ಕಲಬುರಗಿ | ಸಿಐಟಿಯು ವತಿಯಿಂದ ಕರಾಳ ದಿನಾಚರಣೆ
ಕಲಬುರಗಿ: ದೇಶದಲ್ಲಿನ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ “ಕರಾಳ ದಿನ” ಆಚರಿಸಲಾಯಿತು. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ನಡೆದ ಈ ಪ್ರತಿಭಟನೆಯಲ್ಲಿ ಕಾರ್ಮಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಮಿಕ ವರ್ಗವು ಕೆಲಸದ ಸುರಕ್ಷತೆ, ಸಂಘಟನೆ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನ, ಸಾಮಾಜಿಕ ಭದ್ರತೆ ಹಾಗೂ ಮುಷ್ಕರ ಹಕ್ಕುಗಳನ್ನು ಸುಮಾರು 150 ವರ್ಷಗಳ ಹೋರಾಟದ ಮೂಲಕ ಗಳಿಸಿಕೊಂಡಿದ್ದು, ಇವುಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಿಐಟಿಯು ಆರೋಪಿಸಿದೆ. ಈ ಸಂಹಿತೆಗಳು ಭಾರತೀಯ ಸಂವಿಧಾನದ ಆತ್ಮಕ್ಕೆ, ಅಂತರಾಷ್ಟ್ರೀಯ ಕಾರ್ಮಿಕ ಮಾನದಂಡಗಳಿಗೆ ಹಾಗೂ ಮಾನವ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಇದೇ ಹಿನ್ನೆಲೆಯಲ್ಲಿ, ಎ.1ರಿಂದ ಜಾರಿಗೆ ತರಲಾಗುತ್ತಿರುವ ಈ ಕಾರ್ಮಿಕ ಸಂಹಿತೆಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಎಂಬಿ ಸಜ್ಜನ್, ಶಾಂತಾ ಘಂಟಿ, ಗೌರಮ್ಮ ಪಾಟೀಲ, ಶಾಂತಾ ಸರಡಗಿ, ವಿಜಯಲಕ್ಷ್ಮಿ ಹಿರೇಮಠ, ಮಂಜುಳಾ ಪೂಜಾರಿ, ರಫತ್ ಸುಲ್ತಾನಿ, ರತ್ನಾ, ಶಂಕರಯ್ಯ ಘಂಟಿ, ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಲಬುರಗಿಯಿಂದ ವಿಮಾನ ಹಾರಾಟಕ್ಕೆ ಕೆಕೆಸಿಸಿಐ ಒತ್ತಾಯ
ಕಲಬುರಗಿ : ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಕಚೇರಿಗೆ ಸ್ಟಾರ್ ಏರ್ ಸಂಸ್ಥೆಯ ದಕ್ಷಿಣ ವಿಭಾಗದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾದ ಮುಹಮ್ಮದ್ ಸೋಹೈಲ್ ಅಹ್ಮದ್ ಅವರು ಬುಧವಾರ ಭೇಟಿ ನೀಡಿ, ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗಳನ್ನು ಮರುಪ್ರಾರಂಭಿಸುವ ಕುರಿತು ಚರ್ಚೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ಉಡಾನ್ 2.0 ಯೋಜನೆ ಅಡಿಯಲ್ಲಿ ಕಲಬುರಗಿಯಿಂದ ವಿಮಾನ ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಸ್ಟಾರ್ ಏರ್ ಸಂಸ್ಥೆ ಆಸಕ್ತಿ ವ್ಯಕ್ತಪಡಿಸಿದೆ. ಹಿಂದಿನ ಅನುಭವದ ಆಧಾರದ ಮೇಲೆ ಶೀಘ್ರದಲ್ಲೇ ಸೇವೆಗಳನ್ನು ಮರುಪ್ರಾರಂಭಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಸೇವೆಗಳ ಅಗತ್ಯತೆಯನ್ನು ಕೆಕೆಸಿಸಿಐ ಒತ್ತಿ ಹೇಳಿತು. ಸಂಸ್ಥೆಯು ಸ್ಟಾರ್ ಏರ್ಗೆ ಮನವಿಪತ್ರ ಸಲ್ಲಿಸಿ, ಸೇವೆಗಳನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿದೆ. ಕಲಬುರಗಿ–ಬೆಂಗಳೂರು ಮಾರ್ಗವನ್ನು ಮರುಪ್ರಾರಂಭಿಸುವುದರ ಜೊತೆಗೆ ಮುಂಬೈ, ದೆಹಲಿ, ತಿರುಪತಿ, ಗೋವಾ, ಹೈದರಾಬಾದ್, ಮಂಗಳೂರು ಮತ್ತು ಅಹಮದಾಬಾದ್ ನಗರಗಳಿಗೆ ವಿಮಾನ ಸಂಪರ್ಕ ವಿಸ್ತರಿಸಲು ಮನವಿ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗೆ ಹಾಗೂ ರಾತ್ರಿ ವೇಳೆಯ ಸೇವೆಗಳ ಅಗತ್ಯವಿದೆ ಎಂದು ತಿಳಿಸಲಾಯಿತು. ಸೇವೆಗಳ ಪರಿಣಾಮಕಾರಿತ್ವ ಹೆಚ್ಚಿಸಲು ಬೆಂಗಳೂರು ಮತ್ತು ಹೈದರಾಬಾದ್ ಮೂಲಕ ಹಬ್ ಆಧಾರಿತ ಮಾರ್ಗಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಟಿಕೆಟ್ ದರವನ್ನು 5,000 ರೂ. ಒಳಗೆ ನಿಗದಿ ಮಾಡಲು ಸೂಚಿಸಲಾಗಿದೆ. ವಿಮಾನ ಸಂಪರ್ಕ ಪುನರುಜ್ಜೀವನಗೊಳಿಸಲು ಇಂಡಿಗೋ, ಆಕಾಶ ಏರ್ ಸೇರಿದಂತೆ ಹಲವು ವಿಮಾನ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಮಾತನಾಡಿ, ಕಲಬುರಗಿಯಿಂದ ವಿಮಾನ ಸೇವೆಗಳ ಮರುಪ್ರಾರಂಭವು ಈ ಭಾಗದ ಬಹುಕಾಲದ ಬೇಡಿಕೆಯಾಗಿದೆ. ಉಡಾನ್ ಯೋಜನೆಯಡಿ ಶೀಘ್ರದಲ್ಲೇ ಸೇವೆಗಳು ಆರಂಭವಾಗುವ ವಿಶ್ವಾಸ ವ್ಯಕ್ತಪಡಿಸಿದರು. ವಿಮಾನ ಸೇವೆಗಳ ಪುನರಾರಂಭದಿಂದ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಉತ್ತೇಜನ ದೊರೆಯಲಿದೆ ಎಂದು ಕೆಕೆಸಿಸಿಐ ತಿಳಿಸಿದೆ.
‘ಬಿಕ್ಕಟ್ಟಿನ ನಡುವೆಯೂ ಬಿಜೆಪಿಯ ಲೂಟಿ ದಿವಸ’: ಖರ್ಗೆ ವಾಗ್ದಾಳಿ
ಹೊಸದಿಲ್ಲಿ, ಎ. 1: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಬುಧವಾರ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಮೋದಿ ಸರಕಾರವು ದೇಶದ ರಕ್ಷಣಾ ಹಾಗೂ ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ‘‘ಧ್ವಂಸಗೊಳಿಸಿದೆ’’ ಎಂದು ಆರೋಪಿಸಿದೆ. ಸಾಮಾನ್ಯ ಜನರು ಚೇತರಿಕೆಗೆ ಸರಕಾರದತ್ತ ನೋಡುತ್ತಿದ್ದರೆ, ಬಿಜೆಪಿ ನಾಯಕತ್ವವು ‘‘ಈ ಬಿಕ್ಕಟ್ಟಿನ ನಡುವೆಯೂ ಜನರನ್ನು ಲೂಟಿಗೈಯುವ ಮತ್ತು ದೇಶವನ್ನು ಕೊಳ್ಳೆಹೊಡೆಯುವತ್ತ ಗಮನ ಹರಿಸಿದೆ’’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ‘‘ಮೋದಿ ಸರಕಾರವು ದೇಶದ ರಕ್ಷಣಾ ಮತ್ತು ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಇದರ ನೇರ ಪರಿಣಾಮವನ್ನು ದೇಶದ 140 ಕೋಟಿ ಜನರು ಅನುಭವಿಸುತ್ತಿದ್ದಾರೆ’’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಎಪ್ರಿಲ್ 1ರಿಂದ ಹಲವಾರು ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ ಎಂದು ಅವರು ಹೇಳಿದರು. ‘‘ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳ ಬೆಲೆ ಗಗನಕ್ಕೇರಿದೆ. ಪೂರೈಕೆ ಪಾತಾಳಕ್ಕಿಳಿದಿದೆ. ಇದರ ಪರಿಣಾಮ ರಸ್ತೆ ಬದಿಯ ಚಹಾದಿಂದ ಹಿಡಿದು ಶಾಲೆಗಳ ಮಧ್ಯಾಹ್ನದ ಬಿಸಿಯೂಟದವರೆಗೆ ಕಾಣಿಸುತ್ತಿದೆ. ವಿಮಾನ ಇಂಧನ ದುಬಾರಿಯಾಗಿದೆ’’ ಎಂದು ಖರ್ಗೆ ತಿಳಿಸಿದ್ದಾರೆ. ಒಮ್ಮೆ ಸಾಮಾನ್ಯ ಜನರಿಗೂ ಲಭ್ಯವಿದ್ದ ವಿಮಾನಯಾನ ಈಗ ಕನಸಾಗಿದೆ. ವಿಮಾನ ಟಿಕೆಟ್ ದರ ಮಿತಿಯನ್ನು ಕೂಡ ಸರಕಾರ ತೆಗೆದುಹಾಕಿದೆ ಎಂದು ಅವರು ಆರೋಪಿಸಿದರು. ‘‘ಬಿಜೆಪಿಯ ಲೂಟಿ ದಿವಸ’’ ಎಂಬ ಶೀರ್ಷಿಕೆಯ ವೀಡಿಯೊವನ್ನೂ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ►900ಕ್ಕೂ ಅಧಿಕ ಅಗತ್ಯ ಔಷಧಿಗಳ ಬೆಲೆ ಏರಿಕೆ 900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚ ದಿನೇ ದಿನೇ ಗಗನಕ್ಕೇರುತ್ತಿದೆ. ಹೃದಯದ ಸ್ಟೆಂಟ್ ಗಳ ಬೆಲೆಯೂ ಹೆಚ್ಚಾಗಿದೆ. ರಸ್ತೆ ಟೋಲ್ ಬೂತ್ಗಳಲ್ಲಿ ಜನರು ಹೆಚ್ಚು ಹಣ ಪಾವತಿಸಬೇಕಾಗಿದೆ. ‘‘ಹೆದ್ದಾರಿ ದರೋಡೆ’’ ಈಗ ವ್ಯಾಪಕವಾಗಿದೆ ಎಂದು ಖರ್ಗೆ ಹೇಳಿದ್ದಾರೆ. ಸ್ಪೀಡ್ ಪೋಸ್ಟ್ ದರವನ್ನು 34 ಶೇಕಡ ಹೆಚ್ಚಿಸಲಾಗಿದೆ. ಪ್ಲಾಸ್ಟಿಕ್, ಉಕ್ಕು ಮತ್ತು ಸಿರಾಮಿಕ್ಸ್ ವಸ್ತುಗಳ ಬೆಲೆ ವರ್ಷಕ್ಕೊಮ್ಮೆ ಏರಿಕೆಯಾಗುತ್ತಿದೆ. ರೈತರು ಬಳಸುವ ಪಿವಿಸಿ ಪೈಪ್ ಗಳೂ ದುಬಾರಿಯಾಗಿವೆ. ಡಾಂಬರಿನ ಬೆಲೆ ಸುಮಾರು 50 ಶೇಕಡ ಏರಿಕೆಯಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರವು ಭಾರೀ ಒತ್ತಡವನ್ನು ಎದುರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸುರಪುರ | ವಿವಿಧ ಗ್ರಾಮ ಪಂಚಾಯತ್ಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ ಭೇಟಿ
ಸುರಪುರ : ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ಅವರು ಸುರಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು. ಮೊದಲಿಗೆ ಕಿರದಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ, ಗುಣಮಟ್ಟ ಹಾಗೂ ಸಮಯಪಾಲನೆಗೆ ಹೆಚ್ಚಿನ ಗಮನ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎನ್ಆರ್ಎಲ್ಎಂ ಯೋಜನೆಯಡಿ ಸ್ವಸಹಾಯ ಸಂಘಗಳ ಚಟುವಟಿಕೆಗಳು, ಆರ್ಥಿಕ ಸಬಲೀಕರಣ ಮತ್ತು ಸಾಲ ವಸೂಲಾತಿ ಕುರಿತು ಮಾಹಿತಿ ಪಡೆದು ಮಹಿಳಾ ಸದಸ್ಯರನ್ನು ಉತ್ತೇಜಿಸಿದರು. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ನೀರಿನ ಗುಣಮಟ್ಟ ಮತ್ತು ನಿರ್ವಹಣೆ ಕುರಿತು ಪರಿಶೀಲನೆ ನಡೆಸಿ, ತಾಂತ್ರಿಕ ದೋಷಗಳು ಕಂಡುಬಂದಲ್ಲಿ ತಕ್ಷಣ ಸರಿಪಡಿಸುವಂತೆ ಸೂಚಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ, ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು, ಶಿಕ್ಷಕರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಮಾರ್ಗದರ್ಶನ ನೀಡಿದರು. ಗ್ರಾಮ ಪಂಚಾಯತ್ ಗ್ರಂಥಾಲಯವನ್ನು ವೀಕ್ಷಿಸಿ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಪ್ರೋತ್ಸಾಹಿಸಿದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಪೋಷಣಾ ಆಹಾರ, ಹಾಜರಾತಿ ಹಾಗೂ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು. ನಂತರ ಪೇಠ ಅಮ್ಮಾಪೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಮತ್ತು ಎನ್ಆರ್ಎಲ್ಎಂ ಯೋಜನೆಗಳ ಪ್ರಗತಿಯನ್ನು ಮರುಪರಿಶೀಲನೆ ಮಾಡಿ, ಕಾಮಗಾರಿಗಳ ವೇಗ ಹೆಚ್ಚಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ತಲುಪುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಕೀಯ ಸೇವೆಗಳು, ಔಷಧಿ ಲಭ್ಯತೆ ಮತ್ತು ಸಿಬ್ಬಂದಿ ಹಾಜರಾತಿ ಕುರಿತು ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸೂಚಿಸಿದರು. ಇದೇ ವೇಳೆ ಎನ್ಆರ್ಎಲ್ಎಂ ಮಹಿಳಾ ಸದಸ್ಯರ ಮನೆಗೆ ಭೇಟಿ ನೀಡಿ, ಅವರು ತಯಾರಿಸುತ್ತಿರುವ ಆಹಾರ ಉತ್ಪನ್ನಗಳ ಪ್ರಕ್ರಿಯೆಯನ್ನು ವೀಕ್ಷಿಸಿ, ಉದ್ಯಮದ ಲಾಭ-ನಷ್ಟಗಳ ಕುರಿತು ಮಾಹಿತಿ ಪಡೆದು ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಇನ್ನಷ್ಟು ಉತ್ತೇಜಿಸಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಸಜ್ಜನ್, ಪಿಡಿಓ ಗಳಾದ ಪುತ್ರಪ್ಪಗೌಡ, ಚನ್ನಬಸವ, ನರೇಗಾ ತಾಂತ್ರಿಕ ಸಂಯೋಜಕ ಶಿವಯೋಗಿ ಹಿರೇಮಠ, ಐಇಸಿ ಸಂಯೋಜಕರು ಮಲ್ಲಿಕಾರ್ಜುನ, ಕಾರ್ಯದರ್ಶಿ, ತಾಂತ್ರಿಕ ಸಹಾಯಕರು, ಎನ್ ಆರ್ ಎಲ್ ಎಂ ಸಿಬ್ಬಂದಿ ಸವಿತಾ, ಅಮ್ಮಪ್ಪ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು ಇದ್ದರು
ಮೀನುಗಾರಿಕಾ ಬೋಟ್ಗಳಿಗೆ ನಿರಂತರ ಡೀಸೆಲ್ ಪೂರೈಸಲು ಸ್ಪೀಕರ್ ಖಾದರ್ ಸೂಚನೆ
ಮಂಗಳೂರು: ನಗರದ ಮೀನುಗಾರಿಕಾ ಬಂದರಿನಿಂದ ಹೊರಡುವ ಬೋಟ್ಗಳಿಗೆ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ಗಳನ್ನು ನಿರಂತರವಾಗಿ ಒದಗಿಸಲು ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದ್ದಾರೆ. ಮೀನುಗಾರಿಕಾ ಸಂಘಟನೆಗಳು, ಬೋಟ್ ಮಾಲಕರು, ತೈಲ ಕಂಪನಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿ ಅವರು ಮಾತನಾಡಿದರು. ಮೀನುಗಾರಿಕಾ ಬೋಟುಗಳಿಗೆ ಡೀಸೆಲ್ ಕೊರತೆಯಾಗದಂತೆ ಸರಬರಾಜು ಮಾಡಬೇಕು. ಹಳೆ ಬಂದರಿನಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಡೀಸೆಲ್ ಔಟ್ಲೆಟ್ ಪುನಃ ತೆರೆಯಬೇಕು. ಅಗತ್ಯವಾದ ಕೋಡ್ ಸಂಖ್ಯೆ ಯನ್ನು ತುರ್ತಾಗಿ ನೀಡುವಂತೆ ಮೀನುಗಾರಿಕೆ ನಿರ್ದೇಶಕರಿಗೆ ಸ್ಪೀಕರ್ ಖಾದರ್ ಸೂಚಿಸಿದರು. ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಂತರ ಮೀನುಗಾರಿಕಾ ಬೋಟ್ಗಳಿಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಮೀನುಗಾರಿಕಾ ಬೋಟ್ಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಮೀನುಗಾರಿಕಾ ಉದ್ಯಮ ತೀರ ಸಮಸ್ಯೆ ಎದುರಿಸುತ್ತಿದೆ. ಡೀಸೆಲ್ ದರ ಹೆಚ್ಚಳದಿಂದ ಆಗುವ ನಷ್ಟವನ್ನು ಸರಕಾರ ಭರಿಸಬೇಕು ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಆಗ್ರಹಿಸಿದರು. ಈಗಾಗಲೇ ಕೇಂದ್ರ ಸರಕಾರದ ಸುತ್ತೋಲೆಯ ಅನ್ವಯ ವಿತರಣೆಯ ಶೇ.20ರಷ್ಟು ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಇಂದಿರಾ ಕ್ಯಾಂಟೀನ್, ರೆಸ್ಟೋರೆಂಟ್ ಮತ್ತು ಮೀನುಗಾರಿಕೆ ಮುಂತಾದವುಗಳು ಇರುವುದರಿಂದ ಆದ್ಯತೆಯಲ್ಲಿ ಪರಿಗಣಿಸಿ ಎಲ್ಪಿಜಿ ಸಿಲಿಂಡರ್ಗಳನ್ನು ವಿತರಿಸುವುದಾಗಿ ತೈಲ ಕಂಪೆನಿಗಳ ಪ್ರತಿನಿಧಿಗಳು ಸಭೆಗೆ ತಿಳಿಸಿದರು. ಮೀನುಗಾರರು ಮೀನುಗಾರಿಕೆಗೆ ತೆರಳುವಾಗ ಅಡುಗೆಗಾಗಿ ಕೊಂಡೊಯ್ಯುವ ಎಲ್ಪಿಜಿ ಸಿಲಿಂಡರ್ಗಳಲ್ಲಿಯೂ ಯಾವುದೇ ಕೊರತೆಯಾಗದಂತೆ ಕನಿಷ್ಟ 130ರಿಂದ 150 ಸಿಲಿಂಡರ್ಗಳನ್ನು ಮೀನುಗಾರರಿಗೆ ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಬಂದರ್ ಮೀನುಗಾರಿಕಾ ದಕ್ಕೆಯಿಂದ ಹೊರಡುವ ಪ್ರತಿ ಬೋಟ್ಗೆ 1ರಂತೆ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಸಿಲಿಂಡರ್ ಒದಗಿಸಲು ಸ್ಪೀಕರ್ ಖಾದರ್ ಸೂಚಿಸಿದರು. ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ ಪ್ರತಿ ಜಿಲ್ಲೆಗೆ ನೀಡುವ ಕೋಟಾದಲ್ಲಿ ಮೀನುಗಾರಿಕೆಗಾಗಿ 130ರಿಂದ 150 ಸಿಲಿಂಡರ್ಗಳನ್ನು ಮೀನುಗಾರರಿಗೆ ಒದಗಿಸಲು ಮತ್ತು ಈ ಬಗ್ಗೆ ಮೀನುಗಾರಿಕಾ ಅಧಿಕಾರಿಗಳು ತೈಲ ಕಂಪೆನಿಗಳೊಂದಿಗೆ ವ್ಯವಹರಿಸಲು ಸೂಚಿಸಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಾತನಾಡಿ ನಿಗಮದ ಮೂಲಕ ಡೀಸೆಲ್ ವಿತರಣೆ ಏಜನ್ಸಿ ಈಗಾಗಲೇ ಇದ್ದು, ಇದಕ್ಕಾಗಿ ಕೋಡ್ ನಂಬರ್ ಪಡೆದ ನಂತರ ಇಲಾಖೆಯಿಂದ ಡೀಸೆಲ್ ಕೋಟಾ ಪಡೆದು ಮೀನುಗಾರರಿಗೆ ಡೀಸೆಲ್ ನೀಡಲಾಗುವುದು ಎಂದು ತಿಳಿಸಿದರು.
Yadgir | ಕೆಯುಡಬ್ಲೂಜೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ : ನಾಲ್ವರು ಪತ್ರಕರ್ತರಿಗೆ ರಾಜ್ಯ ಮಟ್ಟದ ಪ್ರಶಸ್ತಿ
ಯಾದಗಿರಿ : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಲಭಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದಂತೆ, ಬೀದರ್ನಲ್ಲಿ ಎ.11 ಮತ್ತು 12ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪತ್ರಕರ್ತ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ), ಅಮರೇಶ ಹಿರೇಮಠ ಅವರಿಗೆ ಅಭಿಮಾನಿ ಪ್ರಕಾಶನ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಅವರಿಗೆ ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ) ಹಾಗೂ ಸಂಜೀವರಾವ್ ಕುಲಕರ್ಣಿ ಅವರಿಗೆ ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ ಲಭಿಸಿದೆ. ಜಿಲ್ಲೆಯ ನಾಲ್ವರು ಪತ್ರಕರ್ತರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಘೋಷಿಸಿರುವುದು ಜಿಲ್ಲೆಯ ಘನತೆಯನ್ನು ಹೆಚ್ಚಿಸಿದೆ ಎಂದು ಮಲ್ಲಪ್ಪ ಸಂಕೀನ್ ಹೇಳಿದ್ದಾರೆ. ವಿಶೇಷವಾಗಿ ಶಹಾಪುರದ ಇಬ್ಬರು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಚಂದ್ರನತ್ತ ಮತ್ತೆ ಮಾನವ; ಏನಿದು ನಾಸಾದ ಆರ್ಟೆಮಿಸ್ II ಚಂದ್ರಯಾನ? ಅದು ಯಾವಾಗ ಉಡಾವಣೆಯಾಗಲಿದೆ?
1972ರ ನಂತರದ ಮೊದಲ ಸಿಬ್ಬಂದಿ ಚಂದ್ರಯಾನದಲ್ಲಿ ನಾಲ್ಕು ಗಗನಯಾತ್ರಿಗಳನ್ನು ಚಂದ್ರನ ಸುತ್ತ ಸುತ್ತಿ ಭೂಮಿಗೆ ಹಿಂತಿರುಗುವ ಆರ್ಟೆಮಿಸ್ II ನ ಉಡಾವಣೆಗೆ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಕ್ಷಣಗಣನೆ ನಡೆಯುತ್ತಿದೆ. ಸೋಮವಾರ ನಡೆದ ಮಿಷನ್ ನಿರ್ವಹಣಾ ತಂಡದ ಸಭೆಯ ನಂತರ, ನಾಸಾ ಅಸೋಸಿಯೇಟ್ ಆಡಳಿತಾಧಿಕಾರಿ ಅಮಿತ್ ಕ್ಷತ್ರಿಯ ಆರ್ಟೆಮಿಸ್ II ಬುಧವಾರ ಉಡಾವಣೆಗೆ ಸಿದ್ಧವಾಗಿದೆ ಎಂದು ಹೇಳಿದರು. ಆರ್ಟೆಮಿಸ್ II ಯಾವಾಗ ಉಡಾವಣೆಯಾಗಲಿದೆ? 2026 ಏಪ್ರಿಲ್ 1ರ ಬುಧವಾರ ಸಂಜೆ 6:24 ಕ್ಕೆ (22:24 GMT), ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿರುವ ಆರ್ಟೆಮಿಸ್ II ಮಿಷನ್ಗೆ ಎರಡು ಗಂಟೆಗಳ ಕಾಲ ಅವಕಾಶ ನೀಡಲಾಗುವುದು. ಸೂರ್ಯಾಸ್ತದ ನಂತರ ಪ್ರತಿದಿನ ಎರಡು ಗಂಟೆಗಳ ಕಾಲ ಉಡಾವಣಾ ವಿಂಡೋ ಏಪ್ರಿಲ್ 6ರವರೆಗೆ ತೆರೆದಿರುತ್ತದೆ. ಚಂದ್ರ, ಕಕ್ಷೆಯ ಮಾರ್ಗಗಳು, ಹವಾಮಾನ ಮತ್ತು ಭೂಮಿಯ ತಿರುಗುವಿಕೆ ಸುರಕ್ಷಿತವಾಗಿದ್ದಾಗ ಮಾತ್ರ ಮಿಷನ್ ಉಡಾವಣೆಯಾಗಬಹುದು. ಆರ್ಟೆಮಿಸ್ II ಈ ಹಿಂದೆ ಎರಡು ಬಾರಿ ಪ್ರಮುಖ ಅಡಚಣೆಯನ್ನು ಎದುರಿಸಿದೆ. ಫೆಬ್ರವರಿ ಆರಂಭದಲ್ಲಿ ಅಭ್ಯಾಸ ಕೌಂಟ್ಡೌನ್ ಸಮಯದಲ್ಲಿ ದ್ರವ ಹೈಡ್ರೋಜನ್ ಸೋರಿಕೆ ಪತ್ತೆಯಾದ ನಂತರ ಮೊದಲ ಪ್ರಯತ್ನವನ್ನು ನಿಲ್ಲಿಸಲಾಗಿತ್ತು. ಆನಂತರ ಮಾರ್ಚ್ ಆರಂಭದಲ್ಲಿ ಎರಡನೇ ಉಡಾವಣಾ ಪ್ರಯತ್ನವನ್ನು ಎಂಜಿನಿಯರ್ಗಳು ರಾಕೆಟ್ನ ಮೇಲಿನ ಹಂತದಲ್ಲಿ ಹೀಲಿಯಂ ಹರಿವಿನ ಸಮಸ್ಯೆಯನ್ನು ಕಂಡುಕೊಂಡಾಗ ರದ್ದುಗೊಳಿಸಲಾಯಿತು. ಉಡಾವಣೆಯನ್ನು ನಾಸಾ ಯೂಟ್ಯೂಬ್ನಲ್ಲಿ ನೇರಪ್ರಸಾರ ಮಾಡಲಿದೆ. ನಾಸಾದ ಆರ್ಟೆಮಿಸ್ ಮಿಷನ್ ಆರ್ಟೆಮಿಸ್ ಮಿಷನ್ 1972ರ ನಂತರ ಮೊದಲ ಬಾರಿಗೆ ಮನುಷ್ಯರನ್ನು ಚಂದ್ರನಲ್ಲಿಗೆ ಕರೆದೊಯ್ಯಲು, ಅಲ್ಲಿ ದೀರ್ಘಕಾಲೀನ ನೆಲೆಯನ್ನು ಸ್ಥಾಪಿಸಲು ಮತ್ತು ಅಂತಿಮವಾಗಿ ಮಂಗಳ ಗ್ರಹಕ್ಕೆ ಭವಿಷ್ಯದ ಮಾನವ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಲು ನಾಸಾದ ಬಹುದಶಕದ ಕಾರ್ಯಾಚರಣೆಯಾಗಿದೆ. ಈ ಕಾರ್ಯಕ್ರಮವನ್ನು ಪ್ರಸ್ತುತ ಆರ್ಟೆಮಿಸ್ I, II, III, IV ಮತ್ತು V ಹೀಗೆ ಐದು ಕಾರ್ಯಾಚರಣೆಗಳಾಗಿ ವಿಂಗಡಿಸಲಾಗಿದೆ. ಆರ್ಟೆಮಿಸ್ I ಸಿಬ್ಬಂದಿ ಇಲ್ಲದ ಪರೀಕ್ಷಾ ಹಾರಾಟವಾಗಿದ್ದು, ಇದು 2022 ನವೆಂಬರ್ 16ರಂದು ಉಡಾವಣೆಯಾಯಿತು. ಈ ಮಿಷನ್ 25 ದಿನಗಳ ಕಾಲ ನಡೆಯಿತು. ಇದು ಒರಾಯನ್ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು ಮತ್ತು ಆರ್ಟೆಮಿಸ್ II ಗಾಗಿ ನಿರ್ಣಾಯಕ ಡೇಟಾವನ್ನು ಒದಗಿಸಿತು. ಆರ್ಟೆಮಿಸ್ II ಆರ್ಟೆಮಿಸ್ II ಆರ್ಟೆಮಿಸ್ ಮಿಷನ್ ನ ಮೊದಲ ಮಾನವ ಯಾತ್ರೆಯಾಗಿದೆ. ಆರ್ಟೆಮಿಸ್ I ಕೇವಲ ಮನುಷ್ಯಾಕೃತಿಗಳು ಮತ್ತು ಸಂವೇದಕಗಳನ್ನು ಹೊಂದಿರುವ ಸಿಬ್ಬಂದಿ ಇಲ್ಲದ ಪರೀಕ್ಷಾ ಯಾತ್ರೆಯಾಗಿದ್ದರೆ, ಆರ್ಟೆಮಿಸ್ II ಗಗನಯಾತ್ರಿಗಳು ಭೂಮಿಯ ಕೆಳ ಕಕ್ಷೆಯನ್ನು ಮೀರಿ ಪ್ರಯಾಣಿಸುವ ಗುರಿಯನ್ನು ಹೊಂದಿದೆ. ಆರ್ಟೆಮಿಸ್ II ಚಂದ್ರನ ಮೇಲೆ ಇಳಿಯಲಿದೆಯೇ? ಈ ಮಿಷನ್ ನಲ್ಲಿ ನಾಲ್ಕು ಜನ ಸಿಬ್ಬಂದಿ ಇದ್ದು, ಇವರು ಚಂದ್ರನ ಮೇಲೆ ಇಳಿಯುವುದಿಲ್ಲ, ಬದಲಿಗೆ ಭೂಮಿಗೆ ಹಿಂತಿರುಗುವ ಮೊದಲು ಚಂದ್ರನ ಸುತ್ತ ಸುತ್ತಲಿದ್ದಾರೆ. ಆರ್ಟೆಮಿಸ್ ಮಿಷನ್ನ ಗುರಿ ಏನು? ಭವಿಷ್ಯದಲ್ಲಿ ಮಾನವನನ್ನು ಚಂದ್ರನ ಮೇಲೆ ಇಳಿಸುವ ಮಿಷನ್ಗೆ ಮುನ್ನ, ಒರಾಯನ್ ನೌಕೆಯ ಜೀವ ರಕ್ಷಕ ವ್ಯವಸ್ಥೆಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಪರೀಕ್ಷಿಸುವುದು ಇದರ ಮುಖ್ಯ ಗುರಿಯಾಗಿದೆ. ಇದು ಯಶಸ್ವಿಯಾದರೆ, ಆರ್ಟೆಮಿಸ್ II ಆರ್ಟೆಮಿಸ್ III, ಸಿಬ್ಬಂದಿಯೊಂದಿಗೆ ಕಡಿಮೆ ಭೂಮಿಯ ಕಕ್ಷೆಯ ಕಾರ್ಯಾಚರಣೆಗೆ ದಾರಿ ಮಾಡಿಕೊಡುತ್ತದೆ. ನಂತರ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವ ಗುರಿಯನ್ನು ಹೊಂದಿರುವ ಆರ್ಟೆಮಿಸ್ IV ಮತ್ತು ಭೂಮಿಯ ಆಚೆಗೆ ಮಾನವ ಉಪಸ್ಥಿತಿಯನ್ನು ಸ್ಥಾಪಿಸಬಹುದಾದ ಭವಿಷ್ಯದ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆಯಲಿದೆ ಆರ್ಟೆಮಿಸ್ ಅಪೊಲೊಗಿಂತ ಹೇಗೆ ಭಿನ್ನ? ಗ್ರೀಕ್ ಪುರಾಣಗಳಲ್ಲಿ, ಆರ್ಟೆಮಿಸ್ ಅಪೊಲೊನ ಅವಳಿ ಸಹೋದರಿ ಮತ್ತು ಚಂದ್ರನ ದೇವತೆ. ಈ ಹೆಸರು 1961 ರಿಂದ 1972 ರವರೆಗೆ ನಡೆದ ಮೂಲ ಅಪೊಲೊ ಚಂದ್ರನ ಕಾರ್ಯಾಚರಣೆಗಳಿಗೆ ಮಿಷನ್ ನ ಸಂಪರ್ಕವನ್ನು ಸಂಕೇತಿಸುತ್ತದೆ. ಅಪೊಲೊ ಕಾರ್ಯಾಚರಣೆಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ಅಪೊಲೊ 11. ಈ ಕಾರ್ಯಾಚರಣೆಯಲ್ಲಿ 1969 ಜುಲೈ 20ರಂದು, ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲ್ಮೈಯಲ್ಲಿ ನಡೆದ ಮೊದಲ ಮಾನವರಾದರು. ಕೊನೆಯ ಕಾರ್ಯಾಚರಣೆ ಅಪೊಲೊ 17 ಆಗಿದ್ದು, ಯುಜೀನ್ ಸೆರ್ನಾನ್ ಮತ್ತು ಹ್ಯಾರಿಸನ್ ಸ್ಮಿತ್ 1972 ಡಿಸೆಂಬರ್ 14 ರಂದು ಚಂದ್ರನ ಮೇಲೆ ನಡೆದ ಕೊನೆಯ ವ್ಯಕ್ತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆರ್ಟೆಮಿಸ್ II ಗಗನಯಾತ್ರಿಗಳು ಯಾರ್ಯಾರು? ಈ ಕಾರ್ಯಾಚರಣೆಯಲ್ಲಿ ನಾಲ್ವರು ಗಗನಯಾತ್ರಿಗಳು ಇರುತ್ತಾರೆ. ರೀಡ್ ವೈಸ್ಮನ್, ವಯಸ್ಸು 50, ಕಮಾಂಡರ್: ನಾಸಾದ ಅನುಭವಿ ಮತ್ತು ಮಾಜಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಮಾಂಡರ್ ಆಗಿದ್ದ ರೀಡ್, ಆರ್ಟೆಮಿಸ್ II ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ. ವಿಕ್ಟರ್ ಗ್ಲೋವರ್, ವಯಸ್ಸು 49, ಪೈಲಟ್: ಯುಎಸ್ ನೌಕಾಪಡೆಯ ವಿಮಾನ ಚಾಲಕ ಚಂದ್ರನ ಕಾರ್ಯಾಚರಣೆಗೆ ನಿಯೋಜಿಸಲಾದ ಮೊದಲ ಕಪ್ಪು ವರ್ಣೀಯ ಗಗನಯಾತ್ರಿ, ಸ್ಪೇಸ್ಎಕ್ಸ್ ಕ್ರೂ -1 ನಲ್ಲಿ ಇವರು ಹಾರಾಟ ನಡೆಸಿದ್ದರು. ಕ್ರಿಸ್ಟಿನಾ ಕೋಚ್, ವಯಸ್ಸು 47, ಮಿಷನ್ ಸ್ಪೆಷಲಿಸ್ಟ್: ಅತಿ ದೀರ್ಘ ಬಾಹ್ಯಾಕಾಶ ಹಾರಾಟದ ದಾಖಲೆ ಹೊಂದಿರುವ ಮಹಿಳೆ, ಬಹು ಬಾಹ್ಯಾಕಾಶ ನಡಿಗೆಗಳ ಅನುಭವಿ ಮತ್ತು ವೈಜ್ಞಾನಿಕ ಮತ್ತು ಆಳವಾದ ಬಾಹ್ಯಾಕಾಶ ಮಿಷನ್ ಪರಿಣತಿಯನ್ನು ಹೊಂದಿದ್ದಾರೆ. ಜೆರೆಮಿ ಹ್ಯಾನ್ಸೆನ್, 50, ಮಿಷನ್ ಸ್ಪೆಷಲಿಸ್ಟ್: ಚಂದ್ರನತ್ತ ಪ್ರಯಾಣಿಸಿದ ಮೊದಲ ಕೆನಡಾದ ಸೆಟ್ ಮಾಜಿ ಫೈಟರ್ ಪೈಲಟ್ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ಪ್ರತಿನಿಧಿಸುತ್ತಾರೆ ಕಾರ್ಯಾಚರಣೆಯ ಸಮಯದಲ್ಲಿ ಆರ್ಟೆಮಿಸ್ ಸಿಬ್ಬಂದಿ ಏನು ಮಾಡುತ್ತಾರೆ? ಹಾರಾಟದ ಸಮಯದಲ್ಲಿ, ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನೌಕೆಯನ್ನು ಮೌಲ್ಯಮಾಪನ ಮಾಡುತ್ತಾರೆ. ವಿಕಿರಣಕ್ಕೆ ಒಡ್ಡಿಕೊಳ್ಳುವ ಅದರ ಪ್ರತಿಕ್ರಿಯೆಗಳನ್ನು ಪರೀಕ್ಷಿಸುತ್ತಾರೆ ಮತ್ತು ಸೂಟ್ ಒತ್ತಡ ಪರೀಕ್ಷೆಯನ್ನು ಮಾಡುತ್ತಾರೆ. ಅಲ್ಲಿ ಅವರು ವೈದ್ಯಕೀಯ ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದು, ಫ್ಲೈಬೈ ಸಮಯದಲ್ಲಿ ಚಂದ್ರನ ಮೇಲ್ಮೈಯ ವಿವರವಾದ ಅವಲೋಕನಗಳನ್ನು ಮಾಡುತ್ತಾರೆ. ನಾಸಾ ಚಂದ್ರನತ್ತ ಮತ್ತೆ ಹೋಗುತ್ತಿರುವುದೇಕೆ? ಈ ಕಾರ್ಯಾಚರಣೆಯು ವಿಶಾಲವಾದ ದೀರ್ಘಕಾಲೀನ ಗುರಿಗಳನ್ನು ಪ್ರತಿಬಿಂಬಿಸುತ್ತದೆ. ಚಂದ್ರನ ಮೇಲೆ ಮತ್ತು ಅದರ ಸುತ್ತಲೂ, ವಿಶೇಷವಾಗಿ ಚಂದ್ರನ ದಕ್ಷಿಣ ಧ್ರುವದ ಬಳಿ, ಮಂಜುಗಡ್ಡೆಯ ರೂಪದಲ್ಲಿ ನೀರು ಅಸ್ತಿತ್ವದಲ್ಲಿದೆ ಎಂದು ನಂಬಲಾದ ಸ್ಥಳದಲ್ಲಿ ನಿರಂತರ ಮಾನವ ಉಪಸ್ಥಿತಿಯನ್ನು ಸ್ಥಾಪಿಸಲು ನಾಸಾ ಯೋಜಿಸಿದೆ. ಇದನ್ನು ಮಂಗಳ ಗ್ರಹಕ್ಕೆ ಭವಿಷ್ಯದ ಮಾನವ ಕಾರ್ಯಾಚರಣೆಗಳತ್ತ ಒಂದು ಮೆಟ್ಟಿಲು ಎಂದು ನೋಡಲಾಗುತ್ತಿದೆ. ಅದೇ ಸಮಯದಲ್ಲಿ, ವಿಶೇಷವಾಗಿ ಚೀನಾದಿಂದ ಎದುರಾಗುತ್ತಿರುವ ಸ್ಪರ್ಧೆಯ ನಡುವೆ ಬಾಹ್ಯಾಕಾಶ ಪರಿಶೋಧನೆಯಲ್ಲಿ ನಾಯಕತ್ವವನ್ನು ಕಾಪಾಡಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತಿರುವುದರಿಂದ ಆರ್ಟೆಮಿಸ್ ವಿಶಾಲವಾದ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ ತೆರೆದುಕೊಳ್ಳುತ್ತಿದೆ. ಮುಂದಿನ ಆರ್ಟೆಮಿಸ್ ಕಾರ್ಯಾಚರಣೆಗಳು ಯಾವಾಗ? ಆರ್ಟೆಮಿಸ್ III - 2027 ನಾಸಾ ಇತ್ತೀಚೆಗೆ ಆರ್ಟೆಮಿಸ್ III ರ ಮಿಷನ್ ಪ್ರೊಫೈಲ್ ಅನ್ನು ಪರಿಷ್ಕರಿಸಿದೆ. ಮುಂದಿನ ವರ್ಷ ನಿಗದಿಯಾಗಿರುವ ಈ ಕಾರ್ಯಾಚರಣೆಯು ಇನ್ನು ಮುಂದೆ ಚಂದ್ರನ ಮೇಲೆ ಇಳಿಯುವುದಿಲ್ಲ, ಬದಲಿಗೆ ಸಿಬ್ಬಂದಿಯನ್ನು ಕಡಿಮೆ ಭೂಮಿಯ ಕಕ್ಷೆಗೆ ಕಳುಹಿಸುತ್ತದೆ, ಅಲ್ಲಿ ಅದು ಒರಾಯನ್ ಬಾಹ್ಯಾಕಾಶ ನೌಕೆ, ಸ್ಪೇಸ್ಎಕ್ಸ್ ಮತ್ತು ಬ್ಲೂ ಒರಿಜಿನ್ನ ಒಂದು ಅಥವಾ ಎರಡೂ ವಾಣಿಜ್ಯ ಲ್ಯಾಂಡರ್ಗಳ ನಡುವಿನ ಸಂಯೋಜಿತ ಕಾರ್ಯಾಚರಣೆಗಳನ್ನು ಪರೀಕ್ಷಿಸುತ್ತದೆ. ಆರ್ಟೆಮಿಸ್ IV - 2028ರ ಆರಂಭದಲ್ಲಿ ಈ ಕಾರ್ಯಾಚರಣೆಯು ಅಪೋಲೋ 17ರ ನಂತರ ಮೊದಲ ಸಿಬ್ಬಂದಿ ಚಂದ್ರನ ಲ್ಯಾಂಡಿಂಗ್ ಆಗಿರುತ್ತದೆ. ನಾಸಾ ತನ್ನ ಸಿಬ್ಬಂದಿಯನ್ನು ಚಂದ್ರನ ಕಕ್ಷೆಗೆ ಕಳಿಸಲಿದ್ದು ಇಬ್ಬರು ಗಗನಯಾತ್ರಿಗಳನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಕಳುಹಿಸಲು ಯೋಜಿಸಿದೆ. ಆರ್ಟೆಮಿಸ್ V - 2028ರ ಕೊನೆಯಲ್ಲಿ ಈ ಕಾರ್ಯಾಚರಣೆಯೊಂದಿಗೆ, ನಾಸಾ ಎರಡನೇ ಸಿಬ್ಬಂದಿ ಚಂದ್ರನ ಲ್ಯಾಂಡಿಂಗ್ ಮತ್ತು ಚಂದ್ರನ ನೆಲೆಯ ಪ್ರಾರಂಭವನ್ನು ಯೋಜಿಸಿದೆ. ದೀರ್ಘ vs ಕಡಿಮೆ ಹಾದಿ ಆರ್ಟೆಮಿಸ್ II ಮಿಷನ್ ಚಂದ್ರನ ನೆರೆಹೊರೆ ತಲುಪಲು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತದೆ . ಅಪೊಲೊ ಮಿಷನ್ಗಳು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ತೆಗೆದುಕೊಂಡ ಸರಿಸುಮಾರು ಅದೇ ಸಮಯ. ಭಾರತದ ಚಂದ್ರಯಾನ-3 ಸೇರಿದಂತೆ ಇತ್ತೀಚಿನ ಅನೇಕ ಸಿಬ್ಬಂದಿಗಳಿಲ್ಲದ ಚಂದ್ರ ಕಾರ್ಯಾಚರಣೆಗಳು ಚಂದ್ರನನ್ನು ತಲುಪಲು ಕೆಲವು ವಾರಗಳು ಮತ್ತು ಕೆಲವು ತಿಂಗಳುಗಳ ನಡುವೆ ಹೆಚ್ಚು ಸಮಯ ತೆಗೆದುಕೊಂಡವು. ದೀರ್ಘ ಮಾರ್ಗಗಳು ಹೆಚ್ಚು ಇಂಧನ-ಸಮರ್ಥ ಮತ್ತು ಆರ್ಥಿಕವಾಗಿರುತ್ತವೆ, ಆದರೆ ವೇಗವಾದ ಮಾರ್ಗಗಳಿಗೆ ಹೆಚ್ಚು ಶಕ್ತಿಶಾಲಿ ರಾಕೆಟ್ಗಳು ಬೇಕಾಗುತ್ತವೆ. ಆರ್ಟೆಮಿಸ್ ಮಿಷನ್ಗಳಿಗಾಗಿ ಬಳಸಲಾಗುತ್ತಿರುವ SLS (Space Launch System) ರಾಕೆಟ್ಗಳು ಪ್ರಸ್ತುತ NASA ಗೆ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹನಗಳಾಗಿವೆ. ಅಪೊಲೊ ಮಿಷನ್ಗಳು ಸ್ಯಾಟರ್ನ್ V ರಾಕೆಟ್ಗಳನ್ನು ಬಳಸಿದವು, ಇವು ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ರಾಕೆಟ್ಗಳಾಗಿವೆ. ಈ ಮಿಷನ್ಗಾಗಿ ಬಳಸಲಾಗುತ್ತಿರುವ SLS ರಾಕೆಟ್ ಮತ್ತು ಒರಾಯನ್ ಬಾಹ್ಯಾಕಾಶ ನೌಕೆ ಎರಡೂ ತುಲನಾತ್ಮಕವಾಗಿ ಹೊಸದು. ಇವೆರಡೂ 2022ರಲ್ಲಿ ಆರ್ಟೆಮಿಸ್ I ಮಿಷನ್ನಲ್ಲಿ ಪಾದಾರ್ಪಣೆ ಮಾಡಿದ್ದವು. ಈ ಮಿಷನ್ ಸಿಬ್ಬಂದಿಗಳಿಲ್ಲದೆ ನಡೆಯಿತು. ಆದರೆ ಚಂದ್ರನಲ್ಲಿ ಹೋಗಿ ಹಿಂತಿರುಗಲು ಸರಿಸುಮಾರು ಅದೇ ಮಾರ್ಗವನ್ನು ಅನುಸರಿಸಿತು. ಆದರೂ ಅದು ಪರೀಕ್ಷೆಗಳನ್ನು ನಡೆಸಲು ಸುಮಾರು 25 ದಿನಗಳವರೆಗೆ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಉಳಿಯಿತು. ಗಗನಯಾತ್ರಿಗಳನ್ನು ಸಾಗಿಸಲು SLS ರಾಕೆಟ್ ಮತ್ತು ಓರಿಯನ್ ಬಾಹ್ಯಾಕಾಶ ನೌಕೆಯನ್ನು ಬಳಸುತ್ತಿರುವುದು ಇದೇ ಮೊದಲು. ಆರ್ಟೆಮಿಸ್ II ಮಿಷನ್ ಮಾರ್ಗ ಆರ್ಟೆಮಿಸ್ II ಮಿಷನ್ ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಭೂಮಿಯ ಸುತ್ತಲೂ ಎರಡು ಸುತ್ತುಗಳನ್ನು ಮಾಡುತ್ತದೆ. ಅಲ್ಲಿಗೆ ಒಮ್ಮೆ, ಅದು ಭೂಮಿಗೆ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಚಂದ್ರನ ಸುತ್ತಲೂ ಹೋಗುತ್ತದೆ. ಚಂದ್ರನ ಸುತ್ತ ಚಲಿಸುವಾಗ, ಒರಾಯನ್ ಬಾಹ್ಯಾಕಾಶ ನೌಕೆ ಚಂದ್ರನ ದೂರದ ಬದಿಯಿಂದ ಸುಮಾರು 6,500 ಕಿ.ಮೀ ದೂರಕ್ಕೆ ಪ್ರಯಾಣಿಸುತ್ತದೆ. ಇದು ಮಾನವರು ಬಾಹ್ಯಾಕಾಶಕ್ಕೆ ಹೋದ ಅತ್ಯಂತ ದೂರವಾಗಿರುತ್ತದೆ. ಚಂದ್ರನ ಮೇಲೆ ಇಳಿದ ಅಪೊಲೊ ಕಾರ್ಯಾಚರಣೆಗಳು ಚಂದ್ರನ ಮೇಲ್ಮೈಯ ದೂರದ ಬದಿಯಿಂದ ಕೇವಲ 110 ಕಿ.ಮೀ ಎತ್ತರವನ್ನು ತಲುಪಿ, ಅದರ ಸುತ್ತಲೂ ಚಲಿಸಿದ್ದವು.
ರಾಯಚೂರಿನಲ್ಲಿ ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ ಪ್ರತಿಭಟನೆ; ‘ಕರಾಳ ದಿನ’ ಆಚರಣೆ
ರಾಯಚೂರು : ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಕಾರ್ಮಿಕ ಸಂಘಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ‘ಕರಾಳ ದಿನ’ ಆಚರಿಸಿದರು. ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಅಖಿಲ ಭಾರತ ಫೆಡರೇಷನ್ಗಳ ಜಂಟಿ ವೇದಿಕೆಯ ಕರೆ ಮೇರೆಗೆ ಕಾರ್ಮಿಕರು ಕಪ್ಪು ಬ್ಯಾಡ್ಜ್ ಧರಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಏಪ್ರಿಲ್ 1ರಿಂದ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಘೋಷಿಸಿರುವುದನ್ನು ವಿರೋಧಿಸಿದ ಪ್ರತಿಭಟನಾಕಾರರು, ‘ವ್ಯವಹಾರ ಸುಲಭಿಕರಣ’ ಎಂಬ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಹಾಗೂ ಮಾಲೀಕರ ಪರವಾದ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಸಂಹಿತೆಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. 2026ರ ಫೆ.12ರಂದು ನಡೆದ ಸಾರ್ವತ್ರಿಕ ಮುಷ್ಕರದ ನಂತರವೂ ಸರ್ಕಾರ ಯಾವುದೇ ಗಂಭೀರ ಚರ್ಚೆಗೆ ಮುಂದಾಗಿಲ್ಲ. ಕಾರ್ಮಿಕ ಸಂಹಿತೆಗಳ ರಚನೆ ವೇಳೆ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು. ಭಾರತದ ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲು ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಕೂಡ ಕರೆಯದಿರುವುದು ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮತ್ತೆ ವಸಾಹತು ಕಾಲದ ಶೋಷಣಾತ್ಮಕ ಪರಿಸ್ಥಿತಿಗಳತ್ತ ತಳ್ಳಲಿವೆ. ಹಲವು ದಶಕಗಳ ಹೋರಾಟದ ಫಲವಾಗಿ ಗಳಿಸಿದ ಕೆಲಸದ ಸುರಕ್ಷತೆ, ಸಂಘಟನೆಯ ಹಕ್ಕು, ಮುಷ್ಕರ ಹಕ್ಕು, ಸಮರ್ಪಕ ವೇತನ, ಸಾಮಾಜಿಕ ಭದ್ರತೆ, ಬೋನಸ್, ಗ್ರಾಚ್ಯುಟಿ ಮತ್ತು ಪಿಂಚಣಿ ಹಕ್ಕುಗಳನ್ನು ಹಿಂಪಡೆಯುವ ಪ್ರಯತ್ನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ 1926ರ ಟ್ರೇಡ್ ಯೂನಿಯನ್ ಕಾಯ್ದೆ ಸೇರಿದಂತೆ ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದ ಅನೇಕ ಕಾನೂನುಗಳು ದೀರ್ಘ ಹೋರಾಟದ ಫಲವಾಗಿವೆ. ಆದರೆ, ಪ್ರಸ್ತುತ ನಾಲ್ಕು ಕಾರ್ಮಿಕ ಸಂಹಿತೆಗಳ ಮೂಲಕ ಅವುಗಳನ್ನು ಹಿಂಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಕೇಂದ್ರ ಸರ್ಕಾರದ ಈ ನೀತಿಗಳು ಭಾರತೀಯ ಸಂವಿಧಾನದ ಆತ್ಮಕ್ಕೂ, ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳಿಗೂ ಹಾಗೂ ಮಾನವ ಹಕ್ಕುಗಳಿಗೂ ವಿರುದ್ಧವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ.ಎಸ್.ಶರಣಬಸವ, ಎನ್.ಎಸ್.ವೀರೇಶ, ಅಜೀಜ್ ಜಾಗೀರದಾರ್, ಎಚ್.ಪದ್ಮಾ, ಕೆ.ಜಿ.ವೀರೇಶ, ಶ್ರೀಶೈಲ ರೆಡ್ಡಿ, ವೀರನಗೌಡ ಉಪಸ್ಥಿತರಿದ್ದರು.
ಬೆಂಗಳೂರು : ಧರ್ಮಸ್ಥಳದಲ್ಲಿ ಸಂಭವಿಸಿವೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿದಂತೆ ಕಾಲ್ಪನಿಕ ವಿಚಾರಗಳನ್ನು ಆಧರಿಸಿ, ಕೃತಕ ಬುದ್ದಿಮತ್ತೆ (ಎಐ) ನೆರವಿನಿಂದ ವಿಡಿಯೋ ಮಾಡಿ ವೈರಲ್ ಮಾಡಿದ ಆರೋಪದಲ್ಲಿ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಎಂ.ಡಿ. ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಧರ್ಮಸ್ಥಳ ಠಾಣೆಯಲ್ಲಿ ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ತಡೆ ನೀಡಿತಲ್ಲದೆ, ಪ್ರತಿವಾದಿ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು. ಇದಕ್ಕೂ ಮುನ್ನ, ಸಮೀರ್ ಪರ ವಕೀಲೆ ಕೆ. ಅಕ್ಷತಾ ಶೆಟ್ಟಿ ವಾದ ಮಂಡಿಸಿ, ಯೂಟ್ಯೂಬ್ ಚಾನಲ್ ಓಪನ್ ಮಾಡಿದಾಗ, ಸಮೀರ್ ವಿಡಿಯೊ ಬಂದಿತ್ತು. ಸುಳ್ಳುಗಳನ್ನು ಬಿತ್ತರಿಸಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕರ ನೆಮ್ಮದಿಗೆ ಹಾಳು ಮಾಡಿದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ ಎಂದರು. ಆಗ ನ್ಯಾಯಪೀಠ, (ಸಮೀರ್ಗೆ) ಸುಮ್ಮನೆ ಇರಲು ಆಗುವುದಿಲ್ಲವೇ? ಸುಮ್ಮನೆ ಇರಲು ಏಕೆ ಆಗಲ್ಲ? ನೀವು ಯಾರ ನೆಮ್ಮದಿ ಹಾಳು ಮಾಡಿದ್ದೀರಿ ಎಂದು ಗೊತ್ತಿದೆ. ಸಾರ್ವಜನಿಕರ ನೆಮ್ಮದಿಯಂತೂ ಅಲ್ಲ. ಅವರದು ಯಾಕೆ? ಅವರ ನೆಮ್ಮದಿ, ನೆಮ್ಮದಿಯಲ್ಲವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿತು. ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ಆಸ್ಮಾ ಕೌಸರ್, ಸಮೀರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣವಲ್ಲ. ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಿಸಿದ್ದಾಗಿದೆ. ಸಾಕ್ಷಿ ದೂರುದಾರನನ್ನು ಸಂರಕ್ಷಿಸಿದ್ದ ಪ್ರಕರಣ ಇದಾಗಿದ್ದು, ಅದಾಗ್ಯೂ ಕೃತಕ ಬುದ್ದಿಮತ್ತೆ ನೆರವಿನಿಂದ ಸಮೀರ್ ವಿಡಿಯೋ ಮಾಡಿದ್ದಾರೆ. ಕೆಲವು ಶವಗಳನ್ನು ಅಲ್ಲಿ ಹೂಳಲಾಗಿದ್ದು, ಕೆಲವನ್ನು ಅಲ್ಲಿ ಸಂಸ್ಕಾರ ಮಾಡಲಾಗಿದೆ ಎಂದು ವಿಡಿಯೊದಲ್ಲಿ ತೋರಿಸಲಾಗಿದೆ. ಸಮೀರ್ ವಿರುದ್ಧ 5 ಪ್ರಕರಣ ದಾಖಲಾಗಿವೆ. ತನಿಖೆ ನಡೆದರೆ ಸತ್ಯ ಹೊರಬರಲಿದೆ. ಇದೇ ಮೊದಲ ಬಾರಿಗೆ ಸಮೀರ್ ಈ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರನ್ನು ದಾರಿ ತಪ್ಪಿಸಿ, ದ್ವೇಷದ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದರು.
ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ಶಿಪ್| ಸಹ್ಯಾದ್ರಿ ಕಾಲೇಜು ತಂಡ 9ನೇ ಬಾರಿ ಚಾಂಪಿಯನ್
ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಸ್ಟೂಡೆಂಟ್ಸ್ ಅಥ್ಲೆಟಿಕ್ ತಂಡವು ಇತ್ತೀಚೆಗೆ ತಿಪಟೂರಿನ ಕೆಐಟಿಯಲ್ಲಿ ನಡೆದ ವಿಟಿಯು 27ನೇ ಅಂತರ್ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ 140 ಅಂಕಗಳನ್ನು ಗಳಿಸುವ ಮೂಲಕ 9 ನೇ ಬಾರಿಗೆ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪ್ರಣಯ್ ಜೆ. ಶೆಟ್ಟಿ ಅವರನ್ನು ಪುರುಷರ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು. ಮತ್ತು ಪಲ್ಲವಿ ಜೆ. ಎಸ್ ಅವರನ್ನು ಅತ್ಯುತ್ತಮ ಪ್ರದರ್ಶನಕ್ಕಾಗಿ ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಎಂದು ಗೌರವಿಸಲಾಯಿತು. ಸಹ್ಯಾದ್ರಿ ತಂಡವು ಪುರುಷ-ಮಹಿಳಾ ವಿಭಾಗಗಳಲ್ಲಿಯೂ ಪ್ರಾಬಲ್ಯ ಸಾಧಿಸಿತು, ಪುರುಷರ ವಿಭಾಗದಲ್ಲಿ 57 ಅಂಕ ಗಳೊಂದಿಗೆ ಮತ್ತು ಮಹಿಳಾ ವಿಭಾಗದಲ್ಲಿ 73 ಅಂಕಗಳೊಂದಿಗೆ ಚಾಂಪಿಯನ್ಶಿಪ್ ಅನ್ನು ಪಡೆದುಕೊಂಡಿತು. ಈ ಸಾಧನೆಗಳಿಗೆ ಹೆಚ್ಚುವರಿಯಾಗಿ ಸಹ್ಯಾದ್ರಿ ಮಾರ್ಚ್ ಪಾಸ್ಟ್ ಈವೆಂಟ್ನಲ್ಲಿ ಎರಡನೇ ಸ್ಥಾನವನ್ನು ಪಡೆದರು. ಚಾಂಪಿಯನ್ಶಿಪ್ ಹೆಚ್ಚು ಸ್ಪರ್ಧಾತ್ಮಕ ಮತ್ತು ಪ್ರತಿಷ್ಠಿತವಾಗಿತ್ತು, 137 ಕಾಲೇಜುಗಳನ್ನು ಪ್ರತಿನಿಧಿಸುವ 2,232 ಕ್ರೀಡಾಪಟುಗಳು ಭಾಗವಹಿಸಿದ್ದರು. ವಿಜೇತರ ಪಟ್ಟಿ - ಮಹಿಳಾ ವಿಭಾಗ ಪ್ರಾಂಜಲಿ ಎ - ಡಿಸ್ಕಸ್ ಥ್ರೋ ಮತ್ತು ಶಾಟ್-ಪುಟ್ನಲ್ಲಿ ಚಿನ್ನ, ಪಲ್ಲವಿ ಜೆ ಎಸ್ - ಟ್ರಿಪಲ್ ಜಂಪ್ ಮತ್ತು ಲಾಂಗ್ ಜಂಪ್ನಲ್ಲಿ ಚಿನ್ನ, ಸಾನ್ವಿ ರೈ - 200 ಮೀಟರ್ ಓಟದಲ್ಲಿ ಕಂಚು, ವೀಕ್ಷಾ ವಿ - 10000 ಮೀ.ನಲ್ಲಿ ಚಿನ್ನದ ಮತ್ತು 21 ಕಿ.ಮೀ ಹಾಫ್ ಮ್ಯಾರಥಾನ್ನಲ್ಲಿ ಬೆಳ್ಳಿ , ಸಾನಿಯಾ ಶೆಟ್ಟಿ - 800 ಮೀಟರ್ ಓಟದಲ್ಲಿ ಚಿನ್ನದ ಮತ್ತು 1500 ಮೀ ಓಟದಲ್ಲಿ ಬೆಳ್ಳಿ , ತನ್ವಿ ಜೆ ಆರ್ - ಪೋಲ್ ವಾಲ್ಟ್ನಲ್ಲಿ ಬೆಳ್ಳಿ , ಸ್ಪರ್ಶ ರೈ - ಜಾವೆಲಿನ್ ಥ್ರೋನಲ್ಲಿ ಕಂಚು, 8. ವೈಷ್ಣವಿ ಪಡಸಲ್ಗಿ - 20 ಕಿ.ಮೀ ನಡಿಗೆ ಓಟದಲ್ಲಿ ಚಿನ್ನ, ಚಶ್ಮಿತಾ ಡಿ ಸಿ - 20 ಕಿ.ಮೀ ನಡಿಗೆ ಓಟದಲ್ಲಿ ಕಂಚು , ವಿನೀಶ್ ಕೆ - ಹೆಪ್ಟಾಥ್ಲಾನ್ನಲ್ಲಿ ಬೆಳ್ಳಿ ಪದಕ ಮತ್ತು 400 ಮೀ ಹರ್ಡಲ್ಸ್ನಲ್ಲಿ ಕಂಚು, ಸಾಹಿತ್ಯ ಕೆ ಪಿ - 400 ರಲ್ಲಿ ಕಂಚು, ತ್ರಿಶಾ ಶೆಟ್ಟಿ - 10000 ಮೀ. ಓಟದಲ್ಲಿ ಬೆಳ್ಳಿ , ದೀಕ್ಷಾ ಒ - ಪೋಲ್ ವಾಲ್ಟ್ನಲ್ಲಿ ಚಿನ್ನ ಪಡೆದರು. 4*100 ಮೀ ಓಟ ರಿಲೆಯಲ್ಲಿ ಪಲ್ಲವಿ ಎ, ಆಮ್ನಾ, ವಿನೀಶಾ ಎ, ಸಾಹಿತ್ಯ ಎ ಬೆಳ್ಳಿ , 4*400 ಓಟದಲ್ಲಿ ಸಾನ್ವಿ ರೈ, ತ್ರಿಶಾ ಶೆಟ್ಟಿ, ವಿಭಾ ಬಿ ಕೆ, ಸಾನಿಯಾ ಶೆಟ್ಟಿ ಚಿನ್ನ ಪಡೆದರು. ಪುರುಷರ ವಿಭಾಗ: ಪ್ರಣಯ್ ಜೆ ಶೆಟ್ಟಿ - 100 ಮತ್ತು 200 ಮೀ ಓಟದಲ್ಲಿ ಚಿನ್ನ, ಯಶಸ್ - 200 ಮೀ ಓಟದಲ್ಲಿ ಬೆಳ್ಳಿ , ಪ್ರಜ್ವಲ್ - 110 ಮೀ ಓಟದಲ್ಲಿ ಚಿನ್ನದ ಮತ್ತು 400 ಮೀ. ಓಟದಲ್ಲಿ ಕಂಚಿನ ಪಡೆದರು. ಮನ್ವಿತ್ - 400 ಮೀ ಓಟದಲ್ಲಿ ಚಿನ್ನ ಮತ್ತು 800 ಮೀ .ಓಟದಲ್ಲಿ ಬೆಳ್ಳಿ, ರಿತೇಶ್ ಶೆಟ್ಟಿ - ಪೋಲ್ ವಾಲ್ಟ್ ನಲ್ಲಿ ಕಂಚು, ಪ್ರವಿತ್- 20 ಕಿ.ಮೀ ನಡಿಗೆ ಓಟದಲ್ಲಿ ಚಿನ್ನ, ಹಿತೇಶ್ ಬಿ ಎಸ್ - 20 ಕಿ.ಮೀ ನಡಿಗೆ ಓಟದಲ್ಲಿ ಬೆಳ್ಳಿ , ಗುರುಪ್ರಸಾದ್ - 10,000 ಎಂಟಿಆರ್ ಓಟದಲ್ಲಿ ಕಂಚು ತಮ್ಮದಾಗಿಸಿಕೊಂಡರು. 4*400 ಎಂಟಿಆರ್ ರಿಲೇಯಲ್ಲಿ ಪ್ರಜ್ವಲ್, ಮನ್ವಿತ್ ಕೆ ಎಸ್, ಗುರುಪ್ರಸಾದ್, ಮನ್ವಿತ್ ಯು ತಂಡ ಚನ್ನ ಪಡೆಯಿತು. 4*100 ಎಂಟಿಆರ್ ರಿಲೇಯಲ್ಲಿ ಪ್ರವಿತ್, ಸಿ ಕೆ ಪ್ರೇರಣ್, ನಿಹಾಲ್ ಎಸ್ ಕುಮಾರ್, ಪ್ರಣಯ್ ಜೆ ಶೆಟ್ಟಿ ಚಿನ್ನ ಪಡೆದರು. 4*400 ಎಂಟಿಆರ್ ಮಿಶ್ರ ರಿಲೇಯಲ್ಲಿ ಪ್ರಜ್ವಲ್, ಮನ್ವಿತ್ ಕೆ ಎಸ್, ಸಾನಿಯಾ ಶೆಟ್ಟಿ, ಸಾನ್ವಿ ರೈ ಚಿನ್ನ ಪಡೆಯಿತು. ವಿಟಿಯು ಅಥ್ಲೆಟಿಕ್ಸ್ ಕೂಟದಲ್ಲಿ 140 ಅಂಕಗಳೊಂದಿಗೆ ಸಹ್ಯಾದ್ರಿ ಕಾಲೇಜ್ ಸಾರ್ವಕಾಲಿಕ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದಿದೆ.
ಚೆನ್ನೈ, ಎ. 1: ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ದ್ರಾವಿಡ ಮಾದರಿಯ ‘‘ಸೂಪರ್ಫಾಸ್ಟ್’’ ಇಂಜಿನ್ ಬಿಜೆಪಿಯ ‘‘ಡಬ್ಬಾ’’ ಇಂಜಿನ್ ಎದುರು ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ. ಉತ್ತರಪ್ರದೇಶ ಮುಂತಾದ ಬಿಜೆಪಿ ಆಳ್ವಿಕೆಯ ರಾಜ್ಯಗಳಿಗೆ ಹೋಲಿಸಿದರೆ, ಮಹಿಳೆಯರಿಗೆ ತಮಿಳುನಾಡು ಹೆಚ್ಚು ಸುರಕ್ಷಿತ ಸ್ಥಳವಾಗಿದೆ ಎಂದು ಅವರು ಹೇಳಿದರು. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಮಾಣ ಹೆಚ್ಚಿದೆ ಎಂದೂ ಅವರು ನುಡಿದರು. ತಿರುಚ್ಚಿಯ ತೆನ್ನೂರ್ ಉಳವರ್ ಸಂದೈ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ತಮಿಳುನಾಡಿನ ಅಭಿವೃದ್ಧಿ ಮಾದರಿ, ಸಾಮಾಜಿಕ ನ್ಯಾಯ ವ್ಯವಸ್ಥೆ ಮತ್ತು ಆಡಳಿತದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಒಂದು ವಾರ ನೆಲೆಸುವಂತೆ ಸವಾಲು ಹಾಕಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ DMK ನೇತೃತ್ವದ ಸೆಕ್ಯುಲರ್ ಪ್ರೊಗ್ರೆಸಿವ್ ಅಲಯನ್ಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು, 2021ರ ಚುನಾವಣೆಯಲ್ಲಿ ತಿರುಚ್ಚಿ ಜಿಲ್ಲೆಯಲ್ಲಿ ಸಾಧಿಸಿದ್ದ ‘ಕ್ಲೀನ್ ಸ್ವೀಪ್’ ಅನ್ನು ಈ ಬಾರಿಯೂ ಮೈತ್ರಿಕೂಟ ಪುನರಾವರ್ತಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ‘‘ತಮಿಳುನಾಡು ತಮಿಳುನಾಡಾಗಿಯೇ ಉಳಿಯಬೇಕು. ಅದು ಉತ್ತರಪ್ರದೇಶ ಅಥವಾ ಮಣಿಪುರದಂತೆ ಹಿಂಸಾಪೀಡಿತ ಪ್ರದೇಶವಾಗಬಾರದು’’ ಎಂದು ಅವರು ಹೇಳಿದರು. ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದರೆ, ರಾಜ್ಯವನ್ನು ‘ದಕ್ಷಿಣ ಪ್ರದೇಶ’ ಎಂದು ಮರುನಾಮಕರಣ ಮಾಡುವ ಸಾಧ್ಯತೆಯೂ ಇದೆ ಎಂದು ಸ್ಟಾಲಿನ್ ಆರೋಪಿಸಿದರು. ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷವು ಬಿಜೆಪಿಯ ‘‘ಮುಖವಾಡ’’ವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನ್ನ ನಾಯಕರನ್ನು ರಕ್ಷಿಸಲು ಆ ಪಕ್ಷವು ರಾಜ್ಯದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದೆ ಎಂದರು. ಬಿಜೆಪಿಯು ಪಳನಿಸ್ವಾಮಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾಕೆ ಘೋಷಿಸಿಲ್ಲ ಎಂದು ಪ್ರಶ್ನಿಸಿದರು.
