ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆ, ಇಲಾಖೆಯ ಬಲವರ್ಧನೆಗೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ : ಜಿ.ಪರಮೇಶ್ವರ್
ಕೋಲಾರ : ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆ ಮತ್ತು ಇಲಾಖೆಯ ಬಲವರ್ಧನೆಗೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಕೆಜಿಎಫ್ನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 10ನೇ ಬೆಟಾಲಿಯನ್ ಆವರಣದಲ್ಲಿ ನೂತನ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ಶಾಸಕಿ ಡಾ.ರೂಪಕಲಾ ಶಶಿಧರ್ ಅವರ ಅಭಿವೃದ್ಧಿ ಕಾಳಜಿಯನ್ನು ಶ್ಲಾಘಿಸಿದ ಸಚಿವರು, ರೂಪಕಲಾ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅತ್ಯಂತ ವ್ಯವಸ್ಥಿತವಾದ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಅವರು ಮಾಡುತ್ತಿರುವ ಕೆಲಸ ಇತರರಿಗೆ ಮಾದರಿ, ಎಂದರು. ಇಲಾಖೆಯಲ್ಲಿ ಖಾಲಿ ಇರುವ 15,000 ಹುದ್ದೆಗಳ ಪೈಕಿ ಈ ವರ್ಷ 10,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸೈಬರ್ ಅಪರಾಧ ತಡೆಯಲು 1.10 ಲಕ್ಷ ಸಿಬ್ಬಂದಿಗೆ ವಿಶೇಷ ತರಬೇತಿ ಹಾಗೂ ‘ಮನೆ ಮನೆಗೆ ಪೊಲೀಸ್’ ಯೋಜನೆಯ ಮೂಲಕ ಜನಸ್ನೇಹಿ ಆಡಳಿತ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಅರುಣ್ ಚಕ್ರವರ್ತಿ, ಕೇಂದ್ರ ಐಜಿಪಿ ನಗುರಂ, ಸಂದೀಪ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ, ಕೆಜಿಎಫ್ ತಹಶೀಲ್ದಾರ್ ಭರತ್, ಬಂಗಾರಪೇಟೆ ತಹಶೀಲ್ದಾರ್ ಸುಜಾತಾ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಸುಮಾರು 100 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ‘ಇಂಡಿಯನ್ ರಿಸರ್ವ್ ಪೊಲೀಸ್’ ತರಬೇತಿ ಕೇಂದ್ರದ ನಿರ್ಮಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕೇಂದ್ರ ಮತ್ತು ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಸುಮಾರು 1,000 ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಇಲ್ಲಿ ನೆಲೆ ಸಿಗಲಿದೆ. ಜನಸಂಖ್ಯೆ ಹೆಚ್ಚಳದಿಂದ ಸ್ಥಳೀಯ ವ್ಯಾಪಾರ-ವಹಿವಾಟುಗಳಿಗೆ ಉತ್ತೇಜನ ದೊರೆಯಲಿದೆ. -ಡಾ.ರೂಪಕಲಾ ಶಶಿಧರ್, ಶಾಸಕಿ
ಟ್ರಂಪ್ ಅವರ ಗ್ರೀನ್ಲ್ಯಾಂಡ್ ಸುಂಕಕ್ಕೆ ಸೆಡ್ಡು ಹೊಡೆದ ಐರೋಪ್ಯ ರಾಷ್ಟ್ರಗಳಿಂದ 'ಟ್ರೇಡ್ ಬಝೂಕಾ' ಅಸ್ತ್ರ
ಡೊನಾಲ್ಡ್ ಟ್ರಂಪ್ ಅವರು ಗ್ರೀನ್ಲ್ಯಾಂಡ್ ಖರೀದಿಗೆ ಯುರೋಪಿಯನ್ ದೇಶಗಳು ವಿರೋಧಿಸಿದರೆ ವ್ಯಾಪಾರ ಯುದ್ಧದ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಯುರೋಪ್ 'ಟ್ರೇಡ್ ಬಝೂಕಾ' ಎಂಬ ಶಕ್ತಿಯುತ ಆರ್ಥಿಕ ಅಸ್ತ್ರವನ್ನು ಪರಿಗಣಿಸುತ್ತಿದೆ. ಟ್ರಂಪ್ ಅವರು ನಾರ್ವೆಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದ ಕಾರಣ ತಮ್ಮ ನಿಲುವನ್ನು ಬದಲಾಯಿಸಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ ಒಲಿಂಪಿಕ್ಸ್ ಕ್ರೀಡಾಕೂಟ 2025-26 | ಅತ್ಲೆಟಿಕ್ಸ್ನಲ್ಲಿ 9 ಪದಕಗಳೊಂದಿಗೆ ಬೆಳಗಾವಿ ಶುಭಾರಂಭ
ತುಮಕೂರು : ಜಿಲ್ಲೆಯಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26ರ ಅತ್ಲೆಟಿಕ್ಸ್ನಲ್ಲಿ ಮೊದಲ ದಿನವೇ ಬೆಳಗಾವಿ ಅತ್ಲೆಟ್ಗಳು 9 ಪದಕಗಳನ್ನು ಗೆದ್ದು ಮೇಲುಗೈ ಸಾಧಿಸಿದ್ದಾರೆ. ಏತನ್ಮಧ್ಯೆ, ಉಡುಪಿಯ ಮಾಧುರ್ಯ ಒಂದು ಚಿನ್ನ ಸೇರಿ ಎರಡು ಪದಕ ಗೆದ್ದು ಬೀಗಿದ್ದಾರೆ. ಕೂಟದ ಐದನೇ ದಿನವಾದ ಮಂಗಳವಾರ ಅತ್ಲೆಟಿಕ್ಸ್, ವೇಟ್ಲಿಫ್ಟಿಂಗ್, ಟೇಬಲ್ ಟೆನಿಸ್, ಲಾನ್ ಟೆನಿಸ್ ಮತ್ತು ಈಜು ಸ್ಪರ್ಧೆಗಳಲ್ಲಿ ಪದಕ ಬೇಟೆ ನಡೆದವು. ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅತ್ಲೆಟಿಕ್ಸ್ನಲ್ಲಿ ಬೆಳಗಾವಿ ಜತೆ ಆತಿಥೇಯ ತುಮಕೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅತ್ಲೇಟ್ಗಳು ಒಂದೊಂದು ಸ್ಪರ್ಧೆಯಲ್ಲಿ ಎಲ್ಲಾ ಮೂರು ಪದಕ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ. ಉಡುಪಿಯ ಮಾಧುರ್ಯ ಡಿಸ್ಕಸ್ ಥ್ರೋನಲ್ಲಿ ಸ್ವರ್ಣ ಮತ್ತು ಶಾಟ್ಪುಟ್ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪುರುಷರ 400 ಮೀ. ಓಟದಲ್ಲಿ ಬೆಳಗಾವಿಯ ಓಂ ಸುನಿಲ್ ಚೌಹಾಣ್, ವೀರೇಶ್ ಬಿ. ಕಾಂಬ್ಳೆ ಮತ್ತು ಸ್ವಯಂ ದಿನೇಶ್ ಜುವೇಕರ್ ಸ್ವರ್ಣ, ಬೆಳ್ಳಿ, ಕಂಚಿನ ಪದಕ ಗೆದ್ದರು; ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಶ್ರಾವಣಿ ಭಾಟೆ, ರೇಖಾ ಬಸಪ್ಪ ಪಿರೊಜಿ ಮತ್ತು ಗೀತಾ ಬಿ. ಚೌಕಾಶಿ ಕ್ರಮವಾಗಿ ಮೊದಲ 3 ಸ್ಥಾನ ಗೆದ್ದರು. ಈ ಮಧ್ಯೆ, ಪುರುಷರ 10 ಸಾವಿರ ಮೀ.ನಲ್ಲಿ ತುಮಕೂರಿನ ಟಿ.ಸಿ. ಸಂದೀಪ್, ಎಲ್. ರಘುವೀರ್ ಮತ್ತು ಎಚ್.ಎ. ದರ್ಶನ್ ಅನುಕ್ರಮವಾಗಿ ಪೋಡಿಯಂ ಸ್ಥಾನ ಗಳಿಸಿ ಗಮನ ಸೆಳೆದರು. ಟೇಬಲ್ ಟೆನಿಸ್ ಡಬಲ್ಸ್- ಬೆಂಗಳೂರು, ಮಂಗಳೂರಿಗೆ ಪ್ರಶಸ್ತಿ: ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ಪುರುಷರ ಟೇಬಲ್ ಟೆನಿಸ್ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ರೋಹಿತ್ ಶಂಕರ್-ರಾಮ್ ಕುಮಾರ್ ಜೋಡಿ 3-0 ಸೆಟ್ಗಳಿಂದ ಮಂಗಳೂರಿನ ಸನ್ಮಾನ್-ವಿನಯ್ ಕುಮಾರ್ ಜೋಡಿಯನ್ನು ಸೋಲಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿತು. ಇದೇ ವೇಳೆ ಮಹಿಳೆಯರ ಡಬಲ್ಸ್ನಲ್ಲಿ ಮಂಗಳೂರಿನ ಪಿ.ಪ್ರೇಕ್ಷ -ನಹಲಾ ಜೋಡಿ 3-2 ಸೆಟ್ನಿಂದ ಬೆಂಗಳೂರು ನಗರದ ಸಹನಾ-ಕರ್ಣ ಜೋಡಿ ವಿರುದ್ಧ ಜಯಗಳಿಸಿ ಸ್ವರ್ಣ ಗೆದ್ದಿತು ಟೆನಿಸ್ನಲ್ಲಿ ಜೇಸನ್ ಡೇವಿಡ್, ಹೃದಯೇಶಿಗೆ ಸ್ವರ್ಣ: ತುಮಕೂರು ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಜೇಸನ್ ಡೇವಿಡ್ 2-6, 6-2, 2-1 ಸೆಟ್ಗಳಿಂದ ನಿಶಿತ್ ನವೀನ್ ಅವರನ್ನು ಮಣಿಸಿ, ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಆದರೆ 3ನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ನಿಶಿತ್ ಗಾಯಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ ಜೇಸನ್ ಡೇವಿಡ್ ವಿಜಯಿ ಎಂದು ಘೋಷಿಸಲಾಯಿತು. ಬೆಂಗಳೂರು ಸಿದ್ದಾಂತ ಶಾಸ್ತ್ರಿ ಬಳ್ಳಾರಿಯ ಧನುಶ್ ಸೋಲಿಸಿ ಕಂಚು ಗೆದ್ದರು. ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಹೃದಯೇಶಿ ಪೈ 4-6, 6-1, 6-4 ಸೆಟ್ಗಳಿಂದ ಭಾರತಿಯನ್ ಬಿ. ಪೈ ವಿರುದ್ಧ ಗೆದ್ದರೆ, ಬೆಂಗಳೂರಿನ ಸುರಭಿ ಶ್ರೀನಿವಾಸ್ 6-0, 6-0 ಸೆಟ್ಗಳಿಂದ ತುಮಕೂರು ಸ್ವಾತಿ ಕುಮಾರ್ ಮಣಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಪುರುಷರ ಡಬಲ್ಸ್ನಲ್ಲಿ ಬಳ್ಳಾರಿಯ ಅಭಿಷೇಕ್ ರೆಡ್ಡಿ-ಧನುಶ್ ಜೋಡಿಗೆ ಚಿನ್ನ. ತುಮಕೂರಿನ ಅಮೋಘ -ರಕ್ಷಿತ್ ಜೋಡಿಗೆ ಬೆಳ್ಳಿ. ಬೆಂಗಳೂರಿನ ನಿಶಿತ್ ನವೀನ್-ಸಿದ್ಧಾಂತ್ ಶಾಸ್ತ್ರಿ ಜೋಡಿಗೆ ಕಂಚಿನ ಪದಕ ಲಭಿಸಿತು. ಮಹಿಳಾ ಡಬಲ್ಸ್ ನಲ್ಲಿಬೆಂಗಳೂರಿನ ಭಾರತಿಯಾನ-ಹೃದೇಶಿ (ಸ್ವರ್ಣ), ತುಮಕೂರಿನ ಎಂ.ಎನ್.ರಂಜಿತಾ - ಸ್ವಾತಿ ಎಚ್. ಕುಮಾರ್ (ಬೆಳ್ಳಿ), ತುಮಕೂರಿನ ತಾನ್ಯಾ ಮೋರಸ್ - ಮೇಘನಾ ಸುರೇಶ್ (ಕಂಚು) ಅನುಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.
ಭೀಮಾ ಕೋರೆಗಾಂವ್ ಶೋಷಣೆ, ಅಸ್ಪೃಶ್ಯತೆ ವಿರುದ್ಧದ ಹೋರಾಟ : ಭೀಮ್ ರಾವ್ ವೈ.ಅಂಬೇಡ್ಕರ್
ಹಾಸನ : ಭೀಮಾ ಕೋರೆಗಾಂವ್ ಯುದ್ಧವಲ್ಲ, ಅದು ಶೋಷಣೆ, ಅಸ್ಪೃಶ್ಯತೆ ಮತ್ತು ಅನ್ಯಾಯದ ವಿರುದ್ಧ ನಡೆದ ಶಾಶ್ವತ ಆತ್ಮಗೌರವದ ಹೋರಾಟ ಎಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ, ಭಾರತೀಯ ಬೌದ್ಧ ಮಹಾ ಸಭಾ (ಮುಂಬೈ)ದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಭೀಮ್ ರಾವ್ ವೈ.ಅಂಬೇಡ್ಕರ್ ಹೇಳಿದ್ದಾರೆ. ಹಾಸನ ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ 208ನೇ ಭೀಮಾ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಕೇವಲ ಯುದ್ಧದ ವಿಜಯೋತ್ಸವವಾಗಿ ನೋಡಬಾರದು. ಅದು ಶೋಷಣೆ, ಅಸ್ಪೃಶ್ಯತೆ ಮತ್ತು ಅನ್ಯಾಯದ ವಿರುದ್ಧ ನಡೆದ ಆತ್ಮಗೌರವದ ಹೋರಾಟದ ಸಂಕೇತವಾಗಿದೆ. ಗೌರವಕ್ಕಾಗಿ, ಹಕ್ಕುಗಳಿಗಾಗಿ, ಸಂವಿಧಾನದ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಹೋರಾಟ ಇದಾಗಿದೆ. ಡಾ.ಅಂಬೇಡ್ಕರ್ ನಮಗೆ ಕೊಟ್ಟ ಮಹಾಮಂತ್ರವೇ ‘ಶಿಕ್ಷಣ ಪಡೆಯಿರಿ, ಸಂಘಟಿತರಾಗಿರಿ, ಹೋರಾಡಿರಿ’. 2020ರ ನಂತರ ಕೇಂದ್ರ ಹಾಗೂ ಕೆಲವು ರಾಜ್ಯ ಸರಕಾರಗಳ ನೀತಿಗಳಿಂದಾಗಿ ಸಂವಿಧಾನಾತ್ಮಕ ಹಕ್ಕುಗಳು ದುರ್ಬಲಗೊಳ್ಳುತ್ತಿವೆ ಎಂದರು. ಮೀಸಲಾತಿ ನೀತಿಯ ಸರಿಯಾದ ಅನುಷ್ಠಾನವಾಗುತ್ತಿಲ್ಲ. ಸರಕಾರಿ ಸಂಸ್ಥೆಗಳ ಖಾಸಗೀಕರಣದಿಂದ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂದು ಹೇಳಿದರು. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗ ಜನರಿಗೆ ಭೀಮಾ ಕೋರೆಗಾಂವ್ ಇತಿಹಾಸ ತಿಳಿಯತೊಡಗಿದೆ. ಇದು ನಮ್ಮ ಸಮುದಾಯದ ಇತಿಹಾಸ ಮಾತ್ರವಲ್ಲ, ಸಮಾನತೆ, ನ್ಯಾಯ ಮತ್ತುಮಾನವೀಯ ಗೌರವಕ್ಕಾಗಿ ನಡೆದ ಹೋರಾಟದ ಇತಿಹಾಸ. ಈ ಸತ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು. ನಿವೃತ್ತ ಡಿಸಿಪಿ ಎಸ್.ಸಿದ್ದರಾಜು, ಸಂಸದ ಶ್ರೇಯಸ್ ಪಟೇಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ದಲಿತ ಮುಖಂಡ ಸಂದೇಶ್ ವಹಿಸಿದ್ದರು, ಪ್ರಾಸ್ತಾವಿಕ ಭಾಷಣ ದಲಿತ ಮುಖಂಡ ಅಂಬುಗ ಮಲ್ಲೇಶ್ ನೆರವೇರಿಸಿದರು. ಪತ್ರಕರ್ತ ಹೆತ್ತೂರು ನಾಗರಾಜ್ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ನಗರದ ರೈಲು ನಿಲ್ದಾಣದಿಂದ ಡಿಸಿ ಕಚೇರಿಯವರೆಗೆ ಭೀಮಾ ಕೋರೆಗಾಂವ್ ವಿಜಯ ಸ್ತಂಭದ ಬೃಹತ್ ಮೆರವಣಿಗೆ ನಡೆಯಿತು. ಡಿಸಿ ಕಚೇರಿ ಮುಂಭಾಗದ ಡಬಲ್ ರೋಡ್ (ಪ್ರಜಾಸೌಧಹತ್ತಿರ)ದಲ್ಲಿ ಸಾರ್ವಜನಿಕ ಸಮಾವೇಶ ನಡೆಯಿತು. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಕಾರ್ಮಿಕ ಹಾಗೂ ಮಹಿಳಾ ಸಂಘಟನೆಗಳ ಒಗ್ಗೂಡಿಕೆ ಈ ಕಾರ್ಯಕ್ರಮದ ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಭಾರತೀಯ ಭೌದ್ಧ ಮಹಾಸಭಾ (ರಿ.) ಹಾಗೂ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣಾ ಸಮಿತಿ, ಹಾಸನ ಸಂಯುಕ್ತವಾಗಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷೆ ಡಿ. ಶಿವಮ್ಮ, ಪ್ರಧಾನ ಕಾರ್ಯದರ್ಶಿ ಮಂಜು ತೇಜೂರು, ಹಣಕಾಸು ಸಮಿತಿ ಸದಸ್ಯ ಮಲ್ಲೇಶ್ ಅಂಬುಗ, ಸಮಿತಿ ಸದಸ್ಯರಾದ ಎಚ್.ಜೆ. ಉಮೇಶ್ ಹಾಚಗೋಡನಹಳ್ಳಿ, ಭಾಗ್ಯ ಕಲಿವೀರ್, ತೋಟೇಶ್ ನಿಟ್ಟೂರು, ರಾಮು ನರಸಿನಕುಪ್ಪೆ, ಕೃಷ್ಣದಾಸ್ , ರಾಜಶೇಖರ್ ಹುಲಿಕಲ್, ವೈಚಾರಿಕ ಪತ್ರಿಕೆಯ ಸಂಪಾದಕ ವೆಂಕಟೇಶ್ ಬ್ಯಾಕರವಳ್ಳಿ, ರಾಜು ಗೊರೂರು ಅನೇಕರು ಕಾರ್ಯಕ್ರಮದಲ್ಲಿ ಇದ್ದರು.
ಲಕ್ನೋ : ಪ್ರಜಾಪ್ರಭುತ್ವ ಅಂದರೆ ಸಮಯಕ್ಕೆ ಸರಿಯಾಗಿ ಕೇವಲ ಚುನಾವಣೆಗಳನ್ನು ನಡೆಸುವುದಲ್ಲ. ಚುನಾವಣೆಯ ಮೂಲಕ ಆಯ್ಕೆಯಾಗುವ ಜನಪ್ರತಿನಿಧಿಗಳು ತಮ್ಮ ಪ್ರಾಮಾಣಿಕತೆ, ಬದ್ಧತೆ ಮತ್ತು ಜನಪರ ಕಾಳಜಿಯೊಂದಿಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ, ಜನಸಾಮಾನ್ಯರ ಆಶಯಗಳನ್ನು ಪ್ರತಿಬಿಂಬಿಸುವ ಕಾನೂನುಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅದು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವ ಮೂಲ ಆಧಾರವಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಉತ್ತರ ಪ್ರದೇಶದ ವಿಧಾನ ಮಂಡಲದಲ್ಲಿ ಮಂಗಳವಾರ ನಡೆದ ಸ್ಪೀಕರ್ಗಳ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಧಾನ ಮಂಡಲವು ಪ್ರಜಾಪ್ರಭುತ್ವದ ಹೃದಯವಾಗಿದೆ. ಶಾಸಕರು ಮತ್ತು ಜನಪ್ರತಿನಿಧಿಗಳು ಅದರ ಪ್ರಮುಖ ಅಂಗಗಳಾಗಿದ್ದಾರೆ. ಜನರ ಆಶಯಗಳನ್ನು ಧ್ವನಿಯಾಗಿ ಪರಿವರ್ತಿಸಿ, ಸಮಾಜಕ್ಕೆ ಅಗತ್ಯವಾದ ಕಾನೂನುಗಳನ್ನು ರೂಪಿಸುವ ಮಹತ್ತರ ಹೊಣೆಗಾರಿಕೆ ಜನಪ್ರತಿನಿಧಿಗಳ ಮೇಲಿದೆ. ಆದ್ದರಿಂದ ಶಾಸಕರ ಹಾಗೂ ಜನಪ್ರತಿನಿಧಿಗಳ ಸಾಮರ್ಥ್ಯವರ್ಧನೆ ಇಂದಿನ ತುರ್ತು ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ನಡೆಯುತ್ತಿರುವ ಚರ್ಚೆಗಳು ಅತ್ಯಂತ ಸ್ವಾಗತಾರ್ಹ ಎಂದು ಯು.ಟಿ.ಖಾದರ್ ನುಡಿದರು.
ಯಾದಗಿರಿ| ಅನವಾರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ
ಯಾದಗಿರಿ: ಸುರಪುರ–ಯಾದಗಿರಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅನವಾರ ಗ್ರಾಮದಲ್ಲಿ ಸಾರಿಗೆ ಬಸ್ಗಳು ನಿಲುಗಡೆ ಮಾಡದಿರುವುದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಶರಣರೆಡ್ಡಿ ಹತ್ತಿಗೂಡೂರು ಹೇಳಿದ್ದಾರೆ. ಅನವಾರ ಗ್ರಾಮದಿಂದ ಹತ್ತಿಗೂಡೂರ್ ಸರಕಾರಿ ಪ್ರೌಢಶಾಲೆ, ಶಹಾಪುರ ಕಾಲೇಜು ಹಾಗೂ ಯಾದಗಿರಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಇಲ್ಲದಿರುವುದರಿಂದ ಪ್ರಯಾಣದಲ್ಲಿ ಅಸೌಕರ್ಯ ಎದುರಾಗುತ್ತಿದೆ. ಈ ಸಮಸ್ಯೆಯನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಯಾದಗಿರಿ ಜಿಲ್ಲಾ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಸ್ ನಿಲುಗಡೆ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರದಿದ್ದರೆ ಅನವಾರ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಹತ್ತಿಗೂಡೂರ್ ಶರಣರೆಡ್ಡಿ, ಸಿದ್ದಪ್ಪ ಹೊಸ್ಮನಿ, ವಿದ್ಯಾರ್ಥಿಗಳಾದ ಆಕಾಶ ದೊಡ್ಮನಿ, ರಾಮ ಪೂಜಾರಿ, ಸಾಬು ಗುತ್ತೇದಾರ್, ರಾಜು ಗುತ್ತೇದಾರ್, ಜೈ ಭೀಮ್ ಹೊಸ್ಮನಿ, ಬೀರಲಿಂಗ ಪೂಜಾರಿ, ಅಯ್ಯಾಳಪ್ಪ, ಸೌಂದರ್ಯ, ಯಶೋಧ, ಸಾನಿಯಾ, ಅನುಶಿಯಾ, ಸವಿತಾ, ಅಕ್ಷತಾ, ಶ್ರೀದೇವಿ, ಮಹಾಲಿಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ಕೆಎಸ್ಬಿಸಿ ಚುನಾವಣೆ; ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮತಪತ್ರ ಕೋರಿ ಹೈಕೋರ್ಟ್ಗೆ ರಿಟ್
ಬೆಂಗಳೂರು : ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್ಬಿಸಿ) ಮಾರ್ಚ್ 11ರಂದು ನಡೆಯಲಿರುವ ಚನಾವಣೆಯಲ್ಲಿ ಮಹಿಳಾ ಮೀಸಲಾತಿ ಕೋಟಾದಡಿ ಸ್ಪರ್ಧಿಸುವ ಮಹಿಳಾ ಅಭ್ಯರ್ಥಿಗಳನ್ನು ಪ್ರತ್ಯೇಕ ವರ್ಗ ಎಂದು ಗುರುತಿಸಿ ಮತದಾನಕ್ಕೆ ಪ್ರತ್ಯೇಕ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮಾಡಲು ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಚುನಾವಣಾ ಆಕಾಂಕ್ಷಿಯಾಗಿರುವ ವಕೀಲೆ ಸಂಧ್ಯಾ ಯು. ಪ್ರಭು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೆಎಸ್ಬಿಸಿ, ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಹಾಗೂ ಪರಿಷತ್ ಚುನಾವಣೆಯ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯದ ಬಗ್ಗೆ ನಿಲುವು ತಿಳಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು. ಇದೇ ವೇಳೆ, ಚುನಾವಣಾ ಪ್ರಕ್ರಿಯೆ ಸಂಬಂಧ 2026ರ ಜನವರಿ 5ರಂದು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಲು ನಿರಾಕರಿಸಿದ ನ್ಯಾಯಪೀಠ, ಈ ಹಂತದಲ್ಲಿ ಚುನಾವಣೆಗೆ ತಡೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದಕ್ಕೂ ಮುನ್ನ ಖುದ್ದು ವಾದ ಮಂಡಿಸಿದ ವಕೀಲೆ ಸಂಧ್ಯಾ ಯು. ಪ್ರಭು, ರಾಜ್ಯ ವಕೀಲರ ಪರಿಷತ್ತಿಗೆ 18 ಮಂದಿಯ ಆಯ್ಕೆಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಮಹಿಳೆಯರಿಗೆ 7 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 2 ಸ್ಥಾನಗಳಿಗೆ ಬಿಸಿಐ ನೇರವಾಗಿ ನೇಮಕ ಮಾಡಲಿದೆ. ಉಳಿದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪುರುಷರು-ಮಹಿಳೆಯರು ಸೇರಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಬಹುದು. ಇಷ್ಟೊಂದು ಅಭ್ಯರ್ಥಿಗಳ ನಡುವೆ ಮಹಿಳಾ ಅಭ್ಯರ್ಥಿಗಳನ್ನು ಹುಡುಕುವುದು ಕಷ್ಟವಾಗುತ್ತದೆ. ಆದ್ದರಿಂದ, ಮಹಿಳಾ ಮೀಸಲಾತಿ ಕೋಟಾದಡಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪ್ರತ್ಯೇಕ ವರ್ಗ ನಿಗದಿಪಡಿಸಿ ಮತದಾನಕ್ಕೆ ಪ್ರತ್ಯೇಕ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿದರು.
ಭಾರತದ ಅಗ್ರಮಾನ್ಯ ಪೊಲೋ ವಾಲ್ಟರ್ ಗಳನ್ನು ಮುಂಬೈ ರೈಲಿಂದ ಕೆಳಗಿಳಿಸಿದರು! ಕಣ್ಣೀರಿಟ್ಟರೂ ಕರುಣೆ ತೋರಲಿಲ್ಲ!
India's Top Pole Vaulters- ಮಹಾರಾಷ್ಟ್ರದ ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ಕ್ರೀಡಾಪಟುಗಳನ್ನು ಕೆಟ್ಟದಾಗಿ ನಡೆಸಿಕೊಂಡ ಘಟನೆ ವರದಿಯಾಗಿದೆ. ದೇಶದ ಅಗ್ರಮಾನ್ಯ ಪೋಲ್ ವಾಲ್ಟರ್ಗಳಾದ ದೇವ್ ಮೀನಾ ಮತ್ತು ಕುಲದೀಪ್ ಯಾದವ್ ಅವರ ಕ್ರೀಡಾ ಸಲಕರಣೆಗಳನ್ನು ರೈಲಿನ ಗಾತ್ರದ ಮಿತಿಯನ್ನು ಮೀರಿವೆ ಎಂದು ಹೇಳಿ ಯಾವುದೇ ಕರುಣೆ ತೋರದೆ ರೈಲಿನಿಂದ ಇಳಿಸಲಾಗಿದೆ. ಇದರಿಂದಾಗಿ ಆರು ಗಂಟೆಗಳ ಕಾಲ ನಿಲ್ದಾಣದಲ್ಲಿ ಕಾಯಬೇಕಾಯಿತು. ಆ ಮೇಲೆ ದಂಡ ಕಟ್ಟಿ ಪ್ರಯಾಣ ಮಾಡಬೇಕಾಯಿತು. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಕ್ರೀಡಾವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಮೆರಿಕ &ಇರಾನ್ ತಿಕ್ಕಾಟದಲ್ಲಿ ಹೆಚ್ಚಾಯ್ತು ಪರಮಾಣು ದಾಳಿ ಭೀತಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕ
ಮಧ್ಯಪ್ರಾಚ್ಯ ಭಾಗದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿ ಹೋಗಿದೆ, ಏಕೆಂದರೆ ಒಂದಲ್ಲ ಒಂದು ಯುದ್ಧ ಮಧ್ಯಪ್ರಾಚ್ಯ ಹೊತ್ತಿ ಉರಿಯುವಂತೆ ಮಾಡುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಭಾಗದ ಬಹುತೇಕ ದೇಶಗಳು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡಿಕೊಂಡಿವೆ. ಇಸ್ರೇಲ್ ಮತ್ತು ಹಲವು ದೇಶಗಳ ನಡುವೆ ಘೋರ ಕದನ ನಡೆದು ಹೋಗಿತ್ತು. ಇರಾನ್ &ಇಸ್ರೇಲ್ ಯುದ್ಧ ಕೊನೆಗೆ
ಜ. 21ರಂದು ರಾಜ್ಯಾದ್ಯಂತ ತ್ರಿವಿಧ ದಾಸೋಹ ದಿನ- ಶಿವಕುಮಾರ ಸ್ವಾಮಿ ನೆನಪಲ್ಲಿ ಏನೇನು ಕಾರ್ಯಕ್ರಮ?
ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಸೇವೆಯನ್ನು ಸ್ಮರಿಸಲು ಜನವರಿ 21 ರಂದು ರಾಜ್ಯಾದ್ಯಂತ 'ದಾಸೋಹ ದಿನ' ಆಚರಿಸಲಾಗುತ್ತದೆ. ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳಿಗೆ ಸೇವೆ ಸಲ್ಲಿಸಿದ ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಶ್ರೀ ಮಠದ ತ್ರಿವಿಧ ದಾಸೋಹದ ಮಹತ್ವವನ್ನು ಈ ದಿನ ಸಾರುತ್ತದೆ. ಭಕ್ತರು ಮತ್ತು ಹಳೆಯ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ವಂಚನೆ ಆರೋಪ | ನಟ ಕಿಚ್ಚ ಸುದೀಪ್ ಸಹಿತ ಇಬ್ಬರ ವಿರುದ್ಧ ಪೊಲೀಸರಿಗೆ ದೂರು
ಬೆಂಗಳೂರು : ವಂಚನೆ ಆರೋಪದ ಮೇಲೆ ನಟ ಕಿಚ್ಚಸುದೀಪ್ ಮತ್ತು ಅವರ ವ್ಯವಸ್ಥಾಪಕ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಚಿಕ್ಕಮಗಳೂರು ಮೂಲದ, ಕಾಫಿ ತೋಟದ ಮಾಲಕ ದೀಪಕ್ ಮಯೂರ್ ಪಟೇಲ್ ಎಂಬುವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮಂಗಳವಾರ ದೂರು ನೀಡಿದ್ದಾರೆ. ದೂರಿನಲ್ಲೇನಿದೆ..?: 2018ರಲ್ಲಿ ನಟ ಕಿಚ್ಚ ಸುದೀಪ್ ಅವರ ನಿರ್ಮಾಣ ಸಂಸ್ಥೆ ‘ಕಿಚ್ಚ ಕ್ರಿಯೇಷನ್ಸ್’ನಿಂದ ‘ವಾರಸ್ದಾರ’ ಎಂಬ ಧಾರಾವಾಹಿಯನ್ನು ನಿರ್ಮಿಸಲಾಗಿತ್ತು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯ ಚಿತ್ರೀಕರಣವನ್ನು ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ನಡೆಸಲಾಗಿತ್ತು. ಇದಕ್ಕಾಗಿ ದೀಪಕ್ ಮಯೂರ್ ಅವರ ಮನೆ ಹಾಗೂ ಕಾಫಿ ತೋಟವನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ, ಹಣ ನೀಡಿಲ್ಲ ಎಂದು ದೀಪಕ್ ದೂರಿದ್ದಾರೆ. ‘ವಾರಸ್ದಾರ’ ಧಾರಾವಾಹಿ ಚಿತ್ರೀಕರಣಕ್ಕಾಗಿ ತಮ್ಮ ಕಾಫಿ ತೋಟ ಮತ್ತು ಮನೆಯನ್ನು ಎರಡು ವರ್ಷಗಳಿಗೆ ಅಗ್ರಿಮೆಂಟ್ ಮಾಡಿಸಿ ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ, ಕೇವಲ ಎರಡೇ ತಿಂಗಳಿಗೆ ಜಾಗ ಖಾಲಿ ಮಾಡಿದ್ದು, ಹಣ ನೀಡಿಲ್ಲ ಎಂದು ದೀಪಕ್ ಆರೋಪಿಸಿದ್ದಾರೆ. ಈ ಎರಡು ತಿಂಗಳ ಅವಧಿಯ ಚಿತ್ರೀಕರಣದ ನೆಪದಲ್ಲಿ ತಮ್ಮ ತೋಟದಲ್ಲಿ ಕಾಫಿ ಗಿಡಗಳು ಹಾಗೂ ಮರಗಳನ್ನು ನಾಶ ಮಾಡಿದ್ದಾರೆ. ಹೀಗಾಗಿ ತಮಗೆ ನಷ್ಟವಾಗಿದ್ದು, 95 ಲಕ್ಷ ಪರಿಹಾರ ನೀಡುವಂತೆ ಕೇಳಿದ್ದೆ. ಈ ವೇಳೆ ಸುದೀಪ್ ಅವರು 60 ಲಕ್ಷ ನೀಡುವುದಾಗಿ ಭರವಸೆ ನೀಡಿ ರಾಜಿ ಮಾಡಿಕೊಂಡಿದ್ದರು ಎಂದು ದೀಪಕ್ ತಿಳಿಸಿದ್ದಾರೆ. ಅದರೆ, ಆದರೆ ಇದುವರೆಗೆ ತಮಗೆ 10 ಲಕ್ಷ ರೂಪಾಯಿಯ ಚೆಕ್ ಮಾತ್ರವೇ ಬಂದಿದೆ. ಬಾಕಿ ಹಣ ನೀಡದೆ ಸತಾಯಿಸುತ್ತಿದ್ದು ನಟ ಸುದೀಪ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ತಮಗೆ ಪರಿಹಾರ ಕೊಡಿಸಬೇಕು ಎಂದು ದೀಪಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಕಲಚೇತನರಿಗೆ ಸರಕಾರಿ ಸೌಲಭ್ಯಗಳು ಸಕಾಲಕ್ಕೆ ಸಿಗುವಂತಾಗಬೇಕು: ಅಧಿಕಾರಿಗಳಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಸೂಚನೆ
ಯಾದಗಿರಿ: ವಿಕಲಚೇತನರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು. ನಗರದ ಕಚೇರಿಯಲ್ಲಿ ಸೋಮವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯಡಿ 2024-25 ಸಾಲಿನ ಯಾದಗಿರಿ ಮತಕ್ಷೇತ್ರದ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ವಿತರಣೆ ಮಾಡಿ ಮಾತನಾಡಿದ ಚೆನ್ನಾರೆಡ್ಡಿ ಪಾಟೀಲ್, ವಿಕಲಚೇತನರಿಗೆ ಅನುಕಂಪದ ಬದಲಿಗೆ ಅವಕಾಶ ನೀಡಬೇಕು. ಅಂದಾಗಲೇ ಅವರಲ್ಲಿನ ಪ್ರತಿಭೆ ಹೊರಬರಲು ಸಾಧ್ಯವೆಂದರು. ವಿವಿಧ ಇಲಾಖೆಗಳಲ್ಲಿ ಇವರಿಗಾಗಿಯೇ ಪ್ರತ್ಯೇಕ ಬಜೆಟ್ ಇರುತ್ತದೆ. ಅನೇಕ ಸಲಕರಣೆಗಳು ನೀಡಲಾಗುತ್ತದೆ. ಅವುಗಳು ಅವಶ್ಯಕತೆ ಮತ್ತು ಅರ್ಹತೆ ಇದ್ದವರಿಗೆ ನೀಡಬೇಕೆಂದರು. ವಿಕಲಚೇತನ ಮಕ್ಕಳು ಸರಿಯಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನ ಪಡೆಯಬೇಕು. ನೌಕರಿಯಲ್ಲಿ ಕೂಡಾ ಮಿಸಲಾತಿ ಇದೆ. ಅದರ ಲಾಭ ಪಡೆಯಬೇಕು ಎಂದು ಹೇಳಿದರು. ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಮಾತನಾಡಿ, ತ್ರಿಚಕ್ರ ವಾಹನಗಳು ಸೇರಿದಂತೆಯೇ ಎಲ್ಲ ಸೌಲಭ್ಯಗಳು ಜಿಲ್ಲೆಯ ವಿಕಲಚೇತನರಿಗೆ ತಲುಪಿಸಲಾಗುತ್ತಿದೆ ಎಂದರು.
