SENSEX
NIFTY
GOLD
USD/INR

Weather

30    C
...

ಸಿರುಗುಪ್ಪ | ಶಾನವಾಸಪುರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ: ಶಾಸಕ ಬಿ.ಎಂ. ನಾಗರಾಜ ಚಾಲನೆ

ಸಿರುಗುಪ್ಪ: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2025-26ನೇ ಸಾಲಿನ ಸಿಎಂ ಐಡಿಪಿ (ಮುಖ್ಯಮಂತ್ರಿ ಮೂಲಭೂತ ಸೌಕರ್ಯ ಅಭಿವೃದ್ಧಿ) ಯೋಜನೆಯಡಿ 15 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎಂ. ನಾಗರಾಜ ಶಂಕುಸ್ಥಾಪನೆ ನೆರವೇರಿಸಿದರು. ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ಶ್ರೀ ಸುಂಕ್ಲಮ್ಮ ದೇವಸ್ಥಾನದ ಸಮೀಪ ಈ ಸಮುದಾಯ ಭವನ ನಿರ್ಮಾಣವಾಗಲಿದ್ದು, ಗ್ರಾಮಸ್ಥರಿಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ್ ರಾಜೇಗೌಡ, ನಾಗರಾಜ, ಶರಣಗೌಡ, ಅಯ್ಯಪ್ಪ, ನೀಲಕಂಠಗೌಡ, ಅಕ್ಬರ್ ಸಾಬ್, ಇಸ್ಮಾಯಿಲ್ ಸಾಬ್, ಜೀಲಾನ್ ಸಾಬ್, ನಡವಿ ಶಂಕ್ರಪ್ಪ, ಹೊನ್ನೂರಪ್ಪ, ಎರೆಪ್ಪ ಗೌಡ, ತಿಪ್ಪೇರುದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ರಾಜ್ ಎಇಇ ಇಂಜಿನಿಯರ್ ತಿಪ್ಪೇಸ್ವಾಮಿ, ಶಾನವಾಸಪುರ ಗ್ರಾಮ ಪಂಚಾಯತ್ ಪಿಡಿಓ ವೀರೇಶ್, ಬಿ. ವೆಂಕಟೇಶ್, ಹೆಚ್. ಗಣೇಶ್, ಟಿ.ಸಿ. ಮೋಹನ್, ಬಿ.ಎಂ. ಮಣಿಕಂಠ ನಾಯಕ್ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 10:25 pm

ಸಿರುಗುಪ್ಪ | ದಾಸಪುರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು: ಶಾಸಕ ಬಿ.ಎಂ.ನಾಗರಾಜ ಚಾಲನೆ

ಸಿರುಗುಪ್ಪ: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 2025-26ನೇ ಯೋಜನೆಯಡಿ 30 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎಂ. ನಾಗರಾಜ ಅಡಿಗಲ್ಲು ನೆರವೇರಿಸಿದರು. ತಾಲೂಕಿನ ದಾಸಪುರ ಗ್ರಾಮದಲ್ಲಿ ಸಿರಿಗೇರಿ ಮಲ್ಲಪ್ಪನ ಮನೆಯಿಂದ ತಳವಾರ ರೇಣುಕಮ್ಮನ ಮನೆಯವರೆಗೆ ಹಾಗೂ ಟಿ. ದ್ಯಾವಣ್ಣ ಮನೆಯಿಂದ ತಳವಾರ ಮಲ್ಲಯ್ಯನ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮುಖಂಡರಾದ ಕೊಂಚಿಗೇರಿ ಸಿದ್ದನಗೌಡ, ದಾಸಪುರ ಶೇಖರಪ್ಪ, ಬಸವರಾಜ, ರುದ್ರಪ್ಪ, ಹನುಮಂತಪ್ಪ, ಬುಳ್ಳಪ್ಪ, ದೊಡ್ಡ ಮುದುಕನಗೌಡ, ವೀರಭದ್ರಗೌಡ, ಡಿ. ನಾಗಪ್ಪ, ಮುದ್ದು ವೀರಪ್ಪ, ಸಣ್ಣ ಮುದುಕನಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ರಾಜ್ ಎಇಇ ಇಂಜಿನಿಯರ್ ತಿಪ್ಪೇಸ್ವಾಮಿ, ಬಿ. ವೆಂಕಟೇಶ್, ಹೆಚ್. ಗಣೇಶ್, ಟಿ.ಸಿ. ಮೋಹನ್, ಬಿ.ಎಂ. ಮಣಿಕಂಠ ನಾಯಕ್ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 10:23 pm

ಸಿರುಗುಪ್ಪ | ಜುಮ್ಮಾ ಮಸೀದಿ ಅಭಿವೃದ್ಧಿಗೆ 20 ಲಕ್ಷ ರೂ. ಮಂಜೂರು : ಶಾಸಕರಿಂದ ಕಾಮಗಾರಿ ಪರಿಶೀಲನೆ

ಸಿರುಗುಪ್ಪ: ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯ ಅನುದಾನದಡಿ ಜುಮ್ಮಾ ಮಸೀದಿ ಅಭಿವೃದ್ಧಿಗೆ 20 ಲಕ್ಷ ರೂ. ಮಂಜೂರು ಮಾಡಲಾಗಿದ್ದು, ಶಾಸಕ ಬಿ.ಎಂ. ನಾಗರಾಜ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದ ಅವರು, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಕುಮಾರ್ ರಾಜೇಗೌಡ, ಅಕ್ಬರ್ ಸಾಬ್, ಬಳಿಗೇರು ಪೀರಾ ಸಾಬ್, ಚೀಣಿಗಿ ಸಾಬ್, ಟಿ. ಬಾಷಾ, ಟಿ. ಶೇಖ್ ಸಾಬ್, ಇಸ್ಮಾಯಿಲ್ ಸಾಬ್, ಜಿಲಾನ್ ಸಾಬ್, ಅಬ್ದುಲ್ ನಬಿ, ನಾಗರಾಜ, ಶರಣಗೌಡ, ನೀಲಕಂಠಗೌಡ, ಹೆಚ್. ಗಣೇಶ್, ಟಿ.ಸಿ. ಮೋಹನ್, ಬಿ.ಎಂ. ಮಣಿಕಂಠ ನಾಯಕ್ ಸೇರಿದಂತೆ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 10:21 pm

ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

ಬ್ರಹ್ಮಾವರ: ವಿಪರೀತ ಕುಡಿತದ ಚಟ ಹಾಗೂ ಮದುವೆ ಆಗದೇ ಇರುವ ಬಗ್ಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚೇರ್ಕಾಡಿ ಗ್ರಾಮದ ರಾಧಾ ಎಂಬವರ ಮಗ ಮಂಜುನಾಥ(39) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಎ.12ರಂದು ಮಧ್ಯಾಹ್ನ ಮನೆಯ ಎದುರು ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರ್ವ: ಮದ್ಯಪಾನ ಮಾಡುವ ಚಟ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶಿರ್ವ ಮಟ್ಟಾರು ನಿವಾಸಿ ಪ್ರಕಾಶ್ ಆಚಾರ್ಯ(38) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.13ರಂದು ನಸುಕಿನ ವೇಳೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Apr 2026 10:16 pm

ಬಾವಿಗೆ ಬಿದ್ದು ಬಾಲಕ ಮೃತ್ಯು

ಕಾರ್ಕಳ, ಎ.13: ಬಾವಿಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಬೋಳ ಗ್ರಾಮದ ಪುರ್ಲಡ್ಕ ಪರಾರಿ ಎಂಬಲ್ಲಿ ಎ.12ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಪರಾರಿ ನಿವಾಸಿ ರಾಜೇಶ್ ಶೆಟ್ಟಿ ಎಂಬವರ ಮಗ ರಿತಿಕ್ ಆರ್.ಶೆಟ್ಟಿ(11) ಎಂದು ಗುರುತಿಸಲಾಗಿದೆ. ರಾಜೇಶ್ ಶೆಟ್ಟಿ ತಮ್ಮ ಮನೆಯ ಮುಂದಿನ ಅಡಿಕೆ ತೋಟಕ್ಕೆ ನೀರು ಬಿಡಲು ನೀರಿನ ಪಂಪ್ ಸ್ವಿಚ್ ಹಾಕಿದ್ದು, ಆಗ ಪೈಪ್‌ನಲ್ಲಿ ನೀರು ಬರುತ್ತಿರಲಿಲ್ಲ. ಈ ವೇಳೆ ಇವರ ಮಗ ರಿತಿಕ್ ಶೆಟ್ಟಿ ಬಾವಿಯ ಬಳಿಗೆ ಹೋಗಿ, ಬಾವಿಯಲ್ಲಿ ಅಳವಡಿಸಿದ್ದ ಪೈಪ್‌ನ್ನು ಮೇಲಕ್ಕೆತ್ತಲು ಪ್ರಯತ್ನಿಸಿದನು ಎನ್ನಲಾಗಿದೆ. ಆಗ ಅವರು ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Apr 2026 10:15 pm

ಲಾಡ್ಜ್‌ನಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿ ಮೃತ್ಯು

ಮಣಿಪಾಲ, ಎ.13: ಲಾಡ್ಜ್‌ನಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎ.12ರಂದು ರಾತ್ರಿ ವೇಳೆ ಮಣಿಪಾಲದ ಈಶ್ವರನಗರ ಎಂಬಲ್ಲಿ ನಡೆದಿದೆ. ಮೃತರನ್ನು ದಾವಣಗೆರೆಯ ಮಾರುತಿ ಬಿ.ಎನ್.(41) ಎಂದು ಗುರುತಿಸ ಲಾಗಿದೆ. ಇವರು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ತಮ್ಮ ಊರಿನಿಂದ ಹೊರಟು ರಾತ್ರಿ ಮಣಿಪಾಲ ತಲುಪಿದ್ದು, ರಾತ್ರಿ ಮಣಿಪಾಲದ ಈಶ್ವರನಗರ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡಿ ಮಲಗಿದ್ದ ಇವರು ಎ.13ರಂದು ಬೆಳಗ್ಗೆ ಎಬ್ಬಿಸುವಾಗ ಮೃತಪಟ್ಟಿ ರುವುದು ಕಂಡುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Apr 2026 10:13 pm

ಎಂಬಿಬಿಎಸ್, ಬಿಇ, ಸಿಎ ಹೊರತಾದ ಅವಕಾಶಗಳ ಅರಿವು ಮೂಡಿಸಬೇಕು: ಸಿಇಓ ಪ್ರತೀಕ್ ಬಾಯಲ್

ಉಡುಪಿ ಡಯಟ್‌ನಲ್ಲಿ ವೃತ್ತಿ ಮಾರ್ಗದರ್ಶನ ಕೇಂದ್ರ ಉದ್ಘಾಟನೆ

ವಾರ್ತಾ ಭಾರತಿ 13 Apr 2026 10:10 pm

ಅಫಜಲಪುರ ಕಾಂಗ್ರೆಸ್‌ನಲ್ಲಿ ಅಸಮಾಧಾನ : ಶಾಸಕ ಎಂ.ವೈ ಪಾಟೀಲ್ ವಿರುದ್ಧ ಗುತ್ತೇದಾರ್ ಬಣ ಆಕ್ರೋಶ

ಕಲಬುರಗಿ: ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಹಾಗೂ ಅವರ ಪುತ್ರ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರ ವರ್ತನೆಗೆ ವಿರೋಧವಾಗಿ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಭುಗಿಲೆದ್ದಿದ್ದು, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತೇದಾರ್ ಅವರು, ತಂದೆ-ಮಗ ಇಬ್ಬರೂ ಸ್ವಜಾತಿ ಪರ ಆಡಳಿತ ನಡೆಸುತ್ತಿದ್ದು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡರಿಗೆ ಅಗೌರವ ತೋರಲಾಗುತ್ತಿದೆ ಎಂದು ಹೇಳಿದರು. ಶಾಸಕರು ವಯಸ್ಸಿನ ಕಾರಣದಿಂದ ಹೆಚ್ಚಿನ ಅಧಿಕಾರವನ್ನು ಪುತ್ರನಿಗೆ ಒಪ್ಪಿಸಿದ್ದರಿಂದ, ಅರುಣಕುಮಾರ್ ಪಾಟೀಲ್ ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ನೇಮಕಾತಿಗಳನ್ನು ಒಂದೇ ಜಾತಿಗೆ ನೀಡುತ್ತಿದ್ದಾರೆ. 26 ಸೋಸೈಟಿಗಳಲ್ಲಿ 14ನ್ನು ಒಂದೇ ಜಾತಿಗೆ ನೀಡಲಾಗಿದ್ದು, ಕೇವಲ ಒಂದನ್ನು ಮಾತ್ರ ದಲಿತ ಸಮುದಾಯಕ್ಕೆ ನೀಡಲಾಗಿದೆ ಎಂದು ಆರೋಪಿಸಿದರು. ಇದಲ್ಲದೆ, ವಿವಿಧ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿಗೆ ನೀಡಿ ಭ್ರಷ್ಟಾಚಾರ ನಡೆಸಲಾಗುತ್ತಿದೆ. ವಸತಿ ಯೋಜನೆಗಳಲ್ಲಿಯೂ ಬೆಂಬಲಿಗರಿಂದ ಬಡವರಿಗೆ ಹಣ ಕೇಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಹೇಳಿದರು. ಈ ಎಲ್ಲಾ ವಿಚಾರಗಳ ಕುರಿತು ಪಕ್ಷದ ಹೈಕಮಾಂಡ್‌ಗೆ ನಿಯೋಗದೊಂದಿಗೆ ದೂರು ಸಲ್ಲಿಸಲಾಗುವುದು ಎಂದು ಗುತ್ತೇದಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾನಾಸಾಹೇಬ್, ಮಲ್ಲಿನಾಥ, ವಿಶ್ವನಾಥ ಕರ್ನಾಡ್, ಶ್ರೀಮಂತ, ಸಿದ್ದರಾಮ ಸಾಲಿಮನಿ, ದೇವೇಂದ್ರ ಜಮಾದಾರ್, ಜಮೀಲ್ ಗೌಂಡಿ, ವಿಜಯಕುಮಾರ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. “ನಾನು ಯಾವ ಪಕ್ಷದಲ್ಲಿದ್ದೇನೆ ಎಂದು ಶಾಸಕರು ಹೇಳುತ್ತಿದ್ದಾರೆ. ನಾನು 17 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಬ್ಲಾಕ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅರುಣಕುಮಾರ್ ಹುಟ್ಟುವ ಮುಂಚೆಲೇ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಅಂತಹ ವ್ಯಕ್ತಿಗೆ ಕೆಕೆಆರ್‌ಟಿಸಿ ಅಧ್ಯಕ್ಷ ಸ್ಥಾನ ನೀಡಲು ಯಾವ ನೈತಿಕತೆ?” -ಮಕ್ಬೂಲ್ ಪಟೇಲ್, ಕಾಂಗ್ರೆಸ್ ಮುಖಂಡ “ಪಕ್ಷಕ್ಕೆ ಮುಜುಗರ ಉಂಟುಮಾಡುವ ಕೆಲಸ ನಾವು ಮಾಡುವುದಿಲ್ಲ. ಹೈಕಮಾಂಡ್ ಆದೇಶದ ಮೇರೆಗೆ 2023ರಲ್ಲಿ ಎಂ.ವೈ ಪಾಟೀಲ್ ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದೇವೆ. ಆದರೆ ಮೂರು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಶಾಸಕರು ಅಫಜಲಪುರದಲ್ಲೇ ನೆಲೆಸಬೇಕು, ಕಾರ್ಯಕರ್ತರಿಗೆ ಸೌಲಭ್ಯ ಒದಗಿಸಬೇಕು.” -ಜೆ.ಎಂ. ಕೊರಬು, ಹಿರಿಯ ಮುಖಂಡ

ವಾರ್ತಾ ಭಾರತಿ 13 Apr 2026 10:09 pm

ಹುಮನಾಬಾದ್‌ | ವಿವಿಧ ಕಾಮಗಾರಿಗಳಿಗೆ ಶಾಸಕ ಸಿದ್ದು ಪಾಟೀಲ್ ಶಂಕುಸ್ಥಾಪನೆ

ಹುಮನಾಬಾದ್: ಪಟ್ಟಣದ ಬೀರಲಿಂಗೇಶ್ವರ್ ದೇವಸ್ಥಾನ ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿದ್ದು ಪಾಟೀಲ್ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಅನುದಾನದಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಹುಮನಾಬಾದ್ ಪಟ್ಟಣಕ್ಕೆ 10 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದೆ. ಅದರಂತೆ ಕುರುಬ, ಕೋಲಿ, ಹೇಳುವ ಹಾಗೂ ಭೂವಿ ಸಮಾಜಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ” ಎಂದು ತಿಳಿಸಿದರು. ಪಟ್ಟಣದಲ್ಲಿ ಜಾತಿ ತಾರತಮ್ಯವಿಲ್ಲದೆ ಎಲ್ಲ ಸಮುದಾಯಗಳು ಒಂದಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತೋಷಕರ ಸಂಗತಿ. ಎಲ್ಲಾ ವರ್ಗಗಳ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದರು. ಸರ್ಕಾರದ ಅನುದಾನ ಹಂಚಿಕೆ ಕುರಿತು ಆರೋಪಿಸಿದ ಅವರು, “ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ 50 ಕೋಟಿ ರೂ. ನೀಡುತ್ತಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಶಾಸಕರಿರುವ ಕ್ಷೇತ್ರಗಳಿಗೆ 25–30 ಕೋಟಿ ರೂ. ಮಾತ್ರ ನೀಡುತ್ತಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಹಾಲುಮತ ಸಮಾಜದ ಬಹುಕಾಲದ ಬೇಡಿಕೆ ಈಡೇರಿದ್ದು ಸಂತೋಷದ ವಿಷಯವಾಗಿದೆ ಎಂದರು. ಹಿಂದೆ ಜಾಗದ ಸಮಸ್ಯೆಯಿಂದ ಬಜೆಟ್ ಮಂಜೂರು ಸಾಧ್ಯವಾಗಿರಲಿಲ್ಲ. ಆದರೆ ಈಗ ಸಿಎಂ ಅನುದಾನದಲ್ಲಿ 1 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಶೀಘ್ರ ಆರಂಭವಾಗಬೇಕು ಎಂದು ಅವರು ವಿನಂತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂತೋಷ್ ಪಾಟೀಲ್, ಸಮಾಜದ ಮುಖಂಡರಾದ ಸತೀಶ್ ರಾಂಪುರೆ, ಶಿವರಾಜ್ ಚೀನಕೆರಿ, ಅಶೋಕ್ ಸೊಂಡೆ, ವಿನಾಯಕ್ ಮಣಕೋಜಿ, ಸಂಜೀವಕುಮಾರ್ ವಡ್ಡನಕೇರಾ, ಶಿವಕುಮಾರ್ ಬೆಳೆಕೇರಿ, ಉಮೇಶ್ ದಾಡಗಿ ಹಾಗೂ ಸಚಿನ್ ಕಲ್ಲೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 10:06 pm

ಔರಾದ್ | ಸಮಾನತೆ, ಸ್ತ್ರೀ ಗೌರವವೇ ಬಸವ ತತ್ತ್ವಗಳ ಹೃದಯ : ಡಾ. ರೇಣುಕಾ ಸ್ವಾಮಿ

ಔರಾದ್: ಭಕ್ತಿ, ಜ್ಞಾನ ಹಾಗೂ ಸಮಾಜ ಪರಿವರ್ತನೆಯ ಸಂದೇಶ ಸಾರಿದ ಬಸವಣ್ಣನ ತತ್ವಗಳು ಮನುಷ್ಯನ ಬದುಕಿಗೆ ದಾರಿದೀಪ ಎಂದು ಸಾಹಿತಿ ಡಾ. ರೇಣುಕಾ ಸ್ವಾಮಿ ಹೇಳಿದರು. ತಾಲ್ಲೂಕಿನ ಎಕಲಾರ ಬಸವ ಮಂಟಪದಲ್ಲಿ ರವಿವಾರ ರಾತ್ರಿ ನಡೆದ 73ನೇ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವಣ್ಣರು ಸೂಚಿಸಿದ ಸರಳ ಮತ್ತು ಸತ್ಯ ಮಾರ್ಗದಲ್ಲಿ ನಡೆಯುವುದೇ ಬಸವ ಜ್ಯೋತಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಮೂಢ ನಂಬಿಕೆಗಳನ್ನು ತೊರೆದು, ಲಿಂಗ ಸಮಾನತೆ, ಸ್ತ್ರೀ ಗೌರವ ಮತ್ತು ಏಕದೇವೋಪಾಸನೆ ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪಳಗಾವೆ ಅವರು ಮಾತನಾಡಿ, ಇಂದಿನ ಯುವಕರಿಗೆ ಬಸವತತ್ವವು ಉತ್ತಮ ಸಂಸ್ಕಾರ ಕಲಿಸಿಕೊಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗುಲ್ಫಾವತಿ ಜೀರ್ಗೆ ಹಾಗೂ ನೀಲಮ್ಮ ಮಜಗೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು ಇದ್ದರು. ಶಿವಕುಮಾರ್ ಪಾರಾ ಸ್ವಾಗತಿಸಿದರು. ಶಿಕ್ಷಕ ಸತೀಶ್ ಮಜಗೆ ನಿರೂಪಿಸಿದರು.

ವಾರ್ತಾ ಭಾರತಿ 13 Apr 2026 10:01 pm

ಭಾಲ್ಕಿ | ಮಹಾಪುರುಷರ ಜಯಂತಿಯಲ್ಲಿ ಶಾಂತತೆ ಕಾಪಾಡಿ : ಸಿಪಿಐ ಹನುಮರೆಡ್ಡೆಪ್ಪ

ಭಾಲ್ಕಿ: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಬಸವೇಶ್ವರ ಅವರ ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಮದ್ಯ ನಿಷೇಧ ಜಾರಿ ಮಾಡಿ, ಶಾಂತಿ ಕಾಪಾಡಿಕೊಳ್ಳಬೇಕು ಎಂದು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಹನುಮರೆಡ್ಡೆಪ್ಪ ತಿಳಿಸಿದ್ದಾರೆ. ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಬಸವಣ್ಣ ಜಯಂತಿ ನಿಮಿತ್ತ ಅಬಕಾರಿ ಇಲಾಖೆಯ ಸಹಯೋಗದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಮಹಾಪುರುಷರ ಜಯಂತಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ವೈನ್‌ಶಾಪ್, ಧಾಬಾ ಹಾಗೂ ಹೋಟೆಲ್ ಮಾಲಿಕರ ಸಭೆ ಕರೆಯಲಾಗಿದೆ. ಎಲ್ಲಾ ಅಂಗಡಿಗಳು ಮತ್ತು ಹೋಟೆಲ್‌ಗಳು ಪ್ರತಿದಿನ ರಾತ್ರಿ 10 ಗಂಟೆಯವರೆಗೆ ಮಾತ್ರ ತೆರೆಯಬೇಕು. ನಂತರ ಕಡ್ಡಾಯವಾಗಿ ಮುಚ್ಚಬೇಕು ಎಂದು ಸೂಚನೆ ನೀಡಿದರು. ಧಾಬಾಗಳಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಬಾರದು. ಎಲ್ಲಾ ಹೋಟೆಲ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು. ಒಟ್ಟಾರೆ ಜಯಂತಿ ಸಮಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆಯ ಪಿಎಸ್‌ಐ ಅಶೋಕ್ ಪಾಟೀಲ್, ಮೆಹಕರ್ ಪೊಲೀಸ್ ಠಾಣೆಯ ಪಿಎಸ್‌ಐ ಸುದರ್ಶನ್ ರೆಡ್ಡಿ, ಖಟಕಚಿಂಚೋಳಿ ಠಾಣೆಯ ಪಿಎಸ್‌ಐ ಪ್ರಭಾಕರ್ ಪಾಟೀಲ್, ಧನ್ನೂರ್ ಠಾಣೆಯ ಪಿಎಸ್‌ಐ ರಾಜಕುಮಾರ್ ಜಾಮಗೊಂಡ್ ಸೇರಿದಂತೆ ಇತರರು ಇದ್ದರು.

ವಾರ್ತಾ ಭಾರತಿ 13 Apr 2026 10:00 pm

ರಾಯಚೂರು | ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಸಂಸದರ ಕಚೇರಿ ಮುಂದೆ ಪ್ರತಿಭಟನೆ

ರಾಯಚೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳ ಜಾರಿಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ರಾಜ್ಯದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ–ಎನ್‌ಡಿಎ ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು. ಜೊತೆಗೆ ಇದನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿ, ಕೇಂದ್ರ ಮಟ್ಟದಲ್ಲಿ ಶೇ.17 ಮತ್ತು ಶೇ.7ರ ಮೀಸಲಾತಿ ಜಾರಿಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲೆಯ ಸಂಸದರು ಈ ವಿಷಯದಲ್ಲಿ ಮುತುವರ್ಜಿ ವಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಆಗ್ರಹಿಸಿದರು. ನಿರುದ್ಯೋಗ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಬಾರದು. ಸುಮಾರು 3 ಲಕ್ಷ ಖಾಲಿ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50 ಮಿತಿಯನ್ನು ದಾಟಬಾರದು ಎಂಬುದಕ್ಕೆ ಉಲ್ಲೇಖವಾಗುತ್ತಿರುವ ಇಂದ್ರಾಸಹಾನಿ ಪ್ರಕರಣ ತೀರ್ಪಿನಲ್ಲಿಯೇ ವಿಶೇಷ ಸಂದರ್ಭಗಳಲ್ಲಿ ಮಿತಿಯನ್ನು ಮೀರುವ ಅವಕಾಶವಿದೆ. ಆದ್ದರಿಂದ ಜನಸಂಖ್ಯೆ ಆಧಾರಿತ ಮೀಸಲಾತಿ ನೀತಿಯನ್ನು ಜಾರಿಗೆ ತರಬೇಕು ಎಂದು ಹೇಳಿದರು. ನೇಮಕಾತಿ ಪ್ರಕ್ರಿಯೆಯಲ್ಲಿ ರೋಸ್ಟರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಎಲ್ಲಾ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಒಳಮೀಸಲಾತಿ ಜಾರಿಯಲ್ಲಿ ಸಮಾನ ಅವಕಾಶ ಕಲ್ಪಿಸಲು ಕಾನೂನು ತಜ್ಞರು, ಚಳವಳಿ ಸಂಘಟನೆಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಾಲೋಚನಾ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಪ್ರಮುಖರಾದ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪ್ರಮುಖರಾದ ಹೆಚ್.ಪದ್ಮಾ, ಡಿ.ಎಸ್.ಶರಣಬಸವ, ನರಸಣ್ಣ ನಾಯಕ, ಗಿರಿಯಪ್ಪ, ಶಬ್ಬೀರ ಜಾಲಹಳ್ಳಿ, ದೇವೇಂದ್ರಗೌಡ, ಗೋಕುರಮ್ಮ, ಗಂಗಮ್ಮ ಸೇರಿ ಅನೇಕರಿದ್ದರು

ವಾರ್ತಾ ಭಾರತಿ 13 Apr 2026 9:57 pm

ಉಪ್ಪಿನಂಗಡಿ: ಜೀಪು - ಥಾರ್ ಮಧ್ಯೆ ಅಪಘಾತ; ಸವಾರರಿಗೆ ಗಾಯ

ಉಪ್ಪಿನಂಗಡಿ: ಜೀಪು ಹಾಗೂ ಥಾರ್ ಜೀಪಿನ ಮಧ್ಯೆ ಢಿಕ್ಕಿಯಾಗಿ ಜೀಪು ಪಲ್ಟಿಯಾದ ಘಟನೆ ಉಪ್ಪಿನಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಜೀಪಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. 34 ನೆಕ್ಕಿಲಾಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಜೀಪುಗಳು ಸಂಚರಿ ಸುತ್ತಿದ್ದು, ಇಂದ್ರಪ್ರಸ್ಥ ವಿದ್ಯಾಲಯದ ಎದುರು ಬದಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀಪು ಚಾಲಕ ಸೇಸಪ್ಪ ಎಂಬ ವರು ತನ್ನ ಜೀಪನ್ನು ರಾಷ್ಟ್ರೀಯ ಹೆದ್ದಾರಿಯ ಬಲಬದಿಯಲ್ಲಿರುವ ಸರ್ವೀಸ್ ರಸ್ತೆಯತ್ತ ಏಕಾಏಕಿ ತಿರುಗಿಸಿದ್ದು, ಈ ಸಂದರ್ಭ ನೆಲ್ಯಾಡಿ ಕಡೆಗೆ ಸಾಗುತ್ತಿದ್ದ ಥಾರ್ ಜೀಪು ಜೀಪಿಗೆ ಢಿಕ್ಕಿಯಾಗಿ ನೆಕ್ಕಿಲಾಡಿಯತ್ತ ಮುಖ ಮಾಡಿ ತಿರುಗಿ ನಿಂತಿದೆ. ಢಿಕ್ಕಿಯ ತೀವೃತೆಗೆ ಜೀಪು ಹೆದ್ದಾರಿಯಲ್ಲಿ ನೆಕ್ಕಿಲಾಡಿಯತ್ತ ಮುಖಮಾಡಿ ಮಗುಚಿ ಬಿದ್ದಿದೆ. ಅಪಘಾತದಿಂದ ಥಾರ್ ಜೀಪಿನ ಮುಂಭಾಗ ಹಾಗೂ ಜೀಪು ಜಖಂಗೊಂಡಿದೆ. ಥಾರ್ ಜೀಪನ್ನು ಕಾವಳಕಟ್ಟೆಯ ಮುಹಮ್ಮದ್ ಅಕ್ರಂ ಚಲಾಯಿಸುತ್ತಿದ್ದರು. ಅಪಘಾತದ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೊಂದಲಕ್ಕೆ ಕಾರಣವಾಗುತ್ತಿರುವ ಹೆದ್ದಾರಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈ ಭಾಗದಲ್ಲಿ ಭಾಗಶಃ ಪೂರ್ಣಗೊಂಡಿದೆ. ಇದರಿಂದ ಇಲ್ಲಿ ವಾಹನಗಳು ಅತೀ ವೇಗವಾಗಿ ಸಾಗುತ್ತಿವೆ. ಅಪಘಾತ ನಡೆದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಎಡಬದಿಗೆ ಕವಲೊಡೆದ ಸವೀಸ್ ರಸ್ತೆ ಉಪ್ಪಿನಂಗಡಿ ಪೇಟೆ ಕಡೆ ಸಾಗಿದರೆ, ಬಲ ಬದಿಗೆ ಕವಲೊಡೆದ ಸರ್ವೀಸ್ ರಸ್ತೆಯು ಉಪ್ಪಿನಂಗಡಿ ಪೇಟೆಯಿಂದ ಬರುವ ರಸ್ತೆಯಾಗಿದೆ. ಆದರೆ ಇಲ್ಲಿ ಯಾವುದೇ ಸೂಚನಾ ಫಲಕವಿಲ್ಲ. ಉಪ್ಪಿನಂಗಡಿ ಪೇಟೆ ಕಡೆ ಸಾಗುವ ರಸ್ತೆಯಲ್ಲಿ ಸೂಚನಾ ಫಲಕವಿದ್ದರೂ, ಅದನ್ನು ಓದಲು ಭೂತಗನ್ನಡಿಯ ಅವಶ್ಯಕತೆಯಿದೆ. ಇಲ್ಲಿ ಜೀಪು ಚಾಲಕ ಏಕಾಏಕಿ ರಸ್ತೆಯ ವಿರುದ್ಧ ದಿಕ್ಕು ಅಂದರೆ ಉಪ್ಪಿನಂಗಡಿ ಪೇಟೆಯಿಂದ ಬರುವ ಸರ್ವೀಸ್ ರಸ್ತೆಗೆ ವಾಹನವನ್ನು ತಿರುಗಿಸಿದ್ದರಿಂದಲೇ ಅಪಘಾತಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಯು ಸಮರ್ಪಕವಾಗಿ ಪೂರ್ಣಗೊಳ್ಳದಿರುವುದರಿಂದ ಈ ಹೆದ್ದಾರಿಯಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿವೆ ಎಂದು ಉದ್ಯಮಿ ಝಕಾರಿಯಾ ಕೊಡಿಪ್ಪಾಡಿ ಆರೋಪಿಸಿದ್ದಾರೆ.       

