ಏಕಾಂಗಿ ಇರಾನ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳ ಲೆಕ್ಕಾಚಾರದ ಮೌನ!
ಮಧ್ಯಪ್ರಾಚ್ಯದ ಪ್ರಸ್ತುತ ಸ್ಥಿತಿಗತಿಯು ಕೇವಲ ಒಂದು ಮಿಲಿಟರಿ ಸಂಘರ್ಷವಲ್ಲ, ಬದಲಾಗಿ ಇದು ಇಸ್ಲಾಮಿಕ್ ರಾಷ್ಟ್ರಗಳ ನೈತಿಕತೆ ಮತ್ತು ರಾಜತಾಂತ್ರಿಕತೆಯ ಅಗ್ನಿಪರೀಕ್ಷೆಯಾಗಿದೆ. ಇರಾನ್ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದರೂ ಪ್ರಭಾವಿ ಮುಸ್ಲಿಮ್ ರಾಷ್ಟ್ರಗಳು ಮೌನವಾಗಿವೆ. ಈ ಮೌನವು ಕೇವಲ ರಾಜತಾಂತ್ರಿಕ ಅನಿವಾರ್ಯತೆಯೇ ಅಥವಾ ಇಸ್ರೇಲ್ನೊಂದಿಗೆ ತೆರೆಮರೆಯ ಒಪ್ಪಂದಗಳ ಭಾಗವೇ? ಇಸ್ಲಾಮಿಕ್ ಒಕ್ಕೂಟ ಎಂಬ ಪರಿಕಲ್ಪನೆಯು ಕೇವಲ ಕಾಗದಕ್ಕೆ ಸೀಮಿತವಾಗಿದೆಯೇ? ಅರಬ್ ರಾಷ್ಟ್ರಗಳು ಇರಾನ್ನ ಪತನವನ್ನು ಆಂತರಿಕವಾಗಿ ಸಂಭ್ರಮಿಸುತ್ತಿವೆಯೇ? ಇಂತಹ ಗಂಭೀರ ಪ್ರಶ್ನೆಗಳು ಇಂದು ಜಾಗತಿಕ ರಾಜಕಾರಣದಲ್ಲಿ ಮುನ್ನೆಲೆಗೆ ಬಂದಿವೆ. ಸಂಘರ್ಷದ ತೀವ್ರತೆ ಹೆಚ್ಚಾದಂತೆ, ಮುಸ್ಲಿಮ್ ದೇಶಗಳ ಈ ನಿಗೂಢ ಮೌನವು ಅವರ ನಡುವಿನ ಆಳವಾದ ಸೈದ್ಧಾಂತಿಕ ಕಂದಕ ಮತ್ತು ಸ್ವಹಿತಾಸಕ್ತಿಯ ರಾಜಕಾರಣವನ್ನು ಬಯಲು ಮಾಡುತ್ತಿದೆ. ಮುಸ್ಲಿಮ್ ರಾಷ್ಟ್ರಗಳ ಮೌನದ ಹಿಂದೆ ಪ್ರಬಲವಾದ ಸೈದ್ಧಾಂತಿಕ ಮತ್ತು ಭೌಗೋಳಿಕ ರಾಜಕೀಯ ಕಾರಣಗಳಿವೆ. ದಶಕಗಳಿಂದ ಸೌದಿ ಅರೇಬಿಯ ನೇತೃತ್ವದ ಸುನ್ನಿ ರಾಷ್ಟ್ರಗಳು ಮತ್ತು ಇರಾನ್ ನೇತೃತ್ವದ ಶಿಯಾ ಬಣದ ನಡುವೆ ಒಂದು ಅಘೋಷಿತ ಶೀತಲ ಸಮರ ನಡೆಯುತ್ತಲೇ ಇದೆ. ಯಮನ್, ಸಿರಿಯಾ ಮತ್ತು ಲೆಬನಾನ್ನಂತಹ ದೇಶಗಳಲ್ಲಿ ಇರಾನ್ ತನ್ನ ‘ಪ್ರಾಕ್ಸಿ’ ಪಡೆಗಳ ಮೂಲಕ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವುದು ಅರಬ್ ದೊರೆಗಳಿಗೆ ನುಂಗಲಾರದ ತುತ್ತಾಗಿತ್ತು. ಈ ಕಾರಣಕ್ಕಾಗಿಯೇ, ಇರಾನ್ ಮೇಲೆ ದಾಳಿಯಾದಾಗ ಈ ರಾಷ್ಟ್ರಗಳು ಮೇಲ್ನೋಟಕ್ಕೆ ಶಾಂತಿಯ ಮಾತುಗಳನ್ನಾಡಿದರೂ, ಆಂತರಿಕವಾಗಿ ಇರಾನ್ನ ಶಕ್ತಿ ಕುಸಿಯುವುದನ್ನು ತಮ್ಮದೇ ಭದ್ರತೆಗೆ ಶುಭ ಸೂಚನೆ ಎಂದು ಭಾವಿಸುತ್ತಿವೆ. ಇರಾನ್ ದುರ್ಬಲಗೊಂಡರೆ ಮಾತ್ರ ತಮ್ಮ ಪ್ರಾದೇಶಿಕ ನಾಯಕತ್ವ ಸುಭದ್ರವಾಗಿರುತ್ತದೆ ಎಂಬುದು ಇವರ ಲೆಕ್ಕಾಚಾರವಾಗಿದೆ. ಈ ಮೌನದ ಹಿಂದಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಅಮೆರಿಕದೊಂದಿಗಿನ ಆರ್ಥಿಕ ಮತ್ತು ಮಿಲಿಟರಿ ಅವಲಂಬನೆ. ಇತ್ತೀಚಿನ ವರ್ಷಗಳಲ್ಲಿ ‘ಅಬ್ರಹಾಂ ಅಕಾರ್ಡ್ಸ್’ ಅಡಿಯಲ್ಲಿ ಅನೇಕ ಅರಬ್ ರಾಷ್ಟ್ರಗಳು ಇಸ್ರೇಲ್ನೊಂದಿಗೆ ಸಂಬಂಧವನ್ನು ಸುಧಾರಿಸಿಕೊಳ್ಳಲು ಮುಂದಾಗಿವೆ. ಇಸ್ರೇಲ್ನ ತಂತ್ರಜ್ಞಾನ ಮತ್ತು ಅಮೆರಿಕದ ರಕ್ಷಣೆ ಈ ದೇಶಗಳಿಗೆ ಅನಿವಾರ್ಯವಾಗಿದೆ. ತಮ್ಮ ದೇಶದ ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ಅವರು ಫೆಲೆಸ್ತೀನ್ ಅಥವಾ ಇರಾನ್ ಪರವಾಗಿ ನಿಂತು ಪಶ್ಚಿಮ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಲು ಸಿದ್ಧರಿಲ್ಲ. ಇಲ್ಲಿ ಧಾರ್ಮಿಕ ಒಗ್ಗಟ್ಟಿಗಿಂತಲೂ ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿ ಮತ್ತು ಅಧಿಕಾರ ಭದ್ರತೆಯೇ ಪ್ರಧಾನವಾಗಿದೆ. ಈ ರಾಜಕೀಯ ವ್ಯವಹಾರದಲ್ಲಿ ಇರಾನ್ ಏಕಾಂಗಿಯಾಗುತ್ತಿರುವುದು ಇಡೀ ಇಸ್ಲಾಮಿಕ್ ಜಗತ್ತಿನ ವಿಭಜಿತ ಮುಖವನ್ನು ಜಗತ್ತಿಗೆ ತೋರಿಸುತ್ತಿದೆ. ಇಸ್ರೇಲ್ ಈ ವಲಯದಲ್ಲಿ ಹೊಸ ಸಮೀಕರಣಗಳನ್ನು ಸೃಷ್ಟಿಸುತ್ತಿದೆ. ಇರಾನ್ನ ಪ್ರಭಾವ ಕ್ಷೀಣಿಸುತ್ತಿದ್ದಂತೆ, ಆ ಶೂನ್ಯವನ್ನು ತುಂಬಲು ಇಸ್ರೇಲ್ ತನ್ನ ಮಿಲಿಟರಿ ಮತ್ತು ರಾಜತಾಂತ್ರಿಕ ಜಾಲವನ್ನು ವಿಸ್ತರಿಸುತ್ತಿದೆ. ಕೆಲವು ಮುಸ್ಲಿಮ್ ರಾಷ್ಟ್ರಗಳು ಇಸ್ರೇಲ್ ಅನ್ನು ಶತ್ರು ಎಂದು ಭಾವಿಸುವ ಬದಲು, ತಮ್ಮ ಹಿತಾಸಕ್ತಿಗಳನ್ನು ರಕ್ಷಿಸುವ ಒಂದು ಅನಿವಾರ್ಯ ಶಕ್ತಿಯಾಗಿ ನೋಡಲು ಆರಂಭಿಸಿವೆ. ಇದು ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ವಿರೋಧಾಭಾಸದ ಬೆಳವಣಿಗೆಯಾಗಿದೆ. ಒಂದು ಕಾಲದಲ್ಲಿ ಫೆಲೆಸ್ತೀನ್ ವಿಮೋಚನೆಯೇ ಮುಸ್ಲಿಮ್ ರಾಷ್ಟ್ರಗಳ ಏಕೈಕ ಗುರಿಯಾಗಿತ್ತು, ಆದರೆ ಇಂದು ಇರಾನ್ನಂತಹ ಪ್ರಬಲ ದೇಶವನ್ನು ಮೂಲೆಗುಂಪು ಮಾಡಲು ಇಸ್ರೇಲ್ನ ನೆರವು ಪಡೆಯುವಷ್ಟು ರಾಜಕೀಯ ಸ್ಥಿತ್ಯಂತರಗಳು ಸಂಭವಿಸಿವೆ. ಪಾಕಿಸ್ತಾನವು ಈ ಸಂಘರ್ಷದಲ್ಲಿ ಅತ್ಯಂತ ಜಟಿಲವಾದ ಸ್ಥಾನದಲ್ಲಿದೆ. ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿರುವ ಈ ದೇಶಕ್ಕೆ ಸೌದಿ ಅರೇಬಿಯ ಮತ್ತು ಖತರ್ನಂತಹ ರಾಷ್ಟ್ರಗಳ ಆರ್ಥಿಕ ನೆರವು ಅತ್ಯಗತ್ಯ. ಈ ಶ್ರೀಮಂತ ರಾಷ್ಟ್ರಗಳ ಬಳಿ ಬೃಹತ್ ಹಣದ ಸಂಗ್ರಹವಿದ್ದರೂ, ಯುದ್ಧಭೂಮಿಯಲ್ಲಿ ಹೋರಾಡುವ ಶಕ್ತಿಯಾಗಲಿ ಅಥವಾ ದೀರ್ಘಕಾಲದ ಮಿಲಿಟರಿ ಅನುಭವವಾಗಲಿ ಇಲ್ಲ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನವು ತನ್ನ ಸೈನ್ಯ ಮತ್ತು ಅಣ್ವಸ್ತ್ರದ ಬಲವನ್ನು ಮುಂದಿಟ್ಟುಕೊಂಡು ಈ ಬಣದ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗುತ್ತಿದೆ. 24 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಪಾಕಿಸ್ತಾನಕ್ಕೆ ಸೈನಿಕರ ಬಲದ ಕೊರತೆಯಿಲ್ಲ, ಇದು ತಾಂತ್ರಿಕವಾಗಿ ಮುಂದುವರಿದಿರುವ ತುರ್ಕಿಯ ಮತ್ತು ಆರ್ಥಿಕವಾಗಿ ಸಶಕ್ತವಾಗಿರುವ ಸೌದಿ ಅರೇಬಿಯದ ನಡುವಿನ ಕೊಂಡಿಯಾಗಲು ಪ್ರಯತ್ನಿಸುತ್ತಿದೆ. ಆದರೆ, ಪಾಕಿಸ್ತಾನದ ಈ ಮಿಲಿಟರಿ ಬಲ ಪ್ರದರ್ಶನದ ಹಿಂದೆ ಒಂದು ದೊಡ್ಡ ರಾಜತಾಂತ್ರಿಕ ಭಯ ಮನೆಮಾಡಿದೆ. ಪಾಕಿಸ್ತಾನದ ನಾಯಕತ್ವವು ಇಸ್ರೇಲ್ ವಿರುದ್ಧ ಕೆಂಡ ಕಾರುವ ಟ್ವೀಟ್ ಮಾಡಿದರೂ, ಅಮೆರಿಕದ ಹೆಸರನ್ನು ಎತ್ತಲು ನಡುಗುತ್ತಿದೆ. ಇದಕ್ಕೆ ಕಾರಣವೆಂದರೆ ಪಾಕಿಸ್ತಾನದ ಆರ್ಥಿಕತೆಯ ನಾಡಿಮಿಡಿತವಾಗಿರುವ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ನಲ್ಲಿ ಅಮೆರಿಕದ ಪ್ರಭಾವವೇ ಅಂತಿಮವಾಗಿದೆ. ದಾಳಿಯ ಹಿಂದೆ ಅಮೆರಿಕದ ನೇರ ಪಾತ್ರವಿದೆ ಎಂದು ತಿಳಿದಿದ್ದರೂ, ಕೇವಲ ಇಸ್ರೇಲ್ ಅನ್ನು ಮಾತ್ರ ಟೀಕಿಸುವುದು ಪಾಕಿಸ್ತಾನದ ದ್ವಂದ್ವ ನೀತಿಯನ್ನು ಹಾಗೂ ಅನಿವಾರ್ಯತೆಯನ್ನು ತೋರಿಸುತ್ತದೆ. ಅಮೆರಿಕದಿಂದ ಎಫ್-16 ವಿಮಾನಗಳ ಬಿಡಿಭಾಗಗಳು ಮತ್ತು ಮಿಲಿಟರಿ ನೆರವು ಬೇಕಾಗಿರುವ ಪಾಕಿಸ್ತಾನಕ್ಕೆ ಇರಾನ್ ಪರವಾಗಿ ನಿಲ್ಲುವುದು ಅಸಾಧ್ಯ ಎಂಬಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಅಮೆರಿಕದ ಆಂತರಿಕ ರಾಜಕೀಯದ ಚದುರಂಗದಾಟ ಈ ಯುದ್ಧದ ಗತಿಯನ್ನು ನಿರ್ಧರಿಸುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಈ ಸಂಘರ್ಷವನ್ನು ತಮ್ಮ ರಾಜಕೀಯ ಇತಿಹಾಸದ ಅತಿದೊಡ್ಡ ವಿಜಯವನ್ನಾಗಿ ಬಿಂಬಿಸಲು ಹವಣಿಸುತ್ತಿದ್ದಾರೆ. ಇರಾನ್ನ ಇಸ್ಲಾಮಿಕ್ ಆಡಳಿತವನ್ನು ಪತನಗೊಳಿಸುವ ಮೂಲಕ ತಾನು ಜಗತ್ತಿನ ಅತಿ ಶಕ್ತಿಶಾಲಿ ನಾಯಕ ಎಂದು ತೋರಿಸಿಕೊಳ್ಳುವುದು ಅವರ ಗುರಿಯಾಗಿದೆ. ಆದರೆ ಅಮೆರಿಕದ ಒಳಗೆ ಪರಿಸ್ಥಿತಿ ಬದಲಾಗುತ್ತಿದೆ. ಅಲ್ಲಿ ಫೆಲೆಸ್ತೀನ್ ಪರವಾಗಿ ಹೆಚ್ಚುತ್ತಿರುವ ಜನಮತ ಮತ್ತು ಇಸ್ರೇಲ್ನ ಅತಿಯಾದ ದಾಳಿಯ ಬಗ್ಗೆ ಯುವ ಪೀಳಿಗೆಯಲ್ಲಿ ಬೆಳೆಯುತ್ತಿರುವ ಅಸಮಾಧಾನವು ಟ್ರಂಪ್ ಅವರ ಲೆಕ್ಕಾಚಾರವನ್ನು ತಲೆಕೆಳಗು ಮಾಡಬಹುದು. ಅಮೆರಿಕದ ಸಾರ್ವಜನಿಕರು ಯುದ್ಧಕ್ಕೆ ಹಣ ವ್ಯಯಿಸುವುದಕ್ಕಿಂತ ತಮ್ಮ ದೇಶದ ಆರ್ಥಿಕತೆಯ ಬಗ್ಗೆ ಚಿಂತಿಸುತ್ತಿರುವುದು ಈ ಸಂಘರ್ಷವನ್ನು ಶೀಘ್ರವಾಗಿ ಮುಗಿಸಲು ಅಮೆರಿಕದ ಮೇಲೆ ಒತ್ತಡ ಹೇರುತ್ತಿದೆ. ಇರಾನ್ನ ಈಗಿನ ಯುದ್ಧತಂತ್ರವು ಕೇವಲ ದಾಳಿಗೆ ಪ್ರತಿ-ದಾಳಿ ಮಾಡುವುದಲ್ಲ, ಬದಲಾಗಿ ಇದೊಂದು ಅತ್ಯಂತ ಯೋಜಿತ ನಿಧಾನ ಯುದ್ಧ. ಇರಾನ್ ತನ್ನ ಎಲ್ಲಾ ಅತ್ಯಾಧುನಿಕ ಕ್ಷಿಪಣಿಗಳನ್ನು ಮೊದಲ ದಿನವೇ ಬಳಸದೆ, ಹಳೆಯ ತಂತ್ರಜ್ಞಾನದ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಬಳಸುವ ಮೂಲಕ ಅಮೆರಿಕ ಮತ್ತು ಇಸ್ರೇಲ್ನ ರಕ್ಷಣಾ ವ್ಯವಸ್ಥೆಯನ್ನು ದಣಿಸುತ್ತಿದೆ. ಇರಾನ್ನ ಗುರಿ ಸ್ಪಷ್ಟವಾಗಿದೆ: ಈ ಯುದ್ಧವನ್ನು ಸಾಧ್ಯವಾದಷ್ಟು ದೀರ್ಘಕಾಲ ಎಳೆಯುವುದು. ಯುದ್ಧ ದೀರ್ಘವಾದಷ್ಟೂ ಅಮೆರಿಕದ ಆಂತರಿಕ ರಾಜಕೀಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಕುಸಿಯುತ್ತದೆ ಮತ್ತು ಜಾಗತಿಕವಾಗಿ ಇಸ್ರೇಲ್ ಮೇಲಿನ ಒತ್ತಡ ಹೆಚ್ಚಾಗುತ್ತದೆ ಎಂಬುದು ಇರಾನ್ ಆಡಳಿತದ ಲೆಕ್ಕಾಚಾರ. ಶತ್ರುವನ್ನು ಮಿಲಿಟರಿ ಬಲದಿಂದ ಸೋಲಿಸುವುದಕ್ಕಿಂತ ಹೆಚ್ಚಾಗಿ, ಅವರನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹೈರಾಣು ಮಾಡುವುದು ಇರಾನ್ನ ‘ಸರ್ವೈವಲ್ ಈಸ್ ವಿಕ್ಟರಿ’ ಅಂದರೆ ಉಳಿಯುವುದೇ ಜಯ ಎಂಬ ತಂತ್ರದ ಮುಖ್ಯ ಭಾಗವಾಗಿದೆ. ಈ ಸಂಘರ್ಷದ ಅಂತಿಮ ಫಲಿತಾಂಶ ಕೇವಲ ಇರಾನ್ನ ಪತನಕ್ಕೆ ಸೀಮಿತವಾಗಿಲ್ಲ, ಬದಲಾಗಿ ಇದು ಇಡೀ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆಯ ಹೊಸ ಕಿಡಿಯನ್ನು ಹಚ್ಚುವ ಅಪಾಯವನ್ನು ಹೊಂದಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ನ ಆಡಳಿತವನ್ನು ಬದಲಿಸಬಹುದು, ಆದರೆ ಆನಂತರ ಸೃಷ್ಟಿಯಾಗುವ ಅಧಿಕಾರದ ಶೂನ್ಯವನ್ನು ತುಂಬುವುದು ಅಸಾಧ್ಯದ ಮಾತು. ಇರಾನ್ನಂತಹ ಬೃಹತ್ ದೇಶದಲ್ಲಿ ಆಡಳಿತ ಪತನವಾದರೆ, ಅದು ಸಿರಿಯಾ ಅಥವಾ ಲಿಬಿಯಾದಂತೆ ಭೀಕರ ಅಂತರ್ಯುದ್ಧಕ್ಕೆ ಸಾಕ್ಷಿಯಾಗಬಹುದು. ಇರಾನ್ ಒಳಗೆ ಇರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಜನಾಂಗೀಯ ಗುಂಪುಗಳು ಅಧಿಕಾರಕ್ಕಾಗಿ ಹೋರಾಟ ಆರಂಭಿಸಿದರೆ, ಅದು ಇಡೀ ವಿಶ್ವದ ಇಂಧನ ಪೂರೈಕೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಭೀಕರ ಪರಿಣಾಮ ಬೀರಲಿದೆ. ಮಧ್ಯಪ್ರಾಚ್ಯದ ಇತಿಹಾಸವನ್ನು ಗಮನಿಸಿದರೆ, ಅಮೆರಿಕವು ಆಡಳಿತಗಳನ್ನು ಬದಲಿಸುವುದರಲ್ಲಿ ಯಶಸ್ವಿಯಾಗಿದೆ. ಆದರೆ ಆ ದೇಶಗಳಲ್ಲಿ ಶಾಂತಿ ಸ್ಥಾಪಿಸುವಲ್ಲಿ ಪ್ರತೀ ಬಾರಿಯೂ ವಿಫಲವಾಗಿದೆ ಎಂಬ ಕಟು ಸತ್ಯ ಇಲ್ಲಿ ಎದ್ದು ಕಾಣುತ್ತದೆ. ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟದ ಭವಿಷ್ಯವು ಈಗ ಪಾಕಿಸ್ತಾನ ಮತ್ತು ತುರ್ಕಿಯದಂತಹ ದೇಶಗಳ ನಿರ್ಧಾರದ ಮೇಲೆ ನಿಂತಿದೆ. ಒಂದು ವೇಳೆ ಇರಾನ್ ಸಂಪೂರ್ಣವಾಗಿ ನಾಶವಾದರೆ, ಮುಂದೆ ಅರಬ್ ರಾಷ್ಟ್ರಗಳ ಸಾರ್ವಭೌಮತ್ವಕ್ಕೂ ಧಕ್ಕೆ ಬರಬಹುದು ಎಂಬ ಆತಂಕ ಸೌದಿ ಅರೇಬಿಯದಂತಹ ದೇಶಗಳನ್ನು ಕಾಡತೊಡಗಿದೆ. ಹೀಗಾಗಿ, ಬಹಿರಂಗವಾಗಿ ಮೌನವಾಗಿದ್ದರೂ ತೆರೆಮರೆಯಲ್ಲಿ ಈ ದೇಶಗಳು ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಿವೆ. ಆದರೆ ಇಸ್ರೇಲ್ನ ಅತಿಯಾದ ಆತ್ಮವಿಶ್ವಾಸ ಮತ್ತು ಅಮೆರಿಕದ ಹಠಮಾರಿ ಧೋರಣೆಯು ಮಧ್ಯಪ್ರಾಚ್ಯವನ್ನು ಎಂದೂ ಮುಗಿಯದ ಸಂಘರ್ಷದ ಸುಳಿಗೆ ತಳ್ಳುತ್ತಿದೆ. ಯುದ್ಧವು ಯಾರನ್ನೂ ವಿಜೇತರನ್ನಾಗಿ ಮಾಡುವುದಿಲ್ಲ, ಬದಲಾಗಿ ಈ ಮಣ್ಣಿನ ಮೇಲೆ ಹರಿಯುವ ರಕ್ತವು ಮುಂದಿನ ದಶಕಗಳ ಕಾಲ ದ್ವೇಷದ ಕಿಚ್ಚನ್ನು ಜೀವಂತವಾಗಿರಿಸುತ್ತದೆ
ಪಶ್ಚಿಮ ಏಷ್ಯಾದಲ್ಲಿ ವಿಮಾನಯಾನ ಪುನಾರಂಭ: ಭಾರತೀಯರ ರಕ್ಷಣೆ
ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ಶನಿವಾರದಿಂದ ಸ್ಥಗಿತಗೊಂಡಿದ್ದ ವಿಮಾನಯಾನ ಸೇವೆ ಸೋಮವಾರ ಪುನರಾರಂಭಗೊಂಡಿದ್ದು, ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗಾಗಿ ಭಾರತ ಸೇರಿದಂತೆ ಹಲವು ದೇಶಗಳಿಗೆ ಯುಎಇಯ ಎಮಿರೇಟ್ಸ್, ಫ್ಲೈದುಬೈ ಮತ್ತು ಇತ್ತಿಹಾದ್ ವಿಮಾನಯಾನ ಸಂಸ್ಥೆಗಳು ವಿಶೇಷ ವಿಮಾನ ಸೇವೆ ಆರಂಭಿಸಿವೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಕೂಡಾ, ವಾಯುಪ್ರದೇಶ ಮುಕ್ತವಾಗಿರುವ ಒಮಾನ್ ಹಾಗೂ ಸೌದಿ ಅರೇಬಿಯಾದಂಥ ದೇಶಗಳಿಗೆ ಕಾರ್ಯಾಚರಣೆ ಆರಂಭಿಸುವಂತೆ ವಿಮಾನಯಾನಗಳ ಮಹಾನಿರ್ದೇಶನಾಲಯ ಸೂಚನೆ ನೀಡಿದೆ. ಏರ್ ಇಂಡಿಯಾ ಮತ್ತು ಇಂಡಿಗೊ ಸಂಸ್ಥೆಯ ಸೇವೆಗಳು ಮಂಗಳವಾರ ಆರಂಭವಾಗಲಿವೆ. ಭಾರತೀಯರು ಅಪಾರ ಸಂಖ್ಯೆಯಲ್ಲಿ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಕಾಯಂ ಹಾಗೂ ಚಾರ್ಟರ್ಡ್ ವಿಮಾನಗಳಿಗೆ ಭಾರಿ ಬೇಡಿಕೆ ಇದೆ. ಇಂಡಿಗೊ ಸಂಸ್ಥೆ ಜಿದ್ದಾದಿಂದ ಮಂಗಳವಾರ 10 ವಿಶೇಷ ವಿಮಾನಗಳನ್ನು ಹಾರಿಸಲು ನಿರ್ಧರಿಸಿದ್ದು, ಅತಂತ್ರ ಭಾರತೀಯ ಪ್ರಯಾಣಿಕರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಲು ಅವಕಾಶ ಕಲ್ಪಿಸಿದ್ದಾಗಿ ಸರ್ಕಾರ ಹೇಳಿಕೆ ನೀಡಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳವಾರದಿಂದ ಮಸ್ಕತ್-ದೆಹಲಿ, ಕೊಚ್ಚಿನ್, ಕೋಝಿಕ್ಕೋಡ್, ಮಂಗಳೂರು, ಮುಂಬೈ ಹಾಗೂ ತಿರುಚಿನಾಪಳ್ಳಿಗೆ ವಿಮಾನಯಾನ ಸೇವೆ ಆರಂಭಿಸಲಿದೆ. ಏರ್ ಇಂಡಿಯಾ ಈಗಾಗಲೇ ಅಮೆರಿಕ, ಕೆನಡಾ ಮತ್ತು ಬ್ರಿಟನ್ ವಿಮಾನಗಳ ಸೇವೆಯನ್ನು ಆರಂಭಿಸಿದೆ. ಮೊದಲು ಟಿಕೆಟ್ ಕಾಯ್ದಿರಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಎಮಿರೇಟ್ಸ್ ಸಂಸ್ಥೆ ಹೇಳಿದೆ. ಈ ಸೀಮಿತ ವಿಮಾನಗಳಲ್ಲಿ ವಾಪಸ್ಸಾಗಲು ಮರು ಟಿಕೆಟ್ ಕಾಯ್ದಿರಿಸಿದವರು ನೇರವಾಗಿ ಎಮಿರೇಟ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಮಾಹಿತಿನೀಡಿದೆ. ಮಂಗಳವಾರ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್ ಗೆ ತಲಾ ಒಂದೊಂದು ವಿಮಾನಗಳು ಹಾರಾಟ ನಡೆಸಿವೆ ಎಂದು ಸ್ಪಷ್ಟಪಡಿಸಿದೆ. ಇತ್ತಿಹಾದ್ ವಿಮಾನಯಾನ ಸಂಸ್ಥೆಯ 15 ಪ್ರಯಾಣಿಕ ವಿಮಾನಗಳು ಟೇಕಾಫ್ ಆಗಿದ್ದು, ದೆಹಲಿ, ಮುಂಬೈ, ಬೆಂಗಳೂರು ಹಾಗೂ ಕೊಚ್ಚಿನ್ ಗೆ ಆಗಮಿಸುತ್ತಿವೆ. ಅಬುಧಾಬಿಯಿಂದ ಮೂರು ಗಂಟೆಗಳ ಗವಾಕ್ಷಿಯಡಿ ವಿಮಾನಯಾನ ಸೇವೆ ಆಂಶಿಕವಾಗಿ ಪುನರಾರಂಭವಾಗಿವೆ.
ಯುದ್ಧ ಪರಿಸ್ಥಿತಿಯಿಂದಾಗಿ ಇಂಗ್ಲೆಂಡ್ನಲ್ಲೇ ಉಳಿದಿರುವ ರಣವೀರ್ ಸಿಂಗ್; ಹೈಕೋರ್ಟ್ಗೆ ವಕೀಲರ ಮಾಹಿತಿ
ಬೆಂಗಳೂರು : ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ರದ್ದಾಗಿರುವುದರಿಂದ ಬಾಲಿವುಡ್ ನಟ ರಣವೀರ್ ಸಿಂಗ್ ಇಂಗ್ಲೆಂಡ್ನಲ್ಲೇ ಉಳಿದುಕೊಂಡಿದ್ದು, ಭಾರತಕ್ಕೆ ಹಿಂದಿರುಗಲಾಗುತ್ತಿಲ್ಲ ಎಂದು ಹಿರಿಯ ವಕೀಲ ಸಜನ್ ಪೂವಯ್ಯ ಹೈಕೋರ್ಟ್ಗೆ ತಿಳಿಸಿದರು. ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸಂಬಂಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಮೊದಲನೇ ಪ್ರತಿವಾದಿ ಹೈಗ್ರೌಂಡ್ಸ್ ಠಾಣೆ ಪೊಲೀಸರ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಅರ್ಜಿ ಸಂಬಂಧ ಸರ್ಕಾರದ ಆಕ್ಷೇಪಣೆ ಸಿದ್ಧವಾಗಿದೆ. ಅದನ್ನು ಮುಂದಿನ ಎರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರಲ್ಲದೆ, ವಿಚಾರಣೆಗೆ ಹಾಜರಾಗಲು ಸೂಚಿಸಿ ಅರ್ಜಿದಾರರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ವಿಚಾರಣೆಗೆ ಹಾಜರಾಗಲು ರಣವೀರ್ ಸಿಂಗ್ ಸಮಯ ಕೋರಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ರಣವೀರ್ ಸಿಂಗ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಅವರು, ಪೊಲೀಸರ ನೋಟಿಸ್ ಸ್ವೀಕರಿಸಲಾಗಿದೆ. ರಣವೀರ್ ಸಿಂಗ್ ಸದ್ಯ ವಿದೇಶದಲ್ಲಿದ್ದಾರೆ. ವಿಮಾನಗಳಿಲ್ಲದ ಕಾರಣ ಭಾರತಕ್ಕೆ ಬರಲಾಗದೆ ಇಂಗ್ಲೆಂಡ್ನಲ್ಲೇ ಉಳಿದುಕೊಂಡಿದ್ದಾರೆ. ಯುದ್ಧದಿಂದ ಮಧ್ಯಪ್ರಾಚ್ಯದ ಯಾವುದೇ ಭಾಗದಿಂದಲೂ ಅದರಲ್ಲೂ ಇಂಗ್ಲೆಂಡ್ನಿಂದ ಭಾರತಕ್ಕೆ ಬರಬೇಕಿರುವ ಬಹತೇಕ ಎಲ್ಲ ವಿಮಾನಗಳ ಹಾರಾಟ ರದ್ದಾಗಿದೆ ಎಂದು ತಿಳಿಸಿದರು. ಮುಂದುವರಿದು, ಪ್ರಕರಣದ ಖಾಸಗಿ ದೂರುದಾರನಾದ ವಕೀಲ ಪ್ರಶಾಂತ್ ಮೆಥಲ್ (ಎರಡನೇ ಪ್ರತಿವಾದಿ) ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರೆ, ಅದನ್ನು ಪರಿಶೀಲಿಸಿ ವಾದ ಮಂಡಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು. ಪೊಲೀಸರ ವಿಚಾರಣೆಗೆ ರಣವೀರ್ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಈ ಕುರಿತು ಭರವಸೆ ನೀಡುತ್ತಿದ್ದೇನೆ ಎಂದರು. ಅಂತಿಮವಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಕಾಲಾವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿತು. ಜತೆಗೆ, ರಣವೀರ್ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿ ಫೆಬ್ರವರಿ 24ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.