ಪಾನೀಯ ತಯಾರಿಕೆ ಮತ್ತು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ವಿಜಯಪುರ ಜಿಲ್ಲೆ ಹೆಚ್ಚು ಸೂಕ್ತ : ಎಂ.ಬಿ.ಪಾಟೀಲ್
‘ಕೋಕ-ಕೋಲಾದ 25,760 ಕೋಟಿ ರೂ.ಹೂಡಿಕೆಯ ಬಹುಪಾಲು ರಾಜ್ಯಕ್ಕೆ ಸೆಳೆಯಲು ಪ್ರಯತ್ನ
ಫೆ.9ರಂದು ಆಲಮಟ್ಟಿಗೆ ರೈತರ ನಡೆ: ಕೃಷ್ಣಾ ಮೇಲ್ದಂಡೆ ಹಂತ-3 ತಕ್ಷಣ ಜಾರಿಗೆ ಆಗ್ರಹ
ಯಾದಗಿರಿ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ನ್ನು ತಕ್ಷಣ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಫೆಬ್ರವರಿ 9ರಂದು ಆಲಮಟ್ಟಿ ಜಲಾಶಯದ ಬಳಿ ಬೃಹತ್ ರೈತ ಹೋರಾಟ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಸಮಿತಿ ನಿರ್ಣಯ ಕೈಗೊಂಡಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮೀಕಾಂತ ಎ. ಪಾಟೀಲ್, ಉತ್ತರ ಕರ್ನಾಟಕದ ರೈತರ ಹಿತದೃಷ್ಟಿಯಿಂದ ಈ ಹೋರಾಟವನ್ನು ಆಯೋಜಿಸಲಾಗಿದ್ದು, ವಿವಿಧ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಯೋಜನೆಯ ಮೂರನೇ ಹಂತದಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು 14 ಅಡಿ ಹೆಚ್ಚಿಸಲು ಅವಕಾಶವಿದ್ದರೂ ಇದುವರೆಗೆ ಜಾರಿಯಾಗಿಲ್ಲ. ಇದರಿಂದ 150 ಟಿಎಂಸಿ ನೀರು ಸಂಗ್ರಹಿಸಿ ಬಳಸುವ ಅವಕಾಶ ಕೈ ತಪ್ಪಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ ಎಂದು ಆರೋಪಿಸಿದರು. ಮೂರನೇ ಹಂತದಲ್ಲಿ ಒಟ್ಟು 9 ಉಪಯೋಜನೆಗಳಿದ್ದು, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಸುಮಾರು 5.49 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ಆದರೆ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದ ಆಂಧ್ರ ಪ್ರದೇಶದ ತಗಾದೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವುದರಿಂದ ಯೋಜನೆ ಇತ್ಯರ್ಥವಾಗದೆ ಉತ್ತರ ಕರ್ನಾಟಕದ ಶೇ.11ರಷ್ಟು ರೈತರಿಗೆ ಅನ್ಯಾಯವಾಗುತ್ತಿದೆ ಎಂದರು. ಯಾದಗಿರಿ ಜಿಲ್ಲೆಯಲ್ಲಿ ಯೋಜನೆ ಜಾರಿಯಾದರೆ ವಡಗೇರಿ ತಾಲ್ಲೂಕಿನ ವಡಗೇರಿ, ತುಮಕೂರು, ಅಭಿವ್ಯಾಳ, ರೊಟ್ಟಡಿಗಿ, ಬೂದಿಯಾಳ, ಕದರಾಪುರ ಸೇರಿದಂತೆ ಹಲವು ಗ್ರಾಮಗಳಿಗೆ ಭೀಮಾ ಪ್ಲಾಂಟ್ ಯೋಜನೆಯಿಂದ ನೀರು ದೊರೆಯಲಿದೆ. ಸುರಪುರ ಹಾಗೂ ಶಹಾಪುರ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಮಲ್ಲಾಬಾದಿ ಏತನೀರಾವರಿ ಲಿಫ್ಟ್–1, 2 ಹಾಗೂ 3 ಹಂತಗಳ ಮೂಲಕ ನೀರು ಒದಗಿಸುವ ಉದ್ದೇಶವಿದೆ ಎಂದು ವಿವರಿಸಿದರು. ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ಕೊನೆ ಭಾಗದ ರೈತರಿಗೆ ಪ್ರತಿವರ್ಷ ನೀರು ಸಿಗದೆ ಭೂಮಿ ಬರಡಾಗುತ್ತಿದೆ. ಎರಡನೇ ಬೆಳೆಗೆ ನೀರು ಒದಗಿಸುವಂತೆ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಿ ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣ ಇತ್ಯರ್ಥಗೊಳಿಸಿ ಜಲಾಶಯ ಎತ್ತರ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಹೋರಾಟದಲ್ಲಿ ನಾಡಿನ ವಿವಿಧ ಮಠಾಧೀಶರು, ಸಂಘಟನೆಗಳ ಮುಖಂಡರು, ಚಿಂತಕರು, ಸಾಹಿತಿಗಳು, ಪತ್ರಕರ್ತರು, ನ್ಯಾಯವಾದಿಗಳು ಹಾಗೂ ಕೃಷಿ ಸಂಬಂಧಿ ಉದ್ಯಮದಾರರು ಸೇರಿದಂತೆ ಅಪಾರ ಸಂಖ್ಯೆಯ ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯಾದಗಿರಿ ಜಿಲ್ಲಾ ಅಧ್ಯಕ್ಷ ಮಹಾವೀರ ಲಿಂಗೇರಿ, ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಯರಗೋಳ, ಮಹಿಪಾಲರೆಡ್ಡಿ, ಸುಭಾಷ್ ನಡುವಿನಕೇರಿ, ಶಿವು ಯರಗೋಳ, ಮೊಹಮ್ಮದ್ ಗೌಸ್, ಶ್ರೀಕಾಂತ್ ಕುಂಬಾರ, ತಾಯಪ್ಪ ನಗಲಾಪೂರ, ಬಾಷ್ ಕುರುಕುಂದಿ, ಭವಾನಿಶಂಕರ, ಸೈದು ವಿಭೂತಿ, ಸಾಬರೆಡ್ಡಿ, ಶರಣು ಖಾನಾಪೂರ, ಅರುಣ ಸಾಹುಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು| ಅಕ್ರಮ ಮದ್ಯ ಮಾರಾಟದ ವಿರುದ್ಧ ಕೆಆರ್ಎಸ್ ಪಕ್ಷದಿಂದ ಜನ ಜಾಗೃತಿ ಜಾಥಾ
ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಗ್ಗಿಲ್ಲದೆ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಜನರಿಗೆ ಜಾಗೃತಿ ಮೂಡಿಸಿ ಮದ್ಯ ಮುಕ್ತ ಕಲ್ಯಾಣ ಕರ್ನಾಟಕದ ನಿರ್ಮಾಣಕ್ಕೆ ಕೆಆರ್ ಎಸ್ ಪಕ್ಷದ ವತಿಯಿಂದ ಲಿಂಗಸೂರು ತಾಲೂಕಿನ ಗುರುಗುಂಟ ಗ್ರಾಮದಲ್ಲಿ ಅರಿವಿನ ಕ್ರಾಂತಿ (ಕುಡಿತ ಬಿಡಿಸಿ ಸಂಸಾರ ಉಳಿಸಿ) ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗುರುಗುಂಟದ ಬಸ್ ನಿಲ್ದಾಣದಿಂದ ಪಕ್ಷದ ನೂರಾರು ಸೈನಿಕರ ನೇತೃತ್ವದಲ್ಲಿ ಆರಂಭವಾದ ಜಾಥಾವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರಾಯಿ ಬೇಡ, ಶಿಕ್ಷಣ ಬೇಕು. ನಮಗೆ ಬೀರು ಬೇಡ, ನೀರು ಬೇಕು ಎಂದು ಘೋಷಣೆ ಕೂಗುತ್ತಾ, ಅಕ್ರಮವಾಗಿ ಮದ್ಯ ಮಾರುವ ಅಂಗಡಿಗಳಿಗೆ ಭೇಟಿ ಮಾಡಿ ಅಕ್ರಮ ಮದ್ಯ ಮಾರುವುದನ್ನು ನಿಲ್ಲಿಸುವಂತೆ ಅಂಗಡಿ ಮಾಲೀಕರಿಗೆ ಮನವಿ ಮಾಡಲಾಯಿತು. ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ರಾಜ್ಯದಲ್ಲಿ ನಮ್ಮನ್ನು ಆಳುವ ಯಾವುದೇ ಸರ್ಕಾರಗಳು ಜಾರಿ ಮಾಡುತ್ತಿರುವ ಯಾವುದೇ ಜನ ಕಲ್ಯಾಣದ ಯೋಜನೆಗಳು ವಿಶೇಷವಾಗಿ ಬಡತನ ನಿರ್ವಣೆಯಂತಹ ವಿಶೇಷ ಯೋಜನೆಗಳು ಗಣನೀಯವಾಗಿ ಫಲ ನೀಡದೇ ಇರುವ ಕಾರಣ ಕಲ್ಯಾಣ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು ಇದರಿಂದಾಗಿ ಮಹಿಳೆಯರು, ಯುವಕರು, ಬಡವರು, ಹಿಂದುಳಿದವರು, ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ. ಹಾಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕಲ್ಯಾಣ ಕರ್ನಾಟಕದ ಭಾಗದ ಹಲವು ಜಿಲ್ಲೆಗಳಲ್ಲಿ ಈ ಜಾಥಾವು ಆಯೋಜಿಸಲಾಗಿದೆ ಎಂದು ಹೇಳಿದರು. ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ಆಶಾ ವೀರೇಶ್ ಮಾತನಾಡಿ, ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಹಾಗೂ ಜನಪ್ರತಿನಿಧಿಗಳ ಸರಕಾರದ ಕಾನೂನು ನಿಯಮಗಳ ಉಲ್ಲಂಘನೆಯಿಂದಾಗಿ ಹಳ್ಳಿ ಹಳ್ಳಿಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಅಕ್ರಮವಾಗಿ ಸರಾಯಿ ಸಿಗುವಂತಾಗಿದ್ದು ಇದರಿಂದ ಸಾರ್ವಜನಿಕರು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಸಾಮಾಜಿಕ, ಆರ್ಥಿಕ, ಕೌಟಂಬಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮದ್ಯಪಾನ ನಿಷೇಧ ಆಂದೋಲನದ ಮುಖ್ಯಸ್ಥೆ ಶ್ರೀಮತಿ ಮೋಕ್ಷಮ್ಮ, ರಾಜ್ಯ ಕಾರ್ಯದರ್ಶಿಗಳಾದ ರಮೇಶ್ ಗೌಡ, ಮಹಿಳಾ ಘಟಕದ ಉಪಾಧ್ಯಕ್ಷೆ ಶಕುಂತಲಾ, ಎಸ್ಸಿಎಸ್ಟಿ ಘಟಕದ ರಾಜ್ಯ ಉಪಾಧ್ಯಕ್ಷೆ ಮಹಾದೇವಿ, ಎಸ್ಸಿಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಬಸವ ಪ್ರಭು, ರಾಜ್ಯ ರೈತ ಘಟಕದ ಕಾರ್ಯದರ್ಶಿಗಳಾದ ಶಿವರಾಜ ಕಪಗಲ್, ನಿರುಪಾದಿ ಕೆ ಗೋಮರ್ಸಿ, ಯುವ ಘಟಕದ ಕಾರ್ಯದರ್ಶಿ ದ್ಯಾವಣ್ಣ ಪುಲದಿನ್ನಿ, ರಾಯಚೂರು ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಕಂಡೂರು, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಕಾರ್ಯದರ್ಶಿಗಳಾದ ವಿಶ್ವನಾಥ್ ನಾಯ್ಡು, ಅಲ್ಲಾಸಾಬ್, ಶಂಕರ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮರಳು ಗಣಿಗಾರಿಕೆ| ಅಮಾಯಕರ ಮೇಲೆ ಪ್ರಕರಣ ದಾಖಲು: ಚಂದಪ್ಪ ಅಕ್ಕರಕಿ ಆರೋಪ
ದೇವದುರ್ಗ: ದೇವದುರ್ಗದಲ್ಲಿ ಟ್ರ್ಯಾಕ್ಟರ್ ಮೂಲಕ ಮರಳು ತೆಗೆದುಕೊಂಡು ಹೋಗುವ ಅಮಾಯಕರ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಕೂಲಿಕಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ ಚಂದಪ್ಪ ಅಕ್ಕರಕಿ, ತಾಲೂಕಿನಾದ್ಯಂತ ಮಟ್ಕಾ ಹಾವಳಿ ತೀವ್ರಗೊಂಡಿದ್ದು, ಬಡಜನತೆ ಬೀದಿ ಪಾಲಾಗುತ್ತಿದ್ದಾರೆ. ಗಾಂಜಾ ಮಾರಾಟ ಜಾಲ ಸಕ್ರಿಯವಾಗಿದೆ. ಅಹಿತಕರ ಚಟುವಟಿಕೆಗಳಿಗೆ ನಿಯಂತ್ರಣವೇ ಆಗುತ್ತಿಲ್ಲ. ಮನೆ ನಿರ್ಮಿಸಿಕೊಳ್ಳುವವರ ಒತ್ತಾಯದ ಬೇಡಿಕೆ ಆಧರಿಸಿ ಕೆಲ ಟ್ರ್ಯಾಕ್ಟರ್ ಮಾಲಕರು ಮರಳು ಪಡೆಯುವುದು ಸಾಮಾನ್ಯ. ಇಲ್ಲಿ ಯಾವುದೇ ಜೆಸಿಬಿ, ಇಟಾಚಿ ಯಂತ್ರಗಳನ್ನು ಬಳಸದೇ ಕೃಷಿ ಕೂಲಿಕಾರರಿಗೆ ಕೆಲಸ ನೀಡಿ ಕೂಲಿ ನೀಡುವ ಪರಿಪಾಠವಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಮಳೆ ಬಂದಿರುವ ಪರಿಣಾಮ ಕೃಷಿಕರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು. ಮರಳು ಸಾಗಾಣಿಕೆಯೇ ಅಕ್ರಮ ಎನ್ನುವುದಾದರೆ ಮನೆ ನಿರ್ಮಿಸಿಕೊಳ್ಳುವವರಿಗೆ ಅವಶ್ಯಕವಾದ ಮರಳು ನೀಡುವುದು ಹೇಗೆ? ಸರಕಾರಿ ಕಟ್ಟಡ ಕಾಮಗಾರಿಗಳಿಗೆ ಮರಳು ಬೇಕಿಲ್ಲವೇ? ಕೂಡಲೇ ತಾಲೂಕು ಮತ್ತು ಜಿಲ್ಲಾಡಳಿತ ಸಾಮಾನ್ಯರಿಗೆ ಬೇಕಾಗಿರುವ ಮರಳು ದೊರಕುವ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಶಾಸಕರ ಮನೆಗೆ ಹೋಗಿರುವ ಅಮಾಯಕರ ಮೇಲೆ ಹಾಕಲಾದ ಪ್ರಕರಣವನ್ನು ಕೈಬಿಡಬೇಕೆಂದು ಚಂದಪ್ಪ ಅಕ್ಕರಕಿ ಆಗ್ರಹಿಸಿದ್ದಾರೆ.
ಮೂಡುಬಿದಿರೆ : ನಿವೃತ್ತ ಮುಖ್ಯ ಶಿಕ್ಷಕಿ, ಉದ್ಯಮಿ ಗೋಪಾಲ ಶೆಟ್ಟಿ ಅವರ ಪತ್ನಿ ಎಲ್. ವಿಲಾಸಿನಿ (80) ನಿಧನ ಹೊಂದಿದರು. ಪುತ್ರ ಉದ್ಯಮಿ ದೇವಿಪ್ರಸಾದ್ ಶೆಟ್ಟಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಿಜಾರು, ಪ್ರಾಂತ್ಯ, ಮಾಸ್ತಿಕಟ್ಟೆ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿಯಾಗಿ, ಜ್ಯೋತಿನಗರ, ಹಂಡೇಲು ಶಾಲೆಗಳಲ್ಲಿ ಮುಖ್ಯ ಶಿಕ್ಷಕಿಯಾಗಿ ಒಟ್ಟು 35 ವರ್ಷ ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ಆದರ್ಶ ಶಿಕ್ಷಕ ಪ್ರಶಸ್ತಿ, ರೋಟರ್ಯಾಕ್ಟ್ ಮತ್ತಿತರ ಸಂಘಟನೆಗಳಿಂದ ಸಮ್ಮಾನ ಸ್ವೀಕಸಿದ್ದರು.
ಮರ್ಕಝುಲ್ ಹುದಾ ಮದೀನಾ ಘಟಕ: ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಸೌದಿ ಅರೇಬಿಯಾದ ಮದೀನಾ ಘಟಕದ ಮಹಾಸಭೆಯು ಇತ್ತೀಚಿಗೆ ಉಹುದ್, ಜಬಲ್ ರುಮಾತ್ ವಠಾರದಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಮ್ ಝೈನಿ ಕಾಮಿಲ್ ಅವರ ನೇತೃ ತ್ವದಲ್ಲಿ ನಡೆಯಿತು. ಈ ಸಂದರ್ಭ ಮದೀನಾ ಸಮಿತಿಯನ್ನು ಪುನಾರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಶ್ರಫ್ ಸಖಾಫಿ ನೂಜಿ, ಅಧ್ಯಕ್ಷರಾಗಿ ಸುಲೈಮಾನ್ ಸಅದಿ ಸೋಮವಾರಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ ಕೆಸಿ ರೋಡ್, ಕೋಶಾಧಿಕಾರಿಯಾಗಿ ತಾಜುದ್ದೀನ್ ಸುಳ್ಯ, ಉಪಾಧ್ಯಕ್ಷರಾಗಿ ಅಬೂಬಕರ್ ಮುಸ್ಲಿಯಾರ್ ಉದ್ದಬೆಟ್ಟು, ಕಾರ್ಯದರ್ಶಿಯಾಗಿ ಶರೀಫ್ ಕಬಕ ಆಯ್ಕೆಯಾದರು. ಕಾರ್ಯಕಾರಿ ಸದಸ್ಯರುಗಳಾಗಿ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ, ಫಾರೂಕ್ ಮುಸ್ಲಿಯಾರ್ ಎರುಮಾಡ್, ಸಿದ್ದೀಕ್ ಕನ್ಯಾನ, ಅಬ್ದುಲ್ ಹಮೀದ್ ಪೊರ್ಕುಂಜ, ಅಬ್ದುಲ್ ಹಕೀಮ್ ಬೋಳಾರ್, ಅಶ್ರಫ್ ಕಿನ್ಯ, ಹುಸೈನ್ ಮಾಪ್ಪಲ್, ಅಶ್ರಫ್ ಸಂಗಮ್ ಸುಳ್ಯ, ಬದ್ರುದ್ದೀನ್ ಕಬಕ ಅವರನ್ನು ಆಯ್ಕೆ ಮಾಡಲಾಯಿತು. ಸಮಾರಂಭದಲ್ಲಿ ಮರ್ಕಝುಲ್ ಹುದಾ ಸೌದಿ ರಾಷ್ಟೀಯ ಸಮಿತಿ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಮದೀನಾ ಝೋನ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಉದ್ಘಾಟನೆ ಮಾಡಿದರು. ಮರ್ಕಝುಲ್ ಹುದಾ ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು ಸ್ವಾಗತಿಸಿ, ವಂದಿಸಿದರು.
ಶಾಸಕಿ ಕರೆಮ್ಮಾ ಜಿ. ನಾಯಕ್ಗೆ ಜೀವ ಬೆದರಿಕೆ ಆರೋಪ: 60 ಜನರ ವಿರುದ್ಧ ಪ್ರಕರಣ ದಾಖಲು
ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮಾ ಜಿ. ನಾಯಕ್ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಶ್ರೀನಿವಾಸ ನಾಯಕ್ ಸೇರಿ 60 ಜನರ ಮೇಲೆ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ್ ಸಹೋದರ ಶ್ರೀನಿವಾಸ ನಾಯಕ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಾಸಕಿ ಕರೆಮ್ಮಾ ಜಿ. ನಾಯಕ್ ಆರೋಪಿಸಿದ್ದರು. ಜೆಡಿಎಸ್ ಮುಖಂಡ ವಕೀಲ ಹನುಮಂತರಾಯ್ ಅವರು ನೀಡಿದ ದೂರಿನ ಮೇರೆಗೆ ಶ್ರೀನಿವಾಸ್ ನಾಯಕ್, ರವಿ ಪ್ರಕಾಶ್ ಅಕ್ಕರಕಿ, ಸುರೇಶ್ ನಾಯಕ್ ಚಿಂತಲಕುಂಟ, ವೀರೇಶ ಗೌಡ, ಯಾಟಗಲ್, ಹನುಮಂತ್ರಾಯ ಕರಿಗುಡ್ಡ, ಅಮರೇಶ ಅಂಜಳ ಸೇರಿ ಇತರೆ 60 ಜನರ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.
ಪವಿತ್ರಾ ಗೌಡ ಸೇರಿ ಮೂವರು ಆರೋಪಿಗಳಿಗೆ ಮನೆ ಊಟ; ಸೆಷನ್ಸ್ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚಿಸಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ. ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜನವರಿ 12ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರಕರಣದ ತನಿಖಾಧಿಕಾರಿಗಳಾದ ನಗರದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು. ಜತೆಗೆ, ಪ್ರತಿವಾದಿಗಳಾದ ಪವಿತ್ರಾಗೌಡ, ನಾಗರಾಜ್ ಮತ್ತು ಲಕ್ಷ್ಮಣ್ಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು. ಆದೇಶದಲ್ಲೇನಿದೆ? ವಿಶೇಷ ಸರ್ಕಾರಿ ಅಭಿಯೋಜಕರು, ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಬಾರದು ಎಂದು ಸುಪ್ರಿಂಕೋರ್ಟ್ ಆದೇಶಿಸಿದೆ. ಆದೇಶ ಉಲ್ಲಂಘನೆಯಾದರೆ ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ. ಇನ್ನೂ ವಿಶೇಷ ಸಂದರ್ಭದಲ್ಲಿ ಮಾತ್ರ ಮನೆ ಊಟಕ್ಕೆ ಅವಕಾಶವಿದೆ. ಕಾನೂನು ಮುಂದೆ ಎಲ್ಲರೂ ಒಂದೇ. ಒಬ್ಬೊಬ್ಬರಿಗೆ ಒಂದು ರೀತಿಯ ಸೌಲಭ್ಯ ಕಲ್ಪಿಸುವುದು ಕಾನೂನುಬಾಹಿರವಾಗುತ್ತದೆ. ಜೈಲು ಕೈಪಿಡಿಯ ನಿಯಮಗಳನ್ನು ಉಪೇಕ್ಷಿಸಿ ಮೂವರು ಆರೋಪಿಗಳಿಗೆ ಮನೆ ಊಟ ಒದಗಿಸಲು ಸೆಷನ್ಸ್ ನ್ಯಾಯಾಲಯ ಆದೇಶಿಸಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದಾರೆ. ಈ ವಾದ ಪರಿಗಣಿಸಿ ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಎಸ್ಪಿಪಿ ವಾದವೇನು? ಇದಕ್ಕೂ ಮುನ್ನ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಬಿ.ಎನ್. ಜಗದೀಶ್ ವಾದ ಮಂಡಿಸಿ, ಪ್ರಕರಣದ ಆರೋಪಿಗಳಿಗೆ ಯಾವುದೇ ವಿಶೇಷ ಸೌಲಭ್ಯ ನೀಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಪವಿತ್ರಾ ಗೌಡ ಸೇರಿ ಮೂವರು ಆರೊಪಿಗಳಿಗೆ ವಾರಕೊಮ್ಮೆ ಮನೆ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಜೈಲು ಅಧಿಕಾರಿಗಳಿಗೆ ಸೆಷನ್ಸ್ ನ್ಯಾಯಾಲಯ ನಿರ್ದೇಶಿಸಿದೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾದರೆ ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ. ಇನ್ನು ಜೈಲು ಆಹಾರ ಗುಣಮಟ್ಟದ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್ಎಸ್ಎಸ್ಎಐ) ಪ್ರಾಧಿಕಾರ ನಾಲ್ಕು ಸ್ಟಾರ್ನ ಸರ್ಟಿಫಿಕೇಟ್ ನೀಡಿದೆ. ವೈದ್ಯರು ಸೂಚಿಸಿದರೆ ಮಾತ್ರ ಮನೆ ಊಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದ್ದರಿಂದ, ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.
ನಾಳೆಯಿಂದ ವಿಧಾನಮಂಡಲ ಜಂಟಿ ಅಧಿವೇಶನ, ನರೇಗಾ ಬಗ್ಗೆ ವಿಶೇಷ ಚರ್ಚೆ: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಜನವರಿ 22ರಿಂದ ಜನವರಿ 31ರವರೆಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಅಧಿವೇಶನದಲ್ಲಿ ಮಹತ್ವದ ವಿಷಯವಾಗಿ ನರೇಗಾ (MGNREGA) ಯೋಜನೆ ಕುರಿತಂತೆ ವಿಶೇಷ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು. ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಜಂಟಿ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ ನಡೆಯಲಿದ್ದು, ಅದರ
ಭಟ್ಕಳ: ‘ವಿಸ್ಡಮ್ ಸ್ಪೆಷಲ್ ಸ್ಕೂಲ್’ ಲೋಕಾರ್ಪಣೆ
ಭಟ್ಕಳ: ವಿಶೇಷ ಅಗತ್ಯವುಳ್ಳ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಹಾಗೂ ಮಾನಸಿಕ ಸಬಲೀಕರಣದ ಉದ್ದೇಶದಿಂದ ಭಟ್ಕಳದಲ್ಲಿ ‘ವಿಸ್ಡಮ್ ಸ್ಪೆಷಲ್ ಸ್ಕೂಲ್’ ಎಂಬ ನೂತನ ವಿಶೇಷ ಶಾಲೆಯನ್ನು ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಅಬ್ದಲ್ ರಬ್ ಖತೀಬ್ ನದ್ವಿ ಹಾಗೂ ಮರ್ಕಝಿ ಖಲಿಫಾ ಜಮಾಅತ್ ನ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಈನುದ್ದೀನ್ ಅಕ್ರಮಿ ಮದನಿ ನದ್ವಿ ಉದ್ಘಾಟಿದರು. ಈ ಸಂದರ್ಭದಲ್ಲಿ ಮಾತನಾಡಿದ . ಮೌಲಾನ ಅಬ್ದಲ್ ರಬ್ ಖತೀಬ್ ನದ್ವಿ, ವಿಶೇಷ ಮಕ್ಕಳ ಬದುಕನ್ನು ರೂಪಿಸುವುದು ಹಾಗೂ ಅವರಿಗೆ ಸಮಾಜದಲ್ಲಿ ಸಮಾನ ಅವಕಾಶ ಮತ್ತು ಗೌರವ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಮರ್ಕಝಿ ಖಲಿಫಾ ಜಮಾಅತ್ ನ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಈನುದ್ದೀನ್ ಅಕ್ರಮಿ ಮಾತನಾಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಶಕೀಲ್, ಸಮುದಾಯದ ಹಲವಾರು ತಾಯಂದಿರು ತಮ್ಮ ವಿಶೇಷಚೇತನ ಮಕ್ಕಳ ಶಿಕ್ಷಣಕ್ಕಾಗಿ ದೂರದ ಸಂಸ್ಥೆಗಳ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿಯನ್ನು ಕಂಡು, ಈ ಶಾಲೆ ಸ್ಥಾಪಿಸುವ ಸಂಕಲ್ಪ ಮೂಡಿತು ಎಂದು ತಿಳಿಸಿದರು. ಸಮುದಾಯದ ಪ್ರತಿಯೊಂದು ಮಗು ಮುಂದುವರಿಯಬೇಕು, ಯಾವುದೇ ಮಗು ಹಿಂದೆ ಉಳಿಯಬಾರದು ಎಂಬ ದೃಢ ನಿಲುವಿನೊಂದಿಗೆ ನಿರಂತರ ಪರಿಶ್ರಮದಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು ಮೌಲಾನ ಸೈಯ್ಯದ್ ಝುಬೇರ್ ಮಾತನಾಡಿ, ಭಟ್ಕಳದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಸುಮಾರು 200 ರಿಂದ 300 ವಿಶೇಷಚೇತನ ಮಕ್ಕಳು ಇದ್ದು, ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥೆಗಳ ಕೊರತೆಯಿಂದ ಹಲವರು ಮನೆಗಳಲ್ಲೇ ಸೀಮಿತರಾಗಿದ್ದರು. ಅಂತಹ ಮಕ್ಕಳಿಗೆ ಶಿಕ್ಷಣ, ತರಬೇತಿ ಮತ್ತು ಆತ್ಮವಿಶ್ವಾಸ ನೀಡುವ ಉದ್ದೇಶ ದಿಂದ ಈ ಶಾಲೆ ಆರಂಭಿಸಲಾಗಿದೆ. ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳೊಳಗೆ ಬಂಧಿಸದೇ, ಕ್ರೀಡೆ, ಚಿತ್ರಕಲೆ, ಸೃಜನಶೀಲ ಚಟುವಟಿಕೆಗಳು ಹಾಗೂ ದೃಶ್ಯಮಾಧ್ಯಮಗಳ ಮೂಲಕ ಬದುಕಿನ ಹೊಸ ಆಯಾಮಗಳನ್ನು ಪರಿಚಯಿಸುವ ಯೋಜನೆಯಿದೆ ಎಂದರು. ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಡಾ.ಅತಿಕುರ್ರಹ್ಮಾನ್ ಮುನೀರಿ, ಈ ಸಂಸ್ಥೆ ಸಮುದಾಯಕ್ಕೆ ಮಾತ್ರವಲ್ಲ, ಸಮಾಜಕ್ಕೂ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ವಿಶೇಷ ಮಕ್ಕಳಿಗೆ ಕೇವಲ ಪಾಠವಲ್ಲ, ಪ್ರೀತಿ, ಮಾನವೀಯತೆ ಮತ್ತು ಆತ್ಮಗೌರವ ಕಲಿಸುವುದು ಇಂದಿನ ಅಗತ್ಯ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನೂಸ್ ಕಾಜಿಯಾ, ರಾಬಿತಾ ಸೂಸೈಟಿಯ ಅಧ್ಯಕ್ಷ ಫಾರೂಖ್ ಮುಸ್ಬಾ, ಪ್ರ.ಕಾ. ಡಾ.ಅತಿಕುರ್ರಹ್ಮಾನ್ ಮುನೀರಿ, ಜಿದ್ದಾ ಜಮಾಅತ್ ಅಧ್ಯಕ್ಷ ಖಮರ್ ಸಾದಾ, ದುಬೈ ಜಮಾಅತ್ ಕಾರ್ಯದರ್ಶಿ ಜೈಲಾನಿ ಮೊಹತೆಶಮ್, ಮುಸದ್ದೀಖ್ ಇಕ್ಕೇರಿ ಕಿಮಿಯಾ, ಮೌಲಾನ ಇಲ್ಯಾಸ್ ನದ್ವಿ, ಮತ್ತಿತರು ಭಾಗವಹಿಸಿ ಶುಭ ಹಾರೈಸಿದರು. ಮೌಲಾನ ಝೀಯಾವುರ್ರಹ್ಮಾನ್ ರುಕ್ನುದ್ದೀನ್ ನದ್ವಿಯವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ವಿಸ್ಡಂ ವಿಶೇಷ ಶಾಲೆಯ ಕಾರ್ಯದರ್ಶಿ ಮೌಲಾನ ಸೈಯ್ಯದ್ ಯಾಸೀರ್ ನದ್ವಿ ಬರ್ಮಾವರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.
ಮನೆಗೆಲಸದ ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ: CRPF ಅಧಿಕಾರಿ, ಪತ್ನಿ ಬಂಧನ
ಶೌಚಾಲಯದಲ್ಲಿ ಬಿದ್ದಿದ್ದಳು ಎಂದು ವೈದ್ಯರಿಗೆ ತಿಳಿಸಿದ್ದ ದಂಪತಿ
ದೇಶದ ಪ್ರಜೆಗೆ ಸಂವಿಧಾನವೇ ಗ್ರಂಥ: ವಿನಯಕುಮಾರ್ ಸೊರಕೆ
ಕನ್ನಂಗಾರ್ನಲ್ಲಿ ಧಾರ್ಮಿಕ ಕಾರ್ಯಕ್ರಮ
Matrimonial site ನಲ್ಲಿಯೂ ವಂಚನೆ!
ಭಾವನಾತ್ಮಕ ಕಥೆಗಳಿಗೆ ಮರುಳಾಗಬೇಡಿ.. ಇದು Cyber crime ಲೋಕ
ಸುಳ್ಯ| ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ
ಬೆಳ್ಳಾರೆ: ಗ್ರಾಮದ ದರ್ಖಾಸು ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ಆರೋಪಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬೆಳ್ಳಾರೆ ದರ್ಖಾಸು ನಿವಾಸಿ ಎಂ.ಸೆಲ್ವಕುಮಾರ್ ಲೈಂಗಿಕ ಕಿರುಕುಳ ನೀಡಿದ ಆರೋಪಿ. ಬೆಳ್ಳಾರೆ ದರ್ಖಾಸು ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದ ಸೆಲ್ವ ಕುಮಾರ್ 2020 ಏಪ್ರಿಲ್ 1ರಂದು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚಾಕಲೇಟ್ನ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ಪೊಕ್ಸೋ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಒಟ್ಟು 17 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಆರೋಪಿ ವಿರುದ್ಧ ಸಂತ್ರಸ್ತ ಬಾಲಕಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬೆಳ್ಳಾರೆ ಪೊಲೀಸರು ವಿವರವಾದ ಸಾಕ್ಷ್ಯ ನೀಡಿದರು. ನ್ಯಾಯಾಧೀಶೆ ಸರಿತಾ ಡಿ. ಅವರು ಇತ್ತಂಡಗಳ ವಾದ ಆಲಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಪೊಕ್ಸೋ ಕಾಯ್ದೆಯಡಿಯ ಅಪರಾಧಕ್ಕೆ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.20 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ನೀಡಿ ಆದೇಶಿದ್ದಾರೆ. ದಂಡದ ಮೊತ್ತದಲ್ಲಿ ರೂ.20 ಸಾವಿರವನ್ನು ನೊಂದ ಬಾಲಕಿಗೆ ನೀಡಲು ಆದೇಶಿಸಲಾಗಿದೆ. ಸರಕಾರದ ಪರ ಪೊಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.