ವಾರ್ತಾ ಭಾರತಿ 13 Apr 2026 9:55 pm

ಬಾಹ್ಯಾಕಾಶ ಆಧಾರಿತ ಜೀವವೈದ್ಯಕೀಯ ಸಂಶೋಧನೆಗೆ ಮಾಹೆ ಒಪ್ಪಂದ: ಭವಿಷ್ಯದ ‘ಭಾರತೀಯ ಅಂತರಿಕ್ಷ ನಿಲ್ದಾಣ’ದಲ್ಲಿ ಸಂಶೋಧನೆಗೆ ಅವಕಾಶ

ಉಡುಪಿ, ಎ.13: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯು ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿ ‘ಹೆಲೋಜನ್ ಕಾರ್ಪೊರೇಷನ್’ ಜೊತೆ ಬಾಹ್ಯಾಕಾಶ ಆಧಾರಿತ ಜೀವವೈದ್ಯಕೀಯ ಸಂಶೋಧನೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಮಾಹೆ ಮತ್ತು ಹೆಲೋಜನ್ ಕಾರ್ಪೊರೇಷನ್ ಜಂಟಿಯಾಗಿ ಸುಧಾರಿತ ಬಯೋಮಟಿರಿಯಲ್ ಕುರಿತು ಸಂಶೋಧನೆ ನಡೆಸಲು, ಮಿಷನ್ ಸಿದ್ಧಪಡಿಸಲು ಮತ್ತು ಹೊಸ ಪ್ರಯೋಗಗಳನ್ನು ಕೈಗೊಳ್ಳಲು ಈ ಪಾಲುದಾರಿಕೆ ಸಹಕಾರಿಯಾ ಗಲಿದೆ ಎಂದು ಮಾಹೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಹಂತ ಹಂತವಾಗಿ ಈ ಸಂಶೋಧನೆ ನಡೆಯಲಿದ್ದು, ಭೂಮಿ ಮತ್ತು ಬಾಹ್ಯಾಕಾಶದಲ್ಲಿ ಬಳಸಬಹುದಾದ ಸ್ನಾಯು ಮಾದರಿಗಳನ್ನು ಒಳಗೊಂಡಂತೆ ಜೀವಕೋಶಗಳ ಮಾದರಿ ಅಭಿವೃದ್ಧಿ ಮತ್ತು ಮೂಳೆ ಸವೆತದ ಅಧ್ಯಯನದ ಬಗ್ಗೆ ಈ ಸಹಯೋಗವು ಗಮನ ಹರಿಸಲಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಈ ಒಪ್ಪಂದದ ಅಡಿಯಲ್ಲಿ, ಮಾಹೆಯು ಬಾಹ್ಯಾಕಾಶ ಜೀವಶಾಸ್ತ್ರದ ಸಂಶೋಧನೆಯ ನೇತೃತ್ವ ವಹಿಸಲಿದೆ. ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಪೂರಕವಾದ ಹೊಸ ಪ್ರಯೋಗಗಳನ್ನು ಸಿದ್ಧಪಡಿಸುವ ಗುರಿ ಹೊಂದಿದೆ. ಈ ಒಪ್ಪಂದ ಮೂಲಕ ನಡೆಯುವ ಸಂಶೋಧನೆಗಳು ಭಾರತದ ಹೊಸ ಬಾಹ್ಯಾಕಾಶ ನಿಲ್ದಾಣ ಯೋಜನೆಗಳಿಗೆ ಪೂರಕವಾಗಿರಲಿದೆ. ಮುಖ್ಯವಾಗಿ, ಭವಿಷ್ಯದಲ್ಲಿ ಸ್ಥಾಪನೆಯಾಗಲಿರುವ ‘ಭಾರತೀಯ ಅಂತರಿಕ್ಷ ನಿಲ್ದಾಣ’ದ ಮೂಲಕ ಶೂನ್ಯ ಗುರುತ್ವಾಕರ್ಷಣೆಯಲ್ಲಿ ದೀರ್ಘಕಾಲದವರೆಗೆ ಮತ್ತು ಶಾಶ್ವತವಾಗಿ ಸಂಶೋಧನೆಗಳನ್ನು ನಡೆಸಲು ಇದು ಸಹಾಯ ಮಾಡಲಿದೆ. ಸಮಾಜಕ್ಕೆ ಉಪಯುಕ್ತ: ‘ಜೀವವೈದ್ಯಕೀಯ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸಂಧಿಸುವ ಕ್ಷೇತ್ರದಲ್ಲಿ, ಭವಿಷ್ಯಕ್ಕೆ ಪೂರಕವಾದ ಸಂಶೋಧನೆಗಳನ್ನು ಉತ್ತೇಜಿಸಲು ಮಾಹೆ ಸದಾ ಸಿದ್ಧವಾಗಿದೆ ಎಂಬುದನ್ನು ಈ ಸಹ ಯೋಗವು ಸಾಬೀತುಪಡಿಸುತ್ತದೆ. ಶೈಕ್ಷಣಿಕ ಜ್ಞಾನ ಮತ್ತು ವೈದ್ಯಕೀಯ ಅನುಭವವನ್ನು ಬಾಹ್ಯಾಕಾಶ ತಂತ್ರಜ್ಞಾನ ದೊಂದಿಗೆ ಬಳಸಿಕೊಳ್ಳುವ ಮೂಲಕ, ವಿಜ್ಞಾನದ ದೃಷ್ಟಿಯಿಂದ ನಿಖರವಾದ ಹಾಗೂ ಸಮಾಜಕ್ಕೆ ಉಪಯುಕ್ತವಾದ ಹೊಸ ಮಾಹಿತಿಯನ್ನು ಪಡೆಯುವುದು ನಮ್ಮ ಗುರಿಯಾಗಿದೆ ಎಂದು ಮಾಹೆ ಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್ ಹೇಳಿದ್ದಾರೆ. ಪ್ರಮುಖ ಹೆಜ್ಜೆ: ಮುಂದಿನ ತಲೆಮಾರಿನ ಜೀವವೈದ್ಯಕೀಯ ಸಂಶೋಧನೆ ಯಲ್ಲಿ ಮಹತ್ವದ ಸಾಧನೆ ಮಾಡಲು ಬಾಹ್ಯಾಕಾಶದ ‘ಶೂನ್ಯ ಗುರುತ್ವಾಕರ್ಷಣೆ’ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಒಪ್ಪಂದವು ಒಂದು ಪ್ರಮುಖ ಹೆಜ್ಜೆಯಾ ಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗ ನಡೆಸಿದ ಅನುಭವವಿರುವ ಮಾಹೆಯ ಪರಿಣಿತ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ನಮಗೆ ಸಂತಸ ತಂದಿದೆ. ಇದು ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಸಹಯೋಗಗಳಲ್ಲಿ ಒಂದಾಗಲಿದೆ’ ಎಂದು ಹೆಲೋಜನ್ ಕಾರ್ಪೊರೇಶನ್ ಸಿಇಒ ಶಿಶಿರ್ ಬಂಕಾಪುರ ಅಭಿಪ್ರಾಯಪಟ್ಟಿದ್ದಾರೆ. ಹೆಲೋಜನ್ ಜತೆಗಿನ ಒಪ್ಪಂದದಿಂದ ನಮ್ಮ ಸಂಶೋಧಕರಿಗೆ ಬಾಹ್ಯಾಕಾಶ ಆಧಾರಿತ ವಿಶಿಷ್ಟ ತಂತ್ರಜ್ಞಾನಗಳನ್ನು ಬಳಸುವ ಅವಕಾಶ ಸಿಗಲಿದೆ. ಸಂಶೋಧನೆ ಕ್ಷೇತ್ರದಲ್ಲಿ ಮಾಹೆ ಸಂಸ್ಥೆಗೆ ಇದೊಂದು ಹೊಸ ಗರಿ ಮೂಡಿಸಲಿದೆ ಎಂದು ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ಸಹ ಪ್ರಾಧ್ಯಾಪಕ ಡಾ. ಮಾನಶ್ ಕೆ. ಪಾಲ್ ಹೇಳಿದ್ದಾರೆ. ಸಹಯೋಗದ ಪ್ರಮುಖಾಂಶಗಳು: ಸುಧಾರಿತ ಸಂಶೋಧನಾ ತಂತ್ರಜ್ಞಾನ: ಮಾಹೆ ತನ್ನದೇ ಆದ ’ಆರ್ಗನಾಯ್ಡ್’ (ಅಂಗಾಂಶ ಮಾದರಿ) ಸಂಶೋಧನೆ ಯನ್ನು ಹೆಲೋಜನ್ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲಿದೆ. ಇದು ಬಾಹ್ಯಾಕಾಶದಲ್ಲಿ ಬಯೋಮಟಿರಿಯಲ್ ಅಭಿವೃದ್ಧಿ, ಅವುಗಳ ವೈಜ್ಞಾನಿಕ ಅಧ್ಯಯನಕ್ಕೆ ನೆರವಾಗಲಿದೆ. ವೈಜ್ಞಾನಿಕ ನಾಯಕತ್ವ: ಮಾಹೆಯ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ಸಹ ಪ್ರಾಧ್ಯಾಪಕರಾದ ಡಾ. ಮಾನಶ್ ಕೆ. ಪಾಲ್ ಅವರು ಈ ಕಾರ್ಯಕ್ರಮದ ಮುಖ್ಯ ಸಂಶೋಧಕರಾಗಿ ಒಟ್ಟಾರೆ ವೈಜ್ಞಾನಿಕ ನಾಯಕತ್ವ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ಇವರು ಮಾಹೆಯ ಸೆಂಟರ್ ಫಾರ್ ಆರ್ಗನಾಯ್ಡ್ ಬಯೋ ಇಂಜಿನಿಯರಿಂಗ್, ಬಯೋಪ್ರಿಂಟಿಂಗ್, ಬಯೋಬ್ಯಾಂಕಿಂಗ್ ಮತ್ತು ಬಯೋಮೆಡಿಕಲ್ ಸಾಯನ್ಸ್‌ನ ಸಂಯೋಜಕರೂ ಆಗಿದ್ದಾರೆ. ಮಣಿಪಾಲದ ಕೆಎಂಸಿ ಹಾಗೂ ಎಂಐಟಿಗಳ ತಜ್ಞರ ತಂಡ ಇವರಿಗೆ ಬೆಂಬಲ ನೀಡಲಿದೆ.

ವಾರ್ತಾ ಭಾರತಿ 13 Apr 2026 9:51 pm

ರಾಯಚೂರು | ಮಂತ್ರಾಲಯ ರಾಘವೇಂದ್ರ ಸ್ವಾಮಿ ಜಪದ ಕಟ್ಟೆ ಸರ್ವೆಗೆ ಅಡ್ಡಿ : 12 ಮಂದಿ ವಶಕ್ಕೆ

ರಾಯಚೂರು: ಗಡಿಭಾಗದ ತಾಲ್ಲೂಕಿನ ಎಲೆಬಿಚ್ಚಾಲಿ ಪ್ರದೇಶದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ತಪಸ್ಸು ಮಾಡಿದ ಜಪಕಟ್ಟೆಗೆ ಸಂಬಂಧಿಸಿದ ಭೂ ವಿವಾದ ತೀವ್ರಗೊಂಡಿದ್ದು, ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 12 ಜನರನ್ನು ಯರಗೇರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಪಕಟ್ಟೆಗೆ ಸಂಬಂಧಿಸಿದ ಒಟ್ಟು 4 ಎಕರೆ ಭೂಮಿಯಲ್ಲಿ 2.33 ಎಕರೆ ಜಮೀನು ಸರ್ಕಾರದಾಗಿದ್ದು, ಅದರ ಸರ್ವೆ ನಡೆಸಲು ಅಧಿಕಾರಿಗಳು ಬಂದ ಸಂದರ್ಭದಲ್ಲಿ ರೈತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಅನೇಕ ವರ್ಷಗಳಿಂದ ಈ ಜಮೀನನ್ನು ಉಳುಮೆ ಮಾಡುತ್ತಿರುವ ರೈತರು, ಯಾವುದೇ ನೋಟಿಸ್ ನೀಡದೇ ಸರ್ವೆಗೆ ಬಂದಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಆದರೆ ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ಸರ್ವೆ ನಂಬರಿನಲ್ಲಿ ಭೂಮಿ ಸರ್ಕಾರದಾಗಿ ದಾಖಲಾಗಿರುವುದರಿಂದ ನೋಟಿಸ್ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ರಾಯರ ಜಪದಕಟ್ಟೆಯನ್ನು ಮಂತ್ರಾಲಯ ಮಠದ ಸುಪರ್ದಿಗೆ ಪಡೆಯುವ ಪ್ರಯತ್ನ ನಡೆಯುತ್ತಿದ್ದು, ಇದರ ವಿರುದ್ಧ ಟ್ರಸ್ಟ್‌ನ ಪದಾಧಿಕಾರಿಗಳು ಕೊರ್ಟ್ ಮೊರೆ ಹೋಗಿದ್ದರು. ಟ್ರಸ್ಟ್ ಸ್ವಾಧೀನದಲ್ಲಿಯೇ ಜಪಕಟ್ಟೆ ನಿರ್ವಹಣೆ ಮಾಡಲಾಗುತ್ತಿದೆ. ಈಗ ಸರ್ವೆಗೆ ಅಡ್ಡಿಪಡಿಸಿದ ಘಟನೆಯ ನಡುವೆಯೂ ಪೊಲೀಸರ ನೆರವಿನಿಂದ ಸರ್ವೆ ಮುಂದುವರೆದಿದೆ.

ವಾರ್ತಾ ಭಾರತಿ 13 Apr 2026 9:42 pm

ರಾಜ್ಯಸಭಾ ಉಪಸಭಾಪತಿ ಹುದ್ದೆ ತುಂಬಲು ಯಾಕಿಷ್ಟು ಅವಸರ?: ಪ್ರತಿಪಕ್ಷಗಳ ಪ್ರಶ್ನೆ

ಹೊಸದಿಲ್ಲಿ: ರಾಜ್ಯಸಭೆಯ ಉಪಸಭಾಪತಿಯಾಗಿ ಹರಿವಂಶ್‌ರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಆಡಳಿತಾರೂಢ ಎನ್‌ಡಿಎ ಮುಂದಾಗಿದೆ. ಕೇಂದ್ರ ಸಚಿವ ಹಾಗೂ ರಾಜ್ಯಸಭೆಯ ಆಡಳಿತಾರೂಢ ಘಟಕದ ನಾಯಕ ಜೆ.ಪಿ. ನಡ್ಡಾ, ಹರಿವಂಶರ ಮರು ಆಯ್ಕೆ ಬಗ್ಗೆ ವಿವಿಧ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ ಒಮ್ಮತವೊಂದಕ್ಕೆ ಬರಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, 2019ರಿಂದ ಖಾಲಿ ಬಿದ್ದಿರುವ ಲೋಕಸಭೆಯ ಉಪ ಸ್ಪೀಕರ್ ಹುದ್ದೆಯನ್ನು ತುಂಬುವ ಬಗ್ಗೆ ಚಿಂತಿಸದೆ ರಾಜ್ಯಸಭೆಯ ಉಪ ಸಭಾಪತಿ ಹುದ್ದೆಯನ್ನು ತುಂಬಲು ಚುನಾವಣೆ ನಡೆಸಲು ಆಡಳಿತಾರೂಢ ಪಕ್ಷ ತೋರಿಸುತ್ತಿರುವ ಉತ್ಸಾಹಕ್ಕೆ ಕಾಂಗ್ರೆಸ್, ಟಿಎಮ್‌ಸಿ ಮತ್ತು ಎಡ ಪಕ್ಷಗಳು ಸೇರಿದಂತೆ ಹಲವು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ರಾಜ್ಯಸಭಾ ಉಪ ಸಭಾಪತಿ ಹುದ್ದೆಯನ್ನು ತುಂಬಲು ಅಧಿಸೂಚನೆಯನ್ನು ಹೊರಡಿಸಿಲ್ಲವಾದರೂ, ಎಪ್ರಿಲ್ 16 ಅಥವಾ 17ರಂದು ಚುನಾವಣೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ. ಅಂದು ಮಹಿಳಾ ಮೀಸಲಾತಿ ಕಾನೂನಿಗೆ ತರಲಾಗಿರುವ ತಿದ್ದುಪಡಿಗೆ ಅನುಮೋದನೆ ನೀಡಲು ಸಂಸತ್‌ನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ರಾಜ್ಯಸಭೆಯ ಉಪಸಭಾಪತಿ ಹುದ್ದೆಗೆ ಬಲವಂತದ ನೇಮಕಾತಿಯನ್ನು ಮಾಡಲು ಸರಕಾರ ಬಯಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ‘‘ಲೋಕಸಭೆಯ ಉಪಸ್ಪೀಕರ್ ಹುದ್ದೆಗೆ ಏಳು ವರ್ಷಗಳಿಂದ ನೇಮಕಾತಿಯನ್ನು ಮಾಡದ ಸರಕಾರವೊಂದು, ರಾಜ್ಯಸಭೆಯ ಉಪ ಸಭಾಪತಿ ಹುದ್ದೆಗೆ ನಾಲ್ಕು ದಿನಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಬಲವಂತದ ನೇಮಕಾತಿಯನ್ನು ಮಾಡಲು ಬಯಸಿದೆ’’ ಎಂದು ರಮೇಶ್ ಹೇಳಿದ್ದಾರೆ. ‘‘ಲೋಕಸಭೆಯ ಉಪ ಸ್ಪೀಕರ್ ಹುದ್ದೆ 2019ರಿಂದ ಖಾಲಿ ಬಿದ್ದಿದೆ. ರಾಜ್ಯಸಭಾ ಉಪಸಭಾಪತಿ ಹುದ್ದೆ ಕೇವಲ 10 ದಿನಗಳಿಂದ ಖಾಲಿಯಾಗಿದೆ. ಅದನ್ನು ತುಂಬಲು ಬಿಜೆಪಿಗೆ ಇಷ್ಟೊಂದು ಅವಸರ ಯಾಕೆ? ಸರಕಾರವು ಮತ್ತೊಮ್ಮೆ ಸಂಸತ್‌ಗೆ ಅವಹೇಳನ ಮಾಡುತ್ತಿದೆ’’ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯನ್ ಸಾಮಾಜಿಕ ಮಾಧ್ಯಕ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.

ವಾರ್ತಾ ಭಾರತಿ 13 Apr 2026 9:42 pm

ಟರ್ಕಿಯನ್ನು ಹೊಸ ಶತ್ರುವೆಂದು ಘೋಷಿಸಲು ಇಸ್ರೇಲ್ ಪ್ರಯತ್ನ: ಟರ್ಕಿ ವಿದೇಶಾಂಗ ಸಚಿವ ಆರೋಪ

ಅಂಕಾರ: ಶತ್ರುಗಳಿಲ್ಲದೆ ಇಸ್ರೇಲ್‍ಗೆ ಬದುಕಲು ಸಾಧ್ಯವಿಲ್ಲ. ಇದೀಗ ಆ ದೇಶದ ಸರಕಾರವು ಟರ್ಕಿಯನ್ನು ಹೊಸ ಶತ್ರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿದಾನ್ ಸೋಮವಾರ ಟೀಕಿಸಿದ್ದಾರೆ. 2023ರ ಅಕ್ಟೋಬರ್‍ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಗಾಝಾ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಟರ್ಕಿ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಗಳೂ ಉಲ್ಬಣಗೊಂಡಿವೆ. ಕಳೆದ ವಾರದಿಂದ ಉಭಯ ದೇಶಗಳ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದೆ. `ನೆತನ್ಯಾಹು ನಮ್ಮ ಕಾಲದ ಹಿಟ್ಲರ್' ಎಂದು ಟರ್ಕಿಯ ವಿದೇಶಾಂಗ ಇಲಾಖೆ ಬಣ್ಣಿಸಿದ್ದು ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಯನ್ನು ಹಾಳುಮಾಡುವುದು ಅವರ ಉದ್ದೇಶವಾಗಿದೆ' ಎಂದು ಇಸ್ರೇಲ್ ಆರೋಪಿಸಿದೆ. `ಟರ್ಕಿಯು ತನ್ನದೇ ನಾಗರಿಕರ ಹತ್ಯಾಕಾಂಡ ನಡೆಸಿದೆ' ಎಂದು ಇಸ್ರೇಲ್ ತಿರುಗೇಟು ನೀಡಿತ್ತು. `ಇಸ್ರೇಲ್‍ಗೆ ಶತ್ರುಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಇರಾನ್‍ನ ಬಳಿಕ ಇದೀಗ ಟರ್ಕಿಯನ್ನು ಹೊಸ ಶತ್ರು ಎಂದು ಘೋಷಿಸಲು ನೆತನ್ಯಾಹು ಮಾತ್ರವಲ್ಲ, ಅಲ್ಲಿನ ಕೆಲವು ವಿರೋಧ ಪಕ್ಷಗಳ ನಾಯಕರೂ ಬಯಸಿದ್ದಾರೆ. ಇದು ಇಸ್ರೇಲ್‍ನಲ್ಲಿ ಹೊಸ ಬೆಳವಣಿಗೆಯಾಗಿದ್ದು ರಾಷ್ಟ್ರದ ಕಾರ್ಯತಂತ್ರವಾಗಿ ರೂಪುಗೊಳ್ಳುತ್ತಿದೆ' ಎಂದು ಫಿದಾನ್‍ರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಾರ್ತಾ ಭಾರತಿ 13 Apr 2026 9:37 pm

ಕಲಬುರಗಿ | ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳ ಜಾರಿಗೆ ಸಿಪಿಐ(ಎಂ) ಒತ್ತಾಯ

ಕಲಬುರಗಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮುಖಂಡರು ನಗರದ ಲೋಕಸಭಾ ಸದಸ್ಯರ ಕಚೇರಿ ಎದುರು ಪ್ರತಿಭಟಿಸಿ, ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕನ್ನಡ ಭವನದಿಂದ ಸಂಸದರ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸುವ ಮೂಲಕ ಅನೇಕ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯದಲ್ಲಿ ಎಸ್‌ಸಿ–ಎಸ್‌ಟಿ ಸಮುದಾಯಗಳ ಜನಸಂಖ್ಯೆ ಆಧಾರಿತ ಮೀಸಲಾತಿ ಹೆಚ್ಚಳ ಕುರಿತು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಕ್ರಮವಾಗಿ ಶೇ.17 ಮತ್ತು ಶೇ.7ಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸುಗಳನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಂಗೀಕರಿಸಿ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಿತ್ತು. ಆದರೆ ಈ ತೀರ್ಮಾನಕ್ಕೆ ಇನ್ನೂ ಕೇಂದ್ರದ ಅಂತಿಮ ಅನುಮೋದನೆ ಲಭ್ಯವಾಗಿಲ್ಲ. ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವ ಮೂಲಕ ಈ ಮೀಸಲಾತಿ ಜಾರಿಗೆ ತರಬೇಕಾಗಿದೆ ಎಂದು ಒತ್ತಾಯಿಸಿದರು. ಸಾಮಾಜಿಕ ನ್ಯಾಯ ಸಾಧನೆಗಾಗಿ ಒಳ ಮೀಸಲಾತಿ ಅಗತ್ಯವಿದ್ದು, ದೇವಿಂದರ್ ಸಿಂಗ್ ವಿರುದ್ಧ ಪಂಜಾಬ್ ಪ್ರಕರಣ ತೀರ್ಪು ಇದಕ್ಕೆ ಪೂರಕವಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಸೂಕ್ತ ಕ್ರಮಗಳನ್ನು ವಿಳಂಬಿಸದೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು, 9ನೇ ಶೆಡ್ಯೂಲ್ ಗೆ ಸೇರಿಸಬೇಕು ಎಂದು ಆಗ್ರಹಿಸಿದರು. ದಲಿತರಿಗೆ ಹಕ್ಕುಗಳು ನೀಡುವ ಒಳಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರದಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ತಾಳುತ್ತಿವೆ. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹಾಗೂ ಗುತ್ತಿಗೆ ಸಿಬ್ಬಂದಿಯನ್ನು ತೆಗೆದುಹಾಕಲು ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪ್ರಭು ಖಾನಾಪುರೆ, ಮೀನಾಕ್ಷಿ ಬಾಳಿ, ಸುಧಾಮ ಧನ್ನಿ, ಪದ್ಮಿನಿ ಕಿರಣಗಿ, ಪಾಂಡುರಂಗ ಮಾವಿನಕರ, ಶಾಂತಾ ಗಂಟೆ, ವಿರುಪಾಕ್ಷಪ್ಪ ತಡಕಲ್, ಸಾಬಮ್ಮ, ಚಂದಮ್ಮ ಗೋಳಾ, ಸಾಬಮ್ಮ ಎಂ.ಕಾಳಗಿ, ಗುರು ಚಂದಕವಠೆ, ನಾಗಪ್ಪ ರಾಯಚೂರಕರ, ಸೇರಿದಂತೆ ಹಲವರು ಇದ್ದರು. ಒಂದು ಸಮುದಾಯವನ್ನು ಕಾಂಗ್ರೆಸ್ ಮತಬ್ಯಾಂಕ್ ಮಾಡಿಕೊಳ್ಳುತ್ತದೆ, ಇನ್ನೊಂದು ಸಮುದಾಯವನ್ನು ಬಿಜೆಪಿ ಮತಬ್ಯಾಂಕ್ ಮಾಡಿಕೊಳ್ಳುತ್ತದೆ. ಇವೆರಡು ಪಕ್ಷಗಳು ದಲಿತ ಅಣ್ಣ ತಮ್ಮಂದಿರ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿವೆ. ಇದನ್ನ ಕೈಬಿಟ್ಟು ಮೊದಲು ವೈಜ್ಞಾನಿಕವಾಗಿ ಒಳಮೀಸಲಾತಿ ಪರಿಶೀಲಿಸಿ, ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಜಾರಿ ಮಾಡಬೇಕು. ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದತ್ತ ಹೋದರೂ ಬಿಜೆಪಿ 9ನೆಯ ಶೆಡ್ಯೂಲ್ ಗೆ ತಿದ್ದುಪಡಿ ಮಾಡಿಲ್ಲ. ಇದು ದಲಿತ ವಿರೋಧಿ ಸರ್ಕಾರ. -ಮೀನಾಕ್ಷಿ ಬಾಳಿ (ಲೇಖಕಿ)

ವಾರ್ತಾ ಭಾರತಿ 13 Apr 2026 9:35 pm

ಇರಾನ್ ಮೇಲೆ ನೌಕಾ ದಿಗ್ಬಂಧನಕ್ಕೆ ಇಸ್ರೇಲ್ ಬೆಂಬಲ: ನೆತನ್ಯಾಹು ಘೋಷಣೆ

ಜೆರುಸಲೇಂ: ಇರಾನ್ ಮೇಲೆ ನೌಕಾ ದಿಗ್ಬಂಧನವನ್ನು ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಇಸ್ರೇಲ್ ಬೆಂಬಲಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಹೇಳಿದ್ದು ಈ ವಿಷಯದಲ್ಲಿ ತಮ್ಮ ಸರಕಾರ ಅಮೆರಿಕದೊಂದಿಗೆ ಸಂಪೂರ್ಣ ಸಮನ್ವಯದಲ್ಲಿದೆ ಎಂದಿದ್ದಾರೆ. ʼಇರಾನ್ ನಿಯಮಗಳನ್ನು(ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಯ) ಉಲ್ಲಂಘಿಸಿದೆ. ಅಧ್ಯಕ್ಷ ಟ್ರಂಪ್ ನೌಕಾ ದಿಗ್ಬಂಧನ ವಿಧಿಸಲು ನಿರ್ಧರಿಸಿದ್ದಾರೆ. ಸಹಜವಾಗಿ ನಾವು ಈ ದೃಢ ನಿಲುವನ್ನು ಬೆಂಬಲಿಸುತ್ತೇವೆ ಮತ್ತು ಅಮೆರಿಕದೊಂದಿಗೆ ನಿರಂತರ ಸಮನ್ವಯದಲ್ಲಿದ್ದೇವೆ' ಎಂದು ಸೋಮವಾರ ಸಂಪುಟ ಸಭೆಯಲ್ಲಿ ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ. ಕದನ ವಿರಾಮ ಜಾರಿಯಾಗಬೇಕು ಮತ್ತು ಇರಾನ್ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಬೇಕು ಎಂಬುದು ಒಪ್ಪಂದದ ಮೂಲ ಅಂಶವಾಗಿತ್ತು. ಮಾತುಕತೆಯ ನಿಯಮಗಳನ್ನು ಇರಾನ್ ಸ್ಪಷ್ಟವಾಗಿ ಉಲ್ಲಂಘಿಸಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾತುಕತೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ತನಗೆ ತಿಳಿಸಿದ್ದಾರೆ ಎಂದು ನೆತನ್ಯಾಹು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಹೇಳಿದರು. ಇರಾನ್‍ನಿಂದ ಸಂವರ್ಧಿತ ಯುರೇನಿಯಂ ಅನ್ನು ವರ್ಗಾಯಿಸುವುದು ಮತ್ತು ಮುಂದಿನ ವರ್ಷಗಳಲ್ಲಿ ಇರಾನ್ ಯುರೇನಿಯಂ ಸಂವರ್ಧನೆ ನಡೆಸುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಟ್ರಂಪ್‍ಗೆ ಮುಖ್ಯ ವಿಷಯವಾಗಿತ್ತು. ಇದು ನಮಗೆ ಕೂಡಾ ಮುಖ್ಯವಾಗಿದೆ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 13 Apr 2026 9:35 pm

ನೆತನ್ಯಾಹುರಿಂದ ಬಂದ ಫೋನ್ ಕರೆ ಶಾಂತಿ ಮಾತುಕತೆಯ ಹಳಿತಪ್ಪಿಸಿತು: ಇರಾನ್

ಟೆಹರಾನ್: ಇಸ್ಲಮಾಬಾದ್‍ನಲ್ಲಿ ಅಮೆರಿಕ-ಇರಾನ್ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆಯ ಸಂದರ್ಭ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‍ಗೆ ಮಾಡಿದ ಫೋನ್ ಕರೆ ಮಾತುಕತೆಯ ಹಳಿತಪ್ಪಿಸಿತು ಎಂದು ಇರಾನ್ ಸೋಮವಾರ ಪ್ರತಿಪಾದಿಸಿದೆ. ಮಾತುಕತೆ ಸುಸೂತ್ರವಾಗಿ ಸಾಗಿತ್ತು. ಆ ಸಂದರ್ಭದಲ್ಲಿ ಇಸ್ರೇಲಿ ಪ್ರಧಾನಿ ನೆತನ್ಯಾಹು ಅವರಿಂದ ಜೆ.ಡಿ.ವ್ಯಾನ್ಸ್‍ಗೆ ಬಂದ ಫೋನ್ ಕರೆ ಮಾತುಕತೆಯ ದಿಕ್ಕನ್ನು ಬದಲಿಸಿತು. ಇರಾನ್-ಅಮೆರಿಕದ ನಡುವಿನ ಮಾತುಕತೆ ಇಸ್ರೇಲ್ ಹಿತಾಸಕ್ತಿಗೆ ಆದ್ಯತೆ ನೀಡುವತ್ತ ತಿರುಗಿತು ಮತ್ತು ಮಾತುಕತೆಯ ಹಳಿ ತಪ್ಪಿಸಿತು. ಅಮೆರಿಕ ಯುದ್ಧ ಭೂಮಿಯಲ್ಲಿ ಸಾಧಿಸಲು ವಿಫಲವಾಗಿರುವುದನ್ನು ಸಂಧಾನ ಪ್ರಕ್ರಿಯೆಯಲ್ಲಿ ಗಳಿಸಿಕೊಳ್ಳಲು ಅಮೆರಿಕ ಮುಂದಾಯಿತು' ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿಯನ್ನು ಉಲ್ಲೇಖಿಸಿ ಇರಾನ್‍ನ ʼಪ್ರೆಸ್ ಟಿವಿʼ ವರದಿ ಮಾಡಿದೆ. ಅಮೆರಿಕ ಮುಂದಿರಿಸಿದ್ದ ಅಂತಿಮ ಮತ್ತು ಅತ್ಯುತ್ತಮ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದ್ದರಿಂದ ಮಾತುಕತೆ ವಿಫಲಗೊಂಡಿತ್ತು ಎಂದು ಮಾತುಕತೆಯಲ್ಲಿ ಅಮೆರಿಕದ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದರು. ಪರಮಾಣು ಕಾರ್ಯಕ್ರಮಗಳನ್ನು ಕೈಬಿಡಲು ಇರಾನ್ ನಿರಾಕರಿಸಿದ್ದರಿಂದ ಮಾತುಕತೆ ವಿಫಲಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದರು. ಹಲವು ವಾರಗಳ ಹಗೆತನದ ನಂತರ ಆಳವಾದ ಅಪನಂಬಿಕೆ ಮಾತುಕತೆಗೆ ಪ್ರಮುಖ ಅಡಚಣೆಯಾಗಿತ್ತು. ಯುದ್ಧ ಮತ್ತು ಸಂದೇಹದಿಂದ ರೂಪುಗೊಂಡ ವಾತಾವರಣದಲ್ಲಿ ಮಾತುಕತೆಗಳು ನಡೆದವು ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದು, ಒಂದೇ ಹಂತದಲ್ಲಿ ಪ್ರಗತಿ ಅಸಂಭವವಾಗಿದ್ದು ಭವಿಷ್ಯದ ರಾಜತಾಂತ್ರಿಕ ಪ್ರಯತ್ನಗಳಿಗೆ ಇರಾನ್ ಮುಕ್ತವಾಗಿದೆ ಎಂದಿದ್ದಾರೆ. ಹೇಳಿಕೆ ನಿರಾಕರಿಸಿದ ನೆತನ್ಯಾಹು: ತಾನು ಮಾಡಿದ ಫೋನ್ ಕರೆ ಶಾಂತಿ ಮಾತುಕತೆಯ ಹಳಿ ತಪ್ಪಿಸಿದೆ ಎಂಬ ಇರಾನ್ ವಿದೇಶಾಂಗ ಸಚಿವರ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ನಿರಾಕರಿಸಿದ್ದು, ಮಾತುಕತೆಯ ನಿಯಮಗಳನ್ನು ಇರಾನ್ ಉಲ್ಲಂಘಿಸಿದ್ದರಿಂದ ಅಮೆರಿಕ ಮಾತುಕತೆಯನ್ನು ಸ್ಥಗಿತಗೊಳಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 13 Apr 2026 9:33 pm

ಕಲಬುರಗಿ | ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ; ಆರೋಪಿಗಳ ಬಂಧನ, ಲಕ್ಷಾಂತರ ರೂ. ಮೌಲ್ಯದ ಸ್ವತ್ತು ಜಪ್ತಿ : ಎಸ್ಪಿ ಅಡ್ಡೂರು ಶ್ರೀನಿವಾಸಲು

ಕಲಬುರಗಿ: ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿರುವ ಆಳಂದ, ವಾಡಿ, ಕಾಳಗಿ ಮತ್ತು ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಣಿ ಮನೆ ಕಳ್ಳತನ ಮತ್ತು ಸರಣಿ ಜಾನುವಾರುಗಳ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಆಳಂದ ಉಪ-ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಲಕ್ಷಾಂತರ ರೂ. ಮೌಲ್ಯದ 71 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದರು. ಆಳಂದ ಠಾಣೆ ವ್ಯಾಪ್ತಿಯಲ್ಲಿ 3.75 ಲಕ್ಷ ರೂ. ಮೌಲ್ಯದ 16 ಮೊಬೈಲ್‌ಗಳು, ನರೋಣಾ ಠಾಣೆ ವ್ಯಾಪ್ತಿಯಲ್ಲಿ 3,20 ಲಕ್ಷ ರೂ. ಮೌಲ್ಯದ 15 ಮೊಬೈಲ್‌ಗಳು, ದೇವಲಗಾಣಗಾಪುರ ಠಾಣೆ ವ್ಯಾಪ್ತಿಯಲ್ಲಿ 2.10 ಲಕ್ಷ ರೂ. ಮೌಲ್ಯದ 10 ಮೊಬೈಲ್‌ಗಳು, ಮಾದನಹಿಪ್ಪರಗಾ ಠಾಣೆ ವ್ಯಾಪ್ತಿಯಲ್ಲಿ ಒಂದು ಲಕ್ಷ ರೂ. ಮೌಲ್ಯದ 8 ಮೊಬೈಲ್‌ಗಳು, ಅಫಜಲಪುರ ಠಾಣೆ ವ್ಯಾಪ್ತಿಯಲ್ಲಿ 2,67,359 ರೂ. ಮೌಲ್ಯದ 16 ಮೊಬೈಲ್‌ಗಳು, ರೇವೂರ ಠಾಣೆ ವ್ಯಾಪ್ತಿಯಲ್ಲಿ 45 ಸಾವಿರ ರೂ. ಮೌಲ್ಯದ 2 ಮೊಬೈಲ್‌ಗಳು, ನಿಂಬರ್ಗಾ ಠಾಣೆ ವ್ಯಾಪ್ತಿಯಲ್ಲಿ 60 ಸಾವಿರ ರೂ. ಮೌಲ್ಯದ 4 ಮೊಬೈಲ್‌ಗಳು ಸೇರಿ 13,77,359 ರೂ. ಮೌಲ್ಯದ 71 ಮೊಬೈಲ್‌ಗಳು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು. ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 5 ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಮುತ್ತಗಾ ಗ್ರಾಮದ ವೀರಭದ್ರಪ್ಪ ಅಲಿಯಾಸ್ ವೀರಭದ್ರ ಸದಾಶಿವ ಪಂಚಾಳ ಎಂಬಾತನನ್ನು ಬಂಧಿಸಿ 8.80 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದರು. ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 8 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ 119 ಗ್ರಾಂ. ಬಂಗಾರದ ಒಡವೆ, 85 ಗ್ರಾಂ. ಬೆಳ್ಳಿ ಆಭರಣ, 28 ಸಾವಿರ ರೂ. ನಗದು ಸೇರಿ 18.46 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ 8 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ತಾಲೂಕಿನ ಕಾಮ್ಸರನಾಯಕ ತಾಂಡಾದ ಅಪ್ಪಾಜಿ ಗಂಗಾರಾಮ ಚವ್ಹಾಣ್ (22), ಹೊನ್ನಳ್ಳಿ ತಾಂಡಾದ ಮಿಥುನ್ ಲಕ್ಷ್ಮಣ ಚವ್ಹಾಣ್ (23) ಎಂಬುವವರನ್ನು ಬಂಧಿಸಲಾಗಿದೆ. ಇವರು ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು ಎಂದರು. ನರೋಣಾ ಮತ್ತು ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈತರ ಹೊಲಗಳಲ್ಲಿ ಕಟ್ಟಿದ್ದ ಒಂದು ಖಿಲಾರಿ ಹೆಣ್ಣು ಕರು, ಎರಡು ದೇವಣಿ ಹೋರಿಗಳು ಸೇರಿ ಒಟ್ಟು 1.15 ಲಕ್ಷ ರೂ. ಮೌಲ್ಯದ ಮೌಲ್ಯದ ಜಾನುವಾರುಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶರಣಪ್ಪ ಬೇನೂರ, ಫಾರುಕ ಖುರೇಶಿ ಮತ್ತು ರಬ್ಬಾನಿ ಅತ್ತಾರ ಎಂಬುವರನ್ನು ಬಂಧಿಸಿ ಅವರಿಂದ ಜಾನುವಾರು ಮಾರಾಟ ಮಾಡಿ ಬಂದ ಒಟ್ಟು 2.15 ಲಕ್ಷ ರೂ. ನಗದು ಮತ್ತು ಕಳ್ಳತನಕ್ಕೆ ಬಳಸುತ್ತಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಶಹಾಬಾದ್‌ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಶಹಾಬಾದ ಸಿಪಿಐ ಎಸ್.ಸಿ.ಪಾಟೀಲ, ಆಳಂದ ಡಿವೈಎಸ್‌ಪಿ ತಮ್ಮರಾಯ ಪಾಟೀಲ, ಸಿಪಿಐ ಜಗದೀಶ ಕೆ.ಜಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಮತ್ತಿತ್ತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.

ವಾರ್ತಾ ಭಾರತಿ 13 Apr 2026 9:31 pm

ಇರಾನ್ ಯುದ್ಧದಿಂದಾಗಿ ಇಂಧನ ಕೊರತೆಯುಂಟಾಗಿದ್ದರೂ ಆಹಾರ ಕೊರತೆಯುಂಟಾಗಿಲ್ಲ, ಕಾರಣವೇನು?

