ಬಳ್ಳಾರಿ | ವಿವಿಧ ಯೋಜನೆಗಳ ಸೌಲಭ್ಯ ವಿತರಣೆ
ಬಳ್ಳಾರಿ : ಪಟ್ಟಣದ ಸಂಡೂರು ತಾಲೂಕು ಪಂಚಾಯಿತಿ ಆವರಣದಲ್ಲಿ ಇಂದು ಸಂಡೂರು ತಾಲೂಕಿನ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಹಾಗೂ ಅಖಂಡ ಬಳ್ಳಾರಿ ಜಿಲ್ಲಾ ಸಂಸದ ಈ ತುಕಾರಾಮ್ ಭಾಗವಹಿಸಿ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಕುಂದುಕೊರತೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಿದ ಜನಪ್ರತಿನಿಧಿಗಳು, ಜನರ ಸಮಸ್ಯೆಗಳನ್ನು ಮನಗಂಡು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸರ್ಕಾರದ ವಿವಿಧ ಯೋಜನೆಗಳು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. “ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆ. ಜನಸೇವೆ ನಮ್ಮ ಧ್ಯೇಯವಾಗಿದ್ದು, ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಂಕಲ್ಪ ಹೊಂದಿದ್ದೇವೆ” ಎಂದು ಶಾಸಕಿ ಹಾಗೂ ಸಂಸದರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ, ಅಕ್ಷಯ್ ಲಾಡ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯನಗರ | ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ವಿಜಯನಗರ : ರಾಜ್ಯಾದ್ಯಂತ ಸಂಪೂರ್ಣ ಒಳಮೀಸಲಾತಿ ಜಾರಿಗೆ ಕರೆ ನೀಡಿರುವ ಹಿನ್ನೆಲೆ, ವಿಜಯನಗರ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ ಮಾತನಾಡಿ, ಸರ್ಕಾರ ಒಳಮೀಸಲಾತಿ ಜಾರಿ ಮಾಡಿದರೂ ಕಳೆದ ಆರು ತಿಂಗಳಾದರೂ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಒಳಮೀಸಲಾತಿ ವಿಚಾರದಲ್ಲಿ ಸ್ವಜಾತಿ ಪರ ನಿಲುವು ತಾಳಿದ್ದಾರೆ ಎಂದು ಆರೋಪಿಸಿದರು. ಒಳಮೀಸಲಾತಿ ವಿರೋಧಿ ಬಲಗೈ ವಿದ್ಯಾರ್ಥಿ ಒಕ್ಕೂಟ ರಚನೆಗೂ ಸಚಿವರು ಕಾರಣರಾಗಿದ್ದಾರೆ ಎಂದು ದೂರಿದರು. ಮಾದಿಗರ ಒಳಮೀಸಲಾತಿ ಹೋರಾಟವು ಕೇವಲ ಒಂದು ಜಾತಿಗಾಗಿ ಅಲ್ಲದೆ ರಾಜ್ಯದ 101 ಪರಿಶಿಷ್ಟ ಜಾತಿ ಸಮುದಾಯಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನಡೆದದ್ದಾಗಿದೆ. ವಿಶೇಷವಾಗಿ ಬಿಕ್ಷಕ ಸಮುದಾಯಕ್ಕೆ ಮೊದಲು ನ್ಯಾಯ ನೀಡಬೇಕಾಗಿತ್ತು, ಆದರೆ ಸರ್ಕಾರ ದ್ರೋಹ ಮಾಡಿದೆ ಎಂದು ಹೇಳಿದರು. ಸರ್ಕಾರವು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. ಆಗಸ್ಟ್ 19 ಮತ್ತು 20ರಂದು ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ತೀರ್ಮಾನ ಕೈಗೊಂಡು ಒಳಮೀಸಲಾತಿ ಜಾರಿ ಮಾಡಿದರು. ಆದರೆ ಅಲೆಮಾರಿ ಸಮುದಾಯಕ್ಕೆ ನಿರೀಕ್ಷಿತ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿದರು. ಬೆಂಗಳೂರು ವಿಧಾನಸೌಧ ಹಾಗೂ ಬೆಳಗಾವಿ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸಭೆಗಳಲ್ಲಿ ಅಲೆಮಾರಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಬರುವ ಮಾ.6ರ ಬಜೆಟ್ ಅಧಿವೇಶನದಲ್ಲೇ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಿ, ಅಲೆಮಾರಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು. ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಉಸ್ತುವಾರಿ ಸಚಿವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಹೋರಾಟದಲ್ಲಿ ನಗರಸಭೆ ಮಾಜಿ ಸದಸ್ಯ ಗೋವಿಂದರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಹೊಸಪೇಟೆ | ಪರೀಕ್ಷಾ ಪೂರ್ವ ತಯಾರಿ ಅಂಗವಾಗಿ ವಿಶೇಷ ಉಪನ್ಯಾಸ
ವಿಜಯನಗರ : ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಸರ್ಕಾರಿ ಉನ್ನತಕರಿಸಿದ ಪ್ರೌಢ ಶಾಲೆಯಲ್ಲಿ ಫೆಬ್ರವರಿ 22 ರಂದು ಪರೀಕ್ಷಾ ಪೂರ್ವ ತಯಾರಿಯ ಅಂಗವಾಗಿ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಣಿಪಾಲ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿರುವ ಡಾ. ವಿರೂಪಾಕ್ಷ ದೇವರಮನೆ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೀಳಿರಿಮೆ ಹಾಗೂ ಸೋಮಾರಿತನ ಎಂಬ ಎರಡು ದುರ್ಗುಣಗಳೇ ವಿದ್ಯಾರ್ಥಿಗಳ ಅತ್ಯಂತ ದೊಡ್ಡ ಶತ್ರುಗಳು. ಇವುಗಳನ್ನು ಜಯಿಸಿದಾಗಲೇ ಜೀವನದಲ್ಲಿ ಖಚಿತ ಯಶಸ್ಸು ಸಾಧಿಸಬಹುದು” ಎಂದು ಹೇಳಿದರು. ಸರಳತೆಯಲ್ಲಿಯೇ ಮಹತ್ತರ ಸಾಧನೆ ಮಾಡಿದ ಅನೇಕ ಸಾಧಕರ ಉದಾಹರಣೆಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಉತ್ತಮ ಸ್ನೇಹಿತರ ಆಯ್ಕೆ ಅಗತ್ಯ ಪ್ರೌಢವಸ್ಥೆಯಲ್ಲಿ ಪೋಷಕರು ಮತ್ತು ಶಿಕ್ಷಕರಿಗಿಂತ ಸ್ನೇಹಿತರ ಸಲಹೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಪ್ರವೃತ್ತಿ ಹೆಚ್ಚಿರುವುದನ್ನು ಉಲ್ಲೇಖಿಸಿ, “ಈ ವಯಸ್ಸಿನಲ್ಲಿ ಉತ್ತಮ ಗುಣಗಳಿರುವ ಸ್ನೇಹಿತರನ್ನೇ ಆಯ್ಕೆ ಮಾಡಿಕೊಳ್ಳಬೇಕು. ಅದು ಭವಿಷ್ಯದ ಯಶಸ್ಸಿಗೆ ಮಾರ್ಗದರ್ಶಿಯಾಗುತ್ತದೆ” ಎಂದು ಸಲಹೆ ನೀಡಿದರು. ಜೀವನದಲ್ಲಿ ಸಂಭವಿಸುವ ಋಣಾತ್ಮಕ ಘಟನೆಗಳನ್ನು ಮರೆತು ಧನಾತ್ಮಕ ಅಂಶಗಳನ್ನು ನೆನಪಿನಲ್ಲಿ ಇಟ್ಟು ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯಗಳನ್ನು ನಿವಾರಿಸಿಕೊಂಡರು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಶಾಸ್ತ್ರ ಕಾರ್ಯಾಗಾರ
ಮಂಗಳೂರು: ಕಂಕನಾಡಿಯ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಎಫ್ಒಸಿಐಎಲ್ 2026 ಕಾರ್ಯಾಗಾರ ಇತ್ತೀಚೆಗೆ ಕಾಲೇಜಿನ ದಶಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಧಾರವಾಡದ ಎಸ್ಡಿಎಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರೊಫೆಸರ್ ಡಾ. ರತ್ನಮಾಲಾ ಎಂ. ದೇಸಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಮತ್ತು ಪ್ರಾಯೋಗಿಕ ನೈಪುಣ್ಯತೆ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ. ಫಾಸ್ಟಿನ್ ಲ್ಯೂಕಾಸ್ ಲೋಬೋ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಹೈದರಾಬಾದ್ನ ಫರ್ನಾಂಡಿಸ್ ಆಸ್ಪತ್ರೆಯ ಡಾ. ಕಾಮೇಶ್ವರಿ ಸುರಂಪುಡಿ ಮತ್ತು ಡಾ. ವಿಶಾಖಾ ನಾಗರಾಜ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಭಾಗದ ಹಿರಿಯ ನಿವೃತ್ತ ಪ್ರಾಧ್ಯಾಪಕಿ ಡಾ. ಪ್ರೇಮಾ ಡಿಕುನ್ಹಾ ಅವರನ್ನು ಅವರ ಸುದೀರ್ಘ ಮತ್ತು ಸಮರ್ಪಣಾ ಮನೋಭಾವದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. *ಶೈಕ್ಷಣಿಕ ಗೋಷ್ಠಿ, ಕಾರ್ಯಾಗಾರ: ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ವಿನಿಮಯ ನಡೆಯಿತು. ಅಲ್ಟ್ರಾಸೌಂಡ್ ಮತ್ತು ಪೆಲ್ವಿಕ್ ಅನ್ಯಾಟಮಿ ಬಗ್ಗೆ ಡಾ. ಮಹೇಶ್, ಡಾ. ಪ್ರತಿಮಾ ಮತ್ತು ಡಾ. ಅಂಜುಮ್ ಇಫ್ತಿಕರ್, ಸಿಟಿಜಿ ಮತ್ತು ದಾಖಲಾತಿ: ಡಾ. ರತ್ನಮಾಲಾ ದೇಸಾಯಿ ಮತ್ತು ಡಾ. ಸುಜಯಾ ವಿ. ರಾವ್ ಮಾಹಿತಿ ನೀಡಿದರು. ಪ್ರಾಯೋಗಿಕ ತರಬೇತಿಯಲ್ಲಿ ಡಾ. ಶ್ರದ್ಧಾ ಶೆಟ್ಟಿ, ಡಾ. ಜಾಯ್ಲಿನ್ ಡಾಲ್ಮಿಡಾ, ಡಾ. ಶಾನನ್ ಫೆರ್ನಾಂಡಿಸ್, ಡಾ. ಚೇತನಾ ಬೋಳಂತಕೋಡಿ ಮತ್ತು ಡಾ. ಅಲ್ವೀರಾ ಡಿಸೋಜ, ಒತ್ತಡ ನಿರ್ವಹಣೆ ಬಗ್ಗೆ ಖ್ಯಾತ ಮನೋವೈದ್ಯೆ ಡಾ. ಕ್ಯಾರೋಲಿನ್ ಡಿಸೋಜ ಅವರು ಮಾನಸಿಕ ಒತ್ತಡ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಹೈದರಾಬಾದ್ನ ತಜ್ಞರಿಂದ ‘ಪೆರಿನಿಯಲ್ ಟಿಯರ್ ರಿಪೇರ್’ ಕುರಿತು ಕಾರ್ಯಾಗಾರ ನಡೆಯಿತು. ವಿಭಾಗದ ಮುಖ್ಯಸ್ಥ ಡಾ. ಮಹೇಶ ನಾವಡ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಏಕ್ತಾ ಎಂ. ಶೆಟ್ಟಿ ವಂದಿಸಿದರು, ಡಾ. ಜ್ಯೋತ್ಸ್ನಾ ಕೋಯೆಲ್ಹೊ ಸಹಕರಿಸಿದರು. ಡಾ. ಲಿಜಾ ಮೆಲಿಟಾ ಪಿಂಟೊ , ಡಾ. ನಿಶ್ಮಿತಾ ರೊಡ್ರಿಗಸ್ ಮತ್ತು ಡಾ. ನಿಕಿತಾ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 100ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.
Bengaluru | ಅಧಿಕಾರಿಗಳ ಸೋಗಿನಲ್ಲಿ 24 ಲಕ್ಷ ರೂ. ಸುಲಿಗೆ ಆರೋಪ: ಒಂಬತ್ತು ಮಂದಿಯ ಬಂಧನ
ಬೆಂಗಳೂರು, ಫೆ.23 : ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಸೋಗಿನಲ್ಲಿ 24 ಲಕ್ಷ ರೂ., ಹಣ ಸುಲಿಗೆ ಮಾಡಿರುವ ಆರೋಪದಡಿ 9 ಆರೋಪಿಗಳನ್ನು ದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ 12 ಜನರ ಪೈಕಿ ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ ಸೇರಿದಂತೆ 9 ಮಂದಿಯನ್ನು ಬಂಧಿಸಿ ಹಣವನ್ನು ಜಪ್ತಿ ಮಾಡಲಾಗಿದೆ. ಶಂಕರಪ್ಪ ಎಂಬುವವರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆರೋಪಿ ಕೃಷ್ಣ ಕುಮಾರ್ ಹೇಳಿದ್ದು, ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಇತ್ತ ಮೊದಲೇ ಮಾಡಿಕೊಂಡಿದ್ದ ಸಂಚಿನಂತೆ ಖಾಸಗಿ ಕಾರಿನಲ್ಲಿ ಕೃಷ್ಣ ಕುಮಾರ್ ಸಹಚರರು ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಹೆಸರಿನಲ್ಲಿ ಖಾಸಗಿ ಕಾರ್ಗೆ ಫಲಕ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಹಣ ಎಗರಿಸಿದ ನಂತರ ಆರೋಪಿ ಕೃಷ್ಣಕುಮಾರ್ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆ ಪೊಲೀಸರು 12 ಜನರಲ್ಲಿ 9 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಂಧ್ರಪ್ರದೇಶ| ಶಂಕಿತ ಕಲಬೆರಕೆ ಹಾಲು ಕುಡಿದು ನಾಲ್ವರು ಮೃತ್ಯು
ರಾಜಮುಂಡ್ರಿ, ಫೆ. 23: ರಾಜಮುಂಡ್ರಿಯಲ್ಲಿ ಶಂಕಿತ ಕಲಬೆರಕೆ ಹಾಲು ಕುಡಿದು ನಾಲ್ವರು ಮೃತಪಟ್ಟಿದ್ದಾರೆ. 12 ಮಂದಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಂತ್ರಸ್ತರಾದ ಎಲ್ಲರೂ 65 ವರ್ಷಕ್ಕಿಂತ ಮೇಲಿನ ವಯಸ್ಸಿನವರು. ಈ ಘಟನೆಗೆ ಸಂಬಂಧಿಸಿ ಅಧಿಕಾರಿಗಳು ಕೊರುಕುಂಡ ಮಂಡಲ್ನ ನರಸಪುರಂ ಗ್ರಾಮದ ಹಾಲು ಮಾರಾಟಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖೆಯ ಭಾಗವಾಗಿ ಅನಧಿಕೃತ ಡೈರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಿರ್ದಿಷ್ಟ ಹಾಲು ಮಾರಾಟಗಾರ ಹಾಲು ಪೂರೈಸಿದ 105 ಕುಟುಂಬಗಳ ಪೈಕಿ 75 ಕುಟುಂಬಗಳಿಂದ ಹಾಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತ ಅನಾರೋಗ್ಯದ ಕಾರಣವನ್ನು ಕಂಡು ಹಿಡಿಯಲು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪರಿಸ್ಥಿತಿ ಅವಲೋಕಿಸಲು ವಿಜಯವಾಡದಿಂದ ವಿಶೇಷ ತಂಡಗಳು ಆಗಮಿಸಿವೆ ಹಾಗೂ ವೈದ್ಯಕೀಯ, ಪ್ರತಿಬಂಧಕ ಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
Prakash Raj: ವಿಭಿನ್ನ ಆಹಾರ - ವಿಭಿನ್ನ ರುಚಿಯೊಂದಿಗೆ ಸೌಹಾರ್ದತೆಯಿಂದ ಬದುಕೋಣ: ನಟ ಪ್ರಕಾಶ್ ರಾಜ್ ಟ್ವೀಟ್ ವೈರಲ್
Prakash Raj: ನಟ ಪ್ರಕಾಶ್ ರಾಜ್ ಅವರು ಆಹಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಕೇರಳ ಸ್ಟೋರಿ 2 ಸಿನಿಮಾವೂ ಕೇರಳದಲ್ಲಿ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ದೇಶದಾದ್ಯಂತ ಪರ - ವಿರೋಧ ಚರ್ಚೆಗಳು ನಡೆದಿವೆ. ಈ ಸಿನಿಮಾದಲ್ಲಿ ಒತ್ತಾಯ ಪೂರ್ವಕವಾಗಿ ಬೀಫ್ ತಿನ್ನಿಸುವ ದೃಶ್ಯವಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಭಾನುವಾರ ಆಹಾರ
ಮಾ.28ರಿಂದ ಗಂಜಿಮಠದಲ್ಲಿ ರಾಷ್ಟ್ರೀಯ ಮಟ್ಟದ ಮೋಟಾರ್ ರ್ಯಾಲಿ
ಮಂಗಳೂರು, ಫೆ.23: ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್ಸಿ ಆಫ್ ರೋಡ್ ಟ್ರೋಫಿ-2026’ ಮೋಟಾರ್ ರ್ಯಾಲಿ ಮಾ.28 ಮತ್ತು 29ರಂದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಮಂಗಳೂರಿನ ಗಂಜಿಮಠದ ಒಡ್ಡೂರು ಫಾರ್ಮ್ನಲ್ಲಿ ಆಯೋಜಿಸಲಾಗಿದೆ ಎಂದು ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಅಶ್ವಿನ್ ನಾಯಕ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ಲಬ್ 25ನೇ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ರೋಮಾಂಚನಕಾರಿ ರ್ಯಾಲಿಯಲ್ಲಿ ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ 400ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಮೊದಲ ದಿನವಾದ ಮಾ.28ರಂದು ಮಹಿಳಾ ವಿಭಾಗ, ಜೂನಿಯರ್ ವಿಭಾಗ, ಮಾಸ್ಟರ್ಸ್ ವಿಭಾಗ, ಜಿಮ್ನಿ ವಿಭಾಗ, ಥಾರ್ 2020, ಎಸ್ಯುವಿ, ಸ್ಟಾಕ್ ಡೀಸೆಲ್, ಸ್ಟಾಕ್ ಪೆಟ್ರೋಲ್ ವಿಭಾಗಗಳಲ್ಲಿ, ಎರಡನೇ ದಿನವಾದ ಮಾ.29ರಂದು ಮೋಡಿಫೈಡ್ ಪೆಟ್ರೋಲ್, ಮೋಡಿಫೈಡ್ ಡೀಸೆಲ್, ಓಪನ್ ಕ್ಲಾಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. 15 ಲಕ್ಷ ರೂ. ಮೊತ್ತದ ಬಹುಮಾನ: ರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್ಸಿ ಆಫ್ ರೋಡ್ ಟ್ರೋಫಿ-2026’ ರ್ಯಾಲಿಯಲ್ಲಿ ವಿಜೇತರಿಗೆ ಒಟ್ಟು 15 ಲಕ್ಷ ರೂ. ನಗದು ಬಹುಮಾನ, ಟ್ರೋಫಿಯನ್ನು ನೀಡಲಾಗುವುದು. ಸುಮಾರು 5 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಮಹಿಳೆಯರಿಗಾಗಿ ಎರೈವ್ ಆ್ಯಂಡ್ ಡ್ರೈವ್ ವ್ಯವಸ್ಥೆ ಇದ್ದು ವಾಹನ ಇಲ್ಲದವರು ಕೂಡ ಆಗಮಿಸಬಹುದು. ಅವರಿಗೆ ಸ್ಪರ್ಧೆಗಾಗಿ ವಾಹನವನ್ನು ಸ್ಥಳದಲ್ಲಿಯೇ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು. ಕ್ಲಬ್ನ ಅಧ್ಯಕ್ಷ ಮೂಸಾ ಶರೀಫ್ ಮಾತನಾಡಿ, ಮಂಗಳೂರನ್ನು ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಐಎಂಎಸ್ಸಿ ಕಳೆದ 25 ವರ್ಷಗಳಿಂದ ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದೆ. ರ್ಯಾಲಿ, ಆಟೋಕ್ರಾಸ್, ಹಿಲ್ ಕ್ಲೈಂಬ್, ಮೋಟೋ ಕ್ರಾಸ್ ಸೇರಿದಂತೆ ವಿವಿಧ ಮಾದರಿಯ ಸ್ಪರ್ಧೆಗಳ ಮೂಲಕ ಜಮ್ಮು ಕಾಶ್ಮೀರ ಸೇರಿದಂತೆ ದೇಶದಾದ್ಯಂತ ಪ್ರತಿಭಾವಂತರಿಗೆ ವೇದಿಕೆ ಒದಗಿಸುತ್ತಿದ್ದು ಸುರಕ್ಷಿತ ಹಾಗೂ ವೃತ್ತಿಪರ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ನ ಸದಸ್ಯ ಸಂಜಯ್ ಉಪಸ್ಥಿತರಿದ್ದರು.
Raichur | ರಾಜ್ಯ ಬಜೆಟ್ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ 200 ಕೋಟಿ ರೂ. ಮೀಸಲಿಡಲು ಒತ್ತಾಯ
ರಾಯಚೂರು : 2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ 200 ಕೋಟಿ ರೂ. ಮೀಸಲಿಡಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಹೋರಾಟಗಾರ ಮಹೇಶ ಪಾಟೀಲ ಒತ್ತಾಯಿಸಿದರು. ಸೋಮವಾರ ಪತ್ರಿಕಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಾರ್ಷಿಕ ರೂ.200 ಕೋಟಿ ಮೀಸಲಿಡುವುದಾಗಿ ಘೋಷಿಸಿತ್ತು. ಆದ್ದರಿಂದ ಸರ್ಕಾರ ತನ್ನ ವಾಗ್ದಾನವನ್ನು ಈಡೇರಿಸಬೇಕು ಎಂದು ಹೇಳಿದರು. 2026ರ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಪ್ರತ್ಯೇಕ ಅನುದಾನ ಘೋಷಿಸಿ, ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಸರ್ವತೋಮುಖ ಅಭಿವೃದ್ಧಿಗಾಗಿ ರೂ.250 ಕೋಟಿ ಪ್ರತ್ಯೇಕ ಬಜೆಟ್ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿ ವರ್ಷ ಕನಿಷ್ಠ 500 ಮನೆಗಳನ್ನು ಹಂಚಿಕೆ ಮಾಡಬೇಕು. ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ 2 ಎಕರೆ ಕೃಷಿಯೋಗ್ಯ ಭೂಮಿ ನೀಡಬೇಕು. ಮೈತ್ರಿ ಪಿಂಚಣಿಯನ್ನು ತಿಂಗಳಿಗೆ ರೂ.2 ಸಾವಿರಕ್ಕೆ ಹೆಚ್ಚಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಂಗಳಿಗೆ ರೂ.5 ಸಾವಿರ ವೃದ್ಧಾಪ್ಯ ಪಿಂಚಣಿ ನೀಡಬೇಕು. ಶೇ 1ರಷ್ಟು ಮೀಸಲಾತಿಯನ್ನು ಘೋಷಣೆಯಷ್ಟೇ ಅಲ್ಲದೆ ಜಾರಿಗೆ ತರಬೇಕು ಎಂದರು. ಸರ್ಕಾರಿ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಬೇಕು. ಉಚಿತ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸಿ, ಶಸ್ತ್ರಚಿಕಿತ್ಸೆಯ ನಂತರ 6 ತಿಂಗಳು ಪ್ರತಿ ತಿಂಗಳು ರೂ.5 ಸಾವಿರ ಪುನರ್ವಸತಿ ನೆರವು ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ವಿಶೇಷ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಂಬಮ್ಮ, ವಿದ್ಯಾ ಪಾಟೀಲ, ಎಂ.ಆರ್. ಬೇರಿ ಹಾಗೂ ಅನಿಲಕುಮಾರ ಉಪಸ್ಥಿತರಿದ್ದರು.
‘ಮಿಷನ್ ಪ್ರಕೃತಿ’ ರಾಜ್ಯದ ಹತ್ತು ಶಾಲೆಗಳಿಗೆ ‘ಅತ್ಯುತ್ತಮ ಶಾಲೆ' ಪ್ರಶಸ್ತಿ ಪ್ರದಾನ
ಬೆಂಗಳೂರು, ಫೆ. 23 : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಮಿಷನ್ ಪ್ರಕೃತಿ: ತರಗತಿಯಿಂದ ಸಂರಕ್ಷಣೆಯತ್ತ' ಕಾರ್ಯಕ್ರಮದಡಿಯಲ್ಲಿ ರಾಜ್ಯದ ಹತ್ತು ಅತ್ಯುತ್ತಮ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಸೋಮವಾರ ಇಲ್ಲಿನ ವಿಕಾಸಸೌಧದಲ್ಲಿ ನಡೆದ ಈ ಸಮಾರಂಭದಲ್ಲಿ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್, ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಸಿಇಒ ಕರಣ್ ಭಲ್ಲಾ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದಬಾರದು. ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು. ಅರಿವು ಮೂಡಿದರೆ ಫಲಿತಾಂಶ ತಾನಾಗಿಯೇ ಉತ್ತಮವಾಗುತ್ತದೆ ಎಂದು ಕಿವಿಮಾತು ಹೇಳಿದರು. ತ್ಯಾಜ್ಯ ನಿರ್ವಹಣೆ ಕುರಿತು ಜಪಾನ್ನ ಉದಾಹರಣೆ ನೀಡಿದ ಅವರು, ಅಲ್ಲಿ ಕಸದ ಬುಟ್ಟಿಗಳು ಕಡಿಮೆ ಇದ್ದರೂ ಜನರು ತಮ್ಮ ಕಸವನ್ನು ತಾವೇ ಮನೆಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುತ್ತಾರೆ. ಅಂತಹ ಶಿಸ್ತು ನಮ್ಮಲ್ಲಿಯೂ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮುಂದಿನ ವರ್ಷದಿಂದ 1 ರಿಂದ 10ನೇ ತರಗತಿಯ ವರೆಗೆ ‘ನೈತಿಕ ವಿಜ್ಞಾನ' ಪಠ್ಯ ಪುಸ್ತಕವನ್ನು ಪರಿಚಯಿಸಲಾಗುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶಿಕ್ಷಣದ ಮೊದಲ ಮೆಟ್ಟಿಲು ಎಂದು ಅವರು ಪ್ರತಿಪಾದಿಸಿದರು. ಸರಕಾರಿ ಶಾಲಾ ಶಿಕ್ಷಕರ ಮೆರಿಟ್ ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಸಚಿವರು, ವಿದ್ಯಾರ್ಥಿಗಳಿಗೆ ಸರಕಾರ ನೀಡುತ್ತಿರುವ ಬಿಸಿಯೂಟ, ರಾಗಿಮಾಲ್ಟ್, ಹಾಲು, ಮೊಟ್ಟೆ/ಬಾಳೆಹಣ್ಣು, ಪಠ್ಯಪುಸ್ತಕ ಮತ್ತು ಸಮವಸ್ತ್ರಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ನಾಗಭೂಷಣ್ ಮತ್ತು ರೆಹಮಾನ್ ಬಿ. ಮಿಷನ್ ಪ್ರಕೃತಿಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ವನ್ಯಜೀವಿಗಳ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಈ ಅಭಿಯಾನವು ತಮಗೆ ಹೇಗೆ ಕಲಿಸಿಕೊಟ್ಟಿತು ಎಂಬುದನ್ನು ವಿವರಿಸಿದರು. ಇದೇ ವೇಳೆ ಪ್ರಶಸ್ತಿ ವಿಜೇತ ಶಾಲೆಗಳಿಗೆ ಅಭಿನಂದನೆ ಸಲ್ಲಿಸಿದ ಸಚಿವ ಮಧು ಬಂಗಾರಪ್ಪ, ಇಲ್ಲಿ ಕಲಿತ ವಿಷಯಗಳನ್ನು ಇತರ ವಿದ್ಯಾರ್ಥಿಗಳಿಗೂ ಹಂಚಿಕೊಳ್ಳುವಂತೆ ಕರೆ ನೀಡಿದರು. ಪ್ರಶಸ್ತಿ ವಿಜೇತ 10 ಶಾಲೆಗಳನ್ನು ಈ ವೇಳೆ ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ಗೌರವಿಸಲಾಯಿತು: ಪ್ರಶಸ್ತಿ ವಿಜೇತ ಶಾಲೆಗಳು: ಜಿ.ಎಂ.ಪಿ.ಎಚ್.ಎಸ್, ಎಮ್ಮಿಗನೂರು, ಬಳ್ಳಾರಿ. ಜಿ.ಕೆ.ಎಚ್.ಪಿ.ಎಸ್, ಕಾತ್ರಾಳ, ಕಾಗವಾಡ, ಬೆಳಗಾವಿ. ಜಿ.ಎಚ್.ಎಸ್, ಅಲಿಪುರ, ಚಿಕ್ಕಬಳ್ಳಾಪುರ. ಜಿ.ಎಚ್.ಪಿ.ಎಸ್, ಹಿರೇಗೋಣಿಗೆರೆ, ದಾವಣಗೆರೆ. ಜಿ.ಎಚ್.ಪಿ.ಎಸ್, ಜೋಡಳ್ಳಿ, ಕಲಘಟಗಿ. ಕೆ.ಪಿ.ಎಸ್, ಕೋಟೇಶ್ವರ, ಕುಂದಾಪುರ, ಉಡುಪಿ. ಡಿ.ಕೆ.ಜೆಡ್.ಪಿ, ಅಳಿಯೂರು, ದಕ್ಷಿಣ ಕನ್ನಡ. ಕೆ.ಎಸ್.ಎಸ್ ಜಿ.ಎಚ್.ಎಸ್, ಹಕ್ಲಾಡಿ, ಬೈಂದೂರು, ಉಡುಪಿ. ಕೆ.ಜಿ.ಬಿ.ವಿ, ಯಳಂದೂರು, ಚಾಮರಾಜನಗರ ಹಾಗೂ ಜಿ.ಎಚ್.ಪಿ.ಎಸ್, ಮಲ್ಲೂರು, ಉಡುಪಿ.
ದೇವದುರ್ಗ | ಅಗ್ನಿ ಅವಘಡ ತಡೆ ಕುರಿತು ಅಣಕು ಪ್ರದರ್ಶನ
ದೇವದುರ್ಗ : ಪಟ್ಟಣದ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಸೋಮವಾರ ತಳವಾರ್ ದೊಡ್ಡಿ ಚಿಣ್ಣರ ಆಟದ ಮೈದಾನದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಣಕು ಪ್ರದರ್ಶನ ನಡೆಸಲಾಯಿತು. ಅರಣ್ಯ ವಲಯಾಧಿಕಾರಿ ಅಲಿಮುದ್ದೀನ್ ಮಾತನಾಡಿ, ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಾಗ ಅಗ್ನಿಶಾಮಕ ಸಿಬ್ಬಂದಿಗಳ ಸೇವೆ ಶ್ಲಾಘನೀಯವಾಗಿದೆ. 24x7 ಹಗಲಿರುಳು ಸೇವೆಯಲ್ಲಿ ತೊಡಗಿರುವ ಅಗ್ನಿಶಾಮಕ ಸಿಬ್ಬಂದಿ ಅನಾಹುತಗಳನ್ನು ತಡೆಗಟ್ಟಲು ಪ್ರಾಣಪಣವಾಗಿ ಕಾರ್ಯನಿರ್ವಹಿಸುತ್ತಾರೆ. ಅಗ್ನಿ ಅವಘಡಗಳಿಗೆ ತಕ್ಷಣ ಸ್ಪಂದಿಸಿ ಜೀವ ರಕ್ಷಿಸುವ ಇಲಾಖೆಯೇ ಅಗ್ನಿಶಾಮಕ ಠಾಣೆ ಎಂದು ಹೇಳಿದರು. ಠಾಣಾಧಿಕಾರಿ ರವಿ ಕುಮಾರ ಮಾತನಾಡಿ, ಫೆಬ್ರವರಿ 23ನ್ನು ಅಗ್ನಿ ಅವಘಡ ಅರಿವು ಮತ್ತು ತಡೆ ದಿನವಾಗಿ ಆಚರಿಸಲಾಗುತ್ತದೆ. ಸುತ್ತಮುತ್ತ ಅಗ್ನಿ ಅವಘಡ ಸಂಭವಿಸಿದರೆ ತಕ್ಷಣ 108 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಜನರನ್ನು ಮೊದಲು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಎಂದು ತಿಳಿಸಿದರು. ಎಲ್ಲ ತರಹದ ಬೆಂಕಿಯನ್ನು ನೀರಿನಿಂದ ನಂದಿಸಲಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ನೀರು ಬಳಸಿದರೆ ಬೆಂಕಿ ಹೆಚ್ಚಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಅಗ್ನಿ ಅವಘಡ ಸಂಭವಿಸಿದ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಾಲಾರ್ ಹುಸೇನ್, ಹನುಮೇಶ ಯಾದವ್, ಬಸವರಾಜ್, ಆಂಜಿನಯ್ಯ, ಸಂಗಮೇಶ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವನ್ಯಜೀವಿ ಸಂಚಾರದ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ನೀಡಿ : ಈಶ್ವರ್ ಖಂಡ್ರೆ
ಬೆಂಗಳೂರು, ಫೆ.23 : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳಿಗೆ, ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಕಳೆದ 7 ದಿನಗಳ ಅಂತರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ಉನ್ನತಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಅವರು, ವನ್ಯಜೀವಿ-ಮಾನವ ಸಂಘರ್ಷ ಇರುವ ಪ್ರದೇಶಗಳ ಸ್ಥಳೀಯ ಮುಖಂಡರ, ಗ್ರಾಮಗಳ ಜಮೀನು ಮಾಲಕರ ವಾಟ್ಸ್ ಅಪ್ ಗ್ರೂಪ್ ಮಾಡಿ ಮಾಹಿತಿ ಪ್ರಸಾರ ಮಾಡುವಂತೆ ಸೂಚಿಸಿದರು. ಮಾನವ ಜೀವ ಅತ್ಯಮೂಲ್ಯವಾದ್ದು, ಒಂದು ಜೀವಹಾನಿ ಆದ ಬಳಿಕ ಮತ್ತೊಂದು ಜೀವ ಹಾನಿ ಆಗಿರುವುದು ಅತ್ಯಂತ ನೋವಿನ ಸಂಗತಿ. ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಘಟನೆ ಮರುಕಳಿಸದಂತೆ 24/7 ನಿಗಾ ಇಡಬೇಕು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸರೆ ಕಾರ್ಯಾಚರಣೆ ನಡೆಸಬೇಕು. ಅತ್ಯಾಧುನಿಕ ಸಲಕರಣೆಗಳಾದ ಥರ್ಮಲ್ ಡ್ರೋನ್ ಬಳಕೆ ಮಾಡಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದರು. ಚಿಕ್ಕಮಗಳೂರಿನಲ್ಲಿ ಕಳೆದ ವಾರ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಬಳಿಕ, ಆನೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರಿಗೆ ತೋಟಕ್ಕೆ ಹೋಗದಂತೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ ತೋಟಕ್ಕೆ ಹೋದ ಕಾರಣ ಈ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಅವರು ಹೇಳಿದರು. ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬಳಿಕವೂ ತೋಟದ ಮಾಲಕರು ಕಾರ್ಮಿಕರನ್ನು ತೋಟಕ್ಕೆ ಕಳಿಸಿದರೆ ಅಂತಹ ಮಾಲಕರಿಗೆ ಎಚ್ಚರಿಕೆ ನೀಡಿ, ತೋಟದ ಮಾಲಕರಿಗೂ ಜವಾಬ್ದಾರಿ ಇರಬೇಕು. ನಿರ್ಲಕ್ಷ್ಯ ತೋರಿದರೆ ದೂರು ದಾಖಲಿಸಿ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಮಾಹಿತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಗೆ 35 ಆನೆಗಳು 3 ಗುಂಪಿನಲ್ಲಿ ಸಂಚರಿಸುತ್ತಿದ್ದು, ಬೇಸಿಗೆಯಲ್ಲಿ ಅವುಗಳು ಕಾಡಿನಿಂದ ಹೊರಬರುವುದು ಸಾಮಾನ್ಯ. ಆದಾಗ್ಯೂ ಸಿಬ್ಬಂದಿ ಮತ್ತು ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಆಗದಂತೆ ನಿಗಾ ಇಡಬೇಕು. ಪ್ರತಿ ವರ್ಷ ವನ್ಯಜೀವಿ-ಮಾನವ ದಾಳಿಯಲ್ಲಿ ಆಗುತ್ತಿರುವ ಸಾವಿನ ಸಂಖ್ಯೆ ಇಳಿಕೆಯಾಗಬೇಕೇ ಹೊರತು, ಹೆಚ್ಚಳ ಆಗಬಾರದು ನೀವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಅವರು ತಿಳಿಸಿದರು. ಹಿರಿಯ ಅಧಿಕಾರಿಗಳು ಕ್ಷೇತ್ರಕ್ಕೆ ಹೋಗುವಂತೆ ಸೂಚನೆ: ಬೇಸಿಗೆ ಹಿನ್ನೆಲೆಯಲ್ಲಿ ಮುಂದಿನ 2-3 ತಿಂಗಳು ಅತ್ಯಂತ ಕ್ಲಿಷ್ಟಕರವಾಗಿದ್ದು, ಹಿರಿಯ ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಇರುವ ಪ್ರದೇಶಕ್ಕೆ ತೆರಳಿ, ಅಧಿಕಾರಿ, ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದರು. ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರ, ಮನೋಜ್ ರಾಜನ್, ಸಿಎಫ್ ಪ್ರಭಾಕರನ್, ಕೊಪ್ಪ ವಲಯದ ಡಿಸಿಎಫ್ ಶಿವಶಂಕರ್ ಮತ್ತಿತರರು ಪಾಲ್ಗೊಂಡಿದ್ದರು. ‘ಸಫಾರಿ ಪುನಾರಂಭ: ಕಾಡಿನಂಚಿನ ಗ್ರಾಮಗಳಲ್ಲಿ ಸಭೆ ನಡೆಸಲು ಸೂಚನೆ’ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಪುನಾರಂಭ ಮಾಡಿರುವ ಬಗ್ಗೆ ಕೆಲವರು ಮಾತ್ರವೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರಕಾರ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ತೀರ್ಮಾನಿಸಿದ್ದು, ಗ್ರಾಮಗಳಲ್ಲಿ ಸಭೆ ನಡೆಸಿ, ಸ್ಥಳೀಯರ ಅಗತ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಬೇಕು. ಯುವಜನರಿಗೆ ಕೌಶಲ್ಯ ತರಬೇತಿ ನೀಡಬೇಕು, ಕಾಡಿನಂಚಿನ ಶಾಲೆ ಕಾಲೇಜುಗಳಿಗೆ ಅಗತ್ಯ ಸಲಕರಣೆ ನೀಡಬೇಕು. ವನ್ಯಜೀವಿಗಳು ನಾಡಿಗೆ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ಸೂಚಿಸಿದರು.
ನನಗೆ ‘ದಿ ಕೇರಳ ಸ್ಟೋರಿ 2’ ಚಿತ್ರ ನೋಡುವ ಆಸಕ್ತಿಯಿಲ್ಲ’: ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್
ಕೊಚ್ಚಿ, ಫೆ.23: ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಬಾಲಿವುಡ್ ಚಲನಚಿತ್ರ ವೀಕ್ಷಿಸುವ ಯಾವುದೇ ಯೋಜನೆ ಇಲ್ಲ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸೋಮವಾರ ಹೇಳಿದರು. ಚಿತ್ರದ ಟ್ರೇಲರ್ ಕೇರಳವನ್ನು ಕೆಟ್ಟದಾಗಿ ಚಿತ್ರಿಸುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲಿ ಅವರು ಈ ನಿಲುವು ವ್ಯಕ್ತಪಡಿಸಿದರು. ಕೊಚ್ಚಿಯ ತ್ರಿಕ್ಕಾಕರದಲ್ಲಿ NDA ವಲಯ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನನಗೆ ‘ದಿ ಕೇರಳ ಸ್ಟೋರಿ 2’ ಚಿತ್ರ ವೀಕ್ಷಿಸಲು ಆಸಕ್ತಿ ಇಲ್ಲ” ಎಂದು ಸ್ಪಷ್ಟಪಡಿಸಿದರು. “ಚಿತ್ರವನ್ನು ನೋಡಲು ಬಯಸುವವರು ನೋಡಬಹುದು. ಆಸಕ್ತಿ ಇಲ್ಲದವರು ನೋಡಬೇಕಾಗಿಲ್ಲ,” ಎಂದು ಹೇಳಿದರು. ಸಂವಿಧಾನ ಖಾತರಿಪಡಿಸಿರುವ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ ಅವರು, ಚಿತ್ರದಲ್ಲಿ ‘ಕಾನೂನುಬಾಹಿರ’ ಅಂಶಗಳಿದ್ದರೆ ಅದರ ಕುರಿತು ತೀರ್ಮಾನಿಸುವುದು ನ್ಯಾಯಾಲಯಗಳ ಕೆಲಸ ಎಂದು ಹೇಳಿದರು. “ಪ್ರತಿಯೊಬ್ಬರಿಗೂ ಚಲನಚಿತ್ರ ನಿರ್ಮಿಸುವ ಹಕ್ಕಿದೆ. ಅದರಲ್ಲಿ ಏನಾದರೂ ಕಾನೂನುಬಾಹಿರವಾಗಿದ್ದರೆ, ನ್ಯಾಯಾಲಯ ಅದನ್ನು ರದ್ದುಗೊಳಿಸುತ್ತದೆ,” ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟರು. ಈ ಹಿಂದೆ ‘ಎಂಪುರಾನ್’ ಚಿತ್ರದ ಸುತ್ತಲೂ ಉದ್ಭವಿಸಿದ್ದ ವಿವಾದದ ಸಂದರ್ಭದಲ್ಲಿಯೂ ತಾವು ಇದೇ ರೀತಿಯ ನಿಲುವು ತಾಳಿದ್ದಾಗಿ ಅವರು ಹೇಳಿದರು. ಮೋಹನ್ ಲಾಲ್ ಅಭಿನಯದ ಈ ಚಿತ್ರದಲ್ಲಿ ಗೋಧ್ರಾ ಗಲಭೆಗಳ ಚಿತ್ರಣವಿತ್ತು ಎಂದು ಹೇಳಲಾಗಿತ್ತು. ಬಳಿಕ ಅದು ಬಲಪಂಥೀಯ ಬೆಂಬಲಿಗರಿಂದ ಟೀಕೆಗೆ ಗುರಿಯಾಗಿ ಮರು–ಸೆನ್ಸಾರ್ ಪ್ರಕ್ರಿಯೆಗೆ ಒಳಗಾಗಬೇಕಾಯಿತು. ‘ದಿ ಕೇರಳ ಸ್ಟೋರಿ 2’ ಟ್ರೇಲರ್ ನಲ್ಲಿನ ವಿಷಯದ ಬಗ್ಗೆ ತಮಗೆ ಆಕ್ಷೇಪಣೆ ಇದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ, “ನಾನು ಅದನ್ನು ನೋಡುವುದಿಲ್ಲ ಎಂದು ಹೇಳಿದ್ದೇನೆ,” ಎಂದು ಪುನರುಚ್ಚರಿಸಿದರು. ಜೊತೆಗೆ, “ನನಗೆ ‘ಧುರಂಧರ್’ ಚಿತ್ರ ಇಷ್ಟವಾಯಿತು. ಅದನ್ನು ಎರಡು ಬಾರಿ ನೋಡಿದ್ದೇನೆ,” ಎಂದು ರಾಜೀವ್ ಚಂದ್ರಶೇಖರ್ ಹೇಳಿದರು. ಈ ಬ್ಲಾಕ್ಬಸ್ಟರ್ ಸ್ಪೈ ಥ್ರಿಲ್ಲರ್ ಚಿತ್ರವು ಬಿಜೆಪಿಯ ರಾಜಕೀಯ ಹಿತಾಸಕ್ತಿಗಳಿಗೆ ಪೂರಕವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು.