ಹಟ್ಟಿ | 20 ಸಾವಿರ ರೂ. ಮೌಲ್ಯದ ಗಾಂಜಾ ವಶ : ಆರೋಪಿ ಬಂಧನ
ಹಟ್ಟಿ : ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲಬಂಡ ಗ್ರಾಮದ ಜಮೀನಿನಲ್ಲಿ ಗಾಂಜಾ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಹಟ್ಟಿ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 20 ಸಾವಿರ ರೂ. ಮೌಲ್ಯದ ಒಣ ಗಾಂಜಾವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ರೋಡಲಬಂಡ ಗ್ರಾಮದ ನಿವಾಸಿ ಬಸವರಾಜು ತನ್ನ ಜಮೀನಿನ ಸರ್ವೆ ನಂ. 5, ಹಿಸ್ಸಾ-1ರಲ್ಲಿ 258 ಗ್ರಾಂ ಒಣ ಗಾಂಜಾವನ್ನು ಸಂಗ್ರಹಿಸಿ ಇಟ್ಟಿದ್ದುದಾಗಿ ಪೊಲೀಸರು ತಿಳಿಸಿದರು. ಈ ಕುರಿತು ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Krunal Pandya: ರಾಯಲ್ ಚಾಲೆಂಜರ್ಸ್ ಬೆಂಗಳೂರು (Rcb) ಪುರುಷರ ತಂಡವು ಸುದೀರ್ಘ 18 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ ಕಪ್ ಎತ್ತಿಹಿಡಿದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್ನಲ್ಲಿ ತನ್ನದೇ ಹವಾ ಇದೆ. ಅಪಾರವಾದ ಅಭಿಮಾನ ಬಳಗವಿದೆ. ಇನ್ನು 2025ರಲ್ಲಿ ಆರ್ಸಿಬಿ ತಂಡವು ಕಪ್ ಗೆದ್ದ ಮೇಲೆ ಹಾಗೂ ಈಗ ಹೇಗಿದೆ ಎನ್ನುವ ಬಗ್ಗೆ RCB ಸ್ಟಾರ್
2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಬ್ಯಾರಿ ಕೃತಿಗಳ ಆಹ್ವಾನ
ಮಂಗಳೂರು, ಎ.1: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಕವನ ಸಂಕಲನ, ಕಾದಂಬರಿ. ಕಥೆ ಸಹಿತ ಬ್ಯಾರಿ ಸಾಹಿತ್ಯ ಎಲ್ಲಾ ಪ್ರಕಾರದ ಪುಸ್ತಕಗಳನ್ನು ಆಹ್ವಾನಿಸಿದೆ. ಬ್ಯಾರಿ ಸ್ವಂತ ಕೃತಿ ಅಥವಾ ಅನುವಾದ ಕೃತಿಯೂ ಆಗಿರಬಹುದು. ಪುಸ್ತಕ ಬಹುಮಾನವು 25,000 ರೂ.ನಗದು, ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲಪುಷ್ಪಾಹಾರಗಳನ್ನು ಒಳಗೊಂಡಿರುತ್ತದೆ. ಪ್ರತೀ ಪ್ರಕಾರದಲ್ಲೂ ಕನಿಷ್ಠ ಮೂರು ಬ್ಯಾರಿ ಪುಸ್ತಕಗಳು ಪ್ರಕಟವಾಗಿದ್ದಲ್ಲಿ ಮಾತ್ರ ಬಹುಮಾನದ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಆಸಕ್ತರು ಪುಸ್ತಕದ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು-575001 ಈ ವಿಳಾಸಕ್ಕೆ ಎ.10ರ ಒಳಗೆ ಸಲ್ಲಿಸುವಂತೆ ಅಕಾಡಮಿಯ ಅಧ್ಯಕ್ಷ ಉಮರ್ ಯು. ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಟ್ಟಿ | ಕಾರ್ಮಿಕ ಕೋಡ್ ವಿರೋಧಿಸಿ ಸಿಐಟಿಯುನಿಂದ ಪ್ರತಿಭಟನೆ : ಕಪ್ಪು ದಿನಾಚರಣೆ
ಹಟ್ಟಿ : ಕೇಂದ್ರ ಸರ್ಕಾರ ಜಾರಿಗೊಳಿಸಿದ ನಾಲ್ಕು ಕಾರ್ಮಿಕ ಕೋಡ್ಗಳನ್ನು ವಿರೋಧಿಸಿ ಸಿಐಟಿಯು ಹಟ್ಟಿ ಘಟಕದಿಂದ ಬುಧವಾರ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದಲ್ಲಿ ಕಪ್ಪು ದಿನಾಚರಣೆ ಆಚರಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಭಾಗವಹಿಸಿ, ಕೆಲಸದ ಸುರಕ್ಷತೆ, ಸಂಘಟನೆಯ ಹಕ್ಕು, ಮುಷ್ಕರ ಹಕ್ಕು, ಸಾಮಾಜಿಕ ಭದ್ರತೆ, ಬೋನಸ್, ಗ್ರ್ಯಾಚ್ಯುಟಿ ಹಾಗೂ ಪಿಂಚಣಿ ಹಕ್ಕುಗಳನ್ನು ಕಡಿಮೆ ಮಾಡುವ ಈ ನಾಲ್ಕು ಕಾರ್ಮಿಕ ಕೋಡ್ಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಜಂಟಿ ಕಾರ್ಯದರ್ಶಿ ರಮೇಶ ವೀರಾಪೂರು, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾರ್ಮಿಕ ಕೋಡ್ಗಳು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಕಾರ್ಮಿಕರನ್ನು ನವ ಗುಲಾಮಗಿರಿಯತ್ತ ತಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ದೇಶದಾದ್ಯಂತ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಜಂಟಿ ಕಾರ್ಯದರ್ಶಿ ರಮೇಶ ವೀರಾಪೂರು, ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಕಾರ್ಯದರ್ಶಿಗಳಾದ ವೆಂಕೋಬ್ ಮಿಯ್ಯಾಪೂರು, ರಮೇಶ ಬಾಬು, ನಾಗರಾಜ್, ಗೌಸಮಿಯಾ, ಜಮದಗ್ನಿ, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್, ಗುಂಡಪ್ಪ, ಹಟ್ಟಿ ಘಟಕದ ಅಧ್ಯಕ್ಷ ಫಕೃದ್ದೀನ್, ಕಾರ್ಯದರ್ಶಿ ವೆಂಕಟೇಶ ಗೋರಕಲ್, ಸಿಐಟಿಯು ಮುಖಂಡರಾದ ಪೆಂಚಲಯ್ಯ ಅಲ್ಲಾಭಕ್ಷ ಸಾಸಿಹಾಳ, ಶ್ರೀಧರ್, ಶೇಖ್ ಬಡೆ, ರಾಜೇಶ್ವರಿ, ನಿಂಗಪ್ಪ, ದಾವೂದ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಂಗಳೂರು : ಕರ್ನಾಟಕ ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಯಲ್ಲಿ (ಎಸೆಸೆಲ್ಸಿ) ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರಕಾರದ ಪ್ರಸ್ತಾವ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಬೆಂಗಳೂರಿನ ಎಚ್.ಎನ್. ಚಂದನಾ ಹಾಗೂ ಎಸ್. ವೆಂಕಟೇಶ್ ಅರ್ಜಿ ಸಲ್ಲಿಸಿದ್ದು, ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರು, ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ. ಮನವಿ ಏನು? ರಾಜ್ಯ ಸರಕಾರದ ನಿರ್ಧಾರದಿಂದ ಸಂವಿಧಾನದ ಪರಿಚ್ಛೇದ 14ರ ಅಡಿಯ ಸಮಾನತೆ ಹಕ್ಕಿನ ಉಲ್ಲಂಘನೆಯಾಗಲಿದೆ. 21ನೇ ಪರಿಚ್ಛೇದದ ಅಡಿ ಶಿಕ್ಷಣ ಹಕ್ಕಿನ ಮೇಲೆ ಪರಿಣಾಮ ಬೀರಲಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಅಸ್ಥಿರಗೊಳಿಸುತ್ತದೆ. ಸರಕಾರದ ಅಧಿಕೃತ ಆದೇಶವಿಲ್ಲದೆ ನೀತಿ ಜಾರಿಗೆ ತರಲು ಸಾಧ್ಯವಿಲ್ಲ. ಆದ್ದರಿಂದ, ಸರಕಾರದ ನಿರ್ಧಾರವನ್ನು ರದ್ದುಪಡಿಸುವ ನಿಟ್ಟಿನಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಪಿಐಎಲ್ನಲ್ಲಿ ಕೋರಲಾಗಿದೆ. ಅರ್ಜಿಯಲ್ಲೇನಿದೆ? ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ರಾಜ್ಯದಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ಕಡ್ಡಾಯವಲ್ಲ. ಈ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡಲಾಗುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಸೂತ್ರವನ್ನು ಜಾರಿಗೆ ತರವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಚಿವರು ಈ ನಿರ್ಧಾರವನ್ನು ಪ್ರಕಟಿಸುವುದಕ್ಕೂ ಮುನ್ನ ಸಾರ್ವಜನಿಕವಾಗಿ ಚರ್ಚೆ ನಡೆಸಿಲ್ಲ. ಸಚಿವ ಸಂಪುಟದ ಅನುಮೋದನೆ ಪಡೆದಿಲ್ಲ ಹಾಗೂ ಭಾಷಾ ತಜ್ಞರ ಸಲಹೆ ಇಲ್ಲದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಅಂದರೆ ಮಾರ್ಚ್ 31ರಂದು ಈ ರೀತಿಯ ಹೇಳಿಕೆ ಹೊರಬಿದ್ದಿರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಆದರೆ, ಈವರೆಗೂ ಈ ಕುರಿತಂತೆ ಯಾವುದೇ ಅಧಿಕೃತ ಸರಕಾರಿ ಆದೇಶ ಅಥವಾ ಅಧಿಸೂಚನೆ ಹೊರಬಂದಿಲ್ಲ. ಸಚಿವರ ಈ ನಿರ್ಧಾರಕ್ಕಾಗಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
Kalaburagi | ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಎ.10ರಿಂದ ಅರಿವು ಉತ್ಸವ: ಹನುಮಂತ ಇಟಗಿ
ಕಲಬುರಗಿ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ನಗರದ ಹೀರಾಪುರ ಕ್ರಾಸ್ ಸಮೀಪ ಎ.10ರಿಂದ ಆರು ದಿನಗಳ ಕಾಲ “ಅಂಬೇಡ್ಕರ್ ಅರಿವು ಉತ್ಸವ”ವನ್ನು ಆಯೋಜಿಸಲಾಗಿದೆ ಎಂದು ಜಯಂತ್ಯೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ಹನುಮಂತ ಇಟಗಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅವಧಿಯಲ್ಲಿ ಪ್ರತಿದಿನವೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಅಭಿನಂದನಾ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ವೇಳೆ ಏಪ್ರಿಲ್ 6ರಂದು ಡಾ. ಬಿ.ಆರ್. ಅಂಬೇಡ್ಕರ್, ಭಾರತದ ಸಂವಿಧಾನ ಹಾಗೂ ಜ್ಯೋತಿರಾವ್ ಫುಲೆ ಅವರ ಕುರಿತು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಭಾಷಣ ಸ್ಪರ್ಧೆಗಳು ನಡೆಯಲಿವೆ. ಅದೇ ರೀತಿ ಏಪ್ರಿಲ್ 12ರಂದು 135ಕ್ಕೂ ಹೆಚ್ಚು ಜನರಿಂದ ನೇತ್ರದಾನ ಕಾರ್ಯಕ್ರಮವೂ ನಡೆಯಲಿದೆ. ಜ್ಞಾನ ಪ್ರಕಾಶ್ ಸ್ವಾಮೀಜಿ, ಹ.ರಾ ಮಹೇಶ್, ಆರ್.ಡಿ. ಮಲ್ಲಯ್ಯ, ಕೋಟಿ ರಾಮಯ್ಯ, ಕವಿತಾ ರೆಡ್ಡಿ, ಅಪ್ಪಗೆರೆ ಸೋಮಶೇಖರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅರವಿಂದ ಕಮಲಾಪುರ, ಡಾ.ಅನಿಲ್ ಟೆಂಗಳಿ, ಅಲ್ಲಮಪ್ರಭು ನಿಂಬರ್ಗಾ, ಸಲೀಮ್ ಶೇಖ್, ಮಹೇಶ್ ತೆಲ್ಲೂರು, ದಶರಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪರೀಕ್ಷೆ ನಡೆಸಿ: ಉಡುಪಿ ಡಿಸಿ ಸ್ವರೂಪಾ ಸೂಚನೆ
ಉಡುಪಿ, ಎ.1: ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ‘ಡ್ರಗ್ ಟೆಸ್ಟ್ ಕಿಟ್’ಗಳನ್ನು ಕಡ್ಡಾಯ ವಾಗಿ ದಾಸ್ತಾನು ಇರಿಸಿಕೊಳ್ಳಬೇಕು. ಅದೇ ರೀತಿ ವಸತಿ ನಿಲಯಗಳ ವಿದ್ಯಾರ್ಥಿಗಳಿಗೂ ಮಾದಕದ್ರವ್ಯ ಪರೀಕ್ಷಾ ಕಿಟ್ಗಳ ಮೂಲಕ ಪರೀಕ್ಷೆ ನಡೆಸುವಂತೆ ಹಾಗೂ ಮಾದಕ ವಸ್ತುಗಳ ಬಳಕೆಯ ಪ್ರಕರಣ ಗಳು ಪತ್ತೆ ಯಾದಲ್ಲಿ ಸಂಬಂಧಪಟ್ಟ ಹಾಸ್ಟೆಲ್ ವಾರ್ಡನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದ್ದಾರೆ. ಬುಧವಾರ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ನಾಲ್ಕನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಯುವಜನತೆಯಲ್ಲಿ ಮಾದಕದ್ರವ್ಯ ಸೇವನೆಯಿಂದ ಭವಿಷ್ಯದಲ್ಲಿ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಅವರು ಅವುಗಳಿಂದ ದೂರ ಉಳಿಯುವಂತೆ ನೋಡಿಕೊಳ್ಳಬೇಕು ಎಂದೂ ಜಿಲ್ಲಾದಿಕಾರಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಮಾದಕ ದ್ರವ್ಯಗಳ ಸೇವೆನೆಯಿಂದ ಮನುಷ್ಯನಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ನಷ್ಟ ಉಂಟಾಗುವುದಲ್ಲದೇ ಹಲವಾರು ರೀತಿಯ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಅಂಥವರ ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಅಸಮತೋಲನ ಉಂಟಾಗಿ ಆರೋಗ್ಯ ಹದಗೆಡುತ್ತದೆ. ಮಾದಕ ವ್ಯಸನಗಳಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸಬೇಕು. ಶಾಲಾ ಮತ್ತು ಕಾಲೇಜುಗಳಲ್ಲಿ ಮಾದಕ ದ್ರವ್ಯ ಮುಕ್ತ ವಾತಾವರಣವನ್ನು ಕಲ್ಪಿಸಲು ಆದ್ಯತೆ ನೀಡಬೇಕು ಎಂದರು. ಮೆಡಿಕಲ್ ಸ್ಟೋರ್ಗಳಿಗೆ ಸೂಚನೆ: ಜಿಲ್ಲೆಯ ಪ್ರತಿಯೊಂದು ಔಷಧ ಅಂಗಡಿಗಳಲ್ಲಿ ವೈದ್ಯರು ಶಿಫಾರಸ್ಸು ಮಾಡುವ ಔಷಧಿಗಳನ್ನು ಮಾತ್ರ ರೋಗಿಗಳಿಗೆ ನೀಡಬೇಕು. ‘ವೈದ್ಯರ ನಿರ್ದೇಶನವಿಲ್ಲದೇ ಔಷಧ ಮಾರಾಟ ನಿಷೇಧ’ ಎಂಬ ಫಲಕವನ್ನು ಕಡ್ಡಾಯವಾಗಿ ಔಷಧ ಅಂಗಡಿಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್ಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಆಳವಡಿಸಿರುವ ಬಗ್ಗೆ ಅಧಿಕಾರಿಗಳಿಂದ ನಿಯಮಿತವಾಗಿ ಪರಿಶೀಲನೆ ನಡೆಯಬೇಕು ಎಂದರು. ತಂಬಾಕು ಮುಕ್ತ: ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಗಳು ಜಂಟಿಯಾಗಿ ಪ್ರತೀ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ, ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯ ಮಾನದಂಡಗಳಿಗೆ ಬದ್ದವಾಗಿ ರುವುದರ ಕುರಿತು ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಜಿಲ್ಲೆಯಲ್ಲಿರುವ ಒಟ್ಟು 1058 ಶಾಲೆಗಳಲ್ಲಿ 17 ಶಾಲೆಗಳು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಎಂದು ದೃಢೀಕರಿಸಿ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲು ಬಾಕಿ ಇವೆ. ಇದು ಪೂರ್ಣಪ್ರಮಾಣದಲ್ಲಿ ನಡೆಯಬೇಕು ಎಂದರು. ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್ಗಳ ಗ್ರಾಮಗಳನ್ನು ಈಗಾಗಲೇ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸ ಲಾಗಿದೆ. ಉಳಿದ ಗ್ರಾಮಗಳನ್ನು ಸಹ ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಅಲ್ಲಿನ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಹಕಾರ ಪಡೆಯಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಂಗಡಿಗಳ ಮೇಲೆ 104ಕ್ಕೂ ಹೆಚ್ಚು ಧಿಡೀರ್ ದಾಳಿಗಳನ್ನು ನಡೆಸಿ, ಒಟ್ಟು 1249ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡು 2,18,050 ರೂ ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೂ ಸಹ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿದ 173 ಪ್ರಕರಣಗಳಿಂದ 20,250 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಸಭೆಯಲ್ಲಿ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಎಎಸ್ಪಿ ಸುಧಾಕರ ನಾಯಕ್, ಡಿಹೆಚ್ಓ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಕುಟಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣ ಸ್ವಾಮಿ, ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು. ಕೈಗಾರಿಕಾ ಘಟಕಗಳ ತಪಾಸಣೆ ಕೆಲವು ಕೈಗಾರಿಕಾ ಘಟಕಗಳಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ತಯಾರಿಕೆ ನಡೆಯುವ ಸಾಧ್ಯತೆಗಳು ಇರುತ್ತವೆ. ಈ ಬಗ್ಗೆ ಕಾರ್ಮಿಕ ಇಲಾಖೆ, ಕೈಗಾರಿಕಾ ಇಲಾಖೆ ಅಧಿಕಾರಿಗಳು ಆಗಿಂದಾಗ್ಗೆ ಅವುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು. ಮಾದಕ ದ್ರವ್ಯಗಳ ಸೇವನೆಗೆ ಒಳಗಾದಲ್ಲಿ ಅದರಿಂದ ಹೊರಬರುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಮಾದಕ ವ್ಯಸನಗಳಿಂದ ದೂರ ಉಳಿಯುವಂತೆ ಮಾಡಲು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮದ ಕುರಿತಂತೆ ಪ್ರಬಂಧ, ಭಾಷಣ ಸ್ಪರ್ಧೆಗಳು, ಚರ್ಚಾಕೂಟ, ಕಿರುನಾಟಕ ಸ್ಪರ್ಧೆಗಳನ್ನು ಪ್ರತೀ ತಿಂಗಳು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಮಹಿಳಾ ಹಕ್ಕುಗಳಿಗಾಗಿ ಕಲಬುರಗಿಯಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಕಲಬುರಗಿ : ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ, ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಡಿವೈಎಫ್ಐ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ 118ನೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಹಕ್ಕುಗಳ ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಸಂಘಟನೆಗಳ ಮುಖಂಡರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನಾಕಾರರು ಮಾತನಾಡಿ, ಸ್ವಾತಂತ್ರ್ಯ ಪಡೆದ ನಂತರವೂ ಸಮಾಜದಲ್ಲಿ ಲಿಂಗ ತಾರತಮ್ಯ ಇನ್ನೂ ಜೀವಂತವಾಗಿದ್ದು, ಸಮಾನ ಹಕ್ಕುಗಳಿಗಾಗಿ ಮಹಿಳೆಯರು ನಿರಂತರ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು. ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಮಾತೃತ್ವ ರಜೆ ಹಾಗೂ ಮುಟ್ಟಿನ ರಜೆ ನೀಡಬೇಕು ಎಂದು ಆಗ್ರಹಿಸಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮನಿ ಕಿರಣಗಿ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಅಫಜಲಪುರದ ಬಳೂರಗಿ ಗ್ರಾಮದ ಸಮೀಪ ನಡೆದ ಪತ್ನಿಹತ್ಯೆ ಘಟನೆ ಉಲ್ಲೇಖಿಸಿ, ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಖೇದ ವ್ಯಕ್ತಪಡಿಸಿದರು. ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷೆ ಲವಿತ್ರ ವಸ್ತ್ರದ ಮಾತನಾಡಿ, ಸಾವಿತ್ರಿಬಾಯಿ ಫುಲೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಮಹಿಳೆಯರು ಹಲವಾರು ಹಕ್ಕುಗಳನ್ನು ಪಡೆದಿದ್ದಾರೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಆ ಹಕ್ಕುಗಳನ್ನು ಉಳಿಸಿಕೊಳ್ಳಲು ಸಹ ಮತ್ತೆ ಹೋರಾಟ ನಡೆಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಿಐಟಿಯುನ ಶಾಂತಾ ಘಂಟಿ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ, ಜಿಲ್ಲಾ ಕೃಷಿ ಕೂಲಿಕಾರರ ಸಂಘಟನೆಯ ಮಲ್ಲಮ್ಮ ಕೊಡ್ಲಿ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಸುಜಾತಾ ವೈ., ಬಸಮ್ಮ ಗುತ್ತೇದಾರ, ಸಿಐಟಿಯು ಮುಖಂಡ ಎಂ.ಬಿ.ಸಜ್ಜನ್, ಶ್ರೀಮಂತ ಬಿರಾದಾರ, ಶಾಂತಾ ಸರಡಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Chandigarh | BJP ಕಚೇರಿ ಬಳಿ ಸ್ಫೋಟ; ಕಚ್ಚಾ ಬಾಂಬ್ ಎಸೆದು ಪರಾರಿ
ಚಂಡೀಗಢ: ಇಲ್ಲಿನ ಸೆಕ್ಟರ್ 37ರಲ್ಲಿ ಇರುವ ಪಂಜಾಬ್ ಬಿಜೆಪಿ ಕಚೇರಿಯ ಬಳಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದ್ದು, ಯಾವುದೇ ಗಾಯಗಳ ವರದಿ ಆಗಿಲ್ಲ ಎಂದು India Today ವರದಿ ಮಾಡಿದೆ. ಸಂಜೆ ಸುಮಾರು 5 ಗಂಟೆ ವೇಳೆಗೆ ಸ್ಫೋಟದ ಶಬ್ದ ಕೇಳಿಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಕಚೇರಿ ಸಮೀಪ ಕಚ್ಚಾ ಬಾಂಬ್ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಫೋಟದಿಂದ ಒಂದು ಕಾರಿನ ಗಾಜುಗಳು ಪುಡಿಯಾಗಿ, ಎರಡು ಸ್ಕೂಟರ್ ಗಳಿಗೆ ಹಾನಿಗೊಳಗಾಗಿವೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರಿದು ಪರಿಶೀಲನೆ ನಡೆಸಿದರು. ಶಂಕಿತರ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಥಳದಿಂದ ಸ್ಫೋಟಕದ ಅವಶೇಷಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಇದು ಗ್ರೆನೇಡ್ ದಾಳಿ ಅಲ್ಲ, ಕಚ್ಚಾ ಬಾಂಬ್ ಸ್ಫೋಟವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಕೇಂದ್ರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (CFSL) ತಂಡವು ಸಾಕ್ಷ್ಯ ಸಂಗ್ರಹಣೆ ನಡೆಸುತ್ತಿದೆ. ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಿ: ಉಡುಪಿ ಡಿಸಿ ಸ್ವರೂಪ
ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸಭೆ
ಕಲಬುರಗಿ | ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ : ಭಂವಾರ್ ಸಿಂಗ್ ಮೀನಾ
ಕಲಬುರಗಿ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಸಿಇಓ ಭಂವಾರ ಸಿಂಗ್ ಮೀನಾ ಬುಧವಾರ ಆಳಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ವೈಜಾಪುರ, ಕಡಗಂಚಿ, ಖಾತ್ರಬಾದ್, ಸಾವಳೇಶ್ವರ, ಕಾಮನಹಳ್ಳಿ, ಸರಸಂಬ, ತಡಕಲ್ ಹಾಗೂ ಹಾಲತಡಕಲ್ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಕುಡಿಯುವ ನೀರಿನ ಜಲಮೂಲಗಳ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಸಿಇಓ ಅವರು, ಬೇಸಿಗೆಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ನಿರಂತರ ಸರಬರಾಜು ಮಾಡಬೇಕು ಎಂದು ಹೇಳಿದರು. ಇದೇ ವೇಳೆ ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭೇಟಿ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಆಳಂದ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಗಮೇಶ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೋಟ| ಯುವಕನ ಅಪಹರಣ ಪ್ರಕರಣ: ಕೋಕಾ ಕಾಯ್ದೆಯಡಿ ಏಳು ಮಂದಿ ಆರೋಪಿಗಳ ಬಂಧನ
ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರಿಂದ ಶೋಧ
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ
Cricket News: ನಾಯಕಿ ಅಮೆಲಿಯಾ ಕೆರ್ (ಅಜೇಯ 179) ಅವರು ಬಾರಿಸಿದ ಶತಕದ ನೆರವಿನಿಂದ ನ್ಯೂಜಿಲೆಂಡ್ ವನಿತೆಯರ ತಂಡ 2 ವಿಕೆಟ್ಗಳಿಂದ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ ದಾಖಲೆಯ ರನ್ಗಳನ್ನು ಚೇಸ್ ಮಾಡಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಭಾರತ ತಂಡ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ 330
ವಾಡಿ | ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕು : ಮುತ್ತುರಾಜ
ವಾಡಿ : ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣದ ಮೂಲಕವೇ ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಲು ಸಾಧ್ಯವಾಯಿತು ಎಂದು ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುತ್ತುರಾಜ್ ಹೇಳಿದರು. ಸ್ಥಳೀಯ ಸವಿತಾ ಸಮಾಜದ ವತಿಯಿಂದ ಆಯೋಜಿಸಲಾದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸವಿತಾ ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಶಾಲೆಯಲ್ಲಿ ಅನ್ನೂತ್ತೀರ್ಣರಾದ ಕೂಡಲೇ ಮಕ್ಕಳನ್ನು ಕುಲಕಸುಬಿಗೆ ತಳ್ಳದೇ, ಅವರ ವಿದ್ಯಾಭ್ಯಾಸವನ್ನು ಮುಂದುವರಿಸಲು ಪ್ರೋತ್ಸಾಹಿಸಬೇಕು. ಸ್ವಲ್ಪ ಹಣಕ್ಕಾಗಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ವೃತ್ತಿ ಆಧಾರಿತ ಅಸಮಾನತೆಗಳಿದ್ದರೂ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆ, ಶಿಕ್ಷಣದ ಹಕ್ಕು, ಉದ್ಯೋಗದ ಅವಕಾಶ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದರು. ಆ ಹಕ್ಕುಗಳನ್ನು ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು. ವಿಶೇಷ ಉಪನ್ಯಾಸ ನೀಡಿದ ಅಶೋಕ ರಾಜನಕೊಳ್ಳೂರ ಅವರು, ಋಷಿ-ಮುನಿಗಳು, ಶರಣ ಸಂತರು ಮತ್ತು ಪೀರ್ ಪೈಗಂಬರರಂತೆ ಸವಿತಾ ಮಹರ್ಷಿಗಳು ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಿದ್ದಾರೆ ಎಂದು ಹೇಳಿದರು. ಸವಿತಾ ಸಮಾಜವು ಆಯುರ್ವೇದ, ಸಂಗೀತ ಮತ್ತು ಕ್ಷೌರ ಕರ್ಮಗಳ ಮೂಲಕ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಮನುಷ್ಯ ಹುಟ್ಟಿನಿಂದ ಅಂತ್ಯವರೆಗೂ ಈ ಸಮಾಜದ ಪಾತ್ರ ಅನಿವಾರ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಲಕರ್ಟಿ ಕಟ್ಟಿಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣು ನಾಟೇಕರ, ಸೂರ್ಯಕಾಂತ ರದ್ದೇವಾಡಿ, ರಾಜು ಮುಕ್ಕಣ್ಣ, ಶರಣಗೌಡ ಪಾಟೀಲ ಚಾಮನೂರು, ಭೀಮರಾಯ ದೊರಿ, ಬಸವರಾಜ ಕೇಶ್ವರ, ವೀರಣ್ಣ ಯಾರಿ, ರಾಜು ವಾಲಿಯ, ಗುರುಪಾದ ದೊಡ್ಡಮನಿ, ಹರೂನ್ ಖುರೇಶಿ, ಸುನೀಲ ಗುತ್ತೇದಾರ, ಸಿದ್ದು ಪೂಜಾರಿ, ಬಸವರಾಜ ಬಗಡಿಕರ್ ಆಂಜನೇಯ ಟಿ, ಅಂಬರೀಶ ಕಡದರಾಳ, ಕಲ್ಲಪ್ಪ ಅರಕೇರಿ, ದೇವಣ್ಣ ರಾಜ ಹಿಂದುಸ್ತಾನಿ, ಬಾಬು ಅರಕೇರಿ, ಪ್ರಭು ಅರಕೇರಿ, ವೆಂಕಟೇಶ ದುಗುನೂರಕರ, ಚಂದ್ರಕಾಂತ ಬೆಳಾರ, ನಾಗರಾಜ ಶಿವಪುರ, ಅಂಬರೀಶ ಹಡಪದ ಸೇರಿದಂತೆ ಹಲವರು ಇದ್ದರು.
