ಕೇರಳದಲ್ಲಿ ತಾಪಮಾನ ತೀವ್ರ ಏರಿಕೆ: ಕಣ್ಣೂರಿನಲ್ಲಿ ಗರಿಷ್ಠ , ಹಗಲು ಬಿಸಿ, ರಾತ್ರಿ ಚಳಿ
ಕೇರಳದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದ್ದು, ಕಣ್ಣೂರು ಜಿಲ್ಲೆಯಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣತೆ ದಾಖಲಾಗಿದೆ. ಹಗಲಿನಲ್ಲಿ ಉರಿಬಿಸಿಲು ಇದ್ದರೆ, ರಾತ್ರಿ ಮತ್ತು ಮುಂಜಾನೆ ಮೈಕೊರೆಯುವ ಚಳಿ ಅನುಭವಕ್ಕೆ ಬರುತ್ತಿದೆ. ಮುನ್ನಾರ್ನಂತಹ ಪ್ರದೇಶಗಳಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಗೆ ಇಳಿಯುತ್ತಿದೆ.
ಜಾಹೀರಾತಿನಿಂದ ಬಿಎಂಟಿಸಿಗೆ ಬರಲಿದೆ 263 ಕೋಟಿ ರೂ. ಆದಾಯ!
ಆರ್ಥಿಕ ನಷ್ಟದಿಂದ ಹೊರಬರಲು ಬಿಎಂಟಿಸಿ ಬಸ್ಗಳಲ್ಲಿ ಜಾಹೀರಾತು ಪ್ರದರ್ಶಿಸಲು ಮುಂದಾಗಿದೆ. ಮುಂದಿನ 3-4 ವರ್ಷಗಳಲ್ಲಿ 263.41 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸಾಮಾನ್ಯ ಬಸ್ಗಳಿಗೆ ತಿಂಗಳಿಗೆ 12,616 ರೂ. ಹಾಗೂ ವೋಲ್ವೊ ಬಸ್ಗಳಿಗೆ 25,255 ರೂ. ಶುಲ್ಕ ನಿಗದಿಪಡಿಸಲಾಗಿದೆ.
21 ಎಕರೆ ಜಮೀನು ಕಬಳಿಕೆ: ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ಆರೋಪ
ಬೆಳಗಾವಿ : ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೋಲಾರ ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಬುಧವಾರ ಬೆಳಗಾವಿ ನಗರದಲ್ಲಿ ಬಿಜೆಪಿ ಮುಖಂಡ ತಮ್ಮೇಶ ಗೌಡ, ಸಚಿವ ಕೃಷ್ಣಬೈರೇಗೌಡರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸಿವುದಕ್ಕೆ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವೈಟ್ ಕಾಲರ್ ರಾಜಕಾರಣಿ, ಭ್ರಷ್ಟಾಚಾರ ಇಲ್ಲ ಎನ್ನುವ ಮಂತ್ರಿ ಕೃಷ್ಣಬೈರೇಗೌಡ. ಆದರೆ, ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬ್ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿದರು. ಪಿತ್ರಾರ್ಜಿತ ಆಸ್ತಿ: ಕೃಷ್ಣಬೈರೇಗೌಡ ಸ್ಪಷ್ಟನೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣಬೈರೇಗೌಡ, ಅದು ನಮ್ಮ ಪಿತ್ರಾರ್ಜಿತ ಆಸ್ತಿ. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಯಾಗಲಿ. ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ. ಲೋಕಾಯುಕ್ತಕ್ಕೆ ದೂರು ಕೊಡಲಿ. ಸರಕಾರವೇ ತನಿಖೆ ಮಾಡಿದರೆ ನೀವೇ ಮಂತ್ರಿ, ನೀವೇ ತನಿಖೆ ಮಾಡುವುದು ಸರಿಯಾ ಎನ್ನುತ್ತೀರಾ. ಅದು ನಮ್ಮ ತಾತನವರ ಜಾಗ, ಅವರಿಂದ ನಮ್ಮ ತಂದೆಯವರಿಗೆ ಬಂದಿರುವುದು. ಆಗ ನಾನು ಐದು ವರ್ಷದ ಮಗು. ನಮ್ಮ ತಾತನಿಗೆ ಮೂರು ಜನ ಮಕ್ಕಳು. ಅವರಿಗೆ ವಿಭಾಗವಾಗಿ ನಮಗೆ ಬಂದಿದೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ಕೆಸರೆರಚಾಟಕ್ಕೆ ವಿಪಕ್ಷದವರು ಆರೋಪ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅಷ್ಟೋ, ಇಷ್ಟೋ ತಲೆ ಎತ್ತಿಕೊಂಡು ಇದ್ದೇವೆ. ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ. ನಮಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದು ನಾನ್ಯಾಕೆ ದೂರು ನೀಡಲಿ. ಕಾನೂನು ಪ್ರಕಾರ ರಾಜಕೀಯದಲ್ಲಿ ಘನತೆ ಗೌರವದಿಂದ ಇದ್ದೇವೆ ಎಂದು ಕೃಷ್ಣಬೈರೇಗೌಡ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ 5 ಪ್ರಮುಖ ವಿಧೇಯಕಗಳ ಅಂಗೀಕಾರ
ಬೆಳಗಾವಿ : 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಗ್ರಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಸೇರಿದಂತೆ ಪ್ರಮುಖ 5 ವಿಧೇಯಕಗಳಿಗೆ ಅಂಗೀಕಾರ ದೊರೆಯಿತು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಡಿಸಿದ 2025ನೇ ಸಾಲಿನ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧೀಕಾರ (ತಿದ್ದುಪಡಿ) ವಿಧೇಯಕ ಮಂಡಿಸಿದರು. ಬಳಿಕ ಈ ಬಗ್ಗೆ ವಿವರಣೆ ನೀಡಿದ ಅವರು, 2022 ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಧಿನಿಯಮದಲ್ಲಿರುವ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮತ್ತು ಕಾರ್ಯಕಾರಿ ಸಮಿತಿಯನ್ನು ಪರಿಷ್ಕರಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರು ಮತ್ತು ಆಯುಕ್ತರನ್ನು ಮತ್ತು 2024ರ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮದ ಅನುಷ್ಠಾನದ ತತ್ಪರಿಣಾಮವಾಗಿ ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಪಾಲಿಕೆಗಳನ್ನು ಸೇರಿಸಲು ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪರವಾಗಿ ಕಾನೂನು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು 2025ನೇ ಸಾಲಿನ ಬಾಂಬೆ ಸಾರ್ವಜನಿಕ ನ್ಯಾಸ(ಕರ್ನಾಟಕ ತಿದ್ದುಪಡಿ) ವಿಧೇಯಕ ಮತ್ತು 2025ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕಗಳು ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಪರವಾಗಿ 2025ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಎರಡನೇ ತಿದ್ದುಪಡಿ ವಿಧೇಯಕ ಮಂಡಿಸಿದರು. ಬಳಿಕ ಈ ಬಗ್ಗೆ ವಿವರಣೆ ನೀಡಿದ ಅವರು, 1950ರ ಬಾಂಬೆ ಸಾರ್ವಜನಿಕ ನ್ಯಾಸ ಅಧಿನಿಯಮಕ್ಕೆ ತಿದ್ದುಪಡಿ ತಂದು ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಧರ್ಮಾದಾಯ ಆಯುಕ್ತರನ್ನಾಗಿ, ಜಿಲ್ಲಾಧಿಕಾರಿಯನ್ನು ಜಂಟಿ ಧರ್ಮಾದಾಯ ಆಯುಕ್ತರನ್ನಾಗಿ ಹಾಗೂ ಸಂಬಂಧಪಟ್ಟ ಉಪವಿಭಾಗದ ಉಪವಿಭಾಗಾಧಿಕಾರಿಯನ್ನು ಉಪ ಧರ್ಮಾದಾಯ ಆಯುಕ್ತರನ್ನಾಗಿ ಹಾಗೂ ಸಂಬಂಧಪಟ್ಟ ತಹಶೀಲ್ದಾರನ್ನು ಸಹಾಯಕ ಧರ್ಮಾದಾಯ ಆಯುಕ್ತರನ್ನಾಗಿ ಪದನಾಮಿಸಲು ತಿದ್ದುಪಡಿ ತರಲಾಗಿದೆ ಎಂದರು. 2025ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ವಾಹನಗಳ ನೋಂದಣಿ ಮಾಡುವ ಸಮಯದಲ್ಲಿ ಒಂದು ಬಾರಿಯ ಸೆಸ್ ಅನ್ನು ಹೆಚ್ಚಿನ ಮಿತಿಯಲ್ಲಿ ವಿಧಿಸುವುದನ್ನು ಮತ್ತು ಸಂಗ್ರಹಿಸುವುದನ್ನು ಬಿಟ್ಟುಬಿಡುವುದಕ್ಕಾಗಿ ತಿದ್ದುಪಡಿ ತರಲಾಗಿದೆ. 2025ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಿರ್ದೇಶಕರು, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಮತ್ತು ಮುಖ್ಯ ನಗರ ಯೋಜಕರನ್ನು ಸದಸ್ಯರನ್ನಾಗಿ ನೇಮಿಸಲು ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಗ್ರಿ ಕರ್ನಾಟಕ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಬಳಿಕ ಈ ಬಗ್ಗೆ ವಿವರಣೆ ನೀಡಿದ ಅವರು, 1940ರ ಔಷಧ ಮತ್ತು ಪ್ರಸಾಧನ ಸಾಮಗ್ರಿ ಕೇಂದ್ರ ಅಧಿನಿಯಮಕ್ಕೆ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ, ಕೇಂದ್ರ ಸರಕಾರದ ಪೂರ್ವಾನುಮೋದನೆಯೊಂದಿಗೆ ರಾಜ್ಯದಲ್ಲಿ ಕೇಂದ್ರ ಔಷಧಗಳ ಪ್ರಯೋಗಾಲಯ ಸ್ಥಾಪಿಸಿ, ಅದರ ನಿರ್ದೇಶಕರ ಪ್ರಕಾರ್ಯಗಳನ್ನು ಅನುಕ್ರಮವಾಗಿ ರಾಜ್ಯ ಸರಕಾರ ನಿರ್ಧಿಷ್ಟ ಪಡಿಸಬಹುದಾದ ಪ್ರಾಧಿಕಾರ ಮತ್ತು ಅಧಿಕಾರಿ ನಿರ್ವಹಿಸಲು ಅಧಿಕಾರ ನೀಡಲು ತಿದ್ದುಪಡಿ ತರಲಾಗಿದೆ. ಇದರೊಂದಿಗೆ ಕಲಬೆರೆಕೆ ಔಷಧಗಳ ಪ್ರಕರಣಗಳಲ್ಲಿ ಕಲಬೆರೆಕೆ ಔಷಧಗಳನ್ನು ಯಾರಿಂದ ವಶಪಡಿಸಿಕೊಳ್ಳಲಾಗಿದೆಯೋ, ಅವರೇ ಕಲಬೆರಕೆ ವಸ್ತುಗಳ ತಯಾರಕರು ಯಾರೆಂದು ಹಾಗೂ ತಾವು ತಯಾರಿಸಿಲ್ಲ ಎನ್ನುವ ರುಜುವಾತುಪಡಿಸುವ ಭಾರವನ್ನು ತಿದ್ದುಪಡಿ ವಿಧೇಯಕದಲ್ಲಿ ತರಲಾಗಿದೆ. ಪ್ರಕರಣ 30ರ ಅಡಿ ದಂಡನೆಗಳನ್ನು ಜೀವಾವಧಿ ಕಾರಾವಾಸಕ್ಕೆ ಹೆಚ್ಚಿಸಲು ಮತ್ತು ಕಲಬೆರಕೆ ಅಪರಾಧಗಳನ್ನು ಜಾಮೀನು ರಹಿತ ಪ್ರಕರಣಗಳೆಂದು ಪರಿಗಣಿಸಲು ಹಾಗೂ ಇತರ ನಿಯಮಗಳನ್ನು ರಚಿಸಲು ತಿದ್ದುಪಡಿಯನ್ನು ವಿಧೇಯಕದಲ್ಲಿ ತರಲಾಗಿದೆ ಎಂದು ಸಚಿವರು ಹೇಳಿದರು. ಆನಂತರ, ಚರ್ಚೆಯ ಬಳಿಕ ವಿಧಾನಸಭೆಯಲ್ಲಿ 5 ತಿದ್ದುಪಡಿ ವಿಧೇಯಕಗಳಿಗೆ ಅನುಮೋದಿಸಿ ಅಂಗೀಕಾರ ನೀಡಲಾಯಿತು.
ಆರೋಗ್ಯದಲ್ಲಿ ಏರುಪೇರು; ಕಲಾಪಗಳಿಂದ ದೂರ ಉಳಿದ ಸಿಎಂ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು. ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಲು ಹಲವು ನಾಯಕರು ದೌಡಾಯಿಸಿದ್ದರು. ಕೇಂದ್ರ ಸರಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಮಾಡುತ್ತಿರುವ ದ್ವೇಷ ರಾಜಕಾರಣ ಖಂಡಿಸಿ, ಇಲ್ಲಿನ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಇಂದು ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಅದಾದ ಬಳಿಕ ಸದನದೊಳಗೆ ಹೋದರು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಶ್ರಾಂತಿ ಪಡೆಯಲು ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್, ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಜಿ.ಟಿ.ದೇವೇಗೌಡ ಸೇರಿ ಹಲವು ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಿದ್ದರಾಮಯ್ಯ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೆಯವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಸಿಎಂ ಆರೋಗ್ಯ ವಿಚಾರಿಸಿ ವಾಪಸ್ ಆದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ''ತಂದೆಯವರ ಆರೋಗ್ಯ ಚೆನ್ನಾಗಿದೆ, ಗ್ಯಾಸ್ಟ್ರೋಕೇಷನ್ ಇನ್ಫೆಕ್ಷನ್ ಆಗಿದೆ. ಡೈರಿಯಾ ಸಮಸ್ಯೆ ತರಹ ಇದೆ. ವೈದ್ಯರು ತಪಾಸಣೆ ನಡೆಸಿ ಮಾತ್ರೆಗಳನ್ನು ಕೊಟ್ಟಿದ್ದಾರೆ. ತಂದೆಯವರು ವಿಶ್ರಾಂತಿ ಪಡೆಯುತ್ತಿದ್ದು, ನಾಳೆ ಅಧಿವೇಶನಕ್ಕೆ ಬರುತ್ತಾರೆ'' ಎಂದು ಹೇಳಿದರು.
ಕೊಪ್ಪಳ| ಬೈಕ್ಗೆ ಬೊಲೆರೋ ಢಿಕ್ಕಿ: ಮೂವರು ಯುವಕರು ಮೃತ್ಯು
ಕೊಪ್ಪಳ: ಬೈಕ್ಗೆ ಬೊಲೆರೋ ವಾಹನ ಢಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾಹುಸೇನ್(18), ಆಸೀಫ್(16) ಮತ್ತು ವಾಜಿದ್(19) ಮೃತರು. ಈ ಮೂವರು ಶ್ರೀರಾಮನಗರದಿಂದ ಹೊಸಹಳ್ಳಿಗೆ ಬೈಕ್ನಲ್ಲಿ ಹೋಗುವಾಗ ಇಂದರಗಿ ಗ್ರಾಮದ ಸಮೀಪ ಬೊಲೆರೋ ವಾಹನ ಢಿಕ್ಕಿಯಾಗಿದೆ. ಅಪಘಾತದ ಬಳಿಕ ಬೊಲೆರೋ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಧಾರವಾಡ : ವಿದ್ಯಾರ್ಥಿನಿ ಆತ್ಮಹತ್ಯೆ
ಧಾರವಾಡ : ವಿದ್ಯಾರ್ಥಿನಿಯೋರ್ವಳು ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಧಾರವಾಡ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ ನಡೆದಿದೆ. ಬಳ್ಳಾರಿ ಮೂಲದ ಕಗ್ಗಲ್ ಗ್ರಾಮದ ಪಲ್ಲವಿ (24) ಆತ್ಮಹತ್ಯೆಗೈದ ವಿದ್ಯಾರ್ಥಿನಿ. ಆಕೆ ನೇಮಕಾತಿ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ ಆಗಮಿಸಿದ್ದಳು ಎಂದು ತಿಳಿದು ಬಂದಿದೆ. ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಲ್ಲವಿ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆ ನೇಮಕಾತಿ ವಿಳಂಬ ಕಾರಣಕ್ಕೆ ಪಲ್ಲವಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ʼಕೆಲವರು ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ವಿದ್ಯಾರ್ಥಿಗಳ ಮನೋಸ್ಥೆರ್ಯ ಕುಗ್ಗಿಸುವ ಕೆಲಸ ಯಾರೂ ಮಾಡಬಾರದು. ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕುಟುಂಬಸ್ಥರ ಸ್ಪಷ್ಟನೆ : ಪಲ್ಲವಿಗೆ ಆರೋಗ್ಯ ಸಮಸ್ಯೆ ಇತ್ತು. ಅಲ್ಲದೆ, ಆಕೆ ಪೊಲೀಸ್ ಇಲಾಖೆ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಆದರೆ, ಅಂತಿಮ ಸುತ್ತಿಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಮತ್ತೆ ಸ್ಪರ್ಧಾ ಪರೀಕ್ಷೆ ಎದುರಿಸಲು ಧಾರವಾಡಕ್ಕೆ ಬಂದಿದ್ದಳು. ಮಗಳು ಓದುತ್ತಾಳೆ ಅನ್ನುವ ನಂಬಿಕೆ ಇತ್ತು. ಆದರೆ, ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಪಲ್ಲವಿ ತಂದೆ ಉತ್ತೆಪ್ಪ ಹೇಳಿದ್ದಾರೆ.
ನನಗೆ ಹೊಸ ಜೀವನ ನೀಡಿದ CSKಗೆ ಧನ್ಯವಾದಗಳು: ಸರ್ಫರಾಝ್
ಹೊಸದಿಲ್ಲಿ, ಡಿ.17: ಅಬುಧಾಬಿಯಲ್ಲಿ ಮಂಗಳವಾರ ನಡೆದ 2026ರ ಐಪಿಎಲ್ ನ ಮಿನಿ ಹರಾಜಿನ ವೇಳೆ ಮೂಲ ಬೆಲೆ 75 ಲಕ್ಷ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ಭಾರತೀಯ ಬ್ಯಾಟರ್ ಸರ್ಫರಾಝ್ ಖಾನ್, ‘‘ನನಗೆ ಹೊಸ ಜೀವನ ನೀಡಿದ ಸಿಎಸ್ಕೆಗೆ ತುಂಬಾ ಧನ್ಯವಾದಗಳು’ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ಮಂಗಳವಾರ ರಾಜಸ್ಥಾನ ತಂಡದ ವಿರುದ್ಧ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 27ರ ವಯಸ್ಸಿನ ಸರ್ಫರಾಝ್ ಅವರು 22 ಎಸೆತಗಳಲ್ಲಿ 73 ರನ್ ಗಳಿಸಿದ ಬೆನ್ನಿಗೇ ಸಿಎಸ್ಕೆ ತಂಡಕ್ಕೆ ಆಯ್ಕೆಯಾದರು. ಆರಂಭಿಕ ಸುತ್ತಿನ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಸರ್ಫರಾಝ್ ಕೊನೆಗೂ ಸಿಎಸ್ಕೆ ತೆಕ್ಕೆಗೆ ಸೇರಿದರು. ಸಾಮಾಜಿಕ ಮಾಧ್ಯಮದ ಮೂಲಕ ಫ್ರಾಂಚೈಸಿಗೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿದರು. ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 64ರ ಸರಾಸರಿಯಲ್ಲಿ ಹಾಗೂ 182.85ರ ಸ್ಟ್ರೈಕ್ರೇಟ್ನಲ್ಲಿ ಆರು ಇನಿಂಗ್ಸ್ಗಳಲ್ಲಿ ಒಟ್ಟು 256 ರನ್ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಬ್ಯಾಟರ್ ಸರ್ಫರಾಝ್ ಕೊನೆಗೂ ಐಪಿಎಲ್ನಲ್ಲಿ ಮತ್ತೊಮ್ಮೆ ಆಡುವ ಅವಕಾಶ ಪಡೆದರು. ಹರಾಜಿನುದ್ದಕ್ಕೂ ಸಕ್ರಿಯವಾಗಿದ್ದ ಸಿಎಸ್ಕೆ, ಹೊಸ ಆಟಗಾರರಾದ ಕಾರ್ತಿಕ್ ಶರ್ಮಾ ಹಾಗೂ ಪ್ರಶಾಂತ್ ವೀರ್ ಅವರನ್ನು ತಲಾ 14.20 ಕೋ.ರೂ.ಗೆ ಖರೀದಿಸಿತು. ಮ್ಯಾಟ್ ಹೆನ್ರಿ ಹಾಗೂ ರಾಹುಲ್ ಚಹಾರ್ರನ್ನು ಸೇರಿಸಿಕೊಳ್ಳುವ ಮೂಲಕ ತಂಡವನ್ನು ಬಲಿಷ್ಠಗೊಳಿಸಿದೆ. ಹರಾಜಿಗಿಂತ ಮೊದಲು ಸಿಎಸ್ಕೆ ತಂಡವು ಸಂಜು ಸ್ಯಾಮ್ಸನ್ರನ್ನು 18 ಕೋ.ರೂ. ನೀಡಿ ಖರೀದಿಸಿತ್ತು. ದೀರ್ಘ ಸಮಯದಿಂದ ತಂಡದಲ್ಲಿದ್ದ ರವೀಂದ್ರ ಜಡೇಜ ಹಾಗೂ ಸ್ಯಾಮ್ ಕರನ್ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಸೇರಿದರು. ಐದು ಬಾರಿಯ ಚಾಂಪಿಯನ್ ಸಿಎಸ್ಕೆ, ಶ್ರೀಲಂಕಾದ ವೇಗದ ಬೌಲರ್ ಮಥೀಶ ಪಥಿರನ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಈ ನಿರ್ಧಾರದಿಂದ 13 ಕೋ.ರೂ. ಉಳಿಸಿಕೊಂಡಿತು. ಸರ್ಫರಾಝ್ ಅವರು 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಬಾರಿ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಸರ್ಫರಾಝ್ ಅವರು ಈ ಬಾರಿ ಐಪಿಎಲ್ ಗೆ ಪ್ರವೇಶಿಸಿದ್ದಾರೆ.
ಧರ್ಮಸ್ಥಳ ಕೇಸ್ನಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಮುಕ್ತಿ; ಪತ್ನಿಯಿಂದ ಬಾಂಡ್ ಸಲ್ಲಿಕೆ
ಧರ್ಮಸ್ಥಳ ಪ್ರಕರಣದ ಆರೋಪಿ 'ಬುರುಡೆ' ಪಾತ್ರಧಾರಿ ಚಿನ್ನಯ್ಯ, ಜಾಮೀನು ಸಿಕ್ಕ 23 ದಿನಗಳ ನಂತರ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ. ಪತ್ನಿ ಮಲ್ಲಿಕಾ ಅವರು ಒಂದು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರು ಜಾಮೀನುದಾರರ ಶ್ಯೂರಿಟಿ ಒದಗಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದೆ. ಸುಮಾರು 4 ತಿಂಗಳ ಜೈಲುವಾಸದ ಬಳಿಕ ಚಿನ್ನಯ್ಯ ಹೊರಬಂದಿದ್ದಾರೆ.
ಆನೆಧಾಮಕ್ಕೆ ಕೇಂದ್ರದ ಸಮ್ಮತಿ ಸಿಗದಿದ್ದರೆ ಪರ್ಯಾಯ ಕ್ರಮ : ಈಶ್ವರ್ ಖಂಡ್ರೆ
ಬೆಳಗಾವಿ : ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ರಾಜ್ಯ ಸರಕಾರ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆನೆಧಾಮಕ್ಕೆ ಕೇಂದ್ರ ಸರಕಾರ ಇನ್ನೂ ತನ್ನ ಸಮ್ಮತಿ ನೀಡಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ. ನಿಯಮ 73ರಡಿಯಲ್ಲಿ ಶಾಸಕ ಎಚ್.ಕೆ. ಸುರೇಶ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಮೃದು ಧಾಮ ಮಾಡಲು ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮತ್ತು ಕೇಂದ್ರದ ಅನುಮತಿ ಬೇಕು, ಒಂದೊಮ್ಮೆ ಕೇಂದ್ರ ಅನುಮತಿಸದಿದ್ದರೆ ಪರ್ಯಾಯ ಮಾರ್ಗದ ಚಿಂತನೆಯೂ ಸರಕಾರಕ್ಕಿದೆ ಎಂದರು. ಪ್ರತಿ ವರ್ಷ ರಾಜ್ಯದಲ್ಲಿ 45 ರಿಂದ 50 ಜನರು ಮಾನವ ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದು ನೋವಿನ ಸಂಗತಿ. ಈ ಪೈಕಿ ಆನೆ ದಾಳಿಯಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಅದಕ್ಕಾಗಿಯೇ ಆನೆ ಧಾಮ ಮಾಡಲು ಸಂಪುಟದ ಅನುಮತಿ ಪಡೆದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಆನೆ-ಮಾನವ ಸಂಘರ್ಷ ತಗ್ಗಿಸಲು ರಾಜ್ಯ ಸರಕಾರ 428 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಿದೆ.1775 ಕಿ.ಮೀ ಆನೆ ಕಂದಕ ನಿರ್ಮಿಸಿದ್ದೇವೆ. 1361 ಕಿ.ಮೀ. ಸೌರ ಬೇಲಿ ಹಾಕಿದ್ದೇವೆ. ಆದರೆ ಹಾಸನದಲ್ಲಿ ಮತ್ತು ಕೊಡಗಿನಲ್ಲಿ ಹಲವು ವರ್ಷದಿಂದ ತಲಾ 100ಕ್ಕೂ ಹೆಚ್ಚು ಆನೆಗಳು ಕಾಡಿನಿಂದ ಹೊರಗಿವೆ. ಅಲ್ಲಿ ತೋಟ ಮತ್ತು ಕಾಡು ಒಂದೇ ರೀತಿ ಇದೆ ಎಂದರು. ತಾವು ಸಚಿವರಾದ ತರುವಾಯ 8 ಬಾರಿ ಹಾಸನಕ್ಕೆ ಭೇಟಿ ನೀಡಿದ್ದು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ ಅವರು, ಆನೆಗಳ ಕಾರಿಡಾರ್ ವಿಭಜನೆ ಆಗಿರುವುದು ಇದಕ್ಕೆ ಕಾರಣವಾಗಿದೆ. ಆದಾಗ್ಯೂ ರಾಜ್ಯ ಸರಕಾರ ರೈತರ ಬೆಳೆ ಹಾನಿ ಆಗದಂತೆ ಕ್ರಮ ಕೈಗೊಳ್ಳುತ್ತಿದೆ. ವನ್ಯಜೀವಿಗಳಿಂದ ಆಗಿರುವ ಬೆಳೆ ಹಾನಿಯ ಸಂಪೂರ್ಣ ಪರಿಹಾರ ನೀಡಲಾಗಿದೆ. ಯಾವುದೇ ಬಾಕಿ ಇರುವುದಿಲ್ಲ ಎಂದು ತಿಳಿಸಿದರು. ಎಲ್ಲರೂ ಸೇರಿ ಮಾನವ- ವನ್ಯಜೀವಿ ಸಂಘರ್ಷಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬನ್ನಿ: ಮಾಜಿ ಸಚಿವ ಅಮರೇಗೌಡ ಪಾಟೀಲ್
ಲಿಂಗಸಗೂರು.ನ.17- ಕೇವಲ ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಬರಬೇಡಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬನ್ನಿ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಲಿಂಗಸುಗೂರು ಪಟ್ಟಣದ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಆಯೋಜಿಸಿದ 72ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮರೇಗೌಡ ಪಾಟೀಲ್ ಬಯ್ಯಾಪುರ, ನಾನು ನಾಗರಾಳ ಮಂಡಲ ಪಂಚಾಯತಿ ಪ್ರಧಾನರಾಗಿದ್ದಾಗ ನಮ್ಮ ಪಂಚಾಯತಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿತ್ತು. ನನ್ನ ಹಿರಿಯ ಸಹೋದರ ಅನ್ನಾದಾನಿಗೌಡ ಬಯ್ಯಾಪುರ ಬೆಂಬಲ ಹಾಗೂ ಆಶೀರ್ವಾದ ನನನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಜನತಾ ಪಕ್ಷದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ಲಿಂಗಸುಗೂರ ಕ್ಷೇತ್ರದಿಂದ ಮೂರು ಭಾರಿ ಶಾಸಕನಾಗಿದ್ದ ನಾನು ಶೈಕ್ಷಣಿಕ, ನೀರಾವರಿ ಮೂಲಸೌಕರ್ಯಗಳಿಗಾಗಿ ಶ್ರಮಿಸಿದೇನೆ. ಅಲ್ಲದೇ ಕುಷ್ಟಗಿ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿದ್ದು ಕಾರಣ ಕ್ಷೇತ್ರದ ಜನರು ನನ್ನ ಮೇಲೆಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದು ಹೇಳಿದರು. ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ನಗರಾ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭೂಪನಗೌಡ ಕರಡಕಲ್, ಡಿ.ಜಿ.ಗುರಿಕಾರ, ಡಾ.ನಾಗನಗೌಡ ಪಾಟೀಲ್ ಬಯ್ಯಾಪೂರ, ಡಾ.ದಿವಟರ್, ಬಸವರಾಜಗೌಡ ಗಣೇಕಲ್, ಗುಂಡಪ್ಪ ನಾಯಕ, ಹನುಮಂತಪ್ಪ ಕಂದಗಲ್, ಸಿದ್ರಾಮಪ್ಪ ಸಾಹುಕಾರ, ಪ್ರಮೋದ ಕುಲಕರ್ಣಿ, ಅನಿಷಾ ಪಾಷಾ, ಶಶಿಧರ ಪಾಟೀಲ್, ಡಾ.ಡಿ.ಹೆಚ್.ಕಡದಳ್ಳಿ, ವಕೀಲರ ಸಂಘದ ಅಧ್ಯಕ್ಷ ಭೂಪನ ಗೌಡ ಪಾಟೀಲ್, ಸೋಮಶೇಖರ ಐದನಾಳ, ಬಸವರಾಜ ಅಂಗಡಿ, ಜಗದೀಶಗೌಡ, ಚೆನ್ನರೆಡ್ಡಿ ಬಿರಾದರ ಸೇರಿ ಹಲವರು ಉಪಸ್ಥಿತರಿದ್ದರು.