2008 ಜುಲೈ 11ರಂದು ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 147.50 ಡಾಲರ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಜಾಗತಿಕ ಆಹಾರ ಬೆಲೆಗಳು ನವೆಂಬರ್ 2006 ಮತ್ತು ಆಗಸ್ಟ್ 2008 ರ ನಡುವೆ ಸತತ 22 ತಿಂಗಳುಗಳ ಕಾಲ ಎರಡಂಕಿಯ ವಾರ್ಷಿಕ ಬೆಳವಣಿಗೆಯನ್ನು ಕಾಯ್ದುಕೊಂಡಿವೆ. ಈ ನಿರಂತರ ಹಣದುಬ್ಬರದ ಅವಧಿಯಲ್ಲಿ, ಬೆಲೆ ಏರಿಕೆಗಳು ಸರಾಸರಿ 34.8% ರಷ್ಟಿತ್ತು. ಫೆಬ್ರವರಿ 2022 ರ ಅಂತ್ಯದಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಮಾಡಿದ ನಂತರದ ತೈಲ ಕೊರತೆಯ ಸಮಯದಲ್ಲಿಯೂ ಇದು ಹಾಗೆಯೇ ಇತ್ತು. 2022 ಮಾರ್ಚ್ 7ರಂದು ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 139.13 ಡಾಲರ್ ತಲುಪಿತು. ನಂತರ, ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿದ್ದು, ಜನವರಿ 2021 ರಿಂದ ಜುಲೈ 2022 ರವರೆಗೆ ಸತತ 19 ತಿಂಗಳುಗಳ ಕಾಲ ಎಫ್‌ಎಒ ಸೂಚ್ಯಂಕದಲ್ಲಿ ಎರಡಂಕಿಯ ಹಣದುಬ್ಬರ ಮತ್ತು ವರ್ಷದಿಂದ ವರ್ಷಕ್ಕೆ ಸರಾಸರಿ 26.8% ರಷ್ಟಿತ್ತು. ಈ ಬಾರಿ ಅದು ಭಿನ್ನವಾಗಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ಉಂಟಾದ ಜಾಗತಿಕ ಇಂಧನ ಕೊರತೆಯಿಂದಾಗಿ ಬ್ರೆಂಟ್ ಬೆಲೆಗಳು ಜನವರಿಯಲ್ಲಿ ಪ್ರತಿ ಬ್ಯಾರೆಲ್‌ಗೆ ಸರಾಸರಿ 64.6 ಡಾಲರ್ ಆಗಿತ್ತು. ಫೆಬ್ರವರಿಯಲ್ಲಿ ಇದು 69.2 ಡಾಲರ್ ಆಗಿದ್ದು 2026 ಮಾರ್ಚ್ ತಿಂಗಳಲ್ಲಿ 98.2 ಡಾಲರ್ ಗೆ ಏರಿದೆ. ಮಾರ್ಚ್ 9 ರಂದು ಇದು 119.5 ಡಾಲರ್ ತಲುಪಿದೆ. ಎಪ್ರಿಲ್ 8 ರಿಂದ ದುರ್ಬಲವಾದ ಕದನ ವಿರಾಮ ಮತ್ತು ಹಾರ್ಮುಝ್ ಜಲಸಂಧಿಯು ಇನ್ನೂ ಹೆಚ್ಚಿನ ತೈಲ ಮತ್ತು ಅನಿಲ ಸಂಚಾರಕ್ಕೆ ಮುಕ್ತವಾಗಿಲ್ಲದ ಕಾರಣ, ಬ್ರೆಂಟ್ ಕಳೆದ ವಾರ ಪ್ರತಿ ಬ್ಯಾರೆಲ್‌ಗೆ 95.2 ಡಾಲರ್ ಆಗಿತ್ತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 2022 ಮತ್ತು 2008 ರಂತೆ ಅಂತರರಾಷ್ಟ್ರೀಯ ಆಹಾರ ಬೆಲೆಗಳಲ್ಲಿ ಏರಿಕೆ ಆಗಿಲ್ಲ ಎಂಬುದು. ಮಾರ್ಚ್ 2026 ರ ಹೊತ್ತಿಗೆ, ಎಫ್‌ಎಒ ಆಹಾರ ಬೆಲೆ ಸೂಚ್ಯಂಕ (ಇದು 2014-16 ರ ಬೇಸ್‌ಲೈನ್ 100 ಕ್ಕೆ ಹೋಲಿಸಿದರೆ ಜಾಗತಿಕ ಆಹಾರ ಸರಕುಗಳ ಬೆಲೆಗಳ ಸರಾಸರಿಯನ್ನು ಅಳೆಯುತ್ತದೆ) 128.5 ಅಂಕಗಳನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 1% ಕ್ಕಿಂತ ಕಡಿಮೆಯಿರುವ ಅಲ್ಪ ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಸೆಪ್ಟೆಂಬರ್ 2025 ರಿಂದ, ವಾರ್ಷಿಕ ಆಹಾರ ಹಣದುಬ್ಬರವು ಸ್ಥಿರವಾಗಿ ಕಡಿಮೆ ಅಥವಾ ಋಣಾತ್ಮಕವಾಗಿ ಉಳಿದಿದೆ. ಇದು 2021-22 ರ ಹೆಚ್ಚಿನ ಎರಡಂಕಿಯ ದರಗಳಿಗೆ ವ್ಯತಿರಿಕ್ತವಾಗಿದೆ. ಅರ್ಜೆಂಟೀನಾ, ಯುರೋಪಿಯನ್ ಒಕ್ಕೂಟ ಮತ್ತು ರಷ್ಯಾದಿಂದ ರಫ್ತಾಗುವ ಗೋಧಿಯ ರಫ್ತು ಬೆಲೆಗಳು ಪ್ರಸ್ತುತ ಪ್ರತಿ ಟನ್‌ಗೆ 230 ಡಾಲರ್, 238 ಡಾಲರ್ ಮತ್ತು 239 ಡಾಲರ್ ಗೆ ತಲುಪಿವೆ. ಹಿಂದಿನ ವರ್ಷದ ಇದೇ ದರಗಳು ಕ್ರಮವಾಗಿ 248 ಡಾಲರ್, 247 ಡಾಲರ್ ಮತ್ತು 254 ಡಾಲರ್ ಆಗಿತ್ತು. ಭಾರತದಿಂದ ಅಕ್ಕಿ ರಫ್ತು ಪ್ರತಿ ಟನ್‌ಗೆ ಕಳೆದ ವರ್ಷ 372 ಡಾಲರ್ ಇದ್ದದ್ದು 367 ಡಾಲರ್ ಆಗಿ ಇಳಿಕೆ ಕಂಡಿದೆ. ಈ ಪ್ರವೃತ್ತಿಯು ಥೈಲ್ಯಾಂಡ್ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ತೀವ್ರವಾಗಿ ಪ್ರತಿಫಲಿಸುತ್ತದೆ, ಅಲ್ಲಿ ಬೆಲೆಗಳು ಕ್ರಮವಾಗಿ 382 ಡಾಲರ್ ಮತ್ತು 351 ಡಾಲರ್ ಗೆ ಇಳಿದಿವೆ. ಜೋಳ ಮಾರುಕಟ್ಟೆಯಲ್ಲಿ ರಫ್ತು ಬೆಲೆ ಇದೇ ರೀತಿ ಕಡಿಮೆಯಾಗಿದೆ. ಅರ್ಜೆಂಟೀನಾದಲ್ಲಿ ರಫ್ತು ಬೆಲೆಗಳು ಪ್ರತಿ ಟನ್‌ಗೆ 219 ಡಾಲರ್ ನಿಂದ 209 ಡಾಲರ್ ಗೆ, ಉಕ್ರೇನ್ ನಲ್ಲಿ 240 ಡಾಲರ್ ನಿಂದ 227 ಡಾಲರ್ ಗೆ ಇಳಿದಿವೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದಲ್ಲಿ ಮೆಕ್ಕೆಜೋಳ ರಫ್ತು ಬೆಲೆಗಳು 214 ಡಾಲರ್ ಇದ್ದದ್ದು 217 ಡಾಲರ್ ಆಗಿಯೂ ಬ್ರೆಜಿಲ್ ನಲ್ಲಿ 223 ಡಾಲರ್ ಇದ್ದದ್ದು 225 ಡಾಲರ್ ಆಗಿಯೂ ಏರಿಕೆ ಆಗಿದೆ. ನ್ಯೂಯಾರ್ಕ್‌ನಲ್ಲಿ ಕಚ್ಚಾ ಸಕ್ಕರೆ ಬೆಲೆಗಳು ಸಹ ಪ್ರತಿ ಪೌಂಡ್‌ಗೆ 13.75 ಸೆಂಟ್‌ಗಳಷ್ಟಿದ್ದು, ಕಳೆದ ವರ್ಷ ಈ ಸಮಯದಲ್ಲಿ 18.1 ಸೆಂಟ್‌ಗಳಷ್ಟಿತ್ತು. ಮಾರ್ಚ್‌ನಲ್ಲಿ ಎಫ್‌ಎಒ ಡೈರಿ ಬೆಲೆ ಉಪಸೂಚ್ಯಂಕವು ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ 18.7% ಕಡಿಮೆಯಾಗಿತ್ತು. ಇತ್ತೀಚಿನ ಅವಧಿಯಲ್ಲಿ ಖಾದ್ಯ ತೈಲಗಳು ಮಾತ್ರ ಗಮನಾರ್ಹ ಬೆಲೆ ಏರಿಕೆಯನ್ನು ದಾಖಲಿಸಿವೆ. ಭಾರತಕ್ಕೆ ಆಮದು ಮಾಡಿಕೊಳ್ಳಲಾದ ಕಚ್ಚಾ ತಾಳೆ ಎಣ್ಣೆಯ ಬೆಲೆಗಳು ಟನ್‌ಗೆ 1,265 ಡಾಲರ್ ಆಗಿದ್ದು, ಎಪ್ರಿಲ್ 2025 ರ ಸರಾಸರಿ 1,112 ಡಾಲರ್ ಗಿಂತ ಹೆಚ್ಚಾಗಿದೆ. ಅದೇ ರೀತಿ ಸೋಯಾಬೀನ್ ಬೆಲೆ ಮತ್ತು ಸೂರ್ಯಕಾಂತಿ ಎಣ್ಣೆ ಬೆಲೆಯಲ್ಲಿಯೂ ಏರಿಕೆ ಕಂಡಿದೆ. ಈ ಬದಲಾವಣೆಗೆ ಕಾರಣವೇನು? ಈ ಬದಲಾವಣೆಗೆ ಕಾರಣ ಜಾಗತಿಕ ಪೂರೈಕೆಯ ಕೊರತೆಯಾಗಿದ್ದು, ದಾಖಲೆಯ ಉತ್ಪಾದನಾ ಮಟ್ಟಗಳಿಂದ ಇದು ಉತ್ತೇಜಿಸಲ್ಪಟ್ಟಿದೆ. ಅಮೆರಿಕದ ಕೃಷಿ ಇಲಾಖೆ 2025-26 ರ ಋತುವಿನಲ್ಲಿ ಗೋಧಿ ಉತ್ಪಾದನೆ 844.2 ಮಿಲಿಯನ್ ಟನ್, ಜೋಳ 1,301.1 ಮಿಲಿಯನ್ ಟನ್, ಎಣ್ಣೆಕಾಳುಗಳು 698.2 ಮಿಲಿಯನ್ ಟನ್ ಮತ್ತು ಸಕ್ಕರೆ 189.3 ಮಿಲಿಯನ್ ಟನ್ ಎಂದು ಅಂದಾಜಿಸಿದೆ. 2025-26ನೇ ಸಾಲಿಗೆ ಜಾಗತಿಕವಾಗಿ ಅಕ್ಕಿ ದಾಸ್ತಾನುಗಳು ಸಾರ್ವಕಾಲಿಕ ಗರಿಷ್ಠ 192.3 ಮಿಲಿಯನ್ ಟನ್ ತಲುಪುವ ನಿರೀಕ್ಷೆಯಿದೆ. 2007-08ರಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಆ ಅವಧಿಯಲ್ಲಿ, ಪೂರೈಕೆ ಕೊರತೆ, ಮೆಕ್ಕೆಜೋಳ ಮತ್ತು ಕಬ್ಬನ್ನು ಜೈವಿಕ ಇಂಧನ ಉತ್ಪಾದನೆಗೆ ಬಳಸಿದ ಕಾರಣ ಅಂತರರಾಷ್ಟ್ರೀಯ ಆಹಾರ ಬೆಲೆಗಳು ಗಗನಕ್ಕೇರಿದವು. ಸಾಂಸ್ಥಿಕ ಹೂಡಿಕೆದಾರರು ಸ್ಟಾಕ್‌ಗಳು ಮತ್ತು ಬಾಂಡ್‌ಗಳಂತಹ ಕೃಷಿ ಸರಕುಗಳನ್ನು ಪರಿಗಣಿಸಲು ಪ್ರಾರಂಭಿಸಿದಾಗ ಇದು ಹಣಕಾಸಿನ ಊಹಾಪೋಹದಿಂದ ಮತ್ತಷ್ಟು ತೀವ್ರಗೊಂಡಿತು. ಪರಿಣಾಮವಾಗಿ, ಆಹಾರ ಮತ್ತು ಕಚ್ಚಾ ತೈಲ ಬೆಲೆಗಳು ಒಟ್ಟಿಗೆ ಏರಿ, ಮಾರ್ಚ್ ಮತ್ತು ಜುಲೈ 2008 ರ ನಡುವೆ ಗರಿಷ್ಠ ಮಟ್ಟವನ್ನು ತಲುಪಿದವು. ಆದರೆ ಅಕ್ಟೋಬರ್ ವೇಳೆಗೆ ಇದು ಕುಸಿತ ಕಂಡಿತು. ಅದೇ ರೀತಿ, 2022 ರಲ್ಲಿ, ಜಾಗತಿಕ ಆಹಾರ ಮತ್ತು ಕಚ್ಚಾ ತೈಲ ಬೆಲೆಗಳು ಏರಿಕೆ ಕಂಡವು. ಲಾಕ್‌ಡೌನ್‌ಗಳನ್ನು ಸಡಿಲಿಸುವುದರೊಂದಿಗೆ ಕೋವಿಡ್ ನಂತರದ ಬೇಡಿಕೆಯೇ ಇದಕ್ಕೆ ಕಾರಣ. ರಷ್ಯಾ-ಉಕ್ರೇನ್ ಯುದ್ಧದ ಈ ಪ್ರವೃತ್ತಿಯನ್ನು ವೇಗಗೊಳಿಸಿತು, 2022 ರ ಮಾರ್ಚ್‌ನಲ್ಲಿ ಎಫ್‌ಎಒ ಸೂಚ್ಯಂಕವು 160.2 ಪಾಯಿಂಟ್‌ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು, ಅದೇ ತಿಂಗಳಲ್ಲಿ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 139.13 ಡಾಲರ್ ತಲುಪಿತು. ► ಆಹಾರದ ಬೆಲೆಗಳು ಮತ್ತೆ ಮೊದಲಿನಂತೆ ಏರಬಹುದೇ? ಮಾರ್ಚ್ 2026 ರಲ್ಲಿ ಎಫ್‌ಎಒ ಸೂಚ್ಯಂಕವು ಕೇವಲ 128.5 ಅಂಕಗಳನ್ನು ಗಳಿಸಿದ್ದರೂ ಮತ್ತು ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಸಕ್ಕರೆಯ ಹೇರಳವಾದ ನಿಕ್ಷೇಪಗಳೊಂದಿಗೆ ಜಗತ್ತು ಈ ಬಿಕ್ಕಟ್ಟಿಗೆ ಸಿಲುಕಿದ್ದರೂ ಸಹ, ಆ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಪ್ರಸ್ತುತ ದಾಸ್ತಾನುಗಳಿಗೆ ಸಂಬಂಧಿಸಿದಂತೆ ಭಾರತವೂ ಉತ್ತಮ ಸ್ಥಾನದಲ್ಲಿದೆ. ಇದು ಬಂಪರ್ ರಾಬಿ ಬೆಳೆಯನ್ನು ಕೊಯ್ಲು ಮಾಡಲು ಸಜ್ಜಾಗಿದೆ. ► ಮುಂಬರುವ ತಿಂಗಳುಗಳಲ್ಲಿ ಆಹಾರ ಬೆಲೆ ಏರಿಕೆಯಾಗಲು ಎರಡು ಕಾರಣಗಳಿವೆ ಮೊದಲನೆಯದು ಇರಾನ್ ಯುದ್ಧ ಮತ್ತು ನಿರ್ಣಾಯಕ ಹಾರ್ಮುಝ್ ಜಲಮಾರ್ಗದ ಮುಚ್ಚುವಿಕೆಯು ತೈಲವನ್ನು ಮಾತ್ರವಲ್ಲದೆ, ರಸಗೊಬ್ಬರಗಳು ಮತ್ತು ಬೆಳೆ ಸಂರಕ್ಷಣಾ ರಾಸಾಯನಿಕಗಳು ಸೇರಿದಂತೆ ಹಲವಾರು ಕೈಗಾರಿಕೆಗಳಿಗೆ ಹೋಗುವ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್‌ಗಳು ಮತ್ತು ಮಧ್ಯವರ್ತಿಗಳ ಪೂರೈಕೆಯ ಮೇಲೆಯೂ ಪರಿಣಾಮ ಬೀರುವ ಪೂರ್ಣ ಪ್ರಮಾಣದ ಇಂಧನ ಕೊರತೆಯನ್ನು ಉಂಟುಮಾಡಿದೆ. ವಿಶ್ವಬ್ಯಾಂಕ್ ದತ್ತಾಂಶದ ಪ್ರಕಾರ, ಯೂರಿಯಾ (ಮಧ್ಯಪ್ರಾಚ್ಯ ಮೂಲ) ಮತ್ತು ಡೈ-ಅಮೋನಿಯಂ ಫಾಸ್ಫೇಟ್ ಸರಾಸರಿ ಬೆಲೆಗಳು ಮಾರ್ಚ್ 2026 ರಲ್ಲಿ ಕ್ರಮವಾಗಿ ಪ್ರತಿ ಟನ್‌ಗೆ 725.6 ಡಾಲರ್ ಮತ್ತು 658.3 ಡಾಲರ್ ನಷ್ಟಿದ್ದವು, ಇದು ಮಾರ್ಚ್ 2025 ರ ವೇಳೆಗೆ ಕ್ರಮವಾಗಿ 394.5 ಡಾಲರ್ ಮತ್ತು 615.1 ಡಾಲರ್ ಆಗಿ ಹೆಚ್ಚಾಗಿದೆ. ಸೀಮಿತ ಲಭ್ಯತೆ ಮತ್ತು ರಸಗೊಬ್ಬರಗಳು, ಕಳೆನಾಶಕಗಳು, ಕೀಟನಾಶಕಗಳು, ಶಿಲೀಂಧ್ರನಾಶಕಗಳು ಮತ್ತು ಡೀಸೆಲ್‌ಗಳ ಹೆಚ್ಚಿನ ವೆಚ್ಚವು 2026-27ರ ಬೆಳೆಗಳ ಎಕರೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರಬಹುದು. ಅಮೆರಿಕದಲ್ಲಿ, ಜೋಳದ ನಾಟಿ ಏಪ್ರಿಲ್-ಮೇ ತಿಂಗಳಲ್ಲಿ ಮತ್ತು ಸೋಯಾಬೀನ್ ನಾಟಿ ಮೇ-ಜೂನ್‌ನಲ್ಲಿ ನಡೆಯುತ್ತದೆ. ಭಾರತದ ಖಾರಿಫ್ (ಮಾನ್ಸೂನ್) ಬಿತ್ತನೆ ಮುಖ್ಯವಾಗಿ ಜೂನ್ ಮಧ್ಯದಿಂದ ಆಗಸ್ಟ್ ಮಧ್ಯದವರೆಗೆ ಮಾಡಲಾಗುತ್ತದೆ. ಪ್ರಸ್ತುತ ಕದನ ವಿರಾಮವು ಹಾರ್ಮುಝ್ ಅನ್ನು ಸಂಪೂರ್ಣವಾಗಿ ಪುನರಾರಂಭಿಸದಿದ್ದರೆ ಇದು ಮುಂಬರುವ ಕೃಷಿ ಋತುವಿನ ನಿರೀಕ್ಷೆಗಳಿಗೆ ಅಪಾಯವನ್ನುಂಟುಮಾಡಬಹುದು ಮತ್ತು ಪ್ರತಿಯಾಗಿ, ಆಹಾರ ಬೆಲೆಗಳನ್ನು ಹೆಚ್ಚಿಸಬಹುದು. ಆಹಾರ ಹಣದುಬ್ಬರಕ್ಕೆ ಎರಡನೇ ಕಾರಣವೆಂದರೆ ಬೆಳೆಗಳನ್ನು ಜೈವಿಕ ಇಂಧನಗಳಾಗಿ ಪರಿವರ್ತಿಸುವುದು. ಕಚ್ಚಾ ವಸ್ತುಗಳ ಬೆಲೆಗಳು ದೀರ್ಘಕಾಲದವರೆಗೆ ಹೆಚ್ಚಿದ್ದರೆ, ಪೆಟ್ರೋಲ್‌ನೊಂದಿಗೆ ಬೆರೆಸಬಹುದಾದ ಎಥೆನಾಲ್ ತಯಾರಿಸಲು ಜೋಳ, ಅಕ್ಕಿ ಅಥವಾ ಕಬ್ಬನ್ನು ಬೇರೆಡೆಗೆ ತಿರುಗಿಸಲು ಹೆಚ್ಚಿನ ಪ್ರೋತ್ಸಾಹವಿರುತ್ತದೆ. ಅದೇ ರೀತಿ, ಪಾಮ್, ಸೋಯಾಬೀನ್ ಮತ್ತು ರೇಪ್ಸೀಡ್‌ನಂತಹ ಸಸ್ಯಜನ್ಯ ಎಣ್ಣೆಗಳನ್ನು ಡೀಸೆಲ್ ಬದಲಿಯಾಗಿ ಫ್ಯಾಟಿ ಆಸಿಡ್ ಮೀಥೈಲ್ ಎಸ್ಟರ್ (FAME) ಉತ್ಪಾದಿಸಲು ಬಳಸಬಹುದು. 2025-26ರಲ್ಲಿ ಜಾಗತಿಕವಾಗಿ 80.7 ಮಿಲಿಯನ್ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದ್ದರೂ, ತಾಳೆ ಎಣ್ಣೆ (ಪಾಮ್ ಆಯಿಲ್) ಬೆಲೆಗಳು ಏರಲು ಒಂದು ಕಾರಣವೆಂದರೆ ಇಂಡೋನೇಷ್ಯಾದ ಜೈವಿಕ ಇಂಧನ ಮಿಶ್ರಣ ಆದೇಶಗಳ ಆಕ್ರಮಣಕಾರಿ ಬಳಕೆ. ವಿಶ್ವದ ಅತಿದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರವು ಜನವರಿ 2025 ರಿಂದ ತನ್ನ ಡೀಸೆಲ್‌ನಲ್ಲಿ FAME ಅಂಶವನ್ನು 35% ರಿಂದ 40% ಕ್ಕೆ ಹೆಚ್ಚಿಸಿದೆ. ಈ ವರ್ಷದ ಜುಲೈನಿಂದ 50% FAME ಮತ್ತು 50% ಸಾಮಾನ್ಯ ಡೀಸೆಲ್ ಹೊಂದಿರುವ ಮಿಶ್ರಣವಾದ B50 ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. 2028ರ ವೇಳೆಗೆ ದೇಶಾದ್ಯಂತ ಮಾರಾಟವಾಗುವ ಎಲ್ಲಾ ಡೀಸೆಲ್‌ಗಳಿಗೆ B50 ಮಾನದಂಡವನ್ನು ಕಡ್ಡಾಯಗೊಳಿಸಲು ಇಂಡೋನೇಷ್ಯಾ ಸರ್ಕಾರವು ಆದೇಶವನ್ನು ಹೊರಡಿಸಿದೆ. ಅಂತಿಮವಾಗಿ, ಎಲ್ಲವೂ ಈ ಇಂಧನ ಪೂರೈಕೆ ಬಿಕ್ಕಟ್ಟಿನ ಅವಧಿಯನ್ನು ಅವಲಂಬಿಸಿದೆ, ಇದು 1970 ರ ದಶಕದ ನಂತರದ ಅತ್ಯಂತ ಪರಿಣಾಮ ಬೀರುವ ಬಿಕ್ಕಟ್ಟಾಗಿದೆ. ಕೃಪೆ: indianexpress.com

ವಾರ್ತಾ ಭಾರತಿ 13 Apr 2026 9:30 pm

Kalaburagi | ಡಾ.ಅಂಬೇಡ್ಕರ್ ಜಯಂತಿ : ಮದ್ಯ ಮಾರಾಟ ನಿಷೇಧಿಸಿ ಡಿ.ಸಿ ಆದೇಶ

ಕಲಬುರಗಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯಾದ್ಯಂತ ಎ.14ರ ಬೆಳಿಗ್ಗೆ 6 ಗಂಟೆಯಿಂದ ಎ.15ರ ಬೆಳಿಗ್ಗೆ 6 ಗಂಟೆ ವರೆಗೆ ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ-21 ರನ್ವಯ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯಪಾನ ನಿಷೇಧಿಸಿ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಿ.ಸಿ ಬಿ.ಫೌಝಿಯಾ ತರನ್ನುಮ್ ಅವರು ಆದೇಶಿಸಿದ್ದಾರೆ.

ವಾರ್ತಾ ಭಾರತಿ 13 Apr 2026 9:26 pm

ಜೇವರ್ಗಿಯಲ್ಲಿ ದಲಿತ ಪೌರಕಾರ್ಮಿಕರ ಧರಣಿ ತೀವ್ರ: ವೇತನ ಬಾಕಿ, ನೇಮಕಾತಿ ಸಮಸ್ಯೆ ವಿರುದ್ಧ ಆಕ್ರೋಶ

ಜೇವರ್ಗಿ: ದಲಿತ ಪೌರಕಾರ್ಮಿಕರ ಬಾಕಿ ವೇತನ ಹಾಗೂ ನೇಮಕಾತಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಜೇವರ್ಗಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ತೀವ್ರಗೊಂಡಿದ್ದು, ಕಾರ್ಮಿಕ ಸಂಘಟನೆ ಮುಖಂಡರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪುರಸಭೆ ದಲಿತ ಪೌರಕಾರ್ಮಿಕರ ಸಂಘಟನೆಯ ಮುಖಂಡ ಮಹೇಶ್ ಕುಮಾರ್ ರಾಠೋಡ್ ಮಾತನಾಡಿ, “ಇಲ್ಲಿನ ಶಾಸಕರು ದಲಿತ ಪೌರಕಾರ್ಮಿಕರು ಹಾಗೂ ದುಡಿಯುವ ವರ್ಗದ ಪರ ನಿಜವಾದ ಬದ್ಧತೆ ಹೊಂದಿದ್ದರೆ, ತಕ್ಷಣ ಧರಣಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಕಾಳಜಿಯನ್ನು ತೋರಿಸಬೇಕು” ಎಂದು ಒತ್ತಾಯಿಸಿದರು. ಮುಂದುವರಿಸಿ, ಶಾಸಕರು, ತಹಶೀಲ್ದಾರ್ ಹಾಗೂ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಧರಣಿ ಸತ್ಯಾಗ್ರಹದಲ್ಲಿ ಪೌರಕಾರ್ಮಿಕರ ಸಂಘಟನೆ ಅಧ್ಯಕ್ಷೆ ಶಂಕರಮ್ಮ, ಕಾರ್ಯದರ್ಶಿ ರಾಘವೇಂದ್ರ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಚೌದ್ರಿ ಕೊಡ್ಚಿ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೆಲ್ಲೂರ್, ಮುಖಂಡರಾದ ರಾಜ ಪಟೇಲ್ ಯಳ್ವಾರ್, ಪೌರಕಾರ್ಮಿಕರಾದ ಗಂಗಮ್ಮ, ಶರಣಮ್ಮ, ದೊಡ್ಡಮ್ಮ, ದೇವಕಿ, ಶಾರದಬಾಯಿ ಸೇರಿದಂತೆ ಅನೇಕರು ನಿರಂತರ ಧರಣಿಯಲ್ಲಿ ಭಾಗಿಯಾಗಿದ್ದಾರೆ.

ವಾರ್ತಾ ಭಾರತಿ 13 Apr 2026 9:25 pm

IPL 2026- ಅಭಿಷೇಕ್ ಶರ್ಮಾ ಗೋಲ್ಡನ್ ಡಕ್ ಗೆ ನೆಟ್ಟಿಗರ ಗೇಲಿ; ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಗೆ ಒತ್ತಾಯ

ಕ್ರಿಕೆಟ್ ಪ್ರೇಮಿಗಳೇ ಹಾಗೆ ಚೆನ್ನಾಗಿ ಆಡಿದಾಗ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಕೆಟ್ಟದಾಗಿ ಆಡಿದಾಗ ತೆಗಳುತ್ತಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಗೋಲ್ಡನ್ ಡಕ್ ಗೆ ಔಟಾದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ವಿಪರೀತ ಟ್ರೋಲ್ ಆಗಿದ್ದಾರೆ. ಅಪರೂಪಕ್ಕೆ ಆಡುವ ಈತನನ್ನು ಭಾರತ ತಂಡದಿಂದ ಕಿತ್ತ ಹಾಕಿ ಆ ಜಾಗಕ್ಕೆ 15 ವರ್ಷದ ವೈಭವ್ ಸೂರ್ಯವಂಶಿಯನ್ನು ಆಯ್ಕೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಏಪ್ರಿಲ್ 13ರ ಸೋಮವಾರ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಸನ್ ರೈಸರ್ಸ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ನಾಯಕ ಇಶಾನ್ ಕಿಶನ್ ಅವರ ಅಮೋಘ 91(44 ಎಸೆತ) ರನ್ ಗಳ ನೆರವಿನಿಂದ ಹೈದರಾಬಾದ್ ತಂಡ 6 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ()ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಇನ್ನಿಂಗ್ಸ್ ನ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಜೋಫ್ರಾ ಆರ್ಚರ್ ಅವರ ಮಿಡಲ್ ಮತ್ತು ಲೆಗ್ ಸ್ಟಂಪ್ ಮೇಲಿದ್ದ ಎಸೆತಕ್ಕೆ ದೊಡ್ಡ ಹೊಡೆತಕ್ಕೆ ಯತ್ನಿಸಿದ ಅಭಿಷೇಕ್ ಅವರು ಡೀಪ್ ಬ್ಯಾಕ್ ವರ್ಡ್ ಪಾಯಿಂಟ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರವಿ ಬಿಷ್ಣೋಯಿಗೆ ಕ್ಯಾಚಿತ್ತು ಔಟಾದರು. ಇದು ಈ ವರ್ಷ ಟಿ20 ಕ್ರಿಕೆಟ್ ನಲ್ಲಿ ಅವರು ಸೊನ್ನೆ ರನ್ ಗೆ ಔಟಾಗುತ್ತಿರುವುದು 7ನೇ ಬಾರಿ. ಈ ಕೆಟ್ಟ ದಾಖಲೆ ಈ ಹಿಂದೆ ರೋಹಿತ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಜಂಟಿಯಾಗಿ ಹಂಚಿಕೊಂಡಿದ್ದರು. ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಡಕ್ ಔಟ್ ಆದ ಭಾರತೀಯರು 7 ಬಾರಿ- ಅಭಿಷೇಕ್ ಶರ್ಮಾ 2026 ರಲ್ಲಿ (18 ಇನ್ನಿಂಗ್ಸ್) 6 ಬಾರಿ- ರೋಹಿತ್ ಶರ್ಮಾ 2018 ರಲ್ಲಿ (32 ಇನ್ನಿಂಗ್ಸ್) 6 ಬಾರಿ- ಸಂಜು ಸ್ಯಾಮ್ಸನ್ 2024 ರಲ್ಲಿ (32 ಇನ್ನಿಂಗ್ಸ್) 5 ಬಾರಿ- ಗುರುಕೀರತ್ ಸಿಂಗ್ ಮಾನ್ 2013 ರಲ್ಲಿ (19 ಇನ್ನಿಂಗ್ಸ್) ಭಾರತ ತಂಡದ ಆರಂಭಿಕನಾಗಿ ಅಬಿಷೇಕ್ ಶರ್ಮಾ ಈ ವರ್ಷ 6 ಬಾರಿ ಶೂನ್ಯ ರನ್ ಗೆ ಔಟಾಗಿದ್ದರು. ೀಅದರಲ್ಲಿ 3 ಬಾರಿ ಟಿ20 ವಿಶ್ವಕಪ್ ನಲ್ಲಿಯೇ ಸೊನ್ನೆ ರನ್ ಗೆ ಔಟಾಗಿ ನಿರಾಸೆ ಮೂಡಿಸಿದ್ದರು. ಇದೀಗ ಐಪಿಎಲ್ ನಲ್ಲಿ ಮೊದಲ ಬಾರಿಗೆ ಶುೂನ್ಯ ಸಂಪಾದನೆ ಮಾಡಿದ್ದಾರೆ. ಅಲ್ಲಿಗೆ 7 ಬಾರಿ ಆದ ಹಾಗಾಯಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯ ಕರ್ನಾಟಕ 13 Apr 2026 9:24 pm

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ʼಝಾಂಬಿ ಡ್ರಗ್ಸ್ʼ ಬಳಕೆ ದೇಶದಲ್ಲಿಲ್ಲ: ಮನೋವೈದ್ಯ ಡಾ.ಪಿ.ವಿ. ಭಂಡಾರಿ ಸ್ಪಷ್ಟನೆ

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಝಾಂಬಿ ಡ್ರಗ್ಸ್ ಸೇವನೆ ವಿಡಿಯೋ ಅಪ್ಪಟ್ಟ ಸುಳ್ಳು, ಭಾರತದಲ್ಲಿ ಈ ಡ್ರಗ್ಸ್ ಬಳಕೆ ಇಲ್ಲ ಎಂದು ಉಡುಪಿಯ ಹಿರಿಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ತಿಳಿಸಿದ್ದಾರೆ. ಇತ್ತೀಚೆಗೆ ಯುವಕನೊಬ್ಬ ಝಾಂಬಿ ಡ್ರಗ್ಸ್ ಸೇವಿಸಿ ಪ್ರತಿಮೆಯಂತೆ ನಿಂತಿರುವ ವಿಡಿಯೋ ವೈರಲ್ ಆಗಿತ್ತು. ಇದು ಸಾಕಷ್ಟು ಆತಂಕಕ್ಕೂ ಕಾರಣ ಆಗಿತ್ತು. ಈ ಸಂಬಂಧ ಗೃಹ ಸಚಿವರು, ಪೊಲೀಸರು ಸ್ಪಷ್ಟಿಕರಣ ನೀಡಿ, ಝಾಂಬಿ ಡ್ರಗ್ಸ್ ಬಗ್ಗೆ ವದಂತಿ ಹಬ್ಬುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ವೈರಲ್ ಆದ ವಿಡಿಯೋ ಬೆಂಗಳೂರು ಮತ್ತು ಚಂಡೀಗಢ ಎಂಬುದಾಗಿ ಹೇಳಲಾಗಿದೆ. ಈ ಡ್ರಗ್ಸ್‌ನ್ನು ಯುವಕ ನೋರ್ವ ಪೂರೈಸಿದ್ದಾನೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಆದರೆ ಇದೆಲ್ಲವೂ ಅಪ್ಪಟ್ಟ ಸುಳ್ಳು. ಈ ರೀತಿಯ ಡ್ರಗ್ಸ್ ಭಾರತದಲ್ಲಿ ಎಲ್ಲಿಯೂ ಸಿಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಅಮೆರಿಕದಲ್ಲಿ 2016ರಲ್ಲಿ ವರದಿಯಾದ ಈ ವೆಟರ್ನರಿ ಡ್ರಗ್ ಪ್ರಾಣಿಗಳಿಗೆ ಅರಿವಳಿಕೆ ನೀಡಲು ಬಳಸಲಾಗುತ್ತದೆ. ಮನುಷ್ಯರು ಬಳಸಿದರೆ ಚರ್ಮದಲ್ಲಿ ಗಾಯಗಳು ಕಂಡುಬರುತ್ತದೆ, ಪ್ರತಿಮೆಯಂತೆ ನಿಂತುಕೊಳ್ಳುವ ವರ್ತನೆ ಕಾಣಿಸಿ ಕೊಳ್ಳುತ್ತದೆ. ಆದರೆ ಇದು ಭಾರತದಲ್ಲಿ ಈವರೆಗೆ ಬಳಕೆ ಆಗಿರುವುದು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ವೈರಲ್ ಆದ 30 ಸೆಕೆಂಡ್ ವಿಡಿಯೋದಲ್ಲಿ ಒಬ್ಬ ಯುವಕ ಪ್ರತಿಮೆ ರೀತಿಯಲ್ಲಿ ನಿಂತಿರುವುದು ಕಂಡು ಬಂದಿದೆ. ಈ ವಿಡಿಯೋ ಆಧರಿಸಿ ತಪ್ಪು ನಿರ್ಧಾರವನ್ನು ಯಾರು ಕೈಗೊಳ್ಳಬಾರದು. ವಿಡಿಯೋದಲ್ಲಿ ಕಾಣುವ ವ್ಯಕ್ತಿ ಬಿಸಿಲು ಅಥವಾ ಹೈಪೋಗ್ಲೈಸೀಮಿಯಾ ಸೇರಿದಂತೆ ಅನೇಕ ಕಾರಣಗಳಿಂದ ಈ ರೀತಿ ನಿಂತಿರಬಹುದು. ಇಂತಹ ಸಂದರ್ಭಗಳಲ್ಲಿ ವಿಡಿಯೋ ಮಾಡುವ ಬದಲು ಅಂಥವರಿಗೆ ಸಹಾಯ ಮಾಡಬೇಕು ಎಂದು ಭಂಡಾರಿ ಸಲಹೆ ನೀಡಿದ್ದಾರೆ. ನಮ್ಮಲ್ಲಿ ಝಾಂಬಿ ಬಳಕೆ ಇಲ್ಲ. ಈ ಬಗ್ಗೆ ಅನಗತ್ಯ ಭಯ ಹರಡಿಸಬಾರದು. ಅದರ ಬದಲು ನಮ್ಮಲ್ಲಿ ಚಾಲ್ತಿಯಲ್ಲಿ ರುವ ಗಾಂಜಾ, ಅಫೀಮು, ನಿದ್ರೆ ಮಾತ್ರೆ, ಎಂಡಿಎಂಎಗಳಂತಹ ಮಾದಕ ದ್ರವ್ಯಗಳ ನಿಯಂತ್ರಣದ ಕಡೆ ಹೆಚ್ಚು ಗಮನ ಹರಿಸಬೇಕು. ಇವು ನಮ್ಮ ಯುವಜನತೆಯನ್ನು ನಿಜವಾಗಿಯೂ ಹಾಳು ಮಾಡುತ್ತಿವೆ. ಇವುಗಳ ಬಳಕೆಯ ವಿರುದ್ಧ ಎಚ್ಚರ ಅಗತ್ಯ ಎಂದು ಅವರು ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 13 Apr 2026 9:23 pm