Bengaluru | ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಬಂಧನ
ಬೆಂಗಳೂರು : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಮಲ್ಲು ಎಂಬಾತನನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇಲ್ಲಿನ ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಕಚೇರಿಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆಯನ್ನು ಗುರಿಯಾಗಿಸಿಕೊಂಡು ಆರೋಪಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆ ಮಹಿಳೆಯ ಹೇಳಿಕೆಯಂತೆ, ಆರೋಪಿ ಮಲ್ಲು ಸಂತ್ರಸ್ತೆ ಮಹಿಳೆಯ ಬಳಿ ಬಂದು ಬಲವಂತವಾಗಿ ಮುಟ್ಟಿ ಎಳೆದಾಡಿದ್ದಾನೆ. ಈ ವೇಳೆ ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದರೂ ಬಿಡದೆ ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ಮಲ್ಲು ವಿರುದ್ಧ ದೂರು ನೀಡಿದ ಹಿನ್ನಲೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Kalaburagi | ಜಗಜೀವನ ರಾಮ್, ಡಾ.ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಣೆಗೆ ಸಿದ್ಧತೆ : ಡಿಸಿ ಫೌಝಿಯಾ ತರನ್ನುಮ್
ಕಲಬುರಗಿ : ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಮತ್ತು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಜಿಲ್ಲೆಯಾದ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹನೀಯರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಸೌಹಾರ್ದಯುತವಾಗಿ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಮುಖ್ಯ ಉದ್ದೇಶವಾಗಿರಬೇಕು ಎಂದು ಹೇಳಿದರು. ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್) ನಲ್ಲಿ ಇರುವ ಬಾಬು ಜಗಜೀವನರಾಂ ಹಾಗೂ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಬೆಳಗ್ಗೆ 8.30 ಗಂಟೆಗೆ ಮಾಲಾರ್ಪಣೆ ಸಲ್ಲಿಸಲಾಗುತ್ತದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ಧ ಮೆರವಣಿಗೆ ಆಯೋಜಿಸಲು ನಿರ್ಧರಿಸಲಾಗಿದೆ. ಜಯಂತಿ ಅಂಗವಾಗಿ ಪ್ರಮುಖ ವೃತ್ತಗಳು, ಸಾರ್ವಜನಿಕ ಸ್ಥಳಗಳು ಹಾಗೂ ಪ್ರತಿಮೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿ, ವಿದ್ಯುತ್ ದೀಪಾಲಂಕಾರ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮಗಳನ್ನು ಆಯೋಜಿಸಿ ಗಣ್ಯರನ್ನು ಆಹ್ವಾನಿಸಬೇಕೆಂದು ತಿಳಿಸಲಾಗಿದೆ. ಜಯಂತಿ ಕೇವಲ ಮೆರವಣಿಗೆಗೆ ಸೀಮಿತವಾಗದೇ, ಯುವಜನತೆಗೆ ಮಹನೀಯರ ಆದರ್ಶಗಳು, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಕೃಷಿ–ಆಡಳಿತ ಸುಧಾರಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು. ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಸಮುದಾಯ ಭವನಗಳ ದುರಸ್ತಿ, ಸುಣ್ಣ-ಬಣ್ಣ ಹಾಗೂ ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ನಿರ್ದೇಶನ ನೀಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಬೆಳಗ್ಗೆ 9 ಗಂಟೆಗೆ ಜಯಂತಿ ಆಚರಿಸಲು ಹಾಗೂ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಸೂಚಿಸಲಾಗಿದೆ. ಮೆರವಣಿಗೆ ವೇಳೆ ಆಸ್ಪತ್ರೆಗಳ ಬಳಿ ಧ್ವನಿವರ್ಧಕಗಳ ಶಬ್ದ ಕಡಿಮೆ ಮಾಡುವುದು, ಅಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಮತ್ತು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಂಚಾರ ವ್ಯವಸ್ಥೆ ಸುಗಮವಾಗಿರಲು ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸಮುದಾಯ ಮುಖಂಡರು, ಈ ಜಯಂತಿಗಳು ಎಲ್ಲಾ ವರ್ಗದ ಜನರು ಒಗ್ಗೂಡಿ ಆಚರಿಸುವಂತಾಗಬೇಕು ಎಂದು ಮನವಿ ಮಾಡಿದರು. ವಿವಿಧ ಬಡಾವಣೆಗಳಿಂದ ಮೆರವಣಿಗೆ ಅಂಬೇಡ್ಕರ್ ವೃತ್ತದವರೆಗೆ ಸಾಗಲಿದ್ದು, ಕಲಾ ತಂಡಗಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಇನ್ನಷ್ಟು ವೈಭವಶಾಲಿಯಾಗಲಿದೆ. ಸಭೆಯಲ್ಲಿ ಡಿಸಿಪಿ ಪ್ರವೀಣ ನಾಯಕ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಡಿ.ಎಚ್.ಒ. ಡಾ. ಶರಣಬಸಪ್ಪ ಕ್ಯಾತನಾಳ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ ಗೋನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
ಕರ್ನಾಟಕ ಟೈಲರ್ ಅಸೋಷಿಯೇಷನ್ನ ಜಂಟಿ ಕಾರ್ಯದರ್ಶಿಯಾಗಿ ಕಂಪ್ಲಿಯ ಜಡೇಶ್ ಹಿರೇಮಠ ಆಯ್ಕೆ
ಬಳ್ಳಾರಿ/ಕಂಪ್ಲಿ : ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ಟೈಲರ್ ಅಸೋಷಿಯೇಷನ್ ರಾಜ್ಯ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಕಂಪ್ಲಿಯ ಜಡೇಶ್ ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಡೇಶ್ ಹಿರೇಮಠ, ಕಳೆದ 23 ವರ್ಷಗಳಿಂದ ಸಂಘಟನೆ ಟೈಲರ್ಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಹಿಳಾ ಮತ್ತು ಪುರುಷ ಕಾರ್ಮಿಕರ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು. ಟೈಲರ್ಗಳಿಗೆ ಜೀವನ ಭದ್ರತೆ ಒದಗಿಸಲು ಟೈಲರ್ಸ್ ಕ್ಷೇಮನಿಧಿ ಮಂಡಳಿ ರಚಿಸುವಂತೆ ಸರ್ಕಾರವನ್ನು ಆಗ್ರಹಿಸಿದ ಅವರು, ಭವಿಷ್ಯ ನಿಧಿ, ಪಿಂಚಣಿ ಯೋಜನೆ ಹಾಗೂ ಆರೋಗ್ಯ ವಿಮೆ ಜಾರಿಗೆ ತರಬೇಕೆಂದು ಮನವಿ ಮಾಡಿದರು. 60 ವರ್ಷ ಪೂರೈಸಿದ ಎನ್ಪಿಎಸ್ ಲೈಟ್ ಫಲಾನುಭವಿಗಳಿಗೆ ನಿವೃತ್ತಿವೇತನ ಘೋಷಿಸಿ, ಕನಿಷ್ಠ ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ನೀಡಬೇಕು ಎಂದರು. ಇದೇ ವೇಳೆ ಹೊಲಿಗೆ ಕಾರ್ಮಿಕರ ಹೆಣ್ಣುಮಕ್ಕಳಿಗೆ ವಿವಾಹಧನ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಹಿನ್ನೆಲೆ ಜಿಲ್ಲೆಯ ಹೊಲಿಗೆ ಕಾರ್ಮಿಕರ ಅಭಿವೃದ್ಧಿಗಾಗಿ ಹೆಚ್ಚಿನ ಶ್ರಮವಹಿಸುವುದಾಗಿ ಜಡೇಶ್ ಹಿರೇಮಠ ತಿಳಿಸಿದರು.
ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ ನೀಡಿದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್
ಬೆಂಗಳೂರು : ಕೇಂದ್ರ ಸರಕಾರ ಹಮ್ಮಿಕೊಂಡಿರುವ ಜನಗಣತಿ 2027ರ ಅಂಗವಾಗಿ ಸ್ವಯಂ ಗಣತಿ ವ್ಯವಸ್ಥೆ ಪರಿಚಯಿಸಿದ್ದು, ಬುಧವಾರ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ತಮ್ಮ ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ ಪೂರ್ಣಗೊಳಿಸಿದ್ದಾರೆ. ಎ.1 ರಿಂದ 15 ರವರೆಗೆ ಎಲ್ಲ ನಾಗರಿಕರು ಅಧಿಕೃತ ಪೋರ್ಟಲ್ se.census.gov.in ಮೂಲಕ ತಮ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಿಕೊಳ್ಳಬೇಕೆಂದು ತಿಳಿಸಿದ ಅವರು, ‘ನಮ್ಮ ಜನಗಣತಿ-ನಮ್ಮ ಅಭಿವೃದ್ಧಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸರಕಾರ ಜನಗಣತಿ ಹಮ್ಮಿಕೊಂಡಿದೆ. ಇದರ ಅಂಗವಾಗಿ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಿದ್ದು, ಈ ಪ್ರಕ್ರಿಯೆ ಸರಳ ಮತ್ತು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಸುಲಭವಾಗಿ 5 ರಿಂದ 10 ನಿಮಿಷಗಳಲ್ಲಿ ಸ್ವಯಂ ಗಣತಿ ಪೂರ್ಣಗೊಳಿಸಬಹುದಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡಿರುವ ಮುಖ್ಯ ಕಾರ್ಯದರ್ಶಿ, ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಅರ್ಜಿಯ ಸಂಖ್ಯೆ ದೊರೆಯುವುದು. ಈ ಸಂಖ್ಯೆಯನ್ನು ಎ.16 ರಿಂದ ಮೇ 15 ರವರೆಗೆ ಮನೆಮನೆಗೆ ಭೇಟಿ ನೀಡುವ ಗಣತಿದಾರರಿಗೆ ನೀಡಿದಲ್ಲಿ, ಗಣತಿದಾರರು ಸ್ವಲ್ಪ ಸಮಯದಲ್ಲಿ ಗಣತಿ ಪೂರ್ಣಗೊಳಿಸಲು ಹಾಗೂ ಯಾವುದಾದರೂ ತಿದ್ದುಪಡಿ ಇದ್ದಲ್ಲಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಮೊಬೈಲ್ ಅಥವಾ ಕಂಪ್ಯೂಟರ್ ಇಲ್ಲದಿದ್ದಲ್ಲಿ ಸಮೀಪದ ಕಂಪ್ಯೂಟರ್ ಕೇಂದ್ರಗಳಿಂದ ಅಥವಾ ಸ್ನೇಹಿತರ ಮೊಬೈಲಿನಿಂದ ಮಾಹಿತಿ ಸಲ್ಲಿಸಿ ನೋಂದಣಿ ಸಂಖ್ಯೆಯನ್ನು ಪಡೆಯಬೇಕು. ಜನಗಣತಿ ನಮ್ಮ ರಾಜ್ಯ ಮತ್ತು ದೇಶದ ಭವಿಷ್ಯ ರೂಪಿಸುವ ಮಹತ್ವದ ಕಾರ್ಯ. ಇದು ದತ್ತಾಂಶ ಆಧಾರಿತ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ ಎಂದು ಶಾಲಿನಿ ರಜನೀಶ್ ಹೇಳಿದ್ದಾರೆ. ಆರೋಗ್ಯ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಮರ್ಪಕ ಸಂಪನ್ಮೂಲ ಹಂಚಿಕೆಗೆ ದಾರಿ ತೋರುತ್ತದೆ. ನಿಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಇದು ಕೇವಲ ಕರ್ತವ್ಯವಲ್ಲ-ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆಯಾಗಿದೆ. ಇಂದು ನೀಡುವ ನಿಖರ ಮಾಹಿತಿ, ನಾಳೆಯ ಉತ್ತಮ ನೀತಿಗಳು ಮತ್ತು ಸೇವೆಗಳಿಗೆ ಆಧಾರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಜನಗಣತಿಯಿಂದ ಯಾರು ಬಿಟ್ಟು ಹೋಗದಂತೆ ಸರಕಾರ ಮುತುವರ್ಜಿ ವಹಿಸಿದೆ. ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ, ಜನಗಣತಿಯನ್ನು ಯಶಸ್ವಿಗೊಳಿಸಲು ನಾವು ಎಲ್ಲರೂ ಕೈಜೋಡಿಸೋಣ ಎಂದು ನಾಗರಿಕರಲ್ಲಿ ಮುಖ್ಯ ಕಾರ್ಯದರ್ಶಿ ಮನವಿ ಮಾಡಿದ್ದಾರೆ. ಜನಗಣತಿ ನಿರ್ದೇಶಕ ರಾಮಚಂದ್ರನ್ ಅವರು ಮುಖ್ಯ ಕಾರ್ಯದರ್ಶಿಗೆ ಸ್ವಯಂ ಗಣತಿ ವ್ಯವಸ್ಥೆಯ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.
Karnataka Tax: ಕರ್ನಾಟಕದಿಂದ ಮತ್ತೆ ನಮ್ಮ ತೆರಿಗೆ - ನಮ್ಮ ಹಕ್ಕು ಅಭಿಯಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸುಳಿವು ಕೊಟ್ಟಿದ್ದಾರೆ. ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು ನೀಡುತ್ತಿದೆ. ಇದನ್ನು ತೆರಿಗೆ ಭಯೋತ್ಪಾದನೆ ಎನ್ನಲೇ, ತೆರಿಗೆ ದರೋಡೆ ಎನ್ನಲೇ ಈ
ನೀವು ಹೇಳಿದ ಕೆಲಸ ಆಗಿದೆ; ಬೆಂಗಳೂರು - ವಿಜಯಪುರ ಹೊಸ ನೇರ ರೈಲು ಆರಂಭಿಸಿ - ರೈಲ್ವೇ ಸಚಿವರಿಗೆ ಎಂಬಿ ಪಾಟೀಲ ಪತ್ರ
ವಿಜಯಪುರ - ಬೆಂಗಳೂರು ನಡುವೆ ಪ್ರಯಾಣ ಸಮಯ ಇಳಿಸುವ ನಿಟ್ಟಿನಲ್ಲಿ ಹೊಸ ನೇರ ಎಕ್ಸ್ಪ್ರೆಸ್ ರೈಲು ಆರಂಭಿಸಲು ಕೇಂದ್ರ ರೈಲ್ವೇ ಸಚಿವರಿಗೆ ರಾಜ್ಯ ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಪತ್ರ ಬರೆದಿದ್ದಾರೆ. ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ರೈಲು ಓಡಿಸಲು ಕೋರಿದ್ದಾರೆ. ಸದ್ಯ ಎರಡು ನಗರಗಳ ನಡುವೆ ರೈಲು ಸಂಚಾರ 15 ಗಂಟೆ ಹಿಡಿಯುತ್ತಿದ್ದು, ಆ ಸಮಯವನ್ನು 10 ಗಂಟೆಗೆ ಇಳಿಸಲು ಕೋರಲಾಗಿದೆ.
ಉಡುಪಿ ಮಲಬಾರ್ ಗೋಲ್ಡ್ನ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ
ಉಡುಪಿ, ಎ.1: ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಸ್ಟೋರ್ ಹೆಡ್ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡ ಹಫೀಝ್ ರೆಹಮಾನ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಬುಧವಾರ ಜರಗಿತು. ಉಡುಪಿ ಶಾಖೆಯ ಬೆಳವಣಿಗೆಯಲ್ಲಿ ಮಹತ್ವ ಪಾತ್ರ ವಹಿಸಿ, ಮಂಗಳೂರಿಗೆ ವರ್ಗಾವಣೆಗೊಂಡ ಹಫೀಝ್ ರೆಹಮಾನ್ ಅವರನ್ನು ಶಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಡುಪಿ ಶಾಖಾ ಮುಖ್ಯಸ್ಥ ವಿಜಯ್ ಕುಮಾರ್, ವ್ಯವಸ್ಥಾಪದರಾದ ಪುರಂದರ ತಿಂಗಳಾಯ, ಹರೀಶ್ ಎಂ.ಜಿ, ಸಂದೀಪ್, ರಾಘವೇಂದ್ರ, ತಂಝೀಮ್ ಶಿರ್ವ ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಎ.3ರಂದು ವಾರ್ಷಿಕ ಸುನ್ನಿ ಇಜ್ತಿಮಾ
ಉಡುಪಿ, ಎ.1: ಸುನ್ನೀ ದಾವತೇ ಇಸ್ಲಾಮಿ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ವಾರ್ಷಿಕ ಸುನ್ನಿ ಇಜ್ತಿಮಾ ಎ.3ರಂದು ಸಂಜೆ 4.30ರಿಂದ ರಾತ್ರಿ 10ಗಂಟೆವರೆಗೆ ಹೂಡೆ ದಾರುಸ್ಸಲಾಮ್ ಶಾಲಾ ವಠಾರದಲ್ಲಿ ಜರಗಲಿದೆ. ಮುಖ್ಯ ಅತಿಥಿಗಳಾಗಿ ಮುಂಬೈ ಸುನ್ನಿ ದಾವತೆ ಇಸ್ಲಾಮಿ ಅಮೀರ್ ಹಾಫಿಝ್ ವ ಖಾರಿ ಮೌಲಾನ ಮೊಹಮ್ಮದ್ ಶಾಕಿರ್ ಅಲಿ ನೂರಿ, ಬೆಂಗಳೂರಿನ ಸುನ್ನಿ ದಾವತೆ ಇಸ್ಲಾಮಿಯ ನಿಗ್ರಾನ್ ಖಾರಿ ಅಝ್ಮತುಲ್ಲಾ ಖಾನ್, ಮುಂಬೈಯ ಮುಬಲ್ಲಿಗ್ ಖಾರಿ ಯೂನುಸ್ ರಝ್ವಿ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
ಬ್ರಹ್ಮಾವರ, ಎ.1: ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಚಕ್ರಪಾಣಿ ಅಡಿಗ (76) ಸಾಸ್ತಾನದ ಸ್ವಗೃಹದಲ್ಲಿ ಬುಧವಾರ ಹೃದಯಘಾತದಿಂದ ನಿಧನರಾದರು. ಸಾಸ್ತಾನದ ಶ್ರೀಲಕ್ಷ್ಮಿ ಜನಾರ್ದನ ದೇವಸ್ಥಾನದ ಮೊಕ್ತೇಸರರು ಆಗಿ ಕಾರ್ಯನಿರ್ವಹಿಸಿದ್ದ ಇವರು, ಸಮಾಜಮುಖಿ ಕಾರ್ಯಗಳ ಮೂಲಕ ಹೆಸರುವಾಸಿ ಯಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಕಾರ್ಮಿಕರಿಂದ ಕಪ್ಪು ದಿನಾಚರಣೆ
ಉಡುಪಿ, ಎ.1: ಕೇಂದ್ರ ಸರಕಾರ ಇಂದಿನಿಂದ ಜಾರಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಸೆಂಟ್ರಲ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್(ಸಿಐಟಿಯು) ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾ ದ್ಯಂತ ಕಪ್ಪು ದಿನವನ್ನು ಆಚರಿಸಲಾಯಿತು. ಉಡುಪಿ ಜಿಲ್ಲಾ ಕೇಂದ್ರ, ಕಾರ್ಕಳ, ಬ್ರಹ್ಮಾವರ, ಕುಂದಾಪುರವ ತಾಲೂಕು ಕೇಂದ್ರಗಳು, ಕಾರ್ಮಿಕರ ಕೆಲಸದ ಸ್ಥಳಗಳಲ್ಲಿ, ಫ್ಯಾಕ್ಟರಿ, ಕಂಪನಿಗಳ ಮುಂದೆ ಎಲ್ಲಾ ವರ್ಗದ ಕಾರ್ಮಿಕರು ಪ್ರತಿಭಟನೆ ನಡೆಸಿ ಕಪ್ಪು ದಿನ ಆಚರಣೆ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಸಿಐಟಿಯು ಉಡುಪಿ ವಲಯ ಸಮಿತಿ ನೇತೃತ್ವದಲ್ಲಿ ಉಡುಪಿ ಬಸ್ ನಿಲ್ದಾಣ ಬಳಿ ಕಾರ್ಮಿಕರು ಕಪ್ಪು ದಿನಾಚರಣೆ ಹಾಗೂ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ್ ಗೊಲ್ಲ, ಕೇಂದ್ರ ಸರಕಾರ ಜಾರಿ ಮಾಡಿರುವ ಕಾರ್ಮಿಕ 4ಸಂಹಿತೆಗಳಿಂದ ಕಾರ್ಮಿಕರು ಬೀದಿಗೆ ಬಿಳುವಂತಾಗಿದೆ,ಕಾರ್ಮಿಕರಿಗೆ ಇನ್ನೂ ಮುಂದೆ ಸವಲತ್ತುಗಳು ಸಿಗಬೇಕಾದರೆ ಹಲವು ದಾಖಲೆಗಳನ್ನು ನೀಡಬೇ ಕಾಗುತ್ತದೆ, ಕೆಲಸದ ಅವಧಿಗಳು ಹೆಚ್ಚಳ ಮಾಡಿರುವುದು, ಕಾರ್ಮಿಕರ ಮುಷ್ಕರದ ಹಕ್ಕುಗಳನ್ನು ದುರ್ಬಲ ಗೊಳಿಸಿ ರುವುದು,ಕಾರ್ಮಿಕ ಸಂಘಗಳ ನೊಂದವಣಿಗಳಲ್ಲಿ ಬದಲಾವಣೆಗಳನ್ನು ಕೇಂದ್ರ ಸರಕಾರ ಇವತ್ತು ಜಾರಿಮಾಡಿದೆ. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆವಕಾಶ ನೀಡಿದ್ದು ಇವರಿಗೆ ಸರಿಯಾದ ಸುರಕ್ಷತೆ, ಭದ್ರತೆ,ಆರೋಗ್ಯ ಸಮಸ್ಯೆ ಗಳನ್ನು ಎದುರಿಸಬೇಕಾಗಿದೆಎಂದು ಹೇಳಿದರು. ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ಕೇಂದ್ರ ಸರಕಾರವು ಕಾರ್ಮಿಕರ ವಿರೋಧದ ನಡುವೆಯೂ 4 ಕಾರ್ಮಿಕ ಸಂಹಿತೆಗಳನ್ನು ಇಂದಿನಿಂದ ಜಾರಿ ಮಾಡಲು ಹೊರಟಿದ್ದು, ಇದಕ್ಕೆ ಸರಿಯಾದ ಬೆಲೆ ತೆರ ಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಬೀಡಿ ಸಂಘದ ಉಡುಪಿ ಅಧ್ಯಕ್ಷೆ ನಳಿನಿ, ಕಾರ್ಯದರ್ಶಿ ಉಮೇಶ್ ಕುಂದರ್, ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷ ಸರೋಜ ಎಸ್., ಸಿಐಟಿಯು ಮುಖಂಡರಾದ ಮೋಹನ್, ಗಿರಿಜಾ, ವಸಂತಿ, ಕಟ್ಟಡ ಸಂಘದ ಮುಖಂಡರಾದ ಸಾರಿಕಾ, ಶರ್ಮಿಳಾ, ಸೌಮ್ಯ, ಶಾರದ ಉಪಸ್ಥಿತರಿದ್ದರು. ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳದಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆದ ಕಪ್ಪು ದಿನಾಚರಣೆ ಪ್ರತಿಭಟನೆಯಲ್ಲಿ ಕಾರ್ಕಳ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಕಟ್ಟಡ ಸಂಘದ ಮುಖಂಡ ನಾಗೇಶ್, ಸಿಐಟಿಯು ಮುಖಂಡರಾದ ಜಯಂತಿ, ಶಕುಂತಲಾ, ಪುಷ್ಪಾ ಉಪಸ್ಥಿತರಿದ್ದರು. ಬ್ರಹ್ಮಾವರದ ಆಕಾಶವಾಣಿ ಬಳಿ ನಡೆದ ಕಾರ್ಮಿಕರ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷ ಸುಭಾಷ್ ನಾಯಕ್, ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ್ ಗೊಲ್ಲ, ಸಿಐಟಿಯು ಮುಖಂಡರಾದ ಸದಾಶಿವ ಪೂಜಾರಿ, ರಮೇಶ್ ಪೂಜಾರಿ, ಮುರಳಿ ಮೊದಲಾದವರು ಉಪಸ್ಥಿತರಿದ್ದರು. ಸಿದ್ದಾಪುರ: ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ ಕುಂದಾಪುರ: ಎ.1ರಿಂದ ನಾಲ್ಕು ಲೇಬರ್ ಕೋಡ್ ಜಾರಿ ಮಾಡಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಬುಧವಾರ ಸಿದ್ದಾಪುರದ ಪೇಟೆಯಲ್ಲಿ ಕಪ್ಪು ದಿನಾಚರಣೆ ಪ್ರತಿಭಟನೆ ನಡೆಯಿತು. ಸಭೆಯನ್ನುದ್ದೇಶಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕಾರ್ಮಿಕರ ವರ್ಗ ಕಷ್ಟಪಟ್ಟು ಹೋರಾಟ ನಡೆಸಿ ಪಡೆದ ಕಾನೂನುಗಳನ್ನು ಕೇಂದ್ರ ಸರಕಾರ ರದ್ದು ಪಡಿಸಿ ನೂತನ ಲೇಬರ್ ಕೋಡ್ ತಂದಿರುವುದು ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುವ ನೀತಿಯಾಗಿದೆ. ಹೊಸ ಲೇಬರ್ ಕೋಡ್ ಬಹುತೇಕ ಮಾಲಕ ವರ್ಗಕ್ಕೆ ಸೂಪರ್ ಲಾಭ ಮತ್ತು ರಕ್ಷಣೆ ಒದಗಿಸುವ ಕಾರ್ಮಿಕ ಕಾಯ್ದೆ ಆಗಿದೆ ಎಂದು ಟೀಕಿಸಿದರು. ಇದೇ ವೇಳೆ ಅನಿಲ ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ತಾಲೂಕು ಉಪಾಧ್ಯಕ್ಷ ಅಲೆಕ್ಸಾಂಡರ್, ಸಿದ್ದಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ರಾಘವೇಂದ್ರ, ಚಕ್ರೇಶ್, ಸುಧಾಕರ ಮೇಸ್ತ್ರಿ, ರತ್ನಾಕರ ರಾವ್ ಸುಕುಮಾರ್ ಉಪಸ್ಥಿತರಿದ್ದರು.
‘ಬೆಲೆ ಏರಿಕೆ’ ದುಬಾರಿಯಾಯ್ತು ಕರ್ನಾಟಕಕ್ಕೆ : ಕೇಂದ್ರ ಸರಕಾರದ ವಿರುದ್ಧ ಸಿಎಂ, ಡಿಕೆಶಿ, ಸುರ್ಜೇವಾಲ ಆಕ್ರೋಶ
ಬೆಂಗಳೂರು : ಕೇಂದ್ರದ ಮೋದಿ ನೇತೃತ್ವದ ಸರಕಾರ ಮತ್ತು ಬಿಜೆಪಿಯು ಕರ್ನಾಟಕ ರಾಜ್ಯದ ಹಾಗೂ ಭಾರತ ದೇಶದ ಜನರು ಹಿಂದೆಂದೂ ಕಾಣದ ರೀತಿಯಲ್ಲಿ ‘ಜೇಬುಗಳ್ಳತನ'ವನ್ನು ಆರಂಭಿಸಿದೆ. ಬಿಜೆಪಿ ‘ಅಚ್ಚೇ ದಿನ್' ಭರವಸೆ ನೀಡಿತು. ಆದರೆ, ಇದೀಗ ನಮಗೆ ನೀಡಿದ್ದು ‘ದುಬಾರಿ ದರ್ಬಾರ್' ಆಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮತ ಕೇಳುವ ಮೊದಲು ಸಾಮಾನ್ಯ ಜನರಿಗೆ ಉತ್ತರ ನೀಡಲಿ’ ಎಂದು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ಇಂದು ಬೆಳಗ್ಗೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 200 ರೂ.ಹೆಚ್ಚಿಸಲಾಗಿದೆ, ಇದರಿಂದ ಒಂದು ಸಿಲಿಂಡರ್ ಬೆಲೆ 2 ಸಾವಿರ ರೂ.ದಾಟಿದೆ. ಕೇವಲ 45 ದಿನಗಳಲ್ಲಿ 3 ಬಾರಿ ಏರಿಕೆಯಾಗಿದೆ. ನಿನ್ನೆಯಷ್ಟೇ 19ಕೆ.ಜಿ.ವಾಣಿಜ್ಯ ಸಿಲಿಂಡರ್ ಬೆಲೆ 1,958 ರೂ. ಇತ್ತು. ಇಂದು 2 ಸಾವಿರ ರೂ.ಗಳ ಗಡಿ ದಾಟಿದೆ. ಮಾರ್ಚ್ ತಿಂಗಳಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆಗಳು ಎರಡು ಬಾರಿ ಏರಿಕೆಯಾಗಿ, ಪ್ರತಿ ಸಿಲಿಂಡರ್ಗೆ 913 ರೂ.ತಲುಪಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯು, ಶೀಘ್ರದಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗುವುದರ ಮುನ್ಸೂಚನೆಯಾಗಿದೆ. ಇದಲ್ಲದೆ, ಎಲ್ಪಿಜಿ ತೀವ್ರ ಅಭಾವದಿಂದಾಗಿ ಜನರು ದುಪ್ಪಟ್ಟು ದರ ನೀಡಿ ಸಿಲಿಂಡರ್ ಖರೀದಿಸುವಂತಾಗಿರುವುದನ್ನು ಮರೆಯಬಾರದು ಎಂದು ಟೀಕಿಸಿದ್ದಾರೆ. ಇಂದಿನಿಂದ ಟೋಲ್ ತೆರಿಗೆಯನ್ನು ಹೆಚ್ಚಿಸಲಾಗಿದೆ. ಕರ್ನಾಟಕವೊಂದರಲ್ಲೇ 2026-27ರಲ್ಲಿ 5 ಸಾವಿರ ಕೋಟಿ ರೂ.ಟೋಲ್ ಸಂಗ್ರಹವಾಗುವ ನಿರೀಕ್ಷೆಯಿದೆ ಮತ್ತು ದೇಶಾದ್ಯಂತ 80 ಸಾವಿರ ಕೋಟಿ ರೂ. ಲೂಟಿಯಾಗುತ್ತಿದೆ. ನಯಾರಾ ಎನರ್ಜಿ (ಹಿಂದಿನ ಎಸ್ಸಾರ್) ಮಾ.26ರಂದು ಪೆಟ್ರೋಲ್ ಬೆಲೆಯನ್ನು 5.30 ರೂ.ಮತ್ತು ಡೀಸೆಲ್ ಬೆಲೆಯನ್ನು 3 ರೂ.ಹೆಚ್ಚಿಸಿದೆ. ನಿನ್ನೆ, ಮಾ.31ರಂದು, ಮತ್ತೊಂದು ಖಾಸಗಿ ಕಂಪೆನಿಯಾದ ಶೆಲ್, ಪೆಟ್ರೋಲ್ ಬೆಲೆಯನ್ನು 112 ರೂ.ಮತ್ತು ಡೀಸೆಲ್ ಬೆಲೆಯನ್ನು 98 ರೂ.ಗಳಿಗೆ ಏರಿಸಿದೆ. ಎ.9/23ರ ಚುನಾವಣೆಗಳು ಮುಗಿಯುವುದನ್ನೇ ಕಾಯುತ್ತಿರುವ ಮೋದಿ ಸರಕಾರ, ನಂತರ ಮತ್ತಷ್ಟು ಬೆಲೆ ಏರಿಸುವುದಕ್ಕೆ ಇದು ಸ್ಪಷ್ಟ ಸಂಕೇತ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರಕಾರವು ಇತ್ತೀಚೆಗೆ ವಾಣಿಜ್ಯ ವಿಮಾನಯಾನ ದರಗಳ ಮೇಲಿನ ಮಿತಿಯನ್ನು ತೆಗೆದುಹಾಕಿದ್ದು, ಇದು ಬೆಲೆ ಏರಿಕೆಯ ಅಲೆ ಎಬ್ಬಿಸಿದೆ. ಮಾರ್ಚ್ ತಿಂಗಳಲ್ಲೇ ವಿಮಾನ ದರಗಳಲ್ಲಿ ಶೇ.10ರಿಂದ 15ರಷ್ಟು ಏರಿಕೆಯಾಗಿದೆ. ಇಂದು, ಹೊಸದಿಲ್ಲಿ ವಿಮಾನ ಇಂಧನ ದರ ಕಿ.ಲೋ.ಲೀಟರ್ಗೆ 2 ಲಕ್ಷ ರೂ.ದಾಟಿದೆ. ಇದರ ನೇರ ಹೊರೆ ಗ್ರಾಹಕರ ಮೇಲೆ ಬೀಳಲಿದ್ದು, ಟಿಕೆಟ್ ದರ ಶೇ.25ರಷ್ಟು ಹೆಚ್ಚಳವಾಗಲಿದೆ ಎಂದು ಅವರುಗಳು ಎಚ್ಚರಿಸಿದ್ದಾರೆ. ಎಪ್ರಿಲ್ 2026ರ ವೇಳೆಗೆ ಎಸಿ, ಫ್ರಿಡ್ಜ್ ಮತ್ತು ವಾಟರ್ ಕೂಲರ್ ದರಗಳಲ್ಲಿ ಈಗಾಗಲೇ ಶೇ.5ರಿಂದ ಶೇ.15ರಷ್ಟು ಏರಿಕೆಯಾಗಿದೆ. ತಜ್ಞರ ಪ್ರಕಾರ ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಈ ಎ.1 ರಿಂದ ರೈಲ್ವೆ ಟಿಕೆಟ್ ರದ್ದತಿ ದರವು ಸಾಮಾನ್ಯಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ರೈಲು ಹೊರಡುವ 8 ಗಂಟೆಗಳ ಒಳಗೆ ಟಿಕೆಟ್ ರದ್ದುಗೊಳಿಸಿದರೆ ಯಾವುದೇ ಹಣ ಮರುಪಾವತಿಯಾಗುವುದಿಲ್ಲ. ಅದರ ಮುಂಚಿತವಾಗಿ ರದ್ದುಗೊಳಿಸಿದರೆ ಶೇ.50ರಷ್ಟು ಹಣ ಕಡಿತವಾಗುತ್ತದೆ. ಬಿಜೆಪಿ ಈ ಕ್ರಮಗಳ ಮೂಲಕ ಬಡ ಮತ್ತು ಮಧ್ಯಮ ವರ್ಗದವರ ರಕ್ತ ಹೀರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಸರಕಾರ ಈಗ ಸಾಮಾನ್ಯ ಜನರು ತಮ್ಮ ಸ್ವಂತ ಹಣವನ್ನು ಪಡೆಯುವುದಕ್ಕೂ ತೆರಿಗೆ ವಿಧಿಸುತ್ತಿದೆ. ಇಂದಿನಿಂದ, ಉಚಿತ ಮಿತಿಯ ನಂತರದ ಎಟಿಎಂ ಹಣ ಹಿಂಪಡೆಯುವಿಕೆಗೆ ಪ್ರತಿ ವಹಿವಾಟಿಗೆ 23 ರೂ.ಮತ್ತು ಅನ್ವಯವಾಗುವ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕುಗಳು ಎಲ್ಲ UPI ವಹಿವಾಟುಗಳನ್ನು ಸಹ ‘ನಗದು ಹಿಂಪಡೆಯುವಿಕೆ' ಎಂದೇ ಪರಿಗಣಿಸಿ ಶುಲ್ಕ ವಿಧಿಸಲಿವೆ. ಅಷ್ಟೇ ಅಲ್ಲದೆ, ಖಾತೆಯಲ್ಲಿ ಹಣವಿಲ್ಲದೆ ವಹಿವಾಟು ವಿಫಲವಾದರೆ ಪ್ರತಿ ಬಾರಿಗೆ 25 ರೂ.ದಂಡ ವಿಧಿಸಲು ಮುಂದಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಫ್ಯೂಚರ್ಸ್ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ () ಶೇ.0.02ರಿಂದ ಶೇ. 0.05ಕ್ಕೆ ಏರಿಸಲಾಗಿದೆ. ಹಾಗೆಯೇ ಆಪ್ಷನ್ಸ್ ಮೇಲಿನ ತೆರಿಗೆಯನ್ನು ಶೇ.0.1ರಿಂದ ಶೇ.0.15ಕ್ಕೆ ಹೆಚ್ಚಿಸಲಾಗಿದೆ, ಇದು ಹೂಡಿಕೆ ವೆಚ್ಚವನ್ನು ಗಣನೀಯವಾಗಿ ಏರಿಸುತ್ತದೆ. ಭಾರತದಲ್ಲಿ ಕಾರು ಖರೀದಿ ಈಗ ಮತ್ತಷ್ಟು ದುಬಾರಿಯಾಗಿದೆ. ಜೆಎಸ್ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಇಂದಿನಿಂದ ಕಾರುಗಳ ಬೆಲೆಯನ್ನು ಶೇ.2ರಷ್ಟು ಹೆಚ್ಚಿಸಿದೆ. ಉಳಿದ ಕಂಪೆನಿಗಳು ಇದೇ ಹಾದಿ ಹಿಡಿಯಲಿವೆ. ಜೊತೆಗೆ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ವಾಹನಗಳ ಖರೀದಿಗೆ ಪ್ಯಾನ್ಕಾರ್ಡ್ ಕಡ್ಡಾಯಗೊಳಿಸಿ ನಿಯಮಗಳನ್ನು ಕಠಿಣಗೊಳಿಸಲಾಗಿದೆ ಎಂದು ಅವರುಗಳು ಆರೋಪಿಸಿದ್ದಾರೆ. ‘ಬೇಳೆಕಾಳುಗಳು, ಖಾದ್ಯ ತೈಲ, ಬೆಣ್ಣೆ, ಕಬ್ಬಿಣ, ಸಿಮೆಂಟ್ ಬೆಲೆಗಳು ಈಗಾಗಲೇ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿವೆ. ಮಾರ್ಚ್ ತಿಂಗಳಲ್ಲೇ ಬ್ರೆಡ್, ಬಿಸ್ಕತ್ತು ಮತ್ತು ಸೋಪಿನಂತಹ ನಿತ್ಯಬಳಕೆಯ ವಸ್ತುಗಳ ಬೆಲೆ ಶೇ.5ರಷ್ಟು ಏರಿಕೆಯಾಗಿದೆ ಅಥವಾ ಅವುಗಳ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಎಂದು ಸಿಎಂ, ಡಿಕೆಶಿ, ಸುರ್ಜೆವಾಲ ಆಕ್ರೋಶ ಹೊರ ಹಾಕಿದ್ದಾರೆ.