ಶಿಕ್ಷಣ ಸಂಸ್ಥೆಗಳ ಪರಿಸರದ ಅಂಗಡಿಗಳ ತಪಾಸಣೆ ತೀವ್ರಗೊಳಿಸಲು ದ.ಕ. ಡಿಸಿ ಸೂಚನೆ
ಮಂಗಳೂರು: ಶಾಲಾ ಕಾಲೇಜುಗಳ ಆಸುಪಾಸಿನಲ್ಲಿ ಕಾರ್ಯಾಚರಿಸುವ ಅಂಗಡಿಗಳಲ್ಲಿ ಮಾದಕ ವಸ್ತು ಮತ್ತು ಧೂಮಪಾನ ಮಾರಾಟದ ಬಗ್ಗೆ ನಿರಂತರ ತಪಾಸಣೆ ನಡೆಸುವಂತೆ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ನಗರದ ಪುರಭವನದಲ್ಲಿ ಮಂಗಳವಾರ ನಡೆದ ನಾರ್ಕೋ ಕೋ ಆರ್ಡಿನೇಶನ್ ಸೆಂಟರ್ನ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ ನಡೆಸಬೇಕು. ಕೆಲವೆಡೆ ವಿದ್ಯಾರ್ಥಿಗಳು ಪರೀಕ್ಷೆ ಒತ್ತಡದಿಂದಾಗಿ ಮಾದಕ ವಸ್ತುಗಳನ್ನು ಸೇವಿಸುವ ಬಗ್ಗೆ ವರದಿ ಬಂದಿದೆ. ಈ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದರು. ಪದವಿಪೂರ್ವ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಲು ನಿರ್ಲಕ್ಷ್ಯ ವಹಿಸಿದ ಬಗ್ಗೆ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಡ್ರಗ್ಸ್ ಪರೀಕ್ಷೆಯನ್ನು ಹೆಚ್ಚಿಸಲು ಆರೋಗ್ಯ ಇಲಾಖೆಗೆ ಹೆಚ್ಚಿನ ಕಿಟ್ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾತನಾಡಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಾರ್ವಜನಿಕರಲ್ಲಿ ಡ್ರಗ್ಸ್ ಮುಕ್ತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ನಗರದಲ್ಲಿ ಕಳೆದ ಡಿಸೆಂಬರ್ನಲ್ಲಿ ಡ್ರಗ್ಸ್ ಸೇವಿಸಿದ 62 ಮಂದಿಯನ್ನು ಹಾಗೂ 21 ಪೆಡ್ಲರ್ಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೋಂಸ್ಟೇ ಮತ್ತು ಲಾಡ್ಜ್ಗಳಲ್ಲಿ ಆಗ್ಗಿಂದಾಗೆ ತಪಾಸಣೆ ನಡೆಸಬೇಕು. ಕರಾವಳಿ ಭದ್ರತಾ ಪೊಲೀಸರು ಬೋಟ್ಗಳನ್ನು ಅನಿರೀಕ್ಷಿತ ತಪಾಸಣೆ ನಡೆಸಬೇಕು. ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪಾರ್ಸೆಲ್ಗಳ ಮೇಲೆ ನಿಗಾ ವಹಿಸಬೇಕು. ಕೈಗಾರಿಕಾ ಘಟಕಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸ ಬೇಕು. ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಮೆಡಿಕಲ್ಗಳಲ್ಲಿ ಔಷಧದ ಮಾರಾಟದ ಬಗ್ಗೆ ಸೂಕ್ತ ದಾಖಲೆಯನ್ನು ನಿರ್ವಹಿಸದ ನಾಲ್ಕು ಮೆಡಿಕಲ್ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್., ಎಎಸ್ಪಿ ಅನಿಲ್ ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರಿದ್ದರು.
ಶಾಲೆಗಳ ಅಡುಗೆ ಮನೆ ಆಧುನೀಕರಣ | ಪಾತ್ರೆ-ಪರಿಕರಗಳ ಖರೀದಿಗಾಗಿ 18.91 ಕೋಟಿ ರೂ.ಬಿಡುಗಡೆ
ಬೆಂಗಳೂರು : ಸರಕಾರವು ರಾಜ್ಯದ 9,090 ಶಾಲೆಗಳ ಅಡುಗೆ ಮನೆಗಳನ್ನು ಆಧುನೀಕರಿಸಲು ಹಾಗೂ ಹೊಸ ಪಾತ್ರೆ-ಪರಿಕರಗಳನ್ನು ಒದಗಿಸಲು ಒಟ್ಟು 18.91 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿ, ಮಂಗಳವಾರದಂದು ಆದೇಶ ಹೊರಡಿಸಿದೆ. ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 16 ಜಿಲ್ಲೆಗಳ 7,015 ಶಾಲೆಗಳಲ್ಲಿ ಅಕ್ಕಿ ಬೇಯಿಸಲು ಮತ್ತು ತೊಗರಿಬೇಳೆ ಸಾಂಬಾರು ತಯಾರಿಸಲು ಸ್ಟೀಲ್ ಪಾತ್ರೆಗಳನ್ನು ಒದಗಿಸಲು 12.56 ಕೋಟಿ ರೂ.ಗಳನ್ನು ಹಾಗೂ ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿನ 2075 ಶಾಲೆಗಳಿಗೆ ಮೊಟ್ಟೆ ಬೇಯಿಸಲು ಸ್ಟೀಲ್ ಪಾತ್ರೆಗಳು, ಎಲ್.ಪಿ.ಜಿ. ಸಿಲಿಂಡರ್ಗಳನ್ನು ಒದಗಿಸಲು 6.35 ಕೋಟಿ ರೂ.ಗಳನ್ನು ಒಳಗೊಂಡಂತೆ ಒಟ್ಟಾರೆ 18.91 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಇಸ್ಕಾನ್ ಸಂಸ್ಥೆ ಹಾಗೂ ಅದಮ್ಯ ಚೇತನ ಸಂಸ್ಥೆಯಿಂದ ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡುತ್ತಿರುವ ಶಾಲೆಗಳಿಗೆ, ಒಂದು ವೇಳೆ ಸಂಸ್ಥೆಗಳು ಮೊಟ್ಟೆಯನ್ನು ಸರಬರಾಜು ಮಾಡಲು ನಿರಾಕರಿಸಿದರೆ ಮಾತ್ರ, ಅಂತಹ ಶಾಲೆಗಳಲ್ಲಿ ಮೊಟ್ಟೆ ಬೇಯಿಸಲು ಅಗತ್ಯವಿರುವ ಪಾತ್ರೆ ಪರಿಕರಗಳನ್ನು ಮತ್ತು ಇತರೆ ಸಾಮಗ್ರಿಗಳನ್ನು ಖರೀದಿಸಲು ಅಗತ್ಯವಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು. ಅನುದಾನ ಬಿಡುಗಡೆ ವಿವರಗಳನ್ನು ಹಾಗೂ ವೆಚ್ಚದ ವಿವರಗಳನ್ನು 15 ದಿನಗಳೊಳಗಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಇಲಾಖಾ ವೆಬ್ ಸೈಟ್ನಲ್ಲಿ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕೊನೆಯ ಪೆಡ್ಲರ್ ಹಿಡಿಯುವವರೆಗೆ ಡ್ರಗ್ಸ್ ಮುಕ್ತ ಕಾರ್ಯಾಚರಣೆ: ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು: ಡ್ರಗ್ಸ್, ಗಾಂಜಾ ಮತ್ತಿತರ ಮಾದಕ ವಸ್ತುವಿನ ಪೆಡ್ಲರ್ಗಳ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ ಕೊನೆಯ ಪೆಡ್ಲರ್ ಬಂಧನವಾಗುವವರೆಗೂ ಮುಂದುವರಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಡ್ರಗ್ಸ್, ಮಾದಕ ವಸ್ತುಗಳ ಜಾಗೃತಿ ಪ್ರಯುಕ್ತ ನಗರದ ಪುರಭವನದಲ್ಲಿ ಮಂಗಳವಾರ ನಡೆದ ವಿವಿಧ ಶಿಕ್ಷಣ ಸಂಸ್ಥೆಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಡ್ರಗ್ಸ್ ವಿತರಣಾ ಜಾಲವನ್ನು ನಿಲ್ಲಿಸಲು ಪೊಲೀಸ್ ಇಲಾಖೆಯು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ತಪಾಸಣೆಯಲ್ಲಿ ಯಾವುದೇ ಡ್ರಗ್ಸ್ ಪಾಸಿಟಿವ್ ಕಂಡು ಬಂದಿಲ್ಲ. ಇದರಿಂದ ನಶಮುಕ್ತ ಮಂಗಳೂರು ಅಭಿಯಾನವು ಸಂಪೂರ್ಣ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಹೇಳಿದರು. ಎಲ್ಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ಕ್ರಿಯಾಶೀಲಗೊಳಿಸಬೇಕು. ಮಾದಕ ವಸ್ತುಗಳ ಪ್ರಭಾವ ಕ್ಕೊಳಗಾದ ಸಂಶಯಾಸ್ಪದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಕೌನ್ಸೆಲಿಂಗ್ ಮೂಲಕ ಹೊರತರಬೇಕು. ಈ ನಿಟ್ಟಿನಲ್ಲಿ ಅಗತ್ಯ ನೆರವನ್ನು ಪೊಲೀಸ್ ಇಲಾಖೆ ನೀಡಲಿದೆ ಎಂದು ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು. ಶಿಕ್ಷಣ ಸಂಸ್ಥೆಗಳ ಕ್ಯಾಂಪಸನ್ನು ಶುದ್ಧಗೊಳಿಸುವ ಇಂತಹ ಚಟಗಳಿಂದ ಮುಕ್ತ ಮಾಡುವ ಈ ಅಭಿಯಾನದಲ್ಲಿ ಕಾಲೇಜುಗಳು ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಆಗಾಗ ಭೇಟಿ ನೀಡಲಿದ್ದಾರೆ. ಡ್ರಗ್ಸ್ ಪ್ರಭಾವಿತ ವಿದ್ಯಾರ್ಥಿಗಳನ್ನು ಸಂತ್ರಸ್ತರೆಂದು ಪರಿಗಣಿಸಲಾಗುವುದು. ಆದರೆ ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೋಲಿಸ್ ಆಯುಕ್ತರು ತಿಳಿಸಿದರು. ಮಂಗಳೂರಿನಲ್ಲಿ ಡ್ರಗ್ಸ್ ವ್ಯಾಪಕವಾಗಿದೆ ಎಂದು ಕೇಳಿ ಬರುತ್ತಿದೆ. ಆದರೆ 2025ರ ಜೂನ್ 1ರಿಂದ 2026ರ ಜನವರಿ 17ರವರೆಗೆ ವಿವಿಧ ಕಾಲೇಜುಗಳಲ್ಲಿ 5,356 ಡ್ರಗ್ಸ್ ಪರೀಕ್ಷೆಗಳನ್ನು ಮಾಡಲಾಗಿದೆ. ಇದರಲ್ಲಿ ಕೇವಲ 14 ಪ್ರಕರಣಗಳು ಕಂಡು ಬಂದಿದೆ. ಇದು ಜಿಲ್ಲೆಯಲ್ಲಿ ಡ್ರಗ್ಸ್ ಚಟುವಟಿಕೆ ಕಡಿಮೆಯಾಗಿರುವ ಸಂಕೇತವಾಗಿದೆ ಎಂದು ಹೇಳಿದರು. *ಪಿಜಿಗಳಿಗೆ ಪೊಲೀಸ್ ಎನ್ಒಸಿ : ನಗರದ ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಪಿಜಿಗಳಿಗೆ ಲೈಸೆನ್ಸ್ ನೀಡುವ ಮೊದಲು ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣ ಪತ್ರ ಪಡೆಯುವ ಬಗ್ಗೆ ಪರಿಶೀಲಿಸುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದರು. ಸಭೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್, ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಎಎಸ್ಪಿ ಅನಿಲ್ ಕುಮಾರ್ ಮತ್ತಿತರಿದ್ದರು.
ತಮ್ಮ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿಯನ್ನು ಸೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಅನೇಕ ದೇಶಗಳಿಗೆ ಆಹ್ವಾನ ನೀಡಿದ್ದಾರೆ. ಟ್ರಂಪ್ ಅವರಿಂದ ಆಹ್ವಾನ ಪಡೆದ ದೇಶಗಳ ಪೈಕಿ ರಷ್ಯಾ ಮತ್ತು ಉಕ್ರೇನ್ ಕೂಡ ಸೇರಿವೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಕಿತ್ತಾಡುತ್ತಿರುವ ರಷ್ಯಾ ಮತ್ತು ಉಕ್ರೇನ್ ಗಾಜಾದಲ್ಲಿ ಶಾಂತಿ ನೆಲೆಸುವಂತೆ ಮಾಡಬಲ್ಲರೇ ಎಂಬ ಪ್ರಶ್ನೆ ಇದಗ ಉದ್ಭವವಾಗಿದೆ. ಅಲ್ಲದೇ ಇಬ್ಬರೂ ನಾಯಕರು ಒಂದೇ ವೇದಿಕೆ ಹಂಚಿಕೊಳ್ಳುವುದೂ ಅನುಮಾನವಾಗಿದೆ.
ಬೆಂಗಳೂರು ಆರ್ಟಿಒ ಕರ್ಮಕಾಂಡ: ಹೊರರಾಜ್ಯದ ವಾಹನಗಳಿಗೆ ತಪಾಸಣೆ ಇಲ್ಲದೆ ‘ಫಿಟ್ನೆಸ್ ಸರ್ಟಿಫಿಕೇಟ್’ ಆರೋಪ
ಬೆಂಗಳೂರು: ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ತಪಾಸಣೆಯೇ ಇಲ್ಲದೇ ಹೊರರಾಜ್ಯದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ವಾಹನಗಳಿಗೆ ಯಾವುದೇ ಭೌತಿಕ ತಪಾಸಣೆ ನಡೆಸದೇ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ಗಳನ್ನು ‘ಮಾರಾಟ' ಮಾಡಲಾಗುತ್ತಿದೆ ಎಂಬ ಮಾಹಿತಿ ಗುಜರಾತ್ ಅಧಿಕಾರಿಗಳಿಂದಲೇ ಲಭಿಸಿದೆ ಎಂದು
ದ.ಕ. ಬಾರ್ ಅಸೋಸಿಯೇಶನ್ ರದ್ದು : ಆಕ್ಷೇಪಣೆ ಆಹ್ವಾನ
ಮಂಗಳೂರು: ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ದ.ಕ.ಡಿಸ್ಟ್ರಿಕ್ಟ್ ಬಾರ್ ಅಸೋಸಿಯೇಶನ್ 1986ರ ಡಿ.3ರಂದು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೊಂದಣಿಗೊಂಡಿದೆ. ಆದರೆ ಇದರ ವಾರ್ಷಿಕ ಫೈಲಿಂಗ್ ಮಾಡದೆ 38 ವರ್ಷಗಳು ಕಳೆದಿದ್ದುದರಿಂದ ಸಂಘದ ಅಸ್ತಿತ್ವ ಇಲ್ಲವೆಂದು ಪರಿಗಣಿಸಿ ಇದರ ನೋಂದಣಿಯನ್ನು ರದ್ದುಗೊಳಿಸಬೇಕಾಗಿದೆ. ಈ ಸಂಬಂಧ ದ.ಕ. ಡಿಸ್ಟ್ರಿಕ್ಟ್ ಬಾರ್ ಅಸೋಸಿಯೇಶನ್ನ ನೋಂದಾಯಿತ ಸದಸ್ಯರು ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟನೆಯ ದಿನಾಂಕದಿಂದ 7 ದಿನಗಳೊಳಗೆ ಜಿಲ್ಲಾ ಸಂಘಗಳ ನೋಂದಣಿ ಕಚೇರಿಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಭಾವಿಸಿ ಇದರ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘ-ಸಂಸ್ಥೆಗಳ ನೋಂದಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೂರ್ವ ಜೆರುಸಲೇಂನಲ್ಲಿ ವಿಶ್ವಸಂಸ್ಥೆಯ ನೆರವು ಏಜೆನ್ಸಿ ಕಟ್ಟಡ ಧ್ವಂಸ
ಜೆರುಸಲೇಂ, ಜ.20: ಫೆಲೆಸ್ತೀನಿಯರಿಗೆ ನೆರವು ಒದಗಿಸುತ್ತಿರುವ ಮಾನವೀಯ ಸಂಘಟನೆಗಳ ಮೇಲಿನ ಹಿಡಿತವನ್ನು ಇಸ್ರೇಲ್ ಬಿಗಿಗೊಳಿಸಿದ್ದು, ಪೂರ್ವ ಜೆರುಸಲೇಂನಲ್ಲಿರುವ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಏಜೆನ್ಸಿ (ಯುಎನ್ಆರ್ಡಬ್ಲ್ಯುಎ) ಕಚೇರಿಯನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ. ಶೇಖ್ ಜರಾಹ್ ಪ್ರದೇಶದಲ್ಲಿರುವ ಕಚೇರಿಯ ಸಾಮಗ್ರಿಗಳನ್ನು ವಶಪಡಿಸಿಕೊಂಡು ಸಿಬ್ಬಂದಿಯನ್ನು ಬಲವಂತವಾಗಿ ಹೊರದಬ್ಬಲಾಗಿದೆ ಎಂದು ಯುಎನ್ಆರ್ಡಬ್ಲ್ಯುಎ ತಿಳಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಸವಲತ್ತುಗಳ ಗಂಭೀರ ಉಲ್ಲಂಘನೆ ಎಂದು ಹೇಳಿದೆ. ಯುಎನ್ಆರ್ಡಬ್ಲ್ಯುಎ ಹಮಾಸ್ ಜೊತೆ ನಂಟು ಹೊಂದಿದೆ ಎಂಬ ಆರೋಪವನ್ನು ಇಸ್ರೇಲ್ ದೀರ್ಘಕಾಲದಿಂದ ಮಾಡುತ್ತಿದ್ದು, ಸಂಸ್ಥೆ ಅದನ್ನು ನಿರಾಕರಿಸಿದೆ. ಇಸ್ರೇಲ್ ಸಂಸತ್ ಕಳೆದ ವರ್ಷ ಅಂಗೀಕರಿಸಿದ ಕಾನೂನಿನಡಿ ಸಂಸ್ಥೆಯನ್ನು ನಿಷೇಧಿಸಲಾಗಿದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
‘ಉಪ ಲೋಕಾಯುಕ್ತರು ನಿಮ್ಮ ಕೆಲಸ ನೆನಪಿಸಬೇಕಾ?’ : ಎಪಿಎಂಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವ ಶಿವಾನಂದ ಪಾಟೀಲ್
ಬೆಂಗಳೂರು : ‘ರೈತರಿಗೆ ಕುಡಿಯುವ ನೀರು ಕೊಡಿ, ಶೌಚಾಲಯ ವ್ಯವಸ್ಥೆ ಮಾಡಿ’ ಎಂದು ಉಪ ಲೋಕಾಯುಕ್ತರು ನಿಮಗೆ ಹೇಳಬೇಕಾ? ನಿಮ್ಮ ಕರ್ತವ್ಯ ಏನು ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಇಂದಿಲ್ಲಿ ಎಪಿಎಂಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗದ ಎಪಿಎಂಸಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೆಲವು ಎಪಿಎಂಸಿಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಪಗಳ ಮೇಲೆ ಅವರು ಬೆಳಕು ಚೆಲ್ಲಿದ ಮೇಲೂ ಮೇಲೂ ಸರಿಪಡಿಸದಿದ್ದರೆ ಏನು ಹೇಳಬೇಕು? ಎಂದು ಪ್ರಶ್ನಿಸಿದರು. ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ. ಹಲವು ಸೇವೆಗಳನ್ನು ಒದಗಿಸಲು ಹೊರಗುತ್ತಿಗೆ ನೀಡಿದ್ದು, ಪ್ರತಿ ತಿಂಗಳು ಸಕಾಲಕ್ಕೆ ಅವರಿಗೆ ಹಣ ಪಾವತಿ ಮಾಡುತ್ತೀರಿ. ಆದರೆ, ಅವರಿಂದ ಕೆಲಸ ಪಡೆಯುವುದು ಯಾರ ಜವಾಬ್ದಾರಿ. ನಿಮ್ಮ ಕೆಲಸ ಏನು ಎಂಬುದನ್ನು ಉಪ ಲೋಕಾಯುಕ್ತರು, ಮಂತ್ರಿಗಳು ಹೇಳಬೇಕಾ? ನಿಮ್ಮ ನಿಮ್ಮ ಕೆಲಸಗಳ ಬಗ್ಗೆ ನಿಮಗೆ ಅರಿವು, ಜವಾಬ್ದಾರಿ ಇಲ್ಲವೇ? ಎಂದು ಅವರು ಕೇಳಿದರು. ‘ತೂಕದ ಯಂತ್ರಗಳು ಸರಿಯಾಗಿಲ್ಲ, ದಲ್ಲಾಲರು ರೈತರಿಂದ ಹೆಚ್ಚುವರಿ ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಉಪಲೋಕಾಯುಕ್ತರು, ಎಪಿಎಂಸಿಗಳಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ. ಎಲ್ಲ ಎಪಿಎಂಸಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಿಮ್ಮ ಕೆಲಸವನ್ನೂ ಉಪ ಲೋಕಾಯುಕ್ತರು ಹೇಳಬೇಕಾ? ಇಲ್ಲಾ, ಮಂತ್ರಿ ಹೇಳಬೇಕಾ? ಎಂದು ಅವರು ಬೇಸರ ವ್ಯಕ್ತಪಡಿಸಿದರು. ಎಪಿಎಂಸಿಗಳ ಆಡಳಿತ ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕಾಗಿದೆ. ಅಸಮರ್ಥ ಅಧಿಕಾರಿಗಳನ್ನು ಗುರುತಿಸಿ ಅಂತಹ ಅಧಿಕಾರಿಗಳನ್ನು ಬದಲಾವಣೆ ಮಾಡಿ ಸಮರ್ಥರನ್ನು ನೇಮಕ ಮಾಡಿ ಎಂದು ಅವರು, ನಿರ್ದೇಶಕರಿಗೆ ಸೂಚಿಸಿದರು. ಕೆಲವು ಎಪಿಎಂಸಿಗಳಲ್ಲಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ನಿವೃತ್ತಿ ಅಂಚಿನಲ್ಲಿರುವವರು ರಜೆ ಮೇಲೆ ಹೋಗಿದ್ದಾರೆ. ಅಂತಹ ಕಡೆ ತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಿ. ನಿವೃತ್ತಿ ಸಮೀಪ ಇರುವ ಕಾರಣಕ್ಕೆ ರಜೆ ಮೇಲೆ ಇರುವವರನ್ನು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿ. ಅವರು ಕೇಂದ್ರ ಕಚೇರಿಯಲ್ಲೇ ನಿವೃತ್ತಿ ಪಡೆಯಲಿ. ಅವರ ಅನುಕೂಲತೆಗೆ ರೈತರಿಗೆ ಸಮಸ್ಯೆಯಾಗಬಾರದು ಎಂದರು ಅಧಿಕಾರಿಗಳಿಗೆ ತಮ್ಮ ಎಪಿಎಂಸಿ ವ್ಯಾಪ್ತಿಯಲ್ಲಿನ ಕೃಷಿ ಉತ್ಪನ್ನಗಳ ಇಳುವರಿ ಹಾಗೂ ಮಾರುಕಟ್ಟೆಗೆ ಅವಕವಾಗುವ ಪ್ರಮಾಣದ ಮಾಹಿತಿ ಇರಬೇಕು. ಪ್ರಾಥಮಿಕ ಮಾಹಿತಿ ಇಲ್ಲದಿದ್ದರೆ ಎಪಿಎಂಸಿಗಳನ್ನು ಹೇಗೆ ನಿಭಾಯಿಸುತ್ತೀರಿ, ಸಭೆ ಕರೆದಾಗ ಇಲ್ಲಿ ಕುಳಿತು ಕೆಲಸ ಮಾಡುವುದು ಸರಿಯಲ್ಲ. ಮುಂದಿನ ಸಭೆಗೆ ಹಾಜರಾಗುವ ಸಂದರ್ಭದಲ್ಲಿ ನಿಮ್ಮ ಬಳಿ ಪೂರ್ಣ ಮಾಹಿತಿ ಇರಬೇಕು ಎಂದು ಹೇಳಿದರು. ವಿಭಾಗಾವಾರು ವಿಜಿಲೆನ್ಸ್ ರಚನೆ ಮಾಡಿದ ಉದ್ದೇಶ ಫಲ ನೀಡಿಲ್ಲ. ವಿಜಿಲೆನ್ಸ್ ಮುಖ್ಯಸ್ಥರು ತಮ್ಮ ತಮ್ಮ ವ್ಯಾಪ್ತಿಯ ಕಾರ್ಯದರ್ಶಿಗಳು ಹಾಗು ಸಹಾಯಕ ನಿರ್ದೇಶಕರ ಸಭೆಗಳನ್ನುನಿಯಮಿತವಾಗಿ ನಡೆಸಿ ಕಾರ್ಯ ಯೋಜನೆ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಸೆಸ್ ಪ್ರಮಾಣ ಕಡಿಮೆ ಮಾಡಿರುವುದರಿಂದ ವಂಚನೆ ಪ್ರಕರಣಗಳು ಕಡಿಮೆಯಾಗಿವೆ ಎಂಬ ವಿಜಿಲೆನ್ಸ್ ಅಧಿಕಾರಿಗಳ ಮಾತನ್ನು ಒಪ್ಪದ ಸಚಿವರು, ವಿಜಿಲೆನ್ಸ್ ತಂಡ ಚುರುಕಾಗಬೇಕು ಎಂದರು. ಶೈಥ್ಯಾಗಾರ(ಕೋಲ್ಡ್ ಸ್ಟೊರೇಜ್) ಸೇರಿದಂತೆ ಅನೇಕ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿಲ್ಲ. ಗುತ್ತಿಗೆದಾರರಿಗೆ ಗಡುವು ವಿಸ್ತರಣೆ ಮಾಡಲಾಗುತ್ತಿದೆ. ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡಲಾಗುತ್ತಿದೆ. ಆದರೂ, ಯಾವ ಕಾರಣಕ್ಕೆ ಕಾಮಗಾರಿ ವಿಳಂಬವಾಗುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಮಾಡಬಾರದು ಎಂದು ಅವರು ಸೂಚಿಸಿದರು. ಪ್ರಗತಿ ವಿವರ ನೀಡಿದ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ ಅವರು, ಪ್ರಗತಿ ಗುರಿ ಸಾಮಾನ್ಯವಾಗಿ ಪ್ರತಿವರ್ಷ ಪ್ರತಿಶತ ಹತ್ತರಷ್ಟು ಹೆಚ್ಚಿರುತ್ತದೆ. ಆದರೆ ನಮ್ಮ ಗುರಿ ಪ್ರತಿಶತ ನಲವತ್ತರಷ್ಟಿದೆ. ಈ ಗುರಿ ತಲುಪುವ ವಿಶ್ವಾಸ ಇದೆ ಎಂದರು. ಈ ವೇಳೆ ಸಹಕಾರ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್ ಇದ್ದರು.
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ನ ಸಂಚಾರ ಸಮಸ್ಯೆ| ತುರ್ತು ಪರಿಹಾರಕ್ಕೆ ಸಂಸದ ಬ್ರಿಜೇಶ್ ಚೌಟ ಸೂಚನೆ
ಮಂಗಳೂರು, ಜ.20: ನಗರದ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ನಲ್ಲಿ ಪದೇಪದೇ ಗೂಡ್ಸ್ ರೈಲು ಹಾಗೂ ಖಾಲಿ ಪ್ಯಾಸೆಂಜರ್ ರೈಲು ಹಾದು ಹೋಗುವುದರಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ಹಾಗೂ ಟ್ರಾಫಿಕ್ ಸಮಸ್ಯೆ ತಪ್ಪಿಸಲು ತುರ್ತಾಗಿ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬ್ರಿಜೇಶ್ ಚೌಟ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಂಗಳೂರು ವ್ಯಾಪ್ತಿಯ ರೈಲ್ವೆ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ನಲ್ಲಿ ದಿನನಿತ್ಯ ಹತ್ತಾರು ಬಾರಿ ಗೂಡ್ಸ್ ಹಾಗೂ ಪ್ಯಾಸೆಂಜರ್ ರೈಲುಗಳು ಮಂಗಳೂರು ಸೆಂಟ್ರಲ್ನಿಂದ ಬಂದರ್ ಗೂಡ್ಸ್ ಶೆಡ್ಗೆ ಹಾದು ಹೋಗುವ ವೇಳೆ ರೈಲ್ವೆ ಗೇಟ್ ಹಾಕುವುದರಿಂದ ಜನರು ಹೆಚ್ಚು ಹೊತ್ತು ಕಾಯುವ ಪರಿಸ್ಥಿತಿಯಿದೆ. ಹೀಗಾಗಿ ಕೂಡಲೇ ರೈಲ್ವೆಗೇಟ್ ಬಳಿ ರೈಲು ಓಡಾಡುವ ಸಮಯದ ಬಗ್ಗೆ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಹಾಕಬೇಕು. ಅಲ್ಲದೆ ಕಚೇರಿ ವೇಳೆಯಲ್ಲಿ ಈ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ತಡೆ ಹಿಡಿಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಬ್ರಿಜೇಶ್ ಚೌಟ ಸೂಚಿಸಿದ್ದಾರೆ. ಪಾಂಡೇಶ್ವರ ಲೆವಲ್ ಕ್ರಾಸಿಂಗ್ನಲ್ಲಿ ಪದೇಪದೇ ಗೇಟ್ ಹಾಕುವುದರಿಂದ ಈ ಭಾಗದಲ್ಲಿ ಓಡಾಡುವ ಸಾರ್ವಜನಿ ಕರು ಹಲವಾರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ ಈ ಲೆವೆಲ್ ಕ್ರಾಸಿಂಗ್ನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿ ಗಳು ಸಮನ್ವಯತೆಯಿಂದ ಸಮಗ್ರ ವರದಿಯನ್ನು ತಯಾರಿಸಬೇಕು. ಆ ವರದಿ ಆಧರಿಸಿ ರೈಲ್ವೆ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ-ಮಾರ್ಗೋಪಾಯಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದು ಕೊಳ್ಳಬೇಕು ಎಂದು ಬ್ರಿಜೇಶ್ ಚೌಟ ಸಲಹೆ ನೀಡಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಮೂಲಕ ದಿನಕ್ಕೆ 10ರಿಂದ 15 ಸಲ ಖಾಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳು ಬಂದರು ಯಾರ್ಡ್ಗೆ ಹೋಗುವುದರಿಂದ ಪ್ರತಿ ಬಾರಿ 15ರಿಂದ 20 ನಿಮಿಷ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಉದ್ಯೋಗಿಗಳು, ಆಂಬುಲೆನ್ಸ್ ಮತ್ತಿತರ ತುರ್ತು ಸೇವೆ ವಾಹನ ಗಳಿಗೆ ಅಡಚಣೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ ರೈಲು ಬರುವ ಸಮಯವನ್ನು ಆಯಾ ಪ್ರದೇಶಗಳಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶಿಸಿದರೆ ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೊಯಿಗೆ ಬಜಾರ್ ಲೆವೆಲ್ ಕ್ರಾಸಿಂಗ್ ಬಳಿಯೂ ಇದೇ ರೀತಿಯಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತಿರುವ ಕಾರಣ ಯಾರ್ಡನ್ನೇ ಸ್ಥಳಾಂತರಿಸುವ ಬಗ್ಗೆ ಹಾಗೂ ಬೇರೆಡೆ ಸೂಕ್ತ ಜಾಗ ನಿರ್ಧರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್, ಮಾಜಿ ಮೇಯರ್ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಅಭಿಯಂತರ ನರೇಶ್ ಶೆಣೈ, ಪ್ರಮುಖರಾದ ಧರ್ಮರಾಜ್, ರವಿಶಂಕರ್ ಮಿಜಾರು, ನಿತಿನ್ ಕುಮಾರ್ ಉಪಸ್ಥಿತರಿದ್ದರು.
ಭಾರತ–ಯುರೋಪ್ ಒಕ್ಕೂಟ ನಡುವೆ ಶೀಘ್ರವೇ ಐತಿಹಾಸಿಕ ವ್ಯಾಪಾರ ಒಪ್ಪಂದ
► ದಾವೋಸ್ ಶೃಂಗಸಭೆಯಲ್ಲಿ ಉರ್ಸುಲಾ ವೊನ್ ಡೆರ್ ಲಿಯೆನ್ ಘೋಷಣೆ► 200 ಕೋಟಿ ಜನರನ್ನು ಒಳಗೊಂಡ ಮಾರುಕಟ್ಟೆ ಸೃಷ್ಟಿಯ ಸಾಧ್ಯತೆ
ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ; ಜಿ.ಟಿ.ದಿನೇಶ್ ಕುಮಾರ್ ಜಾಮೀನು ಅರ್ಜಿ ವಜಾ
ಬೆಂಗಳೂರು : ಅಕ್ರಮ ನಿವೇಶನ ಹಂಚಿಕೆ ಹಗರಣದಲ್ಲಿ ಬಂಧನದಿಂದ ಮುಕ್ತಗೊಳಿಸುವಂತೆ ಕೋರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜಾರಿ ನಿರ್ದೇಶನಾಲಯದ (ಈಡಿ) ಬಂಧನದಲ್ಲಿರುವ ದಿನೇಶ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತು ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು. ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದಿನೇಶ್ ಕುಮಾರ್ ಸೆರೆವಾಸ ಮುಂದುವರಿಯಲಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ವಿಚಾರಣೆ ವೇಳೆ ವಾದ ಮಂಡಿಸಿದ್ದ ದಿನೇಶ್ ಪರ ವಕೀಲರು, ಅರ್ಜಿದಾರರು ಪ್ರಕರಣದ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ನ್ಯಾಯಾಲಯ ವಿಧಿಸುವ ಷರತ್ತುಗಳನ್ನು ಪಾಲಿಸಲು ಸಿದ್ಧರಿದ್ದಾರೆ. ಆದ್ದರಿಂದ, ಪ್ರಕರಣದಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಇದನ್ನು ಆಕ್ಷೇಪಿಸಿದ್ದ ಈಡಿ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಾಧಾರ ಲಭ್ಯವಾಗಿವೆ. ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಅದರಲ್ಲಿ ಎಲ್ಲ ವಿವರಗಳನ್ನು ಉಲ್ಲೇಖಿಸಲಾಗಿದೆ. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ಬಿಡುಗಡೆ ಮಾಡಬಾರದು ಎಂದು ಕೋರಿದ್ದರು.
