ಯಾದಗಿರಿ| ಕೆಂಭಾವಿ ಪಟ್ಟಣದ ಭೋವಿ ವಡ್ಡರ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ
ಕೆಂಭಾವಿ: ಪಟ್ಟಣದ ಭೋವಿ ವಡ್ಡರ ಸಮಾಜದ ಸಭೆ ಶನಿವಾರ ಸಂಜೆ ಶ್ರೀ ಸಂಜೀವು ಆಂಜನೇಯ ದೇವಸ್ಥಾನದಲ್ಲಿ ನಡೆಯಿತು. ಸಭೆಯಲ್ಲಿ ಕೆಂಭಾವಿ ಪಟ್ಟಣದ ಭೋವಿ ವಡ್ಡರ ಸಮಾಜದ ನೂತನ ಪದಾಧಿಕಾರಿಗಳನ್ನು ಸಮಾಜದ ಮುಖಂಡರ ಸಮ್ಮುಖದಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ನೂತನವಾಗಿ ಗೌರವ ಅಧ್ಯಕ್ಷರಾಗಿ ಯಂಕಪ್ಪ ಚಂದಾಪುರ, ಅಧ್ಯಕ್ಷರಾಗಿ ದೇವಪ್ಪ ಹಂದ್ರಾಳ, ಉಪಾಧ್ಯಕ್ಷರಾಗಿ ಮಂಜುನಾಥ್ ಎಚ್, ಕಾರ್ಯದರ್ಶಿಯಾಗಿ ವಿಜಯಕುಮಾರ, ಸಹ ಕಾರ್ಯದರ್ಶಿಯಾಗಿ ರಮೇಶ ಚಿಂಚೋಳಿ, ಸಂಚಾಲಕರಾಗಿ ರಾಜು ನಾಗಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸದಸ್ಯರಾಗಿ ರಂಗಪ್ಪ ವಡ್ಡರ, ಬಸವರಾಜ ಮ್ಯಾಗೇರಿ, ಚಳಿಗೆಪ್ಪ ವಡ್ಡರ, ಮಾರುತಿ ಆರ್. ಭೋವಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಕುಮಾರ್ ಆರ್. ಭೋವಿ, ವೆಂಕಟೇಶ್ ಚಂದಾಪುರ, ಹಳ್ಳೆಪ್ಪ ವಡ್ಡರ, ಅಂಬರೀಶ ಮ್ಯಾಗೇರಿ, ಚಂದ್ರು ಚಿಂಚೋಳಿ, ಭೀಮಣ್ಣ ಭೈರಮಡ್ಡಿ, ಸೋಮು ಆಲ್ಹಾಳ, ಹುಸೇನಿ ಬಳ್ಳಾರಿ, ಮಂಜುನಾಥ ಚೌಕ, ದುರ್ಗಪ್ರಸಾದ, ಅಶೋಕ ವಣಕ್ಯಾಳ, ಮಾರುತಿ ವಣಕ್ಯಾಳ, ಗಂಗಾಧರ ಶಹಾಪುರ, ನಾಗಪ್ಪ ಕೊಡೆಕಲ್ಲ, ಸುರೇಶ ಶಿರವಾರ, ಪರಶುರಾಮ ರಾಯಚೂರು ಸೇರಿದಂತೆ ಇತರರು ಹಾಜರಿದ್ದರು.
ಯಾದಗಿರಿ| ಮೈಲಾರಲಿಂಗೇಶ್ವರ ಜಾತ್ರೆ ಹಿನ್ನೆಲೆ: ಪೊಲೀಸರಿಂದ ಶಾಂತಿ ಸಭೆ
ಯಾದಗಿರಿ: ಮೈಲಾರಲಿಂಗೇಶ್ವರರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆಯ ಮಾರ್ಗದ ಮಧ್ಯದಲ್ಲಿರುವ ಕೆರೆ ಏರಿಯಲ್ಲಿ ಪೂಜೆ ಸಲ್ಲಿಸುವ ವೇಳೆ ಗಲಾಟೆ ಮಾಡಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದವರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಸುರೇಶ್ ನಾಯಕ್ ಎಚ್ಚರಿಕೆಯನ್ನು ನೀಡಿದ್ದಾರೆ. ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆಯಲಿರುವ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಶನಿವಾರ ಮೈಲಾಪುರ, ಹಳಿಗೇರಾ, ರಾಮಸಮುದ್ರ, ಹೊಸಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮುಖಂಡರೊಂದಿಗೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಸುರೇಶ್ ನಾಯಕ್, ಜಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದರೆ ಲಾಠಿ ಚಾರ್ಜ್ ಸೇರಿದಂತೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ. ಸಾರ್ವಜನಿಕರು ಪೊಲೀಸರಿಗೆ ಸಹಕರಿಸಿ ಶಾಂತಿಯುತವಾಗಿ ಜಾತ್ರೆ ನಡೆಸುವಂತೆ ಮನವಿ ಮಾಡಿದರು. ಜಾತ್ರಾ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸಲಾಗುವುದು ಎಂದು ತಿಳಿಸಿದರು. ಪ್ರತಿಯೊಂದು ಗ್ರಾಮಕ್ಕೂ ಸಂಪ್ರದಾಯದಂತೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು. ಯಾವ ಗ್ರಾಮದಿಂದ ಯಾರು ಪೂಜೆ ಸಲ್ಲಿಸಲು ಬರುತ್ತಾರೆ ಎಂಬ ಮಾಹಿತಿಯನ್ನು ಪೊಲೀಸರಿಗೆ ಮುಂಚಿತವಾಗಿ ನೀಡಬೇಕು. ಈ ಸಂಬಂಧ ಪಿಎಸ್ಐಗಳು ಗ್ರಾಮಗಳ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಹೇಳಿದರು. ತಹಶೀಲ್ದಾರ್ ಸುರೇಶ್ ರಾಣಪ್ಪ ಅಂಕಲಗಿ ಮಾತನಾಡಿ, ಗ್ರಾಮಗಳ ಮುಖಂಡರು ಪರಸ್ಪರ ಚರ್ಚಿಸಿ ಒಮ್ಮತದಿಂದ ಪೂಜೆ ಸಲ್ಲಿಸುವವರ ಹೆಸರುಗಳನ್ನು ಪೊಲೀಸರಿಗೆ ನೀಡಬೇಕು. ಗಲಭೆಗಳಿಗೆ ಅವಕಾಶ ನೀಡದೆ ಶಾಂತಿಯಿಂದ ಜಾತ್ರೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಪಿಎಸ್ಐ ಹನುಮಂತ ಬಂಕಲಿಗಿ ಮಾತನಾಡಿ, ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಹೊರುವವರು ಒಂದೇ ರೀತಿಯ ಬಟ್ಟೆ ಧರಿಸಬೇಕು. ಇದರಿಂದ ದೇವರ ಸೇವಾದಾರರನ್ನು ಗುರುತಿಸಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸಾಮಾನ್ಯರಂತೆ ಹಿಂದಕ್ಕೆ ತಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಳೆದ ವರ್ಷ ನಡೆದಂತೆ ಈ ವರ್ಷ ಗಲಾಟೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು. ಅನುಚಿತ ವರ್ತನೆ ಕಂಡುಬಂದಲ್ಲಿ ಯಾವುದೇ ವಿನಾಯಿತಿ ನೀಡದೆ ಪ್ರಕರಣ ದಾಖಲಿಸಲಾಗುವುದು. ಜನರ ಓಡಾಟಕ್ಕೆ ಅಡ್ಡಿಯಾಗುವಂತೆ ಮನೆಗಳ ಮುಂದೆ ಅಂಗಡಿಗಳನ್ನು ಹಾಕಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದರು.
ಅಂತರರಾಷ್ಟ್ರೀಯ ಹಾಕಿಗೆ ಮರಳಲು ಸಿದ್ಧ: ವಂದನಾ ಕಟಾರಿಯ
ರಾಂಚಿ, ಜ. 11: ಕಳೆದ ವರ್ಷ ಅಂತರರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದ ಭಾರತೀಯ ಹಾಕಿ ತಂಡದ ಮಾಜಿ ಆಟಗಾರ್ತಿ ವಂದನಾ ಕಟಾರಿಯ, ಈಗ ರಾಷ್ಟ್ರೀಯ ತಂಡಕ್ಕೆ ಮರಳುವ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಕಳೆದ ವರ್ಷದ ಏಪ್ರಿಲ್ 1ರಂದು ಹಾಕಿಗೆ ನಿವೃತ್ತಿ ಕೋರಿದ್ದರು. “ನನ್ನನ್ನು ವಾಪಸ್ ಕರೆದರೆ, ಹೌದು, ನಾನು ಲಭ್ಯವಿದ್ದೇನೆ. ವಾಸ್ತವಿಕವಾಗಿ, ನಾನು ಪಂದ್ಯ ಆಡುವ ದೈಹಿಕ ಕ್ಷಮತೆಯನ್ನು ಹೊಂದಿದ್ದೇನೆ. ನನ್ನ ದೈಹಿಕ ಕ್ಷಮತೆಯನ್ನು ಹಾಕಿ ಇಂಡಿಯಾ ಲೀಗ್ (ಎಚ್ಐಎಲ್)ನಲ್ಲಿ ಸಾಬೀತುಪಡಿಸಿದ್ದೇನೆ. ಓರ್ವ ಆಟಗಾರ್ತಿಯಾಗಿ ಭಾರತೀಯ ತಂಡಕ್ಕೆ ನನ್ನ ಅಗತ್ಯವಿದ್ದರೆ, ನಾನು ತಯಾರಿದ್ದೇನೆ,” ಎಂದು ಅವರು ಹೇಳಿದರು. ಹಾಕಿ ಇಂಡಿಯಾ ಲೀಗ್ನಲ್ಲಿ ಅವರ ತಂಡ ಶ್ರಾಚಿ ಬೆಂಗಾಲ್ ಟೈಗರ್ಸ್ ರನ್ನರ್ಸ್-ಅಪ್ ಆಗಿ ಹೊರಹೊಮ್ಮಿದ ಬಳಿಕ ‘ಸ್ಪೋರ್ಟ್ಸ್ಟಾರ್’ನೊಂದಿಗೆ ಅವರು ಮಾತನಾಡುತ್ತಿದ್ದರು. 2009ರಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವಂದನಾ ಕಳೆದ ವರ್ಷ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಕೋರಿದ್ದರು. ಅವರು ಭಾರತೀಯ ಮಹಿಳಾ ಹಾಕಿ ಇತಿಹಾಸದಲ್ಲಿ ದೇಶದ ಪರವಾಗಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆಯನ್ನು ಹೊಂದಿದ್ದಾರೆ. ಹರಿದ್ವಾರದ 33 ವರ್ಷದ ಆಟಗಾರ್ತಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ಆಡಿದ್ದ ಭಾರತೀಯ ತಂಡದ ಅವಿಭಾಜ್ಯ ಭಾಗವಾಗಿದ್ದರು. ಆ ತಂಡವು ಐತಿಹಾಸಿಕ ನಾಲ್ಕನೇ ಸ್ಥಾನ ಗಳಿಸಿತ್ತು.
ಉಡುಪಿ| ಮಹಾರಾಷ್ಟ್ರದ ಫುಲ್ಧರ್ ನೇತಂ ‘ಫುಲ್ ಮ್ಯಾರಥಾನ್’ ಚಾಂಪಿಯನ್
ಉಡುಪಿ: ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ಎನ್ಇಬಿ ಸ್ಪೋರ್ಟ್ಸ್ಗಳ ಸಂಯುಕ್ತ ಆಶ್ರಯದಲ್ಲಿ ಇಂದು ಮುಂಜಾನೆ ಉಡುಪಿಯಲ್ಲಿ ಜರಗಿದ ‘ಉಡುಪಿ ಫುಲ್ ಮ್ಯಾರಥಾನ್-2026’ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಫುಲ್ಧರ್ ನೇತಂ ಅವರು 42ಕಿ.ಮೀ. ಓಟವನ್ನು 2ಗಂಟೆ 53.41ನಿ.ಗಳಲ್ಲಿ ಮೊದಲಿಗರಾಗಿ ಕ್ರಮಿಸಿ ಚಾಂಪಿಯನ್ ಪ್ರಶಸ್ತಿಯೊಂದಿಗೆ 20,000ರೂ. ನಗದನ್ನು ಗೆದ್ದುಕೊಂಡರು. ಬೆಳಗ್ಗೆ 4 ಗಂಟೆಗೆ ಪ್ರಾರಂಭಗೊಂಡ ಈ ಸ್ಪರ್ಧೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡು ಉಡುಪಿ, ಮಣಿಪಾಲ, ಜಿಲ್ಲಾಧಿಕಾರಿ ಕಚೇರಿ ಸಮೀಪದ ಆರ್ಟಿಓ ಕಚೇರಿಯವರೆಗೆ ಸಾಗಿ ಮರಳಿ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಮಹಾರಾಷ್ಟ್ರದವರೇ ಆದ ಛೀತ್ರಂ ಕುಮಾರ್ 2ಗಂಟೆ 57ನಿಮಿಷಗಳಲ್ಲಿ ಗುರಿಮುಟ್ಟಿ ರನ್ನರ್ಅಪ್ ಸ್ಥಾನ ಪಡೆದರೆ, ಜಯಂತ್ ಬೋರೊ ಅವರು ತೃತೀಯ (3ಗಂ. 02ನಿ) ಸ್ಥಾನಿಯಾದರು. 21ಕಿ.ಮೀ. ದೂರದ ಹಾಫ್ ಮ್ಯಾರಥಾನ್ನ ಪುರುಷರ ವಿಭಾಗದಲ್ಲಿ ಸಚಿನ್ ಪೂಜಾರಿ (1ಗಂ. 17.29ನಿ.) ಚಾಂಪಿಯನ್ ಆಗಿ ಮೂಡಿಬಂದರೆ, ಲಕ್ಷ್ಮೀಶ ಸಿ.ಎಸ್. ದ್ವಿತೀಯ ಹಾಗೂ ಪ್ರಶಾಂತ್ ತೃತೀಯ ಸ್ಥಾನ ಗೆದ್ದುಕೊಂಡರು. ಹಾಫ್ ಮ್ಯಾರಥಾನ್ನ ಮಹಿಳೆಯರ ವಿಭಾಗದಲ್ಲಿ ರಿತಿಕಾ ಸಿಂಗ್ (1ಗಂ. 58.32ನಿ) ಅಗ್ರಸ್ಥಾನಿಯಾದರೆ, ಅಶ್ವಿನಿ ರನ್ನರ್ ಅಪ್ ಹಾಗೂ ಮರಿಯಾ ಹಾಜಿ ತೃತೀಯ ಸ್ಥಾನದೊಂದಿಗೆ ನಗದು ಬಹುಮಾನ ಗೆದ್ದುಕೊಂಡರು. ಉಳಿದಂತೆ 10ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಮಿಥೇಶ್ ಸಿ.ಜಿ. ಮೊದಲಿಗರಾಗಿ ಗುರಿಮುಟ್ಟಿದರೆ, ಸಂತೋಷ್ ಕುಮಾರ್ ಹಾಗೂ ಮುಗೇಶ್ ಎಂ.ಯು. ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದರು. 10ಕಿ.ಮೀ. ಓಟದ ಮಹಿಳೆಯರ ವಿಭಾಗದಲ್ಲಿ ಪ್ರೀತಿ ಮೊಗವೀರ ಅಗ್ರಸ್ಥಾನ ಪಡೆದರು. ಅವರ ನಂತರದ ಸ್ಥಾನ ಗಳನ್ನು ಕ್ರಮವಾಗಿ ಸಾನ್ವಿ ಸಂಭಾಜಿ ಹಾಗೂ ಸ್ವಾತಿ ಪಿ.ಎಂ. ಪಡೆದುಕೊಂಡರು. ಉಳಿದ ಫಲಿತಾಂಶಗಳ ವಿವರ ಹೀಗಿದೆ... 17ವರ್ಷದೊಳಗಿನ ಬಾಲಕರ ವಿಭಾಗ (5ಕಿ.ಮೀ.): 1.ವಿಠ್ಠಲ ಬಾಳಪ್ಪ, ಸರಕಾರಿ ಪ್ರೌಢ ಶಾಲೆ ವಡೇರಹೋಬಳಿ ಕುಂದಾಪುರ, 2.ಆಕಾಶ್, ಸರಕಾರಿ ಪ್ರೌಢ ಶಾಲೆ ಅಜ್ಜರಕಾಡು, 3. ವರ್ಷಿತ್, ನಿಟ್ಟೆ. 17ವರ್ಷದೊಳಗಿನ ಬಾಲಕಿಯರು: 1.ದೀಕ್ಷಿತಾ, ನಿಟ್ಟೆ. 2.ದೀಪಿಕಾ ನಿಟ್ಟೆ, 3. ಸುೃಜನ್, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ. 14 ವರ್ಷದೊಳಗಿನ ಬಾಲಕರು (3ಕಿ.ಮೀ.): 1.ಸೃಜನ್, ನಿಟ್ಟೆ, 2. ಆಕಾಶ್ ಉಡುಪಿ, 3.ಶೋಧನ್ ಉಡುಪಿ. 14ವರ್ಷದೊಳಗಿನ ಬಾಲಕಿಯರು: 1.ಕುಶಿ ಜೆ.ಶೆಟ್ಟಿ ನಿಟ್ಟೆ, 2.ಶರಣಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ ಕುಂದಾಪುರ, 3. ಪೂಜಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ. ಮ್ಯಾರಥಾನ್ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಕೆ.ರಘುಪತಿ ಭಟ್, ಅಶೋಕ್ ಕುಮಾರ್ ಕೊಡವೂರು, ಎನ್ಇಬಿ ಸ್ಪೋರ್ಟ್ಸ್ನ ನಾಗರಾಜ ಅಡಿಗ ಉಪಸ್ಥಿತರಿದ್ದರು. ವಿಜೇತರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬಹುಮಾನ ವಿತರಿಸಿದರು. ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಡಾ.ರೋಶನ್ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಒಟ್ಟಾರೆಯಾಗಿ 5,500 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದರು. ಎಲ್ಲಾ ವಿಭಾಗಗಳಲ್ಲಿ ಒಟ್ಟಾರೆಯಾಗಿ 10.00 ಲಕ್ಷ ರೂ. ನಗದನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು.
Madhya Pradesh | ಇಂದೋರ್ ದುರಂತ: ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆ; ಕಾಂಗ್ರೆಸ್ನಿಂದ ಪ್ರತಿಭಟನಾ ರ್ಯಾಲಿ
ಇಂದೋರ್, ಜ. 11: ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಹೊಣೆಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಹಾಗೂ ಘಟನೆಯ ಜವಾಬ್ದಾರಿ ವಹಿಸುವಂತೆ ಆಗ್ರಹಿಸಿ ಮಧ್ಯಪ್ರದೇಶ ಕಾಂಗ್ರೆಸ್ ರವಿವಾರ ‘ನ್ಯಾಯಕ್ಕಾಗಿ ಯಾತ್ರೆ’ ನಡೆಸಿತು. ‘ನ್ಯಾಯಕ್ಕಾಗಿ ಯಾತ್ರೆ’ ಬಡಾ ಗಣಪತಿ ಚೌಕದಿಂದ ಆರಂಭವಾಗಿ ರಾಜವಾಡದಲ್ಲಿ ಸಮಾಪನಗೊಂಡಿತು. ಕಾಂಗ್ರೆಸ್ ನ ಹಿರಿಯ ನಾಯಕರು, ಪಕ್ಷದ ಕಾರ್ಯಕರ್ತರು ಹಾಗೂ ನಿವಾಸಿಗಳು ಪಾಲ್ಗೊಂಡರು. ಈ ಯಾತ್ರೆಯ ನೇತೃತ್ವ ವಹಿಸಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಇಂದೋರ್ ಮೇಯರ್, ಬಿಜೆಪಿ ಸರಕಾರ ಹಾಗೂ ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ದುರಂತಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು. ‘ನ್ಯಾಯಕ್ಕಾಗಿ ಯಾತ್ರೆ’ಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ಜಿತು ಪಟ್ವಾರಿ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಪ್ರತಿಪಕ್ಷದ ನಾಯಕ ಉಮಂಗ್ ಸಿಂಘರ್, ಮಾಜಿ ಸಚಿವ ಸಜ್ಜನ್ ವರ್ಮಾ, ಮಧ್ಯಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹರೀಷ್ ಚೌಧುರಿ, ಅಜಯ್ ಸಿಂಗ್ ಹಾಗೂ ಕಾಂಗ್ರೆಸ್ ಶಾಸಕರು, ಕಾರ್ಪೋರೇಟರ್ ಗಳು, ಸೇವಾದಳದ ಸದಸ್ಯರು ಮತ್ತು ಮಹಿಳಾ ಕಾಂಗ್ರೆಸ್ ನಾಯಕರು ಪಾಲ್ಗೊಂಡರು. ‘ನ್ಯಾಯಕ್ಕಾಗಿ ಯಾತ್ರೆ’ ನಡೆದ ಮಾರ್ಗದಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಯಾತ್ರೆಯ ವೇಳೆ ದಿಗ್ವಿಜಯ ಸಿಂಗ್ ಹಾಗೂ ಉಮಂಗ್ ಸಿಂಘರ್ ಅವರು ವಾಹನದ ಮೇಲೆ ನಿಂತು ಜನಸಂದಣಿಯನ್ನು ಉದ್ದೇಶಿಸಿ ಮಾತನಾಡಿದರು. ಇಂದೋರ್ನಲ್ಲಿ ಕಾರ್ಪೋರೇಟರ್ ಗಳಿಂದ ಹಿಡಿದು ಸಂಸತ್ತಿನವರೆಗೆ ಎಲ್ಲ ಮಟ್ಟದ ಅಧಿಕಾರವನ್ನು ಬಿಜೆಪಿ ನಿಯಂತ್ರಿಸುತ್ತಿದೆ. ನ್ಯಾಯಕ್ಕಾಗಿ ಹೋರಾಟ ದೀರ್ಘವಾಗಿರುತ್ತದೆ. ಅಲ್ಲದೆ, ಜನರೊಂದಿಗೆ ಮಾತನಾಡಲು ಮನೆಮನೆಗೆ ತೆರಳಬೇಕಾಗುತ್ತದೆ ಎಂದು ದಿಗ್ವಿಜಯ ಸಿಂಗ್ ಹೇಳಿದರು. ಸರಕಾರ ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಉಮಂಗ್ ಸಿಂಘರ್ ಆರೋಪಿಸಿದರು. ನಗರದ ಕೆಲವು ಭಾಗಗಳಲ್ಲಿ ಇನ್ನೂ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು. “ಇದುವರೆಗೆ 21 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಜವಾಬ್ದಾರರಾದವರು ಕೊಲೆಗಾರರು. ಅವರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು” ಎಂದು ಅವರು ಹೇಳಿದರು.
ರೋಹಿತ್ ಶರ್ಮಾ ವಿಶ್ವದಾಖಲೆಯ ಸಿಕ್ಸರ್; ಹಿಟ್ ಮ್ಯಾನ್ ಬೊಂಬಾಟ್ ಹೊಡೆತಕ್ಕೆ ವಿರಾಟ್ ಕೊಹ್ಲಿ ರಿಪ್ಲೈ ವೈರಲ್!
Rohit Sharma Sixes World Record- ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 650 ಸಿಕ್ಸರ್ಗಳ ಗಡಿ ದಾಟಿದ ಮೊದಲ ಆಟಗಾರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಡೋದರಾದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ರೋಹಿತ್ ಶರ್ಮಾ ಅವರು ಪಂದ್ಯದಲ್ಲಿ 2 ಸಿಕ್ಸರ್ ಹೊಡೆದರು. ಅವರು ಹೊಡೆದ ವಿಶ್ವದಾಖಲೆಯ ಭರ್ಜರಿ ಸಿಕ್ಸರ್ ಗೆ ಪೆವಿಲಿಯನ್ ನಲ್ಲಿದ್ದ ವಿರಾಟ್ ಕೊಹ್ಲಿ ಅವರ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.
ಚಳಿಗಾಲದ ಹವೆಯಿಂದ ಸೋಂಕುಗಳ ಅಪಾಯ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡ ಇರುವವರು ಮತ್ತು ಹೃದಯರೋಗ ಹೊಂದಿರುವವರು ಜಾಗರೂಕರಾಗಿರಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ. ದೇಹದಲ್ಲಿ ಸಾಕಷ್ಟು ಜಲಸಂಚಯನವನ್ನು ನಿರ್ವಹಿಸುವುದು, ಸಂಸ್ಕರಿತ ಆಹಾರ ಸೇವನೆಯನ್ನು ತೊರೆಯುವುದು ಹಾಗೂ ಪೊಟ್ಯಾಶಿಯಂ–ಸಮೃದ್ಧ ಆಹಾರಗಳು ಮತ್ತು ತರಕಾರಿಗಳ ಬಳಕೆಯನ್ನು ಹೆಚ್ಚಿಸುವುದು ಚಳಿಗಾಲದಲ್ಲಿ ಕಿಡ್ನಿ (ಮೂತ್ರಪಿಂಡ) ಕಾರ್ಯ ಸುಗಮವಾಗಲು ಮತ್ತು ಎಲೆಕ್ಟ್ರೊಲೈಟ್ ಸಮತೋಲನಕ್ಕೆ ಸಹಾಯ ಮಾಡಲಿದೆ ಎಂದು ವೈದ್ಯರು ಹೇಳಿದ್ದಾರೆ. ►ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆ ಚಳಿಗಾಲದ ಶೀತ ಹವಾಮಾನ ಪರಿಸ್ಥಿತಿಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಫ್ಲೂ, ನ್ಯುಮೋನಿಯಾ ಅಥವಾ ಶ್ವಾಸಕೋಶದ ಅನಾರೋಗ್ಯದಂತಹ ಅಪಾಯಗಳು ಹೆಚ್ಚಾಗಿದ್ದು, ಅವು ಅಧಿಕ ರಕ್ತದೊತ್ತಡ ಮತ್ತು ಹೃದಯರೋಗ ಇರುವವರಲ್ಲಿ ದೀರ್ಘಕಾಲೀನ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಶ್ವಾಸಕೋಶದ ಕಾಯಿಲೆ) ಸೇರಿದಂತೆ ಪ್ರತಿಕೂಲ ಪರಿಣಾಮಗಳನ್ನು ಬೀರಲಿವೆ. “ಚಳಿಯಿಂದಾಗಿ ರಕ್ತನಾಳಗಳು ಕಿರಿದಾಗುತ್ತವೆ. ಇದರಿಂದ ರಕ್ತದೊತ್ತಡದಲ್ಲಿ ಏರಿಕೆಯಾಗುತ್ತದೆ ಮತ್ತು ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದೇ ಸಂದರ್ಭದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಉಪ್ಪುಭರಿತ ಆಹಾರವನ್ನು ಹೆಚ್ಚು ಸೇವಿಸಿದರೆ ನಿರ್ಜಲೀಕರಣಕ್ಕೆ ಕಾರಣವಾಗಿ, ಚಳಿಗಾಲದ ರೋಗಗಳ ಜೊತೆಗೆ ಹೃದಯ–ರಕ್ತನಾಳ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಹೇರಬಹುದು. ಶೀತ ಹವಾಮಾನವು ಅಡ್ರೆನಲಿನ್ ಸೇರಿದಂತೆ ಒತ್ತಡದ ಹಾರ್ಮೋನ್ಗಳಿಗೂ ಪ್ರಚೋದನೆ ನೀಡುತ್ತದೆ. ಇದರಿಂದ ರಕ್ತದೊತ್ತಡ ಮತ್ತು ಹೃದಯದ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ” ಎಂದು ತಜ್ಞರು ಎಚ್ಚರಿಸಿದ್ದಾರೆ. ►ಸೋಡಿಯಂ–ಪೊಟ್ಯಾಶಿಯಂ ಮಟ್ಟದಲ್ಲಿ ಏರಿಳಿತ ವೈದ್ಯರ ಪ್ರಕಾರ, ಚಳಿಗಾಲದಲ್ಲಿ ದೇಹದ ಸೋಡಿಯಂ ಮತ್ತು ಪೊಟ್ಯಾಶಿಯಂ ಮಟ್ಟಗಳಲ್ಲಿ ಏರಿಳಿತ ಉಂಟಾಗುತ್ತದೆ. ಹೆಚ್ಚು ದ್ರವಾಹಾರವನ್ನು ಸೇವಿಸದೆ ಇರುವುದು ಮತ್ತು ನಿರ್ಜಲೀಕರಣದಿಂದ ಸೋಡಿಯಂ ಮಟ್ಟ ಏರಬಹುದು. ಅದೇ ಸಮಯದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ, ಅಂದರೆ ಹೆಚ್ಚು ಮೂತ್ರವಿಸರ್ಜನೆಗೆ ಕಾರಣವಾಗುವ ಆಹಾರ ಸೇವನೆ ಹಾಗೂ ಹಣ್ಣು–ತರಕಾರಿಗಳನ್ನು ಕಡಿಮೆ ಸೇವಿಸಿದರೆ ಪೊಟ್ಯಾಶಿಯಂ ಅಸಮತೋಲನಕ್ಕೆ ಕಾರಣವಾಗಬಹುದು. ಮುಖ್ಯವಾಗಿ ಹೃದಯರೋಗಿಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ. ►ಶ್ವಾಸಕೋಶದ ರೋಗಗಳ ಅಪಾಯ ಸಾಮಾನ್ಯ ಚಳಿಗಾಲದ ಶ್ವಾಸಕೋಶದ ರೋಗಗಳ ಜೊತೆಗೆ ಜಠರದ ವೈರಸ್ಗಳಾದ ನೋರೋವೈರಸ್ಗಳನ್ನು ಶೀತ, ಒಣ ಗಾಳಿ ಉಲ್ಬಣಗೊಳಿಸುತ್ತದೆ. ಇದರಿಂದ ರೋಗನಿರೋಧಕ ವ್ಯವಸ್ಥೆಯ ಮೇಲೆ ಒತ್ತಡ ಬೀರುತ್ತದೆ. ಹೀಗಾಗಿ ಆಸ್ತಮಾ, ಹೃದಯರೋಗ ಮತ್ತು ಒಣಚರ್ಮದಂತಹ ದೀರ್ಘಕಾಲೀನ ಸಮಸ್ಯೆ ಇರುವವರಿಗೆ ಅಪಾಯ ಹೆಚ್ಚಾಗುತ್ತದೆ. “ದೇಹದಲ್ಲಿ ಸಾಕಷ್ಟು ಜಲಸಂಚಯನವನ್ನು ನಿರ್ವಹಿಸಬೇಕು. ಉಪ್ಪುಭರಿತ ಅಥವಾ ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಪೊಟ್ಯಾಶಿಯಂ–ಸಮೃದ್ಧ ಉತ್ಪನ್ನಗಳ (ಹಣ್ಣುಗಳು/ತರಕಾರಿಗಳು) ಸೇವನೆಯನ್ನು ಹೆಚ್ಚಿಸುವುದರಿಂದ ಸೆಳೆತಗಳು, ಸುಸ್ತು ಮತ್ತು ಕಿಡ್ನಿ ಸ್ಟೋನ್ಗಳಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಜೊತೆಗೆ ಎಲೆಕ್ಟ್ರೊಲೈಟ್ ಸಮತೋಲನ ಮತ್ತು ಕಿಡ್ನಿ ಕಾರ್ಯ ಸುಧಾರಿಸಬಹುದು” ಎಂದು ತಜ್ಞರು ಹೇಳಿದ್ದಾರೆ. ►ಮಕ್ಕಳು ಮತ್ತು ವೃದ್ಧರಿಗೆ ಅಪಾಯ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವಿಶೇಷವಾಗಿ ಹಸುಗೂಸುಗಳು, 65 ವರ್ಷ ಮೇಲ್ಪಟ್ಟ ವಯಸ್ಕರು, ದೀರ್ಘಕಾಲೀನ ಹೃದಯ, ಶ್ವಾಸಕೋಶ, ಕಿಡ್ನಿ ಅಥವಾ ಲಿವರ್ ರೋಗ ಹೊಂದಿರುವವರು, ಮಧುಮೇಹಿಗಳು ಹಾಗೂ ರೋಗನಿರೋಧಕ ಶಕ್ತಿಯ ಸಮಸ್ಯೆ ಇರುವವರು (ಕ್ಯಾನ್ಸರ್ ಥೆರಪಿ ಪಡೆಯುತ್ತಿರುವವರು, ಸ್ಟೆರಾಯ್ಡ್ ಬಳಸುತ್ತಿರುವವರು), ಗರ್ಭಿಣಿಯರು ಮತ್ತು ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವವರಿಗೆ ಹೆಚ್ಚು ಅಪಾಯವಿರುತ್ತದೆ. ►ಹೆಚ್ಚಾಗಿರುವ ಚಳಿಯ ದಿನಗಳು ಭಾರತದಲ್ಲಿ ಈಗ ತಾಪಮಾನಗಳು ಹಲವು ರಾಜ್ಯಗಳಲ್ಲಿ 3°C ರಿಂದ 5°C ಕ್ಕಿಂತ ಕೆಳಗೆ ಇಳಿಯುತ್ತಿವೆ. ದೀರ್ಘಕಾಲೀನ ಸರ್ಕಾರಿ ದತ್ತಾಂಶದ ಪ್ರಕಾರ, ಜಮ್ಮು ಮತ್ತು ಕಾಶ್ಮೀರ, ದಿಲ್ಲಿ ಹಾಗೂ ಒಡಿಶಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚಳಿಯ ದಿನಗಳ ಸಂಖ್ಯೆ ಹೆಚ್ಚಾಗಿದೆ.
2026ರ ಮೊದಲ ಉಡಾವಣೆಗೆ ಸಜ್ಜಾದ ಇಸ್ರೋ; ಇಷ್ಟು ಸ್ಪೀಡ್ ಆಗಿ ಕವಿತೆ ಬರೀತಿರಲಿಲ್ಲ ಅಮೀರ್ ಖುಸ್ರೋ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಮ್ಮಿಕೊಳ್ಳುವ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಇಡೀ ಜಗತ್ತು ಕುತೂಹಲಭರಿತ ಕಣ್ಣುಗಳಿಂದ ನೋಡುತ್ತದೆ. ಅದರಂತೆ ನಾಳೆ (ಜ.12-ಸೋಮವಾರ) ಇಸ್ರೋ 2026ರ ವರ್ಷದ ಮೊದಲ ಸ್ಪೇಸ್ ಮಿಷನ್ ಕೈಗೊಳ್ಳಲಿದ್ದು, ಪಿಎಸ್ಎಲ್ವಿ ಸಿ62 ರಾಕೆಟ್ ಕಣ್ಗಾವಲು ಉಪಗ್ರಹ EOS-N1ನ್ನು ನಭಕ್ಕೆ ಕೊಂಡೊಯ್ಯಲಿದೆ. ಇದರ ಜೊತೆಗೆ ಭಾರತ ಮತ್ತು ವಿದೇಶಗಳ ಒಟ್ಟು 17 ಉಪಗ್ರಹಗಳನ್ನೂ ಇಸ್ರೋ ಕಕ್ಷೆಗೆ ಸೇರಿಸಲಿದೆ. ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳ ವೇಗ ಕಂಡು ಜಗತ್ತು ದಂಗಾಗಿದೆ. ಇಲ್ಲಿದೆ ಮಾಹಿತಿ.
ಸುಟ್ಟ ಗಾಯ: ಚಿಕಿತ್ಸೆ ಫಲಕಾರಿಯಾಗದೆ ಎಎಸ್ಸೈ ಮೃತ್ಯು
ಮಂಗಳೂರು: ಬೆಂಕಿಯ ಸುಟ್ಟ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಾಂಡೇಶ್ವರ ಠಾಣೆಯ ಎಎಸ್ಸೈ ಹರಿಶ್ಚಂದ್ರ ಬೇರಿಕೆ (57) ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ನಗರದ ಕೆಪಿಟಿ ಬಳಿಯ ವ್ಯಾಸನಗರದ ಮನೆಯಲ್ಲಿ ಡಿ.28ರಂದು ತರಗೆಲೆಯನ್ನು ಸುಡುವ ವೇಳೆ ಬೆಂಕಿಯ ತೀವ್ರ ತರದ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕಾಸರಗೋಡು ಜಿಲ್ಲೆಯ ಕಾವುಗೋಳಿಯ ನಿವಾಸಿಯಾಗಿದ್ದ ಹರಿಶ್ಚಂದ್ರ ಬೈಕಂಪಾಡಿಯಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ವ್ಯಾಸ ನಗರದಲ್ಲಿ ಮನೆ ಮಾಡಿದ್ದರು. 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಅವರು 33 ವರ್ಷಗಳಿಂದ ಪಾಂಡೇಶ್ವರ ಠಾಣೆ, ಡಿವೈಎಸ್ಪಿ ಕಚೇರಿ, ಎಸಿಪಿ ಕಚೇರಿ, ಕರಾವಳಿ ಕಾವಲು ಪಡೆ, ಸಂಚಾರ ಪೂರ್ವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 10 ವರ್ಷದ ಹಿಂದೆ ಎಎಸ್ಸೈ ಆಗಿ ಭಡ್ತಿ ಪಡೆದಿದ್ದರು. ಪಾಂಡೇಶ್ವರದ ಪೊಲೀಸ್ ಲೇನ್ ನ ಮುನೀಶ್ವರ ಮಹಾಗಣಪತಿ ದೇವಸ್ಥಾನದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
West Bengal | ಮತ್ತೋರ್ವ ಬಿಎಲ್ಒ ಆತ್ಮಹತ್ಯೆ
ಕೋಲ್ಕತಾ, ಜ. 11: ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಯೊಬ್ಬರ ಮೃತದೇಹ ಮುರ್ಶಿದಾಬಾದ್ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎಸ್ಐಆರ್ ನ ತೀವ್ರ ಕೆಲಸದ ಒತ್ತಡವೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಮೃತಪಟ್ಟ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯನ್ನು ಹಮಿಮುಲ್ ಇಸ್ಲಾಂ (47) ಎಂದು ಗುರುತಿಸಲಾಗಿದೆ. ಅವರು ಪೈಕ್ಮಾರಿ ಚಾರ್ ಕೃಷ್ಣಾಪುರ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರನ್ನು ಖರಿಬೋನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂರ್ವ ಅಲೈಪುರ ಗ್ರಾಮದಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯಾಗಿ ನಿಯೋಜಿಸಲಾಗಿತ್ತು ಎಂದು ರಣಿತಾಲ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ರಣಿತಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪೈಕ್ಮಾರಿ ಚಾರ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಈ ಘಟನೆ ಸ್ಥಳೀಯರ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಹಮಿಮುಲ್ ಅವರು ಶನಿವಾರ ಬೆಳಗ್ಗೆ ಶಾಲೆಗೆ ತೆರಳಿದ್ದರು. ಆದರೆ ಅಪರಾಹ್ನ ಮನೆಗೆ ಹಿಂದಿರುಗಲಿಲ್ಲ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ‘‘ದೀರ್ಘ ಹುಡುಕಾಟದ ಬಳಿಕ ಶನಿವಾರ ರಾತ್ರಿ ಅವರ ಮೃತದೇಹ ಶಾಲೆಯ ಕೊಠಡಿಯೊಳಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು. ನಮ್ಮ ಅಧಿಕಾರಿಗಳು ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ನಡೆಯುತ್ತಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕ ಹಾಗೂ ಬಿಎಲ್ಒ ಆಗಿ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದುದರಿಂದ ಹಮಿಮುಲ್ ಅವರು ತೀವ್ರ ಕೆಲಸದ ಒತ್ತಡದಲ್ಲಿದ್ದರು ಎಂದು ಕುಟುಂಬದ ಸದಸ್ಯರು ಆರೋಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಲೈಂಗಿಕ ಕಿರುಕುಳದ ಮೂರನೇ ಪ್ರಕರಣ | ಕಾಂಗ್ರೆಸ್ ನ ಉಚ್ಛಾಟಿತ MLA ರಾಹುಲ್ ಮಾಂಕ್ಕೂಟತ್ತಿಲ್ ಬಂಧನ
ತಿರುವನಂತಪುರ, ಜ. 11: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನ ಉಚ್ಛಾಟಿತ MLA ರಾಹುಲ್ ಮಾಂಕ್ಕೂಟತ್ತಿಲ್ ಅವರನ್ನು ಬಂಧಿಸಲಾಗಿದೆ. ಅವರನ್ನು ಪಾಲಕ್ಕಾಡ್ ನಲ್ಲಿ ರವಿವಾರ ಮುಂಜಾನೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರನ್ನು ಸೋಮವಾರ ಮುಂಜಾನೆ ಇಲ್ಲಿನ ಪೊಲೀಸ್ ಕಸ್ಟಡಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ತನಂತಿಟ್ಟ ನಿವಾಸಿಯೊಬ್ಬರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಪಾಲಕ್ಕಾಡ್ MLAನ ವಿರುದ್ಧ ಇತ್ತೀಚೆಗೆ ಮೂರನೇ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಕೆನಡಾದಲ್ಲಿರುವ ಸಂತ್ರಸ್ತೆ ಪೊಲೀಸರಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ, ದೂರುದಾರರು ವಿವಾಹಿತ ಮಹಿಳೆಯಾಗಿದ್ದು, ಅವರ ವೈವಾಹಿಕ ಜೀವನದ ಸಮಸ್ಯೆಗಳ ಹಿನ್ನೆಲೆಯಲ್ಲಿ ಮಾಂಕ್ಕೂಟತ್ತಿಲ್ ಅವರ ಪರಿಚಯವಾಗಿದೆ. ವಿವಾಹವಾಗುವುದಾಗಿ ನಂಬಿಸಿ ಮಾಂಕ್ಕೂಟತ್ತಿಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆಕೆ ಗರ್ಭಿಣಿಯಾದಾಗ, ಮಾಂಕ್ಕೂಟತ್ತಿಲ್ ಆಕೆಯ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ಮಾಂಕ್ಕೂಟತ್ತಿಲ್ ತನ್ನಿಂದ ಹಣ ಪಡೆದುಕೊಂಡಿದ್ದಾರೆ ಎಂದು ಮಹಿಳೆ ಪ್ರತಿಪಾದಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಪೊಲೀಸರು ಮಾಂಕ್ಕೂಟತ್ತಿಲ್ ಅವರ ಮೇಲೆ ಕಣ್ಗಾವಲು ಇರಿಸಿದ್ದರು. ನಂತರ ಉಪ ಎಸ್ಪಿ ನೇತೃತ್ವದ ಆರು ಸದಸ್ಯರ ತಂಡ ಮಾಂಕ್ಕೂಟತ್ತಿಲ್ ತಂಗಿದ್ದ ಹೊಟೇಲ್ ಗೆ ಮುಂಜಾನೆ 12.45ಕ್ಕೆ ತಲುಪಿತು ಎಂದು ಮೂಲಗಳು ತಿಳಿಸಿವೆ. ಹೊಟೇಲ್ ನಿಂದ ಅವರನ್ನು ತಡರಾತ್ರಿ 1 ಗಂಟೆಗೆ ವಶಕ್ಕೆ ತೆಗೆದುಕೊಳ್ಳಲಾಯಿತು. ಮುಂಜಾನೆ ಸುಮಾರು 5.30ಕ್ಕೆ ಪತ್ತನಂತಿಟ್ಟದಲ್ಲಿರುವ ಪೊಲೀಸ್ ಕಸ್ಟಡಿಗೆ ಸ್ಥಳಾಂತರಿಸಲಾಯಿತು. ಅವರ ವಿರುದ್ಧ ಇದೇ ರೀತಿಯ ಎರಡು ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಇತ್ತೀಚಿನ ಪ್ರಕರಣದ ತನಿಖೆಯ ಜವಾಬ್ದಾರಿಯನ್ನೂ ನೀಡಲಾಗಿದೆ.
ಜ.12ರಿಂದ ಆಳ್ವಾಸ್ನಲಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ
85ನೇ ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ಶಿಪ್2026
Guwahati ಹೈಕೋರ್ಟ್ ವಕೀಲರಿಂದ ಉಪವಾಸ ಮುಷ್ಕರ, CJI ಕಾರ್ಯಕ್ರಮಕ್ಕೆ ಬಹಿಷ್ಕಾರ
ಗುವಾಹಟಿ (ಅಸ್ಸಾಂ), ಜ.11: ಉಚ್ಚ ನ್ಯಾಯಾಲಯದ ಸ್ಥಳಾಂತರವನ್ನು ವಿರೋಧಿಸಿ ಗುವಾಹಟಿ ಹೈಕೋರ್ಟ್ ವಕೀಲರ ಸಂಘವು (ಜಿಎಚ್ಸಿಬಿಎ) ರವಿವಾರ ನಾಲ್ಕು ಗಂಟೆಗಳ ಉಪವಾಸ ಮುಷ್ಕರವನ್ನು ನಡೆಸಿದ್ದು, ಭಾರತದ ಮುಖ್ಯ ನ್ಯಾಯಾಧೀಶ (CJI) ಸೂರ್ಯಕಾಂತ ಅವರಿಂದ ನೂತನ ಹೈಕೋರ್ಟ್ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮವನ್ನೂ ಬಹಿಷ್ಕರಿಸಿದೆ. ಉತ್ತರ ಗುವಾಹಟಿಯ ರಂಗಮಹಲ್ನಲ್ಲಿ ಸುಮಾರು 49 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ನೂತನ ಹೈಕೋರ್ಟ್ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಜಿಎಚ್ಸಿಬಿಎ ಸದಸ್ಯರು ಗುರುವಾರ ಮತ್ತು ಶುಕ್ರವಾರವೂ ನಗರದ ಹೃದಯಭಾಗದಲ್ಲಿರುವ ಗುವಾಹಟಿ ಉಚ್ಚ ನ್ಯಾಯಾಲಯದ ಹಳೆಯ ಕಟ್ಟಡದ ಮುಂದೆ ನಾಲ್ಕು ಗಂಟೆಗಳ ಉಪವಾಸ ಮುಷ್ಕರ ನಡೆಸಿದ್ದರು. ಬ್ರಹ್ಮಪುತ್ರ ನದಿಯ ಉತ್ತರ ದಂಡೆಗೆ ನ್ಯಾಯಾಲಯದ ಸ್ಥಳಾಂತರವನ್ನು ಜಿಎಚ್ಸಿಬಿಎ ಆರಂಭದಿಂದಲೂ ಬಲವಾಗಿ ವಿರೋಧಿಸುತ್ತಿದೆ. ಆದರೆ ಸರಕಾರವು ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ನೂತನ ಸಂಕೀರ್ಣದ ನಿರ್ಮಾಣಕ್ಕೆ ಮುಂದಾಗಿದೆ ಎಂದು ವಕೀಲರ ಸಂಘದ ಉಪಾಧ್ಯಕ್ಷ ಶಂತನು ಬೋರ್ಥಾಕುರ್ ಆರೋಪಿಸಿದರು.
ಕಳ್ಳಬಟ್ಟೆ ಸರಾಯಿ, ಸೇಂದಿ ಮಾರಾಟಗಾರರನ್ನು ಗಡಿಪಾರು ಮಾಡಿ: ಅಧಿಕಾರಿಗಳಿಗೆ ಅಬಕಾರಿ ಸಚಿವ ತಿಮ್ಮಾಪುರ ಖಡಕ್ ಸೂಚನೆ
ಯಾದಗಿರಿ: ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಕಳ್ಳಬಟ್ಟಿ, ಸೇಂದಿ ತಯಾರಕೆಗೆ ಬಳಸುವ ಸಿಎಚ್ ಪೌಢರ್ ಬಳಕೆ ನಿಷೇಧಿಸುವತ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಇದರಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಡಿಪಾರು ಮಾಡಬೇಕೆಂದು ಅಬಕಾರಿ ಸಚಿವ ಆರ್. ಬಿ.ತಿಮ್ಮಾಪುರ ಅವರು ಅಧಿಕಾರಿಗಳಿಗೆ ಖಡಕ್ ಸೂಚಿಸಿದ್ದಾರೆ. ಅಬಕಾರಿ ಇಲಾಖೆ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಅಬಕಾರಿ ಇಲಾಖೆ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಆರ್. ಬಿ.ತಿಮ್ಮಾಪುರ, ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಸೇಂದಿ, ಸಿಎಚ್ ಪೌಡರ್ ಮತ್ತು ಕಳಬಟ್ಟೆ ಸರಾಯಿ ಹೆಚ್ಚು ತಯಾರಿಸಿ ಮಾರಲಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕವಾಗಲಿದೆ. ಕಳೆದ ಸಭೆಯಲ್ಲಿ ಇಂತಹವುಗಳನ್ನು ತಡೆಯುವಂತೆ ಹೇಳಲಾಗಿತ್ತು. ಆದರೆ ನಿಗದಿತ ಗುರಿಯನ್ನು ತಲುಪಿಲ್ಲ ಎಂದು ಸಚಿವರು ಈ ವೇಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿ ಅಕ್ರಮ ಸರಾಯಿ, ಸೇಂದಿ ಮಾರಾಟವಾದರೆ ಜನರ ಆರೋಗ್ಯ ಹಾಳಾಗುತ್ತದೆ ಮತ್ತು ಸರಕಾರಕ್ಕೆ ಇಲಾಖೆಯಿಂದ ತೆರಿಗೆ ನಷ್ಟವಾಗುತ್ತದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದರು. ಯಾದಗಿರಿ ನಗರದಲ್ಲಿ ಸ್ಥಳವೊಂದರಲ್ಲಿ ಕಳ್ಳಬಟ್ಟಿ ಸರಾಯಿ, ಸೇಂಧಿಯನ್ನು ತಯಾರಿಸಿ ಒಂದು ಬ್ಯಾರಲ್ ಸಂಗ್ರಹಿಸಿ ಟೆರಸ್ ಮೇಲೆ ಇಟ್ಟು ಪೈಪ್ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ಸಚಿವರ ಸಮ್ಮುಖದಲ್ಲಿಯೇ ಗಂಭೀರವಾಗಿ ಆರೋಪಿಸಿದರು.
