ದ್ವಿತೀಯ ಪಿಯುಸಿ ಪರೀಕ್ಷೆ | ಅಝ್ಮೀಯಾಗೆ ಶೇ.84.33 ಅಂಕ
ಉಪ್ಪಿನಂಗಡಿ : ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಉಪ್ಪಿನಂಗಡಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಝ್ಮೀಯಾ 506 (ಶೇ.84.33) ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಇವರು ಮಾಗುಂಡಿಯ ಅಬ್ದುಲ್ ರಹೀಂ ಮತ್ತು ನಬಿಸಾ ದಂಪತಿಯ ಪುತ್ರಿ.
ಪಿಯುಸಿ ಫಲಿತಾಂಶ: ಕಾಟಿಪಳ್ಳದ ಆಯಿಶಾ ರಮ್ಝಿಯಾಗೆ 590 ಅಂಕ
ಕಾಟಿಪಳ್ಳ, ಎ.9: ನೂರುಲ್ ಹುದಾ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಹಸನಬ್ಬ ಮಾಸ್ತರ್ ಸಂಯುಕ್ತ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. ಶೇ.98 ಫಲಿತಾಂಶದಲ್ಲಿ ಎಂಟು ಡಿಸ್ಟಿಂಕ್ಷನ್, 25 ಪ್ರಥಮ ಶ್ರೇಣಿ ಹಾಗೂ 4 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಯಿಶಾ ರಮ್ಝಿಯಾ 590 (ಶೇ.98.33) ಅಂಕಗಳೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನಿಯಾಗಿದ್ದಾರೆ. ಈಕೆ ಕಾಟಿಪಳ್ಳ 9ನೆ ಬ್ಲಾಕ್ನ ನಿವಾಸಿ ಅಬ್ದುಲ್ ರಝಾಕ್-ಸಫಿಯಾ ದಂಪತಿಯ ಪುತ್ರಿ.
ಆತೂರಿನ ಆಯಿಶಾ ಹೆಣ್ಮಕ್ಕಳ ಪಪೂ ಕಾಲೇಜಿಗೆ ಶೇ.100 ಫಲಿತಾಂಶ
ಉಪ್ಪಿನಂಗಡಿ, ಎ.9: ಆತೂರಿನ ಆಯಿಶಾ ಹೆಣ್ಮಕ್ಕಳ ಪಪೂ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಕಲೆ ಮತ್ತು ವಾಣಿಜ್ಯ ವಿಭಾಗವು ಶೇ.100 ಫಲಿತಾಂಶ ದಾಖಲಿಸಿದೆ. ವಫಿಯಾ ಜಿ. 528 (ಶೇ.88) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಫಾತಿಮಾ ತಸ್ಕೀನ್ 578 (ಶೇ.96.33), ಸಬ್ರೀನ್ 562 (ಶೇ.93.66), ಸೆರಿನಾ 554 (ಶೇ.92.33),ನೆಬಿಸತುಲ್ ಮಿಶ್ರಿಯಾ 547 (ಶೇ.91.16), ಫಾತಿಮತ್ ಸಲ್ವಾ 528 (ಶೇ.88), ಫಾತಿಮತ್ ಝೀಯಾನಾ 517 (ಸೇ. 86.16), ತನ್ವೀರಾ 512 (ಶೇ.85.33), ಫಾತಿಮಾ 509 (ಶೇ.84.83) ಅಂಕ ಗಳಿಸಿದ್ದಾರೆ. 8 ಮಂದಿ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ದ್ವಿತೀಯ ಪಿಯುಸಿ ಫಲಿತಾಂಶ: ಫಾತಿಮಾ ರಿಲಾ ಅಲಡ್ಕಗೆ ಶೇ.97 ಅಂಕ
ಮಂಗಳೂರು, ಎ.9: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಅಡ್ಯಾರ್ ಬರಾಕ ಕಾಲೇಜಿನ ವಿದ್ಯಾರ್ಥಿನಿ ಫಾತಿಮ ರಿಲಾ ಅಲಡ್ಕ 582 (ಶೇ.97) ಅಂಕಗಳೊಂದಿಗೆ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ. ಈಕೆ ಪಾಣೆಮಂಗಳೂರು ಅಲಡ್ಕ ನಿವಾಸಿ ಅಬ್ದುಲ್ ರಝಾಕ್ ಮತ್ತು ಎಚ್.ಎಂ. ಫೌಝಿಯಾ ದಂಪತಿಯ ಪುತ್ರಿ.
ಪಿಯುಸಿ ಫಲಿತಾಂಶ: ಮುಹಮ್ಮದ್ ಇಸ್ಮಾಯೀಲ್ ಖದೀಸ್ಗೆ ಶೇ.99.17 ಅಂಕ
ಮಂಗಳೂರು, ಎ.9:ಧ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಯೆನೆಪೋಯ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಇಸ್ಮಾಯಿಲ್ ಖದೀಸ್ 595 (ಶೇ.99.17) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತೌಡುಗೋಳಿ ಸುನ್ನಂಗಳ ನಿವಾಸಿ ಖಾದರ್ ಹಾಜಿ-ಖದೀಜಾ ಪಿ.ಕೆ. ದಂಪತಿಯ ಪುತ್ರನಾಗಿರುವ ಈತ ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟಾಟಿಕ್ಸ್, ಬೇಸಿಕ್ ಮ್ಯಾಥ್ಸ್ನಲ್ಲಿ 100ರಲ್ಲಿ 100 ಅಂಕ ಗಳಿಸಿದ್ದಾರೆ.
ಕಣ್ಣೂರು ಮಹಿಳಾ ಪಿಯು ಕಾಲೇಜು: ಸತತ 6ನೇ ವರ್ಷ ಶೇ.100 ಫಲಿತಾಂಶ ದಾಖಲೆ
ಮಂಗಳೂರು, ಎ.9: ಕಣ್ಣೂರು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್(ರಿ)ನ ಅಧೀನದಲ್ಲಿ ಕಳೆದ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಣ್ಣೂರು ಮಹಿಳಾ ಪಿಯು ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಪರೀಕ್ಷೆಗೆ 23 ವಿದ್ಯಾರ್ಥಿನಿಗಳ ಪೈಕಿ 9 ಮಂದಿ ಉನ್ನತ ಶ್ರೇಣಿಯಲ್ಲಿ ಮತ್ತು 14 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಪೈಕಿ ಆಯಿಷತುಲ್ ಮುಬಶ್ಶಿರ 575 (ಶೇ.95.83), ಫಾತಿಮ ಶಹೀಮ 567 (ಶೇ.94.50), ಅವ್ವ ಶಾಝಿಮ 567 (ಶೇ.94.50), ಶಾಹಿನ ಬಾನು 566 (ಶೇ.94.33), ಝೈನಬ ಅಲ್ಸಿಯಾ 561 (ಶೇ.93.50), ಹಾಝರ ಮುನಾಝ 545 (ಶೇ.90.83) ಅಂಕಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
2nd PUC Result-2026 | ವಾಣಿಜ್ಯ ವಿಭಾಗದ ಅದಿತಿ ಎ.ಬಾಪು, ದಿಶಾ ರಾಜ್ಯಕ್ಕೆ ಪ್ರಥಮ
ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಲ್ಲಾ; ಕಲಾ ವಿಭಾಗದಲ್ಲಿ ಅರ್ಚನಾ, ಸಂಗೀತಾ, ಸೃಷ್ಟಿ ಪ್ರಥಮ
Kalaburagi | ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 598 ಅಂಕ ಪಡೆದ ಸೃಷ್ಟಿಗೆ ಸಚಿವ ಪ್ರಿಯಾಂಕ್ ಖರ್ಗೆಯಿಂದ ಸನ್ಮಾನ
ಕಲಬುರಗಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ 598 ಅಂಕಪಡೆದು ರಾಜ್ಯಕ್ಕೆ ಮೊದಲ ಟಾಪರ್ ಆಗಿ ಹೊರಹೊಮ್ಮಿರುವ ಕಲಬುರಗಿ ನಗರದ ಶ್ರೀಮಂತು ವೀರಮ್ಮ ಗಂಗಸಿರಿ ಮಹಿಳಾ ಪಿಯು ಕಾಲೇಜಿನ ಸೃಷ್ಠಿ ಮಲ್ಲಿನಾಥ ಪಾಟೀಲ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ್, ಕುಡಾ ಅಧ್ಯಕ್ಷ ಮಝಹರ್ ಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಎಎಸ್ ಎಫ್ ಸುಮಿತ ಪಾಟೀಲ್ ಸೇರಿದಂತೆ ಹಲವರಿದ್ದರು.
Kalaburagi | ಆಟೋ ಪಾರ್ಕ್ ಸ್ಥಾಪನೆ: ಸಚಿವರಿಂದ 2 ದಿನಗಳ ಕಾರ್ಯಾಗಾರ ಉದ್ಘಾಟನೆ
ಕಲಬುರಗಿ ಸಮಗ್ರ ಅಭಿವೃದ್ದಿಗೆ ನೀಲಿನಕ್ಷೆ : ಸಚಿವ ಪ್ರಿಯಾಂಕ್ ಖರ್ಗೆ
ಪಿಯುಸಿ ಫಲಿತಾಂಶ: ಕಾರ್ಕಳದ ಚೈತ್ರಿಕಾ- ವೈಷ್ಣವಿಗೆ ನಾಲ್ಕನೇ ರ್ಯಾಂಕ್
ಕಾರ್ಕಳ ಜ್ಞಾನಸುಧಾ ಕಾಲೇಜಿನ ಚೈತ್ರಿಕಾ ಚೌದರಿ ಹಾಗೂ ವೈಷ್ಣವಿ ಕುಲಕರ್ಣಿ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಚಿತ್ರದುರ್ಗದ ಕೃಷಿಕ ಲೋಕೇಶ್ ಹಾಗೂ ನಾಗರತ್ನ ದಂಪತಿ ಪುತ್ರಿಯಾಗಿರುವ ಚೈತ್ರಿಕಾ, ಹಾಸ್ಟೆಲ್ನಲ್ಲಿದ್ದುಕೊಂಡು ಶಿಸ್ತುಬದ್ಧ ಅಧ್ಯಯನದ ಮೂಲಕ ಈ ಸಾಧನೆ ಮಾಡಿದ್ದು, ಮುಂದೆ ವೈದ್ಯೆಯಾಗಿ ಸಮಾಜ ಸೇವೆ ಮಾಡುವ ಗುರಿ ಹೊಂದಿದ್ದಾರೆ. ಮಂಗಳೂರಿನ ನೀರಾವರಿ ಇಲಾಖೆಯ ಅಧಿಕಾರಿ ಪಿ. ಕುಲಕರ್ಣಿ ಹಾಗೂ ಬ್ಯಾಂಕ್ ಉದ್ಯೋಗಿ ಲತಾ ದಂಪತಿ ಪುತ್ರಿಯಾಗಿರುವ ವೈಷ್ಣವಿ, ಮುಂದೆ ಇಂಜಿನಿಯರ್ ಆಗುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
ಪಿಯುಸಿ ಫಲಿತಾಂಶ: 4ನೇ ರ್ಯಾಂಕ್ ವಿಜೇತೆ ಪ್ರಾರ್ಥನಾಗೆ ಇಂಜಿನಿಯರ್ ಆಗುವಾಸೆ
ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಪ್ರಾರ್ಥನಾ ಶೆಟ್ಟಿ ಈ ಬಾರಿಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸುವ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ನಿಟ್ಟೆ ಮೂಲದ ಹರೀಶ್ ಶೆಟ್ಟಿ ಹಾಗೂ ಪ್ರಮೀಳಾ ಶೆಟ್ಟಿ ದಂಪತಿ ಪುತ್ರಿ ಯಾಗಿರುವ ಇವರು, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯುವ ಗುರಿ ಹೊಂದಿದ್ದಾರೆ. ಕಠಿಣ ಪರಿಶ್ರಮ ಹಾಗೂ ಪೋಷಕರು- ಉಪನ್ಯಾಸಕರ ಮಾರ್ಗದರ್ಶನವೇ ಯಶಸ್ಸಿಗೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಪಿಯುಸಿ ಫಲಿತಾಂಶ: ಟ್ಯೂಷನ್ಗೆ ಹೋಗದೆ ಅಂಕಿತಾ ರಾಜ್ಯಕ್ಕೆ 4ನೇ ರ್ಯಾಂಕ್
ಕಾಪು ತಾಲೂಕಿನ ಅದಮಾರು ಪೂರ್ಣ ಪ್ರಜ್ಞಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ ಭಟ್ ಈ ಬಾರಿಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ಅದಮಾರಿನ ಅಡುಗೆ ಭಟ್ಟರಾದ ಎಲ್.ಶ್ರೀನಿವಾಸ ಭಟ್ ಹಾಗೂ ವಿಜಯ ಭಟ್ ದಂಪತಿ ಪುತ್ರಿಯಾಗಿರುವ ಇವರು, ಟ್ಯೂಷನ್ಗೆ ಹೋಗದೇ ಸ್ವಯಂ ಅಧ್ಯಯನದ ಮೂಲಕವೇ ಈ ಸಾಧನೆ ಮಾಡಿದ್ದು, ಮುಂದೆ ಅವರು ಸಿಎ ಮಾಡಲು ಆಸಕ್ತಿ ಹೊಂದಿದ್ದಾರೆ. ‘ಶಿಕ್ಷಕರು ಬೋಧಿಸಿದ ಪ್ರತಿಯೊಂದು ಪಾಠವನ್ನೂ ನಿಖರವಾಗಿ ಅಭ್ಯಾಸ ಮಾಡಿದ ಪರಿಣಾಮ ಈ ಸಾಧನೆ ಮಾಡಲು ಸಾಧ್ಯ ವಾಯಿತು. ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿರುವುದು ತುಂಬಾ ಸಹಕಾರಿಯಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ರಶ್ಮಿ ಉಡುಪಿ ಜಿಲ್ಲೆಗೆ ಟಾಪರ್
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಶ್ಮೀ ಪೈ 598 ಅಂಕ ಗಳಿಸುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸುವ ಮೂಲಕ ಸಾಧನೆಗೈದಿದ್ದಾರೆ. ಕೋಟೇಶ್ವರದ ಉದ್ಯಮಿ ರಾಜೇಶ ಪೈ ಮತ್ತು ಬಿದ್ಕಲ್ಕಟ್ಟೆ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಪೂಜಾ ಪೈ ದಂಪತಿಯ ಪುತ್ರಿಯಾಗಿರುವ ರಶ್ಮಿ ಪೈ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೋಟೇಶ್ವರದಲ್ಲಿ ಸರಕಾರಿ ಶಾಲೆಯಲ್ಲಿ ಪಡೆದಿದ್ದರು. ಇವರು ಮುಂದೆ ಬಿಎಸ್ಸಿ, ಎಂಎಸ್ಸಿ ಓದಿ ಉಪನ್ಯಾಸಕರಾಗುವ ಗುರಿ ಹೊಂದಿದ್ದಾರೆ. ಶಿಕ್ಷಕರು, ಮನೆಯವರ ಪ್ರೋತ್ಸಾಹ ದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಪ್ರತಿದಿನ ಓದು, ಕಠಿಣ ಪರಿಶ್ರಮ ಮಾಡಿದರೆ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪಿಯುಸಿ ಫಲಿತಾಂಶ| ರಾಜ್ಯಕ್ಕೆ 3ನೆ ರ್ಯಾಂಕ್ ಗಳಿಸಿದ ಪ್ರೇರಣಾಗೆ ಸಿಎ ಗುರಿ
ಉಡುಪಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಹಿರ್ಗಾನದ ಕ್ರಿಯೆಟಿವ್ ಕಾಲೇಜಿನ ವಿದ್ಯಾರ್ಥಿನಿ ಪ್ರೇರಣಾ ವಾಣಿಜ್ಯ ವಿಭಾಗದಲ್ಲಿ 598 ಅಂಕ ಗಳಿಸುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಕಾರವಾರ ಮೂಲದ ಎನ್ಪಿಸಿಎಲ್ ಇಂಜಿನಿಯರ್ ರಾಮಚಂದ್ರ ಹೆಗ್ಡೆ ಹಾಗೂ ಶಿಲ್ಪಗಿರಿ ಬಿ.ಎಂ. ದಂಪತಿ ಪುತ್ರಿ ಆಗಿರುವ ಇವರು, ಲೆಕ್ಕ ಪರಿಶೋಧಕ(ಚಾರ್ಟೆರ್ಡ್ ಅಕೌಂಟ್) ಆಗುವ ಗುರಿಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರು ಮುಂದಿನ ತಿಂಗಳು ವೃತ್ತಿಪರ ಕೋರ್ಸ್ಗೆ ಸಂಬಂಧಿಸಿದ ಪರೀಕ್ಷೆಯನ್ನು ಬರೆಯಲಿದ್ದಾರೆ. ಸಾಮೂಹಿಕ ಪ್ರಯತ್ನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಕಾಲೇಜಿನ ವೇಳಾಪಟ್ಟಿಯಿಂದ ನಿಯಮಿತ ಹಾಗೂ ವ್ಯವಸ್ಥಿತವಾಗಿ ಓದಲು ಸಹಾಯವಾಯಿತು. ನಾಲ್ಕು ಪೂರ್ವ ಬೋರ್ಡ್ ಪರೀಕ್ಷೆಗಳು ಹಾಗೂ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಿರುವುದರಿಂದ ಬಹಳ ಸಹಾಯವಾಗಿದೆ. ಕಡಿಮೆ ಸಮಯ ಓದಿದರೂ ಸಂಪೂರ್ಣ ಏಕಾಗ್ರತೆ ಮತ್ತು ಸಮರ್ಪಣೆಯಿಂದ ಓದಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಅವರು ತಿಳಿಸಿದರು.
ಹಟ್ಟಿ | ಚಿನ್ನ ಉತ್ಪಾದನಾ ಗುರಿಯಲ್ಲಿ ಶೇ.99.50ರಷ್ಟು ಸಾಧನೆ : ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ ಆಡಳಿತ
ಹಟ್ಟಿ: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು 2025–26ನೇ ಆರ್ಥಿಕ ವರ್ಷದ ಬಜೆಟ್ನಲ್ಲಿ ನಿಗದಿಪಡಿಸಿದ್ದ ಚಿನ್ನ ಉತ್ಪಾದನಾ ಗುರಿಯ 99.50 ಶೇಕಡಾ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಕಂಪನಿ ಆಡಳಿತವು ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ, ಕಾರ್ಮಿಕರು ಹಾಗೂ ಕಾರ್ಮಿಕ ಮುಖಂಡರಿಗೆ ಅಭಿನಂದನೆ ಸಲ್ಲಿಸಿದೆ. ಬಜೆಟ್ ಪ್ರಕಾರ ನಿಗದಿಪಡಿಸಿದ್ದ 1691.575 ಕೆಜಿ ಚಿನ್ನ ಉತ್ಪಾದನಾ ಗುರಿ ಸಾಧನೆಗೆ ಗಣಿ, ತಾಂತ್ರಿಕ, ಲೋಹ ಹಾಗೂ ಇತರೆ ಸಹಾಯಕ ವಿಭಾಗಗಳ ಸಮನ್ವಯ ಮತ್ತು ಪರಿಶ್ರಮ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಗಿದೆ. ಎಲ್ಲಾ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡಭಾವದಿಂದ ಕಾರ್ಯನಿರ್ವಹಿಸಿದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎಂದು ಆಡಳಿತ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಶ್ರಮ ಹಾಗೂ ಸಮನ್ವಯದಿಂದ ಇನ್ನಷ್ಟು ಉತ್ತಮ ಉತ್ಪಾದನಾ ಗುರಿ ಸಾಧಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಲಾಗಿದೆ. ಕಂಪನಿಯ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರ ಸಹಕಾರ ಶ್ಲಾಘನೀಯವಾಗಿದೆ ಎಂದು ತಿಳಿಸಲಾಗಿದೆ. 2024–25ನೇ ಸಾಲಿನಲ್ಲಿ ಕಂಪನಿ 436 ಕೋಟಿ ರೂ. ಲಾಭ ಗಳಿಸಿದ್ದು, ಅದರಲ್ಲಿ 97.25 ಕೋಟಿ ರೂ ಲಾಭಾಂಶವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ ನೀಡಲಾಗಿದೆ. ಆದರೆ, ಕಾರ್ಮಿಕರು ತಮ್ಮ ಪ್ರಾಣ ಪಣಕ್ಕಿಟ್ಟು ಉತ್ಪಾದನಾ ಗುರಿ ಸಾಧಿಸಿರುವ ನಡುವೆಯೂ, ಶುದ್ಧ ಕುಡಿಯುವ ನೀರು, ಉತ್ತಮ ವೈದ್ಯಕೀಯ ಸೌಲಭ್ಯ, ಕ್ಯಾಂಟೀನ್ನಲ್ಲಿ ಪೌಷ್ಟಿಕ ಆಹಾರ, ಗಣಿಯ ಸುರಕ್ಷತೆ ಹಾಗೂ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಅನ್ಫಿಟ್ ಯೋಜನೆ ಜಾರಿಗೆ ವಿಳಂಬವಾಗುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾರ್ಮಿಕರೊಬ್ಬರು ಆಗ್ರಹಿಸಿದ್ದಾರೆ.
ಮಂಗಳೂರು ವಿವಿ ಅಂತರ ಕಾಲೇಜು ಮಹಿಳಾ ಕಬಡ್ಡಿ ಪ್ರಾರಂಭ; ಆತಿಥೇಯ ಪಿಪಿಸಿ, ವಿವಿ ಕಾಲೇಜು ಕ್ವಾರ್ಟರ್ ಫೈನಲಿಗೆ
ಉಡುಪಿ, ಎ.9: ಆತಿಥೇಯ ಪೂರ್ಣಪ್ರಜ್ಞ ಕಾಲೇಜು ತಂಡ, ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ, ಸರಕಾರಿ ಪದವಿ ಪೂರ್ವ ಕಾಲೇಜು ಪುತ್ತೂರು ಹಾಗೂ ವಿವೇಕಾನಂದ ಕಾಲೇಜು ಪುತ್ತೂರು ತಂಡಗಳೊಂದಿಗೆ ಇಂದಿಲ್ಲಿ ಪ್ರಾರಂಭಗೊಂಡ ಮಂಗಳೂರು ವಿವಿ ಅಂತರ ಕಾಲೇಜು ಮಹಿಳಾ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿವೆ. ಈಗಾಗಲೇ ಕ್ವಾರ್ಟರ್ ಪೈನಲ್ ಪ್ರವೇಶಿಸಿರುವ ಈ ನಾಲ್ಕು ತಂಡಗಳು ಕಳೆದ ವರ್ಷದಲ್ಲಿ ಸೆಮಿಪೈನಲ್ಗೆ ತೇರ್ಗಡೆಗೊಂಡಿದ್ದ ಎಸ್ಡಿಎಂ ಕಾಲೇಜು ಉಜಿರೆ, ಆಳ್ವಾಸ್ ಕಾಲೇಜು ಮೂಡಬಿದ್ರೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು, ಡಾ ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ತಂಡಗಳ ವಿರುದ್ಧ ನಾಳೆ ಕ್ವಾರ್ಟರ್ ಫೈನಲ್ ನಲ್ಲಿ ಸೆಣಸಲಿವೆ. ಮಂಗಳೂರು ವಿವಿಗೆ ಸೇರಿದ ಮಂಗಳೂರು ಹಾಗೂ ಉಡುಪಿ ವಲಯದ 29 ಮಹಿಳಾ ಕಬಡ್ಡಿ ತಂಡಗಳು ಎರಡು ದಿನಗಳ ಟೂರ್ನಿಯಲ್ಲಿ ಪಾಲ್ಗೊಂಡಿವೆ. ಉದ್ಘಾಟನೆ: ಮಂಗಳೂರು ವಿವಿ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜು(ಸ್ವಾಯತ್ತಗಳ) ಜಂಟಿ ಆಶ್ರಯದಲ್ಲಿ ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಮಹಿಳಾ ಕಬಡ್ಡಿ ಟೂರ್ನಿಯನ್ನು ಉಡುಪಿ ಶ್ರೀ ಅದಮಾರು ಮಠಾಧೀಶರೂ, ಬೆಂಗಳೂರಿನ ಯುಎಸ್ಎಎಂಇಸಿ ಅಧ್ಯಕ್ಷರೂ ಆಗಿರುವ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಉಡುಪಿ ಶ್ರೀಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ ದರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ, ಅದಮಾರು ಮಠ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ಪಿ.ಭಟ್, ಪೂರ್ಣ ಪ್ರಜ್ಞ ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ಕೋಶಾಧಿಕಾರಿ ಸಿ.ಎ. ಪ್ರಶಾಂತ್ ಹೊಳ್ಳ, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಮಂಗಳೂರು ವಿವಿ ವೀಕ್ಷಕರಾದ ಡಾ.ರಮೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು ಎಲ್ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸುಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಟಿ. ಎಸ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಧು ಹೆಗಡೆ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಮುರಳಿ ಕಾರ್ಯಕ್ರಮ ನಿರೂಪಿಸಿ ವಾಣಿಜ್ಯಶಾಸ್ತ್ರ ವಿಭಾಗದ ಜಯಲಕ್ಷ್ಮಿ ವಂದಿಸಿದರು.
ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ: ಬೆಂಜಮಿನ್ ನೆತನ್ಯಾಹು
ಜೆರುಸಲೇಂ,ಎ.9: ಇರಾನ್ ಜೊತೆ ಅಮೆರಿಕ ಏರ್ಪಡಿಸಿಕೊಂಡಿರುವ ಕದನವಿರಾಮವು ಲೆಬನಾನ್ಗೆ ಅನ್ವಯಿಸುವುದಿಲ್ಲ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ಇರಾನ್ ಬೆಂಬಲಿತ ಹಿಝ್ಬುಲ್ಲಾ ಹೋರಾಟಗಾರರ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇರಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ತಿಳಿಸಿದ್ದಾರೆ. ಇರಾನ್ ಜೊತೆ ಅಮೆರಿಕ ಕದನವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್ ಸೇನೆಯು ಲೆಬನಾನ್ನಲ್ಲಿ ಭೀಕರ ವಾಯುದಾಳಿಗಳನ್ನು ಮುಂದುವರಿಸಿದ ಮರುದಿನವೇ ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ. ಹಿಝ್ಬುಲ್ಲಾ ವಿರುದ್ಧ ಶಕ್ತಿ, ನಿಖರತೆ ಹಾಗೂ ದೃಢನಿರ್ಧಾರದೊಂದಿಗೆ ದಾಳಿಗಳನ್ನು ನಾವು ಮುಂದುವರಿಸಲಿದ್ದೇವೆ ಎಂದು ನೆತನ್ಯಾಹು, ತನ್ನ ‘ಎಕ್ಸ್’ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ‘‘ನಮ್ಮ ಸಂದೇಶ ಸ್ಪಷ್ಟವಾಗಿದೆ. ಇಸ್ರೇಲಿ ನಾಗರಿಕರ ವಿರುದ್ಧ ಯಾರು ಕೃತ್ಯವೆಸಗುತ್ತಾರೋ ಅವರ ಮೇಲೆ ನಾವು ದಾಳಿ ನಡೆಸುತ್ತೇವೆ. ಉತ್ತರ ಇಸ್ರೇಲ್ನ ನಿವಾಸಿಗಳ ಭದ್ರತೆಯನ್ನು ಮರುಸ್ಥಾಪಿಸುವ ತನಕ ಅಗತ್ಯವಿರುವಲೆಲ್ಲಾ ನಾವು ಹಿಝ್ಬುಲ್ಲಾ ವಿರುದ್ಧ ದಾಳಿಯನ್ನು ಮುಂದುವರಿಸಲಿದ್ದೇವೆ’’ ಎಂದವರು ಹೇಳಿದ್ದಾರೆ. ಇಸ್ರೇಲ್ ಸೇನೆಯಿಂದ ಹಿಝ್ಬಲ್ಲಾ ಮುಖಂಡನ ಹತ್ಯೆ ಹಿಝ್ಬಲ್ಲಾ ಸಂಘಟನೆಯ ಮಹಾ ಕಾರ್ಯದರ್ಶಿ ನಯೀಮ್ ಖಾಸಿಮ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಸೋದರ ಪುತ್ರ ಅಲಿ ಯೂಸುಫ್ ಹಾರ್ಷಿ ಅವರನ್ನು ಹತ್ಯೆಗೈಯಲಾಗಿದೆಯೆಂದು ಇಸ್ರೇಲ್ ಸೇನೆ ಬುಧವಾರ ತಿಳಿಸಿದೆ. ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ನಡೆಸಿದ ವಾಯುದಾಳಿಯಲ್ಲಿ ಯೂಸುಫ್ ಹಾರ್ಷಿ ಮೃತಪಟ್ಟಿದ್ದಾರೆಂದು ಹೇಳಿದೆ. ರಾಜಧಾನಿ ಲೆಬನಾನ್ ಸೇರಿದಂತೆ ಬುಧವಾರ ಬೈರೂತ್ನಾದ್ಯಂತ ಇಸ್ರೇಲ್ ನಡೆಸಿದ ವಾಯುದಾಳಿಗಳಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಕನಿಷ್ಠ 890 ಮಂದಿ ಗಾಯಗೊಂಡಿದ್ದರು. ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಲೆಬನಾನ್ ಗುರುವಾರ ಶೋಕಾಚರಣೆ ನಡೆಸಿದೆ. ಇಸ್ರೇಲ್ ಕದನವಿರಾಮ ಉಲ್ಲಂಘನೆಗೆ ಪ್ರತ್ಯುತ್ತರವಾಗಿ ತಾನು ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿಗಳನ್ನು ನಡೆಸಿರುವುದಾಗಿ ಹಿಝ್ಬುಲ್ಲಾ ತಿಳಿಸಿದೆ.
ದ್ವಿತೀಯ ಪಿಯುಸಿ ಫಲಿತಾಂಶ : 31ನೇ ಸ್ಥಾನಕ್ಕೆ ಕುಸಿದ ರಾಯಚೂರು
ಪ್ರಾಚಾರ್ಯರ, ಉಪನ್ಯಾಸಕರ ಖಾಲಿ ಹುದ್ದೆಯಿಂದ ಹಿನ್ನಡೆ
ತಕ್ಷಣವೇ ಹಾರ್ಮುಝ್ ಜಲಸಂಧಿ ತೆರೆಯುವಂತೆ ಇರಾನ್ಗೆ ಅಮೆರಿಕ ಆಗ್ರಹ
ವಾಶಿಂಗ್ಟನ್,ಎ.9: ಕದನವಿರಾಮದ ಹೊರತಾಗಿಯೂ ಮುಚ್ಚಲ್ಪಟ್ಟಿರುವ ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು ಇರಾನ್ ತಕ್ಷಣ, ತ್ವರಿತವಾಗಿ ಮತ್ತು ಸುರಕ್ಷಿತವಾಗಿ ತೆರೆಯಬೇಕೆಂದು ಅಮೆರಿಕವು ಬುಧವಾರ ಇರಾನ್ಗೆ ಆಗ್ರಹಿಸಿದೆ. ಹಾರ್ಮುಝ್ ಜಲಸಂಧಿಯನ್ನು ಯಾವುದೇ ರೀತಿಯಲ್ಲೂ ಮುಚ್ಚುಗಡೆಗೊಳಿಸಿದರೂ, ಅದು ಸಂಪೂರ್ಣವಾಗಿ ಅಸ್ವೀಕಾರಾರ್ಹವಾದುದಾಗಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೆವಿಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕದನವಿರಾಮದ ಪ್ರಕಾರ ಇರಾನ್ ಟೋಲ್ ಶುಲ್ಕವನ್ನು ಸಂಗ್ರಹಿಸದಿರುವುದು ಸೇರಿದಂತೆ ಹಾರ್ಮುಝ್ ಜಲಸಂಧಿಯನ್ನು ಮುಕ್ತ ಸಂಚಾರಕ್ಕೆ ಮರುತೆರೆಯಬೇಕಾಗುತ್ತದೆ ಎಂದು ಲೆವಿಟ್ ಹೇಳಿದ್ದಾರೆ. ಕದನವಿರಾಮ ಒಪ್ಪಂದಕ್ಕೆ ಬಾರದೇ ಇದ್ದಲ್ಲಿ ಇರಾನ್ನ ಇಡೀ ನಾಗರಿಕತೆಯನ್ನು ನಾಶಪಡಿಸುವುದಾಗಿ ಟ್ರಂಪ್ ಬೆದರಿಕೆಯೊಡ್ಡಿರುವುದನ್ನು ಸಮರ್ಥಿಸಿಕೊಂಡ ಅವರು, ಈ ಬಲವಾದ ಬೆದರಿಕೆಯು ಫಲಿತಾಂಶವನ್ನು ನೀಡಿದೆ ಎಂದು ಪ್ರತಿಪಾದಿಸಿದರು. ‘‘ಅಮೆರಿಕದ ಅಧ್ಯಕ್ಷರ ಅತ್ಯಂತ ಪ್ರಬಲವಾದ ಬೆದರಿಕೆಯಿಂದಾಗಿ ಇರಾನ್ ಆಡಳಿತವು ಮಂಡಿಯೂರುವಂತಾಯಿತು ಹಾಗೂ ಕದನವಿರಾಮವನ್ನು ಕೋರಿತು ಮತ್ತು ಹಾರ್ಮುಝ್ ಜಲಸಂಧಿಯನ್ನು ಮರಳಿ ತೆರೆಯಲು ಒಪ್ಪಿಕೊಂಡಿತ್ತು’’ ಎಂದು ಲೆವಿಟ್ ಹೇಳಿದರು.