ಕಾಸರಗೋಡು: ಹಾಡಹಗಲೇ ತಂಡವೊಂದು ಯುವಕನನ್ನು ಅಪಹರಿಸಿದ ಘಟನೆ ಕಾಸರಗೋಡು ನಗರದಲ್ಲಿ ನಡೆದಿದ್ದು, ತಂಡವನ್ನು ಪತ್ತೆ ಹಚ್ಚುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿ ಯಾಗಿದ್ದಾರೆ. ಹಾಸನದಿಂದ ತಂಡವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಕರಂದಕ್ಕಾಡ್ ನ ಹೋಟೆಲ್ ಪರಿಸರದಿಂದ ಆಂಧ್ರಪ್ರದೇಶ ನೋಂದಾವಣೆಯ ಕಾರಿನಲ್ಲಿ ತಂಡವೊಂದು ಮೇಲ್ಪರಂಬದ ಹನೀಫ್ ಎಂಬವರನ್ನು ಬುಧವಾರ ಮಧ್ಯಾಹ್ನ ಅಪಹರಿಸಿದ್ದು, ಇದನ್ನು ಗಮನಿಸಿದ ಹೊಟೇಲ್ ಕಾವಲುಗಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತ ರಾದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ತಂಡವನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣಕಾಸು ವಿಚಾರ ಅಪಹರಣಕ್ಕೆ ಕಾರಣ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದೆ.
ಸಾಮಾಜಿಕ ಜಾಲತಾಣ ಬಳಕೆ ಮುನ್ನ ಎಚ್ಚರಿಕೆ ಅಗತ್ಯ: ವೆಂಕಟೇಶ್ ಹೊಗೆಬಂಡಿ
ಲಿಂಗಸುಗೂರು: ಮೊಬೈಲ್, ಆನ್ ಲೈನ್ ಶಾಪಿಂಗ್ ಹಾಗೂ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದು ರಾಯಚೂರಿನ ಸೈಬರ್ ಕ್ರೈಂ ಉಪ ಅಧೀಕ್ಷಕ ವೆಂಕಟೇಶ್ ಹೊಗೆಬಂಡಿ ತಿಳಿಸಿದರು. ಲಿಂಗಸುಗೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಟೇಶ ಹೊಗೆಬಂಡಿ, ಸಾಮಾಜಿಕ ಜಾಲತಾಣ ನಮ್ಮ ದಿನನಿತ್ಯದ ಆಗ ಹೋಗುಗಳ ತಿಳುವಳಿಕೆಗೆ ಬಳಕೆ ಮಾಡುವಾಗ ನಮಗೆ ಅರಿವಿರದೇ ಮೋಸಕ್ಕೆ ಒಳಗಾಗುತ್ತೇವೆ. ಇದನ್ನು ಎಚ್ಚರಿಕೆಯಿಂದ ಬಳಕೆ ಮಾಡಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಮೋಹದ ಜಾಲದೊಳಗೆ ಸಿಲುಕಿ ವಂಚನೆಗೆ ಒಳಗಾಗದೇ, ಸೈಬರ್ ಕೃತ್ಯಗಳಿಗೆ ಸಿಲುಕದೇ ಎಚ್ಚರಿಕೆಯಿಂದ ಇರಬೇಕು. ಈ ದೃಷ್ಟಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ತಹಶೀಲ್ದಾರ್ ಸತ್ಯಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸೇರಿ ಹಲವರು ಉಪಸ್ಥಿತರಿದ್ದರು.
ಒಳ ಮೀಸಲಾತಿ ಜಾರಿಗಾಗಿ ಬೆಳಗಾವಿ ಚಲೋ: ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
ರಾಯಚೂರು: ಪರಿಶಿಷ್ಟ ಜಾತಿಗಳ ಸಂಪೂರ್ಣ ಒಳ ಮೀಸಲಾತಿ ಕಾನೂನಾತ್ಮಕವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಯಚೂರು ನಗರದಿಂದ ಬೆಳಗಾವಿಗೆ ತೆರಳುತ್ತಿದ್ದ ಮಾದಿಗ ದಂಡೋರ ಸಂಘಟನೆಯ ಕಾರ್ಯಕರ್ತರನ್ನು ಲಿಂಗಸುಗೂರು ತಾಲೂಕಿನ ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಘಟನೆಯ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಚಲೋ ಹೋರಾಟದ ವೇಳೆ, ಕಾರ್ಯಕರ್ತರು ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಾನೂನು ರೂಪದಲ್ಲಿ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು. ಚಳಿಗಾಲ ಅಧಿವೇಶನದಲ್ಲೇ ಸಂಪೂರ್ಣ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಹಾಗೂ ಮುಂದಿನ ರಾಜಕೀಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೂಕ್ತ ಮೀಸಲಾತಿ ಕಲ್ಪಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ ಎಂದು ಸಂಘದ ಮುಖಂಡರು ಸ್ಪಷ್ಟಪಡಿಸಿದರು. ಈ ಹೋರಾಟದಲ್ಲಿ ರಂಜಿತ್ ದಂಡೋರ, ಕಾಶಪ್ಪ ಹೆಗ್ಗಣ್ಗೆರ, ಗಂಗಣ್ಣ ಸಿದ್ದಾಪುರ, ದುಳ್ಳಯ್ಯ ಗುಂಜಹಳ್ಳಿ, ಜಕ್ರಪ್ಪ ಹಂಚಿನಾಳ, ಭೀಮೇಶ್ ತುಂಟಾಪುರ, ಯಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇವದುರ್ಗ| ಕೋಣಚಪ್ಪಳಿ ಗ್ರಾಮದಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು; ಕ್ರಮಕ್ಕೆ ಒತ್ತಾಯ
ದೇವದುರ್ಗ: ದೊಂಡಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಚಪ್ಪಳಿ ಗ್ರಾಮದಲ್ಲಿ ಚರಂಡಿ ಇಲ್ಲದೇ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವ ಕಾರಣ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆದ್ದರಿಂದ ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಂಗನಗೌಡ ಜಿಲ್ಲಾ ಪಂಚಾಯತಿ ಸಿಇಒಗೆ ಮನವಿ ಸಲ್ಲಿಸಿದರು. ದೇವದುರ್ಗ ತಾಲೂಕಿನ ದೊಂಡಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈರ್ಮಲ್ಯ ಸಮಿತಿ ಸರಕಾರದ ಆದೇಶದಂತೆ ಕಾರ್ಯ ನಿರ್ವಹಿಸುತಿಲ್ಲ. ಕೋಣಚಪ್ಪಳಿ ಗ್ರಾಮದಲ್ಲಿ ಚರಂಡಿ ನೀರಿನಿಂದ ಅನೇಕ ರೋಗಗಳು ಬರುತ್ತಿದೆ. ಮುಖ್ಯ ರಸ್ತೆಯಲ್ಲಿ ಇರುವ ಚರಂಡಿಯ ಹೂಳು ತೆಗೆಯುವ ಕೆಲಸ ಕೂಡಲೇ ಆರಂಭಿಸಬೇಕು. ಅಕ್ಕ ಪಕ್ಕದ ಹೊಲದ ಮಾಲಕರು ಹಾಗೂ ತಕರಾರು ಮಾಡುವವರು ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ನೈರ್ಮಲ್ಯ ಸಮಿತಿ ಸದಸ್ಯರು ಕಾಟಾಚಾರಕ್ಕೆ ಸಮಿತಿ ಮಾಡಿ ಜನ ಸಾಮಾನ್ಯರ ಜೊತೆ ಚೆಲ್ಲಾಟವಾಡುತಿದ್ದಾರೆ. ಕೂಡಲೇ ಸಂಬಂಧಪಟ್ಟ ಸಮಿತಿಯ ಸದಸ್ಯರನ್ನು ಅಮಾನತು ಮಾಡಬೇಕು ಎಂದು ಸಂಗನಗೌಡ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ ಸೂಚನೆ
ರಾಯಚೂರು: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿದಯಾ ಸಂಘದ ವತಿಯಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿತೀಶ್ ಕೆ, ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಬೇಕು. ಅಲ್ಲದೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶದಲ್ಲಿನ ಅಂಶಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ನಾಯಿ ಹಿಡಿಯುವ ತಂಡವು ಸಂಬಂಧಪಟ್ಟ ಸಾರ್ವಜನಿಕ ಸಂಸ್ಥೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ತಿಳಿಸಬೇಕು. ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಹಿಡಿದ ನಂತರ ಅವುಗಳಿಗೆ ಆಶ್ರಯ ನೀಡಲು ನಿಗದಿತ ಕಟ್ಟಡ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಅಲ್ಲದೆ ರೇಬೀಸ್ ಪೀಡಿತ ನಾಯಿಗಳನ್ನು ಪ್ರತ್ಯೇಕ ಕಟ್ಟಡದಲ್ಲಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯ ಉಪ ನಿರ್ದೇಶಕರಾದ ಪೋಮ್ಸಿಂಗ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಚಂದ್ರಶೇಖರ, ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ತಿಮ್ಮಪ್ಪ, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.
MGNREG ಹೆಸರು ಬದಲಾವಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ರಾಯಚೂರು: ಯುಪಿಎ ಸರಕಾರ ಜಾರಿಗೊಳಿಸಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಬದಲಾಯಿಸಿ ಗಾಂಧೀಜಿ ಅವರ ಹೆಸರು ತೆಗೆದು ಹಾಕಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾನಿರತರು ಮಹಾತ್ಮ ಗಾಂಧೀಜಿ ಅವರ ಪೋಸ್ಟರ್ಗಳನ್ನು ಹಿಡಿದು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೇಣ್ಣೆ ಮಾತನಾಡಿ, ಬಡವರ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆಯ ಹೆಸರನ್ನು ಬದಲಿಸಿ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಎಂದು ಮಾಡಿರುವುದು ಖಂಡನೀಯ. ಭಾರತ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಮಹಾತ್ಮಾ ಗಾಂಧಿ ಅವರು ಏನು ಎನ್ನುವುದು ಗೊತ್ತಿದೆ. ಬಿಜೆಪಿ ಸರಕಾರ ಆರ್ ಎಸ್ಎಸ್ ನಾಯಕರನ್ನು ಮೆಚ್ಚಿಸಲು ಮಹಾತ್ಮಾ ಗಾಂಧಿ ಅವರ ಹೆಸರು ತೆಗೆದುಹಾಕಿದೆ ಎಂದು ದೂರಿದರು. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಮುಂದುವರಿಸದಿದ್ದರೆ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನರೇಗಾ ಯೋಜನೆ ಬಡವರ ಪರವಾದ ಉದ್ಯೋಗ ಖಾತ್ರಿ ಯೋಜನೆ. ಅದರ ಹೆಸರನ್ನು ಬದಲಿಸುವ ಅಗತ್ಯವೇನು? ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕುವ ಮೂಲಕ ಬಿಜೆಪಿ ಸರಕಾರ ದೇಶದ ಮಹಾನ್ ನಾಯಕನಿಗೆ ಅಪಮಾನ ಮಾಡುತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಆರತಿ ಚಂದ್ರಶೇಖರ, ಸುರೇಖಾ, ಕವಿತಾ, ಪ್ರತಿಭಾ ರೆಡ್ಡಿ ವಂದಾನ, ರೇಹಾನ ಬೇಗಂ, ಹರಿವಿನ್ ಬೇಗಂ, ಪಿ ಮಾದೇವಿ, ಲಕ್ಷ್ಮಿ ನರಸಿಂಹಲು, ಬಿ.ಉಮಾ ಜ್ಯೋತಿ, ಅಮಿತಾ ಬೇಗಂ, ನಿರ್ಮಲಾ ಭಂಡಾರಿ, ಸುರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು | ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 190 ಟನ್ ಯೂರಿಯಾ ವಶ
ಬೆಂಗಳೂರು : ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 190 ಟನ್ ಯೂರಿಯಾವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ನಗರದ ಹೊರವಲಯದಲ್ಲಿರುವ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ದಾಸ್ತಾನು ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಕಾಳಸಂತೆಯಲ್ಲಿ 200 ರೂ. ಯೂರಿಯಾವನ್ನು 1,500 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.
ಮಂಗಳೂರು| ಜಿಎಸ್ಟಿ ಸುಧಾರಣೆಗಳು 2.0: ವಿಚಾರ ಸಂಕಿರಣ
ಮಂಗಳೂರು, ಡಿ.17: ‘ಜಿಎಸ್ಟಿ ಸುಧಾರಣೆಗಳು 2.0, ಜಿಎಸ್ಟಿಆರ್-9 ಫೈಲಿಂಗ್ ಮತ್ತು ಜಿಎಸ್ಟಿಯಲ್ಲಿನ ಇತರ ಇತ್ತೀಚಿನ ಬದಲಾವಣೆಗಳು’ ಕುರಿತು ವಿಚಾರಸಂಕಿರಣವನ್ನು ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಆಶ್ರಯದಲ್ಲಿ ನಗರದ ಬಂದರ್ನ ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕೆಸಿಸಿಐ ಪರೋಕ್ಷ ತೆರಿಗೆ ಸಮಿತಿಯ ಅಧ್ಯಕ್ಷರಾದ ಸಿಎ ಕೇಶವ ಎನ್. ಬಳ್ಳಕುರಾಯ ಅವರು ‘ಜಿಎಸ್ಟಿ 2.0 ಹೆಚ್ಚು ನಾಗರಿಕ-ಕೇಂದ್ರಿತ, ವ್ಯವಹಾರ-ಸ್ನೇಹಿ ಮತ್ತು ಸರಳೀಕೃತ ತೆರಿಗೆ ಆಡಳಿತದತ್ತ ಬದಲಾವಣೆಯನ್ನು ಸೂಚಿಸುತ್ತದೆ’ ಎಂದು ವಿವರಿಸಿದರು ಸಿಎ ಸಬಾನಾ ಅವರು 56ನೇ ಜಿಎಸ್ಟಿ ಕೌನ್ಸಿಲ್ ಸಭೆಯ ಪ್ರಮುಖ ಶಿಫಾರಸುಗಳನ್ನು ಮತ್ತು ಜಿಎಸ್ಟಿ ಸುಧಾರಣೆಗಳು , ಜಿಎಸ್ಟಿ ದರಗಳ ಪ್ರಸ್ತಾವಿತ ಸರಳೀಕರಣ ಮತ್ತು ಅನುಷ್ಠಾನದ ಸಮಯದ ಬಗ್ಗೆ ತಿಳಿಸಿದರು. ಸಿಎ ಶ್ರದ್ಧಾ ಸಾಂಘ್ವಿ ಅವರು ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿಯ ಕಾರ್ಯಾಚರಣೆಯನ್ನು ಅವರು ವಿವರಿಸಿದರು. ಕೆಸಿಸಿಐ ಖಜಾಂಚಿ ಸಿಎ ಅಬ್ದುರ್ರಹಿಮಾನ್ ಮುಸ್ಬಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಸ್ವಾಗತಿಸಿ ಲೆಕ್ಕಪತ್ರ ವೃತ್ತಿಪರರ ಜ್ಞಾನವನ್ನು ನವೀಕರಿಸುವಲ್ಲಿ ಇಂತಹ ವಿಚಾರ ಸಂಕಿರಣಗಳ ಅಗತ್ಯತೆಯ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಅಶ್ವಿನ್ ಪೈ ಮಾರೂರ್ ವಂದಿಸಿದರು.
BS 4 ಮತ್ತು ಮೇಲಿನ ವಾಹನಗಳು ಮಾತ್ರ ದಿಲ್ಲಿ ರಸ್ತೆ ಪ್ರವೇಶಿಸಬೇಕು: ಸುಪ್ರೀಂ ಕೋರ್ಟ್
ಹೊಸದಿಲ್ಲಿ : ಭಾರತ್ ಸ್ಟೇಜ್ (ಬಿಎಸ್) 4 ಇಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ದಿಲ್ಲಿಯ ರಸ್ತೆಗಳಲ್ಲಿ ಡಿಸೆಂಬರ್ 18ರಿಂದ ವಿನಾಯಿತಿ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಈ ಮೂಲಕ ಅದು, 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ನಿಷೇಧಿಸುವ ತನ್ನ ಹಿಂದಿನ ಆದೇಶಕ್ಕೆ ತಿದ್ದುಪಡಿ ಮಾಡಿದೆ. ಭಾರತದಲ್ಲಿ, 15 ವರ್ಷ ಹಳೆಯ ಪೆಟ್ರೋಲ್ ಚಾಲಿತ ವಾಹನಗಳು ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳು ಹೆಚ್ಚಾಗಿ ಬಿಎಸ್ 3 ಇಂಜಿನ್ಗಳನ್ನು ಹೊಂದಿವೆ. ಇದಕ್ಕೂ ಮೊದಲು, ದಿಲ್ಲಿ ಸರಕಾರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಆದೇಶಿಸಿತ್ತು. ಇದು ವಾಹನ ಮಾಲೀಕರು ಮತ್ತು ಕಾನೂನು ಅನುಷ್ಠಾನ ಸಂಸ್ಥೆಗಳಲ್ಲಿ ಗೊಂದಲ ಹುಟ್ಟಿಸಿತ್ತು. ವಾಯು ಗುಣಮಟ್ಟ ನಿರ್ವಹಣೆ ಆಯೋಗ (ಸಿಎಕ್ಯೂಎಮ್)ದ ಮನವಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಬುಧವಾರ ಈ ಸ್ಪಷ್ಟೀಕರಣ ನೀಡಿದೆ.
ಕಾರಾಗೃಹಗಳ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್, ಗಾಂಜಾ ವಶ: ಅಲೋಕ್ ಕುಮಾರ್
ಬೆಂಗಳೂರು : ರಾಜ್ಯದಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್ಗಳು ಮತ್ತು ಗಾಂಜಾ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ(ಕಾರಾಗೃಹ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜೈಲಿನಿಂದ ಆರು ಮೊಬೈಲ್ ಫೋನ್ಗಳು ಮತ್ತು ನಾಲ್ಕು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೈಸೂರು ಜೈಲಿನಿಂದ ಒಂಬತ್ತು ಮೊಬೈಲ್ ಫೋನ್ಗಳು ಮತ್ತು 11 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಬೆಳಗಾವಿ ಜೈಲಿನಲ್ಲಿ ನಾಲ್ಕು ಮೊಬೈಲ್ ಫೋನ್ಗಳು ಮತ್ತು ಹೊರಗಿನಿಂದ ಎಸೆದ 366 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಜೈಲಿನಿಂದ ನಾಲ್ಕು ಮೊಬೈಲ್ ಫೋನ್ಗಳು ಮತ್ತು ವಿಜಯಪುರ ಜೈಲಿನಿಂದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ. ಜೈಲುಗಳೊಳಗಿನ ಅಕ್ರಮ ಚಟುವಟಿಕೆಗಳನ್ನು ತಡೆಯಲು ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ತಿಳಿಸಿದರು.
ಬಲವಂತವಾಗಿ ವೈದ್ಯೆಯ ಹಿಜಾಬ್ ತೆಗೆದ ಬಿಹಾರ ಸಿಎಂ ನಿತೀಶ್ ಕುಮಾರ್ ಕೃತ್ಯ ಖಂಡನೀಯ: ಲತಾ ರವಿ ರಾಠೋಡ್
ಕಲಬುರಗಿ: ಸಾರ್ವಜನಿಕ ಕಾರ್ಯಕ್ರಮದ ವೇಳೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮಹಿಳಾ ವೈದ್ಯೆಯ ಹಿಜಾಬ್ ಅನ್ನು ಬಲವಂತವಾಗಿ ತೆಗೆಸಿರುವ ಘಟನೆ ಖಂಡನೀಯ ಎಂದು ಕಲಬುರಗಿ ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ್ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿದ ಅವರು, ಬಲವಂತದಿಂದ ಹಿಜಾಬ್ ತೆಗೆದಿರುವುದು ಖಂಡನಾರ್ಹ. ಈ ಘಟನೆ ಮಹಿಳೆಯರ ಗೌರವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ಮಾಡುವುದಾಗಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಈ ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಸಂವಿಧಾನಾತ್ಮಕ ಮೌಲ್ಯಗಳಾದ ಸಮಾನತೆ, ನ್ಯಾಯ ಮತ್ತು ಮಹಿಳೆಯರ ಗೌರವವನ್ನು ಕಾಪಾಡುವುದು ಸರ್ಕಾರದ ಮತ್ತು ಸಮಾಜದ ಜವಾಬ್ದಾರಿಯಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರಿನ ಪ್ರಮುಖ ಹೆದ್ದಾರಿಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಮಾಹಿತಿ ಫಲಕಗಳನ್ನು ಅಳವಡಿಸಿದೆ. ಇದು ತುರ್ತು ಸೇವೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಹೆದ್ದಾರಿ ವಿಸ್ತರಣೆ, ಟೋಲ್ ಪ್ಲಾಜಾ, ರಸ್ತೆ ಬದಿಯ ಸೌಲಭ್ಯಗಳು ಮತ್ತು ತುರ್ತು ಸಂಪರ್ಕಗಳ ಮಾಹಿತಿಯನ್ನು ಒದಗಿಸುತ್ತದೆ. ಆದರೆ, ಸಾರ್ವಜನಿಕರು ಈ ಫಲಕಗಳು ಉಪಯುಕ್ತ ಮಾಹಿತಿಯನ್ನು ಒದಗಿಸುವುದಿಲ್ಲ ಮತ್ತು ತೆರಿಗೆ ಹಣ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಜನಾಡಿ: ನಮ್ಮ ಜೀವನದಲ್ಲಿ ಉತ್ತಮ ಕಾರ್ಯ ಚಟುವಟಿಕೆಗಳು ಆಗಬೇಕು. ಶಿಕ್ಷಣ ಎಂಬುದು ಅಭಿವೃದ್ಧಿ ಗೆ ಇರುವ ದಾರಿಯಾಗಿದ್ದು, ಇದಕ್ಕೆ ಒತ್ತು ನೀಡಬೇಕು ಎಂದು ಉಡುಪಿ ಖಾಝಿ ಅಬ್ದುಲ್ ಹಮೀದ್ ಮಾಣಿ ಉಸ್ತಾದ್ ಅಭಿಪ್ರಾಯ ಪಟ್ಟರು. ಅವರು ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾ ಅಲ್ ಬುಖಾರಿ ಅವರ ಹೆಸರಿನಲ್ಲಿ ಮಸೀದಿಯ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ 11 ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ,ದುಆ ಆಶೀರ್ವಚನ ನೀಡಿ ಮಾತನಾಡಿದರು. ನಮ್ಮ ಜೀವನ ಯಾವಾಗ ಕೊನೆ ಎಂದು ಹೇಳಲು ಸಾಧ್ಯವಿಲ್ಲ. ಬದುಕಿರುವಷ್ಟು ದಿನ ನಾವು ಉತ್ತಮ ಹಾದಿಯಲ್ಲಿ ಸಾಗಬೇಕು.ಇಸ್ಲಾಮಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಸಯ್ಯಿದ್ ವಿ.ಪಿ.ಎ.ಅಬ್ದುಲ್ ರಹ್ಮಾನ್ ತಂಙಳ್ ದಾರಿಮಿ ಆಟೀರಿ , ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ, ಧಾರ್ಮಿಕ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮ ದಲ್ಲಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಸಹಾಯಕ ಮುದರ್ರಿಸ್ ಮೊಹಮ್ಮದ್ ಮಸೂದ್ ಸಅದಿ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಕಲ್ಕಟ್ಟ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ, ಸದ್ ರ್ ಮೊಹಮ್ಮದ್ ಸ ಈ ದ್ ಸಅದಿ, ಇರ್ಷಾದ್ ರಝ್ವಿ,ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮೈಸೂರು ಬಾವ, ಉಪಾಧ್ಯಕ್ಷರಾದ ಆಲಿಕುಂಞಿ ಪಾರೆ,ಮೊಯ್ದಿನ್ ಕುಟ್ಟಿ, ಮುನೀರ್ ಬಾವ, ಕೋಶಾಧಿಕಾರಿ ಉಮರ್ ಕುಂಞಿ ಮೋರ್ಲ, ಕಾರ್ಯದರ್ಶಿ ಗಳಾದ ಹಮೀದ್ ಆರಂಗಡಿ, ಬಾಪಕುಂಞಿ, ಕುಂಞಿ ಬಾವ ಕಟ್ಟೆಮಾರ್, ಇಬ್ರಾಹಿಂ ಅಹ್ಸನಿ,ಎ.ಎಂ.ಇಬ್ರಾಹೀಂ, ಟಿ.ಮೊಹಮ್ಮದ್, ಅಬ್ದುಲ್ ರಹ್ಮಾನ್ ರಝ್ವಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಸಲಾಮ್ ಮದನಿ ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ| VB–G RAM G ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: VB–G RAM G ಮಸೂದೆ ವಾಪಸ್ಸಿಗೆ ಆಗ್ರಹಿಸಿ ಭಾರತ ಕಮ್ಯೂನಿಷ್ಟ್ ಪಕ್ಷ (ಎಂ) ಜಿಲ್ಲಾ ಸಮಿತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬದಲಿಗೆ ಕೇಂದ್ರದ ಹೊಸ ಮಸೂದೆಯಿಂದ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ಹೊಸ ಮಸೂದೆಯನ್ನು ಕೇಂದ್ರದ ನಿಯಂತ್ರಣವನ್ನು ವಿಸ್ತರಿಸುವ ಮತ್ತು ರಾಜ್ಯಗಳಿಗೆ ಆರ್ಥಿಕ ಹೊರೆಯನ್ನು ವರ್ಗಾಯಿಸುವ ಪ್ರಯತ್ನ ನಡೆದಿದೆ. ಮಸೂದೆಯು ಅಧಿಕಾರವನ್ನು ಕೇಂದ್ರೀಕರಿಸುತ್ತದೆ. ಇದು ಪ್ರತಿ ವರ್ಷ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ವೇತನ ಉದ್ಯೋಗದ ಕಾನೂನು ಖಾತರಿಯನ್ನು ಒದಗಿಸುತ್ತದೆ. ಆದರೆ, ಈಗ ಯೋಜನೆಯ ವೆಚ್ಚದ ಶೇ.40 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಒದಗಿಸಬೇಕಾಗಿದೆ. ಹೀಗಾಗಿ ಇದು ಆರ್ಥಿಕ ಹೊರೆಯನ್ನು ರಾಜ್ಯಗಳಿಗೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಡಾ.ಮೀನಾಕ್ಷಿ ಬಾಳಿ, ಮೇಘರಾಜ ಕಠಾರೆ, ಸಲ್ಮಾನ್ ನಗರ, ಪ್ರಮೋದ್ ಪಾಂಚಾಳ, ಶಾಂತಾ ಘಂಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೊಲೀಸರ ಕಾರ್ಯಾಚರಣೆ : ಮಂಗಳೂರು ಕಾರಾಗೃಹದಲ್ಲಿ 4 ಮೊಬೈಲ್ ಫೋನ್ ಪತ್ತೆ
ಮಂಗಳೂರು, ಡಿ.17: ಮಂಗಳೂರಿನ ಜಿಲ್ಲಾ ಕಾರಾಗೃಹದೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಜೈಲಿನ ಕೊಠಡಿಯೊಳಗೆ ಒಟ್ಟು 4 ಮೊಬೈಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಾಗಹ ಅಧೀಕ್ಷಕ ಶರಣಬಸಪ್ಪ ಅವರು ಸೋಮವಾರ ಅನಿರೀಕ್ಷಿತ ತಪಾಸಣೆಗೆ ಹೋದಾಗ ವಿಚಾರಣಾೀನ ಕೈದಿಗಳು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅದೇ ದಿನ ಮತ್ತೆ ಅನಿರೀಕ್ಷಿತ ತಪಾಸಣೆ ಮಾಡಲಾಗಿತ್ತು. ಸಂಜೆ ಕೈದಿಗಳು ಎರಡು ವಿಭಾಗಗಳ ಕಬ್ಬಿಣದ ಗೇಟ್ಗಳನ್ನು ಅಲ್ಲಾಡಿಸುತ್ತಾ ಮುರಿಯುವ ರೀತಿಯಲ್ಲಿ ಜೋರಾಗಿ ಕೂಗಾಡುತ್ತಾ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಮಂಗಳೂರು ನಗರ ಪೊಲೀಸರು, ವಿಶೇಷ ಕಾರ್ಯಪಡೆ ಹಾಗೂ ಠಾಣೆಯ ಅಧಿಕಾರಿ, ಸಿಬ್ಬಂದಿ ಕಾರಾಗಹದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಇದೇ ಸಮಯದಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ 2 ಕೊಠಡಿಗಳಲ್ಲಿ ಗಲಾಟೆಗೆ ಸಂಬಂಸಿದಂತೆ ಪರಿಸ್ಥಿತಿ ನಿಯಂತ್ರಣಗೊಂಡ ಅನಂತರ ಸಿ.ಸಿ.ಟಿ.ವಿ ದಶ್ಯಾವಳಿಗಳನ್ನು ಪರಿಶೀಲಿಸಿದಾಗ ಗಲಾಟೆಯಲ್ಲಿ ‘ಎ’ ವಿಭಾಗದ ಮೊಯಿದ್ದಿನ್ ಫರಾದ್, ಸರ್ಫರಾಜ್, ಮೊಹಮ್ಮದ್ ಅಲ್ತಾಫ್, ಇಮ್ತಿಯಾಜ್, ಅಬ್ದುಲ್ ನೌಜೀದ್, ಮೊಹಮ್ಮದ್ ಸಾಯಿಲ್ ಅಕ್ರಂ ಮತ್ತು ಮಹಮ್ಮದ್ ಹನೀಫ್ ಹಾಗೂ ‘ಬಿ’ ವಿಭಾಗದ ಲತೇಶ್ ಜೋಗಿ , ಮಂಜುನಾಥ , ಮುರುಗನ್, ಸಚಿನ್ ತಲಪಾಡಿ, ತುಷಾರ್ ಅಮೀನ್, ಶಬರೀಶ, ಗುರುರಾಜ ಹಾಗೂ ಸುಮಂತ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಕಂಡು ಬಂದಿದ್ದು ,ಅವರ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ನೆಹರು ದಾಖಲೆಗಳು ನಾಪತ್ತೆಯಾಗಿಲ್ಲ, ಸೋನಿಯಾರಿಗೆ ಕಳುಹಿಸಿದ್ದ ಖಾಸಗಿ ಪತ್ರಗಳನ್ನು ಪತ್ತೆ ಹಚ್ಚಲಾಗುತ್ತಿಲ್ಲ: ಕೇಂದ್ರ
ಹೊಸದಿಲ್ಲಿ,ಡಿ.17: ನೆಹರು ಅವರಿಗೆ ಸಂಬಂಧಿಸಿದ ದಾಖಲೆಗಳಿದ್ದ 51 ಪೆಟ್ಟಿಗೆಗಳನ್ನು 2008ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ಕಳುಹಿಸಲಾಗಿತ್ತು ಮತ್ತು ಆಗಿನಿಂದ ಅವುಗಳನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಸಂಸ್ಕೃತಿ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ. ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ (ಪಿಎಂಎಂಎಲ್) ಸದಸ್ಯ ರಿಜ್ವಾನ್ ಕಾದ್ರಿ ಅವರು ಸೆಪ್ಟಂಬರ್ನ ಲ್ಲಿ ಸೋನಿಯಾರಿಗೆ ಪತ್ರ ಬರೆದು,ಅವರ ವಶದಲ್ಲಿರುವ ನೆಹರು ದಾಖಲೆಗಳನ್ನು ಮರಳಿಸುವಂತೆ ಕೋರಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ,ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ನಾಪತ್ತೆಯಾಗಿಲ್ಲ ಎಂದು ಕೆಲವು ದಿನಗಳ ಹಿಂದೆ ಸಚಿವಾಲಯವು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿತ್ತು. ಸಚಿವಾಲಯದ ಹೇಳಿಕೆಯ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಅವರು ಸರಕಾರವು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಬುಧವಾರದ ಸ್ಪಷ್ಟೀಕರಣ ಹೊರಬಿದ್ದಿದೆ. ನೆಹರು ಅವರ ಎಲ್ಲ ಖಾಸಗಿ ಕುಟುಂಬ ಪತ್ರಗಳು ಮತ್ತು ಟಿಪ್ಪಣಿಗಳನ್ನು ಮರಳಿ ಪಡೆಯಲು ಬಯಸಿದ್ದಾರೆ ಎಂದು ಅವರ ಪ್ರತಿನಿಧಿ ಎಂ.ವಿ.ರಾಜನ್ 29,ಎಪ್ರಿಲ್ 2008ರಂದು ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು. ಅದರಂತೆ ನೆಹರು ದಾಖಲೆಗಳಿದ್ದ 51 ಪೆಟ್ಟಿಗೆಗಳನ್ನು ಸೋನಿಯಾರಿಗೆ ಕಳುಹಿಸಲಾಗಿತ್ತು. ಹೀಗಾಗಿ ಅವು ಎಲ್ಲಿವೆ ಎನ್ನುವುದು ತಿಳಿದಿರುವುದರಿಂದ ಪಿಎಂಎಂಎಲ್ ನಿಂದ ನೆಹರುಗೆ ಸಂಬಂಧಿಸಿದ ಯಾವುದೇ ದಾಖಲೆಯು ನಾಪತ್ತೆಯಾಗಿಲ್ಲ ಎಂದು ಸಚಿವಾಲಯವು ಬುಧವಾರ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. ಪಿಎಂಎಂಎಲ್ನಿಂದ ಬರೆಯಲಾಗಿದ್ದ ಪತ್ರಗಳು ಸೇರಿದಂತೆ ಈ ಎಲ್ಲ ದಾಖಲೆಗಳನ್ನು ಮರಳಿಸುವಂತೆ ತಾನು ಸೋನಿಯಾರ ಕಚೇರಿಯೊಂದಿಗೆ ನಿರಂತರ ಪತ್ರ ವ್ಯವಹಾರವನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿರುವ ಸಚಿವಾಲಯವು,ಭಾರತದ ಮೊದಲ ಪ್ರಧಾನಿಗೆ ಸಂಬಂಧಿಸಿದ ದಾಖಲೆಗಳು ದೇಶದ ಪರಂಪರೆಯ ಭಾಗವಾಗಿದ್ದು, ಖಾಸಗಿ ಆಸ್ತಿಯಲ್ಲ. ಅವು ಪಿಎಂಎಂಎಲ್ ಬಳಿ ಇರುವುದು ಮತ್ತು ಸಂಶೋಧನೆಗಾಗಿ ನಾಗರಿಕರು ಮತ್ತು ವಿದ್ವಾಂಸರು ಅವುಗಳಿಗೆ ಪ್ರವೇಶ ಹೊಂದಿರುವುದು ಅಗತ್ಯವಾಗಿದೆ ಎಂದೂ ಹೇಳಿದೆ.