Digital Arrest | Delhiಯ ವೃದ್ಧ ದಂಪತಿಗೆ 14 ಕೋಟಿ ರೂ. ವಂಚನೆ
ಹೊಸದಿಲ್ಲಿ, ಜ.11: ದಿಲ್ಲಿಯ ಗ್ರೇಟರ್ ಕೈಲಾಷ ನಿವಾಸಿಗಳಾಗಿರುವ ವೃದ್ಧ ವೈದ್ಯ ದಂಪತಿಯನ್ನು ಎರಡು ವಾರಗಳಿಗೂ ಅಧಿಕ ಸಮಯ ‘ಡಿಜಿಟಲ್ ಬಂಧನ’ದಲ್ಲಿರಿಸಿದ್ದ ಸೈಬರ್ ಕ್ರಿಮಿನಲ್ಗಳು ಅವರಿಗೆ ಸುಮಾರು 14 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಡಿ.24ರಿಂದ ಜ.9ರ ನಡುವೆ ಈ ವಂಚನೆ ನಡೆದಿದ್ದು, ಕಾನೂನು ಜಾರಿ ಅಧಿಕಾರಿಗಳೆಂದು ಹೇಳಿಕೊಂಡಿದ್ದ ಆರೋಪಿಗಳು ಬಲವಂತದಿಂದ ದಂಪತಿಯಿಂದ ಹಲವಾರು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು. ಶನಿವಾರ ಈ ಬಗ್ಗೆ E-FIR ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸ್ನ ಸೈಬರ್ ಅಪರಾಧ ಘಟಕವು ತನಿಖೆ ನಡೆಸುತ್ತಿದೆ. ಅಮೆರಿಕದಿಂದ ಮರಳಿದ್ದ ವೈದ್ಯ ದಂಪತಿ 2016ರಿಂದ ಗ್ರೇಟರ್ ಕೈಲಾಷದಲ್ಲಿ ವಾಸವಾಗಿದ್ದು, ಅವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ದಂಪತಿ ಮಾತ್ರ ವಾಸವಾಗಿರುವುದನ್ನು ಗಮನಿಸಿದ್ದ ಆರೋಪಿಗಳು ಪದೇಪದೇ ಅವರಿಗೆ ಬಂಧನ ಮತ್ತು ಕಾನೂನು ಕ್ರಮದ ಬೆದರಿಕೆ ಒಡ್ಡಿದ್ದರು. ದಂಪತಿಯ ಮೇಲೆ ಒತ್ತಡ ಹೇರಿ ಅವರು ತಮ್ಮೊಂದಿಗೆ ನಿರಂತರವಾಗಿ ಫೋನ್ ಮತ್ತು ವೀಡಿಯೊ ಕರೆಗಳಲ್ಲಿರುವಂತೆ ನೋಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು. ಜ.9ರಂದು ಕರೆಗಳು ಬರುವುದು ನಿಂತಾಗ ತಾವು ಮೋಸ ಹೋಗಿದ್ದೇವೆ ಎನ್ನುವುದು ದಂಪತಿಗೆ ಗೊತ್ತಾಗಿದ್ದು, ಬಳಿಕ ಅವರು ಪೊಲೀಸರಿಗೆ ವಂಚನೆ ಕುರಿತು ದೂರು ಸಲ್ಲಿಸಿದ್ದಾರೆ.
ಜ.13: ಜಮೀಯ್ಯತುಲ್ ಫಲಾಹ್ನಿಂದ ಚೈತನ್ಯ ಚಿಲುಮೆ ಕಾರ್ಯಾಗಾರ
ಬಂಟ್ವಾಳ: ಜಮಿಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳ ವಿಷಯಾಧಾರಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಱಚೈತನ್ಯ ಚಿಲುಮೆ-2026 ಕಾರ್ಯಾಗಾರೞ ಜ.13ರಂದು ಬೆಳಗ್ಗೆ 9:30ಕ್ಕೆ ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡ್ನಲ್ಲಿ ನಡೆಯಲಿದೆ. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ. ಉದ್ಘಾಟಿಸಲಿದ್ದಾರೆ. ಜಮಿಯ್ಯತುಲ್ ಫಲಾಹ್ ಬಂಟ್ವಾಳ ಘಟಕ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಕ ಶೇಕ್ ಆದಂ ಸಾಹೇಬ್, ಸಹಶಿಕ್ಷಕ ಪರಮೇಶ್ವರ ಹೆಗಡೆ, ಶಿಕ್ಷಕ ರೋಶನ್ ಅಲೆಕ್ಸಾಂಡರ್ ಪಿಂಟೋ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಜೀವ ಸದಸ್ಯರಾದ ಹಾಜಿ ಅಹ್ಮದ್ ಖಾನ್ ಕೊಡಾಜೆ, ಸಲೀಂ ಅಲ್ತಾಫ್ ಡೈಮಂಡ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Madhya Pradesh | ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಮೃತ್ಯು ಪ್ರಕರಣ; ಸ್ವಚ್ಛ ಜಲ ಅಭಿಯಾನಕ್ಕೆ ಚಾಲನೆ
ಭೋಪಾಲ, ಜ.11: ಇಂದೋರ್ ನಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ರಾಜ್ಯಾದ್ಯಂತ ಸ್ವಚ್ಛ ಜಲ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಉಪಕ್ರಮವು ಪ್ರಮುಖವಾಗಿ ನೀರು ಮತ್ತು ಒಳಚರಂಡಿ ಕೊಳವೆಗಳ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಮ್ಯಾಪಿಂಗ್, ಈ ಕೊಳವೆ ಮಾರ್ಗಗಳು ಪರಸ್ಪರ ಸೇರುವ ಸ್ಥಳಗಳ ಗುರುತಿಸುವಿಕೆ ಮತ್ತು ರೋಬೊಟ್ ಗಳನ್ನು ಬಳಸಿಕೊಂಡು ಸೋರಿಕೆ ಪರಿಶೀಲನೆಗಳನ್ನು ಒಳಗೊಂಡಿರಲಿದೆ. ಅಭಿಯಾನದ ಮೊದಲ ಹಂತ ಜ.10ರಿಂದ ಫೆ.28ರವರೆಗೆ ಮತ್ತು ಎರಡನೇ ಹಂತ ಮಾ.1ರಿಂದ ಮಾ.31ರವರೆಗೆ ನಡೆಯಲಿವೆ. ಅಭಿಯಾನದಲ್ಲಿ ಸಾರ್ವಜನಿಕರ ಅಹವಾಲುಗಳನ್ನೂ ಸ್ವೀಕರಿಸಲಾಗುವುದು. ಮುಖ್ಯಮಂತ್ರಿಗಳ ಸಹಾಯವಾಣಿ (181) ಮೂಲಕ ಸಾರ್ವಜನಿಕರು ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿಗಳು, ಪ್ರತಿಯೊಂದು ಮನೆಗೆ ಶುದ್ಧ ನೀರನ್ನು ಪೂರೈಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ಎಲ್ಲ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಇಂದೋರ್ ನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರಿನ ಸೇವನೆಯಿಂದ ಡಿ.21ರಿಂದ 21 ಜನರು ಮೃತಪಟ್ಟಿದ್ದರು. ಗಮನಾರ್ಹವಾಗಿ, ಭಗೀರಥಪುರದಲ್ಲಿ ಸಂಭವಿಸಿದ ಸಾವುಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಜ.6ರಂದು ಕೈಗೆತ್ತಿಕೊಂಡಿದ್ದ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ ಪೀಠವು ರಾಜ್ಯ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು. ಭಗೀರಥಪುರ ಘಟನೆಯು ದೇಶದ ಅತ್ಯಂತ ಸ್ವಚ್ಛ ನಗರವೆಂಬ ಇಂದೋರ್ ನ ಖ್ಯಾತಿಗೆ ಹಾನಿಯನ್ನುಂಟು ಮಾಡಿದ್ದು, ತನ್ನ ನಿವಾಸಿಗಳಿಗೆ ಕಲುಷಿತ ನೀರನ್ನು ಪೂರೈಸಿದ್ದಕ್ಕಾಗಿ ಅದನ್ನು ಕುಖ್ಯಾತವಾಗಿಸಿದೆ ಎಂದು ನ್ಯಾಯಾಲಯವು ಕಿಡಿಕಾರಿತ್ತು. ಜ.15ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿ ಇಡೀ ಪ್ರಕರಣದ ಕುರಿತು ವಿವರಗಳನ್ನು ಸಲ್ಲಿಸುವಂತೆ ಮತ್ತು ಇತರ ಸ್ಥಳಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ರಾಜ್ಯಮಟ್ಟದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುವುದನ್ನು ತಿಳಿಸುವಂತೆ ಇಬ್ಬರು ನ್ಯಾಯಾಧೀಶರ ಪೀಠವು ರಾಜ್ಯದ ಮುಖ್ಯ ಕಾರ್ಯದರ್ಶಿ ಅನುರಾಗ್ ಜೈನ್ ಅವರಿಗೆ ತಾಕೀತು ಮಾಡಿತ್ತು.
ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಪತ್ತೆ; ಏನೆಲ್ಲಾ ಆಭರಣಗಳು ಸಿಕ್ಕಿವೆ?
ಫೋಟೋಗಳು ಇಲ್ಲಿದೆ......
ಬೆಂಗಳೂರಿನಲ್ಲಿ ಹೋಂ ಗಾರ್ಡ್ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ ಯುವತಿ ಮೋಹಿನಿ ಬಂಧನ
ಕರ್ತವ್ಯನಿರತ ಹೋಂಗಾರ್ಡ್ ಮೇಲೆ ತಲೆಗೂದಲು ಹಿಡಿದು ಹಲ್ಲೆ ನಡೆಸಿದ ಯುವತಿಯನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರ ಬಸ್ ನಿಲ್ದಾಣದ ಬಳಿ ಸಂಚಾರ ನಿಯಂತ್ರಿಸುತ್ತಿದ್ದ ಹೋಂಗಾರ್ಡ್ ಲಕ್ಷ್ಮೀ ನರಸಮ್ಮ ಅವರಿಗೆ, ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡುತ್ತಿದ್ದ ದಾಮಿನಿ ಎಂಬುವರು ಹಲ್ಲೆ ನಡೆಸಿದ್ದರು. ಈ ಘಟನೆಯ ವಿಡಿಯೋ ವೈರಲ್ ಆಗಿತ್ತು.
ದ್ವೇಷ ಭಾಷಣ ಮಸೂದೆ| ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ
ಮಂಗಳೂರು: ದ್ವೇಷ ಭಾಷಣ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕಾರವಾಗಿದೆ. ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ರಾಜ್ಯಪಾಲರು ಆಹ್ವಾನಿಸಿದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಹಿಂದೆ ಪಾದಯಾತ್ರೆ ಮಾಡಿದ್ದೆವು. ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಸವಾಲು ಹಾಕಿದ್ದರು. ಅದಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಯಿತು. ಈ ಬಿಜೆಪಿಗರು ಯಾಕೆ ಪಾದಯಾತ್ರೆ ಮಾಡಬೇಕು ಎಂದು ಪ್ರಶ್ನಿಸಿದರು. *ಬ್ಯಾನರ್ ತೆಗೆದದ್ದು ಬಳ್ಳಾರಿ ಘಟನೆಗೆ ಪ್ರಚೋದನೆ: ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಯ ಹಿನ್ನಲೆಯಲ್ಲಿ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೆ ಘಟನೆಗೆ ಪ್ರಚೋದನೆ ಆಯಿತು. ಜನಾರ್ದನ ರೆಡ್ಡಿ , ಶ್ರೀರಾಮುಲು ಅಧಿಕಾರ ಕಳೆದುಕೊಂಡಿದ್ದರಿಂದ ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದರು. *ಕುರ್ಚಿ ಕಾಳಗವಿಲ್ಲ: ಮುಖ್ಯಮಂತ್ರಿ ಕುರ್ಚಿ ಬಗ್ಗೆ ಕಾಳಗವೇ ಇಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.
ಪುಣೆ, ಜ.11: ವಜಾಗೊಂಡ ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್ ಅವರ ಪೋಷಕರು ಸೇರಿದಂತೆ ಐವರು ಪುಣೆ ನಗರದ ಔಂಧ್ ಪ್ರದೇಶದಲ್ಲಿರುವ ನ್ಯಾಷನಲ್ ಹೌಸಿಂಗ್ ಸೊಸೈಟಿಯ ಬಂಗಲೆಯಲ್ಲಿ ರವಿವಾರ ಮುಂಜಾನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂಗಲೆಯಲ್ಲಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ರವಿವಾರ ಬೆಳಗಿನ ಜಾವ ಸುಮಾರು 1.30ರ ಸುಮಾರಿಗೆ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಾಹಿತಿ ಪಡೆದ ತಕ್ಷಣ ಚತುರ್ಶೃಂಗಿ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿತು. ಪೊಲೀಸರು ಸ್ಥಳಕ್ಕೆ ತಲುಪಿದಾಗ ಪೂಜಾ ಖೇಡ್ಕರ್ ಹಾಗೂ ಅವರ ಸಹೋದರರಾದ ವಿನಯ್ ಬುಧ್ವಂತ್ ಮತ್ತು ಹರ್ಷದ್ ಬುಧ್ವಂತ್ ಬಂಗಲೆಯಲ್ಲಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಬಂಗಲೆಯನ್ನು ಪರಿಶೀಲಿಸಿದ ವೇಳೆ, ಕಾವಲುಗಾರ ಜಿತೇಂದ್ರ ಸಿಂಗ್ ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಪೂಜಾ ಖೇಡ್ಕರ್ ಅವರು ಪೊಲೀಸರನ್ನು ತಮ್ಮ ಪೋಷಕರ ಕೋಣೆಗೆ ಕರೆದೊಯ್ದರು. ಅಲ್ಲಿ ಅವರ ತಂದೆ ಮತ್ತು ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೋಣೆಯಲ್ಲಿದ್ದ ಬೀರು ತೆರೆದಿದ್ದು, ಅದರೊಳಗಿನ ವಸ್ತುಗಳು ನೆಲದ ಮೇಲೆ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಇದೇ ರೀತಿಯಾಗಿ ಬಂಗಲೆಯ ಇತರ ಮೂರು ಕೋಣೆಗಳಲ್ಲಿಯೂ ಬೀರುಗಳಲ್ಲಿದ್ದ ವಸ್ತುಗಳು ನೆಲದ ಮೇಲೆ ಚದುರಿಕೊಂಡಿರುವುದು ಕಂಡುಬಂದಿದೆ. ಬಂಗಲೆಯ ನೆಲಮಹಡಿಯ ಕೋಣೆಯಲ್ಲಿ ಚಾಲಕ ದಾದಾಸಾಹೇಬ್ ಧಕ್ನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಡುಗೆಯವ ಸುಜಿತ್ ರಾಯ್ ಬಂಗಲೆಯ ಹೊರಭಾಗದಲ್ಲಿರುವ ಕೋಣೆಯಲ್ಲಿ ಪ್ರಜ್ಞಾಹೀನರಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಆಂಬ್ಯುಲೆನ್ಸ್ಗಳನ್ನು ಕರೆಸಿದ ಪೊಲೀಸರು, ಪ್ರಜ್ಞಾಹೀನಗೊಂಡ ಐವರನ್ನುಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಷಕರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ, ದೂರು ದಾಖಲಿಸುವುದನ್ನು ನಂತರ ಮಾಡುವುದಾಗಿ ಪೂಜಾ ಖೇಡ್ಕರ್ ಅವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. “ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಆದರೂ ಪ್ರಕರಣದ ತನಿಖೆ ಆರಂಭಿಸಲಾಗಿದೆ,” ಎಂದು ಉಪ ಪೊಲೀಸ್ ಆಯುಕ್ತ ಚಿಲುಮುಲ ರಜನಿಕಾಂತ್ ತಿಳಿಸಿದ್ದಾರೆ. “ಕುಟುಂಬದಿಂದಲೇ ನೇಮಿಸಲ್ಪಟ್ಟ ಸೇವಕನೊಬ್ಬ ಕಳ್ಳತನದ ಉದ್ದೇಶದಿಂದ ನಿದ್ರಾಜನಕ ಔಷಧಿ ನೀಡಿರಬಹುದೆಂಬ ಶಂಕೆ ಇದೆ. ಶಂಕಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ,” ಎಂದು ಅವರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಬಂಗಲೆಯ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ►IASನಿಂದ ವಜಾಗೊಂಡಿದ್ದ ಪೂಜಾ ಖೇಡ್ಕರ್ ಸೆಪ್ಟೆಂಬರ್ 2024ರಲ್ಲಿ, ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಪೂಜಾ ಖೇಡ್ಕರ್ ಅವರ ಆಯ್ಕೆಯನ್ನು ರದ್ದುಗೊಳಿಸಿದ ಬಳಿಕ, ಕೇಂದ್ರ ಸರ್ಕಾರ ಅವರನ್ನು ಭಾರತೀಯ ಆಡಳಿತ ಸೇವೆ (IAS)ಯಿಂದ ವಜಾಗೊಳಿಸಿತ್ತು. 2022ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ ಅವರು, ಅನುಮತಿಸಲಾದ ಪ್ರಯತ್ನಗಳ ಮಿತಿ ಮೀರಿದ್ದರೂ ಪರೀಕ್ಷೆಗೆ ಹಾಜರಾದ ಆರೋಪ ಎದುರಿಸಿದ್ದರು. ತಮ್ಮ ಹಾಗೂ ತಮ್ಮ ಪೋಷಕರ ಹೆಸರುಗಳನ್ನು ಬದಲಾಯಿಸಿ ಬೇರೆ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂಬ ಆರೋಪವೂ ಅವರ ಮೇಲೆ ಇದೆ. ವಂಚನೆ, ಇತರ ಹಿಂದುಳಿದ ವರ್ಗ (ಒಬಿಸಿ) ಹಾಗೂ ಅಂಗವೈಕಲ್ಯ ಕೋಟಾದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪಗಳಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದಿದ್ದು, ಜೀವನಪರ್ಯಂತ ನಾಗರಿಕ ಸೇವಾ ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿದೆ. ಈ ಆರೋಪಗಳನ್ನು ಅವರು ನಿರಾಕರಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದಲ್ಲದೆ, 2023ರ ಜೂನ್ 5ರಂದು ಮುಲ್ಶಿ ತಹಸಿಲ್ನ ಧಡವಾಲಿ ಗ್ರಾಮದಲ್ಲಿ ರೈತರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಪೌಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ, ಅವರ ತಂದೆ ದಿಲೀಪ್ ಖೇಡ್ಕರ್ ಮತ್ತು ತಾಯಿ ಮನೋರಮಾ ಖೇಡ್ಕರ್ ಆರೋಪಿಗಳಾಗಿದ್ದಾರೆ. ಭೂ ವಿವಾದದ ಬಳಿಕ ರೈತನ ಮೇಲೆ ಮನೋರಮಾ ಖೇಡ್ಕರ್ ಬಂದೂಕು ತೋರಿಸುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಬಿಜೆಪಿ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ: ಸಚಿವ ಶಿವರಾಜ್ ತಂಗಡಗಿ
ಕೊಪ್ಪಳ: ಜ.11: ಬಿಜೆಪಿ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಉಳಿಸಲು ಬೇಕಾದ ಯೋಜನೆಗಳನ್ನು ಮಾತ್ರ ಮೋದಿ ಸರಕಾರ ರೂಪಿಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್.ಎಸ್.ತಂಗಡಗಿ ಹೇಳಿದ್ದಾರೆ. ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶಿವರಾಜ್.ಎಸ್.ತಂಗಡಗಿ, ಮಹಾತ್ಮಾ ಗಾಂಧಿ ಅವರ ಬಗ್ಗೆ ಬಿಜೆಪಿಗರು ಬಾಯಿ ಮಾತಿಗಷ್ಟೇ ಮಾತನಾಡುತ್ತಾರೆ. ಇವರದ್ದು ಜನರಿಂದ ಆಯ್ಕೆಯಾಗಿ ಬಂದ ಸರಕಾರ ಅಲ್ಲ, ಮತಗಳ್ಳತನದಿಂದ ಅಧಿಕಾರಕ್ಕೆ ಬಂದಿರುವ ಸರಕಾರ. ಬಿಜೆಪಿ ಜನರ, ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ. ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ರಾಮನಿಗೂ ತೃಪ್ತಿ ತರುವ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಹೇಳಿದರು. ಆರೆಸ್ಸೆಸ್ ಒತ್ತಾಯಕ್ಕೆ ಮಣಿದು ಬಿಜೆಪಿಗರು ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮನುಸ್ಮೃತಿ ಮನಸ್ಥಿತಿಯುಳ್ಳವರು ದಲಿತರು, ಮಹಿಳೆಯರು ಹಾಗೂ ಸಾಮಾನ್ಯರು ನೆಮ್ಮದಿಯಾಗಿ ಬದುಕುವುದನ್ನು ಇಷ್ಟಪಡುವುದಿಲ್ಲ. ಇಂತಹ ಕಾಯ್ದೆ ಪಾಸ್ ಮಾಡಿಕೊಳ್ಳುವ ಮೂಲಕ ದೇಶದ 12.16 ಕೋಟಿ ಕಾರ್ಮಿಕರನ್ನು ಅವರಲ್ಲಿ ಶೇ.53.61ರಷ್ಟು ಸಂಖ್ಯೆಯಲ್ಲಿದ್ದ 6.21 ಕೋಟಿ ಮಹಿಳೆಯರ ಬದುಕನ್ನು ಹಾಗೂ ಶೇ.17ಪರಿಶಿಷ್ಟ ಜಾತಿ ಮತ್ತು ಶೇ.11ಪರಿಶಿಷ್ಟ ಪಂಗಡ ನರೇಗಾ ಕೂಲಿ ಕಾರ್ಮಿಕರ ಬದುಕಿಗೆ ಬೆಂಕಿ ಇಟ್ಟಿದೆ ಎಂದು ಟೀಕಿಸಿದರು. ಉತ್ತರ ಕರ್ನಾಟಕ ಭಾಗಕ್ಕೆ ಇದು ಮಹತ್ತರವಾದ ಯೋಜನೆಯಾಗಿತ್ತು. ಶೇ.71.18 ಲಕ್ಷ ಮಂದಿ ನರೇಗಾ ಯೋಜನೆಯ ಅನುಕೂಲ ಪಡೆಯುತ್ತಿದ್ದರು. ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಯುಪಿಎ ಸರಕಾರ ದೇಶದಲ್ಲಿ ಉದ್ಯೋಗ, ಶಿಕ್ಷಣ, ಆಹಾರದ ಹಕ್ಕಿನಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿತ್ತು. ಮೋದಿ ಸರಕಾರ ಸುಳ್ಳು ಪ್ರಚಾರ ಮಾಡುವ ಮೂಲಕ ಈ ಯೋಜನೆಗಳನ್ನು ವಿಫಲಗೊಳಿಸುವ ಕೆಲಸ ಮಾಡುತ್ತಾ ಬಂದಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಉಳಿಸಲು ಬೇಕಾದ ಯೋಜನೆಗಳನ್ನು ಮಾತ್ರ ಮೋದಿ ಸರಕಾರ ರೂಪಿಸುತ್ತಿದೆ. ಸಾಮಾನ್ಯ ಜನರ ಬದುಕಿನ ಬಗ್ಗೆ ಈ ಸರಕಾರಕ್ಕೆ ಕಾಳಜಿ ಇಲ್ಲ. ಜೀತಾ ಪದ್ಧತಿಯನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯುಪಿಎ ಸರಕಾರ ಜಾರಿಗೆ ತಂದಿದ್ದ ನಿರ್ಮಲಾ ಭಾರತ ಯೋಜನೆಯನ್ನು ಸ್ವಚ್ಛ ಭಾರತ , ಇಂದಿರಾ ಅವಾಸ್ ಯೋಜನೆಗೆ ಪ್ರಧಾನಮಂತ್ರಿ ಅವಾಸ್ ಯೋಜನೆ ಎಂದು ಬದಲಾವಣೆ ಮಾಡಿದ್ದಾರೆ. ಯಾವುದೇ ಹೊಸ ಯೋಜನೆಯನ್ನು ಜಾರಿಗೆ ತಂದಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ ಮಾಡುವ ಬದಲಿಗೆ ಬೇರೊಂದು ಜನಪರ ಯೋಜನೆ ತರಬಹುದಿತ್ತು ಎಂದು ತಿಳಿಸಿದರು. ಬಿಜೆಪಿಗರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಗಾಂಧಿಜಿ ಅವರ ಹೆಸರಿರುವ ಯೋಜನೆಯ ಹೆಸರು ಬದಲಾವಣೆ ಏಕೆ? ಹೆಸರು ಬದಲಾವಣೆ ಮಾಡುವ ಮೂಲಕ ಗಾಂಧಿಜಿ ಅವರ ಬಗ್ಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಎಂಬುದು ತಿಳಿಯುತ್ತಿದೆ ಎಂದು ಹೇಳಿದರು. ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಇವರು ಅನುದಾನ ನೀಡುವುದು ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ಮಾತ್ರ. ಇದು ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯವಲ್ಲವೇ ? ಎಂದು ಸಚಿವರು ಪ್ರಶ್ನಿಸಿದರು. ರೈಲ್ವೆ ಯೋಜನೆಯ ಕಾರ್ಯಕ್ರಮದ ಪೂಜಾ ವೇಳೆ ನಡೆದ ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾ ಬಿಜೆಪಿ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ತಮ್ಮ ವಿರುದ್ಧ ದೂರು ನೀಡಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ತಂಗಡಗಿ, ಶಿಷ್ಟಾಚಾರ ಪಾಲನೆ ಮಾಡುವಂತೆ ಕೇಳಲು ನಾನು ಹಕ್ಕುದಾರ, ನಾನು ಜನಪ್ರತಿನಿಧಿಯಾಗಿದ್ದೇನೆ. ಎಲ್ಲಿ ಕಾರ್ಯಕ್ರಮ ನಡೆಯಲಿದೆಯೋ ಅಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕು. ಸೋಮಣ್ಣ ನನ್ನ ಬಳಿ ಹೇಳಿದ ಮಾತು ಅಸಹ್ಯ ಅನಿಸುತ್ತದೆ. ರೈಲ್ವೆ ಅಧಿಕಾರಿಗಳು ನನ್ನ ಮಾತನ್ನೇ ಕೇಳುವುದಿಲ್ಲ ಎಂದರು. ಮತ್ತೇ ಇನ್ನು ಏಕೆ ಇವರು ಕೇಂದ್ರದಲ್ಲಿ ಮಂತ್ರಿಯಾಗಿರಬೇಕು. ಸ್ವತಃ ನಾನು ಅವರ ಬಳಿ ಮಾತನಾಡುತ್ತಾ, ನನ್ನ ಹಕ್ಕನ್ನು ಪ್ರತಿಪಾದಿಸಿದ್ದೇನೆ. ಹಿರಿಯ ನಾಯಕರು ಸೋಮಣ್ಣ. ನಿಮ್ಮ ನೇತೃತ್ವದಲ್ಲಿ ಈ ರೀತಿ ಕಾರ್ಯಕ್ರಮ ನಡೆಯುವುದು ನನಗೆ ನೋವಾಗುತ್ತದೆ ಎಂದು ಹೇಳಿದೆ ಇದು ತಪ್ಪಾ? ಯಾರೇ ಆದರೂ ಶಿಷ್ಟಾಚಾರ ಪಾಲನೆ ಆಗಬೇಕು. ಬಿಜೆಪಿಯವರಿಗೆ ಬುದ್ಧಿ ಕಡಿಮೆ. ಬಿಜೆಪಿ ಜಿಲ್ಲಾಧ್ಯಕ್ಷನಿಗೂ ಬುದ್ಧಿ ಕಡಿಮೆ ಎಂದು ವಾಗ್ದಾಳಿ ನಡೆಸಿದರು.
Virat Kohli ಒಂದೇ ದಿನ ಡಬಲ್ ಸಾಧನೆ; ಸೌರವ್ ಗಂಗೂಲಿ ಮೈಲಿಗಲ್ಲು, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮೀರಿ ನಿಂತ ಚೀಕೂ!
Virat Kohli Double Achievement- ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಡಬಲ್ ಸಾಧನೆ ಮಾಡಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರಲವ್ ಗಂಗೂಲಿ ಅವರು ತಲುಪಿದ್ದ 2 ಅಪರೂಪದ ಮೈಲಿಗಲ್ಲುಗಳನ್ನು ದಾಟಿದ್ದಾರೆ. ಅತಿ ವೇಗವಾದಿ 28 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ವಿಶ್ವದಾಖಲೆ ಯನ್ನು ಮುರಿದಿದ್ದಾರೆ. ಅಲ್ಲದೆ, ಭಾರತದ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದವರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದಾರೆ.
ಜಮ್ಮು, ಜ.11: ಜಮ್ಮು–ಕಾಶ್ಮೀರದ ಕತ್ರಾದ ಶ್ರೀ ಮಾತಾ ವೈಷ್ಣೋದೇವಿ ಮೆಡಿಕಲ್ ಕಾಲೇಜಿಗೆ 2025–26ನೇ ಶೈಕ್ಷಣಿಕ ವರ್ಷಕ್ಕೆ MBBS ಕೋರ್ಸ್ ನಡೆಸಲು ನೀಡಿದ್ದ ಅನುಮತಿಯನ್ನು ಮೂಲಸೌಕರ್ಯಗಳ ಗಂಭೀರ ಕೊರತೆಯನ್ನು ಉಲ್ಲೇಖಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ಈ ವಾರದ ಆರಂಭದಲ್ಲಿ ಹಿಂದೆಗೆದುಕೊಂಡಿದೆ. ಈ ನಿರ್ಧಾರ ವೈದ್ಯರಾಗುವ ಕನಸುಗಳನ್ನು ಹೊತ್ತಿದ್ದ ವಿದ್ಯಾರ್ಥಿಗಳನ್ನು ಹತಾಶೆಗೆ ತಳ್ಳಿದೆ. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ತಜ್ಞರ ತಂಡವೊಂದು ನಡೆಸಿದ ವಿವರವಾದ ಪರಿಶೀಲನೆಯ ಬಳಿಕ ಎನ್ಎಂಸಿ 50 ವಿದ್ಯಾರ್ಥಿಗಳನ್ನು MBBS ಕೋರ್ಸ್ಗೆ ಸೇರಿಸಿಕೊಳ್ಳಲು ಕಾಲೇಜಿಗೆ ಅನುಮತಿ ನೀಡಿತ್ತು. 50 ವಿದ್ಯಾರ್ಥಿಗಳ ಪೈಕಿ 44 ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದು, ಅವರ ನೀಟ್ ರ್ಯಾಂ ಕಿಂಗ್ ಗಳ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗಿತ್ತು. ಇದು ಆರೆಸ್ಸೆಸ್ ಪರ ಮತ್ತು ಬಿಜೆಪಿ ಪರ ಗುಂಪುಗಳಿಂದ ಪ್ರತಿಭಟನೆಗೆ ಕಾರಣವಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಕಾಶ್ಮೀರ ಕಣಿವೆಯ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ. ಅನುಮತಿ ರದ್ದುಗೊಳಿಸಿದ್ದರೂ ವಿದ್ಯಾರ್ಥಿಗಳಿಗೆ ಜಮ್ಮು–ಕಾಶ್ಮೀರದಲ್ಲಿನ ಇತರ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲಾಗುವುದು ಎಂದು ಸರಕಾರ ಹೇಳಿದೆ. ಆದರೆ, ‘ವೈಷ್ಣೋದೇವಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ ಈಗಾಗಲೇ ಎರಡು ತಿಂಗಳು ವಿಳಂಬವಾಗಿ ಆರಂಭಗೊಂಡಿತ್ತು. ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಒಂದೆರಡು ತಿಂಗಳುಗಳು ತೆಗೆದುಕೊಂಡರೆ ನಾವು ಮೊದಲ ವರ್ಷದಲ್ಲೇ ತುಂಬ ಹಿಂದೆ ಬೀಳುತ್ತೇವೆ’ ಎಂದು ಅನೇಕ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ‘ಪ್ರಾದೇಶಿಕ ಮತ್ತು ಧಾರ್ಮಿಕ ವಿಭಜನೆಗಳ ಕುರಿತು ಪ್ರತಿಭಟನೆಗಳು ಕ್ಯಾಂಪಸ್ ಗೇಟ್ಗಳವರೆಗೆ ತಲುಪಿದ್ದರೂ, ನಮ್ಮ ಹಾಸ್ಟೆಲ್ಗಳು ಮತ್ತು ತರಗತಿ ಕೋಣೆಗಳಲ್ಲಿ ಓದನ್ನು ಹೊರತುಪಡಿಸಿ ಧರ್ಮ ಸೇರಿದಂತೆ ಬೇರೆ ಯಾವುದರ ಬಗ್ಗೆಯೂ ಚರ್ಚೆಗಳು ನಡೆದಿರಲಿಲ್ಲ. ವೈದ್ಯಕೀಯ ಒಂದು ಕಠಿಣ ಕೋರ್ಸ್ ಆಗಿದ್ದು, ಅದು ಪ್ರತಿ ವಿದ್ಯಾರ್ಥಿಯಿಂದಲೂ ಸಂಪೂರ್ಣ ಗಮನವನ್ನು ಅಗತ್ಯಪಡಿಸುತ್ತದೆ’ ಎಂದು ಜಮ್ಮುವಿನಿಂದ ಏಕೈಕ ಮುಸ್ಲಿಂ ವಿದ್ಯಾರ್ಥಿನಿಯಾದ ಮಿಸ್ಬಾ ಹೇಳಿದರು. ಶುಕ್ರವಾರ ಅಪರಾಹ್ನ ಎರಡು ಗಂಟೆಯೊಳಗೆ ಕ್ಯಾಂಪಸ್ ತೊರೆಯುವಂತೆ ಕಾಲೇಜಿನ ಅಧಿಕಾರಿಗಳ ಸೂಚನೆಯ ಮೇರೆಗೆ ಸಂಸ್ಥೆಯ ಮೊದಲ ಬ್ಯಾಚ್ ನ MBBS ವಿದ್ಯಾರ್ಥಿಗಳು ಕಣ್ಣೀರಿನ ವಿದಾಯ ಹೇಳಿ ತಮ್ಮ ಮನೆಗಳಿಗೆ ಮರಳಿದರು. ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ನಿರ್ಗಮಿಸುವ ಮುನ್ನ ಅವರನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರು, ಇಡೀ ಬೆಳವಣಿಗೆ ದುರದೃಷ್ಟಕರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮ್ಮು–ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, 50 ವಿದ್ಯಾರ್ಥಿಗಳಿಗೆ ಇತರ ಕಾಲೇಜುಗಳಲ್ಲಿ ಪ್ರವೇಶ ಒದಗಿಸುವುದು ಸರಕಾರಕ್ಕೆ ಸಮಸ್ಯೆಯಲ್ಲ ಎಂದು ಹೇಳಿದರೂ, ವೈಷ್ಣೋದೇವಿ ಮೆಡಿಕಲ್ ಕಾಲೇಜಿನ ಮುಚ್ಚುವಿಕೆಯಿಂದ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಉಂಟಾಗುವ ಹಾನಿಗೆ ಯಾರನ್ನಾದರೂ ಹೊಣೆಯಾಗಿಸಬೇಕು ಎಂದು ಆಗ್ರಹಿಸಿದರು.
ಉಡುಪಿ ಶೀರೂರು ಪರ್ಯಾಯ: ಡಿಸಿಸಿ ಬ್ಯಾಂಕ್, ಸಮಸ್ತ ಸಹಕಾರಿ ಸಂಘಗಳಿಂದ ಹಸಿರು ಹೊರೆಕಾಣಿಕೆ
ಉಡುಪಿ: ಜ.18ರಂದು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ಪರ್ಯಾಯ ಮಹೋತ್ಸವದ ಅಂಗವಾಗಿ ನಿನ್ನೆಯಿಂದ ಪ್ರಾರಂಭಗೊಂಡಿರುವ ಹಸಿರು ಹೊರೆಕಾಣಿಕೆ ಸಮರ್ಪಣೆಯ ಎರಡನೇ ದಿನದಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಜಿಲ್ಲೆಯ ಸಮಸ್ತ ಸಹಕಾರಿ ಸಂಘಗಳ ಸಹಕಾರದೊಂದಿಗೆ ಅದ್ಧೂರಿಯ ಹಸಿರು ಹೊರೆಕಾಣಿಕೆ ಮೆರವಣಿಗೆ ಸಂಪನ್ನಗೊಂಡಿತು. ಸಮಸ್ತ ಸಹಕಾರಿಗಳ ಸಹಕಾರದೊಂದಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ತೆಂಗಿನಕಾಯಿ, ಅಕ್ಕಿ, ಬೆಲ್ಲ, ಸಕ್ಕರೆ, ಬೇಳೆ, ಎಣ್ಣೆ, ತುಪ್ಪ, ತರಕಾರಿ ಸೇರಿದಂತೆ ಬೃಹತ್ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು. 40ಕ್ಕೂ ಅಧಿಕ ವಾಹನಗಳಲ್ಲಿ ಹಸಿರು ಹೊರೆಕಾಣಿಕೆಯ ವಸ್ತುಗಳನ್ನು ತುಂಬಿಸಿಕೊಂಡು ತಟ್ಟಿರಾಯ, ಬಿರುದಾವಳಿ, ಪಟಾಕಿ, ವಾದ್ಯಘೋಷದೊಂದಿಗೆ ಸಾಗಿ ಬರಲಾಯಿತು. ಇದೇ ಸಂದರ್ಭದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ 20 ಲಕ್ಷ ರೂ.ಮೌಲ್ಯದ ಹಸಿರು ಹೊರೆಕಾಣಿಕೆ ಹಾಗೂ ಧಾರವಾಡದ ಶ್ರೀಕೃಷ್ಣ ಭಕ್ತರಿಂದ ಹೊರೆಕಾಣಿಕೆಯ ಸಮರ್ಪಣೆಯೂ ನಡೆಯಿತು. ಜೋಡುಕಟ್ಟೆಯಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆ ಕೋರ್ಟ್ ರೋಡ್, ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್, ಕನಕದಾಸ ರಸ್ತೆ, ರಥಬೀದಿ, ವಿದ್ಯೋದಯ ಶಾಲೆ ಮಾರ್ಗವಾಗಿ ಅನ್ನವಿಠಲ ಉಗ್ರಾಣ ತಲುಪಿತ್ತು. ಮೆರವಣಿಗೆಯಲ್ಲಿ ಸಾಗಿಬಂದ ಪ್ರಮುಖರನ್ನು ಕನಕದಾಸ ಮಾರ್ಗದಲ್ಲಿ ಪರ್ಯಾಯ ಸ್ವಾಗತ ಸಮಿತಿ ಸಂಚಾಲಕ, ಹೊರೆಕಾಣಿಕೆ ಉಸ್ತುವಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಎಚ್. ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್ ಸಹಿತ ಪ್ರಮುಖರು ಮಾರ್ಲಾಪಣೆಗೈದು ಬರ ಮಾಡಿಕೊಂಡರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದ ಹೊರೆಕಾಣಿಕೆ ಸಮರ್ಪಣೆಯಲ್ಲಿ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಹಿರಿಯ ಸಹಕಾರಿಗಳಾದ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಕಾಪು ದಿವಾಕರ ಶೆಟ್ಟಿ, ಸುರೇಶ್ ಶೆಟ್ಟಿ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಉದ್ಯಾವರ, ರಾಜೇಶ್ ಸೇರಿಗಾರ್, ರಾಜೇಶ್ ಹೆಗ್ಡೆ, ಶರತ್ ಕುಮಾರ್ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಅನುಷಾ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಮಂಜ, ಪ್ರಮುಖರಾದ ಶ್ರೀಕೃಷ್ಣರಾಜ ಕೊಡಂಚ, ಭಾಸ್ಕರ್ ರಾವ್ ಕಿದಿಯೂರು, ಪ್ರೊ. ಶಂಕರ್, ಯು.ಬಿ. ಶ್ರೀನಿವಾಸ, ನಾರಾಯಣ ದಾಸ ಉಡುಪ, ವಿಷ್ಣುಪ್ರಸಾದ್ ಪಾಡಿಗಾರು, ಗಣೇಶ್ ರಾವ್, ಮಂಜುನಾಥ ಉಪಾ ಧ್ಯಾಯ, ಹಯವದನ ಭಟ್, ಗುರುದಾಸ, ಮುರಳಿಕೃಷ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಕ್ಕಪಕ್ಕದಲ್ಲಿ ಇರುವವರೇ ನಿಮಗೆ ಮೋಸ ಮಾಡುತ್ತಾರೆ, ಎಚ್ಚರ: ಡಿಕೆ ಶಿವಕುಮಾರ್ ಹೇಳಿದ್ದು ಯಾರಿಗೆ?
ರಾಜಕೀಯ ಹಿನ್ನೆಲೆಯಿಲ್ಲದೆ ಈ ಮಟ್ಟಕ್ಕೆ ಬಂದಿದ್ದೇನೆ, ಮುಂದೆಯೂ ಪಕ್ಷದವರು ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ, ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಆತ್ಮಸಾಕ್ಷಿಗೆ ಮೆಚ್ಚುವಂತೆ ಕೆಲಸ ಮಾಡಬೇಕು, ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ ಎಂದು ಅವರು ಸಲಹೆ ನೀಡಿದರು.
ತಡವಾಗುವ ಮೊದಲು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಿ, ಇಲ್ಲವಾದರೆ.. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯೂಬಾಗೆ ಎಚ್ಚರಿಕೆ ನೀಡಿರುವ ರೀತಿ. ವೆನೆಜುವೆಲಾ ಬಿಕ್ಕಟ್ಟಿನ ಬಳಿಕ ಕ್ಯೂಬಾದತ್ತ ತಮ್ಮ ದೃಷ್ಟಿ ನೆಟ್ಟಿರುವ ಟ್ರಂಪ್, ಒಂದು ವೇಳೆ ಕ್ಯೂಬಾ ಡೀಲ್ಗೆ ಒಪ್ಪದಿದ್ದರೆ ಆ ರಾಷ್ಟ್ರಕ್ಕೆ ತಮ್ಮ ನಿಯಂತ್ರಣದಲ್ಲಿರುವ ವೆನೆಜುವೆಲಾ ತೈಲವನ್ನು ಪೂರೈಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಅಮೆರಿಕ ಅಧ್ಯಕ್ಷರ ಈ ಬೆದರಿಕೆಗೆ ಕ್ಯೂಬಾ ಯಾವ ರೀತಿ ಪ್ರತಿಕ್ರಿಯೆ ನೀಡಿದೆ? ಇಲ್ಲಿದೆ ಮಾಹಿತಿ.
ರಾಜ್ಯದಲ್ಲಿ ಸರಕಾರ ಬದಲಾವಣೆ ಇಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಚಿವ ಕೆ ಎಚ್ ಮುನಿಯಪ್ಪ
ಕಲಬುರಗಿ: ರಾಜ್ಯದಲ್ಲಿ ಸರಕಾರ ಬದಲಾವಣೆ ಮಾಹಿತಿ ಎಲ್ಲವೂ ಸುಳ್ಳು, ಅಂತಹ ಬದಲಾವಣೆ ಇಲ್ಲ, ಎಲ್ಲದ್ದಕ್ಕೂ ನಮಗೆ ಹೈಕಮಾಂಡ್ ಇದೆ. ಅದರ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ನಾವು ಬದ್ಧರಾಗಿದ್ದೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ನಗರದ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆ.ಎಚ್.ಮುನಿಯಪ್ಪ, ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ದೀರ್ಘಾವಧಿಯ ಸಿಎಂ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಒಂದು ವೇಳೆ ಬದಲಾವಣೆ ಕುರಿತು ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ಅವರು ಬದ್ಧರಾಗಿರುತ್ತಾರೆ ಎಂದು ಹೇಳಿದರು. ಸಮಾನತೆ ಕಾಣುವುದು, ಅನುದಾನ ನೀಡುವುದರಲ್ಲಿ ಸಿದ್ದರಾಮಯ್ಯ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅದರಲ್ಲಿ ಎಲ್ಲ ವರ್ಗಗಳಿಗೂ ಸಮಾನವಾಗಿ ನೋಡುವುದರಲ್ಲಿ ದೇವರಾಜು ಅರಸು ಅವರು ಅಡಿಗಲ್ಲು ಹಾಕಿದರೆ, ಸಿದ್ದರಾಮಯ್ಯ ಅವರು ಮನೆಯನ್ನೇ ಕಟ್ಟಿದ್ದಾರೆ ಎಂದು ಶ್ಲಾಘಿಸಿದರು. ರಾಜ್ಯಪಾಲರು ಒಳಮೀಸಲಾತಿ ಬಿಲ್ ವಾಪಸಾತಿ ಬಗ್ಗೆ ಸರಕಾರಕ್ಕೆ ಏನು ಪತ್ರ ಬರೆದಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಅದರ ಬಗ್ಗೆ ಪರಿಶೀಲಿಸಿ ಮುಂದಿನ ಉತ್ತರ ನೀಡುತ್ತೇವೆ ಎಂದ ಅವರು, ಒಳಮೀಸಲಾತಿ ಮಸೂದೆಗೆ ಬೆಳಗಾವಿ ಅಧಿವೇಶನದಲ್ಲಿ ಅವಿರೋಧವಾಗಿ ಪಾಸ್ ಮಾಡಲಾಗಿದೆ. ಮುಂದೆ ಕಾಯ್ದೆಯಾದಾಗ ಬಡ್ತಿ ವಿಷಯ ಕುರಿತಾಗಿ ಪರಾಮರ್ಶಿಸಲಿದ್ದೇವೆ ಎಂದು ಹೇಳಿದರು.
ಬೀದರ್| ಅಗ್ನಿ ಅವಘಡದಲ್ಲಿ ಹಾನಿಯಾದ ಅಂಗಡಿಗಳಿಗೆ ಶಾಸಕ ಪ್ರಭು ಚೌವ್ಹಾಣ್ ಭೇಟಿ
ಔರಾದ್: ನಗರದಲ್ಲಿ ಶುಕ್ರವಾರ ತಡರಾತ್ರಿ ಬೆಂಕಿಗಾಹುತಿಯಾದ ಫರ್ನೀಚರ್ ಅಂಗಡಿ, ಚಪ್ಪಲಿ ಅಂಗಡಿ, ಕಿರಾಣಿ ಸ್ಟೋರ್, ತರಕಾರಿ ಮಳಿಗೆಗಳಿಗೆ ಶಾಸಕ ಪ್ರಭು ಚೌವ್ಹಾಣ್ ರವಿವಾರ ಭೇಟಿ ನೀಡಿ, ಮಳಿಗೆಗಳ ಮಾಲಕರಿಗೆ ಧೈರ್ಯ ತುಂಬಿ, ವೈಯಕ್ತಿಕ ಧನಸಹಾಯ ಮಾಡಿದರು. ಬಳಿಕ ಮಾತನಾಡಿದ ಶಾಸಕ ಪ್ರಭು ಚೌವ್ಹಾಣ್, ಅಗ್ನಿ ಅವಘಡ ನಡೆದಿರುವುದು ತೀವ್ರ ಆಘಾತ ಉಂಟು ಮಾಡಿದೆ. ನನ್ನಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ತುರ್ತಾಗಿ ಪತ್ರ ಬರೆದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ನಾನು ನಿಮ್ಮ ಜೊತೆಗೆ ಇದ್ದೇನೆ. ವೈಯಕ್ತಿಕವಾಗಿ ಮತ್ತು ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ತಾವು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳದಿರಿ ಎಂದು ಅಂಗಡಿ ಮಾಲಕರು ಮತ್ತು ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ನಂತರ ಮಾತನಾಡಿದ ಅವರು ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನೊಂದ ವ್ಯಾಪಾರಿಗಳಿಗೆ ನೆರವಾಗುವ ರೀತಿಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರದಿಂದ ಹೆಚ್ಚಿನ ಪರಿಹಾರ ಕಲ್ಪಿಸಲು ನೆರವಾಗಬೇಕು ಎಂದು ನಿರ್ದೇಶನ ನೀಡಿದರು. ಜೆಸ್ಕಾಂ ಅಧಿಕಾರಿಗಳು ಪಟ್ಟಣದಲ್ಲಿ ಸಂಚರಿಸಿ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಗಮನಿಸಬೇಕು. ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹೇಶ್ ಪಾಟೀಲ್, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿ ಕಾರಬಾರಿ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ್ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಗುಂಡಪ್ಪ ಮುಧಾಳೆ, ರಾಮ ನರೋಟೆ, ವೀರಶೆಟ್ಟಿ ಅಲ್ಮಾಜೆ, ಸಂದೀಪ್ ಪಾಟೀಲ್, ಅಶೋಕ ಶಂಬೆಳ್ಳಿ, ರಮೇಶ ಗೌಡಾ, ಆನಂದ ದ್ಯಾಡೆ ಹಾಗೂ ಹಲವರು ಉಪಸ್ಥಿತರಿದ್ದರು.