Job Fair: ರಾಮನಗರದಲ್ಲಿ ಮಾರ್ಚ್ 5ಕ್ಕೆ ಬೃಹತ್ ಉದ್ಯೋಗ ಮೇಳ: 20 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ
ರಾಮನಗರ: ಉದ್ಯೋಗದ ನಿರೀಕ್ಷೆಯಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ರಾಮನಗರದ ಸುತ್ತಮುತ್ತಲಿನ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಇಲ್ಲೊಂದು ಭರ್ಜರಿ ಸಿಹಿಸುದ್ದಿ ಇದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಯುವಜನತೆಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಮಾರ್ಚ್ 5ರ ಗುರುವಾರದಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ರಾಮನಗರ ಟೌನ್ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ
ಆತನಿಗೆ ತಂಡದಲ್ಲೂ ಸ್ಥಾನ ಇಲ್ಲ: ಪಾಕ್ ಸಂಭಾವ್ಯ ನಾಯಕನ ವಿರುದ್ಧ ಶಾಹಿದ್ ಅಫ್ರಿದಿ ಕಿಡಿ
ಕರಾಚಿ: ಟಿ20 ವಿಶ್ವಕಪ್ ಸೆಮಿಫೈನಲ್ ಗೆ ಭಾರತ ಲಗ್ಗೆಯಿಟ್ಟ ಬೆನ್ನಲ್ಲೇ ಸಂಭ್ರಮ ಮುಗಿಲು ಮುಟ್ಟಿದ್ದರೆ, ಸೂಪರ್8 ಹಂತದಲ್ಲಿ ನಿರ್ಗಮಿಸಿದ ಪಾಕಿಸ್ತಾನ ಈ ಆಘಾತದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿದೆ. ಭಾರತ ವಿರುದ್ಧ ಗುಂಪು ಹಂತದಲ್ಲಿ ಸೋತಿದ್ದ ಪಾಕಿಸ್ತಾನ ಸೂಪರ್8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಪರಾಭವ ಅನುಭವಿಸಿತ್ತು. ನ್ಯೂಝಿಲೆಂಡ್ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾದರೆ, ಶ್ರೀಲಂಕಾ ವಿರುದ್ಧ ಅಗತ್ಯ ಅಂತರದ ಗೆಲುವು ಸಾಧಿಸಲು ಸಾಧ್ಯವಾಗದೇ ಟೂರ್ನಿಯಿಂದ ನಿರ್ಗಮಿಸಿತು. ಏತನ್ಮಧ್ಯೆ ಪಾಕಿಸ್ತಾನ ಟಿ20 ನಾಯಕ ಸಲ್ಮಾನ್ ಅಲಿ ಅಘಾ ಅವರ ನಾಯಕತ್ವಕ್ಕೆ ಕುತ್ತು ಬಂದಿದೆ ಎಂದು ಹೇಳಲಾಗಿದೆ. ಶಾದಬ್ ಖಾನ್ ಹಾಗೂ ಶಹೀನ್ ಅಫ್ರೀದಿ ಈ ಹೊಣೆಗಾರಿಕೆಗೆ ಸಂಭಾವ್ಯ ಅಭ್ಯರ್ಥಿಗಳು ಎಂದು ವರದಿಗಳು ಹೇಳಿವೆ. ಆದರೆ ಆಲ್ ರೌಂಡರ್ ಶಾದಾಬ್ ಖಾನ್ ವಿರುದ್ಧ ಮಾಜಿ ನಾಯಕ ಶಾಹಿದ್ ಅಫ್ರಿದಿ ಕಿಡಿ ಕಾರಿದ್ದು, ಆತ ತಂಡದಲ್ಲಿ ಸ್ಥಾನಪಡೆಯಲೂ ಯೋಗ್ಯನಲ್ಲ ಎಂದಿದ್ದಾರೆ. ಆತನ ಪ್ರದರ್ಶನವನ್ನು ನೋಡಿದರೆ, ನಾಯಕತ್ವ ನೀಡುವುದು ಬಿಡಿ; ನಾನು ಆತನನ್ನು ತಂಡದಲ್ಲೂ ಇಟ್ಟುಕೊಳ್ಳುವುದಿಲ್ಲ ಎಂದು ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಶಾದಬ್ ವಿಶ್ವಕಪ್ನ 7 ಪಂದ್ಯಗಳಲ್ಲಿ 118 ರನ್ ಗಳಿಸಿದ್ದು, ಐದು ವಿಕೆಟ್ ಪಡೆದಿದ್ದಾರೆ. ಇಷ್ಟಾಗಿಯೂ ಈ ಆಲ್ರೌಂಡರ್ನನ್ನು ಬೆಂಬಲಿಸುತ್ತಿರುವ ಕ್ರಮವನ್ನು ಅಫ್ರಿದಿ ಪ್ರಶ್ನಿಸಿದ್ದಾರೆ. ಪಿಎಸ್ನಲ್ಲಿ ಕೋಚ್ ಆಗಿದ್ದ ಮೈಕ್ ಹಸನ್ ಪಾಕಿಸ್ತಾನ ತಂಡದ ಕೋಚ್ ಆದ ಬಳಿಕ ಶಾದಾಬ್ ಸಂಪರ್ಕ ಆರಂಭವಾಯಿತು ಎಂದು ಆಫ್ರೀದಿ ಹೇಳಿದ್ದಾರೆ. ಮುಖ್ಯ ಕೋಚ್ ಹೇಸನ್ ಪದೇ ಪದೇ ಶಾದಬ್ಗೆ ಅವಕಾಶ ನೀಡುತ್ತಿದ್ದಾರೆ. ಆದ್ದರಿಂದ ಅವರು ಮುಂದಿನ ನಾಯಕನೂ ಆಗಬಹುದು ಎಂದು ನಾನು ಹೇಳಿದ್ದೆ. ಆದರೆ ಅವರ ಇತ್ತೀಚಿನ ಪ್ರದರ್ಶನ ನೋಡಿದರೆ, ಆಡುವ 11ರಲ್ಲಿ ಅವಕಾಶ ಪಡೆಯುವ ಅರ್ಹತೆಯೂ ಅವರಿಗಿಲ್ಲ ಎಂದು ಕುಟುಕಿದ್ದಾರೆ.
ಫೆಬ್ರವರಿ- ಮಾರ್ಚ್ ನಡುವೆ ಪ್ರತಿ ಗ್ರಾಂಗೆ 2 ಸಾವಿರ ಏರಿದ ಚಿನ್ನ; ಇಂದಿನ ದರವೆಷ್ಟು?
ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಹೂಡಿರುವ ಯುದ್ಧದ ಪರಿಣಾಮವಾಗಿ ಚಿನ್ನದ ಬೆಲೆ ಏರುಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ. ಫೆಬ್ರವರಿ 23 ಸೋಮವಾರದಿಂದ ಚಿನ್ನದ ಬೆಲೆ ತುಸು ಏರು ಹಾದಿಯಲ್ಲಿತ್ತು. ಕಳೆದ ಸೋಮವಾರ, ಮಂಗಳವಾರ ಮತ್ತು ಬುಧವಾರ ಚಿನ್ನದಲ್ಲಿ ಅಲ್ಪ ಏರಿಕೆ ಕಂಡುಬಂದು 16 ಸಾವಿರದ ಗಡಿಯನ್ನು ದಾಟಿತ್ತು. ಗುರುವಾರ ಅಲ್ಪ ಕುಸಿತ ಕಂಡ ಬೆಲೆ ಮತ್ತೆ ಶುಕ್ರವಾರ ಅಲ್ಪ ಏರಿಕೆ ಕಂಡಿದ್ದು, ಶನಿವಾರ ಗ್ರಾಂಗೆ 300 ರೂ. ಮೀರಿ ಏರಿದ ನಂತರ ರವಿವಾರವೂ ಗ್ರಾಂಗೆ 437 ರೂ. ಏರಿಕೆಯಾಗಿ 17 ಸಾವಿರದ ಗಡಿ ದಾಟಿತ್ತು. ನಂತರ ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಮತ್ತೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು, ನಂತರ ಸಂಜೆ ವೇಳೆ ತುಸು ಚೇತರಿಸಿಕೊಂಡ ಬೆಲೆ ಮಂಗಳವಾರ ಮತ್ತೆ ತುಸು ಕುಸಿದಿದೆ. ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಹೂಡಿರುವ ಯುದ್ಧದ ಪರಿಣಾಮವಾಗಿ ಚಿನ್ನದ ಬೆಲೆ ಏರುಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ. ಫೆಬ್ರವರಿ ತಿಂಗಳಲ್ಲಿ ಪ್ರತಿ ಗ್ರಾಂಗೆ 15,000ದಲ್ಲಿ ಸ್ಥಿರವಾಗಿದ್ದ ಚಿನ್ನ ಮಾರ್ಚ್ ನಲ್ಲಿ ಪ್ರತಿ ಗ್ರಾಂಗೆ 17,000ದ ಸಮೀಪ ವ್ಯವಹಾರ ನಡೆಸುತ್ತಿದೆ. ಮಾರ್ಚ್ 03ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಗ್ರಾಂಗೆ 49 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,70,020 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 45 ರೂ. ಇಳಿದು ಹತ್ತು ಗ್ರಾಂಗೆ 1,55,850 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 36 ರೂ. ಇಳಿಕೆಯಾಗಿ ಹತ್ತು ಗ್ರಾಂಗೆ 1,27,520 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 03ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 17,002 (-49) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,585 (-45) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,752 (-36) ರೂ. ಬೆಲೆಗೆ ತಲುಪಿದೆ. ಮತ್ತೆ ಕುಸಿದ ಬೆಳ್ಳಿ ದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ 19ರ ಗುರುವಾರದಿಂದ ಏರುಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆ 2,95,000 ರೂ. ಗೆ ಬಂದು ನಿಂತಿತ್ತು. ಮಾರ್ಚ್ 1ರಂದು ಭಾನುವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿತ್ತು. ಆದರೆ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿತ್ತು. ಇದೀಗ ಮಂಗಳವಾರ ಮಾರ್ಚ್ 02ರಂದು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಕುಸಿತ ಕಂಡುಬಂದಿದೆ. ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 17,017 (-49) ರೂ., 22 ಕ್ಯಾರೆಟ್ ಚಿನ್ನದ ದರ 15,600 (-45) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 17,002 (-49) ರೂ., 22 ಕ್ಯಾರೆಟ್ ಚಿನ್ನದ ದರ 15,585 (-45) ರೂ.. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 17,007 (-49) ರೂ., 22 ಕ್ಯಾರೆಟ್ ಚಿನ್ನದ ದರ 15,590 (-45) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 17,073 (-11) ರೂ., 22 ಕ್ಯಾರೆಟ್ ಚಿನ್ನದ ದರ 15,650 (-10) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 17,002 (-49) ರೂ., 22 ಕ್ಯಾರೆಟ್ ಚಿನ್ನದ ದರ 15,585 (-45) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 17,002 (-49) ರೂ., 22 ಕ್ಯಾರೆಟ್ ಚಿನ್ನದ ದರ 15,585 (-45) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 17,017 (-49) ರೂ., 22 ಕ್ಯಾರೆಟ್ ಚಿನ್ನದ ದರ 15,600 (-45) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 17,017 (-49) ರೂ., 22 ಕ್ಯಾರೆಟ್ ಚಿನ್ನದ ದರ 15,600 (-45) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 17,017 (-49) ರೂ., 22 ಕ್ಯಾರೆಟ್ ಚಿನ್ನದ ದರ 15,600 (-45) ರೂ.
ತುಂಗಭದ್ರಾ ಕಾರ್ಮಿಕರಿಗೆ ಉದ್ಯೋಗ ಭದ್ರತೆಗಾಗಿ ಮಾ. 7ರಂದು ಹಕ್ಕೋತ್ತಾಯ ಸಮಾವೇಶ
ರಾಯಚೂರು: ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವಂತೆ ಆಗ್ರಹಿಸಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಾ. 7ರಂದು ಹಕ್ಕೋತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿಟಿಯು ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ತಿಳಿಸಿದರು. ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25–30 ವರ್ಷಗಳಿಂದ ತುಂಗಭದ್ರಾ ನೀರಾವರಿ ಕೇಂದ್ರ ವಲಯದ ಮುನಿರಾಬಾದ್ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ತಕ್ಷಣವೇ ನಿರಂತರ ಕೆಲಸ ನೀಡಿ, ಅವರನ್ನು ಕಾಯಂ ಕೆಲಸಗಾರರಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಸರ್ಕಾರದ ನಿರ್ದೇಶನ, ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆ ಹಾಗೂ ವಲಯದ ಅಧಿಕಾರಿಗಳ ವರದಿ ಅನ್ವಯ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಬದುಕುವ ವೇತನ ಸೇರಿದಂತೆ ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ರಕ್ಷಿಸಿ, ಯೋಜನೆಯ ಜೀವಾಳುಗಳಾದ ಕಾರ್ಮಿಕರಿಗೆ ನ್ಯಾಯ ನೀಡುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಸಮಾವೇಶವನ್ನು ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತ ಉದ್ಘಾಟಿಸಲಿದ್ದಾರೆ. ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಪ್ಟನ್ ಡಿ'ರೋಜಾರಿಯೋ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಬಸವರಾಜ, ಜಿಲ್ಲಾ ಘಟಕದ ಅಧ್ಯಕ್ಷ ಅಜೀಜ್ ಜಾಗೀರದಾರ, ಸಿದ್ಧಪ್ಪಗೌಡ ಯರಮರಸ್, ರಾಮರೆಡ್ಡಿ ಕಲ್ಮಲಾ, ಎಂ. ರಫಿ ಮಸ್ಕಿ, ಶರಣಪ್ಪ ಉದ್ಬಾಳ್, ಜಗದೀಶ್, ನಿಸಾರ್ ಅಹಮದ್, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟೆಕ್ಸಾಸ್ ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರು ಮೃತ್ಯು
ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ರವಿವಾರ ರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 21 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ದಾಳಿಯು ಸಂಭಾವ್ಯ ಭಯೋತ್ಪಾದನಾ ಕೃತ್ಯವಾಗಿರಬಹುದೆಂಬ ಶಂಕೆಯಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ತನಿಖೆ ಕೈಗೊಂಡಿದೆ ಎಂದು ವರದಿಯಾಗಿದೆ. ನಗರದ ಪಶ್ಚಿಮದ ಆರನೇ ಬೀದಿಯಲ್ಲಿರುವ ಜನದಟ್ಟಣೆಯ ಮನರಂಜನಾ ಪ್ರದೇಶದ ಬಾರ್ ನ ಹೊರಭಾಗದಲ್ಲಿ ದಾಳಿ ನಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದವರಲ್ಲಿ ಸವಿತಾ ಶಾನ್ (21) ಕೂಡ ಸೇರಿದ್ದಾರೆ. ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಡ್ಯುಯಲ್-ಡಿಗ್ರಿ ಸೀನಿಯರ್ ಆಗಿದ್ದ ಅವರು ಪದವಿ ಪಡೆಯಲು ಕೆಲವೇ ತಿಂಗಳುಗಳು ಬಾಕಿ ಇತ್ತು. ನಿರ್ವಹಣಾ ಮಾಹಿತಿ ವ್ಯವಸ್ಥೆಗಳು (Management Information Systems) ಹಾಗೂ ಅರ್ಥಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾನ್ ಅತ್ಯುತ್ತಮ ವಿದ್ಯಾರ್ಥಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು ಸಹಪಾಠಿಗಳಲ್ಲಿ ಜನಪ್ರಿಯರಾಗಿದ್ದರು. ಸೋಮವಾರ ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಟಿನ್ ಪೊಲೀಸ್ ಮುಖ್ಯಸ್ಥೆ ಲಿಸಾ ಡೇವಿಸ್, ಘಟನೆಯಲ್ಲಿ ಮೃತಪಟ್ಟವರಲ್ಲಿ 19 ವರ್ಷದ ರೈಡರ್ ಹ್ಯಾರಿಂಗ್ಟನ್ ಹಾಗೂ ಸವಿತಾ ಶಾನ್ ಅವರ ಗುರುತುಗಳನ್ನು ದೃಢಪಡಿಸಿದರು. ಉಳಿದ ಇಬ್ಬರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ರವಿವಾರ ಆಸ್ಟಿನ್ ಡೌನ್ ಟೌನ್ ನಲ್ಲಿ ನಡೆದ ಈ ದಾಳಿಯು ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಟೆಕ್ಸಾಸ್ನಲ್ಲಿರುವ ಭಾರತೀಯ-ಅಮೆರಿಕನ್ ಸಮುದಾಯ, ವಿಶೇಷವಾಗಿ ‘ಸಿಲಿಕಾನ್ ಹಿಲ್ಸ್’ ಕಾರಿಡಾರ್ ಪ್ರದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳು ಹಾಗೂ ತಂತ್ರಜ್ಞಾನ ವೃತ್ತಿಪರರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ದಾಳಿಯ ಹಿನ್ನಲೆ, ಶಂಕಿತನ ಉದ್ದೇಶ ಹಾಗೂ ಭಯೋತ್ಪಾದನಾ ಸಂಪರ್ಕದ ಸಾಧ್ಯತೆಗಳ ಕುರಿತು ವಿವಿಧ ಕೋನಗಳಿಂದ ತನಿಖೆ ಮುಂದುವರಿದಿದೆ. ಕಾನೂನು ಜಾರಿ ಸಂಸ್ಥೆಗಳು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದು, ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಶೀಘ್ರದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ.
ಯಾದಗಿರಿಯ ಯುವ ಪ್ರತಿರೋಧ: ಲೋಕೇಶ್ ರಾಠೋಡ್
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸರಕಾರದಿಂದ ಬಂದ ಹಣದ ಉಪಯೋಗದ ಬಗ್ಗೆ ಪ್ರಾಮಾಣಿಕ ತನಿಖೆ ನಡೆದರೆ ಬಹುಶಃ ಪಕ್ಷಾತೀತವಾಗಿ ಎಲ್ಲರ ಹಗರಣಗಳು ಬಯಲಿಗೆ ಬರುತ್ತವೆ. ಇಂತಹ ವ್ಯವಸ್ಥೆಯನ್ನು ನೋಡಿದ ಕಲ್ಯಾಣ ಕರ್ನಾಟಕದ ಯಾವುದೇ ಪ್ರಜ್ಞಾವಂತ ಯುವಕ-ಯುವತಿಯರೂ ಕೂಡ ಲೋಕೇಶರಂತೆ ಪ್ರಶ್ನೆ ಎತ್ತಬಲ್ಲರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನ ಅವಿರತ ಕಠಿಣ ಶ್ರಮದ ಮೂಲಕ ಗಮನಸೆಳೆದ ಲೋಕೇಶ್ ಎತ್ತಿದ ಪ್ರಶ್ನೆ ಅದು ಆತನೊಬ್ಬನ ಪ್ರಶ್ನೆಯಲ್ಲ. ಇದು ಕಲ್ಯಾಣ ಕರ್ನಾಟಕದ ಪ್ರಾತಿನಿಧಿಕ ಯುವಧ್ವನಿ. ಇದನ್ನು ಆಡಳಿತ ಸರಕಾರ ಅರಿಯಬೇಕಾಗಿದೆ. ಆತನ ಬೇಡಿಕೆಗಳಿಗೆ ಸರಕಾರ ಕಿವಿಯಾಗಬೇಕಿದೆ. ನಾನೊಮ್ಮೆ ಫೇಸ್ಬುಕ್ ಪೇಜಲ್ಲಿ ಲೋಕೇಶ್ ರಾಠೋಡ್ ಎನ್ನುವ ಕ್ರೀಡಾಪಟು ಯಾದಗಿರಿ ಜಿಲ್ಲೆಯ ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಿ ಮಾತನಾಡುತ್ತಿರುವುದನ್ನು ನೋಡಿದೆ. ಆನಂತರ ಆತನ ಚಟುವಟಿಕೆಗಳನ್ನು ಗಮನಿಸುತ್ತಾ ಬಂದೆ. ಆತನ ಹೋರಾಟ, ಆತ ಯಾದಗಿರಿ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರತಿನಿಧಿಸಿ ಕೇಳುತ್ತಿರುವ ಪ್ರಶ್ನೆಗಳು ಪ್ರಾಮಾಣಿಕ ಅನ್ನಿಸಿತು. ಭ್ರಷ್ಟ ವ್ಯವಸ್ಥೆಯ ವಿರುದ್ಧ ವಯೋಸಹಜ ಯುವಧ್ವನಿ ಇದಾಗಿತ್ತು. ಹೀಗೆ ಭ್ರಷ್ಟಾಚಾರದ ವಿರುದ್ಧ ಯುವಕನೊಬ್ಬ ಧ್ವನಿ ಎತ್ತುವುದು, ಗಟ್ಟಿಯಾಗಿ ಕಾನೂನಾತ್ಮಕ ಪ್ರಶ್ನೆ ಮಾಡುವುದು ಹೊಸತೆನಿಸಿತು. ಇದು ಜಿಲ್ಲಾಧಿಕಾರಿಯನ್ನು ಒಳಗೊಂಡಂತೆ ಇಲ್ಲಿನ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲೆನೋವಾಯಿತು. ಆರಂಭಕ್ಕೆ ಸಹಿಸಿದರೂ ನಂತರ ಈತನನ್ನು ಬೆದರಿಸುವ, ಧ್ವನಿ ಎತ್ತಿದ್ದಕ್ಕೆ ಎಫ್ಐಆರ್ ಮಾಡುವ ಮಟ್ಟಕ್ಕೆ ಹೋಯಿತು. ಇಷ್ಟೆಲ್ಲಾ ಗಮನಿಸುತ್ತಾ ಕುತೂಹಲದಿಂದ ಲೋಕೇಶ್ ಜತೆ ಮಾತನಾಡಿದೆ. ಆತನ ಬದುಕಿನ ಪಯಣ ಕಲ್ಯಾಣ ಕರ್ನಾಟಕದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕ ಅನ್ನಿಸಿತು. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದ ಭೀಮಾನಾಯಕ ತಾಂಡದ ದಮು ರಾಠೋಡ್ ಮತ್ತು ಗಂಗಾಬಾಯಿ ಅವರ ಮಗ ಲೋಕೇಶ್. ಕಲ್ಯಾಣ ಕರ್ನಾಟಕದಲ್ಲಿ ಬದುಕಿಗಾಗಿ ವಲಸೆ ಹೋಗುವುದು ಸಾಮಾನ್ಯ. ಹೀಗೆ ಲೋಕೇಶ್ ಅವರ ತಂದೆ-ತಾಯಿಯರು ಪುಣೆಗೆ ಕೆಲಸ ಅರಸಿ ವಲಸೆ ಹೋಗುತ್ತಾರೆ. ಹೊಟ್ಟೆಪಾಡಿಗಾಗಿ ದುಡಿಯುತ್ತ ಕೆಲ ಕಾಲ ಪುಣೆಯಲ್ಲಿಯೇ ನೆಲೆಸುತ್ತಾರೆ. ಪುಣೆಯಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ದೇವಧರ ಕ್ರೀಡಾ ಪ್ರಭೋದಿನಿ, ಬನೇರ್ ಬಾಲವಾಡಿ ಎನ್ನುವ ಶಾಲೆ ಇದೆ. ಈ ಶಾಲೆಗೆ ಮಿಲಿಟರಿ ಶಾಲೆಯಂತೆ ಕಠಿಣ ಪರೀಕ್ಷೆಗಳ ನಂತರವೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಹ ಸ್ಕೂಲಿನಲ್ಲಿ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಲೋಕೇಶನ ಕ್ರೀಡೆಯ ಜತೆಗೆ ಶಿಕ್ಷಣ ಆರಂಭವಾಗುತ್ತದೆ. ಈ ಹುಡುಗ ಹನ್ನೊಂದು ವರ್ಷದಲ್ಲಿಯೇ ಬಾಕ್ಸಿಂಗ್ನಲ್ಲಿ ಜಿಲ್ಲಾ ಮಟ್ಟದಲ್ಲಿ ಗೋಲ್ಡ್ ಮೆಡಲ್ ಪಡೆಯುತ್ತಾನೆ. ನಂತರ 2011ರ ಅತ್ಲೆಟಿಕ್ಸ್ನಲ್ಲೂ ಗೋಲ್ಡ್ ಮೆಡಲ್ ತರುತ್ತಾನೆ. ಹತ್ತನೇ ತರಗತಿಯ ತನಕ ಅತ್ಲೆಟಿಕ್ಸ್ನಲ್ಲಿ ಪ್ರತೀ ವರ್ಷವೂ ರಾಜ್ಯಮಟ್ಟದ ಮೆಡಲ್ ಪಡೆಯುತ್ತಾ ತನ್ನ ಕ್ರೀಡಾ ಪ್ರತಿಭೆಯಿಂದ ಗಮನ ಸೆಳೆಯುತ್ತಾನೆ. ಬಾಕ್ಸಿಂಗ್, ಹೈಜಂಪ್ನಲ್ಲಿ ವಿಶೇಷ ಪ್ರತಿಭೆಯಾಗಿ ಹೊರ ಹೊಮ್ಮುತ್ತಾನೆ. ಹೀಗಿರುವಾಗ ಲೋಕೇಶ್ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ ಕಾರಣ ಆತನ ಜೆರ್ಸಿಯಲ್ಲಿ ಸಹಜವಾಗಿ ಮಹಾರಾಷ್ಟ್ರ ಎಂದು ಅಚ್ಚಾಗುತ್ತದೆ. ಇದು ಲೋಕೇಶನಲ್ಲಿ ತನ್ನತನವನ್ನು ಬಡಿದೆಬ್ಬಿಸುತ್ತದೆ. ತಾನು ಮೂಲತಃ ಕರ್ನಾಟಕದ ಹುಡುಗ ತಾನು ತನ್ನ ರಾಜ್ಯವನ್ನು ಪ್ರತಿನಿಧಿಸಬೇಕೆಂದು ನಿರ್ಧರಿಸುತ್ತಾನೆ. ಹಾಗಾಗಿ ಹತ್ತನೇ ತರಗತಿಯ ನಂತರದ (2017) ಶಿಕ್ಷಣವನ್ನು ಕರ್ನಾಟಕದಲ್ಲಿ ಮಾಡಬೇಕು ಎಂಬ ನಿಲುವಿಗೆ ಬರುತ್ತಾನೆ. ಈ ಸಂದರ್ಭದಲ್ಲಿ ಗೇಲ್ ಇಂಡಿಯಾ ಕಂಪೆನಿಯು ಇಂಡಿಯನ್ ಸ್ಪೀಡ್ ಸ್ಟಾರ್ ಎನ್ನುವ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಈ ಸ್ಪರ್ಧೆಯಲ್ಲಿ ನೂರು ಮೀಟರ್ ಓಟದಲ್ಲಿ ಹಂತ ಹಂತವಾಗಿ ಸ್ಪರ್ಧೆ ಏರ್ಪಡಿಸಿ ಕೊನೆಗೆ ನೂರು, ಇನ್ನೂರು ಮೀಟರ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆದ ಜಮೈಕಾದ ಉಸೈನ್ ಬೋಲ್ಟ್ ಜತೆ ತರಬೇತಿ ಪಡೆಯುವ ಅವಕಾಶ ಒದಗಿಸುತ್ತದೆ. ಈ ಸ್ಪರ್ಧೆಯಲ್ಲಿ ಲೋಕೇಶ್ ನ್ಯಾಷನಲ್ ಲೆವೆಲ್ನಲ್ಲಿ ನಾಲ್ಕನೇ ರ್ಯಾಂಕ್ ಪಡೆದ ಕಾರಣ ಉಸೈನ್ ಬೋಲ್ಟ್ ಅವರ ತರಬೇತಿಗೆ ಆಯ್ಕೆಯಾಗುವುದಿಲ್ಲ. ಈ ಸಂದರ್ಭದಲ್ಲಿ ಕರಾಚಿಯಿಂದ ಬಂದ ಒಬ್ಬ ಅತ್ಲೀಟ್ನ ಪರಿಚಯವಾಗುತ್ತದೆ. ಅವರು ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು (ಡಿವೈಇಎಸ್) ಕ್ರೀಡಾಪಟುಗಳಿಗಾಗಿ ಹಾಸ್ಟೆಲ್ ಸೌಲಭ್ಯ ಒದಗಿಸುವ ಬಗ್ಗೆ ಗಮನಸೆಳೆಯುತ್ತಾರೆ. ಆಗ ಮೊದಲ ಪಿಯುಸಿಗೆ ಕ್ರೀಡಾ ಹಾಸ್ಟೆಲ್ಗೆ ಸೇರಿ ಬೆಂಗಳೂರಿನ ವಿದ್ಯಾವಾಹಿನಿ ಕಾಲೇಜಿನಲ್ಲಿ ಓದಿ 2020 ರಲ್ಲಿ ಪಿಯುಸಿ ಮುಗಿಸುತ್ತಾನೆ. ಆರ್ಥಿಕ ಸಮಸ್ಯೆಯಿಂದಾಗಿ ಪಿಯುಸಿ ನಂತರ ಕ್ರೀಡಾ ಕೋಟಾದಲ್ಲಿ ಕೆಲಸ ಹುಡುಕುವ ಪ್ರಯತ್ನ ಮಾಡುತ್ತಾನೆ. ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಾನೆ. ಕೆಲಸಕ್ಕಾಗಿ ಲಂಚ ನಡೆದ ಕಾರಣ ಕೆಲಸ ಪಡೆಯಲಾಗುವುದಿಲ್ಲ. ಈ ಘಟನೆ ಲೋಕೇಶನಲ್ಲಿ ಭ್ರಷ್ಟಾಚಾರದ ಬಗ್ಗೆ ಸಿಟ್ಟು ಆಕ್ರೋಶವನ್ನು ಬಡಿದೆಬ್ಬಿಸುತ್ತದೆ. ಇದೀಗ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಜಿಬಿಆರ್ ಕಾಲೇಜಿನಲ್ಲಿ ಲೋಕೇಶ್ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ. ಮೊದಲ ವರ್ಷದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಹದಿನಾರು ವರ್ಷದ ಒಳಗಿನ ಆಯ್ಕೆಯಲ್ಲಿ ಬೆಳ್ಳಿ ಪದಕ ಪಡೆಯುತ್ತಾನೆ. ಇದಾದ ನಂತರ 2017 ರಿಂದ ಮೊದಲುಗೊಂಡು ಈ ತನಕ ಕರ್ನಾಟಕ ರಾಜ್ಯ ಮಟ್ಟದಲ್ಲಿ ಬಂಗಾರ ಪದಕ ಪಡೆಯುತ್ತಲೇ ಬಂದಿದ್ದಾನೆ. ಡೆಕತ್ಲಾನ್ ನಲ್ಲಿ 2018ರಿಂದಲೂ ಸ್ಟೇಟ್ ರೆಕಾರ್ಡ್ ಹೋಲ್ಡರ್ ಆಗಿ ಲೋಕೇಶ್ ಈ ತನಕ ತನ್ನ ಸ್ಥಾನವನ್ನು ಕಾಯ್ದುಕೊಂಡಿದ್ದಾನೆ. 2025ರಲ್ಲಿ 5ನೇ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಸ್ಪರ್ಧೆಗೆ ಲೋಕೇಶ್ ಆಯ್ಕೆಯಾಗಿ ಹೆಚ್ಚು ಜನರ ಗಮನಸೆಳೆಯುತ್ತಾನೆ. ಇತ್ತ ತಂದೆ ತಾಯಿ ಕುಟುಂಬ ಸಮೇತ ಯಾದಗಿರಿಯಿಂದ ಪುಣೆಗೆ ನಿರಂತರ ಹೋಗಿ ಬಂದು ಮಾಡುತ್ತಾರೆ. ಕೆಲಕಾಲ ಪುಣೆಯಲ್ಲಿ ಕೂಲಿ ಮಾಡುವುದು, ಮತ್ತೆ ಸ್ವಲ್ಪ ಕಾಲ ಯಾದಗಿರಿಯಲ್ಲಿ ಕೂಲಿಗಳಾಗಿ ದುಡಿಯುವುದು ಹೀಗೆ ನಡೆಯುತ್ತದೆ. ಹಾಗಾಗಿ ಲೋಕೇಶ್ ಕುಟುಂಬಕ್ಕೆ ಹೊರೆಯಾಗಬಾರದು ಯಾದಗಿರಿಯಲ್ಲಿ ತನ್ನ ಪ್ರತಿಭೆಯನ್ನು ಬಳಸಿಕೊಂಡೇ ಏನನ್ನಾದರೂ ಮಾಡಬೇಕೆಂದು ಯೋಚಿಸುತ್ತಾನೆ. ಹೀಗಿರುವಾಗ 2022ರಲ್ಲಿ ಯಾದಗಿರಿಗೆ ಬಂದಾಗ ತನ್ನದೇ ತವರಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸು ಕಂಡು ತನ್ನದೇ ಕೋಚಿಂಗ್ ಕ್ಲಬ್ ತೆರೆದು ತಮ್ಮ ಭಾಗದ ಯುವ ಕ್ರೀಡಾಪಟುಗಳ ಬೆಳವಣಿಗೆಗೆ ಸಹಕಾರ ನೀಡುವ ಅಂಗವಾಗಿ ತೊಡಗಿಸಿಕೊಳ್ಳುತ್ತಾನೆ. ಲೋಕೇಶ್ ಮೊದಲಿಗೆ ಸರಕಾರದ ಕ್ರೀಡಾ ಇಲಾಖೆಯಿಂದ ಯಾದಗಿರಿಯಲ್ಲಿ ಯಾವ ಬಗೆಯ ಸೌಲಭ್ಯಗಳಿವೆ ಎನ್ನುವುದನ್ನು ಪರಿಶೀಲಿಸುತ್ತಾನೆ. ಯಾದಗಿರಿಯ ಜಿಲ್ಲಾ ಕ್ರೀಡಾಂಗಣವನ್ನು ನೋಡಿದಾಗ ಯಾವುದೇ ವ್ಯವಸ್ಥೆ ಇರದೆ ಅವ್ಯವಸ್ಥೆಯ ಗೂಡಾಗಿರುತ್ತದೆ. ಇದನ್ನು ನೋಡಿದ ಲೋಕೇಶ್ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾನೆ. ಹೀಗೆ ಕಂಡು ಹೇಳಿ ಕೇಳಿದ್ದಕ್ಕೆ ಏನೂ ಪ್ರತಿಫಲ ಸಿಗದೆ ಇದ್ದಾಗ, ಸಂಬಂಧ ಪಟ್ಟವರಿಗೆ ನೇರವಾಗಿ ಪತ್ರಗಳನ್ನು ಬರೆಯಲು ಶುರು ಮಾಡುತ್ತಾನೆ. ಸರಕಾರದಿಂದ ಕ್ರೀಡೆಗಾಗಿ ಏನೇನು ಹಣ ಬಂದಿದೆ, ಎಷ್ಟು ಖರ್ಚಾಗಿದೆ ಎನ್ನುವುದನ್ನು ಮಾಹಿತಿ ಹಕ್ಕಿನ ಮೂಲಕ ಮಾಹಿತಿ ಕೇಳಲು ಪ್ರಯತ್ನಿಸುತ್ತಾನೆ. ಈ ಬಗೆಯ ಎಲ್ಲಾ ಪ್ರಯತ್ನಗಳ ಮೂಲಕ ಈ ಭಾಗದ ಕ್ರೀಡಾಪಟುಗಳಿಗೆ ಕ್ರೀಡೆಗೆ ಸಂಬಂಧಿಸಿದ ಪ್ರಾಥಮಿಕ ಸೌಲಭ್ಯಗಳನ್ನಾದರೂ ಒದಗಿಸಿ ಎಂದು ಮೊರೆ ಇಡುತ್ತಾನೆ. ಒಮ್ಮೆ ತಾನು ಈ ತನಕ ಪಡೆದ ಎಲ್ಲಾ ಪದಕಗಳನ್ನು ಹರಡಿಕೊಂಡು ತನ್ನದೇ ಫೋಟೊಕ್ಕೆ ಹಾರ ಹಾಕಿಕೊಂಡು ಕ್ರೀಡಾಂಗಣದ ಎದುರು ಪ್ರತಿಭಟನೆಗಿಳಿದು ಗಮನಸೆಳೆಯುತ್ತಾನೆ. ಕಲ್ಯಾಣ ಕರ್ನಾಟಕ ಯೂತ್ ಅಸೋಸಿಯೇಶನ್ ಸಂಘಟನೆಯ ಮೂಲಕವೂ ಹೋರಾಟ ಮುಂದುವರಿಯುತ್ತದೆ. ಪುನೀತ್ ರಾಜ ಕಮತಗಿ ಇದಕ್ಕೆ ಜತೆಯಾಗುತ್ತಾರೆ. ನಂತರ ಲೋಕೇಶನ ಪ್ರತಿಭಟನೆಯ ವೀಡಿಯೋಗಳನ್ನು ಕೆಲವು ರಾಜಕೀಯ ಪಕ್ಷಗಳು ಆಡಳಿತ ಪಕ್ಷದ ವಿರೋಧಕ್ಕೆ ಬಳಸಿಕೊಳ್ಳುತ್ತವೆ. ಇದರಿಂದಾಗಿ ಲೋಕೇಶನ ಪ್ರಾಮಾಣಿಕ ಹೋರಾಟಕ್ಕೆ ರಾಜಕೀಯ ಬಣ್ಣ ಬರುತ್ತದೆ. ಈ ಬಗ್ಗೆ ಲೋಕೇಶ್ ‘‘ಯಾವುದೇ ರಾಜಕೀಯ ಪಕ್ಷದ ಪರ ವಿರೋಧ ನನ್ನ ಉದ್ದೇಶವಲ್ಲ, ಯಾವ ಪಕ್ಷ ಆಡಳಿತದಲ್ಲಿದ್ದರೂ ನನ್ನ ಹೋರಾಟ ಯಾದಗಿರಿ ಜಿಲ್ಲೆಯ ಕ್ರೀಡಾಪಟುಗಳ ಪರವಾಗಿಯೇ ಇರುತ್ತಿತ್ತು. ಅನಗತ್ಯವಾಗಿ ನನ್ನ ಕ್ರೀಡಾ ಸುಧಾರಣೆಯ ಪ್ರಶ್ನೆಗಳನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ’’ ಎನ್ನುತ್ತಾರೆ. ಮುಂದುವರಿದು, ‘‘ಯಾದಗಿರಿ ಭಾಗದ ಹಳ್ಳಿಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಇವರುಗಳು ಕ್ರೀಡೆಯಲ್ಲಿ ಮುಂದೆ ಬರಲು ಕನಿಷ್ಠ ಪ್ರೋತ್ಸಾಹದ ಅಗತ್ಯವಿದೆ. ಇಂತಹ ಪ್ರೋತ್ಸಾಹ ಸಿಗಲಿ ಎಂದು ನಾನು ಹೋರಾಡುತ್ತಿದ್ದೇನೆ’’ ಎನ್ನುತ್ತಾರೆ. ಲೋಕೇಶ್ ಈ ಭಾಗದಲ್ಲಿ ಏನನ್ನಾದರೂ ಮಾಡಬೇಕು ಎನ್ನುವ ಹಂಬಲದಲ್ಲಿ ಸರಕಾರದಿಂದ 15 ಲಕ್ಷ ರೂ. ಸಾಲ ಪಡೆದು ‘ಯಾದಗಿರಿ ಫಿಟ್ನೆಸ್’ ಎನ್ನುವ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಇದರದ್ದೇ ಆದ yadgirfitness.in ಎಂಬ ವೆಬ್ಸೈಟ್ ಮಾಡಿದ್ದಾರೆ. ಯುವಜನರನ್ನು ಈ ಸಂಸ್ಥೆಯ ಮೂಲಕ ಜಿಮ್ ಟ್ರೈನಿಂಗ್ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಸಾಲವಾಗಿ 15 ಲಕ್ಷ ರೂ. ಪಡೆಯಲೂ ಕೂಡ ಲಕ್ಷಗಟ್ಟಲೆ ಹಣ ಲಂಚಕೊಡಬೇಕಾಯಿತು ಎಂದು ಲೋಕೇಶ್ ನೋವಿನಿಂದ ಹೇಳುತ್ತಾರೆ. ಕರ್ನಾಟಕ ಸರಕಾರ ಹೊರ ತಂದ 2024-25ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸುವಂತೆ ಕರ್ನಾಟಕದ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಂಗಳೂರು ನಗರ ಜಿಲ್ಲೆಯು 0.738 ಮೌಲ್ಯದೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ ಯಾದಗಿರಿ (0.538)ರಷ್ಟು ಎಚ್ಡಿಐ ಮೌಲ್ಯದೊಂದಿಗೆ ಕೆಳಗಿನ ಸ್ಥಾನದಲ್ಲಿದೆ. ತಾಲೂಕುವಾರು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣ ಕನ್ನಡದ ಮಂಗಳೂರು ತಾಲೂಕು (0.786) ಅತಿ ಹೆಚ್ಚು ಮೌಲ್ಯವನ್ನು ಹೊಂದಿದೆ. ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕು (0.325) ಅತಿ ಕಡಿಮೆ ಮೌಲ್ಯವನ್ನು ಹೊಂದಿದೆ. 76 ತಾಲೂಕುಗಳು ರಾಜ್ಯದ ಸರಾಸರಿಗಿಂತ (0.573) ಕಡಿಮೆ ಇದ್ದು, ತುರ್ತು ಅಭಿವೃದ್ಧಿಯ ಗಮನ ಅಗತ್ಯವಿದೆ. ತಲಾ ಆದಾಯದಲ್ಲಿಯೂ ಯಾದಗಿರಿ ಕಡೆಯ ಸ್ಥಾನದಲ್ಲಿದೆ. ಶಾಲೆಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಯಾದಗಿರಿ ಮುಂದಿದೆ. ಈ ಪರಿಸ್ಥಿತಿಯೇ ಯಾದಗಿರಿಯ ಪ್ರಜ್ಞಾವಂತರನ್ನು ಹೋರಾಟಕ್ಕೆ ಇಳಿಸುತ್ತದೆ. ಯುವಜನರಲ್ಲಿ ಕಿಚ್ಚನ್ನು ಹೊತ್ತಿಸುತ್ತದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಪಕ್ಷಾತೀತವಾಗಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಗೆ ಇಲ್ಲಿನ ಜನಪ್ರತಿನಿಧಿಗಳು ಮತ್ತು ಆಡಳಿತ ವರ್ಗ ನೇರ ಹೊಣೆ ಹೊರಬೇಕಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸರಕಾರದಿಂದ ಬಂದ ಹಣದ ಉಪಯೋಗದ ಬಗ್ಗೆ ಪ್ರಾಮಾಣಿಕ ತನಿಖೆ ನಡೆದರೆ ಬಹುಶಃ ಪಕ್ಷಾತೀತವಾಗಿ ಎಲ್ಲರ ಹಗರಣಗಳು ಬಯಲಿಗೆ ಬರುತ್ತವೆ. ಇಂತಹ ವ್ಯವಸ್ಥೆಯನ್ನು ನೋಡಿದ ಕಲ್ಯಾಣ ಕರ್ನಾಟಕದ ಯಾವುದೇ ಪ್ರಜ್ಞಾವಂತ ಯುವಕ-ಯುವತಿಯರೂ ಕೂಡ ಲೋಕೇಶರಂತೆ ಪ್ರಶ್ನೆ ಎತ್ತಬಲ್ಲರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನ ಅವಿರತ ಕಠಿಣ ಶ್ರಮದ ಮೂಲಕ ಗಮನಸೆಳೆದ ಲೋಕೇಶ್ ಎತ್ತಿದ ಪ್ರಶ್ನೆ ಅದು ಆತನೊಬ್ಬನ ಪ್ರಶ್ನೆಯಲ್ಲ. ಇದು ಕಲ್ಯಾಣ ಕರ್ನಾಟಕದ ಪ್ರಾತಿನಿಧಿಕ ಯುವಧ್ವನಿ. ಇದನ್ನು ಆಡಳಿತ ಸರಕಾರ ಅರಿಯಬೇಕಾಗಿದೆ. ಆತನ ಬೇಡಿಕೆಗಳಿಗೆ ಸರಕಾರ ಕಿವಿಯಾಗಬೇಕಿದೆ. ಏಶ್ಯನ್ ಗೇಮ್ಸ್ಗಾಗಿ ಬೆಂಗಳೂರಿನಲ್ಲಿ ಕಠಿಣ ತಯಾರಿ ನಡೆಸಿರುವ ಲೋಕೇಶನ ಮುಂದಿನ ಭವಿಷ್ಯ ಉಜ್ವಲವಾಗಲಿ.