ಹೂಡಿಕೆದಾರರಿಗೆ ಶುಭಸುದ್ದಿ: ಅಗ್ಗವಾಗಲಿದೆ ಮ್ಯೂಚುವಲ್ ಫಂಡ್ ಹೂಡಿಕೆ, ಹಲವು ಸುಧಾರಣಾ ಕ್ರಮ ಪ್ರಕಟಿಸಿದ 'ಸೆಬಿ'
ಸೆಬಿ ಹಲವು ಹೂಡಿಕೆದಾರ ಸ್ನೇಹಿ ಕ್ರಮಗಳನ್ನು ಪ್ರಕಟಿಸಿದೆ. ಐಪಿಒ ಮತ್ತು ಮ್ಯೂಚುವಲ್ ಫಂಡ್ ನಿಯಮಗಳನ್ನು ಸರಳಗೊಳಿಸಿದೆ. ಒಟ್ಟು ವೆಚ್ಚ ಅನುಪಾತ (ಟಿಇಆರ್) ಲೆಕ್ಕಾಚಾರದಲ್ಲಿ ಬದಲಾವಣೆ ಮಾಡಲಾಗಿದ್ದು ಕಮಿಷನ್ ಮತ್ತು ಶುಲ್ಕಗಳ ಕಡಿತ, ಹಾಗೂ ಷೇರು ವರ್ಗಾವಣೆ ಸರಳೀಕರಣವು ಹೂಡಿಕೆದಾರರಿಗೆ ಅನುಕೂಲವಾಗಲಿದೆ.
ಮಂಗಳೂರು: ಕಾರು ಚಾಲಕನಿಗೆ ದಂಡ ವಿಧಿಸಿದ ನ್ಯಾಯಾಲಯ
ಮಂಗಳೂರು, ಡಿ.17: ಪಾದಚಾರಿಗಳಿಗೆ ಕಾರು ಹೊಡೆದ ಕಾರ್ನ ಚಾಲಕನಿಗೆ ನ್ಯಾಯಾಲಯ ದಂಡ ವಿಧಿಸಿದೆ. ಆರೋಪಿ ಚಾಲಕ ಎಂ.ಶ್ರೀಕಷ್ಣ 2023ರ ಡಿ.24ರಂದು ಪಡೀಲ್ ಕಡೆಯಿಂದ ಬಿಕರ್ಣಕಟ್ಟೆ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿ ಇಬ್ಬರು ಪಾದಚಾರಿಗಳಿಗೆ ಢಿಕ್ಕಿ ಹೊಡೆಯಲು ಕಾರಣರಾಗಿರುವುದಾಗಿ ಆರೋಪಿಸಲಾಗಿತ್ತು. ಆರೋಪಿ ಚಾಲಕ ಎಂ.ಶ್ರೀಕಷ್ಣ ಸ್ಕೂಟರೊಂದನ್ನು ಎಡಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ಎಡಬದಿಗೆ ಹೋಗುವ ಭರದಲ್ಲಿ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಹೋದ ಪರಿಣಾಮ ಇಬ್ಬರು ಪಾದಚಾರಿಗಳಿಗೆ ಢಿಕ್ಕಿಯಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಸಂದರ್ಭದಲ್ಲಿ ಕಾರು ಚಾಲಕನ ಚಾಲನಾ ಅನುಜ್ಞಾಪತ್ರದ ಅವಧಿ ಮುಕ್ತಾಯಗೊಂಡಿತ್ತು. ಅಪಘಾತ ಪಡಿಸಿದ ಕಾರಿನ ವಾಯುಮಾಲಿನ್ಯ ಪ್ರಮಾಣ ಪತ್ರದ ಅವಯು ಊರ್ಜಿತದಲ್ಲಿ ಇರಲಿಲ್ಲ. ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್ ಸಿ 8ನೇ ನ್ಯಾಯಾಲಯದ ನ್ಯಾಯಾೀಶರಾದ ಫವಾಜ್ ಪಿ.ಎ ಅವರು ಡಿ.15ರಂದು ಆರೋಪಿಗೆ 8,500 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಸಂಚಾರ ಪೂರ್ವ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಉಪನಿರೀಕ್ಷಕ ಈಶ್ವರ ಸ್ವಾಮಿ ಅವರು ಭಾಗಶ: ತನಿಖೆ ನಡೆಸಿ ಪೊಲೀಸ್ ಉಪನಿರೀಕ್ಷಕ ವೈ.ಎನ್.ಚಂದ್ರಮ್ಮ ಪೂರ್ಣ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ಅವರು ಸಾಕ್ಷಿ ವಿಚಾರಣೆ ನಡೆಸಿದ್ದು, ಸಹಾಯಕ ಸರಕಾರಿ ಅಭಿಯೋಜಕ ಅರೋನ್ ಡಿ ಸೋಜ ವಿಟ್ಲ ಅವರು ವಾದ ಮಂಡಿಸಿದ್ದರು.
ಮುದ್ರಣ ತಂತ್ರಜ್ಞಾನಕ್ಕೆ ಜೀವ ಸಂಕುಲ ಇರುವವರೆಗೂ ಸಾವಿಲ್ಲ: ಡಾ.ವಸುಂಧರಾ ಭೂಪತಿ
ಬಳ್ಳಾರಿ: ಮುದ್ರಣಗೊಳ್ಳುವ ಪುಸ್ತಕಗಳಿಗೂ ಹಾಗೂ ಮುದ್ರಣ ತಂತ್ರಜ್ಞಾನಕ್ಕೂ ಜೀವ ಸಂಕುಲ ಇರುವವರೆಗೂ ಸಾವಿಲ್ಲ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಹೇಳಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ಪುಸ್ತಕ ಪ್ರಕಾಶನ ಕಮ್ಮಟ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ.ವಸುಂಧರಾ ಭೂಪತಿ, ಎಐ, ಇ-ಪುಸ್ತಕಗಳು, ಪ್ರಿಂಟ್ ಆನ್ ಡಿಮಾಂಡ್(ಪಿಓಡಿ) ಮುಂತಾದ ತಂತ್ರಜ್ಞಾನದ ಯುಗದಲ್ಲಿ ಕೇವಲ ಗಂಟೆಯಲ್ಲಿಯೇ ಪುಸ್ತಕವನ್ನು ಹೊರತರಬಹುದು. ಆದರೆ ಮುದ್ರಣವಾಗುವ ಪುಸ್ತಕಗಳು, ದಿನನಿತ್ಯ ಬಳಸುವ (ಕರೆನ್ಸಿ) ನೋಟುಗಳು ಮುದ್ರಣದ ಅವಿಭಾಜ್ಯ ಅಂಗವಾಗಿದ್ದು, ಅವುಗಳು ಎಂದಿಗೂ ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಕ್ರಿ.ಶ. 400ರಲ್ಲಿ ಚೀನಾದಲ್ಲಿ ಉಗಮವಾದ ಹಿರಾಕಸೂತ್ರ ಎಂಬ ಮುದ್ರಣವು ಮುಂದೆ ಜಪಾನ್, ಜರ್ಮನಿ ದೇಶಗಳಲ್ಲಿ ಅಚ್ಚುಮೊಳೆಗಳ ಮೂಲಕ ಮುಂದುವರೆದು ಗುಟೆನ್ಬರ್ಗ್ ಪ್ರೆಸ್ ವಿಕಸನಕ್ಕೆ ನಾಂದಿ ಹಾಡಿದವು. ಕ್ರಿ.ಶ.1556ರಲ್ಲಿ ಭಾರತದಲ್ಲಿ ಪ್ರಥಮ ಮುದ್ರಣ ಯಂತ್ರವು ಗೋವಾದಲ್ಲಿ ಬಂದಿಳಿಯಿತು. 1578ರಲ್ಲಿ ಭಾರತದ ಪ್ರಥಮ ಭಾಷಾ ಪುಸ್ತಕವಾದ ತಮಿಳಿನ ಥಂಬಿರನ್ ಒನಕ್ಕಮ್ ಪ್ರಕಟವಾಯಿತು ಎಂದು ಹೇಳಿದರು. ವಿವಿಯ ಸಿಂಡಿಕೇಟ್ ಸದಸ್ಯರಾದ ಅಮರೇಶ್ ನುಗಡೋಣಿ ಮಾತನಾಡಿ, ಲೇಖಕ, ಪ್ರಕಾಶಕ, ಓದುಗ ಮತ್ತು ಪುಸ್ತಕಗಳು ಎಂಬ ನಾಲ್ಕು ದಿಸೆಯ ಅನನ್ಯವಾದ ಸಮಾಗಮ ನೆಲೆಗೊಂಡಿದೆ. 10ನೇ ಶತಮಾನದಲ್ಲಿ ಶಿಕ್ಷಿತರ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರಿಂದ ವಚನಕಾರರು, ಸಂತಕವಿಗಳು ತಮ್ಮ ಅನುಭವ, ಸಂವಾದ, ಚರ್ಚೆಗಳು ಎಂಬ ಮೌಖಿಕ ಸಂವಹನದ ಮೂಲಕ ಜನಪದ ಕಾವ್ಯಗಳನ್ನು ಎಲ್ಲೆಡೆ ಹರಡಿದರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ಕಲೆ, ಸಾಹಿತ್ಯದ ಆಸಕ್ತಿ ಎಲ್ಲರಲ್ಲಿಯೂ ಕ್ಷೀಣಿಸುತ್ತಿದೆ. ಓದುವ, ಬರೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ವಿವಿಧ ತಾಂತ್ರಿಕ ಕೋರ್ಸ್ಗಳನ್ನು ಶೀಘ್ರದಲ್ಲೆ ಆರಂಭಿಸುವುದಾಗಿ ಕುಲಪತಿಗಳು ಘೋಷಿಸಿದರು. ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ವಿವಿಯ ಸಿಂಡಿಕೇಟ್ ಸದಸ್ಯರಾದ ಬಿ ಪೀರ್ಬಾಷಾ, ಶಿವಕುಮಾರ್ ಕೆ ಮತ್ತು ಕರ್ನಾಟಕ ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನ.ರವಿಕುಮಾರ್ ವೇದಕೆಯಲ್ಲಿದ್ದರು. ಕಾರ್ಯಕ್ರಮದ ಸಂಯೋಜಕರಾದ ವಿವಿಯ ಪ್ರಸಾರಾಂಗದ ಪ್ರಭಾರ ನಿರ್ದೇಶಕರಾದ ಪ್ರೊ.ತಿಪ್ಪೇರುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಪ್ರೊ ಅರುಣ್ಕುಮಾರ್ ಲಗಶೆಟ್ಟಿ ಸ್ವಾಗತಿಸಿದರು. ಡಾ ಶಶಿಧರ್ ಕೆಲ್ಲೂರ್ ನಿರೂಪಿಸಿದರು.
ಉಪಗ್ರಹ ಆಧಾರಿತ ಮುಕ್ತ ಸಂಚಾರ ಟೋಲ್ ವ್ಯವಸ್ಥೆ 2026ರಲ್ಲಿ ಪೂರ್ಣ: ರಾಜ್ಯಸಭೆಗೆ ನಿತಿನ್ ಗಡ್ಕರಿ ಮಾಹಿತಿ
ಹೊಸದಿಲ್ಲಿ, ಡಿ. 17: ವಾಹನಗಳ ಮುಕ್ತ ಸಂಚಾರ ಟೋಲ್ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ-ಚಾಲಿತ ಹೆದ್ದಾರಿ ನಿರ್ವಹಣೆ ಜಾರಿಯನ್ನು ದೇಶಾದ್ಯಂತ 2026ರ ಕೊನೆಯ ವೇಳೆಗೆ ಪೂರ್ಣಗೊಳಿಸಲಾಗುವುದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಗೆ ತಿಳಿಸಿದರು. ಈ ವ್ಯವಸ್ಥೆಯ ಜಾರಿ ಬಳಿಕ, ಪ್ರಯಾಣಿಕರು ಟೋಲ್ ಕೇಂದ್ರಗಳಲ್ಲಿ ಕಾಯುವ ಸಮಯದಲ್ಲಿ ಗಣನೀಯ ಕಡಿತವಾಗುತ್ತದೆ ಎಂದು ಅವರು ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ, ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ, ನೂತನ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ ಆಧಾರಿತವಾಗಿದೆ ಎಂದು ಹೇಳಿದರು. ಇನ್ನು ಮುಂದೆ ಪ್ರಯಾಣಿಕರು ಟೋಲ್ ಕೇಂದ್ರಗಳಲ್ಲಿ ಕಾಯಬೇಕಾಗಿಲ್ಲ ಎಂದು ಹೇಳಿದ ಅವರು, ಇದರಿಂದ 1,500 ಕೋಟಿ ರೂಪಾಯಿ ಬೆಲೆಯ ಇಂಧನ ಉಳಿಯುತ್ತದೆ ಮತ್ತು ಸರಕಾರಕ್ಕೆ 6,000 ಕೋಟಿ ರೂ. ಆದಾಯ ಬರುತ್ತದೆ ಎಂದರು. ‘‘‘ಮಲ್ಟಿ-ಲೇನ್ ಫ್ರೀ ಫ್ಲೋ ಟೋಲ್’ ಅತ್ಯುತ್ತಮ ವ್ಯವಸ್ಥೆಯಾಗಿದೆ. ಮೊದಲು ನಾವು ಟೋಲ್ ಕೇಂದ್ರಗಳಲ್ಲಿ ಹಣ ಪಾವತಿಸಬೇಕಾಗುತ್ತಿತ್ತು. ಅದಕ್ಕೆ 3ರಿಂದ 10 ನಿಮಿಷ ಬೇಕಾಗುತ್ತಿತ್ತು. ನಂತರ ಬಂದ ಫಾಸ್ಟ್ ಟ್ಯಾಗ್ ನಿಂದಾಗಿ, ಈ ಸಮಯವು ಒಂದು ನಿಮಿಷಕ್ಕಿಂತಲೂ ಕಡಿಮೆಯಾಯಿತು. ನಮ್ಮ ಆದಾಯವು ಕನಿಷ್ಠ 5,000 ಕೋಟಿ ರೂಪಾಯಿಯಷ್ಟು ಹೆಚ್ಚಾಯಿತು. ಈಗ ಫಾಸ್ಟ್ಟ್ಯಾಗ್ ಸ್ಥಾನದಲ್ಲಿ ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ಬಂದ ಮೇಲೆ, ಈಗ ಕಾರುಗಳು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಟೋಲ್ ಕೇಂದ್ರಗಳನ್ನು ದಾಟಬಹುದಾಗಿದೆ ಮತ್ತು ಕೇಂದ್ರದಲ್ಲಿ ಯಾರನ್ನೂ ನಿಲ್ಲಿಸಲಾಗುವುದಿಲ್ಲ’’ ಎಂದು ಅವರು ರಾಜ್ಯಸಭೆಯಲ್ಲಿ ತಿಳಿಸಿದರು. ‘‘ಟೋಲ್ ಕೇಂದ್ರಗಳಲ್ಲಿ ಕಾಲ ನಷ್ಟವಾಗುವುದನ್ನು ತಪ್ಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿ ಕೃತಕ ಬುದ್ಧಿಮತ್ತೆ ಮತ್ತು ಫಾಸ್ಟ್ ಟ್ಯಾಗ್ ಜೊತೆಗೆ ಉಪಗ್ರಹ ಮೂಲಕ ವಾಹನಗಳ ಸಂಖ್ಯಾ ಫಲಕವನ್ನು ಗುರುತಿಸಲಾಗುತ್ತದೆ’’ ಎಂದರು. ‘‘2026ರ ಕೊನೆಯ ವೇಳೆಗೆ, ನಾವು ನೂತನ ವ್ಯವಸ್ಥೆಯನ್ನು 100 ಶೇಕಡ ಜಾರಿಗೊಳಿಸುತ್ತೇವೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ನಾವು 1,500 ಕೋಟಿ ರೂ. ಬೆಲೆಯ ಇಂಧನ ಉಳಿಸುತ್ತೇವೆ ಮತ್ತು 6,000 ಕೋಟಿ ರೂ. ಆದಾಯ ಗಳಿಸುತ್ತೇವೆ. ಜೊತೆಗೆ ಟೋಲ್ ಕಳ್ಳತನ ಕೊನೆಯಾಗುತ್ತದೆ. ಏನೂ ಸಮಸ್ಯೆ ಇರುವುದಿಲ್ಲ. ಜನರು ಟೋಲ್ ಕೇಂದ್ರಗಳಲ್ಲಿ ನಿಲ್ಲಬೇಕಾಗಿಲ್ಲ’’ ಎಂದು ಗಡ್ಕರಿ ನುಡಿದರು.
ಪಲ್ಸ್ ಪೋಲಿಯೋ ಬಗ್ಗೆ ಮಸೀದಿಗಳಲ್ಲಿ ಜಾಗೃತಿ ಮೂಡಿಸಲು ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿ.21ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವು ಜರುಗಲಿರುವುದು. ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ 0-5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು. ಈ ಕಾರ್ಯಕ್ರಮದ ಬಗ್ಗೆ ಮಸೀದಿಗಳಲ್ಲಿ, ಸಮುದಾಯದ ಮುಖಂಡರು, ಧಾರ್ಮಿಕ ಮುಖಂಡರುಗಳಿಗೆ ಅರಿವು ಮೂಡಿಸಿ ಲಸಿಕಾ ದಿನದಂದು ತಮ್ಮ ಸಮುದಾಯದ ಎಲ್ಲಾ 0-5 ವರ್ಷದ ಮಕ್ಕಳು ಲಸಿಕೆ ಪಡೆಯುವ ಸಲಹೆ ನೀಡುವಂತೆ ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ, ಹೊಸಪೇಟೆ ಹಾಸ್ಟೆಲ್ಗಳಿಗೆ ಜಿಪಂ ಸಿಇಒ ಧೀಡಿರ್ ಭೇಟಿ
ವಿಜಯನಗರ: ಹೊಸಪೇಟೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಹಗರಿಬೊಮ್ಮನಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬುಧವಾರ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಕ್ರಮ್ ಅಲಿ ಷಾ ಅವರು ಧೀಡಿರ್ ಭೇಟಿ ನೀಡಿ ಪರಿಶೀಲಿಸಿದರು. ಹೊಸಪೇಟೆಯ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಪರಿಶೀಲನೆ ವೇಳೆ ದಾಖಲಾತಿ ನಿರ್ವಹಣೆಯಲ್ಲಿ ವೈಫಲ್ಯ ಕಂಡು ಹಾಸ್ಟೆಲ್ ವಾರ್ಡನ್ ಭೀಮದಾಸ್ ಅವರಿಗೆ ಎಚ್ಚರಿಕೆ ನೀಡಿದರು. ಹಾಸ್ಟೆಲ್ನಲ್ಲಿ ಅಹಾರ ಸುರಕ್ಷತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ದಾಖಲಾತಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ ವಹಿಸದಂತೆ ಸೂಚಿಸಿದರು. ಈ ವೇಳೆ ಜಿಪಂ ಸಹಾಯಕ ಯೋಜನಾಧಿಕಾರಿ ಉಮೇಶ್, ವಸತಿ ಮೇಲ್ವಿಚಾರಕ ಭೀಮದಾಸ್, ಹಗರಿಬೊಮ್ಮನಹಳ್ಳಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ವಸತಿ ಮೇಲ್ವಿಚಾರಕಿ ಎ.ಗೀತಾ ಉಪಸ್ಥಿತರಿದ್ದರು.
Bengaluru | ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ನಿಷೇಧ!
ಬೆಂಗಳೂರು : ಪಾರಿವಾಳಗಳಿಂದ ಶ್ವಾಸಕೋಶದ ಕಾಯಿಲೆಗಳು ಹರಡುತ್ತಿರುವುದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಜಿಬಿಎ ಗುರುತಿಸಿರುವ ಸ್ಥಳದಲ್ಲಿ ಮಾತ್ರ ನಿಗದಿತ ಸಮಯದಲ್ಲಿ ಪಾರಿವಾಳಗಳಿಗೆ ಆಹಾರ ನೀಡಬೇಕು. ಇದನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) 270, 271 ಮತ್ತು 271ರಂತೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದೆ. ನಿಯಮ ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ನೀಡಿದವರಿಗೆ, ಸಾಂಕ್ರಾಮಿಕ ರೋಗ ಹರಡಿದ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗುತ್ತದೆ. ಅವರಿಗೆ ದಂಡ ಹಾಗೂ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಯಾವುದೇ ವ್ಯಕ್ತಿಯು ಸಾರ್ವಜನಿಕರಿಗೆ ತೊಂದರೆ ಅಥವಾ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಬಾರದು ಅಥವಾ ಆಹಾರವನ್ನು ನೀಡಲು ಪ್ರೇರೇಪಿಸಬಾರದು ಎಂದು ಹೇಳಿದೆ.
ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಇನಾಯತ್ ಅಲಿ
ಮಂಗಳೂರು, ಡಿ.17: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಕೈಕಂಬ-ಪೊಳಲಿ ದ್ವಾರದ ಬಳಿ ಇರುವ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯಲ್ಲಿ ಡಿ. 17ರಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಭೂ-ವಿವಾದ, ರಸ್ತೆ ವಿವಾದ, ಅತಿಕ್ರಮಣ, ಆರೋಗ್ಯ ಸಮಸ್ಯೆ, ನೀರು, ಚರಂಡಿ ಸಮಸ್ಯೆ ಮತ್ತಿತರ ಸಮಸ್ಯೆಗಳ ಬಗ್ಗೆ ದೂರು ನೀಡಿದ ಕೆಲವರು ಪಂಚಾಯತ್, ಸರಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಇದೇ ವೇಳೆ ಕೆಲವರು ತಮ್ಮ ಕಷ್ಟದ ಜೀವನಕ್ಕೆ ನೆರವಾಗು ವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಇನಾಯತ್ ಅಲಿ ಮಾತನಾಡಿ, ‘ನೀವು ನನ್ನ ಮೇಲಿಟ್ಟ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಸರಕಾರದ ಇಲಾಖೆ, ಸಚಿವರೊಂದಿಗೆ ಚರ್ಚಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದವರು, ಕೆಲವು ಅರ್ಜಿಗಳಿಗೆ ಸಂಬಂಧಿಸಿ ಅಧಿಕಾರಿಗಳಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾಂಗ್ರೆಸ್ ಪ್ರಮುಖರಾದ ಕೃಷ್ಣ ಅಮೀನ್, ಮಾಲತಿ ಗಂಜಿಮಠ, ಗಿರೀಶ್ ಆಳ್ವ, ಪ್ರಥ್ವೀರಾಜ್ ಆರ್. ಕೆ, ಸುನಿಲ್ ಜಿ, ಜಿ. ಮುಹಮ್ಮದ್ ಉಂಞ, ಪುರುಷೋತ್ತಮ ಮಲ್ಲಿ, ಹರೀಶ್ ಭಂಡಾರಿ, ದಯಾನಂದ ಶೆಟ್ಟಿ ಕುಪ್ಪೆಪದವು, ಟಿ. ಹನೀಫ್, ಅಬ್ದುಲ್ ಅಝೀಝ್ ಕಂದಾವರ, ಜಯಲಕ್ಷ್ಮೀ ಅಡ್ಡೂರು, ಶೋಭಾ ಗುರುಪುರ, ಯಶವಂತ ಶೆಟ್ಟಿ ಗುರುಪುರ, ಚಂದ್ರಶೇಖರ ಬಿ. ಪೂಜಾರಿ, ಜಯಂತಿ ಡಿ. ಅಮೀನ್ ತಿರುವೈಲು, ಬಾಷಾ ಮಾಸ್ಟರ್, ಕಲ್ಲಾಡಿ ಅಬೂಬಕ್ಕರ್ ಕುಪ್ಪೆಪದವು, ಹಸನ್ ಬಾವಾ, ತೌಶೀಫ್ ಅಡ್ಡೂರು, ರಝಾಕ್ ಕುಪ್ಪೆಪದವು, ಅಶ್ರಫ್ ಬಿತ್ತುಪಾದೆ ಮತ್ತಿತರರು ಇದ್ದರು.