Kalaburagi | ಎ.15 ರಿಂದ 17ರವರೆಗೆ ಹೀಟ್ ವೇವ್ ಆರೆಂಜ್ ಅಲರ್ಟ್ : ಮಧ್ಯಾಹ್ನ ಹೊರಹೋಗದಂತೆ ಡಿಸಿ ಡಿ.ಸಿ ಫೌಝಿಯಾ ತರನ್ನುಮ್ ಸಲಹೆ

ಕಲಬುರಗಿ: ಜಿಲ್ಲೆಯಾದ್ಯಂತ ಎ.15ರಿಂದ 17ರವರೆಗೆ ಬಿಸಿ ಗಾಳಿ ತೀವ್ರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ‘ಹೀಟ್ ವೇವ್’ ಆರೆಂಜ್ ಅಲರ್ಟ್ ನೀಡಿದೆ. ಈ ಹಿನ್ನೆಲೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಸಾಧ್ಯವಾದಷ್ಟು ಹೊರಗೆ ಹೋಗುವುದನ್ನು ತಪ್ಪಿಸಬೇಕು. ಅನಿವಾರ್ಯವಾಗಿ ಹೊರಗೆ ಹೋಗಬೇಕಾದರೆ ಛತ್ರಿ, ಟೋಪಿ, ಸನ್‌ಗ್ಲಾಸ್‌, ಪಾದರಕ್ಷೆಗಳನ್ನು ಬಳಸಬೇಕು. ಜೊತೆಗೆ ಸಾಕಷ್ಟು ನೀರನ್ನು ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಹಗುರವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ತಾಪಮಾನ ಹೆಚ್ಚಿರುವ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ನಿರಂತರವಾಗಿ ನೀರು ಕುಡಿಯುವುದು ಅಗತ್ಯ ಎಂದರು. ಶಿಶುಗಳು, ವೃದ್ಧರು ಹಾಗೂ ದೀರ್ಘಕಾಲದ ಕಾಯಿಲೆ ಹೊಂದಿರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಬಿಸಿಲಿನಿಂದ ಮನೆಗೆ ಬಂದ ತಕ್ಷಣ ತಂಪಾದ ನೀರು ಕುಡಿಯುವುದನ್ನು ಹಾಗೂ ತಕ್ಷಣ ಎಸಿ/ಕೂಲರ್ ಬಳಸುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ. ಚಹಾ-ಕಾಫಿ ತ್ಯಜಿಸಿ, ಮಜ್ಜಿಗೆ ಸೇವನೆ ಮಾಡಿ : ಬಿಸಿಲಿನ ಸಮಯದಲ್ಲಿ ದೇಹದ ನೀರಿನ ಅಂಶ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಚಹಾ, ಕಾಫಿ, ಆಲ್ಕೋಹಾಲ್ ಹಾಗೂ ಕಾರ್ಬೋನೇಟೆಡ್ ಪಾನೀಯಗಳನ್ನು ತಪ್ಪಿಸಬೇಕು. ಬದಲಾಗಿ ಓಆರ್‌ಎಸ್, ಲಸ್ಸಿ, ಮಜ್ಜಿಗೆ, ನಿಂಬೆ ನೀರು, ತೋರಣಿ (ಅಕ್ಕಿ ನೀರು) ಸೇವಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಏನು ಮಾಡಬೇಕು? : ►ತಂಪಾದ ಸ್ಥಳಗಳಲ್ಲಿ ಇರಬೇಕು, ►ಛತ್ರಿ, ಟೋಪಿ, ಹತ್ತಿ ಬಟ್ಟೆ ಬಳಸಬೇಕು ►ಸಾಕಷ್ಟು ನೀರು ಕುಡಿಯಬೇಕು ►ಬಿಸಿಲಿನ ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು ಏನು ಮಾಡಬಾರದು? : ►ನೇರ ಸೂರ್ಯ ಕಿರಣಕ್ಕೆ ದೇಹ ಒಡ್ಡಬಾರದು ►ಕೊಡೆ ಇಲ್ಲದೆ ಹೊರಹೋಗಬಾರದು ►ಗಾಢ ಬಣ್ಣದ ಅಥವಾ ಸಿಂಥೆಟಿಕ್ ಉಡುಪು ಧರಿಸಬಾರದು ►ಬಿಸಿಲಿನಲ್ಲಿ ಶ್ರಮದಾಯಕ ಕೆಲಸ ಮಾಡಬಾರದು ಜಾನುವಾರುಗಳಿಗೂ ಮುನ್ನೆಚ್ಚರಿಕೆ ಅಗತ್ಯ : ಜಾನುವಾರುಗಳನ್ನು ಮುಂಜಾನೆ ಹಾಗೂ ಸಂಜೆ ಮಾತ್ರ ಮೇಯಿಸಲು ಬಿಡಬೇಕು. ಮಧ್ಯಾಹ್ನ ನೆರಳಿನಲ್ಲಿ ಇರಿಸಿ, ದಿನಕ್ಕೆ 2-3 ಬಾರಿ ನೀರು ಕೊಡಬೇಕು. ನಿರ್ಜಲೀಕರಣ ತಪ್ಪಿಸಲು ಉಪ್ಪು, ಬೆಲ್ಲ, ಲಿಂಬೆ ಮಿಶ್ರಿತ ನೀರು ನೀಡುವುದು ಉತ್ತಮ ಎಂದು ಸೂಚಿಸಲಾಗಿದೆ. ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ರೈತರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ವಾರ್ತಾ ಭಾರತಿ 13 Apr 2026 9:21 pm

ಕರ್ನಾಟಕದ 11 ಜಿಲ್ಲೆಗಳಲ್ಲಿ 18 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಸರ್ಕಾರ ಒಪ್ಪಿಗೆ; 15 ಸಾವಿರ ಉದ್ಯೋಗ - ಎಲ್ಲೆಲ್ಲಿ?

ರಾಜ್ಯ ಉನ್ನತ ಮಟ್ಟದ ಅನುಮೋದನೆ ನೀಡಿಕೆ ಸಮಿತಿಯ 67ನೆ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ 18,430.44 ಕೋಟಿ ಹೂಡಿಕೆಗೆ ಸಮ್ಮತಿ ನೀಡಲಾಗಿದೆ. ಇದರಿಂದ ರಾಜ್ಯದ 15032 ಜನರಿಗೆ ಉದ್ಯೋಗಾವಕಾಶ ಸಿಗಲಿವೆ. ಯಾವ ಕಂಪನಿಯಿಂದ ಎಲ್ಲೆಲ್ಲಿ ಹೂಡಿಕೆ, ಯಾವ ವಲಯದಲ್ಲಿ ಉದ್ಯೋಗ ಅವಕಾಶ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 13 Apr 2026 9:13 pm

ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ

ನ್ಯೂಯಾರ್ಕ್: ಕಾರ್ಪೊರೇಟ್ ವಲಯದಲ್ಲಿನ ಉದ್ಯೋಗ ಕಡಿತ ಎಂಬುದು ಅನೇಕರ ಪಾಲಿಗೆ ಬರಸಿಡಿಲು ಬಡಿದಂತಾಗುತ್ತದೆ. ಆದರೆ, 34 ವರ್ಷದ ಯುವಕನೊಬ್ಬ ತಾನು ಎದುರಿಸಿದ ಉದ್ಯೋಗ ನಷ್ಟವನ್ನೇ ತನ್ನ ಭವಿಷ್ಯದ ಅಡಿಪಾಯವನ್ನಾಗಿ ಮಾಡಿಕೊಂಡು ಯಶಸ್ಸಿನ ಶಿಖರವೇರಿದ್ದಾರೆ. ನ್ಯೂಯಾರ್ಕ್‌ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿದ್ದ ಪಾಕಿಸ್ತಾನಿ-ಅಮೆರಿಕನ್ ಮೂಲದ ಉದ್ಯಮಿ ಜೀಶನ್ ಬಖ್ರಾನಿ (Zeeshan Bakhrani) ಎರಡು ಬಾರಿ ಕೆಲಸ ಕಳೆದುಕೊಂಡ ಬಳಿಕ ಆಹಾರ

ಒನ್ ಇ೦ಡಿಯ 13 Apr 2026 9:08 pm

ನೌಕಾಪಡೆ ಕ್ಷೀಣಿಸಿದ್ದರೂ ಇರಾನ್ ಹಾರ್ಮುಝ್ ಜಲಸಂಧಿಯನ್ನು ಹೇಗೆ ನಿಯಂತ್ರಿಸುತ್ತಿದೆ?

21 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಶಾಂತಿ ಮಾತುಕತೆಗಳ ನಂತರ ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಬರಲು ವಿಫಲವಾಗಿದೆ. ಇದಾದ ನಂತರ ಅಮೆರಿಕದೊಂದಿಗೆ ಔಪಚಾರಿಕ ಒಪ್ಪಂದವಾಗುವವರೆಗೆ ಹಾರ್ಮುಝ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಇರಾನ್ ಘೋಷಿಸಿತು. ಇರಾನ್ ಯಾವುದೇ ಆತುರದಲ್ಲಿಲ್ಲ. ಅಮೆರಿಕ ಸಮಂಜಸವಾದ ಒಪ್ಪಂದಕ್ಕೆ ಒಪ್ಪುವವರೆಗೆ, ಹಾರ್ಮುಝ್ ಜಲಸಂಧಿಯ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ‌ʼಫಾರ್ಸ್ ನ್ಯೂಸ್ʼ ಏಜೆನ್ಸಿ ರವಿವಾರ ವರದಿ ಮಾಡಿದೆ. ಶನಿವಾರ ಮಾತುಕತೆ ನಡೆಯುತ್ತಿರುವಾಗ, ಸಂಚಾರ ಸ್ವಾತಂತ್ರ್ಯ ಕಾರ್ಯಾಚರಣೆಯ ಭಾಗವಾಗಿ ಎರಡು ನೌಕಾ ಮಾರ್ಗದರ್ಶಿ-ಕ್ಷಿಪಣಿ ವಿಧ್ವಂಸಕಗಳು ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ ಎಂದು ಯುಎಸ್ ರಕ್ಷಣಾ ಇಲಾಖೆ ವರದಿ ಮಾಡಿದೆ. ಫೆಬ್ರವರಿ 28 ರಂದು ಸಂಘರ್ಷ ಭುಗಿಲೆದ್ದ ನಂತರ ಅಮೆರಿಕದ ಯುದ್ಧನೌಕೆಗಳು ಮಾರ್ಗವನ್ನು ತೆರವುಗೊಳಿಸಿದ ನಂತರ ಮೊದಲ ಬಾರಿಗೆ ಈ ರೀತಿ ಯುದ್ಧನೌಕೆಗಳು ಜಲಸಂಧಿ ದಾಟಿವೆ. ಆದರೆ ಇರಾನ್ ಈ ಹೇಳಿಕೆಯನ್ನು ನಿರಾಕರಿಸಿದೆ. ಇರಾನ್‌ನ ರಾಜ್ಯ ಪ್ರಸಾರಕ IRIB ನಲ್ಲಿ ಅಧಿಕೃತ ಹೇಳಿಕೆಯಲ್ಲಿ, ಅಂತಹ ಯಾವುದೇ ಪ್ರಯತ್ನಕ್ಕೆ ದೃಢ ಮತ್ತು ತಕ್ಕುದಾದ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್ ಹೇಳಿದೆ. ಯುದ್ಧ ಪ್ರಾರಂಭವಾದಾಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕವು ಇರಾನ್‌ನ ನೌಕಾಪಡೆಯನ್ನು ನಾಶಪಡಿಸಲಿದೆ ಎಂದು ಹೇಳಿದ್ದರು. ಇಂದು, ಇರಾನ್ ಆರು ವಾರಗಳ ಹಿಂದಿನವರೆಗೂ ತೆರೆದಿದ್ದ ಕಿರಿದಾದ ಜಲಮಾರ್ಗದ ಮೂಲಕ ಹಡಗುಗಳ ಸಾಗಣೆಯನ್ನು ನಿಯಂತ್ರಿಸುತ್ತದೆ. ಶಾಂತಿ ಮಾತುಕತೆಗಳಲ್ಲಿ ಅದನ್ನು ಹತೋಟಿಯಾಗಿ ಬಳಸಿಕೊಂಡಿದೆ. ಇರಾನ್ ಗೆ ಇದೆಲ್ಲವೂ ಸಾಧ್ಯವಾಗಿದ್ದು ಹೇಗೆ? ಆರಂಭಿಕ ದಾಳಿ: ಎಪ್ರಿಲ್ 6 ರ ದಿನಾಂಕದ ಫ್ಯಾಕ್ಟ್ ಶೀಟ್‌ನಲ್ಲಿ, ಪಶ್ಚಿಮ ಏಷ್ಯಾವನ್ನು ಒಳಗೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) 155 ಕ್ಕೂ ಹೆಚ್ಚು ಇರಾನಿನ ಹಡಗುಗಳನ್ನು ಮುಳುಗಿಸಿದೆ ಎಂದು ಹೇಳಿದೆ. ಯುದ್ಧದ ಮೊದಲ ವಾರದೊಳಗೆ, ಸೆಂಟ್‌ಕಾಮ್ ಇರಾನ್‌ನ ಎರಡು ನೌಕಾಪಡೆಗಳಾದ ಸಾಂಪ್ರದಾಯಿಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನೇವಿ (IRIN) ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗಳಲ್ಲಿ ಒಂದಕ್ಕೆ ದೊಡ್ಡ ಮಟ್ಟದ ಹಾನಿಯನ್ನುಂಟುಮಾಡಿದೆ ಎಂದು ಹೇಳಿಕೊಂಡಿದೆ. ಮಾರ್ಚ್ 5 ರಂದು ಪತ್ರಿಕಾಗೋಷ್ಠಿಯಲ್ಲಿ, ಸೆಂಟ್‌ಕಾಮ್ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್, ಅಮೆರಿಕವು ಇರಾನ್‌ನ ಪ್ರಮುಖ ನೌಕಾ ಉಪಸ್ಥಿತಿಯನ್ನು ಪರಿಣಾಮಕಾರಿಯಾಗಿ ನಾಶಗೊಳಿಸಿದೆ ಎಂದು ಹೇಳಿದರು. ಮಾರ್ಚ್ 5 ರಂದು ಓಪನ್ ಸೋರ್ಸ್ ರಕ್ಷಣಾ ಗುಪ್ತಚರ ವೆಬ್‌ಸೈಟ್ ಜೇನ್ಸ್ ನಲ್ಲಿನ ಟಿಪ್ಪಣಿಯ ಪ್ರಕಾರ, ಯುದ್ಧ ಪ್ರಾರಂಭವಾದಾಗ ಬಂದರ್ ಅಬ್ಬಾಸ್ ಮತ್ತು ಕೊನಾರಕ್ ನೌಕಾ ನೆಲೆಗಳಲ್ಲಿ ನೆಲೆಗೊಂಡಿದ್ದ ಐಆರ್‌ಐಎನ್‌ನ ಬಹುತೇಕ ಎಲ್ಲಾ ಪ್ರಮುಖ ಮುಂಚೂಣಿ ಹೋರಾಟಗಾರ ಮೇಲೆ ತೀವ್ರ ದಾಳಿ ನಡೆದಿದೆ ಎಂದು ಉಪಗ್ರಹ ಚಿತ್ರಣಗಳು ತೋರಿಸಿವೆ. IRIN ನ ಪ್ರಾಥಮಿಕ ಯುದ್ಧ ಹಡಗುಗಳಲ್ಲಿ ಏಳು ಅಲ್ವಾಂಡ್/ಜಮರನ್-ವರ್ಗದ ಯುದ್ಧನೌಕೆಗಳಿದ್ದು, ಅವುಗಳಲ್ಲಿ ನಾಲ್ಕು ಬಹುಶಃ ಮೊದಲ ವಾರದಲ್ಲೇ ಮುಳುಗಿರಬಹುದು ಅಥವಾ ನಾಶಗೊಂಡಿರಬಹುದು ಎಂದು ಜೇನ್ಸ್ ಹೇಳಿದೆ. ಬಯಾಂಡರ್-ವರ್ಗದ ಎರಡೂ ಕಾರ್ವೆಟ್‌ಗಳನ್ನು (ಸಣ್ಣ ಯುದ್ಧ ನೌಕೆಗಳು) ಕೊನಾರಕ್‌ನಲ್ಲಿ ಮುಳುಗಿಸಲಾಯಿತು. ಮುಳುಗಿಸಲಾದ ಇತರ ಹಡಗುಗಳಲ್ಲಿ ಬಹುಶಃ ಸಣ್ಣ ಕ್ಷಿಪಣಿ-ಸಶಸ್ತ್ರ ಗಸ್ತು ಹಡಗುಗಳು ಮತ್ತು ಬೆಂಬಲ ಹಡಗುಗಳು ಸೇರಿವೆ. ಜೇನ್ಸ್‌ನ ಕಡಲ ತಂಡದ ಮುಖ್ಯಸ್ಥ ಅಲೆಕ್ಸ್ ಪೇಪ್, ʼದಿ ವಾಲ್ ಸ್ಟ್ರೀಟ್ ಜರ್ನಲ್‌ʼಗೆ ನೀಡಿದ ಸಂದರ್ಶನದಲ್ಲಿ, ಇರಾನ್ ನೌಕಾಪಡೆಯು ತನ್ನ ಏಳು ಯುದ್ಧನೌಕೆಗಳಲ್ಲಿ ಆರು ಯುದ್ಧ ನೌಕೆಗಳು, ಎರಡು ಕಾರ್ವೆಟ್‌ಗಳು ಮತ್ತು ಮೂರು ಸಾಗರದಲ್ಲಿ ಚಲಿಸುವ ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳಲ್ಲಿ ಒಂದನ್ನು ಕಳೆದುಕೊಂಡಿದೆ ಎಂದು ಹೇಳಿದರು. ಕಳೆದ ವಾರ ಪೆಂಟಗನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಅಮೆರಿಕದ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಜನರಲ್ ಡಾನ್ ಕೇನ್, ಇರಾನಿನ ನೌಕಾಪಡೆಯನ್ನು ಪರಿಣಾಮಕಾರಿಯಾಗಿ ನಾಶ ಮಾಡಲಾಗಿದೆ ಎಂದು ಘೋಷಿಸಿದರು. ಅದರ ಹೆಚ್ಚಿನ ಹಡಗುಗಳು ಈಗ ಅರೇಬಿಯನ್ ಕೊಲ್ಲಿಯ ಕೆಳಭಾಗದಲ್ಲಿವೆ. ಯುಎಸ್ ಪಡೆಗಳು ಇರಾನ್‌ನ ಎಲ್ಲಾ ಮಹತ್ವದ ಮುಂಚೂಣಿ ಯುದ್ಧನೌಕೆಗಳನ್ನು ಒಳಗೊಂಡಂತೆ ಅದರ ನಿಯಮಿತ ನೌಕಾಪಡೆಯ 90% ಕ್ಕಿಂತ ಹೆಚ್ಚು ಪಡೆಯನ್ನು ನಾಶಪಡಿಸಿವೆ ಎಂದು ಅವರು ಹೇಳಿದ್ದಾರೆ. ಅಮೆರಿಕವು ನೌಕಾ ಸ್ಫೋಟಕ ಗುರಿಗಳ ವಿರುದ್ಧ 700 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ. ಅವರ ನೌಕಾ ಸ್ಫೋಟಕಗಳಲ್ಲಿ 95% ಕ್ಕಿಂತ ಹೆಚ್ಚು ನಾಶಪಡಿಸಿದೆ ಎಂದಿದ್ದಾರೆ ಕೇನ್. ಕೇನ್ ಅವರ ಹೇಳಿಕೆಗಳ ಹೊರತಾಗಿಯೂ, ಹಾರ್ಮುಝ್ ಜಲಸಂಧಿಯನ್ನು ಹೆಚ್ಚಿನ ಹಡಗು ಸಂಚಾರಕ್ಕಾಗಿ ತೆರೆಯಲು ಇರಾನ್ ಗೆ ಸಾಧ್ಯವಾಗದೇ ಇರುವುದಕ್ಕೆ ಕಾರಣ ಅಲ್ಲಿ ಹಾಕಿರುವ ಎಲ್ಲಾ ಸ್ಪೋಟಕಗಳನ್ನು ಪತ್ತೆಹಚ್ಚುವ ಮತ್ತು ತೆಗೆದುಹಾಕುವ ಸಾಮರ್ಥ್ಯವನ್ನು ಅದು ಹೊಂದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಸಿದ್ಧಾಂತದ ಪರಿಷ್ಕರಣೆ: 1988 ಎಪ್ರಿಲ್ 18, ರಂದು ಆಪರೇಷನ್ ಪ್ರೇಯಿಂಗ್ ಮ್ಯಾಂಟಿಸ್ ಸಮಯದಲ್ಲಿ, ಯುಎಸ್ ನೌಕಾಪಡೆಯು ಒಂದೇ ದಿನದಲ್ಲಿ ಇರಾನ್‌ನ ಸಾಂಪ್ರದಾಯಿಕ ನೌಕಾಪಡೆಯ ಸರಿಸುಮಾರು ಅರ್ಧದಷ್ಟು ಭಾಗವನ್ನು ನಾಶಮಾಡಿತು. ಯುಎಸ್ ಯುದ್ಧನೌಕೆಯನ್ನು ಸ್ಫೋಟಿಸಿದ ನಂತರದ ಪ್ರತೀಕಾರದ ದಾಳಿಯಾಗಿತ್ತು ಅದು. ಈ ನಿರ್ಣಾಯಕ ಸೋಲು ಇರಾನ್ ತನ್ನ ನೌಕಾ ಸಿದ್ಧಾಂತವನ್ನು ಪರಿಷ್ಕರಿಸುವಂತೆ ಮಾಡಿತು. ಏಕೆಂದರೆ ಸಾಂಪ್ರದಾಯಿಕ ಯುದ್ಧದಲ್ಲಿ ಉನ್ನತ ಮಿಲಿಟರಿ ಶಕ್ತಿಯನ್ನು ತೊಡಗಿಸಿಕೊಳ್ಳುವುದು ಸೋಲಿನ ತಂತ್ರ ಎಂದು ಅದು ಅರಿತುಕೊಂಡಿತು. ಮುಂದಿನ ಕೆಲವು ದಶಕಗಳಲ್ಲಿ, ಇರಾನ್ ವೇಗದ ದಾಳಿ ದೋಣಿಗಳು, ನೌಕಾ ಸ್ಫೋಟಕಗಳು ಮತ್ತು ತೀರ-ಆಧಾರಿತ ಹಡಗು ವಿರೋಧಿ ಕ್ಷಿಪಣಿಗಳು, ಸಣ್ಣ ಜಲಾಂತರ್ಗಾಮಿ ನೌಕೆಗಳು ಮತ್ತು ಮಾನವರಹಿತ ಹಡಗುಗಳನ್ನು ಯುದ್ಧದಲ್ಲಿ ಬಳಸಿತು. ದಿ ವಾಲ್ ಸ್ಟ್ರೀಟ್ ಜರ್ನಲ್‌ ಜತೆ ಮಾತನಾಡಿದ ಯುಎಸ್ ಮೂಲದ ವಾಷಿಂಗ್ಟನ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಫೆಲೋ ಫಾರ್ಜಿನ್ ನದಿಮಿ ಐಆರ್‌ಜಿಸಿಯ ವೇಗದ ದಾಳಿ ಹಡಗು ಮತ್ತು ಸ್ಪೀಡ್‌ಬೋಟ್ ಫ್ಲೀಟ್‌ನ 60% ಕ್ಕಿಂತ ಹೆಚ್ಚು ಹಾಗೆಯೇ ಉಳಿದಿದೆ. ಅವು ಬೆದರಿಕೆಯನ್ನು ಒಡ್ಡುತ್ತಲೇ ಇದೆ ಎಂದಿದ್ದಾರೆ. ಈ ಕಾರ್ಯತಂತ್ರದ ಬದಲಾವಣೆಯು ಎರಡು ಪ್ರತ್ಯೇಕ ನೌಕಾ ಶಾಖೆಗಳ ಔಪಚಾರಿಕ ಸ್ಥಾಪನೆಗೆ ಕಾರಣವಾಯಿತು. ಒಂದು ಸಾಂಪ್ರದಾಯಿಕ, ಒಂದೇ ರೀತಿಯ ಮಿಲಿಟರಿ ಪಡೆಯಾಗಿ ಕಾರ್ಯನಿರ್ವಹಿಸುವ IRIN ಮತ್ತು ಎರಡನೆಯದ್ದು ಪರ್ಷಿಯನ್ ಕೊಲ್ಲಿಯೊಳಗೆ ಶತ್ರು ಕಾರ್ಯಾಚರಣೆಗಳನ್ನು ಅಡ್ಡಿಪಡಿಸಲು ವಿವಿಧ ತಂತ್ರಗಳನ್ನು ಬಳಸುವ ಕಾರ್ಯವನ್ನು ಹೊಂದಿರುವ IRGC ​​ನೌಕಾಪಡೆ. ವಾಸ್ತವಿಕ ಸಂಗತಿಗಳು: ವಾಷಿಂಗ್ಟನ್ ಪೋಸ್ಟ್‌ ಜತೆ ಮಾತನಾಡಿದ ಸಂಪ್ರದಾಯವಾದಿ ಚಿಂತಕರ ಚಾವಡಿ ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಮಧ್ಯಪ್ರಾಚ್ಯ ತಜ್ಞ ನಿಕ್ ಕಾರ್ಲ್, ಇರಾನ್‌ನ ನೌಕಾಪಡೆಗಳು ಜಲಸಂಧಿಯ ಮೂಲಕ ಅಂತರರಾಷ್ಟ್ರೀಯ ಸಾಗಣೆಗೆ ದೊಡ್ಡ ಅಪಾಯವನ್ನುಂಟು ಮಾಡಿದ್ದರೂ, ಸಮುದ್ರ ಸಂಚಾರವನ್ನು ಅಡ್ಡಿಪಡಿಸಲು ಇರಾನಿಯನ್ನರು ಅವಲಂಬಿಸಿರುವ ಏಕೈಕ ಸಾಧನ ಇದಲ್ಲ ಎಂದು ಹೇಳಿದರು. Armed Conflict Location & Event Data Project ದತ್ತಾಂಶದ ಪ್ರಕಾರ ಫೆಬ್ರವರಿ 28 ರಿಂದ ಹಾರ್ಮುಝ್ ಜಲಸಂಧಿ ಮತ್ತು ಕೊಲ್ಲಿಯಲ್ಲಿ ಸಾಗಣೆಯ ಮೇಲೆ ಕನಿಷ್ಠ 50 ಇರಾನಿನ ದಾಳಿಗಳು ನಡೆದಿವೆ. ಕಾರ್ಲ್ ಪ್ರಕಾರ, ಇರಾನ್ ಸ್ಫೋಟಕಗಳು ಅಥವಾ ಹಡಗುಗಳಿಗಿಂತ ಹೆಚ್ಚಾಗಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡಿತು. ಇದೆಲ್ಲದರ ಅರ್ಥವೇನೆಂದರೆ, ಇರಾನ್‌ನ ದೊಡ್ಡ ಮಿಲಿಟರಿ ಹಡಗುಗಳ ನಾಶದಿಂದ ಜಲಸಂಧಿಯನ್ನು ಹತ್ತಿಕ್ಕುವ IRGC ಯ ಸಾಮರ್ಥ್ಯವು ಗಮನಾರ್ಹವಾಗಿ ಪರಿಣಾಮ ಬೀರಿಲ್ಲ. ಅದರ ನೌಕಾಪಡೆ ನಾಶವಾಗಿರಬಹುದು, ಆದರೆ ಇರಾನ್‌ನ ಕರಾವಳಿ ಕ್ಷಿಪಣಿ ಬ್ಯಾಟರಿಗಳು, ಡ್ರೋನ್‌ಗಳು ಮತ್ತು ಸಮುದ್ರ ಸ್ಫೋಟಕಗಳಿಂದ ಉಂಟಾಗುವ ಬೆದರಿಕೆಯು ವಾಣಿಜ್ಯ ಹಡಗುಗಳನ್ನು ಹೊರತುಪಡಿಸಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಪ್ರಯತ್ನಿಸುವ ಹಡಗುಗಳನ್ನು ತಡೆಯಲು ಸಾಕು ಎಂದು ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ಹೇಳಿದ್ದಾರೆ. ಅದೇ ರೀತಿ, ಅಮೆರಿಕದ ಚಿಂತಕರ ಚಾವಡಿ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ನ ಮೈಕ್ ಫ್ರೋಮನ್, ಇರಾನ್ ಸಮುದ್ರ ಚಾಕ್‌ಪಾಯಿಂಟ್‌ಗಳನ್ನು ಶಸ್ತ್ರಾಸ್ತ್ರಗಳನ್ನಾಗಿ ಮಾಡುವ ಮೂಲಕ ಸಾಂಪ್ರದಾಯಿಕ, ಪರಮಾಣು ರಹಿತ ಪ್ರತಿಬಂಧಕವನ್ನು ಅಭಿವೃದ್ಧಿಪಡಿಸಿದೆ. ಜಾಗತಿಕ ಆರ್ಥಿಕತೆಗೆ ಬೆದರಿಕೆ ಹಾಕಲು ಕಡಿಮೆ ಸಂಖ್ಯೆಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸುವ ಮೂಲಕ, ಇರಾನ್ ಕನಿಷ್ಠ ವಸ್ತು ವೆಚ್ಚದೊಂದಿಗೆ ಗಮನಾರ್ಹ ಒತ್ತಡವನ್ನು ಬೀರಬಹುದು. ಈ ತಂತ್ರವನ್ನು ಎದುರಿಸಲು ವಿರೋಧಿಗಳಿಗೆ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೃಪೆ: indianexpress.com

ವಾರ್ತಾ ಭಾರತಿ 13 Apr 2026 9:02 pm

ದಿಗ್ಬಂಧನದ ವ್ಯಾಪ್ತಿಯೊಳಗೆ ಯಾವುದೇ ಇರಾನಿನ ಹಡಗು ಬಂದರೆ, ತಕ್ಷಣವೇ ನಾಶಪಡಿಸಲಾಗುವುದು: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಜಾರಿಗೆ ತಂದಿರುವ ನೌಕಾ ದಿಗ್ಬಂಧನದ ನಡುವೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ದಿಗ್ಬಂಧನದ ವ್ಯಾಪ್ತಿಯೊಳಗೆ ಯಾವುದೇ ಇರಾನಿನ ಹಡಗು ಬಂದರೆ, ಅದನ್ನು ತಕ್ಷಣವೇ ನಾಶಪಡಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ. ಟ್ರೂತ್ ಸೋಶಿಯಲ್‌ ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ , ಇರಾನ್ ನೌಕಾಪಡೆಗೆ ಈಗಾಗಲೇ ಭಾರೀ ನಷ್ಟ ಉಂಟಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಸುಮಾರು 158 ಹಡಗುಗಳು ನಾಶವಾಗಿವೆ. ಅವರು ʼವೇಗದ ದಾಳಿ ಹಡಗುಗಳುʼ ಎಂದು ಕರೆಯುವ ಸಣ್ಣ ಹಡಗುಗಳನ್ನು ನಾವು ಗಂಭೀರ ಬೆದರಿಕೆಯಾಗಿಯೇ ಪರಿಗಣಿಸಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ‘ದಿಗ್ಬಂಧನದ ಸಮೀಪಕ್ಕೆ ಬರುವ ಯಾವುದೇ ಹಡಗಿನ ಮೇಲೂ ಮಾದಕವಸ್ತು ಸಾಗಣೆಗಾರರ ವಿರುದ್ಧ ಬಳಸುವಂತೆಯೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅದು ತ್ವರಿತ ಹಾಗೂ ಕ್ರೂರವಾಗಿರುತ್ತದೆ’ ಎಂದು ಎಚ್ಚರಿಸಿದ್ದಾರೆ. ಸಾಗರ ಮಾರ್ಗದ ಮೂಲಕ ಅಮೆರಿಕಕ್ಕೆ ಬರುತ್ತಿದ್ದ ಮಾದಕವಸ್ತುಗಳ ಹರಿವು ಬಹುತೇಕ ಸಂಪೂರ್ಣವಾಗಿ ತಡೆಹಿಡಿದಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ವಾರ್ತಾ ಭಾರತಿ 13 Apr 2026 8:50 pm

ಸರಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : ರಾಜ್ಯ ಸರಕಾರವು 2026-27ನೇ ಸಾಲಿನ ಸರಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಆಡಳಿತಾತ್ಮಕ ದಕ್ಷತೆ ಮತ್ತು ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿಯಮಾವಳಿಗಳನ್ನು ರೂಪಿಸಿದೆ. ಆಸಕ್ತ ಮತ್ತು ಅರ್ಹ ನೌಕರರು ವರ್ಗಾವಣೆಗಾಗಿ ಎ.13 ರಿಂದ ಮೇ 31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ನೌಕರರು ತಮ್ಮ ಸೇವಾ ದಾಖಲೆಗಳನ್ನು ನಿಖರವಾಗಿ ಒದಗಿಸುವುದು ಕಡ್ಡಾಯವಾಗಿದೆ. ಕೇವಲ ವೈಯಕ್ತಿಕ ಬೇಡಿಕೆಗಳಲ್ಲದೆ, ಇಲಾಖೆಯ ಆಡಳಿತಾತ್ಮಕ ಅಗತ್ಯತೆಗಳನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಿ ವರ್ಗಾವಣೆ ಆದೇಶ ಹೊರಡಿಸಲಾಗುತ್ತದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ಮಾನವೀಯ ನೆಲೆಯ ಮೇಲೆ ಆದ್ಯತೆ ನೀಡಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ನೌಕರರಿಗೆ, ಗರ್ಭಿಣಿ ಮಹಿಳಾ ನೌಕರರಿಗೆ ಆದ್ಯತೆ ನೀಡಲಾಗಿದೆ. ಕುಟುಂಬದ ಅನಿವಾರ್ಯ ಪರಿಸ್ಥಿತಿ ಅಥವಾ ಮಕ್ಕಳ ಶಿಕ್ಷಣದಂತಹ ಕಾರಣಗಳಿಗೆ ನಿಯಮಾನುಸಾರ ವಿನಾಯಿತಿ ನೀಡಲಾಗಿದೆ.  

ವಾರ್ತಾ ಭಾರತಿ 13 Apr 2026 8:48 pm

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2026 ಬಹುಮಾನ ಪ್ರಕಟ: ವಿಜೇತರಿಗೆ ₹20 ಕೋಟಿ; ಹೀಗಿದೆ ನೋಡಿ ಮೊತ್ತದ ಪಟ್ಟಿ!

