ಬಹುಸಾವಿರ ಕೋಟಿ ‘ ಗೆಯಿನ್ಬಿಟ್ಕಾಯಿನ್’ ಹಗರಣ | ಸಿಬಿಐನಿಂದ ಮುಖ್ಯ ಆರೋಪಿಯ ಬಂಧನ
ಹೊಸದಿಲ್ಲಿ,ಮಾ.11: ಬಹುಸಾವಿರ ಕೋಟಿ ಗೆಯಿನ್ಬಿಟ್ಕಾಯಿನ್ ಕ್ರಿಪ್ಟೊಕರೆನ್ಸಿ ಹಗರಣಕ್ಕೆ ಸಂಬಂಧಿಸಿ ಡಾರ್ವಿನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಯೂಷ್ ವಾರ್ಶ್ನೆ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಶುಕ್ರವಾರ ಬಂಧಿಸಿದೆ. ವೇರಿಯೇಬಲ್ಟೆಕ್ ಪ್ರೈ.ಲಿಮಿಟೆಡ್ ಎಂಬ ಸಂಸ್ಥೆಯು ನಡೆಸುತ್ತಿತ್ತೆನ್ನಲಾದ ಪೊಂಝಿ ಸ್ಕೀಮ್ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸ್ಕೀಮ್ನಡಿ ಕ್ರಿಪ್ಟೋಕರೆನ್ಸಿ ಹೂಡಿಕೆಗಳಿಂದ ಅತಿಯಾದ ಲಾಭವನ್ನು ಪಡೆಯಬಹುದೆಂಬ ಭ್ರಮೆ ಮೂಡಿಸಿ ಹೂಡಿಕೆದಾರರನ್ನು ಸೆಳೆಯಲಾಗುತ್ತಿತ್ತು. ಹೀಗೆ ಹೂಡಿಕೆದಾರರಿಂದ ಸಂಗ್ರಹಿಸಲಾದ ಹಣವನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿತ್ತು. ಭಾರತೀಯ ದಂಡಸಂಹಿತೆಯ ಸೆಕ್ಷನ್ಗಳಾದ 120 ಬಿ, 406 ಹಾಗೂ 420 ಮತ್ತು 2000ನೇ ಇಸವಿಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ರಡಿ ತನಿಖೆಯನ್ನು ನಡೆಸಲಾಗುತ್ತದೆ. ಗೆಯಿನ್ಬಿಟ್ಕಾಯಿನ್ ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿ ಎಫ್ಐಆರ್ ದಾಖಲಿಸುವಂತೆ 2023ರ ಡಿಸೆಂಬರ್ 13ರಂದು ಸುಪ್ರೀಂಕೋರ್ಟ್ ಆದೇಶಿಸಿದ ಬಳಿಕ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೊಂಡಿತ್ತು.
ಮಣಿಪಾಲ: ಅಖಿಲ ಭಾರತ ಅಂತರ ವಿವಿ ಚೆಸ್ ಪ್ರಾರಂಭ; ದಿಲ್ಲಿ ವಿವಿಗೆ ಮಣಿದ ಮುಂಬೈ ವಿವಿ
ಮಣಿಪಾಲ, ಮಾ.11: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ಪುರುಷರ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಚೆಸ್ ಚಾಂಪಿಯನ್ಷಿಪ್ ಇಂದು ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ. ಪೈ ಸಭಾಂಗಣದಲ್ಲಿ ಪ್ರಾರಂಭಗೊಂಡಿದ್ದು, ಮೊದಲ ದಿನದ ಪಂದ್ಯದಲ್ಲಿ ಹೊಸದಿಲ್ಲಿಯ ದಿಲ್ಲಿ ವಿವಿ ತಂಡ, ಮುಂಬಯಿ ವಿವಿ ತಂಡವನ್ನು ಪರಾಭವಗೊಳಿಸಿ ಶುಭಾರಂಭ ಮಾಡಿದೆ. ಮೊದಲ ದಿನದ ಉಳಿದ ಪಂದ್ಯಗಳಲ್ಲಿ ಚೆನ್ನೈನ ಎಸ್ಆರ್ಎಂ ಐಎಸ್ಟಿ ವಿವಿ, ಪಶ್ಚಿಮ ಬಂಗಾಲದ ಅದಮಾಸ್ ವಿವಿಯನ್ನು ಹಾಗೂ ಆಂಧ್ರಪ್ರದೇಶ ಗುಂಟೂರಿನ ಕೆಎಲ್ಇಎಫ್ ವಿವಿ, ಮರವಾಡಿ ವಿವಿಯನ್ನು ಹಿಮ್ಮೆಟ್ಟಿಸಿ ಪೂರ್ಣ ಅಂಕ ಸಂಪಾದಿಸಿದವು. ತಮಿಳುನಾಡಿನ ವಿಐಟಿ ವೆಲ್ಲೂರು ತಂಡ, ಕೇರಳ ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ ಕೈಯಲ್ಲಿ ಪರಾಭ ಗೊಂಡರೆ, ಪುಣೆಯ ಭಾರತಿ ವಿದ್ಯಾಪೀಠ, ಮೀರತ್ನ ಚಟೌಧುರಿ ಚರಣ್ ಸಿಂಗ್ ವಿವಿಯನ್ನು ಸೋಲಿಸಿತು. ಪರುಲ್ ವಿವಿ ದಿನದ ಕೊನೆಯ ಪಂದ್ಯದಲ್ಲಿ ಚಂಡೀಗಢದ ಪಂಜಾಬ್ ವಿವಿಯನ್ನು ಪರಾಭವಗೊಳಿಸಿತು. ಭಾರತೀಯ ವಿವಿಗಳ ಸಂಘದ (ಎಐಯು) ಸಹಯೋಗದಲ್ಲಿ ಮಾಹೆ ನಾಲ್ಕು ದಿನಗಳ ಚಾಂಪಿಯನ್ಷಿಪ್ನ್ನು ಆಯೋಜಿಸುತ್ತಿದ್ದು, ದೇಶಾದ್ಯಂತ ದಿಂದ ಒಟ್ಟು 12 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ. ತಂಡದಲ್ಲಿ ಮೂವರು ಗ್ರಾಂಡ್ಮಾಸ್ಟರ್ಗಳು ಹಾಗೂ ಮೂವರು ಇಂಟರ್ನೇಷನಲ್ ಮ್ಯಾಸ್ಟರ್ಗಳನ್ನು ಹೊಂದಿರುವ ಚೆನ್ನೈನ ಎಸ್ಆರ್ಎಂ ಐಎಸ್ಟಿ ತಂಡ ಅಗ್ರಶ್ರೇಯಾಂಕವನ್ನು ಪಡೆದಿದೆ. ಚೆಸ್ ಸ್ಪರ್ಧೆಯನ್ನು ಮಾಹೆಯ ಪ್ರೊವೈಸ್ ಚಾನ್ಸಲರ್ (ಆರೋಗ್ಯ ವಿಜ್ಞಾನ) ಡಾ.ಶರತ್ಕುಮಾರ್ ಅವರು ಉದ್ಘಾಟಿಸಿದರು. ಎಐಯು ವೀಕ್ಷಕರಾದ ಡಾ.ನರೇಂದ್ರ ಗೌರ್, ಮಾಹೆ ಕ್ರೀಡಾ ಕೌನ್ಸಿಲ್ನ ಕಾರ್ಯದರ್ಶಿ ಡಾ.ವಿನೋದ ಸಿ.ನಾಯಕ್, ಹೆಚ್ಚುವರಿ ಕಾರ್ಯದರ್ಶಿ ಡಾ.ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಉಪೇಂದ್ರ ನಾಯಕ್ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅಫಜಲಪುರ | ತಹಶೀಲ್ ಕಚೇರಿ ಆವರಣದಲ್ಲಿ ಉರುಳಿ ಬಿದ್ದ ವಿದ್ಯುತ್ ಕಂಬ : ತಪ್ಪಿದ ಭಾರಿ ಅನಾಹುತ
ಅಫಜಲಪುರ: ಪಟ್ಟಣದ ಅಫಜಲಪುರ ತಹಶೀಲ್ ಕಚೇರಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ವಿದ್ಯುತ್ ಕಂಬ ಆಕಸ್ಮಿಕವಾಗಿ ಉರುಳಿ ಬಿದ್ದ ಘಟನೆ ಸಂಭವಿಸಿದ್ದು, ಆ ವೇಳೆ ಸ್ಥಳದಲ್ಲಿ ಯಾರೂ ಇಲ್ಲದಿದ್ದ ಕಾರಣ ಭಾರಿ ಅನಾಹುತ ತಪ್ಪಿದೆ ಎಂದು ಕರ್ನಾಟಕ ವಿದ್ಯುತ್ ಮಂಡಳಿ ಸಿಬ್ಬಂದಿಗಳು ತಿಳಿಸಿದ್ದಾರೆ. ಕಚೇರಿ ಆವರಣದಲ್ಲಿರುವ ನೀರಿನ ಟ್ಯಾಂಕ್ ಕಾಂಪೌಂಡ್ ಹತ್ತಿರದ ಗಿಡದ ಬುಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದಾಗಿ ತಿಳಿದುಬಂದಿದೆ. ಇದರಿಂದ ಗಿಡ ದುರ್ಬಲಗೊಂಡು ಮುರಿದು, ಪಕ್ಕದಲ್ಲಿದ್ದ ವಿದ್ಯುತ್ ಪ್ರವಾಹ ಹರಿಯುತ್ತಿದ್ದ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣವೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಪ್ರವಾಹವನ್ನು ಸ್ಥಗಿತಗೊಳಿಸಿ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸಿದರು. ಈ ಕುರಿತು ಮಾಹಿತಿ ಪಡೆದ ತಹಸೀಲ್ದಾರ ಸಂಜೀವಕುಮಾರ್ ದಾಸರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೊಸ ವಿದ್ಯುತ್ ಕಂಬವನ್ನು ಅಳವಡಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಈ ಘಟನೆ ಹಿನ್ನೆಲೆ ತಹಶೀಲ್ ಕಚೇರಿಯಲ್ಲಿ ಸುಮಾರು ಎರಡು ರಿಂದ ಮೂರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿ ಕೆಲವು ಆಡಳಿತಾತ್ಮಕ ಕಾರ್ಯಗಳು ಸ್ಥಗಿತಗೊಂಡಿದ್ದವು.
ಮೂಡುಬಿದಿರೆ: ಮಹಿಳೆಯ ಸಂಶಯಾಸ್ಪದ ಸಾವು; ಪ್ರಕರಣ ದಾಖಲು
ಮೂಡುಬಿದಿರೆ: ತಲೆಗೆ ಏಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋವ೯ರು ಮಂಗಳವಾರ ರಾತ್ರಿ ಮೃತಪಟ್ಟಿದ್ದು ಇದು ಸಂಶಯಾಸ್ಪದ ಸಾವು ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ. ಪುತ್ತಿಗೆ ವಿದ್ಯಾಗಿರಿಯ ನಿವಾಸಿ ದಿನೇಶ್ ಎಂಬವರ ಪತ್ನಿ ಸವಿತಾ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಮಹಿಳೆ. ಅವರು ಎರಡು ದಿನಗಳ ಹಿಂದೆ ತಲೆಗೆ ಏಟು ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಗಂಡ ದಿನೇಶ್ ಪ್ರತಿದಿನ ಆಕೆಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಇದೀಗ ಕೂಡಾ ಈ ಸ್ಥಿತಿಗೆ ಆತನೇ ಕಾರಣ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆಕೆಯ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ಬಿದ್ದು ಗಂಭೀರ ಗಾಯಗೊಂಡಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ದಿನೇಶ್ ಅವರು ಲ್ಯಾಂಡ್ ವ್ಯವಹಾರ ನಡೆಸುತ್ತಿದ್ದಾರೆ. ಕವಿತಾ ಅವರ ತಾಯಿ ಕೂಡಾ ಇವರ ಜತೆಯಲ್ಲೇ ಇದ್ದು ಎರಡು ವಷ೯ಗಳ ಹಿಂದೆ ಮೃತಪಟ್ಟಿದ್ದರು. ಒಟ್ಟಾರೆಯಾಗಿ ಈ ಸಾವಿನ ಬಗ್ಗೆ ಕವಿತಾ ಅವರ ಸಂಬಂಧಿಕರು ಮತ್ತು ಮನೆಯ ಸಮೀಪದವರು ಸಂಶಯ ವ್ಯಕ್ತ ಪಡಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮಕ್ಕಳ ಮೃತದೇಹದ ಮೇಲೆ ನೊಬೆಲ್ ಶಾಂತಿ ಪದಕದೊಂದಿಗೆ ಟ್ರಂಪ್ ನಿಂತಿರುವ ಪೋಸ್ಟರ್ ಹಂಚಿಕೊಂಡ ಇರಾನ್
ಟೆಹ್ರಾನ್, ಮಾ.11: ಅಮೆರಿಕದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಕ್ಕಳ ಮೃತದೇಹದ ಮೇಲೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಿಡಿದುಕೊಂಡು ನಿಂತಿರುವಂತೆ ಚಿತ್ರಿಸುವ ಪೋಸ್ಟರ್ ಅನ್ನು ಇರಾನ್ ಹಂಚಿಕೊಂಡಿದೆ. ಫೆಬ್ರವರಿ 28ರ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಮೃತದೇಹಗಳ ಮೇಲೆ ಟ್ರಂಪ್ ವ್ಯಂಗ್ಯವಾಗಿ ನಗುತ್ತಾ ನಿಂತಿರುವಂತೆ ಚಿತ್ರಿಸಿರುವ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕೆ `ನೊಬೆಲ್ ನರಭಕ್ಷಕ' ಎಂಬ ಅಡಿಬರಹವನ್ನು ನೀಡಲಾಗಿದೆ. ಹಲವಾರು ಸಂಘರ್ಷಗಳನ್ನು ನಿಲ್ಲಿಸಲು ಸಹಾಯ ಮಾಡಿರುವ ತಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ ಎಂದು ಹಲವು ಬಾರಿ ಪ್ರತಿಪಾದಿಸಿದ್ದ ಟ್ರಂಪ್ ಅವರನ್ನು ಪೋಸ್ಟರ್ ಅಪಹಾಸ್ಯ ಮಾಡಿದೆ. ಜನವರಿಯಲ್ಲಿ ವೆನೆಝುವೆಲಾದ ವಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾದೊ ತನಗೆ ದೊರಕಿದ್ದ 2025ರ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಶ್ವೇತಭವನದಲ್ಲಿ ಟ್ರಂಪ್ಗೆ ಹಸ್ತಾಂತರಿಸಿದ್ದರು.
ಮಂಗಳೂರು: ನಿಷೇಧಿತ ಇ-ಸಿಗರೇಟ್ ವಶ; ಪ್ರಕರಣ ದಾಖಲು
ಮಂಗಳೂರು, ಮಾ.11: ನಗರದ ಲಾಲ್ಬಾಗ್ನ ಕಾಂಪ್ಲೆಕ್ಸ್ನಲ್ಲಿರುವ ಮಳಿಗೆಯೊಂದರಲ್ಲಿ ಕೇಂದ್ರ ಸರಕಾರದಿಂದ ನಿಷೇಧಗೊಂಡಿರುವ ಇ-ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಬರ್ಕೆ ಪೊಲೀಸರು ದಾಳಿ ನಡೆಸಿ ಮಳಿಗೆಯ ಮಾಲಕ ರೆಹಮತುಲ್ಲಾ ಖಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಳಿಗೆಗೆ ದಾಳಿ ಮಾಡಿದಾಗ ನಾನಾ ಕಂಪನಿಗಳ 91,100 ರೂ. ಮೌಲ್ಯದ 89 ಇ-ಸಿಗರೇಟ್ ಹಾಗೂ ಇತರ ಸೊತ್ತುಗಳನ್ನು ಸರಬರಾಜು ಮಾಡಲು ದಾಸ್ತಾನು ಮಾಡಿಟ್ಟಿದ್ದ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ | ಮನೆ ಅಂಗಳದಲ್ಲಿ ವಿದ್ಯಾರ್ಥಿಗಳೊಂದಿಗೆ ಡಿಸಿ ಸಂವಾದ
ಧೈರ್ಯದಿಂದ ಪರೀಕ್ಷೆ ಬರೆಯಿರಿ, ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿ: ಡಿಸಿ ಫೌಝಿಯಾ ತರನ್ನುಮ್
ಇಸ್ಪೀಟು ಜುಗಾರಿ ಆರೋಪ: 10 ಮಂದಿ ಬಂಧನ
ಕೋಟ, ಮಾ.11: ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೇಕ್ಸ್ನ ಒಂದನೇ ಮಹಡಿಯಲ್ಲಿರುವ ಎಸ್ಪಿ ಕ್ರಿಯೇಷನ್ ಕ್ಲಬ್ನಲ್ಲಿ ಮಾ.10ರಂದು ಸಂಜೆ ವೇಳೆ ಇಸ್ಪಿಟ್ ಜುಗಾರಿ ಆಡುತ್ತಿದ್ದ 10 ಮಂದಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಸದಾಶಿವ ದೇವಾಡಿಗ, ಜಯರಾಮ, ರಾಘವೇಂದ್ರ, ಗಣೇಶ, ದಯಾನಂದ, ಪ್ರಭಾಕರ, ಸದಾಶಿವ, ಜಯರಾಜ್ ಶೆಟ್ಟಿ, ಆನಂದ, ಹರೀಶ ಬಂಧಿತ ಆರೋಪಿಗಳು. ಇವರಿಂದ 65,664ರೂ. ನಗದು, ಕಾಯಿನ್, 10 ಮೊಬೈಲ್ ಪೋನ್, ಒಂದು ಸ್ಕೂಟರ್ನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
32ರ ಹರೆಯದ ಹರೀಶ್ ರಾಣಾಗೆ ಪರೋಕ್ಷ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ: ಏನಿದು ಪ್ರಕರಣ?
ಪಿಜಿ ಕಟ್ಟಡದಿಂದ ಬಿದ್ದು ಮೆದುಳಿಗೆ ತೀವ್ರ ಗಾಯಗಳಾಗಿ 13 ವರ್ಷಗಳಿಂದ ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾಗೆ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿಸಿದೆ. ದೇಶದಲ್ಲಿ ನ್ಯಾಯಾಲಯದ ಆದೇಶದ ಮೂಲಕ ಅನುಮತಿ ನೀಡಲಾದ ಮೊತ್ತಮೊದಲ ಪರೋಕ್ಷ ದಯಾಮರಣ ಪ್ರಕರಣ ಇದಾಗಿದೆ. 2018 ರ ತೀರ್ಪಿನ ಆಧಾರದ ಮೇಲೆ ಪರೋಕ್ಷ ದಯಾಮರಣ (ಘನತೆಯಿಂದ ಸಾಯುವ ಹಕ್ಕು) ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ನ್ಯಾಯಪೀಠ ಬುಧವಾರ ಈ ತೀರ್ಪು ನೀಡಿದೆ. ಇದೊಂದು ಐತಿಹಾಸಿಕ ತೀರ್ಪು. ಇದು 2018 ರ ಸುಪ್ರೀಂ ಕೋರ್ಟ್ನ ಪರೋಕ್ಷ ದಯಾಮರಣ ಮಾರ್ಗಸೂಚಿಗಳಿಗಿಂತ ಭಿನ್ನವಾಗಿದೆ. ಹರೀಶ್ ರಾಣಾ ಪ್ರಕರಣದಲ್ಲಿ ವೈದ್ಯರು ಅವರು ಎಂದಿಗೂ ಚೇತರಿಸಿಕೊಳ್ಳುವುದಿಲ್ಲ ಎಂದು ಒಪ್ಪಿಕೊಂಡಿದ್ದರೂ, ವೆಂಟಿಲೇಟರ್ಗಿಂತ ಫೀಡಿಂಗ್ ಟ್ಯೂಬ್ಗಳ ಮೂಲಕ ಅವರ ಜೀವವನ್ನು ಉಳಿಸಿಕೊಳ್ಳಲಾಗುತ್ತಿತ್ತು. 2018ರ ಕಾನೂನು ಮಾರ್ಗಸೂಚಿಗಳು ವೆಂಟಿಲೇಟರ್ಗಳಂತೆ “ಲೈಫ್ ಸಪೋರ್ಟ್” ಅನ್ನು ಹಿಂತೆಗೆದುಕೊಳ್ಳುವುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿವೆ. ಆದರೆ ವೈದ್ಯಕೀಯ ಫೀಡಿಂಗ್ ಟ್ಯೂಬ್ಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬಹುದೇ ಎಂಬುದು ಸ್ಪಷ್ಟವಾಗಿರಲಿಲ್ಲ. ಇದರಿಂದಾಗಿ ಆಸ್ಪತ್ರೆಯು ಅವರ ಚಿಕಿತ್ಸೆಯನ್ನು ಕಾನೂನುಬದ್ಧವಾಗಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳನ್ನು ಸ್ಪಷ್ಟಪಡಿಸುವವರೆಗೆ ರಾಣಾ ಅವರ ಕುಟುಂಬ ದಯಾಮರಣಕ್ಕಾಗಿ ಕಾನೂನು ಹೋರಾಟ ನಡೆಸಿತು. ಮಗನಿಗೆ ದಯಾಮರಣಕ್ಕೆ ಕೋರಿ ಹರೀಶ್ ರಾಣಾ ಅವರ ಪೋಷಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು (ಮಾರ್ಚ್ 11) ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಘನತೆಯನ್ನು ಕಾಪಾಡಿಕೊಳ್ಳುವಂತೆ ಸೂಕ್ತ ಕ್ರಮಗಳನ್ನು ಅನುಸರಿಸಿ ಹರೀಶ್ ರಾಣಾ ಅವರ ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಬಹುದು ಎಂದು ಹೇಳಿದೆ. ಸುಪ್ರೀಂ ಮಹತ್ವದ ತೀರ್ಪು ತೀರ್ಪು ನೀಡಿದ ಪೀಠವು ಅಮೆರಿಕನ್ ಧರ್ಮೋಪದೇಶಕ ಹೆನ್ರಿ ವಾರ್ಡ್ ಬೀಚರ್ ಅವರ ‘ನಾವು ಹುಟ್ಟನ್ನು ಆಯ್ಕೆ ಮಾಡುವುದಿಲ್ಲ, ಆದರೆ ಹೇಗೆ ಬದುಕಬೇಕು ಎಂಬುದನ್ನು ಮಾತ್ರ ಆರಿಸಿಕೊಳ್ಳುತ್ತೇವೆ’ ಎಂಬ ಮಾತನ್ನು ಉಲ್ಲೇಖಿಸಿದೆ. ಯಾರನ್ನಾದರೂ ಸಾಯಲು ಬಿಡಬೇಕೇ ಎಂದು ನಿರ್ಧರಿಸುವಾಗ ನ್ಯಾಯಾಲಯಗಳು ಕೆಲವೊಮ್ಮೆ ಅದೇ ನೋವಿನ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಹೇಳಲು ನ್ಯಾಯಾಧೀಶರು ಶೇಕ್ಸ್ಪಿಯರ್ನ “to be or not to be” ಎಂಬ ಮಾತನ್ನೂ ಉಲ್ಲೇಖಿಸಿದರು. ನಂತರ ನ್ಯಾಯಾಲಯವು ಹರೀಶ್ ರಾಣಾ ಅವರ ಪ್ರಕರಣದಲ್ಲಿನ ಮುಖ್ಯ ಗೊಂದಲವನ್ನು ನಿವಾರಿಸಿತು. ವೈದ್ಯಕೀಯ ಆಹಾರ ಟ್ಯೂಬ್ಗಳು ಮತ್ತು ದೇಹಕ್ಕೆ ನೀಡುವ ದ್ರವ ಪೂರೈಕೆ (ಹೈಡ್ರೇಷನ್) ಅಧಿಕೃತವಾಗಿ “ವೈದ್ಯಕೀಯ ಚಿಕಿತ್ಸೆಗಳು” ಎಂದು ಪೀಠ ತೀರ್ಪು ನೀಡಿತು. ಈ ಆಹಾರವನ್ನು ವೈದ್ಯರು ಶಿಫಾರಸು ಮಾಡುತ್ತಾರೆ ಮತ್ತು ನೀಡುತ್ತಾರೆ, ಆದ್ದರಿಂದ ಅದನ್ನು ಜೀವ ಬೆಂಬಲವೆಂದು ಪರಿಗಣಿಸಬಹುದು. ಆದ್ದರಿಂದ ಪ್ರಾಥಮಿಕ ಮತ್ತು ಮಾಧ್ಯಮಿಕ ವೈದ್ಯಕೀಯ ಮಂಡಳಿಗಳು ಇದು ಇನ್ಮುಂದೆ ರೋಗಿಗೆ ಸಹಾಯ ಮಾಡುವುದಿಲ್ಲ ಎಂದು ಒಪ್ಪಿಕೊಂಡರೆ, ಟ್ಯೂಬ್ಗಳನ್ನು ಕಾನೂನುಬದ್ಧವಾಗಿ ತೆಗೆದುಹಾಕಬಹುದು ಎಂದು ಪೀಠ ಹೇಳಿದೆ. ಹರೀಶ್ ರಾಣಾಗೆ ಏನಾಗಿತ್ತು? 2013 ಆಗಸ್ಟ್ 20ರಂದು ತಮ್ಮ ಪೇಯಿಂಗ್ ಗೆಸ್ಟ್ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಹರೀಶ್ ರಾಣಾ ಬಿದ್ದಿದ್ದರು. ಆಗ ಅವರು ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಬಾಲ್ಕನಿಯಿಂದ ಬಿದ್ದ ಪರಿಣಾಮ ರಾಣಾ ಅವರ ತಲೆಗೆ ತೀವ್ರ ಗಾಯಗಳಾಗಿ ಅವರು 100% ಅಂಗವೈಕಲ್ಯವನ್ನು ಅನುಭವಿಸಿದರು. ಅಪಘಾತದ ನಂತರ ಕಣ್ಣು ತೆರೆಯಲು ಅಥವಾ ಕೈಕಾಲುಗಳನ್ನು ಚಲಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಂದಿನಿಂದ ಅವರು ಜೀವಚ್ಛವದಂತಿದ್ದು ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ನಂತರ ಶಸ್ತ್ರಚಿಕಿತ್ಸೆಯಿಂದ ಸ್ಥಾಪಿಸಲಾದ PEG ಫೀಡಿಂಗ್ ಟ್ಯೂಬ್ ಮೂಲಕ ಪೌಷ್ಟಿಕಾಂಶ ನೀಡಿ ಅವರ ಜೀವ ಉಳಿಸಲಾಗುತ್ತಿತ್ತು. ದೀರ್ಘಕಾಲದ ವೈದ್ಯಕೀಯ ಆರೈಕೆಯು ಕುಟುಂಬದ ಮೇಲೆ ಭಾರೀ ಆರ್ಥಿಕ ಒತ್ತಡ ತಂದಿದೆ. ಇನ್ನಿಬ್ಬರು ಮಕ್ಕಳನ್ನು ಹೊಂದಿರುವ ರಾಣಾ ಅವರ ಪೋಷಕರು ದೆಹಲಿಯ ಮಹಾವೀರ್ ಎನ್ಕ್ಲೇವ್ನಲ್ಲಿದ್ದ ತಮ್ಮ ಮನೆಯನ್ನು ಮಾರಿ, ಹೆಚ್ಚುತ್ತಿರುವ ವೆಚ್ಚಗಳನ್ನು ನಿಭಾಯಿಸಲು ಗಾಜಿಯಾಬಾದ್ಗೆ ಸ್ಥಳಾಂತರಗೊಂಡಿದ್ದಾರೆ. ಅವರೇ ಆಸ್ಪತ್ರೆಯಲ್ಲಿ ರಾಣಾ ಅವರ ಆರೈಕೆ ಮಾಡುತ್ತಿದ್ದಾರೆ. ಇಷ್ಟೊಂದು ವರ್ಷಗಳಲ್ಲಿ ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದ ಕಾರಣ, ರಾಣಾ ಅವರ ಪೋಷಕರು ಜೀವ ಉಳಿಸುವ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳಲು ಅನುಮತಿ ಕೋರಿ ನ್ಯಾಯಾಲಯಗಳ ಮೆಟ್ಟಿಲೇರಿದ್ದರು. ವೈದ್ಯಕೀಯ ಸಾಧನಗಳ ನೆರವಿನಿಂದ ತಮ್ಮ ಮಗ ಜೀವಂತವಾಗಿದ್ದಾನೆ. ಆದರೆ ಅವನ ಚಿಕಿತ್ಸೆಯು ಇನ್ನು ಮುಂದೆ ಅವನ ಚೇತರಿಕೆಗೆ ಸಹಾಯ ಮಾಡುತ್ತಿಲ್ಲ ಎಂದು ಪೋಷಕರು ವಾದಿಸಿದರು. ಅವರ ಮನವಿಯನ್ನು ಅಂಗೀಕರಿಸುವಾಗ ಸುಪ್ರೀಂ ಕೋರ್ಟ್, ನಿಜವಾದ ಪ್ರಶ್ನೆ ರೋಗಿ ಸತ್ತರೆ ಉತ್ತಮವೇ ಎಂಬುದು ಅಲ್ಲ ಎಂದು ಹೇಳಿತು. ಬದಲಾಗಿ, ಅವರನ್ನು ವೈದ್ಯಕೀಯ ಚಿಕಿತ್ಸೆಯಲ್ಲಿ ಇಡುವುದು ನಿಜವಾಗಿಯೂ ಅವರಿಗೆ ಸಹಾಯ ಮಾಡುತ್ತಿದೆಯೇ ಎಂಬುದರ ಮೇಲೆ ಗಮನ ಹರಿಸಬೇಕು ಎಂದು ತಿಳಿಸಿತು. ವೈದ್ಯರು ಚಿಕಿತ್ಸೆಯಿಂದ ಪ್ರಯೋಜನವಾಗುವವರೆಗೆ ಚಿಕಿತ್ಸೆಯನ್ನು ಮುಂದುವರಿಸುವ ಕರ್ತವ್ಯವನ್ನು ಹೊಂದಿರುತ್ತಾರೆ. ಆದರೆ ಯಾವುದೇ ಚೇತರಿಕೆಯ ಭರವಸೆಯಿಲ್ಲದೆ ಕೇವಲ ಜೈವಿಕ ಜೀವಿತಾವಧಿಯನ್ನು ಹೆಚ್ಚಿಸುವ ಸಂದರ್ಭಗಳಿಗೆ ಆ ಬಾಧ್ಯತೆ ವಿಸ್ತರಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸುದೀರ್ಘ ಕಾನೂನು ಹೋರಾಟ ಚೇತರಿಸಿಕೊಳ್ಳುವ ಭರವಸೆ ಮಸುಕಾಗುತ್ತಿದ್ದಂತೆ, ರಾಣಾ ಕುಟುಂಬವು ಜುಲೈ 2024 ರಲ್ಲಿ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿ ಪರೋಕ್ಷ ದಯಾಮರಣಕ್ಕೆ ಕೋರಿತು. ರಾಣಾ ಯಾಂತ್ರಿಕ ವೆಂಟಿಲೇಟರ್ ಅನ್ನು ಅವಲಂಬಿಸಿಲ್ಲ ಮತ್ತು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಹಾಗೂ ಆಹಾರಕ್ಕಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಸಹಾಯದಿಂದ ಬದುಕುತ್ತಿದ್ದಾರೆ ಎಂದು ಗಮನಿಸಿದ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು. ಹರೀಶ್ ರಾಣಾ ಪ್ರಕರಣದ ಟೈಮ್ ಲೈನ್ ಆಗಸ್ಟ್ 20, 2013 – ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ, ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ಮೆದುಳಿಗೆ ಗಂಭೀರ ಗಾಯಗಳಾಗಿತ್ತು. ಜುಲೈ 2024 – ಕುಟುಂಬವು ಪರೋಕ್ಷ ದಯಾಮರಣ ಕೋರಿ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದು ಅರ್ಜಿಯನ್ನು ತಿರಸ್ಕರಿಸಲಾಯಿತು. ನವೆಂಬರ್ 2024 – ಸುಪ್ರೀಂ ಕೋರ್ಟ್ ಕೂಡ ಅನುಮತಿ ನಿರಾಕರಿಸಿ, ಸರ್ಕಾರವು ಚಿಕಿತ್ಸಾ ಬೆಂಬಲವನ್ನು ಅನ್ವೇಷಿಸುವಂತೆ ಸೂಚಿಸಿತು. ಡಿಸೆಂಬರ್ 2025 – ರಾಣಾ ಅವರ ಪೋಷಕರು ಮತ್ತೆ ಸುಪ್ರೀಂ ಕೋರ್ಟ್ಗೆ ಮೊರೆ ಹೋದರು. ರಾಣಾ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಮತ್ತು ಅವರನ್ನು “ಕೃತಕವಾಗಿ ಜೀವಂತವಾಗಿ” ಇಡಲಾಗುತ್ತಿದೆ ಎಂದು ಹೇಳಿದರು. ಜನವರಿ 13, 2026 – ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರು ರಾಣಾ ಅವರ ಪೋಷಕರನ್ನು ಭೇಟಿಯಾದರು. ಜನವರಿ 15, 2026 – ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತು. ಮಾರ್ಚ್ 11, 2026 – ದಯಾಮರಣಕ್ಕೆ ಅನುಮತಿ ನೀಡಿತು. ಇದು ಮಹತ್ವದ ಪ್ರಕರಣ ಯಾಕೆ? ಹರೀಶ್ ರಾಣಾ ಪ್ರಕರಣವು ಭಾರತದಲ್ಲಿ ದಯಾಮರಣ ಕುರಿತ ಚರ್ಚೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಜೀವ ಉಳಿಸುವ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಸಾವಿಗೆ ಅವಕಾಶ ನೀಡುವ ಪರೋಕ್ಷ ದಯಾಮರಣವನ್ನು ಮೊದಲು ಸುಪ್ರೀಂ ಕೋರ್ಟ್ ಅರುಣಾ ಶಾನ್ಬಾಗ್ ಪ್ರಕರಣದಲ್ಲಿ ಗುರುತಿಸಿತು. 2018ರಲ್ಲಿ ನ್ಯಾಯಾಲಯವು Common Cause vs Union of India ಪ್ರಕರಣದಲ್ಲಿ ಕಾನೂನನ್ನು ಮತ್ತಷ್ಟು ಸ್ಪಷ್ಟಪಡಿಸಿ, ಘನತೆಯಿಂದ ಸಾಯುವ ಹಕ್ಕು ಸಂವಿಧಾನದ ಅಡಿಯಲ್ಲಿ ಬದುಕುವ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಘೋಷಿಸಿತು. ಅರುಣಾ ಶಾನ್ಬಾಗ್ ಪ್ರಕರಣ ದಯಾಮರಣದ ಕುರಿತು ಮಾರ್ಗದರ್ಶಕ ಸೂತ್ರಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಾರ್ಗದರ್ಶನ ನೀಡಲು ಕಾರಣವಾಗಿದ್ದು ದಯಾಮರಣ ಸಿಗದೆ ಕೊನೆಯುಸಿರೆಳೆದ ಕನ್ನಡತಿ ಅರುಣಾ ಶಾನ್ಬಾಗ್ ಪ್ರಕರಣ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣಾ ಶಾನ್ಬಾಗ್ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 1973 ನವೆಂಬರ್ 27ರಂದು ಆಸ್ಪತ್ರೆಯ ಬೇಸ್ಮೆಂಟ್ನಲ್ಲಿ ಅದೇ ಆಸ್ಪತ್ರೆಯ ವಾರ್ಡ್ ಬಾಯ್ ಸೋಹನ್ಲಾಲ್ ವಾಲ್ಮೀಕಿ ಅರುಣಾ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ಆಕೆಯನ್ನು ನಿಶ್ಚಲಗೊಳಿಸಲು ಆತ ನಾಯಿಯನ್ನು ಕಟ್ಟುವ ಚೈನ್ ಅನ್ನು ಅರುಣಾ ಅವರ ಕುತ್ತಿಗೆಗೆ ಬಿಗಿದಿದ್ದರಿಂದ ಮಿದುಳಿಗೆ ಗಂಭೀರ ಹಾನಿಯಾಗಿತ್ತು. ಮರುದಿನ ಬೆಳಿಗ್ಗೆ 7.45ಕ್ಕೆ ಕ್ಲೀನರ್ ಒಬ್ಬಳು ಅರುಣಾ ಅವರನ್ನು ಪ್ರಜ್ಞಾಹೀನಳಾಗಿ ನೆಲದ ಮೇಲೆ ಬಿದ್ದಿರುವುದನ್ನು ಕಂಡಳು. ಆಕೆಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ದೇಹದ ಬಹುತೇಕ ಅಂಗಾಂಗಗಳು ನಿಷ್ಕ್ರಿಯಗೊಂಡು, ಗ್ರಹಿಕೆ ಮತ್ತು ಸ್ಪಂದನೆ ಇಲ್ಲದ ಸ್ಥಿತಿಯಲ್ಲಿ ಅರುಣಾ ಇದ್ದರು. ಮೂಗಿಗೆ ನಳಿಕೆ ಅಳವಡಿಸಿ ಆಹಾರ ನೀಡಲಾಗುತ್ತಿತ್ತು. ಜೀವಚ್ಛವದಂತೆ ಅರುಣಾ ಆಸ್ಪತ್ರೆಯಲ್ಲಿ ಕಳೆದದ್ದು ಬರೋಬ್ಬರಿ 42 ವರ್ಷ. ಅರುಣಾ ಅವರಿಗೆ ದಯಾಮರಣ ಕಲ್ಪಿಸುವಂತೆ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಪಿಂಕಿ ವಿರಾನಿ 2009ರಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ 2011 ಮಾರ್ಚ್ 7ರಂದು ಸುಪ್ರೀಂ ಕೋರ್ಟ್ ಅರ್ಜಿಯನ್ನು ತಳ್ಳಿಹಾಕಿತು. ಭಾರತದಲ್ಲಿ ಉದ್ದೇಶಪೂರ್ವಕವಾಗಿ ಹತ್ಯೆ ಮಾಡುವುದು ಅಪರಾಧವಾಗಿರುವುದರಿಂದ ನೇರ ದಯಾಮರಣಕ್ಕೆ ಅವಕಾಶ ನೀಡಲು ನ್ಯಾಯಾಲಯ ನಿರಾಕರಿಸಿತು. ಆದರೆ ದೀರ್ಘಕಾಲ ಕೋಮಾ ಸ್ಥಿತಿಯಲ್ಲಿರುವ ರೋಗಿಗಳಿಗೆ ಜೀವ ಬೆಂಬಲ ಸಾಧನಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಪರೋಕ್ಷ ದಯಾಮರಣವನ್ನು ಪರಿಗಣಿಸಬಹುದು ಎಂದು ತಿಳಿಸಿತು. ಅರುಣಾ ಶಾನ್ಬಾಗ್ 2015 ಮೇ 18ರಂದು ನ್ಯುಮೋನಿಯಾದಿಂದ ಮೃತಪಟ್ಟರು. ನೇರ vs ಪರೋಕ್ಷ ದಯಾಮರಣ ಭಾರತದಲ್ಲಿ ನೇರ ಅಥವಾ ಸಕ್ರಿಯ ದಯಾಮರಣ ಕಾನೂನುಬಾಹಿರವಾಗಿದೆ. ವೈದ್ಯರ ನೆರವಿನ ಆತ್ಮಹತ್ಯೆ ಐಪಿಸಿಯ ಸೆಕ್ಷನ್ 306 ಅಡಿಯಲ್ಲಿ ಅಪರಾಧವಾಗಿದೆ. ಸಕ್ರಿಯ ದಯಾಮರಣದಲ್ಲಿ ರೋಗಿಯ ಸಾವಿಗೆ ಕಾರಣವಾಗುವ ಕ್ರಮಗಳನ್ನು ನೇರವಾಗಿ ಕೈಗೊಳ್ಳಲಾಗುತ್ತದೆ. ಉದಾಹರಣೆಗೆ ಮಾರಕ ಔಷಧವನ್ನು ಚುಚ್ಚುವುದು. ಆದರೆ ಪರೋಕ್ಷ ದಯಾಮರಣದಲ್ಲಿ ರೋಗಿಯ ಜೀವವನ್ನು ಉಳಿಸುವ ಚಿಕಿತ್ಸೆಯನ್ನು ನಿಲ್ಲಿಸಲಾಗುತ್ತದೆ. ವೈದ್ಯರು ಯಾರನ್ನೂ ನೇರವಾಗಿ ಕೊಲ್ಲುವುದಿಲ್ಲ; ಅವರು ಜೀವ ಉಳಿಸುವ ಕ್ರಮಗಳನ್ನು ಮಾತ್ರ ನಿಲ್ಲಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ದಯಾಮರಣ ಯಾವ ದೇಶಗಳಲ್ಲಿ ಕಾನೂನುಬದ್ಧ? ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಲಕ್ಸೆಂಬರ್ಗ್, ಕೆನಡಾ, ಸ್ಪೇನ್ ದೇಶಗಳಲ್ಲಿ ದಯಾಮರಣ ಕಾನೂನುಬದ್ಧವಾಗಿದೆ. 2020ರ ಜನಾಭಿಪ್ರಾಯ ಸಂಗ್ರಹಣೆಯ ನಂತರ ನ್ಯೂಜಿಲೆಂಡ್ನಲ್ಲೂ ಇದು ಕಾನೂನುಬದ್ಧವಾಗಿದೆ. ಕೊಲಂಬಿಯಾ, ಈಕ್ವೆಡಾರ್ ಹಾಗೂ ಆಸ್ಟ್ರೇಲಿಯಾದ ಎಲ್ಲಾ ಆರು ರಾಜ್ಯಗಳಲ್ಲೂ ದಯಾಮರಣ ಕಾನೂನುಬದ್ಧವಾಗಿದೆ. ಸ್ವಿಟ್ಜರ್ಲೆಂಡ್ನಲ್ಲಿ ವೈದ್ಯರ ನೆರವಿನ ಮರಣಕ್ಕೆ ಅವಕಾಶವಿದ್ದರೂ ನೇರ ದಯಾಮರಣಕ್ಕೆ ಅನುಮತಿ ಇಲ್ಲ. ಯುನೈಟೆಡ್ ಸ್ಟೇಟ್ಸ್ನ ಒರೆಗಾನ್, ವಾಷಿಂಗ್ಟನ್, ವರ್ಮೊಂಟ್, ಕ್ಯಾಲಿಫೋರ್ನಿಯಾ, ಹವಾಯಿ, ನ್ಯೂಜೆರ್ಸಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವೈದ್ಯರ ನೆರವಿನ ಮರಣ ಕಾನೂನುಬದ್ಧವಾಗಿದೆ. ಪೋರ್ಚುಗಲ್ನಲ್ಲಿ ಕಾನೂನು ಅಂಗೀಕರಿಸಲಾಗಿದ್ದು ಅಂತಿಮ ನಿಯಮಗಳಿಗಾಗಿ ಕಾಯುತ್ತಿದೆ. ಉರುಗ್ವೆಯಲ್ಲಿ ಕಾನೂನು ಅಂಗೀಕರಿಸಿದರೂ ಇನ್ನೂ ಜಾರಿಗೆ ಬಂದಿಲ್ಲ.