ಎ.3ರಿಂದ ಇಂದ್ರಾಳಿ ಶ್ರೀಮುಖ್ಯಪ್ರಾಣ, ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಉಡುಪಿ, ಎ.1: ಇಂದ್ರಾಳಿ ಶ್ರೀಪಂಚದುರ್ಗಾಪರಮೇಶ್ವರಿ ದೇವಾ ಲಯಕ್ಕೆ ಹೊಂದಿಕೊಂಡು ಕಾನನದ ಮಧ್ಯೆ ಇಂದ್ರಾಣಿ ತೀರ್ಥದ ಉಗಮ ಸ್ಥಾನದಲ್ಲಿರುವ ಆಂಜನೇಯ ದೇವರ ಗುಡಿ ಮತ್ತು ನಾಗದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಎ.3ರಿಂದ 7ರರವರೆಗೆ ನಡೆಯಲಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಶ್ರೀಕ್ಷೇತ್ರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಆಂಜನೇಯ ದೇವರ ಗುಡಿಯನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ 2024ರಲ್ಲಿ ನಿರ್ಧರಿಸಲಾಗಿದ್ದು, ಅದರಂತೆ ಶ್ರೀಆಂಜನೇಯ ದೇವರ ಶಿಲಾಮಯ ಗುಡಿ, ಸುತ್ತುಪೌಳಿಯ ನಿರ್ಮಾಣ ಯೋಜನೆಯನ್ನು ಸುಮಾರು 3 ಕೋಟಿ ವೆಚ್ಚದಲ್ಲಿ ನಡೆಸ ಲಾಗಿದೆ ಎಂದರು. ಎ.3ರಂದು ಸಂಜೆ 6ರಿಂದ ವಾಸ್ತು ಪೂಜೆ, ವಾಸ್ತು ಬಲಿ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. ಎ.4 ರಂದು ಬೆಳಿಗ್ಗೆ 6-48 ರಿಂದ ಅಷ್ಟಬಂಧ ಸಹಿತ ಶ್ರೀಮುಖ್ಯಪ್ರಾಣ ದೇವರ ಪ್ರತಿಷ್ಠಾ ಕಾರ್ಯಕ್ರಮಗಳು ಆರಂಭ ವಾಗಲಿವೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಎ.5ರಂದು ಶ್ರೀಮುಖ್ಯಪ್ರಾಣ ದೇವರಿಗೆ ಬ್ರಹ್ಮಕುಂಬಾಭಿಷೇಕ, ಪ್ರಸನ್ನ ಪೂಜಾದಿಗಳು, ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ 7ರಿಂದ ಮಹಾರಂಗ ಪೂಜೆ ನಡೆಯಲಿದ್ದು, ಎ.6ರಂದು ಸಂಜೆ 6ರಿಂದ ನಾಗಗುಡಿಯಲ್ಲಿ ವಾಸ್ತು, ರಕ್ಷಾ ಹೋಮ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. ಎ.7ರಂದು ನಾಗದೇವರ ಪುನಃ ಪ್ರತಿಷ್ಠಾದಿಗಳು ಆಶ್ಲೇಷ ಬಲಿ, ಮಹಾ ಪೂಜೆ, ವಟು ಆರಾಧನೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನಡೆಯಲಿದೆ. ಉಡುಪಿಯ ಅಷ್ಟಮಠಗಳ ಯತಿಗಳು, ಸುಬ್ರಹ್ಮಣ್ಯ ಮಠಾಧಿಪತಿ ಶ್ರೀವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ, ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಸಚಿವರು, ಶಾಸಕರು, ಗಣ್ಯರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಎ.4ರಂದು ರಾತ್ರಿ 7:30ರಿಂದ ಜನಪದ ಕಲರವ, ಎ.5ರಂದು ರಾತ್ರಿ 7:30ರಿಂದ ಯಕ್ಷಗಾನ ಛಾಯಾನಂದನ, 6ರಂದು ಸಂಜೆ 7:30ರಿಂದ ಪೌರಾಣಿಕ ನಾಟಕ ಬಿಕ್ರಮ ಬಜರಂಗಿ, ಎ.7ರಂದು ಸಂಜೆ 7.30ರಿಂದ ಯಕ್ಷಗಾನ - ವೀರಮಣಿ ಕಾಳಗ ಜೊತೆಗೆ 5 ದಿನಗಳಲ್ಲಿ ನೃತ್ಯ ವೈಭವ, ಭಜನಾಮೃತಂ, ಭಕ್ತಿ ಸಂಗೀತ ತಾಳಮದ್ದಲೆ ಕೂಟ, ಭಕ್ತಿ ಗಾನ, ನೃತ್ಯಾಮೃತಂ, ನಿರಂತರ ಭಜನಾ ಕಾರ್ಯಕ್ರಮಗಳು ಜರಗಲಿವೆ. ಸುದ್ದಿಗೋಷ್ಠಿಯಲ್ಲಿ ಶ್ರೀಮುಖ್ಯಪ್ರಾಣ ದೇವರ ಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಪ್ರಮುಖರಾದ ಬಿ.ಕುಶಲ್ ಶೆಟ್ಟಿ, ರತ್ನಾಕರ್ ಇಂದ್ರಾಳಿ, ಸಾಧು ಶೆಟ್ಟಿ, ರವಿ ಶೆಟ್ಟಿಗಾರ್, ಸೀತಾರಾಮ ನಾಯಕ್ ಪಾಂಡುರಂಗ ನಾಯಕ್ ಮಂಚಿ ಮೊದಲಾದವರು ಹಾಜರಿದ್ದರು.
‘ರಾಜ್ಯದ ಆರ್ಥಿಕ ಸ್ಥಿತಿ’ ಬಹಿರಂಗ ಚರ್ಚೆಗೆ ಬನ್ನಿ: ಸಿಎಂಗೆ ವಿಜಯೇಂದ್ರ ಆಹ್ವಾನ
ಬೆಂಗಳೂರು : ‘ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ್ಗದ ಕಲ್ಯಾಣ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಜನರ ಮುಂದೆ ಚರ್ಚಿಸೋಣ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆಹ್ವಾನ ನೀಡಿದ್ದಾರೆ. ಬುಧವಾರ ಈ ಸಂಬಂಧ ಎಕಸ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಆಯವ್ಯಯ ಶ್ವೇತಪತ್ರವಲ್ಲ, ದೀರ್ಘಾವಧಿ ಬಜೆಟ್ ಮಂಡನೆ ಸಾಧನೆಯೂ ಅಲ್ಲ, ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದೇ ನಿಮ್ಮ ಸಾಧನೆ. ‘ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ’ ಎಂಬ ನನ್ನ ಹೇಳಿಕೆಯಿಂದ ನೀವು ಸಂಪೂರ್ಣ ವಿಚಲಿತರಾಗಿದ್ದೀರಿ’ ಎಂದು ಹೇಳಿದ್ದಾರೆ. ‘ನಿಮ್ಮ ಸುದೀರ್ಘ ಸ್ಪಷ್ಟನೆಯ ಹಿಂದೆ ನಿಮ್ಮ ಪ್ರಯಾಸ, ಪಡಿಪಾಟಲು ಕಂಡು ಮರುಕುವುಂಟಾಯಿತು. ಹಾಂ, 17 ಬಾರಿ ಬಜೆಟ್ ಮಂಡಿಸಿರುವುದನ್ನೇ ದೊಡ್ಡ ಸಾಧನೆ ಎಂದುಕೊಂಡಿರುವ ನಿಮಗೆ, ಆಯವ್ಯಯಕ್ಕೂ ಮತ್ತು ಶ್ವೇತಪತ್ರಕ್ಕೂ ಇರುವ ವ್ಯತ್ಯಾಸವೇ ತಿಳಿದಿಲ್ಲದಿರುವುದು ರಾಜ್ಯದ ದುರಂತ. ಶ್ವೇತಪತ್ರವೆಂದರೆ ಕಪ್ಪುಚುಕ್ಕೆಯಿಲ್ಲದ ನಿಖರ ಅಂಶಗಳನ್ನು ಜನರ ಮುಂದಿಡುವುದು. ಈ ವ್ಯತ್ಯಾಸ ನಿಮಗೆ ಗೊತ್ತಿಲ್ಲದಿದ್ದರೆ ನಿಮ್ಮ ಇಲಾಖೆಯ ಆರ್ಥಿಕ ತಜ್ಞರಿಂದ ತಿಳಿದುಕೊಳ್ಳಿ’ ಎಂದು ಅವರು ಟೀಕಿಸಿದ್ದಾರೆ. ‘ಇಷ್ಟಕ್ಕೂ ಬಜೆಟ್ ಮಂಡನೆಯೇ ದೊಡ್ಡ ಸಾಧನೆ ಆಗುತ್ತದೆಯೇ?. ಅದು ಹೆಚ್ಚೆಂದರೆ ದಾಖಲೆಯಷ್ಟೇ, ಸಾಧನೆಯಲ್ಲ. ಇಷ್ಟೂ ಬಜೆಟ್ನಲ್ಲಿ ಜನ ಶಾಶ್ವತವಾಗಿ ನೆನೆಪಿಸಿಕೊಳ್ಳುವಂತಹ ಯಾವುದಾದರೂ ಜನಪರ ಯೋಜನೆ ಇದಿಯಾ? ಅದನ್ನು ನೀವು ಪಟ್ಟಿ ಮಾಡಿಯೇ ಇಲ್ಲ. ಘೋಷಿಸಿದ್ದರೆ ತಾನೆ ಪಟ್ಟಿ ಮಾಡುವುದು?’ ಎಂದು ಅವರು ಪ್ರಶ್ನಿಸಿದ್ದಾರೆ. ‘ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದು ವಾದಿಸುವ ಸಿಎಂ ಅವರೇ, ಬೆರಳೆಣಿಕೆಯಷ್ಟಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲು ಪಿಂಚಣಿ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು ಯಾಕೆ?. ನಿಮ್ಮ ಅಂಕಿ- ಅಂಶಗಳು ಕೇವಲ ಕಾಗದದ ಮೇಲಿವೆ, ವಾಸ್ತವದಲ್ಲಿ ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?. ಇಡೀ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಕುಖ್ಯಾತಿ ಈ ಸರಕಾರಕ್ಕೆ ಸಲ್ಲುತ್ತದೆ. ಕೇಂದ್ರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನವನ್ನು ಜನರು ನಂಬುವುದಿಲ್ಲ. ಜಿಎಸ್ಟಿ ಪಾಲು ಮತ್ತು ಅನುದಾನ ಪಡೆಯಲು ಸಮರ್ಪಕ ವರದಿ ಸಲ್ಲಿಸುವಲ್ಲಿ ವಿಫಲವಾಗಿರುವ ನಿಮ್ಮ ಸರಕಾರ, ತನ್ನ ದೋಷಪೂರಿತ ನಿರ್ಧಾರಗಳನ್ನು ಮುಚ್ಚಿಹಾಕಲು ಕೇಂದ್ರದತ್ತ ಬೆರಳು ಮಾಡುತ್ತಿದೆ. ನೀವು ಮಾಡಿರುವ ಒಟ್ಟು ಸಾಲದ ಮೊತ್ತ 8.14ಲಕ್ಷ ಕೋಟಿ ರೂ.ಗಡಿ ದಾಟಿದೆ. 2025-26ನೇ ಆರ್ಥಿಕ ವರ್ಷದಲ್ಲಿ 48ಸಾವಿರ ಕೋಟಿ ರೂ.ಬಡ್ಡಿ ಪಾವತಿಸಿದ್ದೀರಿ. ಸಾಲದ ಮೊತ್ತ ಏರುತ್ತಲೇ ಇದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಇದು ಆರ್ಥಿಕ ದಿವಾಳಿತನವಲ್ಲವೇ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ‘ರೈತರಿಗೆ ‘ಘೋಷಣೆ' ಭಾಗ್ಯ ಮಾತ್ರ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡು ಮುಳುಗಡೆ ಸಂತ್ರಸ್ತರಾದ ರೈತರಿಗೆ ಪರಿಹಾರ ನೀಡುವುದಾಗಿ ದೊಡ್ಡದಾಗಿ ಘೋಷಿಸಿದಿರಿ. ಆದರೆ ಈವರೆಗೂ ಆ ಭರವಸೆ ಈಡೇರಿಲ್ಲ. ಅನ್ನದಾತನ ಹೊಟ್ಟೆ ಮೇಲೆ ಹೊಡೆಯುತ್ತಿರುವ ನಿಮಗೆ ಆರ್ಥಿಕತೆಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?’ -ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಐಐಟಿ ಪ್ರವೇಶಿಸದೇ ದಿಗ್ಗಜ ಕಂಪನಿಗಳನ್ನು ನಡೆಸುತ್ತಿರುವ ಭಾರತೀಯ ಸಿಇಒಗಳು ಇವರೇ
ಪ್ರಪಂಚದ ಅಗ್ರಸ್ಥಾನದ ಕಂಪನಿಗಳನ್ನು ಮುನ್ನಡೆಸುತ್ತಿರುವ ಅನೇಕ ಭಾರತೀಯ ಮೂಲದ ನಾಯಕರು ಐಐಟಿಯಿಂದ ಪದವೀಯನ್ನು ಪಡೆದವರಲ್ಲ ಎಂಬುದು ಗಮನಾರ್ಹ ಸಂಗತಿ. ಮೈಕ್ರೋಸಾಫ್ಟ್ನ ಸತ್ಯ ನಾಡೆಲ್ಲಾ ಮತ್ತು ಅಡೋಬ್ನ ಶಾಂತನು ನಾರಾಯಣ್ ಅವರಂತಹ ನಾಯಕರು ವಿಭಿನ್ನ ಶೈಕ್ಷಣಿಕ ಹಿನ್ನೆಲೆಯಿಂದ ಬಂದವರಾಗಿದ್ದು, ಜಾಗತಿಕ ಮಟ್ಟದಲ್ಲಿ ಯಶಸ್ಸು ಸಾಧಿಸಿದ್ದಾರೆ. ಐಐಟಿ ಶಿಕ್ಷಣವು ಅತ್ಯಂತ ಪ್ರತಿಷ್ಠಿತವಾದುದಾದರೂ ಉನ್ನತ ಹುದ್ದೆಗಳಿಗೆ ಹೋಗುವ ಏಕೈಕ ದಾರಿಯಲ್ಲ ಎಂಬುದನ್ನು
`ಸುಮ್ನೇ ಯಾರು ಬೆಂಚು ಕಾಯಿಸ್ತಾರೆ ಹೇಳಿ?': ಮುಂಬೈ ಇಂಡಿಯನ್ಸ್ ತೊರೆಯಲು ಕಾರಣ ಬಿಚ್ಚಿಟ್ಟ ಅರ್ಜುನ್ ತೆಂಡೂಲ್ಕರ್
Arjun Tendulkar Mumbai To Lucknow Juorney- ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ನಲ್ಲಿ ಸೂಕ್ತ ಅವಕಾಶಗಳಿಲ್ಲದೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಯಾರು ತಾನೇ ಬೆಂಚ್ ಮೇಲೆ ಕುಳಿತುಕೊಳ್ಳಲು ಬಯಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಒಬ್ಬ ಆಲ್ರೌಂಡರ್ ಆಗಿ ಲಖನೌ ತಂಡದ ಮಧ್ಯಮ ಕ್ರಮಾಂಕ ಬಲಪಡಿಸುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಲ್ಲದ ಐಪಿಎಲ್ ನ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ವಿರೋಧಿಸಿದ್ದಾರೆ.
ನೆತನ್ಯಾಹು ಪುತ್ರನನ್ನು ಗಡೀಪಾರು ಮಾಡಿ ಯುದ್ಧಕ್ಕೆ ಕಳುಹಿಸಬೇಕು: ಟ್ರಂಪ್ ಮಾಜಿ ಸಲಹೆಗಾರ ಬ್ಯಾನನ್ ಹೇಳಿಕೆ
ವಾಷಿಂಗ್ಟನ್/ಮಿಯಾಮಿ, ಎ. 1: ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪುತ್ರ ಯೈರ್ ನೆತನ್ಯಾಹು ಅವರನ್ನು ಅಮೆರಿಕದಿಂದ ಗಡೀಪಾರು ಮಾಡಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಮುಂಚೂಣಿಗೆ ಕಳುಹಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಹೇಳಿದ್ದಾರೆ. ಮಂಗಳವಾರ ಬಲಪಂಥೀಯ ಸ್ಟ್ರೀಮಿಂಗ್ ವೇದಿಕೆ ‘ರಿಯಲ್ ಅಮೆರಿಕಾಸ್ ವಾಯ್ಸ್’ನಲ್ಲಿ ಮಾತನಾಡಿದ ಬ್ಯಾನನ್, ಯುಎಸ್–ಇಸ್ರೇಲ್ ಸಂಯುಕ್ತ ದಾಳಿಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಯೈರ್ ನೆತನ್ಯಾಹು ಮಿಯಾಮಿಯಲ್ಲಿ ಇರುವುದನ್ನು ಪ್ರಶ್ನಿಸಿದರು. “ನೆತನ್ಯಾಹು ಅವರ ಮಗ ಮಿಯಾಮಿಯಲ್ಲಿದ್ದಾನೆ; ನಾಳೆಯೇ ಅವನನ್ನು ಹೊರಹಾಕಿ,” ಎಂದು ಅವರು ಹೇಳಿ, ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. “ಅವನನ್ನು ಹಿಂದಕ್ಕೆ ಕಳುಹಿಸಿ, ಸಮವಸ್ತ್ರ ತೊಡಿಸಿ, ಮುಂಚೂಣಿ ಹೋರಾಟಕ್ಕೆ ಸೇರಿಸೋಣ,” ಎಂದು ಬ್ಯಾನನ್ ಹೇಳಿದರು. ಇದೇ ವೇಳೆ, ವಾಷಿಂಗ್ಟನ್ ಜೊತೆ ಮೈತ್ರಿ ಹೊಂದಿರುವ ಗಲ್ಫ್ ಅರಬ್ ರಾಷ್ಟ್ರಗಳ ರಾಜಕುಮಾರರ ಮೇಲೂ ಬ್ಯಾನನ್ ಟೀಕೆ ನಡೆಸಿದರು. ಲಂಡನ್ ಮೊದಲಾದ ನಗರಗಳಲ್ಲಿ ಇರುವವರನ್ನು ಹೊರಹಾಕಿ ಗಲ್ಫ್ ಪ್ರದೇಶದಲ್ಲಿ ನಡೆಯಬಹುದಾದ ಯುದ್ಧದಲ್ಲಿ ಪಾಲ್ಗೊಳ್ಳಲು ಕಳುಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು. ಅಮೆರಿಕವು ಭೂ ಸೈನಿಕ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಯನ್ನೂ ಅವರು ಉಲ್ಲೇಖಿಸಿದರು. ಯೈರ್ ಹಾಗೂ ಅವರ ಸಹೋದರ ಅವ್ನರ್ ಇಬ್ಬರೂ ವಯಸ್ಕರಾಗಿದ್ದರೂ ಇಸ್ರೇಲ್ ನ ಕಡ್ಡಾಯ ಸೈನಿಕ ಸೇವೆಯನ್ನು ಪೂರ್ಣಗೊಳಿಸಿಲ್ಲ ಎಂಬ ಮಾಹಿತಿ ಇದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಬ್ಯಾನನ್ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದು, ‘ಮೇಕ್ ಅಮೆರಿಕಾ ಗ್ರೇಟ್ ಅಗೇನ್’ (MAGA) ಚಳುವಳಿಯಲ್ಲಿ ಪ್ರಮುಖ ಧ್ವನಿಯಾಗಿದ್ದರು. ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ವೈಮಾನಿಕ ದಾಳಿಗಳನ್ನು ಮುಂದುವರಿಸಿಕೊಂಡಿದ್ದು, ಸುಪ್ರೀಂ ನಾಯಕ ಅಲಿ ಖಾಮಿನೈ ಸೇರಿದಂತೆ 1,340ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್, ಜೋರ್ಡಾನ್, ಇರಾಕ್ ಹಾಗೂ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ಪ್ರತೀಕಾರ ದಾಳಿಗಳು ಜಾಗತಿಕ ಮಾರುಕಟ್ಟೆಗಳು ಹಾಗೂ ವಾಯುಯಾನ ಸೇವೆಗಳ ಮೇಲೆ ಪರಿಣಾಮ ಬೀರಿದ್ದು, ಸಾವುನೋವು ಮತ್ತು ಮೂಲಸೌಕರ್ಯ ಹಾನಿಗೂ ಕಾರಣವಾಗಿವೆ.
ಕುಕನೂರು ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಆಗಿ ಎಸ್.ಪಿ.ನಾಯಕ ಅಧಿಕಾರ ಸ್ವೀಕಾರ
ಕುಕನೂರು : ಪಟ್ಟಣದ ಕುಕನೂರು ಪೊಲೀಸ್ ಠಾಣೆಗೆ ಬುಧವಾರ ನೂತನ ಪಿಎಸ್ಐ ಆಗಿ ಎಸ್.ಪಿ.ನಾಯಕ ಅವರು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಅವರು ಬೇವೂರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕುಕನೂರು ಠಾಣೆಗೆ ವರ್ಗಾವಣೆಯಾಗಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿ ಹೇಳಿದರು. ಜನಸಾಮಾನ್ಯರು ಯಾವುದೇ ಸಮಸ್ಯೆಗಳಿದ್ದರೂ ನಿರ್ಭಯವಾಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ ಅವರು, ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ನೂತನ ಪಿಎಸ್ಐ ಅವರನ್ನು ಸ್ವಾಗತಿಸಿದರು.
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ
ಬೆಂಗಳೂರು: ಗುಡ್ಫ್ರೈಡೆ, ವಾರಾಂತ್ಯ ಹಾಗೂ ಬೇಸಿಗೆ ಪ್ರಯುಕ್ತ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಹೆಚ್ಚಿರಲಿದ್ದು, ನೈಋತ್ಯ ರೈಲ್ವೆಯು ಕರ್ನಾಟಕದ ಬೆಂಗಳೂರಿನ ಯಶವಂತಪುರ, ಎಸ್ಎಸ್ಎಸ್ ಹುಬ್ಬಳ್ಳಿಯಿಂದ ವಿಶೇಷ ರೈಲುಗಳ ಸಂಚಾರ ಆರಂಭಿಸುತ್ತಿದೆ. ಈ ರೈಲುಗಳು ವಿಶೇಷ ಟ್ರಿಪ್ಗಳ ಸೇವೆ ನೀಡಲಿವೆ. ಆಯಾ ಜಿಲ್ಲೆ, ರಾಜ್ಯಗಳ ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬಹುದು. ವಾರಾಂತ್ಯ ಕಾರಣಕ್ಕಾಗಿ ಬೆಂಗಳೂರಿನ ಯಶವಂತಪುರ-ಕೊಲ್ಲಂ ಮಾರ್ಗ ಮಧ್ಯ ಎರಡು ಬದಿ
Koppal | ಕರ್ತವ್ಯ ಲೋಪ ಆರೋಪ : ಮುನಿರಾಬಾದ್ ಠಾಣೆಯ ಪಿಎಸ್ಐ ಅಮಾನತು
ಕೊಪ್ಪಳ : ಆಡಳಿತಾತ್ಮಕ ವಿಚಾರದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ಧಿ ಅವರು ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಅವರನ್ನು ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಮುನಿರಾಬಾದ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುನೀಲ್ ಅವರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಲವು ಅನಧಿಕೃತ ಚಟುವಟಿಕೆಗಳು ಬೆಳಕಿಗೆ ಬಂದಿದ್ದವು. ವಿದೇಶಿಗರ ಪಾರ್ಟಿ, ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟದಂತಹ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಪಿಎಸ್ಐ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡು ಚುನಾವಣೆ ಸಮೀಕ್ಷೆ: DMK ಭರ್ಜರಿ ಭೇಟೆ; ವಿಜಯ್ ಟಿವಿಕೆ ಅಲ್ಪತೃಪ್ತ, ADMK ಅತೃಪ್ತ! ಯಾರಿಗೆಷ್ಟು ಸ್ಥಾನ?
ತಮಿಳುನಾಡು ಚುನಾವಣೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಏಪ್ರಿಲ್ 23 ಕ್ಕೆ ಮತದಾನ ನಡೆಯಲಿದೆ. ಸದ್ಯ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಲೋಕ್ ಪೋಲ್ ನಡೆಸಿದ ಸಮೀಕ್ಷೆಯಲ್ಲಿ ಆಡಳಿತ ಪಕ್ಷ ಡಿಎಂಕೆ ಭರ್ಜರಿ ಮತಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದು ಫಿಕ್ಸ್ ಎನ್ನಲಾಗಿದೆ. ಇನ್ನು ನಟ ವಿಜಯ್ ಟಿವಿಕೆ ಪಕ್ಷ ಬೆರಳೆಣಿಕೆ ಸ್ಥಾನಕ್ಕೆ ಸೀಮಿತವಾಗಲಿದ್ದು, ಎಡಿಎಂಕೆಗೆ ಭಾರೀ ಹಿನ್ನಡೆಯಾಗಲಿದೆ. ಸಮೀಕ್ಷೆಯಂತೆ ಯಾರಿಗೆ ಎಷ್ಟು ಸ್ಥಾನ? ಸಂಪೂರ್ಣ ವಿವರ ಇಲ್ಲಿದೆ.
ಶಿಶು, ತಾಯಿ ಮರಣ ಪ್ರಮಾಣ ಕಡಿಮೆ ಇರುವ ಸಮಾಜವೇ ನಿಜವಾದ ಆರೋಗ್ಯವಂತ ಸಮಾಜ: ಡಾ.ತಿಮ್ಮಯ್ಯ
ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ʼಆಶಾ ಸಬಲೀಕರಣ: ಸುರಕ್ಷಿತ ತಾಯಂದಿರು, ಆರೋಗ್ಯವಾದ ಶಿಶುಗಳುʼ ಕಾರ್ಯಕ್ರಮ
AI ಸೈಕೊಫ್ಯಾನ್ಸಿ ಹರಡುತ್ತಿರುವ ಚಾಟ್ಬಾಟ್ಗಳು; ಅಧ್ಯಯನ ಏನು ಹೇಳುತ್ತದೆ?
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವು AI ಸೈಕೊಫ್ಯಾನ್ಸಿ ಎಷ್ಟು ಹಾನಿಕರ ಎನ್ನುವ ಬಗ್ಗೆ ಎಚ್ಚರಿಸಿದೆ. ಕಳೆದೊಂದು ವರ್ಷದಲ್ಲಿ AI ಚಾಟ್ಬಾಟ್ಗಳು ಮತ್ತು ಅವುಗಳ ಆಧಾರವಾಗಿರುವ ದೊಡ್ಡ ಭಾಷಾ ಮಾದರಿಗಳು (LLMಗಳು) ಬಳಕೆದಾರರು ಕೇಳಲು ಬಯಸುವುದನ್ನೇ ಹೇಳುತ್ತವೆ ಎಂದು ಟೀಕೆಗೆ ಗುರಿಯಾಗಿವೆ. ಬಳಕೆದಾರರ ಸುಳ್ಳು ನಂಬಿಕೆಯನ್ನು ನಿಜವೆಂದು ಫ್ಲ್ಯಾಗ್ ಮಾಡುವ ಈ ಪ್ರವೃತ್ತಿಯನ್ನು AI ಸೈಕೋಫ್ಯಾನ್ಸಿ ಎಂದು ಕರೆಯಲಾಗುತ್ತಿದೆ. ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವು ಇಂತಹ AI ಸೈಕೊಫ್ಯಾನ್ಸಿ ಎಷ್ಟು ಹಾನಿಕರ ಎನ್ನುವ ಬಗ್ಗೆ ಎಚ್ಚರಿಸಿದೆ. ಅಧ್ಯಯನದಲ್ಲಿ 11 ಪ್ರಮುಖ LLMಗಳನ್ನು ಅಧ್ಯಯನ ಮಾಡಲಾಗಿದೆ. LLMಗಳ ಬಗ್ಗೆ ಎಚ್ಚರಿಸಿದ ಅಧ್ಯಯನ ಶೇ 51ರಷ್ಟು LLMಗಳು ಬಳಕೆದಾರರ ಹಾನಿಕರ ನಡವಳಿಕೆಗಳನ್ನು ದೃಢೀಕರಿಸಿದರೆ, ಶೇ 49ರಷ್ಟು LLMಗಳು ಹಾನಿಕರ ಕಲ್ಪನೆಗಳಿಗೆ ಮಾನವರಿಗಿಂತ ಹೆಚ್ಚು ಮಾನ್ಯತೆ ನೀಡಿವೆ. ಹಾನಿಕರ ಕಾನೂನು ಬಾಹಿರ ಕೃತ್ಯಗಳಿಗೆ ಸಂಬಂಧಿಸಿ ಬಳಕೆದಾರರ ನಂಬಿಕೆಗೆ ಶೇ 47ರಷ್ಟು LLMಗಳು ಮಾನ್ಯತೆ ನೀಡಿವೆ. ಈ ಅಧ್ಯಯನಗಳನ್ನು ‘ಸೈಕೊಫ್ಯಾಂಟಿಕ್ AI ಸಾಮಾಜಿಕ ಉದ್ದೇಶಗಳನ್ನು ಕಡಿಮೆ ಮಾಡುತ್ತದೆ ಮತ್ತು ಅವಲಂಬನೆ ಉತ್ತೇಜಿಸುತ್ತದೆ’ ಎನ್ನುವ ಶೀರ್ಷಿಕೆಯಡಿಯ ಸಂಶೋಧನಾ ವರದಿಯಲ್ಲಿ ಬಳಸಿಕೊಳ್ಳಲಾಗಿದೆ. ಇದೀಗ ವರದಿ ಅಮೆರಿಕನ್ ಅಸೋಸಿಯೇಶನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ ಎನ್ನುವ ವಿಜ್ಞಾನ ಜರ್ನಲ್ನಲ್ಲಿ ಪ್ರಕಟವಾಗಿದೆ. AI ಚಾಟ್ ಬಾಟ್ಗಳು ಏಕೆ ಹಾನಿಕರ? “AI ಚಾಟ್ ಬಾಟ್ಗಳು ಬಳಕೆದಾರರ ಅಭಿಪ್ರಾಯಗಳನ್ನು ಅತಿಯಾಗಿ ಒಪ್ಪುವುದು ಮತ್ತು ಬಳಕೆದಾರರನ್ನು ಹೊಗಳುವ ಪ್ರವೃತ್ತಿ”ಯ ಬಗ್ಗೆ ಹೆಚ್ಚುತ್ತಿರುವ ಚರ್ಚೆಯನ್ನು ಅಧ್ಯಯನದ ಸಂಶೋಧನೆಗಳು ಒತ್ತಿ ಹೇಳಿವೆ. ಅದೇ ಸಮಯದಲ್ಲಿ ಅವರ ಅಸ್ತಿತ್ವದಲ್ಲಿರುವ ನಂಬಿಕೆಗಳ ಬಗ್ಗೆ ಸೂಕ್ತವಾಗಿ ಚಿಂತಿಸದೆ ದೃಢೀಕರಿಸುತ್ತವೆ. ಕಡಿಮೆ ವೆಚ್ಚದ ಚಿಕಿತ್ಸೆ, ಭಾವನಾತ್ಮಕ ಬೆಂಬಲ ಮತ್ತು ವೃತ್ತಿಪರ ಸಲಹೆಗಳಿಗಾಗಿ ಬಳಕೆದಾರರು ಚಾಟ್ ಬಾಟ್ಗಳನ್ನು ಆಶ್ರಯಿಸುತ್ತಿರುವಾಗ AI ಚಾಟ್ ಬಾಟ್ ಗಳ ಇಂತಹ ಪ್ರವೃತ್ತಿ ಹಾನಿಕರ ಎಂದು ನಂಬಲಾಗಿದೆ. ಈ ಚಾಟ್ ಬಾಟ್ಗಳ ಸೈಕೋಫ್ಯಾನ್ಸಿ ಪ್ರವೃತ್ತಿಯನ್ನು ‘AI ಸೈಕೊಸಿಸ್’ ಎಂದು ಕರೆಯಲಾಗುವ ಮತ್ತೊಂದು ಸಂಭಾವ್ಯ ಹಾನಿಗೆ ತಳಕು ಹಾಕಲಾಗಿದೆ. AI ಚಾಟ್ ಬಾಟ್ ಜೊತೆಗೆ ಸುದೀರ್ಘ ಸಭಾಷಣೆ ನಂತರ ಬಳಕೆದಾರರು ಭ್ರಮೆಗಳು ಅಥವಾ ಸಂಶಯಾಸ್ಪದ ಭಾವನೆಗಳನ್ನು ತುಂಬಿಕೊಳ್ಳುತ್ತಿದ್ದಾರೆ. ಅನೇಕ ಬಳಕೆದಾರರು OpenAI ಮತ್ತು ಗೂಗಲ್ನಂತಹ ದೈತ್ಯ ತಂತ್ರಜ್ಞಾನ ಕಂಪೆನಿಗಳ ಮೇಲೆ ಮೊಕದ್ದಮೆ ಹೂಡಿವೆ. ಚಾಟ್ ಬಾಟ್ಗಳ ಜೊತೆಗೆ ದೀರ್ಘಕಾಲೀನ ಸಂವಹನವು ತಮ್ಮ ಪ್ರೀತಿಪಾತ್ರರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿವೆ ಎನ್ನುವ ಆರೋಪಗಳನ್ನು ಹೊರಿಸಲಾಗಿದೆ. ಸ್ಟ್ಯಾನ್ ಫೋರ್ಡ್ ಅಧ್ಯಯನ ಏನು ಹೇಳುತ್ತದೆ? ಅಧ್ಯಯನದ ಪ್ರಕಾರ ಸೈಕೊಫ್ಯಾನ್ಸಿ ಮೇಲ್ನೋಟದ ಸಮಸ್ಯೆಯಲ್ಲ, ವಿಸ್ತೃತ ಮತ್ತು ಪ್ರಚಲಿತ ಸಮಸ್ಯೆಯಾಗಿದೆ. AI ಸಲಹೆಗಳಲ್ಲಿ ಜನರನ್ನು ಎಂದಿಗೂ ತಪ್ಪಾದ ನಡವಳಿಕೆಯನ್ನು ಎತ್ತಿ ತೋರಿಸುವುದಿಲ್ಲ. ಪ್ರೀತಿಯಲ್ಲಿ ಕಠಿಣ ಪ್ರವೃತ್ತಿ ಬದಲಾಗಿ ಸುಲಭದ ಹಾದಿಯನ್ನು ಮುಂದಿಡುತ್ತಿದೆ. ಹೀಗಾಗಿ ಜನರು ಕಷ್ಟವಾದ ಸಾಮಾಜಿಕ ಕೌಶಲ್ಯ ನಿಭಾಯಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. AI ಜನರನ್ನು ಹೆಚ್ಚು ಸ್ವಾರ್ಥಿಗಳಾಗಿ ಮತ್ತು ನೈತಿಕವಾಗಿ ಮೂಢರನ್ನಾಗಿ ಪರಿವರ್ತಿಸುತ್ತಿದೆ ಎಂದು ಸ್ಟ್ಯಾನ್ಫೋರ್ಡ್ ಅಧ್ಯಯನ ಹೇಳಿದೆ. ಸ್ಟ್ಯಾನ್ ಫೋರ್ಡ್ ಅಧ್ಯಯನ ಹೇಗೆ ನಡೆದಿದೆ? ಈ ಅಧ್ಯಯನವು ಎರಡು ಪ್ರಯೋಗಗಳಿಂದ ಪಡೆದ ವಿವರಗಳನ್ನು ಹೊಂದಿದೆ. ಸಂಶೋಧಕರು OpenAI ನ ChatGPT, ಆಂಥ್ರೊಪಿಕ್ನ ಕ್ಲೌಡ್, ಗೂಗಲ್ ಜೆಮಿನಿ ಮತ್ತು ಡೀಪ್ಸೀಕ್ ಸೇರಿದಂತೆ ಹನ್ನೊಂದು LLM ಚಾಲಿತ ಚಾಟ್ಬಾಟ್ಗಳನ್ನು ಜನಪ್ರಿಯ ರೆಡಿಟ್ ಪೋಸ್ಟ್ಗಳು ಮತ್ತು ಸಂಭಾವ್ಯ ಹಾನಿಕರ ಅಥವಾ ಕಾನೂನು ಬಾಹಿರ ಕ್ರಿಯೆಗಳ ಕುರಿತು ಪರಸ್ಪರ ಸಲಹೆ ಹೊಂದಿರುವ ಇತರ ಡೇಟಾಬೇಸ್ಗಳ ಆಧಾರದಲ್ಲಿ ಪ್ರಶ್ನೆಗಳನ್ನು ಕೇಳಿ ಪರೀಕ್ಷೆ ನಡೆಸಲಾಗಿದೆ. ಫಲಿತಾಂಶಗಳಲ್ಲಿ ಹಾನಿಕರ ಪ್ರಾಂಪ್ಟ್ಗಳಿಗೆ ಪ್ರತಿಕ್ರಿಯಿಸುವಾಗ AI ಚಾಟ್ ಬಾಟ್ಗಳು ಶೇ 47ರಷ್ಟು ಸಮಸ್ಯಾತ್ಮಕ ನಡವಳಿಕೆಯನ್ನು ಅನುಮೋದಿಸಿವೆ. ಚಾಟ್ಬಾಟ್ಗಳು ಮಾನವರಿಗಿಂತ ಶೇ 49ರಷ್ಟು ಹೆಚ್ಚು ಬಳಕೆದಾರರನ್ನು ಅನುಮೋದಿಸುತ್ತವೆ ಎಂದು ತಿಳಿದು ಬಂದಿದೆ. ಎರಡನೇ ಪ್ರಯೋಗದಲ್ಲಿ 2,400ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಸೈಕೊಫ್ಯಾನ್ಸಿ AI ಚಾಟ್ಬಾಟ್ ಜೊತೆಗೆ ಮತ್ತು ಸೈಕೊಫ್ಯಾನ್ಸಿಯಲ್ಲದ ಚಾಟ್ ವೇದಿಕೆಗಳೊಂದಿಗೆ ಜನರನ್ನು ಚಾಟ್ ಮಾಡಲು ಹೇಳಲಾಯಿತು. ಅವರು AI ಚಾಟ್ ಬಾಟ್ಗಳ ಫಲಿತಾಂಶಗಳು ತಮ್ಮ ಪರವಾಗಿದ್ದ ಕಾರಣ ಜನರು ಹೆಚ್ಚು ಆದ್ಯತೆ ನೀಡಿರುವುದು ಕಂಡುಬಂದಿದೆ. ಹೀಗಾಗಿ ಸಲಹೆಗಳ ಅಗತ್ಯ ಬಂದಾಗ AI ಚಾಟ್ ಬಾಟ್ಗಳತ್ತ ಸಾಗುವ ಸಾಧ್ಯತೆ ಹೆಚ್ಚು ಕಂಡುಬಂದಿದೆ.