ಪ್ರಕರಣಗಳ ರಾಜೀ ಸಂಧಾನಕ್ಕೆ ವಿಶೇಷ ಮಧ್ಯಸ್ಥಿಕೆ ಅಭಿಯಾನ: ನ್ಯಾಯಾಧೀಶೆ ಜೈಬುನ್ನಿಸಾ
ಮಂಗಳೂರು,ಜ.20:ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0 ಎಂಬ 90 ದಿನಗಳ 2ನೇ ವಿಶೇಷ ಮಧ್ಯಸ್ಥಿಕಾ ಅಭಿಯಾನವು ಈಗಾಗಲೆ ಆರಂಭಗೊಂಡಿದೆ. ಹಾಗಾಗಿ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ರೀತಿಯ ಸಿವಿಲ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಚೆಕ್ಕು ಅಮಾನ್ಯ ಪ್ರಕರಣಗಳು, ವಾಣಿಜ್ಯ ಮತ್ತು ಸೇವಾ ಪ್ರಕರಣಗಳು, ರಾಜಿಯಾಗಬಲ್ಲ ಅಪರಾಧಿ ಪ್ರಕರಣಗಳು, ಗ್ರಾಹಕರ ವ್ಯಾಜ್ಯ ಪ್ರಕರಣಗಳು, ಡಿಆರ್ಟಿ ಪ್ರಕರಣಗಳು, ಭೂ-ಸ್ವಾಧೀನ ಪ್ರಕರಣಗಳು ಮತ್ತಿತರ ಸಿವಿಲ್ ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ನ್ಯಾಯಾಲಯಗಳಿಂದ ಪ್ರಕರಣಗಳನ್ನು ಮಧ್ಯಸ್ಥಿಕಾ ಕೇಂದ್ರಕ್ಕೆ ಸೂಚಿಸಲಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಉಭಯ ಪಕ್ಷಗಾರರನ್ನು ಕರೆಸಿಕೊಂಡು ದ.ಕ. ನ್ಯಾಯಾಲಯದ ಸಮುಚ್ಚಯದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ನ್ಯಾಯಾಲಯಗಳ ಆವರಣಗಳಲ್ಲಿರುವ ಮಧ್ಯಸ್ಥಿಕಾ ಕೇಂದ್ರಗಳಲ್ಲಿ ನುರಿತ ಸಂಧಾನಕಾರರು ರಾಜೀಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸುತ್ತಾರೆ. ಪ್ರಕರಣಗಳು ಹೈಕೋರ್ಟ್ ನಲ್ಲಿ ಬಾಕಿ ಇದ್ದಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಆವರಣಗಳಲ್ಲಿರುವ ಹೈಕೋರ್ಟ್ ಮಧ್ಯಸ್ಥಿಕಾ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.ಉಚಿತ ಕಾನೂನು ಸಲಹೆಗಾಗಿ 15100 ಸಂಖ್ಯೆಗೆ ಕರೆ ಮಾಡಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಮಾನವ ಅಭಿವೃದ್ಧಿ ವರದಿಗೆ ನಿಖರ ಮಾಹಿತಿ ನೀಡಲು ಜಿಪಂ ಸಿಇಒ ಸೂಚನೆ
ಮಂಗಳೂರು,ಜ.20: ದ.ಕ.ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ 2031ರ ವರದಿ ತಯಾರಿಕೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಮಾಹಿತಿ ನೀಡುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ದ.ಕ.ಜಿಪಂ ಸಿಇಒ ನರ್ವಾಡೆ ನಾಯಕ ಕಾರ್ಬಾರಿ ಸೂಚಿಸಿದ್ದಾರೆ. ದ.ಕ.ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ 2031ರ ವರದಿಗಳ ತಯಾರಿಕೆ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಮಾನವ ಅಭಿವೃದ್ಧಿ ವರದಿಯು ಜಿಲ್ಲೆಯ ಮಾನವ ಅಭಿವೃದ್ಧಿಯ ಸಮಗ್ರ ಚಿತ್ರಣವನ್ನು ನೀಡಿ, ಜನರ ಆಯ್ಕೆ ಗಳನ್ನು ವಿಸ್ತರಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜಿಲ್ಲಾ ಮಾನವ ಅಭಿವೃದ್ಧಿ ವರದಿಯು ಜಿಲ್ಲೆಯ ಜನರ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಆದಾಯದಂತಹ ಅಂಶಗಳನ್ನು ಅಳೆಯುವ ಬಹಳ ಮುಖ್ಯವಾದ ವರದಿಯಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಮಾನವ ಅಭಿವೃದ್ಧಿ ಕೇವಲ ಆರ್ಥಿಕ ಬೆಳವಣಿಗೆಯಲ್ಲ. ಅದು ಜನರ ಬೇಡಿಕೆಗಳನ್ನು ಪೂರೈಸುವುದಾಗಿದೆ ಎಂದು ನರ್ವಾಡೆ ನಾಯಕ ಕಾರ್ಬಾರಿ ಹೇಳಿದರು. ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿ ಎಲ್ಲಾ ಇಲಾಖೆ ಅಧಿಕಾರಿಗಳು ವರದಿ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿ ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕು. ಕರ್ನಾಟಕ ರಾಜ್ಯವು ಮಾನವ ಅಭಿವೃದ್ಧಿ ವರದಿಯಡಿ 11ನೇ ಸ್ಥಾನದಲ್ಲಿದೆ. ಪ್ರತಿಯೊಂದು ಕುಟುಂಬಕ್ಕೆ ಮೂಲಭೂತ ಸೌಕರ್ಯಗಳು ದೊರಕು ವಂತಾಗಬೇಕು. ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ನಿಖರ ಮಾಹಿತಿ ನೀಡಿದರೆ ದ.ಕ.ಜಿಲ್ಲೆಯು ಉಳಿದ ಜಿಲ್ಲೆಗಳಿಗಿಂತ ಜಿಲ್ಲಾ ಮಾನವ ಅಭಿವೃದ್ಧಿಯಲ್ಲಿ ಮುಂದುವರಿಯಲಿದೆ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶ್ರೀನಿವಾಸ್ ರಾವ್ ಭಾಗವಹಿಸಿದ್ದರು. ಈ ಸಂದರ್ಭ ಜಿಪಂ ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್, ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಕೆ.ಎಸ್. ಸುಷ್ಮಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಪೊರೇಟ್ ಹಿತಾಸಕ್ತಿಗಾಗಿ ಕೇಂದ್ರದಿಂದ ಎಂನರೇಗಾ ದುರ್ಬಲ: ರಾಹುಲ್ ಗಾಂಧಿ
ಹೊಸದಿಲ್ಲಿ, ಜ. 20: ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿಯವರಂತಹ ಉದ್ಯಮಿಗಳ ಹಿತಾಸಕ್ತಿಯನ್ನು ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ) ಯನ್ನು ದುರ್ಬಲಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರವಾದ ಉತ್ತರಪ್ರದೇಶದ ರಾಯ್ ಬರೇಲಿಗೆ ಭೇಟಿ ನೀಡಿದ ಸಂದರ್ಭ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅಧಿಕಾರವನ್ನು ಕೇಂದ್ರೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ)ಯ ಹೆಸರನ್ನು ಬದಲಾಯಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಹಾತ್ಮಾ ಗಾಂಧಿಗೆ ಅವಮಾನ ಮಾಡಿದೆ. ಜೊತೆಗೆ ದುರ್ಬಲ ವರ್ಗಗಳಿಗೆ ಒದಗಿಸಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ ಎಂದು ಅವರು ಹೇಳಿದರು. ಈ ಕ್ರಮವನ್ನು ಪ್ರಜಾಪ್ರಭುತ್ವದ ಬೇರುಗಳ ಮೇಲಿನ ದಾಳಿ ಎಂದು ರಾಹುಲ್ ಗಾಂಧಿ ವ್ಯಾಖ್ಯಾನಿಸಿದರು. ಎಂನರೇಗಾವನ್ನು ರಕ್ಷಿಸಲು ಕಾಂಗ್ರೆಸ್ ದೇಶವ್ಯಾಪಿ ಚಳುವಳಿ ನಡೆಸುತ್ತಿದೆ. ನಾವು ಕಾರ್ಮಿಕರ ಬೆಂಬಲಕ್ಕೆ ನಿಂತಿದ್ದು, ಅವರ ಹಕ್ಕುಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು. ದೇಶದ ಸಂಪತ್ತು ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿಯವರಂತಹ ಕೈಗಾರಿಕೋದ್ಯಮಿಗಳ ಕೈಯಲ್ಲಿ ಕೇಂದ್ರೀಕೃತವಾಗಿರಬೇಕು ಎಂದು ಪ್ರಧಾನಿ ಬಯಸುತ್ತಾರೆ. ಒಂದೆಡೆ ನಾವು ಜನರನ್ನು ರಕ್ಷಿಸುತ್ತಿದ್ದೇವೆ; ಇನ್ನೊಂದೆಡೆ ನರೇಂದ್ರ ಮೋದಿ ಅವರು ದೇಶದ ಸಂಪೂರ್ಣ ಸಂಪತ್ತನ್ನು ಆಯ್ದ ಕೆಲವರಿಗೆ ವರ್ಗಾಯಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಬೀದಿ ನಾಯಿಗಳ ಪ್ರಕರಣದ ಕುರಿತ ಆದೇಶ | ಮನೇಕಾ ಗಾಂಧಿ ಟೀಕೆಗೆ 'ಸುಪ್ರೀಂ' ಅಸಮಾಧಾನ
ಹೊಸದಿಲ್ಲಿ, ಜ. 20: ಬೀದಿ ನಾಯಿಗಳ ಪ್ರಕರಣದ ಕುರಿತ ತನ್ನ ಆದೇಶವನ್ನು ಟೀಕಿಸಿ ಮಾಜಿ ಸಚಿವೆ ಮನೇಕಾ ಗಾಂಧಿ ನೀಡಿದ ಹೇಳಿಕೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಮನೇಕಾ ಗಾಂಧಿಯವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠ, ಮಾಜಿ ಸಚಿವೆ ಮನೇಕಾ ಗಾಂಧಿ ಅವರು ಯೋಚಿಸದೆ ಪ್ರತಿಯೊಬ್ಬರ ವಿರುದ್ಧ ಎಲ್ಲಾ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಿಳಿಸಿದೆ. ಮನೇಕಾ ಗಾಂಧಿ ಅವರ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ಅವರನ್ನು ಪ್ರಶ್ನಿಸಿದ ಪೀಠ, “ನ್ಯಾಯಾಲಯ ತನ್ನ ಆದೇಶಗಳಲ್ಲಿ ಜಾಗರೂಕರಾಗಿರಬೇಕು ಎಂದು ನೀವು ಹೇಳಿದ್ದೀರಿ. ಆದರೆ, ಅವರು ಯಾವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನೀವು ನಿಮ್ಮ ಕಕ್ಷಿದಾರರಲ್ಲಿ ಕೇಳಿದ್ದೀರಾ? ನೀವು ಅವರ ಪಾಡ್ಕಾಸ್ಟ್ ಕೇಳಿದ್ದೀರಾ? ಅವರು ಯಾವುದೇ ರೀತಿಯಲ್ಲಿ ಆಲೋಚನೆ ಮಾಡದೆ ಪ್ರತಿಯೊಬ್ಬರ ವಿರುದ್ಧ ಎಲ್ಲಾ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ನೀವು ಅವರ ದೇಹಭಾಷೆಯನ್ನು ನೋಡಿದ್ದೀರಾ?” ಎಂದು ಪ್ರಶ್ನಿಸಿತು. ಆದರೆ, ಔದಾರ್ಯದ ಕಾರಣಕ್ಕಾಗಿ ನ್ಯಾಯಾಲಯ ಮನೇಕಾ ಗಾಂಧಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಬೀದಿ ನಾಯಿಗಳ ಸಮಸ್ಯೆ ಪರಿಹರಿಸಲು ಮನೇಕಾ ಗಾಂಧಿ ಅವರು ಬಜೆಟ್ನಲ್ಲಿ ಎಷ್ಟು ಹಣ ಮಂಜೂರು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ರಾಜು ರಾಮಚಂದ್ರನ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜು ರಾಮಚಂದ್ರನ್, ತಾನು ಭಯೋತ್ಪಾದಕ ಅಜ್ಮಲ್ ಕಸಬ್ ಪರವಾಗಿಯೂ ನ್ಯಾಯಾಲಯದಲ್ಲಿ ಹಾಜರಾಗಿದ್ದೆ ಎಂದು ಹೇಳಿದರು ಹಾಗೂ ಇದು ಬಜೆಟ್ ಅನುದಾನ ನೀತಿಗೆ ಸಂಬಂಧಿಸಿದ ವಿಷಯ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು, “ಅಜ್ಮಲ್ ಕಸಬ್ ನ್ಯಾಯಾಂಗ ನಿಂದನೆ ಮಾಡಿಲ್ಲ. ಆದರೆ, ನಿಮ್ಮ ಕಕ್ಷಿದಾರರು ನ್ಯಾಯಾಂಗ ನಿಂದನೆ ಮಾಡಿದ್ದಾರೆ,” ಎಂದು ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಮಂಗಳವಾರ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಬಿಜೆಪಿ ನಾಯಕರು, ಕಾರ್ಯಕರ್ತರು ಸಿಹಿ ತಿಂಡಿ ವಿತರಿಸಿ ಸಂಭ್ರಮಾಚರಣೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಮೇಯರ್ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಕಣ್ಣೂರು, ಬಿಜೆಪಿ ಮೋರ್ಚಾದ ಅಧ್ಯಕ್ಷೆ ಡಾ. ಮಂಜುಳಾ ರಾವ್ ಮತ್ತಿತರರು ಉಪಸ್ಥಿತರಿದ್ದರು.
ನೋಯ್ಡಾದಲ್ಲಿ ಕಾರು ಗುಂಡಿಗೆ ಬಿದ್ದು ಟೆಕ್ಕಿ ಮೃತ್ಯು: ಬಿಲ್ಡರ್ ಬಂಧನ
ನೋಯ್ಡಾ, ಜ. 20: ನಿರ್ಮಾಣ ಕಾರ್ಯಕ್ಕಾಗಿ ಅಗೆಯಲಾಗಿದ್ದ, ನೀರಿನಿಂದ ತುಂಬಿದ್ದ 20 ಅಡಿ ಆಳದ ಗುಂಡಿಗೆ ಕಾರು ಸಹಿತ ಬಿದ್ದು ಸಾಫ್ಟ್ವೇರ್ ಇಂಜಿನಿಯರ್ ಯುವರಾಜ ಮೆಹ್ತಾ (27) ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ಡರ್ ಒಬ್ಬನನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸರು ತಿಳಿಸಿದ್ದಾರೆ. ವಿಷ್ಟೌನ್ ಪ್ಲ್ಯಾನರ್ಸ್ ಪ್ರೈ.ಲಿ. ಮಾಲೀಕರಲ್ಲೊಬ್ಬನಾದ ಅಭಯ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಮಾಲೀಕ ಮನೀಷ್ ಕುಮಾರ್ ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. 2021ರಲ್ಲಿ ನೋಯ್ಡಾದ ಸೆಕ್ಟರ್ 150ರಲ್ಲಿ ಮಾಲ್ ಒಂದರ ಬೇಸ್ಮೆಂಟ್ ನಿರ್ಮಾಣಕ್ಕಾಗಿ 20 ಅಡಿ ಆಳದ ಗುಂಡಿಯನ್ನು ಅಗೆಯಲಾಗಿತ್ತು. ಆದರೆ ನಂತರ ಅದು ನೀರಿನಿಂದ ತುಂಬಿತ್ತು. ಯುವರಾಜ ಸಾವಿನ ಬಳಿಕ ಅವರ ತಂದೆಯ ದೂರಿನ ಮೇರೆಗೆ ವಿಷ್ಟೌನ್ ಪ್ಲ್ಯಾನರ್ಸ್ ಮತ್ತು ಲೋಟಸ್ ಗ್ರೀನ್ಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ತಾನು 2019–20ರಲ್ಲಿ ನೋಯ್ಡಾ ಪ್ರಾಧಿಕಾರದ ಅನುಮತಿಯೊಂದಿಗೆ ಯೋಜನೆಯನ್ನು ವಿಷ್ಟೌನ್ ಪ್ಲ್ಯಾನರ್ಸ್ ಮತ್ತು ಗೃಹಪ್ರವೇಶ ಗ್ರೂಪ್ಗೆ ಮಾರಾಟ ಮಾಡಿದ್ದಾಗಿ ಲೋಟಸ್ ಗ್ರೀನ್ಸ್ ನಂತರ ಹೇಳಿಕೊಂಡಿತ್ತು. ಸೋಮವಾರ ಉತ್ತರ ಪ್ರದೇಶ ಸರ್ಕಾರವು ನೋಯ್ಡಾ ಪ್ರಾಧಿಕಾರದ ಸಿಇಒ ಲೋಕೇಶ್ ಎಂ. ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು ಹಾಗೂ ಯುವರಾಜ ಸಾವಿನ ಕುರಿತು ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲು ಆದೇಶಿಸಿತ್ತು. ರವಿವಾರ ಲೋಕೇಶ್ ಅವರು ಜ್ಯೂನಿಯರ್ ಇಂಜಿನಿಯರ್ ಒಬ್ಬರನ್ನು ವಜಾಗೊಳಿಸಿದ್ದರು. ಜೊತೆಗೆ ಸೆಕ್ಟರ್ 150ರಲ್ಲಿ ರಸ್ತೆ ಮತ್ತು ಸಂಚಾರ ಸಂಬಂಧಿತ ಕೆಲಸಗಳ ಮೇಲ್ವಿಚಾರಣೆಯ ಹೊಣೆಗಾರಿಕೆ ಹೊಂದಿದ್ದ ಇತರ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ಗಳನ್ನು ಜಾರಿಗೊಳಿಸಿದ್ದರು. ಶನಿವಾರ ಬೆಳಗಿನ ಜಾವ ಮನೆಗೆ ಮರಳುತ್ತಿದ್ದ ಯುವರಾಜ ಚಲಾಯಿಸುತ್ತಿದ್ದ ಕಾರು ದಟ್ಟ ಮಂಜಿನಿಂದಾಗಿ ರಸ್ತೆಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ನೀರಿನಿಂದ ತುಂಬಿದ್ದ ಗುಂಡಿಯಲ್ಲಿ ಬಿದ್ದಿತ್ತು. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದರೂ, ಸುಮಾರು 90 ನಿಮಿಷಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಯುವರಾಜನನ್ನು ರಕ್ಷಿಸಲು ಸಾಧ್ಯವಾಗದೆ ಅವರು ಮೃತಪಟ್ಟಿದ್ದರು.
ವೆನ್ಲಾಕ್ ಆಸ್ಪತ್ರೆಯ ಒಪಿಡಿ ಕಟ್ಟಡ ನಿರ್ಮಾಣ: 35 ಕೋಟಿ ರೂ.ಮೊತ್ತದ ಕಾಮಗಾರಿಗೆ ಸರಕಾರದ ಆಡಳಿತಾತ್ಮಕ ಅನುಮೋದನೆ
ಮಂಗಳೂರು, ಜ.20: ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ (ಒಪಿಡಿ) ಕಟ್ಟಡದ 35 ಕೋಟಿ ರೂ. ವೆಚ್ಚದ ಮೊದಲ ಹಂತದ ಕಾಮಗಾರಿಗೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸರಕಾರ ಬಜೆಟ್ನಲ್ಲಿ ಘೋಷಿಸಿರುವಂತೆ 70 ಕೋಟಿ ರೂ. ವೆಚ್ಚದಲ್ಲಿ ಒಪಿಡಿ ಬ್ಲಾಕ್ ನಿರ್ಮಾಣದ ಮೊದಲ ಹಂತದ ಕಾಮಗಾರಿಗೆ 35 ಕೋಟಿ ರೂ. ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆಯೊಂದಿಗೆ ಟೆಂಡರ್ ಆಹ್ವಾನಿಸಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರಭಾಕರ ಟಿ. ಜ.19ರಂದು ಹೊಡರಡಿಸಿರುವ ಆದೇಶ ತಿಳಿಸಿದೆ. ರಾಜ್ಯ ಸರಕಾರ 2025-26ನೇ ಸಾಲಿನ ಆಯವ್ಯಯ ಕಂಡಿಕೆ-138(3) ರಲ್ಲಿ ಮಾಲೂರು, ಮಾಗಡಿ, ಕುಶಾಲನಗರ, ಕೊರಟೆಗೆರೆ,ಜಗಳೂರು ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲೂಕು ಮಟ್ಟದ ಆಸ್ಪತ್ರೆಗಳು, ದಾವಣಗೆರೆ ಜಿಲ್ಲಾಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಒಟ್ಟು 650 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡುವುದಾಗಿ ಸರಕಾರ ಬಜೆಟ್ನಲ್ಲಿ ಘೋಷಿಸಿತ್ತು.
ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೃತ್ಯು
ಕಾಪು, ಜ.20: ಮೀನುಗಾರಿಕೆ ಸಂದರ್ಭ ಬೋಟಿನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರರೊಬ್ಬರ ಮೃತದೇಹ ಉದ್ಯಾವರ ಗ್ರಾಮದ ಪಡುಕೆರೆಯ ಪಾಪನಾಶಿನಿ ಹೊಳೆಯಲ್ಲಿ ಜ.19ರಂದು ಸಂಜೆ ವೇಳೆ ಪತ್ತೆಯಾಗಿದೆ. ಮೃತರನ್ನು ಕೋಟತಟ್ಟು ಮಧುವನ ನಿವಾಸಿ ಮಂಜುನಾಥ(61) ಎಂದು ಗುರುತಿಸಲಾಗಿದೆ. ಇವರು ಜ.17ರಂದು ಬೋಟಿನಲ್ಲಿ ಮೀನುಗಾರಿಕೆ ಕೆಲಸಕ್ಕೆ ತೆರಳಿದ್ದು, ಜ.18ರಂದು ವಾಪಾಸ್ಸು ಮಲ್ಪೆಯ ಬಂದರಿಗೆ ಬರುವಾಗ ಆಕಸ್ಮಿಕ ವಾಗಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಇವರ ಮೃತದೇಹ ಜ.19ರಂದು ಸಂಜೆ ಪಡುಕೆರೆಯ ಪಾಪನಾಶಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರ್ಯಾಯದಲ್ಲಿ ಅಸಂವಿಧಾನಿಕ ಕೃತ್ಯ ಎಸಗಿರುವ ಉಡುಪಿ ಡಿಸಿ ವಿರುದ್ಧ ಕ್ರಮಕ್ಕೆ ಸಹಬಾಳ್ವೆ ಆಗ್ರಹ
ಉಡುಪಿ, ಜ.20: ಉಡುಪಿ ಪರ್ಯಾಯ ಉತ್ಸವದಲ್ಲಿ ಭಾಗವಹಿಸಿದ ಉಡುಪಿಯ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆರ್ಎಸ್ಎಸ್ ಸಂಘಟನೆಯ ಧ್ವಜವನ್ನು ಹಿಡಿದು, ಬೀಸುತ್ತಾ ಪುರ ಪ್ರವೇಶಕ್ಕೆ ಸ್ವಾಗತ ನೀಡಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಸಿಯ ಈ ವರ್ತನೆ ಖಂಡನೀಯ. ಜಿಲ್ಲಾಧಿಕಾರಿ ಸಂವಿಧಾನ ನಿಯಮಬಾಹಿರ ವರ್ತನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಹಬಾಳ್ವೆ ಉಡುಪಿ ಆಗ್ರಹಿಸಿದೆ. ಜಿಲ್ಲಾಧಿಕಾರಿಯವರಾಗಲೀ ಜಿಲ್ಲಾಡಳಿತದ ಭಾಗವಾಗಿರುವ ಯಾವುದೇ ನೌಕರರು ಇರಲೀ, ಸಾರ್ವಜನಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸು ವಾಗ ಸಂವಿಧಾನದ ನಿಯಮಗಳ ಒಳಗೆ ನಡೆದುಕೊಳ್ಳಬೇಕು. ಅದನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಲೇ ಬೇಕು. ತಮ್ಮ ಸಂವಿಧಾನ ವಿರೋಧಿ ನಡೆಗೆ ಸಮರ್ಥನೆಯಾಗಿ ಸ್ವರೂಪ, ತಾವು ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ, ನಾಗರಿಕ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಹೊರತು, ಅದರಲ್ಲಿ ಬೇರೆ ರಾಜಕೀಯ ಹಿತಾಸಕ್ತಿ ಇರಲಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿ ಜಿಲ್ಲಾಡಳಿತದ ಪರವಾಗಿ ಭಾಗವಹಿಸಿದಾಗ, ಸಂವಿಧಾನಿಕ ನಿಯಮಗಳನ್ನು ಪಾಲಿಸಬೇಕು ಎಂಬ ಜಾಗೃತಿ ಇಟ್ಟುಕೊಳ್ಳಬೇಕಿತ್ತು. ಯಾರೋ ದೊಣ್ಣೆ ನಾಯಕರು, ಸಂವಿಧಾನ ವಿರೋಧಿ, ಮತ ವಿಭಜಕ ಸಂಘಟನೆಯ ಧ್ವಜವನ್ನು ಮೆರೆಸಲು ಕುಮ್ಮಕ್ಕು ಕೊಟ್ಟರೆ, ತಮ್ಮ ಸ್ಥಾನಮಾನದ ಘನತೆ ತೋರಿ ನಿರಾಕರಿಸಬೇಕಿತ್ತು. ಅದನ್ನು ಬಿಟ್ಟು, ಈ ಬಗೆಯಲ್ಲಿ ವರ್ತಿಸಿದ್ದೇ ಅಲ್ಲದೇ, ತಮ್ಮ ನಡೆಯನ್ನು ತಮ್ಮ ಸ್ಥಾನವನ್ನು ಮುಂದು ಮಾಡಿ ಸಮರ್ಥಿಸಿಕೊಳ್ಳುವುದು ಜಿಲ್ಲೆಯ ಶಾಂತಿ ಭಂಜಕ ಶಕ್ತಿಗಳಿಗೆ ಏನು ಸಂದೇಶ ಕೊಡುತ್ತದೆ. ನಿರಂತರ ಹಲ್ಲೆಗೆ ತುತ್ತಾಗುತ್ತಿರುವ ಜನ ಸಮುದಾಯಗಳಿಗೆ ಯಾವ ರೀತಿಯ ಆತಂಕ ಹುಟ್ಟಿಸುತ್ತದೆ ಎಂಬ ಅರಿವು ಜಿಲ್ಲಾಧಿಕಾರಿಯ ವರಿಗೆ ಇದ್ದಂತಿಲ್ಲ ಎಂದು ಸಮಿತಿಯ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
121 ದಿನಕ್ಕೆ ಬೈಂದೂರು ರೈತರ ಹೋರಾಟ: ಬೈಕ್ ಜಾಥಾ
ಬೈಂದೂರು, ಜ.20: ರೈತರಿಗೆ ನ್ಯಾಯ ನೀಡಲು ಸರಕಾರದ ಮಟ್ಟದಲ್ಲಿ ಸಚಿವರು ಸಮ್ಮತಿ ನೀಡಿದರೂ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಈ ಕುರಿತು ಈ ಜಿಲ್ಲೆಯ ನಾಯಕರು ಒಮ್ಮತದಿಂದ ರೈತರ ಪರ ಧ್ವನಿ ಎತ್ತಬೇಕು ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ. ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿರುವ 121 ದಿನದ ಪ್ರತಿಭಟನೆ ಪ್ರಯುಕ್ತ ಮಂಗಳವಾರ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಮರಳುಗಾರಿಕೆಯಲ್ಲಿ ರಾಜಕೀಯ ಮರೆತು ಹೊಂದಾಣಿಕೆ ಮಾಡಿಕೊಳ್ಳುವ ನಾಯಕರು ರೈತರಿಗೆ ನ್ಯಾಯ ಕೊಡಲು ಮಾತ್ರ ಒಗ್ಗಟ್ಟು ತೋರಿಸುತ್ತಿಲ್ಲ. ರೈತರ ವಿಚಾರದಲ್ಲಿ ಅನ್ಯಾಯ ಮಾಡಿದರೆ ನಿಮ್ಮ ಭವಿಷ್ಯ ನಿರ್ನಾಮ ವಾಗುತ್ತದೆ ಎಂದು ಅವರು ಆರೋಪಿಸಿದರು. ಕೆಆರ್ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಮಾತನಾಡಿ, ಉಡುಪಿ ಜಿಲ್ಲಾಡಳಿತ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಜಿಲ್ಲೆಯ ಜಿಲ್ಲಾಧಿಕಾರಿ ನೂರು ದಿವಸ ರೈತರು ಬೀದಿಯಲ್ಲಿ ಕುಳಿತರು ಕನಿಷ್ಠ ಮಾತನಾ ಡಿಸುವ ಸೌಜನ್ಯವಿಲ್ಲದೆ ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದಾರೆ. ರೈತರು ನ್ಯಾಯಕ್ಕಾಗಿ ಆಗ್ರಹಿಸಿದರೆ ಜಿಲ್ಲಾಡಳಿತ ಮತ್ತು ರಾಜಕೀಯ ವ್ಯವಸ್ಥೆ ಬೈಂದೂರು ಉತ್ಸವದ ಸಿದ್ದತೆಯಲ್ಲಿರುವುದು ಇವರ ಮಾನಸಿಕ ದಿವಾಳಿತನವನ್ನು ಬಿಂಬಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂಧಿಸುವುದು ಜನಪ್ರತಿನಿಧಿಗಳ ಜವಬ್ದಾರಿಯಾಗಿದೆ ಎಂದರು. ಖಂಬದಕೋಣೆ ರೈತರ ಸೇವಾ ಸಹಾಕರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಗ್ರಾ.ಪಂ ಮಾಜಿ ಸದಸ್ಯ ಗಣೇಶ ಪೂಜಾರಿ, ನಾಗಪ್ಪ ಮರಾಠಿ, ಲಿಮೋನ್ ಬೈಂದೂರು, ಪದ್ಮಾಕ್ಷ ಗೋಳಿಬೇರು, ಹಿರಿಯರಾದ ಹೆರಿಯಣ್ಣ ಪೂಜಾರಿ ಗೋಳಿಬೇರು, ಸುಭಾಷ್ ಗಂಗನಾಡು, ಕೇಶವ ಪೂಜಾರಿ ಅಂತಾರ್, ರೈತ ಮುಖಂಡರು, ಗ್ರಾಮೀಣ ಭಾಗದ ರೈತರು ಹಾಗೂ ಕೆಆರ್ಎಸ್ ಪಕ್ಷದ ಸದಸ್ಯರು ಉಪಸ್ಥಿತರಿದ್ದರು. ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಆಡಳಿತ ಸೌಧದಿಂದ ಕಿರಿಮಂಜೇಶ್ವರದವರೆಗೆ ಬೈಕ್ ಜಾಥಾ ನಡೆಸಲಾಯಿತು. ಜಾಥಾದಲ್ಲಿ ನೂರಾರು ರೈತರು ಭಾಗವಹಿಸಿದ್ದರು.
ಜ.21ರಂದು ಪೋಕ್ಸೋ, ಬಾಲನ್ಯಾಯ ಕಾಯ್ದೆ ಕುರಿತು ತರಬೇತಿ ಕಾರ್ಯಕ್ರಮ
ಉಡುಪಿ, ಜ.20: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಕುರಿತು ಮಕ್ಕಳು ಹಾಗೂ ಮಕ್ಕಳ ರಕ್ಷಣಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಜ.21ರಂದು ಬೆಳಗ್ಗೆ 10 ಗಂಟೆಗೆ ಮಣಿಪಾಲದ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಉದ್ಘಾಟಿಸಲಿದ್ದು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಕ್ಕಳ ವಿಶೇಷ ಪೊಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ಪ್ರಭು ಡಿ.ಟಿ, ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷೆ ಜೂಹಿ ದಾಮೋದರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅನುರಾಧ ಹಾದಿಮನಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕ ಮಾರುತಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಗೋಲ್ಡನ್ ಅವರ್ನಲ್ಲಿ ದೂರು ಕೊಟ್ಟ ಸಂತ್ರಸ್ತ; ಸೈಬರ್ ವಂಚಕರಿಂದ 2 ಕೋಟಿ ರೂ. ವಾಪಸ್ ಕೊಡಿಸಿದ ಬೆಂಗಳೂರು ಪೊಲೀಸ್!
ಸೈಬರ್ ಪೊಲೀಸರು 2.16 ಕೋಟಿ ರೂ. ವಂಚನೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಇ-ಮೇಲ್ ಸ್ಪೂಫಿಂಗ್ ಮೂಲಕ ಹಣ ಕಳೆದುಕೊಂಡಿದ್ದ ರೆಡ್ಡೀಸ್ ಲ್ಯಾಬೋರೇಟರೀಸ್ ಗೆ ಪೊಲೀಸರು ಸಹಾಯ ಮಾಡಿದ್ದಾರೆ. ಗೋಲ್ಡನ್ ಅವರ್ ನಲ್ಲಿ ದೂರು ನೀಡಿದ್ದರಿಂದ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಯಿತು. ವಂಚಕರು ನೈಜೀರಿಯಾದಿಂದ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರು ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ ಹಣವನ್ನು ವಾರಸುದಾರರಿಗೆ ನೀಡಿದ್ದಾರೆ.