ಕಾಳಗಿ | ಮಾ. 14 ರಂದು 100 ಕೋಟಿ ರೂ. ವೆಚ್ಚದ ಕಾಮಗಾರಿಗಳ ಅಡಿಗಲ್ಲು ಸಮಾರಂಭ
ಸಚಿವ ಪ್ರಿಯಾಂಕ್ ಖರ್ಗೆ ಆಗಮನ
ಉಡುಪಿ ನಗರಸಭೆ: ಪರಿಷ್ಕೃತ ಆಸ್ತಿ ತೆರಿಗೆ ಪಾವತಿಗೆ ಸೂಚನೆ
ಉಡುಪಿ, ಮಾ.11: ಉಡುಪಿ ನಗರಸಭಾ ವ್ಯಾಪ್ತಿಯ ಮಾರುಕಟ್ಟೆ ಬೆಲೆ ಪರಿಷ್ಕರಣೆಯಾಗದೇ ಇರುವುದರಿಂದ, ಪ್ರಸಕ್ತ ಸಾಲಿನಲ್ಲಿ ನಿರ್ಧರಣೆಯಾದ ತೆರಿಗೆಯ ಮೇಲೆ ಶೇ.3 ರಷ್ಟು ತೆರಿಗೆಯನ್ನು ನಗರಸಭೆಯ ಆಡಳಿತಾಧಿಕಾರಿ ಗಳ ಸಭೆಯ ನಿರ್ಣಯದಂತೆ ಹೆಚ್ಚಿಸಲಾಗಿದೆ. ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡದ/ಖಾಲಿ ನಿವೇಶನ ಮಾಲಕರು ಹಾಗೂ ಅಧಿಭೋಗದಾರರು 2026-27ನೇ ಸಾಲಿನ ಆಸ್ತಿತೆರಿಗೆ ಯನ್ನು, 2025-26ರ ಆಸ್ತಿತೆರಿಗೆಯ ಮೇಲೆ ಶೇ.3ರಷ್ಟು ಹೆಚ್ಚಿಸಿ, ಎಪ್ರಿಲ್ 1ರಿಂದ 30ರ ಒಳಗೆ ಪಾವತಿಸಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದು. ಮೇ 1ರಿಂದ ಜೂನ್ 30ರವರೆಗೆ ದಂಡ ರಹಿತ ಪಾವತಿಗೆ ಅವಕಾಶವಿದ್ದು, ಜುಲೈ 1ರ ನಂತರ ಪಾವತಿಸಿದ್ದಲ್ಲಿ ಆಸ್ತಿ ತೆರಿಗೆಯ ಮೇಲೆ ಪ್ರತಿ ತಿಂಗಳು ಶೇ.2ರಷ್ಟು ದಂಡ ವಿಧಿಸಲಾಗುವುದು. ಪ್ರಸಕ್ತ ಸಾಲಿನ ಹಾಗೂ ಹಿಂದಿನ ಅವಧಿಯ ಆಸ್ತಿ ತೆರಿಗೆ ಪಾವತಿಸದೇ ಇರುವವರು ಶೇ.2ರಷ್ಟು ದಂಡ ದೊಂದಿಗೆ ಪಾವತಿಸಿ, ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ವಾತಾವರಣ ವೈಪರೀತ್ಯ ಮತ್ತು ಭಾರತದ ಜಲ ಬಿಕ್ಕಟ್ಟು; ಜಲ ಭದ್ರತೆಗೆ ದೇಶ ಸಜ್ಜಾಗಬೇಕಿದೆ
ನಳ್ಳಿ ನೀರು ತೆರೆದಾಗ ಶುದ್ಧ ಜಲ ಹರಿಯುವುದು ಆಧುನಿಕ ಜೀವನದ ಅತಿ ಅಗತ್ಯ ಮೂಲಸೌಕರ್ಯಗಳಲ್ಲಿ ಒಂದಾಗಿದೆ. ಆದರೆ ವಾತಾವರಣ ವೈಪರೀತ್ಯದಿಂದಾಗಿ ಭಾರತದಲ್ಲಿ ಈ ಸೌಲಭ್ಯ ಸಿಗದೆ ಇರಬಹುದಾದ ಆತಂಕ ಇದೆ. ಅನಿಯಮಿತ ಮುಂಗಾರುಗಳಿಂದ ಹಿಡಿದು ಕಣ್ಮರೆಯಾಗುತ್ತಿರುವ ಹಿಮನದಿಗಳವರೆಗೆ ಮತ್ತು ಕುಸಿಯುತ್ತಿರುವ ಅಂತರ್ಜಲ ನಿಕ್ಷೇಪಗಳವರೆಗೆ ಹಲವು ಕಾರಣಗಳಿಂದಾಗಿ ದೇಶದಲ್ಲಿ ಶೀಘ್ರವೇ ತಾಜಾ ನೀರಿನ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ನಗರಗಳಲ್ಲಿ ಪ್ರವಾಹ ರಸ್ತೆ ಬೀದಿಗಳನ್ನು ಪ್ರವೇಶಿಸುವ ಮೊದಲು ನಳ್ಳಿ ನೀರಿನಲ್ಲಿ ಜಲ ಬತ್ತಿಹೋಗುವುದನ್ನು ನೋಡುವ ಪರಿಸ್ಥಿತಿ ಎದುರಾಗಬಹುದು. 2025ರೊಳಗೆ ಜಾಗತಿಕವಾಗಿ ಐದು ದಶಕೋಟಿ ಮಂದಿ ವಾರ್ಷಿಕವಾಗಿ ಕನಿಷ್ಠ ಒಂದು ತಿಂಗಳು ಗಂಭೀರ ಜಲ ಬಿಕ್ಕಟ್ಟನ್ನು ಎದುರಿಸಲಿದ್ದಾರೆ. ಭಾರತದ ವ್ಯಾಪಕ ಜನಸಂಖ್ಯೆಯಿಂದಾಗಿ ಈ ಬಿಕ್ಕಟ್ಟಿನ ಕೇಂದ್ರ ಬಿಂದುವಾಗುವ ಸಾಧ್ಯತೆ ಇದೆ. ಭೂಮಿಯಲ್ಲಿ ಲಭ್ಯವಿರುವ ನೀರಿನ ಶೇ 0.5ರಷ್ಟು ಮಾತ್ರ ತಾಜಾ ನೀರಾಗಿರುತ್ತದೆ. ಕಳೆದ ಎರಡು ದಶಕಗಳಲ್ಲಿ ಒಟ್ಟು ಮೇಲ್ಮೈ ಮತ್ತು ಅಂತರ್ಜಲ ಸೇರಿ ಜಲ ಸಂಗ್ರಹವು ಪ್ರತಿ ವರ್ಷ ಸುಮಾರು 1 ಸೆಂಮೀ ನಷ್ಟು ಕಡಿಮೆಯಾಗುತ್ತಿದೆ. ಭಾರತದಲ್ಲಿ ಬೇಡಿಕೆ ಮತ್ತು ಪೂರೈಕೆಯಲ್ಲಿನ ಈ ಅಸಮತೋಲನದಿಂದಾಗಿ ಗಲಭೆಗಳು, ಸಂಘರ್ಷಗಳು ಮತ್ತು ‘ಶೂನ್ಯ ದಿನ’ (ಕೊಳವೆಯಲ್ಲಿ ಬರುವ ನೀರಿನ ಪ್ರಮಾಣ ಅತಿ ಕಡಿಮೆ ಅಥವಾ ಶೂನ್ಯವಾಗುವ ದಿನ) ಪರಿಸ್ಥಿತಿಗಳು ಕಂಡುಬಂದಿವೆ. 2019ರಲ್ಲಿ ಚೆನ್ನೈನ ಎಲ್ಲಾ ನಾಲ್ಕು ಜಲಾಶಯಗಳು ಬತ್ತಿಹೋಗಿ ದೊಡ್ಡ ಜಲ ಬಿಕ್ಕಟ್ಟು ಉಂಟಾಗಿತ್ತು. ಮುಂಗಾರು ಎಂಬ ಒಗಟು ಭಾರತದ ನೀರಿನ ಬಿಕ್ಕಟ್ಟು ಮತ್ತು ಮುಂಗಾರು ನಡುವೆ ಸಮೀಪದ ಸಂಬಂಧವಿದೆ. ಸುಮಾರು ಶೇ 75ರಷ್ಟು ಮಳೆ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಬರುತ್ತದೆ. ಆದರೆ ಅದನ್ನು ಸಂಪೂರ್ಣವಾಗಿ ನಂಬುವಂತಿಲ್ಲ. * ಮಳೆಗಾಲದಲ್ಲಿ ಬದಲಾವಣೆಗಳು: 2013–2022ರ ನಡುವೆ ರಾಜಸ್ಥಾನ ಮತ್ತು ಗುಜರಾತ್ನಂತಹ ಒಣ ಪ್ರದೇಶಗಳಿರುವ ರಾಜ್ಯಗಳಲ್ಲಿ ಶೇ 10–30ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಹಿಂದೂ–ಗಂಗಾ ಬಯಲು ಪ್ರದೇಶದಲ್ಲಿ ಶೇ 10ರಷ್ಟು ಮಳೆ ಕಡಿಮೆಯಾಗಿದೆ. * ಅತಿಯಾದ ಮಳೆ: ಭಾರತದ ಮಧ್ಯಭಾಗದಲ್ಲಿ 1950ರಿಂದ 2015ರ ನಡುವೆ ಶೇ 75ರಷ್ಟು ಹೆಚ್ಚು ಅತಿವೃಷ್ಟಿ ಘಟನೆಗಳು ಸಂಭವಿಸಿವೆ. * ಒಣ ಮುಂಗಾರು: 1981ರಿಂದ 2011ರ ನಡುವೆ ಮಳೆಗಾಲದ ಮಧ್ಯ ಅವಧಿಯಲ್ಲಿ ವಿರಾಮ (ಮಳೆ ಬಾರದ ಪರಿಸ್ಥಿತಿ) ಶೇ 27ರಷ್ಟು ಹೆಚ್ಚಾಗಿದೆ. ಋತುಮಾನದ ಮಳೆಯ ಅರ್ಧದಷ್ಟು ಭಾಗವು ಈಗ 20–30 ಗಂಟೆಗಳೊಳಗೆ ಸುರಿಯುತ್ತಿದ್ದು, ಇದರಿಂದ ಪ್ರವಾಹ ಉಂಟಾಗುತ್ತಿದೆ. ಆದರೆ ಇದು ಅಂತರ್ಜಲಗಳನ್ನು ಮರುಪೂರಣ ಮಾಡಲು ವಿಫಲವಾಗುತ್ತಿದೆ. ಜುಲೈನಲ್ಲಿ ಹೊಲಗಳು ಮುಳುಗುವುದನ್ನು ನೋಡುವ ರೈತರು ಮಾರ್ಚ್ ವೇಳೆಗೆ ಕೊಳವೆಬಾವಿಗಳು ಒಣಗುವುದನ್ನು ಕಾಣುತ್ತಿದ್ದಾರೆ. ಅಂತರ್ಜಲ ಕೊರತೆ ಎಂಬ ಭಾರತದ ನಿಗೂಢ ಬಿಕ್ಕಟ್ಟು ಭಾರತ ಅಂತರ್ಜಲದ ಅತಿದೊಡ್ಡ ಬಳಕೆದಾರ ರಾಷ್ಟ್ರವಾಗಿದೆ. ವಾರ್ಷಿಕವಾಗಿ ಸುಮಾರು 241 ಶತಕೋಟಿ ಕ್ಯೂಬಿಕ್ ಮೀಟರ್ ಅಂತರ್ಜಲವನ್ನು ಬಳಸಲಾಗುತ್ತಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚು ತೀವ್ರವಾಗಿದೆ. ಈ ಪ್ರದೇಶದಲ್ಲಿ 2002ರಿಂದ 2008ರ ನಡುವೆ ಅಂತರ್ಜಲ 108 ಶತಕೋಟಿ ಕ್ಯೂಬಿಕ್ ಮೀಟರ್ಗಳಷ್ಟು ಕುಸಿದಿದೆ. ಪಂಜಾಬ್ನಲ್ಲಿ 2000ರಿಂದ 2006ರ ನಡುವೆ ನೀರಿನ ಮಟ್ಟ ವರ್ಷಕ್ಕೆ ಸುಮಾರು 100 ಸೆಂಮೀ ಕುಸಿದಿದೆ. ಅದರ ಹಿಂದಿನ ದಶಕದಲ್ಲಿ ಇದು ಕೇವಲ 20 ಸೆಂಮೀ ಮಾತ್ರ ಕುಸಿದಿತ್ತು. ದೆಹಲಿಯನ್ನು ಅತಿಯಾಗಿ ಅಂತರ್ಜಲ ತೆಗೆದುಕೊಳ್ಳುವ ಪ್ರದೇಶವೆಂದು ವರ್ಗೀಕರಿಸಲಾಗಿದೆ. ಅಂದರೆ ಹೊರತೆಗೆದುಕೊಳ್ಳುವ ಪ್ರಮಾಣ ಮರುಪೂರಣವನ್ನು ಮೀರಿಸಿದೆ. ಶೇ 90ರಷ್ಟು ಗ್ರಾಮೀಣ ಕುಡಿಯುವ ನೀರು ಮತ್ತು ಶೇ 75ರಷ್ಟು ಕೃಷಿ ಅಂತರ್ಜಲದ ಮೇಲೆ ಅವಲಂಬಿತವಾಗಿರುವುದರಿಂದ ಅಂತರ್ಜಲ ಕೊರತೆ ಆಹಾರ ಭದ್ರತೆ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಿಮಾಲಯದ ಹಿಮನದಿಗಳ ಹಿಮ್ಮೆಟ್ಟುವಿಕೆ ಏಷ್ಯಾದ ನೀರಿನ ಗೋಪುರ ಎಂದು ಕರೆಯಲಾಗುವ ಹಿಮಾಲಯವು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳಿಗೆ ನೀರಿನ ಆಗರವಾಗಿದೆ. ಗಂಗೋತ್ರಿ ಹಿಮನದಿ 20ನೇ ಶತಮಾನದ ಮಧ್ಯಭಾಗದಿಂದ 3 ಕಿಲೋಮೀಟರ್ಗಿಂತ ಹೆಚ್ಚು ಹಿಮ್ಮೆಟ್ಟಿದೆ. ಇಂತಹ ಹಿಮ್ಮೆಟ್ಟುವಿಕೆ 1990ರ ದಶಕದಿಂದ ಇನ್ನಷ್ಟು ವೇಗ ಪಡೆದಿದೆ. ವೇಗವಾಗಿ ಕರಗುವುದರಿಂದ ನದಿಗಳ ಹರಿವು ಹೆಚ್ಚಾಗಬಹುದು. ಆದರೆ ಹಿಮನದಿಗಳು ಕಣ್ಮರೆಯಾದ ನಂತರ ನದಿಗಳು ಮಳೆಯ ಮೇಲೆ ಮಾತ್ರ ಅವಲಂಬಿತವಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭಗಳಲ್ಲಿ ಬರಗಾಲ ಉಂಟಾಗಿ ಲಕ್ಷಾಂತರ ಜನರನ್ನು ಬಾಧಿಸಬಹುದು. ನೀರಿನ ಒತ್ತಡದ ಆರ್ಥಿಕ ವೆಚ್ಚಗಳು ಒಂದು ಅಂದಾಜಿನ ಪ್ರಕಾರ, 2050ರ ವೇಳೆಗೆ ಜಾಗತಿಕ ಜಿಡಿಪಿಯ ಶೇ 31ರಷ್ಟು, ಅಂದರೆ ಸುಮಾರು 70 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆ ಹೆಚ್ಚು ನೀರಿನ ಒತ್ತಡವನ್ನು ಎದುರಿಸಬೇಕಾಗಬಹುದು. ಕಳಪೆ ನೀರಿನ ನಿರ್ವಹಣೆಯಿಂದಾಗಿ ಭಾರತವು ತನ್ನ ಜಿಡಿಪಿಯ ಶೇ 7–12ರಷ್ಟು ಕಳೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ 2017ರಿಂದ 2021ರ ನಡುವಿನ ನೀರಿನ ಕೊರತೆಯಿಂದಾಗಿ ವಿದ್ಯುತ್ ಸ್ಥಾವರಗಳು 8.2 ಟೆರಾವಾಟ್-ಗಂಟೆಗಳಷ್ಟು ವಿದ್ಯುತ್ ಉತ್ಪಾದನೆಯನ್ನು ಕಳೆದುಕೊಂಡಿವೆ. ಮುಂಬೈನಲ್ಲಿ ಟ್ಯಾಂಕರ್ ನೀರು ಕೊಳವೆ ನೀರಿಗಿಂತ 52 ಪಟ್ಟು ಹೆಚ್ಚು ವೆಚ್ಚವಾಗುತ್ತದೆ. ಈ ವೆಚ್ಚವು ನೀರಿನ ಕೊರತೆಯು ಅಸಮಾನತೆಯನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ತೋರಿಸುತ್ತದೆ. ಅಂತಿಮವಾಗಿ ಹೇಳುವುದಾದರೆ, ಭಾರತದ ಜಲ ಬಿಕ್ಕಟ್ಟು ದೂರದ ಸಮಸ್ಯೆಯಲ್ಲ. ಅದು ಈಗಾಗಲೇ ಬಿಗಡಾಯಿಸಲು ಆರಂಭಿಸಿರುವ ಸಮಸ್ಯೆಯಾಗಿದೆ. ಅನಿಯಮಿತ ಮುಂಗಾರುಗಳಿಂದ ಹಿಡಿದು ಕಣ್ಮರೆಯಾಗುತ್ತಿರುವ ಹಿಮನದಿಗಳವರೆಗೆ ಮತ್ತು ಕುಸಿಯುತ್ತಿರುವ ಅಂತರ್ಜಲ ನಿಕ್ಷೇಪಗಳವರೆಗೆ ಹಲವು ಕಾರಣಗಳು ದೇಶದ ಜಲ ಭದ್ರತೆಯ ಮೇಲೆ ಪರಿಣಾಮ ಬೀರುತ್ತಿವೆ. ಜಲ ನಿರ್ವಹಣೆ, ಸಂರಕ್ಷಣೆ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವ ಕ್ರಮಗಳಲ್ಲಿ ತುರ್ತು ಸುಧಾರಣೆಗಳನ್ನು ಕೈಗೊಳ್ಳದಿದ್ದರೆ ಅನೇಕರಿಗೆ ನಳ್ಳಿಯಲ್ಲಿ ನೀರು ಪಡೆಯುವ ಸೌಲಭ್ಯವೂ ಸಿಗದೆ ಹೋಗುವ ಪರಿಸ್ಥಿತಿ ಎದುರಾಗಬಹುದು.
ಉಡುಪಿ, ಮಾ.11: ನಗರದ ಕುಂಜಿಬೆಟ್ಟು ಶಿವಳ್ಳಿಯ ಮ್ಯಾಟ್ರಿಕ್ಸ್ ಆಟೋ ವೆಂಚರ್ಸ್ (ಹೋಂಡಾ ಟೂ ವಿಲರ್) ಇಲ್ಲಿ ನಾಳೆ ಮಾ.12ರಂದು ಬೆಳಗ್ಗೆ 10:30ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಎಸೆಸೆಲ್ಸಿ, ಪಿಯುಸಿ, ಏಟಿಐ, ಡಿಪ್ಲೋಮಾ ಹಾಗೂ ಪದವಿ ವಿದ್ಯಾರ್ಹತೆ ಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ ಉಡುಪಿ ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿ ಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿ: ಐವರು ಮಹಿಳಾ ಸಾಧಕರಿಗೆ ಜಿಲ್ಲಾ ರೆಡ್ಕ್ರಾಸ್ ಗೌರವ
ಉಡುಪಿ, ಮಾ.12: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕವು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಮಾ.14ರಂದು ರೆಡ್ಕ್ರಾಸ್ ಭವನದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಐವರು ಮಹಿಳಾ ಸಾಧಕಿಯರನ್ನು ಗುರುತಿಸಿ ಗೌರವಿಸಲಿದೆ. ಸಾರ್ವಜನಿಕ ಆಡಳಿತ ಸೇವೆಗಾಗಿ ಶ್ಯಾಮಲಾ ಸಿ.ಕೆ, ಹಿರಿಯ ಲೇಖಕಿ ಹಾಗೂ ಭಾಷಾಂತರ ತಜ್ಞೆ ಡಾ.ಪಾರ್ವತಿ ಜಿ. ಐತಾಳ್, ಕಲೆ ಮತ್ತು ಸಮಾಜ ಸೇವೆಗಾಗಿ ಕುಸುಮ ಕಾಮತ್ ಕರ್ವಾಲು, ಶೈಕ್ಷಣಿಕ ಸೇವೆಗಾಗಿ ಪ್ರೊ. ಸುಜಯ ಕೆ. ಎಸ್ ಮತ್ತು ಹಿಂದಿ ಸಾಹಿತ್ಯ, ಎಎನ್ನೆಸ್ಸೆಸ್, ಎನ್ಸಿಸಿ ಹಾಗೂ ರೆಡ್ಕ್ರಾಸ್ ಸೇವೆಗಾಗಿ ಕ್ಯಾಪ್ಟನ್ ಡಾ. ಸುಕನ್ಯ ಮಾರ್ಟಿಸ್ ಇವರು ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಗೊಳ್ಳಲಿರುವ ಸಾಧಕಿಯರು. ಈ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಮತ್ತು ರಂಗನಟಿ ಗೀತಾ ಸುರತ್ಕಲ್ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ರೆಡ್ಕ್ರಾಸ್ ಪ್ರಕಟಣೆ ತಿಳಿಸಿದೆ.