ಬೆಂಗಳೂರು : ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರನ್ನು ಮೆಚ್ಚಿಸಲು ಹೇಳಿಕೆ ನೀಡುವ ಬದಲು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿ. ಕಾಂಗ್ರೆಸ್ ಸರಕಾರಕ್ಕೆ ಪಾಠ ಹೇಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಪ್ರಾಮಾಣಿಕ ಪ್ರಯತ್ನ ಮಾಡಲಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸಲಹೆ ನೀಡಿದ್ದಾರೆ. ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕೇಂದ್ರದ ಎನ್ಡಿಎ ಸರಕಾರದ ಅಸಹಕಾರದಿಂದ ಕರ್ನಾಟಕದ ಕೈಗಾರಿಕಾ ವೇಗಕ್ಕೆ ಅಡ್ಡಿಯಾಗುತ್ತಿದೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಹೀಗಿರುವಾಗ ಕುಮಾರಸ್ವಾಮಿ ಕರ್ನಾಟಕ ರಾಜ್ಯದ ಪರ ಕೇಂದ್ರದಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಬೌದ್ಧಿಕ ದಿವಾಳಿ : ‘ನರೇಗಾ ಯೋಜನೆ’ ಸಂಬಂಧ ಕರ್ನಾಟಕದ ಬಿಜೆಪಿ-ಜೆಡಿಎಸ್ ನಾಯಕರು ಬಹಿರಂಗ ಚರ್ಚೆಗೆ ಸಿದ್ದ ಎಂದು ಹೇಳುವ ಮೂಲಕ ತಮ್ಮ ಬೌದ್ಧಿಕ ದಿವಾಳಿತನವನ್ನು ಸಾಬೀತು ಮಾಡಿದ್ದಾರೆ. ನರೇಗಾ ಯೋಜನೆಯನ್ನು ಜನವಿರೋಧಿ ಯೋಜನೆಯಾಗಿ ರೂಪಿಸಿರುವ ಕೇಂದ್ರ ಸರಕಾರದ ಕಾಯಿದೆಯನ್ನು ಬೆತ್ತಲೆಗೊಳಿಸಲು ಶೀಘ್ರದಲ್ಲೇ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ. ಅಧಿವೇಶನದಲ್ಲಿ ಬಹಿರಂಗ ಚರ್ಚೆಗೆ ಅವಕಾಶವಿದ್ದು, ಎಚ್.ಡಿ.ಕುಮಾರಸ್ವಾಮಿ ಲೋಕಸಭೆಯ ಬದಲು ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಆಸಕ್ತಿ ಇದ್ದರೆ ರಾಷ್ಟ್ರಪತಿಗಳಿಂದ ವಿಶೇಷ ಅನುಮತಿಯನ್ನು ಪಡೆದುಕೊಂಡು ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ. ಕುಮಾರಸ್ವಾಮಿಗೆ ಕರ್ನಾಟಕದ ಬಗ್ಗೆ ಬದ್ಧತೆ ಇದ್ದರೆ ಕೆಳಕಂಡ ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಅನುಮತಿಯನ್ನು ದೊರಕಿಸಿಕೊಡಲಿ ಎಂದು ರಮೇಶ್ಬಾಬು ಒತ್ತಾಯಿಸಿದ್ದಾರೆ. ‘ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ವಿಮಾನ ನಿಲ್ದಾಣ ವಿಸ್ತರಣೆ/ಉನ್ನತಿ ಸರಕಾರ ಸಿದ್ಧವಾಗಿದ್ದು, ಕೇಂದ್ರದ ಅನುಮತಿ ಬಾಕಿ ಇದೆ. ರಕ್ಷಣಾ ಕೈಗಾರಿಕಾ ಕಾರಿಡಾರ್ಗಳು, ಏರೋಸ್ಪೇಸ್ ಮತ್ತು ಡಿಫೆನ್ಸ್ ಕೈಗಾರಿಕಾ ಪಾರ್ಕ್ಗಳು, ಬಹು ಜಿಲ್ಲಾ ಕೈಗಾರಿಕಾ ಪಾರ್ಕ್, ದೊಡ್ಡ ಕೈಗಾರಿಕಾ ಹೂಡಿಕೆ ಯೋಜನೆಗಳು, ಬೆಂಗಳೂರು ಉಪನಗರ ರೈಲು ಯೋಜನೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ, ಕೃಷ್ಣಾ ಮೆಲ್ದಂಡೆ ಮೂರನೇ ಹಂತದ ಯೋಜನೆ, ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ರಾಜ್ಯದಲ್ಲಿ ಬಾಕಿ ಇರುವ ಯೋಜನೆಗಳಿಗೆ ಕುಮಾರಸ್ವಾಮಿ ಕೇಂದ್ರದ ಅನುಮತಿ ಕೊಡಿಸಲಿ’ ಎಂದು ರಮೇಶ್ಬಾಬು ಸವಾಲು ಹಾಕಿದ್ದಾರೆ.
ಸಾಮೂಹಿಕ ಹಿಂಸಾಚಾರಗಳ ಅಪಾಯದಲ್ಲಿರುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತ: ಹೊಲೋಕಾಸ್ಟ್ ಮ್ಯೂಸಿಯಂ ಎಚ್ಚರಿಕೆ
ಹೊಸದಿಲ್ಲಿ, ಜ.11: ಅಮೆರಿಕದ ಹೊಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಪ್ರಕಟಿಸಿರುವ ವಾರ್ಷಿಕ ಜಾಗತಿಕ ಅಧ್ಯಯನ ವರದಿಯ ಪ್ರಕಾರ, ಭಾರತವು ಮುಂದಿನ ಎರಡು ವರ್ಷಗಳಲ್ಲಿ ನಾಗರಿಕರ ವಿರುದ್ಧ ಸಾಮೂಹಿಕ ಹಿಂಸಾಚಾರ ಮತ್ತು ಜನಾಂಗೀಯ ದೌರ್ಜನ್ಯಗಳ ಗಂಭೀರ ಅಪಾಯಕ್ಕೆ ಸಿಲುಕಬಹುದು. ರಾಜ್ಯಗಳಲ್ಲಿ ಸಾಮೂಹಿಕ ಹತ್ಯೆಗಳು ನಡೆಯುವ ಸಾಧ್ಯತೆಯಿರುವ 168 ದೇಶಗಳ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಗಮನಾರ್ಹವಾಗಿ, ಪ್ರಸಕ್ತ ಭಾರೀ ಪ್ರಮಾಣದ ಹಿಂಸಾಚಾರವನ್ನು ಎದುರಿಸದಿದ್ದರೂ, ಅಂತಹ ಅಪಾಯವನ್ನು ಎದುರಿಸುತ್ತಿರುವ ದೇಶಗಳ ಪೈಕಿ ಭಾರತವು ಅಗ್ರಸ್ಥಾನದಲ್ಲಿದೆ ಎಂದು ವರದಿಯು ಹೇಳಿದೆ. ವರದಿಯು ಭಾರತದಲ್ಲಿ ಈಗಲೇ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ ಎಂದು ಹೇಳಿಲ್ಲ. ಆದರೆ ಅಪಾಯದ ಲಕ್ಷಣಗಳು ಗೋಚರಿಸುತ್ತಿವೆ ಮತ್ತು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಮ್ಯೂಸಿಯಂನ ಅರ್ಲಿ ವಾರ್ನಿಂಗ್ ಪ್ರಾಜೆಕ್ಟ್ ಸಿದ್ಧಪಡಿಸಿರುವ ಡಿಸೆಂಬರ್ 2025ರ ವರದಿಯು, ಭಾರತವು 2026ರ ಅಂತ್ಯಕ್ಕೆ ಮುನ್ನ ನಾಗರಿಕರ ವಿರುದ್ಧ ಉದ್ದೇಶಪೂರ್ವಕ ಸಾಮೂಹಿಕ ಹಿಂಸಾಚಾರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಶೇ.7.5ರಷ್ಟಿದೆ ಎಂದು ಹೇಳಿದೆ. ಸಶಸ್ತ್ರ ಗುಂಪುಗಳು ಒಂದು ವರ್ಷದೊಳಗೆ ಕನಿಷ್ಠ 1,000 ನಾಗರಿಕರನ್ನು ಅವರ ಜನಾಂಗೀಯತೆ, ಧರ್ಮ, ರಾಜಕೀಯ ಅಥವಾ ಭೌಗೋಳಿಕತೆಯ ಆಧಾರದ ಮೇಲೆ ಕೊಲ್ಲಬಹುದು ಎಂದು ವರದಿಯು ತಿಳಿಸಿದೆ. ಪಟ್ಟಿಯಲ್ಲಿ ಮೂರು ದೇಶಗಳು ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿದೆ. ಮ್ಯಾನ್ಮಾರ್ ಅಗ್ರಸ್ಥಾನದಲ್ಲಿದ್ದರೆ, ಚಾಡ್ ಮತ್ತು ಸುಡಾನ್ ನಂತರದ ಸ್ಥಾನಗಳಲ್ಲಿವೆ. ಮ್ಯಾನ್ಮಾರ್ ಮತ್ತು ಸುಡಾನ್ ಸೇರಿದಂತೆ ಪಟ್ಟಿಯಲ್ಲಿನ ಹಲವಾರು ಅಗ್ರ ದೇಶಗಳಲ್ಲಿ ಈಗಾಗಲೇ ಸಾಮೂಹಿಕ ಹತ್ಯೆಗಳು ನಡೆಯುತ್ತಿದ್ದು, ಇಂತಹ ಅಪಾಯವನ್ನು ಎದುರಿಸಬಹುದಾದ ದೇಶವಾಗಿ ಭಾರತದ ಸ್ಥಾನವನ್ನು ಇದು ಗಮನಾರ್ಹವಾಗಿಸುತ್ತದೆ. ಮ್ಯೂಸಿಯಂ ಮತ್ತು ಡಾರ್ಟ್ಮೌತ್ ಕಾಲೇಜಿನ ಸಂಶೋಧಕರು ಹಿಂಸಾಚಾರದ ಮಾದರಿಗಳನ್ನು ಗುರುತಿಸಲು ದಶಕಗಳ ಐತಿಹಾಸಿಕ ದತ್ತಾಂಶಗಳನ್ನು ವಿಶ್ಲೇಷಿಸಿದ್ದಾರೆ. ಅವರು ಹಿಂದಿನ ವರ್ಷಗಳಲ್ಲಿ ಸಾಮೂಹಿಕ ಹಿಂಸಾಚಾರ ಭುಗಿಲೆದ್ದಿದ್ದ ದೇಶಗಳಲ್ಲಿ ಸಮಾನವಾಗಿದ್ದ ಗುಣಲಕ್ಷಣಗಳನ್ನು ಪರಿಶೀಲಿಸಿದ ಬಳಿಕ, ಇಂದಿನ ದಿನಗಳಲ್ಲಿ ಇಂತಹುದೇ ಎಚ್ಚರಿಕೆಯ ಸಂಕೇತಗಳಿಗಾಗಿ ಹುಡುಕಿದ್ದಾರೆ. ಮಾದರಿಯು ಜನಸಂಖ್ಯಾ ಗಾತ್ರ ಮತ್ತು ಆರ್ಥಿಕ ಸೂಚಕಗಳಿಂದ ಹಿಡಿದು ರಾಜಕೀಯ ಸ್ವಾತಂತ್ರ್ಯ ಮತ್ತು ಸಶಸ್ತ್ರ ಸಂಘರ್ಷಗಳವರೆಗೆ 30ಕ್ಕೂ ಅಧಿಕ ಅಂಶಗಳನ್ನು ಪರಿಶೀಲಿಸಿದೆ. ಐತಿಹಾಸಿಕವಾಗಿ, ಪ್ರತಿ ವರ್ಷ ಸರಾಸರಿ ಒಂದು ಅಥವಾ ಎರಡು ದೇಶಗಳಲ್ಲಿ ಸಾಮೂಹಿಕ ಹತ್ಯೆಗಳ ಹೊಸ ಘಟನೆಗಳು ಸಂಭವಿಸುತ್ತವೆ. ಯೋಜನೆಯು ಹಿಂಸಾಚಾರವನ್ನು ತಡೆಯಲು ಯಾವ ಕ್ರಮಗಳ ಮೇಲೆ ಗಮನ ಹರಿಸಬೇಕು ಎಂಬುದನ್ನು ನಿರ್ಧರಿಸಲು ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ನೆರವಾಗುವ ಗುರಿಯನ್ನು ಹೊಂದಿದೆ ಎಂದು ಮ್ಯೂಸಿಯಂನ ಜನಾಂಗೀಯ ಹತ್ಯೆ ತಡೆ ಕೇಂದ್ರದ ಸಂಶೋಧನಾ ನಿರ್ದೇಶಕ ಲಾರೆನ್ಸ್ ವೂಚರ್ ಅವರು ವರದಿಯ ಮುನ್ನುಡಿಯಲ್ಲಿ ಬರೆದಿದ್ದಾರೆ. ಹತ್ಯಾಕಾಂಡಗಳನ್ನು ತಡೆಯಬಹುದು ಎಂದು ಒತ್ತಿ ಹೇಳಿರುವ ಅವರು, ಎಚ್ಚರಿಕೆಯ ಸಂಕೇತಗಳನ್ನು ಗಮನಿಸಿ ಆರಂಭಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ವ್ಯಕ್ತಿಗಳು ಮತ್ತು ಸರ್ಕಾರಗಳು ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದ್ದಾರೆ. ಅಧ್ಯಯನವು ಪ್ರಚಲಿತ ಹಿಂಸಾಚಾರವು ಇನ್ನಷ್ಟು ಹದಗೆಡಬಹುದೇ ಎಂಬುದನ್ನು ಪರಿಶೀಲಿಸುವುದಕ್ಕಿಂತ, ಭವಿಷ್ಯದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಯನ್ನು ಮಾತ್ರ ವಿಶ್ಲೇಷಿಸಿದೆ. ಅರ್ಲಿ ವಾರ್ನಿಂಗ್ ಪ್ರಾಜೆಕ್ಟ್ 2014ರಿಂದ ವಾರ್ಷಿಕ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡುತ್ತಿದೆ. ಈ ಅವಧಿಯಲ್ಲಿ ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾಗಳ ವಿರುದ್ಧ ನರಮೇಧ, ದಕ್ಷಿಣ ಸುಡಾನ್ ಹಾಗೂ ಇಥಿಯೋಪಿಯಾದಲ್ಲಿ ಸಾಮೂಹಿಕ ನಾಗರಿಕ ಸಾವುಗಳು ಸೇರಿದಂತೆ ಅನೇಕ ದೇಶಗಳಲ್ಲಿ ಸಾಮೂಹಿಕ ದೌರ್ಜನ್ಯಗಳು ನಡೆದಿವೆ. ಇಂತಹ ಪ್ರಕರಣಗಳಲ್ಲಿಯೂ ಎಚ್ಚರಿಕೆಗಳನ್ನು ನೀಡಲಾಗಿತ್ತು. ಆದರೆ ಅವು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ವೂಚರ್ ಹೇಳಿದ್ದಾರೆ. ಸೌಜನ್ಯ : thewire.in
ಕಂಪ್ಲಿ ಕ್ಷೇತ್ರದ ಅಭಿವೃದ್ಧಿ ನನ್ನ ಧ್ಯೇಯ : ಶಾಸಕ ಜೆ.ಎನ್.ಗಣೇಶ್
ಕಂಪ್ಲಿ: ಕ್ಷೇತ್ರದ ಅಭಿವೃದ್ಧಿ ಕಾರ್ಯದ ಜೊತೆಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಹೊರತು ಜನಾರ್ದನರೆಡ್ಡಿ ಅವರ ಹೇಳಿಕೆಗಳಿಗೆ ಕಿವಿಗೊಡುವುದಿಲ್ಲ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಬಳ್ಳಾರಿಯ 22ನೇ ವಾರ್ಡಿನಲ್ಲಿ 2024-25ನೇ ಸಾಲಿನ ಕೆಕೆಆರ್ಡಿಬಿ ಯೋಜನೆಯಡಿ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಜೆ.ಎನ್.ಗಣೇಶ, ಜನಾರ್ದನರೆಡ್ಡಿ ದೊಡ್ಡವರು. ಅವರು ರಾಜ್ಯ ಮತ್ತು ಕೇಂದ್ರದ ನಾಯಕರಾಗಿದ್ದಾರೆ. ಅವರು ಏನಾದರೂ ಮಾತಾಡುತ್ತಾರೆ. ನಾನು ಮಾಧ್ಯಮದಿಂದ ದೂರವಿರುತ್ತೇನೆ. ಇಂತಹ ಸೊಕ್ಕಿನ ಮಾತುಗಳಿಗೆ ಕಿವಿಗೊಡುವುದಿಲ್ಲ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಮತದಾರರು ಕೈಹಿಡಿಯಲಿದ್ದಾರೆ ಎಂದು ಹೇಳಿದರು. ಉತ್ಸವ ಮಾಡಿದರೆ ಕಂಪ್ಲಿ ಮತ್ತು ಕುರುಗೋಡು ಎರಡೂ ಉತ್ಸವಗಳನ್ನು ಮಾಡುತ್ತೇನೆ. ಒಬಿಸಿ ಹಾಸ್ಟೆಲ್ ನಿರ್ಮಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿತ್ತು. ಆದರೆ, ಈಗ ಕಾಲ ಕೂಡಿ ಬಂದಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕಾಗಿ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೂ 3 ಕೋಟಿ ಬರಬೇಕಿದೆ. ಒಟ್ಟಾರೆ 6 ಕೋಟಿ ವೆಚ್ಚದಲ್ಲಿ ಹಾಸ್ಟರ್ ಕಾಮಗಾರಿ ಆರಂಭಗೊಂಡಿದೆ. ಈಗಾಗಲೇ ಎಸ್ಸಿ, ಒಬಿಸಿ, ಅಲ್ಪಸಂಖ್ಯಾತರ ಹಾಸ್ಟೆಲ್ ಆಗಿದೆ. ಮುಂಬರುವ ದಿನಗಳಲ್ಲಿ ಸುಮಾರು 5.50 ಕೋಟಿ ವೆಚ್ಚದಲ್ಲಿ ಎಸ್ಟಿ ಹಾಸ್ಟೆಲ್ ನಿರ್ಮಾಣವಾಗಲಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲಿಂದಲೂ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಈ ಭಾಗದಲ್ಲಿ ರೈತಾಪಿ ಜನರಿದ್ದಾರೆ. ಆದ್ದರಿಂದ ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಬಿಸಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು. ನಂತರ ಒಬಿಸಿ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಶಾಸಕ ಗಣೇಶ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಎಇಇ ಚಂದ್ರಕಾಂತ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ನಿಲಯ ಪಾಲಕರಾದ ಎಂ.ಗಾದಿಲಿಂಗಪ್ಪ, ವಿರುಪಾಕ್ಷಿ, ಮುಖಂಡರಾದ ಕೆ.ಶ್ರೀನಿವಾಸರಾವ್, ಭಟ್ಟ ಪ್ರಸಾದ್, ಸಿ.ಆರ್.ಹನುಮಂತ, ಎಲ್.ರಾಮನಾಯ್ಡು, ಕರಿಬಸವನಗೌಡ, ಜಾಫರ್, ಹಬೀಬ್ ರೆಹಮಾನ್, ಕೆ.ಷಣ್ಮುಕಪ್ಪ, ನಾಯಕರ ತಿಮ್ಮಪ್ಪ, ಗೋಪಾಲ, ಯಾಳ್ಪಿ ಅಬ್ದುಲ್ ಮುನಾಫ್, ಕರೇಕಲ್ ಮನೋಹರ, ಮೆಹಬೂಬ್, ಡೆಕೋರೇಷನ್ ನಾಗರಾಜ, ಪ್ರಸಾದ್, ಹನುಮಂತಪ್ಪ, ಅಕ್ಕಿ ಜಿಲಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
SIR Row; ಗುರುತು ಪರಿಶೀಲನೆಗೆ ನೌಕಾಸೇನೆ ಮಾಜಿ ಮುಖ್ಯಸ್ಥರಿಗೆ ಬುಲಾವ್: ವೀರಚಕ್ರ ಪ್ರಶಸ್ತಿ ಪುರಸ್ಕೃತ ಹೇಳಿದ್ದೇನು?
ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಸಾಧಕ-ಬಾಧಕಗಳ ಚರ್ಚೆ ಒತ್ತಟ್ಟಿಗಿರಲಿ. SIR ಪ್ರಕ್ರಿಯೆಯಲ್ಲಿ ಆಗುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಚುನಾವಣಾ ಆಯೋಗ ಇನ್ನೂ ಯಶಸ್ವಿಯಾಗಿಲ್ಲ. ಇದಕ್ಕೆ ಪುಷ್ಠಿ ಎಂಬಂತೆ, ಭಾರತೀಯ ನೌಕಾಸೇನೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ (ನಿವೃತ್ತ) ಅರುಣ್ ಪ್ರಕಾಶ್ ದಂಪತಿಗೆ ತಮ್ಮ ಗುರುತು ಸಾಬೀತುಪಡಿಸುವಂತೆ ಕೋರಿ, ಎಸ್ಐಆರ್ ನೋಟಿಸ್ ನೀಡಲಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ವೀರಚಕ್ರ ಪ್ರಶಸ್ತಿ ಪುರಸ್ಕೃತ ನೌಕಾಪಡೆ ಮಾಜಿ ಮುಖ್ಯಸ್ಥರನ್ನು ಚುನಾವಣಾ ಆಯೋಗ ಅವಮಾನ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಹರಿದಾಟ ಕೇಸ್ನಲ್ಲಿ ಮೂವರ ಬಂಧನ
ಹುಬ್ಬಳ್ಳಿ: 35 ವರ್ಷದ ಮಹಿಳೆಯ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಡಿಜಿಟಲ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ 9ರ ರಾತ್ರಿ ಅಂಬೇಡ್ಕರ್ ಮೈದಾನದ ಸಮೀಪ ನಡೆದಿದ್ದು, ದೌರ್ಜನ್ಯಕ್ಕೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಹರಿದಾಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಇಂಡಿ
ರಾಯಚೂರು| ಟ್ರ್ಯಾಕ್ಟರ್ಗೆ ಟಿಪ್ಪರ್ ಢಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಮೃತ್ಯು
ರಾಯಚೂರು: ಹತ್ತಿ ತುಂಬಿದ್ದ ಟ್ರ್ಯಾಕ್ಟರ್ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ನಲ್ಲಿದ್ದ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊರವಲಯದ ಲಿಂಗಸುಗೂರು ರಸ್ತೆಯ ಬೈಪಾಸ್ ಬಳಿ ನಡೆದಿದೆ. ಮೃತನನ್ನು ಗೋರ್ಕಲ್ ಗ್ರಾಮದ ನಿವಾಸಿ ನಾಗರಾಜ(55) ಎಂದು ಗುರುತಿಸಲಾಗಿದೆ. ಗೋರ್ಕಲ್ ಗ್ರಾಮದಿಂದ ಹತ್ತಿ ಮಾರಾಟ ಮಾಡಲು ರಾಯಚೂರು ನಗರಕ್ಕೆ ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ ಹಿಂಬದಿಯ ಟ್ರ್ಯಾಲಿಗೆ ಟಿಪ್ಪರ್ ಢಿಕ್ಕಿ ಹೊಡೆದಿದೆ. ಈ ವೇಳೆ ಟ್ರ್ಯಾಕ್ಟರ್ ಮೇಲೆ ಕೂತಿದ್ದ ನಾಗರಾಜ ಅವರು ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಭಾರತೀಯ ಸಂಜಾತ ಗಣಿತ ತಜ್ಞೆ ನಳಿನಿ ಜೋಶಿಗೆ 2025ರ NSW ವರ್ಷದ ವಿಜ್ಞಾನಿ ಪ್ರಶಸ್ತಿ
NSW ವರ್ಷದ ವಿಜ್ಞಾನಿ ಪ್ರಶಸ್ತಿಯನ್ನು ಪಡೆದ ಮೊದಲ ಗಣಿತಜ್ಞೆಯಾಗಿ ನಳಿನಿ ಜೋಶಿ ಆಸ್ಟ್ರೇಲಿಯಾದ ಕ್ವಾಂಟಮ್ ಭವಿಷ್ಯವನ್ನು ಭದ್ರಪಡಿಸುತ್ತಿದ್ದಾರೆ. ಜೊತೆಗೆ ಮುಂದಿನ ಪೀಳಿಗೆಯ ವಿಜ್ಞಾನ ಮತ್ತು ಗಣಿತದ ನಾಯಕರಿಗೆ ಸ್ಫೂರ್ತಿಯಾಗಿದ್ದಾರೆ. ಭಾರತೀಯ ಮೂಲದ ಗಣಿತಜ್ಞೆ ಮತ್ತು ಪ್ರಾಧ್ಯಾಪಕರಾದ ನಳಿನಿ ಜೋಶಿ ಎಒ ಅವರನ್ನು 2025ರ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (NSW) ವರ್ಷದ ವಿಜ್ಞಾನಿ ಎಂದು ಘೋಷಿಸಲಾಗಿದೆ. NSWನ ಅತ್ಯುನ್ನತ ವೈಜ್ಞಾನಿಕ ಗೌರವವನ್ನು ಮೊದಲ ಬಾರಿಗೆ ಗಣಿತ ತಜ್ಞರಿಗೆ ನೀಡಲಾಗಿದೆ. NSW ನೀಡುವ ವೈಜ್ಞಾನಿಕ ಪ್ರೀಮಿಯರ್ ಪ್ರಶಸ್ತಿಗಳ ಭಾಗವಾಗಿ ನಳಿನಿ ಜೋಶಿ ಈ ಗೌರವವನ್ನು ಪಡೆದಿದ್ದಾರೆ. ನಳಿನಿ ಜೋಶಿ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ಗಣಿತಶಾಸ್ತ್ರದ ಮುಖ್ಯಸ್ಥರು ಮತ್ತು ಪಾಯ್ನೆ–ಸ್ಕಾಟ್ ಪ್ರೊಫೆಸರ್ ಆಗಿದ್ದಾರೆ. ಇಂಟೆಗ್ರೇಬಲ್ ಸಿಸ್ಟಮ್ಸ್ನಲ್ಲಿ ಅವರು ನಡೆಸಿದ ಪ್ರವರ್ತಕ (ಮೊದಲ ಶೋಧಕ) ಸಂಶೋಧನಾ ಕಾರ್ಯಗಳಿಗೆ ಪ್ರಸಿದ್ಧರಾಗಿದ್ದಾರೆ. ಅವರ ಸಂಶೋಧನೆ ಹವಾಮಾನ ವಿಜ್ಞಾನದಿಂದ ಹಿಡಿದು ಫೈಬರ್ ಆಪ್ಟಿಕ್ಸ್ವರೆಗಿನ ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುವ ಸಂಕೀರ್ಣ ಗಣಿತ ವಿನ್ಯಾಸಗಳ ಆಳವಾದ ಅಧ್ಯಯನವನ್ನು ಒಳಗೊಂಡಿದೆ. ನಳಿನಿ ಜೋಶಿ ಮ್ಯಾನ್ಮಾರ್ ನಲ್ಲಿ ಜನಿಸಿದ್ದಾರೆ. ನಂತರ ಅವರ ಕುಟುಂಬ ಆಸ್ಟ್ರೇಲಿಯಾಗೆ ವಲಸೆ ಹೋದ ಬಳಿಕ ಅಲ್ಲಿಯೇ ತಮ್ಮ ಬಾಲ್ಯವನ್ನು ಕಳೆದರು. ಸಿಡ್ನಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದ ಅವರು, ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಮುಗಿಸಿದರು. ಬಳಿಕ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡ ಮೊದಲ ಮಹಿಳಾ ಗಣಿತ ಪ್ರಾಧ್ಯಾಪಕರಾಗಿದ್ದಾರೆ. ಗಣಿತ ಸಮಸ್ಯೆಗಳ ಪರಿಹಾರಕ್ಕೆ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಿದವರಾಗಿ ನಳಿನಿ ಜೋಶಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕ್ವಾಂಟಮ್ ಕ್ರಿಪ್ಟೋಗ್ರಫಿ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ತೊಡಗಿಸಿಕೊಂಡಿದ್ದಾರೆ. ಕ್ವಾಂಟಮ್ ಕಂಪ್ಯೂಟರ್ಗಳು ಜಾಗತಿಕ ಸೈಬರ್ ಭದ್ರತೆಗೆ ತರುವ ಸವಾಲುಗಳನ್ನು ನಿರ್ವಹಿಸುವ ಕ್ಷೇತ್ರದಲ್ಲೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. “ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಬಳಿ ಸ್ಮಾರ್ಟ್ಫೋನ್ಗಳೇ ಇರಲಿಲ್ಲ. ಕಾಫಿ ಕುಡಿಯುವುದರಿಂದ ಹಿಡಿದು ಬ್ಯಾಂಕ್ ಬ್ಯಾಲೆನ್ಸ್ವರೆಗೂ ಎಲ್ಲವನ್ನೂ ನಾವು ವಿಭಿನ್ನ ರೀತಿಯಲ್ಲಿ ನಿರ್ವಹಿಸುತ್ತಿದ್ದೆವು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ಕ್ವಾಂಟಮ್ ಚಾಲಿತ ಸಾಧನಗಳ ಮೂಲಕ ಕ್ವಾಂಟಮ್ ಹಣಗಳೊಂದಿಗೆ ವ್ಯವಹರಿಸುವ ಸ್ಥಿತಿಗೆ ತಲುಪುತ್ತೇವೆ. ಆದರೆ ಆ ಭವಿಷ್ಯದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಕುರಿತು ಕೈಗಾರಿಕಾ ಕ್ಷೇತ್ರದಲ್ಲಿ ಕನಿಷ್ಠ ಜ್ಞಾನವೂ ಇಲ್ಲ. ಆಸ್ಟ್ರೇಲಿಯಾದಲ್ಲಿ ಈ ವಿಷಯದಲ್ಲಿ ಪರಿಣತಿ ಪಡೆದವರು ಡಜನ್ಗೂ ಕಡಿಮೆ ಮಂದಿ ಮಾತ್ರ ಇದ್ದಾರೆ,” ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ ಕ್ವಾಂಟಮ್ ಭವಿಷ್ಯಕ್ಕೆ ಸಿದ್ಧವಾಗಲು ಗಣಿತ ಅತ್ಯಂತ ಮುಖ್ಯವಾಗಿದೆ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಅನೇಕ ಯುವ ಸಂಶೋಧಕರಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಸೇವೆಗೆ 2018ರಲ್ಲಿ ಯುರೇಕಾ ಪ್ರಶಸ್ತಿ ಪಡೆದಿದ್ದಾರೆ. 2016ರಲ್ಲಿ ಆಫಿಸರ್ ಆಫ್ ದ ಆರ್ಡರ್ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಅವರು ಆಸ್ಟ್ರೇಲಿಯಾ ಅಕಾಡೆಮಿ ಆಫ್ ಸೈನ್ಸಸ್ನ ಸದಸ್ಯರಾಗಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಗಣಿತ ಒಕ್ಕೂಟದ ಮೊದಲ ಆಸ್ಟ್ರೇಲಿಯನ್ ಉಪಾಧ್ಯಕ್ಷರಾಗಿದ್ದಾರೆ.
ಕಾರ್ಕಳ: ಉಚಿತ ಕಿವಿಯ ಶ್ರವಣ ತಪಾಸಣೆ, ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ
ಕಾರ್ಕಳ: ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಇವರ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣಾ ಕಾರ್ಯಕ್ರಮವು ಜ. 11ರಂದು ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈ ಟಿಯ ಸಾರಸ್ವತ ಸೌಧ ಸಭಾಂಗಣದಲ್ಲಿ ನಡೆಯಿತು. ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಸುರೇಂದ್ರ ನಾಯಕ್ ಶಿಬಿರವನ್ನು ಉದ್ಘಾಟಿಸಿ ಅಗತ್ಯವುಳ್ಳವರಿಗೆ ಶಿಬಿರದ ಪ್ರಯೋಜನ ದೊರಕುವಂತಾಗಲಿ ಎಂದರು. ಡಾ| ಅಂಕಿತಾ ಕಲ್ಮಾಡಿ ಮಾತನಾಡಿ ಕಿವಿಯ ಪಂಚೇಂದ್ರಿಯಗಳಲ್ಲಿ ಕಿವಿಯ ಅರೈಕೆ ಅತ್ಯಮೂಲ್ಯವಾಗಿದೆ. ಸ್ಥಳೀಯವಾಗಿ ಸಿಗುವ ಕಿವಿಯ ಉಪಕರಣಗಳನ್ನು ಉಪಯೋಗಿಸಿಕೊಂಡು ಇನ್ನಷ್ಟು ಸಮಸ್ಯೆಗೆ ಒಳಪಡದೆ ಸರಿಯಾಗಿ ಪರೀಕ್ಷಿಸಿ ಡಿಜಿಟಲ್ ಉಪಕರಣಗಳನ್ನು ಉಪಯೋಗಿಸುವಂತೆ ಸಲಹೆ ನೀಡಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಹರೀಶ್ ಆಚಾರ್ಯ, ಡಾ| ಅಂಕಿತಾ ಕಲ್ಮಾಡಿ, ಟೀಮ್ ಈಶ್ವರ್ ಮಲ್ಪೆ ತಂಡದ ಲವ ಬಂಗೇರ ಉಪಸ್ಥಿತರಿಸದ್ದರು. ಸೊಸೈಟಿಯ ಹಿರಿಯ ವ್ಯವಸ್ಥಾಪಕರಾದ ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ಸುಮಾರು 19 ಮಂದಿ ಭಾಗವಹಿಸದ್ದರು. ಅಗತ್ಯವುಳ್ಳ 8 ಮಂದಿಗೆ ಸಹಾಯಧನ ಹಸ್ತಾಂತರಿಸಲಾ ಯಿತು. ಡಾ| ಅಂಕಿತಾ ಕಲ್ಮಾಡಿ ಕಿವಿಯ ಶ್ರವಣ ತಪಾಸಣೆ ನಡೆಸಿದರು.
ಬಂಗೇರಕಟ್ಟೆ: ನೂರುಲ್ ಹುದಾ ಮದರಸ ವಠಾರದಲ್ಲಿ ನಡೆದ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಸಮಿತಿ ಸದಸ್ಯರ ಆಯ್ಕೆಯು ಶುಕ್ರವಾರ ನಡೆಯಿತು. 2026ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಬಂಗೇರಕಟ್ಟೆ, ಉಪಾಧ್ಯಕ್ಷರಾಗಿ ಹಕೀಂ ರೋಯಲ್, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಟಿ.ಎಸ್, ಕೋಶಾಧಿಕಾರಿಯಾಗಿ ಯೂಸುಫ್ ಬಳ್ಳಮಂಜ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಸಾಲುಮರ ಮತ್ತು ಇಕ್ಬಾಲ್ ರೋಯಲ್ ಅವರು ಆಯ್ಕೆಯಾದರು. ಮೂರು ವರ್ಷಕ್ಕೊಮ್ಮೆ ನಡೆಯುವ ಗೌರವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ನೂತನ ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಪಿ.ಕೆ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.
ಗದಗ ಲಕ್ಕುಂಡಿ ನಿಧಿ ಸತ್ಯ ಬಿಚ್ಚಿಟ್ಟ ಪುರಾತತ್ವ ಇಲಾಖೆ ಅಧಿಕಾರಿ! 470 ಗ್ರಾಂ ಚಿನ್ನಾಭರಣ ವಾಪಸ್ಗೆ ಕುಟುಂಬ ಪಟ್ಟು
ಗದಗದ ಲಕ್ಕುಂಡಿಯಲ್ಲಿ ಮನೆಯೊಂದರಲ್ಲಿ ಪತ್ತೆಯಾದ ಬೆಲೆಬಾಳುವ ವಸ್ತುಗಳು ನಿಧಿಯಲ್ಲ, ಬದಲಾಗಿ ಹಿರಿಯರು ಅಡುಗೆ ಕೋಣೆಯಲ್ಲಿ ಕೂಡಿಟ್ಟಿದ್ದ ಆಭರಣಗಳು ಎಂದು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. ಪ್ರಾಮಾಣಿಕವಾಗಿ ಆಭರಣಗಳನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅಧಿಕಾರಿಗಳು ಶ್ಲಾಘಿಸಿದ್ದಾರೆ. ಇದು ಪೂರ್ವಜರ ಆಸ್ತಿ ಎಂದು ಕುಟುಂಬಸ್ಥರು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.
`ಟ್ರೋಲ್ ಗಳೆಲ್ಲಾ ನಾನ್ ಸೆನ್ಸ್': ಕಿವೀಸ್ ರೆಕ್ಕೆ ಪುಕ್ಕ ಮುರಿದ ಹರ್ಷಿತ್ ರಾಣಾ ಪರ ಹರ್ಷ ಬೋಗ್ಲೆ ಬ್ಯಾಟಿಂಗ್!
Harsha Bhogle On Harshit Rana- ಖ್ಯಾತ ಕ್ರಿಕೆಟ್ ವಿಮರ್ಶಕ ಹರ್ಷ ಬೋಗ್ಲೆ ಅವರು ವೇಗದ ಬೌಲರ್ ಹರ್ಷಿತ್ ರಾಣಾ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಅರ್ಥಹೀನ' ಮಾತುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಣಾ ಅವರು ಭಾರತದ ಮೂರೂ ಮಾದರಿಯ ತಂಡದಲ್ಲಿ ಇರುವುದು ದೊಡ್ಡ ಪ್ರಶ್ನೆಯಾಗಿಬಿಟ್ಟಿದೆ ಎಂಬ ಟೀಕೆಗಳಿಗೆ ಅವರು ತಿರುಗೇಟು ನೀಡಿದ್ದಾರೆ. ರಾಣಾ ಅವರು ಭಾರತದ ಪ್ರಮುಖ ವಿಕೆಟ್ ಟೇಕರ್ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಬೋಗ್ಲೆ ಅವರು ಅಂಕಿ ಅಂಶಗಳ ಸಮೇತ ಸಮರ್ಥಿಸಿದ್ದಾರೆ.
ರಾಯಚೂರು| ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ' ಕೃತಿ ಲೋಕಾರ್ಪಣೆ
ರಾಯಚೂರು: ಮಹಿಳೆಯರು ದಲಿತರು ಮತ್ತು ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಎಲ್ಲರೂ ಕೂಡಿ ಸೌಹಾರ್ದ ಭಾರತವನ್ನು ಕಟ್ಟಬೇಕಾಗಿದೆ ಎಂದು ರಾಯಚೂರಿನ ಹಿರಿಯ ಸಾಹಿತಿ ವೀರ ಹನುಮಾನವರು ಹೇಳಿದರು. ಶನಿವಾರದಂದು ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನ ರಾಯಚೂರು ಇವರ ಸಹಯೋಗದಲ್ಲಿ ರಾಯಚೂರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ನಾಡಿನ ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ, ಸಮಾನತೆಯ ಸ್ನೇಹಿತ ಪುಸ್ತಕ ಜನಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿನ ಸಾಮಾಜಿಕ ನ್ಯಾಯದ ಅನೇಕ ಮುಖಗಳನ್ನು ಕಾಣಬಹುದು.10 ಲೇಖನಗಳಲ್ಲಿ ಭಾರತ ಪಾರಂಪರಿಕ ಸೌಹಾರ್ದತೆ ಜೊತೆಗೆ ದೇಶದ ಬಿಕ್ಕಟ್ಟುಗಳಿಗೆ ಪರಿಹಾರವನ್ನು ಕಾಣಬಹುದಾಗಿದೆ ಎಂದು ಹೇಳಿದರು. ಡಾ. ಸಿ. ಬಿ. ಚಿಲ್ಕರಾಗಿ ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರು ಪುಸ್ತಕ ಲೋಕಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಮಾರುಕಟ್ಟೆ ಮಾತುಗಳಿಗಿಂತ ಮೌಲ್ಯ ಮಾತುಗಳು ಉತ್ತಮ ಎಂದು ಹೇಳಿದರು. ಕೃತಿ ಪರಿಚಯವನ್ನು ಮಾಡಿ ಹಿರಿಯ ಸಾಹಿತಿಗಳು, ಮಾಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ ಮಸ್ಕಿ ಅವರು ಮಾತನಾಡುತ್ತಾ, ಈ ರಾಷ್ಟ್ರವನ್ನು ಒಂದೇ ಧರ್ಮಕ್ಕೆ ಸೀಮೀತಗೊಳಿಸಬಾರದು ಎನ್ನುವುದು ಈ ಪುಸ್ತಕದಲ್ಲಿರುವ ತಿರುಳಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅತುಬಿಹಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಖಾದರ್ ಬಾಷಾ ಮಾತನಾಡಿ, ಬರಗೂರವರು ಭಾರತ ಚಿಂತನೆಯನ್ನು ಬೆವರಿನ ಸಂಸ್ಕೃತಿ ಮೂಲಕ ಕಟ್ಟಿದರು ಎಂದು ಹೇಳಿದರು. ಕ್ರಿ ಶ 960 ರಿಂದ ನಾವು ಪಂಪನ ಸಾಹಿತ್ಯ ಓದುತ್ತೇವೆ, ಆದರೇ ವಿಚಾರವಂತರ ನಾಡಿನಲ್ಲಿ ವಿಚಾರವಂತರ ಕೊಲೆಗಾಳಾಗುವುದೇಕೆ? ವರ್ತಮಾನದಲ್ಲಿ ಈ ಪುಸ್ತಕದ ಆಶಯಗಳು ಪ್ರಸ್ತುತ. ಹಿಂದೆ ಇರುವ ಸೌಹಾರ್ದತೆ ಇಂದು ಯಾಕೆ ಇಲ್ಲ, ಮೊದಲು ನಾವು ಮಾನವರು ಪರಿವರ್ತನೆ ಆಗಬೇಕು. ನಮ್ಮ ತಪ್ಪನ್ನು ನಾವು ತಿದ್ದಿಕೊಂಡು ನಡೆಯಬೇಕು ಎಂದರು. ಜಾತಿ ಧರ್ಮ ಮನೆಯ ಒಳಗೆ ಇರಲಿ ಹೊರಗೆ ನಾವೆಲ್ಲರೂ ಒಂದೇ ಅನ್ನುವ ಭಾವ ಬರಲಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಸಾಹಿತಿಗಳಾದ ಬಾಬು ಬಂಡಾರಿಗಲ್, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಯಿತು. ಇನ್ನೂ ನಮಗೆ ಸೌಹಾರ್ದ ಭಾರತ ಬೆಳೆಸಲು ಆಗುತ್ತಿಲ್ಲ. ಸೌಹಾರ್ದತೆ ಮತ್ತು ಸಮಾನತೆಯ ಅಗತ್ಯ ಇನ್ನೂ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಮಗ್ರ ಜನತೆಗಾಗಿ ಹೋರಾಟ ಮಾಡಿದವರು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು. ವೇದಿಕೆಯಲ್ಲಿ ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಬಸವ ಪ್ರಭು ಪಾಟೀಲ್ ಬೆಟ್ಟದೂರು, ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್.ಎಚ್. ಮ್ಯಾದಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಬಿ.ವಿಜಯ ರಾಜೇಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನ ರಾಯಚೂರು ಇದರ ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ರಾಯಚೂರಿನ ನಾಗರಿಕರು ಭಾಗವಹಿಸಿದ್ದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗೌರವ ಕಾರ್ಯದರ್ಶಿಗಳಾದ ರಾವುತರಾವ್ ಬರೂರ ಸ್ವಾಗತಿಸಿದರು. ರಾಮಣ್ಣ ಮ್ಯಾದಾರ್ ವಂದಿಸಿದರು. ಡಾ.ರೇಖಾ ಪಾಟೀಲ್ ನಿರೂಪಿಸಿದರು.
ಕೇರಳದ ಕೆಂಪುಕೋಟೆಗೆ ಕೇಸರಿ ಧ್ವಜದ ಜೊತೆ ನುಗ್ಗಿದ ಅಮಿತ್ ಶಾ; ರಾಜಕೀಯ ಸಮೀಕರಣ ಬದಲಾಯಿಸಲಿದೆ ಬಿಜೆಪಿ ಮಿಷನ್ 2026?
ಮುಂಬರುವ ಏಪ್ರಿಲ್ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳದಲ್ಲಿ, ಕೆಂಪು vs ಕೇಸರಿ ರಾಜಕೀಯ ಕದನ ಆರಂಭವಾಗಿದೆ. ಕೇರಳದಲ್ಲಿ ತನ್ನ ಅಸ್ತಿತ್ವ ಸದಾಬೀತುಪಡಿಸುವ ಹುಮ್ಮಸ್ಸಿನೊಂದಿಗೆ, ಬಿಜೆಪಿ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಧಾನಿ ತಿರುವನಂತಪುರಂ ಪ್ರವಾಸ ಕೈಗೊಂಡಿದ್ದು, ಪಕ್ಷದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಕೇರಳದ ಕೆಂಪುಕೋಟೆಗೆ ಅಮಿತ್ ಶಾ ಕೇಸರಿ ಧ್ವಜದೊಂದಿಗೆ ನುಗ್ಗಿದ್ದು, ಇದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಏನು ಕಮಾಲ್ ಮಾಡಲಿದೆ ಕಾದುನೋಡಬೇಕಿದೆ.
ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನ ಹೊಸ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಆತ ಭಾರತದ ಮೇಲೆ ದಾಳಿ ಮಾಡಲು ಸಾವಿರಾರು ಆತ್ಮಹತ್ಯಾ ಬಾಂಬರ್ಗಳು ಸಿದ್ಧರಿದ್ದಾರೆ ಎಂದು ಹೇಳಿದ್ದಾನೆ. ಈ ಬೆದರಿಕೆ ಭದ್ರತಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಜೈಶ್ ಸಂಘಟನೆಯ ಸಂಪರ್ಕ ಪತ್ತೆಯಾಗಿದೆ. ಈ ಘಟನೆಗಳ ಬೆನ್ನಲ್ಲೇ ಮಸೂದ್ ಅಜರ್ನ ಈ ಬೆದರಿಕೆ ಹೊರಬಂದಿದೆ.
