ಆರಿಕ್ಕಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ: ಶಾಸಕ ಅಶ್ರಫ್ ಸಹಿತ 15ಕ್ಕೂ ಅಧಿಕ ಮಂದಿ ಪೊಲೀಸ್ ವಶಕ್ಕೆ
ಪ್ರತಿಭಟನಾಕಾರರ ಚಪ್ಪರ ತೆರವು, ಟೋಲ್ ಸಂಗ್ರಹ ಪುನಾರಂಭ
Madhya Pradesh| ಖಾಸಗಿ ಶಾಲೆಯನ್ನು ಅನಧಿಕೃತ ಮದರಸಾ ಎಂದು ಸುಳ್ಳು ಪ್ರಚಾರ: ಸ್ಥಳೀಯ ಆಡಳಿತದಿಂದ ಧ್ವಂಸ
ಭೋಪಾಲ್: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನರ್ಸರಿಯಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಶಿಕ್ಷಣ ನೀಡಲು ನಿರ್ಮಿಸುತ್ತಿದ್ದ ಖಾಸಗಿ ಶಾಲೆಯನ್ನು ಅನಧಿಕೃತ ಮದರಸಾ ಎಂದು ಸುಳ್ಳು ಪ್ರಚಾರ ಮಾಡಿದ್ದು ಅದರ ಭಾಗಶಃ ಧ್ವಂಸಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ indianexpress.com ವರದಿ ಮಾಡಿದೆ. ಸ್ಥಳೀಯ ನಿವಾಸಿ ಅಬ್ದುಲ್ ನಯೀಮ್ ಎಂಬವರು ಸಾಲವಾಗಿ ಪಡೆದ ಹಣ ಹಾಗೂ ಕುಟುಂಬದ ಉಳಿತಾಯ ಸೇರಿ ಸುಮಾರು 20 ಲಕ್ಷ ವೆಚ್ಚದಲ್ಲಿ ಶಾಲೆಯನ್ನು ನಿರ್ಮಿಸುತ್ತಿದ್ದರು. ಆದರೆ ಸ್ಥಳೀಯ ಆಡಳಿತದ ಆದೇಶದ ಮೇರೆಗೆ ಜನವರಿ 13ರ ಸಂಜೆ ಗೋಡೆಗಳು ಮತ್ತು ಮುಂಭಾಗದ ಶೆಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿದೆ. ಧಾಬಾ ಗ್ರಾಮ ಮತ್ತು ಸುತ್ತಮುತ್ತಲಿನ ಬುಡಕಟ್ಟು ಹಳ್ಳಿಗಳ ಮಕ್ಕಳಿಗಾಗಿ ನರ್ಸರಿಯಿಂದ 8ನೇ ತರಗತಿಯವರೆಗೆ ಶಾಲೆಯನ್ನು ನಿರ್ಮಿಸುವ ಕನಸನ್ನು ಕಂಡಿದ್ದ ನಯೀಮ್, ಶಾಲೆಯನ್ನು ನಿರ್ಮಿಸುತ್ತಿದ್ದರು. ಅಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಮೈಲುಗಳಷ್ಟು ದೂರ ನಡೆಯಬೇಕಾದ ಪರಿಸ್ಥಿತಿಯಿತ್ತು. ಅವರು ವಾಣಿಜ್ಯ ಭೂಮಿಯ ಬಳಕೆ ಬದಲಾವಣೆ (ಕಮರ್ಷಿಯಲ್ ಲ್ಯಾಂಡ್ ಡೈವರ್ಷನ್) ಅನುಮತಿ ಪಡೆದು, ಪಂಚಾಯತ್ನಿಂದ ಎನ್ಒಸಿ ಪಡೆದಿದ್ದರು. ಇದಲ್ಲದೆ ಡಿಸೆಂಬರ್ 30ರಂದು ಶಾಲಾ ಶಿಕ್ಷಣ ಇಲಾಖೆಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿ ಅಗತ್ಯವಿರುವ ಎಲ್ಲಾ ಭೂ ದಾಖಲೆಗಳನ್ನು ಕೂಡ ಸಲ್ಲಿಸಿದ್ದರು. ನಮ್ಮ ಗ್ರಾಮ ಅಭಿವೃದ್ಧಿಯಾಗಬೇಕು ಮತ್ತು ಕೆಲವು ಮಕ್ಕಳಾದರೂ ಓದಲು ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ನನ್ನ ಖಾಸಗಿ ಜಮೀನಿನಲ್ಲಿ ಶಾಲೆಯನ್ನು ನಿರ್ಮಿಸಲು ನಾನು ನಿರ್ಧರಿಸಿದ್ದೆ. ಆದರೆ ಇಲ್ಲಿ ನಾವು ತಪ್ಪು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಗಳು ಆರೋಪಿಸಿದರು,” ಎಂದು ನಯೀಮ್ ಹೇಳಿದ್ದಾರೆ. ಶಾಲಾ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಧ್ವಂಸಕ್ಕೆ ಮೂರು ದಿನ ಮುಂಚಿತವಾಗಿ ಆ ಪ್ರದೇಶದಲ್ಲಿ ಮದರಸಾ ನಿರ್ಮಾಣವಾಗುತ್ತಿದೆ ಎಂಬ ವದಂತಿಗಳು ಹರಿದಾಡಿದವು. ಇದು ಕೇವಲ ಮೂರು ಮುಸ್ಲಿಂ ಕುಟುಂಬಗಳಿರುವ ಗ್ರಾಮ. ಕಟ್ಟಡವೇ ಪೂರ್ಣವಾಗಿರಲಿಲ್ಲ. ಇಲ್ಲಿ ಮದರಸಾ ಕಾರ್ಯನಿರ್ವಹಿಸುವುದು ಹೇಗೆ ಸಾಧ್ಯ? ತರಗತಿಗಳೇ ಇರಲಿಲ್ಲ, ವಿದ್ಯಾರ್ಥಿಗಳೂ ಇರಲಿಲ್ಲ, ಎಂದು ನಯೀಮ್ ಹೇಳಿದ್ದಾರೆ. ಜನವರಿ 11ರಂದು, ಅನುಮತಿ ಇಲ್ಲದಿರುವುದನ್ನು ಉಲ್ಲೇಖಿಸಿ, ಗ್ರಾಮ ಪಂಚಾಯತ್ ನಯೀಮ್ ಅವರಿಗೆ ಕಟ್ಟಡವನ್ನು ಕೆಡವುವಂತೆ ನೋಟಿಸ್ ನೀಡಿದೆ. ಅದಕ್ಕೆ ಅಧಿಕೃತವಾಗಿ ಉತ್ತರ ನೀಡಲು ಅವರು ಪಂಚಾಯತ್ ಕಚೇರಿಗೆ ಹೋದಾಗ ಅವರ ಅರ್ಜಿಯನ್ನು ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿ ಮತ್ತೆ ಬರುವಂತೆ ಸೂಚಿಸಿದ್ದಾರೆ. ಜನವರಿ 13ರಂದು ನಯೀಮ್ ಮತ್ತು ಕೆಲವು ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಜಿಲ್ಲಾ ಕಚೇರಿಗೆ ತೆರಳಿದ್ದರು. ಆದರೆ ಅಧಿಕಾರಿಗಳು ಪೊಲೀಸ್ ಬಂದೋ ಬಸ್ತ್ನಲ್ಲಿ ಶಾಲಾ ಕಟ್ಟಡದ ಒಂದು ಭಾಗ ಮತ್ತು ಮುಂಭಾಗದ ಶೆಡ್ ನೆಲಸಮಗೊಳಿಸಿದ್ದಾರೆ. ಅತಿಕ್ರಮಣ ಮತ್ತು ನಿಯಮ ಉಲ್ಲಂಘನೆ ಆರೋಪಿಸಿ ಗ್ರಾಮ ಪಂಚಾಯತ್ ದೂರು ದಾಖಲಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪರಿಶೀಲನೆಯ ವೇಳೆ ಕಟ್ಟಡದ ಒಂದು ಭಾಗವನ್ನು ಅತಿಕ್ರಮಣ ಮಾಡಿ ನಿರ್ಮಿಸಿರುವುದು ಕಂಡು ಬಂದಿದೆ. ಆದ್ದರಿಂದ ಆ ಭಾಗವನ್ನು ತೆರವುಗೊಳಿಸಲಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಜಿತ್ ಮರಾವಿ ಹೇಳಿದ್ದಾರೆ. ನಯೀಮ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ನನ್ನ ಬಳಿ ಪಂಚಾಯತ್ ನೀಡಿರುವ ಎನ್ಒಸಿ ಇತ್ತು. ನಾನು ಶಾಲೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ್ದೆ. ಕಾಗದಪತ್ರಗಳಲ್ಲಿ ಯಾವುದೇ ಲೋಪವಿದ್ದರೆ ದಂಡವನ್ನು ಪಾವತಿಸಲು ನಾನು ಸಿದ್ಧನಿದ್ದೆ ಎಂದು ಹೇಳಿದ್ದಾರೆ.
Exclusive: ಲಕ್ಕುಂಡಿ: ನಿಧಿ ನೀಡಿದ ಕುಟುಂಬಕ್ಕೆ ಸರ್ಕಾರದಿಂದ ನಿವೇಶನ ಸೇರಿ ಭರ್ಜರಿ ಆಫರ್: ಎಚ್.ಕೆ ಪಾಟೀಲ್
ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಗಂಗವ್ವ ರಿತ್ತಿ ಹಾಗೂ ಪುತ್ರ ಪ್ರಜ್ವಲ್ ರಿತ್ತಿ ಅವರನ್ನು ವಿಶೇಷವಾಗಿ ಸನ್ಮಾನ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೇ ಈ ಭಾಗದಲ್ಲಿ ಇನ್ನಷ್ಟು ಪುರಾತತ್ವ ವಸ್ತುಗಳು ಸಿಗುವ ನಿರೀಕ್ಷೆ ಇರುವುದರಿಂದ ಪುರಾತತ್ವ ಇಲಾಖೆಯು ವಿಶೇಷ ಕಾರ್ಯಾಚರಣೆಗೆ ಮುಂದಾಗುತ್ತಿದೆ. ಈ ಕುಟುಂಬಕ್ಕೆ ಉದ್ಯೋಗ,
Udupi Paryaya : ಅನ್ನಬ್ರಹ್ಮ ಕ್ಷೇತ್ರಕ್ಕೆ ಬನ್ನಿ, ಸರ್ವಜ್ಞ ಪೀಠವನ್ನೇರಲಿರುವ ಶೀರೂರು ಶ್ರೀಗಳ ಸಂದರ್ಶನ
Shiroor Seer Paryaya : ಕೃಷ್ಣನನಾಡು ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ. ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ವೇದವರ್ಥನ ತೀರ್ಥ ಸ್ವಾಮೀಜಿಗಳು ಸರ್ವಜ್ಞ ಪೀಠವನ್ನೇರಲಿದ್ದಾರೆ. ಶ್ರೀಗಳು, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದ ಸಂದರ್ಭದಲ್ಲಿ ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಕೆನಡಾ ಇತಿಹಾಸದಲ್ಲೇ ಬೃಹತ್ ದರೋಡೆ ಪ್ರಕರಣ: ಮುಖ್ಯ ಆರೋಪಿಯನ್ನು ಗಡೀಪಾರು ಮಾಡುವಂತೆ ಭಾರತಕ್ಕೆ ಮನವಿ
ಟೊರಾಂಟೊ: ಕೆನಡಾ ಇತಿಹಾಸದಲ್ಲೇ ಬೃಹತ್ ದರೋಡೆ ಪ್ರಕರಣ ಎಂದು ಹೇಳಲಾಗಿರುವ 20 ದಶಲಕ್ಷ ಮೌಲ್ಯದ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸಿಮ್ರಾನ್ ಪ್ರೀತ್ ಪನೇಶರ್ ನನ್ನು ದೇಶದಿಂದ ಗಡೀಪಾರು ಮಾಡುವಂತೆ ಕೆನಡಾ ಪೊಲೀಸರು ಅಧಿಕೃತ ಮನವಿ ಸಲ್ಲಿಸಿದ್ದಾರೆ. ಎಪ್ರಿಲ್ 2023ರಲ್ಲಿ ಟೊರಾಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಚಿನ್ನದ ದರೋಡೆ ಪ್ರಕರಣದಲ್ಲಿ ಬ್ರಾಂಪ್ಟನ್ ನಿವಾಸಿ ಹಾಗೂ ಏರ್ ಕೆನಡಾದ ಮಾಜಿ ಉದ್ಯೋಗಿಯಾದ 33 ವರ್ಷದ ಸಿಮ್ರಾನ್ ಪ್ರೀತ್ ಪನೇಸರ್ ಮುಖ್ಯ ಆರೋಪಿಯಾಗಿದ್ದಾನೆ. .9999 ಪರಿಶುದ್ಧತೆಯ ಸುಮಾರು 400 ಕೆಜಿ ಚಿನ್ನದ ತುಂಡುಗಳು ಹಾಗೂ 2.5 ದಶಲಕ್ಷ ಡಾಲರ್ ವಿದೇಶಿ ನಗದನ್ನು ಒಳಗೊಂಡಿದ್ದ ಭಾರಿ ಮೊತ್ತದ ಸರಕನ್ನು ಸ್ಥಳಾಂತರಿಸುವಲ್ಲಿ ಪನೇಸರ್ ನಿರ್ಣಾಯಕ ಪಾತ್ರ ವಹಿಸಿದ್ದಾನೆ ಎಂದು ಕೆನಡಾ ಪೊಲೀಸರು ಆರೋಪಿಸಿದ್ದಾರೆ. ಈ ದರೋಡೆಯ ನಂತರ ಪನೇಸರ್ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಕೆನಡಾ ಪೊಲೀಸರು ಶಂಕಿಸಿದ್ದು, ಕೆನಡಾದ್ಯಂತ ಬಂಧನ ವಾರೆಂಟ್ ಹಾಗೂ ಗಡೀಪಾರು ಮನವಿಯನ್ನು ಕೆನಡಾ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಸ್ವಿಝರ್ ಲೆಂಡ್ ನ ಝೂರಿಚ್ ನಿಂದ ಟೊರಾಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರಿ ಮೌಲ್ಯದ ಚಿನ್ನದ ಸರಕನ್ನು ವಿಮಾನ ನಿಲ್ದಾಣದ ಸುರಕ್ಷಿತ ದಾಸ್ತಾನು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮರು ದಿನ ಈ ಸರಕು ನಾಪತ್ತೆಯಾಗಿದೆ ಎಂದು ವರದಿಯಾಗಿತ್ತು. ಈ ಕಾರ್ಯಾಚರಣೆಗೆ ‘ಪ್ರಾಜೆಕ್ಟ್ 24ಕೆ’ ಎಂಬ ಗೋಪ್ಯ ನಾಮವಿಡಲಾಗಿತ್ತು. ಈ ದರೋಡೆಗೆ ದೊಡ್ಡ ಮಟ್ಟದಲ್ಲಿ ಸಮನ್ವಯ ಸಾಧಿಸಲಾಗಿದ್ದು, ಒಳಗಿನವರು ಹಾಗೂ ಹೊರಗಿನವರಿಬ್ಬರೂ ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದಿನವರೆಗೆ ಹತ್ತು ಮಂದಿಯ ವಿರುದ್ಧ 21 ಕೌಂಟ್ ದೋಷಾರೋಪಗಳನ್ನು ಹೊರಿಸಲಾಗಿದೆ.
ಚಾಮರಾಜನಗರ | ನಾಡಿಗೆ ಬಂದ ಕಾಡಾನೆ: ಮಾರಿಗುಡಿ ಬೀದಿಯಲ್ಲಿ ರಂಪಾಟ
ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದ ಮಾರಿಗುಡಿ ಬೀದಿಗೆ ಬುಧವಾರ ತಡರಾತ್ರಿ ಕಾಡಾನೆ ಒಂದು ನುಗ್ಗಿ ರಂಪಾಟ ನಡೆಸಿದೆ. ಮನೆ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಾಡಾನೆ ಜಖಂಗೊಳಿಸಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪುರಸಭೆ 5ನೇ ವಾರ್ಡ್ನ ಮಾರಿಗುಡಿ ಬೀದಿಯಲ್ಲಿ ಅಚಾನಕ್ ಕಾಣಿಸಿಕೊಂಡ ಕಾಡಾನೆಯನ್ನು ಕಂಡು ನಾಯಿಗಳು ಬೊಗಳಿವೆ. ಇದರಿಂದ ಗಾಬರಿಗೊಂಡ ಕಾಡಾನೆ ಎದುರಿಗೆ ಸಿಕ್ಕ ವಾಹನಗಳನ್ನು ಎತ್ತಿ ಬಿಸಾಡಿದೆ ಎಂದು ತಿಳಿದು ಬಂದಿದೆ. ಗುರುವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಈ ಘಟನೆ ನಡೆದಿದ್ದು, ಆ ಸಮಯದಲ್ಲಿ ಸಾರ್ವಜನಿಕರ ಓಡಾಟ ಇರಲಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾಡಾನೆ ಪಟ್ಟಣದ ಸಮೀಪದ ನಿರ್ಜನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಅನುಮಾನವಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಕಿರಣಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಕಾಡಾನೆಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕಾಡಿಗೆ ಹಿಂತಿರುಗಿಸುವಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹೈಕೋರ್ಟ್ಗೆ ಹೋಗಿ, ಸೆನ್ಸಾರ್ ಅನುಮತಿ ಕೋರಿ; 'ಜನ ನಾಯಗನ್' ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಸೂಚನೆ
'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ವಿಳಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಮದ್ರಾಸ್ ಹೈಕೋರ್ಟ್ಗೆ ಪ್ರಕರಣವನ್ನು ಹಿಂದಿರುಗಿಸಿ, ಜನವರಿ 20ರೊಳಗೆ ನಿರ್ಧರಿಸುವಂತೆ ಸೂಚಿಸಿದೆ. ನಿರ್ಮಾಪಕರು ಭಾರೀ ನಷ್ಟ ಅನುಭವಿಸಿರುವುದಾಗಿ ತಿಳಿಸಿದ್ದು, ಹೈಕೋರ್ಟ್ ಶೀಘ್ರ ನಿರ್ಧಾರದ ನಿರೀಕ್ಷೆಯಲ್ಲಿದೆ.
ಲಿಂಗಸುಗೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿಳಂಬ; ಕೆಕೆಆರ್ಟಿಸಿ ಬಸ್ ಜಪ್ತಿ
ರಾಯಚೂರು, ಜ.15: ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ, ಅದನ್ನು ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕೆಕೆಆರ್ಟಿಸಿ ಬಸ್ಸನ್ನು ಪಟ್ಟಣದ ಬಸ್ ನಿಲ್ದಾಣದಲ್ಲಿ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಮಸ್ಕಿ ತಾಲೂಕಿನ ಪಾಂಡುರಂಗ ಕ್ಯಾಂಪ್ ಸಮೀಪ 2001ರಲ್ಲಿ ಯಾದಗಿರಿ ಘಟಕಕ್ಕೆ ಸೇರಿದ ಸರ್ಕಾರಿ ಬಸ್ ಒಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಉಮೇಶ್ ಎಂಬವರು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬದವರು ಪರಿಹಾರಕ್ಕಾಗಿ ಲಿಂಗಸುಗೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ದಾವೆಯನ್ನು ವಿಚಾರಿಸಿದ ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶರು, ರೂ.66,99,675 ಪರಿಹಾರ ಮೊತ್ತ, ರೂ.8,37,450 ಬಡ್ಡಿ ಹಾಗೂ ರೂ.7,525 ಇತರೆ ವೆಚ್ಚ ಸೇರಿ ಒಟ್ಟು ರೂ.75,44,650ನ್ನು ನೀಡುವಂತೆ ಆದೇಶಿಸಿದ್ದರು. ಆದರೆ ಕೆಕೆಆರ್ಟಿಸಿ ಪರಿಹಾರ ಪಾವತಿಯಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಬಸ್ ಜಪ್ತಿ ವಾರಂಟ್ ಹೊರಡಿಸಿತ್ತು. ಅದರಂತೆ ಕೋರ್ಟ್ ಬೇಲಿಫ್ಗಳಾದ ಶಾಂತಪ್ಪ ಹಾಗೂ ಮಾನಪ್ಪ.ಬಿ ಅವರು ಲಿಂಗಸುಗೂರು ಬಸ್ ನಿಲ್ದಾಣಕ್ಕೆ ತೆರಳಿ ಯಾದಗಿರಿ ಘಟಕಕ್ಕೆ ಸೇರಿದ (ಕೆಎ 33 ಎಫ್ 0637) ಬಸ್ಸನ್ನು ವಶಪಡಿಸಿಕೊಂಡು ಲಿಂಗಸುಗೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ವೇಳೆ ವಕೀಲರಾದ ಎಚ್. ವೀರಭದ್ರಪ್ಪ, ಶಿವಕುಮಾರ ಎಸ್., ಮಲ್ಲಿಕಾರ್ಜುನ ಗೋನಾಳ ಹಾಗೂ ರತ್ನಾಬಾಯಿ ಉಪಸ್ಥಿತರಿದ್ದರು.
ಕೇರಳದ ಹಾಸ್ಟೆಲ್ನಲ್ಲಿ 2 ಅಪ್ರಾಪ್ತ ಕ್ರೀಡಾಪಟುಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಪ್ರಕರಣ ದಾಖಲು
ಕೊಲ್ಲಂನ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ನಲ್ಲಿ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 17 ವರ್ಷದ ಸ್ಯಾಂಡ್ರಾ ಮತ್ತು 15 ವರ್ಷದ ವೈಷ್ಣವಿ ಮೃತಪಟ್ಟಿದ್ದಾರೆ. ಗುರುವಾರ ಮುಂಜಾನೆ ಈ ದುರಂತ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ಲಭಿಸಲಿದೆ.
ಸಂಕ್ರಾಂತಿ ನಂತರ ಕುಸಿದ ಚಿನ್ನ; ಮುಂದುವರಿದ ಬೆಳ್ಳಿ ಬೆಲೆ ಏರಿಕೆ
ಮುಂಬರುವ ಮದುವೆಯ ಸೀಸನ್ಗೆ ಮೊದಲು ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇಂದಿನ ದರದ ವಿವರ ಇಲ್ಲಿದೆ. ಜನವರಿ 9ರಿಂದ ಸತತವಾಗಿ ಏರು ಹಾದಿಯಲ್ಲಿದ್ದ ಚಿನ್ನ ಕೊನೆಗೂ ಸಂಕ್ರಾಂತಿಯ ನಂತರ ಅಲ್ಪ ಮಟ್ಟಿಗೆ ಕುಸಿದಿದೆ. ಆದರೆ ಬೆಳ್ಳಿಯ ನಾಗಾಲೋಟ ಮುಂದುವರಿದಿದೆ. ಗುರುವಾರ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 14,254 ರೂ. ನಿಂದ 14,318 ರೂ. ಗೆ ಇಳಿದಿದೆ. ಒಂದು ಗ್ರಾಂ ಆಭರಣ ಚಿನ್ನದ ಬೆಲೆ 13,165 ರೂ. ನಿಂದ 13,125 ರೂ.ಗೆ ಇಳಿದಿದೆ. ಆದರೆ ಬೆಳ್ಳಿಯ ಬೆಲೆ ಒಂದು ಗ್ರಾಂಗೆ 3 ರೂ.ನಿಂದ 5 ರೂ. ವರೆಗೆ ಏರಿಕೆ ಕಂಡಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಒಂದು ಗ್ರಾಂಗೆ 292 ರೂ .ನಿಂದ 295 ರೂ. ಗೆ ಅಲ್ಪಮಟ್ಟಿಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 310 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದ ಏರಿಳಿತ ಮತ್ತು ಹೂಡಿಕೆದಾರರ ನಡೆ ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಗುರುವಾರ ಜನವರಿ 15ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಮಟ್ಟಿಗೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,318 (-82) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,125 (-75) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,739 (-61) ರೂ. ಬೆಲೆಗೆ ತಲುಪಿದೆ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಗುರುವಾರ ಬೆಳಗ್ಗಿನ ಚಿನ್ನದ ವಹಿವಾಟಿನ ಪ್ರಕಾರ ಬೆಂಗಳೂರಿನಲ್ಲಿ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,44,010 ರೂ. ಕುಸಿದಿದೆ. 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,32,010 ರೂ. ಗೆ ಇಳಿದಿದೆ. ಬೆಳ್ಳಿಯ ಬೆಲೆ 1 ಕೆಜಿಗೆ 2,57,900 ರೂ.ಗೆ ಏರಿದೆ. ಕರ್ನಾಟಕದಲ್ಲಿ ಒಂದು ಗ್ರಾಂ ಚಿನ್ನದ ದರ ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ 14,401 ರೂ. ಇದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 13,201 ರೂ. ಹಾಗೂ 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10,801 ರೂ. ಆಗಿದೆ. ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ 1 ಗ್ರಾಂನ ಬೆಲೆ ಚೆನ್ನೈ 13,2 ರೂ. ಹೈದರಾಬಾದ್ 13,201 ರೂ. ಕೇರಳ 13,201 ರೂ. ಪುಣೆ 13,201 ರೂ. ವಡೋದರ 13,206 ರೂ. ಅಹಮದಾಬಾದ್ 13,206 ರೂ. ದಿಲ್ಲಿ 13,140 ರೂ ಕೋಲ್ಕತಾ 13,125 ರೂ ಜೈಪುರ್ 13,140 ರೂ ಲಕ್ನೋ 13,140 ರೂ ಭುವನೇಶ್ವರ್ 13,125 ರೂ
ಮಹೀಂದ್ರಾ ಎಸ್ಯುವಿಗಳಿಗೆ ಮುಗಿಬಿದ್ದ ಜನ, ಕೇವಲ 4 ಗಂಟೆಯಲ್ಲಿ ₹20,500 ಕೋಟಿ ಮೌಲ್ಯದ ಬುಕ್ಕಿಂಗ್!
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ನೂತನ ಎಸ್ಯುವಿಗಳಾದ ಎಕ್ಸ್ಯುವಿ 7ಎಕ್ಸ್ಒ ಮತ್ತು ಎಲೆಕ್ಟ್ರಿಕ್ ಮಾದರಿಯ ಎಕ್ಸ್ಇವಿ 9ಎಸ್ ಗಾಗಿ ಬುಕ್ಕಿಂಗ್ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ದಾಖಲೆ ಬರೆದಿದೆ. ಜನವರಿ 14 ರಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಒಟ್ಟು 93,689 ಕಾರುಗಳು ಬುಕ್ ಆಗಿದ್ದು, ಇದರ ಮೌಲ್ಯ 20,500 ಕೋಟಿ ರೂಪಾಯಿ ದಾಟಿದೆ. ಎಕ್ಸ್ಯುವಿ 7ಎಕ್ಸ್ಒ ವಿತರಣೆ ಈಗಾಗಲೇ ಆರಂಭವಾಗಿದ್ದರೆ, ಎಕ್ಸ್ಇವಿ 9ಎಸ್ ವಿತರಣೆ ಜನವರಿ 26ರಂದು ಪ್ರಾರಂಭವಾಗಲಿದೆ.
ಕುಂಬಳೆ ಟೋಲ್ ಗೇಟ್ ಪ್ರಕರಣ: 500 ಮಂದಿಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು
ಕಾಸರಗೋಡು:ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಗೇಟ್ನಲ್ಲಿ ಬುಧವಾರ ರಾತ್ರಿ ನಡೆದ ಘಟನೆಯ ಸಂಬಂಧ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸೇರಿದಂತೆ ಸುಮಾರು 500 ಮಂದಿ ವಿರುದ್ಧ ಕುಂಬಳೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಟೋಲ್ ವಿರುದ್ಧ ಸತ್ಯಾಗ್ರಹ ನಡೆಸುತ್ತಿದ್ದ ಕ್ರಿಯಾ ಸಮಿತಿ ಸದಸ್ಯರು ಹಾಗೂ ಕಂಡರೆ ಗುರುತಿಸಬಹುದಾದ ಸುಮಾರು 500 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೇ ವೇಳೆ ಕುಂಬಳೆಯಲ್ಲಿ ಕಣಿಪುರ ಜಾತ್ರೋತ್ಸವ ನಡೆಯುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಜನಸಾಗರ ಸೇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಟೋಲ್ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಸಕರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘರ್ಷದ ಸಾಧ್ಯತೆಯನ್ನು ಮನಗಂಡು ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಬುಧವಾರ ರಾತ್ರಿ ಕುಂಬಳೆ ಪೇಟೆಯಿಂದ ಆರಂಭವಾದ ಎಡಪಂಥೀಯ ಸಂಘಟನೆಗಳ ಪ್ರತಿಭಟನೆ ಬೆಂಬಲ ಮೆರವಣಿಗೆ ಟೋಲ್ ಪ್ಲಾಝಾ ತಲುಪಿದ ನಂತರ ಟೋಲ್ ಬೂತ್ ಮೇಲೆ ಆಕ್ರಮಣ ನಡೆದಿದೆ. ಈ ವೇಳೆ ಟೋಲ್ ಬೂತ್ ಕಚೇರಿಯ ಕಿಟಕಿಗಳು, ಕ್ಯಾಮೆರಾ ಸೇರಿದಂತೆ ಹಲವು ಉಪಕರಣಗಳನ್ನು ಒಡೆದುಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ; ಕೊನೆಗೂ ಸ್ಮಾರ್ಟ್ ಆಗದ ಸಿಟಿಗಳು?