ಕಾಸರಗೋಡು : ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ಅಧಿಕಾರ ಸ್ವೀಕಾರ
ಕಾಸರಗೋಡು: ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ಅಧಿಕಾರ ಸ್ವೀಕರಿಸಿದರು. ಮಂಗಳವಾರ ಬೆಳಿಗ್ಗೆ ನಿರ್ಗಮನ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಇಡುಕ್ಕಿ ಜಿಲ್ಲಾಧಿಕಾರಿಯಾಗಿದ್ದ ಪಾಂಡ್ಯನ್ ಅವರನ್ನು ಕಾಸರಗೋಡು ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಉನ್ನತ ರಕ್ಷಣಾ ಸಾಮರ್ಥ್ಯಗಳ ಕುರಿತು ಬ್ಲೂಮ್ಬರ್ಗ್ (Bloomberg) ಪ್ರಕಟಿಸಿದ ವರದಿಯು ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು ಯುಎಇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ. ಈ ವರದಿಯು ಆಧಾರರಹಿತವಾಗಿವೆ ಮತ್ತು ಯುಎಇಯ ತಾಂತ್ರಿಕ ಅತ್ಯಾಧುನಿಕತೆ ಮತ್ತು ಕಾರ್ಯಾಚರಣೆಯ ಸನ್ನದ್ಧತೆ ಕುರಿತು ತಪ್ಪು ನಿರೂಪಣೆಯಾಗಿದೆ ಎಂದು ಹೇಳಿದೆ. ವರದಿಯನ್ನು ಪ್ರಕಟಿಸುವ ಮೊದಲು ಅಧಿಕೃತ ಮೂಲಗಳಿಂದ ದೃಢೀಕರಿಸುವುದು ಅಗತ್ಯವೆಂದು ಸಚಿವಾಲಯ ಹೇಳಿದ್ದು, ಜವಾಬ್ದಾರಿಯುತ ಪತ್ರಿಕೋದ್ಯಮದ ಮಹತ್ವವನ್ನು ಒತ್ತಿ ಹೇಳಿದೆ. ಯುಎಇಯ ಬಳಿ ವೈವಿಧ್ಯಮಯ, ಏಕೀಕೃತ ಹಾಗೂ ಬಹು ವಾಯು ರಕ್ಷಣಾ ವ್ಯವಸ್ಥೆಗಳಿವೆ. ಇವು ವಿವಿಧ ರೀತಿಯ ವಾಯು ದಾಳಿಗಳು ಹಾಗೂ ಭದ್ರತಾ ಬೆದರಿಕೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ ಹೊಂದಿವೆ ಎಂದು ಯುಎಇ ತಿಳಿಸಿದೆ. ಈ ದೀರ್ಘ, ಮಧ್ಯಮ ಮತ್ತು ಅಲ್ಪ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಗಳು ದೇಶದ ವಾಯುಪ್ರದೇಶಕ್ಕೆ ಸಮಗ್ರ ಭದ್ರತೆಯನ್ನು ಒದಗಿಸುತ್ತವೆ. ಯುಎಇ ದೀರ್ಘಕಾಲದವರೆಗೆ ಪ್ರತಿದಾಳಿ ಮತ್ತು ತಡೆ ಕ್ರಮಗಳನ್ನು ಕೈಗೊಳ್ಳಲು ಸಮರ್ಥವಾಗುವಂತಹ ಬಲಿಷ್ಠ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೊಂದಿದೆ. ರಾಷ್ಟ್ರೀಯ ಭದ್ರತೆ ಮತ್ತು ಸ್ವಾಯತ್ತತೆಯನ್ನು ಕಾಪಾಡಲು ಪೂರ್ಣ ಕಾರ್ಯಾಚರಣಾ ಸಿದ್ಧತೆಯನ್ನು ಕಾಯ್ದುಕೊಳ್ಳಲಾಗಿದೆ. ನಾಗರಿಕರು, ನಿವಾಸಿಗಳು ಹಾಗೂ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಯಾವಾಗಲೂ ಸಂಪೂರ್ಣ ಆದ್ಯತೆಯಾಗಿ ಎಂದು ಯುಎಇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Yadgiri | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ
ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಗುತ್ತಿಬಸವಣ್ಣ ಕ್ರಾಸ್ ಬಳಿ ಕುಡಿದಮತ್ತಿನಲ್ಲಿ ಸ್ನೇಹಿತರಿಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಬಸನಗೌಡ (30) ಎಂಬ ಯುವಕ ಕೊಲೆಯಾದ ವ್ಯಕ್ತಿ. ಇಬ್ಬರೂ ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ಆರಂಭವಾಗಿ, ಅದು ತೀವ್ರ ಸ್ವರೂಪ ಪಡೆದು ಹಲ್ಲೆಗೆ ತಿರುಗಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹಾಗೂ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯಾದ ಬಸನಗೌಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಹಾರ್ಮುಜ್ ಜಲಸಂಧಿ ಉದ್ವಿಗ್ನತೆ: ತೈಲ ಬೆಲೆ ಜಿಗಿತ, ಜಾಗತಿಕ ಪೂರೈಕೆ ಸರಪಳಿಗೆ ಆಘಾತ
ಹೊಸದಿಲ್ಲಿ: ಇರಾನ್ ಜೊತೆಗಿನ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ವಿಶ್ವದ ಪ್ರಮುಖ ಇಂಧನ ಚಾಕ್ಪಾಯಿಂಟ್ಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಕಂಡುಬಂದಿದೆ. ಜಲಸಂಧಿ ಸ್ಥಗಿತಗೊಳ್ಳುವ ಭೀತಿಯಿಂದ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿವೆ. ಜಾಗತಿಕವಾಗಿ ಬಳಕೆಯಾಗುವ ತೈಲದ ಸುಮಾರು ಐದನೇ ಒಂದು ಭಾಗ ಹಾಗೂ ಹೆಚ್ಚಿನ ಪ್ರಮಾಣದ ನೈಸರ್ಗಿಕ ಅನಿಲವು ಹಾರ್ಮುಜ್ ಜಲಮಾರ್ಗದ ಮೂಲಕವೇ ಸಾಗುತ್ತದೆ. ಈ ಪ್ರದೇಶದಲ್ಲಿ ತೈಲ ಟ್ಯಾಂಕರ್ಗಳ ಮೇಲೆ ಇರಾನಿನ ದಾಳಿಗಳು ನಡೆದ ಬಳಿಕ ಸಾಗಣೆ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಇರಾನ್ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಸೋಮವಾರ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಘೋಷಿಸಿ, ಈ ಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗಿನ ಮೇಲೆ ತೀವ್ರ ದಾಳಿ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಂದರೆ ಟ್ಯಾಂಕರ್ ಗೆ ಬೆಂಕಿ ಹಚ್ಚುವ ಆಕ್ರಮಣಕಾರಿ ಕರೆ ನೀಡಲಾಗಿದೆ. ಇದುವರೆಗೆ ಕನಿಷ್ಠ ಐದು ಟ್ಯಾಂಕರ್ಗಳು ಹಾನಿಗೊಳಗಾಗಿದ್ದು, ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸುಮಾರು 150 ಹಡಗುಗಳು ಇರಾನ್ ಮತ್ತು ಒಮಾನ್ ಅನ್ನು ಬೇರ್ಪಡಿಸುವ ಜಲಸಂಧಿ ಸುತ್ತಲೂ ಸಿಲುಕಿಕೊಂಡಿವೆ. ಶನಿವಾರ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆದ ಬಳಿಕ ಉದ್ವಿಗ್ನತೆ ಮತ್ತಷ್ಟು ಗಟ್ಟಿಯಾಗಿದೆ. ಶುಕ್ರವಾರ ಬ್ಯಾರೆಲ್ಗೆ 73 ಡಾಲರ್ ತಲುಪಿದ್ದ ಕಚ್ಚಾ ತೈಲದ ಬೆಲೆ ಸೋಮವಾರ 79.40 ಡಾಲರ್ಗಿಂತ ಮೇಲಾಗಿದ್ದು, ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿದೆ. ವಿಂಡ್ವರ್ಡ್ನ ಹಿರಿಯ ಕಡಲ ಗುಪ್ತಚರ ವಿಶ್ಲೇಷಕಿ ಮಿಷೆಲ್ ಬಾಕ್ಮನ್ ಪ್ರಕಾರ, “ಸಂಚಾರ ಕನಿಷ್ಠ ಶೇ.80ರಷ್ಟು ಕುಸಿದಿದೆ. ಮಧ್ಯಪ್ರಾಚ್ಯ ಮತ್ತು ಕೊಲ್ಲಿಯಿಂದ ಹೊರಹೋಗುವ ಮಾರ್ಗಗಳಲ್ಲಿ ಸರಕು ಸಾಗಣೆ ವೆಚ್ಚದಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ, ಎಂದು ಅವರು ತಿಳಿಸಿದ್ದಾರೆ. ಕಂಟ್ರೋಲ್ ರಿಸ್ಕ್ನ ಕಡಲ ಗುಪ್ತಚರ ಮತ್ತು ಭದ್ರತಾ ಸೇವೆಗಳ ನಿರ್ದೇಶಕ ಕಾರ್ಮ್ಯಾಕ್ ಮೆಕ್ಗ್ಯಾರಿ ಅವರು, ಶನಿವಾರ ಅಂತರರಾಷ್ಟ್ರೀಯ ಸಾಗಾಟಕ್ಕೆ ಅಡಚಣೆ ಮರುಕಳಿಸುವ ಮೂಲಕ ಇರಾನ್ ಜಲಸಂಧಿಯನ್ನು ಮುಚ್ಚಿರುವ ಸಂದೇಶವನ್ನು ನೌಕಾಪಡೆಯವರು ಸ್ವೀಕರಿಸಿದ್ದಾಗಿ ಹೇಳಿದ್ದಾರೆ. “ಆ ಸಂದೇಶವನ್ನು ಈ ಪ್ರದೇಶದ ಪ್ರತಿಯೊಂದು ಹಡಗು ಕೇಳುತ್ತಿತ್ತು. ಹೆಚ್ಚಿನ ಹಡಗುಗಳು ತಮ್ಮ ಸಂಚಾರವನ್ನು ವಿರಾಮಗೊಳಿಸಲು ಅದು ಸಾಕಾಯಿತು” ಎಂದರು. ಹಡಗು ಟ್ರ್ಯಾಕಿಂಗ್ ಸೇವೆ ಕೆಪ್ಲರ್ ಮಾಹಿತಿ ಪ್ರಕಾರ, ರವಿವಾರ ಜಲಸಂಧಿಯಲ್ಲಿ ಸೀಮಿತ ಸಂಚಾರ ಮುಂದುವರಿದಿದ್ದು, ಮುಖ್ಯವಾಗಿ ಇರಾನ್ ಹಾಗೂ ಅದರ ಪ್ರಮುಖ ವ್ಯಾಪಾರ ಪಾಲುದಾರ ಚೀನಾದ ಧ್ವಜವನ್ನು ಹೊತ್ತಿರುವ ಹಡಗುಗಳೇ ಸಂಚರಿಸುತ್ತಿದ್ದವು. ಹಡಗಿನ ಇರುವಿಕೆ ಪತ್ತೆಯಾಗುವುದನ್ನು ತಪ್ಪಿಸಲು ಕೆಲವು ಹಡಗುಗಳು ತಮ್ಮ ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ಅನ್ನು ಸ್ಥಗಿತಗೊಳಿಸಿದ್ದ ಸಾಧ್ಯತೆಯಿದೆ ಎಂದು ಬಾಕ್ಮನ್ ತಿಳಿಸಿದ್ದಾರೆ. ಇರಾನ್ ಸಂಪೂರ್ಣವಾಗಿ ಜಲಸಂಧಿಯನ್ನು ಸ್ಥಗಿತಗೊಳಿಸಿದರೆ ಅದು “ತನ್ನ ಕುತ್ತಿಗೆಯ ಸುತ್ತ ಕಣಿಕೆಯನ್ನು ಬಿಗಿಗೊಳಿಸುವಂತಾಗಿದೆ” ಎಂದು ಮೆಕ್ಗ್ಯಾರಿ ಅಭಿಪ್ರಾಯಪಟ್ಟಿದ್ದಾರೆ. “ಹಡಗು ಸಾಗಣೆಯ ಮೇಲೆ ದಾಳಿ ಮುಂದುವರೆದರೆ ಗಲ್ಫ್ ರಾಷ್ಟ್ರಗಳು ಯುದ್ಧಕ್ಕೆ ಸೇರುವ ಸಾಧ್ಯತೆ ಇದೆ. ಅದು ಇರಾನ್ಗೆ ದೊಡ್ಡ ಹೆಜ್ಜೆಯಾಗಬಹುದು” ಎಂದರು. ಪರಿಸ್ಥಿತಿ ಹೀಗಿದ್ದರೂ ಜಲಸಂಧಿಯನ್ನು ದೀರ್ಘಕಾಲ ಸಂಪೂರ್ಣ ಮುಚ್ಚಿಡುವ ಸಾಧ್ಯತೆ ಅಸಾಧ್ಯವೆಂದು ಅವರು ಹೇಳಿದ್ದಾರೆ. ಆದರೆ ಪ್ರಾದೇಶಿಕ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಗಂಭೀರವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕೆಪ್ಲರ್ ಪ್ರಕಾರ, ಪ್ರಮುಖ ತೈಲ ಕಂಪನಿಗಳು, ವಾಣಿಜ್ಯ ನಿರ್ವಾಹಕರು ಹಾಗೂ ವಿಮಾ ಕಂಪನಿಗಳು ಈ ಕಾರಿಡಾರ್ನಿಂದ ಪರಿಣಾಮಕಾರಿಯಾಗಿ ಹಿಂದೆ ಸರಿದಿವೆ. ಯುದ್ಧಕ್ಕೂ ಮುನ್ನವೇ ವಿಮಾ ಕಂತುಗಳು ಆರು ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದವು. ಗಲ್ಫ್ ಮತ್ತು ಕತಾರ್ನ ಇಂಧನ ಮೂಲಸೌಕರ್ಯಗಳ ಮೇಲಿನ ಒತ್ತಡದಿಂದ ಎಲ್ಎನ್ಜಿ ಉತ್ಪಾದನೆ ಪೂರ್ವಭಾವಿಯಾಗಿ ಸ್ಥಗಿತಗೊಂಡಿದೆ ಎಂದು ಸೆಂಟರ್ ಫಾರ್ ಎ ನ್ಯೂ ಅಮೇರಿಕನ್ ಸೆಕ್ಯುರಿಟಿಯ ಹಿರಿಯ ಸಹಾಯಕ ರಾಚೆಲ್ ಝೀಂಬಾ ತಿಳಿಸಿದ್ದಾರೆ. “ಟ್ಯಾಂಕರ್ಗಳು ಕೊಲ್ಲಿಗೆ ಬರಲು ಹಿಂಜರಿಯುತ್ತಿರುವುದು ಅಪಾಯದ ಸ್ಪಷ್ಟ ಸೂಚನೆ” ಎಂದರು. ಅಮೆರಿಕಕ್ಕೂ ಪರಿಣಾಮ ಅಮೆರಿಕ–ಇಸ್ರೇಲಿ ದಾಳಿಗಳ ನಿರೀಕ್ಷೆಯಲ್ಲಿ ಫೆಬ್ರವರಿಯಲ್ಲಿ ಇರಾನ್ ತನ್ನ ತೈಲ ರಫ್ತನ್ನು ಹಲವು ವರ್ಷಗಳ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿತ್ತು ಎಂದು ಕೆಪ್ಲರ್ ತಿಳಿಸಿದೆ. ಗಲ್ಫ್ ರಾಷ್ಟ್ರಗಳೂ ಮುಂಚಿತವಾಗಿ ಸರಬರಾಜುಗಳನ್ನು ಲೋಡ್ ಮಾಡಿದ್ದವು. ಇದರಿಂದ ಅಲ್ಪಾವಧಿಯಲ್ಲಿ ಪೂರೈಕೆ ಸಮಸ್ಯೆ ಸ್ವಲ್ಪ ಮಟ್ಟಿಗೆ ತಗ್ಗಿತ್ತು ಎಂದು ಝೀಂಬಾ ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಕಚ್ಚಾ ತೈಲದ ಸುಮಾರು 70 ಶೇಕಡಾ ಏಷ್ಯಾಕ್ಕೆ ಸಾಗುತ್ತದೆ. ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರಮುಖ ಖರೀದಿದಾರರು ಎಂದು ಯುಎಸ್ ಇಂಧನ ಮಾಹಿತಿ ಆಡಳಿತ ಹೇಳಿದೆ. ಕಚ್ಚಾ ತೈಲದ ಹೊರತಾಗಿ ಜೆಟ್ ಇಂಧನ ಹಾಗೂ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಪೂರೈಕೆಯೂ ಒತ್ತಡ ಎದುರಿಸುತ್ತಿದೆ. ಯುರೋಪ್ನ ಜೆಟ್ ಇಂಧನ ಪೂರೈಕೆಯ ಸುಮಾರು 30 ಶೇಕಡಾ ಈ ಜಲಸಂಧಿಯಿಂದ ಪ್ರಾರಂಭವಾಗುತ್ತದೆ ಅಥವಾ ಅದರ ಮೂಲಕ ಸಾಗುತ್ತದೆ. ಜಾಗತಿಕ ಎಲ್ಎನ್ಜಿ ಪೂರೈಕೆಯ ಐದನೇ ಒಂದು ಭಾಗವೂ ಇದೇ ಮಾರ್ಗದ ಮೇಲೆ ಅವಲಂಬಿತವಾಗಿದೆ. ಅಮೆರಿಕ ಈಗ ಮಧ್ಯಪ್ರಾಚ್ಯ ತೈಲದ ಮೇಲೆ ಹಿಂದಿನಷ್ಟು ಅವಲಂಬಿತವಾಗಿಲ್ಲದಿದ್ದರೂ, ಪರಿಣಾಮದಿಂದ ಸಂಪೂರ್ಣ ಮುಕ್ತವಾಗಿಲ್ಲ. ಪಂಪ್ ಗಳಲ್ಲಿ ಬೆಲೆಗಳ ಪರಿಣಾಮ ಕಾಣಲು ಕೆಲವು ವಾರಗಳು ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಸರಬರಾಜು ಸರಪಳಿ ತಜ್ಞ ಡೇವಿಡ್ ವಾರಿಕ್ ಪ್ರಕಾರ, ಪರಿಸ್ಥಿತಿ ಅತ್ಯಂತ ಅಸ್ಥಿರವಾಗಿದೆ. ಕಂಪೆನಿಗಳು ತಮ್ಮ ಹಡಗುಗಳನ್ನು ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ತಿರುಗಿಸುತ್ತಿದ್ದು, ಇದರಿಂದ ವಿತರಣಾ ಸಮಯ ಹೆಚ್ಚಳ ಮತ್ತು ಹೆಚ್ಚುವರಿ ವೆಚ್ಚಗಳು ಎದುರಾಗುತ್ತಿವೆ. “ಯುದ್ಧ ಅಪಾಯ ವಿಮೆ ಮತ್ತು ತುರ್ತು ವಿಮೆ ಸೇರಿ ಸಾವಿರಾರು ಡಾಲರ್ ಹೆಚ್ಚುವರಿ ವೆಚ್ಚವಾಗುತ್ತಿದೆ. ಕಚ್ಚಾ ವಸ್ತು ಸಂಗ್ರಹ ಹಾಗೂ ರಜಾ ಕಾಲದ ಯೋಜನೆಗಳಿಗೆ ಇದು ಪ್ರಮುಖ ಸಮಯ. ಇಂತಹ ಅಡಚಣೆ ಪೂರೈಕೆ ಸರಪಳಿಗೆ ದೊಡ್ಡ ಹೊರೆ ಆಗುತ್ತದೆ” ಎಂದು ಅವರು ಹೇಳಿದ್ದಾರೆ. ಇಂಧನದ ನಿವ್ವಳ ಉತ್ಪಾದಕರಾಗಿರುವ ಅಮೆರಿಕದ ತೈಲ ಉತ್ಪಾದಕರಿಗೆ ಬೆಲೆ ಏರಿಕೆ ಲಾಭದಾಯಕವಾಗಬಹುದು ಎಂದು ಝೀಂಬಾ ಅಭಿಪ್ರಾಯಪಟ್ಟಿದ್ದಾರೆ. “ಗ್ರಾಹಕರು ನಷ್ಟ ಅನುಭವಿಸಬಹುದು, ಆದರೆ ಉತ್ಪಾದಕರು ಲಾಭ ಪಡೆಯುತ್ತಾರೆ. ಆದರೆ ಈ ಪರಿಸ್ಥಿತಿ ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದು ಪ್ರಮುಖ ಪ್ರಶ್ನೆ” ಎಂದು ಅವರು ತಿಳಿಸಿದ್ದಾರೆ. ಕೃಪೆ: aljazeera.com
ಮೂರನೇ ದಿನವೂ ತೈಲ ಬೆಲೆ ಏರಿಕೆ; ಹಾರ್ಮುಜ್ ಜಲಸಂಧಿ ಆತಂಕದಿಂದ ಮಾರುಕಟ್ಟೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಭೀತಿ
ಲಂಡನ್: ಇರಾನ್ ಜೊತೆಗಿನ ಅಮೆರಿಕ–ಇಸ್ರೇಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಗೆ ಬೆದರಿಕೆ ಇರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಮೂರನೇ ದಿನವೂ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಭೀತಿ ಹೂಡಿಕೆದಾರರ ಆತಂಕ ಹೆಚ್ಚಿಸಿದೆ. ಮಂಗಳವಾರ ಬೆಳಿಗ್ಗೆ GMT 04:00ರ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಭವಿಷ್ಯ ವಹಿವಾಟು ಬ್ಯಾರೆಲ್ಗೆ 1.70 ಡಾಲರ್ ಅಥವಾ 2.2 ಶೇಕಡಾ ಏರಿಕೆ ಕಂಡು 79.44 ಡಾಲರ್ಗೆ ತಲುಪಿತು ಎಂದು ರಾಯಿಟರ್ಸ್ ವರದಿ ಮಾಡಿದೆ. ಸೋಮವಾರ ಬ್ರೆಂಟ್ ಕಾಂಟ್ರಾಕ್ಟ್ 82.37 ಡಾಲರ್ಗೆ ಏರಿಕೆ ಕಂಡಿದ್ದು, ಇದು ಜನವರಿ 2025 ನಂತರದ ಗರಿಷ್ಠ ಮಟ್ಟವಾಗಿದೆ. ಬಳಿಕ ಕೆಲವು ಲಾಭ ಕಳೆದುಕೊಂಡಿದ್ದರೂ, ದಿನಾಂತ್ಯಕ್ಕೆ 6.7 ಶೇಕಡಾ ಏರಿಕೆಯಲ್ಲಿ ವಹಿವಾಟು ಮುಕ್ತಾಯಗೊಂಡಿತು. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲವೂ ಬ್ಯಾರೆಲ್ಗೆ 1.17 ಡಾಲರ್ ಅಥವಾ 1.6 ಶೇಕಡಾ ಏರಿಕೆ ಕಂಡು 72.40 ಡಾಲರ್ಗೆ ತಲುಪಿತು. ಹಿಂದಿನ ವಹಿವಾಟಿನಲ್ಲಿ ಈ ಕಾಂಟ್ರಾಕ್ಟ್ ಜೂನ್ 2025 ನಂತರದ ಗರಿಷ್ಠ ಮಟ್ಟಕ್ಕೆ ಏರಿಕೆಯಾದರೂ, ನಂತರ 6.3 ಶೇಕಡಾ ಏರಿಕೆಯಲ್ಲಿ ಸ್ಥಿರವಾಯಿತು. ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ದ್ವಾರವಾಗಿದ್ದು, ಅಲ್ಲಿ ಉಂಟಾಗುವ ಯಾವುದೇ ವ್ಯತ್ಯಯವು ವಿಶ್ವದ ಪೂರೈಕೆ ಸರಪಳಿಗೆ ನೇರ ಪರಿಣಾಮ ಬೀರುತ್ತದೆ. ಸಂಘರ್ಷದ ತೀವ್ರತೆ ಹೆಚ್ಚುತ್ತಿರುವುದರಿಂದ ಸಾಗಣೆ ಅಡಚಣೆಯ ಆತಂಕ ಮಾರುಕಟ್ಟೆ ಚಲನವಲನಕ್ಕೆ ಕಾರಣವಾಗಿದೆ. “ಉದ್ವಿಗ್ನತೆ ತ್ವರಿತವಾಗಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹಾರ್ಮುಜ್ ಜಲಸಂಧಿ ಕಾರ್ಯತಃ ಮುಚ್ಚಲ್ಪಟ್ಟಂತೆಯೇ ಇದೆ. ಇರಾನ್ ಈ ಪ್ರದೇಶದ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸುವ ಮನೋಭಾವ ತೋರಿಸುತ್ತಿರುವುದರಿಂದ ಮೇಲ್ಮುಖ ಅಪಾಯಗಳು ಉಳಿದಿವೆ. ಸಂಘರ್ಷ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ,” ಎಂದು ಐಜಿ ಮಾರುಕಟ್ಟೆ ವಿಶ್ಲೇಷಕ ಟೋನಿ ಸೈಕಾಮೋರ್ ರಾಯಿಟರ್ಸ್ಗೆ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಶಾಸಕರ ಬೆನ್ನತ್ತಿದೆಯೇ ಗುಪ್ತಚರ ಇಲಾಖೆ, ವಿಪಕ್ಷಗಳ ಆರೋಪದಲ್ಲಿ ಹುರುಳಿದೆಯೇ?
