ಪ್ರತಿ ಮತವೂ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುತ್ತದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು: ಪ್ರತಿ ಮತವೂ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುತ್ತದೆ. ಹೀಗಾಗಿ ಮತದಾರರು ತಮ್ಮ ಮತದಾನದ ಹಕ್ಕನ್ನು ಮುಕ್ತವಾಗಿ ಮತ್ತು ನ್ಯಾಯಯುತವಾಗಿ, ಯಾವುದೇ ಭಯ, ಒತ್ತಡ ಅಥವಾ ಪ್ರಚೋದನೆಯಿಲ್ಲದೆ ಚಲಾಯಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ. ರವಿವಾರ ಇಲ್ಲಿನ ಪುರಭವನದಲ್ಲಿ ಭಾರತ ಚುನಾವಣಾ ಆಯೋಗವು ಆಯೋಜಿಸಿದ್ದ ‘ರಾಷ್ಟ್ರೀಯ ಮತದಾರರ ದಿನಾಚರಣೆ-2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವವು ಸಂವಿಧಾನದ ಆದರ್ಶಗಳು ಮತ್ತು ಚುನಾವಣೆಯಲ್ಲಿ ಪ್ರತಿಯೊಬ್ಬರು ಸಕ್ರಿಯ ಭಾಗವಹಿಸುವಿಕೆಯನ್ನು ಆಧರಿಸಿದೆ. ‘ಒಂದು ಮತ-ಒಂದು ಧ್ವನಿ-ಒಂದು ಜವಾಬ್ದಾರಿ’ ಇದು ಪ್ರಜಾಪ್ರಭುತ್ವದ ಆತ್ಮ ಎಂದರು. ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ, ಭಾರತೀಯ ಸಂವಿಧಾನವು ಆಡಳಿತದ ಸರ್ವೋಚ್ಚ ಅಧಿಕಾರವು ಜನರೊಂದಿಗೆ ಇರುತ್ತದೆ ಎಂದು ಖಚಿತಪಡಿಸಿದೆ. ಮತದಾನವು ಕಾನೂನುಬದ್ಧ ಹಕ್ಕು ಮಾತ್ರವಲ್ಲದೆ ಪ್ರಜಾಪ್ರಭುತ್ವದ ಕಡೆಗೆ ನಾಗರಿಕರ ಸಾಂವಿಧಾನಿಕ ಜವಾಬ್ದಾರಿಯೂ ಆಗಿದೆ. ಭಾರತದ ಪ್ರಜಾಪ್ರಭುತ್ವವು ಅದರ ಸಮಗ್ರತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯಿಂದಾಗಿ ಜಗತ್ತಿನಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ಪ್ರಜಾಪ್ರಭುತ್ವದ ಅಡಿಪಾಯವು ನ್ಯಾಯಯುತ, ಮುಕ್ತ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆಯಲ್ಲಿದೆ. ಇದಕ್ಕಾಗಿ ಪ್ರತಿಯೊಬ್ಬ ಮತದಾರರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಮತದಾರರ ದಿನವು ನಾವೆಲ್ಲರೂ ಪ್ರತಿಜ್ಞೆ ಮಾಡಲು ಪ್ರೇರೇಪಿಸುತ್ತದೆ. ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ನಾವು ಮತ ಚಲಾಯಿಸಿ ಮತ್ತು ಇತರರು ಅದೇ ರೀತಿ ಮಾಡಲು ಪ್ರೋತ್ಸಾಹಿಸಬೇಕು. ರಾಷ್ಟ್ರದ ಕಡೆಗೆ ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಷ್ಟೆಯಿಂದ ನಿರ್ವಹಿಸುವ ಪ್ರತಿಜ್ಞೆ ಮಾಡಬೇಕು ಎಂದು ಅವರು ಹೇಳಿದರು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾತನಾಡಿ, ಇಂದು ರಾಜ್ಯಾದ್ಯಂತ 16ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾರರು ಬಹುಮುಖ್ಯ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು. ಭಾರತ ಚುನಾವಣಾ ಆಯೋಗವು ಸುಗಮ ಮತದಾನಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರತಿ ವರ್ಷ ಜನವರಿ 1, ಎಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಯುವ ಮತದಾರರು, ಮಹಿಳೆಯರು, ವಿಶೇಷ ಚೇತನರು ಇತರೆ ಅವಕಾಶ ವಂಚಿತರಿಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಇನ್ನಿತರೆ ಚುನಾವಣೆ ವಿಷಯಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್ ಸೇರಿದಂತೆ ಮತ್ತಿತರರು ಇದ್ದರು. ಮತದಾನ ಪ್ರತಿಜ್ಞಾ ವಿಧಿ ಸ್ವೀಕಾರ: ‘ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸಭಾಂಗಣದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು/ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ 1,000ಕ್ಕೂ ಹೆಚ್ಚು ಜನ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
2022ರ ಮೀಸಲಾತಿ ಕಾಯ್ದೆಯನ್ನು ಶೆಡ್ಯೂಲ್ 9ಕ್ಕೆ ಸೇರಿಸಲು ವಿ.ಎಸ್.ಉಗ್ರಪ್ಪ ಆಗ್ರಹ
ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ ಮಾಡಿರುವ 2022ರ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸಿ ಎಂದು ‘ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ’ಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2022ರ ಮೀಸಲಾತಿ ಕಾಯ್ದೆಯನ್ನು ಭಾರತದ ಸಂವಿಧಾನದ 9 ನೇ ಶೆಡ್ಯೂಲ್ಗೆ ಸೇರಿಸಲು ಮತ್ತು ಅನುಚ್ಛೇದ 15 ಮತ್ತು 16ಕ್ಕೆ ಮೀಸಲಾತಿ ಹೆಚ್ಚಿಸಲು ತಿದ್ದುಪಡಿ ತರಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬಂದಾಗೆಲ್ಲ ಕೆಲ ಜಾತಿಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸಿದರು. ಇದರಿಂದ ಸಾಕಷ್ಟು ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದ್ದಕ್ಕೆ ಬಿಜೆಪಿ ಸರಕಾರ ಹಾಗೂ ಬಿಜೆಪಿ ನಾಯಕರೇ ಕಾರಣ ಎಂದರು. ಮುಂದಿನ ಬಾರಿ ಸುಮಾರು 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಆದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಬಾರದು ಎಂಬ ಕಾನೂನು ಇದ್ದರೂ ಬಳಕೆಯಾಗುತ್ತಿದೆ. ಇದನ್ನು ತಪ್ಪಿಸಬೇಕು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಎಚ್.ಡಿ. ಕುಮಾರಸ್ವಾಮಿ, ಹಾಗೂ ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ ಮತ್ತಿತರರು ಕೇಂದ್ರದ ಮೇಲೆ ಒತ್ಗಡ ತಂದು ಕರ್ನಾಟಕದ ತಳ ಸಮುದಾಯಗಳ ಹಿತ ಕಾಯಬೇಕು ಎಂದು ಒತ್ತಾಯಿಸಿದರು. ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಸಂವಿಧಾನದಲ್ಲಿ ಎಲ್ಲೂ ಆರ್ಥಿಕ ಮೀಸಲಾತಿಯ ಬಗ್ಗೆ ಡಾ.ಅಂಬೇಡ್ಕರ್ ಉಲ್ಲೇಖಿಸಿಲ್ಲ. ಆದರೆ ಇಷ್ಟು ವರ್ಷಗಳಾದರೂ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದವರ ಹೆಸರಿನಲ್ಲಿ ಮೇಲ್ವರ್ಗದವರಿಗೆ ಮೀಸಲಾತಿ ಘೋಷಣೆ ಮಾಡಿದೆ. ಆರ್ಥಿಕವಾಗಿ ಹಿಂದುಳಿದವರ ಮೇಲ್ವರ್ಗದ ಸಮುದಾಯದ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು 8.5 ಲಕ್ಷ ರೂ. ಆದಾಯ ಮಿತಿ ಇದೆ. ಆದರೆ ತಲ ತಲಾಂತರದಿಂದ ಶೋಷಣೆ ಅನುಭವಿಸುತ್ತ ಬಂದಿರುವ ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಆದಾಯ ಮಿತಿ 2.5ಲಕ್ಷ ರೂ.ನಿಗಧಿಪಡಿಸಲಾಗಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗಲೇ ಹೋರಾಟ ನಡೆಸಿದ ಫಲವಾಗಿ ಪರಿಶಿಷ್ಟ ಪಂಗಡಕ್ಕೆ ಶೇ.3ರ ಬದಲು ಶೇ.7ರಷ್ಟು ಮೀಸಲಾತಿ ಹಾಗೂ ಪರಿಶಿಷ್ಟ ಜಾತಿಗೆ ಶೇ.15, ಇತರೆ ಹಿಂದುಳಿದ ವರ್ಗಗಳಿಗೆ ಶೇ.32 ಮೀಸಲಾತಿ ಜಾರಿಗೊಳಿಸಲಾಗಿತ್ತು. ಆದರೆ ಅದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಇದರಿಂದಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆ ಕಾಯ್ದೆಯನ್ನು ಅನೂರ್ಜಿತಗೊಳಿಸಿದೆ. ಕರ್ನಾಟಕ ಹೈಕೋರ್ಟ್ ಕೂಡ ಈ ಕಾಯ್ದೆಗೆ ತಡೆಯಾಜ್ಞೆ ನೀಡಿದೆ. ಇದರ ಪರಿಣಾಮ ಬಿಜೆಪಿ ಸರಕಾರ ಜಾರಿಗೆ ತಂದ ಮೀಸಲಾತಿ ಹೆಚ್ಚಳ ರದ್ದಾಗಿದೆ ಎಂದು ತಿಳಿಸಿದರು. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆ 2022ನ್ನು ಶೆಡ್ಯೂಲ್ 9ಕ್ಕೆ ಸೇರಿಸಲು ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಒಂದು ತಿಂಗಳಾದರೂ ಕೇಂದ್ರ ಸರಕಾರ ಅದನ್ನು ಶೆಡ್ಯೂಲ್ 9ಕ್ಕೆ ಸೇರಿಸದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ತಳ ಸಮುದಾಯದ ಬಡ ಜನರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈಗಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳಿಗೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಕಾರ್ಯಾಧ್ಯಕ್ಷ ಎಂ.ನರಸಿಂಹಯ್ಯ, ಖಜಾಂಚಿ ಈ.ರಾಜಪ್ಪ, ಉಪಾಧ್ಯಕ್ಷ ರಾಜಣ್ಣ ಟಿ.ಚಿತ್ರದುರ್ಗ, ರೇವತಿ ಭೀಮಪುತ್ರಿ, ಪ್ರಧಾನ ಕಾರ್ಯದರ್ಶಿಗಳಾದ ಸಣ್ಣ ನಾಯಕ್, ರಮೇಶ್ ಹಿರೇಜಂಬೂರು, ನಾಗರಾಜ ಗಾಣದ ಹುಣಸೆ, ನಿವೃತ್ತ ಅಧಿಕಾರಿ ಕೆಂಪರಾಮಯ್ಯ, ಕೆಪಿಸಿಸಿ ಎಸ್ಟಿ ಸೆಲ್ ಅಧ್ಯಕ್ಷ ವಿಜಯ ನಾಯಕ್, ವಾಲ್ಮೀಕಿ ನಾಯಕ ಮಹಾಸಭಾ ಮಹಿಳಾ ಅಧ್ಯಕ್ಷೆ ಜಯಶ್ರೀ ಗುಡ್ಡೆಕಾಯಿ, ಗುಲ್ಬರ್ಗಾ ವಿವಿ ನಿವೃತ್ತ ಉಪಕುಲಪತಿ ಶ್ರೀರಾಮುಲು, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಸವರಾಜ್ ನಾಯಕ್, ಕಾರ್ಯದರ್ಶಿ ತುಳಸಿರಾಮ್ ಟಿ.ಆರ್., ಸಂಘಟನಾ ಕಾರ್ಯದರ್ಶಿ ಕೆ.ವಿ.ನಾಗೇಂದ್ರ, ರವಿಚಂದ್ರ ಉಪಸ್ಥಿತರಿದ್ದರು.
ಗ್ರೀಕ್ ಬಳಿ ವಲಸಿಗರ ದೋಣಿ ಮುಳುಗಿ ಮಹಿಳೆ, ಬಾಲಕ ಮೃತ್ಯು
ಅಥೆನ್ಸ್, ಜ.25: ಸುಮಾರು 50 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗ್ರೀಕ್ ಕರಾವಳಿಯ ಬಳಿ ಮುಳುಗಿ, ಓರ್ವ ಮಹಿಳೆ ಮತ್ತು ಬಾಲಕ ಸಾವನ್ನಪ್ಪಿದ್ದು, ದೋಣಿಯಲ್ಲಿದ್ದ ಇತರ ಮೂವರು ನಾಪತ್ತೆಯಾಗಿದ್ದಾರೆ ಎಂದು ಕರಾವಳಿ ಕಾವಲು ಪಡೆ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಉತ್ತರ ಏಜಿಯನ್ ಸಮುದ್ರದ ಇಕ್ರಿಯಾ ದ್ವೀಪದ ಬಳಿ ಈ ದುರಂತ ಸಂಭವಿಸಿದ್ದು, 50 ವಲಸಿಗರನ್ನು ರಕ್ಷಿಸಲಾಗಿದೆ. ಮಹಿಳೆ ಮತ್ತು ಬಾಲಕನ ಮೃತದೇಹಗಳು ಪತ್ತೆಯಾಗಿವೆ. ಪ್ರಾಥಮಿಕ ಮಾಹಿತಿಯಂತೆ ಕನಿಷ್ಠ ಮೂವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಬಲವಾಗಿ ಬೀಸುತ್ತಿರುವ ಗಾಳಿ ಕಾರ್ಯಾಚರಣೆಗೆ ತೊಡಕಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ರಾಹುಲ್ ಗಾಂಧಿ ಎಲ್ಲಿಯೂ ದೇಶಕ್ಕೆ ನೋವು ಮಾಡಿಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋಗಿ ಭಾರತಕ್ಕೆ ನೋವು ಮಾಡುವುದಿಲ್ಲ. ಸುಳ್ಳು ಸುದ್ದಿಗಳನ್ನು ಪರಿಗಣಿಸಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾದ ಬಳಿಕ ರವಿವಾರ ನಗರದ ಕುಮಾರಕೃಪದ ಸರಕಾರಿ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಆರ್ಥಿಕತೆ ವಿಚಾರವಾಗಿ ರಾಹುಲ್ ಗಾಂಧಿ ಅವರ ಹೇಳಿಕೆ ರಾಜಕೀಯ ತರಬೇಡಿ. ಹೃದಯ ಶ್ರೀಮಂತಿಕೆಯಿಂದ ಆಲೋಚಿಸಿ. ನಾವೆಲ್ಲರೂ ಈ ಪ್ರಗತಿಯನ್ನು ಸಂಭ್ರಮಿಸೋಣ, ಬೇರೆಯವರ ತಪ್ಪನ್ನು ಹುಡುಕುವುದು ಬೇಡ. ವಿದೇಶಕ್ಕೆ ಹೋಗಿ ನಾವು ಭಾರತಕ್ಕೆ ನೋವು ಮಾಡುವುದಿಲ್ಲ. ರಾಹುಲ್ ಗಾಂಧಿ ಅವರು ಕೂಡ ಈ ರೀತಿ ಮಾಡಿಲ್ಲ. ರಾಹುಲ್ ಗಾಂಧಿ ಅವರು ನಮ್ಮ ಆಂತರಿಕ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಪ್ರವಾಸದ ಬಗ್ಗೆ ಬಿಜೆಪಿ ನಾಯಕರು ಟೀಕೆ ಮಾಡಿದ್ದ ಬಗ್ಗೆ ಕೇಳಿದಾಗ, ನಾನು ಬಿಜೆಪಿ ನಾಯಕರ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ನಾನು ಭಾರತ ಹಾಗೂ ಕರ್ನಾಟಕ ರಾಜ್ಯಕ್ಕೆ ಮಾತ್ರ ಉತ್ತರ ನೀಡುತ್ತೇನೆ. ಭಾರತವನ್ನು ಬೆಂಗಳೂರು ಮೂಲಕ ನೋಡಲಾಗುತ್ತಿದೆ. ಕರ್ನಾಟಕ ಭಾರತಕ್ಕೆ ಹೆಮ್ಮೆ ತರುತ್ತಿದೆ ಎಂದು ನಾನು ಈ ಹಿಂದೆಯೂ ಹೇಳಿದ್ದೆ, ವಿದೇಶದಲ್ಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಕ್ಯಾಲಿಫೆÇೀರ್ನಿಯಾದಲ್ಲಿ 13 ಲಕ್ಷ ಇಂಜಿನಿಯರಿಂಗ್ ವೃತ್ತಿ ಪರರಿದ್ದಾರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರಿಂಗ್ ವೃತ್ತಿಪರರಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದರು. ಅದೇ ರೀರಿ, ಕರ್ನಾಟಕ 13,900 ವೈದ್ಯರನ್ನು ಪ್ರತಿ ವರ್ಷ ತಯಾರು ಮಾಡುತ್ತಿದ್ದಾರೆ. ದೇಶದ ಇತರೆ ಯಾವುದೇ ರಾಜ್ಯಕ್ಕೂ ಈ ರೀತಿ ಸಾಮರ್ಥ್ಯವಿಲ್ಲ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷ ವೈದ್ಯಕೀಯ ವೃತ್ತಿಪರರು ತಯಾರಾಗುತ್ತಿದ್ದಾರೆ ಎಂದ ಅವರು, ನಾನು ಕರ್ನಾಟಕ ರಾಜ್ಯವನ್ನು ಇತರೆ ಯಾವುದೇ ರಾಜ್ಯದೊಂದಿಗೆ ಹೋಲಿಕೆ ಮಾಡುತ್ತಿಲ್ಲ. ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ. ಬೆಂಗಳೂರಿನ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ಏನು ಹೇಳಿದ್ದಾರೆ? ಅವರು ಬೇರೆ ರಾಜ್ಯಗಳ ನಗರಕ್ಕೆ ಹೋಗಿ, ಆ ನಗರವನ್ನು ಜಾಗತಿಕ ನಗರ ಎಂದು ಕರೆದಿಲ್ಲ, ಬೆಂಗಳೂರನ್ನು ಜಾಗತಿಕ ನಗರ ಎಂದು ಬಣ್ಣಿಸಿದ್ದಾರೆ ಎಂದು ತಿಳಿಸಿದರು. ಬೆಂಗಳೂರು ಸಂಚಾರ ದಟ್ಟಣೆ 2ನೆ ಸ್ಥಾನಲ್ಲಿದೆ ಎಂದು ಕೇಳಿದಾಗ, ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2.50 ಲಕ್ಷ ಕೋಟಿ ಹಣವನ್ನು ಐದು ವರ್ಷಗಳಲ್ಲಿ ವೆಚ್ಚ ಮಾಡಲಾಗುತ್ತಿದೆ. ಅದಕ್ಕಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಟನಲ್ ರಸ್ತೆಗಳು, 123 ಕಿ.ಮೀ ಎಲಿವೇಟೆಡ್ ಕಾರಿಡಾರ್ ಗಳು, 300 ಕಿ.ಮೀ ಉದ್ದದ ಬಫರ್ ರೋಡ್ ಗಳನ್ನು ನಿರ್ಮಿಸಲಾಗುತ್ತಿದೆ.
ಪಮೇಲಾ ಕೊಂಟಿ U17 ಮಹಿಳಾ ಫುಟ್ಬಾಲ್ ತಂಡದ ಪ್ರಧಾನ ಕೋಚ್
ಹೊಸದಿಲ್ಲಿ, ಜ. 25: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಭಾರತೀಯ ಅಂಡರ್–17 ಮಹಿಳಾ ರಾಷ್ಟ್ರೀಯ ತಂಡದ ಪ್ರಧಾನ ಕೋಚ್ ಆಗಿ ಇಟಲಿಯ ಪಮೇಲಾ ಕೊಂಟಿ ಅವರನ್ನು ನೇಮಿಸಿದೆ. 43 ವರ್ಷದ ಪಮೇಲಾ ಆಂಧ್ರಪ್ರದೇಶದ ಅನಂತಪುರದಲ್ಲಿರುವ ಮಹಿಳಾ ತರಬೇತಿ ಶಿಬಿರವನ್ನು ಸೇರಿಕೊಂಡಿದ್ದಾರೆ. ಈ ತರಬೇತಿ ಶಿಬಿರದಲ್ಲಿ ಹದಿನೇಳು ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರ್ತಿಯರು ಎಎಫ್ಸಿ ಅಂಡರ್–17 ಮಹಿಳಾ ಏಷ್ಯನ್ ಕಪ್ ಪಂದ್ಯಾವಳಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಪಂದ್ಯಾವಳಿ ಚೀನಾದಲ್ಲಿ ಏಪ್ರಿಲ್ 30ರಿಂದ ಮೇ 17ರವರೆಗೆ ನಡೆಯಲಿದೆ. ಕೊಂಟಿಯ ಜೊತೆಗೆ ಸಹಾಯಕ ಕೋಚ್ ಆಗಿ ಅವರ ಸಹೋದರ ವಿನ್ಸೆನ್ಜೊ ಕೊಂಟಿ ತಂಡಕ್ಕೆ ಬರಲಿದ್ದಾರೆ. ಇನ್ನೋರ್ವ ಸಹಾಯಕ ಕೋಚ್ ನಿವೇತಾ ರಾಮದಾಸ್ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಎಸ್ಎಎಎಫ್ಎಫ್ ಅಂಡರ್–19 ಮಹಿಳಾ ಚಾಂಪಿಯನ್ಶಿಪ್ 2026 ಕೊಂಟಿಯ ಮೊದಲ ಅಧಿಕೃತ ಪಂದ್ಯಾವಳಿಯಾಗಿರಲಿದೆ. ಈ ಪಂದ್ಯಾವಳಿ ನೇಪಾಳದ ಪೋಖರಾದಲ್ಲಿ ಜನವರಿ 31ರಿಂದ ಫೆಬ್ರವರಿ 7ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾರತವು ತನ್ನ ಅಂಡರ್–17 ತಂಡವನ್ನು ಆಡಿಸಲಿದೆ. ಇಟಲಿಯ ಅಂತರರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಮಿಡ್ಫೀಲ್ಡರ್ ಆಗಿ ಆಡಿರುವ ಕೊಂಟಿ ತಮ್ಮೊಂದಿಗೆ ಅಪಾರ ಅನುಭವವನ್ನು ತರಲಿದ್ದಾರೆ.
Venezuela | ಮಡುರೊ ಪದಚ್ಯುತಿಗೆ ಮುನ್ನ ಅಮೆರಿಕದೊಂದಿಗೆ ಡೆಲ್ಸಿ ರೊಡ್ರಿಗಸ್ ರಹಸ್ಯ ಮಾತುಕತೆ: ವರದಿ
ಕ್ಯಾರಕಾಸ್, ಜ.25: ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಪದಚ್ಯುತಗೊಳಿಸುವ ಮೊದಲು, ದೇಶದ ಮಧ್ಯಂತರ ನಾಯಕತ್ವ ಮತ್ತು ಅಮೆರಿಕದ ಅಧಿಕಾರಿಗಳ ನಡುವೆ ಉನ್ನತ ಮಟ್ಟದ ರಹಸ್ಯ ಮಾತುಕತೆಗಳು ನಡೆದಿದ್ದವು ಎಂದು ಬ್ರಿಟನ್ನ The Guardian ವರದಿ ಮಾಡಿದೆ. ವರದಿಯ ಪ್ರಕಾರ, ವೆನೆಝುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಹಾಗೂ ಅವರ ಸಹೋದರ, ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಜಾರ್ಜ್ ರೊಡ್ರಿಗಸ್, ಈ ತಿಂಗಳ ಆರಂಭದಲ್ಲಿ ಮಡುರೊ ಅವರನ್ನು ವಶಕ್ಕೆ ಪಡೆಯುವ ಅಮೆರಿಕ ನೇತೃತ್ವದ ಕಾರ್ಯಾಚರಣೆಗೆ ಮುನ್ನ ಟ್ರಂಪ್ ಆಡಳಿತದೊಂದಿಗೆ ಸಹಕರಿಸುವ ಇಚ್ಛೆಯನ್ನು ಅಮೆರಿಕ ಮತ್ತು ಖತರ್ ಅಧಿಕಾರಿಗಳಿಗೆ ಮಧ್ಯವರ್ತಿಗಳ ಮೂಲಕ ವ್ಯಕ್ತಪಡಿಸಿದ್ದರು. ಜ. 3ರಂದು ಕ್ಯಾರಕಾಸ್ನಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆಗೆ ಮುಂಚಿತವಾಗಿಯೇ ಈ ಮಾತುಕತೆಗಳು ನಡೆದಿವೆ ಎಂದು ವರದಿ ಹೇಳಿದೆ. ಮಡುರೊ ಅವರನ್ನು ಸೆರೆಹಿಡಿದ ಎರಡು ದಿನಗಳ ಬಳಿಕ ಡೆಲ್ಸಿ ರೊಡ್ರಿಗಸ್ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮಡುರೊ ಅವರ ನಿರ್ಗಮನವನ್ನು ಸ್ವಾಗತಿಸಿದರೂ, ಅವರನ್ನು ನೇರವಾಗಿ ಪದಚ್ಯುತಗೊಳಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸುವುದಕ್ಕೆ ರೊಡ್ರಿಗಸ್ ಸಹೋದರರು ಒಪ್ಪಲಿಲ್ಲ ಎಂದು ಉನ್ನತ ಮಟ್ಟದ ಮೂಲಗಳು ತಿಳಿಸಿವೆ. ಮಡುರೊ ನಂತರ ದೇಶದಲ್ಲಿ ಸ್ಥಿರ ಆಡಳಿತ ಸಹಕಾರಕ್ಕೆ ಮಾತ್ರ ಅವರು ಬೆಂಬಲ ಸೂಚಿಸಿದ್ದರು ಎಂದು ವರದಿ ಹೇಳಿದೆ. ಡಿಸೆಂಬರ್ ವೇಳೆಗೆ ಡೆಲ್ಸಿ ರೊಡ್ರಿಗಸ್ ಅವರು “ಮಡುರೊ ಹೋಗಬೇಕು” ಎಂಬ ನಿಲುವು ವ್ಯಕ್ತಪಡಿಸಿದ್ದರು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಂತರದ ಪರಿಣಾಮಗಳು ಏನೇ ಇರಲಿ, ಅವುಗಳೊಂದಿಗೆ ಕೆಲಸ ಮಾಡಲು ಅವರು ಸಿದ್ಧರಾಗಿದ್ದರು” ಎಂದು ಮತ್ತೊಬ್ಬರು ಹೇಳಿದ್ದಾರೆ. ಆರಂಭದಲ್ಲಿ ಅಮೆರಿಕದ ಆಡಳಿತದೊಳಗೆ ಈ ರೀತಿಯ ಆಂತರಿಕ ನಾಯಕರೊಂದಿಗೆ ತೊಡಗಿಸಿಕೊಳ್ಳುವ ಬಗ್ಗೆ ಸಂಶಯವಿತ್ತು. ಆದರೆ ಮಡುರೊ ಪದಚ್ಯುತಿಯ ನಂತರ ಉಂಟಾಗಬಹುದಾದ ಅಸ್ಥಿರತೆಯನ್ನು ತಪ್ಪಿಸಲು ಡೆಲ್ಸಿ ರೊಡ್ರಿಗಸ್ ಅವರ ಭರವಸೆಗಳು ಸಹಾಯಕವಾಗಬಹುದು ಎಂಬ ಅಭಿಪ್ರಾಯ ಮೂಡಿತ್ತು ಎಂದು ವರದಿ ಹೇಳುತ್ತದೆ. ಮಡುರೊ ಬಂಧನದ ಕೆಲವೇ ಗಂಟೆಗಳ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯೂಯಾರ್ಕ್ ಪೋಸ್ಟ್ಗೆ, “ನಾವು ಆಕೆಯೊಂದಿಗೆ ಹಲವಾರು ಬಾರಿ ಮಾತನಾಡಿದ್ದೇವೆ. ಆಕೆ ಅರ್ಥಮಾಡಿಕೊಂಡಿದ್ದಾಳೆ” ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ವೆನೆಝುವೆಲಾ ಸರ್ಕಾರವು ಸಾಮಾಜಿಕ ಜಾಲತಾಣ Xನಲ್ಲಿ ಇಂತಹ ಸಹಕಾರದ ವರದಿಗಳನ್ನು “ಸುಳ್ಳು” ಎಂದು ತಳ್ಳಿಹಾಕಿದೆ. ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಇದಕ್ಕೂ ಮುನ್ನ, ಮಡುರೊ ಕೆಳಗಿಳಿದರೆ ಖತರ್ ಮೂಲಕ ಪರಿವರ್ತನಾ ಸರ್ಕಾರವನ್ನು ಮುನ್ನಡೆಸಲು ಸಿದ್ಧತೆ ಇದೆ ಎಂದು ಡೆಲ್ಸಿ ರೊಡ್ರಿಗಸ್ ಸೂಚಿಸಿದ್ದರೆಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಆ ಪ್ರಸ್ತಾವವನ್ನು ಅಯವಮೆರಿಕವು ಸ್ವೀಕರಿಸಿರಲಿಲ್ಲ. ಇದಾದ ಬಳಿಕ, ಮಡುರೊ ಅವರನ್ನು ಪದಚ್ಯುತಗೊಳಿಸುವ ಕಾರ್ಯಾಚರಣೆಗೆ ತಿಂಗಳುಗಳ ಮೊದಲು ವೆನೆಝುವೆಲಾದ ಆಂತರಿಕ ಸಚಿವ ಡಿಯೊಸ್ಡಾಡೊ ಕ್ಯಾಬೆಲ್ಲೊ ಕೂಡ ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರೆಂದು ರಾಯಿಟರ್ಸ್ ವರದಿ ಮಾಡಿದೆ. ಮಡುರೊ ನಂತರ ವೆನೆಝುವೆಲಾ ವಿಫಲ ರಾಷ್ಟ್ರವಾಗದಂತೆ ತಡೆಯುವುದೇ ಅಮೆರಿಕದ ಪ್ರಮುಖ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ. ಡೆಲ್ಸಿ ರೊಡ್ರಿಗಸ್ ಅವರು ಅಮೆರಿಕದ ತೈಲ ಕಂಪೆನಿಗಳೊಂದಿಗೆ ಕೆಲಸ ಮಾಡಲು ಸಿದ್ಧತೆ ನಡೆಸಿದ್ದೂ ಅಮೆರಿಕದ ಕೆಲವು ಅಧಿಕಾರಿಗಳ ಬೆಂಬಲಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ. ಆದರೆ, ಈ ಎಲ್ಲದ ನಡುವೆಯೂ, ರೊಡ್ರಿಗಸ್ ಸಹೋದರರು ಮಡುರೊ ಅವರನ್ನು ಉರುಳಿಸಲು ಪಿತೂರಿ ನಡೆಸಲಿಲ್ಲ ಎಂದು ಮೂಲಗಳು ಒತ್ತಿ ಹೇಳಿವೆ. ಜನವರಿ ಆರಂಭದಲ್ಲಿ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ಗಳು ಕ್ಯಾರಕಾಸ್ ಗೆ ಬಂದಾಗ ಡೆಲ್ಸಿ ರೊಡ್ರಿಗಸ್ ರಾಜಧಾನಿಯಲ್ಲಿ ಇರಲಿಲ್ಲ. ಅವರು ಮಾರ್ಗರಿಟಾ ದ್ವೀಪದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
Greenland Future: ಗ್ರೀನ್ಲ್ಯಾಂಡ್ ಭವಿಷ್ಯದ ವಿಚಾರದಲ್ಲಿ ಯುರೋಪ್ ಒಕ್ಕೂಟದ ಒಗ್ಗಟ್ಟು, ಮುಂದಿನ ನಿರ್ಧಾರ ಏನು?
ಯುರೋಪ್ ಒಕ್ಕೂಟ ಇದೀಗ ಅದೊಂದು ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲು ಸಜ್ಜಾಗಿದೆ. ಒಂದು ಕಡೆ ಅಮೆರಿಕ ಹೇಳುವ ಎಲ್ಲಾ ವಿಚಾರಕ್ಕೂ ಸರಿ, ಸರಿ ಎನ್ನುತ್ತಾ ಬಂದಿದ್ದ ಯುರೋಪ್ನಲ್ಲಿ ಇದೀಗ ಇಲ್ಲ &ಬೇಡ ಎನ್ನುವ ಧೈರ್ಯ ಮೂಡಲು ಕಾರಣ ಆಗಿರುವುದೇ ಗ್ರೀನ್ಲ್ಯಾಂಡ್ ವಿಚಾರ. ಏಕೆಂದರೆ ಗ್ರೀನ್ಲ್ಯಾಂಡ್ ವಿಚಾರದಲ್ಲಿ ಅಮೆರಿಕ ಕೈಗೊಳ್ಳುತ್ತಿರುವ ನಿರ್ಧಾರಗಳು ಸಹಜವಾಗಿ ಇಡೀ ಯುರೋಪ್ ಒಕ್ಕೂಟಕ್ಕೆ
ಸುರಪುರ | ಮತಗಳ್ಳತನ ತಡೆಗೆ ಬೂತ್ ಮಟ್ಟದ ಕಾರ್ಯಕರ್ತರು ಜಾಗೃತರಾಗಬೇಕು: ಶಾಸಕ ರಾಜಾ ವೇಣುಗೋಪಾಲ ನಾಯಕ
ಬೂತ್ ಮಟ್ಟದ ಕಾರ್ಯಕರ್ತರ ಸಭೆ
Bangladeshನ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 'ದ್ವೇಷ ಭಾಷಣ' ಕ್ಕೆ ಅವಕಾಶ: ಆಶ್ಚರ್ಯ, ಆಘಾತ ವ್ಯಕ್ತಪಡಿಸಿದ ಢಾಕಾ
ಭಾರತದ ವಿರುದ್ಧ ಬಾಂಗ್ಲಾದೇಶದ ಆಕ್ಷೇಪ
ಹುಣಸಗಿ | ಅಕ್ರಮ ಚಟುವಟಿಕೆ ತಡೆಗೆ ಗ್ರಾಮೀಣ ಪ್ರದೇಶಗಳಲ್ಲಿ ಡ್ರೋಣ್ ಕಣ್ಗಾವಲು ಆರಂಭ
ಹುಣಸಗಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವ ಹಾಗೂ ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮೆರಾ ಮೂಲಕ ಕಣ್ಗಾವಲು ಆರಂಭಿಸಿದೆ. ಹುಣಸಗಿ ಠಾಣೆಯ ಸಿಪಿಐ ರವಿಕುಮಾರ್ ಅವರ ನೇತೃತ್ವದಲ್ಲಿ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲಕುಂಟೆ, ತೀರ್ಥಲ ಹುಲಿಕೇರಿ ಗುಡ್ಡ, ರಾಜವಾಳಗುಡ್ಡ, ಕಕ್ಕೇರಾ (ಅಂಬಾನಗರ) ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾಗಳನ್ನು ಹಾರಿಸಲಾಯಿತು. ಗ್ರಾಮಗಳಲ್ಲಿ ನಡೆಯುವ ಇಸ್ಪೀಟ್, ಜೂಜಾಟ, ಮಟ್ಕಾ ಬರೆಯುವುದು, ಕೋಳಿ ಪಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚಿ ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಸಾರ್ವಜನಿಕರು ಯಾವುದೇ ಅಕ್ರಮ ಚಟುವಟಿಕೆಗಳಿಗೆ ಮುಂದಾಗದಂತೆ ಎಚ್ಚರಿಕೆ ನೀಡುವ ಸಂದೇಶವನ್ನೂ ಪೊಲೀಸ್ ಇಲಾಖೆ ರವಾನಿಸಿದೆ. ಈ ಕುರಿತು ಮಾಹಿತಿ ನೀಡಿದ ಸಿಪಿಐ ರವಿಕುಮಾರ್, ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯಬಾರದು ಹಾಗೂ ಸಾರ್ವಜನಿಕರು ಇಂತಹ ಕೃತ್ಯಗಳಿಗೆ ಬೆಂಬಲ ನೀಡಬಾರದು ಎಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಡ್ರೋಣ್ ಕ್ಯಾಮೆರಾ ಕಣ್ಗಾವಲು ಆರಂಭಿಸಲಾಗಿದೆ ಎಂದು ತಿಳಿಸಿದರು. ಈ ಕಾರ್ಯಾಚರಣೆಯಲ್ಲಿ ಕೊಡೇಕಲ್ ಪೊಲೀಸ್ ಠಾಣೆಯ ಪಿಎಸ್ಐ ರಾಜಶೇಖರ ರಾಥೋಡ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಡ್ರೋಣ್ ಕಣ್ಗಾವಲಿನಲ್ಲಿ ಯಾವುದೇ ಅಕ್ರಮ ಚಟುವಟಿಕೆ ಪತ್ತೆಯಾಗಿದೆಯೇ ಎಂಬ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಪದ್ಮ ಪ್ರಶಸ್ತಿಗಳಲ್ಲಿ ರಾಜಕೀಯ ವಿಭಿನ್ನ ಸಿದ್ಧಾಂತಗಳಿಗೆ ಕೇಂದ್ರದ ಗೌರವ; ಕೇರಳದ ಮೇಲೆ 'ವಿಶೇಷ' ಗಮನ
5 ಪದ್ಮವಿಭೂಷಣ ಪ್ರಶಸ್ತಿಗಳ ಪೈಕಿ ಮೂರು ಕೇರಳಕ್ಕೆ!