2026 ರ ವರ್ಷವಿಡೀ ಕ್ರಿಕೆಟ್ ಹಬ್ಬ ಎಂದಿದ್ದು ಸುಮ್ಮನೇ ಅಲ್ಲ. ಐಪಿಎಲ್ ಮುಗಿದೊಡನೆ ಕ್ರಿಕೆಟ್ ಪ್ರೇಮಿಗಳ ಚಿತ್ತ ಇಂಗ್ಲೆಂಡ್ ಕಡೆಗೆ ಹೊರಳಲಿದೆ. ಜೂನ್ 12ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಟೂರ್ನಿ ಪ್ರಾರಂಭವಾಗಲಿದ್ದು ಒಟ್ಟು 24 ದಿನಗಳ ಕಾಲ 33 ಪಂದ್ಯಗಳು ನಡೆಯಲಿವೆ. ಒಟ್ಟು 81 ಕೋಟಿ ಬಹುಮಾನದ ಮೊತ್ತವನ್ನು ಐಸಿಸಿ ಘೋಷಿಸಿದ್ದು ಅದರಲ್ಲಿ ಗೆದ್ದ ತಂಡ ಸುಮಾರು 19.5 ಕೋಟಿ ರೂ ಬಹುಮಾನದ ಮೊತ್ತವನ್ನು ಜೇಬಿಗಿಳಿಸಲಿದೆ. ಇನ್ನು ರನ್ನರ್ ತಂಡಕ್ಕೆ 10.92 ಕೋಟಿ ರೂಪಾಯಿಯನ್ನು ತನ್ನದಾಗಿಸಿಕೊಳ್ಳಲಿದೆ. ಐಸಿಸಿಯು 2024ರಲ್ಲಿ ದುಬೈನಲ್ಲಿ ನಡೆದ ಆವೃತ್ತಿಯಲ್ಲಿ 7,958,077 ಡಾಲರ್ (ಸುಮಾರು ₹74 ಕೋಟಿ) ರೂಪಾಯಿ ಬಹುಮಾನದ ಮೊತ್ತವನ್ನು ಘೋಷಿಸಿತ್ತು. ಈ ಬಾರಿ ಕಳೆದ ಬಾರಿಗಿಂತ ಶೇಕಡಾ 10ರಷ್ಟು ದೊಡ್ಡ ಮೊತ್ತವನ್ನು ಏರಿಸಿದೆ. ಆ ಬಾರಿ ದಾಖಲೆಯ 8,764,615 ಡಾಲರ್ (ಸುಮಾರು ₹81 ಕೋಟಿ) ಬಹುಮಾನ ನಿಧಿಯನ್ನು ಘೋಷಿಸಿದೆ. ಬಹುಮಾನದ ಹಣ ಯಾರಿಗೆ ಎಷ್ಟು? ವಿಜೇತರು 2,340,000 ಡಾಲರ್ (ಸುಮಾರು ₹19.5 ಕೋಟಿ) ಪಡೆಯುತ್ತಾರೆ. ರನ್ನರ್ ಅಪ್ ತಂಡ 1,170,000 ಡಾಲರ್ (ಸುಮಾರು ₹10.92 ಕೋಟಿ) ಪಡೆಯಲಿದೆ. ಸೆಮಿಫೈನಲ್‌ನಲ್ಲಿ ಸೋತ ತಂಡಗಳು 675,000 ಡಾಲರ್ (ಸುಮಾರು ₹6.30 ಕೋಟಿ) ಗಳಿಸುತ್ತವೆ. ಗುಂಪು ಹಂತದಲ್ಲಿ ಪ್ರತಿ ಗೆಲುವಿಗೆ ತಂಡಗಳಿಗೆ 31,154 ಡಾಲರ್(ಸುಮಾರು ₹29.08 ಲಕ್ಷ) ಸಿಗಲಿದೆ. ಎಲ್ಲಾ 12 ತಂಡಗಳಿಗೆ ಕನಿಷ್ಠ 247,500 ಡಾಲರ್ (ಸುಮಾರು ₹2,31,06,476) ಹಣವನ್ನು ಪಡೆಯಲಿವೆ. ಜೂನ್ 12 ರಂದು ಬರ್ಮಿಂಗ್ ಹ್ಯಾಂನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಬಾರಿಗೆ ಟೂರ್ನಿಯಲ್ಲಿ 12 ತಂಡಗಳು ಸೆಣೆಸಲಿದ್ದು 7 ಸ್ಥಳಗಳಲ್ಲಿ 33 ಪಂದ್ಯಗಳು ನಡೆಯಲಿವೆ. ಆತಿಥೇಯ ಇಂಗ್ಲೆಂಡ್ ಜೊತೆಗೆ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭಾರತ, ಐರ್ಲೆಂಡ್, ನೆದರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭಾಗವಹಿಸಲಿವೆ. ಆಟವನ್ನು ಸ್ಪರ್ಧಾತ್ಮಕವಾಗಿಸುವ ಗುರಿ ಈ ಬಗ್ಗೆ ಮಾತನಾಡಿದ ಐಸಿಸಿ ಸಿಇಒ , ಮಹಿಳಾ ಕ್ರಿಕೆಟ್‌ನ ಏರಿಕೆ ಪ್ರಬಲವಾಗಿದೆ ಮತ್ತು ಹೆಚ್ಚುತ್ತಿರುವ ಬಹುಮಾನದ ಹಣದೊಂದಿಗೆ ಪಂದ್ಯಾವಳಿಯನ್ನು ವಿಸ್ತರಿಸುವುದು ಜಾಗತಿಕವಾಗಿ ಆಟವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ಐಸಿಸಿಯ ಬದ್ಧತೆಯನ್ನು ತೋರಿಸುತ್ತದೆ. ಬೆಳೆಯುತ್ತಿರುವ ಹೂಡಿಕೆ ಮತ್ತು ಅವಕಾಶಗಳು ವಿಶ್ವಾದ್ಯಂತ ಹೆಚ್ಚಿನ ಗಮನ ಮತ್ತು ಪ್ರಭಾವವನ್ನು ಪಡೆಯಲು ಹೇಗೆ ಸಹಾಯ ಮಾಡುತ್ತಿವೆ ಎಂಬುದನ್ನು ಅವರು ವಿವರಿಸಿದರು. ಪಂದ್ಯಾವಳಿಗೆ ಮುಂಚಿತವಾಗಿ, ಐಸಿಸಿ ಟ್ರೋಫಿ ಪ್ರವಾಸವು ಪ್ರಾರಂಭವಾಗಿದೆ ಮತ್ತು ಯುರೋಪಿನಾದ್ಯಂತ ಪ್ರಯಾಣಿಸಲಿದೆ. ಇದು ಲಂಡನ್‌ನಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭವಾಯಿತು, ಅಲ್ಲಿ ಪ್ರಸಿದ್ಧ ಪೆವಿಲಿಯನ್‌ನಲ್ಲಿ ಟ್ರೋಫಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ, ಇದರಲ್ಲಿ ಒಂದು ಪ್ರೊಜೆಕ್ಷನ್ ಸೇರಿದೆ.

ವಿಜಯ ಕರ್ನಾಟಕ 13 Apr 2026 8:44 pm

ನಿರುದ್ಯೋಗಿ ಪತಿ, ಉದ್ಯೋಗಸ್ಥ ಪತ್ನಿ; ಜೀವನಾಂಶ ಹೆಚ್ಚಿಸಲು ಹೈಕೋರ್ಟ್ ನಕಾರ

ಬೆಂಗಳೂರು : ನಿರುದ್ಯೋಗಿ ಪತಿಯಿಂದ ಹೆಚ್ಚಿನ ಜೀವನಾಂಶ ಕೋರಿ ಉದ್ಯೋಗಸ್ಥ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜತೆಗೆ, ಪತ್ನಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡುವಂತೆ ಪತಿಗೆ ‌ನಿರ್ದೇಶಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಪಡಿಸಲೂ ನ್ಯಾಯಾಲಯ ನಿರಾಕರಿಸಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜೀವನಾಂಶದ ಮೊತ್ತ ಹೆಚ್ಚಳ ಕೋರಿ ಪತ್ನಿ ಹಾಗೂ ಜೀವನಾಂಶ ಪಾವತಿ ಆದೇಶ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ಪತಿಗೆ ಬರಬೇಕಾದ ಪೂರ್ವಜರ ಆಸ್ತಿ ಇನ್ನೂ ಹಂಚಿಕೆಯಾಗಿಲ್ಲ. ಪೂರ್ವಜರ ಆಸ್ತಿ ಇದೆ ಎಂಬ ಕಾರಣವು ಜೀವನಾಂಶ ಹೆಚ್ಚಳಕ್ಕೆ ಆಧಾರವಾಗುವುದಿಲ್ಲ. ಪತಿಯ ಪಾಲಿಗೆ 1 ಎಕರೆ ಜಮೀನಿದ್ದು, ಅದನ್ನು ಎರಡು ಬಾರಿ ಅಡಮಾನವಿಟ್ಟು ಸಾಲ ಪಡೆದಿದ್ದಾರೆ. ಒಂದು ವೇಳೆ ಸಾಲ ಪಡೆದೂ ಜೀವನಾಂಶ ನೀಡದಿದ್ದಲ್ಲಿ, ಅವರು ಜೀವನಾಂಶ ಪಾವತಿಸಲು ಸಿದ್ಧರಿಲ್ಲ ಎಂದು ತಿಳಿಯಬಹುದು. ಆದರೆ, ಸಾಲ ಪಡೆದ ನಂತರ ಪತ್ನಿಗೆ ಜೀವನಾಂಶ ನೀಡುತ್ತಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಹಾಲಿ ಪ್ರಕರಣದಲ್ಲಿ ಪತ್ನಿ ದುಡಿಯುತ್ತಿದ್ದು, ಪತಿ ನಿರುದ್ಯೋಗಿಯಾಗಿದ್ದಾರೆ. ದಂಪತಿಯ ವಿವಾದದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದ್ದರಿಂದ, ನಿರ್ವಹಣಾ ವೆಚ್ಚ ಹೆಚ್ಚಳ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ದಂಪತಿ ಸಲ್ಲಿಸಿದ್ದ ಎರಡೂ ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ಪ್ರಕರಣವೇನು? ಅರ್ಜಿದಾರ ದಂಪತಿ 2009ರಲ್ಲಿ ವಿವಾಹವಾಗಿದ್ದು, ಪತಿ ಹೆಚ್ಚುವರಿ ವರದಕ್ಷಿಣೆ ತರುವಂತೆ ಪದೇಪದೆ ಒತ್ತಾಯಿಸುತ್ತಾ, ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಪತ್ನಿ ಪ್ರಕರಣ ಹೂಡಿದ್ದರು. ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಪತ್ನಿಗೆ ಯಾವುದೇ ರೀತಿಯ ಕೌಟುಂಬಿಕ ಹಿಂಸಾಚಾರ ನೀಡದಂತೆ ನಿರ್ಬಂಧಿಸಿ ಆದೇಶಿಸಿತ್ತಲ್ಲದೆ, ಪತ್ನಿಗೆ ಜೀವನಾಂಶಕ್ಕಾಗಿ ಮಾಸಿಕ 4 ಸಾವಿರ ರೂ. ಹಾಗೂ ಮನೆ ಬಾಡಿಗೆಗಾಗಿ 5 ಸಾವಿರ ರೂ. ಸೇರಿ ಮಾಸಿಕ 9 ಸಾವಿರ ರೂ. ನೀಡಬೇಕು. ಜತೆಗೆ, 40 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಸೂಚನೆ ನೀಡಿತ್ತು. ಈ ಆದೇಶವನ್ನು ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ದೃಢೀಕರಿಸಿತ್ತು. ಇದರಿಂದ, ಜೀವನಾಂಶ ಪಾವತಿ ಆದೇಶ ರದ್ದು ಕೋರಿ ಪತಿ ಹಾಗೂ ಜೀವನಾಂಶ ಹೆಚ್ಚಳಕ್ಕೆ ಕೋರಿ ಪತ್ನಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ವಾದ ಮಂಡಿಸಿದ್ದ ಪತಿ ಪರ ವಕೀಲರು, ಅರ್ಜದಾರರು ಈ ಹಿಂದೆ ನಡೆಸುತ್ತಿದ್ದ ಶಾಲೆ ಈಗ ಮುಚ್ಚಲ್ಪಟ್ಟಿದ್ದು, ಸದ್ಯ ನಿರುದ್ಯೋಗಿಯಾಗಿದ್ದಾರೆ. ಪತ್ನಿ ಉದ್ಯೋಗದಲ್ಲಿರುವುದರಿಂದ ಆಕೆಗೆ ಜೀವನಾಂಶ ನೀಡಲು ಪತಿಗೆ ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಪತ್ನಿಯ ಪರ ವಕೀಲರು, ಪತಿಗೆ ಪೂರ್ವಜರ ಆಸ್ತಿಯಲ್ಲಿ ಪಾಲಿದ್ದು, ಅವರ ಹೆಸರಿನಲ್ಲಿಯೂ ಆಸ್ತಿಗಳಿವೆ. ಆದರೆ, ನ್ಯಾಯಾಲಯಕ್ಕೆ ಮಾಹಿತಿಯನ್ನು ತಿಳಿಸದೆ ಮರೆಮಾಚುತ್ತಿದ್ದಾರೆ. ಜತೆಗೆ, ಪತ್ನಿ ಉದ್ಯೋಗದಲ್ಲಿರುವುದು ಜೀವನಾಂಶ ನೀಡುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ವಾದ ಮಂಡಿಸಿದ್ದರು.

ವಾರ್ತಾ ಭಾರತಿ 13 Apr 2026 8:41 pm

ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಅನುಷ್ಕಾ-ಅನನ್ಯಾ ಬಿರ್ಲಾ: ನೆಟ್ಟಿಗರ ಮನಗೆದ್ದ ಆ ಹ್ಯಾಂಡ್‌ಶೇಕ್ ವಿಡಿಯೋ

RCB IPL 2026: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ರೋಚಕ ಪಂದ್ಯಕ್ಕೆ ವಿರಾಟ್‌ ಪತ್ನಿ ಅನುಷ್ಕಾ ಶರ್ಮಾ ಅವರ ಉಪಸ್ಥಿತಿ ವಿಶೇಷ ಮೆರುಗು ನೀಡಿತು. ಮತ್ತೊಂದೆಡೆ ಅನನ್ಯಾ ಬಿರ್ಲಾ ಅವರು ಅನುಷ್ಕಾ ಅವರ ಸಂಭ್ರದಲ್ಲಿ ಭಾಗಿಯಾಗಿ ಗಮನ ಸೆಳೆದರು. ಪಂದ್ಯದ ವೇಳೆ ಅನುಷ್ಕಾ ಶರ್ಮಾ ಅವರು ಅತ್ಯಂತ

ಒನ್ ಇ೦ಡಿಯ 13 Apr 2026 8:40 pm

ಬೆಂಗಳೂರಿನ ಅಕ್ಕಪಕ್ಕದ ಮನೆಯ ಬೆಕ್ಕುಗಳ ಪ್ರಣಯ; 4 ಮರಿ ಜನನ - ಸಾಕುವವರು ಯಾರೆಂದು ಜಗಳ! ಪೊಲೀಸರು ಹೈರಾಣ

ಬೆಂಗಳೂರಿನ ಅಕ್ಕಪಕ್ಕ ಮನೆಯ ಬೆಕ್ಕುಗಳು ಪ್ರಣಯವು ದೊಡ್ಡ ಗಲಾಟೆಗೆ ಕಾರಣವಾಗಿದೆ. ಆ ಬೆಕ್ಕುಗಳಿಗೆ 4 ಮರಿಗಳು ಜನಿಸಿದ್ದು, ಅವುಗಳನ್ನು ಸಾಕುವ ವಿಚಾರಕ್ಕೆ 2 ಮನೆಯವರು ನಿರಾಸಕ್ತಿ ತೋರಿದ್ದು, ಪೊಲೀಸ್‌ವರೆಗೂ ದೂರು ನೀಡಿದ್ದಾರೆ. ಜಗಳ ಪರಿಹರಿಸುವಲ್ಲಿ ಪೊಲೀಸರು ಹೈರಾಣಗಿದ್ದು, ಕೊನೆಗೆ ಸ್ಥಳೀಯರೇ ನಾವು ಸಾಕುತ್ತೇವೆ ಎಂದು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 13 Apr 2026 8:33 pm

ʼಸಚಿವ ಸಂಪುಟ ಪುನರ್ ರಚನೆಗೆ ಪಟ್ಟುʼ | ದಿಲ್ಲಿಯಲ್ಲಿ ವರಿಷ್ಠರ ಭೇಟಿಗೆ ಬೀಡುಬಿಟ್ಟ 30 ಮಂದಿ ‘ಕೈʼ ಶಾಸಕರು

ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಬೆನ್ನಲ್ಲೇ ಸಂಪುಟ ಪುನರ್ ರಚನೆ ಮಾಡಬೇಕೆಂದು ಹಿರಿಯ ಶಾಸಕರ ಒತ್ತಡ ಹೇರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ‘ರಾಜ್ಯ ಸರಕಾರಕ್ಕೆ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೊಡಿ’ ಎಂದು ಮೂವತ್ತು ಮಂದಿ ಹಿರಿಯ ಶಾಸಕರು ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದು, ವರಿಷ್ಠರ ಭೇಟಿಯ ನಿರೀಕ್ಷೆಯಲ್ಲಿದ್ದಾರೆ. ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಾಗಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಮ್ಮ ಶಾಸಕರು ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನು ಇಲ್ಲ. ಹೈಕಮಾಂಡ್ ಒಪ್ಪಿಗೆ ನೀಡಿದರೆ ಸಂಪುಟ ಪುನರ್ ರಚನೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ. ಶಿಸ್ತನ್ನು ಯಾರೂ ಮೀರಬೇಡಿ: ಮತ್ತೊಂದೆಡೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ‘ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಪಕ್ಷದ ಚೌಕಟ್ಟಿನ ಒಳಗೆ ಎಲ್ಲ ಶಾಸಕರು ಮಾತನಾಡಬೇಕು. ಕೆಲವರು ಏನೇನು ಮಾತನಾಡಿದ್ದಾರೋ ಎಲ್ಲವನ್ನೂ ಗಮನಿಸಿದ್ದೇನೆ. ಆದರೆ ಮಾಧ್ಯಮಗಳೇ ನಿಮ್ಮ ಭವಿಷ್ಯ ಅಲ್ಲ, ಪಕ್ಷ ನಿಮ್ಮ ಭವಿಷ್ಯ. ಪಾರ್ಟಿಯಲ್ಲೇ ಎಲ್ಲರ ಭವಿಷ್ಯವಿದೆ, ಪಕ್ಷದ ಚೌಕಟ್ಟಿನೊಳಗೆ ಇರಬೇಕು’ ಎಂದು ಎಚ್ಚರಿಸಿದ್ದಾರೆ. ಈ ನಡುವೆ ಹೊಸದಿಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಹಿರಿಯ ಶಾಸಕ ಅಶೋಕ್ ಪಟ್ಟಣ್, ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂದು ಆಗ್ರಹಿಸಿ 30 ಮಂದಿ ಶಾಸಕರು ದಿಲ್ಲಿಗೆ ಆಗಮಿಸಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದೇವೆ ಎಂದರು. ‘ಪದೇ ಪದೇ ಸಚಿವರು ಆಗಿರುವವರೇ ಸಚಿವರು ಆಗುತ್ತಾರೆ. ಆದರೆ, ಹೊಸಬರಿಗೆ, ನಾಲ್ಕೈದು ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ. ಹೀಗಾಗಿ ನಾಲ್ಕೈದು ಬಾರಿ ಆಯ್ಕೆಯಾದ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬುದು ನಮ್ಮ ಒಂದು ಅಂಶದ ಬೇಡಿಕೆ. ಹೀಗಾಗಿಯೇ ನಾವೆಲ್ಲರೂ ದಿಲ್ಲಿಗೆ ಬಂದಿದ್ದೇವೆ’ ಎಂದು ಅಶೋಕ್ ಪಟ್ಟಣ್ ತಿಳಿಸಿದರು. ಸಿಎಂ ಸ್ಥಾನದ ಬದಲಾವಣೆ ವಿಚಾರವು ನಮಗೆ ಸಂಬಂಧಿಸಿದ್ದಲ್ಲ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ನಾವು ದಿಲ್ಲಿಗೆ ಬರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇವೆ ಎಂದು ಅಶೋಕ್ ಪಟ್ಟಣ್ ತಿಳಿಸಿದರು. ಹಿರಿಯ ಶಾಸಕರಾದ ಪುಟ್ಟರಂಗಶೆಟ್ಟಿ, ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ, ಎ.ಆರ್.ಕೃಷ್ಣಮೂರ್ತಿ, ಎಸ್.ಎನ್.ನಾರಾಯಣಸ್ವಾಮಿ, ಡಿ.ಜಿ.ಶಾಂತನಗೌಡ, ಗೋಪಾಲಕೃಷ್ಣ ಬೇಳೂರು ಸೇರಿದಂತೆ 30 ಮಂದಿ ಶಾಸಕರು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.  

ವಾರ್ತಾ ಭಾರತಿ 13 Apr 2026 8:33 pm

ಯಾದಗಿರಿ | ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ

ಗಣಿತ ಜೀವನದ ಮೂಲ ಕೌಶಲ್ಯ: ಡಿಡಿಪಿಐ ಚನ್ನಬಸಪ್ಪ ಮುದೋಳ

ವಾರ್ತಾ ಭಾರತಿ 13 Apr 2026 8:32 pm

ತೋಕೂರು ಮಖಾಂ ಉರೂಸ್ ಸಮಾರೋಪ

ಸುರತ್ಕಲ್: ಜೋಕಟ್ಟೆ 62ತೋಕೂರು ಮೊಗರುಪೇಟೆ ಮುಹಿಯುದ್ದೀನ್ ಜುಮಾ‌ ಮಸೀದಿ ನೇತೃತ್ವದಲ್ಲಿ ಸುಮಾರು 700 ವರ್ಷಗಳ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ಸೀವಾ ಇಮಾಂ ವಲಿಯುಲ್ಲಾಹಿ (ಖ.ಸ) ಅವರ‌ ತೋಕೂರು ಮಖಾಂ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ರವಿವಾರ ದರ್ಗಾದ ವಠಾರದಲ್ಲಿ ನಡೆಯಿತು. ಸಮಾರೋಪ ಸಮಾರಂಭವನ್ನು ಅಸ್ಸಯ್ಯಿದ್ ಇಬ್ರಾಹೀಂ ಪೂಕುಂಞಿ ತಂಙಳ್ ಕಲ್ಲಕಟ್ಟ ಅವರು ಉದ್ಘಾಟಿಸಿ ಮಾತನಾಡಿದರು‌. ಅಸ್ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ ಕಡಲುಂಡಿ ದುಆ ನೆರವೇರಿಸಿದರು. ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಮೊದಲಾದವರು ಮತ ಪ್ರಭಾಷಣಗೈದರು. ಮೊಗರುಪೇಟೆ ಮುಹಿಯುದ್ದೀನ್ ಜುಮಾ‌ ಮಸೀದಿಯ ಅಧ್ಯಕ್ಷ ಟಿ.ಎ. ಖಾದರ್ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ “ಕೇರಳ ಯಾತ್ರಾ”ದ ಸ್ಮರಣಾರ್ಥ ಅದರ ಮುಂದಾಳತ್ವ ವಹಿಸಿದ್ದ ನಾಯಕರಾದ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಕಡಲುಂಡಿ, ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಹಾಗೂ ಮೊಗರುಪೇಟೆ ಮುಹಿಯುದ್ದೀನ್ ಜುಮಾ‌ ಮಸೀದಿಗೆ ನೂತನ ಮದರಸ ಕಟ್ಟಡ ನಿರ್ಮಿಸಿಕೊಟ್ಟ ವೈಟ್ ಸ್ಟೋನ್ ಶರೀಫ್ ಹಾಜಿ ಜೋಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಆನಿ ಟ್ರೇಡಿಂಗ್ ಕಂಪೆನಿಯ ಚೇರ್ಮನ್ ಅಬ್ದುಲ್ಲತೀಫ್ ಗುರುಪುರ, ಬಿಜೆಪಿ ಅಲ್ಪಸಂಖ್ಯಾತ ಘಟಕದ ದ.ಕ. ಜಿಲ್ಲಾಧ್ಯಕ್ಷ ಶಾನವಾಝ್, ಕೂಳೂರು ಮುಹಿಯುದ್ದೀನ್ ಜುಮಾ‌ ಮಸೀದಿಯ ಅಧ್ಯಕ್ಷ ಅಬ್ಬಾಸ್ ಹಾಜಿ ಕೂಳೂರು, ಮರವೂರು ಎಂಜೆಎಂ ಅಧ್ಯಕ್ಷ ಶಾಕಿ‌ರ್ ಹಾಜಿ, ಕೆಂಜಾರ್ ತೋಕೂರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಸುವರ್ಣ, ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್.‌ ಬಶೀರ್ ಜೋಕಟ್ಟೆ, ಜೋಕಟ್ಟೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಉಮರುಲ್ ಫಾರೂಕ್, ನಿಕಟಪೂರ್ವ ಸದಸ್ಯ ಬಿ.ಕೆ. ಹಸನ್ ಫಯಾಝ್‌, ಮೊಗರುಪೇಟೆ ಮುಹಿಯುದ್ದೀನ್ ಜುಮಾ‌ ಮಸೀದಿಯ ಖತೀಬ್ ಕೆ.ಬಿ. ಇಬ್ರಾಹೀಂ ಸಖಾಫಿ, ಉಪಾಧ್ಯಕ್ಷ ಕಲಂದರ್ ಉಸ್ತಾದ್ ತೋಕೂರು, ಪ್ರಧಾನ ಕಾರ್ಯದರ್ಶಿ ಟಿ.‌ಇಸ್ಮಾಯೀಲ್ ತೋಕೂರು, ಉರೂಸ್ ಸಮಿತಿಯ ಅಧ್ಯಕ್ಷ ಟಿ. ಅಬೂಬಕರ್ ಸಿದ್ದೀಕ್, ಉಪಾಧ್ಯಕ್ಷ ಟಿ.ಎ. ರಿಯಾಝ್ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 8:31 pm

ಸುರತ್ಕಲ್‌| ನೂತನ ಮದರಸ ಕಟ್ಟಡ ಉದ್ಘಾಟನಾ ಸಮಾರಂಭ

ಸುರತ್ಕಲ್‌: ಪಣಂಬೂ‌ರ್ ಮುಸ್ಲಿಂ ಜಮಾಅತ್‌ ಮುಹಿಯುದ್ದೀನ್‌ ಜುಮಾ ಮಸೀದಿ ಕಾಟಿಪಳ್ಳ ಇದರ ನೂತನ ಮದರಸ ಕಟ್ಟಡ ಉದ್ಘಾಟನಾ ಸಮಾರಂಭವು ಸೋಮವಾರ ಮಸೀದಿಯ ವಠಾರದಲ್ಲಿ ಜರುಗಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಕರಾಗಿ ಮಾತನಾಡಿದ ಇಂಡಿಯನ್‌ ಗ್ರ್ಯಾಂಡ್‌ ಮಸ್ಜಿದ್‌ ಜಾಮಿಉಲ್‌ ಫುತೂಹ್‌ನ ಇಮಾಂ ಅಬ್ದುಲ್‌ ಹಕೀಂ ಅಝ್‌ಹರಿ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಯೂನಿವರ್ಸಿಟಿಗಳನ್ನು ಮದರಸಗಳೆಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಮದರಸ ವಿದ್ಯಾಭ್ಯಾಸವು ದಾರಾಳ ರೀತಿಯಲ್ಲಿ ನಡೆಯುತ್ತಿದ್ದವು ಎಂಬುದನ್ನು ಇತಿಹಾಸ ತಿಳಿಸುತ್ತದೆ. ಕರ್ನಾಟಕದಲ ಬೀದರ್‌ನಲ್ಲಿ ಭಾರತದ ಪ್ರಥಮ ವ್ಯವಸ್ಥಿತ ಮದರಸವಿದ್ದು, ಆಕಾಲದಲ್ಲಿ ಮದರಸವಿದ್ಯಾಭ್ಯಾಸ ಎಂದರೆ ಧಾರ್ಮಿಕ ಮತ್ತು ಲೌಕಿಕ ವಿಧ್ಯೆಯನ್ನೊಳ ಗೊಂಡಿದ್ದವು. ಆದರೆ ಕಾಲಕ್ರಮೇಣ ಅದನ್ನು ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ಬೇರ್ಪಡಿಸಲಾಯಿತು. ಇದು ಮಕ್ಕಳಿಗೆ ವಿದ್ಯಾರ್ಜನೆಗೆ ಸಹಕಾರಿಯಾಗಿದೆ. ಈ ಕಾಲದಲ್ಲಿ ತಂದೆ ತಾಯಿ ಇಲ್ಲದವರು ಅನಾಥರಲ್ಲ ಬದಲಾಗಿ ವಿಧ್ಯೆ ಇಲ್ಲದವರು ಅನಾಥರು ಎಂದು ನುಡಿದರು. ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯುದರ್ಶಿ ಇನಾಯತ್‌ ಅಲಿ ಅವರು, ಮದರಸಗಳೆಂದರೆ ಒಂದು ಮಗು ತನ್ನ ದೈನಂದಿನ ಕೈಂಕರ್ಯಗಳನ್ನು ತಿಳಿದುಕೊಂಡು, ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆಯುವ ಕೇಂದ್ರವಾಗಿದೆ. ಮದರಸಗಳು ಎಂದೆಂದಿಗೂ ಅದೊಂದು ತೆರದ ಪುಸ್ತಕವಾಗಿದ್ದು, ಯಾರು ಯಾವಾಗ ಬೇಕಾದರೂ ಅಲ್ಲಿಗೆ ಸಂದರ್ಶಿಸಬಹುದಾಗಿದೆ. ರಾಜಕೀಯಲಾಭಕ್ಕಾಗಿ ಮತಾಂಧರು ಮದರಸಗಳನ್ನು ದೂರಿ ಕೊಂಡಿದ್ದರೂ ಮದರಸಗಳು ದೇಶದ ಭವಿಷ್ಯ ರೂಪಿಸುವಲ್ಲಿ ತನ್ನದೇಆದ ಕೊಡುಗೆಗಳನ್ನು ನೀಡುತ್ತಿಲೇ ಇವೆ ಎಂದ ಅವರು, ಆಲಿಮ್ ಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ನಮ್ಮ ಭಾಗ್ಯ. ಸುಂದರ ಮದರಸ ಕಟ್ಟದ ನಿರ್ಮಾಣಗೊಂಡು ಇಂದು ಉದ್ಘಾಟನೆಗೊಂಡಿರುವುದು ಸಂತೋಷತಂದಿದೆ ಎಂದರು. ಮದರಸ ಕಟ್ಟಡವನ್ನು ಸಯ್ಯಿದ್‌ ಇಬ್ರಾಹೀಂ ಖಲೀಲ್‌ ಜುಖಾರಿ ತಂಙಳ್‌ ಕಡಲುಂಡಿ ಅವರು ಉದ್ಘಾಟಿಸಿ ಮಾತನಾಡಿದು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಣಂಬೂ‌ರ್ ಮುಸ್ಲಿಂ ಜಮಾಅತ್‌ ಮುಹಿಯುದ್ದೀನ್‌ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ. ಎಸ್‌. ರಹ್ಮತುಲ್ಲಾ ವಹಿಸಿ ಮಾತನಾಡಿದರು. ಇದೇ ಸಂದರ್ಭ ಸಯ್ಯಿದ್‌ ಇಬ್ರಾಹೀಂ ಖಲೀಲ್‌ ಜುಖಾರಿ ತಂಙಳ್‌ ಕಡಲುಂಡಿ, ಇಂಡಿಯನ್‌ ಗ್ರ್ಯಾಂಡ್‌ ಮಸ್ಜಿದ್‌ ಜಾಮಿಉಲ್‌ ಫುತೂಹ್‌ನ ಇಮಾಂ ಅಬ್ದುಲ್‌ ಹಕೀಂ ಅಝ್‌ಹರಿ, ಕೆಪಿಸಿಸಿ ಪ್ರಧಾನ ಕಾರ್ಯುದರ್ಶಿ ಇನಾಯತ್‌ ಅಲಿ ಮತ್ತು ಮದರಸ ಕಟ್ಟಡ ನಿರ್ಮಣದಲ್ಲಿ ಅವಿರತ ಶ್ರಮಿಸಿದ್ದ ಪಣಂಬೂ‌ರ್ ಮುಸ್ಲಿಂ ಜಮಾಅತ್‌ ಮುಹಿಯುದ್ದೀನ್‌ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ. ಎಸ್‌. ರಹ್ಮತುಲ್ಲಾ ಅವರನ್ನು ಜಮಾಅತ್‌ ಸಮಿತಿ ಮತ್ತು ಮದರಸ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಾಟಿಪಳ್ಳ ಪಿಜೆಎಂ ಮಾಜಿ ಖತೀಬ್‌ ಅಬೂ ಸುಫ್ಯಾನ್ ಇಬ್ರಾಹಿಂ ಮದನಿ ಮೂಡಬಿದಿರೆ, ಸುನ್ನೀಜಂಇಯತುಲ್ ಮುಅಲ್ಲಿಮೀನ್ ಕರ್ನಾಟಕ ಅಧ್ಯಕ್ಷ ಅಬ್ದುಲ್ ರಹ್ಮಾನ್‌ ಮದನಿ ಜೆಪ್ಪು, ಸಂಯುಕ್ತ ಜಮಾಅತ್ ಮಂಗಳೂರು ಅಧ್ಯಕ್ಷ ಅಶ್ರಫ್‌ ಸಅದಿ ಮಲ್ಲೂರು, ಕರ್ನಾಟಕ ಐಇಬಿಒಐ ಮುಫತ್ತಿಶ್‌ ಮುಫ‌ತ್ತಿಶ್ ಅಬ್ದುಲ್ ಹಮೀದ್ ಮದನಿ, ಕೃಷ್ಣಾಪುರ ಬಿಜೆಎಂ ಮುದರ್ರಿಸ್‌ ಉಮರುಲ್ ಫಾರೂಖ್ ಸಖಾಫಿ ಕಾಟಿಪಳ್ಳ, ದ.ಕ. ಜಿಲ್ಲಾ ವಕ್ಫ್‌ ಅಲಹಾ ಸಮಿತಿ ಮಾಜಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾ‌ರ್, ರಾಜ್ಯ ಕಾಂಗ್ರೆಸ್‌ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ಶಮೀರ್‌ ಕಾಟಿಪಳ್ಳ, ಮಾಜಿ ಕಾರ್ಪೊರೇಟರ್‌ ಬಶೀರ್‌ ಕಾಟಿಪಳ್ಳ, ಕಾಟಿಪಳ್ಳ ಪಿಐಎಂ ಪ್ರಧಾನ ಕಾರ್ಯದರ್ಶಿ ಅಬೂಬಕರ್‌ ಅಬ್ಬು, ಇಸ್ಮಾಯೀಲ್‌ ಸಅದಿ ಕಿನ್ಯಾ, ಮುಹಮ್ಮದ್‌ ಹನೀಫ್‌ ಸಖಾಫಿ ಬೊಳ್ವಾರ್‌, ಮುಹಮ್ಮದ್‌ ಹನೀಫ್‌ ಸ ಅದಿ ಪುಚ್ಚೆಮೊಗರು, ವಕ್ಫ್‌ ನಿವೃತ್ತ ಅಧಿಕಾರಿ ಎಂ. ಅಬೂಬಕ್ಕರ್ ಹಾಜಿ ಪಿ. ಬಶೀರ್ ಅಹ್ಮದ್, ಪಿ. ಎಂ. ಸಲೀಮ್ ರಫಿ, ಕಾಟಿಪಳ್ಳ ನೂರುಲ್‌ ಹುದಾ ಟ್ರಸ್ಟ್‌ ಅಧ್ಯಕ್ಷ ಬದ್ರುದ್ದೀನ್ ಪಣಂಬೂರ್, ಕೆಎಂವೈಎ ದಮಾಮ್ ಘಟಕಾಧ್ಯಕ್ಷ ಮುಸ್ತಫಾ ಆರಗ, ಕೆಎಂವೈಎ ರಿಯಾದ್‌ ಘಟಕಾಧ್ಯಕ್ಷ ಸುಲೈಮಾನ್ ಅಬ್ದುಲ್ ರಹ್ಮಾನ್, ಎಸ್‌.ಎಂ.ಎ. ಕಾಟಿಪಳ್ಳ ರೀಜನಲ್‌ ಅಧ್ಯಕ್ಷ ಸಿ.ಅಬ್ದುಲ್ ಹಮೀದ್ ಮಂಗಳಪೇಟೆ, 4ನೇ ಬ್ಲಾಕ್‌ ಬದ್ರಿಯಾ ಮಸೀದಿ ಅಧ್ಯಕ್ಷ ಆಬ್ದುಲ್ ಖಾದರ್, 3ನೇ ಬ್ಲಾಕ್‌ ಮಸ್ಜಿದುಲ್‌ ಹುದಾ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ಕಲಾವಿದ ಹಾಜಿ ಪಿ. ಇಬ್ರಾಹಿಂ, ಸೂರಿಂಜೆ ಎಂಯುಎಂ ಅಧ್ಯಕ್ಷ ಮುಹಮ್ಮದ್ ಹನೀಫ್ ಪಂಜ, ಇಂಜಿನಿಯರ್ ಖಾಲಿದ್, ನಕೀಝ್ ಅರಬಿ, ಹಾಜಿ ನಝೀರ್ ಕತಾರ್, ಕಾಟಿಪಳ್ಳ ಪಿಎಂಯು ಉಪಾಧ್ಯಕ್ಷ ದಾವೂದ್ ಅಹ್ಮದ್, ಕೋಶಾಧಿಕಾರಿ ಅಬೂಬಕ್ಕರ್ ಕೈಕಂಬ, ಕಾಟಿಪಳ್ಳ ಪಿಎಂಐ ಸದಸ್ಯ ಮುಹಮ್ಮದ್ ಶಮೀರ್ ಕಾಟಿಪಳ್ಳ, ಬಿ. ಯೂಸುಫ್, ಅಬ್ದುಲ್ ಖಾದರ್ ಬಾವ, ಮುಹಮ್ಮದ್ ನವಾಝ್, ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು. ಕಾಟಿಪಳ್ಳ ಪಿಎಂಜೆ ಖತೀಬ್ ಅಬ್ದುಲ್ ನಾಸರ್ ಮದನಿ ಸ್ವಾಗತಿಸಿದರು.          