ನಾಯಕತ್ವ ಬದಲಾವಣೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಮೇಲೆ ಗುಪ್ತಚರ ಇಲಾಖೆಯ ಮೂಲಕ ಕಣ್ಗಾವಲು ಇಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಎಚ್ ಡಿ ಕೆ ಮಾಡರುವ ಆರೋಪಕ್ಕೆ ವಿಪಕ್ಷ ನಾಯಕ ಆರ್ ಅಶೋಕ ಕೂಡಾ ಸಾಥ್ ನೀಡಿದ್ದಾರೆ. ಹಾಗಾದರೆ ವಿಪಕ್ಷಗಳ ಆರೋಪದಲ್ಲಿ ಸತ್ಯ ಎಷ್ಟಿದೆ? ಎಂಬ ಪ್ರಶ್ನೆಯೂ ಸಹಜವಾಗಿ ಉದ್ಭವಿಸಿದೆ. ವಿಪಕ್ಷಗಳು ಮಾಡಿರುವ ಆರೋಪವನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ. ಇದು ರಾಜಕೀಯ ಉದ್ದೇಶದ ಆರೋಪ ಎಂದಿದ್ದಾರೆ.
ಕೇವಲ ಫ್ಲ್ಯಾಟ್ಗಳನ್ನು ಮಾಲೀಕರಿಗೆ ನೀಡಿ, ಆ ಫ್ಲ್ಯಾಟ್ ಇರುವ ಅಪಾರ್ಟ್ಮೆಂಟ್ ನ ಭೂಮಿಯ ಹಕ್ಕು ಮಾತ್ರ ಅಸೋಸಿಯೇಷನ್ಗಳಿಗೆ ವರ್ಗಾವಣೆಯಾಗುತ್ತಿಲ್ಲ. ಜಿಬಿಎ ಇದೀಗ ಭೂಮಿಯ ಖಾತಾ ಪಿಐಡಿ ವರ್ಗಾವಣೆಯನ್ನು ತಡೆಹಿಡಿದಿದ್ದರೂ ಕೂಡಾ, ಅನೇಕ ಕಡೆ ಬಿಲ್ಡರ್ಸ್ ಅಥವಾ ಪ್ರೊಮೋಟರ್ ಅವರೇ ಭೂಮಿಯ ಮಾಲೀಕರಾಗಿ ಮುಂದುವರಿಯುತ್ತಿದ್ದಾರೆ. ಹೀಗಾಗಿ ಗ್ರಾಹಕರು ತಿಳಿಯಲೇ ಬೇಕಾದ 6 ಅಂಶಗಳು ಇಲ್ಲಿವೆ.
ಅಮೆರಿಕದ ಬಳಿ ಅನಿಯಮಿತ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳಿವೆ, ದೀರ್ಘಕಾಲದ ಯುದ್ಧವೂ ಸಾಧ್ಯ : ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ : ಮಾಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ 4ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಅಮೆರಿಕದ ಬಳಿ ಅನಿಯಮಿತ ಪ್ರಮಾಣದ ಶಸ್ತ್ರಾಸ್ತ್ರಗಳಿವೆ. ನಮಗೆ ದೀರ್ಘಕಾಲದ ಯುದ್ಧಗಳನ್ನು ಕೂಡ ನಡೆಸಲು ಸಾಧ್ಯವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿ ಅನಿಯಮಿತ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹವಿದೆ. ಇವುಗಳನ್ನು ಮಾತ್ರ ಬಳಸಿಕೊಂಡು ಯುದ್ಧಗಳನ್ನು ಸುದೀರ್ಘವಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಸಬಹುದು. ನಮ್ಮ ಶಸ್ತ್ರಾಸ್ತ್ರಗಳು ಇತರ ದೇಶಗಳ ಅತ್ಯುತ್ತಮ ಶಸ್ತ್ರಾಸ್ತ್ರಗಳಿಗಿಂತಲೂ ಉತ್ತಮವಾಗಿವೆ ಎಂದು ಹೇಳಿದ್ದಾರೆ. ನಮ್ಮಲ್ಲಿ ಉತ್ತಮ ಶಸ್ತ್ರಾಸ್ತ್ರಗಳ ಸಂಗ್ರಹ ಇದೆ ಆದರೆ, ನಾವು ಬಯಸುವ ಸ್ಥಳದಲ್ಲಿ ಇಲ್ಲ ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಮಿತ್ರ ರಾಷ್ಟ್ರದಲ್ಲಿ ಹೆಚ್ಚಿನ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಮಾಡಿರುವ ಆರೋಪದಡಿ ಪೋಕ್ಸೊ ಪ್ರಕರಣದಲ್ಲಿಆರೋಪಿಯಾಗಿರುವ ಜಿಲ್ಲೆಯ ಮಹಲ್ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು. ಬಾಲಕಿಯ ಕುಟುಂಬ ಸದಸ್ಯರನ್ನು ಒಳಗೊಂಡ ಫೋಟೋ ಹಾಗೂ ವಿಡಿಯೋ ಕ್ಲಿಪಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಮಾಡಬಾರದು ಎಂದು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಹೇಳಿದ್ದಾರೆ.
ಕಲಬುರಗಿ| ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ; ತೀವ್ರ ತಪಾಸಣೆ
ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯಕ್ಕೆ ಅನಾಮಿಕರರೊಬ್ಬರು ಹುಸಿ ಬಾಂಬ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಮತ್ತು ಶ್ವಾನದಳದಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲಾ ನ್ಯಾಯಾಲಯದ ಅಧಿಕೃತ ಇಮೇಲ್ ಗೆ ಅನಾಮಿಕ ವ್ಯಕ್ತಿಯೋರ್ವ ಬಾಂಬ್ ಬೆದರಿಕೆ ಹಾಕಿರುವ ಹಿನ್ನೆಲೆ ಮಂಗಳವಾರ ಬೆಳಗ್ಗೆ ನ್ಯಾಯಾಲಯದ ಆವರಣದಲ್ಲಿರುವ ವಕೀಲರನ್ನು, ಕಕ್ಷಿದಾರರನ್ನು ಕೋರ್ಟ್ ಆವರಣದಿಂದ ಹೊರಗೆ ಕಳುಹಿಸಲಾಗಿದೆ. ಬಾಂಬ್ ಬೆದರಿಕೆ ಹಾಕಿರುವ ಬೆನ್ನಲ್ಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ಸಿಬ್ಬಂದಿ, ಶ್ವಾನ ದಳದ ಸಿಬ್ಬಂದಿಯವರು ತಪಾಸಣೆ ನಡೆಸಿಡುತ್ತಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಮರೆಯಾಗುತ್ತಿರುವ ಸಾಂಸ್ಥಿಕ ಮೌಲ್ಯಗಳು
ಪ್ರಜಾತಂತ್ರವನ್ನು ಕಾಪಾಡಬೇಕಾದ ಸಾಂವಿಧಾನಿಕ ಸಂಸ್ಥೆಗಳು ಬಳಕೆಯ ಅಸ್ತ್ರಗಳಾಗಿವೆ
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು?
National Highway: ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಮತ್ತು ಐತಿಹಾಸಿಕ ತಾಣವಾದ ಬೇಲೂರನ್ನು ಮೈಸೂರಿನ ಬಿಳಿಕೆರೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 373 ಯೋಜನೆ ಕಳೆದ 5 ವರ್ಷಗಳಿಂದ ಪೂರ್ಣಗೊಳ್ಳದೇ ಸ್ಥಗಿತಗೊಂಡು ಹಳ್ಳ ಹಿಡಿದಿದೆ. ಸುಮಾರು 630 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಸ್ಥಗಿತಗೊಂಡಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ವಿಶ್ವ ಪಾರಂಪರಿಕ
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿ ಖರೀದಿ ಹಾಗೂ ಆಸ್ತಿ ಮಾರಾಟ ವಿಚಾರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭಾರೀ ಬದಲಾವಣೆಗಳು ಆಗಿವೆ. ಅದರಲ್ಲಿ ಖಾತಾಗಳ ವಿಚಾರದಲ್ಲಿ ಆಗಿರುವ ಬದಲಾವಣೆಗಳು ಮಹತ್ವದ್ದಾಗಿದೆ. ಇ ಖಾತಾ ಬದಲಾವಣೆಯು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ನವೀನ ಇ-ಖಾತಾ (e-Khata) ಯೋಜನೆಗೆ 2025ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ (National e-Governance Award
ಇರಾನ್ ಸುಪ್ರೀಂ ಲೀಡರ್ ಖಮೇನಿ ಸಾವು : ಭಾರತದ 'ತಟಸ್ಥ' ನಿಲುವಿನ ಹಿಂದಿನ 3 ರಾಜತಾಂತ್ರಿಕ ಕಾರಣಗಳು?
Khamenei Death and India stand : 86ವರ್ಷದ ಇರಾನ್’ನ ಸರ್ವೋಚ್ಚ ನಾಯಕ ಅಯತುಲ್ಲಾ ಖಮೇನಿ ಸಾವಿಗೆ ಶಿಯಾ ಮತ್ತು ಸುನ್ನಿ ಪಂಗಡದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಸ್ರೇಲ್ ಮತ್ತು ಯುಎಸ್ ಜಂಟಿಯಾಗಿ ನಡೆಸಿದ ದಾಳಿಗೆ ಭಾರತ ಪ್ರತಿಭಟನೆಯನ್ನು ಸಲ್ಲಿಸಬೇಕು, ಮೌನವಾಗಿ ಇರಬಾರದು ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ, ಮೋದಿ ಸರ್ಕಾರವನ್ನು ಒತ್ತಾಯಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಅಡಚಣೆ ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮುಂದಿನ ಆಯ್ಕೆಗಳೇನು?
ಯುಎಸ್ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ದಾಳಿ ಜಾಗತಿಕ ಇಂಧನ ಪೂರೈಕೆಗೆ ನಿರ್ಣಾಯಕ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಮತ್ತು ಅನಿಲ ಹರಿವನ್ನು ತೀವ್ರವಾಗಿ ಅಡ್ಡಿಪಡಿಸಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಜಂಟಿ ಮಿಲಿಟರಿ ಕಾರ್ಯಾಚರಣೆಯ ನಂತರ, ಟೆಹ್ರಾನ್ ಅಮೆರಿಕದ ಮಿಲಿಟರಿ ಮೂಲಸೌಕರ್ಯವನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸುವ ಮೂಲಕ ಸಂಘರ್ಷವನ್ನು ವಿಸ್ತರಿಸಿದೆ. ಶನಿವಾರ ರಾತ್ರಿ, ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಹಡಗುಗಳಿಗೆ ಸಂದೇಶಗಳನ್ನು ರವಾನಿಸಿತು. ಟೆಹ್ರಾನ್ ನಿಂದ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಇರಾನ್ ಜಲಸಂಧಿಯನ್ನು ನಿರ್ಬಂಧಿಸುತ್ತಿದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗದಿದ್ದರೂ, ಹೆಚ್ಚಿನ ಸಂಖ್ಯೆಯ ವ್ಯಾಪಾರ ಸಂಸ್ಥೆಗಳು, ವಿಮಾದಾರರು ಮತ್ತು ಹಡಗುಗಳು ಕಡಲ ಮಾರ್ಗದ ಮೂಲಕ ಸಾಗಣೆಯನ್ನು ಸ್ಥಗಿತಗೊಳಿಸಿವೆ. ವರದಿಗಳ ಪ್ರಕಾರ, ನೂರಾರು ಟ್ಯಾಂಕರ್ ಗಳು ಗಲ್ಫ್ ನೀರಿನಲ್ಲಿ ಲಂಗರು ಹಾಕಿವೆ. ಜಲಸಂಧಿಯ ಮೂಲಕ ತೈಲ ಮತ್ತು ಅನಿಲ ಹರಿವನ್ನು ಸ್ಥಗಿತಗೊಳಿಸುವುದು ಅಥವಾ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸುವುದು ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಭಾರತವೂ ಸೇರಿದೆ, ಏಕೆಂದರೆ ಇದು ತನ್ನ ತೈಲ ಮತ್ತು ಅನಿಲ ಆಮದುಗಳ ಬಹುಪಾಲನ್ನು ಈ ಜಲಮಾರ್ಗದ ಮೂಲಕ ಸ್ವೀಕರಿಸುತ್ತದೆ. ಅಡಚಣೆಯ ಅವಧಿ ಹೆಚ್ಚಿದಂತೆ ಪರಿಣಾಮವೂ ತೀವ್ರಗೊಳ್ಳುವ ಸಾಧ್ಯತೆ ಇದೆ. ಆದರೆ ಇದು ದೀರ್ಘಾವಧಿಯದ್ದಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತೈಲ ಆಮದುಗಳ ವಿಷಯದಲ್ಲಿ ಭಾರತವು ಅಲ್ಪಾವಧಿಯ ಪೂರೈಕೆ ಆಘಾತವನ್ನು ತಡೆಯಲು ಉತ್ತಮ ಸ್ಥಿತಿಯಲ್ಲಿದೆ, ಏಕೆಂದರೆ ಪರ್ಯಾಯ ಪೂರೈಕೆ ಮೂಲಗಳು ಲಭ್ಯವಿವೆ ಎಂದು ಅವರು ಹೇಳುತ್ತಾರೆ. ಆದಾಗ್ಯೂ, ಸಂಘರ್ಷದ ಪರಿಣಾಮವಾಗಿ ಭಾರತ ಹೆಚ್ಚಿನ ಇಂಧನ ಬೆಲೆಗಳನ್ನು ಪಾವತಿಸಬೇಕಾಗುತ್ತದೆ. ಎಲ್ಪಿಜಿ ಮತ್ತು ಎಲ್ ಎನ್ ಜಿ ಗೆ ಸವಾಲು ಇನ್ನಷ್ಟು ಗಂಭೀರವಾಗಿದೆ. ಭಾರತವು ತೈಲಕ್ಕಿಂತ ಈ ಅನಿಲಗಳಿಗಾಗಿ ಹಾರ್ಮುಜ್ ಜಲಸಂಧಿಯನ್ನು ಹೆಚ್ಚು ಅವಲಂಬಿಸಿರುವುದರಿಂದ, ಸಮರ್ಪಕ ಪೂರೈಕೆಯನ್ನು ಪಡೆಯುವುದು ಕಷ್ಟಕರವಾಗಿದ್ದು ಹೆಚ್ಚಿನ ಆಮದು ಬೆಲೆಗಳನ್ನು ಪಾವತಿಸಬೇಕಾಗಬಹುದು. ಭಾರತದ ಅಲ್ಪಾವಧಿಯ ಆಯ್ಕೆಗಳು ವಿಶ್ವದ ಪ್ರಮುಖ ತೈಲ ಸಾಗಣೆ ಚಾಕ್ ಪಾಯಿಂಟ್ ಆಗಿರುವ ಹಾರ್ಮುಜ್ ಜಲಸಂಧಿ ಇರಾನ್ ಮತ್ತು ಒಮಾನ್ ನಡುವಿನ ಕಿರಿದಾದ ಜಲಮಾರ್ಗವಾಗಿದ್ದು, ಇದು ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಇದು ಜಾಗತಿಕ ದ್ರವ ಪೆಟ್ರೋಲಿಯಂ ಬಳಕೆ ಹಾಗೂ ಜಾಗತಿಕ ಎಲ್ಎನ್ಜಿ ವ್ಯಾಪಾರದ ಸರಿಸುಮಾರು ಐದನೇ ಒಂದು ಭಾಗವನ್ನು ನಿರ್ವಹಿಸುತ್ತದೆ. ಪ್ರತಿದಿನ ಸುಮಾರು 15 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವು ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಜಲಮಾರ್ಗವನ್ನು ಬೈಪಾಸ್ ಮಾಡಲು ಗಲ್ಫ್ ರಾಜ್ಯಗಳಲ್ಲಿ ಕೆಲವು ಪೈಪ್ಲೈನ್ಗಳು ಅಸ್ತಿತ್ವದಲ್ಲಿದ್ದರೂ, ಅವುಗಳ ಸಾಮರ್ಥ್ಯ ಸೀಮಿತವಾಗಿದೆ. ಪ್ರತಿಯೊಂದು ಪರ್ಯಾಯ ಮಾರ್ಗವನ್ನು ಗರಿಷ್ಠ ಸಾಮರ್ಥ್ಯಕ್ಕೆ ಬಳಸಿದರೂ ಸಹ, ದಿನಕ್ಕೆ ಸುಮಾರು 9 ಮಿಲಿಯನ್ ಬ್ಯಾರೆಲ್ ತೈಲವು ಇನ್ನೂ ಸ್ಥಗಿತಗೊಳ್ಳಬಹುದು ಎಂದು ಕೈಗಾರಿಕಾ ತಜ್ಞರು ಎಚ್ಚರಿಸಿದ್ದಾರೆ. ಇದು ವಿಶ್ವದ ಒಟ್ಟು ತೈಲ ಅಗತ್ಯಗಳಲ್ಲಿ ಸರಿಸುಮಾರು 9% ರಷ್ಟಿದ್ದು, ಜಲಸಂಧಿ ಮುಚ್ಚಿರುವವರೆಗೆ ಮಾರುಕಟ್ಟೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಭಾರತದ ಒಟ್ಟು ತೈಲ ಆಮದುಗಳಲ್ಲಿ ಸುಮಾರು ಅರ್ಧದಷ್ಟು, ಅಂದರೆ ದಿನಕ್ಕೆ ಸರಿಸುಮಾರು 2.5–2.7 ಮಿಲಿಯನ್ ಬ್ಯಾರೆಲ್ ಗಳು (bpd), ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್ನಂತಹ ದೇಶಗಳಿಂದ ಜಲಸಂಧಿಯ ಮೂಲಕ ಹಾದುಹೋಗುತ್ತವೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕವಾಗಿದ್ದು, 88% ಕ್ಕಿಂತ ಹೆಚ್ಚು ಆಮದು ಅವಲಂಬನೆಯನ್ನು ಹೊಂದಿದೆ. ದೇಶದ ಅನಿಲ ಬಳಕೆಯ ಬಹುಪಾಲು ಭಾಗವನ್ನು ಆಮದುಗಳ ಮೂಲಕ ಪೂರೈಸಲಾಗುತ್ತದೆ. ಹೀಗಾಗಿ ಪಶ್ಚಿಮ ಏಷ್ಯಾದಿಂದ ತೈಲ ಮತ್ತು ಅನಿಲ ಪೂರೈಕೆಗಳು ಭಾರತಕ್ಕೆ ನಿರ್ಣಾಯಕವಾಗಿವೆ. ಭಾರತೀಯ ಸಂಸ್ಕರಣಾಗಾರರು ಈಗಾಗಲೇ 10 ದಿನಗಳಿಗಿಂತ ಹೆಚ್ಚಿನ ಕಚ್ಚಾ ದಾಸ್ತಾನುಗಳ ಜೊತೆಗೆ ಸುಮಾರು ಒಂದು ವಾರದ ಇಂಧನ ದಾಸ್ತಾನುಗಳನ್ನು ಹೊಂದಿದ್ದಾರೆ. ಆಮದು ಪ್ರಮಾಣದಲ್ಲಿನ ಯಾವುದೇ ಸಂಭಾವ್ಯ ಕೊರತೆಯನ್ನು ಸರಿದೂಗಿಸಲು, ಭಾರತವು ತನ್ನ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ಬಳಸಿಕೊಳ್ಳಬಹುದು. ಹಾರ್ಮುಜ್ ಹೊರಗಿನ ಪ್ರದೇಶಗಳಿಂದ ಸಂಗ್ರಹಣೆಯನ್ನು ವೇಗಗೊಳಿಸಬಹುದು ಮತ್ತು ಪರ್ಯಾಯ ಪೂರೈಕೆದಾರರೊಂದಿಗೆ ಒಪ್ಪಂದಗಳನ್ನು ಮಾಡಬಹುದು. ರಷ್ಯಾ, ಅಮೆರಿಕ, ಪಶ್ಚಿಮ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಿಂದ ಆಮದುಗಳನ್ನು ಭಾರತ ಹೆಚ್ಚಿಸಬಹುದು. ಇದಲ್ಲದೆ, ಹಿಂದೂ ಮಹಾಸಾಗರ ಮತ್ತು ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ರಷ್ಯಾದ ಸರಕುಗಳ ನಿರಂತರ ಲಭ್ಯತೆ ಇದೆ. ಭಾರತೀಯ ಸಂಸ್ಕರಣಾಗಾರರು ಇತ್ತೀಚೆಗೆ ರಷ್ಯಾದ ತೈಲ ಪಡೆಯುವುದನ್ನು ಕಡಿಮೆ ಮಾಡಿರುವುದರಿಂದ ಹೆಚ್ಚುವರಿ ಸಂಗ್ರಹ ಲಭ್ಯವಿದೆ. ಕೆಪ್ಲರ್ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ಅವರ ಪ್ರಕಾರ, ಮಧ್ಯಪ್ರಾಚ್ಯದ ಸರಬರಾಜುಗಳು ಕಡಿತಗೊಂಡರೆ ಭಾರತವು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳಬಹುದು. ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯು ತಕ್ಷಣದ ಮಾರುಕಟ್ಟೆ ಅವ್ಯವಸ್ಥೆಗೆ ಕಾರಣವಾಗಬಹುದು. ಆದರೆ ಭಾರತ ಬೇರೆ ಮೂಲಗಳಿಂದ ಮತ್ತು ಹತ್ತಿರದ ಪರ್ಯಾಯ ಬ್ಯಾರೆಲ್ಗಳ ಲಭ್ಯತೆಯನ್ನು ಆಶ್ರಯಿಸುವ ಕಾರಣ ದೀರ್ಘಾವಧಿಯ ತೈಲ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಕಡಿಮೆ. ಅವರ ಪ್ರಕಾರ, ದೇಶವು ತನ್ನ LPG ಅಗತ್ಯಗಳಲ್ಲಿ 80–85% ಅನ್ನು ಆಮದು ಮಾಡಿಕೊಳ್ಳುತ್ತದೆ. ಇದನ್ನು ಬಹುಪಾಲು ಗಲ್ಫ್ ಪೂರೈಕೆದಾರರಿಂದ ಪಡೆಯಲಾಗುತ್ತದೆ ಮತ್ತು ಇದು ಹಾರ್ಮುಜ್ ಮೂಲಕ ಸಾಗಿಸಲಾಗುತ್ತದೆ. ಕಚ್ಚಾ ತೈಲಕ್ಕಿಂತ ಭಿನ್ನವಾಗಿ, ಭಾರತದಲ್ಲಿ ಎಲ್ಪಿಜಿಗೆ ದೊಡ್ಡ ಪ್ರಮಾಣದ ಕಾರ್ಯತಂತ್ರದ ನಿಕ್ಷೇಪಗಳ ಕೊರತೆಯಿದೆ. ಅದೇ ರೀತಿ, ಭಾರತದ LNG ಆಮದುಗಳಲ್ಲಿ ಸುಮಾರು 60% ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತವೆ. ಇಲ್ಲಿಯೂ ನಿಕ್ಷೇಪಗಳ ಕೊರತೆ ಇದೆ. ಹೆಚ್ಚುವರಿ ಕಚ್ಚಾ ತೈಲವು ತ್ವರಿತ ಖರೀದಿಗೆ ಲಭ್ಯವಿದ್ದರೂ, LPG ಮತ್ತು LNG ಗಾಗಿ ಸ್ಪಾಟ್ ಲಭ್ಯತೆ ಅತ್ಯಂತ ಸೀಮಿತವಾಗಿದೆ. ಜಲಸಂಧಿಯು ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿದ್ದರೆ, ಈ ಎರಡು ಇಂಧನಗಳನ್ನು ಪಡೆದುಕೊಳ್ಳುವುದು ಭಾರತಕ್ಕೆ ದೊಡ್ಡ ಬಿಕ್ಕಟ್ಟಾಗಬಹುದು. ತೈಲ ಬೆಲೆ ಏರಿಕೆ ಇರಾನ್ ವಿರುದ್ಧ ಅಮೆರಿಕದ ಮಿಲಿಟರಿ ದಾಳಿ ತೀವ್ರಗೊಳ್ಳುತ್ತಿದ್ದಂತೆ, ಜಾಗತಿಕ ತೈಲ ಮಾರುಕಟ್ಟೆಗಳು ತೀವ್ರವಾಗಿ ಪ್ರತಿಕ್ರಿಯಿಸಿವೆ. ತೈಲ ಬೆಲೆಯಲ್ಲಿ ಪ್ರತಿ ಬ್ಯಾರೆಲ್ಗೆ 1 ಡಾಲರ್ ಹೆಚ್ಚಳವು ಭಾರತದ ತೈಲ ಆಮದು ಬಿಲ್ ಅನ್ನು ವಾರ್ಷಿಕವಾಗಿ 1.8–2 ಬಿಲಿಯನ್ ಡಾಲರ್ ಹೆಚ್ಚಿಸಬಹುದು. ಹಾರ್ಮುಜ್ ಜಲಸಂಧಿಯಲ್ಲಿನ ಪ್ರಸ್ತುತ ಅಡಚಣೆ ಹಡಗು ನಿರ್ವಾಹಕರು ಮತ್ತು ವಿಮಾದಾರರು ಇರಾನ್ ಭೌತಿಕ ದಿಗ್ಬಂಧನಕ್ಕಿಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದರಿಂದಾಗಿರಬಹುದು ಎಂದು ರೈಸ್ಟಾಡ್ ಎನರ್ಜಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ಭೌಗೋಳಿಕ ರಾಜಕೀಯ ವಿಶ್ಲೇಷಣೆಯ ಮುಖ್ಯಸ್ಥ ಜಾರ್ಜ್ ಲಿಯಾನ್ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಮಾರುಕಟ್ಟೆ ದೃಷ್ಟಿಕೋನದಿಂದ ಕಾರಣ ಅಪ್ರಸ್ತುತವಾಗುತ್ತದೆ. ಮಾರ್ಗವನ್ನು ಬಲವಂತವಾಗಿ ಮುಚ್ಚಲಾಗಿದೆಯೋ ಅಥವಾ ಭಯದಿಂದ ಮುಚ್ಚಲಾಗಿದೆಯೋ ಫಲಿತಾಂಶ ಒಂದೇ ಆಗಿರುತ್ತದೆ. ಇದು ಮುಂದುವರಿದರೆ, ಮೀಸಲು ಹೊಂದಿರುವ ದೇಶಗಳು ತಮ್ಮ ತುರ್ತು ತೈಲ ಸರಬರಾಜುಗಳನ್ನು ಬಿಡುಗಡೆ ಮಾಡಲು ಒತ್ತಾಯಿಸಲ್ಪಡಬಹುದು. ವಾರ ಪ್ರಾರಂಭವಾಗುತ್ತಿದ್ದಂತೆ ತೈಲ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಲಿಯಾನ್ ತಿಳಿಸಿದ್ದಾರೆ. ಹಾರ್ಮುಜ್ನಿಂದ ದೀರ್ಘಕಾಲದ ಪ್ರಾದೇಶಿಕ ಸಂಘರ್ಷ ಮತ್ತು ಪೂರೈಕೆ ಅಡಚಣೆಯ ಸನ್ನಿವೇಶಗಳಲ್ಲಿ, ತೈಲ ಬೆಲೆಗಳು ಬ್ಯಾರೆಲ್ಗೆ 100 ಡಾಲರ್ಗಿಂತ ಹೆಚ್ಚಾಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಇರಾನ್ ಆಗಾಗ್ಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದರೂ, ಅದು ಎಂದಿಗೂ ಪೂರ್ಣ ದಿಗ್ಬಂಧನವನ್ನು ಅನುಸರಿಸಿಲ್ಲ. ಏತನ್ಮಧ್ಯೆ, ಯಾವುದೇ ಮುಚ್ಚುವಿಕೆ ಅಥವಾ ಅಡ್ಡಿ ಅಲ್ಪಕಾಲಿಕವಾಗಿರುತ್ತದೆ ಎಂದು ಇಂಧನ ಮತ್ತು ವ್ಯಾಪಾರ ತಜ್ಞರು ಹೇಳಿದ್ದಾರೆ. ಇರಾನ್ ಸೇರಿದಂತೆ ಗಲ್ಫ್ ತೈಲ ಮತ್ತು ಅನಿಲ ಉತ್ಪಾದಕರು ಇಂಧನ ರಫ್ತಿನಿಂದ ನಿರಂತರ ಆದಾಯಕ್ಕಾಗಿ ಈ ಮಾರ್ಗವನ್ನು ಅವಲಂಬಿಸಿರುತ್ತಾರೆ. “ಹಾರ್ಮುಜ್ ಜಲಸಂಧಿ ಮುಚ್ಚಿದರೆ, ಅದು ತಾತ್ಕಾಲಿಕವಾಗಿರಬಹುದು. ಅದು ಒಂದರಿಂದ ಎರಡು ವಾರಗಳವರೆಗೆ ಇರಬಹುದು. ದೀರ್ಘಕಾಲದ ಮುಚ್ಚುವಿಕೆಯು ತೀವ್ರ ಭೌಗೋಳಿಕ ರಾಜಕೀಯ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ತ್ವರಿತ ಅಂತರರಾಷ್ಟ್ರೀಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಆದಾಗ್ಯೂ, ಅಲ್ಪಾವಧಿಯ ಅಡಚಣೆಯೂ ಸಮಸ್ಯೆ ಸೃಷ್ಟಿಸುತ್ತದೆ. ಟ್ಯಾಂಕರ್ ದಟ್ಟಣೆ, ಸರಕುಗಳ ಮರುಹೊಂದಿಸುವಿಕೆ ಮತ್ತು ಬಂದರು ವಿಳಂಬಗಳು ಸಾಮಾನ್ಯ ಸ್ಥಿತಿಗೆ ಮರಳಲು ವಾರಗಳನ್ನು ತೆಗೆದುಕೊಳ್ಳಬಹುದು. ಅಂದರೆ ಮಾರುಕಟ್ಟೆಯ ಪರಿಣಾಮವು ಸಾರಿಗೆ ಮಾರ್ಗಗಳ ಔಪಚಾರಿಕ ಪುನರಾರಂಭವನ್ನು ಮೀರಿ ಮುಂದುವರಿಯುವ ಸಾಧ್ಯತೆ ಇದೆ,” ಎಂದು ಲಿಯಾನ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿ ಮತ್ತು GCC (ಗಲ್ಫ್ ಸಹಕಾರ ಮಂಡಳಿ) ದೇಶಗಳ ಸಂಯೋಜಿತ ಕಡಲ ಸಾಮರ್ಥ್ಯಗಳನ್ನು ಗಮನಿಸಿದರೆ, ಯಾವುದೇ ಪ್ರಮುಖ ಅಡಚಣೆ ದೀರ್ಘಕಾಲ ಮುಂದುವರಿಯುವ ಬದಲು ಕೆಲವೇ ದಿನಗಳಲ್ಲಿ ಪರಿಹಾರ ಕಾಣಬಹುದು ಎಂದು ರಿಟೋಲಿಯಾ ಹೇಳಿದ್ದಾರೆ. ಸಂಪೂರ್ಣ ದಿಗ್ಬಂಧನವು ಟೆಹ್ರಾನ್ಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಏಕೆಂದರೆ ಇದು ಇರಾನ್ ತೈಲದ ಪ್ರಾಥಮಿಕ ಖರೀದಿದಾರ ಚೀನಾವನ್ನು ದೂರವಿಡುವ ಅಪಾಯವನ್ನುಂಟುಮಾಡಬಹುದು. ಇದಲ್ಲದೆ, ಅಂತಹ ಕ್ರಮವು ಒಮಾನ್ನ ಪ್ರಾದೇಶಿಕ ಜಲಪ್ರದೇಶಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆ. ಇದು ಅಮೆರಿಕದೊಂದಿಗಿನ ನಿರ್ಣಾಯಕ ರಾಜತಾಂತ್ರಿಕ ಸೇತುವೆಯಾಗಿ ಕಾರ್ಯನಿರ್ವಹಿಸುವ ನೆರೆಯ ದೇಶದೊಂದಿಗಿನ ಸಂಬಂಧಗಳಿಗೆ ಹಾನಿ ಉಂಟುಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಸ್ರೇಲ್-ಇರಾನ್ ಯುದ್ದದಿಂದಾಗಿ ಮಧ್ಯಪ್ರಾಚ್ಯ ಅಕ್ಷರಶಃ ಯುದ್ದದಲ್ಲಿ ಬೇಯುತ್ತಿದೆ. ಹೀಗಿರುವಾಗ ದುಬೈನಲ್ಲಿ ಕನ್ನಡಿಗರು ಸೇರಿದಂತೆ ನೂರಾರು ಭಾರತೀಯರು ಸಿಲುಕಿಕೊಂಡಿದ್ದರು. ಸದ್ಯ ಇವರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಈ ಕಾರ್ಯಚರಣೆಯಲ್ಲಿ ಮೊದಲ 2 ವಿಮಾನಗಳ ಮೂಲಕ ಸುಮಾರು 700 ಮಂದಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಇದರಲ್ಲಿ ಜೆಡಿಎಸ್ MLC ಭೋಜೇಗೌಡ, ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸಹ ಇದ್ದಾರೆ. ಇನ್ನು, ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ MLC ಭೋಜೇಗೌಡ ದುಬೈನಲ್ಲಿ ಯುದ್ದದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
“ಇದು ತಟಸ್ಥ ನಿಲುವಲ್ಲ” : ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಬಗ್ಗೆ ಮೋದಿ ಸರಕಾರದ ಮೌನವನ್ನು ಪ್ರಶ್ನಿಸಿದ ಸೋನಿಯಾಗಾಂಧಿ
1994ರಲ್ಲಿ ವಿಶ್ವಸಂಸ್ಥೆಯಲ್ಲಿ ಇರಾನ್ ಭಾರತವನ್ನು ಬೆಂಬಲಿಸಿರುವುದನ್ನು ಲೇಖನದಲ್ಲಿ ನೆನಪಿಸಿದ ಕಾಂಗ್ರೆಸ್ ನಾಯಕಿ
ಐಪಿಎಲ್ ನಂತರ ಭಾರತ-ಅಫ್ಘಾನಿಸ್ತಾನ್ ಸರಣಿ ಪಂದ್ಯಗಳ ಹಬ್ಬ: ವೇಳಾಪಟ್ಟಿ ಪ್ರಕಟ
India vs Afghanistan 2026 Series: ಇದೀಗ ಅದ್ಯ ಟಿ20 ವಿಶ್ವಕಪ್ 2026 ಟೂರ್ನಿ ನಡೆಯುತ್ತಿದ್ದು, ಫೈನಲ್ ಪಂದ್ಯ ಮಾರ್ಚ್ 8ರಂದು ಅಹಮದಾಬಾದ್ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯಾವಳಿಯ ಐಪಿಎಲ್ ಹಬ್ಬ ಶುರುವಾಗಲಿದೆ. ಈ ಪಂದ್ಯಾವಳಿಯೂ ಮಾರ್ಚ್ 28ರಿಂದ ಆರಂಭವಾಗಿ ಮೇ 31ರವರೆಗೆ ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ ಅಫ್ಘಾನಿಸ್ತಾನದ
ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಭೀತಿ ಹಾಗೂ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲದ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇರಾನ್ ನಡೆಸಿದ ಡ್ರೋನ್ ದಾಳಿಯ ಬಳಿಕ, ವಿಶ್ವದ ಪ್ರಮುಖ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದಕ ದೇಶವಾದ ಕತಾರ್, ತನ್ನ
ಹುಬ್ಬಳ್ಳಿ-ವಿಜಯಪುರ ಚತುಷ್ಪಥ ಶೀಘ್ರ ; ಕೇಂದ್ರದಿಂದ ಡಿಪಿಆರ್ ಸಿದ್ಧ
ಹುಬ್ಬಳ್ಳಿ - ವಿಜಯಪುರ ದ್ವಿಪಥ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ಪರಿವರ್ತಿಸುವ ಕೆಲಸಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಾಲನೆ ನೀಡಿದೆ. ಕೇಂದ್ರ ಸರಕಾರ ಡಿಪಿಆರ್ ಕೂಡಾ ಸಿದ್ಧಪಡಿಸಿದೆ. ಸದ್ಯದಲ್ಲೇ ಹುಬ್ಬಳ್ಳಿ-ವಿಜಯಪುರ ಚತುಷ್ಪಥ ಕಾಮಗಾರಿ ಶುರುವಾಗಲಿದೆ.