Davanagere | ಹಿಮೋಫಿಲಿಯಾ ರೋಗಿಗಳ ಆಶಾಕಿರಣ ಡಾ. ಸುರೇಶ್ ಹನಗವಾಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ
ದಾವಣಗೆರೆ/ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿನ ಅಪಾರ ಸೇವೆಗಾಗಿ ಜಿಲ್ಲೆಯ ಖ್ಯಾತ ವೈದ್ಯ ಡಾ. ಸುರೇಶ್ ಹನಗವಾಡಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ಸಂಸ್ಥಾಪಕರಾದ ಡಾ. ಸುರೇಶ್ ಹನಗವಾಡಿ ಅವರು ಕಳೆದ ಮೂರು ದಶಕಗಳಿಂದ ರಕ್ತ ಹೆಪ್ಪುಗಟ್ಟದ ಕಾಯಿಲೆ (ಹಿಮೋಫಿಲಿಯಾ) ಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸ್ಥಾಪಿಸಿದ ಚಿಕಿತ್ಸಾ ಕೇಂದ್ರವು ಇಂದು ದಕ್ಷಿಣ ಭಾರತದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದು, ಸಾವಿರಾರು ಜನರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಜೀವ ಉಳಿಸುವ 'ಫ್ಯಾಕ್ಟರ್' ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಸೇವೆಯ ಜೊತೆಗೆ ಸಾಹಿತ್ಯ ಮತ್ತು ಸಂಶೋಧನೆಯಲ್ಲೂ ತೊಡಗಿಸಿಕೊಂಡಿರುವ ಇವರಿಗೆ ಈಗಾಗಲೇ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಸಂದಿದೆ. ಈಗ ಪದ್ಮಶ್ರೀ ಗೌರವದ ಮೂಲಕ ಅವರ ಸೇವೆಗೆ ರಾಷ್ಟ್ರಮಟ್ಟದ ಮನ್ನಣೆ ದೊರೆತಿದೆ. ದಿವಂಗತ ಲೋಹಿತಮ್ಮ, ದಿವಂಗತ ಸಿ. ಹನುಮಂತಪ್ಪ ಅವರ ಪುತ್ರರಾದ ಡಾ. ಸುರೇಶ್ ಹನಗವಾಡಿ ಅವರು, ಬಳ್ಳಾರಿಯ ಸೇಂಟ್ ಜಾನ್ಸ್ ಶಾಲೆಯಲ್ಲಿ ಎಸ್ಎಸ್ಎಲ್ಸಿ, ವಾರ್ಡ್ಲಾ ಕಾಂಪೋಸಿಟ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ , 1982-88 ದಾವಣಗೆರೆಯಲ್ಲಿ ಜೆಜೆಎಂ ವೈದ್ಯಕೀಯ ಕಾಲೇಜು ಎಂಬಿಬಿಎಸ್. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (1990-1993) ಸ್ನಾತಕೋತ್ತರ (ರೋಗಶಾಸ್ತ್ರ) ಪದವಿ ಪಡೆದಿದ್ದಾರೆ.
ರೈಲು ನಿಲ್ದಾಣದಲ್ಲೇ ಆಫೀಸ್ ಕೆಲಸ: ದೇಶದ ಮೊದಲ 'ಡಿಜಿಟಲ್ ಲೌಂಜ್' ಆರಂಭ, ಏನಿದು?
ನವದೆಹಲಿ: ಕೇಂದ್ರ ಸರ್ಕಾರವು ಅಮೃತ್ ರೈಲ್ವೆ ಸ್ಟೇಷನ್ ಯೋಜನೆಯಡಿ ದೇಶದ ಹಲವಾರು ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಮಾಡಿತ್ತು. ಇದೀಗ ಮುಂದುವರಿದು ರೈಲು ನಿಲ್ದಾಣದಲ್ಲಿ 'ಭಾರತದ ಮೊದಲ ಡಿಜಿಟಲ್ ಲೌಂಜ್ ಮತ್ತು ಕೋ-ವರ್ಕಿಂಗ್ ಸ್ಪೇಸ್' ಅನ್ನು ಆರಂಭಿಸಲಾಗಿದೆ. ವೃತ್ತಿಪರ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ. ಏನಿದು? ಇದರ ಬಳಕೆ, ಉದ್ದೇಶ ಮತ್ತು ವಿಶೇಷತೆಗಳು ಏನೆಂದು ಇಲ್ಲಿ ತಿಳಿಯಿರಿ. ಮುಂಬೈ ಸೆಂಟ್ರಲ್
ಗಣತಂತ್ರದ ಹಬ್ಬಕ್ಕೆ ಭಾರತ ಸಿದ್ಧ, ಸಾರ್ವಭೌಮತ್ವ ರಕ್ಷಣೆಗೆ ಸದಾ ಬದ್ಧ; ಜ.26ರ ಸಂಭ್ರಮದ ಸಂಪೂರ್ಣ ವಿವರ
Republic Day 2026: ಭಾರತ ನಾಳೆ (ಜ.26-ಸೋಮವಾರ) 77ನೇ ಗಣರಾಜ್ಯೋತ್ಸವನ್ನು ಆಚರಿಸಿಕೊಳ್ಳಲಿದೆ. ಭಾರತದ ಸಾರ್ವಭೌಮತ್ವವನ್ನು ಜಗತ್ತಿಗೆ ಸಾರಿದ ಈ ಪ್ರಮುಖ ದಿನ ಸಮಸ್ತ ಭಾರತೀಯರ ಪಾಲಿಗೆ ಅತ್ಯತಂತ ಮಹತ್ವವಾದದ್ದು. ಈ ಹಿನ್ನೆಲೆಯಲ್ಲಿ ನಾಳೆ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಕಾರ್ಯಕ್ರಮಗಳು, ಈ ಬಾರಿಯ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳು ಮತ್ತು ಭಾರತೀಯ ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಮತ್ತು ಇತರ ಭದ್ರತಾ ತುಕಡಿಗಳ ವಿಶೇಷ ಪರೇಡ್ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ.
ಪ್ರಬುದ್ದ ಸಮಾಜ ನಿರ್ಮಾಣಕ್ಕಾಗಿ ಆರೆಸ್ಸೆಸ್ನಿಂದ ದೂರವಿರಿ : ಯುವಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಕರೆ
ಕಲಬುರಗಿ: ಪ್ರಬುದ್ಧ ಸಮಾಜ ನಿರ್ಮಾಣವಾಗಬೇಕಾದರೆ ಸಂವಿಧಾನಕ್ಕೆ ಗೌರವ ನೀಡದ ಆರೆಸ್ಸೆಸ್ ಹಾಗೂ ಮನುವಾದಿ ಸಿದ್ಧಾಂತಗಳಿಂದ ಯುವಕರು ದೂರವಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು. ನಗರದ ಘಾಟ್ಗೆ ಲೇಔಟ್ನಲ್ಲಿ ನಿರ್ಮಾಣಗೊಂಡ ಪ್ರಬುದ್ಧ ಬುದ್ಧ ವಿಹಾರ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ ನೀಡಿದ ಸಂದೇಶಗಳನ್ನು ಅಕ್ಷರಶಃ ಪಾಲಿಸಿದಾಗ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಬಡವರು, ಹಿಂದುಳಿದವರು ಹಾಗೂ ಆದಿವಾಸಿಗಳ ಮಕ್ಕಳು ಮಾತ್ರ ಇಂತಹ ರಾಜಕೀಯದ ಹೊರೆ ಹೊರುತ್ತಿದ್ದಾರೆ ಎಂದು ಹೇಳಿದರು. ಆರೆಸ್ಸೆಸ್ ಸಿದ್ದಾಂತ ಚೆನ್ನಾಗಿದ್ದರೆ, ಬಿಜೆಪಿ ಆರೆಸ್ಸೆಸ್ ನಾಯಕರ ಮಕ್ಕಳು ಯಾಕೆ ಗೋಮೂತ್ರ ಕುಡಿಯಲ್ಲ? ಇದು ಯಾವ ನ್ಯಾಯ. ಇಂತಹ ಒಳಸಂಚುಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಾನು ಇಂತಹ ಸಿದ್ದಾಂತಗಳನ್ನು ಧೈರ್ಯವಾಗಿ ಎದುರಿಸಿದ್ದೇನೆ ಹಾಗೂ ಪ್ರಶ್ನಿಸಿದ್ದೇನೆ. ಹಾಗಾಗಿ ನನಗೆ ದಿನಕ್ಕೆ ಕನಿಷ್ಠ 300 ಬೆದರಿಕೆ ಕರೆಗಳು ಬಂದಿವೆ. ಹಾಗೆ ನನಗೆ ಬೆದರಿಕೆ ಹಾಕಿದ ವ್ಯಕ್ತಿ ಈಗಲೂ ಜೈಲಿನಲ್ಲಿ ಇದ್ದಾನೆ. ಅವನ ಪರವಾಗಿ ಒಬ್ಬ ವಕೀಲರನ್ನು ಕೂಡಾ ಆರೆಸ್ಸೆಸ್ ನೇಮಿಸಿಲ್ಲ. ಆತನ ತಾಯಿ ನನಗೆ ಕರೆ ಮಾಡಿ, ತಮ್ಮ ಮಗ ಯಾಕೆ ಹಾಗೆ ಮಾಡಿದನೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ಖರ್ಗೆ ಹೇಳಿದರು. ಆರೆಸ್ಸೆಸ್ ಪಥಸಂಚಲನ ಸಂಬಂಧ ನಡೆದ ಕಾನೂನು ಪ್ರಕ್ರಿಯೆಯನ್ನು ನೆನಪಿಸಿಕೊಂಡ ಖರ್ಗೆ, ಸಂವಿಧಾನ ಹಾಗೂ ಕಾನೂನಿನ ಶಕ್ತಿಯಿಂದಲೇ ಎಲ್ಲರೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದು ಸಂವಿಧಾನದ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಿದರು. ಬೌದ್ಧ ಧರ್ಮದಲ್ಲಿ ಸಮಾನತೆ, ಗೌರವ ಮತ್ತು ಸ್ವಾಭಿಮಾನಕ್ಕೆ ಮಹತ್ವವಿದೆ. ಇದನ್ನು ಅರಿತು ಡಾ.ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಅವರೊಂದಿಗೆ ಲಕ್ಷಾಂತರ ಜನರು ಈ ಧರ್ಮವನ್ನು ಅಳವಡಿಸಿಕೊಂಡರು ಎಂದು ಹೇಳಿದರು. ನಮಗೆ ಸಂವಿಧಾನವೇ ಪ್ರಧಾನ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳು ಸಂವಿಧಾನದಲ್ಲಿ ಅಡಕವಾಗಿವೆ. ಸಂವಿಧಾನ ಇಲ್ಲದಿದ್ದರೆ ನಾವು ಇಂದು ಸ್ವತಂತ್ರವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಬಾಬಾಸಾಹೇಬರ ಬರಹಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಅವರ ವಿಚಾರಗಳು ಅನಿವಾರ್ಯವಾಗಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ನಗರದ ವಿವಿಧ ಪ್ರದೇಶಗಳಲ್ಲಿ ಪ್ರಬುದ್ಧ ಬುದ್ಧ ವಿಹಾರಗಳನ್ನು ನಿರ್ಮಿಸಿ ಬುದ್ಧ–ಬಸವ–ಅಂಬೇಡ್ಕರ್ ವಿಚಾರಧಾರೆಯನ್ನು ಜನರಲ್ಲಿ ಬಿತ್ತರಿಸಬೇಕೆಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಬೌದ್ಧ ಧರ್ಮಗುರುಗಳು ಧಮ್ಮ ಸಂದೇಶ ನೀಡಿದರು. ವೇದಿಕೆಯಲ್ಲಿ ಬೌದ್ಧ ಧರ್ಮಗುರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಿಜೆಪಿ ಮುಖಂಡನಿಗೆ ದ್ವೇಷ ಭಾಷಣ ಮಸೂದೆಯಡಿ ಪೊಲೀಸರು ನೋಟಿಸ್ ನೀಡಿದ್ದು ತಪ್ಪು: ಡಾ.ಜಿ. ಪರಮೇಶ್ವರ್
ಬೆಂಗಳೂರು: ಜಾರಿಯ ಹಂತದಲ್ಲಿರುವಾಗಲೇ ದ್ವೇಷ ಭಾಷಣ ಮಸೂದೆಯ ಅಡಿ ಬಿಜೆಪಿ ಮುಖಂಡ ವಿಕಾಸ್ ಪುತ್ತೂರುಗೆ ಪೊಲೀಸರು ನೋಟಿಸ್ ನೀಡಿದ್ದು ತಪ್ಪು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟಿಸ್ ನೀಡಿರುವ ವಿಚಾರವಾಗಿ ಮಾಹಿತಿ ತರಿಸಿಕೊಳ್ಳುತ್ತೇನೆ. ಇನ್ನೊಂದೆಡೆ, ಈ ಮಸೂದೆಗೆ ರಾಜ್ಯಪಾಲರು ಸಹಿ ಹಾಕಿಲ್ಲ. ಇದು ಕಾನೂನಾಗದ ಕಾರಣ ಈ ಮಸೂದೆಯ ಅಡಿ ನೋಟಿಸ್ ನೀಡಿದ್ದು ತಪ್ಪು. ಪೊಲೀಸರು ಯಾಕೆ ಈ ರೀತಿ ಮಾಡಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಬೇಕು ಎಂದು ಉಲ್ಲೇಖಿಸಿದರು.
ಕರ್ನಾಟಕಕ್ಕೆ 217 ರನ್ ಸೋಲುಣಿಸಿದ ಮಧ್ಯಪ್ರದೇಶ
ರಣಜಿ ಎಲಿಟ್ ‘ಬಿ’ ಗುಂಪಿನ ಪಂದ್ಯ
Bangladesh ಅನುಪಸ್ಥಿತಿ ಕ್ರಿಕೆಟ್ ನ ದುಃಖದ ಕ್ಷಣ: ಆಟಗಾರರ ಸಂಘ
ಮುಂಬೈ, ಜ. 25: ಮುಂದಿನ ತಿಂಗಳು ನಡೆಯಲಿರುವ ಟ್ವೆಂಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ಅನುಪಸ್ಥಿತಿಯು ಕ್ರಿಕೆಟ್ನ ದುಃಖದ ಗಳಿಗೆಯಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟಿಗರ ಅಸೋಸಿಯೇಶನ್ ರವಿವಾರ ಹೇಳಿದೆ. ಈ ವಿದ್ಯಮಾನವು ಕ್ರೀಡೆಯನ್ನು ವಿಭಜಿಸುವ ಬಗ್ಗೆ ಯೋಚಿಸದೆ ಒಗ್ಗೂಡಿಸುವುದರತ್ತ ಕೆಲಸ ಮಾಡುವುದಕ್ಕೆ ಸಂಬಂಧಪಟ್ಟವರಿಗೆ ಕರೆಗಂಟೆಯಾಗಬೇಕು ಎಂದು ಅದು ಹೇಳಿದೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಗಾಗಿ ಪಂದ್ಯಾವಳಿಯಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿದೆ. ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಬೇಕು ಎಂಬುದಾಗಿ ಅದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯನ್ನು ಕೋರಿತ್ತು. ಆದರೆ, ಈ ಕೋರಿಕೆಯನ್ನು ಐಸಿಸಿ ತಿರಸ್ಕರಿಸಿದೆ ಹಾಗೂ ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ಸ್ಥಾನದಲ್ಲಿ ಆಡಲು ಸ್ಕಾಟ್ಲ್ಯಾಂಡ್ಗೆ ಆಹ್ವಾನ ನೀಡಿದೆ. ‘‘ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ ಹೊರಬಂದಿರುವುದು ಹಾಗೂ ಕ್ರಿಕೆಟ್ನ ಜಾಗತಿಕ ಕೂಟದಲ್ಲಿ ಉನ್ನತ ಕ್ರಿಕೆಟ್ ದೇಶವೊಂದರ ಅನುಪಸ್ಥಿತಿಯು ನಮ್ಮ ಕ್ರೀಡೆ ಹಾಗೂ ಬಾಂಗ್ಲಾದೇಶದ ಆಟಗಾರರು ಮತ್ತು ಅಭಿಮಾನಿಗಳಿಗೆ ದುಃಖದ ಗಳಿಗೆಯಾಗಿದೆ. ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ’’ ಎಂದು ವಿಶ್ವ ಕ್ರಿಕೆಟಿಗರ ಅಸೋಸಿಯೇಶನ್ (ಡಬ್ಲ್ಯುಸಿಎ)ನ ಮುಖ್ಯ ಕಾರ್ಯನಿರ್ವಾಹಕ ಟಾಮ್ ಮೊಫತ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಮೂರನೇ ಶ್ರೇಯಾಂಕದ ಅಮೆರಿಕದ ಕೋಕೊ ಗೌಫ್ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ಫೈನಲ್ಗೆ ತೇರ್ಗಡೆಯಾಗಿದ್ದಾರೆ. ಅವರು ಝೆಕ್ನ ಕರೊಲಿನಾ ಮುಚೋವರನ್ನು 6–1, 3–6, 6–3 ಸೆಟ್ಗಳಿಂದ ಮಣಿಸಿದರು. ಎರಡು ಬಾರಿಯ ಗ್ರ್ಯಾನ್ಸ್ಲ್ಯಾಮ್ ಚಾಂಪಿಯನ್, 21 ವರ್ಷದ ಗೌಫ್ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ಗಿಂತ ಮುಂದೆ ಹೋಗಿಲ್ಲ.
Australian Open | ಸಬಲೆಂಕ, ಜೊವಿಚ್, ಅಲ್ಕರಾಝ್ ಕ್ವಾರ್ಟರ್ ಫೈನಲ್ ಗೆ
ಮೆಲ್ಬರ್ನ್, ಜ. 25: ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ರವಿವಾರ ಮಹಿಳಾ ಸಿಂಗಲ್ಸ್ನಲ್ಲಿ ಬೆಲಾರಸ್ನ ಅರೈನಾ ಸಬಲೆಂಕ ಕೆನಡಾದ ವಿಕ್ಟೋರಿಯಾ ಎಂಬೊಕೊರನ್ನು ಸೋಲಿಸಿ ಸತತ ನಾಲ್ಕನೇ ಬಾರಿ ಕ್ವಾರ್ಟರ್ಫೈನಲ್ ತಲುಪಿದರು. ಪುರುಷರ ಸಿಂಗಲ್ಸ್ನಲ್ಲಿ ಸ್ಪೇನ್ನ ಕಾರ್ಲೋಸ್ ಅಲ್ಕರಾಝ್ ಕ್ವಾರ್ಟರ್ಫೈನಲ್ಗೆ ತೇರ್ಗಡೆಯಾದರು. ಎರಡು ಬಾರಿಯ ಚಾಂಪಿಯನ್ ಸಬಲೆಂಕ ತಮ್ಮ ಎದುರಾಳಿಯನ್ನು 6–1, 7–6(1) ಸೆಟ್ಗಳಿಂದ ಸೋಲಿಸಿದರು. ರಾಡ್ ಲೇವರ್ ಅರೀನಾದಲ್ಲಿ ನಡೆದ ಪಂದ್ಯದಲ್ಲಿ ಸಬಲೆಂಕ ಮೊದಲ ಸೆಟ್ ಅನ್ನು 31 ನಿಮಿಷಗಳಲ್ಲಿ ಗೆದ್ದರು. ಆದರೆ, ಎರಡನೇ ಸೆಟ್ನಲ್ಲಿ 17ನೇ ಶ್ರೇಯಾಂಕದ ವಿಕ್ಟೋರಿಯಾ ತೀವ್ರ ಪ್ರತಿಹೋರಾಟ ನೀಡಿದರೂ 4–1ರ ಮುನ್ನಡೆಯನ್ನು ಕಳೆದುಕೊಂಡರು. ಸಬಲೆಂಕ ಕ್ವಾರ್ಟರ್ಫೈನಲ್ನಲ್ಲಿ ಅಮೆರಿಕದ ಇವಾ ಜೊವಿಚ್ ಅವರನ್ನು ಎದುರಿಸಲಿದ್ದಾರೆ. ರವಿವಾರ ನಡೆದ ಇನ್ನೊಂದು ಪ್ರೀ–ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇವಾ ಜೊವಿಚ್ ಕಝಖಿಸ್ತಾನದ ಯೂಲಿಯಾ ಪುಟಿನ್ಟ್ಸೇವಾರನ್ನು 6–0, 6–1 ಸೆಟ್ಗಳಿಂದ ಸೋಲಿಸಿದರು. ಜಾನ್ ಕೇನ್ ಅರೀನಾದಲ್ಲಿ ನಡೆದ ಈ ಪಂದ್ಯ ಕೇವಲ 53 ನಿಮಿಷಗಳಲ್ಲಿ ಮುಗಿಯಿತು. ಪುರುಷರ ಸಿಂಗಲ್ಸ್ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ಕಾರ್ಲೋಸ್ ಅಲ್ಕರಾಝ್ ಸತತ ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ಫೈನಲ್ ತಲುಪಿದರು. ರಾಡ್ ಲೇವರ್ ಅರೀನಾದಲ್ಲಿ ನಡೆದ ಪ್ರೀ–ಕ್ವಾರ್ಟರ್ಫೈನಲ್ನಲ್ಲಿ ಅವರು ಅಮೆರಿಕದ ಟಾಮಿ ಪಾಲ್ ಅವರನ್ನು 7–6(6), 6–4, 7–5 ಸೆಟ್ಗಳಿಂದ ಸೋಲಿಸಿದರು. ಮೊದಲ ಸೆಟ್ ಟೈಬ್ರೇಕ್ ಹಂತದಲ್ಲಿದ್ದಾಗ ಪ್ರೇಕ್ಷಕರಲ್ಲಿ ಒಬ್ಬ ಹಿರಿಯ ಮಹಿಳೆ ಅಸ್ವಸ್ಥರಾದ ಕಾರಣ 14 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿತು. ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ ನಂತರ ಅವರನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ಯಲಾಯಿತು. ► ಆಡದೇ ಕ್ವಾರ್ಟರ್ಫೈನಲ್ ತಲುಪಿದ ಜೊಕೊವಿಕ್! ಪುರುಷರ ಸಿಂಗಲ್ಸ್ನಲ್ಲಿ 10 ಬಾರಿಯ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಕ್ ಆಡದೇ ನೇರವಾಗಿ ಕ್ವಾರ್ಟರ್ಫೈನಲ್ಗೆ ತಲುಪಿದರು. ಅವರ ಎದುರಾಳಿಯಾಗಿದ್ದ ಝೆಕ್ನ ಜಾಕೂಬ್ ಮೆನ್ಸಿಕ್ ಹೊಟ್ಟೆ ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದಿದ್ದರು. ಹೀಗಾಗಿ, ಜೊಕೊವಿಕ್ ಕ್ವಾರ್ಟರ್ಫೈನಲ್ನಲ್ಲಿ ಇಟಲಿಯ ಐದನೇ ಶ್ರೇಯಾಂಕದ ಲೊರೆನ್ಜೊ ಮುಸೆಟ್ಟಿ ಅಥವಾ ಅಮೆರಿಕದ ಒಂಭತ್ತನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರನ್ನು ಎದುರಿಸಲಿದ್ದಾರೆ. ಪಾಕ್ T20 ವಿಶ್ವಕಪ್ ತಂಡ ಪ್ರಕಟ: ಆದರೆ, ಭಾಗವಹಿಸುವುದು ಖಚಿತವಿಲ್ಲ ಎಂದ ಪಿಸಿಬಿ!(w) ಲಾಹೋರ್, ಜ. 25: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಯ್ಕೆ ಸಮಿತಿಯು ರವಿವಾರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಆಡುವ ತನ್ನ 15 ಆಟಗಾರರ ತಂಡವನ್ನು ಘೋಷಿಸಿದೆ. ಆದರೆ, ಪಂದ್ಯಾವಳಿಯಲ್ಲಿ ಭಾಗವಹಿಸುವುದು ಖಚಿತವಲ್ಲ ಎಂದು ಹೇಳಿದೆ. ಬಾಂಗ್ಲಾದೇಶದ ಸ್ಥಾನಕ್ಕೆ ಸ್ಕಾಟ್ಲ್ಯಾಂಡ್ ತಂಡವನ್ನು ಐಸಿಸಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವೂ ವಿಶ್ವಕಪ್ನಿಂದ ಹಿಂದೆ ಸರಿಯಬಹುದು ಎಂಬ ಎಚ್ಚರಿಕೆಯನ್ನು ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಕೆಲ ದಿನಗಳ ಹಿಂದೆ ನೀಡಿದ್ದರು. ಲಾಹೋರಿನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಸಿಬಿಯ ಹೈಪರ್ಫಾರ್ಮನ್ಸ್ ನಿರ್ದೇಶಕ ಆಕಿಬ್ ಜಾವೇದ್ ಮತ್ತು ಪ್ರಧಾನ ಕೋಚ್ ಮೈಕಲ್ ಜೇಮ್ಸ್ ಹೆಸನ್ ತಂಡವನ್ನು ಪ್ರಕಟಿಸಿದರು. ಆದರೆ, ಭಾಗವಹಿಸುವುದರ ಕುರಿತು ಅಂತಿಮ ನಿರ್ಧಾರ ಸರ್ಕಾರದ ಕೈಯಲ್ಲಿದೆ ಎಂದು ಜಾವೇದ್ ಸ್ಪಷ್ಟಪಡಿಸಿದರು. ► ತಂಡದಲ್ಲಿ ಏನೂ ಅಚ್ಚರಿಯಿಲ್ಲ ಟೀಂ: ಸಲ್ಮಾನ್ ಅಲಿ ಅಘ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಅಝಮ್, ಫಾಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮುಹಮ್ಮದ್ ನಫಾಯ್ (ವಿಕೆಟ್ಕೀಪರ್), ಮುಹಮ್ಮದ್ ನವಾಝ್, ಮುಹಮ್ಮದ್ ಸಲ್ಮಾನ್ ಮಿರ್ಝಾ, ನಸೀಮ್ ಶಾ, ಸಾಹಿಬ್ಝಾದಾ ಫರ್ಹಾನ್ (ವಿಕೆಟ್ಕೀಪರ್), ಸಯೀಮ್ ಅಯೂಬ್, ಶಹೀನ್ ಶಾ ಅಫ್ರಿದಿ, ಶದಬ್ ಖಾನ್, ಉಸ್ಮಾನ್ ಖಾನ್ (ವಿಕೆಟ್ಕೀಪರ್) ಮತ್ತು ಉಸ್ಮಾನ್ ತಾರಿಖ್.
Iran And USA: ಇರಾನ್ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ಆತಂಕ, ಬಂಕರ್ ಸೇರಿದ ಇರಾನ್ ಸರ್ವಾಧಿಕಾರಿ?
ಅಮೆರಿಕ ಮತ್ತು ಇರಾನ್ ನಡುವೆ ಇದೀಗ ಘೋರ ಯುದ್ಧ ನಡೆಯುವ ಎಲ್ಲಾ ಲಕ್ಷಣ ಗೋಚರಿಸಿದೆ. ಈ ಪೈಕಿ ಡೊನಾಲ್ಡ್ ಟ್ರಂಪ್ ಯಾವಾಗ ನೇರವಾಗಿ ಇರಾನ್ ಕಡೆಗೆ ಅಮೆರಿಕದ ಬೃಹತ್ ಸೇನೆಯನ್ನ ಹಾಗೂ ಸೇನಾ ಹಡಗನ್ನು ನುಗ್ಗಿಸಲು ಅನುಮತಿ ನೀಡಿದರೋ, ಆ ನಂತರ ಪರಿಸ್ಥಿತಿ ಮತ್ತೊಂದು ತಿರುವು ಪಡೆಯುತ್ತಿದೆ. ಇಷ್ಟೆಲ್ಲಾ ನಡೆಯುವಾಗಲೇ ಮತ್ತೊಂದು ಕಡೆ ಇರಾನ್ ನೆಲದಲ್ಲಿ ತಲ್ಲಣವೇ
ಕಲಬುರಗಿಯಲ್ಲಿ ಫೆ.21ರಿಂದ 28ರವರೆಗೆ ರಾಷ್ಟ್ರೀಯ ನಾಟಕೋತ್ಸವ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ,ಜ.25: ಕಲಬುರಗಿಯನ್ನು ರಾಜ್ಯದ ಸೃಜನಶೀಲ ನಗರವನ್ನಾಗಿ ರೂಪಿಸುವ ಗುರಿಯೊಂದಿಗೆ ಕಲಬುರಗಿಯಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತ ಮತ್ತು ಬೆಂಗಳೂರಿನ ರಂಗಶಂಕರ ಸಹಯೋಗದಲ್ಲಿ ಫೆಬ್ರವರಿ 21ರಿಂದ 28ರವರೆಗೆ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಕಲಬುರಗಿಯ ಸಮಸ್ತ ಕಲಾಭಿಮಾನಿಗಳು ಈ ನಾಟಕೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ನಾಟಕೋತ್ಸವ-26ರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಬೆಂಗಳೂರಿನ ಪ್ರಸಿದ್ಧ ರಂಗಶಂಕರ ಸಹಭಾಗಿತ್ವದಲ್ಲಿ ಮುಂದಿನ ಐದು ವರ್ಷಗಳ ಕಾಲ ನಿರಂತರ ನಾಟಕೋತ್ಸವ ಆಯೋಜಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. ನಾಟಕೋತ್ಸವದಲ್ಲಿ ನಗರದ ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಕನ್ನಡದ ಪ್ರಸಿದ್ಧ ನಾಟಕಗಳು ಸೇರಿದಂತೆ ವಿವಿಧ ರಾಜ್ಯಗಳ ಬೇರೆ ಭಾಷೆಯ ನಾಟಕಗಳನ್ನು, ಕಲಬುರಗಿ ರಂಗಾಯಣದಲ್ಲಿ ವಿಶೇಷವಾಗಿ ಮಕ್ಕಳಿಗಾಗಿ ನಾಟಕಗಳು ಮತ್ತು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ರಂಗಭೂಮಿ ಕುರಿತಂತೆ ಹೆಸರಾಂತ ರಂಗಕರ್ಮಿಗಳೊಂದಿಗೆ ಪ್ರತಿದಿನ ವಿವಿಧ ವಿಷಯಗಳ ಕುರಿತು ಸಂವಾದಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಕಲಬುರಗಿಯನ್ನು ಕರ್ನಾಟಕದ ಒಂದು ಕ್ರಿಯಾಶೀಲ ಸಾಂಸ್ಕೃತಿಕ ಹೆಗ್ಗುರುತನ್ನಾಗಿ ರೂಪಿಸುವ ಆಶಯವನ್ನು ‘ಕಲಬುರಗಿ ನಾಟಕೋತ್ಸವ’ ಹೊಂದಿದೆ. ಇದು ಕೇವಲ ತನ್ನ ಐತಿಹಾಸಿಕ ಪರಂಪರೆಗೆ ಮಾತ್ರವಲ್ಲದೆ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜೀವಂತ ಕಲಾ ಕ್ಷೇತ್ರಕ್ಕೂ ಹೆಸರುವಾಸಿಯಾಗಬೇಕು ಎಂಬುದು ಈ ನಾಟಕೋತ್ಸವದ ಪರಿಕಲ್ಪನೆಯಾಗಿದೆ. ಇಲ್ಲಿನ ಸಾಂಸ್ಕೃತಿಕ ಅನನ್ಯತೆಗೆ ರಾಷ್ಟ್ರೀಯ ಮಟ್ಟದ ಮಾನ್ಯತೆ ತಂದುಕೊಡುವ ಮೂಲಕ ಹಾಗೂ ರಂಗಭೂಮಿ, ಸಂಗೀತ ಮತ್ತು ಪೂರಕ ಕಲೆಗಳ ಮೂಲಕ ಪ್ರವಾಸೋದ್ಯಮದ ಆಕರ್ಷಣೆಗಳನ್ನು ವೈವಿಧ್ಯಗೊಳಿಸುವ ಮೂಲಕ, ಸಾಂಸ್ಕೃತಿಕ ಆಸಕ್ತರು ಭೇಟಿ ನೀಡಲೇಬೇಕಾದ ತಾಣವಾಗಿ ಕಲಬುರಗಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್ಸಿ ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಡಿಸಿಎಫ್ ಸುಮಿತ್ ಪಾಟೀಲ್, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ, ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ ಸೇರಿದಂತೆ ಹಲವರು ಇದ್ದರು. ನಾಟಕ ಪ್ರದರ್ಶನಗಳು : ಎಸ್.ಎಮ್. ಪಂಡಿತ್ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 7:00ಗಂಟೆಗೆ ದೇಶದ ವಿವಿಧ ಭಾಗಗಳ ಶ್ರೇಷ್ಠ ನಾಟಕಗಳು ಪ್ರದರ್ಶನಗೊಳ್ಳಲಿವೆ. ಫೆ.21ರಂದು ಸ್ಪಂದನ ಬೆಂಗಳೂರು ತಂಡದ ಬಿ.ಜಯಶ್ರೀ ನಿರ್ದೇಶನದ ‘ಕರಿಮಾಯಿ’, ಫೆ.22ರಂದು ಮುಂಬೈ ಅರಣ್ಯ ಥಿಯೇಟರ್ ತಂಡದ ಅಜಿತೇಶ್ ಗುಪ್ತಾ ನಿರ್ದೇಶನದ ‘ಜೋ ಡೂಬಾ ಸೋ ಪಾರ್’, ಫೆ.23ರಂದು ಕಲಾಗಂಗೋತ್ರಿ ಬೆಂಗಳೂರು ತಂಡದ ಬಿ.ವಿ.ರಾಜಾರಾಂ ನಿರ್ದೇಶನದ ‘ಮುಖ್ಯಮಂತ್ರಿ’, ಫೆ.24ರಂದು ಡಿ ಫಾರ್ ಡ್ರಾಮಾ ತಂಡದ ಮುಂಬೈ ಸುಮೀತ್ ವ್ಯಾಸ್ ನಿರ್ದೇಶನದ ‘ಪುರಾನಾ ಚಾವಲ್’ ಫೆ.25ರಂದು ಸಂಚಯ ಬೆಂಗಳೂರು ತಂಡದ ಗಣೇಶ್ ಮಂದಾರ್ತಿ ಅವರ ‘ಕಾಮರೂಪಿಗಳು’ ಫೆ.26ರಂದು ಪಪೆಟ್ ಪ್ರದರ್ಶನ ನವದೆಹಲಿ ತಂಡದ ಅನುರೂಪ ರಾಯ್ ನಿರ್ದೇಶನದ ‘ಎಬೌಟ್ ರಾಮ್’, ಫೆ.27ರಂದು ರಂಗಾಯಣ, ಕಲಬುರಗಿ ತಂಡದ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ‘ಕಾಲಚಕ್ರ’, ಫೆ.28ರಂದು ಜಂಗಮ ಕಲೆಕ್ಟಿವ್ ತಂಡದ ಲಕ್ಷ್ಮಣ.ಕೆ.ಪಿ ನಿರ್ದೇಶನದ ‘ಬಾಬ್ ಮಾರ್ಲೆ ಪ್ರಮ್ ಕೋಡಿಹಳ್ಳಿ’ ನಾಟಕಗಳು ಪ್ರದರ್ಶನಗೊಳ್ಳಲಿದೆ. ಮಕ್ಕಳಿಗಾಗಿ ನಾಟಕ ಪ್ರದರ್ಶನ: ಶಾಲಾ ಮಕ್ಕಳಿಗಾಗಿ ವಿಶೇಷ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, ಕಲಬುರಗಿಯ ಕರ್ನಾಟಕ ರಂಗಾಯಣದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ ನಡೆಯಲಿದೆ. ಫೆ.22 ಮತ್ತು 23ರಂದು ರಂಗ ಶಂಕರದ ‘ಸರ್ಕಲ್ ಆಫ್ ಲೈಫ್’, ಫೆ.24 ಮತ್ತು 25ರಂದು ಮುಂಬೈನ ರೆಡ್ ಎಂಟರ್ಟೈನ್ಮೆಂಟ್ನ ‘ಜಾಬ್ ಲೆಸ್ ಜಾಬ್’. ಫೆ.26 ಮತ್ತು 27ರಂದು ರಂಗ ಶಂಕರದ ‘ಚಿಪ್ಪಿ, ದಿ ಚಿಕ್ಕಲಿ’. ನಾಟಕಗಳ ಪ್ರದರ್ಶನ ನಡೆಯಲಿದೆ. ನಾಟಕ ಸಂವಾದಗಳು: ಜಿಲ್ಲಾ ಕಸಾಪ ಸಭಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00ರವರೆಗೆ ನಾಟಕ ಸಂವಾದಗಳು ನಡೆಯಲಿದೆ. ಫೆ.22ರಂದು ಬಿ. ಜಯಶ್ರೀಯವರಿಂದ ಕರ್ನಾಟಕದ ಕಂಪನಿ ನಾಟಕಗಳು, ಫೆ. 23ರಂದು ಎಚ್. ಕೆ. ಶ್ವೇತಾರಾಣಿಯವರಿಂದ ರಂಗಾಭಿನಯದ ಸೂಕ್ಷ್ಮತೆಗಳು, ಫೆ. 24ರಂದು ಕೃಷ್ಣಮೂರ್ತಿ ಹನೂರುರವರಿಂದ ನಾಟಕ ಮತ್ತು ಜಾನಪದ ಕಲೆಗಳು, ಫೆ.25ರಂದು ನಟರಾಜ್ ಹೊನ್ನವಳ್ಳಿರವರಿಂದ ನಿರ್ದೇಶನದ ಟಿಪ್ಪಣಿಗಳು, ಫೆ. 26ರಂದು ಜೆ. ಶ್ರೀನಿವಾಸಮೂರ್ತಿರವರಿಂದ ಭಾರತದ ಅಭಿಜಾತ ರಂಗಭೂಮಿ, ಫೆ. 27ರಂದು ಲಕ್ಷ್ಮಣ ಕೆ.ಪಿ.ಯವರಿಂದ ರಂಗ ಪಠ್ಯವನ್ನು ತಯಾರಿಸಿಕೊಳ್ಳುವುದು ಎಂಬ ವಿಷಯಗಳ ಬಗ್ಗೆ ನಾಟಕ ಸಂವಾದಗಳು ನಡೆಯಲಿದೆ.
ಅಮೆರಿಕದ ಹೊಸ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರದಲ್ಲಿ ಇಂಡೊ–ಪೆಸಿಫಿಕ್ ಗೆ ಆದ್ಯತೆ
ವಾಷಿಂಗ್ಟನ್, ಜ.25: ಟ್ರಂಪ್ ಆಡಳಿತವು ಶನಿವಾರ ಬಿಡುಗಡೆಗೊಳಿಸಿರುವ ಹೊಸ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರ (ಎನ್ಡಿಎಸ್)ದಲ್ಲಿ ಇಂಡೊ–ಪೆಸಿಫಿಕ್ ಮತ್ತು ಅಮೆರಿಕಾದ ತಾಯ್ನಾಡು ರಕ್ಷಣೆಗೆ ಯುರೋಪ್ ಮತ್ತು ಮಧ್ಯಪ್ರಾಚ್ಯಕ್ಕಿಂತ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಸಹಿ ಹಾಕಿರುವ ಈ ದಾಖಲೆ, ಮುಂಬರುವ ವರ್ಷಗಳಲ್ಲಿ ಅಮೆರಿಕಾದ ರಕ್ಷಣಾ ಇಲಾಖೆಯ ಕಾರ್ಯತಂತ್ರದ ಆದ್ಯತೆಗಳನ್ನು ನಿರ್ಧರಿಸಿದ್ದು, ಚೀನಾವನ್ನು ಮುಖಾಮುಖಿಯ ಮೂಲಕವಲ್ಲ, ಬಲದ ಮೂಲಕ ಎದುರಿಸಲು ಕರೆ ನೀಡಿದೆ. ಎನ್ಡಿಎಸ್ನಲ್ಲಿ ಚೀನಾವನ್ನು ಅಮೆರಿಕಾದ ರಕ್ಷಣಾ ಯೋಜನೆಯ ಕೇಂದ್ರದಲ್ಲಿ ಇರಿಸಲಾಗಿದ್ದು, ‘ಚೀನಾ 19ನೇ ಶತಮಾನದಿಂದಲೂ ಅಮೆರಿಕಾವನ್ನು ಹೊರತುಪಡಿಸಿದರೆ ಅತ್ಯಂತ ಬಲಿಷ್ಠ ರಾಷ್ಟ್ರ’ ಎಂದು ಗುರುತಿಸಲಾಗಿದೆ. ರಶ್ಯವನ್ನು ನಂತರದ ಸ್ಥಾನದಲ್ಲಿ ಇರಿಸಿದ್ದರೂ, ಅದನ್ನು ಗಂಭೀರ ಸವಾಲು ಎಂದು ಪರಿಗಣಿಸಲಾಗಿದೆ. ‘ನ್ಯಾಟೋನ ಪೂರ್ವದ ಸದಸ್ಯ ರಾಷ್ಟ್ರಗಳಿಗೆ ರಶ್ಯವು ನಿರಂತರ, ಆದರೆ ನಿರ್ವಹಿಸಬಹುದಾದ ಬೆದರಿಕೆಯಾಗಿ ಉಳಿಯುತ್ತದೆ’ ಎಂದು ದಾಖಲೆಯಲ್ಲಿ ಹೇಳಲಾಗಿದೆ.