‘ಕೃಷಿಕರಿಗೆ, ಕೃಷಿಗೆ ಸಿಗುವ ಎಲ್ಲಾ ಸೌಲಭ್ಯ ಮೀನುಗಾರರಿಗೂ ಸಿಗಲಿ’
ಸಹಕಾರಿ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
ಧ್ವಜ ವಿವಾದ| ಕೇಸರಿ ಧ್ವಜ ಹಾರಿಸದೇ ಕಾಂಗ್ರೆಸ್ ಧ್ವಜ ಹಾರಿಸಬೇಕಿತ್ತೇ?: ಸುನಿಲ್ ಕುಮಾರ್ ಪ್ರಶ್ನೆ
ಕಾರ್ಕಳ, ಜ.20: ಉಡುಪಿ ಪರ್ಯಾಯದ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಾರಿಸದೇ ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಬೇಕಿತ್ತೇ ? ಎಂದು ಮಾಜಿ ಸಚಿವ ವಿ ಸುನೀಲ್ ಕುಮಾರ್ ಪರ್ಯಾಯ ಮೆರವಣಿಗೆಯಲ್ಲಿ ಧ್ವಜ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಪ್ರಶ್ನಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿರುವ ಅವರು ಉಡುಪಿ ಪರ್ಯಾಯದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಪ್ರಕರಣ ಕಾಂಗ್ರೆಸ್ ನಾಯಕರ ಕ್ಷುದ್ರ ಮನಸ್ಥಿತಿಗೆ ಇದು ಕೈಗನ್ನಡಿ. ಹಿಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಬಿಟ್ಟು ಕಾಂಗ್ರೆಸ್ ಅಥವಾ ಹಸಿರು ಧ್ವಜ ಪ್ರದರ್ಶಿಸುವುದು ಮಾತ್ರ ಧರ್ಮ ನಿರಪೇಕ್ಷತೆಯೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾನವ ಹಕ್ಕು ಹಾಗೂ ಕಾನೂನು ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿ ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದು ಡಿಸಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಉಡುಪಿ ಪರ್ಯಾಯ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳು ಮೊದಲಿನಿಂದಲೂ ಭಾಗವಹಿಸಿದ್ದನ್ನು ನಾವು ನೋಡಿದ್ದೇವೆ. ಆದರೆ ಈ ಬಾರಿ ಮಾತ್ರ ಕಾಂಗ್ರೆಸ್ ಕಣ್ಣಿಗೆ ಅದ್ಯಾವ ಲೋಪ ಕಂಡಿತು ? ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದು ಆಚರಣೆಗಳಲ್ಲಿ ತಪ್ಪು ಹುಡುಕುವುದೇ ಕಾಂಗ್ರೆಸ್ಗೆ ಚಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
West Bengal: ವ್ಯಕ್ತಿ ಮೃತಪಟ್ಟ ಘಟನೆಗೆ S I R ನೋಟಿಸ್ ಕಾರಣ: ಕುಟುಂಬ ಆರೋಪ
ಕೋಲ್ಕತಾ, ಜ. 20: ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಲಂಗಿಯಲ್ಲಿ 50 ವರ್ಷದ ವ್ಯಕ್ತಿಯೋರ್ವರು ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂಬಂಧಿತ ನೋಟಿಸ್ನಿಂದ ಉಂಟಾದ ತೀವ್ರ ಮಾನಸಿಕ ಒತ್ತಡವೇ ಸಾವಿಗೆ ಕಾರಣ ಎಂದು ಅವರ ಕುಟುಂಬ ಆರೋಪಿಸಿದೆ. ಮೃತಪಟ್ಟ ವ್ಯಕ್ತಿಯನ್ನು ನವ್ಡಾಪಾರ ಗ್ರಾಮದ ಅಕ್ಷತ್ ಅಲಿ ಮಂಡಲ್ ಎಂದು ಗುರುತಿಸಲಾಗಿದೆ. ಆರಕ್ಕಿಂತ ಹೆಚ್ಚು ಮಕ್ಕಳಿದ್ದಾರೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದ್ದ ನೋಟಿಸ್ ಬಂದ ಬಳಿಕ ಅವರು ತೀವ್ರ ಆತಂಕಕ್ಕೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಡಲ್ ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರ ಐವರು ಪುತ್ರರು ಹೊರರಾಜ್ಯಗಳಲ್ಲಿ ಹಾಗೂ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕುಟುಂಬ ತಿಳಿಸಿದೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನೋಟಿಸ್ ಮಂಡಲ್ಗೆ ತೀವ್ರ ಆತಂಕ ಉಂಟುಮಾಡಿತ್ತು. ತಮ್ಮ ಪುತ್ರರನ್ನು ಮರಳಿ ಕರೆತರುವುದು, ಅಧಿಕಾರಿಗಳ ಮುಂದೆ ಹಾಜರುಪಡಿಸುವುದು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಅವರು ನಿರಂತರವಾಗಿ ಚಿಂತಿಸುತ್ತಿದ್ದರು. ನೋಟಿಸ್ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾದರು. ಅವರನ್ನು ಸಾದಿಕಾರ್ಡಿಯಾರ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಮಂಡಲ್ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ತಮ್ಮ ಪತಿ ಸಾವನ್ನಪ್ಪುವ ಮೂರು ದಿನಗಳ ಮುನ್ನ ಈ ನೋಟಿಸ್ ಬಂದಿತ್ತು. ಆ ಬಳಿಕ ಅವರು ನಿರಂತರ ಭೀತಿಯಲ್ಲಿ ಬದುಕುತ್ತಿದ್ದರು ಎಂದು ಮಂಡಲ್ ಅವರ ಪತ್ನಿ ಸರೀಫಾ ಬೀಬಿ ತಿಳಿಸಿದ್ದಾರೆ. ಮಂಡಲ್ ಅವರ ನಾಲ್ವರು ಪುತ್ರರು ಕೇರಳದಲ್ಲಿ ಹಾಗೂ ಓರ್ವ ಪುತ್ರ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಪುತ್ರರ ಸಂಖ್ಯೆ ಕುರಿತು ನೋಟಿಸ್ನಲ್ಲಿ ನೀಡಿರುವ ತಪ್ಪು ಮಾಹಿತಿ ಮಂಡಲ್ ಅವರ ಸಾವಿಗೆ ಕಾರಣವಾಗಿದೆ ಎಂದು ಸ್ಥಳೀಯ ಪಂಚಾಯತ್ ಪ್ರಧಾನ್ ಮಹಬುಲ್ ಇಸ್ಲಾಮ್ ಹೇಳಿದ್ದಾರೆ. ಈ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನೋಟಿಸ್ ಜನರಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಿದ್ದು, ಇಂತಹ ನೋಟಿಸ್ಗಳನ್ನು ಜಾರಿಗೊಳಿಸುವ ಹಿಂದಿನ ಆಡಳಿತಾತ್ಮಕ ಪ್ರಕ್ರಿಯೆಯ ಕುರಿತು ನಿವಾಸಿಗಳು ಪ್ರಶ್ನೆ ಎತ್ತುವಂತಾಗಿದೆ. ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಯೂಸುಫ್ ಅಲಿ ಈ ಘಟನೆಯನ್ನು ಅಮಾನವೀಯ ಕಿರುಕುಳ ಎಂದು ಹೇಳಿ, ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. Assam: ಜಾನುವಾರು ಕಳವು ಶಂಕಿಸಿ ಗುಂಪಿನಿಂದ ದಾಳಿ; ಓರ್ವ ಮೃತ್ಯು (W/F) ಕೊಕ್ರಝಾರ್, ಜ. 20: ಅಸ್ಸಾಂನ ಕೊಕ್ರಝಾರ್ ಜಿಲ್ಲೆಯಲ್ಲಿ ಜಾನುವಾರು ಕಳವು ಮಾಡಿದ್ದಾರೆ ಎಂಬ ಶಂಕೆಯ ಮೇರೆಗೆ ಗುಂಪೊಂದು ದಾಳಿ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿ, ಇತರ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಂತ್ರಸ್ತರು ರಸ್ತೆ ನಿರ್ಮಾಣ ಯೋಜನೆಗೆ ಸಂಬಂಧಿಸಿದವರು. ಅವರು ಸೋಮವಾರ ರಾತ್ರಿ ಔಡಾಂಗ್ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರ ವಾಹನ ಗೌರಿ ನಗರ–ಮಾಶಿಂಗ್ ರಸ್ತೆಗೆ ತಲುಪುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರ ಗುಂಪೊಂದು ಜಾನುವಾರು ಕಳ್ಳರೆಂದು ಶಂಕಿಸಿ ತಡೆದು ನಿಲ್ಲಿಸಲು ಪ್ರಯತ್ನಿಸಿತು. ಇದರಿಂದ ವಾಹನ ರಸ್ತೆಯಿಂದ ಜಾರಿತು. ಈ ಸಂದರ್ಭ ಗುಂಪು ಅದರಲ್ಲಿದ್ದವರ ಮೇಲೆ ದಾಳಿ ನಡೆಸಿ, ವಾಹನಕ್ಕೆ ಬೆಂಕಿ ಹಚ್ಚಿತು. ಪರಿಣಾಮ ಕೆಲವರಿಗೆ ಗಂಭೀರ ಸುಟ್ಟ ಗಾಯಗಳಾದವು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಗಂಭೀರ ಗಾಯಗೊಂಡಿದ್ದ ಸಿಖ್ನಾ ಜ್ವಾಹೌಲಾವೊ ಬಿಸ್ಮಿತ್ ಆಲಿ ಅಲಿಯಾಸ್ ರಾಜಾ ಮೃತಪಟ್ಟಿದ್ದಾರೆ. ಅವರು ಈ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಯೋಜನೆಯ ಗುತ್ತಿಗೆದಾರ ಮೊರಾಂಡಾ ಬಸುಮತಾರಿ ಅವರ ಅಳಿಯ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಭಾತ್ ಬ್ರಹ್ಮಾ, ಜುಬಿರಾಜ್ ಬ್ರಹ್ಮಾ, ಸುನಿಲ್ ಮುರ್ಮು ಹಾಗೂ ಮಹೇಶ್ ಮುರ್ಮು ಗಂಭೀರ ಗಾಯಗೊಂಡಿದ್ದು, ಅವರನ್ನು ಕೊಕ್ರಝಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಭಾತ್ ಬ್ರಹ್ಮಾ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಸಂಬಂಧ ಕೆಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
AAP ಸರಕಾರದ ಕ್ರಮದಿಂದ ಪಂಜಾಬ್ ಕೇಸರಿಗೆ ಮಧ್ಯಂತರ ಪರಿಹಾರ ನೀಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಜ.20: ಪಂಜಾಬ್ ಕೇಸರಿ ಮಾಧ್ಯಮ ಸಮೂಹವು ಲೂಧಿಯಾನಾದಲ್ಲಿರುವ ತನ್ನ ಮುದ್ರಣಾಲಯದಲ್ಲಿ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಅವಕಾಶ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಪಂಜಾಬ್ ಸರಕಾರಕ್ಕೆ ನಿರ್ದೇಶನ ನೀಡಿದೆ. ಮಾಧ್ಯಮ ಸಮೂಹವು ಸಲ್ಲಿಸಿರುವ ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಇತ್ಯರ್ಥಗೊಳಿಸುವವರೆಗೆ, ಪಂಜಾಬ್ ಕೇಸರಿ ಪತ್ರಿಕೆಯ ಪ್ರಕಟಣೆಯ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ನ್ಯಾಯಾಲಯವು ಸರಕಾರಕ್ಕೆ ತಾಕೀತು ಮಾಡಿತು. ಜಲಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ, ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದ ಮೇರೆಗೆ ಜ.15ರಂದು ಮುದ್ರಣಾಲಯವನ್ನು ಮುಚ್ಚಲಾಗಿತ್ತು. ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಯ (ಆಪ್) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕುರಿತು ತನ್ನ ವರದಿಯೇ ಸರಕಾರದ ಕ್ರಮಕ್ಕೆ ಕಾರಣವಾಗಿದೆ ಎಂದು ಪಂಜಾಬ್ ಕೇಸರಿ ಸಮೂಹ ಆರೋಪಿಸಿದೆ. ಸಮೂಹವು ಪಂಜಾಬ್ ಕೇಸರಿ, ಜಗ್ ಬಾಣಿ ಮತ್ತು ಹಿಂದ್ ಸಮಾಚಾರ್ ಸೇರಿದಂತೆ ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಸಾರವನ್ನು ಹೊಂದಿರುವ ಕೆಲವು ಪತ್ರಿಕೆಗಳನ್ನು ಪ್ರಕಟಿಸುತ್ತಿದೆ. ಮಂಗಳವಾರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಜಗತ್ ವಿಜಯ ಪ್ರಿಂಟರ್ಸ್ ಮತ್ತು ಹಿಂದ್ ಸಮಾಚಾರ್ ಲಿ. ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಉಲ್ಲೇಖಿಸಿದ ಬಳಿಕ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿ.ಎಂ. ಪಂಚೋಲಿ ಅವರ ಪೀಠವು ಮುದ್ರಣಾಲಯದಲ್ಲಿ ಕಾರ್ಯಾಚರಣೆಗಳನ್ನು ಪುನರಾರಂಭಿಸುವಂತೆ ನಿರ್ದೇಶನ ನೀಡಿತು. ಹಿಂದ್ ಸಮಾಚಾರ್ ಲಿ. ಪಂಜಾಬ್ ಕೇಸರಿ ಸಮೂಹದ ಮಾತೃ ಸಂಸ್ಥೆಯಾಗಿದ್ದರೆ, ಜಗತ್ ವಿಜಯ ಪ್ರಿಂಟರ್ಸ್ ಸಮೂಹದ ಮುಖ್ಯ ಮುದ್ರಣ ಘಟಕವಾಗಿದೆ. ರಾಜ್ಯ ಸರಕಾರವನ್ನು ಟೀಕಿಸಿದ ಕೆಲವು ಲೇಖನಗಳನ್ನು ಪ್ರಕಟಿಸಿದ ಬಳಿಕ ಪಂಜಾಬ್ ಕೇಸರಿ ಸಮೂಹದ ಆಡಳಿತಕ್ಕೆ ಕಿರುಕುಳ ಆರಂಭಗೊಂಡಿತ್ತು. ವಿದ್ಯುತ್ ಕಡಿತ, ಮುದ್ರಣಾಲಯದ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್ಗಳು, ಸಮೂಹ ನಡೆಸುತ್ತಿರುವ ಹೋಟೆಲ್ಗಳ ಮುಚ್ಚುಗಡೆ ಮತ್ತು ಎಫ್ಐಆರ್ಗಳ ದಾಖಲು ಇತ್ಯಾದಿಗಳು ಇದರಲ್ಲಿ ಒಳಗೊಂಡಿವೆ ಎಂದು ರೋಹಟ್ಗಿ ನ್ಯಾಯಾಲಯಕ್ಕೆ ತಿಳಿಸಿದರು. ತನ್ನ ಹೋಟೆಲ್ ಮತ್ತು ಮುದ್ರಣಾಲಯವನ್ನು ಮುಚ್ಚಿರುವುದನ್ನು ಪ್ರಶ್ನಿಸಿ ಸಮೂಹವು ಸಲ್ಲಿಸಿರುವ ಇಂತಹುದೇ ಅರ್ಜಿಗಳ ಮೇಲೆ ತೀರ್ಪನ್ನು ಸೋಮವಾರ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಕಾಯ್ದಿರಿಸಿದೆ. ಆದರೆ ಯಾವುದೇ ಮಧ್ಯಂತರ ಪರಿಹಾರವನ್ನು ಒದಗಿಸಿಲ್ಲ ಎಂದು ರೋಹಟಗಿ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಧ್ವಜ ವಿವಾದ: ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದ ಕಾಂಗ್ರೆಸ್
ಉಡುಪಿ, ಜ.20: ಜ.18ರ ಮುಂಜಾನೆ ನಗರದ ಜೋಡುಕಟ್ಟೆ ಬಳಿ ನಡೆದ ಶೀರೂರು ಪರ್ಯಾಯದ ಪುರಮೆರವಣಿಗೆ ಸಂದರ್ಭ ಆರೆಸ್ಸೆಸ್ ಧ್ವಜ ಹಿಡಿದು ಹಾರಿಸುತ್ತಾ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ಸೆಲ್ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ ಬರೆದಿದೆ. ಮುಂಜಾನೆ 3:00ಗಂಟೆ ಸುಮಾರಿಗೆ ಮೆರವಣಿಗೆಯ ವೇಳೆ ಉಪಸ್ಥಿತರಿದ್ದ ಜಿಲ್ಲಾಧಿಕಾರಿಯವರ ಕೈಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಆರೆಸ್ಸೆಸ್ ಧ್ವಜ (ಭಗವಾನ್ಧ್ವಜ) ಹಸ್ತಾಂತರಿಸಿದ್ದು, ಅವರು ಈ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ ಪ್ರದರ್ಶಿಸುತ್ತಾ ಮೆರವಣಿಗೆಗೆ ಚಾಲನೆ ನೀಡಿದ್ದರು ಎಂದು ಕಾಂಗ್ರೆಸ್ ಕಾನೂನು ಸೆಲ್ನ ಅಧ್ಯಕ್ಷ ಹರೀಶ್ ಶೆಟ್ಟಿ ಜ.19ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರದ ಪ್ರತಿಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೂ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಯವರ ಈ ನಡೆ ಸರಕಾರಿ ಸೇವಾ ನಿಯಮಗಳು ಹಾಗೂ ಸಂವಿಧಾನದ ಧರ್ಮ ನಿರಪೇಕ್ಷತೆಯ ತತ್ವಗಳಿಗೆ ವಿರುದ್ಧವಾಗಿದ್ದು, ಈ ರೀತಿಯ ನಡೆ ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಹರೀಶ್ ಶೆಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸ್ಪಷ್ಟನೆ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಧ್ವಜ ಬೀಸುತ್ತಾ ಮೆರವಣಿಗೆಗೆ ಚಾಲನೆ ನೀಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗಳು ಕೇಳಿ ಬಂದಾಗ ಸ್ಪಷ್ಟೀಕರಣ ನೀಡಿದ್ದ ಸ್ವರೂಪ ಟಿ.ಕೆ., ತಾನು ಶೀರೂರು ಪರ್ಯಾಯೋತ್ಸವದ ಅಂಗವಾಗಿ ನಡೆದ ಶೋಭಾಯಾತ್ರೆ ಯಲ್ಲಿ ಉಡುಪಿ ನಗರಸಭೆಯ ಆಡಳಿತಾಧಿಕಾರಿಯಾಗಿ ಭಾಗವಹಿಸಿ ಚಾಲನೆ ನೀಡಿದ್ದೇನೆ. ಅದೇ ರೀತಿ ನೂತನ ಯತಿಗಳಿಗೆ ಪೌರ ಸನ್ಮಾನ ಹಾಗೂ ಸರ್ವಜ್ಞ ಪೀಠ ಏರಿದ ನಂತರ ನಡೆಯುವ ದರ್ಬಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಹೊರತು ಯಾವುದೇ ರಾಜಕೀಯ ಪ್ರೇರಿತ ಉದ್ದೇಶ ಅದರಲ್ಲಿ ಇರಲಿಲ್ಲ ಎಂದು ತಿಳಿಸಿದ್ದರು. ಜಿಲ್ಲಾಧಿಕಾರಿಗೆ ಯಶಪಾಲ್ ಸುವರ್ಣ ಬೆಂಬಲ: ಈ ನಡುವೆ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ನಿಂತಿರುವ ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅತ್ಯಂತ ಯಶಸ್ವಿಯಾಗಿ ಪರ್ಯಾಯ ಮಹೋತ್ಸವವನ್ನು ನಡೆಸಿದ್ದು, ಇದನ್ನು ಸಹಿಸದ ಕೆಲವರು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದಿದ್ದಾರೆ. ಜಿಲ್ಲಾಧಿಕಾರಿಗಳು ಭಗವಾಧ್ವಜದ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ್ದು, ಬಹುಶಃ ಕಾಂಗ್ರೆಸಿಗರು ಅದನ್ನು ಪಾಕಿಸ್ತಾನದ ಧ್ವಜ ಎಂಬ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ. ಪರ್ಯಾಯ ಮಹೋತ್ಸವ ಅಷ್ಟ ಮಠಾಧೀಶರು ಭಾಗವಹಿಸಿದ್ದ ವೇದಿಕೆಯಾಗಿತ್ತು. ಕಳೆದ ಬಾರಿ ಕೂಡ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಭಗವಾಧ್ವಜದ ಮೂಲಕವೇ ಚಾಲನೆ ನೀಡಿದ್ದರು ಎಂದವರು ಟೀಕೆಗೆ ಉತ್ತರಿಸಿದ್ದಾರೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕೂಡಾ ಭಗವಾಧ್ವಜದ ಮೂಲಕ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಕಾಂಗ್ರೆಸ್ಸಿಗರು ಮಾತನಾಡುವ ರೀತಿ ನೋಡಿದರೆ ಎಲ್ಲೋ ಪಾಕಿಸ್ತಾನದ ಧ್ವಜದ ಮೂಲಕ ಚಾಲನೆ ನೀಡಿದ್ದಾರೆ ಎಂಬ ರೀತಿಯಲ್ಲಿ ಟೀಕಿಸುತ್ತಿದ್ದಾರೆ ಎಂದು ಯಶ್ವಾಲ್ ಹೇಳಿದ್ದಾರೆ.
ಮುಡಾ ಹಗರಣ: ಕರ್ನಾಟಕ ಹೈಕೋರ್ಟ್ನಿಂದ ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ಗೆ ಶಾಕ್!
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ಗೆ ಕರ್ನಾಟಕ ಹೈಕೋರ್ಟ್ನಿಂದ ಹಿನ್ನಡೆಯಾಗಿದೆ. ಇ.ಡಿ. ಬಂಧನದಿಂದ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲೇ ಮುಂದುವರೆಯಲಿದ್ದಾರೆ.
ಎಸ್ಟಿ ಮೀಸಲಾತಿ ಲಾಟರಿಯಡಿ ಶಿವಸೇನೆ (ಯುಬಿಟಿ) ಮುಂಬೈ ಮೇಯರ್ ಹುದ್ದೆ ಪಡೆಯಬಹುದು: ಉದ್ಧವ್ ಠಾಕ್ರೆ ಸುಳಿವು
ಮುಂಬೈ, ಜ.20: 227 ಸದಸ್ಯರ ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಹುಮತಕ್ಕೆ ಅಗತ್ಯವಾದ 114 ಸ್ಥಾನಗಳು ತನ್ನ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಬಳಿಯಿಲ್ಲದಿದ್ದರೂ, ದೇವರು ಬಯಸಿದರೆ ಮುಂಬೈನ ಮುಂದಿನ ಮೇಯರ್ ಹುದ್ದೆ ಶಿವಸೇನೆ (ಯುಬಿಟಿ)ಗೆ ದೊರೆಯಲಿದೆ ಎಂದು ಉದ್ಧವ ಠಾಕ್ರೆ ಹೇಳಿದ್ದಾರೆ. ಮೀಸಲಾತಿ ಲಾಟರಿಯೇ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ ಅವರ ಹೇಳಿಕೆಗೆ ಕಾರಣವಾಗಿದೆ. ಮುಂಬೈ ಮೇಯರ್ ಹುದ್ದೆಯು ಪರಿಶಿಷ್ಟ ಪಂಗಡದ (ಎಸ್ಟಿ) ಅಭ್ಯರ್ಥಿಗೆ ಮೀಸಲಾದರೆ ಪರಿಸ್ಥಿತಿ ಬದಲಾಗಲಿದೆ. ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿ 89 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷ ಏಕನಾಥ ಶಿಂದೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದ್ದರೂ, ಮೇಯರ್ ಹುದ್ದೆಯು ಎಸ್ಟಿ ವರ್ಗಕ್ಕೆ ಮೀಸಲಾದರೆ ಅದಕ್ಕೆ ಹಕ್ಕು ಮಂಡಿಸಲು ಈ ಎರಡೂ ಪಕ್ಷಗಳಲ್ಲಿ ಆ ಸಮುದಾಯಕ್ಕೆ ಸೇರಿದ ನೂತನವಾಗಿ ಚುನಾಯಿತ ಕಾರ್ಪೊರೇಟರ್ಗಳಿಲ್ಲ. ಇನ್ನೊಂದೆಡೆ, ಶಿವಸೇನೆ (ಯುಬಿಟಿ)ಯ 65 ಕಾರ್ಪೊರೇಟರ್ಗಳ ಪೈಕಿ ಜಿತೇಂದ್ರ ವಳವಿ (ವಾರ್ಡ್ ನಂ.53) ಮತ್ತು ಪ್ರಿಯದರ್ಶಿನಿ ಠಾಕರೆ (ವಾರ್ಡ್ ನಂ.121) ಅವರು ಎಸ್ಟಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಸನ್ನಿವೇಶದಲ್ಲಿ ಬಹುಮತಕ್ಕೆ ಕೊರತೆಯಿದ್ದರೂ ಶಿವಸೇನೆ (ಯುಬಿಟಿ) ಮೇಯರ್ ಹುದ್ದೆಯನ್ನು ಪಡೆಯಬಹುದು. ಏಕೆಂದರೆ ಎಸ್ಸಿ ಮತ್ತು ಎಸ್ಟಿಗೆ ಮೀಸಲಾದ ಹುದ್ದೆಗಳು ಪಕ್ಷದ ಬಲವನ್ನು ಪರಿಗಣಿಸದೆ, ಆ ವರ್ಗಗಳಿಗೆ ಸೇರಿದ ಚುನಾಯಿತ ಕಾರ್ಪೊರೇಟರ್ಗಳಿಗೆ ಸಿಗಬೇಕು ಎನ್ನುವುದನ್ನು ಮೀಸಲಾತಿ ನಿಯಮಗಳು ಕಡ್ಡಾಯಗೊಳಿಸಿವೆ. ರಾಜ್ಯ ಚುನಾವಣಾ ಆಯೋಗವು 29 ಮಹಾನಗರ ಪಾಲಿಕೆಗಳ ಮೇಯರ್ ಹುದ್ದೆಗಳಿಗೆ ಎಸ್ಸಿ, ಎಸ್ಟಿ, ಒಬಿಸಿ, ಒಬಿಸಿ ಮಹಿಳೆ, ಸಾಮಾನ್ಯ ವರ್ಗದ ಮಹಿಳೆ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾತಿಯನ್ನು ಜ.22ರಂದು ಮಂತ್ರಾಲಯದಲ್ಲಿ ಲಾಟರಿ ಮೂಲಕ ನಿರ್ಧರಿಸಲಿದೆ. ಮೀಸಲಾತಿ ನೀತಿಯಡಿ ಮೇಯರ್ ಹುದ್ದೆಗಳ ಶೇ.7ರಷ್ಟು ಎಸ್ಟಿಗಳಿಗೆ, ಶೇ.11.5ರಷ್ಟು ಎಸ್ಸಿಗಳಿಗೆ ಮತ್ತು ಶೇ.27ರಷ್ಟು ಒಬಿಸಿಗಳಿಗೆ ಸಿಗಲಿವೆ. ಉಳಿದ ಹುದ್ದೆಗಳು ಒಬಿಸಿ/ಸಾಮಾನ್ಯ ವರ್ಗದ ಮಹಿಳೆಯರು ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾಗಲಿವೆ. 29 ಮಹಾನಗರ ಪಾಲಿಕೆಗಳಲ್ಲಿ ಕನಿಷ್ಠ ಎರಡು ಮೇಯರ್ ಹುದ್ದೆಗಳು ಎಸ್ಟಿಗಳಿಗೆ, ಮೂರು ಎಸ್ಸಿಗಳಿಗೆ, ಒಂಬತ್ತು ಒಬಿಸಿಗಳಿಗೆ ಸಿಗಲಿದ್ದು, ಉಳಿದ ಹುದ್ದೆಗಳು ಮಹಿಳೆಯರು (ಒಬಿಸಿ ಮತ್ತು ಸಾಮಾನ್ಯ ವರ್ಗ) ಹಾಗೂ ಸಾಮಾನ್ಯ ವರ್ಗದ ಪ್ರತಿನಿಧಿಗಳಿಗೆ ಹಂಚಿಕೆಯಾಗಲಿವೆ. ಇತ್ತೀಚಿಗೆ ಆಯ್ಕೆಯಾಗಿರುವ 29 ಮಹಾನಗರ ಪಾಲಿಕೆಗಳ ಸದಸ್ಯರನ್ನು ಹೊಸಬರು ಎಂದು ಪರಿಗಣಿಸಿದರೆ, ಆಯಾ ನಗರಗಳ ಮೇಯರ್ ಹುದ್ದೆಗಳಿಗೆ ವರ್ಗ ಮೀಸಲಾತಿಯನ್ನು ನಿರ್ಧರಿಸಲು ಜನಸಂಖ್ಯಾ ಮಾನದಂಡವನ್ನು ಬಳಸಲಾಗುತ್ತದೆ. ಅಂದರೆ ನಗರದ ಜನಸಂಖ್ಯೆಯಲ್ಲಿ ಎಸ್ಟಿಗಳು ಹೆಚ್ಚಿದ್ದರೆ ಅದು ಎಸ್ಟಿ ಮೇಯರ್ ಅನ್ನು ಪಡೆಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಈ ಚುನಾವಣೆಯನ್ನು ಹೊಸದು ಎಂದು ಪರಿಗಣಿಸುವುದಿಲ್ಲ ಮತ್ತು ಹಿಂದಿನ ಚುನಾವಣೆಗಳಿಂದ ಮುಂದುವರಿಯುವ ನಿರಂತರ ಪ್ರಕ್ರಿಯೆಯನ್ನಾಗಿ ಪರಿಗಣಿಸುತ್ತದೆ. ಆಗ ಮೀಸಲಾತಿ ವರ್ಗವನ್ನು ನಿರ್ಧರಿಸುವಾಗ ಆವರ್ತನ ಪದ್ಧತಿಯನ್ನು ಬಳಸಲಾಗುತ್ತದೆ. ಹಿಂದಿನ ಸಲ ಮುಂಬೈ ಎಸ್ಸಿ ಮೇಯರ್ನ್ನು (ಸ್ನೇಹಲ್ ಅಂಬೇಕರ್) ಹೊಂದಿತ್ತು. ಮುಂದಿನ ಸರದಿ ಎಸ್ಟಿ, ಒಬಿಸಿ, ಒಬಿಸಿ ಮಹಿಳೆಯರು, ಮಹಿಳೆಯರು (ಸಾಮಾನ್ಯ) ಮತ್ತು ಸಾಮಾನ್ಯ ವರ್ಗದ್ದಾಗುತ್ತದೆ. ಆದ್ದರಿಂದ ಜ.22ರಂದು ಮಂತ್ರಾಲಯದಲ್ಲಿ ಮೇಯರ್ ಹುದ್ದೆ ಮೀಸಲಾತಿಗಾಗಿ ಲಾಟರಿಯನ್ನು ನಡೆಸುವ ಸಂದರ್ಭದಲ್ಲಿ ಅದರಲ್ಲಿರುವ ಹಲವಾರು ತಾಂತ್ರಿಕ ವಿಷಯಗಳನ್ನು ವಿವರಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
‘ಲೈಂಗಿಕ ಕಿರುಕುಳ’ ಆರೋಪದಿಂದ ನೊಂದು ವ್ಯಕ್ತಿ ಆತ್ಮಹತ್ಯೆ | ವೀಡಿಯೊ ಚಿತ್ರೀಕರಿಸಿದ್ದ ಕೇರಳ ಮಹಿಳೆ ವಿರುದ್ಧ ಪ್ರಕರಣ
ಕೋಝಿಕ್ಕೋಡ್, ಜ.20: 42 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ವೀಡಿಯೊವನ್ನು ಆನ್ಲೈನ್ ನಲ್ಲಿ ಪೋಸ್ಟ್ ಮಾಡಿದ್ದ ಶಿಮ್ಜಿತಾ ಮುಸ್ತಫಾ (35) ಎಂಬ ಮಹಿಳೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಲ್ಲಿ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಯು. ಅವರು ರವಿವಾರ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ತಾಯಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಸೋಮವಾರ ಮಹಿಳೆಯ ವಿರುದ್ಧ ಜಾಮೀನುರಹಿತ ಕಲಮ್ನಡಿ ಪ್ರಕರಣ ದಾಖಲಾಗಿದೆ. ಇಲ್ಲಿನ ಗೋವಿಂದಪುರ ನಿವಾಸಿ ದೀಪಕ್ ರವಿವಾರ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಲೈಂಗಿಕ ಕಿರುಕುಳದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ದೀಪಕ್ ಶುಕ್ರವಾರ ಕಾರ್ಯನಿಮಿತ್ತ ಬಸ್ನಲ್ಲಿ ಕಣ್ಣೂರಿಗೆ ಪ್ರಯಾಣಿಸಿದ್ದರು. ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಶಿಮ್ಜಿತಾ ಅವರು ಲೈಂಗಿಕ ದುರ್ವರ್ತನೆಯ ಆರೋಪ ಮಾಡಿ ವೀಡಿಯೊ ಚಿತ್ರೀಕರಿಸಿದ್ದರು. ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಲೈಂಗಿಕ ಕಿರುಕುಳದ ಆರೋಪವನ್ನು ನಿರಾಕರಿಸಿದ್ದರು. ಶಿಮ್ಜಿತಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧಿಗಾಗಿ ಅವರ ಚಾರಿತ್ರ್ಯಹನನ ಮಾಡಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ವೀಡಿಯೊ ಇಂಟರ್ನೆಟ್ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ದೀಪಕ್ ಭಾರೀ ಆಕ್ರೋಶವನ್ನು ಎದುರಿಸಿದ್ದರು ಎಂದೂ ಅವರು ತಿಳಿಸಿದ್ದಾರೆ. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಕುರಿತು ಪೊಲೀಸ್ ತನಿಖೆಗೆ ಆದೇಶಿಸಿದೆ. ಒಂದು ವಾರದೊಳಗೆ ವರದಿಯನ್ನು ಸಲ್ಲಿಸುವಂತೆ ಅದು ಉತ್ತರ ವಲಯ ಡಿಜಿಪಿಗೆ ನಿರ್ದೇಶನ ನೀಡಿದೆ. ಫೆ.19ರಂದು ಕೋಝಿಕ್ಕೋಡ್ನಲ್ಲಿ ನಡೆಯುವ ಆಯೋಗದ ಸಭೆಯಲ್ಲಿ ಈ ಪ್ರಕರಣವನ್ನು ಪರಿಶೀಲಿಸಲಾಗುವುದು.
Australian Open: ದ್ವಿತೀಯ ಸುತ್ತಿಗೆ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್
ಮೆಲ್ಬರ್ನ್, ಜ.20: ಫ್ರಾನ್ಸ್ ಆಟಗಾರ ಹ್ಯೂಗೊ ಗಾಸ್ಟನ್ ಮೊದಲೆರಡು ಸೆಟ್ಗಳನ್ನು 2–6, 1–6 ಅಂತರದಿಂದ ಸೋತ ನಂತರ ಗಾಯಗೊಂಡು ನಿವೃತ್ತಿಯಾದ ಕಾರಣ, ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮಂಗಳವಾರ ದ್ವಿತೀಯ ಸುತ್ತಿಗೆ ತಲುಪಿದ್ದಾರೆ. ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಕಾರ್ಲೊಸ್ ಅಲ್ಕರಾಝ್ರನ್ನು ಮಣಿಸಿದ ನಂತರ ಸಿನ್ನರ್ ಆಡಿರುವ ಮೊದಲ ಅಧಿಕೃತ ಪಂದ್ಯ ಇದಾಗಿದೆ. ಇಟಲಿಯ ವಿಶ್ವ ನಂ.1 ಆಟಗಾರ ಸಿನ್ನರ್ ಅವರು ಆಸ್ಟ್ರೇಲಿಯನ್ ಓಪನ್ನಲ್ಲಿ ಕಳೆದೆರಡು ವರ್ಷಗಳಿಂದ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಎರಡನೇ ಸೆಟ್ ಸೋತ ನಂತರ ಗಾಸ್ಟನ್ ಅವರು ನೋವಿನಿಂದ ಪಂದ್ಯವನ್ನು ಮುಂದುವರಿಸಲಾಗದೆ ಕಣ್ಣೀರಿಟ್ಟರು. ಆಸ್ಟ್ರೇಲಿಯನ್ ಓಪನ್ನಲ್ಲಿ ಸತತ ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸಿನ್ನರ್, ಮುಂದಿನ ಸುತ್ತಿನಲ್ಲಿ ಜೇಮ್ಸ್ ಡಕ್ವರ್ತ್ ಅಥವಾ ಡಿನೊ ಪ್ರೈಝ್ಮಿಕ್ ಅವರನ್ನು ಎದುರಿಸಲಿದ್ದಾರೆ. *ಅಮೆರಿಕದ ನಂ.1 ಆಟಗಾರ ಶೆಲ್ಟನ್ಗೆ ಜಯ: ಎಂಟನೇ ಶ್ರೇಯಾಂಕದ ಬೆನ್ ಶೆಲ್ಟನ್ ಫ್ರಾನ್ಸ್ ಆಟಗಾರ ಯುಗೊ ಹಂಬರ್ಟ್ರನ್ನು 6–3, 7–6(2), 7–6(5) ಸೆಟ್ಗಳ ಅಂತರದಿಂದ ಮಣಿಸಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮಂಗಳವಾರ ದ್ವಿತೀಯ ಸುತ್ತು ತಲುಪಿದ್ದಾರೆ. ಕಳೆದ ವರ್ಷ ಸೆಮಿಫೈನಲ್ನಲ್ಲಿ ಸಿನ್ನರ್ಗೆ ಸೋತಿದ್ದ ಅಮೆರಿಕದ ನಂ.1 ಆಟಗಾರ ಶೆಲ್ಟನ್ ಅವರು ಮೊದಲ ಸೆಟ್ಟನ್ನು 6–3 ಅಂತರದಿಂದ ಗೆದ್ದುಕೊಂಡರು. ಆದರೆ ಹಂಬರ್ಟ್ ಉಳಿದ ಎರಡು ಸೆಟ್ಗಳಲ್ಲಿ ಮರು ಹೋರಾಟ ನೀಡಿ ಪಂದ್ಯವನ್ನು ಟೈಬ್ರೇಕರ್ಗೆ ಕೊಂಡೊಯ್ದರು. *ಸ್ಥಳೀಯ ಆಟಗಾರ ಡೆನ್ ಸ್ವೀನಿಗೆ ಸೋತ ಗೇಲ್ ಮೊನ್ಫಿಲ್ಸ್: ಫ್ರಾನ್ಸ್ನ ಹಿರಿಯ ಆಟಗಾರ ಗೇಲ್ ಮೊನ್ಫಿಲ್ಸ್ ತಮ್ಮ 20ನೇ ಹಾಗೂ ಕೊನೆಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ನೋವು ಹಾಗೂ ವಿಷಾದದೊಂದಿಗೆ ನಿರ್ಗಮಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ಒಳಗಾದ 39 ವರ್ಷದ ಮೊನ್ಫಿಲ್ಸ್ ಸ್ಥಳೀಯ ಕ್ವಾಲಿಫೈಯರ್ ಡೆನ್ ಸ್ವೀನಿ ವಿರುದ್ಧ 7–6(3), 5–7, 4–6, 5–7 ಅಂತರದಿಂದ ಸೋತಿದ್ದಾರೆ. ‘‘ನನ್ನ ಪ್ರಯಾಣವು 2003ರಲ್ಲಿ ನಿಮ್ಮೊಂದಿಗೆ ಆರಂಭವಾಯಿತು. ಈಗ ನಾವು 2026ರಲ್ಲಿ ಇದ್ದೇವೆ. ಇಂದು ಕೊನೆಯ ಬಾರಿ ಆಡಿದ್ದೇನೆ. ಈ ಅದ್ಭುತ ಪ್ರಯಾಣಕ್ಕೆ ತುಂಬಾ ಧನ್ಯವಾದಗಳು’’ ಎಂದು ತಮ್ಮನ್ನು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಮೊನ್ಫಿಲ್ಸ್ ತಿಳಿಸಿದರು. Australian Open: ಮೊದಲ ಸುತ್ತಿನಲ್ಲಿ ಎಡವಿದ ಪೂಣಚ್ಚ–ಇಸಾರೊ ಜೋಡಿ(w) ಮೆಲ್ಬರ್ನ್, ಜ.20: ಮೊದಲ ಸುತ್ತಿನ ಪುರುಷರ ಡಬಲ್ಸ್ ಪಂದ್ಯದಲ್ಲಿ ಪೆಡ್ರೊ ಮಾರ್ಟಿನೆಝ್ ಹಾಗೂ ಜೌಮ್ ಮುನಾರ್ ವಿರುದ್ಧ ವೀರೋಚಿತ ಸೋಲುಂಡಿರುವ ಭಾರತದ ನಿಕಿ ಪೂಣಚ್ಚ ಹಾಗೂ ಥಾಯ್ಲೆಂಡ್ನ ಪ್ರುಚ್ಯ ಇಸಾರೊ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಮಂಗಳವಾರ ಒಂದು ಗಂಟೆ 51 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಂಡೋ–ಥಾಯ್ಲೆಂಡ್ ಜೋಡಿ ವೈಲ್ಡ್ಕಾರ್ಡ್ ಪಡೆದಿರುವ ಸ್ಪೇನ್ ಜೋಡಿಯ ಎದುರು 6–7(3), 5–7 ಸೆಟ್ಗಳ ಅಂತರದಿಂದ ಸೋತಿದ್ದಾರೆ. ಎರಡೂ ಜೋಡಿಗಳು ತೀವ್ರ ಹೋರಾಟ ನೀಡಿದ್ದವು. ಆದರೆ ಪೂಣಚ್ಚ ಹಾಗೂ ಇಸಾರೊ ಮೂರು ಬ್ರೇಕ್ಚಾನ್ಸ್ಗಳ ಪೈಕಿ ಕೇವಲ ಒಂದನ್ನು ಸದುಪಯೋಗಪಡಿಸಿಕೊಂಡರು. ಪಂದ್ಯದಲ್ಲಿ ಎರಡು ಬಾರಿ ಸರ್ವ್ ಕೈಬಿಟ್ಟರು. ಡಬಲ್ಸ್ ಪಂದ್ಯದಲ್ಲಿ ಭಾರತದ ಸವಾಲು ಇನ್ನೂ ಅಂತ್ಯವಾಗಿಲ್ಲ. ಯೂಕಿ ಭಾಂಬ್ರಿ ಅವರು ಸ್ವೀಡನ್ನ ಆಂಡ್ರೆ ಗೊರಾನ್ಸನ್ ಅವರೊಂದಿಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅಮೆರಿಕದ ಆಟಗಾರರಾದ ಜೇಮ್ಸ್ ಡಕ್ವರ್ತ್ ಹಾಗೂ ಕ್ರೂಝ್ ಹೆವಿಟ್ ಅವರನ್ನು ಎದುರಿಸುವ ಮೂಲಕ ಭಾಂಬ್ರಿ ಜೋಡಿ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ(w/f) ಹೊಸದಿಲ್ಲಿ, ಜ.20: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಹಾಗೂ ಮಾಜಿ ವಿಶ್ವ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸ್ಪರ್ಧಾತ್ಮಕ ಆಟಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಸುಮಾರು ಎರಡು ದಶಕಗಳ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ‘‘ನಾನು ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಆಡುತ್ತಿಲ್ಲ. ನನ್ನ ದೇಹವು ಆಟಕ್ಕೆ ಸ್ಪಂದಿಸುತ್ತಿಲ್ಲ. ನಾನು ನನ್ನದೇ ಉದ್ದೇಶಗಳಿಂದ ಆಟವಾಡಲು ಆರಂಭಿಸಿದೆ ಹಾಗೂ ನನ್ನದೇ ಉದ್ದೇಶಗಳಿಂದ ಬ್ಯಾಡ್ಮಿಂಟನ್ ಅಂಗಳದಿಂದ ಹಿಂದೆ ಸರಿದಿದ್ದೇನೆ’’ ಎಂದು ಸೈನಾ ನೆಹ್ವಾಲ್ ಅವರು ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ. ದೀರ್ಘಕಾಲದಿಂದ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದ ನೆಹ್ವಾಲ್, ಕಳೆದ ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಅಂಗಳದಿಂದ ದೂರ ಉಳಿದಿದ್ದರು. ಕೊನೆಯ ಬಾರಿ 2023ರ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಿದ್ದರು. ಸೈನಾ ಅವರು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದರು. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದು, ಇದು ಅವರ ವೃತ್ತಿಬದುಕಿನ ಮೇಲೆ ಗಾಢ ಪರಿಣಾಮ ಬೀರಿತು. ಗಾಯದಿಂದ ಮರಳಿದ ನಂತರ 2017ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಹಾಗೂ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆಡಲು ಸಾಧ್ಯವಾಗದಿರುವುದರಿಂದ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ. *ಸೈನಾ ಸಾಧನೆಗಳು ಬಿಡಬ್ಲ್ಯುಎಫ್ನ ಎಲ್ಲ ಪ್ರಮುಖ ಟೂರ್ನಿಗಳಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಆಟಗಾರ್ತಿ ಬ್ಯಾಡ್ಮಿಂಟನ್ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ವಿಶ್ವ ಚಾಂಪಿಯನ್ಶಿಪ್ ಫೈನಲ್ಗೆ ತಲುಪಿದ ಭಾರತದ ಮೊದಲ ಆಟಗಾರ್ತಿ ವಿಶ್ವ ಜೂನಿಯರ್ ಚಾಂಪಿಯನ್ ಪಟ್ಟಕ್ಕೇರಿದ ಮೊದಲ ಭಾರತೀಯ ಆಟಗಾರ್ತಿ 2006ರಲ್ಲಿ 4 ಸ್ಟಾರ್ ಪ್ರಶಸ್ತಿ ಗೆದ್ದ ಏಶ್ಯದ ಕಿರಿಯ ಆಟಗಾರ್ತಿ ಬಿಡಬ್ಲ್ಯುಎಫ್ ಸೂಪರ್ ಸಿರೀಸ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮೊದಲ ಭಾರತೀಯ ಆಟಗಾರ್ತಿ 2010 ಹಾಗೂ 2018ರ ಕಾಮನ್ವೆಲ್ತ್ ಗೇಮ್ಸ್ಗಳಲ್ಲಿ ಚಿನ್ನದ ಪದಕ 2018ರ ಏಶ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಸಿಂಗಲ್ಸ್ ಕಂಚಿನ ಪದಕ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್ಶಿಪ್: 2015ರಲ್ಲಿ ಬೆಳ್ಳಿ, 2017ರಲ್ಲಿ ಕಂಚು ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್ಶಿಪ್: 2006ರಲ್ಲಿ ಬೆಳ್ಳಿ, 2008ರಲ್ಲಿ ಚಿನ್ನ *ಪ್ರಮುಖ ಪ್ರಶಸ್ತಿಗಳು 2008: ಬಿಡಬ್ಲ್ಯುಎಫ್ ವರ್ಷದ ಅತ್ಯಂತ ಭರವಸೆಯ ಆಟಗಾರ್ತಿ 2009: ಅರ್ಜುನ ಪ್ರಶಸ್ತಿ, ಮೇಜರ್ ಧ್ಯಾನ್ಚಂದ್ ಖೇಲ್ ರತ್ನ 2010: ಪದ್ಮ ಶ್ರೀ 2016: ಪದ್ಮ ಭೂಷಣ
ಗೋರಖ್ಪುರದಲ್ಲಿ, ಶಿಕ್ಷಕರು ಹೊಡೆಯುತ್ತಾರೆಂದು ಮಗಳು ಹೇಳಿದಾಗ, ತಂದೆಯೊಬ್ಬರು ನೇರವಾಗಿ ಶಾಲೆಗೆ ತೆರಳಿ, ತರಗತಿಯಲ್ಲಿಯೇ ಕುಳಿತು, ಮಗಳಿಗೆ ತಾಯಿ ಇಲ್ಲ, ತಾನೊಬ್ಬನೇ ಬೆಳೆಸಿದ್ದೇನೆ, ದಯವಿಟ್ಟು ಹೊಡೆಯಬೇಡಿ ಎಂದು ಶಿಕ್ಷಕರಿಗೆ ಕಣ್ಣೀರಿಟ್ಟು ಬೇಡಿಕೊಂಡ ಘಟನೆ ನಡೆದಿದೆ. ಈ ಹೃದಯಸ್ಪರ್ಶಿ ಘಟನೆ ತಂದೆಯ ಅಸಹಾಯಕತೆ ಮತ್ತು ಮಗಳ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸಿದೆ.