ಡಿ.21ಕ್ಕೆ ಪರ್ಯಾಯ ರಾಜಕಾರಣಕ್ಕಾಗಿ ಸಿಪಿಎಂನಿಂದ ಜನದನಿ ರ್ಯಾಲಿ
ಉಡುಪಿ, ಡಿ.17: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಸಮಿತಿ ರಾಜ್ಯಾದ್ಯಂತ ಇರುವ ತನ್ನ ಜಿಲ್ಲಾ ಸಮಿತಿಗಳ ಮೂಲಕ ನ.1ರಿಂದ ಡಿ.15ರವರೆಗೆ 45 ದಿನಗಳ ಕಾಲ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು, ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳ ಜನವಿರೋಧಿ ನೀತಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿಯ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ತಿಳಿಸಿದರು. ಉಡುಪಿ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 45 ದಿನಗಳ ಮನೆ ಮನೆ ಪ್ರಚಾರ ಆಂದೋಲನದ ಸಮಾರೋಪವಾಗಿ ಇದೇ ಡಿ.21ರಂದು ಬೆಂಗಳೂರಿನಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಸಿಪಿಎಂ ಜನದನಿ ರ್ಯಾಲಿಯನ್ನು ಆಯೋಜಿಸಿದೆ ಎಂದವರು ತಿಳಿಸಿದರು. ಈ ಸಂದರ್ಭದಲ್ಲಿ ನಡೆಯುವ ಪ್ರತಿಭಟನಾ ರ್ಯಾಲಿಯ ಬಹಿರಂಗ ಅಧಿವೇಶನದಲ್ಲಿ ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯರಾದ ಯು.ವಾಸುಕಿ ಹಾಗೂ ರಾಜ್ಯದ ಹಿರಿಯ ಸಿಪಿಎಂ ನಾಯಕರು ಮಾತನಾಡಲಿದ್ದಾರೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು. ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ರ್ಯಾಲಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 30ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲೆಯಿಂದಲೂ ಸಾವಿರಾರು ಮಂದಿ ಪಾಲ್ಗೊಳ್ಳು ವರು. ಮಧ್ಯಮ ಹಾಗೂ ಬಡರೈತರು, ಬಗರಹುಕುಂ ಸಾಗುವಳಿದಾರರು, ಭೂಸ್ವಾಧೀನ ವಿರೋಧಿ ಹೋರಾಟ ನಿರತ ಸಂತ್ರಸ್ತ ರೈತರು, ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು, ಸರಕಾರಿ ವಲಯದ ಯೋಜನಾ ಕಾರ್ಮಿಕರು, ಗುತ್ತಿಗೆ ನೌಕರರು, ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು, ಕೃಷಿ ಕೂಲಿಕಾರರು, ಮಹಿಳೆಯರು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವರು ಎಂದರು. ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರಗಳ ಜನವಿರೋಧಿ ನೀತಿಗಳಿಂದ ಜನ ಸಾಮಾನ್ಯರ ಬದುಕಿನ ಮೇಲೆ ಕೆಟ್ಟ ಪರಿಣಾಮಗಳು ಬೀರುತಿದ್ದು, ಇದಕ್ಕೆ ಬದಲಿಯಾಗಿ ಪರ್ಯಾಯ ರಾಜಕಾರಣಕ್ಕೆ ಜನರು ಒಲವು ತೋರ ಬೇಕಾಗಿದೆ. ರ್ಯಾಲಿಯಲ್ಲಿ ಪರ್ಯಾಯ ರಾಜಕಾರಣದ ಅನಿವಾರ್ಯತೆಯನ್ನು ಜನತೆಗೆ ಮನವರಿಕೆ ಮಾಡಲಾ ಗುವುದು. ಮಾತ್ರವಲ್ಲ ರಾಜ್ಯದ ಜನ ಎದುರಿಸುತ್ತಿರುವ 20ಕ್ಕೂ ಅಧಿಕ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಲನ್ನು ಒತ್ತಾಯಿಸಲು ಸಾರ್ವಜನಿಕರ ಸಹಿಸಂಗ್ರಹ ನಡೆಯುತ್ತಿದೆ ಎಂದರು. ಕೃಷಿ ಬಿಕ್ಕಟ್ಟು, ಭೂಮಿ ಪ್ರಶ್ನೆ, ಕಾರ್ಮಿಕರ ಹಕ್ಕುಗಳು, ನಿರುದ್ಯೋಗ, ಭ್ರಷ್ಟಾಚಾರ, ಶಿಕ್ಷಣ, ಆರೋಗ್ಯ, ಹೆಚ್ಚುತ್ತಿರುವ ಅಸಮಾನತೆ, ಪಡಿತರ ವ್ಯವಸ್ಥೆ, ವಸತಿ-ನಿವೇಶನ, ದಲಿತ, ಮಹಿಳೆ, ಅಲ್ಪಸಂಖ್ಯಾತರು, ಕೋಮುವಾದ-ಜಾತೀವಾದ, ವಿವಿಧ ಸೇವೆಗಳ ಖಾಸಗೀಕರಣದ ಕುರಿತಂತೆ ಹಕ್ಕೊತ್ತಾಯವನ್ನು ಮಂಡಿಸಲಾಗುವುದು ಎಂದು ಸುರೇಶ್ ಕಲ್ಲಾಗರ ಹೇಳಿದರು. ಹಕ್ಕೊತ್ತಾಯದ ಕೈಪಿಡಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ನಾಯಕರಾದ ಶಶಿಧರ ಗೊಲ್ಲ, ಚಂದ್ರಶೇಖರ ವಿ., ಕವಿರಾಜ್ ಕಾಂಚನ್, ಮೋಹನ್ ಉಪಸ್ಥಿತರಿದ್ದರು.
ಬೆಳಗಾವಿ : ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಮತ್ತು ಘಟಕ ವೆಚ್ಚ ಹೆಚ್ಚಿಸುವ ಪ್ರಸ್ತಾವವು ಪರಿಶೀಲನೆಯಲ್ಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬುಧವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಿ.ಟಿ.ಶ್ರೀನಿವಾಸ್ ಪ್ರಶ್ನೆಗೆ ವಸತಿ ಸಚಿವ ಝಮೀರ್ ಅಹ್ಮದ್ ಪರವಾಗಿ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 2024-2025ನೇ ಸಾಲಿನಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆ(ಗ್ರಾ)ಯಡಿ ಹಾಗೂ ರಾಜ್ಯ ಸರಕಾರದ ವಸತಿ ಯೋಜನೆಗಳಡಿ ಮರು ಹಂಚಿಕೆ ಮಾಡಲಾದ 36,150 ಮನೆಗಳನ್ನು ಒಳಗೊಂಡಂತೆ ಒಟ್ಟಾರೆ 7,38,881 ಮನೆಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದ್ದು, 3,27,747 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು. ಅಲೆಮಾರಿ ಜನಾಂಗದವರಿಗೆ 2024-25ನೇ ಸಾಲಿನಲ್ಲಿ ಪ್ರತ್ಯೇಕವಾಗಿ ಗುರಿ ಹಂಚಿಕೆಯಾಗಿಲ್ಲ. ಅಲೆಮಾರಿ ವರ್ಗದ ವಸತಿ ರಹಿತರನ್ನು ಒಳಗೊಂಡಂತೆ ಎಲ್ಲಾ ವಸತಿ ರಹಿತರಿಗೆ ವಸತಿ ಸೌಕರ್ಯ ಒದಗಿಸಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಸ್ಪೀಕರ್ ವಿರುದ್ಧ ಯಶಪಾಲ್ ಆರೋಪ: ಪ್ರಸಾದ್ರಾಜ್ ಖಂಡನೆ
ಉಡುಪಿ ಡಿ.17: ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿರುವ ಯು.ಟಿ. ಖಾದರ್ ವಿರುದ್ಧ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಮಾಡಿರುವ ಆರೋಪಗಳನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಶಾಸಕರಾಗಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನರಲ್ಲಿ ಕೋಮು ಭಾವನೆ ಕೆರಳಿಸುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಅಭಿವೃದ್ಧಿಯ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವ ಬದಲು ಸಣ್ಣ ವಿಷಯವನ್ನು ದೊಡ್ಡದು ಮಾಡಿ ವಿವಾದಗೊಳಿಸುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ ಎಂದರು. ಹರಿಕಥೆ ಎಂಬುದು ಶ್ರೇಷ್ಠ ಕಲೆ. ಕರಾವಳಿಯಲ್ಲಿ ಸಾಮಾನ್ಯವಾಗಿ ಅದನ್ನು ಅನಗತ್ಯವಾಗಿ ಸುದೀರ್ಘ ಮಾತನಾಡು ವವರಿಗೆ ಎಲ್ಲರೂ ಬಳಸುತ್ತಾರೆ. ಆದರೆ ತನ್ನ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಶಾಸಕರು ಧರ್ಮ ಹಾಗೂ ಸಂಪ್ರದಾಯವನ್ನು ಗುರಾಣಿಯಾಗಿ ಬಳಸುತ್ತಿರುವುದು ಖಂಡನೀಯ ಎಂದರು. ಸದನದ ಘನತೆ ಹಾಗೂ ಸಮಯವನ್ನು ಕಾಪಾಡುವುದು ಸಭಾಧ್ಯಕ್ಷರ ಕರ್ತವ್ಯ. ನೇರವಾಗಿ ವಿಷಯಕ್ಕೆ ಬನ್ನಿ ಎಂದು ಹೇಳುವುದು ಸಂಸದೀಯ ಶಿಸ್ತಿನ ಭಾಗವಾಗಿದೆಯೇ ಹೊರತು ಸಂಪ್ರದಾಯಕ್ಕೆ ಮಾಡಿದ ಅವಮಾನವಲ್ಲ ಎಂದು ಕಾಂಚನ್, ಖಾದರ್ ನಡೆಯನ್ನು ಸಮರ್ಥಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಕುಶಲ ಶೆಟ್ಟಿ, ಕೆ.ಟಿ.ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.
ಹಾವೇರಿಯ 9 ಗ್ರಾಮಗಳಲ್ಲಿ ನೀರಿನಲ್ಲಿ ಪ್ಲೋರೈಡ್ ಅಂಶ ಪತ್ತೆ : ಪ್ರಿಯಾಂಕ್ ಖರ್ಗೆ
ಬೆಳಗಾವಿ : ಹಾವೇರಿ ಜಿಲ್ಲಾ ವ್ಯಾಪ್ತಿಯ 9 ಗ್ರಾಮಗಳಲ್ಲಿ ಪ್ರಮಾಣಕ್ಕಿಂತ ಹೆಚ್ಚಾಗಿ ನೀರಿನಲ್ಲಿ ಪ್ಲೋರೈಡ್ ಅಂಶವು ಪತ್ತೆಯಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ಬಣಕಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾವೇರಿಯ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ 685 ಗ್ರಾಮಗಳ ಕುಡಿಯುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ ಹಾವೇರಿ ತಾಲೂಕಿನ ಬೆಳವಿಗಿ, ಮರಡೂರ, ತೆರೆದಹಳ್ಳಿ, ಗುಯಿಲಗುಂದಿ, ಮೇವುಂಡಿ, ಗೂಡೂರು, ಮರೋಳ, ದೇವಗಿರಿ ಹಾಗೂ ಶಿಗ್ಗಾಂವ್ ತಾಲ್ಲೂಕಿನ ಕಂಕಣವಾಡ ಗ್ರಾಮಗಳ ಮಾದರಿಯಲ್ಲಿ ಪ್ಲೋರೈಡ್ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಮೇಲ್ಮೈ ನೀರನ್ನು ಒದಗಿಸಲಾಗುತ್ತಿದೆ ಎಂದರು. ಜತೆಗೆ, ಈ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಕಂಕಣವಾಡಿ ಗ್ರಾಮದಲ್ಲಿ ಪರ್ಯಾಯ ಕೊಳವೆ ಬಾವಿ ನೀರು ಮತ್ತು ಪಕ್ಕದ ಹನುಮರಹಳ್ಳಿ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಎಲ್ಲ ಜಿಲ್ಲಾ ಪಂಚಾಯಿತಿಗಳಲ್ಲಿ ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ಸುಮಾರು 6.50 ಲಕ್ಷ ನೀರಿನ ಮಾದರಿಗಳನ್ನು ರಾಜ್ಯಾದ್ಯಂತ ಪರೀಕ್ಷಿಸಲಾಗಿದೆ. ಗ್ರಾಮಗಳಿಗೆ ನೀರು ಪರೀಕ್ಷಾ ಕಿಟ್ ಒದಗಿಸಲಾಗಿದೆ ಎಂದು ಅವರು ವಿವರಿಸಿದರು. ಈ ವೇಳೆ ಸದಸ್ಯರಾದ ಎಸ್.ಆರ್.ಶ್ರೀನಿವಾಸ್, ಡಾ.ಚಂದ್ರು ಲಮಾಣಿ ಸೇರಿದಂತೆ ಪ್ರಮುಖರು ಕೆಟ್ಟು ನಿಂತು ಹೋದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡುವಂತೆ ಸಚಿವರಲ್ಲಿ ಕೋರಿದರು. ಇದಕ್ಕೆ ಉತ್ತರಿಸಿದ ಸಚಿವರು, ಗ್ರಾಮ ಪಂಚಾಯಿತಿಗಳಿಂದ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಸರಕಾರದಿಂದ ನಿರ್ವಹಣೆಗೆ ಅನುದಾನ ನೀಡಲಾಗಿದೆ. ಆದರೆ ಶಾಸಕರು, ಸಂಸದರು ಇತರೆ ಅನುದಾನಗಳಡಿ ನಿರ್ಮಿಸಿರುವ ಘಟಕಗಳ ನಿರ್ವಹಣೆ ತೊಂದರೆ ಉಂಟಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವುದಾಗಿ ತಿಳಿಸಿದರು.
ಯಕ್ಷಗಾನ ಕಲಾರಂಗದಿಂದ ಕಲಾವಿದರಿಗೆ ಬಸ್ಪಾಸ್ ವಿತರಣೆ
ಉಡುಪಿ, ಡಿ.17: ಯಕ್ಷಗಾನ ಕಲಾರಂಗ ಪ್ರತೀವರ್ಷ ಪ್ರಕಟಿಸುತ್ತಿರುವ ವೃತ್ತಿನಿರತ ಯಕ್ಷಗಾನ ಕಲಾವಿದರಾದ 1300 ಯಕ್ಷನಿಧಿ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡ 2026ನೇ ಸಾಲಿನ ಡೈರಿಯನ್ನು ಪ್ರಕಟಿಸಿ ಬಿಡುಗಡೆಗೊಳಿಸಿದೆ. 2026ರ ಯಕ್ಷನಿಧಿ ಡೈರಿಯನ್ನು ಇಂದು ಬಾರಕೂರು ಸಮೀಪದ ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಳದಲ್ಲಿ ಅಮೃತೇಶ್ವರೀ ಮೇಳದ ಸಂಚಾಲಕರೂ, ಗೀತಾನಂದ ಫೌಂಡೇಶನ್ ಅಧ್ಯಕ್ಷರೂ ಆದ ಆನಂದ ಸಿ. ಕುಂದರ್ ಬಿಡುಗಡೆಗೊಳಿಸಿ, ಸಂಸ್ಥೆಯ ನಿರಂತರ ಕಾರ್ಯಚಟುವಟಿಕೆಗಳಿಗೆ ಶುಭಹಾರೈಸಿದರು. ವೃತ್ತಿ ಮೇಳದ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘ ನೀಡುತ್ತಾ ಬಂದ ಶೇ.50ರ ರಿಯಾಯತಿಯ ಬಸ್ಪಾಸನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಅವರು ವಿವಿಧ ಮೇಳಗಳ ಪ್ರತಿನಿಧಿಗಳಿಗೆ ವಿತರಿಸಿದರು. ಸದ್ಯ ಇರುವ 10 ತಿಂಗಳ ಅವಧಿಯ ಬಸ್ಪಾಸ್ ಸೌಲಭ್ಯವನ್ನು ಮುಂದೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಒಂದು ವರ್ಷಕ್ಕೆ ವಿಸ್ತರಿಸುವ ಯೋಚನೆ ಇದೆ ಎಂದು ಈ ಸಂದರ್ಭದಲ್ಲಿ ಸುರೇಶ್ ನಾಯಕರು ನುಡಿದರು. ಕರಾವಳಿಯ ವಿವಿಧ ಯಕ್ಷಗಾನ ಮೇಳಗಳ 500ಕ್ಕೂ ಅಧಿಕ ಕಲಾವಿದರು ಪ್ರತಿ ವರ್ಷ ಈ ಸೌಲಭ್ಯವನ್ನು ಪಡೆಯು ತ್ತಿದ್ದಾರೆ ಎಂದು ತಮ್ಮ ಪ್ರಾಸಾವ್ತಿಕ ಮಾತುಗಳಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಕೆ. ಸದಾಶಿವ ರಾವ್, ನಾರಾಯಣ ಎಂ. ಹೆಗಡೆ, ಭುವನಪ್ರಸಾದ್ ಹೆಗ್ಡೆ, ಸಂತೋಷ್ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿವಿಧ ಮೇಳಗಳ ಪ್ರತಿನಿಧಿಗಳಾದ ಹರಿಶ್ಚಂದ್ರ ಆಚಾರ್ಯ, ಕೃಷ್ಣ ಪಿ., ಜ್ಞಾನೇಂದ್ರ ತೀರ್ಥಹಳ್ಳಿ, ಆನಂದ ದೇವಾಡಿಗ, ರವಿ ನಾಯಕ, ಶ್ರೇಯಸ್, ಸುದೇಶ್, ರಾಜೇಶ್ ಬೈಕಾಡಿ, ಶ್ರೀನಿವಾಸ ಅಡಿಗ, ರವಿ ನಾಯ್ಕ್ ಬಾಡ, ಸುಕೇಶ್, ಸುರೇಶ್ ಆಚಾರ್ಯ, ವಂಡಾರು ರಮೇಶ್ ಮಡಿವಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಹ್ಮದಾಬಾದ್ ನ 10 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ
ಹೊಸದಿಲ್ಲಿ, ಡಿ.17: ಬಾಂಬ್ ಸ್ಫೋಟಿಸುವ ಬೆದರಿಕೆಯೊಡ್ಡಿ ಬುಧವಾರ ಅಹ್ಮದಾಬಾದ್ ನ 10 ಶಾಲೆಗಳಲ್ಲಿ ಇಮೇಲ್ ಸಂದೇಶ ಬಂದಿದೆ. ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲವಾದ್ದರಿಂದ ಇದೊಂದು ಹುಸಿಬೆದರಿಕೆಯೆಂದು ದೃಢಪಟ್ಟಿರುವುದಾಗಿ ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಇ ಮೇಲ್ ನಲ್ಲಿ ಬಾಂಬ್ ಬೆದರಿಕೆಯ ಸಂದೇಶವನ್ನು ಸ್ವೀಕರಿಸುವ ಮುನ್ನ ಬೆಳಗ್ಗಿ ಹೊತ್ತಿನ ತರಗತಿಗಳು ಮುಗಿದಿದ್ದರಿಂದ ಮಧ್ಯಾಹ್ನದ ಆನಂತರ ಶಾಲೆಗಳಿಗೆ ರಜೆಯನ್ನು ಘೋಷಿಸಲಾಯಿತು. ಈ ಶಾಲೆಗಳಿಗೆ ಬಂದಿರುವ ಬೆದರಿಕೆ ಸಂದೇಶವು ಒಂದೇ ರೀತಿಯದ್ದಾಗಿದೆ ಎಂದು ಅಹ್ಮದಾಬಾದ್ ನ ಉಪಪೊಲೀಸ್ ಆಯುಕ್ತ ಹರ್ಷದ್ ಪಟೇಲ್ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ವಿಧ್ವಂಸಕೃತ್ಯ ನಿಗ್ರಹ ದಳವು ಶಾಲೆಗಳಿಗೆ ಆಗಮಿಸಿ, ಕೂಲಂಕಷವಾಗಿ ಶೋಧ ಕಾರ್ಯಾಚರಣೆ ನಡೆಸಿದವು. ಆದರೆ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಲಿಲ್ಲ. ಇದೀಗ ಸೈಬರ್ ಅಪರಾಧ ತಡೆ ದಳವು ಈ ಇ-ಮೇಲ್ ಗಳ ಮೂಲವನ್ನು ಹಾಗೂ ಅದರ ಹಿಂದೆ ಯಾರಿದ್ದಾರೆಂಬ ಬಗ್ಗೆ ತನಿಖೆಯನ್ನು ನಡೆಸುತ್ತಿವೆ ಎಂದು ಪಟೇಲ್ ಹೇಳಿದ್ದಾರೆ. ಮಧ್ಯಾಹ್ನ 1.11ರ ವೇಳೆಗೆ ಈ ಶಾಲೆಗಳಲ್ಲಿ ಬಾಂಬ್ ಸ್ಫೋಟಗಳು ನಡೆಯಲಿವೆಯೆಂದು ಇಮೇಲ್ ನಲ್ಲಿ ಬೆದರಿಕೆಹಾಕಲಾಗಿತ್ತು.
21 ದಿನ ಗಂಡನ ಜತೆ ಸಂಸಾರ ಮಾಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ತರಾಟೆ!
ಕೇವಲ 21 ದಿನಗಳ ವೈವಾಹಿಕ ಜೀವನದ ಬಳಿಕ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಚ್ಛೇದನ ಕೋರಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯ ಮೇಲೆ ನಡೆಯುವ ಬಂಧನ ಎಂದು ಹೇಳಿದ ನ್ಯಾಯಾಲಯ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅರ್ಜಿಯನ್ನು ವಜಾ ಮಾಡಿದೆ. ಮಹಿಳೆಯ ಆರೋಪಗಳು ನಂಬಲರ್ಹವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
ಕೋಟ, ಡಿ.17: ವೈಯಕ್ತಿಕ ಕಾರಣದಿಂದ ಮನನೊಂದ ಕಾರ್ಕಡ ಗ್ರಾಮದ ಶೈಲಾ(37) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.15ರಂದು ರಾತ್ರಿ ವೇಳೆ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ನಿದ್ರಾಹೀನತೆಯಿಂದ ಬಳಲುತ್ತಿದ್ದ ಕುಂಜಿಬೆಟ್ಟು ನಿವಾಸಿ ಸೀತಾ ನಾಯಕ್ (67) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.16ರಂದು ಸಂಜೆ ವೇಳೆ ಮನೆ ಸಮೀಪದ ಖಾಲಿ ಜಾಗದಲ್ಲಿರುವ ಪಾಳು ಬಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ: ಅನಾರೋಗ್ಯದಿಂದ ಬಳಲುತ್ತಿದ್ದ ಶಿರಿಯಾರ ಗ್ರಾಮದ ಶಾರದಾ (83) ಎಂಬವರು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.16ರಂದು ಸಂಜೆ ವೇಳೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತ-ಇಥಿಯೋಪಿಯಾ ಬಾಂಧವ್ಯ `ಕಾರ್ಯತಂತ್ರ ಪಾಲುದಾರ' ಮಟ್ಟಕ್ಕೆ ಏರಿಕೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ಅಡಿಸ್ ಅಬಾಬ, ಡಿ.17: ಭಾರತ ಮತ್ತು ಇಥಿಯೋಪಿಯಾ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕದಲ್ಲಿ ನೈಸರ್ಗಿಕ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಥಿಯೋಪಿಯಾ ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಮಂಗಳವಾರ ಇಥಿಯೋಪಿಯಾಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಇಥಿಯೋಪಿಯಾ ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದರು. ಈ ವರ್ಷದ ಆರಂಭದಲ್ಲಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಪರಸ್ಪರ ಭದ್ರತೆಗೆ ನಮ್ಮ ಬದ್ಧತೆ ಬಲವಾಯಿತು. ಈ ವ್ಯವಸ್ಥೆಯು ನಿಕಟ ಮಿಲಿಟರಿ ಸಹಕಾರದ ಮೇಲೆ ಕೇಂದ್ರೀಕರಿಸುತ್ತದೆ. ಪ್ರಜಾಪ್ರಭುತ್ವವು ಜೀವನ ವಿಧಾನ ಎಂದು ಎರಡೂ ದೇಶಗಳು ಅರ್ಥ ಮಾಡಿಕೊಂಡಿವೆ. ರಾಷ್ಟ್ರದ ಚಕ್ರವು ಜನರೊಂದಿಗೆ ಸಾಮರಸ್ಯದಿಂದ ಚಲಿಸಿದಾಗ ಪ್ರಗತಿಯ ಚಕ್ರವು ಭರವಸೆ ಮತ್ತು ಉದ್ದೇಶದೊಂದಿಗೆ ಮುಂದುವರಿಯುತ್ತದೆ ಎಂದು ಮೋದಿ ಹೇಳಿದ್ದಾರೆ. ಜಾಗತಿಕ ದಕ್ಷಿಣದ ಬಗ್ಗೆ ಪ್ರಸ್ತಾಪಿಸಿದ ಮೋದಿ `ಜಾಗತಿಕ ದಕ್ಷಿಣ ಯಾರ ವಿರುದ್ಧವೂ ಅಲ್ಲ. ಎಲ್ಲರಿಗಾಗಿ ಎಂಬುದು ನಮ್ಮ ಪರಿಕಲ್ಪನೆಯಾಗಿದೆ. ನಾವು ಒಟ್ಟಿಗೆ ನಿಲ್ಲುತ್ತೇವೆ ಮತ್ತು ಹೆಚ್ಚು ನ್ಯಾಯಯುತ, ಸಮಾನ ಮತ್ತು ಶಾಂತಿಯುತ ಜಗತ್ತಿಗಾಗಿ ಕೆಲಸ ಮಾಡುತ್ತೇವೆ. ಉಭಯ ದೇಶಗಳು ತಮ್ಮ ಐತಿಹಾಸಿಕ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ಏರಿಸಿವೆ' ಎಂದರು. ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರೊಂದಿಗೆ ಮೋದಿ ನಡೆಸಿದ ವ್ಯಾಪಕ ಮಾತುಕತೆಯ ನಂತರ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದೇ ಸಂದರ್ಭ ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ` ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ'ವನ್ನು ಇಥಿಯೋಪಿಯಾ ಪ್ರಧಾನಿ ಅಲಿ ಪ್ರದಾನ ಮಾಡಿದರು.
ಕೋಟ ಪಡುಕೆರೆ ಯುವಕನ ಕೊಲೆ ಪ್ರಕರಣ| ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ: ಎಸ್ಪಿ ಹರಿರಾಂ ಶಂಕರ್
ಉಡುಪಿ, ಡಿ.17: ಕೋಟ ಸಮೀಪದ ಪಡುಕೆರೆಯ ಸಂತೋಷ್ ಮೊಗವೀರ(31) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಡಿ.14ರಂದು ರಾತ್ರಿ ವೇಳೆ ಪಡುಕೆರೆ ಸರ್ಕಲ್ ಬಳಿ ಕುಡಿದ ಮತ್ತಿನಲ್ಲಿ ದರ್ಶನ್, ಕೌಶಿಕ್, ಅಂಕಿತ್, ಸುಜನ್ ಎಂಬವರು ನಡೆಸಿದ ಹಲ್ಲೆಯಿಂದಾಗಿ ಸಂತೋಷ್ ಮೊಗವೀರ ಮೃತಪಟ್ಟಿದ್ದು, ಈ ಸಂಬಂಧ ಈ ನಾಲ್ವರು ಆರೋಪಿಗಳನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಎಲ್ಲ ಆರೋಪಿ ಗಳಿಗೆ ಡಿ.29ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ‘ಇವರೆಲ್ಲ ಇತ್ತೀಚೆಗೆ ಶಬರಿಮಲೆಗೆ ವೃತ್ತ ಆಚರಿಸಿಕೊಂಡು ಹೋಗಿದ್ದು, ಇವರ ಗುರುಸ್ವಾಮಿ ವಿಚಾರವಾಗಿ ಕೆಟ್ಟದಾಗಿ ಮಾತನಾಡಿದಕ್ಕೆ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಅದೇ ರೀತಿ ಇನ್ನೊಂದು ಹುಡುಗಿ ವಿಚಾರವಾಗಿ ಇವರ ಮಧ್ಯೆ ಗಲಾಟೆ ಆಗಿದೆ ಎಂಬುದು ಕೂಡ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿ ಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು. ಇದರಿಂದ ಕೊಲೆಗೆ ಸ್ಪಷ್ಟ ಕಾರಣ ತಿಳಿದುಬರಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಗಾಝಾಕ್ಕೆ ಸೇನಾ ತುಕಡಿ ಕಳುಹಿಸಲು ಟ್ರಂಪ್ ಒತ್ತಾಯ; ಇಕ್ಕಟ್ಟಿನಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್: ವರದಿ
ಇಸ್ಲಾಮಾಬಾದ್, ಡಿ.17: ಗಾಝಾದಲ್ಲಿ ನಿಯೋಜನೆಗೊಳ್ಳಲಿರುವ ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆಗೆ ಯೋಧರನ್ನು ಕಳುಹಿಸುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಮೇಲೆ ನಿರಂತರ ಒತ್ತಡ ಹಾಕುತ್ತಿರುವುದರಿಂದ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸಿಮ್ ಮುನೀರ್ ಇಕ್ಕಟ್ಟಿಗೆ ಸಿಲುಕಿರುವುದಾಗಿ ವರದಿಯಾಗಿದೆ. ಟ್ರಂಪ್ ಒತ್ತಾಯವನ್ನು ನಿರಾಕರಿಸಿದರೆ ಅಮೆರಿಕಾದ ಬೆಂಬಲವನ್ನು ಕಳೆದುಕೊಳ್ಳುವ ಅಪಾಯ, ಒಪ್ಪಿದರೆ ದೇಶದಲ್ಲಿ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ಎದುರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನೀರ್ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಗಾಝಾ ಯುದ್ಧ ಆರಂಭಗೊಂಡಂದಿನಿಂದಲೂ ಪಾಕಿಸ್ತಾನದಲ್ಲಿ ಫೆಲೆಸ್ತೀನೀಯರ ಪರ ಸಾರ್ವಜನಿಕ ಅಭಿಪ್ರಾಯ ಬಲವಾಗಿದೆ. ಮುಂದಿನ ವಾರದಲ್ಲಿ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅಮೆರಿಕಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ. 6 ತಿಂಗಳಲ್ಲಿ ಮೂರನೇ ಬಾರಿ ಟ್ರಂಪ್ ರೊಂದಿಗೆ ನಡೆಸಲಿರುವ ಸಭೆಯಲ್ಲಿ ಗಾಝಾ ಸ್ಥಿರೀಕರಣ ಪಡೆಗೆ ತುಕಡಿಯನ್ನು ಕಳುಹಿಸುವ ವಿಷಯ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ. ಟ್ರಂಪ್ ಅವರ 20 ಅಂಶಗಳ ಗಾಝಾ ಶಾಂತಿ ಯೋಜನೆಯು `ಗಾಝಾದಲ್ಲಿ ಪುರ್ನನಿರ್ಮಾಣ ಮತ್ತು ಆರ್ಥಿಕ ಚೇತರಿಕೆಯ ಮೇಲೆ ಕೇಂದ್ರೀಕರಿಸಿದ ಪರಿವರ್ತನೆಯ ಹಂತವನ್ನು ಮೇಲ್ವಿಚಾರಣೆ ಮಾಡಲು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಸೈನ್ಯವನ್ನು ನಿಯೋಜಿಸಲು' ಕರೆ ನೀಡುತ್ತದೆ. ಹಮಾಸ್ ಗುಂಪನ್ನು ನಿಶ್ಯಸ್ತ್ರಗೊಳಿಸುವುದನ್ನು ಒಳಗೊಂಡಿರುವ ಕಾರ್ಯಾಚರಣೆಗೆ ಪಡೆಗಳನ್ನು ಕಳುಹಿಸುವ ಬಗ್ಗೆ ಹಲವಾರು ದೇಶಗಳು ಎಚ್ಚರಿಕೆಯಿಂದ ಪರಿಶೀಲಿಸುತ್ತಿವೆ. ಇದು ತಮ್ಮನ್ನೂ ನೇರವಾಗಿ ಸಂಘರ್ಷಕ್ಕೆ ಎಳೆಯಬಹುದು ಎಂಬ ಭಯವೂ ಇದಕ್ಕೆ ಕಾರಣವಾಗಿದೆ. ಶಾಂತಿಪಾಲನೆ ಕರ್ತವ್ಯಗಳಿಗೆ ತುಕಡಿಗಳನ್ನು ಒದಗಿಸುವ ಬಗ್ಗೆ ಪಾಕಿಸ್ತಾನ ಪರಿಗಣಿಸಬಹುದು. ಆದರೆ ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವುದು ನಮ್ಮ ಕೆಲಸವಲ್ಲ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ ಕಳೆದ ತಿಂಗಳು ಹೇಳಿದ್ದರು. ಗಾಝಾ ಸ್ಥಿರೀಕರಣ ಪಡೆಗೆ ಯೋಧರನ್ನು ಕಳುಹಿಸದಿರುವುದು ಟ್ರಂಪ್ರನ್ನು ಕೆರಳಿಸಬಹುದು. ಅಮೆರಿಕಾ ಅಧ್ಯಕ್ಷರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ ಅಮೆರಿಕಾದ ಹೂಡಿಕೆ ಮತ್ತು ಭದ್ರತಾ ಸಹಾಯವನ್ನು ಪಡೆಯಬಹುದು ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ವೆನೆಝುವೆಲಾಗೆ ತೈಲ ಟ್ಯಾಂಕರ್ ಪ್ರವೇಶಕ್ಕೆ ದಿಗ್ಬಂಧನ: ಟ್ರಂಪ್ ಆದೇಶ
ವಾಷಿಂಗ್ಟನ್, ಡಿ.17: ನಿರ್ಬಂಧಕ್ಕೆ ಗುರಿಯಾಗಿರುವ ತೈಲ ಟ್ಯಾಂಕರ್ಗಳು ವೆನೆಝುವೆಲಾ ಪ್ರವೇಶಿಸುವುದನ್ನು ತಡೆಗಟ್ಟಲು ಆದೇಶಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧದ ಒತ್ತಡವನ್ನು ತೀವ್ರಗೊಳಿಸಿದ್ದಾರೆ. ವೆನೆಝುವೆಲಾ ಮಾದಕ ವಸ್ತು ಕಳ್ಳಸಾಗಣೆ ಹಾಗೂ ಇತರ ಅಪರಾಧಗಳಿಗೆ ಹಣ ಒದಗಿಸಲು ತೈಲದ ಆದಾಯವನ್ನು ಬಳಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. `ನಮ್ಮ ತೈಲ, ಭೂಮಿ ಹಾಗೂ ಇತರ ಆಸ್ತಿಗಳನ್ನು ಕದ್ದಿರುವುದು , ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಸೇರಿದಂತೆ ಹಲವಾರು ಕಾರಣಕ್ಕಾಗಿ ವೆನೆಝುವೆಲಾದ ಆಡಳಿತವನ್ನು `ವಿದೇಶಿ ಭಯೋತ್ಪಾದಕ ಸಂಘಟನೆ'ಯೆಂದು ಗೊತ್ತುಪಡಿಸಲಾಗಿದೆ. ನಿರ್ಬಂಧಕ್ಕೆ ಒಳಗಾಗಿರುವ ಎಲ್ಲಾ ತೈಲ ಟ್ಯಾಂಕರ್ ಗಳು ವೆನೆಝುವೆಲಾ ಪ್ರವೇಶ ಮತ್ತು ಅಲ್ಲಿಂದ ನಿರ್ಗಮಿಸುವುದಕ್ಕೆ ಸಂಪೂರ್ಣವಾಗಿ ತಡೆಯೊಡ್ಡಲು ನಾನು ಆದೇಶಿಸಿದ್ದೇನೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ವಾರ ವೆನೆಝುವೆಲಾ ಕರಾವಳಿಯ ಬಳಿ ಅಮೆರಿಕಾದ ಪಡೆಗಳು ತೈಲ ಟ್ಯಾಂಕರ್ ಅನ್ನು ವಶಕ್ಕೆ ಪಡೆದಿದ್ದವು. ಇದರ ಜೊತೆಗೆ, ಅಮೆರಿಕಾದ ಹನ್ನೆರಡಕ್ಕೂ ಅಧಿಕ ಸಮರ ನೌಕೆಗಳು, ವಿಮಾನವಾಹಕ ಯುದ್ಧನೌಕೆ, ಸಾವಿರಾರು ಯೋಧರನ್ನು ಕೆರಿಬಿಯನ್ ಸಮುದ್ರ ವಲಯಕ್ಕೆ ಸ್ಥಳಾಂತರಿಸಲಾಗಿದೆ. ಈ ಮಧ್ಯೆ, ಮಂಗಳವಾರ ಸಂಜೆ ರಾಜಧಾನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ `ಸಾಮ್ರಾಜ್ಯಶಾಹಿ ಮತ್ತು ಫ್ಯಾಸಿಸ್ಟ್ ಶಕ್ತಿಗಳು ವೆನೆಝುವೆಲಾದ ಇಂಧನ, ಗ್ಯಾಸ್, ಚಿನ್ನ ಮತ್ತಿತರ ಖನಿಜಗಳ ಮೇಲೆ ಕಣ್ಣುಹಾಕಿವೆ. ನಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳಲು ನಾವು ದೃಢನಿರ್ಧಾರ ಮಾಡಿದ್ದೇವೆ. ವೆನೆಝುವೆಲಾದಲ್ಲಿ ಶಾಂತಿ ಜಯಿಸುತ್ತದೆ' ಎಂದು ಹೇಳಿದ್ದಾರೆ.