COVID-19 ಹೊಸ ರೂಪಾಂತರ BA.3.2 ಬಗ್ಗೆ ನೀವು ತಿಳಿದಿರಬೇಕಾದ ಅಂಶಗಳೇನು?
ಒಮಿಕ್ರಾನ್ ವೇರಿಯಂಟ್ನಿಂದ ಬಂದಿರುವ BA.3.2 ಎನ್ನುವುದು 2021ರ ಅಂತ್ಯದಲ್ಲಿ ಕಂಡುಬಂದಿತ್ತು. ಮೊದಲಿಗೆ 2024 ನವೆಂಬರ್ನಲ್ಲಿ ಸಂಶೋಧಕರು ಆಫ್ರಿಕಾದಲ್ಲಿ BA.3.2 ಅನ್ನು ಗುರುತಿಸಿದ್ದರು. 2025ರಲ್ಲಿ ಅದು ಜಾಗತಿಕವಾಗಿ ಹರಡಲು ಆರಂಭಿಸಿ, 2026 ಫೆಬ್ರವರಿಗಾಗುವಾಗ 23 ದೇಶಗಳಿಗೆ ಹರಡಿದೆ. 2025ರ ಡಿಸೆಂಬರ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಈ ವೇರಿಯಂಟ್ ಮೇಲೆ ನಿಗಾ ಇಟ್ಟಿರುವುದಾಗಿ ತಿಳಿಸಿದೆ.. ಈಗ ದೊಡ್ಡ ಅಪಾಯ ಎದುರಾಗಿರುವುದು ಎಲ್ಲಿ? ಕೋವಿಡ್- 19ನ ಹೊಸ ವೇರಿಯೆಂಟ್ BA.3.2 ಇದೀಗ ಅಮೆರಿಕದಾದ್ಯಂತ ಹರಡುತ್ತಿದೆ. ಸಿಕಾಡಾ ಎನ್ನುವ ನಿಕ್ನೇಮ್ ಪಡೆದಿರುವ BA.3.2 ಹೆಚ್ಚು ಅಪಾಯಕಾರಿ. 2025-26ರಲ್ಲಿ ಹರಡುತ್ತಿರುವ ಇತರ ವೇರಿಯಂಟ್ಗಳಿಗೆ ಹೋಲಿಸಿದರೆ ಹೆಚ್ಚು ಅಪಾಯಕಾರಿ. ಏಕೆಂದರೆ ಕೋವಿಡ್ -19ಗೆ ತೆಗೆದುಕೊಂಡ ಲಸಿಕೆ ಇದರ ಮುಂದೆ ಸಾಲುವುದಿಲ್ಲ. ಈಗಿನ ಕೋವಿಡ್ ವ್ಯಾಕ್ಸಿನ್ BA.3.2 ವಿರುದ್ಧ ರಕ್ಷಣೆ ನೀಡುವುದೆ? ಈಗಿನ ಕೋವಿಡ್-19 ಲಸಿಕೆಗಳನ್ನು ವೈರಸ್ನ JN.1 ಲೀನಿಯೇಜ್ಗಳ (ಕುಟುಂಬ) ವಿರುದ್ಧ ರಕ್ಷಣೆಗಾಗಿ ಸಿದ್ಧಪಡಿಸಲಾಗಿದೆ. ಹೀಗಾಗಿ ಈಗಿನ ಹೊಸ ವೇರಿಯಂಟ್ ವಿರುದ್ಧ ನಿರೋಧಕ ವ್ಯವಸ್ಥೆಯ ರಕ್ಷಣೆಯಲ್ಲಿ ಉತ್ತಮ ಫಲಿತಾಂಶ ನೀಡಲು ಸಾಧ್ಯವಿಲ್ಲ. ಈಗಿನ ಲಸಿಕೆಯಿಂದ BA.3.2 ಪತ್ತೆಯಾಗುವ ಸಾಧ್ಯತೆ ಕಡಿಮೆಯಿದೆ. BA.3.2 ವಿರುದ್ಧ ಯಾರು ಗಮನ ಹರಿಸಬೇಕು? ಪ್ರಸ್ತುತ ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ BA.3.2 ಹೆಚ್ಚುವರಿ ಸಾರ್ವಜನಿಕ ಆರೋಗ್ಯ ಅಪಾಯಗಳನ್ನು ತರುವ ಸಾಧ್ಯತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ರಕ್ಷಣೆ ಅಗತ್ಯ. ಮುಖ್ಯವಾಗಿ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವವರು ಕೋವಿಡ್ 19 ಸೋಂಕಿನಿಂದ ಗಂಭೀರ ಸಮಸ್ಯೆ ಎದುರಿಸಬಹುದು. ಸ್ವಯಂ ಮತ್ತು ಸಮುದಾಯದ ರಕ್ಷಣೆ ಹೇಗೆ? ಚೆನ್ನಾಗಿ ಕೈ ತೊಳೆಯುವುದರಿಂದ ಸೋಂಕು ಹರಡುವ ಸಾಧ್ಯತೆ ಶೇ 16ರಿಂದ 21ರಷ್ಟು ಕಡಿಮೆಯಾಗಲಿದೆ, ಎರಡನೆಯದಾಗಿ ಅನಾರೋಗ್ಯವಿದ್ದಾಗ ಮನೆಯೊಳಗೇ ಇರಬೇಕು. ಜನಸಂದಣಿ ಹೆಚ್ಚು ಇರುವ ಸ್ಥಳಗಳಿಗೆ ಹೋಗದೆ ಇರುವುದು ಉತ್ತಮ. ಅಂತಿಮವಾಗಿ, ನಿರ್ದಿಷ್ಟ ಸನ್ನಿವೇಶಗಳಲ್ಲಿ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಹೊಸದಿಲ್ಲಿ, ಎ. 1: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಯೋಗಗುರು ರಾಮದೇವ್ ತೀವ್ರ ಟೀಕೆ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ABP ನ್ಯೂಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ‘ಯುದ್ಧ ಅಪರಾಧಿಗಳು’ ಎಂದು ಕರೆದಿದ್ದಾರೆ. “ನಾನು ಅವರನ್ನು ಮಾನವೀಯತೆಯ ವಿರುದ್ಧದ ಅಪರಾಧಿಗಳು; ಪ್ರಕೃತಿ ಮತ್ತು ಪರಿಸರದ ವಿರುದ್ಧದ ಅಪರಾಧಿಗಳು ಎಂದು ಪರಿಗಣಿಸುತ್ತೇನೆ,” ಎಂದು ಹೇಳಿದ್ದಾರೆ. ಚರ್ಚೆಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಲಿ ಖಾಮಿನೈ ಹತ್ಯೆಯ ಕುರಿತು ಪ್ರಶ್ನೆ ಕೇಳಿದಾಗ ಪ್ರತಿಕ್ರಿಯಿಸಿದ ರಾಮದೇವ್, “ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದು. ಆದರೆ ಅವರ ವಿಚಾರಗಳು, ತತ್ವಗಳು, ಮನೋಭಾವ ಮತ್ತು ಆತ್ಮವನ್ನು ಕೊಲ್ಲಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತವು ಇಸ್ರೇಲ್ ಪರ ನಿಲ್ಲಬೇಕೇ ಅಥವಾ ಇರಾನ್ ಪರವಾಗಿರಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮದೇವ್, ಇರಾನ್ ಕುರಿತು ಮಾತನಾಡಿದ ಅವರು, “ನನಗೆ ಇರಾನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಇವರು ಪ್ರವಾದಿ ಮುಹಮ್ಮದ್ ಅವರ ವಂಶಕ್ಕೆ ಸೇರಿದವರು. ಶಿಯಾ ಸಮುದಾಯದವರು. ಅವರನ್ನು ಯಾರೂ ತಲೆಬಾಗಿಸಲು ಅಥವಾ ಸಂಪೂರ್ಣವಾಗಿ ಸೋಲಿಸಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ. ಟ್ರಂಪ್ ಮತ್ತು ನೆತನ್ಯಾಹು ಕುರಿತು ಮತ್ತಷ್ಟು ಟೀಕೆ ಮಾಡಿದ ಅವರು, “ಇಬ್ಬರೂ ಒಂದೇ ಸ್ವಭಾವದವರು ಎಂಬ ಗಾದೆ ಇದೆ. ನಾನು ಯಾರನ್ನೂ ನೇರವಾಗಿ ಕಳ್ಳ ಎಂದು ಕರೆಯುವುದಿಲ್ಲ; ಆದರೆ ‘ಚೋರ್-ಚೋರ್ ಮೌಸೆರೆ ಭಾಯ್’ ಎಂಬ ಗಾದೆಯಂತೆ,ಅವರ ನಡುವಿನ ಸಾಮ್ಯತೆಯನ್ನು ಸೂಚಿಸುತ್ತದೆ,” ಎಂದು ಹೇಳಿದ್ದಾರೆ. “ಅಮೆರಿಕ ಮತ್ತು ಇಸ್ರೇಲ್ ಹಿಮಾಲಯದಷ್ಟು ದೊಡ್ಡ ರಾಜಕೀಯ ಅಪನಂಬಿಕೆಯ ಬೆಟ್ಟವನ್ನು ನಿರ್ಮಿಸಿವೆ. ಮುಂದಿನ ಹಲವು ದಶಕಗಳ ಕಾಲ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಈ ಸಂಘರ್ಷದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿಜಯಶಾಲಿಯಾಗಲು ಸಾಧ್ಯವಿಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಭಾರತವು ಇಸ್ರೇಲ್ ಪರ ನಿಂತಿದೆ ಎಂಬ ಟೀಕೆಗಳ ನಡುವೆ ರಾಮ್ ದೇವ್ ಅವರ ಈ ಹೇಳಿಕೆಗಳು ಹೊರಬಂದಿವೆ.
ಪ್ರಯಾಣಿಕರ ಸೇವೆಗೆ ಜಾಗತಿಕ ಗರಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರತಿಷ್ಠಿತ 'ಎಸಿಐ 5ನೇ ಹಂತದ' ಅತ್ಯುನ್ನತ ಮಾನ್ಯತೆ
ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಮತ್ತು ಸುಗಮ ಪ್ರಯಾಣದ ಅನುಭವವನ್ನು ಒದಗಿಸುವಲ್ಲಿ ಸತತ ಶ್ರಮ ವಹಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ' (ACI) ವತಿಯಿಂದ ನೀಡಲಾಗುವ ಅತ್ಯುನ್ನತ 5ನೇ ಹಂತದ ಗ್ರಾಹಕ ಅನುಭವ ಮಾನ್ಯತೆ ಲಭಿಸಿದೆ. ತಂತ್ರಜ್ಞಾನದ ಅಳವಡಿಕೆ ಹಾಗೂ ಪ್ರಯಾಣಿಕರ ಸ್ನೇಹಿ ಸೌಲಭ್ಯಗಳ ನಿರಂತರ ಸುಧಾರಣೆಗಾಗಿ ಈ ಪ್ರತಿಷ್ಠಿತ ಜಾಗತಿಕ ಗೌರವ ಒಲಿದುಬಂದಿದೆ. ಹಾಗಾದರೆ ಏನಿದರ ವಿಶೇಷತೆ? ಈ ಕುರಿತಾದ ಮಾಹಿತಿ ಇಲ್ಲಿದೆ.
ದೇಶೀಯ ಪ್ರಯಾಣ ದರಗಳ ಹೆಚ್ಚಳ ತಡೆಯಲು ವಿಮಾನ ಇಂಧನ ಬೆಲೆ ಭಾಗಶಃ ಏರಿಕೆ: ಮಾಹಿತಿ ನೀಡಿದ ಕೇಂದ್ರ ಸರಕಾರ
ಹೊಸದಿಲ್ಲಿ,ಎ.1: ಪಶ್ಚಿಮ ಏಶ್ಯಾ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾತೈಲ ದರಗಳ ಏರಿಕೆಯ ನಡುವೆ ಭಾರತದಲ್ಲಿ ವಿಮಾನ ಇಂಧನ (ಎಟಿಎಫ್) ಬೆಲೆಯು ಬುಧವಾರ ತೀವ್ರ ಪರಿಷ್ಕರಣೆಯನ್ನು ಕಂಡಿದ್ದರೂ ಸರಕಾರವು ಪ್ರಯಾಣಿಕರನ್ನು ಟಿಕೆಟ್ ಬೆಲೆ ಏರಿಕೆಯಿಂದ ರಕ್ಷಿಸಲು ಮುಂದಾಗಿದೆ. ಭಾರತೀಯ ತೈಲ ನಿಗಮವು (ಐಒಸಿ) ಬಿಡುಗಡೆಗೊಳಿಸಿದ ಆರಂಭಿಕ ಪ್ರಕಟಣೆಯಂತೆ ಎಟಿಎಫ್ ದರ ದುಪ್ಪಟ್ಟಿಗಿಂತಲೂ ಅಧಿಕ ಏರಿಕೆಯಾಗಿ ಪ್ರತಿ ಕಿಲೋಲೀಟರ್ಗೆ 2.07 ಲಕ್ಷ.ರೂ.ಗಳನ್ನು ತಲುಪಿತ್ತು. ಆದರೆ ಶೀಘ್ರವೇ ದರಗಳನ್ನು ಪರಿಷ್ಕರಿಸಲಾಗಿದ್ದು, ದರ ಏರಿಕೆಯ ಸಂಪೂರ್ಣ ಹೊರೆಯನ್ನು ದೇಶೀಯ ವಿಮಾನಯಾನ ಸಂಸ್ಥೆಗಳು ಭರಿಸುವುದಿಲ್ಲ ಎಂದು ಸರಕಾರವು ಸ್ಪಷ್ಟಪಡಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ ಭಾರತದಲ್ಲಿ ಎಟಿಎಫ್ ದರಗಳು ನಿಯಂತ್ರಣ ಮುಕ್ತವಾಗಿದ್ದು, ಪ್ರತಿ ತಿಂಗಳು ಅಂತರರಾಷ್ಟ್ರೀಯ ಬೆಲೆಗಳನ್ನು ಆಧರಿಸಿ ಪರಿಷ್ಕರಿಸಲಾಗುತ್ತದೆ. ಹಾರ್ಮುಝ್ ಜಲಸಂಧಿಯ ಮುಚ್ಚುವಿಕೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿಯ ಬಿಕ್ಕಟ್ಟಿನ ಸ್ಥಿತಿಯಿಂದಾಗಿ ಎ.1ರಿಂದ ಎಟಿಎಫ್ ದರಗಳಲ್ಲಿ ಶೇ.100ಕ್ಕೂ ಅಧಿಕ ತೀವ್ರ ಏರಿಕೆಯನ್ನು ನಿರೀಕ್ಷಿಸಲಾಗಿತ್ತು. ತೈಲ ಮಾರಾಟ ಕಂಪೆನಿಗಳು ತನ್ನೊಂದಿಗೆ ಸಮಾಲೋಚಿಸಿದ ಬಳಿಕ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಸುಮಾರು ಶೇ.25ರಷ್ಟು (ಪ್ರತಿ ಲೀ.ಗೆ ಸುಮಾರು 15 ರೂ.) ಭಾಗಶಃ ಮತ್ತು ಹಂತ ಹಂತವಾಗಿ ಏರಿಕೆಯನ್ನು ಮಾತ್ರ ಜಾರಿಗೊಳಿಸಿವೆ ಎಂದು ಸಚಿವಾಲಯವು ತಿಳಿಸಿದೆ. ಅಂತರರಾಷ್ಟ್ರೀಯ ವಿಮಾನಗಳು ವಿಶ್ವದ ಇತರ ಭಾಗಗಳಲ್ಲಿ ಪಾವತಿಸುವ ದರಗಳಿಗೆ ಅನುಗುಣವಾಗಿ ಎಟಿಎಫ್ ದರಗಳ ಸಂಪೂರ್ಣ ಹೆಚ್ಚಳವನ್ನು ಭರಿಸುತ್ತವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಎ.1ರಿಂದ ಜಾರಿಗೆ ಬಂದಿರುವ ಪರಿಷ್ಕೃತ ದರಗಳ ಪ್ರಕಾರ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಎಟಿಎಫ್ ದರ ದಿಲ್ಲಿಯಲ್ಲಿ ಪ್ರತಿ ಕಿಲೋಲೀಟರ್ಗೆ ಸುಮಾರು 1.04 ಲ.ರೂ.ಗಳಾಗಿದ್ದರೆ ಕೋಲ್ಕತಾ ಮತ್ತು ಚೆನ್ನೈನಂತಹ ಇತರ ಮಹಾನಗರಗಳಲ್ಲಿ 1.09 ಲ.ರೂ.ಗಿಂತ ಹೆಚ್ಚಿದೆ. ಇದೇ ವೇಳೆ ಮುಂಬೈನಲ್ಲಿ ಎಟಿಎಫ್ ದರ ಪ್ರತಿ ಕಿಲೋಲೀಟರ್ಗೆ 98,000 ರೂ.ಆಗಿದೆ. ಅಂತರರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಬುಧವಾರ ಬೆಳಗಿನ ವಹಿವಾಟಿನಲ್ಲಿ ಬೆಲೆಗಳು ಶೇ.1ಕ್ಕೂ ಅಧಿಕ ಏರಿಕೆಯನ್ನು ಕಂಡಿವೆ. ಕಚ್ಚಾತೈಲ ಬೆಲೆಗಳಲ್ಲಿ ನಿರಂತರ ಏರಿಕೆಯಿಂದಾಗಿ ಎಟಿಎಫ್ ವೆಚ್ಚವೂ ಹೆಚ್ಚಿದೆ. ಜಾಗತಿಕ ಎಟಿಎಫ್ ದರಗಳು ಒಂದು ತಿಂಗಳಲ್ಲಿ ಸುಮಾರು ದುಪ್ಪಟ್ಟಾಗಿವೆ ಎಂದು ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘದ ದತ್ತಾಂಶಗಳು ತೋರಿಸಿವೆ. ಎಟಿಎಫ್ ವಿಮಾನಯಾನ ಸಂಸ್ಥೆಗಳ ಹೆಚ್ಚಿನ ವೆಚ್ಚಗಳಲ್ಲೊಂದಾಗಿದ್ದು, ಸಾಮಾನ್ಯವಾಗಿ ನಿರ್ವಹಣಾ ವೆಚ್ಚಗಳ ಶೇ.40ರವರೆಗೆ ಇರುತ್ತದೆ. ಇಂಧನ ಬೆಲೆಗಳು ಏರಿಕೆಯಾದರೆ ನಿರ್ವಹಣಾ ವೆಚ್ಚಗಳೂ ಏರಿಕೆಯಾಗುತ್ತವೆ. ಪಶ್ಚಿಮ ಏಶ್ಯಾದಲ್ಲಿನ ಬೆಳವಣಿಗೆಗಳನ್ನು ಅವಲಂಬಿಸಿ ಅಗತ್ಯವಾದರೆ ಎಟಿಎಫ್ ಬೆಲೆಗಳನ್ನು ಹಂತಹಂತವಾಗಿ ಹೆಚ್ಚಿಸಬಹುದು ಎಂದು ತೈಲ ಮಾರಾಟ ಕಂಪೆನಿಗಳ ಮೂಲಗಳು ತಿಳಿಸಿವೆ. ವಿಮಾನಯಾನ ಸಂಸ್ಥೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಎಟಿಎಫ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಇಳಿಕೆ ಮಾಡುವಂತೆ ನಾಗರಿಕ ವಾಯುಯಾನ ಸಚಿವ ರಾಮಮೋಹನ ನಾಯ್ಡು ಅವರು ರಾಜ್ಯಸರಕಾರಗಳನ್ನು ಆಗ್ರಹಿಸಿದ್ದಾರೆ.
ಶೆಲ್ ಇಂಡಿಯಾದಿಂದ ಪೆಟ್ರೋಲ್ ಡೀಸೆಲ್ ದರ ಏರಿಕೆ! ಬೆಂಗಳೂರಿನಲ್ಲಿ ಡೀಸೆಲ್ ಲೀಟರ್ಗೆ 25 ರೂ. ಹೆಚ್ಚಳ;
ಖಾಸಗಿ ತೈಲ ಕಂಪನಿಗಳು ದರ ಏರಿಕೆಗೆ ಮುಂದಾಗಿವೆ. ಕೆಲ ದಿನಗಳ ಹಿಂದೆ ನಯಾರಾ ಎನರ್ಜಿ ದರ ಏರಿಕೆ ಮಾಡಿದ್ದು, ಈ ಬೆನ್ನಲ್ಲೆ ಶೆಲ್ ಇಂಡಿಯಾ ಕೂಡ ದರ ಹೆಚ್ಚಳ ಮಾಡಿದೆ. ಬೆಂಗಳೂರಿನಲ್ಲಿ ಡೀಸೆಲ್ ದರ ಪ್ರತಿ ಲೀಟರ್ಗೆ 25 ರೂ. ಹೆಚ್ಚಳವಾಗಿದ್ದು, ಗ್ರಾಹಕರಿಗೆ ಭಾರೀ ಹೊರಯಾಗಿದೆ. ಇನ್ನೂ ಪೆಟ್ರೋಲ್ ಲೀಟರ್ಗೆ 7 ರೂ. ಅಧಿಕವಾಗಿದೆ.
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ
ಬೆಂಗಳೂರು: ಪರೀಕ್ಷೆ ಇನ್ನಿತರ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತೊಂದರೆ ಆಗದಂತೆ ರಾಜ್ಯ ಸಾರಿಗೆ ವಾಹನಗಳು ಉಚಿತ ಪ್ರಯಾಣ ನೀಡುತ್ತಿವೆ. ಇದೀಗ ಅಗತ್ಯತೆ ಆಧಾರದಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) 1 ರಿಂದ 9ನೇ ತರಗತಿ ಮಕ್ಕಳಿಗೆ ಖುಷಿ ಸುದ್ದಿ ನೀಡಿದೆ. 2025-26ನೇ ಸಾಲಿನ 01
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ
ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಬಜೆಟ್, ಗ್ಯಾರಂಟಿ ಯೋಜನೆಗಳು ಹಾಗೂ ಆರ್ಥಿಕ ಸ್ಥಿತಿ ಕುರಿತ ಚರ್ಚೆಗಳು ತೀವ್ರವಾಗಿರುವ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಬಜೆಟ್ಗೆ ಹೋಲಿಸಿದರೆ ಕರ್ನಾಟಕದ ಬಜೆಟ್ ಉತ್ತಮವಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ನಾಯಕರು ರಾಜಕೀಯ ಉದ್ದೇಶದಿಂದ ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ
FIFA World Cup 2026: 48 ತಂಡ, 12 ಗುಂಪು, 104 ಪಂದ್ಯ! ಹೀಗಿದೆ ನೋಡಿ ಫುಟ್ಬಾಲ್ ವಿಶ್ವಕಪ್ ವೇಳಾಪಟ್ಟಿ
ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಫುಚ್ಬಾಲ್ ನ ಅತಿ ದೊಡ್ಡ ಟೂರ್ನಿ ಫಿಫಾ ವಿಶ್ವಕಪ್ 2026ರ ಪಂದ್ಯಗಳು ಜೂನ್ 11ರಿಂದ 29ರವರೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾಗಳಲ್ಲಿ ನಡೆಯಲಿವೆ. ಒಟ್ಟು 48 ತಂಡಗಳು ಈ ಟೂರ್ನಿಯಲ್ಲಿ ಆಡಲಿದ್ದು ಅರ್ಹತಾ ಪ್ರಕ್ರಿಯೆ ಮುಗಿದ ನಂತರ ಈಗ ದೃಢೀಕರಿಸಲಾಗಿದೆ. ತಂಡಗಳನ್ನು 12 ಜನರ ನಾಲ್ಕು ಗುಂಪುಗಳಾಗಿ ವಿಂಗಡಿಸಿ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ವಿಶೇಷ ಎಂದರೆ ಬಲಿಷ್ಠ ಇಟಲಿ ಈ ಬಾರಿ ಆರ್ಹತೆ ಪಡೆದುಕೊಂಡಿಲ್ಲ.
Kuknoor | ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಹಿಳೆಯರಿಂದ ದಿಢೀರ್ ಪ್ರತಿಭಟನೆ: ತಕ್ಷಣ ಕ್ರಮಕ್ಕೆ ಆಗ್ರಹ
ಕುಕನೂರು : ತಾಲ್ಲೂಕಿನ ದ್ಯಾಂಪೂರು, ಚಿಕ್ಕಬಿಡ್ನಾಳ ಹಾಗೂ ಕದ್ರೊಳ್ಳಿ ಗ್ರಾಮಗಳ ನೂರಾರು ಮಹಿಳೆಯರು ಬುಧವಾರ ಕುಕನೂರು ಪೊಲೀಸ್ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿ, ಅಕ್ರಮ ಮದ್ಯ ಮಾರಾಟ ಮತ್ತು ಕುಡಿತದ ಹಾವಳಿ ತಕ್ಷಣ ನಿಲ್ಲಿಸಲು ಒತ್ತಾಯಿಸಿದರು. ಈ ವೇಳೆ ಮಹಿಳೆಯರು ಮಾತನಾಡಿ, ದ್ಯಾಂಪೂರು ಗ್ರಾಮದಲ್ಲಿ ನಾಲ್ಕುರಿಂದ ಆರು ಸ್ಥಳಗಳಲ್ಲಿ, ಚಿಕ್ಕಬಿಡ್ನಾಳದಲ್ಲಿ ಮೂರು ಕಡೆ ಹಾಗೂ ಕದ್ರೊಳ್ಳಿಯಲ್ಲಿ ಎರಡು ಸ್ಥಳಗಳಲ್ಲಿ ಅಕ್ರಮ ಮದ್ಯ ಮತ್ತು ಸಾರಾಯಿ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿದರು. ಸಣ್ಣ ಹಳ್ಳಿಗಳಲ್ಲೇ ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ ವರೆಗೆ ಮದ್ಯ ಲಭ್ಯವಿದ್ದು, ಕುಟುಂಬದ ಪುರುಷರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಕ್ರಮ ಮದ್ಯ ಮಾರಾಟದಿಂದ ಹಳ್ಳಿಗಳಲ್ಲಿ ಅಶಾಂತಿ ಉಂಟಾಗುತ್ತಿದ್ದು, ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಸರ್ಕಾರದ ನಿಯಮಗಳನ್ನು ಲೆಕ್ಕಿಸದೆ ಪಾನ್ ಶಾಪ್, ಕಿರಾಣಿ ಅಂಗಡಿ, ಕೂಲ್ ಡ್ರಿಂಕ್ಸ್ ಮಳಿಗೆಗಳು ಹಾಗೂ ಗೂಡಂಗಡಿಗಳಲ್ಲಿಯೂ ನಿರ್ಭಯವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಮಹಿಳೆಯರು ದೂರಿದರು. ಈ ಸಂದರ್ಭದಲ್ಲೇ ನೂತನವಾಗಿ ಅಧಿಕಾರ ಸ್ವೀಕರಿಸಿದ ಪಿಎಸ್ಐ ಎಸ್.ಪಿ. ನಾಯಕ್ ಅವರು ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿ, “ನಾನು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ ಸೂಚಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಅಕ್ರಮ ಮಾರಾಟಗಾರರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ದ್ಯಾಂಪುರ, ಚಿಕ್ಕಬಿಡ್ನಳ, ಹೊನ್ನುಣಸಿ ಕ್ರಾಸ್ ಮತ್ತು ಕದ್ರೊಳ್ಳಿ ಗ್ರಾಮಗಳ ಮಹಿಳೆರಾದ ಚೆನ್ನಮ್ಮ, ಮಲ್ಲಮ್ಮ, ಜ್ಯೋತೆವ್ವ, ಹನುಮವ್ವ, ಜಯಮ್ಮ, ಹುಲಿಗೆಮ್ಮ, ಗವಿಸಿದ್ದಮ್ಮ, ಸುಬ್ಬಮ್ಮ, ನಿಂಗಮ್ಮ, ರೇಖಾ, ವಿಜಯಲಕ್ಷ್ಮಿ, ಪಕೀರಮ್ಮ, ವಿದ್ಯಾಸಿರಿ, ನಿರ್ಮಲ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.
ಹಾವೇರಿ : ಕಾರಿಡಾರ್ ಗೆ ನುಗ್ಗಿದ ಬಸ್ ಮಗು ಸಾವು, ನಾಲ್ವರಿಗೆ ಗಾಯ
ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ದಾರುಣ ಘಟನೆಯೊಂದು ಸಂಭವಿಸಿದೆ. ಲಕ್ಷ್ಮೇಶ್ವರಕ್ಕೆ ತೆರಳಬೇಕಿದ್ದ ಬಸ್ ಅನ್ನು ನಿಲ್ದಾಣದ ಕಾರಿಡಾರ್ಗೆ ತರುವಾಗ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ನುಗ್ಗಿದೆ. ಈ ವೇಳೆ ಬಸ್ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ವಾಹನ ಹರಿದ ಪರಿಣಾಮ ಎರಡು ವರ್ಷದ ಹಸುಗೂಸು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Davangere by-election : ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಪರ ಸಿಎಂ ಸಿದ್ದರಾಮಯ್ಯ ರೋಡ್ ಶೋ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ತುರ್ತುಘಟ್ಟ ಗ್ರಾಮದಲ್ಲಿ ನಡೆದ ರೋಡ್ ಶೋನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿದರು. ಹಿರಿಯ, ಮುತ್ಸದ್ದಿ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಬದುಕಿನ ಕಳೆದೆರೆಡು ದಶಕಗಳನ್ನು ಈ ಕ್ಷೇತ್ರದ ಅಭಿವೃದ್ಧಿಗಾಗಿಯೇ ಮೀಸಲಿಟ್ಟವರು. ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಅಭಿವೃದ್ಧಿ ಕನಸು ನಮ್ಮ ಕಣ್ಣೆದುರಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಕ್ಷೇತ್ರದ ಪ್ರಗತಿಗೆ ಕೈಜೋಡಿಸುವ ಮೂಲಕ ಇಲ್ಲಿನ ಮತದಾರರು ಶಾಮನೂರು ಶಿವಶಂಕರಪ್ಪ ಅವರ ಕನಸನ್ನು ನನಸಾಗಿಸುವ ಸಂಕಲ್ಪ ಸ್ವೀಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿಕೊಂಡರು.
