿತು. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಜಿ.ಶಂಕರ್ ಪ್ರಶಸ್ತಿ ಪ್ರದಾನ ಮಾಡಿ, ಶುಭಹಾರೈಸಿದರು. ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ.ರಾವೇಂದ್ರ ಭಟ್ ಶುಭಾಶಂಸನೆಗೈದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ, ಬೆಂಗಳೂರು ಉದ್ಯಮಿ ಹರೀಶ್ ರಾಯಸ್, ಬೆಂಗಳೂರಿನ ಡಾ.ಕಬ್ಯಾಡಿ ಹರಿರಾಮ ಆಚಾರ್ಯ, ಮಂದಾರ್ತಿ ಕೆ.ಎಂ.ಉಡುಪ, ಟ್ರಸ್ಟ್ ನ ವಿಶ್ವಸ್ಥ ಕೆ.ಮಹೇಶ್ ಉಡುಪ, ಅಡಿಕೆ ಪತ್ರಿಕೆಯ ಪ್ರಕಾಶಕ ಡಾ.ಪಡಾರು ರಾಮಕಷ್ಣ ಶಾಸ್ತ್ರಿ, ಲೀಲಾಕ್ಷ ಬಿ.ಕರ್ಕೇರ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಕಲಾವಿದರನ್ನು ಪರಿಚಯಿಸಿದರು. ಸದಾಶಿವ ರಾವ್ ವಂದಿಸಿದರು.
ಸತ್ಯ ಸಾಯಿ ಬಾಬಾಗೆ ನಾದ ನಮನ, ವೈಭವದ ಸಮಾರೋಪ ಸಮಾರಂಭದ ಮೂಲಕ ಜನ್ಮ ಶತಮಾನೋತ್ಸವ ಸಂಪನ್ನ
ಚಿಕ್ಕಬಳ್ಳಾಪುರ: ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ 100 ದಿನಗಳ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ವು 400ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ 'ಸಾಯಿ ಸಿಂಫನಿ ಆರ್ಕೆಸ್ಟ್ರಾ'ದ ಅದ್ಭುತ ಸಂಗೀತ ಪ್ರಸ್ತುತಿಯೊಂದಿಗೆ ಸಂಪನ್ನವಾಯಿತು. ಭಾರತದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಎನ್ನುವ ಶ್ರೇಯಕ್ಕೆ ಪಾತ್ರವಾಗಿರುವ 'ಸಾಯಿ ಸಿಂಫನಿ
ಮಂಗಳೂರಿನಲ್ಲಿ ʼನಮೋ ಚೆಸ್ ಟೂರ್ನಮೆಂಟ್ʼ
ಚೆಸ್ ಆಡಿ ಗಮನ ಸೆಳೆದ ಕೇಂದ್ರ ಸಚಿವ ಶ್ರೀಪಾದ ನಾಯಕ್, ಸಂಸದ ಕ್ಯಾ. ಚೌಟ
ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಯಾಗಿರುವ ಆರ್.ಡಿ. ಪಾಟೀಲ್ ಮತ್ತು ಜೈಲು ವಾರ್ಡನ್ ಶಿವಕುಮಾರ್ ಮಧ್ಯೆ ಕೇಂದ್ರ ಕಾರಾಗೃಹದಲ್ಲಿ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ. ಸುಪ್ರೀಂಕೋರ್ಟ್ನಿಂದ ಮೂರು ವಾರಗಳ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗುತ್ತಿದ್ದ ಸಂದರ್ಭದಲ್ಲಿ ವಾರ್ಡನ್ ಶಿವಕುಮಾರ್ ಬಿಡುಗಡೆಗೆ ನಿರಾಕರಿಸಿ ಹಲ್ಲೆ ಮಾಡಿದ್ದಾಗಿ ಆರ್.ಡಿ.ಪಾಟೀಲ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆರ್.ಡಿ.ಪಾಟೀಲ್ ಕೂಡ ಹಲ್ಲೆ ಮಾಡಿದ್ದಾಗಿ ವಾರ್ಡನ್ ಶಿವಕುಮಾರ್ ದೂರು ನೀಡಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಎಫ್ಐಆರ್ ದಾಖಲಾಗಿದೆ.
ಮಂಗಳೂರು | ಶಕ್ತಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಮಂಗಳೂರು, ನ.23: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯು ರೇಷ್ಮಾ ಮೆಮೊರಿಯಲ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲೆ ಬಬಿತ ಸೂರಜ್ ಅವರು ಶಕ್ತಿ ಶಾಲೆಯ ಮುದ್ದು ಪುಟಾಣಿಗಳೊಂದಿಗೆ ಸೇರಿ ದೀಪವನ್ನು ಬೆಳಗಿಸಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಬೆಳೆಯುವುದಕ್ಕೆ ಮೌಲ್ಯಗಳ ಬೇರುಗಳು ಮತ್ತು ಆಸಕ್ತಿಯ ರೆಕ್ಕೆಗಳು ಇರಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ಮಾತಿನಂತೆ ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾ ಜೀವನದಲ್ಲಿ ಸದೃಢರಾಗಿ ಬೆಳೆಯಬೇಕು ಎಂದರು. ಶಿಕ್ಷಕಿ ವಿದ್ಯಾ ಲಕ್ಷ್ಮೀ ಸ್ವಾಗತಿಸಿದರು, ಶಿಕ್ಷಕಿ ಮರಿಯಾ ವಂದಿಸಿದರು. ಶಿಕ್ಷಕಿ ನಯನ ಅವರು ದಿನದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
‘ಉಮೀದ್ ’ನಲ್ಲಿ ವಕ್ಫ್ ಸಂಸ್ಥೆಗಳ ಮಾಹಿತಿ ಸಲ್ಲಿಕೆ : ದ.ಕ. ಜಿಲ್ಲೆಯಲ್ಲಿ ಶೇ.74ರಷ್ಟು ಪ್ರಗತಿ
ಮಂಗಳೂರು, ನ.23: ದ.ಕ. ಜಿಲ್ಲೆಯಲ್ಲಿ ವಕ್ಫ್ ಸಂಸ್ಥೆಗಳ ವಿವರಗಳನ್ನು ಉಮಿದ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೇ.74ರಷ್ಟು ವಕ್ಫ್ ಸೊತ್ತುಗಳ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ವಕ್ಫ್ ಕಚೇರಿಯ ಮೂಲಗಳು ತಿಳಿಸಿವೆ. ರಾಜ್ಯ ವಕ್ಫ್ ಸಚಿವರು 2025 ನವೆಂಬರ್ 27ರ ಮೊದಲು ವಕ್ಫ್ನ ಎಲ್ಲ ಸೊತ್ತುಗಳ ದಾಖಲೆಗಳನ್ನು ಅಪ್ಲೋಡ್ ಮಾಡುವಂತೆ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಅದರಂತೆ ಇನ್ನು ಬಾಕಿ ಉಳಿದಿರುವ ಮಸೀದಿ, ಮದ್ರಸ ಹಾಗೂ ಖಬರಸ್ಥಾನಗಳನ್ನು ವಿವರಗಳನ್ನು ತಕ್ಷಣ ಸಂಬಂಧಪಟ್ಟ ಸಂಸ್ಥೆಗಳ ಆಡಳಿತ ಸಮಿತಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಜಿಲ್ಲಾ ವಕ್ಫ್ ಕಚೇರಿಯನ್ನು ಸಂಪರ್ಕಿಸಿ ಸೊತ್ತುಗಳ ವಿವರಗಳನ್ನು ಉಮೀದ್ ಪೋರ್ಟಲ್- 2025ರಲ್ಲಿ ಅಪ್ಲೋಡ್ ಮಾಡುವಂತೆ ದ . ಕ. ಜಿಲ್ಲಾ ವಕ್ಫ್ ಕಚೇರಿಯ ಪ್ರಕಟನೆ ತಿಳಿಸಿದೆ.
ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ
ಉಡುಪಿ, ನ.23: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಜರಗಿತು. ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ನಾವು ತೋರಿಸುವ ಪ್ರೀತಿ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರಬೇಕು. ಪ್ರೀತಿ ಮತ್ತು ಸೇವೆ ಕ್ರೈಸ್ತ ಧರ್ಮದ ಮೂಲ ತತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು’ ಮುಂದಿನ ವರ್ಷವನ್ನು ಉಡುಪಿ ಧರ್ಮಪ್ರಾಂತ್ಯದಲ್ಲಿ ಬಡವರ ವರ್ಷವಾಗಿ ಆಚರಿಸಲಾಗುತ್ತಿದ್ದು, ಕಷ್ಟದಲ್ಲಿರುವವರಿಗೆ, ಬಡತನದ ನೋವಿನಲ್ಲಿರುವವರಿಗೆ ಸಹಾಯಹಸ್ತ ಚಾಚಲು ಪ್ರತಿಯೊಬ್ಬರು ಈ ವರ್ಷದದಲ್ಲಿ ಪಣತೊಡಬೇಕು ಎಂದರು. ಪವಿತ್ರ ಬಲಿಪೂಜೆಯ ಬಳಿಕ ಧರ್ಮಗುರು ವಿಲ್ಸನ್ ಡಿಸೋಜ ಪರಮ ಪ್ರಸಾದ ಆರಾಧನೆ ನೆರವೇರಿಸಿದರು. ಬಳಿಕ ಪರಮ ಪ್ರಸಾದವನ್ನು ವಿಶೇಷವಾಗಿ ಅಲಂಕರಿಸಿದ, ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಒಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು. ಬ್ಯಾಂಡ್- ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ ಮೆರವಣಿಗೆ ನಡೆಯಿತು. ಮೌಂಟ್ ರೋಜರಿ ದೈವಾಲಯದ ಸಭಾಂಗಣದಲ್ಲಿ ದೈವವಾಕ್ಯದ ಪ್ರಬೋಧನೆಯನ್ನು ಮಿಲಾಗ್ರಿಸ್ ಕಾಥೆಡ್ರಲ್ ಸಹಾಯಕ ಗುರು ವಂದನೀಯ ಫಾ.ಪ್ರದೀಪ್ ಕಾರ್ಡೋಜ ನೀಡಿದರು. ಅವರು ಅಪೋಸ್ತಲರ ಆತ್ಮಸ್ಫೂರ್ತಿಯಲ್ಲಿ ಧರ್ಮಕೇಂದ್ರ, ಮನೆ, ಸಮುದಾಯ- ಎಲ್ಲೆಡೆ ಪರಮಪ್ರಸಾದ ಐಕ್ಯ ಕುಟುಂಬ ಕಟ್ಟುವ ಜವಾಬ್ದಾರಿ ನಮ್ಮದಾಗಿದೆ ಎಂದು ಮನದಟ್ಟು ಮಾಡಿದರು. ಧರ್ಮಾಧ್ಯಕ್ಷರು ಕಾರ್ಯಕ್ರಮದ ಅಂತ್ಯದಲ್ಲಿ ಪರಮಪ್ರಸಾದದ ಅಂತಿಮ ಆಶೀರ್ವಚನ ನೀಡಿ ಭಕ್ತರಿಗೆ ಆಧ್ಯಾತ್ಮಿಕ ಬಲವರ್ಧನ ಒದಗಿಸಿದರು. ಧರ್ಮಪ್ರಾಂತ್ಯದ ಬೈಬಲ್ ಆಯೋಗದ ನಿರ್ದೇಶಕ ವಂ. ವಿಲ್ಸನ್ ಡಿಸೋಜ ಮತ್ತು ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ.ಡಾ.ರೋಕ್ ಡಿಸೋಜ ದೈವಾರಾಧನಾ ವಿಧಿಯನ್ನು ಸಮರ್ಪಕವಾಗಿ ನಿರೂಪಿಸಿದರು. ರೊನಾಲ್ಡ್ ಸಲ್ಡಾನಾ ವಂದಿಸಿದರು. ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚ್ಗಳಿಂದ ಸುಮಾರು 3,000ಕ್ಕೂ ಅಧಿಕ ಭಕ್ತರು, 60ಕ್ಕೂ ಅಧಿಕ ಧರ್ಮಗುರುಗಳು, 100ಕ್ಕೂ ಅಧಿಕ ಧರ್ಮ ಭಗಿನಿಯರು ಭಾಗವಹಿಸಿದ್ದರು. ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಸ್ಟೀಫನ್ ಡಿಸೋಜ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ.ಡಾ. ಲೆಸ್ಲಿ ಡಿಸೋಜ, ವಂ.ಆಲ್ಬನ್ ಡಿಸೋಜ, ವಂ.ಚಾರ್ಲ್ಸ್ ಮಿನೇಜಸ್, ಧರ್ಮಪ್ರಾಂತ್ಯದ ಪಾಲನಾ ಸಮಿತಿ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.
Dubai Air Crash; ಪೈಲಟ್ಗೆ ಅಂತಿಮ ವಿದಾಯ; ಸಮವಸ್ತ್ರ ತೊಟ್ಟು, ಕಣ್ಣೀರು ಹಾಕುತ್ತ ಪತಿಗೆ ಸೆಲ್ಯೂಟ್ ಹೊಡೆದ ಪತ್ನಿ
ದುಬೈನಲ್ಲಿ ಶುಕ್ರವಾರ ಸಂಭವಿಸಿದ ತೇಜಸ್ ಫೈಟರ್ ಜೆಟ್ ಅವಘಡದಲ್ಲಿ ಪ್ರಾಣ ಕಳೆದುಕೊಂಡ ವಿಂಗ್ ಕಮಾಂಡರ್ ನಮಾಂಶ್ ಸಿಯಾಲ್ ಅವರಿಗೆ ಅವರ ಪತ್ನಿ ಅಂತಿಮ ಗೌರವ ಸಲ್ಲಿಸಿದರು. ನಮಾಂಶ್ ಸಿಯಾಲ್ ಅವರ ಅಂತ್ಯಕ್ರಿಯೆ ಭಾನುವಾರ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನೆರವೇರಿತು. ನಮಾಂಶ್ ಅವರು ತಮ್ಮ ಪತ್ನಿ ಅಫ್ಸಾನ್ ಹಾಗೂ ಏಳು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ವಿಮಾನ ದುರಂತಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ಭಾರತೀಯ ವಾಯು ಪಡೆ ತನಿಖಾ ಸಮಿತಿ ರಚಿಸಿದೆ.
Bengaluru | ಕಾಲ್ಸೆಂಟರ್ ಉದ್ಯೋಗಿಗಳ ಅಪಹರಿಸಿ ಹಣಕ್ಕೆ ಬೇಡಿಕೆ ಆರೋಪ: ಕಾನ್ಸ್ಟೇಬಲ್ ಸಹಿತ 8 ಮಂದಿ ಸೆರೆ
ಬೆಂಗಳೂರು: ಕಾಲ್ ಸೆಂಟರ್ ಉದ್ಯೋಗಿಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಕಾನ್ಸ್ಟೇಬಲ್ ಸಹಿತ 8 ಆರೋಪಿಗಳನ್ನು ಇಲ್ಲಿನ ಕೋರಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಚಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬೀವುಲ್ಲಾ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಈ ಆರೋಪಿಗಳ ಪೈಕಿ ಚಲಪತಿ ಕೋಲಾರ ಜಿಲ್ಲೆಯ ಹೆಡ್ ಕಾನ್ಸ್ಟೇಬಲ್ ಎಂಬುದು ತನಿಖೆ ಸಂದರ್ಭದಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಸಂಬಂಧ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಮಾತನಾಡಿ, ನ.22ರ ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಾಲ್ಸೆಂಟರ್ ಬಳಿ ತೆರಳಿದ್ದ ಆರೋಪಿಗಳು, ತಾವು ಪೊಲೀಸರು ಎಂದು ಉದ್ಯೋಗಿಗಳನ್ನು ಬೆದರಿಸಿದ್ದರು. ಬಳಿಕ ಪವನ್, ರಾಜ್ವೀರ್, ಆಕಾಶ್, ಅನಸ್ ಎಂಬ ನಾಲ್ವರನ್ನು ಅಪಹರಿಸಿ ಕರೆದೊಯ್ದಿದ್ದರು. ನಂತರ 25 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟು, ಕಂಪೆನಿಯ ಆಪರೇಷನಲ್ ಮ್ಯಾನೇಜರ್ ಖಾತೆಯಿಂದ 18 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಬಳಿಕ ನ.22ರ ಶನಿವಾರ ಮುಂಜಾನೆ 4 ಗಂಟೆಗೆ ಕಾಲ್ ಸೆಂಟರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನ.22ರ ಶನಿವಾರ ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಹೊಸಕೋಟೆಯ ಲಾಡ್ಜ್ ನಲ್ಲಿ ಆರೋಪಿಗಳಿರುವುದನ್ನು ಪತ್ತೆ ಹಚ್ಚಿ ಅಪಹರಣಕ್ಕೊಳಪಟ್ಟವರನ್ನು ರಕ್ಷಿಸಿದ್ದಾರೆ. ಈ ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದ್ದು, 2 ಕಾರು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಪೊಲೀಸರು ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ್ದ ಪ್ರಕರಣವನ್ನೇ ಬಂಡವಾಳ ಮಾಡಿಕೊಂಡು ಆರೋಪಿತರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
ಉಡುಪಿ | ಲಿಫ್ಟ್ನಲ್ಲಿ ಸಿಲುಕಿದ್ದ ಐವರು ವಿದ್ಯಾರ್ಥಿಗಳ ರಕ್ಷಣೆ
ಉಡುಪಿ, ನ.23: ವಸತಿ ಸಮುಚ್ಛಯದ ಲಿಫ್ಟ್ನಲ್ಲಿ ಸಿಲುಕಿದ್ದ ಐವರು ವಿದ್ಯಾರ್ಥಿಗಳನ್ನು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಇಂದ್ರಾಳಿಯಲ್ಲಿ ನ.22ರಂದು ಮಧ್ಯರಾತ್ರಿ ವೇಳೆ ನಡೆದಿದೆ. ಇಂದ್ರಾಳಿಯ ಯುನೈಟೆಡ್ ಐಕಾನ್ ನೆಲ ಮತ್ತು ಮೂರು ಮಹಡಿಗಳ ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದ ಮಣಿಪಾಲದ ವಿದ್ಯಾರ್ಥಿಗಳು, ಮಧ್ಯರಾತ್ರಿ 12.10ರ ಸುಮಾರಿಗೆ ನೆಲಮಹಡಿಯಲ್ಲಿ ಲಿಫ್ಟ್ ನೊಳಗೆ ಸಿಲುಕಿಕೊಂಡಿದ್ದರು. ಹೊರಗೆ ಬಾರದ ಸ್ಥಿತಿಯಲ್ಲಿದ್ದ ಅವರು ಕೂಡಲೇ ತಮ್ಮ ಸ್ನೇಹಿತರನ್ನು ಸಂಪರ್ಕಿಸಿ, ಆ ಮೂಲಕ ಉಡುಪಿ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ತಂಡ, ಸುಮಾರು ಅರ್ಧ ತಾಸು ಕಾರ್ಯಾಚರಣೆ ನಡೆಸಿ, ಲಿಫ್ಟ್ ನೊಳಗೆ ಸಿಲುಕಿಕೊಂಡಿದ್ದ ಐವರನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತು. ವಿದ್ಯಾರ್ಥಿಗಳು ಭಯಭೀತರಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ರವೀಂದ್ರ, ಪ್ರಮುಖ ಫೈಯರ್ಮೆನ್ ರಾಘವೇಂದ್ರ, ಫೈಯರ್ಮೆನ್ ರವಿ ನಾಯ್ಕ್, ಚಾಲಕ ಸುಧೀರ್ ಪಾಲ್ಗೊಂಡಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ; ಕನ್ನಡಿಗನಿಗೆ ನಾಯಕ ಸ್ಥಾನ! ಯಾರೆಲ್ಲಾ ಆಯ್ಕೆ?
