ರಾಯಚೂರು | ಸಕಾಲದಲ್ಲಿ ಮಾಹಿತಿ ನೀಡಿ, ದಂಡದಿಂದ ಮುಕ್ತರಾಗಿ : ಆಯುಕ್ತ ಬಿ.ವೆಂಕಟ್ ಸಿಂಗ್ ಸಲಹೆ
ಜಿಲ್ಲಾಮಟ್ಟದ ಮಾಹಿತಿ ಹಕ್ಕು ಕಾಯ್ದೆ ಕಾರ್ಯಾಗಾರ
ಶಾಸಕ ಹಂಪನಗೌಡ ಬಾದರ್ಲಿ ಅವರಿಂದ ಸಿಂಧನೂರು ತಾಲೂಕಿಗೆ 14 ಹೊಸ ಬಸ್ಗಳ ಕೊಡುಗೆ
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ವಿನೂತನ ಬಸ್ಸುಗಳಿಗೆ ಸಿಎಂ ಚಾಲನೆ
ರಾಯಚೂರು | ಭೂ ಅತಿಕ್ರಮಣ ಮಾಡಿ ನಕಲಿ ದಾಖಲೆ ಸೃಷ್ಟಿ ಆರೋಪ : ಅಂಬಾಜಿರಾವ್ ಗಡಿಪಾರು ಮಾಡಲು ಭೀಮ್ ಆರ್ಮಿ ಆಗ್ರಹ
ರಾಯಚೂರು: ಭೂಮಿಯನ್ನು ಅತಿಕ್ರಮಣ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡಿರುವ ಅಂಬಾಜಿರಾವ್ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಭೀಮ್ ಆರ್ಮಿ ಸಂಘಟನೆಯಿಂದ ಶುಕ್ರವಾರ ಮಹಾನಗರ ಪಾಲಿಕೆಯ ಉಪ ಆಯುಕ್ತೆ ಸಂತೋಷಿರಾಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಯರಮರಸ್ ಸೀಮಾಂತರದಲ್ಲಿರುವ ಸುಗುಣಾಬಾಯಿ ಎಂಬುವವರ ಜಮೀನಿಗೆ ಸಂಬಂಧಿಸಿದಂತೆ ಅಂಬಾಜಿರಾವ್ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಸಂಘಟನೆಯವರು ಆರೋಪಿಸಿದರು. ಸುಗುಣಾಬಾಯಿ ಅವರ ಹೆಸರಿನಲ್ಲಿ ಹಲವು ವರ್ಷಗಳಿಂದ ಇದ್ದ ಜಮೀನನ್ನು, ಅವರ ಮರಣದ ನಂತರ ಮರಣ ಪ್ರಮಾಣ ಪತ್ರವನ್ನು ದುರುಪಯೋಗಪಡಿಸಿಕೊಂಡು, ಸಂಬಂಧಿಸಿದ ಅಧಿಕಾರಿಗಳ ಸಹಕಾರದೊಂದಿಗೆ ಜಮೀನು ದಾಖಲೆಗಳಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ದೂರಿದರು. ಕೂಡಲೇ ಅಂಬಾಜಿರಾವ್ ಮತ್ತು ಕುಟುಂಬದವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಪ್ರವೀಣಕುಮಾರ, ಮಂಜುನಾಥ, ಶಿವು, ಜಿಲಾನಿ, ಪ್ರಶಾಂತ ಸೇರಿದಂತೆ ಅನೇಕರಿದ್ದರು
ಮುಂದಿನ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು: ಅತೀಖು ರೆಹಮಾನ್
ಮಡಿಕೇರಿ: ಪೋಷಕರು ತಮ್ಮ ಮಕ್ಕಳನ್ನು ಇಂತಹದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಧೋರಣೆಯನ್ನು ಬಿಡಬೇಕು. ಅವರ ಮುಂದಿನ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಸ್ವಾತಂತ್ರ ನೀಡಬೇಕು ಎಂದು ದಿಲ್ಲಿಯ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಅತೀಖು ರೆಹಮಾನ್ ಸಲಹೆ ನೀಡಿದರು. ಉಮ್ಮತ್ ಒನ್ ಕೊಡಗು ಹಾಗೂ ಕರ್ನಾಟಕದ ಖ್ಯಾತ ಶಿಕ್ಷಣ ಸಂಸ್ಥೆ ಶಾಹಿನ್ ಶಿಕ್ಷಾ ಯಾತ್ರೆ ವತಿಯಿಂದ ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ವಿಧ್ಯಾರ್ಥಿಗಳಿಗಾಗಿ ನಡೆದ ವೃತ್ತಿ ತರಬೇತಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿದೆ. ಅದರ ಬಗ್ಗೆ ಅರಿವಿಲ್ಲದೆ, ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್ ಮತ್ತು ಇಂಜಿನಿಯರ್ ಹುದ್ದೆಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುತ್ತಿರುವುದು ಕಂಡು ಬರುತ್ತಿದೆ. ಇದು ಅವರಲ್ಲಿರುವ ಅಭಿರುಚಿಗಳಿಗೆ ವಿರುದ್ಧವಾಗಿದೆ. ಅಲ್ಲದೆ ಅವರ ಭವಿಷ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅತೀಖು ರೆಹಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ಸಹಪಾಠಿಗಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅದನ್ನೆ ನಾನು ಮಾಡುತ್ತೇನೆ ಎಂಬ ಧೋರಣೆಯನ್ನು ವಿದ್ಯಾರ್ಥಿಗಳು ಬಿಡಬೇಕು. ನಿಮ್ಮಲ್ಲಿರುವ ಅಭಿರುಚಿಗಳಿಗೆ ತಕ್ಕಂತೆ ನೀವು ಮುಂದುವರಿಯಬೇಕು ಎಂದು ಸಲಹೆ ನೀಡಿದರು. ಸಲಹಾ ಸಮಿತಿ ಸದಸ್ಯ ಹಾರೂನ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕೋಶಾಧಿಕಾರಿ ಸಿ.ಎಂ.ಹಮೀದ್ ಫೈಝಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಉಮ್ಮತ್ ಒನ್ ಕೊಡಗು ಅಧ್ಯಕ್ಷ ಎಂ.ಬಿ.ಬಶೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಹಿನ್ ಸಂಸ್ಥೆ ನಿರ್ದೇಶಕರಾದ ಶಕನೂರು ಸಾಂಬಾರ್ಕರ್ ಪುಣೆ, ಶಾಹಿನ್ ಅಕಾಡಮಿ ಘಟಕದ ಮುಖ್ಯಸ್ಥ ಫೈಝೂನ್ ದಾವೀಸ್ ಹಾಗೂ ಉಮ್ಮತ್ ಒನ್ ಸಂಘನೆಯ ಪಧಾದಿಕಾರಿಗಳು, ಮಡಿಕೇರಿ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಪದವಿಪೂರ್ವ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಭಟ್ಕಲ್ ಮಸೀದಿ ಖತೀಬರಾದ ಅಲೀ ಮುಸ್ಲಿಯಾರ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಖಾಲಿದ್ ಸ್ವಾಗತಿಸಿದರು.
ಲಿಂಗಸುಗೂರು | ಟಿಇಟಿ ಬರೆದು ಮಾಸ್ತರನಾಗಬಹುದು, ಆದರೆ ನಿಜವಾದ ಶಿಕ್ಷಕನಾಗಬೇಕಿದೆ : ಎಫ್.ಸಿ.ಚೇಗರೆಡ್ಡಿ
ಲಿಂಗಸುಗೂರು: ಟಿಇಟಿ ಪರೀಕ್ಷೆ ಬರೆದು ಮಾಸ್ತರನಾಗಬಹುದು, ಆದರೆ ಅದರಿಂದಲೇ ನಿಜವಾದ ಶಿಕ್ಷಕನಾಗುವುದಿಲ್ಲ. ಮಾಸ್ತರನಾಗುವುದಕ್ಕಿಂತ ಸಮಾಜ ರೂಪಿಸುವ ಶಿಕ್ಷಕನಾಗಬೇಕೆಂದು ಟೀಚರ್ ಪತ್ರಿಕೆಯ ಸಹ ಸಂಪಾದಕ ಎಫ್.ಸಿ.ಚೇಗರೆಡ್ಡಿ ಅಭಿಪ್ರಾಯಪಟ್ಟರು. ಪಟ್ಟಣದ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಬೆಳ್ಳಿ ಸಂಭ್ರಮೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗೋಷ್ಠಿ–1ರಲ್ಲಿ “ಪ್ರಾಥಮಿಕ ಶಿಕ್ಷಣದಲ್ಲಿನ ಕಲಿಕಾ ತೊಡಕುಗಳು” ಎಂಬ ವಿಷಯದ ಕುರಿತು ಮಾತನಾಡಿದ ಅವರು, ಇಂದಿನ ಶಿಕ್ಷಕರು ಬೋಧನೆಯ ಬದಲು ಮಧ್ಯಾಹ್ನದ ಬಿಸಿಯೂಟದ ಅಂಕಿ–ಅಂಶಗಳನ್ನು ಆನ್ಲೈನ್ನಲ್ಲಿ ದಾಖಲಿಸುವುದಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ಶಿಕ್ಷಕರು ಶಿಕ್ಷಕರಾಗದೆ ಗುಮಾಸ್ತರಂತೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳು ಮುಚ್ಚಬಾರದು ಎಂದು ಅವರು ಸ್ಪಷ್ಟವಾಗಿ ಹೇಳಿದರು. “ಕಲಿಕಾರ್ಥಿ ಮತ್ತು ಬೋಧಕನ ಸಾಮಥ್ರ್ಯ ಶೈಕ್ಷಣಿಕ ಮೌಲ್ಯಮಾಪನ” ವಿಷಯದ ಕುರಿತು ಮಾತನಾಡಿದ ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಗದೀಶ ಬಸಾಪೂರು, ಮಕ್ಕಳಲ್ಲಿ ದೋಷವಿಲ್ಲ, ಕಲಿಕಾರ್ಥಿಗಳ ಚಿಂತನೆ ಸರಿಯಾಗಿದೆ. ಆದರೆ ಪೋಷಕರು, ಶಿಕ್ಷಕರು ಹಾಗೂ ಸರ್ಕಾರದ ವ್ಯವಸ್ಥೆಯಲ್ಲಿಯೇ ದೋಷಗಳಿವೆ ಎಂದು ಅಭಿಪ್ರಾಯಪಟ್ಟರು. ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಹೆಚ್ಚು ಮಕ್ಕಳು ಓದುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳನ್ನು ಅಂಕಗಳನ್ನು ಗಳಿಸುವ ಯಂತ್ರಗಳನ್ನಾಗಿ ಮಾಡಬಾರದು. ಆಟವಾಡುತ್ತಾ ಕಲಿಯುವಂತಹ ಶಿಕ್ಷಣ ವಾತಾವರಣ ನಿರ್ಮಿಸಬೇಕೆಂದು ಅವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ರೇಷ್ಮಾ ಡಿ., ಶಾಂತನಗಡ ಪಾಟೀಲ್, ಸಿದ್ದರಾಮ ಮನಹಳ್ಳಿ, ಶರಣಪ್ಪ ಮೇಟಿ, ಅಮರಗುಂಡಪ್ಪ ಮೇಟಿ, ಸಂಸ್ಥೆಯ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ, ಭೂಪನಗೌಡ ಕರಡಕಲ್, ಬಸವಂತರಾಯ ಕುರಿ, ಬಸವರಾಜ ಮೇಟಿ, ಪಾಮಯ್ಯ ಮುರಾರಿ ಸೇರಿದಂತೆ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೆನೆಜುವೆಲಾದಲ್ಲಿ ಸದ್ಯಕ್ಕೆ ನಮ್ಮದೇ ಆಡಳಿತ: ಮಡುರೊ ಬಂಧನದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಚ್ಚರಿಯ ಘೋಷಣೆ
ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾದಲ್ಲಿ ನಡೆದ ಕ್ಷಿಪ್ರ ಮತ್ತು ಅನಿರೀಕ್ಷಿತ ಸೇನಾ ಕಾರ್ಯಾಚರಣೆಯಲ್ಲಿ, ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿವೆ. ಈ ಘಟನೆಯ ಬೆನ್ನಲ್ಲೇ ಫ್ಲೋರಿಡಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದಲ್ಲಿ ಸ್ಥಿರ ಸರ್ಕಾರ ರಚನೆಯಾಗುವವರೆಗೆ ಅಮೆರಿಕವೇ ಆಡಳಿತ ನಡೆಸಲಿದೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಲಿಂಗಸುಗೂರು | ಅನ್ನದಾನ, ವಿಧ್ಯಾದಾನವು ಶ್ರೇಷ್ಠವಾದ ಕಾಯಕ : ಸಚಿವ ದರ್ಶನಾಪುರ
ಲಿಂಗಸುಗೂರು : ಅನ್ನದಾನ, ವಿಧ್ಯಾದಾನವು ಶ್ರೇಷ್ಠವಾದ ಕಾಯಕವಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರು ಅಭಿಪ್ರಾಯಪಟ್ಟರು. ಲಿಂಗಸುಗೂರು ಪಟ್ಟಣದ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಬೆಳ್ಳಿ ಸಂಭ್ರಮ ಉದ್ಘಾಟಿಸಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಬಾಲಕರ ವಸತಿ ನಿಲಯ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸಣ್ಣ ಕೆಲಸವಲ್ಲ. ಮಠಮಾನ್ಯಗಳು ಹಾಗೂ ಸಂಘ ಸಂಸ್ಥೆಗಳಿಂದ ಬಡ ಮಕ್ಕಳು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿದೆ. ಅಲ್ಲದೇ ದಕ್ಷಿಣ ಕರ್ನಾಟಕದ ವಿದ್ಯಾರ್ಥಿಗಳ ಜೊತೆ ಸ್ಪರ್ಧೆ ಮಾಡುವ ಶಕ್ತಿ ಈ ಭಾಗದ ವಿದ್ಯಾರ್ಥಿಗಳಲ್ಲಿದೆ. 3,500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆಂದರೆ ಸಂಸ್ಥೆ ನೀಡುವ ಗುಣಮಟ್ಟದ ಶಿಕ್ಷಣದಿಂದಾಗಿದೆ ಎಂದರು. ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃಧ್ಧಿಗೆ ಶ್ರಮಿಸುವ ಕೆಲಸ ನಮ್ಮ ಭಾಗದ ಜನಪ್ರತಿನಿಧಿಗಳು ಶ್ರಮಿಸಬೇಕು. ದೊಡ್ಡ ಕೈಗಾರಿಕೆಗಳನ್ನು ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸಿ ಯುವಕರಿಗೆ ಉದ್ಯೋಗ ಕೊಡುವಂತಹ ಕೆಲಸ ಮಾಡಬೇಕೆಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ, ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ, ವಿಧಾನ ಪರಿಷತ್ ಸದಸ್ಯರುಗಳಾದ ಶರಣಗೌಡ ಪಾಟೀಲ್ ಬಯ್ಯಾಪುರ, ಶಶಿಲ್ ಜಿ.ನಮೋಶಿ, ಭೂಪನಗೌಡ ಕರಡಕಲ್, ಬಸವಂತರಾಯ ಕುರಿ, ಬಸವರಾಜ ಮೇಟಿ ಸೇರಿ ಗಣ್ಯರು ಶಿಕ್ಷಕರು ವಿಧ್ಯಾರ್ಥಿಗಳು ಸೇರಿ ಇತರರು ಇದ್ದರು.
ಅಮೆರಿಕ ಯುದ್ಧನೌಕೆಯಲ್ಲಿ ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ: ಮೊದಲ ಚಿತ್ರ ಬಿಡುಗಡೆ ಮಾಡಿದ ಟ್ರಂಪ್
ವಾಷಿಂಗ್ಟನ್/ಕ್ಯಾರಕಾಸ್: ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೇನೆ ವಶಪಡಿಸಿಕೊಂಡ ಕೆಲವೇ ಗಂಟೆಗಳ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಡುರೊ ಅವರ ಮೊದಲ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ಕೈಕೋಳ ಹಾಕಿ ಕಣ್ಣುಗಳಿಗೆ ಬಟ್ಟೆ ಕಟ್ಟಿರುವ ಸ್ಥಿತಿಯಲ್ಲಿ ಅಮೆರಿಕದ ಯುದ್ಧನೌಕೆಯಲ್ಲಿ ನಿಂತಿರುವ ಮಡುರೊ ಅವರ ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಿತ್ರದಲ್ಲಿ ಟ್ರ್ಯಾಕ್ಸೂಟ್ ನಂತೆ ಕಾಣುವ ಉಡುಪಿನಲ್ಲಿ 63 ವರ್ಷದ ಮಡುರೊ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಹಿಡಿದುಕೊಂಡಿರುವುದು ಕಾಣಿಸುತ್ತದೆ. ಕ್ಯಾರಕಾಸ್ ನಲ್ಲಿ ನಡೆದ ರಾತ್ರಿಯ ಮಿಲಿಟರಿ ದಾಳಿಯ ವೇಳೆ ಅಮೆರಿಕ ಪಡೆಗಳು ಅವರನ್ನು ವಶಕ್ಕೆ ಪಡೆದಿವೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಸುರಕ್ಷಿತ ಅಧಿಕಾರ ಪರಿವರ್ತನೆ ಪೂರ್ಣಗೊಳ್ಳುವವರೆಗೆ ಅಮೆರಿಕವೇ ವೆನೆಝುವೆಲಾವನ್ನು ನಡೆಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಮಡುರೊ ವಶಪಡಿಸಿಕೊಳ್ಳಲಾದ ಬಳಿಕ ಅಮೆರಿಕದ ತೈಲ ಕಂಪೆನಿಗಳಿಗೆ ವೆನೆಝುವೆಲಾದ ಬೃಹತ್ ಕಚ್ಚಾ ತೈಲ ನಿಕ್ಷೇಪಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಅಮೆರಿಕದ ಸೇನಾ ಉನ್ನತಾಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆ ತಿಂಗಳ ಕಾಲದ ಯೋಜನೆ ಮತ್ತು ಪೂರ್ವಾಭ್ಯಾಸದ ಫಲವಾಗಿದ್ದು, ಪಶ್ಚಿಮ ಗೋಳಾರ್ಧದ ವಿವಿಧ ನೆಲೆಗಳಿಂದ 150ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಬಳಸಲಾಗಿದೆ. ಇದು ಅತ್ಯಂತ ನಿಖರ ಹಾಗೂ ಸಂಕೀರ್ಣ ಹೊರತೆಗೆಯುವ ಕಾರ್ಯಾಚರಣೆಯಾಗಿದ್ದು, ಅಮೆರಿಕ ಪಡೆಗಳಲ್ಲಿ ಯಾರೂ ಮೃತಪಟ್ಟಿಲ್ಲ. ಮಡುರೊ ಮತ್ತು ಅವರ ಪತ್ನಿ ನ್ಯಾಯ ಇಲಾಖೆ ವಶಕ್ಕೆ ಒಪ್ಪಿಸಲ್ಪಟ್ಟಿದ್ದಾರೆ ಎಂದು ಸೇನೆ ಸ್ಪಷ್ಟಪಡಿಸಿದೆ. ಯುದ್ಧ ಕಾರ್ಯಾಚರಣೆ ಪೂರ್ಣಗೊಂಡು ಅಮೆರಿಕ ಪಡೆಗಳು ವೆನೆಝುವೆಲಾದ ವಾಯುಪ್ರದೇಶದಿಂದ ಹೊರಬಂದ ಬಳಿಕ, ಟ್ರಂಪ್ ಇದನ್ನು “ಅದ್ಭುತ ಕಾರ್ಯಾಚರಣೆ” ಎಂದು ವರ್ಣಿಸಿದ್ದಾರೆ. ದಾಳಿಯ ವೇಳೆ ಕೆಲ ಅಮೆರಿಕ ಸೈನಿಕರಿಗೆ ಗಾಯಗಳಾಗಿವೆ, ಆದರೆ ಯಾರೂ ಮೃತಪಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ. ಇದರ ನಡುವೆ ಅಮೆರಿಕ ಬೆಂಬಲಿತ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ಸಾಮಾಜಿಕ ಜಾಲತಾಣದಲ್ಲಿ “ಸ್ವಾತಂತ್ರ್ಯದ ಸಮಯ ಬಂದಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. 2024ರ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದ ಎಡ್ಮಂಡೊ ಗೊನ್ಜಾಲೆಜ್ ಉರುಟಿಯಾ ಅವರನ್ನು ತಕ್ಷಣವೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ. ಈಗಾಗಲೇ ಟ್ರಂಪ್, ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಪ್ರಕರಣಗಳಲ್ಲಿ ವಿಚಾರಣೆಗೆ ನ್ಯೂಯಾರ್ಕ್ ಗೆ ಕರೆದೊಯ್ಯಲಾಗುತ್ತದೆ ಎಂದು ಘೋಷಿಸಿದ್ದಾರೆ. ಡೆಲ್ಟಾ ಪಡೆ ನಡೆಸಿದ ಈ ದಾಳಿಯನ್ನು ಟ್ರಂಪ್ ಹಾಗೂ ಅವರ ಆಡಳಿತದ ಪ್ರಮುಖರು ಫ್ಲೋರಿಡಾದ ಮಾರ್–ಎ–ಲಾಗೊದಲ್ಲಿರುವ ತಮ್ಮ ಕ್ಲಬ್ ನಿಂದ ಲೈವ್ ಆಗಿ ವೀಕ್ಷಿಸಿದ್ದರು ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವೆನೆಝುವೆಲಾ ಸರ್ಕಾರ, ಅಮೆರಿಕದ ಕ್ರಮವನ್ನು “ಅತ್ಯಂತ ಗಂಭೀರ ಮಿಲಿಟರಿ ಆಕ್ರಮಣ” ಎಂದು ಖಂಡಿಸಿದೆ. ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ರಾಜಧಾನಿ ಕ್ಯಾರಕಾಸ್ ನಲ್ಲಿ ರಾತ್ರಿಯಿಡೀ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ.
ಲಿಂಗಸುಗೂರು | ಶಿಕ್ಷಕರ ಕೊರತೆಯಿಂದ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಹಿಂದುಳಿತ : ಶಶಿಲ್ ಜಿ.ನಮೋಶಿ
ಲಿಂಗಸುಗೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದ್ದು, ಇದರ ಪರಿಣಾಮವಾಗಿ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳಲ್ಲಿ ಈ ಭಾಗ ಹಿನ್ನಡೆಯಲ್ಲಿದೆ. ಆದ್ದರಿಂದ ನಮ್ಮ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಅವರು ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದ ಪದವಿ ಪೂರ್ವ ಪ್ರೌಢ ಶಾಲಾ ವಿಭಾಗದಲ್ಲಿ, ತಾಲೂಕು ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಲಿಂಗಸುಗೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಮುಂದಕ್ಕೆ ಬರಬೇಕಾದರೆ ಶಿಕ್ಷಕರ ಕೊರತೆ ನಿವಾರಣೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳೊಂದಿಗೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯವೆಂದರು. ಶಾಸಕ ಮಾನಪ್ಪ ವಜ್ಜಲ್ ಅವರು ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 19 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅನೇಕ ಶಾಲೆಗಳು ಅತಿಥಿ ಶಿಕ್ಷಕರ ಮೂಲಕ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಹೇಗೆ ಮುಂದೆ ಬರಲು ಸಾಧ್ಯ ಎಂದು ಪ್ರಶ್ನಿಸಿದರು. ಸರ್ಕಾರ ಕೂಡಲೇ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸತ್ಯಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹೂನೂರು, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಬಸವರಾಜ ಕರಡಿ, ಬಸವರಾಜ ಹಂದ್ರಾಳ, ಶರಣಗೌಡ ಅಗಸಿ, ಗುರುಸಂಗಯ್ಯ ಗಣಾಚಾರಿ, ಜಮದಗ್ನಿ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಯಚೂರು | ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ
ರಾಯಚೂರು: ನಗರದಲ್ಲಿ ರಾಯಚೂರು ಜಿಲ್ಲಾ ಹಾಗೂ ತಾಲ್ಲೂಕು ಹೂಗಾರ ಸಂಘದ ವತಿಯಿಂದ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ಹೊರವಲಯದಲ್ಲಿರುವ ನವೋದಯ ವೈದ್ಯಕೀಯ ಕಾಲೇಜು ಮುಂಭಾಗದ ಸಾವಿತ್ರಿಬಾಯಿ ಫುಲೆ ವೃತ್ತದಲ್ಲಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್, ಸಮಾಜ ಸುಧಾರಕರು, ಶರಣರು ಹಾಗೂ ಮಹಾತ್ಮರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಒಟ್ಟಾಗಿ ಸ್ಮರಿಸುವ ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು. ದುರ್ಬಲ ಹಾಗೂ ಶೋಷಿತ ಸಮುದಾಯಗಳಿಗೆ ಮೊದಲ ಅಕ್ಷರದ ಬೆಳಕು ನೀಡಿದ ಸಾವಿತ್ರಿಬಾಯಿ ಫುಲೆಯವರ ಸ್ಮರಣೆ ಸರಳ ಹಾಗೂ ಅರ್ಥಪೂರ್ಣ ಆಚರಣೆಯಾಗಿ ನಡೆಯಬೇಕು. ಹೂಗಾರ ಸಮಾಜವು ಇಂತಹ ಆಚರಣೆಗಳ ಮೂಲಕ ಎಲ್ಲ ಸಮುದಾಯಗಳೊಂದಿಗೆ ಶಿಸ್ತು, ಸೌಹಾರ್ದತೆ ಮತ್ತು ಒಗ್ಗಟ್ಟಿನ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಹೂಗಾರ ಸಮಾಜದ ಹಿರಿಯ ಉಗ್ರನರಸಿಂಹಪ್ಪ ಹೂಗಾರ ದಿನ್ನಿ, ಜಿಲ್ಲಾ ಹೂಗಾರ ಸಮಾಜದ ಅಧ್ಯಕ್ಷ ಈರಣ್ಣ ಹೂಗಾರ, ಅಖಂಡ ಕರ್ನಾಟಕ ಹೂಗಾರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ, ರಾಯಚೂರು ತಾಲ್ಲೂಕು ಅಧ್ಯಕ್ಷ ಶಶಿಧರ ಹೂಗಾರ ಮಟಮಾರಿ, ಬಸವರಾಜ ಹೂಗಾರ ತಲಮಾರಿ, ವಕೀಲ ರವಿಕುಮಾರ್, ಮಹಾದೇವ ಹೂಗಾರ ತಲಮಾರಿ, ದಂಡಪ್ಪ ಬಿರಾದಾರ್, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ವಿಜಯಲಕ್ಷ್ಮೀ, ಶಾರದಾ, ಶಿಲ್ಪಾ ಬಿರಾದಾರ್, ಜಯಲಕ್ಷ್ಮಿ, ಸುಮಾ, ಮಹೇಶ್ವರಿ, ಲಕ್ಷ್ಮಿ, ಕಲ್ಪನಾ, ತೋಟಮ್ಮ, ಸುನಿತಾ, ಗೀತಾಂಜಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ | ʼನಾರಿ ಶಕ್ತಿ ಪ್ರಶಸ್ತಿʼಗೆ ಜಮುನಾ ಗುತ್ತೇದಾರ್, ವನಿತಾ ಗುತ್ತೇದಾರ್ ಆಯ್ಕೆ
ಕಲಬುರಗಿ : ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ನಾರಿ ಶಕ್ತಿ ಪ್ರಶಸ್ತಿಗೆ ಸಮಾಜ ಸೇವಕರಾದ ಕಲಬುರಗಿ ಜಿಲ್ಲಾ ಈಡಿಗ ಸಮುದಾಯದ ಜಮುನಾ ಅಶೋಕ್ ಗುತ್ತೇದಾರ್ ಮತ್ತು ವನಿತಾ ಚಂದ್ರಕಾಂತ್ ಗುತ್ತೇದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಆರ್ಯ ಈಡಿಗ ಸಂಘವು ಜ.4ರಂದು ( ಭಾನುವಾರ ) ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ ನಾರಿ ಶಕ್ತಿ ರಾಷ್ಟ್ರೀಯ ಸಮಾವೇಶದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಜಮುನಾ ಗುತ್ತೇದಾರ್ ಸ್ಟೇಷನ್ ಗಾಣಗಾಪುರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಆರೋಗ್ಯ ರಂಗದಲ್ಲಿ ಮತ್ತು ಕೃಷಿಕರಾಗಿಯೂ, ಮಹಿಳಾ ಸಬಲೀಕರಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಸ್ವತಃ ಗಾಯಕಿ ಆಗಿರುವ ಇವರು ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ನಾರಿ ಶಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಅಭಿನಂದನೆ : ಈಡಿಗ ಸಮುದಾಯದ ಇಬ್ಬರು ಸಮಾಜ ಸೇವಾ ಕಾರ್ಯಕರ್ತರಾದ ಜಮುನಾ ಅಶೋಕ್ ಗುತ್ತೇದಾರ್ ಮತ್ತು ವನಿತಾ ಚಂದ್ರಕಾಂತ ಗುತ್ತೇದಾರ್ ಅವರನ್ನು ಕರ್ನಾಟಕ ರಾಜ್ಯ ಈಡಿಗ ಮಹಿಳಾ ಸಂಘವು ನಾರಿ ಶಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಮುದಾಯಕ್ಕೆ ಸಿಕ್ಕ ದೊಡ್ಡ ಗೌರವ ಎಂದು ಕಲಬುರಗಿಯ ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.
ಮಾರ್ಚ್ನಿಂದ ₹500 ನೋಟು ರದ್ದಾಗಲಿದೆಯೇ? ವೈರಲ್ ಸುದ್ದಿ ಬಗ್ಗೆ ಇಲ್ಲಿದೆ ಸ್ಪಷ್ಟನೆ
ಈ ಹಿಂದೆ ನೋಟ್ ಬ್ಯಾನ್ ಆಗಿದ್ದನ್ನು ಜನ ಇಂದಿಗೂ ಮರೆತಿಲ್ಲ. ಏಕಾಏಕಿ ತಾವು ಬಳಕೆ ಮಾಡುತ್ತಿದ್ದ ನೋಟುಗಳು ತಕ್ಷಣದಿಂದಲೇ ರದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಬಳಿಕ ಹೊಸ ನೋಟುಗಳು ಚಲಾವಣೆಗೆ ಬಂದಿದ್ದವು. ಆದರೆ, ಇದೇ ಮಾರ್ಚ್ನಿಂದ 2026ರಿಂದ ಎಟಿಎಂಗಳಲ್ಲಿ 500 ರೂಪಾಯಿ ನೋಟುಗಳ ವಿತರಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಲ್ಲಿಸುತ್ತದೆ ಎಂದು
ಕಲಬುರಗಿ | ಹೆಸರು, ಉದ್ದು, ಸೂರ್ಯಕಾಂತಿ ಕಾಳು, ಸೋಯಾಬಿನ್ ಮಾರಾಟ ಮಾಡಲು ಕಾಲಾವಧಿ ವಿಸ್ತರಣೆ: ಬಿ.ಫೌಝಿಯಾ ತರನ್ನುಮ್
ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ. ಗುಣಮಟ್ಟದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಮಾರಾಟ ಮಾಡಲು ಈಗಾಗಲೇ ನಿಗದಿತ ಅವಧಿಯಲ್ಲಿ ನೊಂದಾಯಿಸಿಕೊಂಡಿರುವ ರೈತರು ಮಾರಾಟ ಮಾಡುವ ಕಾಲಾವಧಿ ವಿಸ್ತರಿಸಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ. ಹೆಸರು ಕಾಳು ಪ್ರತಿ ಕ್ವಿಂಟಾಲ್ಗೆ 8,768 ರೂ., ಉದ್ದಿನ ಕಾಳು ಪ್ರತಿ ಕ್ವಿಂಟಾಲ್ಗೆ 7,800 ರೂ. ಮತ್ತು ಸೂರ್ಯಕಾಂತಿ ಪ್ರತಿ ಕ್ವಿಂಟಾಲ್ಗೆ 7,721 ರೂ. ಗಳಂತೆ ಖರೀದಿಸಲಾಗುತ್ತಿದ್ದು, ಈ ಉತ್ಪನ್ನಗಳ ಮಾರಾಟ ಮಾಡಲು ಜ.22 ರವರೆಗೆ ಹಾಗೂ ಸೋಯಾಬೀನ್ ಪ್ರತಿ ಕ್ವಿಂಟಾಲ್ಗೆ 5,328 ರೂ. ಗಳಂತೆ ಮಾರಾಟ ಮಾಡಲು ಜ.26 ರವರೆಗೆ ಕಾಲಾವಧಿ ವಿಸ್ತರಿಸಲಾಗಿದೆ. ಜಿಲ್ಲೆಯ ರೈತರು ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (ಪಿ.ಎ.ಸಿ.ಎಸ್) (PACS) ಹಾಗೂ (ಎಫ್.ಪಿ.ಓ.) FPO ಗಳಿಗೆ ಭೇಟಿ ನೀಡಿ ತಾವು ಬೆಳೆದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬೀನ್ ನಿಗದಿತ ಅವಧಿಯಲ್ಲಿ ಮಾರಾಟ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಉದ್ದಿನ ಕಾಳು ಮತ್ತು ಸೋಯಾಬೀನ್ ಮಾರಾಟಕ್ಕೆ ಕೆ.ಎಸ್.ಸಿ.ಎಮ್.ಎಫ್. ಮೊಬೈಲ್ ಸಂಖ್ಯೆ 9449864446, ಹೆಸರು ಕಾಳು ಮಾರಾಟಕ್ಕೆ ಕೆ.ಎಸ್.ಪಿ.ಎ.ಎಮ್.ಎಲ್. ಮೊಬೈಲ್ ಸಂಖ್ಯೆ 9964474444 ಹಾಗೂ ಸೂರ್ಯಕಾಂತಿ ಮಾರಾಟಕ್ಕೆ ಕೆ.ಓ.ಎಫ್. ಮೊಬೈಲ್ ಸಂಖ್ಯೆ. 9591812142 ಸಂಪರ್ಕಿಸಲು ಕೋರಿದೆ.