ಲಿಂಗಸುಗೂರು |ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ
ಲಿಂಗಸುಗೂರು : ತಾಲೂಕಿನ ಗ್ರಾಮೀಣ ಭಾಗಗಳಾದ ಟಮಣಕಲ್ ಹಾಗೂ ರಾಯದುರ್ಗದಿಂದ ಗುರುಗುಂಟಾಕ್ಕೆ ಶಾಲಾ ಸಮಯದಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಟಮಣಕಲ್ ಹಾಗೂ ರಾಯದುರ್ಗ ಗ್ರಾಮಗಳಿಂದ ಗುರುಗುಂಟಾಕ್ಕೆ ಬಸ್ ಸೌಲಭ್ಯವಿಲ್ಲದೇ ಸುಮಾರು 50-60 ವಿದ್ಯಾರ್ಥಿಗಳು ದಿನವೂ ಸುಮಾರು 10 ಕಿ.ಮೀ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪರೀಕ್ಷಾ ಅವಧಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಕಷ್ಟ ಎದುರಾಗುತ್ತಿದೆ ಎಂದು ಸಂಘಟನೆಯವರು ಆತಂಕ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಬೆಳಿಗ್ಗೆ 9.00 ಗಂಟೆಗೆ ಹಾಗೂ ಸಂಜೆ 4.30 ಗಂಟೆಗೆ ಗುರುಗುಂಟಾದಿಂದ ಟಮಣಕಲ್ ಮತ್ತು ರಾಯದುರ್ಗ ಗ್ರಾಮಗಳಿಗೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ ಸೇರಿದಂತೆ ಬಸವರಾಜ, ರಾಮಣ್ಣ, ಹನುಮನಗೌಡ, ಮುದಿಯಪ್ಪ, ನಾಗಪ್ಪ, ಸೋಮರೆಡ್ಡಿ ಹಾಗೂ ವಿದ್ಯಾರ್ಥಿನಿಯರಾದ ಸೋಮಮ್ಮ, ಚನ್ನಮ್ಮ, ಅಕ್ಷತಾ, ಅಂಬಮ್ಮ, ದುರುಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಸ್ತಾಪದಲ್ಲಿರುವ ಸಿಂಧನೂರು ಜಿಲ್ಲೆಗೆ ಸಿರವಾರ ತಾಲೂಕು ಸೇರ್ಪಡೆ ವಿರೋಧಿಸಿ ಬೃಹತ್ ಪ್ರತಿಭಟನೆ
ಸಿರವಾರ : ನೂತನವಾಗಿ ಪ್ರಸ್ತಾಪದಲ್ಲಿರುವ ಸಿಂಧನೂರು ಜಿಲ್ಲೆಗೆ ಸಿರವಾರ ತಾಲೂಕು ಸೇರ್ಪಡೆ ಮಾಡುವ ವಿಚಾರಕ್ಕೆ ಪಟ್ಟಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆಯುತ್ತಿದ್ದು, ಸೋಮವಾರ ತಾಲೂಕು ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ರಾಯಚೂರಿನಿಂದ ಸಿರವಾರ 36 ಕಿ.ಮೀ ದೂರದಲ್ಲಿದ್ದು, ಸಿಂಧನೂರು ಸುಮಾರು 80 ಕಿ.ಮೀ ದೂರದಲ್ಲಿದೆ. ಒಂದು ವೇಳೆ ಸಿರವಾರವನ್ನು ಸಿಂಧನೂರು ಜಿಲ್ಲೆಗೆ ಸೇರಿಸಿದರೆ ಜಿಲ್ಲಾ ಕಚೇರಿಗಳ ಕಾರ್ಯಗಳಿಗೆ ಜನರು ಹೆಚ್ಚಿನ ದೂರ ಪ್ರಯಾಣಿಸಬೇಕಾಗಿ ಬಂದು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು. ಪಟ್ಟಣದ ಹಿರಿಯ ವಾಣಿಜ್ಯೋಧ್ಯಮಿ ಚುಕ್ಕಿ ಸೂಗಪ್ಪ ಸಾಹುಕಾರ್ ಮಾತನಾಡಿ, “ಹೊಸ ಜಿಲ್ಲೆಗಳ ರಚನೆ ಜನರಿಗೆ ಅನುಕೂಲವಾಗಬೇಕೇ ಹೊರತು ಅನಾನುಕೂಲವಾಗಬಾರದು. ಸಿರವಾರವನ್ನು ಸಿಂಧನೂರು ಜಿಲ್ಲೆಗೆ ಸೇರಿಸಿದರೆ ಜನರಿಗೆ ಸಂಕಷ್ಟವಾಗಲಿದೆ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ಸಿರವಾರ ತಾಲೂಕನ್ನು ರಾಯಚೂರು ಜಿಲ್ಲೆಯಲ್ಲಿ ಉಳಿಸಬೇಕು” ಎಂದು ಆಗ್ರಹಿಸಿದರು. ಪ್ರತಿಭಟನೆ ನಿರ್ಲಕ್ಷಿಸಿದರೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು. ವಿವಿಧ ಪಕ್ಷಗಳ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಒಕ್ಕೋರಲಿನಿಂದ ಸರ್ಕಾರವನ್ನು ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿದರು. ಬಳಿಕ ರಾಜ್ಯಪಾಲರಿಗೆ ಉದ್ದೇಶಿಸಿ ಬರೆದ ಮನವಿ ಪತ್ರವನ್ನು ರಾಯಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿರವಾರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಜೆ.ದೇವರಾಜಗೌಡ, ಮಾಜಿ ಶಾಸಕರಾದ ಗಂಗಾಧರ ನಾಯಕ, ಮುಖಂಡರಾದ ಜೆ.ಶರಣಪ್ಪಗೌಡ, ಎನ್.ಉದಯಕುಮಾರ್, ಜಿ.ಲೋಕರೆಡ್ಡಿ, ಮಲ್ಲಿಕಾರ್ಜುನ ವಕೀಲ ಜಕ್ಕಲದಿನ್ನಿ, ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಿಗಿ, ಪ.ಪಂ. ಅಧ್ಯಕ್ಷ ಹಾಜಿ ಚೌದ್ರಿ, ರಮೇಶ ದರ್ಶನಕರ್, ದಾನನಗೌಡ, ಶಶಿಧರಗೌಡ ಹರವಿ, ವೈ.ಅಮರೇಶಪ್ಪಗೌಡ, ಚಂದ್ರಶೇಖರಯ್ಯಸ್ವಾಮಿ, ಸಿದ್ದರಾಮಯ್ಯಸ್ವಾಮಿ, ವೀರೇಶ ಸಾಹುಜಾರ್, ನರಸಿಂಹರಾವ್ ಕುಲ್ಕರ್ಣಿ, ಪ.ಪಂ. ಸದಸ್ಯರಾದ ಅಜೀತಕುಮಾರ್, ಹೊನ್ನಟಿಗಿ, ವಿನಯಕುಮಾರ್, ಹಸೇನ ಅಲೀ, ಹೆಚ್.ಮಾರ್ಕಪ್ಪ, ಡಾ: ಸುನೀಲ್ ಸರೋಧೆ, ಕರವೇ ಅಧ್ಯಕ್ಷರಾದ ರಾಘವೇಂದ್ರ ಖಾಜನಗೌಡ, ಡಿ.ಯಮನೂರು, ಎಲ್.ವಿ. ಸುರೇಶ, ಮೇಶಕ್ ದೊಡ್ಡಮನೆ, ಡೇವಿಡ್, ಸೇರಿದಂತೆ ಸಿರವಾರ ತಾಲೂಕಿನ ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘ - ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಇದ್ದರು.
ಲಿಂಗಸುಗೂರು | ಮಟ್ಕಾ ನಡೆಸುತ್ತಿದ್ದ ಆರೋಪ : ಮೂವರ ಬಂಧನ
ಲಿಂಗಸುಗೂರು : ತಾಲೂಕಿನ ಹಟ್ಟಿ ಪಟ್ಟಣದ ಸಂತೆ ಬಜಾರ್ ಹಾಗೂ ಕಾಕಾನಗರ ಪ್ರದೇಶಗಳಲ್ಲಿ ಅಕ್ರಮ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಏಕಕಾಲದಲ್ಲಿ ಮೂರು ಪ್ರತ್ಯೇಕ ದಾಳಿಗಳನ್ನು ನಡೆಸಿ ಮೂವರು ಮಟ್ಕಾ ಬುಕ್ಕಿಗಳನ್ನು ಬಂಧಿಸಿದ್ದಾರೆ. ಆರಕ್ಷಕ ನಿರೀಕ್ಷಕ ಶಿವಾನಂದ ಗಾಣಿಗೇರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದರಾಮೇಶ (32), ಆದಪ್ಪ (54) ಹಾಗೂ ಸೈಯದ್ ಮಮ್ಮದ್ ಅಲಿ ಖಾದ್ರಿ ಅವರನ್ನು ಬಂಧಿಸಲಾಗಿದೆ. ಬಂಧಿತರು ಮಟ್ಕಾ ಚೀಟಿಗಳನ್ನು ಬರೆಯುತ್ತಿದ್ದು, ಹಣವನ್ನು ತಮ್ಮಲ್ಲೇ ಇಟ್ಟುಕೊಂಡು ಜೂಜಾಟ ನಡೆಸುತ್ತಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಆರೋಪಿಗಳಿಂದ 2,560 ರೂ. ನಗದು, ಮಟ್ಕಾ ಚೀಟಿಗಳು ಹಾಗೂ ಒಂದು ಪೆನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಅಲ್ಟಾಟೆಕ್ ಹೆಸರಿನಲ್ಲಿ 80 ಸಾವಿರ ರೂ. ಆನ್ಲೈನ್ ವಂಚನೆ: ದೂರು ದಾಖಲು
ಮಣಿಪಾಲ, ಫೆ.23: ಅಲ್ಟಾಟೆಕ್ ಕಂಪೆನಿ ಹೆಸರಿನಲ್ಲಿ ಇಂಜಿನಿಯರೊಬ್ಬ ರಿಗೆ ಸಾವಿರಾರು ರೂ. ಹಣ ಆನ್ಲೈನ್ನಲ್ಲಿ ವಂಚಿಸಿ ರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಷಾರ್ ಎಚ್.ಪಿ.(42) ಎಂಬವರು ಮಣಿಪಾಲ ಹೆರ್ಗಾ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಮನೆ ನಿರ್ಮಾಣ ಮಾಡು ತ್ತಿದ್ದು ಈ ಮನೆಯ ನಿರ್ಮಾಣಕ್ಕೆ ಕಿರಣ್ ಹಾಗೂ ಮಂಜುನಾಥ್ ಎಂಬ ಇಂಜಿನಿಯರ್ ಅವರಿಗೆ ವಹಿಸಿದ್ದರು. ಕಿರಣ್ ಕಾಂಕ್ರೀಟ್ ಮಾಡಲು ಆರ್ಎಂಸಿ ಸಪ್ಲಾಯರನ್ನು ಆನ್ಲೈನ್ನಲ್ಲಿ ಹುಡುಕುತ್ತಿದ್ದು, ಅಲ್ಲಿ ಸಿಕ್ಕಿದ ನಂಬರ್ಗೆ ಫೆ.21ರಂದು ಕರೆ ಮಾಡಿದರು. ಅವರು ಅಲ್ಟ್ರಾಟೆಕ್ ಕಂಪನಿಯಿಂದ ಮಾತನಾಡುತ್ತಿರುವುದು ಎಂದು ಹೇಳಿ, ಸೈಟ್ ಪರಿಶೀಲನೆ ಮಾಡುವ ಮೊದಲು ಮುಂಗಡ 80000ರೂ. ನೀಡುವಂತೆ ತಿಳಿಸಿದರು. ಅದನ್ನು ನಂಬಿ ಕಿರಣ್ ಆರೋಪಿಗಳು ತಿಳಿಸಿದ ಖಾತೆಗೆ 80 ಸಾವಿರ ರೂ. ಹಣವನ್ನು ಹಾಕಿದ್ದರು. ಆದರೆ ಆರೋಪಿಗಳು ಅಲ್ಟಾಟೆಕ್ ಕಂಪನಿಯ ಹೆಸರಿನಲ್ಲಿ ಕಿರಣ್ ಅವರಿಗೆ ಮೋಸ ಮಾಡಿರುವುದು ತಿಳಿದುಬಂದಿದೆ.
ಹೂಡಿಕೆ ಹೆಸರಿನಲ್ಲಿ 5.39 ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಕುಂದಾಪುರ, ಫೆ.23: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಮೂಲದ ಪರಶುರಾಮ್ ಲಮಾಣಿ(29) ಎಂಬವರಿಗೆ ಫೆ.18ರಂದು ಅಪರಿಚಿತರು ಕರೆ ಮಾಡಿ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ತಿಳಿಸಿದರು. ಇದನ್ನು ನಂಬಿದ ಅವರು, ವಿವಿಧ ಹಂತಗಳಲ್ಲಿ ಬೇರೆ ಬೇರೆ ಖಾತೆಗಳಿಗೆ ಒಟ್ಟು 5,39,200ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಪರಶುರಾಮ್ ಅವರಿಗೆ ಯಾವುದೇ ಹಣವನ್ನು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
ಎಸ್ಐಆರ್ ವಿರುದ್ಧ ರಾಷ್ಟ್ರವ್ಯಾಪಿ ದೊಡ್ಡ ಪ್ರಮಾಣದಲ್ಲಿ ಜನಾಂದೋಲನ ನಡೆಯಬೇಕಾಗಿದೆ : ಶಿವಸುಂದರ್
ಮಂಡ್ಯ : ಚುನಾವಣಾ ಆಯೋಗವು ದೇಶಾದ್ಯಂತ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯು ಪ್ರಜಾತಂತ್ರವನ್ನು ಕೊನೆಗೊಳಿಸುವ ಕೇಂದ್ರದ ಆಡಳಿತರೂಢ ಪಕ್ಷದ ಯತ್ನಕ್ಕೆ ಅಸ್ತ್ರವಾಗಿದೆ ಎಂದು ಚಿಂತಕ, ಅಂಕಣಕಾರ ಶಿವಸುಂದರ್ ಆರೋಪಿಸಿದ್ದಾರೆ. ಎದ್ದೇಳು ಕರ್ನಾಟಕ, ಕರ್ನಾಟಕ ಜನಶಕ್ತಿ, ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಎಸ್ಐಆರ್ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್ಐಆರ್ ನ ಪರಿಣಾಮ, ಅಪಾಯಗಳ ಕುರಿತು ವಿವರಿಸಿದರು. ದೇಶದ ಆಡಳಿತದ ಚುಕ್ಕಾಣಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದೆಂಬ ತೀರ್ಮಾನಕ್ಕೆ ಬಿಜೆಪಿ, ಸಂಘಪರಿವಾರ ಬಂದಿದೆ. ಅದು ಕೈಗೂಡಬೇಕಾದರೆ ಸಂಸತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ಸಂವಿಧಾನದ ಮೂಲಭೂತ ನೆಲೆಯನ್ನು ಧ್ವಂಸಗೊಳಿಸಬೇಕು. ಅದಕ್ಕಾಗಿ ಎಸ್ಐಆರ್ ಅನ್ನು ದಾಳವಾಗಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ತಮ್ಮ ಓಟ್ ಬ್ಯಾಂಕ್ ಅಲ್ಲದ ಅಲ್ಪಸಂಖ್ಯಾತರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ಪ್ರಯತ್ನವನ್ನು ಸಿಎಎ, ಎನ್ಆರ್ಸಿ ಮೂಲಕ ನಡೆಸಲಾಯಿತು. ಆದರೆ, ಜನವಿರೋಧದಿಂದ ಅದನ್ನು ಕೈಬಿಡಲಾಯಿತು. ಈಗ ಎಸ್ಐಆರ್ ಮೂಲಕ ಅದನ್ನು ಈಡೇರಿಸಿಕೊಳ್ಳಲು ಹೊರಟಿದೆ. ಇದರಿಂದ ಅಲ್ಪಸಂಖ್ಯಾತರು ಮಾತ್ರವಲ್ಲ, ದಲಿತರು, ಹಿಂದುಳಿದವರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ವಿಶ್ಲೇಷಿಸಿದರು. ಈಗಾಗಲೇ ಎಸ್ಐಆರ್ ಮೂಲಕ ಬಿಹಾರದಲ್ಲಿ ಅಧಿಕಾರಿ ಹಿಡಿಯಲಾಗಿದೆ. ಮುಂದುವರಿದು ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ ಸೇರಿದಂತೆ ಚುನಾವಣಾ ಹತ್ತಿರದಲ್ಲಿರುವ ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ನಾನಾ ಕಾರಣ ನೀಡಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮುಂದೆ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಮತದಾರರ ವಿಶೇಷ ಪರಿಷ್ಕರಣೆಗೆ 11 ದಾಖಲೆಗಳನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ. ಇಷ್ಟೂ ದಾಖಲೆಗಳನ್ನು ದೇಶದ ಎಲ್ಲಾ ಪ್ರಜೆಗಳ ಹೊಂದಿರುವುದು ಸಾಧ್ಯವಿಲ್ಲ. ಕೇವಲ ಹೆಸರಿನಲ್ಲಿ ತಾಂತ್ರಿಕ ದೋಷದಿಂದ ಒಂದು ಅಕ್ಷರ ತಪ್ಪಾಗಿದ್ದರೂ ಆತ ಮತಪಟ್ಟಿಯಿಂದ ಹೊರದಬ್ಬುತ್ತಾನೆ. ಇದರ ಹಿಂದಿನ ಷಡ್ಯಂತ್ರವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಸಂವಿಧಾನಕ್ಕೆ ಕೊಡಲಿಪೆಟ್ಟು ನೀಡಲು ಹೊರಟಿರುವ ಎಸ್ಐಆರ್ ವಿರುದ್ಧ ರಾಷ್ಟ್ರವ್ಯಾಪಿ ದೊಡ್ಡ ಪ್ರಮಾಣದಲ್ಲಿ ಜನಾಂದೋಲನ ನಡೆಯಬೇಕಾಗಿದೆ. ಜನಪರ ಸಂಘಟನೆಗಳು ಈ ನಿಟ್ಟಿನಲ್ಲಿ ಜಾಗೃತಿಗೊಳಿಸುವ, ಹೋರಾಟಕ್ಕೆ ಅಣಿಗೊಳಿಸುವ ಜವಾಬ್ಧಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದರು. ಮಹಿಳಾ ಮುನ್ನಡೆ ಸಂಘಟನೆಯ ಪೂರ್ಣೀಮಾ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ದಸಂಸ ಮುಖಂಡ ಎಂ.ವಿ.ಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಜೆಎನ್ಯುನಲ್ಲಿ ಎಡ, ಬಲ ಪಂಥೀಯ ವಿದ್ಯಾರ್ಥಿಗಳ ನಡುವೆ ಘರ್ಷಣೆ
ಹೊಸದಿಲ್ಲಿ, ಫೆ. 23: ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪ ಕುಲಪತಿ ಸಾಂತಿಶ್ರೀ ಧೂಳಿಪುಡಿ ಪಂಡಿತ್ರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆದ ಬಳಿಕ, ಎಡಪಂಥೀಯ ಮತ್ತು ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ನಡುವೆ ಸೋಮವಾರ ಮುಂಜಾನೆ ಘರ್ಷಣೆ ನಡೆದಿದೆ. ಫೆಬ್ರವರಿ 16ರಂದು ‘ದ ಸಂಡೇ ಗಾರ್ಡಿಯನ್’ಗೆ ನೀಡಿದ ಸಂದರ್ಶನವೊಂದರಲ್ಲಿ ಜಾತೀವಾದಿ ಹೇಳಿಕೆಗಳನ್ನು ನೀಡಿದ್ದಾರೆನ್ನಲಾದ ಉಪ ಕುಲಪತಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಶ್ವವಿದ್ಯಾಲಯ ಆವರಣದ ಪೂರ್ವ ದ್ವಾರದತ್ತ ಮೆರವಣಿಗೆಯಲ್ಲಿ ಸಾಗುವಂತೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘ ಕರೆ ನೀಡಿತ್ತು. ‘‘ತಾವು ಸಂತ್ರಸ್ತರು ಎಂಬುದಾಗಿ ಶಾಶ್ವತವಾಗಿ ಹೇಳಿಕೊಳ್ಳುತ್ತಾ ಬಂದರೆ ದಲಿತರ ಅಭಿವೃದ್ಧಿ ಸಾಧ್ಯವಾಗುವುದಿಲ್ಲ’’ ಎಂದು ಅವರು ಆ ಸಂದರ್ಶನದಲ್ಲಿ ಹೇಳಿದ್ದಾರೆ. ಸೋಮವಾರ ಮುಂಜಾನೆ 1:30ರ ವೇಳೆಗೆ ಎಡಪಂಥೀಯ ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘ ಮತ್ತು ಬಲಪಂಥೀಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಗೆ ಸೇರಿದ ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿತು. ವಿಶ್ವವಿದ್ಯಾಲಯ ಆಡಳಿತವು ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿಗಳೊಂದಿಗೆ ಮಾತನಾಡದೆ, ಅವರ ವಿರುದ್ಧ ಎಬಿವಿಪಿ ಸದಸ್ಯರನ್ನು ಛೂ ಬಿಟ್ಟರು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪಶ್ಚಿಮದಂಡೆಯಲ್ಲಿ ಮಸೀದಿಗೆ ಬೆಂಕಿ ಹಚ್ಚಿದ ಇಸ್ರೇಲಿ ವಸಾಹತುಗಾರರು
ರಮಲ್ಲಾ, ಫೆ.23: ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಮಸೀದಿಯೊಂದರಲ್ಲಿ ಸೋಮವಾರ ಬೆಳಿಗ್ಗೆ ಇಸ್ರೇಲಿ ವಸಾಹತುಗಾರರು ದಾಂಧಲೆ ನಡೆಸಿ ಬೆಂಕಿ ಹಚ್ಚಿರುವುದಾಗಿ ಫೆಲೆಸ್ತೀನ್ ಪ್ರಾಧಿಕಾರದ ಮೂಲಗಳು ಹೇಳಿವೆ. ನಬ್ಲೂಸ್ ಬಳಿಯ ಟೆಲ್ಲ್ ಪಟ್ಟಣದಲ್ಲಿರುವ ಅಬು ಬಕರ್ ಅಲ್-ಸಿದ್ದಿಕ್ ಮಸೀದಿಯ ಗೋಡೆಯ ಮೇಲೆ ಬಣ್ಣ ಎರಚಿ, ಆಕ್ಷೇಪಾರ್ಹ ಪದಗಳನ್ನು ಬರೆದ ಬಳಿಕ ಮಸೀದಿಗೆ ಬೆಂಕಿ ಹಚ್ಚಲಾಗಿದೆ. ಬೆಳಿಗ್ಗೆ ಪ್ರಾರ್ಥನೆಗೆ ಬಂದವರು ಮಸೀದಿಯ ಮುಖ್ಯ ದ್ವಾರದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಕೃತ್ಯದಲ್ಲಿ ಮಸೀದಿಯ ಕಿಟಕಿ ಗಾಜು ಮತ್ತು ಬಾಗಿಲಿಗೆ ಹಾನಿಯಾಗಿದೆ . ಇಬ್ಬರು ವ್ಯಕ್ತಿಗಳು ಗ್ಯಾಸೊಲಿನ್ ಮತ್ತು ಸ್ಪ್ರೇ ಪೈಂಟ್ನ ಕ್ಯಾನಿನೊಂದಿಗೆ ಮಸೀದಿಯತ್ತ ಹೋಗುತ್ತಿರುವುದು ಮತ್ತು ಕೆಲ ಹೊತ್ತಿನ ಬಳಿಕ ಅಲ್ಲಿಂದ ಓಡಿಹೋಗುತ್ತಿರುವುದು ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.
ದೈವಪಾತ್ರಗಳಿಗೆ ಅಪಮಾನ ಆರೋಪ; ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರಣವೀರ್ ಸಿಂಗ್
ಬೆಂಗಳೂರು : ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಮಾನಕರ ರೀತಿಯಲ್ಲಿ ಅನುಕರಣೆ ಮಾಡಿದ ಹಾಗೂ ಚಾವುಂಡಿ ದೈವದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ರಣವೀರ್ ಸಿಂಗ್ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದು, ಹೈಗ್ರೌಂಡ್ಸ್ ಠಾಣೆ ಪೊಲೀಸರು ಹಾಗೂ ಖಾಸಗಿ ದೂರುದಾರ ಪ್ರಶಾಂತ್ ಮೆಥಲ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಿದ್ದಾರೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ಹಾಜರಾದ ರಣವೀರ್ ಸಿಂಗ್ ಪರ ವಕೀಲರು, ಅರ್ಜಿದಾರರು ಬಾಲಿವುಡ್ ನಟರಾಗಿದ್ದಾರೆ. ರಣವೀರ್ ಸಿಂಗ್ ಕಾಂತರ ಚಾಪ್ಟರ್ -1 ರ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟನೆ ಬಗ್ಗೆ ಪ್ರಾಮಾಣಿಕವಾಗಿ ಹೊಗಳಿ ಮಾತನಾಡಿದ್ದಾರೆ. ಆದರೆ, ಅವರ ಹೇಳಿಕೆಗೆ ಕ್ರಿಮಿನಲ್ ಬಣ್ಣ ಬಳಿಯಲಾಗಿದೆ. ಪ್ರಕರಣದಲ್ಲಿನ ಖಾಸಗಿ ದೂರುದಾರರು ವಕೀಲರಾಗಿದ್ದಾರೆ. ಅರ್ಜಿಯನ್ನು ಇಂದು ಮಧ್ಯಾಹ್ನ 2.30ಕ್ಕೆ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಏಕೆ ತುರ್ತು ವಿಚಾರಣೆ ನಡೆಸಬೇಕು? ಅರ್ಜಿದಾರರು ಬಾಲಿವುಡ್ ನಟರೆಂಬ ಕಾರಣಕ್ಕಾಗಿಯೇ? ಹಾಲಿವುಡ್ನವರಾದರೆ ಈಗಲೇ ವಿಚಾರಣೆ ನಡೆಸಬೇಕೇ? ಎಂದು ಪ್ರಶ್ನಿಸಿದರು. ರಣವೀರ್ ಪರ ವಕೀಲರು, ಪೊಲೀಸರು ಅರ್ಜಿದಾರರಿಗೆ ಈಗಾಗಲೇ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಆದ್ದರಿಂದ, ತುರ್ತು ವಿಚಾರಣೆಗೆ ಕೋರಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ಪ್ರಕರಣದ ಹಿನ್ನೆಲೆ: ನಗರದ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದ ಪ್ರಶಾಂತ್ ಮೆಥಲ್, 2025ರ ನವೆಂಬರ್ 28ರಂದು ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್, ಕಾಂತಾರ ಚಾಪ್ಟರ್-1 ಕುರಿತು ಮಾತನಾಡಿದ್ದರು. ಈ ವೇಳೆ ಚಿತ್ರದ ಕರವಾಳಿ ಕರ್ನಾಟಕ ಭಾಗದ ಪಂಜುರ್ಲಿ/ಗುಳಿಗ ದೈವದ ದೈವಿಕ ಅಭಿವ್ಯಕ್ತಿಗಳನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಅನುಕರಿಸಿದ್ದಾರೆ ಎಂದು ಆರೋಪಿಸಿದ್ದರು. ಮುಂದುವರಿದು, ಚಾವುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಇದರಿಂದ, ಚಾವುಂಡಿ ದೈವ ಭಕ್ತರ ಮನಸ್ಸಿಗೆ ನೋವಾಗಿದೆ. ಆ ಮೂಲಕ ರಣವೀರ್, ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮಾಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ, ಈ ಕುರಿತು ತನಿಖೆ ನಡೆಸುವಂತೆ 2026ರ ಜನವರಿ 23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 196, 299 ಮತ್ತು 302 ಅಡಿಯಲ್ಲಿ ವಿಭಿನ್ನ ಗುಂಪುಗಳ ನಡುವೆ ಧ್ವೇಷ ಭಾವನೆ ಪ್ರಚೋದಿಸಿದ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ರಣವೀರ್ ಸಿಂಗ್ಗೆ ನೋಟಿಸ್ ನೀಡಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ರಣವೀರ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಮಧ್ಯಪ್ರಾಚ್ಯಕ್ಕೆ `ವಾಯು ಸೇತುವೆ' ನಿರ್ಮಿಸಿದ ಅಮೆರಿಕ: ವರದಿ
ವಾಷಿಂಗ್ಟನ್, ಫೆ.23: ಇರಾನ್ನೊಂದಿಗೆ ಸಂಭಾವ್ಯ ಪರಮಾಣು ಒಪ್ಪಂದದ ಕುರಿತು ಮಾತುಕತೆಗಳು ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಮಧ್ಯಪ್ರಾಚ್ಯಕ್ಕೆ ಮಿಲಿಟರಿ ವಿಮಾನಗಳ ನಿಯೋಜನೆಯನ್ನು ತೀವ್ರಗೊಳಿಸಿದೆ. ಪ್ರದೇಶಕ್ಕೆ ಸಿಬ್ಬಂದಿ, ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಸಾಗಿಸುವ ವಿಮಾನಗಳ `ಹರಿವು' ಹೆಚ್ಚಿರುವುದಾಗಿ ವರದಿಯಾಗಿದೆ. ವಿಮಾನಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವ `ಫ್ಲೈಟ್ ರಾಡಾರ್' ಬಿಡುಗಡೆಗೊಳಿಸಿರುವ ವೀಡಿಯೊ ಅಮೆರಿಕದ ಸೇನಾ ನೆಲೆಯಿಂದ ಫೈಟರ್ ಜೆಟ್ಗಳು, ಆಗಸದಲ್ಲಿ ವಿಮಾನಗಳಿಗೆ ಇಂಧನ ಮರುತುಂಬಿಸುವ ಟ್ಯಾಂಕರ್ ವಿಮಾನಗಳು ಮತ್ತು ಸಾರಿಗೆ ವಿಮಾನಗಳು ನಿರ್ಗಮಿಸುತ್ತಿರುವುದನ್ನು ತೋರಿಸಿದೆ. ಅಟ್ಲಾಂಟಿಕ್ನಾದ್ಯಂತ ಯುರೋಪ್ ಮತ್ತು ಮೆಡಿಟರೇನಿಯನ್ ಮೇಲೆ ನಿರಂತರ ಹಾದು ಹೋಗುತ್ತಿರುವ ವಿಮಾನಗಳ ಸಾಲನ್ನು `ಡಿಜಟಿಲ್ ವಾಯು ಸೇತುವೆ' ಎಂದು ಬಣ್ಣಿಸಲಾಗಿದೆ. `ಏರ್ ಆ್ಯಂಡ್ ಸ್ಪೇಸ್ ಫೋರ್ಸಸ್' ಮ್ಯಾಗಝಿನ್ ಪ್ರಕಾರ ಹಲವು ವಿಧಗಳ ಯುದ್ದ ವಿಮಾನಗಳನ್ನು ನಿಯೋಜಿಸಲಾಗಿದೆ. ಜರ್ಮನಿಯ ಸ್ಪಾಂಗ್ದಹ್ಲೆಮ್ ವಾಯು ನೆಲೆ, ಇಟಲಿಯ ಆವಿಯಾನೊ ವಾಯುನೆಲೆ, ದಕ್ಷಿಣ ಕ್ಯಾಲಿಫೋರ್ನಿಯಾದ ಮೆಕಂಟೈರ್ ಜಾಯಿಂಟ್ ನ್ಯಾಷನಲ್ ಗಾರ್ಡ್ ನೆಲೆಯಿಂದ ಎಫ್-16 ಯುದ್ದವಿಮಾನಗಳು ಮಧ್ಯಪ್ರಾಚ್ಯದತ್ತ ಸಾಗುತ್ತಿವೆ. ಬ್ರಿಟನ್ನ ಆರ್ಎಎಫ್ ಲೇಕನ್ಹೆಲ್ತ್ ನೆಲೆಯಿಂದ ಎಫ್-15ಇ ಯುದ್ದವಿಮಾನ, ವರ್ಜೀನಿಯಾ ವಾಯುನೆಲೆಯಿಂದ ಎಫ್-22 ಯುದ್ದವಿಮಾನಗಳು ಮಧ್ಯಪ್ರಾಚ್ಯದತ್ತ ಧಾವಿಸುತ್ತಿವೆ. ಇದರ ಜೊತೆಗೆ ಆರ್ಸಿ-135 ರಿವೆಟ್ ಜಂಟಿ ಕಣ್ಗಾವಲು ವಿಮಾನ ಮತ್ತು ಪಿ-8 ಪೊಸಿಡಾನ್ ಕಡಲ ಬೇಹುಗಾರಿಕಾ ವಿಮಾನಗಳನ್ನೂ ಅಮೆರಿಕ ಸ್ಥಳಾಂತರಿಸುತ್ತಿದೆ ಎಂದು ವರದಿ ಹೇಳಿದೆ.
ನಾಳೆ ಕೊಪ್ಪಳ ಬಂದ್: ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
ಪರೀಕ್ಷೆ ಮುಂದೂಡಿದ ಕೊಪ್ಪಳ ವಿವಿ
ರಾಯಚೂರು | ಸರಕಾರಿ ಶಾಲೆಗಳನ್ನು ಉಳಿಸದಿದ್ದರೆ ಸಂವಿಧಾನ ಉಳಿಯದು: ಡಾ.ನಿರಂಜನ ಆರಾಧ್ಯ
ರಾಯಚೂರು : ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲು ಇದ್ದಂತೆ. ಅವುಗಳನ್ನು ಉಳಿಸಿಕೊಳ್ಳದಿದ್ದರೆ ಸಂವಿಧಾನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನದ ಆಶಯ ಈಡೇರಿಸಲು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲವಾಗಿರಬೇಕು ಎಂದು ಶಿಕ್ಷಣ ತಜ್ಞ ಡಾ. ನಿರಂಜನ ಆರಾಧ್ಯ ಹೇಳಿದರು. ನಗರದ ನವೋದಯ ಶಿಕ್ಷಣ ಸಂಸ್ಥೆಯ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ವೇದಿಕೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಮಹಿಳಾ ಒಕ್ಕೂಟ ಹಾಗೂ ಶಿಕ್ಷಣ ಹಕ್ಕಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ “ನಮ್ಮ ಶಾಲೆ ನಮ್ಮ ಹಕ್ಕು” ಕಾರ್ಯಕ್ರಮದಲ್ಲಿ ಅವರು ಕೆಪಿಎಸ್ ಶಾಲೆಗಳ ಸ್ಥಿತಿಗತಿ ಕುರಿತು ಅವಲೋಕನ ಮಂಡಿಸಿದರು. ಸಾರ್ವಜನಿಕ ಶಿಕ್ಷಣದಲ್ಲಿ ಇರುವ ಕನಿಷ್ಠ ಸೌಲಭ್ಯಗಳನ್ನು ಬಲಪಡಿಸುವ ಬದಲು, ಅವನ್ನು ಕುಗ್ಗಿಸುವ ಕ್ರಮಗಳು ನಡೆಯುತ್ತಿವೆ. ಶಿಕ್ಷಣವನ್ನು ಸಾಮಾಜಿಕ ಒಳಿತಿನ ಸಾಧನವೆಂದು ನೋಡುವ ಮನೋಭಾವ ಕುಂದಿದೆ. ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಪೊರೇಟ್ ಶಾಲೆಗಳನ್ನು ಮಾದರಿಯಾಗಿ ನೋಡುವುದು ಅಪಾಯಕಾರಿ ಬೆಳವಣಿಗೆ. 1950ರಿಂದ 1990ರ ದಶಕದವರೆಗೆ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದ್ದರೂ, 1990ರ ನಂತರದ ಆರ್ಥಿಕ ಮತ್ತು ನೀತಿ ಬದಲಾವಣೆಗಳಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರು. ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆ ಕುಸಿದಿದ್ದು, ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಎಲ್ಲ ಶಾಲೆಗಳನ್ನು ಮುಚ್ಚಿ ಒಂದೇ ಶಾಲೆ ಮಾಡುವ ನಿರ್ಧಾರ ಸಮಂಜಸವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಬುನಾದಿ ಹಾಗೂ ಮೌಲ್ಯಾಧಾರಿತ ಶಿಕ್ಷಣ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವುದಿಲ್ಲ. ಮ್ಯಾಗ್ನೇಟ್ ಶಾಲೆಗಳ ಪರಿಕಲ್ಪನೆ ಬಡವರ ಶಿಕ್ಷಣ ಹಕ್ಕನ್ನು ಕಸಿಯುವ ಹುನ್ನಾರವಾಗಿದ್ದು, ಇದರ ಹಿಂದೆ ಕಾರ್ಪೊರೇಟ್ ಪ್ರಭಾವವಿದೆ ಎಂದು ಆರೋಪಿಸಿದರು. ಸರ್ಕಾರ ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ಕೈಬಿಟ್ಟು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿಯ ವೇಳೆ ಟಿಇಟಿ ವಿನಾಯಿತಿ ನೀಡುವ ಮೂಲಕ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಡಾ. ನಿರಂಜನ ಆರಾಧ್ಯ ಆಗ್ರಹಿಸಿದರು.
ಕುಂದಾಪುರ| ಅಪ್ರಾಪ್ತನಿಂದ ಪ್ರಚೋದನಕಾರಿ ಹೇಳಿಕೆಯ ವಿಡಿಯೋ ಚಿತ್ರೀಕರಣ: ಇಬ್ಬರು ಆರೋಪಿಗಳ ಬಂಧನ
ಕುಂದಾಪುರ: ಉತ್ತರ ಭಾರತದ ಕೂಲಿ ಕಾರ್ಮಿಕ ಕುಟುಂಬದ ಅಪ್ರಾಪ್ತ ಬಾಲಕನಿಂದ ಬಲವಂತವಾಗಿ ದೇಶದ್ರೋಹದ ಹೇಳಿಕೆ ದಾಖಲಿಸಿ ಆ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶಶಾಂಕ್ ಹಾಗೂ ಪ್ರಮೋದ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಾಪುರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಾಲಕನ ತಂದೆ ನೀಡಿದ ದೂರಿನಂತೆ ಪ್ರಕರಣಕ್ಕೆ ಸಂಬಂಧಿಸಿ ಶಶಾಂಕ್ ಹಾಗೂ ಪ್ರಮೋದ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದೇ ರೀತಿ ಆರೋಪಿ ಶಶಾಂಕ್, ತನ್ನ ಮೇಲೆಯೂ ಗುಂಪೊಂದು ಹಲ್ಲೆಗೆ ನಡೆಸಿದೆ ಎಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದು ಅದರಂತೆಯೂ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ವಿಡಿಯೋ ಹರಿಬಿಟ್ಟರೆ ಕಾನೂನು ಕ್ರಮ: ಎಸ್ಪಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರ್ಡ್ರೆಸ್ ಅಂಗಡಿಯೊಂದರಲ್ಲಿ ಬಿಹಾರ ಮೂಲದ 11 ವರ್ಷದ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಚಾರದಲ್ಲಿ ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವುದರಿಂದ ಈ ವಿಡಿಯೋವನ್ನು ಸಾರ್ವಜನಿಕರು ಶೇರ್ ಮಾಡುವುದಾಗಲಿ ಅಥವಾ ಪೋಸ್ಟ್ ಮಾಡುವುದಾಗಲಿ ಮಾಡಬಾರದು. ಮಾಡಿದಲ್ಲಿ ಅವರ ವಿರುದ್ಧ ಐಟಿ ಕಾಯ್ದೆ, ಜೆಜೆ ಆಕ್ಟ್, ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಅಜಿತ್ ಪವಾರ್ ಮಹಾರಾಷ್ಟ್ರ ಎಂದೂ ಕಂಡಿರದ ಅತ್ಯುತ್ತಮ CM ಆಗಿರುತ್ತಿದ್ದರು: ಫಡ್ನವಿಸ್
ಮುಂಬೈ: “ಅಜಿತ್ ಪವಾರ್ ಮಹಾರಾಷ್ಟ್ರ ಎಂದೂ ಕಂಡಿರದ ಅತ್ಯುತ್ತಮ ಮುಖ್ಯಮಂತ್ರಿಯಾಗಿರುತ್ತಿದ್ದರು” ಎಂದು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭಾವುಕವಾಗಿ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಜನವರಿ 28ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಶ್ರದ್ಧಾಂಜಲಿ ನಿರ್ಣಯ ಮಂಡಿಸಿ ಅವರು ಮಾತನಾಡುತ್ತಿದ್ದರು. ಮೊದಲಿಗೆ ಪ್ರತಿಸ್ಪರ್ಧಿಗಳಾಗಿ ರಾಜಕೀಯ ಜೀವನ ಆರಂಭಿಸಿ, ಬಳಿಕ ಸರ್ಕಾರದಲ್ಲಿ ಸಹೋದ್ಯೋಗಿಗಳಾದ ತಮ್ಮಿಬ್ಬರ ರಾಜಕೀಯ ಪಯಣವನ್ನು ಅವರು ಈ ವೇಳೆ ಸ್ಮರಿಸಿದರು. ಅಜಿತ್ ಪವಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಸಚಿವೆ ಅದಿತಿ ತತ್ಕರೆ ಹಾಗೂ ಅವರ ಸೋದರಳಿಯ ಮತ್ತು ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಗದ್ಗದಿತರಾಗಿದ್ದು ಕಂಡುಬಂತು. ಶಿವಸೇನೆ (ಉದ್ಧವ್ ಬಣ) ನಾಯಕ ಉದ್ಧವ್ ಠಾಕ್ರೆ ಹಾಗೂ ಶಿವಸೇನೆ (ಏಕನಾಥ್ ಶಿಂದೆ ಬಣ) ನಾಯಕ ಮತ್ತು ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡ ಅಜಿತ್ ಪವಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ವಿಧಾನಸಭೆಯಲ್ಲಿ ಅಜಿತ್ ಪವಾರ್ ಅವರ ಸ್ಮಾರಕ ಸ್ಥಾಪಿಸುವ ಪ್ರಸ್ತಾವವನ್ನು ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಮಂಡಿಸಿದರು.
3.25 ಲಕ್ಷ ಕೋಟಿ ರೂ.ದಾಟಿದ ರಾಜ್ಯದ ಜೈವಿಕ ಆರ್ಥಿಕತೆ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಫೆ.23: ರಾಜ್ಯದ ಜೈವಿಕ ಆರ್ಥಿಕತೆಯು 2025ರಲ್ಲಿ 3,25,360 ಕೋಟಿ ರೂ.ಗಳಿಗೆ (39.2 ಶತಕೋಟಿ ಡಾಲರ್)ತಲುಪಿದ್ದು, ಸಂಶೋಧನೆ-ನೇತೃತ್ವದ ಜೊತೆಗೆ ತಯಾರಿಕೆ, ವಿತರಣೆ, ಸೇವೆಗಳವರೆಗೆ ಸಂಪೂರ್ಣ ಮೌಲ್ಯ ಸರಪಳಿ ಒಳಗೊಂಡಿರುವ, ತಯಾರಿಕೆ ಕೇಂದ್ರಿತ ಜೈವಿಕ ಆರ್ಥಿಕತೆಯು ರಾಜ್ಯದಲ್ಲಿ ಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸೋಮವಾರ ನಗರದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್ಇ) ಸಹಯೋಗದಲ್ಲಿ ಸಿದ್ಧಪಡಿಸಿರುವ ರಾಜ್ಯದ ಜೈವಿಕ ಆರ್ಥಿಕತೆಯ ವರದಿ 2025 ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯತೆ ಆಧಾರಿತ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಾಗಿ ಕರ್ನಾಟಕವು ಸುಸ್ಥಿರ ರೀತಿಯಲ್ಲಿ ತನ್ನ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದರ ಮೇಲೆ ಈ ವರದಿಯು ಬೆಳಕು ಚೆಲ್ಲಿದೆ. ಇದು ರಾಜ್ಯದ ಜೈವಿಕ ಆರ್ಥಿಕತೆಯ ಅಂಕಿ ಸಂಖ್ಯೆಗಳಲ್ಲಿನ ಹೆಚ್ಚಳವನ್ನಷ್ಟೇ ಪ್ರತಿಬಿಂಬಿಸುತ್ತಿಲ್ಲ. ರಾಜ್ಯದ ಸಮಗ್ರ ಆರ್ಥಿಕ ವ್ಯವಸ್ಥೆಯಲ್ಲಿ ಜೈವಿಕ ಆರ್ಥಿಕತೆಯು ಗಮನಾರ್ಹ ಪಾಲು ಹೊಂದಿರುವುದನ್ನೂ ಸೂಚಿಸುತ್ತದೆ ಎಂದು ಹೇಳಿದರು. ಜೈವಿಕ ತಂತ್ರಜ್ಞಾನವು ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಿ ಅಭಿವೃದ್ಧಿಗೊಳ್ಳುತ್ತ ಮುನ್ನಡೆಯುತ್ತಿದೆ. ಡೀಪ್-ಟೆಕ್ ಸ್ಟಾರ್ಟ್ಅಪ್ಗಳಿಗೆ ಬೆಂಬಲ, ನಾವೀನ್ಯತೆ ಮೂಲಸೌಕರ್ಯಗಳ ಬಲಪಡಿಸುವಿಕೆ ಮತ್ತು ಬೆಂಗಳೂರು ಆಚೆಗಿನ ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ಮಾಡುವ ಸಮಗ್ರ ಜೈವಿಕ ಉತ್ಪಾದನಾ ಆರ್ಥಿಕತೆ ನಿರ್ಮಿಸುವುದರತ್ತ ರಾಜ್ಯ ಸರಕಾರವು ಹೆಚ್ಚು ಗಮನ ನೀಡಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ವರದಿಯ ಮುಖ್ಯಾಂಶಗಳು: ರಾಜ್ಯ ಜೈವಿಕ ಆರ್ಥಿಕತೆಯು 2025 ರಲ್ಲಿ 3,25,360 ಕೋಟಿ ರೂ.ಗಳಿಗೆ (39.2 ಶತಕೋಟಿ ಡಾಲರ್) ತಲುಪಿದ್ದು, ಇದು ಹಿಂದಿನ ವರ್ಷಗಳಿಗಿಂತ ಗರಿಷ್ಠ ಬೆಳವಣಿಗೆ ದಾಖಲಿಸಿದೆ. ರಾಜ್ಯವು ದೇಶದ ಜೈವಿಕ ಆರ್ಥಿಕತೆಗೆ ಶೇ.21ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್ಡಿಪಿ) ಶೇ.10ಕ್ಕಿಂತ ಹೆಚ್ಚು ಪಾಲು ಹೊಂದಿದೆ, ಜೈವಿಕ ತಂತ್ರಜ್ಞಾನವು ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿರುವುದಕ್ಕೆ ನಿದರ್ಶನವಾಗಿದೆ. *ಜೈವಿಕ ಆರ್ಥಿಕತೆಯು 2023ರಲ್ಲಿದ್ದ 31 ಶತಕೋಟಿ ಡಾಲರ್ನಿಂದ ಈಗ 39.2 ಶತಕೋಟಿ ಡಾಲರ್ಗೆ ವಿಸ್ತರಿಸಿದೆ, ಇದು ಒಟ್ಟಾರೆ ಶೇ.26.5ರಷ್ಟು ಬೆಳವಣಿಗೆ ಸೂಚಿಸುತ್ತದೆ. ಈಗ ರಾಜ್ಯದ ಜಿಡಿಪಿಗೆ ಪ್ರತಿ ತ್ರೈಮಾಸಿಕದಲ್ಲಿ ಸರಿಸುಮಾರು 10 ಶತಕೋಟಿ ಡಾಲರ್ ಸೇರ್ಪಡೆ ಮಾಡುತ್ತಿದೆ. *ಜೈವಿಕ ಔಷಧಗಳು, ಕಡಿಮೆ ವೆಚ್ಚದ ಪರ್ಯಾಯ ಜೈವಿಕ ಔಷಧಿಗಳು (ಬಯೊಸಿಮಿಲರ್ಸ್), ಲಸಿಕೆಗಳು ಮತ್ತು ರೋಗ ಪತ್ತೆ ವಲಯಗಳು ಒಳಗೊಂಡಂತೆ ಶೇ.40 ಕ್ಕಿಂತ ಹೆಚ್ಚು ಪಾಲು (ಸುಮಾರು 16.44 ಶತಕೋಟಿ ಡಾಲರ್) ಹೊಂದಿವೆ. *ಸುಮಾರು 11.46 ಶತಕೋಟಿ ಡಾಲರ್ ಮೊತ್ತದ ಜೈವಿಕ ಕೈಗಾರಿಕಾ ತಂತ್ರಜ್ಞಾನ ವಲಯವು ಶೇ.29ರಷ್ಟು ಪಾಲು ಹೊಂದುವುದರ ಜೊತೆಗೆ ವೇಗವಾಗಿ ಬೆಳೆಯುತ್ತಿದೆ. ಇದು ರಾಜ್ಯವು ಬಲವಾದ ಜೈವಿಕ ತಯಾರಿಕಾ ಆರ್ಥಿಕತೆಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ. *ಶೇ.25.8 ಪಾಲು ಹೊಂದಿರುವ ಜೈವಿಕ ಸೇವೆಗಳು ಸ್ಥಿರವಾಗಿ ಬೆಳೆಯುತ್ತಲೇ ಇವೆ. ಜಾಗತಿಕ ಸಂಶೋಧನಾ ಸೇವೆಗಳು, ಡಿಜಿಟಲ್ ಆರೋಗ್ಯ ಮತ್ತು ನಾವೀನ್ಯತೆ-ನೇತೃತ್ವದ ಹೊರಗುತ್ತಿಗೆಯಲ್ಲಿ ಕರ್ನಾಟಕದ ಸ್ಥಾನವನ್ನು ಬಲಪಡಿಸುತ್ತಿವೆ. ಜೈವಿಕ ಕೃಷಿಯು ಸುಸ್ಥಿರ ಕೃಷಿ ಚಟುವಟಿಕೆ ಮತ್ತು ಕಚ್ಚಾ ಸಾಮಗ್ರಿಗಳ ನಾವೀನ್ಯತೆಗಳಿಗೆ ಕೊಡುಗೆ ನೀಡುತ್ತಿದೆ. *ರಾಜ್ಯದ ಜೈವಿಕ ಆರ್ಥಿಕತೆಯ ಬೆಳವಣಿಗೆಯು ವಿಕೇಂದ್ರಿಕರಣ ಆಗುತ್ತಿರುವುದರ ಬಗ್ಗೆಯೂ ವರದಿಯು ಬೆಳಕು ಚೆಲ್ಲಿದೆ. ಬೆಂಗಳೂರು ನಗರವು ರಾಜ್ಯದ ಜೈವಿಕ ಆರ್ಥಿಕತೆಯಲ್ಲಿ ಶೇ.54ರಷ್ಟು ಪಾಲು ಹೊಂದಿದೆ. ಮೈಸೂರು ಶೇ.8.7, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಒಟ್ಟಾಗಿ ಶೇ.9ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಉತ್ತರ ಕರ್ನಾಟಕದ ಜಿಲ್ಲೆಗಳು ಕೃಷಿ-ಜೈವಿಕ ತಂತ್ರಜ್ಞಾನ ವಲಯಗಳಾಗಿ ಗಮನ ಸೆಳೆಯುತ್ತಿವೆ. *ಬೆಂಗಳೂರು ಆಚೆಗಿನ ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕಾರಿಡಾರ್ಗಳ ಬೆಳವಣಿಗೆಯು ಜೈವಿಕ ಆರ್ಥಿಕತೆಯು ರಾಜ್ಯವ್ಯಾಪಿ ಬೆಳವಣಿಗೆಯ ಎಂಜಿನ್ ಆಗಿ ಬದಲಾಗುತ್ತಿರುವುದನ್ನು ಸೂಚಿಸುತ್ತದೆ, ಇದು ಅಂತರ್ಗತ ಅಭಿವೃದ್ಧಿ, ಪ್ರಾದೇಶಿಕ ಉದ್ಯೋಗ ಮತ್ತು ಕೃಷಿ ಉತ್ಪನ್ನಗಳಿಗೆ ಹೊಸ ಮೌಲ್ಯ ಸೇರ್ಪಡೆ ಮಾಡಲು ನೆರವಾಗುತ್ತಿದೆ. *ರಾಜ್ಯದಲ್ಲಿ 2025ರಲ್ಲಿ 218 ಹೊಸ ಜೈವಿಕ ತಂತ್ರಜ್ಞಾನ ನವೋದ್ಯಮಗಳು ಸೇರ್ಪಡೆಯಾಗಿವೆ. ಅವುಗಳ ಒಟ್ಟಾರೆ ಸಂಖ್ಯೆ 1,451ಕ್ಕೆ ತಲುಪಿದ್ದು, ಶೇ.75ಕ್ಕಿಂತ ಹೆಚ್ಚು ನವೋದ್ಯಮಗಳು ಜೀವ ವಿಜ್ಞಾನ ಮತ್ತು ಆರೋಗ್ಯ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸಿವೆ. ಬೆಂಗಳೂರಿನಲ್ಲಿ ಸುಮಾರು ಶೇ.54ರಷ್ಟು ನವೋದ್ಯಮಗಳಿದ್ದರೆ, ರಾಜ್ಯದಾದ್ಯಂತ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್ಅಪ್ ಕ್ಲಸ್ಟರ್ಗಳೂ ವೇಗ ಪಡೆಯುತ್ತಿವೆ. ಬಂಡವಾಳ ಹೂಡಿಕೆ ಹೆಚ್ಚಳ: 2024ರ ಜನವರಿ ಮತ್ತು 2025ರ ಅಕ್ಟೋಬರ್ ನಡುವಣ ಅವಧಿಯಲ್ಲಿ ರಾಜ್ಯವು ಜೈವಿಕ ಔಷಧ, ವೈದ್ಯಕೀಯ ತಂತ್ರಜ್ಞಾನ, ಕಿಣ್ವ ಆಧಾರಿತ ಕೈಗಾರಿಕೆಗಳು (ಫಮರ್ಂಟೇಷನ್), ಡಿಜಿಟಲ್ ಆರೋಗ್ಯ, ಜೈವಿಕ ಕೃಷಿ ವಲಯಗಳು ಸೇರಿದಂತೆ ಸೇರಿದಂತೆ ಸುಮಾರು 40 ಒಪ್ಪಂದಗಳಲ್ಲಿ 1.14 ಶತಕೋಟಿ ಡಾಲರ್ ಮೊತ್ತದ ಬಂಡವಾಳ ಆಕರ್ಷಿಸಿದೆ. ಇದು ರಾಜ್ಯದ ಜೈವಿಕ ಉತ್ಪಾದನೆ ಮತ್ತು ಸಾಮಥ್ರ್ಯ ವೃದ್ಧಿಯಲ್ಲಿ ಹೂಡಿಕೆದಾರರ ಹೆಚ್ಚುತ್ತಿರುವ ವಿಶ್ವಾಸವನ್ನು ಸೂಚಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಎಬಿಎಲ್ಇ ಗೌರವ ಅಧ್ಯಕ್ಷ ಜಿ.ಎಸ್.ಕೃಷ್ಣನ್ ಮಾತನಾಡಿ, ಈ ವರದಿಯು ರಾಜ್ಯದ ಜೈವಿಕ ಆರ್ಥಿಕತೆಯು ವಲಯವಾರು ಸಮತೋಲನ ಮತ್ತು ನವೋದ್ಯಮ ವ್ಯವಸ್ಥೆಯ ಹೆಚ್ಚುತ್ತಿರುವ ಮಹತ್ವವನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್., ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
'ಎಲ್ ಮೆಂಚೊ' ಎಂದೇ ಕುಖ್ಯಾತನಾಗಿದ್ದ ನೆಮೆಸಿಯೊ ಒಸೆಗುರಾ ಯಾರು? ಮೆಕ್ಸಿಕೊದಲ್ಲಿ ಏನಾಗುತ್ತಿದೆ?
'ಎಲ್ ಮೆಂಚೊ' ಎಂದೇ ಕುಖ್ಯಾತನಾಗಿದ್ದ ಅಕ್ರಮ ಮಾದಕ ವಸ್ತು ಸಾಗಣೆದಾರ ನೆಮೆಸಿಯೊ ಒಸೆಗುರಾ ನನ್ನು ಮೆಕ್ಸಿಕನ್ ಸೇನೆ ರವಿವಾರ (ಫೆ.22) ಹತ್ಯೆ ಮಾಡಿದೆ ಎಂದು ಮೆಕ್ಸಿಕೊದ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ ಈತನ ಹತ್ಯೆಯ ಬೆನ್ನಲ್ಲೇ ಮೆಕ್ಸಿಕೊದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಜಲಿಸ್ಕೊದಲ್ಲಿ ನಡೆದ ಮಿಲಿಟರಿ ದಾಳಿಯ ಸಂದರ್ಭದಲ್ಲಿ ನೆಮೆಸಿಯೊ ಎಲ್ ಮೆಂಚೊ ಒಸೆಗುರಾ ಸೆರ್ವಾಂಟೆಸ್ ಅವರ ಹತ್ಯೆಯು ಮಾದಕವಸ್ತುಗಳ ವಿರುದ್ಧದ ಯುದ್ಧದಲ್ಲಿ ಒಂದು ಐತಿಹಾಸಿಕ ತಿರುವು ಎಂದು ಗುರುತಿಸಲಾಗಿದೆ. ಒಂದು ದಶಕದ ಹಿಂದೆ ಎಲ್ ಚಾಪೊ ಗುಜ್ಮಾನ್ ಸೆರೆಹಿಡಿಯಲ್ಪಟ್ಟ ನಂತರ ಸಂಘಟಿತ ಅಪರಾಧಕ್ಕೆ ಇದು ಅತ್ಯಂತ ಮಹತ್ವದ ಹೊಡೆತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ►ಎಲ್ ಮೆಂಚೊ ಯಾರು? ಮೂಲತಃ ಪಶ್ಚಿಮ ರಾಜ್ಯವಾದ ಮೈಕೋವಕನ್ನ ನಿವಾಸಿ ಎಲ್ ಮೆಂಚೊ ಎಂದೇ ಕರೆಯಲ್ಪಡುವ ಒಸೆಗುರಾ ಸೆರ್ವಾಂಟೆಸ್ ಗೆ 59 ವರ್ಷ ವಯಸ್ಸು. ಸಂಘಟಿತ ಅಪರಾಧದೊಂದಿಗಿನ ಈತನ ನಂಟು ಕನಿಷ್ಠ ಮೂರು ದಶಕಗಳ ಹಿಂದಿನದು. 1994ರಲ್ಲಿ ಈತನನ್ನು ಅಮೆರಿಕದಲ್ಲಿ ಹೆರಾಯಿನ್ ಕಳ್ಳಸಾಗಣೆಗಾಗಿ ವಿಚಾರಣೆಗೆ ಒಳಪಡಿಸಲಾಯಿತು. ಈ ಅಪರಾಧದಲ್ಲಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಮೆಕ್ಸಿಕೊಗೆ ಹಿಂದಿರುಗಿದ ನಂತರ ಆತ ಮೆಕ್ಸಿಕೊದ ಮಾದಕವಸ್ತು ಕಳ್ಳಸಾಗಣೆ ಭೂಗತ ಜಗತ್ತಿನಲ್ಲಿ ಕುಖ್ಯಾತನಾದ. 2009ರಲ್ಲಿ ಎಲ್ ಮೆಂಚೊ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (CJNG) ಅನ್ನು ಸ್ಥಾಪಿಸಿದ್ದು, ಇದು ಮೆಕ್ಸಿಕೊದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಕ್ರಿಮಿನಲ್ ಸಂಘಟನೆಯಾಗಿ ಹೊರಹೊಮ್ಮಿತು. ಈ ಕಾರ್ಟೆಲ್ ಕೊಕೇನ್, ಮೆಥಾಂಫೆಟಮೈನ್ಗಳು, ಫೆಂಟನಿಲ್ ಮತ್ತು ವಲಸಿಗರನ್ನು ಯುನೈಟೆಡ್ ಸ್ಟೇಟ್ಸ್ಗೆ ಕಳ್ಳಸಾಗಣೆ ಮಾಡುವುದರಲ್ಲಿ ತೊಡಗಿತ್ತು. ಇದರ ಜತೆಗೆ ಡ್ರೋನ್ ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸುವಂತಹ ನವೀನ ಹಿಂಸಾತ್ಮಕ ತಂತ್ರಗಳನ್ನು ಅಳವಡಿಸಿಕೊಂಡಿತ್ತು. ಈ ಕಾರ್ಟೆಲ್ ಮೆಕ್ಸಿಕನ್ ಸರ್ಕಾರದ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸಿದೆ. 2015ರಲ್ಲಿ ಆತ ಜಲಿಸ್ಕೊದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲು ರಾಕೆಟ್ ಲಾಂಚರ್ ಬಳಸಿದ್ದನು. ಮೆಕ್ಸಿಕೊ ನಗರದಲ್ಲಿ ಪೊಲೀಸ್ ಮುಖ್ಯಸ್ಥ ಒಮರ್ ಗಾರ್ಸಿಯಾ ಹರ್ಫುಚ್ (ಈಗ ಮೆಕ್ಸಿಕೊದ ಫೆಡರಲ್ ಭದ್ರತಾ ಕಾರ್ಯದರ್ಶಿ) ವಿರುದ್ಧ ಬೃಹತ್, ಅತ್ಯಾಧುನಿಕ ಹೊಂಚುದಾಳಿಯನ್ನು ನಡೆಸಲಾಗಿತ್ತು. ಅವರು ದಾಳಿಯಿಂದ ಬದುಕುಳಿದಿದ್ದರೂ, ಕಾರ್ಟೆಲ್ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ಅದು ಜಗತ್ತಿಗೆ ತೋರಿಸಿತು. ತಮ್ಮ ಸಂಖ್ಯೆಯನ್ನು ಹೆಚ್ಚಿಸಲು, ಗುಂಪು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಆಕ್ರಮಣಕಾರಿ ಮತ್ತು ಸೃಜನಶೀಲ ಮಾರ್ಗಗಳನ್ನು ಬಳಸಿತು. ಇದರಲ್ಲಿ ಯುವಜನರನ್ನು ಆನ್ಲೈನ್ನಲ್ಲಿ ಗುರಿಯಾಗಿಸಲು ಸಾಮಾಜಿಕ ಮಾಧ್ಯಮ ಬಳಸುವುದೂ ಸೇರಿದೆ. ►ಟಪಲ್ಪಾದಲ್ಲಿ ದಾಳಿ ಎಲ್ ಮೆಂಚೊ ನನ್ನು ಸದೆಬಡಿಯುವ ಕಾರ್ಯಾಚರಣೆಯನ್ನು ಮೆಕ್ಸಿಕನ್ ವಾಯುಪಡೆ ಮತ್ತು ರಾಷ್ಟ್ರೀಯ ಗಾರ್ಡ್ನ ವಿಮಾನಗಳ ಬೆಂಬಲದೊಂದಿಗೆ ಮೆಕ್ಸಿಕನ್ ವಿಶೇಷ ಪಡೆಗಳು ಮುನ್ನಡೆಸಿದವು. ಈ ಕಾರ್ಯಾಚರಣೆಯನ್ನು ದೇಶೀಯವಾಗಿ ಯೋಜಿಸಿ ಕಾರ್ಯಗತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್ ಒದಗಿಸಿದ ಪೂರಕ ಮಾಹಿತಿಯನ್ನೂ ಅವಲಂಬಿಸಿತ್ತು. ಹೊಸದಾಗಿ ರೂಪುಗೊಂಡ ಯುಎಸ್ ಮಿಲಿಟರಿ ನೇತೃತ್ವದ ಕಾರ್ಯಪಡೆ ಗುಪ್ತಚರ ಸೇವೆಯನ್ನು ಒದಗಿಸುವಲ್ಲಿ ಪಾತ್ರವಹಿಸಿದೆ ಎಂದು ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೆಕ್ಸಿಕೊಗೆ ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್ ಗುಪ್ತಚರ ಬೆಂಬಲ ಒದಗಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ. ಮೆಕ್ಸಿಕೊದ ಜಲಿಸ್ಕೊದ ಟಪಲ್ಪಾದಲ್ಲಿ ನಡೆದ ಕಾರ್ಯಾಚರಣೆಗೆ ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್ ಮೆಕ್ಸಿಕನ್ ಸರ್ಕಾರಕ್ಕೆ ಗುಪ್ತಚರ ಬೆಂಬಲ ನೀಡಿತು. ಇದರಲ್ಲಿ ನೆಮೆಸಿಯೊ 'ಎಲ್ ಮೆಂಚೊ' ಒಸೆಗುರಾ ಸೆರ್ವಾಂಟೆಸ್ ನನ್ನು ಹತ್ಯೆ ಮಾಡಲಾಯಿತು. ಎಲ್ ಮೆಂಚೊ ಯುನೈಟೆಡ್ ಸ್ಟೇಟ್ಸ್ಗೆ ಫೆಂಟನಿಲ್ ನ ಪ್ರಮುಖ ಕಳ್ಳಸಾಗಣೆದಾರನಾಗಿದ್ದನು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವರ್ಷ CJNG ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದ್ದರು ಎಂದು ಲೀವಿಟ್ ತಿಳಿಸಿದ್ದಾರೆ. ಘರ್ಷಣೆಯ ಸಮಯದಲ್ಲಿ ಭಾರೀ ಗುಂಡಿನ ದಾಳಿ ನಡೆದಿದೆ. ಹಲವಾರು ಕಾರ್ಟೆಲ್ ಸದಸ್ಯರು ಕೊಲ್ಲಲ್ಪಟ್ಟರು, ಇತರರು ಗಾಯಗೊಂಡರು. ಇಬ್ಬರು ಶಂಕಿತರನ್ನು ಬಂಧಿಸಲಾಯಿತು. ಅಧಿಕಾರಿಗಳು ಶಸ್ತ್ರಸಜ್ಜಿತ ವಾಹನಗಳು ಮತ್ತು ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ರಾಕೆಟ್ ಲಾಂಚರ್ಗಳು ಸೇರಿದಂತೆ ಹೆಚ್ಚಿನ ಶಕ್ತಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ►ಮೆಕ್ಸಿಕೊದಲ್ಲಿ ಏನಾಗುತ್ತಿದೆ? ಒಸೆಗುರಾ ಸೆರ್ವಾಂಟೆಸ್ ಹತ್ಯೆಯ ನಂತರ ಬಂದೂಕುಧಾರಿಗಳು ದೇಶಾದ್ಯಂತ ಹಿಂಸಾಚಾರ ನಡೆಸಿದ್ದಾರೆ. ಕಾರ್ಟೆಲ್ ಸದಸ್ಯರು ಸುಮಾರು ಒಂದು ಡಜನ್ ಮೆಕ್ಸಿಕನ್ ರಾಜ್ಯಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮೆಕ್ಸಿಕೊದ ಎರಡನೇ ಅತಿದೊಡ್ಡ ನಗರ ಹಾಗೂ ಜಲಿಸ್ಕೊದ ರಾಜಧಾನಿಯಾದ ಗ್ವಾಡಲಜರಾದಲ್ಲಿ ಜನರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡಿದ್ದು, ಹಲವಾರು ರಾಜ್ಯಗಳಲ್ಲಿ ಶಾಲೆಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಗ್ವಾಟೆಮಾಲಾ ತನ್ನ ಮೆಕ್ಸಿಕೊ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಿದೆ. ಎಲ್ ಮೆಂಚೊ ಹತ್ಯೆಯಿಂದ ಟ್ರಂಪ್ ಆಡಳಿತದೊಂದಿಗಿನ ಮಾತುಕತೆಯಲ್ಲಿ ಮೆಕ್ಸಿಕೊಗೆ ಗಮನಾರ್ಹ ಪ್ರಯೋಜನ ಸಿಗಬಹುದು. ಸರ್ಕಾರವು ಡ್ರಗ್ ಕಾರ್ಟೆಲ್ಗಳನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರೆ, ಅಮೆರಿಕ ಮೆಕ್ಸಿಕೊದ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಅಥವಾ ಸೈನ್ಯ ಕಳುಹಿಸುವುದಾಗಿ ತಿಂಗಳುಗಳಿಂದ ಬೆದರಿಕೆ ಹಾಕುತ್ತಿದೆ. ಆದಾಗ್ಯೂ, ಈ ಪ್ರಮುಖ ಗೆಲುವಿನೊಂದಿಗೆ ಮೆಕ್ಸಿಕೊದ ಭದ್ರತೆ ದೀರ್ಘಾವಧಿಯಲ್ಲಿ ನಿಜವಾಗಿಯೂ ಸುಧಾರಿಸುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ►ಕಾರ್ಟೆಲ್ಗಳ ವಿರುದ್ಧದ ಯುಎಸ್ ಹೋರಾಟ ರವಿವಾರ (ಫೆಬ್ರವರಿ 22) ನಡೆದ ಕಾರ್ಯಾಚರಣೆಯಲ್ಲಿ ಯುಎಸ್ ಮತ್ತು ಮೆಕ್ಸಿಕೊ ನಡುವಿನ ಗುಪ್ತಚರ ಸಹಯೋಗವು ಕುಖ್ಯಾತ ಮೆಕ್ಸಿಕನ್ ಡ್ರಗ್ ಕಾರ್ಟೆಲ್ ನಾಯಕನ ಹತ್ಯೆಗೆ ಕಾರಣವಾಯಿತು. ಒಸೆಗುರಾ ಸೆರ್ವಾಂಟೆಸ್ ವಿರುದ್ಧ ಅಮೆರಿಕದಲ್ಲಿ ಹಲವು ಆರೋಪಗಳು ಕೇಳಿಬಂದಿದ್ದು, ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ ಅಮೆರಿಕ ವಿದೇಶಾಂಗ ಇಲಾಖೆ 15 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. ಟ್ರಂಪ್ ಆಡಳಿತವು ಒಂದು ವರ್ಷದ ಹಿಂದೆ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿತ್ತು. ಮೊದಲ ಟ್ರಂಪ್ ಆಡಳಿತದ ಅವಧಿಯಲ್ಲಿ ಮೆಕ್ಸಿಕೊಗೆ ಅಮೆರಿಕದ ರಾಯಭಾರಿಯಾಗಿದ್ದ ಅಮೆರಿಕದ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ, ಒಳ್ಳೆಯ ವ್ಯಕ್ತಿಗಳು ಕೆಟ್ಟ ವ್ಯಕ್ತಿಗಳಿಗಿಂತ ಬಲಶಾಲಿಗಳು. ಮೆಕ್ಸಿಕನ್ ರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪಡೆಗಳಿಗೆ ಅಭಿನಂದನೆಗಳು ಎಂದು ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ (DEA)ನ ಅಂತರರಾಷ್ಟ್ರೀಯ ಕಾರ್ಯಾಚರಣೆಗಳ ಮಾಜಿ ಮುಖ್ಯಸ್ಥ ಮೈಕ್ ವಿಜಿಲ್, ಮೆಕ್ಸಿಕೊ ಅತ್ಯಂತ ಶಕ್ತಿಶಾಲಿ ಕಾರ್ಟೆಲ್ಗಳ ವಿರುದ್ಧ ಆಕ್ರಮಣಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಹೋರಾಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಬಲವಾದ ಸಂದೇಶ ಕಳುಹಿಸಿದೆ ಎಂದು ಹೇಳಿದ್ದಾರೆ. ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಜಲಿಸ್ಕೊ ಕಾರ್ಟೆಲ್ ಮೆಕ್ಸಿಕೊದ 32 ರಾಜ್ಯಗಳಲ್ಲಿ ಕನಿಷ್ಠ 21 ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿದ್ದು, ಅಮೆರಿಕದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸಕ್ರಿಯವಾಗಿದೆ ಎಂದು ಯುಎಸ್ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಇದು ಜಾಗತಿಕ ಸಂಘಟನೆಯೂ ಆಗಿದ್ದು, ಅದರ ನಾಯಕನ ನಷ್ಟವನ್ನು ಮೆಕ್ಸಿಕೊದಾಚೆಗೂ ಅನುಭವಿಸಬಹುದು. ಎಲ್ ಮೆಂಚೊ ಎಲ್ಲವನ್ನೂ ನಿಯಂತ್ರಿಸುತ್ತಿದ್ದನು; ಆತ ಒಂದು ದೇಶದ ಸರ್ವಾಧಿಕಾರಿಯಂತೆ ಇದ್ದನು ಎಂದು ಮೈಕ್ ವಿಜಿಲ್ ಹೇಳಿದ್ದಾರೆ. ಆತನ ಅನುಪಸ್ಥಿತಿಯು ಕಾರ್ಟೆಲ್ನ ತ್ವರಿತ ಬೆಳವಣಿಗೆ ಮತ್ತು ವಿಸ್ತರಣೆಯನ್ನು ನಿಧಾನಗೊಳಿಸಬಹುದು. ಅವನ ಪ್ರತಿನಿಧಿಗಳು ಹೋರಾಡುತ್ತಿರುವ ಹಲವಾರು ರಂಗಗಳಲ್ಲಿ ಸಿನಾಲೋವಾ ಕಾರ್ಟೆಲ್ ವಿರುದ್ಧ ಆರಂಭದಲ್ಲಿ ದುರ್ಬಲಗೊಳ್ಳಬಹುದು. ಆದಾಗ್ಯೂ, ಎಲ್ ಚಾಪೊ ನ ಪುತ್ರರು ಮತ್ತು ಯುಎಸ್ ವಶದಲ್ಲಿರುವ ಇಸ್ಮಾಯಿಲ್ ಎಲ್ ಮೇಯೊ ಜಾಂಬಾಡಾಗೆ ನಿಷ್ಠರಾಗಿರುವ ಬಣದ ನಡುವೆ ಸಿನಾಲೋವಾ ತನ್ನದೇ ಆದ ಆಂತರಿಕ ಅಧಿಕಾರ ಹೋರಾಟದಲ್ಲಿ ಸಿಲುಕಿಕೊಂಡಿದೆ. ಒಸೆಗುರಾ ಸೆರ್ವಾಂಟೆಸ್ ನ ಸಂಬಂಧಿಕರು ಕಾರ್ಟೆಲ್ ನಿಯಂತ್ರಿಸಿದರೆ ಹಿಂಸಾಚಾರ ಮುಂದುವರಿಯಬಹುದು. ಇತರರು ಅಧಿಕಾರ ವಹಿಸಿಕೊಂಡರೆ, ಅವರು ತಮ್ಮ ಕೆಲಸವನ್ನು ಮುಂದುವರಿಸಲು ಹೆಚ್ಚು ಸಿದ್ಧರಾಗಿರಬಹುದು ಎಂದು ಭದ್ರತಾ ವಿಶ್ಲೇಷಕ ಡೇವಿಡ್ ಸೌಸೆಡೊ ಹೇಳಿದ್ದಾರೆ. ಜಲಿಸ್ಕೊದಲ್ಲಿ ನಡೆದ ಆರು ಪ್ರತ್ಯೇಕ ದಾಳಿಗಳಲ್ಲಿ ರಾಷ್ಟ್ರೀಯ ಗಾರ್ಡ್ನ 25 ಸದಸ್ಯರು ಸಾವಿಗೀಡಾಗಿದ್ದಾರೆ. ಜೈಲು ಸಿಬ್ಬಂದಿ, ರಾಜ್ಯ ಪ್ರಾಸಿಕ್ಯೂಟರ್ ಕಚೇರಿಯ ಏಜೆಂಟ್ ಮತ್ತು ಮಹಿಳೆಯೊಬ್ಬರು ಈ ದಾಳಿಯಲ್ಲಿ ಸಾವಿಗೀಡಾಗಿರುವುದಾಗಿ ಮೆಕ್ಸಿಕೊ ಭದ್ರತಾ ಕಾರ್ಯದರ್ಶಿ ಒಮರ್ ಗಾರ್ಸಿಯಾ ಹರ್ಫುಚ್ ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ►ಮೆಕ್ಸಿಕೊದಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ ಮೆಕ್ಸಿಕನ್ ಸೈನಿಕರು ಮಾದಕವಸ್ತು ಕಳ್ಳಸಾಗಣೆ ದಂಧೆಯ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ನಂತರ ಅಲ್ಲಿ ಭುಗಿಲೆದ್ದಿರುವ ಹಿಂಸಾಚಾರ, ರಸ್ತೆ ತಡೆ ಹಾಗೂ ವಿಮಾನ ರದ್ದತಿಯ ಹಿನ್ನೆಲೆ ಮೆಕ್ಸಿಕೊದಲ್ಲಿರುವ ಭಾರತೀಯ ನಾಗರಿಕರು ಮುಂದಿನ ಸೂಚನೆ ಬರುವವರೆಗೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಸೋಮವಾರ (ಫೆಬ್ರವರಿ 23, 2026) ಮೆಕ್ಸಿಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಮೆಕ್ಸಿಕೊದಲ್ಲಿ ನಡೆಯುತ್ತಿರುವ ಭದ್ರತಾ ಕಾರ್ಯಾಚರಣೆಗಳು ಮತ್ತು ಸಂಬಂಧಿತ ರಸ್ತೆ ತಡೆಗಳಿಂದಾಗಿ, ಜಲಿಸ್ಕೊ ರಾಜ್ಯ (ಪೋರ್ಟೊ ವಲ್ಲರ್ಟಾ, ಚಾಪಲಾ ಮತ್ತು ಗ್ವಾಡಲಜರಾ ಪ್ರದೇಶಗಳು), ತಮೌಲಿಪಾಸ್ ರಾಜ್ಯ (ರೇನೋಸಾ ಮತ್ತು ಇತರ ಪುರಸಭೆಗಳ ಪ್ರದೇಶಗಳು), ಮೈಕೋಕಾನ್ ರಾಜ್ಯ, ಗೆರೆರೊ ರಾಜ್ಯ ಮತ್ತು ನ್ಯೂಯೆವೊ ಲಿಯಾನ್ ರಾಜ್ಯಗಳಲ್ಲಿ ಇರುವ ಭಾರತೀಯ ಪ್ರಜೆಗಳಿಗೆ ಸುರಕ್ಷಿತ ಸ್ಥಳವನ್ನು ಕಂಡುಕೊಳ್ಳಲು ಭಾರತದ ರಾಯಭಾರ ಕಚೇರಿ ಮನವಿ ಮಾಡಿದೆ. ಕಾನೂನು ಜಾರಿ ಚಟುವಟಿಕೆಗಳ ಸುತ್ತಮುತ್ತಲಿನ ಪ್ರದೇಶಗಳನ್ನು ತಪ್ಪಿಸಲು, ತಮ್ಮ ಸುತ್ತಮುತ್ತಲಿನ ಬಗ್ಗೆ ಜಾಗೃತರಾಗಿರಲು ಮತ್ತು ಜನಸಂದಣಿಯನ್ನು ತಪ್ಪಿಸಲು ಭಾರತೀಯ ನಾಗರಿಕರಿಗೆ ರಾಯಭಾರ ಕಚೇರಿ ಸೂಚಿಸಿದೆ. ಆಶ್ರಯ ಪಡೆದ ಸ್ಥಳದ ಹೊರಗೆ ಅನಗತ್ಯವಾಗಿ ಅಡ್ಡಾಡುವುದನ್ನು ತಪ್ಪಿಸಿ. ಅಪ್ಡೇಟ್ಗಳಿಗಾಗಿ ಸ್ಥಳೀಯ ಸುದ್ದಿಗಳನ್ನು ಅನುಸರಿಸಿ. ಸ್ಥಳೀಯ ಅಧಿಕಾರಿಗಳ ನಿರ್ದೇಶನಗಳನ್ನು ಅನುಸರಿಸಿ ಮತ್ತು ತುರ್ತು ಸಂದರ್ಭದಲ್ಲಿ 911 ಗೆ ಕರೆ ಮಾಡಿ. ನಿಮ್ಮ ಸ್ಥಳ ಮತ್ತು ಯೋಗಕ್ಷೇಮದ ಬಗ್ಗೆ ಕುಟುಂಬ ಮತ್ತು ಸ್ನೇಹಿತರಿಗೆ ಫೋನ್, ಮೆಸೇಜ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿ ಎಂದು ಭಾರತೀಯ ರಾಯಭಾರ ಕಚೇರಿ X ನಲ್ಲಿ ಪೋಸ್ಟ್ ಮಾಡಿದೆ. ಭಾರತದ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ಸಹಾಯವಾಣಿ ಸಂಖ್ಯೆಯನ್ನು ಒದಗಿಸಿದ್ದು, ಅದರ ಸಂಖ್ಯೆ: Embassy of India +52 55 4847 7539.
ಸಾಧಕರ ಸಾಧನೆ ಕಿರಿಯರಿಗೆ ಪ್ರೇರಣೆ: ಶಾಸಕ ಗಂಟಿಹೊಳೆ
ಉಡುಪಿ, ಫೆ.23: ಸಾಧಕರ ಸಾಧನೆ ಕಿರಿಯರಿಗೆ ಪ್ರೇರಣೆಯಾಗಬೇಕು. ಗ್ರಾಮೀಣ ಭಾಗದಲ್ಲಿ ಹುಟ್ಟಿಬೆಳೆದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಸಾಧಕರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ. ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಗೋಪಾಲಕೃಷ್ಣ ಅಡಿಗ ಸ್ಮಾರಕ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ 108ನೇ ಜನ್ಮ ದಿನೋತ್ಸವದ ಪ್ರಯುಕ್ತ ಅಯೋಜಿಸಿದ್ದ ಅಡಿಗ ಸಂಸ್ಮರಣೆ ಮತ್ತು ಕಾರಂತರ ಕುರಿತು ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಿ ಮಾತನಾಡುತಿದ್ದರು. ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶತಮಾನ ಪೂರೈಸಿದ ಅಡಿಗರು ಕಲಿತ ಮಾಧ್ಯಮಿಕ ಶಾಲೆ ಕುರಿತು ಶಾಲಾ ಮುಖ್ಯೋಪಾಧ್ಯಾಯ ಗಣಪತಿ ಹೋಬಳಿದಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಮೂಗೇರಿ ಸಮಷ್ಟಿ ಪುರಸ್ಕಾರ ಶಾಶ್ವತ ಫಲಕವನ್ನು ಕೆ. ಪುಂಡಲೀಕ್ ನಾಯಕ್ ಇವರಿಗೆ ನೀಡಲಾಯಿತು. ಶಾಲಾ ಮಕ್ಕಳಿಗೆ ರಂಗೋಲಿ ಪ್ರಾತ್ಯಕ್ಷಿಕೆಯೊಂದಿಗೆ ರಂಗೋಲಿ ಸ್ಪರ್ಧೆಯನ್ನು ಡಾ.ಭಾರತಿ ಮರವಂತೆ ನಡೆಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಬೈಂದೂರು ಸಿಟಿ ಅಧ್ಯಕ್ಷ ಚೈತ್ರಾ ಸತೀಶ್, ಬೈಂದೂರು ಅರಣ್ಯ ಇಲಾಖೆ ಗಸ್ತು ಅರಣ್ಯ ಪಾಲಕ ವಿಜಯ್, ಶಾಲಾ ಅಭಿವೃದ್ಧಿ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಭಾಸ್ಕರ್ ದೇವಾಡಿಗ ಉಪಸ್ಥಿತರಿದ್ದರು. ಡಾ.ಭಾರತಿ ಮರವಂತೆ ಸ್ವಾಗತಿಸಿ ವೀಣಾ ಹೆಗಡೆ ಮತ್ತು ಜಯ ಕಾರ್ಯಕ್ರಮ ನಿರೂಪಿಸಿದರೆ, ಸಹ ಶಿಕ್ಷಕರಾದ ಶಶಿರೇಖಾ ವಂದಿಸಿದರು. ಸಂಜಿ ನಡೆದ ಸಮಾರೋಪ ಸಮಾರಂಭದಲ್ಲಿ ಚಿಂತಕಿ, ಲೇಖಕಿ ಡಾ. ರೇಖಾ ಬನ್ನಾಡಿ ಮತ್ತು ವಿಮರ್ಶಕ ರಾಜೀವ ನಾಯಕ್ ಉಪನ್ಯಾಸ ನೀಡಿದರು. ಸಾಹಿತಿ ಗಣೇಶ್ ಅಡಿಗರ ಕವಿತ್ವದ ಕುರಿತು ಮಾತನಾಡಿದರು. ಹಿರಿಯ ಕೃಷಿಕ ಭದ್ರಪ್ಪ ಗೌಡ ಎಂ.ಗೋಪಾಲಕೃಷ್ಣ ಅಡಿಗರ ಹಾಡುಗಳನ್ನು ಹಾಡಿದರು. ಡಾ.ಗಣನಾಥ ಎಕ್ಕಾರು ಆಶಯ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಚಂದ್ರಶೇಖರ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಪಿ.ಪದ್ಮನಾಭ, ಡಾ.ಕಾರಂತ ಟ್ರಸ್ಟ್ನ ಸದಸ್ಯರಾದ ಡಾ.ಭಾರತಿ ಮರವಂತೆ, ಡಾ.ಚೇತನ್ ಶೆಟ್ಟಿ ಕೋವಾಡಿ, ಅಡಿಗ ಟ್ರಸ್ಟ್ನ ಪ್ರವರ್ತಕ ಜಯರಾಮ ಅಡಿಗ ಉಪಸ್ಥಿತರಿದ್ದರು.
ಭಾರತದಿಂದ ಪ್ರಪ್ರಥಮ ಭಯೋತ್ಪಾದನಾ ನಿಗ್ರಹ ನೀತಿ ‘ಪ್ರಹಾರ್’ ಬಿಡುಗಡೆ
ಹೊಸದಿಲ್ಲಿ: ಸೋಮವಾರ ಪ್ರಪ್ರಥಮ ಭಯೋತ್ಪಾದನಾ ನಿಗ್ರಹ ನೀತಿ ‘ಪ್ರಹಾರ್’ ಅನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ, ಗಡಿಯ ಹೊರಗಿನಿಂದ ನಡೆಯುವ ಪ್ರಾಯೋಜಿತ ಭಯೋತ್ಪಾದನೆಯಷ್ಟೇ ಅಲ್ಲದೆ, ಕ್ರಿಮಿನಲ್ ಹ್ಯಾಕರ್ ಗಳು ಹಾಗೂ ಸೈಬರ್ ದಾಳಿಗಳ ಮೂಲಕ ಭಾರತವನ್ನು ಗುರಿಯಾಗಿಸಿಕೊಳ್ಳುವುದನ್ನು ಮುಂದುವರಿಸುವ ಯಾವುದೇ ದೇಶಗಳನ್ನೂ ಭಯೋತ್ಪಾದಕ ದೇಶಗಳು ಎಂದು ವ್ಯಾಖ್ಯಾನಿಸಿದೆ. ಭಾರತವು ಜಲ, ನೆಲ ಹಾಗೂ ವಾಯು ಮಾರ್ಗಗಳನ್ನು ಒಳಗೊಂಡಂತೆ ಎಲ್ಲ ಮೂರು ರಂಗಗಳಲ್ಲೂ ಭಯೋತ್ಪಾದಕ ಬೆದರಿಕೆಯನ್ನು ಎದುರಿಸುತ್ತಿದ್ದು, ಇಂಧನ, ರೈಲ್ವೆ, ವಾಯುಯಾನ, ಬಂದರುಗಳು, ರಕ್ಷಣೆ, ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಸೇರಿದಂತೆ ಭಾರತೀಯ ಆರ್ಥಿಕತೆಯ ಮಹತ್ವದ ಎಲ್ಲಾ ವಲಯಗಳನ್ನು ಭಯೋತ್ಪಾದಕರಿಂದ ರಕ್ಷಿಸಿಕೊಳ್ಳಲು ಅಗತ್ಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಈ ನೀತಿಯಲ್ಲಿ ಪ್ರತಿಪಾದಿಸಲಾಗಿದೆ. ಇದಕ್ಕೂ ಮುನ್ನ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ವ್ಯೂಹತಂತ್ರವನ್ನು ಅಂತಿಮಗೊಳಿಸಲಾಗಿದ್ದು, ಅದನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುತ್ತದೆ ಎಂದು ವರದಿಯಾಗಿತ್ತು. ಈ ನೀತಿಗೆ ‘PRAHAAR’ ಎಂದು ನಾಮಕರಣ ಮಾಡಲಾಗಿದ್ದು, ಕೇಂದ್ರ ಗೃಹ ಸಚಿವಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ನೀತಿಯಲ್ಲಿ, “ಭಾರತವು ಭಯೋತ್ಪಾದನೆಯನ್ನು ಯಾವುದೇ ನಿರ್ದಿಷ್ಟ ಧರ್ಮ, ಜನಾಂಗ, ರಾಷ್ಟ್ರೀಯತೆ ಅಥವಾ ನಾಗರಿಕತೆಗೆ ಸಂಪರ್ಕಿಸುವುದಿಲ್ಲ” ಎಂದು ಹೇಳಲಾಗಿದೆ. ಭಾರತವು ಜಿಹಾದಿ ಭಯೋತ್ಪಾದನಾ ನೆಲೆಗಳಷ್ಟೇ ಅಲ್ಲದೆ, ಅವುಗಳ ಮುಖ್ಯ ಸಂಘಟನೆಗಳು ಗಡಿಯ ಹೊರಗಿನಿಂದ ನಡೆಸುತ್ತಿರುವ ಪ್ರಾಯೋಜಿತ ಭಯೋತ್ಪಾದನೆಯಿಂದ ನಿರಂತರವಾಗಿ ತೊಂದರೆಗೀಡಾಗಿದ್ದು, ಈ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ದಾಳಿಗಳ ಯೋಜನೆ, ಸಮನ್ವಯ ಹಾಗೂ ನೆರವು ಒದಗಿಸುವುದನ್ನು ಮುಂದುವರಿಸಿವೆ ಎಂದೂ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಸರಣಿ ಬಾಂಬ್ ಬೆದರಿಕೆ: ದಿಲ್ಲಿ ಮೆಟ್ರೊ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್
ಹೊಸದಿಲ್ಲಿ: ಇಮೇಲ್ ಮೂಲಕ ದಿಲ್ಲಿಯಾದ್ಯಂತ ಸರಣಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ, ಎಲ್ಲ ದಿಲ್ಲಿ ಮೆಟ್ರೊ ನಿಲ್ದಾಣಗಳಲ್ಲಿನ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಮುಂಜಾನೆ ದಿಲ್ಲಿ ಕಾರ್ಯಾಲಯ, ದಿಲ್ಲಿ ವಿಧಾನಸಭೆ, ಕೆಂಪು ಕೋಟೆ ಹಾಗೂ ಎರಡು ಶಾಲೆಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ಗಳನ್ನು ರವಾನಿಸಲಾಗಿದೆ. ಇದರ ಬೆನ್ನಿಗೇ ಭದ್ರತಾ ಸಂಸ್ಥೆಗಳಿಂದ ನಡೆದ ವ್ಯಾಪಕ ಶೋಧಗಳ ಬಳಿಕ, ಇವು ಹುಸಿ ಬಾಂಬ್ ಬೆದರಿಕೆಗಳು ಎಂದು ಘೋಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಬಾಂಬ್ ಬೆದರಿಕೆಗಳನ್ನು ರವಾನಿಸಿರುವ ದುಷ್ಕರ್ಮಿಗಳ ಐಪಿ ವಿಳಾಸಗಳನ್ನು ಪತ್ತೆ ಹಚ್ಚಲು ನಮ್ಮ ಸೈಬರ್ ತಂಡಗಳು ಪ್ರಯತ್ನಿಸುತ್ತಿವೆ. ಪೊಲೀಸರ ತನಿಖೆಯನ್ನು ದಿಕ್ಕು ತಪ್ಪಿಸಲು ಇಂತಹ ಅಪರಾಧಿಗಳು ವಿಪಿಎನ್ (ವರ್ಚುಯಲ್ ಪ್ರೈವೇಟ್ ನೆಟ್ವರ್ಕ್) ಬಳಸುತ್ತಿದ್ದಾರೆ. ಆದರೆ, ನಮ್ಮ ತಜ್ಞ ಅಧಿಕಾರಿಗಳು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾಂಬ್ ಬೆದರಿಕೆಗಳ ಹಿನ್ನೆಲೆಯಲ್ಲಿ ದಿಲ್ಲಿ ಮೆಟ್ರೊ ನಿಲ್ದಾಣಗಳು ಸೇರಿದಂತೆ ಎಲ್ಲ ಪ್ರಮುಖ ಸಂಸ್ಥೆಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪೊಲೀಸರು ಮತ್ತಷ್ಟು ಬಿಗಿಗೊಳಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. “ದಿಲ್ಲಿ ಖಾಲಿಸ್ತಾನ ಆಗಲಿದೆ” ಎಂದು ಉಲ್ಲೇಖಿಸಲಾಗಿದ್ದ ಈ ಇಮೇಲ್ಗಳಲ್ಲಿ ದಿಲ್ಲಿ ಸೇನಾ ಶಾಲೆ, ಕೆಂಪು ಕೋಟೆ ಹಾಗೂ ಮೆಟ್ರೊ ನಿಲ್ದಾಣಗಳನ್ನು ಮುಂದಿನ ಮೂರು ದಿನಗಳಲ್ಲಿ ಸ್ಫೋಟಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು. ಸೇನಾ ಶಾಲೆಯಲ್ಲಿ ಇಂದು ಮಧ್ಯಾಹ್ನ 1.11 ಗಂಟೆಗೆ, ವಿಧಾನಸಭೆಯಲ್ಲಿ ಮಧ್ಯಾಹ್ನ 3.11 ಗಂಟೆಗೆ ಹಾಗೂ ಕೆಂಪು ಕೋಟೆಯಲ್ಲಿ ಬೆಳಗ್ಗೆ 9.11 ಗಂಟೆಗೆ ಸ್ಫೋಟಗಳು ನಡೆಯಲಿವೆ ಎಂದು ಇಮೇಲ್ನಲ್ಲಿ ಬೆದರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಾಂಬ್ ಬೆದರಿಕೆ ಇಮೇಲ್ ನಲ್ಲಿ ನಿರ್ದಿಷ್ಟವಾಗಿ ಮೆಟ್ರೊ ನಿಲ್ದಾಣಗಳನ್ನು ಉಲ್ಲೇಖಿಸಿದ್ದುದರಿಂದ, ದಿಲ್ಲಿ ಮೆಟ್ರೊ ರೈಲು ನಿಗಮ ಜಾಲದ ಎಲ್ಲ ನಿಲ್ದಾಣಗಳ ಬಳಿ ಪೊಲೀಸರು ಭದ್ರತಾ ನಿಯೋಜನೆಯನ್ನು ಬಿಗಿಗೊಳಿಸಿದ್ದಾರೆ.