Tamil Nadu | ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಲ್ಲಿ ಪತ್ತೆ: 44 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಕೊಯಂಬತ್ತೂರು: ವಿಷಪೂರಿತ ಆಹಾರ ಸೇವಿಸಿದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ, ಕೊಯಂಬತ್ತೂರಿನ ಕವುಂದಂಪಾಳಯಂನಲ್ಲಿರುವ ಕೊಯಂಬತ್ತೂರು ನಗರ ಪಾಲಿಕೆ ಮಾಧ್ಯಮಿಕ ಶಾಲೆಯ ಸುಮಾರು 44 ವಿದ್ಯಾರ್ಥಿಗಳನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿಯೊಂದು ಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಂತೆಯೇ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದ್ದು, ಕೆಲವರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಈ ಕುರಿತು ಶಾಲೆಯ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದ್ದು, ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಆ್ಯಂಬುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ. ತಕ್ಷಣವೇ 43 ವಿದ್ಯಾರ್ಥಿಗಳನ್ನು ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನೊಬ್ಬ ವಿದ್ಯಾರ್ಥಿಯನ್ನು ಆತನ ಪೋಷಕರು ಕರೆದೊಯ್ದಿದ್ದು, ಆತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಐವರು ವೈದ್ಯರ ತಂಡವು ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಸಂತ್ರಸ್ತ ವಿದ್ಯಾರ್ಥಿಗಳ ಪೈಕಿ 30 ಮಂದಿ ಬಾಲಕರು ಹಾಗೂ 14 ಮಂದಿ ಬಾಲಕಿಯರು ಸೇರಿದ್ದಾರೆ. ತಮಿಳುನಾಡು ವಸತಿ ಮಂಡಳಿ ಘಟಕದಲ್ಲಿ ಈ ಶಾಲೆಯಿದ್ದು, ಈ ಶಾಲೆಯನ್ನು ಲಾಟರಿ ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಮಾಲಕತ್ವದ ಮಾರ್ಟಿನ್ ಗ್ರೂಪ್ ₹7 ಕೋಟಿ ವೆಚ್ಚದಲ್ಲಿ ನವೀಕರಿಸಿತ್ತು. 2024ರಲ್ಲಿ ಈ ಶಾಲೆಯನ್ನು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮಳಿ ಉದ್ಘಾಟಿಸಿದ್ದರು. ಮಧ್ಯಾಹ್ನದ ಬಿಸಿಯೂಟವನ್ನು ನಗರಪಾಲಿಕೆಯ ಸಿಬ್ಬಂದಿಗಳು ಸಿದ್ಧಪಡಿಸುತ್ತಿದ್ದರು ಎಂದು ವರದಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಕೊಯಂಬತ್ತೂರು ಜಿಲ್ಲಾಧಿಕಾರಿ ಪವನ್ ಕುಮಾರ್ ಜಿ. ಗಿರಿಯಪ್ಪನವರ್, ಕೊಯಂಬತ್ತೂರು ನಗರ ಪಾಲಿಕೆ ಆಯುಕ್ತ ಎಂ. ಶಿವಗುರು ಪ್ರಭಾಕರನ್, ಮೇಯರ್ ಆರ್. ರಂಗನಾಯಕಿ ಹಾಗೂ ಕವುಂದಂಪಾಳಯಂ ಶಾಸಕ ಆರ್.ಪಿ.ಜಿ. ಅರುಣ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ಮಾತುಕತೆ ನಡೆಸಿದರು. ಈ ಘಟನೆ ಕುರಿತು ತನಿಖೆ ನಡೆಸಲು ತಂಡವೊಂದನ್ನು ರಚಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಎಂ. ಶಿವಗುರು ಪ್ರಭಾಕರನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಪ್ಪಿನಂಗಡಿ| ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಟೆಂಪೊ ಚಾಲಕ ಕುಮಾರ್ ಸೆರೆ
ಉಪ್ಪಿನಂಗಡಿ: ಗುಂಡ್ಯ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪತ್ತೆ ಹಚ್ಚಿದ ಪೊಲೀಸರು ನಾಲ್ಕು ಹೋರಿಗಳ ಸಹಿತ ವಾಹನ ಚಾಲಕನನ್ನು ಬಂಧಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಬಂಧಿತ ಗೂಡ್ಸ್ ಟೆಂಪೊ ಚಾಲಕನನ್ನು ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಾಸರಗೋಡಿನ ಕಸಾಯಿಖಾನೆಗೆಂದು ಅರಸೀಕೆರೆಯಿಂದ ನಾಲ್ಕು ಹೋರಿಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರೊಬೆಷನರಿ ಎಎಸ್ಪಿ ಅನನ್ಯ ಶ್ರೀವಾಸ್ತವ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಗುಂಡ್ಯ ಚೆಕ್ ಪೋಸ್ಟ್ ಬಳಿ ಕಾರ್ಯ ನಿರತ ಪೊಲೀಸರು ತಪಾಸನೆ ಕೈಗೊಂಡಾಗ ಕೃತ್ಯ ಬೆಳಕಿಗೆ ಬಂದಿದ್ದು, ಅಕ್ರಮ ಸಾಗಾಟಕ್ಕೆ ಬಳಸಿದ ಗೂಡ್ಸ್ ಟೆಂಪೊ ಸಹಿತ ವಾಹನ ಚಾಲಕ ಕುಮಾರ್ ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
2027ರ ಅಕ್ಟೋಬರ್ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಎತ್ತಿನಹೊಳೆ ಯೋಜನೆ ಅನುಷ್ಟಾನ ಮಾಡಿದ್ದು, 2027ರ ಅಕ್ಟೋಬರ್ ವೇಳೆಗೆ ಯೋಜನೆಯ ಎಲ್ಲಾ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಗೋವಿಂದ ರಾಜು, ರವಿಕುಮಾರ್, ಸೂರಜ್ ರೇವಣ್ಣ, ನಿರಾಣಿ ಹಣಮಂತ ರುದ್ರಪ್ಪ ಸೇರಿದಂತೆ ಹಲವು ಸದಸ್ಯರು ನಿಯಮ 330ರ ಅಡಿಯಲ್ಲಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರ ನೀಡಿದರು. ವಿಶ್ವೇಶ್ವರಯ್ಯ ಜಲ ನಿಗಮದ ವರದಿಯಂತೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, 2026ರ ಜೂನ್ ಒಳಗಾಗಿ ತುಮಕೂರು ಜಿಲ್ಲಾ ವ್ಯಾಪ್ತಿಯ ಕಾಲುವೆ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳಲಿವೆ. 2027ರ ಅಕ್ಟೋಬರ್ ಒಳಗಾಗಿ ಯೋಜನೆಯ ಎಲ್ಲ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದು ಅವರು ವಿವರಿಸಿದರು. ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಮೀಣ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಜಲ ಜೀವನ್ ಮಿಷನ್ ಅಡಿಯಲ್ಲಿ ಕೊಳವೆಬಾವಿ ಹಾಗೂ ಭೂ ಮೇಲ್ಮೈ ಸುಸ್ಥಿರ ಜಲಮೂಲಗಳನ್ನು ಆಧರಿಸಿ ಏಕ ಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳು ಪ್ರಸ್ತುತ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಜನವಸತಿಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಲಂಚ ಸ್ವೀಕಾರ ಪ್ರಕರಣ: ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಗೆ ಷರತ್ತು ಬದ್ಧ ಜಾಮೀನು
ಬೆಂಗಳೂರು: ಗುತ್ತಿಗೆದಾರನಿಂದ 5ಲಕ್ಷ ರೂ.ಲಂಚ ಸ್ವೀಕರಿಸಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಗುತ್ತಿಗೆದಾರನಿಂದ ಐದು ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆ ಫೆಬ್ರವರಿ 21ರಂದು ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ 15 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಈ ಮಧ್ಯೆ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ಡಾ.ಚಂದ್ರು ಲಮಾಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಎರಡು ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಒದಗಿಸುವ ಷರತ್ತಿನೊಂದಿಗೆ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ.
ಮಾ.12-16: ಹಜ್ ಯಾತ್ರಿಕರಿಗೆ ವೈದ್ಯಕೀಯ ತಪಾಸಣೆ ಶಿಬಿರ
ಮಂಗಳೂರು,ಮಾ.11:ಪ್ರಸಕ್ತ (2026ನೇ) ಸಾಲಿನ ಪವಿತ್ರ ಹಜ್ ಯಾತ್ರೆಕೈಗೊಳ್ಳಲು ಅರ್ಜಿ ಸಲ್ಲಿಸಿ ಆಯ್ಕೆ ಯಾಗಿರುವವರಿಗೆ ವೈದ್ಯಕೀಯ ತಪಾಸಣಾ ಶಿಬಿರವು ಸರಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಮಾ.12ರಿಂದ 16ರವರೆಗೆ ನಡೆಯಲಿದೆ. ಮಂಗಳೂರು ತಾಲೂಕಿನ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಉಳ್ಳಾಲ ತಾಲೂಕಿನ ಸರಕಾರಿ ತಾಲೂಕು ಆಸ್ಪತ್ರೆ, ಬಂಟ್ವಾಳ ತಾಲೂಕಿನ ಸರಕಾರಿ ತಾಲೂಕು ಆಸ್ಪತ್ರೆ, ಮೂಡುಬಿದಿರೆ ತಾಲೂಕಿನ ಸರಕಾರಿ ತಾಲೂಕು ಆಸ್ಪತ್ರೆ, ಬೆಳ್ತಂಗಡಿ ತಾಲೂಕಿನ ಸರ್ಕಾರಿ ಆಸ್ಪತ್ರೆ, ಪುತ್ತೂರು ತಾಲೂಕಿನ ಸರಕಾರಿ ಆಸ್ಪತ್ರೆ, ಸುಳ್ಯ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು. ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ಅವಕಾಶವಿರುವುದಿಲ್ಲ. ವೈದ್ಯಕೀಯ ತಪಾಸಣೆಗೆ ಬರುವ ಸಂದರ್ಭ ಇತ್ತೀಚೆಗೆ ರಾಜ್ಯ ಹಜ್ ಸಮಿತಿಯ ವತಿಯಿಂದ ಅಂಚೆ ಮೂಲಕ ನೀಡಲಾದ ಮೆಡಿಕಲ್ ಮತ್ತು ಫಿಟ್ನೆಸ್ ಸರ್ಟಿಫಿಕೆಟ್ ತರಬೇಕು ಹಾಗೂ ಪಾಸ್ಪೋರ್ಟ್ ಪ್ರತಿ ಮತ್ತು ಫೋಟೋಗಳನ್ನು ಕಡ್ಡಾಯವಾಗಿ ತರಬೇಕು. ಪ್ರತಿ ತಾಲೂಕಿನಲ್ಲಿಯೂ ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಸಹಾಯವಾಣಿ (ಮಂಗಳೂರು: 94481 90557, 63626 20674, 99166 47651 ಉಳ್ಳಾಲ: 81051 18339, 91644 25372, ಮೂಡುಬಿದಿರೆ: 99019 49459, ಬಂಟ್ವಾಳ: 99808 80860, ಬೆಳ್ತಂಗಡಿ: 96869 76087, ಪುತ್ತೂರು: 94496 62472, 99029 82976, 94482 52948, ಸುಳ್ಯ: 99027 70850, 94817 65210ನ್ನು ಸಂಪರ್ಕಿಸಬಹುದು. ಮಾಹಿತಿಗೆ 9448190557, 6362620674, 9916647651)ಯನ್ನು ಸಂಪರ್ಕಿಸಬಹುದು ಎಂದು ದ.ಕ.ಜಿಲ್ಲಾ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಹಾಜಿ ಎಸ್. ಎಂ. ರಶೀದ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಮೆಸ್ಕಾಂ ಕೈಕಂಬ ಉಪವಿಭಾಗದ ಜನಸಂಪರ್ಕ ಸಭೆ
ಮಂಗಳೂರು, ಮಾ.11: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ನಿ) ಕೈಕಂಬ ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯು ಮೆಸ್ಕಾಂ ಅಧೀಕ್ಷಕ ಕೃಷ್ಣರಾಜ್ರ ಅಧ್ಯಕ್ಷತೆಯಲ್ಲಿ ಬುಧವಾರ ಕೈಕಂಬ ಉಪವಿಭಾಗದ ಸಭಾಗೃಹದಲ್ಲಿ ನಡೆಯಿತು. ಗಂಜಿಮಠ ಗ್ರಾಪಂ ಮಾಜಿ ಸದಸ್ಯ ಸುನಿಲ್ ಫೆರ್ನಾಂಡಿಸ್ ಮಾತನಾಡಿ ಬಡಗುಳಿಪಾಡಿ ಆದರ್ಶನಗರ ಮಳಲಿ ಕ್ರಾಸ್, 4ನೇ ಅಡ್ಡರಸ್ತೆಯ ನಿವಾಸಿಯೊಬ್ಬರು 10 ವರ್ಷದ ಹಿಂದೆ ಕೃಷಿಗೆ ಮಂಜೂರಾಗಿರುವ ಉಚಿತ ವಿದ್ಯುತ್ನ್ನು ತನ್ನ 12 ಬಾಡಿಗೆ ಮನೆಗಳಿಗೆ ಉಪಯೋಗಿಸುತ್ತಿದ್ದಾರೆ. ಈ ಮೂಲಕ ಬಾಡಿಗೆ ಮನೆಯವರಿಂದ ಪ್ರತಿ ತಿಂಗಳು ಸುಮಾರು 40-50 ಸಾ. ರೂ. ಆದಾಯ ಗಳಿಸುತ್ತಿದ್ದಾರೆ. ಕಳೆದ ತಿಂಗಳು ಮೆಸ್ಕಾಂ ವಿಚಕ್ಷಣ ದಳ ದಾಳಿ ಮಾಡಿ, ದಾಖಲೆಗಳ ಬಗ್ಗೆ ಪರಿಶೀಲಿಸದೆ ಕೇವಲ 10 ಸಾ. ರೂ. ದಂಡ ವಿಧಿಸಿದೆ. ಕಳೆದ 10 ವರ್ಷದಿಂದ ಕಾನೂನು ಬಾಹಿರವಾಗಿ ವಿದ್ಯುತ್ ನಿರಂತರ ಬಳಕೆ ಮಾಡುತ್ತಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ‘ಅನಧಿಕೃತ ವಿದ್ಯುತ್ ಬಳಕೆಗೆ ಅವಕಾಶವಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ’’ ಎಂದು ಅಧೀಕ್ಷಕ ಕೃಷ್ಣರಾಜ್ ಭರವಸೆ ನೀಡಿದರು. ಗಂಜಿಮಠ ಪಂಚಾಯತ್ ವ್ಯಾಪ್ತಿಯ ಬಡಗುಳಿಪಾಡಿ 3ನೇ ವಾರ್ಡ್ನಲ್ಲಿ ಸೈಟ್ ಮನೆಗಳಿಗೆ ಲೇಔಟ್ ಮಾದರಿಯಲ್ಲಿ ಹೆಚ್ಚುವರಿ ವಿದ್ಯುತ್ ಬಿಲ್ ಬಂದಿರುವ ಬಗ್ಗೆ ಪುನರ್ಪರಿಶೀಲಿಸುವಂತೆ ತಾಪಂ ಮಾಜಿ ಸದಸ್ಯ ಸುನಿಲ್ ಜಿ ಆಗ್ರಹಿಸಿದರು. ಗಂಜಿಮಠದಲ್ಲಿ ಹೆದ್ದಾರಿ ಪಕ್ಕದ ಬೀದಿದೀಪಗಳ ಕಂಬಗಳು ತೆರವಾದ ಬಳಿಕ ಪರ್ಯಾಯ ವ್ಯವಸ್ಥೆ ಮಾಡದಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಕೃಷ್ಣರಾಜ್ ಭರವಸೆ ನೀಡಿದರು. ಸಭೆಯಲ್ಲಿ ಮೆಸ್ಕಾಂ ಕಾವೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್ ಬಿ. ಎಸ್, ಕೈಕಂಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುನಿಲ್ ಮೊಂತೆರೊ, ಗುರುಪುರ ಕೈಕಂಬ ಜೆಇ ದೇವಿಪ್ರಸಾದ್, ಮುಚ್ಚೂರು ಜೆಇ ಶಿವರಾಮ, ಎಡಪದವು ಪ್ರಭಾರ ಜೆಇ ಪ್ರವೀಣ್ ಕುಮಾರ್, ಸಹಾಯಕ ಇಂಜಿನಿಯರ್ ಮನು ಕೆ. ಎಸ್. ಮತ್ತಿತರರು ಉಪಸ್ಥಿತರಿದ್ದರು.
ಅಮೇರಿಕಾದ ಯುದ್ಧಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕ: ಮಹಾಂತೇಶ್
ಮಂಗಳೂರು, ಮಾ.11: ಅಮೇರಿಕಾ ಇಸ್ರೇಲ್ನ ಯುದ್ದಕೋರ ನೀತಿಗಳಿಂದಾಗಿ ಜಗತ್ತಿನೆಲ್ಲಡೆ ಯುದ್ಧದ ಕಾರ್ಮೋಡ ಕವಿದಿದೆ. ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದಾರೆ. ಅಮೇರಿಕನ್ ಸಾಮ್ರಾಜ್ಯಶಾಹಿ ರಾಷ್ಟಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಅದನ್ನು ಸರಿದೂಗಿಸಲು ಪ್ರತೀ ಸಂದರ್ಭದಲ್ಲೂ ಯುದ್ದವನ್ನೇ ಅಸ್ತ್ರವನ್ನಾಗಿಸಿದೆ. ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದೆ. ದುಡಿಯುವ ವರ್ಗದ ಬದುಕು ಸಂಕಷ್ಟ ಕ್ಕೀಡಾಗಿದೆ. ಒಟ್ಟಿನಲ್ಲಿ ಅಮೇರಿಕಾದ ಯುದ್ದಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು. ಎ.4 ಮತ್ತು 5ರಂದು ಮಂಗಳೂರಿನಲ್ಲಿ ನಡೆಯಲಿರುವ ಸಿಐಟಿಯು ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರದ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ 101 ಮಂದಿಯನ್ನು ಒಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಹಿರಿಯ ಕಾರ್ಮಿಕ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಬಿ.ಎ.ಂ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಬಜಾಲ್, ಖಜಾಂಚಿಯಾಗಿ ಯೋಗೀಶ್ ಜಪ್ಪಿನಮೊಗರು ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ವಸಂತ ಆಚಾರಿ, ಸಂತೋಷ್ ಬಜಾಲ್, ಕೃಷ್ಣಪ್ಪಕೊಂಚಾಡಿ, ವಾಸುದೇವ ಉಚ್ಚಿಲ್, ಬಿ.ಎಂ ಮಾಧವ, ಮುನೀರ್ ಕಾಟಿಪಳ್ಳ, ಪುರುಷೋತ್ತಮ ಪೂಜಾರಿ, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ಫ್ಲೇವಿ ಕ್ರಾಸ್ತಾ ಅತ್ತಾವರ, ಯೋಗಿತಾ ಉಳ್ಳಾಲ, ಶೈಲೇಶ್, ರವಿಚಂದ್ರ ಕೊಂಚಾಡಿ ಉಪಸ್ಥಿತರಿದ್ದರು.
ಪಡುಬಿದ್ರಿ: ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ರಮೀಝ್ ಹುಸೈನ್ ನೇಮಕ
ಪಡುಬಿದ್ರಿ: ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ರಮೀಝ್ ಹುಸೈನ್ ನೇಮಕಗೊಂಡಿದ್ದಾರೆ. ಪಡುಬಿದ್ರಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಹಾಗೂ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದ ರಮೀಝ್, ಎನ್ಎಸ್ಯುಐ ಜಿಲ್ಲಾ ಕಾರ್ಯದರ್ಶಿಯಾಗಿದ್ದ ರಮೀಝ್, ವಿವಿಧ ರಾಜ್ಯಗಳಲ್ಲಿ ಚುನಾವಣಾ ವೀಕ್ಷಕರಾಗಿದ್ದರು. ಕಾಪು ತಾಲೂಕು ಭೂನ್ಯಾಯ ಮಂಡಳಿ ಸದಸ್ಯರೂ ಕಾರ್ಯನಿರ್ವಹಿಸುತಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರ ಶಿಫಾರಸ್ಸಿನ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ಅವರು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ತಿಪಟೂರು | ವ್ಯಾಪಾರಿ ಕೊಲೆ ಪ್ರಕರಣಕ್ಕೆ ತಿರುವು: ಪತ್ನಿ ಸೇರಿ ನಾಲ್ವರು ಆರೋಪಿಗಳ ಬಂಧನ
ತಿಪಟೂರು: ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗುಜರಿ ವ್ಯಾಪಾರಿ ಕೊಲೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೃತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮಾರ್ಚ್ 4, 2026ರಂದು ತಿಪಟೂರು ತಾಲ್ಲೂಕಿನ ರಂಗಾಪುರ ಸಮೀಪದ ಚಿಕ್ಕಕೊಟ್ಟಿಗೆಹಳ್ಳಿ ಗ್ರಾಮದ ಬಳಿ, ತಿಪಟೂರು ನಗರದ ಗಾಂಧೀನಗರ ನಿವಾಸಿಯಾಗಿದ್ದ ಹಾಗೂ ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಮನ್ಸೂರ್ ಪಾಷಾ (31) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಡೆದಿತ್ತು. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ. 23/2026 ಅಡಿಯಲ್ಲಿ ಕಲಂ 103 BNS ಪ್ರಕಾರ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಪತ್ತೆಹಚ್ಚಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ. ಗೋಪಾಲ್ ಮತ್ತು ಪುರುಷೋತ್ತಮ ಎಂ.ಎಲ್. ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು. ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಂ.ಹೆಚ್. ಉಮೇಶ್ ಅವರ ಮಾರ್ಗಸೂಚನೆಯ ಮೇರೆಗೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ. ವೆಂಕಟೇಶ್ ಸಿ., ಸಿ.ಪಿ.ಐ. ಚಂದ್ರಶೇಖರ್ ಟಿ.ಕೆ., ತಿಪಟೂರು ನಗರ ಪಿ.ಐ. ರವಿಕುಮಾರ್, ಪಿ.ಎಸ್.ಐ. ರಾಮಣ್ಣ ಸಿ., ಪಿ.ಎಸ್.ಐ. ನಾಗರಾಜು (ಕೆ.ಬಿ. ಕ್ರಾಸ್), ಎ.ಎಸ್.ಐ. ಉಸ್ಮಾನ್ ಸಾಬ್, ಚಿಕ್ಕಲಕ್ಕೇಗೌಡ, ಹೆಡ್ ಕಾನ್ಸ್ಟೇಬಲ್ ಮೋಹನ್ ಕುಮಾರ್, ಕಾನ್ಸ್ಟೇಬಲ್ಗಳಾದ ಲೋಕೇಶ್, ಚೇತನ್, ದಕ್ಷಿಣಮೂರ್ತಿ, ಇಮ್ರಾನ್ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು ಮತ್ತು ರಮೇಶ್ ಅವರನ್ನೊಳಗೊಂಡ ತಂಡ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿತ್ತು. ತನಿಖೆಯ ವೇಳೆ ಆರೋಪಿತರಾದ ಧನರಾಜ್ ಎಚ್.ಟಿ (24), ವೆಂಕಟೇಶ್ (24), ದರ್ಶನ್ (24), ಹಾಗೂ ಮನ್ಸೂರ್ ಪಾಷಾ ಅವರ ಪತ್ನಿ ಫರ್ಜಾನ್ ಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನ, ಪಲ್ಸರ್ ಬೈಕ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ., ಐಪಿಎಸ್ ಅವರು ಪ್ರಶಂಸಿಸಿದ್ದಾರೆ.
ಕುಂಭಮೇಳ ಮೊನಾಲಿಸ ಅಂತರ್ಧರ್ಮೀಯ ವಿವಾಹ; ಕೇರಳದಲ್ಲಿ ಗೆಳೆಯ ಫರ್ಮಾನ್ ಖಾನ್ ವರಿಸಿದ ವೈರಲ್ ಹುಡುಗಿ
ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಎಲ್ಲರ ಗಮನ ಸೆಳೆದು ವೈರಲ್ ಆಗಿದ್ದ ಯುವತಿ ಮೊನಾಲಿಸ ಕೇರಳದಲ್ಲಿ ಮದುವೆಯಾಗಿದ್ದಾರೆ. ಪ್ರಿಯಕರ ಫರ್ಮಾನ್ ಖಾನ್ ಅವರನ್ನೇ ವರಿಸಿದ್ದು, ಇದೊಂದು ಅಂತರ ಧರ್ಮ ವಿವಾಹ ಇದಾಗಿದೆ. ಕುಟುಂಬದಿಂದ ರಕ್ಷಣ ನೀಡಿ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನು ಪೊಲೀಸರು ವಯಸ್ಕಳಾಗಿದ್ದು, ಮದುವೆಗೆ ಕಾನುನು ಬದ್ಧ ಹಕ್ಕು ಇದೆ ಎಂದು ತಿಳಿಸಿದ್ದಾರೆ.
ಕೊಪ್ಪಳ | ಮಹಿಳೆಯರ ಸ್ವಾವಲಂಬನೆ ಬದುಕಿಗೆ ಸರಸ್ ಮೇಳ ಉತ್ತಮ ಮಾರುಕಟ್ಟೆ: ಡಾ.ಸುರೇಶ ಇಟ್ನಾಳ
ಕೊಪ್ಪಳ : ಸರಸ್ ಮೇಳವು ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಸಾರ್ವಜನಿಕರಿಗೆ ಪರಿಚಯಿಸಿ, ಮಾರಾಟ ಮಾಡುವ ಮೂಲಕ ಸ್ವಾವಲಂಬನೆ ಬದಕು ರೂಪಿಸಿಕೊಳ್ಳಲು ಅವರಿಗೆ ಇದು ಉತ್ತಮ ಮಾರುಕಟ್ಟೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು. ಅವರು ಬುಧವಾರ ಕೊಪ್ಪಳ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಲ್ಯ ಮಿಷನ್ ಕೊಪ್ಪಳ ಹಾಗೂ ಸಂಜೀವಿನಿ ಎನ್.ಆರ್.ಎಲ್.ಎಂ ಮತ್ತು ನಲ್ಮ್ ಯೋಜನೆಯಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.11 ರಿಂದ 13ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ 2026ರ ಸರಸ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸರಸ್ ಮೇಳ ಆಯೋಜಿಸಲಾಗಿದ್ದು, ಒಳ್ಳೆಯ ವಿಚಾರವಾಗಿದೆ. ಈ ಕಾರ್ಯಕ್ರಮದ ಮೂಲಕ ಜನರಿಗೆ ಮತ್ತು ವಿಶೇಷವಗಿ ಇಂದಿನ ಯುವ ಸಮುದಾಯಕ್ಕೆ ನಮ್ಮ ಭಾಗದ ಕಲೆ, ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ ಗ್ರಾಮೀಣ ಕಲೆ, ಪಾರಂಪರಿಕ ಆಹಾರ ಪದ್ಧತಿಗಳು, ಸಾವಯವ ಆಹಾರ ಪದ್ಧತಿ ಮತ್ತು ಉಡುಗೆ ತೊಡುಗೆಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಈ ಮೇಳದಲ್ಲಿನ ಬಹುತೇಕ ಎಲ್ಲಾ ಉತ್ಪನ್ನಗಳು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸೇರಿದ್ದರಿಂದ ಮಹಿಳಾ ಉದ್ಯಮಿಗಳಿಗೆ ಉತ್ತಮ ಆದಾಯ ಒದಗಿಸಲು ಈ ಮೇಳವು ಪೂರಕವಾಗಲಿದೆ. ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದರ ಜೊತೆಗೆ ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲಾ ಕೌಶಲ್ಯ ಮಿಷನ್ ವ್ಯವಸ್ಥಾಪಕರು, ಎನ್.ಆರ್.ಎಲ್.ಎಂ ಮತ್ತು ನಲ್ಮ್ ಯೋಜನೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ಸ್ವ-ಸಹಾಯ ಗುಂಪಿನ ಸದಸ್ಯರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ : ನಗರ ಮತ್ತು ಗ್ರಾಮೀಣ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ತಯಾರಿಸುತ್ತಿರುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಒಟ್ಟು 30 ಸ್ಟಾಲ್ಗಳ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿಗಳಿಂದ ಬಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಾವು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಮೇಳದಲ್ಲಿ ಕಿನ್ನಾಳ ಗೊಂಬೆಗಳು, ಗಾಣದಿಂದ ತಯಾರಿಸಿದ ಕೊಬ್ಬರಿ ಎಣ್ಣೆ, ಕೈಮಗ್ಗದಿಂದ ತಯಾರಿಸಿದ ಕಾಟನ್ ಸೀರೆಗಳು, ಹ್ಯಾಂಡ್ ಮೇಡ್ ಬ್ಯಾಗ್ಗಳು, ಕೌದಿ, ಲಮಾಣಿ ಕೈಗಾರಿಕಾ ಉತ್ಪನ್ನಗಳು, ಬಾಳೆ ನಾರು ಉತ್ಪನ್ನಗಳು, ಬಿದಿರಿನ ಬುಟ್ಟಿಗಳು, ರಾಗಿ ಪೌಡರ್, ಸಿರಿಧಾನ್ಯ ಪೌಡರ್, ಅಗರಬತ್ತಿಗಳು, ಮಸಾಲೆ ಹಾಗೂ ವಿವಿಧ ರೀತಿಯ ಉಪ್ಪಿನಕಾಯಿ, ಸಜ್ಜೆ, ಜೋಳ ಮತ್ತು ರಾಗಿಯ ಮಂಡಾಳು, ಚಾಕೊಲೇಟ್, ಸಾವಯವ ಉತ್ಪನ್ನಗಳು, ಹಪ್ಪಳ, ಚಕ್ಕುಲಿ, ನಿಪ್ಪಟ್ಟು, ಕಜ್ಜಾಯ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಹಾಗೂ ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.
ಆಭರನ್ 2026: ನಿಟ್ಟೆ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ: ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಉಡುಪಿಯಲ್ಲಿ ನಡೆದ ಮ್ಯಾರಥಾನ್ ಸ್ಪರ್ಧೆಯಾದ ಅಭರನ್ 2026 ರಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ನಿಟ್ಟೆ ಕ್ಯಾಂಪಸ್ಗೆ ಕೀರ್ತಿ ತಂದಿರುತ್ತಾರೆ. ನಿಟ್ಟೆ ರುಕ್ಮಿಣಿ ಅಡ್ಯಂತಾಯ ಮೆಮೋರಿಯಲ್ ಪಾಲಿಟೆಕ್ನಿಕ್ ನ ವಿದ್ಯಾರ್ಥಿನಿ ಸಾಕ್ಷಿ 18-40 ವರ್ಷ ವಯಸ್ಸಿನ ಮಹಿಳಾ ವಿಭಾಗದಲ್ಲಿ 5 ಕಿ.ಮೀ ಓಟದಲ್ಲಿ ಚಿನ್ನದ ಪದಕವನ್ನು ಪಡೆದರು. 3 ಕಿ.ಮೀ ಮಹಿಳಾ ಓಟದಲ್ಲಿ ಡಾ.ಎನ್.ಎಸ್.ಎ.ಎಂ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ದೀಕ್ಷಿತಾ ಗಣಪತಿ ನಾಯಕ್ ಚಿನ್ನದ ಪದಕವನ್ನು ಗೆದ್ದರೆ, ದೀಪಿಕಾ ಮಂಜುನಾಥ್ ಗೊಂಡ್ ಬೆಳ್ಳಿ ಪದಕವನ್ನು ಪಡೆದರು. ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ನಂದಿನಿ ಜಿ ಅವರು 18-40 ವರ್ಷ ಮಹಿಳಾ ವಿಭಾಗದಲ್ಲಿ 10 ಕಿ.ಮೀ ಓಟದಲ್ಲಿ ಕಂಚಿನ ಪದಕ ಗೆದ್ದರು. ಪುರುಷರ ವಿಭಾಗದಲ್ಲಿ, ನಿಟ್ಟೆ ರುಕ್ಮಿಣಿ ಅಡ್ಯಂತಾಯ ಮೆಮೋರಿಯಲ್ ಪಾಲಿಟೆಕ್ನಿಕ್ ನ ಶಾಶ್ವತ್ ರಾಜೇಶ್ ಪೂಜಾರಿ 18-40 ವರ್ಷ ಪುರುಷರ ವಿಭಾಗದಲ್ಲಿ 10 ಕಿ.ಮೀ ಓಟದಲ್ಲಿ ಕಂಚಿನ ಪದಕ ಗೆದ್ದರು. ಈ ಕ್ರೀಡಾಪಟುಗಳ ಸಾಧನೆಗಳು ನಿಟ್ಟೆ ಸಂಸ್ಥೆಗಳಿಗೆ ಹೆಮ್ಮೆ ತಂದಿವೆ, ಅವರ ಸಮರ್ಪಣೆ, ಶಿಸ್ತು ಮತ್ತು ಕ್ರೀಡಾ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಅಭರನ್ 2026 ರಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ನಿಟ್ಟೆ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಪದಕ ವಿಜೇತರನ್ನು ಅಭಿನಂದಿಸಿರುವರು.
ಮಾದಕ ವಸ್ತು ಸಾಗಾಟ ಪ್ರಕರಣ: ಇಬ್ಬರ ವಿರುದ್ಧ ಅಪರಾಧ ಸಾಬೀತು
ಮಂಗಳೂರು, ಮಾ.10: ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಟಿ.ಪಿ. ಫಾರೂಕ್ ಎಂಬಾತನ ವಿರುದ್ಧ ಅಪರಾಧ ಸಾಬೀತಾಗಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಮೇಲೆ ವಾದ ಆಲಿಸಲು ಪ್ರಕರಣವನ್ನು ಮಾ.16ಕ್ಕೆ ನಿಗದಿ ಪಡಿಸಲಾಗಿದೆ. ಬಂದರು ನಿವಾಸಿ ಟಿ.ಪಿ. ಫಾರೂಕ್ (56) ಹಾಗೂ ನೇಪಾಳದ ರಾಜಪುರ ವಿಡಿಸಿ, ದಾಂಗ್ ರೆನ್ ನಿವಾಸಿ ಸಾಗರ್ ಸಿಂಗ್ (28) ಎಂಬವರು 2020ರ ನ.10ರಂದು ಕಾರಿನಲ್ಲಿ ಮಂಗಳೂರಿನಿಂದ ಮೆಲ್ಕಾರ್ ಗೆ ತೆರಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಸಂಜೆ 6:20ರ ವೇಳೆಗೆ ಬಂಟ್ವಾಳ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಟಿ.ಪಿ. ಫಾರೂಕ್ ಕಾರಿನ ಢಿಕ್ಕಿಯಿಂದ 1 ಕೆ.ಜಿ. 375 ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಆರೋಪಿಗಳನ್ನು ಅಂಗಶೋಧನೆಗೆ ಒಳಪಡಿಸಿ ದಾಗ ಟಿ.ಪಿ. ಫಾರೂಕ್ನ ಪ್ಯಾಂಟ್ ಕಿಸೆಯಲ್ಲಿ 4 ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ 15 ಗ್ರಾಂ. ನಂತೆ 60 ಗ್ರಾಂ ಹಾಗೂ ಸಾಗರ್ ಸಿಂಗ್ ನ ಪ್ಯಾಂಟ್ ಕಿಸೆಯಲ್ಲಿ3 ಪ್ಯಾಕೆಟ್ ಗಳಲ್ಲಿ 15 ಗ್ರಾಂ.ನಂತೆ 45 ಗ್ರಾಂ. ತೂಕದ ಮಾದಕ ವಸ್ತು ಗಾಂಜಾ ಪತ್ತೆಯಾಗಿತ್ತು. ಜತೆಗೆ ಕಾರು, ಮೊಬೈಲ್, ನಗದು ವಶಪಡಿಸಿಕೊಂಡು ಬಂಟ್ವಾಳ ನಗರ ಠಾಣೆಯಲ್ಲಿ ಎನ್ ಡಿಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆಗಿನ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ತನಿಖೆ ಪೂರ್ಣಗೊಳಿಸಿ ನ್ಯಾ ಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸಾಗರ್ ಸಿಂಗ್ ಜಾಮೀನು ಪಡೆದು ತಲೆಮರೆಸಿಕೊಂಡಿದ್ದಾನೆ. ಈತ ವಿರುದ್ಧದ ಪ್ರಕರಣವನ್ನು ಸ್ಪ್ಲೀಟ್ ಆಪ್ ಕೇಸ್ ಆಗಿ ವಿಭಜಿಸಲಾಗಿದೆ. ಪ್ರಕರಣದಲ್ಲಿ ಒಟ್ಟು 10 ಸಾಕ್ಷಿದಾರರನ್ನು ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಸರಕಾರದ ಪರ ವಾದಿಸಿದ್ದರು. ನ್ಯಾಯಾಲಯದಲ್ಲಿ ಒಟ್ಟು 29 ದಾಖಲೆಗಳನ್ನು ಗುರುತಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ಅವರು ಟಿ.ಪಿ. ಫಾರೂಕ್ ನನ್ನು ಎನ್ ಡಿಪಿ ಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(2)(ಬಿ) ಅಡಿ ದೋಷಿ ಎಂದು ಮಾ.9ರಂದು ತೀರ್ಪು ನೀಡಿದ್ದಾರೆ. ಮಾ.16ರಂದು ಶಿಕ್ಷೆಯ ಮೇಲೆ ವಾದ ಆಲಿಕೆ ನಡೆಯಲಿದೆ. ಟಿ.ಪಿ. ಫಾರೂಕ್ ವಿರುದ್ಧ ಇನ್ನೊಂದು ಗಾಂಜಾ ಪ್ರಕರಣ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 2023 ಫೆ.5ರಂದು ಈ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ವ್ಯಂಗ್ಯಚಿತ್ರ ಕ್ಷೇತ್ರದ ಸಾಧಕ ಜೀವನ್ ಶೆಟ್ಟಿಗೆ ಸನ್ಮಾನ
ಉಡುಪಿ, ಮಾ.11: ಉಡುಪಿ ಆರ್ಟಿಸ್ಟ್ ಫೋರಂ ವತಿಯಿಂದ ಗ್ಯಾಲರಿ ದೃಷ್ಟಿಯಲ್ಲಿ ಆಯೋಜಿಸಿದ್ದ ಚಿತ್ರಕಲೆ ಮತ್ತು ಛಾಯಾಚಿತ್ರ ಕಲಾಕೃತಿಗಳ 3ದಿನಗಳ ’ಪಯಣ’ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಇತ್ತೀಚೆಗೆ ವ್ಯಂಗ್ಯ ಚಿತ್ರ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತ ಫೋರಂ ಸದಸ್ಯ ಜೀವನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ರಂಜನ್, ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಮಂಗಳೂರು ಫಿಶರೀಸ್ ಕಾಲೇಜಿನ ಮಾಜಿ ಡೀನ್ ಡಾ. ಎಸ್.ಎಂ.ಶಿವಪ್ರಕಾಶ್, ಆರ್ಟಿಸ್ಟ್ ಫೋರಂ ಅಧ್ಯಕ್ಷ ರಮೇಶ್ ರಾವ್, ಕಾರ್ಯದರ್ಶಿ ಸಕು ಪಾಂಗಳ ಉಪಸ್ಥಿತರಿದ್ದರು.