ಆಳಂದ | ಜ.5ರಂದು ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವ, ಬಹಿರಂಗ ಸಭೆ : ಪಿಂಟು ಸಾಲೇಗಾಂವ
ಆಳಂದ: ಪಟ್ಟಣದ ಹಳೆಯ ಚೆಕ್ಪೋಸ್ಟ್ ಬಳಿಯ ದೀಕ್ಷಾ ಭೂಮಿಯಲ್ಲಿ ಜ.5ರಂದು ತಾಲೂಕು ದಲಿತ ಸೇನೆಯ ಆಶ್ರಯದಲ್ಲಿ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ತಾಲೂಕು ದಲಿತ ಸೇನೆ ಅಧ್ಯಕ್ಷ ಪಿಂಟು ಸಾಲೇಗಾಂವ ಅವರು ತಿಳಿಸಿದರು. ಈ ಕುರಿತು ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕ್ರಮದ ವಾಲ್ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಂದು ಬೆಳಗ್ಗೆ 10.30ಕ್ಕೆ ಬಹಿರಂಗ ಸಭೆ ಮತ್ತು ಮಧ್ಯಾಹ್ನ 1.30ಕ್ಕೆ ಭೀಮ ಕೋರೆಗಾಂವ್ ಸ್ತಂಭ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಭವ್ಯವಾಗಿ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳಲಾಗಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಕಲಬುರಗಿ ಬುದ್ಧ ವಿಹಾರದ ಧಮ್ಮ ಜ್ಯೋತಿ ಬಂತೇಜಿ ಅವರು ವಹಿಸಲಿದ್ದಾರೆ. ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಭಾವಚಿತ್ರ ಪೂಜೆಯನ್ನು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ನ್ಯಾಯವಾದಿ ಹನುಮಂತ ಯಳಸಂಗಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಉಪನ್ಯಾಸಕ ಜಿತೇಂದ್ರ ತಳವಾರ ಅವರು ಉಪನ್ಯಾಸ ನೀಡುವರು ಎಂದು ಹೇಳಿದರು. ಈ ವೇದಿಕೆಯಲ್ಲಿ ಮುಖಂಡ ದಯಾನಂದ ಶೇರಿಕಾರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ದರಾಮ್ ಪ್ಯಾಟಿ, ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಭಂಡಾರಿ, ಹಿರಿಯ ಮುಖಂಡ ಬಸಲಿಂಗ ಗಾಯಕ್ವಾಡ್, ಆರ್ಪಿಐ ರಾಜ್ಯಾಧ್ಯಕ್ಷ ಪ್ರಕಾಶ್ ಮೂಲಭಾರತಿ, ಆನಂದ ಗಾಯಕ್ವಾಡ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಆದಿಮನಿ, ಆನಂದ ಗಾಯಕವಾಡ, ಪುರಸಭೆ ನಿಕಟಪೂರ್ವ ಅಧ್ಯಕ್ಷ ಫಿರದೋಸ್ ಅನ್ಸಾರಿ, ಉದ್ಯಮೆ ಮಲ್ಲಿಕಾರ್ಜುನ ಖೇಮಜೀ, ಪರಸಭೆ ನಿಕಟಪೂರ್ವ ಸದಸ್ಯ ಶಿವುಪುತ್ರ ನಡಗೇರಿ, ಲಕ್ಷ್ಮಣ್ ಝಳಕಿ, ಸಂದೀಪ್ ಪಾತ್ರೆ, ಸಿದ್ಧು ಪೂಜಾರಿ ಮತ್ತು ಬಿಜೆಪಿ ಮುಖಂಡ ಕಿಟ್ಟಿ ಸಾಲೇಗಾಂವ ಅವರನ್ನು ಒಳಗೊಂಡಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಸೇನೆಯ ತಾಲೂಕು ಗೌರವ ಅಧ್ಯಕ್ಷ ಪಿಂಕು ಭದ್ರೆ, ಕಾರ್ಯಾಧ್ಯಕ್ಷ ಗೌತಮ ಕಾಂಬಳೆ, ವಿ.ಓ. ಅಧ್ಯಕ್ಷ ಗೌತಮ ನಿಂಬಾಳ, ಜಿಲ್ಲಾ ಮುಖಂಡ ಅಪ್ಪು ಗೋಪಾಳೆ, ಆಕಾಶ ಬಂಗರಗಾ, ಸಾಗರೆ ಗುಳಗಿ, ರಾಘವೇಂದ್ರ ಹೇಬಳಿ ಸೇರಿದಂತೆ ಇತರರು ಇದ್ದರು.
ಕಾಳಗಿ | ಕಂದಗೂಳ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ : ಸಾಂಕ್ರಾಮಿಕ ರೋಗ ಭೀತಿ
ಕಾಳಗಿ : ತಾಲೂಕಿನ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನವಾದ ಕಂದಗೂಳ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ. ಗ್ರಾಮದ ಕುರುಬರ ಗಲ್ಲಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳ ಮುಂಭಾಗದಲ್ಲಿ ಹೊಲಸು ನೀರು ನಿಂತಿದ್ದು, ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಓಣಿಯ ನಿವಾಸಿಗಳು ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಗ್ರಾಮಸ್ಥರು ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಚರಂಡಿ ದುರಸ್ತಿ ಹಾಗೂ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಗ್ರಾಮದ ಮಹಿಳೆಯೊಬ್ಬರು ಸರಕಾರಿ ಸಾರ್ವಜನಿಕ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ, ಅದನ್ನು ಧರ್ಮಸ್ಥಳ ಸಂಘದವರಿಗೆ ಬಾಡಿಗೆಗೆ ನೀಡಿ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಚರಂಡಿ ನಿರ್ಮಾಣಕ್ಕೆ ತಕರಾರು ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ದೂರಿದ್ದಾರೆ. ಕುರುಬರ ಗಲ್ಲಿ ಹಾಗೂ ಬಾದುನ ಮನೆಯ ಹತ್ತಿರದ ನಿವಾಸಿಗಳು ಸ್ವಂತ ಖರ್ಚಿನಲ್ಲಿ ಚರಂಡಿ ದುರಸ್ತಿ ಮಾಡಲು ಮುಂದಾದರೂ, ಜಾಗ ತಮ್ಮದೇ ಎಂಬ ಕಾರಣ ನೀಡಿ ಮಹಿಳೆಯೊಬ್ಬರು ತಕರಾರು ಮಾಡುತ್ತಿರುವುದರಿಂದ ಸಮಸ್ಯೆ ಕಗ್ಗಂಟಾಗಿ ಉಳಿದಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರಾದ ಗೌರಮ್ಮ ಕುರುಬರ, ಬಂಡಮ್ಮ ಸರಡಗಿ, ನಿಂಬೆಮ್ಮ ಸರಡಗಿ, ಗೌರಬಿ ಮುಲ್ಲಾಗೋಳ, ಸಿದ್ದಣ್ಣ ಹಡಪಾದ, ಶಿವರಾಜ್ ಪೂಜಾರಿ, ಗುರುನಾಥ ಪೂಜಾರಿ, ಬಸಪ್ಪ ಜಿಡಗಿ, ಮಲ್ಲು ಜಿಡಗಿ, ಮಂಜುನಾಥ ಜಿಡಗಿ, ಗುರುನಾಥ ವಾಡೇದ, ಅಶೋಕ ನಾರಂಜಿ, ಆನಂದ ಚನ್ನೂರ, ಬಾಬುರಾವ ಸರಡಗಿ, ಮಲ್ಲಿನಾಥ ಬಾದುನ, ಪ್ರಭುಗೌಡ ರಾಚಟ್ಟಿ, ಈರಣ್ಣ ವಜ್ಜರಗ್ಗಿ, ಗುಂಡಪ್ಪ ಮಹಗಾಂವ್, ಮರ್ತುಜ್ ಅಲಿ ಮುಲ್ಲಾ, ಅನೀಲ ಕೇಶಟ್ಟಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ. “ಮನೆಯ ಮುಂದೆ ಚರಂಡಿಯ ಹೊಲಸು ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೂ ಬಿಡುತ್ತಿಲ್ಲ. ಇದರಿಂದ ಓಡಾಟಕ್ಕೂ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಬೇಕು.” -ಬಂಡಮ್ಮ ಸರಡಗಿ, ಕಂದಗೂಳ ಗ್ರಾಮದ ಮಹಿಳೆ “ನಮ್ಮ ಮನೆಯ ಎದುರುಗಡೆ ಇರುವ ಸಾರ್ವಜನಿಕ ಸ್ಥಳ ಹುಳು–ಹುಪ್ಪಡಿ ಹಾಗೂ ವಿಷಜಂತುಗಳ ವಾಸಸ್ಥಾನವಾಗಿದೆ. ಸ್ವಂತ ಖರ್ಚಿನಲ್ಲಿ ಮುರುಮ ಹಾಕಿ ಸ್ವಚ್ಛಗೊಳಿಸಲು ನಿರ್ಧರಿಸಿದ್ದೇವೆ. ಆದರೆ ಗ್ರಾಮದ ಮಹಿಳೆಯೊಬ್ಬರು ಆ ಜಾಗ ನಮ್ಮದೇ ಎಂದು ತಕರಾರು ಮಾಡುತ್ತಿದ್ದಾರೆ. ಜಾಗ ನಿಮ್ಮದಾದರೆ ದಾಖಲೆ ತೋರಿಸಿ ಎಂದು ಕೇಳಿದರೆ ಜಗಳವಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ಪಿಡಿಓ ಅವರು ಸ್ಥಳ ಪರಿಶೀಲನೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು.” -ಮಲ್ಲಿನಾಥ ಚಿತ್ರಶೇಖರ ಬಾದುನ
ವಾಡಿ | ಆಧ್ಯಾತ್ಮದಿಂದ ಆತ್ಮಸಾಕ್ಷಾತ್ಕಾರ, ಆಂತರಿಕ ಶಾಂತಿ ಸಾಧ್ಯ : ಅಭಿನವ ಮುನೀಂದ್ರ ಶಿವಾಚಾರ್ಯರು
ವಾಡಿ: ಆಧ್ಯಾತ್ಮದ ಮೂಲಕ ಆತ್ಮಸಾಕ್ಷಾತ್ಕಾರ ಮತ್ತು ಆಂತರಿಕ ಶಾಂತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅದರಿಂದಲೇ ಉತ್ತಮ ಬದುಕು ಹಾಗೂ ನೆಮ್ಮದಿಯ ಜೀವನ ನಡೆಸಬಹುದು ಎಂದು ಹಲಕರ್ಟಿ ಕಟ್ಟಿಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯರು ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಶ್ರೀ ರೇಣುಕಾ ಎಲ್ಲಮ್ಮ ದೇವಿಯ 14ನೇ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ವಿಶೇಷ ಪ್ರವಚನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ದೇಹ–ಮನಸ್ಸು–ಆತ್ಮಗಳ ಸಮತೋಲನ ಸಾಧಿಸಲು ಧ್ಯಾನ, ಪ್ರಾರ್ಥನೆ ಹಾಗೂ ಧರ್ಮಗ್ರಂಥಗಳ ಅಧ್ಯಯನ ಅಗತ್ಯವಿದೆ ಎಂದು ತಿಳಿಸಿದರು. ಇದರಿಂದ ವ್ಯಕ್ತಿಯ ಜೀವನದಲ್ಲಿ ಆಂತರಿಕ ಮತ್ತು ಬಾಹ್ಯ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಎಂದರು. ನಾವು ಕುಳಿತಿರುವ ಸ್ಥಳ ನಿನ್ನೆ ಹೇಗಿತ್ತು ಅಥವಾ ನಾಳೆ ಹೇಗಿರುತ್ತದೆ ಎಂಬುದು ಮುಖ್ಯವಲ್ಲ. ಜಾತ್ರೆಯ ಸಂದರ್ಭದ ಪೂಜೆ, ಪಠಣ, ಪಾರಾಯಣ ಹಾಗೂ ಕೀರ್ತನೆಗಳ ಮೂಲಕ ಈ ಸ್ಥಳ ಅತ್ಯಂತ ಪವಿತ್ರವಾಗಿ ಸ್ವರ್ಗಕ್ಕಿಂತಲೂ ಶ್ರೇಷ್ಠವಾಗಿ ಪರಿವರ್ತಿತವಾಗುತ್ತದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಘಟಕದ ಅಧ್ಯಕ್ಷ ಸಿದ್ದಯ್ಯಶಾಸ್ತ್ರೀ ನಂದೂರಮಠ ಮಾತನಾಡಿ, ಗುರುವಿನ ಮಾರ್ಗದರ್ಶನದಿಂದಲೇ ಅಜ್ಞಾನ ಎಂಬ ಕತ್ತಲೆಯನ್ನು ದೂರ ಮಾಡಿ ಆತ್ಮಜ್ಞಾನದ ಕಡೆಗೆ ಸಾಗಬಹುದು. ಗುರು ದೇವರಿಗೆ ಸಮಾನರು, ಕುಂಬಾರನು ಮಣ್ಣನ್ನು ಹದಗೊಳಿಸುವಂತೆ ಶಿಷ್ಯರನ್ನು ಹದಗೊಳಿಸಿ ಆನಂದಮಯ ಜೀವನದತ್ತ ನಡೆಸುತ್ತಾರೆ. ಆದ್ದರಿಂದ ಗುರುವಿನ ಮಾರ್ಗದರ್ಶನದಲ್ಲಿ ಬದುಕಿದರೆ ಮಾತ್ರ ಮುಕ್ತಿಯನ್ನು ಪಡೆಯಲು ಸಾಧ್ಯ ಎಂದರು. ಮೈಲಾಪುರ ಮೈಲಾರಲಿಂಗೇಶ್ವರ ಪೀಠದ ಪೀಠಾಧಿಪತಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ರೇಣುಕಾ ಎಲ್ಲಮ್ಮ ದೇವಸ್ಥಾನದ ರೇಣುಕಾ ಅಮ್ಮ ಸಾನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ಸುಭಾಷ ಸನಬಾಲ, ಶರಣು ಮರತೂರ, ಬಸವರಾಜ ತುಮಕೂರ, ವಿಜಯಕುಮಾರ ಮೇತ್ರೆ, ಭೀಮರಾಯ ಮುದ್ನಾಳ, ಶಣ್ಮುಖ ಕೊಲ್ಲೂರ, ಸಾಯಬಣ್ಣ ಸೂಗೂರ, ಹಣಮಂತ ಕೆಲ್ಲೂರ, ರಾಮು ಅಳ್ಳೊಳ್ಳಿ, ಮಲ್ಲು ಮುದ್ನಾಳ, ಅನೀಲ ಮುದ್ನಾಳ, ನಿಂಗಪ್ಪ ಹಳ್ಳಿ, ಮಾರ್ತಂಡ ಮಾಡಗಿ, ರವಿ ತೆಗ್ಗನೂರ, ಚಂದಪ್ಪ ಕಟ್ಟಿಮನಿ, ಶಂಕರ ಮುಡಬೂಳ, ಶರಣಪ್ಪ ರಾಜಳ್ಳಿ, ಚಂದ್ರು ರಾಜಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಣ್ಮುಖ ಕೊಲ್ಲೂರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಅಮೆರಿಕದ ನ್ಯಾಯಾಲಯದಲ್ಲಿ ಮಡುರೊ ದಂಪತಿ ವಿಚಾರಣೆ: ಯುಎಸ್ ಅಟಾರ್ನಿ ಜನರಲ್ ಘೋಷಣೆ
ವಾಶಿಂಗ್ಟನ್, ಜ. 3: ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ನ್ಯೂಯಾರ್ಕ್ನಲ್ಲಿ ನ್ಯಾಯಾಂಗ ವಿಚಾರಣೆ ಎದುರಿಸಲಿದ್ದಾರೆ ಎಂದು ಅಮೆರಿಕದ ಅಟಾರ್ನಿ ಜನರಲ್ ಪ್ಯಾಮ್ ಬೊಂಡಿ ಹೇಳಿದ್ದಾರೆ. ‘‘ವೆನೆಝುವೆಲದ ದಂಪತಿಯು ಶೀಘ್ರದಲ್ಲೇ ಅಮೆರಿಕದ ನೆಲದಲ್ಲಿ, ಅಮೆರಿಕದ ನ್ಯಾಯಾಲಯಗಳಲ್ಲಿ ಅಮೆರಿಕದ ಕಾನೂನಿನ ಪೂರ್ಣ ಕ್ರೋಧವನ್ನು ಎದುರಿಸಲಿದ್ದಾರೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಅವರು ತಿಳಿಸಿದ್ದಾರೆ. ‘‘ನಿಕೊಲಸ್ ವಿರುದ್ಧ ಅಮೆರಿಕದಲ್ಲಿ ಮಾದಕ ದ್ರವ್ಯ-ಭಯೋತ್ಪಾದನೆ ಪಿತೂರಿ, ಕೊಕೇನ್ ಆಮದು ಪಿತೂರಿ, ಮಶಿನ್ಗನ್ಗಳು ಮತ್ತು ವಿನಾಶಕಾರಿ ಸಲಕರಣೆಗಳನ್ನು ಹೊಂದಿರುವ ಹಾಗೂ ಅಮೆರಿಕದ ವಿರುದ್ಧ ಬಳಕೆಗಾಗಿ ಮಶಿನ್ಗನ್ಗಳು ಮತ್ತು ವಿನಾಶಕಾರಿ ಸಲಕರಣೆಗಳನ್ನು ಹೊಂದಲು ನಡೆಸಿದ ಪಿತೂರಿಗೆ ಸಂಬಂಧಿಸಿದ ಮೊಕದ್ದಮೆಗಳು ದಾಖಲಾಗಿವೆ’’ ಎಂದು ಅವರು ಹೇಳಿದ್ದಾರೆ.
ಕಾಳಗಿ | ಸರ್ಕಾರಿ ಶಾಲೆ ಮುಚ್ಚಲು ವಿರೋಧ : ಎಐಡಿಎಸ್ಓ ನೇತೃತ್ವದಲ್ಲಿ ಪಾಲಕರು, ವಿದ್ಯಾರ್ಥಿಗಳ ಪ್ರತಿಭಟನೆ
ಕಾಳಗಿ: ತಾಲೂಕಿನ ಕೋರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯಾಗಿ ಗುರುತಿಸಿ, ವಚ್ಚಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ಗೆ ವಿಲೀನಗೊಳಿಸಿ ಸಂಪೂರ್ಣವಾಗಿ ಮುಚ್ಚಲು ಸರ್ಕಾರ ಮುಂದಾಗಿರುವ ಕ್ರಮವನ್ನು ಖಂಡಿಸಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಕೌನ್ಸಿಲ್ ಅಧ್ಯಕ್ಷ ತುಳಜರಾಮ ಎನ್.ಕೆ., ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಕ್ರಮೇಣ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ ಎಂದು ಆರೋಪಿಸಿದರು. ಒಂದು ಕಡೆ “ಒಂದು ಮಗು ಇದ್ದರೂ ಶಾಲೆಗೆ ಎಲ್ಲಾ ಸೌಲಭ್ಯ ಒದಗಿಸಲಾಗುತ್ತದೆ, ಶಾಲೆ ಮುಚ್ಚುವುದಿಲ್ಲ” ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಶಾಲೆಗಳ ವಿಲೀನ ಮತ್ತು ಮುಚ್ಚುವಿಕೆ ನಡೆಯುತ್ತಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು. ಸರ್ಕಾರಕ್ಕೆ ನಿಜವಾಗಿಯೂ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಇದ್ದರೆ, ಶಾಲೆಗಳ ವಿಲೀನ ಹಾಗೂ ಮುಚ್ಚುವಿಕೆಯನ್ನು ನಿಲ್ಲಿಸುವ ಕುರಿತು ಲಿಖಿತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ 200ಕ್ಕೂ ಹೆಚ್ಚು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಗುರಿಯಾಗಿಸಿಕೊಂಡಿದ್ದು, ಈ ಭಾಗದ ಅಭಿವೃದ್ಧಿಗೆ ಮೀಸಲಾದ ಕೆಕೆಆರ್ಡಿಬಿ ನಿಧಿಯ ಹಣವನ್ನು 2 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ದುರುಪಯೋಗಪಡಿಸಲಾಗುತ್ತಿದೆ ಎಂದು ಆರೋಪಿಸಿದರು. ವಚ್ಚಾ ಗ್ರಾಮದ ಜನರು ಈ ನೀತಿಯ ವಿರುದ್ಧ ಎಚ್ಚೆತ್ತುಕೊಂಡು ಬೃಹತ್ ಜನಾಂದೋಲನ ಕಟ್ಟಬೇಕು. ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚಲು ಬಿಡಬಾರದು ಎಂದು ಅವರು ಕರೆ ನೀಡಿದರು. ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷ ಗೋವಿಂದ ಯಳವರ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಗ್ರಾಮದ ಮುಖಂಡರಾದ ವೀರಭದ್ರಪ್ಪ ಸ್ವಾಮಿ, ಸಂಜುಕುಮಾರ್, ಶರಣು ಪೂಜಾರಿ, ಶ್ರೀನಿವಾಸ್, ಕಾಶಿನಾಥ್, ಶಿವಕುಮಾರ್, ಸಿದ್ದಣ್ಣ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು.
ಟಿಎಂಸಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸಂಸದೆ ಮೌಸಮ್ ನೂರ್
ಕೋಲ್ಕತ್ತಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದೆ ಮೌಸಮ್ ನೂರ್ ತಮ್ಮ ಮಾತೃಪಕ್ಷವಾದ ಕಾಂಗ್ರೆಸ್ ಗೆ ಮರಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್ ಹಾಗೂ ಗುಲಾಂ ಅಹ್ಮದ್ ಮೀರ್ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಂಸದೆ ಮೌಸಮ್ ನೂರ್, “ಪಶ್ಚಿಮ ಬಂಗಾಳಕ್ಕೆ ಬದಲಾವಣೆ ಬೇಕಿದೆ” ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕತ್ವದ ಕುರಿತು ತನಗೆ ಸಂಪೂರ್ಣ ವಿಶ್ವಾಸವಿದೆ. ಪಕ್ಷವು ನನಗೆ ಯಾವ ಜವಾಬ್ದಾರಿ ನೀಡುತ್ತೋ ಅದಕ್ಕೆ ಹೆಗಲು ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ಚಿತ್ತಾಪುರ | ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ನಾಗಲಕ್ಷ್ಮೀ ಚೌಧರಿ
ಚಿತ್ತಾಪುರ: ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದ ಸಮಯವಾಗಿದ್ದು, ಈ ಅವಧಿಯಲ್ಲಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂದೆ–ತಾಯಿಗಳು ತಮ್ಮ ಸಂಪೂರ್ಣ ಜೀವನವನ್ನು ಮಕ್ಕಳ ಭವಿಷ್ಯಕ್ಕಾಗಿ ಮುಡುಪಾಗಿಟ್ಟಿರುತ್ತಾರೆ. ಅವರು ಇಟ್ಟಿರುವ ನಂಬಿಕೆಗೆ ವಿದ್ಯಾರ್ಥಿಗಳು ಮೋಸ ಮಾಡಬಾರದು ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಅತಿಯಾದ ಮೊಬೈಲ್ ಬಳಕೆ, ದುಶ್ಚಟಗಳು ಹಾಗೂ ಪ್ರೀತಿ–ಪ್ರೇಮದ ವ್ಯತ್ಯಯಗಳಿಂದ ದೂರವಿದ್ದು, ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಅರಿವು ಹೊಂದಿ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು, ಓದಿನ ಹಸಿವು ಹಾಗೂ ಸಾಧನೆಯ ಛಲ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ಸೇರಿದಂತೆ ವಿವಿಧ ದುಶ್ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹೊರಬಂದು ‘ಮುಂದೆ ಗುರಿ, ಹಿಂದೆ ಗುರು’ ಎಂಬ ತತ್ವದೊಂದಿಗೆ, ಸರ್ಕಾರ ನೀಡುತ್ತಿರುವ ಶಿಕ್ಷಣ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಾಸಂಗ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಬಿರಾದಾರ ವಹಿಸಿದ್ದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗಯ್ಯ ಹಿರೆಮಠ, ತಾಪಂ ಇಓ ಅಕ್ರಂ ಪಾಷಾ, ಸಿಡಿಪಿಓ ಆರತಿ ತುಪ್ಪದ, ಪಿಎಸ್ಐ ಮಂಜುನಾಥ ರೆಡ್ಡಿ, ಬಿಇಓ ಶಶಿಧರ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಡಾ.ಸೂಗೂರೇಶ್ವರ ಪ್ರಾರ್ಥಿಸಿದರು, ಮಲ್ಲಪ್ಪ ಮಾನೇಗಾರ ಸ್ವಾಗತಿಸಿದರು, ಸಂಗಪ್ಪ ಮಾಮನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಹಿಂದ ಎಂಬುದು ಕೇವಲ ಮತಬ್ಯಾಂಕ್ ಅಲ್ಲ: ಚಿಂತಕ ಶಿವಸುಂದರ್
ಮೈಸೂರು: ಅಹಿಂದ ಎಂಬುದು ಕೇವಲ ಮತಬ್ಯಾಂಕ್, ಅಲ್ಲ, ಅದೊಂದು ತತ್ವ ಮತ್ತು ಆದರ್ಶವಾಗಿದ್ದು, ಅಹಿಂದ ವರ್ಗವನ್ನು ಜಾಗೃತಗೊಳಿಸಬೇಕಿದೆ ಎಂದು ಚಿಂತಕ ಶಿವಸುಂದರ್ ತಿಳಿಸಿದರು. ನಗರದ ಜೆ ಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಶನಿವಾರ ಅಹಿಂದ ಚಳುವಳಿ ವತಿಯಿಂದ ಅಯೋಜಿಸಿದ್ದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯದ ಜಾಗೃತಿ ಸಭೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಅಹಿಂದ ವರ್ಗವನ್ನು ರಾಜಕೀಯ ಪಕ್ಷಗಳು ಮತ ಬ್ಯಾಂಕ್ ಎಂದುಕೊಂಡಿವೆ. ಆದರೆ ಅಹಿಂದ ಎಂಬುದು ತತ್ವ ಆದರ್ಶ, ಅಹಿಂದ ವರ್ಗ ಗಟ್ಟಿಯಾಗಿ ನಿಂತರೆ ರಾಜಕೀಯ ಬದಲಾವಣೆ ಮಾಡುವ ಶಕ್ತಿಯಿದೆ. ಹಾಗಾಗಿ ಅಹಿಂದ ವರ್ಗವನ್ನು ಜಾಗೃತಗೊಳಿಸಬೇಕಿದೆ ಎಂದು ಹೇಳಿದರು. ಎಸ್.ಐ.ಆರ್ ಮೂಲಕ ಅಹಿಂದ ವರ್ಗಗಳ ಮತಗಳನ್ನು ಬೇರ್ಪಡಿಸುವ ಷಡ್ಯಂತರ ನಡೆಯುತ್ತಿದೆ. ಎಸ್ ಐ ಆರ್ ಎಂದರೆ ಕೇವಲ ಮತಪಟ್ಟಿಯ ತೀವ್ರ ಪರಿಷ್ಕರಣೆ ಮಾತ್ರವಲ್ಲ, ಅದು ಅಷ್ಟೆ ಆಗಿದ್ದರೆ ಇದಕ್ಕೆ ಯಾರ ವಿರೋಧವೂ ಇರುತ್ತಿರಲಿಲ್ಲ. ಸರ್ಕಾರವೇ ಯಾರು ಮತ ಹಾಕಬೇಕು ಎನ್ನುವುದನ್ನ ಆಯ್ಕೆ ಮಾಡುವ ವಿಕೃತ ಫ್ಯಾಸಿಸ್ಟ್ ಪ್ರಕ್ರಿಯೆ ಎಂದು ಹೇಳಿದರು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹೇಳಿದಂತೆ ದೇಶ ಆಳುವ ರಾಜ ಮತಪೆಟ್ಟಿಗೆಯಲ್ಲಿ ಹುಟ್ಟಬೇಕು ಎನ್ನುವುದು ಅವರ ಆಶಯವಾಗಿತ್ತು. ಅದಕ್ಕಾಗಿ ಎಲ್ಲ ನಾಗರೀಕರಿಗೆ ಸಂವಿಧಾನವು ಮತ ಹಾಕುವ ಹಕ್ಕನ್ನು ನೀಡಿರುವುದನ್ನು ನಾವೆಲ್ಲ ಅರಿಯಬೇಕು. ಆರ್ಟಿಕಲ್ 3 ರಿಂದ 12 ರವರೆಗೆ ಹೇಳುವಂತೆ ಈ ದೇಶದಲ್ಲಿ ಹುಟ್ಟಿದ ಎಲ್ಲರೂ ನಾಗರೀಕರು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟ ಜನರಿಗೆ ಸಂವಿಧಾನದಲ್ಲಿ ಮತ ಹಾಕುವುದಕ್ಕೆ ಯಾವ ವಿರೋಧವು ಇಲ್ಲವೆಂಬಂತೆ ದಾಖಲಿಸಲಾಗಿದೆ ಎಂದು ಹೇಳಿದರು. 1960 ರಲ್ಲಿ ಮತದಾರರ ಪಟ್ಟಿ ಸಿದ್ದಪಡಿಸುವ ಪರಿಷ್ಕರಣಾ ನಿಯಮಗಳು ಜಾರಿಗೆ ಬಂದಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಿಷ್ಕರಣೆ ಆರಂಭವಾಯಿತು. ಹದಿನೆಂಟು ವರ್ಷ ತುಂಬಿದ ಬಳಿಕ ಮತದಾನ ಮಾಡುವ ಹಕ್ಕನ್ನು ನೀಡುವಂತದ್ದು ಸರ್ಕಾರದ್ದು ಆಗಿರುತ್ತದೆ ಎಂಬುದನ್ನು ನಾವು ತಿಳಿಯಬೇಕಿದೆ. ಚುನಾವಣಾ ಅಯೋಗ ಮೊದಲ ಹಂತದಲ್ಲಿ ಮ್ಯಾಪಿಂಗ್ ನಡೆಸಲಿದೆ. 2002 ರಲ್ಲಿ ಆಗಿದ್ದ ಪರಿಷ್ಕರಣೆಯಲ್ಲಿ ಮತಪಟ್ಟಿಯಲ್ಲಿ ಹೆಸರು ಇತ್ತು ಎನ್ನುವುದು ಹೋಲಿಕೆ ಆದರೆ ಮಾತ್ರ ಈ ದೇಶದ ನಾಗರೀಕರಾಗಲು ಸಾಧ್ಯ, ಆದರೆ ನಮ್ಮ ಬಳಿ ಹೆಚ್ಚು ದಾಖಲೆ ಇಲ್ಲ , 2002 ರ ನಂತರ ಹುಟ್ಟಿದವರು ತನ್ನ ಅಪ್ಪ ಅಮ್ಮನ ಹೆಸರು ಇರಬೇಕಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಈಗಾಗಲೇ ಮ್ಯಾಪಿಂಗ್ ಕಾರ್ಯ ನಡೆದಿದ್ದು ತಮಿಳುನಾಡಿನ ಎಂಟು ಕೋಟಿ ಮತದಾರರ ಪೈಕಿ 98 ಲಕ್ಷ ಜನರ ಮ್ಯಾಪಿಂಗ್ ಆಗಿಲ್ಲ ಹಾಗೂ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಆದರೂ ನಮ್ಮಹೆಸರು ಮ್ಯಾಪ್ ಆಗಿರುವುದಿಲ್ಲ ಎಂದು ತಿಳಿಸಿದರು. ವಿಧಾನ ಸಭೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿ ಮಾತನಾಡಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳು ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿಲ್ಲ, ಈ ವರ್ಗಗಳಲ್ಲಿನ ಬಹುತೇಕರು ಬಡತನ ರೇಖೆಗಿಂತ ಕೆಳಗೆ ಶೋಷಿತ ಸಮುದಾಯವಾಗಿಯೇ ಉಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ವಿಜಯ್ ಕುಮಾರಿ ಅರಸ್, ರಾಜ್ಯ ಜಂಟಿ ಕಾರ್ಯದರ್ಶಿ ವೆಂಕಟೇಶ್ ಗೌಡ, ಮಾಜಿ ಸಚಿವ ಕೋಟೆ ಶಿವಣ್ಣ, ಎಸ್ ಪ್ರತಿಮಾ, ಮುನಿರಾಜ್, ದೇವರಾಜ್ ಪಾಳೇಗಾರ್, ಸುರೇಂದ್ರ,ತಾಜ್ ಪಾಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಾಡಿ | ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯಕ್ಕೆ ಅನುದಾನ ನೀಡಲು ಮನವಿ