ಲೆಬನಾನ್ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್| ಬೈರೂತ್ನಲ್ಲಿ ಮೃತರ ಸಂಖ್ಯೆ 200ಕ್ಕೆ ಏರಿಕೆ
ಬೈರೂತ್ ಎ.9: ಲೆಬನಾನ್ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ ಇರಾನ್ ಜೊತೆ ಅಮೆರಿಕ ಏರ್ಪಡಿಸಿಕೊಂಡಿರುವ ಎರಡು ವಾರಗಳ ಕದನವಿರಾಮ ಭವಿಷ್ಯದ ಬಗ್ಗೆ ಆತಂಕ ಆವರಿಸಿದೆ. ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ನಿರ್ಬಂಧವನ್ನು ಮುಂದುವರಿಸಿರುವುದರಿಂದ ಶುಕ್ರವಾರ ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಶಾಂತಿಮಾತುಕತೆ ಸಫಲವಾಗುವ ಬಗ್ಗೆ ಸಂದೇಹಗಳು ಉದ್ಬವಿಸಿರುವುದಾಗಿ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ತಿಳಿಸಿದ್ದಾರೆ. ಇರಾನ್ ಜೊತೆ ಕದನವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಕೆಲವೇ ತಾಸುಗಳ ಬಳಿಕ ಇಸ್ರೇಲ್, ಲೆಬನಾನ್ನ ವಿವಿಧೆಡೆ ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿದ್ದು , ರಾಜಧಾನಿ ಬೈರೂತ್ನಲ್ಲಿಯೇ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಿಝ್ಬುಲ್ಲಾ ಭದ್ರಕೋಟೆಯಾಗಿರುವ ಬೈರೂತ್ ನಗರ ಸಮೀಪದ ಗ್ರಾಮಾಂತರ ಪ್ರದೇಶಗಳ ಮೇಲೂ ಇಸ್ರೇಲ್ ವ್ಯಾಪಕ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ. ಲೆಬನಾನ್ ಮೇಲಿನ ದಾಲಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರೆಸ್ ಹೇಳಿಕೆಯೊಂದರಲ್ಲಿ ಬಲವಾಗಿ ಖಂಡಿಸಿದ್ದಾರೆ. ಲೆಬನಾನ್ನಲ್ಲಿ ಪ್ರಸಕ್ತ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಕದನವಿರಾಮವನ್ನು ಅಪಾಯಕ್ಕೆ ದೂಡಿದೆಯೆಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಇರಾನ್ ಜೊತೆ ಏರ್ಪಡಿಸಲಾಗಿರುವ ಕದನವಿರಾಮದಲ್ಲಿ ಲೆಬನಾನ್ ಒಳಗೊಂಡಿಲ್ಲವೆಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೊನ್ ತಿಳಿಸಿದ್ದಾರೆ. ಇರಾನ್ ಬೆಂಬಲಿತ ಹಿಜ್ಭುಲ್ಲಾ ಬಂಡುಕೋರರ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ಇಸ್ರೇಲ್ ಸತತವಾಗಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೆ 2 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 5 ಸಾವಿರ ಮಂದಿ ಗಾಯಗೊಂಡಿದ್ದಾರೆ. ಗುರುವಾರವೂ ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಸೇನೆ ದಾಳಿಗಳನ್ನು ನಡೆಸಿದ್ದು, ಟೈರೆ ನಗರದ ಪಕ್ಕದ ಗ್ರಾಮವಾದ ಅಬಾಸ್ಸಿಯೆಹ್ನಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ.
2nd PUC Result-2026| ಉಡುಪಿ ಜಿಲ್ಲೆಯ 25 ಕಾಲೇಜುಗಳಿಗೆ ಶೇ.100 ಫಲಿತಾಂಶ
ಉಡುಪಿ, ಎ.8: ಎಂಟು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಜಿಲ್ಲೆಯ ಒಟ್ಟು 25 ಕಾಲೇಜುಗಳು ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಗೊಳ್ಳುವ ಮೂಲಕ ಶೇ.100ರ ಫಲಿತಾಂಶವನ್ನು ದಾಖಲಿಸಿವೆ ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ. ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕರ್ಣೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರೂರು ಬ್ರಹ್ಮಾವರ, ಸರಕಾರಿ ಪಿಯು ಕಾಲೇಜು ಮುದರಂಗಡಿ, ಸರಕಾರಿ ಪಿಯು ಕಾಲೇಜು ಪಲಿಮಾರು, ಸರಕಾರಿ ಪದವಿ ಪೂರ್ವ ಕಾಲೇಜು ಪಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಿಯಾರು, ಸರಕಾರಿ ಪ.ಪೂ.ಕಾಲೇಜು ವಂಡ್ಸೆ ಹಾಗೂ ಸರಕಾರಿ ಪ.ಪೂ.ಕಾಲೇಜು ತೆಕ್ಕಟ್ಟೆ ಶೇ.100 ಫಲಿತಾಂಶ ದಾಖಲಿಸಿರುವ ಸರಕಾರಿ ವಿದ್ಯಾಸಂಸ್ಥೆಗಳಾಗಿವೆ. ಇನ್ನುಳಿದಂತೆ ಶೇ.100 ಫಲಿತಾಂಶ ದಾಖಲಿಸಿರುವ ಜಿಲ್ಲೆಯ 17 ಅನುದಾನಿತ ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ವಿವರ ಹೀಗಿದೆ. ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಕಟಪಾಡಿ, ಎಸ್.ಆರ್. ಪದವಿ ಪೂರ್ವ ಕಾಲೇಜು ಹೆಬ್ರಿ, ಸೈಂಟ್ ಜಾನ್ಸ್ ಪಿಯು ಕಾಲೇಜು ಶಂಕರಪುರ, ಕ್ರೈಸ್ಟ್ ಕಿಂಗ್ ಪ.ಪೂ.ಕಾಲೇಜು ಕಾರ್ಕಳ, ಎಸ್.ಎನ್.ವಿ. ಪದವಿ ಪೂರ್ವ ಕಾಲೇಜು ಕಾರ್ಕಳ, ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಕಾರ್ಕಳ, ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ, ತೌಹೀದ್ ಪದವಿ ಪೂರ್ವ ಕಾಲೇಜು ಗಂಗೊಳ್ಳಿ. ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣ, ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ, ಗುರುಕುಲ ಪದವಿ ಪೂರ್ವ ಕಾಲೇಜು ಕೋಟೇಶ್ವರ, ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ವಿದ್ಯೋದಯ ಪ.ಪೂ.ಕಾಲೇಜು ಉಡುಪಿ, ತ್ರಿಷಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ, ಜ್ಞಾನಸುಧಾ ಪದವಿ ಪರ್ವ ಕಾಲೇಜು ಉಡುಪಿ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮಣಿಪಾಲ. ಹೆಜಮಾಡಿಗೆ ಕನಿಷ್ಠ ಫಲಿತಾಂಶ: ಜಿಲ್ಲೆಯಲ್ಲಿ ಯಾವುದೇ ಸಂಸ್ಥೆ ಶೂನ್ಯ ಫಲಿತಾಂಶ ದಾಖಲಿಸಿಲ್ಲ. ಆದರೆ ಹೆಜಮಾಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಶೇ.33.33 ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಅತಿ ಕನಿಷ್ಠ ಫಲಿತಾಂಶ ದಾಖಲಿಸಿದೆ. ಇಲ್ಲಿ ಪರೀಕ್ಷೆಗೆ ಕುಳಿತ 9 ಮಂದಿ ವಿದ್ಯಾರ್ಥಿಗಳಲ್ಲಿ ಮೂವರು ಮಾತ್ರ ತೇರ್ಗಡೆ ಗೊಂಡಿದ್ದು ಆರು ಮಂದಿ ಅನುತ್ತೀರ್ಣ ಗೊಂಡಿದ್ದಾರೆ. ಖಾಸಗಿ ಶಾಲೆಗಳ ಪೈಕಿ ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಪದವಿ ಪೂರ್ವ ಕಾಲೇಜು ಶೇ.53.85 ಫಲಿತಾಂಶ ದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಪರೀಕ್ಷೆ ಬರೆದ 13 ಮಂದಿಯಲ್ಲಿ 7 ಮಂದಿ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಈ ಬಾರಿ ಪರೀಕ್ಷೆ ಬರೆದ 16,626 ಮಂದಿ ವಿದ್ಯಾರ್ಥಿಗಳ ಪೈಕಿ 16,038 ಮಂದಿ ತೇರ್ಗಡೆಗೊಂಡಿದ್ದು, 587 ಮಂದಿ ಅನುತ್ತೀರ್ಣರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗಳ ಸಾಧನೆ ಖಾಸಗಿ ಶಾಲೆಗಳ ಪೈಕಿ ಕಾರ್ಕಳದ ಕ್ರಿಯೆಟೀವ್ ಪದವಿ ಪೂರ್ವ ಕಾಲೇಜಿನಿಂದ ಒಟ್ಟು 951 ಮಂದಿ ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆಗೊಳ್ಳುವ ಮೂಲಕ ಶೇ.100 ಫಲಿತಾಂಶ ಪಡೆದಿದೆ. ಹಾಗೆಯೇ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜಿ ನಿಂದ ಪರೀಕ್ಷೆಗೆ ಕುಳಿತ ಎಲ್ಲಾ 649 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.100 ಫಲಿತಾಂಶ ಪಡೆದಿದೆ. ಅಲ್ಲದೇ ಕಾಲೇಜಿನಿಂದ ಮೂವರು ರಾಜ್ಯದ ಟಾಪರ್ಗಳಲ್ಲಿ ಸ್ಥಾನ ಪೆದಿದ್ದಾರೆ. ಅದೇ ರೀತಿ ಕಾರ್ಕಳದ ಜ್ಞಾನಸುಧಾ ಕಾಲೇಜಿನಿಂದ ಪರೀಕ್ಷೆ ಬರೆದ 575 ಮಂದಿಯೂ ಉತ್ತೀರ್ಣರಾಗಿದ್ದರೆ, ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನಿಂದ ಪರೀಕ್ಷೆ ಬರೆದ ಎಲ್ಲಾ 538 ಮಂದಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನಲ್ಲಿ 568 ಮಂದಿ ಪರೀಕ್ಷೆ ಬರೆದಿದ್ದು 566 ಮಂದಿ ತೇರ್ಗಡೆಗೊಂಡು ಶೇ.99.65 ಫಲಿತಾಂಶ ಪಡೆದಿದೆ. ಉಡುಪಿಯ ವಿದ್ಯೋದಯ ಪಿಯು ಕಾಲೇಜಿನಲ್ಲಿ 368 ಮಂದಿ ವಿದ್ಯಾರ್ಥಿ ಗಳೆಲ್ಲರೂ ತೇರ್ಗಡೆಗೊಂಡಿದ್ದಾರೆ. ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆದ 689 ಮಂದಿಯ ಪೈಕಿ 686 ಮಂದಿ (ಶೇ.99.56) ತೇರ್ಗಡೆಗೊಂಡಿದ್ದಾರೆ. ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನಲ್ಲಿ 596 ಮಂದಿ ಪರೀಕ್ಷೆ ಬರೆದವರ ಪೈಕಿ 548 ಮಂದಿ (ಶೇ.91.96), ಉಡುಪಿಯ ಎಂಜಿಎಂ ಪ.ಪೂ. ಕಾಲೇಜಿನಲ್ಲಿ 591 ಮಂದಿ ವಿದ್ಯಾರ್ಥಿಗಳ ಪೈಕಿ 584 ಮಂದಿ (ಶೇ.98.82) ತೇರ್ಗಡೆಗೊಂಡಿದ್ದಾರೆ.
ಕೋಲ್ಕತಾ, ಎ. 9: ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವುದಕ್ಕಾಗಿ ಬಿಜೆಪಿಯು ಮತದಾರರ ಪಟ್ಟಿಗಳಿಂದ 90 ಲಕ್ಷಕ್ಕೂ ಅಧಿಕ ಜನರ ಹೆಸರುಗಳನ್ನು ಅಳಿಸಿ ಹಾಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ. ಇದರ ಹೊರತಾಗಿಯೂ, ಮುಂಬರುವ ಚುನಾವಣೆಯಲ್ಲಿ ತನ್ನ ಪಕ್ಷವೇ ಗೆಲ್ಲುವುದು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯೂ ಆಗಿರುವ ಅವರು ಹೇಳಿದರು. ಉತ್ತರ 24 ಪರಗಣ ಜಿಲ್ಲೆಯ ಮಿನಖಾನ್ನಲ್ಲಿ ನಡೆದ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ ಟಿಎಎಂಸಿ ಮುಖ್ಯಸ್ಥೆ, ಮತದಾರರ ಪಟ್ಟಿಗಳಿಂದ ತೆಗೆಯಲಾಗಿರುವ ಎಲ್ಲರನ್ನೂ ಮತ್ತೆ ಸೇರ್ಪಡೆಗೊಳಿಸಬೇಕು ಎಂದು ಕೋರಿ ತನ್ನ ಪಕ್ಷವು ನ್ಯಾಯಾಲಯಕ್ಕೆ ಹೋಗುವುದು ಎಂದು ಹೇಳಿದರು. ‘‘ಬಂಗಾಳದಲ್ಲಿ ಅಧಿಕಾರಕ್ಕೆ ಬರುವುದಕ್ಕಾಗಿ 90 ಲಕ್ಷಕ್ಕೂ ಅಧಿಕ ಮತದಾರರನ್ನು ನೀವು ಮತದಾರರ ಪಟ್ಟಿಯಿಂದ ತೆಗೆದಿದ್ದೀರಿ. ಆದರೆ ನಾವೇ ಗೆಲ್ಲುತ್ತೇವೆ’’ ಎಂದು ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವಿಷಯದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಹೇಳಿದರು. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಮುಕ್ತಾಯದ ಬಳಿಕ, ಮತದಾರರ ಪಟ್ಟಿಯಿಂದ ಸುಮಾರು 91 ಲಕ್ಷ ಹೆಸರುಗಳನ್ನು ತೆಗೆದ ಬಳಿಕ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ. ‘‘ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಬಂಗಾಳಿ ಭಾಷೆಯನ್ನು ಮಾತನಾಡುವುದಕ್ಕಾಗಿ ಜನರಿಗೆ ಹಿಂಸೆ ನೀಡಲಾಗುತ್ತಿದೆ. ಬಿಜೆಪಿಯು ಬಂಗಾಳಿಯನ್ನು ವಿದೇಶಿ ಭಾಷೆ ಎಂದು ಹೇಳುತ್ತದೆ ಹಾಗೂ ಬಂಗಾಳಿ ಮಾತನಾಡುವವರನ್ನು ನುಸುಳುಕೋರರು ಎಂದು ಬಣ್ಣಿಸುತ್ತದೆ’’ ಎಂದು ಟಿಎಂಸಿ ಮುಖ್ಯಸ್ಥೆ ಹೇಳಿದರು.
ಪಾಲಕ್ಕಾಡ್,ಎ.9: ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರಿಗೆ ಹಣ ಹಂಚಿದ ಆರೋಪದಲ್ಲಿ ಕೇರಳದ ಪಾಲಕ್ಕಾಡ್ನ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ವಿರುದ್ಧ ಚುನಾವಣಾ ಆಯೋಗವು (ಇಸಿ) ತನಿಖೆಯನ್ನು ಆರಂಭಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಆರೋಪವನ್ನು ತಿರಸ್ಕರಿಸಿರುವ ಸುರೇಂದ್ರನ್,ಇದು ತನ್ನ ವಿರುದ್ಧ ಪಿತೂರಿ ಎಂದು ಬಣ್ಣಿಸಿದ್ದಾರೆ. ಆಪಾದಿತ ಘಟನೆಯು ಬುಧವಾರ ವರದಿಯಾಗಿತ್ತು ಎಂದು ಕೇರಳದ ಮುಖ್ಯ ಚುನಾವಣಾಧಿಕಾರಿ ರತನ್ ಯು.ಕೇಳ್ಕರ್ ತಿಳಿಸಿದರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಗುರುವಾರ ಒಂದೇ ಹಂತದಲ್ಲಿ ನಡೆದಿದ್ದು,ಮೇ 4ರಂದು ಮತಎಣಿಕೆ ನಡೆಯಲಿದೆ. ಪಾಲಕ್ಕಾಡ್ನ ಕನ್ನಾಡಿ ಪಂಚಾಯತ್ ವ್ಯಾಪ್ತಿಯ ತೆರುವಕ್ಕುರಿಷಿ ಎಂಬಲ್ಲಿ ವ್ಯಕ್ತಿಯೋರ್ವ ವೃದ್ಧ ಮಹಿಳೆಗೆ ಏನನ್ನೋ ನೀಡಿದ್ದನ್ನು ಮತ್ತು ನಂತರ ಇನ್ನೊಂದು ಗುಂಪು ಮಹಿಳೆಯ ಬಳಿ ತೆರಳಿ ಆಕೆಯ ಮುಷ್ಟಿಯನ್ನು ಬಿಚ್ಚಿಸಿದಾಗ 500 ರೂ.ನೋಟುಗಳ ಕಂತೆ ಇದ್ದಿದ್ದನ್ನು ಸಾಮಾಜಿಕ ಮಾಧ್ಯಮಗಳು ಮತ್ತು ಟಿವಿ ವಾಹಿನಿಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳು ತೋರಿಸಿವೆ. ಸುರೇಂದ್ರನ್ ಅವರ ಪ್ರಚಾರ ತಂಡದ ವ್ಯಕ್ತಿಯೋರ್ವ ಮಹಿಳೆಗೆ ಹಣ ನೀಡಿದ್ದಾಗಿ ಆರೋಪಿಸಲಾಗಿದೆ. ಯಾವುದೇ ಹಣ ಸ್ವೀಕರಿಸಿದ್ದನ್ನು ಮಹಿಳೆ ನಿರಾಕರಿಸಿದ್ದರೂ, ಔಷಧಿಗಳನ್ನು ಖರೀದಿಸಲು ತಾನು 5,000 ರೂ.ಗಳನ್ನು ಕೇಳಿದ್ದನ್ನು ಒಪ್ಪಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ವರದಿಗಳ ಬಳಿಕ ಜಿಲ್ಲಾ ಚುನಾವಣಾ ಇಲಾಖೆಯು ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ರವಾನಿಸಿ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿರುವ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಆಯೋಗವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಜಿಲ್ಲಾಧಿಕಾರಿಗಳಿಂದ ವರದಿ ಸ್ವೀಕರಿಸಿದ ಬಳಿಕ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಕೇಳ್ಕರ್ ತಿಳಿಸಿದರು. ಆರೋಪಗಳು ನಿರಾಧಾರವಾಗಿವೆ. ತಾನು ಹತ್ತನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು,ನಿಯಮಗಳು ತನಗೆ ಚೆನ್ನಾಗಿ ತಿಳಿದಿವೆ ಎಂದು ಹೇಳಿದ ಸುರೇಂದ್ರನ್,ಈ ಬಗ್ಗೆ ತಾನೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು. ಆಪಾದಿತ ಘಟನೆಯ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ ಅವರು,ಇದು ಅಪರಾಧವಾಗಿದ್ದು,ಚುನಾವಣಾ ನಿಯಮಗಳ ಉಲ್ಲಂಘನೆಗಾಗಿ ಅಭ್ಯರ್ಥಿಯನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಿಕ್ಕಜಾಜೂರಿನ ಪೊಲೀಸ್ ಸಿಬ್ಬಂದಿಗೆ ಉರಿಬಿಸಿಲಿನಲ್ಲಿ ಸಿಲ್ಲುವ ಶಿಕ್ಷೆ ನೀಡಿದ ಘಟನೆ ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರಿನಲ್ಲಿ ನಡೆದಿದೆ. ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ ನೇತ್ರಾವತಿ ಎಂಬುವವರು ತಮ್ಮ ಠಾಣೆಯ 20 ಸಿಬ್ಬಂದಿಗೆ ಈ ಶಿಕ್ಷೆ ನೀಡಿದ್ದಾರೆ. ತಮ್ಮ ಮಾತು ಕೇಳುತ್ತಿಲ್ಲವೆಂದು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಉನ್ನತ ಮಟ್ಟದ ತನಿಖೆ ನಡೆಸಿದ್ದು ಪಿಎಸ್ಐ ವರ್ಗಾವಣೆಯಾಗಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ| 6 ಗ್ಯಾರಂಟಿಗಳನ್ನು ಘೋಷಿಸಿದ ಪ್ರಧಾನಿ ಮೋದಿ
ಕೋಲ್ಕತಾ,ಎ.9: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮುಂಬರುವ ಪ.ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯದ ಜನರಿಗೆ ಆರು ಗ್ಯಾರಂಟಿಗಳನ್ನು ಘೋಷಿಸಿದರು. ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರವು ದುರಾಡಳಿತ ನಡೆಸುತ್ತಿದೆ ಎಂದು ಟೀಕಿಸಿದ ಅವರು, ಟಿಎಂಸಿಯನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಮತದಾರರನ್ನು ಆಗ್ರಹಿಸಿದರು. ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರ ಭದ್ರಕೋಟೆ ಹಾಲ್ದಿಯಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಆಡಳಿತಾರೂಢ ರಾಜ್ಯ ಸರಕಾರವು ಬಂಗಾಳವನ್ನು ಹಿಂದಕ್ಕೆ ಒಯ್ಯುತ್ತಿದೆ. ಬಿಜೆಪಿ ಸರಕಾರವು ಟಿಎಂಸಿಯ ಭಯದ ಆಡಳಿತದ ಬದಲಿಗೆ ಭರವಸೆಯ ಆಡಳಿತವನ್ನು ನೀಡಲಿದೆ ಎಂದು ಹೇಳಿದರು. ಅಭಿವೃದ್ಧಿ ವಿಷಯ ಕುರಿತು ಟಿಎಂಸಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ ಟಿಎಂಸಿಯ ‘ನಿರ್ಮಮ (ಕ್ರೂರ)’ ಸರಕಾರವು ಬಂಗಾಳವನ್ನು ಹಿಂದಕ್ಕೆ ಒಯ್ಯುತ್ತಿದೆ ಎಂದು ಆರೋಪಿಸಿದರು. ‘ವಿಕಸಿತ ಬಂಗಾಳ’ ಕ್ಕೆ ನಾಂದಿ ಹಾಡಲು ಟಿಎಂಸಿಯನ್ನು ಅಧಿಕಾರದಿಂದ ಕಿತ್ತೊಗೆಯುವುದು ಅತ್ಯಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು. ಟಿಎಂಸಿ ಎರಡು ವಿಷಯಗಳಲ್ಲಿ ಬಂಗಾಳದ ಯುವಜನತೆಯನ್ನು ವಂಚಿಸಿದೆ. ಅದು ಖಾಸಗಿ ವಲಯವನ್ನು ನಾಶಗೊಳಿಸಿದೆ ಮತ್ತು ಸರಕಾರಿ ಹುದ್ದೆಗಳನ್ನು ಮಾರಾಟ ಮಾಡಿ ಹಣವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ ಮೋದಿ, ಟಿಎಂಸಿ ಬಂಗಾಳದ ಯುವಜನತೆಯ ವಿರುದ್ಧ ಎಸಗಿದ ಪಾಪಗಳಿಂದ ಮುಕ್ತವಾಗಲು ನೂರು ವರ್ಷಗಳಾದರೂ ಸಾಧ್ಯವಿಲ್ಲ ಎಂದರು. ಹೂಡಿಕೆಯು ಭಯದ ವಾತಾವರಣದಲ್ಲಿ ಬರುವುದಿಲ್ಲ. ಆದರೆ, ಬಿಜೆಪಿಯು ಬಂಗಾಳದಲ್ಲಿ ತರಲಿರುವ ಭರವಸೆಯ ವಾತಾವರಣದಲ್ಲಿ ಬರುತ್ತದೆ ಎಂದರು. ಟಿಎಂಸಿಯು ತನ್ನ ವೋಟ್ ಬ್ಯಾಂಕನ್ನು ಸುಭದ್ರಗೊಳಿಸಲು ಧರ್ಮಾಧಾರಿತ ಮೀಸಲಾತಿ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು. ಪ್ರಧಾನಿ ಭರವಸೆಗಳು ► ಎಲ್ಲ ಸಾರ್ವಜನಿಕ ಸೇವಕರನ್ನು ಜನತೆಗೆ ಉತ್ತರದಾಯಿಯಾಗಿಸಲಿದೆ ► ಟಿಎಂಸಿಯು ಮೂಲೆಗುಂಪು ಮಾಡಿರುವ ಭ್ರಷ್ಟಾಚಾರ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳ ಕುರಿತ ಎಲ್ಲ ಕಡತಗಳನ್ನು ಮರುತೆರೆಯಲಾಗುವುದು. ಭಾಗಿಯಾಗಿರುವ ಎಲ್ಲ ನಾಯಕರನ್ನು ಜೈಲಿಗೆ ಕಳುಹಿಸಲಾಗುವುದು. ಮಹಿಳೆಯರಿಗೆ ಭಯಮುಕ್ತ ವಾತಾವರಣ ನಿರ್ಮಿಸಲಾಗುವುದು ► ನಿಜವಾದ ನಾಗರಿಕರಿಗೆ ಎಲ್ಲ ಸರಕಾರಿ ಸೌಲಭ್ಯಗಳನ್ನು ಲಭ್ಯವಾಗಿಸಲಾಗುವುದು ಮತ್ತು ನುಸುಳುಕೋರರಿಗೆ ಈ ದೇಶದಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ ► ಸರಕಾರಿ ನೌಕರರು, ಶಿಕ್ಷಕರು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗಾಗಿ ಏಳನೇ ವೇತನ ಆಯೋಗವನ್ನು ಜಾರಿಗೊಳಿಸಲಾಗುವುದು ► ಪ್ರತಿಯೊಬ್ಬರಿಗೂ ಸಮಾನ ನ್ಯಾಯ ದೊರೆಯುವಂತೆ ನ್ಯಾಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲಾಗುವುದು ► ಪಶ್ಚಿಮ ಬಂಗಾಳವನ್ನು ಮೀನುಗಾರಿಕೆ ಮತ್ತು ಸಮುದ್ರ ಆಹಾರ ಕ್ಷೇತ್ರಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡಲಾಗುವುದು
ಪಶ್ಚಿಮಬಂಗಾಳ ಚುನಾವಣೆ| ಆರ್ಜಿ ಕರ್ ಸಂತ್ರಸ್ತೆಯ ತಾಯಿ ರತ್ನಾ ದೇಬನಾತ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
ಕೋಲ್ಕತಾ, ಎ.9: ಹತ್ಯೆಯಾದ ಆರ್ಜಿ ಕರ್ ಆಸ್ಪತ್ರೆಯ ವೈದ್ಯೆಯ ತಾಯಿ ಹಾಗೂ ಪಾನಿಹಾಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾತ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರು ಬಿಜೆಪಿಯ ಹಿರಿಯ ನಾಯಕಿ, ಕೇಂದ್ರದ ಮಾಜಿ ಸಚಿವೆ ಸ್ಮತಿ ಇರಾನಿ ಹಾಗೂ ಪಕ್ಷದ ಜಿಲ್ಲಾ ನಾಯಕರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮಬಂಗಾಳದಲ್ಲಿ ಟಿಎಂಸಿ ಸರಕಾರವನ್ನು ಕಿತ್ತೊಗೆಯುವುದು ತನ್ನ ಏಕೈಕ ಗುರಿ. ಇದು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಆರ್.ಜಿ. ಕರ್ ಪ್ರಕರಣದಂತಹ ಘಟನೆಗಳು ನಡೆಯದಂತೆ ತಡೆಯುತ್ತದೆ ಎಂದಿದ್ದಾರೆ. 2024 ಆಗಸ್ಟ್ನಲ್ಲಿ ಸರಕಾರಿ ಆಸ್ಪತ್ರೆಯ ಬೀಗ ಹಾಕಿದ ಸೆಮಿನಾರ್ ಹಾಲ್ನಲ್ಲಿ ತನ್ನ 26 ವರ್ಷದ ಪುತ್ರಿ ಕ್ರೂರವಾಗಿ ಹತ್ಯೆಯಾದ ಸುಮಾರು ಒಂದೂವರೆ ವರ್ಷಗಳ ಬಳಿಕ ಬಿಜೆಪಿ ದೇಬನಾಥ್ ಅವರನ್ನು ಸಂಪರ್ಕಿಸಿತ್ತು. ಅನಂತರ ಅವರು ತಮ್ಮ ತವರೂರಾದ ಪಾನಿಹಾಟಿನಲ್ಲಿ ಬಿಜೆಪಿ ಟಿಕೆಟ್ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡರು.
ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ 3,700 ಮತದಾರರ ಹೆಸರು ಡಿಲೀಟ್: ಆತಂಕದಲ್ಲಿ ಮಹೀಷಬಾಥನಿ ಗ್ರಾಮದ ಜನರು
ಕೋಲ್ಕತಾ, ಎ. 9: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಪಶ್ಚಿಮಬಂಗಾಳದ ಮಾಲ್ಡಾದ ಮಹೀಷಬಾಥನಿ ಗ್ರಾಮದ 3,700 ಮತದಾರರನ್ನು ಕೈ ಬಿಡಲಾಗಿದೆ. ಇದರಿಂದ ಇಲ್ಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಗ್ರಾಮದ 27,000 ಮತದಾರರ ಪೈಕಿ 3,700 ಹೆಸರುಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ರಾಜ್ಯಾದ್ಯಂತದ ಲಕ್ಷಾಂತರ ಇತರ ಜನರಂತೆ ಇವರು ಕೂಡ ಎಪ್ರಿಲ್ 23ರಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಅವರು ಮೇಲ್ಮನವಿ ಸಲ್ಲಿಸಲು ಆಯ್ಕೆ ಮಾಡಿಕೊಂಡರೆ ಸುಪ್ರೀಂ ಕೋರ್ಟ್ ಆದೇಶದಂತೆ ಸ್ಥಾಪಿಸಲಾದ ಮೇಲ್ಮನವಿ ನ್ಯಾಯ ಮಂಡಳಿ ಅವರ ಸ್ಥಿತಿಗತಿಯನ್ನು ನಿರ್ಧರಿಸುವುದರಿಂದ ಅವರ ಭವಿಷ್ಯ ಅನಿಶ್ಚಿತವಾಗಿದೆ. ಅವರು 2009ರ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಬಹುದೇ ಎಂಬುದನ್ನು ಮೇಲ್ಮನವಿ ನ್ಯಾಯಮಂಡಳಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ನಂತರ ತೀರ್ಮಾನಿಸಲಾಗುತ್ತದೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು ನ್ಯಾಯ ಮಂಡಳಿಯನ್ನು ಸಂಪರ್ಕಿಸಬಹುದು. ಆದರೆ, ಅವರು ಮೊದಲ ಹಂತದ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಹೊಸದಿಲ್ಲಿ, ಎ. 9: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿ ಮಾನಹಾನಿಕರ ಪೋಸ್ಟ್ಗಳನ್ನು ಹಾಕುತ್ತಿದ್ದ ಆರೋಪದಲ್ಲಿ ಸ್ಥಗಿತಗೊಳಿಸಲಾಗಿದ್ದ ವಿಡಂಬನಾತ್ಮಕ ‘ಎಕ್ಸ್’ ಖಾತೆ @ ಡಾ.ನಿಮೋ ಯಾದವ್ ಅನ್ನು ಮರು ಸ್ಥಾಪಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ. ಅರ್ಜಿದಾರ ಪ್ರತೀಕ್ ಶರ್ಮಾ ಅವರು ನಿರ್ವಹಿಸುತ್ತಿದ್ದ ಈ ಖಾತೆಯನ್ನು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಸೆಕ್ಷನ್ 69ಎ ಅಡಿಯಲ್ಲಿ ಮಾರ್ಚ್ 18ರಂದು ಆದೇಶ ಹೊರಡಿಸಿದ ಬಳಿಕ ನಿರ್ಬಂಧಿಸಲಾಗಿತ್ತು. ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲರು, ಹಕ್ಕುಗಳು ಹಾಗೂ ವಾದಗಳಿಗೆ ಹಾನಿ ಉಂಟಾಗದಂತೆ, ಅರ್ಜಿದಾರರು ಆಕ್ಷೇಪಾರ್ಹ ಎಂದು ಹೇಳಲಾದ ಟ್ವೀಟ್ಗಳನ್ನು ಅಳಿಸಲು ಸಿದ್ಧರಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರ ‘ಎಕ್ಸ್’ ಖಾತೆಯನ್ನು ಮರು ಸ್ಥಾಪಿಸಬಹುದು ಎಂದು ಹೇಳಿದರು. ಈ ವಿಷಯವನ್ನು ಪರಿಶೀಲಿಸಲು ಅಂತರ್ ಸಚಿವಾಲಯ ಸಮಿತಿಯ ಮುಂದೆ ವಿಚಾರಣೆಗೆ ಅವಕಾಶ ನೀಡುವುದಾಗಿ ಕೇಂದ್ರ ಸರಕಾರ ಅರ್ಜಿದಾರರಿಗೆ ತಿಳಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದರು. ಆದರೆ, ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು, ಕೇಂದ್ರದ ಅಂತರ್ ಸಚಿವಾಲಯ ಸಮಿತಿಯ ತೀರ್ಪು ಬಾಕಿ ಇರುವುದರಿಂದ, ಆಕ್ಷೇಪಾರ್ಹ ಪೋಸ್ಟ್ಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ‘ಎಕ್ಸ್’ಗೆ ನಿರ್ದೇಶನ ನೀಡಿದರು.