Bidar | ಬಲಗೈ ಸಮುದಾಯದ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣ ಹಿಂತೆಗೆದುಕೊಳ್ಳಲು ಮನವಿ
ಬೀದರ್ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬಲಗೈ ಸಮುದಾಯದ ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಮನವಿ ಮಾಡಿದೆ. ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಸೋಮವಾರ ಸಲ್ಲಿಸಿದ ಮನವಿ ಪತ್ರದಲ್ಲಿ, ಸರ್ಕಾರ ಜಾರಿಗೆ ತಂದ ಒಳ ಮೀಸಲಾತಿ ನೀತಿಯಿಂದ ಬಲಗೈ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಸಾಮಾಜಿಕ, ಉದ್ಯೋಗ ಹಾಗೂ ಆರ್ಥಿಕ ಹಿನ್ನಡೆ ಉಂಟಾಗುತ್ತಿದೆ ಎಂದು ಆರೋಪಿಸಿ ಫೆ.19 ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಪ್ರತಿಭಟನೆ ಶಾಂತಿಯುತವಾಗಿ ನಡೆಸಿಲ್ಲ ಎಂದು ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದು, ಪ್ರತಿಭಟನಾಕಾರರು ಒಳ ಮೀಸಲಾತಿ ಸಂಬಂಧ ಹೊರಡಿಸಿದ ನೇಮಕಾತಿ ಆದೇಶಗಳಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಅದನ್ನು ಮರು ಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಪ್ರತಿಭಟನೆಯ ವೇಳೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಸಂವಿಧಾನಾತ್ಮಕ ಹಕ್ಕು ಎಂದು ಸಮಿತಿ ಹೇಳಿದ್ದು, ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ. ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಮತ್ತಷ್ಟು ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮಾಲೆ, ಜಿಲ್ಲಾ ಕಾರ್ಯದರ್ಶಿ ಅನೀಲ್ ಮಡ್ಡೆ, ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ್ ಹೊಸಮನಿ, ಬಹುಜನ ಯುತ್ ಪ್ಯಾಂಥರ್ ಜಿಲ್ಲಾಧ್ಯಕ್ಷ ಜನಾರ್ಧನ್ ದೀನೆ ಹಾಗೂ ಯುವ ಮುಖಂಡ ಸಾಯಿ ಕೌರವ್ ಉಪಸ್ಥಿತರಿದ್ದರು.
ನನ್ನ ಪದಚ್ಯುತಿಗೆ ಮಧ್ಯಂತರ ಸರಕಾರ ಪ್ರಯತ್ನಿಸಿತ್ತು: ಬಾಂಗ್ಲಾದೇಶದ ಅಧ್ಯಕ್ಷರ ಗಂಭೀರ ಆರೋಪ
ಢಾಕಾ, ಫೆ.23: ಬಾಂಗ್ಲಾದೇಶದಲ್ಲಿ ಸಂವಿಧಾನಾತ್ಮಕ ಶಿಷ್ಟಾಚಾರ ಉಲ್ಲಂಘನೆ ಮತ್ತು ಅಧಿಕಾರ ದುರುಪಯೋಗದ ಕುರಿತು ಗಂಭೀರ ರಾಜಕೀಯ ವಿವಾದ ಭುಗಿಲೆದ್ದಿದೆ. ದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಧ್ಯಂತರ ಸರಕಾರದ ಮುಖ್ಯಸ್ಥರಾಗಿದ್ದ ಮುಹಮ್ಮದ್ ಯೂನುಸ್ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ್ದಾರೆ. ಬಾಂಗ್ಲಾದೇಶದ ದಿನಪತ್ರಿಕೆ ಕಲೇರ್ ಕಾಂತೊ ವರದಿ ಪ್ರಕಾರ, ಯೂನುಸ್ ನೇತೃತ್ವದ ಮಧ್ಯಂತರ ಸರಕಾರ ತನ್ನನ್ನು ಪದಚ್ಯುತಗೊಳಿಸಲು ಪ್ರಯತ್ನಿಸಿತ್ತು ಎಂದು ಶಹಾಬುದ್ದೀನ್ ಆರೋಪಿಸಿದ್ದಾರೆ. ಸಂವಿಧಾನಾತ್ಮಕ ನಿಯಮಗಳು ಹಾಗೂ ಸಾಂಸ್ಥಿಕ ಸಮನ್ವಯವನ್ನು ಯೂನುಸ್ ಪಾಲಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ. “ಸರಕಾರದ ಪ್ರಮುಖ ನಿರ್ಧಾರಗಳು, ವಿದೇಶಿ ಭೇಟಿಗಳು ಹಾಗೂ ಅಂತಾರಾಷ್ಟ್ರೀಯ ಒಪ್ಪಂದಗಳ ಕುರಿತು ನನಗೆ ಮಾಹಿತಿ ನೀಡಲಾಗುತ್ತಿರಲಿಲ್ಲ. ಅಧ್ಯಕ್ಷರೊಂದಿಗೆ ನಿಯಮಿತ ಸಮಾಲೋಚನೆ ನಡೆಸುವ ಸಾಂವಿಧಾನಿಕ ಬಾಧ್ಯತೆಯನ್ನು ಅವರು ಪಾಲಿಸಲಿಲ್ಲ,” ಎಂದು ಶಹಾಬುದ್ದೀನ್ ಹೇಳಿದ್ದಾರೆ. ಸಂವಿಧಾನದ ಪ್ರಕಾರ ಸರಕಾರದ ಮುಖ್ಯಸ್ಥರು ವಿದೇಶ ಪ್ರವಾಸದಿಂದ ವಾಪಾಸಾದ ಬಳಿಕ ಅಧ್ಯಕ್ಷರನ್ನು ಭೇಟಿಯಾಗಿ ನಡೆದ ಸಭೆಗಳು ಹಾಗೂ ಮಾತುಕತೆಗಳ ಕುರಿತು ಲಿಖಿತ ಮಾಹಿತಿ ನೀಡಬೇಕು. ಆದರೆ ಯೂನುಸ್ ಸುಮಾರು 15 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದರೂ ಒಂದೇ ಬಾರಿಯೂ ತನಗೆ ಮಾಹಿತಿ ನೀಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಮೆರಿಕದೊಂದಿಗೆ ಮಾಡಿಕೊಂಡ ಒಪ್ಪಂದ ಸೇರಿದಂತೆ ಹಲವು ಪ್ರಮುಖ ವಿಷಯಗಳಲ್ಲಿ ತನ್ನನ್ನು ಸಂಪೂರ್ಣವಾಗಿ ದೂರ ಇಡಲಾಗಿದೆ ಎಂದು ಅವರು ದೂರಿದ್ದಾರೆ. ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ಒಪ್ಪಂದಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿ ನೀಡುವುದು ಸಾಂವಿಧಾನಿಕ ಕರ್ತವ್ಯವಾಗಿದ್ದರೂ ಅದನ್ನು ಪಾಲಿಸಲಾಗಿಲ್ಲ ಎಂದು ಶಹಾಬುದ್ದೀನ್ ಹೇಳಿದ್ದಾರೆ. ಕೊಸೊವೊ ಮತ್ತು ಖತರ್ ದೇಶಗಳಿಂದ ಬಂದ ಆಹ್ವಾನಗಳನ್ನು ಅಧಿಕಾರಿಗಳು ತನ್ನೊಂದಿಗೆ ಚರ್ಚಿಸದೆ ನಿರಾಕರಿಸಿದರೆಂದು ಅವರು ಆರೋಪಿಸಿದ್ದಾರೆ. “ರಾಷ್ಟ್ರದ ಕರ್ತವ್ಯದಲ್ಲಿ ನಿರತವಾಗಿರುವುದರಿಂದ ಭೇಟಿ ಸಾಧ್ಯವಿಲ್ಲ” ಎಂದು ಉಲ್ಲೇಖಿಸಿ ಪತ್ರ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೇಶದ ರಾಯಭಾರಿ ಕಚೇರಿಗಳಲ್ಲಿ ಅಧ್ಯಕ್ಷರ ಭಾವಚಿತ್ರ ಪ್ರದರ್ಶಿಸುವ ಸಂಪ್ರದಾಯವನ್ನು ಕೂಡ ಯೂನುಸ್ ಆಡಳಿತ ರಾತ್ರೋರಾತ್ರಿ ಬದಲಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ಹಂತದಲ್ಲಿ ತನ್ನನ್ನು ಬದಲಾಯಿಸಿ ಮಾಜಿ ಮುಖ್ಯ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪ್ರಯತ್ನವೂ ನಡೆದಿತ್ತು, ಆದರೆ ಅದು ವಿಫಲವಾಯಿತು ಎಂದು ಶಹಾಬುದ್ದೀನ್ ಹೇಳಿದ್ದಾರೆ.
ಕಾಂತಾರ ದೈವಪಾತ್ರಕ್ಕೆ ಅವಮಾನ: ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಹೈಕೋರ್ಟ್ ಮೊರೆ; ತುರ್ತು ಏಕೆಂದು ಜಡ್ಜ್ ಗರಂ
ಕಾಂತಾರ ಸಿನಿಮಾ ದೈವಪಾತ್ರಕ್ಕೆ ಅವಮಾನ ಪ್ರಕರಣದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮೇಲೆ ಖಾಸಗಿ ದೂರು ದಾಖಲಾಗಿದೆ. ಈ ದೂರು ರದ್ದು ಕೋರಿ ನಟ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ವಿಚಾರಣೆ ತುರ್ತಾಗಿ ನಡೆಯಬೇಕೆಂದು ನಟನ ಪರ ವಕೀಲರು ಕೋರಿದಾಗ ನ್ಯಾಯಮೂರ್ತಿಗಳು ಗರಂ ಆಗಿದ್ದಾರೆ. ಮಂಗಳವಾರಕ್ಕೆ ವಿಚಾರಣೆ ನಿಗದಿಯಾಗಿದೆ.
ಶೇ. 90ರಷ್ಟು ಕೆಮ್ಮು ಸಿರಪ್ ತಯಾರಿಕಾ ಸಂಸ್ಥೆಗಳಲ್ಲಿ ಲೋಪ: ಔಷಧ ನಿಯಂತ್ರಕರ ತಪಾಸಣೆಯಲ್ಲಿ ಬಯಲು
ಹೊಸದಿಲ್ಲಿ: ಭಾರತದಲ್ಲಿ ಹಾಗೂ ಹೊರದೇಶಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಲಾದ ಭಾರತದಲ್ಲಿ ತಯಾರಿಸಲಾದ ಕೆಮ್ಮು ಸಿರಪ್ ಗಳಿಗೆ ಸಂಬಂಧಿಸಿದಂತೆ ಪರಿಶೀಲನೆಯನ್ನು ಬಿಗಿಗೊಳಿಸಿದ ಬೆನ್ನಿಗೇ, ಸುಮಾರು ಶೇ. 90ರಷ್ಟು ಭಾರತೀಯ ಕೆಮ್ಮು ಸಿರಪ್ ತಯಾರಿಕಾ ಸಂಸ್ಥೆಗಳು ನಿಯಮಗಳ ಪಾಲನೆಯಲ್ಲಿ ಲೋಪಗಳನ್ನು ಎಸಗಿರುವುದು ಪತ್ತೆಯಾಗಿದೆ ಎಂದು ಸೋಮವಾರ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ರಾಜೀವ್ ರಘುವಂಶಿ ತಿಳಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ್ದ 24 ಮಕ್ಕಳ ಸಾವಿಗೆ ಕಾರಣ ಎಂದು ಆರೋಪಿಸಲಾಗಿದ್ದ ಒಂದು ಬ್ರ್ಯಾಂಡ್ ನ ಕೆಮ್ಮು ಸಿರಪ್ನಲ್ಲಿ ಕಲುಷಿತ ಡೈಎಥಿಲೀನ್ ಗ್ಲೈಕಾಲ್ ಇರುವುದು ಪತ್ತೆಯಾದ ನಂತರ ಈ ತಪಾಸಣೆಗಳನ್ನು ನಡೆಸಲಾಗಿತ್ತು. ‘ಕೋಲ್ಡ್ರಿಫ್’ ಎಂಬ ಈ ಕೆಮ್ಮು ಸಿರಪ್ ಅನ್ನು ತಮಿಳುನಾಡು ಮೂಲದ ಶ್ರೀಶನ್ ಫಾರ್ಮಸ್ಯೂಟಿಕಲ್ಸ್ ಎಂಬ ಔಷಧ ಕಂಪೆನಿ ತಯಾರಿಸಿತ್ತು. ಮುಂಬೈನಲ್ಲಿ ಇಂಡಿಯನ್ ಫಾರ್ಮಾಸ್ಯೂಟಿಕಲ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ 11ನೇ ಜಾಗತಿಕ ಫಾರ್ಮಾಸ್ಯೂಟಿಕಲ್ಸ್ ಗುಣಮಟ್ಟ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಭಾರತೀಯ ಔಷಧ ನಿಯಂತ್ರಕ ರಾಜೀವ್ ರಘುವಂಶಿ, “ಗಂಭೀರವಾಗಿ ಪಾಲನೆಯಾಗದ ನಿಯಮಗಳ ವಿರುದ್ಧ ನಾವು ಗಂಭೀರ ಕ್ರಮಗಳನ್ನು ಕೈಗೊಂಡಿದ್ದೇವೆ. ಕೆಮ್ಮು ಸಿರಪ್ ತಯಾರಿಕೆಯಿಂದ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ತೆಗೆದುಹಾಕಲಾಗುವುದು ಎಂಬುದು ನನ್ನ ವಿಶ್ವಾಸವಾಗಿದೆ” ಎಂದು ಹೇಳಿದರು. ಯಾವುದೇ ಕಾಲಮಿತಿಯನ್ನು ನೀಡದೆ ಕೆಮ್ಮು ಸಿರಪ್ ಉತ್ಪನ್ನಗಳ ತಯಾರಿಕೆಯಲ್ಲಿ ಕಂಡುಬಂದ ಲೋಪಗಳನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. 2022ರಿಂದ ಇಲ್ಲಿಯವರೆಗೆ ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿ 140ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಾದ ಕೆಮ್ಮು ಸಿರಪ್ ಗಳು ಕಾರಣ ಎಂಬ ಆರೋಪಗಳು ಕೇಳಿಬಂದ ಬಳಿಕ, ಬಹುತೇಕ ಸಣ್ಣ ತಯಾರಿಕಾ ಕಂಪೆನಿಗಳೇ ಮೇಲುಗೈ ಸಾಧಿಸಿರುವ 42 ಶತಕೋಟಿ ಡಾಲರ್ ಮೌಲ್ಯದ ಔಷಧ ತಯಾರಿಕಾ ಕ್ಷೇತ್ರದ ಮೇಲೆ ನಿಗಾ ವಹಿಸಬೇಕು ಎಂಬ ಒತ್ತಡಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಳಗಾಗಿತ್ತು. ಈ ಆರೋಪಗಳಿಂದ ‘ಜಗತ್ತಿನ ಔಷಧಾಲಯ’ ಎಂಬ ಭಾರತದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿತ್ತು.
ಹುಮನಾಬಾದ್ | ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ : ಪ್ರತಿಭಟನೆ
ನಗರದಲ್ಲಿ ಬಹುತೇಕ ಎಲ್ಲ ಅಂಗಡಿ ಮುಂಗಟ್ಟು ಬಂದ್
Madhya Pradesh ರಾಜ್ಯಸಭಾ ಚುನಾವಣೆ | ಕಾಂಗ್ರೆಸ್ ಶಾಸಕ ರಾಜೀನಾಮೆ; ‘ಮ್ಯಾಜಿಕ್ ನಂಬರ್ 58’ರತ್ತ ಎಲ್ಲರ ಚಿತ್ತ
ಭೋಪಾಲ್: ರಾಜ್ಯಸಭಾ ಚುನಾವಣೆಯ ಮುನ್ನ ಮಧ್ಯಪ್ರದೇಶ ರಾಜಕೀಯ ಬೆಳವಣಿಗೆ ತೀವ್ರಗೊಂಡಿದೆ. ಕಾಂಗ್ರೆಸ್ ಶಾಸಕ ಹಾಗೂ ವಿಧಾನಸಭೆಯ ಉಪ ನಾಯಕ ಹೇಮಂತ್ ಕಟಾರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ–ಊಹಾಪೋಹಗಳಿಗೆ ಕಾರಣವಾಗಿದೆ. ಎರಡು ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸದಿದ್ದ ಅವರು ಸೋಮವಾರ ಮಾಧ್ಯಮಗಳ ಮುಂದೆ ಹಾಜರಾಗಿ, “ನನ್ನ ನಿರ್ಧಾರ ಸಂಪೂರ್ಣ ವೈಯಕ್ತಿಕ. ಕೌಟುಂಬಿಕ ಕಾರಣಗಳಿಂದಲೇ ರಾಜೀನಾಮೆ ಸಲ್ಲಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು. ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಗಳನ್ನು ಅವರು ತಳ್ಳಿಹಾಕಿದರು. “ಅಂತಹ ಯಾವುದೇ ಯೋಜನೆ ಇಲ್ಲ. ಪಕ್ಷ ನನ್ನ ಕುರಿತು ಯಾವ ನಿರ್ಧಾರ ಕೈಗೊಂಡರೂ ಅದನ್ನು ಅಂಗೀಕರಿಸುತ್ತೇನೆ,” ಎಂದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಗ್ ಅವರೊಂದಿಗೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತುಗಳನ್ನೂ ಅವರು ನಿರಾಕರಿಸಿದರು. ಆದರೆ, ಅವರ ರಾಜೀನಾಮೆ ಅಂಗೀಕಾರವಾಗಿದೆಯೇ ಎಂಬುದರ ಕುರಿತು ಸಂಜೆಯವರೆಗೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಏಪ್ರಿಲ್–ಮೇ ತಿಂಗಳಲ್ಲಿ ಖಾಲಿಯಾಗಲಿರುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿರುವ ಹೊತ್ತಿನಲ್ಲಿ ಈ ಬೆಳವಣಿಗೆ ನಡೆದಿದೆ. ಹೀಗಾಗಿ ರಾಜ್ಯಸಭಾ ಚುನಾವಣೆಯ ಅಂಕಗಣಿತ ಮತ್ತೊಮ್ಮೆ ಗಮನ ಸೆಳೆದಿದೆ. ವಿಧಾನಸಭೆಯಲ್ಲಿ ಬಿಜೆಪಿಗೆ 165 ಸದಸ್ಯರಿದ್ದು, ಕಾಂಗ್ರೆಸ್ ಬಳಿ 64 ಮಂದಿ ಇದ್ದಾರೆ. ಭಾರತೀಯ ಆದಿವಾಸಿ ಪಕ್ಷದ ಬಳಿ ಒಬ್ಬ ಶಾಸಕನಿದ್ದಾರೆ. ರಾಜ್ಯಸಭಾ ಸ್ಥಾನ ಗೆಲ್ಲಲು ಪ್ರತಿಯೊಬ್ಬ ಅಭ್ಯರ್ಥಿಗೆ 58 ಮತಗಳು ಅಗತ್ಯ. ಈ ಲೆಕ್ಕದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ತನ್ನದಾಗಿಸಿಕೊಳ್ಳುವ ಸ್ಥಿತಿಯಲ್ಲಿದೆ. ಆದರೆ, ಮೂರನೇ ಸ್ಥಾನ ಗೆಲ್ಲಲು ಹೆಚ್ಚುವರಿ ಬೆಂಬಲ ಅವಶ್ಯಕ. ಕಾಂಗ್ರೆಸ್ ತನ್ನ ಸದಸ್ಯಬಲವನ್ನು ಸಂಪೂರ್ಣವಾಗಿ ಕಾಪಾಡಿಕೊಂಡರೆ ಮೂರನೇ ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ. ಆದರೆ, ಹಿಂದಿನ ರಾಜ್ಯಸಭಾ ಚುನಾವಣೆಯಲ್ಲಿ ಕಂಡ ಅಡ್ಡ ಮತದಾನದ ಹಿನ್ನೆಲೆ ಪಕ್ಷದೊಳಗಿನ ಶಿಸ್ತು ಪ್ರಮುಖವಾಗಲಿದೆ. ಹೀಗಾಗಿ ‘ಮ್ಯಾಜಿಕ್ ನಂಬರ್ 58’ರತ್ತ ಎಲ್ಲರ ಗಮನ ನೆಟ್ಟಿದೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಸಹಕಾರ ಸಚಿವ ವಿಶ್ವದಾಸ್ ಸಾರಂಗ್, “ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಪ್ರತಿದಿನ ಕೆಲ ಶಾಸಕರು ಸಂಪರ್ಕಿಸುತ್ತಿದ್ದಾರೆ. ಆದರೆ, ಅವರಿಗೆ ಪ್ರವೇಶ ನೀಡುವ ಪ್ರಶ್ನೆಯೇ ಇಲ್ಲ,” ಎಂದು ಟೀಕಿಸಿದರು. ರಾಜ್ಯಸಭಾ ಚುನಾವಣೆಯ ಮುನ್ನಿನ ಈ ರಾಜಕೀಯ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
Bidar | ಹೋರಾಟದ ಮೂಲಕವೇ ಬದಲಾವಣೆ ಸಾಧ್ಯ : ಬಸವರಾಜ್ ಹೊರಟ್ಟಿ
ಬೀದರ್ : ಸಂಘಟನೆ ಎನ್ನುವುದು ಬಹಳ ಮುಖ್ಯವಾಗಿದೆ. ಮಹಿಳೆಯರು ಸಂಘವನ್ನು ಕಟ್ಟಿಕೊಂಡು ರಾಜ್ಯವ್ಯಾಪಿ ಸಂಘಟನೆ ರೂಪಿಸುತ್ತಿರುವುದು ಶ್ಲಾಘನೀಯವಾಗಿದೆ. ಹೋರಾಟದ ಮೂಲಕವೇ ಬದಲಾವಣೆ ಸಾಧ್ಯವಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಚೆನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸೋಮವಾರ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಕಾರ್ಯಕ್ರಮ, ಸರಕಾರದ ಯೋಜನೆಗಳ ಅನುಷ್ಠಾನ ಮತ್ತು ಆಡಳಿತದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳು ಸಮಾಜದ ಎಲ್ಲಾ ರಂಗಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾರೆ. ಇನ್ನಷ್ಟು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸುವುದು ಅಗತ್ಯವಿದೆ. ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುವುದು ತುಂಬಾ ಅವಶ್ಯಕವಾಗಿದೆ ಎಂದು ಅವರು ಹೇಳಿದರು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ನಮ್ಮ ಸರ್ಕಾರ ಮಹಿಳೆಯರಿಗಾಗಿ ಋತುಚಕ್ರ ರಜೆ ಘೋಷಣೆ ಮಾಡುವ ಮೂಲಕ ಅವರ ನೋವಿಗೆ ಸ್ಪಂದಿಸಿದೆ. ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಲಿಂಗ ತಾರತಮ್ಯಕ್ಕೆ ಕಡಿವಾಣ ಹಾಕಲು ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ. ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ಸಂಘದ ಚಟುವಟಿಕೆಗಳನ್ನು ಮೆಚ್ಚಿಕೊಂಡ ಅವರು, ಸಂಘಕ್ಕೆ ಅಗತ್ಯವಿದ್ದಲ್ಲಿ ಅನುದಾನ ನೀಡಲು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು. ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಮಾತನಾಡಿ, ಬೀದರ್ನಲ್ಲಿ ಮಹಿಳೆಯರು ಇಷ್ಟೊಂದು ಅಚ್ಚುಕಟ್ಟಾಗಿ ಹಾಗೂ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷ ತಂದಿದೆ ಎಂದರು. ಈ ಸಂದರ್ಭದಲ್ಲಿ ಬಸವ ಕಲ್ಯಾಣದ ಶಿವಾನಂದ್ ಮಹಾಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ರೋಶನಿ ಗೌಡ, ಸಿದ್ದಾರೆಡ್ಡಿ ಫೌಂಡೇಶನ್ ಅಧ್ಯಕ್ಷೆ ಗುರಮ್ಮಾ ಸಿದ್ದಾರೆಡ್ಡಿ ಅಕ್ಕಪಡೆ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ, ಶಶಿಕಲಾ ಕೆ., ವೀಣಾ ಕೃಷ್ಣಮೂರ್ತಿ, ಸಿಂಧು ರಘು ಎಚ್.ಎಸ್, ಫಣಿಂದ್ರ ಪ್ರಸಾದ್, ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ವಿ. ಸೋನಾರೆ, ಔರಾದ್ ತಾಲೂಕು ವೈದ್ಯಧಿಕಾರಿ ಡಾ. ಗಾಯತ್ರಿ ಹಾಗೂ ಜೂನಿಯರ್ ಮಿಸ್ ಇಂಡಿಯಾ ಸೆಕೆಂಡ್ ರನ್ನರ್ ಆಫ್ ಪೂರ್ವಿ ಬಿರಾದಾರ್ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಜಿಲ್ಲೆಯ ಸರಕಾರಿ ಮಹಿಳಾ ಅಧಿಕಾರಿಗಳು ಮತ್ತು ಅನೇಕರು ಉಪಸ್ಥಿತರಿದ್ದರು.
ಭಾಸ್ಕರ್ ರಾವ್ ಸೋದರ ಅಳಿಯ ನಾಪತ್ತೆ! 8 ದಿನಗಳಿಂದ ಸಿಕ್ಕಿಲ್ಲ ಸುಳಿವು; ನೆರವು ಕೋರಿದ ಮಾಜಿ IPS ಅಧಿಕಾರಿ
ಭಾಸ್ಕರ್ ರಾವ್ ಅವರ ಸೋದರ ಸಂಬಂಧಿಯೊಬ್ಬರು ಕಳೆದ 8 ದಿನಗಳಿಂದ ಕಾಣಿಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಫೆ.15 ರಂದು ಏಕಾಏಕಿ ನಾಪತ್ತೆಯಾಗಿದ್ದಾರೆ. ಸದ್ಯ ಅವರ ಹುಡುಕಾಟ ಬರದಿಂದ ಸಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಮಾಡಿ ಬಳಕೆದಾರರಿಗೆ ಕಾಣಿಯಾದ ವ್ಯಕ್ತಿಯ ಮಾಹಿತಿ ನೀಡಲು ಕೋರಿದ್ದಾರೆ.
ಯಾದಗಿರಿ | ವಿವಿಧ ಕೋರ್ಟ್ ಗಳ ಮೇಲೆ ಬಾಂಬ್ ಬೆದರಿಕೆ : ಬಾಂಬ್ ತಪಾಸಣಾ ತಂಡದಿಂದ ಜನಸಂದಣಿ ಸ್ಥಳಗಳ ತಪಾಸಣೆ
ಯಾದಗಿರಿ: ರಾಜ್ಯದ ವಿವಿಧ ಜಿಲ್ಲೆಗಳ ಕೊರ್ಟ್ ಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಮೆಲ್ ಮೂಲಕ ಮೆಸೆಜ್ ಬಂದ ಹಿನ್ನಲೆಯಲ್ಲಿ ನಗರದ ಜನಸಂದಣಿ ಇರುವ ಸ್ಥಳಗಳಲ್ಲಿ ಸೋಮವಾರ ಬಾಂಬ್ ತಪಾಸಣಾ ತಂಡವು ಪರಿಶೀಲನೆ ನಡೆಸಿತು. ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾ ಕೋರ್ಟ್ ಸೇರಿದಂತೆಯೇ ವಿವಿಧಡೆ ತಪಾಸಣಾ ತಂಡ ಶ್ವಾನದಳದೊಂದಿಗೆ ಆಗಮಿಸಿ ಪ್ರಯಾಣಿಕರ ಲಗೇಜ್, ಅನುಮಾನಾಸ್ಪದ ವಸ್ತುಗಳನ್ನು ಪರಿಶೀಲಿಸಿದರು. ಈ ತಂಡವು ನಾಳೆಯಿಂದ ನಾರಾಯಣಪುರ ಜಲಾಶಯ ಸೇರಿದಂತೆಯೇ ಜಿಲ್ಲೆಯ ವಿವಿಧಡೆ ತೆರಳಿ ತಪಾಸಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೆ ಲೋಕಭವನಕ್ಕೆ ಒಳ ಮೀಸಲು ದೂರು; ರಾಜ್ಯಪಾಲರ ಭೇಟಿ ಮಾಡಿದ ಬಿಜೆಪಿ ನಿಯೋಗ
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಸೌಲಭ್ಯ ಇದುವರೆಗೂ ಜಾರಿಯಾಗಿಲ್ಲ. ಈ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ವಿಚಾರವನ್ನು ಗಮನಕ್ಕೆ ತಂದಿದೆ.
ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಮಣಿಪಾಲ, ಫೆ.23: ಗೋವಾದಲ್ಲಿ ಡೋಮಿನೋಸ್ನಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮಣಿಪಾಲ ರುದ್ರಪ್ರಿಯ ನಗರ ನಿವಾಸಿ ಅಶೋಕ್ ನಾಯ್ಕ ಎಂಬವರ ಮಗ ಅಮರ್ ನಾಯ್ಕ್(29) ಎಂಬವರು ಫೆ.18ರಂದು ಮದ್ಯಾಹ್ನ ಮನೆಯಿಂದ ಉಡುಪಿಗೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. 5.3 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿರುವ ಇವರು, ಬೂದು ಬಣ್ಣದ ಪ್ಯಾಂಟ್ ಕ್ರೀಮ್ ಕಲರ್ ಶರ್ಟ್ ಧರಿಸಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ಮಾನಸಿಕ ಖಿನ್ನತೆ ಖಾಯಿಲೆಯಿಂದ ಸಂತೆಕಟ್ಟೆ ಪುತ್ತೂರು ಗ್ರಾಮದ ಲಿಂಗೊಟ್ಟುಗುಡ್ಡೆ ನಿವಾಸಿ ಸುರೇಶ್ ಪೂಜಾರಿ(54) ಎಂಬವರು ಫೆ.21ರಂದು ಸಂಜೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಪ್ರಭು ಕಾಲೇಜ್ ಮೈದಾನ ಜಾಗ ಹಂಚಿಕೆ ವಿರೋಧಿಸಿ ಸುರಪುರ ಸಂಪೂರ್ಣ ಬಂದ್
ಸುರಪುರ : ಪಟ್ಟಣದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ 21 ಗುಂಟೆ ಜಾಗವನ್ನು ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ನೀಡಿರುವ ಆದೇಶವನ್ನು ವಿರೋಧಿಸಿ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಕರೆ ಮೇರೆಗೆ ಸುರಪುರ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಬೆಳಗ್ಗಿನಿಂದಲೇ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ನೇತೃತ್ವದಲ್ಲಿ ಕನ್ನಡ ಪರ, ರೈತ ಪರ, ಕಾರ್ಮಿಕ ಹಾಗೂ ವಿವಿಧ ಸಮುದಾಯಗಳ 50ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿ ಜಿಲ್ಲಾಧಿಕಾರಿಗಳ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶಿಲ್ ಜಿ ನಮೋಶಿ ಮಾತನಾಡಿ, “ಪ್ರಭು ಕಾಲೇಜ್ ಮೈದಾನ ಸುರಪುರದ ಜನರ ಆಸ್ತಿ. ಇದರ ರಕ್ಷಣೆಗೆ ನೀವು ಹೋರಾಟ ನಡೆಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು. ಪ್ರಕರಣ ನ್ಯಾಯಾಲಯದಲ್ಲಿದ್ದು, ಮೈದಾನದಲ್ಲಿ ಹಾಕಲಾಗಿರುವ ಧ್ವಜಗಳನ್ನು ತೆರವುಗೊಳಿಸಲು ನ್ಯಾಯಾಲಯ ಆದೇಶ ನೀಡಿದೆ. ಅಧಿಕಾರಿಗಳು ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಯಥಾಸ್ಥಿತಿ ಕಾಪಾಡಲು ಒತ್ತಾಯ : ಮೈದಾನವನ್ನು ತಾಲೂಕಿನ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳು ಆಟ-ಪಾಠಕ್ಕಾಗಿ ಬಳಸುತ್ತಿದ್ದಾರೆ. ಯಾರ ಅಭಿಪ್ರಾಯವನ್ನೂ ಕೇಳದೆ ಆದೇಶ ನೀಡಿರುವುದು ಖಂಡನೀಯ. ಆದೇಶವನ್ನು ಹಿಂಪಡೆದು ಯಥಾಸ್ಥಿತಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಯಾವುದೇ ಮುನ್ಸೂಚನೆ ಇಲ್ಲದೆ ಅಂಗಡಿಗಳಿಗೆ ಬೀಗ ಹಾಕಿರುವುದನ್ನು ತಕ್ಷಣ ತೆರವುಗೊಳಿಸಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ಸಜ್ಜನ್, ವೇಣುಗೋಪಾಲ ಜೇವರ್ಗಿ, ರಮೇಶ ದೊರೆ, ಹನುಮಂತ ಕಟ್ಟಿಮನಿ, ದಾನಪ್ಪ ಕಡಿಮನಿ, ಲಕ್ಷ್ಮಿಕಾಂತ ದೇವರಗೋನಾಲ, ಡಾ. ಉಪೇಂದ್ರ ನಾಯಕ, ಶಿವಮೋನಯ್ಯ ನಾಯಕ, ವೆಂಕಟೇಶ ನಾಯಕ, ನಾಗರಾಜ ಪ್ಯಾಪಲಿ, ಸೋಮಶೇಖರ ಶಾಬಾದಿ, ಶರಣಪ್ಪ ಕಲಿಕೇರಿ, ಶರಣಬಸವ ಹೂಗಾರ, ವಿಶ್ವರಾಜ, ಚಂದ್ರು ಎಲಿಗಾರ, ವಿನಾಯಕ ಕರಡಕಲ್, ಹಣಮಂತ ಬಿಲ್ಲವ್ ಇತರರು ಮಾತನಾಡಿದರು. ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಹೆಮನೂರ, ಗಂಗಾಧರ ನಾಯಕ, ಶರಣು ನಾಯಕ, ದೇವೇಂದ್ರಪ್ಪ ತಳವಾರಗೆರ, ರಂಗನಾಥ ನಾಯಕ, ಮಲ್ಲು ಹೊಸಮನಿ, ಕಾಳಪ್ಪ ಕವಾತಿ, ಭೀಮರಾಯ ಕುಂಬಾರ, ಮಲ್ಲೇಶಿ ಪಾಟೀಲ, ವಿಜಯಕುಮಾರ ಶೆಟ್ಟಿ, ದತ್ತು ಗುತ್ತೇದಾರ, ಧರ್ಮಣ್ಣ ದೊರೆ, ಭೀಮು ನಾಯಕ ಮಲ್ಲಿಬಾವಿ, ವೆಂಕಟೇಶ ಪ್ಯಾಪ್ಲಿ ಸೇರಿದಂತೆ ನೂರಾರು ಜನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾವಿರಾರು ಜನ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರು ಮಾತನಾಡಿ, ನಾಳೆ ಬೆಳಗ್ಗೆ ಕೀಲಿ ಹಾಕಿರುವ ಅಂಗಡಿಗಳನ್ನು ತೆರೆಯಲಾಗುವುದು. ಮೂರು-ನಾಲ್ಕು ದಿನಗಳಲ್ಲಿ ಮೈದಾನದಲ್ಲಿರುವ ಧ್ವಜಗಳನ್ನು ತೆರವುಗೊಳಿಸಲಾಗುವುದು. ಜಿಲ್ಲಾಧಿಕಾರಿಗಳ ಆದೇಶ ಕುರಿತು ಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪ್ರಯಾಣಿಕರ ಪರದಾಟ ಪಟ್ಟಣ ಸಂಪೂರ್ಣ ಬಂದ್ ಆಗಿದ್ದರಿಂದ ಬಸ್ ಹಾಗೂ ಇತರ ವಾಹನ ಸಂಚಾರ ಸ್ಥಗಿತಗೊಂಡಿತು. ಬಸ್ ನಿಲ್ದಾಣ ಬಿಕೋ ಆಗಿ, ಮಾಹಿತಿ ತಿಳಿಯದೆ ಬಂದ ಪ್ರಯಾಣಿಕರು ಸಂಜೆಯವರೆಗೆ ಪರದಾಡುವಂತಾಯಿತು. ಪೊಲೀಸ್ ಬಂದೋಬಸ್ತ್ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಜಾವಿದ್ ಇನಾಂದಾರ್ ನೇತೃತ್ವದಲ್ಲಿ, ಪಿಐ ಉಮೇಶ ಎಂ ನಾಯಕ ಹಾಗೂ ಯಶಹಾಪುರ ಪಿಐ ಎಸ್.ಎಂ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.
‘ಹಜ್ ಯಾತ್ರೆ-2026’ | ಮಾ.28ರೊಳಗೆ ವೈದ್ಯಕೀಯ ತಪಾಸಣೆ-ಲಸಿಕಾ ಕಾರ್ಯ ಪೂರ್ಣಗೊಳಿಸಬೇಕು: ಗುರುದತ್ತ ಹೆಗ್ಡೆ
ಬೆಂಗಳೂರು, ಫೆ. 23: ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ತೆರಳಲಿರುವ ಯಾತ್ರಿಕರ ವೈದ್ಯಕೀಯ ತಪಾಸಣೆ ಹಾಗೂ ಲಸಿಕಾ ಕಾರ್ಯಕ್ರಮವನ್ನು ಮಾ.28ರೊಳಗಾಗಿ ಪೂರ್ಣಗೊಳಿಸಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಗುರುದತ್ತ ಹೆಗ್ಡೆ ತಿಳಿಸಿದ್ದಾರೆ. ಸೋಮವಾರ ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿರುವ ಅವರು, ಮಾನದಂಡ ಕಾರ್ಯಾಚರಣೆ ವಿಧಾನ ಅನುಸಾರ ಎಲ್ಲ ಚಟುವಟಿಕೆಗಳನ್ನು ಪೂರ್ಣಗೊಳಿಸುವ ನೊಡಲ್ ಅಧಿಕಾರಿಯಾಗಿ ಜಿಲ್ಲಾ ಆರ್ಸಿಎಚ್ ಅಧಿಕಾರಿಯನ್ನು ಗುರುತಿಸಲಾಗಿದೆ. ಸಮಗ್ರ ಮೇಲ್ವಿಚಾರಣೆ ಮತ್ತು ಸಮನ್ವಯ ಕಾರ್ಯವನ್ನು ಸಂಬಂಧಿತ ಜಿಲ್ಲಾ ಆರೋಗ್ಯಾಧಿಕಾರಿ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ನಿರ್ದೇಶಕರು, ಜಿಲ್ಲಾ ಶಸ್ತ್ರಚಿಕಿತ್ಸಕರು, ವೈದ್ಯಕೀಯ ಅಧೀಕ್ಷಕರು ಅಗತ್ಯ ಸಹಕಾರವನ್ನು ಒದಗಿಸಿ ಈ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ಮಾಡಬೇಕು. ಆದುದರಿಂದ, ವೈದ್ಯಕೀಯ ಕಾಲೇಜುಗಳ ಡೀನ್ ಹಾಗೂ ನಿರ್ದೇಶಕರಿಗೆ, ನಿಮ್ಮ ಸಂಸ್ಥೆಯ ತಜ್ಞ ವೈದ್ಯರನ್ನು ಹಜ್ ಯಾತ್ರಿಕರ ವೈದ್ಯಕೀಯ ತಪಾಸಣೆ ತಂಡಗಳಿಗೆ ನಿಯೋಜಿಸಿ ಅಗತ್ಯ ಸಹಕಾರ ನೀಡುವಂತೆ ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ವೈದ್ಯಕೀಯ ತಪಾಸಣೆಯಲ್ಲಿ ಭಾಗವಹಿಸುವ ತಜ್ಞರ ತಂಡದ ವಿವರಗಳು ಹಾಗೂ ಹಜ್ ಯಾತ್ರಿಕರಿಗಾಗಿ ಆಯೋಜಿಸಲಾದ ಆರೋಗ್ಯ ಶಿಬಿರಗಳ ದಿನಾಂಕಗಳನ್ನು ಸಲ್ಲಿಸಬೇಕು. ಹಾಗೆಯೇ, ಚಟುವಟಿಕೆಗಳ ದೈನಂದಿನ ಪ್ರಗತಿಯನ್ನು ಉಲ್ಲೇಖ ಮತ್ತು ಪರಿಶೀಲನೆಗಾಗಿ ವೆಬ್ಸೈಟ್ https://hphis.ehospital.nic.in/ ನಲ್ಲಿ ನಿಯಮಿತವಾಗಿ ನವೀಕರಿಸಬೇಕು ಎಂದು ಗುರುದತ್ತ ಹೆಗ್ಡೆ ಸೂಚಿಸಿದ್ದಾರೆ. ಸೂಚನೆ: ಬೆಂಗಳೂರಿನಲ್ಲಿ ತಪಾಸಣೆಗೆ ಒಳಪಡಬೇಕಿರುವ 3991 ಹಜ್ ಯಾತ್ರಿಕರನ್ನು ಗಮನದಲ್ಲಿಟ್ಟುಕೊಂಡು, ವಿಕ್ಟೋರಿಯಾ ಆಸ್ಪತ್ರೆ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸರ್ ಸಿ.ವಿ.ರಾಮನ್ ಜನರಲ್ ಆಸ್ಪತ್ರೆ, ಕೆ.ಆರ್.ಪುರಂ ಜನರಲ್ ಆಸ್ಪತ್ರೆ ಹಾಗೂ ಯಲಹಂಕ ಜನರಲ್ ಆಸ್ಪತ್ರೆಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು. ಅಲ್ಲದೇ, ಈ ಎಲ್ಲ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.
17 ವರ್ಷ ಬೇಕಾಯಿತು ಲೋಕಾಯುಕ್ತ ಪೊಲೀಸರಿಗೆ ಮತ್ತದೇ ದಕ್ಷತೆ, ಪ್ರಾಮಾಣಿಕತೆಯ ಕರ್ತವ್ಯ ನಿಭಾಯಿಸಲು: ರವಿ ಕೃಷ್ಣರೆಡ್ಡಿ
17 ವರ್ಷ ಬೇಕಾಯಿತು ಲೋಕಾಯುಕ್ತ ಪೊಲೀಸರಿಗೆ ಮತ್ತದೇ ದಕ್ಷತೆ, ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ಕರ್ತವ್ಯ ನಿಭಾಯಿಸಲು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವ್ಯಾಧ್ಯಕ್ಷರಾದ ರವಿ ಕೃಷ್ಣರೆಡ್ಡಿ ಅವರು ಹೇಳಿದ್ದಾರೆ. ಈ ಬರಹವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರ ಪೂರ್ಣ ಬರಹ ಇಲ್ಲಿದೆ. ಇದೇ 28-12-2025ರಂದು ರಾಜ್ಯದ ನೂರಾರು ಪೊಲೀಸ್ ಠಾಣೆಗಳಿಗೆ ದಿವಂಗತ ಮಧುಕರ್
ರಂಗಭೂಮಿ ಸಮಾಜದ ಪ್ರತಿಬಿಂಬ: ಡಾ.ಸುನೀತಾ
ಉಡುಪಿ, ಫೆ.23: ನಾಟಕ ಸೇರಿದಂತೆ ರಂಗಭೂಮಿಯು ಸಮಾಜದ ಪ್ರತಿಬಿಂಬ. ಎಲ್ಲ ಆಗುಹೋಗುಗಳಿಗೆ ಹಿಡಿವ ಕನ್ನಡಿ ಎಂದು ಕೋಟ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಸುನೀತಾ ವಿ. ಹೇಳಿದ್ದಾರೆ. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನವಾದ ಸೋಮವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಿನಿಮಾಗಳು ಯಾವ ಸಂದೇಶವನ್ನು ಸಾರುತ್ತಿವೆ ಎಂದು ನೋಡಿದರೆ ಸಂದೇಶಗಳೇ ಕಾಣುತ್ತಿಲ್ಲ. ರೌಡಿಸಂ, ಹೊಡೆದಾಟಗಳೇ ಕಾಣುತ್ತವೆ. ಆದರೆ, ನಾಟಕಗಳು ಆ ರೀತಿಯಲ್ಲಿಲ್ಲ. ಇಂದಿಗೂ ಸಮಾಜದ ಸಮಸ್ಯೆಗಳನ್ನು, ಪಿಡುಗುಗಳನ್ನು ಪ್ರತಿಬಿಂಬಿಸುತ್ತಾ ಚಿಂತನೆಗೆ ಹಚ್ಚುತ್ತವೆ. ಅಲ್ಲದೆ, ಸಿನಿಮಾ ನಟರು ಅನೇಕ ರೀಟೇಕ್ಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಆದರೆ, ರಂಗಭೂಮಿಯ ಕಲಾವಿದ ರಂಗದ ಮೇಲೆ ನಟಿಸಬೇಕು. ತಪ್ಪಾದರೆ ಅಲ್ಲಿ ರೀಟೇಕ್ ಇರುವುದಿಲ್ಲ. ಎಲ್ಲ ತಯಾರಿಗಳನ್ನು ಮಾಡಿಕೊಂಡು ಪ್ರದರ್ಶನ ನೀಡಬೇಕಾಗುತ್ತದೆ. ಹಾಗಾಗಿ ಶ್ರೇಷ್ಠ ನಟರು ರಂಗಭೂಮಿಯಿಂದ ಹೊರಹೊಮ್ಮುತ್ತಾರೆ ಎಂದು ವಿಶ್ಲೇಷಿಸಿದರು. ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಯು.ಮೋಹನ್ ಉಪಾಧ್ಯಾಯ ಮಾತನಾಡಿದರು. ರಂಗಕರ್ಮಿ ಕೃಷ್ಣ ವಿ.ಸುವರ್ಣ ಮಲ್ಪೆ ಅವರಿಗೆ ರಂಗಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದ್ಯಮಿ ಆನಂದ ಪಿ.ಸುವರ್ಣ, ಮಲ್ಪೆಯ ಉದ್ಯಮಿ ಸದಾನಂದ ಸಾಲ್ಯಾನ್, ಮಹಾಲಕ್ಷ್ಮೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಸುರೇಶ್ ಬಿ.ಕರ್ಕೇರ, ಮಲ್ಪೆಯ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರತ್ನಾಕರ ಅಮಿನ್, ತಾಂಗದಗಡಿ ವೀರಮಾರುತಿ ವ್ಯಾಯಮ ಶಾಲೆಯ ಅಧ್ಯಕ್ಷ ಮನೋಜ್ ಕುಮಾರ್ ಹಾಗೂ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು. ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ.ಎಸ್.ಭಟ್ ಸ್ವಾಗತಿಸಿದರು. ನಿರ್ದೇಶಕ ದಿವಾಕರ ಕಟೀಲ್ ವಂದಿಸಿದರು. ಅಕ್ಷತ್ ಅಮಿನ್ ಕಾರ್ಯಕ್ರಮ ನಿರೂಪಿಸಿದರು.