ವಾಡಿ: ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಗ್ರಂಥಾಲಯಕ್ಕೆ ಪುಸ್ತಕ ಖರೀದಿಗಾಗಿ ಅನುದಾನ ನೀಡಬೇಕು ಎಂದು ಡಾ.ಅಂಬೇಡ್ಕರ್ ತರುಣ ಸಂಘದ ಪದಾಧಿಕಾರಿಗಳು ಶನಿವಾರ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೌದ್ಧ ಸಮಾಜದ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಎರಡು ಬಾರಿ ಭೇಟಿ ನೀಡಿದ ಐತಿಹಾಸಿಕ ಪಟ್ಟಣವಾದ ಭೀಮ ಸ್ಪರ್ಶ ಭೂಮಿ ವಾಡಿಯಲ್ಲಿ, ಕಳೆದ ವರ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಗ್ರಂಥಾಲಯವನ್ನು ಆರಂಭಿಸಲಾಗಿದೆ. ಆದರೆ ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆಯಿದ್ದು, ಆ ಕೊರತೆಯನ್ನು ಸ್ಥಳೀಯ ಆಡಳಿತ ಪೂರೈಸಬೇಕು ಎಂದು ಮನವಿ ಮಾಡಿದರು. ಡಾ. ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ನಿತೇಶ್ ವಾಡೇಕರ ಮಾತನಾಡಿ, “ಓದಿನಿಂದಲೇ ಬದಲಾವಣೆ ಸಾಧ್ಯ” ಎಂಬ ಬಾಬಾ ಸಾಹೇಬರ ಆಶಯದಂತೆ ಗ್ರಂಥಾಲಯ ಆರಂಭಿಸಿದ್ದೇವೆ. ವಿದ್ಯಾರ್ಥಿ ಹಾಗೂ ಯುವಜನರಿಗೆ ಉಪಯುಕ್ತವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಮಗ್ರ ಕೃತಿಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಸಂವಿಧಾನ ಚರ್ಚಾ ಸಂಪುಟಗಳು, ವಚನ ಸಾಹಿತ್ಯ, ಸೀಮಾತೀತ ಸಾಹಿತ್ಯ ಚರಿತ್ರೆ, ಹಾಗೂ ದೇವನೂರು ಮಹಾದೇವ, ಡಾ. ಸಿದ್ದಲಿಂಗಯ್ಯ, ಕುವೆಂಪು ತೇಜಸ್ವಿ, ಭಾನು ಮುಷ್ತಾಕ್ ಸೇರಿದಂತೆ ಹಲವು ಸಾಹಿತಿಗಳ ಸಮಗ್ರ ಕೃತಿಗಳು ಅಗತ್ಯವಿವೆ. ಜೊತೆಗೆ ಸ್ತ್ರೀವಾದಿ, ಬಂಡಾಯ, ವಿಜ್ಞಾನ, ವೈಜ್ಞಾನಿಕ ಹಾಗೂ ವೈಚಾರಿಕ ಪುಸ್ತಕಗಳ ಖರೀದಿಗೆ ಪುರಸಭೆಯಿಂದ ಅನುದಾನ ನೀಡಬೇಕು” ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಹಾಗೂ ಸಮುದಾಯ ಸಂಘಟನಾಧಿಕಾರಿ ಕಾಶಿನಾಥ ಧನಿ ಮನವಿ ಪತ್ರವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿಜಯ ಸಿಂಗೆ, ಸುರೇಶ ಬನಸೋಡೆ, ಪರಶುರಾಮ ಬನಸೋಡೆ, ಕೃಷ್ಣ ಬಟ್ಟರ್ಕಿ, ರೋಹಿತ ಹದಗೇರಿ, ರಿತಿಕ್ ಮಟ್ಟಾ, ಬಾಬು ನದಿಸಿನ್ನೂರ, ಕಾರ್ತಿಕ ದೊಡ್ಡಮನಿ, ಅವಿನಾಶ ಬೇಡಕರ, ಸಾಯಿಕುಮಾರ ವಾಡೇಕರ, ಕೆನೀತ ಹುಗ್ಗಿ, ವಿಜಯ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
US Venezuela War: ಅಮೆರಿಕದ ಸೆರೆಯಲ್ಲಿರುವ ವೆನೆಜುವೆಲಾ ಅಧ್ಯಕ್ಷ ಮಡುರೊ ಫೋಟೋ ಹಂಚಿಕೊಂಡ ಟ್ರಂಪ್
ಅಮೆರಿಕ ಸೇನೆಯಿಂದ ಸೆರೆಯಾಗಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಮೊದಲ ಫೋಟೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಯುದ್ಧನೌಕೆ ಐವೊ ಜಿಮಾದಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಇರುವ ಫೋಟೋ ಬಹಿರಂಗಪಡಿಸಿದ್ದಾರೆ. ಯುಎಸ್ಎಸ್ ಐವೊ ಜಿಮಾ ಹಡಗಿನಲ್ಲಿ ನಿಕೋಲಸ್ ಮಡುರೊ ಎಂದು ಅಧ್ಯಕ್ಷ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ವೆನೆಜುವೆಲಾದ ಮೇಲೆ ಅಮೆರಿಕ
ವೆನೆಝುವೆಲ ಮೇಲೆ ಅಮೆರಿಕ ದಾಳಿ, ಮಡುರೊ ಸೆರೆ: ಇರಾನ್, ರಶ್ಯ ಸೇರಿ ವಿವಿಧ ದೇಶಗಳಿಂದ ಖಂಡನೆ
ಕ್ಯಾರಕಸ್, ಜ. 3: ಅಮೆರಿಕ ವೆನೆಝುವೆಲ ವಿರುದ್ಧ ‘‘ಬೃಹತ್ ಪ್ರಮಾಣದಲ್ಲಿ ದಾಳಿ ನಡೆಸಿದೆ’’ ಹಾಗೂ ಆ ದೇಶದ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದಾರೆ. ಇದರ ಬೆನ್ನಿಗೇ, ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿಕೆಯೊಂದನ್ನು ನೀಡಿದ ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೊ, ‘‘ಈಗ ವೆನೆಝುವೆಲ ಹೊಸ ಮುಂಜಾನೆಯೊಂದನ್ನು ನೋಡುತ್ತಿದೆ’’ ಎಂದು ಬಣ್ಣಿಸಿದ್ದಾರೆ. ‘‘ನಿರಂಕುಶಾಧಿಕಾರಿ ಹೋಗಿದ್ದಾನೆ. ಅವರು ಇನ್ನು ಅಂತಿಮವಾಗಿ ತನ್ನ ಅಪರಾಧಗಳಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಾರೆ’’ ಎಂದು ಲ್ಯಾಂಡೊ ಹೇಳಿದ್ದಾರೆ. ಈ ಬೆಳವಣಿಗೆಗೆ ಇತರ ದೇಶಗಳು ಕೂಡ ಪ್ರತಿಕ್ರಿಯಿಸಿವೆ. ಅದರ ವಿವರ ಇಲ್ಲಿದೆ. ಕೊಲಂಬಿಯ ಅಮೆರಿಕವು ವೆನೆಝುವೆಲದ ಮೇಲೆ ನಡೆಸಿರುವ ದಾಳಿಯು ಇಡೀ ಜಗತ್ತಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಕೊಲಂಬಿಯದ ಅಧ್ಯಕ್ಷ ಗುಸ್ತಾವೊ ಪೆಟ್ರೊ ಎಕ್ಸ್ನಲ್ಲಿ ಬರೆದಿದ್ದಾರೆ. ‘‘ಯಾವುದೇ ರೀತಿಯ ಸಶಸ್ತ್ರ ಸಂಘರ್ಷದ ಬದಲು ಶಾಂತಿ, ಅಂತರ್ರಾಷ್ಟ್ರೀಯ ಕಾನೂನಿಗೆ ಗೌರವ ಹಾಗೂ ಪ್ರಾಣ ಮತ್ತು ಮಾನವ ಘನತೆಯ ರಕ್ಷಣೆ ಮುಖ್ಯವಾಗಬೇಕು ಎನ್ನುವುದು ರಿಪಬ್ಲಿಕ್ ಆಫ್ ಕಾಂಗೊದ ನಂಬಿಕೆಯಾಗಿದೆ’’ ಎಂದು ಅವರು ಹೇಳಿದ್ದಾರೆ. ‘‘ವೆನೆಝುವೆಲ ಮತ್ತು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ವಿರುದ್ಧದ ಆಕ್ರಮಣವನ್ನು ಕೊಲಂಬಿಯ ತಿರಸ್ಕರಿಸುತ್ತದೆ’’ ಎಂಬುದಾಗಿ ಇನ್ನೊಂದು ಸಂದೇಶದಲ್ಲಿ ಅವರು ಬರೆದಿದ್ದಾರೆ. ಕ್ಯೂಬಾ ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಝ್-ಕನೇಲ್ ಅಮೆರಿಕದ ಕಾರ್ಯಾಚರಣೆಯನ್ನು ಕಟುವಾಗಿ ಖಂಡಿಸಿ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ. ಅಮೆರಿಕವು ವೆನೆಝುವೆಲದ ವಿರುದ್ಧ ‘‘ಪಾತಕ ದಾಳಿ’’ ನಡೆಸಿದೆ ಎಂದು ಆರೋಪಿಸಿರುವ ಅವರು, ಇದಕ್ಕೆ ತುರ್ತು ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಬೇಕು ಎಂಬುದಾಗಿ ಹೇಳಿದ್ದಾರೆ. ‘‘ಕ್ಯೂಬಾದ ‘ಶಾಂತಿ ವಲಯ’ದ ಮೇಲೆ ಭೀಕರ ದಾಳಿ ನಡೆಸಲಾಗಿದೆ. ಅಮೆರಿಕದ ಈ ಕೃತ್ಯವು ಭಯೋತ್ಪಾದನೆಯಾಗಿದೆ. ಇದು ವೆನೆಝುವೆಲದ ಜನರ ಮೇಲೆ ಮಾತ್ರ ಮಾಡಿದ ದಾಳಿಯಲ್ಲ, ಇಡೀ ‘ನಮ್ಮ ಅಮೆರಿಕ’ದ ಮೇಲೆ ಮಾಡಿದ ಆಕ್ರಮಣವಾಗಿದೆ’’ ಎಂಬುದಾಗಿ ಡಿಯಾಝ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ‘‘ನಮ್ಮ ದೇಶ ಅಥವಾ ಸಾವು, ಇದನ್ನು ನಾವು ಎದುರಿಸಬೇಕು’’ ಎಂಬ ಕ್ರಾಂತಿಕಾರಿ ಘೋಷಣೆಯೊಂದಿಗೆ ಅವರು ತನ್ನ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ. ಚಿಲಿ ವೆನೆಝುವೆಲದಲ್ಲಿ ಅಮೆರಿಕ ನಡೆಸಿರುವ ಸೇನಾ ಕಾರ್ಯಾಚರಣೆಯನ್ನು ಚಿಲಿ ಅಧ್ಯಕ್ಷ ಗ್ಯಾಬ್ರಿಯೆಲ್ ಬೊರಿಕ್ ಫೋಂಟ್ ಖಂಡಿಸಿದ್ದಾರೆ. ‘‘ಬಲಪ್ರಯೋಗ ನಿಷೇಧ, ಹಸ್ತಕ್ಷೇಪ ನಡೆಸದಿರುವುದು, ಅಂತರ್ರಾಷ್ಟ್ರೀಯ ವಿವಾದಗಳ ಶಾಂತಿಯುತ ಪರಿಹಾರ ಮತ್ತು ದೇಶಗಳ ಭೂಭಾಗ ಸಮಗ್ರತೆಗೆ ಸಂಬಂಧಿಸಿದ ಅಂತರ್ರಾಷ್ಟ್ರೀಯ ಕಾನೂನಿನ ಮೂಲ ತತ್ವಗಳಿಗೆ ಚಿಲಿ ಬದ್ಧವಾಗಿದೆ. ವೆನೆಝುವೆಲ ಬಿಕ್ಕಟ್ಟನ್ನು ಮಾತುಕತೆ ಮತ್ತು ಬಹುಪಕ್ಷೀಯ ವೇದಿಕೆಯಲ್ಲಿ ಪರಿಹರಿಸಿಕೊಳ್ಳಬೇಕೇ ಹೊರತು ಹಿಂಸೆ ಅಥವಾ ವಿದೇಶಿ ಹಸ್ತಕ್ಷೇಪದ ಮೂಲಕ ಅಲ್ಲ’’ ಎಂಬುದಾಗಿ ಚಿಲಿ ಅಧ್ಯಕ್ಷರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಇರಾನ್ ಅಮೆರಿಕವು ವೆನೆಝುವೆಲದ ಮೇಲೆ ನಡೆಸಿರುವ ಸೇನಾ ಆಕ್ರಮಣವನ್ನು ಖಂಡಿಸಿರುವ ಇರಾನ್ನ ಸರ್ವೋಚ್ಛ ನಾಯಕ ಆಯುತುಲ್ಲಾ ಅಲಿ ಖಾಮಿನೈ, ‘‘ಒಂದು ಸರಕಾರದ ಮೇಲೆ ಅಥವಾ ಒಂದು ದೇಶದ ಮೇಲೆ ಶತ್ರುವೊಂದು ಸುಳ್ಳು ಹೇಳಿಕೆಗಳ ಮೂಲಕ ಏನನ್ನೋ ಹೇರಲು ನಿರ್ಧರಿಸಿದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಾಗ, ಅವರು ಆ ಶತ್ರುವಿನ ವಿರುದ್ಧ ದೃಢವಾಗಿ ನಿಲ್ಲಬೇಕು’’ ಎಂಬುದಾಗಿ ಎಕ್ಸ್ನಲ್ಲಿ ಬರೆದಿದ್ದಾರೆ. ‘‘ನಾವು ಅವರಿಗೆ ತಲೆಬಾಗುವುದಿಲ್ಲ ದೇವರನ್ನು ಆಶ್ರಯಿಸುತ್ತಾ ಮತ್ತು ಜನರ ಬೆಂಬಲದ ಮೇಲೆ ವಿಶ್ವಾಸವಿಡುತ್ತಾ, ನಾವು ಶತ್ರು ಮಂಡಿಯೂರುವಂತೆ ಮಾಡುತ್ತೇವೆ’’ ಎಂದು ಅವರು ಹೇಳಿದ್ದಾರೆ. ರಶ್ಯ ವೆನೆಝುವೆಲದ ವಿರುದ್ಧ ಅಮೆರಿಕ ನಡೆಸಿರುವ ಸೇನಾ ಕಾರ್ಯಾಚರಣೆಯಿಂದ ರಶ್ಯ ತೀವ್ರವಾಗಿ ಕಳವಳಗೊಂಡಿದೆ ಮತ್ತು ಅದನ್ನು ಖಂಡಿಸುತ್ತದೆ ಎಂದು ರಶ್ಯದ ವಿದೇಶ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ಪ್ರಸಕ್ತ ಪರಿಸ್ಥಿತಿಯಲ್ಲಿ, ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಡೆಯುವುದು ಮತ್ತು ಮತುಕತೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವುದು ಅಗತ್ಯವಾಗಿದೆ’’ ಎಂದು ಅದು ಹೇಳಿದೆ. ಮೆಕ್ಸಿಕೊ ಮತ್ತು ಬ್ರೆಝಿಲ್ ದೇಶಗಳೂ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಖಂಡಿಸಿವೆ.
ರಾಯಚೂರು | ಪರಿಶಿಷ್ಟ ಜಾತಿ ಸಂಘಟಿತವಾದರೆ ಸೌಲಭ್ಯ: ದ್ವಾರಕನಾಥ್
ಸಿಂಧೋಳ್ ಸಮಾಜದ ಕುಂದುಕೊರತೆ ಸಭೆ
ಇಂದೋರ್ ದುರಂತ| ನಳ್ಳಿ ನೀರು ಕುಡಿಯಲು ಭಯ ಪಡುತ್ತಿರುವ ನಾಗರಿಕರು
ಇಂದೋರ್, ಜ. 3: ಮಧ್ಯಪ್ರದೇಶದ ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ ಹಲವರು ಮೃತಪಟ್ಟ ಬಳಿಕ ಅಲ್ಲಿನ ಜನರಿಗೆ ಮಹಾನಗರ ಪಾಲಿಕೆಯ ನೀರಿನ ಬಗ್ಗೆ ಭಯ ಮೂಡಿದೆ. ಅವರು ಬಾಟಲಿ ನೀರು ಖರೀದಿಸುತ್ತಿದ್ದಾರೆ. ಇದರಿಂದ ಅವರು ಹೆಚ್ಚುವರಿ ಆರ್ಥಿಕ ಹೊರೆ ಅನುಭವಿಸುವಂತಾಗಿದೆ. ಅಧಿಕಾರಿಗಳ ಪ್ರಕಾರ, ಕಡಿಮೆ ಹಾಗೂ ಮಧ್ಯಮ ಆದಾಯ ಗುಂಪಿನ ದೊಡ್ಡ ಸಂಖ್ಯೆಯ ಜನರಿರುವ ಭಗೀರಥಪುರದಲ್ಲಿ ಕಲುಷಿತ ನೀರಿನಿಂದ ವಾಂತಿ ಹಾಗೂ ಅತಿಸಾರದಿಂದ 6 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಆದರೆ, ವರದಿಯಾದ ಸಾವಿನ ಸಂಖ್ಯೆ 10 ಹಾಗೂ 16ರ ನಡುವೆ ಇದೆ. ‘‘ಹೌದು ನಾವು ಈಗ ಮಹಾನಗರ ಪಾಲಿಕೆಯ ನಳ್ಳಿಯಿಂದ ನೀರು ಕುಡಿಯಲು ಭಯ ಪಡುತ್ತಿದ್ದೇವೆ. ನೀರು ಸ್ವಚ್ಛವಾಗಿದೆ ಎಂಬ ಬಗ್ಗೆ ನಮಗೆ ಪುರಾವೆ ಬೇಕು. ಅನಂತರ ಮಾತ್ರವೇ ನಾವು ನೀರು ಕುಡಿಯುತ್ತೇವೆ. ನನ್ನ ಕುಟುಂಬ ಪ್ರಸ್ತುತ ಮಾರುಕಟ್ಟೆಯಿಂದ ಜಾಡಿಗಳಲ್ಲಿ ಕುಡಿಯುವ ನೀರು ಖರೀದಿಸುತ್ತಿದೆ. ಪ್ರತಿ ಜಾಡಿಗೆ 20 ರೂ. ಹಾಗೂ 30 ರೂ. ನಡುವೆ ನೀಡುತ್ತದೆ’’ ಎಂದು ಮರಾಠಿ ಮೊಹಲ್ಲಾದ ನಿವಾಸಿ ಸುನಿತಾ ಹೇಳಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ಈ ಪ್ರದೇಶದ ನಳ್ಳಿಯಲ್ಲಿ ಕೊಳಕು ನೀರು ಪೂರೈಸಲಾಗುತ್ತಿದೆ. ಆದರೆ, ನಿವಾಸಿಗಳ ದೂರನ್ನು ಯಾರೂ ಆಲಿಸಲಿಲ್ಲ ಎಂದು ಅವರು ಹೇಳಿದ್ದಾರೆ. ಬಹಳ ಸಮಯದಿಂದ ನಾವು ಕುಡಿಯುವ ನೀರಿಗೆ ಸಲ್ಫೇಟ್ ಉಪ್ಪನ್ನು ಸೇರಿಸುತ್ತಿದ್ದೆವು ಹಾಗೂ ಕುದಿಸುತ್ತಿದ್ದೆವು ಎಂದು ಸುನಿತಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ಬಿ ಕೆ ಹರಿಪ್ರಸಾದ್ ನೇಮಕ, ಅಸ್ಸಾಂಗೆ ಪ್ರಿಯಾಂಕಾ ಗಾಂಧಿ
ಮಂಗಳೂರು: ಬಾರೆಬೈಲ್ ವ್ಯಾಸನಗರ ನಿವಾಸಿ, ಹಂಪನಕಟ್ಟೆಯ ಹೋಟೆಲ್ ಪ್ರಕಾಶ್ ಮಾಲಕ ದೇವಾನಂದ ಸುವರ್ಣ (73) ನಗರದ ಖಾಸಗಿ ಆಸ್ಪತ್ರೆಯಲ್ಲಿ ಜನವರಿ 3ರಂದು ನಿಧನರಾದರು. ಅವರು ಪತ್ನಿ, ಯುವ ಜನತಾದಳ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ವಿಬಿ-ಜಿ ರಾಮ್ ಜಿ ವಿರುದ್ಧ ನಿರ್ಣಯ ಅಂಗೀಕರಿಸಿದ ತೆಲಂಗಾಣ ವಿಧಾನಸಭೆ
ಹೈದರಾಬಾದ್,ಜ.3: ತೆಲಂಗಾಣ ವಿಧಾನಭೆಯು ಮನರೇಗಾ ಕಾಯ್ದೆಯನ್ನು ಉಳಿಸಿಕೊಳ್ಳುವ ಮತ್ತು ಅದರ ಬದಲಿಗೆ ತರಲಾಗಿರುವ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸುವ ನಿರ್ಣಯವೊಂದನ್ನು ಅಂಗೀಕರಿಸಿದೆ. ಪಂಜಾಬ್ ವಿಧಾನಸಭೆಯೂ ಡಿ.30ರಂದು ಇಂತಹುದೇ ನಿರ್ಣಯವನ್ನು ಅಂಗೀಕರಿಸಿತ್ತು. ಹೊಸ ವಿಬಿ-ಜಿ ರಾಮ್ ಜಿ ಕಾಯ್ದೆಯು ಬಡವರಿಗೆ ಹಾನಿಕಾರಕವಾಗಿದೆ ಮತ್ತು ಅದು ಉದ್ಯೋಗ ಖಾತರಿ ಕಾಯ್ದೆಯ ಮೂಲ ಉದ್ದೇಶವನ್ನು ದುರ್ಬಲಗೊಳಿಸಿದೆ ಎಂದು ವಿಧಾನಸಭೆಯಲ್ಲಿ ಹೇಳಿದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿಯವರು, ನೂತನ ಕಾಯ್ದೆಯು ಬೇಡಿಕೆಯನ್ನು ಆಧರಿಸಿ ಕೆಲಸದ ಯೋಜನೆಗಳನ್ನು ಸಿದ್ಧಗೊಳಿಸುವ ವ್ಯವಸ್ಥೆಯನ್ನು ಅಂತ್ಯಗೊಳಿಸಿದೆ. ಹಳೆಯ ಬೇಡಿಕೆ ಆಧಾರಿತ ವ್ಯವಸ್ಥೆಯೇ ಮುಂದುವರಿಯಬೇಕು ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣ| ಎಸ್.ಐ.ಟಿ ನೀಡಿರುವ ಮಧ್ಯಂತರ ವರದಿಯನ್ನು ತಟಸ್ಥವಾಗಿರಿಸಿದ ನ್ಯಾಯಾಲಯ
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಕೋರಿಕೆಯನ್ನು ಮನ್ನಿಸಲು ನಿರಾಕರಿಸಿದ ನ್ಯಾಯಾಲಯ ಈಗ ಎಸ್.ಐ.ಟಿ ನೀಡಿರುವ ಮಧ್ಯಂತರ ವರದಿಯನ್ನು ತಟಸ್ಥವಾಗಿರಿಸಿದ್ದು, ಪೂರ್ಣ ವರದಿಯನ್ನು ಎಸ್.ಐ.ಟಿ ಸಲ್ಲಿಸಿದ ಬಳಿಕ ಪ್ರಕರಣವನ್ನು ಕೈಗೆತ್ತಿಗೊಳ್ಳುವುದಾಗಿ ತಿಳಿಸಿದೆ. ಉಳಿದ ವಿಚಾರಗಳ ಬಗ್ಗೆ ಜ.23ರಕ್ಕೆ ವಿಚಾರಣೆಯನ್ನು ಮುಂದೂಡಿ ಶನಿವಾರ ಆದೇಶ ಹೊರಡಿಸಿದೆ. ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ ಎಸ್.ಐ.ಟಿ ಮಹೇಶ್ ಶೆಟ್ಟಿ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಮಕೈಗೊಳ್ಳಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಾಲಯ ನಿರಾಕರಿಸಿದ್ದು ಸಲ್ಲಿಸಿದ ಅಪೂರ್ಣ ವರದಿಯನ್ನು ಸ್ಥಗಿತ ಗೊಳಿಸಿ ಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದೆ. ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಟಿ.ಎಚ್ ಅವರ ಮುಂದೆ ಇಂದು ಮಹೇಶ್ ಶೆಟ್ಟಿ ಹಾಗು ಇತರ ಸೌಜನ್ಯ ಪರ ಹೋರಾಟಗಾರರ ಪರವಾಗಿ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆ ರಾಜು, ವಿಜಯ ವಾಸು ಪೂಜಾರಿ, ಸಿರಾಜುದ್ದೀನ್ ಜೋಗಿಬೆಟ್ಟು ಹಾಗೂ ತಂಡ ವಾದ ಮಂಡಿಸಿದರು. ವಾದವಿವಾದಗಳನ್ನು ಆಲಿಸಿದ ನ್ಯಾಯಾಲಯ ಎಸ್.ಐ.ಟಿ ಸಲ್ಲಿಸಿರುವ ವರದಿ ಅಪೂರ್ಣವಾಗಿದೆ ಎಂಬ ವಾದವನ್ನು ಒಪ್ಪಿಕೊಂಡು ಇದರ ಆಧಾರದ ಮೇಲೆ ಯಾರ ಮೇಲೆಯೂ ಕ್ರಮ ಕೈಗೊಳ್ಳಲು ಆದೇಶ ನೀಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಈ ಅಪೂರ್ಣ ವರದಿಯನ್ನು ತಟಸ್ಥ ಮಾಡಿ ಆದೇಶ ಹೊರಡಿಸಿದೆ. ಎಸ್.ಐ.ಟಿ ತನಿಖೆ ನಡೆಸಿ ಪೂರ್ಣ ವರದಿಯನ್ನು ಸಲ್ಲಿಸಿದ ಬಳಿಕ ಈ ವಿಚಾರವನ್ನು ಪರಿಗಣಿಸುವುದಾಗಿ ತಿಳಿಸಿದೆ. ಎಸ್.ಐ.ಟಿ ಗೆ ವರದಿ ನೀಡಲು ಸಮಯ ಮಿತಿ ನಿಗಧಿ ಪಡಿಸಬೇಕಾದುದು ನ್ಯಾಯಾಲಯವಲ್ಲ ಎಂದು ನ್ಯಾಯಾಧೀಶರು ತನಿಖೆ ಮುಂದುವರಿಸುವಂತೆ ಎಸ್.ಐ.ಟಿ ಅಧಿಕಾರಿಗಳಿಗೆ ಸೂಚಿಸಿತ್ತು. ನ್ಯಾಯಾಲಯದಲ್ಲಿ ಹಲವು ಬಾರಿ ಎರಡೂ ಕಡೆಯಿಂದ ಹಾಜರಾಗಿದ್ದ ನ್ಯಾಯವಾದಿಗಳ ನಡುವೆ ವಾಗ್ವಾವಾದಗಳು ನಡೆಯಿತು. ಧರ್ಮಸ್ಥಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ರಾಜಶೇಖರ ಹಿಲಿಯಾರ್ ಹಾಗೂ ಇತರರು ಹಾಜರಾಗಿದ್ದರು. ಎಸ್.ಐ.ಟಿ ಪರವಾಗಿ ಎ.ಪಿ.ಪಿ ವಾದ ಮಂಡಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಪರ ಅರ್ಜಿ ವಿಚಾರಣೆ ಜ.23ಕ್ಕೆ ಮುಂದೂಡಿಕೆ:- ಧರ್ಮಸ್ಥಳ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸಂತ್ರಸ್ತರು ಎಂಬ ನೆಲೆಯಲ್ಲಿ ಪ್ರಕರಣದ ವಿಚಾರಣೆಯಲ್ಲಿ ತಮ್ಮ ವಾದವನ್ನು ಮಂಡಿಸಲು ತಮಗೂ ಅವಕಾಶ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ವಾದ ಆಲಿಸಿ ಮುಂದಿನ ವಿಚಾರಣೆಯನ್ನು ಜ 23ಕ್ಕೆ ಮುಂದೂಡಿದೆ. ಧರ್ಮಸ್ಥಳ ಪರವಾಗಿ ಸಲ್ಲಕೆಯಾಗಿರುವ ಅರ್ಜಿಗೆ ಹಿರಿಯ ನ್ಯಾಯವಾದಿ ದೊರೆ ರಾಜು ಅವರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯೂ ಜ.23 ರಂದು ನಡೆಯಲಿದೆ. ಅದೇ ರೀತಿ ಈ ಅರ್ಜಿಯ ಬಗ್ಗೆ ಎಸ್.ಐ.ಟಿ ಪರವಾಗಿ ವಾದ ಮಂಡಿಸಿದ ಸರಕಾರಿ ವಕೀಲರು ಅರ್ಜಿಯನ್ನು ಪರಿಶೀಲಿಸಿ ತಕರಾರು ಇದೆಯೇ ಎಂಬ ಬಗ್ಗೆ ಮುಂದಿನ ವಿಚಾರಣೆಯ ವೇಳೆ ತಿಳಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಜ.10ರಿಂದ ಕಾಂಗ್ರೆಸ್ನಿಂದ ಮನರೇಗಾ ಬಚಾವೊ ಸಂಗ್ರಾಮ
ಹೊಸದಿಲ್ಲಿ,ಡಿ.3: ಮೋದಿ ಸರಕಾರವು ದೇಶವನ್ನು ‘ವಿಕಸಿತ ಭಾರತ’ದ ಬದಲು ‘ವಿನಾಶ ಭಾರತ’ದತ್ತ ಒಯ್ಯುತ್ತಿದೆ ಎಂದು ಶನಿವಾರ ಆರೋಪಿಸಿರುವ ಕಾಂಗ್ರೆಸ್ ಜ.10ರಿಂದ 45 ದಿನಗಳ ‘ಮನರೇಗಾ ಬಚಾವೊ ಸಂಗ್ರಾಮ’ವನ್ನು ಘೋಷಿಸಿದ್ದು,ಯುಪಿಎ ಕಾಲದ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಪುನಃಸ್ಥಾಪನೆಗೆ ಆಗ್ರಹಿಸಲಿದೆ. ಮನರೇಗಾ ಬದಲಿಗೆ ತರಲಾಗಿರುವ ವಿಬಿ-ಜಿ-ರಾಮ್ ಜಿ ಕಾಯ್ದೆಯನ್ನು ಪ್ರತಿಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ಜಾರಿಗೊಳಿಸದಿರುವುದು ಸೇರಿದಂತೆ ‘ಎಲ್ಲ ಆಯ್ಕೆಗಳನ್ನು’ ತಾನು ಅನ್ವೇಷಿಸುವುದಾಗಿ ಕಾಂಗ್ರೆಸ್ ಹೇಳಿದೆ. ರಾಜ್ಯಗಳು ಶೇ.40ರಷ್ಟು ಯೋಜನಾ ವೆಚ್ಚವನ್ನು ಭರಿಸುವುದನ್ನು ಕಡ್ಡಾಯಗೊಳಿಸಿರುವ ‘ಪೂರೈಕೆ ಆಧಾರಿತ’ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ತರಲು ‘ಬೇಡಿಕೆ ಆಧಾರಿತ, ಹಕ್ಕು ಆಧಾರಿತ’ ಮನರೇಗಾದ ರದ್ದತಿಯ ವಿರುದ್ಧ ಪ್ರತಿಭಟಿಸುವಂತೆ ಕೋರಿ ತಾನು ಇತರ ಪ್ರತಿಪಕ್ಷಗಳು ಮತ್ತು ಅವುಗಳ ನೇತೃತ್ವದ ಸರಕಾರಗಳನ್ನು ಸಂಪರ್ಕಿಸುವುದಾಗಿ ಕಾಂಗ್ರೆಸ್ ತಿಳಿಸಿದೆ. ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕು, ಮನರೇಗಾವನ್ನು ಪುನಃಸ್ಥಾಪಿಸಬೇಕು ಹಾಗೂ ಕೆಲಸದ ಹಕ್ಕು ಮತ್ತು ಪಂಚಾಯತ್ಗಳ ಅಧಿಕಾರವನ್ನು ಮರಳಿಸಬೇಕು ಎಂದು ಪಕ್ಷವು ಸ್ಪಷ್ಟವಾಗಿ ಆಗ್ರಹಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದರು. ‘ಮನರೇಗಾದ ಮೇಲೆ ದಾಳಿಯು ಕೋಟ್ಯಂತರ ಕಾರ್ಮಿಕರು ಮತ್ತು ಅವರ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿಯಾಗಿದೆ. ಪ್ರತಿ ಪಂಚಾಯತ್ನಿಂದ ಸಂಸತ್ತಿನವರೆಗೆ ನಾವು ಶಾಂತಿಯುತವಾಗಿ ಮತ್ತು ದೃಢವಾಗಿ ಪ್ರತಿರೋಧಿಸುತ್ತೇವೆ’ ಎಂದು ಖರ್ಗೆ ಶನಿವಾರ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಜ.10ರಿಂದ ಫೆ.25ರವರೆಗೆ ಪ್ರತಿಭಟನೆ ಕಾರ್ಯಕ್ರಮವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು,ಮನರೇಗಾವನ್ನು ‘ಕೊಲ್ಲುವುದು’ ಮೋದಿ ಸರಕಾರದ ಸ್ಪಷ್ಟ ಹುನ್ನಾರವಾಗಿದೆ. ಸಾಂವಿಧಾನಿಕ ಭರವಸೆಯನ್ನು ಸರಕಾರಿ ಕಾರ್ಯಕ್ರಮವಾಗಿ ಪರಿವರ್ತಿಸಲಾಗುತ್ತಿದೆ ಮತ್ತು ಇನ್ನು ಮುಂದೆ ಉದ್ಯೋಗವು ಒಂದು ಹಕ್ಕು ಆಗಿ ಉಳಿಯುವುದಿಲ್ಲ ಎಂದು ಹೇಳಿದರು. ಮನರೇಗಾ ಅತ್ಯಂತ ವಿಕೇಂದ್ರೀಕೃತ ಯೋಜನೆಯಾಗಿತ್ತು, ಆದರೆ ಪಂಚಾಯತ್ಗಳನ್ನು ‘ಗುಮಾಸ್ತರ ಪಾತ್ರಕ್ಕೆ ಇಳಿಸುವ’ ಮೂಲಕ ಈಗ ಸರಕಾರವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದರು. ವಿಬಿ-ಜಿ ರಾಮ್ ಜಿ ಕಾಯ್ದೆಗೆ ಈಗ ರದ್ದುಗೊಂಡಿರುವ ಮೂರು ಕೃಷಿ ಕಾನೂನುಗಳ ಗತಿಯೇ ಆಗಲಿದೆ ಎಂದು ಹೇಳಿದ ವೇಣುಗೋಪಾಲ್, ಜನವರಿ 10ರಂದು ಎಲ್ಲ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿಗಳೊಂದಿಗೆ ಪ್ರತಿಭಟನಾ ಕಾರ್ಯಕ್ರಮ ಆರಂಭವಾಗಲಿದ್ದು,ಬಳಿಕ ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಅಥವಾ ಮಹಾತ್ಮಾ ಗಾಂಧಿ ಅಥವಾ ಅಂಬೇಡ್ಕರ್ ಪ್ರತಿಮೆಗಳ ಬಳಿ ಒಂದು ದಿನದ ನಿರಶನ ನಡೆಯಲಿದೆ. ಜ.12ರಿಂದ 30ರ ನಡುವೆ ಎರಡನೇ ಹಂತದ ಪ್ರತಿಭಟನೆಯಲ್ಲಿ ಪಂಚಾಯತ್ ಮಟ್ಟದಲ್ಲಿ ಸಭೆಗಳು, ಎಲ್ಲ ಮನರೇಗಾ ಕಾರ್ಮಿಕರು, ಗ್ರಾಮ ಪ್ರಧಾನರು ಮತ್ತು ಇತರರಿಗೆ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಪತ್ರಗಳ ವಿತರಣೆ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದ ಸಭೆಗಳು ನಡೆಯಲಿವೆ. ಇದು ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಾದ ಜ.30ರಂದು ವಾರ್ಡ್ ಮಟ್ಟದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆಗಳೊಂದಿಗೆ ಮುಕ್ತಾಯಗೊಳ್ಳಲಿದೆ ಎಂದರು. ಜ.31ರಿಂದ ಫೆ.15ರವರೆಗೆ ಮೂರನೇ ಹಂತದಲ್ಲಿ ಫೆ.6ರವರೆಗೆ ಜಿಲ್ಲಾ ಮಟ್ಟದಲ್ಲಿ ಧರಣಿಗಳು ಮತ್ತು ಫೆ.7ರಿಂದ 15ರ ನಡುವೆ ವಿಧಾನಸಭೆ ಅಥವಾ ರಾಜಭವನಗಳು ಅಥವಾ ಕೇಂದ್ರ ಸರಕಾರದ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು. ಫೆ.16ರಿಂದ ಫೆ.25ರವರೆಗೆೆ ದೇಶಾದ್ಯಂತ ನಾಲ್ಕು ಬೃಹತ್ ರ್ಯಾಲಿಗಳನ್ನು ಆಯೋಜಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.