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಕನ್ನಡಿಗ ಕೆ.ಎಲ್. ರಾಹುಲ್ ತಂಡದ ನಾಯಕರಾಗಿ ಮತ್ತು ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ರೋಹಿತ್, ಕೊಹ್ಲಿ, ಪಂತ್ ಸೇರಿದಂತೆ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ. ಸರಣಿಯು ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ನಡೆಯಲಿದೆ.
ಕಲಬುರಗಿ | ವಿಚಾರವಾದಿ ಸೂಗಯ್ಯ ಹಿರೇಮಠ ಯುವ ಬರಹಗಾರರಿಗೆ ಮಾದರಿಯಾಗಿದ್ದರು : ಪ್ರೊ. ಶಿವರಾಜ ಪಾಟೀಲ್
ಕಲಬುರಗಿ: ಬಂಡಾಯ ಸಾಹಿತಿ ಪ್ರೊ. ಸೂಗಯ್ಯ ಹಿರೇಮಠ ಅವರದ್ದು ಅಪ್ಪಟ ಜಾನಪದ ಬದುಕಾಗಿತ್ತು. ವಿಚಾರವಾದಿಯಾಗಿ, ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಅವರು, ಇಂದಿನ ಯುವ ಬರಹಗಾರರಿಗೆ ಮಾದರಿಯಾಗಿದ್ದರು ಎಂದು ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ್ ಹೇಳಿದರು. ಸೂಗಯ್ಯ ಹಿರೇಮಠ ಸಾಹಿತ್ಯ ಸಂಸ್ಕೃತಿ ಪ್ರತಿಷ್ಠಾನ ಹಾಗೂ ಸರ್ವೋದಯ ಅಭಿವೃದ್ಧಿ ಸೇವಾ ಸಂಘದ ಸಹಯೋಗದಲ್ಲಿ ನಗರದ ವಿಶ್ವೇಶ್ವರ ಭವನದಲ್ಲಿ ರವಿವಾರ ಆಯೋಜಿಸಿದ್ದ ಪ್ರೊ. ಸೂಗಯ್ಯ ಹಿರೇಮಠ ಅವರ ಬದುಕು ಬರಹ ಒಂದು ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಸಾಹಿತ್ಯದ ಮೂಲಕ ಅಳಿದ ನಂತರವೂ ಉಳಿದ ಸೂಗಯ್ಯನವರು ನೇರ ನಡೆ ನುಡಿ ಉಳ್ಳವರಾಗಿದ್ದರು. ನಾಡಿನ ಸುಗಂಧವನ್ನು ನಾಡಿನಾದ್ಯಂತ ಪಸರಿಸಿದ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ ಮಾತನಾಡಿ, ವೈಚಾರಿಕ, ವಸ್ತುನಿಷ್ಠ ಬರಹಗಾರರಾಗಿದ್ದ ಸೂಗಯ್ಯನವರು ತಮ್ಮ ಕಾವ್ಯ ಕೃತಿಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ಅನಾವರಣಗೊಳಿಸಿದರು ಎಂದರು. ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಗವಿಸಿದ್ದಪ್ಪ ಪಾಟೀಲ್ ಅವರು ಸೂಗಯ್ಯ ಹಿರೇಮಠ ಅವರ ಕೃತಿಗಳ ಅವಲೋಕನ ಮಾಡಿದರು. ಸಾಮಾಜಿಕ ಚಿಂತನೆಗಳ ಕುರಿತು ಸಾಹಿತಿ ಡಾ. ಚಿ.ಸಿ. ನಿಂಗಣ್ಣ, ದೇಶಿಯ ಭಾಷೆ ಹಾಗೂ ಬಂಡಾಯದ ನಿಲುವುಗಳ ಕುರಿತು ಪತ್ರಕರ್ತ, ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿದರು. ಉಪನ್ಯಾಸಕ ಪ್ರೊ. ಕೆ.ವೀರಪ್ಪ ಹಿರೇಮಠ ಅವರ ಒಡನಾಟವನ್ನು ಸ್ಮರಿಸಿದರು. ಟ್ರಸ್ಟ್ ಗೌರವಾಧ್ಯಕ್ಷ ಪ. ಮಾನು ಸಗರ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ನಟರಾಜ ಸೂಗಯ್ಯ ಹಿರೇಮಠ, ಉಪಾಧ್ಯಕ್ಷ ಗಿರಿಮಲ್ಲಪ್ಪ ಹರವಾಳ ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ಶಂಕರಗೌಡ ಪಾಟೀಲ್ ನಿರೂಪಿಸಿದರು. ಚಿದಾನಂದ ಹಿರೇಮಠ ಸ್ವಾಗತಿಸಿದರು. ಕುಶಾಲ ಯಡವಳ್ಳಿ ವಂದಿಸಿದರು. ಪ್ರೊ. ಎಸ್.ಎಲ್. ಪಾಟೀಲ್, ಕನಕಪ್ಪ ಬಿಲ್ಲವ, ಮಹೇಶ ಕುಲಕರ್ಣಿ, ಬಾಬು ಮಿಟೇಕರ್, ಮಂಜುನಾಥ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಂಟ್ವಾಳ | ಅಝಾದ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಯುವ ನ್ಯಾಯವಾದಿಗಳಿಗೆ ಸನ್ಮಾನ
ಬಂಟ್ವಾಳ, ನ.23: ಪಾಣೆಮಂಗಳೂರಿನ ನೆಹರೂ ನಗರದ ಅಝಾದ್ ಫ್ರೆಂಡ್ಸ್ ಸರ್ಕಲ್ (ರಿ) ವತಿಯಿಂದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿಗೊಳಪಟ್ಟ ಪಿತ್ತಿಲಗುಡ್ಡೆಯ ಇಜಾಝ್ ಅಹ್ಮದ್, ಅಕ್ಕರಂಗಡಿಯ ಸೌದತ್ ಬಾನು, ನೆಹರೂ ನಗರದ ಮುಹಮ್ಮದ್ ನಿಹಾಲ್ ಅವರನ್ನು ಸಂಸ್ಥೆಯ ಕಚೇರಿ ವಠಾರದಲ್ಲಿ ಸನ್ಮಾನಿಸಲಾಯಿತು. ಉದ್ಯಮಿ ಪಿ.ಎಸ್. ಅಬ್ದುಲ್ ಹಮೀದ್, ಅಕ್ಕರಂಗಡಿ ಮಸೀದಿ ಅಧ್ಯಕ್ಷ ಜೆಟಿಟಿ ಗಫೂರ್, ಸುಲೈಮಾನ್ ನೆಹರೂ ನಗರ, ಗ್ರಾಪಂ ಸದಸ್ಯರಾದ ರಿಯಾಝ್, ಝುಬೈದಾ, ಮುಮ್ತಾಝ್ ಹಾಗೂ ಅಝಾದ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಎನ್. ಬಶೀರ್ ನಾಗರೀಕರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಬ್ದುಲ್ ಖಾದರ್ ಪಿ.ಜೆ. ವಂದಿಸಿದರು.
ವಿಜಯನಗರ | ದಲ್ಲಾಳಿಗಳಿಂದ ರೈತರನ್ನು ರಕ್ಷಿಸಬೇಕಿದೆ : ಶಾಸಕ ಬಿ.ದೇವೇಂದ್ರಪ್ಪ
ಹರಪನಹಳ್ಳಿ : ಪ್ರಸಕ್ತ ಮುಂಗಾರಿನಲ್ಲಿ ಖಾಸಗಿ ಗೊಬ್ಬರ, ಬೀಜ ಮಾರಾಟಗಾರ ದಲ್ಲಾಳಿಗಳಿಂದ ಕೃತಕ ರಸಗೊಬ್ಬರ ಅಭಾವ ಉಂಟಾಗಿ ರೈತರಿಗೆ ಸಮಸ್ಯೆ ಉಂಟಾಗಿದೆ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಹೊಸಕೋಟೆ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತೆ ಅಭಿಯಾನ ಯೋಜನೆಯಡಿ ಪರಿಕರಗಳ ವಿತರಣಾ ಕಾರ್ಯಕ್ರಮ ಹಾಗೂ ಹಿಂಗಾರು ಬೆಳೆಯಲ್ಲಿ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಬಿ.ದೇವೇಂದ್ರಪ್ಪ ಮಾತನಾಡಿದರು. ಉಪ ಕೃಷಿ ನಿರ್ದೇಶಕ ಡಾ.ನಯೀಮ್ ಪಾಷಾ ಮಾತನಾಡಿ, ಆಧುನಿಕತೆ ಬೆಳೆದಂತೆ ಕೃಷಿ ಪದ್ಧತಿಗಳು ಬದಲಾವಣೆಯಾಗುತ್ತಿದೆ. ಯೂರಿಯಾದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ, ಇಳುವರಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನ್ಯಾನೋ ಯೂರಿಯ ಬಳಕೆ ರೂಢಿಸಿಕೊಳ್ಳಬೇಕು. ಕೃಷಿ ಇಲಾಖೆಯಲ್ಲಿ ಅನೇಕ ರೈತಪರ ಯೋಜನೆಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ರೈತ ಮಹಿಳಾ ಸಂಘಟನೆಗಳಿಗೆ ಸಬ್ಸಿಡಿ ಯೋಜನೆಗಳಿವೆ ಬಳಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಂಜುನಾಥ್, ಉಪ ಕೃಷಿ ಸಹಾಯಕ ಅಧಿಕಾರಿ ಷಣ್ಮುಖ ನಾಯ್ಕ, ಮುಖಂಡ ಪ್ರಕಾಶ್ ಪಾಟೀಲ್, ಬೂದಿಹಾಳ್ ಸಿದ್ದಪ್ಪ, ಶೇಖರಪ್ಪ, ಡಾ.ಚಂದ್ರ ಕಾಂತ್, ಗುಡಿಹಳ್ಳಿ ಹಾಲೇಶ್, ಚನ್ನ ಬಸಪ್ಪ, ತುಂಬಿಗೆರೆ ಶಿವಣ್ಣ, ಗುಡಿಹಳ್ಳಿ ದುಗತ್ತಿ ವಿರೇಶ್, ರಾಜಪ್ಪ, ವಕೀಲ ನಂದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಲಾಲಾದಲ್ಲಿ ಪಿರ್ಸಪ್ಪಾಡ್- 2025 ಕಾರ್ಯಕ್ರಮ
ಒಮಾನ್, ನ.23: ಬ್ಯಾರಿ ಸಮುದಾಯದ ವತಿಯಿಂದ ಪಿರ್ಸಪ್ಪಾಡ್ -2025 ಕಾರ್ಯಕ್ರಮವು ಇತ್ತೀಚೆಗೆ ಸಲಾಲಾದಲ್ಲಿ ನಡೆಯಿತು. ಸಿದ್ದೀಕ್ ಅಹ್ಮದ್ ಮತ್ತು ಉಮರ್ ಫಾರೂಕ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಮತ್ತು ಸುತ್ತಮುತ್ತಲಿನ ಕನ್ನಡಿಗರ ಸಹಿತ ಹಲವು ಮಂದಿ ಜೊತೆಗೂಡಿ ಏಕತೆಯನ್ನು ಪ್ರದರ್ಶಿಸಿದರು. ಸಲಾಲಾದ ಬ್ಯಾರಿಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದ, ವಿಭಿನ್ನ ಸಂಸ್ಕೃತಿಯ ಜನರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ದಫ್ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು, ಕುಟುಂಬಸ್ಥರಿಗೆ ವಿನೋದ ಕಾರ್ಯಕ್ರಮಗಳು ಮತ್ತು ಮಂಗಳೂರಿನ ಪರಂಪರೆಯನ್ನು ತೋರಿಸುವ ಸ್ಟಾಲ್ಗಳು ದಿನವಿಡೀ ಕಾರ್ಯಕ್ರಮಕ್ಕೆ ಚೈತನ್ಯ ತುಂಬಿದವು. ಪರಸ್ಪರ ಪರಿಚಯಿಸಿಕೊಂಡು, ಸ್ನೇಹ ಹಸ್ತ ಚಾಚಿ ಪಿರ್ಸಪ್ಪಾಡ್ ನ ಹಿರಿಮೆ ಹೆಚ್ಚಿಸಿದರು. ಮುಂದಿನ ದಿನಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಉತ್ಸವ, ಆರೋಗ್ಯ ಜಾಗೃತಿ ಯೋಜನೆಗಳು ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ಆಯೋಜಕರು ಕಾರ್ಯಕ್ರಮದಲ್ಲಿ ಪ್ರಕಟಿಸಿದರು.
ಕಲಬುರಗಿ | ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ
ಕಲಬುರಗಿ : ಸಾಲಬಾಧೆ ತಾಳಲಾರದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ತಾಲೂಕಿನ ಕರಿಕಲ್ ತಾಂಡಾದಲ್ಲಿ ಸಂಭವಿಸಿದೆ. ಕರಿಕಲ್ ತಾಂಡಾ ನಿವಾಸಿ ಪ್ರಕಾಶ್ ಸೇವು ಜಾಧವ್(39) ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ಪ್ರಕಾಶ್, ಕಾಳಗಿ ರೈತ ಸೇವಾ ಸಹಕಾರ ಸಂಘದಲ್ಲೂ 25,000 ರೂ. ಸಾಲಮಾಡಿಕೊಂಡಿದ್ದರು. ಇತ್ತೀಚೆಗೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಕೂಡ ಅತಿವೃಷ್ಟಿಯಿಂದ ನಾಶವಾಗಿತ್ತು. ಇದರಿಂದ ಮನನೊಂದುಕೊಂಡಿದ್ದ ಪ್ರಕಾಶ್, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Karnataka CM Change: ಸಿಎಂ ಬದಲಾವಣೆ ಬಗ್ಗೆ ಕುತೂಹಲ ಮೂಡಿಸಿದ ಖರ್ಗೆ ಹೇಳಿಕೆ
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಈ ವಿಚಾರದ ಬಗ್ಗೆ ದಿನಕ್ಕೊಂದು ಹೇಳಿಕೆಗಳು ಸಂಚಲನ ಸೃಷ್ಟಿಸುತ್ತಿವೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದರು. ಆದರೆ ಅಸಲಿಗೆ ಕಾಂಗ್ರೆಸ್ನಲ್ಲಿ ಆಂತರಿಕವಾಗಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಸಿಎಂ ಬದಲಾವಣೆ ವಿಚಾರವಾಗಿ
ಮಜೂರು | ನ.25ರಂದು ಅನುಸ್ಮರಣಾ ಮಜ್ಲಿಸ್
ಕಾಪು, ನ.23: ಸುನ್ನೀ ಸಂಯುಕ್ತ ಜಮಾಅತ್ ಹಾಗೂ ಸುನ್ನೀ ಜಂ-ಇಯ್ಯತುಲ್ ಉಲಮಾ ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ತಾಜುಲ್ ಉಲಮಾ ಉಳ್ಳಾಲ ತಂಙಳ್, ನೂರುಲ್ ಉಲಮಾ, ತಾಜುಲ್ ಫುಖಹಾಹ್ ಹಾಗೂ ನಮ್ಮಿಂದ ಅಗಲಿದ ಇನ್ನಿತರ ನಾಯಕರ ಹೆಸರಿನಲ್ಲಿ ಅನುಸ್ಮರಣಾ ಮಜ್ಲಿಸ್ ನ.25ರಂದು ಬೆಳಿಗ್ಗೆ 10 ಗಂಟೆಗೆ ಮಜೂರು ಮಲ್ಲಾರು ಬದ್ರಿಯಾ ಜುಮಾ ಮಸೀದಿಯಲ್ಲಿ ಜರಗಲಿದೆ. ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೇತೃತ್ವ ವಹಿಸಲಿದ್ದು, ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುಆ ನೆರವೇರಿಸಲಿರುವರು. ಕರ್ನಾಟಕ ಉಲಮಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಬಹು ಟಿ.ಎಂ.ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ನಾಯಿಬ್ ಖಾಝಿ ಅಬ್ದುರ್ರಹ್ಮಾನ್ ಮದನಿ ಮೂಳೂರು, ಉಲಮಾ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೆಸ್ಸೆಸ್ನಿಂದ ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆ ಬುಡಮೇಲು : ಸುಂದರ್ ಮಾಸ್ತರ್
ದಸಂಸ ಪದಾಧಿಕಾರಿಗಳ ಪದಗ್ರಹಣ-ಶೋಷಿತ ಜನಜಾಗೃತಿ ಸಮಾವೇಶ
ಮಂಗಳೂರು | ಕ್ಯಾಂಪ್ಕೊ ಆಡಳಿತ ಮಂಡಳಿಗೆ ಚುನಾವಣೆ : ಶೇ 45.53 ಮತದಾನ
ಮಂಗಳೂರು, ನ.23: ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ)ದ ಆಡಳಿತ ಮಂಡಳಿಯ ನಿರ್ದೇಶಕರ 19 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಚುನಾವಣೆ ರವಿವಾರ ಶಾಂತಿಯುತವಾಗಿ ನಡೆದಿದ್ದು, ಶೇ 45.53 ಮತದಾನವಾಗಿದೆ. ನಗರದ ಶಾರದಾ ವಿದ್ಯಾಲಯದಲ್ಲಿ ಬೆಳಗ್ಗೆ 8ರಿಂದ ಸಂಜೆ 3ಗಂಟೆ ತನಕ ನಡೆದ ಮತದಾನದಲ್ಲಿ ಒಟ್ಟು 5,651 ಮಂದಿ ಸದಸ್ಯ ಮತದಾರರ ಪೈಕಿ 2,573 ಮಂದಿ ಮತ ಚಲಾಯಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದೆ. ಮತ ಎಣಿಕೆ ನ.25ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಕ್ಯಾಂಪ್ಕೊ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಒಟ್ಟು 19 ನಿರ್ದೇಶಕರ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ ಆರು ಸ್ಥಾನಗಳಿಗೆ 8 ಮಂದಿ ಕಣದಲ್ಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆದಿದೆ. ಸಿ ಕ್ಲಾಸ್ ಸಾಮಾನ್ಯ ವಿಭಾಗದಿಂದ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಸತೀಶ್ಚಂದ್ರ ಎಸ್.ಆರ್.ದಯಾನಂದ ಹೆಗ್ಡೆ, ಮಹೇಶ್ ಚೌಟ ಎಂ , ಮುರಳೀಕೃಷ್ಣ ಕೆ.ಎನ್, ಪುರುಷೋತ್ತಮ ಭಟ್ ಎಂ, ತೀರ್ಥರಾಮ ಎ.ವಿ, ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಸತ್ಯನಾರಾಯಣ ಎಂ.ಜಿ. ಮತ್ತು ರಾಮ ಪ್ರತೀಕ್ ಕೆ ಸ್ಪರ್ಧಾ ಕಣದಲ್ಲಿದ್ದಾರೆ. 13 ಸ್ಥಾನಗಳಿಗೆ ಅವಿರೋಧ ಆಯ್ಕೆ : ಕೇರಳದ ಎಲ್ಲ ಒಂಬತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಸಾಮಾನ್ಯ ಸಿ. ಕ್ಲಾಸ್ ಸ್ಥಾನಗಳಿಗೆ ಸ್ಪರ್ಧಿಸಿದ್ದ ಕೆ.ಸತೀಶ್ಚಂದ್ರ ಭಂಡಾರಿ, ಸದಾನಂದ ಶೆಟ್ಟಿ, ವಿವೇಕಾನಂದ ಗೌಡ ಪಿ, ಕೆ. ಸತ್ಯನಾರಾಯಣ ಪ್ರಸಾದ್, ರಾಧಾಕೃಷ್ಣನ್ ಕೆ , ಗಣೇಶ್ ಕುಮಾರ್ ಎ, ಮಹಿಳಾ ಮೀಸಲು ವಿಭಾಗದಿಂದ ಸೌಮ್ಯ, ಎ ಮತ್ತು ಬಿ ವಿಭಾಗದಿಂದ ವೆಂಕಟರಮಣ ಭಟ್ ವೈ ಮತ್ತು ಪದ್ಮರಾಜ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಒಟ್ಟು 10 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಎ ಮತ್ತು ಬಿ ವಿಭಾಗದಿಂದ ರಾಘವೇಂದ್ರ ಎಚ್.ಎಂ, ಮತ್ತು ವಿಶ್ವನಾಥ ಈಶ್ವರ ಹೆಗಡೆ , ಸಿ ಕ್ಲಾಸ್ ಮಹಿಳಾ ವಿಭಾಗದಿಂದ ಮಾಲಿನಿ ಪ್ರಸಾದ್, ಎಸ್ಸಿ -ಎಸ್ಟಿ ಮೀಸಲು ಸ್ಥಾನ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಕ್ಷ್ಮಿ ದೇವಸ್ಥಾನ ಕಟ್ಟಿಸುತ್ತಿದ್ದೇನೆ ಎಂದು ಹೇಳಿಕೊಂಡು ಶಿಕ್ಷಕಿಯೊಬ್ಬರಿಗೆ ಒಂದು ಕೋಟಿ ರೂಪಾಯಿ ಮತ್ತು ಚಿನ್ನಾಭರಣ ವಂಚಿಸಿದ್ದ ಘಟನೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ. ಶಿಕ್ಷಕಿಯ ಭಕ್ತಿ ಮತ್ತು ಆಕೆಗೆ ಜಾತಕದ ಮೇಲಿದ್ದ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಜ್ಯೋತಿಷಿ ಕೋಟಿ ಹಣ ವಂಚಿಸಿದ್ದಾರೆ. ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಗಾಜಾದಲ್ಲಿ ಹಮಾಸ್ ಕಮಾಂಡರ್ ಹತ್ಯೆ, ಮಹತ್ವದ ಮಾಹಿತಿ ನೀಡಿದ ಇಸ್ರೇಲ್!