ಯಾದಗಿರಿ | ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ನಾಲ್ವರಿಗೆ ಜಿಲ್ಲಾಡಳಿತದಿಂದ ಸನ್ಮಾನ
ಯುಪಿಎಸ್ಸಿ ಪರೀಕ್ಷೆಯಲ್ಲಿ ನಾಲ್ವರು ಉತ್ತೀರ್ಣ: ಯುವಕರಿಗೆ ಮಾದರಿ – ಸಚಿವ ದರ್ಶನಾಪುರ
ಕೋಡಿ ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸನ್ಮಾನ-ಸಂವಾದ ಕಾರ್ಯಕ್ರಮ
ಕುಂದಾಪುರ, ಮಾ:11: ಮಂಗಳೂರು ವಿಶ್ವವಿದ್ಯಾಲಯದ ಮಟ್ಟದ ಬಿ.ಎಡ್ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಕೋಡಿ ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿನಿಗೆ ಸನ್ಮಾನ ಮತ್ತು ನೂತನ 2025-26ನೇ ಸಾಲಿನ ಬಿ.ಎಡ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಸಲಾಗಿತ್ತು. ಬಿಎಡ್ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದ ಅನುಪಮಾ ಸಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ತದನಂತರ ಮಾತನಾಡಿದ ಅವರು, ತಮ್ಮ ಯಶಸ್ಸಿನ ಹಾದಿ ಮತ್ತು ಇದರೆಡೆಗೆ ಶಿಕ್ಷಕರ ಪರಿಶ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ನಿಯಮಿತವಾದ ಅಧ್ಯಯನ ಮತ್ತು ತರಗತಿಯಲ್ಲಿ ಏಕಾಗ್ರತೆ ಅತೀ ಮುಖ್ಯ ಎಂದರು. ಬ್ಯಾರೀಸ್ ಸಮೂಹ ಸಂಸ್ಥೆಗಳ ಸಂಚಾಲಕ ಸಯ್ಯದ್ ಮೊಹಮ್ಮದ್ ಬ್ಯಾರಿ ಮಾತನಾಡಿ, ಸನ್ಮಾನಿತಗೊಂಡ ವಿದ್ಯಾರ್ಥಿನಿಯ ಸಾಧನೆಯಿಂದ ಸ್ಪೂರ್ತಿ ಪಡೆದು ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಪ್ರಯತ್ನಿಸಬೇಕು ಎಂದು ಹೇಳಿದರು. ಅವರು ಬಿ.ಎಡ್ ಪ್ರಶಿಕ್ಷಣಾರ್ಥಿಗಳೊಂದಿಗಿನ ಸಂವಾದದಲ್ಲಿ ತ್ಯಾಗ, ನಮ್ಮ ಸಾಧನೆಗೆ ಅಡಿಪಾಯ, ಸತತ ಪ್ರಯತ್ನ ದಿಂದ ಸಾಧನೆ ಮಾಡಲು ಸಾಧ್ಯ ಮತ್ತು ಮುಂಬರುವ ಪರೀಕ್ಷೆಗಳಿಗೆ ತಮ್ಮನ್ನು ಹೇಗೆ ಸಿದ್ಧಪಡಿಸಿ ಕೊಳ್ಳಬೇಕು ಎನ್ನುವ ಕುರಿತು ಪ್ರಾಯೋಗಿಕ ಸಲಹೆಗಳನ್ನು ನೀಡಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸೀಫ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತ ನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ದ್ವಿತೀಯ ರ್ಯಾಂಕ್ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಮುಂದೆ ಅವರು ಉತ್ತಮ ಶಿಕ್ಷಕಿಯಾಗಿ ರೂಪುಗೊಳ್ಳಲಿ ಮತ್ತು ಅವರ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ನಾವು ಮಾಡುವ ಕೆಲಸವು ಇಷ್ಟೇ ಸಾಕು ಎಂದು ಭಾವಿಸಬಾರದು. ಯಾವಾಗ ನಾವು ಇದು ಸಾಲದು ಇನ್ನು ಹೆಚ್ಚು ಮಾಡಬೇಕು ಎಂದು ಕೊಳ್ಳುತ್ತೇವೆಯೋ ಆಗ ಹೆಚ್ಚಿನ ಸಾಧನೆ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಸನ್ಮಾನಿತಗೊಂಡ ವಿದ್ಯಾರ್ಥಿಯ ಬದುಕು ಎಲ್ಲರಿಗೂ ಸ್ಪೂರ್ತಿದಾಯಕವಾಗಬೇಕು. ವಿದ್ಯಾರ್ಥಿಗಳು ಇನ್ನು ಹೆಚ್ಚು ಆಸಕ್ತಿಯಿಂದ ಕಲಿತು ಈ ವಿದ್ಯಾಸಂಸ್ಥೆಗೆ ಉತ್ತಮ ಹೆಸರನ್ನು ತರಬೇಕು. ಅದರೊಂದಿಗೆ ನಿಮ್ಮ ಮುಂದಿನ ಜೀವನವೂ ಒಳ್ಳೆಯದಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ ಡೀನ್ ಡಾ.ಪೂರ್ಣಿಮಾ ಟಿ., ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ., ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲೆ ಅಫ್ರೀನ್ ಖಾನ್, ಉಪನ್ಯಾಸಕರು ಮತ್ತು ಬಿಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಫೀರ್ದೋಸ್ ಸ್ವಾಗತಿಸಿದರು. ಬಿ.ಎಡ್ ಪ್ರಶಿಕ್ಷಣಾರ್ಥಿ ದೀಕ್ಷಿತ ಮತ್ತು ಆನಮ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಸುಮನ ವಂದಿಸಿದರು.
ನವೆಂಬರ್ನಲ್ಲಿ ಯಾದಗಿರಿ ಜಿಲ್ಲಾ ಉತ್ಸವ ಆಯೋಜನೆ
ಕರವೇ ನಿಯೋಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಭರವಸೆ
ಸುರಪುರ | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಅರಿವು
ಸುರಪುರ: ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ದಿನಾಚರಣೆ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಡಿಪಿಓ ಲಾಲ್ಸಾಬ್ ಪಿರಾಪುರ್ ಮಾತನಾಡಿ, ಮಹಿಳೆಯರು ಇನ್ನೂ ಸಂಪೂರ್ಣ ಸಬಲರಾಗಿಲ್ಲ ಮತ್ತು ತಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ಪಡೆದುಕೊಂಡಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. ಮಹಿಳೆಯರು ಕ್ರೀಡೆ, ಶಿಕ್ಷಣ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಬಾಲ್ಯ ವಿವಾಹದಂತಹ ಸಮಸ್ಯೆಗಳು ಇನ್ನೂ ಸಮಾಜದಲ್ಲಿ ನಡೆಯುತ್ತಿವೆ. ಪುರುಷರ ಮನೋಭಾವ ಬದಲಾಗಿದಾಗ ಮಾತ್ರ ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತು ಸಂಪೂರ್ಣ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕ ಅಧ್ಯಕ್ಷ ಬೆರಲಿಂಗ ಬದ್ಯಾಪುರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವಿಶೇಷವಾಗಿ ಗೃಹ ಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಕರ್ನಾಟಕ, ಗೃಹ ಜ್ಯೋತಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿ ನಿಂಗಮ್ಮ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಪಂಚ ಗ್ಯಾರಂಟಿ ಸಮಿತಿ ಸದಸ್ಯ ಪಾರಪ್ಪ ದೇವತ್ಕಲ್, ಜೆಸ್ಕಾಂ ಎಇಇ ರಫೀಕ್, ತಾ.ಪಂ ವ್ಯವಸ್ಥಾಪಕ ನಾಗರಾಜ,ಶರಣಗೌಡ,ವೈದ್ಯರಾದ ರೂಪಾ, ಮಹಿಳಾ ಮೇಲ್ವಿಚಾರಕಿಯರಾದ ಗುರುದೇವಿ ಹಿರೇಮಠ, ಸಂಗಮ್ಮ, ಪದ್ಮಾವತಿ ಡಿ.ನಾಯಕ, ಚಂದ್ರ ಲೀಲಾ, ಸಿದ್ದಮ್ಮ ಜಾನಕಿ, ಶಿಕ್ಷಣ ಇಲಾಖೆಯ ಸೋಮಶೇಖರ ಉಪಸ್ಥಿತರಿದ್ದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಕ್ರೀಡೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುರೇಖಾ, ಮಮತಾ,ಅನುರಾಧಾ, ಅಕ್ಷತಾ, ಮಂಜುಳಾ,ತಬಸುಮಾ,ಸಾವಿತ್ರಿ,ಸರಣಿಯಾ, ಜಯಶ್ರೀ ಬಿರಾದಾರ,ಶಶಿಕಲಾ ಗಾಳಿ, ಸಾವಿತ್ರಿ ಗಾಳಿ, ಹಾಗೊಮ್ಮೆ, ಸರೋಜಾ, ಲಕ್ಷ್ಮೀ, ಪ್ರಮೀಳಾ, ಹುಲಗಮ್ಮ, ಮಂಜುಳಾ, ನಾಗಮ್ಮ, ಕಮಲ ಇವರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಇದೇ ಸಂದರ್ಭದಲ್ಲಿ ಸಿಡಿಪಿಓ ಕಚೇರಿಯಲ್ಲಿ ಮೇಲ್ವಿಚಾರಕರಾಗಿದ್ದು ಈಗ ಭಡ್ತಿ ಹೊಂದಿ ಅಧೀಕ್ಷಕರಾದ ಭೀಮಾಶಂಕರ ನಾಯಕಗೆ ಸನ್ಮಾನಿಸಲಾಯಿತು.ಗುರುದೇವಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಕವಿತಾ ಪತ್ತಾರ ಪ್ರಾರ್ಥಿಸಿದರು,ಸಿದ್ದಮ್ಮ ಸ್ವಾಗತಿಸಿದರು, ಸಾವಿತ್ರಿ ಗಾಳಿ ನಿರೂಪಿಸಿ ವಂದಿಸಿದರು.
ತೆಂಕ ಗ್ರಾಪಂ ಕಟ್ಟಡದ ಮೊದಲನೆ ಮಹಡಿ ಉದ್ಘಾಟನೆ
ಕಾಪು, ಮಾ.11: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ತನ್ನ ಸಿಎಸ್ಆರ್ ಅಂಗವಾದ ಅದಾನಿ ಫೌಂಡೇಶನ್ ಮುಖಾಂತರ 25.15 ಲಕ್ಷ ರೂ. ಅನುದಾನದಲ್ಲಿ ತೆಂಕ ಗ್ರಾಮ ಪಂಚಾಯತ್ ಕಚೇರಿಯ ಹೊಸದಾಗಿ ನಿರ್ಮಿಸಲಾದ ಮೊದಲ ಮಹಡಿಯನ್ನು ಅನಾವರಣಗೊಳಿಸ ಲಾಯಿತು. ಈ ಹೊಸ ಕಚೇರಿಯನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸುತ್ತಮುತ್ತಲಿನ 7 ಗ್ರಾಪಂಗಳಿಗೆ ವಿಶೇಷ ಸಿಆರ್ಎಸ್ ಅನುದಾನವನ್ನು ನೀಡಲಾಗಿದೆ. ಈ ಯೋಜನೆಯಡಿ ಅದಾನಿ ಫೌಂಡೇಶನ್ ಈಗಾಗಲೇ ಸುಮಾರು 12 ಕೋಟಿ ರೂ. ಮೌಲ್ಯದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಇದರಲ್ಲಿ ತೆಂಕ ಗ್ರಾಪಂ ನಲ್ಲೇ 2.10 ಕೋಟಿ ರೂ. ಮೌಲ್ಯದ ಕಾಮಗಾರಿಗಳು ಜಾರಿಗೊಂಡಿವೆ ಎಂದು ತಿಳಿಸಿದರು. ಹೊಸದಾಗಿ ನಿರ್ಮಿಸಲಾದ ಈ ಕಚೇರಿ ಸ್ಥಳವು ಪಂಚಾಯತ್ ಆಡಳಿತದ ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯನ್ನು ಮತ್ತಷ್ಟು ಸುಧಾರಿಸಲು ಸಹಾಯಕವಾಗಲಿದೆ. ಸುಧಾರಿತ ಮೂಲಸೌಕರ್ಯದಿಂದ ಪಂಚಾಯತ್ ಕಚೇರಿ ಗ್ರಾಮಸ್ಥರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುವ ಆಡಳಿತಾತ್ಮಕ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಅರ್ಜಿಗಳ ತ್ವರಿತ ನಿರ್ವಹಣೆ, ಅಧಿಕಾರಿಗಳ ನಡುವಿನ ಉತ್ತಮ ಸಂಯೋಜನೆ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆ ಬಲಪಡಲಿದೆ ಎಂದರು. ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಸುರೇಖಾ, ಗ್ರಾಮ ಲೆಕ್ಕಾಧಿಕಾರಿ ವಿಜಯ್, ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್, ಬಾಲಚಂದ್ರ, ಅರುಣಾ ಕುಮಾರಿ, ಅದಾನಿ ಪವರ್ ಲಿಮಿಟೆಡ್ನ ಎಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಶನ್ ಸಿಬ್ಬಂದಿ ಅನುದೀಪ್ ಹಾಗೂ ಪಂಚಯಾತ್ ಸಿಬ್ಬಂದಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ವಂದಿಸಿದರು.
ಯುವರಾಜ್ ಸಿಂಗ್ ಅವರನ್ನು ಕೈಬಿಡುವಂತೆ ಧೋನಿ ಎಂದೂ ಕೇಳಿರಲಿಲ್ಲ: ಬಿಸಿಸಿಐ ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ತಮ್ಮ ಅಸಮಾಧಾನವನ್ನು ಎಂದಿಗೂ ಬಚ್ಚಿಟ್ಟಿಲ್ಲ. ವಾಸ್ತವವಾಗಿ ಅವರು ಹಲವು ಬಾರಿ ತಮ್ಮ ಪುತ್ರನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಕಡಿತವಾಗಲು ಧೋನಿ ಕಾರಣ ಎಂದು ನೇರವಾಗಿ ಆರೋಪಿಸುತ್ತಾ ಬಂದಿದ್ದಾರೆ. ಯುವರಾಜ್ ಸಿಂಗ್ಗೆ ಧೋನಿ ಮಾಡಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಆದರೆ, ಯೋಗರಾಜ್ ಸಿಂಗ್ ಅವರ ಈ ಆರೋಪಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಅವರು ಅದಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದಾರೆ. ಯೂಟ್ಯೂಬ್ನಲ್ಲಿ ವಿಕ್ಕಿ ಲಾಲ್ವಾನಿ ಶೋನಲ್ಲಿ ಮಾತನಾಡಿರುವ ಸಂದೀಪ್ ಪಾಟೀಲ್, ಈ ಆರೋಪಗಳಿಗೆ ನೇರ ಪ್ರತಿಕ್ರಿಯೆ ನೀಡಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಧೋನಿಯ ಪಾತ್ರವಿತ್ತು ಎಂಬುದನ್ನು ಅವರು ಅಲ್ಲಗಳೆದಿದ್ದಾರೆ. “ಒಂದೇ ಒಂದು ಬಾರಿ ಕೂಡ ಆಯ್ಕೆ ಸಮಿತಿಯ ಸಭೆಯಲ್ಲಿ ಯುವರಾಜ್ ಸಿಂಗ್ ಅವರನ್ನು ಕೈಬಿಡುವಂತೆ ಮಹೇಂದ್ರ ಸಿಂಗ್ ಧೋನಿ ಕೇಳಿಲ್ಲ. ನಾನು ಇದನ್ನು ದಾಖಲೆಗಳ ಆಧಾರದಲ್ಲಿ ಹೇಳುತ್ತಿದ್ದೇನೆ” ಎಂದು ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಆಯ್ಕೆ ಸಮಿತಿಯು ತನ್ನ ನಿರ್ಧಾರವನ್ನು ಅಂತಿಮಗೊಳಿಸಿದಾಗ ಮಹೇಂದ್ರ ಸಿಂಗ್ ಧೋನಿ ಒಮ್ಮೆಯೂ ಅದನ್ನು ತಳ್ಳಿ ಹಾಕಿಲ್ಲ ಅಥವಾ ಹಸ್ತಕ್ಷೇಪ ಮಾಡಿಲ್ಲ ಎಂದೂ ಅವರು ಹೇಳಿದ್ದಾರೆ. “ಆತನಿಗೆ ಆಯ್ಕೆ ಸಮಿತಿಯ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ಆತ ಏನೂ ಹೇಳುತ್ತಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ಧೋನಿಯನ್ನು ಗುರಿಯಾಗಿಸಿಕೊಂಡು ಬರುತ್ತಿರುವ ದೂಷಣೆಗಳಿಗೆ ಪ್ರತಿಕ್ರಿಯಿಸಿರುವ ಸಂದೀಪ್ ಪಾಟೀಲ್, ಯೋಗರಾಜ್ ಸಿಂಗ್ ಅವರ ಭಾವನೆಗಳಿಗೆ ಮನ್ನಣೆ ನೀಡಿದ್ದರೂ, ನೈಜ ಹೊಣೆಗಾರಿಕೆ ಎಲ್ಲಿತ್ತು ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. “ಒಬ್ಬ ತಂದೆ ತನ್ನ ಪುತ್ರನದ್ದು ಯಾವುದೇ ತಪ್ಪಿಲ್ಲ ಎಂದು ಬಲವಾಗಿ ಭಾವಿಸುತ್ತಾನೆ. ಆದರೆ, ದೂಷಣೆಯನ್ನು ತಪ್ಪು ವ್ಯಕ್ತಿಯ ಮೇಲೆ ಹೊರಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ. ಯೋಗರಾಜ್ ಸಿಂಗ್ ಹಲವಾರು ವರ್ಷಗಳಿಂದ ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಸ್ವಿಚ್ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದ ಅವರು ತಮ್ಮ ಭಾವನೆಗಳನ್ನು ತಡೆಹಿಡಿದಿರಲಿಲ್ಲ. “ನಾನೆಂದಿಗೂ ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಆತ ತುಂಬಾ ವಿಶ್ವಾಸಾರ್ಹ ಕ್ರಿಕೆಟಿಗ. ಅದಕ್ಕಾಗಿ ನಾನು ಆತನಿಗೆ ವಂದಿಸುತ್ತೇನೆ. ಆದರೆ, ನನ್ನ ಪುತ್ರ ಕ್ಷಮಿಸಲಾರದಂತಹದ್ದನ್ನು ಏನು ಮಾಡಿದ್ದ? ಇದೀಗ ಎಲ್ಲವೂ ಬೆಳಕಿಗೆ ಬರುತ್ತಿದೆ ಹಾಗೂ ಅದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂದೀಪ್ ಪಾಟೀಲ್ ಅವರ ಸ್ಪಷ್ಟೀಕರಣ ಮಹತ್ವ ಪಡೆದುಕೊಂಡಿದೆ.
ರಾಷ್ಟ್ರಮಟ್ಟದ ತಾಂತ್ರಿಕ - ಸಾಂಸ್ಕೃತಿಕ ಹಬ್ಬ ‘ವರ್ಣೋತ್ಸವ’ ಉದ್ಘಾಟನೆ
ಉಡುಪಿ, ಮಾ.11: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ, ಮ್ಯಾನೇಜ್ಮೆಂಟ್ ಸ್ಪರ್ಧೆಗಳ ಕಾರ್ಯಕ್ರಮ ’ವರ್ಣೋತ್ಸವ-2026ನ್ನು ಮಾ.11ರಂದು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಟಾನದ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಬೆಂಗಳೂರು ಕ್ಲೀಯರ್ ಫೀಡ್ನ ಲೀಡ್ ಇಂಜಿನಿಯರ್ ದೀಪಕ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ನವೀನತೆ ಸಾಧಿಸುವಾಗ ಸಂಸ್ಕೃತಿಯ ಮೌಲ್ಯಗಳನ್ನು ಕಾಪಾಡಿ ಕೊಳ್ಳಬೇಕು. ತಾಂತ್ರಿಕ ಪ್ರಗತಿ ಹಾಗೂ ಸೃಜನಶೀಲತೆಯ ಸಮತೋಲನ ಸಾಧಿಸುವುದು ಅಗತ್ಯ. ವರ್ಣೋತ್ಸವ ದಂತಹ ಕಾರ್ಯ ಕ್ರಮಗಳು ವಿದ್ಯಾರ್ಥಿಗಳಿಗೆ ಪ್ರತಿಭೆ ಪ್ರದರ್ಶಿಸಲು, ಪರಸ್ಪರ ಸಹಕಾರ ಬೆಳೆಸಲು ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲು ಉತ್ತಮ ಅವಕಾಶ ಒದಗಿಸುತ್ತದೆ ಎಂದು ಹೇಳಿದರು. ಉಡುಪಿ ಸೈಮನ್ಸ್ ಆ್ಯಂಡ್ ಅಸೋಸಿಯೆಟ್ಸ್ನ ಕ್ವಾಂಟಿಟಿ ಸರ್ವೇಯರ್ ಸ್ನೇಹಲ್ ರಾವ್ ಮಾತನಾಡಿ, ವಿದ್ಯಾರ್ಥಿಗಳು ತಾಂತ್ರಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳ ಬೇಕು. ಕಾಲೇಜಿನಲ್ಲಿ ಕಲಿಯುವುದು ಚಾಲನಾ ಪಾರವಾನಿಗೆ ಯಂತೆ ಅದು ನಮಗೆ ಜ್ಞಾನ ನೀಡುತ್ತದೆ ಮತ್ತು ನಿಜವಾದ ಅನುಭವ ಸಿಗುತ್ತದೆ ಎಂದು ಹೇಳಿದರು. ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ರತ್ನಕುಮಾರ್, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಡಾ.ರಾಧಾಕೃಷ್ಣ ಎಸ್.ಐತಾಳ್, ಮೆಕ್ಯಾನಿಕಲ್ ವಿಭಾಗದ ಲ್ಯಾಬ್ ಸಿಬ್ಬಂದಿ ವಿಘ್ನೇಶ್ ಕಳತ್ತೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ನಾಗರಾಜ್ ಭಟ್ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಂಧ್ಯಾ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಾಂಸ್ಕೃತಿಕ ಘಟಕದ ಸಂಯೋಜಕಿ ಸವಿತಾ ಎ. ಶೆಣೈ ವಂದಿಸಿದರು.
ಮಧ್ಯಪ್ರಾಚ್ಯ ಯುದ್ಧ | ಇಬ್ಬರು ಭಾರತೀಯರ ಮೃತ್ಯು; ಓರ್ವ ನಾಪತ್ತೆ: ಸರಕಾರ
ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧದ ನಡುವೆ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಓರ್ವ ನಾಪತ್ತೆಯಾಗಿದ್ದಾರೆ ಎಂದು ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತೀಯರಿದ್ದ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ಇದರಿಂದ ಈ ಸಾವುಗಳು ಸಂಭವಿಸಿವೆ ಎಂದು ಹೇಳಲಾಗಿದೆ. ಈ ಬೆಳವಣಿಗೆಯನ್ನು ದೃಢಪಡಿಸಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, ಸಂತ್ರಸ್ತ ಭಾರತೀಯ ಪ್ರಜೆಗಳು ಹಾಗೂ ಅವರ ಕುಟುಂಬಗಳಿಗೆ ಅಗತ್ಯ ಸಹಾಯ ಒದಗಿಸಲಾಗುತ್ತಿದೆ. ನಾವು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. “ಕೆಲವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ನಾವು ಇಬ್ಬರು ಭಾರತೀಯ ಪ್ರಜೆಗಳನ್ನು ಕಳೆದುಕೊಂಡಿದ್ದು, ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾರೆ. ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಈ ಘಟನೆ ನಡೆದಿದೆ” ಎಂದು ಅವರು ಹೇಳಿದ್ದಾರೆ. ಕೊಲ್ಲಿ ಪ್ರಾಂತ್ಯದಲ್ಲಿ ಗಾಯಗೊಂಡಿರುವ ಭಾರತೀಯರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೃಢಪಡಿಸಿದೆ. ಅಧಿಕಾರಿಗಳ ಪ್ರಕಾರ, ದುಬೈನಲ್ಲಿ ಗಾಯಗೊಂಡಿರುವ ಓರ್ವ ಭಾರತೀಯ ಪ್ರಜೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. “ನಮ್ಮ ದೂತಾವಾಸವು ಅವರೊಂದಿಗೆ ಸಂಪರ್ಕದಲ್ಲಿದೆ. ಇಂದು ಬೆಳಿಗ್ಗೆ ದುಬೈನಲ್ಲಿ ಓರ್ವ ಭಾರತೀಯ ಪ್ರಜೆ ಗಾಯಗೊಂಡಿದ್ದಾರೆ ಎಂಬ ವರದಿಗಳನ್ನು ನಾವು ಗಮನಿಸಿದ್ದೇವೆ. ಈ ವ್ಯಕ್ತಿಯೊಂದಿಗೆ ನಮ್ಮ ದೂತಾವಾಸ ಸಂಪರ್ಕದಲ್ಲಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕಲ್ಯಾಣ ಮತ್ತು ಆರೋಗ್ಯವನ್ನು ಖಾತರಿಪಡಿಸಲು ನಾವು ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ” ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಈ ನಡುವೆ, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಅಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆಗೆ ಸಂಬಂಧಿಸಿದ ಕಳವಳಗಳಿಗೆ ಸ್ಪಂದಿಸಲು ಭಾರತ ಸರಕಾರ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಉಡುಪಿ ಜಿಲ್ಲೆಯ ಹೊಟೇಲ್ಗಳಿಗೂ ತಟ್ಟಿದ ಗ್ಯಾಸ್ ಬಿಸಿ !