ಚಿನ್ನ ಬೆಳ್ಳಿ ದರದಲ್ಲಿ ಇಂದು ಇಳಿಕೆಯಾಗಿದ್ದು, ಇನ್ನದ ಬೆಲೆ 1 ಲಕ್ಷದ 70 ಸಾವಿರ ಹಾಗೂ ಬೆಳ್ಳಿ ಬೆಲೆ 2,95,000 ಕ್ಕೆ ಇಳಿಕೆ ಆಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಅಮೆರಿಕ-ಿರಾನ್ ಸಂಘರ್ಷದಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಆಗುವ ಸಾಧ್ಯತೆ ಇದೆ.
ಮಲ್ಲಿಕಾರ್ಜುನ ಮುತ್ಯಾ ಪೋಕ್ಸೋ ಪ್ರಕರಣ: ಕೋರ್ಟ್ನಲ್ಲಿ ಸಂತ್ರಸ್ತೆ ಬಾಲಕಿಯ ಹೇಳಿಕೆ ಮೇಲೆ ಮುತ್ಯಾ ಭವಿಷ್ಯ ನಿರ್ಧಾರ
ಯಾದಗಿರಿ: ಮಹಲ್ ರೋಜಾದ ಪ್ರಸಿದ್ಧ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ . ಶಹಾಪುರ ಜೆಎಂಸಿ ನ್ಯಾಯಾಲಯದಲ್ಲಿ (JMC Court) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯು ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಈ ಬೆಳವಣಿಗೆಯಿಂದಾಗಿ ಮಲ್ಲಿಕಾರ್ಜುನ ಮುತ್ಯಾ ಅವರ ಮುಂದಿನ ಭವಿಷ್ಯ ಇದೀಗ ಬಾಲಕಿಯ ಅಧಿಕೃತ ಹೇಳಿಕೆಯ ಆಧಾರದ
ಪಾಕಿಸ್ತಾನದ ಈಗಾಗಲೇ ಅಫ್ಘಾನಿಸ್ತಾನದೊಂದಿಗೆ ಯುದ್ದ ಮಾಡುತ್ತಿದ್ದು, ಈ ನಡುವೆ ಭಾರತ ಎಲ್ಲಿ ತಮ್ಮ ಮೇಲೆ ದಾಳಿಗೆ ಮುಂದಾಗುತ್ತದೋ ಎಂಬ ಆತಂಕದಲ್ಲಿದೆ. ಹೀಗಾಗಿಯೇ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಭಾರತದ ನಾಯಕರು ಮತ್ತೊಂದು ಯುದ್ದಕ್ಕೆ ಸಿದ್ದತೆ ಮಾಡುತ್ತಿರುವುದಾಗಿ ಹೇಳುತ್ತಾರೆ, ಆದರೆ, ಯುದ್ದ ಬೇಡ ಮಾತುಕತೆ ಮಾಡೋಣ ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ, ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿದ ಭಾರತದ ನಡೆಯನ್ನು ಜಲ ಭಯೋತ್ಪಾದನೆ ಎಂದು ಟೀಕಿಸಿದ್ದಾರೆ. ಇನ್ನು, ಅಫ್ಘಾನ್ ನೊಂದಿಗಿನ ಸಂಘರ್ಷವನ್ನು ಕುರಿತು ಸಹ ಮಾತನಾಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
ಯಾರು ಆತಂಕ ಪಡಬೇಡಿ.. ದುಬೈ ಸೇರಿ ಗಲ್ಫ್ ದೇಶಗಳಲ್ಲಿನ ಭಾರತೀಯರಿಗೆ ಮಾರ್ಗಸೂಚಿ ರಿಲೀಸ್
ಇಸ್ರೇಲ್ ಹಾಗೂ ಇರಾನ್ ನಡುವೆ ದಾಳಿಗಳು ಮುಂದುವರೆದಿದ್ದು,ಯಾವುದೇ ಕ್ಷಣದಲ್ಲಾದ್ರೂ ಯುದ್ಧದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ, ಹೀಗಾಗಿ ಯುದ್ಧ ಭೂಮಿಯಲ್ಲಿ ಸಿಲುಕಿಗೊಂಡಿರುವ ಭಾರತೀಯರಿಗೆ ಸೇಫ್ ಆಗಿರುವಂತೆ ಭಾರತೀಯ ರಾಯಭಾರ ಕಚೇರಿ ಸಲಹೆ ಕೊಟ್ಟಿದೆ. ಇರಾನ್, ಸೌದಿ ಅರೇಬಿಯಾ, ಯುಎಇ ಮತ್ತು ಜೋರ್ಡನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿನ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಮತ್ತು ಸ್ಥಳೀಯಾಡಳಿತಗಳ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಿದೆ. ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕು?, ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು, ದಾಳಿಯ ಮುನ್ಸೂಚನೆ ಸಿಕ್ಕಾಗ ಏನು ಮಾಡಬೇಕು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೋಳಿ ಹಬ್ಬ: ಈ ರತಿ-ಮನ್ಮಥನ್ನು ನಗಿಸಿ ಬರೋಬ್ಬರಿ 13 ಲಕ್ಷ ರೂ.ಗೆಲ್ಲಿ
ಹಾವೇರಿ: ಪ್ರತಿ ವರ್ಷದಂತೆ ಈ ವರ್ಷವು ರಾಜ್ಯಾದಾದ್ಯಂತ ಹೋಳಿ ಹಬ್ಬದ ಸಡಗರ ಮನೆ ಮಾಡಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜೀವಂತ ರತಿ ಮನ್ಮಥರ ಆಚರಣೆಯು ಯಶಸ್ವಿ 66 ವರ್ಷ ಪೂರೈಸಿದ್ದು, 2026ರಲ್ಲಿ 67ನೇ ವರ್ಷಕ್ಕೆ ಕಾಲಿಟ್ಟಿದೆ. ಇಂದು ಮಾರ್ಚ್ 3ರಂದು ಮಂಗಳವಾರ ಸಂಜೆ ಹೋಳಿ ಪ್ರಯುಕ್ತ ಜೀವಂತ ರತಿ-ಮನ್ಮಥರನ್ನು ಕೂರಿಸಿ ಆಚರಣೆ ಮಾಡಲಾಗುತ್ತಿದೆ. ಯಾರಾದರೂ ಈ ಜೋಡಿಯನ್ಉ
ಕರ್ನಾಟಕ ಸಿಎಂ ಕುರ್ಚಿ ಜಟಾಪಟಿ: ಸದ್ಯಕ್ಕೆ ಸಿದ್ದರಾಮಯ್ಯ ನಿರಾಳ
ಕರ್ನಾಟಕದಲ್ಲಿ ಸಿಎಂ ಕುರ್ಚಿ ಬದಲಾವಣೆ ಕುರಿತು ನಡೆಯುತ್ತಿದ್ದ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆ. ಮಾರ್ಚ್ 6 ರಂದು ಆರಂಭವಾಗುವ ರಾಜ್ಯ ಬಜೆಟ್ ಅಧಿವೇಶನದ ಹಿನ್ನೆಲೆ ನಾಯಕತ್ವ ಬದಲಾವಣೆ ವಿಚಾರವನ್ನು ಮುಂದೂಡುವ ಸಾಧ್ಯತೆ ಇದೆ. ಹೀಗಾಗಿ, ಸದ್ಯಕ್ಕೆ ಸಿದ್ದರಾಮಯ್ಯ ಸೇಫ್.
ಕರಾಚಿಯಲ್ಲಿರುವ ಕಾನ್ಸುಲೇಟ್ ಎದುರು ಹಿಂಸಾಚಾರ: ಪ್ರತಿಭಟನಾಕಾರರ ಮೇಲೆ ಅಮೆರಿಕ ನೌಕಾಪಡೆಗಳಿಂದ ಗುಂಡಿನ ದಾಳಿ?
ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿ ಎದುರು ವಾರಾಂತ್ಯದಲ್ಲಿ ನಡೆದ ಹಿಂಸಾಚಾರದ ವೇಳೆ ಪ್ರತಿಭಟನಾಕಾರರ ಮೇಲೆ ಅಮೆರಿಕದ ನೌಕಾಪಡೆಗಳು ಗುಂಡು ಹಾರಿಸಿವೆ ಎಂಬ ಮಾಹಿತಿ ಬಹಿರಂಗವಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಾನ್ಸುಲೇಟ್ ಆವರಣಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಪ್ರತಿಭಟನಾಕಾರರ ವಿರುದ್ಧ ನಡೆದ ಗುಂಡಿನ ದಾಳಿಯಲ್ಲಿ ನೌಕಾಪಡೆಯ ಪಾತ್ರವಿದೆ ಎಂಬುದು ಇದೇ ಮೊದಲ ಬಾರಿ ದೃಢೀಕರಣಗೊಂಡಿದೆ. ನೌಕಾಪಡೆಗಳಿಂದ ಹಾರಿಸಲಾದ ಗುಂಡುಗಳು ಯಾರನ್ನಾದರೂ ತಗುಲಿದವೆಯೇ ಅಥವಾ ಸಾವುಗಳಿಗೆ ಕಾರಣವಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸಹ ಗುಂಡು ಹಾರಿಸಿದ್ದಾರೆಯೇ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನಾಕಾರರು ಕಚೇರಿ ಆವರಣದ ಹೊರಗೋಡೆಯನ್ನು ಭೇದಿಸಿದ ಬಳಿಕ ಪರಿಸ್ಥಿತಿ ಹದಗೆಟ್ಟಿದ್ದು, ಈ ಗಲಭೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರಾಂತೀಯ ಸರ್ಕಾರದ ವಕ್ತಾರ ಸುಖದೇವ್ ಅಸ್ಸಾರ್ದಾಸ್ ಹೆಮ್ನಾನಿ, ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಹೇಳಿದರೂ, ಅವರು ಯಾವ ಪಡೆಗೆ ಸೇರಿದವರು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಘಟನೆಯ ಹಿನ್ನೆಲೆ ಮತ್ತು ಗುಂಡಿನ ದಾಳಿಯ ಕುರಿತು ತನಿಖೆ ಮುಂದುವರಿದಿದೆ.
T20 ವಿಶ್ವಕಪ್’ನಿಂದ ಹೊರಬಿದ್ದಿದ್ದಕ್ಕೆ ಶಿಕ್ಷೆ : ಪಾಕ್ ಆಟಗಾರರಿಗೆ ತಲಾ 50 ಲಕ್ಷ ದಂಡ ವಿಧಿಸಿದ ಪಿಸಿಬಿ?
Pakistan Board decided impose massive fine : ಹಾಲೀ ವಿಶ್ವಕಪ್ T20 ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತಕ್ಕೂ ಬಾರದೇ ಶರಣಾದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ, ಭಾರೀ ದಂಡ ವಿಧಿಸಲು ಪಾಕಿಸ್ತಾನ ಬೋರ್ಡ್ ನಿರ್ಧರಿಸಿದೆ ಎನ್ನುವ ಮಾಹಿತಿಯಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡ, ಭಾರತದ ವಿರುದ್ದವೂ ಹೀನಾಯವಾಗಿ ಸೋತಿತ್ತು.
ಮಧ್ಯಪ್ರಾಚ್ಯ ಬಿಕ್ಕಟ್ಟು : ಮಾರ್ಚ್ 3 ರಿಂದ ಭಾರತೀಯ ಪ್ರಯಾಣಿಕರಿಗಾಗಿ ಇಂಡಿಗೋ ವಿಶೇಷ ವಿಮಾನ ವ್ಯವಸ್ಥೆ
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಬಿಕ್ಕಟ್ಟು ಮುಂದುವರೆದಿದೆ. ಅಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರನ್ನು ಮರಳಿ ಕರೆತರಲು ಇಂಡಿಗೋ ಮಾರ್ಚ್ 3 ರಂದು ಜೆಡ್ಡಾದಿಂದ ವಿವಿಧ ಭಾರತೀಯ ನಗರಗಳಿಗೆ 10 ವಿಶೇಷ ಪರಿಹಾರ ವಿಮಾನಗಳನ್ನು ನಿರ್ವಹಿಸಲು ಯೋಜಿಸಿದೆ.
ಇರಾನ್ ಪರಮಾಣು–ಕ್ಷಿಪಣಿ ತಾಣಗಳನ್ನು ತಿಂಗಳುಗಳಲ್ಲಿ ದಾಳಿ ಮಾಡಲು ಕಷ್ಟವಾಗುವಂತೆ ರೂಪಿಸುತ್ತಿತ್ತು: ನೆತನ್ಯಾಹು ಆರೋಪ
ಜೆರುಸಲೇಮ್: ಇರಾನ್ ತನ್ನ ಪರಮಾಣು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳನ್ನು ಕೆಲವೇ ತಿಂಗಳಲ್ಲಿ ದಾಳಿ ಮಾಡಲು ಕಷ್ಟವಾಗುವಂತೆ ರೂಪಿಸುತ್ತಿತ್ತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ಅವರ ಪರಮಾಣು ತಾಣಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗಳ ಮೇಲೆ ಹೊಡೆತ ನೀಡಿದ ಬಳಿಕ ಅವರು ಪಾಠ ಕಲಿಯುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ ಅವರು ಹಾಗೆ ಮಾಡಲಿಲ್ಲ,” ಎಂದರು. ಅಮೆರಿಕವನ್ನು ನಾಶಮಾಡುವ ಗುರಿಯ ಬಗ್ಗೆ ಇರಾನ್ ನಾಯಕತ್ವವು ಮತಾಂಧ ನಿಲುವು ಹೊಂದಿದೆ ಎಂದು ಅವರು ಆರೋಪಿಸಿದರು ಎಂದು Aljazeera ವರದಿ ಮಾಡಿದೆ. ಇದರಿಂದ ಇರಾನ್ ಹೊಸ ತಾಣಗಳು, ರಹಸ್ಯ ಕೇಂದ್ರಗಳು ಹಾಗೂ ಭೂಗತ ಬಂಕರ್ಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಕ್ರಮಗಳಿಂದ ಅವರ ಕ್ಷಿಪಣಿ ಮತ್ತು ಪರಮಾಣು ಬಾಂಬ್ ಯೋಜನೆಗಳನ್ನು ‘ತಿಂಗಳುಗಳಲ್ಲಿ ದಾಳಿ ಮಾಡಲು ಕಷ್ಟವಾಗುವಂತೆ’ ಮಾಡಲು ಪ್ರಯತ್ನಿಸಲಾಗಿದೆ ಎಂದು ನೆತನ್ಯಾಹು ಹೇಳಿದರು. “ಈಗ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಹೋಗಬಹುದು,” ಎಂದು ಅವರು ಎಚ್ಚರಿಸಿದರು.
Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ
Oil Price Hike: ಇರಾನ್ ಮೇಲೆ ಇಸ್ರೇಲ್-ಯುಎಸ್ ದಾಳಿ ವೈಮಾನಿಕ ದಾಳಿ ಮುಂದುವರಿದಿದೆ. ಯುದ್ಧವು ಇವತ್ತು ಮಂಗಳವಾರಕ್ಕೆ (ಮಾರ್ಚ್ 3) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿದೆ. ಇರಾನ್-ಇಸ್ರೇಲ್ ಮಧ್ಯದಲ್ಲಿರುವ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ತೈಲ ಟ್ಯಾಂಕರ್ಗಳು ಸಾಗಿ ಬರುತ್ತವೆ. ಈ ಯುದ್ಧದಿಂದಾಗಿ ಈ
ವಿಚಾರಣಾ ನ್ಯಾಯಾಲಯದಲ್ಲಿ AI ರಚಿಸಿದ ನಕಲಿ ತೀರ್ಪು ಬಳಕೆ: ಇದು ದುರ್ನಡತೆ ಎಂದ ಸುಪ್ರೀಂ ಕೋರ್ಟ್
ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಹಾಸುಹೊಕ್ಕಾಗಿದೆ. ಆದರೆ, ನ್ಯಾಯಾಲಯದಂತಹ ಪವಿತ್ರ ಹಾಗೂ ಮಹತ್ವದ ಸ್ಥಳಗಳಲ್ಲಿ ಎಐ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಿದ 'ಅಸ್ತಿತ್ವದಲ್ಲೇ ಇಲ್ಲದ' ನಕಲಿ ತೀರ್ಪುಗಳನ್ನು ಉಲ್ಲೇಖಿಸುವುದು ಕೇವಲ ಸಾಮಾನ್ಯ ತಪ್ಪಲ್ಲ, ಬದಲಾಗಿ ಅದು ನ್ಯಾಯಾಧೀಶರ ದುರ್ನಡತೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆಂಧ್ರಪ್ರದೇಶದ ವಿಚಾರಣಾ ನ್ಯಾಯಾಲಯವೊಂದು ಆಗಸ್ಟ್
ಬೈರೂತ್ನಲ್ಲಿ ಹಿಝ್ಬುಲ್ಲಾದೊಂದಿಗೆ ಸಂಪರ್ಕವಿರುವ ಅಲ್ ಮನಾರ್ ಟಿವಿ ಕೇಂದ್ರದ ಮೇಲೆ ಇಸ್ರೇಲ್ ನಿಂದ ವಾಯುದಾಳಿ
ದಕ್ಷಿಣ ಲೆಬನಾನ್ದೆಲ್ಲೆಡೆ ದಾಳಿಗಳ ತೀವ್ರತೆ; 52 ಮೃತ್ಯು, 154 ಗಾಯ
ಇರಾನ್ ನಿಂದ ದಾಳಿ: ಬಹುಪಾಲು ಕ್ಷಿಪಣಿ, ಡ್ರೋನ್ ಗಳನ್ನು ತಡೆದ ಖತರ್
ದೋಹಾ: ಇರಾನ್ ಆರಂಭಿಸಿರುವ ದಾಳಿಗಳ ಬಳಿಕ ತನ್ನ ದೇಶದತ್ತ ಹಾರಿಸಲಾದ ಬಹುಪಾಲು ಕ್ಷಿಪಣಿ ಮತ್ತು ಡ್ರೋನ್ಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು ಖತರ್ನ ರಕ್ಷಣಾ ಸಚಿವಾಲಯ ತಿಳಿಸಿದೆ. ದಾಳಿಗಳು ಪ್ರಾರಂಭವಾದ ನಂತರ ದೇಶದ ಮೇಲೆ ಮೂರು ಕ್ರೂಸ್ ಕ್ಷಿಪಣಿಗಳು, 101 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 39 ಡ್ರೋನ್ಗಳನ್ನು ಹಾರಿಸಲಾಗಿತ್ತು. ಅವುಗಳಲ್ಲಿ 98 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 24 ಡ್ರೋನ್ ಗಳನ್ನು ವಾಯುರಕ್ಷಣಾ ವ್ಯವಸ್ಥೆಗಳು ಮಧ್ಯದಲ್ಲೇ ನಿಷ್ಕ್ರಿಯಗೊಳಿಸಿದ್ದವೆ ಎಂದು ಪ್ರಕಟಣೆ ತಿಳಿಸಿದೆ. ಇದಲ್ಲದೆ, ಎರಡು SU-24 ಯುದ್ಧವಿಮಾನಗಳನ್ನು ರಾಡಾರ್ ವ್ಯವಸ್ಥೆಗಳು ಪತ್ತೆಹಚ್ಚಿವೆ ಎಂದು ಸಚಿವಾಲಯ ಹೇಳಿದೆ. ದೇಶದ ವಾಯುಪ್ರದೇಶದ ಮೇಲಿನ ನಿಗಾವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು Aljazeera ವರದಿ ಮಾಡಿದೆ.
ನಮ್ಮ ಆಪ್ತ ಮಿತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಸತ್ಯದ ಪರವಾಗಿ ಹಾಗೂ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಮುಂದುವರಿದು ಮಾತನಾಡಿದ ಅವರು ಭಾರತೀಯರ ಅಪಾರವಾದ ಸ್ನೇಹಕ್ಕೂ ಧನ್ಯವಾದ, ಇಸ್ರೇಲ್ನಲ್ಲಿ ಭಾರತೀಯರನ್ನು ಅತಿಯಾಗಿ ಪ್ರೀತಿಸಲಾಗುತ್ತದೆ, ಗೌರವಿಸಲಾಗುತ್ತೆ. ಮಾತುಕತೆಯ ಸಂಪೂರ್ಣ ವಿವರಗಳನ್ನು ನಾನು ಈಗ ಬಹಿರಂಗಪಡಿಸಲ್ಲ. ಜಗತ್ತಿನ ಇತರ ಹಲವು ನಾಯಕರೊಂದಿಗೂ ಚರ್ಚಿಸಿದ್ದೇನೆ ಎಂದು ಬೆಂಜಮಿನ್ ನೆತನ್ಯಾಹು ತಿಳಿಸಿದರು.
ರಿಯಾದ್ ನ ಅಮೆರಿಕ ರಾಯಭಾರ ಕಚೇರಿ ಮೇಲಿನ ದಾಳಿಗೆ ಶೀಘ್ರದಲ್ಲೇ ಪ್ರತಿಕ್ರಿಯೆ: ಟ್ರಂಪ್
ವಾಷಿಂಗ್ಟನ್: ಸೌದಿ ಅರೇಬಿಯಾದ ರಿಯಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲಿನ ದಾಳಿಗೆ ಅಮೆರಿಕದ ಪ್ರತಿಕ್ರಿಯೆ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಎಂದು ನ್ಯೂಸ್ನೇಷನ್ ವರದಿ ಮಾಡಿದೆ. ನ್ಯೂಸ್ನೇಷನ್ ಪತ್ರಕರ್ತೆ ಕೆಲ್ಲಿ ಮೇಯರ್ ಉಲ್ಲೇಖಿಸಿದಂತೆ, ದಾಳಿಗೆ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಪ್ರಶ್ನೆಗೆ ಟ್ರಂಪ್ “ನೀವು ಶೀಘ್ರದಲ್ಲೇ ಕಂಡುಕೊಳ್ಳುವಿರಿ” ಎಂದು ಉತ್ತರಿಸಿದ್ದಾರೆ. ರಿಯಾದ್ ಘಟನೆಯ ನಂತರ ವೈಟ್ ಹೌಸ್ನಲ್ಲಿ ಉನ್ನತ ಮಟ್ಟದ ಚರ್ಚೆಗಳು ನಡೆದಿರುವುದಾಗಿ ತಿಳಿದುಬಂದಿದೆ ಎಂದು Aljazeera ವರದಿ ಮಾಡಿದೆ. ರಿಯಾದ್ ಘಟನೆಯ ಬಳಿಕ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ನಾಗರಿಕರಿಗೆ ಅಲರ್ಟ್: ಸುರಕ್ಷತೆಗಾಗಿ ಮಧ್ಯಪ್ರಾಚ್ಯದ 14 ದೇಶಗಳನ್ನು ಕೂಡಲೇ ಬಿಟ್ಟು ಬರುವಂತೆ ಸೂಚನೆ
ಅಮೆರಿಕ-ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಖಮೇನಿ ಹತ್ಯೆಗೆ ಪ್ರತೀಕಾರದ ಕ್ರಮವಾಗಿ ನೆರೆಯ ದೇಶಗಳ ಮೇಲೆ ಇರಾನ್ ದಾಳಿ ತೀವ್ರಗೊಳಿಸಿದೆ. ತೈಲ, ಅನಿಲ ಸಂಸ್ಕರಣ ಘಟಕ, ಮೂಲಸೌಕರ್ಯ ವ್ಯವಸ್ಥೆ, ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಹೀಗಾಗಿ ಅಲ್ಲಿರುವ ಅಮೆರಿಕದ ನಾಗರಿಕರನ್ನು ತಕ್ಷಣವೇ ದೇಶಕ್ಕೆ ಮರಳುವಂತೆ ಸೂಚಿಸಿದೆ.
ದುಬೈ ಸಮೀಪ ಆಸ್ಟ್ರೇಲಿಯದ ಸೇನಾ ನೆಲೆಗೆ ಇರಾನ್ ದಾಳಿ
ಅಬುಧಾಬಿ: ದುಬೈ ಸಮೀಪ ಆಸ್ಟ್ರೇಲಿಯಾದ ಪಡೆಗಳು ಬಳಸುತ್ತಿದ್ದ ಅಲ್ ಮಿನ್ಹಾದ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ದಾಳಿ ನಡೆಸಿವೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಿಯೋಜಿತವಾಗಿರುವ ಆಸ್ಟ್ರೇಲಿಯಾದ ಎಲ್ಲಾ ಸೈನಿಕರು ಸುರಕ್ಷಿತವಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಸುಮಾರು 100 ಆಸ್ಟ್ರೇಲಿಯಾದ ಸೈನಿಕರು ಮಧ್ಯಪ್ರಾಚ್ಯದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನೆಲೆಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ದಾಳಿಯಿಂದ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆಯ ನಂತರ ಭದ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದೆ.
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್
ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷದ ಪರಿಣಾಮವಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ನೂರಾರು ಭಾರತೀಯರು, ಅದರಲ್ಲೂ ವಿಶೇಷವಾಗಿ ಕನ್ನಡಿಗರು ಕೊನೆಗೂ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಮೂರು ದಿನಗಳ ಕಾಲ ಆತಂಕದಲ್ಲಿಯೇ ದಿನ ದೂಡಿದ್ದ ಪ್ರಯಾಣಿಕರು, ಸೋಮವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಬಂದಿಳಿದು ನೆಮ್ಮದಿಯ
ಕೇರಳ ಕಂಪೆನಿಯಿಂದಲೇ ವಿದ್ಯುತ್ ಪರಿವರ್ತಕಗಳ ನೇರ ಖರೀದಿ
ಸಮರ್ಥನೆ ನೀಡದ ರಾಜ್ಯ ಇಂಧನ ಇಲಾಖೆ
ಗೊಂದಲದ ಗೂಡಾದ ತಿ.ನರಸಿಪುರ ಕೆಎಸ್ಐಸಿ ; ರೇಷ್ಮೆ ನೂಲಿಗೆ ಕ್ರೀಡಾಂಗಣದ ಕಿಚ್ಚು
ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ಭೈರಾಪುರ ಗ್ರಾಮದಲ್ಲಿನ ಕೆ.ಎಸ್.ಐ.ಸಿ ಸೇರಿದ ಜಾಗ/ನಿವೇಶನದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಉದ್ದೇಶಿಸಿರುವ ನಿವೇಶನದ ಹಸ್ತಾಂತರಗೊಳಿಸುವ ಕುರಿತು ಸರ್ಕಾರ ಕೈಗೆತ್ತಿಕೊಂಡಿರುವ ನಿರ್ಧಾರದ ವಿರುದ್ಧ ಕೆ.ಎಸ್.ಐ.ಸಿ ನೌಕರರು ರೊಚ್ಚಿಗೆದ್ದಿದ್ದಾರೆ.
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ?
ಚಿನ್ನ ಮತ್ತು ಬೆಳ್ಳಿ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ ಇಂದಿನ ಮಾರುಕಟ್ಟೆಯ ಸ್ಥಿತಿಗತಿಗಳು ಅಚ್ಚರಿ ಮೂಡಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಆರ್ಥಿಕ ಬದಲಾವಣೆಗಳು, ಹಣದುಬ್ಬರ ಹಾಗೂ ಡಾಲರ್ ಮೌಲ್ಯದಲ್ಲಿನ ಏರಿಳಿತಗಳು ನೇರವಾಗಿ ಭಾರತೀಯ ಚಿನಿವಾರ ಪೇಟೆಯ ಮೇಲೆ ಭಾರಿ ಪ್ರಭಾವ ಬೀರುತ್ತಿವೆ. ಮುಖ್ಯವಾಗಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ದಾಖಲೆಯ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಗ್ರಾಹಕರು ಆಭರಣ ಖರೀದಿಸುವ ಮುನ್ನ
ತೀವ್ರಗೊಂಡ ಗಲ್ಫ್ ಉದ್ವಿಗ್ನತೆ: ಯುಎಇ, ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ವಿಮಾನಗಳ ಮಾರ್ಗ ಬದಲಾವಣೆ
ಅಬುಧಾಬಿ/ದುಬೈ/ರಿಯಾದ್: ಗಲ್ಫ್ ಪ್ರದೇಶದಲ್ಲಿ ಉಲ್ಬಣಗೊಂಡಿರುವ ಭದ್ರತಾ ಪರಿಸ್ಥಿತಿಯ ನಡುವೆ ಯುಎಇ ಹಾಗೂ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ಹಲವು ಅಂತರಾಷ್ಟ್ರೀಯ ವಿಮಾನಗಳ ಮಾರ್ಗಗಳನ್ನು ತುರ್ತಾಗಿ ಬದಲಿಸಲಾಗಿದೆ ಎಂದು ವಿಮಾನ ಸಂಚಾರ ಮಾನಿಟರಿಂಗ್ ಮೂಲಗಳು ತಿಳಿಸಿವೆ ಎಂದು Aljazeera ವರದಿ ಮಾಡಿದೆ. ಅಬುಧಾಬಿಗೆ ಹೊರಟಿದ್ದ ಎತಿಹಾದ್ ಏರ್ವೇಸ್ ಸಂಸ್ಥೆಯ ಎರಡು ವಿಮಾನಗಳನ್ನು ಒಮಾನ್ ನ ರಾಜಧಾನಿ ಮಸ್ಕತ್ ಗೆ ತಿರುಗಿಸಲಾಗಿದೆ ಎಂದು ಫ್ಲೈಟ್ ರಾಡಾರ್ ಮಾಹಿತಿ ನೀಡಿದೆ. ದುಬೈಗೆ ತೆರಳುತ್ತಿದ್ದ ಎಮಿರೇಟ್ಸ್ ಸಂಸ್ಥೆಯ ವಿಮಾನವೊಂದು ಭಾರತದ ಮುಂಬೈಗೆ ವಾಪಸ್ಸಾಗುತ್ತಿರುವುದು ಕಾಣಿಸಿಕೊಂಡಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಹಲವಾರು ವಿಮಾನಗಳು ತಟಸ್ಥ ವಲಯಗಳಲ್ಲಿ ಲ್ಯಾಂಡ್ ಆಗಿರುವುದು ಅಥವಾ ತಮ್ಮ ಮೂಲ ವಿಮಾನ ನಿಲ್ದಾಣಗಳತ್ತ ಮರಳುತ್ತಿರುವುದು ಕಂಡುಬಂದಿದೆ. ರಿಯಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದಿದೆ ಎಂಬ ವರದಿಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾನಿಟರ್ ಸಂಸ್ಥೆಗಳು ಹೇಳಿವೆ.