ಗಾಜಾ ಪಟ್ಟಿಯಲ್ಲಿ ಭೀಕರವಾಗಿ ಆರಂಭವಾಗಿರುವ ವಾರ್ ಮತ್ತಷ್ಟು ದೊಡ್ಡ ಹಂತಕ್ಕೆ ತಲುಪಿ, ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ. ಎಲ್ಲಿ ನೋಡಿದರೂ ಕುಸಿದು ಬಿದ್ದ ಕಟ್ಟಡ ಅವಶೇಷ ಮತ್ತು ಶವಗಳ ನಡುವೆ ಜನರು ಜೀವನ ಮಾಡುವ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಹಮಾಸ್ ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿರುವ ಇಸ್ರೇಲಿ ಸೇನೆ, ಇದೀಗ ಮತ್ತೆ ಒಬ್ಬ ಹಮಾಸ್
ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ; ಮದುವೆಯ ಕಾರ್ಯಕ್ರಮ ಮುಂದೂಡಿಕೆ
ಸಾಂಗ್ಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಅವರ ವಿವಾಹ ಸಮಾರಂಭಕ್ಕೆ ಮುನ್ನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಮೃತಿ–ಪಲಾಶ್ ಮುಚ್ಚಲ್ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸ್ಯಾಮ್ಡೋಲ್ನಲ್ಲಿರುವ ಮಂದಾನಾ ಫಾರ್ಮ್ಹೌಸ್ನಲ್ಲಿ ಮದುವೆ ಸಿದ್ಧತೆಗಳು ಅಂತಿಮ ಹಂತದಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಸ್ವಸ್ಥರಾದ ಶ್ರೀನಿವಾಸ್ ಮಂಧಾನ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ವೀಕ್ಷಣೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. “ಯಾವುದೇ ಅಪಾಯವನ್ನು ಎದುರಿಸಬಾರದೆಂದು ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಲಾಯಿತು. ಈಗ ಸ್ಥಿತಿ ಸ್ಥಿರವಾಗಿದೆ,” ಎಂದು ಸ್ಮೃತಿ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ತಿಳಿಸಿದ್ದಾರೆ. ಸ್ಮೃತಿ ಅವರು ತಮ್ಮ ತಂದೆಯ ಆರೋಗ್ಯ ಸುಧಾರಣೆಗೇ ಆದ್ಯತೆ ನೀಡಲು ನಿರ್ಧರಿಸಿರುವುದರಿಂದ ಮದುವೆಯನ್ನು ಮುಂದೂಡಲಾಗಿದೆ. ಮದುವೆ ಸ್ಥಳದಲ್ಲಿದ್ದ ಅಲಂಕಾರ ಮತ್ತು ಸಿದ್ಧತೆಗಳನ್ನು ಈಗ ತೆರವುಗೊಳಿಸಲಾಗುತ್ತಿದೆ. ಸ್ಮೃತಿ ಮತ್ತು ಕುಟುಂಬವು ಈ ಸಂದರ್ಭದಲ್ಲಿ ಗೌಪ್ಯತೆಯನ್ನು ಕೋರಿದೆ. ನವೆಂಬರ್ 23ರಂದು ನಿಕಟ ಬಂಧುಗಳ ಸಮ್ಮುಖದಲ್ಲಿ ಮದುವೆ ನಡೆಯಬೇಕಿತ್ತು. ಮಹಿಳಾ ಕ್ರಿಕೆಟ್ ತಂಡದ ಕೆಲವರು ಸಾಂಗ್ಲಿಗೆ ಆಗಮಿಸಿದ್ದರು. ಕಳೆದ ಕೆಲವು ದಿನಗಳಿಂದ ದಂಪತಿಯ ಪೂರ್ವ ಸಂಭ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದುವು. ಹಲ್ದಿ, ಮೆಹಂದಿ ಹಾಗೂ ಕುಟುಂಬಗಳ ನಡುವಿನ ಸ್ನೇಹಪರ ಕ್ರಿಕೆಟ್ ಪಂದ್ಯ ಸೇರಿದಂತೆ ಸಡಗರದ ಕಾರ್ಯಕ್ರಮಗಳು ಯೋಜನೆಯಲ್ಲಿದ್ದರೂ, ಉಳಿದ ಎಲ್ಲ ಉತ್ಸವಗಳು ಈಗ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿವೆ.
ಬೆಂಗಳೂರಿನ ಟೆಕ್ಕಿಗೆ ಲೈಂಗಿಕ ಆರೋಗ್ಯ ಚಿಕಿತ್ಸೆಗೆಂದು ಚೂರ್ಣ, ತೈಲ ಕೊಟ್ಟು 48 ಲಕ್ಷ ರೂ. ವಂಚನೆ! ಕಿಡ್ನಿಗೂ ಹಾನಿ
ಲೈಂಗಿಕ ಆರೋಗ್ಯದ ಚಿಕಿತ್ಸೆ ಹೆಸರಿನಲ್ಲಿ 48 ಲಕ್ಷ ರೂ. ಕಳೆದುಕೊಂಡ ಟೆಕ್ಕಿಯೊಬ್ಬರ ಮೂತ್ರಪಿಂಡಗಳಿಗೆ ಹಾನಿಯಾಗಿದೆ. ವಿಜಯ್ ಗುರೂಜಿ ಎಂಬುವರು 'ದೇವರಾಜ ಬೂಟಿ' ಮತ್ತು 'ಭಾವನಾ ಬೂಟಿ ತೈಲ'ದಂತಹ ದುಬಾರಿ ಔಷಧಿಗಳನ್ನು ಮಾರಾಟ ಮಾಡಿ ವಂಚಿಸಿದ್ದಾರೆ. ಚಿಕಿತ್ಸೆ ನಿಲ್ಲಿಸಿದರೆ ಆರೋಗ್ಯ ಹದಗೆಡುತ್ತದೆ ಎಂದು ಬೆದರಿಕೆ ಹಾಕಿದ್ದರು.
ಹಿರಿಯ ಪತ್ರಕರ್ತರ ಮಾಸಾಶನ ಷರತ್ತುಗಳನ್ನು ಸದ್ಯದಲ್ಲೇ ಸಡಿಲಿಸಲಾಗುವುದು: ಕೆ.ವಿ. ಪ್ರಭಾಕರ್
ಬೆಂಗಳೂರು: ಹಿರಿಯ ಪತ್ರಕರ್ತರ ಮಾಸಾಶನಕ್ಕೆ ಸಂಬಂಧಿಸಿದಂತೆ ಇರುವ ಕಠಿಣ ಷರತ್ತುಗಳನ್ನು ಸದ್ಯದಲ್ಲೇ ಸಡಿಲಿಸಿ ಎಲ್ಲಾ ಅರ್ಹ ಪತ್ರಕರ್ತರಿಗೂ ಮಾಸಾಶನ ಸಿಗುವಂತೆ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳುವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು. ಭಾರತೀಯ ಹಿರಿಯ ಪತ್ರಕರ್ತರ ಒಕ್ಕೂಟ (ಎಸ್ ಜೆಎಫ್ ಐ) ಹಾಗೂ ಕರ್ನಾಟಕ ಹಿರಿಯ ಪತ್ರಕರ್ತರ ವೇದಿಕೆಯ ಆಶ್ರಯದಲ್ಲಿ ಇಂದು ನಡೆದ ಹಿರಿಯ ಪತ್ರಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪತ್ರಕರ್ತರಿಗೆ ಸೌಲಭ್ಯಗಳು ದೊರೆಯುತ್ತಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ. ಈಗಿರುವ ಷರತ್ತುಗಳಿಂದ ಹಿರಿಯ ಪತ್ರಕರ್ತರಿಗೆ ಮಾಸಾಶನ ಸಿಗುವುದು ಕಠಿಣವಾಗಿರುವುದರಿಂದ ಸದ್ಯದಲ್ಲೇ ಷರತ್ತುಗಳನ್ನು ಸಡಿಲಿಸಿ ಎಲ್ಲಾ ಅರ್ಹ ಪತ್ರಕರ್ತರಿಗೂ ಮಾಸಾಶನ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು. ಪತ್ರಕರ್ತರ ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದ 'ಮುಖ್ಯ ಮಂತ್ರಿಗಳ ಮಾಧ್ಯಮ ಸಂಜೀವಿನಿ' ಯೋಜನೆಯನ್ನು ಹಿರಿಯ ಪತ್ರಕರ್ತರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇಂದು ಅಭಿವೃದ್ಧಿ ಮತ್ತು ತನಿಖಾ ಪತ್ರಿಕೋದ್ಯಮ ಸ್ಥಗಿತಗೊಂಡಿದ್ದು, ಊಹಾ ಪತ್ರಿಕೋದ್ಯಮ ದೊಡ್ಡದಾಗಿ ಬೆಳೆಯುತ್ತಿದೆ. ಸತ್ಯದ ಮೇಲೆ ಸುಳ್ಳಿನ ಸವಾರಿ ನಡೆಯುತ್ತಿದೆ. ಇದರಿಂದ ಪತ್ರಿಕೋದ್ಯಮದ ಬಗೆಗಿನ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತರ ವೇದಿಕೆಯ ಅಧ್ಯಕ್ಷ ಆರ್.ಪಿ.ಸಾಂಬಸದಾಶಿವ ರೆಡ್ಡಿ ಅವರು, ಪತ್ರಕರ್ತರ ಮಾಸಾಶನ ಮತ್ತು ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದ ಷರತ್ತುಗಳನ್ನು ಸಡಿಲಿಸುವಂತೆ ಕೆ.ವಿ.ಪ್ರಭಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. 'ಎಸ್ ಜೆ ಎಫ್ ಐ', ಪ್ರಧಾನ ಕಾರ್ಯದರ್ಶಿ ಎನ್.ಪಿ.ಚೆಕ್ಕುಟ್ಟಿ ಮಾತನಾಡಿ, ಹಿರಿಯ ಪತ್ರಕರ್ತರಿಗೆ ರಾಷ್ಟ್ರ ಮಟ್ಟದಲ್ಲಿ ಮಾಸಾಶನ ಮತ್ತು ಆರೋಗ್ಯ ಸೌಲಭ್ಯಗಳು ಸಿಗಬೇಕು ಎಂದು ಆಗ್ರಹಿಸಿದರು. ಸಮಾವೇಶದಲ್ಲಿ 'ಎಸ್ ಜೆಎಫ್ ಐ' ನ ಉಪಾಧ್ಯಕ್ಷ ಆನಂದಮ್ ಪುಲಿಪಲುಪುಲ, ಕಾರ್ಯದರ್ಶಿಗಳಾದ ಕೆ.ಶಾಂತ ಕುಮಾರಿ, ಕೆ.ಪಿ.ವಿಜಯ ಕುಮಾರ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಭೂಪತಿ, ಶಾಸ್ತ್ರಿ ರಾಮಚಂದ್ರನ್, ಹಿರಿಯ ಪತ್ರಕರ್ತರ ವೇದಿಕೆಯ ಕಾರ್ಯಾಧ್ಯಕ್ಷ ಎಂ.ಎ.ಪೊನ್ನಪ್ಪ, ಉಪಾಧ್ಯಕ್ಷ ಸೋಮಸುಂದರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಾಜೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಆರ್. ವೆಂಕಟೇಶ ಪ್ರಸಾದ್, ಖಜಾಂಚಿ ಬಿ.ನಾರಾಯಣ್,ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಿವಾಜಿ ಗಣೇಶನ್, ಕೆ.ಆದಿನಾರಾಯಣ ಮೂರ್ತಿ ಸೇರಿದಂತೆ ರಾಜ್ಯಾದ್ಯಂತ ದಿಂದ ಆಗಮಿಸಿದ್ದ ಹಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.
ಮಂಗಳೂರು | ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರಕ್ಕೆ ಟಿವಿ ಕೊಡುಗೆ
ಮಂಗಳೂರು, ನ.23: ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರಕ್ಕೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ಮಹಾ ಪ್ರಬಂಧಕ ಅರುಣ್ ಪ್ರಭ ಕೊಡುಗೆಯಾಗಿ ನೀಡಿರುವ ಟಿವಿಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಈ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು. ಆನೆಗುಂಡಿ ಅಂಗನವಾಡಿ ಕೇಂದ್ರ ಬಾಡಿಗೆ ಕೊಠಡಿಯಲ್ಲಿದ್ದು, ಅದಕ್ಕೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಜಮೀನು ಒದಗಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲಭವನ ಸೊಸೈಟಿ ಅಧ್ಯಕ್ಷ ಬಿ ಆರ್ ನಾಯ್ಡು, ಕರ್ನಾಟಕ ಸೆಣಬು ಅಭಿವೃದ್ಧಿ ನಿಗಮದ ಅಧ್ಯಕ್ಷ ನಟರಾಜ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪೆನಿ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ, ಎಂ ಸಿ ಸಿ ಬ್ಯಾಂಕ್ ನಿರ್ದೇಶಕ ಅಲ್ವಿನ್ ಮೊಂತೆರೋ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಸಿಂಧೂ, ಶಿಕ್ಷಕಿ ಲಕ್ಷ್ಮೀ , ಕೆ ವಿ ಪ್ರಭಾಕರ್ ಕುಟುಂಬದ ಸದಸ್ಯರು, ವಿವಿಧ ಅಂಗನವಾಡಿ ಕೇಂದ್ರದ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
Gen-Z ಹೋರಾಟದ ಭಯದಲ್ಲಿ ನೇಪಾಳಕ್ಕೆ ನೆಮ್ಮದಿಯೇ ಇಲ್ಲ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ!
ನೇಪಾಳ ಸೈಲೆಂಟ್ ಆಗಲಿದೆ ಅನ್ನೋ ನಂಬಿಕೆ ಸುಳ್ಳಾಗಿದ್ದು, ಮತ್ತೆ ಹೋರಾಟದ ಕಾವು ಯಾವ ಕ್ಷಣದಲ್ಲಿ ಸ್ಫೋಟಗೊಳ್ಳುತ್ತೋ ಎಂಬ ಭಯ ಕಾಡತೊಡಗಿದೆ. ಕೆಲವು ಗಂಟೆಗಳ ಹಿಂದಷ್ಟೇ ಈ ಹೋರಾಟಕ್ಕೆ ಬ್ರೇಕ್ ಹಾಕಲು 18 Gen-Z ಹೋರಾಟಗಾರರ ನಾಯಕರು &ಅಧಿಕಾರಿಗಳ ನಡುವೆ ಮಹತ್ವದ ಸಭೆ ನಡೆದಿತ್ತು. ಅಲ್ಲದೆ ಈ ಸಭೆಯ ನಂತರ ಎಲ್ಲವೂ ಸೈಲೆಂಟ್ ಆಗಲಿದೆ ಎನ್ನುವ ನಂಬಿಕೆ
ಮಂಗಳೂರು | ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಮುಹಮ್ಮದ್ ಝಾಹಿದ್ಗೆ ವೈಯಕ್ತಿಕ ಅವಳಿ ಪ್ರಶಸ್ತಿ
ಮಂಗಳೂರು, ನ.23: ಇಂಫಾಕ್ಟ್ ಆರ್ಟ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಆರ್ಟ್ಸ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಸಹಯೋಗದಲ್ಲಿ ಸುಳ್ಯದ ಅಮರಜ್ಯೋತಿ ಕೆ ವಿ ಜಿ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಿಳಿಯಾರ್ ಬಾತಿಷಾ ಹಾಗೂ ರುಕಿಯಾ ರವರ ಪುತ್ರ ಮುಹಮ್ಮದ್ ಝಾಹಿದ್ ರವರು ವೈಯಕ್ತಿಕ ಬಾಲಕರ ವೈಟ್ ಬೆಲ್ಟ್ ವಿಭಾಗದ ಕಟ ಪ್ರಥಮ ಹಾಗೂ ಕುಮಿಟಾದಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ. ಝಾಹಿದ್ ರವರು ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಯಾಗಿದ್ದಾನೆ.