► ಹಲವು ಹೊಟೇಲುಗಳು ಬಂದ್ ► 2-3 ದಿನಗಳಲ್ಲಿ ಬಹುತೇಕ ಸ್ಥಗಿತ
ಕೊಚ್ಚಿಯಲ್ಲಿ ‘ವಿಕಸಿತ ಕೇರಳಂ’ ಮಾರ್ಗ ನಕ್ಷೆ ಅನಾವರಣಗೊಳಿಸಿದ ಪ್ರದಾನಿ ನರೇಂದ್ರ ಮೋದಿ
‘‘ಗಲ್ಫ್ನಲ್ಲಿರುವ ನಮ್ಮ ಜನರಿಗೆ ನೆರವು ನೀಡಲಿದ್ದೇವೆ’’
Vijayapura | ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಒಲೆ ಹಚ್ಚಿ ರೊಟ್ಟಿ ಮಾಡಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತೆಯರು
ವಿಜಯಪುರ: ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್ಗೆ ರೂ. 60 ಏರಿಕೆ ಮಾಡಿದ್ದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ನಗರದ ಅಂಬೇಡ್ಕರ್ ವೃತ್ತದಲ್ಲಿ ಕಟ್ಟಿಗೆಯ ಒಲೆ ಹಚ್ಚಿ ರೊಟ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಡುಗೆ ಸಿಲಿಂಡರ್ ದರವನ್ನು ಏಕಾಏಕಿ ಏರಿಕೆ ಮಾಡಿದ್ದರಿಂದ ಬಡವರು, ಮಧ್ಯಮ ವರ್ಗದವರಿಗೆ ಖರ್ಚು ಭರಿಸುವುದೇ ಸವಾಲಾಗುತ್ತದೆ. ಅನಿವಾರ್ಯವಾಗಿ ಅಡುಗೆ ಅನಿಲ ಸಿಲಿಂಡರ್ ಬಿಟ್ಟು ಕಟ್ಟಿಗೆ ಒಲೆಯತ್ತ ಹೊರಳಬೇಕಾಗುತ್ತದೆ. ಇದು ಮೋದಿ ಸರ್ಕಾರ್ ಅಚ್ಚೇದಿನ ಎಂದು ಕೈ ನಾಯಕಿಯರು ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಖಾಲಿ ಅಡುಗೆ ಅನಿಲ ಸಿಲಿಂಡರ್ಗಳನ್ನು ರಸ್ತೆಯ ಮೇಲೆ ಇಟ್ಟ ಕಾರ್ಯಕರ್ತೆಯರು, ಕಟ್ಟಿಗೆಯನ್ನು ಉರಿಸಿ ಅದರ ಮೇಲೆ ಹಂಚಿಟ್ಟು ರೊಟ್ಟಿ ತಯಾರಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ, ಸರ್ಕಾರಕ್ಕ ವಿರುದ್ಧ ಲೇವಡಿ ಮಾಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರಮೀಜಾ ನಧಾಪ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ಬೆಲೆಗಳನ್ನು ಏರಿಸಿ ಬಡಜನತೆಗೆ ಅತ್ಯಂತ ಕಷ್ಟ ಕಾಲದ ಆರ್ಥಿಕ ದುಃಸ್ಥಿತಿಗೆ ತಳ್ಳಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ₹ 400 ರೂಪಾಯಿ ಇದ್ದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏಕಾಏಕಿ ರೂ. 1100 ಏರಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅದನ್ನು ಪ್ರತಿಭಟಿಸಿ ಕಾಂಗ್ರೆಸ್ ದೇಶದ ಉದ್ದಗಲಕ್ಕೂ ಬೀದಿಗಿಳಿದು ಪ್ರತಿಭಟಿಸಿದರ ಪರಿಣಾಮ ಸಿಲಿಂಡರ್ ಬೆಲೆಯಲ್ಲಿ ₹ 200 ಕಡಿಮೆ ಮಾಡುವ ನಾಟಕವಾಡಿತ್ತು. ಆದರೆ, ಈಗ ಮತ್ತೆ ಪ್ರತಿ ಸಿಲಿಂಡರ್ ಬೆಲೆಯಲ್ಲಿ ಒಮ್ಮೆಲೇ ₹60 ಹೆಚ್ಚಿಸಿ ಬಡಜನತೆಯ ಮೇಲೆ ಅನ್ಯಾಯದ ಆರ್ಥಿಕ ಹೊರೆಯನ್ನು ಹೇರಿದೆ. ಇದು ದೇಶದ ಬಡವರ ಹಗಲು ದರೋಡೆಗೆ ದಾರಿ ಮಾಡಿ ಕೊಟ್ಟಿದೆ ಎಂದರು. ಮಹಾನಗರ ಪಾಲಿಕೆಯ ಸದಸ್ಯೆ ಆರತಿ ಶಾಹಪುರ ಮಾತನಾಡಿ, ಕೇಂದ್ರ ಸರ್ಕಾರವು ಅಡುಗೆ ಅನಿಲ ದರ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡಿದೆ. ತಕ್ಷಣ ಅಡುಗೆ ಅನಿಲ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. ದರ ಏರಿಕೆಯಿಂದಾಗಿ ಜನರು ಮತ್ತೆ ಕಟ್ಟಿಗೆ ಒಲೆಯ ಮೊರೆ ಹೋಗುವಂತೆ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದರು. ದೇವರಹಿಪ್ಪರಗಿ ಮಹಿಳಾ ಕಾಂಗ್ರೆಸ್ ಸಮಿತಿ ಉಸ್ತುವಾರಿ ಶೋಭಾ ಅಂಗಡಿ ಮಾತನಾಡಿ, ನಮ್ಮಲ್ಲಿ ಇಂಧನ ಕೊರತೆಯಾಗದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವರು ಆರಂಭದಲ್ಲಿ ಹೇಳಿದ್ದರು. ಆದರೆ ಯುದ್ಧ ಆರಂಭವಾಗಿ ಕೆಲವೇ ದಿನಗಳಲ್ಲಿ ಅಡುಗೆ ಅನಿಲ ದರ ಏರಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಸಣ್ಣ ಸಣ್ಣ ಹೋಟೆಲ್ನವರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು. ಗಂಗೂಬಾಯಿ ದುಮ್ಮಳೆ, ಮಂಜುಳಾ ಗಾಯಕ್ವಾಡ್, ಶಮಿಮ್ ಅಕ್ಕಲಕೋಟ, ಆಶಾ ಕಟ್ಟಿಮನಿ, ನಾಗರತ್ನ ನಾವಿ, ಅಕ್ಷತಾ ಚಲವಾದಿ, ಮಾಬೂಬಿ ಭಗವಾನ್, ಪ್ರೇಮ ಬ್ಯಾಕೋಡ್, ಮುಸ್ಕಾನ್ ಶಿರ್ಗೂರ್, ಸವಿತಾ ಧನರಾಜ್, ಜಯಶ್ರೀ ಹದನೂರು ಮುಂತಾದವರು ಇದ್ದರು.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ 93,000ಕ್ಕೂ ಅಧಿಕ ಹುದ್ದೆ ಖಾಲಿ : ರಾಜ್ಯಸಭೆಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ, ಮಾ. 11: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 93,139 ಹುದ್ದೆಗಳು ಖಾಲಿ ಇವೆ. ಇದು ಮಂಜೂರಾದ ಒಟ್ಟು ಹುದ್ದೆಯ ಸುಮಾರು ಶೇ. 8.5 ಎಂದು ಕೇಂದ್ರ ಸರಕಾರ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಸಂಸದ ಅಶೋಕ್ ಮಿತ್ತಲ್ ಅವರು ಕೇಳಿದ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳಲ್ಲಿ 2026 ಜನವರಿ 1ರವರೆಗೆ ಖಾಲಿ ಇರುವ ಹುದ್ದೆಗಳನ್ನು ವರದಿ ಮಾಡಲಾಗಿದೆ ಎಂದರು. ನಿತ್ಯಾನಂದ ರಾಯ್ ಅವರು ರಾಜ್ಯ ಸಭೆಯಲ್ಲಿ ಮಂಡಿಸಿದ ದತ್ತಾಂಶದ ಪ್ರಕಾರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯಲ್ಲಿ ಅತಿ ಹೆಚ್ಚು ಅಂದರೆ ಶೇ.17.7 (28,342) ಹುದ್ದೆಗಳು ಖಾಲಿ ಇವೆ. ಚೀನಾದೊಂದಿಗಿನ ಭಾರತದ ಅತಿ ಸೂಕ್ಷ್ಮ ಗಡಿಯನ್ನು ಕಾಯುವ ಜವಾಬ್ದಾರಿ ಹೊಂದಿರುವ ಇಂಡೊ ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ)ನಲ್ಲಿ ಎರಡನೇ ಅತ್ಯಧಿಕ ಶೇ. 13.2 (12,333) ಹುದ್ದೆಗಳು ಖಾಲಿ ಇವೆ. ಪೂರ್ವ (ಬಾಂಗ್ಲಾದೇಶ) ಹಾಗೂ ಪಶ್ಚಿಮ (ಪಾಕಿಸ್ತಾನ) ಭಾಗಗಳ ಭಾರತದ ಗಡಿಗಳನ್ನು ಕಾಯುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯಲ್ಲಿ ಶೇ. 5.6 (14.531) ಹುದ್ದೆಗಳು ಖಾಲಿ ಇವೆ. ಅದೇ ರೀತಿ, ನೇಪಾಳ ಹಾಗೂ ಭೂತಾನ್ನೊಂದಿಗಿನ ಭಾರತದ ಗಡಿ ಕಾಯುವ ಸಶಸ್ತ್ರ ಸೀಮಾ ಬಲದಲ್ಲಿ ಶೇ. 7.2 (6,784), ಮ್ಯಾನ್ಮಾರ್ನೊಂದಿಗಿನ ಭಾರತದ ಗಡಿಯನ್ನು ಕಾಯುವ ಹಾಗೂ ಬಂಡಾಯ ವಿರೋಧಿ ಪಡೆಯ ಪಾತ್ರವನ್ನು ನಿರ್ವಹಿಸುವ ಅಸ್ಸಾಂ ರೈಪಲ್ಸ್ನಲ್ಲಿ ಶೇ. 6 (3,749) ಹುದ್ದೆಗಳು ಖಾಲಿ ಇವೆ ಎಂದು ಅವರು ಹೇಳಿದ್ದಾರೆ. ಈ ನಡುವೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್ಗಳು, ಆರ್ಥಿಕ ಕೇಂದ್ರಗಳ ಮೇಲೆ ದಾಳಿ : ಅಮೆರಿಕ, ಇಸ್ರೇಲ್ಗೆ ಇರಾನ್ ಎಚ್ಚರಿಕೆ
ಟೆಹ್ರಾನ್, ಮಾ.11: ಪಶ್ಚಿಮ ಏಶ್ಯಾದಲ್ಲಿನ ಯುದ್ಧವು ಬುಧವಾರ 12ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಇರಾನ್ ಬ್ಯಾಂಕ್ಗಳು ಸೇರಿದಂತೆ ಈ ಪ್ರದೇಶದಲ್ಲಿ ಅಮೆರಿಕ ಮತ್ತು ಇಸ್ರೇಲ್ನ ಆರ್ಥಿಕ ಕೇಂದ್ರಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಮಂಗಳವಾರ ತಡರಾತ್ರಿ ಟೆಹ್ರಾನ್ನಲ್ಲಿನ ಬ್ಯಾಂಕೊಂದರ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಅನಿರ್ದಿಷ್ಟ ಸಂಖ್ಯೆಯ ಉದ್ಯೋಗಿಗಳು ಮೃತಪಟ್ಟಿರುವ ವರದಿಯ ಬೆನ್ನಲ್ಲೇ ಇರಾನ್ ಈ ಎಚ್ಚರಿಕೆ ಸಂದೇಶ ರವಾನಿಸಿದೆ. ಅಮೆರಿಕ ಮತ್ತು ಝಿಯೊನಿಸ್ಟ್ ಆಡಳಿತಕ್ಕೆ(ಇಸ್ರೇಲ್) ಸೇರಿದ ಆರ್ಥಿಕ ಕೇಂದ್ರಗಳು ಮತ್ತು ಬ್ಯಾಂಕ್ಗಳನ್ನು ಗುರಿಯಾಗಿಸಲು ಶತ್ರು ನಮಗೆ ಮುಕ್ತ ಅವಕಾಶ ಒದಗಿಸಿದ್ದಾನೆ. ಪ್ರದೇಶದಲ್ಲಿ ಇಸ್ರೇಲ್ ಮತ್ತು ಅಮೆರಿಕಾಕ್ಕೆ ಸಂಬಂಧಿಸಿದ ಆರ್ಥಿಕ ಕೇಂದ್ರ ಮತ್ತು ಬ್ಯಾಂಕಿಂಗ್ ಹಿತಾಸಕ್ತಿಗಳನ್ನು ಇರಾನ್ ಗುರಿಯಾಗಿಸುತ್ತದೆ. ಆದ್ದರಿಂದ ಜನರು ಬ್ಯಾಂಕ್ಗಳಿಂದ ದೂರ ಇರಬೇಕು ಎಂದು ಇರಾನ್ ಮಿಲಿಟರಿಯ ಸೆಂಟ್ರಲ್ ಆಪರೇಷನಲ್ ಕಮಾಂಡ್ ಎಚ್ಚರಿಕೆ ನೀಡಿದೆ. ಇರಾನ್ನ ಐಆರ್ಜಿಸಿ ಸಂಯೋಜಿತ ತಸ್ನಿಮ್ ಸುದ್ದಿಸಂಸ್ಥೆಯು ಪ್ರಮುಖ ಅಮೆರಿಕನ್ ತಂತ್ರಜ್ಞಾನ ಸಂಸ್ಥೆಗಳಿಗೆ ಸಂಬಂಧಿಸಿದ ಕಚೇರಿಗಳು ಮತ್ತು ಮೂಲಸೌಕರ್ಯಗಳ ಪಟ್ಟಿಯನ್ನು ಪ್ರಕಟಿಸಿದ್ದು ಇವು ಇಸ್ರೇಲ್ನೊಂದಿಗೆ ಸಂಪರ್ಕದಲ್ಲಿವೆ ಮತ್ತು ಇವುಗಳ ತಂತ್ರಜ್ಞಾನವನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸಲಾಗಿದೆ. ಆದ್ದರಿಂದ ಈ ಸ್ಥಳಗಳು ಇರಾನ್ನ ಹೊಸ ಗುರಿಗಳಾಗಿವೆ ಎಂದು ವರದಿ ಮಾಡಿದೆ. ಪ್ರಾದೇಶಿಕ ಸಂಘರ್ಷವು `ಮೂಲಸೌಕರ್ಯ ಯುದ್ಧ'ವಾಗಿ ವ್ಯಾಪಿಸುತ್ತಿರುವುದರಿಂದ ಇರಾನ್ ಕಾನೂನುಬದ್ಧವೆಂದು ಪರಿಗಣಿಸುವ ಗುರಿಗಳ ವ್ಯಾಪ್ತಿಯೂ ಬೆಳೆಯುತ್ತದೆ. ದಾಳಿಗೆ ಗುರಿ ಎಂದು ಗುರುತಿಸಲಾದ ಪಟ್ಟಿಯಲ್ಲಿ ಗೂಗಲ್, ಮೈಕ್ರೋಸಾಫ್ಟ್, ಪಲಂತಿರ್, ಐಬಿಎಂ, ಎನ್ವಿಡಿಯಾ ಮತ್ತು ಒರಾಕಲ್ ಕಂಪೆನಿಗಳು ಸೇರಿವೆ. ಈ ಸಂಸ್ಥೆಗಳಿಗೆ ಸಂಬಂಧಿಸಿದ ಕಚೇರಿಗಳು ಮತ್ತು ಕ್ಲೌಡ್-ಸೇವಾ ಮೂಲಸೌಕರ್ಯವು ಹಲವಾರು ಇಸ್ರೇಲಿ ನಗರಗಳಲ್ಲಿ ಮತ್ತು ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಬುಧವಾರ ತೈಲ ಮೂಲಸೌಕರ್ಯಗಳು ಮತ್ತು ಹಡಗುಗಳನ್ನು ಗುರಿಯಾಗಿಸುವ ಮೂಲಕ ಇರಾನ್ ಪ್ರದೇಶದ ತೈಲ ಉದ್ಯಮದ ಮೇಲಿನ ಒತ್ತಡವನ್ನು ಮುಂದುವರಿಸಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನ್ನ ಎರಡು ಡ್ರೋನ್ಗಳು ಅಪ್ಪಳಿಸಿದ್ದು ನಾಲ್ವರು ಗಾಯಗೊಂಡಿದ್ದಾರೆ. ಇರಾನ್ನ ಎಂಟು ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಕುವೈತ್ ಹೇಳಿದೆ. ಶೈಬಾ ತೈಲಕ್ಷೇತ್ರದತ್ತ ಮುನ್ನುಗ್ಗುತ್ತಿದ್ದ ಇರಾನ್ನ ಐದು ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೆಬಿಯಾ ಹೇಳಿದೆ.
ಸಿಂಧನೂರು | ನ್ಯಾಯಬೆಲೆ ಅಂಗಡಿಯಲ್ಲಿ ಹೆಚ್ಚುವರಿ ಅಕ್ಕಿ ದಾಸ್ತಾನು ಪತ್ತೆ: ಪರಿಶೀಲನೆ
ಸಿಂಧನೂರು: ತಾಲೂಕಿನ ಗುಂಜಳ್ಳಿ ಶಿಬಿರ ಪ್ರದೇಶದ ನ್ಯಾಯಬೆಲೆ ಅಂಗಡಿ ಸಂಖ್ಯೆ 99ರಲ್ಲಿ ಹೆಚ್ಚುವರಿ ಪಡಿತರ ಅಕ್ಕಿ ದಾಸ್ತಾನು ಸಂಗ್ರಹಿಸಲಾಗಿದೆ ಎಂಬ ದೂರಿನ ಆಧಾರದಲ್ಲಿ ಆಹಾರ ಇಲಾಖೆಯ ಶಿರಸ್ತೆದಾರ ಆನಂದ್ ಮೋಹನ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ನ್ಯಾಯಬೆಲೆ ಅಂಗಡಿ ರಾಜಶೇಖರ್ ತುರ್ವಿಹಾಲ್ ಅವರ ನಿರ್ವಹಣೆಯಲ್ಲಿದ್ದು, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಅಂಗಡಿಗೆ ಭೇಟಿ ನೀಡಿದಾಗ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ. ಪರಿಶೀಲನೆ ವೇಳೆ ದಾಸ್ತಾನು ಫಲಕವನ್ನು ಕಾಲೋಚಿತಗೊಳಿಸದೇ ಇರುವುದು, ಜಾಗೃತಿ ಸಮಿತಿ ಸದಸ್ಯರ ವಿವರಗಳನ್ನು ಪ್ರಕಟಿಸದೇ ಇರುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಕಂಡುಬಂದಿವೆ. ದೈಹಿಕ ದಾಸ್ತಾನು ಪರಿಶೀಲನೆ ವೇಳೆ 225 ಚೀಲ ಅಕ್ಕಿ (ಸುಮಾರು 127.50 ಕ್ವಿಂಟಾಲ್) ಪತ್ತೆಯಾಗಿದ್ದು, ಆನ್ಲೈನ್ ದಾಖಲೆಯಲ್ಲಿ 81.990 ಕ್ವಿಂಟಾಲ್ ಮಾತ್ರ ದಾಖಲಾಗಿತ್ತು. ಇದರಿಂದ 45.51 ಕ್ವಿಂಟಾಲ್ ಹೆಚ್ಚುವರಿ ಅಕ್ಕಿ ಸಂಗ್ರಹಿಸಿರುವುದು ಬಹಿರಂಗವಾಗಿದೆ. ನ್ಯಾಯಬೆಲೆ ಅಂಗಡಿ ಸಂಚಾಲಕ ರಾಜಶೇಖರ ತುರ್ವಿಹಾಳ ಅವರು ಕರ್ನಾಟಕ ಅಗತ್ಯ ಸರಕುಗಳು (ಸಾರ್ವಜನಿಕ ವಿತರಣಾ ವ್ಯವಸ್ಥೆ) ನಿಯಂತ್ರಣ ಆದೇಶ 2016 ನ ಕ್ಲಾಜ್ 4(3) ಅಡಿಯಲ್ಲಿ ಇರುವ ಷರತ್ತುಗಳು ಹಾಗೂ ನಿಯಮಗಳ ಕ್ರಮ ಸಂಖ್ಯೆ 7, 8 ಮತ್ತು 11 ಅನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ತಹಸೀಲ್ದಾರ್ ಅವರು ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.
ಸಮುದ್ರದಡಿ ಸ್ಫೋಟಕ ಇರಿಸುವ ಇರಾನ್ನ16 ಹಡಗುಗಳ ನಾಶ: ಅಮೆರಿಕ
ವಾಶಿಂಗ್ಟನ್, ಮಾ.11: ಸಮುದ್ರದಡಿ ಸ್ಫೋಟಕಗಳನ್ನು ಇರಿಸುವ ಇರಾನ್ನ 16 ಹಡಗುಗಳನ್ನು ನಾಶಗೊಳಿಸಿರುವುದಾಗಿ ಅಮೆರಿಕ ಬುಧವಾರ ಹೇಳಿದೆ. ಶತ್ರು ಹಡಗುಗಳನ್ನು ಮುಳುಗಿಸಲು ಅಥವಾ ಜಲಮಾರ್ಗಗಳನ್ನು ನಿರ್ಬಂಧಿಸುವ ಉದ್ದೇಶದಿಂದ ಸಮುದ್ರದಡಿ ಸ್ಫೋಟಕಗಳನ್ನು ಇರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೆಲವು ನೌಕೆ ಮತ್ತು ಸಬ್ಮೆರಿನ್ಗಳನ್ನು ನಾಶಗೊಳಿಸುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವುದಾಗಿ ಅಮೆರಿಕದ ಮಿಲಿಟರಿ ಹೇಳಿದೆ.
ಅಡುಗೆ ಅನಿಲಕ್ಕಾಗಿ ಹಾಹಾಕಾರ : ದಿಲ್ಲಿ, ಮುಂಬೈ ಸಹಿತ ದೇಶದ ವಿವಿಧೆಡೆ ಹಲವಾರು ರೆಸ್ಟೋರೆಂಟ್ಗಳು ಬಂದ್
ಕಟ್ಟಿಗೆ ಒಲೆ , ಕಲ್ಲಿದ್ದಲು ಮತ್ತಿತರ ಪರ್ಯಾಯ ಇಂಧನ ಮೂಲಗಳ ಮೊರೆ ಹೋದ ಹೊಟೇಲ್ಗಳು
ಕೇರಳ ಸ್ಟೋರಿ: ಸಿನಿಮಾ ಶೂಟಿಂಗ್ ನಡುವೆಯೇ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಿಯಕರನ ಮದುವೆಯಾದ ಮೋನಾಲಿಸಾ
ತಿರುವನಂತಪುರಂ: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಸರ ಮಾರುತ್ತಿದ್ದ ಯುವತಿ ಮೋನಾಲಿಸಾ ಭೋಂಸ್ಲೆ (Monalisa Bhosle) ವಿಡಿಯೋ ವೈರಲ್ ಆಗಿತ್ತು. ನೋಡ ನೋಡುತ್ತಿದ್ದಂತೆ ಖ್ಯಾತಿ ಪಡೆದಿದ್ದ ಈ ಸುಂದರಿಗೆ ಇದೀಗ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ತನ್ನ ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇರಳದ ಮೂಲದ ಮಾಡೆಲ್ ಫರ್ಮಾನ್ ಖಾನ್ ಅವರನ್ನು ವರಿಸಿ
ಡಾಟಾ ಸೆಂಟರ್ ಪ್ರಾರಂಭಕ್ಕೆ ರಾಜ್ಯ ಸರಕಾರ ತನ್ನ ನೀತಿ ಪರಿಷ್ಕರಣೆ ಮಾಡಲಿದೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ಪೂರಕವಾಗಿರುವ ಡಾಟಾ ಸೆಂಟರ್ ಳನ್ನು ಆರಂಭಿಸಲು ಸಹಾಯವಾಗುವಂತೆ ರಾಜ್ಯ ಸರಕಾರ ತನ್ನ ನೀತಿಯನ್ನು ಪರಿಷ್ಕರಣೆ ಮಾಡಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿ ಸದಸ್ಯ ಧೀರಜ್ ಮುನಿರಾಜು ಪ್ರಶ್ನೆ ಕೇಳಿ, ಮಾಹಿತಿ ತಂತ್ರಜ್ಞಾನದ ಹಲವು ವಲಯಗಳಲ್ಲಿ ಬೆಂಗಳೂರು ದೇಶದಲ್ಲೇ ಮೊದಲನೆ ಸ್ಥಾನದಲ್ಲಿದೆ. ಆದರೆ ಡೇಟಾ ಸೆಂಟರ್ ನಲ್ಲಿ ಐದನೆ ಸ್ಥಾನದಲ್ಲಿದೆ. ಸರಕಾರ ಡಾಟಾ ಸೆಂಟರ್ ಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ 32 ಖಾಸಗಿ ಡಾಟಾ ಸೆಂಟರ್ ಗಳಿವೆ. ಸರಕಾರದಿಂದಲೇ ಡೇಟಾ ಸೆಂಟರ್ ಸ್ಥಾಪಿಸಬೇಕು ಎಂಬುದು ಶಾಸಕರ ಆಗ್ರಹ. ಮಿಷನ್ ಲರ್ನಿಂಗ್, ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಡಾಟಾ ಸೆಂಟರ್ ಅಗತ್ಯ ಇದೆ. ಆದರೆ ಇವು ಅತಿ ಹೆಚ್ಚು ನೀರು ಮತ್ತು ಇಂಧನವನ್ನು ಬಯಸುತ್ತದೆ. ಮೊದಲು ರೂಪಿಸಲಾಗಿದ್ದ ಡಾಟಾ ಸೆಂಟರ್ ನೀತಿ ಹಳೆಯದಾಗಿದೆ. ಅದನ್ನು ಪರಿಷ್ಕರಣೆ ಮಾಡುವ ಅಗತ್ಯ ಇದೆ. ಬದಲಾಗಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಅದನ್ನು ಹೊಸದಾಗಿ ರೂಪಿಸಲಾಗುವುದು ಎಂದರು . ಕರ್ನಾಟಕದಲ್ಲಿ ನೀರಿನ ಲಭ್ಯತೆ ಇರುವ ಕರಾವಳಿ ಭಾಗದಲ್ಲಿ ಡಾಟಾ ಸೆಂಟರ್ ಆರಂಭಿಸುವ ಚಿಂತನೆ ಇದೆ. ಸಮುದ್ರ ಭಾಗದಲ್ಲಿ ಸಮುದ್ರ ಸಬ್ ಸಿ ಕೇಬಲ್ ಅಳವಡಿಸಲು ಕೇಂದ್ರ ಟೆಲಿಕಾಂ ಸಚಿವರಿಗೆ ಮನವಿ ಮಾಡಲಾಗಿತ್ತು. ಅವರು ಸರಕಾರದಿಂದ ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ ಆದರೆ ಖಾಸಗಿಯವರು ಮುಂದೆ ಬಂದರೆ ನೆರವು ನೀಡುವುದಾಗಿ ಹೇಳಿದ್ದಾರೆ ಎಂದು ಸಚಿವರು ಉಲ್ಲೇಖಿಸಿದರು.
ಮಂಗಳೂರು| ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷಗಳ ಕಠಿಣ ಜೈಲುಶಿಕ್ಷೆ, ದಂಡ
ಮಂಗಳೂರು, ಮಾ.11: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪಿ ಅಬೂಬಕರ್ (53) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೊಕ್ಸೊ-ಎಫ್ಟಿಎಸ್ಸಿ 2) ನ್ಯಾಯಾಧೀಶ ಮಾನು ಕೆ.ಎಸ್. ಅವರು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ. 2025ರ ಮಾ.29ರಂದು ಅಬೂಬಕರ್ ತನ್ನ ನೆರೆಮನೆಯ ಬಾಲಕಿಯನ್ನು ಮನೆಯೊಳಗೆ ಒಬ್ಬಳಿದ್ದಾಗ ಎಳೆದೊಯ್ದು ಯಾರೂ ವಾಸವಿಲ್ಲದ ಮನೆಯೊಂದರ ಬಳಿ ಅತ್ಯಾಚಾರಗೈದಿದ್ದ. ಅದಕ್ಕೂ ಮುನ್ನ ಈತನು 3 ಬಾರಿ ಆಕೆಯನ್ನು ಅತ್ಯಾಚಾರಗೈದಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಶಿವಕುಮಾರ್ ಬಿ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಬಿಎನ್ಎಸ್ ಕಲಂ 64(1) ಹಾಗೂ ಪೊಕ್ಸೊ ಕಾಯ್ದೆಯ ಕಲಂ 6 ರಡಿ ಆರೋಪಿಗೆ 20 ವರ್ಷಗಳ ಕಠಿಣ ಸಜೆ ಹಾಗು 45,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 4 ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಬಿಎನ್ಎಸ್ ಕಲಂ 351(2) ನಡಿ 3 ತಿಂಗಳ ಸಾದಾ ಸಜೆ ಮತ್ತು 5,000 ರೂ.ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 15 ದಿನ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ ದಂಡದ ಮೊತ್ತ 50,000 ರೂ. ಹಾಗೂ ಪ್ರತ್ಯೇಕವಾಗಿ 3.50 ಲ.ರೂ. ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪೊಕ್ಸೊ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದಿಸಿದ್ದರು.
ಹುಲಸೂರ್ | ಗಡಿಭಾಗದ ಶಾಲೆಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಲು ಆಗ್ರಹ
ಹುಲಸೂರ್: ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ಅಗತ್ಯ ಪ್ರಾಮುಖ್ಯತೆ ನೀಡದೆ ಇತರೆ ಭಾಷೆಗಳ ಪ್ರಚಾರ ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ ಆಗ್ರಹಿಸಿದರು. ಕನ್ನಡವು ಜ್ಞಾನಪೀಠ ಪ್ರಶಸ್ತಿ ಪಡೆದ ಮಹತ್ವದ ಸಾಹಿತ್ಯ ಪರಂಪರೆ ಹೊಂದಿರುವ ಹಾಗೂ ಶಾಸ್ತ್ರೀಯ ಭಾಷೆಯಾಗಿ ಮಾನ್ಯತೆ ಪಡೆದ ಸಮೃದ್ಧ ಭಾಷೆಯಾಗಿದ್ದರೂ ಗಡಿಭಾಗಗಳಲ್ಲಿ ಕನ್ನಡಕ್ಕಿಂತ ಇತರೆ ಭಾಷೆಗಳ ಬಳಕೆ ಹೆಚ್ಚಾಗುತ್ತಿರುವುದು ಕನ್ನಡಾಭಿಮಾನಿಗಳಲ್ಲಿ ಆತಂಕ ಮೂಡಿಸಿದೆ ಎಂದು ಅವರು ಹೇಳಿದರು. ಭಾಲ್ಕಿ ತಾಲೂಕಿನ ಗುಂಜರಗಾ, ಬಸವನವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನೆರೆ ರಾಜ್ಯದ ಮರಾಠವಾಡ ಪ್ರದೇಶದಿಂದ ಬಂದ ಕೆಲವರು ಮರಾಠಿ ಭಾಷೆಯ ಅಭಿಮಾನವನ್ನು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಲ್ಲಿ ಬೆಳೆಸುವ ನಿಟ್ಟಿನಲ್ಲಿ ಚಟುವಟಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ ಎಂದು ಹೇಳಿದರು. ಕರ್ನಾಟಕ ಸರ್ಕಾರದಿಂದ ಸಂಬಳ ಪಡೆಯುವ ಕೆಲ ಅಧಿಕಾರಿಗಳು ಮತ್ತು ಶಿಕ್ಷಕರು ಕನ್ನಡ ಭಾಷೆಯ ಪ್ರಚಾರಕ್ಕಿಂತ ಇತರೆ ಭಾಷೆಗಳ ಅಭಿಮಾನ ಬೆಳೆಯುವಂತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಸಿಆರ್ಪಿ, ಬಿಆರ್ಪಿ ಹಾಗೂ ಶಾಲಾ ಮುಖ್ಯ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ್ ಅವರು, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬಿಟ್ಟು ಇತರೆ ಭಾಷೆಗಳ ಪ್ರಚಾರ ನಡೆಯುತ್ತಿರುವುದು ಕಂಡುಬಂದರೆ ಸಂಬಂಧಪಟ್ಟ ಮುಖ್ಯ ಶಿಕ್ಷಕ ಹಾಗೂ ಸಿಆರ್ಪಿ ವಿರುದ್ಧ ನೋಟಿಸ್ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Bidar | ಸೌಹಾರ್ದತೆ ಬಲಪಡಿಸಲು ಇಫ್ತಾರ್ ಕೂಟ ಸಹಾಯಕ: ಉಮಾಕಾಂತ್ ವಿಳಸಪೂರೆ
ಬೋರ್ಗಿಯಲ್ಲಿ ಸೌಹಾರ್ದತೆಯ ಇಫ್ತಾರ್ ಕೂಟ
IPL 2026- ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉದ್ಘಾಟನಾ ಪಂದ್ಯದ ಭಾಗ್ಯ! RCB ವಿರುದ್ಧ SRH ಹಣಾಹಣಿ: ಇಲ್ಲಿದೆ ವೇಳಾಪಟ್ಟಿ
ಹಲವು ಗೊಂದಲಗಳ ಮಧ್ಯೆ ತಡವಾಗಿದ್ದ () ನ ಮುಂಬರುವ ಆವೃತ್ತಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇದೀಗ ಅಧಿಕೃತವಾಗಿ ಪ್ರಕಟಿಸಿದೆ. ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಅಭಿಮಾನಿಗಳಿಗಂತೂ ಬಿಸಿಸಿಐ ಖುಷಿಯ ಸುದ್ದಿ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28 ರ ಶನಿವಾರದಂದು ನಡೆಯಲಿರುವ ಈ ಸೀಸನ್ ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಸ್ಥಳದಲ್ಲಿ ನಡೆಯಲಿರುವ ಐದು ಪಂದ್ಯಗಳಲ್ಲಿ ಇದೂ ಒಂದಾಗಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಾರ್ಚ್ 29 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಅದೇ ರೀತಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮಾರ್ಚ್ 30ರಂದು ಸೆಣಸಲಿದೆ. ಮೊದಲ ಹಂತದ ವೇಳಾಪಟ್ಟಿಯ ವಿವರ ಇಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) vs ಸನ್ ರೈಸರ್ಸ್ ಹೈದರಾಬಾದ್ – ಮಾರ್ಚ್ 28, 2026 (ಶನಿವಾರ), ಸಂಜೆ – ಬೆಂಗಳೂರು ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ – ಮಾರ್ಚ್ 29, 2026 (ಭಾನುವಾರ), ಸಂಜೆ – ಮುಂಬೈ ರಾಜಸ್ಥಾನ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಮಾರ್ಚ್ 30, 2026 (ಸೋಮವಾರ), ಸಂಜೆ – ಗುವಾಹಟಿ ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ – ಮಾರ್ಚ್ 31, 2026 (ಮಂಗಳವಾರ), ಸಂಜೆ – ಮುಲ್ಲನ್ಪುರ ಲಖನೌ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಏಪ್ರಿಲ್ 1, 2026 (ಬುಧವಾರ), ಸಂಜೆ – ಲಕ್ನೋ ಕೋಲ್ಕತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್ – ಏಪ್ರಿಲ್ 2, 2026 (ಗುರುವಾರ), ಸಂಜೆ – ಕೋಲ್ಕತ್ತಾ ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ – ಏಪ್ರಿಲ್ 3, 2026 (ಶುಕ್ರವಾರ), ಸಂಜೆ – ಚೆನ್ನೈ ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ – ಏಪ್ರಿಲ್ 4, 2026 (ಶನಿವಾರ), ಮಧ್ಯಾಹ್ನ – ದೆಹಲಿ ಗುಜರಾತ್ ಟೈಟಾನ್ಸ್ vs ರಾಜಸ್ಥಾನ ರಾಯಲ್ಸ್ – ಏಪ್ರಿಲ್ 4, 2026 (ಶನಿವಾರ), ಸಂಜೆ – ಅಹಮದಾಬಾದ್ ಸನ್ ರೈಸರ್ಸ್ ಹೈದರಾಬಾದ್ vs ಲಖನೌ ಸೂಪರ್ ಜೈಂಟ್ಸ್ – ಏಪ್ರಿಲ್ 5, 2026 (ಭಾನುವಾರ), ಮಧ್ಯಾಹ್ನ – ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) vs ಚೆನ್ನೈ ಸೂಪರ್ ಕಿಂಗ್ಸ್ – ಏಪ್ರಿಲ್ 5, 2026 (ಭಾನುವಾರ), ಸಂಜೆ – ಬೆಂಗಳೂರು ಕೋಲ್ಕತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ – ಏಪ್ರಿಲ್ 6, 2026 (ಸೋಮವಾರ), ಸಂಜೆ – ಕೋಲ್ಕತ್ತಾ ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್ – ಏಪ್ರಿಲ್ 7, 2026 (ಮಂಗಳವಾರ), ಸಂಜೆ – ಗುವಾಹಟಿ ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ – ಏಪ್ರಿಲ್ 8, 2026 (ಬುಧವಾರ), ಸಂಜೆ – ದೆಹಲಿ ಕೋಲ್ಕತಾ ನೈಟ್ ರೈಡರ್ಸ್ vs ಲಖನೌ ಸೂಪರ್ ಜೈಂಟ್ಸ್ – ಏಪ್ರಿಲ್ 9, 2026 (ಗುರುವಾರ), ಸಂಜೆ – ಕೋಲ್ಕತ್ತಾ ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) – ಏಪ್ರಿಲ್ 10, 2026 (ಶುಕ್ರವಾರ), ಸಂಜೆ – ಗುವಾಹಟಿ ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ – ಏಪ್ರಿಲ್ 11, 2026 (ಶನಿವಾರ), ಮಧ್ಯಾಹ್ನ – ಮುಲ್ಲನ್ಪುರ ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಏಪ್ರಿಲ್ 11, 2026 (ಶನಿವಾರ), ಸಂಜೆ – ಚೆನ್ನೈ ಲಖನೌ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್ – ಏಪ್ರಿಲ್ 12, 2026 (ಭಾನುವಾರ), ಮಧ್ಯಾಹ್ನ – ಲಕ್ನೋ ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) – ಏಪ್ರಿಲ್ 12, 2026 (ಭಾನುವಾರ), ಸಂಜೆ – ಮುಂಬೈ
90 ದಿನದೊಳಗೆ ಅಂಗನವಾಡಿ ಹುದ್ದೆ ಭರ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳನ್ನು 90 ದಿನದೊಳಗಾಗಿ ಭರ್ತಿ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬುಧವಾರ ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿ ಸದಸ್ಯ ಗುರುಮೆ ಸುರೇಶ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಡವರ ಮಕ್ಕಳು ಓದುವ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ವಾತಾವರಣ ಇರಬೇಕು ಎಂಬುದು ಸರಕಾರದ ಬದ್ಧತೆ. ಈ ನಿಟ್ಟಿನಲ್ಲಿ ಎಲ್ಲಿಯೂ ಹುದ್ದೆಗಳನ್ನು ಖಾಲಿ ಬಿಡಲು ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದರು. ತೆರವಾದ ಹುದ್ದೆಗಳಿಗೆ ಸ್ಥಳೀಯವಾಗಿಯೇ 12 ಜನ ಸದಸ್ಯರು ಇರುವ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಲಿದೆ. ಒಟ್ಟಾರೆ 90 ದಿನದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅಂಗನವಾಡಿ ಕಾರ್ಯಕರ್ತರು ಆಯಾ ಗ್ರಾಮಗಳಲ್ಲೇ ವಾಸವಿರಬೇಕು ಎಂಬುದನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ ಎಂದೂ ಅವರು ಉಲ್ಲೇಖಿಸಿದರು. ಇದೇ ವೇಳೆ ಬಿಜೆಪಿ ಸದಸ್ಯ ಸಿದ್ದು ಸವದಿ ಅವರು ಉದ್ಯೋಗಿನಿ ಯೋಜನೆಯ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರ ನೀಡಿದ ಸಚಿವರು, ಉದ್ಯೋಗಿನಿ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಶಾಸಕರ ನೇತೃತ್ವದಲ್ಲಿ ಸಮಿತಿಗಳಿವೆ. ಶಾಸಕರು ಫಲಾನುಭವಿಗಳ ಆಯ್ಕೆ ಪಟ್ಟಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಆ ನಂತರ ಅದನ್ನು ಬ್ಯಾಂಕುಗಳಿಗೆ ಕಳುಹಿಸಿದರೆ ಅಲ್ಲಿ ಎಂಟರಿಂದ ಒಂಬತ್ತು ತಿಂಗಳು ವಿಳಂಬವಾಗುತ್ತಿದೆ. ಆದರೆ, ಸರಲೀಕರಣ ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸದನ ಸ್ವಾರಸ್ಯ: ಡಿಕೆಶಿಗೆ ಭಾವಿ ಸಿಎಂ ಪಟ್ಟ ಕಟ್ಟಿದ ಬಿಜೆಪಿ ಶಾಸಕ! ಅನುದಾನದ ಭರವಸೆ ನೀಡಿದ ಡಿಸಿಎಂ
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಬಿಜೆಪಿ ಶಾಸಕ ವಿಧಾನಸಭೆಯಲ್ಲಿ ಕರೆದ ಪ್ರಸಂಗ ಗಮನ ಸೆಳೆಯಿತು. ನಾಯಕತ್ವ ಬದಲಾವಣೆಯ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಶಾಸಕ ಎಚ್ ಕೆ ಸುರೇಶ್ ಡಿಕೆಶಿಯನ್ನು ಭಾವಿ ಸಿಎಂ ಎಂದು ಕರೆದು ಕ್ಷೇತ್ರದ ರಸ್ತೆಯ ಅಭಿವೃದ್ದಿಗೆ ಅನುದಾನಕ್ಕೆ ಮನವಿ ಮಾಡಿದರು. ಶಾಸಕರ ಮಾತಿನಿಂದ ಖುಷಿಯಾದ ಡಿಕೆ ಶಿವಕುಮಾರ್ ಅನುದಾನ ನೀಡುವ ಭರವಸೆ ನೀಡಿದರು. ಬಳಿಕ ಸುನೀಲ್ ಕುಮಾರ್ ಹಾಗೂ ಆರ್ ಆಶೋಕ್ ಕೂಡಾ ಡಿಕೆಶಿ ಕಾಲೆಳೆದರು. ಮತ್ತಷ್ಟು ವಿವರ ಇಲ್ಲಿದೆ.