ಕಲಬುರಗಿ| ಕೃಷಿ ಯಂತ್ರೋಪಕರಣಗಳ ಲೋಕಾರ್ಪಣೆ, ವಿಕಲಚೇತನರಿಗೆ ಯಂತ್ರಗಳ ವಿತರಣೆ
ಕಲಬುರಗಿ: ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಇತ್ತೀಚೆಗೆ ಉನ್ನತಿಕರಿಸಿದ ಕೃಷಿ ಯಂತ್ರೋಪಕರಣಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಈ ಮುಂಚೆ ಯಂತ್ರಗಳಿಂದ ರಾಶಿ ಮಾಡಲಾಗಿದ್ದರೂ ಸಮರ್ಪಕವಾಗಿ ಸಂಸ್ಕರಣೆಯಾಗುತ್ತಿರಲಿಲ್ಲ. ಹೀಗಾಗಿ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಆದರೆ ಉನ್ನತೀಕರಿಸಿದ ಯಂತ್ರಗಳಿಂದ ಸಂಪೂರ್ಣ ಕ್ಲಿನಿಂಗ್ , ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಆಗುತ್ತದೆ ಎಂದು ತಿಳಿಸಿದರು. ಜಿಲ್ಲೆಯ ಎಫ್.ಪಿ.ಓ ಕೇಂದ್ರದ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನಗಳನ್ನು ಪ್ರಾಥಮಿಕವಾಗಿ ಕ್ಲೀನಿಂಗ್, ಗ್ರೇಡಿಂಗ್ ಹಾಗೂ ಪ್ಯಾಕಿಂಗ್ ಮಾಡಲು ಈಗಾಗಲೆ ಜಿಲ್ಲೆಯಾದ್ಯಂತ 11 ಯಂತ್ರೋಪಕರಣ ಬಾಡಿಗೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರದ ಮೂಲಕ ಈ ಎಲ್ಲಾ ಯಂತ್ರಗಳನ್ನು ರೈತರು ಬಾಡಿಗೆ ಮೂಲಕ ಪಡೆಯಬಹುದಾಗಿದೆ. ಇದಕ್ಕಾಗಿ ಸರಕಾರ 5.50 ಕೋಟಿ ರೂ. ವ್ಯಯ ಮಾಡಿದೆ. ಅಫಜಲಪುರ ತಾಲೂಕಿನ ಅಫಜಲಪುರ, ಅತನೂರ, ಕಲಬುರಗಿ ತಾಲೂಕಿನಲ್ಲಿ ಕಲಬುರಗಿ, ಸೇಡಂ ತಾಲೂಕಿನ ಸೇಡಂ ಪಟ್ಟಣ ಹಾಗೂ ಕೋಡ್ಲಾ, ಚಿತ್ತಾಪುರ ತಾಲೂಕಿನ ಚಿತ್ತಾಪುರ ಪಟ್ಟಣ, ಗುಂಡಗುರ್ತಿ, ಅಲ್ಲೂರ ಬಿ, ಡಿಗ್ಗಾಂವ, ಹೆಬ್ಬಾಳ ಹಾಗೂ ರಾವೂರ ಗ್ರಾಮದಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸ್ವಯಂ ಉದ್ಯೋಗದ ಮೂಲಕ ಆದಾಯ ಗಳಿಸಲು 2024-25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆ ಅಡಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಅನುದಾನದಡಿಯಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿ ತಾಲೂಕಿನ ಕೆರಿಭೋಸಗಾ ಗ್ರಾಮದ ವಿಠಲ್ ಭಿಮಶಾ ಪೂಜಾರಿ, ಭೀಮಳ್ಳಿ ಗ್ರಾಮದ ಸಂತೋಷ ಗಣಪತಿ ಎಂಬ ವಿಕಲಚೇತನರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕಲಬುರಗಿ ಉತ್ತರ ಶಾಸಕರಾದ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ್ ಖರ್ಗೆ, ಧರ್ಮಸಿಂಗ್ ಇರದಿದ್ದರೆ 371(ಜೆ) ಕಲಂ ಸಿಗುತ್ತಿರಲಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿಯಲ್ಲಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಹೈಟೆಕ್ ಕಟ್ಟಡ ಲೋಕಾರ್ಪಣೆ
ಕಲಬುರಗಿ: ಸಾರ್ವಜನಿಕರ ಸೇವೆ, ನಾಗರಿಕ ಸ್ನೇಹಿ ವೃತ್ತಿಪರತೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪೊಲೀಸ್ ಕಮೀಷನರೇಟ್ ಅಮೂಲಾಗ್ರ ಸುಧಾರಣೆ ತಂದಿದೆ. ಈ ಎಲ್ಲಾ ಮಾನದಂಡಗಳನ್ನು ಪರಿಗಣಿಸಿ ಅಂತಾರಾಷ್ಟ್ರೀಯ ISO ಪ್ರಶಸ್ತಿ ಲಭಿಸಿದೆ. ಇದು ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಪ್ರತಿಯೊಬ್ಬ ಸಿಬ್ಬಂದಿ ಕಾರಣರಾಗಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ರವಿವಾರ ಬೆಳಗ್ಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಈಗ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿದೆ. ಆದರೆ ಪೊಲೀಸರು ಜನಸ್ನೇಹಿ ಆದಾಗ ಮಾತ್ರ ಜನರ ಸರ್ಟಿಫಿಕೇಟ್ ಸಿಗಲಿದೆ. ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಪೊಲೀಸರಿಗೆ ಸಲಹೆ ನೀಡಿದರು. ಅಪರಾಧಗಳಲ್ಲಿ ಸಾಕಷ್ಟು ಇಳಿಮುಖವಾಗಿದೆ. ಎಸ್ಸಿಎಸ್ಟಿ ಸಂಬಂಧಿಸಿದ ಪ್ರಕರಣಗಳು ಇಳಿಮುಖವಾಗಿದೆ. ಚೈನ್ ಕಳ್ಳತನ ಕಡಿಮೆಯಾಗಿವೆ. ಪೊಲೀಸ್ ಕಮಿಷನರೇಟ್ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿರುವುದು ಅತ್ಯಂತ ಖಷಿಯ ವಿಚಾರವಾಗಿದೆ ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಕಲಬುರಗಿ ಪೊಲೀಸ್ ಕಮೀಷನರೇಟ್ ಸಾರ್ವಜನಿಕ ಸೇವೆ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಕಮೀಷನರ್ ಡಾ.ಶರಣಪ್ಪ, ಸಾರ್ವಜನಿಕ ಸೇವೆಗಳಲ್ಲಿ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದ ಹಿನ್ನೆಲೆಯಲ್ಲಿ ಐಎಸ್ಓ 2021 ಪ್ರಶಸ್ತಿಯನ್ನು ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಗೆ ನೀಡಲಾಗಿದೆ. ಸಾರ್ವಜನಿಕರ ಫೈಲ್ ಗಳು ತ್ವರಿತವಾಗಿ ವಿಲೇವಾರಿಯಾಗುತ್ತಿವೆ. ಸಿಬ್ಬಂದಿಗಳ ರಜೆ, ವೈದ್ಯಕೀಯ ಸೇವೆ, ವಿವಿಧ ವಿಭಾಗಗಳಲ್ಲಿ ಗಣನೀಯ ಬದಲಾವಣೆಯಾಗಿವೆ. ಕಮೀಷನರೇಟ್ ಅಡಿಯಲ್ಲಿನ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಗಣನೀಯ ಸುಧಾರಣೆ ಹಾಗೂ. ಸಾರ್ವಜನಿಕ ಸೇವೆ ಮುಖ್ಯವಾಗಿ ಪಾಸ್ ಪೋರ್ಸ್ ವೆರಿಫಿಕೇಷನ್ ನಲ್ಲಿ ಸುಧಾರಣೆ ತರಲಾಗಿದೆ. ಒಂದು ವಾರದ ಒಳಗಾಗಿ ವಿಲೇವಾರಿ ಮಾಡಲು ಕ್ರಮವಹಿಸಲಾಗಿದೆ ಎಂದು ವಿವರಿಸಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜರ್ ಅಲಂಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಜಿಲ್ಲಾಧಿಕಾರಿ ಫೌಝಿಯಾ ತರನ್ನಮ್, ಕಮಿಷನರ್ ಡಾ.ಶರಣಪ್ಪ ಢಗೆ, ಸಿಇಓ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಿಂಗ್ ಕೊಹ್ಲಿ ಜೊತೆ `ಮಿನಿ ಕೊಹ್ಲಿ'! ವಡೋದರಾದಲ್ಲಿ ಕಾಣಿಸಿಕೊಂಡ ಬಾಲಕ ಥೇಟ್ ವಿರಾಟ್ ಬಾಲ್ಯದ ಝೆರಾಕ್ಸ್!
Virat Kohli WIth Mini Kohli- ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪ್ರ್ಯಾಕ್ಟೀಸ್ ಸೆಶನ್ ವೇಳೆ ವಿರಾಟ್ ಕೊಹ್ಲಿಯ ಬಾಲ್ಯದ ಪ್ರತಿರೂಪದಂತಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ. ನೆರೆದಿದ್ದ ಜನರೆಲ್ಲರೂ ಈತನನ್ನು ಮಿನಿ ಕೊಹ್ಲಿ ಎಂದರೆ ಕೆಲವರಂತೂ ಅಕಾಯ್ ಏನಾದ್ರೂ ಮೈದಾನಕ್ಕೆ ಬಂದನಾ ಎಂದೇ ಪ್ರಶ್ನಿಸಿದರು. ಆ ಬಾಲಕನನ್ನು ನೋಡಿ ಸ್ವತಃ ವಿರಾಟ್ ಕೊಹ್ಲಿ ಅವರೇ ಖುಷಿಪಟ್ಟರು. ಈ ಅಪರೂಪದ ಘಟನೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮೊಬೈಲ್ ಮತ್ತು ಇಂಟರ್ನೆಟ್ ಬಳಸುವುದಿಲ್ಲ. ಅವರು ತಮ್ಮ ಕೆಲಸಗಳಿಗೆ ರಹಸ್ಯ ಸಂವಹನ ವ್ಯವಸ್ಥೆಗಳನ್ನು ಬಳಸುತ್ತಾರೆ. ದೋವಲ್ ಅವರು ತಂತ್ರಜ್ಞಾನದ ಭದ್ರತಾ ಅಪಾಯಗಳನ್ನು ಅರಿತು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು 1945 ರಲ್ಲಿ ಜನಿಸಿದರು ಮತ್ತು ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರು ಹಲವು ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇರಾನ್ ನಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ; ಕಟ್ಟೆಚ್ಚರದಲ್ಲಿ ಇಸ್ರೇಲ್: ವರದಿ
ಹೊಸದಿಲ್ಲಿ: ಇರಾನ್ನಲ್ಲಿ ನಡೆಯುತ್ತಿರುವ ಬೃಹತ್ ಸರ್ಕಾರ ವಿರೋಧಿ ಪ್ರತಿಭಟನೆಯನ್ನು ಭದ್ರತಾ ಪಡೆಗಳು ಹತ್ತಿಕ್ಕುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ ಇರುವುದರಿಂದ ಇಸ್ರೇಲ್ ನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಇಸ್ರೇಲ್ ನ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು theprint.in ವರದಿ ಮಾಡಿದೆ. ಪ್ರತಿಭಟನಾಕಾರರ ವಿರುದ್ಧ ಭದ್ರತಾ ಪಡೆಗಳನ್ನು ಬಳಸುತ್ತಿರುವುದರ ವಿರುದ್ಧ ಹಾಗೂ ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿನ ದಿನಗಳಲ್ಲಿ ಬೆದರಿಕೆ ಒಡ್ಡುತ್ತಿದ್ದಾರೆ. ಇರಾನ್ ಜನತೆಗೆ ನೆರವು ನೀಡಲು ಅಮೆರಿಕ ಸಿದ್ಧವಿದೆ ಎಂದೂ ಅವರು ಭರವಸೆ ನೀಡಿದ್ದಾರೆ. ಇಸ್ರೇಲ್ ಕಟ್ಟೆಚ್ಚರ ವಹಿಸುವುದರ ವಿಸ್ತೃತ ವಿವರವನ್ನು ವಾರಾಂತ್ಯದಲ್ಲಿ ನಡೆದ ಇಸ್ರೇಲ್ ಭದ್ರತಾ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದವರು ಬಹಿರಂಗಪಡಿಸಿಲ್ಲ ಎಂದು ಈ ಮೂಲಗಳು ಹೇಳಿವೆ ಎಂದು ವರದಿಯಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಇಸ್ರೇಲ್ ಇರಾನ್ನೊಂದಿಗೆ 12 ದಿನಗಳ ಯುದ್ಧ ನಡೆಸಿತ್ತು. ಈ ವೇಳೆ ಅಮೆರಿಕವೂ ಇಸ್ರೇಲ್ ನೊಂದಿಗೆ ವಾಯುದಾಳಿಯಲ್ಲಿ ಪಾಲ್ಗೊಂಡಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಇಸ್ರೇಲ್ ಮೂಲವೊಂದರ ಪ್ರಕಾರ, ಶನಿವಾರ ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಅವರಿಬ್ಬರೂ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ಅಧಿಕಾರಿಯೊಬ್ಬರು ದೃಢಪಡಿಸಿದ್ದರೂ, ಯಾವ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಕಾಲಚಕ್ರ ಒಂದು ಸುತ್ತು ಸುತ್ತುತ್ತದೆ ಅಂತಾರಲ್ಲ, ಅದೆಷ್ಟು ನಿಜ ನೋಡಿ. 2025ರ ಜೂನ್ನಲ್ಲಿ ಬರೋಬ್ಬರಿ 12 ದಿನಗಳ ಕಾಲ ಬಡಿದಾಡಿದ್ದ ಇರಾನ್, ಇಸ್ರೇಲ್ ಮತ್ತು ಅಮೆರಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿವೆ. ಈ ಬಾರಿ ಮೂರೂ ರಾಷ್ಟ್ರಗಳು ಬಡಿದಾಡುತ್ತಿಲ್ಲವಾದರೂ, ಇರಾನ್ನಲ್ಲಿ ಭುಗಿಲೆದ್ದಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು, ಮೂರೂ ರಾಷ್ಟ್ರಗಳನ್ನು ಮತ್ತೆ ಒಂದೇ ವೇದಿಕೆಗೆ ಬರುವಂತೆ ಮಾಡಿದೆ. ಇರಾನ್ನಲ್ಲಿ ಅಮೆರಿಕದ ಹಸ್ತಕ್ಷೇಪ ಸುದ್ದಿ ಕೇಳಿ ಇಸ್ರೇಲ್ ಕೂಡ ಕ್ರಿಯಾಶೀಲವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಸೋಮನಾಥ ದೇಗುಲದಲ್ಲಿ ಶೌರ್ಯ ಯಾತ್ರೆ ನಡೆಸಿ, ದೇಗುಲದ ಸಂಘರ್ಷಮಯ ಇತಿಹಾಸವನ್ನು ನೆನಪಿಸಿಕೊಂಡರು. ಭಾರತದ ನಾಗರಿಕತೆಯ ಶಕ್ತಿ ಹೇಗೆ ಉಳಿದುಕೊಂಡಿದೆ ಎಂಬುದರ ಕುರಿತು ಸಂದೇಶ ನೀಡಿದರು. ಎಷ್ಟೇ ಪ್ರಯತ್ನಿಸಿದರೂ ಅಳಿಯದೇ, ಸೋಮನಾಥವು ಭಾರತದ ಧೈರ್ಯ, ಸ್ಥಿತಿಸ್ಥಾಪಕತೆ ಮತ್ತು ಆಧ್ಯಾತ್ಮಿಕ ಶಕ್ತಿಯ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು. ಈ ಯಾತ್ರೆಯು ಸೋಮನಾಥ ಸ್ವಾಭಿಮಾನ ಪರ್ವದ ಅಂಗವಾಗಿತ್ತು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ಗಾಗಿ ಅಹಿಂದ ಸಮುದಾಯದ ನಾಯಕರು ಒತ್ತಡ ಹೇರುತ್ತಿದ್ದಾರೆ. ಮುಸ್ಲಿಂ, ದಲಿತ, ಹಿಂದುಳಿದ ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯಗಳಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ. ಶಾಮನೂರು ಕುಟುಂಬವು ಹೈಕಮಾಂಡ್ಗೆ ಆಕಾಂಕ್ಷಿಗಳ ಹೆಸರನ್ನು ಸೂಚಿಸಿದೆ. ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರೆ ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. 45 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಾಯಕರು ಅವಕಾಶ ಕೇಳಿದ್ದಾರೆ.
343 ಕಿ.ಮೀನಲ್ಲಿ ಆನಿ ಪಾಲೆಷ್ಟು ಆಡಿನ ಪಾಲೆಷ್ಟು: ರಾಜಾರಾಂ ತಲ್ಲೂರು ಬರಹ
343 ಕಿಮೀ ಸಮುದ್ರ ತೀರ ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ, ಅದರಿಂದ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಹಾಗೂ ಅಲ್ಲಿನ ಪರಿಸರ ಹಾನಿಯ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಈಚೆಗೆ ನಡೆದ ಸಮಾವೇಶದಲ್ಲಿ ಕರ್ನಾಟಕ ಸರ್ಕಾರದ ಎಲ್ಲ ಹಿರಿತಲೆಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಪಾಲ್ಗೊಂಡಿದ್ದರು. ಕರಾವಳಿಗೆ ಬೂದಿಮಳೆ,
ಸೋಮನಾಥ ಸ್ವಾಭಿಮಾನ ಪರ್ವ: ಆಕ್ರಮಣಕಾರರು ಇತಿಹಾಸದ ಪುಟ ಸೇರಿದರು, ಸೋಮನಾಥ ಇಂದಿಗೂ ಅಚಲ; ಪ್ರಧಾನಿ ಮೋದಿ ಬಣ್ಣನೆ
ಸೋಮನಾಥದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡಿದರು. ದೇವಾಲಯದ ಧ್ವಜವು ಭಾರತದ ಶೌರ್ಯದ ಸಂಕೇತ ಎಂದು ಬಣ್ಣಿಸಿದರು. ಘಜ್ನಿ ಮತ್ತು ಔರಂಗಜೇಬರ ದಾಳಿಗಳು ನಮ್ಮ ನಂಬಿಕೆಗಳನ್ನು ಅಲುಗಾಡಿಸುವ ಪ್ರಯತ್ನಗಳಾಗಿದ್ದವು ಎಂದು ವಿವರಿಸಿದರು. ಹಿಂದಿನ ಆಡಳಿತಗಳು ಇತಿಹಾಸವನ್ನು ಮರೆಮಾಚಿದ್ದವು ಎಂದು ಆರೋಪಿಸಿದರು. ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡು, ಹಮೀರ್ಜಿ ಗೋಹಿಲ್ ಮತ್ತು ಸರ್ದಾರ್ ಪಟೇಲ್ ಅವರಿಗೆ ನಮನ ಸಲ್ಲಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
WPL ನಲ್ಲಿ ಜೆಮಿಮಾ ರೋಡ್ರಿಗಸ್ ಹೊಸ ಇತಿಹಾಸ! ಸ್ಮೃತಿ ಮಂದಾನ ಹೆಸರಲ್ಲಿದ್ದ ಅಪರೂಪದ ದಾಖಲೆಗೆ ಈಗ ಈಕೆಯೇ ಒಡತಿ!
Smriti Mandhana Vs Jemimah Rodrigues- ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿತು. ಆದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸಿದ ಜೆಮಿಮಾ ರೋಡ್ರಿಗಸ್ ಅವರು ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ನಾಯಕಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಈ ಗೌರವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಮೃತಿ ಮಂದಾನ ಅವರು ಡಬ್ಲ್ಯೂಪಿಎಲ್ ನ ಅತಿ ಕಿರಿಯ ನಾಯಕಿಯಾಗಿ ದಾಖಲೆ ಬರೆದಿದ್ದರು.
IMD Weather Forecast: ಮೈಕೊರೆಯುವ ಚಳಿ ನಡುವೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ ದಟ್ಟ ಮಂಜಿನ ಜೊತೆಗೆ ಶೀತಗಾಳಿ ಬೀಸುತ್ತಿದೆ. ಅದರಲ್ಲೂ ಉತ್ತರ ಭಾಗದಲ್ಲಿ ಭಾರೀ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆಯೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ದಕ್ಷಿಣದ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು
Davanagere | ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ
ತಂದೆಯ ಸಾವಿನ ಸುದ್ದಿ ತಿಳಿದು ಮಗ-ಮಗಳು ಆತ್ಮಹತ್ಯೆಗೆ ಯತ್ನ; ಆಸ್ಪತ್ರೆಗೆ ದಾಖಲು
ದಾವಣಗೆರೆಯಲ್ಲಿ ಕಾರಿನ ಒಳಗೆ ಕುಳಿತು ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ! ಪೊಲೀಸರಿಂದ ತನಿಖೆ ಆರಂಭ
ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರವಾಗಿ ಕುಟುಂಬದಲ್ಲಿ ಜಗಳ ನಡೆದಿದೆ. ಇದರಿಂದ ಮನನೊಂದ ಚಂದ್ರಶೇಖರ ಸಂಕೋಳ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪುತ್ರ ವಿಷ ಸೇವಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪುತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kannada: ಕನ್ನಡ - ತಮಿಳು ಭಾಷಿಕರ ಹಕ್ಕು ರಕ್ಷಿಸಲಿದ್ದೇವೆ: ಸಿ.ಎಂ ಪಿಣರಾಯಿ ವಿಜಯನ್
ಮಲಯಾಳಂ ಭಾಷೆ ಮಸೂದೆ ವಿವಾದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಕೇರಳ ಸರ್ಕಾರವು ಮಲಯಾಳಂ ಭಾಷೆ ಮಸೂದೆ ಮಂಡನೆ ಮಾಡುವುದಕ್ಕೆ ಮುಂದಾಗಿದೆ. ಈ ಹೊಸ ಮಸೂದೆಯ ಪ್ರಕಾರ ಕೇರಳದಲ್ಲಿ ಸರ್ಕಾರಿ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಎಲ್ಲರೂ ಕಡ್ಡಾಯವಾಗಿ ಕಲಿಯಬೇಕು ಎಂದು ಹೇಳಲಾಗಿದೆ.
ಕನಕಗಿರಿ ತಾಲೂಕಾಗಿ ವರ್ಷಗಳೇ ಕಳೆದರೂ ಇನ್ನೂ ಸಿಕ್ಕಿಲ್ಲ ಕ್ರೀಡಾಂಗಣ ಭಾಗ್ಯ
► ಆಟಕ್ಕೆ ಕಾಲೇಜು, ಹೊಲಗಳೇ ಗತಿ! ► ವಾಕಿಂಗ್ ಮಾಡಲು ಗಂಗಾವತಿ-ಲಿಂಗಸಗೂರು ರಸ್ತೆ!
ಗದಗದ ಲಕ್ಕುಂಡಿಯಲ್ಲಿ ಸಿಕ್ಕ 470 ಗ್ರಾಂ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಕೊಟ್ಟು ಬೀದಿಗೆ ಬಿದ್ದ ಕುಟುಂಬ! ಕಾರಣವೇನು?
ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವಾಗ ಚಿನ್ನದ ನಿಧಿ ಸಿಕ್ಕಿದ್ದು, ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಒಪ್ಪಿಸಿದರೂ, ನಿಧಿ ಸಿಕ್ಕ ಸ್ಥಳವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದ್ದರಿಂದ ಬಡ ಕುಟುಂಬ ಬೀದಿಗೆ ಬಿದ್ದಿದೆ. ತಾಯಿ ಮತ್ತು ಚಿಕ್ಕ ಮಗನಿದ್ದ ಈ ಕುಟುಂಬಕ್ಕೆ ಆಶ್ರಯವಿಲ್ಲದಂತಾಗಿದ್ದು, ಸರ್ಕಾರದಿಂದ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.
ತತ್ವಪದಗಳಲ್ಲಿವೆ ಬಹುತ್ವದ ಪರಿಕಲ್ಪನೆ
ತತ್ವಪದಗಳಲ್ಲಿ ಕಾಣುವ ಬಹುತ್ವವನ್ನು ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಚರಿತ್ರೆಯಲ್ಲಿ 17-18ನೇ ಶತಮಾನದ ಕಾಲಘಟ್ಟಕ್ಕೆ ‘ಕತ್ತಲೆ ಯುಗ’ ಎಂದು ಚರಿತ್ರೆಕಾರರು ಗುರುತಿಸಿದ್ದಾರೆ. ಇತ್ತೀಚಿನ ವಿದ್ವಾಂಸರು ವಿಷಾದ ವ್ಯಕ್ತಪಡಿಸಿ ಆ ಕಾಲಘಟ್ಟವನ್ನು ಹಿಂದಿರುಗಿ ವಿಶ್ಲೇಷಿಸುವ, ವಿಮರ್ಶಿಸುವ ಮತ್ತು ಸಂಶೋಧಿಸುವ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕಿ.ರಂ.ನಾಗರಾಜ್, ಒ.ಎಲ್. ನಾಗಭೂಷಣಸ್ವಾಮಿ, ನಟರಾಜ ಬೂದಾಳು, ರಹಮತ್ ತರೀಕೆರೆ, ಎಚ್.ಎಸ್.ಶಿವಪ್ರಕಾಶ್, ಮೀನಾಕ್ಷಿ ಬಾಳಿ, ಜಿ.ವಿ.ಆನಂದ ಮೂರ್ತಿ ಪ್ರಮುಖವಾಗಿದ್ದಾರೆ. ಬಹುತ್ವ ಎಂದರೇನು?: ಬಹುತ್ವವೆಂದರೆ ಕೂಡಿಬಾಳುವುದು. ಸಹಬಾಳ್ವೆಯಿಂದ ಬದುಕುವುದು. ನಮ್ಮ ಸಂವಿಧಾನದ ಪೀಠಿಕೆಯ ಆಶಯವೂ ಇದನ್ನೇ ಒತ್ತಿ ಹೇಳುತ್ತದೆ. ಅದರ ಪ್ರಕಾರ ಎಲ್ಲ್ಲ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ಕಲ್ಪಿಸುವ ಜತೆಗೆ ಎಲ್ಲರಲ್ಲೂ ಭ್ರಾತ್ರತ್ವ ಭಾವನೆ ಮೂಡಿಸುವುದೇ ಬಹುತ್ವ. ಇಂಥ ಪರಿಕಲ್ಪನೆಯುಳ್ಳಂಥ ‘ಬಹುತ್ವ’ ಎನ್ನುವ ಪದ 17-18ನೇ ಶತಮಾನದ ತತ್ವಪದಕಾರರು ಆಗಲೇ ಬಳಸಿದ್ದಾರೆ. ಸಂವಿಧಾನದ ಆಶಯಗಳು ತತ್ವಪದಗಳಲ್ಲಿ ಇದ್ದಾವೆಯೇಎಂದು ಸಹ ಕೇಳಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿತತ್ವಪದಕಾರರ ಕುರಿತು ಮೊದಲಿಗೆ ಚರ್ಚಿಸಿ ದವರು ಡಿ.ಆರ್.ನಾಗರಾಜ್ ಮತ್ತು ಕಿ.ರಂ.ನಾಗರಾಜ್. ಅನಂತರ ಎಚ್.ಎಸ್.ಶಿವಪ್ರಕಾಶ್ ಅವರ ಬಹುತ್ವ’ದ ಆಶಯ ಹೊತ್ತ ‘ಎಲ್ಲಾ ಜಾತಿಯ ಮರಗಳ ಕಾಡು: ತತ್ವಪದಕಾರರು’ ಲೇಖನ ಬರೆದು ಚರ್ಚಿಸಿದರು. ಈ ಲೇಖನವನ್ನು ಶಿವಪ್ರಕಾಶ್ ಮುಖ್ಯವಾಗಿ ಆರು ಭಾಗಗಳಾಗಿ ವಿಂಗಡಿಸಿದ್ದಾರೆ. 1.ಮಠದೇಗುಲಗಳಾಚೆಗಿನ ಧರ್ಮ, 2.ತತ್ವಪದಗಳು: ಒಂದು ಸಂಸ್ಕೃತಿ, 3.ತತ್ವಪದಗಳ ಭಿತ್ತಿ, 4.ವಾಗ್ರೂಪದ ಕಾರಣಿಕಗಳು, 5.ಸಾಂಸ್ಕೃತಿಕ ನಾನಾತ್ವಗಳಲ್ಲಿ ತತ್ವಪದಗಳು, 6.ಸಾಹಿತ್ಯ ಚರಿತ್ರೆ ಮೀಮಾಂಸೆ ಮತ್ತು ತತ್ವಪದಗಳು. ಮುಖ್ಯವಾಗಿ ತತ್ವಪದಗಳು ಸಂವಿಧಾನದಲ್ಲಿ ಬಳಸಲಾದ ಪರಿಭಾಷೆಗಳ ಮೂಲಕ ಬಹುತ್ವ ಅಭಿವ್ಯಕ್ತಿಸುವುದಿಲ್ಲವಾದರೂ ಕೂಡು ಸಂಸ್ಕತಿ ಅಥವಾ ಸಂಕರ ಸಂಸ್ಕೃತಿ ಎನ್ನುತ್ತವೆ. ಯಾವುದೇ ಕಾಲದ ಸಾಹಿತ್ಯವಾದರೂ ಹಿಂದಿನ ಪರಂಪರೆ ಪರಾಮರ್ಶಿಸಿ ವರ್ತಮಾನಕ್ಕೆ ತಕ್ಕಂತೆ ಬದಲಾಗಿದೆ. ಉದಾಹರಣೆಗೆ ವೇದವ್ಯಾಸರು ಬರೆದ ‘ಮಹಾಭಾರತ’ವನ್ನು ಪಂಪ ಮತ್ತು ರನ್ನರಂಥವರು ತಮ್ಮ ಕಾಲಕ್ಕೆ ಬೇಕಾದಂತೆ ಮುರಿದು ಕಟ್ಟಿದರು. ಇಂತಹ ಪರಂಪರೆಯನ್ನೇ ಮಹರ್ಷಿ ವಾಲ್ಮೀಕಿ ಬರೆದ ‘ರಾಮಾಯಣ’ವನ್ನು ನಾಗಚಂದ್ರ, ಲಕ್ಷ್ಮೀಶ, ಕುವೆಂಪು ತರಹದವರು ಮುಂದುವರಿಸಿದರು. ಅದೇ ರೀತಿ ತತ್ವಪದಕಾರರೂ ಹಿಂದಿನ ಪರಂಪರೆ ನಿರಾಕರಿಸದೆ, ನಿವಾರಿಸಿಕೊಂಡಿದ್ದಾರೆ. ಹಾಗಾಗಿಯೇ ಎಚ್.ಎಸ್.ಶಿವಪ್ರಕಾಶ್ ಅವರು ‘‘ಹನ್ನೆರಡನೇ ಶತಮಾನದ ಶರಣರು ಶೈವಧರ್ಮದ ಕೆಲವು ಪರಿಕರ ಉಳಿಸಿಕೊಂಡು ಇನ್ನೂ ಕೆಲವನ್ನು ನವೀಕರಿಸಿಕೊಂಡು ಉಳಿದೆಲ್ಲ ಸಂಸ್ಕೃತಿಗಳ ನಂಬಿಕೆ ಆಚರಣೆ ನಿವಾರಿಸಿ ಯಾಗ, ದಾನ, ಬಲಿ, ದೇವಾಲಯ, ಗ್ರಾಮದೇವತೆ ಮುಂತಾದ ಸಂಸ್ಕೃತಿಗಳ ಬಹುದೇವೋಪಾಸನೆ ಪ್ರವೃತ್ತಿಗಳ ಮೇಲೆ ವಚನಕಾರರು ಉರಿವ ನಾಲಿಗೆ ಹರಿಬಿಟ್ಟಿದ್ದಾರೆ. ಅನಂತರದ ದಾಸ ಪಂಥದವರು ಹರಿಭಕ್ತರಾದರೂ ದೇವಾಲಯ, ದಾನ, ಧರ್ಮ, ಯಜ್ಞ-ಯಾಗ ಒಪ್ಪಿಕೊಂಡರು. ಇವರ ನಿರಾಕರಣೆ ಇದ್ದದ್ದು ‘ಬಣಗು ದೈವಗಳ’ ಬಗ್ಗೆ ದಾಸ ಪಂಥ ಬಹುಮಟ್ಟಿಗೆ ಕೆಳಸಂಸ್ಕೃತಿ ನಿರಾಕರಿಸಿತು. ಶರಣ ಚಳವಳಿ ಮತ್ತು ದಾಸಪಂಥಗಳೆರಡು ಮೂಲಭೂತವಾಗಿ ಏಕದೇವೋಪಾಸನೆಯ ಮಾದರಿಗಳು. ಆದರೆ ತತ್ವಪದಕಾರರು ಮೇಲು, ಕೆಳ ಸಂಸ್ಕೃತಿಗಳ ಸಂಕೇತಗಳ ವಿಚಾರದಲ್ಲಿ ಸ್ವೀಕಾರ ಭಾವ ತಾಳಿದರು. ಬಾಹ್ಯ ಆಚರಣೆಗಳ ವೈವಿಧ್ಯದಲ್ಲಿ ಅಂತರಂಗದ ಅನುಭವದ ಏಕತೆ ಹುಡುಕಿದರು. ಶಿಶುನಾಳ ಶರೀಫರು ಯಲ್ಲಮ್ಮನ ಜಾತ್ರೆ, ಪಂಚಮಿ ಹಬ್ಬದ ಬಗ್ಗೆ ಮನದುಂಬಿ ಹಾಡಿದ ಹಾಗೆ ಬಸವಾದಿ ಶರಣರು ಹಾಡುವುದನ್ನು ಊಹಿಸುವುದೂ ಕಷ್ಟ ಎನ್ನುವ ಮಾತು ತತ್ವಪದಗಳಲ್ಲಿ ‘ಬಹುತ್ವ’ ವಿಷಯದ ಪ್ರಾರಂಭದ ಹಾದಿಯಾಗುತ್ತದೆ. ಸಾಕುಬೇಕು ಏಕಮಾಡಿದ ತತ್ವಪದಕಾರರು: ತತ್ವಪದಕಾರರು ಏನನ್ನೂ ನಿರಾಕರಿಸದೆ ಎಲ್ಲವನ್ನೂ ಒಳಗೊಂಡು ಸ್ವಲ್ಪ ಬದಲಾವಣೆಯೊಂದಿಗೆ ಮುನ್ನಡೆದು ಹೊಸ ಅರ್ಥ ಸಾಧ್ಯತೆಗಳಿಗೆ ಮುನ್ನುಡಿ ಬರೆದರು. ಸಾಕು ಮತ್ತು ಬೇಕೆಂಬ ಸ್ಥಿತಿಗಳನ್ನು ಒಂದುಗೂಡಿಸಿಕೊಂಡು ಸಮಾಜಕ್ಕೆ ಬೇಕಾದ ವಿಚಾರಗಳನ್ನು ನೀಡಿದರು. ಹಾಗಾಗಿಯೇ ಮಡಿವಾಳಪ್ಪನ ಶಿಷ್ಯನಾದ ಚೆನ್ನೂರು ಜಲಾಲ್ ಸಾಬ ತನ್ನ ತತ್ವಪದದಲ್ಲಿ, ‘‘ಹಮ್ ಬೀ ಕಹತೆ ತುಮ್ ಬೀ ಕಹತೆ ಮಾಡಬ್ಯಾಡರಿ ಮ್ಯಾಲಿನ ಶೀಲ ಗುರು ಮಡಿವಾಳಪ್ಪ ಹೋಕರ್ ಬೋಲೆ ತೊಳಿಯಬೇಕರಿ ಒಳಗಿನ ಮೈಲಾ’’ ಎಂದು ಬರೆಯುತ್ತಾನೆ. ಮನಸ್ಸಿನ ಮೈಲಿಗೆ ತೊಳೆದುಕೊಳ್ಳುವುದೆಂದರೆ, ಎಲ್ಲ ಸಮುದಾಯ, ಸಂಸ್ಕೃತಿ ಒಳಗೊಳ್ಳುವುದೇ ಆಗಿದೆ. ಇದು ಭಾಷೆಯ ದೃಷ್ಟಿಯಿಂದಲೂ ಸತ್ಯವಾದ ಮಾತು. ವಿದ್ವಾಂಸರು ಇಪ್ಪತ್ತೆರಡು ಭಾರತೀಯ ಪಂಥಗಳನ್ನು ಗುರುತಿಸಿದ್ದಾರೆ. ಓ.ಎಲ್.ಎನ್ ಅವರು ‘ನವೋದಯ ಪೂರ್ವದ ಸಾಹಿತ್ಯ’ ಲೇಖನದಲ್ಲಿ ಇದನ್ನು ಗುರುತಿಸುತ್ತಾರೆ. ಆಯಾ ಪ್ರದೇಶದ ಸಾಧಕರು ತಮ್ಮ ನೆಲದಲ್ಲಿದ್ದ ಪಂಥಗಳ ಜೊತೆಗೆ ವಿಚಿತ್ರವಾದಂಥ ಒಡನಾಟ ಹೊಂದಿದ್ದಾರೆ. ಉದಾಹರಣೆಗೆ ಮಹಾರಾಷ್ಟ್ರದ ವಾರಕರಿ ಪಂಥ. ಬಂಗಾಳದ ಚೈತನ್ಯ ಪಂಥ ಇತ್ಯಾದಿ. ತತ್ವಪದಕಾರರು ನಾಥ, ಶಾಕ್ತ, ಅಮನಸ್ಕ, ಶರಣ, ಸೂಫಿ ಮುಂತಾದ ಪಂಥಗಳ ಮೂಲಕ ಬಹುತ್ವದ ಪರಿಕಲ್ಪನೆ ಬಿತ್ತಿದ್ದಾರೆ ಎಂದೇ ಹೇಳಬೇಕಾಗುತ್ತದೆ. ನಾಥಪಂಥದ ಆಚರಣೆ ಕುರಿತ ರಹಮತ್ ತರೀಕೆರೆ ಅವರ ‘ಕರ್ನಾಟಕದ ನಾಥಪಂಥ’ ಕೃತಿಯಲ್ಲಿ ‘‘ನಾಥಪಂಥದಲ್ಲಿ ಕುರಿಯ ಉಣ್ಣೆಗೆ ಬಹಳ ಮಹತ್ವವಿದೆ. ನಾಥರು ದೀಕ್ಷೆಯಲ್ಲಿ ಹಾಕಿಕೊಳ್ಳುವ ಶೈಲಿ ‘ಕುರುಬದಾರ’ದಿಂದಲೇ ಮಾಡಬೇಕು. ಶಿವನು ಬ್ರಹ್ಮಹತ್ಯೆಯ ದೋಷದಿಂದ ಪಾರಾಗಲು ಕೂದಲು ಜನಿವಾರ ಹಾಗೂ ಕಪಾಲ ಮಾಲೆ ಧರಿಸಿ ತೀರ್ಥಯಾತ್ರೆ ಮಾಡಬೇಕಾಯಿತು ಎಂದು ಹೇಳಲಾಗುತ್ತದೆ. ಈಗಲೂ ಕಾಶಿಯಲ್ಲಿ ಕಪಾಲ ಮೋಚನ ಮೈದೊಳೆದು ಕಪ್ಪನೆಯ ಕಾಶಿದಾರ ತರುವ ಸಂಪ್ರದಾಯವಿದೆ. ಇದು ನಾಥರ ಶೈಲಿಯ ಅವಶೇಷ ರೂಪ’’ . ಎಂದು ಬರೆದುಕೊಳ್ಳುತ್ತಾರೆ. ಈ ಪರಂಪರೆಯಿಂದಲೇ ಬಂದಂಥ ಅಲ್ಲಮಪ್ರಭು, ಸಿದ್ಧರಾಮ, ರೇವಣಸಿದ್ಧರಂಥವರಿಗೆ ನಾಥಪರಂಪರೆಯ ಪ್ರಭಾವವಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ತರೀಕೆರೆ ಮಾತಿಗೆ ಸಾಮೀಪ್ಯವಿರುವ ದ್ಯಾಗಾಯಿ ಗುಂಡಪ್ಪನವರ ತತ್ವಪದ ಹೀಗಿದೆ. ‘‘ಇಲ್ಲೇ ಇಟ್ಟಿದ ಕಳೆದು ಹೋಯಿತು ಧಾರಾ ಎಲ್ಲಿ ಹೋಯಿತು ಧಾರಾ ಸೋಲಾಪುರದ ಮೂಲದ ಧಾರಾ ಅಲ್ಲಮ ಪ್ರಭುವಿನ ಬಲ್ಲಿದ್ದ ಧಾರಾ’’ ದ್ಯಾಗಾಯಿ ಗುಂಡಪ್ಪನ ಊರು ಕಲಬುರಗಿ ಜಿಲ್ಲೆಯ ಈಗಿನ ದೇಗಾಂವ್ ಆಗಿರುವುದರಿಂದ ಮತ್ತು ಈ ತತ್ವಪದದಲ್ಲಿರುವ ನುಡಿಗಟ್ಟು ತರೀಕೆರೆ ಮಾತಿಗೆ ಸಾಮೀಪ್ಯವಿರುವುದರಿಂದ ಹಾಗೂ ಅಲ್ಲಮಪ್ರಭು, ಸಿದ್ಧರಾಮನಂಥ ಶರಣರು ದೇಗಾಂವ್ ಊರಿಗೆ ಹಾಯ್ದು ಕಲ್ಯಾಣಕ್ಕೆ ಹೋಗಿರಬೇಕು. ಜೊತೆಗೆ ಅಲ್ಲಮನ ಗುರು ‘ಅನಿಮಿಶಿಯಾ’ (ಕಣ್ಣ ರೆಪ್ಪೆಯಿಲ್ಲದ್ದ-ಮೀನು) ಆಗಿರುವುದರಿಂದ. ಗುಂಡಪ್ಪನಿಗೆ ಇವೆಲ್ಲವೂ ಗೊತ್ತಿರುವಂತೆ ತೋರುತ್ತದೆ. ಯುಗಾದಿ ಹಬ್ಬದ ಹದಿನೈದು ದಿನ ಮುಂಚೆಯೇ ಜನರು ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಾರೆ. ಬರುವಾಗ ಕಪ್ಪು ದಾರ, ವಿಭೂತಿ, ರುದ್ರಾಕ್ಷಿ ಮುಂತಾದವುಗಳನ್ನು ತರುತ್ತಾರೆ. ಬೋರಮ್ಮನನ್ನು ಕಳುಹಿಸುವ ಕಾರ್ಯಕ್ರಮದಲ್ಲಿ ಈ ಎಲ್ಲ ವಸ್ತುಗಳನ್ನಿಟ್ಟು ಪೂಜಿಸಿ ನಂತರ ಕೈಯಲ್ಲಿ, ಕೊರಳಲ್ಲಿ ಕಟ್ಟಿಕೊಳ್ಳುವ ಪದ್ಧತಿಯಿದೆ. ಇದು ನಾಥಪಂಥದ ದೀಕ್ಷೆಯಾಗಿ ತೋರುತ್ತದೆ. ಹೀಗೆ ನಾಥಪಂಥದ ಸಂಕೇತಗಳು ಹೊಳಲಗುಂದಿ ಸಾಯಿಬಣ್ಣ ತಾತ, ಕಡಕೋಳ ಮಡಿವಾಳಪ್ಪ, ರಾಚಪ್ಪಯ್ಯ, ಮೂಡಬೂಳ ರಂಗಲಿಂಗೇಶ್ವ, ಸಿದ್ಧಪ್ರಭು ಮುಂತಾದವರ ತತ್ವಪದಗಳಲ್ಲಿ ಸಿಗುತ್ತವೆ. ನಾಥಪಂಥದಷ್ಟೇ, ಶಾಕ್ತಪಂಥವನ್ನೂ ತತ್ವಪದಕಾರರು ತತ್ವಪದಗಳ ಮೂಲಕ ಒಳಗೊಳ್ಳುತ್ತಾರೆ. ಈ ಧಾರೆಯ ಜೊತೆಗೆ ತತ್ವಪದಕಾರರು ವಿಶಿಷ್ಟವಾದ ಸಂಬಂಧವನ್ನು ಹೊಂದಿದ್ದಾರೆ. ಚಿದಾನಂದಾವಧೂತರಂಥವರು ‘ಶ್ರೀದೇವಿ ಮಹಾತ್ಮೆ’ ಎನ್ನುವಂಥ ಕೃತಿ ಬರೆದಿದ್ದಾರೆ. ಜೊತೆಗೆ ‘ಬಂಗಳಾಂಬ’ ಎನ್ನುವ ಹೆಣ್ಣು ದೈವವನ್ನು ತತ್ವಪದಗಳಲ್ಲಿ ಯಥೇಚ್ಛವಾಗಿ ತರುತ್ತಾರೆ. ಶಿಶುನಾಳ ಶರೀಫನು ‘ಯಲ್ಲಮ್ಮ’ನನ್ನು, ನವಲಗುಂದ ನಾಗಲಿಂಗ ಸ್ವಾಮಿಗಳು ‘ಸಮಗಾರ ಭೀಮವ್ವ’ನನ್ನು, ಕಡಕೋಳದ ಮಡಿವಾಳಪ್ಪನು ‘ಶಕ್ತಿಯ ರೇಖೆ’ಯ ಮೂಲಕ ಪಾರ್ವತಿಯನ್ನು, ಕೂಡಲೂರು ಬಸವಲಿಂಗ ಶರಣರು ‘ಮಾತಂಗಿ’ಯನ್ನು ತಮ್ಮ ತತ್ವಪದಗಳಲ್ಲಿ ಪ್ರೇಮ, ಭಕ್ತಿ, ದೈವಗಳಾಗಿ ಕಾಣುತ್ತಾರೆ. ಚಿದಾನಂದಾವಧೂತರು ಶಾಕ್ತರಾಗಿರುವುದರಿಂದ ಗುರುಮುಟ್ಟಿ ಗುರುವಿನಂತಾಗಲು ಚಡಪಡಿಸುತ್ತಾರೆ. ಇಂಥ ಚಡಪಡಿಕೆಯ ತೀವ್ರತೆ ಇರುವ ತತ್ವಪದವೊಂದು ಹೀಗಿದೆ. ‘‘ಓಡಿ ಬಂದು ಅಪ್ಪಬೇಕು ಅಂಬನ ಕುದುರೆ ಮಾಡಿ ಹಡಗಲನೇರಬೇಕು ಅಂಬನ ಓಡಬೇಕು ಒಡನೆ ಮುಟ್ಟಿ ಅಂಬನ’ ಸಾಕ್ಷಿ ಚಿದಾನಂದ ಬಂಗಳಾಂಬನ’’ ಹೀಗೆ ಪ್ರೇಮಕ್ಕೆ ಸಂಬಂಧಿಸಿದ ಲೌಕಿಕ ಪರಿಭಾಷೆಗಳನ್ನು ಬಳಸಿಕೊಂಡು ಅಲೌಕಿಕವಾದ ಸಂಗತಿಗಳನ್ನು ಹೇಳುತ್ತಾರೆ. ಇಂಥ ತತ್ವಪದಗಳು ಚಿದಾನಂದಾವಧೂತರ ರಚನೆಯಲ್ಲಿ ಸಾಕಷ್ಟು ಸಿಗುತ್ತವೆ. ಉದಾಹರಣೆಗೆ ‘ದೂತ ಸಂವಾ ದೇವಿಯೊಡನಾದುದು, ನಾದದಿ ಬೆರೆತಿರು ಮುಕ್ತಾ ವಿರಕ್ತಾ, ನಾದದಿ ಮಲಗ್ಯಾನೆ ಯೋಗಿ ನಿತ್ಯಾನಂದ ಭೋಗಿ, ನಾದನಾದ ಸುನಾದವ ತಿಳಿದವ, ಇತ್ಯಾದಿ. ಇವರ ಇನ್ನೊಂದು ತತ್ವಪದದಲ್ಲಿ ಅದ್ವೈತದ ತತ್ವ ಹೀಗೆ ಹೇಳುತ್ತಾರೆ. ‘‘ನೀನು ನಾನಾಗಿಹೆ ದೇವರೆ ನೀನು ನಾನೇ ಎಂದು ಪೂಜಿಸುವೆ ದೇವರೇ’’ ಶಿಶುನಾಳ ಶರೀಫನು ತನ್ನದೊಂದು ತತ್ವಪದದಲ್ಲಿ ಯಲ್ಲಮ್ಮನ ಕುರಿತು ಹೀಗೆ ಬರೆಯುತ್ತಾನೆ. ‘‘ಎಕ್ಕಲಿಗೆ ಜೋಗು ಒಕ್ಕಲಿರಿಸಿ ಪೋಗುವೆ ಚಿಕ್ಕ ತೊಡರು ಎಲ್ಲ ಕಳೆದು ಸಾಧರ ಪಾದಕೆ ಬಾಗುವೆ ಕಡಬು ಗುಗ್ಗರಿ ಮನೆಯಲಿ ಮಾಡಿ ಹಡಗಲಿ ತುಂಬಿಟ್ಟು ನನು ಬೇವಿನ ತಪ್ಪಲಿ ಉಡುಗಿ ಉಟ್ಟು ಗಂಡು ದೀಪವ ಎತ್ತುವೆ’’ ಹನ್ನರೆಡನೇ ಶತಮಾನದ ಶರಣರು ವ್ಯಂಗ್ಯ-ವಿಡಂಬನೆ ಮಾಡಿ ತಿರಸ್ಕರಿಸಿದ ಜಾನಪದ ದೈವಗಳನ್ನು ತತ್ವಪದಕಾರರು ಸ್ವೀಕರಿಸುತ್ತ ಬರುವುದರಲ್ಲಿಯೇ ಬಹುತ್ವ ಉಳಿಸಿಕೊಳ್ಳುವ ತಾತ್ವಿಕತೆ ಇದೆ. ಶರೀಫನ ತತ್ವಪದಗಳಲ್ಲಿ ಶಾಕ್ತ ಪರಂಪರೆಯ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ ‘‘ಹೌದೇ ನಮ್ಮವ್ವ ನೀನು ಹೌದೆ, ದೇವಿ ನಿನ್ನ ಸೇವಕನೆಂದು, ನಾ ಕಂಡೇನೀಗ ಶಾಕಾಂಬರಿ’’ ಮುಂತಾದ ತತ್ವಪದಗಳಲ್ಲಿ ಶರೀಫ ಇದನ್ನು ಸಶಕ್ತವಾಗಿ ಹಿಡಿದಿದ್ದಾನೆ. ತತ್ವಪದಗಳು ನಾಥ, ಶಾಕ್ತದಷ್ಟೇ ಸೂಫಿ ಪರಂಪರೆಯನ್ನು ಆಗು ಮಾಡಿಕೊಳ್ಳುತ್ತವೆ. ಮಡಿವಾಳಪ್ಪನು ತನ್ನ ಶಿಷ್ಯನಾದ ಚನ್ನೂರು ಜಲಾಲ್ ಸಾಬನ ಕುರಿತು. ‘‘ಫಕೀರನಾಗಬೇಕೆಂದರೆ ಈ ಮನ ವಿಕಾರವನೆಲ್ಲ ತೊಳಿದಿರಬೇಕೋ ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರ ತಿಳಿದಿರಬೇಕೋ’’ ಹೀಗೆ ಮುಂದುವರಿಯುವ ತತ್ವಪದವು ‘ನಾಮ ಸೀಮೆ ಬಿಟ್ಟೇನೆಂಬ ದೃಢ ಪ್ರೇಮದ ಲುಂಗಿ ತೊಟ್ಟಿರಬೇಕೋ’ ಎನ್ನುವ ಲಯದಲ್ಲಿಯೇ ಎಲ್ಲ ಎಲ್ಲೆಗಳನ್ನು ಮೀರಿ ಬಹುತ್ವ ಒಳಗೊಳ್ಳುವ ಸ್ಥಿತಿಯಾಗಿ ಕಂಡುಬರುತ್ತದೆ. ಈತನಂತೆ ಜಂಬಗಿ ಶರಣರ ಒಂದು ತತ್ವಪದ ಹೀಗಿದೆ. ‘‘ಜಲ್ಲೆ ಬರುತಾವಂತ ಜಲ್ದಿಲೇ ನಾ ಬಂದೆ ಜಲ್ಯ್ಕ ಜಲ್ದಿ ಬರಲಿಲ್ಲ॥ ಬಂದೇನವಾಜ್ ನಿಂತಲ್ಲೇ ಕೈಯ್ಯ ಮುಗಿದೇನೋ॥ ಜಂಬಗಿ ಶರಣ ಕಲಬುರಗಿ ಶರಣಬಸಪ್ಪನವರು ಮತ್ತು ಅವರ ಸ್ನೇಹಿತನಾದ ಖಾಜಾ ಬಂದೇನವಾಜರನ್ನು ತನ್ನ ತತ್ವಪದಗಳಲ್ಲಿ ಸಾಕಷ್ಟು ಗುಣಗಾನ ಮಾಡಿದ್ದಾನೆ. ಲಿಂಗಾಯತನಾಗಿದ್ದ ಶರಣಬಸವ, ಸೂಫಿಯಾಗಿದ್ದ ಬಂದೇನವಾಜ್, ದಲಿತನಾಗಿದ್ದ ಜಂಬಗಿ ಶರಣ ಈ ಮೂರು ಜನರ ಕೂಡುವಿಕೆಯಲ್ಲಿಯೇ ಬಹುತ್ವದ ಭಾರತ ಎದ್ದು ಕಾಣುತ್ತದೆ. ಬಸವಕಲ್ಯಾಣದ ಫೈಮುದಾ ಫಾತಿಮಾ ತನ್ನ ತತ್ವಪದದಲ್ಲಿ, ‘‘ನಮಾಜು ಮಾಡೋ ನಿಮ್ಮ ಒಳಗ ನಾದ ಬರುತಾವ ಅದರಿಂದೊಳಗ ನಾದದೊಳಗ ಕಾಣೋ ನೀ ಅಲ್ಲಾಗ ಕಂಡು ನೀ ಆಗು ಎಲ್ಲಾ’’ ಎನ್ನುವ ತತ್ವಪದಕ್ಕೂ ಮತ್ತು ಇರಾಕ್ ದೇಶದ ರಾಬಿಯಾ ಅಲ್ ಬಸ್ರಾಳ ಪದ್ಯಕ್ಕೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅವಳದೊಂದು ಪದ್ಯ, ‘‘ನನ್ನಾತ್ಮದಲ್ಲೊಂದು ಮಂದಿರವಿದೆ. ಪವಿತ್ರ ಸಮಾಧಿಯಿದೆ. ಮಸೀದಿಯೊಂದಿದೆ ಮತ್ತು ಚರ್ಚೊಂದು ಎಲ್ಲ ತೊರೆದಿದೆ. ಎಲ್ಲಾ ಮುರಿದಿದೆ. ಎಲ್ಲಾ ಇಲ್ಲವಾಗಿದೆ ಅಲ್ಲಿ’’ ಎನ್ನುವ ಇಲ್ಲಿಯ ಪದ್ಯ ಮತ್ತು ಫೈಮುದಾ ಫಾತಿಮಾ ತತ್ವಪದಕ್ಕೂ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ. ಏಕೆಂದರೆ ಫಾತಿಮಾಳ ಮಾತಿನಲ್ಲಿ ‘ಎಲ್ಲಾ ಆಗುವುದು’ ಮತ್ತು ರಬಿಯಾ ಅಲ್ ಬಸ್ರಾಳ ಮಾತಿನಲ್ಲಿ ‘ಎಲ್ಲಾ ಇಲ್ಲವಾಗುವುದು’ ಇವೆರಡೂ ಬಹುತ್ವವನ್ನೇ ಹೇಳುತ್ತವೆ. ಕೊನೆಮಾತು: ಕೊನೆಯದಾಗಿ ಬಹುತ್ವವೆಂದರೆ, ತೀರಾ ಸರಳವಾಗಿ ಹೇಳುವುದಾದರೆ, ಸಾಮಾನ್ಯವಾಗಿ ಅತೀ ಸಣ್ಣ ರೈತರಿಗೆ ಜಮೀನು ಸ್ವಲ್ಪವೇ ಇರುತ್ತದೆ. ಎಲ್ಲಾ ಬೆಳೆಗಳನ್ನು ತಮಗಿರುವಷ್ಟು ಜಮೀನಿನಲ್ಲಿಯೇ ಬೆಳೆಯುತ್ತಾರೆ. ಉದಾಹರಣೆಗೆ ವರ್ಷದ ಬೆಳೆಯಾದ ತೊಗರಿಯ ನಡುಸಾಲುಗಳಲ್ಲಿ ಆರು ತಿಂಗಳ ಬೆಳೆಗಳಾದ ಸಜ್ಜೆ, ಸೂರ್ಯಪಾನ, ಶೇಂಗಾ ಇತ್ಯಾದಿ ಬೆಳೆಗಳನ್ನು ಹಾಕುತ್ತಾರೆ. ಉಳಿದಂತೆ ತಲೆ ಸಾಲಿಗೆ ಅಗಸಿ, ಕಾರೆಳ್ಳು, ಎಳ್ಳು ಇತ್ಯಾದಿ ಬಾಯಿ ಚಟದ ಬೆಳೆಗಳನ್ನು ಒಳಗೊಂಡು ಉತ್ತಿ ಬಿತ್ತಿದ ಎತ್ತುಗಳಿಗೆಂದು ಬಾಟಿ ಹಾಕುತ್ತಾರೆ. ಏಕಕಾಲಕ್ಕೆ ಬಹು ಬೆಳೆಗಳಿಂದ ಮಣ್ಣು ಹದಕ್ಕೆ ಬರುತ್ತದೆನ್ನುವ ವೈಜ್ಞಾನಿಕ ಸ್ಕಾಲರ್ಶಿಪ್ ನಮಗಿಲ್ಲವಾದರೂ ಈ ತರಹದ ಬಹು ಬೆಳೆಯ ಸಂಸ್ಕೃತಿ ಬದುಕಿಗೆ ಮುಖ್ಯವಾಗಿದೆಯೆಂದು ಹೇಳಬೇಕಾಗುತ್ತದೆ. ಏಕ ಬೆಳೆಯ ಗೋಜಿಗೆ ಅತೀ ಸಣ್ಣ ರೈತರು ಹೋಗುವುದಿಲ್ಲ. ಇದು ಸಾಹಿತ್ಯಕ್ಕೂ ಅನ್ವಯಿಸಬಹುದು. ಇಂಥ ಅರಿವಿರುವ ತತ್ವಪದಕಾರರು ಶರಣರಿಗಿಂತ ವಿಭಿನ್ನವಾಗಿ ಚಿಂತಿಸುತ್ತಾರೆ. ಎಲ್ಲ ಅನ್ಯ ದೈವಗಳನ್ನೂ ಕಾವ್ಯದಲ್ಲಿ ರೂಪಕ ಪ್ರತಿಮೆಗಳಾಗಿ ತರುತ್ತಾರೆ. ಈಗಾಗಲೇ ಹೇಳಿದಂತೆ ನಾಥ, ಶಾಕ್ತ, ಸೂಫಿ, ಶರಣ ಮುಂತಾದ ಪಾಂಥಗಳನ್ನು ಮತ್ತು ಜಾನಪದ ಮೌಖಿಕ ಪರಂಪರೆಗಳಲ್ಲಿರುವ ಆಚರಣೆಗಳನ್ನು ಒಳಗೊಳ್ಳುವುದರಿಂದ ತತ್ವಪದಗಳಿಗೆ ಅತಿ ಹೆಚ್ಚು ಒತ್ತು ಕೊಡಬೇಕಾದದ್ದು ಅನಿವಾರ್ಯವಾಗುತ್ತದೆ.