ಋತುಚಕ್ರ ರಜೆ ನೀತಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕೋರಿ ಅರ್ಜಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿನ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕರ್ನಾಟಕ ಗೆಜೆಟ್ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಧಾರವಾಡದಲ್ಲಿ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಆಯುಕ್ತರು, ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತಲ್ಲದೆ, ಋತುಚಕ್ರ ರಜೆ ಸೌಲಭ್ಯ ನೀತಿ ಅಸ್ತಿತ್ವದಲ್ಲಿರುವ ಕುರಿತು ಮಹಿಳಾ ಉದ್ಯೋಗಿಗಳ ಗಮನಕ್ಕೆ ತರುವಂತೆ ಉದ್ಯೋಗ ಸಂಸ್ಥೆಗಳಿಗೆ ಸೂಚಿಸಿ ಹೊರಡಿಸಲಾಗುವ ಸಂವಹನವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು 2026ರ ಜನವರಿ 5ಕ್ಕೆ ಮುಂದೂಡಿತು. ಅರ್ಜಿದಾರರ ವಾದವೇನು? ವಿಚಾರಣೆ ವೇಳೆ ಅರ್ಜಿದಾರ ಮಹಿಳೆಯ ಪರ ವಾದ ಮಂಡಿಸಿದ ವಕೀಲೆ ದೀಕ್ಷಾ ಅಮೃತೇಶ್, ರಾಜ್ಯದಲ್ಲಿ ಮಹಿಳಾ ನೌಕರರಿಗೆ ಋತುಸ್ರಾವದ ಸಂದರ್ಭದಲ್ಲಿ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಹೊಸ ನೀತಿಯ ಅಡಿ ಅರ್ಜಿದಾರರು ಕೋರಿದ್ದ ರಜೆಯನ್ನು ಅವರಿಗೆ ನೀಡಲಾಗಿಲ್ಲ. ಹಲವಾರು ಕ್ಷೇತ್ರಗಳಲ್ಲಿನ ಉದ್ಯೋಗಿಗಳಿಗೆ ಈ ನೀತಿಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ, ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಸಂಸ್ಥೆಗಳಿಗೆ ಋತುಚಕ್ರದ ರಜೆಯ ನೀತಿ ಜಾರಿಗೊಳಿಸಲು ನಿರ್ದೇಶಿಸಬೇಕು ಹಾಗೂ ಆ ನೀತಿ ಅಸ್ತಿತ್ವದಲ್ಲಿರುವ ಬಗ್ಗೆ ಉದ್ಯೋಗಿಗಳಿಗೆ ತಿಳಿಸುವಂತಾಗಬೇಕು. ಇದರಿಂದ, ಮಹಿಳಾ ಉದ್ಯೋಗಿಗಳು ರಜೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದರು. ಸರಕಾರದ ಪರ ವಕೀಲರು ವಾದ ಮಂಡಿಸಿ, ಇದು ರಾಜ್ಯದ ನೀತಿಯಾಗಿದ್ದು, ಜಾರಿಗೊಳಿಸದಿರುವ ಪ್ರಶ್ನೆಯೇ ಇಲ್ಲ. ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಸರಕಾರದ ಆದೇಶಕ್ಕೆ ಒಳಪಡುವ ಎಲ್ಲ ಸಂಸ್ಥೆಗಳು, ಹೋಟೆಲ್ಗಳು ಇನ್ನಿತರ ಉದ್ಯೋಗ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ನೀಡಲು ಕ್ರಮ ಕೈಗೊಂಡು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದರು. ಪ್ರಕರಣವೇನು? ಬೆಳಗಾವಿಯ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು. ಇದರಿಂದ, ಕಾರ್ಮಿಕ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದ ಚಂದ್ರವ್ವ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಭಾರತ ವಿರೋಧಿ ಹೇಳಿಕೆ | ಬಾಂಗ್ಲಾದೇಶಿ ರಾಯಭಾರಿಯನ್ನು ಕರೆಸಿದ ಕೇಂದ್ರ, ಪ್ರತಿಭಟನೆ ಸಲ್ಲಿಕೆ
ಹೊಸದಿಲ್ಲಿ,ಡಿ.17: ಢಾಕಾದಲ್ಲಿಯ ಭಾರತೀಯ ರಾಯಭಾರ ಕಚೇರಿಗೆ ಇತ್ತೀಚಿನ ಬೆದರಿಕೆಗಳು ಮತ್ತು ಬಾಂಗ್ಲಾದೇಶಿ ರಾಜಕೀಯ ನಾಯಕರಿಂದ ಪ್ರಚೋದನಾಕಾರಿ ಭಾರತ ವಿರೋಧಿ ಹೇಳಿಕೆಗಳ ಕುರಿತು ಬುಧವಾರ ದಿಲ್ಲಿಯಲ್ಲಿಯ ಬಾಂಗ್ಲಾದೇಶ ರಾಯಭಾರಿ ಮುಹಮ್ಮದ್ ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಧ್ಯುಕ್ತ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿದೆ. ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿಯ (ಎನ್ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ,ತನ್ನ ದೇಶವು ಭಾರತ ವಿರೋಧಿ ಪಡೆಗಳಿಗೆ ಆಶ್ರಯ ನೀಡಲಿದೆ ಮತ್ತು ಭಾರತ ‘ಏಳು ಸೋದರಿಯರನ್ನು(ಈಶಾನ್ಯ ರಾಜ್ಯಗಳನ್ನು ಬಣ್ಣಿಸಲು ಬಳಸುವ ಪದ)’ ಅದರಿಂದ ಬೇರ್ಪಡಿಸುವುದಾಗಿ ಕಳೆದ ವಾರ ಬೆದರಿಕೆಯೊಡ್ಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಬಾಂಗ್ಲಾದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಹಮೀದುಲ್ಲಾ ಅವರಿಗೆ ಭಾರತದ ತೀವ್ರ ಕಳವಳಗಳನ್ನು ತಿಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. ಢಾಕಾದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಬೆದರಿಕೆಯೊಡ್ಡಿರುವ ಕೆಲವು ಉಗ್ರಗಾಮಿ ಶಕ್ತಿಗಳ ಚಟುವಟಿಕೆಗಳ ಬಗ್ಗೆಯೂ ಅವರಿಗೆ ತಿಳಿಸಲಾಗಿದೆ ಎಂದಿದೆ. ಬಾಂಗ್ಲಾದೇಶದಲ್ಲಿಯ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ಉಗ್ರಗಾಮಿ ಶಕ್ತಿಗಳ ಸುಳ್ಳು ನಿರೂಪಣೆಯನ್ನು ತಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದೂ ಭಾರತವು ತಿಳಿಸಿದೆ. ಭಾರತವು ಬಾಂಗ್ಲಾದೇಶದ ಜನರ ಜೊತೆ ನಿಕಟ ಮತ್ತು ಸ್ನೇಹಪರ ಸಂಬಂಧಗಳನ್ನು ಹೊಂದಿದೆ. ಈ ಸಂಬಂಧಗಳು ಬಾಂಗ್ಲಾದೇಶದ ವಿಮೋಚನಾ ಹೋರಾಟದಲ್ಲಿ ಬೇರೂರಿದ್ದು,ವಿವಿಧ ಅಭಿವೃದ್ಧಿ ಉಪಕ್ರಮಗಳಿಂದ ಬಲಗೊಂಡಿವೆ. ನಾವು ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಪರವಾಗಿದ್ದೇವೆ ಹಾಗೂ ಶಾಂತಿಯುತ ವಾತಾವರಣದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ನಿರಂತರವಾಗಿ ಕರೆ ನೀಡುತ್ತಿದ್ದೇವೆ. ಬಾಂಗ್ಲಾದೇಶದ ಮಧ್ಯಂತರ ಸರಕಾರವು ತನ್ನ ರಾಜತಾಂತ್ರಿಕ ಬಾಧ್ಯತೆಗಳಿಗೆ ಅನುಗುಣವಾಗಿ ಭಾರತದ ರಾಯಭಾರ ಕಚೇರಿ ಮತ್ತು ಇತರ ನೆಲೆಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಜೈವಿಕ ಉದ್ಯಾನದ (ನಿಸರ್ಗಧಾಮ) ಮಾಸ್ಟರ್ ಪ್ಲಾನ್ ಅನುಮೋದಿಸಿರುವ ಕುರಿತ ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಹೈಕೋರ್ಟ್ 2 ವಾರ ಕಾಲಾವಕಾಶ ನೀಡಿದೆ. ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ 'ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್' (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಕೇಂದ್ರ ಮೃಗಾಲಯ ಪ್ರಾಧಿಕಾರದ ಪರ ಹಾಜರಾದ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರು, ಪಿಲಿಕುಳ ಜೈವಿಕ ಉದ್ಯಾನದ ಮಾಸ್ಟರ್ ಪ್ಲಾನ್ ಅನುಮೋದನೆಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನಿರ್ದೇಶಿಸಿತ್ತು. ಈ ಕುರಿತ ದಾಖಲೆಯನ್ನು ನಿನ್ನೆ ಮೃಗಾಲಯ ಪ್ರಾಧಿಕಾರದಿಂದ ಕಳುಹಿಸಲಾಗಿದ್ದು, ಅದು ನಮ್ಮ ಕೈಸೇರಿದ ಬಳಿಕ ಪರಿಶೀಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅದಕ್ಕಾಗಿ ಕೊಂಚ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಪ್ರಮಾಣಪತ್ರ ಸಲ್ಲಿಸಲು ಮೃಗಾಲಯ ಪ್ರಾಧಿಕಾರಕ್ಕೆ 2 ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು. ಪ್ರಕರಣದ ಹಿನ್ನೆಲೆ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ಕಂಬಳ ಕ್ರೀಡೆ ಆಯೋಜನೆ ನಿರ್ಬಂಧಿಸಲು ಸರಕಾರಕ್ಕೆ ನಿರ್ದೇಶಿಸಬೇಕು. ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳ ಆಯೋಜನೆಗೆ ಅನುಮತಿಸಬಾರದು ಎಂದು ಕೋರಿ ಪೆಟಾ 2024ರಲ್ಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ನವೆಂಬರ್ 14ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ಸ್ಥಳಗಳಲ್ಲಿ ಕಂಬಳ ಆಯೋಜಿಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಲು ನಿರಾಕರಿಸಿತ್ತು. ಇದೇ ವೇಳೆ, ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಂಬಳ ಆಯೋಜಿಸಲು ಅನುಮತಿಸಬಾರದೆಂಬ ಅರ್ಜಿದಾರರ ಎರಡನೇ ಮನವಿ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಂಬಳ ಆಯೋಜಿಸುವುದರಿಂದ ಅಲ್ಲಿನ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಅಲ್ಲಿ ಕಂಬಳ ನಡೆಸುವುದು ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಪಿಲಿಕುಳ ನಿಸರ್ಗಧಾಮವು 80 ಹೆಕ್ಟೇರ್ ವ್ಯಾಪ್ತಿಯಲ್ಲಿದೆ ಎಂದು ಹೇಳಲಾಗಿದ್ದು, ಕಂಬಳ ಕಾರ್ಯಕ್ರಮ ನಡೆಯಬೇಕಿರುವ ಸ್ಥಳವು 80 ಹೆಕ್ಟೇರ್ಗಳ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಈ ಹಿನ್ನೆಲೆಯಲ್ಲಿ ಪಿಲಿಕುಳ ಉದ್ಯಾನದ ಮಾಸ್ಟರ್ ಪ್ಲಾನ್ ಅನುಮೋದಿಸಿರುವ ಕುರಿತ ಪ್ರಮಾಣಪತ್ರವನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು.
ಆರ್ ಸಿಬಿಯಿಂದ ವೆಂಕಟೇಶ್ ಅಯ್ಯರ್ ಖರೀದಿ ಇದ್ದೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ತರುತ್ತಾ ಕುತ್ತು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಳೆದ ವರ್ಷ ನಡೆದ ಮೆಗಾ ಹರಾಜಿನ ವೇಳೆ ವೆಂಕಟೇಶ್ ಅಯ್ಯರ್ ಖರೀದಿಗೆ ದುಂಬಾಲು ಬಿದ್ದಿದ್ದು ನಿಮಗೆ ನೆನಪಿರಬಹುದು. ಈ ಬಾಕಿ ಅಂತೂ ಪಟ್ಟಿಗೆ ಬಿದ್ದು ಖರೀದಿಸಿಯೇ ಬಿಟ್ಟಿದೆ. 2024ರ ಸೀಸನ್ ನಲ್ಲಿ ವೆಂಕಟೇಶ್ ಅಯ್ಯರ್ ಬಹಳ ಚನ್ನಾಗಿ ಆಟವಾಡಿದ್ದರು ನಿಜ. ಆದರೆ ಕಳೆದ ಸೀಸನ್ ನಲ್ಲಿ ಇನ್ನಿಲ್ಲದ ರೀತಿಯಲ್ಲಿ ನೆಲಕಚ್ಚಿದ್ದೇ ಕೆಕೆಆರ್ ರಿಲೀಸ್ ಮಾಡಲು ಕಾರಣ. ಈ ಬಾರಿ ಆರ್ ಸಿಬಿ ಬೆನ್ನಿಗೆ ಬಿದ್ದು ಖರೀದಿಸಿರುವುದರ ಹಿಂದಿದೆ ಒಂದು ಲೆಕ್ಕಾಚಾರ! ಇದು ಕನ್ನಡಿಗ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಕುತ್ತು ತರುತ್ತದಾ ಎಂಬುದೇ ಕುತೂಹಲ ಕೆರಳಿಸಿರುವ ಸಂಗತಿ.
PCBಗಳು, ಸಮಿತಿಗಳಲ್ಲಿ ಶೇ.45.6ರಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳು ಖಾಲಿಯಿವೆ: ಕೇಂದ್ರ
ಹೊಸದಿಲ್ಲಿ,ಡಿ.17: ದಿಲ್ಲಿ ಮತ್ತು ಹೆಚ್ಚಿನ ಉತ್ತರ ಭಾರತ ತೀವ್ರ ವಾಯುಮಾಲಿನ್ಯದಿಂದ ತತ್ತರಿಸಿರುವ ನಡುವೆ ಕೇಂದ್ರ ಪರಿಸರ ಸಚಿವಾಲಯವು ದೇಶಾದ್ಯಂತ ಮಾಲಿನ್ಯ ನಿಯಂತ್ರಣ ಮಂಡಳಿಗಳು (PCB) ಮತ್ತು ಸಮಿತಿಗಳಲ್ಲಿ ಶೇ.45.6ರಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳು ಖಾಲಿಯಿವೆ ಎಂದು ಸಂಸತ್ತಿನಲ್ಲಿ ತಿಳಿಸಿದೆ. ಇತ್ತೀಚಿಗೆ ಲೋಕಸಭೆಯಲ್ಲಿ ಸಿಪಿಎಂ ಸಂಸದ ರತ್ನವೇಲ್ ಸಚ್ಚಿದಾನಂದಂ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಪರಿಸರ ಖಾತೆ ರಾಜ್ಯಸಚಿವ ಕೀರ್ತಿವರ್ಧನ್ ಸಿಂಗ್ ಅವರು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) ಶೇ.16.28ರಷ್ಟು ಇಂತಹ ಹುದ್ದೆಗಳು ಖಾಲಿಯಿವೆ ಎಂದು ತಿಳಿಸಿದರು. ಸಿಪಿಸಿಬಿಯಲ್ಲಿ ಮಂಜೂರಾದ 393 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ 64 ಖಾಲಿಯಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ (ಎಸ್ಪಿಸಿಬಿ) 6,137 ಹುದ್ದೆಗಳ ಪೈಕಿ 2,921 ಮತ್ತು ದಿಲ್ಲಿ-ಎನ್ಸಿಆರ್ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಲಿನ್ಯನಿಯಂತ್ರಣ ಸಮಿತಿಗಳಲ್ಲಿ (ಪಿಸಿಸಿ) 402 ಹುದ್ದೆಗಳ ಪೈಕಿ 176 ಹುದ್ದೆಗಳು ಖಾಲಿಯಿವೆ. ಒಟ್ಟಾರೆಯಾಗಿ 6,932 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ 3,161 ಅಥವಾ ಶೇ.45.6ರಷ್ಟು ಹುದ್ದೆಗಳು ಖಾಲಿಯಿವೆ ಎಂದು ಸಿಂಗ್ ವಿವರಿಸಿದರು. ಎಸ್ಪಿಸಿಬಿಗಳು ಮತ್ತು ಪಿಸಿಸಿಗಳು ಆಯಾ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಆಡಳಿತಾತ್ಮಕ ನಿಯಂತ್ರಣದಲ್ಲಿವೆ ಮತ್ತು ಅವುಗಳಲ್ಲಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸಂಬಂಧಿಸಿದ ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶದ್ದಾಗಿದೆ ಎಂದು ತಿಳಿಸಿದ ಸಿಂಗ್,ಎಸ್ಪಿಸಿಬಿ ಮತ್ತು ಪಿಸಿಸಿಗಳು ತಮ್ಮ ನಿಯಮಾವಳಿಗಳಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೇಮಕವನ್ನು ಮಾಡಿಕೊಳ್ಳುತ್ತವೆ ಎಂದು ಹೇಳಿದರು.
ಭಾರತದ SIR ಪ್ರಜಾಪ್ರಭುತ್ವ ಮತ್ತು ಮುಸ್ಲಿಮರಿಗೆ ಬೆದರಿಕೆಯೊಡ್ಡಿದೆ: ಟೀಕಾಕಾರರು
ಕೃಪೆ: theguardian.com
ನೈಸರ್ಗಿಕ ಕೃಷಿಯಿಂದ ಮಣ್ಣಿನ ಆರೋಗ್ಯ ವೃದ್ಧಿ: ನಿತ್ಯಾನಂದ ನಾಯಕ್
ಶಿರ್ವ, ಡಿ.17: ನೈಸರ್ಗಿಕ ಕೃಷಿ ಎಂದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಲ್ಲದೆ ಭೂಮಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಸ್ಥಳೀಯ ಸಂಪನ್ಮೂಲಗಳಾದ ದನದ ಸೆಗಣಿ, ಗೋಮೂತ್ರ, ಮಲ್ಚಿಂಗ್ ಬಳಸಿ ಜಮೀನಿನಲ್ಲಿ ಲಭ್ಯ ಇರುವ ಜೀವರಾಶಿಗಳನ್ನು ಆಧರಿಸಿ ಮಾಡುವ ಕೃಷಿ ಪದ್ಧತಿಯಾಗಿದೆ ಎಂದು ಪಾದೂರು ಗ್ರಾಮದ ಪ್ರಗತಿಪರ ಕೃಷಿಕ ನಿತ್ಯಾನಂದ ನಾಯಕ್ ಪಾಲಮೆ ಹೇಳಿದ್ದಾರೆ. ಕಾಪು ರೈತಕೇಂದ್ರದ ವತಿಯಿಂದ ಶಿರ್ವದ ಕೃಷಿಕ ಬೆಟ್ಸಿ ಅರಾನ್ಹಾರವರ ನಿವಾಸದಲ್ಲಿ ಸೋಮವಾರ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ ಪರಿಸರದ ಕೃಷಿಕರಿಗಾಗಿ ಏರ್ಪಡಿಸಿದ ನೈಸರ್ಗಿಕ ಕೃಷಿ ಪ್ರಾತಿಕ್ಷಿಕೆ ಸಹಿತ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನೈಸರ್ಗಿಕ ಮಾದರಿಯ ಕೃಷಿಯಲ್ಲಿ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮಣ್ಣಿನ ಆರೋಗ್ಯವನ್ನೂ ಕಾಪಾಡು ತ್ತದೆ ಎಂದರು. ನೈಸರ್ಗಿಕ ಕೃಷಿಕ ಘಟಕಗಳಾದ ಜೀವಾಮೃತ ಹಾಗೂ ಬೀಜಾಮೃತ ತಯಾರಿಕೆ ಹಾಗೂ ಬಳಸುವ ವಿಧಾನದ ಬಗ್ಗೆ ಪ್ರಾತಿಕ್ಷಿಕೆ ಮಾಹಿತಿ ನೀಡಿದರು. ಹಿರಿಯರಾದ ಜೆರಾಲ್ಡ್ ಅರಾನ್ಹಾ ಸಹಕರಿಸಿದರು. ಕೃಷಿಕರಾದ ಪ್ರಕಾಶ್ ಪಾಲಮೆ, ಲಕ್ಷ್ಮಣ ನಾಯಕ್ ಪಾಲಮೆ, ಮ್ಯಾಕ್ಸಿಮ್ ಫೆರ್ನಾಡಿಸ್, ಜೆರೋಮ್ ಕೆಸ್ತಲಿನೊ ಬಿ.ಸಿ.ರೋಡ್, ಗಿಲ್ಬರ್ಟ್ ಮೋನಿಸ್, ರೊನಾಲ್ಡ್ ಮೋನಿಸ್, ಶಿಲ್ಪಾ ಪ್ರಭು ಪಾಲಮೆ, ಡಯಾನಾ ಫೆರ್ನಾಂಡಿಸ್ ಸಹಿತ 40ಕ್ಕೂ ಅಧಿಕ ಕೃಷಿಕರು ಪ್ರಯೋಜನ ಪಡೆದುಕೊಂಡರು. ಕಾಪು ರೈತ ಕೇಂದ್ರದ ಕೃಷಿ ಅಧಿಕಾರಿ ಪುಷ್ಪಲತಾ ಪಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ಕೃಷಿ ಸಖಿಯರಾದ ಪ್ರಜ್ಞಾ ಸಂತೋಷ್, ಕೇಶವತಿ ಸಹಕರಿಸಿದರು.
ಪೊಲೀಸರೇ ಕಳ್ಳರು: ಅಪರಾಧಿಗಳ ಜತೆ ಶಾಮೀಲಾಗಿದ್ದ 130 ಪೊಲೀಸರ ಅಮಾನತು; ಆರ್ ಅಶೋಕ
ಬೆಂಗಳೂರು, ಡಿಸೆಂಬರ್ 17: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜೈಲುಗಳಲ್ಲಿ ಕೈದಿಗಳ ಕೈಯಲ್ಲಿ ಫೋನ್ ಬಂದಿದೆ. ಡ್ರಗ್ಸ್ ಮಾಫಿಯಾ ವ್ಯಾಪಕವಾಗಿ ಬೆಳೆದಿದೆ. ಪೊಲೀಸರೇ ಕಳ್ಳರಾಗಿ ಬದಲಾಗಿದ್ದಾರೆ. ಪೊಲೀಸರೇ ಅಪರಾಧಿಗಳ ಜೊತೆಗೆ ಕೈಜೋಡಿಸಿ ಅಮಾನತಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಹೇಳಿದರು. ಇಂದು ವಿಧಾನಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸರೇ ಕಳ್ಳರಾಗಿದ್ದಾರೆ.
ರಾಯಚೂರು| ನೆಲ ಅಗೆದು ಬಿಎಸ್ಎನ್ಎಲ್ ತಂತಿ ಕಳ್ಳತನ; ಅಂದಾಜು 15 ಲಕ್ಷ ರೂ.ನಷ್ಟ
ರಾಯಚೂರು: ನಗರದ ಅಂದ್ರೂನ್ ಕಿಲ್ಲಾ ಬಡಾವಣೆಯಲ್ಲಿರುವ ಬಿಎಸ್ ಎನ್ ಎಲ್ ಮುಖ್ಯ ಕಚೇರಿಯಿಂದ ದುಷ್ಕರ್ಮಿಗಳು ನೆಲವನ್ನು ಅಗೆದು ಬಿಎಸ್ಎನ್ಎಲ್ ಸಂಪರ್ಕ ತಂತಿ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸದರ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ಒಂದೂವರೆ ಕಿಮೀನಷ್ಟು ತಂತಿ ಕಳ್ಳತನವಾಗಿದೆ ಎನ್ನಲಾಗಿದ್ದು, ಅದರ ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸುಮಾರು 20 ರಿಂದ 30 ಜನ ಇರುವ ತಂಡದಿಂದ ಈ ಕೃತ್ಯ ನಡೆದಿರಬಹುದು ಎಂದು ಹೇಳಲಾಗಿದ್ದು ಸೋಮವಾರ ರಾತ್ರಿ 12.30 ರಿಂದ ಬೆಳಗಿನ ಜಾವ 5 ಗಂಟೆವರೆಗಿನ ಸಮಯಯದಲ್ಲಿ ತಂತಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ.
MGNREGA Vs VB–G RAM G; ಯಾವುದು ಉತ್ತಮ?