RCB Smriti Mandhana: ಆರ್ಸಿಬಿ ನಾಯಕಿ ಸ್ಮೃತಿ ಮಂದಾನಗೆ ಮದುವೆ ದಿನವೇ ದೊಡ್ಡ ಆಘಾತ
ಭಾರತೀಯ ಮಹಿಳಾ ಕ್ರಿಕೆಟ್ ತಾರೆ, ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಅವರಿಗೆ ತಮ್ಮ ಮದುವೆ ದಿನವೇ ಬಿಗ್ಶಾಕ್ ಎದುರಾಗಿದೆ. ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ದಿಢೀರ್ ಮುಂದೂಡಲಾಗಿದೆ. ಮಂಧಾನ ಮತ್ತು ಮುಚ್ಚಲ್ ಭಾನುವಾರ (ಇಂದು) ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ವಿವಾಹವಾಗಲು ಸಜ್ಜಾಗಿದ್ದರು.
ಇಂಟಾಕ್ ಮಂಗಳೂರು ವತಿಯಿಂದ ’ನಮ್ಮ ಊರು ನಮ್ಮ ನೆಲ’ ಕಲಾ ಪ್ರದರ್ಶನಕ್ಕೆ ಚಾಲನೆ
ಮಂಗಳೂರು, ನ.23: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆಯಾದ ಇಂಟಾಕ್ ನ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ ವಿಶ್ವ ಪರಂಪರೆಯ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ನಮ್ಮ ಊರು ನಮ್ಮ ನೆಲ ಎಂಬ ಶೀರ್ಷಿಕೆಯ ಕಲಾ ಪ್ರದರ್ಶನದ ಉದ್ಘಾಟನೆಯಾಯಿತು. ತುಳುನಾಡು ಪ್ರದೇಶದ ಹತ್ತು ಕಲಾವಿದರ ವರ್ಣಚಿತ್ರಗಳು, ರೇಖಾಚಿತ್ರಗಳು ಮತ್ತು ಪ್ರತಿಷ್ಠಾಪನೆಗಳ ಪ್ರದರ್ಶನವನ್ನು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಉದ್ಘಾಟಿಸಿದರು. ಹರೀಶ್ ಕೊಡಿಯಾಲ್ಬೈಲ್, ಜನಾರ್ದನ ಹಾವಂಜೆ, ಜೀವನ್ ಸಾಲಿಯಾನ್, ರೇಷ್ಮಾ ಎಸ್. ಶೆಟ್ಟಿ, ಸಂತೋಷ್ ಅಂದ್ರಾದೆ, ಸಂತೋಷ್ ಪೈ, ಶಿಲ್ಪಾ ಭಟ್, ಉಮೇಶ್ ವಿ.ಎಂ., ವಿಶ್ವಾಸ್ ಎಂ. ಮತ್ತು ವಿಲ್ಸನ್ ಡಿಸೋಜ ಮತ್ತಿತರ ಕಲಾವಿದರ ಕೃತಿಗಳು ಪ್ರದರ್ಶನದಲ್ಲಿ ಕಾಣಲಿವೆ. ಇಂಟಾಕ್ ಸಂಚಾಲಕ ಸುಭಾಸ್ಚಂದ್ರ ಬಸು ಸ್ವಾಗತಿಸಿದರು. ರಾಜೇಂದ್ರ ಕೇದಿಗೆ ವಂದಿಸಿದರು.
ಉಳ್ಳಾಲ | ಅಲ್ ಮೆಮ್ಸ್ ಜುಬಿಲೋಸೊ-25 : ಸ್ವಾಗತ ಸಮಿತಿ ರಚನೆ
ಉಳ್ಳಾಲ, ನ.23: ಅಲ್ ಮದೀನ ಆಂಗ್ಲ ಮಾಧ್ಯಮ ಶಾಲೆ ನರಿಂಗಾನ ಇದರ ವಾರ್ಷಿಕ ಕಲೋತ್ಸವ ಜುಬಿಲೋಸೊ ಡಿ. 4,5,6 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಇದರ ಪೂರ್ವಭಾವಿ ಸಿದ್ಧತೆ ಮತ್ತು ಆಯೋಜನೆಗಾಗಿ ಸ್ವಾಗತ ಸಮಿತಿ ರಚನಾ ಸಭೆಯು ಇತ್ತೀಚೆಗೆ ಅಲ್ ಮದೀನ ಶಾಲೆಯಲ್ಲಿ ನಡೆಯಿತು. ಸಂಸ್ಥೆಯ ಡೈರೆಕ್ಟರ್ ಮುಹಮ್ಮದ್ ಕುಂಞಿ ಅಮ್ಜದಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ಮೀಡಿಯಂ ಮದ್ರಸದ ಸದರ್ ಅಬೂಬಕರ್ ಮದನಿ ಪಡಿಕ್ಕಲ್ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲ ಕೆ.ಪಿ ಮನ್ಸೂರ್ ಹಿಮಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಕಾಡಮಿಕ್ ಡೈರಕ್ಟರ್ ಅಬುಸಾಲಿಹ್ ಅಝ್ಹರಿ, ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಮುಹಮ್ಮದ್ ಮಾಸ್ಟರ್, ಝೈನುಲ್ ಆಬಿದ್ ಮದನಿ, ಸಿದ್ದೀಕ್ ಅಹ್ಸನಿ, ಝಕರಿಯ ಅಹ್ಸನಿ, ಇಸ್ಮಾಯಿಲ್ ಸಖಾಫಿ, ಫಾರೂಕ್ ಸಖಾಫಿ ಉಪಸ್ಥಿತರಿದ್ದರು. ಕನ್ವೀನರ್ ಅಬ್ದುಲ್ ಲತೀಫ್ ವಂದಿಸಿದರು. ಜುಬಿಲೋಸೊ-25 ರ ಸ್ವಾಗತ ಸಮಿತಿಯ ಚೆಯರ್ಮ್ಯಾನ್ ಆಗಿ ಅಬ್ದುಲ್ ಖಾದರ್ ಮುಸ್ಲಿಯಾರ್, ವೈಸ್ ಚೆಯರ್ಮಾನ್ ಆಗಿ ಮುಸ್ತಫ ಸಅದಿ ಹಾಗೂ ಮುಹಮ್ಮದ್ ಜೀಲಾನಿ, ಜನರಲ್ ಕನ್ವೀನರ್ ಆಗಿ ಮೊಯ್ದಿನ್ ಕುಂಞಿ, ವೈಸ್ ಕನ್ವೀನರ್ ಆಗಿ ಅಬ್ದುಲ್ ಲತೀಫ್ ಹಾಗೂ ಮುಹಮ್ಮದ್ ನಾಸಿರ್, ಫೈನಾನ್ಸ್ ಕನ್ವೀನರ್ ಆಗಿ ಇಸ್ಮಾಯಿಲ್ ಫಯಾಝ್ ಹಾಗು 40 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ನಮ್ಮ ನಾಡಾ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷರಾಗಿ ಹಮೀದ್ ಆಯ್ಕೆ
ಕಾಪು, ನ.23: ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಸಮಿತಿಯ ಮಹಾಸಭೆಯು ಅಶ್ರಫ್ ಪಡುಬಿದ್ರಿ ಅಧ್ಯಕ್ಷತೆಯಲ್ಲಿ ಪಡುಬಿದ್ರಿ ಕಮ್ಯೂನಿಟಿ ಸೆಂಟರ್ ನಲ್ಲಿ ಇತ್ತೀಚೆಗೆ ನಡೆಯಿತು. 2026-2027ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಮೀದ್ ಯೂಸಫ್, ಉಪಾಧ್ಯಕ್ಷರಾಗಿ ರಶೀದ್ ಯು.ಎ., ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್, ಕಾರ್ಯದರ್ಶಿಯಾಗಿ ಸೈಯದ್ ಅಕ್ಬರ್ ಅಲಿ, ಕೋಶಾಧಿಕಾರಿಯಾಗಿ ಬಿ.ಎ.ಮೊಯಿದಿನ್, ಸಂಘಟನಾ ಕಾರ್ಯದಶಿಯಾಗಿ ಎಂ.ಡಿ.ಯಾಕಿನುಳ್ಳ ಅವರನ್ನು ಆಯ್ಕೆ ಮಾಡಲಾಯಿತು. ಚುನಾವಣಾ ವೀಕ್ಷಕರಾಗಿ ಇರ್ಫಾನ್ ಕಾಪು ಉಪಸ್ಥಿತರಿದ್ದರು.
ಉಡುಪಿ | ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಅಧ್ಯಕ್ಷರಾಗಿ ಇಬಾದ್ ಆಯ್ಕೆ
ಉಡುಪಿ, ನ.23: ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆ ಮಲ್ಪೆಯಲ್ಲಿ ಇತ್ತೀಚಿಗೆ ನಡೆಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ನಕ್ವಾ ಯಾಹ್ಯಾ, ಪ್ರಧಾನ ಕಾರ್ಯದರ್ಶಿ ಫಾಝಿಲ್ ಆದಿಉಡುಪಿ, ಜಂಟಿ ಕಾರ್ಯದರ್ಶಿ ನಿಹಾರ್ ಅಹ್ಮದ್ ಕುಂದಾಪುರ ಮತ್ತು ಅಶ್ರಫ್ ಪಡುಬಿದ್ರಿ, ಮಾಜಿ ಜಿಲ್ಲಾಧ್ಯಕ್ಷ ಮುಷ್ತಾಕ್ ಬೆಳ್ವೆ, ಟ್ರಸ್ಟಿ ಪೀರು ಭಾಯಿ ಉಪಸ್ಥಿತರಿದ್ದರು. ನಂತರ ತಾಲೂಕು ಉಸ್ತುವಾರಿ ನಜೀರ್ ಸಾಹೇಬ್ ನೇಜಾರು, ಚುನಾವಣಾ ಅಧಿಕಾರಿ ಅಶ್ರಫ್ ಪಡುಬಿದ್ರಿ ಮತ್ತು ತಾಜುದ್ದೀನ್ ಬ್ರಹ್ಮಾವರ ಉಡುಪಿ ತಾಲೂಕು ಸಮಿತಿ ರಚನೆಯ ಪ್ರಕ್ರಿಯೆ ನಡೆಸಿಕೊಟ್ಟರು. 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಇಬಾದ್ ಉಸ್ಮಾನ್, ಉಪಾಧ್ಯಕ್ಷರಿಗೆ ಅಕ್ರಮಾಲಿ, ಪ್ರಧಾನ ಕಾರ್ಯದರ್ಶಿಯಾಗಿ ಇಫ್ತಿಕಾರ್ ಅಹಮದ್, ಜಂಟಿ ಕಾರ್ಯದರ್ಶಿಯಾಗಿ ಬಿಲಾಲ್ ಸಾಗರ, ಕೋಶಾಧಿಕಾರಿಯಾಗಿ ಅಮಾನುಲ್ಲಾ, ಸಂಘಟನಾ ಕಾರ್ಯದರ್ಶಿಯಾಗಿ ಶಾಮು ಅಹಮದ್, ತಾಲೂಕು ಸಮಿತಿ ಸದಸ್ಯರುಗಳಾಗಿ ಅವೇಜ ಶೇಖ್, ಇಮ್ತಿಯಾಜ್, ಮುಮ್ತಾಜ್ ಅಲಿ ಹಾರೂನ್ ರಶೀದ್ ಆತ್ರಾಡಿ ಆಯ್ಕೆಯಾದರು.
ಉಡುಪಿ | ಕೆಎಸ್ಇಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಯಿಷಾ ಸನಾ ಉತ್ತೀರ್ಣ
ಉಡುಪಿ : ಸಹಾಯಕ ಪ್ರಾಧ್ಯಾಪಕರಿಗಾಗಿ ಇತ್ತೀಚೆಗೆ ನಡೆದ 2026ನೆ ಸಾಲಿನ ಕೆಎಸ್ಇಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಯಿಷಾ ಸನಾ ಉತ್ತೀರ್ಣರಾಗಿದ್ದಾರೆ. ಇವರು ಕಣ್ಣಂಗಾರ್ ಬೈಪಾಸ್ ಮೂಲದ ಮುಹಮ್ಮದ್ ಶಫೀಕ್ ಮತ್ತು ನಫೀಸಾ ದಂಪತಿ ಪುತ್ರಿ,
ಇಂದ್ರಾಳಿ | 27 ಪ್ರಬೇಧಗಳ 185 ಹಕ್ಕಿಗಳ ವೀಕ್ಷಣೆ
ಉಡುಪಿ, ನ.23: ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಇಂದ್ರಾಳಿಯಲ್ಲಿ ಶನಿವಾರ ಸಂಜೆ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರಾಸಕ್ತರು ಕಾಲ್ನಡಿಗೆಯ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ 27 ಪ್ರಬೇಧಗಳ 185 ಹಕ್ಕಿಗಳನ್ನು ಪಟ್ಟಿ ಮಾಡಿದರು. ಇದರಲ್ಲಿ ಏಶಿಯನ್ ಗ್ರೀನ್ ಬೀ ಈಟರ್(ಸಣ್ಣ ಕಳ್ಳಿಪೀರ) ಪ್ರಬೇಧದ ಸುಮಾರು 120ಕ್ಕೂ ಹೆಚ್ಚಿನ ಹಕ್ಕಿಗಳನ್ನು ವೀಕ್ಷಣೆ ಮಾಡಲಾಯಿತು. ವೈಟ್ ಬ್ರೊವ್ಡ್ ವ್ಯಾಗ್ಟೈಲ್(ಕಪ್ಪು ಬಿಳಿ ಸಿಪಿಲೆ), ಗೋವಕ್ಕಿ, ಚುಕ್ಕೆ ಬೆಳವ, ಚುಕ್ಕ ರಾಟವಾಳ, ಪುಟ್ಟ ನೀರುಕಾಗೆ, ಗದ್ದೆ ಮಿಂಚುಳ್ಳಿ, ಗೊರವಂಕ, ಚಿಕ್ಕ ಬಾನಾಡಿ, ಕೆಂದಲೆ ಗಿಳಿ, ಸಣ್ಣ ಕುಟ್ರ, ಕಂಚುಕುಟಿಗ, ಕೆಮ್ಮೀಸೆ ಪಿಕಳಾರ, ಕೆಂಪು ಚಿಬ್ಬೊಟ್ಟೆಯ ಪಿಕಳಾರ, ಹೊನ್ನಕ್ಕಿ, ಕಾಜಾಣ, ರಾಜಪಕ್ಷಿ, ಮಟಪಕ್ಷಿ, ಬೂದು ಉಲಿಯಕ್ಕಿ, ನೇರಳೆ ಸೂರಕ್ಕಿ, ಗರುಡ ಸೇರಿದಂತೆ 27 ಪ್ರಬೇಧಗಳ ಹಕ್ಕಿಗಳನ್ನು ವೀಕ್ಷಿಸಲಾಯಿತು. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿಎನ್ಎಚ್ಎಸ್) ಇದರ ಪಕ್ಷಿ ವಿಜ್ಞಾನದ ವಿದ್ಯಾರ್ಥಿನಿ ಮಂಜುಳಾ ಎಚ್. ಹಕ್ಕಿಗಳ ವಲಸೆ ವಿಧಗಳು, ಗೂಡು ರಚನೆಯ ಬಗ್ಗೆ ಉದಾಹರಣೆ ಸಹಿತ ವಿಸ್ತೃತ ಮಾಹಿತಿ ನೀಡಿದರು. ಲೇಖಕ ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ ಹಕ್ಕಿಗಳು ಆಹಾರ ಹುಡುಕುವ ಬಗ್ಗೆ, ಗೂಡುಗಳ ರಚನೆಯ ಹಿಂದಿರುವ ಅಂಶಗಳ ಬಗ್ಗೆ ಸಂವಾದ ರೂಪದಲ್ಲಿ ಮಾಹಿತಿ ನೀಡಿದರು. ಮನೆಯೇ ಗ್ರಂಥಾಲಯ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಲೆಸ್ಲಿ ಫರ್ನಾಂಡಿಸ್, ಗಣಪತಿ ನಾಯಕ್, ಪ್ರಸನ್ನ ಉದ್ಯಾವರ, ಕೆ.ಪ್ರೇರಣಾ ಉಪಾಧ್ಯಾಯ, ಉದಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಉಡುಪಿಗೆ ಬನ್ನಿ ತಂಡದ ಸದಸ್ಯ ಡಾ.ಗಣೇಶ್ ಪ್ರಸಾದ್ ಜಿ.ನಾಯಕ್ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು.
'ದುಬೈ ರನ್-2025' | ಲಕ್ಷಾಂತರ ಮಂದಿ ಭಾಗಿ
ದುಬೈ : ಫಿಟ್ನೆಸ್(ದೈಹಿಕ ಕ್ಷಮತೆ) ಚಾಲೆಂಜ್ನ ಭಾಗವಾಗಿ ರವಿವಾರ ದುಬೈನಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ 'ದುಬೈ ರನ್-2025' ಏಳನೇ ಆವೃತ್ತಿ ಬಹಳ ಅದ್ದೂರಿಯಾಗಿ ನಡೆಯಿತು. ದುಬೈಯ ಜನನಿಬಿಡ ಪ್ರದೇಶವಾದ ಶೇಖ್ ಝಾಯೆದ್ ರಸ್ತೆಯಲ್ಲಿ ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಿತಿಯ ಲಕ್ಷಾಂತರ ಮಂದಿ ಅತೀ ಉತ್ಸಾಹದಿಂದ ಭಾಗವಹಿಸುವ ಮೂಲಕ 'ದುಬೈ ರನ್'ನ ಐತಿಹಾಸಿಕ ಓಟಕ್ಕೆ ಸಾಕ್ಷಿಯಾದರು. 'ದುಬೈ ರನ್'ನಿಂದಾಗಿ ಶೇಖ್ ಝಾಯೆದ್ ರಸ್ತೆ ವಿಶ್ವದ ಅತಿ ದೊಡ್ಡ ಓಟದ ಟ್ರ್ಯಾಕ್(ಮಾರ್ಗ) ಆಗಿ ಮಾರ್ಪಟ್ಟಿತು. ಈ ಉಚಿತ, ಸಾಮೂಹಿಕ ಭಾಗವಹಿಸುವಿಕೆಯ ಕಾರ್ಯಕ್ರಮದಿಂದಾಗಿ ರವಿವಾರ ಸೂರ್ಯೋದಯಕ್ಕೂ ಮುನ್ನವೇ ದುಬೈ ನಗರವಿಡೀ ಹಬ್ಬದ ವಾತಾವರಣದಂತೆ ಕಂಗೊಳಿಸುತ್ತಿತ್ತು. ಫಿಟ್ನೆಸ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಆಯೋಜಿಸಲಾಗುತ್ತಿರುವ ಈ ದುಬೈ ರನ್ ನಲ್ಲಿ ಯುಎಇಯಲ್ಲಿ ನೆಲೆಸಿರುವ ವಿಶ್ವದ ನಾನಾ ಕಡೆಗಳ ಜನ ಅತೀ ಉತ್ಸಾಹ ಹಾಗು ಸಂತಸದಿಂದ ಕುಟುಂಬ, ಗೆಳೆಯ, ಗೆಳತಿಯರೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ಹೊಸಬರು, ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತರಾಗಿ ಪಾಲ್ಗೊಳ್ಳುವ ಜನರು ಸುಲಭವಾಗಿ ಓಡಲು 5 ಕಿ.ಮೀ ಹಾಗು ವೃತ್ತಿಪರ ಅನುಭವಿ ಓಟಗಾರರಿಗೆ 10 ಕಿ.ಮೀ ಓಟವನ್ನು ಆಯೋಜಿಸಲಾಗಿತ್ತು. ಶೇಖ್ ಝಾಯೆದ್ ರಸ್ತೆ ಮತ್ತು ದುಬೈ ಡೌನ್ಟೌನ್ ಪ್ರದೇಶವನ್ನು ಓಟಕ್ಕಾಗಿ ಬಳಸಲಾಗಿದ್ದು, ಮ್ಯೂಸಿಯಂ ಆಫ್ ದಿ ಫ್ಯೂಚರ್, ಎಮಿರೇಟ್ಸ್ ಟವರ್ಸ್, ದುಬೈ ಒಪೇರಾ ಮತ್ತು ಬುರ್ಜ್ ಖಲೀಫಾದಂಥ ಐತಿಹಾಸಿಕ ಸ್ಥಳಗಳ ಸುತ್ತ ಓಟಗಾರರು ಓಡುವ ಮೂಲಕ ತಮ್ಮ ಗುರಿ ಮುಟ್ಟಿದರು. ಕಳೆದ ವರ್ಷ ಈ ಓಟದಲ್ಲಿ 2,78,000 ಜನರು ಭಾಗವಹಿಸಿದ್ದು, ಅದಕ್ಕೂ ಹಿಂದಿನ ಆವೃತ್ತಿಗಿಂತ 23% ಜನರ ಪಾಲ್ಗೊಳ್ಳುವಿಕೆ ಹೆಚ್ಚಳವಾಗಿತ್ತು. ದುಬೈ ರನ್ ವಿಶ್ವದ ಅತಿ ದೊಡ್ಡ ಸಾಮೂಹಿಕ ಓಟ ಎಂಬ ಖ್ಯಾತಿಗೂ ಪಾತ್ರವಾಗಿದೆ.