ರಾಜ್ಯದ ಏಳು ಸ್ಮಾರ್ಟ್ ಸಿಟಿಗಳಿಗೆ ಒಟ್ಟಾರೆ ಸುಮಾರು ರೂ. 7,000 ಕೋಟಿ ವೆಚ್ಚ ನಿರ್ಧರಿಸಲಾಗಿದ್ದು, ಪ್ರತೀ ನಗರಕ್ಕೆ ಐದು ವರ್ಷಗಳಲ್ಲಿ ರೂ. 1,000 ಕೋಟಿ ಅನುದಾನ ನೀಡುವ ಗುರಿ ಇಡಲಾಗಿತ್ತು. ವರದಿಗಳ ಪ್ರಕಾರ ರಾಜ್ಯದ ಈ ಏಳು ನಗರಗಳಲ್ಲಿ ಒಟ್ಟು 889 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸರಕಾರದ ಪ್ರಕಾರ ಇದರಲ್ಲಿ 590 ಕಾಮಗಾರಿಗಳು ಪೂರ್ಣಗೊಂಡಿವೆ ಎನ್ನಲಾಗಿದೆ. ಇದುವರೆಗೆ ರೂ. 5,068 ಕೋಟಿ ವೆಚ್ಚವಾಗಿದ್ದು, ಉಳಿದ 295 ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಅಥವಾ ಪ್ರಗತಿಯಲ್ಲೇ ಇವೆ. ಅಂದರೆ ಸ್ಮಾರ್ಟ್ ಸಿಟಿ ಯೋಜನೆ ಆರಂಭವಾಗಿ ಹೆಚ್ಚು ಕಡಿಮೆ ಹತ್ತು ವರ್ಷ ಕಳೆದರೂ ಒಟ್ಟಾರೆ ಪ್ರಗತಿ ಶೇ.26ರಷ್ಟೇ ಎನ್ನುವುದು ಗ್ರೌಂಡ್ ರಿಪೋರ್ಟ್ಗಳಿಂದ ಸ್ಪಷ್ಟವಾಗುತ್ತದೆ. ನಗರಗಳ ಅಭಿವೃದ್ಧಿ ಯೊಂದಿಗೆ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವುದು, ತಂತ್ರಜ್ಞಾನದ ಸಹಾಯದಿಂದ ನಾಗರಿಕರಿಗೆ ಉತ್ತಮ ಜೀವನಮಟ್ಟ ಒದಗಿಸುವುದು ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದು ಎಂಬ ಘೋಷಣೆಯೊಂದಿಗೆ ಕೇಂದ್ರ ಸರಕಾರವು 2015ರ ಜೂನ್ 25ರಂದು ‘ಸ್ಮಾರ್ಟ್ ಸಿಟಿ ಮಿಷನ್’ ಅನ್ನು ಜಾರಿಗೆ ತಂದಿತ್ತು. ದೇಶದಾದ್ಯಂತ ವೇಗವಾಗಿ ನಗರೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳ ಕೊರತೆ, ಸಂಚಾರ ಸಮಸ್ಯೆ, ಪರಿಸರ ಹಾನಿ, ಅಸಮರ್ಪಕ ಸೇವೆಗಳು ಮತ್ತು ಆಡಳಿತಾತ್ಮಕ ಅಸಮರ್ಥತೆಯನ್ನು ನಿವಾರಿಸುವ ಉದ್ದೇಶದಿಂದ 100 ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಈ ಯೋಜನೆ ಹೊಂದಿತ್ತು. ಜನವರಿ 2016ರಿಂದ ಜೂನ್ 2018ರವರೆಗೆ ನಾಲ್ಕು ಹಂತಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯಮಟ್ಟದ ಅಂಕಗಳ ಆಧಾರದ ಮೇಲೆ ನಗರಗಳನ್ನು ಆಯ್ಕೆ ಮಾಡಿ, ನಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಮೂಲಕ ಸ್ಮಾರ್ಟ್ ಸಿಟಿ ಪ್ರಸ್ತಾವಗಳನ್ನು ಮೌಲ್ಯಮಾಪನ ಮಾಡಿ ಅಂತಿಮವಾಗಿ 100 ನಗರಗಳನ್ನು ಘೋಷಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಕರ್ನಾಟಕದಿಂದ ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ತುಮಕೂರು, ಶಿವಮೊಗ್ಗ ಸೇರಿದಂತೆ ಏಳು ನಗರಗಳು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿವೆ. ಸ್ಮಾರ್ಟ್ ಸಿಟಿ ಮಿಷನ್, 2015ರಲ್ಲಿ ನಗರಜೀವನವನ್ನು ತಂತ್ರಜ್ಞಾನ ಸಹಾಯಿತ ಪರಿಹಾರಗಳು ಮತ್ತು ಮೂಲಭೂತ ಸೌಕರ್ಯಗಳ ಮೂಲಕ ಪರಿವರ್ತಿಸಲು ಪ್ರಾರಂಭಿಸಲಾಗಿತ್ತು. ಈಗ ಹಲವಾರು ಸಮಯಮಿತಿ ವಿಸ್ತರಣೆಗಳ ನಂತರ ಮೂಲ ಯೋಜನೆಯನ್ನು ಬಹುತೇಕ ಪೂರ್ಣಗೊಳಿಸಿದರೂ ತತ್ಕಾಲೀನವಾಗಿ ಪ್ರಗತಿಯಲ್ಲಿರುವ ಕೆಲಸವನ್ನು ಮುಗಿಸಲು ಮಾರ್ಚ್ 31, 2025ರವರೆಗೆ ವಿಸ್ತರಿಸಲಾಗಿದೆ. ದಾಖಲೆಗಳ ಪ್ರಕಾರ, ಸುಮಾರು 8,064 ಮಾನ್ಯಗೊಂಡ ಯೋಜನೆಗಳಲ್ಲಿ 100 ಸ್ಮಾರ್ಟ್ ಸಿಟಿಗಳಲ್ಲಿ ಜುಲೈ 2025ರ ತನಕ ಸುಮಾರು ರೂ. 1.53 ಲಕ್ಷ ಕೋಟಿ ಮೌಲ್ಯದ 7,636ಕ್ಕೂ ಹೆಚ್ಚು ಯೋಜನೆಗಳು ಪೂರ್ಣಗೊಂಡಿದ್ದು, ಉಳಿದ ಯೋಜನೆಗಳು ಪ್ರಗತಿಯಲ್ಲಿ ಇವೆ ಎನ್ನಲಾಗಿದೆ. ಸ್ವತಂತ್ರ ತಂತ್ರಜ್ಞರ ಪರಿಶೀಲನೆ ಪ್ರಕಾರ, ಡಿಸೆಂಬರ್ 2025 ಆರಂಭದ ವೇಳೆಗೆ ರೂ. 1.55 ಲಕ್ಷ ಕೋಟಿ ಮೌಲ್ಯದ 7,741 ಯೋಜನೆಗಳು ಪೂರ್ಣಗೊಂಡಿದ್ದು, 323 ಯೋಜನೆಗಳು ಇನ್ನೂ ಪ್ರಗತಿಯಲ್ಲಿ ಇವೆ ಎನ್ನುವ ಮಾಹಿತಿ ಇದೆ. ವರದಿಗಳ ಪ್ರಕಾರ ಕೇವಲ ಸುಮಾರು 18 ನಗರಗಳು ತಮ್ಮ ಎಲ್ಲಾ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿವೆ ಎನ್ನಲಾಗಿದೆ. ಅಂದರೆ ಬಹುತೇಕ ನಗರಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಯೋಜನಾ ಚಟುವಟಿಕೆಗಳು ಬಾಕಿ ಇವೆ ಅನ್ನುವುದಂತೂ ಸತ್ಯ. ಸ್ಮಾರ್ಟ್ ಸಿಟಿ ಮಿಷನ್ನ ಮೂಲ ಉದ್ದೇಶವೆಂದರೆ ನಗರಗಳಲ್ಲಿ ಸ್ಥಿರ ವಿದ್ಯುತ್ ಸರಬರಾಜು, ಸಮರ್ಪಕ ಕುಡಿಯುವ ನೀರು, ಪರಿಣಾಮಕಾರಿ ಒಳಚರಂಡಿ ವ್ಯವಸ್ಥೆ, ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು, ಸುರಕ್ಷಿತ ಹಾಗೂ ಸುಗಮ ಸಾರ್ವಜನಿಕ ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ಬಡವರಿಗೆ ಕೈಗೆಟುಕುವ ವಸತಿ, ಡಿಜಿಟಲ್ ಸಂಪರ್ಕ, ಇ-ಆಡಳಿತ, ನಾಗರಿಕರ ಪಾಲ್ಗೊಳ್ಳುವಿಕೆ, ಪರಿಸರ ಸಂರಕ್ಷಣೆ ಮತ್ತು ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ವಿಶೇಷ ಭದ್ರತೆ ಒದಗಿಸುವುದಾಗಿದೆ. ಸ್ಮಾರ್ಟ್ ಸಿಟಿ ಮಿಷನ್ನ ಅಧಿಕೃತ ವೆಬ್ಸೈಟ್ ಪ್ರಕಾರ ದೇಶಾದ್ಯಂತ ಒಟ್ಟು 5,929 ಯೋಜನೆಗಳಿಗೆ ರೂ. 1,78,492 ಕೋಟಿ ಮೌಲ್ಯದ ಟೆಂಡರ್ ನೀಡಲಾಗಿದ್ದು, ರೂ. 1,46,466 ಕೋಟಿ ಮೌಲ್ಯದ 5,245 ಯೋಜನೆಗಳಿಗೆ ವರ್ಕ್ ಆರ್ಡರ್ ನೀಡಲಾಗಿದೆ ಎನ್ನಲಾಗಿದೆ. ಇದರಲ್ಲಿ ರೂ. 45,264 ಕೋಟಿ ವೆಚ್ಚದ 2,673 ಯೋಜನೆಗಳು ಪೂರ್ಣಗೊಂಡಿವೆ ಎಂದು ದಾಖಲೆಗಳು ಹೇಳುತ್ತವೆ. 2017ರಿಂದ 2023ರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಾನ ಪಾಲಿನಲ್ಲಿ ಅನುದಾನ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದು, ಅಂಕಿ-ಅಂಶಗಳ ಮಟ್ಟದಲ್ಲಿ ಯೋಜನೆ ಮಹತ್ವದ ಸಾಧನೆ ಮಾಡಿದಂತೆ ಕಾಣುತ್ತದೆ. ವಾಸ್ತವದಲ್ಲಿ ಪರಿಸ್ಥಿತಿ ಆಗಿಲ್ಲ. ಕರ್ನಾಟಕದ ನೆಲಮಟ್ಟದ ವಾಸ್ತವ ಸ್ಥಿತಿ ಈ ಅಂಕಿ-ಅಂಶಗಳಿಗೆ ಸಂಪೂರ್ಣ ಭಿನ್ನವಾದ ಚಿತ್ರವನ್ನು ನೀಡುತ್ತದೆ. ರಾಜ್ಯದ ಏಳು ಸ್ಮಾರ್ಟ್ ಸಿಟಿಗಳಿಗೆ ಒಟ್ಟಾರೆ ಸುಮಾರು ರೂ. 7,000 ಕೋಟಿ ವೆಚ್ಚ ನಿರ್ಧರಿಸಲಾಗಿದ್ದು, ಪ್ರತೀ ನಗರಕ್ಕೆ ಐದು ವರ್ಷಗಳಲ್ಲಿ ರೂ. 1,000 ಕೋಟಿ ಅನುದಾನ ನೀಡುವ ಗುರಿ ಇಡಲಾಗಿತ್ತು. ವರದಿಗಳ ಪ್ರಕಾರ ರಾಜ್ಯದ ಈ ಏಳು ನಗರಗಳಲ್ಲಿ ಒಟ್ಟು 889 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸರಕಾರದ ಪ್ರಕಾರ ಇದರಲ್ಲಿ 590 ಕಾಮಗಾರಿಗಳು ಪೂರ್ಣಗೊಂಡಿವೆ ಎನ್ನಲಾಗಿದೆ. ಇದುವರೆಗೆ ರೂ. 5,068 ಕೋಟಿ ವೆಚ್ಚವಾಗಿದ್ದು, ಉಳಿದ 295 ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಅಥವಾ ಪ್ರಗತಿಯಲ್ಲೇ ಇವೆ. ಅಂದರೆ ಸ್ಮಾರ್ಟ್ ಸಿಟಿ ಯೋಜನೆ ಆರಂಭವಾಗಿ ಹೆಚ್ಚು ಕಡಿಮೆ ಹತ್ತು ವರ್ಷ ಕಳೆದರೂ ಒಟ್ಟಾರೆ ಪ್ರಗತಿ ಶೇ.26ರಷ್ಟೇ ಎನ್ನುವುದು ಗ್ರೌಂಡ್ ರಿಪೋರ್ಟ್ಗಳಿಂದ ಸ್ಪಷ್ಟವಾಗುತ್ತದೆ. ಐದು ವರ್ಷದ ಕಾಲಮಿತಿಯ ಯೋಜನೆ ಈಗ ಹತ್ತನೇ ವರ್ಷಕ್ಕೂ ಕಾಲಿಟ್ಟರೂ ಕರ್ನಾಟಕದಲ್ಲಿ ಅರ್ಧದಷ್ಟು ಕಾಮಗಾರಿಗಳು ಪೂರ್ಣಗೊಳ್ಳದಿರುವುದು ಯೋಜನೆಯ ಅನುಷ್ಠಾನದ ಮೇಲಿನ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ ಎನ್ನಬಹುದು. ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದರೂ, ಇಲ್ಲಿನ ಕಾಮಗಾರಿಗಳ ವೇಗ ಮತ್ತು ಗುಣಮಟ್ಟದ ಬಗ್ಗೆ ವ್ಯಾಪಕ ಅಸಮಾಧಾನವಿದೆ. ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಹೇಳುವುದಾದರೆ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ರೂ. 3,000 ಕೋಟಿ ಮೌಲ್ಯದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ತಾಂತ್ರಿಕ ತೊಡಕುಗಳಿಂದ ವಿಳಂಬವಾಗಿದ್ದ ಯೋಜನೆಗೆ ಈಗ ವೇಗ ಸಿಕ್ಕಿದೆ. ರೂ. 1,499 ಕೋಟಿ ಮೌಲ್ಯದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ರೂ. 1,407 ಕೋಟಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿದೆ ಎಂದು ಅಂದಿನ ಸರಕಾರ ಹೇಳಿತ್ತು. ಆದರೂ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇದುವರೆಗೆ 100 ಕೋಟಿ ರೂ. ಮೌಲ್ಯದ ಕಾಮಗಾರಿಯನ್ನೂ ಸರಿಯಾಗಿ ಸಂಪೂರ್ಣಗೊಳಿಸಿಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಅನೇಕ ಯೋಜನೆಗಳು ಡಿಪಿಆರ್ ಮತ್ತು ಟೆಂಡರ್ ಹಂತದಲ್ಲೇ ಅಂಟಿಕೊಂಡಿದ್ದು, ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಾಗುತ್ತಿದೆ ಎಂಬುದು ಮತ್ತೊಂದು ಸಮಸ್ಯೆಯಾಗಿದೆ. ಇತರ ನಗರಗಳಲ್ಲಿಯೂ ಸ್ಥಿತಿ ಬಹುತೇಕ ಒಂದೇ ರೀತಿಯಾಗಿದೆ. ತುಮಕೂರಿನಲ್ಲಿ 35 ವಾರ್ಡ್ಗಳ ಪೈಕಿ ಕೇವಲ ಹತ್ತು ವಾರ್ಡ್ ಗಳಲ್ಲಿ ಮಾತ್ರ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ಹಲವೆಡೆ ಕಳಪೆ ಕಾಮಗಾರಿಯ ಆರೋಪಗಳಿವೆ. ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗಳು ಶಿಥಿಲಾವಸ್ಥೆಗೆ ತಲುಪಿದ್ದು, ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಏಳು ಬಾರಿ ಪ್ರತಿಭಟನೆಗಳು ನಡೆದಿವೆ. ಹುಬ್ಬಳ್ಳಿ-ಧಾರವಾಡದಲ್ಲಿ ರಸ್ತೆ, ಕೆರೆ ಮತ್ತು ಉದ್ಯಾನವನಗಳ ಕಾಮಗಾರಿಗಳ ಗುಣಮಟ್ಟದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎನ್ನುವ ಮಾಹಿತಿ ಇದೆ. ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಮಾಹಿತಿಯಂತೆ 204 ಕಿಲೋಮೀಟರ್ ಮಣ್ಣಿನ ರಸ್ತೆಗಳಿದ್ದು, ಈಗಾಗಲೇ ನಿರ್ಮಿಸಲಾದ ರಸ್ತೆಗಳೂ ಕಳಪೆ ಎನ್ನುವ ಆರೋಪಗಳಿಗೆ ಗುರಿಯಾಗಿವೆ. ಮಂಗಳೂರಿನಲ್ಲಿ ಕೆಲ ವೃತ್ತಗಳು, ರಥಬೀದಿ ಹಾಗೂ ಕ್ಲಾಕ್ ಟವರ್ ಅಭಿವೃದ್ಧಿ ಹೊರತುಪಡಿಸಿ ರಸ್ತೆ, ಉದ್ಯಾನವನ, ಒಳಚರಂಡಿ ಸೇರಿದಂತೆ ಬಹುತೇಕ ಮೂಲಸೌಕರ್ಯ ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ ಎನ್ನಲಾಗಿದೆ. ಬೆಳಗಾವಿಯಲ್ಲಿ ಡಿಜಿಟಲ್ ಲೈಬ್ರರಿ, ಸ್ಮಾರ್ಟ್ ಕ್ಲಾಸ್ಗಳು ಸೇರಿದಂತೆ ಕೆಲ ಯೋಜನೆಗಳು ಜಾರಿಯಾಗಿದ್ದರೂ, ಜನರಿಗೆ ಸ್ಮಾರ್ಟ್ ಸಿಟಿ ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ರಸ್ತೆ, ಒಳಚರಂಡಿ, ಕೆರೆ, ಉದ್ಯಾನವನ, ಪುರಾತನ ಸ್ಥಳಗಳ ಅಭಿವೃದ್ಧಿಗೆ ಭಾರೀ ಅನುದಾನ ಮೀಸಲಿಡಲಾಗಿದ್ದರೂ, ಬಹುತೇಕ ನಗರಗಳಲ್ಲಿ ಈ ಯೋಜನೆ ಕಾಂಕ್ರಿಟೀಕರಣಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಟೀಕೆ ವ್ಯಾಪಕವಾಗಿದೆ. ಹಸಿರೀಕರಣ, ವಾಹನ ಪಾರ್ಕಿಂಗ್, ಸಂಚಾರ ವ್ಯವಸ್ಥೆ ಸುಧಾರಣೆ, ಕುಡಿಯುವ ನೀರು, ಡಿಜಿಟಲ್ ಸೇವೆಗಳು ಮತ್ತು ಪರಿಸರ ಸ್ನೇಹಿ ಕಾಮಗಾರಿಗಳು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿವೆ. ಸಣ್ಣ ಮಳೆಯಲ್ಲೇ ರಸ್ತೆಗಳು ಮತ್ತು ಫುಟ್ಪಾತ್ಗಳು ಹಾಳಾಗುತ್ತಿರುವುದು ‘ಸ್ಮಾರ್ಟ್’ ಅಭಿವೃದ್ಧಿಯ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ. ಹುಬ್ಬಳ್ಳಿಯಲ್ಲಿ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ರೂ. 4.50 ಕೋಟಿ ವೆಚ್ಚದಲ್ಲಿ ಪುನಾರಂಭಿಸಿದ ಪುಟಾಣಿ ರೈಲು ವ್ಯವಸ್ಥೆ ಉದ್ಘಾಟನೆ ದಿನವೇ ಬಣ್ಣ ಕಳಚಿದ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. 100 ಅಡಿ ರಸ್ತೆಯ ಡಾಂಬರು ಕೇವಲ ಒಂದು ವರ್ಷದಲ್ಲೇ ಕಿತ್ತುಬಂದಿರುವ ಉದಾಹರಣೆಗಳು ‘ಸ್ಮಾರ್ಟ್ ಭ್ರಷ್ಟಾಚಾರ’ ಎಂಬ ಪದವನ್ನು ಜನಸಾಮಾನ್ಯರ ನಡುವೆ ಹರಡಿವೆ ಎನ್ನಬಹುದು. ಸಾರ್ವಜನಿಕರ ಅಭಿಪ್ರಾಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ಪ್ರತ್ಯೇಕ ಕಟ್ಟಡಗಳು, ಸಿಬ್ಬಂದಿ ನಿಯೋಜನೆ ಮತ್ತು ರಿಯಲ್ ಎಸ್ಟೇಟ್ ಬೆಳವಣಿಗೆಗೆ ದಾರಿ ಮಾಡಿಕೊಡಲಾಗಿದೆ. ಸಹಜವಾಗಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೊಸ ಹೆಸರಿಟ್ಟು ಹೆಚ್ಚಿನ ಹಣ ವ್ಯಯಿಸಲಾಗುತ್ತಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಅಲ್ಲಲ್ಲಿ ಕೇಳಿಬರುತ್ತಿದೆ. ಕಾಮಗಾರಿಗಳಿಂದ ನಿತ್ಯ ಸಂಚಾರಕ್ಕೆ ಉಂಟಾಗುತ್ತಿರುವ ತೊಂದರೆ, ಅವೈಜ್ಞಾನಿಕ ಯೋಜನೆಗಳು ಮತ್ತು ಅತಿಯಾದ ವಿಳಂಬದಿಂದ ಜನಸಾಮಾನ್ಯರಲ್ಲಿ ಅಸಮಾಧಾನ ಹೆಚ್ಚಾಗಿದೆ. ಈ ಎಲ್ಲ ಟೀಕೆಗಳ ನಡುವೆಯೇ ಸರಕಾರವು ರಾಜ್ಯದ 275 ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುವಂತೆ ಏಕರೂಪದ ಕಟ್ಟಡ ಬೈಲಾ ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದು, ಪರಿಸರ ಸ್ನೇಹಿ ನಿರ್ಮಾಣ, ಅಗ್ನಿ ಸುರಕ್ಷತೆ, ಎತ್ತರದ ಕಟ್ಟಡಗಳಿಗೆ ಮಾನದಂಡ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಸೇರಿದಂತೆ ಹಲವು ಅಂಶಗಳನ್ನು ಹೊಸ ಬೈಲಾದಲ್ಲಿ ಸೇರಿಸಲಾಗಿದೆ ಎನ್ನುವ ಹೇಳಿಕೆ ನೀಡಿತ್ತು. ಸ್ಮಾರ್ಟ್ ಸಿಟಿ ಯೋಜನೆಯ ಬಾಕಿ ಕಾಮಗಾರಿಗಳನ್ನು ಕರ್ನಾಟಕದಲ್ಲಿ 2023ರ ಜೂನ್ ಒಳಗೆ ಪೂರ್ಣಗೊಳಿಸುವ ಗುರಿ ಇಡಲಾಗಿದೆ ಎಂದು ಸರಕಾರ ಹೇಳಿತ್ತು. ಆದರೆ ಅದು ಜಾರಿಗೆ ಬಂದಿಲ್ಲ. ಒಟ್ಟಾರೆ ಸ್ಮಾರ್ಟ್ ಸಿಟಿ ಮಿಷನ್ ಒಂದು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಯೋಜನೆಯಾಗಿದ್ದರೂ, ಕರ್ನಾಟಕದಲ್ಲಿ ಅದರ ಅನುಷ್ಠಾನವು ಘೋಷಣೆ ಮತ್ತು ವಾಸ್ತವದ ನಡುವಿನ ಅಂತರವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಅಂಕಿ-ಅಂಶಗಳಲ್ಲಿ ಸ್ಮಾರ್ಟ್ ಆಗಿರುವ ನಗರಗಳು ನಾಗರಿಕರ ದಿನನಿತ್ಯದ ಬದುಕಿನಲ್ಲಿ ಎಷ್ಟು ಸುಧಾರಣೆ ತಂದಿವೆ ಎಂಬ ಪ್ರಶ್ನೆಗೆ ಇನ್ನೂ ತೃಪ್ತಿಕರ ಉತ್ತರ ಸಿಕ್ಕಿಲ್ಲ. ‘ಸ್ಮಾರ್ಟ್’ ಎಂಬ ಪದ ಕೇವಲ ಕಾಗದದ ಮೇಲೆ ಉಳಿಯದೆ, ಜನರ ಅನುಭವದಲ್ಲಿ ಕಾಣಿಸಿಕೊಳ್ಳಬೇಕೆಂದರೆ ಯೋಜನೆಯ ದಿಕ್ಕು, ಕಾರ್ಯವೈಖರಿ, ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಸರಕಾರ ಗಂಭೀರವಾಗಿ ಮರುಪರಿಶೀಲಿಸಬೇಕಾದ ಅಗತ್ಯ ಈಗ ಅನಿವಾರ್ಯವಾಗಿದೆ.
BELTHANGADY | ಕೆರೆಯಲ್ಲಿ ಬಾಲಕನ ಮೃತದೇಹ ಪತ್ತೆ ಪ್ರಕರಣ: ಸುಮಂತ್ ತಲೆಗೆ 3 ಪೆಟ್ಟು ಬಿದ್ದಿರುವುದು ಪತ್ತೆ ?
ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ಚುರುಕು
ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು (53) ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನ ಜೊತೆಗೆ ಸಮಾಜಮುಖಿ ಸೇವೆ ಸಲ್ಲಿಸಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಆರ್. ಅಶೋಕ್ ಸೇರಿದಂತೆ ಗಣ್ಯರು, ಮಠಾಧೀಶರು ಸಂತಾಪ ಸೂಚಿಸಿದ್ದಾರೆ. ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
Gold Rate Jan 15: ಸಂಕ್ರಾಂತಿ ಸಂಭ್ರಮ - ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ಬೆಲೆ ಭರ್ಜರಿ ಹೆಚ್ಚಳ
ಸಂಕ್ರಾಂತಿಯ ಸಂಭ್ರಮದ ಬೆನ್ನಲ್ಲೇ ಚಿನ್ನ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ಚಿನ್ನದ 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಭಾರೀ ಹೆಚ್ಚಳವಾಗಿದೆ. ಚಿನ್ನದ ಬೆಲೆಯು ಕಳೆದ ಒಂದು ವಾರದಿಂದಲೂ ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಆದರೆ ಇದೀಗ ಸಂಕ್ರಾಂತಿ ಸಂಭ್ರಮದ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು
ಪ್ರತಿಭಟನೆ ಮುಂದುವರಿದ ಹಿನ್ನೆಲೆ ವಾಯುಪ್ರದೇಶವನ್ನು ಮುಚ್ಚಿದ ಇರಾನ್
“ಪ್ರಯಾಣ ವಿಳಂಬಕ್ಕೆ ಕಾರಣವಾಗಬಹುದು”: ಪ್ರಯಾಣಿಕರಿಗೆ ಏರ್ ಇಂಡಿಯಾ, ಇಂಡಿಗೋ ಸಲಹೆ
ಅಕ್ರಮವಾಸಿಗಳೆಂದು ಅನುಮಾನಿಸಿ ದಾಳಿ ನಡೆಸಿದರೆ ಕಾನೂನು: ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ
'ಅಕ್ರಮವಾಗಿ ವಾಸಿಸುವರ ವಿರುದ್ಧವೂ ಕಾನೂನು ಕ್ರಮ'
ಫೆಬ್ರವರಿ ಮೊದಲ ವಾರದಲ್ಲಿ ಅಧಿಕಾರಾವಧಿ ಅಂತ್ಯ
ಕೊಡಗಿನ 101 ಗ್ರಾಪಂಗಳಿಗೆ ನಡೆಯಬೇಕಿದೆ ಚುನಾವಣೆ
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಶಿಕ್ಷಣ, ವಸತಿ, ಕೃಷಿ ಹಾಗೂ ಸ್ವಯಂ ಉದ್ಯಮಗಳಿಗೆ ಉತ್ತೇಜನ ನೀಡುವ ಈ ಯೋಜನೆಗಳು, ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಬಜೆಟ್ ಹಂಚಿಕೆಯನ್ನು ಕಡ್ಡಾಯಗೊಳಿಸಿವೆ. 2025ರ ಒಳ ಮೀಸಲಾತಿ ಮಸೂದೆ ಜಾರಿಗೆ ಬರಲಿದ್ದು, ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ರಷ್ಯಾ-ಉಕರೇನ್ ನಡುವಿನ 4ವರ್ಷಗಳ ಸುಧೀರ್ಘ ಯುದ್ದವನ್ನು ಕೊನೆಗೊಳಿಸಲು ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಉಕ್ರೇನ್ ಶಾಂತಿ ಒಪ್ಪಂದ ಮಾತುಕತೆಗಳು ಇನ್ನೂ ಯಾವುದೇ ನಿರ್ಣಾಯಕ ಘಟ್ಟ ತಲುಪದೆ ಸ್ಥಗಿತಗೊಂಡಿದ್ದು, ಈ ಬೆನ್ನಲ್ಲೆ, ಅಮೆರಿಕಾ ಅಧ್ಯಕ್ಷ ಟ್ರಂಪ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಅಧ್ಯಕ್ಷ ಪುಟಿನ್ ಸಿದ್ಧರಿದ್ದಾರೆ. ಆದರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಶಾಂತಿ ಒಪ್ಪಂದಕ್ಕೆ ಹಿಂಜರಿಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ಝೆಲೆನ್ಸ್ಕಿ ನಿರ್ಧಾರಕ್ಕೆ ಬರಲು ಕಷ್ಟಪಡುತ್ತಿರಬಹುದು ಎಂದು ಟ್ರಂಪ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಇಂಧನ ವಲಯಕ್ಕೆ ಈ ಬಾರಿ ಬಂಪರ್ ಅನುದಾನದ ನಿರೀಕ್ಷೆ; ಷೇರುಗಳ ಮೇಲೆ ಹೂಡಿಕೆದಾರರ ಕಣ್ಣು!
ಮುಂಬರುವ ಕೇಂದ್ರ ಬಜೆಟ್ನಲ್ಲಿ ಇಂಧನ ವಲಯವು ಕ್ರಾಂತಿಕಾರಿ ಬದಲಾವಣೆಗಳಿಗಿಂತ, ಸ್ಥಿರತೆ ಮತ್ತು ದೀರ್ಘಾವಧಿಯ ಸುಧಾರಣೆಗಳನ್ನು ನಿರೀಕ್ಷಿಸುತ್ತಿದೆ. 'ಪಿಎಂ ಸೂರ್ಯ ಘರ್' ಸೋಲಾರ್ ಯೋಜನೆ, ಹಸಿರು ಇಂಧನ ಕಾರಿಡಾರ್ ಮತ್ತು ಬ್ಯಾಟರಿ ಸಂಗ್ರಹಣಾ ವ್ಯವಸ್ಥೆಗಳಿಗೆ ಹೆಚ್ಚಿನ ಉತ್ತೇಜನ ಸಿಗುವ ಸಾಧ್ಯತೆಯಿದೆ. ಉದ್ಯಮ ವಲಯವು ತೆರಿಗೆ ಸುಧಾರಣೆ ಮತ್ತು ಜಿಎಸ್ಟಿ ಕಡಿತಕ್ಕೆ ಬೇಡಿಕೆ ಇಟ್ಟಿದೆ. ವಿದ್ಯುತ್ ವಲಯಕ್ಕೆ ಸುಮಾರು 45,000-60,000 ಕೋಟಿ ರೂ. ಅನುದಾನ ಹಂಚಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ತಕ್ಷಣದ ಏರಿಕೆ ಕಂಡುಬರದಿದ್ದರೂ, ಆರ್ಇಸಿ, ಪಿಎಫ್ಸಿ ಮತ್ತು ಗ್ರೀನ್ ಎನರ್ಜಿ ಕಂಪನಿಗಳಿಗೆ ಇದು ದೀರ್ಘಾವಧಿಯಲ್ಲಿ ಲಾಭದಾಯಕವಾಗಲಿದೆ.
ಪಾಕಿಸ್ತಾನ ಸೇರಿದಂತೆ 75 ದೇಶಗಳಿಗೆ ಅಮೆರಿಕದ ವಲಸೆ ವೀಸಾ ಪ್ರಕ್ರಿಯೆ ಸ್ಥಗಿತ
ಅಮೆರಿಕದ ಸೌಲಭ್ಯಗಳನ್ನು ಪಡೆಯುವುದನ್ನು ನಿಯಂತ್ರಿಸಲು, ದೇಶವು 75 ದೇಶಗಳ ನಾಗರಿಕರಿಗೆ ವೀಸಾ ವಿತರಣೆ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲು ಟ್ರಂಪ್ ಸರಕಾರ ನಿರ್ಧರಿಸಿದೆ. ಇದರಿಂದ ವಿವಿಧ ಕಾರಣಗಳಿಗಾಗಿ ಅಮೆರಿಕಕ್ಕೆ ಹೋಗಲು ಬಯಸಿದ್ದ ವಿವಿಧ ದೇಶಗಳ ಸಾವಿರಾರು ನಾಗರಿಕರು ಸಂಷಕ್ಟಕ್ಕೆ ಸಿಲುಕಲಿದ್ದಾರೆ.