ನಿರ್ವಹಣೆಯಿಲ್ಲದೆ ನಶಿಸುತ್ತಿರುವ ಅಶೋಕನ ಶಿಲಾಶಾಸನ
ಮಸ್ಕಿ ಪಟ್ಟಣದ ಹೊರ ವಲಯದಲ್ಲಿರುವ ಅಶೋಕನ ಐತಿಹಾಸಿಕ ಶಿಲಾಶಾಸನ ನಿರ್ವಹಣೆ ಇಲ್ಲದೆ ನಶಿಸಿಹೋಗುವ ಸ್ಥಿತಿಯಲ್ಲಿರುವುದಕ್ಕೆ ಅಧಿಕಾರಿ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮ್ರಾಟ್ ಅಶೋಕನ ಶಿಲಾಶಾಸನದ ವಿಷಯವಾಗಿ ವಾರ್ತಾಭಾರತಿ ಪತ್ರಿಕೆಯೊಂದಿಗೆಮಾತನಾಡಿದ ಸಾಹಿತಿ ಸುರೇಶ್ ಬಳಗಾನೂರು, ಮಸ್ಕಿ ಚಕ್ರವರ್ತಿ ಅಶೋಕ ಮೌರ್ಯ ಸಾಮ್ರಾಜ್ಯದಿಂದ ಇಡೀ ದೇಶದಲ್ಲಿ ಹೆಸರುವಾಸಿಯಾಗಿದೆ. ಹಾಗಾಗಿ ಈ ಸ್ಥಳ ನೋಡಲು ದೇಶ-ವಿದೇಶದಿಂದ ಪ್ರವಾಸಿಗರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಮಸ್ಕಿ ಆಕರ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಮುದಗಲ್ ಕ್ರಾಸ್ನ ಬಳಿ ಅಶೋಕ ಸ್ತಂಭ ನಿರ್ಮಿಸಿ ಅಶೋಕ ವೃತ್ತ ಎಂದು ಹೆಸರಿಡಲಾಗಿತ್ತು. ಈ ಸ್ಥಳದಲ್ಲಿ ಸುಮಾರು 30-40 ವರ್ಷಗಳಿಂದ ಅಶೋಕ ಶಿಲಾಶಾಸನದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಫಲಕವನ್ನು ಪ್ರವಾಸೋದ್ಯಮ ಇಲಾಖೆ ಅಳವಡಿಸಿತ್ತು. ಆದರೆ ಕೆಲ ಕಿಡಿಗೇಡಿಗಳು 2022ರ ಜ. 27ರಂದು ರಾತ್ರೋರಾತ್ರಿ ನಾಮಫಲಕ ಕದ್ದೊಯ್ದಿದ್ದಾರೆ. ಕಳ್ಳರನ್ನು ಪತ್ತೆಹಚ್ಚಿ ನಾಮಫಲಕ ವಶಪಡಿಸಿಕೊಳ್ಳಬೇಕು ಎಂದು ಮಸ್ಕಿಯ ವಿದ್ಯಾರ್ಥಿಗಳು, ರೈತರು ಸೇರಿ ಪ್ರಗತಿಪರ ಸಂಘಟನೆಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಅಲ್ಲದೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ. ಆದರೆ ಇದುವರೆಗೂ ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆಮಾಡಿಲ್ಲ ಎಂದು ಸುರೇಶ್ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಹೊರ ವಲಯದಲ್ಲಿರುವ ಐತಿಹಾಸಿಕ ಪ್ರಸಿದ್ಧ ಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿ ಕಾಣದೆ ಭಣಗುಡುತ್ತಿದೆ. ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷಿಸುತ್ತಿದ್ದು, ಶಾಸನ ಸ್ಥಳ ಹಾಳುಕೊಂಪೆಯಾಗಿದೆ. ಇದು ಪ್ರವಾಸಿಗರು, ಇತಿಹಾಸಕಾರರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು. ಶಾಸನ ಸ್ಥಳದ ಅಭಿವೃದ್ಧಿಗೆ 3 ಎಕರೆ ಜಾಗದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ವಸ್ತು ಸಂಗ್ರಹಾಲಯದ ಕಟ್ಟಡಗಳ ಪೂರ್ಣಗೊಂಡು ಏಳು ವರ್ಷ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇನ್ನು ಉದ್ಯಾನವನ ನಿರ್ಮಾಣ ಕೆಲಸ ವಿಳಂಬವಾದ ಕಾರಣ ಶಾಸನದ ಪರಿಸರ ಬಿಕೋ ಎನ್ನುತ್ತಿದೆ. ಪ್ರವಾಸಿಗರ ಬಹುವರ್ಷದ ಪ್ರಮುಖ ಬೇಡಿಕೆಯ ಹಿನ್ನೆಲೆಯಲ್ಲಿ ಶಾಸನ ಸ್ಥಳ ಅಭಿವೃದ್ಧಿಪಡಿಸಲು ಅದರ ಬಳಿಯ ಜಮೀನಿನಲ್ಲಿ ಉದ್ಯಾನವನ ನಿರ್ಮಾಣ ಇನ್ನಿತರ ಕಟ್ಟಡ ಕಟ್ಟಲು 3 ಎಕರೆ ಜಮೀನು ಖರೀದಿಸಲಾಗಿತ್ತು. ಆದರೆ ಶಾಸನ ಸ್ಥಳದ ಬಳಿ ವಸ್ತು ಸಂಗ್ರಹಾಲಯ ಕಟ್ಟಡ ನಿರ್ಮಾಣ ಬಿಟ್ಟರೆ, ಉಳಿದ ಯಾವ ಕೆಲಸಗಳು ಆಗಿಲ್ಲ. ಅಲ್ಲದೆ ಸುಮಾರು 29 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ 6 ವರ್ಷ ಗತಿಸಿದರೂ ಚಾಲನೆ ಸಿಕ್ಕಿಲ್ಲ. ಅಲ್ಲದೆ ಉದ್ಘಾಟನಾ ಭಾಗ್ಯ ಕಾಣದೆ ಇರುವ ವಸ್ತು ಸಂಗ್ರಹಾಲಯದ ಶೌಚಾಲಯ ಕಟ್ಟಡಗಳು, ಕಿಟಕಿಗಳು ಹಾಗೂ ಗಾಜುಗಳು ಹಾಳಾಗಿ ಹೋಗಿವೆ. ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರಸ್ತೆ ಹದಗೆಟ್ಟಿವೆ. ಕೂಡಲು ಆಸನಗಳಿಲ್ಲ. ಹೀಗಾಗಿ ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಬಹು ವರ್ಷಗಳ ಬೇಡಿಕೆಯಾಗಿರುವ ಐತಿಹಾಸಿಕ ಪ್ರಸಿದ್ಧಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿಪಡಿಸಲು 10 ಕೋಟಿ ರೂಪಾಯಿ ಅನುದಾನ ಟೆಂಡರ್ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೆ ಯಾವ ಕಾಮಗಾರಿಗಳೂ ಆರಂಭವಾಗಿಲ್ಲ. ಈಗಲಾದರೂ ಮೂಲಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರ ಆಕರ್ಷಣೆಯ ಪ್ರವಾಸಿ ತಾಣವನ್ನಾಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಹೋರಾಟ ಅನಿವಾರ್ಯ. -ಬಸವಂತ ಹಿರೇಕಡುಬೂರು, ಜೈ ಕರುನಾಡು ರಕ್ಷಣೆ ಸೇನೆಯ ಮುಖಂಡ
Grok ಅಶ್ಲೀಲ ಕಂಟೆಂಟ್ ವಿವಾದ; ಪೋಸ್ಟ್ಗಳು ಮತ್ತು ಖಾತೆಗಳನ್ನು ರದ್ದು ಮಾಡಿದ ‘ಎಕ್ಸ್’ ಸಾಮಾಜಿಕ ಜಾಲತಾಣ
ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ ತನ್ನ ವೆಬ್ತಾಣದಲ್ಲಿರುವ ಅಶ್ಲೀಲ ಕಂಟೆಂಟ್ಗಳ ವಿರುದ್ಧ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ಅಶ್ಲೀಲ ಕಂಟೆಂಟ್ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ ಬಳಿಕ ಎಕ್ಸ್ 3500 ಪೋಸ್ಟ್ಗಳನ್ನು ಬ್ಲಾಕ್ ಮಾಡಿದ್ದು, 600ಕ್ಕೂ ಅಧಿಕ ಖಾತೆಗಳನ್ನು ರದ್ದು ಮಾಡಿದೆ. ಮಾಧ್ಯಮಗಳ ವಿವರಗಳ ಪ್ರಕಾರ ‘ಎಕ್ಸ್’ ತನ್ನ ವೇದಿಕೆಯಲ್ಲಿ ಅಶ್ಲೀಲ ಕಂಟೆಂಟ್ಗೆ ಅವಕಾಶ ನೀಡುವುದಿಲ್ಲ ಮತ್ತು ಸರ್ಕಾರದ ನಿಯಂತ್ರಣಗಳನ್ನು ಅನುಸರಿಸುವುದಾಗಿ ಸರ್ಕಾರಕ್ಕೆ ತಿಳಿಸಿದೆ. ►ಕಾನೂನುಬಾಹಿರ ಕಂಟೆಂಟ್ ತೆಗೆಯಲು ಆದೇಶ ‘ಎಕ್ಸ್’ ಸಾಮಾಜಿಕ ಜಾಲತಾಣದಿಂದ ಅಸಭ್ಯ, ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯಗಳನ್ನು ತೆಗೆಯುವಂತೆ ಭಾರತದ ತಾಂತ್ರಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶಿಸಿದ ಒಂದು ವಾರದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ Grok ಮೂಲಕ ಉತ್ಪಾದಿಸಲಾಗುತ್ತಿರುವ ವಿಷಯಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿತ್ತು. ತಪ್ಪಿದಲ್ಲಿ ಭಾರತೀಯ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿತ್ತು. “ಎಐ ಆಧಾರಿತ ಸೇವೆಗಳಾದ Grok ಮತ್ತು xAI ನ ಇತರ ಸೇವೆಗಳ ದುರುಪಯೋಗದ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಕಂಟೆಂಟ್ಗಳನ್ನು ಪೋಸ್ಟ್ ಮಾಡಲು ಅವಕಾಶ ಕೊಡುವುದು, ಉತ್ಪಾದಿಸುವುದು, ಪ್ರಕಟಿಸುವುದು ಅಥವಾ ಪ್ರಸಾರ, ಹಂಚಿಕೆ ಅಥವಾ ಅಪ್ಲೋಡ್ ಮಾಡುವುದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ 72 ಗಂಟೆಗಳ ಒಳಗೆ ತಿಳಿಸಬೇಕು” ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿತ್ತು. ►ಎಐ ಸಾಧನಗಳನ್ನು ಬಳಸಿ ಅಶ್ಲೀಲ ಕಂಟೆಂಟ್ ರಚನೆ ಎಐ ಸಾಧನಗಳನ್ನು ಬಳಸಿ ಅಶ್ಲೀಲ ಮತ್ತು ಅವಹೇಳನಕಾರಿ ವಿಷಯಗಳನ್ನು ತಯಾರಿಸಲಾಗುತ್ತಿದೆ ಮತ್ತು ಮುಖ್ಯವಾಗಿ ಮಹಿಳೆಯರನ್ನು ಗುರಿ ಮಾಡಲಾಗುತ್ತಿದೆ ಎನ್ನುವ ಕುರಿತ ಕಳವಳದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ನಿರ್ದೇಶನ ಬಂದಿತ್ತು. ಸಚಿವಾಲಯ ಅಮೆರಿಕ ಮೂಲದ ಸಾಮಾಜಿಕ ಜಾಲತಾಣ ವೇದಿಕೆಗೆ ಕೈಗೊಂಡ ಕ್ರಮಗಳ ಕುರಿತು 72 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು. ಅಂತಹ ವಿಷಯಗಳನ್ನು ತೆಗೆದುಹಾಕಲು ಮತ್ತು ಅಂತಹ ಬಳಕೆದಾರರ ವಿರುದ್ಧ ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ಸರ್ಕಾರ ಸೂಚಿಸಿತ್ತು. “ಪದೇಪದೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ದೂರುಗಳನ್ನು ಸ್ವೀಕರಿಸಲಾಗಿದೆ. ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಸಂಸದೀಯ ಪ್ರತಿನಿಧಿಗಳು ದೂರು ಸಲ್ಲಿಸಿ ಎಕ್ಸ್ ಜಾಲತಾಣದಲ್ಲಿರುವ ವಿಷಯಗಳು ಸಭ್ಯತೆ ಮತ್ತು ಅಶ್ಲೀಲತೆ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಈಗಿರುವ ನಿಯಮಗಳ ಹೊರತಾಗಿಯೂ ನಿರ್ದಿಷ್ಟ ವರ್ಗದ ಕಾನೂನುಬಾಹಿರ ವಿಷಯಗಳು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ” ಎಂದು ಆದೇಶದಲ್ಲಿ ಹೇಳಲಾಗಿತ್ತು. ಸರ್ಕಾರದ ಆದೇಶದಂತೆ ಇದೀಗ ಎಕ್ಸ್ ವೇದಿಕೆಯಿಂದ 3500 ಪೋಸ್ಟ್ಗಳನ್ನು ಬ್ಲಾಕ್ ಮಾಡಲಾಗಿದೆ ಮತ್ತು 600 ಖಾತೆಗಳನ್ನು ರದ್ದು ಮಾಡಲಾಗಿದೆ. ಇನ್ನು ಮುಂದೆ ಅಶ್ಲೀಲ ಇಮೇಜ್ಗಳ ಸೃಷ್ಟಿಗೆ ಅವಕಾಶ ಕೊಡುವುದಿಲ್ಲ ಎಂದು ‘ಎಕ್ಸ್’ ಸರ್ಕಾರಕ್ಕೆ ತಿಳಿಸಿದೆ. ►Grok ದುರುಪಯೋಗದ ಕುರಿತು ಕಳವಳ Grok ಎಂಬುದು ಎಐ ಚಾಟ್ಬೋಟ್ ಅಪ್ಲಿಕೇಶನ್ ಆಗಿದ್ದು, 2023ರಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ‘Grok ಇಮ್ಯಾಜಿನ್’ ಎನ್ನುವ ಹೊಸ ಫೀಚರ್ ಪರಿಚಯಿಸಲಾಗಿತ್ತು. ಇದನ್ನು ಬಳಸಿ ಅಸಭ್ಯ ಅಥವಾ ಅಶ್ಲೀಲ ಕಂಟೆಂಟ್ ಸೃಷ್ಟಿಸಬಹುದಾಗಿತ್ತು. ಪೇಯ್ಡ್ ಗ್ರಾಹಕರಿಗೆ ಮಾತ್ರ ಈ ವೈಶಿಷ್ಟ್ಯ ಲಭ್ಯವಿದೆ. ಎಕ್ಸ್ ಬಳಕೆದಾರರಿಗೆ ಈ ಚಾಟ್ಬೋಟ್ ಅನ್ನು ಉಚಿತವಾಗಿ ಬಳಸಲು ಅವಕಾಶ ನೀಡಲಾಗಿದೆ. ಎಕ್ಸ್ ಪೋಸ್ಟ್ಗಳಲ್ಲಿ ಗ್ರೋಕ್ಗೆ ಟ್ಯಾಗ್ ಮಾಡಿ ಬೇಕಾದ ವಿಷಯಕ್ಕೆ ಸೂಚನೆ ನೀಡಬಹುದು. ಪೋಸ್ಟ್ ಆಗಿರುವ ವ್ಯಕ್ತಿಯ ಫೋಟೋವನ್ನು ನಗ್ನಗೊಳಿಸುವಂತೆ ಹೇಳಿದರೂ ಅದು ಮಾಡುತ್ತದೆ ಎಂಬ ಆರೋಪಗಳೂ ಕೇಳಿಬಂದಿವೆ. ಒಂದು ವಿಚಾರದ ಬಗ್ಗೆ ಮಾಹಿತಿ ಹೆಕ್ಕಿ ತೆಗೆ ಎಂದು ಹೇಳಿದರೆ ಅದನ್ನೂ ಮಾಡುತ್ತದೆ ಎನ್ನಲಾಗಿದೆ. ಆದರೆ ಎಕ್ಸ್ನಲ್ಲಿ ಇತ್ತೀಚೆಗೆ ಜನರು ಅಶ್ಲೀಲ ಕಂಟೆಂಟ್ ಸೃಷ್ಟಿ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ ಎನ್ನುವ ಕಳವಳ ಭಾರತದಲ್ಲಿ ವ್ಯಕ್ತವಾಗಿತ್ತು. ಇತರ ದೇಶಗಳಲ್ಲಿಯೂ ಈ ವಿಚಾರವಾಗಿ ಎಕ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇಂಡೋನೇಷ್ಯಾ Grok ಅನ್ನು ಬ್ಲಾಕ್ ಮಾಡಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಮತ್ತು ಅಮೆರಿಕ ದೇಶಗಳು Grok ವಿರುದ್ಧ ತನಿಖೆಗೆ ಯೋಜಿಸಿವೆ. ಅಮೆರಿಕದ ಮೂವರು ಸಂಸದರು ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್ಗಳಿಂದ Grok ಆ್ಯಪ್ ಅನ್ನು ತೆಗೆದುಹಾಕುವಂತೆ ಆ್ಯಪಲ್ ಮತ್ತು ಗೂಗಲ್ಗೆ ಮನವಿ ಮಾಡಿದ್ದಾರೆ.
ಠಾಕ್ರೆಗಳು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮುಂಬೈಯನ್ನು ಮುಚ್ಚಬಹುದು: ಸಂಜಯ್ ರಾವತ್
ಠಾಕ್ರೆ ಕುಟುಂಬವನ್ನು ಅಳಿಸಿಹಾಕಲು ಸಾಧ್ಯವಿಲ್ಲ, ನಾವು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮುಂಬೈಯನ್ನು ಮುಚ್ಚಬಹುದು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಎಚ್ಚರಿಸಿದ್ದಾರೆ. 2026ರ ಬಿಎಂಸಿ ಚುನಾವಣೆ ಸಮೀಪಿಸುತ್ತಿರುವಾಗ, ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರ ಪುನರ್ಮಿಲನ ಮಹತ್ವ ಪಡೆದುಕೊಂಡಿದೆ. ರಾಷ್ಟ್ರಕ್ಕೆ ಆದ್ಯತೆ ನೀಡುವ ಮೂಲಕ ಠಾಕ್ರೆ ಸಹೋದರರು ಒಂದಾಗಿದ್ದಾರೆ ಎಂದು ರಾವತ್ ಹೇಳಿದ್ದಾರೆ.
ಅಸೈಗೋಳಿ: ರಸ್ತೆ ನಿರ್ಮಾಣದ ಮೂಲ ನಕ್ಷೆಯಲ್ಲಿ ತಿದ್ದುಪಡಿ ಆರೋಪ; ಸ್ಥಳೀಯರಿಂದ ಪಂಚಾಯತ್ ಗೆ ಮನವಿ
ಕೊಣಾಜೆ: ಅಸೈಗೋಳಿಯಲ್ಲಿ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆಯ ಮೂಲ ನಕ್ಷೆಯಲ್ಲಿ ಪರಿವರ್ತನೆ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪದೊಂದಿಗೆ, ರಸ್ತೆ ನಿರ್ಮಾಣಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಸ್ಥಳೀಯರು ಶುಕ್ರವಾರ ಕೊಣಾಜೆ ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸಿದರು. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಅಗತ್ಯ ಭೂಮಿ ಒದಗಿಸುವ ಉದ್ದೇಶದಿಂದ ರಸ್ತೆಗೆ ತಾಗಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಿ, ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಂಗಡಿ ಉಳಿಸಲು ಲಾಬಿ ಆರೋಪ ಈ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ಅರುಣ್ ಡಿಸೋಜ ಅವರು, ರಸ್ತೆ ನಿರ್ಮಾಣ ಕಾಮಗಾರಿಯ ವೇಳೆ ನೀರು ಹಾಗೂ ವಿದ್ಯುತ್ ಪೈಪ್ಗಳು ಇನ್ನೂ ಮೇಲ್ಭಾಗದಲ್ಲಿರುವುದರಿಂದ ಕಾಮಗಾರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಡಿಸೆಂಬರ್ 31ರೊಳಗೆ ತೆರವು ನೋಟಿಸ್ ಪಕ್ಕದಲ್ಲಿರುವ ಅಂಗಡಿಗಳನ್ನು ಖಾಲಿ ಮಾಡುವಂತೆ ಗ್ರಾಮ ಪಂಚಾಯತ್ ನೋಟಿಸ್ ನೀಡಿದ್ದರೂ, ಕೆಲವರು ಅಂಗಡಿ ಉಳಿಸಿಕೊಳ್ಳಲು ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಹಳೇ ಕಟ್ಟಡ ಉಳಿಸುವ ನೆಪದಲ್ಲಿ ಕೆಲ ವ್ಯಕ್ತಿಗಳು ರಸ್ತೆ ನಿರ್ಮಾಣದ ಮೂಲ ನಕ್ಷೆಯಲ್ಲಿ ತಿದ್ದುಪಡಿ ಮಾಡಲು ಯತ್ನಿಸುತ್ತಿದ್ದು, ಇದರಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂದು ಅವರು ದೂರಿದರು. ಚತುಷ್ಪಥ ರಸ್ತೆಗೆ 18 ಮೀಟರ್ ಅಗಲದ ಭೂವಿಸ್ತೀರ್ಣಕ್ಕೆ ಈಗಾಗಲೇ ಗುರುತು ಹಾಕಲಾಗಿದ್ದು, ಹಳೇ ಕಟ್ಟಡ ತೆರವು ಹಾಗೂ ವಿದ್ಯುತ್ ಸರಬರಾಜು ನಿಲ್ಲಿಸುವಂತೆ ಸ್ಥಳೀಯ ಗ್ರಾಮ ಪಂಚಾಯತ್ ಆದೇಶ ಹೊರಡಿಸಿದೆ. ಆದರೆ, ತೆರೆಮರೆಯಲ್ಲಿ ಕೆಲವರು ಅಡ್ಡಿಪಡಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು. ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯಗಳೊಂದಿಗೆ ಮುಂದಿನ ದಿನಗಳಲ್ಲಿ ಹೊಸ ಅಂಗಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಚರಂಡಿ, ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ, ಸುಸಜ್ಜಿತ ಬಸ್ ಹಾಗೂ ಆಟೋ ನಿಲ್ದಾಣ ನಿರ್ಮಾಣಕ್ಕೂ ಯೋಜನೆ ರೂಪಿಸುವಂತೆ ಅವರು ಆಗ್ರಹಿಸಿದರು. ಸಮಸ್ಯೆ ಬಗೆಹರಿಯದಿದ್ದರೆ ನ್ಯಾಯಾಲಯದ ಮೊರೆ ಮೂಲ ಯೋಜನಾ ನಕ್ಷೆಯನ್ನು ಯಾವುದೇ ರೀತಿಯ ತಿದ್ದುಪಡಿ ಇಲ್ಲದೆ ಕಾಪಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಬೇಕು ಹಾಗೂ ಸ್ಥಳ ಪರಿಶೀಲನೆ ನಡೆಸಬೇಕು. ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದು, ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು. ರಸ್ತೆಯ ಒಂದು ಬದಿಯ ಕಟ್ಟಡ ತೆರವಿಗೆ ಕೆಲವರು ಅಡ್ಡಿಪಡಿಸುತ್ತಿರುವ ಬಗ್ಗೆ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸಂಜೆಯೊಳಗೆ ಸಮಸ್ಯೆ ಪರಿಹಾರಕ್ಕೆ ಭರವಸೆ ನೀಡಿರುವುದಾಗಿ ಸ್ಥಳೀಯರಾದ ರೊನಾಲ್ಡ್ ಡಿಸೋಜ ತಿಳಿಸಿದರು. “ಸುಂದರ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣವೇ ನಮ್ಮ ಬೇಡಿಕೆ” ಎಂದು ಹೇಳಿದರು. ಮನವಿ ಸ್ವೀಕರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ರಜನಿ ಅವರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಸುಧಾಕರ್ ಬಿ. ಅಸೈಗೋಳಿ, ರೋಯ್ದಾಸನ್, ರಾಜೇಶ್ ಗಾಣಿಗ, ಸ್ಟೀವನ್ ರೇಗೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Rishabh Sharma Injury- ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಾಲೀಮಿನ ವೇಳೆ ಗಾಯಗೊಂಡ ಕಾರಣ ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರಿಗೆ ಬದಲಿಯಾಗಿ ಧ್ರುವ್ ಜ್ಯುರೆಲ್ ಅಯ್ಕೆಯಾಗಿದ್ದು ಈಗಾಗಲೇ ತಂಡವನ್ನು ಸೇರಿದ್ದಾರೆ. ಕೆಎಲ್ ರಾಹುಲ್ ಅವರು ಮೊದಲ ಪ್ರಾಶಸ್ತ್ಯದ ವಿಕೆಟ್ ಕೀಪರ್ ಆಗಿ ಮುಂದುವರಿಯಲಿರುವುದರಿಂದ ಈ ಬದಲಾವಣೆ ದೊಡ್ಡ ಮಟ್ಟಿಗೆ ತಂಡದ ಸಂಯೋಜನೆ ಮೇಲೆ ಪರಿಣಾಮ ಬೀರದು. ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಸರಣಿಗೆ ಕೆಎಲ್ ರಾಹುಲ್ ಜೊತೆ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ ಕೃಷ್ಣ ಪ್ಲೇಯಿಂಗ್ ಇಲೆವೆನ್ ನಲ್ಲಿ ಇದ್ದಾರೆ.
ಬೆಂಗಳೂರು ಸಿಟಿ KSR ರೈಲು ನಿಲ್ದಾಣ ಕಾಮಗಾರಿ: 6 ಪ್ರಮುಖ ರೈಲುಗಳ ಆಗಮನ ನಿರ್ಗಮನ ಒಂದೂವರೆ ತಿಂಗಳು ರದ್ದು! ಯಾವೆಲ್ಲಾ?
ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 16 ರಿಂದ ಮಾರ್ಚ್ ಆರಂಭದವರೆಗೆ ಹಲವು ಪ್ರಮುಖ ರೈಲುಗಳ ಆಗಮನ-ನಿರ್ಗಮನ ನಿಲ್ದಾಣ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳು ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ ಮತ್ತು ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳಲ್ಲಿ ಕೊನೆಗೊಳ್ಳಲಿವೆ ಅಥವಾ ಅಲ್ಲಿಂದ ಹೊರಡಲಿವೆ.
ಅಮೆರಿಕವು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಈ ಮಸೂದೆ ಜಾರಿಯಾದರೆ ಭಾರತದ ರಫ್ತು ವಲಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಜವಳಿ, ರತ್ನ, ಪಾದರಕ್ಷೆ, ರಾಸಾಯನಿಕ, ಯಂತ್ರೋಪಕರಣಗಳ ಮೇಲೆ ಪರಿಣಾಮ ಬೀರಲಿದೆ. ಫಾರ್ಮಾ, ಐಟಿ ಸೇವೆಗಳಿಗೂ ಭೀತಿ ಎದುರಾಗಿದೆ. ಭಾರತದ ಆರ್ಥಿಕತೆಗೆ ಇದು ತೀವ್ರ ಹೊಡೆತ ನೀಡುವ ಸಾಧ್ಯತೆಯಿದೆ. ಈ ಕುರಿತ ವಿವರಗಳು ಇಲ್ಲಿವೆ.
ವಿಮೆನ್ ಇಂಡಿಯಾ ಮೂವ್ಮೆಂಟ್ 10ನೇ ಸಂಸ್ಥಾಪನಾ ದಿನಾಚರಣೆ
ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಸಂಸ್ಥೆಯ 10ನೇ ವರ್ಷದ ಸಂಸ್ಥಾಪನಾ ದಿನವನ್ನು “10 ವರ್ಷಗಳ ಭಯದ ರಾಜಕೀಯದ ಪ್ರತಿರೋಧ” ಎಂಬ ಘೋಷವಾಕ್ಯದಡಿ ಜನವರಿ 10ರಂದು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ರಾಂಚ್, ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳು, ವೃದ್ಧಾಶ್ರಮ ಭೇಟಿ, SIR ಕುರಿತ ಮಾಹಿತಿ ಶಿಬಿರ, ಮತದಾರರಿಗೆ ಗುರುತಿನ ಚೀಟಿ ಮಾಡಿಸಿಕೊಡುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ದಕ್ಷಿಣ ಕನ್ನಡ ನಗರ ಜಿಲ್ಲೆಯ ಬಜಪೆ ಪಟ್ಟಣ ಪಂಚಾಯತ್ಗೆ ನೂತನವಾಗಿ ಆಯ್ಕೆಯಾದ ಮಹಿಳಾ ಸದಸ್ಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದಲ್ಲದೆ, ಅನೇಕ ಮಹಿಳೆಯರು ವಿಮ್ ಸಂಸ್ಥೆಯ ತತ್ವ–ಸಿದ್ಧಾಂತಗಳನ್ನು ಒಪ್ಪಿಕೊಂಡು ಸದಸ್ಯತ್ವವನ್ನು ಪಡೆದುಕೊಂಡರು. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕಿಯರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಮ್ ಸಂಸ್ಥಾಪನಾ ದಿನದ ಸಂದೇಶವನ್ನು ನೀಡಿದರು. ಮಹಿಳಾ ರಾಜಕೀಯದ ಅಗತ್ಯತೆ, ಸಮಾನ ನ್ಯಾಯ, ಸ್ವಾತಂತ್ರ್ಯ, ಮಹಿಳಾ ಹಕ್ಕುಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಯಿತು.
ದೇರಳಕಟ್ಟೆ: ಮೇಲ್ತೆನೆ ಇ-ಮ್ಯಾಗಝಿನ್ ಬಿಡುಗಡೆ
ದೇರಳಕಟ್ಟೆ: ಮೇಲ್ತೆನೆ (ಬ್ಯಾರಿ ಎಲ್ತ್ಕಾರ್ – ಕಲಾವಿದಮಾರೊ ಕೂಟ) ವತಿಯಿಂದ ಹೊರತಂದ ಮೇಲ್ತೆನೆ ಇ-ಮ್ಯಾಗಝಿನ್ ಬಿಡುಗಡೆ ಕಾರ್ಯಕ್ರಮವು ರವಿವಾರ ನಾಟೆಕಲ್ ವಿಜಯನಗರದಲ್ಲಿರುವ ಇಲೈಟ್ ಟ್ಯೂಶನ್ ಸೆಂಟರ್ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಅಧ್ಯಕ್ಷ ಮಂಗಳೂರು ರಿಯಾಝ್, ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ವಿ. ಇಬ್ರಾಹಿಂ ನಡುಪದವು, ಉಪಾಧ್ಯಕ್ಷ ಇಬ್ರಾಹಿಂ ರಫೀಕ್ ಮುದುಂಗಾರುಕಟ್ಟೆ, ಜೊತ ಕಾರ್ಯದರ್ಶಿ ಸಿ.ಎಂ. ಶರೀಫ್ ಪಟ್ಟೋರಿ ಉಪಸ್ಥಿತರಿದ್ದರು. ಇದಲ್ಲದೆ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಯೂಸುಫ್ ವಕ್ತಾರ್, ಅಬೂಬಕ್ಕರ್ ಹೂಹಾಕುವಕಲ್ಲು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Kodimata Sri: ಸಿ.ಎಂ ಬದಲಾವಣೆ ಬಗ್ಗೆ, ರಾಜ್ಯ ರಾಜಕೀಯದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು
Kodimata Sri: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹಾಗೂ ಸಂಪುಟ ಪುನರ್ ರಚನೆಯ ಬಗ್ಗೆ ಸೇರಿದಂತೆ ಹಲವು ವಿಷಯಗಳು ಚರ್ಚೆ ಆಗುತ್ತಿವೆ. ಈ ರೀತಿ ಪ್ರಮುಖ ವಿಷಯಗಳು ಚರ್ಚೆ ಆಗುತ್ತಿರುವಾಗಲೇ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಸ್ಫೋಟಕ ಭವಿಷ್ಯವೊಂದನ್ನು ಹೇಳಿದ್ದಾರೆ. ಕೋಡಿಮಠ ಶ್ರೀಗಳು ಪ್ರಮುಖ ಇಬ್ಬರು ರಾಜಕೀಯ ನಾಯಕರ ಸಾವಿನ ಬಗ್ಗೆ
WPL 2026 RCB: ಆರ್ಸಿಬಿಯಿಂದ ಸ್ಟಾರ್ ಆಲ್ರೌಂಡರ್ ಔಟ್: ಮಾಹಿತಿ ಇಲ್ಲಿದೆ ತಿಳಿಯಿರಿ
WPL 2026 RCB: ಡಬ್ಲ್ಯೂಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿತು. ಈ ನಡುವೆಯೇ ಇದೀಗ ಸ್ಟಾರ್ ಆಲ್ರೌಂಡರ್ ಹೊರಗುಳಿದಿದ್ದು, ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಹಾಗಾದ್ರೆ, ಕಾರಣ ಏನು ಹಾಗೂ ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆರ್ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದು
ರಾಯಚೂರು: ರೈಲ್ವೆ ಟಿಕೆಟ್ ದರ ಹೆಚ್ಚಳ ಖಂಡಿಸಿ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ
ರಾಯಚೂರು: ಭಾರತೀಯ ರೈಲ್ವೆ ಇಲಾಖೆಯು ಡಿಸೆಂಬರ್ 26ರಿಂದ ಜಾರಿಗೊಳಿಸಿರುವ ರೈಲ್ವೆ ಟಿಕೆಟ್ ದರ ಹೆಚ್ಚಳವನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ರಾಯಚೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸ್ಟೇಷನ್ ಮಾಸ್ಟರ್ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ರೈಲ್ವೆ ಇಲಾಖೆ ಡಿಸೆಂಬರ್ 26ರಿಂದ ಸಾಮಾನ್ಯ ವರ್ಗದಲ್ಲಿ 215 ಕಿ.ಮೀ. ಮೀರಿದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 1 ಪೈಸೆ ಹಾಗೂ ನಾನ್-ಎಸಿ ಮೇಲ್/ಎಕ್ಸ್ಪ್ರೆಸ್ ಮತ್ತು ಎಲ್ಲಾ ಎಸಿ ವರ್ಗಗಳ ಟಿಕೆಟ್ ದರದಲ್ಲಿ ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಳ ಮಾಡಿದೆ. ಇದು ಈ ವರ್ಷದ ಎರಡನೇ ಬಾರಿಗೆ ರೈಲ್ವೆ ಟಿಕೆಟ್ ದರ ಏರಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಮೇಲೆ, ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ದೂರಿದರು. ಇನ್ನೊಂದೆಡೆ ದಿನಬಳಕೆ ವಸ್ತುಗಳ ದರ ನಿರಂತರವಾಗಿ ಹೆಚ್ಚುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಮಕ್ಕಳ ಪಾಲನೆ–ಪೋಷಣೆ ಹಾಗೂ ಶಿಕ್ಷಣ ವೆಚ್ಚಗಳು ದುಬಾರಿಯಾಗಿರುವ ಪರಿಸ್ಥಿತಿಯಲ್ಲಿ ರೈಲ್ವೆ ಟಿಕೆಟ್ ದರ ಏರಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು. ಕೂಡಲೇ ಈ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ, ಮಹಮ್ಮದ್ ಶಹಬಾಜ್, ಮಹಮ್ಮದ್ ಫೈಜಲ್ ಖಾನ್, ರಘು ಮಡಿವಾಳ, ಎಂಡಿ ಜಾವೇದ್, ಉಪಾಧ್ಯಕ್ಷರಾದ ಬಿ. ಮಧುಕುಮಾರ, ರಶೀದ್, ದುಗನೂರು ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Channarayapatna | ಪುತ್ರನಿಂದಲೇ ತಂದೆಯ ಭೀಕರ ಹತ್ಯೆ
ಹಾಸನ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪುತ್ರನೊಬ್ಬ ತಂದೆಯನ್ನು ಭೀಕರವಾಗಿ ಹತ್ಯೆಗೈದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸತೀಶ್ (60) ಎಂದು ಗುರುತಿಸಲಾಗಿದ್ದು, ಪುತ್ರ ರಂಜಿತ್ (28) ತಂದೆಯನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಕುಟುಂಬದಲ್ಲಿ ನಿರಂತರ ಕಲಹ ನಡೆಯುತ್ತಿತ್ತು. ಇದರಿಂದ ಬೇಸತ್ತ ರಂಜಿತ್ ಹಾಗೂ ಆತನ ತಾಯಿ ಪ್ರತ್ಯೇಕವಾಗಿ ಕೆ.ಆರ್.ನಗರದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಂದೆ-ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ನಿನ್ನೆ ರಾತ್ರಿ ಗಲಾಟೆ ತಾರಕಕ್ಕೇರಿದೆ. ಜಗಳದ ವೇಳೆ ರಂಜಿತ್ ರಾಡ್ನಿಂದ ತಂದೆಯ ತಲೆಗೆ ಹೊಡೆದು ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಜಕಾರಣಿಗಳ ಮೇಲಿನ ಭಕ್ತಿ ಸಂವಿಧಾನಕ್ಕೆ ಅಪಾಯ: ಕ್ಲಿಪ್ಟನ್ ಡಿ’ ರೊಜಾರಿಯೋ
ಬಂಟ್ವಾಳ: ರಾಜಕೀಯ ನಾಯಕರನ್ನು ಹೀರೋಗಳಂತೆ ಭಕ್ತಿಯಿಂದ ನೋಡಬಾರದು. ಅಂಥ ಅಂಧಭಕ್ತಿ ಸಂವಿಧಾನಕ್ಕೆ ದೊಡ್ಡ ಸವಾಲಾಗುತ್ತದೆ ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್ಎಜೆ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಹೈಕೋರ್ಟ್ ವಕೀಲ ಕ್ಲಿಪ್ಟನ್ ಡಿ’ ರೊಜಾರಿಯೋ ಎಚ್ಚರಿಸಿದರು. ಎಐಎಲ್ಎಜೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಲೀಗಲ್ ಫ್ರೆಂಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬಿ.ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನದ ಮುಂದಿರುವ ಸವಾಲುಗಳು’ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದು ರಾಜಕೀಯ ನಾಯಕರನ್ನು ಹೀರೋಗಳಾಗಿ ಭಾರೀ ಭಕ್ತಿಯಿಂದ ಕಾಣುವ ಪ್ರವೃತ್ತಿ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಭಕ್ತರಾಗಿಬಿಟ್ಟರೆ ಪ್ರಭುತ್ವವನ್ನು ಪ್ರಶ್ನಿಸುವ ಶಕ್ತಿ ಕಳೆದುಕೊಳ್ಳಲಾಗುತ್ತದೆ. ಈ ಅಪಾಯವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು 1974ರಲ್ಲೇ ಎಚ್ಚರಿಸಿದ್ದರು. ಇದನ್ನು ನಾವು ಭಾರತ ಸಂವಿಧಾನಕ್ಕೆ ಎದುರಾಗಿರುವ ಭಾರೀ ಅಪಾಯವಾಗಿ ನೋಡಬೇಕು ಎಂದು ಹೇಳಿದರು. ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಬಡತನ ಸಂವಿಧಾನದ ಆಶಯಗಳನ್ನು ಸಾಧಿಸಲು ಅಡ್ಡಿಯಾಗುತ್ತಿದೆ. ಬಡವರಿಗೆ ಇಂದು ಒಬ್ಬ ಜಾಗೃತ ನಾಗರಿಕನಾಗಿ ಚಿಂತಿಸುವ ಅವಕಾಶವೂ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಸಂವಿಧಾನದ ಆಶಯಗಳನ್ನು ಮನದಟ್ಟು ಮಾಡಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. “ಇಂದು ಯುವಕರು ಧರ್ಮದ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಆ ಗೋಡೆಗಳನ್ನು ಒಡೆಯಬೇಕಾಗಿದೆ. ಆಗ ಮಾತ್ರ ಸಂವಿಧಾನಕ್ಕೆ ಪೂರಕವಾದ ಬದುಕು ಸಾಧ್ಯವಾಗುತ್ತದೆ” ಎಂದು ಹೇಳಿದರು. ಸಂವಿಧಾನವನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದಕ್ಕೆ ತಕ್ಕ ಶಿಕ್ಷಣ ವ್ಯವಸ್ಥೆ ಸಮಾಜದಲ್ಲಿ ರೂಪುಗೊಳ್ಳಬೇಕು. ಬಡವ–ಶ್ರೀಮಂತ ಭೇದ, ಜಾತಿ ಶೋಷಣೆ, ಧರ್ಮ ಹಾಗೂ ಲಿಂಗ ಆಧಾರಿತ ತಾರತಮ್ಯವಿಲ್ಲದ ಸಮಾಜವನ್ನು ನಿರ್ಮಿಸುವುದು ಇಂದಿನ ಹಿರಿಯರು ಮುಂದಿನ ಪೀಳಿಗೆಗೆ ನೀಡಬಹುದಾದ ಮಹತ್ವದ ಕೊಡುಗೆ ಎಂದು ಹೇಳಿದರು. ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ದೇಶದ ಪ್ರಜಾಪ್ರಭುತ್ವ ‘ತುರ್ತು ಪರಿಸ್ಥಿತಿ’ ಎಂಬ ಕರಾಳ ದಿನಗಳನ್ನು ಕಂಡಿತ್ತು. ಆ ಸಂದರ್ಭದಲ್ಲಿ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಲು ಪ್ರಯತ್ನ ನಡೆದರೂ, ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟುಮಾಡುವ ತಿದ್ದುಪಡಿ ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ಇದರಿಂದ ಸಂವಿಧಾನ ಉಳಿದುಕೊಂಡಿತು ಎಂದು ಕ್ಲಿಪ್ಟನ್ ಡಿ’ ರೊಜಾರಿಯೋ ಹೇಳಿದರು. ಹಿರಿಯ ವಕೀಲ ಮನೋರಾಜ್ ರಾಜೀವ್ ಅವರು ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಜನತೆ ಹೇಗೆ ಎದುರಿಸಬೇಕು ಎಂಬುದನ್ನು ವಿವರಿಸಿದರು. ಎಐಎಲ್ಎಜೆ ಕೇಂದ್ರ ಸಮಿತಿ ಸದಸ್ಯೆ ಅವನಿ ಚೋಕ್ಷಿ, ಯುವ ವಕೀಲ ಅಬ್ದುಲ್ ಜಲೀಲ್ ಎನ್., ಹೈಕೋರ್ಟ್ ವಕೀಲೆ ಸಂದ್ಯಾ ಪ್ರಭು ಮಾತನಾಡಿದರು. ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಅಶ್ವಿನಿ ಕುಮಾರ್ ರೈ ಹಾಗೂ ಸುರೇಶ್ ಪೂಜಾರಿ, ಹಿರಿಯ ವಕೀಲರಾದ ಶೋಭಲತಾ ಸುವರ್ಣ, ಹಾತಿಮ್ ಅಹಮದ್, ಶ್ರೀಧರ್ ಪೈ, ಯುವ ವಕೀಲರಾದ ಮೋಹನ್ ಕುಮಾರ್ ಕಡೇಶಿವಾಲ್ಯ, ಉಮಾಕರ್ ಬಂಗೇರ, ಎಐಎಲ್ಎಜೆ ಉಪಾಧ್ಯಕ್ಷ ಮಂಜುನಾಥ್ ಪೂಜಾರಿ, ನವೀನ್ ತಾವ್ರೋ, ಲೀಗಲ್ ಫ್ರೆಂಡ್ಸ್ ಜಿಲ್ಲಾ ಘಟಕದ ಮುಖಂಡ ಉಮ್ಮರುಲ್ ಫಾರೂಕ್ ನೆಲ್ಯಾಡಿ, ಸಿರಾಜುದ್ದೀನ್ ಉಪ್ಪಿನಂಗಡಿ, ಎಸ್.ಜಿ. ಅಫ್ರೀಝ್, ಮಹಮ್ಮದ್ ಲುಕ್ಮಾನ್, ಕಾರ್ತಿಕ್ ಎಂ., ಪ್ರಜ್ವಲ್ ಪುತ್ತೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಐಎಲ್ಎಜೆ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಸ್ಫಾಕ್ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ತುಳಸೀದಾಸ್ ಆರ್. ವಂದಿಸಿದರು. ಯುವ ಮುಖಂಡ ಸತೀಶ್ ಅರಳ ಸಂವಿಧಾನದ ಪೀಠಿಕೆಯನ್ನು ಹಾಡಿದರು. ವಕೀಲರಾದ ಚಂದ್ರಶೇಖರ್ ರಾವ್ ಪುಂಚಮೆ ಹಾಗೂ ಮಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು.