ಫೆ. 1ರಂದು ಮಾತುಕತೆ ಮುಂದುವರಿಸಲು ಉಕ್ರೇನ್, ರಶ್ಯ, ಅಮೆರಿಕ ಒಪ್ಪಿಗೆ
ಅಬುಧಾಬಿ, ಜ.25: ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆಯುವ ನೇರ ಮಾತುಕತೆಯ ಎರಡನೇ ಸುತ್ತನ್ನು ಫೆಬ್ರವರಿ 1ರಂದು ಮುಂದುವರಿಸಲು ಉಕ್ರೇನ್ ಮತ್ತು ರಶ್ಯ ಒಪ್ಪಿಕೊಂಡಿವೆ. ‘ಯುಎಇಯಲ್ಲಿ ತ್ರಿಪಕ್ಷೀಯ ಮಾತುಕತೆ ಫೆಬ್ರವರಿ 1ರಂದು ಮುಂದುವರಿಯಲಿದೆ. ಎಲ್ಲರನ್ನೂ ಒಟ್ಟುಗೂಡಿಸುವುದು ದೊಡ್ಡ ಹೆಜ್ಜೆಯೆಂದು ಭಾವಿಸುತ್ತೇನೆ. ಇದು ಒಂದು ತೀರ್ಮಾನಕ್ಕೆ ಬರಲು ಅಗತ್ಯವಿರುವ ವಿವರಗಳನ್ನು ನಿರೂಪಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವುದಕ್ಕೆ ದೃಢೀಕರಣವಾಗಿದೆ’ ಎಂದು ಅಮೆರಿಕಾದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ಮುಂದುವರಿದಿರುವ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಿರಿಸಿರುವ ಯೋಜನೆಯ ಬಗ್ಗೆ ರಶ್ಯ ಮತ್ತು ಉಕ್ರೇನ್ ಪ್ರತಿನಿಧಿಗಳು ಅಬುಧಾಬಿಯಲ್ಲಿ ಎರಡು ದಿನಗಳ ಕಾಲ ಮಾತುಕತೆ ನಡೆಸಿದ್ದಾರೆ. ಬಹಳಷ್ಟು ವಿಷಯಗಳನ್ನು ಚರ್ಚಿಸಲಾಗಿದೆ ಮತ್ತು ಮಾತುಕತೆ ರಚನಾತ್ಮಕವಾಗಿತ್ತು ಎಂಬುದೇ ಮುಖ್ಯವಾಗಿದೆ. ಯುದ್ಧವನ್ನು ಕೊನೆಗೊಳಿಸುವ ಸಂಭವನೀಯ ಮಾನದಂಡಗಳ ಕುರಿತು ಚರ್ಚೆ ಕೇಂದ್ರೀಕೃತವಾಗಿತ್ತು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಎರಡೂ ಕಡೆಯ ಉನ್ನತ ಮಿಲಿಟರಿ ಅಧಿಕಾರಿಗಳನ್ನು ಒಳಗೊಂಡಿದ್ದ ಸಭೆ ರಚನಾತ್ಮಕ ಮತ್ತು ಸಕಾರಾತ್ಮಕ ವಾತಾವರಣದಲ್ಲಿ ನಡೆಯಿತು. ಮಾತುಕತೆಗಳು ಅಮೆರಿಕಾ ಪ್ರಸ್ತಾವಿತ ಶಾಂತಿ ಚೌಕಟ್ಟಿನ ಮಹತ್ವದ ಅಂಶಗಳು ಮತ್ತು ವಿಶ್ವಾಸ ನಿರ್ಮಾಣ ಕ್ರಮಗಳ ಮೇಲೆ ಕೇಂದ್ರೀಕೃತವಾಗಿದ್ದವು ಎಂದು ಯುಎಇ ಸರ್ಕಾರದ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ರಶ್ಯದ ಪಡೆಗಳು ಮುನ್ನಡೆ ಸಾಧಿಸಿರುವ ಉಕ್ರೇನ್ ನ ಪೂರ್ವ ಡೊನ್ಬಾಸ್ ಪ್ರಾಂತದ ಭವಿಷ್ಯದ ವಿಷಯವು ವಿವಾದ ಬಗೆಹರಿಸುವಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಉಕ್ರೇನ್ ಪಡೆ ಈ ಪ್ರದೇಶದಿಂದ ಹಿಂದೆ ಸರಿಯಬೇಕು ಎಂದು ರಶ್ಯ ಪಟ್ಟುಹಿಡಿದಿದ್ದರೆ, ತನ್ನ ಭೂಪ್ರದೇಶವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಸ್ಪಷ್ಟಪಡಿಸಿದೆ.
ʼಬಸ್ ಕಂಡಕ್ಟರ್ TO ಪದ್ಮಶ್ರೀʼ: ಪುಸ್ತಕ ಪ್ರೀತಿಯ ಅಂಕೆ ಗೌಡರಿಗೆ ಪದ್ಮಶ್ರೀ ಗೌರವ
ಬೆಂಗಳೂರು: ಬಸ್ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ, ತಮ್ಮ ಸಂಬಳದ ಬಹುಪಾಲನ್ನು ಪುಸ್ತಕಗಳ ಖರೀದಿಗೆ ಮೀಸಲಿಟ್ಟು, ನಂತರ ಪಾಂಡವಪುರದ ಸಕ್ಕರೆ ಕಾರ್ಖಾನೆಯಲ್ಲಿ ಸಮಯಪಾಲಕರಾಗಿ ಸೇವೆ ಸಲ್ಲಿಸಿದ ಹರಳಹಳ್ಳಿ ಗ್ರಾಮದ ಅವರಿಗೆ 2026ರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಗ್ರಂಥ ಪಾಲಕತ್ವ ಮತ್ತು ಪುಸ್ತಕ ಸಂಗ್ರಹಣೆಯ ಕ್ಷೇತ್ರದಲ್ಲಿ ಜೀವಮಾನದ ಸೇವೆ ಸಲ್ಲಿಸಿದ ಅಂಕೆ ಗೌಡ ಅವರಿಗೆ ಈಗ 75 ವರ್ಷ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಅಂಕೆ ಗೌಡರು ನಡೆಸುತ್ತಿರುವ ‘ಪುಸ್ತಕ ಮನೆ’ (ಪುಸ್ತಕಗಳ ಮನೆ) ದೇಶದ ಅತಿದೊಡ್ಡ ವೈಯಕ್ತಿಕ ಗ್ರಂಥಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ 20 ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದ್ದು, ಓದುಗರಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಪುಸ್ತಕ ಮೇಲ್ವಿಚಾರಣೆ ಹಾಗೂ ಗ್ರಂಥಪಾಲಕರಾದ ಅಂಕೆ ಗೌಡರು ಪುಸ್ತಕಗಳ ಮೇಲೆ ಪುಸ್ತಕ ಕೂಡಿಟ್ಟು ಪುಸ್ತಕ ಮನೆ ಕಟ್ಟಿದರು. ಬಸ್ ಕಂಡಕ್ಟರ್ ಆಗಿದ್ದ ದಿನಗಳಿಂದ ಹಿಡಿದು ಪಾಂಡವಪುರದ ಸಕ್ಕರೆ ಕಾರ್ಖಾನೆಯಲ್ಲಿ ಸಮಯಪಾಲಕರಾಗಿ ಕೆಲಸ ಮಾಡುವ ವರೆಗೆ ಪುಸ್ತಕಗಳನ್ನು ಖರೀದಿಸಲು ತಮ್ಮ ಸಂಬಳದ ಪ್ರಮುಖ ಭಾಗವನ್ನು ಮೀಸಲಿಟ್ಟ ಅವರು, ಗ್ರಂಥಾಲಯದ ವಿಸ್ತರಣೆಯ ಸಲುವಾಗಿ ಮೈಸೂರಿನಲ್ಲಿದ್ದ ತಮ್ಮ ನಿವೇಶನವನ್ನು ಮಾರಾಟ ಮಾಡಿದ್ದಾರೆ. ಪುಸ್ತಕವೇ ತಮ್ಮ ಸರ್ವಸ್ವ ಎಂದು ಭಾವಿಸಿದ್ದ ಅವರು ನಿವೃತ್ತಿ ಹಣವನ್ನೂ ಪುಸ್ತಕ ಸಂಗ್ರಹಕ್ಕೆ ಹೂಡಿಕೆ ಮಾಡಿದ್ದಾರೆ. ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಗ್ರಾಮದಲ್ಲಿ ಜನಿಸಿದ ಅಂಕೆ ಗೌಡರು, ಸಂಜೆ ಕಾಲೇಜಿನ ಮೂಲಕ ಉನ್ನತ ಶಿಕ್ಷಣ ಪಡೆದು ಬಿ.ಎ. ಪದವಿ ಪಡೆದರು. ನಂತರ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಅವರು 20ನೇ ವಯಸ್ಸಿನಲ್ಲಿ ಆರಂಭಿಸಿದ ಪುಸ್ತಕ ಸಂಗ್ರಹ ಇಂದು 20 ಲಕ್ಷ ಸಂಪುಟಗಳನ್ನು ಮೀರಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರಿಗೆ ವಿಶ್ವಾಸಾರ್ಹ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಸಂಪನ್ಮೂಲಗಳಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ, ಸ್ಥಳೀಯ ಸಮುದಾಯದಲ್ಲಿ ಓದುವ ಹವ್ಯಾಸ ಮತ್ತು ಸಾಹಿತ್ಯಿಕ ಜಾಗೃತಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಗ್ರಂಥಾಲಯದ ಸಂಗ್ರಹದಲ್ಲಿ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಮತ್ತು ತತ್ವಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಪುಸ್ತಕಗಳಿವೆ. ಅಲ್ಲದೆ, 1832ರ ಹಿಂದಿನ ಅಪರೂಪದ ಐತಿಹಾಸಿಕ ಹಸ್ತಪ್ರತಿಗಳು, ಬಹು ಭಾಷೆಗಳ 5,000ಕ್ಕೂ ಅಧಿಕ ನಿಘಂಟುಗಳು, ಹಾಗೂ ಸುಮಾರು ಐದು ಲಕ್ಷ ಅಪರೂಪದ ವಿದೇಶಿ ಪುಸ್ತಕಗಳು ಅಂಕೆ ಗೌಡರ ಬಳಿ ಲಭ್ಯವಿವೆ. ಇದಲ್ಲದೆ, ಗ್ರಂಥಾಲಯದಲ್ಲಿ 20ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳ ಪುಸ್ತಕಗಳು, 35,000 ಅಂತರರಾಷ್ಟ್ರೀಯ ನಿಯತಕಾಲಿಕೆಗಳು, 2,500 ಕನ್ನಡ ನಿಯತಕಾಲಿಕೆಗಳು, ಮಹಾತ್ಮ ಗಾಂಧಿಯವರ ಕುರಿತು 2,500 ಬರಹಗಳು, ಭಗವದ್ಗೀತೆಯ ಕುರಿತು 2,500 ಪುಸ್ತಕಗಳು, ಜೊತೆಗೆ ಬೈಬಲ್ ಸೇರಿದಂತೆ 100ಕ್ಕೂ ಹೆಚ್ಚು ಧಾರ್ಮಿಕ ಗ್ರಂಥಗಳು ಸಂಗ್ರಹಗಳಲ್ಲಿವೆ. ಉದ್ಯೋಗದಿಂದ ಲಭಿಸುವ ಆದಾಯ ಸೀಮಿತವಾಗಿದ್ದರೂ, ವೈಯಕ್ತಿಕ ಬೇಡಿಕೆಗಳನ್ನು ತ್ಯಾಗ ಮಾಡಿ, ಸಾರ್ವಜನಿಕ ಪ್ರಯೋಜನಕ್ಕಾಗಿ ಪುಸ್ತಕಗಳನ್ನು ಸಂಪಾದಿಸುವುದು ಮತ್ತು ಸಂರಕ್ಷಿಸುವುದಕ್ಕೆ ತಮ್ಮ ಆದಾಯದ ಬಹುಪಾಲು ಹಣವನ್ನು ಅವರು ಹೂಡಿಕೆ ಮಾಡಿದ್ದಾರೆ. ಅಂಕೆ ಗೌಡರು ಇದುವರೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2016ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ (ಅತಿದೊಡ್ಡ ವೈಯಕ್ತಿಕ ಪುಸ್ತಕ ಸಂಗ್ರಹ), 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2011ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಹಾಗೂ 2009ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಿಕಾ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.
ರಫಾ ಗಡಿದಾಟು ತೆರೆಯಲು ಇಸ್ರೇಲ್ ಗೆ ಅಮೆರಿಕ ಆಗ್ರಹ
ಕದನ ವಿರಾಮದ ಮುಂದಿನ ಹಂತಕ್ಕೆ ಪ್ರವೇಶಿಸಲು ಆಗ್ರಹ
ವಿವಾದಿತ ಗಡಿಯಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸಿದ ಥೈಲ್ಯಾಂಡ್: ಕಂಬೋಡಿಯಾ ಆಕ್ಷೇಪ
ಬ್ಯಾಂಕಾಕ್, ಜ.25: ಕಂಬೋಡಿಯಾದೊಂದಿಗಿನ ವಿವಾದಿತ ಗಡಿ ಪ್ರದೇಶದಲ್ಲಿ ಥೈಲ್ಯಾಂಡ್ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿದ್ದು, ಇದಕ್ಕೆ ಕಂಬೋಡಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸ್ಥಳೀಯರಲ್ಲಿ ಧಾರ್ಮಿಕ ಭಾವನೆ ಮತ್ತು ನೈತಿಕತೆಯನ್ನು ಹೆಚ್ಚಿಸುವ ಕ್ರಮವಾಗಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಥೈಲ್ಯಾಂಡ್ ಸೇನೆ ಹೇಳಿದೆ. ವಿವಾದಿತ ಪ್ರದೇಶವನ್ನು ಥೈಲ್ಯಾಂಡ್ ‘ಆನ್ ಮಾ’ ಎಂದು ಹೆಸರಿಸಿದ್ದರೆ, ಕಂಬೋಡಿಯಾ ‘ಆನ್ ಸೆಸ್’ ಎಂದು ಕರೆಯುತ್ತದೆ. ಎರಡೂ ದೇಶಗಳ ನಡುವೆ ದೀರ್ಘಕಾಲದ ಪ್ರಾದೇಶಿಕ ವಿವಾದದ ಕೇಂದ್ರವಾಗಿರುವ ಈ ಸ್ಥಳದಿಂದ ಕಳೆದ ತಿಂಗಳು ಥೈಲ್ಯಾಂಡ್ ಪಡೆ ವಿಷ್ಣುವಿನ ಪ್ರತಿಮೆಯನ್ನು ತೆರವುಗೊಳಿಸಿದ್ದು, ಇದನ್ನು ಕಂಬೋಡಿಯಾ ಟೀಕಿಸಿತ್ತು. ಥೈಲ್ಯಾಂಡ್ ಮತ್ತು ಕಂಬೋಡಿಯಾ ಎರಡೂ ಪ್ರಧಾನವಾಗಿ ಬೌದ್ಧ ರಾಷ್ಟ್ರಗಳಾಗಿವೆ.
IPL 2026- ಈ ಬಾರಿ ಧೋನಿ ಯಾವ ನಂಬರ್ ನಲ್ಲಿ ಬ್ಯಾಟಿಂಗ್?: 9ರಲ್ಲಂತೂ ಡೌಟು; ಹೀಗಿದೆ ಹಳೇ ಮಿತ್ರ ಬಿಟ್ಟುಕೊಟ್ಟ ಗುಟ್ಟು
R Ashwin On MS Dhoni- ಐಪಿಎಲ್ 2026ರ ಸೀಸನ್ ಗೆ ಇನ್ನೂ 2 ತಿಂಗಳು ಬಾಕಿ ಉಳಿದಿರುವಾಗಲೇ ಮಹೇಂದ್ರ ಸಿಂಗ್ ಧೋನಿ ಅವರು ಅಭ್ಯಾಸ ಆರಂಭಿಸಿದ್ದಾರೆ. ರಾಂಚಿಯಲ್ಲಿ ತರಬೇತಿ ನಡೆಸುತ್ತಿರುವ ಧೋನಿ ಅವರ ವಿಡಿಯೋಗಳು ವೈರಲ್ ಆಗಿವೆ. ಹೀಗಾಗಿ ಈ ಬಾರಿ ಅವರಿಂದ ಅಭಿಮಾನಿಗಳಿಗೆ ಬಹಳ ದೊಡ್ಡ ನಿರೀಕ್ಷೆ ಇದೆ. ಅವರ ಮಾಜಿ ಸಹೋದ್ಯೋಗಿ ರವಿಚಂದ್ರನ್ ಅಶ್ವಿನ್ ಅವರ ಪ್ರಕಾರ ಧೋನಿ ಅವರು ಈ ಬಾರಿ ಡೆತ್ ಓವರ್ಗಳ ಬದಲಿಗೆ ಪವರ್ಪ್ಲೇನಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
ಮಂಗಳೂರಿನ ಲಿಶಾ ಡಿ.ಸುವರ್ಣರಿಗೆ ಎನ್ಸಿಸಿ ಅತ್ಯುನ್ನತ ಗೌರವ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್
ಮಂಗಳೂರು: ಎನ್ಸಿಸಿ ಕೆಡೆಟ್ ಮಂಗಳೂರಿನ ಲಿಶಾ ಡಿ.ಸುವರ್ಣರಿಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನೀಡುವ ಅತ್ಯುನ್ನತ ಪ್ರಶಂಸಾ ಗೌರವ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್ ಲಭಿಸಿದೆ. ಜ.24ರಂದು ಹೊಸದಿಲ್ಲಿಯ ಆರ್ಡಿಸಿ 2026 ಕ್ಯಾಂಪಸ್ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಿಶಾರಿಗೆ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿದರು. ದೇಶದ 6 ಮಂದಿ ಎನ್ಸಿಸಿ ಕೆಡೆಟ್ಗಳಿಗೆ ಈ ಬಾರಿ ಪ್ರಶಸ್ತಿ ನೀಡಲಾಗಿದ್ದು, ಈ ಪೈಕಿ ಲಿಶಾ ಅವರು ನೇವಿ ಪರ ಭಾರತದಲ್ಲಿ ಈ ಗೌರವ ಪಡೆದ ಏಕೈಕ ಎನ್ಸಿಸಿ ಕೆಡೆಟ್ ಆಗಿದ್ದಾರೆ. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನಲ್ಲಿ ಅಸಾಧಾರಣ ನಾಯಕತ್ವ, ಧೈರ್ಯ, ಕರ್ತವ್ಯ ನಿಷ್ಠೆ ಅಥವಾ ಎನ್ಸಿಸಿ ಗೆ ನೀಡಿದ ಗಮನಾರ್ಹ ಕೊಡುಗೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಗಣರಾಜ್ಯೋತ್ಸವ ಶಿಬಿರದಂತಹ ಕಾರ್ಯಕ್ರಮಗಳಲ್ಲಿ ಈ ವರೆಗೆ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್ ಗೌರವವು ಉತ್ತರ ಭಾರತದ ಎನ್ಸಿಸಿ ಕೆಡೆಟ್ಗಳೇ ಆಯ್ಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನ ಕೆಡೆಟ್ಗೆ ಈ ಗೌರವ ಲಭಿಸಿರುವುದು ವಿಶೇಷ. ಮಂಗಳೂರು ಕೂಳೂರು ನಿವಾಸಿ ದೇಜಪ್ಪ ಬಂಗೇರ ಹಾಗೂ ಮಲ್ಲಿಕಾ ದಂಪತಿ ಪುತ್ರಿಯಾಗಿರುವ ಇವರು ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಕಳೆದ ವರ್ಷ ಇವರು ಆರ್ಡಿಸಿಯಲ್ಲಿ ಭಾಗವಹಿಸಿದ್ದರು. ಕೆಡೆಟ್ ಲಿಶಾ ಡಿ ಎಸ್ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ ಅತ್ಯುತ್ತಮ ಕೆಡೆಟ್ ಆಗಿ ಆರ್ಡಿಸಿ ಯನ್ನು ಪೂರ್ಣಗೊಳಿಸಿದ ದೇಶದ ಟಾಪ್ 5 ರಲ್ಲಿ ಒಬ್ಬರಾಗಿದ್ದರು. ಲಿಶಾ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಆಲ್ ಇಂಡಿಯಾ ಬೆಸ್ಟ್ ಫ್ಲಾಗ್ ಏರಿಯಾ ಬ್ರೀಫರ್ ಪ್ರಶಸ್ತಿಯನ್ನು ಜಯಿಸಿದ್ದರು.ಡಿಜಿ ಎನ್ಸಿಸಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾದ ಸಾಂಸ್ಕೃತಿಕ, ಡ್ರಿಲ್, ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಫೈರಿಂಗ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಔರಾದ್ | ಶಿವಕುಮಾರ್ ಬಂಬುಳಗೆ ರಾಜ್ಯ ಮಟ್ಟದ ಅತ್ಯುತ್ತಮ ಮತಗಟ್ಟೆ ಅಧಿಕಾರಿ ಪ್ರಶಸ್ತಿ
ಔರಾದ್ : ತಾಲೂಕಿನ ನಾಗಮಾರಪಳ್ಳಿ ಗ್ರಾಮದ ಶಿಕ್ಷಕ ಶಿವಕುಮಾರ್ ಬಂಬುಳಗೆ ಅವರಿಗೆ 2025-26ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಮತಗಟ್ಟೆ ಅಧಿಕಾರಿ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಪುಟ್ಟಣ್ಣ ಚಟ್ಟಿ ಟೌನ್ ಹಾಲ್ ನಲ್ಲಿ ರವಿವಾರ ನಡೆದ ರಾಜ್ಯಮಟ್ಟದ 16ನೇ ರಾಷ್ಟ್ರೀಯ ಮತರಾರರ ದಿನಾಚರಣೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ವಿಜಯನಗರ | ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪರಿಗೆ ರಾಜ್ಯಮಟ್ಟದ ಅತ್ಯುತ್ತಮ ಚುನಾವಣಾ ಜಾಗೃತಿ ಅಭ್ಯಾಸ ಪ್ರಶಸ್ತಿ
ವಿಜಯನಗರ : ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪರವರಿಗೆ ಅತ್ಯುತ್ತಮ ಚುನಾವಣಾ ಜಾಗೃತಿ ಅಭ್ಯಾಸ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನ ಪುಟ್ಟಣ್ಣ ಚಟ್ಟಿ ಟೌನ್ ಹಾಲ್ನಲ್ಲಿ ರವಿವಾರ ನಡೆದ ರಾಜ್ಯಮಟ್ಟದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಉಪಸ್ಥಿತರಿದ್ದರು.
ಪಠ್ಯಪುಸ್ತಕಗಳಿಂದ ಮೊಘಲರನ್ನು ತೆಗೆಯುವುದು ಅರ್ಥಹೀನ, ಇತಿಹಾಸ ನಿರಂತರವಾಗಿರಬೇಕು: ಇತಿಹಾಸಕಾರ್ತಿ ರೊಮಿಲಾ ಥಾಪರ್
ಕೋಝಿಕ್ಕೋಡ್ (ಕೇರಳ), ಜ.25: ಇತಿಹಾಸವು ನಿರಂತರ ಪ್ರಕ್ರಿಯೆಯಾಗಿದ್ದು, ಅದನ್ನು ತುಣುಕುಗಳಲ್ಲಿ ಕಲಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಖ್ಯಾತ ಇತಿಹಾಸಕಾರ್ತಿ ರೊಮಿಲಾ ಥಾಪರ್, ಪಠ್ಯಪುಸ್ತಕಗಳಿಂದ ಮೊಘಲರಂತಹ ಇಡೀ ರಾಜವಂಶಗಳನ್ನು ತೆಗೆದುಹಾಕುವ ಪರಿಪಾಠವು ಅರ್ಥಹೀನವಾಗಿದೆ ಎಂದಿದ್ದಾರೆ. ಇಲ್ಲಿ ನಡೆದ ಕೇರಳ ಸಾಹಿತ್ಯೋತ್ಸವದಲ್ಲಿ ಶನಿವಾರ ಆನ್ಲೈನ್ನಲ್ಲಿ ಮಾತನಾಡಿದ ಥಾಪರ್, ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚೆಚ್ಚಾಗಿ ಹರಡುತ್ತಿರುವ ಜನಪ್ರಿಯ ಇತಿಹಾಸದಿಂದ ಹಿಡಿದು ಸ್ತ್ರೀವಾದಿ ಇತಿಹಾಸದ ಪ್ರಾಮುಖ್ಯ ಮತ್ತು ಅಸ್ತಿತ್ವದಲ್ಲಿರುವ ಜ್ಞಾನವನ್ನು ಪ್ರಶ್ನಿಸುವಲ್ಲಿ ಶಿಕ್ಷಣದ ಕೇಂದ್ರ ಪಾತ್ರದವರೆಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು. ‘ಇಂದು ನಡೆಯುತ್ತಿರುವ ಬೆಳವಣಿಗೆಗಳು — ಉದಾಹರಣೆಗೆ ಪಠ್ಯಕ್ರಮದಿಂದ ಇತಿಹಾಸದ ದೊಡ್ಡ ಭಾಗಗಳನ್ನು ತೆಗೆದುಹಾಕುತ್ತಿರುವುದು ಅಥವಾ ನಾವು ಅವುಗಳ ಅಧ್ಯಯನ ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಿರುವುದು — ಇವೆಲ್ಲ ಅರ್ಥಹೀನವಾಗಿವೆ. ಇತಿಹಾಸವು ನಿರಂತರ ಪ್ರಕ್ರಿಯೆಯಾಗಿದೆ. ಅದು ಜನರು ಮತ್ತು ಸಂಸ್ಕೃತಿಗಳ, ನಡೆನುಡಿಗಳ ಮತ್ತು ಚಿಂತನೆಯ ವಿಕಸನವಾಗಿದೆ’ ಎಂದು ಹೇಳಿದರು. ‘ಮಹಿಳಾ ಬರವಣಿಗೆ ಇತಿಹಾಸ: ಮೂರು ತಲೆಮಾರುಗಳು’ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದ 25ಕ್ಕೂ ಅಧಿಕ ವಿದ್ವತ್ಪೂರ್ಣ ಪುಸ್ತಕಗಳನ್ನು ರಚಿಸಿರುವ ಥಾಪರ್, ‘ಸರಿ, ಈ ರಾಜವಂಶವನ್ನು ತೆಗೆದುಹಾಕೋಣ, ಮೊಘಲರನ್ನು ತೆಗೆಯೋಣ ಎಂದು ಹೇಳುವುದರಿಂದ ಇತಿಹಾಸದ ನಿರಂತರತೆಯನ್ನು ಮುರಿಯಲಾಗುವುದಿಲ್ಲ. ಅದು ಇತಿಹಾಸವನ್ನು ತುಂಡರಿಸುತ್ತದೆ ಮತ್ತು ಅದಕ್ಕೆ ಯಾವುದೇ ಅರ್ಥವಿಲ್ಲ’ ಎಂದು ಹೇಳಿದರು. ಎನ್ಸಿಇಆರ್ಟಿ 2025–26ನೇ ಶೈಕ್ಷಣಿಕ ವರ್ಷದಿಗಾಗಿ ತನ್ನ ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ದಿಲ್ಲಿಯ ಸುಲ್ತಾನರು ಮತ್ತು ಮೊಘಲರ ಕುರಿತ ಅಧ್ಯಾಯಗಳನ್ನು ತೆಗೆದುಹಾಕಿದೆ ಎಂದು ಹೇಳಲಾಗಿದೆ. ಎನ್ಸಿಇಆರ್ಟಿ ಈಗ ಮೌರ್ಯರು, ಶುಂಗರು, ಶಾತವಾಹನರಂತಹ ಪ್ರಾಚೀನ ಭಾರತೀಯ ರಾಜವಂಶಗಳ ಜೊತೆಗೆ ವಿವಿಧ ಧಾರ್ಮಿಕ ಪರಂಪರೆಗಳ ಸಾಂಸ್ಕೃತಿಕ ಆಚರಣೆಗಳು ಮತ್ತು ಪವಿತ್ರ ಸ್ಥಳಗಳ ಮೇಲೆ ಕೇಂದ್ರೀಕರಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ‘ಜನಪ್ರಿಯ ಇತಿಹಾಸ’ದ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ 93ರ ಹರೆಯದ ಥಾಪರ್, ಅದು ಮಾಹಿತಿಪೂರ್ಣ ಪಾಂಡಿತ್ಯ ಮತ್ತು ವೈಯಕ್ತಿಕ ಅಭಿಪ್ರಾಯದ ನಡುವಿನ ರೇಖೆಯನ್ನು ಮಸುಕುಗೊಳಿಸುತ್ತಿದೆ ಎಂದರು. ಭೂತಕಾಲದ ಘಟನೆಗಳ ಕುರಿತು ನಿಖರವಾದ ವಿವರಣೆಗಳನ್ನು ತಿಳಿದುಕೊಳ್ಳಲು ವೃತ್ತಿಪರ ಇತಿಹಾಸಕಾರರ ಹೇಳಿಕೆಗಳನ್ನು ಅವಲಂಬಿಸುವಂತೆ ಅವರು ಜನರನ್ನು ಆಗ್ರಹಿಸಿದರು. ಇಂದು ಜನಪ್ರಿಯ ಇತಿಹಾಸ ಮತ್ತು ವೃತ್ತಿಪರ ಇತಿಹಾಸಕಾರರ ಬರವಣಿಗೆಯ ನಡುವೆ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಯಾವುದೇ ಐತಿಹಾಸಿಕ ಹೇಳಿಕೆಯನ್ನು ಉಲ್ಲೇಖಿಸುವಾಗ ಅದರ ಮೂಲ ವೃತ್ತಿಪರ ಇತಿಹಾಸಕಾರರ ಬರವಣಿಗೆಯೇ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾದ ಅಭಿಪ್ರಾಯವೇ ಎನ್ನುವುದನ್ನು ತಿಳಿದಿರಬೇಕು ಎಂದು ಥಾಪರ್ ವಿವರಿಸಿದರು. ಇತಿಹಾಸಕಾರ್ತಿಯಾಗಿ ತನ್ನ ಸ್ವಂತ ಪಯಣದ ಕುರಿತು ಮಾತನಾಡಿದ ಅವರು, ತನ್ನ ವೃತ್ತಿಜೀವನದುದ್ದಕ್ಕೂ ಮಹಿಳೆಯ ದೃಷ್ಟಿಕೋನದಿಂದ ತಾನು ಪ್ರಜ್ಞಾಪೂರ್ವಕವಾಗಿ ಇತಿಹಾಸವನ್ನು ಬರೆದಿಲ್ಲದಿರಬಹುದು, ಆದರೆ ಸಾಧ್ಯವಾದಲ್ಲೆಲ್ಲ ಸ್ತ್ರೀವಾದಿ ಒಳನೋಟಗಳನ್ನು ಬಿಂಬಿಸಲು ನಿರಂತರವಾಗಿ ಯತ್ನಿಸಿದ್ದೇನೆ ಎಂದರು.