RAICHURU | ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ನಿಧನ
ರಾಯಚೂರು: ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (55) ಗುರುವಾರ ಮುಂಜಾನೆ ಹೃದಯಘಾತದಿಂದಾಗಿ ನಿಧನರಾಗಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ವಾಮೀಜಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಲಿಂಗಸೂಗೂರು ಆಸ್ಪತ್ರೆಗೆ ದಾಖಲು ಮಾಡಲಾಗಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ತಿಂಥಣಿಯ ಕನಕ ಗುರು ಪೀಠದಲ್ಲೇ ಹಾಲುಮತದ ಪದ್ಧತಿಯಂತೆ ಸ್ವಾಮೀಜಿಯ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಚಿನ್ನದ ದರದಲ್ಲಿ ಇಂದು ದಿಢೀರ್ ಇಳಿಕೆಯಾಗಿದೆ. ಆದರೆ ಇದು ತಾತ್ಕಾಲಿಕ ಬೆಳವಣಿಗೆಯಾಗಿದ್ದು, ಜಾಗತಿಕವಾಗಿ ಕೆಲವು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹಿನ್ನೆಲೆ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಬೆಳ್ಳಿ ಬೆಲೆ ಮಾತ್ರ 3 ಲಕ್ಷದ ಗಡಿಗೆ ತಲುಪಿದೆ.
Maharashtra| ಬಿಎಂಸಿ ಸೇರಿ 29 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿರುಸಿನ ಮತದಾನ
ಮುಂಬೈ: ಮಹಾರಾಷ್ಟ್ರದಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಸೇರಿ ಒಟ್ಟು 29 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿರುಸಿನ ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ 893 ವಾರ್ಡ್ಗಳ ಒಟ್ಟು 2,869 ಸ್ಥಾನಗಳಿಗೆ ಬೆಳಿಗ್ಗೆ 7.30ರಿಂದ ಮತದಾನ ನಡೆಯುತ್ತಿದೆ. ಈ ಬಹುತೇಕ ಮಹಾನಗರ ಪಾಲಿಕೆಗಳ ಅವಧಿ 2020 ರಿಂದ 2023ರ ನಡುವೆ ಕೊನೆಗೊಂಡಿತ್ತು. 74,400 ಕೋಟಿಗಿಂತ ಹೆಚ್ಚಿನ ವಾರ್ಷಿಕ ಬಜೆಟ್ ಹೊಂದಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ದೇಶದ ಶ್ರೀಮಂತ ಮಹಾನಗರ ಪಾಲಿಕೆಯಾಗಿದೆ. 2022ರಲ್ಲಿ ಶಿವಸೇನೆ ವಿಭಜನೆಯಾದ ನಂತರ ನಡೆಯುತ್ತಿರುವ ಮೊದಲ ಬಿಎಂಸಿ ಚುನಾವಣೆ ಇದಾಗಿದೆ. ಚುನಾವಣೆಗೆ ಮುನ್ನ ನಡೆದ ಮಹತ್ವದ ರಾಜಕೀಯ ತಿರುವುಗಳಲ್ಲಿ, ಶಿವಸೇನೆ (ಯುಬಿಟಿ) ಮತ್ತು ಎಂಎನ್ಎಸ್ ಮುಖ್ಯಸ್ಥರಾಗಿರುವ ಉದ್ಧವ್ ಮತ್ತು ರಾಜ್ ಠಾಕ್ರೆ ಎರಡು ದಶಕಗಳ ನಂತರ ಒಂದಾಗಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ನ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯ ಹಿನ್ನೆಲೆ ಮುಂಬೈನಾದ್ಯಂತ 25,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತನ್ನದೇ ಜನರನ್ನು ಕೊಲ್ಲಲ್ಲು ಖಮೇನಿ ಭೀಕರ ಪ್ಲಾನ್; ಯಾತ್ರಿಕರ ಸೋಗಿನಲ್ಲಿ ಇರಾನ್ಗೆ ಬಂತು ಶಿಯಾ ಮಿಲಿಟರಿ ಪಡೆ
ಇರಾನ್ನಲ್ಲಿ ಪ್ರತಿಭಟನೆ ಉದ್ವಗ್ನತೆಗೆ ತಿರುಗಿದೆ. ಇಲ್ಲಿನ ಸ್ಥಳೀಯ ಭದ್ರತಾ ಪಡೆಗಳು ತನ್ನದೇ ಜನರ ಮೇಲೆ ಗುಂಡಿಕ್ಕಿ ಕೊಲ್ಲಲ್ಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಅರಬ್ ಭಾಷಿಕ ಇರಾಕಿ ಶಿಯಾ ಮಿಲಿಟರಿ ಪಡೆಯನ್ನು ಯಾತ್ರಿಕರ ಸೋಗಿನಲ್ಲಿ ಕರೆಸಿಕೊಳ್ಳಲಾಗಿದ್ದು, ಜನರ ಪ್ರತಿಭಟನಾಕಾರರ ಹತ್ಯೆಗೆ ಸಂಚು ರೂಪಿಸಲಾಗಿದೆ. ಅಯತೊಲ್ಲಾ ಖಮೇನಿ ಆಡಳಿತದ ವಿರುದ್ಧ ಭುಗಿಲೆದ್ದಿರುವ ಬೃಹತ್ ಜನಪರ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಸರ್ಕಾರ ಅತ್ಯಂತ ಅಪಾಯಕಾರಿ ಹಾದಿ ಹಿಡಿದಿದೆ ಎನ್ನಲಾಗುತ್ತಿದೆ.
10 ನಿಮಿಷ ಡೆಲಿವರಿ ಭೂತಕ್ಕೆ ಬ್ರೇಕ್: ಹೊಸ ಆತಂಕದಲ್ಲಿ ಗಿಗ್ ಕಾರ್ಮಿಕರು
ಹತ್ತೇ ನಿಮಿಷದಲ್ಲಿ ಡೆಲಿವರಿ ಎನ್ನುವ ಭೂತಕ್ಕೆ ಬ್ರೇಕ್ ಬಿದ್ದಿದ್ದು. ಸ್ವಿಗ್ಗಿ, ಜೆಪ್ಟೋ ಹಾಗೂ ಬ್ಲಿಂಕಿಟ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರು ಇದೀಗ ನಿರಾಳರಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅವರಿಗೆ ಹೊಸದೊಂದು ಆತಂಕ ಶುರುವಾಗಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದಾಗಿ ಗಿಗ್ಕಾರ್ಮಿಕರು ತುಸು ನಿಟ್ಟುಸಿರುವ ಬಿಡುವಂತೆ ಆಗಿದೆ. ಆದರೆ ಇದೇ ಸಂದರ್ಭದಲ್ಲಿ ಅವರಿಗೆ ಉದ್ಯೋಗದಲ್ಲಿ ಮತ್ತೊಂದು
KOLARA | ಪ್ರಿಯಕರನಿಂದ ಯುವತಿಯ ಬರ್ಬರ ಹತ್ಯೆ
ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ನ್ಯಾಮತಿ: ಆಕಸ್ಮಿಕ ಬೆಂಕಿಗೆ 14 ಎಕರೆ ಅಡಕೆ ತೋಟ ಭಸ್ಮ
ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ರೈತರ ಅಡಕೆ ತೋಟಗಳಿಗೆ ಬೆಂಕಿ ಬಿದ್ದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಕೆ ಮರಗಳು, ತೇಗದ ಮರಗಳು, ಡ್ರಿಪ್ ಪೈಪ್ಗಳು ಸುಟ್ಟು ಹೋಗಿವೆ. ಧರ್ಮಿಬಾಯಿ ರಾಮನಾಯ್ಕರ, ರಾಮನಾಯ್ಕ ಪೀರಾರಯನಾಯ್ಕರ, ಹಾಲಿಬಾಯಿ ರಾಜೇಶನಾಯ್ಕರ, ಗೋಪಾಲನಾಯ್ಕ ಶೇಖರನಾಯ್ಕರ ಅವರ ತೋಟಗಳು ಹಾನಿಗೊಳಗಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ಹೆಚ್ಚಿನ ಹಾನಿ ತಪ್ಪಿದೆ.
Kodi Mutt Predictions 2025 : ಕಳೆದ ಸಂಕ್ರಾಂತಿಯಂದು ಶ್ರೀಗಳು ನುಡಿದಿದ್ದ ಭವಿಷ್ಯವೇನು - ಆಗಿದ್ದೇನು?
Sankranthi 2025 Kodi Mutt Prediction : ಕಳೆದ ವರ್ಷದ ಸಂಕ್ರಾಂತಿಯ ಆಸುಪಾಸಿನಲ್ಲಿ ಕೋಡಿಮಠದ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದರು. ಈಗ, ಮತ್ತೆ ಸಂಕ್ರಾಂತಿ ಹಬ್ಬ ಬಂದಿದೆ. ಕಳೆದ ವರ್ಷ ಶ್ರೀಗಳು ನುಡಿದಿದ್ದ ಭವಿಷ್ಯದಲ್ಲಿ ನಿಜವಾಗಿದ್ದು ಯಾವುದು, ನಿಜವಾಗದೇ ಇದ್ದದ್ದು ಯಾವುದು? ಇದರ ಚರ್ಚೆ ನಡೆಯುತ್ತಿದೆ.
ಸೆಗಣಿ, ಗೋಮೂತ್ರದ ಮಧ್ಯೆ ಭಾರತದ ಶಿಕ್ಷಣ ವ್ಯವಸ್ಥೆ
ಈ ದೇಶದಲ್ಲಿ ದಲಿತರು ದೇವಸ್ಥಾನ ಪ್ರವೇಶ ಮಾಡುತ್ತಾರೆ ಎಂಬ ಆತಂಕದಿಂದ ವರ್ಷಗಟ್ಟಲೆ ದೇವಸ್ಥಾನಗಳಿಗೇ ಬೀಗ ಹಾಕಿದ ಉದಾಹರಣೆಗಳಿವೆ. ಶಾಲೆ ಕಾಲೇಜುಗಳಲ್ಲಿ ದಲಿತರು, ದುರ್ಬಲ ವರ್ಗದ ಜನರು ಕಾಲಿಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಹಂತಹಂತವಾಗಿ ಸರಕಾರಿ ಶಾಲೆಗಳನ್ನೇ ಮುಚ್ಚಿಸುವ ಸಂಚುಗಳು ನಡೆಯುತ್ತಿವೆ. ಸರಕಾರಿ ಶಾಲೆಗಳು ದುರ್ಬಲ, ಕೆಳಜಾತಿಯ ಜನರ ಶಿಕ್ಷಣದ ಹಕ್ಕುಗಳನ್ನು ಪೂರೈಸುತ್ತಿರುವುದು ಹಲವರಿಗೆ ಸಹಿಸುವ ವಿಷಯವಲ್ಲ. ಇದೇ ಕಾರಣಕ್ಕೆ ದಲಿತರ, ಅಲ್ಪಸಂಖ್ಯಾತರ ಸ್ಕಾಲರ್ಶಿಪ್ಗಳಿಗೂ ಸರಕಾರ ಹಂತಹಂತವಾಗಿ ಕತ್ತರಿ ಹಾಕುತ್ತಾ ಬರುತ್ತಿದೆ. ಒಂದು ಕಾಲದಲ್ಲಿ, ಮುಸ್ಲಿಮರು ವಿದ್ಯಾವಂತರಾಗಬೇಕು, ಮುಖ್ಯವಾಹಿನಿಗೆ ಬರಬೇಕು ಎನ್ನುವ ಕೂಗು ಪ್ರಗತಿಪರ ವಲಯದಿಂದ ಕೇಳಿ ಬರುತ್ತಿತ್ತು. ನರೇಂದ್ರ ಮೋದಿಯವರೇ ಒಮ್ಮೆ ಜೋರ್ಡಾನ್ ದೊರೆ ಅತಿಥಿಯಾಗಿ ಭಾಗವಹಿಸಿದ ಸಮಾವೇಶವೊಂದರಲ್ಲಿ ‘ಮುಸ್ಲಿಮರು ಒಂದು ಕೈಯಲ್ಲಿ ಕುರ್ಆನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ನ್ನು ಹೊಂದಿರಬೇಕು’ ಎಂದು ಕರೆ ನೀಡಿದ್ದರು. ಇದೀಗ ನೋಡಿದರೆ, ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾವಂತರಾಗುವುದನ್ನು, ಕಾಲೇಜುಗಳಿಗೆ ಅಡಿಯಿಡುವುದನ್ನು ಗಮನಿಸಿ ಶಾಲಾ ಕಾಲೇಜುಗಳನ್ನೇ ಮುಚ್ಚಿ ಸುವಂತಹ ಕೃತ್ಯಗಳಿಗೆ ಸರಕಾರವೇ ಮುಂದಾಗುತ್ತಿದೆ. ಮಹಿಳೆಯರು ವಿದ್ಯಾವಂತರಾಗಬೇಕು, ಮುಸ್ಲಿಮ್ ತರುಣಿಯರು ಶಿಕ್ಷಣ ಪಡೆಯಬೇಕು ಎಂದು ಘೋಷಿಸಿದ ಸರಕಾರವೇ, ಬಳಿಕ ಹಿಜಾಬ್ನ ನೆಪ ಮುಂದಿಟ್ಟು ಆಕೆಯನ್ನು ಶಾಲೆ ಪ್ರವೇಶಿಸದಂತೆ ತಡೆಯಿತು. ಮುಸ್ಲಿಮ್ ವಿದ್ಯಾರ್ಥಿನಿಯರು ಶಾಲೆ ಕಾಲೇಜುಗಳಲ್ಲಿ ಸಾಧಿಸುತ್ತಿರುವ ಸಾಧನೆಗಳನ್ನು ನೋಡಿದ ಸಂಘಪರಿವಾರ ಮತ್ತು ಸರಕಾರ ಜಂಟಿಯಾಗಿ ‘ಹಿಜಾಬ್ ವಿವಾದ’ವನ್ನು ಪ್ರಾಯೋಜಿಸಿತು. ಬಟ್ಟೆಯನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿನಿಯರಿಗೆ ಬಹಿಷ್ಕಾರವನ್ನು ಹಾಕಿತು. ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳು ಅತ್ಯುನ್ನತ ಶಿಕ್ಷಣ ಪಡೆದು ಯುಪಿಎಸ್ಸಿಯಲ್ಲಿ ಅತಿ ಹೆಚ್ಚು ಮಂದಿ ಉತ್ತೀರ್ಣಗೊಂಡಾಗ ಅದಕ್ಕಾಗಿ ಸಂತೋಷ ಪಡದೆ, ‘ಯುಪಿಎಸ್ಸಿ ಜಿಹಾದ್’ ಎಂದು ಸಂಘಪರಿವಾರ ಮೈಪರಚಿಕೊಳ್ಳತೊಡಗಿತು. ‘ಎದೆ ಸೀಳಿದರೆ ನಾಲ್ಕು ಅಕ್ಷರವಿಲ್ಲ’ ‘ಪಂಕ್ಚರ್ ಹಾಕುವವರು’ ಎಂದು ಸಾರ್ವಜನಿಕವಾಗಿ ನಿಂದನೆಗೊಳಗಾದ ಸಮುದಾಯ ಅಕ್ಷರ ಕಲಿತಾಕ್ಷಣ, ಅದನ್ನೇ ‘ಅಪರಾಧ’ವಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದರೂ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಯುಪಿಎಸ್ಸಿಯಂತಹ ಪರೀಕ್ಷೆಯಲ್ಲಿ ದುರ್ಬಲ ಸಮುದಾಯ ಸಾಧನೆ ಹೆಮ್ಮೆಯ ವಿಷಯವಾಗಬೇಕು. ಆದರೆ ಅದಕ್ಕಾಗಿ ಅಸೂಯೆ ಪಡುತ್ತಾ ಮುಸ್ಲಿಮರಿಗೆ ಶಿಕ್ಷಣವನ್ನೇ ನಿರಾಕರಿಸುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ದಕ್ಷಿಣ ಭಾರತದ ರಾಜ್ಯದಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಿಗಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಜಮ್ಮುವಿನಲ್ಲಿ ಶ್ರೀಮಾತಾ ವೈಷೋದೇವಿ ನಾರಾಯಣ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾನ್ಯತೆಯನ್ನು ನೆಪಗಳನ್ನು ತೆಗೆದು ರದ್ದುಗೊಳಿಸಿದಾಗ ಅದನ್ನು ಸಂಘಪರಿವಾರ ಕಾರ್ಯಕರ್ತರು ಸಂಭ್ರಮಿಸಿ ಸ್ವಾಗತಿಸಿದರು. ಸಾರ್ವಜನಿಕವಾಗಿ ಸಿಹಿ ಹಂಚಿದರು. 2016ರಲ್ಲಿ ಈ ಆಸ್ಪತ್ರೆ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಜಮ್ಮು ಮತ್ತು ಕಾಶ್ಮೀರದ ಯುವ ಸಮುದಾಯಕ್ಕೆ ಶಿಕ್ಷಣದ ಹೆಬ್ಬಾಗಿಲು ತೆರೆಯಿತು ಎಂಬರ್ಥದಲ್ಲಿ ಮಾತನಾಡಿದ್ದರು. ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಪ್ರಶಂಸಿಸುತ್ತಾ ಅದನ್ನು ಕೇಂದ್ರ ಸರಕಾರದ ಸಾಧನೆಯೆಂಬಂತೆ ಕೊಚ್ಚಿಕೊಂಡಿದ್ದರು. ಆದರೆ ಇತ್ತೀಚೆಗೆ ಏಕಾಏಕಿ ಕಾಲೇಜಿನ ಅನುಮತಿಯನ್ನು ನಿರಾಕರಿಸಲಾಯಿತು. ಕಾರಣವಿಷ್ಟೆ. ಕಳೆದ ಬಾರಿಯ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾಲೇಜಿನಲ್ಲಿ ಪ್ರವೇಶ ಪಡೆದ 50 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಅಲ್ಪಸಂಖ್ಯಾತರು ಅಥವಾ ಮುಸ್ಲಿಮರು. ಇದು ಜಮ್ಮುವಿನ ಸಂಘಪರಿವಾರದ ಕೆಂಗಣ್ಣಿಗೆ ಕಾರಣವಾಯಿತು. ನೀಟ್ ಪರೀಕ್ಷೆಯೆನ್ನುವುದು ಧರ್ಮಾಧಾರಿತವಲ್ಲ. ಅದು ಅರ್ಹತೆಯನ್ನು ಆಧರಿಸಿಕೊಂಡಿದೆ. ದೇಶಾದ್ಯಂತ ನೀಟ್ ಪರೀಕ್ಷೆಯ ಮೂಲಕವೇ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತದೆ. ಹೀಗಿದ್ದರೂ, 44 ಅರ್ಹ ಮುಸ್ಲಿಮ್ ವಿದ್ಯಾರ್ಥಿಗಳ ಕಾಲೇಜು ಸೇರ್ಪಡೆಯನ್ನು ಸ್ಥಳೀಯ ಸಂಘಪರಿವಾರ ವಿರೋಧಿಸಿತು. ಹಾಗಾದರೆ ಸಂಘಪರಿವಾರ ಏನನ್ನು ನಿರೀಕ್ಷಿಸುತ್ತದೆ? ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಹೊರಗಿಟ್ಟು ಕಳಪೆ ಸಾಧನೆ ಮಾಡಿದವರನ್ನು ವೈದ್ಯಕೀಯ ಕಾಲೇಜಿಗೆ ಸೇರ್ಪಡೆ ಮಾಡಬೇಕೆ? ಸರಕಾರಕ್ಕೆ ಈ ಪ್ರತಿಭಟನೆ ನುಂಗಲಾರದ ತುತ್ತಾಯಿತು. ಅಂತಿಮವಾಗಿ ಸೂಕ್ತ ಸಿಬ್ಬಂದಿಯಿಲ್ಲ ಎಂಬ ನೆಪವನ್ನು ಮುಂದಿಟ್ಟುಕೊಂಡು ವೈದ್ಯಕೀಯ ಕೋರ್ಸ್ನ್ನೇ ರದ್ದುಗೊಳಿಸಿತು. ದ್ವೇಷ ಗೆದ್ದಿತು, ಶಿಕ್ಷಣ ಸೋತಿತು. ಅಲ್ಲಿ ಅವಕಾಶ ಪಡೆದ 44 ಮುಸ್ಲಿಮ್ ವಿದ್ಯಾರ್ಥಿಗಳ ಜೊತೆಗೆ ಇತರ ಹಿಂದೂ ಮತ್ತು ಸಿಖ್ ವಿದ್ಯಾರ್ಥಿಗಳೂ ಆ ಕಾಲೇಜಿನಲ್ಲಿ ಕಲಿಯುವ ಅವಕಾಶದಿಂದ ವಂಚಿತರಾದರು. ‘ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ. ಅದು ದಕ್ಷಿಣ ಭಾರತೀಯರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದೆ’ ಎಂಬ ದಕ್ಷಿಣ ರಾಜ್ಯಗಳ ಆಗ್ರಹವನ್ನು ಈ ಮೂಲಕ ಕೇಂದ್ರ ಸರಕಾರವೇ ಸಮರ್ಥಿಸಿದಂತಾಗಿದೆ. ಧರ್ಮದ ಹೆಸರು ಹೇಳಿ ನೀಟ್ ಪರೀಕ್ಷೆಯ ಅರ್ಹ ವಿದ್ಯಾರ್ಥಿಗಳನ್ನು ವೈದ್ಯಕೀಯ ಕಾಲೇಜಿನಿಂದ ಹೊರಗಿಡಬಹುದಾದರೆ, ಪ್ರಾದೇಶಿಕತೆಯ ಹೆಸರಿನಲ್ಲಿ ನೀಟ್ನ್ನು ಯಾಕೆ ತಿರಸ್ಕರಿಸಬಾರದು? ಎನ್ನುವ ಪ್ರಶ್ನೆಗೆ ಬಲ ಬಂದಿದೆ. ಒಂದೆಡೆ ವೈದ್ಯಕೀಯ ಕಾಲೇಜುಗಳನ್ನು ಮುಚ್ಚಿಸುತ್ತಾ ಇನ್ನೊಂದೆಡೆ ಸೆಗಣಿಯಿಂದ, ಪಂಚಗವ್ಯದಿಂದ ಕ್ಯಾನ್ಸರ್ಗಳಿಗೆ ಔಷಧಿ ಹುಡುಕಲು ಸರಕಾರ ಕೋಟಿ ಗಟ್ಟಲೆ ಹಣ ಸುರಿಯುವ ಮೂಲಕ ಸುದ್ದಿಯಲ್ಲಿದೆ. ನಾನಾಜಿ ದೇಶ್ಮುಖ್ ಪಶುವೈದ್ಯಕೀಯ ವಿಜ್ಞಾನ ವಿವಿಯಲ್ಲಿ ಹಸುವಿನ ಸೆಗಣಿ, ಮೂತ್ರ ಬಳಸಿ ಕ್ಯಾನ್ಸರ್ಗೆ ಔಷಧಿ ಹುಡುಕಲು ಮೂರೂವರೆ ಕೋಟಿ ರೂಪಾಯಿ ವ್ಯಯ ಮಾಡಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದೀಗ ಮಂಜೂರಾದ ಹಣದಲ್ಲಿ 2 ಕೋಟಿ ರೂಪಾಯಿ ಅವ್ಯವಹಾರವಾಗಿರುವುದು ಬಹಿರಂಗವಾಗಿದೆ. ಇದೇ ಸಂದರ್ಭದಲ್ಲಿ ವಿಶ್ವದ ಟಾಪ್ 100 ರ್ಯಾಂಕಿಂಗ್ ಪಟ್ಟಿಯಲ್ಲಿ ಈ ಬಾರಿಯೂ ಭಾರತದ ವಿಶ್ವವಿದ್ಯಾನಿಲಯಗಳ ಹೆಸರಿಲ್ಲ. ಭಾರತದ ವಿಶ್ವವಿದ್ಯಾನಿಲಯಗಳು ಇಂದು ಮೌಢ್ಯಗಳಿಗೆ, ಜಾತಿ ರಾಜಕೀಯಗಳಿಗಾಗಿಯಷ್ಟೇ ಸುದ್ದಿಯಾಗುತ್ತಿವೆ. ವಿದೇಶಗಳ ವಿದ್ಯಾರ್ಥಿಗಳನ್ನು ನಮ್ಮ ವಿಶ್ವವಿದ್ಯಾನಿಲಯಗಳು ಆಕರ್ಷಿಸುವುದಿರಲಿ, ಭಾರತದ ವಿದ್ಯಾರ್ಥಿಗಳ ವಲಸೆಗಳು ಹೆಚ್ಚುತ್ತಿವೆ. ಈಗಾಗಲೇ ಗಮನಾರ್ಹ ಸಾಧನೆಗಳನ್ನು ಮಾಡಿರುವ ಕೆಲವು ವಿಶ್ವವಿದ್ಯಾನಿಲಯಗಳು ಆರೆಸ್ಸೆಸ್ ಹಸ್ತಕ್ಷೇಪದಿಂದಾಗಿ ಹಿನ್ನಡೆ ಅನುಭವಿಸುತ್ತಿವೆ. ದಲಿತರನ್ನು, ಮಹಿಳೆಯರನ್ನು, ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಹೊರಗಿಟ್ಟು, ಆಧುನಿಕ, ವೈಜ್ಞಾನಿಕ, ವೈಚಾರಿಕ ದೃಷ್ಟಿಕೋನಗಳ ಜಾಗದಲ್ಲಿ ಸೆಗಣಿ, ಗೋಮೂತ್ರ ಕೇಂದ್ರಿತ ಶಿಕ್ಷಣ ವ್ಯವಸ್ಥೆಯು ಭಾರತದ ಭವಿಷ್ಯವನ್ನು ಇನ್ನಷ್ಟು ನಿರಾಶದಾಯಕವಾಗಿಸಿದೆ. ಸೆಗಣಿ, ಗೋಮೂತ್ರದಲ್ಲಿ ಒದ್ದಾಡುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಮೇಲೆತ್ತುವ ಬಗ್ಗೆ ಸರಕಾರ ಇನ್ನಾದರೂ ಯೋಚಿಸದಿದ್ದರೆ, ಭಾರತ ಮತ್ತೆ ಸ್ವಾತಂತ್ರ್ಯಪೂರ್ವದ ಅಂಧಕಾರದತ್ತ ಸಾಗುವುದರಲ್ಲಿ ಅನುಮಾನವಿಲ್ಲ.
ನಮಗ್ಯಾಕೆ ಬೇಕಯ್ಯ.. ಈ ಮಾರ್ಗದ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಎಂದ ಕನ್ನಡಿಗರು, ಹೊಸ ರೈಲು ಬೇಡ ಅಭಿಯಾನ
ನವದೆಹಲಿ: ಕೇಂದ್ರ ಸರ್ಕಾರವು 9 ರಾಜ್ಯಗಳಿಗೆ ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಪರಿಚಯಿಸಿದೆ. ದೇಶದಾದ್ಯಂತ ಹೊಸ ಅಮೃತ್ ಭಾರತ್ ರೈಲು ಪ್ರಾರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಇದರಲ್ಲಿ ಒಂದು ಕರ್ನಾಟಕಕ್ಕೆ ಸಂಬಂಧಿಸಿದ ರೈಲು ಸಹ ಇದೆ. ಆದರೆ, ಕರ್ನಾಟಕಕ್ಕೆ - ಕನ್ನಡಿಗರಿಗೆ ಈ ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್
ಟಿ20 ವಿಶ್ವಕಪ್ನಿಂದ ಬಾಂಗ್ಲಾ ಹಿಂದೆ ಸರಿದರೆ ಆಟಗಾರರಿಗೇ ನಷ್ಟ: ಬಿಸಿಬಿ ಎಚ್ಚರಿಕೆ
ಢಾಕಾ:ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆ ಕುರಿತು ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಟೂರ್ನಿಯಿಂದ ಬಾಂಗ್ಲಾ ತಂಡ ಹಿಂದೆ ಸರಿದರೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ಯಾವುದೇ ನಷ್ಟವಾಗುವುದಿಲ್ಲ; ನಷ್ಟವಾಗುವುದು ಆಟಗಾರರಿಗೆ ಮಾತ್ರ ಎಂದು ಬಿಸಿಬಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹುಸೈನ್ ಎಚ್ಚರಿಕೆ ನೀಡಿದ್ದಾರೆ. “ವಿಶ್ವಕಪ್ನಲ್ಲಿ ಬಾಂಗ್ಲಾ ತಂಡ ಭಾಗವಹಿಸದಿದ್ದರೆ ಬಿಸಿಬಿಗೆ ಯಾವುದೇ ನಷ್ಟವಿಲ್ಲ. ನಷ್ಟವಾಗುವುದು ಆಟಗಾರರಿಗೆ,” ಎಂದು ನಜ್ಮುಲ್ ಹುಸೈನ್ ಹೇಳಿದ್ದಾಗಿ ಕ್ರಿಕ್ಬುಝ್ ವರದಿ ಮಾಡಿದೆ. “2027ರವರೆಗೂ ನಮ್ಮ ಆದಾಯಕ್ಕೆ ಯಾವುದೇ ತೊಂದರೆ ಇಲ್ಲ. ಏಕೆಂದರೆ 2022ರ ಐಸಿಸಿ ಹಣಕಾಸು ಸಭೆಯಲ್ಲೇ ಇದನ್ನು ನಿರ್ಧರಿಸಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭವಿಷ್ಯದ ವಿಶ್ವಕಪ್ಗಳು, ದ್ವಿಪಕ್ಷೀಯ ಸರಣಿಗಳು ಅಥವಾ ಇತರ ಅಂತರರಾಷ್ಟ್ರೀಯ ಟೂರ್ನಿಗಳ ವಿಚಾರದಲ್ಲಿ ಮಾತ್ರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. “ಉದಾಹರಣೆಗೆ, ಎಫ್ಟಿಪಿ ಅಡಿಯಲ್ಲಿ ಇತರ ತಂಡಗಳು ನಮ್ಮ ದೇಶಕ್ಕೆ ಬರಲಿವೆಯೇ ಎಂಬುದು ಪ್ರಮುಖ ಪ್ರಶ್ನೆ. ಆದರೆ ವಿಶ್ವಕಪ್ನಿಂದ ಬಿಸಿಬಿಗೆ ಯಾವುದೇ ನಷ್ಟವಾಗುವುದಿಲ್ಲ,” ಎಂದು ವಿವರಿಸಿದರು. ಪಂದ್ಯದ ಸಂಭಾವನೆ ಹಾಗೂ ಸಾಧನೆ ಆಧಾರಿತ ಬೋನಸ್ಗಳನ್ನು ನೇರವಾಗಿ ಆಟಗಾರರಿಗೇ ನೀಡಲಾಗುತ್ತದೆ. ಇದರಿಂದ ಮಂಡಳಿಗೆ ಲಾಭ ಅಥವಾ ನಷ್ಟವಾಗುವುದಿಲ್ಲ. “ಆಟಗಾರರು ಪಂದ್ಯಗಳಲ್ಲಿ ಭಾಗವಹಿಸಿದರೆ ಪ್ರತಿಪಂದ್ಯಕ್ಕೂ ಶುಲ್ಕ ಪಡೆಯುತ್ತಾರೆ. ಪಂದ್ಯಶ್ರೇಷ್ಠ ಪ್ರಶಸ್ತಿ ಅಥವಾ ವಿಶೇಷ ಸಾಧನೆ ಮಾಡಿದರೆ, ಐಸಿಸಿ ನಿಯಮಾವಳಿಯಂತೆ ಅವರಿಗೆ ಹಣ ಲಭಿಸುತ್ತದೆ,” ಎಂದು ನಜ್ಮುಲ್ ಹುಸೈನ್ ತಿಳಿಸಿದರು. “ಹಣವನ್ನು ನೇರವಾಗಿ ಆಟಗಾರರು ಪಡೆಯುತ್ತಾರೆ. ಅದಕ್ಕೆ ಮಂಡಳಿಗೆ ಯಾವುದೇ ಸಂಬಂಧವಿಲ್ಲ. ವಿಶ್ವಕಪ್ನಲ್ಲಿ ಬಾಂಗ್ಲಾ ಆಟಗಾರರು ಆಡಿದರೂ, ಆಡದಿದ್ದರೂ ಬಿಸಿಬಿಗೆ ಲಾಭವೂ ಇಲ್ಲ; ನಷ್ಟವೂ ಇಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ಗೆ ಮರಳಲು ಮುಂದಾದ ಬಿಜೆಪಿ ಮುಖಂಡನ ಮನೆ ಮೇಲೆ ಎಸಿಬಿ ದಾಳಿ
ಜೈಪುರ: ಕಾಂಗ್ರೆಸ್ ಪಕ್ಷಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ ಎರಡೇ ದಿನಗಳಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಮಹೇಂದ್ರಜೀತ್ ಸಿಂಗ್ ಮಾಳವೀಯ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ಬ್ಯೂರೊ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಆರೋಪಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಾಳವೀಯ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಅವರಿಗೆ ಸೇರಿದ ಮೂರು ಆಸ್ತಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ ಸಚಿವರಾಗಿದ್ದ ಹಾಗೂ ಬುಡಕಟ್ಟು ಪ್ರದೇಶವಾದ ಬನ್ಸ್ವಾರಾದಿಂದ ಸಂಸದರಾಗಿದ್ದ ಮಾಳವೀಯ ಅವರು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಖಜೀಂದರ್ ಸಿಂಗ್ ರಾಂಡ್ವಾ, ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಹಾಗೂ ವಿರೋಧ ಪಕ್ಷದ ನಾಯಕ ಟಿಕಾರಾಂ ಜುಲ್ಲಿ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಎಸಿಬಿ ದಾಳಿಯ ಕುರಿತು ಪ್ರತಿಕ್ರಿಯಿಸಲು ಮಾಳವೀಯ ಅವರು ನಿರಾಕರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಈ ಬೆಳವಣಿಗೆಯನ್ನು ದೃಢಪಡಿಸಿ, ಇದು ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಖಂಡಿಸಿದ್ದಾರೆ. ರಾಜಕೀಯ ದುರುದ್ದೇಶಕ್ಕಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಇನ್ನೊಂದೆಡೆ, ಎಸಿಬಿ ಅಧಿಕಾರಿಗಳು ಕೂಡ ಈ ವಿಷಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ ಕಾಂಗ್ರೆಸ್ಗೆ ಮರಳುವುದಾಗಿ ಮಾಳವೀಯ ಅವರು ಇತ್ತೀಚೆಗೆ ಘೋಷಿಸಿದ್ದರು.