ಮರಿಯಮ್ಮನಹಳ್ಳಿ | ಸರಕಾರಿ ಜಾಗ ಒತ್ತುವರಿ ದೂರು: ಸ್ಥಳಕ್ಕೆ ತಹಶೀಲ್ದಾರ್ ಭೇಟಿ
ಮರಿಯಮ್ಮನಹಳ್ಳಿ : ಪಟ್ಟಣದಲ್ಲಿ ಸರಕಾರಿ ಜಾಗ ಒತ್ತುವರಿಯಾಗಿದೆ. ಮೂಲ ವಾರಸುದಾರರಲ್ಲದವರಿಗೆ ಪಟ್ಟಣ ಪಂಚಾಯಿತಿಯಿಂದ ಫಾರಂ ನಂಬರ್ 3 ಕೊಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಹೊಸಪೇಟೆ ತಹಶೀಲ್ದಾರ್ ಶೃತಿ ಮಳ್ಳಪ್ಪ ಗೌಡರ ಶುಕ್ರವಾರ ಮರಿಯಮ್ಮನಹಳ್ಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಶನೇಶ್ವರ ದೇವಸ್ಥಾನದ ಪಕ್ಕದಲ್ಲಿ ಹೊಲಗಳಿಗೆ ತೆರಳಲೆಂದು ಸಾರ್ವಜನಿಕ ರಸ್ತೆಯಿದ್ದು ಅದನ್ನು ಒತ್ತುವರಿ ಮಾಡಲಾಗಿದೆ. ಅಲ್ಲದೇ ಮೂಲ ವಾರಸುದಾರರಲ್ಲದವರಿಗೆ ಪಟ್ಟಣ ಪಂಚಾಯತ್ ನಿಂದ ಫಾರಂ ನಂಬರ್ 3 ನೀಡಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರರಿಗೆ ದೂರಿದರು. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಶೃತಿ ಮಳ್ಳಪ್ಪಗೌಡ ಅವರು ಎಲ್ಲಾ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ 2 ನೇ ವಾರ್ಡ್ ಪ.ಪಂ.ಸದಸ್ಯ ಎಲ್ ಪರಶುರಾಮ, ಕುಪ್ಪ ರಾಘವೇಂದ್ರ, ಗೌಳಿ ವಿರುಪಾಕ್ಷಿ, ಗೌಳಿ ಭರತ ಇತರರು ಇದ್ದರು.
ಲಾಡ್ಜ್ನಲ್ಲಿ ವ್ಯಕ್ತಿ ಅನುಮಾನಾಸ್ಪದ ಮೃತ್ಯು
ಮಂಗಳೂರು,ಜ.3: ನಗರದ ಲಾಡ್ಜ್ನಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬಗ್ಗೆ ಬಂದರು ಠಾಣೆ ಪ್ರಕರಣ ದಾಖಲಾಗಿದೆ. ಡಿ.26ರಂದು ಅಪರಿಚಿತ ವ್ಯಕ್ತಿಯು ಕೊಠಡಿ ಪಡೆದಿದ್ದರು. ಡಿ.31ರಂದು ಬೆಳಗ್ಗೆ ಕೊಠಡಿಯ ನೆಲದಲ್ಲಿ ಬೆಡ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಲಾಡ್ಜ್ ಸಿಬ್ಬಂದಿ ಮಾತನಾಡಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೂಡಲೇ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸುಮಾರು 5.8 ಅಡಿ ಎತ್ತರದ, ಎಣ್ಣೆ ಕಪ್ಪುಮೈ ಬಣ್ಣದ, ಕಂದು ಬಣ್ಣದ ಟಿ-ಶರ್ಟ್ ಮತ್ತು ತಿಳಿ ನೀಲಿ ಬಣ್ಣದ ಜೀನ್ಸ್ ಧರಿಸಿರುವ ಈ ವ್ಯಕ್ತಿಯ ಕುರಿತು ಮಾಹಿತಿ ಇದ್ದಲ್ಲಿ ಬಂದರು ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಳ್ಳಾರಿ | ಅಕ್ಷರಬೀಜ ಬಿತ್ತಿದ ಶಿಕ್ಷಣ ಸಾಧಕಿ ಸಾವಿತ್ರಿಬಾಯಿ ಫುಲೆ : ಕೆ.ಶ್ವೇತಾ
ಬಳ್ಳಾರಿ, ಜ. 3: ಅನೇಕ ಕಷ್ಟ, ಅವಮಾನಗಳನ್ನು ಸಹಿಸಿಕೊಂಡು ಜೀವನವಿಡೀ ಹೋರಾಟ ನಡೆಸಿದ ಸಾವಿತ್ರಿಬಾಯಿ ಫುಲೆ ಅವರು ದಲಿತರು ಮತ್ತು ಮಹಿಳೆಯರ ಹೃದಯದಲ್ಲಿ ಅಕ್ಷರ ಬೀಜ ಬಿತ್ತಿದ ಶಿಕ್ಷಣ ಸಾಧಕಿ ಎಂದು ಮುಖ್ಯೋಪಾಧ್ಯಾಯನಿ ಕೆ.ಶ್ವೇತಾ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಪಟ್ಟಣದ ಸ್ಥಳೀಯ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ 194ನೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಿರಾರು ವರ್ಷಗಳಿಂದ ಅಕ್ಷರ ಲೋಕದಿಂದ ವಂಚಿತರಾದ ದಲಿತರು, ಮಹಿಳೆಯರಿಗೆ ಸ್ವತಃ ಶಿಕ್ಷಕಿಯಾಗಿ ಅಕ್ಷರಮಾಲೆ ತೊಡಿಸಿದವರು ಫುಲೆ. ಶೋಷಣೆಯಿಂದ ಪಾರಾಗಲು ಸ್ವಾಭಿಮಾನದ ಜೀವನಕ್ಕೆ ದಾರಿದೀಪವಾದ ಅಕ್ಷರಮಾತೆ. ಅವರ ಜಯಂತಿ ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಾಲವಿಧವೆಯರ ನಿಲಯ, ಶಾಲೆ, ಹಾಸ್ಟೆಲ್ಗಳನ್ನು ತೆರೆದು ಸಮಾಜ ಸುಧಾರಣೆ ಮಾಡಿದ ಜ್ಯೋತಿಭಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಯನ್ನು ಈಗಲಾದರೂ ಸ್ಮರಿಸುವ ಅವಕಾಶ ದೊರೆಕಿಸಿಕೊಟ್ಟಿರುವುದು ಅವರ ತ್ಯಾಗಕ್ಕೆ ಸಂದ ಗೌರವವಾಗಿದೆ ಎಂದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಉಮಾ ಕೊಲ್ಕರ್, ವರ್ಷಾ ಮಜುಮದಾರ್, ಜೆ. ಅಕ್ಷತಾ, ಗೌಸಿಯ, ಸುನೀತಾ, ನಂದಿನಿ, ಕೊಲ್ಕರ್ ಜಯಶ್ರೀ, ವಿದ್ಯಾರ್ಥಿಗಳು ಹಾಗೂ ಪಾಲಕ ಪೋಷಕರು ಹಾಜರಿದ್ದರು.
ಕಲಬುರಗಿ | ಚನ್ನಣ್ಣ ವಾಲೀಕಾರ ಬಂಡಾಯ ಸಾಹಿತ್ಯದ ದೈತ್ಯ ಶಕ್ತಿ : ಪ್ರೊ.ಎಚ್.ಟಿ. ಪೋತೆ
‘ಚಿಗರೆ ಆಕ್ರಂದನ’ ಕಾವ್ಯ ಸಂಕಲನ ಲೋಕಾರ್ಪಣೆ
ಕೋಳಿ ಅಂಕ ವಿಚಾರದಲ್ಲಿ ಬಿಜೆಪಿ ರಾಜಕೀಯ: ಹರೀಶ್ ಕುಮಾರ್ ಆರೋಪ
ಮಂಗಳೂರು, ಜ.3: ತುಳುನಾಡಿನಲ್ಲಿ ದೈವ-ದೇವಸ್ಥಾನ ಜಾತ್ರೋತ್ಸವ ಸಂದರ್ಭ ನಡೆಯುತ್ತಿರುವ ಕೋಳಿ ಅಂಕ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಚಿಲ್ಲರೆ ರಾಜಕೀಯ ಮಾಡಲು ಹೊರಟಿದ್ದಾರೆ. ಈ ನೆಲದ ಬಗ್ಗೆ ನಿಜವಾಗಿಯೂ ಬಿಜೆಪಿಗರಿಗೆ ಆಸಕ್ತಿ, ಕಾಳಜಿ ಇದ್ದಿದ್ದರೆ ಅಧಿವೇಶನ ಸಂದರ್ಭ ಯಾಕೆ ಚರ್ಚೆ ಮಾಡದೆ ಮೌನವಾಗಿದ್ದರು? ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಬಹುದಿತ್ತಲ್ವೇ? ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ. ತುಳುನಾಡಿನ ದೈವರಾಧನೆ, ಈ ನೆಲದ ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ, ಮಾತ್ರವಲ್ಲದೆ ಸದಾ ಬೆಂಬಲ ನೀಡುತ್ತಿದೆ. ಈ ನೆಲದ ಜಾನಪದ ಕ್ರೀಡೆ ಕಂಬಳಕ್ಕೆ ಅನುದಾನ, ದೈವ-ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಸೇರಿದಂತೆ ಕರಾವಳಿ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಜಾತ್ರೋತ್ಸವ ಸಂದರ್ಭ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಆದರೆ ಪೊಲೀಸ್ ಅಧಿಕಾರಿಗಳು ಕಾನೂನು ಕಾರಣದಿಂದ ಕೋಳಿ ಅಂಕಕ್ಕೆ ಅವಕಾಶ ನೀಡುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಶೋಭೆಯಲ್ಲ. ಬಿಜೆಪಿಯವರ ಮೌನವೇ ಕೋಳಿ ಅಂಕ ವಿಚಾರ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದೇ ಬಿಜೆಪಿಯ ಉದ್ದೇಶವಾಗಿದೆ ಎಂದಿದ್ದಾರೆ. *ಕೆಂಪು ಕಲ್ಲು ಗಣಿಗಾರಿಕೆ ಕ್ರಮಬದ್ಧ: ಜಿಲ್ಲೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕೆಂಪು ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದು, ಲಂಗು ಲಗಾಮಿಲ್ಲದೆ ವ್ಯವಹಾರ ನಡೆಯುತ್ತಿತ್ತು. ರಾಜ್ಯ ಸರಕಾರಕ್ಕೂ ಸಮರ್ಪಕವಾಗಿ ರಾಜಸ್ವ ಸಂದಾಯವಾಗದೆ ಅಕ್ರಮ ಚಟುವಟಿಕೆಗಳಿಗೆ ನೆರವಾಗುತ್ತಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅಕ್ರಮಗಳಿಗೆ ಮೂಗುದಾರ ಹಾಕಿ ಕೆಂಪು ಕಲ್ಲು ಗಣಿಗಾರಿಕೆಯನ್ನು ಕ್ರಮಬದ್ಧಗೊಳಿಸಿ ಜನರಿಗೆ ಕೆಂಪು ಕಲ್ಲು ಸುಲಭವಾಗಿ, ಕಾನೂನು ರೀತಿಯಲ್ಲಿ ಸಿಗುವಂತಾಗಿದೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಮರಳುಗಾರಿಕೆ ಪರವಾನಗಿ ವಿಚಾರದಲ್ಲೂ ನಾನ್ ಸಿಆರ್ಝೆಡ್ ಪರವಾನಗಿ ಸಮಸ್ಯೆ ಈಗಾಗಲೇ ಬಗೆಹರಿದಿದ್ದು, ಬೇಕಾದಷ್ಟು ಮರಳು ಸಿಗುತ್ತಿದೆ. ನಾನ್ ಸಿಆರ್ಝೆಡ್ ಮರಳುಗಾರಿಕೆ ಕೇಂದ್ರ ಸರಕಾರದ ಸುಪರ್ದಿಯಲ್ಲಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿ ಬಿಜೆಪಿ ಸಂಸದರು, ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಲಿ. ಸಿಆರ್ಝೆಡ್ ಮರಳು ಸಮಸ್ಯೆ ಬಗೆಹರಿದರೆ ಬಡವರಿಗೆ ನಿಜವಾಗಿಯೂ ಅನುಕೂಲವಾಗಲಿದೆ. ಬಿಜೆಪಿಗರು ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಜನರಿಗೆ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಸುಲಭದಲ್ಲಿ ಮರಳು ಸಿಗುವಂತೆ ಮಾಡಲಿ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.
ತೋರಣಗಲ್ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಘಟನೆಯ ಕುರಿತು ಸಿಎಂ ಸಿದ್ದರಾಮಯ್ಯ, ಸಚಿವರ ಸಭೆ
ತೋರಣಗಲ್ (ಬಳ್ಳಾರಿ): ತೋರಣಗಲ್ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹಮದ್ ಖಾನ್ ಹಾಗೂ ಶಾಸಕ ಭರತ್ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರದಲ್ಲಿ ನಡೆದ ಇತ್ತೀಚಿನ ಘಟನೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಗೆ ಸಂಪೂರ್ಣ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿಯವರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿ ಹಿತೇಂದ್ರ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರಿಂದಲೂ ಘಟನೆಯ ಬಗ್ಗೆ ವಿವರವಾಗಿ ಮಾಹಿತಿ ಪಡೆದುಕೊಂಡರು. ಮುಖ್ಯಮಂತ್ರಿಯವರು ಸಿಂಧನೂರಿನಿಂದ ಹೆಲಿಕಾಪ್ಟರ್ ಮೂಲಕ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಂತರ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಪಾಕಿಸ್ತಾನ ವಾಯುಪಡೆಯು 'ತೈಮೂರ್' ಎಂಬ 600 ಕಿ.ಮೀ. ದೂರದ ಭೂಮಿ ಹಾಗೂ ಸಮುದ್ರ ಗುರಿಗಳನ್ನು ಭೇದಿಸುವ ಹೊಸ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಶತ್ರುಗಳ ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸುವ ಸಾಮರ್ಥ್ಯ ಹೊಂದಿದೆ. ಭಾರತದ ಇತ್ತೀಚಿನ ಕ್ಷಿಪಣಿ ಪರೀಕ್ಷೆಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು ಪಾಕಿಸ್ತಾನದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿದೆ.
ಕಲಬುರಗಿ | ಅಕ್ಷರ ಮಾತಾ ಪುಲೆ ಕಾರ್ಯ ಅನನ್ಯ : ಮಾರುತಿ ಗಂಜಗಿರಿ
ಸಾವಿತ್ರಿಬಾಯಿ ಫುಲೆ ಜಯಂತಿ, ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ
ಕರಾವಳಿ ಉತ್ಸವ; ಕೈಲಾಸ್ ಕೇರ್ ರಿಂದ ಸಂಗೀತ ಸಂಜೆ ಕಾರ್ಯಕ್ರಮ
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಖ್ಯಾತ ಗಾಯಕರಾದ ಕೈಲಾಸ್ ಕೇರ್ ಅವರಿಂದ ತಣ್ಣೀರು ಬಾವಿ ಬೀಚ್ ನಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನೆರೆದ ಜನತ್ಸೋಮವನ್ನು ರಂಜಿಸಿದರು. ಈ ಸಂದರ್ಭ ಸ್ಥಳೀಯ ಕಲಾವಿದರು ತಮ್ಮ ಹಾಡುಗಳ ಮೂಲಕ ಜನಮನವನ್ನು ರಂಜಿಸಿದರು. ಈ ಸಂದರ್ಭ ಮಾತನಾಡಿದ ಅವರು ಮೂಡಬಿದಿರೆಯ ಆಳ್ವಾಸ್ ನಲ್ಲಿ ಈ ಹಿಂದೆ ನೀಡಿದ ಕಾರ್ಯಕ್ರಮ ಹೊರತು ಪಡಿಸಿ ಈ ಕಾರ್ಯಕ್ರಮ ಮಂಗಳೂರಿನ ನನ್ನ ಪ್ರಥಮ ಕಾರ್ಯಕ್ರಮ ಈ ಬೃಹತ್ ಜನಸ್ತೋನ ನೋಡಿ ತುಂಬಾ ಖುಷಿ ನೀಡಿದೆ ಎಂದು ಕೈಲಾಸ್ ಕೇರ್ ಹೇಳಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಅಪರ ಜಿಲ್ಲಾಧಿಕಾರಿ ರಾಜು ಕೆ ಮೊದಲಾದವರು ಉಪಸ್ಥಿತರಿದ್ದರು. ಕಲ್ಟ್ ಚಲನಚಿತ್ರದ ನಟ ಝಾಹಿದ್ ಖಾನ್, ನಟಿ ಮಲೈಕಾ ಉಪಸ್ಥಿತರಿದ್ದರು.
ತುಮಕೂರು: ವಾಲ್ಮೀಕಿ ಜಯಂತಿಯ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯ ಜನಾರ್ದನ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ಅವರ ನಡುವಿನ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವ ಬುಲೆಟ್ ಸರ್ವಿಸ್ ರಿವಾಲ್ವರ್ನಿಂದ ಹಾರಿದ ಗುಂಡಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ದೇಹದಲ್ಲಿದ್ದ ಗುಂಡನ್ನು ಎಫ್.ಎಸ್.ಐ.ಎಲ್ಗೆ ಕಳುಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ತಿಳಿಗೊಳಿಸಲು ನಿಯಂತ್ರಿಸಲಾಗಿರುವ ಎಡಿಜಿಪಿ ಅವರು ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ, ವ್ಯಕ್ತಿಯ ದೇಹದಲ್ಲಿ ಸಿಕ್ಕಿರುವ ಗುಂಡಿಗೂ, ನಮ್ಮ ಇಲಾಖೆಯ ಸರ್ವಿಸ್ ರಿವಾಲ್ವರ್ ಗುಂಡಿಗೂ ತಾಳೆ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ನಿಖರವಾದ ಮಾಹಿತಿಗೆ ಎಫ್.ಎಸ್.ಐ.ಎಲ್ಗೆ ಕಳುಹಿಸಲಾಗಿದೆ ಎಂದರು. ಬಳ್ಳಾರಿ ಎಸ್ಪಿಯಾಗಿ ಒಂದು ದಿನದ ಹಿಂದೆ ಚಾರ್ಜ್ ತೆಗೆದುಕೊಂಡಿದ್ದ ನವೀನ್ ಅವರಿಗೆ ದಿಢೀರ್ ಎಂದು ಉದ್ಬವವಾಗುವ ಇಂತಹ ಘಟನೆಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತರಬೇತಿ ಆಗಿರುತ್ತದೆ. ಹಾಗಾಗಿ ಸ್ಥಳದಲ್ಲಿದ್ದು ಅದನ್ನು ನಿಭಾಯಿಸಬೇಕಾಗಿರುವುದು ಅವರ ಕರ್ತವ್ಯ. ಎಷ್ಟು ದಿನ ಎಂಬುದು ಮುಖ್ಯವಲ್ಲ ಎಂದ ಗೃಹ ಸಚಿವರು, ತಾತ್ಕಾಲಿಕವಾಗಿ ಬಳ್ಳಾರಿ ಜಿಲ್ಲೆಗೆ ಈ ಹಿಂದೆ ಬಳ್ಳಾರಿಯಲ್ಲಿ ಕೆಲಸ ಮಾಡಿದ್ದ ಚಿತ್ರದುರ್ಗ ಎಸ್ಪಿಮತ್ತು ದಾವಣಗೆರೆ ಎಸ್ಪಿಯನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲಿಯೇ ಒಳ್ಳೆಯ ತರಬೇತಿ ಹೊಂದಿದ, ಅನುಭವಿ ಅಧಿಕಾರಿಯನ್ನು ಎಸ್ಪಿಯಾಗಿ ಕಳುಹಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು. ಘಟನೆ ನಡೆದಿದೆ, ಅದನ್ನು ರಾಜಕೀಯಗೊಳಿಸುವುದು ತರವಲ್ಲ. ಇದೊಂದು ಸೂಕ್ಷ್ಮ ವಿಚಾರ. ರಾಜಕೀಯ ನಾಯಕರು ಬಾಯಿಗೆ ಬಂದಂತೆ ಮಾತನಾಡಿ, ಅದರಿಂದ ಪ್ರಚೋದನೆಗೆ ಒಳಗಾಗಿ ಆನಾಹುತಗಳಾದರೆ, ಅಂತಹವರ ವಿರುದ್ಧ ಯಾವ ಮುಲಾಜಿಗೂ ಒಳಗಾಗದೆ ಕ್ರಮ ಕೈಗೊಳ್ಳುತ್ತೇವೆ. ನಾನು ಸದ್ಯಕ್ಕೆ ಬಳ್ಳಾರಿಗೆ ಹೋಗುತ್ತಿಲ್ಲ. ವರದಿ ಬಂದ ನಂತರ ಅಗತ್ಯವೆನಿಸಿದರೆ ತೆರಳಿ, ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತೇನೆ. ಈಗ ಆ ಸಂದರ್ಭ ಒದಗಿ ಬಂದಿಲ್ಲ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಆಳಂದ | ಲೋಕಾಯುಕ್ತ ತಂಡದಿಂದ ಹಲವು ಕಚೇರಿಗಳಿಗೆ ದಿಢೀರ್ ದಾಳಿ
ಆಳಂದ: ಭ್ರಷ್ಟಾಚಾರ, ಆಡಳಿತ ಲೋಪದೋಷಗಳು ಹಾಗೂ ಸಾರ್ವಜನಿಕ ಸೇವೆಗಳಲ್ಲಿನ ವಿಳಂಬದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಲೋಕಾಯುಕ್ತರ ತಂಡವು ಶನಿವಾರ ಆಳಂದ ಸೇರಿದಂತೆ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮಿಂಚಿನ ಕಾರ್ಯಾಚರಣೆ ನಡೆಸಿ ಆಡಳಿತ ವ್ಯವಸ್ಥೆಗೆ ಬಿಸಿಮುಟ್ಟಿಸುವಂತ ಎಚ್ಚರಿಕೆ ನೀಡಿದೆ. ಲೋಕಾಯುಕ್ತ ನ್ಯಾಯಾಧೀಶ ವಿಜಯನಂದ ಅವರ ನೇತೃತ್ವದಲ್ಲಿ, ರಾಜ್ಯ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ನ್ಯಾಯಾಧೀಶ ಶ್ರೀನಾಥ, ಲೋಕಾಯುಕ್ತ ಎಸ್ಪಿ ಸಿದ್ಧರಾಜ, ಡಿವೈಎಸ್ಪಿಗಳಾದ ಬಸವರಾಜ, ಪೋಟೆಬಾರೆಡ್ಡಿ, ವಸಂತ, ವಿಜಯ ಬಿರಾದಾರ, ಬಿ.ಎಸ್. ಪಾಟೀಲ ಹಾಗೂ ಇನ್ಸ್ಪೆಕ್ಟರ್ ಸಲಾಂ ಸೇರಿದಂತೆ ಅಧಿಕಾರಿಗಳ 8 ತಂಡಗಳು ಆಳಂದ ಪಟ್ಟಣದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದವು. ಸ್ಥಳೀಯವಾಗಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ತಂಡದೊಂದಿಗೆ ಇದ್ದರು. ನಾಲ್ಕು ಜಿಲ್ಲೆಗಳಲ್ಲೂ ಸುಮಾರು 150ಕ್ಕೂ ಅಧಿಕ ಅಧಿಕಾರಿಗಳನ್ನೊಳಗೊಂಡ ಹಲವು ತಂಡಗಳು ವಿವಿಧ ಸರ್ಕಾರಿ ಕಚೇರಿಗಳಿಗೆ ಹಠಾತ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದವು. ಆರ್ಟಿಒ ಚೆಕ್ಪೋಸ್ಟ್ನಲ್ಲಿ ಅಕ್ರಮ ಹಣ ವಸೂಲಾತಿ : ಆಳಂದದ ಆರ್ಟಿಒ ಚೆಕ್ಪೋಸ್ಟ್ಗೆ ಹಠಾತ್ ಭೇಟಿ ನೀಡಿದ ಲೋಕಾಯುಕ್ತರ ತಂಡ, ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿಸುತ್ತಿದ್ದ ಪ್ರಕರಣವನ್ನು ಸ್ವತಃ ಕಣ್ಣಾರೆ ಕಂಡು ಬೆಚ್ಚಿಬಿದ್ದಿತು. ಆರ್ಟಿಒ ಅಧಿಕಾರಿ ಇಕ್ರಂ ಪಾಷಾ ಲಂಚ ವಸೂಲಾತಿಯಲ್ಲಿ ತೊಡಗಿದ್ದರೆಂಬ ಆರೋಪದಡಿ ಈಗಾಗಲೇ ತನಿಖೆ ನಡೆಯುತ್ತಿರುವ ನಡುವೆಯೇ, ಅಕ್ರಮ ವಸೂಲಾತಿ ಮುಂದುವರಿದಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ : ಕಂದಾಯ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿದ ವೇಳೆ, ಖಾತಾ ಪೋಡಿ, ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿಸಿ ಜನರಿಗೆ ನ್ಯಾಯ ಒದಗಿಸಲಾಯಿತು. ಇದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು. ಅಧಿಕಾರಿ ಗೈರು : ನ್ಯಾಯಾಧೀಶರ ಆಕ್ರೋಶ : ಬಿಸಿಎಂ ಇಲಾಖೆ ಪರಿಶೀಲನೆಯ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿ ಗೈರಾಗಿದ್ದ ಹಿನ್ನೆಲೆಯಲ್ಲಿ ಎಸ್ಡಿಸಿ ಸುನಿತಾ ರೆಡ್ಡಿ ಅವರು ಇಲಾಖೆಯ ಮಾಹಿತಿ ಒದಗಿಸಿದರು. ಶಿಕ್ಷಣ ಇಲಾಖೆಗೆ ಭೇಟಿ ನೀಡಿದಾಗ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ದಾಖಲೆಗಳನ್ನು ಸಲ್ಲಿಸಿದರು. ಭೂ ನೋಂದಣಿ, ಆಹಾರ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಕಡತಗಳನ್ನೂ ಲೋಕಾಯುಕ್ತರ ತಂಡ ಸೂಕ್ಷ್ಮವಾಗಿ ಪರಿಶೀಲಿಸಿತು.
ಶಹಾಬಾದ್ | ಗೋಳಾ(ಕೆ) ಗ್ರಾಮದಲ್ಲಿ ತೆರಿಗೆ ಬಾಕಿ ಸಂಗ್ರಹಕ್ಕೆ ವಿಶೇಷ ಅಭಿಯಾನ
ಶಹಾಬಾದ್ : ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತಿಯ ಗೋಳಾ(ಕೆ) ಗ್ರಾಮದಲ್ಲಿ “ತೆರಿಗೆ ಪಾವತಿ” ಘೋಷಣೆಯೊಂದಿಗೆ ಗ್ರಾಪಂ ಪಿಡಿಓ ನಿಂಗಪ್ಪ ಕೆಂಭಾವಿ ತೆರಿಗೆ ಬಾಕಿ ಸಂಗ್ರಹಕ್ಕೆ ಈ ಬಾರಿ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತೆರಿಗೆ ಪಾವತಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಪಂ ಪಿಡಿಓ ನಿಂಗಪ್ಪ ಕೆಂಭಾವಿ ಅವರ ನೇತೃತ್ವದಲ್ಲಿ ಮನೆಮನೆಗೆ ಭೇಟಿ ನೀಡಿ ತೆರಿಗೆ ಪಾವತಿಗೆ ಮನವಿ ಮಾಡಲಾಗುತ್ತಿದೆ. ಗ್ರಾಮ ಪಂಚಾಯತ್ಗಳು ಬಾಕಿ ಇರುವ ತೆರಿಗೆಗಳನ್ನು ಸಂಗ್ರಹಿಸುವ ಮೂಲಕ ಆದಾಯವನ್ನು ಹೆಚ್ಚಿಸಿ, ಸ್ವಂತ ಸಂಪನ್ಮೂಲಗಳಿಂದ ಗ್ರಾಮಗಳ ಅಭಿವೃದ್ಧಿಗೆ ಅಗತ್ಯವಾದ ಕಾಮಗಾರಿಗಳನ್ನು ಕೈಗೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕರವಸೂಲಿಗಾರರು, ಜಲಗಾರರು ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಯಚಟುವಟಿಕೆ ಆರಂಭಿಸಲಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆಗಳು, ನಿವೇಶನಗಳು, ವಾಣಿಜ್ಯ ಮಳಿಗೆಗಳು ಹಾಗೂ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದ್ದು, ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ತೆರಿಗೆ ಪಾವತಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಂಗ್ರಹವಾಗುವ ಹಣವನ್ನು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಬಳಸಲಾಗುತ್ತದೆ. ಈ ವಿಶೇಷ ಅಭಿಯಾನದ ಮೂಲಕ ಹೆಚ್ಚಿನ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಪಿಡಿಓ ನಿಂಗಪ್ಪ ಕೆಂಭಾವಿ ತಿಳಿಸಿದ್ದಾರೆ.