ಬಲವಂತದ ಸಂಭೋಗ: ಪತಿ ವಿರುದ್ಧದ ಪ್ರಕರಣ ರದ್ದತಿಗೆ ಕರ್ನಾಟಕ ಹೈಕೋರ್ಟ್ ನಕಾರ!
ಬಲವಂತದ ಸಂಭೋಗದ ಬಗ್ಗೆ ಪತಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಲು ಹೈಕೋರ್ಟ್ ನಿರಾಕರಣೆ ಮಾಡಿದೆ. ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ. ಇನ್ನು ಪತಿಯ ಪರ ಹಾಕಿರುವ ಕೆಲ ಚಾರ್ಜ್ಗಳನ್ನು ಕೈಬಿಡಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಹಾಕಲು ಸೂಚನೆ ನೀಡಿದೆ.
ಚರ್ಚ್ ಅಮೆರಿಕ ಪರವಾಗಿದ್ದರೆ ಉತ್ತಮ: ಯುದ್ಧ ವಿರೋಧಿ ಭಾಷಣ ಮಾಡಿದ ಪೋಪ್ ಗೆ ಬೆದರಿಕೆ ಒಡ್ಡಿತೇ ಟ್ರಂಪ್ ಆಡಳಿತ?
ವಾಷಿಂಗ್ಟನ್: ಅಮೆರಿಕ ಮತ್ತು ವ್ಯಾಟಿಕನ್ ಸಿಟಿ ನಡುವೆ ಉದ್ವಿಗ್ನತೆ ತಲೆದೋರಿದ್ದು, ಚರ್ಚ್ ಅಮೆರಿಕ ಹಿತಾಸಕ್ತಿಗೆ ಪೂರಕವಾಗಿರಬೇಕು ಎಂದು ಅಮೆರಿಕ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮುಚ್ಚಿದ ಕೋಣೆಯಲ್ಲಿನ ಸಭೆಗೆ ಹಾಜರಾಗುವಂತೆ ಹದಿನಾಲ್ಕನೆ ಪೋಪ್ ಲಿಯೊರ ರಾಯಭಾರಿಗೆ ನೋಟಿಸ್ ನೀಡಲಾಗಿದೆ ಎಂದು ಅಮೆರಿಕ ಮೂಲದ ಮಾಧ್ಯಮ ಸಂಸ್ಥೆ The Free Press ವರದಿ ಮಾಡಿದೆ. ಸರ್ವಾನುಮತವನ್ನು ಆಧರಿಸಿದ್ದ ರಾಜತಾಂತ್ರಿಕತೆಯ ಜಾಗವನ್ನು ಸೇನಾಬಲ ಆಧಾರಿತ ರಾಜತಾಂತ್ರಿಕತೆ ಆಕ್ರಮಿಸಿದೆ ಎಂದು ಹದಿನಾಲ್ಕನೆ ಪೋಪ್ ಲಿಯೊ ಭಾಷಣ ಮಾಡಿದ ಬಳಿಕ, ಅಮೆರಿಕ ಸೇನೆಯು ತನ್ನ ಶಕ್ತಿಯ ಕುರಿತು ಜನವರಿ ತಿಂಗಳಲ್ಲಿ ವ್ಯಾಟಿಕನ್ ರಾಯಭಾರಿಗೆ ನೆನಪು ಮಾಡಿತ್ತು ಎಂದು ಹೇಳಲಾಗಿದೆ. ಅಮೆರಿಕ ಸಂಜಾತ ಹಾಗೂ ಸದ್ಯ ವ್ಯಾಟಿಕನ್ ಸಿಟಿಯ ಸಾರ್ವಭೌಮರಾಗಿರುವ ಹದಿನಾಲ್ಕನೆ ಪೋಪ್ ಲಿಯೊ, ಡೊನಾಲ್ಡ್ ಟ್ರಂಪ್ ಸರ್ಕಾರದ ವಲಸೆ ನೀತಿ ಹಾಗೂ ಅದರ ಆಕ್ರಮಣಕಾರಿ ವಿದೇಶಾಂಗ ನಿಲುವನ್ನು ಟೀಕಿಸಿದ್ದರು. ಜನವರಿ 9ರಂದು ವ್ಯಾಟಿಕನ್ ರಾಜತಾಂತ್ರಿಕರ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಹದಿನಾಲ್ಕನೆ ಪೋಪ್ ಲಿಯೊ, ಯುದ್ಧ ಮತ್ತೆ ವಾಡಿಕೆಯಾಗಿದೆ ಎಂದು ಎಚ್ಚರಿಸಿದ್ದರು. ಸೇನಾಬಲ, ಜಾಗತಿಕ ಪಾರಮ್ಯವನ್ನು ಆಧರಿಸಿದ ರಾಜತಾಂತ್ರಿಕತೆ ಹಾಗೂ ವಲಸಿಗರನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದನ್ನು ಟೀಕಿಸಿದ್ದರು. ಹದಿನಾಲ್ಕನೆ ಪೋಪ್ ಲಿಯೊರ ಈ ಭಾಷಣವನ್ನು ಟ್ರಂಪ್ ಆಡಳಿತಕ್ಕೆ ನೇರ ಸವಾಲು ಎಂದು ರಕ್ಷಣಾ ನೀತಿಯ ಅಧೀನ ರಕ್ಷಣಾ ಕಾರ್ಯದರ್ಶಿ (ಹಾಲಿ ಯುದ್ಧ) ಎಲ್ಬ್ರಿಡ್ಜ್ ಕಾಲ್ಬಿ ಸೇರಿದಂತೆ ಪೆಂಟಗಾನ್ ನ ಉನ್ನತ ಅಧಿಕಾರಿಗಳು ವ್ಯಾಖ್ಯಾನಿಸಿದ್ದರು ಎಂದು The Free Press ವರದಿ ಮಾಡಿದೆ. ಆ ಸಮಯದಲ್ಲಿ ಪೋಪ್ ಅವರ ಅಮೆರಿಕದ ಖಾಸಗಿ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಡಿನಲ್ ಕ್ರಿಸ್ಟೋಫ್ ಪಿಯರ್ರೆ ಅವರಿಗೆ ಪೆಂಟಗಾನ್ ನೋಟಿಸ್ ನೀಡಿತ್ತು ಎಂದು ಹೇಳಲಾಗಿದೆ. ಈ ನೋಟಿಸ್ ಕಠಿಣ ಭಾಷೆಯನ್ನು ಹೊಂದಿತ್ತು ಎಂದು ವ್ಯಾಟಿಕನ್ ಮೂಲಗಳು ಬಣ್ಣಿಸಿವೆ. ಅಮೆರಿಕ ಪರವಾಗಿರಬೇಕು ಎಂದು ಈ ನೋಟಿಸ್ ನಲ್ಲಿ ವ್ಯಾಟಿಕನ್ ಸಿಟಿಗೆ ತಾಕೀತು ಮಾಡಲಾಗಿದೆ ಎನ್ನಲಾಗಿದೆ.
2nd PUC Result-2026 | ಸಿಂಧನೂರು ವಿದ್ಯಾರ್ಥಿಗಳ ಸಾಧನೆ
ಸಿಂಧನೂರು : ಗುರುವಾರ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸಿಂಧನೂರು ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ರಾಜ್ಯ ಹಾಗೂ ಜಿಲ್ಲೆಗೆ ಗಮನಾರ್ಹ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಶೇ.99 ಅಂಕ ಪಡೆದು ರಾಜ್ಯಕ್ಕೆ 6 ನೇ ಸ್ಥಾನ ಹಾಗೂ ಕಲಾ ವಿಭಾಗದಲ್ಲಿ ದುರ್ಗಾಭವಾನಿ ಎನ್ನುವ ವಿದ್ಯಾರ್ಥಿನಿ ಶೇ.98.83 ಅಂಕಗಳನ್ನು ಪಡೆದು ರಾಜ್ಯಕ್ಕೆ 7 ನೇ ಸ್ಥಾನ ಪಡೆಯುವ ಮೂಲಕ ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಿಂಧನೂರು ನಗರದ ಪಾಟೀಲ್ ಪಿಯು ಕಾಲೇಜಿನ ಭಕ್ತಿ ತಂದೆ ಪ್ರವೀಣಕುಮಾರ ಹಾಗೂ ಎವಿಎಸ್ ಬ್ರಿಲಿಯಂಟ್ ಕಾಲೇಜಿನ ವಿದ್ಯಾರ್ಥಿನಿ ನಯನ 600ಕ್ಕೆ 594 ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಆಕ್ಸಫರ್ಡ್ ಪಿಯು ಕಾಲೇಜಿನ ವಿದ್ಯಾರ್ಥಿನಿ ದುರ್ಗಾಭವಾನಿ 600ಕ್ಕೆ 593 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಐಕ್ಯೂ ಇಂಟರ್ನ್ಯಾಷನಲ್ ಪಿಯು ಕಾಲೇಜಿನ ವಿದ್ಯಾರ್ಥಿ ಚಂದ್ರಶೇಖರ ಹೆಚ್. ಶೇ.98 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಎ.10ರಂದು ರಾಜ್ಯಸಭಾ ಸದಸ್ಯರಾಗಿ ಅಧಿಕಾರ ಸ್ವೀಕರಿಸಲಿರುವ ನಿತೀಶ್ ಕುಮಾರ್
ಹೊಸದಿಲ್ಲಿ: ಬಿಹಾರದ ಅತ್ಯಂತ ಸುದೀರ್ಘ ಕಾಲದ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರು ಏಪ್ರಿಲ್ 10 (ಶುಕ್ರವಾರ) ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಡಲಿದ್ದಾರೆ. ಗುರುವಾರ ಹೊಸದಿಲ್ಲಿಗೆ ಆಗಮಿಸಿದ ನಿತೀಶ್ ಕುಮಾರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಜೆಡಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಸೇರಿದಂತೆ ಪಕ್ಷದ ಹಲವು ನಾಯಕರು ಬರಮಾಡಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, “ನಾನು ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ್ದೇನೆ” ಎಂದು ತಿಳಿಸಿದರು. ನಿತೀಶ್ ಕುಮಾರ್ ಅವರಿಗೆ ರಾಜ್ಯಸಭಾ ಸದಸ್ಯತ್ವದ ಪ್ರಮಾಣ ವಚನವನ್ನು ರಾಜ್ಯಸಭಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಬೋಧಿಸಲಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್, ಬಿಹಾರದಲ್ಲಿನ ತಮ್ಮ ಆಡಳಿತವನ್ನು ಅಂತ್ಯಗೊಳಿಸಲಿದ್ದು, ಎ.14ರಂದು NDA ಮೈತ್ರಿಕೂಟ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಕಾರ್ಕಳ, ಎ.9: ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ಎ.4ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕುಕ್ಕುಂದೂರು ಗ್ರಾಮದ ನಕ್ರೆಯ ಉಮೇಶ ಕೋಟ್ಯಾನ್ ಎಂಬವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಎ.8ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟರ್ ಢಿಕ್ಕಿ: ಪಾದಚಾರಿ ಮೃತ್ಯು
ಕುಂದಾಪುರ, ಎ.9: ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎ.8ರಂದು ರಾತ್ರಿ 8ಗಂಟೆ ಸುಮಾರಿಗೆ ಕಂದಾವರ ಗ್ರಾಮ ಪಂಚಾಯತ್ ಕಚೇರಿಯ ಎದುರು ನಡೆದಿದೆ. ಮೃತರನ್ನು ಮೂಡ್ಲಕಟ್ಟೆ ಸಟ್ವಾಡಿ ನಿವಾಸಿ ಹೆನ್ರಿ ಡಿಸೋಜ(81) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸ್ಕೂಟರ್ ಸವಾರ ಗೋಪಾಲ ಶೆಟ್ಟಿ ಹಾಗೂ ಅವರ ಪತ್ನಿ ಸಹಸವಾರಿಣಿ ಯಶೋಧ ಎಂಬವರು ಗಾಯಗೊಂಡಿದ್ದಾರೆ. ಇವರು ಮನೆಯಿಂದ ಮೆರ್ಡಿ ಕಡೆಗೆ ಯಕ್ಷಗಾನ ನೋಡಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಸ್ರೂರು ಮೂರ್ಕೈ ಕಡೆಯಿಂದ ಬಸ್ರೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಹೆನ್ರಿ ಡಿಸೋಜ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga | ಹುಲಿಕಲ್ ಘಾಟ್ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮಣ್ಣುಕುಸಿತ; ಮೂವರು ಕಾರ್ಮಿಕರು ಮೃತ್ಯು
ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕು ಹುಲಿಕಲ್ ಘಾಟ್ ಶ್ರೀ ಚಂಡಿಕಾಂಬ ದೇವಸ್ಥಾನದ ಬಳಿ ತಿರುವಿನಲ್ಲಿ ನಡೆದಿದೆ. ಮೃತರನ್ನು ನಗರ ಸಮೀಪದ ಚಕ್ಕಾರು ಗ್ರಾಮದ ರಾಘು, ಹಾವೇರಿ ಜಿಲ್ಲೆಯ ನೆಲಗಲ್ಲು ಗ್ರಾಮದ ಶಬ್ಬೀರ್, ರಾಜು ಎಂದು ಗುರುತಿಸಲಾಗಿದೆ. ಹುಲಿಕಲ್ ಘಾಟ್ ( ಬಾಳೆಬರೆ ಘಾಟ್, ರಾಜ್ಯ ಹೆದ್ದಾರಿ 52) ಹೇರ್ ಪಿನ್ ತಿರುವಿನಲ್ಲಿ ಈ ಹಿಂದೆ ಭೂಕುಸಿತ ಸಂಭವಿಸಿತ್ತು. ಈ ಹಿನ್ನಲೆಯಲ್ಲಿ ಶಾಶ್ವತ ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾರ್ಮಿಕರ ಮೇಲೆ ಮಣ್ಣು ಜಾರಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಕಾರ್ಮಿಕರು ಗಾಯಗೊಂಡಿರುವ ಶಂಕೆ ಇದೆ. ಮಣ್ಣಿನ ಅಡಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ| ಸತತ ಎರಡನೇ ವರ್ಷ ರಾಜ್ಯದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಉಡುಪಿ
ಉಡುಪಿ, ಎ.9: ಗುರುವಾರ ಪ್ರಕಟಗೊಂಡ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.96.39 ಉತ್ತೀರ್ಣದ ಫಲಿತಾಂಶದೊಂದಿಗೆ ರಾಜ್ಯದಲ್ಲೇ ಸತತ ಎರಡನೇ ವರ್ಷವೂ ಅಗ್ರಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಸತತ ಎರಡನೇ ವರ್ಷ ನೆರೆಯ ದಕ್ಷಿಣ ಕನ್ನಡ ಜಿಲ್ಲೆ ನಿಕಟ ಸ್ಪರ್ಧೆ ನೀಡಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಈ ಬಾರಿ ಉಡುಪಿ ಶೇ.96.39 ಫಲಿತಾಂಶದೊಂದಿಗೆ ಅಗ್ರಸ್ಥಾನಿಯಾದರೆ ದಕ್ಷಿಣ ಕನ್ನಡ ಜಿಲ್ಲೆ ಶೇ.96.35 ಉತ್ತೀರ್ಣತೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. 2025ರಲ್ಲಿ ಉಡುಪಿ ಜಿಲ್ಲೆ ಶೇ.93.90 ಫಲಿತಾಂಶದೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಶೇ.0.33ರಷ್ಟು ಹಿನ್ನಡೆಯೊಂದಿಗೆ ದಕ್ಷಿಣ ಕನ್ನಡ (ಶೇ.93.57) ಮೂರು ವರ್ಷಗಳ ಬಳಿಕ ದ್ವಿತೀಯ ಸ್ಥಾನಕ್ಕೆ ಇಳಿದಿತ್ತು. ಇದಕ್ಕೆ ಮುನ್ನ ಕೊರೋನಾದ ಬಳಿಕ ಮೂರು ವರ್ಷಗಳಲ್ಲಿ- 2022, 2023, 2024- ಸತತವಾಗಿ ದಕ್ಷಿಣ ಕನ್ನಡ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದರೆ, ತೀವ್ರ ಸ್ಪರ್ಧೆಯ ಹೊರತಾಗಿಯೂ ಉಡುಪಿ ಜಿಲ್ಲೆಯ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿತ್ತು. 2024ರಲ್ಲಿ ದಕ್ಷಿಣಕನ್ನಡ ಜಿಲ್ಲೆ ಶೇ.97.37ರ ಸಾಧನೆಯೊಂದಿಗೆ ಅಗ್ರಸ್ಥಾನಿ ಯಾದರೆ, ಉಡುಪಿ ಕೇವಲ ಶೇ.0.57ರ ಹಿನ್ನಡೆಯೊಂದಿಗೆ (ಶೇ.96.80) ಎರಡನೇ ಸ್ಥಾನ ಪಡೆದಿತ್ತು. 2023ರಲ್ಲಿ ದಕ್ಷಿಣ ಕನ್ನಡ ಶೇ.95.33 ರೊಂದಿಗೆ, ಉಡುಪಿ ಜಿಲ್ಲೆ ಶೇ.95.24 ಸಾಧನೆಯೊಂದಿಗೆ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದವು. 2022ರಲ್ಲಿ ದಕ್ಷಿಣಕನ್ನಡ ಶೇ.88.02 ಫಲಿತಾಂಶ ಪಡೆದಿದ್ದರೆ, ಉಡುಪಿ ಜಿಲ್ಲೆ ಶೇ.86.38 ಫಲಿತಾಂಶ ಪಡೆದಿತ್ತು. 2019-20 ರಲ್ಲಿ ಎರಡೂ ಜಿಲ್ಲೆಗಳು ಶೇ.90.71 ಫಲಿತಾಂಶ ಪಡೆದು ಸಮಬಲದಲ್ಲಿದ್ದರೆ, 2018-19ರಲ್ಲಿ ಉಡುಪಿ ಜಿಲ್ಲೆ ಶೇ.92.20 ಫಲಿತಾಂಶದೊಂದಿಗೆ ರಾಜ್ಯಕ್ಕೆ ಅಗ್ರಸ್ಥಾನಿಯಾಗಿತ್ತು. ಈ ಬಾರಿ ಮೊದಲ ಸಲ ಪರೀಕ್ಷೆ ಬರೆದ ಜಿಲ್ಲೆಯ ಒಟ್ಟು 16,624 ವಿದ್ಯಾರ್ಥಿಗಳಲ್ಲಿ 16,024 ಮಂದಿ ತೇರ್ಗಡೆ ಗೊಂಡಿದ್ದು ಶೇ.96.39 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ, ಮರು ಪರೀಕ್ಷೆ ಬರೆದವರು ಸೇರಿದಂತೆ ಒಟ್ಟಾರೆಯಾಗಿ ಈ ಬಾರಿ 17,133 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 16,275 ಮಂದಿ ತೇರ್ಗಡೆಗೊಂಡು ಶೇ.94.99 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ ಪರೀಕ್ಷೆ ಬರೆದವರು ಶೇ.52.43ರಷ್ಟು ಹಾಗೂ ಮರು ಪರೀಕ್ಷೆ ಬರೆದವರು ಶೇ.41.01ರಷ್ಟು ತೇರ್ಗಡೆಗೊಂಡಿದ್ದಾರೆ. ಬಾಲಕಿಯರ ಮೇಲುಗೈ: ಜಿಲ್ಲೆಯಲ್ಲಿ 8452 ಮಂದಿ ಬಾಲಕರಲ್ಲಿ 7872 ಮಂದಿ (ಶೇ.93.14) ಹಾಗೂ 8681 ಮಂದಿ ಬಾಲಕಿಯರಲ್ಲಿ 8403 ಮಂದಿ (ಶೇ.96.8) ತೇರ್ಗಡೆಗೊಂಡಿದ್ದಾರೆ. ಈ ಮೂಲಕ ಈ ವರ್ಷವೂ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಪಡೆದಂತಾಗಿದೆ. ಆಂಗ್ಲ ಮಾಧ್ಯಮದವರ ಸಾಧನೆ: ಆಂಗ್ಲ ಮಾಧ್ಯಮದಲ್ಲಿ ಉತ್ತರ ಬರೆದ ವಿದ್ಯಾರ್ಥಿಗಳೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ 15,299 ವಿದ್ಯಾರ್ಥಿಗಳಲ್ಲಿ 14,756 ಮಂದಿ (ಶೇ.96.45) ಹಾಗೂ ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದ 1834 ವಿದ್ಯಾರ್ಥಿಗಳಲ್ಲಿ 1519 ಮಂದಿ (ಶೇ.82.82) ತೇರ್ಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ 1160 ಮಂದಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಲ್ಲಿ 1052 (ಶೇ.90.69) ಮಂದಿ ಹಾಗೂ 762 ಮಂದಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಲ್ಲಿ 705 ಮಂದಿ (92.52) ತೇರ್ಗಡೆ ಗೊಂಡಿದ್ದಾರೆ. ಉಳಿದಂತೆ 2ಎ ವರ್ಗದಲ್ಲಿ ಶೇ.95.33, 2ಬಿಯಲ್ಲಿ ಶೇ.93.39, 3ಎಯಲ್ಲಿ 97.71, 3ಬಿಯಲ್ಲಿ ಶೇ.96.56 ಹಾಗೂ ಇತರ ವರ್ಗದಲ್ಲಿ ಶೇ.96.59ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ನಗರ ವಿದ್ಯಾರ್ಥಿಗಳ ಮೇಲುಗೈ: ಜಿಲ್ಲೆಯ ಫಲಿತಾಂಶದಲ್ಲಿ ಈ ಬಾರಿ ನಗರ ಪ್ರದೇಶಗಳ ವಿದ್ಯಾರ್ಥಿಗಳು ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ 6090 ಮಂದಿ ನಗರದ ವಿದ್ಯಾರ್ಥಿಗಳ ಪೈಕಿ 5877 ಮಂದಿ (ಶೇ.96.5) ಉತ್ತೀರ್ಣರಾಗಿದ್ದರೆ, 10,534 ಮಂದಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ 10,147 ಮಂದಿ (ಶೇ.96.33) ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳ ಮೇಲುಗೈ: ಮೂರು ವಿಭಾಗಗಳ ವಿದ್ಯಾರ್ಥಿಗಳ ಪೈಕಿ ನಿರೀಕ್ಷೆಯಂತೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ಬಾರಿಯ ಫಲಿತಾಂಶದಲ್ಲಿ ಸ್ಪಷ್ಟ ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ 8336 ಮಂದಿಯಲ್ಲಿ 8006 ಮಂದಿ ಉತ್ತೀರ್ಣರಾಗುವ ಮೂಲಕ ಶೇ.98.44ರಷ್ಟು ಫಲಿತಾಂಶ ಪಡೆದಿದ್ದಾರೆ. ಇನ್ನು ವಾಣಿಜ್ಯ ವಿಭಾಗದಲ್ಲಿ 7173 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 6866 (ಶೇ.95.72) ಮಂದಿ ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 1115 ಮಂದಿ ವಿದ್ಯಾರ್ಥಿಗಳಲ್ಲಿ 952 ಮಂದಿಯಷ್ಟೇ (ಶೇ.85.38) ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ| ಸಿಹಾಂ ಹಸನ್ಗೆ ವಿಜ್ಞಾನ ವಿಭಾಗದಲ್ಲಿ 571 ಅಂಕ
ಮಂಗಳೂರು. ಎ.9: ದ್ವಿತೀಯ ಪಿಯುಸಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಿಹಾಂ ಹಸನ್ 571 (ಶೇ.95) ಅಂಕಗಳೊಂದಿಗೆ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ಜೋಕಟ್ಟೆ ನಿವಾಸಿ ಅಬ್ದುಲ್ ರಫೀಕ್ ಪಿ.ಎಚ್ ಹಾಗೂ ರೇಷ್ಮಾ ದಂಪತಿಯ ಪುತ್ರ.
ಮಂಗಳೂರು: ಹತ್ತನೇ ತರಗತಿಯಿಂದ ನೇರವಾಗಿ ಪಿಯುಸಿ ಸೇರ್ಪಡೆಗೊಂಡು ಡಿಸ್ಟಿಂಕ್ಷನ್ ಪಡೆದ ಶಜೀಮ್
ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಸ್ಟೇಟ್ಬ್ಯಾಂಕ್ ಸಮೀಪದ ನ್ಯಾಷನಲ್ ಟ್ಯುಟೋರಿಯಲ್ನ ವಿದ್ಯಾರ್ಥಿ ಶಜೀಮ್ ಹತ್ತನೇ ತರಗತಿಯಿಂದ ನೇರವಾಗಿ ದ್ವಿತೀಯ ಪಿಯುಸಿಗೆ ಸೇರ್ಪಡೆ ಗೊಂಡು 522 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಈ ಹಿಂದೆ ಶಜೀಮ್ 7ನೇ ತರಗತಿಯಿಂದ ನ್ಯಾಷನಲ್ ಟ್ಯುಟೋರಿಯಲ್ನಲ್ಲೇ ಹತ್ತನೇ ತರಗತಿಗೆ ಸೇರ್ಪಡೆ ಗೊಂಡು 412 ಅಂಕಗಳೊಂದಿಗೆ ತೇರ್ಗಡೆ ಹೊಂದಿ ಗಮನಸೆಳೆದಿದ್ದರು ಎಂದು ಟ್ಯುಟೋರಿಯಲ್ನ ಪ್ರಾಂಶುಪಾಲ ಯು.ಎಚ್. ಖಾಲಿದ್ ಉಜಿರೆ ತಿಳಿಸಿದ್ದಾರೆ.
2nd PUC Result-2026 | ಅರ್ಪಿತಾ ಎಚ್.ಜಿ. ಹಾಸನ ಜಿಲ್ಲೆಗೆ ಪ್ರಥಮ; 600ಕ್ಕೆ 597 ಅಂಕ
ಹಾಸನ : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅರ್ಪಿತಾ ಎಚ್.ಜಿ. ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಹಾಸನದ ಎಪಿಜೆ ಕಾಲೇಜಿನ ವಿದ್ಯಾರ್ಥಿನಿಯಾದ ಅರ್ಪಿತಾ, ವಿಜ್ಞಾನ ವಿಭಾಗದಲ್ಲಿ ಒಟ್ಟು 600ರಲ್ಲಿ 597 ಅಂಕಗಳನ್ನು ಗಳಿಸಿ ಶೇ.99.5 ಫಲಿತಾಂಶ ಸಾಧಿಸಿದ್ದಾರೆ.
ಹೆಚ್ಚುತ್ತಿರುವ ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣಗಳು: ಸುಪ್ರೀಂ ಕೋರ್ಟ್ ಕಳವಳ
ಹೊಸದಿಲ್ಲಿ, ಎ. 9: ಮಕ್ಕಳ ಕಳ್ಳ ಸಾಗಾಣಿಕೆಯ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ ಹಾಗೂ ಸಂಘಟಿತ ಗುಂಪುಗಳು ದೇಶಾದ್ಯಂತ ಸಕ್ರಿಯವಾಗಿವೆ ಎಂದು ಹೇಳಿದೆ. ತಕ್ಷಣ ಕ್ರಮ ತೆಗೆದುಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಫಲವಾದರೆ ಪರಿಸ್ಥಿತಿಯು ನಿಯಂತ್ರಣ ಮೀರಿ ಹೋಗಬಹುದು ಎಂಬ ಎಚ್ಚರಿಕೆಯನ್ನೂ ಅದು ನೀಡಿತು. ಪ್ರಾಥಮಿಕ ಹೊಣೆಗಾರಿಕೆಯು ರಾಜ್ಯ ಸರಕಾರಗಳು ಮತ್ತು ಅವುಗಳ ಗೃಹ ಇಲಾಖೆಗಳ ಮೇಲಿವೆ ಎಂದು ಹೇಳಿದ ನ್ಯಾಯಾಲಯವು, ಅವುಗಳು ಜಾಗೃತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿತು. ‘‘ನ್ಯಾಯಾಲಯವಾಗಿ ನಾನು ನಿಗಾ ಇಡಬಹುದು. ಆದರೆ ಅಂತಿಮವಾಗಿ ಕ್ರಮ ತೆಗೆದುಕೊಳ್ಳಬೇಕಾಗಿರುವುದು ರಾಜ್ಯ ಸರಕಾರ, ಅದರ ಪೊಲೀಸರು ಮತ್ತು ಇತರ ಘಟಕಗಳು. ಹಾಗಾಗಿ, ಇದು ನಮ್ಮ ವಿನಮ್ರ ವಿನಂತಿ’’ ಎಂದು ಬುಧವಾರ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿತು. ಸಂಘಟಿತ ಮಾನವ ಸಾಗಣೆ ಜಾಲಗಳನ್ನು ಧ್ವಂಸಗೊಳಿಸುವ ಉದ್ದೇಶದ ತನ್ನ 2025ರ ತೀರ್ಪೊಂದನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಷ್ಕ್ರಿಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ‘‘ಕೆಲವು ಪ್ರಕರಣಗಳಲ್ಲಿ, ಸಾಗಣೆಗೊಳಗಾಗಿರುವ ಮಕ್ಕಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ಇದು ಈ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ ಎನ್ನುವುದನ್ನು ನಿರೂಪಿಸುತ್ತದೆ. ಆದರೆ, ಅಗತ್ಯ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿ ಈಗ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಸೇರುವಾಸೆ: ಪ್ರಿನ್ಸಿಲ್ಲಾ ಕಾರ್ಡೊಜಾ
ಮಂಗಳೂರು, ಎ.9: ಉತ್ತಮ ಅಂಕ ಪಡೆಯುವ ನಿರೀಕ್ಷೆ ಇತ್ತು. ಜೆಇಇ ಪರೀಕ್ಷೆಯ ಜತೆಗೆ ಬೋರ್ಡ್ ಪರೀಕ್ಷೆಗೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡ ಕಾರಣ ಉತ್ತಮ ಅಂಕ ಬರುವ ನಿರೀಕ್ಷೆ ಇತ್ತು ಎನ್ನುತ್ತಾರೆ ಮಂಗಳೂರು ಆಕಾಶಭವನದ ಸಿಎಫ್ಎಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಿನ್ಸಿಲ್ಲಾ ಕಾರ್ಡೊಜಾ. ಪ್ರಸಕ್ತ ಸಾಲಿನ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 599 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಪ್ರಿನ್ಸಿಲ್ಲಾ ಕೊಡಿಯಾಲ್ಬೈಲ್ ನಿವಾಸಿ, ಸೌದಿ ಆರೇಬಿಯಾದ ಉದ್ಯೋಗಿ ಬೆನೆಡಿಕ್ಟ್ ಪ್ರಕಾಶ್ ಕಾರ್ಡೊಜಾ ಹಾಗೂ ಜೆಸಿಂತಾ ಕಾರ್ಡೊಜಾ ದಂಪತಿಯ ಪುತ್ರಿ. ಜೆಇಇ ಪರೀಕ್ಷೆ ಬರೆದಿದ್ದು, ಉತ್ತಮ ಅಂಕ ಪಡೆದು ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಸೇರಿ ಶಿಕ್ಷಣ ಮುಂದು ವರಿಸುವ ಇರಾದೆ ಇದೆ. ಕಂಪ್ಯೂಟರ್ ಸಾಯನ್ಸ್ನಲ್ಲಿ ಅತ್ಯುತ್ತಮ ಇಂಜಿನಿಯರ್ ಆಗಬೇಕೆಂಬುದು ನನ್ನ ಬಯಕೆ ಎಂದು ಪ್ರಿನ್ಸಿಲ್ಲಾ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ. ‘ಮಗಳ ಆಯ್ಕೆಗೆ ನಮ್ಮ ಬೆಂಬಲವಿದೆ. ಆಕೆ ಟಾಪ್ 10 ಆಗಿ ಹೊರಹೊಮ್ಮುವ ನಿರೀಕ್ಷೆ ನಮಗೂ ಇತ್ತು. ಸೌದಿಯಲ್ಲಿ ಉದ್ಯೋಗದಲ್ಲಿರುವ ಪ್ರಿನ್ಸಿಲ್ಲಾ ತಂದೆ ಮಗಳ ಈ ಸಾಧನೆಯ ಬಗ್ಗೆ ಕೇಳಿ ತುಂಬಾ ಖುಷಿ ಪಟ್ಟುಕೊಂಡಿದ್ದಾರೆ’ ಎಂದು ಪ್ರಿನ್ಸಿಲ್ಲಾ ಅವರ ತಾಯಿ, ಗೃಹಿಣಿಯಾಗಿರುವ ಜೆಸಿಂತಾ ಪ್ರತಿಕ್ರಿಯಿಸಿದ್ದಾರೆ.