ಔರಾದ್: ತಾಲೂಕಿನ ನಾಗಮಾರಪಳ್ಳಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಅನ್ವರ್ ಜಕಾತಿ ಅವರಿಗೆ 2025–26ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಮತಗಟ್ಟೆ ಮೇಲ್ವಿಚಾರಕ ಪ್ರಶಸ್ತಿ ಲಭಿಸಿದೆ. ಬೆಂಗಳೂರು ನಗರದ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ನಲ್ಲಿ ರವಿವಾರ ಆಯೋಜಿಸಲಾದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅನ್ವರ ಜಕಾತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
Gaza Peace: ಗಾಜಾ ಭವಿಷ್ಯದ ಬಗ್ಗೆ ಇಸ್ರೇಲ್ ಮತ್ತು ಮಿತ್ರರ ಜೊತೆಗೆ ಅಮೆರಿಕ ಮಹತ್ವದ ಚರ್ಚೆ
ಗಾಜಾ ಪಟ್ಟಿಯಲ್ಲಿ ಭೀಕರ ಕದನ ನಡೆದು, ಇಡೀ ಗಾಜಾ ಪಟ್ಟಿಯೇ ಹಾಳಾಗಿ ಹೋಗಿದೆ. ಹಮಾಸ್ ಮಾಡಿದ ಕೃತ್ಯಕ್ಕೆ ಇಸ್ರೇಲ್ ನುಗ್ಗಿ ಬಂದು ಯುದ್ಧ ಮಾಡಿ, ಇಡೀ ಗಾಜಾ ಪಟ್ಟಿಯನ್ನೇ ಧ್ವಂಸ ಮಾಡಿ ಹಾಕಿದೆ ಎಂದು ಪಾಶ್ಚಿಮಾತ್ಯ ದೇಶಗಳು ಹೇಳುತ್ತಿವೆ. ಆದರೆ ಇಸ್ರೇಲ್ ಮಾಡಿದ್ದು ತಪ್ಪು ಎಂದು ಅತ್ತ ಪಾಶ್ಚಿಮಾತ್ಯ ದೇಶಗಳ ಎದುರಾಳಿ ದೇಶಗಳು ಆರೋಪ ಮಾಡುತ್ತಿವೆ. ಅದೆಲ್ಲಾ
ರಾಯಚೂರು | ಕೋಟ್ಯಾಂತರ ರೂ. ಖರ್ಚಾದರೂ ಕುಡಿಯುವ ನೀರಿನ ಯೋಜನೆ ಅಪೂರ್ಣ: ಭೀಮರಾಯಸ್ವಾಮಿ ಆರೋಪ
ರಾಯಚೂರು: ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಕೋಟಿ ಕೋಟಿ ರೂ. ಅನುದಾನ ಮಂಜೂರಾಗಿದ್ದರೂ ಕುಡಿಯುವ ನೀರಿನ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಯೋಜನೆ ಜಾರಿಯಾಗದಂತೆ ತಡೆಯುತ್ತಿದ್ದಾರೆ ಎಂದು ಅತ್ತನೂರು ಕುಡಿಯುವ ನೀರು ಹೋರಾಟ ಸಮಿತಿಯ ಅಧ್ಯಕ್ಷ ಭೀಮರಾಯಸ್ವಾಮಿ ಆರೋಪಿಸಿದರು. ಅವರು ಮಂಗಳವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2009–10ನೇ ಸಾಲಿನಲ್ಲಿ ರಾಜೀವ್ ಗಾಂಧಿ ಮಿಷನ್ ಯೋಜನೆಯಡಿ ಗ್ರಾಮಕ್ಕೆ 9 ಕೋಟಿ 53 ಲಕ್ಷ ರೂ. ಅನುದಾನ ಮಂಜೂರಾಗಿತ್ತು. 11 ತಿಂಗಳೊಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಮಧ್ಯದಲ್ಲೇ ಸ್ಥಗಿತಗೊಂಡಿತು ಎಂದು ಹೇಳಿದರು. ಯೋಜನೆ ಮಂಜೂರಾದ ಎಂಟು ವರ್ಷಗಳ ನಂತರ 2018ರಲ್ಲಿ ಮಾತ್ರ ಕೆರೆ ಜಾಗ ನೋಂದಣಿ ನಡೆದಿದ್ದು, ತಜ್ಞರ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಸ್ಥಳ ಬದಲಾವಣೆ ಮಾಡಿದ ಬಳಿಕ 2020ರಲ್ಲಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತು. ಮರು ಟೆಂಡರ್ ಕರೆಯದೇ ಜಿಲ್ಲಾ ಪಂಚಾಯತ್ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಯೋಜನೆ ಮುಂದುವರಿಯಲಿಲ್ಲ ಎಂದು ದೂರಿದರು. ಅದೇ ಕುಡಿಯುವ ನೀರಿನ ಯೋಜನೆಗೆ ಜಲ ಜೀವನ ಮಿಷನ್ ಯೋಜನೆಯಡಿ ಮತ್ತೆ 1 ಕೋಟಿ 30 ಲಕ್ಷ ರೂ. ಅನುದಾನ ಮಂಜೂರಾದರೂ, ಗ್ರಾಮಸ್ಥರಿಗೆ ಇನ್ನೂ ಕುಡಿಯುವ ನೀರು ದೊರಕಿಲ್ಲ. ಗ್ರಾಮಕ್ಕೆ ಸೇರಿದ 17 ಎಕರೆ 17 ಗುಂಟೆ ಕೆರೆ ಜಾಗದಲ್ಲಿ ಕಾಮಗಾರಿ ನಡೆಯದೇ ಇರುವುದರಿಂದ ಅಕ್ರಮ ಮರಳು ದಂಧೆ ಆರಂಭವಾಗಿದೆ. ಇದನ್ನು ತಡೆಯಲು ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಕ್ಷೇತ್ರದ ಶಾಸಕರು, ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ, ಗ್ರಾಮಸ್ಥರು ರಸ್ತೆಯಲ್ಲೇ ನೀರು ಹೊತ್ತುಕೊಂಡು ಹೋಗುವ ಸ್ಥಿತಿ ಇದ್ದರೂ ಯಾರಿಗೂ ಕರುಣೆ ಕಾಣಿಸುತ್ತಿಲ್ಲ. ಗ್ರಾಮದಲ್ಲಿ ನೀರಿನ ಬವಣೆ ತೀವ್ರವಾಗಿದೆ ಎಂದು ಹೇಳಿದರು. ಕುಡಿಯುವ ನೀರಿನ ಅಕ್ರಮಗಳ ಕುರಿತು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಅವರು ಸದನದಲ್ಲಿ ಪ್ರಶ್ನೆ ಎತ್ತಿದ್ದು, ಗ್ರಾಮೀಣಾಭಿವೃದ್ಧಿ ಸಚಿವರು 2025ರ ಡಿಸೆಂಬರ್ ವೇಳೆಗೆ ಜಲ ಜೀವನ ಮಿಷನ್ ಕಾಮಗಾರಿ ಪೂರ್ಣಗೊಳಿಸಿ ಮನೆಮನೆಗೆ ನೀರು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅವಧಿ ಮುಗಿದರೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಹಾಗೂ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇಲಾಖಾ ಸಚಿವರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಉಸ್ತುವಾರಿ ಸಚಿವರು ಯೋಜನೆಯನ್ನು ತನಿಖೆಗೆ ಒಳಪಡಿಸಿ, ಯೋಜನೆ ಜಾರಿಗೆ ಅಡ್ಡಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಸಮಿತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹನುಂತ್ರಾಯ ಗಚ್ಚಿನಮನೆ, ಬಸವಂತ ಪಾಟೀಲ್ (ವಕೀಲ), ಬಸವರಾಜ ನಾಯಕ (ಅತ್ತನೂರು), ಶಿವುಪುತ್ರ ನಾಯಕ, ಹಮೀದ ಪಾಷಾ, ಇರ್ಫಾನ್ ಅತ್ತನೂರು, ಅಮರೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವಮೊಗ್ಗದ ದುರ್ಗಿಗುಡಿ ಬಳಿಯ ವಿವಾದಿತ ಜಾಗ ಸ್ವಾಧೀನಕ್ಕೆ ಪಾಲಿಕೆಗೆ ಹೈಕೋರ್ಟ್ ಆದೇಶ! 65 ವರ್ಷದ ಕೇಸ್ಗೆ ತೀರ್ಪು
ಶಿವಮೊಗ್ಗದ ದುರ್ಗಿಗುಡಿ ಪ್ರದೇಶದ ವಿವಾದಿತ ಜಾಗವನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆಯಲು ಹೈಕೋರ್ಟ್ ಆದೇಶಿಸಿದೆ. ಅರ್ಜಿದಾರರು ಹಾಗೂ ಅವರ ಉತ್ತರಾಧಿಕಾರಿಗಳು ಈ ಜಾಗದ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವಂತಿಲ್ಲ. 1959 ರಿಂದಲೂ ಈ ಜಾಗದ ಕುರಿತು ವ್ಯಾಜ್ಯ ನಡೆಯುತ್ತಿತ್ತು. ನ್ಯಾಯಾಲಯದ ಆದೇಶದಂತೆ ಪಾಲಿಕೆಗೆ ಜಾಗದ ಪ್ರಯೋಜನ ಪಡೆಯಲು ಅವಕಾಶ ನೀಡಲಾಗಿಲ್ಲ. ಅರ್ಜಿದಾರರು ಮಹಾನಗರ ಪಾಲಿಕೆ ಮುಂದೆ ತಮ್ಮ ಹಕ್ಕು ಒಪ್ಪಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
Tamil Nadu | ಚುನಾವಣೆಯಲ್ಲ, ಪ್ರಜಾಪ್ರಭುತ್ವಕ್ಕಾಗಿ ಯುದ್ಧ: CBI ತನಿಖೆ ನಡುವೆ ಗುಡುಗಿದ ನಟ ವಿಜಯ್
ಮಾಮಲ್ಲಾಪುರಂ (ತಮಿಳುನಾಡು), ಜ.25: ಸಿಬಿಐ ವಿಚಾರಣೆ ಮತ್ತು ತನ್ನ ಮುಂಬರುವ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಎದುರಾಗಿರುವ ಅಡೆತಡೆಗಳ ನಡುವೆಯೇ ಖ್ಯಾತ ತಮಿಳು ನಟ-ರಾಜಕಾರಣಿ ಹಾಗೂ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರು ತಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ಯಾರ ಎದುರೂ ತಲೆಬಾಗುವುದಿಲ್ಲ ಎಂದು ರವಿವಾರ ಇಲ್ಲಿ ಹೇಳಿದ್ದಾರೆ. ತನ್ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಖಡಕ್ ಸಂದೇಶವೊಂದನ್ನು ರವಾನಿಸಿದ್ದಾರೆ. ಮಾಮಲ್ಲಾಪುರಂನಲ್ಲಿ ಪಕ್ಷದ ಕಾರ್ಯತಂತ್ರ ಸಭೆಯಲ್ಲಿ 3,000ಕ್ಕೂ ಅಧಿಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ, ‘ಇದು ಕೇವಲ ಚುನಾವಣೆಯಲ್ಲ, ಬದಲಾಗಿ ಪ್ರಜಾಪ್ರಭುತ್ವ ಯುದ್ಧವಾಗಿದೆ. ಈ ಯುದ್ಧವನ್ನು ಗೆಲ್ಲಲು ನೀವೇ ನನ್ನ ಕಮಾಂಡೋಗಳು’ ಎಂದು ಹೇಳಿದರು. ಡಿಎಂಕೆ ಮತ್ತು ಮುಖ್ಯ ಪ್ರತಿಪಕ್ಷ ಎಐಎಡಿಎಂಕೆ ವಿರುದ್ಧ ದಾಳಿ ನಡೆಸಿದ ವಿಜಯ್, ತಮ್ಮ ಪಕ್ಷದ ಹೆಸರಿನಲ್ಲಿ ‘ಅಣ್ಣಾ’ ಇರುವವರು ಸೇರಿದಂತೆ ಇಂದು ರಾಜಕೀಯದಲ್ಲಿರುವವರು ಅಣ್ಣಾದುರೈ ಅವರನ್ನು ಮರೆತಿದ್ದಾರೆ ಎಂದು ಟೀಕಿಸಿದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರು ದ್ರಾವಿಡ ರಾಜಕೀಯದ ಪ್ರಮುಖ ಸಿದ್ಧಾಂತಕಾರರಾಗಿದ್ದರು. ಅಧಿಕಾರದಲ್ಲಿರುವ ಪಕ್ಷಗಳಿಗೆ ಮತಗಟ್ಟೆಗಳು ಬೋಗಸ್ ಮತಗಳನ್ನು ಚಲಾಯಿಸುವ ಕೇಂದ್ರಗಳಾಗಿವೆ ಎಂದ ವಿಜಯ್, ಪ್ರತಿಯೊಂದೂ ಮತವನ್ನು ರಕ್ಷಿಸಿ, ಪ್ರತಿಯೊಬ್ಬರನ್ನೂ ಭೇಟಿಯಾಗಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ‘ದುಷ್ಟಶಕ್ತಿ (ಡಿಎಂಕೆ)’ ಮತ್ತು ‘ಭ್ರಷ್ಟಶಕ್ತಿ (ಎಐಎಡಿಎಂಕೆ)’ಯನ್ನು ಎದುರಿಸುವ ಧೈರ್ಯ ಟಿವಿಕೆಗೆ ಮಾತ್ರ ಇದೆ ಎಂದು ಹೇಳಿದರು. ಮುಂಬರುವ ಚುನಾವಣೆಗೆ ಮುನ್ನ ಬೆಂಬಲವನ್ನು ಕ್ರೋಡೀಕರಿಸಲು ಟಿವಿಕೆ ಜ.26ರಿಂದ ರಾಜ್ಯವ್ಯಾಪಿ ಅಭಿಯಾನವನ್ನು ಆರಂಭಿಸಲಿದೆ ಎಂದು ಪಕ್ಷದ ನಾಯಕರು ತಿಳಿಸಿದರು. ಟಿವಿಕೆ ಈವರೆಗೂ ಯಾವುದೇ ಪಕ್ಷದೊಂದಿಗೆ ಮೈತ್ರಿಯನ್ನು ಪ್ರಕಟಿಸಿಲ್ಲ. ‘ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ನಾವು ಏಕಾಂಗಿಯಾಗಿ ಚುನಾವಣೆಯನ್ನು ಗೆಲ್ಲುತ್ತೇವೆ’ ಎಂದು ವಿಜಯ್ ಹೇಳಿದರು. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಕರೂರಿನಲ್ಲಿ ವಿಜಯ್ ರ್ಯಾಲಿ ಸಂದರ್ಭ ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು. ಈ ಸಂಬಂಧ ಅವರನ್ನು ತನಿಖೆಗೊಳಪಡಿಸಿರುವ ಸಿಬಿಐ ದಿಲ್ಲಿಯಲ್ಲಿ ಎರಡು ಸಲ ಅವರ ವಿಚಾರಣೆ ನಡೆಸಿದೆ. ಅವರ ‘ಜನ ನಾಯಗನ್’ ಚಿತ್ರವು ಅದರ ಬಿಡುಗಡೆಗೆ ಸೆನ್ಸಾರ್ ಮಂಡಳಿಯು ತಡೆಯೊಡ್ಡಿದ ಬಳಿಕ ಸುದ್ದಿಯಲ್ಲಿದೆ. ಬಿಡುಗಡೆಗೆ ಅಡೆತಡೆಗಳ ನಿವಾರಣೆಯನ್ನು ಕೋರಿ ಅವರು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ.
20 ವರ್ಷಗಳ ಹಿಂದಿನ ಮಾನನಷ್ಟ ಪ್ರಕರಣ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಖುಲಾಸೆ
ಹೊಸದಿಲ್ಲಿ, ಜ.25: ದಿಲ್ಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ್ದ 20 ವರ್ಷಗಳಷ್ಟು ಹಳೆಯ ಮಾನನಷ್ಟ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಇಲ್ಲಿಯ ಸಾಕೇತ್ ನ್ಯಾಯಾಲಯವು ಶನಿವಾರ ಖುಲಾಸೆಗೊಳಿಸಿದೆ. ಎಪ್ರಿಲ್ 2006ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ಪಾಟ್ಕರ್ ತಮ್ಮ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದರು ಎನ್ನುವುದನ್ನು ಸಾಬೀತುಗೊಳಿಸುವಲ್ಲಿ ಸಕ್ಸೇನಾ ವಿಫಲಗೊಂಡಿದ್ದಾರೆ ಎಂದು ನ್ಯಾ. ರಾಘವ್ ಶರ್ಮಾ ತೀರ್ಪಿನಲ್ಲಿ ಹೇಳಿದ್ದಾರೆ. ಆಗ ಅಹಮದಾಬಾದ್ನ ಎನ್ಜಿಒ ‘ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್’ನ ಮುಖ್ಯಸ್ಥರಾಗಿದ್ದ ಸಕ್ಸೇನಾ ಈ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಟಿವಿ ಕಾರ್ಯಕ್ರಮವೊಂದರಲ್ಲಿ ಪಾಟ್ಕರ್ ಎನ್ಜಿಒ ಸಿವಿಲ್ ಗುತ್ತಿಗೆಗಳನ್ನು ಪಡೆಯುತ್ತಿರುವ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದ ಸಕ್ಸೇನಾ, ಅವುಗಳನ್ನು ತಿರಸ್ಕರಿಸಿದ್ದರು. ಟಿವಿ ಕಾರ್ಯಕ್ರಮದಲ್ಲಿ ಪಾಟ್ಕರ್ ಖುದ್ದಾಗಿ ಭಾಗವಹಿಸಿರಲಿಲ್ಲ ಮತ್ತು ಅವರ ಹಿಂದೆ ರೆಕಾರ್ಡ್ ಆಗಿದ್ದ ವೀಡಿಯೊ ಕ್ಲಿಪ್ನ್ನು ಮಾತ್ರ ತೋರಿಸಲಾಗಿತ್ತು ಎನ್ನುವುದನ್ನು ನ್ಯಾಯಾಲಯವು ಗಮನಿಸಿದೆ. ಆಡಿಯೊ-ವೀಡಿಯೊವನ್ನು ರೆಕಾರ್ಡ್ ಮಾಡಿದ್ದ ವರದಿಗಾರನನ್ನು ಅಥವಾ ಆರೋಪಿಯು ವಿವಾದಿತ ಹೇಳಿಕೆಗಳನ್ನು ನೀಡಿದ್ದನ್ನು ನೋಡಿದ್ದ ಯಾವುದೇ ವ್ಯಕ್ತಿಯನ್ನು ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಿಲ್ಲ ಎನ್ನುವುದನ್ನು ಗಮನಿಸುವುದು ಮುಖ್ಯವಾಗಿದೆ. ಕಾರ್ಯಕ್ರಮದಲ್ಲಿ ಪ್ರಸಾರವಾಗಿದ್ದ ವೀಡಿಯೊ ಪಾಟ್ಕರ್ ಅವರ ಸಂದರ್ಶನದ ಅಥವಾ ಅವರು ನಡೆಸಿದ್ದ ಸುದ್ದಿಗೋಷ್ಠಿಯ ಭಾಗವಾಗಿದ್ದಂತೆ ಕಂಡು ಬರುತ್ತದೆ. ನ್ಯಾಯಾಲಯದಲ್ಲಿ ಏನನ್ನಾದರೂ ಸಾಬೀತುಪಡಿಸಲು ಸುದ್ದಿಗೋಷ್ಠಿಯ ಸಂಪೂರ್ಣ ವೀಡಿಯೊ ಮತ್ತು ಆಡಿಯೊವನ್ನು ಸಲ್ಲಿಸುವುದು ಅತ್ಯಗತ್ಯವಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಸಕ್ಸೇನಾ ಮೂಲ ವೀಡಿಯೊ ದೃಶ್ಯಾವಳಿಯನ್ನು ಅಥವಾ ಆರೋಪಿತ ಮಾನಹಾನಿಕರ ಹೇಳಿಕೆಗಳನ್ನು ರೆಕಾರ್ಡ್ ಮಾಡಿದ್ದ ಸಾಧನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲು ವಿಫಲಗೊಂಡಿದ್ದಾರೆ. ಹೀಗಾಗಿ ಅವರು ಮಾಡಿರುವ ಆರೋಪಗಳು ಸಾಬೀತಾಗಿಲ್ಲ ಎಂದೂ ನ್ಯಾ. ಶರ್ಮಾ ಹೇಳಿದರು.
ರಾಯಚೂರು | ಪಡಿತರ ಅಕ್ಕಿ ಅಕ್ರಮ ಸಾಗಾಟ : 13 ಕ್ವಿಂಟಾಲ್ ಅಕ್ಕಿ ವಶಕ್ಕೆ
ರಾಯಚೂರು: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಣೆ ಮಾಡುತ್ತಿದ್ದ ವೇಳೆ ಶಕ್ತಿನಗರ ಪೊಲೀಸರು ದಾಳಿ ನಡೆಸಿ 13 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ಸಹಿತ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಿಂದ ಗದ್ವಾಲ್ ಕಡೆಗೆ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ವಡ್ಲೂರು ಕ್ರಾಸ್ ಸಮೀಪ ಶಕ್ತಿನಗರ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಕೆಎ-33 ಎಫ್-3843 ಸಂಖ್ಯೆಯ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಅನ್ನಭಾಗ್ಯ ಅಕ್ಕಿ ಸಾಗಣೆ ಪತ್ತೆಯಾಗಿದೆ. ವಶಪಡಿಸಿಕೊಂಡ ಲಾರಿ ವಡಗೇರಾ ಮೂಲದ ಮುಹಮ್ಮದ್ ಹಜರತ್ ಅಲಿ, ಮಹೆಬೂಬು ಹಾಗೂ ಸೋಹೆಲ್ ಎಂಬುವರಿಗೆ ಸೇರಿದ್ದಾಗಿ ತಿಳಿದು ಬಂದಿದೆ. ಮಾಹಿತಿ ಪಡೆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರೀಕ್ಷಕರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಲಾರಿಯಲ್ಲಿ ಸಾಗಿಸಲಾಗುತ್ತಿದ್ದದ್ದು ಸರ್ಕಾರದ ಅನ್ನಭಾಗ್ಯ ಅಕ್ಕಿಯೇ ಎಂಬುದನ್ನು ಖಚಿತಪಡಿಸಿದ್ದಾರೆ. ಈ ದಾಳಿಯಲ್ಲಿ ಶಕ್ತಿನಗರ ಪೊಲೀಸ್ ಠಾಣೆ ಪಿಎಸ್ಐ ನಾರಾಯಣ ಹಾಗೂ ಸಿಬ್ಬಂದಿಗಳು ಭಾಗವಹಿಸಿ ಲಾರಿ ಮತ್ತು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದರೂ, ಈ ಅಕ್ಕಿ ಬಡವರಿಗೆ ತಲುಪದೇ ಉಳ್ಳವರ ಕೈ ಸೇರಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ತೆಲಂಗಾಣ ರಾಜ್ಯಕ್ಕೆ ಸಾಗಿಸಲಾಗುತ್ತಿರುವುದು ದಾಳಿಯಿಂದ ಬೆಳಕಿಗೆ ಬಂದಿದೆ. ಇದಕ್ಕೂ ಕೆಲ ದಿನಗಳ ಹಿಂದಷ್ಟೇ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ನಲ್ಲಿ ಅಕ್ರಮ ಅಕ್ಕಿ ಸಾಗಾಣೆ ಜಾಲ ಪತ್ತೆಯಾಗಿತ್ತು. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದರೂ, ಮತ್ತೆ ಮತ್ತೆ ಅಕ್ರಮ ಸಾಗಣೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಣೆ ಮುಂದುವರೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
Assam SIR: ಮಿಯಾಗಳಿಗೆ ಮಾತ್ರ ನೋಟಿಸ್ ನೀಡಲಾಗುತ್ತಿದೆ, ಹಿಂದುಗಳಿಗಲ್ಲ: ಸಿಎಂ ಹಿಮಂತ ಬಿಸ್ವ ಶರ್ಮಾ
ಗುವಾಹಟಿ, ಜ.25: ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯಡಿ ಮಿಯಾಗಳಿಗೆ ಮಾತ್ರ ನೋಟಿಸ್ಗಳನ್ನು ನೀಡಲಾಗುತ್ತಿದೆ, ಹಿಂದುಗಳು ಅಥವಾ ಅಸ್ಸಾಮಿ ಮುಸ್ಲಿಮರಿಗೆ ಅಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ‘ವಿಶೇಷ ಪರಿಷ್ಕರಣೆ ಕುರಿತು ಯಾವುದೇ ವಿವಾದವಿಲ್ಲ. ಯಾವ ಹಿಂದು ನೋಟಿಸ್ ಪಡೆದಿದ್ದಾನೆ? ಯಾವ ಅಸ್ಸಾಮಿ ಮುಸ್ಲಿಂ ನೋಟಿಸ್ ಪಡೆದಿದ್ದಾನೆ? ಮಿಯಾಗಳು ಮತ್ತು ಅಂತಹ ಜನರಿಗೆ ನೋಟಿಸ್ ನೀಡಲಾಗಿದೆ. ಇಲ್ಲದಿದ್ದರೆ ಅವರು ನಮ್ಮ ತಲೆಯ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ’ ಎಂದು ಹೇಳಿದರು. ‘ಮಿಯಾ’ ಎನ್ನುವುದು ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಉದ್ದೇಶಿಸಿ ಬಳಸುವ ಅವಹೇಳನಕಾರಿ ಪದವಾಗಿದೆ. ಅಸ್ಸಾಮಿನ ಆಡಳಿತಾರೂಢ ಪಕ್ಷ ಬಿಜೆಪಿ ಈ ಸಮುದಾಯಕ್ಕೆ ‘ನುಸುಳುಕೋರರು’ ಎಂಬ ಹಣೆಪಟ್ಟಿ ಕಟ್ಟಿದ್ದು, ಅವರು ಸ್ಥಳೀಯ ಜನರ ಸಂಪನ್ಮೂಲಗಳು, ಉದ್ಯೋಗಗಳು ಮತ್ತು ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ. ತನ್ನ ಆಡಳಿತದಲ್ಲಿ ಮಿಯಾಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ತನ್ನ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ಶರ್ಮಾ, ‘ಇಲ್ಲಿ ಮುಚ್ಚಿಡುವಂಥದ್ದೇನೂ ಇಲ್ಲ. ನಾವು ಅವರಿಗೆ ತೊಂದರೆ ನೀಡುತ್ತಿದ್ದೇವೆ. ವಿಶೇಷ ಪರಿಷ್ಕರಣೆಯಡಿ ಅವರಿಗೆ ನೋಟಿಸ್ಗಳನ್ನು ನೀಡುತ್ತಿರುವುದು ಅವರನ್ನು ಒತ್ತಡದಲ್ಲಿರಿಸಲು ಒಂದು ಮಾರ್ಗವಾಗಿದೆ’ ಎಂದು ಹೇಳಿದರು. ‘ಯಾವುದೋ ಹಂತದಲ್ಲಿ ಅಸ್ಸಾಮಿನ ಜನರು ತಮ್ಮನ್ನು ವಿರೋಧಿಸುತ್ತಿದ್ದಾರೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರು ಮುಕ್ತವಾಗಿ ಮುನ್ನಡೆಯುತ್ತಾರೆ. ಇದಕ್ಕಾಗಿಯೇ ಕೆಲವರಿಗೆ ತೆರವು ಕಾರ್ಯಾಚರಣೆಗಾಗಿ, ಕೆಲವರಿಗೆ ಗಡಿ ಪೊಲೀಸರಿಂದ ನೋಟಿಸ್ಗಳು ಬರುತ್ತವೆ. ನಾವು ಕೊಂಚ ಕಿಡಿಗೇಡಿತನವನ್ನು, ಅದೂ ಕಾನೂನಿನ ವ್ಯಾಪ್ತಿಯಲ್ಲಿ ಮಾಡುತ್ತೇವೆ. ನಾವು ಬಡವರು ಮತ್ತು ಶೋಷಿತರ ಜೊತೆಯಲ್ಲಿದ್ದೇವೆ, ಆದರೆ ನಮ್ಮ ಸಮುದಾಯವನ್ನು ನಾಶಗೊಳಿಸಲು ಬಯಸುವವರ ಜೊತೆಯಲ್ಲಲ್ಲ’ ಎಂದರು. ಅಸ್ಸಾಂನಲ್ಲಿ ವಿಶೇಷ ಪರಿಷ್ಕರಣೆಯಡಿ ಮನೆ-ಮನೆ ಪರಿಶೀಲನೆಯ ಬಳಿಕ 10 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲು ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗವು ಡಿ.27ರಂದು ತಿಳಿಸಿತ್ತು. ಅಂತಿಮ ಪಟ್ಟಿಯು ಫೆ.10ರಂದು ಪ್ರಕಟಗೊಳ್ಳಲಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಬದಲಾಗಿ ಅಸ್ಸಾಂನಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯು ಎಸ್ಐಆರ್ನಂತೆ ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಮಾರ್ಚ್–ಎಪ್ರಿಲ್ನಲ್ಲಿ ನಡೆಯುವ ನಿರೀಕ್ಷೆಯಿದೆ. ವಿಶೇಷ ಪರಿಷ್ಕರಣೆಯ ಮೂಲಕ ಬಿಜೆಪಿಯು ಹೆಚ್ಚಿನ ಸಂಖ್ಯೆಯ ನೈಜ ಮತದಾರರ ಹೆಸರುಗಳನ್ನು ಅಳಿಸಲು ಹುನ್ನಾರ ನಡೆಸಿದೆ ಎಂದು ಹಲವಾರು ಪ್ರತಿಪಕ್ಷಗಳು ಆರೋಪಿಸಿದ್ದು, ಪೊಲೀಸ್ ದೂರುಗಳನ್ನೂ ದಾಖಲಿಸಿವೆ.
ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಸಿನಿಮಾಗಳ ಕಡೆಗಣನೆ: ಡಾ. ರಾಜೇಂದ್ರ ಸಿಂಗ್ ಬಾಬು ಆರೋಪ
ಮಂಗಳೂರು: ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಚಿತ್ರಗಳನ್ನು ಕಡೆಗಣಿಸುಲಾಗುತ್ತಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ತುಳು ಮತ್ತು ಇತರ ಪ್ರಾದೇಶಿಕ ಭಾಷಾ ಚಿತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಶಸ್ತಿ ಮತ್ತು ಸಹಾಯಧನ ನೆರವನ್ನು ತುಳು ಚಿತ್ರಗಳಿಗೆ ವಿಸ್ತರಿಸಿದೆ. ಪ್ರತಿ ವರ್ಷ ಒಂದು ಪ್ರಾದೇಶಿಕ ಭಾಷಾ ಚಿತ್ರಕ್ಕೆ ಪ್ರಶಸ್ತಿ ನೀಡುತ್ತದೆ. ತ್ರೈಮಾಸಿಕ ಪ್ರಶಸ್ತಿಗಳನ್ನು ಪಡೆಯುವ ಈ ಚಿತ್ರಗಳು ಸ್ವರ್ದಿಸಿವೆ. 16ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಎರಡನೆ ಮತ್ತು ಮೂರನೇ ಪ್ರಶಸ್ತಿಗಳನ್ನು ತುಳು ಚಿತ್ರಗಳು ಪಡೆದಿದ್ದವು. ಇಂದು ಈ ಬಾರಿ 17ನೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಯಾವುದೇ ತುಳು ಚಿತ್ರವನ್ನು ಪರಿಗಣಿಸಿಲ್ಲ ಎಂದವರು ತಿಳಿಸಿದ್ದಾರೆ. ನಾನು ತುಳುವಿನಲ್ಲಿ ನಿರ್ದೇಶಿಸಿದ ಬಿದ್೯ದ ಕಂಬುಲ' ಚಿತ್ರವನ್ನು ಸ್ವರ್ಧೆಗಾಗಿ ಕಳುಹಿಸಿದೆ. ತುಳುನಾಡಿನ ವಿಶಿಷ್ಟ ಜಾನಪದ ಕ್ರೀಡೆಯಾಗಿರುವ ಕಂಬಳದ ಹಿನ್ನಲೆ ಕಥೆಯಿದು. ಸುಮಾರು 700 ವರ್ಷಗಳ ಇತಿಹಾಸ ಇರುವ ಕಂಬಳ ತುಳುನಾಡಿನ ಸಾಂಸ್ಕೃತಿಕ ಕ್ರೀಡೆ, ಮಾನ್ಯ ಮುಖ್ಯಮಂತ್ರಿಗಳು ಈ ಸಾರಿಯ ಬಜೆಟ್ನಲ್ಲಿ ಕಂಬಳ ಕ್ರೀಡೆಗೆ ವಿಶೇಷ ಅನುದಾನ ಮತ್ತು ಪ್ರೊತ್ಸಾಹ ನೀಡುತ್ತೇನೆ ಎಂದು ಘೋಶಿಸಿದ್ದರು. ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ವನ್ನು ತಿರಸ್ಕರಿಸುವ ಮೂಲಕ ತುಳುನಾಡು ಮತ್ತು ತುಳುನಾಡು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಗೆ ಬೆಂಬಲಿ ಸದೆ ಪರಿಗಣಿಸದೆ ಇರುವುದರ ಮೂಲಕ ಸಂಬಂಧ ಪಟ್ಟವರು ತುಳು ಚಿತ್ರರಂಗದ ಮೇಲೆ ಕಡೆಗಣಿಸುವ ವ್ಯವಸ್ತೆಯನ್ನು ಸೃಷ್ಟಿಸಿದ್ದಾರೆ. 17ನೇ ಚಿತ್ರೋತ್ಸವದಲ್ಲಿ ಮಲೆಯಾಳಂನ 6 ಚಿತ್ರಗಳು ಮತ್ತು ಮಾರಾಠಿಯ 4 ಚಿತ್ರಗಳಿಗೆ ಮನ್ನಣೆ ಹಾಕುವ ಮೂಲಕ ಕನ್ನಡ ನಾಡಿನಲ್ಲಿಯೆ ನಾವು ಅನಾಥರಾಗಿರುವುದು ದುರಂತವೆ ಸರಿ ಎಂದವರು ತಿಳಿಸಿದ್ದಾರೆ. ತುಳು ಭಾಷೆಯನ್ನು ರಾಜ್ಯದ ಎರಡನೆ ಆಡಳಿತ ಭಾಷೆಯಾಗಿ ಪರಿಗಣಿಸಬೆಕಾಗಿದೆ ಅದನ್ನು ಪರಿಚ್ಚೆದಕ್ಕೆ ಸೇರಿಸಬೇಕು ಎನ್ನುವ ಒತ್ತಾಯ. ಒತ್ತಡಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ತುಳು ಚಿತ್ರಗಳನ್ನು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ವರ್ಧಾಮಾನಕ್ಕೆ ಆಯ್ಕೆ ನೀಡದೆ ಇರುವುದು ಅನ್ಯಾಯ ಮಾಡಿದಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಆದೇಶ ನೀಡಿ, ತುಳು ಚಿತ್ರರಂಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ನಿರ್ದೇಶಕ ಡಾ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
IND Vs NZ T20 | ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಸರಣಿ ಜಯ
ಗುವಾಹಟಿ: ಬರ್ಸಪಾರದ ಎಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಝಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಕೈ ವಶಪಡಿಸಿಕೊಂಡಿದೆ.
ಶುಭಾ ವೆಂಕಟೇಶ ಅಯ್ಯಂಗಾರ್ ರಿಗೆ ಪದ್ಮಶ್ರೀ ಪ್ರಶಸ್ತಿ
ಶುಭಾ ವೆಂಕಟೇಶ ಅಯ್ಯಂಗಾರ್ ಅವರು ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ (ಎನ್ಎಎಲ್) ಮೆಟೀರಿಯಲ್ ಸೈನ್ಸಸ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಪ್ರಸಿದ್ಧ ವಿಜ್ಞಾನಿಯಾಗಿದ್ದಾರೆ. ಸುಮಾರು 40 ವರ್ಷಗಳ ಕಾಲ ಎನ್ಎಎಲ್ನಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸಿರುವ ಅವರು, ವಿಮಾನ ನಿಲ್ದಾಣಗಳಲ್ಲಿ ಬಳಸುವ ರನ್ವೇ ಗೋಚರತೆ ಅಳೆಯುವ ಉಪಕರಣವಾದ ‘ಟ್ರಾನ್ಸ್ಮಿಸೋಮೀಟರ್' ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶುಭಾ ಅಯ್ಯಂಗಾರ್ ತಂಡ ಅಭಿವೃದ್ಧಿಪಡಿಸಿದ ಈ ಉಪಕರಣಗಳನ್ನು ಲಕ್ನೋ, ದೆಹಲಿ ಮತ್ತು ಕೋಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ.
ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಮೇಲೆ ಕಲ್ಲೆಸೆತ! ಕೊಪ್ಪಳದ ಅನ್ನದಾನೇಶ್ವರ ಮಠದ ಆವರಣದಲ್ಲಿ ಘಟನೆ
ಕೊಪ್ಪಳ ಜಿಲ್ಲೆಯ ಕೂಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಬಸವರಾಜ ರಾಯರಡ್ಡಿ ಅವರ ಮೇಲೆ ಕಲ್ಲೆಸೆದ ಘಟನೆ ನಡೆದಿದೆ. ಕಾರ್ಯಕ್ರಮದ ವೇಳೆ, ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರು ಕಲ್ಲೆಸೆದಿದ್ದು, ಈ ಹಿಂದೆ ಇದೇ ರೀತಿ ಘಟನೆ ನಡೆದಿದ್ದಾಗಿ ತಿಳಿದುಬಂದಿದೆ. ಶಾಸಕರು ನಂತರ ತಮ್ಮ ಭಾಷಣ ಮುಂದುವರೆಸಿದರು.
IND Vs NZ- ಅಭಿಷೇಕ್ ಶರ್ಮಾ ಬಿರುಗಾಳಿ ಅರ್ಧಶತಕಕ್ಕೆ ನಡುಗಿದ ಕಿವೀಸ್; ಗುರು ಯುವರಾಜ್ ಸಿಂಗ್ ದಾಖಲೆ ಜಸ್ಟ್ ಮಿಸ್!