ವಾಲ್ಮೀಕಿ ನಿಗಮ ಅಕ್ರಮ, CBI ಬಂಧನ ಭೀತಿಯಲ್ಲಿದ್ದ ಶಾಸಕ ನಾಗೇಂದ್ರಗೆ ಬಿಗ್ ರಿಲೀಫ್
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತನಿಖಾಧಿಕಾರಿ ಮುಂದೆ ಹಾಜರಾಗುವುದು, ಸಹಿ ಮಾಡುವುದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಕಾಫಿ ಬೆಳೆಗೆ ವರುಣಾಘಾತ; ಕೋಟ್ಯಂತರ ರೂ ನಷ್ಟ, ಬೆಳೆಗಾರರಿಗೆ ಸಂ'ಕಷ್ಟ'
ಅಕಾಲಿಕ ಮಳೆಯಿಂದಾಗಿ ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕಾಫಿ ಬೆಳೆ ನಾಶವಾಗಿದೆ. ಸಕಲೇಶಪುರ, ಮೂಡಿಗೆರೆ, ಕೊಡಗು ಭಾಗಗಳಲ್ಲಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗೂ ವಿಮೆ ಸೌಲಭ್ಯ ಕಲ್ಪಿಸುವಂತೆ ಬೆಳೆಗಾರರು ಒತ್ತಾಯಿಸಿದ್ದಾರೆ.
Iran Conflict: ಹೇಗಿದ್ದರೆ ಹಾಗೆ, ಯಾವ ವಾಹನ ಸಿಕ್ಕರೆ ಅದರಲ್ಲಿ ತಕ್ಷಣ ಇರಾನ್ ಬಿಟ್ಟು ಹೊರಡಿ: ಭಾರತ ಸರ್ಕಾರ ಸೂಚನೆ
ಇರಾನ್: ಇರಾನ್ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಭಾರತೀಯ ರಾಯಭಾರಿ ಕಚೇರಿಯು ಅಲ್ಲಿನ ಭಾರತೀಯ ಪ್ರಜೆಗಳಿಗೆ ತುರ್ತು ಸಂದೇಶವನ್ನು ನೀಡಿದೆ. ಇರಾನ್ನಲ್ಲಿ ಪ್ರತಿಭಟನೆಗಳು ತೀವ್ರ ಹಿಂಸಾಸ್ವರೂಪ ಪಡೆದುಕೊಂಡಿದೆ. ಅಲ್ಲದೇ ಇರಾನ್ನ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡುವ ಭೀತಿಯೂ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ತುರ್ತು ಸಂದೇಶವನ್ನು ಹಂಚಿಕೊಂಡಿದೆ. ಪ್ರಸ್ತುತ ಇರಾನ್ನಲ್ಲಿರುವ
ರಾಷ್ಟ್ರೀಯ ಭದ್ರತೆಗೆ ಗ್ರೀನ್ಲ್ಯಾಂಡ್ ಅಗತ್ಯ: ಟ್ರಂಪ್
ವಾಷಿಂಗ್ಟನ್: ಡೆನ್ಮಾರ್ಕ್ ಹಾಗೂ ಗ್ರೀನ್ಲ್ಯಾಂಡ್ ಸ್ವಾಯತ್ತ ಪ್ರದೇಶದ ಅಧಿಕಾರಿಗಳೊಂದಿಗೆ ವಾಷಿಂಗ್ಟನ್ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಕುರಿತು ಶೀಘ್ರದಲ್ಲೇ ಒಂದು ನಿರ್ಣಯ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಮಾತುಕತೆಯ ಬಳಿಕ ಓವಲ್ ಆಫೀಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶತಮಾನಗಳಿಂದ ಗ್ರೀನ್ಲ್ಯಾಂಡ್ ಅನ್ನು ಆಡಳಿತ ನಡೆಸುತ್ತಿರುವ ಡೆನ್ಮಾರ್ಕ್ ಜತೆ ಅಮೆರಿಕ ಅತ್ಯುತ್ತಮ ಸಂಬಂಧ ಹೊಂದಿದೆ. ನನ್ನ ಅಭಿಪ್ರಾಯದಲ್ಲಿ ಈ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಿದೆ” ಎಂದು ಹೇಳಿದರು. ಅದೇ ವೇಳೆ ಅಮೆರಿಕದ ಭದ್ರತಾ ಹಿತಾಸಕ್ತಿಗೆ ಗ್ರೀನ್ಲ್ಯಾಂಡ್ ಅತ್ಯಗತ್ಯ ಎಂದು ಟ್ರಂಪ್ ಪುನರುಚ್ಚರಿಸಿದರು. “ನಮ್ಮ ರಾಷ್ಟ್ರೀಯ ಭದ್ರತೆಗೆ ಗ್ರೀನ್ಲ್ಯಾಂಡ್ ಅವಶ್ಯಕ. ಮುಂದೆ ಏನಾಗುತ್ತದೆ ನೋಡೋಣ” ಎಂದು ಹೇಳಿದರು. ಆರ್ಕ್ಟಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಜಾಗತಿಕ ಸ್ಪರ್ಧೆಯ ಕುರಿತು ಒತ್ತಿ ಹೇಳಿದ ಅವರು, “ನಾವು ಅಲ್ಲಿ ಸಕ್ರಿಯರಾಗದಿದ್ದರೆ ರಷ್ಯಾ ಹಾಗೂ ಚೀನಾ ಒಳನುಗ್ಗುತ್ತವೆ. ಈ ವಿಚಾರದಲ್ಲಿ ಡೆನ್ಮಾರ್ಕ್ ಏನೂ ಮಾಡಲು ಸಾಧ್ಯವಿಲ್ಲ. ಆದರೆ ನಾವು ಎಲ್ಲವನ್ನೂ ಮಾಡಲು ಸಾಮರ್ಥ್ಯ ಹೊಂದಿದ್ದೇವೆ” ಎಂದು ವಿಶ್ಲೇಷಿಸಿದರು.
980 ಗ್ರಾ.ಪಂಗಳಲ್ಲಿ PDO ಹುದ್ದೆ ಖಾಲಿ; ನಿಂತಲ್ಲೇ ನಿಂತ ವಿವಿಧ ಯೋಜನೆಗಳ ಕೆಲಸ, ಜನ ಸಾಮಾನ್ಯರಿಗೆ ಸಮಸ್ಯೆ
ರಾಜ್ಯದ 980 ಪಿಡಿಒ ಕೊರತೆಯಿಂದಾಗಿ ಗ್ರಾಮೀಣ ಜನರಿಗೆ ಕುಡಿಯುವ ನೀರು, ರಸ್ತೆ, ನೈರ್ಮಲ್ಯ, ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೇವೆ ತಲುಪಿಸಲು ಹಿನ್ನಡೆಯಾಗುತ್ತಿದೆ. ಪ್ರಭಾರಿಗಳ ಮೇಲಿನ ಒತ್ತಡ ಮತ್ತು ಕೆಲ ಪಿಡಿಒಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವುದರಿಂದ ಕೆಲಸಗಳು ವಿಳಂಬವಾಗುತ್ತಿವೆ. ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪಿಡಿಒಗಳ ನೇಮಕಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ.
Donald Trump: ಡೊನಾಲ್ಡ್ ಟ್ರಂಪ್ ದುಬಾರಿ ಸುಂಕಕ್ಕೆ ಸದ್ಯಕ್ಕಿಲ್ಲ ಬ್ರೇಕ್: ಯುಎಸ್ ಕೋರ್ಟ್ ಹೇಳಿದ್ದೇನು
ಅಮೆರಿಕ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ವಿಧಿಸಿರುವ ದುಬಾರಿ ಸುಂಕಕ್ಕೆ ಸಂಬಂಧಿಸಿದಂತೆ ಬ್ರೇಕ್ ಬೀಳುವ ನಿರೀಕ್ಷೆಯಲ್ಲಿದ್ದವರಿಗೆ ತಾತ್ಕಾಲಿಕ ಹಿನ್ನಡೆ ಆಗಿದೆ. ವಿವಿಧ ದೇಶಗಳ ಮೇಲೆ ವಿಪರೀತವಾಗಿ ವಿಧಿಸಿರುವ ಆಮದು ಮತ್ತು ಉತ್ಪನ್ನಗಳ ಮೇಲಿನ ಸುಂಕದ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಈ ವಿಚಾರಣೆಯನ್ನು ಮುಂದೂಡಲಾಗಿದೆ.
ಜಲಮಂಡಳಿಯ 6ನೇ ಹಂತದ ಕಾವೇರಿ ಯೋಜನೆಗೆ ಮೀನಮೇಷ! ಬೆಂಗಳೂರು ಹೊರವಲಯಕ್ಕೆ ನೀರು ಸಿಗೋದ್ಯಾವಾಗ?
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕಾವೇರಿ 6ನೇ ಹಂತದ ಯೋಜನೆಗೆ 9 ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. 6939 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ಕೆಆರ್ಎಸ್ನಿಂದ 6 ಟಿಎಂಸಿ ನೀರು ತರಲು ಉದ್ದೇಶಿಸಲಾಗಿದೆ. ಸರಕಾರದ ವಿಳಂಬದಿಂದಾಗಿ ಭವಿಷ್ಯದಲ್ಲಿ ನೀರಿನ ಕೊರತೆ ಎದುರಾಗುವ ಆತಂಕವಿದೆ. ಯೋಜನೆಗೆ ಅನುಮೋದನೆ ದೊರೆತರೆ ಕಾಮಗಾರಿ ಆರಂಭವಾಗಲಿದೆ.
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಖಂಡಿಸಿ, ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಜನವರಿ 17ರಂದು ಬೃಹತ್ ಸಮಾವೇಶ ನಡೆಸಲಿವೆ. ಬಳಿಕ, ಬೆಂಗಳೂರಿನತ್ತ ಪಾದಯಾತ್ರೆ ಆರಂಭವಾಗಲಿದ್ದು, ಹಲವು ನಾಯಕರು ಭಾಗವಹಿಸಲಿದ್ದಾರೆ. ಗಲಭೆಯಲ್ಲಿ ಭಾಗಿಯಾದವರ ಬಂಧನಕ್ಕೆ ಒತ್ತಾಯಿಸಲಾಗಿದೆ. ಈ ಪಾದಯಾತ್ರೆ ಫೆಬ್ರವರಿ ಐದರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತ್ಯಗೊಳ್ಳಲಿದೆ ಎನ್ನಲಾಗುತ್ತಿದೆ.
Karnataka Weather: ಕರ್ನಾಟಕದಲ್ಲಿ ಚಳಿ ಇಳಿಕೆ, ಈಶಾನ್ಯ ಮುಂಗಾರು ಮಳೆ ಬಗ್ಗೆ ಐಎಂಡಿ ವರದಿ
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಳಿ ಪ್ರಮಾಣ ಇಳಿಕೆಯಾಗಿದ್ದು, ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿದಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಆಗಿದೆ. ರಾಜ್ಯದ ವಿವಿಧ ಭಾಗದಲ್ಲಿ ಕನಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿದೆಯಾದರೂ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಮುಂದಿನ 2 ದಿನಗಳಲ್ಲಿ
ದೇಶದಲ್ಲಿ 70% ವಾಹನಗಳಲ್ಲಿ ನಿಯಮ ಉಲ್ಲಂಘನೆ, ಕರ್ನಾಟಕದಲ್ಲೇ ಗರಿಷ್ಠ: ನೋಂದಣಿ ರದ್ದಾಗುತ್ತೆ ಎಚ್ಚರ!
ಕೊಟ್ಟ ಗಡುವಿನೊಳಗೆ ವಾಹನಗಳ ಅಗತ್ಯ ದಾಖಲೆ, ಕಾನೂನು ಪ್ರಕಾರ ಬೇಕಾಗಿರುವ ಸರ್ಟಿಫಿಕೇಟ್ ಗಳನ್ನು ಮಾಡಿಸದಿದ್ದರೆ, ತಕ್ಷಣವೇ ವಾಹನದ ನೋಂದಣಿ ರದ್ದಾಗಲಿದೆ. ಯಾವೆಲ್ಲಾ ದಾಖಲೆ ಅಗತ್ಯ, ಕರ್ನಾಟಕದ ಅಂಕಿಅಂಶ ಏನಿದೆ ಎಂಬ ವಿವರ ಇಲ್ಲಿದೆ.
ಹುಳಿಮಾವು ಠಾಣೆ ಪೊಲೀಸರು ದೇಶಾದ್ಯಂತ ಸಾವಿರ ಕೋಟಿ ರೂ.ಗೂ ಅಧಿಕ ಹಣ ದೋಚಿದ್ದ ಸೈಬರ್ ವಂಚಕರ ಜಾಲವನ್ನು ಭೇದಿಸಿದ್ದಾರೆ. ತಾಯಿ-ಮಗ ಸೇರಿ 12 ಮಂದಿಯನ್ನು ಬಂಧಿಸಲಾಗಿದ್ದು, 240 ಕೋಟಿ ರೂ.ಗಳನ್ನು ಫ್ರೀಜ್ ಮಾಡಿಸಲಾಗಿದೆ. ದುಬೈನಲ್ಲಿರುವ ಪ್ರಮುಖ ಸೂತ್ರಧಾರ ಪ್ರೇಮ್ ತನೇಜಾ ಬಂಧನಕ್ಕೆ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಈ ಜಾಲವು ಕ್ರಿಪ್ಟೊ ಕರೆನ್ಸಿ ಮೂಲಕ ಹಣ ವರ್ಗಾವಣೆ ಮಾಡುತ್ತಿತ್ತು.
ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚು ಮಾಡಲು ಉದ್ಯೋಗಾವಕಾಶ ಹೆಚ್ಚಿಸಲು ಹೊಸ ಕ್ರಮಕ್ಕೆ ಮುಂದಾಗಿದೆ. ಬಂಡವಾಳ ಹೂಡಿಕೆದಾರರು ಸುಲಭವಾಗಿ ಉದ್ಯಮ ಆರಂಭಿಸಲು ಅನುಕೂಲ ಆಗುವಂತೆ ಲೈಸೆನ್ಸ್ ನೀಡುವ ಪ್ರಕ್ರಿಯೆಯಲ್ಲಿ ಈ ಕೆಲವು ಪ್ರಮುಖ ಬದಲಾವಣೆ ಮಾಡಲಾಗಿದೆ.
ವಿಜಯಪುರ ಮೆಡಿಕಲ್ ಕಾಲೇಜು ಹೋರಾಟಗಾರರ ಬಿಡುಗಡೆ : ಭವ್ಯ ಸ್ವಾಗತ
ವಿಜಯಪುರ : ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಪ್ರತಿಭಟಿಸಿ, ಬಂಧನಕ್ಕೊಳಗಾಗಿದ್ದ ಆರು ಹೋರಾಟಗಾರರನ್ನು ಬುಧವಾರ ಸಂಜೆ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗಿದೆ. ಹೋರಾಟಗಾರರಾದ ಸಂಗನಬಸವೇಶ್ವರ ಸ್ವಾಮೀಜಿ, ಬಿ.ಭಗವಾನರೆಡ್ಡಿ, ಸಿದ್ರಾಮ ಹಳ್ಳೂರ, ಅರವಿಂದ ಕುಲಕರ್ಣಿ, ಭೋಗೇಶ ಸೊಲ್ಲಾಪೂರ, ಅನೀಲ ಹೊಸಮನಿ ಅವರು ಕಾರಾಗೃಹದಿಂದ ಹೊರ ಬರುತ್ತಿದ್ದಂತೆ ಹೋರಾಟಗಾರರು, ಕುಟುಂಬ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಿಹಿ ತಿನಿಸಿ, ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು. ಜೈಲಿನಿಂದ ಬಿಡುಗಡೆಗೊಂಡ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಅನೀಲ ಹೊಸಮನಿ ಮಾತನಾಡಿ, ಇದು ಜನರ ಗೆಲುವು, ಈ ಹೋರಾಟದ ಫಲವಾಗಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸುವ ನಿರ್ಧಾರ ಕೈ ಬಿಟ್ಟಿದೆ. ಕೊನೆಗೂ ಸರಕಾರ ಮೆಡಿಕಲ್ ಕಾಲೇಜ್ ಸ್ಥಾಪಿಸುವ ನಿರ್ಧಾರ ಪ್ರಕಟಿಸಿರುವುದು ಸಂತೋಷ ತರಿಸಿದೆ. ಜೈಲಿನಲ್ಲಿ ಸಚಿವ ಶಿವಾನಂದ ಪಾಟೀಲರು ಭೇಟಿಯಾಗಿ ಮುಂದಿನ ಬಜೆಟ್ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ಸಹ ಈ ವಿಷಯವಾಗಿ ಸ್ಪಂದಿಸಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಇದು ಜನರ ಗೆಲುವು ಎಂದು ಹೇಳಿದರು. ಮುಖಂಡರಾದ ಶ್ರೀನಾಥ್ ಪೂಜಾರಿ, ಮಲ್ಲಿಕಾರ್ಜುನ ಯಂಡಿಗೇರಿ, ಎಂ.ಸಿ.ಮುಲ್ಲಾ, ಅಕ್ರಂ ಮಾಶ್ಯಾಳಕರ, ಎಚ್.ಟಿ. ಭರತಕುಮಾರ, ಎಚ್.ಟಿ.ಮಲ್ಲಿಕಾರ್ಜುನ, ಸುರೇಶ ಬಿಜಾಪೂರ, ಸುರೇಖಾ ರಜಪೂತ ಮೊದಲಾದವರು ಸ್ವಾಗತಿಸಿದರು. ಬಳಿಕ ಜೈಲಿನಿಂದ ಬಿಡುಗಡೆಯಾದ ಹೋರಾಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಪ್ರಮುಖ ದಾರಿಯಲ್ಲಿ ಸಾಗಿದ ಮೆರವಣಿಗೆ ಹೋರಾಟ ಸ್ಥಳವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕೊನೆಗೊಂಡಿತು.
Dharwad | ಚಾಕುವಿನಿಂದ ಇರಿದು ಬಾಲಕನ ಹತ್ಯೆ
ಧಾರವಾಡ : ಚಾಕುವಿನಿಂದ ಇರಿದು ಬಾಲಕನನ್ನು ಹತ್ಯೆಗೈದಿರುವ ಘಟನೆ ಕುಂದಗೋಳ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಸೂಸೈಟಿ ಮೈದಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಮೃತ ಬಾಲಕನನ್ನು ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಮಲ್ಲಿಕಾರ್ಜುನ ಅವಾರಿ (16) ಎಂದು ತಿಳಿದು ಬಂದಿದೆ. ಕೃತ್ಯ ಎಸಗಿರುವವರು ಯಾರು ಮತ್ತು ಯಾಕೆ ಎಂಬುದನ್ನ ಪೊಲೀಸರು ತನಿಖೆಯನ್ನು ಮಾಡುತ್ತಿದ್ದು, ಆ ಪ್ರದೇಶದ ಸಿ.ಸಿ ಟಿವಿ ದೃಶ್ಯಗಳ ಪರಿಶೀಲನೆ ಮಾಡುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ಗೆ ರವಾನಿಸಲಾಗಿದ್ದು, ಡಿವೈಎಸ್ಪಿ ವಿನೋದ ಮುಕ್ತಿದಾರ, ಪೊಲೀಸ್ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ, ಪಿಎಸ್ಐ ಇಮ್ರಾನ್ ಪಠಾಣ ಸ್ಥಳ ಪರಿಶೀಲನೆ ಮಾಡಿದ್ದಾರೆ.
‘ಇದು ನನ್ನ ಮೊದಲ ದುಡಿಮೆಯ ಹಣ’ - 100 ರೂ. ನೋಟಿನ ಮೇಲಿನ ಬರಹ ಹೃದಯವನ್ನೇ ತಟ್ಟಿತು! ಯಾರಿಗೆ ಸೇರಿದ್ದು ಆ ನೋಟು?
ಬೆಂಗಳೂರಿನ ರಾಘವೇಂದ್ರ ಸಿಂತ್ರೆ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಘಟನೆ ಗಮನ ಸೆಳೆದಿದೆ. 2013ರ ತಮ್ಮ ಮೊದಲ ಗ್ಲಾಸ್ ಪೇಂಟಿಂಗ್ ಆದಾಯದ 100 ರೂಪಾಯಿ ನೋಟು ಇದೀಗ ಅವರ ಕೈ ಸೇರಿದೆ. ಈ ನೋಟು ಹತ್ತಾರು ಜನರ ಕೈ ಬದಲಾಯಿಸಿ ಬಂದಿದ್ದು, ಅದರ ಹಿಂದಿನ ವ್ಯಕ್ತಿಯನ್ನು ಪತ್ತೆ ಹಚ್ಚಿ, ಆ ನೋಟನ್ನು ಅವರಿಗೆ ಹಿಂದಿರುಗಿಸಲು ರಾಘವೇಂದ್ರ ನಿರ್ಧರಿಸಿದ್ದಾರೆ.
ಎಐ ತಂತ್ರಜ್ಞಾನದಿಂದ ರೈತರ ಭವಿಷ್ಯ ಉಜ್ವಲ: ಬಸವರಾಜ ಹೊರಟ್ಟಿ
ಬೆಂಗಳೂರು : ದೇಶದ ಬೆನ್ನೆಲುಬಾದ ನಮ್ಮ ರೈತರು ಹಿಂದಿಗಿಂತ ಈಗ ಸುಧಾರಣೆಯಾಗಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಹೊಸ ತಂತ್ರಜ್ಞಾನ ರೈತರಿಗೆ ವರದಾನವಾಗಲಿ, ಎಐ ರೈತರ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ತಿಳಿಸಿದ್ದಾರೆ. ಬುಧವಾರ ವಿಧಾನೌಧದಲ್ಲಿ ಹಮ್ಮಿಕೊಂಡಿದ್ದ ರವಿಶಂಕರ್ ಬರೆದಿರುವ ‘ಫಾರ್ಮಾಸಿ ಕ್ಷೇತ್ರದ ಕಾರ್ಯ ನಿರ್ವಹಣಾ ವ್ಯವಸ್ಥೆ ಹಾಗೂ ಎಐ ಮತ್ತು ಕ್ವಾಂಟಮ್ ಸಂಯೋಜನೆ ಮತ್ತು ಅದರ ಸ್ಪರ್ಧಾತ್ಮಕ ಲಾಭಗಳ’ ಕುರಿತ ಪುಸ್ತಕಗಳಗನ್ನು ಬಿಡುಗಡೆ ಮಾತನಾಡಿದ ಅವರು, ರೈತರ ಕುರಿತು ರಾಜ್ಯದ ಜನತೆಗೆ ಮಾಹಿತಿಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ‘ಫಾರ್ಮಾಸಿ ಕ್ಷೇತ್ರದ ಕಾರ್ಯನಿರ್ವಹಣಾ ವ್ಯವಸ್ಥೆ ಹಾಗೂ ಎಐ ಮತ್ತು ಕ್ವಾಂಟಮ್ ಸಂಯೋಜನೆ ಮತ್ತು ಅದರ ಸ್ಪರ್ಧಾತ್ಮಕ ಲಾಭಗಳ ಕುರಿತ ಪುಸ್ತಕಗಳ’ ಬಿಡುಗಡೆ ಮಾಡಲಾಗಿದೆ ಎಂದರು. ನಮ್ಮಲ್ಲಿ ಕೂಲಿ ಕಾರ್ಮಿಕರು ಲಭ್ಯವಿಲ್ಲದ ಈ ಕಾಲದಲ್ಲಿ ರೈತರಿಗೆ ಈ ಹೊಸ ತಂತ್ರಜ್ಞಾನದಿಂದ ಅನುಕೂಲವಾಗಲಿದೆ. ಆ ಮೂಲಕ ನಮ್ಮ ರೈತರಿಗೆ ಅತ್ಯಾಧುನಿಕ ತಾಂತ್ರಿಕತೆ ಅನುಕೂಲ ಕಲ್ಪಿಸಲಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು. ಲೇಖಕ ಡಾ.ರವಿಶಂಕರ್ ಮಾತನಾಡಿ, ‘ಎಐ-ಚಾಲಿತ ಫಾರ್ಮಾ ಅನುವಂಶದಿಂದ ಮಾರುಕಟ್ಟೆಗೆ’ ಎಂಬ ಪುಸ್ತಕವು ಕೃತಕ ಬುದ್ಧಿಮತ್ತೆ ಔಷಧಶಾಸ್ತ್ರ, ಮೌಲ್ಯ ಸರಪಳಿಯನ್ನು ಹೇಗೆ ಪುನರ್ಗಟ್ಟುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಎಂದರು. ಲಕ್ಷ್ಯ ಗುರುತಿಸುವಿಕೆ ಮತ್ತು ಸೃಜನಾತ್ಮಕ ರಸಾಯನಶಾಸ್ತ್ರದಿಂದ ಪ್ರಿಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಭಿವೃದ್ಧಿ, ಉತ್ಪಾದನೆ, ಸರಬರಾಜು ಸರಪಳಿ ಮತ್ತು ವಾಣಿಜ್ಯ ಕಾರ್ಯಗತಗೊಳಿಸುವಿಕೆ ಕುರಿತು ಏಳು ಭಾಗಗಳು ಮತ್ತು 24 ಅಧ್ಯಾಯಗಳಲ್ಲಿ ರಚಿಸಲಾಗಿದೆ. ಡೇಟಾ ಮೂಲಾಧಾರಗಳು, ಫೌಂಡೇಷನ್ ಮಾದರಿಗಳು, ಮಲ್ಟಿಮೋಡಲ್ ಮತ್ತು ಏಜೆಂಟಿಕ್ ಎಐ, ನಿಯಂತ್ರಣಶಾಸ್ತ್ರ, ನೈತಿಕತೆ ಮತ್ತು ಹೊಸ ಕಾರ್ಯನಿರ್ವಹಣಾ ಮಾದರಿಗಳನ್ನು ಒಟ್ಟಾರೆಯಾಗಿ ಫಾರ್ಮಾಸಿ ಕ್ಷೇತ್ರದ ‘ಎಐ ಕಾರ್ಯನಿರ್ವಹಣಾ ವ್ಯವಸ್ಥೆ’ಯಲ್ಲಿ ವಿವರಿಸಲಾಗಿದೆ ಎಂದು ಹೇಳಿದರು.