Vijayanagara | ರೈತನ ಮೇಲೆ ಕರಡಿ ದಾಳಿ : ಆಸ್ಪತ್ರೆಗೆ ದಾಖಲು
ಗ್ರಾಮಸ್ಥರಲ್ಲಿ ಆತಂಕ
ಕನ್ನಡದ ಮಕ್ಕಳಿಗೆ ಮೂರನೇ ಭಾಷೆಯ ಹೊರೆಯಿಂದ ಮುಕ್ತಿ
ಎಸೆಸೆಲ್ಸಿ ತೃತೀಯ ಭಾಷೆ ಪಾಸ್-ಫೇಲ್ ರದ್ದು, ಗ್ರೇಡಿಂಗ್ ಪದ್ಧತಿ ಜಾರಿ
B.C Road | ಸೈಕಲ್ಗೆ ಪಿಕಪ್ ಢಿಕ್ಕಿ; ಸವಾರ ಮೃತ್ಯು
ಬಂಟ್ವಾಳ : ಸೈಕಲ್ ಸವಾರನಿಗೆ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಿ.ಸಿ.ರೋಡ್ ಕೈಕಂಬದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮೃತ ಸೈಕಲ್ ಸವಾರನನ್ನು ಶಾಂತಿ ಅಂಗಡಿ ನಿವಾಸಿ ಗಾಡ್ವಿನ್ (45) ಎಂದು ಹೆಸರಿಸಲಾಗಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾಧಿಕಾರಿ ಆದರ್ಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನಗಳಿಗೆ ತೋರಿದಷ್ಟು ಕಾಳಜಿಯನ್ನೂ ತೋರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಅವರು ಪತ್ರಿಕಾ ಹೇಳಿಕೆ ನೀಡಿ, ಈಗಾಗಲೇ ಹದಿನೈದನೇ ಹಣಕಾಸು ಆಯೋಗದ ಅವಧಿ ಮುಕ್ತಾಯವಾಗಿದೆ. ಈ ಹೊತ್ತಿನಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಅನ್ಯಾಯದ ದೊಡ್ಡ ಸಾಕ್ಷಿಗುಡ್ಡೆಯನ್ನೂ ಉಳಿಸಿದೆ ಎಂದು ಹೇಳಿದ್ದಾರೆ. ಈ ಕುರಿತಾಗಿ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
ಪತ್ನಿಯ ಕೊಲೆ: 4 ವರ್ಷ ಬಳಿಸಿ ಸಿಕ್ಕಬಿದ್ದ ಮಾಜಿ ಸೈನಿಕ; ಹಂತಕ ಸುಳಿವುಕೊಟ್ಟಿದ್ದು LPG ಸಿಲಿಂಡರ್ ಬುಕ್ಕಿಂಗ್!
ಪತ್ನಿಯ ಕೊಲೆಗೈದು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಸೇನಾ ಕ್ಯಾಪ್ಟನ್ ಬಂಧನವಾಗಿದೆ. ಹಂತಕನನ್ನು ಸಿಕ್ಕಿಸಿಕೊಟ್ಟಿದ್ದು ಒಂದು ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಹಿತಿಯಿಂದ ಎಂಬುದು ಕುತೂಹಲದ ಸಂಗತಿ. ಸಂದೀಪ್ ತೋಮರ್ 2014 ರಲ್ಲಿ ಪತ್ನಿ ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದನು. ಆ ಬಳಿಕ ಜೈಲಿನಿಂದ ತಪ್ಪಿಸಿಕೊಂಡಿದ್ದನು. ಸದ್ಯ ಆ ತನ ಬಂಧನ ಮಾಡಲಾಗಿದೆ.
ಜಗತ್ತನ್ನು ಬಗೆಬಗೆಯಲ್ಲಿ ಮೂರ್ಖನನ್ನಾಗಿಸಿದ ಟ್ರಂಪಣ್ಣನ ಆಟ ಬಲ್ಲವರಾರು?
ವರುಷದ 364 ದಿನವೂ ನಾವು ಬುದ್ಧಿವಂತರೇ. ಏಪ್ರಿಲ್ 1ರ ಒಂದು ದಿನ ಮೂರ್ಖರಾಗುವುದು ಕೇವಲ ಮೂರ್ಖರ ದಿನಕ್ಕಾಗಿಯಷ್ಟೇ ಎಂದೇ ಭಾವಿಸಿತ್ತು ಜಗತ್ತು. ಆದರೆ, ಕಳೆದೊಂದು ವರ್ಷವಿಡೀ ತಮ್ಮ ಹೇಳಿಕೆ, ನಿಲುವುಗಳಿಂದ ಇಡೀ ಜಗತ್ತನ್ನು ಬಗೆಬಗೆಯಲ್ಲಿ ಮೂರ್ಖನನ್ನಾಗಿಸಿದ್ದು ಡೊನಾಲ್ಡ್ ಟ್ರಂಪ್. ಈ ಟ್ರಂಪಣ್ಣ ಐಪಿಎಲ್ ಫೈ ನಲ್ಗೂ ಬಂದು ಆರ್ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ಇಲ್ಲಿನ ವಿನೋದದ ಕಚಗುಳಿ ಮೂರ್ಖರ ದಿನದ ವಿಶೇಷ.
Viral Video: ವಿದೇಶಿ ಮಹಿಳೆಯೊಬ್ಬರ ಫೋಟೋಗ್ರಫಿ ಹುಚ್ಚುತನಕ್ಕೆ ಭಾರತೀಯ ಆನೆಯೊಂದು ಮೃತಪಟ್ಟಿದೆ ಎನ್ನುವ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. ವಿದೇಶಿ ಕಲಾವಿದರೊಬ್ಬರು ಪ್ರಕಾಶಮಾನವಾದ ಗುಲಾಬಿ ಬಣ್ಣ ಬಳಿದ ಆನೆಯ ಫೋಟೋಶೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ಈ ಆನೆ ಮೃತಪಟ್ಟಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಫೋಟೋಗ್ರಫಿ ಸಂದರ್ಭದಲ್ಲಿ ಆನೆಗೆ
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಕರ್ನಾಟಕದಲ್ಲಿ ಸಾರಿಗೆ ಮೂಲಸೌಕರ್ಯ, ಸಾರಿಗೆ ವ್ಯವಸ್ಥೆ ಸುಧಾರಿಸುತ್ತಿದೆ. ಇದರೊಂದಿಗೆ ವಿಮಾನಯಾನ ಮೂಲಸೌಕರ್ಯ, ಹೊಸ ಏರ್ಪೊರ್ಟ್ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ. ಇದರೊಂದಿಗೆ ಬಹು ದಿನಗಳಿಂದ ಇಡಲಾಗಿದ್ದ ಹುಬ್ಬಳ್ಳಿ-ಹೈದಾರಾಬಾದ್ ಮತ್ತು ಹುಬ್ಬಳ್ಳಿ-ಬೆಂಗಳೂರಿಗೆ ವಿಮಾನ ಸೇವಾರಂಭದ ಬೇಡಿಕೆ ಈಡೇರಿದೆ. ಇದೇ ತಿಂಗಳು ಈ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ. ಹುಬ್ಬಳ್ಳಿ ಧಾರವಾಡ
ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ನಡುವೆ ಇರಾನ್ ಹಾಗೂ ಅಮೆರಿಕಾ ಮಾತುಕತೆ ನಡೆಸುತ್ತಿದ್ದೆ ಎಂಬ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ಇರಾನ್ ವಿದೇಶಾಂ ಸಚಿವ USನಿಂದ ನಮಗೆ ನೇರ ಸಂದೇಶಗಳು ಬಂದಿವೆ. ಇದರರ್ಥ ನಾವು ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದಲ್ಲ, ಅಲ್ಲದೆ, ನಾವು ಅವರ ಶಾಂತಿ ಒಪ್ಪಂದಕ್ಕೆ ಪ್ರತಿಕ್ರಿಯೆಯಾಗಲಿ ಷರತ್ತುಗಳನ್ನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಅಮೆರಿಕಾದ ಸಂಭಾವ್ಯ ಭೂದಾಳಿಗಾಗಿ ನಾವು ಕಾಯುತ್ತೀದ್ದೇವೆ, ಆದರೆ ಅವರು ಆ ತಪ್ಪು ಮಾಡುವುದಿಲ್ಲ ಎಂದಿದ್ದು, ಇಸ್ರೇಲಿ ದಾಳಿಗಳನ್ನು ಖಂಡಿಸಿದ್ದಾರೆ. ಇತ್ತ ಇರಾನ್ ನಲ್ಲಿ ಇಸ್ರೇಲ್-USಗೆ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಮತ್ತೆ 65 ಜನರನ್ನು ಬಂಧಿಸಲಾಗಿದೆ.
ಗೋವಾದ ನೈಟ್ ಕ್ಲಬ್ನಲ್ಲಿ ಅಗ್ನಿ ಅವಘಡ ಪ್ರಕರಣ: ಲೂತ್ರಾ ಸಹೋದರರಿಗೆ ಷರತ್ತುಬದ್ಧ ಜಾಮೀನು ಮಂಜೂರು
ಪಣಜಿ: 25 ಮಂದಿಯ ಪ್ರಾಣಹಾನಿಗೆ ಕಾರಣವಾಗಿದ್ದ ಗೋವಾದ ಬಿರ್ಚ್ ನೈಟ್ ಕ್ಲಬ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಗೋವಾದ ನ್ಯಾಯಾಲಯವೊಂದು ಗೌರವ್ ಲೂತ್ರಾ ಹಾಗೂ ಸೌರಭ್ ಲೂತ್ರಾ ಸಹೋದರರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ ಫೋರ್ಜರಿ ಆರೋಪಕ್ಕೆ ಸಂಬಂಧಿಸಿ ಅವರಿಬ್ಬರೂ ಈಗಲೂ ಪೊಲೀಸರ ವಶದಲ್ಲಿದ್ದಾರೆ. ಡಿಸೆಂಬರ್ 2025ರಲ್ಲಿ ಬಿರ್ಚ್ ಬೈ ರೋಮಿಯೊ ಲೇನ್ ನೈಟ್ ಕ್ಲಬ್ ನಲ್ಲಿ ನಡೆದಿದ್ದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮೆರ್ಸೆಸ್ ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಲೂತ್ರಾ ಸಹೋದರರಿಗೆ ಸಾಮಾನ್ಯ ಜಾಮೀನು ಮಂಜೂರು ಮಾಡಿದ್ದಾರೆ. ಲೂತ್ರಾ ಸಹೋದರರ ಪರವಾಗಿ ಹಿರಿಯ ವಕೀಲ ಸುಬೋಧ್ ಕಾಂತಕ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಜಾಮೀನು ಮಂಜೂರಾಗಿರುವ ಹೊರತಾಗಿಯೂ ಅವರಿಬ್ಬರೂ ತಕ್ಷಣವೇ ಜೈಲಿನಿಂದ ಬಿಡುಗಡೆಯಾಗುವುದಿಲ್ಲ. ಲೂತ್ರಾ ಸಹೋದರರ ವಿರುದ್ಧ ದಾಖಲಾಗಿರುವ ಮತ್ತೊಂದು ಪ್ರಕರಣದ ತನಿಖೆಯ ಭಾಗವಾಗಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಮಪುಸಾ ಪೊಲೀಸರು ತಿಳಿಸಿದ್ದಾರೆ.
ʼಕೇಂದ್ರ ಸರಕಾರಕ್ಕಿಂತ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆʼ : ವಿಜಯೇಂದ್ರಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು : ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 38,455 ಕೋಟಿ ರೂ. ಗಳಷ್ಟು ಹೆಚ್ಚಿನದ್ದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಮ್ಮ ಬಜೆಟ್ ಗಾತ್ರದಲ್ಲಿ ಶೇ.9.4ರಷ್ಟು ಬೆಳವಣಿಗೆಯಾಗಿದ್ದರೆ, ಕೇಂದ್ರ ಸರಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷ 50.66 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ ಈ ವರ್ಷ 53.47 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ. ನಮ್ಮ ಬಜೆಟ್ ಗಾತ್ರ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತಿದೆ. ಆರ್ಥಿಕ ಹಿಂಜರಿತ ಇದ್ದಿದ್ದರೆ ಈ ಪ್ರಗತಿ ಸಾಧ್ಯವಾಗುತ್ತಿತ್ತೇ? ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಆಯವ್ಯಯವೇ ನಮ್ಮ ಶ್ವೇತಪತ್ರ : ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ, ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ನಾನು ಮಂಡಿಸಿದ್ದೇನೆ, ಅದು ಅಂಕಿ-ಅಂಶಗಳ ಕಾಗದದ ಕಂತೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಆಯವ್ಯಯವನ್ನು ವಿಧಾನಮಂಡಲದ ಉಭಯ ಸದನಗಳು ಒಪ್ಪಿಕೊಂಡು ಅಂಗೀಕರಿಸಿವೆ. ಇದೇ ನಮ್ಮ ಶ್ವೇತಪತ್ರ ಎಂದು ಉಲ್ಲೇಖಿಸಿದ್ದಾರೆ. ಆರ್ಥಿಕ ದಿವಾಳಿತನವೇ ಬಿಜೆಪಿ ಸರಕಾರದ ಹೆಗ್ಗುರುತು : 16ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ವಿತ್ತೀಯ ಕೊರತೆ ರಾಜ್ಯಗಳಲ್ಲಿ ಜಿಎಸ್ಡಿಪಿಯ ಶೇ.3 ರೊಳಗೆ ಹಾಗೂ ಕೇಂದ್ರ ಸರಕಾರ ಜಿಡಿಪಿಯ ಶೇ.4.2 ರೊಳಗೆ ಇರಬೇಕು. ನಮ್ಮ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ.3 ರ ಒಳಗೆ ಇದೆ. ಆದರೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3 ರಷ್ಟಿದೆ ಎಂದು ಅವರು ತಿಳಿಸಿದ್ದಾರೆ. ವಿಜಯೇಂದ್ರ ಅವರೇ ದಯವಿಟ್ಟು ಒಮ್ಮೆ ನಿಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳ ಆರ್ಥಿಕತೆಯ ಮೇಲೆ ಕಣ್ಣಾಡಿಸಿಕೊಂಡು ಬನ್ನಿ. ಮಹಾರಾಷ್ಟ್ರದ ಸಾಲ ಬಾಕಿ ರೂ.11.02 ಲಕ್ಷ ಕೋಟಿಯಷ್ಟಿದ್ದರೆ, ಬಿಹಾರದ ವಿತ್ತೀಯ ಕೊರತೆ ಜಿಎಸ್ ಡಿಪಿ ಶೇ.11.8ರಷ್ಟಿದೆ. ರಾಜಸ್ತಾನ ಮತ್ತು ಮಧ್ಯಪ್ರದೇಶದ ವಿತ್ತೀಯ ಕೊರತೆ ಜಿಎಸ್ಡಿಪಿಯ ಶೇಕಡಾ 3.7ರಷ್ಟಿದೆ. ಬಿಜೆಪಿ ಆಳ್ವಿಕೆಯ ಕೇಂದ್ರ ಸರಕಾರ ಇರಲಿ, ರಾಜ್ಯ ಸರಕಾರಗಳಿರಲಿ ಆರ್ಥಿಕ ದಿವಾಳಿತನವೇ ಬಿಜೆಪಿ ಆಡಳಿತದ ಮುಖ್ಯ ಗುರುತಾಗಿದೆ ಎಂದು ತಿಳಿಸಿದ್ದಾರೆ. “ಆರ್ಥಿಕ ದಿವಾಳಿತನವೇ ಬಿಜೆಪಿ ಸರ್ಕಾರದ ಹೆಗ್ಗುರುತು” 16ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ವಿತ್ತೀಯ ಕೊರತೆ ರಾಜ್ಯಗಳಲ್ಲಿ ಜಿಎಸ್ಡಿಪಿಯ ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಜಿಡಿಪಿಯ ಶೇ.4.2 ರೊಳಗೆ ಇರಬೇಕು. ನಮ್ಮ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ.3 ರ ಒಳಗೆ ಇದೆ. ಆದರೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3… pic.twitter.com/L2U8KK7okK — Siddaramaiah (@siddaramaiah) April 1, 2026 “ಕೇಂದ್ರ ಸರ್ಕಾರಕ್ಕಿಂತ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆ” ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 38,455 ಕೋಟಿ ರೂ. ಗಳಷ್ಟು… pic.twitter.com/oZptvh7nOM — Siddaramaiah (@siddaramaiah) April 1, 2026 “ನಮ್ಮ ಆಯವ್ಯಯವೇ ನಮ್ಮ ಶ್ವೇತಪತ್ರ” ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ, ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತದೆ. ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ… pic.twitter.com/SJa9d7kmGr — Siddaramaiah (@siddaramaiah) April 1, 2026
ಕೆಯುಡಬ್ಲ್ಯೂಜೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ; 4 ಜನ ಪತ್ರಕರ್ತರಿಗೆ ಪ್ರಶಸ್ತಿ
ಯಾದಗಿರಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೀದರ್ನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದರು. ಪತ್ರಕರ್ತ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ) ಪ್ರಶಸ್ತಿ, ಪತ್ರಕರ್ತ ಅಮರೇಶ ಹಿರೇಮಠ ಅವರಿಗೆ ಅಭಿಮಾನಿ ಪ್ರಕಾಶನ ಪ್ರಶಸ್ತಿ, ಪತ್ರಕರ್ತ ಬಸವರಾಜ ಕಟ್ಟಿಮನಿ ಅವರಿಗೆ ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ) ಪ್ರಶಸ್ತಿ ಹಾಗೂ ಪತ್ರಕರ್ತ ಸಂಜೀವರಾವ್ ಕುಲಕರ್ಣಿ ಅವರಿಗೆ ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು. ಜಿಲ್ಲೆಯ 4 ಜನ ಪತ್ರಕರ್ತರ ಸೇವೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಜಿಲ್ಲೆಯ ಘನತೆ ಇಮ್ಮಡಿಗೊಳಿಸಿದ್ದಾರೆ ಎಂದರು. ನಿಜಕ್ಕೂ ಸಣ್ಣ ಜಿಲ್ಲೆಯ ನಾಲ್ಕು ಜನ ಪತ್ರಕರ್ತರ ಸೇವೆಗೆ ಗೌರವ ಸಿಕ್ಕಂತಾಗಿದೆ. ಗಿರಿನಾಡಿನ ಕಿರುತಿ ನಾಡಿನ ತುಂಬ ಪಸರಿಸಿದೆ ಎಂದು ತಿಳಿಸಿದರು. ಅದರಲ್ಲಿಯೂ ಶಹಾಪುರದ ಇಬ್ಬರೂ ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
Belagavi | ಗ್ಯಾಸ್ ಸಿಲಿಂಡರ್ ಸಂಕಷ್ಟಕ್ಕೆ ಕಂಗಾಲಾದ ಜನರು; ಎಂ.ಕೆ.ಹುಬ್ಬಳ್ಳಿಯಲ್ಲಿ ರಸ್ತೆ ತಡೆ ಪ್ರತಿಭಟನೆ
ಬೆಳಗಾವಿ : ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗ್ಯಾಸ್ ಸಿಲಿಂಡರ್ ಏಜೆನ್ಸಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ತಮ್ಮೂರಿಗೆ ಬಂದ ಸಿಲಿಂಡರ್ಗಳನ್ನು ಬೇರೆ ಊರಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಸಿಲಿಂಡರ್ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ನಡುರಸ್ತೆಯಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಿದ ಸ್ಥಳೀಯರು, ಹಣ ನೀಡುವವರಿಗೆ ಮಾತ್ರ ಸಿಲಿಂಡರ್ ನೀಡಲಾಗುತ್ತಿದೆ ಎಂದು ಆರೋಪಿಸಿದರು. “ನಮಗೆ ಮಾತ್ರ ನಾಳೆ ಬನ್ನಿ ಎಂದು ಹೇಳುತ್ತಿದ್ದಾರೆ” ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಪ್ರೀಮಿಯಂ ಪೆಟ್ರೋಲ್ ಬೆಲೆ 160ರೂ.ಗೆ ಏರಿಕೆ: ಜೆಟ್ ಇಂಧನ ದರದಲ್ಲಿ ಶೇ.8.5ರಷ್ಟು ಏರಿಕೆ
ಹೊಸದಿಲ್ಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರೀಮಿಯಂ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದೆ. ಇದೇ ವೇಳೆ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಮಾಡಲಾಗಿದ್ದ ಎಟಿಎಫ್ ಬೆಲೆ ಏರಿಕೆಯನ್ನು ಹಿಂಪಡೆದು, ಉಳಿದಂತೆ ಎಟಿಎಫ್ ಬೆಲೆಯನ್ನು ಏರಿಕೆ ಮಾಡಲಾಗಿದೆ. XP100 ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ ಇದೀಗ ಪ್ರತಿ ಲೀಟರ್ ಗೆ 160ರೂ.ಗೆ ಏರಿಕೆಯಾಗಿದೆ. Xtra Green ಪ್ರೀಮಿಯಂ ಡೀಸೆಲ್ ಬೆಲೆ ಇದೀಗ ಪ್ರತಿ ಲೀಟರ್ ಗೆ 92.99 ರೂ. ಆಗಿದೆ. ಇದಕ್ಕೂ ಮುನ್ನ ಅದರ ಬೆಲೆ 91.49 ರೂ. ಆಗಿತ್ತು. XP100 ಆಕ್ಟೇನ್ ಪೆಟ್ರೋಲ್ ಆಗಿದೆ. ಈ ಪೆಟ್ರೋಲ್ ಅನ್ನು ಅತ್ಯಾಧುನಿಕ ಕಾರುಗಳು ಹಾಗೂ ಸೂಪರ್ ಬೈಕ್ ಗಳ ಇಂಜಿನ್ ಸಾಮರ್ಥ್ಯ ವನ್ನು ವೃದ್ಧಿಸಲು ಬಳಸಲಾಗುತ್ತದೆ. ಈ ಬೆಲೆ ಏರಿಕೆಗೆ ಕಾರಣವೇನು ಎಂದು ಇಂಡಿಯನ್ ಆಯಿಲ್ ಇದುವರೆಗೆ ಯಾವುದೇ ಅಧಿಕೃತ ಕಾರಣ ಬಿಡುಗಡೆ ಮಾಡಿಲ್ಲ. ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಪೂರೈಕೆ ಸರಪಣಿಯಲ್ಲಿನ ಅಡಚಣೆಯಿಂದಾಗಿ ಜಾಗತಿಕ ತೈಲ ಮತ್ತು ಇಂಧನ ಬೆಲೆಗಳು ಏರಿಕೆಯಾಗಿರುವ ಬೆನ್ನಿಗೆ ಈ ಬೆಲೆ ಏರಿಕೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಬಳಕೆ ನಿಯಂತ್ರಣಕ್ಕೆ ಕರಡು ನೀತಿ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಕ್ಕೆ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಇಂಟರ್ನೆಟ್ ಬಳಕೆ ಹಾಗೂ ಹೆಚ್ಚು ಅವಧಿಗಳ ಕಾಲ ಸ್ಕಿನ್ ಬಳಕೆಯಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತು ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಕಾಣಸಿಗುತ್ತಿರುವ ಆತಂಕ, ನಿದ್ರೆಯ ಸಮಸ್ಯೆ, ಕಡಿಮೆ ಶೈಕ್ಷಣಿಕ ಕಾರ್ಯಕ್ಷಮತೆ ಹಾಗೂ ಸಾಮಾಜಿಕ ಪ್ರತ್ಯೇಕತೆ ಇತ್ಯಾದಿ ಸಮಸ್ಯೆಗಳನ್ನು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.
ಪೊಲೀಸ್ ಹುದ್ದೆಯಲ್ಲಿದ್ದೇ ‘ಇತಿಹಾಸ’ ಬರೆದ ಶಕೀಲ್ ಐ.ಎಸ್.
ಸಾಹಿತ್ಯ ಕ್ಷೇತ್ರದಲ್ಲಿ ಖಾಕಿ ಖದರ್
ಪರವಾನಗಿ ದುರುಪಯೋಗಿಸಿ ಅಕ್ರಮ ಮರಳು ದಂಧೆ
ಟ್ರಾಕ್ಟರ್, ಟಿಪ್ಪರ್ಗಳ ಮೂಲಕ ನಿರಂತರ ಸಾಗಣೆ; ಅಧಿಕಾರಿಗಳ ಮೌನಕ್ಕೆ ಜನರ ಕಿಡಿ
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ
ಭಾರತೀಯ ರೈಲ್ವೆ ಪ್ರತಿದಿನ ಲಕ್ಷಾಂತರ ಜನರಿಗೆ ಪ್ರಯಾಣದ ಪ್ರಮುಖ ಆಸರೆಯಾಗಿದೆ. ಆದರೆ, ರೈಲಿನಲ್ಲಿ ಪ್ರಯಾಣಿಸುವಾಗ ಕೆಲವರು ತೋರುವ ಬೇಜವಾಬ್ದಾರಿಯುತ ವರ್ತನೆಗಳು ಸಾರ್ವಜನಿಕ ಸ್ಥಳಗಳ ಘನತೆಗೆ ಕುಂದು ತರುವುದರ ಜೊತೆಗೆ ಸಹ-ಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಸಾರ್ವಜನಿಕರ ನಾಗರಿಕ ಪ್ರಜ್ಞೆಯ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಚಲಿಸುವ ರೈಲಿನ ಬೋಗಿಯೊಂದರಲ್ಲಿ ಪ್ರಯಾಣಿಕರು
ಘನತ್ಯಾಜ್ಯ ಅಸಮರ್ಪಕ ನಿರ್ವಹಣೆ : ಜನಶಿಕ್ಷಣ ಟ್ರಸ್ಟ್ನಿಂದ ಮಂಗಳೂರು ವಿವಿಗೆ ಪತ್ರ
ಮಂಗಳೂರು, ಎ.1: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ ಕ್ರಮ ಕೈಗೊಳ್ಳುವ ನಿರ್ಣಯದ ಹೊರತಾಗಿಯೂ ತ್ಯಾಜ್ಯ ಸುಡುತ್ತಿರುವ ಬಗ್ಗೆ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜನಶಿಕ್ಷಣ ಟ್ರಸ್ಟ್ ಮಂಗಳೂರು ವಿವಿಗೆ ಪತ್ರ ಸಲ್ಲಿಸಿದೆ. ವಿವಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಪ್ರಸ್ತಾವನೆ ಕುರಿತು ಸಕ್ಷಮ ಪ್ರಾಧಿಕಾರ ಸಮಿತಿಗಳ ಸಭೆಯಲಿ ಚರ್ಚಿಸಿ ಸಕರಾತ್ಮಕ ಕ್ರಮ ವಹಿಸುವುದಾಗಿ ತಿಳಿಸಲಾಗಿತ್ತು. ಆದರೆ ಈ ವರೆಗೆ ಯಾವುದೇ ಕ್ರಮ ಆಗಿಲ್ಲ. ಆದರೆ ಈ ನಡುವೆ ಕೊಣಾಜೆ ವಿವಿ ವ್ಯಾಪ್ತಿಯ ಅಲ್ಲಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಡಲಾಗುತ್ತಿದೆ. ಪರಿಸರ ಸಂರಕ್ಷಣಾ ಕಾಯಿದೆ 1986 ಮತ್ತು ಪರಿಸರ ಮಾಲಿನ್ಯ ತಡೆ ಕಾಯಿದೆ 1981ರ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು, ಬೆಂಕಿ ಹಾಕುವುದು ಕಾನೂನು ಬಾಹಿರ ಶಿಕ್ಷಾರ್ಹ ಅಪರಾಧವಾಗಿದೆ. ಕಾಯಿದೆ ಅನ್ವಯ ಗರಿಷ್ಟ 1 ಲಕ್ಷ ರೂ. ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಈ ವಿಷಯವನ್ನು ಗಂಭೀರವಾಗಿ ಪರಿಣಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಜತೆಗೆ ಈ ವ್ಯವಸ್ಥೆ ಪುನರಾವರ್ತನೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿಯೂ ಆಗಿರುವ ಜನಶಿಕ್ಷಣ ಟ್ರಸ್ಟ್ನ ಎನ್. ಶೀನ ಶೆಟ್ಟಿ ಹಾಗೂ ತಂಡದವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ‘ಈ ನಡುವೆ ಮಂಗಳವಾರ ಕೊಣಾಜೆಯ ಗಣೇಶ್ಮಹಲ್ ಪ್ರದೇಶದ ದೂರವಾಣಿ ವಿನಿಮಯ ಕೇಂದ್ರದ ಹಿಂಭಾಗದಲ್ಲಿರುವ ಹಳೆಯ ಕೆಂಪು ಕಲ್ಲು ಕೋರೆಯ ಗುಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸುರಿದು ಬೆಂಕಿ ಹಚ್ಚಲಾಗಿದೆ. ಇಲ್ಲಿ ನಿರಂತರವಾಗಿ ಈ ರೀತಿ ತ್ಯಾಜ್ಯವನ್ನು ನಿರಂತರವಾಗಿ ಸುಡಲಾಗುತ್ತಿದ್ದು, ವಿಷಾನಿಲ ವಾತಾವರಣವನ್ನು ಸೇರುತ್ತಿದೆ. ಇದರಿಂದಾಗಿ ಸ್ಥಳೀಯ ಜನರಿಗೆ ವಿವಿಧ ರೀತಿಯ ಕಾಯಿಲೆಗಳಿಗೂ ಕಾರಣವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಮೂಲ್ಯ ಆಗ್ರಹಿಸಿದ್ದಾರೆ.
ತವರು ಮನೆಯಿಂದ ಪತ್ನಿಯು ಪಡೆದುಕೊಂಡ ಆಸ್ತಿಯಲ್ಲಿ ಪತಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ಆದೇಶ
ಪೋಷಕರಿಂದ ಉತ್ತರಾಧಿಕಾರವಾಗಿ ಬಂದ ಪತ್ನಿಯ ಆಸ್ತಿಯಲ್ಲಿ ಪತಿ ಅಥವಾ ಅತ್ತೆ-ಮಾವನಿಗೆ ಹಕ್ಕಿಲ್ಲ ಎಂದು ಆಂಧ್ರ ಹೈಕೋರ್ಟ್ ತೀರ್ಪು ನೀಡಿದೆ. ಮಹಿಳೆಯು ಮಕ್ಕಳಿಲ್ಲದೆ ಮೃತಪಟ್ಟರೆ, ಆ ಆಸ್ತಿಯು ಪತಿಯ ಕುಟುಂಬಕ್ಕೆ ಸೇರುವುದಿಲ್ಲ; ಬದಲಾಗಿ ಆಕೆಯ ತಂದೆಯ ವಾರಸುದಾರರಿಗೆ ಮರಳುತ್ತದೆ. ಆಸ್ತಿ ಹಕ್ಕಿನ ಗೊಂದಲಕ್ಕೆ ತೆರೆ ಎಳೆದಿರುವ ಈ ತೀರ್ಪು ಮಹಿಳೆಯರ ಪೋಷಕರ ಆಸ್ತಿ ಹಕ್ಕನ್ನು ಎತ್ತಿ ಹಿಡಿದಿದೆ.
ಧಾರವಾಡ : ಸ್ವಯಂ ಗಣತಿ ಕಾರ್ಯ ಇಂದಿನಿಂದ ; 1,658 ಗಣತಿದಾರರು, 287 ಮೇಲ್ವಿಚಾರಕರ ನೇಮಕ
ಧಾರವಾಡ ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ 15 ರವರೆಗೆ ಜನಗಣತಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ವಿಧಾನದಿಂದ ನಿಖರವಾದ ಮಾಹಿತಿ ದಾಖಲಾಗುವುದರ ಜೊತೆಗೆ ಸಮಯವೂ ಉಳಿತಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದು, ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕುಟುಂಬದ ವಿವರಗಳನ್ನು ದಾಖಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಹದಗೆಟ್ಟ ಆರ್ಥಿಕ ಸ್ಥಿತಿ, ಅಭಿವೃದ್ದಿ ಶೂನ್ಯ: ಸಿದ್ದರಾಮಯ್ಯಗೆ ವಿಜಯೇಂದ್ರ ಪತ್ರ! ಉಲ್ಲೇಖಿಸಿದ 9 ಅಂಶಗಳೇನು
ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿ ಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ್ಗದ ಕಲ್ಯಾಣ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಜನರ ಮುಂದೆ ಚರ್ಚಿಸೋಣ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಹದಗೆಟ್ಟ ಆರ್ಥಿಕ ಸ್ಥಿತಿ ಇದೆ ಹಾಗೂ ಅಭಿವೃದ್ದಿಯಲ್ಲಿ ಶೂನ್ಯ ಸಾಧನೆ ಎಂದು ಸಿದ್ದರಾಮಯ್ಯಗೆ ವಿಜಯೇಂದ್ರ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB v/s SRH ಪಂದ್ಯದ ವೇಳೆ ಹಲವರ ಮೊಬೈಲ್ ಫೋನ್ ಗಳು ಕಳ್ಳತನವಾಗಿದ್ದವು. ಇದೀಗ ಬೆಂಗಳೂರು ಪೊಲೀಸರು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ್ದು, ಬಂಧನಕ್ಕೊಳಗಾದವರಲ್ಲಿ ಅಪ್ರಾಪ್ತರಿದ್ದು, ಕಳ್ಳತನಕ್ಕೆ ಜಾರ್ಖಾಂಡ್ ಮೂಲಕ ವಿಮಾನದಲ್ಲಿ ಬಂದಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಕಳ್ಳತನವಾಗಿದ್ದ 29 ಮೊಬೈಲ್ ಗಳ ಪೈಕಿ 18 ಲಕ್ಷ ಮೌಲ್ಯದ 21 ಫೋನ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ..
ಎಥೆನಾಲ್ ಮಿಶ್ರಿತ ಇಂಧನ: ವಾಹನಿಗರ ಕಿಸೆಗೆ ಕನ್ನ?