ಭಾನುವಾರ ಗುವಾಹಟಿಯಲ್ಲಿ ನಡೆದ ದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು 153 ರನ್ ಗಳಿಸಿತ್ತು. ಈ ಮೊತ್ತವನ್ನು ಲೆಕ್ಕಕ್ಕಿಲ್ಲದಂತೆ ಬೆನ್ನಟ್ಟಿದ ಭಾರತ ತಂಡ ಇನ್ನೂ 60 ಎಸೆತಗಳನ್ನು ಬಾಕಿ ಉಳಿದಿರುವಂತೆ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ಭಾರತದ ಪರವಾಗಿ 2ನೇ ಅತಿ ವೇಗದ ಅರ್ಧಶತಕ ಹೊಡೆದದ್ದು ವಿಶೇಷವಾಗಿತ್ತು. ಅವರ ಮೆಂಟರ್ ಆಗಿರುವ ಯುವರಾಜ್ ಸಿಂಗ್ ಅವರು ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವುದು ಭಾರತದ ಪರವಾಗಿ ದಾಖಲಾಗಿರುವ ಅತ್ಯಂತ ವೇಗದ ಅರ್ಧಶತಕವಾಗಿದೆ. ಈ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಅಭಿಷೇಕ್ ಶರ್ಮಾ ಅವರು ಕೇವಲ 2 ಎಸೆತಗಳಲ್ಲಿ ವಂಚಿತರಾದರು. ಅವರು 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಸಮಸ್ತ ನೂರನೇ ವರ್ಷದ ಸಂಭ್ರಮ: ಕಾಸರಗೋಡಿನ ಕುಣಿಯದಲ್ಲಿ ಭರದ ಸಿದ್ಧತೆ
ಕುಣಿಯ (ಕಾಸರಗೋಡು): ಸಮಸ್ತ ಕೇರಳ ಜಮೀಯ್ಯತುಲ್ ಉಲಮಾದ ನೂರನೇ ವರ್ಷದ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿರುವ ಬೃಹತ್ ಅಂತರಾಷ್ಟ್ರೀಯ ಮಹಾಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕುಣಿಯದಲ್ಲಿ ನಿರ್ಮಿಸಲಾಗಿರುವ 'ವರಕ್ಕಲ್ ಮುಲ್ಲಕ್ಕೋಯ ತಂಙಳ್ ನಗರ'ದಲ್ಲಿ ಫೆ. 4 ರಿಂದ 8 ರವರೆಗೆ ನಡೆಯಲಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕೇರಳ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳು, ಲಕ್ಷದ್ವೀಪ ಹಾಗೂ ವಿದೇಶಗಳಿಂದ ಗಣ್ಯರು, ನಾಯಕರು ಮತ್ತು ಲಕ್ಷಾಂತರ ಕಾರ್ಯಕರ್ತರು ಆಗಮಿಸಲಿದ್ದಾರೆ. ಜಾಗತಿಕ ಎಕ್ಸ್ಪೋ ಮತ್ತು ಮಹಿಳೆಯರಿಗೆ ಅವಕಾಶ:- ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿರುವ 'ಗ್ಲೋಬಲ್ ಎಕ್ಸ್ಪೋ' ಜ.30ರ ಸಂಜೆ ಉದ್ಘಾಟನೆಗೊಳ್ಳಲಿದೆ. ಎಕ್ಸ್ಪೋ ವೀಕ್ಷಣೆಗಾಗಿ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವೆಂದರೆ, ಜನವರಿ 31 ಮತ್ತು ಫೆಬ್ರವರಿ 1 ರಂದು ಮಹಿಳೆಯರಿಗೆ ಮಾತ್ರ ಎಕ್ಸ್ಪೋ ವೀಕ್ಷಿಸಲು ಅವಕಾಶ ನೀಡಲಾಗಿದ್ದು, ಆ ದಿನಗಳಲ್ಲಿ ಸಂಪೂರ್ಣ ಪೆವಿಲಿಯನ್ ಮಹಿಳಾ ಸ್ವಯಂಸೇವಕರ ನಿಯಂತ್ರಣದಲ್ಲಿರಲಿದೆ. ಫೆಬ್ರವರಿ 2 ರಿಂದ 8 ರವರೆಗೆ ಪುರುಷರಿಗೆ ಪ್ರವೇಶವಿರುತ್ತದೆ. 100 ಧ್ವಜಗಳ ಮೆರವಣಿಗೆ:- ಈಜಿಪ್ಟ್ ಸೇರಿದಂತೆ ವಿವಿಧ ದೇಶಗಳು ಮತ್ತು ಭಾರತದ ವಿವಿಧ ರಾಜ್ಯಗಳಿಂದ ತರಲಾದ 100 ಧ್ವಜಗಳು ಫೆಬ್ರವರಿ 4 ರಂದು ಕುಣಿಯ ತಲುಪಲಿವೆ. ಕೋಝಿಕೋಡ್ ನ ವರಕ್ಕಲ್ ನಲ್ಲಿರುವ ಶಂಸುಲ್ ಉಲಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಅವರ ಮಖಾಮಿನಿಂದ ದ ತರಲಾಗುವ ಈ ಧ್ವಜಗಳನ್ನು ತಳಂಗರೆಯ ಮಲಿಕ್ ಇಬ್ನು ದೀನಾರ್ ಮಖಾಮಿಗೆ ತಲುಪಿಸಿ, ಅಲ್ಲಿಂದ ಭವ್ಯ ಮೆರವಣಿಗೆಯ ಮೂಲಕ ಸಮ್ಮೇಳನ ನಗರಿಗೆ ತರಲಾಗುವುದು. ಧ್ವಜಾರೋಹಣದೊಂದಿಗೆ ಕ್ಯಾಂಪ್ ಸೆಷನ್ಗಳಿಗೆ ಚಾಲನೆ ಸಿಗಲಿದೆ. ಬೃಹತ್ ಪ್ರತಿನಿಧಿ ಶಿಬಿರ:- * ಆನ್ಲೈನ್ ಮೂಲಕ ಆಯ್ಕೆಯಾದ 33,313 ಪ್ರತಿನಿಧಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. * ಫೆಬ್ರವರಿ 4 ರಿಂದ 6ರವರೆಗೆ 10,000 ಪ್ರತಿನಿಧಿಗಳಿಗೆ 'ದಾಈ' ಶಿಬಿರ. * ಫೆಬ್ರವರಿ 6 ರಿಂದ 8ರವರೆಗೆ 23,313 ಪ್ರತಿನಿಧಿಗಳನ್ನೊಳಗೊಂಡ ಜನರಲ್ ಕ್ಯಾಂಪ್. ವಿವಿಧ ವಿಷಯಗಳ ಕುರಿತು ಪ್ರಮುಖ ವಿದ್ವಾಂಸರು ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಇದರೊಂದಿಗೆ ಸಮ್ಮೇಳನ ನಗರಿಯ ಹಾಲ್ಗಳಲ್ಲಿ ಅಂತರಾಷ್ಟ್ರೀಯ ಸೆಮಿನಾರ್ ಗಳು ನಡೆಯಲಿವೆ. ಸುಸಜ್ಜಿತ ವ್ಯವಸ್ಥೆ ಮತ್ತು ಭದ್ರತೆ:- ಆರೋಗ್ಯ ಸೇವೆ: ಸಮ್ಮೇಳನ ನಗರಿಯಲ್ಲಿ 30 ಹಾಸಿಗೆಗಳ ತಾತ್ಕಾಲಿಕ ಚಿಕಿತ್ಸಾ ಕೇಂದ್ರ, ವೈದ್ಯರು ಮತ್ತು ಸಿಬ್ಬಂದಿ ಲಭ್ಯವಿರುತ್ತಾರೆ. ತುರ್ತು ಚಿಕಿತ್ಸೆಗಾಗಿ 20 ಅಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ಅಗ್ನಿಶಾಮಕ ದಳ: ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಲಿವೆ. ಊಟೋಪಚಾರ: ಶಿಬಿರದ ಪ್ರತಿನಿಧಿಗಳಿಗೆ ನುರಿತ ತಜ್ಞರ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಿದ ಆಹಾರ ಮತ್ತು ಕುಡಿಯುವ ನೀರನ್ನು ಪೂರೈಸಲಾಗುವುದು. ಸ್ವಯಂಸೇವಕರು: ಸುಗಮ ಸಂಚಾರ ಮತ್ತು ಜನದಟ್ಟಣೆ ನಿಯಂತ್ರಿಸಲು 3,313 'ವಿಖಾಯ' ಸ್ವಯಂಸೇವಕರು ಹಾಗೂ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಸಮಸ್ತದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ಸ್ಥಳೀಯ ಸ್ವಾಗತ ಸಮಿತಿಯವರು ಹಗಲಿರುಳು ಸಿದ್ಧತೆಯಲ್ಲಿ ತೊಡಗಿದ್ದಾರೆ. ವಿಶೇಷವೆಂದರೆ, ಜಾತಿ-ಮತ ಮತ್ತು ರಾಜಕೀಯ ಭೇದವಿಲ್ಲದೆ ಕುಣಿಯದ ಸುತ್ತಮುತ್ತಲಿನ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿದ್ದಾರೆ. ವರದಿ : ಯೂಸುಫ್ ಮುಂಡೋಲೆ
ತಲಪಾಡಿ: ಮನೆಗೆ ನುಗ್ಗಿ ಕಳ್ಳತನ; ಪ್ರಕರಣ ದಾಖಲು
ಉಳ್ಳಾಲ: ಮನೆಗೆ ನುಗ್ಗಿ ಕಪಾಟು ಜಾಲಾಡಿ ಬೆಲೆ ಬಾಳುವ ವಸ್ತುಗಳನ್ನು ಕಳವುಗೈದ ಘಟನೆ ತಲಪಾಡಿ ಗ್ರಾಮ ಕೆಸಿನಗರ ಪಲಾಹ್ ಸ್ಕೂಲ್ ಬಳಿ ನಡೆದಿದೆ. ಘಟನೆಯ ವಿವರ: ಎಲಿಯಾರ್ ಪದವುನಲ್ಲಿ ಅಂಗಡಿ ಹೊಂದಿದ್ದ ಅಬೂಬಕ್ಕರ್ ಅವರು 25 ವರ್ಷಗಳಿಂದ ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಅಬೂಬಕ್ಕರ್ ಪತ್ನಿ, ಪುತ್ರ ಹಾಗೂ ಪುತ್ರಿ ಅವರು ಈ ಮನೆಗೆ ಬೀಗ ಹಾಕಿ ಕುಟುಂಬ ಸಹಿತ ಸೌದಿಗೆ ಹೋಗಿದ್ದರು. ಇದರ ಬಳಿಕ ಅಬೂಬಕ್ಕರ್ ಅವರ ಸಹೋದರ ನ ಪತ್ನಿ ಇಂದು ಮನೆ ನೋಡಿ ಸ್ವಚ್ಛ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಮನೆಯ ಮುಂಬಾಗಿಲನ್ನು ಒಡೆದು ಒಳ ನುಗ್ಗಿದ ಕಳ್ಳರು ಕೆಳ ಮಹಡಿಯಲ್ಲಿರುವ ಮೂರು ಕೊಠಡಿಗಳು ಹಾಗೂ ಮೊದಲ ಮಹಡಿಯಲ್ಲಿ ಇರುವ ಒಂದು ಕೊಠಡಿಯಲ್ಲಿರುವ ಒಟ್ಟು ನಾಲ್ಕು ಕಪಾಟುಗಳನ್ನು ಒಡೆದು ಜಾಲಾಡಿದ್ದಾರೆ. ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.ಅಲ್ಲದೇ ಅಡುಗೆ ಕೋಣೆ ಯ ಕಪಾಟುಗಳನ್ನು ಜಾಲಾಡಿದ ಕಳ್ಳರಿಗೆ ಚಿನ್ನಾಭರಣ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕಳ್ಳರು ಕಪಾಟಿನಲ್ಲಿದ್ದ ಬೆಲೆ ಬಾಳುವ ವಾಚ್, ಮೊಬೈಲ್ ಕಳವುಗೈದಿದ್ದಾರೆ. ಈ ಮನೆಯ ಕುಟುಂಬ ವಿದೇಶಕ್ಕೆ ಹೋಗುವ ಮೊದಲೇ ಚಿನ್ನಾಭರಣಗಳನ್ನು ಸೇಫ್ ಲಾಕರ್ ನಲ್ಲಿ ಇಟ್ಟು ಹೋಗಿದ್ದರು ಎಂದು ಅಬೂಬಕ್ಕರ್ ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಚಿನ್ನಾಭರಣ ದೋಚಲು ಬಂದಿದ್ದರು: ಕಳವುಗೈದ ಆರೋಪಿಗಳು ಚಿನ್ನಾಭರಣ ದೋಚಲು ಬಂದಿದ್ದರು.ಚಿನ್ನಾಭರಣ ಸಿಗದ ಕಾರಣ ಮೊಬೈಲ್, ವಾಚ್ ಕಳವುಗೈದಿರಬೇಕು ಎಂದು ಶಂಕಿಸಲಾಗಿದೆ.ಈ ಬಗ್ಗೆ ಅಬೂಬಕ್ಕರ್ ಅವರ ಬಾವ ಶೇಖಬ್ಬ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆನ್ಲೈನ್ ಬೆಟ್ಟಿಂಗ್ನಲ್ಲಿ ಗೆದ್ದ ಹಣ ನೀಡದೆ ಬೆದರಿಕೆ ಪ್ರಕರಣ: ಐದು ಮಂದಿ ಆರೋಪಿಗಳ ಬಂಧನ
ಕೋಟ, ಜ.25: ಆನ್ಲೈನ್ ಬೆಟ್ಟಿಂಗ್ನಲ್ಲಿ ಗೆದ್ದ 15ಲಕ್ಷ ರೂ. ಹಣ ನೀಡದೆ ಜೀವಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಶಿರಿಯಾರ ಗ್ರಾಮದ ಎತ್ತಿನಟ್ಟಿಯ ರೂಪೇಶ್(23), ಮನೋಜ್(25), ಕೊಳ್ಕೆಬೈಲುವಿನ ಸೃಜನ್ ಶೆಟ್ಟಿ(28), ಪಡುಮುಂಡುವಿನ ರಾಘವೇಂದ್ರ (37), ಶಿರಿಯಾರ ಕುಶಲ(38) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಲ್ಲಾಡಿಯ ಸಂದೇಶ್ ಕುಲಾಲ್ ಎಂಬವರಿಗೆ ಸುಮಾರು ಒಂದು ವರ್ಷದ ಹಿಂದೆ ಆನ್ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಶಿರಿಯಾರ ನಿವಾಸಿ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ಸಂದೇಶ್ ಕುಲಾಲ್, ಪ್ರದೀಪ್ ಸೂಚನೆಯಂತೆ ರೂಪೇಶ್, ಮನೋಜ್, ಧೀರಜ್, ಹರೀಶ, ವಿದೇಶ್ ಹಾಗೂ ಇತರೆ ವ್ಯಕ್ತಿಗಳ ಮೊಬೈಲ್ ನಂಬರ್ಗಳಿಗೆ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಸಂದೇಶ್ ಕುಲಾಲ್ ಬೆಟ್ಟಿಂಗ್ನಲ್ಲಿ ಸುಮಾರು 15 ಲಕ್ಷ ರೂ. ಹಣವನ್ನು ಗೆದ್ದಿದ್ದು ಈ ಹಣವನ್ನು ಇವರು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಒಂದು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್ನನ್ನು ಭೇಟಿ ಮಾಡಿ ಗೆದ್ದ 15ಲಕ್ಷ ರೂ. ಹಣ ನೀಡುವಂತೆ ಕೇಳಿದ್ದು, ಆಗ ಪ್ರದೀಪ್, ಆತನ ತಂಡವರು ಹಣವನ್ನು ನೀಡಲು ನಿರಾಕರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಿರಾಶ್ರಿತರ ಕಲ್ಯಾಣಕ್ಕಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಎಸ್.ಜಿ. ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ
ಬೆಂಗಳೂರು: ಇಲ್ಲಿನ ಆರ್.ಟಿ.ನಗರದ ನಿವಾಸಿಯಾದ ಡಾ.ಎಸ್.ಜಿ. ಸುಶೀಲಮ್ಮ ಅವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಮಹಿಳಾ ಸಬಲೀಕರಣ, ಶಿಶು ಸಂರಕ್ಷಣೆ, ಬಡವರ ಹಾಗೂ ನಿರಾಶ್ರಿತರ ಕಲ್ಯಾಣಕ್ಕಾಗಿ ದಶಕಗಳ ಕಾಲ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಗುರುತಿಸಿ ಕೇಂದ್ರ ಸರಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. 1939ರ ಮೇ 24ರಂದು ನಗರದಲ್ಲಿ ಜನಿಸಿದ ಡಾ. ಎಸ್.ಜಿ. ಸುಶೀಲಮ್ಮ ಅವರು 1959ರಿಂದ 1967ರವರೆಗೆ ಕಾರ್ಖಾನೆಯೊಂದರಲ್ಲಿ 15 ವರ್ಷ ಸೇವೆ ಸಲ್ಲಿಸಿದರು. 1963ರಲ್ಲಿ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಸಮಾಜಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದರು. ಅವರು 1974ರಿಂದ 1978ರವರೆಗೆ ಭುವನೇಶ್ವರಿ ಮಹಿಳಾ ಮಂಡಳಿಯಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸಿದ್ದಾರೆ. 1975ರಲ್ಲಿ ಹೆಬ್ಬಾಳದ ಸಮೀಪದ ಚೋಳನಾಯಕನಹಳ್ಳಿಯಲ್ಲಿ ಬಡವರು, ಅನಾಥರು, ನಿರಾಶ್ರಿತ ಮಕ್ಕಳು ಮತ್ತು ಮಹಿಳೆಯರ ಸೇವೆಗಾಗಿ ಸುಮಂಗಲಿ ಸೇವಾ ಆಶ್ರಮವನ್ನು ಸ್ಥಾಪಿಸಿದರು. 1976ರಲ್ಲಿ ಬಸವಾನಂದ ನರ್ಸರಿ, 1979ರಲ್ಲಿ ಸುಮಂಗಲಿ ಯುವತಿ ಮಂಡಳಿ ಹಾಗೂ 1985ರಲ್ಲಿ ಚೋಳನಾಯಕನಹಳ್ಳಿಯಲ್ಲಿ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿ ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದರು. ಪ್ರಾರಂಭದಿಂದ ಸುಮಂಗಲಿ ಸೇವಾಶ್ರಮದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿರುವ ಎಸ್.ಜಿ.ಸುಶೀಲಮ್ಮ 1987ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷರಾಗಿ ಮತ್ತು ಜಾಲಹಳ್ಳಿಯ ಸಮೂಹ ಸಾಮಾಜಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, 1989ರಲ್ಲಿ ಬೆಂಗಳೂರು ನಗರ ಜಿಲ್ಲಾ ಮಹಿಳಾ ಮಹಾಮಂಡಲದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1990ರಲ್ಲಿ ದೊಡ್ಡಬಳ್ಳಾಪುರದ ಸದ್ಗುರು ಅಮರಜ್ಯೋತಿ ವಿಶ್ವಕುಂಡಲ ಯೋಗ ಆಶ್ರಮದ ಅಧ್ಯಕ್ಷರಾಗಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಬಹೋಪಯೋಗಿ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ಅನೇಕ ಸಂಘ-ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಡಾ. ಸುಶೀಲಮ್ಮ ಅವರು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಮಹಿಳಾ ಒಕ್ಕೂಟಗಳ ರಚನೆ, ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳು ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇವರ ಸೇವಾ ಕಾರ್ಯಗಳಿಂದ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಹೊಸ ಬದುಕಿನ ದಾರಿಯನ್ನು ಕಂಡಿದ್ದಾರೆ.
ಭಾರತ ಮಾತೆಯ ದೈವಿಕ ರೂಪಕ್ಕೆ ವಂದೇ ಮಾತರಂ ಗೀತೆಯಿಂದ ದೇಶಭಕ್ತಿಯ ಸಿಂಚನ; ರಾಷ್ಟ್ರಪತಿ ದ್ರೌಪದಿ ಮುರ್ಮು
ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಆ ನಂತರದ ದೇಶ ರಚನೆಯಲ್ಲಿ ವಂದೇ ಮಾತರಂ ಗೀತೆ ನಿರ್ವಹಿಸಿರುವ ಮಹತ್ವದ ಪಾತ್ರವನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಮರಿಸಿದ್ದಾರೆ. ಭಾರತದ 77ನೇ ಗಣರಾಜ್ಯೋತ್ಸವ ಮುನ್ನಾದಿನ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ದ್ರೌಪದಿ ಮುರ್ಮು ಅವರು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶ್ರೌರ್ಯವನ್ನು ಕೊಂಡಾಡಿದರು. ಇದೇ ವೇಳೆ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿದೆ ಮಾಹಿತಿ.
ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯಡಿ ಮಂಗಳೂರಿಗೆ 200 ಕೋಟಿ ರೂ. ಅನುದಾನ: ಸಚಿವ ಭೈರತಿ ಸುರೇಶ್
ಮಹಾಕಾಳಿಪಡ್ಪು ಅಂಡರ್ ಪಾಸ್ ಉದ್ಘಾಟನೆ
ಬೆಳಗಾವಿಯ ಪ್ರಭಾಕರ್ ಕೋರೆ ಅವರಿಗೆ ಪದ್ಮಶ್ರೀ ಗರಿ
ಬೆಂಗಳೂರು: ‘ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ’(ಕೆಎಲ್ಇ)ಯ ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಅವರ ಅನುಪಮ ಸೇವೆಯನ್ನು ಗುರುತಿಸಿ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯನ್ನು ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಮೂಲದ ಪ್ರಭಾಕರ ಕೋರೆ ಅವರು, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅದ್ವಿತೀಯ ಸೇವೆಯನ್ನು ಗುರುತಿಸಿ ಪ್ರತಿಷ್ಟಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿಕ್ಷಣ ಪ್ರೇಮಿಯಾಗಿರುವ ಕೋರೆ ಅವರ ದೂರದೃಷ್ಟಿ ಹಾಗೂ ನಾಯಕತ್ವ ಗುಣಗಳೇ ಅವರನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಿವೆ ಎಂದು ಅವರ ಆಪ್ತರ ಅನಿಸಿಕೆಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಕೋರೆ ಅವರ ಸೇವೆ ಪರಿಗಣಿಸಿ ಅಮೆರಿಕದ ಪ್ರತಿಷ್ಠಿತ ಥಾಮಸ್ ಜಾಫರ್ಸನ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ. ಪ್ರಭಾಕರ ಕೋರೆ ಈ ಗೌರವ ಪಡೆದ ಮೊದಲ ಕನ್ನಡಿಗ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸರಕಾರ ಗೌರವಿಸಿದೆ. 2008ರಲ್ಲಿ ಕರ್ನಾಟಕ ವಿಶ್ವ ವಿದ್ಯಾನಿಲಯ ಹಾಗೂ 2013ರಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾನಿಲಯಗಳು ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಇದೀಗ ಪದ್ಮಶ್ರೀ ಪ್ರಶಸ್ತಿಯೂ ಬಂದಿದೆ. 1947ರ ಆಗಸ್ಟ್ 1ರಂದು ಜನಿಸಿದ ಅವರು, ಬಿ.ಕಾಂ ಪದವೀಧರ. ಮೂರು ಅವಧಿಗೆ (1990-1996, 2008-2014, 2014-2020) ರಾಜ್ಯಸಭಾ ಸದಸ್ಯರಾಗಿ ಅವರು ಕೆಲಸ ಮಾಡಿದ್ದಾರೆ. 2001ರಿಂದ 2007ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕೃತಕ ಬುದ್ದಿಮತ್ತೆಯಿಂದ ಸೃಷ್ಠಿಶೀಲ ಮನಸ್ಸುಗಳು ನಾಶ: ಟಿ.ಎನ್.ಸೀತಾರಾಂ ಆತಂಕ
ಉಡುಪಿ: ಕೃತಕ ಬುದ್ದಿಮತ್ತೆ ಎಂಬುದು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮೂಡಿಸುತ್ತಿದೆ. ಆದರೆ ಅದು ಸಾಹಿತ್ಯ, ಸಂಸ್ಕೃತಿಗಳ ಕ್ಷೇತ್ರಕ್ಕೆ ಕಾಲಿಟ್ಟರೆ ಸೃಷ್ಠಿಶೀಲ ಮನಸ್ಸುಗಳು ನಾಶವಾಗಿ ದೊಡ್ಡ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಅದರ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ಸಾಹಿತಿ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಆತಂಕ ವ್ಯಕ್ತಪಡಿಸಿದ್ದಾರೆ. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಕಾರದೊಂದಿಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಸಂಸ್ಕೃತಿ ಉತ್ಸವದ ಎರಡನೆ ದಿನವಾದ ರವಿವಾರ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು. ಕೃತಕ ಬುದ್ಧಿಮತ್ತೆಯ ಅನುಕೂಲಗಳನ್ನು ನಾವು ಸ್ವಾಗತಿಸಬೇಕು ಮತ್ತು ಯಾವುದೇ ಕಾರಣಕ್ಕೂ ನಿರಾಕರಿಸಬಾ ರದು. ಕೃತಕ ಬುದ್ದಿಮತ್ತೆಗೆ ಎಷ್ಟೇ ಬುದ್ದಿ ಇರಬಹುದು. ಆದರೆ ಹೃದಯ ಕಣ್ಣೀರು ಅರ್ಥ ಮಾಡಲು ಅದಕ್ಕೆ ಸಾಧ್ಯ ಇಲ್ಲ. ಆದುದರಿಂದ ಮುಂದೆ ಇದರ ಜೊತೆ ಪ್ರತಿ ಹಂತದಲ್ಲೂ ಯುದ್ಧ ಮಾಡುವ ಸ್ಥಿತಿ ಬರಲಿದೆ ಎಂದರು. ಕೃತಕ ಬುದ್ದಿಮತ್ತೆಯ ಪರಿಣಾಮವಾಗಿ ಲಕ್ಷಾಂತರ ಮಂದಿ ಕೆಲಸ ಕಳೆದು ಕೊಳ್ಳಲಿದ್ದಾರೆ. ಈ ಜಗತ್ತಿನಲ್ಲಿ ನಿರು ದ್ಯೋಗ ಸಂಖ್ಯೆ ಕೋಟಿಗೆ ತಂದು ಇಡುವ ಸ್ಥಿತಿಯನ್ನು ಕೃತಕ ಬುದ್ದಿಮತ್ತೆ ಸೃಷ್ಠಿಸುತ್ತದೆ. ಈ ಸವಾಲನ್ನು ನಾವು ಸ್ವೀಕರಿಸ ಬೇಕು. ಇಲ್ಲದಿದ್ದರೆ ಇಲ್ಲಿ ಮನುಷ್ಯರು ಉಳಿಯುವುದಿಲ್ಲ ಎಂದು ಅವರು ತಿಳಿಸಿದರು. ಅಧ್ಯಕ್ಷತೆಯನ್ನು ಉಡುಪಿ ಹಿರಿಯ ವಿದ್ವಾಂಸ ನಾಡೋಜ ಪ್ರೊ.ಕೆ.ಪಿ.ರಾವ್ ವಹಿಸಿದ್ದರು. ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಮಾತುಗಳನ್ನಾಡಿದರು. ಲೇಖಕ ಜೋಗಿ, ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್, ಪಂಚಮಿ ಟ್ರಸ್ಟ್ನ ಸಂಸ್ಥಾಪಕ ಡಾ.ಎಂ.ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿದ್ದರು. ಉದ್ಯಮಿ ಸುಗುಣ ಸುವರ್ಣ, ಕಲಾ ಪೋಷಕ ಭುವನಪ್ರಸಾದ್ ಹೆಗ್ಡೆ, ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಸ್ಟ್ರೋ ಮೋಹನ್ ಸ್ವಾಗತಿಸಿದರು. ಪುರಸ್ಕಾರ ಸಮಿತಿಯ ಸಂಯೋಜಕ ಜನಾರ್ದನ ಕೊಡವೂರು ವಂದಿಸಿದರು. ವಿದ್ಯಾ ಶ್ಯಾಮಸುಂದರ್ ಸನ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರಿಂದ ಗುಲಾಮನ ಸ್ವಾತಂತ್ರ್ಯ ಯಾತ್ರೆ ನಾಟಕ ಪ್ರದರ್ಶನಗೊಂಡಿತು. ಗುರು ಲಂಕೇಶರನ್ನು ನೆನಪಿಸಿದ ಸೀತಾರಾಮ್! ಇದೇ ದಿನ ನನ್ನ ಗುರು ಪಿ.ಲಂಕೇಶ್ ತೀರಿಹೋಗಿರುವುದು. ಇಂದಿಗೆ 25ವರ್ಷಗಳಾಗಿವೆ. ಲಂಕೇಶ್ ಅವರು ನನ್ನನು ಮನುಷ್ಯರನ್ನಾಗಿ ಮಾಡಿದರು. ಅವರ ನಾಟಕಗಳಲ್ಲಿ ನಾನು ಮುಖ್ಯ ಪಾತ್ರ ವಹಿಸುತ್ತಿದ್ದೆ. ಅವರ ಪಲ್ಲವಿ ಸಿನೆಮಾ ದಲ್ಲಿ ನನಗೆ ನಾಯಕನಾಗಿ ನಟಿಸುವ ಅವಕಾಶ ಮಾಡಿಕೊಟ್ಟರು. ಅವರ ದೃಷ್ಠಿಕೋನ ಸಾಮಾನ್ಯರನ್ನು ಗುರುತಿ ಸುವುದು. ಇದು ನನ್ನ ಬದುಕಿನ ಬಹಳ ದೊಡ್ಡ ಪಾಠ ಮತ್ತು ದೀಪ ಎಂದು ಭಾವಿಸುತ್ತೇನೆ. ಆದುದರಿಂದ ನನ್ನ ಸಾಧನೆಗೆ ದೊರೆತ ಈ ಪ್ರಶಸ್ತಿಯಲ್ಲಿ ಮುಖ್ಯ ಪಾಲು ಲಂಕೇಶ್ ಅವರಿಗೆ ಸಲ್ಲಬೇಕು ಎಂದು ಟಿ.ಎನ್.ಸೀತಾರಾಂ ತಿಳಿಸಿದರು.
ಬಿಡದಿ ಟೌನ್ಶಿಪ್ ಭೂಸ್ವಾಧೀನ: ರೈತರ ಪರ ನಿಂತ ಎಚ್ಡಿ ಕುಮಾರಸ್ವಾಮಿ - ಹೊಸ ದರಕ್ಕೆ ಆಗ್ರಹ; ಎಕರೆಗೆ ಎಷ್ಟು?
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಭೂಮಿ ಉಳಿಸಲು ಬದ್ಧತೆ ತೋರಿದ್ದಾರೆ. ಭೂಸ್ವಾಧೀನವಾದರೆ ಎಕರೆಗೆ 13 ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜಮೀನಿಗೂ ಪರಿಹಾರ ಪಡೆಯುವುದಿಲ್ಲ ಎಂದಿದ್ದಾರೆ. 2028ಕ್ಕೆ ಜನತಾ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ಶೀಘ್ರವೇ ಪರಶುರಾಮ ಪ್ರತಿಮೆ ಪ್ರತಿಷ್ಠಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಕಾರ್ಕಳದಲ್ಲಿ ಹೊನಲು ಬೆಳಕಿನ ಕಾಂಗ್ರೆಸ್ ಕ್ರೀಡಾಕೂಟ ಉದ್ಘಾಟನೆ
ದೇವದುರ್ಗ | ಕುಡುಕರ ಅಡ್ಡೆಯಾದ ಎಪಿಎಂಸಿ ಕಲ್ಯಾಣ ಮಂಟಪ
ಕೋಟಿ ರೂ. ವೆಚ್ಚದ ಕಟ್ಟಡ ನಿರ್ವಹಣೆಯಿಲ್ಲದೆ ಶಿಥಿಲ: ಅಧಿಕಾರಿಗಳು ಮೌನ
ಸಮಾಜದ ಏಳಿಗೆಗೆ ಸವಿತಾ ಮಹರ್ಷಿ ಮಾರ್ಗದರ್ಶನ ಅತೀ ಅಗತ್ಯ: ಎಂ.ಎ.ಗಫೂರ್
ಉಡುಪಿ, ಜ.25: ಸವಿತಾ ಸಮಾಜವು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ಸೃಜನಶೀಲತೆಯನ್ನು ಹೊಂದುವ ಮೂಲಕ ಸಮಾಜಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದು, ವೃತ್ತಿಯ ಮೂಲ ಪುರುಷರಾದ ಸವಿತಾ ಮಹರ್ಷಿ ಅವರ ಮಾರ್ಗದರ್ಶನ ಸಮಾಜದ ಏಳಿಗೆಗೆ ಅತೀ ಅಗತ್ಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದ್ದಾರೆ. ಉಡುಪಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಸವಿತಾ ಸಮಾಜದ ಸಹಯೋಗದಲ್ಲಿ ರವಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯವನ್ನು ಉದ್ಘಾಟಿಸಿ, ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಅವರು ಮಾತನಾಡುತಿದ್ದರು. ಸಮಾಜವನ್ನು ಸನ್ಮಾರ್ಗದಲ್ಲಿ ನಡೆಯುವಂತ ಸಂದೇಶವನ್ನು ನೀಡಿದ ಮಹನೀಯರು ಜಯಂತಿ ಕಾರ್ಯಕ್ರಮವನ್ನು ಸರಕಾರ ಆಚರಿಸಿಕೊಂಡು ಬಂದಿದ್ದು,ಸವಿತಾ ಸಮಾಜದ ಏಳಿಗೆಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮಕ್ಕಳು ಶಿಕ್ಷಣವನ್ನು ಪಡೆವುದ ರೊಂದಿಗೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಮಾಜವು ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸವಿತಾ ಮಹರ್ಷಿ ಗಳು ಜೀವನ ನಿರ್ವಹಣೆಗಾಗಿ ಅನೇಕ ತತ್ವಗಳನ್ನು ಕೊಡುಗೆಯಾಗಿ ನೀಡಿದ್ದು, ಪ್ರಸ್ತುತ ಬದುಕಿನಲ್ಲಿ ಅವುಗಳ ಪಾಲನೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ ಕಿನ್ನಿಮುಲ್ಕಿ, ಸವಿತಾ ಮಹರ್ಷಿಗಳ ತತ್ವ ಆದರ್ಶ ಗಳ ಪಾಲನೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿನಿತ್ಯದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಹೇಳಿದರು. ಸಮುದಾಯದ ಹಿರಿಯರಾದ ಗೋವಿಂದ ಭಂಡಾರಿ ಬನ್ನಂಜೆ, ಸವಿತಾ ಮಹರ್ಷಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶೇಖರ ಸಾಲಿಯಾನ್ ಆದಿಉಡುಪಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ ದರು. ಮಹೇಶ್ ಕಾರ್ಯಕ್ರಮ ನಿರೂಪಿಸಿ, ಶೇಖರ್ ಸಾಲಿಯಾನ್ ವಂದಿಸಿದರು.
KSRTC: ಬಸ್ಗಳ ಲೈವ್ ಲೋಕೇಶನ್ ಇನ್ಮುಂದೆ ನಿಮ್ಮ ಮೊಬೈಲ್ನಲ್ಲಿ, ವಿಟಿಎಂಎಸ್ ವ್ಯವಸ್ಥೆ ಶೀಘ್ರವೇ ಜಾರಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವ್ಯಾಪ್ತಿಯಲ್ಲಿ 8,000 ಕ್ಕೂ ಅಧಿಕ ಬಸ್ಗಳು ನಿತ್ಯ ಲಕ್ಷಾಂತರ ಕಿಲೋ ಮೀಟರ್ ಸಂಚರಿಸಿ ಸಾರ್ವಜನಿಕರಿಗೆ ದಕ್ಷ ಸೇವೆ ನೀಡುತ್ತಿವೆ. ಇವುಗಳ ಮೇಲ್ವಿಚಾರಣೆಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಬಹುನಿರೀಕ್ಷಿತ ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಸಿಸ್ಟಮ್ (VTMS) ಸಾರಿಗೆ ಇಲಾಖೆ ಜಾರಿಗೆ ತರಲು ಮುಂದಾಗಿದೆ. ಈ
ಮತದಾರರಿಂದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯ: ಉಡುಪಿ ಡಿಸಿ ಸ್ವರೂಪ
ಉಡುಪಿ, ಜ.25: ಭಾರತವು ಒಂದು ಪ್ರಜಾಪ್ರಭುತ್ವ ದೇಶವಾಗಿದ್ದು ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಮತ್ತು ಕರ್ತವ್ಯ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ. ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತ ಆಶ್ರಯ ದಲ್ಲಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ರವಿವಾರ ನಡೆದ 16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ದೇಶದ ಚುನಾವಣಾ ಆಯೋಗ ಸ್ಥಾಪನೆಯಾದ ಸಂಸ್ಕರಣಾರ್ಥವಾಗಿ 2011ರಿಂದ ಪ್ರತಿ ವರ್ಷ ಜನವರಿ 25ನ್ನು ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಪಾರದರ್ಶಕ ಮತದಾನ ಪ್ರಕ್ರಿಯೆಗಾಗಿ ಚುನಾವಣಾ ಆಯೋಗವು ನಾಗರಿಕ ಸ್ನೇಹಿ ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಮತದಾನವು ಐಚ್ಛಿಕವಾಗಿದ್ದು, ಹೆಚ್ಚು ಜನರು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾಗರಿಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಮತದಾನ ನಮಗೆ ನೀಡುತ್ತಿದ್ದು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ಬಲಿದಾನ ದಿಂದ ದೇಶವು ಗುಲಾಮ ಗಿರಿಯಿಂದ ಮುಕ್ತವಾಯಿತು. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವವನ್ನು ಸಂವಿಧಾನದ ಮೂಲಕ ಪಡೆದುಕೊಂಡು ಮತದಾನದ ಅಧಿಕಾರವನ್ನು ಗಳಿಸಿದ್ದೇವೆ. 18 ವರ್ಷ ಮೀರಿದ ಎಲ್ಲಾ ವಯಸ್ಕರು ಪಕ್ಷಪಾತವಿಲ್ಲದೇ ಮತ ನೀಡಬಹುದು. ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸ ಬೇಕು. ಜನ ಪ್ರತಿನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡಲು ನಾವು ಜವಾಬ್ದಾರಿಯುತವಾಗಿ ಮತ ಚಲಾಯಿಸ ಬೇಕು. ನಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡಬಾರದು ಎಂದರು. ನಿವೃತ್ತ ಸರಕಾರಿ ಅಭಿಯೋಜಕ ರಾಜು ಪೂಜಾರಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಶಿವಪ್ರಸಾದ್ ಶೆಟ್ಟಿ ಎಸ್ಐಆರ್ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಯುವ ಮತದಾರ ರಿಗೆ ಎಪಿಕ್ ಕಾರ್ಡುಗಳನ್ನು ವಿತರಿಸಲಾಯಿತು. ಮತದಾನ ನಿಮಿತ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ 5 ಜನ ಬಿಎಲ್ಓಗಳನ್ನು ಹಾಗೂ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯವನ್ನು ನಿರ್ವಹಿಸಿದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಕೆ.ಎಸ್.ಜ್ಯೋತಿಶ್ರೀ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸ್ವಾಗತಿಸಿದರು. ಗಂಗಾಧರ್ ಕೆ. ನಿರೂಪಿಸಿ, ವಂದಿಸಿದರು.
BBL 15- ಲೀಗ್ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ ಪರ್ತ್ ಸ್ಕಾಚರ್ಸ್; CSK- MI ಜಂಟಿ ದಾಖಲೆ ನುಚ್ಚುನೂರು!
Perth Scorchers Vs Sydney Sixers- ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕಾಚರ್ಸ್ ತಂಡವು ಸಿಡ್ನಿ ಸಿಕ್ಸರ್ಸ್ ತಂಡದ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸುವುದರೊಂದಿಗೆ 6ನೇ ಬಾರಿ ಪ್ರಶಸ್ತಿ ಗೆದ್ದಿದೆ. ಇದು ಲೀಗ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯಾಗಿದೆ. ಈ ವರೆಗೂ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಟ್ರಿನಿಬಾಗೊ ನೈಟ್ ರೈಡರ್ಸ್ ತಂಡಗಳ ಜೊತೆಗೆ ಪರ್ತ್ ಸ್ಕಾಚರ್ಸ್ 5 ಬಾರಿ ಪ್ರಶಸ್ತಿ ಗೆದ್ದಿದ್ದು ಈ ಗೌರವವನ್ನು ಹಂಚಿಕೊಂಡಿದ್ದರು.
ಕರ್ನಾಟಕಕ್ಕೆ 8 ಪದ್ಮ ಗೌರವ; ಶತಾವಧಾನಿ ಆರ್. ಗಣೇಶ್ ರಿಗೆ ಪದ್ಮಭೂಷಣ
ಬೆಂಗಳೂರು: 2026ರ ಪದ್ಮ ಪ್ರಶಸ್ತಿಗಳು ಪ್ರಕಟವಾಗಿದ್ದು, ಈ ಬಾರಿ ಪದ್ಮ ಪ್ರಶಸ್ತಿಗಳಿಗೆ ಕರ್ನಾಟಕದಿಂದ ಎಂಟು ಮಂದಿ ಸಾಧಕರು ಆಯ್ಕೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಅಪೂರ್ವ ಸಾಧನೆ ಸಲ್ಲಿಸಿರುವ ಶತಾವಧಾನಿ ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಏಳು ಮಂದಿ ಕರ್ನಾಟಕದ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಸೇವೆಗಾಗಿ ಮಂಡ್ಯದ ಪುಸ್ತಕ ಮನೆಯ ಅಂಕೆ ಗೌಡ, ಸಾಮಾಜಿಕ ಸೇವೆಗಾಗಿ ಎಸ್.ಜಿ. ಸುಶೀಲಮ್ಮ, ಸಾಹಿತ್ಯ ಕ್ಷೇತ್ರದಲ್ಲಿ ಶಶಿ ಶೇಖರ್ ವೆಂಪತಿ, ವೈದ್ಯಕೀಯ ವಿಭಾಗದಲ್ಲಿ ಡಾ. ಸುರೇಶ್ ಹಂಗನವಾಡಿ, ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಟಿ.ಟಿ. ಜಗನ್ನಾಥನ್, ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶುಭಾ ವೆಂಕಟೇಶ ಅಯ್ಯಂಗಾರ್, ಹಾಗೂ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾಕರ್ ಬಸವಪ್ರಭು ಕೋರೆ ಅವರಿಗೆ ಪದ್ಮಶ್ರೀ ಗೌರವ ನೀಡಲಾಗಿದೆ. ಶತಾವಧಾನಿ ಗಣೇಶ್ ಅವರ ಪರಿಚಯ ಇಲ್ಲಿದೆ... ಬಹುಭಾಷಾ ಪಂಡಿತರಾದ ಶತಾವಧಾನಿ ಆರ್.ಗಣೇಶ ಅವರಿಗೆ ಕಲಾ ಕ್ಷೇತ್ರದಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯು ಸಂದಿದೆ. ಬಹುಭಾಷಾ ಪಂಡಿತರಾದ ಶತಾವಧಾನಿ ಗಣೇಶ ಅವರು 1962ರಲ್ಲಿ ಕೋಲಾರದಲ್ಲಿ ಜನಿಸಿದರು. ಅವರ ತಂದೆ ಆರ್.ಶಂಕರನಾರಾಯಣ ಅಯ್ಯರ್ ಹಾಗೂ ತಾಯಿ ಅಲಮೇಲಮ್ಮ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಹಾಗೂ ಗೌರಿಬಿದನೂರಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಅವರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದಾರೆ. ಮೈಸೂರ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ‘ಕನ್ನಡದಲ್ಲಿ ಅವಧಾನ ಕಲೆ’ ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಸಂಸ್ಕೃತ, ಕನ್ನಡ, ತೆಲುಗು ಹೀಗೆ 8 ಭಾಷೆಗಳಲ್ಲಿ ಅವಧಾನವನ್ನು ಪ್ರಸ್ತುತಪಡಿಸಿದ್ದಾರೆ. ‘ಚಿತ್ರಕಾವ್ಯ' ಗಣೇಶ್ ಅವರ ವಿಶೇಷತೆಯಾಗಿದ್ದು, ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ ಭೇಟಿ ನೀಡಿ ಈ ಕುರಿತು ಪ್ರದರ್ಶನ ನೀಡಿದ್ದಾರೆ. ಈ ಕಲೆಯ ಕುರಿತು ಶತಾವಧಾನ ಶಾರದೆ ಹಾಗೂ ಶತಾವಧಾನ ಶ್ರೀವಿದ್ಯೆ ಎರಡು ಕೃತಿಗಳನ್ನು ರಚಿಸಿದ್ದಾರೆ. ಕಾವ್ಯಮೀಮಾಂಸೆ, ಛಂದಶ್ಯಾಸ್ತ್ರ, ವೇದಾಂತ, ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರ ವಿಷಯಗಳಲ್ಲಿ ಪರಿಣಿತರಾಗಿರುವ ಗಣೇಶ್ ಅವರು, ಸಂಸ್ಕೃತದಲ್ಲಿ 12ಕ್ಕೂ ಹೆಚ್ಚಿನ ನಾಟಕಗಳನ್ನೂ, 16 ಕಾವ್ಯಗಳನ್ನೂ, ಕನ್ನಡದಲ್ಲಿ 8 ಕಾವ್ಯಗಳನ್ನು, 3 ಕಾದಂಬರಿಗಳನ್ನು ಬರೆದಿದ್ದಾರೆ. 6 ಕೃತಿಗಳನ್ನು ಅನುವಾದ ಮಾಡಿದ್ದಾರೆ. ಗಣೇಶ ಅವರು ತಮ್ಮ ಮೊದಲ ಶತಾವಧಾನವನ್ನು 1991ರ ಡಿ.15ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಪ್ರದರ್ಶಿಸಿದರು. 2012ರ ನವೆಂಬರ್ 30ರಿಂದ ಡಿಸೆಂಬರ್ 2 ರವರೆಗೆ ಅವರು ಕನ್ನಡದಲ್ಲಿ ಮೊದಲ ಶತಾವಧಾನವನ್ನು ಸಂಪೂರ್ಣವಾಗಿ ಪ್ರದರ್ಶಿಸಿದರು. 2014ರ ಫೆ.16 ರಂದು ಬೆಂಗಳೂರಿನಲ್ಲಿ ಅವರು ತಮ್ಮ 1000ನೇ ಅವಧಾನವನ್ನು ಪ್ರದರ್ಶಿಸಿದ್ದಾರೆ.