ಮಡುರೊ ಜೀವಂತವಾಗಿರುವ ಬಗ್ಗೆ ಪುರಾವೆ ಬೇಕು: ವೆನೆಝುವೆಲ ಉಪಾಧ್ಯಕ್ಷೆ ಡೆಲ್ಸಿ ರೋಡ್ರಿಗ್ಸ್
ಕ್ಯಾರಕಸ್ (ವೆನೆಝುವೆಲ), ಜ. 3: ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಹಾಗೂ ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್ರನ್ನು ಅಮೆರಿಕದ ಪಡೆಗಳು ಸೆರೆಹಿಡಿದ ಬಳಿಕ ಅವರು ಎಲ್ಲಿದ್ದಾರೆ ಎನ್ನುವುದು ಸರಕಾರಕ್ಕೆ ತಿಳಿದಿಲ್ಲ ಎಂದು ವೆನೆಝುವೆಲದ ಉಪಾಧ್ಯಕ್ಷೆ ಡೆಲ್ಸಿ ರೋಡ್ರಿಗ್ಸ್ ಶನಿವಾರ ಸರಕಾರಿ ಟಿವಿಯಲ್ಲಿ ಹೇಳಿದ್ದಾರೆ. ‘‘ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್ ಎಲ್ಲಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ. ಅವರು ಜೀವಂತವಾಗಿರುವ ಬಗ್ಗೆ ನಮಗೆ ಪುರಾವೆ ಬೇಕು’’ ಎಂದು ಅವರು ಹೇಳಿದರು. ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿಯಲಾಗಿದೆ ಹಾಗೂ ಅವರನ್ನು ದೇಶದಿಂದ ಹೊರಗೆ ಒಯ್ಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ‘‘ಅಮೆರಿಕವು ವೆನೆಝುವೆಲದ ವಿರುದ್ಧ ಬೃಹತ್ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ’’ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ, 1989ರಲ್ಲಿ ಅಮೆರಿಕದ ಪಡೆಗಳು ಪನಾಮದ ಮೇಲೆ ದಾಳಿ ನಡೆಸಿ ಅದರ ಅಧ್ಯಕ್ಷ ಮ್ಯಾನುಯೆಲ್ ನೊರೀಗರನ್ನು ಪದಚ್ಯುತಗೊಳಿಸಿದ್ದವು. ಆ ಬಳಿಕ, ಅಮೆರಿಕವು ಲ್ಯಾಟಿನ್ ಅಮೆರಿಕ ದೇಶವೊಂದರಲ್ಲಿ ಇಂಥ ನೇರ ಹಸ್ತಕ್ಷೇಪವನ್ನು ಮಾಡಿರಲಿಲ್ಲ. ಅಮೆರಿಕದ ಸೇನಾ ಆಕ್ರಮಣವನ್ನು ವೆನೆಝುವೆಲ ತಿರಸ್ಕರಿಸಿದೆ ಹಾಗೂ ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯಮನ್ನು ಘೋಷಿಸಿದೆ. ‘‘ವೆನೆಝುಯೆಲದ ನೆಲ ಮತ್ತು ಜನರ ಮೇಲೆ ಅಮೆರಿಕದ ಹಾಲಿ ಸರಕಾರವು ನಡೆಸಿರುವ ಅತ್ಯಂತ ಗಂಭೀರ ಸೇನಾ ಆಕ್ರಮಣವನ್ನು ವೆನೆಝುಯೆಲ ತಿರಸ್ಕರಿಸುತ್ತದೆ ಮತ್ತು ಖಂಡಿಸುತ್ತದೆ’’ ಎಂದು ಅಧ್ಯಕ್ಷ ನಿಕೊಲಸ್ ಮಡುರೊ ಸರಕಾರ ಹೇಳಿದೆ. ವೆನೆಝುವೆಲದಲ್ಲಿರುವ ಮಾದಕದ್ರವ್ಯ ಜಾಲಗಳ ವಿರುದ್ಧ ಭೂದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರಗಳಿಂದ ಬೆದರಿಕೆ ಹಾಕುತ್ತಿದ್ದರು. ಅವರು ಕೆರಿಬಿಯನ್ ಸಮುದ್ರದಲ್ಲಿ ಅಮೆರಿಕದ ಅತ್ಯಂತ ಸುಧಾರಿತ ವಿಮಾನವಾಹಕ ಯುದ್ಧನೌಕೆ ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಸೇರಿದಂತೆ ಭಾರೀ ಪ್ರಮಾಣದಲ್ಲಿ ಯುದ್ಧನೌಕೆಗಳು ಮತ್ತು ಯುದ್ಧವಿಮಾನಗಳನ್ನು ನಿಯೋಜಿಸಿದ್ದರು. ಸದ್ದಾಮ್, ಪನಾಮದ ನೊರೀಗ ಸಾಲಿಗೆ ಸೇರ್ಪಡೆಗೊಂಡ ನಿಕೊಲಸ್ ಮಡುರೊ ಅಮೆರಿಕದ ಪಡೆಗಳು ಶನಿವಾರ ಮುಂಜಾನೆ ಸೇನಾ ಕಾರ್ಯಾಚರಣೆ ನಡೆಸಿ ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಹಾಗೂ ದೇಶದ ಪ್ರಥಮ ಮಹಿಳೆಯನ್ನು ದೇಶದಿಂದ ಹೊರಗೆ ಅಪಹರಿಸಿರುವ ಘಟನೆಯು ಹಿಂದಿನ ಇಂಥದೇ ಘಟನೆಗಳನ್ನು ಕೆದಕಿದೆ. ಅಮೆರಿಕವು ಈ ಹಿಂದೆ ಇಂಥದೇ ಸೇನಾ ಕಾರ್ಯಾಚರಣೆಗಳನ್ನು ನಡೆಸಿ ಪನಾಮದ ಮಾಜಿ ಸೇನಾ ನಾಯಕ ಮ್ಯಾನುಯೆಲ್ ನೊರೀಗ ಅವರನ್ನು ಪದಚ್ಯುತಗೊಳಿಸಿರುವುದನ್ನು ಮತ್ತು ಇರಾಕ್ ಅಧ್ಯಕ್ಷ ಸದ್ದಾಮ್ ಹುಸೇನ್ರನ್ನು ಹತ್ಯೆಗೈದಿರುವುದನ್ನು ಸ್ಮರಿಸಬಹುದಾಗಿದೆ. ವೆನೆಝುವೆಲದಂತೆ ಲ್ಯಾಟಿನ್ ಅಮೆರಿಕದ ದೇಶವೇ ಆಗಿರುವ ಪನಾಮದ ಮೇಲೆ 1989ರಲ್ಲಿ ಅಮೆರಿಕದ ಪಡೆಗಳು ಸೇನಾ ದಾಳಿ ನಡೆಸಿ, ಸೇನಾ ನಾಯಕ ಹಾಗೂ ದೇಶದ ಮುಖ್ಯಸ್ಥರಾಗಿದ್ದ ಮ್ಯಾನುಯೆಲ್ ನೊರೀಗರನ್ನು ಪದಚ್ಯುತಗೊಳಿಸಿದ್ದವು. ಪನಾಮದಲ್ಲಿರುವ ಅಮೆರಿಕದ ನಾಗರಿಕರ ರಕ್ಷಣೆಗಾಗಿ ಹಾಗೂ ಅಪ್ರಜಾಸತ್ತಾತ್ಮಕ ವಿಧಾನಗಳು, ಭ್ರಷ್ಟಾಚಾರ ಮತ್ತು ಅಕ್ರಮ ಮಾದಕದ್ರವ್ಯ ದಂಧೆಯನ್ನು ಮಟ್ಟಹಾಕುವುದಕ್ಕಾಗಿ ಈ ಸೇನಾ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿತ್ತು. ಪನಾಮದ ಮೇಲೆ ದಾಳಿ ನಡೆಸುವ ಮೊದಲು, ಅಮೆರಿಕವು 1988ರಲ್ಲಿ ಮಯಾಮಿಯಲ್ಲಿ ನೊರೀಗ ವಿರುದ್ಧ ಮಾದಕದ್ರವ್ಯ ಕಳ್ಳಸಾಗಣೆಯ ಆರೋಪವನ್ನು ಹೊರಿಸಿತ್ತು. ಅದೇ ತಂತ್ರವನ್ನು ಅಮೆರಿಕವು ವೆನೆಝುವೆಲ ಅಧ್ಯಕ್ಷ ಮಡುರೊ ವಿರುದ್ಧವೂ ಹೂಡಿದೆ. 1985ರಲ್ಲಿ, ಪನಾಮದ ಅಧ್ಯಕ್ಷ ನಿಕೊಲಸ್ ಅರ್ಡಿಟೊ ಬಾರ್ಲೆಟ್ಟ ರಾಜೀನಾಮೆ ನೀಡುವಂತೆ ನೊರೀಗ ಒತ್ತಡ ಹೇರಿದ್ದರು. ಬಳಿಕ, 1989ರಲ್ಲಿ ಚುನಾವಣೆಯನ್ನು ರದ್ದುಗೊಳಿಸಿದ್ದರು. ಅವರು ದೇಶದಲ್ಲಿ ನೆಲೆಸಿದ್ದ ಅಮೆರಿಕ ವಿರೋಧಿ ಭಾವನೆಗಳನ್ನು ಬೆಂಬಲ ನೀಡಿದರು. ನೊರೀಗ ಆರಂಭದಲ್ಲಿ ಅಮೆರಿಕದ ಮಿತ್ರನಾಗಿದ್ದರು. ಆದರೆ, ನಿಧಾನವಾಗಿ ಅಮೆರಿಕ ವಿರೋಧಿ ನಿಲುವುಗಳನ್ನು ತೆಗೆದುಕೊಂಡರು. ಅಮೆರಿಕ ಪಡೆಗಳು ನೊರೀಗರನ್ನು ಅಮೆರಿಕಕ್ಕೆ ಒಯ್ದು, ಮಯಾಮಿಯಲ್ಲಿ ಅವರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯಲ್ಲಿ ವಿಚಾರಣೆಗೆ ಒಳಪಡಿಸಿದರು. ಅವರು 2010ರವರೆಗೂ ಅಮೆರಿಕ ಜೈಲಿನಲ್ಲಿದ್ದರು. 2010ರಲ್ಲಿ, ಇನ್ನೊಂದು ಮೊಕದ್ದಮೆಯ ವಿಚಾರಣೆಗಾಗಿ ಅವರನ್ನು ಫ್ರಾನ್ಸ್ಗೆ ಗಡೀಪಾರು ಮಾಡಲಾಯಿತು. ಒಂದು ವರ್ಷದ ಬಳಿಕ, ಫ್ರಾನ್ಸ್ ಅವರನ್ನು ಪನಾಮಕ್ಕೆ ವಾಪಸ್ ಕಳುಹಿಸಿತು. ನೊರೀಗ 2017ರಲ್ಲಿ ಪನಾಮದ ಜೈಲಿನಲ್ಲಿ ನಿಧನರಾದರು. ಸದ್ದಾಮ್ ಹುಸೇನ್ಗೆ ಗಲ್ಲು ಇರಾಕ್ನಲ್ಲಿ ಸಾಮೂಹಿಕ ವಿನಾಶಕ ಶಸ್ತ್ರಗಳಿವೆ ಎಂಬ ತಪ್ಪು ಗುಪ್ತಚರ ವರದಿಯ ಆಧಾರದಲ್ಲಿ 2003ರಲ್ಲಿ ಆ ದೇಶದ ಮೇಲೆ ಅಮೆರಿಕ ನೇತೃತ್ವದ ಪಡೆಗಳು ಯುದ್ಧ ನಡೆಸಿದವು. ಯುದ್ಧ ಆರಂಭಗೊಂಡು ಒಂಭತ್ತು ತಿಂಗಳ ಬಳಿಕ, 2003 ಡಿಸೆಂಬರ್ 13ರಂದು ಅಮೆರಿಕದ ಪಡೆಗಳು ಇರಾಕ್ ಅಧ್ಯಕ್ಷ ಸದ್ದಾಮ್ ಹುಸೇನ್ರನ್ನು ಸೆರೆ ಹಿಡಿದವು. ನೊರೀಗರಂತೆಯೇ, ಸದ್ದಾಮ್ ಹುಸೇನ್ ಕೂಡ ವರ್ಷಗಳ ಕಾಲ ಅಮೆರಿಕದ ಪ್ರಮುಖ ಮಿತ್ರನಾಗಿದ್ದರು. 2003ರ ಯುದ್ಧಕ್ಕೆ ಮುನ್ನ, ಸದ್ದಾಮ್ ಅಲ್-ಖಾಯಿದ ಮುಂತಾದ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದಾಗಿ ಅಮೆರಿಕ ಯಾವುದೇ ಪುರಾವೆ ಇಲ್ಲದೆ ಹೇಳಿಕೊಂಡಿತ್ತು. ಆದರೆ, ಇರಾಕ್ನಲ್ಲಿ ಸಾಮೂಹಿಕ ವಿನಾಶಕ ಅಸ್ತ್ರಗಳು ಯಾವತ್ತೂ ಪತ್ತೆಯಾಗಿಲ್ಲ. ಸದ್ದಾಮ್ ತನ್ನ ತವರು ಪಟ್ಟಣ ತಿಕ್ರಿತ್ನಲ್ಲಿ ಬಿಲವೊಂದರಲ್ಲಿ ಅಡಗಿರುವುದನ್ನು ಅಮೆರಿಕದ ಸೈನಿಕರು ಪತ್ತೆಹಚ್ಚಿದರು. ಅವರನ್ನು ಇರಾಕ್ನ ನ್ಯಾಯಾಲಯವೊಂದರಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಮಾನವತೆಯ ವಿರುದ್ಧದ ಅಪರಾಧಕ್ಕಾಗಿ ನ್ಯಾಯಾಲಯವು ಅವರಿಗೆ ಮರಣ ದಂಡನೆ ವಿಧಿಸಿತು. 2006 ಡಿಸೆಂಬರ್ 30ರಂದು ಅವರನ್ನು ಗಲ್ಲಿಗೇರಿಸಲಾಯಿತು. ಹೊಂಡುರಸ್ ಅಧ್ಯಕ್ಷ ಹರ್ನಂಡಿಝ್ಗೆ ಅಮೆರಿಕ ಕ್ಷಮಾದಾನ ಹೊಂಡುರಸ್ ಅಧ್ಯಕ್ಷ ಹರ್ನಂಡಿಝ್ ಪ್ರಕರಣವು ಅಮೆರಿಕದ ಆಷಾಢಭೂತಿತನವನ್ನು ತೋರಿಸುತ್ತದೆ ಎಂದು ಕೆಲವು ವೀಕ್ಷಕರು ಅಭಿಪ್ರಾಯಪಡುತ್ತಾರೆ. 2022ರ ಫೆಬ್ರವರಿಯಲ್ಲಿ, ಅಮೆರಿಕದ ಏಜಂಟ್ಗಳು ಮತ್ತು ಹೊಂಡುರಸ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹರ್ನಂಡಿಝ್ರನ್ನು ಟೆಗುಸಿಗಲ್ಪದಲ್ಲಿರುವ ಅವರ ಮನೆಯಿಂದ ಸೆರೆಹಿಡಿಯಲಾಯಿತು. ದೇಶದ ಅಧ್ಯಕ್ಷ ಹುದ್ದೆಯನ್ನು ತೊರೆದ ದಿನಗಳ ಬಳಿಕ ಈ ಬೆಳವಣಿಗೆ ನಡೆಯಿತು. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಅಕ್ರಮ ಮಾದಕದ್ರವ್ಯ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಲ್ಲಿ ವಿಚಾರಣೆ ಎದುರಿಸಲು ಅವರನ್ನು 2022 ಎಪ್ರಿಲ್ನಲ್ಲಿ ಅಮೆರಿಕಕ್ಕೆ ಗಡೀಪಾರು ಮಾಡಲಾಯಿತು. ಅದೇ ವರ್ಷದ ಜೂನ್ನಲ್ಲಿ ಅವರಿಗೆ 45 ವರ್ಷಗಳ ಜೈಲುವಾಸದ ಶಿಕ್ಷೆಯನ್ನು ವಿಧಿಸಲಾಯಿತು. ಆದರೆ, 2025 ಡಿಸೆಂಬರ್ ಒಂದರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹರ್ನಂಡಿಝ್ಗೆ ಕ್ಷಮಾದಾನ ನೀಡಿದರು. ಹರ್ನಂಡಿಝ್ ಅಮೆರಿಕದ ಜೈಲಿನಿಂದ ಹೊರನಡೆದ ಕೆಲವೇ ದಿನಗಳ ಬಳಿಕ, ಅವರ ವಿರುದ್ಧ ಹೊಂಡುರಸ್ನ ಪ್ರಾಸಿಕ್ಯೂಟರ್ ಅಂತರ್ರಾಷ್ಟ್ರೀಯ ಬಂಧನ ವಾರಂಟ್ ಹೊರಡಿಸಿದರು.
ಯಲ್ಲಾಪುರ: ಮಹಿಳೆಯ ಕತ್ತು ಸೀಳಿ ಕೊಲೆ
ಯಲ್ಲಾಪುರ, ಜ.3: ಮಹಿಳೆಯನ್ನು ಆಕೆಯ ಮನೆಯ ಬಳಿಯೇ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ನಡೆದಿದೆ. ರಾಮಾಪುರ ಸರಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಂಜಿತಾ ಮಲ್ಲಪ್ಪ ಬನಸೋಡೆ (30) ಹತ್ಯೆಗೀಡಾದ ಮಹಿಳೆ. ರಫೀಕ್ ಇಮಾಮಸಾಬ ಯಳ್ಳೂರ (30) ಕೊಲೆಗೈದ ಆರೋಪಿ ಎಂದು ತಿಳಿದು ಬಂದಿದೆ. ಮದುವೆಯಾಗಿ ವಿಚ್ಛೇದನ ಹೊಂದಿದ್ದ ರಂಜಿತಾಗೆ ರಫೀಕ್ ಅನೇಕ ವರ್ಷಗಳಿಂದ ಪರಿಚಿತನಾಗಿದ್ದು, ತನ್ನನ್ನು ಪ್ರೀತಿಸಿ ಮದುವೆಯಾಗುವಂತೆ ಸತಾಯಿಸುತ್ತಿದ್ದ ಎನ್ನಲಾಗಿದ್ದು, ಇದಕ್ಕೆ ನಿರಾಕರಿಸಿದ ರಂಜಿತಾ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಆರೋಪಿ ರಫೀಕ್, ರಂಜಿತಾ ಕೆಲಸ ಮುಗಿಸಿ ಶಾಲೆಯಿಂದ ಬರುತ್ತಿರುವ ಸಂದರ್ಭ ಆಕೆಯನ್ನು ಅಡ್ಡಗಟ್ಟಿದ್ದು, ಈ ವೇಳೆ ಇಬ್ಬರ ನಡುವೆ ವಾದ ವಿವಾದ ನಡೆದಿದ್ದು, ಆರೋಪಿ ರಫೀಕ್ ಹರಿತವಾದ ಆಯುಧದಿಂದ ರಂಜಿತಾಳ ಕತ್ತು ಸೀಳಿ ಅರಣ್ಯದೊಳಗೆ ಓಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ರಂಜಿತಾಳನ್ನು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಮೃತಳ ಸಹೋದರಿ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಎಸ್ಪಿ ಭೇಟಿ ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಅಲ್ಲಿಯವರೆಗೆ ಪಟ್ಟಣದಲ್ಲಿ ಕೋಮು ಸೌಹಾರ್ದ ಕಾಪಾಡಿಕೊಳ್ಳುವಂತೆ ಕೋರಿದರು.
ಅಫಜಲಪುರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ : ಕ್ಯಾಲೆಂಡರ್ ಬಿಡುಗಡೆ
ಅಫಜಲಪುರ: ನಗರದ ಶ್ರೀ ನಿಂಬೆಕ್ಕದೇವಿ ದೇವಸ್ಥಾನದಲ್ಲಿ ಅಕ್ಷರದ ಅವ್ವೆ ಎಂದೇ ಖ್ಯಾತರಾಗಿರುವ ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ರಾಜಶೇಖರ ಮನ್ಮಿ, ಸತೀಶ ಪದಕಿ ಹಾಗೂ ಸುಭಾಷ ಮನ್ಮಿ ಅವರು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಹಾಗೂ ಟ್ರಸ್ಟ್ ಅಧ್ಯಕ್ಷರಾದ ಸಂತೋಷ ಮನ್ಮಿ ವಹಿಸಿ ಮಾತನಾಡಿ, ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಗಾಗಿ ಸಾವಿತ್ರಿಬಾಯಿ ಫುಲೆ ಅವರು ನಡೆಸಿದ ಹೋರಾಟ ಹಾಗೂ ಅವರ ಕೊಡುಗೆಗಳು ಇಂದಿನ ಸಮಾಜಕ್ಕೂ ಪ್ರೇರಣಾದಾಯಕವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸರ್ವೇಶ ಲಿಂಬಿತೋಟ, ಶಿವಾನಂದ ಎಸ್. ಕಾಮಗೊಂಡ, ಮಹಾಂತೇಶ ಸರಸಂಬಾ, ಭೀಮಾಶಂಕರ ಕಲ್ಯಾಣಕರ, ವಿಶ್ವನಾಥ ಮಲಘಾಣ, ಮಂಜುನಾಥ ಮನ್ಮಿ, ಮಹಾದೇವ ಲಿಂಬಿತೋಟ, ಸುನಿಲ್ ಯಲ್ದೆ, ವಿಶ್ವರಾದ್ಯ ಪದಕಿ, ಅಯ್ಯಪ್ಪ ಮನ್ಮಿ, ಸಾಮ್ರಾಟ್ ಮನ್ಮಿ ಸೇರಿದಂತೆ ಸಮಾಜದ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಅಸ್ಟ್ರೋಗೆ ಎಫ್ಐಎಪಿಯಿಂದ ಅಸೋಸಿಯೇಟ್ ಗೌರವ
ಉಡುಪಿ, ಜ.3: ಅಂತಾರಾಷ್ಟ್ರೀಯ ಛಾಯಾಚಿತ್ರ ಕಲೆಗಳ ಉನ್ನತ ಸಂಸ್ಥೆಯಾದ ಎಫ್ಐಎಪಿ ವತಿಯಿಂದ ಹಿರಿಯ ಛಾಯಾ ಪತ್ರಕರ್ತ ಅಸ್ಟ್ರೋ ಮೋಹನ್ ಅವರಿಗೆ ಅಸೋಸಿಯೇಟ್(ಎಎಫ್ಐಎಪಿ) ಗೌರವ ಲಭಿಸಿದೆ. ಎಎಫ್ಐಎಪಿ ಗೌರವವು ಎಫ್ಐಎಪಿ ಗೌರವ ಕ್ರಮದಲ್ಲಿ ಪ್ರಾಥಮಿಕ ಹಂತದ ಮಾನ್ಯತೆಯಾಗಿದ್ದರೂ, ಕರ್ನಾಟಕದ ಸಕ್ರಿಯ ಛಾಯಾ ಚಿತ್ರ ಪತ್ರಕರ್ತರ ಪೈಕಿ ಈ ಅಂತರರಾಷ್ಟ್ರೀಯ ಗೌರವವನ್ನು ಪಡೆದವರು ಅತಿ ವಿರಳ. ಮೂರು ದಶಕಗಳಿಗೂ ಅಧಿಕ ವೃತ್ತಿಪರ ಅನುಭವ ಹೊಂದಿರುವ ಅಸ್ಟ್ರೋ ಮೋಹನ್, ಸಂಸ್ಕೃತಿ, ಪರಂಪರೆ, ಧಾರ್ಮಿಕ ಆಚರಣೆಗಳು ಹಾಗೂ ಜನಜೀವನವನ್ನು ಆಳವಾಗಿ ದಾಖಲಿಸುವ ತಮ್ಮ ಛಾಯಾಚಿತ್ರಗಳ ಮೂಲಕ ಗುರುತಿಸಿ ಕೊಂಡಿದ್ದಾರೆ. ಅವರ ಕೃತಿಗಳು ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಮಾನ್ಯತೆ ಪಡೆದಿವೆ.
ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ: ಮುಸ್ತಫಿಝುರ್ ರೆಹ್ಮಾನ್ರನ್ನು ಕೈಬಿಟ್ಟಿದ್ದಕ್ಕೆ ಶಶಿ ತರೂರ್ ಪ್ರತಿಕ್ರಿಯೆ
ಹೊಸದಿಲ್ಲಿ, ಜ.3: ‘‘ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗೆ ಕ್ರಿಕೆಟನ್ನು ಎಳೆದು ತರಬಾರದು’’ ಎಂದು ಬಿಸಿಸಿಐ ಸೂಚನೆಯ ನಂತರ ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ರಹ್ಮಾನ್ರನ್ನು ಐಪಿಎಲ್ ತಂಡದಿಂದ ಕೆಕೆಆರ್ ಬಿಡುಗಡೆ ಮಾಡಿರುವ ನಿರ್ಧಾರಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. ಶನಿವಾರ ವೀಡಿಯೊವನ್ನು ಹಂಚಿಕೊಂಡಿರುವ ತರೂರ್ ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ‘ಬಿಸಿಸಿಐ, ಮುಸ್ತಫಿಝುರ್ರಹ್ಮಾನ್ರನ್ನು ಶೋಚನೀಯವಾಗಿ ತಂಡದಿಂದ ಹೊರಗಟ್ಟಿದೆ. ಬಾಂಗ್ಲಾದೇಶದ ಆಟಗಾರರಾದ ಲಿಟನ್ ದಾಸ್ ಹಾಗೂ ಸೌಮ್ಯ ಸರ್ಕಾರ್ ಆಗಿದ್ದರೆ ಏನು ಮಾಡುತ್ತಿದ್ದರು. ಒಂದು ರಾಷ್ಟ್ರ, ಒಬ್ಬ ವ್ಯಕ್ತಿ, ಆತನ ಧರ್ಮ?ಇಲ್ಲಿ ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ? ಕ್ರೀಡೆಯ ಈ ಅರ್ಥಹೀನ ರಾಜಕೀಯ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದೆ? ಎಂದು ಬಿಸಿಸಿಐ ನಿರ್ಧಾರದ ವ್ಯಾಪಕ ಪರಿಣಾಮಗಳ ಕುರಿತು ತರೂರ್ ತೀಕ್ಷ್ಣವಾಗಿ ಪ್ರಶ್ನಿಸಿದರು. ಬಿಸಿಸಿಐ ಸೂಚನೆಯು ಮೇರೆಗೆ ಮುಂಬರುವ ಐಪಿಎಲ್ ಋತುವಿನಿಂದ ಮುಸ್ತಫಿಝುರ್ರಹ್ಮಾನ್ರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಕೆಕೆಆರ್ ದೃಢಪಡಿಸಿದ ನಂತರ ತರೂರ್ರಿಂದ ಈ ಹೇಳಿಕೆ ಬಂದಿದೆ.
ಬೈಂದೂರು ತಾಲೂಕು ಆಡಳಿತದ ಎದುರು ಗೆರಟೆ ಹಿಡಿದು ರೈತರ ಪ್ರತಿಭಟನೆ
ಬೈಂದೂರು, ಜ.3: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಕಳೆದ 104 ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ರೈತರು ಗೆರಟೆ(ತೆಂಗಿನ ಚಿಪ್ಪು) ದೀಪ ಹಿಡಿದು ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೇಡಿಕೆ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ರಾಜ್ಯಮಟ್ಟದ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಸಚಿವರು ಹೇಳಿದರೂ ಕೂಡ ಅಧಿಕಾರಿಗಳು ರೈತರಿಗೆ ಸಹಕರಿಸುತ್ತಿಲ್ಲ ಎಂದು ದೂರಿದರು. ಬಡ ರೈತರು ನ್ಯಾಯಕ್ಕಾಗಿ ಬೀದಿಯಲ್ಲಿದ್ದಾರೆ. ನಾಯಕರು ಹಣ ಮಾಡುವ ದಂಧೆಯಲ್ಲಿದ್ದಾರೆ. ಜನರ ಎದುರು ನಾಟಕ ಮಾಡುತ್ತಿದ್ದಾರೆ. ಸರಕಾರದ ಮಟ್ಟದಲ್ಲಿ ಏನಿದೆ ಎನ್ನುವುದು ಸ್ಪಷ್ಟವಾಗಿ ತಿಳಿಸದಿದ್ದರೆ ಜ.15ರಂದು ರೈತರು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ. ನೂರಾರು ರೈತರು ನ್ಯಾಯ ಸಿಗುವವರೆಗೆ ಬೈಂದೂರು ತಾಲೂಕು ಆಡಳಿತದ ಎದುರು ಉಪವಾಸ ಸತ್ಯಾಗ್ರಹ ಮುಂದುವರೆಸಲಿದ್ದಾರೆ. ಮುಂದಿನ ಎಲ್ಲಾ ಸಮಸ್ಯೆಗೆ ಅಧಿಕಾರಿಗಳೆ ನೇರ ಕಾರಣವಾಗಲಿದ್ದಾರೆ ಎಂದು ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅರುಣ್ ಕುಮಾರ್ ಶಿರೂರು, ವೀರಭದ್ರ ಗಾಣಿಗ, ಕೇಶವ ಅಂತಾರ್, ಮಹಾದೇವ ಪೂಜಾರಿ ಕಿಸ್ಮತ್ತಿ, ಪದ್ಮಾಕ್ಷ ಗೋಳಿಬೇರು, ಲಿಮೋನ್ ಬೈಂದೂರು, ಸೂರ್ಯಕಾಂತಿ ಸಹಿತ ನೂರಾರು ರೈತರು ಹಾಜರಿದ್ದರು.
ದೀಕ್ಷಾ ರಾಮಕೃಷ್ಣರಿಂದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್
ಉಡುಪಿ, ಜ.3: ಸತತ 6ಗಂಟೆ 13 ನಿಮಿಷಗಳ ಕಾಲ ಹಾಡುತ್ತ ಕುಣಿಯುತ್ತ ಪುರಂದರ ಗಾನ ನರ್ತನದ ಮೂಲಕ ದೀಕ್ಷಾ ರಾಮಕೃಷ್ಣ(31) ನೂತನ ವಿಶ್ವ ದಾಖಲೆ ಬರೆದಿದ್ದಾರೆ. ಮಣಿಪಾಲ ಹೆಜ್ಜೆ ಗೆಜ್ಜೆ ಫೌಂಡೇಶನ್ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಬೆಳಗ್ಗೆ 8.58ಕ್ಕೆ ಪುರಂದರದಾಸ ರಚಿತ ಗಜ ವದನ ಬೇಡುವೆ ಕೃತಿಯನ್ನು ಹಾಡುತ್ತ ನರ್ತನ ಆರಂಭಿಸಿದ ದೀಕ್ಷಾ ನಿರಂತರವಾಗಿ ಗಾನ ಭಾವ ಅಭಿನಯ ಪ್ರಸ್ತುತಪಡಿಸಿದರು. ಆ ಮೂಲಕ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದರು. ತಬಲಾದಲ್ಲಿ ವಿದುಷಿ ವಿಜೇತಾ ಹೆಗಡೆ ಕೆರೆಮನೆ ಹಾಗೂ ಹಾರ್ಮೋನಿಯಂನಲ್ಲಿ ವಿದ್ವಾನ್ ಸತೀಶ್ ಭಟ್ ಹೆಗ್ಗಾರ್ ಸಾಥ್ ನೀಡಿದರು. ಸಂಜೆ ತಾತ್ಕಾಲಿಕ ಪ್ರಮಾಣ ಪತ್ರ, ಪದಕ, ಲಾಂಛನವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದರ ಏಶ್ಯಾ ಮುಖ್ಯಸ್ಥ ಡಾ. ಮನೀಶ್ ಬಿಷ್ಣೋಯ್ ಹಸ್ತಾಂತರಿಸಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಎಂಜಿಎಂ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಶೆಣೈ, ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ, ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ, ವಿದ್ವಾನ್ ರಾಘವೇಂದ್ರ ಆಚಾರ್ಯ ಮಣಿಪಾಲ, ಗೋಲ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದರ ಕರ್ನಾಟಕ ಮುಖ್ಯಸ್ಥ ಡಾ.ಭರತ್ ಕಾಮತ್, ದೀಕ್ಷಾ ಅವರ ಪತಿ ಡಾ.ಶರಣ ಬಸವ ಬಳ್ಳಾರಿ ಉಪಸ್ಥಿತರಿದ್ದರು. ಡಾ.ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಯಶಾ ರಾಮಕೃಷ್ಣ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ರಾಮಕೃಷ್ಣ ವಂದಿಸಿದರು.
ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೆರೆ ಹಿಡಿದಿದ್ದು ಹೇಗೆ? ಮುಂದೇನಾಗಲಿದೆ?