Bidar | ಕರೋಡಿಮಲ್ ಕಾಲೋನಿಗೆ ಮೂಲ ಸೌಕರ್ಯ ಒದಗಿಸಲು ಮನವಿ
ಬೀದರ್: ನಗರದ ಕರೋಡಿಮಲ್ ಕಾಲೋನಿ ನಿವಾಸಿಗಳು ಮೂಲ ಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಬೀದರ್ ನಗರ ಪುರಸಭೆ ಆಯುಕ್ತರಿಗೆ ಸ್ವಾಮಿ ವಿವೇಕಾನಂದ ಗೆಳೆಯರ ಬಳಗ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಕರೋಡಿಮಲ್ ಕಾಲೋನಿಯ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಅಸಾಧ್ಯವಾಗಿರುವುದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ ಸಮರ್ಪಕ ಒಳಚರಂಡಿ ವ್ಯವಸ್ಥೆಯಿಲ್ಲದ ಕಾರಣ ಹೊಲಸು ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಕೂಡಲೇ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಲಾಗಿದೆ. ಇದೇ ವೇಳೆ ರಸ್ತೆಗಳ ಪಕ್ಕದಲ್ಲಿ ದಾರಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆ ಸಂಚರಿಸಲು ಜನರಿಗೆ ತೊಂದರೆ ಆಗುತ್ತಿದೆ. ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದರಿಂದ ನಿವಾಸಿಗಳು ತೆರೆದ ಬಾವಿಯ ನೀರಿನ ಮೇಲೆ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈಗಾದರೂ ಕರೋಡಿಮಲ್ ಕಾಲೋನಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಗೆಳೆಯರ ಬಳಗದ ಅಧ್ಯಕ್ಷ ವೀರಶೆಟ್ಟಿ ಬಿರಾದಾರ್, ಉಪಾಧ್ಯಕ್ಷ ಶಂಕರ್ ಬಂಬುಳಗೆ , ಪ್ರಧಾನ ಕಾರ್ಯದರ್ಶಿ ಸೋಮನಾಥ್ ಬಿರಾದಾರ್ ಹಾಗೂ ಕಾರ್ಯಕಾರಣಿ ಸದಸ್ಯ ಅಣ್ಣಾಜಿ ಪಾಟೀಲ್ ಅವರು ಉಪಸ್ಥಿತರಿದ್ದರು.
ಹುಮನಾಬಾದ್ | ಭಾರತ ಜನಸೇವಾ ಟ್ರಸ್ಟ್ ವತಿಯಿಂದ ಈದ್ ಕಿಟ್ ವಿತರಣೆ
ಹುಮನಾಬಾದ್ : ಭಾರತ ಜನಸೇವಾ ಟ್ರಸ್ಟ್ ನ ಸಂಸ್ಥಾಪಕ ತಾಹೇರ್ ಅಲಿ ಔರಂಗಬಾದ್ ಅವರಿಂದ ಬುಧವಾರ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಈದ್ ಕಿಟ್ ಹಾಗೂ ನಗದು ಹಣ ವಿತರಣೆ ಮಾಡಲಾಯಿತು. ಈದ್ ಕಿಟ್ ನಲ್ಲಿ ಅಕ್ಕಿ, ಎಣ್ಣೆ, ಕಾರದ ಪುಡಿ, ಉಪ್ಪು ಹೀಗೆ ಈದ್ ಗೆ ಬೇಕಾಗುವ ಎಲ್ಲಾ ಸರಕು ಸಾಮಾನುಗಳಿದ್ದು, ನೂರಾರು ಕುಟುಂಬಗಳಿಗೆ ವಿತರಿಸಿದರು. ಹಾಗೆಯೇ ಮಹಿಳೆಯರಿಗೆ ಕಿಟ್ ಜೊತೆಗೆ ನಗದು ಹಣ ಕೂಡ ನೀಡಿದರು. ಈ ವೇಳೆ ಮಾತನಾಡಿದ ತಾಹೇರ ಅಲಿ ಔರಂಗಬಾದ್ ಅವರು, ಈದ್ ಕಿಟ್ ಗಳನ್ನು ನನ್ನ ಕಡೆಯಿಂದ ಉಡುಗೊರೆಯಾಗಿ ನೀಡಿದ್ದೇನೆ. ಕಿಟ್ ಜೊತೆಗೆ ನೀಡಿರುವ ನಗದು ಹಣ ಝಕಾತ್ ಆಗಿರುತ್ತದೆ. ಝಕಾತ್ ನಮ್ಮನ್ನು ರಕ್ಷಣೆ ಮಾಡುತ್ತದೆ. ಇದು ನಾವು ಅಲ್ಲಾಹನಿಗೆ ಕಟ್ಟುವ ಟ್ಯಾಕ್ಸ್ ಆಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ಅಲ್ತಾಫ್, ಧರ್ಮಗುರು ನಯೀಮ್ ಮೌಲಾನಾ, ಅಮೀನ್ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Bidar | ಕಳಪೆ ಆಹಾರ ಪೂರೈಕೆ ಆರೋಪ: ಬಸವೇಶ್ವರ ಎಂಟರ್ಪ್ರೈಸಸ್ನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹ
ಬೀದರ್: ವಸತಿ ನಿಲಯಗಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗ ಸಂಘಟನೆ ಬಸವೇಶ್ವರ ಎಂಟರ್ಪ್ರೈಸಸ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ, ಬಾಕಿ ಬಿಲ್ಲುಗಳನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದೆ. ಈ ಕುರಿತು ಜಿಲ್ಲಾ ಕೇಂದ್ರ ಕಚೇರಿಯ ಶಿರಸ್ತೆದಾರ ಧನರಾಜ್ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಲಾಗಿದೆ. ಮನವಿಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಆಹಾರ ಪೂರೈಕೆ ಮಾಡುವ ಟೆಂಡರ್ ಬೀದರ್ ನಿವಾಸಿ ಚಂದ್ರಕಾಂತ್ ಹೆಬ್ಬಾಳೆ ಮತ್ತು ಅವರ ಮಕ್ಕಳ ಮಾಲಿಕತ್ವದ ಬಸವೇಶ್ವರ ಎಂಟರ್ಪ್ರೈಸಸ್ ಸಂಸ್ಥೆಗೆ ನೀಡಲಾಗಿದೆ. ಟೆಂಡರ್ ನಿಯಮದ ಪ್ರಕಾರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕಾದ ಜವಾಬ್ದಾರಿ ಸಂಸ್ಥೆಯದ್ದಾಗಿದ್ದರೂ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಉಪನಿರ್ದೇಶಕ, ಸಹಾಯಕ ನಿರ್ದೇಶಕ ಹಾಗೂ ವಸತಿ ನಿಲಯಗಳ ಪಾಲಕರನ್ನು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಗೈರುಹಾಜರಾಗಿರುವ ವಿದ್ಯಾರ್ಥಿಗಳಿಗೂ ಆಹಾರ ಪೂರೈಕೆ ಮಾಡಿದಂತೆ ದಾಖಲೆಗಳಲ್ಲಿ ನಮೂದಿಸಲಾಗುತ್ತಿದೆ ಎಂದು ಸಂಘಟನೆ ದೂರಿದೆ. ಜಿಲ್ಲೆಯ 31 ಮೊರಾರ್ಜಿ ದೇಸಾಯಿ ವಸತಿ ನಿಲಯಗಳಿಗೆ ಆಹಾರ ಪೂರೈಕೆ ಮಾಡುವ ಟೆಂಡರ್ ಬಸವೇಶ್ವರ ಎಂಟರ್ಪ್ರೈಸಸ್ ಸಂಸ್ಥೆಗೆ ನೀಡಲಾಗಿದ್ದು, ಕಳಪೆ ಆಹಾರ ಪೂರೈಕೆ ಹಿನ್ನೆಲೆಯಲ್ಲಿ ಟೆಂಡರ್ ರದ್ದುಪಡಿಸಿ ಬಾಕಿ ಬಿಲ್ಲುಗಳನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಲಾಗಿದೆ. ಇದಲ್ಲದೆ ವಸತಿ ನಿಲಯಗಳ ನೋಡಲ್ ಅಧಿಕಾರಿ ಶರಣಪ್ಪ ಬಿರಾದಾರ್ ಪ್ರತಿ ತಿಂಗಳು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಶರಣಪ್ಪ ಬಿರಾದಾರ್ ಹಾಗೂ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚನ್ನಬಸವ ಹೆಡೆ ಅವರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗದ ಜಿಲ್ಲಾ ಸಂಚಾಲಕ ಸಂಜುಕುಮಾರ್ ಮೇತ್ರೆ, ಜಿಲ್ಲಾ ಸಂಘಟನಾ ಸಂಚಾಲಕ ವಿನೋದಕುಮಾರ್ ಗುಪ್ತಾ ಹಾಗೂ ದಸರಥ ದೊಡ್ಡಮನಿ ಇದ್ದರು.
ರಿಯಾದ್ನ ಅಲಿಫ್ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಪುಸ್ತಕ ರಚನೆ
ರಿಯಾದ್ (ಸೌದಿ ಅರೇಬಿಯಾ), ಮಾ.11: ಅನಿವಾಸಿ ಕನ್ನಡಿಗರು ವಿದೇಶಿ ನೆಲದಲ್ಲೂ ಕನ್ನಡ ಭಾಷೆಯ ಕಂಪನ್ನು ಪಸರಿಸುತ್ತಿದ್ದಾರೆ ಎಂಬುದಕ್ಕೆ ರಿಯಾದ್ನ ಅಲಿಫ್ ಇಂಟರ್ರ್ನಾಷನಲ್ ಶಾಲೆಯ ವಿದ್ಯಾರ್ಥಿಗಳ ಸಾಧನೆಯೇ ಸಾಕ್ಷಿ. ಶಾಲೆಯು ಹಮ್ಮಿಕೊಂಡಿದ್ದ ‘ಬುಕ್ ಬ್ಲೂಮ್ 500’ (Book Bloom 500) ಅಭಿಯಾನದ ಭಾಗವಾಗಿ 6ನೇ ತರಗತಿಯ ವಿದ್ಯಾರ್ಥಿನಿಯರಾದ ಫಾತಿಮತ್ ಆಫಿಯಾ ಮತ್ತು ಐಷತ್ ಅಜೀಫಾ ಕನ್ನಡದಲ್ಲಿ ಪುಸ್ತಕಗಳನ್ನು ರಚಿಸುವ ಮೂಲಕ ಸೃಜನಶೀಲ ಬರವಣಿಗೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜನವರಿ 23ರಂದು ರಿಯಾದ್ನ ಶಿಫಾ’ದ ಖಸ್ರ್ ಅಲ್ ಅಮೀರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ 1200 ವಿದ್ಯಾರ್ಥಿಗಳ ಪೈಕಿ 500 ವಿದ್ಯಾರ್ಥಿಗಳು ಸೃಜನಶೀಲ ಬರವಣಿಗೆಯ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಬರವಣಿಗೆಯ ಪಾಠವು (Largest Creative Writing Lesson) ಈಗ ಅಧಿಕೃತವಾಗಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಈ ಮೂಲಕ ಅಲಿಫ್ ಇಂಟರ್ನ್ಯಾಷನಲ್ ಸ್ಕೂಲ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿಸಿದೆ. ನಮ್ಮ ವಿದ್ಯಾರ್ಥಿಗಳು ವಿದೇಶದಲ್ಲೂ ಕನ್ನಡದಲ್ಲಿ ಪುಸ್ತಕ ಬರೆದು ಸಮುದಾಯವು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ ಎಂದು ತರಗತಿ ಶಿಕ್ಷಕಿ ಸುಂದುಸ್ ಸಬೀರ್ ಚೌಧರಿ ಪ್ರಶಂಸಿಸಿದ್ದಾರೆ. ಈ ಸಾಧಕ ವಿದ್ಯಾರ್ಥಿನಿಯರು ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲಂಜಿಬೈಲ್ ನಿವಾಸಿ, ಅಲಿಫ್ ಶಾಲೆಯ ಸಾರಿಗೆ ಮೇಲ್ವಿಚಾರಕ ಯೂಸುಫ್ ಉಸ್ಮಾನ್ ಕೆ.ವಿ. ಮತ್ತು ರೈಹಾನಾ ದಂಪತಿಯ ಪುತ್ರಿಯರು. ಯೂಸುಫ್ ಉಸ್ಮಾನ್ ಅವರು ಕಳೆದ 34 ವರ್ಷಗಳಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, 16 ವರ್ಷಗಳಿಂದ ಅಲಿಫ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುಟುಂಬವು ವಿದೇಶದಲ್ಲೂ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸು ತ್ತಿದೆ. ಯೂಸುಫ್ ಉಸ್ಮಾನ್ರ ಪುತ್ರಿಯರಾದ ಅಶ್ರಿಫಾ ಬಾನು ಮತ್ತು ಕೆ.ವಿ. ಆಶಿಕಾ ಬಾನು ಕೂಡ ಈ ಶಾಲೆಯಲ್ಲಿ ಕನ್ನಡ ಶಿಕ್ಷಕಿಯರಾಗಿದ್ದು, ತಂಗಿಯರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ದಯಾಮರಣ ಮಾರ್ಗಸೂಚಿ ಜಾರಿಗೆ ತಂದಿದ್ದು ಕರ್ನಾಟಕದಲ್ಲಿಯೇ ಮೊದಲು; ಹಲವರು ಅರ್ಜಿ; ಏನಿದು ಲಿವಿಂಗ್ ವಿಲ್? ನಿಯಮಗಳೇನು?
ದಯಾಮರಣ ಕುರಿತು ಸುಪ್ರೀಂ ಕೋರ್ಟ್ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಬೆನ್ನಲ್ಲೆ ದಯಾಮರಣಕ್ಕೆ ಸಂಬಂಧಿಸಿದಂತೆ ಕಾನೂನು ಏನಿದೆ? ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ? ಮೊದಲ ಕಾನೂನು ರಚಿಸಿದ ಕರ್ನಾಟಕ ಸರ್ಕಾರ ಏನಿಲ್ಲಾ ನಿಯಮ ವಿಧಿಸಿದೆ? ಯಾರಿಗೆಲ್ಲಾ ಅವಕಾಶ ಸಿಗಲಿದೆ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಸ್ಪೀಕರ್ ಓಂ ಬಿರ್ಲಾ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ಸೋಲು
ಲೋಕಸಭೆಯಲ್ಲಿ ಗದ್ದಲದ ನಡುವೆ ಧ್ವನಿ ಮತದ ಮೂಲಕ ತಿರಸ್ಕಾರ
ವೈಭವ್ ಸೂರ್ಯವಂಶಿಗೆ ರವೀಂದ್ರ ಜಡೇಜಾ ಬ್ಯಾಟಿಂಗ್ ಕ್ಲಾಸ್; Viral Video ಇಲ್ಲಿದೆ
ಐಪಿಎಲ್ 2026ರ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 28ರಿಂದ ಟೂರ್ನಿ ಅಧಿಕೃತವಾಗಿ ಚಾಲನೆ ಪಡೆಯಲಿದ್ದು, ಎಲ್ಲಾ ತಂಡಗಳು ಸಮರಕ್ಕೆ ಸಜ್ಜಾಗಿವೆ. ಈ ನಡುವೆ ರಾಜಸ್ಥಾನ್ ರಾಯಲ್ಸ್ ತಂಡವು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ತನ್ನ ತರಬೇತಿ ಶಿಬಿರವನ್ನು ಉತ್ಸಾಹದಿಂದ ಆರಂಭಿಸಿದೆ. ಜಡೇಜಾ-ವೈಭವ್ ಸಂಭಾಷಣೆ ವೈರಲ್ ತಂಡದ ಅಭ್ಯಾಸದ ವೇಳೆ ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ
ಮಧುರೈ ಏಕೆ? ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ಏರ್ಪೋರ್ಟಾಗಿ ಘೋಷಿಸಿ
ಬೆಂಗಳೂರು: ತಮಿಳುನಾಡಿನ ಚುನಾವಣೆ 2026 ಇದೇ ವರ್ಷ ನಡೆಯಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣದೇ ಚುನಾವಣೆ ದೃಷ್ಟಿಯಿಂದ ತಮಿಳುನಾಡಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second International Airport) ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ಪೈಪೋಟಿ ಉಂಟಾಗಿತ್ತು.
Middle East Conflict- ಇರಾನಿಗೆ ಹೊಸ ಬಾಸ್: ಉಳಿಯಬಲ್ಲರೇ ಅಥವಾ ತಂದೆಯ ಹಾದಿ ಹಿಡಿದಾರೇ?
Israel- Iran War- ಇರಾನಿನ ಧಾರ್ಮಿಕ ಸರ್ವೇಚ್ಚ ನಾಯಕರಾಗಿದ್ದ ಅಯತೊಲ್ಲ ಅಲಿ ಖಮೇನಿಯವರ ಹತ್ಯೆಯ ಬಳಿಕ ಅವರ ಪುತ್ರ ಮೊಜ್ತಾಬಾ ಖಮೇನಿ ಅವರು ಇರಾನಿನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ನ ನೇರ ಹತ್ಯೆಯ ಬೆದರಿಕೆಗಳ ನಡುವೆಯೂ ಅವರು ಈ ಸ್ಥಾನ ಸ್ವೀಕರಿಸುವ ನಿರ್ಧಾರ ತಳೆದದ್ದು ಗಮನಾರ್ಹ. ಅಮೆರಿಕ ಮತ್ತು ಇಸ್ರೇಲ್ನ ಅತ್ಯಾಧುನಿಕ ತಂತ್ರಜ್ಞಾನದ ಮುಂದೆ ಮೊಜ್ತಾಬಾ ಯಾವ ರೀತಿಯ ಪ್ರತಿರೋಧ ಒಡ್ಡುತ್ತಾರೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ಸದನ ಸ್ವಾರಸ್ಯ: ಬಜೆಟ್ ಚರ್ಚೆ ಆರಂಭಿಸುವ ಮುನ್ನ ವಿಪಕ್ಷಗಳಿಗೆ ವಾರ್ನಿಂಗ್ ಮಾಡಿದ ಶಿವಲಿಂಗೇಗೌಡ!
ಬಜೆಟ್ ಕುರಿತಾದ ಚರ್ಚೆಗೂ ಮುನ್ನ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಅವರ ವಿಪಕ್ಷದವರಿಗೆ ಮನವಿ ಮತ್ತು ಎಚ್ಚರಿಕೆ ನೀಡಿದರು. ಚರ್ಚೆಗೂ ಮುನ್ನ ಯಾರೂ ನನಗೆ ತೊಂದರೆ ನೀಡಬೇಡಿ ಎಂದು ಹೇಳಿದರು. ನೀವು ಮಾತಾಡುವಾಗ ನಾನು ಮಧ್ಯೆ ಮಾತಾಡಲಿಲ್ಲ. ನಾನು ಮಾತಾಡುವಾಗ ನೀವು ಮಾತಾಡಬೇಡಿ. ನಾನು ತಪ್ಪು ಮಾತಾಡಿದ್ರೆ, ಸದನವನ್ನು ತಪ್ಪು ದಾರಿಗೆ ತರೋ ಮಾತಾಡಿದ್ರೆ ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಸ್ಪೀಕರ್ ಬಳಿ ಮನವಿ ಮಾಡಿಕೊಂಡ ಸ್ವಾರಸ್ಯಕರ ಪ್ರಸಂಗ ನಡೆಯಿತು.
ಕಲಬುರಗಿ | ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ
ಕಲಬುರಗಿ: ಎಲ್ಲಿ ಮಹಿಳೆಯರನ್ನು ಗೌರವಿಸಿ ಪೂಜಿಸಲಾಗುತ್ತದೆ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹೆಣ್ಣು ಇರುವ ಮನೆ ಸ್ವರ್ಗಕ್ಕೆ ಸಮಾನ, ಅಂತಹ ಸ್ತ್ರೀಯರನ್ನು ಶಕ್ತಿಸ್ವರೂಪಿಣಿಯಾಗಿ ಆರಾಧಿಸುವ ದೇಶ ನಮ್ಮದು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶರಣಮ್ಮ ವಾರದ ಹೇಳಿದರು. ನಗರದ ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಲ್ಲ, ಬದಲಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸುವ ಅವರ ಹಕ್ಕುಗಳಿಗಾಗಿ ಹೋರಾಟವನ್ನು ಸ್ಮರಿಸುವ ಮತ್ತು ಲಿಂಗಸಮಾನತೆಯತ್ತ ಹೆಜ್ಜೆ ಹಾಕುವ ಸಂಕಲ್ಪದ ದಿನ ಇದಾಗಿದೆ ಎಂದರು. ಸ್ತ್ರೀಯರನ್ನು ಮೂರು ದೃಷ್ಟಿಯಿಂದ ನೋಡುತ್ತೇವೆ. ಕರ್ತೃತ್ವ, ನೇತೃತ್ವ ಮತ್ತು ತಾಯತ್ವವಾಗಿರುತ್ತಾಳೆ. ಇವೆಲ್ಲವೂ ಒಂದು ಹೆಣ್ಣಿನಲ್ಲಿ ಇದ್ದಾಗ ಸಮಾಜವು ಶಾಂತಿ, ನೆಮ್ಮದಿಯ ನೆಲೆಯಾಗುತ್ತದೆ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನೊದು ಸುಳ್ಳಲ್ಲ. ಈ ಸೃಷ್ಟಿಯ ಮೂಲವೇ ಸ್ತ್ರೀ ಆಗಿದ್ದಾಳೆ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೆ ಆದ ಸ್ಥಾನವಿದೆ, ಗೌರವಿದೆ. ಜಾಗತಿಕ ಮಟ್ಟದಲ್ಲಿ ಮಹಿಳೆ ಇಂದು ರತ್ನವಾಗಿ ಕಂಗೊಳಿಸುತ್ತಿದ್ದಾಳೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ ಮಾತನಾಡಿದರು. ಪ್ರಾಧ್ಯಾಪಕ ಡಾ.ಲಕ್ಷ್ಮೀಪುತ್ರ ಸ್ವಾಗತಿಸಿದರು, ಪ್ರೊ.ಅನಿತಾ ಗೊಬ್ಬುರ್ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಚೆನ್ನಬಸವ ಬಮ್ಮಣಿ ನಿರೂಪಿಸಿದರೆ, ಡಾ.ಮಿಲಿಂದಕುಮಾರ ಸುಳ್ಳದ್ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಅರುಣಾ, ಡಾ.ಆರತಿ, ಡಾ.ಪಿಂಕ್ಯಾನಿ, ಡಾ.ವಿಜಯಲಕ್ಷ್ಮಿ, ಡಾ.ಸಂಗೀತಾ, ಡಾ.ಪ್ರತಿಭಾ, ಡಾ.ಮಹಾಲಕ್ಷ್ಮಿ, ಪ್ರೊ.ಕಲ್ಮೇಶ ಪ್ರೊ.ಹೆಬ್ಜಿಬಾ, ಜ್ಯೋತಿ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಕಲಬುರಗಿ | ತರಬೇತಿಗಾಗಿ ಅರ್ಜಿ ಆಹ್ವಾನ
ಕಲಬುರಗಿ: ಪ್ರವಾಸೋದ್ಯಮ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಾಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಮೈಸೂರಿನ ಫುಡ್ ಕ್ರಾಫ್ಟ್ ಇನ್ಸ್ ಸ್ಟಿಸ್ಟೂಟ್ (ಎಫ್.ಸಿ.ಐ.) ಹಾಗೂ ಬೆಂಗಳೂರಿನ ಇನ್ಸ್ ಸ್ಟಿಟ್ಯೂಟ್ ಆಫ್ ಹೊಟೇಲ್ ಮ್ಯಾನೇಜ್ಮೆಂಟ್ (ಐ.ಹೆಚ್.ಎಮ್.) ಮೂಲಕ ವಸತಿ ಸಹಿತ ತರಬೇತಿ ನೀಡಲಾಗುತ್ತದೆ. ತರಬೇತಿ ಕಾರ್ಯಕ್ರಮಗಳ ವಿವರ : ಫುಡ್ ಆಂಡ್ ಬೆವರೇಜ್ ಸರ್ವಿಸ್ ಸ್ಟೀವಾರ್ಡ್ (Food & Beverage Service Steward) ತರಬೇತಿ ಪಡೆಯಲು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ರೂಮ್ ಅಟೆಂಡೆಂಟ್ (Room Attendant) ತರಬೇತಿ ಪಡೆಯಲು 5ನೇ ತರಗತಿ ಪಾಸಾಗಿರಬೇಕು. ಮಲ್ಟಿ ಕ್ಯೂಸೈನ್ ಕುಕ್ (Multi Cuisine Cook) ತರಬೇತಿ ಪಡೆಯಲು 8ನೇ ತರಗತಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯೋಮಿತಿ 20 ರಿಂದ 45 ವರ್ಷದೊಳಗಿರಬೇಕು. ಈ ತರಬೇತಿ ಪಡೆಯಲು ಆಸಕ್ತಿಯುಳ್ಳ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದ ಭರ್ತಿ ಮಾಡಿ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ನಿಗದಿತ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅಂಕಪಟ್ಟಿ, ಜಾತಿ ಪ್ರಮಾಣಪತ್ರಗಳನ್ನು ಅಭ್ಯರ್ಥಿಗಳು ಸ್ವಯಂ ಧೃಢೀಕರಿಸಿ ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಿ ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ 2026ರ ಮಾರ್ಚ್ 20 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಪ್ರಸ್ತುತ ಪರಿಸ್ಥಿತಿ ಸುರಕ್ಷಿತ - ಸ್ಥಿರವಾಗಿದೆ: ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ
ಮನಾಮಾ: ಅಮೇರಿಕ - ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ಪ್ರಸಕ್ತ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬಹರೈನ್ ದೇಶವು ಇನ್ನೂ ಸುರಕ್ಷಿತ ಮತ್ತು ಸ್ಥಿರವಾಗಿದೆ. ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಾಗರಿಕರು ಮತ್ತು ನಿವಾಸಿಗಳಲ್ಲಿ ಕೆಲವು ಆತಂಕಗಳು ಕಂಡುಬಂದರೂ, ದೇಶದ ಒಟ್ಟಾರೆ ಪರಿಸ್ಥಿತಿ ಅಸ್ಥಿರವಾಗಿಲ್ಲ ಮತ್ತು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ದೈನಂದಿನ ಜೀವನ ಮುಂದುವರಿಯುತ್ತಿದೆ ಎಂದಿದ್ದಾರೆ. ಬಹರೈನ್ ಸರಕಾರವು ನಾಗರಿಕರು ಹಾಗೂ ನಿವಾಸಿಗಳ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಲು ಸಾಧ್ಯ ವಾದ ಎಲ್ಲಾ ರೀತಿಯಲ್ಲಿ ಸಮಯಕ್ಕೆ ತಕ್ಕಂತೆ ಸಹಕಾರ ನೀಡುತ್ತಿದೆ. ಸರಕಾರ ಪರಿಸ್ಥಿತಿಯನ್ನು ಸಮೀಪದಿಂದ ಗಮನಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿದೆ. ಪ್ರಸ್ತುತ ಪರಿಸ್ಥಿತಿಯ ಕಾರಣದಿಂದ ಕೆಲವು ವಾಣಿಜ್ಯ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಮಟ್ಟಿನ ನಿಧಾನತೆ ಕಾಣುತ್ತಿದೆ. ಇದರಿಂದ ಹಲವರು ಮನಸ್ಸಿನಲ್ಲಿ ಆತಂಕ ಮತ್ತು ಒತ್ತಡ ಅನುಭವಿಸುತ್ತಿರುವುದು ಸಹಜ. ಆದರೆ ಎಲ್ಲರೂ ಧೈರ್ಯದಿಂದ ಮತ್ತು ಪರಸ್ಪರ ಸಹಕಾರದಿಂದ ಈ ಸವಾಲಿನ ಸಮಯವನ್ನು ಎದುರಿಸುತ್ತಿದ್ದಾರೆ ಎಂದು ಅಜಿತ್ ಹೇಳಿದ್ದಾರೆ. ಈ ಸಂದರ್ಭದಲ್ಲಿ, ಬಹರೈನ್ ಕನ್ನಡ ಸಂಘವು ಅಗತ್ಯವಿರುವ ಕನ್ನಡಿಗರಿಗಾಗಿ ಹೆಲ್ಪ್ಲೈನ್ ಹಾಗೂ ತಾತ್ಕಾಲಿಕ ಆಶ್ರಯ ವ್ಯವಸ್ಥೆಯನ್ನು ಮಾಡಿದೆ. ತಾಯಿನಾಡಿಗೆ ಮರಳಲು ಬಯಸುವ ಕನ್ನಡಿಗರಿಗಾಗಿ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಸಂಬಂಧಿತ ಅಧಿಕಾರಿಗಳ ಅನುಮತಿ ದೊರೆತ ನಂತರ ರಿಪ್ಯಾಟ್ರಿಯೇಷನ್ (ತವರಿಗೆ ವಾಪಸ್ಸು) ವಿಮಾನ ವ್ಯವಸ್ಥೆ ಮಾಡುವ ಪ್ರಯತ್ನ ನಡೆಯುತ್ತಿದೆ. ಯುದ್ಧ ಪರಿಸ್ಥಿತಿ ಶೀಘ್ರವೇ ಅಂತ್ಯಗೊಳ್ಳಲಿ ಎಂಬ ಆಶಯವಿದ್ದು, ಬಹರೈನ್ ಈ ಪರಿಸ್ಥಿತಿಯನ್ನು ಬೇಗ ದಾಟಿ ಮತ್ತೆ ಸಾಮಾನ್ಯ ಜೀವನ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲಿದೆ ಎಂಬ ವಿಶ್ವಾಸವಿದೆ ಎಂದು ಅಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ | ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿಕೆಗೆ ಮಲ್ಲಿಕಾರ್ಜುನ ಕೋಡ್ಲಿ ಖಂಡನೆ
ಕಲಬುರಗಿ: ಕೋಲಿ ಸಮಾಜವನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವ ವಿಷಯವಾಗಿ ಕುರಿತು ವಿಧಾನಸಭೆಯಲ್ಲಿ ಅವಾಚ್ಯವಾಗಿ ನಿಂದನೆ ಮಾಡಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರ ಹೇಳಿಕೆಗೆ ಕರ್ನಾಟಕ ರಾಜ್ಯ ಕೋಲಿ ಸಂಘರ್ಷ ಸಮಿತಿಯು ಖಂಡಿಸುತ್ತದೆ ಎಂದು ಸಮಿತಿಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಸ್.ಕೋಡ್ಲಿ ಹೇಳಿದರು. ಇತ್ತೀಚೆಗೆ ವಿಧಾನಸಭೆಯಲ್ಲಿ ಮಾತನಾಡಿದ ಶಾಸಕರು, ಕೋಲಿ ಸಮಾಜದವರು ಅತ್ಯಂತ ಹೊಲಸು ನಾರುವ ಜನ, ಬೇರೆಯವರ ಮನೆಯಲ್ಲಿ ಮುಸುರಿ ಭಾಂಡೆ ತಿಕ್ಕುತ್ತಾ ಜೀವನ ಸಾಗಿಸುತ್ತಾರೆ. ಮೀನುಗಳನ್ನು ಹಿಡಿದು ನಂತರ ಬುಟ್ಟಿಯಲ್ಲಿ ತಲೆ ಮೇಲೆ ಇಟ್ಟುಕೊಂಡು ಮಾರಾಟ ಮಾಡುತ್ತಾರೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಈ ಹೇಳಿಕೆಯಿಂದಾಗಿ ಸಮಾಜಕ್ಕೆ ನೋವು ತಂದಿದೆ ಎಂದು ಹೇಳಿದರು. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಒಂದು ಸಮಾಜದ ಕುರಿತು ಮಾತನಾಡುವಾಗ ಬಾಯಿ ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಆದರೆ ಶಾಸಕರು ರಾಜಕೀಯ ಮಾಡುವ ಭರದಲ್ಲಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿಕೊಡುವ ಬದಲು ಮರ್ಯಾದೆ ತೆಗೆಯುವ ಕೆಲಸವನ್ನು ಮಾಡಿದ್ದು, ಇದಕ್ಕೆ ನಮ್ಮ ಕೋಲಿ ಸಮಾಜದ ಧಿಕ್ಕಾರ ಇರುತ್ತದೆ. ಕೂಡಲೇ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಫಜಲಪುರ | ಮಹಿಳೆಯರು ಕಾನೂನು ತಿಳಿಯುವುದು ಅವಶ್ಯಕ: ನ್ಯಾ.ವಿನಾಯಕ ಮಾಯಣ್ಣವರ
ಅಫಜಲಪುರ: ಸಮಾಜದಲ್ಲಿ ಪುರುಷರಷ್ಟೇ ಸರಿ ಸಮಾನವಾಗಿ ಬದುಕಲು ಪ್ರತಿ ಮಹಿಳೆಯರು ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ತಾಲೂಕಾಧ್ಯಕ್ಷ ವಿನಾಯಕ ಮಾಯಣ್ಣವರ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಹಿಳೆ ಸಮಾಜದಲ್ಲಿ ಸರಿಸಮನಾಗಿ ಬದುಕು ಕಟ್ಟಿಕೊಳ್ಳಬೇಕು. ಯಾವುದೇ ಕಾರಣಕ್ಕೂ ದೌರ್ಜನ್ಯ, ಒತ್ತಡಕ್ಕೆ ಒಳಗಾಗಬಾರದು. ಬಾಲ್ಯ ವಿವಾಹ, ಒತ್ತಡದ ಮದುವೆ, ವರದಕ್ಷಿಣೆ ಪಿಡುಗು ಇಂತವುಗಳಿಂದ ಎಚ್ಚರವಾಗಿರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಅನೀಲ ಅಮಾತೆ ಮಾತನಾಡಿ, ಮಹಿಳೆಯರಿಗಾಗಿರುವ ಕಾನೂನುಗಳು ತಿಳಿದುಕೊಂಡು ಪುರುಷರಷ್ಟೇ ಸರಿ ಸಮನಾಗಿ ಬಾಳಬೇಕು. ಸಮಸ್ಯೆಗಳಿಗೆ ತುತ್ತಾದಲ್ಲಿ ಕಾನೂನು ಸೇವಾ ಸಮಿತಿ ಸಲಹೆ ಪಡೆದುಕೊಳ್ಳಬೇಕು ಎಂದರು. ತಹಶೀಲ್ದಾರ್ ಸಂಜೀವಕುಮಾರ ದಾಸರ್, ಸಿಪಿಐ ಲಖನ್ ಮಸಗುಪ್ಪಿ , ಪ್ರಾಚಾರ್ಯ ಡಾ.ಸಂತೋಷ ಹುಗ್ಗಿ, ವಕೀಲ ಸಂಘದ ತಾಲೂಕಾಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿದರು. ನ್ಯಾಯವಾದಿ ಸುಪ್ರೀಯಾ ಅಂಕಲಗಿ, ಸಹಾಯಕ ಸರಕಾರಿ ಅಭಿಯೋಜಕಿ ಜಯಶ್ರೀ ಪಿ ಅವರು ಉಪನ್ಯಾಸ ನೀಡಿದರು. ಸಾಧಕ ಮಹಿಳೆಯರಿಗೆ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ರಾಷ್ಟ್ರೀಯ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀದೇವಿ ಪಾಟೀಲ ಅವರು ಎಂಟು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರವೀಣ ಹೇರೂರ, ಕಾಲೇಜು ಸಿಬ್ಬಂದಿಗಳಾದ ಎಂ.ಎಸ್.ರಾಜೇಶ್ವರಿ, ಡಾ.ಚಿನ್ನಾ ಆಸೆಪ್ಪ, ಡಾ.ವಿನಾಯಕ ಕೆ. ಡಾ.ಭಾರತಿ ಭೂಸಾರೆ, ಡಾ.ಶಾಂತಲಾ, ಡಾ.ಸೂರ್ಯಕಾಂತ ಉಮ್ಮಾಪುರೆ, ಡಾ.ಮಹ್ಮದ್ ಯುನುಸ್, ಡಾ.ದತ್ತಾತ್ರೇಯ ಸಿ.ಹೆಚ್, ಡಾ.ರಾಘವೇಂದ್ರ ಡಿ, ಪ್ರವೀಣ ಸೇಡಂಕರ್, ಡಾ.ಸಂಗಣ್ಣ ಎಂ.ಸಿಂಗೆ, ಹೀರು ರಾಠೋಡ, ಡಾ.ಶಿವಶರಣ, ಸುರೇಶ ಮುಗಳಿ, ಶರಣಬಸವೇಶ್ವರ, ಗೌರಿಶಂಕರ ಸೇರಿದಂತೆ ಅಂಗನವಾಡಿ ಸಹಾಯಕಿಯರು, ವಿದ್ಯಾರ್ಥಿಗಳು ಇದ್ದರು. ಅಂಗನವಾಡಿ ಸಿಬ್ಬಂದಿ ಪೂರ್ಣಿಮಾ ಸುಬೇದಾರ ಸ್ವಾಗತಿಸಿದರು. ಮೇಲ್ವಿಚಾರಕಿ ಶಾರದಾ ಅವಟೆ ನಿರೂಪಿಸಿದರು. ಸಿಡಿಪಿಒ ಪ್ರವೀಣ ಹೇರೂರ ವಂದಿಸಿದರು.