Saudi Arabia | ತನ್ನ ನಾಗರಿಕರಿಗೆ ಆಶ್ರಯ ತಾಣದಲ್ಲಿಯೇ ಉಳಿಯುವಂತೆ ಅಮೆರಿಕ ರಾಯಭಾರ ಕಚೇರಿಯಿಂದ ಸೂಚನೆ
ರಿಯಾದ್: ಸೌದಿ ಅರೇಬಿಯಾದ ವಿವಿಧ ನಗರಗಳಲ್ಲಿ ವಾಸಿಸುತ್ತಿರುವ ಅಮೆರಿಕ ನಾಗರಿಕರು ತಕ್ಷಣವೇ ಆಶ್ರಯ ತಾಣಗಳಲ್ಲಿ ಆಶ್ರಯ ಪಡೆಯುವಂತೆ ಹಾಗೂ ರಿಯಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮುಂದಿನ ಸೂಚನೆ ಬರುವವರೆಗೆ ಭೇಟಿ ನೀಡದಂತೆ ಅಮೆರಿಕದ ಅಧಿಕಾರಿಗಳು ಕೋರಿದ್ದಾರೆ ಎಂದು Aljazeera ವರದಿ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಅಧಿಸೂಚನೆಯಲ್ಲಿ, ಸೌದಿ ಅರೇಬಿಯಾದಲ್ಲಿರುವ ಅಮೆರಿಕ ಮಿಷನ್ಗಳು ಜಿದ್ದಾ, ರಿಯಾದ್ ಮತ್ತು ಧಹ್ರಾನ್ ನಗರಗಳಿಗೆ ಸಂಬಂಧಿಸಿದಂತೆ ಆಶ್ರಯ ತಾಣದಲ್ಲಿ ಉಳಿಯುವ ಸೂಚನೆಯನ್ನು ಹೊರಡಿಸಿರುವುದಾಗಿ ತಿಳಿಸಲಾಗಿದೆ. ಈ ಪ್ರದೇಶದಲ್ಲಿನ ಮಿಲಿಟರಿ ನೆಲೆಗಳಿಗೆ ಅನಗತ್ಯ ಪ್ರಯಾಣವನ್ನು ಸೀಮಿತಗೊಳಿಸಲಾಗಿದ್ದು, ಭದ್ರತಾ ಕಾರಣಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಈ ನಡುವೆ ನಡೆದ ದಾಳಿಯಿಂದ, ಅಲ್ಪ ಪ್ರಮಾಣದ ಬೆಂಕಿ ಹೊತ್ತಿ ಹಾನಿ ಮಾತ್ರ ಉಂಟಾಗಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಸಮೀಕ್ಷಿಸಲಾಗುತ್ತಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇರಾನ್ ಪ್ರತಿದಾಳಿ ಹೆಚ್ಚುತ್ತಿದ್ದಂತೆ ರೆಕಾರ್ಡೆಡ್ ಭಾಷಣ ಬಿಟ್ಟು Live ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್!
ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಅಭಿಯಾನದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ದೇಶದ ಸಾರ್ವಜನಿಕರನ್ನು ಉದ್ದೇಶಿಸಿ ನೇರವಾಗಿ ಮಾತನಾಡಿದರು. ಇದುವರೆಗೆ ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ರೆಕಾರ್ಡೆಡ್ ವೀಡಿಯೊಗಳ ಮೂಲಕವೇ ಪ್ರತಿಕ್ರಿಯೆ ನೀಡಿದ್ದರು. ಶ್ವೇತಭವನದಲ್ಲಿ ನಡೆದ ಪದಕ ಪ್ರದಾನ ಸಮಾರಂಭದ ವೇಳೆ ಮಾತನಾಡಿದ ಟ್ರಂಪ್, ಇರಾನ್ ಮೇಲೆ ದಾಳಿ ನಡೆಸುವ ತಮ್ಮ ನಿರ್ಧಾರ ಮತ್ತು ಅದರ ಹಿಂದೆ ಇರುವ ಉದ್ದೇಶಗಳನ್ನು ವಿವರಿಸಿದರು. ಈ ಕಾರ್ಯಾಚರಣೆಗೆ ನಾಲ್ಕು ಪ್ರಮುಖ ಗುರಿಗಳನ್ನು ಅವರು ಪ್ರಕಟಿಸಿದರು. ಇರಾನ್ನ ಕ್ಷಿಪಣಿ ಸಾಮರ್ಥ್ಯ ಹಾಗೂ ಹೊಸ ಕ್ಷಿಪಣಿಗಳನ್ನು ಉತ್ಪಾದಿಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುವುದು ಮೊದಲ ಗುರಿ ಎಂದು ಅವರು ಹೇಳಿದರು. ಎರಡನೆಯದಾಗಿ, ಇರಾನಿನ ನೌಕಾಪಡೆಯನ್ನು “ನಿರ್ಮೂಲನೆ” ಮಾಡುವುದು. ಮೂರನೆಯದಾಗಿ, ಟೆಹ್ರಾನ್ ಯಾವ ಸಂದರ್ಭದಲ್ಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯದಂತೆ ಖಚಿತಪಡಿಸಿಕೊಳ್ಳುವುದು. ಅಂತಿಮವಾಗಿ, ತನ್ನ ಗಡಿಯ ಹೊರಗೆ ಸಶಸ್ತ್ರ ಗುಂಪುಗಳನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಇರಾನ್ ಕಳೆದುಕೊಳ್ಳುವಂತೆ ಮಾಡುವುದು ಈ ಅಭಿಯಾನದ ಉದ್ದೇಶವೆಂದು ಟ್ರಂಪ್ ಸ್ಪಷ್ಟಪಡಿಸಿದರು.
ಸುರಕ್ಷಿತ ಕುಡಿಯುವ ನೀರು ಪೂರೈಕೆಯಾಗಲಿ
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಗತಿಸಿದವು. ಅಭಿವೃದ್ಧಿಯ ದಿಕ್ಕಿನಲ್ಲಿ ದಾಪುಗಾಲಿಡುತ್ತ ಸಾಗಿದ್ದೇವೆ ಎಂದು ಸರಕಾರಗಳು ಹೇಳುತ್ತಲೇ ಬಂದಿವೆ. ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಾಲದಲ್ಲಿ ಅಂದರೆ ಅವರ ಸಾರಥ್ಯದಲ್ಲಿ ಭಾರತ ಸಾಗಿದ ಹದಿನೆಂಟು ವರ್ಷಗಳಲ್ಲಿ ಸಾರ್ವಜನಿಕ ಉದ್ದಿಮೆಗಳು, ಅಣೆಕಟ್ಟುಗಳು, ಶಾಲೆ-ಕಾಲೇಜುಗಳು ಸಾಕಷ್ಟು ಸಂಖ್ಯೆಯಲ್ಲಿ ಸ್ಥಾಪನೆಯಾದವು. ಆನಂತರದ ಅಂದರೆ ಇಂದಿರಾಗಾಂಧಿ ಅವರ ಕಾಲಾವಧಿಯನ್ನು ಬಿಟ್ಟರೆ ಹೊಸ ಯೋಜನೆಗಳೇನೂ ರೂಪುಗೊಳ್ಳಲಿಲ್ಲ.ಜಾಗತೀಕರಣದ ಶಕೆ ಆರಂಭವಾದ ನಂತರವಂತೂ ಅಭಿವೃದ್ಧಿ ಅಂದರೆ ಉಳ್ಳವರ ಸಂಪತ್ತಿನ ಅಭಿವೃದ್ಧಿ ಎಂದಾಗಿದೆ. ಅಂದರೆ ಮಾನವಾಭಿವೃದ್ಧಿ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಜನರಿಗೆ ಮೂಲಭೂತ ಕನಿಷ್ಠ ಸೌಕರ್ಯಗಳನ್ನು ಒದಗಿಸುವುದೂ ನಮ್ಮ ಸರಕಾರಗಳಿಂದ ಸಾಧ್ಯವಾಗಿಲ್ಲ. ಇದಕ್ಕೆ ಸದ್ಯದ ಒಂದು ಉದಾಹರಣೆಯೆಂದರೆ ಕುಡಿಯುವ ನೀರಿನ ಸಮಸ್ಯೆ. ಇಷ್ಟೆಲ್ಲ ಅಭಿವೃದ್ಧಿ ಸಾಧಿಸಿದರೂ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡಲು ಆಗಿಲ್ಲ. ದೇಶದ ಅನೇಕ ಕಡೆಗಳಂತೆ ರಾಜ್ಯದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದರಿಂದ ನೂರೆಂಟು ಕಾಯಿಲೆಗಳು ಜನಸಾಮಾನ್ಯರನ್ನು ಬಾಧಿಸುತ್ತಿರುವ ವರದಿಗಳು ಬರುತ್ತಲೇ ಇವೆ. ರಾಜ್ಯದಲ್ಲಿ ಈ ವರ್ಷ ಮಾರ್ಚ್ ಮೊದಲ ವಾರದಲ್ಲೇ ಬೇಸಿಗೆಯ ಝಳ ತೀವ್ರವಾಗಿದೆ. ಮುಂದಿನ ಮೂರು ತಿಂಗಳ ಕಾಲ ಬಿಸಿಲಿನ ಪ್ರಖರತೆ ಇನ್ನೂ ಹೆಚ್ಚಾಗಲಿದೆ ಎಂದು ಅಧಿಕೃತ ವರದಿಗಳು ಎಚ್ಚರಿಕೆ ನೀಡಿವೆ. ಕೆಲವು ಕಡೆ ಐದಾರು ಸಲ ಬಿಸಿ ಗಾಳಿ ಬೀಸುವ ಸಂಭವವೂ ಇದೆ ಎಂದು ಹೇಳಲಾಗುತ್ತಿದೆ.ಇಂಥ ಸಂದರ್ಭದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರಕಾರದ ಮೊದಲ ಆದ್ಯತೆಯಾಗಬೇಕಾಗಿದೆ. ರಾಜ್ಯ ಸರಕಾರ ಜನರಿಗೆ ಗುಣಮಟ್ಟದ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಂಡಿಲ್ಲವೆಂದಲ್ಲ. ಆದರೂ ಅನೇಕ ಹಳ್ಳಿಗಳ ಪರಿಸ್ಥಿತಿ ದಾರುಣವಾಗಿದೆ. ಜನರಿಗೆ ಕುಡಿಯಲೆಂದು ಪೂರೈಕೆಯಾಗುತ್ತಿರುವ ನೀರಿನಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶಗಳಿರುವುದು ಪ್ರಯೋಗಾಲಯದಲ್ಲಿ ನಡೆಸಿದ ನೀರಿನ ಮಾದರಿ ಪರೀಕ್ಷೆಯಲ್ಲಿ ಖಚಿತವಾಗಿ ಗೊತ್ತಾಗಿದೆ. ಕಳೆದ 2023ರಿಂದ 2026ರ ಫೆಬ್ರವರಿವರೆಗಿನ, ಅಂದರೆ ಮೂರು ವರ್ಷಗಳ ಕಾಲಾವಧಿಯಲ್ಲಿ 9,34,645 ನೀರಿನ ಮಾದರಿಯನ್ನು ಪರೀಕ್ಷಿಸಲಾಗಿದೆ.ಇದರಲ್ಲಿ 53,089 ನೀರಿನ ಮಾದರಿಯಲ್ಲಿ ರಾಸಾಯನಿಕ ಹಾಗೂ 7,696 ನೀರಿನ ಮಾದರಿಯ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾ ಕಂಡು ಬಂದಿರುವ ಸಂಗತಿ ಬಹಿರಂಗವಾಗಿದೆ. ಕೆಲವು ಜಿಲ್ಲೆಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್, ಆರ್ಸೆನಿಕ್ ಮತ್ತು ಐರನ್ ಅಂಶ ಹೆಚ್ಚಿರುವುದು ಸಾಬೀತಾಗಿದೆ. ರಾಯಚೂರು, ಬೀದರ್, ಯಾದಗಿರಿ, ಚಿತ್ರದುರ್ಗ, ಬಿಜಾಪುರ, ದಾವಣಗೆರೆ, ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಲುಷಿತ ಕುಡಿಯುವ ನೀರಿನ ಪೂರೈಕೆಯಿಂದ ಜನಸಾಮಾನ್ಯರು ಅಸ್ವಸ್ಥರಾದ ಪ್ರಕರಣಗಳು ಹೆಚ್ಚಾಗಿರುವುದು ವರದಿಯಾಗಿದೆ. ಕುಡಿಯುವ ನೀರಿನಲ್ಲಿ ಕೊಳಚೆ ನೀರು ಮಿಶ್ರಣ, ಪೈಪ್ಲೈನ್ ಸೋರಿಕೆ, ನೈರ್ಮಲ್ಯ ಅವ್ಯವಸ್ಥೆಯಿಂದಾಗಿ ಜನರು ಅಸ್ವಸ್ಥರಾಗುವ ಘಟನೆಗಳು ಮರುಕಳಿಸುತ್ತಿವೆ. ಬೇಸಿಗೆಯ ಬಿಸಿಲು ತೀವ್ರವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಿಸಲಿದೆ. ಇದನ್ನು ಎದುರಿಸಲು ಸರಕಾರ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಹಳೆಯದಾದ ಕುಡಿಯುವ ನೀರಿನ ಪೈಪುಗಳನ್ನು ತಕ್ಷಣ ಬದಲಾಯಿಸಿ ಆಧುನಿಕ ಹೊಸ ಪೈಪುಗಳನ್ನು ಹಾಕಬೇಕಾಗಿದೆ. ನಗರ ಪ್ರದೇಶಗಳಲ್ಲಿ ಚರಂಡಿ ನೀರಿನ ಮತ್ತು ಕುಡಿಯುವ ನೀರಿನ ಪೈಪುಗಳು ಬೆರೆಯದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಸರಕಾರವೇನೋ ಹಲವಾರು ಕ್ರಮಗಳನ್ನು ಘೋಷಿಸುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ತೊಂದರೆ ಪಡಬೇಕಾಗಿ ಬಂದಿದೆ. ಕರ್ನಾಟಕದಲ್ಲಿ ದೊಡ್ಡ ನಗರಗಳು ಮಾತ್ರವಲ್ಲ ನೂರಾರು ಹಳ್ಳಿಗಳಿವೆ. ಆ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಈ ವರೆಗೆ ಸಾಧ್ಯವಾಗಿಲ್ಲ. ತುಂಬಾ ದಿನಗಳಿಂದ ಸಂಗ್ರಹಗೊಂಡ ನೀರನ್ನು ಹಾಗೂ ಕಲುಷಿತಗೊಂಡ ಜಲಮೂಲಗಳಿಂದ ಪಡೆದ ನೀರನ್ನು ಕುಡಿಯುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಪದೇ ಪದೇ ಅಸ್ವಸ್ಥರಾಗುತ್ತಿದ್ದಾರೆ. ಅತಿಸಾರ, ವಾಂತಿಭೇದಿ, ಜ್ವರ, ಕಾಲರಾ, ಅಲರ್ಜಿಯಂಥ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.ಕಲುಷಿತ ನೀರು ಪ್ರಾಣಕ್ಕೆ ಗಂಡಾಂತರಕಾರಿಯಾಗಿದೆ. ಕಲುಷಿತ ನೀರು ಮತ್ತು ಕಲುಷಿತ ಆಹಾರದಿಂದಾಗಿ 2024ರಲ್ಲಿ ಅತಿಸಾರದ 66 ಸಾವಿರ ಪ್ರಕರಣಗಳು ವರದಿಯಾಗಿವೆ. ಇದು ನಿಜವಾಗಿ ಗಂಭೀರ ಸಮಸ್ಯೆಯಾಗಿದೆ. ನವ ಉದಾರೀಕರಣದ ಆರ್ಥಿಕ ನೀತಿಯ ಈ ದಿನಗಳಲ್ಲಿ ನೀರು ಸೇರಿದಂತೆ ನಾವು ಸೇವಿಸುವ ಆಹಾರ, ತಿಂಡಿ ಪದಾರ್ಥಗಳು ಅತ್ಯಂತ ವಿಷಕಾರಿ ರಾಸಾಯನಿಕಗಳ ಮಿಶ್ರಣದಿಂದ ಕೂಡಿವೆ. ಹೋಟೆಲ್ ಮಾತ್ರವಲ್ಲ ಮನೆಯಲ್ಲಿ ಊಟಕ್ಕೆ ಬಳಸುವ ಆಹಾರ ಪದಾರ್ಥಗಳು ಸುರಕ್ಷಿತವಾಗಿಲ್ಲ ಎಂಬುದು ಆತಂಕಕಾರಿ ಅಂಶವಾಗಿದೆ. ಹೋಟೆಲ್, ಬೇಕರಿಗಳಲ್ಲಿ ಸಿಗುವ ತಿಂಡಿ-ತಿನಿಸುಗಳ ರುಚಿಯನ್ನು ಹೆಚ್ಚಿಸಲು ನಿಷೇಧಿತ ರಾಸಾಯನಿಕಗಳನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಬಣ್ಣಗಳನ್ನು ಬೆರೆಸುವುದು ಸಾಮಾನ್ಯವಾಗಿದೆ. ಹಾಲು, ಮಾಂಸ ಮತ್ತು ಮತ್ತಿತರ ಪದಾರ್ಥಗಳಲ್ಲಿ ಆಂಟಿ ಬಯೊಟಿಕ್ಸ್ ಬಳಕೆ ಮಾಡಲಾಗುತ್ತಿದೆ. ಕಲಬೆರಕೆ ಮಸಾಲೆ ಪದಾರ್ಥಗಳಿಂದಾಗಿ ಅಕ್ಕಿ, ಬೇಳೆಗಳು ಸುರಕ್ಷಿತವಾಗಿ ಉಳಿದಿಲ್ಲ. ಆಹಾರ ಪದಾರ್ಥಗಳು ಮಾತ್ರವಲ್ಲ, ಬಾಟಲಿಗಳಲ್ಲಿ ಮಾರಾಟವಾಗುತ್ತಿರುವ ಕುಡಿಯುವ ನೀರು ಕೂಡ ದುರ್ಮಿಶ್ರಣವಾಗುವ ಅಪಾಯದಿಂದ ಸುರಕ್ಷಿತವಾಗಿಲ್ಲ. ಸೋವಿಯತ್ ಸಮಾಜವಾದಿ ವ್ಯವಸ್ಥೆಯ ಕುಸಿತದ ನಂತರ ಜಗತ್ತಿನಲ್ಲಿ ಈಗಿರುವುದು ಮಾರುಕಟ್ಟೆ ಆಧರಿತ ಲಾಭಕೋರ ವ್ಯವಸ್ಥೆ. ಇದಕ್ಕೆ ಜನರ ಆರೋಗ್ಯ ಮುಖ್ಯವಲ್ಲ. ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕು ಬಿಕರಿಯಾಗುವುದು ಮುಖ್ಯ. ಇಂಥ ಸನ್ನಿವೇಶದಲ್ಲಿ ಸರಕಾರಗಳನ್ನು ಎಚ್ಚರಿಸಲು ಜನ ಜಾಗೃತಿ ಮುಖ್ಯವಾಗಿದೆ.
ಬೆಂಗಳೂರು ಗ್ರಾಮಾಂತರ : ಎದುರಾಗಲಿದೆಯಾ ನೀರಿನ ಬವಣೆ? ಜನರಲ್ಲಿ ಶುರುವಾಗಿದೆ ಆತಂಕ
ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಬಯಲು ಸೀಮೆ ಜಿಲ್ಲೆಯಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಯಾವುದೇ ನದಿ ಮೂಲಗಳಿಲ್ಲ. ನಾನಾ ತಾಲೂಕುಗಳಲ್ಲಿಈಗಾಗಲೇ ಕೆಲ ಕೆರೆಗಳು ಹಲವೆಡೆ ಕಲುಷಿತಗೊಂಡಿವೆ. ಅಂತರ್ಜಲದ ಮಟ್ಟ ಗಣನೀಯ ಕುಸಿಯುತ್ತಿದೆ. ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬೇಸಿಗೆಯಲ್ಲಿನಿರ್ವಹಣೆಗೆ ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಅಗತ್ಯ ಕ್ರಮವಹಿಸುವ ಅನಿವಾರ್ಯತೆ ಇದೆ.
ಕುವೈತ್ ನಲ್ಲಿರುವ ಅಮೆರಿಕದ ಅರಿಫ್ಜನ್ ನೆಲೆಯ ಮೇಲೆ ಇರಾನ್ ನಿಂದ ಡ್ರೋನ್ ದಾಳಿ
ಕುವೈತ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲೇ ಕುವೈತ್ ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ದಾಳಿ ಆರಂಭಿಸಿದೆ ಎಂದು Aljazeera ವರದಿ ಮಾಡಿದೆ. ಕುವೈತ್ನಲ್ಲಿ ಅಮೆರಿಕದ ಮಿಲಿಟರಿ ನೆಲೆ ಅರಿಫ್ಜನ್ (Camp Arifjan) ಗುರಿಯಾಗಿಸಿಕೊಂಡು 10 ಡ್ರೋನ್ಗಳನ್ನು ಬಳಸಿ ಹೊಸ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಘೋಷಿಸಿದೆ. ದಾಳಿಗೆ ಬಳಸಲಾದ ಡ್ರೋನ್ಗಳು ತಮ್ಮ ನಿಗದಿತ ಗುರಿಗಳನ್ನು ಯಶಸ್ವಿಯಾಗಿ ಹೊಡೆದಿವೆ ಎಂದು IRGC ಹೇಳಿಕೊಂಡಿದೆ. ಆದರೆ ದಾಳಿಯಿಂದ ಉಂಟಾದ ಹಾನಿಯ ಪ್ರಮಾಣದ ಕುರಿತು ತಕ್ಷಣದ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬೆಳವಣಿಗೆ ಕುರಿತು ಕುವೈತ್ ಸರ್ಕಾರದಿಂದಲೂ, ಅಮೆರಿಕದ ರಕ್ಷಣಾ ಇಲಾಖೆ ಅಥವಾ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಮಿಲಿಟರಿ ಅಧಿಕಾರಿಗಳಿಂದಲೂ ತಕ್ಷಣದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
Saudi Arabia | ರಿಯಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್ ದಾಳಿ
ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೇಲೆ ಎರಡು ಡ್ರೋನ್ಗಳು ದಾಳಿ ನಡೆಸಿದ ಪರಿಣಾಮ ಸ್ಫೋಟ ಸಂಭವಿಸಿ ಸೀಮಿತ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸ್ಫೋಟದ ಬಳಿಕ ರಾಯಭಾರ ಕಚೇರಿ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭದ್ರತಾ ಸಿಬ್ಬಂದಿ ತಕ್ಷಣ ನಂದಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿದ ಸೌದಿ ರಕ್ಷಣಾ ಸಚಿವಾಲಯ, ರಿಯಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಎರಡು ಡ್ರೋನ್ ಗಳು ಡಿಕ್ಕಿ ಹೊಡೆದಿರುವುದನ್ನು ದೃಢಪಡಿಸಿದೆ. “ಪ್ರಾಥಮಿಕ ಅಂದಾಜಿನ ಪ್ರಕಾರ ರಿಯಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಎರಡು ಡ್ರೋನ್ಗಳು ದಾಳಿ ನಡೆಸಿದ್ದು, ಇದರ ಪರಿಣಾಮವಾಗಿ ಸೀಮಿತ ಬೆಂಕಿ ಕಾಣಿಸಿಕೊಂಡು ಕಟ್ಟಡಕ್ಕೆ ಸಣ್ಣ ಪ್ರಮಾಣದ ವಸ್ತು ಹಾನಿಯಾಗಿದೆ” ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಇಂದು ಸಂಜೆ 4-30 ರ ವೇಳೆಗೆ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸುವುದರಿಂದ ಚಂದ್ರಗ್ರಹಣ ಉಂಟಾಗುತ್ತದೆ, ಆದರೆ ಈ ವೇಳೆ ಭಾರತದಲ್ಲಿ ಗ್ರಹಣದ ಚಂದ್ರ ಗೋಚರಿಸುವುದಿಲ್ಲ. ಕರ್ನಾಟಕದಲ್ಲಿ ಚಂದ್ರೋದಯ ಆದ ಕೊನೆಯ 9-10 ನಿಮಿಷ ಮಾತ್ರ ಗ್ರಹಣ ನೋಡಲು ಲಭ್ಯವಿದ್ದು ಈ ವೇಳೆ ಭೂಮಿಯ ನೆರಳು ಬಹುತೇಕ ಸರಿಯುವುದರಿಂದ ಗ್ರಹಣ ನೋಡಲು ಸಿಗೋದು ಕಷ್ಟ ಎನ್ನಲಾಗುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ | ಅವಧಿ ಮೀರಿದ ವೀಸಾಗಳಿಗೆ ಒಂದು ತಿಂಗಳ ವಿಶೇಷ ರಿಯಾಯಿತಿ ಘೋಷಿಸಿದ ಖತರ್
ವಾಯುಪ್ರದೇಶ ಮುಚ್ಚಿದ ನಡುವೆ ಖತರ್ ಮಹತ್ವದ ನಿರ್ಧಾರ
ಅತಿ ಹೆಚ್ಚು ತೆಂಗು ಬೆಳೆಯುವ ತುಮಕೂರಿಗೆ ತೆಂಗು ಪಾರ್ಕ್ ಭಾಗ್ಯ? ಕರ್ನಾಟಕ ಬಜೆಟ್ ಮೇಲೆ ನಿರೀಕ್ಷೆ
ತೆಂಗು ಉತ್ಪನ್ನಗಳ ಮೌಲ್ಯವರ್ದನೆಗೆ ತೆಂಗು ಪಾರ್ಕ್ ನಿರ್ಮಾಣದ ಒತ್ತಾಸೆ ಕೇಳಿಬಂದದೆ. ಇದರಿಂದ ಉದ್ಯೋಗ ಸೃಷ್ಟಿ, ರಫ್ತಿಗೆ ಉತ್ತೇಜನ ಸಿಗುವ ಮೂಲಕ ತೆಂಗು ಬೆಳೆಯ ವಿಸ್ತಾರ, ಬೆಳೆದ ರೈತರಿಗೂ ಬಲ ಸಿಗಲಿದೆ.
ಮುಂದುವರಿದ ಸಂಘರ್ಷ; ಇರಾನ್ ನಿಂದ UAE ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ಅಬುಧಾಬಿ: ಇರಾನ್ ನಿಂದ ಹಾರಿಸಲಾದ ಹೊಸ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯನ್ನು ಎದುರಿಸುತ್ತಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮಂಗಳವಾರ ಅಧಿಕೃತವಾಗಿ ತಿಳಿಸಿದೆ. ಕ್ಷಿಪಣಿಗಳನ್ನು ತಡೆಹಿಡಿಯಲು ದೇಶದ ವಾಯು ರಕ್ಷಣಾ ವ್ಯವಸ್ಥೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ ಎಂದು ALJAZEERA ವರದಿ ಮಾಡಿದೆ. “ಎಮಿರಾಟಿ ವಾಯು ರಕ್ಷಣಾ ಪಡೆಗಳು ಪ್ರಸ್ತುತ ಇರಾನ್ನಿಂದ ಬರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯನ್ನು ಎದುರಿಸುತ್ತಿವೆ,” ಎಂದು ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ. ದಾಳಿಯ ಸ್ವರೂಪ, ಗುರಿಯಾದ ಪ್ರದೇಶಗಳು ಅಥವಾ ಸಂಭವನೀಯ ಹಾನಿ ಕುರಿತು ತಕ್ಷಣದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ದೇಶದ ಭೌಗೋಳಿಕ ಅಖಂಡತೆ ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ಪ್ರಾಥಮಿಕ ಕರ್ತವ್ಯ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. “ನಾಗರಿಕರು ಮತ್ತು ನಿವಾಸಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ನಾವು ಸಂಪೂರ್ಣ ಸಿದ್ಧತೆಯಲ್ಲಿದ್ದೇವೆ. ಎಲ್ಲ ರೀತಿಯ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗುತ್ತದೆ,” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಸಾರ್ವಜನಿಕರು ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.