ಮುಖ್ಯವಾದ ವ್ಯತ್ಯಾಸಗಳಲ್ಲಿ ಒಂದು MGNREGA ಬೇಡಿಕೆ ಚಾಲಿತವಾಗಿದೆ ಮತ್ತು ಕೆಲಸಕ್ಕೆ ಬೇಡಿಕೆ ಇದ್ದರೆ ಕೇಂದ್ರ ಸರ್ಕಾರ ಹೆಚ್ಚು ಹಣ ಕೊಡಬೇಕಾಗಿದೆ. ಆದರೆ ಹೊಸ ಮಸೂದೆಯಲ್ಲಿ ಪ್ರತಿ ವರ್ಷ ರಾಜ್ಯವಾರು ಎಷ್ಟು ಹಣ ಹಂಚಿಕೆಯಾಗಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಹೆಚ್ಚುವರಿ ವೆಚ್ಚವೇನಾದರೂ ಆದಲ್ಲಿ ಅದನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA ) ಬದಲಿಸಲು ಯೋಜಿಸುತ್ತಿದ್ದು, ಅದರ ಬದಲಿಗೆ ವಿಕಸಿತ್ ಭಾರತ್-ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ 2025 ( VB–G RAM G ಮಸೂದೆ) ಜಾರಿಗೆ ತರುವುದಾಗಿ ಹೇಳಿದೆ. ಹಳೆಯ ಕಾನೂನಿನಲ್ಲಿ ಗ್ರಾಮೀಣ ಕುಟುಂಬಗಳಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗದ ಕಾನೂನುಬದ್ಧ ಖಾತರಿಯನ್ನು ಒದಗಿಸುತ್ತದೆ. ಪ್ರಸ್ತುತ ಅದನ್ನು 125 ದಿನಗಳಿಗೆ ಏರಿಸಲಾಗಿದೆ. ಹಾಗಿದ್ದರೆ ವಿಪಕ್ಷಗಳು ಈ ಕಾನೂನಿಗೆ ವಿರೋಧ ವ್ಯಕ್ತಪಡಿಸುವುದೇಕೆ? ಹೊಸ ಮಸೂದೆಯಲ್ಲಿ ಏನಿದೆ? ಕೇಂದ್ರ ಸರ್ಕಾರದ ಪ್ರಕಾರ, 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಗ್ರಾಮೀಣಾಭಿವೃದ್ಧಿ ಚೌಕಟ್ಟನ್ನು ಸ್ಥಾಪಿಸುವ ಗುರಿಯೊಂದಿಗೆ ಮಸೂದೆಯನ್ನು ಮುಂದಿಡಲಾಗಿದೆ. ಕೇಂದ್ರ ಸರ್ಕಾರದ ಪ್ರಕಾರ ಹಿಂದಿನ ಕಾಯ್ದೆಯಲ್ಲಿದ್ದ ರಚನಾತ್ಮಕ ದೌರ್ಬಲ್ಯಗಳನ್ನು ಸರಿಪಡಿಸಲು ಪ್ರಮುಖ ನವೀಕರಣವನ್ನು ಮಾಡಲಾಗಿದೆ. ಡಿಜಿಟಲ್ ಹಾಜರಾತಿ, ಡಿಜಿಟಲ್ ಪಾವತಿ ಮತ್ತು ಡೇಟಾ ಚಾಲಿತ ಯೋಜನೆಯು ದಕ್ಷತೆಯನ್ನು ಹೆಚ್ಚಿಸುತ್ತದೆ. ಜಲಸಂಬಂಧಿತ ಕೆಲಸಗಳ ಮೂಲಕ ಜಲಭದ್ರತೆ, ಪ್ರಮುಖ ಗ್ರಾಮೀಣ ಮೂಲ ಸೌಕರ್ಯ, ಜೀವನೋಪಾಯ ಸಂಬಂಧಿತ ಮೂಲಸೌಕರ್ಯ ಮತ್ತು ತೀವ್ರವಾದ ಹವಾಮಾನ ವೈಪರೀತ್ಯವನ್ನು ಎದುರಿಸಲು ವಿಶೇಷ ಕೆಲಸಗಳು ಎಂದು ವಿವರಿಸಿದೆ. ಎರಡು ಮಸೂದೆಗಳ ನಡುವಿನ ಪ್ರಮುಖ ವ್ಯತ್ಯಾಸವೇನು? ಮುಖ್ಯವಾದ ವ್ಯತ್ಯಾಸಗಳಲ್ಲಿ ಒಂದು MGNREGA ಬೇಡಿಕೆ ಚಾಲಿತವಾಗಿದೆ ಮತ್ತು ಕೆಲಸಕ್ಕೆ ಬೇಡಿಕೆ ಇದ್ದರೆ ಕೇಂದ್ರ ಸರ್ಕಾರ ಹೆಚ್ಚು ಹಣ ಕೊಡಬೇಕಾಗಿದೆ. ಆದರೆ ಹೊಸ ಮಸೂದೆಯಲ್ಲಿ ಪ್ರತಿ ವರ್ಷ ರಾಜ್ಯವಾರು ಎಷ್ಟು ಹಣ ಹಂಚಿಕೆಯಾಗಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಹೆಚ್ಚುವರಿ ವೆಚ್ಚವೇನಾದರೂ ಆದಲ್ಲಿ ಅದನ್ನು ರಾಜ್ಯ ಸರ್ಕಾರವೇ ಭರಿಸಬೇಕು. MGNREGA ಯೋಜನೆಯಲ್ಲಿ ಕೇಂದ್ರ ಸರ್ಕಾರವೇ ಶೇ 100ರಷ್ಟು ವೆಚ್ಚ ಭರಿಸುತ್ತಿತ್ತು. ಸಾಮಗ್ರಿ ವೆಚ್ಚವನ್ನು ರಾಜ್ಯವಾರು ಅನುಪಾತ 75:25 ದಲ್ಲಿ ಭರಿಸಲಾಗುತ್ತಿತ್ತು. ಪ್ರಸ್ತಾಪಿತ ಯೋಜನೆಯಲ್ಲಿ ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 60:40 ಅನುಪಾತದಲ್ಲಿ ವೆಚ್ಚಗಳನ್ನು ಹಂಚಿಕೊಳ್ಳುತ್ತವೆ. ಆದಾಗ್ಯೂ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಮಾದರಿಯು 90:10 ಅನುಪಾತದಲ್ಲಿ ಉಳಿಯುತ್ತದೆ. ಕೃಪೆ: ಡೆಕ್ಕನ್ ಹೆರಾಲ್ಡ್
ಮಹಿಳಾ ಅಭಿವೃದ್ಧಿ ನಿಗಮ ಯೋಜನೆ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಉಡುಪಿ, ಡಿ.17: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನಿಗಮದ ಯೋಜನೆಗಳಾದ ಉದ್ಯೋಗಿನಿ ಯೋಜನೆ, ಚೇತನಾ ಯೋಜನೆ, ಧನಶ್ರೀ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ವೆಬ್ಸೈಟ್ - -ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು 2026ರ ಜನವರಿ 15ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಹಾಗೂ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, 1ನೇ ಮಹಡಿ, ಬಿ ಬ್ಲಾಕ್, ರೂಂ ನಂ.204, ರಜತಾದ್ರಿ, ಮಣಿಪಾಲ ಅಥವಾ ಉಡುಪಿ, ಕುಂದಾಪುರ, ಬ್ರಹ್ಮಾವರ ಹಾಗೂ ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ದುಬೈ ಲಾಟರಿ ಡ್ರಾ; ಭಾರತೀಯ ಮೂಲದ ಶಿಕ್ಷಕನಿಗೆ ಲಕ್ಕು; 15 ವರ್ಷ ಕಾದಿದ್ದಕ್ಕೆ ಸಿಕ್ತು ಇಷ್ಟು ಹಣ
ದುಬೈನಲ್ಲಿ 30 ವರ್ಷಗಳಿಂದ ನೆಲೆಸಿರುವ ಗುಜರಾತ್ ಮೂಲದ ಕಂಪ್ಯೂಟರ್ ಶಿಕ್ಷಕ ರಿತೇಶ್ ಧನಕ್ ಅವರು, ಸುಮಾರು 15 ವರ್ಷಗಳ ಸತತ ಪ್ರಯತ್ನದ ನಂತರ ಬಿಗ್ ಟಿಕೆಟ್ ಇ-ಡ್ರಾದಲ್ಲಿ ಭಾರತೀಯ ಮೌಲ್ಯದಲ್ಲಿ 25 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ಎರಡು ಕೊಂಡರೆ ಮೂರು ಫ್ರೀ ಎಂದು ಕರೆ ಬಂದಿದ್ದ ಕಾರಣ ಟಿಕೆಟ್ ಖರೀದಿಸಿದ್ದರಂತೆ. ಲಕ್ಕಿ ಡ್ರಾ ಗೆದ್ದಾಗ ಮೊದಲು ನಂಬದೆ ಆನಂತರ ಸಂತಸ ವ್ಯಕ್ತಪಡಿಸಿದ್ದಾರೆ.
‘ಮನೆಮನೆ ಭೇಟಿ ಮೂಲಕ ಪಂಚ ಗ್ಯಾರಂಟಿಗಳ ಪ್ರಗತಿ ಪರಿಶೀಲನೆ’
ಉಡುಪಿ, ಡಿ.17: ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತ ಮತ್ತು ಸ್ವಾವಲಂಬಿ ಬದುಕು ಹೊಂದಬೇಕೆನ್ನುವ ಉದ್ದೇಶದಿಂದ ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಕಳೆದ ಎರಡೂವರೆ ವರ್ಷಗಳಿಂದ ಅವು ರಾಜ್ಯವ್ಯಾಪಿ ಯಶಸ್ವಿಯಾಗಿ ಅನುಷ್ಠಾನ ಗೊಂಡಿವೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ. ಅಜ್ಜರಕಾಡಿನ ಪುರಭವನದಲ್ಲಿ ಉಡುಪಿ ತಾಲೂಕು ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಆಯೋಜಿ ಸಲಾದ ನಮ್ಮ ನಡೆ ವಾರ್ಡ್ ಕಡೆಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಉಂಟಾಗ ಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಯೋಜನೆಗಳ ಪ್ರಗತಿ ಪರಿಶೀಲಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು. ಗ್ಯಾರಂಟಿ ಯೋಜನೆಗಳು ಸಮದರ್ಶಿ ಮತ್ತು ಸಮಾವೇಶಿಯಾಗಿದ್ದು ಸಮಾಜದ ಬಡವರ್ಗವನ್ನು ಮೇಲೆತ್ತುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ಮನೆ ಮನೆಗೆ ಭೇಟಿ ನೀಡಿ ಯೋಜನೆಯ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸಲಾಗುತ್ತಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಲಾಭವನ್ನು ಪ್ರತಿಯೊಂದು ಫಲಾನುಭವಿಯ ಮನೆ ಬಾಗಿಲಿಗೆ ತಲುಪಿಸುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದರು. ಯೋಜನೆಗಳ ಸಮಿತಿ ಸದಸ್ಯ ಡಾ.ಸಂತೋಷ್ ಕುಮಾರ್ ಬೈರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಆರ್ಥಿಕ ಚೈತನ್ಯ ತುಂಬಿದೆ. ಪಂಚ ಗ್ಯಾರಂಟಿ ಯೋಜನೆಗಳು ಗಿನ್ನೆಸ್ ದಾಖಲೆ ನಿರ್ಮಿಸಿದ್ದು, ಜನರ ಕೊಳ್ಳುವ ಸಾಮರ್ಥ್ಯ ವನ್ನು ಹೆಚ್ಚಿಸಿವೆ. ಯೋಜನೆ ರಾಜ್ಯದ ಜಿಡಿಪಿಗೂ ಚೈತನ್ಯ ನೀಡಿದ್ದು ಆರ್ಥಿಕತೆಗೂ ಬಲ ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಉಡುಪಿ ತಾಲೂಕು ಉಪ ತಹಶೀಲ್ದಾರ್ ಐರಿನ್ ನೊರೊನ್ಹಾ, ಅನುಷ್ಠಾನ ಸಮಿತಿ ಸದಸ್ಯರಾದ ಅರ್ಚನಾ ದೇವಾಡಿಗ, ದಿನೇಶ್ ಜತ್ತನ್ನ, ಯೋಜನೆಯ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯ ನಿರ್ವಹಿಸಬೇಕು: ಸಿಇಒ ಪ್ರತೀಕ್ ಬಾಯಲ್
ಉಡುಪಿ, ಡಿ.17: ಜಿಲ್ಲೆಯಲ್ಲಿರುವ ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಮುಂದಿನ 2050ರ ವೇಳೆಗೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳು ಮಹತ್ವದ ಪಾತ್ರ ವಹಿಸಲು ಕೈಗಾರಿಕೋದ್ಯಮಿಗಳು ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಜಿಲ್ಲೆಯ ಉದ್ದಿಮೆದಾರರಿಗೆ ಕರೆ ನೀಡಿದ್ದಾರೆ. ಕಡಿಯಾಳಿಯ ದಿ ಓಷಿಯನ್ ಪರ್ಲ್ ಹೋಟೆಲ್ನಲ್ಲಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ ನಿರ್ದೇಶನಾಲಯ, ಕೆ.ಸಿ.ಟಿ.ಯು ಟೆಕ್ಸಾಕ್ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಎಂ.ಎಸ್.ಎಂ.ಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ರ್ಯಾಂಪ್) ಯೋಜನೆಯಡಿಯಲ್ಲಿ ನಡೆದ ಒಂದು ದಿನದ ಝೆಡ್ ಮತ್ತು ಲೀನ್ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಉತ್ಪನ್ನಗಳ ತಯಾರಿಕೆ ಮತ್ತು ಗುಣಮಟ್ಟ ಪರಿಸರ ಸ್ನೇಹಿಯಾಗಿರಬೇಕು ಹಾಗೂ ಆರೋಗ್ಯದಾಯಕವಾಗಿರುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದವರು ಉದ್ಯಮಿಗಳಿಗೆ ಕಿವಿಮಾತು ಹೇಳಿದರು. ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳು ಕೇವಲ ಆರ್ಥಿಕತೆಯ ಲಾಭಕ್ಕೆ ಒತ್ತು ನೀಡುವ ಜೊತೆಗೆ ಪರಿಸರ ಸ್ನೇಹಿ ಹಾಗೂ ಆರೋಗ್ಯದಾಯಕ ಉತ್ಪನ್ನಗಳ ತಯಾರಿಕೆಗೆ ಮುಂದಾಗಬೇಕು. ಇದರಿಂದ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಕೈಗಾರಿಕೆಗಳು ಸುದೀರ್ಘವಾಗಿ ನಡೆಯುವುದರ ಜೊತೆಗೆ ದೇಶದ ಆರ್ಥಿಕತೆಗೂ ಅದರಿಂದ ಲಾಭವಾಗುತ್ತದೆ ಎಂದೂ ಪ್ರತೀಕ್ ಬಾಯಲ್ ಅಭಿಪ್ರಾಯಪಟ್ಟರು. ಭಾರತಕ್ಕೆ ಯೂರೋಪಿಯನ್ನರು ವ್ಯಾಪಾರ ಅರಿಸಿ ಬರುವುದಕ್ಕೂ ಮುನ್ನ ದೇಶದಲ್ಲಿ ಸಣ್ಣ ಹಾಗೂ ಗುಡಿ ಕೈಗಾರಿಕೆ ಗಳಿಗೆ ಹೆಚ್ಚಿನ ಆದ್ಯತೆ ಇತ್ತು. ಅವುಗಳಲ್ಲಿ ತಯಾರಿಸುತ್ತಿದ್ದ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಸೇರಿ ದಂತೆ ವಿವಿಧ ಉತ್ಪನ್ನಗಳು ವಿಶ್ವದಲ್ಲೇ ಹೆಚ್ಚಿನ ಬೇಡಿಕೆ ಹೊಂದಿದ್ದವು. ಆದರೆ ವ್ಯಾಪಾರ ಅರಸಿ ದೇಶಕ್ಕೆ ಬಂದವರು ತಮ್ಮ ಕೈಗಾರಿಕಾ ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ಹೆಚ್ಚಿಸಿ, ನಮ್ಮ ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಕೆ ಬಹುತೇಕ ಕುಂಠಿತಗೊಳ್ಳುವಂತೆ ನೋಡಿಕೊಂಡರು ಎಂದರು. ಇದರಿಂದ ನಮ್ಮ ಸಾಂಪ್ರದಾಯಿಕ ಕುಶಲಕರ್ಮಿಗಳು ಕೃಷಿಯತ್ತ ಸಾಗಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭ ದಲ್ಲಿ ಗಾಂಧೀಜಿಯವರು ಸ್ವದೇಶಿ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಿ, ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದರಿಂದ ದೇಶೀಯ ಉತ್ಪನ್ನಗಳು ಮತ್ತೆ ಚಿಗುರುವಂತಾಯಿತು ಎಂದು ಬಾಯಲ್ ವಿವರಿಸಿದರು. ಬೆಂಗಳೂರು ಟೆಕ್ಸಾಕ್ನ ಸಿಇಓ ಸಿದ್ಧರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 2019-20ನೇ ಅವಧಿಯ ಕೊರೋನಾ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸ್ಥಿರವಾಗಿ ನಿಲ್ಲಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದ ಸಣ್ಣ ಕೈಗಾರಿಕೆಗಳಿಗೆ ರ್ಯಾಂಪ್ ಯೋಜನೆಯನ್ನು ಜಾರಿ ಮಾಡುವ ಮೂಲಕ ಕೇಂದ್ರ, ರಾಜ್ಯ ಸರಕಾರಗಳ ಜೊತೆಗೆ ವಿಶ್ವ ಬ್ಯಾಂಕ್ ಆರ್ಥಿಕ ಬಲ ನೀಡಿದವು ಎಂದರು. ಯಾವುದೇ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿವೆ ಎಂದು ತಿಳಿಸಲು ಪ್ರಮಾಣಪತ್ರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶೂನ್ಯ ದೋಷ, ಶೂನ್ಯ ಪರಿಣಾಮದೊಂದಿಗೆ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಉತ್ಪಾದಿಸಲು ಝಡ್.ಇ.ಡಿ ಪ್ರಮಾಣಪತ್ರಗಳು ಪ್ರಮುಖ ಪಾತ್ರ ವಹಿಸಲಿವೆ. ಇದರಲ್ಲಿ ಕಂಚು, ಬೆಳ್ಳಿ, ಚಿನ್ನದಂತಹ ಪ್ರಮಾಣೀಕರಣ ಪತ್ರವನ್ನು ಪಡೆಯಬಹುದು. ಅದನ್ನು ಪಡೆಯುವ ಕುರಿತು ಕಾರ್ಯಾಗಾರದಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ಅಧ್ಯಕ್ಷತೆ ವಹಿಸಿದ್ದರು. ಎಂಎಸ್ಎಂಇನ ಗೋಪಿನಾಥ್ ಝೆಡ್ ಮತ್ತು ಲೀನ್ ಯೋಜನೆಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಝೆಡ್ಇಡಿ ಯೋಜನೆಯಡಿ ಅರ್ಹ ಉದ್ಯಮಿ ಗಳಿಗೆ ಸಿಲ್ವರ್ ಸರ್ಟಿಫಿಕೇಟ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಂಎಸ್ಎಂಇ ಜಂಟಿ ನಿರ್ದೇಶಕ ಸುಂದರ್ ಶೇರಿಗಾರ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಸಂತ ಕಿಣಿ, ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್, ಜಿಲ್ಲೆಯ ಕೈಗಾರಿಕೋದ್ಯಮಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಟೆಕ್ಸಾಕ್ ಅಸೋಸಿಯೇಟ್ ಕನ್ಸಲ್ಟೆಂಟ್ ಅರವಿಂದ್ ಡಿ ಬಾಳೇರಿ ಸ್ವಾಗತಿಸಿ, ಶ್ರುತಿ ಕಾರ್ಯಕ್ರಮ ನಿರೂಪಿಸಿ, ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.
ಕುಂದಾಪುರ ಇಎಸ್ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಭರವಸೆ
ಉಡುಪಿ, ಡಿ.17: ಕುಂದಾಪುರ ತಾಲೂಕಿನ ಇಎಸ್ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಭರವಸೆ ನೀಡಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕುಂದಾಪುರ ತಾಲೂಕಿನ ಇಎಸ್ಐ ಆಸ್ಪತ್ರೆಗೆ ಇಬ್ಬರು ವೈದ್ಯರ ಹುದ್ದೆಯನ್ನು ಮಂಜೂರು ಮಾಡಲಾಗಿತ್ತು. ಆದರೆ 2015ರಿಂದ ಒಬ್ಬರೂ ಖಾಯಂ ವೈದ್ಯರಿಲ್ಲ. ಬೇರೆ ಕಡೆಯಿಂದ ನಿಯೋಜನೆ ಮೇರೆಗೆ ವೈದ್ಯರು ಕರ್ತವ್ಯ ನಿರ್ವಹಿ ಸುತ್ತಾರೆ. ಇದರಿಂದ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ಸಿಗದೆ ತೊಂದರೆಯಾಗಿದೆ ಎಂದು ಕಿರಣ್ ಕುಮಾರ್ ಹೇಳಿದರು. ಕುಂದಾಪುರದ ಇಎಸ್ಐ ಆಸ್ಪತ್ರೆಯಲ್ಲಿ ನಿಯೋಜನೆ ಮೇಲೆ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಯಂ ವೈದ್ಯರು ಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಮೂರು ವಾರದಲ್ಲಿ ತಾತ್ಕಾಲಿಕ ವೈದ್ಯರ ನೇಮಕ ಮಾಡಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು. ಆಸ್ಪತ್ರೆ ಹೆಸರು ಬಿಟ್ಟಿದ್ದರೆ ಕ್ರಮ: ಇಎಸ್ಐ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಪಟ್ಟಿಯಲ್ಲಿ ಮಣಿಪಾಲದ ಕಸ್ತೂರರ್ಬಾ ಆಸ್ಪತ್ರೆ ಹಾಗೂ ಕುಂದಾಪುರದ ಆದರ್ಶ ಆಸ್ಪತ್ರೆ ಬಿಟ್ಟು ಹೋಗಿದೆ ಎಂಬ ಕಿರಣ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಲಾಡ್, ಮಣಿಪಾಲ ಕೆಎಂಸಿ, ಆದರ್ಶ ಆಸ್ಪತ್ರೆ ಬಿಟ್ಟು ಹೋಗಿದ್ದರೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಲಿಯೋನೆಲ್ ಮೆಸ್ಸಿಗೆ ಮುಕೇಶ್ ಅಂಬಾನಿ ಪುತ್ರನ ದುಬಾರಿ ಗಿಫ್ಟ್ - ಬೆಲೆ ಎಷ್ಟಿರಬಹುದು ? ಗೆಸ್ ಮಾಡಿ
Messi Greatest Of All Time : ಅರ್ಜೆಂಟೀನಾದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದ ವೇಳೆ, ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ದುಬಾರಿ ಗಿಫ್ಟ್ ಅನ್ನು ನೀಡಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಏಷ್ಯಾ ಎಡಿಷನ್ ಗಡಿಯಾರವನ್ನು ಮೆಸ್ಸಿಗೆ ನೀಡಲಾಗಿದೆ ಎನ್ನುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.