ವಿಧಾನಮಂಡಲದ ಸಂಪ್ರದಾಯ ಭಗ್ನಗೊಳಿಸಲು ಹೊರಟಿರುವ ಸರಕಾರ : ಸುನಿಲ್ ಕುಮಾರ್
ಬೆಂಗಳೂರು : ರಾಜ್ಯ ಸರಕಾರ ತನ್ನ ಒಳಜಗಳ ಹಾಗೂ ಹೈಕಮಾಂಡ್ ಮೆಚ್ಚಿಸುವುದಕ್ಕೆ ಕರ್ನಾಟಕದ ವಿಧಾನಮಂಡಲ ಸಂಸದೀಯ ಇತಿಹಾಸ ಹಾಗೂ ಸಂಪ್ರದಾಯವನ್ನು ಭಗ್ನಗೊಳಿಸಲು ಹೊರಟಿದೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಟೀಕಿಸಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಮಾನ್ಯವಾಗಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ಕನಿಷ್ಠ ಹತ್ತು ದಿನಗಳ ಕಾಲ ಕಲಾಪ ನಡೆಸಲಾಗುತ್ತಿತ್ತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಶಾಸಕರು ಕ್ಷೇತ್ರ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದು ಹಾಗೂ ಅದಕ್ಕೆ ಮುಖ್ಯಮಂತ್ರಿ ಸದನದಲ್ಲೆ ಉತ್ತರ ಕೊಡುವುದು ವಾಡಿಕೆ ಹಾಗೂ ಸದನದ ರೀತಿ ಎಂದು ಹೇಳಿದ್ದಾರೆ. ಆದರೆ, ‘ವಿಬಿ: ಜಿ ರಾಮ್ ಜಿ’ ವಿಧೇಯಕದ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯುವ ನೆಪದಲ್ಲಿ ಜಂಟಿ ಅಧಿವೇಶನವನ್ನು ಸೀಮಿತಗೊಳಿಸಲಾಗಿದೆ. ಒಳಜಗಳಗಳಿಂದ ಹೈರಾಣಾಗಿರುವ ಅಧಿವೇಶನವನ್ನೂ ನಡೆಸದಷ್ಟು ಹತಾಷ ಹಾಗೂ ದುರ್ಬಲತೆಗೆ ಸರಕಾರ ಸಿಕ್ಕಿದ್ದು ನಾಡಿನ ದುರಂತ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ತರಾತುರಿಯಲ್ಲಿ ಜಂಟಿ ಅಧಿವೇಶನ ಕರೆಯುವ ಅನಿವಾರ್ಯತೆ ಏನಿತ್ತು ? ಸದನವನ್ನಾದರೂ ವ್ಯವಸ್ಥಿತವಾಗಿ ನಡೆಸುವುದು ನಿಮ್ಮ ಕರ್ತವ್ಯವಲ್ಲವೇ ? ಎಂದು ಪ್ರಶ್ನಿಸಿರುವ ಸುನಿಲ್ ಕುಮಾರ್, ವಿಬಿ: ಜಿ ರಾಮ್ ಜಿ ವಿಧೇಯಕದ ಬಗ್ಗೆ ಯಾವುದೇ ವೇದಿಕೆಯಲ್ಲಿ ಬೇಕಾದರೂ ಚರ್ಚೆ ನಡೆಸುವುದಕ್ಕೆ ಬಿಜೆಪಿ ಸಿದ್ದ. ಆದರೆ ಈ ಕಾಯ್ದೆ ವಿರುದ್ಧ ತುರ್ತಾಗಿ ನಿರ್ಣಯ ಅಂಗೀಕರಿಸಿಕೊಂಡು ರಾಜಕೀಯ ಹೋರಾಟ ಮಾಡಬೇಕೆಂಬುದೆ ಸರಕಾರದ ಉದ್ದೇಶವಾಗಿದೆ ಎಂದು ದೂರಿದ್ದಾರೆ. ಶಾಸನ ಸಭೆಯ ರೀತಿ-ರಿವಾಜುಗಳು ಕಾಂಗ್ರೆಸ್ ಹೈಕಮಾಂಡ್ ಆಶಯಕ್ಕೆ ತಕ್ಕಂತೆ ನಡೆಸುವುದು ಸರಿ ಅಲ್ಲ. ಅಧಿವೇಶನದ ಅವಧಿಯನ್ನು ವಿಸ್ತರಿಸುವ ಜತೆಗೆ ನಾಡಿನ ಜ್ವಲಂತ ವಿಚಾರಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ರಘುನಾಥ ಚ.ಹ.ಗೆ ‘ಕುವೆಂಪು ಚಿರಂತನ’, ಇಂದೂಧರ ಹೊನ್ನಾಪುರ ‘ಕುವೆಂಪು ಅನಿಕೇತನ’ ಪ್ರಶಸ್ತಿ
ಬೆಂಗಳೂರು : ಕನ್ನಡ ಸಂಘರ್ಷ ಸಮಿತಿ 2026ನೇ ಸಾಲಿಗೆ ನೀಡುವ ‘ಕುವೆಂಪು ಚಿರಂತನ’ ಪ್ರಶಸ್ತಿಗೆ ಪತ್ರಕರ್ತ ರಘುನಾಥ ಚ.ಹ. ಹಾಗೂ ‘ಕುವೆಂಪು ಅನಿಕೇತನ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಹಾಗೂ ‘ಕುವೆಂಪು ಯುವಕವಿ’ ಪ್ರಶಸ್ತಿಗೆ ಯುವ ಕವಯತ್ರಿ ಸಂಘಮಿತ್ರೆ ನಾಗರಘಟ್ಟ ಆಯ್ಕೆಯಾಗಿದ್ದಾರೆ. ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಕುವೆಂಪು ಚಿರಂತನ ಪ್ರಶಸ್ತಿಯು ನಗದು ಪುರಸ್ಕಾರ 10ಸಾವಿರ ರೂ., ಕುವೆಂಪು ಅನಿಕೇತನ ಪ್ರಶಸ್ತಿಯು 5 ಸಾವಿರ ರೂ., ಯುವಕವಿ ಪ್ರಶಸ್ತಿಯು 2ಸಾವಿರ ರೂ. ನಗದನ್ನು ಹೊಂದಿದ್ದು, ಪುರಸ್ಕಾರದ ಜೊತೆಗೆ ಪ್ರಶಸ್ತಿ ಫಲಕ ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ ಎಂದು ತಿಳಿಸಿದ್ದಾರೆ. ಜ.18ರ ಬೆಳಗ್ಗೆ 10 ಗಂಟೆಗೆ ನಗರದ ಚಾಮರಾಜಪೇಟೆ, ಕಸಾಪದ ಕುವೆಂಪು ಸಭಾಂಗಣದಲ್ಲಿ ಸಮಿತಿ ಆಯೋಜಿಸಿರುವ ಕುವೆಂಪು ಹಾಗೂ ಬೇಂದ್ರೆ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಹೋರಾಟಗಾರ ರಾಮಣ್ಣ ಎಚ್.ಕೋಡಿಹೊಸಹಳ್ಳಿ ವಹಿಸಲಿದ್ದು, ಪ್ರಾಧ್ಯಾಪಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಉಪನ್ಯಾಸ ನೀಡಲಿದ್ದು, ವೈಚಾರಿಕ ಕೃತಿ ಆಯ್ಕೆ ಕುರಿತು ಕನ್ನಡ ಸಾಹಿತ್ಯ ವಿಮರ್ಶಕ ಎಚ್.ದಂಡಪ್ಪ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
Kolar | ಬಸ್-ಬೈಕ್ ಢಿಕ್ಕಿ: ಇಬ್ಬರ ಮೃತ್ಯು
ಕೋಲಾರ : ಶ್ರೀನಿವಾಸಪುರ ತಾಲೂಕಿನ ಕೂಸ್ಸಂದ್ರ ಕ್ರಾಸ್ ಬಳಿ ಚಿಂತಾಮಣಿ ಡಿಪೋದ ಕೆಎಸ್ಸಾರ್ಟಿಸಿ ಬಸ್ ಮತ್ತು ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ಬೈಕ್ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ. ಮೃತ ಬೈಕ್ ಸವಾರರನ್ನು ನಾಗರಾಜ್ (26), ಚಂದ್ರಶೇಖರ್ (24) ಎಂದು ಗುರುತಿಸಲಾಗಿದ್ದು, ಶ್ರೀನಿವಾಸ್(26) ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ಗುಲ್ಲು ಕುಂಟೆಯಿಂದ ಗಂಗನಗಾರಿಪಲ್ಲಿಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಾಹನ ಹಿಂಬದಿಯಿಂದ ಗುದ್ದಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಗೌನಿಪಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಂಬಳೆ| ಆರಿಕ್ಕಾಡಿ ಟೋಲ್ಗೇಟ್ ವಿರುದ್ಧ ಪ್ರತಿಭಟನೆ: ಟೋಲ್, ರಸ್ತೆ ಬಂದ್ ಮಾಡಿ ಆಕ್ರೋಶ
ಕಾಸರಗೋಡು: ಕುಂಬಳೆ ಆರಿಕ್ಕಾಡಿ ಯಲ್ಲಿ ಟೋಲ್ ಶುಲ್ಕ ವಸೂಲು ವಿರುದ್ಧದ ಹೋರಾಟ ಹಿಂಸಾತ್ಮಕ ರೂಪು ಪಡೆದಿದ್ದು, ಪ್ರತಿಭಟನಾಕಾರರು ಟೋಲ್ ಗೇಟ್ ನ ಕ್ಯಾಮರಾ ಹಾಗೂ ಗಾಜು ಪುಡಿ ಗೈದ ಘಟನೆ ಬುಧವಾರ ರಾತ್ರಿ ನಡೆದಿದೆ. ಹೋರಾಟಕ್ಕೆ ಬೆಂಬಲ ವಾಗಿ ಕುಂಬಳೆ ಪೇಟೆಯಿಂದ ಬಂದ ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಟೋಲ್ ಗೇಟ್ ನ ಕ್ಯಾಮರಾ ಗಳನ್ನು ಧ್ವಂಸ ಗೊಳಿಸಿದ್ದು, ಕಚೇರಿ ಗಾಜುಗಳನ್ನು ಹಾನಿ ಗೊಳಿಸಿದ್ದಾರೆ. ವಾಹನಗಳನ್ನು ತಡೆಯುವ ಟೋಲ್ ಬೂತ್ ನ ಹ್ಯಾಂಡಲ್ ಗಳನ್ನು ಪ್ರತಿಭಟನಾಕಾರರು ಕಿತ್ತೆಸೆದಿದ್ದಾರೆ. ಸ್ಕ್ಯಾನರ್ ಗಳಿಗೆ ಕಪ್ಪು ಸ್ಟಿಕ್ಕರ್ ಲಗತ್ತಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಹೆಚ್ಚುವರಿ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿದೆ. ಹಲವು ಯುವಜನ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಕಚೇರಿಯೊಳಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ತಡೆದರು. ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಸೋಮವಾರ ದಿಂದ ಪೊಲೀಸರು ಟೋಲ್ ಗೇಟ್ ಗೆ ಭದ್ರತೆ ಕಲ್ಪಿಸಿದ್ದು, ಈ ನಡುವೆ ಬುಧವಾರ ರಾತ್ರಿ ನಡೆದ ಪ್ರತಿಭಟನಾ ಜಾಥಾ ದಲ್ಲಿ ಸಾವಿರಕ್ಕೂ ಅಧಿಕ ಪ್ರತಿಭಟನಾ ಕರಾರು ಪಾಲ್ಗೊಂಡರು. ಇದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡುವಂತೆ ಮಾಡಿತು. ಘಟನೆ ಬಳಿಕ ವಾಹನ ಗಳು ಟೋಲ್ ಶುಲ್ಕ ಇಲ್ಲದೆ ಸಂಚಾರ ನಡೆಸುತ್ತಿದೆ. ಟೋಲ್ ಶುಲ್ಕ ವಿರುದ್ಧ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಇಂಪಾ ಶೇಖರ್ ನೇತೃತ್ವದ ಲ್ಲಿ ಬುಧವಾರ ಸಂಜೆ ನಡೆದ ಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ವಿಫಲಗೊಂಡಿತ್ತು. ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ರವರ ಸಮ್ಮುಖದಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಆದರೆ ಪ್ರಕರಣ ಹೈಕೋರ್ಟ್ ವಿಚಾರಣೆ ಯಲ್ಲಿರುವುದರಿಂದ ಅಂತಿಮ ತೀರ್ಮಾನ ಹೊರಬೀಳುವ ತನಕ ಟೋಲ್ ಶುಲ್ಕ ವಸೂಲಿ ಸ್ಥಗಿತಗೊಳಿವಂತೆ ಶಾಸಕ ಅಶ್ರಫ್ ಒತ್ತಾಯಿಸಿದ್ದರು ಸೋಮವಾರ ಬೆಳಿಗ್ಗೆಯಿಂದ ಟೋಲ್ ಶುಲ್ಕ ವಸೂಲು ವಿರುದ್ಧ ಹೋರಾಟ ನಡೆಯುತ್ತಿದ್ದು, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸತ್ಯಾಗ್ರಹಕ್ಕೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸತ್ಯಾಗ್ರಹ ಸ್ಥಳಕ್ಕೆ ಮೆರವಣಿಗೆ ನಡೆಸಿವೆ. ಈ ನಡುವೆ ಬುಧವಾರ ರಾತ್ರಿ ಯುವಜನ ಪಕ್ಷಗಳು ನಡೆಸಿದ ಪ್ರತಿಭಟನಾ ಜಾಥಾ ತೀವ್ರ ಸ್ವರೂಪ ಪಡೆದುಕೊಂಡಿದೆ. ಶುಲ್ಕ ವಸೂಲು ರದ್ದುಗೊಳಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರ್ವಜನಿಕ ಭಾಷಣಗಳಲ್ಲಿ ಶಿಸ್ತು ಮತ್ತು ಬಲದ ಬಗ್ಗೆ ಮಾತನಾಡಿದರೂ, ಪ್ರಯಾಣದ ವೇಳೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರ ಪ್ರಕಾರ, ಟ್ರಂಪ್ ಪ್ರಯಾಣದಲ್ಲಿ ಪರಿಚಿತ ಫಾಸ್ಟ್ ಫುಡ್ಗಳನ್ನು ಆರಿಸಿಕೊಳ್ಳುತ್ತಾರೆ. ಆದರೂ, ಅವರ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯ ಮಟ್ಟವನ್ನು ಕೆನಡಿ ಶ್ಲಾಘಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಪತ್ರಿಕೆ ಓದು ಕಡ್ಡಾಯಗೊಳಿಸಲು ಸೂಕ್ತ ಕ್ರಮ : ಕೆ.ವಿ.ಪ್ರಭಾಕರ್
ಬೆಂಗಳೂರು : ಶಾಲಾ ಕಾಲೇಜುಗಳಲ್ಲಿ ಪತ್ರಿಕೆಗಳ ಪ್ರಮುಖ ಸುದ್ದಿಗಳನ್ನು ಓದುವುದು ಮತ್ತು ನೋಟೀಸ್ ಬೋರ್ಡ್ನಲ್ಲಿ ಹಾಕುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸರಕಾರದಿಂದ ಆದೇಶ ಹೊರಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ. ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಎಚ್.ಬಿ.ಮದನಗೌಡ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಈ ಹಿಂದೆ ಶಾಲಾ ಕಾಲೇಜಿನಲ್ಲಿ ಪತ್ರಿಕೆಗಳನ್ನು ಓದುವ ಅಭ್ಯಾಸ ಇದ್ದಂತೆ ಈಗಲೂ ಮುಂದುವರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಲಾಗುವುದು ಎಂದರು. ಉತ್ತರ ಪ್ರದೇಶ ಸರಕಾರವು, ಆ ರಾಜ್ಯದ ಸರಕಾರಿ ಶಾಲೆಗಳಲ್ಲಿ ಪತ್ರಿಕೆ ಓದಿಸುವ ಮತ್ತು ನೋಟೀಸ್ ಬೋರ್ಡ್ನಲ್ಲಿ ಹಾಕುವುದನ್ನು ಕಡ್ಡಾಯ ಮಾಡಿರುವಂತೆ ರಾಜ್ಯದಲ್ಲಿಯೂ ಮಾಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮನವಿ ಮಾಡಿತ್ತು. ಪಠ್ಯ ಪುಸ್ತಕದಲ್ಲಿ ಪತ್ರಿಕೆಗಳ ವಿಷಯವನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಈ ಬಗ್ಗೆ ತಜ್ಞರ ಜೊತೆಗೆ ಅಧ್ಯಯನ ಮಾಡಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿಲಾಗಿದೆ.
America And Iran: ಆಂತರಿಕ ಹಿಂಸಾಚಾರ ನಡುವೆ ಅಮೆರಿಕ ದಾಳಿ ಭೀತಿ, ಇರಾನ್ ಸೇನೆಗೆ ನಡುಕ
ಇರಾನ್ ನೆಲದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದ್ದು, ಭಾರಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಪ್ರತಿಭಟನೆ ಕೈಮೀರಿ ಹೋಗಿರುವ ಕಾರಣಕ್ಕೆ ಕಠಿಣ ಮಾರ್ಗಗಳನ್ನು ಅನುಸರಿಸುತ್ತಾ ಇದೀಗ ಹಿಂಸೆಗೆ ತಡೆ ಹಾಕಲು ಮುಂದಾಗಿದೆ ಇರಾನ್ ಸರ್ಕಾರ. ಇಂತಹ ಸಮಯದಲ್ಲೇ ಅಮೆರಿಕದ ಕಡೆಯಿಂದ ಕೂಡ ದಾಳಿಯ ಭೀತಿ ಎದುರಾಗಿದೆ. ಹೀಗಿದ್ದಾಗಲೇ ಇರಾನ್ ಸೇನೆ ಅಲರ್ಟ್ ಆಗಿದ್ದು, ಈ ಹೊತ್ತಲ್ಲಿ ದಿಢೀರ್ ಹೊರಗಿನಿಂದ
Dharwad : ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ
ಧಾರವಾಡ : ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ ಈಶ್ವರಪ್ಪ ಪೂಜಾರ (46) ಆತ್ಮಹತ್ಯೆ ಮಾಡಿಕೊಂಡ ಕೈದಿ. ಈಶ್ವರಪ್ಪ ವರದಕ್ಷಿಣೆ ಕಿರುಕುಳ ಹಾಗೂ ಪತ್ನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿ ಧಾರವಾಡ ಕೇಂದ್ರ ಕಾರಾಗೃಹ ಸೇರಿದ್ದ ಎಂದು ತಿಳಿದುಬಂದಿದೆ. ಕಾರಾಗೃಹದ ಆವರಣದಲ್ಲಿರುವ ಕೆಲಸ ಮಾಡುವ ಕಟ್ಟಡದೊಳಗೆ ಈಶ್ವರಪ್ಪನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಜೈಲು ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನಾ ಸ್ಥಳಕ್ಕೆ ಧಾರವಾಡ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಉಕ್ರೇನ್ಗೆ ಭರ್ಜರಿ ಸಾಲ, 90 ಬಿಲಿಯನ್ ಯುರೋ ಕೊಡಲು ಯುರೋಪಿಯನ್ ಒಕ್ಕೂಟ ಒಪ್ಪಿಗೆ!
ಉಕ್ರೇನ್ ಇದೀಗ ರಷ್ಯಾ ಜೊತೆಗಿನ ಯುದ್ಧದಲ್ಲಿ ಭಾರಿ ಒದ್ದಾಡುತ್ತಾ ಇದ್ದು, ಕೈಯಲ್ಲಿ ಕಾಸು ಇಲ್ಲ ಎಂಬ ಕಾರಣಕ್ಕೆ ನರಳುತ್ತಿದೆ. ಒಂದು ಕಡೆ ರಷ್ಯಾ ಸೇನೆ ಉಕ್ರೇನ್ನ ಭಾಗಶಃ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದ್ದು, ಇನ್ನೊಂದು ಕಡೆ ಯುದ್ಧ ಮಾಡಲು ಸರಿಯಾದ ಅಸ್ತ್ರಗಳು ಇಲ್ಲದೆ ನರಳುತ್ತಿರುವ ಉಕ್ರೇನ್ ಸೈನಿಕರು ಪ್ರಾಣ ಬಿಡುತ್ತಿದ್ದಾರೆ. ಇದೇ ಸಮಯದಲ್ಲಿ ಉಕ್ರೇನ್ ಜನರಿಗೆ ಸರಿಯಾಗಿ
ಬಸವಣ್ಣ ಅವರ ಹೆಸರಿನಲ್ಲಿ ಹೊಸ ಉದ್ಯಾನ ನಿರ್ಮಾಣ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಬೆಂಗಳೂರು ಉತ್ತರ ಭಾಗದಲ್ಲಿ ಅರಣ್ಯ ಇಲಾಖೆ ಜಾಗದಲ್ಲಿ ಬಸವಣ್ಣ ಅವರ ಹೆಸರಿನಲ್ಲಿ ಲಾಲ್ಬಾಗ್ ಮಾದರಿ ಉದ್ಯಾನ ನಿರ್ಮಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಬೆಂಗಳೂರಿನ ದಕ್ಷಿಣ ಭಾಗದಲ್ಲೂ ಇದೇ ಮಾದರಿ ಉದ್ಯಾನ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬುಧವಾರ ತೋಟಗಾರಿಕೆ ಇಲಾಖೆಯ ವತಿಯಿಂದ ನಗರದ ಲಾಲ್ಬಾಗ್ನಲ್ಲಿ ಆಯೋಜಿಸಿದ ತೇಜಸ್ವಿ ವಿಸ್ಮಯ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು-ಬರಹ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ಉದ್ಯಾನ ನಗರಿ ಎಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದಿದೆ. ಹೀಗಾಗಿ ಈ ಉದ್ಯಾನಗಳ ನಿರ್ಮಾಣಕ್ಕೆ ಜಿಬಿಎ, ಪಾಲಿಕೆ ವತಿಯಿಂದ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದೇನೆ. ನಾನು ನಗರದ ಪಾರ್ಕ್ಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ನೋಡಿ, ಜನರ ಅಭಿಪ್ರಾಯ ಪಡೆದು ಅನೇಕ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸೂಚಿಸಿದ್ದೇನೆ. ನಮ್ಮ ರಾಜ್ಯದಿಂದ ಹೊರ ದೇಶಗಳಿಗೆ ಪ್ರತಿ ವಾರ 17 ವಿಮಾನದಷ್ಟು ಹೂ, ತರಕಾರಿ ರಫ್ತಾಗುತ್ತಿದೆ. ಅಂತರ್ರಾಷ್ಟ್ರೀಯ ಮಟ್ಟದ ಹೂ, ತರಕಾರಿ ಮಾರುಕಟ್ಟೆ ನಿರ್ಮಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು. ಮೆಟ್ರೋ ಹಾಗೂ ಸುರಂಗದಿಂದ ಲಾಲ್ಬಾಗ್ಗೆ ತೊಂದರೆಯಾಗುತ್ತದೆ ಎಂದು ಕೆಲವರು ರಾಜಕಾರಣ ಮಾಡಿದ್ದಾರೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಈ ಐತಿಹಾಸಿಕ ಉದ್ಯಾನ ಕಾಪಾಡಲು ಬೇರೆಯವರಿಗಿಂತ ಹೆಚ್ಚಿನ ಆಸಕ್ತಿ ನನಗಿದೆ. ನಾಗರೀಕರ ಸೌಲಭ್ಯಕ್ಕೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಬೆಂಗಳೂರು ನಗರದ ಜನಸಂಖ್ಯೆ 70 ಲಕ್ಷದಿಂದ 1.50 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಬೇಕಾಗಿದೆ. ಎಲ್ಲಾ ಪಾರ್ಕ್ ಹಾಗೂ ಕೆರೆ ಉಳಿಸುವುದು ನಮ್ಮ ಕರ್ತವ್ಯ. ಅದಕ್ಕೆ ಅಗತ್ಯ ಕ್ರಮವನ್ನು ನಮ್ಮ ಸರಕಾರ ಕೈಗೊಳ್ಳುತ್ತಿದೆ ಎಂದು ಶಿವಕುಮಾರ್ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪೌರಾಯುಕ್ತೆ ವಿರುದ್ಧದ ಅವಾಚ್ಯ ಶಬ್ಧ ಬಳಸಿರುವ ಬಗ್ಗೆ ಮಾತನಾಡಿ, ‘ಲಾಲ್ಬಾಗ್ ಪವಿತ್ರವಾದ ಜಾಗ, ಇಲ್ಲಿ ಅಂತಹ ವಿಚಾರ ಚರ್ಚೆ ಬೇಡ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ತಪ್ಪು ಮಾಡಿದವರು ಕ್ಷಮೆ ಕೇಳಬೇಕು ಎಂದು ಸೂಚಿಸುತ್ತೇನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹರಡಿದ ಆರೋಪ; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಎಫ್ಐಆರ್
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಎಂಎಲ್ಸಿ ಜಗದೇವ ಗುತ್ತೇದಾರ್ ಅವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಶಕುಂತಲಾ ನಟರಾಜ್ ಹಾಗೂ ಬಿಜೆಪಿ ಕರ್ನಾಟಕ ಫೇಸ್ಬುಕ್ ಹಾಗೂ ಎಕ್ಸ್ ಖಾತೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡಲಾಗಿದೆ. ಯಾದಗಿರಿ ಕ್ರೀಡಾಂಗಣ ಸರಿಪಡಿಸಿ ಎಂದು ಕೇಳಿಕೊಂಡಿದ್ದಕ್ಕೆ ರಾಷ್ಟ್ರ ಮಟ್ಟದ ಕ್ರೀಡಾಪಟುವಿನ ಮೇಲೆ ಕೇಸ್ ಹಾಕಿಸಿದ ಮಹಾನುಭಾವ ಪ್ರಿಯಾಂಕ್ ಖರ್ಗೆ ಎಂದು ಬರೆದು ಸಚಿವರ ವಿರುದ್ಧ ದ್ವೇಷ ಪ್ರಚೋದಿಸಿದ್ದಾರೆ. ಇದಲ್ಲದೆ ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ ಎಂದು ಜಗದೇವ್ ಗುತ್ತೇದಾರ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈನಲ್ಲಿ ಸ್ವಚ್ಛತಾ ಕಾರ್ಯಕರ್ತೆ ಪದ್ಮ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ರಸ್ತೆಯಲ್ಲಿ ಪತ್ತೆ ಮಾಡಿದರು. ಅವರು ಅದನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದರು. ಈ ಚಿನ್ನಾಭರಣಗಳು ನಂಗನಲ್ಲೂರು ನಿವಾಸಿ ರಮೇಶ್ ಅವರಿಗೆ ಸೇರಿದ್ದವು. ಪದ್ಮ ಅವರ ಪ್ರಾಮಾಣಿಕತೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ₹1 ಲಕ್ಷ ಬಹುಮಾನ ನೀಡಿ ಸನ್ಮಾನಿಸಿದರು. ಇದು ಜನವರಿ 13, 2026 ರಂದು ಪ್ರಕಟವಾಯಿತು.
West Bengal | ಇಬ್ಬರು ನರ್ಸ್ ಗಳಿಗೆ ನಿಫಾ ವೈರಸ್ ಪಾಸಿಟಿವ್
ಕೋಲ್ಕತಾ, ಜ. 14: ಪಶ್ಚಿಮ ಬಂಗಾಳದಿಂದ ಕಳುಹಿಸಲಾದ ಬರಾಸತ್ ಆಸ್ಪತ್ರೆಯ ಇಬ್ಬರು ನರ್ಸ್ ಗಳ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿ ದೃಢಪಡಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನರ್ಸ್ ಗಳ ಮಾದರಿಗಳು ನಿಫಾ ವೈರಸ್ ಪಾಸಿಟಿವ್ ಆಗಿವೆ ಎಂಬುದು ಏಮ್ಸ್ ಕಲ್ಯಾಣಿಯ ವರದಿಯಲ್ಲಿ ತಿಳಿದುಬಂದಿತ್ತು. ನಂತರ ಮರುದೃಢೀಕರಣಕ್ಕಾಗಿ ಅವರ ಮಾದರಿಗಳನ್ನು ಪುಣೆಗೆ ಕಳುಹಿಸಲಾಗಿತ್ತು. ಪ್ರಸ್ತುತ ಇಬ್ಬರು ನರ್ಸ್ಗಳು ತಾವು ಕೆಲಸ ಮಾಡುತ್ತಿರುವ ಬರಾಸತ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಈ ಇಬ್ಬರು ನರ್ಸ್ ಗಳ ನಿಕಟ ಸಂಪರ್ಕಕ್ಕೆ ಬಂದ 120ಕ್ಕೂ ಅಧಿಕ ಜನರನ್ನು ಆರೋಗ್ಯ ಇಲಾಖೆ ಗುರುತಿಸಿದೆ. ನಿಫಾ ವೈರಸ್ ಪಾಸಿಟಿವ್ ದೃಢಪಟ್ಟ ಇಬ್ಬರು ನರ್ಸ್ ಗಳಲ್ಲಿ ಒಬ್ಬರು ಮಹಿಳೆ ಹಾಗೂ ಮತ್ತೊಬ್ಬರು ಪುರುಷರು. ನಿಕಟ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯ ಮುಂದುವರಿದಿದೆ. ನರ್ಸ್ಗಳ ಕುಟುಂಬ ಸದಸ್ಯರು ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರು ಸೇರಿದಂತೆ ಇದುವರೆಗೆ ಸಂಪರ್ಕಕ್ಕೆ ಬಂದ 120 ಮಂದಿಯನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಇಬ್ಬರು ವೈದ್ಯರು ಸೇರಿದಂತೆ ಕತ್ವಾದ 10 ಮಂದಿ ಹಾಗೂ 8 ವೈದ್ಯರು ಸೇರಿದಂತೆ ಬರ್ದ್ವಾನದ 38 ಮಂದಿಯನ್ನು ಮನೆಯಲ್ಲೇ ಐಸೋಲೇಷನ್ ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Bengaluru | ದಂಪತಿಗೆ ಚಾಕು ತೋರಿಸಿ 1 ಲಕ್ಷ ರೂ.ಸುಲಿಗೆ; ಮೂವರ ಬಂಧನ
ಬೆಂಗಳೂರು : ಆಟೋರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ದಂಪತಿ ಅಡ್ಡಗಟ್ಟಿ ಚಾಕು ತೋರಿಸಿ, ಬೆದರಿಸಿ ಅವರ ಬಳಿಯಿದ್ದ 1 ಲಕ್ಷ ರೂ.ನಗದು ಹಾಗೂ ಚಿನ್ನದುಂಗುರ ದೋಚಿ ಪರಾರಿಯಾಗಿದ್ದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿಯ ವಲಗೇರಹಳ್ಳಿ ನಿವಾಸಿ ಸಿದ್ದಗಂಗಯ್ಯ ಎಂಬುವರು ನೀಡಿದ ದೂರಿನನ್ವಯ ಆರೋಪಿಗಳಾದ ಸುರೇಶ್, ಶಶಿಕುಮಾರ್ ಹಾಗೂ ಅಖಿಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.22ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಗಳ ಮನೆಗೆ ಆಟೋದಲ್ಲಿ ಹೋಗುವಾಗ ಮಾರ್ಗ ಮಧ್ಯೆ ಮೂವರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಹಣ ನೀಡುವಂತೆ ಬೆದರಿಸಿದ್ದರು. ಈ ವೇಳೆ, ದೂರುದಾರರ ಪತ್ನಿ ವ್ಯಾನಿಟಿ ಬ್ಯಾಗ್ನಲ್ಲಿದ್ದ 1 ಲಕ್ಷ ರೂ. ನಗದು ಹಾಗೂ ಎರಡೂವರೆ ಗ್ರಾಂ ಚಿನ್ನದುಂಗುರವನ್ನು ಸುಲಿಗೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ವಿರುದ್ಧ ಹಿಂದೆಯೇ ಕೊಲೆ, ದರೋಡೆ, ಹಲ್ಲೆ, ಕಳ್ಳತನ, ಸುಲಿಗೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ ಆರೋಪದಡಿ ಹಲವು ಪ್ರಕರಣಗಳು ದಾಖಲಾಗಿವೆ. ಬಂಧಿತರ ಪೈಕಿ ಅಖಿಲ್, ಅಪರಾಧ ಕೃತ್ಯವೆಸಗುವಾಗ ಅಪ್ರಾಪ್ತನಾಗಿದ್ದರಿಂದ ಬಾಲಮಂದಿರದ ಸುಪರ್ದಿಗೆ ಪೊಲೀಸರು ಒಪ್ಪಿಸಿದ್ದರು. ಅಲ್ಲಿಂದ ಬಿಡುಗಡೆಗೊಂಡ ಬಳಿಕ ಇನ್ನಿತರ ಆರೋಪಿಗಳೊಂದಿಗೆ ಸೇರಿಕೊಂಡು ಮತ್ತೆ ಅಪರಾಧ ಕೃತ್ಯ ಎಸಗುವ ಪ್ರವೃತ್ತಿ ಮುಂದುವರೆಸಿದ್ದ ಎನ್ನಲಾಗಿದೆ. ಸದ್ಯ, ಈ ಮೂವರು ಆರೋಪಿಗಳು ಕೆಂಗೇರಿ, ಮಾದನಾಯಕನಹಳ್ಳಿ, ಪೀಣ್ಯ, ನಂದಿನಿ ಲೇಔಟ್, ಹಲಸೂರು, ಬ್ಯಾಡರಹಳ್ಳಿ ಹಾಗೂ ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸುಲಿಗೆ ಹಾಗೂ ಕಳ್ಳತನ ಮಾಡಿದ್ದ 10 ಲಕ್ಷ ರೂ. ಮೌಲ್ಯದ ಎರಡು ಆಟೋ, ಮೂರು ದ್ವಿಚಕ್ರ ವಾಹನ, ಬೆಳ್ಳಿಯ ಸರ, ಕಡಗಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
Strike: ಸಾರಿಗೆ ಮುಷ್ಕರ ಎಚ್ಚರಿಕೆ ನೀಡಿದ ಬಿಜೆಪಿ: ₹224 ಕೋಟಿ ಪಾವತಿಸಿದ್ದೇವೆ ಎಂದ ರಾಮಲಿಂಗಾ ರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನೌಕರರ 38 ತಿಂಗಳ ಹಿಂಬಾಕಿ ವೇತನ ನೀಡಬೇಕಿದೆ. ಶಕ್ತಿ ಯೋಜನೆ ಜಾರಿ ಬಳಿಕವು ಸಾರಿಗೆ ಇಲಾಖೆ ಲಾಭದಲ್ಲಿದ್ದಿದ್ದೇ ಆದಲ್ಲಿ ನಿವೃತ್ತ ನೌಕರರ ಬಾಕಿ ಹಣವನ್ನು ನೀಡುತ್ತಿಲ್ಲವೇಕೆ?. ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡುವ ಪರಿಸ್ಥಿತಿದೆ ಇದೆ ಎಂದು ಬಿಜೆಪಿ ಪ್ರಸ್ತಾಪಿಸಿದೆ. ಇದಕ್ಕೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯಿಸಿ
ಟೆನ್ಶನ್ನಲ್ಲಿ ಜೈಶಂಕರ್ಗೆ ಫೋನ್ ಮಾಡಿದ ಇರಾನ್ ವಿದೇಶಾಂಗ ಸಚಿವ; ಭಾರತದ ಸಲಹೆ ಆಲಿಸಿದ ಅಬ್ಬಾಸ್
ಇರಾನ್ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಖಮೇನಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶವನ್ನು ಸಹಜ ಸ್ಥಿತಿಗೆ ತರುವುದು ಸವಾಲಿನ ಕೆಲಸವಾಗಿದೆ. ಈ ಮಧ್ಯೆ ಇರಾನ್ನ ವಿದೇಶಾಂಗ ಸಚಿವ ಸೈಯ್ಯದ್ ಅಬ್ಬಾಸ್ ಅರಾಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಅಸಹಜ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ
ವಿಜಯನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹೆಸರು ಬದಲಾಯಿಸಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ, ವಿಜಯನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹೊಸಪೇಟೆಯ ಅಮರಾವತಿ ಪ್ರವಾಸಿ ಮಂದಿರದ ಎದುರು ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಡವರ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಈ ಮಹತ್ವದ ಯೋಜನೆಗೆ ಯುಪಿಎ ಸರಕಾರ ನೀಡಿದ ಹೆಸರನ್ನು ಅಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ನಾಯಕರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೀರಾಜ್ ಶೇಕ್ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ರಾಜ್ಯದ ಪ್ರಭಾವಿ ನಾಯಕರು, ಜಿಲ್ಲಾ ಸಚಿವರಾದ ಜಮೀರ್ ಅಹಮ್ಮದ್ ಖಾನ್, ಸಂಸದರಾದ ಇ. ತುಕಾರಾಂ, ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಎನ್. ಗಣೇಶ್, ಶ್ರೀಮತಿ ಲತಾ ಮಲ್ಲಿಕಾರ್ಜುನ ಭಾಗವಹಿಸಿದರು.
ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ: ಜನಪ್ರತಿನಿಧಿಗಳ ಗೈರು ಖಂಡಿಸಿ ಪ್ರತಿಭಟನೆ
ರಾಯಚೂರು; 12ನೇ ಶತಮಾನದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ವಚನಕಾರರಲ್ಲಿ ಪ್ರಮುಖರಾದ ಶಿವಯೋಗಿ ಸಿದ್ಧರಾಮೇಶ್ವರ ಅವರ ಜಯಂತಿಯನ್ನು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಚರಣೆ ಮಾಡಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಸೇರಿದಂತೆ ಇತರೆ ಗಣ್ಯರು ಶಿವಯೋಗಿ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ, ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ, ಸಿಪಿಐಗಳಾದ ಉಮೇಶ ಕಾಂಬಳೆ, ನಾಗರಾಜ್ ಮೇಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಕೆಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗೈರಾಗಿರುವುದರಿಂದ ಬೋವಿ ಸಮಾಜದ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಮಾತ್ರ ಏಕೆ ಅಧಿಕಾರಿಗಳು ಗೈರಾಗುತ್ತಾರೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಬೋವಿ ಸಮಾಜದ ಅಧ್ಯಕ್ಷ ನಾರಾಯಣಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಭೀಮರಾಯ ಸೇರಿದಂತೆ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ; ಮಾಜಿ ಸಚಿವ ಬಿ.ನಾಗೇಂದ್ರಗೆ ನಿರೀಕ್ಷಣಾ ಜಾಮೀನು
ಬೆಂಗಳೂರು : ಮಾಜಿ ಸಚಿವ ಬಿ.ನಾಗೇಂದ್ರ ಅವರು ಹಲವು ಹಣ ದುರ್ಬಳಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಆದರೆ, ಇದಕ್ಕೆ ಪೂರಕವಾಗಿ ಯಾವುದೇ ದಾಖಲೆ ಹಾಜರುಪಡಿಸಿಲ್ಲ ಎಂದು ಹೇಳಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ, ಸರಕಾರಿ ಮತ್ತು ಖಾಸಗಿ ವ್ಯಕ್ತಿಗಳ ನೆರವಿನಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ (ಕೆಜಿಟಿಟಿಐ) ಟೆಂಡರ್ ಪ್ರಕ್ರಿಯೆ ತಿರುಚಿ ತಮಗೆ ಬೇಕಾದ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು ಲಂಚ ಸ್ವೀಕರಿಸಿದ ಆರೋಪ ಕುರಿತು ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪುರಸ್ಕರಿಸಿದ್ದಾರೆ. ಪ್ರಕರಣದಲ್ಲಿ ನಾಗೇಂದ್ರ ಅವರನ್ನು ಬಂಧಿಸಿದರೆ 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಪಡೆದು ಬಿಡುಗಡೆ ಮಾಡಬೇಕು. ಆರೋಪಿಯು ಪ್ರಾಸಿಕ್ಯೂಷನ್ ಸಾಕ್ಷಿಯನ್ನು ಬೆದರಿಸಬಾರದು ಅಥವಾ ತಿರುಚಬಾರದು. ಇಂದಿನಿಂದ 15 ದಿನಗಳ ಒಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಿ, ತನಿಖೆಗೆ ಸಹಕರಿಸಬೇಕು. ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು. ಪೂರ್ವಾನುಮತಿ ಪಡೆಯದೇ ನ್ಯಾಯಾಲಯದ ವ್ಯಾಪ್ತಿ ತೊರೆಯಬಾರದು. ಸಿಬಿಐ ಅಂತಿಮ ವರದಿ ಸಲ್ಲಿಸುವವರೆಗೆ ಅಥವಾ ಮುಂದಿನ 3 ತಿಂಗಳವರೆಗೆ ತಿಂಗಳ ಎರಡನೇ ಶನಿವಾರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ತನಿಖಾಧಿಕಾರಿಯ ಮುಂದೆ ಹಾಜರಿರಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಆದೇಶದಲ್ಲೇನಿದೆ? ವಾಲ್ಮೀಕಿ ನಿಗಮದ ಹಣವನ್ನು ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ವರ್ಗಾಯಿಸಲಾಗಿದ್ದು, ಅದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ ಎಂದು ಹೇಳಲಾಗಿದೆ. ಸಿಬಿಐನ ಈ ವಾದವನ್ನು ಒಪ್ಪಿಕೊಳ್ಳುವುದಾದರೆ ಹಣ ವರ್ಗಾವಣೆಯ ಹೆಣಿಗೆ ಮತ್ತು ಅಕ್ರಮ ಹಣ ವರ್ಗಾವಣೆಯ ಕುರಿತು ತನಿಖೆ ನಡೆಸುವ ಸೂಚನೆ ನೀಡುತ್ತಿದೆ. ಹೀಗಾದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವಾಲ್ಮೀಕಿ ನಿಗಮದ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ದಾಖಲಿಸಿರುವ ಪ್ರಕರಣದ ಕುರಿತು ಉತ್ತರಿಸಬೇಕಿದೆ. ಆದರೆ, ಆಕ್ಷೇಪಣೆ ಹೊರತುಪಡಿಸಿ, ಸಿಬಿಐ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಕೆಜಿಟಿಟಿಐ ಟೆಂಡರ್ ಅನ್ನು ಸರ್ಕಾರದ ಪೋರ್ಟಲ್ ಮೂಲಕ ಕರೆಯಲಾಗಿದ್ದು, ಇದಕ್ಕೆ ಸಂಬಂಧಿಸಿದ ಮತ್ತು ಟೆಂಡರ್ ಅನುಷ್ಠಾನವಾಗಿರುವ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಇ-ಆಡಳಿತ ಪರಿಶೀಲನೆಯ ಬಳಿಕ ಟೆಂಡರ್ ಹಣ ಬಿಡುಗಡೆ ಮಾಡಲಾಗಿದೆ. ಇಂಥ ಸಂದರ್ಭದಲ್ಲಿ ಏಕೆ ಮತ್ತೆ ತನಿಖೆ ನಡೆಸಬೇಕು ಎಂಬುದಕ್ಕೆ ಸಿಬಿಐ ಉತ್ತರಿಸಬೇಕಿದೆ ಎಂದು ಕೋರ್ಟ್ ಹೇಳಿದೆ. ಸಿಬಿಐ ತನಿಖಾ ವ್ಯಾಪ್ತಿ ಮತ್ತು ಹಂದರ ವಿಭಿನ್ನವಾಗಿದ್ದು, ವಾಲ್ಮೀಕಿ ನಿಗಮದ ಹಣ ಮತ್ತು ಇತರೆ ಹಣ ಎಲ್ಲಿ ಹೋಗಿದೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಯಾವ ರೀತಿಯಲ್ಲಿ ಅಪರಾಧ ಪ್ರಕ್ರಿಯೆ ನಡೆದಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಇದನ್ನು ಪೂರಕ ದಾಖಲೆಗಳೊಂದಿಗೆ ಸಿಬಿಐ ಸಮರ್ಥಿಸಿಲ್ಲ. ತನಿಖೆಯ ವಿಧಾನದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಮೇಲ್ನೋಟಕ್ಕೆ ಪ್ರಕರಣ ಕಂಡರೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ. ಈ ನೆಲೆಯಲ್ಲಿ ಅರ್ಜಿದಾರ ನಾಗೇಂದ್ರ ಅವರು ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಾಗಿದ್ದಾರೆ. ಆದ್ದರಿಂದ, ಕಠಿಣ ಷರತ್ತು ವಿಧಿಸಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಮಂಗಳೂರು ವಿ.ವಿ. ಅಗ್ರ ಸ್ಥಾನ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2025-26ರ ಮೂರನೇ ದಿನವಾದ ಬುಧವಾರ ಕೂಟದ ಏಕೈಕ ಮಿಕ್ಸೆಡ್ (ಪುರುಷ+ಮಹಿಳೆ) ಸ್ಪರ್ಧೆಯಾದ 4x400 ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪಾರಮ್ಯ ಮೆರೆಯಿತು. ಸಮಗ್ರ ಪದಕ ಪಟ್ಟಿಯಲ್ಲಿ ಮಂಗಳೂರು ವಿ.ವಿ. 74 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿಗಳು ಬುಧವಾರ ಮೂರು ಚಿನ್ನ ಹಾಗೂ ಮೂರು ಕಂಚಿನ ಪದಕ ಗೆದ್ದಿದ್ದು, ಈವರೆಗೆ ಒಟ್ಟು 12 ಪದಕ ಜಯಿಸಿದರು. ಆತಿಥೇಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭಾಗೀರಥಿ ಬುಧವಾರ ಮುಂಜಾನೆ ನಡೆದ ಹಾಫ್ ಮ್ಯಾರಥಾನ್ನಲ್ಲಿ ಚಿನ್ನ ಗೆದ್ದು, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಭ್ರಮ ತಂದರು. ಹಾಫ್ ಮ್ಯಾರಥಾನ್ನಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾಲಯಕ್ಕೆ ಚಿನ್ನ ತಂದುಕೊಟ್ಟ ಭಾಗೀರಥಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಳ್ವಾಸ್ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿನಿ ಮೂಲತಃ ಉತ್ತಾರಖಂಡ ಚಮೋಲಿ ಜಿಲ್ಲೆಯ ವ್ಯಾನ್ ಹಳ್ಳಿಯವರು. 2025ರ ಏಪ್ರಿಲ್ನಲ್ಲಿ ಇರಾಕ್ನಲ್ಲಿ ನಡೆದಿದ್ದ ಆಲ್ ಬಾಸ್ರಾ ಅಂತರ್ ರಾಷ್ಟ್ರೀಯ ಹಾಫ್ ಮ್ಯಾರಥಾನ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ದೆಹಲಿ, ಮುಂಬೈ, ದೆಹಲಿ ಮಾತ್ರವಲ್ಲ ವಿದೇಶದಲ್ಲಿ ನಡೆಯುವ ಮ್ಯಾರಥಾನ್ಗಳಲ್ಲೂ ಪಾಲ್ಗೊಂಡಿದ್ದರು. ಕಳೆದ 35 ವರ್ಷಗಳಿಂದ ಮ್ಯಾರಾಥಾನ್ನಲ್ಲಿ ಹೆಸರು ಮಾಡುತ್ತಿರುವ ಸುನೀಲ್ ಶರ್ಮಾ ಅವರ ಶಿಷ್ಯೆ. ಡಿಸ್ಕಸ್ ಥ್ರೋದಲ್ಲಿ ಚಿನ್ನ ಗೆದ್ದ ಉಜ್ವಲ್ ಚೌಧರಿ ಹರಿಯಾಣದ ಹಿಸ್ಸಾರ್ನ ಕೃಷಿಕ ರಾಜೀವ್ ಮತ್ತು ಬಬ್ಲಿ ದಂಪತಿಯ ಪುತ್ರ. ಅರವಿಂದ್ ತರಬೇತಿಯಲ್ಲಿ ಪಳಗಿದ ಉಜ್ವಲ್ ಏಷಿಯನ್ ಚಾಂಪಿಯನ್ಶಿಪ್ ಗುರಿ ಹೊಂದಿ ದ್ದಾರೆ. ಇದೇ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಾಗೇಂದ್ರ ಅವರು ಭಟ್ಕಳದ ಆಟೋ ಚಾಲಕ ಅಣ್ಣಪ್ಪ ನಾಯ್ಕ ಅವರ ಪುತ್ರ. ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದಿದ್ದರು. 400 ಮೀಟರ್ಸ್ ಓಟದ ಮಹಿಳಾ ವಿಭಾಗದ ಚಿನ್ನ ಗೆದ್ದ ಚಂಡೀಗಢ ವಿಶ್ವವಿದ್ಯಾಲಯದ ಎಂ.ಎ. ಯೋಗ ವಿದ್ಯಾರ್ಥಿನಿ ಪ್ರಿಯಾ ಠಾಕೂರ್. ಹಿಮಾಚಲ ಪ್ರದೇಶದ ಅಮೀರ್ಪುರ್ ಕಂಗಾಡದ 24 ವರ್ಷದ ಅವರು, ಕೃಷಿಕರಾದ ದೇಸ್ರಾಜ್ ಮತ್ತು ಮಾಯಾದೇವಿ ದಂಪತಿ ಪುತ್ರಿ. ಅನಿಲ್ ಕುಮಾರ್ ತರಬೇತಿಯಲ್ಲಿ ಪಳಗಿದ್ದಾರೆ. ಫಲಿತಾಂಶ: 4x400 ಮೀಟರ್ಸ್ ಮಿಕ್ಸೆಡ್ ರಿಲೇ: ಮಂಗಳೂರು ವಿ.ವಿ. (ರೇಖಾ, ಆಕಾಶ್ ರಾಜ್, ಸಾಕೇತ್ ಮಿಂಜ್, ಮನಿಷಾ) (3:24.83ನಿ..)ಪ್ರಥಮ, ಚಂಡೀಗಢ ಪಂಜಾಬ್ ವಿ.ವಿ. (ರೋಜ್ಯ್ಜತ್ ಸಿಂಗ್, ನಿತಿಶಾ, ಕುಲ್ವೀರ್ ರಾಮ್, ಕಾಜಲ್) (3:24.87 ನಿ.) ದ್ವಿತೀಯ, ಅಮೃತಸರ ಗುರುನಾನಕ್ ದೇವ್ ವಿ.ವಿ. (ರಾಧಾದೇವಿ, ನವ್ಯಾ, ಅಮೃತ್, ಸಚಿನ್) (3:25.86ನಿ.) ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗ: ಹಾಫ್ ಮ್ಯಾರಥಾನ್: 1.ರವಿಕುಮಾರ್ ಪಾಲ್, ಲಕ್ನೋ ವಿ.ವಿ. (1:06:52.42) 2.ಪ್ರವೀಣ್ ಬಾಬನ್ ಕಾಂಬ್ಳೆ, ಕೊಲ್ಹಾಪುರ ಶಿವಾಜಿ ವಿ.ವಿ. (1:07:13.04)-2 3.ಸತೀಶ್ ಕುಮಾರ್ ವರ್ಮಾ, ಉ.ಪ್ರ. ಜವಾನ್ಪುರ್ ವೀರ ಬಹದ್ದೂರ್ ಸಿಂಗ್ ವಿ.ವಿ. (1:07:24.44)-3. ಟ್ರಿಪಲ್ ಜಂಪ್: 1.ಮೋಹನ್ ರಾಜ್, ಚೆನೈ ಮದ್ರಾಸ್ ವಿ.ವಿ. (16.09ಮೀ.) 2.ವಿದ್ಯಾ ವಿಕಾಸ್, ಮಧುರೈ ಕಾಮರಾಜ್ ವಿ.ವಿ.(15.56) 3ಡೊನಾಲ್ಡ್ ಎಂ., ಕೇರಳದ ಕ್ಯಾಲಿಕಟ್ವಿ.ವಿ.(15.50) ಡಿಸ್ಕಸ್ ಥ್ರೋ: 1ಉಜ್ವಲ್ ಚೌಧರಿ, ಮಂಗಳೂರು ವಿ.ವಿ. (54.16ಮೀ.) 2.ಋತಿಕ್, ಮೊಹಾಲಿಯ ಚಂಡೀಗಢ ವಿ.ವಿ. (53.50ಮೀ.) 3.ನಾಗೇಂದ್ರ ಅಣ್ಣಪ್ಪ ನಾಯ್ಕ, ಮಂಗಳೂರು ವಿ.ವಿ. (53.35ಮೀ) 400 ಮೀಟರ್ಸ್ ಓಟ: 1.ಅಜಯ್ ಡಿ, ಚೆ ನ್ನೈನ ಮದ್ರಾಸ್ ವಿ.ವಿ. (46.83ನಿ.) 2.ತರಂದೀಪ್ ಸಿಂಗ್, ಪಟಿಯಾಲ ಪಂಜಾಬಿ ವಿ.ವಿ. (46.91ನಿ.) 3. ಆಕಾಶ್ ರಾಜ್ ಎಸ್.ಎಂ., ಮಂಗಳೂರು ವಿಶ್ವವಿದ್ಯಾಲಯ (47.19ನಿ) 3000 ಮೀಟರ್ಸ್ ಸ್ಟೀಫಲ್ ಚೇಸ್: 1.ರಣವೀರ್ ಸಿಂಗ್, ವಡೋದರಾ ಸ್ವರ್ಣಿಮಾ ಗುಜರಾತ್ ಸ್ಪೋರ್ಟ್ಸ್ ವಿ.ವಿ. (8:45.94 ನಿ.) 2.ಮನೋಜ್ ಕುಮಾರ್, ಕೇರಳದ ಕ್ಯಾಲಿಕಟ್ ವಿ.ವಿ.(8:48.80ನಿ.) 3.ನವರತನ್, ಉ.ಪ್ರ. ಜವಾನ್ಪುರ್ ವೀರ ಬಹದ್ದೂರ್ ಸಿಂಗ್ ವಿ.ವಿ. (8:51.03ನಿ.) ಡೆಕಥ್ಲಾನ್: 1.ಮನೋಜ್ ಕುಮಾರ್ ಆರ್., ಚೆನ್ನೈ ಮದ್ರಾಸ್ ವಿ.ವಿ. (6872 ಅಂಕ) 2. ಹರೀಶ್, ಜೈನ್ ವಿ.ವಿ. ಬೆಂಗಳೂರು (6711) 3.ಚಮನ್ಜ್ಯೋತ್ ಸಿಂಗ್, ಮಂಗಳೂರು ವಿ.ವಿ. (6202) ಮಹಿಳೆಯರ ವಿಭಾಗ: ಹಾಫ್ ಮ್ಯಾರಾಥಾನ್ 1.ಭಾಗೀರಥಿ, ಮಂಗಳೂರು ವಿಶ್ವವಿದ್ಯಾಲಯ (1:21:49.95-ಗಂ:ನಿ:ಸೆ) 2.ಮಾಯಾ, ಉತ್ತಾರಖಂಡ ಅಲ್ಮೋರಾದ ಸೋಬಾನ್ ಸಿಂಗ್ ಜೀನಾ ವಿ.ವಿ. (1:22:13.44) 3. ಗಂಗಾ, ಮೀರತ್ ಚೌಧರಿ ಚರಣ್ಸಿಂಗ್ ವಿ.ವಿ. (1:23:07.35) 400 ಮೀಟರ್ಸ್ ಓಟ: 1.ಪ್ರಿಯಾ ಠಾಕೂರ್, ಚಂಡೀಗಢ ವಿ.ವಿ. (53.33 ನಿ.) 2.ಅಂಜಲಿ, ರೋಹ್ತಕ್ ಎಂ.ಡಿಯು ವಿ.ವಿ.(54.05ನಿ.), 3.ಆಯುಷಿ, ಸಹರಾನ್ಪುರ್ ಮಾ ಶಾಕುಂಬರಿ ವಿ.ವಿ. (54.24ನಿ.) 3000 ಮೀಟರ್ಸ್ ಸ್ಟೀಫಲ್ ಚೇಸ್: 1.ದೇವ್ಕಾರ್ ಪ್ರಾಚಿ ಅಂಕುಶ್, ಮೊಹಾಲಿ ಚಂಡೀಗಢ ವಿ.ವಿ. (10:22.04 ನಿ.) 2.ಚಂಚಲ್, ಕಾನ್ಪುರ ಛತ್ರಪತಿ ಸಾಹುಜೀ ವಿ.ವಿ. (10:33.51 ನಿ.)-2 3.ಅಂಜು, ವಿಜಯವಾಡ ಕೆ.ಎಲ್. ವಿ.ವಿ. (10:35.20ನಿ.) ಜಾವೆಲಿನ್ ಥ್ರೋ: 1.ದೀಪಿಕಾ, ಮೊಹಾಲಿ ಚಂಡೀಗಢ ವಿ.ವಿ. (54.64 ಮೀ.) 2. ಜ್ಯೋತಿ, ಗುರುಕಾಶಿ ವಿ.ವಿ. (52.59ಮೀ) 3. ಪೂನಂ, ಮೊಹಾಲಿ ಚಂಡೀಗಢ ವಿ.ವಿ. (50.85 ಮೀ.)
ರಾಯಚೂರು ಜಿಲ್ಲಾ ಉತ್ಸವ: ಜನವರಿ 26ರಿಂದ ಹೆಲಿಕಾಪ್ಟರ್ ರೈಡ್
ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಜನವರಿ 26ರಿಂದ 31ರವರೆಗೆ ರಾಯಚೂರು ಜಿಲ್ಲೆಯ ನಾಗರಿಕರಿಗೆ ಬಾನಂಗಳದಿಂದ ರಾಯಚೂರು ವೀಕ್ಷಣೆಗೆ ರಾಯಚೂರು ಬೈಸ್ಕಯ್ ಎಂಬ ವಿಶೇಷ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಯಚೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಿಂದ ಹೆಲಿಕಾಪ್ಟರ್ ರೈಡ್ಗೆ ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮ ಪ್ರತಿದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 12.30ರಿಂದ ಸಂಜೆ 4.30ರವರೆಗೆ ನಡೆಯಲಿದೆ. ಪ್ರತಿಯೊಬ್ಬರಿಗೆ ಕೇವಲ 3,500 ರೂ.ಗಳನ್ನು ನಿಗದಿ ಮಾಡಲಾಗಿದೆ. 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು. ಟಿಕೆಟ್ ಕುರಿತು ಮಾಹಿತಿಗಾಗಿ ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಂತ ನರೇಂದ್ರ ಪ್ರಸಾದ್ ಗಿರಿ ಆತ್ಮಹತ್ಯೆ ಪ್ರಕರಣ | ಪ್ರಮುಖ ಆರೋಪಿಗೆ ಜಾಮೀನು
ಹೊಸದಿಲ್ಲಿ, ಜ.14: ಅಖಿಲ ಭಾರತೀಯ ಆಖಾಡ ಪರಿಷತ್ನ ವರಿಷ್ಠ ಮಹಂತ ನರೇಂದ್ರ ಗಿರಿ ಅವರ ಸಾವಿನ ಪ್ರಕರಣದ ಪ್ರಮುಖ ಆರೋಪಿ ಆದ್ಯ ಪ್ರಸಾದ್ ತಿವಾರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ. ಭಾರೀ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಭಾರತದ ಅತಿ ದೊಡ್ಡ ಸಾಧು–ಸಂತರ ಸಂಘಟನೆಯಾದ ಅಖಿಲ ಭಾರತೀಯ ಆಖಾಡ ಪರಿಷತ್ನ ಅಧ್ಯಕ್ಷರಾಗಿದ್ದ ನರೇಂದ್ರ ಗಿರಿ ಅವರ ಮೃತದೇಹವು 2021ರ ಅಕ್ಟೋಬರ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಮ್ಮ ಪರಿತ್ಯಕ್ತ ಶಿಷ್ಯ ಆನಂದ್ ಗಿರಿ, ಆರ್ಚಕ ಆದ್ಯ ಪ್ರಸಾದ್ ತಿವಾರಿ ಹಾಗೂ ಆತನ ಪುತ್ರ ಸಂದೀಪ್ ತಿವಾರಿಯಿಂದ ನರೇಂದ್ರ ಗಿರಿ ಅವರು ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದರು. ಸಮಾಜದ ಕಣ್ಣಲ್ಲಿ ಕಳಂಕಿತ ಹಾಗೂ ಅಪಮಾನಕ್ಕೊಳಗಾಗುವುದನ್ನು ತಪ್ಪಿಸಲು ಅವರು ಸಾವಿಗೆ ಶರಣಾಗಿದ್ದಾರೆ ಎಂದು ಸಿಬಿಐ 2021ರ ನವೆಂಬರ್ ನಲ್ಲಿ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ತಿಳಿಸಿತ್ತು. ಆರೋಪಿ ಆದ್ಯ ಪ್ರಸಾದ್ ತಿವಾರಿಗೆ ಜಾಮೀನು ನಿರಾಕರಿಸಿದ್ದ ಅಲಹಾಬಾದ್ ಹೈಕೋರ್ಟ್ನ ಅಕ್ಟೋಬರ್ 14, 2025ರ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಸತೀಶ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಸುಮಾರು 150 ಸಾಕ್ಷಿಗಳ ವಿಚಾರಣೆ ನಡೆಸಬೇಕಾಗಿದ್ದ ಸಿಬಿಐ ಈವರೆಗೆ ಕೇವಲ ಮೂವರನ್ನಷ್ಟೇ ವಿಚಾರಣೆ ನಡೆಸಿದೆ. ಆದ್ದರಿಂದ ನಿಕಟ ಭವಿಷ್ಯದಲ್ಲಿ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ತೀರಾ ವಿರಳ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಿಬಿಐ, ಮಹಂತ ನರೇಂದ್ರ ಗಿರಿ ಅವರು ಸಾವಿಗೆ ಮುನ್ನ ಸ್ವತಃ ಚಿತ್ರೀಕರಿಸಿದ್ದ ವೀಡಿಯೊವೊಂದನ್ನು ವಶಪಡಿಸಿಕೊಂಡಿತ್ತು. ಅದರಲ್ಲಿ, ತಾವು ಮಹಿಳೆಯೊಬ್ಬರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವಂತೆ ಎಡಿಟ್ ಮಾಡಲಾದ ವೀಡಿಯೊವನ್ನು ಆನಂದ್ ಗಿರಿ ಬಿಡುಗಡೆಗೊಳಿಸಲಿದ್ದಾನೆ ಎಂದು ನರೇಂದ್ರ ಗಿರಿ ಅವರು ಖಿನ್ನತೆ ವ್ಯಕ್ತಪಡಿಸಿದ್ದರು. ಆರೋಪಿಗಳಾದ ಅಲಹಾಬಾದ್ನ ಬಡೆ ಹನುಮಾನ್ ಮಂದಿರದ ಆರ್ಚಕ ಆನಂದ್ ಗಿರಿ, ಆದ್ಯ ಪ್ರಸಾದ್ ತಿವಾರಿ ಹಾಗೂ ಸಂದೀಪ್ ತಿವಾರಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರಿಮಿನಲ್ ಸಂಚಿನ ಆರೋಪಗಳನ್ನು ಹೊರಿಸಲಾಗಿದೆ.
ಚೀನಾ ಕಮ್ಯುನಿಸ್ಟ್ ಪಕ್ಷದಿಂದ ಬಿಜೆಪಿ, ಆರೆಸ್ಸೆಸ್ ಭೇಟಿ; ಸಮಯ, ಉದ್ದೇಶ ಪ್ರಶ್ನಿಸಿದ ಕಾಂಗ್ರೆಸ್
ಹೊಸದಿಲ್ಲಿ, ಜ. 14: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ಭೇಟಿಯಾದ ಒಂದು ದಿನದ ಬಳಿಕ, ಚೀನಾ ಕಮ್ಯುನಿಸ್ಟ್ ಪಾರ್ಟಿ (ಸಿಪಿಸಿ)ಯ ನಿಯೋಗವೊಂದು ಮಂಗಳವಾರ ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಹಿರಿಯ ಪದಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಹಿರಿಯ ಬಿಜೆಪಿ ನಾಯಕರೂ ಮಾತುಕತೆಯ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗದ ಭೇಟಿಯನ್ನು ‘‘ಸೌಜನ್ಯದ ಭೇಟಿ’’ ಎಂದಷ್ಟೇ ಅವರು ಬಣ್ಣಿಸಿದ್ದಾರೆ. ಈ ನಡುವೆ, ಚೀನಾ ಕಮ್ಯುನಿಸ್ಟ್ ಪಕ್ಷ ಹಾಗೂ ಆರ್ಎಸ್ಎಸ್ ಮತ್ತು ಬಿಜೆಪಿ ನಡುವಿನ ಭೇಟಿಯ ಸಮಯ ಮತ್ತು ಉದ್ದೇಶವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ‘‘ಭೇಟಿಯ ಬಗ್ಗೆ ಆಕ್ಷೇಪವಿಲ್ಲ. ಮಾತುಕತೆಯ ಬಗ್ಗೆ ಆಕ್ಷೇಪವಿಲ್ಲ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದರು. ‘‘ಸಮಸ್ಯೆ ಇರುವುದು ಬಿಜೆಪಿಯ ಸೋಗಲಾಡಿತನ ಮತ್ತು ವಂಚನೆಯ ಬಗ್ಗೆ’’ ಎಂದು ಅವರು ಹೇಳಿದರು. ಕೆಲವು ವರ್ಷಗಳ ಹಿಂದೆ, ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಹಾಕುವ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಗುರಿಪಡಿಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಮುಚ್ಚಿದ ಬಾಗಿಲ ಸಭೆಯ ಗಂಟೆಗಳ ಬಳಿಕ, ಜಮ್ಮು ಮತ್ತು ಕಾಶ್ಮೀರದ ಶಕ್ಸ್ಗಮ್ ಕಣಿವೆ ತನ್ನದೆಂದು ಚೀನಾ ಪ್ರತಿಪಾದಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ವಿವಾದಿತ ಪ್ರದೇಶದಲ್ಲಿ ಚೀನಾ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ ಎಂಬ ವರದಿಗಳ ನಡುವೆ, ಆಡಳಿತಾರೂಢ ಪಕ್ಷವು ಚೀನಾಕ್ಕೆ ಮಿಶ್ರ ಸಂದೇಶಗಳನ್ನು ನೀಡುತ್ತಿದೆ ಎಂದು ಅದು ಹೇಳಿದೆ. ‘‘ಈ ಮುಚ್ಚಿದ ಬಾಗಿಲ ಸಭೆಗಳಲ್ಲಿ ಏನು ನಡೆಯಿತು ಎಂಬುದನ್ನು ಬಿಜೆಪಿ ಮತ್ತು ಪ್ರಧಾನಿ ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ನಿರೀಕ್ಷಿಸುತ್ತದೆ. ಈ ವಿಷಯದಲ್ಲಿ ಅವರು ಸಂಪೂರ್ಣ ಉತ್ತರದಾಯಿತ್ವ ವಹಿಸಿಕೊಳ್ಳಬೇಕು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು’’ ಎಂದು ಪವನ್ ಖೇರಾ ಹೇಳಿದರು. ಭಾರತೀಯ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆಯೇ ಎಂಬುದಾಗಿ ಅವರು ಪ್ರಶ್ನಿಸಿದರು.