2nd PUC Result-2026 | ವಿಜ್ಞಾನ ವಿಭಾಗ : ಕೊಪ್ಪಳದ ಶ್ರೀರಕ್ಷಾಗೆ 600ಕ್ಕೆ 589 ಅಂಕ
ಕೊಪ್ಪಳ: ಇಲ್ಲಿನ ಚುಕ್ಕನಕಲ್ ರಸ್ತೆಯಲ್ಲಿರುವ ಲಯನ್ಸ್ ಸ್ವಾಮಿ ವಿವೇಕಾನಂದ ಸಂಯುಕ್ತ ಪದವಿಪೂರ್ವ ಕಾಲೇಜಿನ (ಶ್ರೀ ಚೈತನ್ಯ ಸಮೂಹ ಸಂಸ್ಥೆ) ವಿದ್ಯಾರ್ಥಿನಿ ಶ್ರೀರಕ್ಷಾ ವಿಜ್ಞಾನ ವಿಭಾಗದಲ್ಲಿ 600ಕ್ಕೆ 589 ಅಂಕ ಪಡೆಯುವ ಮೂಲಕ ಶೇ.98.16ರಷ್ಟು ಫಲಿತಾಂಶ ಪಡೆದಿದ್ದಾರೆ. ಇವರು ಭೌತಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ಈ ಮೂರೂ ವಿಷಯಗಳಲ್ಲಿ ಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ. ಶ್ರೀರಕ್ಷಾ ಇಲ್ಲಿನ ಪ್ರಶಾಂತ ಕಾಲೊನಿಯಲ್ಲಿರುವ ವೇಣುಗೋಪಾಲಚಾರ್ ಜಹಗೀರದಾರ್ ಹಾಗೂ ವೀಣಾ ದಂಪತಿಯ ಪುತ್ರಿ.
PUC ವಿಜ್ಞಾನ ವಿಭಾಗದಲ್ಲಿ ಶೇ.91.69ರಷ್ಟು ದಾಖಲೆ ಫಲಿತಾಂಶ: ಇವರೇ 599 ಅಂಕ ಗಳಿಸಿದ ಟಾಪರ್
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಎಂದಿನಂತೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಶೇಕಡಾ 88.5ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಲವು ಮಂದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಾಂತ್ರಿಕ ಮತ್ತು ವೈದ್ಯಕೀಯದಂತಹ ವೃತ್ತಿಪರ ಕೋರ್ಸ್ಗಳಿಗೆ ಸೇರಲು ಬಯಸುವವರಿಗೆ ಇದು ದೊಡ್ಡ ಉತ್ತೇಜನ ನೀಡಿದೆ. ಎಷ್ಟು ಮಂದಿ ಟಾಪರ್ಸ್, ಅವರು ಪಡೆದ ಅಂಕಗಳು, ಕಳೆದ
ಮಣಿಪುರ| ಬಿಷ್ಣುಪುರ ಜಿಲ್ಲೆಯಲ್ಲಿ ಬಾಂಬ್ ದಾಳಿ ವಿರೋಧಿಸಿ ಬೃಹತ್ ಪ್ರತಿಭಟನೆ
ಇಂಫಾಲ, ಎ. 9: ಬಿಷ್ಣುಪುರ ಜಿಲ್ಲೆಯಲ್ಲಿ ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಬಾಂಬ್ ದಾಳಿಯನ್ನು ಪ್ರತಿಭಟಿಸಿ ಮಣಿಪುರದ ಐದು ಕಣಿವೆ ಜಿಲ್ಲೆಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಗುರುವಾರ ಕರ್ಫ್ಯೂವನ್ನು ಉಲ್ಲಂಘಿಸಿ ಪ್ರತಿಭಟನಾ ಸಭೆಗಳನ್ನು ನಡೆಸಿ ರಸ್ತೆಗಳಲ್ಲಿ ಟಯರ್ಗಳನ್ನು ಸುಟ್ಟಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ತಿದ್ದಿಮ್ ಲೈನ್ನಲ್ಲಿ, ‘ಆಲ್ ಮಣಿಪುರ ಯುನೈಟೆಡ್ ಕ್ಲಬ್ಸ್ ಆರ್ಗನೈಸೇಶನ್’ನ ಆಶ್ರಯದಲ್ಲಿ ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಕ್ಕಳ ಹತ್ಯೆಯನ್ನು ಖಂಡಿಸಿದ ಅವರು, ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಬಾಂಬ್ ದಾಳಿಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಪೋಸ್ಟರ್ಗಳನ್ನು ಹಿಡಿದುಕೊಂಡು ಹಲವು ಮಕ್ಕಳೂ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ, ಪ್ರತಿಭಟನಾಕಾರರ ಪ್ರತಿನಿಧಿಗಳು ಮುಖ್ಯಮಂತ್ರಿ ವೈ. ಖೇಮ್ಚಂದ್ ಸಿಂಗ್ರನ್ನು ಭೇಟಿಯಾದರು. ಎಪ್ರಿಲ್ 7ರಂದು, ಬಿಷ್ಣುಪುರ ಜಿಲ್ಲೆಯ ಟ್ರೋಂಗ್ಲವೊಬಿಯಲ್ಲಿರುವ ಮನೆಯೊಂದರ ಮೇಲೆ ಗುಂಪೊಂದು ಬಾಂಬೊಂದನ್ನು ಎಸೆದಾಗ ಐದು ವರ್ಷದ ಗಂಡು ಮಗು ಮತ್ತು ಅದರ ಆರು ತಿಂಗಳ ಸಹೋದರಿ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದ ತಕ್ಷಣ, ಸುಮಾರು 500 ಜನರ ಗುಂಪೊಂದು ಸಮೀಪದ ಗೆಲ್ಮೊಲ್ನಲ್ಲಿರುವ ಸಿಆರ್ಪಿಎಫ್ ಶಿಬಿರದ ಎದುರು ಜಮಾಯಿಸಿ ದಾಂಧಲೆ ನಡೆಸಿತು ಹಾಗೂ ಭದ್ರತಾ ವಾಹನಗಳಿಗೆ ಬೆಂಕಿ ಕೊಟ್ಟಿತು. ಸಿಆರ್ಪಿಎಫ್ ಸಿಬ್ಬಂದಿ ಗುಂಡು ಹಾರಿಸಿದಾಗ ಮೂವರು ಪ್ರತಿಭಟನಾಕಾರರು ಮೃತಪಟ್ಟರು ಮತ್ತು 30 ಮಂದಿ ಗಾಯಗೊಂಡರು. ಗುರುವಾರ, ಇಂಫಾಲ್ ಪಶ್ಚಿಮ ಜಿಲ್ಲೆಯ ಸಮುರೂ ಎಂಬಲ್ಲಿ ನೂರಾರು ಪ್ರತಿಭಟನಾಕಾರರು ಮುಖ್ಯಮಂತ್ರಿಯ ಅಧಿಕೃತ ನಿವಾಸದತ್ತ ಹೋಗಲು ಪ್ರಯತ್ನಿಸಿದರು. ಆದರೆ ಅವರನ್ನು ಪೊಲೀಸರು ತಡೆದರು. ಪ್ರತಿಭಟನಾಕಾರರು ರಸ್ತೆಯಲ್ಲಿ ಟಯರ್ಗಳನ್ನು ಸುಟ್ಟು ವಾಹನ ಸಂಚಾರವನ್ನು ನಿಲ್ಲಿಸಿದರು.
ಹೊಸದಿಲ್ಲಿ,ಎ.9: ಪ.ಬಂಗಾಳದ ಮಾಲ್ಡಾದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದ ಕೆಲಸಕ್ಕಾಗಿ ನಿಯೋಜಿಸಲಾಗಿದ್ದ ನ್ಯಾಯಾಂಗ ಅಧಿಕಾರಿಗಳಿಗೆ ಘೇರಾವ್ ಹಾಕಿದ್ದ ಘಟನೆಯ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಬುಧವಾರ 12 ಎಫ್ಐಆರ್ಗಳನ್ನು ದಾಖಲಿಸಿಕೊಂಡಿದೆ. ಎಸ್ಐಆರ್ಗೆ ಸಂಬಂಧಿತ ಕೆಲಸಕ್ಕಾಗಿ ನಿಯೋಜಿತ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಎ.6ರ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಾಲ್ಡಾ ಜಿಲ್ಲೆಯ ಮೋತಿಬಾರಿಯಲ್ಲಿ ಏಳು ಮತ್ತು ಕಾಲಿಯಾಚಕ್ನಲ್ಲಿ ಐದು ಎಫ್ಐಆರ್ಗಳನ್ನು ಮರುದಾಖಲಿಸಲಾಗಿದೆ ಎಂದು ಎನ್ಐಎ ಬುಧವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರಕರಣಗಳ ಸಮಗ್ರ ತನಿಖೆಗಾಗಿ ಎನ್ಐಎ ತಂಡಗಳು ಈಗಾಗಲೇ ಮಾಲ್ಡಾಕ್ಕೆ ತೆರಳಿವೆ ಎಂದೂ ಅದು ಹೇಳಿದೆ. ಪ.ಬಂಗಾಳದ ಸಚಿವಾಲಯ ಮತ್ತು ಸರಕಾರಿ ಕಚೇರಿಗಳಲ್ಲಿ ಅಧಿಕಾರಶಾಹಿಯ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ ಮತ್ತು ರಾಜಕೀಯವು ನುಸುಳುತ್ತಿದೆ ಎಂದು ಸೋಮವಾರ ಬೆಟ್ಟು ಮಾಡಿದ್ದ ಸರ್ವೋಚ್ಚ ನ್ಯಾಯಾಲಯವು,ಮಾಲ್ಡಾದಲ್ಲಿ ಏಳು ನ್ಯಾಯಾಂಗ ಅಧಿಕಾರಿಗಳಿಗೆ ಮುತ್ತಿಗೆಗೆ ಸಂಬಂಧಿಸಿದ ಪ್ರಕರಣಗಳನ್ನು ವಹಿಸಿಕೊಳ್ಳುವಂತೆ ಎನ್ಐಎಗೆ ಆದೇಶಿಸಿತ್ತು. ಈ ವಿಷಯದಲ್ಲಿ ಸ್ಥಳೀಯ ಪೋಲಿಸರನ್ನು ನಂಬುವಂತಿಲ್ಲ ಎಂದು ಹೇಳಿದ್ದ ನ್ಯಾಯಾಲಯವು ಘಟನೆಗೆ ಸಂಬಂಧಿಸಿದಂತೆ ಎಲ್ಲ 26 ಬಂಧಿತರನ್ನು ಎನ್ಐಎಗೆ ಹಸ್ತಾಂತರಿಸುವಂತೆ ಪ.ಬಂಗಾಳ ಪೋಲಿಸರಿಗೆ ನಿರ್ದೇಶನ ನೀಡಿತ್ತು. ಎ.1ರಂದು ಘಟನೆ ನಡೆದಿತ್ತು. ಮಾಲ್ಡಾ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ಸಂದರ್ಭ ‘ಸಮಾಜ ವಿರೋಧಿ ಶಕ್ತಿಗಳ’ ಗುಂಪು ನ್ಯಾಯಾಂಗ ಅಧಿಕಾರಿಗಳನ್ನು ಒಂಭತ್ತು ಗಂಟೆಗಳಿಗೂ ಹೆಚ್ಚಿನ ಅವಧಿಗೆ ಅನ್ನಾಹಾರವೂ ಇಲ್ಲದೆ ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿತ್ತು. ಕಲಕತ್ತಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮಧ್ಯ ಪ್ರವೇಶದ ಬಳಿಕ ಮಧ್ಯರಾತ್ರಿಯ ನಂತರ ನ್ಯಾಯಾಂಗ ಅಧಿಕಾರಿಗಳು ಒತ್ತೆಸೆರೆಯಿಂದ ಬಿಡುಗಡೆಗೊಂಡಿದ್ದರು.
ಕಂಪ್ಲಿ | ಬೇಸಿಗೆ ಯೋಗ ಶಿಬಿರಕ್ಕೆ ಚಾಲನೆ
ಬಳ್ಳಾರಿ / ಕಂಪ್ಲಿ: ಪಟ್ಟಣದ ವೀರಶೈವ ಸಂಘದ ಶಾರದಾ ಶಾಲೆ ಆವರಣದಲ್ಲಿ ಕಂಪ್ಲಿ ತಾಲೂಕು ಪತಂಜಲಿ ಯೋಗ ಸಮಿತಿಯಿಂದ ಮಕ್ಕಳಿಗಾಗಿ ವಿಶೇಷ ಬೇಸಿಗೆ ಯೋಗ ಶಿಬಿರ ಆರಂಭಿಸಲಾಯಿತು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಮಿತಿ ತಾಲೂಕು ಪ್ರಭಾರಿ ಡಿ.ಮೌನೇಶ್, ಎ.4ರಿಂದ ಮೇ 30ರವರೆಗೆ ಪ್ರತಿದಿನ ಬೆಳಿಗ್ಗೆ 5.45ರಿಂದ 7.15ರವರೆಗೆ ಯೋಗ ತರಬೇತಿ ನಡೆಯಲಿದೆ ಎಂದು ತಿಳಿಸಿದರು. ಯೋಗ ಮತ್ತು ಪ್ರಾಣಾಯಾಮದಿಂದ ಮಧುಮೇಹ, ಅಸ್ತಮಾ, ರಕ್ತದೊತ್ತಡ, ಬೆನ್ನುನೋವು, ಮಂಡಿನೋವು ಸೇರಿದಂತೆ ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು. ಮಕ್ಕಳಿಗೆ ಯೋಗ ಅಭ್ಯಾಸದಿಂದ ದೈಹಿಕ ಬೆಳವಣಿಗೆ, ಜ್ಞಾಪಕಶಕ್ತಿ, ಏಕಾಗ್ರತೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ವಿವರಿಸಿದರು. ಪಾಲಕರು ಮಕ್ಕಳನ್ನು ಯೋಗಾಭ್ಯಾಸಕ್ಕೆ ಪ್ರೇರೇಪಿಸಿ ಶಿಬಿರದ ಸದುಪಯೋಗ ಪಡೆಯುವಂತೆ ಕರೆ ನೀಡಿದರು. ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಯೋಗಾಸನಗಳು, ಪ್ರಾಣಾಯಾಮ, ಧ್ಯಾನ, ಸೂರ್ಯನಮಸ್ಕಾರ ತರಬೇತಿ ನೀಡಲಾಗಿದ್ದು, ಕೊನೆಯಲ್ಲಿ ಮೊಳಕೆಯೊಡೆದ ಕಾಳುಗಳಂತಹ ಪೌಷ್ಟಿಕ ಆಹಾರ ವಿತರಿಸಲಾಯಿತು. ಶಿಬಿರದಲ್ಲಿ 50 ರಿಂದ 60ಕ್ಕೂ ಹೆಚ್ಚು ಮಕ್ಕಳು ಹಾಗೂ ಹಿರಿಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್.ಜಿ. ಚಿತ್ರಗಾರ, ತಿಪ್ಪೇಸ್ವಾಮಿ, ವಿರೂಪಾಕ್ಷಿ, ಶಿವಮೂರ್ತಿ, ರಾಜಾರಾಮ್ ಗಾಂಧಿ, ಚಂದ್ರಪ್ಪ, ನಿರ್ಮಲಮ್ಮ, ರುದ್ರಮ್ಮ, ಲಲಿತಮ್ಮ, ಉಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Bengaluru | ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ: ಬಿಹಾರ ಮೂಲದ ಕಾರ್ಮಿಕನ ಬಂಧನ
ಬೆಂಗಳೂರು: ಮನೆಯ ಮುಂದೆ ಆಟವಾಡುತ್ತಿದ್ದ ಅಪ್ರಾಪ್ತೆಯನ್ನು ಬಿಲ್ಡಿಂಗ್ ಮೇಲೆ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪದಡಿ ಬಿಹಾರ ಮೂಲದ ಕಾರ್ಮಿಕನನ್ನು ಇಲ್ಲಿನ ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಮುನ್ನಾ(25) ಬಂಧಿತ ಎಂದು ಗುರುತಿಸಲಾಗಿದೆ. 11 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಪೋಷಕರು ಕಲಬುರಗಿ ಮೂಲದವರಾಗಿದ್ದು, ಹಲವು ವರ್ಷಗಳಿಂದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ದಂಪತಿಗಳು ಗಾರೆ ಕೆಲಸ ಮಾಡುತ್ತಿದ್ದಾರೆ. ಎ.8ರ ಬುಧವಾರ ಸಂಜೆ ಮನೆಗೆ ಬಂದಾಗ ಬಾಲಕಿಯ ಕೈಯಲ್ಲಿ 150 ರೂಪಾಯಿ ಇರುವುದನ್ನು ತಾಯಿ ಗಮನಿಸಿ ಪ್ರಶ್ನಿಸಿದಾಗ ಸರಿಯಾಗಿ ಹೇಳಿರಲಿಲ್ಲ. ಬಳಿಕ ಒತ್ತಾಯದಿಂದ ಪ್ರಶ್ನಿಸಿದಾಗ “ತಮ್ಮ ಮನೆ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ತನ್ನನ್ನು ಬಿಲ್ಡಿಂಗ್ ಮೇಲೆ ಕರೆದೊಯ್ದು ಅಸಭ್ಯವಾಗಿ ಮುಟ್ಟಿದ. ಬಳಿಕ ಹಣ ನೀಡಿ ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಹೇಳಿ ಕಳುಹಿಸಿದ. ಎ.7ರಂದು ಸಹ ಇದೇ ರೀತಿ ತನ್ನೊಂದಿಗೆ ವರ್ತಿಸಿದ್ದ” ಎಂಬುದಾಗಿ ಬಾಲಕಿ ಹೇಳಿದ್ದಳು ಎಂದು ವರದಿಯಾಗಿದೆ. ಈ ವಿಚಾರ ತಿಳಿದು ಆತಂಕಗೊಂಡ ಪೋಷಕರು, ನಿರ್ಮಾಣ ಹಂತದ ಕಟ್ಟಡದ ಬಳಿ ಹೋಗುತ್ತಿದ್ದಂತೆ ಆರೋಪಿ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದ. ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2 ವಾರಗಳ ಕದನ ವಿರಾಮ: ಅಮೆರಿಕ-ಇರಾನ್ ಕದನವಿರಾಮಕ್ಕೆ ಅಡ್ಡಿಯಾಗಬಹುದಾದ ಐದು ಸವಾಲುಗಳೇನು?
ಅಮೆರಿಕ-ಇರಾನ್ ಸಂಘರ್ಷದಲ್ಲಿ ಉಭಯ ರಾಷ್ಟ್ರಗಳು ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದೆ. ಆದರೆ ಶಾಶ್ವತ ಪರಿಹಾರದ ಹಾದಿಯು ಅಡೆತಡೆಗಳಿಂದ ತುಂಬಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಹಿವಾಟಿನ ವಿಧಾನವು ಹಿಂದಿನ ಆಡಳಿತಗಳು ವಿಫಲವಾದ ಟೆಹ್ರಾನ್ನೊಂದಿಗೆ ಐತಿಹಾಸಿಕ, ಸಮಗ್ರ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಆಶಾವಾದಿಗಳು ವಾದಿಸುತ್ತಾರೆ. ಅಮೆರಿಕದೊಂದಿಗಿನ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸುವುದು ತಮ್ಮ ಆರ್ಥಿಕತೆಯನ್ನು ಪುನರ್ನಿರ್ಮಿಸುವುದಕ್ಕೆ ಇರಾನ್ ಗೆ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಅದೇ ವೇಳೆ 1979 ರ ಕ್ರಾಂತಿಯ ನಂತರ ಐದು ದಶಕಗಳಲ್ಲಿ ನಡೆದ ಸಂಘರ್ಷದಲ್ಲಿ ಈ ವಿರಾಮವು ಕೇವಲ ಸಂಕ್ಷಿಪ್ತ ಮಧ್ಯಂತರವಾಗಬಹುದು ಎಂದು ನಿರಾಶಾವಾದಿಗಳು ಚಿಂತಿಸುತ್ತಾರೆ. ಇಸ್ಲಾಮಾಬಾದ್ ನಲ್ಲಿ ಶುಕ್ರವಾರ ಅಮೆರಿಕ-ಇರಾನ್ ಮಾತುಕತೆ ಆರಂಭವಾಗುತ್ತಿದ್ದಂತೆ, ಭರವಸೆ ಮತ್ತು ಹತಾಶೆ ಎರಡಕ್ಕೂ ಸಾಕಷ್ಟು ಅವಕಾಶವಿದೆ. ಎರಡೂ ಕಡೆಯವರು ವಿಜಯವನ್ನು ಘೋಷಿಸಿರುವುದು ಯಶಸ್ವಿ ಮಾತುಕತೆಗಳ ನಿರೀಕ್ಷೆಯನ್ನು ಸೂಚಿಸುತ್ತದೆ. ಆದರೆ ಎರಡೂ ಕಡೆಯವರ ಘೋಷಿತ ನಿಲುವುಗಳಾದ ವಾಷಿಂಗ್ಟನ್ನ 15-ಅಂಶಗಳ ಪ್ರಸ್ತಾವನೆ ಮತ್ತು ಟೆಹ್ರಾನ್ನ 10-ಅಂಶಗಳ ಪ್ರತಿವಾದದ ನಡುವಿನ ಬೃಹತ್ ವ್ಯತ್ಯಾಸವು ಮುಂದಿರುವ ಸವಾಲನ್ನು ರೂಪಿಸುತ್ತದೆ. ಇವು ಕೇವಲ ತಾಂತ್ರಿಕ ವಿಷಯಗಳಲ್ಲ, ಬದಲಾಗಿ ಅವು ಮೂಲಭೂತವಾಗಿ ಹೊಂದಾಣಿಕೆ ಮಾಡಲಾಗದ ವಿಶ್ವದೃಷ್ಟಿಕೋನಗಳನ್ನು ಮತ್ತು ಸಂಘರ್ಷಕ್ಕೆ ಕಾರಣವಾದ ವಿಷಯದ ಬಗ್ಗೆ ಸಂಪೂರ್ಣವಾಗಿ ವಿರುದ್ಧವಾದ ವ್ಯಾಖ್ಯಾನಗಳನ್ನು ಪ್ರತಿನಿಧಿಸುತ್ತವೆ. ಇಸ್ಲಾಮಾಬಾದ್ ಶಾಂತಿಗಾಗಿ ಒಂದು ಚೌಕಟ್ಟನ್ನು ನಿರ್ಮಿಸುತ್ತದೆಯೇ ಅಥವಾ ಹೊಸ ಮುಖಾಮುಖಿಗೆ ವೇದಿಕೆಯನ್ನು ಹೊಂದಿಸುತ್ತದೆಯೇ ಎಂಬುದು ಎರಡೂ ಕಡೆಯವರ ಐದು ಭದ್ರವಾದ ವಿರೋಧಾಭಾಸಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಮೊದಲನೆಯದು ಇರಾನ್ ನ ಪರಮಾಣು ಮತ್ತು ಕ್ಷಿಪಣಿಗಳಿಗೆ ಸಂಬಂಧಿಸಿದೆ. ಇರಾನ್ನ ಪರಮಾಣು ಸಾಮರ್ಥ್ಯಗಳು ಕೇಂದ್ರ ಘರ್ಷಣೆಯ ಬಿಂದುವಾಗಿ ಉಳಿದಿವೆ. ವಾಷಿಂಗ್ಟನ್ ನ ಕಾರ್ಯತಂತ್ರವು ಟೆಹ್ರಾನ್ನ ರಾಷ್ಟ್ರೀಯ ಪುಷ್ಟೀಕರಣ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ, ಇರಾನ್ ನ 10-ಅಂಶಗಳ ಪ್ರಸ್ತಾವನೆಯು ಯುರೇನಿಯಂ ಪುಷ್ಟೀಕರಣವನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನಾಗರಿಕ ಬಳಕೆಗೆ ಅವಿನಾಭಾವ ಹಕ್ಕು ಎಂದು ರೂಪಿಸುತ್ತದೆ; ಈ ನಿಲುವನ್ನು ಟೆಹ್ರಾನ್ ಈಗ ಅಮೆರಿಕ ಔಪಚಾರಿಕವಾಗಿ ಒಪ್ಪಿಕೊಳ್ಳಬೇಕು ಎಂದು ಹೇಳುತ್ತದೆ. ಕದನ ವಿರಾಮ ಘೋಷಣೆಯ ನಂತರದ ಟ್ರೂತ್ ಸೋಶಿಯಲ್ ಪೋಸ್ಟ್ನಲ್ಲಿ, ವಾಷಿಂಗ್ಟನ್ ಯಾವುದೇ ಮುಂದುವರಿದ ಇರಾನಿನ ಪುಷ್ಟೀಕರಣವನ್ನು ಸಹಿಸುವುದಿಲ್ಲ ಮತ್ತು ಉಳಿದ ಪರಮಾಣು ವಸ್ತುಗಳ ಸಂಪೂರ್ಣ ಹೊರತೆಗೆಯುವಿಕೆಯನ್ನು ಒತ್ತಾಯಿಸುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದರು. ಪುಷ್ಟೀಕರಣ ಮಟ್ಟಗಳು ಮತ್ತು ದಾಸ್ತಾನು ಮಿತಿಗಳ ಕುರಿತಾದ ಒಪ್ಪಂದಕ್ಕೆ ಅಡಿಪಾಯವನ್ನು ಪ್ರಸ್ತುತ ಯುದ್ಧ ಪ್ರಾರಂಭವಾಗುವ ಮೊದಲೇ ಹಾಕಲಾಗಿತ್ತು. ಕ್ಷಿಪಣಿಗಳ ಬಗ್ಗೆ ಹೇಳುವುದಾದರೆ, ಅಮೆರಿಕಕ್ಕೆ ಇರಾನ್ ನ ದೀರ್ಘ-ಶ್ರೇಣಿಯ ಸಾಮರ್ಥ್ಯಗಳು ಈ ಪ್ರದೇಶದಲ್ಲಿ ಅತ್ಯಂತ ಅಸ್ಥಿರ ಅಂಶವಾಗಿದೆ. ಇರಾನ್ ಗೆ ಅವು ರಾಷ್ಟ್ರೀಯ ಉಳಿವಿನ ಸಂಗತಿಯಾಗಿದೆ. ಬೃಹತ್ ಕ್ಷಿಪಣಿ ಶಸ್ತ್ರಾಗಾರವು ಅದರ ತಡೆಗಟ್ಟುವಿಕೆಯ ಕಾರ್ಯತಂತ್ರದ ಕೇಂದ್ರವಾಗಿದೆ. ಯುಎಸ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳಿಗೆ ಅವು ಅತ್ಯಂತ ಅಪಾಯಕಾರಿ ಬೆದರಿಕೆಯಾಗಿದೆ. ಇಸ್ರೇಲ್ ಮತ್ತು ಅರಬ್ ನೆರೆಹೊರೆಯವರ ಮೇಲೆ ಟೆಹ್ರಾನ್ ನ ನಿರಂತರ ಕ್ಷಿಪಣಿ ದಾಳಿಗಳಲ್ಲಿ ಆ ಪ್ರತಿಪಾದನೆಯು ಸ್ಪಷ್ಟವಾಗಿದೆ. ಎರಡನೇ ಅಡೆತಡೆ ಹಾರ್ಮುಜ್ ಜಲಸಂಧಿಯ ಬಗ್ಗೆ ಆಗಿದೆ. ಟ್ರಂಪ್ ಅವರ ಕದನ ವಿರಾಮ ಘೋಷಣೆಯು ಜಲಸಂಧಿಯ ಸಂಪೂರ್ಣ, ತಕ್ಷಣದ ಮತ್ತು ಸುರಕ್ಷಿತ ತೆರೆಯುವಿಕೆಯನ್ನು ಕೋರಿತು, ಅಂದರೆ ಯುದ್ಧಪೂರ್ವದ ಯಥಾಸ್ಥಿತಿಗೆ ಮರಳುವುದನ್ನು ಸೂಚಿಸುತ್ತದೆ. ಮಾತುಕತೆಗಳಿಗೆ ಟೆಹ್ರಾನ್ ಒಪ್ಪಿಕೊಂಡಿದ್ದರೂ, ಈ ಅಂಶವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಇರಾನ್ ಈ ವ್ಯವಸ್ಥೆಯನ್ನು ಇರಾನ್ ನ ಸಶಸ್ತ್ರ ಪಡೆಗಳ ಸಮನ್ವಯದ ಅಡಿಯಲ್ಲಿ ಸುರಕ್ಷಿತ ಮಾರ್ಗ ಎಂದು ವಿವರಿಸಿದೆ. ಅಂತರರಾಷ್ಟ್ರೀಯ ಜಲಮಾರ್ಗವನ್ನು ತನ್ನ ರಾಷ್ಟ್ರೀಯ ನಿಯಂತ್ರಣಕ್ಕೆ ತರುವ ಟೆಹ್ರಾನ್ನ ಮಹತ್ವಾಕಾಂಕ್ಷೆಯು ಈ ನಿಲುವಿನ ಆಧಾರವಾಗಿದೆ. ಆದರೆ ಟ್ರಂಪ್ ಹಣ ಗಳಿಸಲು ಮತ್ತು ಪ್ರತಿಸ್ಪರ್ಧಿ ಶಕ್ತಿಗಳ ಮೇಲೆ ಹತೋಟಿ ಸಾಧಿಸಲು ಜಲಸಂಧಿಯಲ್ಲಿ ಜಂಟಿ ಯುಎಸ್-ಇರಾನ್ ಟೋಲ್ ಬೂತ್ ಬಗ್ಗೆಯೂ ಯೋಚಿಸಿದ್ದಾರೆ. ಇತ್ತೀಚೆಗೆ, ಇರಾನಿನ ಅಧಿಕಾರಿಗಳು ಪ್ರತಿ ಟ್ಯಾಂಕರ್ ಗೆ 2 ಮಿಲಿಯನ್ ಡಾಲರ್ ವರೆಗೆ ಸಾಗಣೆ ಶುಲ್ಕವನ್ನು ವಿಧಿಸುವ ಪ್ರಸ್ತಾಪವನ್ನು ಪರಿಚಯಿಸಿದ್ದಾರೆ. ಇದರ ಆದಾಯದ ಒಂದು ಭಾಗವನ್ನು ಒಮಾನ್ ನೊಂದಿಗೆ ಹಂಚಿಕೊಳ್ಳಬಹುದು. ಅಂತಹ ಸುಂಕವನ್ನು ಅಧಿಕೃತಗೊಳಿಸುವುದರಿಂದ ಹಾರ್ಮುಜ್ ಜಲಸಂಧಿಯನ್ನು ಜಾಗತಿಕ ಸಮುದ್ರ ಸಾಮಾನ್ಯದಿಂದ ಇರಾನಿನ ನಿರ್ವಹಣೆಯ ಕಾರಿಡಾರ್ ಆಗಿ ಮೂಲಭೂತವಾಗಿ ಪರಿವರ್ತಿಸುತ್ತದೆ. ವಿಶ್ವದ ಇಂಧನ ಪೂರೈಕೆಯ ಸರಿಸುಮಾರು 20% ಈ ಕಿರಿದಾದ ಮಾರ್ಗವನ್ನು ದಾಟುವುದರಿಂದ, ಈ ಯೋಜನೆಯು ಭಾರತ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದಿಂದ ತಕ್ಷಣದ ಪ್ರತಿರೋಧವನ್ನು ಎದುರಿಸಿದೆ. ಬುಧವಾರ ನಡೆದ ಶಾಂತಿ ಮಾತುಕತೆಗಳನ್ನು ಸ್ವಾಗತಿಸುತ್ತಾ, ಭಾರತವು ಜಲಸಂಧಿಯಲ್ಲಿ ಅಡೆತಡೆಯಿಲ್ಲದ ಸಂಚಾರ ಸ್ವಾತಂತ್ರ್ಯ ಮೇಲುಗೈ ಸಾಧಿಸುತ್ತದೆ ಎಂಬ ನಿರೀಕ್ಷೆಯನ್ನು ಒತ್ತಿಹೇಳಿತು. ಮೂರನೆಯದ್ದು ಆರ್ಥಿಕ ವಿಷಯ. ಇರಾನ್ ನಲವತ್ತು ವರ್ಷಗಳಿಂದ ಸಂಗ್ರಹವಾಗಿರುವ ಯುಎಸ್ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ಎಲ್ಲಾ ಬಹುಪಕ್ಷೀಯ ನಿರ್ಬಂಧಗಳ ಆಡಳಿತಗಳನ್ನು ವಿಸರ್ಜಿಸುವಂತೆ ಒತ್ತಾಯಿಸುತ್ತದೆ. ಟೆಹ್ರಾನ್ ನಿರ್ಬಂಧಗಳ ಪರಿಹಾರವನ್ನು ಯಾವುದೇ ಇತ್ಯರ್ಥಕ್ಕೆ ಅಗತ್ಯವಾದ ಮೊದಲ ಹೆಜ್ಜೆಯಾಗಿ ನೋಡುತ್ತದೆ. ಆದರೆ ವಾಷಿಂಗ್ಟನ್ ನಿರ್ಬಂಧಗಳ ಪರಿಹಾರವನ್ನು ಎಲ್ಲಾ ಕ್ಷೇತ್ರಗಳಲ್ಲಿ ಇರಾನಿನ ಅನುಸರಣೆಗೆ ಅಂತಿಮ ಪ್ರತಿಫಲವೆಂದು ಪರಿಗಣಿಸುತ್ತದೆ. ಈ ಎರಡು ವಿರುದ್ಧ ಟೈಮ್ ಲೈನ್ ಗಳನ್ನು ಸಮನ್ವಯಗೊಳಿಸುವುದು ಸಮಾಲೋಚಕರಿಗೆ ಸವಾಲಾಗಿದೆ. ನಾಲ್ಕನೆಯದ್ದು ಇರಾನ್ ನ ಪ್ರಾದೇಶಿಕ ಮಿತ್ರರಾಷ್ಟ್ರಗಳ ಜಾಲಕ್ಕೆ ಸಂಬಂಧಿಸಿದೆ. ಇದನ್ನು ವಾಷಿಂಗ್ಟನ್ನಲ್ಲಿ ಸಾಮಾನ್ಯವಾಗಿ ಪ್ರಾಕ್ಸಿಗಳು ಎಂದು ಕರೆಯಲಾಗುತ್ತದೆ. ಅಮೆರಿಕ ಈ ಗುಂಪುಗಳನ್ನು ಪ್ರಮುಖ ಭದ್ರತಾ ಬೆದರಿಕೆಯಾಗಿ ನೋಡುತ್ತದೆ. ಟೆಹ್ರಾನ್ ಹೆಜ್ಬೊಲ್ಲಾ, ಹಮಾಸ್ ಮತ್ತು ಹೌತಿಗಳಿಗೆ ಬೆಂಬಲವನ್ನು ನಿಲ್ಲಿಸಬೇಕು, ಅವರ ಗಡಿಯಾಚೆಗಿನ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು, ಅವರಿಗೆ ಮಿಲಿಟರಿ ಸಾಮರ್ಥ್ಯಗಳನ್ನು ಒದಗಿಸುವುದನ್ನು ನಿಲ್ಲಿಸಬೇಕು ಎಂದು ಅಮೆರಿಕ ಒತ್ತಾಯಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಟೆಹ್ರಾನ್ ಈ ಸಂಬಂಧಗಳನ್ನು ತಡೆಗಟ್ಟುವಿಕೆ ಮತ್ತು ಪ್ರಾದೇಶಿಕ ಪ್ರಭಾವದ ಅಗತ್ಯ ಸಾಧನಗಳಾಗಿ ನೋಡುತ್ತದೆ. ಇರಾನ್ನ ಹತ್ತು ಅಂಶಗಳ ಪ್ರಸ್ತಾವನೆಯು ಶಾಂತಿಗಾಗಿ ಪೂರ್ವಭಾವಿ ಷರತ್ತಾಗಿ ಹೆಜ್ಬೊಲ್ಲಾ ಮತ್ತು ಇತರ ಮಿತ್ರರಾಷ್ಟ್ರಗಳ ಮೇಲಿನ ಇಸ್ರೇಲಿ ಮತ್ತು ಯುಎಸ್ ದಾಳಿಗಳನ್ನು ಕೊನೆಗೊಳಿಸುವುದನ್ನು ಒತ್ತಿಹೇಳುತ್ತದೆ. ಈ ದಾಳಿಗಳನ್ನು ಕೊನೆಗೊಳಿಸುವ ಬಗ್ಗೆ ಇಸ್ರೇಲ್ ಅಸ್ಪಷ್ಟವಾಗಿದೆ. ಐದನೇ ಪಾಯಿಂಟ್ ಪ್ರಾದೇಶಿಕ ಭದ್ರತೆ. ಪ್ರದೇಶದಾದ್ಯಂತದ ಎಲ್ಲಾ ನೆಲೆಗಳು ಮತ್ತು ಸ್ಥಾನಗಳಿಂದ ಯುಎಸ್ ಯುದ್ಧ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಇರಾನ್ ಕರೆ ನೀಡುತ್ತಿದೆ. ಇದು 1991 ರಿಂದ ನಿರ್ಮಿಸಲಾದ ಕೊಲ್ಲಿಯಲ್ಲಿ ಅಮೆರಿಕನ್ ಭದ್ರತಾ ವ್ಯವಸ್ಥೆಯನ್ನು ಕೆಡವುವ ಬೇಡಿಕೆಯಾಗಿದೆ. ಇರಾನ್ನ ಪ್ರಾದೇಶಿಕ ಪ್ರಾಬಲ್ಯವು ಮೊದಲು ಗಲ್ಫ್ ರಾಷ್ಟ್ರಗಳು ಮತ್ತು ಇಸ್ರೇಲ್ ಈ ಪ್ರದೇಶದಲ್ಲಿ ಯುಎಸ್ ಭದ್ರತಾ ಉಪಸ್ಥಿತಿಯನ್ನು ಅವಲಂಬಿಸಲು ಕಾರಣವಾಯಿತು. ದೀರ್ಘಕಾಲೀನ ಪ್ರಾದೇಶಿಕ ಭದ್ರತಾ ಚೌಕಟ್ಟು, ಜಾಗತಿಕ ಭದ್ರತಾ ಖಾತರಿಗಳಿಗಾಗಿ ಇರಾನಿನ ಹಸ್ತಕ್ಷೇಪ ಮಾಡದಿರುವಿಕೆ ಅಪ್ರಾಯೋಗಿಕವಾಗಿದೆ. ಈ ಮೂಲ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಶಾಂತಿ ದುರ್ಬಲವಾಗಿರುತ್ತದೆ. ಈ ಸವಾಲುಗಳನ್ನು ಪರಿಹರಿಸಲು ಅಮೆರಿಕ-ಇರಾನ್ ಒಮ್ಮತಕ್ಕಿಂತ ಹೆಚ್ಚಿನದ್ದು ಅಗತ್ಯವಿದೆ. ಇದು ಎರಡೂ ರಾಜಧಾನಿಗಳಲ್ಲಿ ಆಂತರಿಕ ರಾಜಕೀಯ ವಿಭಜನೆಗಳನ್ನು ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಘರ್ಷಣೆಯನ್ನು ಎದುರಿಸಬೇಕಾಗುತ್ತದೆ. ಇಸ್ರೇಲ್ ಮತ್ತು ಯುಎಇ ಈಗಾಗಲೇ ಟ್ರಂಪ್ ಅವರ ಕದನ ವಿರಾಮ ನಿಯಮಗಳ ಬಗ್ಗೆ ಅಸಮಾಧಾನವನ್ನು ಸೂಚಿಸುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ಇರಾನಿನ ನಾಯಕತ್ವವು ಕೂಡ ಈ ಬಗ್ಗೆ ಎಚ್ಚರದಲ್ಲಿದೆ.