ಯುನಿವೆಫ್ನಿಂದ ಬೆಂಗಳೂರಿನಲ್ಲಿ ವಿಚಾರಗೋಷ್ಠಿ
ಮಂಗಳೂರು: ಪ್ರವಾದಿ ಮುಹಮ್ಮದ್ರ ವ್ಯಕ್ತಿತ್ವವನ್ನು ನಿಷ್ಪಕ್ಷವಾಗಿ ಅಧ್ಯಯನ ಮಾಡಿದಾಗ ಅವರು ಮಾಡಿರುವ ಸಮಾಜ ಸುಧಾರಣೆಗಳು, ಹೆಣ್ಣಿಗೆ ನೀಡಿರುವ ಸ್ಥಾನಮಾನ, ಮನುಷ್ಯ ಸಂಬಂಧಗಳ ಸೂಕ್ಷ್ಮಗಳನ್ನು ಅವರು ನಿಭಾಯಿಸಿದ ರೀತಿ ಇವೆಲ್ಲವೂ ಗಮನ ಸೆಳೆಯದೆ ಇರಲು ಸಾಧ್ಯವೇ ಇಲ್ಲ. ಮುಹಮ್ಮದ್ ಎಂಬ ಮಹಾನ್ ವ್ಯಕ್ತಿಯನ್ನು ಒಪ್ಪಿಕೊಳ್ಳುವುದಕ್ಕೆ, ಅವರನ್ನು ಪ್ರೀತಿಸುವುದಕ್ಕೆ ಧರ್ಮ ತಡೆಯಾಗಲಾರದು ಎಂದು ಸಾಹಿತಿ ಯೋಗೇಶ್ ಮಾಸ್ಟರ್ ಹೇಳಿದ್ದಾರೆ. ಯುನಿವೆಫ್ ಕರ್ನಾಟಕ 2025ರ ಸೆಪ್ಟೆಂಬರ್ 19 ರಿಂದ 2 ಜನವರಿ 2026 ರ ವರೆಗೆ 100 ದಿನಗಳ ಕಾಲ ಹಮ್ಮಿಕೊಂಡಿರುವ 20 ನೇ ವರ್ಷದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಡಿ.13 ರಂದು ಬೆಂಗಳೂರಿನ ಬ್ಯಾರಿ ಸೌಹಾರ್ದ ಭವನದಲ್ಲಿ ‘ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ತಾನು ಪ್ರೀತಿಸುವ ಪ್ರವಾದಿ ಎಂಬ ಪುಸ್ತಕ ರಚಿಸುವ ಮೂಲಕ ತನ್ನ ಗೌರವವನ್ನು ಪ್ರಕಟಿಸಲು ಸಿದ್ಧನಾಗಿದ್ದೇನೆ ಎಂದು ಅವರು ತಿಳಿಸಿದರು. ಮುಖ್ಯ ಅತಿಥಿ ಸಿ ಎಸ್ಐ ಬೆಂಗಳೂರು ಇದರ ಉಸ್ತುವಾರಿ ರೆ. ಡಾ. ಡಿ. ಮನೋಹರ್ ಚಂದ್ರ ಪ್ರಸಾದ್ ಅವರು ಮಾತನಾಡಿ, ಮಾನವೀಯತೆಯೇ ಎಲ್ಲಾ ಧರ್ಮಗಳ ಸಾರ. ಪ್ರೀತಿ, ಪ್ರೇಮ, ಸಾಮರಸ್ಯವೇ ಪ್ರವಾದಿಗಳ ಬೋಧನೆಯಾಗಿತ್ತು. ಮಹಾಪುರುಷರುಗಳನ್ನು ಕೇವಲ ಒಂದು ಕಾಲಕ್ಕೆ ಸೀಮಿತಗೊಳಿಸದೆ ಅವರ ವ್ಯಕ್ತಿತ್ವಗಳನ್ನು ಸಾರ್ವಕಾಲಿಕವಾಗಿಸಿದಾಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಹೇಳಿದರು. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಅಪಪ್ರಚಾರಗಳನ್ನು ವ್ಯಾಪಕಗೊಳಿಸಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನಗಳ ಮಧ್ಯೆ ನಾವು ನಮ್ಮ ಹಿತೈಷಿಗಳು ಯಾರು, ವಿರೋಧಿಗಳು ಯಾರು ಎಂಬುದನ್ನು ನಿಖರವಾಗಿ ಅರಿಯಬೇಕಾಗಿದೆ. ಯಾವುದೇ ರಾಜಕೀಯ ಪಕ್ಷಗಳನ್ನೂ ಅವಲಂಭಿಸದೆ ಯುವಕರು ತಾವಾಗಿಯೇ ಈ ಅಪಪ್ರಚಾರಗಳನ್ನು ತಡೆಯುವ, ಮಿಥ್ಯ ಅಪಪ್ರಚಾರಗಳನ್ನು ಸತ್ಯದ ಮೂಲಕ ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಪರಿವರ್ತನೆ ಯುವಕರಿಂದಲೇ ಸಾಧ್ಯ ಎಂದು ಹೇಳಿದರು. ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಬೆಂಗಳೂರು ಇದರ ಅಧ್ಯಕ್ಷ ಬಿ. ಶಂಸುದ್ದೀನ್ ಅಡ್ಡೂರ್, ಬೆಂಗಳೂರು ಬ್ಯಾರಿಸ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಬಿ. ಶಬೀರ್ ಬ್ರಿಗೇಡ್, ಎಂಎಂವೈಸಿ ಬೆಂಗಳೂರು ಅಧ್ಯಕ್ಷ ಬಿ. ಅಬೂಬಕರ್ ಎಚ್ ಉಪಸ್ಥಿತರಿದ್ದರು. ಉಮರ್ ಮುಖ್ತಾರ್ ಕಿರಅತ್ ಪಠಿಸಿದರು. ಮುಹಮ್ಮದ್ ಹುಝೈಫ್ ಅನುವಾದಿಸಿದರು. ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ಸೈಫುದ್ದೀನ್ ವಿಷಯ ಮಂಡಿಸಿದರು. ಸೀರತ್ ಅಭಿಯಾನ ಸಂಚಾಲಕ ಯು . ಕೆ. ಖಾಲಿದ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
Uttar Pradesh | ಬುರ್ಖಾ ಧರಿಸದೆ ಇದ್ದುದಕ್ಕಾಗಿ ವ್ಯಕ್ತಿಯಿಂದ ಪತ್ನಿ, ಇಬ್ಬರು ಪುತ್ರಿಯರ ಹತ್ಯೆ
ಹೊಸದಿಲ್ಲಿ,ಡಿ.17: ತನ್ನ ಪತ್ನಿ ಬುರ್ಖಾ ಧರಿಸದೆ ಮನೆಯಿಂದ ಹೊರ ಹೋಗಿದ್ದಕ್ಕಾಗಿ ಕ್ರುದ್ಧಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಹಾಗೂ ಇಬ್ಬರು ಪುತ್ರಿಯನ್ನು ಕೊಲೆಗೈದು, ಅವರ ಮೃತದೇಹಗಳನ್ನು ಮನೆಯೊಳಗೆ ಹೂತುಹಾಕಿದ ಘೋರ ಘಟನೆ ಉತ್ತರಪ್ರದೇಶ ಶಾಮ್ಲಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಫಾರೂಕ್ ನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 10ರಂದು ಕಾಂದ್ಲಾ ಪೊಲೀಸ್ ವ್ಯಾಪ್ತಿಯ ಘಾರಿ ದೌಲತ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಪತಿಯೊಂದಿಗೆ ಕೌಟುಂಬಿಕ ವಿವಾದವುಂಟಾದ ಕಾರಣ ಫಾರೂ ಕ್ನ ಪತ್ನಿ ತಾಹಿರಾ ತವರು ಮನೆಗೆ ತೆರಳಿದ್ದಳು. ಆಗ ಆಕೆ ಬುರ್ಖಾ ಧರಿಸದೆ ಹೋಗಿದ್ದರಿಂದ ಫಾರೂಕ್ ರೋಷಗೊಂಡಿದ್ದ ಎನ್ನಲಾಗಿದೆ. ತಾಹಿರಾ ಮನೆಗೆ ಮರಳಿದಾಗ ಆತ ಈ ವಿಷಯವಾಗಿ ಆಕೆಯೊಂದಿಗೆ ವಾಗ್ವಾದ ನಡೆಸಿದ್ದು, ಕೋಪದಿಂದ ಪತ್ನಿಯನ್ನು ಹಾಗೂ ತನ್ನ ಇಬ್ಬರು ಪುತ್ರಿಯನ್ನು ಹತ್ಯೆಗೈದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮೂವರ ಮೃತದೇಹಗಳನ್ನೂ ಆತ ಮನೆಯ ಒಳಗಡೆ ಹೂತುಹಾಕಿದ್ದನ್ನು ಪೊಲೀಸರು ಮಂಗಳವಾರ ಪತ್ತೆಹಚ್ಚಿದ್ದಾರೆ. ತಾಹಿರಾ ಹಾಗೂ ಆಕೆಯ ಪುತ್ರಿಯರಾದ ಆಫ್ರಿನ್ ಹಾಗೂ ಸೆಹ್ರಿನ್ ಸುಮಾರು ಐದು ದಿನಗಳಿಂದ ನಾಪತ್ತೆಯಾಗಿದ್ದರಿಂದ ಸಂದೇಹಗೊಂಡ ಫಾರೂಕ್ ನ ತಂದೆಯೇ ಖುದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಫಾರೂಕ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಸದನದಲ್ಲಿ ಇ-ಸಿಗರೇಟ್ ಸೇದಿದ ಕೀರ್ತಿ ಆಝಾದ್; TMC ಸಂಸದನ ನಡವಳಿಕೆ ವಿರುದ್ಧ ಸ್ಪೀಕರ್ ಗೆ ಅನುರಾಗ್ ಠಾಕೂರ್ ಪತ್ರ
ಹೊಸದಿಲ್ಲಿ,ಡಿ.17: ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಕೀರ್ತಿ ಆಝಾದ್ ಅವರು ಸದನದಲ್ಲಿ ಇ-ಸಿಗರೇಟ್ ಸೇದಿದ್ದಾರೆಂದು ಆರೋಪಿಸಿ ಲೋಕಸಭೆಯ ಬಿಜೆಪಿ ಎಂಪಿ, ಅನುರಾಗ್ ಠಾಕೂರ್ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಲೋಕಸಭಾ ಕಲಾಪ ನಡೆಯುತ್ತಿದ್ದಾಗ ಕೀರ್ತಿ ಆಝಾದ್ ಅವರು ಇ-ಸಿಗರೇಟ್ ಸೇದುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು,, ವಿವಾದ ಸೃಷ್ಟಿಯಾಗಿದೆ. ಈ ವೀಡಿಯೋವನ್ನು ಬಿಜೆಪಿಯ ಐಟಿ ವಿಭಾಗದ ವರಿಷ್ಠ ಅಮಿತ್ ಮಾಳವೀಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಅವರಿಗೆ ನೀಡಿದ ದೂರಿನಲ್ಲಿ ಅನುರಾಗ್ ಠಾಕೂರ್ ಅವರು ಸಿಗರೇಟ್ ಸೇದುತ್ತಿರುವ ಸಂಸದನನ್ನು ಹೆಸರಿಸಿಲ್ಲವಾದರೂ, ಅಮಿತ್ ಮಾಳವೀಯ ಅವರು, ತನ್ನ ಪೋಸ್ಟ್ ನಲ್ಲಿ ಆ ವ್ಯಕ್ತಿ ಕೀರ್ತಿ ಆಝಾದ್ ಎಂಬುದಾಗಿ ಗುರುತಿಸಿದ್ದರು. ಆಝಾದ್ ಅವರ ದುರ್ನಡತೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಮಾಳವೀಯ ಅವರು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಆಗ್ರಹಿಸಿದ್ದಾರೆ. ‘‘ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿರುವ ಟಿಎಂಸಿ ಸಂಸದ ಕೀರ್ತಿ ಆಝಾದ್ ಅಲ್ಲದೆ ಇನ್ನ್ಯಾರೂ ಅಲ್ಲ. ಅವರಂತಹ ವ್ಯಕ್ತಿಗಳ ಪಾಲಿಗೆ ಕಾನೂನು, ನಿಯಮಗಳಿಗೆ ಯಾವುದೇ ಅರ್ಥವಿಲ್ಲ. ಅಂಗೈಯಲ್ಲಿ ಇ-ಸಿಗರೇಟ್ ಅನ್ನು ಬಚ್ಚಿಟ್ಟುಕೊಂಡಿದ್ದ ಅವರ ಧಾರ್ಷ್ಟ್ಯವನ್ನು ಕಲ್ಪಿಸಿಕೊಳ್ಳಿ. ಧೂಮಪಾನ ಕಾನೂನುಬಾಹಿರವಾಗದೆ ಇರಬಹುದು. ಆದರೆ ಸಂಸತ್ನೊಳಗೆ ಅದನ್ನು ಬಳಸುವುದು ಸ್ವೀಕಾರಾರ್ಹವಲ್ಲ. ತನ್ನ ಪಕ್ಷದ ಸಂಸದನ ಬಗ್ಗೆ ಮಮತಾ ಬ್ಯಾನರ್ಜಿ ಸ್ಪಷ್ಟೀಕರಣ ನೀಡಬೇಕೆಂದು, ಮಾಳವೀಯ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಂದೆ ಸಂಬಳ ₹12,000, ಮಗನಿಗೆ ಹೊಡೀತು ₹14.2 ಕೋಟಿ ಜಾಕ್ಪಾಟ್! IPLನಲ್ಲಿ ಬಡ ಪ್ರತಿಭೆಗೆ ಖುಲಾಯಿಸಿತು ಅದೃಷ್ಟ
ಉತ್ತರ ಪ್ರದೇಶದ ಅಮೇಥಿ ಸಮೀಪದ ಹಳ್ಳಿಯೊಂದರ 20 ವರ್ಷದ ಕ್ರಿಕೆಟಿಗ ಪ್ರಶಾಂತ್ ವೀರ್, ಐಪಿಎಲ್ ಹರಾಜಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಿಂಗಳಿಗೆ ಕೇವಲ 12,000 ರೂ. ಸಂಪಾದಿಸುವ ಶಾಲಾ ಶಿಕ್ಷಕರ ಮಗನಾಗಿರುವ ಪ್ರಶಾಂತ್ ಅವರನ್ನು, ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 14.2 ಕೋಟಿ ರೂ. ನೀಡಿ ಖರೀದಿಸಿದೆ. ಅಜ್ಜನ ಪಿಂಚಣಿ ಹಣದಲ್ಲಿ ಕ್ರಿಕೆಟ್ ಕಲಿತ ಈ ಎಡಗೈ ಸ್ಪಿನ್ನರ್, ಈಗ ಐಪಿಎಲ್ನ ಅತಿ ಹೆಚ್ಚು ಬೆಲೆಯ ಅನ್-ಕ್ಯಾಪ್ಡ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಧೋನಿ ನಾಯಕತ್ವದಲ್ಲಿ ಆಡುವುದು ನನ್ನ ಕನಸಾಗಿತ್ತು ಎಂದು ಪ್ರಶಾಂತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಹಳತಾದ 71 ಕಾನೂನುಗಳ ರದ್ದತಿ, ತಿದ್ದುಪಡಿ ಕಾಯ್ದೆಗೆ ಸಂಸತ್ ಅಸ್ತು
ಹೊಸದಿಲ್ಲಿ,ಡಿ.17: ದೇಶದ ಪ್ರಜೆಗಳ ಬದುಕನ್ನು ಸುಗಮಗೊಳಿಸುವ ಉದ್ದೇಶದಿಂದ ಬಳಕೆಯಲ್ಲಿರದ ಹಾಗೂ ಹಳತಾದ 71 ಕಾನೂನುಗಳ ರದ್ದತಿ ಅಥವಾ ತಿದ್ದುಪಡಿಯನ್ನು ಕೋರುವ ಮಸೂದೆಯನ್ನು ಸಂಸತ್ ನ ಉಭಯ ಸದನಗಳು ಬುಧವಾರ ಅಂಗೀಕರಿಸಿವೆ. ‘ಕಾಯ್ದೆ ರದ್ದತಿ ಹಾಗೂ ತಿದ್ದುಪಡಿ ವಿಧೇಯಕ 2025’ ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ಮಂಡಿಸಿದ್ದು, ಅದನ್ನು ಸದನವು ಧ್ವನಿಮತದಿಂದ ಆಂಗೀಕರಿಸಿದೆ. ಇದಕ್ಕೂ ಮುನ್ನ ಈ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿತ್ತು. ರಾಜ್ಯಸಭೆಯಲ್ಲಿ ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಮೇಘವಾಲ್ ಅವರು, ಉದ್ಯಮ ನಡೆಸುವುದನ್ನು ಸುಗಮಗೊಳಿಸುವಂತೆಯೇ, ಜನಸಾಮಾನ್ಯರ ಬದುಕನ್ನು ಸಹ ಸುಗಮಗೊಳಿಸಲು ನಾವು ಆದ್ಯತೆ ನೀಡುತ್ತಿದ್ದೇವೆ ಎಂದರು. ಈ ಮಸೂದೆಯಡಿ ತಿದ್ದುಪಡಿಗೊಳಿಸಲಿರುವ ಮಸೂದೆಗಳಲ್ಲಿ ಒಂದಾದ 1925ರ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ, ಹಿಂದೂ, ಬೌದ್ಧ, ಸಿಖ್ಖ್, ಜೈನ ಅಥವಾ ಫಾರಸಿ ಧರ್ಮೀಯನು ಉಯಿಲು ಮಾಡಿದ್ದಲ್ಲಿ, ಅದು ಮದ್ರಾಸ್, ಬಾಂಬೆ ಹಾಗೂ ಕೋಲ್ಕತಾ ಪ್ರಾಂತಗಳಲ್ಲಿ ಅದರ ಸಿಂಧುತ್ವವನ್ನು ಪರಿಶೀಲನೆಗೊಳಿಸಬೇಕಾಗುತ್ತಿತ್ತು. ಆದರೆ ಈ ನಿಬಂಧನೆಯು ಮುಸ್ಲಿಮರಿಗೆ ಅನ್ವಯವಾಗುತ್ತಿರಲಿಲ್ಲ ಎಂದು ಮೇಘವಾಲ್ ಹೇಳಿದರು. ಈಗ ನರೇಂದ್ರ ಮೋದಿ ಸರಕಾರವಿದ್ದು, ಸಂವಿಧಾನ ಪ್ರಕಾರವಾಗಿ ದೇಶವು ಕಾರ್ಯನಿರ್ವಹಿಸುತ್ತದೆ ಎಂದರು. ಧರ್ಮ, ಜಾತಿ ಹಾಗೂ ಲಿಂಗದ ಆಧಾರದಲ್ಲಿ ಯಾವುದೇ ತಾರತಮ್ಯ ಎಸಗುವುದನ್ನು ಸಂವಿಧಾನವು ತಡೆಯುತ್ತಿದೆ ಎಂದರು. ಭಾರತೀಯ ಟ್ರಾಮ್ವೇಸ್ ಕಾಯ್ದೆ 1886, ಲೆವಿ ಸಕ್ಕರೆ ದರ ಸಮಾನೀಕರಣ ನಿಧಿ ಕಾಯ್ದೆ 1976 ಹಾಗೂ ಭಾರತ್ ಪೆಟ್ರೋಲ್ ಕಾರ್ಪೊರೇಶನ್ ಲಿಮಿಟೆಡ್ ( ಉದ್ಯೋಗಿಗಳ ಸೇವಾ ಶರತ್ತುಗಳಲ್ಲಿ ನಿರ್ಧಾರ) ಕಾಯ್ದೆ, 1888 ಸೇರಿದಂತೆ 71 ಕಾಯ್ದೆಗಳನ್ನು ರದ್ದುಪಡಿಸಲು ಈ ಮಸೂದೆಯು ಬಯಸಿದೆ. ಸಾಮಾನ್ಯ ಪರಿಚ್ಚೇದಗಳ ಕಾಯ್ದೆ 1897, ನಾಗರಿಕ ಪ್ರಕ್ರಿಯಾ ಸಂಹಿತೆ 1908, ರಿಜಿಸ್ಟರ್ಡ್ ಪೋಸ್ಟ್ ವ್ಯವಸ್ಥೆಯಲ್ಲಿನ ಪರಿಭಾಷೆಗಳ ನವೀಕರಣ ಹಾಗೂ 1925ರ ಭಾರತೀಯ ಉತ್ತರಾಧಿಕಾರ ಕಾಯ್ದೆ ಇವು ಈ ಮಸೂದೆಯಡಿ ತಿದ್ದುಪಡಿಗೊಳ್ಳಲಿವೆ. 2005ರ ವಿಪತ್ತು ನಿರ್ವಹಣಾ ಕಾಯ್ದೆಯು ಈ ವಿಧೇಯಕದಡಿ ತಿದ್ದುಪಡಿಗೊಳ್ಳಲಿದೆ.
4.8 ಲಕ್ಷ ಟಿಕೆಟ್ ರಹಿತ ಸಂಚಾರ ಪ್ರಕರಣ ಪತ್ತೆ: ₹45.89 ಕೋಟಿ ಆದಾಯ ಸಂಗ್ರಹ: ನೈಋತ್ಯ ರೈಲ್ವೆ
ಬೆಂಗಳೂರು, ಡಿಸೆಂಬರ್ 17:ಭೌಗೋಳಿಕವಾಗಿ ಕರ್ನಾಟಕ ರಾಜ್ಯದ ಬಹುಪಾಲು ಹೊಂದಿರುವ ನೈಋತ್ಯ ರೈಲ್ವೆ ವಿಭಾಗವು (South Western Railways) ಟಿಕೆಟ್ ರಹಿತ ಪ್ರಕರಣಗಳ ತಪಾಸಣೆಯನ್ನು ತೀವ್ರಗೊಳಿಸಿದೆ. ಈ ಕ್ರಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ರೈಲ್ವೆ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾವಿರಾರು ಟಿಕೆಟ್ ಲೆಸ್ ಪ್ರಕರಣ ವರದಿ ಆಗಿದ್ದು, ಕೋಟ್ಯಾಂತರ ರೂಪಾಯಿ ಆದಾಯ ರೈಲ್ವೆ ಬೊಕ್ಕಸ ಸೇರಿದೆ.
ಮಂಗಳೂರು: ಮಹಿಳಾ ಕಾಂಗ್ರೆಸ್ನಿಂದ ಕ್ರಿಸ್ಮಸ್ ಸಂಭ್ರಮಾಚರಣೆ
ಮಂಗಳೂರು: ಮಂಗಳೂರು ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಧ್ಯಕ್ಷೆ ರೂಪಾ ಚೇತನ್ ನೇತೃತ್ವದಲ್ಲಿ ಆಶ್ರಮದ ವಿದ್ಯಾರ್ಥಿಗಳ ಜೊತೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮಾಚಾರಣೆ ಕಾರ್ಯಕ್ರಮ ಮಲ್ಲಿಕಟ್ಟೆಯ ಇಂದಿರಾ ಪ್ರಿಯದರ್ಶಿನಿ ಜನ್ಮ ಶತಾಬ್ದಿ ಭವನದಲ್ಲಿ ಮಂಗಳವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹಾಗೂ ಮಂಗಳೂರು ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಜ್ಯ ಮಹಿಳಾ ಕಾಂಗ್ರೆಸ್ನ ಕಾರ್ಯದರ್ಶಿಗಳಾದ ಚಂದ್ರಕಲಾ ಡಿ ರಾವ್, ಮಂಜುಳಾ ನಾಯಕ್, ಗೀತಾ ಅತ್ತಾವರ, ದ.ಕ. ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಸದಸ್ಯೆ ಶಾಂತಲಾ ಗಟ್ಟಿ, ಮೂಡಾ ಸದಸ್ಯೆ ಸಬೀತಾ ಮಿಸ್ಕಿತ್, ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಕಲಾ ಜೋಗಿ, ಮೂಲ್ಕಿ ಬ್ಲಾಕ್ ನ ಅಧ್ಯಕ್ಷೆ ವಿಲ್ಮಾ ಡಿಕೋಸ್ತಾ, ಮಂಗಳೂರು ನಗರ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾ ಅಂದ್ರಾದೆ, ಮಾಜಿ ಮ.ನ.ಪಾ ಸದಸ್ಯರಾದ ನವೀನ್ ಡಿ ಸೋಜ, ಕೇಶವ್ ಮರೋಳಿ, ಚೇತನ್ ಕುಮಾರ್, ಝೀನತ್ ಸಂಶುದ್ದೀನ್, ತನ್ವೀರ್ ಶಾ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಮೀನಾ ಟೆಲ್ಲಿಸ್, ಕಿರಣಾ ಜೇಮ್ಸ್, ಅವಿತಾ ನೊರೋನ್ಹ, ಡಿಂಪಲ್ ಫೆರ್ನಾಂಡಿಸ್, ಮೇರಿ ಶಾಂತಿಸ್, ರಮಣಿ ಉಮೇಶ್, ಭಾಗ್ಯವತಿ, ಚಂದ್ರಾವತಿ, ಲತಾಶ್ರೀ ಮಲ್ಲಿಕಾ ಜಯರಾಜ್, ಸಿಲಿಸ್ತಿನ್ ಕ್ರಾಸ್ತ, ಪದ್ಮಾವತಿ, ಗ್ರೇಸಿ ತಾವ್ರೋ, ಮರಿಯಾ ಲೋಬೊ, ಗೀತಾ ಪ್ರವೀಣ್, ವಾರ್ಡ್ ಅಧ್ಯಕ್ಷರಾದ ಜೇಮ್ಸ್ ಪ್ರವೀಣ್, ಟಿ.ಸಿ ಗಣೇಶ್, ಬ್ಲಾಕ್ ನ ಪರಿಶಿಷ್ಟ ಘಟಕದ ಅಧ್ಯಕ್ಷ ದಿನೇಶ್ ಬಲಿಪತೋಟ, ಕಿಸಾನ್ ಘಟಕದ ಅಧ್ಯಕ್ಷ ರಿತೇಶ್ ಶಕ್ತಿನಗರ, ಪ್ರಕಾಶ್ ಪಾತ್ರವೋ ಮತ್ತಿತರವರು ಉಪಸ್ಥಿತರಿದ್ದರು. ಆನ್ನಾ ಪಾತ್ರವೋ ಕಾರ್ಯಕ್ರಮ ನಿರ್ವಹಿಸಿದರು. ನ್ಯಾನ್ಸಿ ನೋರೋನ್ಹ ವಂದಿಸಿದರು.
ಕಾಸರಗೋಡು: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ
ಕಾಸರಗೋಡು: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್ ಐ ಆರ್) ಅರ್ಜಿಗಳನ್ನು ನಾಳೆ ( ಡಿಸೆಂಬರ್ 18) ರಂದು ಬೆಳಿಗ್ಗೆ 11 ಗಂಟೆ ಯೊಳಗೆ ಬಿ ಎಲ್ ಒ ಅಥವಾ ಗ್ರಾಮಾಧಿಕಾರಿಗಳಿಗೆ ತಲಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ತಿಳಿಸಿದ್ದಾರೆ. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 10,78,256 ಮತದಾರರಿದ್ದಾರೆ . ಈ ಪೈಕಿ 10,17,167 ಅರ್ಜಿಗಳನ್ನು ಡಿಜಿಟೆಲೈಸ್ ಮಾಡಲಾಗಿದೆ. 94.33 ಶೇಕಡಾ ಪ್ರಗತಿ ಸಾಧಿಸಲಾಗಿದೆ. ಉಳಿದ ಅರ್ಜಿಗಳನ್ನು ಭರ್ತಿ ಮಾಡಿ ತಲುಪಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ
ಕೊಪ್ಪಳ| ಸಾಹಿತ್ಯ ಗೊಂಡಬಾಳಗೆ ರಾಜ್ಯ ಬಾಲಗೌರವ ಪ್ರಶಸ್ತಿ ಪ್ರದಾನ
ಕೊಪ್ಪಳ: ಶ್ರೀ ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ದ್ವಿತಿಯ ಪಿಯು ವಿದ್ಯಾರ್ಥಿನಿ ಸಾಹಿತ್ಯ ಎಂ. ಗೊಂಡಬಾಳರವರಿಗೆ ಕರ್ನಾಟಕ ಸರಕಾರದ ಬಾಲವಿಕಾಸ ಅಕಾಡೆಮಿಯ ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಳಗಾವಿಯ ಸುವರ್ಣಸೌಧದ ಆಡಿಟೋರಿಯಂ ಹಾಲ್ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 2023-24ನೇ ಸಾಲಿನ ಬಹುಮುಖ ಪ್ರತಿಭೆ ವಿಭಾಗದಲ್ಲಿ ಸಮಾಜ ಸೇವಕರಾದ ಮಂಜುನಾಥ ಜಿ.ಗೊಂಡಬಾಳ ಮತ್ತು ಜ್ಯೋತಿ ಎಂ. ಗೊಂಡಬಾಳ ದಂಪತಿಯ ಪುತ್ರಿ ಕು.ಸಾಹಿತ್ಯ ಎಂ. ಗೊಂಡಬಾಳರವರಿಗೆ ಸಂಗೀತ, ವೆಸ್ಟರ್ನ್ ನೃತ್ಯ, ಭರತನಾಟ್ಯ ಸೇರಿದಂತೆ ಗಿಟಾರ್ ವಾದನ, ಕೀಬೋರ್ಡ್, ಹಾರ್ಮೋನಿಯಂ ನುಡಿಸುವುದು ಮತ್ತು ಮೌಥ್ ಪಿಯಾನೋದಲ್ಲಿ ಪರಿಣತಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶಶ್ ಬಬಲೇಶ್ವರ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವಿನಯ ನಾವಲಗಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಚೇತನ್ ಕುಮಾರ್, ಬಾಲವಿಕಾಸ ಅಕಾಡಮಿ ಯೋಜನಾಧಿಕಾರಿ ಅಕ್ಕಮಹಾದೇವಿ ಕೆ. ಹೆಚ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಗಜಪತಿ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಆಲಮಟ್ಟಿ - ಕುಷ್ಟಗಿ ಹೊಸ ರೈಲು ಮಾರ್ಗ ಸಮೀಕ್ಷೆ ಪೂರ್ಣ; 91 KM ಮಾರ್ಗ - ಯಾವೆಲ್ಲಾ ನಿಲ್ದಾಣಗಳು? 4 ಜಿಲ್ಲೆಗೆ ಅನುಕೂಲ
ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ ಗುಡ್ನ್ಯೂಸ್. ಆಲಮಟ್ಟಿ - ಕುಷ್ಟಗಿ ನಡುವೆ 91 ಕಿ.ಮೀ ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, 2026ರ ಮೇ ವೇಳೆಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗಲಿದೆ. ಇದರಿಂದ ವಿಜಯಪುರ, ಬಾಗಲಕೋಟೆ, ಕೊಪ್ಪಳ, ವಿಜಯನಗರ ಸೇರಿ ನಾಲ್ಕು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ವಾಹನಗಳ ನೋಂದಣಿಗೆ ನಕಲಿ ದಾಖಲೆ ಸೃಷ್ಟಿಸಿದರೆ ನಿರ್ದಾಕ್ಷಿಣ್ಯ ಕ್ರಮ : ರಾಮಲಿಂಗಾರೆಡ್ಡಿ
ಬೆಳಗಾವಿ : ರಾಜ್ಯದ ಯಾವುದೇ ಆರ್ ಟಿಓ ಕಚೇರಿಗಳಲ್ಲಿ ಐಷಾರಾಮಿ ಕಾರುಗಳ ನೋಂದಣಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿಜವಾದ ವಾಹನದ ಮೌಲ್ಯವನ್ನು ಮರೆಮಾಚಿ ನೋಂದಣಿ ಮಾಡಿರುವುದು, ಮಾಡುವುದು ಸರಕಾರದ ಗಮನಕ್ಕೆ ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳು, ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಬುಧವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಂಗಳೂರು ಮತ್ತು ಉಡುಪಿ ಆರ್.ಟಿ.ಒ ಕಚೇರಿಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಾರಿನ ನಿಜವಾದ ಮೌಲ್ಯವನ್ನು ಮರೆಮಾಚಿ, ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕಚೇರಿಯ ಕೇಂದ್ರ ಸ್ಥಾನೀಯ ಸಹಾಯಕರು, ಅಧೀಕ್ಷಕರು ಮತ್ತು ಪ್ರಥಮ ದರ್ಜೆ ಸಹಾಯಕರು ಹಾಗೂ ಉಡುಪಿ ಕಚೇರಿಯ ಅಧೀಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಸಂಬಂಧ ಇಲಾಖಾ ವಿಚಾರಣೆ ಜಾರಿಯಲ್ಲಿದೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಪ್ರಸ್ತಾವದ ಮೇರೆಗೆ ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರುದ್ಧ ವಿಚಾರಣೆ, ತನಿಖೆ ಕೈಗೊಳ್ಳಲು ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆಯ ಕಲಂ 17(ಎ) ಅನ್ವಯ ಪೂರ್ವಾನುಮತಿಯನ್ನು ಸಹ ನೀಡಲಾಗಿರುತ್ತದೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.
ವಸತಿ ರಹಿತ ಮೀನುಗಾರರಿಗೆ 10 ಸಾವಿರ ಮನೆ: ಮಂಕಾಳ ವೈದ್ಯ
ಬೆಳಗಾವಿ : ಮೀನುಗಾರರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಸಾಲ ಸೌಲಭ್ಯ, ವಿದ್ಯಾನಿಧಿ ಯೋಜನೆ, ಗುಂಪು ವಿಮಾ ಯೋಜನೆ ಜಾರಿ ಸೇರಿದಂತೆ ರಾಜ್ಯ ಸರಕಾರವು ವಸತಿ ರಹಿತ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಇದುವರೆಗೆ 10 ಸಾವಿರ ಮನೆಗಳನ್ನು ನೀಡಿದೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು. ಬುಧವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾಗರಾಜು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಾಂಪ್ರದಾಯಿಕ ಮೀನುಗಾರರಿಗೆ ಮೀನು ಹಿಡುವಳಿಯನ್ನು ಹೆಚ್ಚಿಸಲು ಸಮುದ್ರದಲ್ಲಿ ಮೀನುಮರಿಗಳ ಬಿತ್ತನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕಾಗಿ 2025-26ನೇ ಸಾಲಿನಲ್ಲಿ 50 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಈ ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ 1.53 ಲಕ್ಷ ಸೀಬಾಸ್ ತಳಿಯ ಮೀನುಮರಿಗಳನ್ನು ಕರಾವಳಿಯ ಅಳಿವೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮೀನುಗಾರಿಕೆ ಇಲಾಖೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯವನ್ನು ಒಟ್ಟು 14,998 ಮೀನುಗಾರರು ಪಡೆದಿರುತ್ತಾರೆ. ಮೀನುಗಾರರ ಸಮುದಾಯದ ಕಲ್ಯಾಣವನ್ನು ಕಾಪಾಡಲು ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ, ಆಕಸ್ಮಿಕ ಅವಘಡದಿಂದ ಮೃತಪಟ್ಟ ಮೀನುಗಾರರ ವಾರಸುದಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರ ವಿತರಣೆ, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಣೆ, ಮೀನುಗಾರರ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಪರಿಹಾರ ವಿತರಣೆ, ಮೀನುಗಾರರಿಗೆ ಗುಂಪು ವಿಮಾ ಯೋಜನೆ, ವಸತಿ ಸೌಕರ್ಯ, ಸಾಂಪ್ರದಾಯಿಕ ಮೀನುಗಾರರರಿಗೆ ಮೀನು ಹಿಡುವಳಿಯನ್ನು ಹೆಚ್ಚಿಸಲು ಕೃತಕ ಬಂಡೆಗಳ ಸ್ಥಾಪನೆ ಹಾಗೂ ಸಮುದ್ರದಲ್ಲಿ ಮೀನುಮರಿ ಬಿತ್ತನೆ ಕಾರ್ಯಕ್ರಮ ಯೋಜನೆಗಳು ಜಾರಿಯಲ್ಲಿವೆ ಎಂದು ಮಂಕಾಳ ವೈದ್ಯ ಸದನಕ್ಕೆ ಮಾಹಿತಿ ನೀಡಿದರು.
ಕನಕಗಿರಿ|ಗಣಿ, ಭೂ ವಿಜ್ಞಾನ ಇಲಾಖೆ ಕಾರಿಗೆ ಬಸ್ ಢಿಕ್ಕಿ : ಸಿಬ್ಬಂದಿ ಅಪಾಯದಿಂದ ಪಾರು
ಕನಕಗಿರಿ: ಕನಕಗಿರಿಯ ತೊಂಡೆತೇವರಪ್ಪ ದೇವಸ್ಥಾನದ ಕಮಾನಿನ ಬಳಿ ಸರಕಾರಿ ಬಸ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರಿಗೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಗ್ಲಾಸ್ ಸಂಪೂರ್ಣವಾಗಿ ಪುಡಿ ಪುಡಿಯಾಗಿವೆ. ಕಾರಿನಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ ಖಾತಾ ನಿಯಮಕ್ಕೆ ಕಾಲಾವಕಾಶ ಬೇಕು : ಪ್ರಿಯಾಂಕ್ ಖರ್ಗೆ
ಬೆಳಗಾವಿ : ಗ್ರಾಮೀಣ ಪ್ರದೇಶಗಳಲ್ಲಿನ ಕಂದಾಯ ಜಮೀನಿನಲ್ಲಿ ನಿವೇಶನವನ್ನು ಕೇವಲ ಕರಾರು ಒಪ್ಪಂದ ಪತ್ರದಲ್ಲಿ ಖರೀದಿಸಿ, ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಿ, ಖಾತಾ ಒದಗಿಸುವುದಕ್ಕೆ ನಿಯಮಗಳನ್ನು ರೂಪಿಸಲು ಕಾಲಾವಕಾಶ ಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಜೆ.ಎನ್.ಗಣೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಕಂದಾಯ ನಿವೇಶನಗಳಿಗೆ ಖರೀದಿಯ ಕ್ರಯಪತ್ರ ಮುಂತಾದ ದಾಖಲೆಗಳನ್ನು ಪರಿಶೀಲಿಸಿ, ಇ-ಸ್ವತ್ತು ನೀಡಿ, ಅವುಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲು ಕ್ರಮ ವಹಿಸಿದ್ದು, ಈವರೆಗೆ 2,936 ಅರ್ಜಿಗಳು ಸ್ವೀಕೃತವಾಗಿವೆ. ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಅಥವಾ ಗ್ರಾಮದ ಭಾಗವಾಗಿ ಪರಿವರ್ತಿಸಿ, ಅಲ್ಲಿನ ನಿವಾಸಿಗಳಿಗೆ ಭೂಸುಧಾರಣಾ ಕಾಯ್ದೆ ಅನ್ವಯ ಹಕ್ಕುಪತ್ರಗಳನ್ನು ಕಂದಾಯ ಇಲಾಖೆಯಿಂದ ವಿತರಿಸಲು ಅವಕಾಶ ಕಲ್ಪಿಸಲಾಗಿದ್ದು, ಕಂದಾಯ ಇಲಾಖೆಯಿಂದ ಹಕ್ಕುಪತ್ರ ಒದಗಿಸಿದಲ್ಲಿ, ಗ್ರಾಮ ಪಂಚಾಯತಿಗಳಿಗೆ ಖಾತೆ ವಿತರಣೆ ಮಾಡಲು ಅವಕಾಶವಿದೆ. ಆದರೆ ಕೇವಲ ಕರಾರು ಪತ್ರದ ಆಧಾರದಲ್ಲಿ ನಿವೇಶನ ಖರೀದಿಸಿ, ವಸತಿ ನಿರ್ಮಿಸಿದವರಿಗೆ, ಒಂದು ಬಾರಿಯ ಪರಿಹಾರವಾಗಿ ಖಾತಾ ಮಾಡಿಕೊಡಲು ನಿಯಮಗಳನ್ನು ರೂಪಿಸಬೇಕಾಗುತ್ತದೆ. ಇದು ತಕ್ಷಣಕ್ಕೆ ಆಗುವ ಕೆಲಸವಲ್ಲ, ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಇದಕ್ಕೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದರು.