ಬೀದರ್ | ನಗರದಲ್ಲಿ ಗುಡುಗು ಸಹಿತ ಮಳೆ
ಬೀದರ್ : ನಗರದಲ್ಲಿ ಸೋಮವಾರ ರಾತ್ರಿ ಸುಮಾರು 8 ಗಂಟೆಯಿಂದ ಗುಡುಗು ಸಹಿತ ಮಳೆ ಸುರಿಯಿತು. ಮುಂಜಾನೆ ಮೋಡ ಕವಿದ ವಾತಾವರಣ ಮಳೆಯ ಮುನ್ಸೂಚನೆ ನೀಡುತ್ತಿತ್ತು. ಮಧ್ಯಾಹ್ನ ಸ್ವಲ್ಪ ಸಮಯ ಬಿಸಿಲು ಕಾಣಿಸಿಕೊಂಡರೂ, ಆವಾಗಾವಾಗ ಜೋರಾಗಿ ಗಾಳಿ ಬೀಸುತ್ತಿತ್ತು. ರಾತ್ರಿ ವೇಳೆಗೆ ಏಕಾಏಕಿ ಮಳೆ ಆರಂಭವಾಗಿ ಕೆಲಕಾಲ ಮುಂದುವರಿಯಿತು. ಬೇಸಿಗೆ ಕಾಲ ಪೂರ್ಣವಾಗಿ ಆರಂಭವಾಗುವ ಮುನ್ನವೇ ಮಳೆ ಬಂದಿರುವುದು ಗಮನಾರ್ಹವಾಗಿದೆ. ಕೆಲ ದಿನಗಳಿಂದ ಚಳಿ ಕಡಿಮೆಯಾಗುತ್ತಾ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿತ್ತು. ಇದೀಗ ಮಳೆ ಸುರಿದ ಹಿನ್ನೆಲೆಯಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ರೈತರು ಬೆಳೆದ ಬಹುತೇಕ ಬೆಳೆಗಳ ರಾಶಿ ಮಾಡಲಾಗಿದೆ. ಆದರೆ ಕೆಲವೆಡೆ ಕಡಲೆ ಮತ್ತು ಜೋಳದ ರಾಶಿ ಬಾಕಿ ಉಳಿದಿದೆ. ಮಳೆ ಮುಂದುವರಿದರೆ ರಾಶಿ ಮಾಡಿರುವ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ರಾಜಕೀಯ ಕೊನೆ ಎಂದ ಪ್ರಿಯಾಂಕ್, ಕೆಣಕಿದರೆ ಸುಮ್ಮನಿರಲ್ಲ ಎಂದ ಛಲವಾದಿ
ಪ್ರಿಯಾಂಕ್ ಖರ್ಗೆ ಅವರಿಗೆ ಮಾಡೋದಿಕ್ಕೆ ಬೇರೆ ಏನೂ ಕೆಲಸವಿಲ್ಲ. ಅವರು ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆನೂ ಇಲ್ಲ. ಅವರು ದಲಿತರ ಪರ ಹೋರಾಡಿಯೇ ಇಲ್ಲ. ದಲಿತತ್ವ ಅವರಲ್ಲಿ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುತ್ತಾರೆ ಹೊರತು ದಲಿತತ್ವ ಅವರ ಕುಟುಂಬದಲ್ಲಿ ಇಲ್ಲ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಹೇಳಿದ್ದರು. ಅಲ್ಲದೆ, ಪ್ರಿಯಾಂಕ್ ಖರ್ಗೆ ಅವರು ರಾಜಕಾರಣಿಯೇ ಅಲ್ಲ. ಅಪ್ಪನ ನೆರಳಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಬದ್ಧತೆಯೂ ಇಲ್ಲ. ಅವರ ತಳಬುಡ ಎಲ್ಲಾ ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ಎಲ್ಲ ದೇಶಗಳ ಮೇಲೆ ಶೇ.15 ಸುಂಕ ವಿಧಿಸಿದ ಟ್ರಂಪ್; ಹೊಸ ಸುಂಕ ನೀತಿಯಿಂದ ಯಾರಿಗೆ ಲಾಭ?
ಡೊನಾಲ್ಡ್ ಟ್ರಂಪ್ ಆಡಳಿತವು ವಿಧಿಸಿದ ಸುಂಕಗಳನ್ನು ಯುಎಸ್ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕೂಡಲೇ, ಮತ್ತೊಂದು ಕಾನೂನು ನಿಬಂಧನೆಯನ್ನು ಬಳಸಿಕೊಂಡು ಅಮೆರಿಕಕ್ಕೆ ಬರುವ ಎಲ್ಲಾ ಸರಕುಗಳ ಮೇಲೆ 10% ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷರು ಶುಕ್ರವಾರ ಹೇಳಿದ್ದಾರೆ. ಇದಾಗಿ ಕೆಲವೇ ಗಂಟೆಗಳ ನಂತರ ಅದನ್ನು 15%ಕ್ಕೆ ಹೆಚ್ಚಿಸಿದ್ದಾರೆ. ಶನಿವಾರ (ಫೆಬ್ರವರಿ 21) ಘೋಷಿಸಲಾದ 15% ಸುಂಕಗಳು 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಅನುಮತಿಸಲಾದ ಗರಿಷ್ಠ ಸುಂಕವಾಗಿದೆ. ಇದು ತಾತ್ಕಾಲಿಕವಾಗಿದೆ, ಏಕೆಂದರೆ ಈ ನಿಬಂಧನೆಯು ಹೊಸ ಸುಂಕಗಳು ಸುಮಾರು ಐದು ತಿಂಗಳವರೆಗೆ ಮಾತ್ರ ಜಾರಿಯಲ್ಲಿರಲು ಅನುವು ಮಾಡಿಕೊಡುತ್ತದೆ. ಅದರ ನಂತರ, ಅಮೆರಿಕ ಸರ್ಕಾರವು ಯುಎಸ್ ಕಾಂಗ್ರೆಸ್ಸಿನ ಅನುಮೋದನೆಯನ್ನು ಪಡೆಯಬೇಕು. ಇದೀಗ, ಹೊಸ 15% ತೆರಿಗೆಯಿಂದಾಗಿ ಹೆಚ್ಚಿನ ಪ್ರಮುಖ ದೇಶಗಳು ವಾಸ್ತವವಾಗಿ ಉತ್ತಮ ಸ್ಥಿತಿಯಲ್ಲಿವೆ. ಯುಎಸ್ ಸುಪ್ರೀಂ ಕೋರ್ಟ್ ಶುಕ್ರವಾರ ಹಿಂದಿನ ಹೆಚ್ಚಿನ ತೆರಿಗೆಗಳನ್ನು ರದ್ದುಗೊಳಿಸಿದ ನಂತರ, ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಬಹುತೇಕ ಎಲ್ಲಾ ಆಸಿಯಾನ್ ರಾಷ್ಟ್ರಗಳು, ಕಝಾಕಿಸ್ತಾನ್, ಟರ್ಕಿ, ದಕ್ಷಿಣ ಆಫ್ರಿಕಾ, ಲಿಬಿಯಾ, ಬ್ರೆಝಿಲ್, ಮೆಕ್ಸಿಕೊ ಮತ್ತು ಕೆನಡಾ ಸೇರಿದಂತೆ ಹಲವಾರು ರಾಷ್ಟ್ರಗಳು ಫೆಬ್ರವರಿ 24ರಿಂದ ಕಡಿಮೆ ದರಗಳನ್ನು ಪಾವತಿಸುತ್ತವೆ. ►ಹೊಸ ಸುಂಕ vs ಹಳೆಯ ಸುಂಕ ರಷ್ಯಾ, ಆಸ್ಟ್ರೇಲಿಯಾ, ಯುಕೆ, ಸೌದಿ ಅರೇಬಿಯಾ, ಯುಎಇ, ಖತರ್, ಉತ್ತರ ಮತ್ತು ಮಧ್ಯ ಆಫ್ರಿಕಾದ ಹೆಚ್ಚಿನ ಭಾಗ, ಅರ್ಜೆಂಟೀನಾ ಮತ್ತು ಕೊಲಂಬಿಯಾ ಈಗ ಹೆಚ್ಚಿನ ಸುಂಕ ಪಾವತಿಸುತ್ತಿವೆ. ಯುರೋಪಿಯನ್ ಒಕ್ಕೂಟ ಮತ್ತು ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳು (ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್) ಉನ್ನತ ನ್ಯಾಯಾಲಯ ರದ್ದುಗೊಳಿಸಿದ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ವಿಧಿಸಲಾದ ಹಿಂದಿನ ಸುಂಕಗಳ ಅಡಿಯಲ್ಲಿವೆ. ಆಗಸ್ಟ್ 2025ರಿಂದ ಭಾರತವು ಅಮೆರಿಕಕ್ಕೆ 50% ಸಂಚಿತ ಸುಂಕ ನೀಡುತ್ತಿದೆ (ಪ್ರತಿ ಸುಂಕ ಮತ್ತು ರಷ್ಯಾದ ತೈಲ ಆಮದುಗಾಗಿ ಹೆಚ್ಚುವರಿ ಸುಂಕಗಳು). ಇದರರ್ಥ ಯುಎಸ್ಗೆ ಅದರ ಪರಿಣಾಮಕಾರಿ ಸುಂಕದ ಪ್ರಮಾಣವು ಚೀನಾಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಈ ತಿಂಗಳ ಆರಂಭದಲ್ಲಿ, ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡವು. ಈ ಒಪ್ಪಂದಕ್ಕೂ ಮೊದಲು, ಭಾರತೀಯ ಸರಕುಗಳ ಮೇಲೆ ಭಾರಿ ಪ್ರಮಾಣದಲ್ಲಿ 50% ತೆರಿಗೆ ವಿಧಿಸಲಾಗುತ್ತಿತ್ತು. ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದರಿಂದ ಇದು ಪ್ರಮಾಣಿತ 25% ತೆರಿಗೆ ಮತ್ತು 25% ದಂಡದಿಂದ ಕೂಡಿತ್ತು. ಹೊಸ ಒಪ್ಪಂದದ ಭಾಗವಾಗಿ, ಅಮೆರಿಕವು 25% ರಷ್ಯಾದ ತೈಲ ದಂಡವನ್ನು ತೆಗೆದುಹಾಕಿತು, ಇದರಿಂದಾಗಿ ತೆರಿಗೆಯನ್ನು 25%ಕ್ಕೆ ಇಳಿಸಲಾಯಿತು. ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ನಂತರ ಅದನ್ನು 18%ಕ್ಕೆ ಇಳಿಸುವುದು ಯೋಜನೆಯಾಗಿತ್ತು. ಈ ಮಧ್ಯೆ, ಚೀನಾ ಪ್ರತಿ ಸುಂಕಗಳನ್ನು ಎದುರಿಸಬೇಕಾಯಿತು. ಜೊತೆಗೆ IEEPA ಅಡಿಯಲ್ಲಿ ಮೆಕ್ಸಿಕೊ ಮತ್ತು ಕೆನಡಾ ಜೊತೆಗೆ ಫೆಂಟನಿಲ್ ಸುಂಕಗಳನ್ನು (ಫೆಂಟನಿಲ್ ತಡೆಗಟ್ಟುವಿಕೆಯ ನೆಪದಲ್ಲಿ ವಿಧಿಸಿದ ಸುಂಕ) ಎದುರಿಸಬೇಕಾಯಿತು. ಇವೆಲ್ಲವೂ ಒಟ್ಟಾರೆಯಾಗಿ 45%ವರೆಗೆ ತಲುಪಿದವು. ಹಳೆಯ IEEPA ರದ್ದು ಆಗಿರುವುದರಿಂದ, 15% ತೆರಿಗೆ ವಿಧಿಸುವುದರಿಂದ ಭಾರತ ಮತ್ತು ಚೀನಾ ಈಗ ಸಮಾನ ದರದಲ್ಲಿವೆ. ಕನಿಷ್ಠ ಟ್ರಂಪ್ ಹೊಸ ಕಾನೂನುಗಳ ಅಡಿಯಲ್ಲಿ ಸುಂಕಗಳನ್ನು ಹೇರುವವರೆಗೆ ಯಾವುದೇ ದೇಶವು ಇನ್ನೊಂದಕ್ಕೆ ಹೋಲಿಸಿದರೆ ವಿಶೇಷ ಅನುಕೂಲ ಅಥವಾ ಅನಾನುಕೂಲತೆಯನ್ನು ಹೊಂದಿರುವುದಿಲ್ಲ. ಈಗ ಅಮೆರಿಕದ ಸುಪ್ರೀಂ ಕೋರ್ಟ್ IEEPA ಬಳಕೆಯನ್ನು ವಿರೋಧಿಸಿ ತೀರ್ಪು ನೀಡಿರುವುದರಿಂದ, ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್ ಅಥವಾ ಸರಳ ಆದೇಶದ ಮೂಲಕ ತೆರಿಗೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಹೆಚ್ಚಿನ ತೆರಿಗೆಗಳನ್ನು ಮರಳಿ ತರಲು ಅವರು ಈಗ ನಿಧಾನವಾದ, ಹೆಚ್ಚು ಕಷ್ಟಕರವಾದ ಕಾನೂನು ಮಾರ್ಗಗಳನ್ನು ಬಳಸಬೇಕು. ಈ ಇತರ ಆಯ್ಕೆಗಳು ಹೆಚ್ಚು ಸೀಮಿತವಾಗಿವೆ. ತೆರಿಗೆಗಳು ವಾಸ್ತವವಾಗಿ ಅಗತ್ಯವೆಂದು ಸಾಬೀತುಪಡಿಸಲು ಸರ್ಕಾರಿ ಸಂಸ್ಥೆಗಳು ದೀರ್ಘ, ವಿವರವಾದ ತನಿಖೆಗಳನ್ನು ನಡೆಸುವ ಅಗತ್ಯವಿದೆ. ಸುಪ್ರೀಂ ಕೋರ್ಟ್ನ ತೀರ್ಪು ಟ್ರಂಪ್ ತಾನು ಬಯಸಿದ್ದನ್ನು ಏನು ಬೇಕಾದರೂ ಮಾಡಬಹುದು ಎಂಬ ಸೊಕ್ಕನ್ನು ಮುರಿದಿದೆ. ಈಗ ತೆರಿಗೆಗಳನ್ನು ನಿಗದಿಪಡಿಸುವ ಅವರ ಅಧಿಕಾರವನ್ನು ಕಡಿತಗೊಳಿಸಲಾಗಿರುವುದರಿಂದ, ಅಮೆರಿಕದ ವ್ಯಾಪಾರ ಪಾಲುದಾರರು ಮಾತುಕತೆಗಳಲ್ಲಿ ಹೆಚ್ಚು ಕಠಿಣವಾಗಬಹುದು. ಇದಕ್ಕೆ ಹೆಚ್ಚುವರಿಯಾಗಿ, ಟ್ರಂಪ್ ಆಡಳಿತವು ಕಳೆದ ವರ್ಷದಲ್ಲಿ ಸಂಗ್ರಹಿಸಿದ ಸುಂಕದ ಆದಾಯದ ಹೆಚ್ಚಿನ ಭಾಗವನ್ನು ಹಿಂದಿರುಗಿಸಬೇಕಾಗಬಹುದು, ಇದು ಅವಮಾನಕ್ಕೆ ಕಾರಣವಾಗಬಹುದು. ►ಇತರ ನ್ಯಾಯಾಂಗ ಬದಲಾವಣೆಗಳು ಟ್ರಂಪ್ ಮುಂದೆ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗಬಹುದು. ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ಅವರ ಯೋಜನೆ ಮತ್ತು ಫೆಡರಲ್ ರಿಸರ್ವ್ ಮಂಡಳಿಯ ಸದಸ್ಯರನ್ನು ವಜಾಗೊಳಿಸುವ ಪ್ರಯತ್ನದಂತಹ ಅವರ ಆಡಳಿತವು ಗೆಲ್ಲಲು ಹೆಣಗಾಡುತ್ತಿರುವ ಹಲವಾರು ಇತರ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಪ್ರಸ್ತುತ ಪರಿಶೀಲಿಸುತ್ತಿದೆ. ಟ್ರಂಪ್ ಅವರು ಬಯಸಿದಂತೆ ತೆರಿಗೆಗಳನ್ನು ನಿಗದಿಪಡಿಸುವ ಅಧಿಕಾರವನ್ನು ಮರಳಿ ಪಡೆಯಲು ಯುಎಸ್ ಕಾಂಗ್ರೆಸ್ ಅನುಮತಿ ನೀಡಬೇಕಾಗುತ್ತದೆ. ಆದಾಗ್ಯೂ, ರಿಪಬ್ಲಿಕನ್ನರು ಹೌಸ್ ಮತ್ತು ಸೆನೆಟ್ ಎರಡರಲ್ಲೂ ಬಹಳ ಕಡಿಮೆ ಬಹುಮತವನ್ನು ಹೊಂದಿರುವುದರಿಂದ ಮತ್ತು ನವೆಂಬರ್ನಲ್ಲಿ ಮಧ್ಯಂತರ ಚುನಾವಣೆಗಳು ಬರಲಿರುವ ಕಾರಣ, ಕಾಂಗ್ರೆಸ್ ಅವರಿಗೆ ಆ ಅಧಿಕಾರವನ್ನು ನೀಡುವ ಸಾಧ್ಯತೆ ಕಡಿಮೆ. ಟ್ರಂಪ್ ಅವರ ಆಮದುಗಳ ಮೇಲಿನ ತೆರಿಗೆಗಳು ಅಮೆರಿಕನ್ನರಿಗೆ ದೈನಂದಿನ ಜೀವನವನ್ನು ಹೆಚ್ಚು ದುಬಾರಿಯನ್ನಾಗಿ ಮಾಡಿವೆ. ಈ ವೆಚ್ಚಗಳನ್ನು ಖರೀದಿದಾರರಿಗೆ (ಹಣದುಬ್ಬರ ರೂಪದಲ್ಲಿ) ವರ್ಗಾಯಿಸಲಾಗುತ್ತಿರುವುದರಿಂದ, ಕೆಲವು ರಿಪಬ್ಲಿಕನ್ ರಾಜಕಾರಣಿಗಳು ಮುಂಬರುವ ಚುನಾವಣೆಗಳಲ್ಲಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ. ತಮ್ಮನ್ನು ಉಳಿಸಿಕೊಳ್ಳಲು, ಈ ರಿಪಬ್ಲಿಕನ್ನರು ಟ್ರಂಪ್ಗೆ ಬೆಂಬಲ ನೀಡುವುದನ್ನು ನಿಲ್ಲಿಸಬಹುದು ಮತ್ತು ಡೆಮೋಕ್ರಾಟ್ಗಳ ಜೊತೆ ಸೇರಬಹುದು. ಇದು ರಿಪಬ್ಲಿಕನ್ ಪಕ್ಷದೊಳಗೆ ದೊಡ್ಡ ಒಡಕನ್ನು ಉಂಟುಮಾಡಬಹುದು. ಯೇಲ್ ವಿಶ್ವವಿದ್ಯಾಲಯದ ಬಜೆಟ್ ಲ್ಯಾಬ್ ಪ್ರಕಾರ, ತೆರಿಗೆಗಳನ್ನು ತೆಗೆದುಹಾಕುವುದರಿಂದ ಆಮದುಗಳ ಮೇಲಿನ ಸರಾಸರಿ ತೆರಿಗೆ ದರವನ್ನು ಅರ್ಧದಷ್ಟು ಕಡಿತಗೊಳಿಸಬಹುದು. ಆದಾಗ್ಯೂ, ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಕಳೆದುಹೋದ ಆದಾಯವನ್ನು ಸರಿದೂಗಿಸಲು ಹೊಸ ತೆರಿಗೆಗಳನ್ನು ರಚಿಸಲು ಅವರು ಮೂರು ವಿಭಿನ್ನ ಕಾನೂನುಗಳನ್ನು (ಸೆಕ್ಷನ್ 122, 232 ಮತ್ತು 301) ಸಂಯೋಜಿಸಿದರೆ ಸರ್ಕಾರವು ಯಾವುದೇ ಹಣವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಟ್ರಂಪ್ ಆಡಳಿತವು ಈಗ ತನ್ನ ವ್ಯಾಪಾರ ನೀತಿಗಳನ್ನು ಸಕ್ರಿಯವಾಗಿಡಲು ಹೆಚ್ಚು ಸಂಕೀರ್ಣವಾದ ಕಾನೂನುಗಳನ್ನು ಬಳಸಬೇಕಾಗುತ್ತದೆ. ಒಂದು ಉತ್ಪನ್ನ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುತ್ತದೆ ಎಂದು ಸಾಬೀತಾದರೆ ಸೆಕ್ಷನ್ 232 ತೆರಿಗೆ ವಿಧಿಸಲು ಅವಕಾಶ ನೀಡುತ್ತದೆ, ಆದರೆ ಸೆಕ್ಷನ್ 301 ಅನ್ಯಾಯ ವ್ಯಾಪಾರ ನಿಯಮಗಳನ್ನು ಬಳಸುವ ದೇಶಗಳನ್ನು ಗುರಿಯಾಗಿಸುತ್ತದೆ. ಟ್ರಂಪ್ ಈ ನಿಬಂಧನೆಗಳನ್ನು ಬಳಸಲು ಬಯಸಿದ್ದರೂ, ಅವರು ಇನ್ನು ಮುಂದೆ ತಕ್ಷಣ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅವರ ಹಿಂದಿನ ತುರ್ತು ಅಧಿಕಾರಗಳಿಗಿಂತ ಭಿನ್ನವಾಗಿ, ಈ ಕಾನೂನುಗಳಿಗೆ ತಿಂಗಳುಗಳ ಔಪಚಾರಿಕ ತನಿಖೆಗಳು, ಸಾರ್ವಜನಿಕ ವಿಚಾರಣೆಗಳು ಮತ್ತು ವಿವರವಾದ ವರದಿಗಳು ಬೇಕಾಗುತ್ತವೆ. ಇದು ಹೆಚ್ಚು ಕಷ್ಟಕರವಾಗಿರುತ್ತದೆ. ►ಲಾಭ ಯಾರಿಗೆ? ►ಭಾರತ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಬಳಸಿಕೊಂಡು ಟ್ರಂಪ್ ಸುಂಕ ವಿಧಿಸಿದ್ದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ, ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಚೀನಾ, ಭಾರತ ಮತ್ತು ಬ್ರೆಝಿಲ್ ದೇಶಗಳ ಉತ್ಪನ್ನಗಳ ಮೇಲಿನ ಸುಂಕ ಕಡಿಮೆಯಾಗಿದೆ. ಫೆಬ್ರವರಿ ಆರಂಭದಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕಗಳು 50%ಕ್ಕೆ ಏರಿ 25%ಕ್ಕೆ ಇಳಿದವು. ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ ಬಳಿಕ ಅಮೆರಿಕವು 18%ಕ್ಕೆ ಮತ್ತೊಂದು ಕಡಿತವನ್ನು ಭರವಸೆ ನೀಡಿತು. ಶುಕ್ರವಾರದ ತೀರ್ಪಿನ ನಂತರ ಅವು 10%ಕ್ಕೆ ಇಳಿದು, ನಂತರ ಶನಿವಾರ 15%ಕ್ಕೆ ಏರಿತು. ►ಚೀನಾ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಟ್ರಂಪ್ ಆಡಳಿತವು ತನ್ನ ಸುಂಕ ವ್ಯವಸ್ಥೆಯನ್ನು ಇತರ ವ್ಯಾಪಾರ ಕ್ರಮಗಳ ಮೂಲಕ ಮುಂದುವರಿಸುವ ಕ್ರಮವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಚೀನಾ ಹೇಳಿದೆ. ವ್ಯಾಪಾರ ಯುದ್ಧದಲ್ಲಿ ರಕ್ಷಣಾತ್ಮಕ ನೀತಿಯು ಅಂತಿಮವಾಗಿ ಎಲ್ಲಾ ಕಡೆಯ ಆರ್ಥಿಕ ಪ್ರಗತಿಯನ್ನು ನಾಶಪಡಿಸುವುದರಿಂದ ಎಲ್ಲರೂ ಸೋಲುತ್ತಾರೆ ಎಂದು ಹೇಳಿ, ಟ್ರಂಪ್ ಘೋಷಿಸಿದ ಏಕಪಕ್ಷೀಯ ಸುಂಕಗಳನ್ನು ರದ್ದುಗೊಳಿಸುವಂತೆ ಅಮೆರಿಕವನ್ನು ಒತ್ತಾಯಿಸಿತ್ತು. ನ್ಯಾಯಾಲಯಗಳು 10% ಫೆಂಟನಿಲ್ ಸುಂಕವನ್ನು ತೆಗೆದುಹಾಕಿರುವುದರಿಂದ, ಚೀನಾದಂತಹ ದೇಶಗಳಿಗೆ ರಫ್ತುಗಳು ಈಗ ಕಡಿಮೆ ಕಠಿಣ ದರದ್ದಾಗಿವೆ. ಬೀಜಿಂಗ್ ಹೊರತುಪಡಿಸಿ, ಮೆಕ್ಸಿಕೊ ಕೂಡ ಫೆಂಟನಿಲ್-ಸಂಬಂಧಿತ ಸುಂಕಗಳನ್ನು ಹೊಂದಿತ್ತು. ಆ ಶುಲ್ಕಗಳು ಇನ್ನು ಮುಂದೆ ಅನ್ವಯಿಸದ ಕಾರಣ ಅದು ಸಹ ಪ್ರಯೋಜನ ಪಡೆಯುತ್ತದೆ. ►ಯಾರಿಗೆ ಹೊಡೆತ? ಬ್ರಿಟನ್ ಇತರ ಹಲವು ದೇಶಗಳಿಗಿಂತ 10% ಕಡಿಮೆ ಪ್ರತಿ ಸುಂಕದಿಂದ ಲಾಭ ಪಡೆಯುತ್ತಿತ್ತು. ಆದರೆ ಟ್ರಂಪ್ ಎಲ್ಲಾ ರಾಷ್ಟ್ರಗಳಿಗೆ ಅದನ್ನು 15%ಕ್ಕೆ ಹೆಚ್ಚಿಸಿರುವುದರಿಂದ ಈಗ ಹೆಚ್ಚಿನ ಸುಂಕಗಳನ್ನು ಎದುರಿಸಬೇಕಾಗಿದೆ. ಗ್ಲೋಬಲ್ ಟ್ರೇಡ್ ಅಲರ್ಟ್ ಪ್ರಕಾರ, ಯುಕೆ ಅತಿದೊಡ್ಡ ಏರಿಕೆಯನ್ನು ಎದುರಿಸಲಿದೆ. ಇಟಲಿ ಮತ್ತು ಸಿಂಗಾಪುರ ಕೂಡ ಹೆಚ್ಚುವರಿ ಸುಂಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ದರದಿಂದ ಹೊರಗಿಡುವಂತೆ ಯುಕೆ ಅಧಿಕಾರಿಗಳು ಈಗ ತುರ್ತಾಗಿ ಯುಎಸ್ ಆಡಳಿತವನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಯುಎಸ್ಗೆ ಯುಕೆ ರಫ್ತಿನ ವೆಚ್ಚವನ್ನು 3 ಬಿಲಿಯನ್ ಪೌಂಡ್ ($4 ಬಿಲಿಯನ್)ವರೆಗೆ ಹೆಚ್ಚಿಸಬಹುದು ಮತ್ತು 40,000 ಬ್ರಿಟಿಷ್ ಕಂಪನಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಬ್ರಿಟಿಷ್ ಚೇಂಬರ್ಸ್ ಆಫ್ ಕಾಮರ್ಸ್ ಹೇಳಿದೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ನಾವು ಪರಿಗಣಿಸುವ ವಿಷಯಗಳನ್ನು ಮುಂದಿಟ್ಟು ಅಮೆರಿಕದೊಂದಿಗೆ ನಾವು ಉನ್ನತ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸುತ್ತಿದ್ದೇವೆ ಎಂದು ಕ್ಯಾಬಿನೆಟ್ ಸಚಿವೆ ಬ್ರಿಡ್ಜೆಟ್ ಫಿಲಿಪ್ಸನ್ ರವಿವಾರ ಸ್ಕೈ ನ್ಯೂಸ್ಗೆ ತಿಳಿಸಿದ್ದಾರೆ. ►ಮುಂದಿನ ನಡೆ ಏನು? ಇತ್ತೀಚಿನ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ಆಟದ ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ವ್ಯಾಪಾರ ಚಿಂತಕರ ಚಾವಡಿ GTRIಯ ಅಜಯ್ ಶ್ರೀವಾಸ್ತವ ಅವರ ಪ್ರಕಾರ, ಹೆಚ್ಚಿನ ತೆರಿಗೆಗಳಿಂದ ಒತ್ತಡಕ್ಕೊಳಗಾಗಿರುವ ಅನೇಕ ದೇಶಗಳು ಈಗ ತಾವು ಸಹಿ ಮಾಡಿದ ವ್ಯಾಪಾರ ಒಪ್ಪಂದಗಳಿಂದ ಹಿಂದೆ ಸರಿಯಬಹುದು. ಭಾರತಕ್ಕೆ ಇದು ಪ್ರಮುಖ ತಿರುವಾಗಿದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸುಮಾರು ಶೇ.55 ರಷ್ಟು ರಫ್ತುಗಳು ಶೇ.18 ರಷ್ಟು ಪ್ರತಿ ಸುಂಕದಿಂದ ಮುಕ್ತಗೊಳ್ಳುತ್ತವೆ ಮತ್ತು ಪ್ರಮಾಣಿತ ಎಂಎಫ್ಎನ್ (ಅತ್ಯಂತ ಅನುಕೂಲಕರ ರಾಷ್ಟ್ರ) ಸುಂಕಗಳಿಗೆ ಹಿಂತಿರುಗುತ್ತವೆ. ಆದಾಗ್ಯೂ, ಸೆಕ್ಷನ್ 232 ಸುಂಕಗಳು ಹಾಗೆಯೇ ಉಳಿದಿವೆ. ಇದರಲ್ಲಿ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ 50% ಹಾಗೂ ಕೆಲವು ಆಟೋ ಘಟಕಗಳ ಮೇಲೆ 25% ಸೇರಿವೆ. ಸ್ಮಾರ್ಟ್ಫೋನ್ಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಔಷಧಿಗಳು ಸೇರಿದಂತೆ ರಫ್ತಿನ ಸರಿಸುಮಾರು 40% ವಿನಾಯಿತಿಯಾಗಿ ಉಳಿದಿವೆ. ಸುಪ್ರೀಂ ಕೋರ್ಟ್ ತೀರ್ಪು ಜಾಗತಿಕ ವ್ಯಾಪಾರ ಭೂದೃಶ್ಯವನ್ನು ಪುನರ್ರೂಪಿಸಿದೆ. ಇದು ಯುನೈಟೆಡ್ ಸ್ಟೇಟ್ಸ್ನೊಂದಿಗಿನ ಭಾರತದ ವ್ಯಾಪಾರ ಒಪ್ಪಂದದ ಪರಿಶೀಲನೆಯನ್ನು ಪ್ರೇರೇಪಿಸಬಹುದು. ಪ್ರತಿಸುಂಕಗಳು ಅಮೆರಿಕದ ಹತೋಟಿಯಾಗಿತ್ತು. ಆ ಹತೋಟಿ ಹೋದ ನಂತರ ಮಾತುಕತೆಗಳು ನಿಷ್ಪ್ರಯೋಜಕವಾಗುತ್ತವೆ. ವ್ಯಾಪಾರ ನೀತಿಯು ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಇದು ಕಾರ್ಯನಿರ್ವಾಹಕ ಕ್ರಮಕ್ಕಿಂತ ಕಡಿಮೆ ಮತ್ತು ಕಾನೂನು ಮಿತಿಗಳು, ಶಾಸಕಾಂಗ ಅಧಿಕಾರ ಹಾಗೂ ಕಾರ್ಯತಂತ್ರದ ಮರುಮಾಪನದಿಂದ ಹೆಚ್ಚು ವ್ಯಾಖ್ಯಾನಿಸಲ್ಪಟ್ಟಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ. ಭಾರತ ಇನ್ನೂ ಅಮೆರಿಕ ಜೊತೆ ಒಪ್ಪಂದದ ಮಾತುಕತೆ ನಡೆಸುತ್ತಿದೆ. ನ್ಯಾಯಾಲಯದ ಆದೇಶದ ನಂತರ ಹಲವು ಅನಿಶ್ಚಿತತೆಗಳು ಎದುರಾಗಿರುವುದರಿಂದ, ಭಾರತ ಒಪ್ಪಂದದ ಪಠ್ಯವನ್ನು ಪೂರ್ಣಗೊಳಿಸಲು ವಾಷಿಂಗ್ಟನ್ಗೆ ಭಾರತೀಯ ಸಮಾಲೋಚಕರ ತಂಡದ ಭೇಟಿ ಮುಂದೂಡಲಾಗಿದೆ. ಇತ್ತೀಚಿನ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಉಭಯ ರಾಷ್ಟ್ರಗಳಿಗೆ ಸಮಯ ಸಿಕ್ಕ ನಂತರ ಭಾರತೀಯ ಮುಖ್ಯ ಸಮಾಲೋಚಕ ಮತ್ತು ತಂಡದ ಪ್ರಸ್ತಾವಿತ ಭೇಟಿಯನ್ನು ನಿಗದಿಪಡಿಸಬೇಕು ಎಂದು ಎರಡೂ ಕಡೆಯವರು ಅಭಿಪ್ರಾಯಪಟ್ಟಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಹೊಸ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ.
ಯಾದಗಿರಿ | ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿಸಿದ ಹೋರಾಟಗಾರರಿಗೆ ಜೀವ ಬೆದರಿಕೆ ಆರೋಪ
ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಅಮಾನತಿಗೆ ಭೀಮು ಪೂಜಾರಿ ಆಗ್ರಹ
ಆರೋಗ್ಯ ಕೇಂದ್ರ, ಭೂ ತೆರಿಗೆ ಇಳಿಕೆಗೆ ಆಗ್ರಹ: ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆ
ಉಳ್ಳಾಲ: ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ದ ಬಗ್ಗೆ ಸೋಮೇಶ್ವರ ಪುರಸಭೆಯಲ್ಲಿ ವ್ಯಾಪಕ ಚರ್ಚೆ ನಡೆಸಿದ ಸದಸ್ಯರು ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಒತ್ತಾಯಿಸಿದ ಘಟನೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಅಧಿಕಾರಿ ಮಾತನಾಡಿ, ಆರೋಗ್ಯ ಕೇಂದ್ರ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇದೆ.ಸೋಮೇಶ್ವರ ದಲ್ಲಿ ನಿರ್ಮಿಸಲು ನಿವೇಶನ ಸಮಸ್ಯೆ ಇದೆ ಎಂದರು. ಸಲಾಮ್ ಉಚ್ಚಿಲ ಮಾತನಾಡಿ,ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ಇಲ್ಲ. 30 ಸಾವಿರ ಜನಕ್ಕೆ ಒಂದು ಆರೋಗ್ಯ ಕೇಂದ್ರ ಇರಬೇಕು ಎಂಬ ನಿಯಮ ಇದೆ. ಇಲ್ಲಿ ಆರೋಗ್ಯ ಕೇಂದ್ರ, ಮೆಡಿಕಲ್ ಆಫೀಸರ್, ಆಶಾ ಕಾರ್ಯಕರ್ತೆಯರ ಕೊರತೆ ಇದೆ ಎಂದರು. ನಿವೇಶನ ಕಂದಾಯ ಇಲಾಖೆ ಮಂಜೂರು ಮಾಡಬೇಕು.ಅವರಿಗೆ ಮನವಿ ಮಾಡಿ ನಿವೇಶನ ಪಡೆಯಬೇಕು.ಈ ಕೆಲಸ ಆರೋಗ್ಯ ಇಲಾಖೆ ಮಾಡಬೇಕು ಎಂದು ಉಪಾಧ್ಯಕ್ಷ ರವಿಶಂಕರ್ ಹೇಳಿದರು. ಸಂಕೋಲಿಗೆಯಲ್ಲಿ ಅಂಚೆ ಇಲಾಖೆ ಗೆ ಇಟ್ಟ ಜಾಗ ಇದೆ.ಅಲ್ಲಿ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡೋಣ ಎಂದು ಕೌನ್ಸಿಲರ್ ಸಲಾಮ್ ಉಚ್ಚಿಲ ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು. ಭೂಮಿಗೆ ಚದರ ಅಡಿ ಗೆ ಶೇ.ಐದರಷ್ಟು ತೆರಿಗೆ ಪುರಸಭೆ ವಿಧಿಸಿದ್ದು ಸರಿಯಲ್ಲ .ಇದರಿಂದ ಜನರಿಗೆ ಹೊರೆ ಆಗುತ್ತಿದೆ. ಇದನ್ನು ಇಳಿಕೆ ಮಾಡುವಂತೆ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರ್ ಆಗ್ರಹಿಸಿದರು. ಇದಕ್ಕೆ ಇತರ ಸದಸ್ಯರು ಧ್ವನಿ ಗೂಡಿಸಿದ ಹಿನ್ನೆಲೆಯಲ್ಲಿ ಭೂ ತೆರಿಗೆಯನ್ನು ಮೂರು ಶೇಕಡಕ್ಕೆ ಇಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಾಲ್ಕು ತಿಂಗಳ ಹಿಂದೆ ನಡೆದ ಮೃತಪಟ್ಟ ದಯಾನಂದ ಗಟ್ಟಿ ಅವರು ನಾಯಿ ಕಚ್ಚಿ ಮೃತಪಟ್ಟಿದ್ದು ದೃಢವಾಗಿದೆ. ಅವರಿಗೆ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಉಪಾಧ್ಯಕ್ಷ ರವಿಶಂಕರ್ ಸಭೆಗೆ ತಿಳಿಸಿದರು. ದಯಾನಂದ ಗಟ್ಟಿ ನಾಯಿ ಕಚ್ಚಿ ಮೃತಪಟ್ಟಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಐದು ಲಕ್ಷ ಪುರಸಭೆ ವತಿಯಿಂದ ಚೆಕ್ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಮತ್ತಡಿ ಘೋಷಿಸಿದರು. ಅಧ್ಯಕ್ಷ ಕಮಲ ಅವರು ದಯಾನಂದ ಗಟ್ಟಿ ಕುಟುಂಬ ಸ್ಥರಿಗೆ ಚೆಕ್ ವಿತರಣೆ ಮಾಡಿದರು. ಘನತ್ಯಾಜ್ಯ ವಿಲೇವಾರಿ, ಶುಲ್ಕ ಏರಿಕೆ ಮಾಡಿದ ಬಗ್ಗೆ ಸಭೆಯಲ್ಲಿ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮತ್ತಡಿ ಅವರು, ಘನತ್ಯಾಜ್ಯ ವಿಲೇವಾರಿ ಮಂಗಳೂರಿನಲ್ಲಿ ಮಾಡಲಾಗುತ್ತಿದೆ.ಇದಕ್ಕೆ ನಾವು ಶುಲ್ಕ ಪಾವತಿ ಮಾಡಬೇಕು, ವಾಹನ, ಪೆಟ್ರೊಲ್ ನಾವೇ ನೀಡಬೇಕಾಗುತ್ತದೆ. ಇದಕ್ಕೆ ಜಾಸ್ತಿ ಖರ್ಚು ತಗಲುತ್ತದೆ ಎಂದರು. ಅಮೃತ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಎಲ್ಲಾ ಕಡೆ ನೀರು ಬರುತ್ತಿಲ್ಲ.ಮೀಟರ್ ರೀಡಿಂಗ್ ಆಗುತ್ತದೆ. ಈಗ ಕುಡಿಯುವ ನೀರಿನ ಶುಲ್ಕ ಅಮೃತ್ ಯೋಜನೆಯಡಿ ಸಿಗುವ ನೀರಿಗೆ ಪಾವತಿ ಮಾಡಬೇಕೇ ಎಂಬ ಬಗ್ಗೆ ತೀರ್ಮಾನ ಮಾಡಿ ಎಂದು ಮನೋಜ್ ಹೇಳಿದರು. ಅಮೃತ ಕುಡಿಯುವ ನೀರು ಶುಲ್ಕ ಈಗ ವಿಧಿಸುವುದಿಲ್ಲ ಅದರ ಕಾರ್ಯ ಯೋಜನೆ ಪೂರ್ಣಗೊಂಡ ಬಳಿಕ ಶುಲ್ಕ ವಿಧಿಸಲಾಗುವುದು ಎಂದು ರವಿಶಂಕರ್ ಹೇಳಿದರು. ಪಿಲಾರ್ ನಲ್ಲಿ ಕಸ ಹಾಕಲಾಗುತ್ತಿದೆ.ಸಿಸಿ ಕೆಮರಾ ಸರಿಯಾಗಿಲ್ಲ. ಈ ಬಗ್ಗೆ ಕ್ರಮ ಆಗಬೇಕು ಎಂದು ಕೌನ್ಸಿಲರ್ ಪರ್ವೀನ್ ಆಗ್ರಹಿಸಿದರು. ಸಿಸಿ ಕ್ಯಾಮರಾ ಸರಿ ಇದೆಯಾ ಎಂದು ನೋಡಿ. ಸಿಸಿ ಕ್ಯಾಮೆರಾ ವರ್ಕ್ ಆಗ್ತಿಲ್ಲ. ಕಾಟಾಚಾರಕ್ಕೆ ಸಿ.ಸಿ ಕ್ಯಾಮೆರಾ ಅಳವಡಿಕೆ ಬೇಡ ಎಂದು ಜಯಪೂಜಾರಿ ಪುರಸಭೆ ಇಂಜಿನಿಯರ್ ಅವರನ್ನು ತರಾಟೆಗೈದರು. ಸಾಮಾನ್ಯ ಸಭೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗೈರು ಆಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೌನ್ಸಿಲ್ ಸಲಾಮ್ ಉಚ್ಚಿಲ ಅವರು, ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಯಿಂದ ಉಚ್ಚಿಲ ಪರಿಸರ ದಲ್ಲಿ ಮಳೆ ನೀರು ಹರಿದು ಹಾನಿ ಆಗುತ್ತದೆ. ಈ ಬಾರಿ ಮಳೆ ಬರುವ ಮೊದಲೇ ಕ್ರಮ ಆಗಬೇಕು.ಅಧಿಕಾರಿಗಳಿಗೆ ನೋಟೀಸ್ ನೀಡಿ ರಾ.ಹೆ. ಸರ್ವಿಸ್ ರಸ್ತೆ ಸಮಸ್ಯೆ ಇತ್ಯರ್ಥ ಪಡಿಸುವ ಕೆಲಸ ಮಾಡಿ ಎಂದು ಸಭೆಯಲ್ಲಿ ಅಧ್ಯಕ್ಷರ ಗಮನ ಸೆಳೆದರು. ಪೌರ ಕಾರ್ಮಿಕರ ಸೇವೆಗೆ ನಿಯೋಜಿತರಾದ ಸುಧೀರ್ ಅವರನ್ನು ಪುರಸಭೆ ಯ ಖಾತೆ ನಿರ್ವಹಣೆಗೆ ನಿಯೋಜಿಸಬೇಕು ಎಂಬ ಸದಸ್ಯರ ಬೇಡಿಕೆಗೆ ಸಹಮತ ವ್ಯಕ್ತವಾಯಿತು. ಜಿಲ್ಲಾ ಯೋಜನಾ ಸಮಿತಿ ಸದಸ್ಯ ರಾಗಿ ಆಯ್ಕೆ ಆಗಿರುವ ಹರೀಶ್, ಮನೋಜ್,ಸೋನಾ ಶುಭಾಶಿನಿ ಅವರನ್ನು ಗೌರವಿಸಲಾಯಿತು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.