ದ್ವಿತೀಯ ಪಿಯುಸಿ ಫಲಿತಾಂಶ| ಇಂದ್ರಪ್ರಸ್ಥ ಕಾಲೇಜಿನ ವಿದ್ಯಾರ್ಥಿನಿ ಅನಘಾಗೆ 597 ಅಂಕ
ಉಪ್ಪಿನಂಗಡಿ: 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನಘಾ ಕೆ. ಅವರು ವಿಜ್ಞಾನ ವಿಭಾಗದಲ್ಲಿ 600ರಲ್ಲಿ 597 ಅಂಕಗಳಿಸಿದ್ದಾರೆ. ಅನಘಾ ಕೆ. ಅವರು ಕೊಕ್ಕಡದ ಹರಿಪ್ರಸಾದ್ ಕೆದಿಲಾಯ ಮತ್ತು ಶ್ವೇತಾ ಎಚ್.ಕೆ. ದಂಪತಿಯ ಪುತ್ರಿಯಾಗಿದ್ದು, ತನ್ನ ಪ್ರಾಥಮಿಕ ಶಿಕ್ಷಣವನ್ನು ನೆಲ್ಯಾಡಿಯ ಜ್ಞಾನೋದಯ ಬೆಥನಿ ಶಾಲೆಯಲ್ಲಿ ಪೂರೈಸಿದ್ದರು. ಪ್ರೌಢಶಿಕ್ಷಣವನ್ನು ಸೈಂಟ್ ಜಾರ್ಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದರು. ಬಳಿಕ ಪಿಯುಸಿ ಶಿಕ್ಷಣವನ್ನು ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿ, ಇದೀಗ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಐಟಿ ಎಂಜಿನಿಯರ್ ಆಗುವ ಕನಸು: ಅನಘಾ ಕೆ. ಅವರನ್ನು ʼವಾರ್ತಾಭಾರತಿʼ ಮಾತನಾಡಿಸಿದಾಗ, ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗುತ್ತೇನೆಂದು ನಿರೀಕ್ಷಿಸಿರಲಿಲ್ಲ. ಆದರೆ 95ಶೇ. ಕ್ಕಿಂತ ಹೆಚ್ಚು ಅಂಕಗಳಿಸುವ ನಿರೀಕ್ಷೆ ಇತ್ತು. ನನ್ನ ಶಿಕ್ಷಣಕ್ಕೆ ಇಂದ್ರಪ್ರಸ್ಥ ಕಾಲೇಜಿನಲ್ಲಿಯೂ ಉತ್ತಮ ಪ್ರೋತ್ಸಾಹ ದೊರೆತಿದೆ. ತನ್ನ ಅಕ್ಕ ಸಮನ್ವಿತಾ ಕೆ. ಕೂಡಾ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರೈಸಿದ್ದು, ಅಲ್ಲಿ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದಿದ್ದಳು. ಅವಳ ಮಾರ್ಗದರ್ಶನ ಹಾಗೂ ನನ್ನ ತಂದೆ ನೆಲ್ಯಾಡಿಯ ಸೈಂಟ್ ಜಾರ್ಜ್ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದು ಅವರ ಹಾಗೂ ತಾಯಿಯ ಸಹಕಾರ ನನ್ನ ಕಲಿಕೆಗೆ ಅನುದಿನ ಲಭಿಸಿತ್ತು. ಅವರೆಲ್ಲರ ಪ್ರೋತ್ಸಾಹ, ಸಹಕಾರ ಪಡೆದ ನಾನು ಅಂದಿನ ಪಾಠವನ್ನು ಅಂದೇ ಮನನ ಮಾಡಿಕೊಂಡು ನಿರಂತರ ಶ್ರಮ ಪಟ್ಟ ಕಾರಣ ರಾಜ್ಯಕ್ಕೆ ಎರಡನೇ ರ್ಯಾಂಕ್ ನನಗೆ ಬರುವಂತಾಗಿದೆ. ನನಗೂ ಕೂಡಾ ಅಕ್ಕನಾಗೇ ಐಟಿ ಕಂಪೆನಿಯಲ್ಲಿ ಎಂಜಿನಿಯರ್ ಆಗುವ ಕನಸಿದೆ. ಎಲ್ಲರ ಸಹಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.
Ballari | ಮಕ್ಕಳಿಗೆ ಕಾನೂನು ಅರಿವು ಅಗತ್ಯ : ಎಎಸ್ಐ ಬಸವರಾಜ
ಬಳ್ಳಾರಿ / ಕಂಪ್ಲಿ: ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸಿ, ಅಪರಾಧ ತಡೆಗಟ್ಟಲು ಕಾನೂನು ತಿಳಿವಳಿಕೆ ಅಗತ್ಯವಾಗಿದೆ ಎಂದು ಪೊಲೀಸ್ ಠಾಣೆಯ ಎಎಸ್ಐ ಬಸವರಾಜ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಮಕ್ಕಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ವ್ಯವಸ್ಥೆಯ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಮಕ್ಕಳ ಸುರಕ್ಷತೆ ಹಾಗೂ ಪೊಲೀಸರೊಂದಿಗೆ ಬಾಂಧವ್ಯ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಪೋಕ್ಸೊ ಕಾಯ್ದೆ ಅತ್ಯಂತ ಕಠಿಣವಾಗಿದ್ದು, ಇದರ ಬಗ್ಗೆ ಮಕ್ಕಳು ಸೇರಿದಂತೆ ಎಲ್ಲರೂ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು. ಕೇಂದ್ರದ ಪ್ರಾಚಾರ್ಯ ಬಡಿಗೇರ ಜಿಲಾನ್ ಸಾಬ್ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದು ಪೊಲೀಸ್ ಕಾರ್ಯವೈಖರಿ ಕುರಿತು ಸಂಪೂರ್ಣ ಮಾಹಿತಿ ನೀಡಲಾಯಿತು. ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಈ ವೇಳೆ ಮಕ್ಕಳ ಸಹಾಯವಾಣಿ, ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಠಾಣೆಗೆ ಭೇಟಿ ನೀಡಿ ಪೊಲೀಸರ ದೈನಂದಿನ ಕರ್ತವ್ಯ, ಗಸ್ತು, ಠಾಣೆಯ ವ್ಯವಸ್ಥೆ, ಸಿಬ್ಬಂದಿ ಕೆಲಸ, ತಾತ್ಕಾಲಿಕ ಸೆಲ್, ಬೇಡಿ, ಬಂದೂಕು ಸೇರಿದಂತೆ ಹಲವು ಅಂಶಗಳನ್ನು ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಮೇಶ್, ದತ್ತಾತ್ರೇಯ, ದೊಡ್ಡಬಸಮ್ಮ, ಶಿಕ್ಷಕಿಯರಾದ ಕೆ. ಶ್ವೇತಾ, ಜಯಲಕ್ಷ್ಮೀ, ಸುಧಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯನಗರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಮನವಿ
ವಿಜಯನಗರ (ಹೊಸಪೇಟೆ, : ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಪಿ.ಸಿ ಪೋರ್ ಬೇ ಕಾಲುವೆಯಲ್ಲಿ ಸುಮಾರು 40 ರಿಂದ 45 ವರ್ಷದ ಅನಾಮಧೇಯ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ವ್ಯಕ್ತಿಯು ಸುಮಾರು 5.6 ಅಡಿ ಎತ್ತರ, ಎಣ್ಣೆಗೆಂಪು, ಸಾಧಾರಣ ಮೈಕಟ್ಟು ಹೊಂದಿದ್ದು, ಬಿಳಿ ಬಣ್ಣದ ಅರ್ದ ತೋಳಿನ ಗೆರೆವುಳ್ಳ ಶರ್ಟ್, ಕಪ್ಪು ಮತ್ತು ಬಿಳಿ ಮಿಶ್ರಿತ ಪಟ ಪಟ ಲುಂಗಿ, ಕೆಂಪು ಮತ್ತು ಹಳದಿ ಮಿಶ್ರಿತ ಉಡದಾರ ಧರಿಸಿದ್ದಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಸಂ:9480805700, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊ.ಸಂ: 9480805701, ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಸಂ:9480805702, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ 9480805720, ಹಂಪಿ ವೃತ್ತದ ಕಮಲಾಪುರ ಸಿಪಿಐ 9480805732, ಕಮಲಾಪುರ ಪೊಲೀಸ್ ಠಾಣೆಯ ಪಿಎಸ್ಐ 9480805762 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ಬಾರಿಯ CM ಮಮತಾ ಬ್ಯಾನರ್ಜಿ ಬಳಿ ಇರುವುದು ಕೇವಲ 75,700 ರೂ. ನಗದು!
ಚುನಾವಣಾ ಅಫಿಡವಿಟ್ ನಲ್ಲಿ 'ದೀದಿ'ಯ ಆಸ್ತಿ ವಿವರ ಬಹಿರಂಗ
ವಿಜಯನಗರ | ಯೋಜನೆಗಳ ಅನುಷ್ಠಾನ ವಿಳಂಬ ಸಲ್ಲದು : ಡಾ.ಕೆ.ಜಿ.ಜಗದೀಶ್ ಎಚ್ಚರಿಕೆ
ವಿಜಯನಗರ (ಹೊಸಪೇಟೆ) : ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೀರು ಸರಬರಾಜು ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ತಾಂತ್ರಿಕ ನೆಪವೊಡ್ಡಿ ವಿಳಂಬ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳು ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುವುದರಿಂದ ಕಾಮಗಾರಿಗಳ ಗುಣಮಟ್ಟ ಕಾಪಾಡುವುದು ಅತ್ಯಗತ್ಯ. ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ಅಥವಾ ವಿಳಂಬವಾದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನುದಾನದ ಕೊರತೆ ಹಾಗೂ ಇತರೆ ಕಾರಣಗಳಿಂದ ಕುಡಿಯುವ ನೀರು ಯೋಜನೆಗಳು ಸೇರಿದಂತೆ ಹಲವು ಕಾಮಗಾರಿಗಳು ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, ತಕ್ಷಣ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಬಾಕಿ ಬಿಲ್ ಪಾವತಿ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಯೋಜನೆಗಳನ್ನು ಆರಂಭಿಸಲು ಕ್ರಮವಹಿಸಬೇಕು ಎಂದರು. ವಿಜಯನಗರ ಜಿಲ್ಲೆ ರೂಪುಗೊಂಡಿದ್ದರೂ ಕೆಲವು ಕಚೇರಿಗಳು ಇನ್ನೂ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಂಬಂಧಿತ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ನಿರ್ದೇಶಿಸಿದರು. ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆ ಜನರಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುವುದು ಮೊದಲ ಆದ್ಯತೆಯಾಗಿದ್ದು, ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನವನ್ನು ದುರ್ಬಳಕೆ ಮಾಡದೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಅಕ್ರಮ್ ಷಾ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲಾ ಪಂಚಾಯತ್ಗೆ 33,777.93 ಲಕ್ಷ ರೂ. ಹಾಗೂ ತಾಲೂಕು ಪಂಚಾಯತ್ಗಳಿಗೆ 82,787.39 ಲಕ್ಷ ರೂ. ಸೇರಿ ಒಟ್ಟು 1,16,565.32 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದರು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಒಟ್ಟು 29 ಇಲಾಖೆಗೆ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಹರಪನಹಳ್ಳಿ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು, ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಐದು ಸ್ಥಳಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಕ್ರೀಡಾ ಪರಿಕರಗಳೊಂದಿಗೆ ಮಾದರಿ ಅಂಗನವಾಡಿ ಕಟ್ಟಡ ನಿರ್ಮಿಸಲು ಡಾ. ಜಗದೀಶ್ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಯೋಜನಾ ನಿರ್ದೇಶಕ ಅನ್ನದಾನಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಎಸ್. ದೀಪಾ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಲ್ಲಿ 250 ಹೊಸ ಬಿಎಸ್ಸೆನ್ನೆಲ್ ಟವರ್ಗಳಿಗೆ ಬೇಡಿಕೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಎ.9: ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 196 ಬಿಎಸ್ಎನ್ಎಲ್ ಟವರ್ಗಳಿದ್ದು, ಇತ್ತೀಚೆಗೆ 39 ಹೊಸ 4ಜಿ ಟವರ್ಗಳು ಮಂಜೂರಾಗಿವೆ. ಇದರಲ್ಲಿ 30 ಟವರ್ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 196ಟವರ್ಗಳಲ್ಲಿ 115 ಟವರ್ಗಳನ್ನು 3ಜಿಯಿಂದ 4ಜಿಗೆ ಪರಿವರ್ತನೆ ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 235 ಟವರ್ಗಳು ಸೇವೆಗೆ ಲಭ್ಯ ಇದೆ. ಇನ್ನು 200- 250 ಟವರ್ಗಳು ಬೇಕಾಗಿದ್ದು, ಈ ಬಗ್ಗೆ ಪಟ್ಟಿ ಮಾಡಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಬಿಎಸ್ಎನ್ಎಲ್ ಟವರ್ ಕಾರ್ಯ ಧಕ್ಷತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಬಿಎಸ್ಎನ್ಎಲ್ ಗ್ರಾಹಕರ ಹಿತರಕ್ಷಣೆಗೆ ಸಂಬಂಧಪಟ್ಟಂತೆ ಉಡುಪಿ ನಗರದಲ್ಲಿರುವ ಬಿಎಸ್ಎನ್ಎಲ್ ಮುಖ್ಯ ಕಚೇರಿಯಲ್ಲಿ ಗುರುವಾರ ಕರೆದ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು. ಜಿಲ್ಲೆಯಲ್ಲಿ ಖಾಸಗಿ ನೆಟ್ವರ್ಕ್ ಸಂಸ್ಥೆಗಳ 500-600 ಟವರ್ಗಳಿದ್ದು, ಅವರ ರೀತಿಯಲ್ಲಿ ಸೇವೆ ನೀಡಬೇಕಾದರೆ ಬಿಎಸ್ಎನ್ಎಲ್ ಟವರ್ಗಳ ಈಗಿರುವ 235 ಸಂಖ್ಯೆಯನ್ನು 500ರವರೆಗೆ ಹೆಚ್ಚಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳು ಪಟ್ಟಿ ಮಾಡಿಕೊಟ್ಟರೆ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸ ಲಾಗುವುದು ಎಂದು ಅವರು ಹೇಳಿದರು. ಈ ಹಿಂದೆ ಬಿಎಸ್ಎನ್ಎಲ್ ಟವರ್ಗಳಲ್ಲಿ ಬ್ಯಾಟರಿ ಸಮಸ್ಯೆಗಳಿದ್ದು, ಇದರಿಂದ ಟವರ್ ಕಾರ್ಯ ಎಸಗುತ್ತಿರಲಿಲ್ಲ. ಇದೀಗ ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಅದೇ ರೀತಿ ಜನರೇಟರ್ ಸಮಸ್ಯೆ ಪರಿಹಾರ ಕಾರ್ಯ ಶೇ.90ರಷ್ಟು ಪ್ರಗತಿಯಲ್ಲಿದೆ. ಹೊಸದಾಗಿ ಬಂದ 4ಜಿ ಟವರ್ ಗಳಿಗೆ ಸೋಲಾರ್ ವ್ಯವಸ್ಥೆ ಇರುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು. ಖಾಸಗಿ ನೆಟ್ವರ್ಕ್ಗಳಿಗೆ ಸ್ಪರ್ಧೆ ಕೊಡುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಸರಿಪರಿಸಲು ಯೋಜನೆ ರೂಪಿಸಲಾಗುವುದು. ಇಂಟರ್ನೆಟ್ ಸೇರಿದಂತೆ ವಿವಿಧ ಸೇವೆಗಳನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಮುಂದಿನ ಮೇ 10ರೊಳಗೆ ಮತ್ತೆ ಸಭೆ ಕರೆಯ ಲಾಗುವುದು ಎಂದು ಸಂಸದರು ತಿಳಿಸಿದರು. ಸಾಲಿಗ್ರಾಮ ಮತ್ತು ಸಾಸ್ತಾನ ನೆಟ್ವರ್ಕ್ ಸಮಸ್ಯೆ, ಜಾತ್ರೆಗಳಲ್ಲಿ ಬಿಎಸ್ಎನ್ಎಲ್ ಬಗ್ಗೆ ಪ್ರಚಾರ ಪಡಿಸುವ ಕುರಿತ ಅಧಿಕಾರಿಗಳ ನಿರಾಸಕ್ತಿ, ಮಣಿಪಾಲದಂತಹ ಪ್ರಮುಖ ಪಟ್ಟಣದಲ್ಲಿಯೇ ನೆಟ್ವರ್ಕ್ ಸಮಸ್ಯೆಗಳಿರುವ ಬಗ್ಗೆ ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು ಸಭೆಯಲ್ಲಿ ಗಮನ ಸೆಳೆದರು. ಮಣಿಪಾಲ ಮಾಹೆ ಕ್ಯಾಂಪನ್ ಒಳಗೆ ಖಾಸಗಿ ನೆಟ್ವರ್ಕ್ ಸಂಸ್ಥೆಗಳಿಗೆ ಟವರ್ ಹಾಕಲು ಅನುಮತಿ ನೀಡುತ್ತಿದ್ದು, ಬಿಎಸ್ಎನ್ಎಲ್ಗೆ ಅವಕಾಶ ನೀಡುತ್ತಿಲ್ಲ. ಇದರಿಂದ ಮಣಿಪಾಲ ಆಸ್ಪತ್ರೆ ಸೇರಿದಂತೆ ಎಲ್ಲೂ ಸರಿಯಾದ ನೆಟ್ವರ್ಕ್ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಈ ಕುರಿತು ಮಾಹೆ ಮುಖ್ಯಸ್ಥರಿಗೆ ಪತ್ರ ಬರೆದು ಕೂಡಲೇ ಮಣಿಪಾಲ ಆಸ್ಪತ್ರೆ ಹಾಗೂ ಎಂಐಟಿ ಸೇರಿದಂತೆ ಮೂರು ನಾಲ್ಕು ಕಡೆಗಳಲ್ಲಿ ಟವರ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಬಿಎಸ್ಎನ್ಎಲ್ನ ಜನರಲ್ ಮೆನೆಜರ್ ಹೇಮಂತ್ ಬೊರ್ಲೆ, ಡೆಪ್ಯುಟಿ ಜನರಲ್ ಮೆನೇಜರ್ಗಳಾದ ಗೀತಾ ಕುಮಾರಿ, ಕೃಷ್ಣ ಮೊಗೇರ, ಮಮತಾ ಎನ್. ಮೊದಲಾದವರು ಉಪಸ್ಥಿತರಿದ್ದರು.
2nd PUC Result-2026 | ಬೀದರ್ನ ಸಾನಿಯಾ ಅಲಿಸಾಬ್ಗೆ ಶೇ.98 ಅಂಕ
ಬೀದರ್ : ನಗರದ ಶಾಹಿನ್ ಕಾಲೇಜಿನ ಸಾನಿಯಾ ಅಲಿಸಾಬ್ ಪಿಯುಸಿಯಲ್ಲಿ ಶೇ.98 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದಿರ್ ಹಾಗೂ ಸಾನಿಯಾ ಅವಳ ತಂದೆ ಅಲಿಸಾಬ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಒಟ್ಟು 1,117 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಸಾನಿಯಾ ಶೇ. 98 ರಷ್ಟು ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ. ಇವರು ಯುಪಿಎಸ್ಸಿ ಮಾಡುವ ಕನಸು ಹೊಂದಿದ್ದಾರೆ. ಸಾನಿಯಾ ಅವರ ತಂದೆ ಅಲಿಸಾಬ್ ಅವರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕುರಿತು ವಾರ್ತಾ ಭಾರತಿಯೊಂದಿಗೆ ಮಾತನಾಡಿದ ಅವರು, ಮಕ್ಕಳನ್ನು ಅವರ ಗುರಿಯಂತೆ ಪೋಷಕರು ಓದಿಸಬೇಕು. ವಿದ್ಯಾರ್ಥಿಗಳಲ್ಲಿ ಹೆಣ್ಣು ಗಂಡು ಎನ್ನುವ ಭೇದ ಮಾಡಬಾರದು. ತಮ್ಮ ಮಗಳು ಶೇ. 98 ಅಂಕ ಪಡೆದು ಶಾಹಿನ್ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು ಖುಷಿ ಇದೆ. ಅವಳ ಇಚ್ಛೆಯಂತೆ ಆಕೆಯು ಯುಪಿಎಸ್ಸಿ ಓದಲಿ. ಅದಕ್ಕೆ ನಮ್ಮ ಸಹಕಾರವಿರುತ್ತದೆ ಎಂದು ತಿಳಿಸಿದ್ದಾರೆ.
ಚಾರಣಿಗರ ಸುರಕ್ಷತೆಗೆ ವಿಮೆ, ಆ್ಯಪ್ ಜೊತೆಗೆ ಎಸ್ಒಪಿ ರೂಪಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ
ಬೆಂಗಳೂರು : ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ವಿಮೆ, ಆ್ಯಪ್ ಜೊತೆಗೆ ಪ್ರಮಾಣಿತ ಮಾನದಂಡ (ಎಸ್ಒಪಿ) ರೂಪಿಸುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತಡಿಯಾಂಡಮೋಲ್ ಚಾರಣದ ವೇಳೆ ಕೇರಳದ ಶರಣ್ಯ ಎಂಬ ಮಹಿಳೆ 3 ದಿನ ಕಾಡಿನಲ್ಲಿ ದಿನ ಕಳೆದಿರುವುದು ಹಾಗೂ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತದ ಬಳಿ ಬಾಲಕಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಖಂಡ್ರೆ ಈ ಲಿಖಿತ ಸೂಚನೆ ಕೊಟ್ಟಿದ್ದಾರೆ. ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ಇ-ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆ ಮಾಡುವ ಆ್ಯಪ್ ಮಾದರಿಯಲ್ಲಿಯೇ ಚಾರಣ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್ನಲ್ಲಿ ಆ್ಯಪ್ ಅಳವಡಿಸಿದರೆ, ಯಾರೇ ದಾರಿ ತಪ್ಪಿಸಿಕೊಂಡರೂ ಅವರ ಶೋಧಕಾರ್ಯ ಸುಲಭವಾಗುತ್ತದೆ. ಹೀಗಾಗಿ ಆ್ಯಪ್ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಮತ್ತು ಚಾರಣಿಗರಿಗೆ ಗುಂಪು ವಿಮೆ ಮಾಡಿಸುವಂತೆ ಅರಣ್ಯ ಸಚಿವರು ನಿರ್ದೇಶಿಸಿದ್ದಾರೆ. ಇದರೊಂದಿಗೆ ಚಾರಣಿಗರಿಗೆ ಮಾರ್ಗದರ್ಶನ ಮಾಡುವ ನೇಚರ್ ಗೈಡ್ಗಳಿಗೆ ಕಡ್ಡಾಯವಾಗಿ ವೈರ್ಲೆಸ್ ಸೆಟ್ ನೀಡಬೇಕು. ಚಾರಣಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಗೈಡ್ಗಳಿಗೆ ಹೊಣೆಗಾರಿಕೆ ನಿಗದಿ ಮಾಡುವಂತೆಯೂ ಸಚಿವರು ಸೂಚಿಸಿದ್ದಾರೆ.
2nd PUC Result-2026 | ಬೀದರ್ನ ಶಾಹಿನ್ ಕಾಲೇಜಿಗೆ ಶೇ. 96.41 ಫಲಿತಾಂಶ
ಬೀದರ್ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ಮೂಲಕ ಇಲ್ಲಿನ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಸಾಧನೆಗೈದಿದ್ದು, ಕಾಲೇಜಿಗೆ ಒಟ್ಟು ಶೇ. 96.41 ಫಲಿತಾಂಶ ಲಭಿಸಿದೆ. ಕಾಲೇಜಿನ ಒಟ್ಟು 1,117 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 439 ಅಗ್ರಶ್ರೇಣಿ, 632 ಪ್ರಥಮ ದರ್ಜೆ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಒಟ್ಟಾರೆ ಫಲಿತಾಂಶ ಶೇ. 96.41 ಆಗಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ತಿಳಿಸಿದ್ದಾರೆ. ಸಾನಿಯಾ ಅಲಿಸಾಬ್ ಶೇ. 98 ರಷ್ಟು ಅಂಕ ಗಳಿಸಿ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಯಾಸೀರ್ ಮುಲ್ಲಾ ಶೇ.97.33, ಉಮ್ಮೆಐಮನ್ ಮುಂದಾಸ್ ಶೇ.97, ಮೈನಾಕ್ ಕುಂದು ಶೇ. 96.67, ನಂದಿನಿ ಶೇ. 96.50, ಝೋಯಾ ಫಾತಿಮಾ ಶೇ.96.50, ಭಿಮಾಶಂಕರ್ ಶೇ.96.33, ಝೀಶಾನ್ ಶೇ.96.17, ಅಬುಬಕರ್ ಅಬ್ದುಲ್ಲಾ ಶೇ.96.17 ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಉತ್ತಮ ಶೈಕ್ಷಣಿಕ ವಾತಾವರಣ, ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣ, ಆಡಳಿತ ಮಂಡಳಿ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ: ಕಲಾ, ವಾಣಿಜ್ಯ, ವಿಜ್ಞಾನ ಟಾಪ್ 10 ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ; ಊರು, ಕಾಲೇಜು ವಿವರ
ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿಯುಸಿ 2026 ರ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 600 ಅಂಕಗಳಿಸಿ ಬೆಂಗಳೂರಿನ ಅದಿತಿ ಬಾಪೂ, ಮಂಗಳೂರಿನ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ, ಅರ್ಚನಾ ಡಿ ಎಂ, ಸಂಗೀತಾ, ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಲಾ ಕಾರ್ಡೋಜಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 3 ವಿಭಾಗಗಳ ಟಾಪ್ 10 ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ.