ಖತರ್ ರಾಜಧಾನಿ ದೋಹಾದಲ್ಲಿ ಭಾರೀ ಸರಣಿ ಸ್ಫೋಟ: ವರದಿ
ದೋಹಾ: ಖತರ್ ರಾಜಧಾನಿ ದೋಹಾದಲ್ಲಿ ಮಧ್ಯರಾತ್ರಿ ಬಳಿಕ ಸರಣಿ ಭಾರೀ ಸ್ಫೋಟಗಳು ಸಂಭವಿಸಿವೆ ಎಂದು Aljazeera ವರದಿ ಮಾಡಿದೆ. ಸ್ಥಳೀಯ ಸಮಯದಂತೆ (22:40 GMT) ಬೆಳಗಿನ ಜಾವ ಸುಮಾರು 1:40 ಗಂಟೆಯ ವೇಳೆಗೆ ನಗರದಲ್ಲಿ ಕನಿಷ್ಠ ಐದು ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಸ್ಫೋಟಗಳಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿ ಸಂಭವಿಸಿರುವ ವರದಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ತಕ್ಷಣ ಕಾರ್ಯಾಚರಣೆ ಕೈಗೊಂಡು ಪ್ರಮುಖ ಪ್ರದೇಶಗಳಲ್ಲಿ ನಿಗಾವಣೆ ಹೆಚ್ಚಿಸಿವೆ. ಇದಕ್ಕೂ ಮೊದಲು ಸೋಮವಾರ, ಇರಾನಿನ ಡ್ರೋನ್ ಗಳು ಖತರ್ ನ ಎರಡು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮೆಸಯೀದ್ ಕೈಗಾರಿಕಾ ನಗರದಲ್ಲಿರುವ ವಿದ್ಯುತ್ ಸ್ಥಾವರ ಮತ್ತು ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದಕ ಸಂಸ್ಥೆಯಾದ ಖತರ್ ಎನರ್ಜಿಗೆ ಸೇರಿದ ರಾಸ್ ಲಫಾನ್ ನ ಇಂಧನ ಸೌಲಭ್ಯಗಳು ದಾಳಿಗೆ ಒಳಗಾಗಿವೆ ಎಂದು ತಿಳಿದುಬಂದಿದೆ. ಯಾವುದೇ ಸಾವುನೋವುಗಳ ವರದಿ ಇಲ್ಲದಿದ್ದರೂ, ಭದ್ರತಾ ಕಾರಣಗಳಿಂದಾಗಿ ಖತರ್ ಎನರ್ಜಿಯು ದಾಳಿ ನಡೆದ ಪ್ರದೇಶಗಳಲ್ಲಿ LNG ಹಾಗೂ ಇತರ ಉತ್ಪನ್ನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕ–ಇಸ್ರೇಲ್ ದಾಳಿಗಳ ನಡುವೆಯೇ ಮಧ್ಯಪ್ರಾಚ್ಯದ ಒಂದು ಡಝನ್ ಗೂ ಹೆಚ್ಚು ರಾಷ್ಟ್ರಗಳಿಂದ ತಕ್ಷಣವೇ ನಿರ್ಗಮಿಸುವಂತೆ ಅಮೆರಿಕ ವಿದೇಶಾಂಗ ಇಲಾಖೆ ತನ್ನ ನಾಗರಿಕರಿಗೆ ತುರ್ತು ಸೂಚನೆ ನೀಡಿದೆ Aljazeera ವರದಿ ಮಾಡಿದೆ. ಬಹ್ರೇನ್, ಈಜಿಪ್ಟ್, ಇರಾನ್, ಇರಾಕ್, ಇಸ್ರೇಲ್, ಆಕ್ರಮಿತ ವೆಸ್ಟ್ ಬ್ಯಾಂಕ್ ಮತ್ತು ಗಾಝಾ, ಜೋರ್ಡಾನ್, ಕುವೈತ್, ಲೆಬನಾನ್, ಒಮಾನ್, ಖತರ್, ಸೌದಿ ಅರೇಬಿಯಾ, ಸಿರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಯೆಮೆನ್ ದೇಶಗಳಲ್ಲಿ ಭದ್ರತಾ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ವಾಣಿಜ್ಯ ವಿಮಾನಗಳು ಅಥವಾ ಇತರ ಸಾಮಾನ್ಯ ಸಾರಿಗೆ ವ್ಯವಸ್ಥೆಗಳ ಮೂಲಕ ತಕ್ಷಣವೇ ಹೊರಹೋಗುವಂತೆ ಸೂಚಿಸಲಾಗಿದೆ. ಅಮೆರಿಕ ವಿದೇಶಾಂಗ ಇಲಾಖೆಯ ಕಾನ್ಸುಲರ್ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಮೋರಾ ನಾಮ್ದಾರ್ ಪ್ರಕಟಣೆ ನೀಡಿ, “ಪ್ರದೇಶದಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಭದ್ರತಾ ಆತಂಕಗಳು ಹೆಚ್ಚುತ್ತಿರುವುದರಿಂದ ಅಮೆರಿಕ ನಾಗರಿಕರು ವಿಳಂಬ ಮಾಡದೆ ನಿರ್ಗಮಿಸಬೇಕು” ಎಂದು ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ದಾಳಿಗಳ ತೀವ್ರತೆ, ಇರಾನಿನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ನಂತರದ ಬೆಳವಣಿಗೆ ಮತ್ತು ಯಾವುದೇ ಸ್ಪಷ್ಟ ನಿರ್ಗಮನ ಯೋಜನೆಯ ಕೊರತೆ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಈ ಬೆಳವಣಿಗೆಗಳು ದೀರ್ಘಕಾಲದ ಸಂಘರ್ಷಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಟೆಹ್ರಾನ್ ನ ಸರ್ಕಾರಿ ಟಿವಿ ಕೇಂದ್ರದ ಮೇಲೆ ವಾಯುದಾಳಿ ಮಾಡಿದ್ದು ನಾವೇ: ದೃಢಪಡಿಸಿದ ಇಸ್ರೇಲ್ ಸೇನೆ
ಇರಾನ್ ನಲ್ಲಿ ಮೃತಪಟ್ಟವರ ಸಂಖ್ಯೆ 555ಕ್ಕೆ ಏರಿಕೆ: ರೆಡ್ ಕ್ರೆಸೆಂಟ್ ವರದಿ
ಇಸ್ರೇಲ್ ನಿಂದ ಟೆಹ್ರಾನ್ ಮೇಲೆ ಭಾರೀ ಪ್ರಮಾಣದಲ್ಲಿ ವಾಯುದಾಳಿ
ಲೆಬನಾನ್ ರಾಜಧಾನಿ ಬೈರುತ್ ಮೇಲೆ ದಾಳಿಗೆ ಸಿದ್ಧತೆ
ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಮೇಲೆ IRGC ದಾಳಿ
ಜಾಗತಿಕ ಇಂಧನ ಸಾಗಣೆಗೆ ಭಾರೀ ಆತಂಕ
UAE | ಅಬುಧಾಬಿಯಲ್ಲಿ ಇಂಧನ ಟ್ಯಾಂಕ್ ಟರ್ಮಿನಲ್ ಗೆ ಡ್ರೋನ್ ದಾಳಿ
ಮುಂದುವರಿದ 'ಮಧ್ಯಪ್ರಾಚ್ಯ' ಸಂಘರ್ಷ
ಅಮೆರಿಕಾ-ಇಸ್ರೇಲ್ನಿಂದ ಇರಾನ್ ಮೇಲಿನ ದಾಳಿ ಖಂಡನೀಯ : ಜಾಗೃತ ನಾಗರಿಕರು-ಕರ್ನಾಟಕ
ಬೆಂಗಳೂರು, ಮಾ.2: ಅಮೆರಿಕಾ ಮತ್ತು ಇಸ್ರೇಲ್ ಏಕಪಕ್ಷೀಯವಾಗಿ ಇರಾನ್ ಮೇಲೆ ನಡೆಸಿರುವ ಬಾಂಬ್ ಮತ್ತು ಕ್ಷಿಪಣಿ ದಾಳಿ ಖಂಡನೀಯ. ಇದು ಇರಾನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ಮೇಲೆ ನಡೆದ ದಾಳಿಯಾಗಿದೆ ಎಂದು ಜಾಗೃತ ನಾಗರಿಕರು-ಕರ್ನಾಟಕ ತಿಳಿಸಿದೆ. ಸೋಮವಾರ ಈ ಕುರಿತು ಜಾಗೃತ ನಾಗರಿಕರು-ಕರ್ನಾಟಕದ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮಲಾ ಕೆ.ಎಸ್. ಬಿ.ಶ್ರೀಪಾದ ಭಟ್, ಡಾ.ಬಂಜಗೆರೆ ಜಯಪ್ರಕಾಶ್, ಟಿ.ಸುರೇಂದ್ರ ರಾವ್, ಡಾ.ವಸುಂಧರಾ ಭೂಪತಿ, ಡಾ.ಎನ್. ಗಾಯತ್ರಿ, ಮಾವಳ್ಳಿ ಶಂಕರ್, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹುನಗವಾಡಿ, ಡಾ.ಮೀನಾಕ್ಷಿ ಬಾಳಿ, ಇಂದಿರಾ ಕೃಷ್ಣಪ್ಪ, ವಾಸುದೇವ ಉಚ್ಚಿಲ, ಎನ್.ಕೆ.ವಸಂತರಾಜ್, ಡಾ.ಬಿ.ಆರ್.ಮಂಜುನಾಥ್. ಡಾ.ಎಚ್.ಜಿ.ಜಯಲಕ್ಷ್ಮೀ ಅವರು ಜಂಟಿ ಪ್ರಕಟನೆ ನೀಡಿದ್ದಾರೆ. ಅಮೆರಿಕಾ ಮತ್ತು ಇಸ್ರೇಲ್ನ ಯುದ್ಧದಾಹಿತನ ಅನಗತ್ಯವಾಗಿ ಅಮಾಯಕರ ಸಾವಿಗೆ ಕಾರಣವಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರ ಪ್ರತಿಯೊಂದು ಹೇಳಿಕೆ ಅನಾಗರಿಕತೆ ಮತ್ತು ಸಾಮ್ರಾಜ್ಯಶಾಹಿ ಧೋರಣೆಯ ಪ್ರತೀಕವಾಗಿದೆ. ಅಮೆರಿಕಾ ಮತ್ತು ಇರಾನ್ ಮಧ್ಯೆ ಶಾಂತಿ ಮಾತುಕತೆ ನಡೆಯುತ್ತಿರುವಾಗ ನಡೆಸಿದ ಇವರಿಬ್ಬರ ಈ ಪುಂಡಾಟಿಕೆ ಜಾಗತಿಕವಾಗಿ ತೀವ್ರವಾದ ಸಂಘರ್ಷ ಸೃಷ್ಟಿಸುತ್ತಿದೆ ಎಂದು ತಿಳಿಸಿದ್ದಾರೆ. ನಾಗರಿಕರ ನೆಲೆಗಳನ್ನು ಗುರಿಯಾಗಿರಿಸಿ ಬಾಂಬ್ ದಾಳಿ ಮಾಡಿ 165 ಜನ ಮಕ್ಕಳನ್ನು ಕೊಂದ ಘಟನೆಯು ಇವರ ದಾಳಿಯ ಹಿಂದಿರುವ ಜನಾಂಗ ನಾಶದ ದುಷ್ಟ ಸಂಚನ್ನೂ ಬಯಲಿಗೆಳೆದಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಲವು ದಿನಗಳ ಹಿಂದಷ್ಟೇ ಇಸ್ರೇಲ್ಗೆ ಭೇಟಿ ನೀಡಿ ನೇತಾನ್ಯಾಹು ಅವರ ಜೊತೆ ಕೈ ಕುಲಕಿದ್ದರು. ಇದಾದ ಕೂಡಲೇ ಇರಾನ್ ಮೇಲಿನ ಈ ದಾಳಿ ನಡೆದಿದೆ. ಹಾಗಿದ್ದರೆ ನಮ್ಮ ಪ್ರಧಾನಿಯವರಿಗೆ ಈ ದಾಳಿಯ ಮುನ್ಸೂಚನೆ ಇರಲಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತದೆ ಎಂದು ಹೇಳಿದ್ದಾರೆ. ಭಾರತ ಸರಕಾರವು ಇರಾನ್ ಮೇಲಿನ ದಾಳಿಯನ್ನು ಖಂಡಿಸಬೇಕು. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಬೇಕು ಎಂದು ಸಾಹಿತಿಗಳು, ಚಿಂತಕರು, ಹೋರಾಟಗಾರರು ಮನವಿ ಮಾಡಿದ್ದಾರೆ.
ಅರೆಭಾಷೆ ಸಂಸ್ಕೃತಿ-ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಕಟ
ಮಡಿಕೇರಿ, ಮಾ.2: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯು 2025 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದೆ. ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಪುತ್ತೂರಿನ ಅನಂತರಾಜ ಗೌಡ, ಅರೆಭಾಷಿಕ ಸಂಘಟನಾ ಕ್ಷೇತ್ರದಲ್ಲಿ ಬೆಳ್ತಂಗಡಿಯ ಲೋಕೇಶ್ವರಿ ವಿನಯಚಂದ್ರ ಹಾಗೂ ಅರೆಭಾಷೆ ಸಾಹಿತ್ಯ ಕ್ಷೇತ್ರದಲ್ಲಿ ಮಡಿಕೇರಿಯ ಕಟ್ರತನ ಲಲಿತಾ ಅಯ್ಯಣ್ಣ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಮಾರ್ಚ್ 14ರಂದು ಮಂಗಳೂರಿನ ಉರ್ವಸ್ಟೋರ್ ಸಮೀಪದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅಂದು ನಡೆಯುವ ಸಮಾರಂಭದಲ್ಲಿ ಅಕಾಡಮಿ ಪ್ರಕಟಿತ ಪುಸ್ತಕಗಳ ಬಿಡುಗಡೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲಾವಿದರಿಗೆ ವಾದ್ಯ ಪರಿಕರಗಳ ವಿತರಣೆ ಹಾಗೂ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Kolar | ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ; ಅವಳಿ ಮಕ್ಕಳ ಮೃತ್ಯು
ಕೋಲಾರ, ಮಾ.2: ಕೌಟುಂಬಿಕ ಕಲಹದ ಹಿನ್ನೆಲೆ ಇಬ್ಬರು ಮಕ್ಕಳೊಂದಿಗೆ ತಾಯಿ ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಯತ್ನ ನಡೆಸಿದ್ದು, ಅದೃಷ್ಟವಶಾತ್ ತಾಯಿ ರಕ್ಷಣೆಯಾಗಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ವರದಿಯಾಗಿದೆ. ಇಬ್ಬರು ಮಕ್ಕಳು ಸಂಪಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟ ಗ್ರಾಮದಲ್ಲಿ ಜರುಗಿದೆ . ಸೋಮವಾರ ಬೆಳಗ್ಗೆ ಕೌಟುಂಬಿಕ ಕಲಹದಿಂದ ಬೇಸತ್ತ ಕೋಡಗುರ್ಕಿ ಗ್ರಾಮದ ಉಷಾ(28) ತನ್ನ ಮೂರು ವರ್ಷಗಳ ಅವಳಿ ಮಕ್ಕಳಾದ ಹರ್ಷಿತ್ ಮತ್ತು ಹಿತೇಶ್ ಬೂದಿಕೋಟಿಯ ಹೈದರಾಲಿ ಕೋಟೆಯ ಸಮಿಪದ ಸಂಪಿನಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಜನರು ನೋಡಿ ತಾಯಿಯನ್ನು ರಕ್ಷಣೆ ಮಾಡಿದ್ದು, ಮಕ್ಕಳಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಎಂಟು ವರ್ಷಗಳ ಹಿಂದೆ ಕಾರಹಳ್ಳಿಯ ಉಷಾ ಅವರನ್ನು ಮುರಳಿಗೆ ನೀಡಿ ಮದುವೆ ಮಾಡಲಾಗಿತ್ತು. ಮೊದಲು ಅನೋನ್ಯವಾಗಿದ್ದ ಇದ್ದಂತಹ ದಂಪತಿ ನಡುವೆ ಪ್ರತಿದಿನ ಸಣ್ಣಪುಟ್ಟ ವಿಷಯಗಳಿಗೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಬೂದಿಕೋಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇರಾನ್ ಪರ ಇರುವ ಮೂಲಭೂತವಾದಿಗಳ ಬಗ್ಗೆ ನಿಗಾ ವಹಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
Central Government Instructions- ಖಮೇನಿ ಹತ್ಯೆಯ ನಂತರ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೇಶದೊಳಗೆ ಸಂಭವನೀಯ ಹಿಂಸಾಚಾರ ತಡೆಯಲು ತೀವ್ರಗಾಮಿಗಳು ಮತ್ತು ಮೂಲಭೂತವಾದಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸುವಂತೆ ಕೇಂದ್ರ ಸರ್ಕಾರ ಇದೀಗ ಎಲ್ಲಾ ರಾಜ್ಯಗಳಿಗೆ ತುರ್ತು ಸೂಚನೆ ನೀಡಿದೆ. ಇಷ್ಟೇ ಅಲ್ಲದೆ ಜಾಗತಿಕ ಭಯೋತ್ಪಾದಕ ಸಂಘಟನೆಗಳು ಮತ್ತು ತೀವ್ರಗಾಮಿಗಳ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳ ಮೇಲೆ ಹದ್ದಿನ ಕಣ್ಣಿಡಲು ಗುಪ್ತಚರ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ.
Karnataka Budget: ಡಿಕೆ ಶಿವಕುಮಾರ್ ಮೇಲೆ ನಿಗಾ ಇಡಲು ಸಿದ್ದರಾಮಯ್ಯರಿಂದ ತಂಡ ರಚನೆ: ಆರ್.ಅಶೋಕ್
ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಪಿ ನೇತೃತ್ವದಲ್ಲಿ ಅನಧಿಕೃತವಾಗಿ ತಂಡ ರಚಿಸಿದ್ದಾರೆ. ಅನುದಾನ ಕಡಿತ ಮಾಡುವುದು, ಫೋನ್ ಟ್ಯಾಪ್ ಮಾಡುವುದು ಹೀಗೆ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. 2026ರ ಬಜೆಟ್ ಅಧಿವೇಶನಕ್ಕೆ ಸಂಬಂಧಿಸಿದಂತೆ ಅವರು ಸುದ್ದಿಗೋಷ್ಠ
ನೇಮಕಾತಿ ವಿಚಾರ | ವಿವಿಯನ್ನು ಘಟಕವಾಗಿ ಮಾಡಿದರೆ ಯಾರಿಗೂ ಅನ್ಯಾಯ ಆಗದು : ಸಚಿವ ಮಹದೇವಪ್ಪ
ಬೆಂಗಳೂರು, ಮಾ.2: ನೇಮಕಾತಿ ವಿಚಾರವಾಗಿ ವಿಶ್ವ ವಿದ್ಯಾನಿಲಯವನ್ನು ಘಟಕವಾಗಿ ಮಾಡಿದರೆ ಶೋಷಿತ ಸಮುದಾಯದ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ವಿಶ್ವ ವಿದ್ಯಾನಿಲಯ/ಶೈಕ್ಷಣಿಕ ಸಂಸ್ಥೆಗಳ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಷಯವಾರು ಮೀಸಲಾತಿ ಅಥವಾ ವಿಶ್ವವಿದ್ಯಾಲಯ/ ಶೈಕ್ಷಣಿಕ ಸಂಸ್ಥೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸಬೇಕೇ ಎಂಬುದರ ಕುರಿತು ಸರಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಮತ್ತು ರಾಜ್ಯದ ವಿವಿಧ ವಿಶ್ವ ವಿದ್ಯಾಲಯದ ಕುಲಪತಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ ಎಂದು ಹೇಳಿದರು. ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಶೋಷಿತ ಸಮುದಾಯದ ಯಾರಿಗೂ ಅನ್ಯಾಯವಾಗಬಾರದು ಎಂಬ ಮಹತ್ತರ ಉದ್ದೇಶದಿಂದ ರಾಜ್ಯದ ಎಲ್ಲ ವಿವಿಗಳ ಕುಲಪತಿಗಳೊಂದಿಗೆ ನಡೆಸಿರುವ ಈ ಸಭೆಯು ಐತಿಹಾಸಿಕ ಮಹತ್ವವನ್ನು ಒಳಗೊಂಡಿದ್ದು, ಇದೇ ಮೊದಲ ಬಾರಿಗೆ ಸರಕಾರ ಮಾಡಿದ ಇಂತಹ ಪ್ರಯತ್ನಕ್ಕೆ ವಿದ್ವಾಂಸರ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು. ಇನ್ನು ಉದ್ಯೋಗಾವಕಾಶ ನೀಡುವಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಎಲ್ಲ ಜಾತಿಗಳ ನ್ಯಾಯಬದ್ಧ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಸಲುವಾಗಿ ಯಾವೆಲ್ಲಾ ರೀತಿ ನೀತಿಗಳನ್ನು ಅನುಸರಿಸಬಹುದು ಎಂಬುದರ ಕುರಿತು ಸುದೀರ್ಘ ಅವಧಿಯವರೆಗೆ ಸಮಾಜ ಕಲ್ಯಾಣ ಸಚಿವರು ಚರ್ಚಿಸಿದರು ಎಂದು ಅವರು ತಿಳಿಸಿದರು. ವಿಭಾಗವಾರು ಮಾಡುವ ಮೀಸಲಾತಿಗೂ ಮತ್ತು ಘಟಕವಾರು ಮಾಡುವ ನೇಮಕಾತಿಗೆ ಇರುವಂತಹ ವ್ಯತ್ಯಾಸಗಳು ಮತ್ತು ಯಾವ ಕ್ರಮ ಅನುಸರಿಸಿದರೆ ಪರಿಶಿಷ್ಟ ವರ್ಗದ ಯುವಕ ಯುವತಿಯರಿಗೆ ನ್ಯಾಯಬದ್ಧ ಅನುಕೂಲ ಆಗುತ್ತದೆ ಎಂಬುದರ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು. ಒಳ ಮೀಸಲಾತಿಯನ್ನು ಒಳಗೊಂಡಂತೆ ಮಾಡಲಾಗುವ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ ಎಲ್ಲರಿಗೂ ನ್ಯಾಯಬದ್ಧ ಅವಕಾಶಗಳನ್ನು ನೀಡುವ ಉದ್ದೇಶದಿಂದ ಮಾಡಿದ ಸಭೆಯು ಹೆಚ್ಚು ಉಪಯುಕ್ತವಾಗಿದೆ ಎಂದು ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಸಿಪಿಎಂ ಹಿರಿಯ ಮುಖಂಡ ನಿತ್ಯಾನಂದ ಸ್ವಾಮಿ ನಿಧನ
ಬೆಂಗಳೂರು, ಮಾ. 2: ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ (ಸಿಪಿಎಂ) ಕರ್ನಾಟಕ ರಾಜ್ಯ ಸಮಿತಿಯ ಮಾಜಿ ಕಾರ್ಯದರ್ಶಿ ಮಂಡಳಿ ಸದಸ್ಯರೂ, ಕೃಷಿ ಕೂಲಿಕಾರ ಸಂಘದ ಮಾಜಿ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ(77) ಅವರು ಸೋಮವಾರ ನಿಧನರಾಗಿದ್ದಾರೆ. ಬೆಳಗ್ಗೆ ನಗರದ ತೆರೆಸಾ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದು, ನಿತ್ಯಾನಂದ ಸ್ವಾಮಿ ಅವರ ನಿಧನಕ್ಕೆ ಸಿಪಿಎಂ ರಾಜ್ಯ ಸಮಿತಿಯು ಸಂತಾಪ ವ್ಯಕ್ತಪಡಿಸಿದೆ. ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆ ವರೆಗೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಪಕ್ಷದ ರಾಜ್ಯ ಸಮಿತಿ ಕಚೇರಿಯಲ್ಲಿ ಅಂತಿಮ ಗೌರವಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ. ತಿಳಿಸಿದ್ದಾರೆ. ಭಾರತ ಕಮ್ಯೂನಿಸ್ಟ್ (ಮಾಕ್ರ್ಸ್ ವಾದಿ) ಪಕ್ಷದ ಪೂರ್ಣವಧಿ ಕಾರ್ಯಕರ್ತರಾದ ಅವರು ಅವಿಭಜಿತ ಧಾರವಾಡ ಜಿಲ್ಲಾ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಹಲವು ದಶಕಗಳ ಕಾಲ ಹುಬ್ಬಳ್ಳಿ, ಹರಿಹರ, ಹಾನಗಲ್, ದಾಂಡೇಲಿ ಕೇಂದ್ರವಾಗಿಸಿಕೊಂಡು ಕೆಲಸ ಮಾಡಿದ್ದರು. ಸಿಐಟಿಯು ರಾಜ್ಯ ಮುಖಂಡರಾಗಿ ರಾಜ್ಯದಲ್ಲಿ ನೇಕಾರರೂ ಸೇರಿದಂತೆ ಇತರೆ ಕಾರ್ಮಿಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿತ್ಯಾನಂದ ಸ್ವಾಮಿ ಅವರು ಕರ್ನಾಟಕ ರಾಜ್ಯ ನೇಕಾರರ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನೇಕಾರರ ಬದುಕನ್ನು ಉತ್ತಮಪಡಿಸಲು ಹಲವು ಹೋರಾಟಗಳನ್ನು ಮುನ್ನಡೆಸಿದ್ದರು. ಕೃಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾಗಿ ಗಂಗಾವತಿ ಸೇರಿ ರಾಜ್ಯದ ಹಲವಡೆ ಕೂಲಿಗಾಗಿ, ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ಹೋರಾಟದ ನೇತೃತ್ವ ವಹಿಸಿದ್ದರು. ಇದೇ ಅವಧಿಯಲ್ಲಿ ಗಂಗಾವತಿಯ ‘ಮರಕುಂಬಿ’ ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ನಿರಂತರಿತಾದ ಹೋರಾಟ ನಡೆಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಬೆಂಗಳೂರು, ಮಾ.2: ಕರ್ನಾಟಕದ ತಂತ್ರಜ್ಞಾನ ದೂರದೃಷ್ಟಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ. ವಿಶ್ವದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ 34 ವಿಜ್ಞಾನಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಅವರಿಗೆ ಪತ್ರ ಬರೆದಿದ್ದು, ರಾಜ್ಯದ ‘ಕ್ವಾಂಟಮ್ ಮೆಟೀರಿಯಲ್ ಇನ್ನೋವೇಶನ್ ನೆಟ್ವರ್ಕ್' ಯೋಜನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಐಸಿಟಿಎಸ್-ಟಿಐಎಫ್ಆರ್ನಲ್ಲಿ ನಡೆದ ‘ಫ್ರಾಂಟಿಯರ್ಸ್ ಇನ್ ಕ್ವಾಂಟಮ್ ಕಂಡೆನ್ಸ್ಡ್ ಮ್ಯಾಟರ್ ಫಿಸಿಕ್ಸ್' ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ಜಾಗತಿಕ ವಿಜ್ಞಾನಿಗಳ ಸಮುದಾಯವು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಕ್ವಾಂಟಮ್ ಸಿಟಿ' ಕಾರ್ಯಕ್ರಮದ ಪ್ರಮುಖ ಭಾಗವಾಗಿ ಕ್ಯೂ-ಮಿಂಟ್ ಸ್ಥಾಪಿಸುವ ದೂರದೃಷ್ಟಿಯ ಕ್ರಮವನ್ನು ಶ್ಲಾಘಿಸಿದೆ. ಕಂಪ್ಯೂಟಿಂಗ್, ಸಂವಹನ ಮತ್ತು ಸೆನ್ಸಿಂಗ್ ಕ್ಷೇತ್ರಗಳಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ಆವಿಷ್ಕಾ ರಕ್ಕೆ ನವೀನ ಕ್ವಾಂಟಮ್ ವಸ್ತುಗಳು ನಿರ್ಣಾಯಕ ಅಡಿಪಾಯವಾಗಿವೆ ಎಂದು ವಿಜ್ಞಾನಿಗಳು ತಮ್ಮ ಜಂಟಿ ಪತ್ರದಲ್ಲಿ ಹೇಳಿದ್ದಾರೆ. ವಿಶ್ವದ ಪ್ರಮುಖ ವಿಜ್ಞಾನಿಗಳ ಬೆಂಬಲವನ್ನು ಸಚಿವ ಭೋಸರಾಜು ಸ್ವಾಗತಿಸಿದ್ದಾರೆ. ‘ಕರ್ನಾಟಕ ರಾಜ್ಯವು ಮೊದಲಿನಿಂದಲೂ ನಾವೀನ್ಯತೆಗೆ ಹೆಸರುವಾಸಿಯಾಗಿದೆ. ವಿಶ್ವದ ಅಗ್ರಗಣ್ಯ 34 ಕ್ವಾಂಟಮ್ ವಿಜ್ಞಾನಿಗಳಿಂದ ಇಂತಹ ಬೆಂಬಲ ದೊರೆತಿರುವುದು ನಮ್ಮ ಗುರಿಯ ಉತ್ತಮ ದಾರಿಯಲ್ಲಿ ನಡೆಯುತ್ತಿರುವುದನ್ನು ತೋರಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ‘ಕ್ವಾಂಟಮ್ ಮೆಟೀರಿಯಲ್ ಇನ್ನೋವೇಶನ್ ನೆಟ್ವರ್ಕ್' ಅನ್ನು ಅನುಷ್ಠಾನಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಸುಧಾರಿತ ಸಂಶೋಧನೆ ಮತ್ತು ಉತ್ಪಾದನೆಗಾಗಿ ಉತ್ತಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ, 2035ರ ವೇಳೆಗೆ 20 ಬಿಲಿಯನ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯ ಗುರಿಯನ್ನು ತಲುಪಲು ನಾವು ಅಡಿಪಾಯ ಹಾಕುತ್ತಿದ್ದೇವೆ. ಜೊತೆಗೆ ಈ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಿ, ನಮ್ಮ ಯುವಜನತೆಗೆ ಉದ್ಯೋಗಗಳನ್ನು ಸೃಷ್ಟಿಸಲಿದ್ದೇವೆ ಎಂದು ತಿಳಿಸಿದರು. ಕ್ಯೂ-ಮಿಂಟ್ ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ವಿಜ್ಞಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಐಟಿ/ಬಿಟಿ ಇಲಾಖೆಗೆ, ವಿಶ್ವದರ್ಜೆಯ ತಜ್ಞರನ್ನು ಒಳಗೊಂಡ ಕೇಂದ್ರೀಕೃತ ‘ಕ್ವಾಂಟಮ್ ಮೆಟೀರಿಯಲ್ಸ್ ಫೌಂಡ್ರಿ'ಯನ್ನು ಸ್ಥಾಪಿಸುವುದು, ಸಮಗ್ರ ಕಂಪ್ಯೂಟೇಶನಲ್ ಮತ್ತು ಡೇಟಾ ಸೈನ್ಸ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಬಹುಸಂಸ್ಥೆಗಳ ಸಹಯೋಗವನ್ನು ಉತ್ತೇಜಿಸುವಂತಹ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ, ವಿಶ್ವಾಸ-ವರ್ಧಿಸುವ ಯೋಜನೆಗಳ ಮೂಲಕ ಹಂತ ಹಂತದ ಅನುಷ್ಠಾನದ ಅಗತ್ಯವನ್ನು ಅವರು ಎತ್ತಿ ತೋರಿಸಿದ್ದಾರೆ. ಈ ಪತ್ರಕ್ಕೆ ಸಹಿ ಹಾಕಿರುವ ಗಣ್ಯ ವಿಜ್ಞಾನಿಗಳು ಐಐಎಸ್ಸಿ, ಟಿಐಎಫ್ಆರ್, ಎಂಐಟಿ, ಆಕಾ ಫರ್ಡ್, ಪ್ರಿನ್ಸ್ ಟನ್ ಮತ್ತು ಕೊಲಂಬಿಯಾ ವಿಶ್ವ ವಿದ್ಯಾನಿಲಯಗಳಂತಹ ಪ್ರಮುಖ ಜಾಗತಿಕ ಸಂಸ್ಥೆಗಳನ್ನು ಪ್ರತಿನಿಧಿಸುತ್ತಾರೆ ಎಂದು ಭೋಸರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಗಡಾಯಿಸಿದ ಮಧ್ಯಪ್ರಾಚ್ಯ ಸಂಘರ್ಷ: ಸಿಡಿದೆದ್ದ ಇರಾನ್! ಯುದ್ಧಭೂಮಿಯಲ್ಲಿ ಸೋಮವಾರ ಇಡೀ ದಿನ ನಡೆದದ್ದೇನು?
ತನ್ನ ಪರಮೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಿಂದ ಸಿಟ್ಟಿಗೆದ್ದಿರುವ ಇರಾನ್ ಇದೀಗ ನೆರೆಯ ರಾಷ್ಟ್ರಗಳ ಮೇಲೆ ಅವ್ಯಾಹತವಾಗಿ ಕ್ಷಿಪಣಿ ದಾಳಿ ನಡೆಸಿದೆ. ಸೌದಿ ಅರೇಬಿಯಾ ಮತ್ತು ಕತಾರ್ನ ತೈಲ ಹಾಗೂ ಅನಿಲ ಸ್ಥಾವರಗಳ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಜೊತೆಗೆ ಒಮಾನ್ ಕರಾವಳಿ ತೀರ ಮೂಲಕ ಹಾದು ಹೋಗುತ್ತಿರುವ ತೈಲ ಹಡಗುಗಳನ್ನು ಟಾರ್ಗೆಟ್ ಮಾಡುತ್ತಿದೆ. ಇದರಿಂದ ಹರ್ಮುಜ್ ಜಲಸಂಧಿ ಬಂದ್ ಆಗಿದ್ದು ಜಾಗತಿಕ ತೈಲ ಬೆಲೆ ಏರಿಕೆಯಾಗಿದೆ. ಅಮೆರಿಕ ಇರಾನ್ ವಿರುದ್ಧ ಮತ್ತಷ್ಟು ಸೈನ್ಯವನ್ನು ಸಜ್ಜುಗೊಳಿಸುತ್ತಿದ್ದರೆ, ಅತ್ತ ಇರಾನ್ ಪರ ಹೆಜ್ಬೊಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ್ದಾರೆ. ಈ ಯುದ್ಧದ ಕಾರ್ಮೋಡದಿಂದಾಗಿ ಷೇರುಪೇಟೆ ಕುಸಿದಿದೆ.
ಕಲಬುರಗಿ | ಡಾ.ಬಾಬು ಜಗಜೀವನ್ ರಾಮ್ರವರ 119 ಜಯಂತಿ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
ಕಲಬುರಗಿ: ಹಸಿರು ಕ್ರಾಂತಿ ಹರಿಕಾರ, ಭಾರತ ಸರ್ಕಾರದ ಮಾಜಿ ಉಪ ಪ್ರಧಾನ ಮಂತ್ರಿಯಾದ ಡಾ.ಬಾಬು ಜಗಜೀವನ್ ರಾಮ್ ಅವರ 119 ನೆಯ ಜಯಂತಿ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ದೊಡ್ಡಮನಿ, ಕಾರ್ಯಾಧ್ಯಕ್ಷರಾಗಿ ಶರಣು ಸಾಗರಕರ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸತೀಶ್ ಅಳ್ಳೊಳ್ಳಿ, ಕಾರ್ಯಾಧ್ಯಕ್ಷರಾಗಿ ಪ್ರದೀಪ್ ಬಾಚ್ಚನಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯ ಮುಖಂಡರಾದ ಪರಮೇಶ್ವರ್ ಖಾನಾಪುರ್, ಶ್ಯಾಮ್ ನಾಟೇಕರ್,ರಾಜು ವಾಡೆಕರ್, ಬಾಬು ಸುಂಟಾಣ್, ಗೋಪಾಲರಾವ ಕಟ್ಟಿಮನಿ, ರಮೇಶ್ ವಾಡೆಕರ್, ಗೋಪಿಕೃಷ್ಣ ಗುಡೇನವರ್, ಲಿಂಗರಾಜ್ ತಾರಫೈಲ್, ದಶರಥ್ ಕಲಗುರ್ತಿ, ಮಾಣಿಕರಾವ್ ಕಟ್ಟಿಮನಿ, ನಾಗರಾಜ್ ಸೋಲಾಪುರ್ ಕರ್, ಮಲ್ಲಿಕಾರ್ಜುನ ಜಿನಕೇರಿ, ಶ್ರೀನಿವಾಸ್ ರಾಮನಾಳ್ಕರ್, ದತ್ತು ಬಾಸ್ಗಿ,ಮನೋಹರ್ ಬೀರನೂರ್, ಗೋಪಾಲ್ ನಾಟಿಕರ್, ಬಸವರಾಜ್ ಬಾಡಿಯಾಳ್, ಪ್ರಲ್ಲಾದ್ ಹಡಗಿಲ್ಕರ್, ಹಾಗೂ ವಿವಿಧ ಬಡಾವಣೆಯ ಹಿರಿಯ ಮುಖಂಡರು ಸಮಾಜ ಚಿಂತಕರು ಮತ್ತು ಇತರರು ಉಪಸ್ಥಿತರಿದ್ದರು.