ಅಲ್ಪ ಹಸಿವಿನಿಂದ ನಿದ್ರೆಗೆ ಜಾರುವುದರಿಂದ ಪ್ರಯೋಜನಗಳೇನು?
ಸ್ವಲ್ಪ ಮಟ್ಟಿಗೆ ಹಸಿವೆಯ ಅನುಭವ ಜೀರ್ಣಕ್ರಿಯೆಯನ್ನೂ ಹಾಗೂ ನಿದ್ರೆಯ ಗುಣಮಟ್ಟವನ್ನೂ ಉತ್ತಮಗೊಳಿಸುತ್ತದೆ. ಏಕೆಂದರೆ ಭಾರವಾದ ರಾತ್ರಿ ಭೋಜನವನ್ನು ಕರಗಿಸುವಲ್ಲಿ ದೇಹ ಅತಿಯಾಗಿ ವ್ಯಸ್ತವಾಗಿರುವುದಿಲ್ಲ. ಆನ್ಲೈನ್ನಲ್ಲಿ ಪೌಷ್ಠಿಕಾಂಶ ತಜ್ಞರು ಹೇಳುವ ಪ್ರಕಾರ, ರಾತ್ರಿ ಮಲಗಲು ಹೋಗುವಾಗ ಹೊಟ್ಟೆಯನ್ನು ಸಂಪೂರ್ಣ ತುಂಬಿಸಿಕೊಳ್ಳಬಾರದು. ಸ್ವಲ್ಪ ಹಸಿವೆ ಉಳಿದಿರಬೇಕು. ದೇಹ ಕ್ಯಾಲರಿ ಕೊರತೆಯನ್ನು ಎದುರಿಸಿದಾಗ ಶೇಖರಿಸಿದ ಕೊಬ್ಬನ್ನು ಬಳಸಿಕೊಳ್ಳಲು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ದೇಹ ಕೊಬ್ಬು ಬಳಕೆಗೆ ಹೆಚ್ಚು ಒಲವು ತೋರಿಸುತ್ತದೆ. ►ಅತಿ ಹಸಿವಿನಿಂದ ಮಲಗಬಾರದು ಸ್ವಲ್ಪ ಹಸಿವೆಯಿಂದ ಇರುವುದು ಎಂದರೆ ಹಸಿವಿನಿಂದ ಮಲಗಬೇಕು ಎಂದರ್ಥವಲ್ಲ. ಅತಿ ಹಸಿವಿನಿಂದ ಮಲಗಲು ಹೋದರೆ ಒತ್ತಡದ ಹಾರ್ಮೋನ್ಗಳಾದ ಕಾರ್ಟಿಸೋಲ್ ನ ಮಟ್ಟ ಏರಿಕೆಯಾಗಬಹುದು. ಇದರಿಂದ ನಿದ್ರೆಗೆ ತೊಂದರೆಯಾಗಬಹುದು. ಪರಿಣಾಮವಾಗಿ ಬೆಳಗ್ಗೆ ಬೇಗನೇ ಎಚ್ಚರವಾಗುವ ಸಾಧ್ಯತೆ ಇದೆ ಮತ್ತು ಮರುದಿನ ಹಸಿವೆ ಇನ್ನಷ್ಟು ಹೆಚ್ಚಾಗಬಹುದು. ನಿದ್ರಾ ರಾಹಿತ್ಯವು ಕೊಬ್ಬು ಕರಗುವಿಕೆಯನ್ನು ನಿಧಾನಗೊಳಿಸಬಹುದು ಮತ್ತು ಒಟ್ಟು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ►ಅಧಿಕ ಆಹಾರ ಸೇವಿಸಿ ಮಲಗಬಾರದು ಮಲಗುವ ಮೊದಲು ಅತಿಯಾದ ಆಹಾರ ಸೇವನೆಯೂ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ತಡರಾತ್ರಿ ಹೆಚ್ಚಿನ ಆಹಾರ ಸೇವನೆಯಿಂದ ಇನ್ಸುಲಿನ್ ಮಟ್ಟ ಏರಿಕೆಯಾಗಬಹುದು. ಇದರಿಂದ ಕೊಬ್ಬು ಶೇಖರಣೆಯಾಗುವ ಸಾಧ್ಯತೆ ಹೆಚ್ಚುತ್ತದೆ. ನಿದ್ರೆಯ ಸಮಯದಲ್ಲೂ ಜೀರ್ಣಕ್ರಿಯೆ ಮುಂದುವರಿಯುವುದರಿಂದ ನಿದ್ರಾ ವ್ಯತ್ಯಯ, ಹೊಟ್ಟೆ ಉಬ್ಬರಿಸುವಿಕೆ ಉಂಟಾಗಬಹುದು. ಅಲ್ಲದೆ, ಆಮ್ಲದ ರಿಫ್ಲಕ್ಸ್ (ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯುವ ಸ್ಥಿತಿ) ಉಂಟಾಗಿ ಎದೆಯುರಿ ಹಾಗೂ ಅಸಹನೀಯತೆ ಎದುರಾಗಬಹುದು. ಸರಿಯಾದ ನಿದ್ರೆ ಇಲ್ಲದಿದ್ದರೆ ಹಸಿವೆಯನ್ನು ನಿಯಂತ್ರಿಸುವ ಹಾರ್ಮೋನ್ಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮರುದಿನ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಇದೆ. ಇಂತಹ ಪ್ರವೃತ್ತಿ ಮುಂದುವರಿದರೆ ತೂಕ ಏರಿಕೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳ ಮತ್ತು ನಿರಂತರ ಸುಸ್ತಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುವ ಸಾಧ್ಯತೆ ಇದೆ. ►ಕಾರ್ಬೋಹೈಡ್ರೇಟ್ ಸೇವಿಸಿ ಮಲಗಬಾರದು ಮಲಗುವ ಮುನ್ನ ಕಾರ್ಬೋಹೈಡ್ರೇಟ್ಗಳ ಸೇವನೆಯಿಂದ ಅವು ಸರಿಯಾಗಿ ಜೀರ್ಣವಾಗಲು ಕಷ್ಟವಾಗಬಹುದು. ಇದರ ಪರಿಣಾಮವಾಗಿ ತೂಕ ಏರಿಕೆ ಮತ್ತು ಆಮ್ಲದ ಸಮಸ್ಯೆಗಳು ಉಂಟಾಗಬಹುದು. ಹೊಟ್ಟೆ ನೋವು, ಅಸಹನೀಯತೆ, ನಿರಂತರ ಎದೆಯುರಿ ಮತ್ತು ಆಸಿಡಿಟಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಾವಧಿಯಲ್ಲಿ ಇದು ಗ್ಯಾಸ್ಟ್ರೋಇಸೋಫೇಜಿಯಲ್ ರಿಫ್ಲಕ್ಸ್ ರೋಗ (GERD) ಗೆ ಕಾರಣವಾಗುವ ಸಾಧ್ಯತೆ ಇದೆ. ►ತಡರಾತ್ರಿ ಊಟ ಮಾಡಬಾರದು ಕೆಲವರು ತಡರಾತ್ರಿ ಊಟ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇಂತಹವರಿಗೆ ಬೊಜ್ಜು, ಹೃದಯ ಸಂಬಂಧಿತ ಸಮಸ್ಯೆಗಳು ಮತ್ತು ಮಧುಮೇಹದ ಅಪಾಯ ಹೆಚ್ಚಾಗಬಹುದು. ವಿಶೇಷವಾಗಿ ಸಂಸ್ಕರಿತ ಆಹಾರಗಳನ್ನು ರಾತ್ರಿ ಸಮಯದಲ್ಲಿ ಸೇವಿಸುವುದರಿಂದ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಶೇಖರಣೆ ಹೆಚ್ಚಾಗಿ ಅಪಧಮನಿಗಳು ಕಿರಿದಾಗುವ ಸಾಧ್ಯತೆ ಇದೆ. ►ಸ್ವಲ್ಪ ಹಸಿವಿನಿಂದ ಮಲಗುವುದು ಉತ್ತಮ ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ವಲ್ಪ ಮಟ್ಟಿಗೆ ಹಸಿವೆಯಿಂದ ನಿದ್ರೆಗೆ ಜಾರುವುದರಿಂದ ಕೊಬ್ಬಿನ ನಷ್ಟಕ್ಕೆ ಸಹಕಾರಿಯಾಗಬಹುದು ಮತ್ತು ಉತ್ತಮ ನಿದ್ರೆಯೂ ಲಭಿಸಬಹುದು. ರಾತ್ರಿಯ ಭೋಜನ ಸಮತೋಲಿತವಾಗಿದ್ದು, ಬೇಗನೇ ಸೇವಿಸಿದರೆ ಇದು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಪ್ರೋಟೀನ್ ಮತ್ತು ಫೈಬರ್ ಅಂಶಗಳುಳ್ಳ ಆಹಾರವನ್ನು ಆಯ್ಕೆ ಮಾಡುವುದು ಸೂಕ್ತ. ನಿದ್ರೆಗೆ ಜಾರುವ ಕೆಲ ಗಂಟೆಗಳ ಮೊದಲು ಆಹಾರ ಸೇವನೆಯನ್ನು ಕಡಿಮೆಗೊಳಿಸಿದಾಗ ಇನ್ಸುಲಿನ್ ಮಟ್ಟ ನಿಧಾನವಾಗಿ ಇಳಿಯುತ್ತದೆ. ಇನ್ಸುಲಿನ್ ಮಟ್ಟ ಕಡಿಮೆಯಾದಾಗ ದೇಹದಲ್ಲಿ ಕೊಬ್ಬು ಶೇಖರಣೆಯಾಗುವ ಬದಲು ಶೇಖರಿಸಿದ ಕೊಬ್ಬನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತದೆ. ನಿದ್ರೆಯ ಸಮಯದಲ್ಲಿ ಬೆಳವಣಿಗೆಗೆ ಸಹಾಯಕವಾಗುವ ಹಾರ್ಮೋನ್ಗಳ ಮಟ್ಟ ಏರಿಕೆಯಾಗುತ್ತದೆ. ಇದು ಕೊಬ್ಬು ಕರಗಿಸುವಿಕೆ, ಸ್ನಾಯುಗಳ ಪುನಶ್ಚೇತನ ಮತ್ತು ದೇಹದ ಒಟ್ಟು ಚೇತರಿಕೆಗೆ ನೆರವಾಗುತ್ತದೆ. ಹೀಗಾಗಿ ಸ್ವಲ್ಪ ಮಟ್ಟಿನ ಹಸಿವೆಯ ಅನುಭವ ಜೀರ್ಣಕ್ರಿಯೆಯನ್ನೂ ಮತ್ತು ನಿದ್ರೆಯ ಗುಣಮಟ್ಟವನ್ನೂ ಉತ್ತಮಗೊಳಿಸಲು ಸಹಾಯಕವಾಗುತ್ತದೆ.
ದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ
ಮಂಗಳೂರು : ದ್ವೇಷ ಭಾಷಣ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ . ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ಪಾದಯಾತ್ರೆ ಏಕೆ ಕೈಗೊಳ್ಳಬೇಕು : ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾವು ಹಿಂದೆ ಪಾದಯಾತ್ರೆ ಮಾಡಿದ್ದು, ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ಸವಾಲು ಹಾಕಿದ್ದರು. ಅದಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಯಿತು. ಇವರು ಪಾದಯಾತ್ರೆ ಏಕೆ ಮಾಡಬೇಕು ಎಂದು ಪ್ರಶ್ನಿಸಿದರು. ಬ್ಯಾನರ್ ತೆಗೆದದ್ದು ಬಳ್ಳಾರಿ ಘಟನೆಗೆ ಪ್ರಚೋದನೆ : ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೇ ಘಟನೆಗೆ ಪ್ರಚೋದನೆ ಆಯಿತು ಎಂದರು.
ಮಾರ್ಚ್ 27,28 ರಂದು ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ
ಬಂಟ್ವಾಳ: ಬಂಟ್ವಾಳ ತಾಲೂಕಿನ ಸಾಹಿತ್ಯಾಸಕ್ತರ ಸಹಕಾರದೊಂದಿಗೆ ಬಂಟ್ವಾಳ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಮಾರ್ಚ್ 27 ಮತ್ತು 28ರಂದು ಎರಡು ದಿನಗಳ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಘೋಷಿಸಿದ್ದಾರೆ. ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮಿತಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ಮೆರವಣಿಗೆ ಸಹಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಗೋಷ್ಠಿಗಳು ನಡೆಯಲಿದ್ದು, ಸ್ಥಳೀಯ ಹಾಗೂ ಜಿಲ್ಲೆಯ ಪ್ರತಿಭಾನ್ವಿತ ಸಾಹಿತಿಗಳಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಸಮ್ಮೇಳನದ ಸಂದರ್ಭದಲ್ಲೇ ಪುಸ್ತಕ ಬಿಡುಗಡೆಗೆ ಸಹ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ವಿಶೇಷವಾಗಿ ಗಡಿನಾಡ ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಅಗತ್ಯವಿದೆ ಹಾಗೂ ಎಲ್ಲ ವರ್ಗದ ಜನರಿಗೂ ಆಸಕ್ತಿ ಮೂಡಿಸುವಂತಹ ಗೋಷ್ಠಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಆಶಯ ವ್ಯಕ್ತವಾಯಿತು. ಸಭೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಕಾರ್ಯದರ್ಶಿಗಳಾದ ವಿ.ಸು. ಭಟ್ ಹಾಗೂ ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿ ಅಬ್ದುಲ್ ರಹಮಾನ್ ಡಿ.ಬಿ., ಜಿಲ್ಲಾ ಕಸಾಪ ಸದಸ್ಯರಾದ ಪೂವಪ್ಪ ನೇರಳಕಟ್ಟೆ ಹಾಗೂ ಸುಭಾಶ್ಚಂದ್ರ ಜೈನ್, ವಿಟ್ಲ ಹೋಬಳಿ ಕಸಾಪ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರಮುಖರಾದ ಕೈಯೂರು ನಾರಾಯಣ ಭಟ್, ದೇವಪ್ಪ ಕುಲಾಲ್ ಪಂಜಿಕಲ್ಲು, ಎಚ್.ಕೆ. ನಯನಾಡು, ಸಂಕಪ್ಪ ಶೆಟ್ಟಿ, ಜಯಾನಂದ ಪೆರಾಜೆ, ಪ್ರೊ. ಎಂ.ಡಿ. ಮಂಚಿ, ಜಯರಾಮ ಪಡ್ರೆ, ಸೋನಿತಾ ಕೆ. ನೇರಳಕಟ್ಟೆ, ಉಮ್ಮರ್ ಮಂಚಿ, ಸಾಯಿರಾಮ ನಾಯಕ್, ಗೀತಾ ಕೋಂಕೋಡಿ, ಸನ್ಮತಿ ಜಯಕೀರ್ತಿ, ದಾಮೋದರ ಏರ್ಯ, ಶ್ರೀಕಲಾ ಕಾರಂತ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದ್ದು, ಅಬೂಬಕ್ಕರ್ ಅಮ್ಮಂಜೆ ವಂದಿಸಿದರು.
ಮುಂಬೈ ಬಗ್ಗೆ ಅಣ್ಣಾಮಲೈ ಹೇಳಿಕೆ ಬಿರುಗಾಳಿ; ಬಂಧನಕ್ಕೆ ಶಿವಸೇನೆ ಆಗ್ರಹ
ಮಾಜಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಮುಂಬೈಯನ್ನು ಅಂತಾರಾಷ್ಟ್ರೀಯ ನಗರ ಎಂದು ಕರೆದ ಹೇಳಿಕೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವಾಗ, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಅಣ್ಣಾಮಲೈ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಲ್ಲರಂತೆ ಆಗುವುದು ಬೇಕಿಲ್ಲ; Gen Z ವೃತ್ತಿಯ ಹೊಸ ಟ್ರೆಂಡ್ ಏನು?
ದಶಕಗಳಿಂದ ಭಾರತೀಯ ಹೆತ್ತವರು ತಮ್ಮ ಮಕ್ಕಳು ವೈದ್ಯರು, ಇಂಜಿನಿಯರ್ಗಳು, ಐಎಎಸ್, ಕೆಎಎಸ್, ಅಧ್ಯಾಪಕರು ಮೊದಲಾದ ಉದ್ಯೋಗ ಭದ್ರತೆಯ ವೃತ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಬಯಸುತ್ತಿದ್ದರು. ಆದರೆ ಇತ್ತೀಚೆಗೆ ಕಾಲ ಬದಲಾಗಿದೆ. ಒಂದು ಸ್ಥಿರ ಉದ್ಯೋಗದಲ್ಲೇ ಪ್ರಗತಿ ಹೊಂದಿ ಮೇಲೇರಲು ಪ್ರಯತ್ನಿಸುವ ಬದಲಾಗಿ ಪರ್ಯಾಯ ಆದಾಯ ಅವಕಾಶಗಳನ್ನು ಹುಡುಕುವ ಪ್ರವೃತ್ತಿ ಹೆಚ್ಚಾಗಿದೆ. ಹೆಚ್ಚು ಕೌಶಲ್ಯ ಆಧಾರಿತ ಉದ್ಯೋಗಗಳತ್ತ ಯುವಜನರು ಗಮನಹರಿಸುತ್ತಿದ್ದಾರೆ. ಇತ್ತೀಚಿನ ಅಧ್ಯಯನವೊಂದರಲ್ಲಿ ಜೆನ್ ಝೀ ಅಂದರೆ 20ರಿಂದ 30ರ ವಯಸ್ಸಿನವರನ್ನು ಸಮೀಕ್ಷೆ ಮಾಡಲಾಗಿದೆ. 2025ರಲ್ಲಿ ಡಿಲೋಯಿಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ 16ರಷ್ಟು ಜೆನ್ ಝೀ ಮಾತ್ರ ಸಾಂಪ್ರದಾಯಿಕವೆನಿಸಿದ ಒಂದೇ ಪೂರ್ಣಾವಧಿಯ ಉದ್ಯೋಗ ಮಾಡಲು ಬಯಸಿದ್ದಾರೆ. ಶೇ 43ರಷ್ಟು ಜೆನ್ ಝೀ ಪೂರ್ಣಾವಧಿಯ ಉದ್ಯೋಗದ ಪ್ರಗತಿಯತ್ತ ಹೆಚ್ಚು ಗಮನಹರಿಸದೆ ಪರ್ಯಾಯ ಆದಾಯ ಗಳಿಸುವತ್ತ ಗಮನಹರಿಸಿದ್ದಾರೆ. ►ಎಲ್ಲರಂತೆ ಆಗುವುದು ಬೇಕಿಲ್ಲ ಉದಾಹರಣೆಗೆ ತುಮಕೂರಿನ ನಿವಾಸಿ 28 ವರ್ಷದ ಬಿ.ಕೆ. ಸುಶ್ಮಾ ಅವರನ್ನು ತೆಗೆದುಕೊಳ್ಳಿ. ಅವರು ಪತ್ರಿಕೋದ್ಯಮ ಮತ್ತು ಕಲಾ ವಿಷಯದಲ್ಲಿ ಪದವಿ ಮುಗಿಸಿದ್ದರು. ಆದರೆ ಲೇಖಕಿಯಾಗುವುದು ಅವರಿಗೆ ಇಷ್ಟವಾಗಲಿಲ್ಲ. ನಂತರ ನಾಲ್ಕು ವರ್ಷ ಚಿತ್ರಕಲಾ ಪರಿಷತ್ತಿನಲ್ಲಿ ವೃತ್ತಿಪರವಾಗಿ ಕಲೆ ಕಲಿತರು. ಸಿನಿಮಾಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಇದೀಗ ಅವರು ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ‘ಸು ಫ್ರಂ ಸೊ’ ಮತ್ತು ‘ಆಹಾ ನನ್ನ ಮದ್ವೆ ಅಂತೆ’ ಸಿನಿಮಾಗಳಲ್ಲಿ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸಮಂತಾ ಅಭಿನಯದ ‘ಮಾ ಇಂತಿ ಬಂಗಾರಂ’ ಸಿನಿಮಾದಲ್ಲಿ ಸಹಾಯಕ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೃತ್ತಿಯಿಂದ ಅವರಿಗೆ ಆಸಕ್ತಿಯ ಜೊತೆಗೆ ಹಣಕಾಸು ಸ್ವಾತಂತ್ರ್ಯವೂ ದೊರೆತಿದೆ. “ನನ್ನದೇ ಆದ ಸೃಷ್ಟಿಯ ಬಗ್ಗೆ ನನಗೆ ಮೊದಲಿನಿಂದಲೇ ಪ್ರೀತಿ. ಕಲೆ ನನ್ನ ಬಹುದೊಡ್ಡ ಸಾಮರ್ಥ್ಯ. ಬಹಳ ಸಣ್ಣ ವಯಸ್ಸಿನಲ್ಲಿಯೇ ಈ ಬಗ್ಗೆ ಅರಿವಾಗಿರುವುದು ಖುಷಿ ನೀಡಿದೆ. ನಾನು ಯಾವಾಗಲೂ ಸುರಕ್ಷಿತ ಅಥವಾ ನಿರೀಕ್ಷಿತ ಎನಿಸಿದ ಹಾದಿಯ ಬದಲಾಗಿ ನನಗೆ ಉತ್ಸಾಹ ನೀಡುವ ದಾರಿಯನ್ನು ಹುಡುಕಲು ಬಯಸಿದ್ದೆ. ಸ್ನೇಹಿತರು ಮತ್ತು ಕುಟುಂಬದವರು ರೆಗ್ಯುಲರ್ ಹಾಗೂ ನಿರೀಕ್ಷಿತ ಉದ್ಯೋಗಗಳನ್ನು ಮಾಡುವುದನ್ನು ನೋಡಿದ್ದೇನೆ. ಹೀಗೆ ಊಹಿಸಬಹುದಾದ ಸಾಮಾನ್ಯ ಜೀವನ ನಡೆಸುವುದು ನನಗೆ ಬೇಕಿರಲಿಲ್ಲ. ಎಲ್ಲರಂತೆ ಆಗುವುದು ನನಗೆ ಬೇಡ. ನನ್ನತನವನ್ನು ಕಂಡುಕೊಂಡು ನನ್ನದೇ ದಾರಿಯಲ್ಲಿ ಸಾಗಲು ಬಯಸಿದ್ದೆ” ಎಂದು ಸುಶ್ಮಾ ಹೇಳುತ್ತಾರೆ. ►ಏನಾದರೂ ಹೊಸದನ್ನು ಮಾಡುವ ತವಕ ವಿಟ್ಲದ ನಿವಾಸಿ 24 ವರ್ಷದ ಆಕಾಶ್ ಪಿ.ಪಿ. ಎಂಬಿಎ ಮುಗಿಸಿದ್ದಾರೆ. ಆದರೆ ಎಂಬಿಎ ಸಂಬಂಧಿತ ವೃತ್ತಿಗೆ ಹೋಗುವುದು ಅವರಿಗೆ ಇಷ್ಟವಿಲ್ಲ. ತಂದೆಗೆ ಹೋಟೆಲ್ ಉದ್ಯಮದಲ್ಲಿ ನೆರವಾಗುತ್ತಿದ್ದಾರೆ. ಈ ಉದ್ಯಮವನ್ನು ಮತ್ತೊಂದು ಘಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದು ಅವರ ಬಯಕೆ. ಅದಕ್ಕಾಗಿ ಈಗ ಐಸ್ಕ್ರೀಂ ತಯಾರಿಕೆ ಬಗ್ಗೆ ಕಲಿಕೆಗೆ ತೊಡಗಿದ್ದಾರೆ. ಆನ್ಲೈನ್ನಲ್ಲಿ ವಿವಿಧ ಕೋರ್ಸ್ ಗಳನ್ನು ತೆಗೆದುಕೊಂಡಿದ್ದಾರೆ. “ಸ್ವಲ್ಪ ಸಮಯ ಸ್ವಂತ ಉದ್ಯಮಕ್ಕೆ ಪ್ರಯತ್ನಿಸಿ ನೋಡೋಣ ಎಂದುಕೊಂಡಿದ್ದೇನೆ. ಒಂದೆರಡು ವರ್ಷ ವ್ಯವಹಾರದಲ್ಲಿ ಪ್ರಯತ್ನಿಸುತ್ತೇನೆ. ಆಮೇಲೆ ಕೈಗೂಡದಿದ್ದರೆ ಬೇಕಾದರೆ ರೆಗ್ಯುಲರ್ ಕೆಲಸಕ್ಕೆ ಹೋಗೋಣ ಎಂಬ ನಿರ್ಧಾರವಿದೆ” ಎನ್ನುತ್ತಾರೆ ಆಕಾಶ್. ►ಅನುಕೂಲದ ಟ್ರೆಂಡ್ ಅಲ್ಲ! ಈ ಟ್ರೆಂಡ್ ಕೇವಲ ತಾತ್ಕಾಲಿಕವಲ್ಲ. ಡಿಲೋಯಿಟ್ ಸಮೀಕ್ಷೆಯ ಪ್ರಕಾರ ಶೇ 94ರಷ್ಟು ಯುವ ಭಾರತೀಯರು ತಮ್ಮ ಹುದ್ದೆಯಲ್ಲೇ ಮೇಲೇರುವ ಬದಲಾಗಿ ಪ್ರಸ್ತುತ ಅಗತ್ಯವಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ತಮ್ಮ ಅವಕಾಶಗಳನ್ನು ವಿಸ್ತರಿಸಿಕೊಳ್ಳಲು ಬಯಸುತ್ತಾರೆ. ಅದೇ ಸಮೀಕ್ಷೆಯಲ್ಲಿ ಶೇ 11ರಷ್ಟು ಜೆನ್ ಝೀ ಭಾರತೀಯ ಪ್ರತಿಸ್ಪಂದಿಗಳು ತಾವು ಸಾಮಾನ್ಯ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ತೊರೆದಿರುವುದಾಗಿ ತಿಳಿಸಿದ್ದಾರೆ. ಪಾರಂಪರಿಕ ಶಿಕ್ಷಣ ಪದ್ಧತಿ ಹೆಚ್ಚು ಪ್ರಯೋಜನಕಾರಿಯಾಗಿಲ್ಲ ಎಂಬ ಕಾರಣದಿಂದ ಪದವಿ ಮುಗಿದ ತಕ್ಷಣ ಉದ್ಯೋಗಕ್ಕೆ ಸೇರ್ಪಡೆಗೊಂಡು ನಂತರ ಅಗತ್ಯ ಪ್ರಮಾಣಪತ್ರಗಳನ್ನು ಪಡೆಯುವ ಪ್ರವೃತ್ತಿ ಹೆಚ್ಚಾಗಿದೆ. ►ಪದವಿಯಿಂದ ಅಗತ್ಯ ಕೌಶಲ್ಯವಿಲ್ಲ ಶೇ 78ರಷ್ಟು ಜೆನ್ ಝೀ ಅಭಿಪ್ರಾಯಪಟ್ಟಂತೆ, ಪಡೆದ ಪದವಿಯಿಂದ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು ದೊರಕುತ್ತಿಲ್ಲ. ಶೇ 60ರಷ್ಟು ಜೆನ್ ಝೀ ಪ್ರಕಾರ 9ರಿಂದ 5ರವರೆಗೆ ಕೆಲಸ ಮಾಡದೇಯೂ ಹಣಕಾಸು ಸ್ವಾತಂತ್ರ್ಯ ಪಡೆಯಬಹುದು. ಕೊಪ್ಪದ ನಿವಾಸಿ ವಿಘ್ನೇಶ್ ಅವರ ಉದಾಹರಣೆ ಇದಕ್ಕೆ ಸಾಕ್ಷಿ. ಪದವಿ ನಂತರ ವಿವಿಧ ಉದ್ಯೋಗಗಳಿಗೆ ಪ್ರಯತ್ನಿಸಿದವರು, ಡ್ರೈವಿಂಗ್ ಮತ್ತು ವ್ಯವಹಾರಕ್ಕೂ ಕೈ ಹಾಕಿದ್ದಾರೆ. ಕೊನೆಗೆ ಅವರಿಗೆ ವೃತ್ತಿ ಬದುಕು ನೀಡಿದ್ದು ಜ್ಯೋತಿಷ್ಯ. ಹದಿಹರೆಯದಲ್ಲಿಯೇ ಆಧ್ಯಾತ್ಮದತ್ತ ಮನ ಹರಿಸಿದ ಅವರು ಮಠದಲ್ಲಿ ಗುರುಗಳಿಂದ ವಿಧಿವತ್ತಾಗಿ ವಿದ್ಯೆ ಹಾಗೂ ಆಚರಣೆಗಳನ್ನು ಕಲಿತಿದ್ದಾರೆ. ಇದೀಗ ಸ್ವತಂತ್ರವಾಗಿ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ. ►ಮಕ್ಕಳು ಜೊತೆಗಿದ್ದು ಖುಷಿಯಾಗಿರುವ ಆಶಯ ಹೆತ್ತವರೂ ಕೂಡ ಮಕ್ಕಳನ್ನು ದೂರ ಕಳುಹಿಸಲು ಇಚ್ಛಿಸುವುದಿಲ್ಲ. ಜೊತೆಗಿದ್ದು ಸಂತೋಷವಾಗಿರಬೇಕು ಎನ್ನುವುದು ಅವರ ಆಶಯ. ಅಳಿಕೆಯ ನಿವಾಸಿ ರಾಹುಲ್ ಬಿಕಾಂ ನಂತರ ಸಿಎ ಓದುತ್ತಿದ್ದಾರೆ. ಜೊತೆಗೆ ಎಲ್ಎಲ್ಬಿಯನ್ನೂ ಮಾಡುತ್ತಿದ್ದಾರೆ. ಸಿಎ ವೃತ್ತಿಗೆ ಕಾನೂನು ಶಿಕ್ಷಣ ಸಹಾಯಕವಾಗುತ್ತದೆ ಎಂಬುದು ಅವರ ನಂಬಿಕೆ. ರಾಹುಲ್ ತಂದೆ ವಿಶ್ವನಾಥ ಅಳಿಕೆ ಹೇಳುವಂತೆ, “ನಮಗೆ ಒಬ್ಬನೇ ಮಗ. ಇಂಜಿನಿಯರ್ ಅಥವಾ ವೈದ್ಯನಾಗಿ ಊರು ಬಿಟ್ಟು ಹೋಗುವುದು ನಮಗೆ ಬೇಕಿರಲಿಲ್ಲ. ಮಗನಿಗೂ ಅದೇ ಅಭಿಪ್ರಾಯ. ಯಾವುದೇ ಓದಿನಲ್ಲಿ ಉತ್ತಮ ಅಂಕ ಪಡೆಯುವ ಸಾಮರ್ಥ್ಯ ಮಗನಿಗಿದೆ. ಆದರೆ ವೈದ್ಯರಾದವರು ದಿನವಿಡೀ ದುಡಿದು ರಾತ್ರಿ 12ಕ್ಕೆ ಮನೆಗೆ ಬರುವುದು, ಇಂಜಿನಿಯರ್ ಆದವರು ದೂರದ ಊರುಗಳಲ್ಲಿ ಕೆಲಸ ಮಾಡುವುದು ನೋಡಿದ್ದೇವೆ. ನಮ್ಮ ಮಗ ಚೆನ್ನಾಗಿರಲಿ, ನಮ್ಮ ಜೊತೆಗೇ ಇರಲಿ”, ಎನ್ನುತ್ತಾರೆ ಅವರು.