ವೆನೆಝುವೆಲಾದಲ್ಲಿ ಅಮೆರಿಕ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆ ಹಿಡಿಯಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಡುರೊ ಈಗ ಅಮೆರಿಕದಲ್ಲಿ ಮಾದಕ ದ್ರವ್ಯ-ಭಯೋತ್ಪಾದನೆಯ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ, ವೆನೆಝುವೆಲಾದ ರಾಜಧಾನಿ ಕ್ಯಾರಕಾಸ್ ಮತ್ತು ಇತರ ಪ್ರದೇಶಗಳಲ್ಲಿ ಸ್ಫೋಟ ಸಂಭವಿಸಿದೆ. ಈ ಕಾರ್ಯಾಚರಣೆಯನ್ನು ಯುಎಸ್ ಮಿಲಿಟರಿಯ ಉನ್ನತ ವಿಶೇಷ ಮಿಷನ್ ಘಟಕವಾದ ಡೆಲ್ಟಾ ಫೋರ್ಸ್ ನಡೆಸಿತು ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಏನಿದು ಡೆಲ್ಟಾ ಫೋರ್ಸ್ ? 1977 ರಲ್ಲಿ ಕರ್ನಲ್ ಚಾರ್ಲ್ಸ್ ಬೆಕ್ವಿತ್ ಸ್ಥಾಪಿಸಿದ ಉತ್ತರ ಕೆರೊಲಿನಾದ ಫೋರ್ಟ್ ಬ್ರಾಗ್ನಲ್ಲಿ ನೆಲೆಗೊಂಡಿರುವ ಡೆಲ್ಟಾ ಫೋರ್ಸ್ ವಿಶ್ವದ ಅತ್ಯಂತ ಗಣ್ಯ ಮತ್ತು ರಹಸ್ಯ ಮಿಲಿಟರಿ ಘಟಕಗಳಲ್ಲಿ ಒಂದಾಗಿದೆ. ಇದು ಯುಎಸ್ ಆರ್ಮಿ ಸ್ಪೆಷಲ್ ಆಪರೇಷನ್ಸ್ ಕಮಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಾಯಿಂಟ್ ಸ್ಪೆಷಲ್ ಆಪರೇಷನ್ಸ್ ಕಮಾಂಡ್ (ಜೆಎಸ್ಒಸಿ)ಆದೇಶವನ್ನು ಪಾಲಿಸುತ್ತಿದೆ. ಇದನ್ನು 1ನೇ ಸ್ಪೆಷಲ್ ಫೋರ್ಸಸ್ ಆಪರೇಶನಲ್ ಡಿಟ್ಯಾಚ್ಮೆಂಟ್–ಡೆಲ್ಟಾ (1 ನೇ ಎಸ್ಎಫ್ಒಡಿ-ಡಿ) ಎಂದೂ ಕರೆಯಲಾಗುತ್ತದೆ. ಇದರ ರಚನೆಯು ಬ್ರಿಟಿಷ್ SAS (22ನೇ ವಿಶೇಷ ವಾಯು ಸೇವಾ ರೆಜಿಮೆಂಟ್) ಮಾದರಿಯಲ್ಲಿದೆ. ಡೆಲ್ಟಾ ಫೋರ್ಸ್ ಮುಖ್ಯ ಕಾರ್ಯಾಚರಣೆ ಯಾವ ರೀತಿಯದ್ದು? ಈ ಘಟಕವು ಹೆಚ್ಚಿನ ಅಪಾಯದ, ಹೆಚ್ಚಿನ ಮೌಲ್ಯದ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದ್ದು, ಪ್ರಾಥಮಿಕವಾಗಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು, ಒತ್ತೆಯಾಳುಗಳ ರಕ್ಷಣೆ, ಭಯೋತ್ಪಾದಕ ಬೆದರಿಕೆಗಳ ನಿರ್ಮೂಲನೆ ಮತ್ತು ಸೆರೆಹಿಡಿಯುವಿಕೆ ಮತ್ತು ವಿಶೇಷ ಕಾರ್ಯಚರಣೆಗಳನ್ನು ನಡೆಸುತ್ತದೆ. ಈ ಘಟಕವು ಉನ್ನತ ಮಟ್ಟದ ವ್ಯಕ್ತಿಗಳಿಗೆ ನಿಕಟ ರಕ್ಷಣೆ ಮತ್ತು ಅಸಾಂಪ್ರದಾಯಿಕ ಯುದ್ಧದಲ್ಲಿ ತರಬೇತಿ ಪಡೆದಿದ್ದು, ಸ್ನೈಪಿಂಗ್, ಕ್ಲೋಸ್-ಕ್ವಾರ್ಟರ್ಸ್ ಯುದ್ಧ, ಸ್ಫೋಟಕಗಳು ಮತ್ತು ರಹಸ್ಯ ಪ್ರವೇಶ ತಂತ್ರಗಳಲ್ಲಿ ನುರಿತ ನಿರ್ವಾಹಕರನ್ನು ಹೊಂದಿದೆ. ವಿಮಾನಗಳು, ರೈಲುಗಳು, ಹಡಗುಗಳು ಮತ್ತು ವಾಹನಗಳಲ್ಲಿನ ಕಾರ್ಯಾಚರಣೆಗಳನ್ನು ನಿರ್ವಹಿಸಲು ಈ ಪಡೆ ತರಬೇತಿ ಪಡೆದಿರುತ್ತದೆ. ಮಡುರೊ ಮತ್ತು ಅವರ ಪತ್ನಿಯನ್ನು ಕೋಟೆಯಂತಹ ಮನೆಯಿಂದ ಸೆರೆಹಿಡಿಯಲಾಯಿತು ಮತ್ತು ಹಡಗಿನಲ್ಲಿ ನ್ಯೂಯಾರ್ಕ್ಗೆ ಕರೆದೊಯ್ಯಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.. ಮಡುರೊ ಭವಿಷ್ಯವೇನು? ಮಡುರೊ ಮತ್ತು ಅವರ ಪತ್ನಿಯ ಬಂಧನದ ನಂತರ ಯುಎಸ್ ಅಟಾರ್ನಿ ಜನರಲ್ ಪಮೇಲಾ ಬೋಂಡಿ ಅವರು ದಂಪತಿಗಳ ಮೇಲೆ ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯಲ್ಲಿ ಈಗಾಗಲೇ ದೋಷಾರೋಪಣೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ X ನಲ್ಲಿ ಬರೆದಿದ್ದಾರೆ. ಅವರು (ಮಡುರೊ ಮತ್ತು ಅವರ ಪತ್ನಿ) ಶೀಘ್ರದಲ್ಲೇ ಅಮೆರಿಕದ ನ್ಯಾಯಾಲಯಗಳಲ್ಲಿ ಅಮೆರಿಕದ ನೆಲದಲ್ಲಿ ವಿಚಾರಣೆ ಎದುರಿಸಲಿದ್ದಾರೆ ಎಂದು ಬೋಂಡಿ ಹೇಳಿದ್ದಾರೆ. ಈ ಕಾರ್ಯಾಚರಣೆಗಾಗಿ ಯುಎಸ್ ಮಿಲಿಟರಿ ಮತ್ತು ಟ್ರಂಪ್ಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು. ವರ್ಷಗಳಿಂದ ಅಮೆರಿಕ ಸರಕಾರವು ಮಡುರೊ ಅವರನ್ನು ನಾಯಕನಾಗಿ ಅಲ್ಲ, ಉನ್ನತ ಮಟ್ಟದ ಅಪರಾಧಿಯಾಗಿ ನೋಡಿದೆ. ಮಡುರೊ ಕಾರ್ಟೆಲ್ ಆಫ್ ದಿ ಸನ್ ಎಂದು ಕರೆಯಲ್ಪಡುವ ಮಾದಕವಸ್ತು ಕಳ್ಳಸಾಗಣೆ ಗುಂಪಿನ ನೇತೃತ್ವ ವಹಿಸಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಆರೋಪಿಸಿದ್ದಾರೆ. ವೆನೆಝುವೆಲಾದ ಉನ್ನತ ಶ್ರೇಣಿಯ ಮಿಲಿಟರಿ ಅಧಿಕಾರಿಗಳು ತಮ್ಮ ಸಮವಸ್ತ್ರದಲ್ಲಿ ಧರಿಸುವ ಸೂರ್ಯನ ಆಕಾರದ ನಕ್ಷತ್ರಗಳಿಂದ ಈ ಹೆಸರು ಬಂದಿದೆ. ಅಮೆರಿಕದ ಜನರ ಆರೋಗ್ಯವನ್ನು ಹಾಳುಮಾಡುವ ಒಂದು ಮಾರ್ಗವಾಗಿ ಮಡುರೊ ತನ್ನ ಅಧಿಕಾರವನ್ನು ಬಳಸಿಕೊಂಡು ಅಮೆರಿಕವನ್ನು ಕೊಕೇನ್ನಿಂದ ತುಂಬಿಸಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್ಗಳು ವಾದಿಸುತ್ತಾರೆ. 2020ರ ದೋಷಾರೋಪಣೆಯ ನಂತರ, ಮಡುರೊ ಸೆರೆಹಿಡಿದರೆ $50 ಮಿಲಿಯನ್ಗೆ ಬಹುಮಾನವನ್ನು ದ್ವಿಗುಣಗೊಳಿಸುವುದಾಗಿ ಅಮೆರಿಕ ಇತ್ತೀಚೆಗೆ ಘೋಷಿಸಿತ್ತು. ಸುಮಾರು ಏಳು ಟನ್ ಕೊಕೇನ್ ನೇರವಾಗಿ ಮಡುರೊಗೆ ಸಂಬಂಧಿಸಿದೆ ಎಂದು ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಆರೋಪಿಸಿದ್ದಾರೆ. 2019ರಿಂದ ಅಮೆರಿಕವು ಮಡುರೊ ಅವರನ್ನು ಕಾನೂನುಬದ್ಧ ಅಧ್ಯಕ್ಷರೆಂದು ಗುರುತಿಸದ ಕಾರಣ, ಶನಿವಾರದಂದು ನಡೆಸಿದ ಈ ಮಿಲಿಟರಿ ಕಾರ್ಯಾಚರಣೆಯನ್ನು ಯುದ್ಧಕ್ಕಿಂತ ಹೆಚ್ಚಾಗಿ ಮಾದಕವಸ್ತು ವಿರೋಧಿ ಕಾರ್ಯಾಚರಣೆ ಎಂದು ಅಮೆರಿಕ ಹೇಳಿದೆ. 1989ರಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆದಿತ್ತು 1989ರ ಕೊನೆಯಲ್ಲಿ ಮಿಲಿಟರಿ ಆಡಳಿತಗಾರ ಮ್ಯಾನುಯೆಲ್ ನೊರಿಗಾ ಅವರನ್ನು ತೆಗೆದುಹಾಕಲು 'Operation Just Cause' ಸಮಯದಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ ಬುಷ್ 20,000 ಸೈನಿಕರನ್ನು ಪನಾಮಕ್ಕೆ ಕಳುಹಿಸಿದ್ದರು. ಬಿಬಿಸಿ ವಿಶ್ಲೇಷಣೆಯ ಪ್ರಕಾರ, ಶನಿವಾರ ವೆನೆಝುವೆಲಾದಲ್ಲಿ ನಡೆದ ಅಮೆರಿಕ ಕಾರ್ಯಾಚರಣೆ ಇದನ್ನೇ ಹೋಲುತ್ತದೆ. ನೊರಿಗಾ ಮತ್ತು ಮಡುರೊ ಇಬ್ಬರೂ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ, ಇದನ್ನು ಅನೇಕರು ಮೋಸದಿಂದ ಗಳಿಸಿದ ಜಯ ಎಂದು ಕರೆದರು. ಇಬ್ಬರ ಮೇಲೂ ಹೊರಿಸಿದ್ದು ಮಾದಕವಸ್ತು ಕಳ್ಳಸಾಗಣೆ ಆರೋಪ ಹೊರಿಸಲಾಗಿತ್ತು . ಯುಎಸ್ ಮಿಲಿಟರಿ ಇವರನ್ನೇ ಟಾರ್ಗೆಟ್ ಮಾಡಿತ್ತು. ಆದಾಗ್ಯೂ, ನೊರಿಗಾ ಅವರನ್ನು ಸೆರೆಹಿಡಿದದ್ದು ಮಡುರೊನನ್ನು ಸೆರೆ ಹಿಡಿದಕ್ಕಿಂತ ವಿಭಿನ್ನ ರೀತಿಯಲ್ಲಾಗಿತ್ತು. ನೊರಿಗಾ ವ್ಯಾಟಿಕನ್ನ ರಾಜತಾಂತ್ರಿಕ ಕಟ್ಟಡದೊಳಗೆ 11 ದಿನಗಳ ಕಾಲ ಅಡಗಿಕೊಂಡಾಗ ಯುಎಸ್ ಪಡೆಗಳು ಕಟ್ಟಡವನ್ನು ಸುತ್ತುವರೆದವು. ಹಗಲು ರಾತ್ರಿ ಕಟ್ಟಡದಲ್ಲಿ ಜೋರಾಗಿ ರಾಕ್ ಸಂಗೀತವನ್ನು ಮೊಳಗಿಸುವ ಮೂಲಕ ಅಮೆರಿಕ ಪಡೆ ನೊರಿಗಾ ಅವರಿಗೆ ಮಾನಸಿಕ ಕಿರಿಕಿರಿಯನ್ನು ನೀಡಿತ್ತು. ಕೊನೆಗೆ ನೊರಿಗಾ ಜನವರಿ 3, 1990 ರಂದು ಶರಣಾದರು. ಅಮೆರಿಕದಲ್ಲಿ ಮಡುರೊಗೆ ಯಾವ ರೀತಿಯ ಕಾನೂನು ಹೋರಾಟ ಕಾದಿದೆ? ಮಡುರೊ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ. 36 ವರ್ಷಗಳ ಹಿಂದೆ ಪನಾಮದ ಮ್ಯಾನುಯೆಲ್ ನೊರಿಗಾ ಅವರನ್ನು ಮಿಯಾಮಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರ ಮೇಲೆ ಮಾದಕವಸ್ತು ಕಳ್ಳಸಾಗಣೆ, ದರೋಡೆ ಮತ್ತು ಹಣ ವರ್ಗಾವಣೆ ಆರೋಪ ಹೊರಿಸಲಾಗಿತ್ತು. ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯಲ್ಲಿ 2020ರಲ್ಲಿ ಫೆಡರಲ್ ದೋಷಾರೋಪಣೆಯಿಂದಾಗಿ ಮಡುರೊ ಇದೇ ರೀತಿಯ ಕಾನೂನು ತೊಂದರೆಯನ್ನು ಎದುರಿಸುತ್ತಿದ್ದಾರೆ. 28 ಪುಟಗಳ ಕಾನೂನು ದಾಖಲೆಯು ಅವರ ಮೇಲೆ ಮಾದಕವಸ್ತು-ಭಯೋತ್ಪಾದನೆ ಮತ್ತು ಕೊಕೇನ್ ಆಮದು ಮಾಡಿಕೊಳ್ಳಲು ಪಿತೂರಿ ಆರೋಪ ಹೊರಿಸುತ್ತದೆ. ಮಡುರೊ ವಿರುದ್ಧದ ಆರೋಪಗಳು ಅತ್ಯಂತ ಗಂಭೀರವಾಗಿದ್ದು, ಇದಕ್ಕೆ ಭಾರೀ ದಂಡ ವಿಧಿಸಲಾಗುವುದು. ಮಾದಕವಸ್ತು-ಭಯೋತ್ಪಾದನಾ ಕೃತ್ಯಕ್ಕೆ ಮಾತ್ರ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ವೆನೆಝುವೆಲಾದ ಮೂಲಕ ಮಾದಕವಸ್ತುಗಳನ್ನು ಸಾಗಿಸಲು 'FARC' ಎಂಬ ಹಿಂಸಾತ್ಮಕ ಭಯೋತ್ಪಾದಕ ಗುಂಪಿನೊಂದಿಗೆ ಕೆಲಸ ಮಾಡಿದ ಆರೋಪವೂ ಮಡುರೊ ಮೇಲಿದೆ. ಈ ಕ್ರಿಮಿನಲ್ ಆರೋಪಗಳ ಮೇಲೆ ಮಡುರೊ ವಿಚಾರಣೆಗೆ ಒಳಗಾಗುವ ನಿರೀಕ್ಷೆಯಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಈಗಾಗಲೇ ದೃಢಪಡಿಸಿದ್ದಾರೆ. ದೋಷಾರೋಪಣೆ ಮತ್ತು ಆರೋಪಗಳನ್ನು ಪರಿಗಣಿಸಿದರೆ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಭವಿಷ್ಯವು ಅವರಿಗಿಂತ ಹೆಚ್ಚು ಭಿನ್ನವಾಗಿರುವುದಿಲ್ಲ. ಮಡುರೊ ಮರಳಿ ಬರಬಹುದೇ? ಮಡುರೊ ಮರಳುವ ಸಾಧ್ಯತೆಗಳು ಕಡಿಮೆ. ಅಮೆರಿಕದಲ್ಲಿ ಶಿಕ್ಷೆಗೊಳಗಾದ ನಂತರ, ನೊರಿಗಾ ತಮ್ಮ ಉಳಿದ ಜೀವನವನ್ನು ಬಂಧನದಲ್ಲೇ ಕಳೆದಿದ್ದರು. ಅವರು ಅಮೆರಿಕದ ಜೈಲಿನಿಂದ ಫ್ರಾನ್ಸ್ನ ಜೈಲಿಗೆ ಸ್ಥಳಾಂತರಗೊಂಡು ಕೊನೆಗೆ ಪನಾಮದಲ್ಲಿ ಗೃಹಬಂಧನದಲ್ಲಿದ್ದರು. ಅವರು 2017 ರಲ್ಲಿ 83ನೇ ವಯಸ್ಸಿನಲ್ಲಿ ನಿಧನರಾದರು. ಮಡುರೊ ಸೆರೆಯಾದ ನಂತರ ವೆನೆಝುವೆಲಾ ಸರಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಇತ್ತ ಅಮೆರಿಕ ವೆನೆಝುವೆಲಾದಲ್ಲಿ ಯಾವುದೇ ಮಿಲಿಟರಿ ಕ್ರಮ ಕೈಗೊಳ್ಳಲು ಯೋಜಿಸುವುದಿಲ್ಲ ಎಂದು ಹೇಳಿದೆ. ಮಡುರೊ ನಂತರ ವೆನೆಝುವೆಲಾದಲ್ಲಿ ಉತ್ತರಾಧಿಕಾರಿ ಯಾರಾಗ್ತಾರೆ? ವೆನೆಝುವೆಲಾದ ಸಂವಿಧಾನದ ಪ್ರಕಾರ ಮಡುರೊ ಅವರ ನಂತರ ಉತ್ತರಾಧಿಕಾರಿ ರೇಸ್ ನಲ್ಲಿರುವ ಮೊದಲ ವ್ಯಕ್ತಿ ಡೆಲ್ಸಿ ರೊಡ್ರಿಗಸ್ ಆಗಿರುತ್ತಾರೆ. ಇವರು 2018 ರಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಧಿಕಾರಕ್ಕೇರಬೇಕಾದರೆ ಇವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ. ಮಡುರೊ ಅವರ ಬಲಗೈ ಎಂದು ಪರಿಗಣಿಸಲಾದ ಗೃಹ ಸಚಿವ ಡಿಯೋಸ್ಡಾಡೊ ಕ್ಯಾಬೆಲ್ಲೊ, ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್ಗೆ ಹತ್ತಿರವಿರುವ ನಿವೃತ್ತ ಲೆಫ್ಟಿನೆಂಟ್ ಕ್ಯಾಬೆಲ್ಲೊ ಕೂಡಾ ಉತ್ತರಾಧಿಕಾರಿಯಾಗುವ ಅರ್ಹತೆ ಹೊಂದಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಉಡುಪಿ, ಜ.3: ಆದಿ ಉಡುಪಿಯ ಶಾಂತ ಎನ್. ಆಚಾರ್ಯ (81) ಶುಕ್ರವಾರ ಮುಂಜಾನೆ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಎರಡು ವಾರಗಳ ಹಿಂದೆ ನಿಧನರಾದ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಆಚಾರ್ಯರ ಧರ್ಮಪತ್ನಿಯಾಗಿದ್ದ ಇವರು ಪುತ್ರ, ಪುತ್ರಿ ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.
ಹಿರಿಯ ಮದ್ದಳೆವಾದಕ ಪ್ರಭಾಕರ ಭಂಡಾರಿ ನಿಧನ
ಉಡುಪಿ, ಜ.3: ಬಡಗು ತಿಟ್ಟಿನ ಪ್ರಸಿದ್ಧ ಮದ್ದಳೆವಾದಕ ಕರ್ಕಿ ಪ್ರಭಾಕರ ಪಾಂಡುರಂಗ ಭಂಡಾರಿ (83) ಇಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಪುತ್ರಿ, ಮೂವರು ಪುತ್ರರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ತಂದೆ ಪಾಂಡುರಂಗ ಭಂಡಾರಿಯವರಲ್ಲಿ ಯಕ್ಷಗಾನ ಹಿಮ್ಮೇಳವಾದನ ಕಲಿತು ಹದಿನಾಲ್ಕರ ಹರೆಯದಲ್ಲೇ ಮೇಳ ಸೇರಿ ಗುಂಡಬಾಳ, ಕುಮಟಾ, ಅಮೃತೇಶ್ವರೀ, ಕೊಳಗಿಬೀಸ್, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ನಾಲ್ಕುವರೆ ದಶಕಗಳ ಕಾಲ ಕಲಾಸೇವೆ ಮಾಡಿದ್ದರು. ನೆಬ್ಬೂರು ಮತ್ತು ಕಪ್ಪೆಕೆರೆಯವರ ಭಾಗವತಿಕೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆಯಂಥ ಯಕ್ಷ ದಿಗ್ಗಜರನ್ನು ಕುಣಿಸಿದ ಹಿರಿಮೆ ಇವರಿಗಿದೆ. ಸ್ಫುಟವಾದ ಪೆಟ್ಟು, ಸ್ಪಷ್ಟ ಬೆರಳುಗಾರಿಕೆಯ ಹೊರಳಿಕೆ, ಹಾಡಿಗೆ ಪೂರಕ ವಾದನ ಕೌಶಲದಿಂದ ಪ್ರಭಾಕರ ಭಂಡಾರಿ ಜನಪ್ರಿಯತೆ ಪಡೆದಿದ್ದರು. ರಂಗದಲ್ಲಿ ಮತ್ತು ಹೊರಗಡೆಯೂ ತನ್ನ ಸಾತ್ವಿಕ, ಶಿಸ್ತಿನ ನಡವಳಿಕೆಯಿಂದ ಎಲ್ಲರ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಭಂಡಾರಿ ಅವರ ಮೂವರು ಪುತ್ರರೂ ಕಲಾಕಾರಾಗಿದ್ದು, ಇವರಲ್ಲಿ ಪರಮೇಶ್ವರ ಭಂಡಾರಿ ಪ್ರಸಿದ್ಧ ಮದ್ದಳೆವಾದಕರು. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಯಕ್ಷಗಾನ ಕಲಾರಂಗ ಸಂಸ್ಥೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ವರ್ಷ ಸುವರ್ಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು. ಭಂಡಾರಿ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಹರಪನಹಳ್ಳಿ | ಸರಕಾರಿ ನೌಕರರ ಸಂಘದಿಂದ ಹರಪನಹಳ್ಳಿ ಪತ್ರಕರ್ತರಿಗೆ ಸನ್ಮಾನ
ಹರಪನಹಳ್ಳಿ : ಪತ್ರಕರ್ತರು ಶೋಷಿತರ ಧ್ವನಿಯಾಗಿ ವರದಿಗಳನ್ನು ಬಿತ್ತರಿಸಿ, ಆಳುವ ಸರ್ಕಾರಗಳ ಕಣ್ತೆರೆಸುವ ನಿಟ್ಟಿನಲ್ಲಿ ವರದಿಗಾರಿಕೆಗೆ ಒತ್ತುಕೊಡಬೇಕು. ಜೊತೆಗೆ ದಿಟ್ಟತನ ಬೆಳೆಸಿಕೊಳ್ಳಬೇಕು ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳನ್ನು ನಗರದ ಸಮತಾ ರೆಸಾರ್ಟ್ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ, ಪ್ರೌಢಶಾಲೆ ಸಹಶಿಕ್ಷಕರ ಸಂಘ, ಸಮತಾ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು. ಸತ್ಯಕ್ಕೆ ದೂರವಾಗಿರುವ ಸುದ್ದಿಗಳಿಂದ ಪತ್ರಕರ್ತರು ದೂರವಿರಬೇಕು. ಸಮಾಜ ಮತ್ತು ಸರ್ಕಾರದ ನಡುವೆ ಉತ್ತಮ ಸೇತುವೆಯಾಗಿ ಕೆಲಸ ಮಾಡುವ ಗುಣವನ್ನು ಪತ್ರಕರ್ತರು ರೂಡಿಸಿಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಮನೋಹರ ಅವರು ಉದ್ಘಾಟಿಸಿದರು. ಹಿರಿಯ ಪತ್ರಕರ್ತರಾದ ಕೆ.ಉಚ್ಚೆಂಗೆಪ್ಪ, ಎ.ನಾಗೇಂದ್ರಪ್ಪ, ಪಟ್ನಾಮದ ವೆಂಕಟೇಶ್ ಅವರು ಪತ್ರಕರ್ತರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ವಿಚಾರಗಳ ಬಗ್ಗೆ ಮಾತನಾಡಿದರು ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ಷರೀಫ್, ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಟಿ.ಎಚ್.ಎಂ.ಲತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕಮ್ಮತ್ತರ ಅಂಜಿನಪ್ಪ, ತಾಲ್ಲೂಕು ಉಪಾಧ್ಯಕ್ಷ ಸಂಗಯ್ಯ, ಶಿಕ್ಷಕರಾದ ವೀರಪ್ಪ, ಪಿ.ಸುಬ್ಬಣ್ಣ, ಇಸ್ಮಾಯಿಲ್, ಗಿರಿರಾಜ್, ಜಮಾಲುದ್ದಿನ್, ನಾಗಪ್ಪ, ಶೋಭಾಕುಮಾರಿ, ಹುಸೇನ್ ಭಾಷ, ಜಿ.ಕರಿಬಸಪ್ಪ, ಡಿ.ವಿಶ್ವನಾಥ, ಬಿ.ವೈ.ದುರುಗೇಶ್, ಎ.ವೆಂಕಟರಾಜು, ನಾಗಭೂಷಣ, ಗುಡಿಹಳ್ಳಿ ಭೋವಿ ಮಂಜುನಾಥ, ಕವಸರ ಬಸವರಾಜ, ದೊಡ್ಡಬಸವರಾಜ, ಶಬ್ಬೀರ, ರುದ್ರಮುನಿ, ಮೈಲಾರಿ, ಹುಲಿಯಪ್ಪನವರ್ ಬಸವರಾಜ, ತಿರುಮಲ, ಕುಂಬಾರ ಬಸವರಾಜ, ಅಶೋಕ, ಚಿಗಟೇರಿ ಪರಶುರಾಮ, ಶಶಿಕುಮಾರ, ಎಲ್.ಪ್ರಕಾಶನಾಯ್ಕ, ಹುಲಿರಾಜ್ ಇತರರಿದ್ದರು.
ಬಸವಕಲ್ಯಾಣ | ಖಾಸಗಿ ಬಸ್ ಢಿಕ್ಕಿ : ಉತ್ತರ ಪ್ರದೇಶದ ಮೂಲದ ಕಾರ್ಮಿಕ ಮೃತ್ಯು
ಬಸವಕಲ್ಯಾಣ : ರಸ್ತೆ ದಾಟುತಿದ್ದ ಕಾರ್ಮಿಕನೊಬ್ಬನಿಗೆ ಖಾಸಗಿ ಬಸ್ ಢಿಕ್ಕಿಯಾಗಿದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಣಮಂತವಾಡಿ (ಆರ್) ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-65ರ ಮೇಲೆ ಶುಕ್ರವಾರ ಸಂಜೆ ನಡೆದಿದೆ. ಉತ್ತರ ಪ್ರದೇಶದ ಬುದಾಯು ಜಿಲ್ಲೆಯ ಕಕರಾಲ್ ಗ್ರಾಮದ ನಿವಾಸಿ ನರೇಶ್ ರಾಮಪಾಲ್ (50) ಮೃತಪಟ್ಟ ಕಾರ್ಮಿಕನಾಗಿದ್ದಾನೆ. ರಾಜೇಶ್ವರ್ ಬಳಿಯ ಕಬ್ಬನಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನರೇಶ್ ಹೆದ್ದಾರಿ-65ರ ಮೇಲೆ ರಸ್ತೆ ದಾಟುವಾಗ ಬಸವಕಲ್ಯಾಣ ನಗರದಿಂದ ಬೆಂಗಳೂರಿಗೆ ತೆರಳುತಿದ್ದ ಖಾಸಗಿ ಬಸ್ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಸುರಪುರದಲ್ಲಿ ಲೋಕಾಯುಕ್ತ ದಾಳಿ : ವಿವಿಧ ಕಚೇರಿಗಳ ಪರಿಶೀಲನೆ
ಸುರಪುರ: ತಾಲೂಕಿನ ವಿವಿಧ ಕಚೇರಿಗಳಿಗೆ ಲೋಕಾಯುಕ್ತ ನ್ಯಾಯಾಧೀಶರು ಹಾಗೂ ಪೊಲೀಸರ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶನಿವಾರ ಬೆಳಗ್ಗೆಯಿಂದಲೇ ಸುರಪುರ ನಗರದ ಉಪ ನೋಂದಣಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಿಗೆ ಲೋಕಾಯುಕ್ತ ತಂಡ ಭೇಟಿ ನೀಡಿ ಪರಿಶೀಲನೆ ಕೈಗೊಂಡಿತು. ಮಧ್ಯಾಹ್ನ ನಗರಸಭೆ ಕಚೇರಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಾಧೀಶರು ಅಲ್ಲಿ ಕಂಡುಬಂದ ಅವ್ಯವಸ್ಥೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಾಧೀಶರಾದ ರಮಾಕಾಂತ್ ಚವ್ಹಾಣ್ ಅವರು ತಹಶೀಲ್ದಾರ್ ಕಚೇರಿ ಬಳಿಯಲ್ಲಿ ಕಸಕ್ಕೆ ಬೆಂಕಿ ಹಾಕಿರುವುದನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ಗರಂ ಆದರು. ಕಸಕ್ಕೆ ಬೆಂಕಿ ಹಾಕಬಾರದು ಎಂಬ ಸ್ಪಷ್ಟ ಆದೇಶ ಇದ್ದರೂ ಪರಿಸರ ಹಾನಿ ಮಾಡುವ ರೀತಿಯಲ್ಲಿ ಕಸ ಸುಟ್ಟಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ನಗರಸಭೆ ಕಟ್ಟಡದ ಮೇಲ್ಛಾವಣಿಯಿಂದ ಸಿಮೆಂಟ್ ಉದುರುತ್ತಿರುವುದು, ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಾಕಿ ಅರ್ಜಿಗಳ ಪರಿಶೀಲನೆ, ಹಾಜರಿ ಪುಸ್ತಕ ತಪಾಸಣೆ : ಕಟ್ಟಡ ಪರವಾನಿಗೆ ಅರ್ಜಿಗಳ ವಿಲೇವಾರಿ ಕುರಿತು ಮಾಹಿತಿ ಪಡೆದು ಬಾಕಿ ಉಳಿದಿರುವ ಅರ್ಜಿಗಳ ಪರಿಶೀಲನೆ ನಡೆಸಿದರು. ಅಲ್ಲದೇ ಕಚೇರಿಯ ಹಾಜರಿ ಪುಸ್ತಕ ಪರಿಶೀಲಿಸಿ, ಸಿಬ್ಬಂದಿಗಳು ಕಚೇರಿಯಲ್ಲಿ ಗೈರುಹಾಜರಾಗಿರುವುದರ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ ಖಡಕ್ ಎಚ್ಚರಿಕೆ ನೀಡಿದರು. ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಫುಟ್ಪಾತ್ ಇಲ್ಲದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯ ಬಿಲ್ ಕಲೆಕ್ಟರ್ಗಳು ಸಾರ್ವಜನಿಕರಿಂದ ಪಾವತಿ ಸಂಗ್ರಹಿಸಿರುವ ಕುರಿತು ಮಾಹಿತಿ ಪಡೆದು, ಅನೇಕ ಸಿಬ್ಬಂದಿಗಳ ಫೋನ್ ಪೇ, ಗೂಗಲ್ ಪೇ ಸೇರಿದಂತೆ ಡಿಜಿಟಲ್ ವ್ಯವಹಾರಗಳ ವಿವರಗಳನ್ನು ಪರಿಶೀಲಿಸಿದರು. ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿನ ಕಡತಗಳ ಪರಿಶೀಲನೆ ನಡೆಸಿ, ಅಸ್ವಚ್ಛತೆ ಕಂಡು ಬೇಸರ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ನಾಲ್ಕು ತಂಡಗಳಿಂದ ಪರಿಶೀಲನೆ : ಈ ಕುರಿತು ಮಾಹಿತಿ ನೀಡಿದ ಲೋಕಾಯುಕ್ತ ಅಧಿಕಾರಿಗಳು, ಒಟ್ಟು ನಾಲ್ಕು ತಂಡಗಳ ಮೂಲಕ ತಾಲೂಕಿನ ವಿವಿಧ ಕಡೆಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ, ಇನಾಮ್ ದಾರ್, ಪೂವಯ್ಯ ಹಾಗೂ ತಾಲೂಕ ಆರೋಗ್ಯ ಅಧಿಕಾರಿ ಡಾ.ಆರ್ ವಿ ನಾಯಕ, ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ, ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಎಇಇ ಶಾಂತಪ್ಪ ಹೊಸೂರ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಯಾದಗಿರಿ | ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ : ಡಾ.ಭಗವಂತ ಅನವಾರ
ಯಾದಗಿರಿ: ಸಾವಿತ್ರಿಬಾಯಿ ಫುಲೆ ಅವರನ್ನು ಎಷ್ಟು ಬಾರಿ ಸ್ಮರಣೆ ಮಾಡಿದರೂ ಕಡಿಮೆಯೇ. ಹಿಂಸೆ, ಬೆದರಿಕೆ, ಅವಮಾನಗಳನ್ನು ಎದುರಿಸಿದರೂ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡುವ ಹೋರಾಟವನ್ನು ಅವರು ಎಂದಿಗೂ ನಿಲ್ಲಿಸಲಿಲ್ಲ. ಅದಕ್ಕಾಗಿಯೇ ಸಾವಿತ್ರಿಬಾಯಿ ಫುಲೆ ನಮಗೆ ತಾಯಿ ಸ್ವರೂಪದ ‘ಅಕ್ಷರದ ಅವ್ವ ಆಗಿದ್ದಾರೆ ಎಂದು ನಿವೃತ್ತ ವೈದ್ಯ ಡಾ.ಭಗವಂತ ಅನವಾರ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ನಡೆದ 195ನೇ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮಕ್ಕಳು ಶೇಕಡಾ ನೂರರಷ್ಟು ಶಿಕ್ಷಣ ಪಡೆಯಬೇಕು ಎಂಬುದು ನಮ್ಮ ಆಶಯ. ಅದಕ್ಕೆ ಸಾವಿತ್ರಿಬಾಯಿ ಫುಲೆ ಅವರ ಹಾದಿ ಮತ್ತು ಸಿದ್ಧಾಂತಗಳನ್ನು ಅನುಸರಿಸಬೇಕು. ಅವರ ಆದರ್ಶಗಳಲ್ಲಿ ಬೆಳೆದಾಗ ಮಾತ್ರ ನಮ್ಮ ಮಕ್ಕಳಿಗೆ ಸಮಾನತೆ, ಸ್ವಾಭಿಮಾನ ಹಾಗೂ ಭದ್ರ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಂಕರರಾವ್ ಕೊಂಡೆ, ಬಸವರಾಜ ಯಾಳಗಿ, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಈಟೇ, ಸುರೇಶ ಬೊಮ್ಮನ್, ಕೈಲಾಸ ಅನವಾರ, ಚಂದ್ರಕಾಂತ ಚಲುವಾದಿ, ಆನಂದ್ ಚಟ್ಟೇರಕರ್, ಮಲ್ಲಿಕಾರ್ಜುನ ಹತ್ತಕುಣಿ, ರಮೇಶ್ ಸುಂಗಲಕರ್, ಬಸವರಾಜ ಹುಂಡೆಕಲ್, ಭೀಮಾಶಂಕರ ಕಲ್ಬುರ್ಗಿ, ಮತ್ತು ಮಕ್ಕಳು ಭಾಗವಹಿಸಿದ್ದರು.