ವಾರ್ತಾ ಭಾರತಿ 13 Apr 2026 8:28 pm

ಯಾದಗಿರಿ | ಜಿಲ್ಲಾಡಳಿತದಿಂದ ಎ.14ರಂದು ಡಾ.ಬಿ.ಆರ್‌.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ

ಯಾದಗಿರಿ : ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಬಾಬಾ ಸಾಹೇಬ ಅಂಬೇಡ್ಕ‌ರ್ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾತರ ರತ್ನ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮ ಎ.14ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಎಸ್. ಚನ್ನಬಸಪ್ಪ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿ 135ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯಸಭೆ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯ ಕರಾದ ಡಾ.ಮಲ್ಲಿಕಾರ್ಜುನ ಎಂ.ಖರ್ಗೆ ಹಾಗೂ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣಸ್ವಾಮಿ ಘನ ಉಪಸ್ಥಿತಿ ಹಾಗೂ ನೆರವೇರಲಿದೆ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದವೂರ ಅವರ ಗೌರವ ಉಪಸ್ಥಿತಿ ಮತ್ತು ನೆರವೇರಲಿದೆ. ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರ ಕಾರ್ಯಕ್ರಮ ಅಧ್ಯಕ್ಷತೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ ಹಾಗೂ ರಾಧಾಕೃಷ್ಣ ದೊಡ್ಡಮನಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.ಶಾಸಕರಾದ ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ವಿಧಾನ ಪರಿಷತ್ತು ಸದಸ್ಯರಾದ ಬಿ.ಜಿ.ಪಾಟೀಲ್, ಡಾ. ಚಂದ್ರಶೇಖರ ಬಿ.ಪಾಟೀಲ್, ಶಶೀಲ್ ಜಿ. ನಮೋಶಿ, ಶಹಾಪೂರ ಭೀಮರಾಯನಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ್‌ ಕಾಣ್ಣೂರ ಅವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ಬಿಆರ್‌ಸಿ ಕಚೇರಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಎಸ್.ಕಟ್ಟಿಮನಿ ಹಾಗೂ ಯಾದಗಿರಿ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಪರಶುರಾಮ್ ಒಡೆಯ‌ರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಪಂ ಸಿಇಒ ಲವೀಶ್ ಒರಡಿಯಾ, ಎಸ್‌ಪಿ ಪೃಥ್ವಿಕ್ ಶಂಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಲಿದ್ದಾರೆಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 13 Apr 2026 8:25 pm

ನಿತ್ಯಶ್ರೀಗೆ ಪಿಎಚ್‌ಡಿ ಪದವಿ

ಮಂಗಳೂರು: ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಯೆನೆಪೋಯ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಿತ್ಯಶ್ರೀ ಬಿ.ವಿ ಅವರಿಗೆ ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ. ಮಂಗಳೂರಿನ ಆಯ್ದ ಶಾಲೆಗಳ ಹದಿಹರೆಯದ ಬಾಲಕಿಯರಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಉದ್ದೇಶದಿಂದ ಅರಿವು, ದೃಢವಾದ ನಡವಳಿಕೆ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುವ ಸಾಮರ್ಥ್ಯ ವರ್ಧನಾ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನದ ಕುರಿತು ಯೆನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಂಶೋಧನಾ ಪ್ರಬಂಧವನ್ನು ಯೆನೆಪೋಯ ವಿವಿಗೆ ಸಲ್ಲಿಸಿದ್ದರು. ಯೆನೆಪೋಯ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿಯಾಗಿರುವ ನಿತ್ಯಶ್ರೀ ಬಿ.ವಿ. ಇವರು ಸುಳ್ಯದ ನಿವೃತ್ತ ಸರ್ವೆ ಮೇಲ್ವಿಚಾರಕ ವಿಠಲ ಬಿ.ಕೆ.- ರುಕ್ಮಿಣಿ ಬಿ.ವಿ. ದಂಪತಿ ಪುತ್ರಿ .ಗಣೇಶ್ ಮಾಣಿಬೆಟ್ಟು ಅವರ ಪತ್ನಿ. 

ವಾರ್ತಾ ಭಾರತಿ 13 Apr 2026 8:20 pm

ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ತಿರುವು: ‘ನನ್ನ-ಸ್ವಾಮೀಜಿ ನಡುವೆ ಗುರು-ಭಕ್ತೆಯ ಸಂಬಂಧವಿದೆ’ ಎಂದ ಮಹಿಳೆ!

ಬೆಂಗಳೂರು : ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಪ್ರಕರಣವು ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ ಮಹಿಳೆಯು ದಿಢೀರನೆ ಉಲ್ಟಾ ಹೊಡೆದಿದ್ದು, ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ. ನನ್ನ ಮತ್ತು ಸ್ವಾಮೀಜಿ ನಡುವೆ ಗುರು-ಭಕ್ತೆಯ ಸಂಬಂಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸೋಮವಾರ ವಿಡಿಯೋವೊಂದರನ್ನು ಬಿಡುಗಡೆ ಮಾಡಿರುವ ಮಹಿಳೆ, ನಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ. ಸ್ವಾಮೀಜಿ ವಿರುದ್ಧ ನನ್ನ ಹೆಸರಿನಲ್ಲಿ ಯಾರೋ ದೂರು ದಾಖಲಿಸಿದ್ದಾರೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಎಪ್ರಿಲ್ 6ರಂದು ದೂರು ನೀಡಿರುವುದು ಯಾರೆಂದು ಗೊತ್ತಿಲ್ಲ. ಅದೊಂದು ಸುಳ್ಳು ದೂರು, ಆ ದೂರನ್ನು ಯಾರೂ ನಂಬಬೇಡಿ. ನಾನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಲ್ಕು ದಿನಗಳ ಬಳಿಕ ಬಂದು ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.

ವಾರ್ತಾ ಭಾರತಿ 13 Apr 2026 8:20 pm

Koppal | ತೆರೆದ ಗುಂಡಿಯಲ್ಲಿ ಇಬ್ಬರ ಮೃತದೇಹ ಪತ್ತೆ ಪ್ರಕರಣ: ಅಪಘಾತದ ಶಂಕೆ ವ್ಯಕ್ತಪಡಿಸಿದ ಪೊಲೀಸರು

ಕುಕನೂರು: ತಾಲೂಕಿನ ಮಸಬಹಂಚಿನಾಳ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ–367 ಪಕ್ಕದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ತೋಡಿದ ತಗ್ಗಿನಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದ್ದು, ಆರಂಭದಲ್ಲಿ ವ್ಯಕ್ತವಾದ ಕೊಲೆ ಶಂಕೆಗೆ ಇದೀಗ ಅಪಘಾತದ ತಿರುವು ಸಿಕ್ಕಿದೆ. ಸೋಮವಾರ ಬೆಳಿಗ್ಗೆ ತಗ್ಗಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದಾಗ ಮೃತದೇಹಗಳು ಪತ್ತೆಯಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೃತದೇಹಗಳ ಮೇಲೆ ಗಾಯಗಳ ಗುರುತುಗಳು ಕಂಡುಬಂದ ಹಿನ್ನೆಲೆ, ಬೇರೆಡೆ ಕೊಲೆ ಮಾಡಿ ಇಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ನಂತರ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದಾಗ, ಅಪಘಾತ ಸಂಭವಿಸಿರುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗಿಲ್ಲ ಎಂದು ತಿಳಿಸಿದ್ದಾರೆ. ಮೃತರನ್ನು ರುದ್ರೇಶ್ ಗಂಗಾವತಿ (23) ಹಾಗೂ ರವಿ ರಾಮಣ್ಣ ತಟ್ಟಿ (32) ಎಂದು ಗುರುತಿಸಲಾಗಿದ್ದು, ಇಬ್ಬರೂ ಕುಕನೂರು ನಿವಾಸಿಗಳಾಗಿದ್ದಾರೆ. ಮೃತದೇಹಗಳು ಸುಮಾರು 3ರಿಂದ 4 ದಿನಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಎ.8ರಂದು ರಾತ್ರಿ ಇಬ್ಬರೂ ಮೋಟಾರ್‌ ಸೈಕಲ್‌ನಲ್ಲಿ ಕುಕನೂರಿನಿಂದ ಕೊಪ್ಪಳ ಕಡೆಗೆ ತೆರಳಿದ್ದರು. ಘಟನಾ ಸ್ಥಳದಲ್ಲಿ ಪತ್ತೆಯಾದ ಬೈಕ್ ಅವಶೇಷಗಳು ರುದ್ರೇಶ್‌ಗೆ ಸೇರಿದ್ದವು ಎಂದು ತಿಳಿದುಬಂದಿದೆ. ಹಿಂದಿನಿಂದ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದಿರಬಹುದು ಅಥವಾ ವೇಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂಬ ಅನುಮಾನವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವರದಿ ನಿರೀಕ್ಷೆಯಲ್ಲಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 106 ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಘಟನೆ ತಿಳಿದು ಸ್ಥಳಕ್ಕೆ ಶಾಸಕ ಬಸವರಾಜ ರಾಯರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ಶೀಘ್ರವೇ ಭೇದಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರಕರಣದ ನಿಖರ ಕಾರಣ ಪತ್ತೆಗೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 13 Apr 2026 8:20 pm

ಮನೆಗಣತಿ: ಆನ್‌ಲೈನ್‌ನಲ್ಲಿ ನಮೂದಿಸಲು ದ.ಕ. ಜಿಲ್ಲಾಧಿಕಾರಿ ಕರೆ

ಮಂಗಳೂರು, ಎ.13: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ಕಾರ್ಯಾಲಯ ಇವರ ಪರವಾಗಿ ಜನಗಣತಿ ಕಾಯ್ದೆ-1948ರ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು 2 ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಹೇಳಿದ್ದಾರೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಲು ಅವಕಾಶಗಳನ್ನು ನೀಡಲಾಗಿರು ತ್ತದೆ. ಅದರಂತೆ ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ ಹೆಸರು ಮತ್ತು ಗುರುತುಗಳ ಗೌಪ್ಯವಾಗಿ ಇರಿಸಲಾಗುತ್ತದೆ. ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ.ಇದನ್ನು ಸುರಕ್ಷಿತ ವಾಗಿ ಇರಿಸಲಾಗುತ್ತದೆ ಎಂದು ಹೇಳಿದ್ದಾರೆ. ಎಪ್ರಿಲ್ 1ರಿಂದ 15ರವರೆಗೆ ನಿರ್ದೇಶನಾಲಯದಿಂದ ನೀಡಿರುವ ಸರಳವಾದ ಹಂತಗಳನ್ನು ಅನುಸರಿಸುವುದರ ಮೂಲಕ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು ಪಡೆಯಬಹುದಾಗಿದೆ.ಪರಿಶೀಲನೆಗೆ ಬರುವ ಗಣತಿದಾರರಗೆ ಐಡಿಯನ್ನು ಒದಗಿಸಿ ಮನೆಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ. *57466 ಮನೆಗಳು ನಮೂದು :- ಸಾರ್ವಜನಿಕರು ಸ್ವಯಂ ಮನೆಗಣತಿ ಕಾರ್ಯ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಂದುವರಿಯುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಇದುವರೆಗೆ 57466 ಮನೆಗಳ ಸ್ವಯಂ ಗಣತಿ ಕಾರ್ಯ ಮುಗಿದಿರುತ್ತದೆ. ಸ್ವಯಂ ಮನೆಗಣತಿಯು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಆನ್‌ಲೈನ್‌ನಲ್ಲಿ se.census.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ಲಾಗಿನ್ ಆಗಿ, ನಿಮ್ಮ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಿ, ಡಿಜಿಟಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ಸ್ಥಳವನ್ನು ಗುರುತಿಸಿ, ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಬೇಕು. ಸಲ್ಲಿಸಿದ ನಂತರ ಎಸ್‌ಇ ಐಡಿ ದೂರಕಲಿದೆ. ಎಸ್‌ಇ ಐಡಿ ಅನ್ನು ಗಣತಿದಾರರು ಮನೆಗೆ ಭೇಟಿ ನೀಡಿದಾಗ ಒದಗಿಸಬೇಕು. ಗಣತಿದಾರರು ಎಸ್‌ಇ ಐಡಿ ಮೂಲಕ ವಿವರಗಳನ್ನು ದೃಢೀಕರಿಸುತ್ತಾರೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಸಾರ್ವಜನಿಕ, ನಾಗರೀಕರು ಆನ್‌ಲೈನ್‌ನಲ್ಲಿ https://se.census.gov.in/ ಲಿಂಕ್ ಮೂಲಕ ತಮ್ಮ ಮನೆಯ ಗಣತಿಯನ್ನು ಮಾಡಿಕೊಳ್ಳಬಹುದು ಎಂದು ದ.ಕ. ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 13 Apr 2026 8:11 pm

ಕಲ್ಲಡ್ಕ: ಸವಾಲುಗಳ ನಡುವೆ ಶ್ರೇಷ್ಠ ಸಾಧನೆಗೈದ ಅನುಗ್ರಹ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ತಸ್ಮೀನ್

ಕಲ್ಲಡ್ಕ: ಅನೇಕ ಸವಾಲುಗಳು ಜೀವನದಲ್ಲಿ ಎದುರಾಗಬಹುದು, ಆದರೆ ದೃಢ ಮನೋಬಲ ಮತ್ತು ಆತ್ಮವಿಶ್ವಾಸ ಇದ್ದರೆ ಯಾವುದೇ ಅಡೆತಡೆಗಳನ್ನೂ ಮೀರಿ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕೆ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ, ನೇರಳಕಟ್ಟೆಯ ಫಾತಿಮಾ ತಸ್ಮೀನ್ ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಉಮರ್ ಮದನಿ ಮತ್ತು ಉಮೈರ ದಂಪತಿಯ 4ನೇ ಪುತ್ರಿ ಫಾತಿಮಾ ತಸ್ಮೀನ್ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 512 ಅಂಕ ಗಳಿಸಿ, ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಫಾತಿಮಾ ತಸ್ಮೀನ್ ಅವರು ವಾರಕ್ಕೆರಡು ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದರೂ ಕೂಡ ಕಲಿಕೆಯ ಮೇಲಿರುವ ಅಭಿರುಚಿಯಿಂದ ತಮ್ಮ ವಿದ್ಯಾಭ್ಯಾಸವನ್ನು ನಿರಂತರವಾಗಿ ಮುಂದುವರಿಸಿ ಈ ಸಾಧನೆಯನ್ನು ಮಾಡಿರುವುದು ಅತ್ಯಂತ ಪ್ರಶಂಸನೀಯವಾಗಿದೆ. ವಿದ್ಯಾರ್ಥಿನಿಯ ಈ ಸಾಧನೆಯನ್ನು ಮೆಚ್ಚಿ, ಕಾಲೇಜಿನ ಪರವಾಗಿ ಕಲಾ ವಿಭಾಗದ ಉಪನ್ಯಾಸಕರು ಅವರ ನಿವಾಸಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಅವರ ಪರಿಶ್ರಮ, ಸಂಕಲ್ಪ ಮತ್ತು ಸಾಧನೆಗೆ  ಅಭಿನಂದನೆ ತಿಳಿಸಿದರು. ಫಾತಿಮಾ ತಸ್ಮೀನ್ ಅವರ ಈ ಯಶೋಗಾಥೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಏನೇ ಸಮಸ್ಯೆಗಳಿದ್ದರೂ ಸಹ ಮನಸ್ಸಿನ ಶಕ್ತಿ ಮತ್ತು ಧೈರ್ಯದಿಂದ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂಬ ಸಂದೇಶವನ್ನು ವಿದ್ಯಾರ್ಥಿನಿ ನೀಡಿದ್ದಾರೆ ಎಂದು ಉಪನ್ಯಾಸಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Apr 2026 8:06 pm

‎ಹಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಸಂಘದಿಂದ ರಕ್ತದಾನ ಶಿಬಿರ

‎ಹಟ್ಟಿ : ಹಟ್ಟಿ ಚಿನ್ನದ ಗಣಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಟ್ಟಿಯಲ್ಲಿ ಆಯೋಜಿಸಲಾಯಿತು. ‎ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮುಖಂಡರು, ರಕ್ತದಾನವು ಜೀವ ಉಳಿಸುವ ಮಹತ್ತರ ಸೇವೆಯಾಗಿದ್ದು, ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು ಸಮಾಜಮುಖಿಯಾಗಿ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು. ‎ಮಹಾನಾಯಕರ ಆದರ್ಶಗಳನ್ನು ಅನುಸರಿಸುವುದರ ಮೂಲಕ ಸಮಾಜದಲ್ಲಿ ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಹೇಳಿದರು. ‎ಶಿಬಿರದಲ್ಲಿ ನೌಕರರು, ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಿತು. ಇದೇ ಸಂದರ್ಭದಲ್ಲಿ ಕೆಲ ಗಣ್ಯರನ್ನು ಸನ್ಮಾನಿಸಲಾಯಿತು. ‎ಕಾರ್ಯಕ್ರಮದಲ್ಲಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫಿ, ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಜಮದಗ್ನಿ, ಕಾರ್ಯದರ್ಶಿ ಶರಣಗೌಡ ಗುರಿಕಾರ, ಕಾರ್ಮಿಕ ಮುಖಂಡರಾದ ಗೌಸ್ ಮಿಯಾ, ಹನುಂಮತಗೌಡ, ಕುಪ್ಪಣ್ಣ, ಬಾಬು, ಗ್ಯಾನಪ್ಪ ಪೆಂಚಲಮ್ಮ, ಮೌನೇಶ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 8:04 pm

ಮತ್ತೆ ಸಂಘರ್ಷದತ್ತ ಮಧ್ಯಪ್ರಾಚ್ಯ | ಇರಾನ್ ನ ಬಂದರುಗಳಿಗೆ ಅಮೆರಿಕದ ದಿಗ್ಬಂಧನ ಪ್ರಾರಂಭ

ಟೆಹ್ರಾನ್: ಇರಾನಿನ ಬಂದರುಗಳಿಗೆ ಸಾಗುವ ಸಮುದ್ರ ಸಂಚಾರದ ಮೇಲೆ ಅಮೆರಿಕ ಮಿಲಿಟರಿ ದಿಗ್ಬಂಧನವನ್ನು ನಿಗದಿತ ಗಡುವಿನಂತೆ ಆರಂಭಿಸಿದೆ ಎಂದು aljazeera.com ವರದಿ ಮಾಡಿದೆ. ಈ ಕ್ರಮದಿಂದ ಇರಾನಿನ ಬಂದರುಗಳನ್ನು ಪ್ರವೇಶಿಸುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ಹಡಗುಗಳ ಸಂಚಾರವನ್ನು ಅಮೆರಿಕ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ದಿಗ್ಬಂಧನದಿಂದ ಅಂತಾರಾಷ್ಟ್ರೀಯ ಸಾಗಾಟ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 13 Apr 2026 8:03 pm

Bidar | ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಆಗ್ರಹಿಸಿ ಎ.14ರಂದು ಅಹೋರಾತ್ರಿ ಧರಣಿ : ಸಪ್ನದೀಪಾ

ಬೀದರ್: ಡಾ. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಆಶಯದಂತೆ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು, ಸರಕಾರಿ ಶಾಲೆ ಅಭಿವೃದ್ಧಿ ವೇದಿಕೆ ವತಿಯಿಂದ ಎ.14ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ನಗರದ ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಸಚಿವರ ಕಚೇರಿ ಎದುರು ರಾತ್ರಿ 8 ಗಂಟೆಯಿಂದ ಈ ಧರಣಿ ಆರಂಭವಾಗಲಿದೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯಕರ್ತೆ ಸಪ್ನದೀಪಾ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗಿ 17 ವರ್ಷಗಳಾದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದು ವಿಷಾದನೀಯ. ಕಳೆದ ಹತ್ತು ವರ್ಷಗಳಿಂದ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದು, ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಇವರ ಭವಿಷ್ಯದ ಬಗ್ಗೆ ಸರ್ಕಾರದ ಧೋರಣೆ ತೃಪ್ತಿಕರವಾಗಿಲ್ಲ ಎಂದು ದೂರಿದ್ದಾರೆ. ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಮುಂದುವರಿದಿರುವುದನ್ನು ಖಂಡಿಸಿ ಈ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Apr 2026 8:01 pm

ವಾರ್ತಾಭಾರತಿ ವರದಿ ಫಲಶ್ರುತಿ : ಹುಮನಾಬಾದ್ ಬಸ್ ನಿಲ್ದಾಣದ ಶೌಚಾಲಯ ಪುನಃ ಆರಂಭ

ಹುಮನಾಬಾದ್: ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಂಟಾಗಿದ್ದ ಶೌಚಾಲಯದ ಸಮಸ್ಯೆ ಕುರಿತು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪರಿಣಾಮವಾಗಿ ಆಡಳಿತ ಎಚ್ಚೆತ್ತುಕೊಂಡು ಶೌಚಾಲಯವನ್ನು ಪುನಃ ಆರಂಭಿಸಿದೆ. ಏಪ್ರಿಲ್ 12ರಂದು “ಬಸ್ ನಿಲ್ದಾಣದಲ್ಲಿ ಮುಚ್ಚಿದ ಶೌಚಾಲಯ, ಬಯಲಲ್ಲೇ ಶೌಚ; ಹುಮನಾಬಾದ್ ನಲ್ಲಿ ಸಾರ್ವಜನಿಕರ ಪರದಾಟ” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯಲ್ಲಿ, ಶೌಚಾಲಯ ಮುಚ್ಚಿದ್ದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಎದುರಿಸುತ್ತಿದ್ದ ತೊಂದರೆಗಳನ್ನು ವಿವರಿಸಲಾಗಿತ್ತು. ಶೌಚಾಲಯ ಸೌಲಭ್ಯ ಇಲ್ಲದೆ ಪ್ರಯಾಣಿಕರು ಬಯಲನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಮಾತ್ರವಲ್ಲದೆ, ಶೌಚ ಮಾಡುವವರಿಗೂ ಮುಜುಗರ ಉಂಟಾಗುತ್ತಿತ್ತು. ಶೌಚಾಲಯ ಮುಚ್ಚಿದ್ದಕ್ಕೆ ನೀರಿನ ಕೊರತೆಯೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದರೆ, ವರದಿ ಪ್ರಕಟವಾದ ಕೇವಲ 24 ಗಂಟೆಗಳಲ್ಲೇ ಟ್ಯಾಂಕರ್ ಮೂಲಕ ನೀರು ವ್ಯವಸ್ಥೆ ಮಾಡಿ ಬಸ್ ನಿಲ್ದಾಣದ ಶೌಚಾಲಯವನ್ನು ಪುನಃ ಪ್ರಾರಂಭಿಸಲಾಗಿದೆ. ಈ ಕ್ರಮದಿಂದ ಸಾರ್ವಜನಿಕರು ನಿರಾಳತೆ ವ್ಯಕ್ತಪಡಿಸಿದ್ದು, ಸಮಸ್ಯೆ ಪರಿಹಾರವಾದ ಹಿನ್ನೆಲೆಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 13 Apr 2026 7:57 pm

ಬೆದ್ರ ಉತ್ಸವ| ಡಾ.ಮೋಹನ ಆಳ್ವ, ರಾಜೇಂದ್ರ ಕುಮಾರ್, ಕಿಶೋರ್ ಆಳ್ವರಿಗೆ 'ಬೆದ್ರ ಮಾಣಿಕ್ಯ' ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಬೆದ್ರ ಉತ್ಸವ ಸಮಿತಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಸ್ವರಾಜ್ಯ ಮೈದಾನದಲ್ಲಿ ನಡೆದ ಬೆದ್ರ ಉತ್ಸವ -2026 ರವಿವಾರ ಸಂಜೆ ನಡೆದ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಅದಾನಿ ಗ್ರೂಪ್ ಅಧ್ಯಕ್ಷ (ದಕ್ಷಿಣ ಭಾರತ) ಕಿಶೋರ್ ಆಳ್ವ ಅವರಿಗೆ ಬೆದ್ರ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮೋಹನ ಆಳ್ವ ಅವರು, ನನ್ನ ತಂದೆ ಮಿಜಾರು ಆನಂದ ಆಳ್ವ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತೋಷ ನೀಡಿದೆ. ಬೆದ್ರ ಉತ್ಸವ ಪ್ರಥಮ ಬಾರಿ ನಡೆಯುತ್ತಿದ್ದು, ಪ್ರತಿ ವರ್ಷ ನಡೆಯುವಂತಾಗಬೇಕು ಎಂದರು. ಡಾ. ಎಂ. ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾನು ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದೇ ಮೂಡುಬಿದಿರೆಯಿಂದ. ತನ್ನ ಸೇವೆಯನ್ನು ಗುರುತಿಸಿ ಗೌರವಿಸಿದ್ದಕ್ಕೆ ಕೃತಜ್ಞತೆಗಳು ಎಂದರು. ಈ ಸಂದರ್ಭ ಕಿಶೋರ್ ಆಳ್ವ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ ಶರತ್ ಶೆಟ್ಟಿ ಅವರು, ಆದಾನಿ ಸಂಸ್ಥೆಯಿಂದ ಹಲವಾರು ಮಂದಿ ನೆಲೆಯನ್ನು ಕಂಡುಕೊಂಡಿದ್ದಾರೆ. ಮೂಡುಬಿದಿರೆ ಯಲ್ಲೂ ಒಂದು ಸಂಸ್ಥೆಯನ್ನು ತೆರೆದು ಇಲ್ಲಿನ ಯುವಕರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸುವಂತೆ ಕಿಶೋರ್ ಆಳ್ವ ಅವರಲ್ಲಿ ವಿಶೇಷವಾಗಿ ಕೋರಿದರು. ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ಹಿರಿಯ ವಕೀಲ, ಎಂ. ಸಿ. ಎಸ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕತ೯ವ್ಯಾಧಿಕಾರಿ ಚಂದ್ರಶೇಖರ ಎಂ., ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ಬಿಜೆಪಿ ಮಂಡಲದ ಪ್ರಧಾನ ಕಾಯ೯ದಶಿ೯ ರಂಜಿತ್ ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷರಾದ ಜಯಶ್ರೀ ಕೇಶವ್, ಪ್ರಸಾದ್ ಕುಮಾರ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಉದ್ಯಮಿಗಳಾದ ರಾಜೇಂದ್ರ ಕುಮಾರ್ ಜೈನ್, ಮಹೇಂದ್ರ ವಮ೯, ವಕೀಲರಾದ ಚೇತನ್ ಕುಮಾರ್ ಶೆಟ್ಟಿ, ಬೆದ್ರ ಉತ್ಸವ ಸಮಿತಿಯ ಉಪಾಧ್ಯಕ್ಷ ಸುದರ್ಶನ ಎಂ., ಸಂಚಾಲಕ ಹರೀಶ್ ದೇವಾಡಿಗ, ಕೋಶಾಧಿಕಾರಿ ನಾಗೇಶ್ ಬಂಗೇರ, ಲಕ್ಷ್ಮಣ್ ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು. ಸಂಜೆ ದಿನೇಶ್ ದೇವಾಡಿಗ ಅವರಿಂದ 'ನಾದ ವೈಭವ' ರಾತ್ರಿ 9ಕ್ಕೆ ಅನೀಶ್ ಎಸ್. ನೇತೃತ್ವದಲ್ಲಿ ಎಂ.ಜೆ. ಸ್ಟೆಪ್ ಅಪ್‌ ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು.  

ವಾರ್ತಾ ಭಾರತಿ 13 Apr 2026 7:57 pm

ವಚನಾನಂದ ಸ್ವಾಮೀಜಿಗೆ 2 ಆಯ್ಕೆ ಕೊಟ್ಟಿದ್ದ ಪಂಚಮಸಾಲಿ ಟ್ರಸ್ಟ್‌! ಉಚ್ಚಾಟನೆ ಸತ್ಯ ಬಿಚ್ಚಿಟ್ಟ ಧರ್ಮದರ್ಶಿ ಮಂಡಳಿ

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ನಿಖರ ಕಾರಣ ಏನು ಎಂದು ಧರ್ಮದರ್ಶಿ ಮಂಡಳಿ ತಿಳಿಸಿದೆ. ಸ್ವಾಮೀಜಿಗೆ ಬೆಂಗಳೂರಿನ ಶ್ವಾಸ ಕೇಂದ್ರ ಅಥವಾ ಹರಿಹರದ ಪಂಚಮಸಾಲಿ ಪೀಠ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಲಾಗಿತ್ತು. ಗಡುವ ಮುಕ್ತಾಯವಾಗಿದ್ದು, ಸ್ವಾಮೀಜಿ ಉಚ್ಚಾಟನೆ ಮಾಡಿದ್ದೇವೆ ಎಂದು ಮಂಡಳಿ ಹೇಳಿದೆ.

ವಿಜಯ ಕರ್ನಾಟಕ 13 Apr 2026 7:55 pm

ದೃಷ್ಟಿಹೀನತೆ ಸವಾಲು ಮೆಟ್ಟಿ ನಿಂತು 2nd PU ಪರೀಕ್ಷೆಯಲ್ಲಿ 600ಕ್ಕೆ 586 ಅಂಕ ಪಡೆದ ಸಿಂಚನಾ: ಡಿಜಿಟಲ್‌ ಮಾದರಿಯಲ್ಲಿ ಪರೀಕ್ಷೆ ಬರೆದು ಸಾಧನೆ!

ಸಾಧಿಸುವ ಛಲ ಹಾಗೂ ಸಾಮರ್ಥ್ಯವಿದ್ದರೆ ಎಂತಹ ಸವಾಲು ಸಹ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ದೃಷ್ಟಿಹೀನತೆಯ ಸವಾಲನ್ನು ಎದುರಿಸುತ್ತಿರುವ ವಿವಿ ಪುರಂ ಜೈನ್‌ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸಿಂಚನಾ ಸಾಬೀತು ಮಾಡಿದ್ದಾರೆ. ತನ್ನ ದೃಷ್ಟಿಹೀನತೆ ಎಂಬ ಅಂಶಕ್ಕೆ ತಲೆಕಡೆಸಿಕೊಳ್ಳದೆ, ಆತ್ಮವಿಶ್ವಾಸ ಹಾಗೂ ಪರಿಶ್ರಮದ ಮೂಲಕ ಡಿಜಿಟಲ್‌ ಮಾದರಿಯಲ್ಲಿ ಪರೀಕ್ಷೆಯನ್ನು ಬರೆದಿದ್ದು, ದ್ವಿತೀಯ ಪಿಯುನಲ್ಲಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 586 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇನ್ನು, ಇದರಲ್ಲಿ ವಿಶೇಷವೆಂದರೆ ಈ ಸಾಧಕಿಗೆ 9ನೇ ತರಗತಿ ವಿದ್ಯಾರ್ಥಿಯ ಶಕ್ತಿಯೂ ಸಾಥ್‌ ನೀಡಿದ್ದು, ಆಕೆ ಈ ಮೈಲಿಗಲ್ಲು ಸಾಧಿಸುವಲ್ಲಿ ಮಹಾನ್‌ ಶಕ್ತಿಯಾಗಿದ್ದಾರೆ. ಇನ್ನು, ಲೆಕ್ಕಗಳ ಸವಾಲಿನ ಜೀವನದಲ್ಲಿ ಮುಂದುವರೆದು CA ಮಾಡುವ ಆಶಯದೊಂದಿಗೆ ಸಿಂಚನಾ ಸಾಗುತ್ತಿದ್ದು, ಹಲವರಿಗೆ ಸ್ಪೂರ್ತಿಯ ಬೆಳಕಾಗಿ ನಿಂತಿದ್ದಾರೆ.

ವಿಜಯ ಕರ್ನಾಟಕ 13 Apr 2026 7:54 pm

Bidar | ಪರೀಕ್ಷಾ ಶುಲ್ಕ ಕಡಿತಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೀದರ್: ಪರೀಕ್ಷಾ ಶುಲ್ಕ ಕಡಿಮೆ ಮಾಡುವಂತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಬೀದರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಹಾಲಹಳ್ಳಿ ಗ್ರಾಮದ ಸಮೀಪ ಇರುವ ವಿಶ್ವವಿದ್ಯಾಲಯದ ಎದುರು ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸೇರಿ ಘೋಷಣೆ ಕೂಗಿ ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಆರಂಭದಲ್ಲಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕುಲಪತಿಗಳ ಕೊಠಡಿಯ ಮುಂದೆ ಹೋಗಿ ಘೋಷಣೆಗಳನ್ನು ಕೂಗಿದರು. ನಂತರ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಕುಲಪತಿಗಳು ಹೊರಬಂದು ಮನವಿ ಪತ್ರ ಸ್ವೀಕರಿಸಿದರು. ವಿದ್ಯಾರ್ಥಿಗಳು ಮಾತನಾಡಿ, ಗುಲ್ಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಬೀದರ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಶುಲ್ಕ ಹೆಚ್ಚು ಇದೆ ಎಂದು ಆರೋಪಿಸಿದರು. ಕಳೆದ ಎರಡು ವರ್ಷಗಳಿಂದ ಶುಲ್ಕ ಹೆಚ್ಚಳವಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ತೊಂದರೆ ಉಂಟಾಗಿದೆ ಎಂದು ಹೇಳಿದರು. ಇದಲ್ಲದೆ, ಕ್ಯಾಂಪಸ್‌ಗೆ ಸರಿಯಾದ ಬಸ್ ಸೌಲಭ್ಯ ಇಲ್ಲ, ಕುಡಿಯುವ ನೀರು, ಕುಳಿತುಕೊಳ್ಳುವ ವ್ಯವಸ್ಥೆ, ಶೌಚಾಲಯ ಹಾಗೂ ಸ್ವಚ್ಛತೆ ಸಮಸ್ಯೆಗಳಿವೆ. ಜೊತೆಗೆ, ಉಪನ್ಯಾಸಕರು ನಿಯಮಿತವಾಗಿ ತರಗತಿಗಳನ್ನು ನಡೆಸುತ್ತಿಲ್ಲ ಎಂಬ ಆರೋಪವನ್ನೂ ವಿದ್ಯಾರ್ಥಿಗಳು ಮಾಡಿದರು. ಅರ್ಹ ಉಪನ್ಯಾಸಕರ ನೇಮಕ ಮತ್ತು ಗ್ರಂಥಾಲಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು. ಶುಲ್ಕ ಕಡಿಮೆ ಮಾಡದಿದ್ದರೆ ಬೀದರ್–ಕಲಬುರಗಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿ ಕುಲಪತಿಗಳು ಮಾತನಾಡಿ, ಶುಲ್ಕ ನಿಗದಿ ಸಮಿತಿ ಶಿಫಾರಸ್ಸು ಹಾಗೂ ಸಿಂಡಿಕೇಟ್ ಸಭೆಯ ನಿರ್ಧಾರ ಆಧಾರದ ಮೇಲೆ ಪರೀಕ್ಷಾ ಶುಲ್ಕ ನಿಗದಿಯಾಗುತ್ತದೆ. ವಿಶ್ವವಿದ್ಯಾಲಯ ಹೊಸದಾಗಿರುವುದರಿಂದ ಮೂಲಸೌಕರ್ಯ ಕೊರತೆ ಇದೆ. ಸರ್ಕಾರದಿಂದ ಅನುದಾನ ಲಭ್ಯವಾಗದೆ, ವಿದ್ಯಾರ್ಥಿಗಳ ಶುಲ್ಕದಿಂದಲೇ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು. ಶುಲ್ಕದ ವಿಷಯವನ್ನು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು. ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ನಾಗಾರ್ಜುನ, ಪ್ರಶಾಂತ್, ಗೌತಮ್ ಕೆಂಪೆ, ಪ್ರತಿಭಾ, ವಿಜಯಲಕ್ಷ್ಮೀ, ಜ್ಞಾನೇಶ್ವರ್ ಹಾಗೂ ಬಾಲಾಜಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 13 Apr 2026 7:50 pm

ಮುಂಬೈ–ಬೆಂಗಳೂರು ವಂದೇ ಭಾರತ್‌ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚಾರ

ಕಲಬುರಗಿ : ಮುಂಬೈ–ಬೆಂಗಳೂರು ನಡುವಿನ ವಂದೇ ಭಾರತ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚರಿಸಲಿರುವ ಮಹತ್ವದ ನಿರ್ಧಾರಕ್ಕೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಮುಂಬೈ–ಬೆಂಗಳೂರು ನಡುವೆ ವಂದೇ ಭಾರತ ಸ್ಲೀಪರ್ ರೈಲು ಆರಂಭಿಸುವುದಾಗಿ ಘೋಷಿಸಿದ್ದರೂ, ಮಾರ್ಗದ ಬಗ್ಗೆ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು. ಕಲಬುರಗಿ–ಬೆಂಗಳೂರು ನಡುವೆ ವೇಗವಾದ ರೈಲು ಸಂಪರ್ಕ ಕಲ್ಪಿಸುವುದು ಈ ಭಾಗದ ಜನರ ದೀರ್ಘಕಾಲದ ಬೇಡಿಕೆಯಾಗಿದ್ದು, ಈ ಕುರಿತು ಕೆಕೆಸಿಸಿಐ ಹಲವು ಬಾರಿ ಕೇಂದ್ರ ರೈಲ್ವೆ ಸಚಿವಾಲಯದ ಗಮನ ಸೆಳೆದಿತ್ತು. ಈ ಸಂಬಂಧ 2025 ಡಿಸೆಂಬರ್ 17ರಂದು ಕೆಕೆಸಿಸಿಐ ನಿಯೋಗ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಬಳಿಕ 2026 ಏಪ್ರಿಲ್ 8ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಹೊಸ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಿತ್ತು. ಇದೀಗ ಏಪ್ರಿಲ್ 13ರಂದು ಪ್ರಹ್ಲಾದ್ ಜೋಶಿ ಅವರು ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಮುಂಬೈ–ಬೆಂಗಳೂರು ವಂದೇ ಭಾರತ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ಪ್ರಹ್ಲಾದ್ ಜೋಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯನ್ನು ಐತಿಹಾಸಿಕ ಸಾಧನೆ ಎಂದು ಕೆಕೆಸಿಸಿಐ ಪರಿಗಣಿಸಿದ್ದು, ಮುಂಬೈ–ಕಲಬುರಗಿ–ಬೆಂಗಳೂರು ಸಂಪರ್ಕ ಬಲಗೊಳ್ಳಲಿದೆ. ಇದರಿಂದ ವ್ಯಾಪಾರ, ಕೈಗಾರಿಕೆ, ಉದ್ಯಮಗಳಿಗೆ ಉತ್ತೇಜನ ದೊರೆಯಲಿದ್ದು, ಪ್ರಯಾಣಿಕರಿಗೆ ವೇಗವಾದ ಹಾಗೂ ಸುಗಮ ಸಂಚಾರ ಸಾಧ್ಯವಾಗಲಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಗೂ ಇದು ಮಹತ್ವದ ಉತ್ತೇಜನ ನೀಡಲಿದೆ ಎಂದು ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

ವಾರ್ತಾ ಭಾರತಿ 13 Apr 2026 7:47 pm

School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ

School Holiday: ಈಗಾಗಲೇ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಗಿದಿದ್ದು, ಫಲಿತಾಂಶ ಇನ್ನೂ ಬಾಕಿಯಿದೆ. ಈಗಿರುವಾಗಲೇ ಇದೀಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ, ವಿದ್ಯಾರ್ಥಿಗಳಿಗೆ ಎಷ್ಟು ದಿನ ರಜೆಗಳು ಸಿಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು

ಒನ್ ಇ೦ಡಿಯ 13 Apr 2026 7:46 pm

Kalaburagi | ಶ್ರೀ ವೇದೇಶತೀರ್ಥ ಸಂಸ್ಕೃತ ವಿದ್ಯಾಪೀಠದ ಕುಲಪತಿ ಪಂ.ಅಂನತಾಚಾರ್ಯ ಅಕಮಂಚಿಯವರಿಗೆ ʼವಿದ್ಯಾಧೀಶಾನುಗ್ರಹ ಪ್ರಶಸ್ತಿʼ

ಕಲಬುರಗಿ : ಅಫಜಲ್ಪುರ ತಾಲೂಕಿನ ಭೀಮಾ ತೀರದಲ್ಲಿರುವ ಪುಣ್ಯಕ್ಷೇತ್ರ ಮಣ್ಣೂರಲ್ಲಿ ಕಳೆದ 4 ದಶಕಗಳಿಂದ ಅಧ್ಯಯನ, ಅಧ್ಯಾಪನ ಮಾಡಿಕೊಂಡು ಸಾಧನೆ ಮಾಡುತ್ತಿರುವ ಶ್ರೀ ವೇದಶತೀರ್ಥ ಸಂಸ್ಕೃತ ವಿದ್ಯಾಪೀಠದ ಕುಲಪತಿಗಳಾದ ಪಂ.ಅನಂತಾಚಾರ್ಯ ಅಕಮಂಚಿಯವರಿಗೆ ರಾಜ್ಯ ಸಂಸ್ಕೃತ ವಿವಿಯಿಂದ ಮಾನ್ಯತೆ ಪಡೆದಿರುವ ಬೆಂಗಳೂರಿನ ದ್ವೈತ ವೇದಾಂತಾಧ್ಯಯನ ಸಂಶೋಧನಾ ಪ್ರತಿಷ್ಠಾನ ವಿಧ್ಯಾಧೀಶಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದೆ. ಶೀಮದುತ್ತರಾದಿ ಮಠದ ಪರಂಪರೆಯಲ್ಲಿ ಆಗಿ ಹೋಗಿರುವ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು ಈ ಬಾರಿ ಪಂ.ಅನಂತಾಚಾರ್ಯರು ಈ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಬೆಂಗಳೂರಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪಂ.ಅನಂತಾಚಾರ್ಯರಿಗೆ ನೀಡಿದರು. ಮಣ್ಣೂರು ಭೀಮಾ ತೀರದಲ್ಲಿ ಗುರುಕುಲ ಪರಂಪರೆಯಲ್ಲಿ ವಿದ್ಯಾಪೀಠ ನಡೆಸಿಕೊಂಡು ಹೊರಟಿರುವ ಅನಂತಾಚಾರ್ಯರು ಕಳೆದ 4 ದಶಕಕ್ಕೂ ಹೆಚ್ಚು ಕಾಲದಿಂದ ಸಂಸ್ಕೃತ ಪಾಠಪ್ರವಚನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇವರಿಂದ ಪಾಠ ಪ್ರವಚನ ಹೇಳಿಸಿಕೊಂಡ ಅನೇಕರು ದೇಶಾದ್ಯಂತ ವಿವಿಧೆಡೆ ಸಂಸ್ಕೃತ ಪಾಠಶಾಲೆ ನಡೆಸಿಕೊಂಡು ಬಂದಿದ್ದಾರೆ. ಧ್ಯಾನಪ್ರಮೋದ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿರುವ ಅನಂತಾಚಾರ್ಯರು ಶ್ರೀಮದ್‌ ಭಾಗವತ ಪುರಾಣ ಪ್ರವಚನ ಚತುರರೆಂದೇ ಖ್ಯಾತ್ಯರಾಗಿದ್ದಾರೆ. ಬೆಂಗಳೂರಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದ್ವೈತ ವೇದಾಂತಾಧ್ಯಯನ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷರಾದ ಸತ್ಯಧ್ಯಾನಾಚಾರ್ಯ ಕಟ್ಟಿ ಅವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 7:41 pm

ಪ್ರಧಾನಿ ಭದ್ರತಾ ಕಾರಣಕ್ಕೆ ಮದುವೆಗೆ ಅಡಚಣೆ; ಸಿಲಿಗುರಿ ನವ ಜೋಡಿಗೆ ಕೈಮುಗಿದು ಕ್ಷಮೆ ಕೇಳಿದ ನರೇಂದ್ರ ಮೋದಿ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ (ಏ.12-ಭಾನುವಾರ) ಸಿಲಿಗುರಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮಗಾಗಿ ಒದಗಿಸಲಾಗಿದ್ದ ಬಿಗಿ ಭದ್ರತೆಯ ಕಾರಣದಿಂದಾಗಿ ನವಜೋಡಿಯ ವಿವಾಹ ಸಮಾರಂಭಕ್ಕೆ ಅಡ್ಡಿಯಾಗಿದ್ದಕ್ಕೆ ಕ್ಷಮೆ ಕೋರಿದ್ದಾರೆ. ತಾವೇ ಖುದ್ದಾಗಿ ನವವಿವಾಹಿತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಇಬ್ಬರಿಗೂ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದರು. ಪ್ರಧಾನಿ ಮೋದಿ ಅವರ ಈ ಸರಳತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 13 Apr 2026 7:40 pm

ಇ-ಸ್ವತ್ತು 2.0 ತಂತ್ರಾಂಶದಿಂದ 1,33,803 ಅರ್ಜಿ ವಿಲೇವಾರಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಇ-ಸ್ವತ್ತು 2.0 ತಂತ್ರಾಂಶದಡಿ ಸಾರ್ವಜನಿಕರಿಂದ ರಾಜ್ಯದಲ್ಲಿ ಈವರೆವಿಗೂ 1,52,863 ಅರ್ಜಿಗಳು ಸ್ವೀಕೃತಗೊಂಡಿದ್ದು, 1,33,803 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸೋಮವಾರ ನಗರದ ತಮ್ಮ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಇ-ಸ್ವತ್ತು ತಂತ್ರಾಂಶದ ಕಾರ್ಯನಿರ್ವಹಣೆ ಹಾಗೂ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಹೊಸ ನಮೂನೆ 11ಬಿ ಗೆ ಸಂಬಂಧಿಸಿದಂತೆ ಈವರೆಗೆ 76,093 ಅರ್ಜಿಗಳು ಸ್ವೀಕೃತವಾಗಿವೆ. ಈ ಅರ್ಜಿಗಳು ವಿವಿಧ ಹಂತಗಳಲ್ಲಿ ಅನುಮೋದನೆಗೆ ಬಾಕಿ ಉಳಿದಿದ್ದು, ಈ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು. ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್‍ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಮತ್ತು ಬಳಕೆದಾರರು ಅರ್ಜಿಗಳನ್ನು ಅನುಮೋದನೆ ಮಾಡುವಂತಹ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಲಹೆಗಳು ಬರುತ್ತಿವುದನ್ನು ಗಮನಿಸಿ ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು. ಹೊಸದಾಗಿ ಅನುಮೋದನೆಗೊಂಡ ಆಸ್ತಿಗಳಿಗೆ ತಿದ್ದುಪಡಿ ಮಾಡುವ ಅವಕಾಶವನ್ನು ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರವನ್ನು ಇ-ಸ್ವತ್ತು ತಂತ್ರಾಂಶದೊಂದಿಗೆ ಸಂಯೋಜನೆ ಮಾಡುವ ಕಾರ್ಯವನ್ನು ಮುಂದಿನ ದಿನದೊಳಗೆ ಕ್ರಮವಹಿಸಲಾಗುವುದು. ಇ-ಸ್ವತ್ತು ತಂತ್ರಾಂಶದ ಬಳಕೆದಾರರು ಲಾಗಿನ್ ನಲ್ಲಿ ಉಂಟಾಗುತ್ತಿರುವ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಅವರು ಉಲ್ಲೇಖಿಸಿದರು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ರಣ್‍ದೀಪ್ ಸೇರಿದಂತೆ ಪ್ರಮುಖರಿದ್ದರು.

ವಾರ್ತಾ ಭಾರತಿ 13 Apr 2026 7:39 pm

ಕಾಂಗ್ರೆಸ್ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್ ಪಕ್ಷ ತೊರೆದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಯಾವೊಬ್ಬ ಮುಖಂಡರು ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಸಂಪರ್ಕದಲ್ಲಿ ಯಾವೊಬ್ಬ ನಾಯಕರು ಇಲ್ಲ. ಒಂದು ವೇಳೆ ಸಂಪರ್ಕಕ್ಕೆ ಬಂದರೆ ನಮ್ಮ ಪಕ್ಷದ ಹಿರಿಯ ನಾಯಕನ ಜೊತೆ ಚರ್ಚಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳುತ್ತೇನೆ ಎಂದು ವಿವರಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಗೆ ಉಂಟಾಗಿರುವ ಗೊಂದಲಗಳ ಬಗ್ಗೆ ನಾನೇಕೆ ಉತ್ತರಿಸಲಿ. ಅದೇನಿದ್ದರೂ ಆ ಪಕ್ಷದ ಆಂತರಿಕ ವಿಚಾರ. ಆದರೆ, ನಾನು ಈ ಬೆಳವಣಿಗೆಗಳನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಸಮಸ್ಯೆ ಸರಿ ಮಾಡಿಕೊಳ್ಳುವುದು-ಬಿಡುವುದು ಆ ಪಕ್ಷಕ್ಕೆ ಬಿಟ್ಟದ್ದು. ಆದರೆ ಒಂದು ಸಮುದಾಯದ ಹಿನ್ನೆಲೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.  

ವಾರ್ತಾ ಭಾರತಿ 13 Apr 2026 7:34 pm

ನಮ್ಮ ಬಂದರುಗಳ ಸುದ್ದಿಗೆ ಬಂದರೆ ಗಲ್ಫ್‌ನಲ್ಲಿರುವ ಯಾವುದೇ ಬಂದರು ಸುರಕ್ಷಿತವಲ್ಲ: ಅಮೆರಿಕಾಗೆ ಇರಾನ್ ಎಚ್ಚರಿಕೆ

ಟೆಹ್ರಾನ್: ಇರಾನ್‌ನ ಬಂದರುಗಳಿಗೆ ಯಾವುದೇ ರೀತಿಯ ಬೆದರಿಕೆ ಉಂಟಾದರೆ, ಪರ್ಷಿಯನ್ ಕೊಲ್ಲಿ ಹಾಗೂ ಒಮಾನ್ ಸಮುದ್ರದಲ್ಲಿನ ಯಾವುದೇ ಬಂದರು ಕೂಡ ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದೆ. ಸೋಮವಾರದಿಂದ ಅಮೆರಿಕ ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳ ಮೇಲೆ ದಿಗ್ಬಂಧನ ಹೇರಲು ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಇರಾನ್ ಈ ಹೇಳಿಕೆ ನೀಡಿದೆ ಎಂದು ವರದಿಯಾಗಿದೆ. ಕದನ ವಿರಾಮ ಮಾತುಕತೆ ವಿಫಲವಾದ ನಂತರ, ಟೆಹ್ರಾನ್ ಮೇಲೆ ಒತ್ತಡ ಹೆಚ್ಚಿಸಲು ಅಮೆರಿಕ ಮುಂದಾಗಿದೆ. ಯುಎಸ್ ಮಿಲಿಟರಿ ಇರಾನಿನ ಬಂದರುಗಳಿಗೆ ಹೋಗುವ ಅಥವಾ ಅಲ್ಲಿಂದ ಹೊರಡುವ ಹಡಗುಗಳನ್ನು ನಿರ್ಬಂಧಿಸುವುದಾಗಿ ಘೋಷಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್‌ ನ ಮಿಲಿಟರಿ ಮತ್ತು ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್(IRGC) ಪಡೆಗಳು, ‘ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಸಮುದ್ರದಲ್ಲಿನ ಭದ್ರತೆ ಎಲ್ಲರಿಗೂ ಸೇರಿದ್ದು. ಅದು ಒಂದೇ ದೇಶಕ್ಕೆ ಮಾತ್ರವಲ್ಲ. ಇರಾನಿನ ಬಂದರುಗಳಿಗೆ ಬೆದರಿಕೆಯುಂಟಾದರೆ ಈ ಪ್ರದೇಶದಲ್ಲಿ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ’ ಎಂದು ಹೇಳಿವೆ. ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಾರ, ದಿಗ್ಬಂಧನವನ್ನು ಬೆಳಿಗ್ಗೆ 10 EDT (ಇರಾನ್‌ನಲ್ಲಿ ಸಂಜೆ 5:30) ರಿಂದ ಜಾರಿಗೊಳಿಸಲಾಗುತ್ತದೆ. ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯಾದ್ಯಂತ ಇರಾನಿನ ಬಂದರುಗಳಿಗೆ ಪ್ರವೇಶಿಸುವ ಅಥವಾ ಹೊರಡುವ ಎಲ್ಲಾ ದೇಶಗಳ ಹಡಗುಗಳಿಗೆ ಇದು ಅನ್ವಯವಾಗಲಿದೆ. ಆದರೆ, ಇರಾನಿನಲ್ಲದ ಬಂದರುಗಳ ನಡುವೆ ಸಂಚರಿಸುವ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯನ್ನು ದಾಟಲು ಅವಕಾಶ ಇರುತ್ತದೆ. ಈ ಬೆಳವಣಿಗೆಯ ಪರಿಣಾಮವಾಗಿ ಸಮುದ್ರ ಸಾರಿಗೆ ಈಗಾಗಲೇ ನಿಧಾನವಾಗಿದೆ. ಕದನ ವಿರಾಮದ ನಂತರ ಭಾಗಶಃ ಪುನರಾರಂಭಗೊಂಡಿದ್ದ ಹಾರ್ಮುಝ್ ಜಲಸಂಧಿಯಲ್ಲಿ, ಹಿಂದೆ ದಿನಕ್ಕೆ 100–135 ಹಡಗುಗಳು ಸಂಚರಿಸುತ್ತಿದ್ದರೆ, ಈಗ ಕೇವಲ 40ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳು ಮಾತ್ರ ಸಂಚರಿಸುತ್ತಿವೆ. ಇನ್ನೊಂದೆಡೆ, ಶ್ವೇತಭವನವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪ್ರಕಟಿಸಿದೆ. ‘ಎ. 13ರಂದು ಬೆಳಿಗ್ಗೆ 10 ಗಂಟೆಗೆ (ಭಾರತೀಯ ಸಮಯ ರಾತ್ರಿ 7:30) ಇರಾನಿನ ಬಂದರುಗಳಿಗೆ ಪ್ರವೇಶಿಸುವ ಅಥವಾ ಹೊರಡುವ ಹಡಗುಗಳನ್ನು ಅಮೆರಿಕ ನಿರ್ಬಂಧಿಸಲಿದೆ’ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Apr 2026 7:33 pm

West Bengal | SIR ಪ್ರಕ್ರಿಯೆಯಲ್ಲಿ ಅಳಿಸಲಾದ ಮತದಾರರಿಗೆ ಮತದಾನದ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾದ ವ್ಯಕ್ತಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಮೇಲ್ಮನವಿ ನ್ಯಾಯಮಂಡಳಿಗಳ ಮುಂದೆ ಸಂಬಂಧಿತ ಅರ್ಜಿಗಳು ಇನ್ನೂ ಬಾಕಿ ಇರುವ ಹಿನ್ನಲೆಯಲ್ಲಿ ಇಂತಹ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಂತದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಅನಾವಶ್ಯಕವೆಂದು ಪೀಠ ಅಭಿಪ್ರಾಯಪಟ್ಟಿತು. ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು, ಮತದಾರರ ಅಳಿಸುವಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಅಕಾಲಿಕವೆಂದು ಪರಿಗಣಿಸಿತು. ಈ ರೀತಿಯ ವಿಚಾರಗಳಿಗೆ ಈಗಾಗಲೇ ವ್ಯವಸ್ಥೆಯಲ್ಲಿರುವ ಮೇಲ್ಮನವಿ ನ್ಯಾಯಮಂಡಳಿಗಳ ಮೂಲಕವೇ ಪರಿಹಾರ ಪಡೆಯಬೇಕು ಎಂದು ಸೂಚಿಸಿತು. ಯಾವುದೇ ನ್ಯಾಯಾಂಗ ಹಸ್ತಕ್ಷೇಪಕ್ಕೂ ಮುನ್ನ ನಿಗದಿತ ಕಾನೂನು ಪ್ರಕ್ರಿಯೆಯನ್ನು ಅನುಸರಿಸುವುದು ಅನಿವಾರ್ಯ ಎಂದು ನ್ಯಾಯಾಲಯ ಒತ್ತಿಹೇಳಿತು. ವಿಚಾರಣೆಯ ವೇಳೆ ಮತದಾರರ ಅಳಿಸುವಿಕೆಯ ಪ್ರಮಾಣದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಯಿತು. ತಮ್ಮ ಹೆಸರುಗಳನ್ನು ಮರುಸ್ಥಾಪಿಸಲು ಲಕ್ಷಾಂತರ ಮಂದಿ ಮೇಲ್ಮನವಿಗಳನ್ನು ಸಲ್ಲಿಸಿರುವುದನ್ನು ಪೀಠ ಗಮನಕ್ಕೆ ತೆಗೆದುಕೊಂಡಿತು. ಈ ವೇಳೆ ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ, ಅಳಿಸಲಾದ ಮತದಾರರಿಗೆ ತಾತ್ಕಾಲಿಕವಾಗಿ ಮತ ಚಲಾಯಿಸಲು ಅವಕಾಶ ನೀಡಬೇಕೆಂದು ವಾದಿಸಿದರು. ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಪ್ರಸ್ತುತ ಕಾನೂನು ಪ್ರಕ್ರಿಯೆಯನ್ನೇ ಅನುಸರಿಸಬೇಕೆಂದು ಸ್ಪಷ್ಟಪಡಿಸಿತು.

ವಾರ್ತಾ ಭಾರತಿ 13 Apr 2026 7:31 pm

ವಾಡಿ | ಕ್ರೀಡೆಯಿಂದ ದೇಹ, ಮನಸ್ಸು ಉಲ್ಲಾಸ : ರಾಜಶೇಖರ ಶಿವಾಚಾರ್ಯ

ವಾಡಿ: ಪ್ರತಿನಿತ್ಯ ದೈಹಿಕ ಕಸರತ್ತಿನ ಆಟದಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಲವಲವಿಕೆ ಉಂಟಾಗಿ ಜೀವ ಚೇತರಿಕೆಯ ಭಾವ ಉಂಟಾಗುತ್ತದೆ ಎಂದು ಹಲಕರ್ಟಿ ಸಿದ್ದೇಶ್ವರ ಧ್ಯಾನಧಾಮದ ರಾಜಶೇಖರ ಶಿವಾಚಾರ್ಯ ಹೇಳಿದರು. ಪಟ್ಟಣ ಸಮೀಪದ ಲಾಡ್ಲಾಪುರ ಹೊರವಲಯದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಭಾಗವಹಿಸುವಿಕೆಯ ಕೊರತೆಯು ನಮ್ಮ ಒತ್ತಡದ ಜೀವನಕ್ಕೆ ಕಾರಣವಾಗುತ್ತಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಹಾಗೂ ಮುಖಂಡ ಪೋಮು ರಾಠೋಡ ಮಾತನಾಡಿದರು. ಪ್ರಮುಖರಾದ ಈರಣ್ಣ ಮಲ್ಕಂಡಿ, ಸಾಬಣ್ಣ ಗನಿಮನಿ, ಮೌನೇಶ ದೊರೆ, ಶರಣಪ್ಪ ಗೊಡಗ, ಮಲ್ಲಿಕಾರ್ಜುನ ಗಂಧಿ, ರವಿಕುಮಾರ ಕಮರಡಗಿ, ಅಂಬರೀಷ ಜಾಲಹಳ್ಳಿ, ಶರಣು ಎಣ್ಣಿ, ಸುರೇಶ ಹೂಗಾರ ಹಾಗೂ ಇನ್ನಿತರರು ಇದ್ದರು.

ವಾರ್ತಾ ಭಾರತಿ 13 Apr 2026 7:30 pm

ಎಆರ್‌ಎಐ ಕೇಂದ್ರದ ಜತೆಗೆ ಕೈಗಾರಿಕಾ ಹಬ್ ಸ್ಥಾಪನೆ ಚಿಂತನೆ : ಎಂ.ಬಿ.ಪಾಟೀಲ್

‘ಕೇಂದ್ರ ಸಚಿವ ಎಚ್‍ಡಿಕೆ ಜತೆ ಚರ್ಚೆ, ಮಂಡ್ಯ ಜಿಲ್ಲೆಯಲ್ಲಿ 500ಎಕರೆ ಗುರುತಿಸಲು ಸೂಚನೆ’

ವಾರ್ತಾ ಭಾರತಿ 13 Apr 2026 7:30 pm

ವಿಟ್ಲ: ಕೋಳಿ ಅಂಕದ ಅಡ್ಡೆಗೆ ಪೊಲೀಸರಿಂದ ದಾಳಿ: ನಾಲ್ವರ ಬಂಧನ

ವಿಟ್ಲ: ವಿಟ್ಲಕಸಬ ಗ್ರಾಮದ ಮಾಡ ಎಂಬಲ್ಲಿ ಕೋಳಿ ಅಂಕದ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಪರಾರಿಯಾಗಿದ್ದಾರೆ. ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ಮತ್ತು ಸಿಬ್ಬಂದಿ ತಂಡ ಸಂಜೆ ಸ್ಥಳಕ್ಕೆ ದಾಳಿ ನಡೆಸಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಸುಮಾರು 20 ರಿಂದ 25 ಜನರ ಗುಂಪು ಸೇರಿ ಕೋಳಿ ಅಂಕದಲ್ಲಿ ತೊಡಗಿರುವುದು ಕಂಡುಬಂದಿದ್ದು, ಪೊಲೀಸರನ್ನು ಕಂಡ ಕೂಡಲೇ ಜೂಜುಕೋರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭ ವಿಟ್ಲಕಸಬ ನಿವಾಸಿಗಳಾದ ಚಂದ್ರಶೇಖರ (43), ಇಬ್ರಾಹಿಂ (65), ಹೊನ್ನಪ್ಪ (46) ಮತ್ತು ವಿಟ್ಲಪಡ್ನೂರು ನಿವಾಸಿ ಚಂದ್ರಹಾಸ (32) ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉಳಿದ ಆರೋಪಿಗಳನ್ನು ಹಿಡಿಯಲು ಪೊಲೀಸರು ಮುಂದಾದಾಗ ಬಾಬಣ್ಣ ಮತ್ತು ಹೊನ್ನಪ್ಪ ಹರಿಜನ ಎಂಬವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರ್ಯಾಚರಣೆಯ ವೇಳೆ ಜೂಜಾಟಕ್ಕೆ ಬಳಸಿದ್ದ 3 ಕೋಳಿಗಳು, 1000 ರೂ. ನಗದು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 13 Apr 2026 7:29 pm

ಸಮಾಜದಲ್ಲಿ ಸಮಾನತೆ ಸಾರಿದ ಬಸವ ತತ್ವವೇ ಶ್ರೇಷ್ಠ : ಶಾಸಕ ಬಿ.ಆರ್.ಪಾಟೀಲ್‌

ಚಿಂಚೋಳಿ : ಸಮಾಜದಲ್ಲಿ ಬೇರುಬಿಟ್ಟಿದ್ದ ಕೀಳು ಜಾತಿ ವ್ಯವಸ್ಥೆಯ ಅಂಕುಡೊಂಕುಗಳನ್ನು ಹೋಗಲಾಡಿಸಿ ಸಮಾನತೆ, ಮಾನವೀಯತೆ ಸಾರಿದ ಮಹತ್ವದ ತತ್ವವೇ ಬಸವ ತತ್ವ ಎಂದು ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ, ಆಳಂದ ಶಾಸಕ ಬಿ.ಆರ್.ಪಾಟೀಲ್‌ ಅಭಿಪ್ರಾಯಪಟ್ಟರು. ಕಲಬುರಗಿ ಜಿಲ್ಲೆಯಲ್ಲಿ ಎ.19 ಮತ್ತು 20ರಂದು ನಡೆಯಲಿರುವ 893ನೇ ಬಸವ ಜಯಂತ್ಯೋತ್ಸವದ ಪೂರ್ವಭಾವಿ ಸಭೆವು ಚಿಂಚೋಳಿ ಪಟ್ಟಣದ ವೀರೇಂದ್ರ ಪಾಟೀಲ್ ಸಭಾಂಗಣದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ನಾಯಕರ ನೇತೃತ್ವದಲ್ಲಿ ಈ ಸಭೆಯಲ್ಲಿ ಮಾತನಾಡಿದರು. ಇಂದಿನ ಸಮಾಜದಲ್ಲಿ ಬಸವಣ್ಣನವರ ಆಚಾರ-ವಿಚಾರಗಳು ಮರೆಯಾಗುತ್ತಿವೆ ಎಂಬ ಆತಂಕ ವ್ಯಕ್ತಪಡಿಸಿದ ಅವರು, ಮೊದಲು ನಾವು ಬಸವಣ್ಣನವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಂತರ ನಮ್ಮ ಮಕ್ಕಳಿಗೆ ಅವರ ವಚನಗಳು, ನಡೆ-ನುಡಿಗಳು ಮತ್ತು ಜೀವನ ಮೌಲ್ಯಗಳ ಅರಿವು ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಲಿಂಗಾಯತ ಧರ್ಮವು ಎಲ್ಲಾ ವರ್ಗದ ಜನರಿಗೆ ಸಮಾನತೆ ನೀಡುವ ಧರ್ಮವಾಗಿದ್ದು, ಬಸವಣ್ಣನವರ ವಚನಗಳು ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಬಸವ ಜಯಂತ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಎ.19ರಂದು  ಕಲಬುರಗಿಯಲ್ಲಿ ನಡೆಯುವ 893ನೇ ಬಸವ ಜಯಂತ್ಯೋತ್ಸವದಲ್ಲಿ ಚಿಂಚೋಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಸೇರಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಬಸವ ಜಯಂತ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಸುಭಾಷ ರಾಠೋಡ, ಅಖಿಲ ಭಾರತ ಮಹಾಸಭೆ ಜಿಲ್ಲಾ ಘಟಕ ಅಧ್ಯಕ್ಷ ಶರಣು ಮೋದಿ, ರವೀಂದ್ರ ಶಾಬಾದಿ, ಮಲ್ಲಿನಾಥ ಪಾಟೀಲ, ಬಾಬುರಾವ ಪಾಟೀಲ, ನಂದಿಕುಮಾರ ಪಾಟೀಲ, ಶರಣು ಪಾಟೀಲ್ ಮೋತ್ಕಪಳ್ಳಿ, ಮಲ್ಲಿಕಾರ್ಜುನ ಪಾಲಾಮೂರು, ವಿರೇಶ ಯಂಪಳ್ಳಿ, ಚಿತ್ರಶೇಖರ ಪಾಟೀಲ, ರಾಜಶೇಖರ, ನೀಲಕಂಠ ಶಿಳಿನ್, ದೀಪಕ ನಾಗಪೂಣ್ಯಶಟಿ, ಬಸವಣ್ಣ ಪಾಟೀಲ, ಜಗನ್ನಾಥ ಇದಾಲಾಯಿ, ಬಸವರಾಜ, ಶಂಕರ, ಸುರೇಶ್ ದೇಶಪಾಂಡೆ, ಅಮೃತರಾವ ಗುಡ್ಡದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 7:28 pm

ಚಾಣಕ್ಯ ನೀತಿ: ಜೀವನದ ದಿಕ್ಕನ್ನೇ ಬದಲಿಸಬಲ್ಲ 4 ಪ್ರಮುಖ ಜೀವನ ಪಾಠಗಳು!

ಜೀವನದಲ್ಲಿ ಯಶಸ್ಸು ಮತ್ತು ಗೆಲುವನ್ನು ಸಾಧಿಸಲು ನಾವು ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಯಾರಿಂದ ಏನು ಕಲಿಯಬೇಕು ಎಂಬುದನ್ನು ಆಚಾರ್ಯ ಚಾಣಕ್ಯನ ನೀತಿ ಶಾಸ್ತ್ರವು ಸ್ಪಷ್ಟವಾಗಿ ವಿವರಿಸುತ್ತದೆ. ಕಠಿಣ ಪರಿಶ್ರಮ ಮಾತ್ರವಲ್ಲದೆ, ಸರಿಯಾದ ನಡವಳಿಕೆ, ಸಮಯೋಚಿತ ನಿರ್ಧಾರಗಳು ಮತ್ತು ಪ್ರಾಯೋಗಿಕ ಬುದ್ಧಿವಂತಿಕೆ ಕೂಡ ಜೀವನದ ಪ್ರಗತಿಗೆ ಅತ್ಯಂತ ಅಗತ್ಯವೆಂದು ಅವರು ಹೇಳಿದ್ದಾರೆ. ಚಾಣಕ್ಯ ನೀತಿಯ ಈ ದಿನದ ಚಿಂತನೆ

ಒನ್ ಇ೦ಡಿಯ 13 Apr 2026 7:25 pm

ಸೇಡಂ | ಬಸವ ಜಯಂತಿ ಯಶಸ್ವಿಗೊಳಿಸಲು ಬಿ.ಆರ್.ಪಾಟೀಲ್‌ ಕರೆ

ಸೇಡಂ: ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವವನ್ನು ಅತ್ಯಂತ ವೈಭವದಿಂದ ಮತ್ತು ಯಶಸ್ವಿಯಾಗಿ ಆಚರಿಸಲು ಸರ್ವ ಸಮಾಜದ ಬಸವಾಭಿಮಾನಿಗಳು ಕೈಜೋಡಿಸಬೇಕು ಎಂದು ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಬಿ.ಆರ್.ಪಾಟೀಲ್‌ ಕರೆ ನೀಡಿದರು. ಸೇಡಂ ಪಟ್ಟಣದ ಪ್ರಸಿದ್ಧ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಬಸವ ಜಯಂತಿಯ ಪ್ರಚಾರ ಕರಪತ್ರಗಳನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಎ.19 ಮತ್ತು 20 ಎರಡು ದಿನಗಳ ಕಾಲ ಕಲಬುರಗಿಯ ಜಗತ್ ವೃತ್ತದ ಶ್ರೀ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಬಹಿರಂಗ ಸಭೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಬಸವಣ್ಣನವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ. ಈ ಉತ್ಸವವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಬಸವಾದಿ ಶರಣರ ತತ್ವದಲ್ಲಿ ನಂಬಿಕೆಯುಳ್ಳ ಎಲ್ಲಾ ಸಮುದಾಯದವರು ಮತ್ತು ಹಿರಿಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾಸ್ವಾಮಿಗಳು ಹಾಗೂ ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌, ಮಾಜಿ ಶಾಸಕ ರಾಜಕುಮಾರ ಪಾಟೀಲ್‌ ತೆಲ್ಕೂರ, ಜಯಂತ್ಯೋತ್ಸವ ಸಮಿತಿಯ ಕಾರ್ಯದರ್ಶಿ ಬಿ.ಜಿ.ಪಾಟೀಲ್‌, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮೋದಿ, ತಾಲೂಕಾಧ್ಯಕ್ಷ ರಾಜಶೇಖರ ನಿಲಂಗಿ, ಅಮರನಾಥ ಪಾಟೀಲ, ರವೀಂದ್ರ ಶಹಬಾದಿ, ಶಿವಕುಮಾರ ಪಾಟೀಲ ತೆಲ್ಕೂರ, ಶಿವಕುಮಾರ ಬೊಳಶೆಟ್ಟಿ, ಸಿದ್ದಣ್ಣ ಶೆಟ್ಟಿ ಸೇರಿದಂತೆ ನೂರಾರು ಬಸವಭಿಮಾನಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 13 Apr 2026 7:25 pm

IPL 2026- ಕ್ಯಾಪ್ ಕೊಡಿ ಎಂದು ಅಭಿಮಾನಿ ಕೇಳಿದ್ದಕ್ಕೆ ತಾಯಾಣೆ ಹಾಕಿದ ಅಂಗ್ಕ್ರಿಷ್ ರಘುವಂಶಿ! ನಕ್ಕು ನಕ್ಕು ಸುಸ್ತು

ಕೆಕೆಆರ್ ಬ್ಯಾಟರ್ ಅಂಗ್ಕ್ರಿಷ್ ರಘುವಂಶಿ ಅವರು ಕ್ಯಾಪ್ ಕೇಳಿದ ಅಭಿಮಾನಿಗೆ ನೀಡಿದ ತಮಾಷೆಯ ಉತ್ತರ ಇದೀಗ ವೈರಲ್ ಆಗಿದೆ. ತಾಯಾಣೆ ನನಗೆ ಇರೋದೇ ಒಂದು ಕ್ಯಾಪ್ ಎಂದು ಅವರು ಹೇಳಿದ್ದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಡೆಲ್ಲಿಯಲ್ಲಿ ಹುಟ್ಟಿದ ಅಂಗ್ಕ್ರಿಷ್ 11 ವರ್ಷಗಳ ಹಿಂದೆ ಕ್ರಿಕೆಟ್ ಗಾಗಿ ಮುಂಬೈಗೆ ವಲಸೆ ಹೋಗಿದ್ದರು. 2022ರ ಅಂಡರ್-19 ವಿಶ್ವಕಪ್ ತಾರೆ ರಘುವಂಶಿ, ಪ್ರಸ್ತುತ ಐಪಿಎಲ್ 2026ರಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಅರ್ಧಶತಕ ಸೇರಿದಂತೆ 155 ರನ್ ಗಳಿಸಿದ್ದಾರೆ.

ವಿಜಯ ಕರ್ನಾಟಕ 13 Apr 2026 7:15 pm

ರಾಜ್ಯದಲ್ಲಿ ಮಕ್ಕಳ ಸಹಾಯವಾಣಿಗೆ ಬಂದಿವೆ 3 ವರ್ಷಗಳಲ್ಲಿ 4.41 ಲಕ್ಷ ಕರೆಗಳು! ಹೇಗಿದೆ ಸ್ಪಂದನೆ

ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ (ತಿದ್ದುಪಡಿ 2016) ವರ್ಷದೊಳಗಿನ 14 ಮಕ್ಕಳನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗಿಸುವುದನ್ನು ಮತ್ತು 14 ರಿಂದ 18 ವರ್ಷದೊಳಗಿನ ಹದಿಹರೆಯದ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿರುತ್ತದೆ. ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಹೆಣ್ಣು ಮಕ್ಕಳಿಗೆ 18 ವರ್ಷ ಮತ್ತು ಗಂಡು ಮಕ್ಕಳಿಗೆ 21 ವರ್ಷಕ್ಕಿಂತ ಮುಂಚೆ ವಿವಾಹ ಮಾಡುವುದನ್ನು ಅಪರಾಧವೆಂದು ಪರಿಗಣಿಸುತ್ತದೆ ಮತ್ತು ಬಾಲ್ಯವಿವಾಹವನ್ನು ತಡೆಯಲು ಗ್ರಾಮ ಪಂಚಾಯತ್ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳನ್ನು ನೇಮಿಸಲಾಗಿರುತ್ತದೆ.