17 ಸ್ಥಾನ ಪಡೆದಿರುವ ಜೆಡಿಎಸ್ ಹೇಗೆ ಅಧಿಕಾರಕ್ಕೆ ಬರುತ್ತಾರೆ: ಸಿ.ಎಂ ಸಿದ್ದರಾಮಯ್ಯ
17 ಸ್ಥಾನ ಪಡೆದಿರುವವರು ಅಧಿಕಾರಕ್ಕೆ ಹೇಗೆ ಬರುತ್ತಾರೆ ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ 140 ಸ್ಥಾನ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ದಾವೋಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರು ಪಾಲ್ಗೊಂಡಿದ್ದು, ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ. ನಮ್ಮಲ್ಲಿ ಕೌಶಲ್ಯವಿರುವ ಮಾನವ ಸಂಪನ್ಮೂಲದ ಲಭ್ಯತೆಯಿದೆ. ಇದಕ್ಕೆ
ಕಲಬುರಗಿ | ಸಾಧಕರಿಗೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ
ಕಲಬುರಗಿ : ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದ ಅವರ 163ನೇ ಜಯಂತಿ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ನಗರದ ಕನ್ನಡ ಭವನದಲ್ಲಿ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯುವ ಸಾಧಕರಾದ ಸಂಗೀತ ಎಂ ಪಡಶೆಟ್ಟಿ, ಅಕ್ಷಯ್ ಯಂಕಪ್ಪ ಡ್ಯಾನ್ಸರ್, ವಿಜಯಕುಮಾರ, ಶ್ರೇಯ ಪಾಟೀಲ್, ಅನನ್ಯ, ಡಿ.ಎಸ್.ಪ್ರಜ್ವಲ್ ಅವರಿಗೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಮುಖಂಡ ನೀಲಕಂಠಾವ್ ಮೂಲಗೆ, ಸುರೇಶ್ ಮಾಲಿಕ್, ಮನ್ನೂರ್ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರೂಕ್ ಮನ್ನೂರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧೂಳಪ್ಪ ದೊಡ್ಡಮನಿ, ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಚಿನ್ ಪರತಾಹಬಾದ, ಡಾ. ರಾಜಶೇಖರ್ ಮಾಂಗ್, ಮಹಮದ್ ಇಬ್ರಾಹಿಂ ಕಪನೂರ್, ವಿಜಯಕುಮಾರ ಕಟ್ಟಿಮನಿ, ಜೈ ಭೀಮ ಹುಡುಗಿ, ಗಿರೀಶ ಬೋರೆ, ಕಲ್ಯಾಣರಾವ ತೋನಸಳ್ಳಿ, ಮಂಜುನಾಥ್ ನಾಲವಾರಕರ್, ಸತೀಶ್ ಫರಹತಾಬಾದ, ಸುರೇಶ ಹನಗುಡಿ, ಅಣವೀರ ಪಾಟೀಲ, ಅಕ್ಷಯ್, ಗುಂಡು ಸಿಂಗ್, ಶಿವು ಯಾದವ, ಅಂಕುಶ್ ಬಿಲ್ಲವ್, ಶ್ರೀಮಂತ ಚೌದರಿ ಇದ್ದರು.
ರಾಷ್ಟ್ರೀಯ ಮತದಾರರ ದಿನಾಚರಣೆ: ಕಲಬುರಗಿಯಲ್ಲಿ ಮತದಾರ ಜಾಗೃತಿಗಾಗಿ ಸೈಕಲ್ ಜಾಥಾ
ಕಲಬುರಗಿ: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರವಿವಾರ ಕಲಬುರಗಿ ನಗರದಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಸೈಕಲ್ ಜಾಥಾಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ನಗರದ ಜಗತ್ ವೃತ್ತದಲ್ಲಿ ಚಾಲನೆ ನೀಡಿದರು. ಸ್ವತಃ ಸೈಕಲ್ ತುಳಿಯುವ ಮೂಲಕ ಯುವಕರಿಗೆ ಮತದಾನದ ಮಹತ್ವದ ಬಗ್ಗೆ ಸಂದೇಶ ನೀಡಿದರು. ಜಗತ್ ವೃತ್ತದಿಂದ ಆರಂಭಗೊಂಡ ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಸಾಗಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಕೂಡ ಸೈಕಲ್ ತುಳಿದು ಜಾಥಾದಲ್ಲಿ ಭಾಗವಹಿಸಿ ಮತದಾರರ ಜಾಗೃತಿಗೆ ಬೆಂಬಲ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ, ತಹಶೀಲ್ದಾರ್ ಆನಂದಶೀಲ, ತಾಲೂಕು ಪಂಚಾಯತ್ ಇ.ಒಗಳಾದ ಸೈಯದ್ ಪಟೇಲ್, ಮಾನಪ್ಪ ಕಟ್ಟಿಮನಿ, ಕ್ರೀಡಾ ಇಲಾಖೆಯ ಸಂಜಯ ಬಾಣದ, ಪ್ರವೀಣ ಪುಣೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಯುವಕರು ಹಾಗೂ ಸೈಕ್ಲಿಸ್ಟ್ಗಳು ಉತ್ಸಾಹದಿಂದ ಭಾಗವಹಿಸಿದ್ದರು.
2026ರ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ | ಯಾರಿಗೆ ಸಿಕ್ಕಿತು ʼಗೌರವʼ?; ಇಲ್ಲಿದೆ ಸಂಪೂರ್ಣ ವಿವರ
ಹೊಸದಿಲ್ಲಿ, ಜ.25: ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವಗಳಲ್ಲೊಂದಾದ ಪದ್ಮ ಪ್ರಶಸ್ತಿಗಳ 2026ನೇ ಸಾಲಿನ ಪುರಸ್ಕೃತರ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾಹಿತ್ಯ–ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಈ ಗೌರವ ನೀಡಲಾಗಿದೆ. ಪದ್ಮ ಪ್ರಶಸ್ತಿಗಳನ್ನು ಪ್ರತಿವರ್ಷ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ಪ್ರದಾನ ಮಾಡಲಾಗುತ್ತದೆ. ಈ ಬಾರಿ ಹಲವು ಗಣ್ಯರಿಗೆ ಮರಣೋತ್ತರವಾಗಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 2026ರ ಪದ್ಮ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಹೀಗಿದೆ: ►ಪದ್ಮವಿಭೂಷಣ 1. ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ) 2. ಕೆ.ಟಿ. ಥಾಮಸ್ 3. ಎನ್. ರಾಜಮ್ 4. ಪಿ. ನಾರಾಯಣನ್ 5. ವಿ.ಎಸ್. ಅಚ್ಯುತಾನಂದನ್ (ಮರಣೋತ್ತರ) ►ಪದ್ಮಭೂಷಣ 1. ಅಲ್ಕಾ ಯಾಗ್ನಿಕ್ 2. ಭಗತ್ ಸಿಂಗ್ ಕೋಶ್ಯಾರಿ 3. ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ 4. ಮಮ್ಮುಟ್ಟಿ 5. ನೋರಿ ದತ್ತಾತ್ರೇಯುಡು 6. ಪಿಯೂಷ್ ಪಾಂಡೆ (ಮರಣೋತ್ತರ) 7. ಎಸ್.ಕೆ.ಎಂ. ಮೈಲಾನಂದನ್ 8. ಶತಾವಧಾನಿ ಆರ್. ಗಣೇಶ್ 9. ಶಿಬು ಸೊರೆನ್ (ಮರಣೋತ್ತರ) 10. ಉದಯ್ ಕೋಟಕ್ 11. ವಿ.ಕೆ. ಮಲ್ಹೋತ್ರಾ (ಮರಣೋತ್ತರ) 12. ವೆಲ್ಲಪ್ಪಳ್ಳಿ ನಟೇಶನ್ 13. ವಿಜಯ್ ಅಮೃತರಾಜ್ ► ಪದ್ಮಶ್ರೀ 1. ಎ.ಇ. ಮುತ್ತುನಾಯಗಂ 2. ಅನಿಲ್ ಕುಮಾರ್ ರಸ್ತೋಗಿ 3. ಅಂಕೇಗೌಡ ಎಂ. 4. ಆರ್ಮಿಡಾ ಫೆರ್ನಾಂಡಿಸ್ 5. ಅರವಿಂದ್ ವೈದ್ಯ 6. ಅಶೋಕ್ ಖಾಡೆ 7. ಅಶೋಕ್ ಕುಮಾರ್ ಸಿಂಗ್ 8. ಅಶೋಕ್ ಕುಮಾರ್ ಹಲ್ದಾರ್ 9. ಬಲದೇವ್ ಸಿಂಗ್ 10. ಭಗವಾಂದಾಸ್ ರೈಕ್ವಾರ್ 11. ಭರತ್ ಸಿಂಗ್ ಭಾರತಿ 12. ಭಿಕ್ಲ್ಯಾ ಲಡಾಕ್ಯ ಧಿಂಡಾ 13. ಬಿಶ್ವ ಬಂಧು (ಮರಣೋತ್ತರ) 14. ಬ್ರಿಜ್ ಲಾಲ್ ಭಟ್ 15. ಬುದ್ಧ ರಶ್ಮಿ ಮಣಿ 16. ಬುಧ್ರಿ ತತಿ 17. ಚಂದ್ರಮೌಳಿ ಗಡ್ಡಮನುಗು 18. ಚರಣ್ ಹೆಂಬ್ರಾಮ್ 19. ಚಿರಂಜಿ ಲಾಲ್ ಯಾದವ್ 20. ದೀಪಿಕಾ ರೆಡ್ಡಿ 21. ಧಾರ್ಮಿಕ್ಲಾಲ್ ಚುನಿಲಾಲ್ ಪಾಂಡ್ಯ 22. ಗದ್ದೆ ಬಾಬು ರಾಜೇಂದ್ರ ಪ್ರಸಾದ್ 23. ಗಫ್ರುದ್ದೀನ್ ಮೇವಾಟಿ ಜೋಗಿ 24. ಗಂಭೀರ್ ಸಿಂಗ್ ಯೋನ್ಜೋನ್ 25. ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ) 26. ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ರಂಜನಿ ಬಾಲಸುಬ್ರಮಣಿಯನ್ (ಜೋಡಿ) 27. ಗೋಪಾಲ್ ಜಿ. ತ್ರಿವೇದಿ 28. ಗುಡೂರು ವೆಂಕಟ್ ರಾವ್ 29. ಎಚ್.ವಿ. ಹಂಡೆ 30. ಹಾಲಿ ವಾರ್ 31. ಹರಿ ಮಾಧಬ್ ಮುಖೋಪಾಧ್ಯಾಯ (ಮರಣೋತ್ತರ) 32. ಹರಿಚರಣ್ ಸೈಕಿಯಾ 33. ಹರ್ಮನ್ಪ್ರೀತ್ ಕೌರ್ ಭುಲ್ಲರ್ 34. ಇಂದರ್ಜಿತ್ ಸಿಂಗ್ ಸಿಧು 35. ಜನಾರ್ದನ್ ಬಾಪುರಾವ್ ಬೋಥೆ 36. ಜೋಗೇಶ್ ದೇವುರಿ 37. ಜುಜರ್ ವಾಸಿ 38. ಜ್ಯೋತಿಶ್ ದೇಬನಾಥ್ 39. ಕೆ. ಪಜನಿವೇಲ್ 40. ಕೆ. ರಾಮಸಾಮಿ 41. ಕೆ. ವಿಜಯ್ ಕುಮಾರ್ 42. ಕಬೀಂದ್ರ ಪುರಕಾಯಸ್ಥ (ಮರಣೋತ್ತರ) 43. ಕೈಲಾಶ್ ಚಂದ್ರ ಪಂತ್ 44. ಕಲಾಮಂಡಲಂ ವಿಮಲಾ ಮೆನನ್ 45. ಕೇವಲ್ ಕ್ರಿಶನ್ ಥಕ್ರಾಲ್ 46. ಖೇಮ್ ರಾಜ್ ಸುಂಡ್ರಿಯಾಲ್ 47. ಕೊಲ್ಲಕಲ್ ದೇವಕಿ ಅಮ್ಮ ಜಿ 48. ಕೃಷ್ಣಮೂರ್ತಿ ಬಾಲಸುಬ್ರಮಣಿಯನ್ 49. ಕುಮಾರ್ ಬೋಸ್ 50. ಕುಮಾರಸ್ವಾಮಿ ತಂಗರಾಜ್ 51. ಲಾರ್ಸ್–ಕ್ರಿಶ್ಚಿಯನ್ ಕೋಚ್ 52. ಲಿಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ 53. ಮಾಧವನ್ ರಂಗನಾಥನ್ 54. ಮಾಗಂಟಿ ಮುರಳಿ ಮೋಹನ್ 55. ಮಹೇಂದ್ರ ಕುಮಾರ್ ಮಿಶ್ರಾ 56. ಮಹೇಂದ್ರ ನಾಥ್ ರಾಯ್ 57. ಮಾಮಿದಾಳ ಜಗದೇಶ್ ಕುಮಾರ್ 58. ಮಂಗಳಾ ಕಪೂರ್ 59. ಮೀರ್ ಹಾಜಿಭಾಯಿ ಕಾಸಂಭಾಯ್ 60. ಮೋಹನ್ ನಗರ 61. ನಾರಾಯಣ ವ್ಯಾಸ್ 62. ನರೇಶ್ ಚಂದ್ರ ದೇವ್ ವರ್ಮ 63. ನೀಲೇಶ್ ವಿನೋದಚಂದ್ರ ಮಂಡ್ಲೇವಾಲ 64. ನೂರುದ್ದೀನ್ ಅಹಮದ್ 65. ಒತುವಾರ್ ತಿರುತ್ತಣಿ ಸ್ವಾಮಿನಾಥನ್ 66. ಪದ್ಮಾ ಗುರ್ಮೆಟ್ 67. ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿ 68. ಪೋಖಿಲ ಲೆಕ್ತೇಪಿ 69. ಪ್ರಭಾಕರ ಬಸವಪ್ರಭು ಕೋರೆ 70. ಪ್ರತೀಕ್ ಶರ್ಮಾ 71. ಪ್ರವೀಣ್ ಕುಮಾರ್ 72. ಪ್ರೇಮ್ ಲಾಲ್ ಗೌತಮ್ 73. ಪ್ರೊಸೆನ್ಜಿತ್ ಚಟರ್ಜಿ 74. ಪುನ್ನಿಮೂರ್ತಿ ನಟೇಶನ್ 75. ಆರ್. ಕೃಷ್ಣನ್ (ಮರಣೋತ್ತರ) 76. ಆರ್.ವಿ.ಎಸ್. ಮಣಿ 77. ರಬಿಲಾಲ್ ತುಡು 78. ರಘುಪತ್ ಸಿಂಗ್ (ಮರಣೋತ್ತರ) 79. ರಘುವೀರ್ ತುಕಾರಾಂ ಖೇಡ್ಕರ್ 80. ರಾಜಸ್ತಪತಿ ಕಾಳಿಯಪ್ಪ ಗೌಂಡರ್ 81. ರಾಜೇಂದ್ರ ಪ್ರಸಾದ್ 82. ರಾಮ ರೆಡ್ಡಿ ಮಾಮಿಡಿ (ಮರಣೋತ್ತರ) 83. ರಾಮಮೂರ್ತಿ ಶ್ರೀಧರ್ 84. ರಾಮಚಂದ್ರ ಗೋಡ್ಬೋಲೆ ಮತ್ತು ಶ್ರೀಮತಿ ಸುನೀತಾ ಗೋಡ್ಬೋಲೆ (ಜೋಡಿ) 85. ರತಿಲಾಲ್ ಬೋರಿಸಾಗರ್ 86. ರೋಹಿತ್ ಶರ್ಮಾ 87. ಎಸ್.ಜಿ. ಸುಶೀಲಮ್ಮ 88. ಸಂಗ್ಯುಸಾಂಗ್ ಎಸ್. ಪೊಂಗೆನರ್ 89. ಸಂತ ನಿರಂಜನ್ ದಾಸ್ 90. ಶರತ್ ಕುಮಾರ್ ಪಾತ್ರ 91. ಸರೋಜ್ ಮಂಡಲ್ 92. ಸತೀಶ್ ಶಾ (ಮರಣೋತ್ತರ) 93. ಸತ್ಯನಾರಾಯಣ ನುವಾಲ್ 94. ಸವಿತಾ ಪುನಿಯಾ 95. ಶಾಫಿ ಶೌಕ್ 96. ಶಶಿ ಶೇಖರ್ ವೆಂಪಾಟಿ 97. ಶ್ರೀರಂಗ್ ದೇವಬ ಲಾಡ್ 98. ಶುಭಾ ವೆಂಕಟೇಶ ಅಯ್ಯಂಗಾರ್ 99. ಶ್ಯಾಮ್ ಸುಂದರ್ 100. ಸಿಮಾಂಚಲ್ ಪಾತ್ರೋ 101. ಶಿವಶಂಕರಿ 102. ಸುರೇಶ ಹನಗವಾಡಿ 103. ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್ 104. ಟಿ.ಟಿ. ಜಗನ್ನಾಥನ್ (ಮರಣೋತ್ತರ) 105. ತಗಾ ರಾಮ್ ಭಿಲ್ 106. ತರುಣ್ ಭಟ್ಟಾಚಾರ್ಯ 107. ಟೆಕಿ ಗುಬಿನ್ 108. ತಿರುವಾರೂರ್ ಭಕ್ತವತ್ಸಲಂ 109. ತೃಪ್ತಿ ಮುಖರ್ಜಿ 110. ವೀಜಿನಾಥನ್ ಕಾಮಕೋಟಿ 111. ವೆಂಪಾಟಿ ಕುಟುಂಬ ಶಾಸ್ತ್ರಿ 112. ವ್ಲಾಡಿಮರ್ ಮೆಸ್ಟ್ವಿರಿಶ್ವಿಲಿ (ಮರಣೋತ್ತರ) 113. ಯುಮ್ನಮ್ ಜತ್ರಾ ಸಿಂಗ್ (ಮರಣೋತ್ತರ)
ಉಡುಪಿ| ಕಲ್ಸಂಕ ಜಂಕ್ಷನ್ ಬಳಿ ಭೀಕರ ಅಪಘಾತ: ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತ್ಯು
ಉಡುಪಿ, ಜ.25: ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಲ್ಸಂಕ ಜಂಕ್ಷನ್ ಬಳಿಯ ಪಾಕಶಾಲೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಮಣಿಪಾಲದ ಅವಿನಾಶ್ (19) ಎಂದು ಗುರುತಿಸಲಾಗಿದೆ. ಉಡುಪಿಯಿಂದ ಮಣಿಪಾಲ ಕಡೆ ಹೋಗುತ್ತಿದ್ದ ಕಂಟೈನರ್ ಲಾರಿಯು ಸ್ಕೂಟರ್ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬಿದ್ದಿದ್ದು, ಈ ವೇಳೆ ಲಾರಿಯ ಚಕ್ರವು ಸವಾರದ ತಲೆಯ ಮೇಲೆ ಹರಿಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸವಾರ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯ ಕರ್ನಾಟಕದ ದಾವಣಗೆರೆಯ ಡಾ. ಸುರೇಶ್ ಹನಗವಾಡಿಯವರಿಗೆ ಹಿಮೋಫೀಲಿಯಾ ರೋಗಿಗಳಿಗೆ ನೀಡಿದ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇದು ಜಿಲ್ಲೆಗೆ ಲಭಿಸಿದ ಮೊದಲ ಪದ್ಮಶ್ರೀ ಗೌರವ. ಮಾವನ ಸಾವಿನಿಂದ ಪ್ರೇರಿತರಾಗಿ ಸುರೇಶ್ ಅವರು ವೈದ್ಯರಾಗಿ ಕರ್ನಾಟಕ ಹಿಮೋಫೀಲಿಯಾ ಸೊಸೈಟಿಯನ್ನು ಸ್ಥಾಪಿಸಿ ಸಾವಿರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೂ ಈ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿದ್ದರು. ಈ ಬಗ್ಗೆ ವಿವರ ಇಲ್ಲಿದೆ.
‘ಗಣರಾಜ್ಯೋತ್ಸವ’ | ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಆಯ್ಕೆ: 27 ಮಂದಿಗೆ ಸೇವಾ ಪದಕ
ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಪ್ರದಾನ ಮಾಡಲಾಗುವ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ರವಿವಾರ ಪ್ರಕಟಿಸಿದೆ. ಶೌರ್ಯ ಮತ್ತು ಸೇವಾ ಪದಕಗಳಿಗೆ ಪೊಲೀಸ್, ಗೃಹರಕ್ಷಕ, ಅಗ್ನಿಶಾಮಕ, ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳ 982 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ 125 ಶೌರ್ಯ ಪದಕಗಳು ಸೇರಿವೆ. ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ಉತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಹಾಗೂ 27 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ. ರಾಷ್ಟ್ರಪತಿಗಳ ಪದಕ: ಎಡಿಜಿಪಿ(ಮಾನವ ಹಕ್ಕುಗಳು) ದೇವಜ್ಯೋತಿ ರೈ, ಹಲಸೂರು ಉಪವಿಭಾಗದ ಎಸಿಪಿ ರಂಗಪ್ಪ ಟಿ. ಅವರಿಗೆ ರಾಷ್ಟ್ರಪತಿಗಳ ಪದಕ ಘೋಷಿಸಿ ಗೌರವಿಸಲಾಗಿದೆ. ಶ್ಲಾಘನೀಯ ಸೇವಾ ಪದಕ: ಐಜಿಪಿಗಳಾದ ಅಮಿತ್ ಸಿಂಗ್, ಚೇತನ್ ಸಿಂಗ್ ರಾಥೋರ್, ಡಿಐಜಿ ಸೀಮಾ ಲಾಟ್ಕರ್, ಎಸ್ಪಿ ಸವಿತಾ ಶ್ರೀನಿವಾಸ್, ಎಎಸ್ಪಿ ಪುಟ್ಟಮಾದಯ್ಯ, ಎಎಸ್ಪಿ ನಾಗಪ್ಪ ನವೀನ್ ಕುಮಾರ್, ಡಿಸಿಪಿ ರಾಜಾ ಇಮಾಂ ಖಾಸೀಂ ಪಿಂಜಾರ್, ಡಿಎಸ್ಪಿ ಹನುಮಂತರಾಯ, ಎಸ್ಪಿ ಸಿ.ಎ.ಸೈಮನ್, ಇನ್ಸ್ಪೆಕ್ಟರ್ ಮೊಹಮ್ಮದ್ ಎಂ.ಎ., ಇನ್ಸ್ಪೆಕ್ಟರ್ ಶಿವಸ್ವಾಮಿ ಸಿ.ಬಿ., ಇನ್ಸ್ಪೆಕ್ಟರ್ ಎಂ.ಎಂ.ತಹಶೀಲ್ದಾರ್, ಇನ್ಸ್ಪೆಕ್ಟರ್ ಎಸ್.ಕೆ.ಬ್ಯಾಕೋಡ್, ಪಿಎಸ್ಸೈ ಕಾಶಿನಾಥ್ ಬಿ., ಪಿಎಸ್ಸೈ ವೈಲೆಟ್ ಫೆಮಿನಾ, ಪಿಎಸ್ಸೈ ಶಕುಂತಲಾ ಎಚ್.ಕೆ., ಎಎಸ್ಸೈ ಹರ್ಷ ನಾಗರಾಜ್, ಎಎಸ್ಸೈ ಸಿದ್ಧರಾಜು ಜಿ., ಹೆಡ್ ಕಾನ್ಸ್ಟೇಬಲ್ ಎಚ್.ಡಿ.ಈರಪ್ಪ, ಹೆಡ್ ಕಾನ್ಸ್ಟೇಬಲ್ ಬಸವರಾಜ್ ಎಂ. ಅವರುಗಳು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಅಲ್ಲದೆ, ಅಗ್ನಿಶಾಮಕ ಇಲಾಖೆಯ ಅಸಿಸ್ಟೆಂಟ್ ಫೈರ್ ಸ್ಟೇಷನ್ ಅಧಿಕಾರಿ ಗುರುಸ್ವಾಮಿ, ಲೀಡಿಂಗ್ ಫೈರ್ಮ್ಯಾನ್ ಅರುಣ್ ಸಿ.ನಾಯ್ಕ್, ಗೃಹರಕ್ಷಕದಳ ವಿಭಾಗದ ಕಮಾಂಡಿಂಗ್ ಅಧಿಕಾರಿಗಳಾದ ಸುನಂದ್ ಸಂಪತ್, ಬಾಲಾಜಿ ಶ್ರೀನಿವಾಸನ್, ಪ್ಲಟೂನ್ ಕಮಾಂಡರ್ಗಳಾದ ಮಲಾಲಿ ಗೌಡ, ವಾದಿರಾಜ್ ನಾರಾಯಣ್ ರಾವ್ ದೇಶಪಾಂಡೆ ಹಾಗೂ ತಿದ್ದುಪಡಿ ಸೇವೆ ವಿಭಾಗದ ಸಹಾಯಕ ಅಧೀಕ್ಷಕ ಪರಮೇಶ್ ಎಚ್.ಎ. ಅವರಿಗೂ ಶ್ಲಾಘನೀಯ ಸೇವಾ ಪದಕ ಘೋಷಿಸಿ ಗೌರವಿಸಲಾಗಿದೆ.
ಕರಾವಳಿ ಕಾವಲು ಪೊಲೀಸ್ ಮಲ್ಪೆ| ಎಸ್ಸೈ ವೈಲೆಟ್ ಫೆಮಿನಾಗೆ ರಾಷ್ಟ್ರಪತಿ ಪದಕ
ಉಡುಪಿ, ಜ.25: ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಯ ಉಪನಿರೀಕ್ಷಕಿ ವೈಲೆಟ್ ಫೆಮಿನಾ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಸರಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನೇಮಕ ಮಾಡಿರುವ ಎಸ್ಐಟಿ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್ಐಟಿ ತಂಡದಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದರು. 1994ರಲ್ಲಿ ಪೊಲೀಸ್ ಇಲಾಖೆ ಸೆರ್ಪಡೆಗೊಂಡ ಇವರು, 2018ನೆ ಎಸ್ಸೈ ಆಗಿ ಭಡ್ತಿ ಹೊಂದಿದರು. ಇವರು ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರ, ಮಣಿಪಾಲ ಹಾಗೂ ಹೊನ್ನಾವರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ದ್ದಾರೆ. ಇವರು 2012ರಲ್ಲಿ ಮುಖ್ಯಮಂತ್ರಿ ಪದಕ ಹಾಗೂ 2025ರಲ್ಲಿ ಡಿಜಿ- ಐಜಿಪಿ ಪ್ರಶಂಸನಾ ಪದಕಕ್ಕೆ ಭಾಜನ ಆಗಿದ್ದರು.
5 ಪದ್ಮವಿಭೂಷಣ, 13 ಪದ್ಮಭೂಷಣ, 113 ಪದ್ಮಶ್ರೀ; ಪುರಸ್ಕೃತರದಲ್ಲಿ 19 ಮಹಿಳೆಯರು, 16 ಮಂದಿಗೆ ಮರಣೋತ್ತರ ಗೌರವ
ಅಫಜಲಪುರ | ರಾಷ್ಟ್ರೀಯ ಮತದಾರರ ದಿನಾಚರಣೆ
ಅಫಜಲಪುರ: ಮತದಾನದ ಮಹತ್ವ ತಿಳಿದುಕೊಂಡು ಮತದಾನ ಮಾಡಿದರೆ ಮಾತ್ರ ಉತ್ತಮವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಮತದಾನದ ಹಕ್ಕು ಮಾರಾಟ ಮಾಡುವ ಕಾಲಘಟ್ಟದಲ್ಲಿ ನಾವು ಇದ್ದೇವೆ, ನಾವೆಲ್ಲರೂ ಜಾಗೃತರಾಗಿ ಮತದಾನದ ಹಕ್ಕಿನಿಂದ ಸಮಾಜ ಬದಲಾವಣೆ ಮಾಡೋಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿನಾಯಕ ಮಾಯಣ್ಣನವರ ತಿಳಿಸಿದರು. ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಬಿ.ಇ.ಡಿ ಕಾಲೇಜಿನಲ್ಲಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಮತ್ತು ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿದ ಅವರು, ಮತದಾನದ ಮಹತ್ವ ತಿಳಿದುಕೊಂಡಾಗ ಮಾತ್ರ ಸೂಕ್ತ ವ್ಯಕ್ತಿಗೆ ಸೂಕ್ತ ಸಂದರ್ಭದಲ್ಲಿ ಮತ ಚಲಾವಣೆ ಮಾಡಲು ಸಾಧ್ಯವಾಗುತ್ತದೆ,ಹೀಗಾಗಿ ಯುವಕರು ಮತದಾನದ ಮಹತ್ವ ತಿಳಿದುಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿ ಸಿವಿಲ್ ನ್ಯಾಯಾಧೀಶರಾದ ಅನೀಲ ಅಮಾತೆ ಮಾತನಾಡಿ,1950 ಜನವರಿ 25ರಂದು ಚುನಾವಣೆ ಆಯೋಗ ಸ್ಥಾಪನೆ ಮಾಡಲಾಗಿತ್ತು, 2011ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಪ್ರತಿ 10 ವರ್ಷಕೊಮ್ಮೆ ಜನಗಣತಿ ಮಾಡಿದಾಗ ಜನಸಂಖ್ಯೆ ಹೆಚ್ಚಾಗುತ್ತಿದ್ದಾರೆ,ಆದರೆ ಮತದಾನ ಮಾತ್ರ ಹೆಚ್ಚಾಗುತ್ತಿಲ್ಲ, ಆದ್ದರಿಂದ ಜನರಿಗೆ ಮತದಾನದ ಮಹತ್ವ ತಿಳಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗಿದೆ ಎಂದರು. ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣೆ ಆಯೋಗದ ಕೆಲಸ ಬಹಳ ಮಹತ್ವದ್ದಾಗಿದೆ.ರಾಷ್ಟ್ರ ಮತ್ತು ರಾಜ್ಯದಲ್ಲಿ ನಮ್ಮ ನಾಯಕರನ್ನಾಗಿ ಯಾರನ್ನೂ ಆಯ್ಕೆ ಮಾಡಬೇಕೆಂದು ಮತದಾರರ ಕೈಯಲ್ಲಿದೆ.ನನ್ನ ದೇಶ ನನ್ನ ಮತ ಎಂಬ ಸದುದ್ದೇಶದಿಂದ ಸರ್ಕಾರ ಯೋಜನೆ ರೂಪಿಸಿದೆ,18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು.ಮುಂದಿನ ದಿನಗಳಲ್ಲಿ ಜಿಪಂ,ತಾಪಂ, ಗ್ರಾಪಂ ಚುನಾವಣೆಯಲ್ಲಿ ಗ್ರಾಮ,ತಾಲೂಕು ಅಭಿವೃದ್ಧಿಗೆ ನಿಮ್ಮ ನೆಚ್ಚಿನ ವ್ಯಕ್ತಿಗಳನ್ನು ನಾಯಕರನ್ನಾಗಿ ಆಯ್ಕೆ ಮಾಡುವ ಹಕ್ಕು ಸಂವಿಧಾನ ನಿಮಗೆ ನೀಡಿದೆ ಎಂದರು. ನ್ಯಾಯವಾದಿ ಕೆ.ಜಿ.ಪೂಜಾರಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ವಿಶೇಷವಾಗಿ ಸನ್ಮಾನ ಮಾಡಲಾಯಿತು.ತಾಲೂಕು ನ್ಯಾಯವಾದಿಗಳ ಸಂಘ ಅಧ್ಯಕ್ಷ ಎಸ್.ಎಸ್.ಪಾಟೀಲ್, ಪ್ರಾಂಶುಪಾಲ ಶಶಿಕಲಾ ಖಜೂರಿ, ಉಪನ್ಯಾಸಕ ಸದಾನಂದ ಟೇಳೆ ಉಪಸ್ಥಿತರಿದ್ದರು.
Padma Shri: ನಡೆದಾಡುವ ವಿಶ್ವಕೋಶ ಶತಾವಧಾನಿ ಆರ್. ಗಣೇಶ್ರಿಗೆ 'ಪದ್ಮಶ್ರೀ' ಗೌರವ, ಯಾರಿವರು?
ಶತಾವಧಾನಿ ಆರ್. ಗಣೇಶ್ (Shatavadhani R Ganesh) ಅವರ ಕಲಾ ಸಾಧನೆ ಗುರುತಿಸಿ ಭಾರತದ ಅತ್ಯುನ್ನತ ಗೌರವವಾದ 'ಪದ್ಮಶ್ರೀ' ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಲೆಯಲ್ಲಿ ಮಾತ್ರವಲ್ಲದೇ ವಿವಿಧ ವಿಭಾಗಗಳಲ್ಲೂ ಉತ್ತಮ ಕಾರ್ಯ ನಿರ್ವಹಣೆಯಿಂದ ಸಾಕಷ್ಟು ಹೆಸರು ಮಾಡಿದ್ದಾರೆ. ಅನೇಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವ್ಯಾಸ ಪುರಸ್ಕಾರ, ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಇವರಿಗೆ ಬಂದಿದ್ದು, ಇದೀಗ ಪ್ರದ್ಮಶ್ರೀ
ಪುಸ್ತಕ ಭಂಡಾರ ಸೃಷ್ಟಿಸಿದ ಮಂಡ್ಯದ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ
ಮಂಡ್ಯ: ಪುಸ್ತಕ ಪ್ರೇಮಿ, ಲಕ್ಷಾಂತರ ಪುಸ್ತಕಗಳ ಸಂಗ್ರಹಕಾರ ಜಿಲ್ಲೆಯ ಪುಸ್ತಕದ ಮನೆ ಅಂಕೇಗೌಡ ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತ ಸರಕಾರ ದೇಶದ 45 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಿದ್ದು, ಇವರಲ್ಲಿ ಮಂಡ್ಯದ ಪುಸ್ತಕದ ಮನೆ ಅಂಕೇಗೌಡರು ಸೇರಿದ್ದಾರೆ. ಇವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಅಂಕೇಗೌಡರ ಪರಿಚಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿ(ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ) 'ಪುಸ್ತಕದ ಮನೆ'ಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿರುವ ಎಂ.ಅಂಕೇಗೌಡರು, ಸುಮಾರು ನಾಲ್ಕು ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇದಲ್ಲದೆ ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹ ಈ ಪುಸ್ತಕ ಮನೆಯಲ್ಲಿ ಇವೆ. ಸಾರಿಗೆ ಸಂಸ್ಥೆಯ ನೌಕರರಾಗಿದ್ದ ಅಂಕೇಗೌಡ, ತನ್ನ ಸಂಬಳದ ಬಹುಪಾಲು ಪುಸ್ತಕಗಳಿಗೇ ಮೀಸಲಿಟ್ಟರು. ಉದ್ಯಮಿ ಹರಿಖೋಡೆ ಅವರು ನಿರ್ಮಿಸಿಕೊಟ್ಟಿರುವ ಈ ಪುಸ್ತಕದ ಮನೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲೂ ಸ್ಥಾನ ಪಡೆದಿದೆ. ಎಂ.ಅಂಕೇಗೌಡರು ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಜನಿಸಿದರು. ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ.ಪದವಿ ಪಡೆದಿದ್ದಾರೆ. ಬಳಿಕ, ಮೈಸೂರು ವಿವಿಯ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ (ಈಗಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ) ಕನ್ನಡ ಎಂ.ಎ. ಪದವಿಯನ್ನೂ ಗಳಿಸಿದ್ದಾರೆ. ಜಿಲ್ಲಾಧಿಕಾರಿ ಅಭಿನಂದನೆ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಂಕೇಗೌಡರಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅಭಿನಂದನೆ ಸಲ್ಲಿಸಿದ್ದಾರೆ.