ಕಲಬುರಗಿ | ಮಾ.18 ರಿಂದ ಎಸೆಸೆಲ್ಸಿ ಪರೀಕ್ಷೆ; ಅಕ್ರಮಕ್ಕೆ ಅವಕಾಶ ಬೇಡ: ರಾಯಪ್ಪ ಹುಣಸಗಿ
ಕಲಬುರಗಿ: ಪ್ರಸಕ್ತ 2025–26ನೇ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆ-1 ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಜಿಲ್ಲೆಯ 141 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯ ವೇಳೆ ಯಾವುದೇ ರೀತಿಯ ನಕಲು ಚಟುವಟಿಕೆಗಳಿಗೆ ಅವಕಾಶ ಕೊಡಬಾರದು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಾಧಿಕಾರಿಗಳು ಹಾಗೂ ವೀಕ್ಷಕರೊಂದಿಗೆ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಒಟ್ಟು 51,744 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ. ನಕಲು ಪ್ರಕರಣಗಳು ವರದಿಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪರೀಕ್ಷೆ ಸುಗಮವಾಗಿ ನಡೆಯಲು 141 ಪರೀಕ್ಷಾ ಕೇಂದ್ರಗಳಿಗೆ ತಲಾ ಒಬ್ಬರಂತೆ ಸ್ಥಳೀಯ ಜಾಗೃತ ಸದಸ್ಯರನ್ನು ನೇಮಿಸಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆಗಾಗಿ 53 ಅಧಿಕಾರಿಗಳನ್ನು ಮಾರ್ಗಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಝೆರಾಕ್ಸ್ ಹಾಗೂ ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಪರೀಕ್ಷೆ ಆರಂಭಕ್ಕೂ ಮುನ್ನ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಹಾಗೂ ಆಸನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯಬಾರದು. ಪ್ರತಿ ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಹೇಳಿದರು. ಸಿ.ಸಿ.ಟಿ.ವಿ., ವೆಬ್ಕಾಸ್ಟಿಂಗ್ ವ್ಯವಸ್ಥೆ : ಪರೀಕ್ಷೆ ಸಂದರ್ಭದಲ್ಲಿ ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರವು ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿ ಇರಲಿದ್ದು, ಜಿಲ್ಲಾ ಕೇಂದ್ರದಿಂದ ವೆಬ್ಕಾಸ್ಟಿಂಗ್ ಮೂಲಕ ಪರೀಕ್ಷೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಕಾರ್ಯಕ್ಕಾಗಿ 25 ತಂಡಗಳನ್ನು ರಚಿಸಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಎಸ್.ಪಿ.ಮಹೇಶ ಮೇಘಣ್ಣನವರ್, ಡಿ.ಸಿ.ಪಿ ಪ್ರವೀಣ ಎಚ್. ನಾಯಕ್, ಡಿ.ಡಿ.ಪಿ.ಐ ಶಂಕ್ರಮ್ಮ ಡವಳಗಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಇದ್ದರು.
ಕಲಬುರಗಿ | ಕಲಾಕೃತಿಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತವೆ : ಬಿರಾದಾರ್
ಕಲಬುರಗಿ: ಚಿತ್ರಕಲಾಕೃತಿಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತವೆ. ತನ್ಮೂಲಕ ಮಾನವನ ಜೀವನವನ್ನು ಉತ್ತಮ ಪಡಿಸುತ್ತವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಅವರು ಹೇಳಿದರು. ನಗರದ 'ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿ'ಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಏರ್ಪಡಿಸಿದ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಸಾಮಾನ್ಯವಾಗಿ ಬಹಳಷ್ಟು ಜನ ಕಲಾವಿದರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುತ್ತಾರೆ. ಎಲ್ಲೋ ಒಬ್ಬಿಬ್ಬರು ಕಲಾಕೃತಿಗಳ ಮಾರಾಟದಿಂದ ಆರ್ಥಿಕವಾಗಿ ಸೂಸ್ಥಿತಿಯಲ್ಲಿರಬಹುದು. ಕಲಾ ಪರಿಕರಗಳನ್ನು ತಯಾರಿಸಿ ಮಾರುವವರು ಯಾವಾಗಲೂ ಶ್ರೀಮಂತರಾಗುತ್ತಾರೆ, ಆದರೆ ಕಲಾವಿದರೇಕೆ ಶ್ರೀಮಂತರಾಗಬಾರದು! ಕಲಾವಿದರು ಮೊದಲು ಆರ್ಥಿಕವಾಗಿ ಚೇತರಿಸಕೊಳ್ಳುವಂತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯದ ಪ್ರೊ.ವಿಕ್ರಮ ವಿಸಾಜಿ ಅವರು ಮಾತನಾಡಿ, 'ಕಲಾವಿದರ ಮನಸ್ಸು ಬಹಳ ಸೂಕ್ಷಷ್ಮವಾಗಿರುತ್ತದೆ, ಅವರು ಪ್ರತಿಯೊಂದನ್ನು ಭಾವುಕ ಆಯಾಮಗಳಿಂದ ನೊಡಿ ತಮ್ಮ ಕಲಾಕೃತಿಗಳ ಮೂಲಕ ಅಭಿವ್ಯಕ್ತಿಸುತ್ತಾರೆ' ಎಂದರು. ಕಲಬುರಗಿಯು ಕಲಾವಿದರ ತಾಣವಾಗಿದ್ದು, ಇಲ್ಲಿ ಕಲೆಯ ಹದಗೊಂಡ ನೆಲದೆ, ಅಂತೆಯೇ ಕೇಂದ್ರೀಯ ವಿವಿಯಲ್ಲಿ ಕೂಡ ಒಂದು ಸ್ವತಂತ್ರ ವಿಭಾಗ ಆರಂಭವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರು, ಕಲಾವಿದರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಿತ್ತಾಪುರ | ಸರ್ವರು ಸಮಾನರು ಎನ್ನುವ ಮನೋಭಾವನೆ ಇರಬೇಕು: ಬಸವರಾಜ ದೇಶಮುಖ
ಚಿತ್ತಾಪುರ: ಸರ್ವರು ಸಮಾನರು ಎನ್ನುವ ಮನೋಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು ಎಂದು ವರುಣ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ದೇಶಮುಖ ಹೇಳಿದರು. ಪಟ್ಟಣದ ವರುಣ ನಗರದಲ್ಲಿ ವರುಣ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಮಾತನಾಡಿದ ಅವರು, ಜಾತಿ ಧರ್ಮ ಎನ್ನುವ ಬದಲು ಮಾನವ ಧರ್ಮದವರು ಎಂದು ತಿಳಿದು ನಡೆದರೆ ಯಾವುದೇ ಸಮಸ್ಯೆಗಳು ಬರಲ್ಲ ಎಂದರು. ಇಫ್ತಾರ್ ಕೂಟದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಪಾಲ್ಗೊಂಡು ಕೋಮು ಸೌಹಾರ್ದತೆ, ಸಹೋದರತ್ವ ಭಾವನೆಯನ್ನು ಸಾರಿದರು. ರಮಝಾನ್ ಪ್ರಯುಕ್ತ ರೋಜಾನಿರತ ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬಂದು, ಬಸವರಾಜ ದೇಶಮುಖ ಅವರು ಏರ್ಪಡಿಸಿದ್ದ ಪ್ರೀತಿಯ ಇಫ್ತಾರ್ ಕೂಟದಲ್ಲಿ ಖರ್ಜೂರ, ಸೇಬು, ಬಾಳೆಹಣ್ಣು, ಕಲ್ಲಂಗಡಿ, ಖರ್ಬೂಜ್, ಬಜಿ, ಪೈನಾಪಲ್, ಆರೇಂಜ್, ಅಂಗುರು ಸೇರಿದಂತೆ ಇತರೇ ಹಣ್ಣುಗಳು ಸವಿದು ಸಂತಸ ಪಟ್ಟರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಜಯಂತ ಕುಲಕರ್ಣಿ, ಉಪಾಧ್ಯಕ್ಷ ಶೇಖ ಜಾಫರ್, ಖಜಾಂಚಿ ಕಲ್ಯಾಣರಾವ ಭಕ್ತಿ, ವಸಂತ, ಮರಲಿಂಗ ದೊಡ್ಮನಿ, ಅಶೋಕರೆಡ್ಡಿ ಅಲ್ಲೂರ್.ಕೆ, ಶರಣು, ಶಿವರಾಜ, ಅಂಬ್ರೀಶ, ಶರಣಗೌಡ, ಡಾ. ಭೀಮಶೇನ್ ರೆಡ್ಡಿ, ಮೌನೇಶ ದೇವುರ್ ಸೇರಿದಂತೆ ಅನೇಕ ಮುಖಂಡರು ಹಾಗೂ ವರುಣ ನಗರದ ನಿವಾಸಿಗಳು ಇದ್ದರು.
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ
ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಯುದ್ಧ ಸಂಘರ್ಷದಿಂದ ಜಾತಿಕವಾಗಿ ಆರ್ಥಿಕತೆಗೆ ಹಾನಿ ಎದುರಾಗುವ ನಿರೀಕ್ಷೆ ನಡುವೆ ಅನೇಕ ರಾಷ್ಟ್ರಗಳ ತೈಲ ಪೂರೈಕೆಯಲ್ಲಿ ಅಡಚಣೆಗಳು ಉಂಟಾಗಿದೆ. ಇಂಧನ ಸಂರಕ್ಷಣೆಗಾಗಿ ಐಟಿ ಕಚೇರಿಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ನೌಕರರಿಗೆ ವರ್ಕ್ ಫ್ರಂ ಹೋಮ್ಗೆ ಆದ್ಯತೆ ನೀಡಲಾಗುತ್ತಿದೆ. ಇಂಧನ, ಅಡುಗೆ ಅನಿಲ ಮಾರಾಟದಲ್ಲಿ ಮಿತಿ ಹೇರಿಕೆ, ಶಾಲೆಗಳಿಗೆ ರಜೆ ಘೋಷಣೆಯಂತಹ ನಿಯಮಗಳನ್ನು ವಿವಿಧ ದೇಶಗಳು ಕೈಗೊಳ್ಳುತ್ತಿವೆ.
ಕಲಬುರಗಿ | ಮಹತ್ವಾಕಾಂಕ್ಷೆ ತಾಲೂಕುಗಳಲ್ಲಿ ಶೇ.100 ಸಾಂಸ್ಥಿಕ ಹೆರಿಗೆ: ನೀತಿ ಆಯೋಗದಿಂದ ಜಿಲ್ಲಾಡಳಿತಕ್ಕೆ ಮೆಚ್ಚುಗೆ
ಕಲಬುರಗಿ: ಮಹತ್ವಾಕಾಂಕ್ಷೆ ತಾಲೂಕುಗಳಲ್ಲಿ ಪ್ರಸವ ಪೂರ್ವ ನೋಂದಣಿ ಹಾಗೂ ಸಾಂಸ್ಥಿಕ ಹೆರಿಗೆಯಲ್ಲಿ ಶೇ.100 ಪ್ರಗತಿ ಸಾಧಿಸಿರುವುದಕ್ಕೆ ಕಲಬುರಗಿ ಜಿಲ್ಲಾಡಳಿತದ ಕಾರ್ಯಕ್ಕೆ ನೀತಿ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸೋಮವಾರ ನಡೆದ “ಬದಲಾವಣೆಯ ದಕ್ಷಿಣ ವೇಗವರ್ಧಕಗಳು” ಎಂಬ ಘೋಷವಾಕ್ಯದಡಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ನಾವೀನ್ಯತೆಗಳು ಮತ್ತು ಉತ್ತಮ ಅಭ್ಯಾಸಗಳ ಕುರಿತ ಪ್ರಾದೇಶಿಕ ಕಾರ್ಯಾಗಾರದಲ್ಲಿ ಈ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನಮ್ ಅವರು, ಜಿಲ್ಲೆಯ ಕಾಳಗಿ, ಅಫಜಲಪುರ ಹಾಗೂ ಶಹಾಬಾದ್ ತಾಲೂಕುಗಳಲ್ಲಿ ಗರ್ಭಧಾರಣೆ ಪತ್ತೆಯಾದ ಬಳಿಕ ಮೊದಲನೇ ತ್ರೈಮಾಸಿಕದಲ್ಲೇ ಪ್ರಸವ ಪೂರ್ವ ನೋಂದಣಿ ಮಾಡಲಾಗುತ್ತಿದೆ. ಜೊತೆಗೆ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಒದಗಿಸಿ ಶೇ.100ರಷ್ಟು ಸಾಂಸ್ಥಿಕ ಹೆರಿಗೆ ಮಾಡಿಸಲಾಗುತ್ತಿದೆ ಎಂದು ಜಿಲ್ಲೆಯ ಉತ್ತಮ ಅಭ್ಯಾಸಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಈ ಉತ್ತಮ ಕಾರ್ಯಕ್ಕೆ ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ರೋಹಿತ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ, ಇದನ್ನು ಇತರ ಜಿಲ್ಲೆಗಳಲ್ಲೂ ಅನುಸರಿಸಬಹುದಾದ ಮಾದರಿಯಾಗಿದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ನೆರೆಯ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕೇಂದ್ರಾಡಳಿತ ಪ್ರದೇಶದ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು. ಮಹತ್ವಾಕಾಂಕ್ಷೆಯ ತಾಲೂಕುಗಳಾದ ಅಫಜಲಪೂರ, ಶಹಾಬಾದ್ ಹಾಗೂ ಕಾಳಗಿ ಬ್ಲಾಕ್ಗಳಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ನವೀನ ಆಡಳಿತ ಕ್ರಮಗಳಿಗೆ 2025ರ ನವೆಂಬರ್ನಲ್ಲಿಯೂ ನೀತಿ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದಲ್ಲದೆ ಶಿಕ್ಷಣ, ಆರೋಗ್ಯ, ಕೌಶಲ್ಯ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಜನರ ಜೀವನಮಟ್ಟ ಸುಧಾರಣೆಗಾಗಿ ಕೈಗೊಂಡ ಕ್ರಮಗಳ ಪರಿಣಾಮವಾಗಿ 2024ರ ಆಗಸ್ಟ್ನಲ್ಲಿ ಪ್ರಕಟಿಸಿದ ಡೆಲ್ಟಾ ರ್ಯಾಂಕ್–2024 ಪಟ್ಟಿಯಲ್ಲಿ ದಕ್ಷಿಣ ಭಾರತ ವಲಯದಡಿ ಕಾಳಗಿ ತಾಲೂಕು ಎರಡನೇ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.
ಇರಾನ್ ನೂತನ ಸರ್ವಾಧಿಕಾರಿ ಮೇಲೆ ಅಮೆರಿಕ ಕಣ್ಣು, ಖಮೇನಿ ಪುತ್ರನ ಬಗ್ಗೆ ಚರ್ಚೆ ಶುರು | Operation Roaring Lion
ಇರಾನ್ ಯುದ್ಧ ಎಲ್ಲವನ್ನೂ ಸರ್ವನಾಶ ಮಾಡಿ ಹಾಕುತ್ತಿದ್ದು, ನೋಡ ನೋಡುತ್ತಲೇ ಇಡೀ ಜಗತ್ತಿನ ಆರ್ಥಿಕ ಪರಿಸ್ಥಿತಿ ತುಂಡು ತುಂಡಾಗಿ ಹೋಗುತ್ತಿದೆ. ಎಲ್ಲಿ ನೋಡಿದರೂ ಬರೀ ಯುದ್ಧದ ಮಾತು &ಭಯ ಕಾಡುತ್ತಾ ಇದೆ ಈಗ. ಅದರಲ್ಲೂ 3ನೇ ಮಹಾಯುದ್ಧದ ಭೀತಿ ಕೂಡ ಕಾಡುತ್ತಿದ್ದು, ಈ ಬಾರಿ ಯುರೋಪ್ ಬದಲು ಮಧ್ಯಪ್ರಾಚ್ಯ ಭಾಗದಲ್ಲೇ 3ನೇ ಮಹಾಯುದ್ಧಕ್ಕೆ ಮುನ್ನುಡಿ ಶುರುವಾಗಿದೆ
PM Kisan 22ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್, ಇಲ್ಲಿದೆ ಸಂಪೂರ್ಣ ಮಾಹಿತಿ
ನವದೆಹಲಿ: ದೇಶದ ಕೋಟ್ಯಂತರ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಮುಂದಿನ ಕಂತಿನ ಹಣ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಕೃಷಿ ವಲಯದ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವಾರ ಬಿಡುಗಡೆ
ಟ್ರೇಸ್ಎಕ್ಸ್ ಲ್ಯಾಬ್ಸ್ AI ಆಧಾರಿತ ಸೈಬರ್ ಸುರಕ್ಷತಾ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ
URL X ಎಂಟರ್ಪ್ರೈಸ್ ಪ್ಲಾಟ್ಫಾರ್ಮ್ ಮತ್ತು TraceX Guard ಮೊಬೈಲ್ ಸುರಕ್ಷತಾ ಆಪ್ ಫಿಶಿಂಗ್, ಮಾಲ್ವೇರ್ ಮತ್ತು ಆನ್ಲೈನ್ ಮೋಸಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ
ಬೀದರ್: ಅಂಗನವಾಡಿಗಳಿಗೆ ಆಹಾರ ಪೂರೈಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ವಿರುದ್ಧ ತನಿಖೆ ನಡೆಸುವಂತೆ ಕಲಬುರಗಿ ಹೈಕೋರ್ಟ್ ಪೀಠವು ಲೋಕಾಯುಕ್ತಕ್ಕೆ ಆದೇಶ ನೀಡಿದೆ. ದೀಪಕ್ ಪಾಟೀಲ ಚಾಂದೋರಿ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜೀತ್ ಶೆಟ್ಟಿ ಅವರು ಮಾರ್ಚ್ 5ರಂದು ಈ ಆದೇಶ ಹೊರಡಿಸಿದ್ದು, ಭ್ರಷ್ಟಾಚಾರದ ದೂರಿನ ಕುರಿತು ಒಂದು ತಿಂಗಳೊಳಗೆ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಔರಾದ್ ಕ್ಷೇತ್ರದ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಕೆಯ ಟೆಂಡರ್ ನೀಡುವುದಕ್ಕೆ ಪ್ರತಿಯಾಗಿ ಸುಂದ್ರಮ್ಮ ಟ್ರೇಡಿಂಗ್ ಕಂಪನಿಯಿಂದ ಸುಮಾರು 1 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ದೀಪಕ್ ಪಾಟೀಲ್ ಚಾಂದೋರಿ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು, ಸುಂದ್ರಮ್ಮ ಟ್ರೇಡಿಂಗ್ ಕಂಪನಿ ಹಾಗೂ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು 2025ರ ನ.10ರಂದು ಲೋಕಾಯುಕ್ತ ಎಡಿಜಿಪಿ ಹಾಗೂ ಬೀದರ್ ಡಿವೈಎಸ್ಪಿ ಅವರಿಗೆ ದೂರು ಸಲ್ಲಿಸಿದ್ದರು. ಆದರೆ ದೂರಿನ ಕುರಿತು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು 2026ರ ಫೆ.2ರಂದು ಕಲಬುರಗಿ ಹೈಕೋರ್ಟ್ ಪೀಠದ ಮೊರೆ ಹೋಗಿದ್ದರು. ಶಾಸಕರು ಅಂಗನವಾಡಿ ಆಹಾರ ಪೂರೈಕೆಯಲ್ಲಿ ಲಂಚ ಪಡೆದಿರುವ ಬಗ್ಗೆ ತಾವು ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಕಲಬುರಗಿ ಹೈಕೋರ್ಟ್ ಪೀಠದ ಆದೇಶದಿಂದ ಸಮಾಧಾನವಾಗಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಗೌರವ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣದಲ್ಲಿ ಸತ್ಯಕ್ಕೆ ಜಯ ಸಿಗಲಿದೆ. ಮುಗ್ಧ ಮಕ್ಕಳ ಆಹಾರದಲ್ಲೂ ಭ್ರಷ್ಟಾಚಾರ ಎಸಗಿರುವವರಿಗೆ ಮಕ್ಕಳ ಶಾಪ ತಟ್ಟಲಿದೆ. - ದೀಪಕ್ ಪಾಟೀಲ್ ಚಾಂದೋರಿ.
Explained: ಏನಿದು ಯೂಥನೇಷಿಯಾ? ಮರಣದ ಹಕ್ಕಿಗೆ ಬುನಾದಿ ಹಾಕಿದ ಅರುಣಾ ಶಾನ್ಬಾಗ್ ಮನಕಲಕುವ ಘಟನೆ ಬಲ್ಲಿರಾ?
ಅದು ಬರೋಬ್ಬರಿ ನಾಲ್ಕು ದಶಕಗಳ ನೋವು. ಅದೊಂದು ಭೀಕರ ಘಟನೆಯಿಂದ ಅರುಣಾ ಶಾನ್ಬಾಗ್ ಹಾಸಿಗೆ ಹಿಡಿದುಬಿಟ್ಟರು. ಮಾತು, ಗ್ರಹಿಕೆ, ಚಲನ-ವಲನ ಸಂಪೂರ್ಣವಾಗಿ ನಿಂತುಹೋಯ್ತು. ಅರುಣಾ ಶಾನ್ಬಾಗ್ಗೆ ಗೌರವಯುವ ಮರಣದ ಹಕ್ಕು ಸಿಗಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವರು ಓರ್ವ ಪತ್ರಕರ್ತೆ. ಆ ಮೂಲಕ ಪ್ಯಾಸಿವ್ ಯೂಥನೇಷಿಯಾ ಭಾರತದಲ್ಲಿ ಮಾನ್ಯತೆ ಪಡೆಯಿತು. ಅಷ್ಟಕ್ಕೂ, ಏನಿದು ಪ್ಯಾಸಿವ್ ಯೂಥನೇಷಿಯಾ? ಅರುಣಾ ಶಾನ್ಬಾಗ್ ಪ್ರಕರಣದ ಹಿನ್ನಲೆಯೇನು? ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…
Enhypen ತಂಡದಿಂದ ಹೀಸುಂಗ್ ಎಕ್ಸಿಟ್: ಹೀಸುಂಗ್ ನಿರ್ಗಮನದ ಸುದ್ದಿಗೆ ಅಭಿಮಾನಿಗಳು ಆಕ್ರೋಶ!
ENHYPEN ತಂಡದ ಸದಸ್ಯ ಹೀಸುಂಗ್( Heeseung) ಸದ್ಯ ತನ್ನ ಸೋಲೊ ಕರಿಯರ್ ಮೇಲೆ ಹೆಚ್ಚಾಗಿ ಫೋಕಸ್ ಮಾಡುವ ನಿಟ್ಟಿನಲ್ಲಿ ತಂಡವನ್ನು ತೊರೆದಿದ್ದಾರೆ. ಈ ಕುರಿತು ENHYPEN ಏಜೆನ್ಸಿಯಾಗಿರುವ Belift Lab ಸಹ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯುವಂತೆ ಫ್ಯಾನ್ಸ್ ಒತ್ತಾಯಿಸಿದ್ದು, ಇಲ್ಲದಿದ್ದರೆ ಟ್ರಕ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ..
ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರುತ್ತಿದ್ದ ಥಾಯ್ ಸರಕು ಹಡಗಿಗೆ ದಾಳಿ; 20 ಸಿಬ್ಬಂದಿ ರಕ್ಷಣೆ
ಹೊಸದಿಲ್ಲಿ: ಗುಜರಾತ್ ಕಡೆಗೆ ಸಾಗುತ್ತಿದ್ದ ಥಾಯ್ ಧ್ವಜ ಹೊತ್ತ ಸರಕು ಹಡಗಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸ್ಪೋಟಕವೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, 20 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಮೂವರು ಸಿಬ್ಬಂದಿ ಇನ್ನೂ ಹಡಗಿನಲ್ಲಿಯೇ ಉಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ಮತ್ತು India Today ವರದಿ ಮಾಡಿದೆ. ‘ಮಯೂರಿ ನಾರಿ’ ಎಂದು ಗುರುತಿಸಲಾದ ಈ ಬೃಹತ್ ನೌಕೆ ಬುಧವಾರ ಒಮಾನ್ ನ ಉತ್ತರ ಕರಾವಳಿಯಿಂದ ಸುಮಾರು 11 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಕಡಲ ಭದ್ರತಾ ಮೂಲಗಳು ಹಾಗೂ ship tracking data ತಿಳಿಸಿವೆ. ಮಾರ್ಚ್ 11ರಂದು ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಈ ಸರಕು ಹಡಗಿಗೆ ಸ್ಪೋಟಕ ಡಿಕ್ಕಿ ಹೊಡೆದಿದೆ ಎಂದು ರಾಯಲ್ ಥಾಯ್ ನೌಕಾಪಡೆ ಹಾಗೂ United Kingdom Maritime Trade Operations ವರದಿ ಮಾಡಿವೆ. ಡಿಕ್ಕಿಯ ನಂತರ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಅದನ್ನು ನಿಯಂತ್ರಣಕ್ಕೆ ತರಲಾಗಿದೆ. ಚಿತ್ರಗಳು ಹಾಗೂ ಕಡಲ ದಾಖಲೆಗಳ ಪರಿಶೀಲನೆಯ ಮೂಲಕ ಹಡಗು ಥಾಯ್ ಧ್ವಜ ಹೊತ್ತಿರುವ ಬೃಹತ್ ನೌಕೆ ‘ಮಯೂರಿ ನಾರಿ’ ಎಂಬುದು ದೃಢಪಟ್ಟಿದೆ. ಅಂತರರಾಷ್ಟ್ರೀಯ ಕಡಲ ಸಂಸ್ಥೆ (IMO) ಸಂಖ್ಯೆಯೊಂದಿಗೆ ಹಡಗಿನ ಹಲ್ ಮತ್ತು ಸೂಪರ್ ಸ್ಟ್ರಕ್ಚರ್ ವಿವರಗಳನ್ನು ಹೋಲಿಸಿ ಈ ಗುರುತು ದೃಢಪಡಿಸಲಾಗಿದೆ. ಕಡಲ ದಾಖಲೆಗಳ ಪ್ರಕಾರ ಈ ಹಡಗು ‘ಪ್ರೆಷಿಯಸ್ ಶಿಪ್ಪಿಂಗ್’ ಕಂಪೆನಿಯ ಒಡೆತನದಲ್ಲಿದೆ. ಘಟನೆಯ ಬಳಿಕ ಒಮಾನ್ ನೌಕಾಪಡೆಯು ಆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಹಡಗಿನಲ್ಲಿದ್ದ ಒಟ್ಟು 23 ಸಿಬ್ಬಂದಿಗಳಲ್ಲಿ 20 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಉಳಿದ ಮೂವರು ಸಿಬ್ಬಂದಿ ಇನ್ನೂ ಹಡಗಿನಲ್ಲಿಯೇ ಇದ್ದಾರೆ. ಮೂವರು ಸಿಬ್ಬಂದಿಯ ಸ್ಥಿತಿ ಅಥವಾ ಹಡಗಿಗೆ ಉಂಟಾದ ಹಾನಿಯ ಪ್ರಮಾಣದ ಬಗ್ಗೆ ಅಧಿಕಾರಿಗಳು ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ. ಕಡಲ ಟ್ರ್ಯಾಕಿಂಗ್ ವ್ಯವಸ್ಥೆಗಳ ದತ್ತಾಂಶ ಪ್ರಕಾರ ಈ ಘಟನೆ ಒಮಾನ್ ನ ಉತ್ತರ ಕರಾವಳಿಯಲ್ಲಿ, ಜಾಗತಿಕವಾಗಿ ಅತ್ಯಂತ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯೊಳಗೆ ಸಂಭವಿಸಿದೆ. ಮಾರ್ಚ್ 11ರಂದು ದಾಖಲಾದ ಹಡಗಿನ ಕೊನೆಯ ದತ್ತಾಂಶಗಳು ಅದು ಒಮಾನ್ ಕರಾವಳಿಯಿಂದ ಸುಮಾರು 11 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದುದನ್ನು ಸೂಚಿಸುತ್ತದೆ.