Picture of the day : ಕುರ್ಚಿಯಲ್ಲಿ ನೂತನ ಬಾಸ್ - ಅವರ ಹಿಂದೆ ಬಿಜೆಪಿಯ ಶಿಸ್ತಿನ ಹಿರಿಯ ಕಾರ್ಯಕರ್ತರು
BJPs New Boss Nitin Boss : ಬಿಹಾರ ಮೂಲದ ನಿತಿನ್ ನಬೀನ್ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಬಿಜೆಪಿಯ ಎಲ್ಲಾ ಹಿರಿಯ ನಾಯಕರು ಈ ವೇಳೆ ಹಾಜರಿದ್ದು, ನೂತನ ಬಾಸ್’ಗೆ ಶುಭವನ್ನು ಕೋರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ನಬೀನ್ ಅವರನ್ನು ಬಾಸ್ ಎಂದು ಸಂಬೋಧಿಸಿದ್ದಾರೆ. ಮೋದಿ, ಶಾ ಆದಿಯಾಗಿ ನಿತಿನ್ ನಬೀನ್ ಹಿಂದೆ ನಿಂತಿರುವ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮೈಲಾರ ಜಾತ್ರೆಗೆ ಭದ್ರಾ ಡ್ಯಾಂನಿಂದ ನೀರು ಬಿಡುಗಡೆ; ಜಾತ್ರೆ ದಿನಾಂಕ ಏನು? ಗೊರವಯ್ಯನ ಕಾರ್ಣಿಕ ನುಡಿ ಯಾವಾಗ?
ಹಾವೇರಿ ಜಿಲ್ಲೆಯ ಮೈಲಾರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ನಡೆಯಲಿದೆ. ಇದಕ್ಕಾಗಿ ಭದ್ರಾ ಜಲಾಶಯದಿಂದ ನದಿಗೆ 0.5 ಟಿಎಂಸಿ ನೀರು ಹರಿಸಲಾಗುತ್ತಿದೆ. ಜಾತ್ರೆ ಜನವರಿ 25 ರಿಂದ ಫೆಬ್ರವರಿ 5 ರವರೆಗೆ ನಡೆಯಲಿದ್ದು, ಫೆಬ್ರವರಿ 4 ರಂದು ಸಂಜೆ ಗೊರವಯ್ಯನಿಂದ ಕಾರ್ಣಿಕ ಜರುಗಲಿದೆ. ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯಲಿದ್ದಾರೆ.
WPL: ಸತತ ಗೆಲುವಿನ ದಾಖಲೆಯೊಂದಿಗೆ ಪ್ಲೇ ಆಫ್ಗೆ ಲಗ್ಗೆ ಇಟ್ಟ RCB
ಬೆಂಗಳೂರು, ಜ.20: ಗುಜರಾತ್ ಟೈಟಾನ್ಸ್ ವಿರುದ್ಧ ವಡೋದರದಲ್ಲಿ ಸೋಮವಾರ ರಾತ್ರಿ 61 ರನ್ ಗಳ ಅಂತರದಿಂದ ಜಯಶಾಲಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 2026ರ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಪ್ಲೇ ಆಫ್ಗೆ ತೇರ್ಗಡೆಯಾದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. ಗೌತಮಿ ನಾಯಕ್ ಅವರ ಚೊಚ್ಚಲ ಡಬ್ಲ್ಯುಪಿಎಲ್ ಅರ್ಧಶತಕದ ನೆರವಿನಿಂದ 6 ವಿಕೆಟ್ ಗಳ ನಷ್ಟಕ್ಕೆ 178 ರನ್ ಗಳಿಸಿದ ಆರ್ಸಿಬಿ ತಂಡ, ಬೌಲರ್ಗಳ ಸಂಘಟಿತ ದಾಳಿಯ ಸಹಾಯದಿಂದ ಈ ವರ್ಷದ ಡಬ್ಲ್ಯುಪಿಎಲ್ನಲ್ಲಿ ಸತತ ಐದನೇ ಗೆಲುವು ದಾಖಲಿಸಿತು. 2025ರ ಆವೃತ್ತಿಯ ಟೂರ್ನಿಯ ಕೊನೆಯ ಪಂದ್ಯ ಸೇರಿದಂತೆ, ಆರ್ಸಿಬಿ ತಂಡ ಮಹಿಳೆಯರ ಟಿ20 ಸ್ಪರ್ಧಾವಳಿಯಲ್ಲಿ ಸತತ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ದೀರ್ಘ ಗೆಲುವಿನ ದಾಖಲೆಯನ್ನು ನಿರ್ಮಿಸಿದೆ. 2024ರ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಸ್ಮೃತಿ ಮಂಧಾನ ಬಳಗವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಫೈನಲ್ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಳ್ಳಲು ತನ್ನ ಕೊನೆಯ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಗಳಿಸುವ ಅಗತ್ಯವಿದೆ.
ಲೋಕಾಯುಕ್ತ ದಾಳಿ | ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್, ಅಧೀಕ್ಷಕ ತಮ್ಮಣ್ಣ ಕೆ.ಎಂ. ಅಮಾನತು
ಬೆಂಗಳೂರು : ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿ ಬಿದ್ದ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಮತ್ತು ಅಬಕಾರಿ ಅಧೀಕ್ಷಕ ತಮ್ಮಣ್ಣ ಕೆ.ಎಂ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತು ಮಾಡಿ ರಾಜ್ಯ ಆರ್ಥಿಕ ಇಲಾಖೆ (ಅಬಕಾರಿ) ಸರಕಾರದ ಅಧೀನ ಕಾರ್ಯದರ್ಶಿ ಭೀಮಪ್ಪ ಪ. ಅಜೂರ್ ಅವರು ಆದೇಶ ಹೊರಡಿಸಿದ್ದಾರೆ. ಜ.17ರಂದು ಬೆಂಗಳೂರು ನಗರದ ಬ್ಯಾಟರಾಯಪುರ ಅಬಕಾರಿ ಭವನದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮೇಲ್ಕಂಡ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದಿದ್ದರು. ಆ ಹಿನ್ನೆಲೆಯಲ್ಲಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ಬಂಧಿಸಲಾಗಿತ್ತು. ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನ್ವಯ ಜೀವನಾಧಾರ ಭತ್ಯೆ ನೀಡತಕ್ಕದ್ದು. ಅಲ್ಲದೆ, ಮೇಲ್ಕಂಡ ಅಧಿಕಾರಿಗಳು ಅಮಾನತ್ತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಿಯವರ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಭೀಮಪ್ಪ ಅಜೂರ್ ಅವರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಜ್ಯದ 5970 ಗ್ರಾಮಗಳಲ್ಲೂ ತರಬೇತಿ: ಡಾ.ತಿಪ್ಪೇಸ್ವಾಮಿ
ಉಡುಪಿ, ಜ.20: ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ರಾಜ್ಯದ 5970 ಗ್ರಾಮಗಳಲ್ಲಿಯೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ 26 ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮ ಪೂರ್ಣಗೊಂಡಿದೆ. ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಜೊತೆ ಸಂವಾದ ನಡೆಸಿ ಅವರ ಸಮಸ್ಯೆ, ಅಹವಾಲು ಗಳನ್ನು ಆಲಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದ್ದಾರೆ. ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಪಾಲನ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಮಕ್ಕಳ ರಕ್ಷಣೆಯ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಮಕ್ಕಳ ಜೊತೆ ವ್ಯವಹರಿಸುವ ಮಕ್ಕಳ ಪಾಲನಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು, ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರು ಕೇವಲ ಕಾನೂನಾತ್ಮಕ ದೃಷ್ಟಿಯಿಂದ ಮಾತ್ರ ನೋಡದೆ ಮಕ್ಕಳ ಜೀವನದ ಆಶಾಕಿರಣವಾಗಿ ಆರೈಕೆ ಮತ್ತು ಪುನರ್ವಸತಿ ಪ್ರಕ್ರಿಯೆಗಳನ್ನು ರೂಪಿಸಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳ ರಕ್ಷಣಾ ಘಟಕದಲ್ಲಿ ಮಕ್ಕಳ ಜೊತೆ ವ್ಯವಹರಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಮನನ ಮಾಡುವ ಜೊತೆ ಕೌಶಲ್ಯವನ್ನು ಮೇಲ್ದರ್ಜೆಗೆ ಏರಿಸಿ ಮಕ್ಕಳ ಜೊತೆ ಸಂವೇದನಾಶೀಲತೆಯಿಂದ ವ್ಯವಹರಿಸಬೇಕು ಎಂದರು. ಈ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳು ಸ್ಪಷ್ಟ ಮಾರ್ಗದರ್ಶನ ನೀಡಲಿವೆ. ಮಕ್ಕಳ ಸಮಸ್ಯೆಗಳನ್ನು ನೋಡುವ ಮತ್ತು ಅವರ ಜೊತೆ ವ್ಯವಹರಿಸುವ ಮನೋಭಾವ ಬದಲಾಗಬೇಕು. ಮಕ್ಕಳಿಗೆ ಸಂಬಂಧಿಸಿದ ಮನೋವೈಜ್ಞಾನಿಕ ಪುಸ್ತಕಗಳನ್ನು ಹೆಚ್ಚು ಓದಿದಾಗ ಮನೋಭಾವದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದ ಅವರು, ಇದಕ್ಕಾಗಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕಿ ಹಲಿಮಾ ಮಾತನಾಡಿ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಾಲನ್ಯಾಯ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಮಕ್ಕಳಿಗೆ ಸಂಬಂಧಿಸಿದ ದೂರುಗಳನ್ನು ಬರೆಯುವಾಗ ಸ್ಪಷ್ಟತೆ ಇರಬೇಕು. ತಮ್ಮಲ್ಲಿಗೆ ಬರುವ ಮಕ್ಕಳು ಇನ್ಯಾರದೊ ಎಂದು ತಾತ್ಸಾರ ಮಾಡದೆ ಆ ಜಾಗದಲ್ಲಿ ತಮ್ಮದೇ ಮಕ್ಕಳಿದ್ದಾಗ ಯಾವ ರೀತಿ ಪ್ರೀತಿ, ಕಾಳಜಿ ತೋರುತ್ತೇವೆಯೋ ಅದೇ ರೀತಿ ಸಂವೇದನೆ ತೋರಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪ್ರಭು ಡಿ.ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅನುರಾಧಾ ಹಾದಿಮನಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜೂಹಿ ದಾಮೋದರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಭಾನುಮತಿ, ಮಕ್ಕಳ ರಕ್ಷಣಾ ಘಟಕದ ನಾಗರತ್ನ ಹಾಗೂ ಇತರರು ಉಪಸ್ಥಿತರಿದ್ದರು.
ಎಸ್ಸಿ-ಎಸ್ಟಿ ಮೀಸಲಾತಿ | ಶೇ.50ರ ಮೀಸಲಾತಿ ಅನ್ವಯ ನೇಮಕಾತಿಗೆ ಆಕ್ಷೇಪವಿಲ್ಲ : ಹೈಕೋರ್ಟ್
ಬೆಂಗಳೂರು : ಚಾಲ್ತಿಯಲ್ಲಿರುವ ಶೇ.50ರ ಮೀಸಲಾತಿಯ ಅನ್ವಯ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಮೀಸಲಾತಿ ಹೆಚ್ಚಿಸಿರುವುದರ (ಶೇ.56) ಅನುಸಾರ ಹೊಸದಾಗಿ ಅಧಿಸೂಚನೆ ಹೊರಡಿಸಕೂಡದು ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಅನುಮತಿಸಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ, ಎಸ್ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಒಟ್ಟು ಮೀಸಲು ಪ್ರಮಾಣವನ್ನು ಶೇ. 50ರಿಂದ 56ಕ್ಕೆ ಹೆಚ್ಚಿಸಿರುವುದನ್ನು ಆಕ್ಷೇಪಿಸಿ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರಾ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಮೀಸಲಾತಿ ಹೆಚ್ಚಿಸಿರುವ ಮಧ್ಯಪ್ರದೇಶ ಸರಕಾರದ ಆದೇಶ ಪ್ರಶ್ನಿಸಿರುವ ಅರ್ಜಿ ಸುಪ್ರೀಂಕೋರ್ಟ್ಗೆ ವರ್ಗಾವಣೆಯಾಗಿದ್ದು, ಅದರ ವಿಚಾರಣೆಯು ಈ ತಿಂಗಳು ನಡೆಯಲಿದೆ. ಇಲ್ಲಿ ಸುಪ್ರೀಂಕೋರ್ಟ್ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ತಿಳಿಸಿದ್ದಾರೆ. ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಅವರು ಸೂಚನೆ ಪಡೆಯಲು ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿಸಲಾಗಿದೆ ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ವಾದ ಮಂಡಿಸಿದ ಅಡ್ವೊಕೇಟ್ ಜನರಲ್, ಮೀಸಲಾತಿ ಹೆಚ್ಚಿಸಿರುವ ಮಧ್ಯಪ್ರದೇಶದ ರಿಟ್ ಅರ್ಜಿಯು ಸುಪ್ರೀಂಕೋರ್ಟ್ಗೆ ವರ್ಗಾವಣೆಯಾಗಿದೆ. ಇದರ ವಿಚಾರಣೆಯನ್ನು ಇದೇ ಜನವರಿಯಲ್ಲಿ ನಡೆಸಲಾಗುವುದು ಎಂದು ಸುಪ್ರೀಂಕೋರ್ಟದ ಹೇಳಿದೆ. ಶೇ.50ರ ಮೀಸಲಾತಿಯಲ್ಲಿ ನೇಮಕಾತಿ ಮುಂದುವರಿಸುತ್ತೇವೆ. ನ್ಯಾಯಾಲಯ ಹಾಲಿ ಅರ್ಜಿಗಳನ್ನು ನಿರ್ಧರಿಸುವವರೆಗೆ ಹೆಚ್ಚುವರಿ ಶೇ. 6 ಮೀಸಲಾತಿ ಅನ್ವಯಿಸುವುದಿಲ್ಲ. ಆಯ್ಕೆ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬೇಕು. ಶೇ.56ರ ಮೀಸಲಾತಿ ಪ್ರಕಾರ ನೇಮಕಾತಿ ನಡೆಸುತ್ತೇವೆ. ಶೇ.50ಕ್ಕೆ ಮಾತ್ರ ನೇಮಕಾತಿ ಆದೇಶ ನೀಡಿ, ಉಳಿದ ಶೇ.6ಕ್ಕೆ ನ್ಯಾಯಾಲಯ ನಿರ್ಧಾರ ಮಾಡಿದ ಬಳಿಕ ಆದೇಶ ನೀಡಲಾಗುವುದು ಎಂದರು. ಆಗ ನ್ಯಾಯಪೀಠ, ಹಿಂದಿನ ಅಧಿಸೂಚನೆಯಡಿ ನೇಮಕಾತಿ ನಡೆಸಬಹುದು. ಶೇ.50 ಮೀಸಲಾತಿ ನೇಮಕಾತಿಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮೀಸಲಾತಿ ಹೆಚ್ಚಿಸಿ, ನೇಮಕಾತಿ ನಡೆಸುವುದಾದರೆ ನೇಮಕಾತಿಯನ್ನೇ ಮಾಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಅದು ಸರ್ಕಾರಕ್ಕೆ ಇರುವ ಆಯ್ಕೆಯಾಗಿದೆ. ಶೇ.50 ಮೀರಿದ ಹೆಚ್ಚುವರಿ ಮೀಸಲಾತಿ ಅನ್ವಯ ನೇಮಕಾತಿಗೆ ಅನುಮತಿಸುವುದಿಲ್ಲ. ಆದರೆ, ಸರ್ಕಾರ ನೇಮಕಾತಿ ನಡೆಸಲೇಬೇಕಿದೆ ಎಂದು ಹೇಳಿತು. ಒಂದು ಹಂತದಲ್ಲಿ ನ್ಯಾಯಪೀಠ, ಶೇ.94 ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತೇವೆ. ಶೇಕಡ 6ರಷ್ಟು ನೇಮಕಾತಿ ಮಾಡುವುದಿಲ್ಲ. ಅಂತಿಮ ತೀರ್ಪಿನ ನಂತರ ಶೇ. 6% ನೇಮಕಾತಿಯನ್ನು ನ್ಯಾಯಾಲಯದ ಆದೇಶದಂತೆ ಕೈಗೊಳ್ಳುವುದಾಗಿ ಅಫಿಡವಿಟ್ ಸಲ್ಲಿಸಿದಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿತು. ಈ ಕುರಿತು ಸರ್ಕಾರದಿಂದ ಸೂಚನೆ ಪಡೆಯಲಾಗುವುದು ಎಂದು ಅಡ್ವೊಕೇಟ್ ಜನರಲ್ ತಿಳಿಸಿದರು. ಅರ್ಜಿದಾರರ ಪರ ವಕೀಲ ರಂಗನಾಥ್ ಜೋಯಿಷ್ ವಾದ ಮಂಡಿಸಿ, ಶೇ.50 ಮೀಸಲಾತಿ ಮೀರಿರುವುದಕ್ಕೆ ಈ ಹಿಂದೆ ಸುಪ್ರೀಂಕೋರ್ಟ್ ಅನುಮತಿಸಿಲ್ಲ. ಶೇ.50 ಮೀರಿ ಮೀಸಲಾತಿ ನೀಡುತ್ತೇವೆ. ಆನಂತರ ಅದನ್ನು ಸರಿಪಡಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಅಕ್ರಮ ನೇಮಕಾತಿ ಮಾಡಿ, ಆನಂತರ ಅದನ್ನು ಸರಿಪಡಿಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರಲ್ಲದೆ, ಕಾಯ್ದೆ ಸೆಕ್ಷನ್ 6ರ ಅಡಿ ನಿಯಮ ರೂಪಿಸಬೇಕು. ಕಾಯ್ದೆ ಅನ್ವಯ ಮೀಸಲಾತಿ ಹೆಚ್ಚಿಸಿದರೂ ಅದನ್ನು ಜಾರಿಗೊಳಿಸಲು ನಿಯಮ ರೂಪಿಸಲೇಬೇಕು. ನಿಯಮ ರೂಪಿಸದೇ ಅಧಿಸೂಚನೆ ಹೇಗೆ ಪ್ರಕಟಿಸಲಾಗುತ್ತದೆ? ಎಂದರು. ಅರ್ಜಿದಾರರ ಪರ ಮತ್ತೊಬ್ಬ ವಕೀಲ ನಚಿಕೇತ್ ಜೋಶಿ ವಾದ ಮಂಡಿಸಿ, ಹಾಲಿ ಅರ್ಜಿ ಇತ್ಯರ್ಥವಾಗುವವರೆಗೆ ಮೀಸಲಾತಿ ಹೆಚ್ಚಿಸಿರುವುದನ್ನು ಆಧರಿಸಿ ನೇಮಕಾತಿ, ಆಯ್ಕೆ ಮಾಡುವ ಸಂಬಂಧ ಯಾವುದೇ ಅಧಿಸೂಚನೆ ಹೊರಡಿಸಕೂಡದು ಎಂದು ಹೈಕೋರ್ಟ್ ಈ ಹಿಂದೆಯೇ ಆದೇಶ ಮಾಡಿತ್ತು. ಇದರ ಮರುಪರಿಶೀಲನೆ, ಮಾರ್ಪಾಡು ಅಥವಾ ಅದನ್ನು ಪ್ರಶ್ನಿಸಲಾಗಿಲ್ಲ. ಈಗ ಮಧ್ಯಂತರ ಅರ್ಜಿಯ ಮೂಲಕ ಇದರ ಮಾರ್ಪಾಡು ಕೋರಲಾಗಿದೆ. ಶೇ.50ರ ಮೀಸಲಾತಿಯ ಪ್ರಕಾರ ನೇಮಕಾತಿ ನಡೆಯಲಿ, ಉಳಿದ ಶೇ.6-7ಕ್ಕೆ ನ್ಯಾಯಾಲಯ ರಿಟ್ ನಿರ್ಧರಿಸಿದ ಬಳಿಕ ನೇಮಕಾತಿ ನಡೆಸಬಹುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಮ್ಯಾಪಿಂಗ್ ಪ್ರಕ್ರಿಯೆ ಪ್ರಾರಂಭ: ಡಿಸಿ ಸ್ವರೂಪ ಟಿ.ಕೆ.
ಉಡುಪಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರನೂ ತಮ್ಮ ಹೆಸರು ಮ್ಯಾಪಿಂಗ್ ಆಗಿದೆಯೋ, ಇಲ್ಲವೋ ಎಂಬುದನ್ನು ತಮ್ಮ ಮತಗಟ್ಟೆಯ ಬಿಎಲ್ಓ ಅವರಿಂದ ಖಚಿತ ಪಡಿಸಿಕೊಳ್ಳ ಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಹೇಳಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯ ಪ್ರತಿಯೊಬ್ಬ ಮತದಾರರು ತಮ್ಮ ತಮ್ಮ ಮತಗಟ್ಟೆಗಳ ಅಧಿಕಾರಿ (ಬಿಎಲ್ಓ) ಗಳನ್ನು ಭೇಟಿ ಮಾಡಿ, 2002ರ ಮತದಾನ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಿಕೊಳ್ಳಬಹುದು ಎಂದ ಅವರು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿರುವವರು ಮತದಾರರ ಪಟ್ಟಿಗೆ ನಿಮ್ಮ ಮ್ಯಾಪಿಂಗ್ ಕಾರ್ಯವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ನೀವು ಈ ಹಿಂದೆ ವಾಸವಿದ್ದಂತಹ ತಮ್ಮ ವಾಸದ ವಿಧಾನಸಭಾ ಕ್ಷೇತ್ರದ ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆಯನ್ನು ತಿಳಿದುಕೊಂಡು ಬಿಎಲ್ಓಗೆ ಮಾಹಿತಿ ನೀಡಬೇಕು ಎಂದವರು ವಿವರಿಸಿದರು. ಜ.25ಕ್ಕೆ ರಾ.ಮತದಾರರ ದಿನ: ಚುನಾವಣಾ ಆಯೋಗದ ನಿರ್ದೇಶನ ದಂತೆ ಯುವ ಜನರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. 16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಇದೇ ಜನವರಿ 25ರಂದು ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಗುವುದು. ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಉತ್ತೇಜಿಸಲು ಹಾಗೂ ಚುನಾವಣೆಯಲ್ಲಿ ಅನುಸರಿಸಲಾಗುವ ಪಾರದರ್ಶಕತೆ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನುಡಿದರು. ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತದಾನ ಕುರಿತು ಅರಿವು ಮೂಡಿಸುವ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿಜೇತರುಗಳಿಗೆ ಕಾರ್ಯಕ್ರಮದ ದಿನದಂದು ಬಹುಮಾನ ವಿತರಿಸಲಾಗುವುದು. ಚುನಾವಣೆ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರತೀ ತಾಲೂಕಿಗೆ ಒಬ್ಬರಂತೆ ಬಿಎಲ್ಓರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.ಹೊಸದಾಗಿ ನೋಂದಣಿ ಯಾದ ಯುವ ಮತದಾರರಿಗೆ ಕಾರ್ಯಕ್ರಮ ದಿನದಂದು ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ವಿತರಿಸಲು ಕ್ರಮ ವಹಿಸಬೇಕು ಎಂದರು. ಜನವರಿ 25 ಸಾರ್ವತ್ರಿಕ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಜನವರಿ 23ರಂದು ಕಡ್ಡಾಯವಾಗಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿ ಸುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿ ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಡಿವೈಎಸ್ಪಿ ಪ್ರಭು ಡಿ.ಟಿ, ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಚುನಾವಣಾ ತರಬೇತುದಾರ ಡಾ.ಅಶೋಕ್ ಕಾಮತ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ರಸ್ತೆಗಳು, ಸೇತುವೆಗಳು ಕೊಲ್ಲುತ್ತಿವೆ; ಉತ್ತರದಾಯಿತ್ವದ ಕೊರತೆಯಿದೆ: ರಾಹುಲ್ ಗಾಂಧಿ
ಟೆಕ್ಕಿಯ ಸಾವಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ
India-EU Trade Pact: ಭಾರತ &ಯುರೋಪ್ ನಡುವೆ ಮಹತ್ವದ ಆರ್ಥಿಕ ಒಪ್ಪಂದ, ಭರ್ಜರಿ ಲಾಭದ ನಿರೀಕ್ಷೆ
ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ಮಹತ್ವದ ವ್ಯಾಪಾರ ಮಾತುಕತೆ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಜಗತ್ತಿನ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದಾಗಿದ್ದು, ಜಗತ್ತಿನ ಶ್ರೀಮಂತ ದೇಶಗಳನ್ನೇ ಹೆಚ್ಚಾಗಿ ಹೊಂದಿರುವ ಯುರೋಪ್ ಒಕ್ಕೂಟದ ಜೊತೆಯಲ್ಲಿ ಇದೀಗ ಮಹತ್ವದ ಮಾತುಕತೆ ನಡೆಯುತ್ತಿದೆ. ದಾವೋಸ್ ಶೃಂಗಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ಆರಂಭ
ಶೇರು ಮಾರುಕಟ್ಟೆಯಲ್ಲಿ 'ರಕ್ತಪಾತ' : 10 ಲಕ್ಷ ಕೋಟಿ ರೂ. ನಷ್ಟ!