ಸಿಂಧನೂರು: ಸಾಲಗುಂದಾ, ಮುಳ್ಳೂರು ಏತ ನೀರಾವರಿ ಕಾಮಗಾರಿಗಳಿಗೆ ಸಿದ್ದರಾಮಯ್ಯ ಚಾಲನೆ
ರಾಯಚೂರು: ಸಿಎಂ ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಶ್ರೀಅಂಬಾಮಠದಲ್ಲಿ ಆಯೋಜಿಸಿದ್ದ ಅಂಬಾ ಮಹೋತ್ಸವ-2026ರಲ್ಲಿ ಪಾಲ್ಗೊಂಡರು. ಇದೇ ವೇಳೆ ಸಿಂಧನೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ತಾಯಿಯ ದರ್ಶನವಾಗಿದ್ದು ನನ್ನ ಪುಣ್ಯ. ಇಂದು ಈ ಕ್ಷೇತ್ರದಲ್ಲಿ ಸಾಲಗುಂದಾ ಏತನೀರಾವರಿ, ಮುಳ್ಳೂರು ಏತ ನೀರಾವರಿ ಮತ್ತು
ಜ.4 ರಂದು ಉಪ್ಪಿನಂಗಡಿಯಲ್ಲಿ ಸಮಸ್ತ ಶತಮಾನೋತ್ಸವ 'ಗೋಲ್ಡನ್ ಜುಬಿಲಿ' ಪ್ರಚಾರ ಮಹಾಸಮ್ಮೇಳನ
ಉಪ್ಪಿನಂಗಡಿ: ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಆಶ್ರಯದಲ್ಲಿ ಗೋಲ್ಡನ್ ಜುಬಿಲಿ ಮತ್ತು ಸಮಸ್ತ 100ನೇ ವಾರ್ಷಿಕ ಪ್ರಚಾರ ಮಹಾಸಮ್ಮೇಳನವು ಜ. 4ರಂದು ಉಪ್ಪಿನಂಗಡಿಯಲ್ಲಿ ನಡೆಯಲಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತ ಉಲಮಾಗಳು ಮಹಾಸಮ್ಮೇಳನದಲ್ಲಿ ಭಾಗವಹಿಸಿ ಧಾರ್ಮಿಕ ಹಾಗೂ ಶೈಕ್ಷಣಿಕ ವಿಷಯಗಳಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಪಾಣಕ್ಕಾಡ್ ಸಯ್ಯಿದ್ ಮುಯೀನಲಿ ಶಿಹಾಬ್ ತಂಙಳ್, ಸಯ್ಯಿದ್ ಝೈನುಲ್ ಆಬಿದ್ ಜಿಫ್ರಿ ತಂಙಳ್, ಸಯ್ಯಿದ್ ಅಮೀರ್ ತಂಙಳ್, ಸಯ್ಯಿದ್ ಜುನೈದ್ ಜಿಫ್ರಿ ತಂಙಳ್, ಸಯ್ಯಿದ್ ಅನಸ್ ಅಲ್ ಹಾದಿ ತಂಙಳ್, ಶೈಖುನಾ ಉಮರ್ ಫೈಝಿ ಮುಕ್ಕಂ, ಶೈಖುನಾ ತ್ವಾಖಾ ಉಸ್ತಾದ್, ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಉಸ್ತಾದ್, ಶೈಖುನಾ ಬಂಬ್ರಾಣ ಉಸ್ತಾದ್, ಮುಜೀಬುರ್ರಹ್ಮಾನ್ ಅನ್ಸಾರಿ ನೀಲಗಿರಿ, ಸತ್ತಾರ್ ಪಂದಲ್ಲೂರು ಸಾಹಿಬ್, ಅಬ್ದುಸ್ಸಲಾಂ ಫೈಝಿ ಉಪ್ಪಿನಂಗಡಿ ಸೇರಿದಂತೆ ಅನೇಕ ಗಣ್ಯ ಉಲಮಾಗಳು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮವನ್ನು ಎಚ್. ಯುಸುಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ರೇಂಜ್ ಅಧ್ಯಕ್ಷ ಇಸ್ಹಾಕ್ ಫೈಝಿ ಮಾಡಲಿದ್ದು, ಕರಾಯ ಅಬ್ದುಲ್ ರಝಾಕ್ ದಾರಿಮಿ ಕಿರಾಅತ್ ಪಠಿಸಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಅಬ್ದುಲ್ ಜಬ್ಬಾರ್ ಮೌಲವಿ ಕರಾಯ ವಹಿಸಲಿದ್ದಾರೆ. ಸಮಸ್ತದ ಶತಮಾನೋತ್ಸವದ ಮಹತ್ವ, ಧಾರ್ಮಿಕ–ಶೈಕ್ಷಣಿಕ ಸೇವೆಗಳ ಪಾತ್ರ ಹಾಗೂ ಸಮುದಾಯದ ಭವಿಷ್ಯದ ಕುರಿತು ಮಹಾಸಮ್ಮೇಳನದಲ್ಲಿ ಪ್ರಬೋಧನೆ ನೀಡಲಾಗುತ್ತದೆ. ಈ ಕಾರ್ಯಕ್ರಮವು ಸಮಸ್ತ ಸೆಂಟಿನರಿ (1926–2026) ಹಾಗೂ ಉಪ್ಪಿನಂಗಡಿ ರೇಂಜ್ ಗೋಲ್ಡನ್ ಜುಬಿಲಿ ಸಂಭ್ರಮದ ಪ್ರಮುಖ ಕಾರ್ಯಕ್ರಮವಾಗಿರಲಿದೆ. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1.30ಕ್ಕೆ SKSBV ಸ್ವಯಂಸೇವಕ ವಿಭಾಗದ ಖಿದ್ಮ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಮ್ಮೇಳನ ನಗರಿಯಲ್ಲಿ ವಿದ್ಯಾರ್ಥಿ ಸಮಾವೇಶವು ಕೆ.ಎಚ್. ಅಶ್ರಫ್ ಹನೀಫಿಯವರ ನೇತೃತ್ವದಲ್ಲಿ ನಡೆಯಲಿದ್ದು, ತರಬೇತುದಾರರಾಗಿ ಹಾಶಿಂ ರಹ್ಮಾನಿ ಸಾಲ್ಮರ, ಮುದರ್ರಿಬ್ SKJMCC ಹಾಗೂ ಉಪ್ಪಿನಂಗಡಿ ರೇಂಜ್ ಉಪಾಧ್ಯಕ್ಷ ಹಾರಿಸ್ ಕೌಸರಿ ಕೋಲ್ಪೆ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಸ್ವಾಗತ ಸಮಿತಿ ಕೋಶಾಧಿಕಾರಿ ಕೆ.ಕೆ. ಅಬೂಬಕ್ಕರ್ ಕೋಲ್ಪೆ ಅವರಿಂದ ಧ್ವಜಾರೋಹಣ ನಡೆಯಲಿದೆ. 4.45ಕ್ಕೆ ಗ್ರಾಂಡ್ ಸೆಲ್ಯೂಟ್ ಹಾಗೂ ಕಾಲ್ನಡಿಗೆ ಜಾಥಾ ನಡೆಯಲಿದ್ದು, 313 ವಿದ್ಯಾರ್ಥಿಗಳಿಂದ ವಿಶೇಷ ಪ್ರದರ್ಶನವನ್ನು ಸಯ್ಯಿದ್ ಇಸ್ಮಾಯಿಲ್ ತಂಙಳ್, ಶಬೀರ್ ಕೆಂಪಿ, ಯು.ಟಿ. ಫಯಾಝ್ ಹಾಗೂ ಮುಹಮ್ಮದ್ ಕೂಟೇಲು ಅವರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಈ ವೇಳೆ ಪ್ರಸ್ತುತ ಧ್ವಜ ಹಸ್ತಾಂತರವನ್ನು ಅಬ್ದುಲ್ ರಹ್ಮಾನ್ ಕೊಳ್ಳೆಜಾಲು (ಅಧ್ಯಕ್ಷರು, ಮದ್ರಸ ರೇಂಜ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್) ನೆರವೇರಿಸಲಿದ್ದಾರೆ. ಸಂಜೆ 5.45ಕ್ಕೆ ಶಂಸುಲ್ ಉಲಮಾ (ಖ.ಸಿ) ಮೌಲೀದ್ ಮಜ್ಲಿಸ್ ಉಸ್ಮಾನ್ ದಾರಿಮಿ ಹಳೆಗೇಟು (ಉಪಾಧ್ಯಕ್ಷರು, ಉಪ್ಪಿನಂಗಡಿ ರೇಂಜ್) ಅವರ ನೇತೃತ್ವದಲ್ಲಿ ನಡೆಯಲಿದ್ದು, ರೇಂಜ್ ವ್ಯಾಪ್ತಿಯ ಮಸೀದಿ ಖತೀಬರು ಹಾಗೂ 32 ಮದ್ರಸ ಮುಖ್ಯ ಶಿಕ್ಷಕರು ಭಾಗವಹಿಸಲಿದ್ದಾರೆ. ಸ್ಥಳೀಯ ಸಮಸ್ತ ಘಟಕಗಳು, ವಿವಿಧ ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಮಹಾಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರದಲ್ಲಿ ಭಾರೀ ಕಡಿತ, ಇಲ್ಲಿದೆ ಮಂಗಳೂರು ವಿಭಾಗದ ನೂತನ ದರ
ಮಂಗಳೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಬಸ್ಗಳ ಪ್ರಯಾಣ ದರವನ್ನು ಜನವರಿ 5 ರಿಂದ ಜಾರಿಗೆ ಬರುವಂತೆ ಶೇಕಡಾ 10ರಿಂದ 15ರಷ್ಟು ಕಡಿತಗೊಳಿಸಲಾಗಿದೆ. ಕುಂದಾಪುರ, ಉಡುಪಿ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಅಂಬಾರಿ ಉತ್ಸವ, ಡ್ರೀಮ್ ಕ್ಲಾಸ್, ಮಲ್ಟಿ ಆಕ್ಸಿಲ್, ನಾನ್ ಎಸಿ ಸ್ಲೀಪರ್, ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಬಸ್ಗಳ ಹೊಸ ದರಗಳು ಇಲ್ಲಿವೆ. ಪ್ರಯಾಣಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.
ಕೋಳಿ ಅಂಕವನ್ನು ತಡೆಯಲು ಹೊರಟಿದ್ದಾರೆಂದು ಪಟ್ಟಭದ್ರ ಹಿತಾಸಕ್ತಿಗಳಿಂದ ಅಪಪ್ರಚಾರ: ಬಿ.ಕೆ.ಹರಿಪ್ರಸಾದ್ ಸ್ಪಷ್ಟನೆ
ಬೆಂಗಳೂರು: ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕೋಳಿ ಅಂಕ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ನಡೆಸುತ್ತಿರುವ ಅಪಪ್ರಚಾರ ನಿಲ್ಲಿಸಿ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಶನಿವಾರ ಈ ಕುರಿತು ತಮ್ಮ ಎಕ್ಸ್ ಖಾತೆಯಿಂದ ಪ್ರತಿಕ್ರಿಯಿಸಿರುವ ಅವರು, ಕೋಳಿ ಅಂಕವನ್ನು ಪೊಲೀಸ್ ಬಲದ ಹರಿಪ್ರಸಾದ್ ತಡೆಯಲು ಹೊರಟಿದ್ದಾರೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಆದರೆ, ಈ ವಿಚಾರವೇ ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಕೋಳಿ ಅಂಕದ ಸಂಬಂಧ ಯಾವುದೇ ವ್ಯಕ್ತಿಗಳಾಗಲೀ, ಸಂಘಟನೆಯವರಾಗಲೀ, ಇಲಾಖೆಯವರಾಗಲೀ ನನ್ನ ಜೊತೆ ಮಾತುಕತೆಯನ್ನೆ ಮಾಡಿರುವುದಿಲ್ಲ. ಹಾಗಾಗಿ ಅದನ್ನು ತಡೆಯುವ ಅಥವಾ ಬೆಂಬಲಿಸುವ ಪ್ರಶ್ನೆಯೇ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾನು ಶ್ರೀ ನಾರಾಯಣ ಗುರುಗಳು ಬೋಧಿಸಿದ ತತ್ವಾದರ್ಶಗಳಂತೆ ಬದುಕುವವನು. ಶ್ರೀ ನಾರಾಯಣ ಗುರು-ಗಾಂಧಿ-ಅಂಬೇಡ್ಕರ್ ಹಾದಿಯಲ್ಲಿ ನಾನು ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಇಂತಹ ಸುಳ್ಳು ಅಪಪ್ರಚಾರಗಳಿಗೆ ನಾನು ಹೆದರುವುದಿಲ್ಲ. ನಾನು ಕರಾವಳಿಯ ಮೂಢನಂಬಿಕೆ ರಹಿತ, ಜೂಜು ರಹಿತ, ಅಸ್ಪೃಶ್ಯತೆ, ಅಸಮಾನತೆ ರಹಿತ ಎಲ್ಲ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬೆಂಬಲಿಸುತ್ತಲೇ ಬಂದಿದ್ದೇನೆ. ಸೌಹಾರ್ದತೆಯ ಸಂದೇಶ ಸಾರುವ ಆಚರಣೆಗಳನ್ನು ಬೆಂಬಲಿಸುತ್ತಲೆ ಇರುತ್ತೇನೆ ಎಂದು ಅವರು ತಿಳಿಸಿದ್ದಾರೆ. ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕೋಳಿ ಅಂಕವನ್ನು ಪೊಲೀಸ್ ಬಲದ ಬಿ ಕೆ ಹರಿಪ್ರಸಾದ್ ತಡೆಯಲು ಹೊರಟಿದ್ದಾರೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ… pic.twitter.com/cvuFPs2dZs — Hariprasad.B.K. (@HariprasadBK2) January 3, 2026
ಜಮ್ಮುಕಾಶ್ಮೀರ| 2025ರಲ್ಲಿ 311 ಮಾದಕ ವಸ್ತು ಮಾರಾಟಗಾರರ ಬಂಧನ
ಜಮ್ಮು, ಜ. 3: ಮಾದಕ ವಸ್ತುಗಳ ವಿರುದ್ಧದ ನಿರಂತರ ಕಾರ್ಯಾಚರಣೆಯ ಭಾಗವಾಗಿ ಜಮ್ಮು ಪೊಲೀಸರು 2025ರಲ್ಲಿ 35 ಮಹಿಳೆಯರು ಸೇರಿದಂತೆ 311 ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದಾರೆ. 60 ಕೋ. ರೂ.ಗೂ ಅಧಿಕ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಇದಲ್ಲದೆ, 2025ರಲ್ಲಿ 11 ಮಂದಿ ಕಟ್ಟಾ ಮಾದಕ ವಸ್ತು ಮಾರಾಟಗಾರರನ್ನು ಪಿಐಟಿ-ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. 48 ಮಂದಿ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. 2025ರಲ್ಲಿ ಜಮ್ಮು ಜಿಲ್ಲೆಯ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪ್ರಗತಿ ಸಾಧಿಸಿದರು. ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸಿದರು. ಕಟ್ಟುನಿಟ್ಟಾದ ಕ್ರಮಗಳ ಜಾರಿ, ಗುಪ್ತಚರ ಆಧಾರಿತ ಕಾರ್ಯಾಚರಣೆ ಹಾಗೂ ಸಮುದಾಯ ಭಾಗವಹಿಸುವಿಕೆಯ ಮೂಲಕ ಇದನ್ನು ಮಾಡಿದರು ಎಂದು ಅವರು ಹೇಳಿದ್ದಾರೆ.
ಹೊಸದಿಲ್ಲಿ: 2020ರ ದಿಲ್ಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿರುವ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಮತ್ತಿತರರ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಲಿದೆ. ಈ ಪ್ರಕರಣದಲ್ಲಿ ಮೀರಾ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಇತರ ಅರ್ಜಿದಾರರಾಗಿದ್ದಾರೆ. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಡ ಪೀಠವು, ಡಿಸೆಂಬರ್ 2025ರಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ಸೆಪ್ಟೆಂಬರ್ 2ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ(UAPA) ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಆರೋಪಿಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದಾರೆ.
ರಾಜ್ಯದಾದ್ಯಂತ ಖಾಲಿ ಇರುವ 569 ಮದ್ಯದ ಸನ್ನದುಗಳ ಇ-ಹರಾಜು : ಡಿಸಿ ಬಿ.ಫೌಝಿಯಾ ತರನ್ನುಮ್
ಕಲಬುರಗಿಯಲ್ಲಿ ಬಿಡ್ಡುದಾರರಿಗೆ ತರಬೇತಿ ಆಯೋಜನೆ
ಕಲಬುರಗಿ | ಹೊಸ ವರ್ಷದ ಗಿಫ್ಟ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ
ಉಪನ್ಯಾಸಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ರಾಯ್ ಪುರ: ಛತ್ತೀಸ್ಗಢದ ರಾಜಧಾನಿ ರಾಯ್ ಪುರದ ಮ್ಯಾಗ್ನೆಟೋ ಮಾಲ್ ನಲ್ಲಿ ಕ್ರಿಸ್ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ 6 ಮಂದಿ ಬಜರಂಗದಳದ ಸದಸ್ಯರಿಗೆ ಬುಧವಾರ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜೈಲಿನಿಂದ ಬಿಡುಗಡೆಗೊಂಡ ತಕ್ಷಣ ಅವರಿಗೆ ಹೂಹಾರ ಹಾಕಿ ಮೆರವಣಿಗೆ ಮಾಡಿ ಸ್ವಾಗತ ನೀಡಲಾಗಿದೆ. ಗುರುವಾರ ರಾಯ್ ಪುರ ನಗರದಲ್ಲಿ ಜೈಲಿನಿಂದ ಹೊರಬಂದ ಆರೋಪಿಗಳನ್ನು ಬಜರಂಗದಳದ ಕಾರ್ಯಕರ್ತರು ಹಾರ ಹಾಕಿ, “ರಘು ಪತಿ ರಾಘವ ರಾಜಾ ರಾಮ್” ಘೋಷಣೆಗಳೊಂದಿಗೆ ಸ್ವಾಗತಿಸಿದರು. ಜಾಮೀನು ದೊರೆತಿರುವುದನ್ನು ಸಂಭ್ರಮಿಸುವ ಉದ್ದೇಶದಿಂದ ಆರು ಆರೋಪಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಬಜರಂಗದಳ ರಾಜ್ಯ ಸಂಯೋಜಕ ರಿಷಿ ಮಿಶ್ರಾ, ಮೆರವಣಿಗೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು. “ಅವರ ವಿರುದ್ಧ ಘೋಷಣೆಗಳನ್ನು ಕೂಗುವುದರಲ್ಲಿ ತಪ್ಪೇನಿದೆ? ಇಡೀ ವಿಷಯವು ಛತ್ತೀಸ್ ಗಢದಲ್ಲಿ ನಡೆದಿರುವ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದೆ. ಎಲ್ಲಾ (ಬಲಪಂಥೀಯ) ಸಂಘಟನೆಗಳು ಬಂದ್ ಗೆ ಕರೆ ನೀಡಲು ನಿರ್ಧರಿಸಿದ್ದವು. ಆದರೆ ಪಿತೂರಿ ನಡೆಸಿ ನಮ್ಮ ಸದಸ್ಯರನ್ನು ಜೈಲಿಗೆ ಹಾಕಲಾಯಿತು. ಆದ್ದರಿಂದ ಈ ಬಗ್ಗೆ ಸಂಭ್ರಮಿಸಲಾಗುತ್ತದೆ,” ಎಂದು ಹೇಳಿದರು. ಇದಕ್ಕೂ ಮೊದಲು, ಡಿಸೆಂಬರ್ 29ರಂದು ರಾಯ್ಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು. ಕ್ರಿಸ್ಮಸ್ ಮುನ್ನಾದಿನದಂದು, ಛತ್ತೀಸ್ ಗಢದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಾಂತರಗಳನ್ನು ವಿರೋಧಿಸಿ ಬಲಪಂಥೀಯ ಸಂಘಟನೆಗಳು ಒಂದು ದಿನದ ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿದ್ದವು. ಅದೇ ದಿನ, ಮರದ ಕೋಲುಗಳನ್ನು ಹಿಡಿದುಕೊಂಡ ಶಸ್ತ್ರಸಜ್ಜಿತ ಗುಂಪೊಂದು ಜನಪ್ರಿಯ ಹಾಗೂ ಹಳೆಯ ವ್ಯಾಪಾರ ಕೇಂದ್ರವಾಗಿರುವ ಮ್ಯಾಗ್ನೆಟೋ ಮಾಲ್ ಗೆ ನುಗ್ಗಿ ಕ್ರಿಸ್ಮಸ್ ಅಲಂಕಾರಗಳು ಹಾಗೂ ಪ್ರತಿಮೆಗಳನ್ನು ಧ್ವಂಸಗೊಳಿಸಿತು. ಮಾಲ್ ನಲ್ಲಿ ಸಾಂತಾ ಕ್ಲಾಸ್, ರೆನ್ಡೀಯರ್ಗಳು, ಜಾರುಬಂಡಿಗಳು ಹಾಗೂ ಹಿಮಮಾನವರ ಪ್ರತಿಮೆಗಳನ್ನು ಅಳವಡಿಸಲಾಗಿತ್ತು. ಮಾಲ್ನ ಭದ್ರತಾ ಸಿಬ್ಬಂದಿ ಗುಂಪನ್ನು ತಡೆಯಲು ಯತ್ನಿಸಿದರೂ, ಅದು ಸಾಧ್ಯವಾಗಲಿಲ್ಲ. ಅದೇ ರಾತ್ರಿ, ತೆಲಿಬಂಧ ಪೊಲೀಸ್ ಠಾಣೆಯಲ್ಲಿ 30 ರಿಂದ 40 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಸೆಕ್ಷನ್ ಗಳು ಅತಿಕ್ರಮಣ, ಉದ್ದೇಶಪೂರ್ವಕ ಹಾನಿ, ನಷ್ಟ ಉಂಟುಮಾಡುವುದು, ನೋವುಂಟುಮಾಡುವುದು, ಗಲಭೆ ಹಾಗೂ ಕಾನೂನುಬಾಹಿರ ಸಭೆಗೆ ಸಂಬಂಧಿಸಿದವುಗಳಾಗಿವೆ. ಡಿ. 27ರಂದು ತೆಲಿಬಂಧ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಿದ್ದು, ಒಬ್ಬ ಅಪ್ರಾಪ್ತನನ್ನೂ ವಶಕ್ಕೆ ಪಡೆದಿದ್ದರು. ಬಂಧಿತ ಆರು ಆರೋಪಿಗಳು ಐದು ದಿನಗಳ ಕಾಲ ಜೈಲಿನಲ್ಲಿದ್ದರು. ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸುಮಾರು 300 ಬಜರಂಗದಳ ಕಾರ್ಯಕರ್ತರು ತೆಲಿಬಂಧ ಪೊಲೀಸ್ ಠಾಣೆ ಹೊರಗಿನ ರಸ್ತೆಯಲ್ಲಿ ಕುಳಿತುಕೊಂಡು ಸುಮಾರು 9 ಗಂಟೆಗಳ ಕಾಲ ಸಂಚಾರ ತಡೆ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಡಿಸೆಂಬರ್ 24ರಂದು ‘ಸರ್ವ ಹಿಂದೂ ಸಮಾಜ’ ಕರೆ ನೀಡಿದ್ದ ‘ಛತ್ತೀಸ್ಗಢ ಬಂದ್’ ಬಸ್ತಾರ್ ಪ್ರದೇಶದ ಕಾಂಕೇರ್ ಜಿಲ್ಲೆಯಲ್ಲಿ ಮತಾಂತರಗೊಂಡ ಕುಟುಂಬದ ವ್ಯಕ್ತಿಯೊಬ್ಬರ ಸಮಾಧಿಗೆ ಸಂಬಂಧಿಸಿ ಇತ್ತೀಚೆಗೆ ನಡೆದ ಎರಡು ಸಮುದಾಯಗಳ ನಡುವಿನ ಘರ್ಷಣೆಯಿಂದ ಪ್ರಚೋದಿತವಾಗಿತ್ತು ಎಂದು ತಿಳಿದು ಬಂದಿದೆ.
ವೆನ್ಲಾಕ್ ಆಸ್ಪತ್ರೆಯ ʼಕಾರುಣ್ಯ ಯೋಜನೆʼಗೆ ಉದ್ಯಮಿ ರೊನಾಲ್ಡ್ ಮಾರ್ಟಿಸ್ ನೆರವು
ಮಂಗಳೂರು: ನಾಡಿನಲ್ಲಿ ಯಾರೂ ಹಸಿವಿನಿಂದ ಮಲಗುವ ಪರಿಸ್ಥಿತಿ ಇರಬಾರದು. ಒಂದು ವೇಳೆ ಹಸಿವಿನಿಂದ ಬಳಲುತ್ತಿದ್ದರೆ, ಅದು ಉಳ್ಳವರಿಗೆ ಅವಮಾನ ಎಂದು ದುಬೈಯ ʼಬ್ಲೂ ರೋಯಲ್ ಗ್ರೂಪ್ ಆಫ್ ಕಂಪನೀಸ್ʼನ ಆಡಳಿತ ನಿರ್ದೇಶಕ ರೊನಾಲ್ಡ್ ಮಾರ್ಟಿಸ್ ಹೇಳಿದರು. ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಫಿಸಿಯೋಥೆರಪಿ ಸೆಂಟರ್ ಬಳಿ ಶನಿವಾರ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ರಾತ್ರಿಯ ಊಟ ನೀಡುವ ಕಾರುಣ್ಯ ಯೋಜನೆಗೆ ಒಂದು ತಿಂಗಳ ಪ್ರಾಯೋಕತ್ವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಲ್ಲಿ ನಿರಂತರ ಎಂಟು ವರ್ಷಗಳಿಂದ ಊಟ ನೀಡುತ್ತಿರುವುದು ಮತ್ತು ಲೇಡಿಗೋಷನ್ ಆಸ್ಪತ್ರೆಗೂ ವಿಸ್ತರಿಸಿರುವುದು ಸಣ್ಣ ವಿಷಯವಲ್ಲ. ಇದು ಇಡೀ ರಾಜ್ಯಕ್ಕೆ ವಿಸ್ತರಿಸುವಂತಾಗಲಿ. ರೋಗಿಗಳಿಗೆ ಬಟ್ಟೆಯ ವ್ಯವಸ್ಥೆ ಕೂಡಾ ಮಾಡಿರುವುದು ದೇವರು ಮೆಚ್ಚುವ ಕೆಲಸ. ಇದಕ್ಕೆ ದೇವರು ದುಪ್ಪಟ್ಟು ಪ್ರತಿಫಲ ಕೊಡುತ್ತಾನೆ. ನಾನು ಎರಡು ವರ್ಷದಿಂದ ಎಂಫ್ರೆಂಡ್ಸ್ ಜತೆಗಿದ್ದು, ಮುಂದೆಯೂ ಇರುತ್ತೇನೆ ಎಂದು ಅವರು ಹೇಳಿದರು. ಎಂಫ್ರೆಂಡ್ಸ್ ಚೆಯರ್ಮ್ಯಾನ್ ಝಕರಿಯಾ ಜೋಕಟ್ಟೆ ಅಧ್ಯಕ್ಷತೆ ವಹಿಸಿ, ರೊನಾಲ್ಡ್ ಮಾರ್ಟಿಸ್ ಅವರನ್ನು ಗೌರವಿಸಿ, ದಾನ ಮಾಡಿದವರು ಎಂದೂ ಸೋತಿಲ್ಲ. ಯಾರೂ ಆಸ್ಪತ್ರೆಗೆ ಬರುವ ಪರಿಸ್ಥಿತಿ ಬರಬಾರದು. ಬಂದವರು ಶೀಘ್ರ ಗುಣಮುಖರಾಗಿ ಹೋಗಬೇಕು. ಹಸಿದವರಿಗೆ ಊಟ ನೀಡುವ ಯೋಜನೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ಎಂಫ್ರೆಂಡ್ಸ್ನ ಅನಿವಾಸಿ ಭಾರತೀಯ ಟ್ರಸ್ಟಿಗಳಾದ ಅಬ್ದುಲ್ಲಾ ಮೋನು ಖತರ್, ಅಶ್ರಫ್ ಅಬ್ಬಾಸ್, ಅಮೀರ್ ಅಬ್ಬಾಸ್, ಹಾರಿಸ್ ಕಾನತ್ತಡ್ಕ, ಮುಹಮ್ಮದ್ ಕುಕ್ಕುವಳ್ಳಿ, ದುಬೈಯ ಉದ್ಯಮಿ ಹಾಫಿಝ್ ಅಹ್ಮದ್ ಸಾಬಿತ್ ಇನ್ಸ್ಪೈರ್ ಉಪಸ್ಥಿತರಿದ್ದರು. ಎಂಫ್ರೆಂಡ್ಸ್ ಕಾರ್ಯಾಧ್ಯಕ್ಷ ಸುಜಾಹ್ ಮೊಹಮ್ಮದ್ ಸ್ವಾಗತಿಸಿದರು. ಸ್ಥಾಪಕ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಕಾರುಣ್ಯ ಯೋಜನೆ ಮುಖ್ಯಸ್ಥ ಮೊಹಮ್ಮದ್ ಹನೀಫ್ ಗೋಳ್ತಮಜಲು ವಂದಿಸಿದರು.
ಸಿಎಂ, ಡಿಸಿಎಂ ಭೇಟಿ ಮಾಡಿದ ಬಿಎಸ್ವೈ ಆಪ್ತ ಎಂ.ಪಿ. ರೇಣುಕಾಚಾರ್ಯ
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಆಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಶನಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸದಾಶಿವ ನಗರದಲ್ಲಿನ ಡಿಸಿಎಂ ನಿವಾಸದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ರೇಣುಕಾಚಾರ್ಯ, ಉಭಯ ನಾಯಕರಿಗೆ ಪುಷ್ಪಾಗುಚ್ಚವನ್ನು ನೀಡಿ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ. ‘ಲಕ್ಷದ ಐದು ಸಾವಿರ ಹೆಕ್ಟರ್ ಅಚ್ಚಕಟ್ಟು ಪ್ರದೇಶ ಇರುವ ಭದ್ರಾ ಜಲಾಶಯವನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ, 2 ಲಕ್ಷಕ್ಕೂ ಅಧಿಕ ಹೆಕ್ಟರ್ ಹನಿ ನೀರಾವರಿ ಅಚ್ಚಕಟ್ಟ ಪ್ರದೇಶವಿರುವ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರಿಸಲು ಸರಕಾರ ತೀರ್ಮಾನಿಸಿದ್ದು, ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ರೈತರಿಗೆ ಅನ್ಯಾಯವಾಗುವುದರಿಂದ ಕರ್ನಾಟಕ ನೀರಾವರಿ ನಿಗಮವನ್ನು ಯಾವುದೇ ಕಾರಣಕ್ಕೂ ಬೇರ್ಪಡಿಸಬಾರದು’ ಎಂದು ರೇಣುಕಾಚಾರ್ಯ, ಸಿಎಂ, ಡಿಸಿಎಂ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೊಪ್ಪಳ | ಗವಿಮಠ ಜಾತ್ರಾಮಹೋತ್ಸವಕ್ಕೆ ಬೃಹತ್ ಪ್ರಮಾಣದಲ್ಲಿ ಮೈಸೂರು ಪಾಕ್ ತಯಾರಿ
10 ರಿಂದ 12 ಲಕ್ಷ ಭಕ್ತರಿಗೆ ಪ್ರಸಾದ ವಿತರಣೆ
ದಲಿತರು, ಮುಸ್ಲಿಮರು ಈಶಾನ್ಯ ಜನರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ
ವೆನೆಝುವೆಲಾ ಮೇಲೆ ಅಮೆರಿಕ ದಾಳಿ ನಡೆಸಿದ್ದೇಕೆ? ತುರ್ತು ಪರಿಸ್ಥಿತಿ ಘೋಷಣೆ ಸೇರಿದಂತೆ ಇಲ್ಲಿವರೆಗೆ ಏನೇನಾಯ್ತು?
ವೆನೆಝುವೆಲಾ ಮತ್ತು ಇತರ ರಾಷ್ಟ್ರಗಳ ಪ್ರತಿಕ್ರಿಯೆ ಏನು ?
ಬುಲಂದ್ ಶಹರ್ (ಉತ್ತರ ಪ್ರದೇಶ): ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ದುಷ್ಕರ್ಮಿಯೊಬ್ಬ, ಆಕೆಯನ್ನು ಮೇಲ್ಚಾವಣಿಯಿಂದ ಕೆಳಗೆಸದಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದಿದ್ದು, ತೀವ್ರವಾಗಿ ಗಾಯಗೊಂಡು ಬಾಲಕಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಕ್ಷಿಪ್ರ ತನಿಖೆ ನಡೆಸಿರುವ ಸಿಕಂದರಾಬಾದ್ ಪೊಲೀಸರು, ಸಣ್ಣ ಪ್ರಮಾಣದ ಗುಂಡಿನ ಚಕಮಕಿ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರಾಜು ಹಾಗೂ ವೀರು ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಸಂತ್ರಸ್ತ ಕುಟುಂಬದ ಸದಸ್ಯರು ವಾಸಿಸುತ್ತಿದ್ದ ಸಿಕಂದರಾಬಾದ್ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮವೊಂದರ ಬಾಡಿಗೆ ಮನೆಯ ಕಟ್ಟಡದಲ್ಲಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ. ಬಾಲಕಿ ತಾರಸಿಯ ಮೇಲೆ ಆಟವಾಡುವಾಗ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆಕೆ ಗಂಭೀರ ಸ್ಥಿತಿಯಲ್ಲಿ ಪಕ್ಕದ ಜಮೀನೊಂದರಲ್ಲಿ ಪತ್ತೆಯಾಗಿದ್ದಳು. ಈ ಕುರಿತು ಮೃತ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಆರೋಪಿಗಳನ್ನು ಬಂಧಿಸಲು ತೆರಳಿದಾಗ ಕನ್ವಾರದಲ್ಲಿ ಆರೋಪಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿದ ಬುಲಂದ್ ಶಹರ್ ಪೊಲೀಸ್ ವರಿಷ್ಠಾಧಿಕಾರಿ ಡಾ.ತೇಜ್ ವೀರ್ ಸಿಂಗ್, “ಪೊಲೀಸರು ಆರೋಪಿಗಳನ್ನು ಕೈಗಾರಿಕಾ ಪ್ರದೇಶದಲ್ಲಿ ಅಡ್ಡಗಟ್ಟಿದಾಗ ಅವರು ಪೊಲೀಸರ ಮೇಲೆ ಗುಂಡು ಹಾರಿಸಿದರು. ಅದಕ್ಕೆ ಪ್ರತಿಯಾಗಿ ಪೊಲೀಸರೂ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ತಾವು ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು: ಕ್ರೈಸ್ತರ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ
ಮಂಗಳೂರು, ಜ.3: ಕ್ರಿಸ್ಮಸ್ ಹಬ್ಬದ ವೇಳೆ ದೇಶಾದ್ಯಂತ ಮೇಲೆ ನಡೆದ ದಾಳಿಯನ್ನು ಖಂಡಿಸಿ ನಗರದ ಬೆಂದೂರ್ವೆಲ್ನಲ್ಲಿರುವ ಸಂತ ಸೆಬಾಸ್ಟಿಯನ್ ಚರ್ಚ್ನ ಪ್ಯಾರಿಸ್ ಕೌನ್ಸಿಲ್ ವತಿಯಿಂದ ಚರ್ಚ್ನ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮೊಂಬತ್ತಿ ಬೆಳಗಿಸಿ ಪ್ರಾರ್ಥನೆ ಮಾಡಿ ನೋವು ವ್ಯಕ್ತಪಡಿಸಿದರು. ಚರ್ಚ್ನ ಧರ್ಮಗುರುಗಳಾದ ವಂ.ಸ್ವಾಮಿ ವಾಲ್ಟರ್ ಡಿಸೋಜ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ದರು. ಚರ್ಚ್ನ ಸಹಾಯಕ ಧರ್ಮಗುರುಗಳಾದ ವಂ. ಸ್ವಾಮಿ ವಿವೇಕ್ ಪಿಂಟೋ, ವಂ. ಸ್ವಾಮಿ ಓಜ್ಮೊಂಡ್ ಡಿಸೋಜ, ಪ್ರಾಂಶುಪಾಲ ವಂ. ಸ್ವಾಮಿ ಅರುಣ್ ಲೋಬೊ, ಮಾಜಿ ಶಾಸಕ ಜೆ.ಆರ್. ಲೋಬೊ, ಡೆನ್ನಿಸ್ ಡಿಸಿಲ್ವ, ಉಪಾಧ್ಯಕ್ಷ ದೀಪಕ್ ಡಿಸೋಜ, ಕಾರ್ಯದರ್ಶಿ ರಾಸ್ಟನ್ ಪ್ಯಾರಿಸ್, ಲಾಯ್ ರೇಗೋ ಮತ್ತಿತರರು ಪ್ರತಿಭಟನೆಗೆ ನೇತೃತ್ವ ನೀಡಿದ್ದರು. ಶಾಂತಿ ಮತ್ತು ನ್ಯಾಯಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಚರ್ಚ್ ವ್ಯಾಪ್ತಿಯ ಭಕ್ತಾಧಿಗಳು, ಭಗಿನಿಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದರು.