ವಾಷಿಂಗ್ಟನ್ ಡಿಸಿಯಲ್ಲಿ ಪ್ರತ್ಯಕ್ಷವಾದ ಟೈಟಾನಿಕ್ ಭಂಗಿಯ ಟ್ರಂಪ್–ಎಪ್ಸ್ಟೀನ್ ಪ್ರತಿಮೆ!
ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಶಿಕ್ಷೆಗೆ ಒಳಗಾದ ಮಕ್ಕಳ ಮೇಲಿನ ಲೈಂಗಿಕ ಪ್ರಕರಣಗಳ ಅಪರಾಧಿ ಜೆಫ್ರಿ ಎಪ್ಸ್ಟೀನ್ ನನ್ನು ಹೋಲುವ ವ್ಯಕ್ತಿಗಳನ್ನು ಒಳಗೊಂಡ ಪ್ರತಿಭಟನಾ ಕಲಾ ಪ್ರತಿಮೆ ವಾಷಿಂಗ್ಟನ್ ಡಿಸಿಯ ಐಕಾನಿಕ್ ನ್ಯಾಷನಲ್ ಮಾಲ್ ಪಾರ್ಕ್ ನಲ್ಲಿ ಕಾಣಿಸಿಕೊಂಡಿದ್ದು ಸಾರ್ವಜನಿಕರ ಗಮನ ಸೆಳೆದಿದೆ. ಟೈಟಾನಿಕ್ ಸಿನಿಮಾದ ಪ್ರಸಿದ್ಧ ಭಂಗಿಯನ್ನು ಹೋಲುವ ರೀತಿಯಲ್ಲಿ ಟ್ರಂಪ್ ಮತ್ತು ಎಪ್ಸ್ಟೀನ್ ಪ್ರತಿಮೆಗಳು ನಿಂತಿರುವಂತೆ ಈ ಕಲಾಕೃತಿಯನ್ನು ರೂಪಿಸಲಾಗಿದೆ. ಇದನ್ನು ‘ಸೀಕ್ರೆಟ್ ಹ್ಯಾಂಡ್ ಶೇಕ್’ ಎಂದು ಕರೆಯಲ್ಪಡುವ ಕಲಾವಿದರ ಸಾಮೂಹಿಕ ತಂಡ ನಿರ್ಮಿಸಿದೆ ಎಂದು ವರದಿಯಾಗಿದೆ. ಈ ವಾರದ ಆರಂಭದಲ್ಲಿ ಈ ಪ್ರತಿಮೆ ಕಾಣಿಸಿಕೊಂಡಿದೆ. ಟ್ರಂಪ್ ಮತ್ತು ಜೆಫ್ರಿ ಎಪ್ಸ್ಟೀನ್ ನಡುವಿನ ಸಂಬಂಧಗಳ ಬಗ್ಗೆ ಅಮೆರಿಕದಲ್ಲಿ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಇದು ಗಮನ ಸೆಳೆಯುತ್ತಿದೆ. ಎಪ್ಸ್ಟೀನ್ ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಅಮೆರಿಕ ರಾಜಧಾನಿಯಲ್ಲಿ ಇತ್ತೀಚೆಗೆ ಇದೇ ರೀತಿಯ ಪ್ರತಿಭಟನಾ ಕಲಾಕೃತಿಗಳ ಸರಣಿ ಕಾಣಿಸಿಕೊಂಡಿದೆ. ಕಳೆದ ವಾರ ವಾಷಿಂಗ್ಟನ್ ಡಿಸಿಯ ಫರಾಗುಟ್ ಸ್ಕ್ವೇರ್ ನಲ್ಲಿ ‘ಜೆಫ್ರಿ ಎಪ್ಸ್ಟೀನ್ ವಾಕ್ ಆಫ್ ಶೇಮ್’ ಎಂಬ ಪ್ರದರ್ಶನ ಕಾಣಿಸಿಕೊಂಡಿತ್ತು. ಹಾಲಿವುಡ್ ವಾಕ್ ಆಫ್ ಫೇಮ್ ಮಾದರಿಯಲ್ಲಿ ನಿರ್ಮಿಸಲಾದ ಈ ಪ್ರದರ್ಶನದಲ್ಲಿ ರಾಜಕಾರಣಿಗಳು, ಬಿಲಿಯನೇರ್ಗಳು ಮತ್ತು ಎಪ್ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ವರದಿಯಾದ ಇತರ ವ್ಯಕ್ತಿಗಳ ಹೆಸರುಗಳನ್ನು ಪ್ರದರ್ಶಿಸಲಾಗಿತ್ತು. ಇದಕ್ಕೂ ಮೊದಲು ಸೆಪ್ಟೆಂಬರ್ ನಲ್ಲಿ ‘ಬೆಸ್ಟ್ ಫ್ರೆಂಡ್ಸ್ ಫಾರೆವರ್’ ಎಂಬ ಶೀರ್ಷಿಕೆಯ ಮತ್ತೊಂದು ಕಲಾಕೃತಿ ನ್ಯಾಷನಲ್ ಮಾಲ್ ನಲ್ಲಿ ಕಾಣಿಸಿಕೊಂಡಿತ್ತು. ಟ್ರಂಪ್ ಮತ್ತು ಎಪ್ಸ್ಟೀನ್ ಕೈ ಹಿಡಿದಿರುವಂತೆ ತೋರಿಸುವ ಸ್ಪ್ರೇ–ಪೇಂಟ್ ಮಾಡಿದ ಕಂಚಿನ ಪ್ರತಿಮೆಯನ್ನು ಕೂಡ ಇದೇ ‘ಸೀಕ್ರೆಟ್ ಹ್ಯಾಂಡ್ಶೇಕ್’ ಕಲಾವಿದರ ಗುಂಪು ನಿರ್ಮಿಸಿದೆ ಎಂದು ಹೇಳಲಾಗಿದೆ.
ಕುಂದಾಪುರ| ಕೊರಗ ಸಮುದಾಯದ ವ್ಯಕ್ತಿಯನ್ನು ಜೀತಕ್ಕೆ ದುಡಿಸಿ ದೌರ್ಜನ್ಯ ಪ್ರಕರಣ: ಆರೋಪಿ ಮಹಿಳೆ ಸೆರೆ
ಕುಂದಾಪುರ, ಮಾ.11: ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ಎಂಬಲ್ಲಿ ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು ಮನೆಯಲ್ಲಿ ಜೀತಕ್ಕೆ ದುಡಿಸಿ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಹೆಮ್ಮಾಡಿ ಕಬೈಲು ಉಳಿಯಾರ ನಿವಾಸಿ ಕರುಣಾಕರ ಶೆಟ್ಟಿ ಎಂಬವರ ಪತ್ನಿ ರಜನಿ ಶೆಟ್ಟಿ ಬಂಧಿತ ಆರೋಪಿ. ಕನ್ಯಾನ ಗ್ರಾಮದ ಕೊರಗ ಸಮುದಾಯದ ನಾಗ (65) ಎಂಬವರನ್ನು ರಜನಿ ಶೆಟ್ಟಿ ಮತ್ತು ಅವರ ಅಳಿಯ ಮನೆಯಲ್ಲಿ ದನ ಕಾಯಲು, ತೋಟದ ಕೆಲಸ ಮಾಡಲು ಸೇರಿಸಿಕೊಂಡಿದ್ದರು. ಇವರು ನಾಗ ಅವರಿಂದ ದನ, ಎಮ್ಮೆ, ಸೆಗಣಿ ತೆಗೆಯುವುದು, ಗದ್ದೆ ಕೆಲಸ, ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುತ್ತಿದ್ದರು. ಇವರು ನಾಗ ಅವರನ್ನು 30 ವರ್ಷಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದು, ಸರಿಯಾದ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಭೂತ ಸೌಕರ್ಯ ಕೊಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸುತ್ತಿದ್ದರು ಎಂದು ದೂರಲಾಗಿದೆ. ನಾಗ ಅವರಿಗೆ ಸಂಬಳ ಕೊಡದೆ ಮನೆಯಿಂದ ಹೊರಗಡೆ ಹೋಗಲು ಬಿಡದೆ ದೌರ್ಜನ್ಯ ಎಸಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ ಆರೋಪಿ ಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಸ್ತುತ ಆರೋಪಿ ಮಂಗಳೂರು ಜಿಲ್ಲಾ ಕಾರಾ ಗೃಹದಲ್ಲಿದ್ದಾರೆ ಎಂದು ತಿಳಿದುಬಂದಿದೆ. ನೊಂದ ವ್ಯಕ್ತಿ ನಾಗ ಅವರನ್ನು ಮುಂದಿನ ಪುರ್ನವಸತಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯ್ಕ್, ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರು, ಕುಂದಾಪುರ ಉಪ ತಹಶೀಲ್ದಾರರು, ಹಟ್ಟಿಯಂಗಡಿ ಗ್ರಾಪಂನ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ | ಸಾಗಾಟ ಸಮಸ್ಯೆಯಿಂದ ದುಬಾರಿಯಾಗಲಿರುವ ಸ್ಮಾರ್ಟ್ ಫೋನ್ ಗಳು!
ಯುದ್ಧವು ಮುಂದುವರಿದಲ್ಲಿ ಸ್ಮಾರ್ಟ್ಫೋನ್ ತಯಾರಕರು ಪರ್ಯಾಯ ವೈಮಾನಿಕ ಮಾರ್ಗಗಳನ್ನು ಹುಡುಕಬೇಕಾಗುತ್ತದೆ ಮತ್ತು ಅದರಿಂದ ಬೆಲೆಯೇರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ RAM ಮತ್ತು ಸ್ಟೋರೇಜ್ ಚಿಪ್ಗಳ ಕೊರತೆಯನ್ನು ಎದುರಿಸುತ್ತಿರುವ ಸ್ಮಾರ್ಟ್ಫೋನ್ ಉದ್ಯಮವು ಇದೀಗ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ದೀರ್ಘಕಾಲೀನ ಸಂಘರ್ಷದ ಕಾರಣ ಸರಕುಗಳ ಸಾಗಾಟಕ್ಕೆ ತೊಂದರೆಯನ್ನೂ ಎದುರಿಸುತ್ತಿದೆ. ಸಾಗರದಲ್ಲಿ ಸರಕುಗಳನ್ನು ಸಾಗಿಸುವುದಕ್ಕಿಂತ ವಾಯುಯಾನದಲ್ಲಿ ಸರಕುಗಳನ್ನು ಸಾಗಿಸುವುದು ಹೆಚ್ಚು ದುಬಾರಿಯಾಗಿದ್ದರೂ, ಸಮಯಕ್ಕೆ ಸರಿಯಾಗಿ ಸರಕುಗಳು ಸಾಗಾಟವಾಗಲು ಗ್ಲೋಬಲ್ ಒರಿಜಿನಲ್ ಇಕ್ವಿಪ್ಮೆಂಟ್ ತಯಾರಕರು (OEM) ವಾಯುಯಾನದ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ. ಚೀನಾ ಮತ್ತು ಭಾರತದಲ್ಲಿ ಜೋಡಣೆಯಾಗುವ ಬಹುತೇಕ ಸ್ಮಾರ್ಟ್ಫೋನ್ಗಳು ವಾಯುಮಾರ್ಗದ ಮೂಲಕ ಮಧ್ಯಪ್ರಾಚ್ಯ, ಯೂರೋಪ್, ಆಫ್ರಿಕಾ ಮತ್ತು ಅಮೆರಿಕಗಳಿಗೆ ಸಾಗಾಟವಾಗುತ್ತವೆ. ಸಾಮಾನ್ಯವಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಯುಎಇ ಮತ್ತು ಅಂತಾರಾಷ್ಟ್ರೀಯ ನಿಲ್ದಾಣಗಳು ತಾಂತ್ರಿಕ ನಿಲ್ದಾಣಗಳು ಮತ್ತು ಕಾರ್ಗೋ ಟ್ರಾನ್ಸ್ಶಿಪ್ಮೆಂಟ್ ವಲಯಗಳಾಗಿ ಕಾರ್ಯ ನಿರ್ವಹಿಸುತ್ತವೆ. ಯುರೋಪ್, ಆಫ್ರಿಕಾ ಅಥವಾ ಅಮೆರಿಕದ ಪೂರ್ವ ಕರಾವಳಿಗೆ ಸರಕುಗಳು ಸಾಗುವ ಮೊದಲು ಈ ವಿಮಾನ ನಿಲ್ದಾಣದಲ್ಲಿ ಮರುಹಂಚಿಕೆಯಾಗುತ್ತವೆ. ಯುದ್ಧವು ಮುಂದುವರಿದಲ್ಲಿ ಸ್ಮಾರ್ಟ್ಫೋನ್ ತಯಾರಕರು ಪರ್ಯಾಯ ವೈಮಾನಿಕ ಮಾರ್ಗಗಳನ್ನು ಹುಡುಕಬೇಕಾಗುತ್ತದೆ ಮತ್ತು ಅದರಿಂದ ಬೆಲೆಯೇರಿಕೆಯಾಗುವ ಸಾಧ್ಯತೆಯಿದೆ. ತಜ್ಞರ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಲ್ಲಿ ವಿಮಾ ಹೊಂದಾಣಿಕೆಗಳು, ನೆಲಮಟ್ಟದಲ್ಲಿ ನಿರ್ವಹಣೆ ಸಮಯ ಸೇರಿದಂತೆ ಲಾಜಿಸ್ಟಿಕ್ಸ್ ವೆಚ್ಚಗಳು ಏರಲಿವೆ. ಲಕ್ಷಾಂತರ ಸ್ಮಾರ್ಟ್ಫೋನ್ಗಳನ್ನು ಹೊತ್ತೊಯ್ಯುವ ವಿಮಾನದಲ್ಲಿ ಈ ವೆಚ್ಚ ಹೆಚ್ಚಳ ಅತ್ಯಲ್ಪವೆಂದು ಕಂಡರೂ, ಹೆಚ್ಚುವರಿ ವೆಚ್ಚವನ್ನು ಈಗಾಗಲೇ ಸೂಕ್ಷ್ಮವಾಗಿರುವ ಪ್ರತಿ ಯುನಿಟ್ ಲಾಜಿಸ್ಟಿಕ್ಸ್ ಹಂಚಿಕೆಯ ಮೇಲೆ ಹೇರಲಾಗುತ್ತದೆ. ಫಲಿತಾಂಶವಾಗಿ ವೆಚ್ಚದಲ್ಲಿನ ಸಣ್ಣ ಏರಿಕೆಯೂ ಪ್ರತೀ ಸಾಧನದ ಶೇಕಡಾವಾರು ವೆಚ್ಚವನ್ನು ಏರಿಸಬಹುದು. ನಿಧಾನವಾಗಿ ಸ್ಮಾರ್ಟ್ಫೋನ್ ಮಾರ್ಜಿನ್ಗಳು, ಬೆಲೆಗಳ ಕಾರ್ಯಯೋಜನೆಗಳು ಮತ್ತು ದಾಸ್ತಾನು ಯೋಜನೆಗಳ ಮೇಲೆ ಒತ್ತಡ ಬೀಳಬಹುದು. ಯುದ್ಧ ದೀರ್ಘಕಾಲ ಮುಂದುವರಿದಲ್ಲಿ ಸ್ಮಾರ್ಟ್ಫೋನ್ ತಯಾರಕರು ಯುರೋಪ್ಗೆ ಸರಕುಗಳ ಸಾಗಾಟದ ತಮ್ಮ ಕೇಂದ್ರೀಯ ಏಷ್ಯನ್ ವಲಯವನ್ನು ತಾಷ್ಕಂಟ್ಗೆ ವರ್ಗಾಯಿಸಬಹುದು. ಅಮೆರಿಕದ ಪೂರ್ವ ಕರಾವಳಿಗೆ ಪಶ್ಚಿಮದ ಕಡೆಗೆ ಸಾಗುವ ಸರಕುಗಳು ಪೂರ್ವ ಏಷ್ಯಾ ಮತ್ತು ಉತ್ತರ ಅಮೆರಿಕದ ಕಡೆಯಿಂದಾಗಿ ಮಾರ್ಗ ಬದಲಿಸಬಹುದು. ಆಫ್ರಿಕನ್ನರು ಕೆಲವು ಪ್ರಾದೇಶಿಕ ಮಾರುಕಟ್ಟೆಗಳಾದ ಆಡಿಸ್ ಅಬಾಬ ಮತ್ತು ಈಜಿಪ್ಟ್ ಅನ್ನು ಬಳಸಬಹುದು. ಹೀಗೆ ಮಾರ್ಗ ಬದಲಿಸುವುದರಿಂದ ವಾಯುಯಾನದಲ್ಲಿ ಹೆಚ್ಚುವರಿ 2-3 ಗಂಟೆಗಳು ಹಿಡಿಯಬಹುದು. ಹೀಗಾಗಿ ಹೆಚ್ಚು ತೈಲದ ಅಗತ್ಯ ಬೀಳಬಹುದು. ಸುಮಾರು 22, 97,604 ರೂ. ಮೌಲ್ಯದ ಇಂಧನ ಬಳಕೆಯಾಗಬಹುದು. ದೀರ್ಘ ಅವಧಿಯ ವಾಯುಯಾನಗಳಿಗೆ ಕಂಪನಿಗಳು ನಿಯಮಗಳಿಗೆ ಅನುಸಾರವಾಗಿ ಸಿಬ್ಬಂದಿ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಅಗತ್ಯ ಬೀಳಬಹುದು. ಇದರಿಂದ ಹೆಚ್ಚುವರಿ 22,05,699 ರೂ. ವೆಚ್ಚವಾಗಬಹುದು. ಇದೀಗ ಆ್ಯಪಲ್ ಮತ್ತು ಸ್ಯಾಮ್ಸಂಗ್ನಂತಹ ಕಂಪನಿಗಳು ಸ್ಮಾರ್ಟ್ಫೋನ್ನ ದೊಡ್ಡ ಬೇಸ್ಮಾಡೆಲ್ಗಳಿಗೆ (256GB) ಬೆಲೆಗಳನ್ನು ಮರುಹೊಂದಿಸಿದ್ದಾರೆ. ದೊಡ್ಡ ಬ್ರಾಂಡ್ ಮೌಲ್ಯದ ಕಾರಣದಿಂದ ಕಂಪನಿಗಳು ಗ್ರಾಹಕರನ್ನು ಪಡೆಯಬಹುದು. ಆದರೆ ಮಧ್ಯಮ ಶ್ರೇಣಿಯ ಫೋನ್ಗಳನ್ನು ಮಾರುವ ಸಣ್ಣ ಕಂಪನಿಗಳು ಈ ವರ್ಷ ದೊಡ್ಡ ನಷ್ಟವನ್ನು ಎದುರಿಸಬಹುದು. ಇತ್ತೀಚೆಗಿನ ವಿವರಗಳ ಪ್ರಕಾರ, ಮುಖ್ಯವಾಗಿ 9,190 ರೂ.ರಿಂದ 36,669 ರೂ.ಗಳ ಬೆಲೆಯಲ್ಲಿರುವ ಸ್ಮಾರ್ಟ್ಫೋನ್ ಸರಕುಗಳ ಮಾರಾಟ ಶೇ 7ರಷ್ಟು ಕಡಿಮೆಯಾಗಲಿದೆ. ಆದರೆ ದುಬಾರಿ ವಿಭಾಗದಲ್ಲಿ 73,431 ರೂ. ಸುತ್ತಮುತ್ತಲಿನ ಬೆಲೆಯ ಸರಕುಗಳು ಮಾರಾಟದಲ್ಲಿ ಶೇ 4ರಷ್ಟು ಲಾಭ ಮಾಡಿಕೊಳ್ಳಲಿವೆ. ಸೆಮಿಕಂಡಕ್ಟರ್ ಕಂಪನಿಗಳು RAM ಮತ್ತು ಸ್ಟೋರೇಜ್ ಚಿಪ್ಸೆಟ್ ಸರಕುಗಳ ಮೇಲೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡೇಟಾ ಕೇಂದ್ರಗಳ ಕಡೆಗೆ ಗಮನ ನೀಡುತ್ತಿರುವ ಕಾರಣದಿಂದ ಸ್ಮಾರ್ಟ್ಫೋನ್ಗಳ ಒಟ್ಟು ಸರಬರಾಜು ಮೇಲೆ 2026 ಮತ್ತು 2027 ಅನ್ನು ಮೀರಿ ತೊಡಕುಗಳನ್ನು ಎದುರಿಸಲಿವೆ. ಕೃಪೆ: ಡೆಕ್ಕನ್ ಹೆರಾಲ್ಡ್
BCCI Cash Reward To Team India- ಐಸಿಸಿ ಟಿ20 ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾಗೆ ಬಿಸಿಸಿಐ 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿತಷ್ಟೇ. ಇದು ತಂಡ ಪಡೆದ ಪ್ರಶಸ್ತಿ ಮೊತ್ತಕ್ಕಿಂತಲೂ 6 ಪಟ್ಟು ಹೆಚ್ಚು ಎಂಬುದು ಗಮನಿಸಬೇಕಾದ ಸಂಗತಿ. ಈ 131 ಕೋಟಿ ರೂಪಾಯಿ ಮೊತ್ತದಲ್ಲಿ ತಂಡದ 15 ಆಟಗಾರರಿಗೆ ತಲಾ 6 ಕೋಟಿ ಸಿಗಲಿದೆ. ಆಟಗಾರರು ಮಾತ್ರವಲ್ಲದೆ ತಂಡದ ಯಶಸ್ಸಿನಲ್ಲಿ ಕಾರ್ಯ ನಿರ್ವಹಿಸಿದ ಕೋಚ್, ಸಹಾಯಕ ಸಿಬ್ಬಂದಿಗೂ ಈ ಹಣ ಹಂಚಲಾಗುತ್ತದೆ.
LPG Cylinder Crisis in India: ಬದಲಾದ ಸನ್ನಿವೇಶದಲ್ಲಿ ಎಲ್ಜಿಪಿ ಸಿಲಿಂಡರ್ ಸರಬರಾಜು, ಲಭ್ಯತೆ, ಬೆಲೆ ಏರಿಕೆಯದ್ದೇ ಚರ್ಚೆ ಆಗುತ್ತಿದೆ. ಕರ್ನಾಟಕ ಬಜೆಟ್ ಮೇಲಿನ ಅಧಿವೇಶನದಲ್ಲೂ ಈ ವಿಚಾರ ಮಾರ್ದನಿಸಿದೆ. ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೇ ರಾಜ್ಯಗಳಲ್ಲೂ ಅಡುಗೆ ಅನಿಲ ಪೂರೈಕೆ ಕೊರತೆ, ದರ ಹೆಚ್ಚಳದ ಆತಂಕ ಶುರುವಾಗಿದೆ. ವಿವಿಧ ಗ್ಯಾಸ್ ಏಜೆನ್ಸಿಗಳ ಸಹಾಯವಾಣಿ,
LPG ಕೊರತೆಯ ಭೀತಿ ಕಾಡುತ್ತಿದೆಯೇ? ಚಿಂತಿಸಬೇಡಿ - ಇಲ್ಲಿದೆ ಪರ್ಯಾಯ ನಾಲ್ಕು ಮಾರ್ಗಗಳು
Four Alternatives to LPG : ಮೂರು ದೇಶಗಳ ನಡುವೆ ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ ಭಾರತಕ್ಕೆ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇದರ ಭಾಗವಾಗಿ, ಪ್ರಮುಖವಾಗಿ ವಾಣಿಜ್ಯ ಸಿಲಿಂಡರ್ ಸಪ್ಲೈನಲ್ಲಿ ಭಾರೀ ತೊಂದರೆ ಎದುರಾಗಿದೆ. ಬೆಂಗಳೂರು ಸೇರಿದಂತೆ, ಹಲವು ನಗರಗಳಲ್ಲಿನ ಹೋಟೆಲ್’ಗಳು ಬಂದ್ ಮಾಡುವಂತಹ ಸ್ಥಿತಿ ಬಂದೊದಗಿದೆ. ಇನ್ನು, ಗೃಹ ಬಳಕೆಯ ಸಿಲಿಂಡರ್ ಸರಬರಾಜಿನಲ್ಲಿ ಕೊರತೆ ಎದುರಾಗಬಹುದು ಎನ್ನುವ ಭೀತಿ ಎದುರಾಗಿದೆ. ಹಾಗಾದರೆ, ಗ್ಯಾಸ್ ಸಿಲಿಂಡರ್’ಗೆ ಇರುವ ಪರ್ಯಾಯ ಆಯ್ಕೆ ಏನು?
ಅಸ್ಸಾಂನ ಹೆದ್ದಾರಿಯೆಂದು ವೀಡಿಯೊ ಹಂಚಿಕೊಂಡ ಸಿಎಂ ಹಿಮಂತ ಬಿಸ್ವಾ ಶರ್ಮಾ; AI ವಿಡಿಯೋ ಎಂದ ಜನರು
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಅಸ್ಸಾಂನ ರಸ್ತೆ ಮತ್ತು ಹೆದ್ದಾರಿ ಮೂಲಸೌಕರ್ಯವನ್ನು ಶ್ಲಾಘಿಸಿ ಮಾಡಿದ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ಅವರು ಹಂಚಿಕೊಂಡ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ರಚಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಟೀಕಿಸಿದ್ದಾರೆ. 26 ಸೆಕೆಂಡುಗಳ ವೀಡಿಯೊವನ್ನು ಮಂಗಳವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಜನನಿಬಿಡ ಹೆದ್ದಾರಿಯಲ್ಲಿ ಸಂಚಾರ ಸುಗಮವಾಗಿ ಸಾಗುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಬಿಜೆಪಿ ನಾಯಕರು ಈ ದೃಶ್ಯವನ್ನು F1 ಟ್ರ್ಯಾಕ್ಗೆ ಹೋಲಿಸಿದ್ದಾರೆ. ಈ ವಿಡಿಯೋ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಲವರು ಈ ದೃಶ್ಯವನ್ನು AI ಬಳಸಿ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ. ವೀಡಿಯೊ ಗಮನಿಸಿದರೆ ವಾಹನಗಳ ಸಂಚಾರ ಭಾರತದಲ್ಲಿನ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಕೆಲವರು ಹೇಳಿಕೊಂಡಿದ್ದಾರೆ. ಅಸ್ಸಾಂನ ಕಳಪೆ ರಸ್ತೆಗಳ ಪೋಟೊಗಳನ್ನು ಪೋಸ್ಟ್ ಮಾಡಿದ ಕೆಲವರು, ಭಾರತದ ಅತಿ ಹೆಚ್ಚು ಹಾನಿಗೊಳಗಾದ ಹೆದ್ದಾರಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಅಸ್ಸಾಂ ಮೂರನೇ ಸ್ಥಾನದಲ್ಲಿದೆ ಎಂಬ ಶೀರ್ಷಿಕೆಯ ಪತ್ರಿಕೆ ವರದಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ರೀತಮ್ ಸಿಂಗ್, ವೀಡಿಯೊದಲ್ಲಿ ವಾಹನಗಳು ತಪ್ಪು ದಿಕ್ಕಿನಲ್ಲಿ ಸಂಚರಿಸುತ್ತಿರುವುದು ಕಂಡು ಬರುತ್ತಿದೆ. ಬಿಜೆಪಿ ಐಟಿ ಸೆಲ್ ನಕಲಿ ಎಐ ವೀಡಿಯೊಗಳನ್ನು ರಚಿಸುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪ್ಪು ದಿಕ್ಕಿನಲ್ಲಿ ಚಾಲನೆ ಮಾಡಿದರೆ 5,000 ರೂ. ದಂಡ ವಿಧಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಹೇಳಿದ್ದಾರೆ. ಟೀಕೆ ಬೆನ್ನಲ್ಲೆ ಸಿಎಂ ಹಿಮಂತ ಬಿಸ್ವಾ ಶರ್ಮಾ, AI (ರೆಡ್ X) ಅಸ್ಸಾಂ ಮೂಲಸೌಕರ್ಯ (ಗ್ರೀನ್ ಟಿಕ್) ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಮತ್ತೆ ಹಂಚಿಕೊಂಡಿದ್ದಾರೆ. People with the negative IQ level of Rahul and Gaurav Gogoi will obviously struggle to digest the pace at which Assam’s infrastructure is transforming. That’s why they have conveniently started calling such visuals “AI-generated.” But here’s a simple question: will they now call… https://t.co/e8IoAG9KFp pic.twitter.com/II5RUgB6Es — Pijush Hazarika (@Pijush_hazarika) March 10, 2026
ದೇಶದ ಆದ್ಯತೆ ವಲಯಗಳಿಗೆ ಅನಿಲ ಪೂರೈಕೆಗೆ ರಿಲಯನ್ಸ್ ನಿಂದ ಗರಿಷ್ಠ ಉತ್ಪಾದನೆ
ಮುಂಬೈ: ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಭಾರತೀಯರಿಗೆ ಅಡುಗೆ ಅನಿಲ (LPG) ಮತ್ತು ಅಗತ್ಯ ಇಂಧನಗಳ ಕೊರತೆಯಾಗದಂತೆ ನೋಡಿಕೊಳ್ಳಲು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ವದ ಹೆಜ್ಜೆಯಿಟ್ಟಿದೆ. ಗುಜರಾತ್ನ ಜಾಮ್ನಗರದಲ್ಲಿರುವ ವಿಶ್ವದ ಅತಿದೊಡ್ಡ ಸಂಸ್ಕರಣಾಗಾರದಲ್ಲಿ (Refinery) ಎಲ್ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ.
ಬೆಂಗಳೂರಿನ ಕೆಲವು ಆಯ್ದ ರಸ್ತೆಗಳಲ್ಲಿ ಎಡಬದಿಯಲ್ಲಿ ವಾಹನ ಚಾಲನೆ ಬದಲು ಬಲಬದಿಯ ರಸ್ತೆಯಲ್ಲಿ ವಾಹನ ಚಾಲನೆ ಆರಂಭ ಆಗಲಿದೆ. ಗೊರಗುಂಟೆಪಾಳ್ಯದ ಸಿಎಂಟಿ ಜಂಕ್ಷನ್ನಿಂದ ಔಟರ್ ರಿಂಗ್ ರೋಡ್ ಮತ್ತು ನಾಯಂಡನಹಳ್ಳಿ ಜಂಕ್ಷನ್ ನಡುವೆ ಮೊದಲ ಪ್ರಯೋಗ ಮಾಡಲು ತೀರ್ಮಾನಿಸಲಾಗಿದೆ. ಇದರ ಉದ್ದೇಶಗಳೇನು ಎಂಬ ವಿವರ ಇಲ್ಲಿದೆ ನೋಡಿ.
ರಾಜ್ಯ BJP ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ರಾಜೀನಾಮೆ! 37 ವರ್ಷ ಪಕ್ಷಕ್ಕಾಗಿ ದುಡಿದರೂ ಅನ್ಯಾಯವೆಂದು ಆಕ್ರೋಶ
ಕರ್ನಾಟಕ ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷರಾಗಿದ್ದ ಲಿಂಗರಾಜ ಪಾಟೀಲ ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬರೆದಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಲಿಂಗರಾಜ ಪಾಟೀಲ ಅವರು, 37 ವರ್ಷ ಪಕ್ಷಕ್ಕಾಗಿ ವಿವಿಧ ಹುದ್ದೆ ನಿಭಾಯಿಸಿದರೂ ಟಿಕೆಟ್ ನೀಡಿಲ್ಲ ಎಂದು ಬೇಸರ ಹೊರ ಹಾಕಿದರು.
ಮಧ್ಯಪ್ರಾಚ್ಯದಲ್ಲಿನ ಯುದ್ದದ ಬಿಸಿ ಕೇವಲ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ, ಸದ್ಯ ಇಡೀ ಜಗತ್ತಿನ ಮೂಲೆ ಮೂಲೆಗೆ ತಟ್ಟುತ್ತಿದ್ದು, ರಾಜ್ಯಕ್ಕೂ ಸಹ ಇದು ಎಫೆಕ್ಟ್ ಆಗುತ್ತಿದೆ. ಅದರಲ್ಲೂ ಹಾಸನದಲ್ಲಿ ಗ್ಯಾಸ್ ಆನ್ ಲೈನ್ ಬುಕಿಂಗ್ ಸ್ವಿಚ್ ಆಫ್ ಎಂದು ಬರುತ್ತಿದ್ದು, ಈಗಾಗಲೇ ಬುಕ್ ಆಗಿರುವ ಸಿಲಿಂಡರ್ ಗಳು ಸಹ ಬರುತ್ತಿಲ್ಲ ಎಂದು ಗ್ರಾಹಕರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಎಲ್ ಪಿಜಿ ಗ್ಯಾಸ್ ಪೂರೈಕೆಯಲ್ಲಿ ಕೊರತೆ ಇಲ್ಲ, ಆದಾಗ್ಯೂ, ಗ್ರಾಹಕರು ಆತಂಕಕ್ಕೀಡಾಗಿ ಹೆಚ್ಚಿನ ಬುಕಿಂಗ್ ಮಾಡುತ್ತಿರುವುದರಿಂದ ಈ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

28 C