ಮುಂಬೈ, ಜ. 20: ಭಾರತೀಯ ಶೇರು ಮಾರುಕಟ್ಟೆ ಮಂಗಳವಾರ ತನ್ನ ಕುಸಿತವನ್ನು ಮುಂದುವರಿಸಿದ್ದು, ಹೂಡಿಕೆದಾರರು ಎರಡು ದಿನಗಳಲ್ಲಿ ಸುಮಾರು 10 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಎಸ್ ಆ್ಯಂಡ್ ಪಿ ಬಾಂಬೆ ಶೇರು ವಿನಿಮಯ (ಬಿಎಸ್ಇ) ಸೂಚ್ಯಂಕವು ಎರಡು ದಿನಗಳಲ್ಲಿ 1,000ಕ್ಕಿಂತಲೂ ಹೆಚ್ಚಿನ ಅಂಕಗಳ ಕುಸಿತ ಕಂಡಿದೆ. ಅದೇ ವೇಳೆ, ರಾಷ್ಟ್ರೀಯ ಶೇರು ವಿನಿಮಯದ ನಿಫ್ಟಿ 50 ಸೂಚ್ಯಂಕವು ಒಂದು ಶೇಕಡಕ್ಕಿಂತಲೂ ಹೆಚ್ಚು ಕುಸಿದಿದೆ. ಜಾಗತಿಕ-ರಾಜಕೀಯ ಉದ್ವಿಗ್ನತೆಗಳು, ವಿದೇಶಿ ಹೂಡಿಕೆಗಳ ನಿರಂತರ ಹೊರಹರಿವು ಹಾಗೂ ಬಜೆಟ್ಪೂರ್ವ ಆತಂಕಗಳು ಭಾರೀ ಪ್ರಮಾಣದಲ್ಲಿ ಶೇರುಗಳ ಮಾರಾಟಕ್ಕೆ ಕಾರಣವಾಗಿವೆ. ಯುರೋಪ್ ನ ಎಂಟು ದೇಶಗಳ ಮೇಲೆ ಸುಂಕ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಶೇರು ಹೂಡಿಕೆದಾರರು ಕಳವಳಗೊಂಡಿದ್ದು, ಶೇರುಗಳನ್ನು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಲು ಆರಂಭಿಸಿದ್ದಾರೆ. ಗ್ರೀನ್ಲ್ಯಾಂಡ್ ನ್ನು ವಶಪಡಿಸಿಕೊಳ್ಳುವ ತನ್ನ ಯೋಜನೆಗೆ ಈ ದೇಶಗಳು ವಿರೋಧ ವ್ಯಕ್ತಪಡಿಸಿರುವುದಕ್ಕಾಗಿ ಟ್ರಂಪ್ ಅವುಗಳ ಮೇಲೆ ಸುಂಕದ ಬೆದರಿಕೆ ಹಾಕಿದ್ದಾರೆ. ಇದು ಅಟ್ಲಾಂಟಿಕ್ ಸಾಗರದ ಆಚೀಚಿನ ದೇಶಗಳ ನಡುವೆ ವ್ಯಾಪಾರ ಯುದ್ಧಕ್ಕೆ ಕಾರಣವಾಗಬಹುದು ಎಂಬ ಭೀತಿ ಎಲ್ಲೆಡೆ ಹರಡಿದೆ. ಫೆಬ್ರವರಿ 1ರಿಂದ ಯುರೋಪ್ ದೇಶಗಳ ವಸ್ತುಗಳ ಮೇಲೆ 10 ಶೇಕಡಾ ಸುಂಕ ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಬಳಿಕ, ಜೂನ್ 1ರಿಂದ ಇದನ್ನು 25 ಶೇಕಡಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ವಸ್ತುಗಳ ಮೇಲೂ ಸುಂಕ ವಿಧಿಸಲು ಯುರೋಪ್ ದೇಶಗಳು ಸಿದ್ಧತೆ ನಡೆಸುತ್ತಿವೆ ಎನ್ನಲಾಗಿದೆ. ‘‘ಅಮೆರಿಕ-ಯುರೋಪ್ ಬಿಕ್ಕಟ್ಟಿಗೆ ಸಂಬಂಧಿಸಿ ಸ್ಪಷ್ಟತೆ ಸಿಗುವವರೆಗೆ ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆಯಿದೆ’’ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ನ ಮುಖ್ಯ ಹೂಡಿಕೆ ತಂತ್ರಗಾರ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ಮಂಗಳೂರು: ಅಲೋಶಿಯಸ್ ಕಾಲೇಜಿನ ಮಾಜಿ ರೆಕ್ಟರ್ ಫಾ. ಲಿಯೋ ಡಿಸೋಜ ನಿಧನ
ಮಂಗಳೂರು, ಜ.20: ಸಂತ ಅಲೋಶಿಯಸ್ ಕಾಲೇಜಿನ ಮಾಜಿ ರೆಕ್ಟರ್ ಮತ್ತು ಪ್ರಾಂಶುಪಾಲ ಫಾ. ಲಿಯೋ ಡಿ ಸೋಜ ಎಸ್ಜೆ (93) ಮಂಗಳವಾರ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಖ್ಯಾತ ಜೆಸ್ಯೂಟ್ ಪಾದ್ರಿ, ವಿಜ್ಞಾನಿಯಾಗಿದ್ದ ಫಾ. ಲಿಯೋ ಡಿ ಸೋಜ ಅವರು ಸಸ್ಯಶಾಸ್ತ್ರ ಸಂಶೋಧಕರಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಪ್ರತಿಷ್ಠಿತ ಅಂತರ್ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಅವರ ಹಲವಾರು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿತ್ತು. ಮಂಗಳೂರಿನಲ್ಲಿ ಜನಿಸಿದ ಅವರು ಸಂತ ಅಲೋಶಿಯಸ್ ಕಾಲೇಜು ಸಂಸ್ಥೆಗಳಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದು, ಅದೇ ಸಂಸ್ಥೆಯೊಂದಿಗೆ ಅವರು ತಮ್ಮ ಜೀವನದುದ್ದಕ್ಕೂ ನಿಕಟ ಸಂಬಂಧ ಹೊಂದಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಸಂಸ್ಥೆಗಳ ರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಜರ್ಮನಿಯ ವಿಶ್ವಪ್ರಸಿದ್ಧ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯಲ್ಲಿ ಪಿಎಚ್ಡಿ ಅಧ್ಯಯನವನ್ನು ನಡೆಸಿದ್ದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ (ಸ್ವಾಯತ್ತ) ಅನ್ವಯಿಕ ಜೀವಶಾಸ್ತ್ರದ ಪ್ರಯೋಗಾಲಯವನ್ನು ಸ್ಥಾಪಿಸಿದ್ದರು. ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕ ನಾಯಕತ್ವಕ್ಕೆ ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, ಕಳೆದ ವರ್ಷದ ಜುಲೈನಲ್ಲಿ ಕೊಲಂಬಿಯಾದ ಬೊಗೋಟಾದಲ್ಲಿ ನಡೆದ ಅಂತರ್ರಾಷ್ಟ್ರೀಯ ಜೆಸ್ಯೂಟ್ ವಿಶ್ವವಿದ್ಯಾಲಯಗಳ ಸಂಘ (ಐಎಜೆಯು)ದ ಸಮ್ಮೇಳನದಲ್ಲಿ ಫಾದರ್ ಲಿಯೋ ಡಿ ಸೋಜ ಅವರಿಗೆ ಪ್ರತಿಷ್ಠಿತ ಕ್ಯಾನಿಸಿಯಸ್ ಪದಕ ನೀಡಿ ಗೌರವಿಸಲಾಗಿತ್ತು. ಅಗಲಿದ ಫಾ. ಲಿಯೋ ಡಿ ಸೋಜ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಫಾತಿಮಾ ರಿಟ್ರೀಟ್ ಹೌಸ್ನಲ್ಲಿರುವ ಡಿವೈನ್ ಮರ್ಸಿ ಚರ್ಚ್ನಲ್ಲಿ ನೆರವೇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನಾಗರಿಕರ ಮೇಲೆ ಅತಿಯಾದ 'ಪೊಲೀಸ್' ಕಣ್ಗಾವಲು, ಹೆಚ್ಚಿದ ಕಳವಳ
ಅಂತರ ಕಾಯ್ದುಕೊಂಡ BJP
ದಾವೋಸ್ ಶೃಂಗಸಭೆ | ರೆನ್ಯೂ ಪವರ್, ಝೈಲಂ, ಆಕ್ಟೋಪಸ್ ಎನರ್ಜಿ ಕಂಪನಿಗಳ ಜತೆ ಮಾತುಕತೆ ನಡೆಸಿದ ಎಂ.ಬಿ.ಪಾಟೀಲ್
ಬೆಂಗಳೂರು : ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯ ಎರಡನೇ ದಿನವಾದ ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ರೆನ್ಯೂ ಪವರ್, ಝೈಲಂ ಇಂಕ್ ಮತ್ತು ಆಕ್ಟೋಪಸ್ ಎನರ್ಜಿ ಕಂಪನಿಗಳ ಜತೆ ಬಂಡವಾಳ ಹೂಡಿಕೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಸೌರ, ಪವನ ಮತ್ತು ಹೈಬ್ರಿಡ್ ವಿದ್ಯುತ್ ಯೋಜನೆಗಳಿಗೆ ಹೆಸರಾಗಿರುವ ರೆನ್ಯೂ ಕಂಪೆನಿಯು ತನ್ನ ಉದ್ದೇಶಿತ ಯೋಜನೆಗಳ ಬಗ್ಗೆ ನಮ್ಮ ಗಮನ ಸೆಳೆದಿದೆ. ನಾವು ಕೂಡ ನಮ್ಮಲ್ಲಿರುವ ವಿದ್ಯುತ್ ಗ್ರಿಡ್ ಮೂಲಸೌಕರ್ಯ, ಮರುಬಳಕೆ ಇಂಧನ ಉತ್ಪಾದನೆಗೆ ಇರುವ ಅವಕಾಶಗಳು, ವಿದ್ಯುತ್ ಶೇಖರಣೆಯ ಅವಕಾಶಗಳನ್ನು ಕುರಿತು ಹೇಳಿದ್ದೇವೆ ಎಂದಿದ್ದಾರೆ. ನ್ಯೂಯಾರ್ಕ್ ಮೂಲದ ಝೈಲಂ ಇಂಕ್ ಕಂಪನಿಯು ಕೈಗಾರಿಕೆಗಳಿಗೆ ಬೇಕಾದ ನೀರು ಪೂರೈಕೆ ಮತ್ತು ತ್ಯಾಜ್ಯ ನೀರು ನಿರ್ವಹಣಾ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಕಂಪನಿಯು ರಾಜ್ಯದ ಯಾವುದಾದರೂ ಒಂದು ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಘಟಕ ಸ್ಥಾಪಿಸಿ, ವಿಸ್ತೃತ ಅಧ್ಯಯನ ಕೈಗೊಳ್ಳಲಯ ಬಯಸಿದೆ. ಇದರ ಮೂಲಕ ಸಮರ್ಥವಾಗಿ ನೀರು ಪೂರೈಕೆ, ತಂತ್ರಜ್ಞಾನದ ಅಳವಡಿಕೆ ಇತ್ಯಾದಿಗಳ ಸ್ವರೂಪ ತಿಳಿಯಲಿದೆ. ಇದರ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಅಗ್ಗದ ದರದಲ್ಲಿ ಕೈಗಾರಿಕೆಳಿಗೆ ನೀರು ಪೂರೈಸುವ ವ್ಯವಸ್ಥೆಯನ್ನು ರೂಪಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಆಕ್ಟೋಪಸ್ ಎನರ್ಜಿ ಕಂಪನಿ ಕೂಡ ವಿದ್ಯುತ್ ಕ್ಷೇತ್ರದಲ್ಲಿ ಸ್ಮಾರ್ಟ್ ಮೀಟರ್, ಡಿಜಿಟಲ್ ಸೌಕರ್ಯ, ವೈಜ್ಞಾನಿಕ ಬೆಲೆ ನಿಗದಿ ಮತ್ತು ಗ್ರಿಡ್ ಸುಧಾರಣೆಗೆ ಹೆಸರುವಾಸಿಯಾಗಿದೆ. ಕಂಪನಿಯ ನಿಯೋಗದೊಂದಿಗೆ ವಿ2ಜಿ (ವೆಹಿಕಲ್ ಟು ಗ್ರಿಡ್) ತಂತ್ರಜ್ಞಾನ ಕುರಿತು ವಿಚಾರ ವಿನಿಮಯ ನಡೆಸಲಾಗಿದೆ. ಇದು ಸಾಧ್ಯವಾದರೆ ಗ್ರಾಹಕರಿಗೆ ಹೆಚ್ಚಿನ ಮಿತವ್ಯಯದ ಲಾಭ ಸಿಗಲಿದೆ. ಈ ಸಂಬಂಧ ಚರ್ಚಿಸಲು ಬೆಸ್ಕಾಂ ಜತೆ ಮಾತುಕತೆಗೆ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಮಾತುಕತೆಗಳಲ್ಲಿ ರೆನ್ಯೂ ಪವರ್ ಮುಖ್ಯಸ್ಥ ಮತ್ತು ಸಿಇಒ ಸುಮಂತ್ ಸಿನ್ಹಾ, ಝೈಲಂ ಇಂಕ್ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಆಲ್ಬರ್ಟ್ ಚೋ, ಆಕ್ಟೋಪಸ್ ಎನರ್ಜಿ ಸಹ ಸಂಸ್ಥಾಪಕ ಸ್ಟುವರ್ಟ್ ಜಾಕ್ಸನ್ ಪಾಲ್ಗೊಂಡಿದ್ದರು.
ಚುನಾಯಿತ ಜನಪ್ರತಿನಿಧಿಗಳು ಕಾನೂನು ರೂಪಿಸುವಲ್ಲಿ ಸಕ್ರಿಯ ಪಾತ್ರ ನಿರ್ವಹಿಸಬೇಕು: ಸ್ಪೀಕರ್ ಯು.ಟಿ.ಖಾದರ್
ಉತ್ತರ ಪ್ರದೇಶದ ವಿಧಾನ ಮಂಡಲದಲ್ಲಿ ಸ್ಪೀಕರ್ಗಳ ಸಮ್ಮೇಳನ
ಪ್ರಾಥಮಿಕ ಶಿಕ್ಷಣ ಮಟ್ಟದಲ್ಲಿ ಎಐ ಪಠ್ಯ ಕ್ರಮ ಅಳವಡಿಕೆ : ಡಾ.ಶಾಲಿನಿ ರಜನೀಶ್
ಬೆಂಗಳೂರು : ಜಾಗತಿಕ ಬೇಡಿಕೆಯನ್ನು ಪೂರೈಸಲು ಭವಿಷ್ಯದಲ್ಲಿ ಸಿದ್ಧವಾಗಿರುವ ಕಾರ್ಯಪಡೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮಟ್ಟದಲ್ಲಿ ಎಐ ಪಠ್ಯ ಕ್ರಮವನ್ನು ಅಳವಡಿಸುವ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ. ಮಂಗಳವಾರ ನಗರದ ಐಐಎಸ್ಸಿಯ ಎವಿ ರಾಮರಾವ್ ಸಭಾಂಗಣದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಉನ್ನತ ಮಟ್ಟದ ಎಐ ಇಂಪ್ಯಾಕ್ಟ್ ಪೂರ್ವ-ಸಮ್ಮಿಟ್ ಕಾರ್ಯಪಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಗಾಗಿ ಮಾರ್ಗಸೂಚಿಯನ್ನು ರೂಪಿಸಲು ಈ ಅಧಿವೇಶನವು ಹಿರಿಯ ಸರಕಾರಿ ಅಧಿಕಾರಿಗಳು, ಉದ್ಯಮ ಮುಖಂಡರು, ಶೈಕ್ಷಣಿಕ ತಜ್ಞರನ್ನು ಒಟ್ಟುಗೂಡಿಸಲು ಒಂದು ವೇದಿಕೆಯಾಗಿದೆ ಎಂದರು. ಬೆಳೆ ಆರೋಗ್ಯ ಮತ್ತು ಮಣ್ಣಿನ ಪೋಷಕಾಂಶಗಳ ಡೇಟಾವನ್ನು ಸಂಯೋಜಿಸುವ ಮೂಲಕ, 6 ಸಾವಿರ ಗ್ರಾಮ ಪಂಚಾಯತ್ಗಳಲ್ಲಿ, 300 ಗ್ರಾಮ ಪಂಚಾಯತ್ಗಳಿಗೆ ಮಾತ್ರ ನಿರ್ದಿಷ್ಟ ಪೌಷ್ಟಿಕಾಂಶದ ಮಧ್ಯಸ್ಥಿಕೆಗಳು ಬೇಕಾಗುತ್ತವೆ ಎಂದು ನಾವು ಕಂಡುಕೊಂಡಿದ್ದು. ಈ ನಿಖರತೆಯು ರಸಗೊಬ್ಬರಗಳ ಸರಿಯಾದ ಹಂಚಿಕೆ, ವ್ಯರ್ಥವನ್ನು ತಡೆಗಟ್ಟುವುದು, ಸಂಪನ್ಮೂಲಗಳನ್ನು ಬಳಕೆಯನ್ನು ಉತ್ತಮಗೊಳಿಸುತ್ತದೆ ಎಂದು ಅವರು ತಿಳಿಸಿದರು. ಸರಕಾರಿ ಯೋಜನೆಗಳು ಮತ್ತು ಯೋಜನೆಯ ಅರ್ಹತಾ ಮಾನದಂಡಗಳ ಸಂಕೀರ್ಣತೆಯನ್ನು ಪರಿಹರಿಸುವ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವುದು, ನಾಗರಿಕರು ನೈಸರ್ಗಿಕ ಭಾಷೆಯಲ್ಲಿ ಸರಕಾರಿ ವೆಬ್ ಸೈಟ್ಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ ಧ್ವನಿ-ಸಕ್ರಿಯಗೊಳಿಸಿದ ಎ.ಐ ಇಂಟರ್ಫೇಸ್ಗಳಿಗಾಗಿ ಒಂದು ದೃಷ್ಟಿಕೋನವನ್ನು ರಚಿಸಲಾಗಿದೆ. ಕಟ್ಟುನಿಟ್ಟಾದ ಗೌಪ್ಯತೆ ಮತ್ತು ರಾಜ್ಯ ನಿಯಮಗಳಿಗೆ ಬದ್ಧವಾಗಿ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲಾಗುತ್ತದೆ ಎಂದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಇ-ಆಡಳಿತ) ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ‘ಬೆಂಗಳೂರು ಲಾಭಾಂಶ’ವನ್ನು ಪರಿಚಯಿಸಿದರು. ನೀರಿನ ಅವಶ್ಯಕತೆಗಳಿಗೆ ಅನುಗುಣವಾಗಿ ಬೆಳೆ ಡೇಟಾವನ್ನು ನಕ್ಷೆ ತಯಾರು ಮಾಡಲು ನಾವು ಎ.ಐ ಅನ್ನು ಬಳಸಿಕೊಳ್ಳುವುದರಿಂದ ನೀರಿನ ಬಳಕೆಯನ್ನು ಅತ್ಯುತ್ತಮವಾಗಿಸಬಹುದು. ಮಣ್ಣಿನ ಸವೆತವನ್ನು ಕಡಿಮೆ ಮಾಡಬಹುದು ಮತ್ತು ಸಬ್ಸಿಡಿ ಹೊರೆಯನ್ನು ಗಮನಾರ್ಹವಾಗಿ ತರ್ಕಬದ್ಧಗೊಳಿಸಬಹುದು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಇಂಧನ ಸಚಿವಾಲಯ ಜಂಟಿ ಕಾರ್ಯದರ್ಶಿ ಶಶಾಂಕ್ ಮಿಶ್ರಾ, ವಿಜ್ಞಾನಿ ಅಭಿಷೇಕ್ ಅಗರ್ವಾಲ್ ಸೇರಿದಂತೆ ಇತರರು ಭಾಗವಹಿಸಿದ್ದರು.
ರಾಜ್ಯಪಾಲರು ಮಸೂದೆಗಳನ್ನು ತಡೆಹಿಡಿಯುವುದು ಸಂವಿಧಾನಕ್ಕೆ ಮಾಡುವ ದ್ರೋಹ : ಸುದರ್ಶನ್ ರೆಡ್ಡಿ
‘ದಕ್ಷಿಣ ಭಾರತದ ಸಮಾಜವಾದಿ ಸಮಾವೇಶ’
ಹುಮನಾಬಾದ್ : ಪಟ್ಟಣದಲ್ಲಿ ನಡೆಯುವ ಐತಿಹಾಸಿಕ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಎಲ್ಲ ಮೂಲ ಸೌಕರ್ಯಗಳು ಒದಗಿಸಬೇಕು ಎಂದು ಶಾಸಕ ಡಾ. ಸಿದ್ದು ಪಾಟೀಲ್ ಅವರು ತಿಳಿಸಿದರು. 2026ನೇ ಸಾಲಿನ ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಡಾ. ಸಿದ್ದು ಪಾಟೀಲ್, ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು, ಈ ಜಾತ್ರೆಗೆ ಅಂಧ್ರಪ್ರದೇಶ , ತೆಲಂಗಾಣ , ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಂದ ಲಕ್ಷಾದೋಪದಿ ಸಂಖ್ಯೆಗಳಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಅವರಿಗೆ ಮೂಲ ಸೌಕರ್ಯ ಒದಗಿಸುವ ಮೂಲಕ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರಿನ ಸಮಸ್ಯೆ ಎದುರಾಗಬಾರದು. ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಆರೋಗ್ಯ ಇಲಾಖೆಯವರು ಪಟ್ಟಣದ ಕೆಲವು ಕಡೆಗೆ ಆರೋಗ್ಯ ತಪಾಸಣೆ ಮತ್ತು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದರು. ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತರಕರ ಘಟನೆ ಹಾಗೂ ಅಕ್ರಮ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅಂಜುಮ್ ತಬ್ಬಸುಮ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೀಪಿಕಾ ನಾಯ್ಕರ್, ಪುರಸಭೆ ಮುಖ್ಯಾಧಿಕಾರಿ ವನಿತಾಬಾಯಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಕುಮಾರ್, ಲೋಕಪಯೋಗಿ ಎಇಇ ವೆಂಕಟೇಶ್ ಹಾಗೂ ಜೇಸ್ಕಾಂ ಅಧಿಕಾರಿ, ಪೊಲೀಸ್, ಸಾರಿಗೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬೀನ್ ಅಧಿಕಾರ ಸ್ವೀಕಾರ : ಬೀದರ್ನಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ
ಬೀದರ್ : ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಿತಿನ್ ನಬೀನ್ ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಬೀದರ್ ನಗರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮದ ವಿಜಯೋತ್ಸವ ಆಚರಿಸಿದರು. ಬಿಜೆಪಿ ಪಕ್ಷದ ಬೀದರ್ ನಗರಾಧ್ಯಕ್ಷ ಶಶಿ ಹೊಸಳ್ಳಿ ಅವರ ನೇತೃತ್ವದಲ್ಲಿ ನಗರದ ಶಿವಾಜಿ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಈ ವೇಳೆ ಶಶಿ ಹೊಸಳ್ಳಿ ಅವರು ಮಾತನಾಡಿ, ನಿತಿನ್ ನಬೀನ್ ಅವರ ನಾಯಕತ್ವವು ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದರ ಜೊತೆಗೆ ಎನ್ಡಿಎ ಮೈತ್ರಿಕೂಟವನ್ನು ಮತ್ತಷ್ಟು ಸದೃಢಗೊಳಿಸಲಿದೆ. ಮುಂಬರುವ ತಮಿಳುನಾಡು, ಕೇರಳ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಯಶಸ್ವಿಯಾಗಿ ಮುನ್ನಡೆಸಲು ಅವರ ಸಂಘಟನಾ ಚಾತುರ್ಯ ಮತ್ತು ರಾಜಕೀಯ ಅನುಭವ ಮಾರ್ಗದರ್ಶಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಬುಡಾ ಅಧ್ಯಕ್ಷ ಬಾಬುವಾಲಿ ಅವರು ಮಾತನಾಡಿ, ನಿತಿನ್ ನಬೀನ್ ಅವರು ಸತತ ಐದು ಬಾರಿ ಶಾಸಕರಾಗಿ ಜನಮನ್ನಣೆ ಪಡೆದು, ಬಿಹಾರ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷ ಸಂಘಟನೆಗೆ ಅವರು ನೀಡಿರುವ ಮಹತ್ವದ ಕೊಡುಗೆ, ಸಂಘಟನಾ ಚಾತುರ್ಯ ಹಾಗೂ ಶುದ್ಧ ಸಾರ್ವಜನಿಕ ಜೀವನದ ಹಿನ್ನೆಲೆಯಿಂದಾಗಿ, ಭಾರತೀಯ ಜನತಾ ಪಕ್ಷದ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರು ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷವು ಸಂಘಟನಾತ್ಮಕವಾಗಿ ಇನ್ನಷ್ಟು ಸಶಕ್ತವಾಗಲಿದೆ ಎಂದರು. ಈ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ನಂದಾಕಿಶೋರ್ ವರ್ಮಾ, ಗುರುನಾಥ್ ಜಾಂತಿಕರ್, ರಾಜರಾಮ್ ಚಿಟ್ಟಾ, ಗಣೇಶ್ ಭೋಸ್ಲೆ, ಸುನಿಲ್ ಗೌಳಿ, ರೋಷನ್ ವರ್ಮಾ, ನಿತಿನ್ ನವಲಕಲೆ, ನರೇಶ್ ಗೌಳಿ, ವೀರೇಶ್ ಸ್ವಾಮಿ, ಭೂಷಣ ಪಾಠಕ, ಪವನ್ ಉಂಡೆ, ಸಂಗಮೇಶ್ ಗುಮ್ಮಾ, ನೀತಿನ್ ಕರ್ಪುರ್, ಆನಂದ್ ಘಂಟಿ, ಸಂಜು ಘನಾತೆ, ಕಾಶಿನಾಥ್, ಗೋಪಾಲ್ ಕುಕುಡಾಳ್, ಸುದರ್ಶನ್, ಆಕಾಶ್ ಮಮದಾಪುರ್, ಬಾಲಾಜಿ ಪಾಟೀಲ್, ಸಂಜು ಜೀರಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೀದರ್| ಕಸಾಪ ವತಿಯಿಂದ ಡಾ. ಭೀಮಣ್ಣ ಖಂಡ್ರೆ ಅವರ ನುಡಿ ನಮನ ಕಾರ್ಯಕ್ರಮ
ಭಾಲ್ಕಿ: ಬೀದರ್ ಜಿಲ್ಲೆಯು ಕರ್ನಾಟಕದಲ್ಲಿ ಉಳಿಯುವುವಲ್ಲಿ ಡಾ. ಭೀಮಣ್ಣ ಖಂಡ್ರೆಯವರ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಾಹಿತಿ ಡಾ. ಸೋಮನಾಥ್ ನುಚ್ಚಾ ಅವರು ಅಭಿಪ್ರಾಯಪಟ್ಟರು. ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ ನಡೆದ ಡಾ. ಭೀಮಣ್ಣ ಖಂಡ್ರೆಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸೋಮನಾಥ್ ನುಚ್ಚಾ, ಭಾಲ್ಕಿ ಹಿರೇಮಠದ ಹಿರಿಯ ಸ್ವಾಮೀಜಿ ಲಿಂ.ಡಾ. ಚನ್ನಸಬವ ಪಟ್ಟದೇವರು ಹಾಗೂ ಡಾ. ಭೀಮಣ್ಣ ಖಂಡ್ರೆ ಅವರು ಒಂದೇ ನಾಣ್ಯದ ಎರಡು ಮುಖಗಳಾಗಿದ್ದರು ಎಂದರು. ಚನ್ನಬಸವ ಪಟ್ಟದೇವರು ಇಚ್ಛಾಶಕ್ತಿಯಾದರೆ, ಭೀಮಣ್ಣ ಖಂಡ್ರೆಯವರು ಕ್ರಿಯಾಶಕ್ತಿಯಾಗಿದ್ದರು. ಭೀಮಣ್ಣ ಖಂಡ್ರೆಯವರ ಸಾಧನೆ ಮರೆಯಲಾಗದು. ಅವರು ಹೋರಾಟ ಮಾಡದಿದ್ದರೆ, ಈ ಭಾಗ ಕರ್ನಾಟಕದಲ್ಲಿ ಇರುತ್ತಿರಲಿಲ್ಲ. ಕರ್ನಾಟಕದ ಕಿರೀಟ ಮುಂಡಿ ಕಳಚಿಕೊಳ್ಳುತ್ತಿತ್ತು. ಕರ್ನಾಟಕ ಏಕೀಕರಣ್ಣಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಅವರಾಗಿದ್ದರು ಎಂದು ಹೇಳಿದರು. ಕಸಾಪ ತಾಲೂಕಾಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ಭೀಮಣ್ಣ ಖಂಡ್ರೆ ಅವರದ್ದು ನಿಶ್ವಾರ್ಥ ಸೇವೆಯಾಗಿತ್ತು. ಅನ್ಯಾಯದ ವಿರುದ್ಧ ಹೋರಾಡಿ ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ವ್ಯಕ್ತಿತ್ವ ಅವರದ್ದಾಗಿತ್ತು. ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಚರಂಡಿ, ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಕೊಡುವಲ್ಲಿ ಅವರ ಕಾರ್ಯ ಮಹತ್ವದ್ದಾಗಿದೆ ಎಂದರು. ಹಿರಿಯ ಪತ್ರಕರ್ತ ವಿಜಯ್ ಕುಮಾರ್ ಪರ್ಮಾ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ್ ಬಿ.ಜಿ ಪಾಟೀಲ್ ಅವರು ಭೀಮಣ್ಣ ಖಂಡ್ರೆಯವರ ಒಡನಾಟದ ಬಗ್ಗೆ ಮಾತನಾಡಿದರು. ಸದ್ಗುರು ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಕ್ಷಯಕುಮಾರ್ ಮುದ್ದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಮುಖರಾದ ವೀರಶೈವ ಮಹಾಸಭಾದ ಅಧ್ಯಕ್ಷ ಮಲ್ಲಿಕಾರ್ಜುನ್ ಹಲಮಂಡಗೆ, ಕಸಾಪ ಉಪಾಧ್ಯಕ್ಷ ಕಾಶಿನಾಥ್ ಲದ್ದೆ, ಅಶೋಕ್ ಬಾವುಗೆ, ಕಸಾಪ ರಾಜ್ಯ ಪರಿಷತ್ ಸದಸ್ಯೆ ಮಲ್ಲಮ್ಮ ಆರ್ ಪಾಟೀಲ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ್ ಕಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕಿ ಉಶಾ ನಿಟ್ಟೂರಕರ್ ಸ್ವಾಗತಿಸಿದರು. ಶಿಕ್ಷಕಿ ಸುಸ್ಮಿತಾ ಸಹಾನೆ ನಿರೂಪಿಸಿದರು.
ಕುದ್ರೋಳಿ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಮಸೂದ್ಗೆ ಸನ್ಮಾನ
ಮಂಗಳೂರು, ಜ.20: ಕುದ್ರೋಳಿಯ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿ ಸತತ ಐದನೇ ಬಾರಿಗೆ ಅವಿರೋಧ ವಾಗಿ ಆಯ್ಕೆಯಾದ ಮಾಜಿ ವಿಧಾನ ಪರಿಷತ್ ಸದಸ್ಯ, ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರನ್ನು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು. ಈ ಸಂದರ್ಭ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಸಿ. ಮಹಮೂದ್, ಹಾಜಿ ಕೆ.ಪಿ. ಅಹ್ಮದ್ ಪುತ್ತೂರು, ಹಾಜಿ ಕೆ.ಎಸ್. ಇಮ್ತಿಯಾಝ್ ಅಹ್ಮದ್ ಕಾರ್ಕಳ, ಮಾಜಿ ಮೇಯರ್ ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಮೂಸಾ ಮೊಯಿದಿನ್, ಕಾರ್ಯದರ್ಶಿಗಳಾದ ಅಬ್ದುಲ್ ಖಾದರ್ ವಿಟ್ಲ, ಡಿ.ಎಂ. ಅಸ್ಲಂ, ಡಾ. ಮುಹಮ್ಮದ್ ಆರಿಫ್ ಮಸೂದ್, ಸಿ.ಎಂ. ಹನೀಫ್, ಅಹ್ಮದ್ ಬಾವ ಬಜಾಲ್, ಎನ್.ಕೆ., ಅಬೂಬಕ್ಕರ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಹಾಜಿ ಪಿ.ಪಿ. ಅಬ್ದುಲ್ ಮಜೀದ್, ಎಂ. ಅನ್ವರ್ ರಿಕೋ, ಎಂ.ಎ. ಅಶ್ರಫ್, ಹಾಜಿ ಮೊಯಿದಿನ್ ಮೋನು, ಅಬೀದ್ ಜಲಿಹಾಲ್, ಹಾಜಿ ಅಬ್ದುಲ್ ಮಜೀದ್ ಸಿತಾರ್, ಹಾಜಿ ಬಿ.ಎಸ್. ಹುಸೈನ್ ಜೋಕಟ್ಟೆ, ಹಾಜಿ ಮಕ್ಬೂಲ್ ಅಹ್ಮದ್, ಹಾಜಿ ಎಸ್.ಎ. ಖಲೀಲ್ ಅಹ್ಮದ್, ಇಕ್ಬಾಲ್ ಅಹ್ಮದ್ ಮುಲ್ಕಿ, ಹಾಜಿ ರಫೀಕ್ ಕೊಡಾಜೆ, ಅಬ್ದುಲ್ ಲತೀಫ್ ಕಂದಕ್, ಹಾಜಿ ಶಂಸುದ್ದೀನ್ ಎಚ್.ಬಿ.ಟಿ, ಶಂಶುದ್ದೀನ್ ಬಂದರ್, ನಾಸೀರ್ ಯಾದ್ಗಾರ್ ಉಪಸ್ಥಿತರಿದ್ದರು.
Mumbai Mayor Election : ಏಕನಾಥ್ ಶಿಂಧೆ ಕೈಕೊಟ್ಟರೆ, ಫಡ್ನವೀಸ್ ಚಾಣಾಕ್ಷ ’ಪ್ಲ್ಯಾನ್ B’ ತಂತ್ರಗಾರಿಕೆ ರೆಡಿ?
Crucial Mumbai Mayor Election : ದೇಶದ ಅತ್ಯಂತ ಶ್ರೀಮಂತ ಪಾಲಿಕೆಗಳ ಪೈಕಿ ಮೊದಲ ಸ್ಥಾನದಲ್ಲಿರುವ ಮುಂಬೈ ಮಹಾನಗರದ ಚುನಾವಣೆ ಮುಗಿದಿದೆ. ಆದರೆ, ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಬಿಜೆಪಿ - ಶಿವಸೇನೆಗೆ ಸರಳ ಬಹುಮತ ಸಿಕ್ಕಿದ್ದರೂ, ಏಕನಾಥ್ ಶಿಂಧೆ ಬಣ, ಮೇಯರ್ ಹುದ್ದೆ ನಮಗೇ ಬೇಕೆಂದು ಹಠ ಹಿಡಿದಿದೆ. ಹಾಗಾಗಿ, ಅಷ್ಟು ಸುಲಭವಾಗಿ ಈ ಸಮಸ್ಯೆ ಬಗೆಹರಿಯುತ್ತಿಲ್ಲ.
ಬೀದರ್| 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಶಾಚರಣೆ ಕಾರ್ಯಕ್ರಮ
ಭಾಲ್ಕಿ : ರಸ್ತೆಯ ಮೇಲೆ ಓಡಾಡುವಾಗಿ ಸುರಿಕ್ಷಿತವಾಗಿ ಸಂಚಾರ ಮಾಡಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ್ ಜಾಫರ್ ಸಾದಿಕ್ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಶಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಮ್ಮದ್ ಜಾಫರ್ ಸಾದಿಕ್, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾ, ವಾಹನ ಚಲಾಯಿಸುವಾಗ ಮೊಬೈಲ್ ಬಳಸದೇ, ಹೆಲ್ಮಟ್ ಮತ್ತು ಸೀಟ್ ಬೆಲ್ಟ್ಗಳನ್ನು ಧರಿಸಿ ಸುರಕ್ಷಿತವಾಗಿ ಸಂಚಾರ ಮಾಡಬೇಕು. ನೀವು ವಾಹನದಲ್ಲಿ ಮನೆಯಿಂದ ಹೊರಬಂದಾಗ ನಿಮ್ಮ ಮನೆಯವರೆಲ್ಲರೂ ನಿಮ್ಮ ಜೊತೆ ಇದ್ದಾರೆ ಎಂದು ತಿಳಿದುಕೊಂಡು ಸುರಕ್ಷಿತವಾಗಿ ಪ್ರಯಾಣ ಮಾಡಬೇಕು ಎಂದು ತಿಳಿಸಿದರು. ಪ್ರಾದೇಶಿಕ ಸಾರಿಗೆ ಕಚೇರಿಯ ವ್ಯವಸ್ಥಾಪಕ ಪ್ರಫುಲ್ ಕುಮಾರ್ ಮಾತನಾಡಿ, ವಾಹನದ ಜೊತೆ ಪ್ರಯಾಣ ಮಾಡುವಾಗ ವಾಹನದ ದಾಖಲಾತಿಗಳು ತಮ್ಮ ಜೊತೆಯಲ್ಲಿ ಸಮರ್ಪಕವಾಗಿ ಇಟ್ಟುಕೊಂಡಿರಬೇಕು ಎಂದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿ ಮಹಾದೇವ್, ಪ್ರಮುಖರಾದ ಮುರಳಿ, ದತ್ತಗಿರಿ, ಉಷಾಲ್, ಶಿವು ಹಾಗೂ ದಿಲೀಪ್ ಸೇರಿಕಾರ್ ಉಪಸ್ಥಿತರಿದ್ದರು.
IND Vs NZ 1st T20 - ಬರೋಬ್ಬರಿ 785 ದಿನಗಳ ಬಳಿಕ ಇಶಾನ್ ಕಿಶನ್ ಕಣಕ್ಕಿಳಿವುದು ಖಚಿತ; ಹೀಗಿದೆ ಸಂಭಾವ್ಯ ಭಾರತ!