ಬಗೆಹರಿಯದ ಪತಿಯ ಸಾವಿನ ನಿಗೂಢತೆ: ಕೇರಳದಲ್ಲಿ ಮಹಿಳೆ ಆತ್ಮಹತ್ಯೆ
ಇಸ್ರೇಲ್ ನಲ್ಲಿ ಐದು ತಿಂಗಳ ಹಿಂದೆ ಮೃತಪಟ್ಟಿದ್ದ ವಯನಾಡು ಮೂಲದ ಜಿನೇಶ್
ಕ.ರಾ.ರ.ಸಾ. ನಿಗಮದ ಪ್ರತಿಷ್ಠಿತ ವಾಹನಗಳ ಪ್ರಯಾಣ ದರ ಕಡಿತ
ಉಡುಪಿ, ಜ.3: ಕ.ರಾ.ರ.ಸಾ.ನಿಗಮದ ಮಂಗಳೂರು ವಿಭಾಗದಿಂದ ಕುಂದಾಪುರ, ಉಡುಪಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಿವಿಧ ಮಾದರಿಯ ಲಕ್ಸುರಿ ವಾಹನಗಳ ಪ್ರಯಾಣ ದರವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10ರಿಂದ 15ರವರೆಗೆ ಕಡಿತಗೊಳಿ ಸಲಾಗುತ್ತಿದೆ. ಇದೇ ಜನವರಿ 5ರಿಂದ ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ. ಕುಂದಾಪುರದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಕುಂದಾಪುರಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವು ಅಂಬಾರಿ ಉತ್ಸವ ಸಾರಿಗೆಯಲ್ಲಿ 1510 ರೂ., ಡ್ರೀಮ್ಕ್ಲಾಸ್ ಸಾರಿಗೆಯಲ್ಲಿ 1350 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1310 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1110 ರೂ., ನಾನ್ ಎಸಿ ಸ್ಲೀಪರ್ನಲ್ಲಿ 1050 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ನಲ್ಲಿ 1100 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 750 ರೂ.ಗಳು ಇರಲಿವೆ. ಉಡುಪಿಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಉಡುಪಿಗೆ ಒಟ್ಟು ಪ್ರಯಾಣ ದರವು ಪ್ರತಿ ಪ್ರಯಾಣಿಕರಿಗೆ ಅಂಬಾರಿ ಉತ್ಸವ ಸಾರಿಗೆ ಯಲ್ಲಿ 1460 ರೂ., ಡ್ರೀಮ್ಕ್ಲಾಸ್ ಸಾರಿಗೆಯಲ್ಲಿ 1300 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1250 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1060 ರೂ., ನಾನ್ ಎಸಿ ಸ್ಲೀಪರ್ನಲ್ಲಿ 1000 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ನಲ್ಲಿ 1060 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 700 ರೂ.ಗಳಾಗಿವೆ. ಇನ್ನು ಮಂಗಳೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವು ಅಂಬಾರಿ ಉತ್ಸವ ಸಾರಿಗೆಯಲ್ಲಿ 1350 ರೂ., ಡ್ರೀಮ್ಕ್ಲಾಸ್ ಸಾರಿಗೆಯಲ್ಲಿ 1200 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1150 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1000 ರೂ., ನಾನ್ ಎಸಿ ಸ್ಲೀಪರ್ನಲ್ಲಿ 900 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ನಲ್ಲಿ 950 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 650ರೂ.ಗಳಷ್ಟು ಇರಲಿವೆ ಎಂದು ಮಂಗಳೂರು ಕ.ರಾ.ರ.ಸಾ.ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಅಕ್ಕ ಪಡೆ ಯೋಜನೆಗೆ ಜಿಲ್ಲಾಧಿಕಾರಿ ಚಾಲನೆ
ಹೆಣ್ಣು ಮಕ್ಕಳ ರಕ್ಷಣೆ, ದೌರ್ಜನ್ಯ ತಡೆ
ಯಾದಗಿರಿ | ರಾಷ್ಟ್ರಧ್ವಜ ಸಂಹಿತೆ ಪಾಲನೆ ಪ್ರತಿಯೊಬ್ಬರ ಕರ್ತವ್ಯ: ಸೈಯದ್ ಕಮರುದ್ದಿನ್
ಶಾಲಾ ಮಕ್ಕಳಿಗೆ ರಾಷ್ಟ್ರಧ್ವಜ ಕಟ್ಟುವ ಮಾಹಿತಿ ಕಾರ್ಯಾಗಾರ
ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗ ಕಾಮಗಾರಿ ಸಂಬಂಧ ಮಹತ್ವದ ಅಪ್ಡೇಟ್ ನೀಡಿದ ಬಿವೈ ರಾಘವೇಂದ್ರ
ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ 45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಭೂಸ್ವಾಧೀನ ಪೂರ್ಣಗೊಂಡು ಕಾಮಗಾರಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ. ಅಲ್ಲದೆ, ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಸ್ಕೈವಾಕ್ ಅಥವಾ ಅಂಡರ್ಪಾಸ್ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Karnataka Budget 2026: ನಾಯಕತ್ವ ಬದಲಾವಣೆ ನಡುವೆಯೇ ಬಜೆಟ್ ಸಿದ್ಧತೆಗೆ ಸಿದ್ದರಾಮಯ್ಯ ಕಸರತ್ತು
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆಯೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27 ಬಜೆಟ್ ಸಿದ್ಧತೆಗೆ ಜನವರಿ ಮೊದಲ ವಾರದಿಂದ ಸಿದ್ದತೆಯನ್ನ ಶುರು ಮಾಡುತ್ತಿದ್ದಾರೆ. ಇದು ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರು ಮುಂದುವರಿಕೆಗೆ ಸಂಕೇತ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಬಜೆಟ್ಗೆ ಸಂಬಂಧಿಸಿದಂಯೆ ಡಿಸೆಂಬರ್ನಿಂದ ಆರಂಭವಾಗುತ್ತಿದ್ದ ಸಿದ್ಧತೆ ಈ ಬಾರಿ
ಹಿರಿಯ ಪತ್ರಕತ೯ ಧನಂಜಯ ಮೂಡುಬಿದಿರೆಗೆ ಸ್ಪೂತಿ೯ರತ್ನ ಪ್ರಶಸ್ತಿ ಪ್ರದಾನ
ಸ್ಪೂತಿ೯ ಕಲಾ ಸಂಭ್ರಮ -2025
ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ, ನೆರೆಯ ದೇಶದಲ್ಲಿ ನಿಲ್ಲುತ್ತಿಲ್ಲ ಅಲ್ಪಸಂಖ್ಯಾತರ ಸಾವಿನ ಸರಣಿ
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಔಷಧಿ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದ ಖೋಕನ್ ಚಂದ್ರ ದಾಸ್ ಎಂಬುವವರನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಥಳಿಸಿ, ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಢಾಕಾದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಮೃತರ ಪತ್ನಿ ತಮಗೆ ನ್ಯಾಯ ಬೇಕೆಂದು ಮತ್ತು ರಕ್ಷಣೆ ನೀಡಬೇಕೆಂದು ಬಾಂಗ್ಲಾ ಸರ್ಕಾರವನ್ನು ಕೋರಿದ್ದಾರೆ.
ಯಾದಗಿರಿ | ಎಸ್ಪಿ ಪವನ್ ನೆಜ್ಜೂರ್ ಅಮಾನತು ಖಂಡಿಸಿ ರಾಜ್ಯಪಾಲರಿಗೆ ದಲಿತ ಸಂಘರ್ಷ ಸಮಿತಿ ಮನವಿ
ಯಾದಗಿರಿ: ಬಳ್ಳಾರಿ ನಗರದಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣದ ಹಿನ್ನೆಲೆಯಲ್ಲಿ ಅಮಾಯಕ ಎಸ್.ಪಿ. ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಜನವರಿ 1, 2026ರಂದು ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಮಠದ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕ ಜನಾರ್ಧನರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು. ಈ ಘಟನೆಯಲ್ಲಿ ರಾಜಶೇಖರ ಎಂಬವರು ಸಾವನ್ನಪ್ಪಿದ್ದು, ಘಟನೆಗೆ ನೇರ ಕಾರಣಕರ್ತರಾದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದೆ, ಅಧಿಕಾರ ವಹಿಸಿಕೊಂಡ ಕೇವಲ ಮೂರು ಗಂಟೆಗಳಲ್ಲೇ ಎಸ್.ಪಿ. ಪವನ್ ನೆಜ್ಜೂರ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತು ಮಾಡಿರುವುದು ಅನ್ಯಾಯಕರವಾಗಿದೆ ಎಂದು ಆರೋಪಿಸಿದರು. ಘರ್ಷಣೆಯ ವೇಳೆ ಶಾಸಕರು ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಮರೆತು ರೌಡಿಗಳಂತೆ ವರ್ತಿಸಿದ್ದಾರೆ. ಶಾಸಕ ಭರತರೆಡ್ಡಿ ಅವರ ಖಾಸಗಿ ಗನ್ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿರುವುದು ಗಂಭೀರ ಕಾನೂನು ಉಲ್ಲಂಘನೆಯಾಗಿದ್ದು, ಇದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗಿದೆ ಎಂದು ಸಮಿತಿ ಕಿಡಿಕಾರಿತು. ರಾಜಕೀಯ ಸ್ವಾರ್ಥದ ಕಿತ್ತಾಟದ ಪರಿಣಾಮವಾಗಿ ಒಬ್ಬ ಅಮಾಯಕ ವ್ಯಕ್ತಿ ಬಲಿಯಾಗಿದ್ದು, ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ಹೊಣೆ ಸರ್ಕಾರದ ಮೇಲಿದೆ. ಆದರೆ ಘಟನೆಗೆ ಹೊಣೆಗಾರರಾದ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಪೊಲೀಸ್ ಇಲಾಖೆಯನ್ನು ರಾಜಕೀಯ ಕೈಗೊಂಬೆಯಂತೆ ಬಳಸಿಕೊಂಡು ಪ್ರಾಮಾಣಿಕ ಅಧಿಕಾರಿ ಎಸ್.ಪಿ. ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿರುವುದು ಅತ್ಯಂತ ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಕೂಡಲೇ ಎಸ್.ಪಿ. ಪವನ್ ನೆಜ್ಜೂರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಈ ಘಟನೆಗೆ ಮೂಲ ಕಾರಣಕರ್ತರಾದ ಶಾಸಕ ಜನಾರ್ಧನರೆಡ್ಡಿ ಹಾಗೂ ಶಾಸಕ ಭರತರೆಡ್ಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಮೃತಪಟ್ಟ ರಾಜಶೇಖರ ಅವರ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಬೇಕು ಎಂದು ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಸಂದರ್ಭದಲ್ಲಿ ಶರಣು ದೊರನಹಳ್ಳಿ, ಬಸವರಾಜ ಚಿಪ್ಪಾರ್, ಶಿವು ಪೋತೆ, ಸಂತೋಷ ಗೋಗಿ, ಶರಣು ಹುರುಸಗುಂಡಗಿ, ವಿಶ್ವ ನಾಟೇಕಾರ್, ಸಂಗು ಕೆಂಭಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸರಕಾರದ ವೈಫಲ್ಯ ಮರೆಮಾಚಲು ಪ್ರಾಮಾಣಿಕ ಅಧಿಕಾರಿಗಳನ್ನು ಬಲಿಪಶು ಮಾಡುವುದು ಸರಿಯಲ್ಲ: ಬಿ.ವೈ. ವಿಜಯೇಂದ್ರ
ಬೆಂಗಳೂರು: ‘ಬಳ್ಳಾರಿ ಗುಂಪು ಘರ್ಷಣೆ ಪ್ರಕರಣದಲ್ಲಿ ಸರಕಾರದ ವೈಫಲ್ಯ ಮರೆಮಾಚಲು ಪ್ರಾಮಾಣಿಕ ಅಧಿಕಾರಿಗಳನ್ನು ಬಲಿಪಶು ಮಾಡುವ, ಅವರ ಸ್ಥೈರ್ಯ ಕುಗ್ಗಿಸುವ ಈ ಕೆಟ್ಟ ಕಾಂಗ್ರೆಸ್ ಪ್ರವೃತ್ತಿ ಈ ಕೂಡಲೇ ನಿಲ್ಲಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ ನಡೆಸಿದ ನಿರ್ಲಜ್ಜ ಗೂಂಡಾಗಿರಿ, ನಮ್ಮ ಪಕ್ಷದ ಶಾಸಕರ ಹಾಗೂ ಕಾರ್ಯಕರ್ತರ ಮೇಲಿನ ಹತ್ಯೆ ಪ್ರಯತ್ನ, ಹಲ್ಲೆ, ಕಾನೂನು ಸುವ್ಯವಸ್ಥೆಯ ಕುಸಿತ, ಓರ್ವನ ಪ್ರಾಣಹಾನಿಯ ಗಂಭೀರ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು, ಈ ಭ್ರಷ್ಟ ಕಾಂಗ್ರೆಸ್ ಸರಕಾರ ಕೇವಲ ದಿನದ ಹಿಂದಷ್ಟೇ ಅಧಿಕಾರ ಸ್ವೀಕರಿಸಿದ್ದ ಎಸ್ಪಿಯನ್ನು ಅಮಾನತು ಮಾಡಿರುವುದು, ತನ್ನ ಅಪ್ರಬುದ್ಧತೆ, ವೈಫಲ್ಯ ಮುಚ್ಚಿಕೊಳ್ಳಲು ನಡೆಸುತ್ತಿರುವ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಆಕ್ಷೇಪಿಸಿದ್ದಾರೆ. ಮುಖ್ಯಮಂತ್ರಿಗಳೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಿಮ್ಮದೇ ಶಾಸಕರ ಪ್ರಚೋದನಾಕಾರಿ ನಡವಳಿಕೆ ಹಾಗೂ ಆಡಳಿತ ಪಕ್ಷದ ಕಾರ್ಯಕರ್ತರ ಪುಂಡಾಟಿಕೆಯನ್ನು ನಿಯಂತ್ರಿಸುವ ಬದಲು, ಓರ್ವ ಅಧಿಕಾರಿಯನ್ನು ‘ಬಲಿಪಶು’ ಮಾಡುವುದು ಎಷ್ಟು ಸರಿ?. ಅಧಿಕಾರಿಗೆ ಕನಿಷ್ಠ ಪರಿಸ್ಥಿತಿಯನ್ನು ಅವಲೋಕಿಸಲು ಕಾಲಾವಕಾಶವನ್ನೇ ನೀಡದೆ ಅಮಾನತು ಮಾಡಿರುವುದು ನಿಮ್ಮ ಆಡಳಿತದ ದಿವಾಳಿತನವನ್ನು ತೋರಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಸಾರ್ವಜನಿಕವಾಗಿ ಗುಂಡು ಹಾರಿಸಿ ಭಯೋತ್ಪಾದನೆ ನಡೆಸಿದ ಶಾಸಕರ ಬೆಂಬಲಿಗರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ನಿಮಗಿದೆಯೇ? ಬಳ್ಳಾರಿಯಲ್ಲಿ ಗುಂಡು ಹಾರಿಸಿದ್ದು ಯಾರು ಮತ್ತು ಯಾರ ಪ್ರಚೋದನೆಯಿಂದ ಈ ಘಟನೆ ನಡೆದಿದೆ. ಹೀಗಾಗಿ ಹಾಲಿ ನ್ಯಾಯಾಧೀಶರಿಂದ ನಿಷ್ಪಕ್ಷಪಾತ ತನಿಖೆ ಮಾಡಿಸಿ, ರಾಜ್ಯವೇ ತಲೆತಗ್ಗಿಸುವಂತಹ ಇಂತಹ ಗೂಂಡಾ ವರ್ತನೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದಾರೆ.
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ತಂಡಕ್ಕೆ ಮರಳಿದ ಸಿರಾಜ್, ಅಯ್ಯರ್, ರಿಷಭ್ ಪಂತ್
ತಂಡದಲ್ಲಿ ಸ್ಥಾನ ಉಳಿಸಿಕೊಂಡ ಕೊಹ್ಲಿ, ರೋಹಿತ್ ಶರ್ಮ; ಶಮಿಗೆ ಸಿಗದ ಸ್ಥಾನ
ಕ್ರೀಡಾಕೂಟದಿಂದ ಸಾಮರಸ್ಯತೆ ಬೆಳೆಯಲು ಸಾಧ್ಯ: ಎ.ಸಿ.ಭಂಡಾರಿ
ಮುಡಿಪುವಿನಲ್ಲಿ ಮಹಾನಾಯಕ ಜೈ ಭೀಮ್ ಟ್ರೋಫಿ -2026 ಉದ್ಘಾಟನೆ
ಯಾದಗಿರಿ/ಶಹಾಪುರ: ಹಿಂದುಳಿದ ವರ್ಗಕ್ಕೆ ಸೇರಿದ ಕೋಲಿ, ಕಬ್ಬಲಿಗ, ಬೆಸ್ತ ಸಮುದಾಯದವರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡ (ಎಸ್ಟಿ) ಜಾತಿ ಪ್ರಮಾಣಪತ್ರ ನೀಡಬಾರದು. ಈ ವರ್ಗದವರು ರಾಜಕೀಯ ಪ್ರಭಾವ ಬಳಸಿ ತಳವಾರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಎಸ್ಟಿ ಮೀಸಲಾತಿಯ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ವಾಲ್ಮೀಕಿ ನಾಯಕರ ಸಂಘದ ಜಿಲ್ಲಾಧ್ಯಕ್ಷ ಗೌಡ ಆಲ್ಬಾಳ ಹಾಗೂ ಉತ್ತರ ಕರ್ನಾಟಕ ಭಾಗದ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮಾರಪ್ಪ ನಾಯಕ ಮಗದಂಪುರ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಇರುವ ನಾಯಕ, ವಾಲ್ಮೀಕಿ, ಬೇಡ ಸಮುದಾಯಗಳಲ್ಲಿನ ತಳವಾರ ಮತ್ತು ಪರಿವಾರ ಜಾತಿಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲಾಗಿದೆ. ಆದರೆ ಹಿಂದುಳಿದ ವರ್ಗಕ್ಕೆ ಸೇರಿದ ತಳವಾರ ಸಮುದಾಯವನ್ನೇ ಎಸ್ಟಿ ಪಟ್ಟಿಗೆ ಸೇರಿಸಲಾಗಿದೆ ಎಂದು ಕೆಲವು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜಕೀಯ ಮುಖಂಡರು ಸುಳ್ಳು ಹೇಳಿ ತಮ್ಮ ಸಮುದಾಯದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೋಲಿ–ಕಬ್ಬಲಿಗ ಸಮಾಜದ ತಳವಾರ ಹಾಗೂ ಪರಿವಾರ ಜಾತಿಗಳನ್ನು ಎಸ್ಟಿ ಪಟ್ಟಿಗೆ ಸೇರಿಸಿರುವುದಾಗಿ ಯಾವುದೇ ಪರಿಷ್ಕೃತ ಸರ್ಕಾರಿ ಆದೇಶವಿಲ್ಲ. ಅಂತಹ ಆದೇಶಗಳಿದ್ದರೆ ಬಹಿರಂಗವಾಗಿ ಪ್ರಕಟಿಸಬೇಕು. ಸರ್ಕಾರದ ಆದೇಶಗಳನ್ನು ತಿರುಚಿ ಸುಳ್ಳು ಮಾಹಿತಿ ಹರಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಸುಮಾರು 2.50 ಲಕ್ಷ ನಕಲಿ ಎಸ್ಟಿ ಜಾತಿ ಪ್ರಮಾಣಪತ್ರಗಳು ಸೃಷ್ಟಿಯಾಗಿದ್ದು, ಅವುಗಳ ಆಧಾರದ ಮೇಲೆ ಉದ್ಯೋಗ, ಮುಂಬಡ್ತಿ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲಾಗುತ್ತಿದೆ. ಈ ಕುರಿತು ದಾಖಲೆ ಸಮೇತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಹಿಂದ ಸಮಾಜದ ಜಿಲ್ಲಾಧ್ಯಕ್ಷ ಹನುಮೇಗೌಡ ಮರ್ಕಲ್, ತಾಲೂಕು ಅಧ್ಯಕ್ಷ ಮರಪ್ಪ ಪ್ಯಾಟಿ ಶಿರವಾಳ, ನಕಲಿ ಎಸ್ಟಿ ಜಾತಿ ಪ್ರಮಾಣಪತ್ರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ನಾಯಕ, ತಾಲೂಕು ಕಾರ್ಯದರ್ಶಿ ಹನುಮಂತ ದೊರೆ, ಯುವ ಜಿಲ್ಲಾಧ್ಯಕ್ಷ ದೇವು, ಘಟಕದ ಮುಖಂಡರಾದ ಗಂಗನಾಳ, ಶರಣಪ್ಪ ಜಾಕನಳ್ಳಿ, ತಿರುಪತಿ ಯಕ್ಕಿಂತಿ, ರಾಘವೇಂದ್ರ ಯಕ್ಕಿಂತಿ ಹಳಿಸಗರ, ಅಶೋಕ ಗಾಂಜಿ, ಮಲ್ಲಪ್ಪ ಹಳಹಳ್ಳಿ, ಅಶೋಕ ಟಣಕೇದಾರ, ಸುಭಾಷ ರಾಂಪುರ, ರಮೇಶ್ ಗುರಿಕಾರ, ಅಂಬರೀಷ ಇಟಗಿ, ಗೋಪಾಲ ದೊರಿ, ಬಲಭೀಮ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಎಸ್ಟಿ ಮೀಸಲಾತಿ ಕೋಟಾದಲ್ಲಿ ಗೆದ್ದ ಶಾಸಕರು–ಸಚಿವರ ಮನೆ ಮುಂದೆ ಧರಣಿ : ಎಸ್ಟಿ ಮೀಸಲಾತಿ ಕೋಟಾದಿಂದ ಚುನಾವಣೆ ಗೆದ್ದು ಶಾಸಕರು ಹಾಗೂ ಸಚಿವರಾಗಿರುವವರು ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಬಲವಾಗಿ ಮುಂದಿಡದೆ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ. ಇಂತಹ ಶಾಸಕರು ಮತ್ತು ಸಚಿವರ ಮನೆ ಮುಂದೆ ಧರಣಿ ನಡೆಸಲಾಗುವುದು. ನಮ್ಮ ಸಮುದಾಯಕ್ಕೆ ನ್ಯಾಯ ಸಿಗದಿದ್ದರೆ ಅರೆಬೆತ್ತಲೆ ಪ್ರತಿಭಟನೆ ಹಾಗೂ ತಲೆ ಬೋಳಿಸಿಕೊಂಡು ಉಗ್ರ ಹೋರಾಟ ನಡೆಸಲಾಗುವುದು. ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು. ಇದು ಕೆಲವರ ನಿರ್ಧಾರವಲ್ಲ. ಇದು ರಾಜ್ಯದ ವಾಲ್ಮೀಕಿ ಸಮುದಾಯದ ಜನರ ತೀರ್ಮಾನವಾಗಿದೆ ಎಂದು ಅವರು ತಿಳಿಸಿದರು. ಸರಿಯಾದ ದಾಖಲೆ ಪರಿಶೀಲನೆ ಇಲ್ಲದೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ನಕಲಿ ಎಸ್ಟಿ ಜಾತಿ ಪ್ರಮಾಣಪತ್ರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. - ಗೌಡಪ್ಪಗೌಡ ಅಲ್ವಾಳ, ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ
ಇಡೀ ವ್ಯವಸ್ಥೆಯಿಂದ ಕೊರಗ ಸಮುದಾಯದ ನಿರ್ಲಕ್ಷ್ಯ: ಸುಶೀಲಾ ನಾಡ
20ನೇ ದಿನ ಪೂರೈಸಿದ ಕೊರಗರ ಅಹೋರಾತ್ರಿ ಧರಣಿ ಸತ್ಯಾಗ್ರಹ
ಹುಮನಾಬಾದ್ | ರಾಶಿ ಯಂತ್ರ ಆಟೋಗೆ ಢಿಕ್ಕಿ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಮೃತ್ಯು
ಹುಮನಾಬಾದ್ : ತಾಲೂಕಿನ ಚಿಟಗುಪ್ಪಾ ಪಟ್ಟಣದಲ್ಲಿ ಗುರುವಾರ ರಾಶಿ ಮಾಡುವ ಯಂತ್ರದ ಬ್ರೇಕ್ ವಿಫಲವಾದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಚಿಟಗುಪ್ಪ ತಾಲೂಕು ನಿರ್ಣಾ ಗ್ರಾಮದ ನಿವಾಸಿ ಖಾಲಿದ್ ಪಾಷಾ (40) ಎಂದು ಗುರುತಿಸಲಾಗಿದೆ. ರಾಶಿ ಮಾಡುವ ಯಂತ್ರದ ಬ್ರೇಕ್ ವಿಫಲವಾದಾಗ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿಸಲು, ಯಂತ್ರ ಚಾಲಕ ವಾಹನವನ್ನು ರಸ್ತೆಯ ಡಿವೈಡರ್ಗೆ ಗುದ್ದಿದ್ದಾನೆ. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋವೊಂದಕ್ಕೆ ಯಂತ್ರ ಢಿಕ್ಕಿ ಹೊಡೆದ ಪರಿಣಾಮ ಆಟೋ ಸಂಪೂರ್ಣವಾಗಿ ನುಚ್ಚುನೂರಾಗಿದ್ದು, ಅಪಘಾತದಲ್ಲಿ ಆಟೋ ಚಾಲಕ ಖಾಲಿದ್ ಪಾಷಾ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಖಾಲಿದ್ ಪಾಷಾ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಖಾಲಿದ್ ಪಾಷಾ ಅವರು ಬಡ ಕುಟುಂಬದ ಆರ್ಥಿಕ ಆಧಾರಸ್ತಂಭವಾಗಿದ್ದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಇದ್ದು, ಕುಟುಂಬದ ಯಜಮಾನನನ್ನು ಕಳೆದುಕೊಂಡ ಪರಿಣಾಮ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕುಟುಂಬಕ್ಕೆ ಭೇಟಿ ನೀಡಿ ಅಗತ್ಯ ನೆರವು ಒದಗಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಸುರತ್ಕಲ್ : ಹೊಸ ವರ್ಷಾಚರಣೆಗೆ ತಂದಿದ್ದ 21 ಕೆ.ಜಿ ಗಾಂಜಾ ವಶ; ಇಬ್ಬರು ಆರೋಪಿಗಳ ಬಂಧನ
ಸುರತ್ಕಲ್ : ಹೊಸ ವರ್ಷಾಚರಣೆಗೆಂದು ಮಾರಾಟ ಮಾಡಲು ತಂದಿದ್ದ ಸುಮಾರು 21ಕೆ.ಜಿ ಗಾಂಜಾವನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಉಳಾಯಿಬೆಟ್ಟು ಗ್ರಾಮ ನಿವಾಸಿ ಪ್ರದೀಪ್ ಪೂಜಾರಿ(32), ಬೈಕಂಪಾಡಿ ಚಿತ್ರಾಪುರ ನಿವಾಸಿ ವಸಂತ (42) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ ಅಂದಾಜು 10,72,500 ರೂ. ಮೊತ್ತದ 21.450 ಕೆಜಿ ಗಾಂಜಾ, 3 ಮೊಬೈಲ್ ಫೋನ್ಗಳು, ಸಾಗಾಟಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು 13,86,500 ರೂ. ಮೊತ್ತದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಜ.3ರಂದು ಸುರತ್ಕಲ್ ಚೊಕ್ಕಬೆಟ್ಟು ಸಮೀಪ ಮಾರಾಟ ಮಾಡುವ ಸಲುವಾಗಿ ಗಾಂಜಾ ಶೇಖರಿಸಿಟ್ಟಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಒರಿಸ್ಸಾದಿಂದ ಡಿ.29ರಂದು ಗಾಂಜಾ ತಂದು ಚೊಕ್ಕಬೆಟ್ಟುವಿನ ಮನೆಯಲ್ಲಿ ಶೇಖರಿಸಿಟ್ಟಿದ್ದರು. ಪೊಲೀಸ್ ಬಂದೋಬಸ್ತ್ ಹೆಚ್ಚಾಗಿದ್ದ ಕಾರಣ ಮಾರಾಟ ಮಾಡಲಾಗದೇ ಅದನ್ನು ಕಾರಿನಲ್ಲೇ ಇಟ್ಟಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 ಕಲಂ: 8(C), 20(b)(ii),(C) ಎನ್ ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪ್ರದೀಪ್ ಪೂಜಾರಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎರಡು, ಬರ್ಕೆ, ಬೆಳ್ತಂಗಡಿ, ಧರ್ಮಸ್ಥಳ, ಮುಲ್ಕಿ, ಸುರತ್ಕಲ್, ಮಂಗಳೂರು ಉತ್ತರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಉತ್ತರ ಉಪ ವಿಭಾಗದ ಎ.ಸಿ.ಪಿ. ಶ್ರೀಕಾಂತ.ಕೆ. ಅವರು ಮತ್ತು ಅವರ ತಂಡದ ಸಿಬ್ಬಂದಿಗಳಾದ ಎ.ಎಸ್.ಐ ಚಂದ್ರಶೇಖರ್, ಎಚ್.ಸಿ ಗಳಾದ ರೆಜಿ.ಎಂ., ದಾಮೋದರ್, ಹಾಲೇಶ್ ನಾಯ್ಕ್, ಸುನೀಲ್ ಪಡನಾಡ, ಸಂಪತ್ ಹಾಗೂ ಸುರತ್ಕಲ್ ಠಾಣಾ ಪಿ.ಐ. ಪ್ರಮೋದ್ ಕುಮಾರ್, ಪಿ.ಎಸ್.ಐ ರಘುನಾಯ್ಕ್ ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ಅಂಜಿನಪ್ಪ ಭಾಗವಹಿಸಿದ್ದರು.
ಬಳ್ಳಾರಿ ಗುಂಪು ಘರ್ಷಣೆ | ನಾನು ಯಾರಿಗೂ ಬೆದರಿಕೆ ಹಾಕಿಲ್ಲ : ಶಾಸಕ ನಾರಾ ಭರತ್ ರೆಡ್ಡಿ ಸ್ಪಷ್ಟನೆ
ಬಳ್ಳಾರಿ : ನಾನು ನನ್ನ ಕುಟುಂಬ ಸಮೇತ ಹೊಸ ವರ್ಷ ಆಚರಣೆಗಾಗಿ ಹೊಸಪೇಟೆಗೆ ಹೋಗಿದ್ದೆ. ಆದರೆ, ಗುರುವಾರ ಸಂಜೆ ಬ್ಯಾನರ್ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಂಘರ್ಷ ಹಾಗೂ ಗಲಾಟೆ ನಡೆದ ವಿಷಯ ತಿಳಿದ ತಕ್ಷಣ ಕೂಡಲೇ ಕುಟುಂಬವನ್ನು ಅಲ್ಲಿಯೇ ಬಿಟ್ಟು, ನಾನು ಹೊಸಪೇಟೆಯಿಂದ ಬಳ್ಳಾರಿಗೆ ಮರಳಿ ಘಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಕಾರ್ಯಕರ್ತರನ್ನು ಸಮಾಧಾನಪಡಿಸುತ್ತಿದ್ದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು. ಈ ಸಂದರ್ಭದಲ್ಲಿ ಗಾಲಿ ಜನಾರ್ಧನ್ ರೆಡ್ಡಿ ಬೆಂಬಲಿಗರಿಂದ ಕಲ್ಲುತೂರಾಟ ನಡೆದಿದೆ. ಆದರೆ ನಾನು ಅವನ ಮನೆ ಸುಟ್ಟುಹಾಕುತ್ತೇನೆ ಎಂದು ಹೇಳಿಲ್ಲ. ನಾನು ಹೇಳಿದ್ದು, ನನ್ನ ಕಾರ್ಯಕರ್ತರನ್ನು ಸಮಾಧಾನಪಡಿಸದೇ ಇದ್ದರೆ ಇವತ್ತು ಅವನ ಮನೆ ಸುಟ್ಟು ಹೋಗುತ್ತಿತ್ತು ಎಂಬ ಅರ್ಥದಲ್ಲಿ ಹೇಳಿದ್ದೆ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಆದರೆ ಮಾಧ್ಯಮದವರು ಆ ಹೇಳಿಕೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸದೆ, ತಪ್ಪಾಗಿ ಪ್ರದರ್ಶಿಸಿದ್ದಾರೆ ಎಂದು ಅವರು ಆರೋಪಿಸಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರತ್ ರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಪ್ರಚಾರವೂ ನಡೆದಿದ್ದು, ಅದು ಸತ್ಯವಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಮ್ಮ ನಾಯಕರು ನನಗೆ ಯಾವುದೇ ರೀತಿಯ ಕೋಪ ವ್ಯಕ್ತಪಡಿಸಿಲ್ಲ. ನಡೆದ ಘಟನೆಯ ಕುರಿತು ಮಾಹಿತಿ ಕೇಳಿದ್ದು, ಅದನ್ನು ನಾನು ಸ್ಪಷ್ಟವಾಗಿ ವಿವರಿಸಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಒಂದು ತಂಡವನ್ನು ಕಳುಹಿಸಲಾಗುವುದು ಎಂಬ ಮಾಹಿತಿ ಅವರು ನೀಡಿದ್ದಾರೆ ಎಂದು ಭರತ್ ರೆಡ್ಡಿ ಹೇಳಿದರು. ಮಾಧ್ಯಮಗಳು ಸತ್ಯ ಮತ್ತು ವಾಸ್ತವಾಂಶಗಳನ್ನು ಜನರಿಗೆ ತಲುಪಿಸಬೇಕು. ಅಸಂಪೂರ್ಣ ಅಥವಾ ತಪ್ಪು ಅರ್ಥ ನೀಡುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಬಾರದು ಎಂದು ಅವರು ಮಾಧ್ಯಮದವರಲ್ಲಿ ಮನವಿ ಮಾಡಿದರು.

18 C