ಮಹಾತ್ಮ ಗಾಂಧೀಜಿ ‘ರಘುಪತಿ ರಾಘವ್ ರಾಜಾ ರಾಮ್’ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದರು ಎಂದ ಕಂಗನಾ ರಾಣಾವತ್!
MGNREGA ಮರುನಾಮಕರಣ ವಿವಾದದ ಬಗ್ಗೆ ಮಾತನಾಡಲು ಹೋಗಿ ಮತ್ತೊಂದು ವಿವಾದ ಹುಟ್ಟುಹಾಕಿದ ಮಂಡಿ ಸಂಸದೆ
25.2 ಕೋಟಿ ರೂ.ಗೆ IPL ನಲ್ಲಿ ಹರಾಜಾದ ಮರುದಿನವೇ ಆ್ಯಷಸ್ ಟೆಸ್ಟ್ ನಲ್ಲಿ 'ಮೊಟ್ಟೆ'ಯಿಟ್ಟ ಗ್ರೀನ್!
ಅಡಿಲೇಡ್: ಅಬುಧಾಬಿಯಲ್ಲಿ ಡಿ.16ರ ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಮಿನಿ ಹರಾಜಿನಲ್ಲಿ 25.2 ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟವಾಗಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ಬುಧವಾರ ಆ್ಯಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೊನ್ನೆಗೆ ಔಟಾಗಿ ನಿರಾಸೆ ಮೂಡಿಸಿದರು. ಆಸ್ಟ್ರೇಲಿಯಾ–ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 94 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಗ್ರೀನ್ ಕೇವಲ ಎರಡು ಬಾಲ್ ಎದುರಿಸಿದರು. ಜೋಫ್ರಾ ಆರ್ಚರ್ ಎಸೆತದಲ್ಲಿ ಬ್ರೆಡನ್ ಕಾರ್ಸೆಗೆ ಕ್ಯಾಚ್ ನೀಡಿ ಅವರು ವಿಕೆಟ್ ಒಪ್ಪಿಸಿದರು. ಈ ಆ್ಯಷಸ್ ಸರಣಿಯಲ್ಲಿ ಇದುವರೆಗೆ ಮೂರು ಇನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ಮಾಡಿದ ಗ್ರೀನ್ ಒಟ್ಟು 69 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ 16 ಓವರ್ಗಳನ್ನು ಎಸೆದು ಒಂದೇ ವಿಕೆಟ್ ಪಡೆದಿದ್ದಾರೆ. ವಿಕೆಟ್ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ದಿನದ ಅಂತ್ಯಕ್ಕೆ 83 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ. ಐಪಿಎಲ್ ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ 25.2 ಕೋಟಿ ರೂಪಾಯಿ ಮೊತ್ತಕ್ಕೆ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.
ಬಿದ್ಕಲ್ಕಟ್ಟೆಯಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ
ಉಡುಪಿ, ಡಿ.17: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್, ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಏಳು ಶಾಲೆಗಳ ಪ್ರೌಢ ಶಾಲಾ ವಿದ್ಯಾರ್ಥಿಗಳ ಕಿಶೋರ ಯಕ್ಷಗಾನ ಸಂಭ್ರಮದ ಪ್ರದರ್ಶನಗಳನ್ನು ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಆಯೋಜಿಸಿದ್ದು ಇದರ ಉದ್ಘಾಟನೆ ಮಂಗಳವಾರ ಸಂಜೆ ಜರಗಿತು. ಪ್ರದರ್ಶನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಸ್ಥಳೀಯ ಉದ್ಯಮಿ ಎಚ್.ಶಂಕರ ಹೆಗ್ಡೆ ಜನ್ನಾಡಿ ಮಾತನಾಡಿ, ಯಕ್ಷಗಾನ ನಮ್ಮ ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ತಲಪಿಸಿ, ಉತ್ತಮ ಜೀವನ ಮೌಲ್ಯಗಳನ್ನು ಕಲಿಸುವ ಅತ್ಯುತ್ತಮ ಕಲಾಪ್ರಕಾರ. ‘ಯಕ್ಷಶಿಕ್ಷಣ ಟ್ರಸ್ಟ್’ ಶಾಲೆಗಳಲ್ಲಿ ಯಕ್ಷ ಶಿಕ್ಷಣ ಮಹಾಭಿ ಯಾನದ ಮೂಲಕ ಮೇಲಿನ ಉದ್ದೇಶವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದರು. ಪ್ರಾಯೋಜಕರಾದ ಪ್ರಶಾಂತ್ ಮತ್ತು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಟ್ರಸ್ಟ್ನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ, ಕಲಾರಂಗದ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು. ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳನ್ನಾಡಿದರು. ಜಯಪ್ರಕಾಶ್ ಅತಿಥಿಗಲನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮೊದಲ ದಿನ ಅಮಾಸೆಬೈಲಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ‘ಸುದರ್ಶನ ವಿಜಯ’ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿಯ ವಿದ್ಯಾರ್ಥಿಗಳು ‘ಮೀನಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನೀಡಿದರು.
ರೆಡ್ಕ್ರಾಸ್ನಿಂದ ವಿದ್ಯಾರ್ಥಿಗಳಿಗೆ ಜೂನಿಯರ್ ರೆಡ್ಕ್ರಾಸ್ ಪರೀಕ್ಷೆ
ಉಡುಪಿ, ಡಿ.17: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯು ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಜೂನಿಯರ್ ರೆಡ್ಕ್ರಾಸ್ ಘಟಕವನ್ನು ಹೊಂದಿದೆ. ಪ್ರತೀ ವರ್ಷ ರಾಜ್ಯದಾದ್ಯಂತ ರೆಡ್ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯ ಶಾಖೆಯು ಜೂನಿಯರ್ ರೆಡ್ಕ್ರಾಸ್ ಪರೀಕ್ಷೆಯನ್ನು ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆಸುತ್ತಿದೆ. ಈ ವರ್ಷದ ಪರೀಕ್ಷೆಯು ಮುಂದಿನ ಜನವರಿ 3ರಂದು ಸಂಬಂಧಿಸಿದ ಕಾಲೇಜುಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು 65ರೂ. ಶುಲ್ಕಗಳೊಂದಿಗೆ ಡಿಸೆಂಬರ್ 20ರೊಳಗೆ ರೆಡ್ಕ್ರಾಸ್ನ ವೆಬ್ಸೈಟ್ -www.redcross karnataka.org- ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಸಂಸ್ಥೆಗಳ ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ರೆಡ್ಕ್ರಾಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು (ಮೊಬೈಲ್: 9964583433) ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಸೈಬರ್ ವಂಚನೆ ಪ್ರಕರಣವನ್ನು ಬೇಧಿಸಿದ ಪೊಲೀಸರು| ಹಣ ಕಳೆದುಕೊಂಡವರ ಖಾತೆಗೆ 2.73 ಕೋಟಿ ಜಮೆ: ಡಾ.ಶರಣಪ್ಪ ಎಸ್.ಡಿ
ಕಲಬುರಗಿ: 2025ನೇ ಸಾಲಿನಲ್ಲಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡವರ ಖಾತೆಗೆ 2,73,24,849 ರೂ. ಜಮೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶರಣಪ್ಪ ಎಸ್.ಡಿ, ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಸೈಬರ್ ಅಪರಾಧ ಸಂಬಂಧಿತ ಪ್ರಕರಣಗಳನ್ನು ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್ ಮಾರ್ಗದರ್ಶನದ ತಂಡ ತನಿಖೆ ನಡೆಸಿ ಸೈಬರ್ ವಂಚನೆ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. 2025ನೇ ಸಾಲಿನಲ್ಲಿ ಕಳೆದುಕೊಂಡ/ಮೋಸಕ್ಕೊಳಗಾದ ಹಣ ಮತ್ತು ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ದಾಖಲಾದ ಒಟ್ಟು 2,211 ಪ್ರಕರಣಗಳಿಂದ ವಂಚನೆಗೆ ಒಳಗಾದ ಒಟ್ಟು 8.93 ಕೋಟಿ ಮೊತ್ತದಲ್ಲಿ ವಶಪಡಿಸಿಕೊಂಡ 96.82 ಲಕ್ಷ ಹಾಗೂ ಸೈಬರ್ ವಂಚನೆಗೊಳಗಾಗಿ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು 40 ಪ್ರಕರಣಗಳಿಂದ ವಂಚನೆಗೊಳಗಾದ ಒಟ್ಟು 12.72 ಕೋಟಿ ಮೊತ್ತದಲ್ಲಿ ವಶಪಡಿಸಿಕೊಂಡ 1.76 ಕೋಟಿ ಸೇರಿ 2.73 ಕೋಟಿ ರೂಪಾಯಿಗಳನ್ನು ನೊಂದವರ ಖಾತೆಗೆ ಮರಳಿ ಜಮೆ ಮಾಡಲಾಗಿದೆ ಎಂದು ವಿವರಿಸಿದರು. ಇತ್ತೀಚೆಗೆ ದಾಖಲಾದ ಕೆಲವೊಂದು ಪ್ರಕರಣಗಳಲ್ಲಿ ವಂಚನೆಗೆ ಒಳಗಾದ ಸಾರ್ವಜನಿಕರು ಸೂಕ್ತ ಸಮಯದಲ್ಲಿ ಪ್ರಕರಣ ದಾಖಲಿಸಿದ್ದರಿಂದ ಶೇ.70 ರಿಂದ 85 ರಷ್ಟು ಹಣವನ್ನು ಆರೋಪಿತರ ಖಾತೆಯಿಂದ ವಂಚನೆಗೆ ಒಳಗಾದವರ ಖಾತೆಗೆ ಮರಳಿ ಜಮೆ ಮಾಡಲಾಗಿದೆ ಎಂದು ತಿಳಿಸಿದರು. ಸೈಬರ್ ಅಪರಾಧಗಳನ್ನು ಬೇಧಿಸಿ ನೊಂದವರ ಖಾತೆಗಳಿಗೆ ಹಣ ಮರಳಿ ಜಮಾವಣೆ ಮಾಡುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದರು. ಕೆಲವೊಂದು ಸೈಬರ್ ಅಪರಾಧಗಳು ಹೆಚ್ಚಾಗಿ ಶನಿವಾರ ಹಾಗೂ ರವಿವಾರದ ದಿನ ನಡೆಯುತ್ತಿದ್ದು, ಈ ಎರಡೂ ದಿನಗಳಂದು ಬ್ಯಾಂಕ್ ರಜೆ ಇರುವ ಕಾರಣ ಸಾರ್ವಜನಿಕರು ಬ್ಯಾಂಕ್ಗಳಿಗೆ ಭೇಟಿ ನೀಡಲು ಸಾಧ್ಯವಾಗದೇ ಪ್ರಕರಣ ದಾಖಲಿಸಲು ಸಾಧ್ಯವಾಗುವುದಿಲ್ಲ ಎಂಬ ತಪ್ಪು ತಿಳುವಳಿಕೆ ಇದೆ. ಆದರೆ, ಸಾರ್ವಜನಿಕರು ಯಾವುದೇ ಸೈಬರ್ ಅಪರಾಧಕ್ಕೊಳಗಾದಲ್ಲಿ 24 ಗಂಟೆಯೊಳಗಾಗಿ ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ಪ್ರಕರಣ ದಾಖಲಿಸಿದಲ್ಲಿ ಮೋಸಕ್ಕೊಳಗಾದ/ವಂಚನೆಗೊಳಗಾದ ಹಣವನ್ನು ಮರಳಿ ಪಡೆಯಲು ಶೇ.70 ರಿಂದ 85 ರಷ್ಟು ಸಾಧ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ವಂಚನೆಗೊಳಗಾದ 24 ಗಂಟೆಯೊಳಗೆ ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ಪ್ರಕರಣ ದಾಖಲಿಸಬೇಕು ಅಥವಾ ಸಮೀಪದ ಠಾಣೆಗೆ ಹೋಗಿಯೂ ದೂರು ನೀಡಬಹುದು ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸಲಹೆ ನೀಡಿದರು.
ಉಡುಪಿ: 47ನೇ ‘ವಾದಿರಾಜ-ಕನಕದಾಸ ಸಂಗೀತೋತ್ಸವ’ ಕಾರ್ಯಕ್ರಮ ಡಿ.28ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಸಂಸ್ಥೆಗಳು ಸಂಘಟಿಸಿವೆ. ಸಂಗೀತೋತ್ಸವದ ಪ್ರಯುಕ್ತ ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ವಾದಿರಾಜ- ಕನಕ ಗಾಯನ ಸ್ಪರ್ಧೆಯನ್ನು ಡಿ.27ರಂದು ಬೆಳಿಗ್ಗೆ 9:00 ಗಂಟೆಗೆ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ರವೀಂದ್ರ ಮಂಟಪದಲ್ಲಿ ನಡೆಸಲಾಗುವುದು. ಸ್ಪರ್ಧಾಳುಗಳು ವಾದಿರಾಜ ಮತ್ತು ಕನಕದಾಸರ ಎರಡೆರಡು ಕೀರ್ತನೆ ಗಳನ್ನು ಅಭ್ಯಸಿಸಿದ್ದು, ತೀರ್ಪುಗಾರರು ಕೇಳುವ ಕೀರ್ತನೆಯನ್ನು ಹಾಡಲು ಶಕ್ತರಿರಬೇಕು. ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಆಡಳಿತಾಧಿಕಾರಿಗಳು, ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂಜಿಎಂ ಕಾಲೇಜು ಆವರಣ, ಉಡುಪಿ 576102 ಈ ವಿಳಾಸಕ್ಕೆ ಕಳುಹಿಸಿಕೊಡಬಹುದು ಅಥವಾ ಸ್ಪರ್ಧೆಯ ದಿನ ಸ್ಥಳದಲ್ಲೇ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ: 9964140601/ 9449471449/ 9448868868, ಇಮೇಲ್:- rgpaiudupi@gmail.com-ನ್ನು ಸಂಪರ್ಕಿ ಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಕಾಯ್ದೆ ರೂಪ | ಕರ್ನಾಟಕ ಅನುಸೂಚಿತ ಜಾತಿಗಳ(ಉಪವರ್ಗೀಕರಣ) ವಿಧೇಯಕ ಮಂಡನೆ
ಪ್ರವರ್ಗ-‘ಎ, ಬಿ, ಸಿ’ ಕ್ರಮವಾಗಿ ಶೇ. 6, 6, 5ರಷ್ಟು ಮೀಸಲಾತಿ ಹಂಚಿಕೆ
ಪಾಕಿಸ್ತಾನದ ಹೆಗಲ ಮೇಲೆ ಅಮೇರಿಕಾದ ಬಂದೂಕು! ಪಾಕ್ಗೆ ಉಭಯ ಸಂಕಟ
ಅಮೇರಿಕಾ: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಹೆಗಲ ಮೇಲೆ ಬಂದೂಕು ಇರಿಸಿದ್ದಾರೆ. ಭಾರತದ ವಿರುದ್ಧ ನಡೆದ ಯುದ್ಧ ಸೇರಿದಂತೆ ಹಲವು ಸಂಕಷ್ಟದ ಸಂದರ್ಭದಲ್ಲಿ ಅಮೇರಿಕಾ - ಚೀನಾದ ಬಳಿ ಸಹಾಯ ಪಡೆದುಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಒತ್ತಡವು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಅಮೇರಿಕಾದ ಸಹಾಯದಿಂದ ಭಾರೀ ಲಾಭವನ್ನು ಪಡೆದುಕೊಳ್ಳಬಹುದು
ವಿಧಾನಸಭೆಯಲ್ಲಿ ಗದ್ದಲದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಆಪ್ತ ಶಾಸಕರೊಂದಿಗೆ ಪ್ರತ್ಯೇಕವಾಗಿ ಅವರು ಕುಳಿತಲ್ಲೇ ತೆರಳಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ನಾಯಕತ್ವ ಬದಲಾವಣೆ ಚರ್ಚೆಗಳ ಮಧ್ಯೆ ಡಿಕೆ ಶಿವಕುಮಾರ್ ಅವರ ಈ ಭೇಟಿ, ಮಾತು ರಾಜಕೀಯ ವಲಯದಲ್ಲಿ ಹೊಸ ಊಹಾಪೋಹಗಳಿಗೆ ಕಾರಣವಾಗಿವೆ. ಶಾಸಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಂಗಳೂರು: ಕರಾವಳಿ ಉತ್ಸವ 2025ರ ಆಯೋಜನೆ ಅಂಗವಾಗಿ ತಣ್ಣೀರುಬಾವಿ ಕಡಲ ತೀರದಲ್ಲಿ ಜನವರಿ 9 ರಿಂದ 11 ರವರೆಗೆ ತಪಸ್ಯಾ ಫೌಂಡೇಶನ್ ಸಹಯೋಗದಲ್ಲಿ ಟ್ರಯತ್ಲಾನ್ ಚಟುಚಟಿಕೆಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳು ಸೂಕ್ತ ರೀತಿ ಕಾರ್ಯನಿರ್ವಹಿಸುವಂತೆ ಸಹಕರಿಸಬೇಕು ಎಂದು ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಹೇಳಿದ್ದಾರೆ. ಬುಧವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಟ್ರಯತ್ಲಾನ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೈಕ್ಲಿಂಗ್, ಮ್ಯಾರಥಾನ್ನಲ್ಲಿ ಅನೇಕ ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದು, ಕ್ರೀಡಾಪಟುಗಳಿಗೆ ಯಾವುದೇ ತೊಂದರೆಯಾಗದಂತೆ ರಸ್ತೆಗಳಲ್ಲಿರುವ ಹೊಂಡ ಗುಂಡಿಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸೂಕ್ತ ರೀತಿಯಲ್ಲಿ ಬೀದಿ ದೀಪದ ವ್ಯವಸ್ಥೆಯನ್ನು ಮಾಡಬೇಕು ಸ್ಪರ್ಧಾತ್ಮಕ ಕ್ರೀಡೆ, ಗ್ರಾಮೀಣ ಮತ್ತು ಕೃಷಿ-ತಂತ್ರಜ್ಞಾನ ನಾವೀನ್ಯತೆ, ಸಾಂಸ್ಕತಿಕ ಕಲೆಗಳು, ಯುವ ಪ್ರತಿಭಾ ವೇದಿಕೆಗಳು ಮತ್ತು ಸಮುದಾಯ-ಚಾಲಿತ ಅನುಭವಗಳನ್ನು ಸಂಯೋಜಿಸುವ ಈ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ, ಕಲಾವಿದರಿಗೆ ಯಾವುದೇ ರೀತಿಯ ಸಮಸ್ಯೆಗಳಾ ಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು. ಜನವರಿ 9 ರಂದು ರಾಷ್ಟ್ರೀಯ ಓಪನ್ ವಾಟರ್ ಈಜು ಚಾಂಪಿಯನ್ಶಿಪ್ನೊಂದಿಗೆ ಉತ್ಸವವು ಪ್ರಾರಂಭವಾಗು ತ್ತದೆ. ಮೊದಲ ದಿನವು ರಾಜ್ಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ, 20-30 ಮಳಿಗೆಗಳನ್ನು ಹೊಂದಿರುವ ಕೃಷಿ ತಂತ್ರಜ್ಞಾನ ಪ್ರದರ್ಶನ ಮತ್ತು ಬೀಚ್ ಕುಸ್ತಿ ಸ್ಪರ್ಧೆಗಳನ್ನು ಒಳಗೊಂಡಿದೆ. ಜನವರಿ 10 ರಂದು ಸೈಕ್ಲಿಂಗ್, ಡ್ಯುಯಥ್ಲಾನ್, ಬೀಚ್ ಕುಸ್ತಿ ಮತ್ತು ಬೈಕ್ ಸ್ಟಂಟ್ ಶೋ ಮತ್ತು ನೃತ್ಯ ಸ್ಪರ್ಧೆಗಳು ನಡೆಯಲಿದೆ. ಜನವರಿ 11 ರಂದು ಮಂಗಳೂರು ಟ್ರಯಥ್ಲಾನ್ ಮತ್ತು ಮ್ಯಾರಥಾನ್ ಸ್ಪರ್ಧೆಗಳ ನಂತರ ಕಲಾ ಸ್ಪರ್ಧೆ ಮತ್ತು ಬ್ಯಾಟಲ್ ಆಫ್ ಬ್ಯಾಂಡ್ಸ್, ಫ್ಯಾಷನ್ ಶೋ ಪ್ರದರ್ಶನ ನಡೆಯಲಿದೆ ಎಂದು ತಪಸ್ಯಾ ಫೌಂಡೇಶನ್ ಪ್ರತಿನಿಧಿ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಇದ್ದರು.
ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳು ಭಾರತಕ್ಕೆ ಮಾತ್ರ ಸೀಮಿತಗೊಂಡಿವೆ : ಡಾ. ಚನ್ನಬಸವಾನಂದ್ ಸ್ವಾಮೀಜಿ
ಬೀದರ್ : ಬುದ್ಧ, ಮಹಾವೀರ, ಏಸುಕ್ರಿಸ್ತ ಮತ್ತು ಗುರುನಾನಕರ ಸಮಾನತೆಯ ಸಂದೇಶಗಳು ವಿಶ್ವಮಟ್ಟದಲ್ಲಿ ಬೆಳೆದಿವೆ. ಆದರೆ ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳು ಭಾರತಕ್ಕೆ ಮಾತ್ರ ಸೀಮಿತಗೊಂಡಿವೆ. ಶಾಲಾ ಕಾಲೇಜು ಸ್ಥಾಪಿಸಿ, ಹಣ ಸಂಪಾದನೆ ಮಾಡುವುದು ಸುಲಭ. ಆದರೆ ವಿಶ್ವಮಟ್ಟದಲ್ಲಿ ಬಸವ ತತ್ವದ ಪ್ರಚಾರ, ಪ್ರಸಾರ ಮಾಡುವುದು ಕಠಿಣವಾದ ಕೆಲಸವಾಗಿದೆ. ಈ ಕಾರಣಕ್ಕಾಗಿ ಬಸವ ಸಂದೇಶಗಳನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಘನ ಉದ್ದೇಶ ನಮ್ಮದಾಗಿದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ್ ಜ್ಞಾನಪೀಠದ ಪೀಠಾಧ್ಯಕ್ಷ ಜಗದ್ಗುರು ಡಾ. ಚನ್ನಬಸವಾನಂದ್ ಮಹಾಸ್ವಾಮೀಜಿ ಹೇಳಿದ್ದಾರೆ. ದುಬೈನ ಅಲ್ ರಿಂಗ್ ನಗರದ ರಸ್ವೆಲ್ಲಾ ಹೊಟೇಲ್ ಸಭಾಂಗಣದಲ್ಲಿ ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ, ಹೈದರಾಬಾದ್ ನ ಗುರುಬಸವ ಫೌಂಡೇಶನ್ ಹಾಗೂ ಚನ್ನಬಸವೇಶ್ವರ್ ಸಾಹಿತ್ಯಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ ಆರನೇ ಬಸವ ತತ್ವ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಡಾ. ಚನ್ನಬಸವಾನಂದ್ ಮಹಾಸ್ವಾಮೀಜಿ, ನೇಪಾಳ, ಭೂತಾನ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್ ನಲ್ಲಿ ಬಸವ ಸಮ್ಮೇಳನ ಮಾಡಲಾಗಿದೆ. ಏಳನೇ ಅಂತಾರಾಷ್ಟ್ರೀಯ ಬಸವ ತತ್ವ ಸಮ್ಮೇಳನ ಸಿಂಗಾಪುರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ದುಬೈ ಸಮ್ಮೇಳನ ಯಶಸ್ವಿಯಾಗಿ ಜರುಗಿದೆ. ಇಲ್ಲಿರುವ ಕನ್ನಡಿಗರು ಕೂಡ ಸಮ್ಮೇಳನದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. ದುಬೈ ಕನ್ನಡಿಗ ಹಾಗೂ ಬಸವಾಭಿಮಾನಿ ಪ್ರಭುರಾಜ್ ಹರಕಂಗಿ ಅವರು ಮಾತನಾಡಿ, ಪೂಜ್ಯ ಶ್ರೀ ಚನ್ನಬಸವಾನಂದ್ ಮಹಾಸ್ವಾಮಿಗಳು ವಿಶ್ವಮಟ್ಟದಲ್ಲಿ ಬಸವ ತತ್ವದ ಪ್ರಚಾರಗೈದು ಭಾರತದ ಕೀರ್ತಿ ಜಗತ್ತಿನಾದ್ಯಂತ ಪಸರಿಸುತ್ತಿರುವುದು ಸಂತಸದ ವಿಚಾರವಾಗಿದೆ. ಚನ್ನಬಸವಾನಂದ್ ಸ್ವಾಮೀಜಿ ಬಹುಭಾಷಾ ಪ್ರಾವೀಣ್ಯತೆ ಹೊಂದಿರುವ ಪ್ರತಿಭಾವಂತರು. ಅವರ ಬಸವ ತತ್ವದ ಪ್ರಚಾರದ ಪಯಣ ವಿಶ್ವಮಟ್ಟದಲ್ಲಿ ಸಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಸಾರ ಕೃತಿ ಲೋಕಾರ್ಪಣೆ ಮಾಡಲಾಯಿತು. ಸಮ್ಮೇಳನದಲ್ಲಿ ಭಾಗವಹಿದ ಶರಣರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಧಾರವಾಡ ಮೂಲದ ದುಬೈ ಕನ್ನಡಿಗ ಹಾಗೂ ಇಂಜಿನಿಯರ್ ಅಭಿಷೇಕ್ ಹರಕಂಗಿ, ಹುಬ್ಬಳ್ಳಿಯ ಶಿವಾನಂದ್ ಹೆಗಡೆ, ಮಹಾಂತಯ್ಯಾ ಗಣಾಚಾರಿ, ಬಾಬುರಾವ ಸೊಂತ, ಡಾ.ವೈಜಿನಾಥ್ ಭುಟ್ಟೆ, ಶ್ರೀದೇವಿ ಪಾಟೀಲ್, ಗಿರಿಜಮ್ಮ ಧಾರವಾಡ್, ಮಹಾರುದ್ರ ಡಾಕುಳಗಿ, ನ್ಯಾಯವಾದಿ ಅಶೋಕ್ ಮಾನೂರೆ, ಸತ್ಯಾದೇವಿ ಮಾತಾಜಿ, ನಾಗನಾಥ್ ಪಾಟೀಲ್ ಹೈದರಾಬಾದ್, ಶ್ರೀನಾಥ್ ಕೋರೆ, ಸಂಗಮೇಶ್ ಕೆ.ಬಿ, ವಿದ್ಯಾ ಧಾರವಾಡ್, ಜಗನ್ನಾಥ್ ಹೈದರಾಬಾದ್, ಮಂಜುನಾಥ್ ಹೈದರಾಬಾದ್, ಪ್ರಕಾಶ್ ಜಿ.ಕೆ ಹಾಗೂ ಗಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ನಿರ್ಣಯ ಅಂಗೀಕರಿಸಬೇಕು : ಎ.ಎಸ್.ಪೊನ್ನಣ್ಣ
ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ಸದನ ಮುಂದೂಡಿಕೆ
ಕೆರೆ ಒತ್ತುವರಿಯಾದರೆ ಅಧಿಕಾರಿಗಳ ವಿರುದ್ಧವೇ ಕೇಸು : ದ.ಕ. ಜಿಲ್ಲಾಧಿಕಾರಿ ದರ್ಶನ್
ಮಂಗಳೂರು: ದ.ಕ. ಜಿಲ್ಲೆಯಲ್ಲಿರುವ ವಿವಿಧ ಕೆರೆಗಳ ರಕ್ಷಣೆಗೆ ಸಂಬಂಧಿಸಿದ ಇಲಾಖೆಗಳು ನಿರಂತರ ಗಸ್ತು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾ ಮಟ್ಟದ ಕೆರೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಕೆರೆಗಳಿವೆ. ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕೆರೆಗಳಿವೆ. ಸಂಬಂಧಿಸಿದ ಇಲಾಖೆಗಳು ಕೆರೆಗಳ ಸಂಪೂರ್ಣ ವ್ಯಾಪ್ತಿಯನ್ನು ಆಗ್ಗಿಂದಾಗೆ ಪರಿಶೀಲಿಸಬೇಕು ಎಂದು ಅವರು ಹೇಳಿದರು. ಅಪರ ಜಿಲ್ಲಾಧಿಕಾರಿ ಕೆ ರಾಜು ಮಾತನಾಡಿ, ಕೆರೆ ಜಮೀನು ಒತ್ತುವರಿಯಾಗದಂತೆ ಆಗ್ಗಿಂದಾಗೆ ಗಸ್ತು ನಿರ್ವಹಿಸಬೇಕು. ಯಾವುದೇ ಕೆರೆ ಒತ್ತುವರಿ ಆಗಿರುವುದು ಕಂಡುಬಂದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಒತ್ತುವರಿಯಾಗಿರುವ ಕೆರೆ ಜಮೀನನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

14 C