2nd PUC Result-2026 | ಐಡಿಯಲ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ
ಬೀದರ್ : ಬಸವಕಲ್ಯಾಣದ ಐಡಿಯಲ್ ಪಿಯು ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ 2025-26ನೇ ಪಿಯು ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 151 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ಅಗ್ರಶ್ರೇಣಿ-40, ಪ್ರಥಮ-89, ದ್ವಿತೀಯ-5 ಹಾಗೂ ತೃತೀಯ-1 ಸ್ಥಾನಗಳು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಆಕಾಶ್ ಶೇ.97 ರಷ್ಟು ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಚಂದ್ರಕಲಾ ಶೇ.95.83 ಅಂಕ ಪಡೆದು ದ್ವಿತೀಯ ಹಾಗೂ ಸೈಯದ್ ಜುನೇದ್ ಅರಬಾಸ್ ಶೇ.95.16 ಹಾಗೂ ಜೊಹಾ ಫಾತೀಮಾ ಶೇ.95.16 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ತಾಜುನಿಸ್ಸಾ ಶೇ.92.33 ಅಂಕ ಪಡೆದು ಪ್ರಥಮ, ಮೊಹಮ್ಮದಿ ಸುಲ್ತಾನಾ ಶೇ.91.16 ದ್ವಿತೀಯ, ವಾಣಿಜ್ಯ ವಿಭಾಗದಲ್ಲಿ ಮುಹಮ್ಮದ್ ನಾಸೀರ್ ಶೇ.93.5 ಪಡೆದು ಪ್ರಥಮ ಹಾಗೂ 4 ವಿದ್ಯಾರ್ಥಿಗಳು ಅಗ್ರ ಶ್ರೇಣಿ ಪಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ ಕಾಲೇಜಿನ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಷಿ ಅವರು, ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತಾ ಈ ವಿದ್ಯಾರ್ಥಿಗಳು ನೀಟ ಹಾಗು ಜೆಇಇ ತರಬೇತಿ ಪಡೆಯುತ್ತಿದ್ದರು ಸಹ ಅದ್ಭುತ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಕುಟುಂಬದಿಂದ ಬಂದು ಪರಿಶ್ರಮ ಪಟ್ಟು ಉನ್ನತ ದರ್ಜೇಯ ಫಲಿತಾಂಶವನ್ನು ನೀಡಿ ಕಾಲೇಜೀನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ನುಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿದೇರ್ಶಕ ಮುಕ್ತದೀರ್ ಉಮರ್ ಖುರೇಶಿ, ಪ್ರಾಂಶುಪಾಲ ವಿ.ವೇಂಕಟ್, ಉಪನ್ಯಾಸಕರಾದ ಶಾಂತಲಿಂಗ್ ಮಠಪತಿ, ಶೇಕ್ ಫಿರೋಜ, ಮೊಹಸಿನ್, ಸುಮಿತ್ರಾ ರಹಿಮ್ ಕಾರಿಗರ್ ಹಾಗು ಪಾಲಕರು ಉಪಸ್ಥಿತರಿದ್ದರು. ಇವರೆಲ್ಲರ ಪರಿಶ್ರಮದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದೆ.
ಕ್ಷೇತ್ರ ವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾದರೆ ರಾಜಕೀಯ ಅಸ್ತಿತ್ವಕ್ಕೆ ಸಂಚಕಾರ: ದಿನೇಶ್ ಗುಂಡೂರಾವ್
ಬೆಂಗಳೂರು : ಕೇಂದ್ರ ಸರಕಾರ ಕ್ಷೇತ್ರ ವಿಂಗಡಣೆ ಮಾಡುವ ಮೂಲಕ ದಕ್ಷಿಣದ ರಾಜ್ಯಗಳಿಗೆ ತಾರತಮ್ಯ ಮಾಡುವುದನ್ನು ಮೊದಲು ನಿಲ್ಲಿಸಬೇಕು. ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡಿದರೆ ಭವಿಷ್ಯದಲ್ಲಿ ನಮ್ಮ ರಾಜ್ಯಗಳ ರಾಜಕೀಯ ಅಸ್ತಿತ್ವಕ್ಕೆ ಸಂಚಕಾರ ಬರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಎಚ್ಚರಿಸಿದ್ದಾರೆ. ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರವು ಮಳೆ ಹಾನಿ ಪರಿಹಾರ, ತೆರಿಗೆ ವಿಷಯಗಳಲ್ಲಿ ನಮಗೆ ಅನ್ಯಾಯವಾಗುತ್ತಿದೆ. ಜನಸಂಖ್ಯೆ ನಿಯಂತ್ರಣ, ಆರ್ಥಿಕ ಪ್ರಗತಿ ಮುಂತಾದವುಗಳಲ್ಲಿ ನಾವು ಮುನ್ನಡೆ ಸಾಧಿಸಿದ್ದೇವೆ. ಇವರು ಜನಸಂಖ್ಯೆ ಆಧಾರದಲ್ಲಿ ತೆರಿಗೆ ಪಾಲು ನೀಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯ ಅಗುವುದರೊಂದಿಗೆ, ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು. ಬಜೆಟ್ನಲ್ಲಿ ಘೋಷಣೆ ಮಾಡುತ್ತಾರೆ, ಹಣ ಬಿಡುಗಡೆ ಮಾಡುವುದಿಲ್ಲ. ಹೀಗೆ ಅವರ ರಾಜ್ಯ ಸರಕಾರಗಳು ತೊಂದರೆಗೆ ಸಿಲುಕುತ್ತದೆ. ಈಗ ಆರ್ಥಿಕ ನಷ್ಟ ಆಗುತ್ತದೆ, ಹೀಗೆ ಮುಂದುವರೆದರೆ ರಾಜಕೀಯವಾಗಿಯೂ ಸಮಸ್ಯೆ ಆಗುತ್ತದೆ. ಮೋದಿಯವರ ಮಾತನ್ನು ನಂಬಿ ಹೋದರೆ ಮುಂದೆ ದಕ್ಷಿಣದ ರಾಜ್ಯಗಳಿಗೆ ಬೆಲೆಯೆ ಇರುವುದಿಲ್ಲ ನೆನಪಿಡಿ ಎಂದು ಅವರು ಎಚ್ಚರಿಸಿದರು. ಅನಿಲ ಸಮಸ್ಯೆ: ದೇಶದಲ್ಲಿ ಗ್ಯಾಸ್ ಸಮಸ್ಯೆ ಇರುವುದು ನಿಜ. ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಕೇಂದ್ರ ಸರಕಾರ ಸರಿಯಾದ ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಸಾರಿಗೆ, ಕೈಗಾರಿಕೆಗಳು ತೊಂದರೆಗೆ ಸಿಲುಕಿದೆ. ಫಾರ್ಮಾ ಕಂಪೆನಿಗಳು ತಮಗೆ ಆಗುತ್ತಿರುವ ಸಮಸ್ಯೆ ಕುರಿತು ನನಗೆ ಪತ್ರ ಬರೆದಿದ್ದಾರೆ. ಔಷಧ ತಯಾರಿಕೆಗೆ ಕಚ್ಚಾ ವಸ್ತುಗಳು ಸಮಯಕ್ಕೆ ಸಿಗುತ್ತಿಲ್ಲ. ಸದ್ಯ ಪೂರೈಕೆಗೆ ಸಮಸ್ಯೆ ಇಲ್ಲ, ಹೀಗೆ ಮುಂದುವರಿದರೆ ಪೂರೈಕೆಗೆ ಕಾಲಾವಕಾಶ ಹೆಚ್ಚಿಸಬೇಕು ಎಂದಿದ್ದಾರೆ. ಈಗಾಗಲೇ ಔಷಧಗಳ ಬೆಲೆ ಹೆಚ್ಚಾಗಿದೆ. ಇದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲೆ ಆಗುತ್ತದೆ. ಕೇಂದ್ರವು ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ. ಯುದ್ಧ ಪ್ರಾರಂಭವಾದ ತಕ್ಷಣ ಕೇಂದ್ರ ಈ ಕುರಿತು ಆಲೋಚಿಸಬೇಕಿತ್ತು. ಈಗ ಪೆಟ್ರೋಲ್, ಕಟ್ಟಿಗೆ ಬಳಸಿ ಎನ್ನುತ್ತಿದ್ದಾರೆ. ಹೋಟೆಲ್, ರೈತರು, ಸಣ್ಣ ವ್ಯಾಪಾರಸ್ಥರು ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಟೀಕಿಸಿದರು. ಅಸ್ಸಾಂ ಸಿಎಂ ಆಡುವ ಮಾತುಗಳನ್ನು ಕೇಳಿದರೆ ವಿಷಕಾರಿ ಅಂತಲೇ ಅನಿಸುವುದಿಲ್ಲವೇ?. ಲಂಗು-ಲಗಾಮು ಇಲ್ಲದೇ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುವುದರಿಂದ ಈ ರೀತಿಯಾಗುತ್ತಿದೆ. ಮೋದಿ ಆಡಳಿತದಲ್ಲಿ ಎಲ್ಲ ಸ್ವಾಯತ್ತ ಸಂಸ್ಥೆಗಳ ಸ್ಥಿತಿ ದೇಶದಲ್ಲಿ ಹೇಗಿದೆ ಎಂದು ಜನರಿಗೆ ಗೊತ್ತಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಇವುಗಳ ಅಸ್ತಿತ್ವವನ್ನು ಮೋದಿಯವರು ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಹಾಳುಮಾಡಿದ್ದಾರೆ ಎಂದು ಅವರು ದೂರಿದರು.
2nd PUC Result-2026 | ಶರಣಬಸವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಸುರಪುರ: ಪಟ್ಟಣದ ಶರಣಬಸವ ವಸತಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 2025-26ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ವಿದ್ಯಾ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 55 ವಿದ್ಯಾರ್ಥಿಗಳಲ್ಲಿ ಅಗ್ರ ಶ್ರೇಣಿಯಲ್ಲಿ-6, ಪ್ರಥಮ ಸ್ಥಾನ-29 ದ್ವಿತೀಯ ಸ್ಥಾನ-10 ಬಂದಿದ್ದು. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿವಾರು ಶ್ವೇತಾ (ಶೇ.97%), ಉರಫಾ ಫಾರತ್ (ಶೇ 93.66%), ರಾಣಿ ನಿಯಾತಿ ನಾಯಕ (ಶೇ.93.33),ಭಾಗ್ಯಾಶ್ರೀ (ಶೇ89.33), ಸುಜಯ್ (ಶೇ.87.66),ಶೀವಲಿಲಾ(ಶೇ.83), ಸಾನಿಯಾ (ಶೇ.82.50), ಅನಮ್ ಸುಹಾನಾ(ಶೇ 80.83) ವಾಣಿಜ್ಯ ವಿಭಾಗದಲ್ಲಿ ಸೌಮ್ಯ (ಶೇ.95.35), ಯಲ್ಲಮ್ಮಾ (ಶೇ.80.50), ಅಮೃತಾ (ಶೇ.80.16) ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ದಾಕ್ಷಾಯಿಣಿ. ಎಸ್. ಅಪ್ಪಾ ಉಪಾದ್ಯಾಕ್ಷರಾದ ನೀಲಮ್ಮತಾಯಿ ವ್ಹಿ ನಿಷ್ಠಿ, ಕಾರ್ಯದರ್ಶಿಗಳಾದ ಡಾ. ಶಾಂತಲಾ ಎಸ್ ನಿಷ್ಠಿ, ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ ಪ್ರಾಂಶುಪಾಲರಾದ ವಿವೇಕ ಗಂಜಿ ಮತ್ತು ನಾನಾಗೌಡ ದೇಸಾಯಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
2nd PUC 'ವಾಣಿಜ್ಯ' ವಿಭಾಗದಲ್ಲಿ ಶೇ.88.4ರಷ್ಟು ಸಾಧನೆ: ಇಬ್ಬರಿಗೆ 600ಕ್ಕೆ 600 ಅಂಕ, ಇವರೇ ಟಾಪರ್ಸ್
ಬೆಂಗಳೂರು: ವಾಣಿಜ್ಯ ವಿಭಾಗದಲ್ಲಿಯೂ ಫಲಿತಾಂಶ ಆಶಾದಾಯಕವಾಗಿದೆ. ಶೇಕಡಾ 88.4ರಷ್ಟು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಲೆಕ್ಕಪತ್ರ ನಿರ್ವಹಣೆ, ಹಣಕಾಸು ಮತ್ತು ವ್ಯವಹಾರ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇದು ಸದಾವಕಾಶ ಒದಗಿಸಿದ್ದು, ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಯಾರೆಲ್ಲ ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿದ್ದಾರೆ, ಎಷ್ಟು ಮಂದಿ ಉತ್ತೀರ್ಣ, ಕಳೆದ ವರ್ಷ ತೇರ್ಗಡೆ ಮಾಹಿತಿ ಇಲ್ಲಿದೆ ಪಿಯುಸಿ 2026ರ ವಾಣಿಜ್ಯ
ಪಿಯುಸಿ ಫಲಿತಾಂಶ: ದ.ಕ. ಜಿಲ್ಲೆ ದ್ವಿತೀಯ ಸ್ಥಾನ; ವಿಜ್ಞಾನ, ವಾಣಿಜ್ಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ
► ವಿದ್ಯಾರ್ಥಿನಿಯರೇ ಮೇಲುಗೈ
2nd PUC Result-2026 | ಶಿವಮೊಗ್ಗದ ಮಹಿನ್ ಖಾನ್ ಅಫ್ರಿದಿಗೆ 600ಕ್ಕೆ 596 ಅಂಕ
ಶಿವಮೊಗ್ಗ: ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ಖಾನ್ ಅಫ್ರಿದಿ ಅವರು 600ರಲ್ಲಿ 596 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಆಯನೂರು ಗ್ರಾಮದ ವಿದ್ಯಾರ್ಥಿನಿ ಮಹಿನ್ ಖಾನ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಜಬೀರ್ ಹಾಗೂ ಆಯಿಷಾ ದಂಪತಿಯ ಪುತ್ರಿ. ಈ ಸಂಬಂಧ ಮಹಿನ್ ಖಾನ್ ಅಫ್ರಿದಿ ಪ್ರತಿಕ್ರಿಯಿಸಿ, ನಾನು ದಿನನಿತ್ಯದ ಪಾಠಗಳನ್ನು ಅದೇ ದಿನ ಓದಿ ಮುಗಿಸುವ ಅಭ್ಯಾಸ ಮಾಡಿಕೊಂಡಿದ್ದೆ. ಯಾವುದೇ ಟ್ಯೂಷನ್ಗೆ ಹೋಗದೆ ಶ್ರದ್ದೆಯಿಂದ ಓದಿದ್ದೇನೆ. ವೈದ್ಯೆಯಾಗುವುದು ನನ್ನ ಕನಸು, ಅದಕ್ಕಾಗಿ ಅಗತ್ಯವಾದ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಜಬೀರ್, ʼತುಂಬಾ ಸಂತೋಷವಾಗಿದೆ. ಅವಳು ಬಹಳ ಪರಿಶ್ರಮ ಪಟ್ಟಿದ್ದಾಳೆ. ವೈದ್ಯೆಯಾಗುವ ಕನಸು ಕಂಡಿದ್ದು, ಅದಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ. ಓದಿನ ಮೇಲೆ ಅವಳ ಶ್ರದ್ದೆ ಈ ಸಾಧನೆಗೆ ಕಾರಣವಾಗಿದೆʼ ಎಂದಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಅದೆಷ್ಟು ಪ್ರಬುದ್ಧವಾಗಿದೆ ಎಂಬುದಕ್ಕೆ ಇತ್ತೀಚಿಗೆ ಮುಕ್ತಾಯ ಕಂಡ ಕೇರಳಂ ವಿಧಾನಸಭೆ ಚುನಾವಣೆ ಪ್ರಚಾರ ಸಾಕ್ಷಿ ಒದಗಿಸಿದೆ. ಕೇರಳಂನಲ್ಲಿ ಇಂದು (ಏ.9-ಗುರುವಾರ) ಏಕಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ರಾಜ್ಯದಲ್ಲಿ ಏ.7 (ಮಂಗಳವಾರ) ಪ್ರಚಾರದ ಕೊನೆಯ ದಿನವಾಗಿತ್ತು. ಅಂದು ಪ್ರಚಾರ ಮುಗಿಯುತ್ತಿದ್ದಂತೇ ಕೊಚ್ಚಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ರಾಜಕಕೀಯ ಪಕ್ಷಗಳು ಒಟ್ಟಾಗಿ ಒಂದೇ ರಸ್ತೆಯಲ್ಲಿ ಪ್ರಜಾಪ್ರಭುತ್ವದ ಹಬ್ಬವನ್ನು ಒಟ್ಟಾಗಿ ಸಂಭ್ರಮಿಸಿವೆ. ಎಲ್ಡಿಎಫ್, ಯುಡಿಎಫ್ ಮತ್ತು ಎನ್ಡಿಎ ಕಾರ್ಯಕರ್ತರು ತಮ್ಮ ಪಕ್ಷಗಳ ಬಾವುಟದೊಂದಿಗೆ ಒಟ್ಟಾಗಿ ಸಂಭ್ರಮಿಸಿರುವುದು ಭಾರೀ ವೈರಲ್ ಆಗಿದೆ.
ಸುರಪುರ | ಚಂದ್ಲಾಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಸುರಪುರ: ಬೇಸಿಗೆ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರು ಆರೋಗ್ಯ ರಕ್ಷಣೆಗೆ ಅತ್ಯಂತ ಅಗತ್ಯವಾಗಿದ್ದು, ಸಾರ್ವಜನಿಕರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಸಲಹೆ ನೀಡಿದರು. ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ಪ್ರಥಮ ಆದ್ಯತೆ ನೀಡುತ್ತಿದೆ. ಪಂಚಾಯತಿ ಯೋಜನೆಗಳು ಕೂಡ ಸಾರ್ವಜನಿಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲ್ಪಟ್ಟಿವೆ. ಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜಾ ಕುಮಾರ ನಾಯಕ, ಮುಖಂಡರಾದ ಮಲ್ಲಣ್ಣ ಸಾಹುಕಾರ್, ಮುಧೋಳ ನರಸಿಂಗಪೇಟೆ, ಅಬ್ದುಲ್ ಗಫರ್ ನಗನೂರಿ, ರಾಜಾ ಸುಶಾಂತ ನಾಯಕ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಹಣಮಂತ್ರಾಯ ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ನೂರಾರು ಜನರು ಭಾಗವಹಿಸಿದ್ದರು.
Yadgiri | ಎ14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ
ಯಾದಗಿರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಎ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಅರ್ಪಿಸಲಾಗುವುದು. ವೇದಿಕೆ, ಆಸನ ವ್ಯವಸ್ಥೆ ಹಾಗೂ ಗಣ್ಯರು, ಉಪನ್ಯಾಸಕರಿಗೆ ಆಹ್ವಾನಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮದ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್, ವೇದಿಕೆ ಸಿದ್ಧತೆ ಹಾಗೂ ಆಮಂತ್ರಣ ಪತ್ರಿಕೆ ವಿತರಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಮೆರವಣಿಗೆಗಾಗಿ ಮೂರು ಕಲಾ ತಂಡಗಳನ್ನು ಒದಗಿಸಲು ಸೂಚನೆ ನೀಡಿದರು. ಜಿಲ್ಲೆಯ ತಾಲೂಕು ಮಟ್ಟದಲ್ಲಿ ಶಾಲೆ, ಕಾಲೇಜು, ಗ್ರಾಮ ಪಂಚಾಯತ್ ಹಾಗೂ ವಿವಿಧ ಕಚೇರಿಗಳಲ್ಲಿ ಜಯಂತಿ ಆಚರಣೆಗಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅದೇ ದಿನ ಬೆಳಿಗ್ಗೆ 9 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಚೌಕ್ ಹಾಗೂ ಕೋಟಗಾರ ವಾಡಾದಲ್ಲಿರುವ ಅವರ ಮೂರ್ತಿಗಳಿಗೆ ಮಾಲಾರ್ಪಣೆ ಕಾರ್ಯಕ್ರಮ ನಡೆಯಲಿದೆ. ರಸ್ತೆ ಹಾಗೂ ಚರಂಡಿ ಸ್ವಚ್ಛತೆ ಕಾರ್ಯಗಳನ್ನು ನಗರಸಭೆಯಿಂದ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಮಾಜಸೇವಕರಿಗೆ ಸನ್ಮಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ. ಇದಲ್ಲದೆ, ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಆರೋಗ್ಯ ತಪಾಸಣಾ ಮೇಳವನ್ನು ಆಯೋಜಿಸಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಸಮಾಜದಿಂದ ಹಮ್ಮಿಕೊಳ್ಳುವ ಮೆರವಣಿಗೆಗಳ ಕುರಿತು ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀ ಚನ್ನಬಸವ ಸ್ವಾಗತಿಸಿದರು. ಸಾಮಾಜದ ಮುಖಂಡರಾದ ಮರೆಪ್ಪ ಚಟ್ಟರ್ಕರ್,ಸೈದಪ್ಪ ಕೋಳೂರ,ಪರಶುರಾಮ ಒಡೆಯರ್, ವಿಜಯಕುಮಾರ ಶಿರಗೋಳ, ಮಲ್ಲಿಕಾರ್ಜುನ ಕ್ರಾಂತಿ, ಚಂದಪ್ಪ ಕಟ್ಟಿಮನಿ ಇತರರು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ‘ಕರ್ಣ’ ನಟಿ ಅಂಕಿತಾ ಜಯರಾಮ್
‘ಕರ್ಣ’ ಸೀರಿಯಲ್ ಖ್ಯಾತಿಯ ಅಂಕಿತಾ ಜಯರಾಮ್ ದ್ವಿತೀಯ ಪಿಯುಸಿಯಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. 97% ಅಂಕಗಳನ್ನ ಗಳಿಸುವ ಮೂಲಕ ಡಿಸ್ಟಿಂಕ್ಷನ್ನಲ್ಲಿ ಅಂಕಿತಾ ಜಯರಾಮ್ ಪಾಸ್ ಆಗಿದ್ದಾರೆ.
ಬೀದರ್ನಲ್ಲಿ ಎ.11, 12ರಂದು ಪತ್ರಕರ್ತರ 40ನೇ ರಾಜ್ಯಮಟ್ಟದ ಸಮ್ಮೇಳನ
ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳು, ಪತ್ರಕರ್ತರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ : ಸಂಕೀನ್
ಉಳ್ಳಾಲ ತಾಲೂಕು 3ನೇ ಬ್ಯಾರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬಶೀರ್ ಅಹ್ಮದ್ ಕಿನ್ಯಾ ಆಯ್ಕೆ
ಮಂಗಳೂರು, ಎ.9: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ದೇರಳಕಟ್ಟೆಯ ಮೇಲ್ತೆನೆ ಸಂಘಟನೆಯ ಸಹಯೋಗದೊಂದಿಗೆ ಮೇ 5ರಂದು ಉಳ್ಳಾಲ ತಾಲೂಕಿನ ಮುಡಿಪು ಬಳಿಯ ಹೂಹಾಕುವ ಕಲ್ಲು ಎಸ್.ಕೆ. ಮಲ್ಟಿಪರ್ಪಸ್ ಹಾಲ್ನಲ್ಲಿ ಹಮ್ಮಿಕೊಂಡಿರುವ ಉಳ್ಳಾಲ ತಾಲೂಕು 3ನೇ ಬ್ಯಾರಿ ಸಾಹಿತ್ಯ ಸಮ್ಮೇನದ ಅಧ್ಯಕ್ಷರಾಗಿ ಕವಿ, ಹಾಡುಗಾರ ಬಶೀರ್ ಅಹ್ಮದ್ ಕಿನ್ಯಾ ಆಯ್ಕೆಯಾಗಿದ್ದಾರೆ. ಸುಮಾರು 28 ವರ್ಷಗಳಿಂದ ಬ್ಯಾರಿ ಗಾಯಕರಾಗಿರುವ ಬಶೀರ್ ಅಹ್ಮದ್ ಕಿನ್ಯಾ ಬಹುಭಾಷಾ ಕವಿಯಾಗಿ, ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಬಶೀರ್ ಕಿನ್ಯರೊ ಪಾಟ್, ಕೊತ್ತಿಪ್ಪೂ, ನಲ್ಮಾಲೆ ಮತ್ತು ಮೀಲಾದ್ ಪಾಟ್ ಇವು ಬಶೀರ್ ಅಹ್ಮದ್ ಕಿನ್ಯಾರ ಪ್ರಕಟಿತ ಬ್ಯಾರಿ ಕೃತಿಗಳು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರ ತಂದಿರುವ ನೂರು ಕವಿಮಾರೊ ಕಾವ್ಯ ಸಂಕಲನ ಕೃತಿಗೆ ಇವರು ಸಂಪಾದಕರಾಗಿದ್ದರು. ಇವರ ಮೊದಲ ಬ್ಯಾರಿ ಹಾಡುಗಳ ಧ್ವನಿಸುರುಳಿ ’ಮಸ್ಕತ್ತ್ಗೊರು ಕಲ್ಲಾಸ್’ ಕೇವಲ ನಾಲ್ಕೈದು ದಿನಗಳಲ್ಲಿ ಮಾರಾಟ ಗೊಂಡು ದಾಖಲೆ ನಿರ್ಮಿಸಿತ್ತು. ಆ ಬಳಿಕ ಅಲಿಕಾತ್, ಉರುಮಾಲ್, ಬಂಗಾರ್, ಮಹರ್, ಮರ್ಹಬ, ಸುಲ್ತಾನ ಮುಂತಾದ ಧ್ವನಿಸುರುಳಿಗಳೂ ಭಾರೀ ಮಟ್ಟದಲ್ಲಿ ಮಾರಾಟಗೊಂಡು ಸುದ್ಧಿ ಮಾಡಿದ್ದವು. 2002ರಲ್ಲಿ ಹೊರ ಬಂದ ಇವರ ಬ್ಯಾರಿ ಬೈಲಾ ಧ್ವನಿಸುರುಳಿಯು ಸುಮಾರು 22,000 ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿದೆ. ಬ್ಯಾರಿ ಮಸಾಲೆ ಮತ್ತು ಚೆಡಿಲ್ ಇವರು ಸಾಹಿತ್ಯ ರಚಿಸಿ, ಹಾಡಿರುವ ಇತರ ಧ್ವನಿ ಸುರುಳಿಗಳು. ಬ್ಯಾರಿ ಮತ್ತು ಕನ್ನಡದಲ್ಲಿ ಧಫ್ ಹಾಡುಗಳನ್ನು ರಚಿಸಿರುವ ಬಶೀರ್ ಅಹ್ಮದ್ ಕಿನ್ಯಾ ಸುಮಾರು 150ಕ್ಕಿಂತಲೂ ಹೆಚ್ಚು ಬ್ಯಾರಿ, ಕನ್ನಡ, ಮಲಯಾಳಂ ಧ್ವನಿಸುರುಳಿಗಳಿಗೆ ಸಾಹಿತ್ಯ ರಚಿಸಿ ಹಾಡಿದ್ದಾರೆ. ರಾಜ್ಯ, ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ಬ್ಯಾರಿ ಕವಿಗೋಷ್ಠಿ ಮತ್ತು ಬಹುಭಾಷಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದ ಬಶೀರ್ ಅಹ್ಮದ್ ಕಿನ್ಯಾ ಅವರಿಗೆ ಅಕಾಡಮಿಯು ಗೌರವ ಪ್ರಶಸ್ತಿ ನೀಡಿದೆ. 2013ರಲ್ಲಿ ದುಬೈನಲ್ಲಿ ನಡೆದ ದ.ಕ. ಸುನ್ನಿ ಸೆಂಟರ್ನ ಮೀಲಾದ್ ಮೀಟ್ ಕಾರ್ಯಕ್ರಮದಲ್ಲಿ ಇವರನ್ನು ಬ್ಯಾರಿ ಕವಿಯೆಂಬ ನೆಲೆಯಲ್ಲಿ ಅಭಿನಂದಿಸಲಾಗಿದೆ. ಮಂಗಳೂರಿನ ಬ್ಯಾರಿ ಕಲಾರಂಗವು 2013ರಲ್ಲಿ ಬ್ಯಾರಿ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2015ರಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಮತ್ತು ಬ್ಯಾರಿ ಗೈಸ್ ಮತ್ತಿತರ ಸಂಘಟನೆಗಳು ಇವರನ್ನು ಅಭಿನಂದಿಸಿವೆ. ಬ್ಯಾರಿ ಬರಹಗಾರರು ಮತ್ತು ಕಲಾವಿದರ ಒಕ್ಕೂಟ, ಮೇಲ್ತೆನೆ ಸಂಘಟನೆಯ ಸ್ಥಾಪಕರಲ್ಲಿ ಒಬ್ಬರಾಗಿರುವ ಇವರು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಿನ್ಯಾ ಅನ್ಸಾರುಲ್ ಮಸಾಕೀನ್ ಸಂಘಟನೆಯ ಕಾರ್ಯದರ್ಶಿಯಾಗಿ, ಅಖಿಲ ಭಾರತ ಬ್ಯಾರಿ ಪರಿಷತ್ ಮತ್ತು ಬ್ಯಾರಿ ಕಲಾರಂಗದಲ್ಲಿ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಮಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ರೆಡ್ಕಾರ್ನರ್ ನೋಟಿಸ್
ಮಂಗಳೂರು, ಎ.9: ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಇಂಟರ್ಪೋಲ್ ಮೂಲಕ ಪೊಲೀಸ್ ಇಲಾಖೆಯು ರೆಡ್ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಸುಲೈಮಾನ್ ಯಾನೆ ಶಮೀರ್ (38) ಮತ್ತು ಶಂಶುದ್ದೀನ್ (36) ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2017ರಲ್ಲಿ ಕುಶಾಲನಗರದ ಸುಲೈಮಾನ್ ಯಾನೆ ಶಮೀರ್ ನಗರದ ಲೇಡಿಹಿಲ್ ಬಳಿ ಉರ್ವ ಠಾಣೆಯಲ್ಲಿ ಆಗ ಎಎಸ್ಸೈ ಆಗಿದ್ದ ಐತಪ್ಪಮೇಲೆ ರಾಡ್ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. 2013ರಲ್ಲಿ ದೇರಳಕಟ್ಟೆಯಲ್ಲಿ ಗ್ಯಾಂಗ್ರೇಪ್ ಪ್ರಕರಣದಲ್ಲಿ ಕೂಡ ಈತ ಆರೋಪಿಯಾಗಿದ್ದ. ಈತನ ವಿರುದ್ಧ 14 ಪ್ರಕರಣಗಳು ದಾಖಲಾಗಿವೆ. ಈತ ಸೌದಿ ಅರೇಬಿಯಾದಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಶುದ್ದೀನ್ ಯಾನೆ ಅಲ್ತಾಫ್ ಯಾನೆ ಅಲ್ತಾಫ್ ಇಮ್ರಾನ್ ಯಾನೆ ಇಮ್ರಾನ್ 2008ರಲ್ಲಿ ಮುಲ್ಕಿಯ ಪಾವಂಜೆ ಬಳಿ ಪ್ರವೀಣ್ ಎಂಬವರನ್ನು ಅಪಹರಿಸಿ ಕಾರು ಮತ್ತು ಬೆಲೆ ಬಾಳುವ ಸೊತ್ತುಗಳನ್ನು ದೋಚಿ, ಕಳವಾರು ಬಳಿಯ ಕೋರೆಯೊಂದಕ್ಕೆ ಕರೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಆರೋಪಿಗಳಲ್ಲಿ ಒಬ್ಬನಾಗಿದ್ದ. ಈ ಪ್ರಕರಣದಲ್ಲಿ ಎಲ್ಲರೂ ಜೀವಾವಧಿ ಶಿಕ್ಷೆಗೊಳಗಾಗಿದ್ದರು. ಸಂಶುದ್ದೀನ್ ನಕಲಿ ದಾಖಲೆಗಳ ಮೂಲಕ ಶೇಕ್ ಮುಹಮ್ಮದ್ ಸಿದ್ದೀಕ್ ಎಂದು ಹೆಸರು ಬದಲಿಸಿ ವಿದೇಶಕ್ಕೆ ಪರಾರಿಯಾಗಿದ್ದ. ಈತನೂ ಸೌದಿ ಅರೇಬಿಯಾದಲ್ಲಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. *ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾದ ನಂತರ ಎಲ್ಲಾ ದೇಶಗಳ ನೋಡಲ್ ಏಜೆನ್ಸಿಗಳು ಹುಡುಕಾಟ ನಡೆಸಲಿವೆ. ಆರೋಪಿಗಳ ವಿರುದ್ಧ ಅವರು ತಲೆಮರೆಸಿಕೊಂಡಿರುವ ದೇಶದಲ್ಲಿ ಯಾವುದಾದರೂ ಪ್ರಕರಣ ದಾಖಲಾಗಿದ್ದರೆ ಅಥವಾ ಅಲ್ಲಿಯೂ ತಲೆಮರೆಸಿಕೊಂಡಿದ್ದರೆ ಅವರನ್ನು ಅಲ್ಲಿಯೇ ಬಂಧಿಸಿ ಕಾನೂನು ಕ್ರಮ ಕೈಗೊಂಡು ಶಿಕ್ಷೆಯ ಅವಧಿ ಮುಗಿದ ಬಳಿಕ ಭಾರತಕ್ಕೆ ಹಸ್ತಾಂತರಿಸಲು ಅವಕಾಶವಿದೆ. ಯಾವುದೇ ಪ್ರಕರಣಗಳು ಇಲ್ಲದಿದ್ದಲ್ಲಿ ಪತ್ತೆಹಚ್ಚಿ ಭಾರತಕ್ಕೆ ಹಸ್ತಾಂತರಿಸಲಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ 'ಕಲಾ' ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ: ಪಾಪರ್ಸ್ ಲಿಸ್ಟ್ ಇಲ್ಲಿದೆ