ಮೊದಲ ಆವೃತ್ತಿಯ ಟಿ-20 ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡ
ಫೈನಲ್ನಲ್ಲಿ ನೇಪಾಳದ ವಿರುದ್ಧ ಏಳು ವಿಕೆಟ್ ಜಯ
ದುಬೈ : ಆರೋಗ್ಯ, ಫಿಟ್ನೆಸ್, ಮನರಂಜನೆ ಮತ್ತು ಸಮುದಾಯ ಒಗ್ಗಟ್ಟಿನ ಹಿನ್ನೆಲೆಯಲ್ಲಿ ರವಿವಾರ ದುಬೈಯ ಶೇಖ್ ಝಾಯೆದ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ 'ದುಬೈ ರನ್-2025' ಓಟದ ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಬ್ಯಾರಿ ಅನಿವಾಸಿ ಸಮುದಾಯವು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ. ಲಕ್ಷಾಂತರ ಮಂದಿ ಸೇರಿದ್ದ 'ದುಬೈ ರನ್' ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಬ್ಯಾರಿ ಅನಿವಾಸಿ ಸಮುದಾಯವು ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, 'ದುಬೈ ರನ್'ಗೆ ಮೆರುಗು ತಂದುಕೊಟ್ಟಿದೆ. ಕಳೆದ ಹಲವು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಡ್ಡೂರು ನೇತೃತ್ವದಲ್ಲಿ ಪೂರ್ವ ತಯಾರಿ ನಡೆಸಿದ್ದ ಅನಿವಾಸಿ ಬ್ಯಾರಿಗಳು, ತಮ್ಮದೇ ಆದ 'ದುಬೈ ಬ್ಯಾರೀಸ್' ಎಂದು ಬರೆದಿರುವ ಟೀ-ಶರ್ಟ್ ಧರಿಸುವ ಮೂಲಕ ಪಾಲ್ಗೊಂಡು, ಅತೀ ಉದ್ದನೆಯ ಯುಎಇ ಧ್ವಜವನ್ನು ಹಾರಿಸುತ್ತ, ಓಟದ ಉದ್ದಕ್ಕೂ ಕನ್ನಡ, ಬ್ಯಾರಿ ಹಾಡುಗಳನ್ನು ಹಾಡುತ್ತ ಸಂಭ್ರಮಿಸಿದರಲ್ಲದೆ, ಈ ಕಾರ್ಯಕ್ರಮದಲ್ಲಿ ಸೇರಿದ್ದ ಜನರ ಗಮನ ಸೆಳೆದರು. ದುಬೈ ರಾಜಕುಮಾರ ಶೇಖ್ ಹಮ್ದಾನ್ ಅವರು ತಮ್ಮ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಐತಿಹಾಸಿಕ ದುಬೈ ರನ್ನಲ್ಲಿ ಪಾಲ್ಗೊಂಡ ದುಬೈನ ಬ್ಯಾರಿ ಸಮುದಾಯದ ಸದಸ್ಯರು ಹಾರಿಸಿದ ಉದ್ದನೆಯ ಯುಎಇ ಧ್ವಜದ ಚಿತ್ರಣದ ವೀಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಬ್ಯಾರಿ ಸಮುದಾಯದ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಹಿದಾಯತ್ ಅಡ್ಡೂರು ನೇತೃತ್ವದಲ್ಲಿ, ಅಶ್ರಫ್ ಶಾ ಮಾಂತೂರು, ಸಲೀಂ ಮೂಡಬಿದ್ರೆ, ಸಮದ್ ಬಿರಾಲಿ, ಮುಹಮ್ಮದ್ ಆಶಿಕ್(ಬದ್ರಿಯಾ ಫ್ರೆಂಡ್ಸ್), ಇಕ್ರಂ ಮೂಳೂರು, ಸಂಶುದ್ದೀನ್ ಪಿಲಿಗೊಡು, ನೌಫಾಲ್, ಅಕ್ಬರ್, ಯೂಸುಫ್ ಶೇಖ್, ಅದ್ದು ಹೊನ್ನಾವರ, ಸೋಶಿಯಲ್ ಇನ್ಫ್ಲುಯೆನ್ಸರ್ ನಝೀಹ ಫಾತಿಮಾ, ಶುಕೂರ್ ಉಳ್ಳಾಲ, ಆಸೀಫ್ ಕಣ್ಣಂಗಾರ್, ನವಾಝ್ ಕೊಳ್ತಮಜಲು, ನಝೀರ್ ವಾಮಂಜೂರು, ಸನಾನ್ ಸೇರಿದಂತೆ ಸಾವಿರಾರು ಬ್ಯಾರಿಗಳು ಕುಟುಂಬ ಸಮೇತರಾಗಿ ಓಟದಲ್ಲಿ ಭಾಗವಹಿಸಿದ್ದರು.
ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ಸಮಾರಂಭವನ್ನು ಅಂತಿಮ ಕ್ಷಣದಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮದುವೆ ಸಿದ್ಧತೆಗಳ ನಡುವೆ, ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನಾ ಅವರಿಗೆ ಹೃದಯಾಘಾತ ಸಂಭವಿಸಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರನ್ನು ತಕ್ಷಣವೇ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ವೈದ್ಯರ ನಿಗಾದಲ್ಲಿದೆ. ಸ್ಮೃತಿ ಅವರ ವ್ಯವಸ್ಥಾಪಕ ತುಹಿನ್ ಮಿಶ್ರಾ ಅವರು ಇದನ್ನು ದೃಢಪಡಿಸಿದ್ದು, ತಮ್ಮ ತಂದೆ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಮದುವೆ ಸಮಾರಂಭವನ್ನು ನಡೆಸದಿರಲು ಸ್ಮೃತಿ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದಿದ್ದು ಒಬ್ಬನ ಪರಿಶ್ರಮದಿಂದಲ್ಲ: ಸತೀಶ್ ಜಾರಕಿಹೊಳಿ
ಬೆಳಗಾವಿ: ಪಕ್ಷಕ್ಕೆ ಅಧಿಕಾರ ಬಂದದ್ದು ಒಬ್ಬನ ಪರಿಶ್ರಮದಿಂದಲ್ಲ, ಸಾವಿರಾರು ಜನರ ದುಡಿಮೆ ಮತ್ತು ಸಾರ್ವಜನಿಕ ಬೆಂಬಲದಿಂದ ಅದು ಸಾಧ್ಯವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನೇ ಪಕ್ಷವನ್ನು ಅಧಿಕಾರಕ್ಕೆ ತಂದೆ' ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. 1960ರಲ್ಲಿ ಹಿಮಾಲಯವನ್ನು ಏರಿದ ತೇನ್ ಸಿಂಗ್ ಉದಾಹರಣೆ ನೀಡಿದ ಜಾರಕಿಹೊಳಿ, “ಪರ್ವತ ಶಿಖರವೇರಲು ತೇನ್ ಸಿಂಗ್ ಜೊತೆಗೆ ಇನ್ನೂ 14 ಮಂದಿ ಇದ್ದರು. ಟೆಂಟ್ ಹೊತ್ತವರು, ಚಹಾ ಮಾಡಿದವರು ಸೇರಿ ಎಲ್ಲರೂ ಪ್ರಯಾಣದಲ್ಲಿ ಸಮಾನವಾಗಿ ಶ್ರಮಿಸಿದರೂ, ಕೀರ್ತಿ ಮಾತ್ರ ತೇನ್ ಸಿಂಗ್ ಗೇ ಸಿಕ್ಕಿತು. ಪಕ್ಷದಲ್ಲಿಯೂ ಇದೇ ರೀತಿಯ ಪರಿಸ್ಥಿತಿ. ದುಡಿದವರ ಹೆಸರು ಮರೆಮಾಡಬಾರದು” ಎಂದು ಹೇಳಿದರು. “ಪಕ್ಷ ಗೆಲ್ಲಲು ಎಲ್ಲ ಶಾಸಕರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೆಲವೇ ಜನರಿಂದ ಅಧಿಕಾರ ಬಂದಿದೆ ಎನ್ನುವುದು ನಾನು ಸಹ ಒಪ್ಪುವುದಿಲ್ಲ. ಒಂದು ಕೋಟಿಗೂ ಅಧಿಕ ಮತದಾರರು ನಮಗೆ ಮತ ಹಾಕಿದ್ದಾರೆ. ಅವರ ವಿಶ್ವಾಸವೇ ನಮ್ಮ ಶಕ್ತಿ” ಎಂದು ಅವರು ಹೇಳಿದರು. “ಎಲ್ಲವೂ ನನ್ನಿಂದ ಆಗಿದೆ ಎಂದು ಹೇಳುವುದು ಸರಿಯಲ್ಲ. ನಾವು ಎಲ್ಲರೂ ನಮ್ಮ ಇತಿಮಿತಿಯಲ್ಲಿ ಇರಬೇಕು. ಪಕ್ಷ ಬಲವಾಗಲು ಸಾವಿರಾರು ಕಾರ್ಯಕರ್ತರ ಶ್ರಮ ಕಾರಣ” ಎಂದು ಜಾರಕಿಹೊಳಿ ಹೇಳಿದರು.
ಮತ್ತೆ ಕಣಕ್ಕಿಳಿದ ನಟ ವಿಜಯ್: ʻಲೂಟಿ ಮಾಡೋದನ್ನೇ ಡಿಎಂಕೆ ತತ್ವವನ್ನಾಗಿ ಮಾಡಿಕೊಂಡಿದೆʼ ಎಂದು ಕಿಡಿ
ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದಿಂದ ನಲವತ್ತೆರಡು ಜನರು ಮೃತಪಟ್ಟಿದ್ದರು. ಈ ದುರಂತದ ನಂತರ ಎರಡು ತಿಂಗಳು ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬ್ರೇಕ್ ಕೊಟ್ಟುಕೊಂಡಿದ್ದ ನಟ ಮತ್ತು ರಾಜಕಾರಿಣಿ ವಿಜಯ್ ಅವರು ಸದ್ಯ ಮತ್ತೆ ಕಣಕ್ಕಿಳಿದ್ದಿದ್ದಾರೆ. ಹಿಂದಾಗಿದ್ದಂತೆ ಅವಘಡ ಮತ್ತೆ ಮರುಕಳಿಸದಂತೆ ತಡೆಯಲು ಕ್ಯೂ ಆರ್ ಕೋಡ್ ಪಾಸ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಮಾವೇಶಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆಯೂ ಇರಲಿದೆ ಎನ್ನಲಾಗಿದೆ.
Indian Railways: ಪ್ರಸ್ತಕ 2025ರಲ್ಲಿ 01 ಬಿಲಿಯನ್ ಟನ್ ಸರಕು ಸಾಗಿಸಿ ದಾಖಲೆ, ಅಂಕಿ-ಸಂಖ್ಯೆ
Goods Transport: ಭಾರತೀಯ ರೈಲ್ವೆ ಇಲಾಖೆಯು ಭಾರೀ ಸರಕು ವಾಹನ ಲೋಡಿಂಗ್ ಕಾರ್ಯಕ್ಷಮತೆಯಲ್ಲಿ ಪ್ರಸಕ್ತ 2025ರಲ್ಲಿ ಮಹತ್ವದ ಮೈಲಿಗಲ್ಲು ಸಾಧನೆ ಮಾಡಿದೆ. ಸದರಿ 2025-26ನೇ ಹಣಕಾಸು ವರ್ಷದಲ್ಲಿ 1 ಬಿಲಿಯನ್ ಟನ್ ಭಾರೀ ಸರಕು ವಾಹನ ಲೋಡಿಂಗ್ ಮಾಡುವ ಮೂಲಕ ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡಿದೆ. ಇದೇ ನವೆಂಬರ್ 19 ರಂದು 1020 ಮಿಲಿಯನ್
ದ್ವಿತೀಯ ಟೆಸ್ಟ್ ಪಂದ್ಯ | ದಕ್ಷಿಣ ಆಫ್ರಿಕಾ ತಂಡ 489 ರನ್ಗೆ ಆಲೌಟ್
ಗುವಾಹಟಿ: ಭಾರತ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 489 ರನ್ಗಳ ದೊಡ್ಡ ಮೊತ್ತ ಕಲೆ ಹಾಕಿದೆ. ಎರಡನೇ ದಿನದ ಆಟದ ಮೂರನೇ ಸೆಷನ್ನಲ್ಲಿ ಆಫ್ರಿಕಾ ತಂಡ ಆಲೌಟ್ ಆಯಿತು. ಅಗ್ರ ಕ್ರಮಾಂಕದ ಬ್ಯಾಟರ್ಗಳು ಎಲ್ಲರೂ ಸ್ಥಿರ ಆಟವನ್ನು ತೋರಿ ತಂಡದ ಮೊತ್ತಕ್ಕೆ ಉತ್ತಮ ಕೊಡುಗೆ ನೀಡಿದರು. ಮಧ್ಯಕ್ರಮದಲ್ಲಿ ಸೆನುರನ್ ಮುತ್ತುಸಾಮಿ ಶತಕ (109) ಬಾರಿಸಿದರೆ, ಅದೇ ವೇಳೆ ಮಾರ್ಕೊ ಜಾನ್ಸೆನ್ 93 ರನ್ ಗಳಿಸಿ ತಂಡಕ್ಕೆ ಬಿರುಸಿನ ನೆರವು ನೀಡಿದರು. ಉಳಿದಂತೆ ಮರ್ಕರಂ (38), ರ್ಯಾನ್ ರಿಕಲ್ಟನ್ (35), ಟ್ರಿಸ್ಟನ್ ಸ್ಟಬ್ಸ್ (49), ಹಾಗೂ ನಾಯಕ ತೆಂಬಾ ಬವುಮಾ (41) ಪ್ರಮುಖ ರನ್ಗಳನ್ನು ಸೇರಿಸಿದರು. ಭಾರತದ ಪರವಾಗಿ ಕುಲ್ದೀಪ್ ಯಾದವ್ 115 ರನ್ಗಳಿಗೆ 4 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ಗಳನ್ನು ಪಡೆದರು.
ಎಚ್.ಡಿ ಕುಮಾರಸ್ವಾಮಿ - ನನ್ನ ನಡುವೆ ತಂದಿಡುವ ಕೆಲಸ ಮಾಡಬೇಡಿ, ಮನೆಹಾಳು ಕೆಲಸ ಎಂದ ಡಿ.ಕೆ ಶಿವಕುಮಾರ್!
ರಾಜಕೀಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರಗಳು ನಡೆಯುವುದು ಇದೆ. ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವು ತಾರಕಕ್ಕೇರಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ನಡುವಿನ ಮುಸುಕಿನ ಗುದ್ದಾಟವು ಬಹಿರಂಗವಾಗಿದ್ದು, ಡಿ.ಕೆ ಶಿವಕುಮಾರ್ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರು ಸಹ ಹೇಳಿಕೆ - ಪ್ರತಿ ಹೇಳಿಕೆಗಳನ್ನು
ಬೆಂಗಳೂರು ಪೊಲೀಸರು ನವೆಂಬರ್ 19 ರಂದು ನಡೆದ ಬ್ಯಾಂಕ್ ಕ್ಯಾಶ್ ವ್ಯಾನ್ ದರೋಡೆ ಪ್ರಕರಣದಲ್ಲಿ 7.11 ಕೋಟಿ ರೂ.ಗಳ ಪೈಕಿ 6.29 ಕೋಟಿ ರೂ.ಗಳನ್ನು ವಶಪಡಿಸಿಕೊಂಡು, ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 72 ಗಂಟೆಗಳ ಕಾಲ ಆರು ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ಬಳಸಿ ನಡೆಸಿದ ಈ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ ಫೋನ್ ಡೇಟಾ, ಸಿಸಿಟಿವಿ ದೃಶ್ಯಾವಳಿ ಮತ್ತು ಮಾನವ ಗುಪ್ತಚರ ಮಾಹಿತಿಯ ಸಹಾಯ ಪಡೆಯಲಾಯಿತು. ಉಳಿದ 82 ಲಕ್ಷ ರೂ.ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
Maize Price: ಸಿಎಂಗೆ ಜ್ಞಾನೋದಯ, ಮಕ್ಕೆಜೋಳ ಖರೀದಿ ಬಗ್ಗೆ ಡಿಸ್ಟಿಲರಿಗಳಿಗೆ ಪತ್ರ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ನವೆಂಬರ್ 23: ಕರ್ನಾಟಕದ ಮಕ್ಕೆಜೋಳ ಖರೀದಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹೊರಗಿನಿಂದ ಮಾಡಿಕೊಳ್ಳುವ ಆಮದು ನಿಲ್ಲಿಸಬೇಕು ಎಂದೆಲ್ಲ ಆರೋಪ ಮಾಡಿದ್ದರು. ಇದನ್ನು ಖಂಡಿಸಿದ್ದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು, ರಾಜ್ಯದ ಸರ್ಕಾರದಲ್ಲಿನ ವೈಫಲ್ಯಗಳ ಬಗ್ಗೆ ವಿವರಿಸಿದ್ದರು. ಇದರ ಬೆನ್ನಲ್ಲೆ ಮುಖ್ಯಮಂತ್ರಿಗಳಿಗೆ ಡಿಸ್ಟಿಲರಿಗಳಿಗೆ ಪತ್ರ ಬರೆದಿದ್ದಾರೆ
ಡಿಸೆಂಬರ್ 3ನೇ ವಾರದಲ್ಲಿ ಮಂಗಳೂರು- ಕಾಸರಗೋಡು ರಾ.ಹೆ. ಬಂದ್ ಮಾಡಿ ಸತ್ಯಾಗ್ರಹ: ವಾಟಾಳ್ ನಾಗರಾಜ್
ಕಾಸರಗೋಡು ಗಡಿನಾಡು ಹೋರಾಟ
ಚಂಡಿಗಡ ಆಡಳಿತ ಕುರಿತು ಮಸೂದೆ ಮಂಡಿಸುವ ಉದ್ದೇಶವಿಲ್ಲ: ವಿವಾದದ ಬಳಿಕ ಕೇಂದ್ರ ಸರಕಾರ ಸ್ಪಷ್ಟನೆ
ಹೊಸದಿಲ್ಲಿ: ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚಂಡಿಗಡದ ಆಡಳಿತ ಕುರಿತು ಯಾವುದೇ ಮಸೂದೆಯನ್ನು ಮಂಡಿಸುವ ಉದ್ದೇಶವನ್ನು ಕೇಂದ್ರ ಸರಕಾರವು ಹೊಂದಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯವು ರವಿವಾರ ತಿಳಿಸಿದೆ. ಚಂಡಿಗಡಕ್ಕಾಗಿ ಕೇಂದ್ರದ ಕಾನೂನು ರಚನೆ ಪ್ರಕ್ರಿಯೆಯನ್ನು ಸರಳಗೊಳಿಸುವುದಷ್ಟೇ ಪ್ರಸ್ತಾವದ ಉದ್ದೇಶವಾಗಿದೆ ಮತ್ತು ಅದಿನ್ನೂ ಸರಕಾರದ ಪರಿಶೀಲನೆಯಲ್ಲಿದೆ. ಪ್ರಸ್ತಾವದ ಕುರಿತು ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ಸಚಿವಾಲಯವು ಹೇಳಿದೆ. ಪಂಜಾಬಿನ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರವು, ಚಂಡಿಗಡದ ಆಡಳಿತ ಅಥವಾ ಆಡಳಿತ ಸ್ವರೂಪವನ್ನು ಬದಲಿಸಲು ತಾನು ಬಯಸಿಲ್ಲ. ಚಂಡಿಗಡ ಹಾಗೂ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ನಡುವಿನ ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಬದಲಿಸುವ ಉದ್ದೇಶವನ್ನೂ ತಾನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಕಳವಳಗೊಳ್ಳಬೇಕಾದ ವಿಷಯವಲ್ಲ ಎಂದು ತಳ್ಳಿ ಹಾಕಿರುವ ಕೇಂದ್ರವು, ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚಿಸಿದ ಬಳಿಕವೇ ಚಂಡಿಗಡದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವದ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ. ಏನಿದು ಸಂವಿಧಾನ (131ನೇ ತಿದ್ದುಪಡಿ) ಮಸೂದೆ,2025? ಹಲವಾರು ವರದಿಗಳ ಪ್ರಕಾರ ಸದ್ರಿ ಮಸೂದೆಯು ಚಂಡಿಗಡವನ್ನು ಸಂವಿಧಾನದ 240ನೇ ವಿಧಿಯಡಿ ತಮ್ಮದೇ ಆದ ಶಾಸಕಾಂಗಗಳನ್ನು ಹೊಂದಿರದ ಇತರ ಕೇಂದ್ರಾಡಳಿತ ಪ್ರದೇಶಗಳ ಗುಂಪಿಗೆ ಸೇರಿಸಲು ಬಯಸಿದೆ, ಇದು ಚಂಡಿಗಡಕ್ಕಾಗಿ ನಿಯಮಗಳನ್ನು ರೂಪಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡುತ್ತದೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಪುದುಚೇರಿ ಪ್ರಸ್ತುತ 240ನೇ ವಿಧಿಯಡಿಯಿವೆ. ಪ್ರಸ್ತುತ ಪಂಜಾಬಿನ ರಾಜ್ಯಪಾಲರು ಚಂಡಿಗಡದ ಆಡಳಿತಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ ಎಂಬ ವರದಿಗಳು ಪಂಜಾಬಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು,ಹಲವಾರು ರಾಜಕಾರಣಿಗಳು ಇದನ್ನು ಚಂಡಿಗಡವನ್ನು ಪಂಜಾಬಿನಿಂದ ಕಿತ್ತುಕೊಳ್ಳುವ ಪ್ರಯತ್ನವಾಗಿದೆ ಎಂದು ಬಣ್ಣಿಸಿದ್ದಾರೆ.
ಗಾಝಾ | ಕಳೆದ 44 ದಿನಗಳಲ್ಲಿ ಇಸ್ರೇಲ್ನಿಂದ 500 ಬಾರಿ ಕದನ ವಿರಾಮ ಉಲ್ಲಂಘನೆ, ನೂರಾರು ಜನರ ಹತ್ಯೆ : ವರದಿ
ಗಾಝಾ: ಗಾಝಾ ಸರಕಾರದ ಮಾಧ್ಯಮ ಕಚೇರಿಯ ಪ್ರಕಾರ, ಅಕ್ಟೋಬರ್ 10ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಗಾಝಾ ಕದನ ವಿರಾಮ ಜಾರಿಗೊಂಡ ಬಳಿಕ 44 ದಿನಗಳಲ್ಲಿ ಕನಿಷ್ಠ 497 ಸಲ ಅದನ್ನು ಉಲ್ಲಂಘಿಸಿರುವ ಇಸ್ರೇಲ್ ನೂರಾರು ಫೆಲೆಸ್ತೀನಿಗಳನ್ನು ಕೊಂದಿದೆ ಎಂದು aljazeera.com ವರದಿ ಮಾಡಿದೆ. ದಾಳಿಗಳಲ್ಲಿ ಸುಮಾರು 342 ನಾಗರಿಕರು ಸಾವನ್ನಪ್ಪಿದ್ದು, ಬಲಿಯಾದವರಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರಾಗಿದ್ದಾರೆ. ‘ಇಸ್ರೇಲಿ ಅಧಿಕಾರಿಗಳಿಂದ ಕದನ ವಿರಾಮ ಒಪ್ಪಂದದ ನಿರಂತರ ಗಂಭೀರ ಮತ್ತು ವ್ಯವಸ್ಥಿತ ಉಲ್ಲಂಘನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಮಾಧ್ಯಮ ಕಚೇರಿಯು,ಇವು ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಒಪ್ಪಂದಕ್ಕೆ ಲಗತ್ತಾದ ಮಾನವೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಗಳಾಗಿವೆ. ಈ ಉಲ್ಲಂಘನೆಗಳ ಪೈಕಿ 27 ಇಂದು( ಶನಿವಾರ) ಸಂಭವಿಸಿದ್ದು, 24 ಜನರು ಹುತಾತ್ಮರಾಗಿದ್ದಾರೆ ಮತ್ತು 87 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ತನ್ನ ಉಲ್ಲಂಘನೆಗಳಿಂದ ಉಂಟಾಗುವ ಮಾನವೀಯ ಮತ್ತು ಭದ್ರತಾ ಪರಿಣಾಮಗಳಿಗೆ ಇಸ್ರೇಲ್ ಸಂಪೂರ್ಣವಾಗಿ ಹೊಣೆಯಾಗಿದೆ ಎಂದೂ ಅದು ಹೇಳಿದೆ. ಧ್ವಂಸಗೊಂಡಿರುವ ಗಾಝಾಕ್ಕೆ ತೀರ ಅಗತ್ಯವಿರುವ ನೆರವು ಹಾಗೂ ವೈದ್ಯಕೀಯ ಸಾಮಗ್ರಿಗಳ ಸಂಪೂರ್ಣ ಮತ್ತು ಮುಕ್ತ ಪೂರೈಕೆಯನ್ನು ಕದನ ವಿರಾಮ ಒಪ್ಪಂದದಲ್ಲಿ ಕಡ್ಡಾಯಗೊಳಿಸಿದ್ದರೂ ಇಸ್ರೇಲ್ ಅದನ್ನು ನಿರ್ಬಂಧಿಸುತ್ತಲೇ ಇದೆ. ಇಸ್ರೇಲ್ ಸೇನೆಯು ಶನಿವಾರ ಗಾಝಾದಾದ್ಯಂತ ಸರಣಿ ವಾಯುದಾಳಿಗಳನ್ನು ನಡೆಸಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 24 ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದಾರೆ. ಗಾಝಾದ ‘ಹಳದಿ ರೇಖೆ’ಯಿಂದ ಒಳಗೆ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿ ಹಮಾಸ್ ಹೋರಾಟಗಾರನೋರ್ವ ಇಸ್ರೇಲಿ ಸೈನಿಕರ ಮೇಲೆ ದಾಳಿ ಮಾಡಿದ ಬಳಿಕ ಈ ದಾಳಿಗಳನ್ನು ನಡೆಸಲಾಗಿದ್ದು, ಐವರು ಹಿರಿಯ ಹಮಾಸ್ ಹೋರಾಟಗಾರರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರ ಕಚೇರಿಯು ತಿಳಿಸಿದೆ. ಇಸ್ರೇಲಿ ಸೇನೆಯು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ತನ್ನ ಪಡೆಗಳನ್ನು ತೀರ ಒಳಪ್ರದೇಶಗಳಿಗೆ ಸ್ಥಳಾಂತರಿಸಿರುವುದರಿಂದ ಉತ್ತರ ಗಾಝಾದಲ್ಲಿ ಡಝನ್ಗಟ್ಟಲೆ ಫೆಲೆಸ್ತೀನಿ ಕುಟುಂಬಗಳು ಮುತ್ತಿಗೆಯಡಿ ಇವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದದಲ್ಲಿ ನಿಗದಿಗೊಳಿಸಲಾಗಿರುವ ಹಳದಿ ರೇಖೆಯು ಗುರುತಿಸದ ಗಡಿಯನ್ನು ಸೂಚಿಸುತ್ತಿದ್ದು,ಕಳೆದ ತಿಂಗಳು ಕದನ ವಿರಾಮ ಒಪ್ಪಂದ ಜಾರಿಗೆ ಬಂದಾಗ ಇಸ್ರೇಲ್ ಸೇನೆಯು ಅಲ್ಲಿ ಮರುಸ್ಥಾಪನೆಗೊಂಡಿತ್ತು. ಇದು ಗಡಿ ರೇಖೆಯನ್ನು ಸಮೀಪಿಸುವ ಫೆಲೆಸ್ತೀನಿಯರನ್ನು ಗುಂಡಿಕ್ಕಿ ಕೊಲ್ಲುತ್ತಿರುವ ಇಸ್ರೇಲ್ಗೆ ಅರ್ಧಕ್ಕೂ ಹೆಚ್ಚಿನ ಕರಾವಳಿ ಪ್ರದೇಶದ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವಕಾಶ ಒದಗಿಸಿದೆ. ಇಸ್ರೇಲ್ ‘ಕಲ್ಪಿತ ನೆಪಗಳಡಿ’ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂದು ಶನಿವಾರ ಆರೋಪಿಸಿರುವ ಹಮಾಸ್, ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ, ಈಜಿಪ್ಟ್ ಮತ್ತು ಖತರ್ ತಕ್ಷಣ ಮಧ್ಯ ಪ್ರವೇಶಿಸುವಂತೆ ಕರೆ ನೀಡಿದೆ.
ಹೈಕಮಾಂಡ್ ಸೂಚನೆಗೂ ಸಿದ್ದರಾಮಯ್ಯ ತಲೆಬಾಗಲ್ಲ, ರಾಜೀನಾಮೆ ಕೊಡಲ್ಲ: ಜಗದೀಶ ಶೆಟ್ಟರ್
ಕರ್ನಾಟಕ ಕಾಂಗ್ರೆಸ್ನಲ್ಲಿನ ನಾಯಕತ್ವ ಬದಲಾವಣೆ ಮತ್ತು ಒಳಜಗಳ, ಸಂಪುಟ ಪುನಾರಚನೆ ಬಗ್ಗೆ ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಯಾರು ಏನೇ ಹೇಳಿದರು ಸಹ ತಮ್ಮ ಸಿಎಂ ಸ್ಥಾನ ಬಿಟ್ಟು ಕೊಡೋದಿಲ್ಲ. ಯಾರಿಗೂ ಬಾಗೋದಿಲ್ಲ. ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನ ಗಿಟ್ಟಿಸಿಕೊಳ್ಳೋದನ್ನು ಬಿಡೋದಿಲ್ಲ. ಇವರಿಬ್ಬರ ಕಿತ್ತಾಟದ ಮಧ್ಯೆ ಸರ್ಕಾರ ಪತನವಾಗುತ್ತದೆ ಎಂದು ಜಗದೀಶ್ ಶೆಟ್ಟರ್ ಅವರು ಹೇಳಿದರು.
\ಒಬ್ಬ ಶಾಸಕನಿಗೆ ₹50 ಕೋಟಿ ಫಿಕ್ಸ್, ಸಚಿವ ಸ್ಥಾನ ಬೇಕಾದ್ರೆ ₹200 ಕೋಟಿ\
ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣಗಳ ಶಾಸಕರನ್ನು ಕೋಟಿಗಟ್ಟಲೆ ಹಣ ನೀಡಿ ಖರೀದಿ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬಾಂಬ್ ಸಿಡಿಸಿದ್ದಾರೆ. 'ಕಾಂಗ್ರೆಸ್ನಲ್ಲಿ ಕಿತ್ತಾಟಕ್ಕಿಂತ ಈ ವ್ಯಾಪಾರ ಹೆಚ್ಚಾಗಿ ನಡೆಯುತ್ತಿದೆ. ನನಗೆ ಮೊದಲು ಬಂದ ಮಾಹಿತಿ ಪ್ರಕಾರ ಒಬ್ಬ ಶಾಸಕನಿಗೆ ತಲಾ
ನಾನು ಯಾವಾಗ್ಲು ಸಿಎಂ ರೇಸ್ನಲ್ಲಿರ್ತಿನಿ: ಡಾ.ಜಿ.ಪರಮೇಶ್ವರ್
ಬೆಂಗಳೂರು: ''ನಾನು ಯಾವಾಗ್ಲು ರೇಸ್ ಅಲ್ಲಿ ಇರ್ತಿನಿ ಕಣ್ರಿ'' ಇದು ಗೃಹಸಚಿವ ಡಾ. ಜಿ.ಪರಮೇಶ್ವರ್ ಹೇಳಿಕೆ. ಸದಾಶಿವನಗರದ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದರ. ನೀವು ಸಿಎಂ ರೇಸ್ ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಯಾವಾಗ್ಲು ರೇಸ್ ಅಲ್ಲಿ ಇರ್ತಿನಿ ಕಣ್ರಿ. 2013ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದೆ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೆವು. ನಾನೊಬ್ಬನೇ ಸರ್ಕಾರ ಅಧಿಕಾರಕ್ಕೆ ತಂದಿದ್ದು ಅಂತ ಇಲ್ಲಿಯವರೆಗೂ ನಾನು ಎಲ್ಲೂ ಹೇಳಿಲ್ಲ. ಎಲ್ಲರು ಸೇರಿ ಕೆಲಸ ಮಾಡಿದ್ವಿ. ಜನರು ಓಟ್ ಹಾಕಿ ಪಕ್ಷವನ್ನು ಗೆಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು ಪರಾಭವಗೊಂಡೆ. ಒಂದು ವೇಳೆ ನಾನು ಗೆದ್ದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ಒಂದು ಅವಕಾಶ ಕೊಡುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ ಎಂದರು. ಆ ಕನಸು ಈಗ ಈಡೇರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಆ ಕನಸೇ ಬಿದ್ದಿಲ್ಲವಲ್ಲ ಎಂದು ಹೇಳಿದರು. ದಲಿತ ನಾಯಕರು ಸಿಎಂ ಆಗಬೇಕು ಎಂದು ಬಹಳ ದಿನದಿಂದ ಕೇಳುತ್ತಿದ್ದಾರೆ. ನಾವು ಊಟಕ್ಕೆ ಸೇರಿದ ತಕ್ಷಣ ಆಗಿಬಿಡುತ್ತದೆಯೇ? ನಾವೆಲ್ಲ ಸಮಾನ ಮನಸ್ಕರಿದ್ದೇವೆ. ಒಳಮೀಸಲಾತಿ ಬಗ್ಗೆ ಹೋರಾಟ ಅಯ್ತು. ನಮ್ಮ ಸಮಸ್ಯೆಗಳ ಚರ್ಚೆ ಮಾಡಬಾರದೇ ಎಂದು ಅವರು ಮರುಪ್ರಶ್ನಿಸಿದರು. ಸಿಎಂ ಬದಲಾವಣೆಯ ಕೂಗು ಬಂದರೆ ಪರಿಗಣಿಸುವಂತೆ ಹೇಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ.. ಆ ಸಂದರ್ಭ ಬರಲಿ. ಸಂದರ್ಭ ಇನ್ನು ಬಂದಿಲ್ಲ. ಎಐಸಿಸಿ ಅಧ್ಯಕ್ಷರನ್ನು ನಾನೇನು ಹೋಗಿ ಭೇಟಿ ಮಾಡುವುದಿಲ್ಲ. ಬೇಕಾದಾಗ ನಾನು ಹೋಗಿ ಅವರನ್ನು ಭೇಟಿ ಮಾಡುತ್ತೇನೆ ಎಂದರು. ನಮ್ಮ ನಾಯಕರಾದ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ನಂತರ ಪಕ್ಷದಲ್ಲಿ ಅಂತ ಬೆಳವಣಿಗೆಗಳಿದ್ದರೆ ಚರ್ಚೆ ಮಾಡಿ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಕರ್ನಾಟಕದವರೇ ಎಐಸಿಸಿ ಅಧ್ಯಕ್ಷರಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಅವರಿಗೆ ಗೊತ್ತಿರುವಷ್ಟು ಯಾರಿಗೂ ಗೊತ್ತಿಲ್ಲ. ಐವತ್ತು ವರ್ಷ ಸುದೀರ್ಘ ರಾಜಕಾರಣ ಮಾಡಿರುವವರು ಎಐಸಿಸಿ ಅಧ್ಯಕ್ಷರಿದ್ದಾರೆ. ತೀರ್ಮಾನಗಳನ್ನು ಮಾಡುತ್ತಾರೆ. ಪಕ್ಷದಲ್ಲಿ ಅಂತದ್ದೇನಾದರು ಗೊಂದಲಗಳಿದ್ದರೆ ರಾಹುಲ್ ಗಾಂಧಿ ಬಂದ ಬಳಿಕ ತೀರ್ಮಾನ ಮಾಡುತ್ತಾರೆ ಎಂದು ಹೆಳಿದರು. ಬಿಜೆಪಿಗರು ಮೊದಲು ಅವರ ಮನೆಯ ಸಮಸ್ಯೆ ಸರಿಪಡಿಸಿಕೊಳ್ಳಲಿ ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರನ್ನು ನಾವೇನು ಸರ್ಟಿಫಿಕೆಟ್ ಕೇಳುತ್ತಿಲ್ಲ. ಅವರ ಮನೆ ಹೇಗಿದೆ ಅಂತ ನೋಡಿಕೊಳ್ಳಲಿ. ಅಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎಂದು ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ. ಆ ಹೇಳಿಕೆಯ ಅಗತ್ಯ ಇದೆಯೇ? ಮೊದಲು ಅವರ ಮನೆಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಹೇಳಿ. ಆ ಮೇಲೆ ನಮ್ಮನ್ನು ಕೇಳಲಿ ಎಂದು ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಜೋಡಿ ರೈಲ್ವೆ ಮಾರ್ಗ ಕಾಮಗಾರಿ: 6 ರೈಲು ರದ್ದು, ವಂದೇ ಭಾರತ್ ಸೇರಿ 8 ರೈಲುಗಳ ಮಾರ್ಗ ಬದಲಾವಣೆ!