Ishan Kishan Comeback Match- ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಇದೀಗ 785 ದಿನಗಳ ನಂತರ ಭಾರತ ತಂಡದ ಕಣಕ್ಕಿಳಿವುದು ಪಕ್ಕಾ ಆಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರು ಆಡಲಿದ್ದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾಗಿ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದಾರೆ. ಗಾಯಾಳು ತಿಲಕ್ ವರ್ಮಾ ಅವರು ಅಲಭ್ಯರಾಗಿರುವುದರಿಂದ ಇಶಾನ ಕಿಶನ್ ಅವರಿಗೆ ಈ ಅವಕಾಶ ಸಿಕ್ಕಿದೆ. ಜೊತೆಗೆ ಅವರು ಭಾರತ ತಂಡದ ಟಿ20 ವಿಶ್ವಕಪ್ ಯೋಜನೆಯ ಭಾಗವಾಗಿದ್ದಾರೆ ಎಂದೂ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಉಡುಪಿ ಡಿಸಿಯನ್ನು ಕೂಡಲೇ ಅಮಾನತು ಮಾಡಲು ದಸಂಸ ಆಗ್ರಹ
ಉಡುಪಿ, ಜ.20: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಕಾರ್ಯ ಕ್ರಮದ ಮೆರವಣಿಗೆಯಲ್ಲಿ ಸಂವಿಧಾನದ ಅಡಿಯಲ್ಲಿ ಸೇವೆ ಮಾಡುವ, ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕಾಗಿರುವ ಉಡುಪಿಯ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆರ್ಎಸ್ಎಸ್ ಧ್ವಜವನ್ನು ಸಾರ್ವಜನಿಕವಾಗಿ ಎತ್ತಿ ಹಿಡಿದು ಪ್ರದರ್ಶಿಸಿ ಹಿಂದುತ್ವ ವಾದವನ್ನು ಪ್ರದರ್ಶಿಸಿದ್ದಾರೆ. ಇದು ಅಕ್ಷಮ್ಯ ಎಂದು ದಸಂಸ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ ಟೀಕಿಸಿದ್ದಾರೆ. ಪರ್ಯಾಯ ಎಂಬುದು ಒಂದು ಪುರೋಹಿತಶಾಹಿ ಖಾಸಗಿ ಮಠದ ಪೂಜೆಯ ವರ್ಗಾವಣೆಯ ಸಮಾರಂಭವಾಗಿದೆ. ಈ ಖಾಸಗಿ ಕಾರ್ಯ ಕ್ರಮಕ್ಕೂ ಸರಕಾರದಿಂದ ಕೋಟ್ಯಾಂತರ ರೂ. ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅಷ್ಟಕ್ಕೂ ಇದು ಸರಕಾರಿ ಕಾರ್ಯಕ್ರಮ ಅಲ್ಲ ಎಂದು ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ ಸಣ್ಣ ಪುಟ್ಟ ಬೇರೆ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣಕ್ಕೆ ಸರಕಾರಿ ನೌಕರರನ್ನು ಅಮಾನತು ಮಾಡುತ್ತದೆ. ಸರಕಾರಿ ನೌಕರರು ಮುಖ್ಯಮಂತ್ರಿಯವರಿಗೆ ಮನವಿ ಕೊಟ್ಟ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದೆ ಎಂಬ ಕಾರಣಕ್ಕೆ ಅಮಾನತು ಮಾಡಿದೆ. ದೇಶಾದ್ಯಂತ ಹಿಂದುತ್ವವಾದಿ ಗಲಭೆಗಳು, ಕೊಲೆಗಳನ್ನು ನಡೆಯುತ್ತಿರುವ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಹಿಂದುತ್ವವಾದಿ ಕೋಮಿನ ಧ್ವಜವನ್ನು ಪ್ರದರ್ಶಿಸುವುದು ಖಂಡನೀಯ ಎಂದು ಅವರು ಆರೋಪಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಯವರು ಒಂದು ಹಾರಿಕೆಯ ಸ್ಪಷ್ಟನೆ ನೀಡಿದ್ದು ಅದು ಸಮಂಜಸವಲ್ಲ. ಹಿಂದೆ ಯಾವುದೇ ಜಿಲ್ಲಾಧಿಕಾರಿಯವರೂ ಕೇವಲ ಒಂದು ಕೋಮಿನ ಬಗ್ಗೆ ಪರವಾಗಿದ್ದ ಉದಾಹರಣೆಗಳಿಲ್ಲ. ಅಷ್ಟಕ್ಕೂ ಜಿಲ್ಲಾಡಳಿತಕ್ಕೆ ಒಂದು ಜಿಲ್ಲೆಯ ಪ್ರಮುಖ ಖಾಸಗಿ ಕಾರ್ಯಕ್ರಮವನ್ನು ಯಾವುದೇ ಗೊಂದಲ, ಗಲಭೆಗಳಾಗದದಂತೆ ನಡೆಸುವ ಜವಾಬ್ದಾರಿ ಇರತ್ತದೆಯೇ ಹೊರತು ಸ್ವತಃ ಜಿಲ್ಲಾಧಿಕಾರಿಯವರೇ ಆರ್ಎಸ್ಎಸ್ ಅಥವಾ ಭಗವಾಧ್ವಜವನ್ನು ಬೀಸಿ ಪುರೋಹಿತಶಾಹಿಗಳ ಕಾರ್ಯಕ್ರಮಕ್ಕೆ ಚಾಲನೆ ಕೊಡುವುದು ಈ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಅವರು ದೂರಿದ್ದಾರೆ. ಜಿಲ್ಲಾಧಿಕಾರಿ ಸರ್ವಜನಾಂಗದ ಸೌಹಾರ್ದತೆಯ ಪ್ರತೀಕವಾಗಬೇಕೇ ಹೊರತು, ಹಿಂದುತ್ವವಾದಿಗಳಿಗೆ ಬೆಂಬಲಿ ಸುವುದು ಸರಕಾರಿ ಸೇವಾ ನಿಯಮಕ್ಕೆ ವಿರುದ್ಧವಾದುದು. ಈ ಬೆಳವಣಿಗೆಯು ಶಾಂತಿ, ಸೌಹಾದರ್ತೆ ಬೀಡಾದ ಉಡುಪಿಗೆ ದಕ್ಕೆ ತರುವಂತಾದ್ದಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿ ಸ್ವರೂಪ ಅವರನ್ನು ಅಮಾನತು ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಔರಾದ್ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಔರಾದ್: ಸಾಹಿತ್ಯ-ಸಂಸ್ಕೃತಿಯ ಸಂಭ್ರಮಕ್ಕೆ ವೇದಿಕೆಯಾಗಲಿರುವ ಔರಾದ್ ತಾಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸೋಮವಾರ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಶಶೀಲ್ ಜಿ.ನಮೋಶಿ, ಫೆ.4ರಂದು ಗಡಿ ತಾಲೂಕಿನಲ್ಲಿ ನಡೆಯಲಿರುವ ಸಮ್ಮೇಳನವು ಮಾದರಿಯಾಗುವ ರೀತಿಯಲ್ಲಿ ರೂಪಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು. ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕನ್ನಡ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ನಾಡಿನ ಭಾಷೆ, ಜನಪದ ಪರಂಪರೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನಗಳು ಜೀವಾಳವಾಗಿವೆ. ಈ ಹಿನ್ನಲೆಯಲ್ಲಿ ಔರಾದ್ ಸಾಹಿತ್ಯ ಸಮ್ಮೇಳನವು ಹೊಸ ಚಿಂತನೆ, ವಿನೂತನ ಕಾರ್ಯಕ್ರಮಗಳು ಮತ್ತು ಸಾಹಿತ್ಯಾಸಕ್ತರ ವಿಶಾಲ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಎಂದರು. ಕಸಾಪ ತಾಲೂಕಾಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, ಔರಾದ್ ತಾಲೂಕಿನ ಏಳನೇ ಸಾಹಿತ್ಯ ಸಮ್ಮೇಳನವನ್ನು ಮಾದರಿಯಾಗುವ ರೀತಿಯಲ್ಲಿ ಯಶಸ್ವಿಗೊಳಿಸೋಣ. ಈಗಾಗಲೇ ಶೇ.70ರಷ್ಟು ಸಮ್ಮೇಳನದ ಸಿದ್ಧತೆ ಮಾಡಲಾಗಿದೆ. ಆಹ್ವಾನ ಪತ್ರಿಕೆ ಸಿದ್ದಗೊಳ್ಳುತ್ತಿದೆ. ಸಮ್ಮೇಳನದ ವಿವಿಧ ಸಮಿತಿಗಳು ರಚನೆಯಾಗಿದ್ದು, ಆಯಾ ಸಮಿತಿಗಳನ್ನು ಹಂಚಿಕೆ ಮಾಡಲಾಗಿದೆ. ಸಮ್ಮೇಳನ ನಡೆಯುವ ಸ್ಥಳ ಗೊತ್ತು ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಪೂರ್ವಭಾವಿ ಎರಡು ಸಭೆ ಮಾಡಲಾಗಿದ್ದು, ಶಾಸಕ ಪ್ರಭು ಚವ್ಹಾಣ ಅವರನ್ನು ಸರ್ವಾನುಮತದಿಂದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಿಡಿಪಿಐ ಎಸ್.ಜಿ ಸುರೇಶ್, ಬಿಇಒ ಬಿ.ಜೆ ರಂಗೇಶ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಶಿವಾನಂದ್ ಮೊಕ್ತೆದಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ನಿರ್ಮಳೆ, ಎಸ್ಸಿ ಎಸ್ಟಿ ನೌಕರರ ಸಂಘದ ತಾಲೂಕಾಧ್ಯಕ್ಷ ರಾಜಕುಮಾರ್ ಡೋಂಗರೆ, ಗುರುನಾಥ್ ದೇಶಮುಖ್, ಸಂಜೀವ ಕುಮಾರ್ ಶೇಟಕಾರ್, ಬಸವರಾಜ್ ಶೆಟಕಾರ್, ಮಹಾದೇವ್ ಚಿಟಗೀರೆ, ಅಶೋಕ್ ಶೆಂಬೆಳ್ಳಿ, ಅಂಬಾದಾಸ್ ನಳನೆ, ಸಂಜುಕುಮಾರ್ ಬಿರಾದಾರ್, ಮಹಾದೇವ್ ಶಿಂಧೆ, ಫೈಯಾಝ್, ಲೋಕೇಶ್, ರಾಜಕುಮಾರ್ ಹಲ್ಮಡಗೆ ಹಾಗೂ ರವಿ ಡೋಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತೊಗರಿ ಮೌಲ್ಯವರ್ಧನೆ ಮೂಲಕ ರೈತರಿಗೆ ಹೆಚ್ಚಿನ ಬೆಲೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ಉತ್ಕೃಷ್ಠ ತೊಗರಿಯನ್ನು ಬಳಸಿಕೊಂಡು ಮೌಲ್ಯವರ್ಧನೆಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮಾರುಕಟ್ಟೆ ಸೃಷ್ಟಿಸಿ, ರೈತರಿಗೆ ಹೆಚ್ಚಿನ ಬೆಲೆ ಒದಗಿಸಿಕೊಡಲು ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ತೊಗರಿ ಮೌಲ್ಯವರ್ಧನೆಗೆ ಬೇಕಾದ ಸಂಶೋಧನೆ, ತಾಂತ್ರಿಕ ನೆರವಿನ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಉಪಕ್ರಮಗಳನ್ನು ಕೈಗೊಳ್ಳಲು ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷ ಸೈಯದ್ ಮಹಮೂದ್ ಚಿಸ್ತಿ (ಸಾಹೇಬ್) ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಅವರು ಚರ್ಚೆ ನಡೆಸಿದರು. ಯಾವುದೇ ಕೃಷಿ ಉತ್ಪನ್ನಗಳನ್ನು ಸ್ಥಳೀಯವಾಗಿ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೃಷ್ಟಿಸಿದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ವೃದ್ಧಿಸಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಈ ಕಾರ್ಯಕ್ರಮದಡಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಧಾರಣೆಯನ್ನೂ ಒದಗಿಸಬಹುದು ಹಾಗೂ ಈ ನಿಟ್ಟಿನಲ್ಲಿ ಸ್ಥಳೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ತೊಗರಿಯಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವ ಸಂಬಂಧ ಸಿದ್ಧಪಡಿಸಿದ ವರದಿಯನ್ನು ಪರಿಶೀಲಿಸಿದರು. ತೊಗರಿ ಕಣಜ ಎಂದೇ ಹೆಸರು ವಾಸಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಯು ವಿಶಿಷ್ಠ ರುಚಿ, ವಿಭಿನ್ನ ಪರಿಮಳ ಮತ್ತು ದೀರ್ಘಕಾಲ ಬಾಳಿಕೆ ಬರುವ ಉತ್ತಮ ಗುಣಮಟ್ಟದ ಕಾರಣದಿಂದಾಗಿ ಜಿಐ ಟ್ಯಾಗ್ ಅನ್ನು ಪಡೆದು ಜಾಗತಿಕವಾಗಿ ತನ್ನದೇ ಆದ ಸ್ಥಾನವನ್ನು ಮತ್ತು ಹೆಗ್ಗುರುತನ್ನು ಪಡೆದಿದೆ ಎಂದು ಅವರು ತಿಳಿಸಿದರು.
ರಾಜ್ಯದ 'ಬಿಯಾಂಡ್ ಬೆಂಗಳೂರು' ಮಿಷನ್ನಡಿ ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್ ಸ್ಪೇಸ್ಗೆ 1.93 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದು ಬೆಂಗಳೂರಿನ ಹೊರಗೆ ತಂತ್ರಜ್ಞಾನ ಕೇಂದ್ರಗಳನ್ನು ನಿರ್ಮಿಸುವ ರಾಜ್ಯದ ಗುರಿಯ ಒಂದು ಪ್ರಮುಖ ಹೆಜ್ಜೆಯಾಗಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಘೋಷಣೆ ಮಾಡಿದರು. ಇದು ಬೆಂಗಳೂರು ಹೊರಗಿನ ವರ್ಕ್ಸ್ಪೇಸ್ ಆಪರೇಟರ್ಗೆ ನೀಡಲಾದ ಮೊದಲ ಮತ್ತು ಅತಿ ದೊಡ್ಡ ಅನುದಾನಗಳಲ್ಲಿ ಒಂದಾಗಿದೆ.
ಗಾಜಾ ಶಾಂತಿ ಮಂಡಳಿಗೆ ಸೇರಲು ಉಕ್ರೇನ್ಗೆ ಟ್ರಂಪ್ ಆಹ್ವಾನ, ಝೆಲೆನ್ಸ್ಕಿಗೆ ಹೊಸ ತಲೆನೋವು!
ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ನಡುವೆ ದೊಡ್ಡ ದೊಡ್ಡ ಒಪ್ಪಂದ ನಡೆಯುತ್ತಿವೆ. ಹೀಗಿದ್ದಾಗ ಉಕ್ರೇನ್ ಕೂಡ ತನಗೆ ಬೇಕಿರುವ ನೆರವು ಪಡೆಯಲು ಅಮೆರಿಕದ ಬಳಿ ಬೇಡುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಇದೇ ಸಮಯವನ್ನು ಅಸ್ತ್ರ ಮಾಡಿಕೊಂಡು ಉಕ್ರೇನ್ ಬಳಿ ಏನೆಲ್ಲಾ ಪಡೆಯಬಹುದೋ ಅದನ್ನೆಲ್ಲಾ ಪಡೆದಿದ್ದಾರೆ. ಇಷ್ಟೆಲ್ಲದರ ನಡುವೆ ಅಮೆರಿಕ ಜೊತೆಯಲ್ಲಿ ಸ್ನೇಹ ಬೆಳೆಸಿರುವ ಉಕ್ರೇನ್ಗೆ ಮತ್ತೊಂದು
ರಾಜ್ಯಪಾಲ vs ತಮಿಳುನಾಡು | ಡಿಎಂಕೆ ಸರಕಾರದೊಂದಿಗೆ ರಾಜ್ಯಪಾಲ ಆರ್.ಎನ್.ರವಿ ಜಟಾಪಟಿ ಯಾಕೆ?
ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಇಂದು (ಮಂಗಳವಾರ) ರಾಜ್ಯ ಸರಕಾರ ಸಿದ್ಧಪಡಿಸಿದ ನೀತಿ ಭಾಷಣವನ್ನು ಓದಲು ನಿರಾಕರಿಸಿ ವಿಧಾನಸಭೆಯಿಂದ ಹೊರನಡೆದಿದ್ದಾರೆ. ನನಗೆ ನಿರಾಸೆಯಾಗಿದೆ. ರಾಷ್ಟ್ರಗೀತೆಗೆ ಸರಿಯಾದ ಗೌರವ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಜ್ಯಪಾಲರು, ಸರಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸತತ ಮೂರನೇ ವರ್ಷವೂ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸಿರುವ ನಡೆಗೆ ತೀವ್ರ ಟೀಕೆ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲರು ಸಂವಿಧಾನಾತ್ಮಕ ಸಂಪ್ರದಾಯಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿ ಸದನದಿಂದ ಹೊರನಡೆದಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರಕಾರ ಸಿದ್ಧಪಡಿಸುವ ನೀತಿ ಭಾಷಣದಲ್ಲಿ ರಾಜ್ಯಪಾಲರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸೇರಿಸಲು ಅಥವಾ ಬೇರೆ ಏನನ್ನಾದರೂ ಹೇಳಲು ಅವಕಾಶವಿಲ್ಲ. ಅವರು ಸರಕಾರದ ನೀತಿಗಳನ್ನು ಪ್ರತಿಬಿಂಬಿಸುವ ಭಾಷಣವನ್ನು ಮಾತ್ರ ಓದಬೇಕು. ಆದರೆ ಆರ್.ಎನ್.ರವಿ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಅವರು “ಉದ್ದೇಶಪೂರ್ವಕವಾಗಿ” ಈ ನಡೆ ಅನುಸರಿಸಿದ್ದಾರೆ. ಇದು “ಸದನವನ್ನು ಅವಮಾನಿಸಿದಂತೆ” ಎಂದು ಸ್ಟಾಲಿನ್ ಪ್ರತಿಕ್ರಿಯಿಸಿದರು. ರಾಜ್ಯಪಾಲರು ಸದನದಿಂದ ಹೊರಬಂದ ಕೆಲವೇ ಹೊತ್ತಿನಲ್ಲಿ, ಭಾಷಣವನ್ನು ಓದಲು ನಿರಾಕರಿಸಿದ್ದಕ್ಕೆ ಕಾರಣಗಳನ್ನು ವಿವರಿಸುವ 13 ಅಂಶಗಳ ಹೇಳಿಕೆಯನ್ನು ರಾಜಭವನ ಬಿಡುಗಡೆ ಮಾಡಿತು. ರಾಜಭವನ ಪ್ರಕಟಿಸಿದ ಹೇಳಿಕೆಯ ಪ್ರಕಾರ, ರಾಜ್ಯಪಾಲರ ಮೈಕ್ ಅನ್ನು ಪದೇಪದೇ ಆಫ್ ಮಾಡಲಾಗುತ್ತಿತ್ತು. ಸದನದ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವರಿಗೆ ಅವಕಾಶ ನೀಡಲಾಗಲಿಲ್ಲ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ಮಾತನಾಡುವ ಹಕ್ಕನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಸದನದಿಂದ ಹೊರನಡೆಯಬೇಕಾಯಿತು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸಿದ್ಧಪಡಿಸಿದ ಭಾಷಣದಲ್ಲಿ ಗಂಭೀರ ಲೋಪಗಳು ಮತ್ತು ತಪ್ಪುಗಳನ್ನು ಗುರುತಿಸಲು ರಾಜ್ಯಪಾಲರು ಪ್ರಯತ್ನಿಸಿದ್ದರು. ಆದರೆ ಅದನ್ನು ಮಾಡಲು ಅವಕಾಶ ನೀಡಲಾಗಲಿಲ್ಲ. ಭಾಷಣವು ಹಲವಾರು ಆಧಾರರಹಿತ ಹಾಗೂ ದಾರಿತಪ್ಪಿಸುವ ಹೇಳಿಕೆಗಳನ್ನು ಒಳಗೊಂಡಿದ್ದು, ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ರಾಜಭವನ ಆರೋಪಿಸಿದೆ. ತಮಿಳುನಾಡು 12 ಲಕ್ಷ ಕೋಟಿ ರೂ. ಗೂ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಿದೆ ಎಂಬ ರಾಜ್ಯ ಸರಕಾರದ ಹೇಳಿಕೆಯನ್ನು ಪ್ರಶ್ನಿಸಿರುವ ರಾಜಭವನ, ಅನೇಕ ಹೂಡಿಕೆ ಒಪ್ಪಂದಗಳು ಕೇವಲ ಕಾಗದದಲ್ಲೇ ಉಳಿದಿವೆ ಎಂದು ಹೇಳಿದೆ. ನಿಜವಾದ ಹೂಡಿಕೆಗಳು ಘೋಷಿತ ಅಂಕಿಅಂಶಗಳ ಒಂದು ಭಾಗ ಮಾತ್ರ. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ನೇರ ಹೂಡಿಕೆ (FDI) ಆಕರ್ಷಿಸುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ನಾಲ್ಕನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ ಎಂದೂ ಹೇಳಲಾಗಿದೆ. ಪೋಕ್ಸೊ ಪ್ರಕರಣಗಳು ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದರೂ, ಮಹಿಳಾ ಸುರಕ್ಷತೆ ಕುರಿತ ಕಾಳಜಿಗಳನ್ನು ಭಾಷಣದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ರಾಜಭವನ ಹೇಳಿದೆ. ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಯುವಕರಲ್ಲಿ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ಸೇವನೆಯ ಹೆಚ್ಚುತ್ತಿರುವ ಅಪಾಯವನ್ನು ಉಲ್ಲೇಖಿಸಿರುವ ರಾಜಭವನ, ಒಂದು ವರ್ಷದಲ್ಲಿ 2,000 ಕ್ಕೂ ಹೆಚ್ಚು ಆತ್ಮಹತ್ಯೆಗಳು ಮಾದಕ ವ್ಯಸನಕ್ಕೆ ಸಂಬಂಧಿಸಿದ್ದಿವೆ ಎಂದು ತಿಳಿಸಿದೆ. ದಲಿತರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳು, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಆತ್ಮಹತ್ಯೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ದೀರ್ಘಕಾಲದಿಂದ ಖಾಲಿ ಉಳಿದಿರುವ ಹುದ್ದೆಗಳು ಮತ್ತು ದುರುಪಯೋಗ, ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸದಿರುವುದು — ಇವೆಲ್ಲವೂ ನಾಗರಿಕರ ತಳಮಟ್ಟದ ಪ್ರಜಾಪ್ರಭುತ್ವದ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸರಿಯಾಗಿ ರಚಿಸಲಾದ ಟ್ರಸ್ಟಿ ಮಂಡಳಿಗಳಿಲ್ಲದೆ ಸಾವಿರಾರು ದೇವಾಲಯಗಳ ಮೇಲೆ ದೀರ್ಘಕಾಲದಿಂದ ಸರಕಾರದ ನಿಯಂತ್ರಣ ಮುಂದುವರಿದಿರುವುದು, ಎಂಎಸ್ಎಂಇ ವಲಯದಲ್ಲಿ ಹೆಚ್ಚುತ್ತಿರುವ ಒತ್ತಡ, ಕೆಳ ಹಂತದ ಸರಕಾರಿ ನೌಕರರಲ್ಲಿ ಅಸಮಾಧಾನ, ರಾಷ್ಟ್ರಗೀತೆಗೆ ಗೌರವ ಸೇರಿದಂತೆ ಸಾಂವಿಧಾನಿಕ ಕರ್ತವ್ಯಗಳನ್ನು ಪದೇಪದೇ ನಿರ್ಲಕ್ಷಿಸಲಾಗುತ್ತಿರುವ ಬಗ್ಗೆ ರಾಜಭವನ ಕಳವಳ ವ್ಯಕ್ತಪಡಿಸಿದೆ. ಈ ಎಲ್ಲಾ ಕಳವಳಗಳು ವಾಸ್ತವಗಳನ್ನು ಪ್ರತಿಬಿಂಬಿಸುತ್ತವೆ. ರಾಜ್ಯ ಸರಕಾರದ ಆದ್ಯತೆಗಳನ್ನು ನಿರ್ಧರಿಸುವ ಉದ್ದೇಶ ಹೊಂದಿರುವ ಮಹತ್ವದ ನೀತಿ ಭಾಷಣದಲ್ಲಿ ಇವುಗಳನ್ನು ನಿರ್ಲಕ್ಷಿಸಬಾರದು ಎಂದು ರಾಜಭವನ ಹೇಳಿಕೆಯಲ್ಲಿದೆ. ರಾಜ್ಯಪಾಲ ಆರ್.ಎನ್.ರವಿ ಮತ್ತು ಡಿಎಂಕೆ ನೇತೃತ್ವದ ತಮಿಳುನಾಡು ಸರಕಾರ ನಡುವಿನ ಸಂಘರ್ಷ ಹೊಸದೇನಲ್ಲ. ವಿವಾದಾತ್ಮಕ ಹೇಳಿಕೆಗಳು ಹಾಗೂ ಸರಕಾರದ ವಿರುದ್ಧದ ಟೀಕೆಗಳ ಮೂಲಕ ರಾಜ್ಯಪಾಲರು ಆಗಾಗ್ಗೆ ಸುದ್ದಿಯಾಗುತ್ತಲೇ ಇದ್ದಾರೆ. *ಮಸೂದೆಗೆ ಒಪ್ಪಿಗೆ ನೀಡಲು ನಿರಾಕರಣೆ 2023ರ ಏಪ್ರಿಲ್ನಲ್ಲಿ, ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ಒಪ್ಪಿಗೆ ನೀಡಲು ರಾಜ್ಯಪಾಲರು ತಡೆಹಿಡಿದರೆ ಆ ಮಸೂದೆ ಸತ್ತುಹೋಯಿತು ಎಂದರ್ಥ ಎಂದು ರವಿ ಹೇಳಿದ್ದರು. ಸುಪ್ರೀಂ ಕೋರ್ಟ್, ಒಪ್ಪಿಗೆಯನ್ನು ತಡೆಹಿಡಿಯುವುದನ್ನು ‘ಮಸೂದೆಗೆ ಒಪ್ಪಿಗೆ ಇಲ್ಲ’ ಎಂದು ವ್ಯಾಖ್ಯಾನಿಸಿದೆ. ಇದು ಮಸೂದೆ ಸತ್ತುಹೋಯಿತೆಂಬ ಅರ್ಥ ನೀಡುತ್ತದೆ. ‘ತಿರಸ್ಕೃತ’ ಎಂಬ ಪದ ಬಳಕೆಗೆ ಇದು ಸಮಾನ ಎಂದು ಅವರು ರಾಜಭವನದಲ್ಲಿ ನಾಗರಿಕ ಸೇವಾ ಆಕಾಂಕ್ಷಿಗಳನ್ನು ಉದ್ದೇಶಿಸಿ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಯಾವುದೇ ಮಾನ್ಯ ಕಾರಣವಿಲ್ಲದೆ ಮಸೂದೆಗೆ ಒಪ್ಪಿಗೆ ತಡೆಹಿಡಿದರೆ ಅದು ‘ಸಂಸದೀಯ ಪ್ರಜಾಪ್ರಭುತ್ವ ಸತ್ತುಹೋಯಿತು’ ಎಂಬರ್ಥ ಎಂದು ಹೇಳಿದ್ದಾರೆ. ನವೆಂಬರ್ 2023ರಲ್ಲಿ ಪಂಜಾಬ್ ರಾಜ್ಯಪಾಲರ ಪ್ರಕರಣ ವಿಚಾರಣೆ ವೇಳೆ, ಭಾರತದ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು, ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಿದರೆ ಅದು ಸತ್ತುಹೋಯಿತೆಂದು ಅರ್ಥವಲ್ಲ ಎಂದು ಅಭಿಪ್ರಾಯಪಟ್ಟಿತ್ತು. ವಿಧೇಯಕಗಳಿಗೆ ಅಂಕಿತ ಹಾಕಲು ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ರಾಜ್ಯಪಾಲರ ನಡೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. *‘ನೀಟ್ ಮಸೂದೆಯನ್ನು ನಾನು ಎಂದಿಗೂ ಅಂಗೀಕರಿಸುವುದಿಲ್ಲ’ ಫೆಬ್ರವರಿ 2022ರಲ್ಲಿ, ತಮಿಳುನಾಡು ಪದವಿಪೂರ್ವ ವೈದ್ಯಕೀಯ ಪ್ರವೇಶ ಮಸೂದೆ–2021 ಅನ್ನು ರಾಜ್ಯಪಾಲ ರವಿ ಅವರು ವಿಧಾನಸಭಾ ಸ್ಪೀಕರ್ ಗೆ ಹಿಂತಿರುಗಿಸಿದ್ದರು. ಈ ಮಸೂದೆ MBBS/BDS ಕೋರ್ಸ್ಗಳಿಗೆ ನೀಟ್ ಆಧಾರಿತ ಪ್ರವೇಶದಿಂದ ವಿನಾಯಿತಿ ನೀಡಬೇಕು ಮತ್ತು ಸರಕಾರಿ ಕೋಟಾ ಸೀಟುಗಳಲ್ಲಿ 12ನೇ ತರಗತಿ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಬೇಕು ಎಂದು ಕೋರಿತ್ತು. ನ್ಯಾಯಮೂರ್ತಿ ಎ.ಕೆ.ರಾಜನ್ ಸಮಿತಿಯ ಶಿಫಾರಸುಗಳ ಮೇರೆಗೆ ಮಸೂದೆ ರೂಪಿಸಲಾಗಿತ್ತು. ಆದರೆ ಸಮಿತಿಯ ವರದಿ “ಕಾಮಾಲೆ ರೋಗದ ದೃಷ್ಟಿಕೋನವನ್ನು” ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದ್ದ ರವಿ, ಈ ಮಸೂದೆ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದಿದ್ದರು. ಈ ಮಸೂದೆ ಕೇಂದ್ರ ಕಾನೂನಿಗೆ ವಿರುದ್ಧವಾಗಿದ್ದ ಕಾರಣ, ವಿಧಾನಸಭೆ ಮತ್ತೊಮ್ಮೆ ಅಂಗೀಕರಿಸಿ ರಾಜಭವನಕ್ಕೆ ಕಳುಹಿಸಿತು. ಬಳಿಕ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಯಿತಾದರೂ, ರಾಷ್ಟ್ರಪತಿ ಒಪ್ಪಿಗೆ ನೀಡಲಿಲ್ಲ. ಆಗಸ್ಟ್ 2023ರಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ, “ನಾನು ನಿಮಗೆ ತುಂಬಾ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನಾನು ಈ ಮಸೂದೆಗೆ ಎಂದಿಗೂ ಅನುಮತಿ ನೀಡುವುದಿಲ್ಲ” ಎಂದು ರವಿ ಹೇಳಿದ್ದರು. *ಸೆಂಥಿಲ್ಬಾಲಾಜಿ ವಜಾ ಮತ್ತು ‘ಯು-ಟರ್ನ್’ 2023 ಜೂನ್ 29ರಂದು ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿ.ಸೆಂಥಿಲ್ಬಾಲಾಜಿಯನ್ನು ಬಂಧಿಸಿತು. ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ಅವರನ್ನು ಏಕಪಕ್ಷೀಯವಾಗಿ ಸಚಿವ ಸಂಪುಟದಿಂದ ವಜಾಗೊಳಿಸಿದರು. ಇದು ನ್ಯಾಯಸಮ್ಮತ ತನಿಖೆಗೆ ಧಕ್ಕೆಯಾಗಬಹುದು ಎಂದು ರಾಜಭವನ ಹೇಳಿತ್ತು. ಆದರೆ ಅದೇ ದಿನ ರಾತ್ರಿ, ಕೇಂದ್ರ ಗೃಹ ಸಚಿವರು ಮತ್ತು ಅಟಾರ್ನಿ ಜನರಲ್ ಸಲಹೆ ಹಿನ್ನೆಲೆಯಲ್ಲಿ ವಜಾ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದರು. ಇಂದಿಗೂ ಅಟಾರ್ನಿ ಜನರಲ್ ಅಭಿಪ್ರಾಯವನ್ನು ಸಾರ್ವಜನಿಕಗೊಳಿಸಲಾಗಿಲ್ಲ. *ಪೊನ್ಮುಡಿ ಮರುಸೇರ್ಪಡೆಗೆ ನಿರಾಕರಣೆ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆ ಸ್ಥಗಿತಗೊಂಡಿದ್ದರೂ, 2024ರ ಮಾರ್ಚ್ನಲ್ಲಿ ಕೆ.ಪೊನ್ಮುಡಿಯನ್ನು ಸಂಪುಟಕ್ಕೆ ಸೇರಿಸಲು ರಾಜ್ಯಪಾಲರು ನಿರಾಕರಿಸಿದರು. ಇದು ಸಾಂವಿಧಾನಿಕ ನೈತಿಕತೆಗೆ ವಿರುದ್ಧ ಎಂದು ಅವರು ವಾದಿಸಿದರು. ನಂತರ, ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ನಡೆಗಾಗಿ ರಾಜ್ಯಪಾಲರನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು. ಬಳಿಕ ರಾಜ್ಯಪಾಲರು ಪೊನ್ಮುಡಿಗೆ ಪ್ರಮಾಣವಚನ ಬೋಧಿಸಿದರು. *ಪೆಟ್ರೋಲ್ ಬಾಂಬ್ ದಾಳಿ ಮತ್ತು NIA ತನಿಖೆ 2023 ಅಕ್ಟೋಬರ್ 25ರಂದು ಚೆನ್ನೈನ ರಾಜಭವನದ ಮೇಲೆ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣದಲ್ಲಿ, ರಾಜಭವನ ಹಲವು ದಾಳಿಕೋರರು ಭಾಗಿಯಾಗಿದ್ದಾರೆ ಎಂದು ಆರೋಪಿಸಿತು. ಆದರೆ NIA ತನಿಖೆಯಲ್ಲಿ ವಿನೋದ್ ಎಂಬ ವ್ಯಕ್ತಿಯೇ ಏಕೈಕ ಆರೋಪಿ ಎಂದು ತಿಳಿದುಬಂದಿತು. *‘ತಮಿಳುನಾಡು’ಗಿಂತ ‘ತಮಿಳಗಂ’ ಸೂಕ್ತ ಕಾಶಿ–ತಮಿಳು ಸಂಗಮ ಕಾರ್ಯಕ್ರಮದಲ್ಲಿ, ತಮಿಳುನಾಡನ್ನು ‘ತಮಿಳಗಂ’ ಎಂದು ಕರೆಯುವುದು ಸೂಕ್ತ ಎಂದು ರಾಜ್ಯಪಾಲರು ಹೇಳಿದ್ದು, ದ್ರಾವಿಡ ರಾಜಕೀಯದ ವಿರುದ್ಧದ ಹೇಳಿಕೆಗಳೊಂದಿಗೆ ಭಾರೀ ವಿವಾದಕ್ಕೆ ಕಾರಣವಾಯಿತು. ದುರದೃಷ್ಟವಶಾತ್ ತಮಿಳುನಾಡಿನಲ್ಲಿ ನಾವು ದ್ರಾವಿಡರು ಎಂಬ ಪ್ರತಿಗಾಮಿ ರಾಜಕೀಯವಿದೆ. ಸಂವಿಧಾನದ ಬಲದಿಂದ ನಮ್ಮನ್ನು ಒಟ್ಟುಗೂಡಿಸಲಾಗಿದೆ. ನಾವು ರಾಷ್ಟ್ರದ ಭಾಗವಲ್ಲ, ರಾಷ್ಟ್ರದ ಅವಿಭಾಜ್ಯ ಅಂಗ ಎಂಬ ಈ ನಿರೂಪಣೆಯನ್ನು ಬಲಪಡಿಸಲು ಅರ್ಧ ಶತಮಾನದಲ್ಲಿ ಸಂಪೂರ್ಣ ಪ್ರಯತ್ನವನ್ನು ರಚಿಸಲಾಗಿದೆ. ವಿಭಿನ್ನ ರೀತಿಯ ನಿರೂಪಣೆಯನ್ನು ಸಹ ರಚಿಸಲಾಗಿದೆ. ಇಡೀ ದೇಶಕ್ಕೆ ಅನ್ವಯವಾಗುವ ಎಲ್ಲದಕ್ಕೂ, ತಮಿಳುನಾಡು ಇಲ್ಲ ಎಂದು ಹೇಳುತ್ತದೆ.ಇದು ಒಂದು ಅಭ್ಯಾಸವಾಗಿ ಹೋಗಿದೆ.ಇದನ್ನು ಮುರಿಯಬೇಕು. ಸತ್ಯ ಗೆಲ್ಲಬೇಕು. ವಾಸ್ತವವಾಗಿ, ತಮಿಳುನಾಡು ಭಾರತದ ಆತ್ಮವನ್ನು ಹೊಂದಿರುವ ಭೂಮಿ. ಅದು ಭಾರತದ ಗುರುತು. ಇದನ್ನು ತಮಿಳಗಂ ಎಂದು ಕರೆಯುವುದು ಸೂಕ್ತ ಎಂದು ರಾಜ್ಯಪಾಲರು ಹೇಳಿದ್ದರು. 2023ರಲ್ಲಿ ಕಾಶಿ-ತಮಿಳು ಸಂಗಮದ ಸಂಘಟಕರು ಮತ್ತು ಸ್ವಯಂಸೇವಕರನ್ನು ಸನ್ಮಾನಿಸಲು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಆ ಮಾತನ್ನಾಡಿದ್ದು ,ಇದು ವಿವಾದ ಸೃಷ್ಟಿಸಿತ್ತು.
Bengaluru | 5.15 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ: ವಿದೇಶಿ ಪ್ರಜೆ ವಶಕ್ಕೆ
ಬೆಂಗಳೂರು : ಬಾಡಿಗೆ ಮನೆಯಲ್ಲಿದ್ದುಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬೆಂಗಳೂರು ನಗರ ಮಾದಕ ದ್ರವ್ಯ ವಿರೋಧಿ ವಿಭಾಗದ ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಅರ್ನೆಸ್ಟ್ ಒನ್ಯೆಕಾಚಿ ಉಗಾ(45) ಎಂಬಾತನೇ ಪೊಲೀಸರು ವಶಕ್ಕೆ ಪಡೆದುಕೊಂಡ ಆರೋಪಿ ಎಂದು ಗುರುತಿಸಲಾಗಿದೆ. ಈತ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುನೆಕೊಳಲು ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಎಂಡಿಎಂಎ ಮತ್ತು ಎಕ್ಸ್ಟಸಿ ಮಾತ್ರೆಗಳ ಮಾರಾಟದಲ್ಲಿ ತೊಡಗಿದ್ದ. ಈ ಬಗ್ಗೆ ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ, ಮಾದಕ ದ್ರವ್ಯ ವಿರೋಧಿ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಆರೋಪಿಯಿಂದ 2.5 ಕೆ.ಜಿ. ಎಂಡಿಎಂಎ ಮತ್ತು 300 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಒಟ್ಟು ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 5.15 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸದ್ಯ, ಆರೋಪಿ ಮೇಲೆ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಕ್ರಿಮಿನಲ್ ಪ್ರಕರಣಗಳು ಇರುವುದು ಬೆಳಕಿಗೆ ಬಂದಿದ್ದು, ಹೆಣ್ಣೂರು ಪೊಲೀಸ್ ಠಾಣೆ ಮತ್ತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿತ್ತು. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ, ಮತ್ತೆ ಅಕ್ರಮ ಚಟುವಟಿಕೆಗಳನ್ನು ಆರಂಭಿಸಿದ್ದ. ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರು, ಮತ್ತೆ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಆತನನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಎನ್ಡಿಪಿಎಸ್ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಳ್ಳಸಾಗಣೆ ವಸ್ತುಗಳ ಮೂಲವನ್ನು ಪತ್ತೆಹಚ್ಚಲು ಮತ್ತು ದಂಧೆಯಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

17 C