ಬೆಂಗಳೂರು: 2026ರ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯಾದ್ಯಂತ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಈ ವರ್ಷ, ಒಟ್ಟಾರೆ ಉತ್ತೀರ್ಣ ಪ್ರಮಾಣ ಉತ್ತಮವಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಪೈಕಿ ಕಲಾ ವಿಭಾಗದಲ್ಲಿ (Arts Combination) ಯಾರು ಪ್ರಥಮ, ಎಷ್ಟು ಮಂದಿ ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
2nd PUC Result-2026 | ವಿಜ್ಞಾನ ವಿಭಾಗ : ಬೀದರ್ನ ನಾದಿಯಾ ನೂರ್ಗೆ 600ಕ್ಕೆ 577 ಅಂಕ
ಬೀದರ್ : ವಿಜ್ಞಾನ ವಿಭಾಗದಲ್ಲಿ ನಗರದ ವಿಸ್ಡ್ಂ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ನಾದಿಯಾ ನೂರ್ ಅವರು 600ಕ್ಕೆ 577 (ಶೇ. 96.16) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ದಾಳೆ. ಮೂಲತಃ ಬೆಂಗಳೂರು ಮೂಲದ ನಾದಿಯಾ ನೂರ್ ಬೆಂಗಳೂರಿನ ಮುಸ್ಲಿಂ ಆರ್ಫನೇಜ್ ಸಂಘಟನೆಯಿಂದ ಪ್ರಯೋಜಕತ್ವದಲ್ಲಿ ನಗರದ ವಿಸ್ಡ್ಂ ಕಾಲೇಜಿನಲ್ಲಿ ಪಿಯುಸಿ ಪ್ರವೇಶ ಪಡೆದು, ಅಲ್ಲಿಯೇ ವಸತಿ ನಿಲಯದಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ತಂದೆ ಮೃತಪಟ್ಟಿದ್ದು, ತಾಯಿಯೇ ಇವರಿಗೆ ಆಸರೆಯಾಗಿದ್ದಾರೆ. ಇವರು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದರಿಂದ ಕಾಲೇಜಿನ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
2nd PUC Result-2026 | ಬೀದರ್ನ ವಿಸ್ಡ್ಂ ಕಾಲೇಜಿಗೆ ಶೇ.98.18 ರಷ್ಟು ಫಲಿತಾಂಶ
ನಾದಿಯಾ ನೂರ್ ಶೇ.96.16 ರಷ್ಟು ಫಲಿತಾಂಶದೊಂದಿಗೆ ಕಾಲೇಜಿಗೆ ಪ್ರಥಮ
ಉಡುಪಿ, ಎ.9: ಕಾಪು ತಾಲೂಕು ಇನ್ನಂಜೆ ಗ್ರಾಮದ ಶಂಕರಪುರ ದಲ್ಲಿರುವ ವಿಶ್ವಾಸದ ಮನೆ ಎಂಬ ಅನಾಥ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಸುಮಾರು 20ರಿಂದ 25 ವರ್ಷ ಪ್ರಾಯದ ಬುದ್ಧಿಮಾಂದ್ಯ ಯುವಕ ಮಾರ್ಚ್ 30ರಂದು ರಾತ್ರಿ 10:30ರ ನಂತರ ಆಶ್ರಮದಿಂದ ನಾಪತ್ತೆ ಯಾಗಿದ್ದಾರೆ. 5 ಅಡಿ 8 ಇಂಚು ಎತ್ತರ, ಕೋಲುಮುಖ, ಗೋದಿ ಮೈಬಣ್ಣ, ಕುತ್ತಿಗೆಯ ಬಲಭಾಗದಲ್ಲಿ ಕಪ್ಪು ಮಚ್ಚೆ ಹೊಂದಿರುವ ಈತನಿಗೆ ಮಾತನಾಡಲು ಬರುವುದಿಲ್ಲ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, 2526709, ಕಾರ್ಕಳ ಪೊಲೀಸ್ ಉಪಾಧೀಕ್ಷಕರ ಕಚೇರಿ ದೂ.ಸಂಖ್ಯೆ: 08258-231333, ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2572333, ಮೊ.ನಂ: 9480805431 ಹಾಗೂ ಕಾಪು ಪೊಲೀಸ್ ಉಪ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2551300, ಮೊ.ನಂ: 9480805449 ಅನ್ನು ಸಂಪರ್ಕಿಸಬಹುದು ಎಂದು ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿ, ಎ.9: ಮರ್ಣೆ ಗ್ರಾಮದ ಕಾಡುಹೊಳೆ ರೈಸ್ಮಿಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮೂಲತಃ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಸಮನಹಳ್ಳಿ ಗ್ರಾಮದವರಾದ ಹನುಮಂತಪ್ಪ (50) ಎಂಬ ವ್ಯಕ್ತಿಯು ಮಾರ್ಚ್ 25 ರಂದು ಸಂಜೆ 7 ಗಂಟೆಯ ಸುಮಾರಿಗೆ ಉಡುಪಿಗೆ ತೆರಳುವುದಾಗಿ ಹೇಳಿ ಹೋದವರು ಇದುವರೆಗೆ ಮನೆಗೆ ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. 5 ಅಡಿ 3 ಇಂಚು ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಅಜೆಕಾರು ಪೊಲೀಸ್ ಠಾಣೆ ದೂ.ಸಂಖ್ಯೆ: 08253-271100, ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ದೂ.ಸಂಖ್ಯೆ: 9480805470, 9480805471, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 08258-231083, ಮೊ.ನಂ: 9480805435 ಹಾಗೂ ಜಿಲ್ಲಾ ಪೊಲೀಸ್ ಕಚೇರಿ ದೂ.ಸಂಖ್ಯೆ: 0820-2534777 ಅನ್ನು ಸಂಪರ್ಕಿಸಬಹುದು ಎಂದು ಅಜೆಕಾರು ಪೊಲೀಸ್ ಠಾಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುನ್ನ ರಾಜಕೀಯ ವಾತಾವರಣ ಕಾವೇರಿರುವ ಸಂದರ್ಭದಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿಡುಗಡೆ ಮಾಡಿದ ವೈರಲ್ ವಿಡಿಯೋ ಹೊಸ ವಿವಾದಕ್ಕೆ ಕಾರಣವಾಗಿದೆ. ಆಮ್ ಜನತಾ ಉನ್ನಾಯನ್ ಪಕ್ಷ (ಎಜೆಯುಪಿ) ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ಬಿಜೆಪಿ ಜೊತೆಗೂಡಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಿತೂರಿ ನಡೆಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್ ಹಾಗೂ ಕುನಾಲ್ ಘೋಷ್ ವಿಡಿಯೋ ಪ್ರದರ್ಶಿಸಿ, ಬಿಜೆಪಿ ಧರ್ಮದ ಆಧಾರದ ಮೇಲೆ ರಾಜಕೀಯ ನಡೆಸುತ್ತಿದೆ ಮತ್ತು ಮುಸ್ಲಿಂ ಮತಗಳನ್ನು ವಿಭಜಿಸಲು ‘ಬಿ’ ಹಾಗೂ ‘ಸಿ’ ತಂಡಗಳನ್ನು ರಚಿಸಿ, ಹುಮಾಯೂನ್ ಕಬೀರ್ ಅವರಂತಹವರನ್ನು ಬಳಸುತ್ತಿದೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಕಬೀರ್ ಬಿಜೆಪಿ ಬೆಂಬಲದೊಂದಿಗೆ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳುತ್ತಿರುವುದು ಸೆರೆಯಾಗಿದೆ. ಮುಸ್ಲಿಂ ಮತಗಳನ್ನು ಬೇರ್ಪಡಿಸಿದರೆ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರವೂ ವಿಡಿಯೋದಲ್ಲಿದೆ ಎಂದು ಟಿಎಂಸಿ ಹೇಳಿದೆ. ಕುನಾಲ್ ಘೋಷ್ ಮಾತನಾಡಿ, “ಈ ವಿಡಿಯೋದಲ್ಲಿ ಹುಮಾಯೂನ್ ಕಬೀರ್ ಅವರು ಬಿಜೆಪಿ ಬಳಿ 1,000 ಕೋಟಿ ರೂ. ಬೇಡಿಕೆ ಇಟ್ಟಿರುವುದು ಬಹಿರಂಗವಾಗಿದೆ. ಅವರು ಪ್ರಧಾನಮಂತ್ರಿ ಕಚೇರಿ (ಪಿಎಂಒ) ಸಂಪರ್ಕದಲ್ಲಿರುವುದಾಗಿ ಹೇಳಿರುವುದು ಗಂಭೀರ ವಿಷಯ. ಸಂಬಂಧಿಸಿದ ಅಧಿಕಾರಿಗಳನ್ನು ಗುರುತಿಸಿ ತನಿಖೆ ನಡೆಸಬೇಕು. ಜಾರಿ ನಿರ್ದೇಶನಾಲಯ (ED) ತಕ್ಷಣವೇ ನೋಟಿಸ್ ನೀಡಿ ಹಣದ ಜಾಡು ಪತ್ತೆಹಚ್ಚಬೇಕು” ಎಂದು ಆಗ್ರಹಿಸಿದರು. ವಿಡಿಯೋದಲ್ಲೇ ಕಬೀರ್, “ಮುಸ್ಲಿಮರು ತುಂಬಾ ಮುಗ್ಧರು; ಅವರನ್ನು ಮರುಳು ಮಾಡುವುದು ಸುಲಭ. ಯಾವುದೇ ಬೆಲೆ ಕೊಟ್ಟರೂ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು” ಎಂದು ಹೇಳಿರುವುದು ಕೇಳಿಬರುತ್ತದೆ. ಜೊತೆಗೆ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ಮಾತನಾಡಿರುವುದಾಗಿ, ದಿಲ್ಲಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಅಸ್ಸಾಂ ಮುಖ್ಯಮಂತ್ರಿ ಈ ಕಾರ್ಯಾಚರಣೆಯ ಉಸ್ತುವಾರಿ ವಹಿಸಲಿದ್ದಾರೆ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದರೆ ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ ಎಂಬ ಮಾತುಗಳೂ ವಿಡಿಯೋದಲ್ಲಿ ಕೇಳಿಬರುತ್ತವೆ ಎಂದು ಟಿಎಂಸಿ ತಿಳಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರ ಹೆಸರುಗಳನ್ನೂ ಟಿಎಂಸಿ ಪ್ರಸ್ತಾಪಿಸಿದೆ. ಫಿರ್ಹಾದ್ ಹಕೀಮ್ ಈ ಘಟನೆಯನ್ನು ಖಂಡಿಸಿ, “ಮತಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಧಾರ್ಮಿಕ ಭಾವನೆಗಳನ್ನು ದುರುಪಯೋಗ ಮಾಡಲಾಗುತ್ತಿದೆ. ಮಸೀದಿಗಳ ಹೆಸರಿನಲ್ಲಿ ಭಾವನೆಗಳನ್ನು ವ್ಯಾಪಾರ ಮಾಡಲಾಗುತ್ತಿದೆ. 1,000 ಕೋಟಿ ರೂಪಾಯಿ ಹಾಗೂ 300 ಕೋಟಿ ರೂಪಾಯಿ ಮುಂಗಡ ಹಣದ ಉಲ್ಲೇಖವೂ ಕೇಳಿಬರುತ್ತಿದೆ” ಎಂದು ಹೇಳಿದರು. “ಮುಸ್ಲಿಂ ಸಮುದಾಯದ ಭಾವನೆಗಳನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ಅಸ್ವೀಕಾರಾರ್ಹ. ಯಾರಾದರೂ ನಮ್ಮ ಧಾರ್ಮಿಕ ಭಾವನೆಗಳನ್ನು ಮಾರುವಾಗ ನಾವು ಮೌನವಾಗಿರಬೇಕೇ ಎಂಬ ಪ್ರಶ್ನೆ ಉದ್ಭವಿಸಿದೆ” ಎಂದರು.
ಸಾಲಿಗ್ರಾಮ ಪ.ಪಂ: ಪರಿಷೃತ ಆಸ್ತಿ ತೆರಿಗೆ ಪಾವತಿಗೆ ಸೂಚನೆ
ಉಡುಪಿ, ಎ.9: ಸರಕಾರದ ಸುತ್ತೋಲೆಯಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಆಸ್ತಿ ತೆರಿಗೆಯನ್ನು ಶೇ.3ರಷ್ಟು ಹೆಚ್ಚಿಸಿ, ಪರಿಷ್ಕರಿಸಲಾಗಿದ್ದು, ಎಲ್ಲಾ ವಾಸ್ತವ್ಯ ಮತ್ತು ವಾಣಿಜ್ಯ ಕಟ್ಟಡಗಳ ಹಾಗೂ ಖಾಲಿ ನಿವೇಶನಗಳ ಮಾಲಕರು ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಎಪ್ರಿಲ್ 30ರೊಳಗೆ ಪಾವತಿ ಸಿದ್ದಲ್ಲಿ ಆಸ್ತಿ ತೆರಿಗೆ ಮೇಲೆ ಶೇ.5ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಮೇ ಅಥವಾ ಜೂನ್ ತಿಂಗಳಲ್ಲಿ ದಂಡ ರಹಿತವಾಗಿ ಪಾವತಿಸ ಬಹುದಾಗಿದ್ದು, ಜು.1ರ ನಂತರ ಆಸ್ತಿ ತೆರಿಗೆ ಪಾವತಿಸಿದ್ದಲ್ಲಿ ತಿಂಗಳಿಗೆ ಶೇ.2ರಷ್ಟು ದಂಡವನ್ನು ಧಿಸಲಾಗುವುದು. ಆದ್ದರಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಏಪ್ರಿಲ್ 30 ರ ಒಳಗೆ ಆಸ್ತಿ ತೆರಿಗೆಯನ್ನು ಪಾವತಿಸಿ, ರಿಯಾುತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ನಳ್ಳಿ ನೀರಿನ ಶುಲ್ಕ, ಮಾಸಿಕ ಅಂಗಡಿ ಫೀ ಬಾಕಿ ಇರುವುದನ್ನು ಕ್ಲಪ್ತ ಸಮಯದಲ್ಲಿ ಪಾವತಿಸಿ, ಪಟ್ಟಣ ಪಂಚಾಯತ್ನೊಂದಿಗೆ ಸಹಕರಿಸುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಅಕ್ಕ ಕೆಫೆ ನಿರ್ವಹಣೆ: ಎ.13ರಂದು ನೇರ ಸಂದರ್ಶನ
ಉಡುಪಿ, ಎ.9: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಇವರ ವತಿಯಿಂದ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ನೂತನವಾಗಿ ಅಕ್ಕ ಕೆಫೆ ಪ್ರಾರಂಭಿಸಲು ಉದ್ದೇಶಿಸ ಲಾಗಿದ್ದು, ಕೆಫೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಸಲುವಾಗಿ ಅರ್ಹ ಸ್ವ-ಸಹಾಯ ಗುಂಪುಗಳನ್ನು ಆಯ್ಕೆ ಮಾಡಲು ಎಪ್ರಿಲ್ 13ರಂದು ಬೆಳಗ್ಗೆ 10 ಗಂಟೆಗೆ ಮಣಿಪಾಲದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಕಡ್ಡಾಯವಾಗಿ ಗ್ರಾಮೀಣ ಅಥವಾ ನಗರ ಸಂಜೀವಿನಿ ಸ್ವ-ಸಹಾಯ ಗುಂಪುಗಳಾಗಿರುವ, ಹೋಟೆಲ್ ಅಥವಾ ಕ್ಯಾಟರಿಂಗ್ ಉದ್ಯಮದಲ್ಲಿ ಅನುಭವ ಹೊಂದಿರುವ ಸ್ಥಳೀಯ ಸ್ವ-ಸಹಾಯ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಲಾ ಗುವುದು. ಭಾಗವಹಿಸುವ ಸ್ವ-ಸಹಾಯ ಗುಂಪುಗಳು ತಾವು ತಯಾರಿಸುವ ಆಹಾರದ ಒಂದು ಮಾದರಿ ಮೆನು ಮತ್ತು ದರ ಪಟ್ಟಿಯೊಂದಿಗೆ ಹಾಗೂ ತಮ್ಮ ಸಂಘದ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಅವಿನಾಶ್, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರು, ಮೊ.ನಂ: 9844234080 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ನ ಕಚೇರಿ ಪ್ರಕಟಣೆ ತಿಳಿಸಿದೆ.
2 ವಾರಗಳ ಕದನ ವಿರಾಮ: ಗೆಲುವು ಸಾಧಿಸಿರುವುದಾಗಿ ಹೇಳಿದ ಅಮೆರಿಕ - ಇರಾನ್; ಉಭಯ ರಾಷ್ಟ್ರಗಳ ನಿಲುವೇನು?
ಟೆಹ್ರಾನ್ ಒಪ್ಪಂದಕ್ಕೆ ಒಪ್ಪದಿದ್ದರೆ ಇರಾನಿನ ನಾಗರಿಕತೆಯನ್ನೇ ನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಗಡುವಿಗೆ ಸ್ವಲ್ಪ ಮೊದಲು ಇರಾನ್ ಮತ್ತು ಅಮೆರಿಕ ಎರಡೂ ಯುದ್ಧದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿಕೊಂಡಿವೆ. ಫೆಬ್ರವರಿ 28 ರಂದು ಪ್ರಾರಂಭವಾದ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಕನಿಷ್ಠ 2,076 ಜನರು ಸಾವಿಗೀಡಾಗಿದ್ದಾರೆ. ಯುದ್ಧದಿಂದಾಗಿ ಜಾಗತಿಕ ಇಂಧನ ಪೂರೈಕೆಗಳಿಗೆ ಅಡಚಣೆ ಉಂಟಾಗಿದೆ. ತೈಲ ಟ್ಯಾಂಕರ್ ಗಳು ಸ್ಥಗಿತಗೊಂಡಿವೆ ಮತ್ತು ಬೆಲೆಗಳು ಏರಿಕೆಯಾಗಿವೆ. ಇದು ಇತಿಹಾಸದಲ್ಲೇ ಅತಿದೊಡ್ಡ ಬಿಕ್ಕಟ್ಟು ಎಂದು ಹೇಳಲಾಗಿದೆ. ಮಂಗಳವಾರ, ಅಧ್ಯಕ್ಷ ಟ್ರಂಪ್ ‘ಟ್ರೂತ್ ಸೋಶಿಯಲ್’ ಮೂಲಕ ಅಮೆರಿಕವು ಇರಾನ್ ವಿರುದ್ಧದ ಬಾಂಬ್ ದಾಳಿಯನ್ನು ನಿಲ್ಲಿಸುವುದಾಗಿ ಘೋಷಿಸಿದರು. ಇರಾನದ 10 ಅಂಶಗಳ ಕದನ ವಿರಾಮ ಪ್ರಸ್ತಾವನೆಯನ್ನು ಸ್ವೀಕರಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡೂ ರಾಷ್ಟ್ರಗಳು ಹಿಂದಿನ ಎಲ್ಲಾ ಸಂಘರ್ಷದ ಅಂಶಗಳ ಬಗ್ಗೆ ಒಪ್ಪಂದಕ್ಕೆ ಬಂದಿವೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಕೂಡ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳು ಚಲಿಸಲು ಅವಕಾಶ ನೀಡುವುದಾಗಿ ಹೇಳಿದೆ. ಆದರೆ ದೇಶದ ಕೆಲವರು ತಮ್ಮ ಸರ್ಕಾರ ಒತ್ತಡಕ್ಕೆ ಮಣಿದಿರುವುದನ್ನು ಖಂಡಿಸಿದ್ದಾರೆ. ಶುಕ್ರವಾರದಿಂದ ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳನ್ನು ಎರಡೂ ಕಡೆಯವರು ಮುಂದುವರಿಸುವ ನಿರೀಕ್ಷೆಯಿದೆ. ►ಒಪ್ಪಂದದ ನಿಯಮಗಳು ಇರಾನ್ ಮೇಲೆ ಬಾಂಬ್ ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸಲು ಅಮೆರಿಕ ಒಪ್ಪಿಕೊಂಡಿದೆ. ತಮ್ಮ ಪೋಸ್ಟ್ನಲ್ಲಿ, ಅಮೆರಿಕದ ಮಿಲಿಟರಿ ಗುರಿಗಳನ್ನು ಈಗಾಗಲೇ ಸಾಧಿಸಲಾಗಿದೆ ಎಂದು ಹೇಳುವ ಮೂಲಕ ಟ್ರಂಪ್ ಕದನ ವಿರಾಮವನ್ನು ಸಮರ್ಥಿಸಿಕೊಂಡರು. ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲೀನ ಶಾಂತಿಗಾಗಿ ಸಮಗ್ರ ಒಪ್ಪಂದವು ಪೂರ್ಣಗೊಳ್ಳುವ ಹಂತದಲ್ಲಿದೆ. ಎರಡು ವಾರಗಳ ಅವಧಿಯು ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಔಪಚಾರಿಕಗೊಳಿಸಲು ಅಗತ್ಯವಾದ ಸಮಯವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಯುಎಸ್ ಸಮಾಲೋಚಕರು ಇಸ್ಲಾಮಾಬಾದ್ ನಲ್ಲಿ ಇರುತ್ತಾರೆಯೇ ಎಂದು ಅಮೆರಿಕ ಅಧ್ಯಕ್ಷರು ತಕ್ಷಣ ದೃಢೀಕರಿಸಲಿಲ್ಲ. ಬೆದರಿಕೆಗಳನ್ನು ಒಡ್ಡಿದ ನಂತರ ಇರಾನ್ ಅನ್ನು ಮಾತುಕತೆಗೆ ಕರೆತಂದಿದ್ದು ಟ್ರಂಪ್ ಅವರ ಗೆಲುವು ಎಂದು ಯಾರ್ಕ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನಿ ಕ್ರಿಸ್ ಫೆದರ್ಸ್ಟೋನ್ Aljazeera ಗೆ ತಿಳಿಸಿದ್ದಾರೆ. ಅವರು ಇದನ್ನು ಯಶಸ್ಸು ಎಂದು ಪ್ರಸ್ತುತಪಡಿಸುತ್ತಿದ್ದಾರೆ. ಆದರೆ ದೀರ್ಘಾವಧಿಯಲ್ಲಿ ಇದನ್ನು ಯಶಸ್ಸು ಎಂದು ತೋರಿಸಲು ಅವರು ಇರಾನ್ನಿಂದ ಕೆಲವು ರೀತಿಯ ರಿಯಾಯಿತಿಗಳನ್ನು ಪಡೆಯಬೇಕಾಗುತ್ತದೆ ಎಂದು ಕ್ರಿಸ್ ಫೆದರ್ ಸ್ಟೋನ್ ಹೇಳಿದ್ದಾರೆ. ಇದಕ್ಕೂ ನಡುವೆ, ದೇಶದ ಮೇಲಿನ ದಾಳಿಗಳನ್ನು ನಿಲ್ಲಿಸಿದರೆ ಇರಾನ್ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ಸಹ ನಿಲ್ಲಿಸುತ್ತದೆ. ಇರಾನಿನ ಸಶಸ್ತ್ರ ಪಡೆಗಳು ಹಾರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ಅನುಮತಿಸುತ್ತವೆ ಎಂದು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಇರಾನ್ ನಲ್ಲಿ ಅನೇಕರು ಕದನ ವಿರಾಮ ಒಪ್ಪಂದಕ್ಕೆ ಪ್ರತಿಕ್ರಿಯಿಸಿದ್ದಕ್ಕಾಗಿ ಟೆಹ್ರಾನ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕೆಂದರೆ ದೇಶದಲ್ಲಿ ಅಮೆರಿಕದ ಮೇಲಿನ ಅಪನಂಬಿಕೆ ಹೆಚ್ಚಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇರಾನ್ ನಲ್ಲಿ ನಿರಾಶಾವಾದವು ಬಹುಶಃ ಬೇರೆ ಯಾವುದೇ ಸ್ಥಳಕ್ಕಿಂತ ಹೆಚ್ಚಾಗಿದೆ. ಏಕೆಂದರೆ ಮಾತುಕತೆಗಳ ಮಧ್ಯದಲ್ಲಿ ನಮ್ಮ ಮೇಲೆ ಎರಡು ಬಾರಿ ದಾಳಿ ಮಾಡಲಾಗಿದೆ ಎಂದು Aljazeera ಜೊತೆ ಮಾತನಾಡಿದ ಟೆಹ್ರಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಫೋಡ್ ಇಜಾದಿ ತಿಳಿಸಿದ್ದಾರೆ. ಕಳೆದ ಜೂನ್ ನಲ್ಲಿ ಇಸ್ರೇಲ್ ಜೊತೆಗಿನ 12 ದಿನಗಳ ಯುದ್ಧದ ಸಮಯದಲ್ಲಿ ಅಮೆರಿಕವು ಇರಾನ್ ಮೇಲೆ ಬಾಂಬ್ ದಾಳಿ ಮಾಡಿತ್ತು. ಫೆಬ್ರವರಿ 28 ರಂದು ನಡೆದ ಅಮೆರಿಕ-ಇಸ್ರೇಲಿ ದಾಳಿಗಳನ್ನು ಅವರು ಉಲ್ಲೇಖಿಸುತ್ತಿದ್ದರು. ಮಾತುಕತೆಗಳು ನಡೆಯುತ್ತಿರುವಾಗಲೇ ಈ ದಾಳಿ ನಡೆದಿತ್ತು. ►ಇರಾನ್ ಮತ್ತು ಅಮೆರಿಕದ ಹಿಂದಿನ ಬೇಡಿಕೆಗಳೇನು? ಅಮೆರಿಕದ 15 ಅಂಶಗಳ ಯೋಜನೆ ಮಾರ್ಚ್ 25 ರಂದು ಅಮೆರಿಕವು 15 ಅಂಶಗಳ ಬೇಡಿಕೆಗಳ ಯೋಜನೆಯನ್ನು ಹೊರಡಿಸಿತ್ತು. ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದು ಟೆಹ್ರಾನ್ ನಿರಾಕರಿಸಿದ ಸಮಯದಲ್ಲಿ ಇದನ್ನು ಪಾಕಿಸ್ತಾನದ ಮೂಲಕ ಇರಾನ್ಗೆ ಕಳುಹಿಸಲಾಯಿತು. ಅಧಿಕೃತ ಚೌಕಟ್ಟನ್ನು ಸಂಪೂರ್ಣವಾಗಿ ಪ್ರಕಟಿಸಲಾಗಿಲ್ಲ, ಆದರೆ ಇರಾನ್ ಈ ಯೋಜನೆಯನ್ನು ತಿರಸ್ಕರಿಸಿತು. ಅಮೆರಿಕದ ಮಾಧ್ಯಮಗಳು ವರದಿ ಮಾಡಿರುವಂತೆ ಅದರ ಕೆಲವು ಪ್ರಮುಖ ಅಂಶಗಳು ಹೀಗಿವೆ: 30 ದಿನಗಳ ಕದನ ವಿರಾಮವು ಯುದ್ಧವನ್ನು ನಿಲ್ಲಿಸುತ್ತದೆ. ಸುರಕ್ಷಿತ ಮಾರ್ಗಕ್ಕಾಗಿ ಟೆಹ್ರಾನ್ ನಿಂದ ಹಾರ್ಮುಝ್ ಜಲಸಂಧಿಯನ್ನು ತಕ್ಷಣವೇ ತೆರೆಯಲಾಗುವುದು. ಟೆಹ್ರಾನ್ ನ ಪರಮಾಣು ಸಾಮರ್ಥ್ಯಗಳನ್ನು ಕೊನೆಗೊಳಿಸುವ ಅಮೆರಿಕ ಮತ್ತು ಇಸ್ರೇಲಿ ಗುರಿಗಳಿಗೆ ಅನುಗುಣವಾಗಿ ಇರಾನ್ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ನಲ್ಲಿರುವ ತನ್ನ ಪರಮಾಣು ಸೌಲಭ್ಯಗಳನ್ನು ರದ್ದುಗೊಳಿಸುತ್ತದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದಿರಲು ಶಾಶ್ವತವಾಗಿ ಬದ್ಧವಾಗಿರುತ್ತದೆ. ನಾಗರಿಕ ಉದ್ದೇಶಗಳಿಗಾಗಿಯೂ ಸಹ ಯಾವುದೇ ಯುರೇನಿಯಂ ಪುಷ್ಟೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಇರಾನ್ ನ ಎಲ್ಲಾ ಅಸ್ತಿತ್ವದಲ್ಲಿರುವ ದಾಸ್ತಾನುಗಳನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಗೆ ಹಸ್ತಾಂತರಿಸಲಾಗುತ್ತದೆ ಮತ್ತು ಏಜೆನ್ಸಿಗೆ ಅದರ ಪರಮಾಣು ಮೂಲಸೌಕರ್ಯವನ್ನು ಮೇಲ್ವಿಚಾರಣೆ ಮಾಡಲು ಅನುಮತಿಸಲಾಗುತ್ತದೆ. ಇರಾನ್ ಹಿಜ್ಬುಲ್ಲಾ ಸೇರಿದಂತೆ ಪ್ರಾದೇಶಿಕ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಮತ್ತು ಹಣಕಾಸು ಒದಗಿಸುವುದನ್ನು ನಿಲ್ಲಿಸಬೇಕು. ಇರಾನ್ ಒಡೆತನದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಂಖ್ಯೆ ಕಟ್ಟುನಿಟ್ಟಾಗಿ ಸೀಮಿತವಾಗಿರುತ್ತದೆ ಮತ್ತು ಅದು ಸ್ವರಕ್ಷಣೆಗಾಗಿ ಮಾತ್ರ ಬಳಸಬೇಕು. ಪ್ರತಿಯಾಗಿ, ಇರಾನ್ ಮೇಲೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ಅಮೆರಿಕ ತೆಗೆದುಹಾಕುತ್ತದೆ. ಇದರಲ್ಲಿ ಹಿಂದೆ ತೆಗೆದುಹಾಕಲಾದ ನಿರ್ಬಂಧಗಳನ್ನು ಮರುಹೊಂದಿಸಲು ಅನುಮತಿಸುವ ಸ್ನ್ಯಾಪ್ಬ್ಯಾಕ್ ವಿಶ್ವಸಂಸ್ಥೆಯ ಕಾರ್ಯವಿಧಾನವೂ ಸೇರಿದೆ. ಇರಾನ್ ನ ಬುಶೆಹ್ರ್ ಪರಮಾಣು ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ಗಾಗಿ ವಾಷಿಂಗ್ಟನ್ ಬೆಂಬಲವನ್ನು ನೀಡುತ್ತದೆ. ►ಇರಾನ್ ನ 10 ಅಂಶಗಳ ಯೋಜನೆ ಅಮೆರಿಕದ ರೂಪರೇಷೆಗೆ ಪ್ರತಿಕ್ರಿಯೆಯಾಗಿ ಇರಾನ್ ಕೂಡ 10 ಅಂಶಗಳ ಯೋಜನೆಯನ್ನು ಪ್ರಸ್ತಾಪಿಸಿತು. ಸೋಮವಾರ, ಯುದ್ಧವು 38ನೇ ದಿನಕ್ಕೆ ಕಾಲಿಟ್ಟಿತ್ತು. ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಇರಾನ್ ನ ವಿದ್ಯುತ್ ಮತ್ತು ಇಂಧನ ಸ್ಥಾವರಗಳನ್ನು ಸ್ಫೋಟಿಸುವುದಾಗಿ ಟ್ರಂಪ್ ಬೆದರಿಕೆ ನೀಡಿದ ನಂತರ ಇರಾನ್ 10 ಅಂಶಗಳ ಪ್ರಸ್ತಾವನೆ ಮುಂದಿಟ್ಟಿತು. ಟೆಹ್ರಾನ್ ಪಾಕಿಸ್ತಾನಿ ಮಧ್ಯವರ್ತಿಗಳ ಮೂಲಕ ಈ 10 ಅಂಶಗಳ ಯೋಜನೆಯನ್ನು ಶ್ವೇತಭವನಕ್ಕೆ ತಲುಪಿಸಿದೆ ಎಂದು ಅಮೆರಿಕದ ಅಧ್ಯಕ್ಷರು ತಿಳಿಸಿದ್ದಾರೆ. ಮಂಗಳವಾರ ತಮ್ಮ ಕದನ ವಿರಾಮ ಘೋಷಣೆಯಲ್ಲಿ, ಟ್ರಂಪ್ ಇರಾನ್ನ ಪ್ರಸ್ತಾಪವು ಅಂತಿಮ ಒಪ್ಪಂದಕ್ಕೆ ಆಧಾರವಾಗಿ ಕಾರ್ಯಸಾಧ್ಯ ಎಂದು ಹೇಳಿದ್ದಾರೆ. ವಿಶ್ಲೇಷಕರು ಈ ಯೋಜನೆಯು ವಾಷಿಂಗ್ಟನ್ ಮತ್ತು ಇಸ್ರೇಲ್ ಮಾತುಕತೆಯ ಸಂದರ್ಭದಲ್ಲಿ ನಿರಾಕರಿಸುವ ಕೆಲವು ವಿವಾದಾತ್ಮಕ ಅಂಶಗಳನ್ನು ಒಳಗೊಂಡಿದೆ ಎಂದು ಗಮನಸೆಳೆದಿದ್ದಾರೆ. ►ಇರಾನ್ ನ ಪ್ರಸ್ತಾವನೆಗಳು ಇರಾನ್ ಮೇಲೆ ಇನ್ನು ಮುಂದೆ ದಾಳಿ ಮಾಡಬಾರದು ಇರಾನದ ಸ್ವತ್ತುಗಳ ಬಿಡುಗಡೆ ಲೆಬನಾನ್ ನಲ್ಲಿ ಇಸ್ರೇಲಿ ದಾಳಿಗಳನ್ನು ನಿಲ್ಲಿಸಬೇಕು ಎಲ್ಲಾ ಯುಎಸ್ ನಿರ್ಬಂಧಗಳನ್ನು ತೆಗೆದುಹಾಕಬೇಕು ಇರಾನ್ನ ಮಿತ್ರ ರಾಷ್ಟ್ರಗಳ ಮೇಲೆ ಇನ್ನು ಮುಂದೆ ದಾಳಿ ಮಾಡಬಾರದು ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತವಾಗಿ ಪುನಃ ತೆರೆಯುವುದು ಪ್ರತಿ ಹಡಗಿಗೆ ಶುಲ್ಕ ವಿಧಿಸುವುದು ಒಮಾನ್ ಜೊತೆ ಆದಾಯ ಹಂಚಿಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಬದ್ಧಗೊಳಿಸುವುದು ಪುನರ್ ನಿರ್ಮಾಣಕ್ಕಾಗಿ ಶುಲ್ಕಗಳ ಬಳಕೆ ►ಇಲ್ಲಿಯವರೆಗೆ ಎರಡೂ ಕಡೆಯವರು ಏನನ್ನು ಒಪ್ಪಿಕೊಂಡಿದ್ದಾರೆ? ►ಇರಾನ್ ಶಾಶ್ವತ ಕದನ ವಿರಾಮ ಇರಾನದ ಅಧಿಕಾರಿಗಳು ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದರು. ಟೆಹ್ರಾನ್ ಸಿದ್ಧವಾದಾಗ ಮತ್ತು ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡುವುದಿಲ್ಲ ಎಂದು ಭರವಸೆ ನೀಡಿದಾಗ ಮಾತ್ರ ಯುದ್ಧವನ್ನು ಕೊನೆಗೊಳಿಸುವುದಾಗಿ ಈ ಹಿಂದೆ ಪ್ರತಿಜ್ಞೆ ಮಾಡಿದ್ದರು. ನಂತರ ಇರಾನದ ಅಧಿಕಾರಿಗಳು ಪಾಕಿಸ್ತಾನಿ ಮಧ್ಯವರ್ತಿಗಳ ಒತ್ತಡಕ್ಕೆ ಮಣಿದಿದ್ದಾರೆ. ವರದಿಯ ಪ್ರಕಾರ, ಚೀನಾದ ಒತ್ತಡಕ್ಕೂ ಮಣಿದು ಮಾತುಕತೆ ನಡೆಸಿದರು. ತಕ್ಷಣದ ಮತ್ತು ಶಾಶ್ವತ ನಿಲುಗಡೆಗೆ ಬದಲಾಗಿ ಅವರು ಎರಡು ವಾರಗಳ ಕದನ ವಿರಾಮಕ್ಕೂ ಒಪ್ಪಿಕೊಂಡಿದ್ದಾರೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಮಾರ್ಚ್ 11 ರಂದು ಕದನ ವಿರಾಮಕ್ಕೆ ಆಧಾರವಾಗಿ ಇಸ್ರೇಲ್ ಮತ್ತು ಅಮೆರಿಕದ ದಾಳಿಗಳಿಂದ ಉಂಟಾದ ಹಾನಿಗಳಿಗೆ ಪರಿಹಾರವನ್ನು ಪಾವತಿಸಲು ಕರೆ ನೀಡಿದ್ದರು. ಈಗ ಇರಾನ್ನ ಪ್ರಸ್ತಾಪವು ಪುನರ್ ನಿರ್ಮಾಣಕ್ಕಾಗಿ ಹಾರ್ಮುಝ್ ಜಲಸಂಧಿಯನ್ನು ದಾಟುವ ಹಡಗುಗಳಿಂದ ಸಂಗ್ರಹಿಸುವ ಶುಲ್ಕವನ್ನು ಬಳಸಲು ಸಿದ್ಧವಿದೆ ಎಂದು ಸೂಚಿಸುತ್ತದೆ. ►ಲೆಬನಾನ್ ಮೇಲಿನ ದಾಳಿಗಳು ಯಾವುದೇ ಕದನ ವಿರಾಮವು ಲೆಬನಾನ್ನಲ್ಲಿನ ಹೆಜ್ಬೊಲ್ಲಾ ಸೇರಿದಂತೆ ತನ್ನ ಪ್ರಾದೇಶಿಕ ಮಿತ್ರ ರಾಷ್ಟ್ರಗಳ ಮೇಲಿನ ದಾಳಿಗಳನ್ನು ನಿಲ್ಲಿಸುವವರೆಗೆ ವಿಸ್ತರಿಸಬೇಕೆಂದು ಇರಾನ್ ಹಲವಾರು ದಿನಗಳಿಂದ ಒತ್ತಾಯಿಸುತ್ತಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಧ್ಯಸ್ಥಿಕೆ ವಹಿಸಲು ಸಹಾಯ ಮಾಡಿದ ಕದನ ವಿರಾಮವನ್ನು ವಿವರಿಸುವಾಗ, ಅದು ಲೆಬನಾನ್ನನ್ನೂ ಒಳಗೊಂಡಿದೆ ಎಂದು ಹೇಳಿದರು. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಾಡಿದ ಭಾಷಣದಲ್ಲಿ ಯುಎಸ್-ಇರಾನ್ ಒಪ್ಪಂದವು ಲೆಬನಾನ್ ಅನ್ನು ಒಳಗೊಂಡಿಲ್ಲ ಎಂದು ಹೇಳಿದರು. ಗಂಟೆಗಳ ನಂತರ, ಇಸ್ರೇಲ್ ಲೆಬನಾನ್ ಮೇಲೆ ಯುದ್ಧದ ತನ್ನ ಅತಿದೊಡ್ಡ ಬಾಂಬ್ ದಾಳಿಯನ್ನು ಪ್ರಾರಂಭಿಸಿತು. ರಾಜಧಾನಿ ಬೈರುತ್ ಮೇಲಿನ ಈ ದಾಳಿಯಲ್ಲಿ ನೂರಾರು ಜನರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಅಧಿಕಾರಿಗಳು ತಿಳಿಸಿದ್ದಾರೆ. ಕದನ ವಿರಾಮ ಒಪ್ಪಂದದಲ್ಲಿ ಲೆಬನಾನ್ ನ ಸ್ಥಾನದ ಬಗ್ಗೆ ಅಮೆರಿಕ, ಇರಾನ್ ಮತ್ತು ಪಾಕಿಸ್ತಾನದಂತಹ ಮಧ್ಯವರ್ತಿಗಳ ನಡುವೆ ಒಮ್ಮತವಿದೆಯೇ ಮತ್ತು ಇಸ್ರೇಲ್ ಅದನ್ನು ಉಲ್ಲಂಘಿಸುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇಲ್ಲಿಯವರೆಗೆ ಯುದ್ಧದ ಸಮಯದಲ್ಲಿ ಲೆಬನಾನ್ನಲ್ಲಿ ಕನಿಷ್ಠ 1,530 ಜನರು ಸಾವಿಗೀಡಾಗಿದ್ದಾರೆ. ►ಅಮೆರಿಕ ►ಹಾರ್ಮುಝ್ ಜಲಸಂಧಿ ಟ್ರಂಪ್ ಇರಾನ್ ಹಾರ್ಮುಝ್ ಜಲಸಂಧಿಯ ಮೂಲಕ ಮುಕ್ತ ಮತ್ತು ಸುರಕ್ಷಿತ ಮಾರ್ಗವನ್ನು ಅನುಮತಿಸಬೇಕೆಂದು ಒತ್ತಾಯಿಸಿದ್ದಾರೆ. ಈ ವಾರ ಟ್ರಂಪ್ ಇರಾನ್ನ ನಾಗರಿಕ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಟ್ರಂಪ್ ಈ ಹಿಂದೆ ಇರಾನ್ ನ ಬೇಷರತ್ತಾದ ಶರಣಾಗತಿಗೂ ಒತ್ತಾಯಿಸಿದ್ದರು. ಆದರೆ ಇರಾನ್ ತನ್ನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಜಲಸಂಧಿಯ ನಿಯಂತ್ರಣವನ್ನು ಕಾಯ್ದುಕೊಳ್ಳುತ್ತದೆ. ಇರಾನ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಶುಲ್ಕವನ್ನು ಪಡೆಯುವುದನ್ನು ಮುಂದುವರಿಸುತ್ತದೆ ಮತ್ತು ಆ ಆದಾಯವನ್ನು ಪುನರ್ ನಿರ್ಮಾಣಕ್ಕಾಗಿ ಬಳಸುತ್ತದೆ ಎಂದು ನಿರೀಕ್ಷಿಸಲಾಗಿದೆ. ►ಇರಾನ್ ನ ಕ್ಷಿಪಣಿ ಸಾಮರ್ಥ್ಯಗಳು ಯುದ್ಧದ ಅವಧಿಯಲ್ಲಿ ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವನ್ನು ಕುಗ್ಗಿಸಲು ಅಮೆರಿಕ ಪ್ರಯತ್ನಿಸುತ್ತಲೇ ಬಂದಿದೆ. ಶಾಂತಿಗಾಗಿ ಈ ಕಾರ್ಯಕ್ರಮವನ್ನು ತೀವ್ರವಾಗಿ ಸೀಮಿತಗೊಳಿಸಬೇಕು ಎಂದು ಅಮೆರಿಕ ಒತ್ತಾಯಿಸಿದೆ. ಆದರೆ ಕದನ ವಿರಾಮಕ್ಕೆ ಕಾರಣವಾದ ಮತ್ತು ನಂತರ ನೀಡಿದ ಹೇಳಿಕೆಗಳಲ್ಲಿ ಟ್ರಂಪ್ ಇರಾನ್ನ ಕ್ಷಿಪಣಿಗಳ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಮುಂದೆ ಏನು? ಶುಕ್ರವಾರ ಎರಡೂ ಕಡೆಯವರು ಗಂಭೀರ ಮಾತುಕತೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿರುವುದರಿಂದ, ಅಂತಿಮವಾಗಿ ಯಾವ ರಿಯಾಯಿತಿಗಳನ್ನು ನೀಡಲು ಸಿದ್ಧರಾಗಬಹುದು ಎಂಬುದರ ಕುರಿತು ವಿಶ್ಲೇಷಕರು ಊಹಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೈನಿಕ ಉಪಸ್ಥಿತಿಯನ್ನು ಕೊನೆಗೊಳಿಸಬೇಕೆಂಬ ಇರಾನದ ಬೇಡಿಕೆಯನ್ನು ಅಮೆರಿಕ ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅಮೆರಿಕ 65 ವರ್ಷಗಳಿಗೂ ಹೆಚ್ಚು ಕಾಲ ಈ ಪ್ರದೇಶದಲ್ಲಿ ಸೈನಿಕ ಉಪಸ್ಥಿತಿಯನ್ನು ಕಾಯ್ದುಕೊಂಡಿದೆ. ಇರಾನ್ ಯುದ್ಧದ ಸಮಯದಲ್ಲಿ ಕರೆಸಲಾದ ಸಾವಿರಾರು ಸೈನಿಕರನ್ನು ಹೊರತುಪಡಿಸಿ, ಹಲವಾರು ದೇಶಗಳಲ್ಲಿ 19 ಸ್ಥಳಗಳಲ್ಲಿ ಸುಮಾರು 50,000 ಅಮೆರಿಕ ಸೈನಿಕರು ನೆಲೆಸಿದ್ದಾರೆ.
ಗುಣಮಟ್ಟದ ಆಹಾರ ಸೇವನೆ,ಸ್ವಚ್ಛತೆಗೆ ಗಮನ ಕೊಡಿ: ರವಿರಾಜ್ ಹೆಗ್ಡೆ
ವಿಶ್ವ ಆರೋಗ್ಯ ದಿನಾಚರಣೆಗೆ ಉಚಿತ ಆರೋಗ್ಯ ತಪಾಸಣೆ
Aland | ಧರ್ಮ, ಶಿಕ್ಷಣದ ಸಮನ್ವಯವೇ ಸಮಾಜದ ಬೆಳವಣಿಗೆಗೆ ಬುನಾದಿ : ಜೇಮಸಿಂಗ್ ಮಹಾರಾಜ್
ಆಳಂದ: ಧರ್ಮ ಮಾರ್ಗದಲ್ಲಿ ಸಾಗುವುದು ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರುತ್ತದೆ ಎಂದು ಮುಗುಳನಾಗಾವಿಯ ಮಠದ ಜೇಮಸಿಂಗ್ ಮಹಾರಾಜ್ ಅವರು ಹೇಳಿದರು. ತಾಲೂಕಿನ ಲಾಡಚಿಂಚೋಳಿ ತಾಂಡಾದ ದೇವಿಸೇವಾ ರಾಮಘಡ ಶಕ್ತಿ ಪೀಠದಲ್ಲಿ ಶ್ರೀ ಜಗದಂಬಾದೇವಿ, ಶ್ರೀ ಸೇವಾಲಾಲ ಮಹಾರಾಜರ ಜಾತ್ರೆ ಅಂಗವಾಗಿ ಹಮ್ಮಿಕೊಂಡ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶಿಕ್ಷಣದೊಂದಿಗೆ ಧಾರ್ಮಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದ್ದು, ಇಂಥ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಶ್ರೇಯೋಭಿವೃದ್ಧಿಗೆ ಬುನಾದಿಯಾಗುತ್ತವೆ ಎಂದು ತಿಳಿಸಿದರು. ಇಂದಿನ ಯುವಜನತೆ ಸಂಸ್ಕಾರಪೂರ್ಣ ಬದುಕಿನತ್ತ ಹೆಜ್ಜೆ ಹಾಕಬೇಕೆಂದರೆ ಇಂತಹ ಜಾತ್ರೆ–ಮಹೋತ್ಸವಗಳು ಪ್ರೇರಣೆಯ ಮೂಲವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ.ಚವ್ಹಾಣ, ಸೇವಾಲ ಕಮೀಟಿ ಕಾರ್ಯದರ್ಶಿ ಶಿವಾಜಿ ರಾಠೋಡ ಮಾತನಾಡಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸೊನ್ನಲಗಿರಿಯ ಪರ್ವತಲಿಂಗ ಪರಶುರಾಮ ಮಹಾರಾಜ್, ಲಿಂಗಸೂರ ವಿಜಯ ಮಹಾಂತೇಶ್ವರ ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ, ಗೊಬ್ಬರವಾಡಿಯ ಶ್ರೀ ಬಳಿರಾಮ ಮಹಾರಾಜ್, ಕೆಸರಟಗಿಯ ಮಾತೋಶ್ರೀ ಲತಾದೇವಿ, ಚೌಡಾಪೂರದ ಮುರಾಹರಿ ಮಹಾರಾಜ್, ಚಿಕ್ಕನಗಾಂವ್ ಅಗ್ನಿ ಪರ್ವತಗಿರಿಯ ಲೋಕೇಶ್ ಮಹಾರಾಜ್, ಕೊರವಿ ಕಾಳಿಕಾ ದೇವಿ ಶಕ್ತಿಪೀಠದ ವಿಠಲ್ ಮಹಾರಾಜ್, ಮಡಿಕಿ ತಾಂಡಾದ ಓಂ ನಾಗಲಿಂಗೇಶ್ವರ ಮಠದ ಶಂಕರ್ ಮಹಾರಾಜ್, ಗೊಬ್ಬರವಾಡಿ ತಾಂಡಾದ ಸುರೇಶ್ ಮಹಾರಾಜ್, ಕಮಲಾನಗರ ಸವಿತಾ ಯಾಡಿ, ಹೆಬಳಿ ತಾಂಡಾದ ಸೋಮಲಿಂಗ್ ಮಹಾರಾಜ್, ಮಹಾರಾಷ್ಟ್ರದ ಮೈನಿ ಶಿವಶಾಂತ್ ಮಹಾರಾಜ್, ಬಳಬಟ್ಟಿ ತಾಂಡದ ಶಿವರಾಮ ಸೇರಿದಂತೆ ಆಗಮಿಸಿದ್ದ ಹರಗುರು ಚರಮೂರ್ತಿಗಳಿಗೆ ಪೀಠದ ಶ್ರೀ ಸುನೀಲ ಮಹಾರಾಜ್ ಅವರು ಸನ್ಮಾನಿಸಿ ಗೌರವಿಸಿದರು. ಕ್ರಾಂತಿದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಪವಾರ, ಕಾರ್ಯದರ್ಶಿ ಕೋಟೇಶ ರಾಠೋಡ, ಉಪಾಧ್ಯಕ್ಷ ಅನೀಲ ರಾಠೋಡ, ರಾಠೋಕರಸಿಂಗ್ ರಾಠೋಡ, ತಾಲೂಕು ಅಧ್ಯಕ್ಷ ದಿನೇಶ ಪವಾರ ಕೊರಳ್ಳಿ, ಡಾ. ಪ್ರೇಮಸಿಂಗ್ ಚವ್ಹಾಣ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಿಕ್ಷಕ ಬಾಬು ಎಂ. ಜಾಧವ ಗಾಯನ ನಡೆಸಿಕೊಟ್ಟರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಜಾಧವ ನಿರೂಪಿಸಿದರು.
ಎ.11: ಟ್ಯಾಪ್ಮಿ ಪದವಿ ಪ್ರದಾನ ಸಮಾರಂಭ
ಉಡುಪಿ, ಎ.9: ಮಾಹೆ ವಿವಿಯ ಘಟಕವಾದ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನ(ಟ್ಯಾಪ್ಮಿ) 40ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ ಎ.11ರಂದು ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ನಡೆಯಲಿದೆ. ಮಾಹೆಯ 33ನೇ ಘಟಿಕೋತ್ಸವದ ಭಾಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೇಲ್ಸ್ ಫೋರ್ಸ್ನ ದಕ್ಷಿಣ ಏಶ್ಯಾ ಅಧ್ಯಕ್ಷೆ ಹಾಗೂ ಸಿಇಒ ಅರುಂಧತಿ ಭಟ್ಟಾಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಹಾಗೂ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವೇಜ್ ಇಂಡಸ್ಟ್ರೀಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ತಿಕ್ ಪೈ, ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹಾಗೂ ಕುಲಪತಿ ಲೆ.ಜ.ಡಾ.ಎಂ.ಡಿ. ವೆಂಕಟೇಶ್ ಭಾಗವಹಿಸ ಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Sedam | ಉತ್ತರ ಕರ್ನಾಟಕದ ಕಲಾವಿದರು ಬೆಳೆಯಲಿ: ಶ್ರೀ ಗುರುಲಿಂಗ ಶಿವಾಚಾರ್ಯ
ಸೇಡಂ: ಉತ್ತರ ಕರ್ನಾಟಕದ ಕಲಾವಿದರು ಚಲನಚಿತ್ರ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದು ಬೆಳೆಯಬೇಕಾಗಿದೆ ಎಂದು ಮಲಕೂಡ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಹೇಳಿದರು. ತಾಲೂಕಿನ ಮಳಖೇಡ ಸಮೀಪದ ಮಲಕೂಡ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಯ್ಯ ಸ್ವಾಮಿ ಮಳಖೇಡ ಅವರ ರಚನೆಯ “ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ” ಚಲನಚಿತ್ರದ ಕ್ಯಾಮರಾ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನಾಟಕ ಅಥವಾ ಕಾದಂಬರಿ ಆಧಾರಿತ ಕಥೆಗಳಿದ್ದರೆ ಚಲನಚಿತ್ರಗಳು ಯಶಸ್ವಿಯಾಗುವ ಸಾಧ್ಯತೆ ಹೆಚ್ಚು ಎಂದು ಅವರು ಅಭಿಪ್ರಾಯಪಟ್ಟರು. ಉತ್ತರ ಕರ್ನಾಟಕದ ನಾಟಕಕಾರರು ಹಾಗೂ ಕಥೆಗಾರರ ಕೃತಿಗಳನ್ನು ಗುರುತಿಸಿ ಚಲನಚಿತ್ರ ರೂಪದಲ್ಲಿ ತರುತ್ತಿರುವುದು ಸಂತಸದ ಸಂಗತಿ. ಇದರಿಂದ ಈ ಭಾಗದ ಕವಿ ಮತ್ತು ಕಲಾವಿದರಿಗೆ ಉತ್ತೇಜನ ಸಿಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದ ಪ್ರತಿಭೆಗಳು ತಮ್ಮ ಕಲೆಯನ್ನು ಪ್ರದರ್ಶಿಸಲು ಇಂತಹ ಅವಕಾಶಗಳು ಸಹಕಾರಿಯಾಗುತ್ತವೆ. ಈ ಚಲನಚಿತ್ರ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು. ಚಲನಚಿತ್ರ ನಿರ್ದೇಶಕ ಶಿವಕುಮಾರ ಅಪ್ಪಾಜಿ ಮಾತನಾಡಿ, ಭಾವನಾತ್ಮಕ ಸಂಬಂಧಗಳನ್ನು ಒಳಗೊಂಡಿರುವ “ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ” ಕಥೆಯನ್ನು ಪರಿಣಾಮಕಾರಿಯಾಗಿ ಚಿತ್ರ ರೂಪಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲೇ ಶೂಟಿಂಗ್ ನಡೆಯಲಿದ್ದು, ಕುಟುಂಬ ಸಮೇತರಾಗಿ ನೋಡುವಂತ ಸಿನಿಮಾ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಸಹ ನಿರ್ದೇಶಕ ಯುವರಾಜ ಗುತ್ತೇದಾರ, ಕಥೆಗಾರ ಸಿದ್ದಲಿಂಗಯ್ಯ ಸ್ವಾಮಿ ಮಳಖೇಡ, ನಿರ್ಮಾಪಕರಾದ ಸೋಮಶೇಖರ ಇನಾಪುರ, ರಾಜಶೇಖರ ಕುಂಬಾರ ಸೇರಿದಂತೆ ಅನೇಕ ಕಲಾವಿದರು ಹಾಗೂ ಗಣ್ಯರು ಉಪಸ್ಥಿತರಿದ್ದರು.
Kalaburagi | ಶರಣಕುಮಾರ ಮೋದಿ ಜನ್ಮದಿನ ಪ್ರಯುಕ್ತ ಹಣ್ಣು ಹಂಪಲು ವಿತರಣೆ, ಅನ್ನ ದಾಸೋಹ ಕಾರ್ಯಕ್ರಮ
ಕಲಬುರಗಿ : ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರು, ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಹಾಗೂ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಶರಣಕುಮಾರ ಮೋದಿ ಅವರ ಜನ್ಮದಿನದ ಅಂಗವಾಗಿ ಶ್ರೀ ಈಶ್ವರ ಖಂಡ್ರೆ ಸಾಬ್ ಅಭಿಮಾನಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದಶವಂತ ಬಿ.ಕಣಮಸಕರ್ ಅವರ ನೇತೃತ್ವದಲ್ಲಿ ಅನ್ನದಾಸೋಹ ಹಾಗೂ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸೋಮಶೇಖರ ಹಿರೇಮಠ, ಭೀಮಾಶಂಕರ ಮಿಟೇಕಾರ, ತೋಟಯ್ಯ ಸ್ವಾಮಿ, ವಿಠಲ ಹಾಗರಗಿ, ಶೇಖರ ವಿದ್ಯಾನಗರ, ಸಿದ್ದು ಕನಕ, ಚಂದ್ರಶಾ ಗಾಯಕವಾಡ, ಮಲ್ಲಿಕಾರ್ಜುನ ಸೇರಿದಂತೆ ಸಂಘದ ಪದಾಧಿಕಾರಿಗಳು, ಅಭಿಮಾನಿಗಳು ಇದ್ದರು.
Kalaburagi | ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಿಂದನಾತ್ಮಕ ಹೇಳಿಕೆ ಖಂಡಿಸಿ ಪ್ರತಿಭಟನೆ
ಕಲಬುರಗಿ: ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ನೀಡಿದ ನಿಂದನಾತ್ಮಕ ಹೇಳಿಕೆಯನ್ನು ಖಂಡಿಸಿ ದಲಿತ ಯುವ ಬ್ರಿಗೇಡ್ ಕಲಬುರಗಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಡ ದಲಿತ ಕುಟುಂಬದಿಂದ ಬೆಳೆಯುತ್ತಾ ಐವತ್ತು ವರ್ಷಗಳ ಕಾಲ ರಾಜಕೀಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರಿಗೆ ವ್ಯಕ್ತಿಗತ ಅವಮಾನ ಮಾಡುವ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾದರೂ, ವ್ಯಕ್ತಿ ಗೌರವ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಹಿಮಂತ್ ಬಿಸ್ವಾ ಶರ್ಮಾ ಅವರ ಹೇಳಿಕೆ ಕೇವಲ ಖರ್ಗೆ ಅವರಿಗೆ ಮಾತ್ರವಲ್ಲ, ಇಡೀ ದಲಿತ ಸಮುದಾಯಕ್ಕೆ ಅವಮಾನವಾಗಿದೆ ಎಂದು ಆರೋಪಿಸಿರುವ ಬ್ರಿಗೇಡ್, ಅವರು ತಕ್ಷಣವೇ ಕ್ಷಮೆಯಾಚಿಸಬೇಕೆಂದು ಮುಖಂಡರು ಆಗ್ರಹಿಸಿದ್ದಾರೆ. ದಲಿತ ಯುವ ಬ್ರಿಗೇಡ ಪದಾಧಿಕಾರಿಗಳಾದ ಅಮರ್ ಶಿರವಾಳ್, ಸಚಿನ್ ಬಂಡೆ, ಶಿವುಕುಮಾರ್ ಮಾನೆ, ಪಾಲಿಕೆ ಸದಸ್ಯರಗಳಾದ ಸಚೀನ ಶಿರವಾಳ, ರಾಜೀವ ಜಾನೆ, ರೇಣುಕಾ, ಶ್ರೀನಿವಾಸ್ ಲಾಖೆ, ದಲಿತ ಮುಖಂಡರಾದ ಅಶೋಕ ವೀರನಾಯಕ, ಪ್ರಕಾಶ ಮೂಲಭಾರತಿ, ರೇಣುಕಾ ಸಿಂಗೆ, ಟೈಗರ್ ವಿಘ್ನೇಶ್ವರ್, ಅರುಣಕುಮಾರ, ಗೌತಮ ಕರೇಕಲ್, ಮಹಾಲಿಂಗ, ಮಲ್ಲಿಕಾರ್ಜುನ, ದಯಾನಂದ, ಗೀತಾ, ರವಿ, ಶೀಲ್ಪಾ ಸೇರಿದಂತೆ ಇತರರು ಇದ್ದರು.
ಸೇಡಂನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕಟ್ಟುನಿಟ್ಟಿನ ನಿಗಾವಹಿಸಿ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಸೇಡಂ : ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ನಿಗಾವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸೂಚಿಸಿದರು. ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಪರಿಶೀಲನಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಿಯಾದರೂ ನೀರಿನ ಸಮಸ್ಯೆ ಕಂಡುಬಂದರೆ ಸಂಬಂಧಿತ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು. ಅಧಿಕಾರಿಗಳ ಫೋನ್ ಸ್ವಿಚ್ ಆಫ್ ಇದ್ದಲ್ಲಿ ವರದಿ ಪಡೆದು ನೋಟಿಸ್ ನೀಡಿ ಸಸ್ಪೆಂಡ್ ಮಾಡುವುದಾಗಿ ಖಡಕ್ ಸೂಚನೆ ನೀಡಿದರು. ಗ್ರಾಮೀಣ ಭಾಗಗಳಲ್ಲಿ ನೀರಿನ ಕೊರತೆ ಕಂಡುಬಂದರೆ ತಕ್ಷಣ ಬೋರ್ವೆಲ್ ಕೊರೆದು ಸಮಸ್ಯೆ ಪರಿಹರಿಸಬೇಕು. ಬೋರ್ವೆಲ್ ಮೋಟರ್ ಸುಟ್ಟಂತಹ ಸಂದರ್ಭಗಳಲ್ಲಿ ತಕ್ಷಣ ಸ್ಪಂದನೆ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಮದನಾದ ಪೋಶಾಮ್ಮಾಯಿ ಗುಡಿ, ಕುಕ್ಕುಂದಾ ಎಸ್ಸಿ ಓಣಿ, ಮದಕಲ್ ಮತ್ತು ಕುರುಕುಂಡಾ ಗ್ರಾಮಗಳಲ್ಲಿ ನೀರಿನ ಕೊರತೆ ಬಗ್ಗೆ ಪಿಡಿಓಗಳು ಸಚಿವರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಹಾಗೂ ಹೆಚ್ಚುವರಿ ಅನುದಾನದಿಂದ ಹೊಸ ನೀರಿನ ಮೂಲಗಳನ್ನು ಸೃಷ್ಟಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೆಜೆಎಂ ಕಾಮಗಾರಿಗಳ ವಿವರಗಳು ಪಿಡಿಓಗಳ ಬಳಿ ಇರಬೇಕು ಎಂದು ಸೂಚಿಸಿದ ಸಚಿವರು, ಮಾಹಿತಿ ಇಲ್ಲದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಕುರುಕುಂಟಾ, ಇಟ್ಟಕಲ್ ಮತ್ತು ಕೋಲಕುಂದಾ ಗ್ರಾಮಗಳಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ತಕ್ಷಣ ಮೇಲಾಧಿಕಾರಿಗಳಿಗೆ ಸೂಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಮೇ ತಿಂಗಳೊಳಗೆ ಸೇಡಂ-ಚಿಂಚೋಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜೆಜೆಎಂ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾರ ಶ್ರೇಯಾಂಕ ಧನಶ್ರೀ, ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಇಒ ಚನ್ನಣ್ಣ ರಾಯಣ್ಣನವರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ಒಂದು ಕಾಲ್ ಬಂದರೂ ಸಂಬಂಧಿತ ಅಧಿಕಾರಿಗಳೇ ಹೊಣೆ. ಪತ್ರಿಕೆಯಲ್ಲಿ ವರದಿ ಬಂದರೂ ಪಿಡಿಓಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಬಗ್ಗೆ ಸಮನ್ವಯತೆಯಿಂದ ಕೆಲಸ ಮಾಡಿ. -ಡಾ.ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ
ಕೆ.ಎಂ.ಇ.ಎಸ್ ಪದವಿ ಪೂರ್ವ ಕಾಲೇಜಿಗೆ ಶೇ. 98 ಫಲಿತಾಂಶ
ವಿಜ್ಞಾನ ವಿಭಾಗದಲ್ಲಿ 100% ಮತ್ತು ವಾಣಿಜ್ಯ ವಿಭಾಗದಲ್ಲಿ 98%
2nd PUC Result-2026 | ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ, ಯಾದಗಿರಿಗೆ ಕೊನೆಯ ಸ್ಥಾನ
86.48ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಮತ್ತು ಐಎಟಿಎ ಸಂಸ್ಥೆಗಳ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಬಯೋಮೆಟ್ರಿಕ್ ಆಧಾರಿತ ‘ಸ್ಪರ್ಶರಹಿತ ಪ್ರಯಾಣ’ದ ತಾಂತ್ರಿಕ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದುವರೆಗೆ ಕೇವಲ ದೇಶೀಯ ಪ್ರಯಾಣಿಕರಿಗೆ ಸೀಮಿತವಾಗಿದ್ದ ಈ 'ಡಿಜಿ ಯಾತ್ರಾ' ಸೌಲಭ್ಯವನ್ನು, ಟಿಕೆಟ್ ಬುಕಿಂಗ್ನಿಂದ ಹಿಡಿದು ವಿಮಾನವೇರುವವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅಳವಡಿಸಿಕೊಳ್ಳಲು ಈ ಪ್ರಯೋಗ ನಾಂದಿ ಹಾಡಿದೆ.

28 C