ಅಫಜಲಪುರ | ಸಾರಿಗೆ ಬಸ್ ಪಲ್ಟಿ : ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
ಅಫಜಲಪುರ: ತಾಲೂಕಿನ ಬಿದನೂರ ಗ್ರಾಮದ ಸಮೀಪ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ಸೊಂದು ಆಕಸ್ಮಿಕವಾಗಿ ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ರವಿವಾರ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ದೇವಲಗಾಣಪೂರ ಪೊಲೀಸ್ ಠಾಣೆಯ ಪಿಎಸ್ಐ ಸಂಗೀತಾ ಶಿಂಧೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಾತನಾಡಿದ ಅವರು, “ಬಸ್ಸಿನಲ್ಲಿ ಸುಮಾರು 15 ಮಂದಿ ಪ್ರಯಾಣಿಕರು ಇದ್ದರು. ಕೆಲವರಿಗೆ ಮಾತ್ರ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ” ಎಂದು ಹೇಳಿದರು. ಇಕ್ಕಟ್ಟಾದ ರಸ್ತೆ ಅಪಘಾತಕ್ಕೆ ಕಾರಣ : ಅಪಘಾತಕ್ಕೆ ಬಿದನೂರ ಗ್ರಾಮದ ಬಳಿ ಇರುವ ಇಕ್ಕಟ್ಟಾದ ರಸ್ತೆ ಪ್ರಮುಖ ಕಾರಣವಾಗಿದೆ ಎಂದು ಅಫಜಲಪುರ ಸಾರಿಗೆ ಘಟಕ ವ್ಯವಸ್ಥಾಪಕ ಎ.ವಿ. ಭೋವಿ ಮಾಹಿತಿ ನೀಡಿದರು. ಎದುರುಗಡೆಯಿಂದ ಮತ್ತೊಂದು ಬಸ್ ಬರುತ್ತಿದ್ದ ಹಿನ್ನೆಲೆಯಲ್ಲಿ ಚಾಲಕರು ಬಸ್ ಅನ್ನು ರಸ್ತೆ ಬದಿಗೆ ತೆಗೆದುಕೊಳ್ಳಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ ಎಂದು ಅವರು ವಿವರಿಸಿದರು. ಈ ಘಟನೆ ಅಫಜಲಪುರ ತಾಲೂಕಿನ ದೇವಲಗಾಣಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ತಾಪುರ | ಪತ್ರಕರ್ತರು ಅಪ್ರಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ: ಸಚಿವ ಪ್ರಿಯಾಂಕ್ ಖರ್ಗೆ
ಚಿತ್ತಾಪುರ: ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು. ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಿರಿಯ ಪತ್ರಕರ್ತ ದಿ. ನಾಗಯ್ಯಸ್ವಾಮಿ ಅಲ್ಲೂರ್ ಅವರ ಗೆಳೆಯರ ಬಳಗದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ “ನಾಗಾವಿ ನಕ್ಷತ್ರ” ಸಂಸ್ಮರಣ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಗಯ್ಯಸ್ವಾಮಿ ಅಲ್ಲೂರ್ ಅವರು ಅತ್ಯಂತ ಪ್ರಾಮಾಣಿಕ ಪತ್ರಕರ್ತರಾಗಿದ್ದು, ಪ್ರಾಮಾಣಿಕತೆಯನ್ನು ಜೀವನ ಮೌಲ್ಯವಾಗಿ ಮೈಗೂಡಿಸಿಕೊಂಡಿದ್ದರು. ಅವರ ಈ ಗುಣವೇ ಅವರನ್ನು ಕೇವಲ ಪತ್ರಿಕಾರಂಗಕ್ಕೆ ಮಾತ್ರ ಸೀಮಿತಗೊಳಿಸದೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ಒಬ್ಬ ನಿಷ್ಠಾವಂತ ಬರಹಗಾರರನ್ನಾಗಿ ರೂಪಿಸಿತು. ಜನರಿಗಾಗಿ ಹಾಗೂ ಮಕ್ಕಳಿಗಾಗಿ ಅವರು ಮಾಡಿದ ಸಮಾಜ ಸೇವೆ ಅವರನ್ನು ಸಮಾಜಮುಖಿ ಚಿಂತಕ ಮತ್ತು ಶಿಕ್ಷಣ ಪ್ರೇಮಿಯಾಗಿ ಗುರುತಿಸುವಂತೆ ಮಾಡಿತು ಎಂದು ಸಚಿವರು ಹೇಳಿದರು. ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ ಎಂದು ತಿಳಿಸಿದ ಅವರು, ನಾಗಯ್ಯಸ್ವಾಮಿಯಂತಹ ಪತ್ರಕರ್ತರು ಸಮಾಜದ ಎಲ್ಲಾ ವರ್ಗದವರಿಗೆ ಮಾದರಿಯಾಗಿದ್ದಾರೆ. ಅವರು ನಮ್ಮೊಂದಿಗೆ ಈಗ ಇಲ್ಲದಿದ್ದರೂ, ಅವರ ಸ್ನೇಹಿತರ ಬಳಗ ಅವರ ಜೀವನ ಹಾಗೂ ಸಾಧನೆಗಳನ್ನು ದಾಖಲಿಸುವ ಉದ್ದೇಶದಿಂದ “ನಾಗಾವಿ ನಕ್ಷತ್ರ” ಎಂಬ ಸಂಸ್ಮರಣ ಗ್ರಂಥ ಹೊರತಂದಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ನಾಗಯ್ಯಸ್ವಾಮಿ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವರು, ವೇದಿಕೆಯ ಮೇಲಿದ್ದ ಅವರ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ, ಗೆಳೆಯರ ನೆರವಿನ ಜೊತೆಗೆ ತಾವು ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ನೇಹಿತ ವಲಯದಿಂದ ಸಂಗ್ರಹಿಸಲಾದ 1.90 ಲಕ್ಷ ರೂ. ಮೊತ್ತದ ಚೆಕ್ ಅನ್ನು ಸಚಿವರು ಮೃತರ ಕುಟುಂಬದವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಹಲಕಟ್ಟಿಮನಿ ಮಠದ ಮುನೀಂದ್ರ ಶಿವಾಚಾರ್ಯ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿದರು. ಸಂಸ್ಮರಣ ಗ್ರಂಥದ ಪ್ರಧಾನ ಸಂಪಾದಕ ಲಿಂಗಪ್ಪ ಮಲ್ಕನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಮಹಮೂದ್ ಸಾಹೇಬ್, ಲಿಂಗಾರೆಡ್ಡಿ ಬಾಸರೆಡ್ಡಿ, ಭವಾನಿ ಸಿಂಗ್ ಠಾಕೋರ್, ಶಿವಾನಂದ ಪಾಟೀಲ್ ಮರ್ತೂರು, ಭೀಮಣ್ಣ ಸಾಲಿ, ಚಂದ್ರಶೇಖರ ಆವಂಟಿ, ಶಂಕರಗೌಡ ಪಾಟೀಲ್, ಬಸವರಾಜ ಬಳೂಂಡಗಿ, ವೀರಭದ್ರಪ್ಪ ಗುರುಮಿಟಕಲ್, ವೀರೇಂದ್ರ ಕೊಲ್ಲೂರ್, ಸಿದ್ಧಮ್ಮ, ಶಿವಾನಂದ ನಾಲವಾರ, ದೇವಪ್ಪ ನಂದೂರಕರ್, ಕಾಶಿರಾಯ ಕಲಾಲ್, ನಟರಾಜ ಶಿಲ್ಪಿ ಸೇರಿದಂತೆ ಅನೇಕ ಮುಖಂಡರು, ಪತ್ರಕರ್ತರು, ಅಭಿಮಾನಿಗಳು ಹಾಗೂ ಗೆಳೆಯ ಬಳಗದವರು ಉಪಸ್ಥಿತರಿದ್ದರು. ರಾಚಯ್ಯ ಸ್ವಾಮಿ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ರಿಗೆ ರಾಜ್ಯಪಾಲರಿಂದ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಪ್ರಧಾನ
ಕೊಪ್ಪಳ: ಚುನಾವಣಾ ಪ್ರಕ್ರಿಯೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದಕ್ಕಾಗಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಸುರೇಶ್ ಬಿ.ಇಟ್ನಾಳ್ ಅವರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಿದ್ದಾರೆ. ಭಾನುವಾರ ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ಹಾಲ್ನಲ್ಲಿ ಆಯೋಜಿಸಲಾಗಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಭಾರತ ಚುನಾವಣಾ ಆಯೋಗವು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ, ಚುನಾವಣಾ ಕಾರ್ಯಗಳಲ್ಲಿ ಹಾಗೂ ಮತದಾರರ ಪಟ್ಟಿಗಳ ಪರಿಷ್ಕರಣೆ ಕಾರ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಜಿಲ್ಲಾ ಚುನಾವಣಾಧಿಕಾರಿಗಳು, ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರರ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು, ಬಿಎಲ್ಓ ಮೇಲ್ವಿಚಾರಕರು ಮತ್ತು ಬೂತ್ ಮಟ್ಟದ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತದೆ. 2025–26ನೇ ಸಾಲಿನ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಜ.19ರಂದು ಭಾರತ ಚುನಾವಣಾ ಆಯೋಗ ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್ ಅವರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಘೋಷಿಸಲಾಗಿತ್ತು. ಇದೇ ಸಂದರ್ಭದಲ್ಲಿ 64–ಕೊಪ್ಪಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 208ರ ಬೂತ್ ಮಟ್ಟದ ಅಧಿಕಾರಿ, ಹಿರೇಬಗನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕರಾದ ಸತೀಶಚಂದ್ರ ಅವರಿಗೆ ಉತ್ತಮ ಬೂತ್ ಮಟ್ಟದ ಅಧಿಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
BBCಯ ಮೂಲಕ ದಶಕಗಳ ಕಾಲ ಭಾರತದ ಕಥನ ಹೇಳಿದ ಪತ್ರಕರ್ತ ಮಾರ್ಕ್ ಟುಲ್ಲಿ ನಿಧನ
ಹೊಸದಿಲ್ಲಿ, ಜ. 25: ಭಾರತದ ಕುರಿತು ದಶಕಗಳ ಕಾಲ ಸಮತೋಲಿತ ಮತ್ತು ಆಳವಾದ ಒಳನೋಟದ ವರದಿಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ಸರ್ ವಿಲಿಯಂ ಮಾರ್ಕ್ ಟುಲ್ಲಿ ಅವರು ರವಿವಾರ ಹೊಸದಿಲ್ಲಿಯಲ್ಲಿ 90ನೇ ವಯಸ್ಸಿನಲ್ಲಿ ನಿಧನರಾದರು. ಸ್ವಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಒಂದು ವಾರದ ಹಿಂದೆ ಸಾಕೇತ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಬಿಸಿಯ ಭಾರತದ ವ್ಯಾಖ್ಯಾನಕಾರಕ ಧ್ವನಿಯಾಗಿ ಗುರುತಿಸಿಕೊಂಡಿದ್ದ ಟುಲ್ಲಿ, ಭಾರತೀಯ ಪತ್ರಿಕೋದ್ಯಮದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ವಿಶ್ವಾಸಾರ್ಹ ವಿದೇಶಿ ಪತ್ರಕರ್ತರಲ್ಲೊಬ್ಬರಾಗಿದ್ದರು. ಭಾರತ ಮತ್ತು ಪಶ್ಚಿಮ ಜಗತ್ತಿನ ನಡುವಿನ ಅಂತರವನ್ನು ಕಡಿಮೆ ಮಾಡಿದ ಧ್ವನಿಯಾಗಿ ಅವರು ಗುರುತಿಸಲ್ಪಟ್ಟಿದ್ದರು. 1935ರಲ್ಲಿ ಕಲ್ಕತ್ತಾ (ಈಗಿನ ಕೋಲ್ಕತ್ತಾ) ನಗರದ ಟಾಲಿಗಂಜ್ ನಲ್ಲಿ ಶ್ರೀಮಂತ ಬ್ರಿಟಿಷ್ ಕುಟುಂಬದಲ್ಲಿ ಜನಿಸಿದ ಟುಲ್ಲಿ, ವಸಾಹತುಶಾಹಿ ಸಾಮಾಜಿಕ ಸಂಹಿತೆಗಳು ಭಾರತೀಯರೊಂದಿಗೆ ನಿಕಟ ಸಂವಹನವನ್ನು ನಿರುತ್ಸಾಹಗೊಳಿಸುತ್ತಿದ್ದ ಕಾಲಘಟ್ಟದಲ್ಲಿ ಭಾರತದಲ್ಲೇ ತಮ್ಮ ಬಾಲ್ಯವನ್ನು ಕಳೆದರು. ಬಾಲ್ಯದಲ್ಲಿ ನಿರಾಕರಿಸಲ್ಪಟ್ಟ ಆ ನಿಕಟ ಸಂಪರ್ಕವೇ ಮುಂದಿನ ದಿನಗಳಲ್ಲಿ ಅವರ ಜೀವನದ ಪ್ರಮುಖ ಅನ್ವೇಷಣೆಯಾಗಿ ಪರಿಣಮಿಸಿತು. ಮುಂದಿನ ಆರು ದಶಕಗಳಲ್ಲಿ ಅವರು ಭಾರತದ ಬೀದಿಗಳಲ್ಲಿ ನಡೆದು, ಜನರ ಮಾತುಗಳನ್ನು ಆಲಿಸಿ, ದೇಶದ ವೈವಿಧ್ಯಗಳನ್ನು ಸಹಾನುಭೂತಿ ಮತ್ತು ಸಂಯಮದಿಂದ ದಾಖಲಿಸಿದರು. ಡಾರ್ಜಿಲಿಂಗ್ನ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ನಂತರ ಮಾರ್ಲ್ಬರೋ ಕಾಲೇಜು ಹಾಗೂ ಕೇಂಬ್ರಿಡ್ಜ್ ನಲ್ಲಿ ಉನ್ನತ ಶಿಕ್ಷಣ ಪಡೆದರು. ಆ ಅವಧಿಯಲ್ಲಿ ಭಾರತದಿಂದ ದೂರವಿದ್ದ ನೋವನ್ನು ಅವರು ನಂತರದ ವರ್ಷಗಳಲ್ಲಿ ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರು. ಕೇಂಬ್ರಿಡ್ಜ್ ನಂತರ ಟುಲ್ಲಿ ಲಿಂಕನ್ ಥಿಯಾಲಜಿಕಲ್ ಕಾಲೇಜಿಗೆ ಸೇರಿದರು. ಆದರೆ ಸೆಮಿನರಿಯ ಶಿಸ್ತುಬದ್ಧ ಜೀವನ ಅವರ ಸ್ವಭಾವಕ್ಕೆ ಹೊಂದಿಕೆಯಾಗಲಿಲ್ಲ. 1964ರಲ್ಲಿ ಬಿಬಿಸಿ ಅವರನ್ನು ಭಾರತದ ವರದಿಗಾರನಾಗಿ ಹೊಸದಿಲ್ಲಿಗೆ ನಿಯೋಜಿಸಿದಾಗ, ಭಾರತವು ಅವರ ಜೀವನದಲ್ಲಿ ನಿರ್ಣಾಯಕವಾಗಿ ಮರುಪ್ರವೇಶಿಸಿತು. ಮುಂದಿನ 30 ವರ್ಷಗಳ ಅವಧಿಯಲ್ಲಿ ಬಿಬಿಸಿಯೊಂದಿಗಿನ ಅವರ ಸಂಬಂಧವು ಅವರನ್ನು ದೇಶದ ಅತ್ಯಂತ ಗುರುತಿಸಲ್ಪಟ್ಟ ಹಾಗೂ ಗೌರವಿಸಲ್ಪಟ್ಟ ವಿದೇಶಿ ಪತ್ರಕರ್ತರನ್ನಾಗಿ ರೂಪಿಸಿತು. 1969ರಲ್ಲಿ ‘ಫ್ಯಾಂಟಮ್ ಇಂಡಿಯಾ’ ಸಾಕ್ಷ್ಯಚಿತ್ರದ ಪ್ರಸಾರಕ್ಕೆ ಸಂಬಂಧಿಸಿದಂತೆ ಭಾರತವು ಬಿಬಿಸಿಗೆ ನಿಷೇಧ ಹೇರಿದ ಬಳಿಕ ಅವರು ಲಂಡನ್ ಗೆ ಹಿಂತಿರುಗಬೇಕಾಯಿತು. ಆದರೆ 1971ರಲ್ಲಿ ಅವರು ಮತ್ತೆ ಭಾರತಕ್ಕೆ ಮರಳಿದರು. 1972ರ ವೇಳೆಗೆ ಹೊಸದಿಲ್ಲಿಯಲ್ಲಿನ ಬಿಬಿಸಿಯ ಬ್ಯೂರೋ ಮುಖ್ಯಸ್ಥರಾಗಿ ನೇಮಕಗೊಂಡ ಅವರು, ದಕ್ಷಿಣ ಏಷ್ಯಾದ ವರದಿಯ ಮೇಲ್ವಿಚಾರಣೆ ಮಾಡಿದರು. ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ಪ್ರಕ್ಷುಬ್ಧ ಘಟ್ಟಗಳಲ್ಲಿ ಟುಲ್ಲಿಯವರ ಶಾಂತ, ಸಂವೇದನಾಶೀಲವಲ್ಲದ ವರದಿಗಾರಿಕೆ ವಿಶಿಷ್ಟ ಗುರುತು ಪಡೆದಿತ್ತು. 1971ರ ಬಾಂಗ್ಲಾದೇಶ ಯುದ್ಧ, ತುರ್ತು ಪರಿಸ್ಥಿತಿ (1975–77), ಜುಲ್ಫಿಕರ್ ಅಲಿ ಭುಟ್ಟೋ ಅವರ ಮರಣದಂಡನೆ, ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಗಾಂಧಿಯವರ ಹತ್ಯೆ, 1984ರ ಸಿಖ್ ವಿರೋಧಿ ಹಿಂಸಾಚಾರ, ರಾಜೀವ್ ಗಾಂಧಿಯವರ ಹತ್ಯೆ, 1992ರ ಬಾಬರಿ ಮಸೀದಿ ಧ್ವಂಸ, ಆರ್ಥಿಕ ಉದಾರೀಕರಣ ಸೇರಿದಂತೆ ಅನೇಕ ಚುನಾವಣೆಗಳು ಮತ್ತು ಸಾಮಾಜಿಕ ಬದಲಾವಣೆಗಳು ಅವರ ವರದಿಗಳ ವ್ಯಾಪ್ತಿಯಲ್ಲಿ ಬಂದಿದ್ದವು. ಉಪಖಂಡದಾದ್ಯಂತದ ತಲೆಮಾರುಗಳ ಶ್ರೋತೃಗಳು ಬಿಬಿಸಿ ವರ್ಲ್ಡ್ ಸರ್ವೀಸ್ನ ‘ಫ್ರಮ್ ಅವರ್ ಓನ್ ಕರೆಸ್ಪಾಂಡೆಂಟ್’ ಕಾರ್ಯಕ್ರಮದಲ್ಲಿನ ಅವರ ಅಳತೆಯ ಧ್ವನಿಯನ್ನು ಅಪಾರ ನಂಬಿಕೆಯಿಂದ ಕೇಳುತ್ತಿದ್ದರು. “ಮಾರ್ಕ್ ಟುಲ್ಲಿಯಿಂದ ಕೇಳಿದ ನಂತರವೇ ಆ ಸುದ್ದಿಯನ್ನು ನಂಬಬಹುದು” ಎಂಬ ಮಾತು ಶ್ರೋತೃವಲಯದಲ್ಲಿ ವ್ಯಾಪಕವಾಗಿತ್ತು. ಆಪರೇಷನ್ ಬ್ಲೂ ಸ್ಟಾರ್ ಮತ್ತು ಪಂಜಾಬ್ ಬಿಕ್ಕಟ್ಟನ್ನು ಆಧರಿಸಿದ ‘ಅಮೃತಸರ: ಶ್ರೀಮತಿ ಗಾಂಧಿಯವರ ಕೊನೆಯ ಯುದ್ಧ’ (1985) ಎಂಬ ಅವರ ಮೊದಲ ಪ್ರಮುಖ ಕೃತಿ, ಪತ್ರಕರ್ತ ಸತೀಶ್ ಜಾಕೋಬ್ ಅವರೊಂದಿಗೆ ಪ್ರಕಟವಾಯಿತು. ಅವರ ಅತ್ಯಂತ ಪ್ರಭಾವಶಾಲಿ ಕೃತಿ ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ’ (1988) ಎರಡು ದಶಕಗಳ ವರದಿಗಳನ್ನು ಪ್ರಬಂಧಗಳಾಗಿ ಸಂಗ್ರಹಿಸಿ, ಮಹತ್ವದ ಘಟನೆಗಳಾಚೆಗೂ ಹೋಗಿ ಭಾರತೀಯ ಸಮಾಜವನ್ನು ಆಳವಾಗಿ ಅನ್ವೇಷಿಸಿತು. ರೂಪ್ ಕನ್ವರ್ ಸತಿ ಪ್ರಕರಣದಿಂದ ಕುಂಭಮೇಳದವರೆಗೆ ಹಾಗೂ ದೂರದರ್ಶನದ ‘ರಾಮಾಯಣ’ದಂತಹ ಮಹಾಕಾವ್ಯಗಳಿಂದ ಹಿಡಿದು ಪಾಶ್ಚಿಮಾತ್ಯ ಚೌಕಟ್ಟುಗಳಿಂದ ಉಂಟಾದ ವಕ್ರತೆಗಳವರೆಗೆ. 1994ರಲ್ಲಿ ಬಿಬಿಸಿಯನ್ನು ತೊರೆದ ಬಳಿಕ ಆಗಿನ ಮಹಾನಿರ್ದೇಶಕ ಜಾನ್ ಬರ್ಟ್ ಅವರೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಟುಲ್ಲಿ 2019ರವರೆಗೆ ಬಿಬಿಸಿ ರೇಡಿಯೋ 4ರಲ್ಲಿ ‘ಸಮ್ಥಿಂಗ್ ಅಂಡರ್ಸ್ಟುಡ್’ ಎಂಬ ಆಧ್ಯಾತ್ಮಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಅವರು ಯಾವುದೇ ಸುದ್ದಿ ಕೋಣೆಗೆ ಔಪಚಾರಿಕವಾಗಿ ಸೇರಿಕೊಳ್ಳದೆ, ದಿಲ್ಲಿಯಲ್ಲಿ ನೆಲೆಸಿರುವ ಸ್ವತಂತ್ರ ಬರಹಗಾರ ಮತ್ತು ನಿರೂಪಕರಾಗಿ ಕಾರ್ಯನಿರ್ವಹಿಸಿದರು. ಟುಲ್ಲಿ ಒಟ್ಟು 10 ಪುಸ್ತಕಗಳನ್ನು ಬರೆದಿದ್ದು, ಅವೆಲ್ಲವೂ ಭಾರತಕ್ಕೆ ಸಂಬಂಧಿಸಿದ್ದೇ ಆಗಿದೆ. ಗಿಲಿಯನ್ ರೈಟ್ ಅವರೊಂದಿಗೆ ಬರೆದ ‘ಇಂಡಿಯಾ ಇನ್ ಸ್ಲೋ ಮೋಷನ್’ (2002) ಕೃತಿಯು ಭಯೋತ್ಪಾದನೆ, ಕಾಶ್ಮೀರ, ಕೃಷಿ, ಭ್ರಷ್ಟಾಚಾರ ಮತ್ತು ಅತೀಂದ್ರಿಯತೆಯಂತಹ ವಿಷಯಗಳೆಡೆ ಬೆಳಕು ಚೆಲ್ಲಿದೆ. ‘ದಿ ಹಾರ್ಟ್ ಆಫ್ ಇಂಡಿಯಾ’ (1995) ಮತ್ತು ‘ಅಪ್ಕಂಟ್ರಿ ಟೇಲ್ಸ್’ (2017) ಕೃತಿಗಳು ದೈನಂದಿನ ಭಾರತೀಯ ಬದುಕನ್ನು ಪ್ರೀತಿ ಮತ್ತು ಶಾಂತ ವಾಸ್ತವಿಕತೆಯಿಂದ ಚಿತ್ರಿಸುತ್ತವೆ. ‘ಇಂಡಿಯಾಸ್ ಅನ್ ಎಂಡಿಂಗ್ ಜರ್ನಿ’ (2008) ಮತ್ತು ‘ಇಂಡಿಯಾ: ದಿ ರೋಡ್ ಅಹೆಡ್’ (2011) ಕೃತಿಗಳು ದೇಶದ ಭವಿಷ್ಯದತ್ತ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಅವರ ಸೇವೆಯನ್ನು ಗುರುತಿಸಿ 1992ರಲ್ಲಿ ಪದ್ಮಶ್ರೀ, 2002ರಲ್ಲಿ ಯುಕೆಯ ಹೊಸ ವರ್ಷದ ಗೌರವಗಳಲ್ಲಿ ಒಂದಾದ ನೈಟ್ ಪದವಿ ಹಾಗೂ 2005ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಪ್ರದಾನಿಸಲಾಯಿತು. ಬ್ರಿಟನ್ ಮತ್ತು ಭಾರತ ಎರಡೂ ದೇಶಗಳಿಂದ ಅಧಿಕೃತ ಗೌರವ ಪಡೆದ ಅಪರೂಪದ ವ್ಯಕ್ತಿಗಳಲ್ಲಿ ಅವರು ಒಬ್ಬರಾಗಿದ್ದರು. ಟುಲ್ಲಿ ತಮ್ಮ ಜೀವನದ ಬಹುಭಾಗವನ್ನು ಹೊಸದಿಲ್ಲಿ ಮತ್ತು ಮ್ಯಾಕ್ಲಿಯೋಡ್ ಗಂಜ್ನಲ್ಲಿ ಕಳೆದರು. ಪ್ರತಿದಿನ ಸಾಮಾನ್ಯ ನಾಗರಿಕರೊಂದಿಗೆ ಸಂವಾದ ನಡೆಸಿ, ಭಾರತದ ಸಾಮಾಜಿಕ ಹಾಗೂ ರಾಜಕೀಯ ಲಯಗಳ ಕುರಿತು ಆಳವಾದ ಆಸಕ್ತಿ ಉಳಿಸಿಕೊಂಡಿದ್ದರು. ಧರ್ಮನಿಷ್ಠ ಆಂಗ್ಲಿಕನ್ ಆಗಿದ್ದ ಅವರು, ತಮ್ಮ ನಂಬಿಕೆ ಮತ್ತು ಭಾರತದ ಜೀವಂತ ಬಹುತ್ವದ ನಡುವಿನ ಅನುರಣನದ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರು. ಕಳೆದ ಅಕ್ಟೋಬರ್ನಲ್ಲಿ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಪುತ್ರ ಸ್ಯಾಮ್ ಟುಲ್ಲಿ ಯುಕೆ–ಭಾರತ ಸಂಬಂಧಗಳಲ್ಲಿ ತಮ್ಮ ತಂದೆಯ ವಿಶಿಷ್ಟ ಸ್ಥಾನವನ್ನು ಪ್ರತಿಬಿಂಬಿಸುತ್ತಾ, “ದಿಲ್ ಹೈ ಹಿಂದೂಸ್ತಾನಿ, ಮಗರ್ ತೋಡ ಅಂಗ್ರೇಜಿ ಭಿ”, ಎಂದು ಬರೆದಿದ್ದರು.
50ರ ವಯಸ್ಸು ಅಂತ್ಯವಲ್ಲ, ಆರೋಗ್ಯಕರ ಜೀವನಕ್ಕೆ ಹಾದಿ!
ಸೂಕ್ತ ಅಭ್ಯಾಸಗಳನ್ನು ಅಳವಡಿಸಿಕೊಂಡಲ್ಲಿ 50ರ ವಯಸ್ಸಿನ ಹಂತವನ್ನು ಸಾಮರ್ಥ್ಯ, ಸ್ಪಷ್ಟತೆ ಮತ್ತು ನವೀಕೃತ ಆರೋಗ್ಯದ ಮೂಲಕ ಕಳೆಯಬಹುದು! ಮಹಿಳೆಯರಿಗೆ 50ರ ವಯಸ್ಸಾದಂತೆ ದೇಹದಲ್ಲಿ ಬದಲಾವಣೆಗಳು ಬರಲಾರಂಭಿಸುತ್ತವೆ. ಋತುಬಂಧದ ಸಮಸ್ಯೆ, ಹಾರ್ಮೋನ್ ಬದಲಾವಣೆ, ಚಯಾಪಚಯ ಕ್ರಿಯೆಯ ನಿಧಾನಗತಿಯಿಂದ ಆರಂಭವಾಗಿ ಓಸ್ಟಿಯೊಪೊರೊಸಿಸ್ (ಅಸ್ಥಿರಂಧ್ರತೆ), ಹೃದಯ ರೋಗ, ಟೈಪ್ 2 ಮಧುಮೇಹದಂತಹ ದೀರ್ಘಕಾಲೀನ ರೋಗಗಳೂ ಕಾಡುತ್ತವೆ. ಸೂಕ್ತ ಅಭ್ಯಾಸಗಳನ್ನು ಅಳವಡಿಸಿಕೊಂಡಲ್ಲಿ ಈ ಹಂತವನ್ನು ಸಾಮರ್ಥ್ಯ, ಸ್ಪಷ್ಟತೆ ಮತ್ತು ನವೀಕೃತ ಆರೋಗ್ಯದ ಮೂಲಕ ಕಳೆಯಬಹುದು. ನೀವು ಏನು ತಿನ್ನುತ್ತೀರಿ ಅಥವಾ ನಿದ್ರೆ ಮಾಡುತ್ತೀರಿ ಎಂಬುದರಿಂದ ಆರಂಭಿಸಿ ನಿತ್ಯ ಜೀವನದ ಚಟುವಟಿಕೆಗಳು ದೀರ್ಘಾಯುಷ್ಯವನ್ನು ಉತ್ತೇಜಿಸುವುದು ಮತ್ತು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. 50ರ ವಯಸ್ಸು ಮೀರಿದ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು ಯಾವುವು? ►ಹಾರ್ಮೋನುಗಳ ಬದಲಾವಣೆಯ ಸಮಯ ಫರೀದಾಬಾದ್ ನ ಕ್ಲೌಡ್ನೈನ್ ಆಸ್ಪತ್ರೆಯ ಸಲಹೆಗಾರರಾದ ಸ್ತ್ರೀರೋಗ ತಜ್ಞೆ ಡಾ. ಶೈಲಿ ಶರ್ಮಾ ಪ್ರಕಾರ, ಈ ವಯಸ್ಸಿನಲ್ಲಿ ಮಹಿಳೆಯರು ಋತುಬಂಧದಿಂದ ಗಮನಾರ್ಹ ಹಾರ್ಮೋನುಗಳ ಬದಲಾವಣೆಗಳನ್ನು ಎದುರಿಸುತ್ತಾರೆ. ಮುಖ್ಯವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದಲ್ಲಿನ ಕುಸಿತ ಕಂಡುಬರುತ್ತದೆ. ಹಾರ್ಮೋನುಗಳ ಬದಲಾವಣೆಯಿಂದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಿದ್ದು, ತೂಕ ಹೆಚ್ಚಾಗಬಹುದು. ಮುಖ್ಯವಾಗಿ ಹೊಟ್ಟೆಯ ಸುತ್ತ ಕೊಬ್ಬು ಬೆಳೆಯಬಹುದು. ವಯಸ್ಸಾದಂತೆ ಸ್ನಾಯುವಿನ ಪ್ರಮಾಣ (Muscle mass) ಕುಸಿಯುತ್ತದೆ. ಅದರಿಂದಾಗಿ ಕ್ಯಾಲರಿ ಕರಗುವ ದರ ಕಡಿಮೆಯಾಗುತ್ತದೆ. ಹೀಗಾಗಿ 50ರ ವಯಸ್ಸಿನ ಮಹಿಳೆಯರು ಶಿಸ್ತಿನ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು ಮತ್ತು ಚಟುವಟಿಕೆಯನ್ನೂ ಏರಿಸಬೇಕು. ►50ರ ವಯಸ್ಸಿನ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಆರು ದೈನಂದಿನ ಚಟುವಟಿಕೆಗಳು ಹೀಗೆ: ►ದೈಹಿಕವಾಗಿ ಸಕ್ರಿಯವಾಗಿರಿ ನಿಯಮಿತ ದೈಹಿಕ ಚಟುವಟಿಕೆ ಕೀಲುಗಳ ಆರೋಗ್ಯಕ್ಕೆ ಉತ್ತಮ. ಹೃದಯ ರೋಗದ ಅಪಾಯ ಕಡಿಮೆಯಾಗುತ್ತದೆ. ಆರೋಗ್ಯಕರ ತೂಕವನ್ನು ನಿರ್ವಹಿಸಬಹುದು. ಮನೋಸ್ಥಿತಿ ಮತ್ತು ನಿದ್ರೆಯ ಗುಣಮಟ್ಟವನ್ನೂ ಸುಧಾರಿಸಬಹುದು. ►ಸಮತೋಲಿತ ಆಹಾರ ಸೇವನೆ ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಅಂದರೆ ಫೈಬರ್, ಆಂಟಿಆಕ್ಸಿಡಂಟ್ಗಳು, ಲೀನ್ ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಬ್ಬುಗಳು ಇರುವ ಆಹಾರ ಉರಿಯೂತವನ್ನು ಕಡಿಮೆಗೊಳಿಸುತ್ತದೆ. ತೂಕ ನಿಯಂತ್ರಣಕ್ಕೆ ಸಹಕಾರಿ ಹಾಗೂ ಹಾರ್ಮೋನುಗಳ ಸಮತೋಲನಕ್ಕೂ ಬೆಂಬಲ ನೀಡುತ್ತದೆ. ►ನೀರಿನಂಶ ಹೆಚ್ಚು ಸೇವಿಸಿ ಸಾಕಷ್ಟು ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆಯನ್ನು ತಡೆಯುತ್ತದೆ. ಚರ್ಮ ಮತ್ತು ದೇಹದ ಅಂಗಗಳ ಕಾರ್ಯಕ್ಷಮತೆಯನ್ನು ಸುಸ್ಥಿತಿಯಲ್ಲಿಡುತ್ತದೆ. ಮುಖ್ಯವಾಗಿ ವಯಸ್ಸಾದಂತೆ ಬಾಯಾರಿಕೆಯ ಭಾವನೆ ಕಡಿಮೆಯಾಗುವ ಕಾರಣದಿಂದ ಆಗಾಗ್ಗೆ ನೀರು ಕುಡಿಯುತ್ತಿರಬೇಕು. ►ನಿದ್ರೆಗೆ ಆದ್ಯತೆ ನೀಡಿ 7–8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಅಗತ್ಯ. ಸೂಕ್ತ ನಿದ್ರೆಯಿಂದ ದೇಹಕ್ಕೆ ದುರಸ್ತಿ ಸಿಗುತ್ತದೆ. ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ. ಭಾವನಾತ್ಮಕ ಆರೋಗ್ಯಕ್ಕೂ ಉತ್ತಮ. ►ಒತ್ತಡ ನಿರ್ವಹಣೆ ಅಗತ್ಯ ನಿತ್ಯವೂ ಧ್ಯಾನ ಮಾಡಬೇಕು, ಪ್ರಾರ್ಥನೆ ಮಾಡಬಹುದು ಅಥವಾ ದೀರ್ಘ ಉಸಿರಾಟದಿಂದ ಕಾರ್ಟಿಸಾಲ್ ಮಟ್ಟವನ್ನು ನಿಯಂತ್ರಿಸಬಹುದು. ಇಲ್ಲದೆ ಹೋದರೆ ಕಾರ್ಟಿಸಾಲ್ನಿಂದ ತೂಕ ಏರಿಕೆ ಮತ್ತು ಹೃದಯದ ಸಮಸ್ಯೆಗಳು ಕಂಡುಬರಬಹುದು. ►ಸಾಮಾಜಿಕವಾಗಿ ಸಂಪರ್ಕಿತರಾಗಿರಿ ಸಂಬಂಧಗಳನ್ನು ಚೆನ್ನಾಗಿ ನಿರ್ವಹಿಸುವುದು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಂತವನ್ನು ದೂರಮಾಡಬಹುದು. ಅದರಿಂದ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವೂ ಸುಧಾರಿಸುತ್ತದೆ. ವಯಸ್ಸಾಗುವಾಗ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿರುವುದು ಅತಿ ಮುಖ್ಯ.
ಭಟ್ಕಳ: 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ, ಸವಿತಾ ಮಹರ್ಷಿ ಜಯಂತಿ ಆಚರಣೆ
ಭಟ್ಕಳ: ತಾಲೂಕು ಆಡಳಿತ ಹಾಗೂ ಭಾರತ ಚುನಾವಣಾ ಆಯೋಗದ ಸಂಯುಕ್ತ ಆಶ್ರಯದಲ್ಲಿ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಭಟ್ಕಳ ತಾಲೂಕಿನ ಆಡಳಿತ ಸೌಧದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸವಿತಾ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಅವರು ಮಾತನಾಡಿ, ಮತದಾನ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಸಂವಿಧಾನ ನೀಡಿದ ಅಮೂಲ್ಯ ಹಕ್ಕಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಕರೆ ನೀಡಿದರು. ಯುವ ಪೀಳಿಗೆಯೇ ರಾಷ್ಟ್ರದ ಭವಿಷ್ಯವಾಗಿರುವುದರಿಂದ ಮತದಾನದ ಮಹತ್ವವನ್ನು ಅರಿತು ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯಬೇಕು ಎಂದರು. ಮತದಾನ ಒಂದು ಪವಿತ್ರ ಪ್ರಕ್ರಿಯೆಯಾಗಿದ್ದು, ಸಾಮಾನ್ಯ ನಾಗರಿಕನಿಗೂ ಸಮಾನ ಮತದ ಹಕ್ಕು ಇರುವುದೇ ಪ್ರಜಾಪ್ರಭುತ್ವದ ಶಕ್ತಿ. ದೇಶದಲ್ಲಿ ಇಂದಿಗೂ ಶೇ.60ರಿಂದ 70ರಷ್ಟು ಮಾತ್ರ ಮತದಾನವಾಗುತ್ತಿರುವುದು ಪ್ರಜಾ ಪ್ರಭುತ್ವಕ್ಕೆ ಹಾನಿಕಾರಕವಾಗಿದೆ. ಶೇ.100ರಷ್ಟು ಮತದಾನವಾದಾಗ ಮಾತ್ರ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಶೀಲ್ದಾರ್ ನಾಗೇಂದ್ರ ಕೊಳ್ಳಶೆಟ್ಟಿ ಅವರು ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ 16 ವರ್ಷಗಳಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮತದಾನದ ಮಹತ್ವವನ್ನು ತಿಳಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ಕಿಟ್ಗಳನ್ನು ವಿತರಿಸಲಾಯಿತು. ಜೊತೆಗೆ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ದಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಶ್ಯಾಮಲಾ ಕಾಮತ್ ಅವರು ಮತದಾರರ ದಿನಾಚರಣೆಯ ಮಹತ್ವ ಹಾಗೂ ಮತದಾನದ ಅಗತ್ಯತೆಯ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಈಶ್ವರ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ್, ನಗರ ಠಾಣೆಯ ಪಿಎಸ್ಐ ನವೀನ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
'ಸಣ್ಣ ಘಟನೆ' ಹೇಳಿಕೆ | ನನ್ನ ಹೇಳಿಕೆಯ ಉದ್ದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ಸಂಸದ ರಾಜಶೇಖರ ಹಿಟ್ನಾಳ್
ಕೊಪ್ಪಳ: ನಾನು ಸರಿಯಾಗಿಯೇ ಮಾತನಾಡಿದ್ದೇನೆ, ನಾನು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಉದ್ದೇಶ ಮತ್ತು ಕಳಕಳಿ ಸಂಪೂರ್ಣವಾಗಿ ಸರಿಯೇ ಇದೆ. ಅಂಜನಾದ್ರಿಯನ್ನು ಜಗತ್ತಿಗೆ ಪರಿಚಯಿಸುವ ವೇಳೆ ಒಂದು ಘಟನೆಯನ್ನು ಅತಿಯಾಗಿ ವೈಭವೀಕರಿಸುವುದರಿಂದ ಆಂಜನೇಯನ ಭಕ್ತರಿಗೆ ನೋವಾಗಬಹುದು ಎಂಬ ಭಾವನೆಯಿಂದಲೇ ನಾನು ಆ ಮಾತುಗಳನ್ನು ಹೇಳಿದ್ದೇನೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನೆಲದ ವೈಭವ, ಪರಂಪರೆ ಹಾಗೂ ಸಂಸ್ಕೃತಿಯನ್ನು ಒಳಗೊಂಡಿರುವ ಐತಿಹಾಸಿಕ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿಯನ್ನು ದೇಶ–ವಿದೇಶಗಳಿಗೆ ಪರಿಚಯಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲಿನ ಮೂಲಭೂತ ಸೌಲಭ್ಯಗಳು, ಪ್ರವಾಸಿ ವ್ಯವಸ್ಥೆಗಳ ಕುರಿತು ಸಮಗ್ರ ಪ್ರಚಾರ ನಡೆಸಬೇಕೆಂಬುದೇ ನನ್ನ ಮಾತಿನ ಅರ್ಥವಾಗಿತ್ತು. ಯಾವುದೇ ಅಹಿತಕರ ಘಟನೆಗಳನ್ನು ಕಡೆಗಣಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಮುಖಂಡರು ನನ್ನ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ‘ಸಣ್ಣ ಘಟನೆ’ ಎಂದು ಹೇಳಿದ ತಕ್ಷಣವೇ ಅದು ನೋವುಂಟುಮಾಡುವ ಘಟನೆ ಎಂಬುದನ್ನೂ ಉಲ್ಲೇಖಿಸಿದ್ದೇನೆ ಎಂದು ಅವರು ತಿಳಿಸಿದರು. ಈ ಹಿಂದೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಕೇಂದ್ರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ದ “ಕೊಪ್ಪಳವನ್ನು ಅನ್ವೇಷಿಸಿ” ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣವನ್ನು ಉಲ್ಲೇಖಿಸಿ, ಆ ಘಟನೆಯನ್ನು ಮಾಧ್ಯಮಗಳು ಅತಿಯಾಗಿ ಬಿಂಬಿಸಿದ್ದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹಾನಿಯಾಗಿದೆ ಎಂದು ಹೇಳಿದ್ದುದು ವಿವಾದಕ್ಕೆ ಕಾರಣವಾಗಿತ್ತು.