ಸಂಸ್ಕಾರಯುತ ಶಿಕ್ಷಣದಿಂದ ಬದುಕು ಸುಂದರ: ನವೀನ್ ಚಂದ್ರ ಶೆಟ್ಟಿ
ಕಾರ್ಕಳ ರೋಟರಿ ಕ್ಲಬ್ ವತಿಯಿಂದ ರಾಷ್ಟ್ರೀಯ ಯುವಕ ದಿನಾಚರಣೆ
ಭಟ್ಕಳ: ಜಾಗ ವಿವಾದದ ಹಿನ್ನೆಲೆ; ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ; ಪ್ರಕರಣ ದಾಖಲು
ಭಟ್ಕಳ: ಮಾರುಕೇರಿ ಗ್ರಾಮದ ಹೆಜ್ಜಲು ಪ್ರದೇಶದಲ್ಲಿ ಜಾಗ ಸಂಬಂಧಿತ ವಿವಾದ ನ್ಯಾಯಾಲಯದಲ್ಲಿ ಪ್ರಚಲಿತ ದಲ್ಲಿರುವ ನಡುವೆಯೇ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀಮತಿ ಸುಜಾತಾ ರವಿ ಗೊಂಡ (39) ಅವರು ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಪತಿ ರವಿ ನಾಗಪ್ಪ ಗೊಂಡ ಹಾಗೂ ಅಣ್ಣ ಶಿವರಾಮ ನಾಗಪ್ಪ ಗೊಂಡ ಧನದ ಕೊಟ್ಟಿಗೆಯ ಬಳಿ ಕೆಲಸ ಮಾಡುತ್ತಿದ್ದ ವೇಳೆ, ಜಾಗದ ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಆರೋಪಿತರು ಏಕಾಏಕಿ ದಾಳಿ ನಡೆಸಿದ್ದಾರೆ. ಆರೋಪಿತರು ಬುಲೆರೋ ವಾಹನದ ಗ್ಲಾಸ್ನ್ನು ಒಡೆದು, ರಾಡಿನಿಂದ ಕಣ್ಣಿನ ಮೇಲೆ ಹೊಡೆದು ತೀವ್ರ ರಕ್ತಗಾಯ ಪಡಿಸಿದ್ದಲ್ಲದೆ, ಬಳಿಕ ಕಲ್ಲಿನಿಂದ ತಲೆಗೆ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ತಡೆಯಲು ಮುಂದಾದ ಸುಜಾತಾ ಗೊಂಡ ಅವರನ್ನು ದೂಡಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ, ಪ್ರಕರಣ ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಆರೋಪವೂ ದೂರಿನಲ್ಲಿ ಇದೆ. ಹಲ್ಲೆಯಿಂದ ಗಾಯಗೊಂಡ ಶಿವರಾಮ ನಾಗಪ್ಪ ಗೊಂಡ (ಸುಮಾರು 50) ಅವರಿಗೆ ತಲೆಗೆ ಗಂಭೀರ ಗಾಯಗಳಾ ಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರವಿ ನಾಗಪ್ಪ ಗೊಂಡ (42) ಹಾಗೂ ಸುಜಾತಾ ರವಿ ಗೊಂಡ ಸೇರಿದಂತೆ ಇತರರಿಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹೆಜ್ಜಲು–ಮಾರುಕೇರಿ ನಿವಾಸಿಗಳಾದ ಮಾದೇವ ಮಂಜು ಗೊಂಡ, ನಾರಾಯಣ ಮಂಜು ಗೊಂಡ, ಸದಾನಂದ ನಾಗಪ್ಪ ಗೊಂಡ, ನಾಗಪ್ಪ ಸಣ್ಣು ಗೊಂಡ ಹಾಗೂ ಅನಂತ ತಿಮ್ಮಪ್ಪ ಗೊಂಡ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಖತರ್ ನಲ್ಲಿರುವ ಅಮೆರಿಕ ವಾಯುನೆಲೆಯ ಕೆಲವು ಸಿಬ್ಬಂದಿಗೆ ನಿರ್ಗಮಿಸಲು ಸೂಚನೆ
ದೋಹ, ಜ.14: ಬುಧವಾರ ಸಂಜೆಯೊಳಗೆ ಖತರ್ ನಲ್ಲಿರುವ ಅಮೆರಿಕ ಮಿಲಿಟರಿಯ ಅಲ್ ಉದೈದ್ ವಾಯುನೆಲೆಯನ್ನು ತೊರೆಯುವಂತೆ ಕೆಲವು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಅಲ್ ಉದೈದ್ ಮಧ್ಯಪ್ರಾಚ್ಯದ ಅತಿದೊಡ್ಡ ಅಮೆರಿಕಾ ಮಿಲಿಟರಿ ನೆಲೆಯಾಗಿದ್ದು, ಅಮೆರಿಕಾದ ಸುಮಾರು 10,000 ಯೋಧರನ್ನು ಇಲ್ಲಿ ನೆಲೆಗೊಳಿಸಲಾಗಿದೆ. ಇದು ಕಾರ್ಯತಂತ್ರದ ಬದಲಾವಣೆಯಾಗಿದ್ದು ಸ್ಥಳಾಂತರವಲ್ಲ. ಈ ಕ್ರಮಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ ಎಂದು ರಾಜತಾಂತ್ರಿಕ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಸಂಭಲ್ ಹಿಂಸಾಚಾರ | 12 ಪೊಲೀಸ್ ಅಧಿಕಾರಿಗಳ ವಿರುದ್ಧ FIR ದಾಖಲಿಸಲು ಉತ್ತರ ಪ್ರದೇಶ ನ್ಯಾಯಾಲಯ ಆದೇಶ
ಲಕ್ನೊ, ಜ. 14: 2024ರಲ್ಲಿ ಮಸೀದಿಯೊಂದರ ಧ್ವಂಸದ ಸಂದರ್ಭ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ 12 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶದ ಸಂಭಲ್ ಜಿಲ್ಲೆಯ ನ್ಯಾಯಾಲಯವೊಂದು ಆದೇಶಿಸಿದೆ. ಈ ಪ್ರಕರಣದ ಆರೋಪಿಗಳಲ್ಲಿ ಸಂಭಲ್ನ ಮಾಜಿ ಸರ್ಕಲ್ ಅಧಿಕಾರಿ ಅನುಜ್ ಜೌಧರಿ, ಸಂಭಲ್ ಕೊಟ್ವಾಲಿಯ ಮಾಜಿ ಉಸ್ತುವಾರಿ ಅನುಜ್ ತೋಮರ್ ಅವರಂತಹ ಹಿರಿಯ ಅಧಿಕಾರಿಗಳು ಸೇರಿದ್ದಾರೆ. ಯಾಮೀನ್ ಅವರು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನಂತರ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ವಿಭಾಂಶು ಸುಧೀರ್ ಅವರು ಜನವರಿ 9ರಂದು ಈ ಆದೇಶ ನೀಡಿದ್ದಾರೆ. ಹಿಂಸಾಚಾರದ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ ಯಾಮೀನ್ ಅವರ ಪುತ್ರ ಗಾಯಗೊಂಡಿದ್ದರು ಎಂದು ಹೇಳಲಾಗಿದೆ. 2024 ನವೆಂಬರ್ 24ರಂದು ಶಾಹಿ ಜಾಮಾ ಮಸೀದಿ ಪ್ರದೇಶದ ಸಮೀಪ ನಡೆದ ಹಿಂಸಾಚಾರದ ವೇಳೆ ತನ್ನ 24 ವರ್ಷದ ಪುತ್ರ ಆಲಂ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಸಂಭಲ್ ನ ಖಗ್ಗು ಸರಾಯಿ ಅಂಜುಮಾನ್ ಪ್ರದೇಶದ ನಿವಾಸಿ ಯಾಮೀನ್ ಆರೋಪಿಸಿದ್ದಾರೆ. ಪೊಲೀಸರು ಆಲಂ ಮೇಲೆ ಗುಂಡು ಹಾರಿಸುವ ಸಂದರ್ಭ ಆಲಂ ಮಸೀದಿಯ ಸಮೀಪ ರಸ್ಕ್ ಹಾಗೂ ಬಿಸ್ಕಿಟುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ 2024 ನವೆಂಬರ್ 24ರಂದು ಬೆಳಗ್ಗೆ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುತ್ತಿದ್ದ ಸಂದರ್ಭ ಪೊಲೀಸರು ಪ್ರತಿಭಟನಕಾರರ ಮೇಲೆ ಹಾರಿಸಿದ ಗುಂಡಿನಿಂದ ಐವರು ಸಾವನ್ನಪ್ಪಿದ್ದರು ಹಾಗೂ ಇತರ ಹಲವರು ಗಾಯಗೊಂಡಿದ್ದರು.
ಸದೃಢ ದೇಶ ನಿರ್ಮಾಣಕ್ಕೆ ಕುಟುಂಬವೇ ತಳಪಾಯ: ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ
ಭಟ್ಕಳ: ಸದೃಢವಾದ ರಾಷ್ಟ್ರ ನಿರ್ಮಾಣಕ್ಕೆ ಕುಟುಂಬವೇ ಮೊದಲ ಮತ್ತು ಅತ್ಯಂತ ಪ್ರಮುಖ ತಳಪಾಯವಾಗಿದ್ದು, ಕುಟುಂಬ ಗಟ್ಟಿಯಾದರೆ ಸಮಾಜ ಹಾಗೂ ರಾಜ್ಯವೂ ಗಟ್ಟಿಯಾಗುತ್ತದೆ ಎಂದು ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ ಹೇಳಿದರು. ನಗರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಲಾಗಿದ್ದ ‘ಸಂತೃಪ್ತ ಕುಟುಂಬ, ಸದೃಢ ಸಮಾಜ’ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಮಾತುಗಳನ್ನು ಸ್ಮರಿಸಿ, ದೇಶದ ಬಲವರ್ಧನೆಯಲ್ಲಿ ಕೌಟುಂಬಿಕ ವ್ಯವಸ್ಥೆಯ ಮಹತ್ವವನ್ನು ಒತ್ತಿ ಹೇಳಿದರು. ಇಂದಿನ ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಜನರೇಷನ್ ಝೀ ಪೀಳಿಗೆಯಲ್ಲಿ ತಾಳ್ಮೆ ಮತ್ತು ಹೊಂದಾಣಿಕೆಯ ಕೊರತೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳ ರೀಲ್ಸ್ ಸಂಸ್ಕೃತಿ ಹೆಚ್ಚಾಗುತ್ತಿದೆ, ಬದುಕಿನಲ್ಲಿ ಯಾವುದೂ ತಕ್ಷಣ ಸಿಗುವುದಿಲ್ಲ ಎಂಬ ಸತ್ಯವನ್ನು ಯುವಜನತೆ ಅರಿಯಬೇಕಿದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಪ್ರವಚನ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಹಾಗೂ ಪ್ರವಚನಕಾರ ಮುಹಮ್ಮದ್ ಕುಂಞಿ, ಕುಟುಂಬವು ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ, ಅದು ದೇವ ನಿರ್ಮಿತ ಪವಿತ್ರ ವ್ಯವಸ್ಥೆ ಎಂದು ಹೇಳಿದರು. ಕುಟುಂಬ ಮೌಲ್ಯಗಳು ಕುಸಿದರೆ ಇಡೀ ಸಮಾಜವೇ ಕುಸಿಯುತ್ತದೆ ಎಂದು ಎಚ್ಚರಿಸಿದರು. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದರೂ ಸತ್ಯ, ನ್ಯಾಯ, ಸಹನೆ, ಕರುಣೆ ಹಾಗೂ ಪರೋಪಕಾರ ದಂತಹ ಮೌಲ್ಯಗಳು ಎಂದಿಗೂ ಬದಲಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳು ವ್ಯಾಪಾರೀಕರಣಗೊಳ್ಳುತ್ತಿದ್ದು, ಕುಟುಂಬದೊಳಗಿನ ಆತ್ಮೀಯತೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಕ್ಕಳನ್ನು ಕೇವಲ ವೃತ್ತಿಪರರನ್ನಾಗಿ ಮಾಡುವುದಕ್ಕಿಂತ ಅವರಿಗೆ ಪ್ರೀತಿ, ಗೌರವ ಮತ್ತು ಸಹನೆಯ ಪಾಠಗಳನ್ನು ಮನೆಯಲ್ಲೇ ಕಲಿಸಬೇಕು ಎಂದ ಅವರು, ಡಾ. ಅಬ್ದುಲ್ ಕಲಾಂ ಅವರ ಬಾಲ್ಯದ ಘಟನೆಯನ್ನು ಉಲ್ಲೇಖಿಸಿ, ಕುಟುಂಬದಲ್ಲಿ ಹಿರಿಯರು ತೋರಿಸುವ ಮೌಲ್ಯಗಳೇ ಮಕ್ಕಳಿಗೆ ಜೀವನ ಪಾಠವಾಗುತ್ತವೆ ಎಂದು ತಿಳಿಸಿದರು. ಪೋಷಕರನ್ನು ವೃದ್ಧಾಪ್ಯದಲ್ಲಿ ಪ್ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಕುರಾನ್ ಬೋಧನೆಗಳನ್ನು ನೆನಪಿಸಿದರು. ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಆಧುನಿಕ ಯುಗದಲ್ಲಿ ಮನೆಗಳು ದೊಡ್ಡದಾಗುತ್ತಿದ್ದರೂ ಮನಸ್ಸುಗಳು ಸಣ್ಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ತಾಂತ್ರಿಕವಾಗಿ ಅಣುವನ್ನೂ ವಿಭಜಿಸುವಷ್ಟು ಪ್ರಗತಿ ಸಾಧಿಸಿದ್ದರೂ, ನಮ್ಮೊಳಗಿನ ಅಹಂಕಾರವನ್ನು ಒಡೆಯಲು ಸಾಧ್ಯವಾಗುತ್ತಿಲ್ಲ ಎಂದರು. ವಿವಿಧ ಧರ್ಮಗಳ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಧರ್ಮಗಳ ಮೂಲ ಸಂದೇಶ ಮಾನವೀಯ ತೆಯೇ ಆಗಿದ್ದು, ಧರ್ಮವು ಗೋಡೆ ಕಟ್ಟಲು ಅಲ್ಲ, ದೃಷ್ಟಿಕೋನವನ್ನು ವಿಶಾಲಗೊಳಿಸಲು ಸಹಾಯಕವಾಗಬೇಕು ಎಂದರು. ಮಕ್ಕಳ ಶಿಕ್ಷಣವು ಪುಸ್ತಕಗಳಿಗೆ ಸೀಮಿತವಾಗದೇ, ಬದುಕಿನಲ್ಲಿ ಪ್ರತಿಬಿಂಬಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ, ಸಮಾಜವನ್ನು ಒಗ್ಗೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ, ಭಟ್ಕಳ ತನ್ನ ಮೂಲ ಮಾನವೀಯತೆ ಮತ್ತು ಧಾರ್ಮಿಕ ಸಾಮರಸ್ಯದ ಸಂಸ್ಕೃತಿಯತ್ತ ಮರಳುತ್ತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಮುಖಂಡ ರಾಮಾ ಮೊಗೇರ್, ನೇತ್ರಾಣಿ ಗುಡ್ಡದ ಉದಾಹರಣೆ ನೀಡುತ್ತಾ, ಭಟ್ಕಳದ ಸೌಹಾರ್ದ ಪರಂಪರೆ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ಹೇಳಿದರು. ಮೊದಲು ಕುಟುಂಬ ಒಗ್ಗೂಡಿದರೆ ಸಮಾಜವೂ ಸ್ವಯಂ ಒಗ್ಗೂಡುತ್ತದೆ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಪ್ರಾಧ್ಯಾಪಕ ಆರ್.ಎಸ್. ನಾಯಕ ಹಾಗೂ ಕಾರ್ಮಿಕ ಮುಖಂಡ ಜಿ.ಎನ್. ರೇವಣಕರ್, ತಂಝಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, , ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸುರೇಶ್ ಪೂಜಾರಿ ಮಾತನಾಡಿ, ಭಾರತದ ವೈವಿಧ್ಯತೆಯೇ ಅದರ ಸೊಬಗು ಸಮಾಜವನ್ನು ಒಡೆಯುವ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು. ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಪ್ರಸ್ತಾವಿಕವಾಗಿ ಮಾತ ನಾಡಿ ಸ್ವಾಗತಿಸಿದರು. ಕುರ್ಆನ್ ಪ್ರವಚನ ಸಂಚಾಲಕ ಇಂಜಿನೀಯರ್ ನಝೀರ್ ಖಾಝಿ ಧನ್ಯವಾದ ಅರ್ಪಿಸಿದರು. ಪತ್ರಕರ್ತ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿದರು.
ನಿಷೇಧಿತ ಮಾಂಜಾ ದಾರ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ಬೀದರ್: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗಾಳಿಪಟ ಹಾರಿಸುವ ವೇಳೆ ನಿಷೇಧಿತ ಮಾಂಜಾ ದಾರ ಬಳಕೆ ಮಾಡಿರುವ ಪರಿಣಾಮ, ರಾಷ್ಟ್ರೀಯ ಹೆದ್ದಾರಿ 65ರ ನಿರ್ಣಾಕ್ರಾಸ್ ಬಳಿ ಈ ದಾರಕ್ಕೆ ಸಿಲುಕಿ ದ್ವಿಚಕ್ರ ವಾಹನ ಓಡಿಸುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಕೂಡಲೇ ಜಿಲ್ಲೆಯಾದ್ಯಂತ ಯಾವುದೇ ಮಳಿಗೆಯಲ್ಲಿ ನಿಷೇಧಿತ ಚೀನಿ ಮಾಂಜಾ ದಾರ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಮತ್ತು ಈ ಪ್ರಕರಣದಲ್ಲಿ ವ್ಯಕ್ತಿಯ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜನ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ಲಿಖಿತ ಸೂಚನೆ ನೀಡಿದ್ದಾರೆ. ತಕ್ಷಣವೇ ಈ ಬಗ್ಗೆ ಜಿಲ್ಲೆಯ ಸಾರ್ವಜನಿಕರ ಮೊಬೈಲ್ ಸಂಖ್ಯೆಗೆ ಸಾಮಾಜಿಕ ತಾಣಗಳ ಮೂಲಕ ಸಂದೇಶ ರವಾನಿಸಿ ಜಾಗೃತಿ ಮೂಡಿಸುವಂತೆ ಆಗ್ರಹಿಸಿದ್ದಾರೆ.
ಬಿಜೆಪಿಯವರು ಅಷ್ಟಮಂಗಲ ಪ್ರಶ್ನೆ ಪದ್ಧತಿಯನ್ನು ಅಪಹಾಸ್ಯ ಮಾಡತ್ತಿದ್ದಾರೆ: ಪ್ರದೀಪ್ ಬೆಲಾಡಿ ಆರೋಪ
ಕಾರ್ಕಳ: ಹಿಂದುತ್ವದ ಪ್ರತಿಪಾದಕರೆಂದು ಬೊಗಳೆ ಬಿಡುತ್ತಿರುವ ಬಿಜೆಪಿಯವರು ಹಿಂದೂ ಧರ್ಮದ ಪವಿತ್ರ ಅಷ್ಟಮಂಗಲ ಪ್ರಶ್ನೆ ಪದ್ಧತಿಯನ್ನು ಅಪಹಾಸ್ಯ ಮಾಡತ್ತಿದ್ದಾರೆ . ಅಷ್ಟಮಂಗಲ ಪ್ರಶ್ನೆ ಹಾಕಿದರೆ ತುಳುನಾಡಿನ ಕರ್ತ ಪರಶುರಾಮನಿಗೆ ನಡೆದಿರುವ ಮೋಸ, ಮೋಸ ಮಾಡಿದವರ ಹಾಗೂ ಮಾಡುತ್ತಿರುವವರ ಬಣ್ಣ ಬಯಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪ್ರದೀಪ್ ಬೆಲಾಡಿ ಆರೋಪಿಸಿದರು. ಅವರು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಟ್ಟದ ಮೇಲೆ ಬೆಂಕಿ ಕಾಣಿಸಿಕೊಳ್ಳುವುದು, ಮೂರ್ತಿ ಕಳ್ಳತನ ಹಾಗೂ ವಸ್ತುಗಳ ಕಳ್ಳತನದಂತಹ ದುರ್ಘಟನೆಗಳು ಏಕೆ ಸಂಭವಿಸುತ್ತವೆ ಎಂಬುದನ್ನು ತಿಳಿಯಲು ವಿದ್ವಾಂಸರು ಹಾಗೂ ಪುರೋಹಿತರನ್ನು ಒಳಗೊಂಡು ಅಷ್ಟಮಂಗಲ ಪ್ರಶ್ನೆ ಹಾಕಬೇಕು. ಇದರಿಂದ ತಪ್ಪು ಎಲ್ಲಿದೆ ಎಂಬ ನೈಜತೆ ಜನರಿಗೆ ತಿಳಿಯಬೇಕು ಎಂದರು. “ಕಾರ್ಕಳ ತಾಲೂಕು ಯಾರಿಗೂ ಪಿತೃಾರ್ಜಿತ ಆಸ್ತಿಯಲ್ಲ. ಬೆದರಿಕೆಗಳು ಹಾಗೂ ಗೂಂಡಾ ಪ್ರವೃತ್ತಿಗಳು ಕಾರ್ಕಳದಂತಹ ಸಾತ್ವಿಕ ಭೂಮಿಗೆ ಶೋಭೆ ತರುವುದಿಲ್ಲ” ಎಂದು ಹೇಳಿದರು. ಪರಶುರಾಮ ಥೀಮ್ ಪಾರ್ಕ್ನ ನಕಲಿ ಪ್ರತಿಮೆ ಹಗರಣದಿಂದ ಕಂಗೆಟ್ಟಿರುವ ಶಾಸಕ ಸುನಿಲ್ ಕುಮಾರ್ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ನೀಡುವುದನ್ನು ಬಿಟ್ಟು ಆರೋಪಗಳಿಂದ ಪಾರಾಗಲು ತಮ್ಮ ಹಿಂಬಾಲಕರ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ತೇಜೋವಧೆಗೆ ಯತ್ನಿಸಿರುವುದು ಖಂಡನೀಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರ ಹಿಂಬಾಲಕರ ಮಾತುಗಳನ್ನು ಕೇಳಿದಾಗ, ಅವರು ಹಗರಣದಿಂದ ಸಂಪೂರ್ಣ ವಿಚಲಿತರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ತುಳುನಾಡಿನ ದೈವಸ್ಥಾನ, ದೇವಸ್ಥಾನಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕ ಮತ್ತು ಬಡ ಜನರ ಆರೋಗ್ಯ ಸೇವೆಗೆ ತಮ್ಮ ಪ್ರಾಮಾಣಿಕ ಸಂಪಾದನೆಯನ್ನು ದಾನ ಮಾಡಿದ ಧರ್ಮಿಷ್ಠ ನಾಯಕರ. ಎಲ್ಲಾ ಜಾತಿ, ಧರ್ಮ ಮತ್ತು ಸಮುದಾಯಗಳ ಜನರನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿತ್ವದವರು. ಇಂತಹ ಸಚ್ಚರಿತ್ರ್ಯವಂತ ನಾಯಕನ ಬಗ್ಗೆ ಬ್ರಹ್ಮoಡ ಭ್ರಷ್ಟಾಚಾರದಲ್ಲಿರುವ ಸುನಿಲ್ ಕುಮಾರ್ ಅವರ ಹಿಂಬಾಲಕರಿಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಕಿಡಿಕಾರಿದರು. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ಕಾರ್ಕಳದ ನಾಗರಿಕರು ಯಾರೂ ಮನವಿ ಸಲ್ಲಿಸಿರಲಿಲ್ಲ. ಸ್ವಯಂ ಪ್ರೇರಣೆಯಿಂದ ಅನುದಾನ ಬಿಡುಗಡೆಗೊಳಿಸಿ, ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಆಗಿನ ಮುಖ್ಯಮಂತ್ರಿ ಗಳನ್ನು ಕರೆಸಿ ಅಪೂರ್ಣ ಪ್ರತಿಮೆಯನ್ನು ಉದ್ಘಾಟಿಸಲಾಯಿತು. ಮಳೆಗಾಲ ಆರಂಭವಾಗುತ್ತಿದ್ದಂತೆ “ಕಂಚಿನ ಪ್ರತಿಮೆ”ಯ ಬಣ್ಣ ಬಯಲಾಗಿದ್ದು, ಅದನ್ನು ಮುಚ್ಚಲು ಟಾರ್ಪಲ್ ಸುತ್ತಿ ಬಣ್ಣ ಬಳಿಯಲು ಯತ್ನಿಸಲಾಯಿತು ಈ ಯೋಜನೆಯ ಸತ್ಯಾಸತ್ಯತೆ ಕುರಿತು ಅನುಮಾನಗೊಂಡ ಸಮಾನ ಮನಸ್ಕ ಸಂಘಟನೆ ಉಪವಾಸ ಸತ್ಯಾಗ್ರಹ ನಡೆಸಿದರೂ, ತುಟಿ ಪಿಟಿಕ್ ಅನ್ನದ. ಶಾಸಕ ಸುನಿಲ್ ಕುಮಾರ್ ಪ್ರಕರಣವನ್ನು ತಿರುವುಮಾಡಲು ಯತ್ನಿಸಿದ್ದಾರೆ. ತಪ್ಪು ಮಾಡಿಲ್ಲವೆಂದರೆ ತನಿಖೆಗೆ ಸಹಕರಿಸಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರ ತೇಜೋವಧೆಗೆ ಇಳಿದಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಪುಷ್ಟಿ ನೀಡುತ್ತದೆ ಎಂದು ಹೇಳಿದರು. ಉದ್ಘಾಟನಾ ಸಂದರ್ಭದಲ್ಲಿ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರ ಎಂದಿದ್ದ ಶಾಸಕರು, ಬಳಿಕ ಅದನ್ನು ಪ್ರವಾಸಿ ತಾಣ ಎಂದು ಹೇಳುತ್ತಿರುವುದು ದ್ವಂದ್ವ ನೀತಿಯಾಗಿದೆ. ಅದು ಪ್ರವಾಸಿ ತಾಣವಾಗಿದ್ದರೆ ಪರಶುರಾಮನ ಕಾಲಿನಡಿ ತುಳು ನಾಡಿನ ದೈವಗಳನ್ನು ಚಿತ್ರಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಇದು ತುಳುನಾಡಿನ ಭಕ್ತರ ಭಾವನೆಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದರು. ಉಮಿಕಲ್ ಬೆಟ್ಟದ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಉಲ್ಲೇಖಿಸಿದ ಅವರು, ಅಲ್ಲಿ ತುಳುನಾಡಿನ ಅವಳಿ ವೀರರಾದ ಕೋಟಿ–ಚೆನ್ನಯ್ಯರ ಪಾದಗುರುತು ಇದ್ದು, ಅದನ್ನು ಒಡೆದು ತೆಗೆದಿರುವುದು ಸಮಸ್ತ ತುಳು ನಾಡಿನ ದೈವಗಳಿಗೆ ಮಾಡಿದ ಅಪಚಾರವಾಗಿದೆ ಸರ್ವಾಧಿಕಾರಿ ಮನೋಭಾವದ ದಿಂದಿರುವ ಬಿಜೆಪಿಗೆ , ಕಾಂಗ್ರೆಸ್ ಪಕ್ಷ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು. ಯುತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ ಮಾತನಾಡಿ, ನಕಲಿ ಪ್ರತಿಮೆ ವಿಚಾರದಲ್ಲಿ ಬಿಜೆಪಿ ಆತ್ಮಸಾಕ್ಷಿಯಿಂದ ಸ್ಪಷ್ಟನೆ ನೀಡಬೇಕು ಎಂದರು. ಜೆಡಿಎಸ್ನಿಂದ ಪಂಚಾಯತ್ ಸದಸ್ಯ ಹಾಗೂ ಎಪಿಎಂಸಿ ಸದಸ್ಯರಾಗಿದ್ದ ಮಹಾ ವೀರ ಹೆಗ್ಡೆಯನ್ನು ಬಿಜೆಪಿ ಸೇರಿದ ತಕ್ಷಣ ಕ್ಷೇತ್ರಾಧ್ಯಕ್ಷರನ್ನಾಗಿ ಮಾಡಿದ ಹಿಂದಿನ ಕಾರಣವೇನು ಎಂಬುದನ್ನು ಬಿಜೆಪಿ ಕಾರ್ಯಕರ್ತರಿಗೆ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂತೋಷ್ ದೇವಾಡಿಗ, , ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಣೈ, ಮಂಜುನಾಥ ಜೋಗಿ, ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
RCB ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಡಲಿದೆಯೇ?: ಮುಂದಿನ ವಾರ ಅಂತಿಮ ನಿರ್ಧಾರ
ಬೆಂಗಳೂರು, ಜ.13: ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ತವರು ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವ ಕುರಿತು ಅಂತಿಮ ನಿರ್ಧಾರವನ್ನು ಮುಂದಿನ ವಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪುಣೆಯ ಎಂಸಿಎ ಕ್ರೀಡಾಂಗಣವನ್ನು RCB ಮರುಪರಿಶೀಲಿಸಿದ್ದಕ್ಕಾಗಿ ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಪತ್ರಿಕಾ ಪ್ರಕಟಣೆಯಲ್ಲಿ ಧನ್ಯವಾದ ಅರ್ಪಿಸಿದ ನಂತರ, RCB ತನ್ನ ಪಂದ್ಯಗಳನ್ನು ಗಾರ್ಡನ್ ಸಿಟಿಯಿಂದ ಹೊರಗೆ ಸ್ಥಳಾಂತರಿಸುವ ಬಗ್ಗೆ ವದಂತಿಗಳು ಹೆಚ್ಚಾಗಿದ್ದವು. 2025ರ ಜೂನ್ 4ರಂದು RCB ಪ್ರಶಸ್ತಿ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ನಂತರ ಚಿನ್ನಸ್ವಾಮಿ ಸ್ಟೇಡಿಯಂ ಮುಚ್ಚಲಾಗಿದೆ. ನಿಯಮಗಳನ್ನು ಪಾಲಿಸದ ಕಾರಣ ಇತ್ತೀಚೆಗೆ ರಾಜ್ಯ ಸರ್ಕಾರವು ವಿಜಯ್ ಹಝಾರೆ ಟ್ರೋಫಿ ಪಂದ್ಯಗಳನ್ನು ನಡೆಸಲು ಅನುಮತಿ ನಿರಾಕರಿಸಿತ್ತು. ಹೀಗಾಗಿ ವಿರಾಟ್ ಕೊಹ್ಲಿ ನಗರದ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ದಿಲ್ಲಿ ಪರವಾಗಿ ಎರಡು ಪಂದ್ಯಗಳನ್ನು ಆಡಿದ್ದರು. ಕರ್ನಾಟಕ ತಂಡವು ಮಧ್ಯಪ್ರದೇಶ ವಿರುದ್ಧದ ಮುಂಬರುವ ರಣಜಿ ಟ್ರೋಫಿ ಪಂದ್ಯವನ್ನು ಜನವರಿ 22ರಂದು ಆಲೂರು ಮೈದಾನದಲ್ಲಿ ಆಡಲಿದೆ. ‘‘RCBಯೊಂದಿಗೆ ಮಾತುಕತೆ ಮುಂದುವರಿದಿದೆ. ಫ್ರಾಂಚೈಸಿಯ ಪಂದ್ಯಗಳು ಬೆಂಗಳೂರಿನಿಂದ ಹೊರಗೆ ಸ್ಥಳಾಂತರವಾಗುವ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಮುಂದಿನ ವಾರ ಮಾತ್ರ ಅಧಿಕೃತ ಹೇಳಿಕೆಯನ್ನು ನೀಡಲು ಸಾಧ್ಯ. ರಣಜಿ ಟ್ರೋಫಿ ಪಂದ್ಯಗಳಿಗೆ ಸಂಬಂಧಿಸಿ ಚಿನ್ನಸ್ವಾಮಿ ಸ್ಟೇಡಿಯಂ ಇನ್ನೂ ಸಂಪೂರ್ಣ ಸಜ್ಜಾಗಿಲ್ಲ’’ ಎಂದು ಕೆಎಸ್ಸಿಎ ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಐಸಿಸಿ ಏಕದಿನ ರ್ಯಾಂಕಿಂಗ್ | ವಿರಾಟ್ ಕೊಹ್ಲಿಯೇ ನಂ.1
ಹೊಸದಿಲ್ಲಿ, ಜ.14: ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸದ್ಯ ಶ್ರೇಷ್ಠ ಫಾರ್ಮ್ನಲ್ಲಿರುವ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೆ ಮರಳಿದ್ದಾರೆ. ವಡೋದರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 93 ರನ್ ಗಳಿಸಿದ್ದ ಕೊಹ್ಲಿ ಅವರು 2021ರ ಜುಲೈ ನಂತರ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಅರ್ಧಶತಕದ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ನಾಲ್ಕು ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿದ್ದು, 37 ವರ್ಷದ ಕೊಹ್ಲಿ ಈಗಲೂ 50 ಓವರ್ ಗಳ ಕ್ರಿಕೆಟ್ ನಲ್ಲಿ ‘ರನ್ ಯಂತ್ರ’ ಎಂಬ ಖ್ಯಾತಿಗೆ ತಕ್ಕಂತೆ ಆಡುತ್ತಿದ್ದಾರೆ. ಕೊಹ್ಲಿ 2013ರ ಅಕ್ಟೋಬರ್ ನಲ್ಲಿ ಮೊದಲ ಬಾರಿ ನಂ.1 ರ್ಯಾಂಕಿನ ಏಕದಿನ ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಒಟ್ಟು 825 ದಿನಗಳ ಕಾಲ ವಿಶ್ವದ ನಂ.1 ಏಕದಿನ ಬ್ಯಾಟರ್ ಆಗಿ ಕೊಹ್ಲಿ ಮಿಂಚಿದ್ದಾರೆ. ಇದು ಭಾರತೀಯ ಬ್ಯಾಟರ್ ನ ಶ್ರೇಷ್ಠ ಸಾಧನೆಯಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ರ್ಯಾಂಕಿಂಗ್ ನಲ್ಲಿ ಐದನೇ ಸ್ಥಾನ ಉಳಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಅಗ್ರ-10ರಲ್ಲಿರುವ ಇನ್ನೋರ್ವ ಆಟಗಾರರಾಗಿದ್ದಾರೆ. ನ್ಯೂಝಿಲ್ಯಾಂಡ್ನ ಡ್ಯಾರಿಲ್ ಮಿಚೆಲ್ ಮೊದಲ ಪಂದ್ಯದಲ್ಲಿ 84 ರನ್ ಗಳಿಸಿದ ಕಾರಣ ಭಡ್ತಿ ಪಡೆದಿದ್ದು, ಕೊಹ್ಲಿಗಿಂತ ಕೇವಲ ಒಂದು ಅಂಕದಿಂದ ಹಿಂದೆ ಇದ್ದಾರೆ. ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಐದು ಸ್ಥಾನ ಮೇಲಕ್ಕೇರಿ 15ನೇ ಸ್ಥಾನ ತಲುಪಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 41 ರನ್ಗೆ ನಾಲ್ಕು ವಿಕೆಟ್ ಗಳನ್ನು ಕಬಳಿಸಿದ್ದ ಕಿವೀಸ್ ವೇಗದ ಬೌಲರ್ ಕೈಲ್ ಜೆಮೀಸನ್ 27 ಸ್ಥಾನಗಳಲ್ಲಿ ಭಡ್ತಿ ಪಡೆದು 69ನೇ ಸ್ಥಾನ ಹಂಚಿಕೊಂಡಿದ್ದಾರೆ.