ಬೆಂಗಳೂರಿನಲ್ಲಿ ಜೋಡಿ ರೈಲ್ವೆ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ 6 ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು, ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ 8 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಂದೂರು ರೋಡ್ ಮತ್ತು ಕಾರ್ಮೆಲರಾಮ್ ನಡುವೆ ನಡೆಯುತ್ತಿರುವ ಕಾಮಗಾರಿಯಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಲಿದೆ.
ತಮಿಳುನಾಡಿನಲ್ಲಿ ಅತ್ಯಧಿಕ ಸಂಖ್ಯೆಯ ನಕಲಿ ಮತದಾರರು: ಬಿಜೆಪಿ ನಾಯಕ ಅಣ್ಣಾಮಲೈ ಆರೋಪ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ತಮಿಳುನಾಡಿನ ಮತಪಟ್ಟಿಯಲ್ಲಿ ಅತ್ಯಧಿಕ ಸಂಖ್ಯೆಯ ನಕಲಿ ಮತದಾರರು ಸೇರ್ಪಡೆಯಾಗಿದ್ದು, ಅವರನ್ನೆಲ್ಲ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ 2.0 ಮೂಲಕ ತುರ್ತಾಗಿ ತೆಗೆದು ಹಾಕಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಶನಿವಾರ ತಿರುಚ್ಚಿ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತು ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ತಮಿಳುನಾಡಿನಲ್ಲಿ ನಡೆಸಲು ಉದ್ದೇಶಿಸಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತು ಪ್ರಸ್ತಾಪಿಸಿದ ಅಣ್ಣಾಮಲೈ, “ಬಿಹಾರದಲ್ಲಿ ಶೇ. 6.49ರಷ್ಟು ನಕಲಿ ಮತದಾರರನ್ನು ತೆಗೆದು ಹಾಕಲಾಗಿದೆ” ಎಂದು ಹೇಳಿದ್ದಾರೆ. “ತಮಿಳುನಾಡಿನಲ್ಲಿ ಅತ್ಯಧಿಕ ಪ್ರಮಾಣದ ನಕಲಿ ಮತದಾರರಿದ್ದಾರೆ. ಡಿಎಂಕೆಯನ್ನು ಬೆಂಬಲಿಸುತ್ತಿರುವ ಕಂದಾಯಾಧಿಕಾರಿಗಳೇ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುತ್ತಿರುವುದು. ಈ ಸಂಬಂಧ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಲು ಡಿಎಂಕೆ ಸರಕಾರ ನಿರಾಕರಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. “ಅರ್ಜಿಗಳನ್ನು ಭರ್ತಿ ಮಾಡುವಲ್ಲಿ ಬಿಜೆಪಿಯ ಎರಡನೆ ಹಂತದ ಮತಗಟ್ಟೆ ಏಜೆಂಟ್ ಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜನರು ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಅರ್ಜಿಗಳನ್ನು ಭರ್ತಿ ಮಾಡಿ, ಶೀಘ್ರವಾಗಿ ಸಲ್ಲಿಸಬೇಕಿದೆ. ಇದಕ್ಕೆ ಡಿಸೆಂಬರ್ 4 ಅಂತಿಮ ಗಡುವಾಗಿದೆ. ಇದನ್ನು ಸಾಮುದಾಯಿಕ ಸೇವೆಯನ್ನಾಗಿ ಮಾಡಬೇಕು ಎಂದು ರಾಷ್ಟ್ರೀಯ ನಾಯಕರು ಹೇಳಿದ್ದು, ಬಿಜೆಪಿಯ ಕಾರ್ಯಕರ್ತರು ಇದನ್ನು ದಕ್ಷವಾಗಿ ನಡೆಸುತ್ತಿದ್ದಾರೆ” ಎಂದೂ ಅವರು ಪ್ರಶಂಸಿಸಿದ್ದಾರೆ. ಬಿಹಾರದಲ್ಲಿ ಪ್ರಥಮ ಹಂತದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನ ನಡೆಸಿದ ಬಳಿಕ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಚುನಾವಣಾ ರಾಜ್ಯಗಳಾದ ಒಟ್ಟು ಒಂಬತ್ತು ರಾಜ್ಯಗಳಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಇನ್ನು ಹಲವು ವಿರೋಧ ಪಕ್ಷಗಳ ಆಡಳಿತಾರೂಢ ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.
ಬಾಬ್ರಿ ಮಸೀದಿ ಶಂಕುಸ್ಥಾಪನೆ ಘೋಷಣೆ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿ
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತೃಣಮೂಲ ಶಾಸಕ ಹುಮಾಯುನ್ ಕಬೀರ್ ಘೋಷಿಸಿದ್ದಾರೆ. ಈ ನಿರ್ಧಾರವು ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಇದನ್ನು ಧಾರ್ಮಿಕ ಅಸ್ಮಿತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಯತ್ನ ಎಂದು ಖಂಡಿಸಿದೆ.
ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 240 ರ ಮೂಲಕ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ರಾಷ್ಟ್ರಪತಿಗಳ ನೇರ ಆಡಳಿತಕ್ಕೆ ತರಲು ಉದ್ದೇಶಿಸಿದೆ ಎಂಬ ಊಹಾಪೋಹಗಳ ಕುರಿತು ಹುಟ್ಟಿಕೊಂಡ ರಾಜಕೀಯ ವಿವಾದಕ್ಕೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚಂಡೀಗಢದ ಆಡಳಿತಾತ್ಮಕ ಸ್ವರೂಪವನ್ನು ಬದಲಿಸುವ ಯಾವುದೇ ಮಸೂದೆಯನ್ನು ಪರಿಚಯಿಸುವ ಉದ್ದೇಶ ಕೇಂದ್ರಕ್ಕಿಲ್ಲ. ಪ್ರಸ್ತುತ, ಕೇವಲ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ಕಾನೂನು ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸುವ ಪ್ರಸ್ತಾವನೆಯು ಮಾತ್ರ ಪರಿಗಣನೆಯಲ್ಲಿದ್ದು, ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದು ಸಚಿವಾಲಯ ದೃಢಪಡಿಸಿದೆ.
Karnataka Weather: 2 ದಿನದ ಮಳೆ ಬಳಿಕ ಮತ್ತೆ ಒಣಹವೆ: ಈ 16 ಜಿಲ್ಲೆಗಳಿಗೆ ನ.24 ರವರೆಗೂ ಮಳೆ
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 23 ಮತ್ತು 24 ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಂತರ, ನವೆಂಬರ್ 25 ರಿಂದ ವಾರದ ಅಂತ್ಯದವರೆಗೆ ರಾಜ್ಯಾದ್ಯಂತ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿಯೂ ಹಗುರ ಮಳೆ ನಿರೀಕ್ಷಿಸಲಾಗಿದೆ.
ತೇಜಸ್ ಯುದ್ಧ ವಿಮಾನ ಪತನ: ತವರಿಗೆ ತಲುಪಿದ ಪೈಲಟ್ ನಮಾಂಶ್ ಅವರ ಪಾರ್ಥಿವ ಶರೀರ
ಕೊಯಮತ್ತೂರು: ದುಬೈ ಏರ್ ಶೋ ವೇಳೆ ತೇಜಸ್ ಯುದ್ಧ ವಿಮಾನ ಪತನಗೊಂಡು ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಪೈಲಟ್ ನಮಾಂಶ್ ಸ್ಯಾಲ್ ರ ಪಾರ್ಥಿವ ಶರೀರವನ್ನು ತವರಿಗೆ ತರಲಾಗಿದೆ. ದುಬೈ ಏರ್ ಶೋ ವೇಳೆ ಶುಕ್ರವಾರದಂದು ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ತೇಜಸ್ ಪತನಗೊಂಡಿತ್ತು. ಈ ದುರಂತದಲ್ಲಿ ಪೈಲಟ್ ನಮಾಂಶ್ ಸ್ಯಾಲ್ ಮೃತಪಟ್ಟಿದ್ದರು. ನಮಾಂಶ್ ಸ್ಯಾಲ್ ರ ಪಾರ್ಥಿವ ಶರೀರವನ್ನು ತಮಿಳುನಾಡಿನ ಕೊಯಮತ್ತೂರಿನ ಸೂಲೂರು ವಾಯುನೆಲೆಗೆ ರವಾನಿಸಲಾಗಿದ್ದು, ಅವರ ಪಾರ್ಥಿವ ಶರೀರಕ್ಕೆ ಭಾರತೀಯ ವಾಯುಪಡೆಯ ಯೋಧರು ಗೌರವ ನಮನ ಸಲ್ಲಿಸಿದರು. ಕೊಯಮತ್ತೂರಿನ ಜಿಲ್ಲಾಧಿಕಾರಿ ಪವನಕುಮಾರ್ ಜಿ. ಗರಿಯಪ್ಪನವರ್ ಕೂಡಾ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ, ಅಂತಿಮ ನಮನ ಸಲ್ಲಿಸಿದರು. ವಿಮಾನ ಪತನದ ನಿಖರ ಕಾರಣವನ್ನು ಪತ್ತೆ ಹಚ್ಚಲು ತನಿಖೆ ಪ್ರಗತಿಯಲ್ಲಿದೆ.
ಮಂಗಳೂರು: ಎಜು-ಎಕ್ಸ್ ಕಾನ್ಫರೆನ್ಸ್
ಮಂಗಳೂರು: ಐ.ಎ.ಎಂ.ಇ ಯ ಪ್ಯಾನ್ ಇಂಡಿಯಾ ಯೋಜನೆಯ ಭಾಗವಾಗಿ, ಎಜುಫೈ ಪಬ್ಲಿಕೇಷನ್ಸ್ ಕಾನ್ಫರೆನ್ಸ್ ಮಂಗಳೂರಿನ ಗ್ರಾಂಡ್ ಎ.ಜೆ ಹೋಟೆಲ್ ನಲ್ಲಿನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸವಾಲುಗಳು ಮತ್ತು ಪರಿಹಾರ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಯಿತು. ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಉದ್ಘಾಟಿಸಿದರು. ಎಜುಫೈ ಪಬ್ಲಿಕೇಷನ್ಸ್ ನಿರ್ದೇಶಕ ಅಫ್ಜಲ್ ಕೋಳಾರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಅಮೀರ್ ಹಸನ್ ಆಸ್ಟ್ರೇಲಿಯಾ, ಮಸೂದ್ ಮಂಗಳೂರು, ವಂದನಾ ರಾವ್, ಪಿ.ಸಿ.ಅಬ್ದುರ್ ರೆಹಮಾನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮುಸ್ತಫಾ ಸಅದಿ, ರಮ್ಜಿ ಮೊಹಮ್ಮದ್, ಮೊಹಮ್ಮದ್ ಮನಾಝಿರ್ ಮುಡಿಪು, ಸಿ.ಎಂ. ನೌಶಾದ್, ಸಿ.ಟಿ. ಮೊಹಮ್ಮದ್ ಅಲಿ ಶುಭ ಹಾರೈಸಿದರು. ದ.ಕ ಜಿಲ್ಲೆಯ ವಿವಿಧ ಶಾಲೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಭಾಗವಹಿಸಿದ್ದರು. ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿವಿಧ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಜುಫೈ ಪಬ್ಲಿಕೇಷನ್ಸ್ ಕನ್ನಡ ಭಾಷೆಯಲ್ಲಿ ಪ್ರಕಟಿಸಿದ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಶಾಲೆಗಳನ್ನು ವಿದ್ಯಾರ್ಥಿ ಸ್ನೇಹಿ ಮತ್ತು ಉತ್ತಮ ಗುಣಮಟ್ಟದ ಕೇಂದ್ರಗಳನ್ನಾಗಿ ಮಾಡಲು ವಿವಿಧ ಕ್ರಿಯಾ ಯೋಜನೆಗಳನ್ನು ಅನುಮೋದಿಸಲಾಯಿತು.
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 100 ಡೇಸ್! ಪ್ರಯಾಣಿಕರು ಡಬಲ್, ಕಾಯುವ ಅವಧಿಯೂ ಇಳಿಕೆ; ಹೊಸ ರೈಲು ಬರೋದು ಯಾವಾಗ?
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು 100 ದಿನಗಳನ್ನು ಪೂರೈಸಿದ್ದು, ನಿತ್ಯ ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 3 ರೈಲುಗಳಿಂದ ಆರಂಭವಾದ ಸೇವೆ, 5ಕ್ಕೆ ಹೆಚ್ಚಳವಾಗಿದ್ದು, ರೈಲುಗಳ ನಡುವಿನ ಕಾಯುವ ಸಮಯ 15 ನಿಮಿಷಕ್ಕೆ ಇಳಿದಿದೆ. ಒಟ್ಟು 36 ರೈಲುಗಳ ಪೈಕಿ 5 ಆಗಮಿಸಿದ್ದು, 30 ಇನ್ನೆರಡು ವರ್ಷದಲ್ಲಿ ಬರಲಿವೆ.