ಡಿಜಿಟಲ್ ಅರೆಸ್ಟ್ : ಗುಜರಾತ್ನಲ್ಲಿ ಶಿಕ್ಷಕಿಗೆ 99 ಲಕ್ಷ ರೂ. ವಂಚನೆ
ಗಾಂಧಿನಗರ, ಫೆ. 23: ಗುಜರಾತ್ನ ಗಾಂಧಿನಗರದ 65 ವರ್ಷದ ನಿವೃತ್ತ ಶಾಲಾ ಶಿಕ್ಷಕಿಯೋರ್ವರನ್ನು ಸೈಬರ್ ವಂಚಕರು ಸುಮಾರು ಒಂದು ತಿಂಗಳ ಕಾಲ ‘ಡಿಜಿಟಲ್ ಅರೆಸ್ಟ್’ನಲ್ಲಿ ಇರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ತನಿಖಾಧಿಕಾರಿಗಳೆಂದು ಹೇಳಿಕೊಂಡ ಸೈಬರ್ ವಂಚಕರು ಅವರಿಗೆ 99 ಲಕ್ಷ ರೂ. ವಂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣವನ್ನು ಈಗ ಗಾಂಧಿನಗರ ವಲಯ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರಿನ ಪ್ರಕಾರ, ಗಾಂಧಿನಗರದ ಸೆಕ್ಟರ್ 8ರ ನಿವಾಸಿಯಾಗಿರುವ ಮಹಿಳೆ ಜನವರಿ 16ರಂದು ಅಪರಿಚಿತ ಸಂಖ್ಯೆಯಿಂದ ಫೋನ್ ಕರೆ ಸ್ವೀಕರಿಸಿದ್ದರು. ಕರೆ ಮಾಡಿದವರು ‘‘ನಿಮ್ಮ ಹೆಸರಿನಲ್ಲಿ ನೀಡಲಾದ ಸಿಮ್ ಕಾರ್ಡ್ ಅನ್ನು ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಬೆದರಿಕೆ ಕರೆಗಳಿಗೆ ಬಳಸಲಾಗುತ್ತಿದೆ’’ ಎಂದು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ಅಜಯ್ ಗುಪ್ತಾ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಮಹಿಳೆಯನ್ನು ವೀಡಿಯೊ ಕರೆಯ ಮೂಲಕ ಸಂಪರ್ಕಿಸಿದ್ದಾನೆ. ಅಲ್ಲದೆ, ತಾನು ಸಿಬಿಐ ಅಧಿಕಾರಿ ಎಂದು ತಿಳಿಸಿದ್ದಾನೆ. ‘‘ನಿಮ್ಮ ಬ್ಯಾಂಕ್ ಖಾತೆಗಳು ಆರೋಪಿ ವ್ಯಕ್ತಿಯೋರ್ವನ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿವೆ’’ ಎಂದು ಕರೆ ಮಾಡಿದವನು ಹೇಳಿದ್ದಾನೆ. ‘‘ನಿಮ್ಮನ್ನು ಶೀಘ್ರದಲ್ಲಿ ಬಂಧಿಸಬಹುದು’’ ಎಂದು ಆತ ಎಚ್ಚರಿಸಿದ್ದಾನೆ. ‘‘ನಿಮ್ಮ ಹಣಕಾಸು ವ್ಯವಹಾರ ಪರಿಶೀಲಿಸಬೇಕು. ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಇರಲು ನಿಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಂಚೆ ಕಚೇರಿಗಳಿಂದ ಹಲವು ಬ್ಯಾಂಕ್ಗಳಿಗೆ ಹಣ ವರ್ಗಾಯಿಸಬೇಕು’’ ಎಂದು ವಂಚಕರು ಮಹಿಳೆಗ ಒತ್ತಡ ಹೇರಿದ್ದಾರೆ. ಫೆಬ್ರವರಿ 5 ಹಾಗೂ ಫೆಬ್ರವರಿ 13ರ ನಡುವೆ ಆರ್ಟಿಜಿಎಸ್ ಮೂಲಕ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾನೂನು ಕ್ರಮದ ಭೀತಿಯಿಂದ ನಿವೃತ್ತ ಶಿಕ್ಷಕಿ ಈ ಅವಧಿಯಲ್ಲಿ ಒಟ್ಟು 99 ಲಕ್ಷ ರೂ. ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾದಗಿರಿ | ಕುರುಬ ಸಮುದಾಯಕ್ಕೆ ಎಸ್.ಟಿ ಸಿಂಧುತ್ವ ಪ್ರಮಾಣಪತ್ರ ನೀಡಲು ಕುರಿ ಹಿಂಡುಗಳೊಂದಿಗೆ ಪ್ರತಿಭಟನೆ
ಯಾದಗಿರಿ : ಕರ್ನಾಟಕ ರಾಜ್ಯದ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಮಾನ್ಯತೆ ಹಾಗೂ ಸಿಂಧುತ್ವ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ನಡೆಯುತ್ತಿರುವ ತಾರತಮ್ಯ ಮತ್ತು ವಿಳಂಬವನ್ನು ಖಂಡಿಸಿ ಕರ್ನಾಟಕ ರಾಜ್ಯ ಎಸ್.ಟಿ ಹೋರಾಟ ಸಮಿತಿ ಹಾಗೂ ಕುರುಬ ಹೋರಾಟ ಸಮಿತಿ ಸದಸ್ಯರು ಕುರಿ ಹಿಂಡುಗಳೊಂದಿಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು. ಕುರುಬ ಸಮುದಾಯಕ್ಕೆ ಕೊಡಗು, ಬೀದರ್, ಕಲಬುರಗಿ, ಯಾದಗಿರಿ ಹಾಗೂ ಕೊಳ್ಳೇಗಾಲ ಪ್ರದೇಶಗಳಲ್ಲಿ ಐತಿಹಾಸಿಕವಾಗಿ ಎಸ್ಟಿ ಸಿಂಧುತ್ವ ನೀಡಲಾಗುತ್ತಿತ್ತು. 2016ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ಪ್ರಾಯೋಗಿಕವಾಗಿ ಅರ್ಹರಿಗೆ ಪ್ರಮಾಣಪತ್ರ ನೀಡಲಾಗುತ್ತಿಲ್ಲ ಎಂದು ಸಮಿತಿ ಆರೋಪಿಸಿದೆ. ರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಮೀಕ್ಷೆಯ ಪ್ರಕಾರ 25 ಜಿಲ್ಲೆಗಳ 50 ತಾಲ್ಲೂಕುಗಳಲ್ಲಿ 60,595 ಜನರ ಅಧ್ಯಯನ ನಡೆಸಲಾಗಿದೆ. 73% ಸಾಕ್ಷರತೆ ಮಾತ್ರ ಇರುವುದರಿಂದ ಶಿಕ್ಷಣ ಹಿಂದುಳಿತತೆ ಸ್ಪಷ್ಟವಾಗಿದೆ. 78% ಕುಟುಂಬಗಳು ಅಲ್ಪ ಪ್ರಮಾಣದ ಕೃಷಿ ಭೂಮಿಯನ್ನು ಹೊಂದಿದ್ದು, ಆರ್ಥಿಕವಾಗಿ ಹಿಂದುಳಿದ ಸ್ಥಿತಿಯಲ್ಲಿವೆ. ಸಾಂಪ್ರದಾಯಿಕವಾಗಿ ಕುರಿ-ಮೇಕೆ ಸಾಕಣೆ, ಪ್ರಕೃತಿ ಆರಾಧನೆ ಹಾಗೂ ಪಿತೃಪ್ರಧಾನ ಪದ್ಧತಿಗಳನ್ನು ಅನುಸರಿಸುತ್ತಿರುವುದು ಬುಡಕಟ್ಟು ಲಕ್ಷಣಗಳನ್ನು ತೋರಿಸುತ್ತದೆ. 2017, 2018 ಹಾಗೂ 2023ರಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿ (ಓಆರ್ಜಿಐ) ಕೆಲವು ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದರೂ, 2018ರಲ್ಲಿ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕುರುಬ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಿದ ಲಕ್ಷಣಗಳನ್ನು ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಸಮಿತಿ ತಿಳಿಸಿದೆ. ಹೋರಾಟ ಸಮಿತಿಯ ಬೇಡಿಕೆಗಳು : 2016ರ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅರ್ಹ ಕುರುಬ ಸಮುದಾಯದವರಿಗೆ ತಕ್ಷಣ ಎಸ್ಟಿ ಸಿಂಧುತ್ವ ಪ್ರಮಾಣಪತ್ರ ನೀಡಬೇಕು. ಓಆರ್ಜಿಐ ಮತ್ತು ಎಸ್ಟಿ ಆಯೋಗದ ನಡುವೆ ಸಮನ್ವಯ ಸಭೆ ನಡೆಸಿ ತಾರತಮ್ಯ ನಿವಾರಣೆ ಮಾಡಬೇಕು. ಕೇಂದ್ರ ಸರ್ಕಾರ ತುರ್ತು ಮಧ್ಯಸ್ಥಿಕೆ ವಹಿಸಬೇಕು. ಸಮಿತಿ ಪ್ರತಿನಿಧಿಗಳು, “ನಾವು ಶಾಂತಿಯುತ ಹಾಗೂ ಕಾನೂನುಬದ್ಧ ಹೋರಾಟದ ಮೂಲಕ ನಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಒತ್ತಾಯಿಸುತ್ತಿದ್ದೇವೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು” ಎಂದು ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಹೋರಾಟ, ಜಾಗೃತಿ ಮೆರವಣಿಗೆ ಹಾಗೂ ಸಮಾವೇಶಗಳನ್ನು ಹಮ್ಮಿಕೊಳ್ಳುವುದಾಗಿ ಸಮಿತಿ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್. ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ, ಕುರುಬ ಹೋರಾಟ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಯಪ್ಪ ಭ ಕರಿಗಾರ, ಸಂಘಟನಾ ಕಾರ್ಯದರ್ಶಿ ವಿಠಲ ಬಿರಾದಾರ, ಯಾದಗಿರಿ ಕುರುಬ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಶಿವಕುಮಾರ ಮುನಗಲ್, ತಾಲೂಕು ಅಧ್ಯಕ್ಷ ಸಿದ್ದು ಪೂಜಾರಿ (ಚಂಡ್ರಿಕಿ), ಬಸವನಬಾಗೇವಾಡಿ ತಾಲೂಕ ಅಧ್ಯಕ್ಷ ಸುರೇಶ ಜಾಲವಾಡಿ ಅರಿಕೇರಿ, ಯಾದಗಿರಿ ಕುರುಬ ಹೋರಾಟ ಸಮಿತಿಯ ಯುವ ಘಟಕ ಜಿಲ್ಲಾಧ್ಯಕ್ಷ ಎಸ್ ನಿಜಲಿಂಗಪ್ಪ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ರಾಘವಾಂಕ ಪಾಟೀಲ, ತಾಲೂಕು ಅಧ್ಯಕ್ಷ ತಾಯಪ್ಪ ಕರಣಿಗಿ, ಯಾದಗಿರಿ ಹೋರಾಟ ಸಮಿತಿಯ ಶಹಾಪುರ ತಾಲೂಕು ಅಧ್ಯಕ್ಷ ರೇವಣ್ಣ ಸಿದ್ದಪ್ಪ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಫೆ.26ರಿಂದ ಕುಲಶೇಖರದಲ್ಲಿ ಬೃಹತ್ ಬೈಬಲ್ ಅಧಿವೇಶನ
ಮಂಗಳೂರು, ಫೆ.23: ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಬೈಬಲ್ ಆಯೋಗದ ಸಹಯೋಗದಲ್ಲಿ ಬೃಹತ್ ಬೈಬಲ್ ಅಧಿವೇಶನ ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ ಸಂಜೆ 4ರಿಂದ 8:30ರವರೆಗೆ ನಗರದ ಕುಲಶೇಖರ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ಬಯಲು ಮೈದಾನದಲ್ಲಿ ನಡೆಯಲಿದೆ ಎಂದು ಕೆಥೋಲಿಕ್ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಜೆ.ಬಿ. ಸಲ್ಡಾನಾ ತಿಳಿಸಿದ್ದಾರೆ. ಮಂಗಳೂರು ಬಿಷಪ್ ಹೌಸ್ನಲ್ಲಿ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2026ನೇ ಸಾಲಿನ ದೇವರ ವಾಕ್ಯದ ರವಿವಾರದ ಆಚರಣೆಯ ಪ್ರಯುಕ್ತ ಕ್ರೈಸ್ತ ಜಗದ್ಗುರು ಪೋಪ್ 14ನೇ ಲಿಯೊ ಅವರು, ಸಂತ ಪೌಲರು ಕೊಲೊಸ್ಸೆಯರಿಗೆ ಬರೆದ ಪತ್ರದ 3ನೇ ಅಧ್ಯಾಯದಿಂದ ಆರಿಸಿದ ‘ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲೆಸಿದೆ’ ಎಂಬ ವಾಕ್ಯವನ್ನು ಶೀರ್ಷಿಕೆಯಾಗಿ ನೀಡಿದ್ದರು. ಹಾಗಾಗಿ ಈ ಬೃಹತ್ ಬೈಬಲ್ ಅಧಿವೇಶನಕ್ಕೂ ಅದೇ ವಿಷಯವನ್ನು ಪ್ರಮುಖ ಶೀರ್ಷಿಕೆಯಾಗಿ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಅಧಿವೇಶನದ ಪ್ರತಿ ದಿನ ಪವಿತ್ರ ಬಲಿಪೂಜೆ, ಪವಿತ್ರ ಜಪಮಾಲೆಯ ಧ್ಯಾನ, ಬೈಬಲ್ನ ಹಳೆ ಮತ್ತು ಹೊಸ ಒಡಂಬಡಿಕೆಯಿಂದ ‘ತಮ್ಮ ಜನರೊಡನೆ ದೇವರ ಉಪಸ್ಥಿತಿ’ಯ ಕುರಿತು ಆಯ್ದ ವಿಷಯಗಳ ಮೇಲೆ ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವಚನಗಳು, ದಿವ್ಯಸಂಸ್ಕಾರದ ಆರಾಧನೆ, ಸ್ತುತಿ- ಆರಾಧನೆ ಮತ್ತು ಪ್ರಾರ್ಥನೆ ಒಳಗೊಂಡಿರುತ್ತದೆ ಎಂದರು. ಅಧಿವೇಶನದಲ್ಲಿ ಎಂಟು ಮಂದಿ ಧರ್ಮಗುರುಗಳು ದೇವರ ವಾಕ್ಯವನ್ನು ಬೋಧಿಸಲಿದ್ದಾರೆ ಹಾಗೂ ನಾಲ್ಕು ಜನ ಧರ್ಮಗುರುಗಳು ಬೈಬಲ್ ಆಧಾರಿತ, ದಿವ್ಯಸಂಸ್ಕಾರದ ಆರಾಧನೆಯ ನೇತೃತ್ವ ವಹಿಸಲಿದ್ದಾರೆ. ದೇವರ ವಾಕ್ಯ ವನ್ನು ಆಚರಿಸಲು ಎಲ್ಲ ದಿನಗಳಲ್ಲೂ ಸರ್ವಿಸ್ ಕಮ್ಯೂನಿಯನ್ ಮುಂದಾಳುಗಳಿಂದ ಭಕ್ತಿಪೂರ್ವಕ ಗಾಯನ ಮತ್ತು ಸ್ತುತಿ-ಆರಾಧನೆ ನಡೆಯಲಿದೆ ಎಂದು ಫಾ.ಜೆ.ಬಿ. ಸಲ್ಡಾನಾ ತಿಳಿಸಿದರು. 8-10 ಸಾವಿರ ಮಂದಿ ಭಾಗಿ: ಬೈಬಲ್ ಅಧಿವೇಶನಕ್ಕೆ ಸರ್ವ ಸಿದ್ಧತೆ ನಡೆಸಲಾಗಿದೆ. ಕಳೆದ ವರ್ಷ 6-8 ಸಾವಿರ ಮಂದಿ ಪಾಲ್ಗೊಂಡಿದ್ದು, ಈ ಬಾರಿ 8-10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು. ನಮ್ಮ ನಡುವೆ ನೆಲೆಸಿರುವ ದೇವರ ವಾಕ್ಯವನ್ನು ಆಚರಿಸುವುದು, ಸಂಭ್ರಮಿಸುವುದು ಈ ಅಧಿವೇಶನದ ಪ್ರಮುಖ ಉದ್ದೇಶ. ಇದೊಂದು ಬೈಬಲ್ ಹಬ್ಬ. ಜನರ ಜೀವನದ ಹೋರಾಟಗಳಲ್ಲಿ, ಅವರ ಸುಖ- ದುಃಖಗಳಲ್ಲಿ ದೇವರು ಹೇಗೆ ಅವರೊಡನೆ ಸದಾ ಇದ್ದಾರೆ ಮತ್ತು ದೇವರಿಗೆ ಮೆಚ್ಚುಗೆಯಾಗುವ ಜೀವನವನ್ನು ರೂಪಿಸಿಕೊಳ್ಳಲು ದೇವರ ವಾಕ್ಯವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಬೈಬಲ್ನ ಬೆಳಕಿನಲ್ಲಿ ವಿವರಿಸುವುದು ಈ ಅಧಿವೇಶನದ ಗುರಿಯಾಗಿದೆ ಎಂದು ಫಾ.ಜೆ.ಬಿ. ಸಲ್ಡಾನಾ ತಿಳಿಸಿದರು. ಇದೇ ಸಂದರ್ಭದಲ್ಲಿ ಸಮ್ಮೇಳನದ ಲೋಗೊವನ್ನು ಅನಾವರಣಗೊಳಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು, ಅತಿ ವಂದನೀಯ ಮ್ಯಾಕ್ಸಿಂ ನೊರೋನಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೊಯ್ ಕಾಸ್ತೆಲಿನೊ, ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸಂಚಲನದ ಆಧ್ಯಾತ್ಮಿಕ ನಿರ್ದೇಶಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಕಾರ್ಯದರ್ಶಿ ವಂ. ವಿನ್ಸೆಂಟ್ ಸಿಕ್ವೇರಾ, ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸಂಚಾಲನದ ಸಂಯೋಜಕರಾದ ಡೊಲ್ಫಿ ಲೋಬೊ, ಮಂಗಳಜ್ಯೋತಿ ಕೇಂದ್ರದ ನಿರ್ದೇಶಕರಾದ ವಂ. ರೋಹಿತ್ ಡಿಕೋಸ್ಟಾ, ಕೆನರಾ ಕಮ್ಯೂನಿಕೇಶನ್ ನಿರ್ದೇಶಕ ವಂ.ಅನಿಲ್ ಫೆರ್ನಾಂಡಿಸ್, ಆಲ್ವಿನ್ ಡಿ’ಸೋಜ , ಎಲಿಯಾಸ್ ಫೆರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಸರಕಾರದಿಂದ ದ್ವೇಷದ ರಾಜಕಾರಣ : ವಿಜಯೇಂದ್ರ
ಬೆಂಗಳೂರು : ‘ರಾಜ್ಯದ ಕಾಂಗ್ರೆಸ್ ಸರಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯೋಗ್ಯತೆ, ನೈತಿಕತೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇದೆಯೇ?’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿನ ವಿಪಕ್ಷ ನಾಯಕ ಆರ್.ಅಶೋಕ್ ಅವರ ಕಚೇರಿಯಲ್ಲಿ ಮಾತನಾಡಿದ ಅವರು, ಈ ಸರಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆಯಿತು. ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಸಚಿವರೊಬ್ಬರು ರಾಜೀನಾಮೆ ನೀಡಿದರು. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತನಾಡಲಿ ಎಂದು ಸವಾಲು ಹಾಕಿದರು. ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿದೆ. ಈ ಸಮಾಜವು 30-40 ವರ್ಷಗಳಿಂದ ಬಿಜೆಪಿ ಜೊತೆ ಗಟ್ಟಿಯಾಗಿ ಗುರುತಿಸಿಕೊಂಡಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಶೇ.100ಕ್ಕೆ ನೂರು ಬೆಂಬಲಿಸುತ್ತಿದೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯರ ಸರಕಾರ ಎರಡೂವರೆ ವರ್ಷಗಳಲ್ಲಿ ಈ ಸಮಾಜಕ್ಕೆ ಅನ್ಯಾಯವೂ ಆಗಿದೆ ಎಂದು ಅವರು ದೂರಿದರು. ಖಜಾನೆ ಖಾಲಿಯೆ?: ಕುರಿಗಳ ಆಕಸ್ಮಿಕ ಸಾವಿನ ಸಂಬಂಧ 48 ಕೋಟಿ ರೂ.ಅನುಗ್ರಹ ಯೋಜನೆಯಡಿ ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯ ಸರಕಾರದ ಖಜಾನೆ ಖಾಲಿ ಆಗಿದೆಯೇ?. ತಿಂಗಳಿಂದ ತಿಳಿಸಿದರೂ ಆ ಬಡ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಿಲ್ಲವೇಕೆ? ಎಂದು ಕೇಳಿದ ಅವರು, ಸಿದ್ದರಾಮಯ್ಯನವರ ಕುರ್ಚಿ ಅಲ್ಲಾಡುವ ಸಂದರ್ಭದಲ್ಲಿ ಸಮಾಜ ನೆನಪಾಗುತ್ತದೆ ಎಂದು ಟೀಕಿಸಿದರು.
ಬಾರಾಮತಿ ವಿಮಾನ ದುರಂತ | ಸಿಬಿಐ ಬೇಡ, ಸಿಐಡಿ ತನಿಖೆಯಾಗಲಿ: ರೋಹಿತ್ ಪವಾರ್
ಮುಂಬೈ, ಫೆ. 23: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ವಿಮಾನ ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸುವ ಮಹಾರಾಷ್ಟ್ರ ಸರಕಾರದ ನಿರ್ಧಾರದ ವಿರುದ್ಧ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ- ಶರದ್ ಪವಾರ್ ಬಣ)ದ ಶಾಸಕ ರೋಹಿತ್ ಪವಾರ್ ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತನಿಖೆಯನ್ನು ವಿಳಂಬಗೊಳಿಸುತ್ತದೆ ಎಂದು ಹೇಳಿದ್ದಾರೆ. ಅಜಿತ್ ಪವಾರ್ ಮತ್ತು ಇತರ ನಾಲ್ವರು ಜನವರಿ 28ರಂದು ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಅಪಘಾತದ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೆಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ ಒಂದು ದಿನದ ಬಳಿಕ ರೋಹಿತ್ ಪವಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಸಿಬಿಐ ತನಿಖೆ ಕೋರುವ ಮನವಿಯೊಂದನ್ನು ಸಂಬಂಧಿತ ಕೇಂದ್ರ ಸಚಿವಾಲಯ, ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮತ್ತು ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರಗಳಿಗೆ ಈಗಾಗಲೇ ಸಲ್ಲಿಸಲಾಗಿದೆ ಎಂದು ವಿಧಾನಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೋಹಿತ್ ಪವಾರ್ ಹೇಳಿದರು. ತನಿಖೆಗೆ ಸಿಬಿಐ ಎದುರು ಸುಮಾರು 7,000 ಪ್ರಕರಣಗಳು ಬಾಕಿಯಿವೆ ಎಂದು ಹೇಳಿದ ಅವರು, ಈ ಪೈಕಿ ಸುಮಾರು 2,500 ಪ್ರಕರಣಗಳು ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಬಾಕಿಯಾಗಿವೆ ಎಂದರು. ‘‘ತನಿಖೆಯ ಹೆಸರಿನಲ್ಲಿ ಸಮಯ ವ್ಯಯ ಮಾಡುವುದನ್ನು ನಾವು ಸಹಿಸುವುದಿಲ್ಲ. ಈ ತನಿಖೆಯನ್ನು ಸಿಐಡಿ ಮಾಡಬಹುದು’’ ಎಂದು ಅವರು ಹೇಳಿದರು. ‘‘ಅಪಘಾತಕ್ಕೆ ಸಂಬಂಧಿಸಿದಂತೆ ಈವರೆಗೆ 30 ಶೇಕಡದಷ್ಟು ಮಾಹಿತಿಯನ್ನು ಮಾತ್ರ ಬಹಿರಂಗಗೊಳಿಸಲಾಗಿದೆ. ಉಳಿದ 70 ಶೇಕಡ ಮಾಹಿತಿ ಮುಖ್ಯಮಂತ್ರಿ ಬಳಿಯೇ ಇದೆ’’ ಎಂದರು. ವಿಮಾನದ ಬ್ಲ್ಯಾಕ್ ಬಾಕ್ಸ್ ಸುಟ್ಟು ಹೋಗಿರುವುದಕ್ಕೆ ಸಂಬಂಧಿಸಿದ ವರದಿಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದರು. ‘‘ಯಾವುದೇ ಅವ್ಯವಹಾರ ಬೆಳಕಿಗೆ ಬಂದರೆ, ಈ ಸರಕಾರ ಭಾರೀ ಬೆಲೆ ತೆರಬೇಕಾಗುತ್ತದೆ’’ ಎಂದು ಎಚ್ಚರಿಸಿದರು.
ಲಾಭದ ಆಮಿಷವೊಡ್ಡಿ ಮಹಿಳೆಗೆ ವಂಚನೆ: ಪ್ರಕರಣ ದಾಖಲು
ಮಂಗಳೂರು, ಫೆ.23: ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 19.06 ಲಕ್ಷ ರೂ. ವಂಚನೆಗೈದಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ನಲ್ಲಿ ಗೂಗಲ್ ಮೂಲಕ ಸಾಫ್ಟೋನಿಕ್ ವೆಬ್ಸೈಟ್ ಹುಡುಕಾಡಿ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ್ದೆ ಬಳಿಕ ಸಾಫ್ಟೋನಿಕ್ ಆ್ಯಪ್ ಬಳಸಿ ಬ್ಯಾಂಕ್ ಖಾತೆಯ ವಿವರ ನೀಡಿದ್ದೆ. ಹೆಚ್ಚಿನ ಲಾಭದ ಉದ್ದೇಶದಿಂದ ಈ ಆ್ಯಪ್ನಲ್ಲಿರುವ ನಾನಾ ಕಂಪನಿಗಳಿಗೆ ಒಟ್ಟು 19,06,166 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಜನವರಿಯಲ್ಲಿ 1 ಲಕ್ಷ ರೂ.ವಾಪಸ್ ಪಡೆದುಕೊಂಡಿದ್ದು, ನಂತರ ತನ್ನನ್ನು ಬ್ಲಾಕ್ ಮಾಡಿದ್ದರು ಎಂದು ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶಹಾಪುರ | ಸರ್ಕಾರಿ ಆಸ್ಪತ್ರೆ ಮುಂದೆ ರೈತ ಸಂಘದಿಂದ ಪ್ರತಿಭಟನೆ
ಶಹಾಪುರ : ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿ ಹಾಗೂ ಇಂಜಕ್ಷನ್ಗಳ ಕೊರತೆಯಿಂದ ರೋಗಿಗಳು ಚಿಕಿತ್ಸೆ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು. ಒಳರೋಗಿ ಮತ್ತು ಹೊರರೋಗಿಗಳಿಗೆ ಬೇಕಾದ ಔಷಧಿ ಸೌಲಭ್ಯಗಳು ಲಭ್ಯವಿಲ್ಲದಿದ್ದರೂ ಆಡಳಿತ ವೈದ್ಯಾಧಿಕಾರಿಗಳು ಹಾಗೂ ತಾಲೂಕು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡದೇ ವೈದ್ಯರು ವಿಶ್ರಾಂತಿ ಕೊಠಡಿಯಲ್ಲಿ ನಿದ್ರಿಸುತ್ತಾರೆ. ಹೆರಿಗೆ ನೋವಿನಿಂದ ಬರುವ ಬಾಣಂತಿಯರನ್ನೂ ಭಯ ಹುಟ್ಟಿಸಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ ಆರೋಪಿಸಿದರು. ರಕ್ತ ಪರೀಕ್ಷೆ ಸೇರಿದಂತೆ ಮೂಲಭೂತ ತಪಾಸಣೆಗಳಿಗೂ ಹೊರಗಡೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅವರು ದೂರಿದರು. ಸಾಮಾನ್ಯ ನೋವಿಗೂ ಇಂಜಕ್ಷನ್ ನೀಡದೇ ಮಾತ್ರೆ ನೀಡಿ ಕಳುಹಿಸಲಾಗುತ್ತಿದೆ. ಅರವಳಿಕೆ ತಜ್ಞರಿದ್ದರೂ ಎಕ್ಸ್ರೇಗಾಗಿ ಹಲವು ದಿನಗಳಿಂದ ಆಸ್ಪತ್ರೆ ಸುತ್ತಾಡಬೇಕಾಗಿದೆ ಎಂದು ನೊಂದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಆಸ್ಪತ್ರೆಯಲ್ಲಿ ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಚೆನ್ನಪ್ಪ ಆನೆಗುಂದಿ ಎಚ್ಚರಿಸಿದರು. ಬಳಿಕ ಆಡಳಿತ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ. ಸಾಗರ, ತಾಲೂಕು ಅಧ್ಯಕ್ಷ ತಮ್ಮಣ್ಣ ಜಾಗಿರದಾರ, ಭೀಮಣ್ಣ ಟಫೆದಾರ, ಹೊನ್ನಪ್ಪ ಮಾನ್ಪಡೆ, ದೇವಕುಮಾರ, ಭೀಮರಾಯ ಪೂಜಾರಿ, ಅಮರಣ್ಣ ಸಾಹು, ಕೃಷಿ ಕೂಲಿಕಾರರ ಸಂಘದ ಗಂಗಮ್ಮ ಸೇರಿದಂತೆ ಅನೇಕ ಕಾರ್ಯಕರ್ತರು, ರೋಗಿಗಳು ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ: ಸಮಾವೇಶದಲ್ಲಿ ಡಿಸಿಎಂ ಡಿಕೆಶಿ ಶಪಥ
ಬಿಜೆಪಿ ಏನೇ ಮಾಡಿದರೂ ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ. ಉದ್ಯೋಗ ಹಕ್ಕು ಕಿತ್ತುಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ ಎಂದು ಮನ್ರೇಗಾ ಬಚಾವ್ ಆಂದೋಲನ ಸಮಾವೇಶಕ್ಕೆ ಚಾಲನೆ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ದೇಶದಲ್ಲಿ ಮಹಾತ್ಮ ಗಾಂಧಿ ಹೆಸರು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕೇರಳ ಸ್ಟೋರಿ-2 ಟ್ರೇಲರ್ | ‘ಎಕ್ಸ್’ನಲ್ಲಿ ಗೋಮಾಂಸ, ಹಂದಿ ಮಾಂಸ, ಮೀನಿನ ಖಾದ್ಯದ ಫೋಟೊ ಹಂಚಿಕೊಂಡ ಪ್ರಕಾಶ್ ರಾಜ್
ಚೆನ್ನೈ, ಫೆ. 23: ಈ ವಾರದಲ್ಲಿ ಬಿಡುಗಡೆಗೊಳ್ಳಲಿರುವ ‘ದಿ ಕೇರಳ ಸ್ಟೋರಿ-2’ ಕುರಿತು ಚರ್ಚೆ ನಡೆಯುತ್ತಿರುವ ನಡುವೆ ನಟ ಪ್ರಕಾಶ್ ರಾಜ್ ಅವರು ಹೇಳಿಕೆ ಎಲ್ಲರ ಗಮನ ಸೆಳೆದಿದೆ. ‘ದಿ ಕೇರಳ ಸ್ಟೋರಿ-2’ ಚಿತ್ರವನ್ನು ಕಾಮಾಖ್ಯ ನಾರಾಯಣ ಸಿಂಗ್ ನಿರ್ದೇಶಿಸಿದ್ದಾರೆ ಹಾಗೂ ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಬಲವಂತವಾಗಿ ಗೋಮಾಂಸ ತಿನ್ನಿಸುವ ಹಾಗೂ ಮತಾಂತರದ ದೃಶ್ಯಗಳು ವಿವಾದಗಳಿಗೆ ಕಾರಣವಾಗಿವೆ. ರವಿವಾರ ಪ್ರಕಾಶ್ ರಾಜ್ ಅವರು ತನ್ನ ‘ಎಕ್ಸ್’ ಖಾತೆಯಲ್ಲಿ ಹಂದಿ ಮಾಂಸ, ದನದ ಮಾಂಸ ಹಾಗೂ ಮೀನಿನ ಖಾದ್ಯಗಳ ಫೋಟೊ ಹಾಕಿಕೊಂಡಿದ್ದಾರೆ. ಅಲ್ಲದೆ, ‘‘ಕೇರಳದ ನಿಜವಾದ ಕಥೆಯೆಂದರೆ, ಇಲ್ಲಿ ಹಂದಿ ಮಾಂಸ, ಗೋಮಾಂಸ ಹಾಗೂ ಮೀನಿನ ಖಾದ್ಯಗಳು ಇವೆ. ಇದರೊಂದಿಗೆ ಸಸ್ಯಹಾರ ಕೂಡ ಇದೆ. ಆದರೆ, ಎಲ್ಲರೂ ಸೌಹಾರ್ದದಿಂದ ಬದುಕುತ್ತಿದ್ದಾರೆ’’ ಎಂದಿದ್ದಾರೆ. ಈ ಪೋಸ್ಟ್ ಅನ್ನು ಚಿತ್ರದ ಟ್ರೇಲರ್ನಲ್ಲಿ ಗಮನ ಸೆಳೆಯಲಾದ ವಿಷಯಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರಾಜ್ ಪೋಸ್ಟ್ ಮಾಡಿದ್ದಾರೆ ಎಂದು ಅರ್ಥೈಸಲಾಗಿದೆ.
ಅಸಮರ್ಪಕ ಸೋಲಾರ್ ಅಳವಡಿಕೆ: ಗ್ರಾಹಕ ಪರಿಹಾರ ವೇದಿಕೆ ದಂಡ
ಮಂಗಳೂರು, ಫೆ.23: ಮನೆಯ ಮೇಲೆ ಅಳವಡಿಸಿದ ಸೋಲಾರ್ ಅಸಮರ್ಪಕವಾಗಿದ್ದು ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡದಿದ್ದಕ್ಕೆ ಗ್ರಾಹಕ ಪರಿಹಾರ ವೇದಿಕೆಯು ಸೋಲಾರ್ ಕಂಪೆನಿಗೆ ದಂಡ ವಿಧಿಸಿದೆ. *ಪ್ರಕರಣದ ಹಿನ್ನೆಲೆ: ನಗರದ ಸೋಲಾರ್ ಕಂಪೆನಿಯೊಂದು ಮನೆಯ ತಾರೀಸಿನಲ್ಲಿ ಸೋಲಾರ್ ಅಳವಡಿಸಿದರೆ ಮನೆಯ ವಿದ್ಯುತ್ ಉಚಿತವಾಗಿ ದೊರೆಯಲಿದೆ. ಹೆಚ್ಚುವರಿ ಉಳಿಕೆಯಾದ ವಿದ್ಯುತ್ನ್ನು ಮೆಸ್ಕಾಮ್ಗೆ ಕೊಟ್ಟು ಅಲ್ಲಿಂದಲೂ ಲಾಭ ಪಡೆಯಬಹುದು ಎಂದು ಜಾಹೀರಾತು ನೀಡಿತ್ತು. ಅದರಂತೆ ನಗರದ ಬಲ್ಮಠ ನಿವಾಸಿ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದ ಡಾ.ಜಯರಾಮ್ ಎಸ್. ತನ್ನ ಮನೆಯ ಛಾವಣಿಗೆ ಕಂಪೆನಿಯಿಂದ 8,18,000 ರೂ. ಪಾವತಿಸಿ ಸೋಲಾರ್ ಅಳವಡಿಸಿದ್ದರು. ಕರಾರು ಪ್ರಕಾರ ದಿನವೊಂದಕ್ಕೆ 40 ಯೂನಿಟ್ಗಳಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ಕಂಪೆನಿ ಭರವಸೆ ನೀಡಿತ್ತು. ಜೊತೆಗೆ 25 ವರ್ಷಗಳ ಗ್ಯಾರಂಟಿಯನ್ನೂ ನೀಡಿತ್ತು. ಆದರೆ ಕೆಲಕಾಲ ಮಾತ್ರ ಆಶ್ವಾಸನೆಯಂತೆ ವಿದ್ಯುತ್ ಉತ್ಪಾದನೆಯಾಗಿತ್ತು. ಈ ಬಗ್ಗೆ ಕಂಪೆನಿಗೆ ದೂರು ನೀಡಿದರೂ ಸ್ಪಂದಿಸಲಿಲ್ಲ. ಹಾಗಾಗಿ ಡಾ ಜಯರಾಮರು ಗ್ರಾಹಕ ಪರಿಹಾರ ವೇದಿಕೆಯ ಮೊರೆ ಹೋಗಿದ್ದರು. ವಾದ-ಪ್ರತಿವಾದ ಆಲಿಸಿದ ದ.ಕ.ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಯು 8,18,000 ರೂ.ಮೊತ್ತದೊಂದಿಗೆ ಮಾನಸಿಕ ವೇದನೆಗೆ 35,000 ರೂ. ಮತ್ತು ಸೇವಾ ನ್ಯೂನ್ಯತೆಗೆ ಪರಿಹಾರ ಹಾಗೂ 10,000 ರೂ. ನ್ಯಾಯಾಲಯದ ಖರ್ಚು ನೀಡಬೇಕೆಂದು ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.
Bengaluru | ಸ್ಕೂಟರ್ಗೆ ಬುಲೇರೋ ವಾಹನ ಢಿಕ್ಕಿ; ಇಬ್ಬರು ಮೃತ್ಯು
ಬೆಂಗಳೂರು, ಫೆ.23: ಬುಲೇರೋ ವಾಹನ ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಕೆಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು ಕೆಆರ್ ಪುರ ನಿವಾಸಿಗಳಾದ ನಿತಿನ್ (21) ಮತ್ತು ಪುನೀತ್ (25) ಎಂದು ಗುರುತಿಸಲಾಗಿದೆ. ನಿತಿನ್ ಸ್ಕೂಟರ್ನಲ್ಲಿ ಪುನೀತ್ನನ್ನು ಕರೆದುಕೊಂಡು ಇಂದು ಬೆಳಗಿನ ಜಾವ 1.30 ರ ಸುಮಾರಿನಲ್ಲಿ ಹೊಸಕೋಟೆ ಕಡೆಯಿಂದ ಕೆಆರ್ ಪುರದ ಕಡೆಗೆ ಹಳೆ ಮದ್ರಾಸ್ ರಸ್ತೆಯ ಬೂದಿಗೆರೆ ಮೇಲ್ಸುತುವೆ ಮೇಲೆ ಹೋಗುತ್ತಿದ್ದರು. ಅದೇ ಸಮಯದಲ್ಲಿ ಅತೀ ವೇಗವಾಗಿ ಬಂದ ಬುಲೇರೋ ವಾಹನ ಇವರ ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಆನಂತರ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಕೆಆರ್ ಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬುಲೇರೋ ವಾಹನ ಚಾಲಕ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆ ಸರಿಪಡಿಸಲು ಆಗ್ರಹ
ಉಡುಪಿ, ಫೆ.23: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಆಗ್ರಹಿಸಿದ್ದಾರೆ. ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣಕ್ಕೆ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಆದರೆ ಬಸ್ ನಿಲ್ದಾಣ ಮಾತ್ರ ಅವ್ಯವಸ್ಥೆಯ ಆಗರವಾಗಿದೆ. ಬಸ್ ನಿಲ್ದಾಣದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೇ ಇರುವುದ ರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕುಡಿಯುವ ನೀರಿನ ಘಟಕ ಶುಚಿತ್ವವಿಲ್ಲದೇ ಪ್ರಯಾಣಿಕರು ದುಡ್ಡು ಕೊಟ್ಟು ನೀರು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರಯಾಣಿಕರು ಕುಳಿತುಕೊಳ್ಳುವ ಕೆಲವೊಂದು ಕುರ್ಚಿ ಮುರಿದು ಬಿದ್ದಿದ್ದು, ಆಸನದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನೂಕೂಲಕ್ಕಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಿದ್ದರೂ ನಿರುಪಯುಕ್ತವಾಗಿವೆ. ಶೌಚಾಲಯದ ಕಾಮಗಾರಿ ಕಳಪೆಯಾಗಿದೆ. ಸುತ್ತ ಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಈ ಸಮಸ್ಯೆಯಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಬಸ್ ನಿಲ್ದಾಣದ ಧೂಳುಮಯ ಅವರಣ ಮುಂತಾದವುಗಳಿಂದ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ. ಬಸ್ ನಿಲ್ದಾಣದಲ್ಲಿ ಅಲ್ಲಲ್ಲಿ ಕಸದ ರಾಶಿ ತಿಂಡಿ ಪೊಟ್ಟಣಗಳು ಬಿದ್ದಿರುವುದನ್ನು ದಿನನಿತ್ಯ ನೋಡಬಹುದು. ಅದೇ ಕಸದ ರಾಶಿಯ ಮದ್ಯೆ ಜನರು ನಿಂತಿರಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಅವಶ್ಯವಿರುವ ಮೂಲ ಸೌಕರ್ಯ ಗಳನ್ನು ಒದಗಿಸದೆ ಜಾಣ ಕುರುಡು ಪ್ರದರ್ಶಿಸುತ್ತಿರು ವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಬಸ್ ನಿಲ್ದಾಣದ ಅವ್ಯವಸ್ಥೆಗೆ ಪ್ರಯಾಣಿಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿ ಗಳು ಎಚ್ಛೆತ್ತುಕೊಂಡರೆ ತಕ್ಷಣ ಬಸ್ ನಿಲ್ದಾಣ ದುರಸ್ತಿ ಕಾಣಬಹುದು. ಈ ಎಲ್ಲಾ ಅವ್ಯವಸ್ಥೆಯನ್ನು ನಗರಸಭೆ ಸರಿಪಡಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಆಗ್ರಹಿಸಿದ್ದಾರೆ.
ಯಾದಗಿರಿ | ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನಶಿಸುತ್ತಿರುವ ಈಚಲ ವನ ರಕ್ಷಣೆಗೆ ಉಮೇಶ ಕೆ. ಮುದ್ನಾಳ ಆಗ್ರಹ
ಯಾದಗಿರಿ : ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿರುವ ಅಪರೂಪದ ಈಚಲ ವನ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನಶಿಸುವ ಹಂತಕ್ಕೇರಿದ್ದು, ತಕ್ಷಣವೇ ರಕ್ಷಣೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಒತ್ತಾಯಿಸಿದ್ದಾರೆ. ತಾಲೂಕಿನ ಹಂಚಿನಾಳ, ಮಳ್ಳಳ್ಳಿ, ಕಾಡಮಗೇರಿ ಹಾಗೂ ಕುರಕುಂದಿ ಗ್ರಾಮಗಳ ಸೀಮಾಂತರದಲ್ಲಿ ಸುಮಾರು 500 ಎಕರೆಗೂ ಅಧಿಕ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಈಚಲ ಮರಗಳ ವಿಶಾಲ ಗೊಂಚಲುಗಳಿವೆ. ಇವು ಅಪರೂಪದ ವನ ಸಂಪತ್ತಾಗಿದ್ದರೂ, ಈಚಲ ಮರವನ್ನು ಕೇವಲ ಹೆಂಡದ ಮೂಲವೆಂಬ ದೃಷ್ಟಿಯಿಂದ ಮಾತ್ರ ಕಾಣಲಾಗುತ್ತಿದೆ. ಇದರಿಂದಾಗಿ ಅಮೂಲ್ಯವಾದ ಈ ವನ ಸಂಪತ್ತು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಅವರು ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ನೈಸರ್ಗಿಕವಾಗಿ ಬೆಳೆಯುವ ಈಚಲ ಮರದಿಂದ ವಿವಿಧ ಉಪ-ಉತ್ಪನ್ನಗಳನ್ನು ತಯಾರಿಸಿ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಬಹುದು. ಇದರಿಂದ ಗ್ರಾಮೀಣ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಿ ಆರ್ಥಿಕ ಚೇತರಿಕೆ ಸಾಧ್ಯವಾಗುತ್ತದೆ ಎಂದರು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಗ್ರಾಮೀಣ ಕಾರ್ಮಿಕರು ಮಹಾನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಚಲ ವನ ಆಧಾರಿತ ಉದ್ಯಮಗಳನ್ನು ಅಭಿವೃದ್ಧಿಪಡಿಸಿದರೆ ಈ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂದು ಸಲಹೆ ನೀಡಿದರು. ಇಲಾಖೆಗಳ ನಿರ್ಲಕ್ಷ್ಯಕ್ಕೆ ಟೀಕೆ ಈಚಲ ಗಿಡಗಳ ಗೊಂಚಲುಗಳು ಒಣಗಿ ಅವನತಿ ಹೊಂದುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದು ಟೀಕಿಸಿದ ಅವರು, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಇಂತಹ ವನವನ್ನು ಬೆಳೆಸುವುದು ಕಷ್ಟವಾಗಿರುವಾಗ ನೈಸರ್ಗಿಕವಾಗಿ ಬೆಳೆದಿರುವ ವೃಕ್ಷ ಸಂಪತ್ತನ್ನು ಉಳಿಸಿಕೊಳ್ಳಲಾಗದಿರುವುದು ನಾಚಿಕೆಗೇಡು ಸಂಗತಿಯಾಗಿದೆ ಎಂದರು. ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖೆಗಳ ವೈಫಲ್ಯ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಖಂಡಿಸಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ಪಸಪೂಲ್, ಪವನ ಮುದ್ನಾಳ, ಸುಕ್ಕಯ್ಯ ಪಸಪೂಲ್, ಮಹೇಶ ಯಾದಗಿರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿಮಾನ ಅಪ್ಪಳಿಸಿಲ್ಲ, ಸಣ್ಣ ತಾಂತ್ರಿಕ ದೋಷ: ತೇಜಸ್ ಯುದ್ಧ ವಿಮಾನ ಪತನ ಕುರಿತ ವರದಿಗೆ ಎಚ್ಎಎಲ್ ಸ್ಪಷ್ಟನೆ
ಬೆಂಗಳೂರು, ಫೆ. 23: ತೇಜಸ್ ಯುದ್ಧ ವಿಮಾನವೊಂದು ಪತನಗೊಂಡಿದೆ ಎಂಬ ವರದಿಗಳನ್ನು ವಿಮಾನದ ತಯಾರಿಕಾ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರಾಕರಿಸಿದೆ ಹಾಗೂ ಘಟನೆಯು ನೆಲದ ಮೇಲೆ ಸಂಭವಿಸಿದ ಸಣ್ಣ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಹೇಳಿದೆ. ಎಲ್ಸಿಎ ತೇಜಸ್ ಜಗತ್ತಿನ ಶ್ರೇಷ್ಠ ಸುರಕ್ಷತಾ ದಾಖಲೆಗಳನ್ನು ಹೊಂದಿರುವ ಸಮಕಾಲೀನ ಯುದ್ಧವಿಮಾನಗಳ ಪೈಕಿ ಒಂದಾಗಿದೆ ಎಂದು ಎಚ್ಎಎಲ್ ಹೇಳಿದೆ. ‘‘ಎಲ್ಸಿಎ ತೇಜಸ್ ಘಟನೆಗೆ ಸಂಬಂಧಿಸಿದ ಇತ್ತೀಚಿನ ಮಾಧ್ಯಮ ವರದಿಗಳನ್ನು ಎಚ್ಎಎಲ್ ಗಣನೆಗೆ ತೆಗೆದುಕೊಂಡಿದೆ ಹಾಗೂ ಘಟನೆಯ ಬಗ್ಗೆ ವಾಸ್ತವಿಕ ಸ್ಪಷ್ಟೀಕರಣವನ್ನು ನೀಡಲು ಬಯಸಿದೆ. ಎಲ್ಸಿಎ ತೇಜಸ್ ಪತನಗೊಂಡಿಲ್ಲ. ವಿಮಾನವು ನೆಲದ ಮೇಲಿದ್ದಾಗ ಸಣ್ಣ ತಾಂತ್ರಿಕ ಸಮಸ್ಯೆಯೊಂದನ್ನು ಎದುರಿಸಿತು’’ ಎಂದು ಎಚ್ಎಎಲ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ತಿಂಗಳ ಆದಿ ಭಾಗದಲ್ಲಿ ವಾಯುನೆಲೆಯೊಂದರ ರನ್ವೇಯಲ್ಲಿ ಇಳಿಯುವಾಗ ಭಾರತೀಯ ವಾಯುಪಡೆಯ ಹಗುರ ಯುದ್ಧ ವಿಮಾನ ತೇಜಸ್ ನೆಲಕ್ಕೆ ಅಪ್ಪಳಿಸಿದ್ದು ಅದರ ದೇಹದ ಭಾಗಕ್ಕೆ ಭಾರೀ ಹಾನಿ ಸಂಭವಿಸಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ಘಟನೆ ಎಲ್ಲಿ ಸಂಭವಿಸಿದೆ ಎಂಬ ಮಾಹಿತಿಯನ್ನು ವರದಿಗಳು ನೀಡಿಲ್ಲ. ಫೆಬ್ರವರಿ 7ರಂದು ತರಬೇತಿ ಹಾರಾಟ ಮುಗಿಸಿ ನೆಲೆಗೆ ವಾಪಸಾಗುತ್ತಿದ್ದಾಗ ವಿಮಾನವು ಬ್ರೇಕ್ ವೈಫಲ್ಯವನ್ನು ಎದುರಿಸಿತು ಎನ್ನಲಾಗಿದೆ. ಆಗ ಅದು ರನ್ವೇಯಲ್ಲಿ ಸುದೀರ್ಘ ದೂರ ಚಲಿಸಿದೆ. ಘಟನೆಯಿಂದ ಅದರ ದೇಹ ಭಾಗಕ್ಕೆ ಭಾರೀ ಹಾನಿಯಾಗಿದೆ ಎನ್ನಲಾಗಿದೆ. ಚಾಲಕ ಹೊರಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಫೆ.25ರಂದು ‘ಕಿಸಾನ್ ಸಭಾ’ ಸಭಾಂಗಣದ ಉದ್ಘಾಟನೆ
ಕಾರ್ಕಳ, ಫೆ.23: ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ‘ಕಿಸಾನ್ ಸಭಾ’ ಸಭಾಂಗಣದ ಉದ್ಘಾಟನೆ ಹಾಗೂ ಕುಕ್ಕುಂದೂರಿನ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ಸಂಭ್ರಮೋತ್ಸವ ಫೆ.25ರಂದು ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಲಿ ತಿಳಿಸಿದ್ದಾರೆ. ಕಾರ್ಕಳದ ಕುಕ್ಕುಂದೂರಿನ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.25ರಂದು ಬೆಳಿಗ್ಗೆ 11.30ಕ್ಕೆ ಕಾಬೆಟ್ಟಿನ ಡಾ.ಬಿ.ಆರ್. ಅಂಬೇಡ್ಕರ್ ಭವನ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು, ಆ ಬಳಿಕ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ನೂತನ ’ಕಿಸಾನ್ ಸಭಾ’ ಸಭಾಂಗಣ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು. ನಂತರ ಕುಕ್ಕುಂದೂರಿನ ನಿಟ್ಟೆ ವಿನಯ ಹೆಗ್ಡೆ ಬಯಲು ರಂಗಮಂದಿರದಲ್ಲಿ ನಡೆಯುವ ಶಾಲೆಯ 35ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮುಖ್ಯಮ ಮಂತ್ರಿ ಪಾಲ್ಗೊಳ್ಳಲಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣ ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಪ್ರಸ್ತುತ ವಸತಿ ಶಾಲೆಯಲ್ಲಿ ಎಲ್ಲ ವರ್ಗದ 103 ಬಡ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯುತ್ತಿ ದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ್ ಶೆಟ್ಟಿ, ಬಿಪಿನ್ ಚಂದ್ರಪಾಲ್ ನಕ್ರೆ, ಶುಭಧ ರಾವ್, ಪ್ರಮುಖರಾದ ಬಿ.ಭಾಸ್ಕರ್ ರಾವ್, ರವಿಕಿರಣ್ ಜೈನ್, ನೀರೆ ಕೃಷ್ಣ ಶೆಟ್ಟಿ, ಬಜಗೋಳಿ ಉಮೇಶ್ ರಾವ್, ಅಶೋಕ್ ಕುಮಾರ್ ಜೈನ್, ಎಂ.ಸಿ. ಆರ್ಚಾ, ಕಿಸಾನ್ ಸಭಾ ಟ್ರಸ್ಟ್ನ ಬಿ. ಕೃಷ್ಣಮೂರ್ತಿ, ಹೆಬ್ರಿ ಎಸ್.ರ್ಆ. ಕಾಲೇಜಿನ ನಾಗರಾಜ ಶೆಟ್ಟಿ ಇದ್ದರು.