ವಿಜಯ ಕರ್ನಾಟಕ 13 Apr 2026 7:01 pm

Bengaluru | ಹಣಕ್ಕಾಗಿ ಸಹಪಾಠಿಯನ್ನು ಅಪಹರಿಸಿದ್ದ ನಾಲ್ವರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು : ಹಣಕ್ಕಾಗಿ ಸಹಪಾಠಿಯನ್ನು ಅಪಹರಿಸಿದ್ದ ಪ್ರತಿಷ್ಠಿತ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಇಲ್ಲಿನ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದಿತ್ಯ ಆರ್.ಭೋಸಲೆ, ಶೌರ್ಯ ಅಗರವಾಲ್, ಸೈಯದ್ ಮೊಹಮ್ಮದ್ ಬಿಲಾಲ್ ಹಾಗೂ ನಿಕುಂಜ್ ಸುಲ್ತಾನಿಯಾ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಚಾಕುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಒಡಿಶಾ ಮೂಲದ ವೃಷಭ್ ಮೊಹಂತಿ ಎಂಬ ವಿದ್ಯಾರ್ಥಿ ಬಿಟಿಎಂ ಲೇಔಟ್‍ನ ಹಾಸ್ಟೆಲ್‍ನಲ್ಲಿ ವಾಸವಿದ್ದ. ಹಣಕ್ಕಾಗಿ ಆತನನ್ನು ಅಪಹರಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಎಪ್ರಿಲ್ 11ರಂದು ರಾತ್ರಿ ಹಾಸ್ಟೆಲ್ ಬಳಿ ಆರೋಪಿಗಳು ವೃಷಭ್‍ನನ್ನು ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಜಯನಗರದ ಮನೆಯೊಂದರಲ್ಲಿ ಕೂಡಿ ಹಾಕಿ, ಸ್ನೇಹಿತರಿಂದ ಹಣ ಕೊಡಿಸುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದರು. ವೃಷಭ್ ಸ್ನೇಹಿತನಿಗೆ ಕರೆ ಮಾಡಿ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಕೂಡಲೇ ಆತನ ಸ್ನೇಹಿತ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದ. ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಮಡಿವಾಳ ಠಾಣೆ ಪೊಲೀಸರು ಮೊಬೈಲ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ, ವೃಷಭ್‍ನನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Apr 2026 7:01 pm

IPL 2026: ಎಸ್‌ಆರ್‌ಎಚ್‌-ಆರ್‌ಆರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?

SRH Vs RR IPL 2026: ಹೈದರಾಬಾದ್‌ನ ಸೋಮವಾರ (ಏಪ್ರಿಲ್‌ 13) ನಡೆಯುವ ಐಪಿಎಲ್ 2026ರ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಮತ್ತು ಎಸ್‌ಆರ್‌ಎಚ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಗಾದ್ರೆ, ಇಲ್ಲಿನ ವಾತಾವರಣ ಹೇಗಿರಲಿದೆ? ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ

ಒನ್ ಇ೦ಡಿಯ 13 Apr 2026 6:51 pm

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ; ಟ್ರಸ್ಟಿಗಳ ವಿರುದ್ಧ ಮಠದ ಭಕ್ತರಿಂದ ʼಲೆಕ್ಕಕೊಡಿ ಅಭಿಯಾನʼ

ಟ್ರಸ್ಟಿಗಳು ಸಾಕಷ್ಟು ಅವ್ಯವಹಾರ ಮಾಡಿದ್ದಾರೆ : ವಚನಾನಂದ ಸ್ವಾಮೀಜಿ

ವಾರ್ತಾ ಭಾರತಿ 13 Apr 2026 6:50 pm

ಕಲಬುರಗಿ | ಕೈಗಳಿಗೆ ಬಟ್ಟೆ ಕಟ್ಟಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ

ಕಲಬುರಗಿ: ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಇಬ್ಬರು ಬಾಲಕಿಯರ ಮೃತದೇಹಗಳು ಹೊಂಡದಲ್ಲಿ ಪತ್ತೆಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಹೊರವಲಯದ ಹೊಂಡದಲ್ಲಿ ಬಾಲಕಿಯರಿಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಅವರ ಕೈಗಳಿಗೆ ಬಟ್ಟೆ ಕಟ್ಟಿದ ಸ್ಥಿತಿಯಲ್ಲಿ ಕಂಡುಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರವಿವಾರ ಸಂಜೆ ಶೌಚಾಲಯಕ್ಕಾಗಿ ಹೊರಗಡೆ ತೆರಳಿದ ಬಾಲಕಿಯರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಬಳಿಕ ಹೊಂಡ ಸಮೀಪ ಚಪ್ಪಲಿಗಳು ಪತ್ತೆಯಾಗಿದ್ದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಅನುಮಾನಾಸ್ಪದವಾಗಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ವಾರ್ತಾ ಭಾರತಿ 13 Apr 2026 6:31 pm

ಪಟ್ಟಿಯಿಂದ ಕೈಬಿಟ್ಟ ಪಶ್ಚಿಮ ಬಂಗಾಳ ಮತದಾರರಿಗೆ ಸುಪ್ರೀಂಕೋರ್ಟ್‌ ನಿರಾಸೆ; ಮಧ್ಯಂತರ ಮತದಾನದ ಹಕ್ಕಿಲ್ಲ!

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ತೀವ್ರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್‌ ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೆಸರು ಕೈಬಿಟ್ಟವರಿಗೆ, ಮೇಲ್ಮನವಿ ಮಂಡಳಿಯಲ್ಲಿ ವಿಚಾರಣೆ ಮುಗಿಯುವವರಗೆ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಮಧ್ಯಂತರ ಮತದಾನದ ಹಕ್ಕು ನೀಡಬೇಕು ಎಂಬ ಟಿಎಂಸಿ ಬೇಡಿಕೆಯನ್ನು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ತಳ್ಳಿಹಾಕಿದೆ. ಸುಪ್ರೀಂಕೋರ್ಟ್‌ ಈ ಹೊಸ ತೀರ್ಪು ಇದೀಗ ದೇಶದ ಗಮನ ಸೆಳೆದಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 13 Apr 2026 6:30 pm

ಕಲಬುರಗಿ ಬಳಿ ಶರಣ ಶರಣೆಯರ ವಚನಮಂಟಪ : ಸಚಿವ ಪ್ರಿಯಾಂಕ್‌ ಖರ್ಗೆ

ಕಲಬುರಗಿ : ನಗರಕ್ಕೆ ಸಮೀಪವಿರುವ ಕಪನೂರು ಗ್ರಾಮದ ಬಳಿ 6.06 ಗುಂಟೆ ಪ್ರದೇಶದಲ್ಲಿ ಶರಣ-ಶರಣೆಯರ ಕುರಿತು ನೂತನ ವಚನಮಂಟಪವನ್ನು ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಉದ್ದೇಶಿತ ವಚನಮಂಟಪವು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳು ಸೇರಿದಂತೆ ವಚನಕ್ರಾಂತಿಯಲ್ಲಿ ಭಾಗಿಗಳಾಗಿರುವ ಕನ್ನಡದ ಎಲ್ಲ ಶರಣ-ಶರಣೆಯರ ಚಿತ್ರಗಳು ಹಾಗೂ ಅವರ ವಚನಗಳನ್ನು ಹೊಂದಿರುತ್ತದೆ ಎಂದು ಮಾಹಿತಿ ನೀಡಿದ ಅವರು, ತೆರೆದ ಸಭಾಂಗಣವನ್ನು ಚರ್ಚೆ, ಉಪನ್ಯಾಸ, ಸಭೆಗಳನ್ನು ನಡೆಸುವಂತೆ ವಿನ್ಯಾಸಗೊಳಿಸಲಾಗುವುದು ಎಂದು ಹೇಳಿದರು. ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈಗಾಗಲೇ ಕಾಳಗಿ ಸೂರ್ಯನಾರಾಯಣ ದೇವಾಲಯ ಸಂರಕ್ಷಣಾ ಕಾಮಗಾರಿ, ಸೇಡಂ ತಾಲ್ಲೂಕಿನಲ್ಲಿನ ಪಾರಂಪರಿಕ ತಾಣವಾದ ಮಳಖೇಡ ಕೋಟೆಯ ಅಭಿವೃದ್ಧಿ ಕಾಮಗಾರಿ, ಚಿತ್ತಾಪುರ ತಾಲ್ಲೂಕಿನ ನಾಗಾವಿ ಪಾರಂಪರಿಕ ಪ್ರದೇಶದಲ್ಲಿರುವ ಪ್ರಾಚ್ಯ ಕುರುಹುಗಳ ಅಭಿವೃದ್ಧಿ, ಸಂರಕ್ಷಣಾ ಕಾಮಗಾರಿಗಳು ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿದ್ದು, ಈ ಕಾಮಗಾರಿಗಳ ಬಗ್ಗೆಯೂ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಇದರೊಂದಿಗೆ ಚಿತ್ತಾಪುರ ತಾಲ್ಲೂಕಿನಲ್ಲಿರುವ ಕನಗನಹಳ್ಳಿಯಲ್ಲಿನ ಐತಿಹಾಸಿಕ ಬೌದ್ಧನೆಲೆ ಮತ್ತು ಪ್ರಾಚ್ಯ ಕುರುಹುಗಳ ಅಭಿವೃದ್ಧಿ ಸಂರಕ್ಷಣಾ ಕಾಮಗಾರಿಯ ಬಗ್ಗೆಯೂ ಸಚಿವರು ಕೆಲವು ನಿರ್ದೇಶನಗಳನ್ನು ನೀಡಿದರು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ತ್ರಿಲೋಕಚಂದ್ರ ಕೆ.ವಿ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಾರ್ತಾ ಭಾರತಿ 13 Apr 2026 6:19 pm

ಗಲ್ಫ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ‘ಕಾನೂನುಬಾಹಿರ, ಕಡಲ್ಗಳ್ಳತನ'ಕ್ಕೆ ಸಮಾನ: ಇರಾನ್ ಆರೋಪ

ಈ ಬಂದರುಗಳು ಯಾರೊಬ್ಬರ ಏಕಾಧಿಪತ್ಯದಲ್ಲಿಲ್ಲ ಎಂದ ಸಶಸ್ತ್ರ ಪಡೆ

ವಾರ್ತಾ ಭಾರತಿ 13 Apr 2026 6:13 pm

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆಗೆ ನಸೀರ್ ಅಹ್ಮದ್ ಹಿಂದೇಟು! ಕಾಂಗ್ರೆಸ್ ನಲ್ಲಿ ಬಗೆಹರಿಯದ ಗೊಂದಲ

ರಾಜ್ಯ ಕಾಂಗ್ರೆಸ್‌ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಸೀರ್ ಅಹ್ಮದ್ ಅವರಿಗೆ ರಾಜೀನಾಮೆ ನೀಡಲು ಸೂಚನೆ ಬಂದಿದೆ ಎಂಬ ಮಾಹಿತಿ ಇದೆ. ಆದರೆ ನಸೀರ್ ಅಹ್ಮದ್ ಅವರು ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಹೈಕಮಾಂಡ್ ಏನು ಕ್ರಮ ಕೈಗೊಳ್ಳಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 13 Apr 2026 6:07 pm

ಮುದ್ದಾದ ಬಲೆ ಹೆಣೆದ್ರಾ ಯುಜ್ವೇಂದ್ರ ಚಾಹಲ್? ಇನ್ ಸ್ಟಾಗ್ರಾಂ ನೇರ ಸಂದೇಶದ ಬಗ್ಗೆ ನಟಿ ತಾನಿಯಾ ಚಟರ್ಜಿ ಹೇಳುತ್ತಿರುವುದೇನು?

ವಿವಾದಗಳು ಯುಜುವೇಂದ್ರ ಚಾಹಲ್ ಅವರನ್ನೇ ಹುಡುಕಿಕೊಂಡು ಬರುತ್ತವೋ ಅಥವಾ ಅವರೇ ಹುಡುಕಿಕೊಂಡು ಹೋಗುತ್ತಾರೋ! ಅಂತೂ ಇದೀಗ ಅವರು ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಚಾಹಲ್ ಅವರು ತನಗೆ ಇನ್ ಸ್ಟಾಗ್ರಾಂನಲ್ಲಿ `ನೀನು ಮುದ್ದಾಗಿದ್ದಿ' ಎಂದು ನೇರ ಸಂದೇಶ(DM) ಗಳನ್ನು ಕಳಿಸಿದ್ದಾರೆ ಎಂದು ನಟಿ ತಾನಿಯಾ ಚಟರ್ಟಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಧೂಮಪಾನ ಮಾಡಿ ರಸ್ತೆಯಲ್ಲಿ ಸಿಗರೇಟು ಎಸೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು. ಅದರ ಬೆಂಕಿ ಆರುವ ಮುನ್ನವೇ ಮತ್ತೊಂದು ವಿವಾದದ ಸುಳಿ ಅವರನ್ನು ಸುತ್ತಿಕೊಂಡಿದೆ. ಪಂಜಾಬ್ ಕಿಂಗ್ಸ್ ತಂಡದ ಪ್ರಧಾನ ಸ್ಪಿನ್ನರ್ ನಟಿ, ಮಾಡೆಲ್ ತಾನಿಯಾ ಅವರ ಒಂದು ಇನ್ ಸ್ಟಾಗ್ರಾಂ ಸ್ಟೋರಿಗೆ ಆಪ್ ಕ್ಯೂಟ್ ಹೋ''(ತಾವು ಮುದ್ದಾಗಿದ್ದೀರಿ) ಎಂದು ಸಂದೇಶ ಕಳಿಸಿದ್ದಾರಂತೆ. ಹಾಗೆಂದು ಸ್ವತಃ ತಾನಿಯಾ ಅವರೇ ತಮ್ಮ ಮೊಬೈಲ್ ನಲ್ಲಿ ಬಂದಿರುವ ಸಂದೇಶವನ್ವು ಪಾಪರಾಝಿಗೆ ತೋರಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ. ಆಕೆ ಹೇಳಿದ ವಿಚಾರ ಸತ್ಯವೋ ಸುಳ್ಳೋ ಎಂದು ದೃಢಪಟ್ಟಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ತಾನಿಯಾ ಹೇಳಿಕೆಗೆ ಚಾಹಲ್ ಅವರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾರು ಈ ತಾನಿಯಾ? ಮೂಲತಃ ಕೋಲ್ಕತ್ತಾದವರಾದ ನಟಿ ಮತ್ತು ರೂಪದರ್ಶಿಯಾಗಿದ್ದಾರೆ. ಒಟಿಟಿ ವೆಬ್ ಸಿರೀಸ್ ಗಳಲ್ಲಿ ಇವರದ್ದು ಜನಪ್ರಿಯ ಹೆಸರು. ಗಂಧೀ ಬಾತ್(ಸೀಸನ್ 4), ಕ್ಲಾಸ್ ಆಫ್ 2020, ಜಾಲ್, ಕಸಕ್, ತಿತಲಿಯಾಂ ಮತ್ತು ವಾಚ್‌ಮ್ಯಾನ್‌ ಸೇರಿದಂತೆ ಅನೇಕ ವೆಬ್ ಸರಣಿಗಳಲ್ಲಿ ಬೋಲ್ಡ್ ಆಗಿ ನಟಿಸಿ ಪಡ್ಡೆಹುಡುಗರ ಮನ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅವರಿಗೆ ಇನ್ ಸ್ಚಾಗ್ರಾಂನಲ್ಲೇ 2 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಚಾಹಲ್ ಬಗ್ಗೆ ನೀಡಿರುವ ಹೇಳಿಕೆಯಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಅವರು ಐಪಿಎಲ್ 2026 ರ ಸೀಸನ್ ನಲ್ಲಿ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಮೈದಾನದ ಹೊರಗೆ, ಅನುಭವಿ ಲೆಗ್-ಸ್ಪಿನ್ನರ್ ಅವರ ವೈಯಕ್ತಿಕ ಜೀವನ ಮತ್ತೊಮ್ಮೆ ಚರ್ಟೆಗೀಡಾಗಿದೆ. ಧನಶ್ರೀ ವರ್ಮಾ ಜೊತೆ ವಿಚ್ಛೇದನ ಭಾರತ ತಂಡದ ಮಾಜಿ ಸ್ಪಿನ್ನರ್ 2022ರಲ್ಲಿ ನೃತ್ಯ ಸಂಜೋಜಕಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದರು. ಆದರೆ 2025ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಬಳಿಕ ಅವರು ಆರ್‌ಜೆ ಮಹ್ವಾಶ್ ಅವರ ಜೊತೆ ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಇಬ್ಬರೂ ಪ್ರೇಕ್ಷಕರ ಗ್ಯಾಲರಿಯಿಂದ ಭಾರತ ತಂಡದ ಪಂದ್ಯಗಳನ್ನು ವೀಕ್ಷಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಇಬ್ಬರೂ ತಮ್ಮ ನಡುವಿನ ಸಂಬಂಧದ ವಿಚಾರವಾಗಿ ಎಲ್ಲೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಕೆಲವು ತಿಂಗಳುಗಳ ನಂತರ, ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದರು.

ವಿಜಯ ಕರ್ನಾಟಕ 13 Apr 2026 6:06 pm

Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ ಮಾಲಿನ್ಯದ ಥಡ್ಕಾ: ರಾಜಾರಾಂ ತಲ್ಲೂರು ಬರಹ

Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ, ಮಾಲಿನ್ಯದ ಥಡ್ಕಾ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಉಡುಪಿಯಲ್ಲಿ ಬೆಳಗ್ಗೆ ಐದೂವರೆಗೆಲ್ಲ ತಡೆಯಲಾರದ ಸೆಖೆ. ಏನಿದು ಕಥೆ ಎಂದು ಹುಡುಕಿದರೆ ಬೆಳ್ಳಂಬೆಳಗ್ಗೆ ಉಷ್ಣತೆ 31ಡಿಗ್ರಿ (Feels like 36 Degree). ಈಗ 10 ಗಂಟೆ ಹೊತ್ತಿಗೆ 32ಡಿಗ್ರಿ (Feels like 38 degree.)

ಒನ್ ಇ೦ಡಿಯ 13 Apr 2026 6:06 pm

ಕೆಲವೇ ಗಂಟೆಗಳಲ್ಲಿ ಇರಾನ್ ಬಂದರುಗಳಿಗೆ ಅಮೆರಿಕದಿಂದ ಕಡಲ ದಿಗ್ಬಂಧನ? ಯುದ್ಧದ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ಕೊಲ್ಲಿ ಪ್ರದೇಶದಲ್ಲಿ ಮಹತ್ವದ ಯುದ್ಧದ ಭೀತಿ ಎದುರಾಗಿದೆ. ಇರಾನ್ ಸಂಪರ್ಕ ಹೊಂದಿರುವ ಹಡಗುಗಳ ಮೇಲೆ ಕಡಲ ದಿಗ್ಬಂಧನ (Maritime Blockade) ವಿಧಿಸಲು ಅಮೆರಿಕ ಸಜ್ಜಾಗಿದ್ದು, ಮುಂದಿನ ಕೆಲವೇ ಗಂಟೆಗಳಲ್ಲಿ ಈ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್

ಒನ್ ಇ೦ಡಿಯ 13 Apr 2026 6:03 pm

ತುಳು ಆಸ್ಮಿತೆಯ ಮಕ್ಕಳ ಶಿಬಿರದಿಂದ ವಿಶಿಷ್ಟ ಅನುಭವ: ಮೈಮ್ ರಾಮದಾಸ್

‘ತೆಲಿಕೆ- ನಲಿಕೆ’ ಶಿಬಿರಕ್ಕೆ ಚಾಲನೆ

ವಾರ್ತಾ ಭಾರತಿ 13 Apr 2026 5:59 pm

ಹೂಡೆ ದಾರುಸ್ಸಲಾಮ್ ಮದ್ರಸ: ಪಬ್ಲಿಕ್ ಪರೀಕ್ಷೆಯಲ್ಲಿ ಸಾಧನೆ

ಉಡುಪಿ, ಎ.13: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ 2025-26ನೇ ಸಾಲಿನ ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಉಡುಪಿ ಹೂಡೆಯ ದಾರುಸ್ಸಲಾಮ್ ಮದ್ರಸಾದ ಉಸ್ತಾದ್ ಅಫ್ರಾ ಫಾತಿಮಾ 574(ಶೇ.96) ಅಂಕ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಹೂಡೆಯ ಉಸ್ತಾದ್ ಶಾಹಿದ್ ಅಲಿ ಮತ್ತು ಅನ್ಸೀರಾ ದಂಪತಿ ಪುತ್ರಿ. ಏಳನೆಯ ತರಗತಿಯ ರುಬೀನಾ 569(ಶೇ.95) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮುರ್ತುಜಾ ಮೂಮಿನ್ ಮತ್ತು ಸಲ್ಮಾ ಮೂಮಿನ್ ದಂಪತಿ ಪುತ್ರಿ. ಐದನೆಯ ತರಗತಿಯ ಆಬಿಯಾ 501 ಅಂಕ ಪಡೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಸ್ತಾದ್ ಅಬ್ದುಲ್ ಖಯ್ಯೂಮ್ ಮತ್ತು ಮುಸರ್ರತ್ ಜಹಾನ್ ದಂಪತಿಗಳ ಪುತ್ರಿ.

ವಾರ್ತಾ ಭಾರತಿ 13 Apr 2026 5:53 pm

ಮೈದಾನದಲ್ಲಿ ಲೆಜೆಂಡ್‌ ಬೌಲರ್‌ಗಳ ಮೇಲೆ ಸವಾರಿ, ಬಸ್‌ನಲ್ಲಿ ಸ್ವಿಚ್, ಲೈಟ್‌, ಎಸಿ ಜೊತೆ ಕಿಲಾಡಿ ಆಟ; ವೈಭವ್ ವಿಡಿಯೋ ಭಾರಿ ವೈರಲ್

Vaibhav Suryavanshi: ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ವೈಭವ್ ಸೂರ್ಯವಂಶಿ, ಮೈದಾನದ ಹೊರಗೆ ಇನ್ನೂ ಅಪ್ಪಟ ಬಾಲಕನೇ. ಹೈದರಾಬಾದ್‌ಗೆ ಪ್ರಯಾಣಿಸುವಾಗ ತಮ್ಮ ಆರ್‌ಆರ್ ತಂಡದ ಬಸ್ಸಿನಲ್ಲಿ ಲೈಟ್ ಆನ್-ಆಫ್ ಮಾಡುತ್ತಾ ಆಟವಾಡುತ್ತಿರುವ ಅವರ ವಿಡಿಯೋ ಈಗ ಸಾಮಾಜಿಕ ಜಾಲಯಾಣದಲ್ಲಿ ಸಖತ್ ಭಾರಿ ವೈರಲ್ ಆಗಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್‌ 2026ರಲ್ಲಿ ಅದ್ಭುತ ಆರಂಭವನ್ನು ಪಡೆದಿದ್ದು,

ಒನ್ ಇ೦ಡಿಯ 13 Apr 2026 5:53 pm

ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ಬ್ಯಾರಿಕೆಡ್ ಹಸ್ತಾಂತರ

ಕುಂದಾಪುರ: ನಮ್ಮ ನಾಡ ಒಕ್ಕೂಟ ಹಾಗು ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ಬ್ಯಾರಿಕೆಡ್‌ಗಳನ್ನು ಇತ್ತೀಚೆಗೆ ಹಸ್ತಾಂತರಿಸ ಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಚಾರ ಪೊಲೀಸ್ ಉಪನಿರಿಕ್ಷಕ ಅನೂಪ್ ನಾಯಕ್, ಕುಂದಾಪುರ ನಗರಕ್ಕೆ ಬರುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಬ್ಯಾರಿಕೆಡ್‌ಗಳ ಅವಶ್ಯಕತೆ ಇದೆ. ನಮ್ಮ ಮನವಿಗೆ ಸ್ಪಂದಿಸಿದ ನಮ್ಮ ನಾಡ ಒಕ್ಕೂಟ ತಂಡವು ಸುಸಜ್ಜಿತ ಬ್ಯಾರಿಕೆಡ್‌ಗಳನ್ನು ಒದಗಿಸಿದೆ ಎಂದರು. ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಧಾ ಪ್ರಭು, ಒಕ್ಕೂಟದ ಉಪಾಧ್ಯಕ್ಷ ಹುಸೇನ್ ಹೈಕಾಡಿ, ನಮ್ಮ ನಾಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೌಲಾನ ಝಮಿರ್ ಅಹ್ಮದ್ ರಶಾದಿ ಮಾತನಾಡಿದರು. ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟದ ಖಜಾಂಚಿ ಮೊಹಮ್ಮದ್ ಪೀರು ಸಾಹೇಬ್ ಉಡುಪಿ, ಜಿಲ್ಲಾ ಉಪಾಧ್ಯಕ್ಷ ರಾದ ಬಿಎಸ್‌ಎಫ್ ರಫೀಕ್ ಗಂಗೊಳ್ಳಿ, ಸಂಘಟನಾ ಕಾರ್ಯದರ್ಶಿ ನಿಹಾರ್ ಅಹ್ಮದ್ ಕುಂದಾಪುರ, ಸದ್ಯಸ್ಯರಾದ ಶಾಬನ್ ಹ್ಯಾಂಗಳೂರ್, ಮನ್ಸೂರು ಇಬ್ರಾಹಿಂ, ಕುಂದಾಪುರ ಘಟಕದ ಅಧ್ಯಕ್ಷ ಜಮಾಲ್ ಗುಲ್ವಾಡಿ, ಹೆಬ್ರಿ ಘಟಕದ ಅಧ್ಯಕ್ಷ ಅನ್ಸಾರ್ ಹೊಸಂಗಡಿ, ಉಡುಪಿ ಘಟಕದ ಸದ್ಯಸ್ಯ ಅಕ್ರಮ್ ಪೀರು ಹಾಗು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 5:52 pm

’ನಾರಿ ಶಕ್ತಿ ವಂದನ ಸಮ್ಮೇಳನ’ದ ನೇರ ಪ್ರಸಾರ ವೀಕ್ಷಣೆ

ಉಡುಪಿ, ಎ.13: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತರಲಿರುವ ಮಹತ್ವಪೂರ್ಣ ’ನಾರಿ ಶಕ್ತಿ ವಂದನ’ ಅಧಿನಿಯಮದ ಪೂರ್ವಭಾವಿಯಾಗಿ ಎ.13ರಂದು ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ’ನಾರಿ ಶಕ್ತಿ ವಂದನ ಸಮ್ಮೇಳನ’ದ ನೇರ ಪ್ರಸಾರವನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾ ಕಛೇರಿಯಲ್ಲಿ ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಜ್ಯೋತಿ ಉದಯ ಕುಮಾರ್, ನಳಿನಿ ಪ್ರದೀಪ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಜಿಲ್ಲಾ ಕಾರ್ಯದರ್ಶಿ ಗಳಾದ ಶ್ರೀನಿಧಿ ಹೆಗ್ಡೆ, ಗಿರೀಶ್ ಎಂ.ಅಂಚನ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿ.ಸೋಜ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ.ಶೆಟ್ಟಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು, ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Apr 2026 5:50 pm

ಯುಡಿಐಡಿ ವೈದ್ಯಕೀಯ ತಪಾಸಣೆ -ನೊಂದಣಿ ಶಿಬಿರ

ಕುಂದಾಪುರ, ಎ.13: ದೇಶಾದ್ಯಂತ ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಏಕೈಕ ಮತ್ತು ಸಾರ್ವತ್ರಿಕ ಗುರುತು ಚೀಟಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗ ಳಲ್ಲಿನ ಎಲ್ಲಾ ವಿಶೇಷಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಕೊಡಬೇಕೆಂಬ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ಯುಡಿಐಡಿ ಕಾರ್ಡ್ ಹೊಂದಿರುವವರಿಗೆ ಸಿಗುವ ಯೋಜನೆಗಳು, ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗಲಿದೆ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ, ಆರೋಗ್ಯ ಇಲಾಖೆ ಕುಂದಾಪುರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಮತ್ತು ಅಂಗವಿಕಲರ ಗ್ರಾಮೀಣ ಮತ್ತು ನಗರ ಪುನರ್ವಸತಿ ಯೋಜನೆ ಕುಂದಾಪುರ ಇವರ ಸಹಯೋಗದೊಂದಿಗೆ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ಯುಡಿಐಡಿ ವೈದ್ಯಕೀಯ ತಪಾಸಣೆ ಹಾಗೂ ನೊಂದಣಿ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯುಡಿಐಡಿ ಕಾರ್ಡ್ ವಿಕಲಚೇತನರ ಸಬಲೀಕರಣಕ್ಕೆ ಮತ್ತು ಅವರಿಗೆ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸಲು ಮತ್ತು ಅವರ ಜೀವನವನ್ನು ಸುಲಭಗೊಳಿಸಲು ಪ್ರಮುಖ ಹೆಜ್ಜೆ ಆಗಿದೆ ಎಂದು ಶುಭ ಹಾರೈಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ, ಫಿಜಿಶಿಯನ್ ಡಾ.ನಾಗೇಶ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಸಭಾಪತಿ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ರತ್ನ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಡಾಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ವಾರ್ತಾ ಭಾರತಿ 13 Apr 2026 5:46 pm

ಕೋಡಿ ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದ ವಿವಿಧ ಸಂಘಗಳ ಉದ್ಘಾಟನೆ

ಕುಂದಾಪುರ, ಎ.13: ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮವನ್ನು ಕೋಟ ಪಡುಕೆರೆಯ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ರಾಜೇಂದ್ರ ನಾಯಕ್, ವಿದ್ಯಾರ್ಥಿಗಳಿಗೆ ಬ್ಯಾಡ್ಜನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ಸ್ಥಾನ ಮತ್ತು ಪ್ರತಿಭೆ ಇರುತ್ತದೆ. ನಮ್ಮ ಒಳಗಿರುವ ಈ ವಿಶೇಷ ಸಾಮರ್ಥ್ಯವನ್ನು ಗುರುತಿಸಿ, ವ್ಯಕ್ತಿತ್ವ ರೂಪಿಸಿಕೊಳ್ಳುವುದು ಯಶಸ್ಸಿನ ಮೊದಲ ಮೆಟ್ಟಿಲು. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬಹುದು’ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಸಂಘಗಳು ಕೇವಲ ಸಂಘಗಳಲ್ಲ, ಬದಲಾಗಿ ವಿದ್ಯಾರ್ಥಿಗಳ ಹೊಸ ಆಲೋಚನೆಗಳನ್ನು ಹೊರತರಲು ಇರುವ ಉತ್ತಮ ಮಾರ್ಗವಾಗಿದೆ. ಈ ಸಂಘಗಳ ಮೂಲಕ ನಡೆಯುವ ವಿವಿಧ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಒದಗಿಸಿ ಕೊಡುತ್ತವೆ. ಆದ್ದರಿಂದ, ಎಲ್ಲಾ ವಿದ್ಯಾರ್ಥಿಗಳು ಈ ಸಂಘಗಳ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಬೆಳೆಸಿ ಕೊಳ್ಳಬೇಕು’ ಎಂದು ಹಾರೈಸಿದರು. ಪ್ರಾಂಶುಪಾಲೆ ಡಾ.ಫಿರ್ದೋಸ್ ಮಾತನಾಡಿ, ವಿದ್ಯಾರ್ಥಿ ಪ್ರತಿನಿಧಿಗಳು ಕೇವಲ ವಿದ್ಯಾರ್ಥಿಗಳ ಧ್ವನಿಯಾಗುವುದು ಮಾತ್ರವಲ್ಲದೆ, ಇಡೀ ವಿದ್ಯಾರ್ಥಿ ಬಳಗಕ್ಕೆ ಮಾದರಿಯಾಗಬೇಕು. ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದರಿಂದ ಜೀವನದ ಪಾಠಗಳನ್ನು ಕಲಿಯಲು ಮತ್ತು ಹೊಸ ವಿಷಯಗಳನ್ನು ಅರಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಶಿಸ್ತು ಮತ್ತು ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಪ್ರಾಧ್ಯಾಪಕ ಪ್ರೊ.ಅನಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸುಪ್ತವಾಗಿರುವ ಪ್ರತಿಭೆಯನ್ನು ಹೊರ ಹಾಕಲು ಕಾಲೇಜುಗಳಲ್ಲಿನ ವಿವಿಧ ಸಂಘಗಳು ಪೂರಕ ವೇದಿಕೆಯನ್ನು ಒದಗಿಸುತ್ತವೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಗುಂಪು ನಾಯಕತ್ವ, ಸಂವಹನ ಕಲೆ ಮತ್ತು ಸೃಜನಾತ್ಮಕ ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು. ಉಪ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಕೆ.ಪಿ. ಪ್ರತಿಜ್ಞಾವಿಧಿ ಭೋದಿಸಿದರು. ವಿವಿಧ ಸಂಘಗಳ ಪರಿಚಯ ವನ್ನು ಪ್ರಾಧ್ಯಾಪಕ ಡಾ.ವೆಂಕಟೇಶ್ ಎಸ್. ಮಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಶಿಕ್ಷಣಾರ್ಥಿ ಮೌನೇಶ್ ಮತ್ತು ಹರ್ಷಿತಾ, ಉಪನ್ಯಾಸಕರು ಪಾಲ್ಗೊಂಡಿದ್ದರು. ಪ್ರಶಿಕ್ಷಣಾರ್ಥಿಗಳಾದ ಶೀತಲ್ ಮತ್ತು ಅಂಜಲಿ ಕೆ.ಬಿ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಸ್ವಾಗತಿಸಿದರು. ಅಕ್ಷತಾ ಎಲ್. ವಂದಿಸಿದರು.

ವಾರ್ತಾ ಭಾರತಿ 13 Apr 2026 5:40 pm

ಹೈಕಮಾಂಡ್ ಸೂಚಿಸಿದರೆ ಹಿರಿಯ ಸಚಿವರು ರಾಜೀನಾಮೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ಸಂಪುಟ ರಚನೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಿರಿಯ ಸಚಿವರು ರಾಜೀನಾಮೆ ನೀಡಬೇಕೆಂದು ಸೂಚಿಸಿದರೆ ಅದನ್ನು ಪ್ರಶ್ನಿಸದೇ ಒಪ್ಪಿಕೊಳ್ಳಲೇಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯ ಶಾಸಕರು ಸಚಿವ ಸ್ಥಾನ ಕೇಳಿರುವುದರಲ್ಲಿ ತಪ್ಪಿಲ್ಲ. ಆದರೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಹೊಸಬರಿಗೆ ಅವಕಾಶ ಮಾಡಿಕೊಡಲು ಸಂಪುಟದಲ್ಲಿರುವ ಹಿರಿಯರೂ ಕೂಡ ರಾಜೀನಾಮೆ ನೀಡಬೇಕೆಂದಾದರೆ, ನಾನಾಗಲೀ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್. ಎಚ್.ಕೆ.ಪಾಟೀಲ್ ಸೇರಿದಂತೆ ಹಿರಿಯ ಸಚಿವರು ಹೈಕಮಾಂಡ್ ನಿರ್ಧಾರವನ್ನು ಒಪ್ಪದೇ ಪ್ರಶ್ನೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದರು. ಸಂಪುಟದಲ್ಲಿ ಅವಕಾಶ ಕಲ್ಪಿಸಲು ಹೈಕಮಾಂಡ್, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಒಟ್ಟಾಗಿ ಕುಳಿತು ತೀರ್ಮಾನ ತೆಗೆದುಕೊಳ್ಳಬೇಕು. ಹಿಂದಿನಿಂದಲೂ ಇದೇ ಪದ್ಧತಿ ನಡೆದು ಬರುತ್ತಿದೆ. ಈಗಲೂ ಅದನ್ನೆ ಅನುಸರಿಸುತ್ತಾರೆ ಎಂದ ಅವರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಸರಕಾರದ ನಾಯಕತ್ವ ಬದಲಾವಣೆಯಂತಹ ಮಹತ್ವದ ನಿರ್ಧಾರಗಳು ಹೈಕಮಾಂಡ್ ಮಟ್ಟದಲ್ಲೇ ತೆಗೆದುಕೊಳ್ಳಬೇಕು. ರಾಜ್ಯ ಮಟ್ಟದಲ್ಲಿ ಯಾರೂ ಏನೇ ಹೇಳಿಕೆ ನೀಡಿದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ. ಹೈಕಮಾಂಡ್ ನಾಯಕರು ಎಲ್ಲವನ್ನೂ ಗಮನಿಸುತ್ತಿರುತ್ತದೆ. ಹೈಕಮಾಂಡ್ ಮೌನವಾಗಿಲ್ಲ. ಸೂಕ್ತ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಉಲ್ಲೇಖಿಸಿದರು.  

ವಾರ್ತಾ ಭಾರತಿ 13 Apr 2026 5:40 pm