Mark Tully: ಹಿರಿಯ ಪತ್ರಕರ್ತ ಹಾಗೂ ಖ್ಯಾತ ಇತಿಹಾಸಕಾರ ಮಾರ್ಕ್ ಟುಲ್ಲಿ ಇನ್ನಿಲ್ಲ
ಭಾರತೀಯ ಪತ್ರಿಕೋದ್ಯಮಕ್ಕೆ ಇಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಏಕೆಂದರೆ ಹಿರಿಯ ಪತ್ರಕರ್ತ ಮತ್ತು ಲೇಖಕ ಹಾಗೂ ಭಾರತದ ಅತ್ಯುನ್ನತ ವಿದೇಶಿ ವೀಕ್ಷಕರಲ್ಲಿ ಒಬ್ಬರಾದ, ಮಾರ್ಕ್ ಟುಲ್ಲಿ ಅವರು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. 90 ವರ್ಷ ವಯಸ್ಸಿನಲ್ಲಿ ಮಾರ್ಕ್ ಟುಲ್ಲಿ ಅವರು ಕೊನೆಯುಸಿರು ಎಳೆದಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜನವರಿ 21 ರಂದು ಸಾಕೇತ್ನ ಖಾಸಗಿ
ಅಳಿವಿನಂಚಿನಲ್ಲಿರುವ ಭಾರತದ ಗುಲಾಬಿ ಡಾಲ್ಫಿನ್ ಗಳ ಸಮೀಕ್ಷೆ
ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ನಲ್ಲಿ ಕಂಡುಬರುವ ಸಿಹಿನೀರಿನ ಡಾಲ್ಫಿನ್ ಗಳು ಮುಖ್ಯವಾಗಿ ಗಂಗಾ, ಬ್ರಹ್ಮಪುತ್ರ, ಕರ್ಣಫುಲಿ ಮತ್ತು ಮೇಘನಾ ನದಿಗಳಲ್ಲಿ ಕಂಡುಬರುತ್ತವೆ. ನದಿ ಡಾಲ್ಫಿನ್ ಗಳಿಗೆ ಸಂಬಂಧಿಸಿದ ಅತಿದೊಡ್ಡ ಸಮೀಕ್ಷೆಯಾದ ‘ಪ್ರೊಜೆಕ್ಟ್ ಡಾಲ್ಫಿನ್’ ಉತ್ತರ ಪ್ರದೇಶದ ಬಿಜ್ನೋರಿನಲ್ಲಿ ಎರಡು ದಿನಗಳ ಹಿಂದೆ ಆರಂಭವಾಗಿದೆ. 2021–23ರಲ್ಲಿ ನಡೆದ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ಭಾರತದಲ್ಲಿ ಒಟ್ಟು 6,327 ನದಿ ಡಾಲ್ಫಿನ್ ಗಳಿರುವುದನ್ನು ಪತ್ತೆ ಮಾಡಲಾಗಿತ್ತು. ಇದೀಗ ಉತ್ತರ ಪ್ರದೇಶದ ಬಿಜ್ನೋರಿನಲ್ಲಿ ಮತ್ತೊಂದು ಸಮೀಕ್ಷೆ ಆರಂಭವಾಗಿದೆ. ಭಾರತದಲ್ಲಿ ಗಂಗಾ ನದಿ ಸಾವಿರಾರು ಡಾಲ್ಫಿನ್ ಗಳಿಗೆ ನೆಲೆಯಾಗಿದೆ. ಅಮೆಝಾನ್ ನದಿ ಡಾಲ್ಫಿನ್ ಗಳ ಸ್ಥಳೀಯ ರೂಪವೆಂದು ಗಂಗಾ ನದಿ ಡಾಲ್ಫಿನ್ ಗಳನ್ನು ಪರಿಗಣಿಸಲಾಗುತ್ತದೆ. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿಯಾದ ಗಂಗಾ ನದಿ ಡಾಲ್ಫಿನ್ ಗಳು ಹೆಚ್ಚಾಗಿ ದೇಶದ ಉತ್ತರ ಭಾಗದಲ್ಲಿರುವ ಗಂಗಾ–ಬ್ರಹ್ಮಪುತ್ರ ನದಿ ವ್ಯಾಪ್ತಿಯಲ್ಲಿ ಕಂಡುಬರುತ್ತವೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಈ ನದಿ ಡಾಲ್ಫಿನ್ ಗಳನ್ನು ‘ಅಳಿವಿನಂಚಿನಲ್ಲಿರುವ’ ಪ್ರಭೇದವೆಂದು ವರ್ಗೀಕರಿಸಿದೆ. ಪಿಂಕ್ ರಿವರ್ ಡಾಲ್ಫಿನ್ ಅಥವಾ ‘ಬೊಟೊ’ ಎಂದು ಕರೆಯಲಾಗುವ ಸಿಹಿನೀರಿನ ಡಾಲ್ಫಿನ್ ಪ್ರಭೇದಗಳು ಮುಖ್ಯವಾಗಿ ಅಮೆಝಾನ್ ತಟದಲ್ಲಿ ಕಂಡುಬರುತ್ತವೆ. ಬೊಲಿವಿಯಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್, ಗಯಾನ, ಪೆರು ಮತ್ತು ವೆನೆಝುವೆಲಾದ ಅಮೆಝಾನ್ ಮತ್ತು ಒರಿನೋಕೋ ನದಿ ಜಲಾನಯನ ಪ್ರದೇಶಗಳ ಜಲಮೂಲಗಳಲ್ಲಿ ವಾಸಿಸುವ ಈ ಸಿಹಿನೀರಿನ ಡಾಲ್ಫಿನ್ ಪ್ರಭೇದವಾಗಿದೆ. ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ನಲ್ಲಿ ಕಂಡುಬರುವ ಸಿಹಿನೀರಿನ ಡಾಲ್ಫಿನ್ ಗಳು ಮುಖ್ಯವಾಗಿ ಗಂಗಾ, ಬ್ರಹ್ಮಪುತ್ರ, ಕರ್ಣಫುಲಿ ಮತ್ತು ಮೇಘನಾ ನದಿಗಳಲ್ಲಿ ಕಂಡುಬರುತ್ತವೆ. ವಯಸ್ಕ ಡಾಲ್ಫಿನ್ ಗಳು ಸುಮಾರು 10 ಅಡಿ ಉದ್ದವಿರುತ್ತವೆ. ಸೀಗಡಿ ಮತ್ತು ಮೃದ್ವಂಗಿಗಳು ಈ ಡಾಲ್ಫಿನ್ ಗಳ ಪ್ರಮುಖ ಆಹಾರವಾಗಿವೆ. ►ಡಾಲ್ಫಿನ್ ಗಳು ಗುಲಾಬಿ ಬಣ್ಣದಲ್ಲೇಕೆ ಇರುತ್ತವೆ? ಸಿಹಿನೀರಿನ ಡಾಲ್ಫಿನ್ ಗಳು ವಿವಿಧ ಕಾರಣಗಳಿಂದ ಗುಲಾಬಿ ಬಣ್ಣವನ್ನು ಪಡೆದಿರುತ್ತವೆ. ಜೈವಿಕ ಗುಣಲಕ್ಷಣಗಳಿಂದಾಗಿ ಅವುಗಳ ಬಣ್ಣ ಬದಲಾಗುತ್ತದೆ. ನೀರಿನ ಮೂಲಗಳ ಖನಿಜಾಂಶಗಳು ಚರ್ಮದ ಬಣ್ಣವನ್ನು ಬದಲಿಸುವ ಸಾಧ್ಯತೆಯಿದೆ. ಕೆಲವೊಮ್ಮೆ ಆಹಾರವೂ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಚರ್ಮದ ಕೆಳಗಿರುವ ರಕ್ತನಾಳಗಳ ಹಿಗ್ಗುವಿಕೆಯಿಂದಲೂ ಅವು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಚಿಕ್ಕ ವಯಸ್ಸಿನ ಡಾಲ್ಫಿನ್ ಗಳು ಬೂದು ಮತ್ತು ಕಂದು ಬಣ್ಣದಲ್ಲಿರುತ್ತವೆ. ಪ್ರೌಢಾವಸ್ಥೆಗೆ ಬಂದಾಗ ಅವು ಬೂದು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಕೆಲವು ಗಂಡು ಡಾಲ್ಫಿನ್ ಗಳು ಬಹಳ ಕಡು ಗುಲಾಬಿ ಬಣ್ಣ ಹೊಂದಿರುತ್ತವೆ. ನದಿ ನೀರಿನಲ್ಲಿ ಹೆಚ್ಚು ಅಡ್ಡಾಡುವ ಕಾರಣದಿಂದಲೂ ಬಣ್ಣ ಬದಲಾಗಬಹುದು. ►ಅಳಿವಿನಂಚಿನಲ್ಲಿರುವ ಪ್ರಭೇದಗಳು ದುರುದೃಷ್ಟವಶಾತ್, ಮಾನವ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಹಿನೀರಿನ ಡಾಲ್ಫಿನ್ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಕೈಗಾರೀಕರಣ, ತೈಲ ಸೋರಿಕೆ, ಬೇಟೆಯಾಡುವುದು ಮತ್ತು ಮೀನು ವ್ಯಾಪಾರ ಇವುಗಳು ಅವುಗಳ ಸಂಖ್ಯೆಗಳು ಕಡಿಮೆಯಾಗಲು ಕಾರಣವಾಗಿವೆ. ಇದೀಗ ಡಾಲ್ಫಿನ್ ಗಳ ಸಮೀಕ್ಷೆ ನಡೆಯುತ್ತಿದ್ದು, ಸ್ಪಷ್ಟ ಸಂಖ್ಯೆಯನ್ನು ಕಂಡುಹಿಡಿಯಲಾಗುತ್ತಿದೆ. ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, “ಸಮೀಕ್ಷೆಯ ಮೊದಲ ಹಂತದಲ್ಲಿ ಬಿಜ್ನೋರಿನಿಂದ ಗಂಗಾ ಸಾಗರ್ ಮತ್ತು ಸಿಂಧೂ ನದಿವರೆಗೆ ಗಂಗಾ ನದಿಯ ಮುಖ್ಯ ನದಿ ಪಾತ್ರದಲ್ಲಿ ಸಮೀಕ್ಷೆ ನಡೆಯಲಿದೆ. ಎರಡನೇ ಹಂತದಲ್ಲಿ ಬ್ರಹ್ಮಪುತ್ರ, ಗಂಗಾ ಉಪನದಿಗಳು, ಸುಂದರ್ಬನ್ಸ್ ಮತ್ತು ಒಡಿಶಾದಲ್ಲಿ ಸಮೀಕ್ಷೆ ನಡೆಯಲಿದೆ. ಹಿಂದಿನ ಸಮೀಕ್ಷೆಯಲ್ಲಿ ಗಂಗಾ, ಯಮುನಾ, ಚಂಬಲ್, ಗಂಡಕ್, ಘಘರ, ಕೋಸಿ, ಮಹಾನಂದ ಮತ್ತು ಬ್ರಹ್ಮಪುತ್ರ ನದಿ ಪಾತ್ರಗಳಲ್ಲಿ ಡಾಲ್ಫಿನ್ ಗಳನ್ನು ಗುರುತಿಸಲಾಗಿತ್ತು.” ಈ ಡಾಲ್ಫಿನ್ ಪ್ರಭೇದಗಳು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ನಂತರದ ಸ್ಥಾನದಲ್ಲಿವೆ.
ಟೀ20 ವಿಶ್ವಕಪ್ ಗೂ ಮುನ್ನ ಭಾರತ ತಂಡದಲ್ಲಿ ಭಾರೀ ಪ್ರಯೋಗ! ಬುಮ್ರಾಗಾಗಿ ಅರ್ಶದೀಪ್ ಔಟ್! ಹರ್ಷಿತ್ ರಾಣಾ ಸೇಫ್!
India Vs New Zealand- ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡದ ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಗುವಾಹಟಿಯಲ್ಲಿ ನಡೆಯುತ್ತಿರುವ 3ನೇ ಪಂದ್ಯದಲ್ಲಿ ಭಾರತ ತಂಡದ 2 ಮುಖ್ಯ ಬದಲಾವಣೆಗಳನ್ನು ಮಾಡಿಕೊಂಡಿದೆ. ಟಿ20ಯ ಅತ್ಯಂತ ಯಶಸ್ವಿ ಬೌಲರ್ ಅರ್ಶದೀಪ್ ಸಿಂಗ್ ಅವರ ಬದಲಿಗೆ ಜಸ್ಪ್ರೀತ್ ಬುಮ್ರಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಬದಲು ರವಿ ಬಿಷ್ಣೋಯಿ ಅವರು ತಂಡವನ್ನು ಸೇರಿಕೊಂಡಿದ್ದಾರೆ.
ಕ್ರಿಸ್ಮಸ್ಗೆ ಬರಲಿದೆ ಶಾರುಖ್ ಖಾನ್ ಅಭಿನಯದ ‘ಕಿಂಗ್’
ಶಾರುಖ್ ಖಾನ್ ‘ಕಿಂಗ್’ ಆಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕಾಗಿ ಈ ವರ್ಷದ ಅಂತ್ಯದವರೆಗೆ ಕಾಯಬೇಕಿದೆ. ‘ಕಿಂಗ್’ ಚಿತ್ರದ ಒಂದು ಝಲಕ್ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ ಚಿತ್ರದ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಸತತ ಮೂರು ಹಿಟ್ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್ ಖಾನ್ ಕೆಲಕಾಲ ಪರದೆಯಿಂದ ದೂರವಾಗಿದ್ದರು. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಚಿತ್ರಗಳು ಒಂದೇ ವರ್ಷದಲ್ಲಿ ತೆರೆಗಪ್ಪಳಿಸಿ ಭರ್ಜರಿ ಯಶಸ್ಸು ಕಂಡಿದ್ದವು. ಆ ಬಳಿಕ ‘ಕಿಂಗ್’ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಇದೇ ವರ್ಷ ಕ್ರಿಸ್ಮಸ್ ಗೆ ‘ಕಿಂಗ್’ ಬಿಡುಗಡೆಯಾಗಲಿದೆ ಎಂದು ಶಾರುಖ್ ಖಾನ್ ಘೋಷಿಸಿದ್ದಾರೆ. ‘ಪಠಾಣ್’ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ ‘ಕಿಂಗ್’ 2026 ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ‘ಪಠಾಣ್’ ಬ್ಲಾಕ್ಬಸ್ಟರ್ ಚಿತ್ರದ ಮೂರನೇ ವಾರ್ಷಿಕೋತ್ಸವದ ಮುನ್ನವೇ ‘ಕಿಂಗ್’ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅನಿಲ್ ಕಪೂರ್, ಜಾಕಿ ಶ್ರಾಫ್, ರಾಣಿ ಮುಖರ್ಜಿ ಸೇರಿದಂತೆ ಇನ್ನೂ ಹಲವರು ನಟಿಸಿದ್ದಾರೆ. ವಿಎಫ್ಎಕ್ಸ್ ಚಿತ್ರದಲ್ಲಿನ ಪ್ರಮುಖ ಆಕರ್ಷಣೆಯಾಗಿರಲಿದೆ. ಅನಿರುದ್ಧ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲೇ ‘ಕಿಂಗ್’ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮುಂಬೈ ಮತ್ತು ವರ್ಸಾವ್ ಲೊಕೇಶನ್ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇದೇ ಕ್ರಿಸ್ಮಸ್ ಸಂದರ್ಭದಲ್ಲಿ ಹಾಲಿವುಡ್ನ ಮಾರ್ವೆಲ್ ಸಿನಿಮಾ ‘ಅವೆಂಜರ್ಸ್: ಡೂಮ್ಸ್ಡೇ’ ಕೂಡ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ‘ಕಿಂಗ್’ ಮತ್ತು ಮಾರ್ವೆಲ್ ಚಿತ್ರದ ನಡುವೆ ಬಾಕ್ಸ್ಆಫೀಸ್ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಸಿನಿಮಾ ನಟರು ಡೈಲಾಗ್ ಹೊಡೆಯುವುದರಲ್ಲಿ ನಿಸ್ಸೀಮರು. ಅದರಲ್ಲೂ ನಟರು ರಾಜಕೀಯ ಪ್ರವೇಶ ಮಾಡಿದರಂತೂ ಅವರ ರಾಜಕೀಯ ಭಾಷಣಗಳೂ ಕೂಡ ಸಿನಿಮಾ ಡೈಲಾಗ್ ರೀತಿಯೇ ಕೇಳಿಸುತ್ತವೆ. ಆದರೆ ಎಲ್ಲ ನಟರೂ ಕೇವಲ ಡೈಲಾಗ್ ಹೊಡೆಯಲು ರಾಜಕೀಯಕ್ಕೆ ಬರಲ್ಲ. ಕೆಲವರು ಸಿರಿಯಸ್ ಪೊಲಿಟಿಶಿಯನ್ಸ್ ಕೂಡ ಆಗಿರುತ್ತಾರೆ. ಅದೇ ರೀತಿ ಟಿವಿಕೆ ಪಕ್ಷ ಸ್ಥಾಪನೆಯೊಂದಿಗೆ ತಮಿಳುನಾಡು ರಾಜಕೀಯಕ್ಕೆ ಧುಮುಕಿರುವ ನಟ ವಿಜಯ್, ಇಂದು (ಜ.25-ಭಾನುವಾರ) ಪದಾಧಿಕಾರಿಗಳ ಸಭೆಯಲ್ಲಿ ಅಬ್ಬರದ ಭಾಷಣ ಮಾಡಿದ್ದಾರೆ. ಇಲ್ಲಿದೆ ಮಾಹಿತಿ.
ಎಸ್ಸಿ ಎಸ್ಟಿ ಕುಂದುಕೊರತೆ ಸಭೆ
ನಿದ್ರೆ ಮಾಡಿದರೆ ಅಪರಾಧಿ ಭಾವ ಬೇಡ!
ನಿತ್ಯವೂ ಅಧಿಕ ನಿದ್ರೆ ಮಾಡಿದೆ ಎನ್ನುವ ಅಪರಾಧಿ ಭಾವ ಕಾಡುತ್ತಿದೆಯೇ? ವಿಶ್ರಾಂತಿ ದೇಹಕ್ಕೆ ಅತಿ ಅಗತ್ಯ ಎಂದು ವೈದ್ಯರು ಹೇಳುತ್ತಾರೆ ಬೆಳಗ್ಗೆ ತಡವಾಗಿ ಎದ್ದಾಗ ಪ್ರತಿ ಬಾರಿ ಪಶ್ಚಾತ್ತಾಪ ಪಡುತ್ತೀರಾ? ಬಹಳ ಹೆಚ್ಚು ನಿದ್ರೆ ಮಾಡಿದೆ ಎಂಬ ಭಾವನೆ ಕಾಡುತ್ತಿದೆಯೇ? ಕಚೇರಿಯ ಕೆಲಸವೆಲ್ಲ ಹಾಗೆಯೇ ಉಳಿಸಿ ಮಲಗಿದ ಭಾವನೆಯೇ? ಹೀಗೆ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ. 7–8 ಗಂಟೆಗಳ ಕಾಲ ಮಲಗಿದರೆ ಅದೇ ಉತ್ತಮ ನಿದ್ರೆ! ವೈದ್ಯರ ಪ್ರಕಾರ, ನೀವು ಮರುದಿನ ಉಲ್ಲಾಸದಿಂದ ಎಲ್ಲಾ ಕೆಲಸಗಳನ್ನು ಮಾಡಬೇಕಾದರೆ ರಾತ್ರಿ ಚೆನ್ನಾಗಿ ನಿದ್ರೆ ಮಾಡುವುದು ಅತ್ಯಂತ ಮುಖ್ಯ. ಕಾರ್ಪೋರೇಟ್ ವೃತ್ತಿಪರರಿಂದ ಹಿಡಿದು ವೃತ್ತಿಪರ ತಾಯಂದಿರವರೆಗೆ ‘ಹೆಚ್ಚು ಮಲಗಿದೆ’ ಎನ್ನುವ ಅಪರಾಧಿ ಭಾವನೆ ಸದಾ ಕಾಡುತ್ತಿರುತ್ತದೆ. ಒಂದಕ್ಕಿಂತ ಹೆಚ್ಚು ಅಲಾರಂ ಇಡುವುದು ಬಹುತೇಕ ಎಲ್ಲರ ವಾಡಿಕೆಯಾಗಿದೆ. ಒಂದು ರೀತಿಯಲ್ಲಿ ‘ಉತ್ಪಾದಕತೆ ನಷ್ಟ’ವಾಗುತ್ತಿದೆ ಎನ್ನುವ ಭಾವನೆ ಇರುತ್ತದೆ. ವೃತ್ತಿ ಮತ್ತು ಇತರ ಕೆಲಸಗಳ ನಡುವೆ ನಿದ್ರೆಯ ಸಮಯ ಕಡಿಮೆ ಮಾಡುವುದು ಹಾಗೂ ಕಡಿಮೆ ನಿದ್ರೆ ಮಾಡಬೇಕು, ಹೆಚ್ಚು ಕೆಲಸ ಮಾಡಬೇಕು ಎನ್ನುವ ಮನೋಭಾವ ಇತ್ತೀಚೆಗೆ ಹೆಚ್ಚಾಗಿದೆ. ಆದರೆ ದೇಹಕ್ಕೆ ವಿಶ್ರಾಂತಿ ಕೊಡುವುದು ಸೋಮಾರಿತನವಲ್ಲ. ಮುಖ್ಯವಾಗಿ ಅಧಿಕ ಒತ್ತಡದ ಕೆಲಸದ ನಂತರ ಸುಖನಿದ್ರೆ ಅತ್ಯಾವಶ್ಯಕ. ► ವಿಶ್ರಾಂತಿ ಸೋಮಾರಿತನವಲ್ಲ “ವಿಶ್ರಾಂತಿಯನ್ನು ನಿಧಾನವಾಗಿ ನಾವು ಸೋಮಾರಿತನ ಅಥವಾ ಮಹತ್ವಾಕಾಂಕ್ಷೆ ಇಲ್ಲದಿರುವುದೆಂದು ವ್ಯಾಖ್ಯಾನಿಸುತ್ತಾ ಬಂದಿದ್ದೇವೆ. ಬಹಳಷ್ಟು ಮಂದಿ ಉತ್ಪಾದಕತೆಯೇ ಮುಖ್ಯ ಎನ್ನುವ ಭಾವನೆಯೊಂದಿಗೆ ಬೆಳೆದುಬಂದಿರುತ್ತಾರೆ. ಹೀಗಾಗಿ ವಿಶ್ರಾಂತಿಯಲ್ಲಿ ಕಳೆದ ಸಮಯವನ್ನು ವ್ಯರ್ಥವೆಂದು ಭಾವಿಸುತ್ತಾರೆ” ಎಂದು ಮನಶ್ಶಾಸ್ತ್ರದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಡಾ. ವಿಶಾಲ್ ಘುಲೆ ಹೇಳುತ್ತಾರೆ. ಅವರು ಎಂಐಟಿ–ಡಬ್ಲ್ಯುಪಿಯುನ ದಿ ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ನಲ್ಲಿ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಘುಲೆ ಅವರ ಪ್ರಕಾರ ನಿದ್ರೆ ದುಬಾರಿಯಾಗಿ ಪರಿಣಮಿಸಬಾರದು. ನಿದ್ರೆ ಒಂದು ಜೈವಿಕ ಅಗತ್ಯ. ಕಡಿಮೆ ನಿದ್ರೆ ಮಾಡಿದರೆ ಹೆಚ್ಚು ಉತ್ಪಾದಕತೆ ಸಾಧ್ಯ ಎನ್ನುವ ಆಲೋಚನೆಯನ್ನು ಬದಲಿಸಿಕೊಳ್ಳಬೇಕು. “ಮನಶ್ಶಾಸ್ತ್ರದ ದೃಷ್ಟಿಕೋನದಲ್ಲಿ ಹೇಳುವುದಾದರೆ, ದೀರ್ಘಕಾಲ ನಿದ್ರೆಯ ಕೊರತೆ ಉತ್ಪಾದಕತೆಯನ್ನು ಕಡಿಮೆಗೊಳಿಸುತ್ತದೆ. ಕಿರಿಕಿರಿ ಹಾಗೂ ಆತಂಕ (anxiety) ಹೆಚ್ಚಾಗುತ್ತದೆ. ಬಳಲಿಕೆ ಕಾಣಿಸಿಕೊಳ್ಳುತ್ತದೆ.” ► ಭಾವನಾತ್ಮಕ ನಿಯಂತ್ರಣಕ್ಕೆ ನಿದ್ರೆ ಅಗತ್ಯ ಸಾಕಷ್ಟು ನಿದ್ರೆ ಮಾಡಿದರೆ ಭಾವನಾತ್ಮಕ ನಿಯಂತ್ರಣ ಸಾಧ್ಯವಾಗುತ್ತದೆ. ನೆನಪಿನ ಶಕ್ತಿ ಉತ್ತಮವಾಗುತ್ತದೆ. ನಿರ್ಧಾರ ಕೈಗೊಳ್ಳುವ ಶಕ್ತಿ ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಘುಲೆ ಹೇಳುತ್ತಾರೆ. ನೀವು ವಿಶ್ರಾಂತಿ ತೆಗೆದುಕೊಂಡಾಗ ಮೆದುಳು ಕಲಿಕೆಯನ್ನು ಕ್ರೂಢೀಕರಿಸುತ್ತದೆ ಮತ್ತು ಭಾವನಾತ್ಮಕ ಸಮತೋಲನವನ್ನು ಮರುಸ್ಥಾಪಿಸುತ್ತದೆ. ಹೀಗಾಗಿ ನಿದ್ರೆ ಕಾರ್ಯದಕ್ಷತೆಗೆ ಮಾಡುವ ಹೂಡಿಕೆಯಾಗಿದೆ. ಆ ಹೂಡಿಕೆಯನ್ನು ಹಿಂಪಡೆಯಬಾರದು. ನಿದ್ರೆ ಮಾಡುವುದಕ್ಕೆ ತಪ್ಪಿತಸ್ಥ ಭಾವನೆ ಬರುವುದು ಉಸಿರಾಡುವುದಕ್ಕೆ ಪಶ್ಚಾತ್ತಾಪ ಪಡುವಂತೆಯೇ. ನಿದ್ರೆ ಮತ್ತು ಉಸಿರಾಟ ಎರಡೂ ದೇಹಕ್ಕೆ ಅತ್ಯಂತ ಅಗತ್ಯ ಎಂದು ಘುಲೆ ಅಭಿಪ್ರಾಯಪಡುತ್ತಾರೆ. ► ಪಶ್ಚಾತ್ತಾಪವಿಲ್ಲದೆ ನಿದ್ರೆ ಮಾಡಿ ಹೀಗಾಗಿ ನಿದ್ರೆ ಕಳೆದುಹೋಗುವ ಸಮಯವಲ್ಲ. ಉಳಿದ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಲು ನಿದ್ರೆ ಅಗತ್ಯ. ಪಶ್ಚಾತ್ತಾಪವಿಲ್ಲದ ನಿದ್ರೆಗೆ ಇವು ಮುಖ್ಯ: • ನಿದ್ರೆ ಕುರಿತ ಮಾನಸಿಕ ಅಭಿಪ್ರಾಯ ಬದಲಿಸಿ: “ನಿದ್ರೆ ನನ್ನ ಕೆಲಸದ ಭಾಗ, ಅದರಿಂದ ನಾನು ತಪ್ಪಿಸಿಕೊಳ್ಳುವುದಿಲ್ಲ” ಎಂದು ಸ್ವತಃ ಹೇಳಿಕೊಳ್ಳಿ. • ಎಲ್ಲ ಮುಗಿಸುವ ಅಭ್ಯಾಸ: ಮಾನಸಿಕವಾಗಿ ಎಲ್ಲವನ್ನು ಮುಗಿಸುವ ನಿರ್ದಿಷ್ಟ ಸಮಯ ನಿಗದಿಪಡಿಸಿ. ನಾಳೆಯ ಕೆಲಸಗಳನ್ನು ಹೇಗೆ ಮಾಡಬೇಕು ಎಂದು ಮುಂಚಿತವಾಗಿ ನಿರ್ಧರಿಸಿಡಿ. ನಿದ್ರೆಗೆ ಜಾರುವಾಗ ನಾಳೆಯ ಚಿಂತೆ ಇರಬಾರದು. • ಸ್ವಯಂ ಸಹಾನುಭೂತಿ ಇರಲಿ: ಪಶ್ಚಾತ್ತಾಪವನ್ನು ಗಮನಿಸಿ, ಆದರೆ ಅದು ತಪ್ಪೆಂದು ತೀರ್ಮಾನಿಸಬೇಡಿ. ವಿಶ್ರಾಂತಿ ಮಾನವನ ಅಗತ್ಯ; ಅದು ಪಡೆಯಬೇಕಾದ ಬಹುಮಾನವಲ್ಲ ಎಂದು ನೆನಪಿಸಿಕೊಳ್ಳಿ. • ಉತ್ಪಾದಕತೆ ಹೋಲಿಕೆ ಬಿಡಿ: ಇತರರು ಮಾಡುವಷ್ಟು ಕೆಲಸ ನಿಮ್ಮ ದೇಹ ಅಥವಾ ಮನಸ್ಸಿಗೆ ಸಾಧ್ಯವಾಗದೇ ಇರಬಹುದು. ಹೀಗಾಗಿ ಹೋಲಿಕೆಯನ್ನು ತ್ಯಜಿಸಿ. • ಗುಣಮಟ್ಟದ ಕಡೆ ಗಮನವಿರಲಿ, ನಿಯಂತ್ರಣವಲ್ಲ: ಒತ್ತಡಪೂರ್ವಕವಾಗಿ ನಿದ್ರೆ ಮಾಡಲು ಯತ್ನಿಸುವ ಬದಲು ಮಂದ ಬೆಳಕು, ನಿಧಾನ ಉಸಿರಾಟದ ಮೂಲಕ ನಿದ್ರೆಗೆ ಬೇಕಾದ ಶಾಂತ ಸ್ಥಿತಿಯನ್ನು ತಂದುಕೊಳ್ಳಿ. ರಾತ್ರಿ ಮಲಗುವಾಗ ಮೊಬೈಲ್ ಬಳಕೆ ಬಿಡಿ. ಸಹಜವಾಗಿ ನಿದ್ರೆ ಬರಲಿ.
Mumbai | ಪ್ರಾಧ್ಯಾಪಕನಿಗೆ ಇರಿದು ಪರಾರಿ: ಹಂತಕನನ್ನು ಪೊಲೀಸರು ಸೆರೆ ಹಿಡಿದಿದ್ದು ಹೇಗೆ?
ಮುಂಬೈ: ಮುಂಬೈ ನಿವಾಸಿಗಳ ಜೀವನಾಡಿಯಾಗಿರುವ ಸ್ಥಳೀಯ ರೈಲ್ವೆಯ ಮಲಾಡ್ ರೈಲ್ವೆ ನಿಲ್ದಾಣದಲ್ಲಿ ಪ್ರಾಧ್ಯಾಪಕರಿಗೆ ಭೀಕರವಾಗಿ ಇರಿದು ಹತ್ಯೆಗೈದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು 27 ವರ್ಷದ ಓಂಕಾರ್ ಶಿಂದೆ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಅಲೋಕ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ವಿಲೆ ಪಾರ್ಲೆಯಲ್ಲಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಮಲಾಡ್ ರೈಲ್ವೆ ನಿಲ್ದಾಣದ 1 ಮತ್ತು 2ನೇ ಪ್ಲಾಟ್ಫಾರ್ಮ್ಗಳ ನಡುವೆ ನಡೆದಿದೆ. ಈ ಘಟನೆ ಕ್ಷುಲ್ಲಕ ವಾಗ್ವಾದದ ಹಿನ್ನೆಲೆಯಲ್ಲಿ ನಡೆದಿರುವಂತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಶಿಂದೆ ಹಾಗೂ ಮೃತ ಸಿಂಗ್ ಇಬ್ಬರೂ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮಲಾಡ್ ರೈಲ್ವೆ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ, ರೈಲಿನಿಂದ ಇಳಿಯುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ. ಈ ವಾಕ್ಸಮರ ಭಯಾನಕ ತಿರುವು ಪಡೆದುಕೊಂಡಿದ್ದು, ಸ್ತಿಮಿತ ಕಳೆದುಕೊಂಡ ಶಿಂದೆ ಹರಿತವಾದ ಚಾಕುವನ್ನು ಹೊರತೆಗೆದು ಸಿಂಗ್ ಅವರ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಸಿಂಗ್ ಕುಸಿದು ಬಿದ್ದರೆ, ಆರೋಪಿ ಶಿಂದೆ ಪ್ರಯಾಣಿಕರ ದಟ್ಟಣೆಯ ನಡುವೆ ಪರಾರಿಯಾಗಿ ಕಣ್ಮರೆಯಾಗಿದ್ದಾನೆ. ಬಳಿಕ ಆತನ ಪತ್ತೆಗೆ ತಕ್ಷಣವೇ ತನಿಖೆಗೆ ಚಾಲನೆ ನೀಡಿದ ಬೊರಿವಿಲಿ ರೈಲ್ವೆ ಪೊಲೀಸರು, ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಹಲ್ಲೆಯ ನಂತರ ಪಾದಚಾರಿ ಸೇತುವೆಯ ಮೇಲೆ ಪರಾರಿಯಾಗುತ್ತಿದ್ದ ಬಿಳಿ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದ ಶಿಂದೆಯನ್ನು ಗುರುತಿಸಿದ್ದಾರೆ. ವೀಡಿಯೊ ಸಾಕ್ಷ್ಯ ಹಾಗೂ ತಾಂತ್ರಿಕ ಸುಳಿವುಗಳ ಆಧಾರದಲ್ಲಿ ವಸಾಯಿಯಲ್ಲಿ ಶಿಂದೆಯನ್ನು ಪತ್ತೆ ಹಚ್ಚಿದ ಪೊಲೀಸರು, ಆತನನ್ನು ಬಂಧಿಸಿದ್ದಾರೆ. ಆದರೆ ಕೇವಲ ವಾಗ್ವಾದದ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬನನ್ನು ಇರಿದು ಹತ್ಯೆಗೈಯುವುದು ಅಸಹಜ ಘಟನೆ. ಇದರ ಹಿಂದೆ ಇನ್ನೂ ಆಳವಾದ ವ್ಯಾಜ್ಯ ಇರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಟ್ರಾಫಿಕ್ ಪೊಲೀಸರು ಹಾಕಿದ ದಂಡದ ರಶೀದಿಯನ್ನು ಪ್ರಶ್ನೆ ಮಾಡ್ಬಹುದು! ಹೊಸ ನಿಯಮದಲ್ಲಿ ಏನೇನಿದೆ? ಇಲ್ಲಿದೆ ವಿವರ
ದೇಶದ ರಸ್ತೆ ಸಾರಿಗೆ ಇಲಾಖೆಯು ಟ್ರಾಫಿಕ್ ದಂಡದ ಚಲನ್ಗಳನ್ನು ಪ್ರಶ್ನಿಸಲು 45 ದಿನಗಳ ಕಾಲಾವಕಾಶ ನೀಡುವ ಹೊಸ ನಿಯಮ ಜಾರಿಗೆ ತಂದಿದೆ. ಈ ಅವಧಿಯಲ್ಲಿ ದಾಖಲೆಗಳೊಂದಿಗೆ ಪ್ರಶ್ನಿಸದಿದ್ದರೆ, ದಂಡ ಪಾವತಿಸುವುದು ಕಡ್ಡಾಯವಾಗುತ್ತದೆ. ಈ ಬದಲಾವಣೆಯು ದಂಡ ತಪ್ಪಿಸುವವರನ್ನು ತಡೆಯುವ ಗುರಿ ಹೊಂದಿದೆ.
Canada | ಭಾರತೀಯ ಮೂಲದ ಯುವಕ ಗುಂಡೇಟಿಗೆ ಬಲಿ: ಗ್ಯಾಂಗ್ ವಾರ್ ಶಂಕೆ
ಬುರ್ನಬಿ (ಕೆನಡಾ): ಗುರುವಾರ ಬುರ್ನಬಿಯಲ್ಲಿ ನಡೆದ 28 ವರ್ಷದ ಭಾರತೀಯ ಮೂಲದ ಯುವಕನ ಹತ್ಯೆ ಮಾಡಲಾಗಿದೆ. ಇದು ಗ್ಯಾಂಗ್ ವಾರ್ ಆಗಿರಬಹುದು ಎಂದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಯುವಕನನ್ನು ವ್ಯಾಂಕೋವರ್ ನಿವಾಸಿ ದಿಲ್ ರಾಜ್ ಸಿಂಗ್ ಗಿಲ್ ಎಂದು ಗುರುತಿಸಲಾಗಿದ್ದು, ಆತ ಪೊಲೀಸರಿಗೆ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ ಸುಮಾರು 5.30ರ ಕೆಲವೇ ಕ್ಷಣಗಳ ಮುಂಚೆ, ಕೆನಡಾ ವೇಯ 3700 ಬ್ಲಾಕ್ ಬಳಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಬುರ್ನಬಿ ಆರ್ಸಿಎಂಪಿ ಫ್ರಂಟ್ ಲೈನ್ ಅಧಿಕಾರಿಗಳಿಗೆ ಲಭಿಸಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪುರುಷನೊಬ್ಬ ಸಾವು–ಬದುಕಿನ ಹೋರಾಟ ನಡೆಸುತ್ತಿರುವುದು ಕಂಡು ಬಂದಿದೆ. ಜೀವ ರಕ್ಷಿಸಲು ಕೈಗೊಂಡ ಪ್ರಯತ್ನಗಳ ಹೊರತಾಗಿಯೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಬುಕ್ಸ್ಟನ್ ಸ್ಟ್ರೀಟ್ನ 5000 ಬ್ಲಾಕ್ ಬಳಿ ಒಂದು ವಾಹನ ಪತ್ತೆಯಾಗಿದೆ. ಆ ವಾಹನಕ್ಕೂ ಗುಂಡಿನ ದಾಳಿಗೂ ಯಾವುದೇ ಸಂಬಂಧವಿದೆಯೇ ಎಂಬುದನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಬ್ರಿಟಿಷ್ ಕೊಲಂಬಿಯಾದ ಬುರ್ನಬಿ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಮಗ್ರ ಹತ್ಯೆ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. “ಗಿಲ್ ಪೊಲೀಸರಿಗೆ ಪರಿಚಿತನಾಗಿದ್ದ ಹಾಗೂ ಈ ಗುಂಡಿನ ದಾಳಿ ಬಿಸಿ ಗ್ಯಾಂಗ್ ಘರ್ಷಣೆಯೊಂದಿಗೆ ಸಂಬಂಧ ಹೊಂದಿರುವಂತೆ ಕಾಣುತ್ತದೆ” ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.

19 C