SI R| ತಮಿಳುನಾಡಿನಲ್ಲಿ ಅಂತಿಮ ಮತದಾರರ ಪಟ್ಟಿಯಿಂದ 74 ಲಕ್ಷ ಹೆಸರು ನಾಪತ್ತೆ!
ಚೆನ್ನೈ, ಫೆ. 23: ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕಸರತ್ತಿನ ಬಳಿಕ, ತಮಿಳುನಾಡು ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಅಧಿಕ ಹೆಸರುಗಳನ್ನು ಕೈಬಿಡಲಾಗಿದೆ. ತಮಿಳುನಾಡು ಮುಖ್ಯ ಚುನಾವಣಾಧಿಕಾರಿ (ಸಿಇಒ) ಅರ್ಚನಾ ಪಟ್ನಾಯಕ್ ಸೋಮವಾರ ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಮ್ನಲ್ಲಿ ನಲ್ಲಿ ಶೀಘ್ರವೇ ಚುನಾವಣೆ ನಡೆಯಲಿದೆ. ಪರಿಷ್ಕರಣೆಯ ಮೊದಲು, ರಾಜ್ಯದ ಮತದಾರರ ಪಟ್ಟಿಯಲ್ಲಿ 6.41 ಕೋಟಿ ಮತದಾರರ ಹೆಸರುಗಳನ್ನು ಹೊಂದಿತ್ತು. ಈಗ ಅದು ಅಂತಿಮ ಪಟ್ಟಿಯಲ್ಲಿ 5.67 ಕೋಟಿಗೆ ಇಳಿದಿದೆ. ಅಂದರೆ, ರಾಜ್ಯದ ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಅಧಿಕ ಹೆಸರುಗಳನ್ನು ಕೈಬಿಡಲಾಗಿದೆ. ಮತದಾರರ ಪಟ್ಟಿಯಲ್ಲಿ 2.7 ಕೋಟಿ ಪುರುಷರು, 2.8 ಕೋಟಿ ಮಹಿಳೆಯರು ಮತ್ತು 7,617 ತೃತೀಯ ಲಿಂಗಿಗಳು ಇದ್ದಾರೆ ಎಂದು ಹೇಳಿಕೆಯೊಂದರಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.
Kalaburagi | ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವದ ಅಧ್ಯಕ್ಷರಾಗಿ ಹಣಮಂತ ಇಟಗಿ ನೇಮಕ
ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ನಿಮಿತ್ತವಾಗಿ ಕಲಬುರಗಿ ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಹಣಮಂತ ಇಟಗಿ ಅವರನ್ನು ನೇಮಕ ಮಾಡಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ವತಿಯಿಂದ ಸೋಮವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹಣಮಂತ ಇಟಗಿ ಅವರನ್ನು ಸರ್ವಾಧ್ಯಕ್ಷರನ್ನಾಗಿ ನೇಮಿಸಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಶಿಕಾಂತ ಹೋಳಕರ್, ಗುಂಡು ಫರತಾಬಾದ್, ದಯಾನಂದ ಪಾಟೀಲ್, ವಿಜಯಕುಮಾರ ಕಟ್ಟಮನಿ, ಸುರೇಶ ಬಡಿಗೇರ, ಸತೀಶ ಸಜ್ಜನ್, ಶಂಕರರಾವ ಕಿಲ್ಲೆದಾರ, ಶಿವಶರಣಪ್ಪ ಮೇತ್ರೆ, ಅಮೃತ ಪಾಟೀಲ, ಬಸಯ್ಯಾ ಗುತ್ತೇದಾರ, ಶರಣಬಸವ ದೊಡ್ಡಮನಿ, ಅರವಿಂದ ಕಮಲಾಪೂರ, ಲಕ್ಷ್ಮಣ ಮೂಲಭಾರತಿ, ಮಂಜುನಾಥ ಭಂಡಾರಿ, ಮಹೇಶ ತೇಲ್ಲೂಕರ್, ಶಿವಶರಣಪ್ಪ ನಂದರಗಿ, ಮಲ್ಲಿಕಾರ್ಜುನ ಮದಾನಿ ಸೇರಿದಂತೆ ಇತರರು ಇದ್ದರು.
ಮಲ್ಲಾರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ, ಫೆ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ವಿಭಾಗ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಆಯುಷ್ಮಾನ್ ಆರೋಗ್ಯ ಕೇಂದ್ರ ಮಲ್ಲಾರ್, ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಎನ್ಸಿಡಿ ಘಟಕ ಹಾಗೂ ಕಾಪು ಪುರಸಭೆಗಳ ಸಂಯುಕ್ತ ಆಶ್ರಯದಲ್ಲಿ ಮಲ್ಲಾರ್ ಫಕೀರ್ನಕಟ್ಟೆಯ ಶ್ರೀ ನಾರಾಯಣ ಗುರು ಬಿಲ್ಲವ ಸಂಘದಲ್ಲಿ ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರಚಿಕಿತ್ಸೆ, ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರ ನಡೆಯಿತು. ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಶಿಬಿರವನ್ನು ಉದ್ಘಾಟಿಸಿ ದರು. ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ. ಪ್ರೇಮ್ ಕಣ್ಣಿನ ಆರೋಗ್ಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ನೂರುದ್ದೀನ್, ಶೈಲೇಶ್, ಎನ್ಸಿಡಿ ವೈದ್ಯಾಧಿಕಾರಿ ಡಾ.ದೀಕ್ಷಾ, ಸಂಯೋಜಕರಾದ ಹರ್ಷ, ಮಾಸ್ಟರ್ ಮಲ್ಲಾರ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿಗಳಾದ ನಿರ್ಮಲಾ ಮೆಂಡನ್ ಮತ್ತು ಶಶಿ, ಸಮುದಾಯ ಆರೋಗ್ಯಾಧಿಕಾರಿ ಶೆರೋನ್, ಆರೋಗ್ಯ ನಿರೀಕ್ಷಣಾಧಿಕಾರಿ ಭವ್ಯಶ್ರೀ, ಶಿರ್ವ ಸಮುದಾಯ ಆರೋಗ್ಯ ಕೇಂದ್ರ ಎನ್ಸಿಡಿ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೃಷಿ ಚಟುವಟಿಕೆಗಾಗಿ ಮಣ್ಣು ಸಾಗಾಟಕ್ಕೆ ಅಡ್ಡಿ ಬೇಡ: ಅಧಿಕಾರಿಗಳಿಗೆ ಸಂಸದ ಕೋಟ ಸೂಚನೆ
ಉಡುಪಿ, ಫೆ.23: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಗಳಿಗಾಗಿ ಟಿಪ್ಪರ್ನಲ್ಲಿ ಮಣ್ಣು ಸಾಗಾಟ ಮಾಡುತ್ತಿರು ವಾಗ ಯಾವುದೇ ರೀತಿಯ ತೊಂದರೆಯನ್ನು ನೀಡದಂತೆ ಅಧಿಕಾರಿಗಳಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೂಚನೆಗಳನ್ನು ನೀಡಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವಾಗ ವಾಹನಗಳನ್ನು ಅಡ್ಡಗಟ್ಟುತ್ತಿರುವ ಸಮಸ್ಯೆಯ ಕುರಿತಂತೆ ಚರ್ಚಿಸಲು ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಗಳಿಗಾಗಿ ಟಿಪ್ಪರ್ನಲ್ಲಿ ಮಣ್ಣನ್ನು ಸಾಗಿಸುತ್ತಿರುವಾಗ ಅಧಿಕಾರಿಗಳು ಟಿಪ್ಪರ್ ಗಳನ್ನು ಅಡ್ಡಗಟ್ಟುತ್ತಿರುವುದರಿಂದ ನಿಜವಾದ ರೈತರು ಅನೇಕ ಕಡೆಗಳಲ್ಲಿ ತೊಂದರೆ ಅನುಭವಿಸುತಿದ್ದಾರೆಂದು ದೂರುಗಳು ಕೇಳಿಬರುತ್ತಿವೆ ಎಂದು ಕೋಟ ವಿವರಿಸಿದರು. ರೈತರು ಕೃಷಿ ಚಟುವಟಿಕೆಗಳಿಗೆ ತಮ್ಮ ಜಮೀನಿನ ಮಣ್ಣನ್ನು ಬಳಸಲು ಸಾಗಾಣಿಕೆ ಮಾಡುತ್ತಿರುವಾಗ ಈ ತೊಂದರೆ ಆಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದವರು ಹೇಳಿದರು. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ರೈತರುಗಳು ತಮ್ಮ ಕೃಷಿ ಚಟುವಟಿಕೆ ಗಳಿಗೆ ತಮ್ಮ ಖಾಸಗಿ ಜಮೀನುಗಳಿಂದ ಮಣ್ಣುಗಳನ್ನು ಸಾಗಾಟ ಮಾಡಿ ಇನ್ನೊಂದು ಜಮೀನಿಗೆ ಬಳಸುತ್ತಿದ್ದಾರೆ. ಆದರೆ ಇನ್ಯಾವುದೇ ಅನ್ಯ ಉದ್ದೇಶಕ್ಕೆ ಬಳಸುತ್ತಿಲ್ಲ. ನಿಯಮಾನುಸಾರ ಅವರಿಗೆ ಸಮಸ್ಯೆಯಾಗದಂತೆ ಎಚ್ಚರ ದಿಂದ ಕಾರ್ಯನಿರ್ವಹಿಸಬೇಕು ಎಂದರು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ರೈತರು ತಮ್ಮ ಕೃಷಿ ಜಮೀನಿಗೆ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ದೂರುಗಳನ್ನು ಕೆಲವರು ತಮ್ಮ ಲಾಭಕ್ಕಾಗಿ ನೀಡುತಿದ್ದಾರೆ. ಇವುಗಳನ್ನು ಗಂಭೀರವಾಗಿ ತೆಗೆದು ಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದರು. ಕುಂದಾಪುರ ಶಾಸಕರು ಎ.ಕಿರಣ್ಕುಮಾರ್ ಕೊಡ್ಗಿ ಮಾತನಾಡಿ, ಇತ್ತೀಚೆಗೆ ಕೋಟ ವ್ಯಾಪ್ತಿಯಲ್ಲಿ ಮಣ್ಣು ಸಾಗಾ ಟದ ಲಾರಿಗಳಿಂದ ಎರಡು ಅಪಘಾತ ಪ್ರಕರಣಗಳು ವರದಿಯಾಗಿದ್ದು, ಅನಂತರ ರೈತರು ಮಣ್ಣು ಸಾಗಾಣಿಕೆ ಸಂಬಂಧಿಸಿ ದೂರುಗಳು ಬರುತ್ತಿವೆ. ಆದರೆ ಈ ಪ್ರಕರಣಗಳಿಗೂ ಹಿಂದೆ ಒಂದು ವರ್ಷದಿಂದ ಯಾವುದೇ ದೂರು ಬಂದಿಲ್ಲ. ಹೀಗಾಗಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಸೂಕ್ತ ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಶಾಸಕರಾದ ಯಶ್ಪಾಲ್ ಎ ಸುವರ್ಣ ಹಾಗೂ ಗುರುರಾಜ್ ಶೆಟ್ಟಿ ಗಂಟಿ ಹೊಳೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವಿಂಧ್ಯ ಎನ್.ಎಮ್ ಉಪಸ್ಥಿತರಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್-8 ಪಂದ್ಯ : ಕೋಚ್ ಗಂಭೀರ್-ಹಾರ್ದಿಕ್ ಪಾಂಡ್ಯ ನಡುವೆ ಮಾತಿನ ಚಕಮಕಿ
ಅಹ್ಮದಾಬಾದ್, ಫೆ.23: ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡ ಭಾರೀ ನಿರಾಸೆ ಅನುಭವಿಸಿದೆ. ಮಾತ್ರವಲ್ಲ ಸೆಮಿ ಫೈನಲ್ ತಲುಪುವ ಹಾದಿ ಕೂಡ ಕಠಿಣವಾಗಿ ಪರಿಣಮಿಸಿದೆ. ಇದೇ ಪಂದ್ಯದ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸೂಪರ್-8 ಪಂದ್ಯದ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಪ್ರಮುಖ ಮೂವರು ಆಟಗಾರರನ್ನು ಔಟ್ ಮಾಡಿದ್ದ ಭಾರತೀಯ ಬೌಲರ್ಗಳು ಮೇಲುಗೈ ಸಾಧಿಸಿದ್ದರು. ಆದರೆ ನಂತರ ಡೇವಿಡ್ ಮಿಲ್ಲರ್ ಹಾಗೂ ಡೆವಾಲ್ಡ್ ಬ್ರೆವಿಸ್ ನಿರ್ಣಾಯಕ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ವಿರುದ್ಧ ಕೋಚ್ ಗಂಭೀರ್ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ವೇಳೆ ಪಾಂಡ್ಯ ಕೂಡ ಗಂಭೀರ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಇಬ್ಬರ ನಡುವೆ ಏನು ಮಾತುಕತೆ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದಿಲ್ಲವಾದರೂ, ಗಂಭೀರ್ ಕೋಪಗೊಂಡು ಮಾತನಾಡಿರುವುದು ಮುಖಭಾವದಲ್ಲಿ ಸ್ಪಷ್ಟವಾಗಿತ್ತು. ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಲ್ಲರ್, ವರುಣ್ ಚಕ್ರವರ್ತಿಯವರ 12ನೇ ಓವರ್ನಲ್ಲಿ ಭರ್ಜರಿ ಬೌಂಡರಿ ಬಾರಿಸುತ್ತಾರೆ. ಈ ವೇಳೆ ದ.ಆಫ್ರಿಕಾ ತಂಡದ ಮೊತ್ತ 100ರ ಗಡಿ ದಾಟುತ್ತದೆ. ಆ ಸಂದರ್ಭದಲ್ಲಿ ಬೌಂಡರಿ ಗೆರೆ ಬಳಿ ನಿಂತಿದ್ದ ಪಾಂಡ್ಯ ಜೊತೆ ಮಾತಿಗೆ ಇಳಿದ ಗಂಭೀರ್, ನಮ್ಮ ಯೋಜನೆಯ ಪ್ರಕಾರ ಯಾವುದೂ ನಡೆಯುತ್ತಿಲ್ಲ ಎಂಬಂತೆ ಪಾಂಡ್ಯ ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಪಾಂಡ್ಯ ಕೂಡ ಪ್ರತ್ಯುತ್ತರ ನೀಡುತ್ತಾರೆ. ಈ ಇಬ್ಬರ ನಡುವಿನ ಮಾತಿನ ಚಕಮಕಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದುದ್ದಕ್ಕೂ ತಾಳ್ಮೆ ಕಳೆದುಕೊಂಡಿದ್ದ ಗಂಭೀರ್ ಅವರು ಪದೇ ಪದೇ ಸಿಟ್ಟಾಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರ್ಕಳ: ಫೆ.25ರಂದು ಮುಖ್ಯಮಂತ್ರಿಗಳಿಂದ ಅಂಬೇಡ್ಕರ್ ಭವನ ಉದ್ಘಾಟನೆ
ಉಡುಪಿ, ಫೆ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ತಾಲೂಕಿನ ಕಾಬೆಟ್ಟುನಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಫೆ.25ರ ಬೆಳಗ್ಗೆ 11:30ಕ್ಕೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಉಪಸ್ಥಿತರಿರಲಿದ್ದು, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲೆಯ ಶಾಸಕರು ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮತ್ತಿತರರು ಭಾಗಹಿವಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Kalaburagi | ಆವಿಷ್ಕಾರಗಳನ್ನು ಉದ್ಯಮವಾಗಿ ರೂಪಿಸಿಕೊಳ್ಳಿ : ಡಿಸಿ ಫೌಝಿಯಾ ತರನ್ನುಮ್
ಕಲಬುರಗಿ: ಇನ್ಕ್ಯುಬೇಶನ್ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಉದ್ಯಮವಾಗಿ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಕರೆ ನೀಡಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ವಿಶ್ವ ಬ್ಯಾಂಕ್ ನೆರವಿನ ಕೇಂದ್ರ ಪುರಸ್ಕೃತ ಮಹತ್ವಾಕಾಂಕ್ಷಿ ರ್ಯಾಂಪ್ (RAMP) ಯೋಜನೆಯಡಿ ಸೋಮವಾರ ಅಂತಿಮ ವರ್ಷದ ತಾಂತ್ರಿಕ(ಐಟಿಐ) ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಇನ್ಕ್ಯುಬೇಶನ್ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಇನ್ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯು ಇನ್ಕ್ಯುಬೇಶನ್ ಹಬ್ ಆಗಿ ಹೊರಹೊಮ್ಮಲಿದೆ ಎಂದು ಅಭಿಪ್ರಾಯಪಟ್ಟರು. ಜಂಟಿ ನಿರ್ದೇಶಕರಾದ ಅಬ್ದುಲ್ ಅಜೀಮ್ ಅವರು RAMP ಯೋಜನೆ ಹಾಗೂ ಇನ್ಕ್ಯುಬೇಶನ್ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಜಿ.ಟಿ.ಟಿ.ಐ. ನಿರ್ದೇಶಕರಾದ ರಾಜೇಶ ಬಾವಗಿ ಮಾತನಾಡಿ, ಇನ್ಕ್ಯುಬೇಶನ್ ಮೂಲಕ ತಾಂತ್ರಿಕ ವಿದ್ಯಾರ್ಥಿಗಳಿಗೆ ತಮ್ಮ ನವೋದ್ಯಮ (Start-up) ಆರಂಭಿಸಲು ಅಗತ್ಯ ಮಾರ್ಗದರ್ಶನ ಮತ್ತು ಮೂಲಸೌಕರ್ಯ ಲಭ್ಯವಾಗಲಿದೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ರಾಘವೇಂದ್ರ ಆರ್.ಪಿ., ಕರ್ನಾಟಕ ರಾಜ್ಯ ಹಣಕಾಸು ನಿಗಮ(KSFC) ಶಾಖಾ ವ್ಯವಸ್ಥಾಪಕರಾದ ಡಾ. ಚಂದ್ರಕಾಂತ ಚಂದಾಪೂರ, ಸಿಡಾಕ್ನ ಹಿರಿಯ ತರಬೇತಿದಾರರಾದ ಸಯ್ಯದ್ ಅಶ್ಫಾಕ್ ಅಹ್ಮದ್, ಸಹಾಯಕ ನಿರ್ದೇಶಕರಾದ ಕು. ರುಪಾಲಿ ಶೇರಖಾನೆ, ಜಾಫರ್ ಖಾಸಿಮ್ ಅನ್ಸಾರಿ ಸೇರಿದಂತೆ ಇತರರು ಇದ್ದರು. ನವೋದ್ಯಮದಾರರಾದ ಪ್ರವೀಣ್ ಕುಮಾರ ಡಿಗ್ಗೆ ಅವರು ತಮ್ಮ ಉದ್ಯಮಾರಂಭದ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಕಾರ್ಯಾಗಾರದಲ್ಲಿ ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Kalaburagi | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ
ಕಲಬುರಗಿ: ಮುಂಬರುವ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು. ಒಳಮೀಸಲಾತಿ ಕಲ್ಪಿಸಲು ಕೇವಲ ಜನಸಂಖ್ಯೆ ಮಾನದಂಡವಾಗಿರದೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಹಾಗೂ ರಾಜಕೀಯ ಹಿಂದುಳಿದಿರುವಿಕೆ ಅಸಮರ್ಪಕತೆ ಮಾನದಂಡವಾಗಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈಗಾಗಲೇ ಕೋರ್ಟ್ ಹೇಳಿದಂತೆ ಹರಿಯಾಣ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಜಾರಿಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಸರಕಾರ ಕೋರ್ಟ್ ಆದೇಶ ಪಾಲಿಸದೆ ವಿಳಂಬ ನೀತಿ ಧೋರಣೆ ನಡೆಸುತ್ತಿದೆ ಎಂದು ಮುಖಂಡರು ಆರೋಪಿಸಿದರು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ 6:6:5 ಅನುಪಾತದಲ್ಲಿ ಪ್ರಾತಿನಿಧ್ಯ ನೀಡಬೇಕು. ತಾರತಮ್ಯಗಳನ್ನು ಸರಿಪಡಿಸಲು ಇದಕ್ಕೊಂದು ಶಾಶ್ವತ ಆಯೋಗ ರಚಿಸಬೇಕು, ಒಳಮೀಸಲಾತಿ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಶ್ಯಾಮ್ ನಾಟಿಕಾರ, ರಾಜು ವಾಡೇಕರ್, ಪರಮೇಶ್ವರ ಖಾನಾಪೂರ, ದಶರಥ ಎಂ.ಕಲಗುರ್ತಿ, ಗೋಪಾಲರಾವ ಕಟ್ಟಿಮನಿ, ಗೋಪಿಕೃಷ್ಣ ಗುಡೇನವರ್, ರಾಜು ಕಟ್ಟಿಮನಿ, ಎ.ಎಚ್.ನಾಗೇಶ್, ಮಲ್ಲಿಕಾರ್ಜುನ ಜಿನಕೇರಿ, ರಂಜೀತ್ ಮೂಲಿಮನಿ, ಅಮಿತ್ ಸಾಗರ, ಸಚಿನ್ ಕಟ್ಟಿಮನಿ, ಮಹೇಶ ಹುಲಿಮನಿ, ಉದಯ ಚಿಟಗಾ, ಮಲ್ಲಿಕಾರ್ಜುನ ಸರಡಗಿ, ಭರತ, ಮಲ್ಲು, ದತ್ತು ಭಾಸಗಿ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದರು.
'ಬೇಕಿದ್ದರೆ ಸಭೆಯಿಂದ ಹೊರನಡೆಯಿರಿ' - ಕಾಂಗ್ರೆಸ್ ಶಾಸಕನ ವಿರುದ್ಧವೇ ಸಚಿವ ಸಂತೋಷ್ ಲಾಡ್ ಗರಂ; ಜಟಾಪಟಿ
ಧಾರವಾಡ ಜಿಪಂ ಸಭಾಂಗಣದಲ್ಲಿಸೋಮವಾರ ನಡೆದ ಕೆಡಿಪಿ ಸಭೆಯಲ್ಲಿಸಚಿವ ಸಂತೋಷ ಲಾಡ್- ಶಾಸಕ ಎಫ್.ಎಚ್. ಜಕ್ಕಪ್ಪನವರ ಮಧ್ಯೆ ವಾಗ್ವಾದ ನಡೆಯಿತು. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಒಂದೇ ಪಕ್ಷದ ಇಬ್ಬರ ನಡುವೆ ಟಾಕ್ವಾರ್ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಎಸ್ಸಿ, ಎಸ್ಟಿ ಯೋಜನೆಗಳ ವಿಚಾರವಾಗಿ ವಾಗ್ವಾದವಾಗಿದ್ದು, ಸಭೆಯಿಂದ ಹೊರನಡೆಯಲು ಮುಂದಾದ ಜಕ್ಕಪ್ಪನವರನ್ನ ಅಧಿಕಾರಿಗಳು ತಡೆದಿದ್ದಾರೆ.
ಆಳಂದ | ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ
ಆಳಂದ: ಪಟ್ಟಣದ ತಾಲೂಕು ಬಂಜಾರಾ ಸಮಾಜ ಆಶ್ರಯದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 287ನೇ ಜಯಂತಿ ಕಾರ್ಯಕ್ರಮ ಭಕ್ತಿ ಭಾವ, ಸಡಗರ ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಅತ್ಯಂತ ಅದ್ಧೂರಿಯಾಗಿ ನಡೆಯಿತು. ವಾದ್ಯಮೇಳಗಳ ನಾದ, ಲಂಬಾಣಿ ಮಹಿಳೆಯರು ಹಾಗೂ ಯುವಕರ ಸಾಂಪ್ರದಾಯಿಕ ನೃತ್ಯ–ಗಾಯನ, ಧಾರ್ಮಿಕ ಘೋಷಣೆಗಳು, ಬಣ್ಣಬಣ್ಣದ ಅಲಂಕಾರಗಳೊಂದಿಗೆ ಸಾಗಿದ ಮೆರವಣಿಗೆ ಪಟ್ಟಣದಾದ್ಯಂತ ಭಕ್ತಿ–ಉತ್ಸಾಹದ ವಾತಾವರಣವನ್ನು ನಿರ್ಮಿಸಿತು. ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಫೌಜಿ ಸೇರಿದಂತೆ ಸಮಾಜದ ಪ್ರಮುಖರ ನೇತೃತ್ವದಲ್ಲಿ ನಡೆದ ಈ ಶೋಭಾಯಾತ್ರೆ ಜನಮನ ಸೆಳೆಯುವ ಭವ್ಯತೆಗೆ ಸಾಕ್ಷಿಯಾಯಿತು. ಸಂತ ಸೇವಾಲಾಲ ಮಹಾರಾಜರ ಪ್ರತಿಮೆ–ಭಾವಚಿತ್ರದೊಂದಿಗೆ ಆಗಮಿಸಿದ ಧಾರ್ಮಿಕ ಗುರುಗಳ ಮೆರವಣಿಗೆಗೆ ಸಾರ್ವಜನಿಕರಿಂದ ಅಪಾರ ಭಕ್ತಿ–ಸನ್ಮಾನ ವ್ಯಕ್ತವಾಯಿತು. ಮಧ್ಯಾಹ್ನ ಶ್ರೀರಾಮ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ನಡೆದ ಸಮಾರಂಭವನ್ನು ಬೀದರ್ ಸಂಸದ ಸಾಗರ ಈಶ್ವರ ಖಂಡ್ರೆ ಉದ್ಘಾಟಿಸಿ ಮಾತನಾಡಿ, “ಸಂತ ಸೇವಾಲಾಲರ ಜೀವನ ಸಂದೇಶಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಾಮಾಜಿಕ ಏಕತೆಯನ್ನು ಬಲಪಡಿಸುವ ಶಾಶ್ವತ ಮೌಲ್ಯಗಳಾಗಿವೆ. ಅವರ ಬೋಧನೆಗಳು ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಬೇಕು” ಎಂದು ಹೇಳಿದ ಅವರು, ಸಮುದಾಯ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ ನಗಾರಿ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ವಿ. ರಾಠೋಡ, ಜಿಪಂ ಮಾಜಿ ಸದಸ್ಯ ಹರ್ಸಾನಂದ ಎಸ್. ಗುತ್ತೇದಾರ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಂತ ಸೇವಾಲಾಲ ಮಹಾರಾಜರ ತ್ಯಾಗ, ಸೇವಾ ಮನೋಭಾವ ಮತ್ತು ಸಾಮಾಜಿಕ ಪರಿವರ್ತನೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ನಮನ ಸಲ್ಲಿಸಿದರು. ದಿವ್ಯ ಸಾನ್ನಿಧ್ಯ ಶ್ರೀ ಬಳಿರಾಮ ಮಹಾರಾಜ, ಕೆಸರಟಗಿಯ ಮಾತಾ ಲತಾದೇವಿ, ಚೌಡಾಪೂರ ಶ್ರೀ ಮುರಹರಿ ಮಹಾರಾಜ್, ಲಾಡಚಿಂಚೋಳಿ ತಾಂಡಾದ ಶ್ರೀ ಸುನಿಲ ಮಹಾರಾಜ, ಅಚಲೇರಾ, ಶ್ರೀ ಸೋಮಲಿಂಗ ಮಹಾರಾಜ ಅವರು ವಹಿಸಿದ್ದರು. ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಉದ್ಯಮಿ ಚನ್ನು ಪಾಟೀಲ, ಗುಂಡಪ್ಪ ಗೌಳಿ, ಗಂಗಾರಾಮ ಪವಾರ, ನ್ಯಾಯವಾದಿ ಸಂಜಯ ನಾಯಕ, ಸಂತೋಷ ಪವಾರ, ಕೋಟೇಶ ರಾಠೋಡ, ಅನೀಲ ಎಂ. ರಾಠೋಡ ಹಾಗೂ ಠಾಕೂರಸಿಂಗ್ ಎಂ. ರಾಠೋಡ ಸೇರಿ ಬಂಜಾರ ಸಮಾಜದ ಮುಖಂಡರು ಭಾಗವಹಿಸಿ ಮಾತನಾಡಿದರು. . ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ನಿರೂಪಿಸಿದರು. ಸುಭಾಷ ಪೌಜಿ ಪ್ರಾಸ್ತಾವಿಕ ಮಾತನಾಡಿದರು. ಶಿವಾಜಿ ರಾಠೋಡ ಸ್ವಾಗತಿಸಿದರು.
ಸಂಪುಟ ಪುನರ್ ರಚನೆ ಮಾಡಲು ಆಗ್ರಹಿಸಿ ಹೈಕಮಾಂಡ್ಗೆ ‘ಕೈ’ ಶಾಸಕರ ಪತ್ರ?
ಬೆಂಗಳೂರು, ಫೆ. 23 : ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಬೆನ್ನಲ್ಲೆ ‘ಸಚಿವ ಸಂಪುಟ ಪುನರ್ ರಚನೆ ಮಾಡಬೇಕು’ ಎಂದು ಆಗ್ರಹಿಸಿ ಪಕ್ಷದ ಶಾಸಕರೇ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರಿಗೆ ಪತ್ರ ಬರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ‘ಮೂವತ್ತಕ್ಕೂ ಅಧಿಕ ಮಂದಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರು, ಕಾಂಗ್ರೆಸ್ ಮುಖಂಡರಿಗೆ ಪತ್ರ ಬರೆದಿದ್ದು, ‘ಮೊದಲ ಬಾರಿಗೆ ಆಯ್ಕೆಯಾದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಇದರಿಂದ ಹೊಸ ಮುಖಗಳಿಗೆ ಅವಕಾಶವಾಗಲಿದೆ. ಹೀಗಾಗಿ ಸಂಪುಟ ಪುನರ್ ರಚನೆ ವೇಳೆ ಕನಿಷ್ಟ ಐದು ಮಂದಿ ಹೊಸಬರಿಗೆ ಸಚಿವ ಸ್ಥಾನವನ್ನು ನೀಡಬೇಕು’ ಎಂದು ಆಗ್ರಹಿಸಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಈ ಪತ್ರ ಹಳೆಯದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಪ್ರಮುಖ ನಾಯಕರಿಗೆ ಬರೆದಿದೆ ಎನ್ನಲಾದ ಪತ್ರದಲ್ಲಿ ದಿನಾಂಕ ಇಲ್ಲ. ಅಲ್ಲದೆ, ಈ ಪತ್ರವನ್ನು ಹೈಕಮಾಂಡ್ಗೆ ತಲುಪಿಸಲಾಗಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ನಾಯಕತ್ವ ಬದಲಾವಣೆಯ ಸುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರ-ವಿರುದ್ಧ ಪಕ್ಷದ ಮುಖಂಡರು ಹಾಗೂ ಶಾಸಕರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ. ಈ ಮಧ್ಯೆ ಶಾಸಕರ ಪತ್ರ ವೈರಲ್ ಆಗಿದ್ದು ಕುತೂಹಲ ಸೃಷ್ಟಿಸಿದೆ. ಪತ್ರದಲ್ಲಿ ಏನಿದೆ?: ‘ಕಾಂಗ್ರೆಸ್ ಪಕ್ಷದಲ್ಲಿ 38 ಮಂದಿ ಶಾಸಕರು ಹೊಸದಾಗಿ ಆಯ್ಕೆಯಾಗಿದ್ದು, ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರು ಮುಖ್ಯಮಂತ್ರಿಯೂ ಆಗಿದ್ದಾರೆ. ಹೀಗಾಗಿ ಮೊದಲ ಬಾರಿ ಆಯ್ಕೆಯಾದ ಶಾಸಕರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಅವಕಾಶ ಕಲ್ಪಿಸಬೇಕು’ ಎಂದು ಕೋರಲಾಗಿದೆ. ನಾಯಕತ್ವ ಬದಲಾವಣೆ ವಿಚಾರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಕೆ.ಎನ್.ರಾಜಣ್ಣ ಹೊಸದಿಲ್ಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಿತ ಹಲವು ಮುಖಂಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಈ ನಡುವೆ ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದಾರೆ.
ಆಳಂದ | ಸಹಕಾರ ಸಂಘಗಳ ಬಲವರ್ಧನೆಗೆ ಬೆಂಬಲ: ಬಿ.ಆರ್.ಪಾಟೀಲ್
ಖಜೂರಿಯಲ್ಲಿ ನೂತನ ಕಟ್ಟಡ, ಉಗ್ರಾಣ, ಜನೌಷಧಿ ಕೇಂದ್ರ ಉದ್ಘಾಟನೆ
ಅವರು ನಮ್ಮ ರಾಷ್ಟ್ರೀಯ ನಾಯಕರು, ಇಲ್ಲಿಂದಲೇ ನಮಸ್ಕಾರ: ಎಚ್ ಸಿ ಮಹದೇವಪ್ಪಗೆ ವ್ಯಂಗ್ಯ ತಿರುಗೇಟು
ನೋಟಿನ ಮೇಲಿರುವ ಗಾಂಧಿ ಫೋಟೋವನ್ನು ತೆಗೆದು ನಿಮ್ಮ ಫೋಟೋ ಹಾಕಿಕೊಳ್ಳುವಂತೆ ನಾನು ಸವಾಲು ಹಾಕಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಚರ್ಚೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಿದ್ದೇವೆ. ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ದೇಶದ ಬಡವರು, ಕೂಲಿ ಕಾರ್ಮಿಕರ ಕಾರ್ಯಕ್ರಮ. ಗ್ರಾಮೀಣ ಭಾಗದ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ. ಮತ್ತೊಮ್ಮೆ ಮನರೇಗಾ ಯೋಜನೆ ಮರುಸ್ಥಾಪಿಸಿ, ಉದ್ಯೋಗದ ಹಕ್ಕು ಹಾಗೂ ಗ್ರಾಮಗಳ ಸ್ವಯಂ ಆಡಳಿತ ಹಕ್ಕನ್ನು ಪುನರ್ ಸ್ಥಾಪಿಸಬೇಕಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಂದೇಶ ನೀಡಿದರು.
ಮಂಗಳೂರು: ಇಲೆಕ್ಟಿಕ್ ಬಸ್ಗಳ ಸಂಚಾರಕ್ಕೆ ಸಿದ್ಧತೆ
ಮಂಗಳೂರು: ಕೇಂದ್ರ ಸರಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ರಾಜ್ಯಕ್ಕೆ 750 ಹೊಸ ಇಲೆಕ್ಟಿಕ್ ಬಸ್ಗಳನ್ನು ಮಂಜೂರು ಮಾಡಿರುವ ಮಧ್ಯೆಯೇ ಖಾಸಗಿಯವರು ಕೂಡ ಇವಿ ಬಸ್ ವ್ಯವಸ್ಥೆಗೆ ಚಿಂತನೆ ನಡೆಸಿದ್ದಾರೆ. ಅದರಲ್ಲೂ ಮಂಗಳೂರಿನಲ್ಲಿ ಸರಕಾರಿ ಇವಿ ಬಸ್ ಗಳಲ್ಲದೆ ಖಾಸಗಿ ಇವಿ ಬಸ್ಗಳು ಓಡಾಡಲು ಸಿದ್ಧತೆ ನಡೆಸಿದೆ. ವಾಹನಗಳಿಂದ ದೇಶಾದ್ಯಂತ ಆಗುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರವು ದೇಶದೆಲ್ಲೆಡೆ ಇಲೆಕ್ಟಿಕ್ ಬಸ್ಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾರಂಭಿಸಿದೆ. ಅದರಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯಕ್ಕೆ 750 ಇಲೆಕ್ಟಿಕಲ್ ಬಸ್ ಗಳನ್ನು ಮಂಜೂರುಗೊಳಿಸಿದೆ. ಆ ಪೈಕಿ ಮಂಗಳೂರಿಗೆ 100 ಬಸ್ಗಳು ಬರುವ ಸಾಧ್ಯತೆ ಇದೆ. ಈ ಬಸ್ಗಳಿಗೆ ಕುಂಟಿಕಾನ ಕೆಎಸ್ಸಾರ್ಟಿಸಿ ಡಿಪೋ ಮತ್ತು ಬಿಜೈ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್ಗೆ ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅನುಮೋದನೆ ನೀಡಿದೆ. ದೇಶದಲ್ಲೇ ಮೊತ್ತಮೊದಲ ಸಾರಿಗೆ ಬಸ್ ವ್ಯವಸ್ಥೆಯು ಮಂಗಳೂರಿನಲ್ಲಿ ಆರಂಭವಾಗಿತ್ತು. ಅಂದರೆ 1914ರಲ್ಲಿ ಶಂಕರ್ ವಿಠಲ್ ಸಂಸ್ಥೆ ಮಂಗಳೂರು-ಬಂಟ್ವಾಳ ಮಧ್ಯೆ ಮೊದಲ ಖಾಸಗಿ ಬಸ್ ಸಂಚಾರ ಆರಂಭಿಸಿತ್ತು. ಇದೀಗ ಇವಿ ಬಸ್ ವ್ಯವಸ್ಥೆಗೂ ಮಂಗಳೂರು ಮಾದರಿಯಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಆರಂಭಗೊಂಡಿದೆ. ಮಂಗಳೂರಿನಲ್ಲಿ ಇಲೆಕ್ಟಿಕಲ್ ಬಸ್ಗಳ ಓಡಾಟವನ್ನು ಪ್ರಾಯೋಗಿಕವಾಗಿ ನಡೆಸಿ ಅದರಲ್ಲಿ ಯಶಸ್ವಿಯಾದರೆ ಇವಿ ಬಸ್ಗಳನ್ನು ಮತ್ತಷ್ಟು ಖರೀದಿಸಲು ಖಾಸಗಿ ಬಸ್ ಮಾಲಕರು ಕೂಡ ನಿರ್ಧರಿಸಿದ್ದಾರೆ. ಖಾಸಗಿ ಇವಿ ಬಸ್ಗಳು 9 ಮೀ. ಉದ್ದವಿರಲಿದೆ. 32-41 ಸೀಟುಗಳನ್ನು ಹೊಂದಿವೆ. 200ಕಿ.ಮೀ. ಓಡಾಟದ ಬ್ಯಾಟರಿ ಸಾಮರ್ಥ್ಯವಿದೆ. 2 ಗಂಟೆಗಳಲ್ಲಿ ರಿಚಾರ್ಜ್ ಆಗಲಿದೆ. ಹವಾನಿಯಂತ್ರಣ ಬಸ್ ಇದಾಗಿದ್ದು, 5 ವರ್ಷದ ಬ್ಯಾಟರಿ ಗ್ಯಾರಂಟಿಯೂ ಇದೆ. ಪುಣೆಯಲ್ಲಿ ಬಸ್ನ ಬಾಡಿ ವಿನ್ಯಾಸ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಂಗಳೂರಿನಲ್ಲಿ ಖಾಸಗಿ ಸಾರಿಗೆ ವ್ಯವ ಸ್ಥೆಯು ದೇಶಕ್ಕೆ ಮಾದರಿಯಾಗಿದೆ. ಇದೀಗ ಪರಿಸರದ ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರ 100 ಇವಿ ಬಸ್ ಗಳನ್ನು ಓಡಿಸಲು ನಿರ್ಧರಿಸಿರುವುದರಿಂದ ಖಾಸಗಿ ಸಾರಿಗೆ ವಲಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಹಾಗಾಗಿ ಇವಿ ಬಸ್ಗಳ ಖರೀದಿಗೆ ಖಾಸಗಿ ವಲಯವು ಮುಂದಾಗಿದೆ. -ದಿಲ್ರಾಜ್ ಆಳ್ವ, ಮಾಜಿ ಅಧ್ಯಕ್ಷರು, ದ.ಕ. ಜಿಲ್ಲಾ ಸಿಟಿ ಬಸ್ ಮಾಲಕರ ಸಂಘ
ಭಾರತವನ್ನು ಸೋಲಿಸಬಹುದು ಎಂದು ದಕ್ಷಿಣ ಆಫ್ರಿಕಾ ತೋರಿಸಿಕೊಟ್ಟಿದೆ: ಡೇವಿಡ್ ಮಿಲ್ಲರ್
ಅಹ್ಮದಾಬಾದ್, ಫೆ.23: ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಸಹ ಆತಿಥೇಯ ಭಾರತ ತಂಡದ ವಿರುದ್ಧ 76 ರನ್ಗಳ ಅಂತರದಿಂದ ಜಯ ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ‘ಭಾರತವನ್ನು ಸೋಲಿಸಬಹುದು’’ಎಂಬುದನ್ನು ತೋರಿಸಿಕೊಟ್ಟಿದೆ ಎಂದು ‘ಗೆಲುವಿನ ರೂವಾರಿ’ ಡೇವಿಡ್ ಮಿಲ್ಲರ್ ಹೇಳಿದ್ದಾರೆ. ‘‘ಭಾರತ ಒಂದು ಅತ್ಯುತ್ತಮ ತಂಡ. ಆಟಗಾರನಾಗಿ ನಮ್ಮ ಕೆಲಸ ಮಾಡಬೇಕು ಹಾಗೂ ಕೆಲಸವನ್ನು ಮಾಡಿಸಬೇಕು ಎಂಬ ಸರಳ ಸೂತ್ರವನ್ನು ಅಳವಡಿಸಿಕೊಂಡಿದ್ದೆವು’’ಎಂದು ಪಂದ್ಯದ ನಂತರ ಸುದ್ದಿಗಾರರಿಗೆ ಮಿಲ್ಲರ್ ತಿಳಿಸಿದರು. ಭಾರತ ತಂಡವು ರವಿವಾರ ಅಹ್ಮದಾಬಾದ್ನಲ್ಲಿ ಪಂದ್ಯಾವಳಿಯಲ್ಲಿ ಮೊದಲ ಸೋಲು ಕಂಡಿತು. ಈ ಮೂಲಕ ಐಸಿಸಿ ಆಯೋಜಿತ ಸೀಮಿತ ಓವರ್ಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸತತ 18 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಭಾರತ ತಂಡವು ಅಹ್ಮದಾಬಾದ್ನಲ್ಲೇ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಆಸ್ಟ್ರೇಲಿಯದ ವಿರುದ್ಧ ಕೊನೆಯ ಬಾರಿ ಸೋತಿತ್ತು. ‘‘ನಮ್ಮದು ಪ್ರಬುದ್ಧ ತಂಡ. ಸಾಕಷ್ಟು ಆಟಗಾರರು ದಕ್ಷಿಣ ಆಫ್ರಿಕಾ ತಂಡದ ಪರ ಬಹಳಷ್ಟು ಕ್ರಿಕೆಟ್ ಆಡಿದ್ದಾರೆ. ಭಾರತದ ಅಪಾಯಕಾರಿ ಆಟಗಾರ ವರುಣ್ ಚಕ್ರವರ್ತಿ ಅವರನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಗಾಢವಾಗಿ ಚರ್ಚೆ ನಡೆಸಿದ್ದೆವು’’ ಎಂದು ‘ಪಂದ್ಯಶ್ರೇಷ್ಠ ’ ಪುರಸ್ಕೃತ ಮಿಲ್ಲರ್ ಹೇಳಿದ್ದಾರೆ. ಚಕ್ರವರ್ತಿ ರವಿವಾರ ನಡೆದ ಪಂದ್ಯದಲ್ಲಿ ನಾಲ್ಕು ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 47 ರನ್ ನೀಡುವ ತನಕ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ದಾಖಲೆ ಹೊಂದಿದ್ದರು. ಮಿಲ್ಲರ್ ಹಾಗೂ ಡೆವಾಲ್ಡ್ ಬ್ರೆವಿಸ್ ಅವರು ಚಕ್ರವರ್ತಿಯವರ ಸ್ಪಿನ್ ಬೌಲಿಂಗನ್ನು ದಿಟ್ಟವಾಗಿ ಎದುರಿಸಿದ್ದರು.