‘ನ್ಯಾಯ ಸಮಿತಿ’ ರಚಿಸುವಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ UGC ನಿರ್ದೇಶನ
ಹೊಸದಿಲ್ಲಿ, ಜ. 14: ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ ರೂಪಿಸಲಾಗಿರುವ ತನ್ನ ನೂತನ ನಿಯಮಾವಳಿಗಳಿಗೆ ಅನುಗುಣವಾಗಿ, ‘ನ್ಯಾಯ ಸಮಿತಿ’ಗಳನ್ನು ಸ್ಥಾಪಿಸುವಂತೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ತಾರತಮ್ಯಕ್ಕೆ ಸಂಬಂಧಿಸಿದ ದೂರುಗಳನ್ನು ನಿಭಾಯಿಸಲು ಮತ್ತು ಸರ್ವರ ಒಳಗೊಳ್ಳುವಿಕೆಯನ್ನು ಖಾತರಿಪಡಿಸಲು ಸಮಾನ ಅವಕಾಶ ಕೇಂದ್ರ ಹಾಗೂ ನ್ಯಾಯ ಸಮಿತಿಯನ್ನು ಸ್ಥಾಪಿಸುವಂತೆ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಯುಜಿಸಿಯು ಮಂಗಳವಾರ ಸೂಚಿಸಿದೆ. ನೂತನ ನಿಯಮಗಳನ್ನು ಒಳಗೊಂಡ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಯ ಕಾಪಾಡಲು ನಿಯಮಾವಳಿಗಳು, 2026’ನ್ನು ಅದು ಪ್ರಕಟಿಸಿದೆ. ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಮತ್ತು ಅಂಗವೈಕಲ್ಯ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ಹಾಗೂ ಉನ್ನತ ಶಿಕ್ಷಣದಲ್ಲಿ ‘ಸಂಪೂರ್ಣ ನ್ಯಾಯ ಮತ್ತು ಸರ್ವರ ಒಳಗೊಳ್ಳುವಿಕೆಯನ್ನು ಖಾತರಿಪಡಿಸಲು’ ಈ ನೂತನ ನಿಯಮಾವಳಿಗಳನ್ನು ರೂಪಿಸಲಾಗಿದೆ. ನಿಯಮಾವಳಿಗಳ ಪ್ರಕಾರ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ನ್ಯಾಯ ಸಮಿತಿಯನ್ನು ರಚಿಸಬೇಕು. ದೂರುಗಳನ್ನು ವಿಚಾರಿಸುವುದು, ಪರಿಹಾರ ಕ್ರಮಗಳನ್ನು ಶಿಫಾರಸು ಮಾಡುವುದು ಹಾಗೂ ದೂರುದಾರರನ್ನು ಪ್ರತೀಕಾರದ ಕ್ರಮಗಳಿಂದ ರಕ್ಷಿಸುವುದು ನ್ಯಾಯ ಸಮಿತಿಯ ಹೊಣೆಗಾರಿಕೆಯಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ‘ನ್ಯಾಯ ಸಹಾಯವಾಣಿ’ಯನ್ನು ನಡೆಸಬೇಕು. ಜೊತೆಗೆ, ತಾರತಮ್ಯ ಸಂಬಂಧಿ ಘಟನೆಗಳನ್ನು ವರದಿ ಮಾಡಲು ಆನ್ಲೈನ್ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂಬುದಾಗಿಯೂ ಯುಜಿಸಿ ನಿಯಮಾವಳಿಗಳು ಹೇಳುತ್ತವೆ. ನ್ಯಾಯ ಸಮಿತಿಯ ಮುಖ್ಯಸ್ಥರು ಸಂಸ್ಥೆಯ ಮುಖ್ಯಸ್ಥರೇ ಆಗಿರುತ್ತಾರೆ. ಸಮಿತಿಯಲ್ಲಿ ಹಿರಿಯ ಬೋಧಕ ಸಿಬ್ಬಂದಿ, ಓರ್ವ ಬೋಧಕೇತರ ಸಿಬ್ಬಂದಿ, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಇರಬೇಕು. ಸಮಾನ ಅವಕಾಶ ಕೇಂದ್ರದ ಸಮನ್ವಯಾಧಿಕಾರಿಯು ನ್ಯಾಯ ಸಮಿತಿಯ ಸದಸ್ಯ-ಕಾರ್ಯದರ್ಶಿಯಾಗಿರುತ್ತಾರೆ. ಸಮಿತಿಯಲ್ಲಿ ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಅಂಗವೈಕಲ್ಯ ಹೊಂದಿರುವವರು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು.
ದಿಲ್ಲಿಯಲ್ಲಿ ತೀವ್ರ ವಾಯು ಮಾಲಿನ್ಯ | ಇಂಡಿಯಾ ಓಪನ್ ಟೂರ್ನಿಯಿಂದ ಹಿಂದೆ ಸರಿದ ವಿಶ್ವದ ನಂ.3ನೇ ಆಟಗಾರ ಆಂಟೊನ್ಸನ್
ಹೊಸದಿಲ್ಲಿ, ಜ.14: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ನಡೆಯುತ್ತಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹಿಂದೆ ಸರಿಯುತ್ತಿರುವುದಾಗಿ ವಿಶ್ವದ ನಂ.3ನೇ ಪುರುಷರ ಸಿಂಗಲ್ಸ್ ಆಟಗಾರ ಆ್ಯಂಡರ್ಸ್ ಆಂಟೊನ್ಸನ್ ಬುಧವಾರ ತಿಳಿಸಿದ್ದಾರೆ. ‘‘ಸತತ ಮೂರನೇ ಬಾರಿಯೂ ಇಂಡಿಯಾ ಓಪನ್ ನಿಂದ ನಾನು ಏಕೆ ಹಿಂದೆ ಸರಿದಿದ್ದೇನೆ ಎಂದು ತಿಳಿದುಕೊಳ್ಳಲು ಹಲವರು ಕುತೂಹಲದಿಂದಿದ್ದಾರೆ. ದಿಲ್ಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗಿದ್ದು, ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲು ಸೂಕ್ತ ಪ್ರದೇಶವೆಂದು ನಾನು ಭಾವಿಸುವುದಿಲ್ಲ’’ ಎಂದು ಆಂಟೊನ್ಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ. ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವನ್ನು ತೋರಿಸುವ ಸ್ಕ್ರೀನ್ ಶಾಟ್ ಅನ್ನು ಆಂಟೊನ್ಸನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ 348 ಎಂದು ದಾಖಲಾಗಿದ್ದು, ಪರಿಸ್ಥಿತಿ ಅಪಾಯಕಾರಿ ಎನ್ನುವುದನ್ನು ಸೂಚಿಸುತ್ತದೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ನಾಲ್ಕು ಬಾರಿ ಪದಕ ವಿಜೇತ ಆಂಟೊನ್ಸನ್ ಅವರು ತಮ್ಮ ಈ ನಿರ್ಧಾರಕ್ಕಾಗಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ಗೆ (ಬಿಡಬ್ಲ್ಯುಎಫ್) 5,000 ಅಮೆರಿಕನ್ ಡಾಲರ್ ಗಳ (4.5 ಲಕ್ಷ ರೂ.) ದಂಡ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. 9,50,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೊಂದಿರುವ ಬಿಡಬ್ಲ್ಯುಎಫ್ ಟೂರ್ನಿಯಲ್ಲಿ ಆಡುವ ಪರಿಸ್ಥಿತಿಯ ಬಗ್ಗೆ ಡೆನ್ಮಾರ್ಕ್ ನ ಆಟಗಾರ್ತಿ ಮಿಯಾ ಬ್ಲಿಚ್ಫೆಲ್ಟ್ ಟೀಕೆ ವ್ಯಕ್ತಪಡಿಸಿದ್ದ ಮರುದಿನವೇ ಆಂಟೊನ್ಸನ್ ಈ ಹೆಜ್ಜೆ ಇಟ್ಟಿದ್ದಾರೆ. ದಿಲ್ಲಿ ನಗರವು ಹೆಚ್ಚಾಗಿ ದಟ್ಟವಾದ ಹೊಗೆಯಿಂದ ಆವೃತವಾಗಿರುತ್ತದೆ. ಇದನ್ನು ವೈದ್ಯರು ಅಪಾಯಕಾರಿ ಎಂದು ಬಣ್ಣಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದ ಕೆ.ಡಿ. ಜಾಧವ್ ಒಳಾಂಗಣ ಕ್ರೀಡಾಂಗಣದಿಂದ ಇಂಡಿಯಾ ಓಪನ್ ಟೂರ್ನಿಯನ್ನು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಬಿಎಐ) ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣವು ಆಗಸ್ಟ್ನಲ್ಲಿ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್ಶಿಪ್ ಆಯೋಜಿಸಲು ಸಜ್ಜಾಗಿದೆ.
ಬಿಜೆಪಿ ಸಂಸದ ದುಬೆ ವಿರುದ್ಧದ ಭ್ರಷ್ಟಾಚಾರ ಅರ್ಜಿಯನ್ನು ವಜಾಗೊಳಿಸಿದ ಲೋಕಪಾಲ್
ಹೊಸದಿಲ್ಲಿ, ಜ. 14: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆದಾಯ ಮೀರಿ ಸಂಪತ್ತು ಸಂಗ್ರಹಿಸಿದ್ದಾರೆ ಎಂಬ ಆರೋಪದಡಿ ಸಾಮಾಜಿಕ ಹೋರಾಟಗಾರ ಅಮಿತಾಭ್ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು ಲೋಕಪಾಲ ಮಂಗಳವಾರ ತಿರಸ್ಕರಿಸಿದೆ. ದೂರಿನಲ್ಲಿ ಸತ್ಯಾಂಶವಿಲ್ಲ ಹಾಗೂ ಅದು ಕ್ಷುಲ್ಲಕವಾಗಿದೆ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ ತೀರ್ಮಾನಿಸಿತು. ದೂರು ನಿಶಿಕಾಂತ್ ದುಬೆಗಿಂತಲೂ ಅವರ ಪತ್ನಿಯನ್ನು ಮುಖ್ಯವಾಗಿ ಗುರಿಯಾಗಿಸಿದೆ ಎಂದು ಲೋಕಪಾಲ ಪೀಠವು ತನ್ನ 134 ಪುಟಗಳ ಆದೇಶದಲ್ಲಿ ಹೇಳಿದೆ. ದುಬೆ ಅವರು 2009ರಿಂದ 2024ರವರೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಗಳ ಆಧಾರದಲ್ಲಿ ದೂರು ಸಲ್ಲಿಸಲಾಗಿತ್ತು. ಅವರ ಪತ್ನಿಯ ಸಂಪತ್ತಿನಲ್ಲಿ ಆದಾಯ ಮೀರಿದ ಏರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ, ದುಬೆಗೆ ಸೇರಿದ ಸಂಪತ್ತಿನಲ್ಲಿ ಆದಾಯ ಮೀರಿದ ಏರಿಕೆಯಾಗಿದೆ ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿದ ಲೋಕಪಾಲವು, ಅವರ ಸ್ವಂತ ಸಂಪತ್ತಿನಲ್ಲಿ ಕೇವಲ ಅಲ್ಪ ಬದಲಾವಣೆಗಳು ಮಾತ್ರ ಕಂಡುಬಂದಿವೆ ಎಂದು ಅಭಿಪ್ರಾಯಪಟ್ಟಿದೆ. ಸಾರ್ವಜನಿಕವಾಗಿ ಲಭ್ಯವಿದ್ದ ಮಾಹಿತಿಗಳ ಆಧಾರದಲ್ಲಿ ಪರಿಶೀಲನೆ ನಡೆಸದೆ ದೂರು ಸಲ್ಲಿಸಿರುವುದಕ್ಕಾಗಿ ಆದೇಶವು ದೂರುದಾರರನ್ನು ಟೀಕಿಸಿದೆ. ಲೋಕಪಾಲ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಅವರಿಗೆ ಲೋಕಪಾಲವು ಶೋಕಾಸ್ ನೋಟಿಸ್ ಕೂಡ ನೀಡಿತ್ತು. ಈಗ ಆ ನೋಟಿಸ್ ಅನ್ನು ಹಿಂದಕ್ಕೆ ಪಡೆಯಲಾಗಿದೆಯಾದರೂ, ತನ್ನ ಖಾಸಗಿತನದ ಉಲ್ಲಂಘನೆ ಮತ್ತು ಪ್ರತಿಷ್ಠೆ ಹಾನಿಗೆ ಸಂಬಂಧಿಸಿ ಠಾಕೂರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ದುಬೆಗೆ ಲೋಕಪಾಲ ನೀಡಿದೆ.
ಎ.ಪಿ. ಉಸ್ತಾದ್ರಿಗೆ ʼಶ್ರೀನಾರಾಯಣ ಗುರು ಸಾಹೋದರ್ಯʼ ಪ್ರಶಸ್ತಿ ಪ್ರದಾನ
ಆಲಪ್ಪುಝ: ಸ್ವಾಮಿ ಶಾಶ್ವತೀಕಾನಂದ ಸಾಂಸ್ಕೃತಿಕ ಕೇಂದ್ರದಿಂದ ಸ್ಥಾಪಿಸಲಾದ ಶ್ರೀನಾರಾಯಣ ಗುರು ಸಾಹೋದರ್ಯ ಪ್ರಥಮ ಪ್ರಶಸ್ತಿಯನ್ನು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ (ಎ.ಪಿ. ಉಸ್ತಾದ್) ಅವರಿಗೆ ಪ್ರದಾನ ಮಾಡಲಾಯಿತು. ಕಾಯಂಕುಳಂನಲ್ಲಿ ನಡೆದ ‘ಕೇರಳ ಯಾತ್ರಾ ಸ್ವಾಗತ ಸಮಾರಂಭ’ದ ವೇದಿಕೆಯಲ್ಲಿ ಈ ಪ್ರಶಸ್ತಿ ನೀಡಲಾಯಿತು. ಎಸ್.ಎನ್.ಡಿ.ಪಿ. ಯೋಗಂನ ಮಾಜಿ ಅಧ್ಯಕ್ಷ ಗೋಕುಳಂ ಗೋಪಾಲನ್, ಮಂಡಳಿಯ ಮಾಜಿ ಸದಸ್ಯ ವಕೀಲರಾದ ಎಸ್. ಚಂದ್ರಸೇನನ್ ಹಾಗೂ ಶಾಶ್ವತೀಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ವಿ.ಆರ್. ಅನೂಪ್ ಅವರು ಪ್ರಶಸ್ತಿಯನ್ನು ಪ್ರದಾನಿಸಿದರು. ಕಾರ್ಯಕ್ರಮದಲ್ಲಿ ಸಚಿವರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಮುದಾಯ ಮತ್ತು ರಾಜಕೀಯ ನಾಯಕರು ಭಾಗವಹಿಸಿದ್ದರು. ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕೆ ದಾರಿ ಮಾಡಿಕೊಡುವಲ್ಲಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ನಡೆಸಿದ ಹೋರಾಟಗಳು ಹಾಗೂ ಸಮಾಜಮುಖಿ ಕಾರ್ಯಗಳಿಗೆ ಗೌರವ ಸೂಚಿಸಲು ಈ ಪ್ರಶಸ್ತಿಯನ್ನು ನೀಡಲಾಗಿದೆ. ಗುರು ಚಿಂತನೆಗಳನ್ನು ಅರ್ಥಪೂರ್ಣವಾಗಿ ಅಳವಡಿಸಿಕೊಂಡು ಕೇರಳವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿತ್ವಗಳನ್ನು ಗುರುತಿಸಿ ಗೌರವಿಸುವ ಧ್ಯೇಯದ ಭಾಗವಾಗಿ ‘ಶ್ರೀನಾರಾಯಣ ಗುರು ಸಾಹೋದರ್ಯ ಪ್ರಶಸ್ತಿ’ಗಾಗಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಸದಸ್ಯರಾದ ವಕೀಲ ಸಿ.ಕೆ. ವಿದ್ಯಾಸಾಗರ್, ರಾಜ್ಯಸಭೆಯ ಮಾಜಿ ಸದಸ್ಯ ಸಿ. ಹರಿದಾಸ್ ಹಾಗೂ ಎಂ.ಜಿ. ವಿಶ್ವವಿದ್ಯಾಲಯ ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್ ನ ಪ್ರಾಧ್ಯಾಪಕ ಡಾ. ರಾಜೇಶ್ ಕೋಮತ್ ಅವರು ತಿಳಿಸಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಫಲಕವನ್ನು ಒಳಗೊಂಡಿದೆ.
ಹಂಗೆಲ್ಲಾ ಓಪನ್ ಆಗಿ ಹೇಳಕ್ಕಾಗಲ್ಲ; ರಾಹುಲ್ ಗಾಂಧಿ ಜೊತೆಗಿನ ಖಾಸಗಿ ಚರ್ಚೆಯ ಗುಟ್ಟು ಬಿಡದ ಡಿಕೆ ಶಿವಕುಮಾರ್
ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ಧಂತೇ ಡಿಕೆ ಶಿವಕುಮಾರ್ ಪಳೆಯ ಹೈಪರ್ ಆ್ಯಕ್ಟೀವ್ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕರೊಂದಿಗೆ ಖಾಸಗಿಯಾಗಿ ಏನು ಚರ್ಚೆ ನಡೆಯಿತು ಎಂಬುದರ ಬಗ್ಗೆ ಕರ್ನಾಟಕದ ಉಪಮುಖ್ಯಮಂತ್ರಿಗಳು ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈ ಕುರಿತು ಕೇಳಿದ ಪ್ರಶ್ನೆಗೆ ಖಾಸಗಿ ಮಾತುಕತೆ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ವಡೋದರಾ ಸೋಲಿಗೆ ರಾಜಕೋಟ್ ನಲ್ಲಿ ಕಿವೀಸ್ ತಿರುಗೇಟು; ಡೆರಿಲ್ ಮಿಚೆಲ್ ರಾಜಾರೋಷದ ಶತಕದ ಮಂದೆ ಮಂಕಾದ ಭಾರತ
New Zealand Beat India- ರಾಜಕೋಟ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸ್ಥಾಪಿಸಿದೆ. ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ ಮತ್ತು ವಿಲ್ ಯಂಗ್ 3ನೇ ವಿಕೆಟ್ ಗೆ 164 ರನ್ ಗಳ ಜೊತೆಯಾಟವಾಡಿದ್ದು ಭಾರತದ ಕೈಯಿಂದ ಪಂದ್ಯವನ್ನು ಕಿತ್ತುಕೊಂಡಿತು. ಅಜೇಯ 131 ರನ್ ಗಳಿಸಿ ನ್ಯೂಜಿಲೆಂಡ್ ಗೆಲುವಿಗೆ ಕಾರಣಕರ್ತರಾದ ಡೆರಿಲ್ ಮಿಚೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶೀರೂರು ಪರ್ಯಾಯ: ನಗರ ದೀಪಾಲಂಕಾರಕ್ಕೆ ಚಾಲನೆ; ಜ. 16ರಂದು ಪರಶುರಾಮ ಸ್ವಾಗತ ಗೋಪುರಕ್ಕೆ ಶಿಲಾನ್ಯಾಸ
ಉಡುಪಿ, ಜ.14: ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಚೊಚ್ಚಲ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಸಜ್ಜುಗೊಂಡಿರುವ ನಡುವೆಯೇ, ಉಡುಪಿ ನಗರಸಭೆ ವತಿಯಿಂದ ಶಾಸಕ ಯಶಪಾಲ್ ಸುವರ್ಣರ ನೇತೃತ್ವದಲ್ಲಿ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸುವ ಯೋಜನೆಗೆ ಜ.16ರಂದು ಚಾಲನೆ ನೀಡಲಾಗುತ್ತದೆ. ಇದೇ ಮೊದಲ ಬಾರಿಗೆ ಸುಮಾರು 50 ಲಕ್ಷ ರೂ.ಗಳ ವೆಚ್ಚದಲ್ಲಿ ಉಡುಪಿ ನಗರದ ಶ್ರೀಕೃಷ್ಣ ಮಠದ ಆಸುಪಾಸಿನ ಇಡೀ ಪ್ರದೇಶವನ್ನು ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕಾರಗೊಳಿಸಲಾಗುತ್ತಿದೆ. ಈ ಯೋಜನೆಗೆ ಶುಕ್ರವಾರ ಸಂಜೆ 7ಗಂಟೆಗೆ ಕೋರ್ಟ್ ರಸ್ತೆಯ ಕೆನರಾಬ್ಯಾಂಕ್ ಶಾಖೆಯ ಎದುರು ಚಾಲನೆ ನೀಡಲಾಗುತ್ತದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಯಶಪಾಲ್ ಸುವರ್ಣ ಇಂದು ಶೀರೂರು ಮಠದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಉಡುಪಿ ನಗರಸಭೆ ಅನುಷ್ಠಾನಗೊಳ್ಳುವ ಈ ಯೋಜನೆಗೆ ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದ್ದು ನಗರ ದೀಪಾಲಂಕಾರವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಉದ್ಘಾಟನೆಯನ್ನು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ನೆರವೇರಿಸಲಿದ್ದಾರೆ. ಪರಶುರಾಮ ಸ್ವಾಗತ ಗೋಪುರಕ್ಕೆ ಶೀಲನ್ಯಾಸ: ಉಡುಪಿಯ ದಕ್ಷಿಣ ಭಾಗದಲ್ಲಿ ಈಗಾಗಲೇ ಪುತ್ತಿಗೆ ಮಠದ ವತಿಯಿಂದ ಭವ್ಯವಾದ ಗೀತಾಚಾರ್ಯರ ಸ್ವಾಗತಗೋಪುರ ನಿರ್ಮಿಸಿದ್ದು ಇದೀಗ ಉಡುಪಿ ನಗರವನ್ನು ಪ್ರವೇಶಿ ಸುವ ಉತ್ತರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ನಲ್ಲಿ ಪರಶುರಾಮ ಸ್ವಾಗತ ಗೋಪುರ ನಿರ್ಮಾಣಕ್ಕೆ ಜ.16ರಂದು ಬೆಳಗ್ಗೆ 9ಗಂಟೆಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಅವರು ಹೇಳಿದರು. ಸುಮಾರು ಒಂದು ಕೋಟಿ ರೂ.ವೆಚ್ಚದ ಈ ಭವ್ಯ ಸ್ವಾಗತ ಗೋಪುರವನ್ನು ಅಂಬಾಗಿಲು ಜಂಕ್ಷನ್ ಬಳಿ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ನಿರ್ಮಿಸಲಾಗುತ್ತದೆ. ಇದರ ಶಿಲಾನ್ಯಾಸವನ್ನು ಸಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ ನೆರವೇರಿಸುವರು. ಅನ್ನಸಂತರ್ಪಣೆ: ಪರ್ಯಾಯ ಮುನ್ನಾದಿನ ಜ.17ರ ಶನಿವಾರ ಉಡುಪಿಯ ವಿವಿಧ ಭಾಗಗಳಲ್ಲಿ ಅಂದರೆ ರಾಜಾಂಗಣದ ಪಾರ್ಕಿಂಗ್ ಪ್ರದೇಶ, ನಿತ್ಯಾನಂದ ಮಂದಿರ, ಬಸ್ಸುನಿಲ್ದಾಣ ಸಮೀಪದ ಬೋರ್ಡ್ ಶಾಲೆ - ಮೂರೂ ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಅನ್ನಸಂಪರ್ಪಣೆ ನಡೆಯಲಿದೆ. ಸುಮಾರು ಒಂದು ಲಕ್ಷದಷ್ಟು ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜನವರಿ 17ರಿಂದ 22ರವರೆಗೆ ಪ್ರತಿದಿನ ವಿಶೇಷ ಅನ್ನಸಂತರ್ಪಣೆ ನಡೆಯಲಿದ್ದು ನಾಲ್ಕರಿಂದ ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕರು ತಿಳಿಸಿದರು. ಪರ್ಯಾಯ ಶೋಭಾಯಾತ್ರೆ: ಈ ಬಾರಿಯ ಪರ್ಯಾಯ ಶನಿವಾರ ಮತ್ತು ಭಾನುವಾರ ಬಂದಿರುವುದರಿಂದ ಸುಮಾರು ಎರಡರಿಂದ ಮೂರು ಲಕ್ಷ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪರ್ಯಾಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿಶಿಷ್ಟವಾಗಿ ನಡೆಯಲಿದೆ ಎಂದವರು ತಿಳಿಸಿದರು. ಇದರಲ್ಲಿ ದೇಶಾದ್ಯಂತದಿಂದ ಬಂದ ಸಾಂಸ್ಕೃತಿಕ ತಂಡಗಳೊಂದಿಗೆ ಸ್ಥಳೀಯ ಕಲಾತಂಡಗಳು, ಭಜನಾ ತಂಡಗಳು, ತಾಲೀಮು ತಂಡಗಳು ಶೋಭಾ ಯಾತ್ರೆಯಲ್ಲಿ ಭಾಗವಹಿಸಲಿವೆ. ಶೋಭಾ ಯಾತ್ರೆ ಜ.18ರ ರವಿವಾರ ಬೆಳಿಗ್ಗೆ ಎರಡು ಗಂಟೆಗೆ ಆರಂಭ ವಾಗಲಿದ್ದು ಸುಮಾರು ಎರಡು ಗಂಟೆಗಳ ಕಾಲ ನಡೆಯಲಿದೆ. ಬಳಿಕ ಅಲಂಕೃತ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಮುಂಜಾನೆ 5:30ರಿಂದ ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ.ಇದರಲ್ಲಿ ಪರ್ಯಾಯ ದೀಕ್ಷೆ ತೆಗೆದುಕೊಂಡಿರುವ ಶ್ರೀವೇದವರ್ಧನ ತೀರ್ಥರು ಇತರ ಸ್ವಾಮೀಜಿಯವರೊಂದಿಗೆ, ನಾಡಿನ ಗಣ್ಯರು, ಉದ್ಯಮಿಗಳನ್ನು ಶ್ರೀಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಪರ್ಯಾಯ ದರ್ಬಾರ್ನಲ್ಲಿ ಕೇಂದ್ರ ಮತ್ತು ರಾಜ್ಯದ ಸಚಿವರು, ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್, ಮಧುಕರ ಮುದ್ರಾಡಿ, ಸಂತೋಷ್ ಸುವರ್ಣ ಬೆಳ್ಳೆ ಉಪಸ್ಥಿತರಿದ್ದರು.

26 C