ಮುಕುಂದ್ ರಿಯಾಲ್ಟಿಯ ಹೊಸ ಯೋಜನೆ ‘ರುದ್ರಾಕ್ಷ್’ ಕೊಟ್ಟಾರದ ಇನ್ಫೋಸಿಸ್ ಬಳಿ ನಿರ್ಮಾಣ
ಮಂಗಳೂರು: ನಗರದ ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿಯ ಮಹತ್ವಾಕಾಂಕ್ಷೆಯ ಪ್ರೀಮಿಯಂ ವಸತಿ ಯೋಜನೆ ‘ರುದ್ರಾಕ್ಷ್’ ಹೈ ಲಿವಿಂಗ್ ಲಕ್ಸುರಿ ಹೋಮ್ಸ್, ಕೊಟ್ಟಾರದ ಇನ್ಫೋಸಿಸ್ ಸಮೀಪ ನಿರ್ಮಾಣವಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನ ವಸತಿ ಮತ್ತು ಐಟಿ ಕಾರಿಡಾರ್ ಪ್ರದೇಶದಲ್ಲಿ ನೂತನ ಯೋಜನೆಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಈ ಮೂಲಕ ಆಧುನಿಕ ಶೈಲಿಯಲ್ಲಿ ನಗರ ಜೀವನದ ಹೊಸ ಅಧ್ಯಾಯ ಆರಂಭವಾಗುತ್ತಿದೆ. ವೃತ್ತಿಪರರು ಮತ್ತು ಕುಟುಂಬಗಳ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ರುದ್ರಾಕ್ಷ್, ಉತ್ತಮ ಸಂಪರ್ಕ ಮತ್ತು ಜೀವನ ಶೈಲಿಯ ಸೌಲಭ್ಯಗಳನ್ನು ಒಟ್ಟುಗೂಡಿಸಿದೆ. ನಾರಾಯಣ ಗುರು ವೃತ್ತ ಮತ್ತು ಲೇಡಿಹಿಲ್ ಪ್ರದೇಶದ ಸಮೀಪದಲ್ಲಿರುವ ಈ ಯೋಜನೆ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ವಾಣಿಜ್ಯ ಕೇಂದ್ರಗಳು ಮತ್ತು ಪ್ರಮುಖ ರಸ್ತೆಗಳಿಗೆ ಸುಲಭ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ವೆಲ್ನೆಸ್ ಆಧಾರಿತ ವಸತಿ ಸಮುದಾಯವಾಗಿ ರೂಪುಗೊಂಡಿರುವ ರುದಾಕ್ಷ್ಷ್, ಮನರಂಜನೆ, ವಿಶ್ರಾಂತಿ ಮತ್ತು ದೈನಂದಿನ ಸೌಲಭ್ಯಗಳನ್ನು ಒಂದೇ ಕಡೆ ಒದಗಿಸುತ್ತದೆ. ಮುಖ್ಯವಾಗಿ, ಮಂಗಳೂರಿನ ಮೊದಲ 24/7 ಕ್ಲೌಡ್ ಕಿಚನ್ ಅನ್ನು ವಸತಿ ಸಮುಚ್ಚಯದ ಒಳಗೆ ಪರಿಚಯಿಸಿರುವುದು ವಿಶೇಷತೆಯಾಗಿದೆ. ಈ ಯೋಜನೆಯಲ್ಲಿ ರೂಫ್ಟಾಪ್ ಇನ್ಫಿನಿಟಿ ಪೂಲ್ ವಿದ್ ಸಿಟಿ ಮತ್ತು ಸೀ ವ್ಯೂ, ವೆಲ್ನೆಸ್ ಕ್ಲಬ್ನಲ್ಲಿ ಜಕುಝಿ ಮತ್ತು ಸೌನಾ, ಜಿಮ್ನೇಶಿಯಂ, ಜಾಗಿಂಗ್ ಟ್ರ್ಯಾಕ್, ಒಳಾಂಗಣ ಆಟಗಳ ಪ್ರದೇಶ, ಬ್ಯಾಡ್ಮಿಂಟನ್ ಮತ್ತು ಬಾಸ್ಕೆಟ್ಬಾಲ್ ಕೋರ್ಟ್ಗಳು ಸೇರಿವೆ. ಮಿನಿ ಥಿಯೇಟರ್, ಮಕ್ಕಳ ಆಟದ ಮೈದಾನ ಮತ್ತು ಬಹು ಉದ್ದೇಶ ಸಭಾಂಗಣವು ಇಲ್ಲಿನ ನಿವಾಸಿಗಳಿಗೆ ಸ್ವಾವಲಂಬಿ ಜೀವನಶೈಲಿ ಗುರಿಯನ್ನಾಗಿಸಿದೆ. ಮಂಗಳೂರು ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವ ತಾಣವಾಗಿ ರೂಪುಗೊಳ್ಳುತ್ತಿರುವಾಗ, ರುದ್ರಾಕ್ಷ್ನಂತಹ ಯೋಜನೆಗಳು ಸ್ಥಳ ಮತ್ತು ಜೀವನ ಶೈಲಿಯ ಸೌಲಭ್ಯಗಳನ್ನು ಒಟ್ಟುಗೂಡಿಸಿದ ಮನೆಗಳತ್ತ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತವೆ. ಈ ಯೋಜನೆಯಲ್ಲಿ 2ಬಿಎಚ್ಕೆ ಅಪಾರ್ಟ್ಮೆಂಟ್ಗಳು 98 ಲಕ್ಷ ರೂ. ದಿಂದ ಪ್ರಾರಂಭವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ 7090933700ಗೆ ಸಂಪರ್ಕಿಸಿ ಅಥವಾ www.mukundmgmrealty.comಗೆ ಭೇಟಿ ನೀಡಲು ಪ್ರವರ್ತಕರು ತಿಳಿಸಿದ್ದಾರೆ. ರುದ್ರಾಕ್ಷ್ ಯೋಜನೆಯ ಮುಖ್ಯ ವೈಶಿಷ್ಟ್ಯಗಳು - ಪ್ರೀಮಿಯಂ 2ಬಿಎಚ್ಕೆ, 3ಬಿಎಚ್ಕೆ, 4 ಬಿಎಚ್ಕೆ ಡ್ಯುಪ್ಲೆಕ್ಸ್ ಮನೆಗಳು - ಇನ್ಫೋಸಿಸ್ ಸಮೀಪದ ಪ್ರಮುಖ ಸ್ಥಳ ಕೊಟ್ಟಾರ - ನಗರ ನೋಟಗಳೊಂದಿಗೆ ರೂಫ್ಟಾಪ್ ಇನ್ಫಿನಿಟಿ ಪೂಲ್ - ಜಕುಝಿ ಮತ್ತು ಸೌನಾ ಹೊಂದಿದ ವೆಲ್ನೆಸ್ ಕ್ಲಬ್ - ಜಿಮ್ನೇಶಿಯಂ, ಜಾಗಿಂಗ್ ಟ್ರಾಕ್ ಮತ್ತು ಕ್ರೀಡಾಂಗಣಗಳು - ಮಿನಿ ಥಿಯೇಟರ್ ಮತ್ತು ಬಹುಉದ್ದೇಶ ಸಭಾಂಗಣ - ಮಂಗಳೂರಿನ ಮೊದಲ 24/7 ಕ್ಲೌಡ್ ಕಿಚನ್ ಸೌಲಭ್ಯ
ಕನಕಗಿರಿ | ಪ.ಪಂ ಸಾಮಾನ್ಯ ಸಭೆಗೆ ಗೈರು ವಿಚಾರ; ಓರ್ವ ಸದಸ್ಯ, ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ : ಆರೋಪ
ಕನಕಗಿರಿ: ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಗೈರು ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಓರ್ವ ಸದಸ್ಯನ ಮೇಲೆ ನೂರಾರು ಜನರ ಗುಂಪೊಂದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಪ.ಪಂ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ ಬೆಂಬಲಿಗರ ಗುಂಪು ಮೆಡಿಕಲ್ ಸ್ಟೋರ್ನಲ್ಲಿ ಇದ್ದ ಪ.ಪಂ ಸದಸ್ಯ ಅನಿಲ ಬಿಜ್ಜಳ್ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದರೆ, ಅಕ್ಕಪಕ್ಕದವರು ತಕ್ಷಣ ಮಧ್ಯಪ್ರವೇಶಿಸಿ ಹಲ್ಲೆಕೋರರನ್ನು ತಡೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಪನ್ನು ಚದುರಿಸಲು ಪ್ರಯತ್ನಿಸಿದರೂ ಪರಿಸ್ಥಿತಿ ಹತೋಟಿಗೆ ಬರಲಿಲ್ಲ. ಬಳಿಕ ಡಿ.ಆರ್ ವಾಹನ ಮೂಲಕ ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ. ಪತ್ರಕರ್ತರ ಮೇಲೂ ಹಲ್ಲೆಗೆ ಯತ್ನ : ಘಟನಾ ಸ್ಥಳಕ್ಕೆ ತೆರಳಿದ ಕೆಲ ಪತ್ರಕರ್ತರು ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ಅವರ ಮೊಬೈಲ್ಗಳನ್ನು ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಓರ್ವ ಪತ್ರಕರ್ತನನ್ನು ಎಳೆದಾಡಿದಾಗ ಅಲ್ಲಿದ್ದ ಪೊಲೀಸರು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ರಕ್ಷಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನೂ ಕೆಲ ವರದಿಗಾರರನ್ನು ಪ.ಪಂ ಸಿಬ್ಬಂದಿಯೊಬ್ಬ ಮಧ್ಯಪ್ರವೇಶಿಸಿ ತಡೆಯುವ ಮೂಲಕ ಅಪಾಯದಿಂದ ತಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
Kerala | ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ವ್ಯಕ್ತಿಗೆ 50 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ತಿರುವನಂತಪುರಂ: ಅಪ್ರಾಪ್ತ ಬಾಲಕಿಯ ಮೇಲೆ ಪದೇಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 37 ವರ್ಷದ ತಿರುವಳ್ಳಂನ ವೆಟ್ಟಕಲ್ಲು ನಿವಾಸಿಗೆ ತ್ವರಿತ ವಿಶೇಷ ನ್ಯಾಯಾಲಯ 50 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಸಂತ್ರಸ್ತೆಯಿಂದ ಸಂಗ್ರಹಿಸಲಾದ ವೀರ್ಯವು ಆರೋಪಿಯ ವೀರ್ಯದೊಂದಿಗೆ ಹೋಲಿಕೆಯಾಗಿರುವುದನ್ನು ಡಿಎನ್ಎ ಪರೀಕ್ಷೆ ದೃಢಪಡಿಸಿದೆ. ಆರೋಪಿಯನ್ನು ಶೈನು ಎಂದು ಗುರುತಿಸಲಾಗಿದ್ದು, ಆತನನ್ನು ಅಪರಾಧಿ ಎಂದು ಘೋಷಿಸಿದ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ ಅವರು 30,000 ರೂ. ದಂಡವನ್ನೂ ವಿಧಿಸಿದ್ದಾರೆ. ದಂಡವನ್ನು ಪಾವತಿಸದಿದ್ದರೆ ಹೆಚ್ಚುವರಿಯಾಗಿ ಮೂರು ವರ್ಷಗಳ ಸೆರೆವಾಸ ಅನುಭವಿಸಬೇಕಾಗುತ್ತದೆ. ಡಿಸೆಂಬರ್ 31, 2018ರಂದು ಈ ಪ್ರಕರಣದ ಮೊದಲ ಘಟನೆ ನಡೆದಿದೆ. ಹೊಸ ವರ್ಷಾಚರಣೆಗೆ ಆರೋಪಿ ಹಾಗೂ ಸಂತ್ರಸ್ತೆ ಸ್ನೇಹಿತರೊಂದಿಗೆ ಕೋವಲಂಗೆ ತೆರಳಿದ್ದರು. ಬಳಿಕ ಆರೋಪಿಯು ಅವರನ್ನು ತನ್ನ ಸಂಬಂಧಿಕರೊಬ್ಬರ ಮನೆಗೆ ಕರೆದೊಯ್ದಿದ್ದಾನೆ. ಶೌಚಾಲಯಕ್ಕೆ ಹೋಗಬೇಕೆಂದು 16 ವರ್ಷದ ಸಂತ್ರಸ್ತೆ ತಿಳಿಸಿದಾಗ, ಆಕೆಯೊಂದಿಗೆ ತೆರಳಿದ ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆ ಕೂಗಲು ಪ್ರಯತ್ನಿಸಿದಾಗ, ಆತ ಆಕೆಯ ಬಾಯಿಗೆ ಬಟ್ಟೆ ತುರುಕಿದ್ದಾನೆ. ಸಾಮಾಜಿಕ ಕಳಂಕದ ಭೀತಿ ಹಾಗೂ ಸ್ನೇಹಿತರ ಮುಂದೆ ಮುಜುಗರಕ್ಕೊಳಗಾಗುವ ಭಯದಿಂದ ಸಂತ್ರಸ್ತೆ ಘಟನೆ ಬಹಿರಂಗಪಡಿಸಿರಲಿಲ್ಲ. ಎರಡನೇ ಘಟನೆ ಜನವರಿ 12, 2019ರಂದು ನಡೆದಿದೆ. ಸಂತ್ರಸ್ತೆಯ ಮನೆಯಲ್ಲಿ ಪ್ರವೇಶಿಸಿದ ಆರೋಪಿ, ಹಿಂದಿನ ಘಟನೆಯನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಮತ್ತೆ ದೌರ್ಜನ್ಯ ಎಸಗಿದ್ದಾನೆ. ಹತ್ತು ತಿಂಗಳ ಬಳಿಕ ರಾಸಾಯನಿಕ ವಿಶ್ಲೇಷಣೆಯ ವರದಿ ಬಂದಿದ್ದು, ಸಂತ್ರಸ್ತೆಯ ಮಾದರಿಯಲ್ಲಿ ವೀರ್ಯ ಇರುವುದನ್ನು ದೃಢಪಡಿಸಿದೆ. ನಂತರ ಆಕೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಡಿಎನ್ಎ ವಿಶ್ಲೇಷಣೆಯಲ್ಲಿ ಆರೋಪಿಯ ರಕ್ತದ ಮಾದರಿ ಹಾಗೂ ಸಂತ್ರಸ್ತೆಯಿಂದ ಸಂಗ್ರಹಿಸಿದ ಜೈವಿಕ ಮಾದರಿಯ ನಡುವೆ ಹೋಲಿಕೆ ಹೊಂದಿರುವುದು ದೃಢಪಟ್ಟಿದೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಆರ್.ಎಸ್. ವಿಜಯ್ ವಾದ ಮಂಡಿಸಿದ್ದರು. ಪೂಂತುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳು ಬಿ.ಎಸ್. ಸಾಜಿಕುಮಾರ್ ಹಾಗೂ ಅನೂಪ್ ಎ ತನಿಖೆ ನಡೆಸಿದ್ದರು. ಸೌಜನ್ಯ: onmanorama.com
ಪಶ್ಚಿಮ ಬಂಗಾಳ | ಮೂರೂವರೆ ವರ್ಷದ ಬಾಲಕಿಯನ್ನು ಕಬೋರ್ಡ್ ನಲ್ಲಿ ಕೂಡಿ ಹಾಕಿದ ಶಿಕ್ಷಕಿ!
ಕೋಲ್ಕತ್ತಾ ಪ್ರೀಸ್ಕೂಲ್ನಲ್ಲಿ ನಡೆದ ಘಟನೆ
ತಮಿಳುನಾಡು ವಿಧಾನಸಭಾ ಚುನಾವಣೆ | ಡಿಎಂಕೆ ಬಳಿ 35 ಸ್ಥಾನಗಳಿಗೆ ಬೇಡಿಕೆ ಇಟ್ಟ ಕಾಂಗ್ರೆಸ್
ಮುಂದುವರಿದ ಸ್ಥಾನ ಹಂಚಿಕೆ ಮಾತುಕತೆ:
ಇರಾನ್-ಇಸ್ರೇಲ್ ಸಂಘರ್ಷ: ತೈಲ ಟ್ಯಾಂಕರ್ಗೆ ಡ್ರೋನ್ ಬೋಟ್ ಡಿಕ್ಕಿ, ಓರ್ವ ಭಾರತೀಯ ಸಾವು
Oman Oil Tanker: ಒಂದು ಕಡೆ ಇರಾನ್-ಇಸ್ರೇಲ್ ಯುದ್ಧ ಮುಂದುವರಿದಿದೆ. ಅಮೆರಿಕ ಸಹ ಇರಾನ್ ಮೇಲೆ ತನ್ನ ಪರಾಕ್ರಮ ಮುಂದುವರಿಸಿದೆ. ಈ ಮಧ್ಯೆ ಇಂದು ಸೋಮವಾರ ಒಮಾನ್ ಕೊಲ್ಲಿಯಲ್ಲಿ ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ತೈಲ ಟ್ಯಾಂಕರ್ಗೆ ಬಾಂಬ್ ಹೊತ್ತೊಯ್ಯುತ್ತಿದ್ದ ತೈಲ ಟ್ಯಾಂಕರ್ ಮೇಲೆ ಡ್ರೋನ್ ಹಡಗಿನ ಮೂಲಕ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಓರ್ವ ನಾವಿಕ ಮೃತಪಟ್ಟ
ನ್ಯಾಯಾಧೀಶರಾಗಿ ನೇಮಕಗೊಂಡ ಕೊಂಬೆಟ್ಟು ಕಾಲೇಜಿನ ಹಿರಿಯ ವಿದ್ಯಾರ್ಥಿ ಮಂಜುನಾಥ್ ಶಿವಲಿಂಗಪ್ಪ ಸಂಸ್ಥೆಗೆ ಭೇಟಿ
ಪುತ್ತೂರು : ಕರ್ನಾಟಕ ನ್ಯಾಯಾಂಗ ಇಲಾಖೆ ಮತ್ತು ರಾಜ್ಯ ಉಚ್ಚ ನ್ಯಾಯಾಲಯವು ನಡೆಸಿದ ಸಿವಿಲ್ ನ್ಯಾಯಾಧಿಶರ ನೇಮಕಾತಿ ಪರೀಕ್ಷೆಯಲ್ಲಿ ನೇಮಕಗೊಂಡ ಕೊಂಬೆಟ್ಟು ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಮಂಜುನಾಥ ಶಿವಲಿಂಗಪ್ಪ ಜಿ ಅವರು ಕೊಂಬೆಟ್ಟು ಸರಕಾರಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಉಪನ್ಯಾಸಕರು ಮತ್ತು ಶಿಕ್ಷಕರೊಂದಿಗೆ ತನ್ನ ಸಂತಸವನ್ನು ಹಂಚಿಕೊಂಡರು. ಕಾಲೇಜಿನ ಪರವಾಗಿ ಮಂಜುನಾಥ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದ ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ ಅವರು ಮಾತನಾಡುತ್ತಾ ತನ್ನ 25 ನೇ ವಯಸ್ಸಿನಲ್ಲಿ ಕಾನೂನು ವಿದ್ಯಾಭ್ಯಾಸ ಮುಗಿದ ಅಲ್ಪಾವಧಿಯಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಮಂಜುನಾಥ್ ಇವರಿಗೆ ಭವಿಷ್ಯದಲ್ಲಿ ನ್ಯಾಯಾಂಗ ವ್ವವಸ್ಥೆಯಲ್ಲಿ ಅತ್ಯುನ್ನತ ಹುದ್ದೆಗೆ ಏರುವ ಅವಕಾಶಗಳು ಲಭಿಸಲಿ ಎಂದು ಹಾರೈಸಿದರು. ಕೊಂಬೆಟ್ಟು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡಿರುವ ಹಲವು ಹಿರಿಯ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಅಂತಹ ಸಾಧಕರ ಸಾಲಿಗೆ ಮಂಜುನಾಥ್ ಅವರು ಸೇರ್ಪಡೆಗೊಂಡಿರುವುದು ಹೆಮ್ಮೆಯ ಸಂಗತಿ, ಇದು ಅವರಿಗೆ ಬೋಧಿಸಿದ ಶಿಕ್ಷಕರಿಗೂ ಅಭಿಮಾನದ ವಿಷಯ ಎಂದು ಹೇಳಿದರು. 2014 - 2019ರ ಅವಧಿಯಲ್ಲಿ ತನಗೆ ಬೋಧಿಸಿದ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಬೇಟಿಯಾದ ಮಂಜುನಾಥ್ ಎಲ್ಲಾ ಶಿಕ್ಷಕರ ಶುಭಹಾರೈಕೆ ಮತ್ತು ಅಭಿನಂದನೆಗಳನ್ನು ಸ್ವೀಕರಿಸಿದರು. ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ತನ್ನ ನೇಮಕಾತಿ ವಿಧಾನವನ್ನು ತಿಳಿಸಿ ಎಲ್ಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ವಹಿಸಿ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಪ್ರೇರೆಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಧರಣಪ್ಪ ಗೌಡ, ಸುಬ್ರಹ್ಮಣ್ಯ , ಲತಾ ಕುಮಾರಿ, ಜಯಪ್ರಕಾಶ್, ಮನಮೋಹನ್, ಡಾ. ಯೋಗೀಶ್, ಪದ್ಮನಾಭ , ಅಬ್ದುಲ್ ರಝಾಕ್, ಪ್ರಕಾಶ್ , ಗೌತಮ್ ಕಾಮತ್, ಕಾತ್ಯಾಯಿನಿ , ಸುಪ್ರೀತಾ, ಸ್ವಾತಿ, ಪ್ರತಿಭಾ ರೈ , ವಿಜೇತಾ ಕುಮಾರಿ ಮತ್ತು ಮಂಜುನಾಥ ಅವರ ತಾಯಿ ನಿಂಗವ್ವ ಉಪಸ್ಥಿತರಿದ್ದರು. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾದ ಶಿವಲಿಂಗಪ್ಪ ಮತ್ತು ನಿಂಗವ್ವ ದಂಪತಿಗಳ ಪುತ್ರರಾದ ಮಂಜುನಾಥ ಶಿವ ಲಿಂಗಪ್ಪ ಗೌಡರ್ ಅವರ ಕುಟುಂಬ ಕೂಲಿಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಇಲ್ಲೆ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಕಾನೂನು ಶಿಕ್ಷಣವನ್ನು ಪುತ್ತೂರಿನ ವಿವಿಧ ಶಿಕ್ಣಣ ಸಂಸ್ಥೆಗಳಲ್ಲಿ ಪಡೆದು 2025 ರ ನ್ಯಾಯಾಧೀಶ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುತ್ತಾರೆ. ಪ್ರಸ್ತುತ ಬೆಳ್ತಂಗಡಿ ಸಮೀಪದ ಮೇಲಂತಬೆಟ್ಟುವಿನಲ್ಲಿ ವಾಸಿಸುತ್ತಿರುವ ಇವರು ಪರಿಶ್ರಮ ಮತ್ತು ಶ್ರದ್ದೆಯಿಂದ ಶಿಕ್ಷಣ ಪಡೆದರೆ ಎಂತಹ ಬಡತನವನ್ನು ಮೀರಿ ನಿಲ್ಲಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ.
ಹರಪನಹಳ್ಳಿ | ಹಕ್ಕುಪತ್ರ ನೀಡುವಂತೆ ಗ್ರಾಮಸ್ಥರ ಮನವಿ
ಹರಪನಹಳ್ಳಿ, ಮಾ.2: ತಾಲ್ಲೂಕಿನ ಚಿಕ್ಕಮೇಗಳಗೆರೆ ಗ್ರಾಮದ ಸರ್ವೇ ನಂ.578ರಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಸ್ಥಳೀಯರು ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು. ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ಅನೇಕ ಬಡ ಕುಟುಂಬಗಳು ಮನೆ ನಿರ್ಮಿಸಿ ವಾಸವಾಗಿದ್ದು, ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದಾಗಿ ಅವರು ದೂರಿದರು. ಹಕ್ಕುಪತ್ರ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಒಂದೇ ಸರ್ವೇ ಸಂಖ್ಯೆಯಲ್ಲಿ ಕೆಲವರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಿದರೆ, ಇತರ ಅರ್ಹರಿಗೆ ಸ್ಪಂದನೆ ನೀಡಲಾಗುತ್ತಿಲ್ಲ. ಕೂಡಲೇ ಮರು ಸಮೀಕ್ಷೆ ನಡೆಸಿ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹೆಸರಿನ 3.79 ಎಕರೆ ಜಮೀನಿನಲ್ಲಿ ಜನ ವಾಸವಾಗಿರುವ 16 ಸೆಂಟ್ಸ್ ಭೂಮಿಯನ್ನು ಯಾವುದೇ ಮಾಹಿತಿ ನೀಡದೆ ಪೋಡಿ ಮಾಡಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಅದನ್ನು ರದ್ದುಗೊಳಿಸಿ ಯಥಾಸ್ಥಿತಿಯಲ್ಲಿ ಉಳಿಸಿ ಹಕ್ಕುಪತ್ರ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಮುನ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಶೃತಿ, ಮುಖಂಡ ಕೆ. ಹನುಮಂತಪ್ಪ, ಅಂಜಿನಪ್ಪ, ಬಿ.ಪರಶುರಾಮ, ಉಮೇಶ್, ದೊಡ್ಡಪ್ಪರ ನಾಗರಾಜ್, ಹನುಮಂತಪ್ಪ, ಮಾರುತಿ, ತಿಪ್ಪಣ್ಣ, ಬಸವರಾಜ್, ಮಲ್ಲೇಶಪ್ಪ, ಅಭಿಜಿತ್, ಮಲ್ಲಿಕಾರ್ಜುನ, ಪರಶುರಾಮಪ್ಪ, ಭರತ, ನಾಗಪ್ಪ, ಶಿವಣ್ಣ ಇತರರು ಉಪಸ್ಥಿತರಿದ್ದರು.
ಮಂಗಳೂರು : ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟಿಸುವುದಾಗಿ ಸಾಮಾಜಿಕ ಜಾಲ ತಾಣದಲ್ಲಿ ಶಂಕರ್ ಎಂಬ ಹೆಸರಿನಲ್ಲಿ ಸಂದೇಶ ಹಾಕಿದ ಕಿಡಿಗೇಡಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ. ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಶ್ರಫ್ ಕೆಸಿ ರೋಡ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಿಕಾ ರೈ ಕೋಟೆಕಾರ್ ಉಳ್ಳಾಲ ಕ್ಷೇತ್ರದಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಶಾಂತಿ ಸೌಹಾರ್ದತೆ ಹಾಗೂ ಅನೋನ್ಯತೆಯಿಂದ ಜೀವಿಸುತ್ತಿದ್ದಾರೆ. ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಯು .ಟಿ ಖಾದರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕೆಲ ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿರುವುದು ಖಂಡನೀಯ. ಪೊಲೀಸ್ ಇಲಾಖೆ ಕೂಡಲೇ ಈ ಕಿಡಿಗೇಡಿಯನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಡಿಕೆಶಿ ಕಡೆಯವರ ಸಭೆಗಳ ಮೇಲೆ ನಿಗಾ ಇಡಲು ಸಿಎಂ ಒಬ್ಬ ಎಸ್ಪಿಯನ್ನು ನೇಮಕ ಮಾಡಿದ್ದಾರೆ : ಆರ್.ಅಶೋಕ್
ಬೆಂಗಳೂರು : ‘ಇರಾನ್ ಮೇಲೆ ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಯುದ್ಧ ನಿಲ್ಲಬೇಕೆಂಬುದು ಭಾರತದ ನಿಲುವು. ನಾವು ಕೇಂದ್ರದ ಮೇಲೆ ಒತ್ತಡ ಹಾಕಿದ್ದು, ಕೇಂದ್ರ ಸರಕಾರ ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಕೆಲಸ ಮಾಡುತ್ತದೆ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇರಾನ್ ದೇಶದಲ್ಲಿ ಭಾರತೀಯರು ಸಿಲುಕಿದ್ದಾರೆ. ಪ್ರಧಾನಿ ಮೋದಿಯವರು ಆ ದೇಶಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಆಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸ ಆಗಲಿದೆ ಎಂದರು. ಪ್ರತಿಭಟನೆ ಸಲ್ಲ: ಇರಾನ್ ನಾಯಕ ಖಾಮಿನೈ ಹತ್ಯೆಯನ್ನು ಖಂಡಿಸಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಶಿಯಾ ಮುಸ್ಲಿಮ್ ಗುಂಪಿನವರು ಪ್ರತಿಭಟನೆ ಮಾಡಿದ್ದು, ಅವರ ಮೇಲೆ ಕ್ರಮ ಆಗಬೇಕು. ಖಾಮಿನೈ ಓರ್ವ ಸರ್ವಾಧಿಕಾರಿ. ಇಲ್ಲಿ ಪ್ರತಿಭಟನೆ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಅಶೋಕ್ ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಮಿನೈ ಹತ್ಯೆಯನ್ನು ಖಂಡಿಸಿರುವುದು ಅವರ ಕಾಂಗ್ರೆಸ್ ಮನಸ್ಥಿತಿಗೆ ಸಾಕ್ಷಿ. ಭಾರತ ದೇಶವು ಯಾರಿಗೂ ವಿರೋಧಿಯಲ್ಲ, ಇಸ್ರೇಲ್ಗೂ ವಿರೋಧವಿಲ್ಲ, ಇರಾನ್ಗೂ ವಿರೋಧವಿಲ್ಲ. ಭಾರತ-ಇರಾನ್ ಮಧ್ಯೆ ವ್ಯವಹಾರಿಕ ಸಂಬಂಧ ಚೆನ್ನಾಗಿಯೇ ಇದೆ ಎಂದು ಅಶೋಕ್ ತಿಳಿಸಿದರು. ನಿಗಾಕ್ಕೆ ಎಸ್ಪಿ ನಿಯೋಜನೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಡೆಯವರ ಸಭೆಗಳ ಮೇಲೆ ನಿಗಾ ಇಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಯನ್ನು ನೇಮಕ ಮಾಡಿದ್ದಾರೆ ಎಂದು ದೂರಿದ ಆರ್.ಅಶೋಕ್, ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ನವರು ಕಾಂಗ್ರೆಸ್ನವರಿಗೇ ಬೀದಿಗಿಳಿದು ಧಮ್ಕಿ ಹಾಕುತ್ತಿದ್ದಾರೆ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ನುಡಿದರು.
Gujarat | ಪ್ರಧಾನಿ ಮೋದಿ ತವರು ರಾಜ್ಯದಲ್ಲಿ 2 ವರ್ಷಗಳಲ್ಲಿ 75 ಸರಕಾರಿ ಶಾಲೆಗಳ ಬಂದ್!
ಅಹ್ಮದಾಬಾದ್, ಮಾ.2: ಖಾಸಗಿ ಶಾಲೆಗಳು ವಿಧಿಸುತ್ತಿರುವ ದುಬಾರಿ ಶುಲ್ಕಗಳು ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ಕಳೆದ ಎರಡು ವರ್ಷಗಳಲ್ಲಿ ಗುಜರಾತ್ ನಲ್ಲಿ 75 ಸರಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುಗಡೆಗೊಂಡಿರುವುದನ್ನು ರಾಜ್ಯ ಸರಕಾರ ಸೋಮವಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ. ಅತ್ಯಂತ ಕ್ಷೀಣ ಸಂಖ್ಯೆಯಿಂದ ಹಿಡಿದು ಶೂನ್ಯಮಟ್ಟದವರೆಗೆ ಶಾಲಾ ದಾಖಲಾತಿಯಿರುವುದೇ ಶಾಲೆಗಳ ಮುಚ್ಚುಗಡೆಗೆ ಕಾರಣವೆಂದು ರಾಜ್ಯಸರಕಾರವು ಲಿಖಿತ ಉತ್ತರದಲ್ಲಿ ತಿಳಿಸಿದೆ. ಅಲ್ಲದೆ ಶಿಥಿಲವಾದ ತರಗತಿಕೊಠಡಿಗಳನ್ನು ಧ್ವಂಸಗೊಳಿಸಲಾಗುತ್ತಿದ್ದು, ನೂತನ ಕಟ್ಟಡಗಳ ಕಾಮಗಾರಿಯ ಕಾರಣ ರಾಜ್ಯದ 2674 ಸರಕಾರಿ ಶಾಲೆಗಳು ಪಾಳಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಕೂಡಾ ಸರಕಾರವು ಬಹಿರಂಗಪಡಿಸಿದೆ. 2023-24 ಹಾಗೂ 2024-25ರ ನಡುವೆ ಗುಜರಾತ್ನ 15 ಜಿಲ್ಲೆಗಳ ಸರಕಾರಿ ಪ್ರಾಥಮಿಕ ಶಾಲೆಗಳನ್ನು ತೊರೆಯು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಕೂಡಾ ಶಾಲೆಗಳ ಮುಚ್ಚುಗಡೆಗೆ ಇನ್ನೊಂದು ಪ್ರಮುಖ ಕಾರಣವಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಇಸ್ರೇಲ್ ನಿಂದ ದಾಳಿ | ಫೆಲೆಸ್ತೀನಿನ ಇಸ್ಲಾಮಿಕ್ ಜಿಹಾದ್ ನ ಹಿರಿಯ ಕಮಾಂಡರ್ ಹತ್ಯೆ: ವರದಿ
ಬೈರುತ್, ಮಾ. 2: ಲೆಬನಾನ್ ನ ರಾಜಧಾನಿ ಬೈರುತ್ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ರಾತ್ರೋರಾತ್ರಿ ವಾಯುದಾಳಿಯಲ್ಲಿ ಫೆಲೆಸ್ತೀನಿನ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಹಿರಿಯ ಕಮಾಂಡರ್ ಹತ್ಯೆಯಾಗಿದ್ದಾರೆ ಎಂದು ಸಂಘಟನೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಸಂಘಟನೆಯ ಸಶಸ್ತ್ರ ಘಟಕವಾದ ಅಲ್-ಕುಡ್ಸ್ ಬ್ರಿಗೇಡ್ಸ್ ಹೊರಡಿಸಿದ ಪ್ರಕಟನೆಯಲ್ಲಿ, ಮೃತರನ್ನು 41 ವರ್ಷದ ಅದಮ್ ಅಲ್-ಒಥ್ಮನ್ ಎಂದು ಗುರುತಿಸಲಾಗಿದೆ. ಅವರನ್ನು ಲೆಬನಾನ್ ನಲ್ಲಿನ ಅಲ್-ಕುಡ್ಸ್ ಬ್ರಿಗೇಡ್ ಗಳ ಕಮಾಂಡರ್ ಎಂದು ಕರೆಯಲಾಗುತ್ತಿತ್ತು. ದಾಳಿ ನಡೆದ ವೇಳೆ ಅವರು ಬೈರುತ್ ನ ದಕ್ಷಿಣ ಉಪನಗರ ಪ್ರದೇಶದಲ್ಲಿದ್ದರು ಎನ್ನಲಾಗಿದೆ. ಲೆಬನಾನ್ ನಲ್ಲಿರುವ ಹೆಜ್ಬೊಲ್ಲಾ ಸಂಘಟನೆಗೆ ಸೇರಿದ 70 ಕ್ಕೂ ಹೆಚ್ಚು ನೆಲೆಗಳನ್ನು ಹೊಡೆದಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಹೆಜ್ಬೊಲ್ಲಾ ರಾತ್ರಿಯಿಡೀ ಉತ್ತರ ಇಸ್ರೇಲ್ ಭಾಗಗಳ ಮೇಲೆ ರಾಕೆಟ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ಪ್ರತಿದಾಳಿ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಇಸ್ರೇಲ್–ಲೆಬನಾನ್ ಸಂಘರ್ಷ ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.

30 C