Kanakagiri | ಟಿಪ್ಪರ್- ಬೈಕ್ ನಡುವೆ ಢಿಕ್ಕಿ; ಬೈಕ್ ಸವಾರ ಮೃತ್ಯು
ಕನಕಗಿರಿ : ತಾಲೂಕಿನ ನವಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೈರಾಪುರ ಗ್ರಾಮದಲ್ಲಿ ಮರಳಿನ ಟಿಪ್ಪರ್, ಬೈಕ್ಗೆ ಢಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ. ರುದ್ರಗೌಡ ದಳಪತಿ (63) ಮೃತರು ಎಂದು ತಿಳಿದು ಬಂದಿದೆ. ಚಿರ್ಚನ ಗುಡ್ಡ ಗ್ರಾಮದಿಂದ ಚಿಕಿತ್ಸೆ ಪಡೆಕೊಂಡು ನವಲಿಗೆ ಮರಳಿ ಬರುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಯುಎಪಿಎ ಮತ್ತು ಜಾಮೀನು ಎನ್ನುವ ಮರೀಚಿಕೆ
ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಕಾಯ್ದೆಯ ಸೆಕ್ಷನ್ಗಳು ಮಾತ್ರ ಮುಖ್ಯವಾಗಿ ಪರಿಗಣಿಸಲ್ಪಡುವಾಗ ಸೈದ್ಧಾಂತಿಕವಾಗಿ, ತಾತ್ವಿಕವಾಗಿ ಇದರ ಬಗ್ಗೆ ನಾವು ಎತ್ತುವ ನ್ಯಾಯಪರ ಪ್ರಶ್ನೆಗಳು ವಾದ ಪ್ರತಿವಾದಕ್ಕೆ ಸೀಮಿತವಾಗಿ ಉಳಿದುಬಿಡುತ್ತವೆ. ಈ ಬಗೆಯ ವಾದವನ್ನು ನ್ಯಾಯಾಂಗದ ಮುಂದೆ ಒಪ್ಪಿಸುವುದು ಕಷ್ಟ, ಕಾನೂನಿನ ಪರಿಧಿಯಡಿ ತೀರ್ಪಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮುಖ್ಯವಾಗಿ ನ್ಯಾಯಾಲಯಗಳಲ್ಲಿ ಯುಎಪಿಎ ಸಿಂಧುತ್ವವನ್ನು ಪ್ರಶ್ನಿಸಿರುವ ಪ್ರಕರಣಗಳಿಗೆ ಹಿನ್ನಡೆಯಾಗಿರುವ ಉದಾಹರಣೆಗಳೇ ಹೆಚ್ಚಾಗಿವೆ. ‘ಪ್ರಜಾಸತ್ತಾತ್ಮಕ ಆಶಯಗಳು ಹಾಗೂ ಜನಜೀವನಕ್ಕೆ ಭಂಗ ತರುವ ಚಟುವಟಿಕೆಗಳು’ ನಡುವಿನ ಆಳವಾದ ಗೆರೆ ಅಳಿಸಿಹೋದರೆ ಆಗುವ ಅನಾಹುತಕ್ಕೆ ಉಮರ್ ಖಾಲಿದ್ ಮತ್ತು ಇತರರು ಮತ್ತು ಭೀಮಾ ಕೋರೆಗಾಂವ್ ಪ್ರಕರಣಗಳೇ ಸಾಕ್ಷಿ. his is political trail, that already decided on us' & ‘ದ ಟ್ರಯಲ್ ಆಫ್ ಚಿಕಾಗೊ 7’ ಸಿನೆಮಾದಲ್ಲಿ ಆ್ಯಕ್ಟಿವಿಸ್ಟ್ ಹಾಫ್ಮನ್ ಮಾತು. 5 ಜನವರಿ 2026ರಂದು ಸುಪ್ರೀಂಕೋರ್ಟ್ ಪೀಠವು 2020ರ ದಿಲ್ಲಿ ಗಲಭೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿತರಾಗಿದ್ದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂ ಅವರಿಗೆ ಮತ್ತೊಮ್ಮೆ ಜಾಮೀನು ನಿರಾಕರಿಸಿದೆ. ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರಹಮಾನ್, ಮುಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಶರತ್ತುಬದ್ಧ ಜಾಮೀನು ನೀಡಿದೆ. ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಪೀಠವು ವಿಚಾರಣೆ ನಡೆಸುವಾಗ ಸಿಎಎ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿನ ದಿಲ್ಲಿ ಗಲಭೆಗಳಲ್ಲಿ ಬಂಧಿತರನ್ನು ‘ಮುಖ್ಯ ಪಿತೂರಿಗಾರರು’ ಮತ್ತು ‘ಸಹಕರಿಸಿದವರು’ ಎಂದು ಕೆಟಗರಿ ಮಾಡಿದ್ದಾರೆ. ಮೊದಲಿನವರು ಸೈದ್ಧಾಂತಿಕ ಮಾರ್ಗದರ್ಶಿಗಳಾಗಿ ಪಾತ್ರವಹಿಸಿದ್ದಾರೆ ಅದಕ್ಕೆ ಜಾಮೀನು ಸಿಕ್ಕಿಲ್ಲ, ಎರಡನೆಯವರು ಅಂಚಿನಲ್ಲಿದ್ದು ಕೆಲಸ ಮಾಡಿದ್ದಾರೆ ಅದಕ್ಕೆ ಸಿಕ್ಕಿದೆ. ಇಡೀ ತೀರ್ಪು ಆರೋಪಿಗಳ ಪಾತ್ರಗಳು ಮತ್ತು ಅದರ ವ್ಯಾಪ್ತಿಯನ್ನು ಆಧರಿಸಿದೆ. ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂಗೆ ಜಾಮೀನು ಸಿಗದೆ ಇರುವುದು, ವಿಚಾರಣಾ ಪೂರ್ವದಲ್ಲಿಯೇ ಐದು ವರ್ಷಗಳ ಸುದೀರ್ಘ ಅವಧಿಗೆ ಬಂಧನದಲ್ಲಿರಿಸಿರುವುದು ಕಳವಳವನ್ನುಂಟು ಮಾಡುವ ವಿಚಾರ. ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಂ ಅವರ ಮೇಲಿನ ಯುಎಪಿಎ ಪ್ರಕರಣದಲ್ಲಿ ಇರುವ ಮುಖ್ಯ ಪ್ರಶ್ನೆಗಳು: ಭಯೋತ್ಪಾದಕ ಕೃತ್ಯ ಎಂದು ನಿರ್ಧರಿಸಲು ಇರುವ ಮಾನದಂಡಗಳೇನು? ಯಾರು ನಿರ್ಧರಿಸುತ್ತಾರೆ? ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಯಾಕೆ ಆರಂಭವಾಗಿಲ್ಲ? ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ? ಇದನ್ನು ನ್ಯಾಯಾಂಗ ಹೇಗೆ ಪರಿಗಣಿಸುತ್ತದೆ? ಉಮರ್ ಖಾಲಿದ್ ಮತ್ತು ಇತರ ಆರೋಪಿಗಳ ಪ್ರಕರಣದ ವಿಚಾರಣೆ ಮತ್ತು ನ್ಯಾಯ ಪ್ರಕ್ರಿಯೆಯಲ್ಲಿನ ವಿಳಂಬವು ಶಾಸಕಾಂಗ ಮತ್ತು ನ್ಯಾಯಾಂಗ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆಯಾಗಿದೆ. ಇಲ್ಲಿ ಯುಎಪಿಎ ಸೆಕ್ಷನ್ಗಳು ಸಹ ತೀರಾ ಜಟಿಲವಾಗಿದೆ. ಇದೂ ಸಹ ಜಾಮೀನು ನಿರಾಕರಣೆಗೆ ಮುಖ್ಯ ಕಾರಣ. ಯುಎಪಿಎ ಸೆಕ್ಷನ್ 15ರಲ್ಲಿ ಭಯೋತ್ಪಾದಕ ಕೃತ್ಯವನ್ನು ‘ಭಾರತದ ಏಕತೆ, ಸಮಗ್ರತೆ, ಭದ್ರತೆ, ಆರ್ಥಿಕ ಭದ್ರತೆ ಅಥವಾ ಸಾರ್ವಭೌಮತ್ವವನ್ನು ಬೆದರಿಕೆಗೊಳಿಸುವ ಅಥವಾ ಬೆದರಿಕೆಗೊಳಿಸುವ ಸಾಧ್ಯತೆಯಿರುವ ಉದ್ದೇಶದಿಂದ ಅಥವಾ ಭಾರತದ ಜನರಲ್ಲಿ ಅಥವಾ ಯಾವುದೇ ವಲಯದ ಜನರಲ್ಲಿ ಭಯ ಹುಟ್ಟಿಸುವ ಅಥವಾ ಭಯ ಹುಟ್ಟಿಸುವ ಸಾಧ್ಯತೆಯಿರುವ ಉದ್ದೇಶದಿಂದ ಮಾಡಿದ ಯಾವುದೇ ಕೃತ್ಯ’ ಎಂದು ವಿವರಿಸುತ್ತದೆ. ಜೊತೆಗೆ ಭಯ ಹುಟ್ಟಿಸುವುದನ್ನು ‘ಬಾಂಬ್ಗಳು, ಡೈನಮೈಟ್ ಅಥವಾ ಇತರ ಸ್ಫೋಟಕ ವಸ್ತುಗಳು ಅಥವಾ ಉರಿಯುವ ವಸ್ತುಗಳು ಅಥವಾ ಇತರ ಮಾರಕ ಶಸ್ತ್ರಾಸ್ತ್ರಗಳು... ಅಥವಾ ಯಾವುದೇ ಇತರ ವಿಧಾನಗಳ ಮೂಲಕ’ ಎಂದು ವ್ಯಾಖ್ಯಾನ ಮಾಡಲಾಗಿದೆ. ಇದನ್ನೇ ಉಲ್ಲೇಖಿಸಿ ನ್ಯಾಯಾಲಯವು ‘ಭಯೋತ್ಪಾದಕ ಕೃತ್ಯ’ವು ಕೇವಲ ಸಾಂಪ್ರದಾಯಿಕ ಹಿಂಸೆ ಅಥವಾ ನಿರ್ದಿಷ್ಟ ಶಸ್ತ್ರಾಸ್ತ್ರಗಳಿಗೆ ಮಾತ್ರ ಸೀಮಿತವಲ್ಲದೆ, ಉದ್ದೇಶ, ಯೋಜನೆ ಮತ್ತು ಪರಿಣಾಮಗಳನ್ನು ಆಧರಿಸಿ ‘ಯಾವುದೇ ಇತರ ವಿಧಾನಗಳ ಮೂಲಕ’ ಎಂಬ ಭಾಗವನ್ನು ಉಲ್ಲೇಖಿಸಿ ಉಮರ್ ಮತ್ತು ಶರ್ಜೀಲ್ ಅವರಿಗೆ ಜಾಮೀನು ನಿರಾಕರಿಸುತ್ತಿದೆ. ಯಾವುದೇ ಇತರ ವಿಧಾನಗಳು(ಚಿಟಿಥಿ oಣheಡಿ meಚಿಟಿs) ಎನ್ನುವ ಅಮೂರ್ತವಾದ, ಮುಖ್ಯವಲ್ಲದ ತೀರಾ ಸಾಧಾರಣ(ಣಡಿiviಚಿಟ) ವಿಚಾರವೇ ಉಮರ್ ಮತ್ತು ಶರ್ಜೀಲ್ ಅವರ ಜಾಮೀನು ನಿರಾಕರಣೆಗೆ ಮುಖ್ಯ ಕಾರಣ ಎನ್ನುವುದಾದರೆ ಇಲ್ಲಿ ಜನಸಾಮಾನ್ಯರ ಪಾಲಿಗೆ ನ್ಯಾಯದ ಬಾಗಿಲು ಮುಚ್ಚಿದಂತೆಯೇ? ಯಾಕೆಂದರೆ ಪ್ರಭುತ್ವ ದ್ವೇಷ ಸಾಧಿಸಲು ಇಂತಹ ಆರೋಪಗಳನ್ನು ದಾಖಲಿಸುತ್ತದೆ, ನ್ಯಾಯಾಂಗ ಪುರಸ್ಕರಿಸುತ್ತದೆ ಅಂದರೆ ನ್ಯಾಯಪ್ರಜ್ಞೆಯ ವ್ಯಾಖ್ಯಾನವೇನು ಎನ್ನುವ ಪ್ರಶ್ನೆ ಕೇಳಬೇಕಾಗುತ್ತದೆ. ಪ್ರಾಸಿಕ್ಯೂಷನ್ ಖಾಲಿದ್ ಮತ್ತು ಇತರ ಆರೋಪಿಗಳು ಆಯೋಜಿಸಿದ್ದ ‘ಚಕ್ಕಾ ಜಾಮ್’ (ರಸ್ತೆ ತಡೆಗಟ್ಟುವಿಕೆ ಅಥವಾ ಟ್ರಾಫಿಕ್ ಜಾಮ್ ಮಾಡುವ ಪ್ರತಿಭಟನೆ) ಸಹ ಯುಎಪಿಎ ಸೆಕ್ಷನ್ 15ರಲ್ಲಿ ಹೇಳಿರುವ ‘ಯಾವುದೇ ಇತರ ವಿಧಾನಗಳ, ದಾರಿಗಳ ಮೂಲಕ’ ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ ಎಂದು ವಾದಿಸಿದ್ದಾರೆ. ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ‘‘ಪ್ರಜಾಪ್ರಭುತ್ವದಲ್ಲಿ ಚಕ್ಕಾ ಜಾಮ್ ಅಥವಾ ರಸ್ತೆ ತಡೆಗಟ್ಟುವಿಕೆಗಳಂತ ಮಾರ್ಗಗಳನ್ನು ಪ್ರತಿಭಟನೆಯ ಕಾನೂನುಬದ್ಧ ರೂಪವೆಂದು ಪರಿಗಣಿಸಬೇಕು. ಇದು ಭಾರತದಲ್ಲಿ ರೈತ ಪ್ರತಿಭಟನೆಗಳು, ಇತರ ಸಾಮಾಜಿಕ ಚಳವಳಿಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಅಹಿಂಸಾತ್ಮಕ ವಿಧಾನವಾಗಿದೆ’’ ಎಂದು ಹೇಳಿದರು. ಇದನ್ನು ಪೀಠ ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ರಸ್ತೆ ತಡೆ ಎನ್ನುವ ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಪ್ರಜಾತಾಂತ್ರಿಕ ಹೋರಾಟ ಭಯೋತ್ಪಾದನೆಗೆ ಸಮ ಎಂದು ಉಮರ್ ಮತ್ತು ಇತರರ ಪ್ರಕರಣದಲ್ಲಿ ಸಾಬೀತಾಗಿದೆ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಪ್ರಾಸಿಕ್ಯೂಷನ್ನ ಈ ದುರ್ಬಲ ವ್ಯಾಖ್ಯಾನವನ್ನು ಒಪ್ಪಿಕೊಂಡು ‘ಅಂತಹ ಕೃತ್ಯಗಳನ್ನು ಎಸಗುವ ಸಾಧನಗಳು ಬಾಂಬ್ಗಳು, ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ಅಥವಾ ಇತರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಎಂದು ಹೇಳಬೇಕಿಲ್ಲ. ದೋಷಾರೋಪಣೆಯಲ್ಲಿ ಉದ್ದೇಶಪೂರ್ವಕವಾಗಿ ‘ಯಾವುದೇ ಇತರ ಸಾಧನಗಳ ಮೂಲಕ, ಯಾವುದೇ ಸ್ವರೂಪದಲ್ಲಿ’ ಎಂಬ ಪದಪ್ರಯೋಗವನ್ನು ಬಳಸಿದೆ. ಇದನ್ನು ನಿರ್ಲಕ್ಷಿಸಲಾಗದು. ಆದ್ದರಿಂದ ಕಾನೂನಿನ ಅಡಿಯಲ್ಲಿ ಕೇವಲ ಬಳಸಿದ ಸಾಧನ ಅಥವಾ ಉಪಕರಣದ ಮೇಲೆ ಮಾತ್ರವಲ್ಲದೆ, ಕೃತ್ಯದ ‘ಉದ್ದೇಶ (ಜesigಟಿ/iಟಿಣeಟಿಣ), ಯೋಜನೆ ಮತ್ತು ಪರಿಣಾಮದ (eಜಿಜಿeಛಿಣ)’ ಮೇಲಿನ ವ್ಯಾಖ್ಯಾನವನ್ನು ಪರಿಗಣಿಸಲಾಗುತ್ತದೆ ’ ಎಂದು ತೀರ್ಪಿನಲ್ಲಿ ಹೇಳಿದೆ. ಕಡೆಗೂ ಪ್ರಭುತ್ವ ನೀತಿಗಳನ್ನು ವಿರೋಧಿಸಿ ಹೋರಾಟ ಮಾಡುವುದು ಸರಕಾರವನ್ನು ಬುಡಮೇಲುಗೊಳಿಸುವ ಕೃತ್ಯ, ಇದು ಭಯೋತ್ಪಾದನೆಗೆ ಸಮ ಎಂದು ವಾದಿಸುವ ಮೋದಿ ನೇತೃತ್ವದ ಸರಕಾರವನ್ನು ನ್ಯಾಯಾಂಗವು ಬೆಂಬಲಿಸುತ್ತದೆ... ‘ಬಾರ್ ಆಂಡ್ ಬೆಂಚ್’ನ ಲೇಖನದಲ್ಲಿ ಈ ವಿಚಾರದ ಕುರಿತು ಇನ್ನೊಂದು ಆಯಾಮದಲ್ಲಿ ವಿಶ್ಲೇಷಿಸಲಾಗಿದೆ. ಈ ವರದಿಯ ಪ್ರಕಾರ ಕಾಯ್ದೆಯ ಪ್ರಸಕ್ತ ಸ್ವರೂಪದಡಿ ಜನಜೀವನಕ್ಕೆ ಭಂಗ ತರುವಂತಹ ಯಾವುದೇ ಬಗೆಯ ಕಾನೂನುಭಂಗ ಚಳವಳಿಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು, ವಿಸ್ತರಿಸುವುದು, ಅವುಗಳ ಸ್ವರೂಪವನ್ನು ಯೋಜಿಸುವುದು, ಯೋಜಿತವಾಗಿ ಅದನ್ನು ಕಾರ್ಯಗತಗೊಳಿಸುವುದು ಇದೆಲ್ಲವೂ ಸುಲಭವಾಗಿ ಸಾರ್ವಜನಿಕ ಜನಜೀವನಕ್ಕೆ ಭಂಗ ತರುವಂತಹ ಬುಡಮೇಲು ಕೃತ್ಯಗಳು ಎಂದು ತೀರ್ಮಾನಿಸಲ್ಪಡುತ್ತವೆ. ಹಾಗಾಗಿ ಅದು ಶರ್ಜೀಲ್, ಉಮರ್ ಮಾತ್ರವೇ ಅಲ್ಲ ಪ್ರಭುತ್ವದ ನೀತಿಗಳ ವಿರುದ್ಧ ಜನಾಭಿಪ್ರಾಯವನ್ನು ರೂಪಿಸಲು ಮುಂದಾಗುವಂತಹ ಯಾವುದೇ ಬಗೆಯ ಪ್ರಜಾತಾಂತ್ರಿಕ ಹೋರಾಟಗಳನ್ನೂ ಯುಎಪಿಎ ಅಡಿ ಬುಡಮೇಲು ಕೃತ್ಯದ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಕೆಲವು ಕಾನೂನು ತಜ್ಞರು ‘ಭೀಮಾ ಕೋರೆಗಾಂವ್ ಸೇರಿದಂತೆ ವಿವಿಧ ಹೋರಾಟಗಳಲ್ಲಿನ ಮುಂಚೂಣಿ ಹೋರಾಟಗಾರರು, ಚಿಂತಕರು, ನ್ಯಾಯವಾದಿಗಳು ಬಂಧನಕ್ಕೆ ಒಳಗಾಗಿರುವುದು ಇದೇ ಕಾರಣಕ್ಕೆ. ಇಲ್ಲಿ ನ್ಯಾಯಾಂಗದ ಕೈ ಕಟ್ಟಿ ಹಾಕಲಾಗಿದೆ’ ಎಂದು ಹೇಳುತ್ತಾರೆ. ಸುಪ್ರೀಂಕೋರ್ಟ್ ಪೀಠದ ಮುಂದೆ ಉಮರ್ ಖಾಲಿದ್ ಮತ್ತು ಇತರರು ಪರ ವಾದ ಮಂಡಿಸಿದ ವಕೀಲರು ‘ವಿಚಾರಣೆಯ ಶೀಘ್ರ ಮುಕ್ತಾಯವಿಲ್ಲದೆ ದೀರ್ಘಕಾಲದವರೆಗೆ ಅವರನ್ನು ವಶದಲ್ಲಿಟ್ಟಿರುವುದು ಸಂವಿಧಾನದ ವಿಧಿ 21ರ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ಪ್ರತಿಪಾದಿಸಿ ‘ನ್ಯಾಯಾಲಯದಿಂದ ಆರೋಪಪತ್ರದ ಪ್ರಕರಣದ ಯೋಗ್ಯತೆಯನ್ನು (meಡಿiಣ) ಪರಿಶೀಲಿಸಲು ಕೇಳುತ್ತಿಲ್ಲ, ಆದರೆ ವಿಚಾರಣೆಯಲ್ಲಿ ಏಕೆ ತಡವಾಗುತ್ತಿದೆ ಎಂಬುದನ್ನು ಮಾತ್ರ ಪರಿಗಣಿಸಬೇಕು’ ಎಂದು ಹೇಳಿದರು. ಆದರೆ ಸುಪ್ರೀಂ ಕೋರ್ಟ್ ‘ವಿಚಾರಣೆಯಲ್ಲಿ ತಡವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗದು ಮತ್ತು ಅದು ಮಾತ್ರ ಸ್ವಯಂಚಾಲಿತವಾಗಿ ಜಾಮೀನು ನೀಡಲು ಸಾಕಾಗದು’ ಎಂದು ಹೇಳಿದೆ. ಮುಂದುವರಿದು ‘ಶೀಘ್ರ ವಿಚಾರಣೆಯ ಹಕ್ಕು ವಿಧಿ 21ರ ಮುಖ್ಯ ಭಾಗವಾಗಿದ್ದರೂ, ಈ ಹಕ್ಕನ್ನು ರಾಷ್ಟ್ರೀಯ ಭದ್ರತೆಯೊಂದಿಗೆ ಸಮತೋಲನಗೊಳಿಸಬೇಕು. ಯುಎಪಿಎ ಅಡಿಯಲ್ಲಿ ಜಾಮೀನಿನ ಹಕ್ಕನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ. ನ್ಯಾಯಾಲಯಗಳು ಮೊದಲು ಆರೋಪಿಗಳ ವಿರುದ್ಧ ಆಕ್ಟ್ ನ ಸೆಕ್ಷನ್ 43ಡಿ(5) ಅಡಿಯಲ್ಲಿ ‘ಪ್ರಾಥಮಿಕವಾಗಿ ಪ್ರಕರಣ ವಿದೆಯೇ’ (ಠಿಡಿimಚಿ ಜಿಚಿಛಿie ಛಿಚಿse) ಎಂದು ನೋಡಬೇಕು ಎಂದು ಅಭಿಪ್ರಾಯಪಟ್ಟಿತು. ಈ ಸೆಕ್ಷನ್ ಪ್ರಕಾರ ಗಂಭೀರ ಅಪರಾಧಗಳಿಗೆ ಆರೋಪಿತ ವ್ಯಕ್ತಿಯನ್ನು ಸಾಮಾನ್ಯ ಸಂದರ್ಭಗಳ ರೀತಿ ಜಾಮೀನು ನೀಡಲಾಗುವುದಿಲ್ಲ. ಯಾವುದೇ ಜಾಮೀನು ಅರ್ಜಿಯನ್ನು ಪರಿಗಣಿಸುವ ಮೊದಲು ನ್ಯಾಯಾಲಯವು ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಕೇಳಬೇಕು. ಅಲ್ಲದೆ ನ್ಯಾಯಾಲಯವು ಪ್ರಾಥಮಿಕವಾಗಿ ಕೇಸ್ ಡೈರಿ ಅಥವಾ ಚಾರ್ಜ್ಶೀಟ್ ನೋಡಿದ ನಂತರ, ಆರೋಪಗಳು ನಿಜವೆಂದು ತೋರಿದರೆ ವಿಚಾರಣೆಯಲ್ಲಿ ಪರೀಕ್ಷಿಸಲ್ಪಡುವ ಕೇಸ್ನ ಮೆರಿಟ್ನ್ನು ಲೆಕ್ಕಿಸದೆ ಕಾನೂನುಬದ್ಧವಾಗಿ ಜಾಮೀನು ನೀಡಲು ನಿಷೇಧಿಸಲಾಗಿದೆ. ಸುಪ್ರೀಂಕೋರ್ಟ್ನ ಹಿಂದಿನ ‘ಯೂನಿಯನ್ ಆಫ್ ಇಂಡಿಯಾ ವಿರುದ್ಧ ಕೆ.ಎ. ನಜೀಬ್ (2021)’ ತೀರ್ಪುನ್ನು ಉಲ್ಲೇಖಿಸಿದ ಪೀಠವು ‘‘ಅಸಾಧಾರಣ ಸಂದರ್ಭಗಳಲ್ಲಿ ನ್ಯಾಯಾಲಯಗಳು ಜಾಮೀನು ನೀಡಬಹುದು, ಇಲ್ಲಿ ದೀರ್ಘಕಾಲದ ವಿಚಾರಣೆ ಅನ್ಯಾಯವಾಗುತ್ತದೆ. ಆದರೆ ಆರೋಪಿಯು ದೀರ್ಘಕಾಲ ಜೈಲಿನಲ್ಲಿದ್ದರೆ ಮಾತ್ರ ಜಾಮೀನು ನೀಡಬೇಕು ಎಂಬ ನಜೀಬ್ ತೀರ್ಪಿನ ಸ್ವಯಂಚಾಲಿತ ನಿಯಮವನ್ನು ಇತರ ಪ್ರಕರಣಗಳಿಗೆ ಅನ್ವಯಿಸಲು ಬರುವುದಿಲ್ಲ’’ ಎಂದೂ ಹೇಳಿದೆ. ಮುಂದುವರಿದು ‘‘ಉಮರ್ ಖಾಲಿದ್ ಮತ್ತು ಇತರರು ಪ್ರಕರಣದಲ್ಲಿನ ದೀರ್ಘಕಾಲದ ವಿಳಂಬಕ್ಕೆ ಪ್ರಾಸಿಕ್ಯೂಶನ್ ಅಥವಾ ನ್ಯಾಯಾಲಯಗಳನ್ನು ದೂಷಿಸುವುದು ಸರಿಯಲ್ಲ’’ ಎಂದು ಹೇಳುತ್ತಾ ‘ದೀರ್ಘಕಾಲದವರೆಗೆ ಬಂಧನದಲ್ಲಿಡುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ.. ಆದರೆ ಈ ಬಂಧನವು ಅಸಾಂವಿಧಾನಿಕ ಎನ್ನುವ ಹಂತಕ್ಕೆ ತಲುಪಿಲ್ಲ.. ಜಾಮೀನು ಕೊಡುವುದರ ಬದಲು ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು’ ಎಂದೂ ಅಭಿಪ್ರಾಯಪಟ್ಟಿದೆ. ಹೀಗೆ ಹೇಳಿದ ನ್ಯಾಯಾಂಗವು ತನ್ನ ತೀರ್ಪಿನಲ್ಲಿ ‘ಒಂದು ವರ್ಷದ ನಂತರ ಅಥವಾ ಸಂರಕ್ಷಿತ ಸಾಕ್ಷಿಗಳ ಮರು ವಿಚಾರಣೆ ಆಧರಿಸಿ ಜಾಮೀನು ಸಲ್ಲಿಸಬಹುದು’ ಎಂದೂ ಹೇಳಿದೆ. ಇಂತಹ ವೈರುಧ್ಯಗಳು ಈ ತೀರ್ಪಿನಲ್ಲಿ ಹೇರಳವಾಗಿದೆ. ಮುಗಿಯದ ಟಿಪ್ಪಣಿಗಳು ‘ಬೇಲ್ ನಿಯಮವಾಗಿದೆ, ಜೈಲು ಅಪವಾದವಾಗಿದೆ’ (bಚಿiಟ is ಣhe ಡಿuಟe, ಎಚಿiಟ is ಣhe exಛಿeಠಿಣioಟಿ) ಎಂಬ ನೀತಿಯು ಭಾರತೀಯ ದಂಡ ಶಾಸನಗಳನ್ನು ಅನ್ವಯಿಸುವ ಸಂದರ್ಭದಲ್ಲಿ ಪಾಲಿಸಬೇಕಾದ ಮೂಲಭೂತ ತತ್ವವಾಗಿದೆ. ಇದು ವೈಯಕ್ತಿಕ ಸ್ವಾತಂತ್ರ್ಯ (ಸಂವಿಧಾನದ ವಿಧಿ 21ರ ಅಡಿಯಲ್ಲಿ ರಕ್ಷಿತವಾದದ್ದು) ಸಾಮಾನ್ಯವಾಗಿ ಮೇಲುಗೈ ಸಾಧಿಸಬೇಕು ಎಂದು ಒತ್ತಿ ಹೇಳುತ್ತದೆ ಮತ್ತು ವಿಚಾರಣೆಗೆ ಮುಂಚಿನ ಬಂಧನವನ್ನು ಕೇವಲ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅನುಸರಿಸಬೇಕು. ಉದಾಹರಣೆಗೆ ಆರೋಪಿಯು ತಪ್ಪಿಸಿಕೊಳ್ಳುವ ನಿಜವಾದ ಅಪಾಯವಿದ್ದಾಗ, ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಅಥವಾ ಮುಂದಿನ ಅಪರಾಧಗಳನ್ನು ಮಾಡುವ ಸಾಧ್ಯತೆ ಇದ್ದಾಗ. ಈ ತತ್ವವನ್ನು ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ರಾಜಸ್ಥಾನ್ ರಾಜ್ಯ ವರ್ಸಸ್ ಬಲಚಂದ್ ಅಲಿಯಾಸ್ ಬಲಿಯಾ (1977) ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳುತ್ತಾರೆ. ಅದರ ನಂತರ ತಪ್ಪಿತಸ್ಥನೆಂದು ಸಾಬೀತಾಗುವವರೆಗೆ ಅವರು ನಿರಪರಾಧಿ ಎನ್ನುವ ಈ ನೀತಿಯನ್ನು ಸುಪ್ರೀಂ ಕೋರ್ಟ್ ಅನೇಕ ಪ್ರಕರಣಗಳಲ್ಲಿ ಪುನಃ ದೃಢೀಕರಿಸಿದೆ. ಈ ಮೂಲಕ ಅನಗತ್ಯವಾಗಿ ಸ್ವಾತಂತ್ರ್ಯದಿಂದ ವಂಚಿಸುವುದನ್ನು ತಪ್ಪಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಆದರೆ ಉಮರ್ ಖಾಲಿದ್ ಮತ್ತು ಇತರರು ಪ್ರಕರಣದಲ್ಲಿ ಈ ನ್ಯಾಯವನ್ನು ನಿರಾಕರಿಸಲಾಗಿದೆ. ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿಯಂತಹ ನ್ಯಾಯವಾದಿಗಳು ವಾದ ಮಂಡಿಸಿದರೂ ಜಾಮೀನು ದೊರಕಲಿಲ್ಲ ಎಂದರೆ ಜನಸಾಮಾನ್ಯರ ಪಾಡೇನು? ಯುಎಪಿಎ ಕಾಯ್ದೆಯೊಳಗಿನ ಕರಾಳ ಸೆಕ್ಷನ್ಗಳು ಇದಕ್ಕೆ ಮುಖ್ಯ ಕಾರಣಗಳಲ್ಲೊಂದು. ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಕಾಯ್ದೆಯ ಸೆಕ್ಷನ್ಗಳು ಮಾತ್ರ ಮುಖ್ಯವಾಗಿ ಪರಿಗಣಿಸಲ್ಪಡುವಾಗ ಸೈದ್ಧಾಂತಿಕವಾಗಿ, ತಾತ್ವಿಕವಾಗಿ ಇದರ ಬಗ್ಗೆ ನಾವು ಎತ್ತುವ ನ್ಯಾಯಪರ ಪ್ರಶ್ನೆಗಳು ವಾದ ಪ್ರತಿವಾದಕ್ಕೆ ಸೀಮಿತವಾಗಿ ಉಳಿದುಬಿಡುತ್ತವೆ. ಈ ಬಗೆಯ ವಾದವನ್ನು ನ್ಯಾಯಾಂಗದ ಮುಂದೆ ಒಪ್ಪಿಸುವುದು ಕಷ್ಟ, ಕಾನೂನಿನ ಪರಿಧಿಯಡಿ ತೀರ್ಪಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮುಖ್ಯವಾಗಿ ನ್ಯಾಯಾಲಯಗಳಲ್ಲಿ ಯುಎಪಿಎ ಸಿಂಧುತ್ವವನ್ನು ಪ್ರಶ್ನಿಸಿರುವ ಪ್ರಕರಣಗಳಿಗೆ ಹಿನ್ನಡೆಯಾಗಿರುವ ಉದಾಹರಣೆಗಳೇ ಹೆಚ್ಚಾಗಿವೆ. ‘ಪ್ರಜಾಸತ್ತಾತ್ಮಕ ಆಶಯಗಳು ಹಾಗೂ ಜನಜೀವನಕ್ಕೆ ಭಂಗ ತರುವ ಚಟುವಟಿಕೆಗಳು’ ನಡುವಿನ ಆಳವಾದ ಗೆರೆ ಅಳಿಸಿಹೋದರೆ ಆಗುವ ಅನಾಹುತಕ್ಕೆ ಉಮರ್ ಖಾಲಿದ್ ಮತ್ತು ಇತರರು ಮತ್ತು ಭೀಮಾ ಕೋರೆಗಾಂವ್ ಪ್ರಕರಣಗಳೇ ಸಾಕ್ಷಿ. ಮುಂದೇನು? ಈ ಹೋರಾಟಗಳ ಮುಂಚೂಣಿಯಲ್ಲಿದ್ದವರಿಗೆ ಕಾನೂನಾತ್ಮಕವಾಗಿ ಯಾವ ಅಂಶಗಳಲ್ಲಿ ಹಿನ್ನಡೆ ಉಂಟಾಗುತ್ತಿದೆ, ನ್ಯಾಯಾಲಯದಲ್ಲಿ ಇವುಗಳನ್ನು ಎದುರಿಸುವುದು ಹೇಗೆ ಎನ್ನುವುದನ್ನು ಕಾನೂನು ತಜ್ಞರ ಜೊತೆಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಬೇಕಿದೆ. ಎಲ್ಲದಕ್ಕೂ ಒಂದು ಪರಿಹಾರ ಕಂಡುಕೊಳ್ಳಲೇಬೇಕಿದೆ. ಯುಎಪಿಎಯ ದುರ್ಬಳಕೆಯ ಬಗ್ಗೆ, ಸಾಂವಿಧಾನಿಕ, ಜನಪರ ಆಶಯಗಳನ್ನು ರಕ್ಷಿಸಬೇಕಾದ ಸರಕಾರಗಳು ಹೇಗೆ ಇದನ್ನು ಉಲ್ಲಂಘಿಸುತ್ತದೆ, ಪ್ರಜಾಸತ್ತಾತ್ಮಕವಾದ ಪ್ರತಿಭಟನೆಯ ಹಕ್ಕನ್ನು ಹೇಗೆ ಹತ್ತಿಕ್ಕುತ್ತದೆ ಎನ್ನುವುದರ ಕುರಿತು ವ್ಯಾಪಕವಾಗಿ ಸಾರ್ವಜನಿಕ ಚರ್ಚೆ, ಸಂವಾದ, ಅಭಿಯಾನ ನಡೆಸಬೇಕಿದೆ. ಸಾಮಾಜಿಕ ಸಂಘಟನೆಗಳು ಪರಸ್ಪರ ಚರ್ಚಿಸಬೇಕಿದೆ. ಸಾಮಾಜಿಕ ಜನಾಂದೋಲನ ಮತ್ತು ರಾಜಕೀಯ ಹೋರಾಟ ರೂಪಿಸಬೇಕಾಗಿದೆ. ಇದು ನಮ್ಮ ಮುಂದಿರುವ ಆಯ್ಕೆ. ಇದನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕಿದೆ. ಇದಕ್ಕೆ ಪೂರಕವಾಗಿ ಕಾನೂನಿನಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಯುಎಪಿಎ ಕಾಯ್ದೆಯ ಸಿಂಧುತ್ವದ ಬಗ್ಗೆ, ಅದರಲ್ಲಿರುವ ಪ್ರಜಾಪ್ರಭುತ್ವ ವಿರೋಧಿ ವ್ಯಾಖ್ಯಾನಗಳ ಬಗ್ಗೆ ಕಾನೂನಾತ್ಮಕ ಹೋರಾಟವನ್ನು ರೂಪಿಸಬೇಕು. ಇಲ್ಲಿ ಸಕಾರಾತ್ಮಕ ಫಲಿತಾಂಶ ದೊರಕುವ ಸಾಧ್ಯತೆ ಇದೆ. ಉದಾಹರಣೆಗೆ ಐಪಿಸಿಯ ದೇಶದ್ರೋಹದ ಸೆಕ್ಷನ್ / ಸೆಡಿಷನ್ ಲಾವನ್ನು (ಸೆಕ್ಷನ್ 124ಎ) ಪ್ರಭುತ್ವವು ದುರ್ಬಳಕೆ ಮಾಡತೊಡಗಿದ ನಂತರ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿದ್ದು ನಮ್ಮ ಮುಂದಿದೆ. (ಆದರೆ ಮೋದಿ ನೇತೃತ್ವದ ಸರಕಾರ ಹೊಸ ಕಾಯ್ದೆ (ಬಿಎನ್ಎಸ್ ಸೆಕ್ಷನ್ 150) ತಂದಿದೆ. ಇದು ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆಯಾಗುವ ಕೃತ್ಯಗಳನ್ನು ಅಪರಾಧವೆಂದು ಪರಿಗಣಿಸುತ್ತದೆ, ಹೊಸ ಕಾಯ್ದೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹೀಗೆ ಒಂದಾದ ನಂತರ ಮತ್ತೊಂದು)
Venezuela ಮೇಲಿನ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಹಿಂಪಡೆಯುವ ಸಾಧ್ಯತೆ: US ಖಜಾನೆ ಕಾರ್ಯದರ್ಶಿ ಬೆಸೆಂಟ್
ವಾಷಿಂಗ್ಟನ್: ತೈಲ ಮಾರಾಟಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವೆನಿಝುವೆಲಾ ಮೇಲೆ ಹೆಚ್ಚುವರಿಯಾಗಿ ವಿಧಿಸಲಾಗಿದ್ದ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ. ವೆನಿಝುವೆಲಾದೊಂದಿಗೆ ಮರು ಮಾತುಕತೆ ನಡೆಸಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ನ ಮುಖ್ಯಸ್ಥರನ್ನು ಮುಂದಿನ ವಾರ ನಾನು ಭೇಟಿಯಾಗಲಿದ್ದೇನೆ ಎಂದೂ ಅವರು ಹೇಳಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ವೆನಿಝುವೆಲಾ ಆರ್ಥಿಕತೆಯನ್ನು ಮರುನಿರ್ಮಾಣ ಮಾಡಲು, ಸದ್ಯ ಮುಟ್ಟುಗೋಲು ಹಾಕಲಾಗಿರುವ ವೆನಿಝುವೆಲಾದ ಹಣಕಾಸು ಸ್ವತ್ತುಗಳ ವಿಶೇಷ ಹಿಂಪಡೆಯುವ ಅಧಿಕಾರದ ಅಡಿಯಲ್ಲಿ ಇರುವ 5 ಶತಕೋಟಿ ಡಾಲರ್ ಮೊತ್ತವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ಶುಕ್ರವಾರ ತಡರಾತ್ರಿ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. “ಮಾರಾಟವಾಗಲಿರುವ ತೈಲದ ಮೇಲಿನ ಆರ್ಥಿಕ ದಿಗ್ಬಂಧನವನ್ನು ನಾವು ಹಿಂಪಡೆಯಲಿದ್ದೇವೆ” ಎಂದು ವಿನ್ನೆಬಾಗೊ ಇಂಡಸ್ಟ್ರೀಸ್ನ ಇಂಜಿನಿಯರಿಂಗ್ ಸೌಲಭ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಸೆಂಟ್ ಹೇಳಿದ್ದಾರೆ. ಹಡಗುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗಿರುವ ತೈಲದ ಮಾರಾಟದಿಂದ ಬಂದ ಹಣವನ್ನು ವೆನಿಝುವೆಲಾಗೆ ಮರಳಿ ನೀಡುವ ಬದಲಾವಣೆ ಪ್ರಕ್ರಿಯೆಗಳನ್ನು ಅವರು ಪರಿಶೀಲಿಸುತ್ತಿದ್ದರು. ‘ವೆನಿಝುವೆಲಾ ಮೇಲಿನ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಹಿಂಪಡೆಯಲಾಗುವುದೇ?’ ಎಂಬ ಪ್ರಶ್ನೆಗೆ, “ಮುಂದಿನ ವಾರ ಈ ಕುರಿತು ಪರಿಶೀಲಿಸಲಾಗುವುದು” ಎಂದು ಅವರು ಉತ್ತರಿಸಿದ್ದಾರೆ. ಆದರೆ ಯಾವ ಆರ್ಥಿಕ ದಿಗ್ಬಂಧನವನ್ನು ಹಿಂಪಡೆಯಲಾಗುವುದು ಎಂಬ ಕುರಿತು ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.
ವಿಚ್ಛೇದನ ಪ್ರಕರಣದಲ್ಲಿ ವಕಾಲತ್ತಿನ ವೇಳೆ ವಕೀಲೆಯೊಂದಿಗೇ ʼಸಂಬಂಧʼ!
ಆರೋಪಿಗೆ ʼಸುಪ್ರೀಂʼ ನಿರೀಕ್ಷಣಾ ಜಾಮೀನು; ವಕೀಲೆಯ ನಡವಳಿಕೆ ಕುರಿತು ನ್ಯಾಯಾಲಯ ಕಳವಳ
ಮಣ್ಣಿನ ಮೌನ ಮತ್ತು ಮಾತಾಡುವ ಹಳ್ಳಿ!
ಹಳ್ಳಿಯ ದಾರಿಯಲ್ಲಿ ನಡೆಯುತ್ತಾ ಬಂದರೆ ಕೆಲವೊಮ್ಮೆ ವಿಚಿತ್ರ ಮೌನ ಎದುರಾಗುತ್ತದೆ. ಅದೇ ಮೌನದೊಳಗೆ ಒಂದು ಪಲ್ಲಟ ಮರುಳುಮಾಡುವಂತೆ ನಿಂತಿರುತ್ತದೆ. ರೈತನೊಬ್ಬ ತನ್ನ ಹೊಲದ ಬೆವರು, ಮಣ್ಣಿನ ಗಂಧ, ಬೆಳೆಗಳ ಲಾಭಾಂಶ-ಇವನ್ನೆಲ್ಲ ಒಟ್ಟಾಗಿ ಸೇರಿಸಿ ಮತ್ತೊಂದು ಲೋಕ ಕಟ್ಟುತ್ತಾನೆ. ತನ್ನ ತೋಟದ ಆದಾಯದಿಂದಲೇ ಶಾಲೆ ಕಟ್ಟುತ್ತಾನೆ; ಅಡಿಕೆ-ಕಾಫಿಯ ಲಾಭದಿಂದ ಆಸ್ಪತ್ರೆ, ದೇವಸ್ಥಾನ, ಅಂಗಡಿ, ಉದ್ಯಮ ಎಲ್ಲವೂ. ಆದರೆ ಅಷ್ಟರಲ್ಲೇ ಒಂದು ಅಸಹಜ ಸಂಕೋಚ ಹುಟ್ಟುತ್ತದೆ. ‘ನಾನು ರೈತ’ ಎನ್ನುವ ಮಾತು ಅವನ ನಾಲಿಗೆಯ ತುದಿಯಿಂದ ನಿಧಾನವಾಗಿ ಜಾರಿಹೋಗುತ್ತದೆ. ಮೊನ್ನೆ ಮೊನ್ನೆಯವರೆಗೆ ಭಾರತದ ಹಳ್ಳಿಯನ್ನು ನೋಡಿದಾಗ ಅಲ್ಲೊಂದು ವಿಚಿತ್ರ ಮೌನ ಕಣ್ಣಿಗೆ ಬೀಳುತ್ತಿತ್ತು. ಅದು ಮಾತಿಲ್ಲದ ಮೌನ, ಘೋಷಣೆ ಇಲ್ಲದ ಮೌನ, ಬ್ಯಾನರ್, ಬಾವುಟ, ಮೈಕ್ಗಳಿಲ್ಲದ ಮೌನ. ಆ ಮೌನದೊಳಗೆ ಸಾವಿರಾರು ಜನ ಇದ್ದರು. ಅವರೆಲ್ಲ ಯಾವುದೇ ಸಂಘಟನೆಯ ಸಾರಥ್ಯಗಳಿಲ್ಲದೆ, ಯಾವ ರಗಳೆಯೂ ಇಲ್ಲದೆ, ಬೆಳಗ್ಗೆ ತೋಟಕ್ಕೆ ಹೋಗಿ ಸಂಜೆ ಮನೆಗೆ ಮರಳುವವರು ಅಥವಾ ತೋಟದೊಳಗಡೆಯೇ ಮನೆ ಕಟ್ಟಿ ಬದುಕುವವರು. ಭತ್ತ, ಜೋಳ, ರಾಗಿಯಂತಹ ನವಧಾನ್ಯಗಳಿರಬಹುದು, ಹೂವು, ಗೆಡ್ಡೆ, ತರಕಾರಿಗಳಿರಬಹುದು, ಅಡಿಕೆ, ಕಾಫಿ, ರಬ್ಬರ್, ಕಿತ್ತಳೆ, ಕೊಕ್ಕೋ ಏನೋ ಒಂದನ್ನು ನಂಬಿ ಬದುಕಲು ಒಪ್ಪಂದ ಮಾಡಿಕೊಂಡವರಿವರು. ‘‘ನಿನ್ನನ್ನು ನಾನು ಪೋಷಿಸುತ್ತೇನೆ, ನನ್ನನ್ನು ನೀನು ಬದುಕಿಸು’’ ಎಂಬ ಬೆಳೆಯೊಂದಿನ ನಿಶ್ಶಬ್ದ ಒಪ್ಪಂದದಲ್ಲಿ ಇವರೆಲ್ಲ ತಾವು ಬಿತ್ತಿದ ಬೀಜದೆದುರು ಧ್ಯಾನಕ್ಕೆ ಕೂತವರಂತೆ ಬದುಕುತ್ತಿರುವವರು. ಇಂಥವರ ಬದುಕು ಯಾವತ್ತೂ ಅಂಕಿ-ಅಂಶಗಳಲ್ಲಿ ಕಾಣಿಸುವುದಿಲ್ಲ. ಊರ ಸಂಘಗಳ ವರದಿಗಳಲ್ಲಿ ಅವರ ಹೆಸರು ಇಲ್ಲ. ವೇದಿಕೆಗಳ ಮೇಲೆ ಅವರ ಮಾತು ಇಲ್ಲ. ಆದರೆ ಇವರಿಗೆ ಆದಾಯದ ನಾಲ್ಕು ಮುಕ್ಕಾಲು ಭಾಗ ಕೃಷಿಯಿಂದಲೇ ಬರುತ್ತದೆ. ಅದನ್ನೇ ನಂಬಿ ಮನೆ ಕಟ್ಟಿದ್ದಾರೆ, ಮಕ್ಕಳನ್ನು ಓದಿಸಿದ್ದಾರೆ, ಬದುಕನ್ನು ಈವರೆಗೆ ಎಳೆದಿದ್ದಾರೆ. ಇಂಥ ರೈತರು ಇರುವ ಹಳ್ಳಿಗಳಲ್ಲಿ, ಒಂದು ಕಾಲದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಘಟನೆಗಳು ಅಷ್ಟಾಗಿ ಲೆಕ್ಕಕ್ಕೆ ಬರುತ್ತಿರಲಿಲ್ಲ. ಭಾಗಶಃ ಅವು ನಗರಗಳ ವಿಷಯವಾಗಿದ್ದವು. ಹಳ್ಳಿಗೆ ಬರುವ ಹೊತ್ತಿಗೆ ಅವು ದಣಿದು ಹೋಗುತ್ತಿದ್ದವು. ಆದರೆ ಈಗ ಹಾಗಿಲ್ಲ. ಹಳ್ಳಿ-ನಗರದ ವ್ಯತ್ಯಾಸವೇ ಇಲ್ಲದಷ್ಟು ಸಂಘಟನೆಗಳು ವಿಸ್ತರಿಸಿಕೊಂಡಿವೆ. ಹಳ್ಳಿಗಳ ಮನೆಮನೆಗೂ ನುಗ್ಗಿವೆ. ಅಂಗಳ ದಾಟಿ ಒಳಗಡೆ ಬಂದಿವೆ. ಗಂಡ-ಹೆಂಡತಿ, ಮಕ್ಕಳು, ಅಕ್ಕ-ತಂಗಿ, ದೊಡ್ಡಪ್ಪ-ಚಿಕ್ಕಪ್ಪ-ಎಲ್ಲರ ಮಧ್ಯೆ ಮಾನಸಿಕ ಗೋಡೆ ಕಟ್ಟುವಲ್ಲಿ ಈ ಸಂಘಟನೆಗಳ ಪಾತ್ರ ದೊಡ್ಡದು. ಒಂದೇ ಮನೆಯೊಳಗೆ ಬೇರೆ ಬೇರೆ ಧ್ವಜಗಳು, ಬೇರೆ ಬೇರೆ ನಂಬಿಕೆಗಳು, ಬೇರೆ ಬೇರೆ ದ್ವೇಷಗಳು. ಇಂಥ ಪರಿಸ್ಥಿತಿಯಲ್ಲಿ, ‘ನನಗೆ ಇದೆಲ್ಲ ಬೇಡವೇ ಬೇಡ’ ಎಂದು ಮೌನವಾಗಿ ಕುಳಿತವನು, ಎಲ್ಲವನ್ನು ಬಿಟ್ಟು ಮಣ್ಣಿಗೆ ಗಟ್ಟಿಯಾಗಿ ಅಂಟಿಕೊಂಡವನು ಅದೇ ಮೌನದ ಕಾರಣಕ್ಕೆ ಅನುಮಾನಕ್ಕೆ ಗುರಿಯಾಗುತ್ತಾನೆ. ಮಹಾನಗರದ ಒಳಗಡೆ ಅದ್ಯಾವುದೋ ದೇವಸ್ಥಾನದ ಬ್ರಹ್ಮಕಲಶಕ್ಕೆ, ಶಾಲೆಯ ವಾರ್ಷಿಕೋತ್ಸವಕ್ಕೆ, ಕಬಡ್ಡಿ ಟೂರ್ನಮೆಂಟ್ಗೆ ರಶೀದಿ ಹರಿಯದವ ಗೊತ್ತೇ ಆಗುವುದಿಲ್ಲ.ಆದರೆ ಗ್ರಾಮದ ನಡುವೆ ದೇಣಿಗೆ ಕೊಡದವ ಬೇಗನೆ ಮರ್ಯಾದೆಯ ವರ್ತುಲದೊಳಗಡೆ ಸೇರಿಕೊಳ್ಳುತ್ತಾನೆ. ಯಾವಾಗಲೂ ಹೀಗೆಯೇ. ಪಟ್ಟಣಕ್ಕಿಂತ ಗ್ರಾಮದ ಒಳಗಡೆಯ ಮರ್ಯಾದೆಗೆ ಒಂದು ಗುಲಗಂಜಿ ತೂಕ ಹೆಚ್ಚೇ. ‘‘ಅವನು ಮಾತಾಡುವುದಿಲ್ಲ, ಮನುಷ್ಯರೊಂದಿಗೆ ಹೆಚ್ಚು ಬೆರೆಯುವುದಿಲ್ಲ, ಗ್ರಾಮದ ಯಾವ ಸುಖ ದುಃಖವೂ ಅವನಿಗೆ ಬೇಕಾಗಿಲ್ಲ, ಮೊನ್ನೆವರೆಗೆ ಸರಿಯಿದ್ದ. ಅವನಿಗೀಗ ಏನಾಯಿತು?. ಗುಟ್ಟಾಗಿ ಏನೋ ಮಾಡುತ್ತಿದ್ದಾನೆ’’ ಎಂಬ ಅನುಮಾನಗಳು ಹಳ್ಳಿಗಳಲ್ಲೂ ಹುಟ್ಟುತ್ತವೆ. ಹಳ್ಳಿಯಲ್ಲೂ ಈಗ ಧ್ಯಾನ, ಮೌನ, ಏಕಾಂತ-ಇವುಗಳಿಗೂ ವಿವರಣೆ ಕೊಡಬೇಕಾದ ಕಾಲ ಬಂದಿದೆ! ದೇವಾಲಯಕ್ಕೆ ನಿತ್ಯ ಹೋದಾಗ ಮಾತ್ರ ಆತ ಭಕ್ತ. ರಾಜಕೀಯ ಪಕ್ಷದ ಸಭೆಗಳಿಗೆ ಹಾಜರಾದಾಗ ಮಾತ್ರ ಆತ ಜಾಗೃತ ನಾಗರಿಕ. ಯುವಕ ಸಂಘಟನೆಗಳಿಗೆ ನಿರಂತರ ಓಡಾಡಿದಾಗ ಮಾತ್ರ ಆತ ಸಮಾಜಸೇವಕ. ಓದಿದ ಶಾಲೆಗೆ ಹತ್ತು ಸಲ ಹೋದಾಗ ಮಾತ್ರ ಆತ ಶಿಕ್ಷಣ ಪ್ರೇಮಿ ಇಲ್ಲವಾದರೆ ಅವನು ಅನುಮಾನಾಸ್ಪದ. ಇಂತಹ ಸಂದೇಹಗಳು ಊರ ನಡುವಿನ ನಾನೂ ಸೇರಿ ನನ್ನಂಥ ಮೌನಿಯ ಬೆನ್ನ ಹಿಂದೆಯೇ ಈಗ ಓಡಾಡುತ್ತವೆ. ನನ್ನ ಊರಲ್ಲೇ ಯಾಕೆ? ಇಂಥ ರೈತರು ನಿಮ್ಮ ಊರಲ್ಲೂ ಇರಬಹುದು. ಸಂಘಟನೆ, ಸಭೆ, ಘೋಷಣೆಗಳ ಮಧ್ಯೆ ಹೊಲ ತೋಟಗಳಿಗೆ ಅವರು ಯಾವಾಗ ಹೋಗುತ್ತಾರೆ, ಯಾರಿಂದ ಮಾಡಿಸುತ್ತಾರೆ ಎನ್ನುವುದೇ ನನಗೆ ಅರ್ಥವಾಗುವುದಿಲ್ಲ. ಬೆಳಗೆದ್ದು ಬಿಳಿ ಬಟ್ಟೆ ತೊಟ್ಟು ನಗರದ ಮನಸ್ಸು ಧರಿಸಿ ಹೊರಗಡೆ ಉಳಿಯುವ ಇವರಿಗೆ ಎಲ್ಲವೂ ಕೊಡುವುದು ಅವರ ಕೃಷಿಯೇ ಎಂಬುದನ್ನು ಅವರು ಮರೆತಂತಿದೆ. ಉಣ್ಣುವ ಅನ್ನ ಕೊಡುವ, ತನ್ನ ಮಕ್ಕಳಿಗೆ ಶಿಕ್ಷಣ ಕೊಡುವ, ತನಗೆ ಓಡಾಡಲು ವಾಹನ ಕೊಟ್ಟ, ತನಗೊಂದು ಘನತೆಯ ಬದುಕು ಕೊಡುವ ಕೃಷಿ ಬೆಳೆಯ ಜೊತೆಗೇ ತಾನು ಸದಾ ಇರಬೇಕು, ಅಸಾಧ್ಯವಾದರೆ ಕೃಷಿ ಹಿಂದುಳಿಯುತ್ತದೆ, ಆದಾಯ ಕುಂಠಿತವಾಗುತ್ತದೆ ಎಂದು ಇವರ್ಯಾರು ಕೆಸರು ಮೆಟ್ಟಿದ್ದನ್ನು ನಾನು ನೋಡೇ ಇಲ್ಲ. ಬಹಳಷ್ಟು ಸಂದರ್ಭದಲ್ಲಿ ಮದುವೆ ಮುಂಜಿ ಬೊಜ್ಜದ ಕೂಟದಲ್ಲಿ ಈಗ ಕೃಷಿ ಪ್ರಯೋಜನ ಇಲ್ಲ, ಇದರಿಂದ ಬದುಕು ಆಗಲ್ಲ ಎಂದು ಅಡ್ಡ ಮಾತು ಮಾತನಾಡುವವರು ಕೂಡ ಇವರೇ. ಗ್ರಾಮದೊಳಗಡೆಯೇ ಬದುಕುತ್ತಿರುವ ನಾನು ಕೆಲವೊಂದು ಊರುಗಳು ಹೇಗೆ ಕೋಮುವಾದಿ, ಜಾತಿವಾದಿ, ಮತೀಯ ಸಂಘರ್ಷಗಳಿಗೆ ಬಲಿಯಾಗುತ್ತಿವೆ ಅನ್ನುವುದನ್ನು ಗಮನಿಸುತ್ತಾ ಬಂದಿದ್ದೇನೆ. ಬೆಳೆ-ಬೆಲೆಯ ಬಗ್ಗೆ ಮಾತಾಡಬೇಕಾದ ಜಾಗದಲ್ಲಿ ಧರ್ಮದ ಚರ್ಚೆ, ಕೃಷಿಯ ಮೌಲ್ಯವರ್ಧನೆಯ ಮಾತು ಬರಬೇಕಾದ ಜಾಗದಲ್ಲಿ ರಾಜಕೀಯದ ವಿಷ, ಬೀಜ ನೀರಾವರಿ ಗೊಬ್ಬರದ ಮಾತಿನ ಬದಲು ದ್ವೇಷದ ಘೋಷಣೆ. ಕೃಷಿಯನ್ನು ನಿರ್ಲಕ್ಷಿಸಿದ ಪರಿಣಾಮಕ್ಕೆ ಬಡತನ ಬಂದು; ಬಡತನ ಬಂದ ಮೇಲೆ ಕೃಷಿಯೇ ತಪ್ಪು ಎಂದು ತೀರ್ಮಾನ ಎಷ್ಟೊಂದು ಹಾಸ್ಯಾಸ್ಪದ!. ಹಳ್ಳಿಯ ಸುಸ್ಥಿರ ಬದುಕು ಅನ್ನೋದು ಕೇವಲ ಬೆಳೆ-ಮಳೆ-ಬೆಲೆಗಳ ಗಣಿತವಲ್ಲ. ಅದು ಒಂದು ಮನಸ್ಥಿತಿ. ಒಂದು ನಂಬಿಕೆಯ ಕ್ರಮ. ನಾನು ಇಲ್ಲೇ ಇದ್ದೇನೆ, ಈ ಮಣ್ಣಿನ ಜೊತೆಗೆ ಅನ್ನುವ ದೀರ್ಘ ಶ್ವಾಸ. ಇವತ್ತು ಆ ಶ್ವಾಸವೇ ತುಂಡಾಗುತ್ತಿದೆ. ಅದರ ಹಿಂದೆ ಕಾಣಿಸದ ಅನೇಕ ಕಾರಣಗಳು ಇವೆ. ನಾವು ಮಾತನಾಡುತ್ತಿರುವ ಈ ನಂಬಿಕೆಗಳು, ಈ ಸಂಘಟನೆಗಳ ವಿಸ್ತರಣೆ, ಈ ಮನಸ್ಸಿನ ವಿಘಟನೆ ಎಲ್ಲವೂ ಒಂದಾಗಿ ಹಳ್ಳಿಯ ಬದುಕಿನ ಬೇರುಗಳನ್ನು ಮೌನವಾಗಿ ಕತ್ತರಿಸುತ್ತಿವೆ. ಒಂದು ಕಾಲದಲ್ಲಿ ಹಳ್ಳಿಯ ರೈತನಿಗೆ ಕೃಷಿ ಕೇವಲ ಉದ್ಯೋಗವಾಗಿರಲಿಲ್ಲ. ಅದು ಅವನ ಗುರುತು. ಬೆಳೆಯುವ ಪ್ರತೀ ಬೆಳೆಯ ಮೇಲೆ ಅವನಿಗೆ ವಿಶ್ವಾಸ ಇತ್ತು. ಮಣ್ಣಿನ ಮೇಲೆ ಒಂದು ಅಂತರಂಗದ ಸಂಬಂಧ ಇತ್ತು. ಆದರೆ ಇವತ್ತು ಆ ನಂಬಿಕೆಯನ್ನು ಬದಲಿಸುವ ಹೊಸ ಹೊಸ ನಂಬಿಕೆಗಳು ಬಂದಿವೆ. ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ರಾಜಕೀಯದ ಹೆಸರಿನಲ್ಲಿ. ‘‘ಇವುಗಳ ಜೊತೆಗೆ ಸಂಬಂಧ ಇಲ್ಲದಿದ್ದರೆ ನೀನು ಏನೂ ಅಲ್ಲ’’ ಅನ್ನುವ ಭಾವನೆಗಳನ್ನು ಅವನೊಳಗೆ ತುಂಬಲಾಗಿದೆ. ಕೃಷಿ ಅವನ ಬದುಕನ್ನು ಪೋಷಿಸುತ್ತಿದ್ದರೂ, ಗೌರವ ಕೊಡದ ಕೆಲಸದಂತೆ ಕಾಣಿಸುವಂತೆ ಮಾಡಲಾಗಿದೆ. ಇದರಿಂದ ಮೊದಲ ಬಿರುಕು ಬರುವುದು ಅವನ ಸಮಯದಲ್ಲಿ. ಈ ದೇಶದ ರೈತನ ಪಾಲಿಗೆ ದಿನದ 24 ಗಂಟೆಯೂ ಅವನ ಕೈಯಲ್ಲೇ ಇತ್ತು. ಬದುಕಿನ ಆಯ್ಕೆ, ಕೃಷಿಯ ವಿನ್ಯಾಸ ಎಲ್ಲದಕ್ಕೂ ಕಾಲವಿತ್ತು. ರೈತ ತೋಟ, ಹೊಲದಲ್ಲಿ ಇರಬೇಕಾದ ಸಮಯದಲ್ಲೀಗ ಸಭೆಯಲ್ಲಿ, ಜಾತ್ರೆಯಲ್ಲಿ, ರಾಜಕೀಯ, ಮತೀಯ ಸಂಘಟನೆಯ ಕರೆಯ ಮೇಲೆ ಓಡಾಡುತ್ತಾನೆ. ಸಾಲ ಸಬ್ಸಿಡಿ ಬೆಳೆ ವಿಮೆ... ಪರಿಣಾಮ ಅವನ ಕೃಷಿಯ ಶಿಸ್ತು ಕುಂಠಿತವಾಗುತ್ತದೆ. ಜೊತೆಗೆ ನೂರಾರು ನಮೂನೆಯ ಪ್ರಾಕೃತಿಕ ಸಮಸ್ಯೆಗಳು. ನಿಧಾನವಾಗಿ ಬೆಳೆ ಕಡಿಮೆಯಾಗುತ್ತದೆ. ಆದಾಯ ಇಳಿಯುತ್ತದೆ. ಆಗ ಮತ್ತೆ ಅದೇ ಸಂಘಟನೆಗಳು ಬಂದು ಹೇಳುತ್ತವೆ ‘‘ಕೃಷಿಯಿಂದ ಪ್ರಯೋಜನ ಇಲ್ಲ, ಬೇರೆ ದಾರಿ ಹಿಡಿ.’’ ಎಂದು! ಇದು ಒಂದು ವೃತ್ತ. ಅದರಿಂದ ಹೊರಬರಲು ಸುಲಭವಿಲ್ಲ. ಈ ಮನಸ್ಸಿನ ಸ್ಥಿತಿಯೇ ನೇರವಾಗಿ ಆರ್ಥಿಕ ಅಸಮತೋಲನಕ್ಕೂ ಕಾರಣವಾಗುತ್ತದೆ. ಕೃಷಿಯ ಆದಾಯ ಕಡಿಮೆಯಾದಾಗ ರೈತ ಸಾಲಕ್ಕೆ ಮೊರೆ ಹೋಗುತ್ತಾನೆ. ಬ್ಯಾಂಕ್ ಸಾಲ, ಸಹಕಾರಿ ಸಾಲ, ಖಾಸಗಿ ಸಾಲ-ಎಲ್ಲವೂ. ಸಾಲ ತೀರಿಸಲು ಮತ್ತೆ ಕೃಷಿಯ ಮೇಲೆ ಹೆಚ್ಚು ಒತ್ತಡ. ಆದರೆ ಮನಸ್ಸು ಈಗ ಕೃಷಿಯಲ್ಲಿಲ್ಲ. ಅದು ಬೇರೆ ಬೇರೆ ಗುರುತುಗಳ ನಡುವೆ ಹರಿದಿದೆ. ಅದೇ ಗುರುತುಗಳ ದಾರಿಯಲ್ಲಿ ಆತ ಕೃಷಿಯೇತರ ಕಾರಣಗಳಿಗೂ ಕೃಷಿ ಭೂಮಿಯನ್ನೇ ತೋರಿಸಿ ಸಾಲ ಮಾಡುವುದು ಇದೆ. ಹೀಗಾಗಿ ಸಾಲ ಹೆಚ್ಚುತ್ತದೆ. ಋಣ ಯಾವತ್ತೂ ಒಂದು ಸಂಖ್ಯೆಯಲ್ಲ; ಅದು ಒಂದು ಭಯ. ಆ ಭಯ ರೈತನ ನಿರ್ಧಾರಗಳನ್ನು ನಿಯಂತ್ರಿಸುತ್ತದೆ. ಇಲ್ಲೇ ಮತ್ತೊಂದು ಅಪಾಯಕಾರಿ ಅಂಶ ಇದೆ. ಈ ಸಂಘಟನೆಗಳು ಹಳ್ಳಿಯಲ್ಲಿ ಪರಸ್ಪರ ನಂಬಿಕೆಯನ್ನು ಒಡೆಯುತ್ತವೆ. ಒಂದೇ ಊರಿನ ರೈತರೆಲ್ಲ ಒಂದೇ ನೀರು ಕುಡಿದವರು. ಬೇರೆ ಬೇರೆ ಧರ್ಮದವರಾದರೂ ಒಂದೇ ಹೊಲದ ಗಡಿ ಹಂಚಿಕೊಂಡವರು. ಬೇರೆ ಬೇರೆಯವರಾದರೂ ಸರಕಾರಿ ದಾಖಲೆಗೆ ಅವೆಲ್ಲವನ್ನು ಮರೆತು ಒಟ್ಟಾಗಿ ಸಹಿ ಹಾಕಿದವರು. ಆದರೆ ಇಂದು ಅದೇ ಊರು ಸಹಕಾರ, ಸಾಲದ ನೆರವು, ಕೆಲಸದ ವಿನಿಮಯಗಳಲ್ಲಿ ಶಂಕೆಯಿಂದ ನೋಡಲ್ಪಡುತ್ತವೆ. ಹಳ್ಳಿಯ ಆರ್ಥಿಕ ವ್ಯವಸ್ಥೆ ಸಹಕಾರದ ಮೇಲೆ ನಿಂತಿದ್ದದ್ದು; ಈಗ ಅದು ಅನುಮಾನಗಳ ಮೇಲೆ ನಿಂತಿದೆ. ಈ ವಿಘಟನೆ ಹಳ್ಳಿಯನ್ನು ಸುಸ್ಥಿರತೆಯಿಂದ ದೂರ ಒಯ್ಯುತ್ತಿದೆ. ಸುಸ್ಥಿರತೆ ಅನ್ನೋದು ಕೇವಲ ಪರಿಸರದ ಮಾತಲ್ಲ; ಅದು ಸಾಮಾಜಿಕ ಸ್ಥಿರತೆ, ಆರ್ಥಿಕ ಸಮತೋಲನ, ಮಾನಸಿಕ ನೆಮ್ಮದಿ ಎಲ್ಲವೂ ಆಗಿದೆ. ರೈತ ತನ್ನ ಕೆಲಸದ ಮೇಲೆ ನಂಬಿಕೆ ಕಳೆದುಕೊಂಡಾಗ, ಸಹಜವಾಗಿಯೇ ಅವನ ಮಕ್ಕಳು ಹಳ್ಳಿಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಹಳ್ಳಿ ಖಾಲಿಯಾಗುತ್ತದೆ. ಉಳಿದವರು ಇನ್ನಷ್ಟು ಒಂಟಿಯಾಗುತ್ತಾರೆ. ನನಗೆ ಅನಿಸುವುದು ಏನೆಂದರೆ, ಇವತ್ತಿನ ಹಳ್ಳಿಯ ಅತಿ ದೊಡ್ಡ ಸಂಕಷ್ಟ ಮೈಕ್ರೋಫೋನ್ಗಳಲ್ಲಿಲ್ಲ, ಮೈಕ್ರೋ ಫೈನಾನ್ಸ್ಗಳಲ್ಲೂ ಇಲ್ಲ, ಘೋಷಣೆಗಳಲ್ಲಿಲ್ಲ. ಅದು ಮನಸ್ಸಿನೊಳಗೆ ಇದೆ. ಮೌನವನ್ನು ಅನುಮಾನಿಸುವ ಪ್ರವೃತ್ತಿಯಲ್ಲಿದೆ. ಕೃಷಿಯನ್ನು ಕೇವಲ ಲಾಭ-ನಷ್ಟದ ಪಟ್ಟಿಯಾಗಿ ನೋಡುವ ದೃಷ್ಟಿಯಲ್ಲಿದೆ. ಹಳ್ಳಿಯ ಸುಸ್ಥಿರ ಬದುಕನ್ನು ಮರಳಿ ಕಟ್ಟಬೇಕಾದರೆ, ಮೊದಲಿಗೆ ಆ ಮೌನಕ್ಕೆ ಮರಳಿ ಗೌರವ ಕೊಡಬೇಕು. ಮಣ್ಣಿನ ಜೊತೆಗಿನ ಆ ಹಳೆಯ ನಂಬಿಕೆಯನ್ನು ಮತ್ತೆ ಜೀವಂತ ಮಾಡಬೇಕು. ಇಲ್ಲದಿದ್ದರೆ, ಸಂಘಟನೆಗಳ ಗದ್ದಲದ ನಡುವೆ ಹಳ್ಳಿ ನಿಧಾನವಾಗಿ ಕರಗುತ್ತಲೇ ಹೋಗುತ್ತದೆ. ಹಳ್ಳಿಯ ದಾರಿಯಲ್ಲಿ ನಡೆಯುತ್ತಾ ಬಂದರೆ ಕೆಲವೊಮ್ಮೆ ವಿಚಿತ್ರ ಮೌನ ಎದುರಾಗುತ್ತದೆ. ಅದೇ ಮೌನದೊಳಗೆ ಒಂದು ಪಲ್ಲಟ ಮರುಳುಮಾಡುವಂತೆ ನಿಂತಿರುತ್ತದೆ. ರೈತನೊಬ್ಬ ತನ್ನ ಹೊಲದ ಬೆವರು, ಮಣ್ಣಿನ ಗಂಧ, ಬೆಳೆಗಳ ಲಾಭಾಂಶ-ಇವನ್ನೆಲ್ಲ ಒಟ್ಟಾಗಿ ಸೇರಿಸಿ ಮತ್ತೊಂದು ಲೋಕ ಕಟ್ಟುತ್ತಾನೆ. ತನ್ನ ತೋಟದ ಆದಾಯದಿಂದಲೇ ಶಾಲೆ ಕಟ್ಟುತ್ತಾನೆ; ಅಡಿಕೆ-ಕಾಫಿಯ ಲಾಭದಿಂದ ಆಸ್ಪತ್ರೆ, ದೇವಸ್ಥಾನ, ಅಂಗಡಿ, ಉದ್ಯಮ ಎಲ್ಲವೂ. ಆದರೆ ಅಷ್ಟರಲ್ಲೇ ಒಂದು ಅಸಹಜ ಸಂಕೋಚ ಹುಟ್ಟುತ್ತದೆ. ‘ನಾನು ರೈತ’ ಎನ್ನುವ ಮಾತು ಅವನ ನಾಲಿಗೆಯ ತುದಿಯಿಂದ ನಿಧಾನವಾಗಿ ಜಾರಿಹೋಗುತ್ತದೆ. ಇಲ್ಲಿ ಸಮಸ್ಯೆ ಯಶಸ್ಸಿನಲ್ಲಿಲ್ಲ. ಸಮಸ್ಯೆ ಗುರುತಿನ ಬದಲಾವಣೆಯಲ್ಲಿ. ಕೃಷಿ ಅವನಿಗೆ ಮೂಲ; ಆದರೆ ಆ ಮೂಲವನ್ನೇ ಹೊತ್ತುಕೊಳ್ಳಲು ಅವನು ಹಿಂಜರಿಯುತ್ತಾನೆ. ಶಿಕ್ಷಣ ತಜ್ಞನಾದವನು ತನ್ನ ಕೃಷಿ ಬೇರುಗಳನ್ನು ಮರೆತು ಮಾತಾಡುತ್ತಾನೆ; ಧಾರ್ಮಿಕ ನಾಯಕನಾದವನು ದೇವಾಲಯದ ನೆರಳಲ್ಲಿ ನಿಂತು ಹೊಲವನ್ನು ದೂರ ಇಡುತ್ತಾನೆ; ಉದ್ಯಮಿಪತಿಯಾದವನು ಲಾಭ-ನಷ್ಟದ ಲೆಕ್ಕದಲ್ಲಿ ಮಣ್ಣಿನ ಲೆಕ್ಕವನ್ನೇ ಕಳೆದುಕೊಳ್ಳುತ್ತಾನೆ. ಹೀಗೆ ಕೃಷಿಯಿಂದ ಹುಟ್ಟಿದ ಗುರುತು ಹೊಸ ಪದವಿಗಳ ಹಿಂದೆ ಕರಗಿಹೋಗುತ್ತದೆ. ಈ ಗುರುತಿಸುವಿಕೆಯ ಪಲ್ಲಟ ಹಳ್ಳಿಗಳಲ್ಲಿ ಜಾಸ್ತಿ. ನಗರಗಳಲ್ಲಿ ಪದವಿ ಬದಲಾವಣೆ ಸಹಜವಾದರೆ, ಹಳ್ಳಿಯಲ್ಲಿ ಅದು ಗೌರವದ ಮಾನದಂಡವಾಗಿಬಿಡುತ್ತದೆ. ರೈತನಾಗಿರುವುದು ‘ಹಿಂದಿನ ಹಂತ’ ಎನ್ನುವ ಅಜ್ಞಾತ ಭಾವನೆ, ಬೆಳೆಸಿದ ಹೊಲಕ್ಕಿಂತ ಬೆಳೆದ ಮಾತಿಗೆ ಹೆಚ್ಚು ಬೆಲೆ ಕೊಡುವ ವಾತಾವರಣ-ಇವೆಲ್ಲ ಸೇರಿ ರೈತನನ್ನು ಮಾತುಗಾರನಾಗಿಸುತ್ತವೆ. ಮೊದಲು ಮಣ್ಣಿನ ಜೊತೆ ಮಾತನಾಡುತ್ತಿದ್ದವನು, ಈಗ ವೇದಿಕೆಯ ಮೇಲೆ ನಿಂತು ರಣ ಭೀಕರ ಭಾಷಣ ಮಾಡುತ್ತಾನೆ. ಮಾತು ಮಾತಾಗಿ, ವಾಕ್ಚಾತುರ್ಯ ವಾಚಾಳಿತನವಾಗುತ್ತಾ ಬೆಳೆಯುತ್ತದೆ. ಇದು ಕೇವಲ ವ್ಯಕ್ತಿಯ ಕಥೆಯಲ್ಲ. ಇದು ಹಳ್ಳಿಯ ಮನಸ್ಥಿತಿಯ ಚಿತ್ರ. ಕೃಷಿ ಎಲ್ಲದರ ಮೂಲವಾದರೂ, ಅದನ್ನು ಗುರುತಾಗಿ ಧರಿಸುವ ಧೈರ್ಯ ಕಡಿಮೆಯಾಗುತ್ತಿದೆ. ಹೊಲದಿಂದ ಹುಟ್ಟಿದ ಶಕ್ತಿ ಬೇರೆ ಬೇರೆ ರೂಪಗಳಲ್ಲಿ ಹರಿಯುತ್ತದೆ; ಆದರೆ ಆ ಶಕ್ತಿಯ ಮೂಲವನ್ನು ಒಪ್ಪಿಕೊಳ್ಳಲು ಹಳ್ಳಿಯೇ ಹಿಂಜರಿಯುತ್ತದೆ. ಗುರುತಿನ ಈ ಪಲ್ಲಟವನ್ನು ಅರಿಯದೇ ಹೋದರೆ, ಮಾತು ಹೆಚ್ಚುತ್ತದೆ-ಮಣ್ಣು ಕಡಿಮೆಯಾಗುತ್ತದೆ ಮತ್ತು ಹಳ್ಳಿಯ ನಿಜವಾದ ಮೌಲ್ಯ, ಅದೇ ಮಣ್ಣಿನೊಳಗೆ ಮೌನವಾಗಿ ಮಲಗಿಹೋಗುತ್ತದೆ.
ಅಯೋಧ್ಯೆ ರಾಮಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆ ನಿಷೇಧ; ಹೋಟೆಲ್ ಮತ್ತು ಹೋಂಸ್ಟೇಗಳಿಗೂ ಅನ್ವಯ
ಅಯೋಧ್ಯೆಯ ಪವಿತ್ರ ಪಂಚಕೋಸಿ ಪರಿಕ್ರಮ ಪ್ರದೇಶದಲ್ಲಿ ಆನ್ಲೈನ್ ಮೂಲಕ ಮಾಂಸಾಹಾರ ವಿತರಣೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ರಾಮಮಂದಿರದ ಸುತ್ತಲಿನ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿದೆ. ಹೋಟೆಲ್ ಮತ್ತು ಹೋಂಸ್ಟೇಗಳಲ್ಲಿ ಮಾಂಸಾಹಾರ ಹಾಗೂ ಮದ್ಯ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಸೀತಾ ರಸೋಯಿಯಲ್ಲಿ ತುಲಾ ದಾನ ಸಂಪ್ರದಾಯ ಮುಂದುವರಿದಿದೆ.
Iran ನಲ್ಲಿನ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ: ವರದಿ
ಟೆಹ್ರಾನ್: ಇರಾನ್ ನ ಧಾರ್ಮಿಕ ಪ್ರಭುತ್ವದ ವಿರುದ್ಧ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಹೋರಾಟದ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 116 ಮಂದಿ ಮೃತಪಟ್ಟಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ಇರಾನ್ ನಲ್ಲಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿ, ಫೋನ್ ಸಂಪರ್ಕಗಳನ್ನೂ ತುಂಡರಿಸಿರುವುದರಿಂದ, ಅಲ್ಲಿನ ಹೋರಾಟದ ತೀವ್ರತೆಯನ್ನು ಅಳೆಯುವುದು ಕ್ಲಿಷ್ಟಕರವಾಗಿದೆ. ಆದರೆ, ಅಮೆರಿಕಾ ಮೂಲದ ಮಾನವ ಹಕ್ಕುಗಳ ಹೋರಾಟಗಾರರ ಸುದ್ದಿ ಸಂಸ್ಥೆಯೊಂದರ ಪ್ರಕಾರ, ಈ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 116ಕ್ಕೆ ಏರಿಕೆಯಾಗಿದ್ದು, 2,600ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಇರಾನ್ ನಲ್ಲಿ ಹಲವು ಬಾರಿ ಭುಗಿಲೆದ್ದಿದ್ದ ಪ್ರಕ್ಷುಬ್ಧತೆಯ ಸಂದರ್ಭಗಳಲ್ಲೂ ಈ ಸುದ್ದಿ ಸಂಸ್ಥೆ ನಿಖರ ಮಾಹಿತಿಯನ್ನು ನೀಡಿತ್ತು. ಈ ಪ್ರತಿಭಟನೆಯ ವೇಳೆ ಭದ್ರತಾ ಸಿಬ್ಬಂದಿಯ ಸಾವು-ನೋವಿನ ಕುರಿತು ವರದಿ ಮಾಡುತ್ತಿರುವ ಇರಾನ್ ನ ಸರಕಾರಿ ಸುದ್ದಿ ಸಂಸ್ಥೆ, ಇಡೀ ದೇಶ ನಿಯಂತ್ರಣದಲ್ಲಿದೆ ಎಂದು ಬಿಂಬಿಸುತ್ತಿದೆ. ಆದರೆ, ಪ್ರತಿಭಟನಾಕಾರರ ಸಾವು-ನೋವುಗಳ ಕುರಿತು ಯಾವುದೇ ಚರ್ಚೆ ನಡೆಸುತ್ತಿಲ್ಲ. ಹೀಗಿದ್ದರೂ, ರವಿವಾರ ಬೆಳಗ್ಗೆಯೂ ಪ್ರತಿಭಟನೆಗಳು ನಡೆಯುತ್ತಿರುವುದನ್ನು ಈ ಸುದ್ದಿ ಸಂಸ್ಥೆ ಒಪ್ಪಿಕೊಂಡಿದ್ದು, ಟೆಹ್ರಾನ್ ಹಾಗೂ ಇರಾನ್ ನ ಈಶಾನ್ಯ ಭಾಗದಲ್ಲಿರುವ ಪವಿತ್ರ ಮಾಶಾದ್ ನಗರದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಹೇಳಿದೆ. ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ, ಪ್ರತಿಭಟನಾಕಾರರ ಮೇಲೆ ಪ್ರಹಾರ ನಡೆಸುವ ಸುಳಿವನ್ನು ಇರಾನ್ ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ನೀಡಿದ್ದಾರೆ. ಶನಿವಾರ ಪ್ರತಿಭಟನಾಕಾರರ ವಿರುದ್ಧ ಬೆದರಿಕೆಯನ್ನು ಇರಾನ್ ಮತ್ತಷ್ಟು ತೀವ್ರಗೊಳಿಸಿದೆ. “ಯಾರಾದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಅಂಥವರನ್ನು ದೇವರ ವೈರಿ ಎಂದು ಪರಿಗಣಿಸಲಾಗುವುದು ಹಾಗೂ ಅಂಥವರೆಲ್ಲರಿಗೂ ಮರಣದಂಡನೆ ವಿಧಿಸಲಾಗುವುದು” ಎಂದು ಇರಾನ್ ನ ಅಟಾರ್ನಿ ಜನರಲ್ ಮುಹಮ್ಮದ್ ಮೊವಹೇದಿ ಆಝಾದ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ಪತ್ರಿಕೆಗಳ ವರದಿಗಳನ್ನು ಪರಿಶೀಲಿಸಿದರೆ, ರಾಜ್ಯದ ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ಈ ವಿಷಯಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ವಿವಾದದಷ್ಟು ಗಮನವನ್ನು ಸೆಳೆಯುವುದಿಲ್ಲ. ವಾಸ್ತವವಾಗಿ, ಕೆಲವೊಮ್ಮೆ ಈ ಇಬ್ಬರೂ ಬೇರೆ ಯಾವುದರಲ್ಲೂ ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ. ಸಿದ್ದರಾಮಯ್ಯನವರಿಗೆ ಒಮ್ಮೆ ರಾಜ್ಯದ ಬಗ್ಗೆ ಒಂದು ದೃಷ್ಟಿಕೋನವಿತ್ತು; ದಾರಿಯುದ್ದಕ್ಕೂ ಅವರು ಅದನ್ನು ಕಳೆದುಕೊಂಡಿದ್ದಾರೆ. ಶಿವಕುಮಾರ್ ಅವರ ವಿಷಯದಲ್ಲಿ, ಮುಖ್ಯಮಂತ್ರಿಯಾಗಬೇಕೆಂಬ ಅವರ ಹತಾಶ ಬಯಕೆಯ ಹೊರತಾಗಿ, ಅವರಿಗೆ ಆಸಕ್ತಿ ತೋರುವ ಏಕೈಕ ವಿಷಯವೆಂದರೆ ಆ ಕೆಟ್ಟ ಕಲ್ಪನೆಯ ಮತ್ತು ಅತ್ಯಂತ ದುಬಾರಿಯಾದ ಸುರಂಗ ಯೋಜನೆ. ಇತ್ತೀಚಿನ ವಾರಗಳಲ್ಲಿ, ನನ್ನ ತವರು ರಾಜ್ಯವಾದ ಕರ್ನಾಟಕದ ಪತ್ರಿಕೆಗಳು ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಅಧಿಕಾರದ ಜಗಳ ಕುರಿತು ಹಲವಾರು ವರದಿಗಳನ್ನು ಪ್ರಕಟಿಸಿವೆ. ಮೇ 2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮೊದಲ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಹೇಳಿತ್ತು ಮತ್ತು ನಂತರ ಡಿ.ಕೆ. ಶಿವಕುಮಾರ್ ಅವರು ಹುದ್ದೆ ವಹಿಸಿಕೊಳ್ಳುತ್ತಾರೆ ಎನ್ನಲಾಗಿತ್ತು ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರ ಅನುಯಾಯಿಗಳು ಇದನ್ನು ವಿರೋಧಿಸುತ್ತಾರೆ ಮತ್ತು ತಮ್ಮ ನಾಯಕನೇ ಪೂರ್ಣ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುವುದಾಗಿ ಹೇಳುತ್ತಾರೆ. ಆ ಅರ್ಧದಾರಿ ತಲುಪಿದಾಗ ಮತ್ತು ಹೈಕಮಾಂಡ್ ಮೌನವಾಗಿದ್ದಾಗ, ಉಪಾಹಾರ, ಊಟ ಮತ್ತು ಭೋಜನ ಸಭೆಗಳ ಸರಣಿ ನಡೆದವು. ಅಲ್ಲಿ ಪ್ರತಿಯೊಬ್ಬ ನಾಯಕರು ಸ್ಥಳೀಯ ಶಾಸಕರು, ಜಾತಿ ಸಂಸ್ಥೆಗಳ ಮುಖ್ಯಸ್ಥರ ಬಳಿ ತಮ್ಮನ್ನು ಬೆಂಬಲಿಸಲು ಕೇಳಿದರು. ಈ ಅಂಕಣವು ನಾಯಕತ್ವದ ವಿವಾದವನ್ನು ಮೀರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಕಾರ್ಯಕ್ಷಮತೆಯ ಬಗ್ಗೆ ನೋಡುತ್ತದೆ. ಮೊದಲು ಕಳೆದ ವಿಧಾನಸಭಾ ಚುನಾವಣೆಗೆ ಹಿಂದಿನ ತಿಂಗಳುಗಳನ್ನು ನೆನಪಿಸಿಕೊಳ್ಳೋಣ. ಆಗ ಹಿಜಾಬ್, ಹಲಾಲ್, ‘ಲವ್ ಜಿಹಾದ್’ ಮುಂತಾದ ವಿಷಯಗಳು ಹೆಚ್ಚು ಸುದ್ದಿಯಾಗುತ್ತಿದ್ದವು. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿತ್ತು ಮತ್ತು ಎಂದಿನಂತೆ ಕೋಮು ಧ್ರುವೀಕರಣವನ್ನು ಪ್ರಚೋದಿಸುವ ಮೂಲಕ ಮರುಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿತು. ಅದರ ಆಡಳಿತಾತ್ಮಕ ಕಾರ್ಯಕ್ಷಮತೆ ದುರ್ಬಲವಾಗಿತ್ತು; ಇದನ್ನು ತಿಳಿದೂ, ರಾಜ್ಯದ ಮುಸ್ಲಿಮರನ್ನು ರಾಕ್ಷಸೀಕರಿಸುವ ಮೂಲಕ, ಹಿಂದೂಗಳ ಬಲದಿಂದ ಮರುಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ನೆಲೆಯನ್ನು ಹೇಗಾದರೂ ಮರಳಿ ಪಡೆಯಬಹುದು ಎಂದು ಅದು ಆಶಿಸಿತು. ಕರ್ನಾಟಕದ ಅದೃಷ್ಟದಿಂದಾಗಿ ಅದರ ಈ ತಂತ್ರವು ವಿಫಲವಾಯಿತು. ಕಾಂಗ್ರೆಸ್ ಚುನಾವಣೆಯಲ್ಲಿ ಗಣನೀಯ ಬಹುಮತದಿಂದ ಗೆದ್ದಿತು ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸರಕಾರದ ಅಧಿಕಾರಾವಧಿಯ ಒಂದು ನಿರಾಕರಿಸಲಾಗದ ವೈಶಿಷ್ಟ್ಯವೆಂದರೆ, ಕೋಮು ಉದ್ವಿಗ್ನತೆಯಲ್ಲಿನ ಗಮನಾರ್ಹ ಇಳಿಕೆ. ರಾಜ್ಯವು ಮುಸ್ಲಿಮರ ದೊಡ್ಡ ಜನಸಂಖ್ಯೆಯನ್ನು (ಒಟ್ಟು ಜನಸಂಖ್ಯೆಯ ಸರಿಸುಮಾರು ಶೇ. 13) ಹೊಂದಿದೆ, ಜೊತೆಗೆ ಅಲ್ಪಸಂಖ್ಯೆಯ ಕ್ರಿಶ್ಚಿಯನ್ನರನ್ನು ಹೊಂದಿದೆ ಮತ್ತು ಈ ಎರಡೂ ಸಮುದಾಯಗಳು, ನಿಸ್ಸಂದೇಹವಾಗಿ, ಮೇ 2023ರಿಂದ ಅವರು ಅದಕ್ಕೂ ಹಿಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಇದ್ದುದಕ್ಕಿಂತ ಹೆಚ್ಚು ಸುರಕ್ಷಿತರೆಂದು ಭಾವಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದ ಇತರ ವಿಷಯಗಳ ಜೊತೆಗೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯ ಯಜಮಾನಿಗೆ ನಗದು ವರ್ಗಾವಣೆ, ಹೆಚ್ಚುವರಿ ಆಹಾರ ಧಾನ್ಯಗಳು, ಪ್ರತೀ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ವಿದ್ಯಾವಂತ ಆದರೆ ನಿರುದ್ಯೋಗಿ ಯುವಕರಿಗೆ ಸ್ಟೈಫಂಡ್ ಎಂಬ ಐದು ಗ್ಯಾರಂಟಿಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈ ಯೋಜನೆಗಳ ಬಗ್ಗೆ ಇನ್ನೂ ಪೂರ್ಣ ಪ್ರಮಾಣದ ವಿದ್ವತ್ಪೂರ್ಣ ಅಧ್ಯಯನಗಳನ್ನು ನಡೆಸಲಾಗಿಲ್ಲವಾದರೂ, ಸ್ವತಂತ್ರ ವೀಕ್ಷಕರ ವರದಿಗಳು ಸಾಮಾಜಿಕ ಸುರಕ್ಷತಾ ಜಾಲವನ್ನು ಸೃಷ್ಟಿಸುವಲ್ಲಿ ಅವರು ಸಾಧಾರಣ ಯಶಸ್ಸನ್ನು ಕಂಡಿರಬಹುದು ಎಂದು ಸೂಚಿಸುತ್ತವೆ. ಕರ್ನಾಟಕದ ಸಿದ್ದರಾಮಯ್ಯ ಸರಕಾರದ ಸಾಧನೆಗಳು ಇವು; ಸಾಪೇಕ್ಷ ಕೋಮು ಶಾಂತಿ ಮತ್ತು ಉದ್ದೇಶಿತ ಕಲ್ಯಾಣ. ನನ್ನ ತವರು ರಾಜ್ಯದಲ್ಲಿ ಮೂವತ್ತೊಂದು ತಿಂಗಳ ಕಾಂಗ್ರೆಸ್ ಆಡಳಿತದ ಯಾವುದೇ ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಯೋಚಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟ. ರಾಜಧಾನಿ ಬೆಂಗಳೂರಿನಲ್ಲಿ ಆಡಳಿತಾತ್ಮಕ ಉದಾಸೀನತೆ ಮತ್ತು ಅಸಮರ್ಥತೆಯ ಚಿಹ್ನೆಗಳು ವಿಶೇಷವಾಗಿ ಗೋಚರಿಸುತ್ತವೆ. ಅಲ್ಲಿ ರಸ್ತೆಗಳ ಹದಗೆಡುತ್ತಿರುವ ಪರಿಸ್ಥಿತಿಗಳು ಮತ್ತು ನಂತರದ ಸಂಚಾರ ದಟ್ಟಣೆಗಳು ನಗರದ ನಿವಾಸಿಗಳಿಗೆ ಹೆಚ್ಚಿನ ತೊಂದರೆಯನ್ನುಂಟುಮಾಡಿವೆ. ಭಾರತದ ಐಟಿ ಕ್ರಾಂತಿಯ ಪ್ರದರ್ಶನ ಕೇಂದ್ರವಾಗಿರುವ ನಗರವು ತನ್ನ ಮೂಲಸೌಕರ್ಯಗಳ ಕುಸಿತದಿಂದಾಗಿ ಹೇಗೆ ನಿಶ್ಚಲತೆ ಮತ್ತು ಕೊಳೆಯುವಿಕೆಯನ್ನು ಎದುರಿಸುತ್ತಿದೆ ಎಂಬುದರ ಕುರಿತು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಪತ್ರಿಕೆಗಳು ಸರಣಿ ವರದಿಗಳನ್ನು ಪ್ರಕಟಿಸಿವೆ. ಸಾರ್ವಜನಿಕ ಆಕ್ರೋಶವನ್ನು ಎದುರಿಸುತ್ತಿರುವ ಬೆಂಗಳೂರಿನ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ, ವಿಮಾನ ನಿಲ್ದಾಣ ಇರುವ ನಗರದ ಉತ್ತರ ಭಾಗವನ್ನು ಪ್ರಮುಖ ಸಾಫ್ಟ್ವೇರ್ ಮತ್ತು ಬಯೋಟೆಕ್ ಸಂಸ್ಥೆಗಳು ನೆಲೆಗೊಂಡಿರುವ ದಕ್ಷಿಣ ಭಾಗದೊಂದಿಗೆ ಸಂಪರ್ಕಿಸಲು ಭೂಗತ ಸುರಂಗವನ್ನು ನಿರ್ಮಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಇದು ಇಂಜಿನಿಯರ್ಗಳು ಮತ್ತು ವೈಟ್ಕಾಲರ್ ಕೆಲಸಗಾರರ ಸಂಚಾರವನ್ನು ಸುಗಮಗೊಳಿಸುತ್ತದೆ ಮತ್ತು ನಾಗರಿಕರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಆದರೂ, ಯಾವುದೇ ಸರಕಾರಿ ಕಾರ್ಯಕ್ರಮವು ಬಿಳಿ ಆನೆ ಎಂಬ ಹೆಸರನ್ನು ಪಡೆಯಲು ಅರ್ಹವಾಗಿದ್ದರೆ, ಅದು ಇದೇ ಆಗಿದೆ. ದೇಶದ ಪ್ರಮುಖ ಸಾರಿಗೆ ತಜ್ಞರು ಬೆಂಗಳೂರಿನಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಉಪಮುಖ್ಯಮಂತ್ರಿಯ ಯೋಜನೆ ಅವಿವೇಕತನ ಮತ್ತು ಕಾರ್ಯಸಾಧ್ಯವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಏಕೆಂದರೆ ಅದು ನಗರದ ಸಂಕೀರ್ಣ ಭೂಸ್ಥಿತಿಯನ್ನು ಲೆಕ್ಕಿಸುವುದಿಲ್ಲ ಮತ್ತು ಖಾಸಗಿ ವಾಹನಗಳ ಮಾಲಕರಿಗೆ ಅನುಚಿತವಾಗಿ ಅನುಕೂಲಕರವಾಗಿದೆ. ನಗರದ ಸಾರಿಗೆ ಅಡಚಣೆಗಳನ್ನು ಪರಿಹರಿಸಲು ಉತ್ತಮ ಆಯ್ಕೆಯೆಂದರೆ, ಅಸ್ತಿತ್ವದಲ್ಲಿರುವ ಮೆಟ್ರೊ ವ್ಯವಸ್ಥೆಯೊಂದಿಗೆ ಸಂಯೋಜಿಸಬಹುದಾದ ಬಸ್ಗಳ ದೊಡ್ಡ ಸಮೂಹವನ್ನು ಹೊಂದಿರುವುದು ಎಂದು ಈ ತಜ್ಞರು ವಾದಿಸುತ್ತಾರೆ. ಗಮನಾರ್ಹವಾಗಿ, ಉಪ ಮುಖ್ಯಮಂತ್ರಿ ಈ ತಜ್ಞರನ್ನು ಭೇಟಿ ಮಾಡಲು ಸಹ ನಿರಾಕರಿಸಿದ್ದಾರೆ ಮತ್ತು ಸಾರ್ವಜನಿಕ ಖಜಾನೆಗೆ ಭಾರೀ ವೆಚ್ಚದಲ್ಲಿ ತಮ್ಮ ಕೆಟ್ಟ ಕಲ್ಪನೆಯ ಸುರಂಗ ಯೋಜನೆಯನ್ನು ಮುಂದುವರಿಸಲು ಯೋಜಿಸಿದ್ದಾರೆ. ಶಿವಕುಮಾರ್ ಅವರ ರಾಜಕೀಯವು ಮಹತ್ವಾಕಾಂಕ್ಷೆ ಮತ್ತು ಆತುರದಿಂದ ಕೂಡಿದೆ. ಏತನ್ಮಧ್ಯೆ, ಒಂದು ಕಾಲದಲ್ಲಿ ಆತ್ಮವಿಶ್ವಾಸ ಮತ್ತು ಸಂಯಮದ ರಾಜಕಾರಣಿಯಾಗಿದ್ದ, ನಿಜವಾದ ಜನಸಾಮಾನ್ಯರ ನೆಲೆಯಿಂದ ಬರುವ ಅಧಿಕಾರವನ್ನು ಹೊಂದಿದ್ದ ಸಿದ್ದರಾಮಯ್ಯ ಈಗ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುವ ಮತ್ತು ರಾಜ್ಯದ ಇತಿಹಾಸದಲ್ಲಿ ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಏಕೈಕ ಮುಖ್ಯಮಂತ್ರಿಯಾಗುವತ್ತ ಗಮನಹರಿಸಿದ್ದಾರೆ. ಈ ಇಬ್ಬರ ನಡುವಿನ ಈ ಜಗಳವು ರಾಜ್ಯದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅತ್ಯಂತ ಸಮರ್ಥರಾಗಿರುವ ಹಲವಾರು ಕ್ಯಾಬಿನೆಟ್ ಮಂತ್ರಿಗಳಿದ್ದರೂ, ಅವರು ತಮ್ಮ ಖಾತೆಗಳ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಅವರು ಇಬ್ಬರು ಉನ್ನತ ನಾಯಕರ ನಡುವಿನ ಘರ್ಷಣೆಯಲ್ಲಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕತ್ವದ ತೀವ್ರ ಅಸಮರ್ಥತೆಯಿಂದಾಗಿ ಕರ್ನಾಟಕ ಕಾಂಗ್ರೆಸ್ನ ಸಮಸ್ಯೆಗಳು ಜಟಿಲವಾಗಿವೆ. ಇದು ಅವರು ಬಹು ಅಧಿಕಾರದ ಕೇಂದ್ರಗಳಾಗಿರುವುದರಿಂದ ಉಂಟಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ತಾಂತ್ರಿಕವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಮತ್ತು ಅವರು ಸ್ವತಃ ಕರ್ನಾಟಕದವರಾಗಿರುವುದರಿಂದ ಮುಖ್ಯಮಂತ್ರಿ ಹುದ್ದೆಯ ಕುರಿತು ಹೈಕಮಾಂಡ್ನ ಸ್ಥಾನದಲ್ಲಿ ಅವರಿಗೆ ನಿರ್ಣಾಯಕ ಪಾತ್ರವಿದೆ ಎಂದು ನಿರೀಕ್ಷಿಸಬಹುದು. ಆದರೂ, ಖರ್ಗೆ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಅತ್ಯಂತ ನಿಷ್ಠರಾಗಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ಅವರ ಅಭಿಪ್ರಾಯವನ್ನು ಸಹ ಕೇಳಲು ಇಷ್ಟಪಡುತ್ತಾರೆ ಎಂದು ತೋರುತ್ತದೆ. ಹಾಗಾಗಿ ಹೊಸದಿಲ್ಲಿಯಲ್ಲಿ ನಾಲ್ಕು ವಿಭಿನ್ನ ಅಧಿಕಾರ ಮೂಲಗಳಿವೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮತ್ತು ಅವರ ಬೆಂಬಲಿಗರು ಅವರಿಗೆ ಮನವಿ ಮಾಡಬೇಕು. ರಾಜ್ಯ ಕಾಂಗ್ರೆಸ್ ಆ ಸ್ಥಿತಿಯಲ್ಲಿರುವುದರಲ್ಲಿ ಆಶ್ಚರ್ಯವೇನಿಲ್ಲ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಮೊದಲೇ ಮಾತನಾಡಿದ್ದೇನೆ. ಆದರೂ, ನಗರವು ರಾಜ್ಯದ ಐದನೇ ಒಂದು ಭಾಗಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಗುರುತಿಸುವುದು ಮುಖ್ಯ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಅದರ ರಾಜಧಾನಿಯ ಸಾರಿಗೆ ಮತ್ತು ನೀರಿನ ಸಮಸ್ಯೆಗಳನ್ನು ಸರಿಪಡಿಸುವುದಕ್ಕಿಂತ ಹೆಚ್ಚಿನ ಅಗತ್ಯವಿದೆ. ಇದರಲ್ಲಿ ಆಧುನಿಕ ಆರ್ಥಿಕ ಚಟುವಟಿಕೆಯ ಇತರ ಕೇಂದ್ರಗಳನ್ನು ರಚಿಸುವುದೂ ಸೇರಿದೆ. ಆದ್ದರಿಂದ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಮಹಾರಾಷ್ಟ್ರದಂತೆ, ಕರ್ನಾಟಕವು ದೊಡ್ಡ ಪ್ರಮಾಣದ ಕೈಗಾರಿಕಾ/ವಾಣಿಜ್ಯ ಉದ್ಯೋಗ ಮತ್ತು ತೆರಿಗೆ ಆದಾಯವನ್ನು ಉತ್ಪಾದಿಸಲು ಒಂದೇ ನಗರವನ್ನು ಅವಲಂಬಿಸಿಲ್ಲ ಮತ್ತು ಜನಸಂಖ್ಯೆಯ ಹೆಚ್ಚಿನ ಭಾಗವು ಇನ್ನೂ ಕೃಷಿಯನ್ನು ಅವಲಂಬಿಸಿರುವುದರಿಂದ, ರೈತರಿಗೆ ನೀರಾವರಿ ಮತ್ತು ಸಾಲವನ್ನು ಒದಗಿಸುವುದರ ಬಗ್ಗೆ ಗಮನ ಕೋಡಬೆಕಾಗುತ್ತದೆ ಮತ್ತು ಅವರನ್ನು ಹೆಚ್ಚು ಸುಸ್ಥಿರ ಅಭ್ಯಾಸಗಳತ್ತ ತಿರುಗಿಸುವುದು ಅಗತ್ಯವಾಗುತ್ತದೆ. ಇದಲ್ಲದೆ, ನಗರ ಮತ್ತು ಗ್ರಾಮೀಣ ನಿವಾಸಿಗಳಿಗೆ ಸಮಾನವಾಗಿ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಸುಧಾರಿಸಲು ಕರ್ನಾಟಕ ಸರಕಾರವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಕೊನೆಯದಾಗಿ, ರಾಜ್ಯದ ಅಸಾಧಾರಣ ಶ್ರೀಮಂತ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದರೆ, ಕನಿಷ್ಠ ಉದ್ಯೋಗ ಮತ್ತು ಆದಾಯ ಎರಡನ್ನೂ ಸೃಷ್ಟಿಸುವ ಅದರ ಅಗಾಧ ಸಾಮರ್ಥ್ಯದಿಂದಾಗಿ ಪ್ರವಾಸೋದ್ಯಮವು ಸರಕಾರಕ್ಕೆ ಆಸಕ್ತಿಯ ಪ್ರಮುಖ ಕ್ಷೇತ್ರವಾಗಿರಬೇಕು. ಆದರೆ ಸ್ಥಳೀಯ ಪತ್ರಿಕೆಗಳ ವರದಿಗಳನ್ನು ಪರಿಶೀಲಿಸಿದರೆ, ರಾಜ್ಯದ ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ಈ ವಿಷಯಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ವಿವಾದದಷ್ಟು ಗಮನವನ್ನು ಸೆಳೆಯುವುದಿಲ್ಲ. ವಾಸ್ತವವಾಗಿ, ಕೆಲವೊಮ್ಮೆ ಈ ಇಬ್ಬರೂ ಬೇರೆ ಯಾವುದರಲ್ಲೂ ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ. ಸಿದ್ದರಾಮಯ್ಯನವರಿಗೆ ಒಮ್ಮೆ ರಾಜ್ಯದ ಬಗ್ಗೆ ಒಂದು ದೃಷ್ಟಿಕೋನವಿತ್ತು; ದಾರಿಯುದ್ದಕ್ಕೂ ಅವರು ಅದನ್ನು ಕಳೆದುಕೊಂಡಿದ್ದಾರೆ. ಶಿವಕುಮಾರ್ ಅವರ ವಿಷಯದಲ್ಲಿ, ಮುಖ್ಯಮಂತ್ರಿಯಾಗಬೇಕೆಂಬ ಅವರ ಹತಾಶ ಬಯಕೆಯ ಹೊರತಾಗಿ, ಅವರಿಗೆ ಆಸಕ್ತಿ ತೋರುವ ಏಕೈಕ ವಿಷಯವೆಂದರೆ ಆ ಕೆಟ್ಟ ಕಲ್ಪನೆಯ ಮತ್ತು ಅತ್ಯಂತ ದುಬಾರಿಯಾದ ಸುರಂಗ ಯೋಜನೆ. ಗಮನಾರ್ಹವಾಗಿ, ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಈ ದೊಡ್ಡ ಪ್ರಶ್ನೆಗಳು ವಿರೋಧ ಪಕ್ಷಗಳಲ್ಲೂ ಕಳವಳ ಮೂಡಿಸುವುದಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತ್ತು ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ರಂತಹ ಪ್ರಭಾವಿ ಮುಖ್ಯಮಂತ್ರಿಗಳು ಇಟ್ಟ ಮಾದರಿಯನ್ನು ಅನುಸರಿಸಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವು ಹೆಚ್ಚು ಹೆಚ್ಚು ಜನಾಂಗೀಯವಾಗಿದೆ. ಇದು ಬೇರೆ ಯಾವುದಕ್ಕಿಂತಲೂ ಹೆಚ್ಚಾಗಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದ್ವೇಷ ಮತ್ತು ಅನುಮಾನದಿಂದ ಪ್ರೇರಿತವಾಗಿದೆ. ಕರ್ನಾಟಕದ ಮತದಾರರಿಗೆ ನೀಡುವ ಯಾವುದೇ ಸಕಾರಾತ್ಮಕ ದೃಷ್ಟಿಕೋನವನ್ನು ಬಿಜೆಪಿ ಹೊಂದಿಲ್ಲ ಮತ್ತು ಜೆಡಿಎಸ್ ವಿಷಯದಲ್ಲಿ, ಅದು ಎಚ್.ಡಿ. ದೇವೇಗೌಡ ಮತ್ತು ಅವರ ಕುಟುಂಬದವರ ಸ್ವಾರ್ಥವನ್ನು ಉತ್ತೇಜಿಸಲು ಮಾತ್ರ ಅಸ್ತಿತ್ವದಲ್ಲಿದೆ. 2013 ಮತ್ತು 2018ರ ನಡುವಿನ ತಮ್ಮ ಮೊದಲ ಅವಧಿಯಲ್ಲಿ, ಸಿದ್ದರಾಮಯ್ಯ ಸ್ಥಿರ ಮತ್ತು ಸಮಂಜಸವಾಗಿ ಸಮರ್ಥ ಆಡಳಿತವನ್ನು ಒದಗಿಸಿದರು. ಅವರ ಎರಡನೇ ಅವಧಿ ಅಲೆದಾಡುವಿಕೆ, ಗೊಂದಲ ಮತ್ತು ತೀವ್ರವಾದ ಗುಂಪು ಪೈಪೋಟಿಯಿಂದ ಕೂಡಿದೆ. ಇತರ ಸಂದರ್ಭಗಳಲ್ಲಿ ನಾಗರಿಕರು ವಿರೋಧ ಪಕ್ಷಗಳನ್ನು ಒಟ್ಟಾಗಿ ಕೆಲಸ ಮಾಡಲು ಕೇಳಿಕೊಳ್ಳುತ್ತಿದ್ದರು. ಆದರೆ ಈ ಸಂದರ್ಭದಲ್ಲಿ, ಮೇ 2028ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ, ಅದು ರಚಿಸುವ ಯಾವುದೇ ಸರಕಾರವು ಈಗಿನದಕ್ಕಿಂತ ಅಸಮರ್ಥವಾಗಿರುತ್ತದೆ ಮತ್ತು ಹೆಚ್ಚು ದುರುದ್ದೇಶಪೂರಿತವಾಗಿರುತ್ತದೆ. ಆದರೂ, ಮುಂದಿನ ಚುನಾವಣೆಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯವಿದೆ. ಕರ್ನಾಟಕ ಕಾಂಗ್ರೆಸ್ ಮರುಸಂಘಟಿಸಲು, ಮರುಕೇಂದ್ರೀಕರಿಸಲು ಮತ್ತು ರಾಜ್ಯ ಮತ್ತು ಅದರ ನಾಗರಿಕರಿಗೆ ತಾನು ಬಯಸುವ ಮತ್ತು ಅರ್ಹವಾದ ರೀತಿಯ ಆಡಳಿತವನ್ನು ಒದಗಿಸಲು ಸಾಕಷ್ಟು ಸಮಯವಿದೆ. ಕಾಂಗ್ರೆಸ್ ನಿಜವಾಗಿಯೂ ಇದನ್ನು ಮಾಡಬಹುದೇ ಎಂಬುದು ಬೇರೆ ವಿಷಯ.
ದುರಸ್ತಿ ಕಾಮಗಾರಿ: ಭದ್ರಾ ನಾಲೆಗಳಲ್ಲಿ ನೀರು ಹರಿಯುವುದು ಒಂದು ವಾರ ತಡ
ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿದಿದ್ದರೂ, ನಾಲೆ ದುರಸ್ತಿ ಕಾಮಗಾರಿಗಳಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ನಾಟಿ ಒಂದು ವಾರ ತಡವಾಗಲಿದೆ. ಕೊನೆ ಭಾಗದ ರೈತರು ನೀರಿಗಾಗಿ ಎದುರು ನೋಡುತ್ತಿದ್ದು, ಕಳೆದ ಬಾರಿ ನಾಟಿ ಮಾಡಲಾಗದ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ನಾಟಿ ಗುರಿ ತಲುಪುವ ವಿಶ್ವಾಸವಿದೆ.

20 C