ಶಹಾಬಾದ್ | ಗೋಳಾ (ಕೆ) ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಕರವೇ ಮನವಿ
ಶಹಾಬಾದ್ : ತಾಲೂಕಿನ ಗೋಳಾ (ಕೆ) ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ಹೈಯ್ಯಾಳಕರ್ ಅವರು ರವಿವಾರ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಮಹಿಳಾ ಶೌಚಾಲಯ ಹಾಗೂ ರಸ್ತೆ ಸಮಸ್ಯೆಗಳ ಕಾರಣ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಮನವಿ ಸ್ವೀಕರಿಸಿದ ಶಾಸಕ ಬಸವರಾಜ ಮತ್ತಿಮಡು, ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದು ಯಾವುದೇ ವೈಯಕ್ತಿಕ ಕೆಲಸವಲ್ಲ; ಗ್ರಾಮದ ಸಾರ್ವಜನಿಕರ ಸಮಸ್ಯೆಯಾಗಿರುವುದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಕ್ಷಣವೇ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ ಅವರು, ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಂಡು ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೊಡ್ಡಪ್ಪ ಹೊಸ್ಮನಿ, ನಾಗಪ್ಪ ಧರೆಪ್ಪಗೋಳ, ಕರವೇ ಪ್ರಧಾನ ಕಾರ್ಯದರ್ಶಿ ಮಹೇಶ್ ಹಲ್ಕರ್ಟಿ, ಸದಾಶಿವ ಕಾಚಾಪೂರ, ಸುರೇಶ್ ಹೈಯ್ಯಾಳಕರ್, ಮರಲಿಂಗ ಗಂಗಭೋ, ದೇವು ಹೊಸಮನಿ, ಭೀಮರಾಯ ಹೊಸಮನಿ ಸೇರಿದಂತೆ ಗ್ರಾಮಸ್ಥರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು.
T20 ವಿಶ್ವಕಪ್ | ಅಭಿಷೇಕ್ ಶರ್ಮಾ ಮತ್ತೆ ವಿಫಲ; ಸುನೀಲ್ ಗಾವಸ್ಕರ್ ಅಸಮಾಧಾನ
ಹೊಸದಿಲ್ಲಿ: ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಪದೇ ಪದೇ ವಿಫಲರಾಗುತ್ತಿರುವುದರಿಂದ ಭಾರತಕ್ಕೆ ತೊಂದರೆಯಾಗುತ್ತಿದೆ ಎಂದು ಭಾರತದ ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ (ರವಿವಾರ) ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಪ್ರಥಮ ಸೂಪರ್ 8 ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಬ್ಯಾಟರ್ ಇಶಾನ್ ಕಿಶಾನ್ ಅವರು ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮರ್ಕಮ್ ಬೌಲಿಂಗ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಆ ಬಳಿಕ, ಅಭಿಷೇಕ್ ಶರ್ಮಾ ಭಾರತದ ಇನಿಂಗ್ಸ್ ನ ಮರು ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಭಾರತೀಯ ಅಭಿಮಾನಿಗಳು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ಮೊದಲ ಬಾಲ್ ನಲ್ಲೇ ಬೌಂಡರಿ ಬಾರಿಸಿದ ಅಭಿಷೇಕ್ ಶರ್ಮ, ಕಗಿಸೊ ರಬಾಡೊ ಬಾಲ್ ಅನ್ನು ಸಿಕ್ಸರ್ ಗೂ ಅಟ್ಟಿದರು. ಆದರೆ, ಕ್ರೀಸಿನಲ್ಲಿದ್ದಷ್ಟೂ ಹೊತ್ತು ಅವರು ಸಹಜವಾಗಿ ಬ್ಯಾಟಿಂಗ್ ಮಾಡಲು ಪರದಾಡಿದರು. ಅಂತಿಮವಾಗಿ ಅವರು ಮ್ಯಾಕ್ರೊ ಜೇಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು. ಹೀಗಾಗಿ, ದಕ್ಷಿಣ ಆಫ್ರಿಕಾ ತಂಡ ಮುಂದೊಡ್ಡಿದ್ದ 188 ರನ್ ಗಳನ್ನು ಬೆನ್ನಟ್ಟಿದ ಭಾರತ ತಂಡ, ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ವೈಫಲ್ಯದಿಂದ 76 ರನ್ ಗಳ ಹೀನಾಯ ಸೋಲು ಅನುಭವಿಸುವಂತಾಯಿತು. ಈ ಹಿನ್ನೆಲೆಯಲ್ಲಿ ಸುನೀಲ್ ಗಾವಸ್ಕರ್ ಅವರು ಬ್ಯಾಟಿಂಗ್ ಲಯಕ್ಕೆ ಮರಳಲು ಪರದಾಡುತ್ತಿರುವ ಅಭಿಷೇಕ್ ಶರ್ಮಾಗೆ ಒಂದಿಷ್ಟು ಸಲಹೆ ನೀಡಿದ್ದಾರೆ. ನೀವು ಬಯಸಿದಂತೆ ಬ್ಯಾಟಿಂಗ್ ಮಾಡುವ ಮುನ್ನ, ಮೊದಲು ಸಮಯಾವಕಾಶ ತೆಗೆದುಕೊಳ್ಳಿ. ಆರಂಭದಿಂದಲೇ ಬೌಲರ್ ಮೇಲೇರಿ ಹೋಗುವ ನಿನ್ನ ಬಯಕೆಯನ್ನು ಹತ್ತಿಕ್ಕಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದ್ದಾರೆ. ಆರಂಭದಿಂದಲೇ ಬೌಲರ್ ಗಳ ಮೇಲೇರಿ ಹೋಗುವ ಅಭಿಷೇಕ್ ಶರ್ಮಗೆ ಅವರ ಆ ಪ್ರವೃತ್ತಿಯೇ ಅವರಿಗೆ ಈವರೆಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಅಲ್ಲದೆ ಅವರನ್ನು ಟಿ-20 ವಿಶ್ವಕಪ್ ರ್ಯಾಂಕಿಂಗ್ ನಲ್ಲಿ ನಂ. 1 ಬ್ಯಾಟರ್ ಆಗಿಸಿತ್ತು. ಆದರೆ, ಕೆಲ ಕಾರಣಗಳಿಂದ ಅವರ ಈ ಪ್ರವೃತ್ತಿ ಫಲದಾಯಕವಾಗುತ್ತಿಲ್ಲ. ಹೀಗಾಗಿ, ನಿಮ್ಮ ಪ್ರವೃತ್ತಿಯನ್ನು ಸರಿಪಡಿಸಿಕೊಂಡು, ಕ್ರೀಸಿಗೆ ಅಂಟಿಕೊಳ್ಳಿ. ಅದರಿಂದ ನಿಮಗೆ ಹಾನಿಯಾಗುವುದಕ್ಕಿಂತ ಹೆಚ್ಚು ಲಾಭವಾಗುತ್ತದೆ ಎಂದು ಸುನೀಲ್ ಗಾವಸ್ಕರ್ ಅವರಿಗೆ ಹಿತನುಡಿ ಹೇಳಿದ್ದಾರೆ. “ಅಭಿಷೇಕ್ ಶರ್ಮ ಬಳಿ ಇರುವ ಹೊಡೆತದ ವೈವಿಧ್ಯತೆಯ ಕಾರಣಕ್ಕೆ ಅವರು ಮೈದಾನದ ನಡುವೆ ಕೆಲ ಕಾಲ ಕಳೆಯಬೇಕಿದೆ. ಅವರು ಇನಿಂಗ್ಸ್ ನ ಮೊದಲ ಬಾಲ್ ನಿಂದಲೇ ಬೌಂಡರಿ ಅಥವಾ ಸಿಕ್ಸ್ ಹೊಡೆಯಬೇಕಿಲ್ಲ. ದೊಡ್ಡ ಹೊಡೆತಗಳು ಬಂದರೆ ಒಳ್ಳೆಯದು. ಆದರೆ, ಅವರು ಎಲ್ಲ ಮೂಲೆಗಳಲ್ಲೂ ದೊಡ್ಡ ಹೊಡೆತಗಳನ್ನು ಹೊಡೆಯಲು ಮುಂದಾಗಬಾರದು. ಒಂದು ರನ್ ತೆಗೆದುಕೊಂಡು ಆಟದ ಲಯಕ್ಕೆ ಕುದುರಿಕೊಳ್ಳಿ. ನಾಲ್ಕು ಡಾಟ್ ಬಾಲ್ ಗಳೂ ಸಮಸ್ಯೆಯಾಗಲಾರದು. ನಂತರ, ಅವರು ಅದನ್ನು ಸರಿದೂಗಿಸಬಹುದು” ಎಂದು ಅವರು ಸಲಹೆ ನೀಡಿದ್ದಾರೆ. ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್ಎ, ಪಾಕಿಸ್ತಾನ ಹಾಗೂ ನೆದರ್ ಲ್ಯಾಂಡ್ ತಂಡಗಳು ಸೇರಿದಂತೆ ಮೂರು ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಸತತ ಶೂನ್ಯ ಸಂಪಾದನೆ ಮಾಡಿದ್ದಾರೆ. ಇದಕ್ಕೂ ಮುನ್ನ ಹೊಟ್ಟೆ ನೋವಿನ ಕಾರಣಕ್ಕೆ ಅವರು ನಮೀಬಿಯಾ ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಇತ್ತೀಚಿನ ನ್ಯೂಝಿಲೆಂಡ್ ತಂಡದೆದುರಿನ ಟಿ-20 ಸರಣಿ ಸೇರಿದಂತೆ ಒಟ್ಟು ಒಂಬತ್ತು ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಐದು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ನಾಗಪುರದ ಪಂದ್ಯದಲ್ಲಿ 84 ರನ್, ಗುವಾಹಟಿ ಪಂದ್ಯದಲ್ಲಿ ಅಜೇಯ 68 ರನ್ ಹಾಗೂ ತಿರುವನಂತಪುರಂ ಪಂದ್ಯದಲ್ಲಿ 30 ರನ್ ಗಳಿಸಿದ್ದರು. ಆದರೆ, ರಾಯ್ಪುರ ಮತ್ತು ವಿಶಾಖಪಟ್ಟಣಂನಲ್ಲಿ ನಡೆದಿದ್ದ ಪಂದ್ಯಗಳಲ್ಲಿ ಶೂನ್ಯ ಸಂಪಾದನೆ ಮಾಡಿದ್ದರು.
ಬೆಂಗಳೂರು: ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯು ಕಾಯ್ದೆ ರೂಪ ಪಡೆಯಯವವರೆಗೆ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಪ್ರಮಾಣೀಕೃತ ಕಾರ್ಯವಿಧಾನ (ಎಸ್ಒಪಿ) ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿ, ಅರ್ಜಿ ವಿಲೇವಾರಿ ಮಾಡಿತು. ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಸಾಕಷ್ಟು ಸಮಯ ತೆಗೆದುಕೊಂಡು ಎಸ್ಒಪಿ ಸಿದ್ದಪಡಿಸಿದ್ದೇವೆ ಎಂದು ತಿಳಿಸಿ, ಜನವರಿ 13ರಂದು ರೂಪಿಸಿರುವ ಎಸ್ಒಪಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅಮೈಕಸ್ ಕ್ಯೂರಿ ಎಸ್. ಸುಶೀಲಾ ಅವರು, ಏನು ನಡೆಯಿತು ಎಂಬ ವಿಚಾರಕ್ಕೆ ನಾವು ಹೋಗುತ್ತಿಲ್ಲ. ನ್ಯಾಯಾಲಯ ಕೆಲವು ನಿರ್ದೇಶನಗಳನ್ನು ನೀಡಬೇಕು. ಈ ಅರ್ಜಿ ದಾಖಲಿಸಿಕೊಳ್ಳುವಾಗ ಒಂಬತ್ತು ಪ್ರಶ್ನೆಗಳನ್ನು ಎತ್ತಲಾಗಿತ್ತು. ಈ ಅರ್ಜಿಯ ಕುರಿತಾದ ಮಿತಿ ನನಗೆ ಅರವಿದೆ. ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯು ಕಾಯ್ದೆಯಾಗಿ ಜಾರಿಯಾಗುವವರೆಗೆ ಎಸ್ಒಪಿ ಜಾರಿಗೊಳಿಸಬೇಕು ಎಂದರು. ಆಗ ನ್ಯಾಯಪೀಠ, ಈಗ ಎಸ್ಒಪಿ ಸಿದ್ಧವಾಗಿದ್ದು, ಕಾನೂನು ಸದನ ಸಮಿತಿಯ ಮುಂದಿದೆ. ಇನ್ನೇನು ಬಾಕಿ ಇದೆ. ಕಾನೂನು ಜಾರಿಯಾದ ಮೇಲೆ ಅದು ಅಸ್ತಿತ್ವಕ್ಕೆ ಬರಲಿದೆ. ಅಲ್ಲಿಯವರೆಗೆ ಎಸ್ಒಪಿ ಪಾಲಿಸಬೇಕು. ಕಾಯ್ದೆ ಜಾರಿಯಾದ ಮೇಲೆ ಅಹವಾಲುಗಳಿದ್ದರೆ ಈ ಅರ್ಜಿಯನ್ನು ಮತ್ತೆ ತೆರೆಯಬಹುದು ಎಂದು ಹೇಳಿತು. ವಕೀಲ ಜಿ.ಆರ್. ಮೋಹನ್ ಅವರು, ಮುಂದಿನ ತಿಂಗಳು ಐಪಿಎಲ್ ನಡೆಸುವುದಕ್ಕೆ ಸಂಬಂಧಿಸಿದಂತೆ ಸಮಿತಿಯು ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಸಂಪುಟದಲ್ಲಿ ನಿರ್ಧರಿಸಲಾಗಿದ್ದು, ಗೃಹ ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಹೇಳಲಾಗಿದೆ. ಈ ವರದಿಯನ್ನು ನ್ಯಾಯಾಲಯದ ಮುಂದೆ ಇಡಲು ಆದೇಶಿಸಬೇಕು ಎಂದು ಕೋರಿದರು. ಅಂತಿಮವಾಗಿ ನ್ಯಾಯಪೀಠ, ಅಡ್ವೊಕೇಟ್ ಜನರಲ್ ಅವರು ಜನವರಿ 13ರಂದು ಜನಸಂದಣಿ ಮತ್ತು ಜನಸಮೂಹ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದ ಎಸ್ಒಪಿ ಸಲ್ಲಿಸಿದ್ದಾರೆ. ಅಮೈಕಸ್ ಕ್ಯೂರಿ ಅವರು ಎಸ್ಒಪಿಯಲ್ಲಿನ ಗಂಭೀರ ಅಂತರದತ್ತ ಬೆರಳು ಮಾಡಿದ್ದು, ಅದನ್ನು ಪರಿಗಣಿಸಲಾಗಿದೆ. ಮಸೂದೆಯೂ ಸದನ ಸಮಿತಿಯ ಪರಿಗಣನೆಗೆ ಸಲ್ಲಿಕೆಯಾಗಿದೆ. ಅಮೈಕಸ್ ಕ್ಯೂರಿ ಸಲಹೆಯನ್ನು ಸದನ ಸಮಿತಿಗೆ ತಿಳಿಸಲಾಗುವುದು ಎಂದು ಈ ಸಂಬಂಧ ಸರ್ಕಾರ ಮೆಮೊ ಸಲ್ಲಿಸಿದೆ. ಇದನ್ನು ಪರಿಗಣಿಸಿ, ಮಸೂದೆ ಜಾರಿಯಾಗುವವರೆಗೆ ಎಸ್ಒಪಿ ಜಾರಿಗೊಳಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.
ಅಗ್ರ ಬೀಫ್ ರಫ್ತುದಾರರಿಂದ ಬಿಜೆಪಿಗೆ 30 ಕೋಟಿ ರೂ. ದೇಣಿಗೆ: ಚುನಾವಣಾ ಆಯೋಗದ ದಾಖಲೆಗಳಿಂದ ಬಹಿರಂಗ
ಯುಪಿಎ ಸರ್ಕಾರ ಪಿಂಕ್ ರೆವಲ್ಯೂಷನ್ ನ್ನು (pink revolution) ಉತ್ತೇಜಿಸುತ್ತಿದೆ, ಗೋಹತ್ಯೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು 2014ರಲ್ಲಿ ನರೇಂದ್ರ ಮೋದಿ ಅವರು ಆರೋಪಿಸಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ನಮ್ಮ ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. ಭಾರತದಾದ್ಯಂತ ಬೃಹತ್ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮೋದಿ ಹೇಳಿದ್ದರು. ಭಾರತೀಯ ಸಂಸ್ಥೆಗಳು ಕೋಣದ ಮಾಂಸವನ್ನು ರಫ್ತು ಮಾಡುತ್ತಿವೆ, ಹಸುವಿನ ಮಾಂಸವನ್ನಲ್ಲ. ವಾಸ್ತವ ಹೀಗಿದ್ದರೂ ಹಿಂದುತ್ವ ಪ್ರಚಾರ ಕಾರ್ಯಕ್ರಮಗಳಲ್ಲಿ ಗೋಮಾಂಸ ಉದ್ಯಮವನ್ನೇ ಗುರಿ ಮಾಡಲಾಗುತ್ತಿದೆ. ಇಷ್ಟೆಲ್ಲ ಗುರಿ ಮಾಡಿದರೂ ಮೋದಿ ಸರ್ಕಾರದ ಅಡಿಯಲ್ಲಿ ಈ ಉದ್ಯಮವು ಬೆಳೆದಿದೆ. ಇದೊಂದು ಅಬ್ಬರವಿಲ್ಲದ ಯಶಸ್ಸು. ಭಾರತದ ಬೀಫ್ ಉದ್ಯಮದಲ್ಲಿ ಅಗ್ರ ರಫ್ತುದಾರರಾದ 160 ವರ್ಷ ಹಳೆಯ ಅಲ್ಲಾನಾ ಗ್ರೂಪ್ ಪ್ರಾಬಲ್ಯ ಸಾಧಿಸಿದೆ. 2024-25ರಲ್ಲಿ ಇರ್ಫಾನ್ ಅಲ್ಲಾನಾ ನೇತೃತ್ವದ ಗ್ರೂಪ್ ಬಿಜೆಪಿಗೆ 30 ಕೋಟಿ ರೂ.ಗಳನ್ನು ದೇಣಿಗೆ ನೀಡಿದೆ ಎಂದು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳು ತೋರಿಸಿವೆ ಎಂದು scroll.in ವರದಿ ಮಾಡಿದೆ. ಅಂದಹಾಗೆ 2025 ರಲ್ಲಿ ಭಾರತದ ಗೋಮಾಂಸ ರಫ್ತು 4 ಬಿಲಿಯನ್ ಡಾಲರ್ಗಳನ್ನು ದಾಟಿದೆ. ವಾಣಿಜ್ಯ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ 2018 ರ ನಂತರ ಮೊದಲ ಬಾರಿಗೆ ಈ ಮಟ್ಟವನ್ನು ಮೀರಿದೆ. ಇದಕ್ಕೆ ಸಮಾನಾಂತರವಾಗಿ, ಗುಂಪಿನ ಪ್ರಮುಖ ರಫ್ತು ಸಂಸ್ಥೆಯಾದ ಅಲ್ಲಾನಾಸನ್ಸ್ ಪ್ರೈವೇಟ್ ಲಿಮಿಟೆಡ್ ಕೂಡ 2018 ರ ನಂತರ ಮೊದಲ ಬಾರಿಗೆ 10,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಆದಾಯವನ್ನು ದಾಖಲಿಸಿದೆ. ಬಿಜೆಪಿಗೆ ಇಷ್ಟೊಂದು ದೇಣಿಗೆ ನೀಡಿದ್ದೇಕೆ? ಬಿಜೆಪಿಗೆ ಬಹುಮೊತ್ತದ ದೇಣಿಗೆ ನೀಡಲು ಕಾರಣವೇನು ಎಂದು scroll.in ಅಲ್ಲಾನಾ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕ ಫೌಝನ್ ಅಲವಿ ಅವರಲ್ಲಿ ಕೇಳಿದೆ. ಇದಕ್ಕೆ ಅವರು, ಮೋದಿ ಸರ್ಕಾರದ ಅಡಿಯಲ್ಲಿ ಸುಸ್ಥಿರ ಬೆಳವಣಿಗೆ ಗಾಗಿ ಸಕಾರಾತ್ಮಕ ಪರಿವರ್ತನೆಗಳು ನಡೆಯುತ್ತಿವೆ. ಅಲ್ಲಾನಾ ಗ್ರೂಪ್ ವಿಕಸಿತ್ ಭಾರತದ ಮತ್ತಷ್ಟು ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಪ್ರಯತ್ನಿಸಿದೆ ಎಂದು ಉತ್ತರಿಸಿದ್ದಾರೆ. ಕಷ್ಟದ ಸಮಯಗಳು: 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರ ಮತ್ತು ಮಾಂಸ ಉದ್ಯಮದ ನಡುವಿನ ಸಂಬಂಧ ಬದಲಾಯಿತು. ಅಲ್ಲಾನಾ ಗ್ರೂಪ್ ಪ್ರಮುಖ ಸಂಸ್ಕರಣಾ ಘಟಕಗಳನ್ನು ನಿರ್ವಹಿಸುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದಾರೆಂದು ಶಂಕಿಸಿ ಸ್ವಘೋಷಿತ ಗೋರಕ್ಷಕರು ಮಾಂಸ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದರಿಂದ ಅದರ ಪೂರೈಕೆ ಸರಪಳಿ ಕುಸಿಯಿತು.ಸ್ವಘೋಷಿತ ಗೋರಕ್ಷಕರು ವಿಶೇಷವಾಗಿ ಮುಸ್ಲಿಂ ವ್ಯಕ್ತಿಗಳನ್ನೇ ಗುರಿಯಾಗಿಸಿದ್ದರು. 2019 ರ ಜನವರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಲ್ಲಾನಾ ಗ್ರೂಪ್ಗೆ ಸಂಬಂಧಿಸಿದ 100 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿತು. ಎಪ್ರಿಲ್ನಲ್ಲಿ ಈ ಗ್ರೂಪ್ ಸುಮಾರು 2,000 ಕೋಟಿ ರೂಪಾಯಿಗಳ ತೆರಿಗೆ ವಂಚಿಸಿದೆ ಎಂದು ಇಲಾಖೆ ಹೇಳಿಕೊಂಡಿದೆ. ಆದಾಗ್ಯೂ, ಅಲ್ಲಾನಾ ಗ್ರೂಪ್ ಆರೋಪಗಳಿಗೆ ಪ್ರತಿಕ್ರಿಯಿಸಲಿಲ್ಲ. ಮುಂದೇನಾಯ್ತು?: ಈ ಆರೋಪಗಳ ನಂತರದ ತಿಂಗಳುಗಳಲ್ಲಿ ಅಲ್ಲಾನ ಗ್ರೂಪ್ ಚುನಾವಣಾ ಬಾಂಡ್ ಗಳನ್ನು ಖರೀದಿಸಲು ಪ್ರಾರಂಭಿಸಿತು. ಆ ವರ್ಷ ಅವರು 7 ಕೋಟಿ ರೂ. ಮೌಲ್ಯದ ಬಾಂಡ್ಗಳನ್ನು ಖರೀದಿಸಿದ್ದಾರೆ ಎಂದು ಡೇಟಾ ತೋರಿಸುತ್ತದೆ. ಇದರಲ್ಲಿ ಅಲ್ಲಾನಾ ಗ್ರೂಪ್ ಶಿವಸೇನಾಗೆ 5 ಕೋಟಿ ರೂ. ಮತ್ತು ಬಿಜೆಪಿಗೆ 2 ಕೋಟಿ ರೂ. ದೇಣಿಗೆ ನೀಡಿತ್ತು. ಆ ಸಮಯದಲ್ಲಿ, ಶಿವಸೇನಾ ಮತ್ತು ಬಿಜೆಪಿ ಮುಂಬೈ ಮತ್ತು ಮಹಾರಾಷ್ಟ್ರ ರಾಜ್ಯ ಎರಡರಲ್ಲೂ ಅಧಿಕಾರದಲ್ಲಿದ್ದವು. ಅಲ್ಲಾನ ಗ್ರೂಪ್ ಪ್ರಧಾನ ಕಚೇರಿ ಇರುವುದು ಕೂಡಾ ಮುಂಬೈನಲ್ಲೇ . ಮೋದಿ ಪ್ರಧಾನಿಯಾಗಿ ಆಯ್ಕೆಯಾಗುವ ಮೊದಲು ಅಲ್ಲಾನ ಗ್ರೂಪ್ ಬಿಜೆಪಿಗೆ ನೇರ ದೇಣಿಗೆ ನೀಡಿತ್ತು. 2013-14ರಲ್ಲಿ ಅದು ಬಿಜೆಪಿಗೆ 2 ಕೋಟಿ ರೂ, 2014-15ರಲ್ಲಿ 50 ಲಕ್ಷ ರೂ. ದೇಣಿಗೆ ನೀಡಿತ್ತು. 2019 ರಲ್ಲಿ ಚುನಾವಣಾ ಬಾಂಡ್ ದೇಣಿಗೆಗಳಲ್ಲಿ 2 ಕೋಟಿ ರೂ ನೀಡಲಾಗಿತ್ತು. 2023-24ರಲ್ಲಿ ಈ ಗ್ರೂಪ್ ತನ್ನ ಸಂಸ್ಥೆ ಫ್ರಿಜೆರಿಯೊ ಕನ್ಸರ್ವಾ ಅಲ್ಲಾನಾ ಪ್ರೈವೇಟ್ ಲಿಮಿಟೆಡ್ ಮೂಲಕ ಬಿಜೆಪಿಗೆ ಮತ್ತೆ 2 ಕೋಟಿ ರೂ. ದೇಣಿಗೆ ನೀಡಿತು. ಇದು 2024-25ರಲ್ಲಿ 15 ಪಟ್ಟು ಹೆಚ್ಚಾಗಿ 30 ಕೋಟಿ ರೂ.ಗಳಿಗೆ ತಲುಪಿದೆ. ಈ ದೇಣಿಗೆಯನ್ನು ಅಲ್ಲಾನಾಸನ್ಸ್ ಪ್ರೈವೇಟ್ ಲಿಮಿಟೆಡ್, ಫ್ರಿಜೆರಿಯೊ ಕನ್ಸರ್ವಾ ಅಲ್ಲಾನಾ ಪ್ರೈವೇಟ್ ಲಿಮಿಟೆಡ್, ಫ್ರಿಗೊರಿಫಿಕೊ ಅಲ್ಲಾನಾ ಪ್ರೈವೇಟ್ ಲಿಮಿಟೆಡ್ ಮತ್ತು ಇಂಡಾಗ್ರೊ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ನಾಲ್ಕು ಸಂಸ್ಥೆಗಳ ಮೂಲಕ ನೀಡಲಾಗಿದೆ. ಹೊಸ ಮಾರುಕಟ್ಟೆಗಳು: 2019 ರಲ್ಲಿ ಅಲ್ಲಾನಾ ಗ್ರೂಪ್ ತೆರಿಗೆ ಒತ್ತಡವನ್ನು ಎದುರಿಸುತ್ತಿರುವಾಗ ದೇಣಿಗೆ ನೀಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಅವರ ಇತ್ತೀಚಿನ 30 ಕೋಟಿ ರೂ. ದೇಣಿಗೆ ಭಾರತದ ಆರ್ಥಿಕ ಬೆಳವಣಿಗೆಗೆ ಹೊಂದಿಕೆಯಾಗುವ ಕಾರ್ಯತಂತ್ರದ ಕ್ರಮವಾಗಿದೆ. ಬೀಫ್ ಉದ್ಯಮದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಆದರೆ 2019 ರಲ್ಲಿ ಚೀನಾ ತನ್ನ ಆಗ್ನೇಯ ಏಷ್ಯಾದ ಗಡಿಯಲ್ಲಿ ಬೂದು ಮಾರುಕಟ್ಟೆ (grey trade) ಯನ್ನು ನಿರ್ಬಂಧಿಸಿದಾಗ ಭಾರತ ಹೊಡೆತ ಅನುಭವಿಸಿತು. ಈ ವ್ಯಾಪಾರವು ಭಾರತೀಯ ಗೋಮಾಂಸವನ್ನು ಅದರ ಅತಿದೊಡ್ಡ ಮಾರುಕಟ್ಟೆಯಾದ ವಿಯೆಟ್ನಾಂನಿಂದ ಚೀನಾಕ್ಕೆ ಹರಿಯಲು ಅವಕಾಶ ಮಾಡಿಕೊಟ್ಟಿತು. ವಿಯೆಟ್ನಾಂಗೆ ಭಾರತದ ಗೋಮಾಂಸ ರಫ್ತು 60% ಕ್ಕಿಂತ ಹೆಚ್ಚು ಕುಗ್ಗಿದ್ದರಿಂದ, ನಷ್ಟವನ್ನು ಸರಿದೂಗಿಸಲು ಅಲ್ಲಾನ್ ಗ್ರೂಪ್ ನಂಥಾ ರಫ್ತುದಾರರು ಹೊಸ ಮಾರುಕಟ್ಟೆಗಳನ್ನು ಹುಡುಕಿ ಇಸ್ಲಾಮಿಕ್ ದೇಶಗಳಿಗೆ ಹೊರಟರು. ಈಜಿಪ್ಟ್ ಮತ್ತು ಮಲೇಷ್ಯಾ ಹೆಚ್ಚು ಭಾರತೀಯ ಗೋಮಾಂಸವನ್ನು ಖರೀದಿಸಲು ಪ್ರಾರಂಭಿಸಿದವು. 2017-2018 ಕ್ಕೆ ಹೋಲಿಸಿದರೆ ಈ ದೇಶಗಳಿಗೆ ರಫ್ತು 2024-25 ರಲ್ಲಿ 1.2 ಬಿಲಿಯನ್ ಡಾಲರ್ (ಅಥವಾ 10,800 ಕೋಟಿ ರೂ.) ಆಗಿ ದ್ವಿಗುಣಗೊಂಡಿದೆ. ದೇಶದಲ್ಲಿ ಗೋಮಾಂಸದ ವಿರುದ್ಧ ಟೀಕೆಗಳ ಹೊರತಾಗಿಯೂ ಮೋದಿ ಸರ್ಕಾರ ಈ ವಿಸ್ತರಣೆಯನ್ನು ಸುಗಮಗೊಳಿಸಿದೆ. ಜನವರಿ 2023 ರಲ್ಲಿ ಭಾರತ ಸರ್ಕಾರವು ಇಂಡೋನೇಷ್ಯಾ ಸರ್ಕಾರದಲ್ಲಿ ಕೋಣದ ಮಾಂಸವನ್ನು ಹೆಚ್ಚು ಖರೀದಿಸುವಂತೆ ಕೇಳಿಕೊಂಡಿತ್ತು ಎಂದು ವರದಿಯಾಗಿದೆ . ಆದರೆ ಅದರ ಪ್ರತಿಕ್ರಿಯೆ ನೀರಸವಾಗಿತ್ತು. ಆ ತಿಂಗಳು, ಸರ್ಕಾರವು ಮಾಂಸ ರಫ್ತಿಗೆ ಹಲಾಲ್ ಪ್ರಮಾಣೀಕರಣವನ್ನು ಒದಗಿಸಲು ಮಾರ್ಗಸೂಚಿಗಳನ್ನು ರೂಪಿಸಿತು.ಇದು ಅಕ್ಟೋಬರ್ 2024 ರಲ್ಲಿ ಜಾರಿಗೆ ಬಂದಿತು. ಈ ಕ್ರಮವು ಪಶ್ಚಿಮ ಏಷ್ಯಾ, ಟರ್ಕಿ ಮತ್ತು ಸಿಂಗಾಪುರದ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡಿತು. ಮಾರ್ಗಸೂಚಿಗಳನ್ನು ರೂಪಿಸಿದ ಕೆಲವು ದಿನಗಳ ನಂತರ ಈಜಿಪ್ಟ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ ಕಾರ್ಯಸೂಚಿಯಲ್ಲಿ ಆಹಾರ ಭದ್ರತೆ ವಿಷಯ ಇತ್ತು. 2024-25ರಲ್ಲಿ, ಈಜಿಪ್ಟ್ ಭಾರತದ ಎರಡನೇ ಅತಿದೊಡ್ಡ ಗೋಮಾಂಸ ರಫ್ತು ಮಾರುಕಟ್ಟೆಯಾಗಿತ್ತು. ಜುಲೈ 2024 ರಲ್ಲಿ ರಫ್ತು ಮಾಡಿದ ಮಾಂಸದ ಹಲಾಲ್ ಮಾನದಂಡಗಳನ್ನು ಮೇಲ್ವಿಚಾರಣೆ ಮಾಡಲು ಅರಬ್ ರಾಷ್ಟ್ರವು ಭಾರತದಲ್ಲಿ ಕಚೇರಿಯನ್ನು ತೆರೆಯುವುದಾಗಿ ಘೋಷಿಸಿತು. 2017 ಮತ್ತು 2021 ರ ನಡುವೆ ಭಾರಿ ಕುಸಿತ ಕಂಡಿದ್ದ ಅಲ್ಲಾನಾಸನ್ಸ್ ಪ್ರೈವೇಟ್ ಲಿಮಿಟೆಡ್ ನ ಆದಾಯವು ಈ ಅವಧಿಯಲ್ಲಿ ಚೇತರಿಸಿಕೊಂಡಿತು. ಕಂಪನಿಗಳ ರಿಜಿಸ್ಟ್ರಾರ್ಗೆ ಸಲ್ಲಿಸಿದ ದಾಖಲೆಗಳ ಪ್ರಕಾರ, 2021 ರಿಂದ ಪ್ರತಿ ವರ್ಷವೂ ಸಂಸ್ಥೆಯು ತನ್ನ ಆದಾಯವನ್ನು ಹೆಚ್ಚಿಸಿಕೊಂಡಿದೆ. ಇದು 2024-25 ರಲ್ಲಿ 10,320 ಕೋಟಿ ರೂ. ತಲುಪಿದೆ. ಈ ಬೆಳವಣಿಗೆಯು ಭಾರತದ ಗೋಮಾಂಸ ರಫ್ತಿನಲ್ಲಿನ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಮೋದಿ ಸರ್ಕಾರವು ಆದಾಯ ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವುದು ಮತ್ತು ಜಿಎಸ್ಟಿ ಚೌಕಟ್ಟನ್ನು ಸರಳೀಕರಿಸುವುದು/ಸುವ್ಯವಸ್ಥಿತಗೊಳಿಸುವುದು ಶ್ಲಾಘನೀಯ. ಕೇಂದ್ರ ಸರ್ಕಾರವು ಪ್ರಾರಂಭಿಸಿದ ಮಹತ್ವದ ಬೆಳವಣಿಗೆಯ ಪಥದ ಭಾಗವಾಗಿರುವುದಕ್ಕೆ ಅಲ್ಲಾನ್ ಗ್ರೂಪ್ ಬಹಳ ಹೆಮ್ಮೆಪಡುತ್ತದೆ ಎಂದ ಫೌಝನ್ ಅಲವಿ, ಸರ್ಕಾರದ ವ್ಯಾಪಾರ ರಾಜತಾಂತ್ರಿಕತೆ ಮತ್ತು ಹಲವಾರು ಮುಕ್ತ ವ್ಯಾಪಾರ ಒಪ್ಪಂದಗಳ ಪ್ರಾರಂಭವನ್ನು ಶ್ಲಾಘಿಸಿದ್ದಾರೆ. ಸೌಜನ್ಯ: scroll.in
India Weather: ಈ ಭಾಗಗಳಲ್ಲಿ ಮುಂದಿ 3 ದಿನ ಧಾರಾಕಾರ ಮಳೆ: ಐಎಂಡಿ ಮುನ್ಸೂಚನೆ
India Weather Forecast: ಬಂಗಾಳಕೊಲ್ಲಿಯ ನೈಋತ್ಯ ಮತ್ತು ಪಕ್ಕದ ಪ್ರದೇಶಗಳಲ್ಲಿ ಕಡಿಮೆ ಒತ್ತಡ ಪ್ರದೇಶವು ರೂಪುಗೊಂಡಿದೆ. ನೆರೆಯ ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲೂ ಮಳೆ ಆಗುವ ಸಾಧ್ಯತೆ ಇದೆ. ಮುಂದಿನ ಮೂರು ದಿನಗಳ ಅವಧಿಗೆ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ
ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ, ಒತ್ತಾಯದಿಂದ ಹಣ ನೀಡಲು ಯತ್ನ: ಬಸವರಾಜ ಬೊಮ್ಮಾಯಿ
ಹಾವೇರಿ: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ, ಬಂಧನವಾಗಿರುವ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ವಿರುದ್ಧ ಪಡ್ಯಂತ್ರ ನಡೆದಿದೆ. ಒತ್ತಾಯಪೂರ್ವಕವಾಗಿ ಅವರಿಗೆ ಹಣ ನೀಡುವ ಪ್ರಯತ್ನ ನಡೆದಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಪ್ರಕಾರ ಲಂಚ ಕೊಡುವ ಒತ್ತಾಯ ಮಾಡುವುದೂ ಕೂಡ ತಪ್ಪು ಹೀಗಾಗಿ ಎಲ್ಲ ಆಯಾಮಗಳಲ್ಲಿ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ
Kalaburagi | ಮಾ.1ರಿಂದ ಅಂತರರಾಷ್ಟ್ರೀಯ ಮಹಿಳಾ ಐಟಿಎಫ್ ಟೂರ್ನಿ : ಬಿ.ಫೌಝಿಯಾ ತರನ್ನುಮ್
ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ಐ.ಟಿ.ಎಫ್ 2026 ರ ಪಂದ್ಯಾವಳಿಯನ್ನು ಮಾ.1 ರಿಂದ 8 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದ್ದಾರೆ. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಇಂಟರ್ ನ್ಯಾಷನಲ್ ಮಹಿಳಾ ಐ.ಟಿ.ಎಫ್ 2026 ರ ಪಂದ್ಯಾವಳಿ ಹಮ್ಮಿಕೊಳ್ಳಲಾಗುತ್ತಿದ್ದು, ಆಯೋಜನೆಗೆ ಸಂಬಂಧಿಸಿದಂತೆ ಹಾಗೂ ಯಶಸ್ವಿಯಾಗಿ ಆಯೋಜಿಸಲು ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು. ಮಹಿಳಾ ಕ್ರೀಡಾಕೂಟ ಆಗಿರುವ ಕಾರಣಕ್ಕೆ ಹೆಚ್ಚಿನ ಭದ್ರತೆ ಇರಬೇಕು, ಯಾವುದೇ ಅವಘಡಗಳಾಗದಂತೆ ನೋಡಿಕೊಳ್ಳಬೇಕು. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ವಸತಿ ವ್ಯವಸ್ಥೆ ಚೆನ್ನಾಗಿ ಮಾಡಬೇಕು, ಅಲ್ಲಿ ಸಹ ಯಾರಿಗೂ ಯಾವುದೇ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿದಿನ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿಸಿ ಸಂಪೂರ್ಣ ದಿನದ ಅವರ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು, ಕಲಬುರಗಿಯಲ್ಲಿ ಮೊದಲ ಬಾರಿಗೆ ಮಹಿಳಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದ್ದು, ಸ್ಥಳೀಯ ಮಹಿಳಾ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಕಳೆದ ವರ್ಷದ ಲೆಕ್ಕಚಾರ ಪರಿಶೀಲಿಸಿ, ಈ ವರ್ಷ ಕಲಬುರಗಿ ನೆಕ್ಸ್ಟ್ ಅಡಿಯಲ್ಲಿ ಆಯೋಜಿಸಲಾಗುವುದು, ಅಗತ್ಯ ಅನುದಾನದ ಜೊತೆಗೆ ಸ್ಥಳೀಯ ದಾನಿಗಳ ಮುಖಾಂತರ ಕೊಡುಗೆಗಳನ್ನು ಪಡೆಯಬಹುದಾಗಿದೆ. ಬ್ರಾಂಡಿಂಗ್ ಬಗ್ಗೆ ಯೋಜಿಸಿ, ಪ್ರಯೋಜಕರನ್ನು ಹುಡುಕಬೇಕು, ಎಷ್ಟು ಆಟಗಾರರು ನಮ್ಮ ದೇಶದವರು ಹಾಗೂ ಹೊರ ದೇಶದವರು ಎಂದು ಗುರುತಿಸಿ ಊಟದ ಮೆನು ಸಿದ್ದಪಡಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ಇರಲಿ, ಆಟಗಾರರು ಅಥವಾ ಯಾರೇ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಸ್ಥಳದಲ್ಲಿ ವೈದ್ಯಕೀಯ ತಂಡಗಳೊಂದಿಗೆ ಆಂಬುಲೆನ್ಸ್ ಸಹ ಇರಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಅವಿನಾಶ್ ಶಿಂಧೆ, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಆಳಂದ | ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಆಳಂದ : ಆಳಂದ ತಾಲೂಕಿನ ಬಿಲಗುಂದಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗೌತಮ್ ಬುದ್ಧ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ವಿಶೇಷ ಶೈಕ್ಷಣಿಕ ಹಾಗೂ ಸನ್ಮಾನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಆಳಂದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ರಂಗಸ್ವಾಮಿ ಶೆಟ್ಟಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾಷಣದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕ-ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ಮಕ್ಕಳ ಭವಿಷ್ಯ ಉಜ್ವಲವಾಗಲು ಉತ್ತಮ ಮಾರ್ಗದರ್ಶನ ಅಗತ್ಯವೆಂದು ಅಭಿಪ್ರಾಯಪಟ್ಟರು. ಶಿಕ್ಷಣ ಸಂಯೋಜಕರಾದ ಪಂಕಜ್ ಪಾಟೀಲ್ ಮಾತನಾಡಿ, ಮುಂಬರುವ ದಿನಗಳಲ್ಲಿ 10ನೇ ಹಾಗೂ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಭಾವಚಿತ್ರ ಪೂಜೆಯನ್ನು ಮಹಾತ್ಮ ಗೌತಮ್ ಬುದ್ಧ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಜಯಕುಮಾರ ಎನ್. ಬಿಲಗುಂದಿ ಹಾಗೂ ಶಾಲೆಯ ಮುಖ್ಯಗುರು ಚಂದ್ರಕಾಂತ ಎನ್. ಬಬಲಾದ ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಸುಧಾಕರ ಬಿ. ಕಾಮನ್ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಎನ್.ಎಚ್.ಪಾಟೀಲ, ಖ್ಯಾತ ಸಾಹಿತಿಗಳಾದ ದತ್ತಾತ್ರಯ ಇಕ್ಕಳಕಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಬಸವರಾಜ ಅಟ್ಟೂರ್, ಪಿಡಬ್ಲ್ಯುಡಿ ಲೆಕ್ಕಾಧಿಕಾರಿಗಳಾದ ದತ್ತಾತ್ರೇಯ ಎನ್. ಬಿಲಗುಂದಿ, ಸಹ ಶಿಕ್ಷಕರಾದ ವಿಜಯಲಕ್ಷ್ಮಿ ಡಿ. ಬಿಲಗುಂದಿ, ಸಂತೋಷಕುಮಾರ ಎನ್. ಬಿಲಗುಂದಿ, ನರೋಣಾ ಕ್ಲಸ್ಟರ್ CRP ಸಿದ್ದಪ್ಪ ಜಮಾದರ, ಚಿಂಚನಸೂರ ಕ್ಲಸ್ಟರ್ CRP ಧರ್ಮರಾಯ ಎಸ್. ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಲಗುಂದಾ ಶಾಲೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಸಹ ಶಿಕ್ಷಕರಾದ ಸಿದ್ದಪ್ಪ ಡಿ.ಬಿರಾದರ, ಪಂಡಿತರಾಯ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. 2024-25ನೇ ಸಾಲಿನ SSLC ಮತ್ತು PUC ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಬಿಲಗುಂದಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಹಾತ್ಮ ಗೌತಮ್ ಬುದ್ಧ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಮುಂದಿನ ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಲು ಶುಭ ಹಾರೈಸಲಾಯಿತು.

23 C