ನಾರಾಯಣಗುರುಗಳ ಬದುಕೇ ಅಪ್ಪಟ ಮನುಷ್ಯರನ್ನು ರೂಪಿಸುವುದಾಗಿತ್ತು: ಕೆ.ವಿ.ಪ್ರಭಾಕರ್
ಬೆಂಗಳೂರು : ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುವಾಗ ನಾರಾಯಣ ಗುರುಗಳ ಆದರ್ಶ ಪ್ರಸ್ತುತ ಆಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಮಂದಿಗೆ ನಾರಾಯಣಗುರು ಪ್ರಶಸ್ತಿ ಪ್ರದಾನ ಮಾಡಿ, ಐದು ಸಾಧಕರನ್ನು ಗೌರವಿಸಿ ಮಾತನಾಡಿದರು. ದಿನೇ ದಿನೇ ಜಾತಿ ವ್ಯವಸ್ಥೆ ಗಟ್ಟಿಗೊಳ್ಳುತ್ತಾ, ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುತ್ತಿರುವ ಹೊತ್ತಿನಲ್ಲಿ, ನಾರಾಯಣ ಗುರುಗಳ ಬದುಕೇ ಅಪ್ಪಟ ಮನುಷ್ಯರನ್ನು ರೂಪಿಸುವುದಾಗಿತ್ತು ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಶೋಷಿಸುವ ಮನಸ್ಥಿತಿ, ಶೋಷಣೆಗೆ ಒಳಗಾಗುವ ಮನಸ್ಥಿತಿ, ಗುಲಾಮಗಿರಿಯ ಮನಸ್ಥಿತಿಗೆ ನಾರಾಯಣ ಗುರುಗಳು ನೈಸರ್ಗಿಕ ಚಿಕಿತ್ಸೆ ಕೊಡಲು ಯತ್ನಿಸಿದರು. ಇವರ ಬೋಧನೆಗಳು ಮತ್ತು ಸುಧಾರಣಾ ಕಾರ್ಯಗಳು ಅವತ್ತಿನ ಮತ್ತು ಇವತ್ತಿನ ಹಲವು ಸಾಮಾಜಿಕ ಸಮಸ್ಯೆಗಳಿಗೆ ದಾರಿದೀಪವಾಗಿವೆ ಎಂದರು. ಒಂದು ಜಾತಿ, ಒಂದು ಮತ, ಒಬ್ಬನೇ ದೇವರು ಮಾನವನಿಗೆ ಎನ್ನುವುದು ಅವರ ಪ್ರಸಿದ್ಧ ಘೋಷಣೆಯಾಗಿತ್ತು. ಹಾಗೆಯೇ, ಶಿಕ್ಷಣದಿಂದ ಸ್ವಾತಂತ್ರ್ಯವನ್ನು ಗಳಿಸಿ ಎನ್ನುವುದು ಅವರ ಪ್ರಮುಖ ಕರೆಯಾಗಿತ್ತು. ಇಂದು ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಧರ್ಮದ ಹೆಸರಲ್ಲಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವವರೆಲ್ಲಾ ಬಿಲ್ಲವ, ಈಳವ ಮತ್ತು ಈಡಿಗ, ಬೆಸ್ತ ಸಮುದಾಯಗಳ ಮಕ್ಕಳೇ ಆಗಿದ್ದಾರೆ. ಇವರಿಗೆ ನಾರಾಯಣಗುರುಗಳ ಬದುಕಿನ ಪಾಠವನ್ನು ಅರ್ಥ ಮಾಡಿಸಬೇಕಾದ ತುರ್ತು ಇದೆ. ಆದರೆ, ನಾರಾಯಣ ಗುರುಗಳ ಮಾತುಗಳಿಂದ ಅವರ ಆದರ್ಶಗಳನ್ನು ಅಳಿಸಿ ಕೇವಲ ಮಾತುಗಳನ್ನು ಅಪಾರ್ಥವಾಗಿ ಬಳಸುವ ಪರಿಪಾಠ ಶುರುವಾಗಿರುವುದು ಬೇಸರದ ಸಂಗತಿಯಾಗಿದೆ. ಒಂದು ಜಾತಿ, ಒಂದು ಮತ, ಒಬ್ಬನೇ ದೇವರು ಮಾನವನಿಗೆ ಎಂದು ಗುರುಗಳು ಕರೆ ಕೊಟ್ಟಿದ್ದರ ಅರ್ಥ ಎಲ್ಲರೂ ನಾರಾಯಣಗುರುಗಳ ಹೆಸರಲ್ಲಿ ಒಂದೊಂದು ದೇವಸ್ಥಾನ ಕಟ್ಟಿ ಅನ್ನುವುದಾಗಿರಲಿಲ್ಲ. ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಪ್ರವೇಶ ಪಡೆಯಲು ಒದ್ದಾಡುವುದಕ್ಕಿಂತ ನಿಮ್ಮದೇ ದೇವರ ಗುಡಿಯನ್ನು ಸೃಷ್ಟಿಸಿಕೊಳ್ಳಿ ಎನ್ನುವುದಾಗಿತ್ತು. ನಾರಾಯಣ ಗುರುಗಳು ಶಿವನ ಪ್ರತಿಷ್ಠಾಪನೆ ಮಾಡಿದಾಗ ಜಾತಿವಾದಿಗಳಿಂದ ಬಂದ ವಿರೋಧಕ್ಕೆ ತಣ್ಣಗೆ ಪ್ರತಿಕ್ರಿಯಿಸಿದ್ದ ಗುರುಗಳು, ಇದು ನಿಮ್ಮ ಶಿವ ಅಲ್ಲ, ಈಳವರ ಶಿವ ಎಂದು ಅವರ ಬಾಯಿ ಮುಚ್ಚಿಸಿದ್ದರು. ಬಳಿಕ ಎಲ್ಲರೂ ದೇವಸ್ಥಾನಗಳನ್ನೇ ಕಟ್ಟಲು ಮುಂದಾದಾಗ ಹೆದರಿದ ಗುರುಗಳು ಕೊನೆಗೆ ದೇವಸ್ಥಾನ ಕಟ್ಟಿ ಶಿವನ ಬದಲಿಗೆ ಕನ್ನಡಿಯನ್ನು ಪ್ರತಿಷ್ಠಾಪಿಸಿ ದೇವರು ನಿಮ್ಮೊಳಗೇ ಇದ್ದಾನೆ, ಹೊರಗೆ ಹುಡುಕುವ ಅಗತ್ಯ ಇಲ್ಲ ಎನ್ನುವ ಸಂದೇಶ ನೀಡಿದ್ದರು ಎಂದು ವಿವರಿಸಿದರು. ದೇವಸ್ಥಾನಗಳನ್ನು ಕಟ್ಟಿ ಕೆಳ ಜಾತಿಯ ಅರ್ಚಕರುಗಳನ್ನು ನೇಮಿಸಿದ್ದು ನಾರಾಯಣಗುರುಗಳ ಮತ್ತೊಂದು ಕ್ರಾಂತಿಯಾಗಿತ್ತು. ಆದರೆ ಎಷ್ಟು ಮಂದಿ ಹಿಂದುಳಿದವರು ಇಂದು ಕೆಳ ಜಾತಿಯ ಅರ್ಚಕರನ್ನು ಕರೆಸುತ್ತಾರೆ, ನಂಬುತ್ತಾರೆ ಎನ್ನುವುದನ್ನು ಪ್ರಶ್ನಿಸಬೇಕಿದೆ ಎಂದರು. ನಾರಾಯಣಗುರುಗಳು ಶಿಕ್ಷಣದ ಮೂಲಕ ಸ್ವಾತಂತ್ರ್ಯ ಗಳಿಸಿ ಎಂದು ಕರೆ ನೀಡುವುದರ ಹಿಂದೆ ಶಾಲಾ ಶಿಕ್ಷಣದ ಜೊತೆಗೆ ಸಾಮಾಜಿಕ ಶಿಕ್ಷಣವನ್ನೂ ಪಡೆಯುವ ಮೂಲಕ ಶೋಷಕ, ಶೋಷಿತ ಮತ್ತು ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತಿ ಹೊಂದಿ ಎನ್ನುವುದಾಗಿತ್ತು. ಆದರ್ಶಗಳನ್ನು ಅಳಿಸಿ ಕೇವಲ ಮಾತುಗಳಿಗೆ ಮಾತ್ರ ಮಾನ್ಯತೆ ನೀಡಿದರೆ ಅಪಾರ್ಥದ ಆಚರಣೆಗಳಿಗೆ ದಾರಿ ಮಾಡಿ ಕೊಡುತ್ತದೆ. ಅಂಬೇಡ್ಕರ್, ನಾರಾಯಣಗುರುಗಳು ಮೀಸಲಾತಿಯನ್ನು ಜಾತ್ಯತೀತ ಸಮಾಜ ನಿರ್ಮಾಣದ ಭಾಗವಾಗಿ ಬೆಂಬಲಿಸಿದ್ದರು. ಆದರೆ ಇಂದು ಮೀಸಲಾತಿ ಚಳವಳಿ ಜಾತೀಯತೆಯ ಭಾಗವಾಗಿ ನಡೆಯುತ್ತಿದೆ. ಎಲ್ಲಾ ಜಾತಿಯವರಿಗೂ ಮೀಸಲಾತಿ, ಒಳ ಮೀಸಲಾತಿ ಬೇಕಾಗಿದೆ. ಹೀಗಾಗಿ ಇಂದು ಮೀಸಲಾತಿಯ ಹೋರಾಟ ಜಾತಿ ಸಮಾಜವನ್ನು ಗಟ್ಟಿಗೊಳಿಸುವ ಭಾಗವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗಲೂ ಒಂದು ಮಾತು ಹೇಳ್ತಾರೆ. ಶಿಕ್ಷಣ ಪಡೆದವರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿದ್ದಾರೆ ಎನ್ನುವ ಮಾತನ್ನು ಪದೇ ಪದೇ ಹೇಳುತ್ತಾರೆ. ಈ ಎಲ್ಲಾ ಕಾರಣಗಳಿಂದ ಇಂದು ಜಾತ್ಯಾತೀತತೆಯ ಮಾರ್ಯಾದಾ ಹತ್ಯೆ ನಡೆಯುತ್ತಿದೆ. ಜಾತಿ ಜಾತಿಯವರನ್ನೇ ಸುತ್ತ ತುಂಬಿಕೊಂಡು ಓಡಾಡುವುದೇ ದೊಡ್ಡ ಶಕ್ತಿ ಅನ್ನಿಸಿಕೊಳ್ಳುವ ದುರಂತದ ಸಾಮಾಜಿಕ, ರಾಜಕೀಯ ಸಂದರ್ಭವನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಧಾರ್ಮಿಕ ಸಹಿಷ್ಣುತೆ ಮತ್ತು ವಿಶ್ವಬಂಧುತ್ವವನ್ನು ಆಚರಿಸುವ ಮೂಲಕ ನಾರಾಯಣಗುರುಗಳ ಆದರ್ಶಗಳಿಗೆ ನಾವು ಚೈತನ್ಯ ತುಂಬಬೇಕಿದೆ ಎಂದರು. ಯಾವುದೇ ಧರ್ಮವಿರಲಿ, ಮನುಷ್ಯನನ್ನು ಉತ್ತಮಗೊಳಿಸಿದರೆ ಸಾಕು ಎನ್ನುವುದು ಅವರ ವಿಶಾಲ ದೃಷ್ಟಿಕೋನವಾಗಿತ್ತು. ಎಲ್ಲಾ ರೀತಿಯ ತಾರತಮ್ಯದ ಮನಸ್ಥಿತಿಯಿಂದ ಮುಕ್ತವಾದ ಅಪ್ಪಟ ಮನುಷ್ಯನನ್ನು ರೂಪಿಸುವುದೇ ನಾರಾಯಣಗುರುಗಳ ಬದುಕಿನ ಸಂದೇಶವಾಗಿತ್ತು ಎನ್ನುವುದನ್ನು ನಾವು ಮರೆಯಬಾರದು ಎಂದರು.
ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರುವ ಕೇಂದ್ರ ಸರ್ಕಾರದ ಪ್ರಸ್ತಾವವು ಪಂಜಾಬಿನಲ್ಲಿ ರಾಜಕೀಯ ಗದ್ದಲ ಸೃಷ್ಟಿಸಿದೆ. ಕೇಂದ್ರವು ಕೇವಲ ಶಾಸನ ಸರಳಗೊಳಿಸುವ ಬಗ್ಗೆ ಪರಿಶೀಲಿಸುತ್ತಿದೆ, ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ, ಪಂಜಾಬ್ನ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷಗಳು ಇದನ್ನು ರಾಜ್ಯದ ಹಿತಾಸಕ್ತಿಗಳ ಮೇಲೆ ದಾಳಿ ಎಂದು ಖಂಡಿಸಿವೆ.
ಬಂಡೀಪುರ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ; ಪೂರ್ವನಿಯೋಜಿತ ಕೃತ್ಯ : ಎಸ್ಪಿ ಕವಿತಾ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮದ್ದೂರು ವನ್ಯಜೀವಿ ವಲಯದಲ್ಲಿ ನಡೆದಿರುವ ದರೋಡೆ ಪ್ರಕರಣ ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಅವರು ತಿಳಿಸಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮದ್ದೂರು ವಲಯದಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದರು. ಕೇರಳದ ಕ್ಯಾಲಿಕಟ್ ನಿವಾಸಿಗಳಾದ ವಿನು ಹಾಗೂ ಸಮೀರ್ ಎಂಬವರು ಆಭರಣ ತಯಾರಿಸಲು ಮಂಡ್ಯದ ರಾಜೇಶ್ ಜ್ಯುವೆಲರ್ಸ್ ಮಾಲೀಕರಿಂದ 800 ಗ್ರಾಂ ಚಿನ್ನದ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರಟ್ ಬಂಗಾರವನ್ನು ಬಂಡೀಪುರ ಮೂಲೆಹೊಳೆ ಮಾರ್ಗವಾಗಿ ಕೇರಳಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಎರಡು ಇನೋವಾ ಹಾಗೂ 1 ಇಟಿಯೋಸ್ ಕಾರಿನಲ್ಲಿ ಬಂದ ದರೋಡೆಕೋರರು ಮೊಬೈಲ್ ನೆಟ್ವರ್ಕ್ ಸಿಗದ ಸ್ಥಳದಲ್ಲಿ ಅಡ್ಡಗಟ್ಟಿ ಬಂಗಾರ ಅಪಹರಿಸಿದ್ದಾರೆ. ದೂರುದಾರ ವಿನು ಹತ್ತರಿಂದ 12 ಮಂದಿ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ದರೊಡೆಕೋರರ ಪತ್ತೆಗಾಗಿ ಐದು ಜನ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಿಹಾರ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ನನ್ನ ಬಳಿ ಪುರಾವೆಗಳಿಲ್ಲ: ಪ್ರಶಾಂತ್ ಕಿಶೋರ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಪ್ರಶಾಂತ್ ಕಿಶೋರ್ ಅವರ 'ಜನ್ ಸೂರ್ರಾಜ್' ಪಕ್ಷವು ಅಕ್ರಮ ನಡೆದಿದೆ ಎಂದು ಆರೋಪಿಸಿದೆ. ಚುನಾವಣಾ ಫಲಿತಾಂಶಗಳು ತಮ್ಮ ಲೆಕ್ಕಾಚಾರಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಕಿಶೋರ್ ಹೇಳಿದ್ದಾರೆ. ಮಹಿಳೆಯರಿಗೆ ಹಣ ಹಂಚಿಕೆ ಮತ್ತು 'ಜಂಗಲ್ ರಾಜ್' ಭಯ ಮತದಾರರನ್ನು ದೂರ ಮಾಡಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ತಮ್ಮ ರಾಜಕೀಯ ಜೀವನ ಮುಗಿದಿಲ್ಲ ಎಂದು ಕಿಶೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಷ್ಯಾ ಜೊತೆ ಉಕ್ರೇನ್ ಕದನ ವಿರಾಮಕ್ಕೆ ಆಗ್ರಹ, ಭಾರತದ ಬಳಿ ಅಂಗಲಾಚಿದ ಉಕ್ರೇನ್!
ಉಕ್ರೇನ್ &ರಷ್ಯಾ ಯುದ್ಧ ಮುಗಿಸುವ ಸಮೀಪಕ್ಕೆ ಬಂದಿದ್ದಾರೆ. ಇಬ್ಬರ ನಡುವೆ ಯುದ್ಧವನ್ನ ನಿಲ್ಲಿಸಬೇಕು ಎಂದು ಅಮೆರಿಕ ಭಾರಿ ದೊಡ್ಡ ಆಫರ್ ಕೊಟ್ಟಿದೆ. ಅದರಲ್ಲೂ ಈಗ 28 ಅಂಶಗಳ ಯೋಜನೆಗೆ ಒಪ್ಪಿಕೊಂಡು ರಷ್ಯಾ ಜೊತೆಗೆ ಶಾಂತಿಯಿಂದ ಬಾಳಬೇಕು ಎಂಬ ಒತ್ತಡ ಉಕ್ರೇನ್ನ ಮೇಲೆ ಹೇರಲಾಗುತ್ತಿದೆ. ಹೀಗಿದ್ದಾಗ ಉಕ್ರೇನ್ ಕೂಡ ಭಾರಿ ದೊಡ್ಡ ಗೊಂದಲದಲ್ಲಿ ಮುಳುಗಿ, ಮುಂದೆ ಏನು
Karnataka CM Crisis: ನಾನು ಯಾವಾಗಲೂ ಸಿಎಂ ರೇಸಿನಲ್ಲಿ ಇದ್ದೇನೆ: ಜಿ.ಪರಮೇಶ್ವರ ಅಚ್ಚರಿಯ ಹೇಳಿಕೆ
ಬೆಂಗಳೂರು, ನವೆಂಬರ್ 23: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಂಡಿದೆ. ಇದೀಗ ಬಣರಾಜಕೀಯ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರ ಮಧ್ಯ ತೆರೆಮರೆಯ ಕಸರತ್ತು ಗುಟ್ಟಾಗಿ ಉಳಿದಿಲ್ಲ. ಒಂದೊಂದೆ ಬಣ್ಣದವರು ಹಿರಿಯ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಕೈ ನಾಯಕರು ಸುಳಿವು ಬಿಟ್ಟು ಕೊಡುತ್ತಿಲ್ಲ.
ಚಿತ್ರದುರ್ಗ | ಟ್ರಾಫಿಕ್ ಪೊಲೀಸರ ಕಿರುಕುಳ ಆರೋಪ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ
ಚಿತ್ರದುರ್ಗ: ಟ್ರಾಫಿಕ್ ಪೊಲೀಸರು ಕಿರುಕುಳ ನೀಡಿದರು ಎಂದು ಆರೋಪಿಸಿ, ಆಟೋ ಚಾಲಕನೋರ್ವ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಮಧ್ಯಭಾಗದ ಗಾಂಧಿ ಸರ್ಕಲ್ನಲ್ಲಿ ಶನಿವಾರ ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಪ್ರಯತ್ನಿಸಿದ ಆಟೋ ಚಾಲಕನನ್ನು ಮಾಳಪ್ಪನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ(35) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಕುಡಿದ ಮದ್ಯ ಮತ್ತಿನಲ್ಲಿ ಆಟೋ ಚಲಾಯಿಸುತ್ತಿದ್ದ ತಿಪ್ಪೇಸ್ವಾಮಿಯನ್ನು ಪೊಲೀಸರು ತಡೆದು ನಿಲ್ಲಿಸಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ತಿಪ್ಪೇಸ್ವಾಮಿ, ಆಟೋದಲ್ಲಿದ್ದ ಪೆಟೋಲ್ ಅನ್ನು ತನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದನೆನ್ನಲಾಗಿದೆ. ಬೆಂಕಿಯಿಂದ ತಿಪ್ಪೇಸ್ವಾಮಿಯ ದೇಹ ಶೇ.70 ರಷ್ಟು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಆಟೊ ಚಾಲಕರಿಂದ ಪ್ರತಿಭಟನೆ ರಾತ್ರಿ ಆಟೋ ಚಾಲಕ ಮತ್ತು ಪೊಲೀಸರ ಮಧ್ಯೆ ನಡೆದ ವಾಗ್ವಾದದಲ್ಲಿ ಪೊಲೀಸರು ಆಟೋ ಚಾಲಕರಿಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ಇಂದು ಬೆಳಗ್ಗೆಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಟೋ ಚಾಲಕರು, ಪೊಲೀಸರ ಕ್ರಮ ಖಂಡಿಸಿದ್ದಾರೆ. ಟ್ರಾಫಿಕ್ ಪೊಲೀಸರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಡ ಆಟೋ ಚಾಲಕರನ್ನು ಟಾರ್ಗೇಟ್ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆ ಪ್ರತಿಭಟನಾ ನಿರತ ಆಟೋ ಚಾಲಕರು ಆರೋಪಿಸಿದ್ದಾರೆ. ಚಿತ್ರದುರ್ಗ ನಗರದಲ್ಲಿ ಪೊಲೀಸ್ ಇಲಾಖೆಯ ದೌರ್ಜನ್ಯಕ್ಕೆ ಬೇಸತ್ತ ನೂರಾರು ಜನ ಆಟೋ ಚಾಲಕರು, ಆಟೋ ಚಾಲನಾ ವೃತ್ತಿಯನ್ನು ಕೈಬಿಟ್ಟು, ಗಾರೆಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆಲ್ಲಾ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಮತ್ತು ವಸೂಲಿಯೇ ಮೂಲ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭಾರತೀಯ ಕ್ರಿಕೆಟ್ನ ಪ್ರಮುಖ ಆಟಗಾರ್ತಿ ಮತ್ತು ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನಾ ಅವರು ಸಂಗೀತ ಸಂಯೋಜಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರನ್ನು ಇಂದು (ನವೆಂಬರ್ 23, 2025) ಸಾಂಗ್ಲಿಯಲ್ಲಿ ವಿವಾಹವಾಗಲಿದ್ದಾರೆ. 2019 ರಲ್ಲಿ ಶುರುವಾದ ಈ ಪ್ರೇಮಕಥೆಯನ್ನು ಈ ಜೋಡಿ ಹಲವು ವರ್ಷಗಳ ಕಾಲ ಗೌಪ್ಯವಾಗಿರಿಸಿದ್ದು, 2024 ರಲ್ಲಿ ಸಾರ್ವಜನಿಕಗೊಳಿಸಿತು. ಮದುವೆ ಪೂರ್ವದ ಅರಿಶಿನ ಶಾಸ್ತ್ರ, ಸ್ನೇಹಪರ ಕ್ರಿಕೆಟ್ ಪಂದ್ಯ ಮತ್ತು ಕೊರಿಯೋಗ್ರಾಫ್ ಮಾಡಿದ ನೃತ್ಯದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿವೆ.
ಗಾಜಾ ಜನರಲ್ಲಿ ನಿಲ್ಲದ ಭಯದ ವಾತಾವರಣ, ಮತ್ತೆ ಮತ್ತೆ ಮುಂದುವರಿದ ವಾಯುದಾಳಿ
ಹಮಾಸ್ &ಇಸ್ರೇಲ್ ಬಡಿದಾಟಕ್ಕೆ ಗಾಜಾ ನೆಲ ನಾಶವಾಗಿ ಹೋಗಿದೆ, ಕೇವಲ 2 ವರ್ಷ ಅಂತರದಲ್ಲಿ ಗಾಜಾ ಪಟ್ಟಿ ನರಕವಾಗಿ ಬದಲಾಗಿದೆ. ಹಮಾಸ್ ವಿರುದ್ಧದ ಕೋಪಕ್ಕೆ ಯುದ್ಧ ಘೋಷಿಸಿ, ಗಾಜಾ ಮೇಲೆ ನುಗ್ಗಿ ಬಂದಿದ್ದ ಇಸ್ರೇಲ್ ಪಡೆಗಳು ಭಾರಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ಆರಂಭ ಮಾಡಿದ್ದವು. ಈಗಾಗಲೇ ಹಲವು ಬಾರಿ ಕದನ ವಿರಾಮ ಘೋಷಣೆ ಮಾಡಿದ್ದರೂ, ಮತ್ತೆ

21 C