ಈಗ ದೇಶಾದ್ಯಂತ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡಲಾಗುತ್ತಿದೆ. ಪರಿಶುದ್ಧ ಇಂಧನಕ್ಕೆ ಉತ್ತೇಜನ ನೀಡುವ ಪ್ರಧಾನಿ ನರೇಂದ್ರ ಮೋದಿ ಸರಕಾರದ ನಿರ್ಧಾರದ ಭಾಗವಾಗಿ ಎಥೆನಾಲ್ ಮಿಶ್ರಿತ ಇಂಧನಕ್ಕೆ ಒತ್ತು ನೀಡಲಾಗುತ್ತಿದೆ. ಎಥೆನಾಲ್ ಎನ್ನುವುದು ಕೃಷಿ ಉತ್ಪನ್ನಗಳು ಮತ್ತು ಜೈವಿಕ ತ್ಯಾಜ್ಯದಿಂದ ಉತ್ಪಾದನೆಯಾಗುವ ಜೈವಿಕ ಇಂಧನವಾಗಿದೆ. ಸರಕಾರದ ಈ ಕ್ರಮವು ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಭಾರತದ 16 ಬಿಲಿಯ ಡಾಲರ್ (ಸುಮಾರು 1.51 ಲಕ್ಷ ಕೋಟಿ ರೂಪಾಯಿ)ಗೂ ಅಧಿಕ ವಿದೇಶಿ ವಿನಿಮಯವನ್ನು ಉಳಿಸಿದೆ ಎಂದು ಸರಕಾರದ ಅಧಿಕೃತ ಅಂಕಿಅಂಶಗಳು ಹೇಳುತ್ತವೆ. ಅಂದರೆ, ಭಾರತದ ಕಚ್ಚಾತೈಲ ಆಮದಿನಲ್ಲಿ 2.45 ಕೋಟಿ ಮೆಟ್ರಿಕ್ ಟನ್ ಕಡಿತವಾಗಿದೆ. ಕಳೆದ ವರ್ಷ, ದೇಶಾದ್ಯಂತದ ಸುಮಾರು 90,000 ಪೆಟ್ರೋಲ್ ಪಂಪ್ಗಳಲ್ಲಿ ಎಥೆನಾಲ್ ಮಿಶ್ರಿತ ‘ಇ20 ಪೆಟ್ರೋಲ್’ ಏಕೈಕ ಇಂಧನ ಆಯ್ಕೆಯಾದಾಗ, ಅದು ತಮ್ಮ ಹಳೆಯ ವಾಹನಗಳ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಾಹನಿಗರು ಚಿಂತಿತರಾದರು. ಆಗ ವಕೀಲ ಅಕ್ಷಯ್ ಮಲ್ಹೋತ್ರಾ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದನ್ನು ಸಲ್ಲಿಸಿ, ಎಥೆನಾಲ್ ಮುಕ್ತ ಪೆಟ್ರೋಲ್ ಮತ್ತು ಡೀಸೆಲ್ ಎಲ್ಲಾ ಪೆಟ್ರೋಲ್ ಪಂಪ್ಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವಂತೆ ಪೆಟ್ರೋಲಿಯಂ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು. ಜೊತೆಗೆ, ಇಂಧನ ಹಾಕುವಾಗ ಗ್ರಾಹಕರ ವಾಹನಗಳು ಎಥೆನಾಲ್ಗೆ ಹೊಂದಿಕೊಳ್ಳುತ್ತವೆಯೇ ಎಂಬ ಬಗ್ಗೆಯೂ ಅವರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಪೆಟ್ರೋಲ್ ಪಂಪ್ಗಳಲ್ಲಿ ಮಾಡುವಂತೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು. ಆದರೆ, ದೇಶದ ಪರಮೋಚ್ಚ ನ್ಯಾಯಾಲಯವು ಆ ಅರ್ಜಿಯನ್ನು ತಿರಸ್ಕರಿಸಿತು. ಇ20 ಇಂಧನವು ಚೆನ್ನಾಗಿ ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿದೆ ಹಾಗೂ ಅದರಿಂದ ಕಬ್ಬು ಬೆಳೆಯುವ ರೈತರಿಗೂ ಪ್ರಯೋಜನವಾಗುತ್ತದೆ ಎಂದು ಹೇಳಿತು. ಇಂಧನ ಸ್ವಾವಲಂಬನೆ ಮತ್ತು ಸುಸ್ಥಿರ ಬೆಳವಣಿಗೆಗೆ ಇ20 ಇಂಧನಕ್ಕೆ ಪರಿವರ್ತನೆಯಾಗುವುದು ಅನಿವಾರ್ಯವೇ ಎಂಬ ಬಗ್ಗೆ ಪರಿಸರವಾದಿಗಳು ಮತ್ತು ಕೈಗಾರಿಕಾ ಕ್ಷೇತ್ರದ ಪರಿಣತರು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸುವುದು ಎಂದರೆ ವಾಹನಗಳಿಗೆ ಬೇರೆಯದೇ ಆದ ಇಂಧನ ವ್ಯವಸ್ಥೆಯೊಂದನ್ನು ಸೃಷ್ಟಿಸಿದಂತೆ ಎಂದು ಹೊಸದಿಲ್ಲಿಯ ಸರಕಾರೇತರ ಸಂಘಟನೆ ಸೆಂಟರ್ ಫಾರ್ ಸಯನ್ಸ್ ಆಂಡ್ ಎನ್ವಯರ್ನ್ಮೆಂಟ್ನ ಸಂಶೋಧನೆ ವಿಭಾಗದ ಕಾರ್ಯಕಾರಿ ನಿರ್ದೇಶಕಿ ಅನುಮಿತಾ ರಾಯ್ಚೌಧರಿ ಹೇಳುತ್ತಾರೆ. ‘‘ಇದಕ್ಕೆ, ವಾಹನದಿಂದ ಹೊರಬೀಳುವ ಹೊಗೆಯ ಮೇಲೆ ಎಥೆನಾಲ್ ಮಿಶ್ರಿತ ಇಂಧನ ಬೀರುವ ಸಂಭಾವ್ಯ ಪರಿಣಾಮಗಳ ಬಗ್ಗೆ ವಿವರವಾದ ಮತ್ತು ಸೂಕ್ಷ್ಮ ಅಧ್ಯಯನದ ಅಗತ್ಯವಿದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ. ‘‘ಕಳಪೆ ಇಂಧನ ನಿರ್ವಹಣೆ (ಮೈಲೇಜ್ ಕುಸಿಯುವುದು), ಚಾಲನೆಯಲ್ಲಿರುವ ವಾಹನಗಳು ಸವೆಯುವುದು ಮತ್ತು ತುಕ್ಕು ಹಿಡಿಯುವುದು ಹಾಗೂ ಆಹಾರ ಭದ್ರತೆಯ ಮೇಲೆ ಪರಿಣಾಮಗಳು (ಯಾಕೆಂದರೆ ಆಹಾರ ಪದಾರ್ಥಗಳೇ ಈ ಇಂಧನದ ಪ್ರಾಥಮಿಕ ಮೂಲವಾಗಿದೆ) ಎಥೆನಾಲ್ ಮಿಶ್ರಿತ ಇಂಧನದ ಪ್ರಮುಖ ವ್ಯತಿರಿಕ್ತ ಪರಿಣಾಮಗಳಾಗಿವೆ’’ ಎಂದು ರಾಯ್ಚೌಧರಿ ಹೇಳುತ್ತಾರೆ. ಎಥೆನಾಲ್ ಇಂಧನದ ಉದ್ದೇಶ ಇಂಧನ ಭದ್ರತೆಯನ್ನು ಬಲಪಡಿಸುವುದಾದರೂ, ಅನುದ್ದೇಶಿತ ಪರಿಣಾಮಗಳನ್ನು ನಿವಾರಿಸಲು ಅದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಇ20 ಇಂಧನದಲ್ಲಿ ವ್ಯಾಪಕ ಸಮಸ್ಯೆಗಳು ಕಳೆದ ವರ್ಷ ದೇಶಾದ್ಯಂತ 37,000ಕ್ಕೂ ಅಧಿಕ ಪೆಟ್ರೋಲ್ ವಾಹನಗಳ ಮಾಲಕರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. 2022ರಲ್ಲಿ ಅಥವಾ ಅದಕ್ಕಿಂತಲೂ ಮೊದಲು ಖರೀದಿಸಲಾದ ವಾಹನಗಳ ಪೈಕಿ ಶೇ. 28 ವಾಹನಗಳು 2025ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸವೆತ ಮತ್ತು ದುರಸ್ತಿಗೆ ಒಳಗಾಗಿರುವುದು ಈ ಸಮೀಕ್ಷೆಯಲ್ಲಿ ಬಹಿರಂಗಗೊಂಡಿತು. ಮುಖ್ಯವಾಗಿ ಇಂಜಿನ್, ಇಂಧನ ಕೊಳವೆಗಳು, ಟ್ಯಾಂಕ್ಗಳು ಮತ್ತು ಕಾರ್ಬ್ಯುರೇಟರ್ಗಳು ಹೆಚ್ಚಿನ ಪ್ರಮಾಣದ ಸವೆತಕ್ಕೆ ಒಳಗಾಗಿದ್ದವು. ಅದೂ ಅಲ್ಲದೆ, 2022ರಲ್ಲಿ ಅಥವಾ ಅದಕ್ಕಿಂತಲೂ ಮೊದಲು ಖರೀದಿಸಲಾಗಿರುವ ಮೂರನೇ ಎರಡರಷ್ಟು ವಾಹನಗಳ ಇಂಧನ ಕ್ಷಮತೆ ಕುಸಿದಿದೆ ಎನ್ನುವುದೂ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ‘‘ಎಥೆನಾಲ್ ವಾಹನಗಳಿಗೆ ಹೊಂದಿಕೆಯಾಗುವ ಇಂಧನ ಎನ್ನುವುದು ಸಮರ್ಪಕವಾಗಿ ಸಾಬೀತಾಗಿದೆ. ಆದರೆ, ವಾಹನಗಳ ಇಂಧನ ಕೊಳವೆಯಲ್ಲಿ ರಬ್ಬರ್ ಭಾಗಗಳು ಇರಬಾರದು. ಯಾಕೆಂದರೆ ಇವುಗಳನ್ನು ಎಥೆನಾಲ್ ಕರಗಿಸಬಲ್ಲದು’’ ಎಂದು ವಾಹನ ಕ್ಷೇತ್ರದ ಪರಿಣತ ಮುರಾದ್ ಅಲಿ ಬೇಗ್ ಹೇಳುತ್ತಾರೆ. ಎಥೆನಾಲ್ ಸಾಮಾನ್ಯ ಪೆಟ್ರೋಲಿಯಂ ಇಂಧನಕ್ಕಿಂತ 30 ಶೇ. ಕಡಿಮೆ ಶಕ್ತಿಯನ್ನು ಉತ್ಪಾದಿಸುತ್ತದೆ. ‘‘ಹಾಗಾಗಿ, ವಾಹನಗಳ ವೇಗವನ್ನು ಹೆಚ್ಚಿಸುವಾಗ ಸಮಸ್ಯೆ ತಲೆದೋರಬಹುದು ಹಾಗೂ ಕಾರುಗಳು ಕಡಿಮೆ ಶಕ್ತಿಯನ್ನು ಹೊಂದುತ್ತವೆ’’ ಎಂದು ಅವರು ಹೇಳುತ್ತಾರೆ. ಸುರಕ್ಷಿತ, ಹಸಿರು ಭವಿಷ್ಯಕ್ಕೆ ಇ20 ಅಗತ್ಯವೇ? ಇತರ ದೇಶಗಳಲ್ಲಿ ಎಥೆನಾಲ್ ಇಂಧನ ಯಶಸ್ವಿಯಾಗಿರುವುದರತ್ತ ಭಾರತದಲ್ಲಿ ಇದನ್ನು ಅನುಷ್ಠಾನಕ್ಕೆ ತಂದವರು ಬೆಟ್ಟುಮಾಡುತ್ತಾರೆ. ಉದಾಹರಣೆಗೆ; ಬ್ರೆಝಿಲ್ನ ಎಥೆನಾಲ್ ಇಂಧನ ಕಾರ್ಯಕ್ರಮ ಆರಂಭದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು ಎಂದು ಅವರು ಹೇಳುತ್ತಾರೆ. ಅದನ್ನು ಮುಖ್ಯವಾಗಿ ತಾಂತ್ರಿಕ ಸುಧಾರಣೆಗಳ ಮೂಲಕ ಸರಿಪಡಿಸಲಾಯಿತು. ಆದರೆ, ಈಗ ಬ್ರೆಝಿಲ್ ಇಂಧನ ಕ್ಷೇತ್ರದಲ್ಲಿ ಪ್ರತೀ ವರ್ಷ 10ರಿಂದ 15 ಬಿಲಿಯ ಡಾಲರ್ (ಸುಮಾರು 94,675 ಕೋಟಿಯಿಂದ 1.42 ಲಕ್ಷ ಕೋಟಿ ರೂಪಾಯಿ)ವರೆಗೆ ಉಳಿತಾಯ ಮಾಡುತ್ತಿದೆ. ‘‘ಪ್ರಸಕ್ತ ಜಾಗತಿಕ ವಿದ್ಯಮಾನದಲ್ಲಿ, ಇಂಥ ಕ್ರಮಗಳ ಮೂಲಕ ಸ್ವಾವಲಂಬನೆ ಮತ್ತು ಇಂಧನ ಭದ್ರತೆಯತ್ತ ಮುನ್ನಡೆಯುತ್ತಿರುವ ದೇಶಗಳನ್ನು ವೈಯಕ್ತಿಕ ಮತ್ತು ರಾಜಕೀಯ ನಿಲುವುಗಳನ್ನು ಮೀರಿ ಬೆಂಬಲಿಸಬೇಕಾಗಿದೆ’’ ಎಂದು ಹೊಗೆ ನಿಯಂತ್ರಣ ಸಲಕರಣೆಗಳ ಉತ್ಪಾದಕರ ಸಂಘದ ನೀಲಕಂಠ ಮರಾಠೆ ಹೇಳುತ್ತಾರೆ. ಆದರೂ, ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ, ಅಂದರೆ ಸಾಮಾನ್ಯವಾಗಿ ಶೇ. 15ಕ್ಕೂ ಅಧಿಕ ಪ್ರಮಾಣದಲ್ಲಿ ಮಿಶ್ರಣ ಮಾಡುವಾಗ ತಾಂತ್ರಿಕ ಸಮಸ್ಯೆಗಳು ತಲೆದೋರುವುದನ್ನು ಅವರು ಒಪ್ಪಿಕೊಂಡರು. ‘‘ಎಥೆನಾಲ್ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅದು ಸಂಬಂಧಿತ ಇಂಜಿನ್ ಭಾಗಗಳ ಸವೆತಕ್ಕೆ ಹಾಗೂ ಸೀಲ್ಗಳು ಮತ್ತು ಗ್ಯಾಸ್ಕೆಟ್ಗಳ ಬಿಗಿತಕ್ಕೆ ಕಾರಣವಾಗಬಹುದು. ಇದು ಸೋರಿಕೆ ಮತ್ತು ಒತ್ತಡ ನಷ್ಟಕ್ಕೆ ಕಾರಣವಾಗಬಹುದು. ಇದು ಅಂತಿಮವಾಗಿ ಇಂಜಿನ್ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ’’ ಎಂದು ಅವರು ಹೇಳಿದರು. ಸರಿಹೊಂದುವ ದರ್ಜೆಯ ವಸ್ತುಗಳಿಂದ ತಯಾರಿಸಿದ ಬಿಡಿಭಾಗಗಳನ್ನು ವಾಹನಗಳಿಗೆ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು. ವಿದ್ಯುತ್ ಚಾಲಿತ ವಾಹನಗಳೇ ಆಸರೆ ಶೇ. 20 ಎಥೆನಾಲ್ ಮಿಶ್ರಿತ ಇಂಧನಗಳು ಇಂಗಾಲದ ಡೈ ಆಕ್ಸೈಡ್ ಅನಿಲದ ಹೊರಸೂಸುವಿಕೆಯ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸುತ್ತವೆಯಾದರೂ, ಸಾರಿಗೆ ಕ್ಷೇತ್ರವನ್ನು ಇಂಗಾಲಮುಕ್ತಗೊಳಿಸುವ ಪ್ರಕ್ರಿಯೆಗೆ ವೇಗ ನೀಡಲು ವಿದ್ಯುತ್ ಚಾಲಿತ (ಇವಿ) ವಾಹನಗಳಿಗೆ ಪರಿವರ್ತನೆಯಾಗುವುದು ಅಗತ್ಯವಾಗಿದೆ ಎಂದು ರಾಯ್ಚೌಧರಿ ಅಭಿಪ್ರಾಯಪಡುತ್ತಾರೆ. ಈ ಮೂಲಕ, ಭಾರತದ ದೀರ್ಘಾವಧಿ ಹವಾಮಾನ ಗುರಿಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳುತ್ತಾರೆ. ‘‘ವಾಯು ಮಾಲಿನ್ಯ, ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಮತ್ತು ಭಾರತದಲ್ಲಿ ವಾಹನಗಳಿಗೆ ಬೇಕಾಗುವ ಅಗಾಧ ಪ್ರಮಾಣದ ಇಂಧನ ಸವಾಲನ್ನು ನಿಭಾಯಿಸಲು ಶೂನ್ಯ ಹೊಗೆಯ ಇಲೆಕ್ಟ್ರಿಕ್ ವಾಹನ (ಇವಿ)ಗಳತ್ತ ಕ್ಷಿಪ್ರವಾಗಿ ಹೊರಳುವುದು ಹಾಗೂ ಅದಕ್ಕಾಗಿ ಮಾರ್ಗನಕ್ಷೆಯನ್ನು ಸಿದ್ಧಪಡಿಸುವುದು ಈಗಿನ ಅಗತ್ಯವಾಗಿದೆ’’ ಎಂದು ರಾಯ್ಚೌಧರಿ ಅಭಿಪ್ರಾಯಪಡುತ್ತಾರೆ.
ಫಾರ್ಮ್–6 ಸಲ್ಲಿಕೆ ವಿವಾದ: ಕೋಲ್ಕತ್ತಾದ ಸಿಇಒ ಕಚೇರಿ ಎದುರು TMC - BJP ಕಾರ್ಯಕರ್ತರ ನಡುವೆ ಘರ್ಷಣೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗೆ ಹೊಸ ಹೆಸರುಗಳನ್ನು ಸೇರಿಸಲು ಬಳಸುವ ಫಾರ್ಮ್–6 ಅನ್ನು ಬಿಜೆಪಿ ಬೃಹತ್ ಪ್ರಮಾಣದಲ್ಲಿ ಸಲ್ಲಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮಂಗಳವಾರ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ಎದುರು ಹಿಂಸಾಚಾರ ಭುಗಿಲೆದ್ದಿತು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ನಡೆಯಿತು. ಫಾರ್ಮ್–6 ಅರ್ಜಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಲ್ಲಿಸುವ ಮೂಲಕ ಅನಿವಾಸಿಗಳು ಮತ್ತು ಹೊರಗಿನವರನ್ನು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಈ ವಿಚಾರದಿಂದ ಕಚೇರಿ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡು, ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಈ ಸಂಬಂಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. “ಅನಿವಾಸಿಗಳು ಮತ್ತು ಹೊರಗಿನವರನ್ನು ಮತದಾರರ ಪಟ್ಟಿಗೆ ಸೇರಿಸಲು ಸಾವಿರಾರು ನಕಲಿ ಫಾರ್ಮ್–6 ಅರ್ಜಿಗಳನ್ನು ಸಲ್ಲಿಸಲಾಗಿದೆ. ಬಿಜೆಪಿ ಏಜೆಂಟ್ಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದು ಮತದಾರರನ್ನು ಹೈಜಾಕ್ ಮಾಡುವ ಪ್ರಯತ್ನ,” ಎಂದು ಅವರು ಆರೋಪಿಸಿದ್ದಾರೆ. “ಇಂತಹ ಕ್ರಮಗಳು ಕಾನೂನುಬಾಹಿರ, ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಆದರೆ, ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್, “ನನ್ನ ಕಚೇರಿಗೆ ಯಾರು ಏನು ತರುತ್ತಾರೆ ಎಂಬುದನ್ನು ನಾನು ಪರಿಶೀಲಿಸಲು ಸಾಧ್ಯವಿಲ್ಲ. ನಾನು ಇಡೀ ರಾಜ್ಯದಲ್ಲಿ ಚುನಾವಣೆ ನಡೆಸಬೇಕಿದೆ, ಅಥವಾ ಇದನ್ನೇ ನೋಡುತ್ತಿರಬೇಕೇ?” ಎಂದು ಪ್ರಶ್ನಿಸಿದ್ದಾರೆ .
500 ಮಿಲಿಯನ್ ಟನ್ ಸರಕು ನಿರ್ವಹಣೆ: ಐತಿಹಾಸಿಕ ಮೈಲಿಗಲ್ಲು ತಲುಪಿದ 'ಅದಾನಿ ಪೋರ್ಟ್ಸ್'
ಭಾರತದ ಅತಿದೊಡ್ಡ ಸಮಗ್ರ ಸಾರಿಗೆ ಸೌಲಭ್ಯ ಮತ್ತು ಪ್ರಮುಖ ಬಂದರು ಅಭಿವೃದ್ಧಿ ಕಂಪನಿಯಾಗಿರುವ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ ಲಿಮಿಟೆಡ್ (APSEZ) 500 ಮಿಲಿಯನ್ ಟನ್ ಸರಕು ನಿರ್ವಹಣೆ ಮಾಡುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ. ಈ ಸಾಧನೆಯು ಕಂಪನಿಯ ಬೆಳವಣಿಗೆಯ ಪಯಣದಲ್ಲಿ ಮಾತ್ರವಲ್ಲದೆ, ದೇಶದ ಮೂಲಸೌಕರ್ಯ ವಿಸ್ತರಣೆ ಮತ್ತು ಜಾಗತಿಕ ವ್ಯಾಪಾರ ವಲಯದಲ್ಲಿನ
ಕರ್ನಾಟಕದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
Karnataka Economy: ಕರ್ನಾಟಕದ ಆರ್ಥಿಕತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ, ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. ಕಳೆದ
ವಿಜಯಪುರ, ಬಾಗಲಕೋಟೆ, ಕಲಬುರಗಿಯಲ್ಲಿ ಬಿಸಿಲ ಝಳ; ಸರ್ಕಾರಿ ಕಚೇರಿಗಳ ಸಮಯದಲ್ಲಿ ಮಹತ್ವದ ಬದಲಾವಣೆ
ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳ ಅವಧಿಗೆ ಅನ್ವಯವಾಗುವಂತೆ ಈ ಜಿಲ್ಲೆಗಳ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯವರೆಗೆ ನಿಗದಿಪಡಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ನಿಗದಿತ ಸಮಯದಲ್ಲಿ ‘ಜೆಜೆಎಂ ಕಾಮಗಾರಿ’ ಅನುಷ್ಠಾನಗೊಳಿಸದ ರಾಜ್ಯ ಸರಕಾರ
ಕೈ ತಪ್ಪಿದ 13 ಸಾವಿರ ಕೋಟಿ ರೂ.ಗೂ ಅಧಿಕ ಕೇಂದ್ರದ ಅನುದಾನ
ಈಗಾಗಲೇ ಜಿಲೆಲಯಲ್ಲಿ ಗ್ಯಾಸ್ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಮೈಸೂರಿನ ಜನತೆಗೆ ಪಾಲಿಕೆ ವಾಹನಗಳ ಮೇಲಿನ ತೆರಿಗೆ, ನೀರಿನ ದರ ಹೆಚ್ಚಳ ಹಾಗೂ ಉದ್ದಿಮೆ ತ್ಯಾಜ್ಯಗಳ ಮೇಲೆ ಶುಲ್ಕವನ್ನು ಹೇರುವ ಮೂಲಕ ತ್ರಿವಳಿ ತೆರಿಗೆ ಹೊರೆಯನ್ನು ಹಾಕುವ ನಿರ್ಧಾರ ಕೈಗೊಂಡಿದೆ. ಈ ಎಲ್ಲಾ ತೆರಿಗೆ ಹಾಗೂ ಶುಲ್ಕಗಳು ಪ್ರಸಕ್ತ ಆರ್ಥಿಕ ವರ್ಷದಿಂದಲೇ ಜಾರಿಗೆ ಬರಲಿದ್ದು, ಈ ಕುರಿತ ವಿವರ ಇಲ್ಲಿದೆ..
ಹಿಂದಿ ಕಲಿಕೆಯ ಹೇರಿಕೆ: ಕನ್ನಡ ರಾಷ್ಟ್ರೀಯತೆಯನ್ನು ಹಿಂದಿ-ಹಿಂದೂ ಸಾಮ್ರಾಜ್ಯಶಾಹಿಗೆ ಬಲಿಕೊಡುವ ಹುನ್ನಾರ
ಹಿಂದಿ ಕಡ್ಡಾಯ ತೇರ್ಗಡೆಯ ನಿಯಮವನ್ನು ಕಾಂಗ್ರೆಸ್ ತೆಗೆದುಹಾಕಿದ್ದರೂ ಭಾರತವನ್ನು ನಿಜವಾಗಿ ಬಹುಜನರ ಭಾರತ ಮತ್ತು ಬಹುತ್ವ ಭಾರತವನ್ನಾಗಿ ರೂಪಿಸುವುದು ಕಾಂಗ್ರೆಸ್ಗೂ ಅಪಥ್ಯವೇ. ಆದ್ದರಿಂದಲೇ ಹಿಂದಿ ಹೇರಿಕೆಯಿಂದ ಕನ್ನಡವನ್ನು ಉಳಿಸುವ ಭಾಷಾ ಚಳವಳಿ ಈ ದೇಶವನ್ನು ಹಿಂದುತ್ವ ಹಿಟ್ಲರ್ಶಾಹಿಯಿಂದ ಉಳಿಸುವ ಪ್ರಜಾತಾಂತ್ರಿಕ ಸಮರದ ಭಾಗವೇ ಆಗಿದೆ. ಅಗಬೇಕಾಗಿದೆ. ಕರ್ನಾಟಕ ಸರಕಾರ ಎಸೆಸೆಲ್ಸಿ ಹಂತದಲ್ಲಿ ತೃತೀಯ ಭಾಷೆಯಾಗಿ ಹಿಂದಿಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕೆಂಬ ನಿಯಮವನ್ನು ತೆಗೆದುಹಾಕಿದೆ. ಇದು ಸರಿಯಾದ ತೀರ್ಮಾನವೇ ಆಗಿದ್ದರೂ ಕೊನೆ ನಿಮಿಷದಲ್ಲಿ ಈ ತೀರ್ಮಾನ ತೆಗೆದುಕೊಳ್ಳದೆ ವರ್ಷದ ಪ್ರಾರಂಭದಲ್ಲೇ ಈ ತೀರ್ಮಾನ ತೆಗೆದುಕೊಂಡಿದ್ದರೆ ಶೈಕ್ಷಣಿಕವಾಗಿ ಇನ್ನೂ ಸರಿ ಇರುತ್ತಿತ್ತು. ಆದರೆ ಈ ತೀರ್ಮಾನವನ್ನು ಎಂದಿನಂತೆ ನಾಡದ್ರೋಹಿ ಹಿಂದುತ್ವವಾದಿ ಬಿಜೆಪಿ ಇದು ಭಾರತದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ದೇಶದ್ರೋಹಿ ನೀತಿಯೆಂಬಂತೆ ರಾಜಕೀಯವಾಗಿ ಮಾತ್ರವಲ್ಲದೆ ಸೈದ್ಧಾಂತಿಕವಾಗಿಯೂ ವಿರೋಧಿಸುತ್ತಿದೆ. ಕಾಂಗ್ರೆಸ್ ಸರಕಾರ ಹಿಂದಿ ತೇರ್ಗಡೆ ಕಡ್ಡಾಯ ಹಿಂದೆಗೆದುಕೊಂಡಿರುವುದರ ತತ್ಕ್ಷಣದ ರಾಜಕೀ ಕಾರಣಗಳ ಹೊರತಾಗಿ ಸ್ಪಷ್ಟವಾದ ಬಹುತ್ವವಾದಿ ಸೈದ್ಧಾಂತಿಕ ಕಾರಣಗಳು ಇರುವುದಿಲ್ಲವಾದರೂ ಬಿಜೆಪಿಯ ವಿರೋಧ ಮಾತ್ರ ಅದರ ಹಿಂದಿ-ಹಿಂದೂ-ಹಿಂದೂಸ್ಥಾನ್ ಎಂಬ ಸಂವಿಧಾನ ವಿರೋಧಿ, ಫೆಡರಲ್ ತತ್ವ ವಿರೋಧಿ, ಫ್ಯಾಶಿಸ್ಟ್ ರಾಜಕಾರಣದ ಭಾಗವೇ ಆಗಿದೆ. ಮೇಲಾಗಿ ಸಂಘಿಗಳ ಹಿಂದಿ ಎಂದರೆ ಉತ್ತರ ಭಾರತದಲ್ಲಿ ಜನಸಾಮಾನ್ಯರು ಬಳಸುತ್ತಿದ್ದ ಖಡಿಬೋಲಿಯೂ ಅಲ್ಲ. ಹಿಂದೂಸ್ಥಾನಿಯೂ ಅಲ್ಲ. ಅದು ದೇವನಾಗರಿ ಎಂಬ ಸಂಸ್ಕೃತ ಲಿಪಿಯನ್ನು ಬಳಸುವ ಹಾಗೂ ತನ್ನ ಭಾಷಾ ಸಂಪತ್ತಿಗೆ ಇಡಿಯಾಗಿ ಸಂಸ್ಕೃತವನ್ನೇ ನೆಚ್ಚಿಕೊಂಡಿರುವ ಸಂಸ್ಕೃತೀಕರಣಗೊಂಡ, ಬ್ರಾಹ್ಮಣೀಕರಣಗೊಂಡ ಹಿಂದಿ. ಇದು ಹಿಂದೂ ಎಂದರೆ ಬ್ರಾಹ್ಮಣೀಯ ಹಿಂದುತ್ವ ಸಿದ್ಧಾಂತದ ವಿಸ್ತರಣೆ. ಇಂತಹ ಸಂಸ್ಕೃತಗೊಂಡ ಹಿಂದಿಯನ್ನು ದೇಶದ ಭಾಷಾ ಸಂಸ್ಕೃತಿ ಎಂದು ಅಧಿಕೃತಗೊಳಿಸುವುದರ ಹಿಂದೆ ಉಳಿದೆಲ್ಲಾ ಭಾಷೆಗಳನ್ನು, ಆ ಭಾಷಿಕರ ಬದುಕನ್ನು ಮೂಲೆಗುಂಪು ಮಾಡುವ ದೊಡ್ಡ ಸಾಂಸ್ಕೃತಿಕ ರಾಜಕಾರಣ ಸಂವಿಧಾನ ಸಭೆಯಲ್ಲೇ ಪ್ರಾರಂಭವಾಗಿ, ಕಾಂಗ್ರೆಸ್ ರಾಜ್ಯಭಾರದ ಕಾಲದಲ್ಲಿ ಶಾಸನಬದ್ಧವಾಗಿದ್ದರೂ, ಅದು ಇನ್ನಷ್ಟು ಬ್ರಾಹ್ಮಣೀಕರಣಗೊಂಡು ಆಕ್ರಮಣಶೀಲವಾಗಿದ್ದು ಮಾತ್ರ ಹಿಂದೂರಾಷ್ಟ್ರವಾದದ ಹೆಸರಿನಲ್ಲಿ ಸಂಘಿ ಫ್ಯಾಶಿಸ್ಟರು ಅಧಿಕಾರಕ್ಕೆ ಬಂದ ಮೇಲೆ. ಅವರ ಪಿತಾಮಹನಾದ ಸಾವರ್ಕರ್ ಅವರು 1923ರಲ್ಲಿ ಬರೆದ, ಆರೆಸ್ಸೆಸ್ನ ಬೈಬಲ್ ಆದ ‘Essentials Of Hindutva’ ಪುಸ್ತಕದಲ್ಲಿ ಸಂಸ್ಕೃತವನ್ನು ಭಾರತದ ಸಂಸ್ಕೃತಿಯ ಏಕಮಾತ್ರ ವಾಹಕ ಎಂದು ಕರೆದಿದ್ದರು. ಆದರೆ ಈಗಲೇ ಎಲ್ಲರೂ ಸಂಸ್ಕೃತ ಕಲಿಯುವುದು ಕಷ್ಟವಾದ್ದರಿಂದ ಸಂಸ್ಕೃತ ಭೂಯಿಷ್ಟ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವುದು ಭಾರತವನ್ನು ಬ್ರಾಹ್ಮಣೀಕರಿಸುವ ಮತ್ತೊಂದು ಹುನ್ನಾರ. 2020ರಲ್ಲಿ ಬಿಜೆಪಿ ಸರಕಾರ ಜಾರಿ ಮಾಡಿರುವ ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಸಹ ಭಾಷಾ ಕಲಿಕೆಯಲ್ಲಿ ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ಆಡು ಬಳಕೆಯಲ್ಲಿ ಸಂಸ್ಕೃತ ಪದಗಳನ್ನು ಪರಿಚಯಿಸಬೇಕೆಂದು ಶಿಫಾರಸು ಮಾಡಲಾಗಿದೆ. ಹೀಗಾಗಿ ಈ ಸಂಸ್ಕೃತಗೊಂಡ ಹಿಂದಿ ಹೇರಿಕೆ, ಭಾರತವನ್ನು ಬ್ರಾಹ್ಮಣಶಾಹಿ ಆಧಿಪತ್ಯಕ್ಕೆ ಮತ್ತೊಮ್ಮೆ ಒಳಪಡಿಸುವ ಆರೆಸ್ಸೆಸ್-ಬಿಜೆಪಿಗಳ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ನೀತಿಗಳ ಭಾಗವೇ ಆಗಿದೆ. ಈ ‘ಹಿಂದೂ ರಾಷ್ಟ್ರ’ದಲ್ಲಿ ಇತರ ಧರ್ಮಗಳು ಮತ್ತು ಧರ್ಮೀಯರು ಮತ್ತು ಇತರ ಭಾಷೆಗಳು ಮತ್ತು ಭಾಷಿಕರು ಹಿಂದೂ ಧರ್ಮಕ್ಕೆ ಮತ್ತು ಹಿಂದಿ ಭಾಷೆಗೆ ಅಧೀನವಾಗಿ ಬದುಕಬೇಕು ಅಥವಾ ಅದರೊಡನೆ ಲೀನವಾಗಿಬಿಡಬೇಕು. ಇದು ಅವರ ಭವಿಷ್ಯದ ಯೋಜನೆ. ಆದ್ದರಿಂದಲೇ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದಿ ಪ್ರಚಾರ ಇಲಾಖೆಯನ್ನು ಭಾಷೆ ಮತ್ತು ಸಂಸ್ಕೃತಿ ಇಲಾಖೆಯ ಭಾಗವಾಗಿಡದೆ ಗೃಹ ಇಲಾಖೆಯ ಭಾಗವನ್ನಾಗಿ ಮಾಡಲಾಗಿದೆ. 1965ರಲ್ಲೊಮ್ಮೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಕಡ್ಡಾಯಗೊಳಿಸಲು ಹೋಗಿ ಹೀನಾಯವಾಗಿ ರಾಜಕೀಯ ಸೋಲನ್ನು ಅನುಭವಿಸಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಹಿಂದುತ್ವದ ಅಜೆಂಡಾದ ಮೇಲೆ ಅಧಿಕಾರಕ್ಕೆ ಬಂದ ಮೇಲೆ ತನ್ನ ಇತರ ಎಲ್ಲಾ ಹಿಂದೂ ಹಿಟ್ಲರ್ಶಾಹಿ ಅಜೆಂಡಾಗಳ ಜೊತೆಗೆ ಬಹಿರಂಗ ಹಿಂದಿ ಹೇರಿಕೆಯ ಕಾರ್ಯಕ್ರಮಗಳನ್ನು ತೀವ್ರವಾಗಿ ಪ್ರಾರಂಭಿಸಿದೆ. ಮೇಲ್ನೋಟಕ್ಕೆ ಅನ್ಯ ದೇಶೀಯ ಇಂಗ್ಲಿಷ್ ಬದಲು ‘ಸ್ವದೇಶಿ’ ಹಿಂದಿ ಎಂದು ಹಿಂದಿ ಹೇರಿಕೆಯನ್ನು ಮಾಡುತ್ತಿದೆ. ಹಾಗೆ ನೋಡಿದರೆ ಹಿಂದಿಯೇತರ ಭಾಷಿಕರಿಗೆ ಇಂಗ್ಲಿಷ್ ಎಷ್ಟು ಅನ್ಯ ದೇಶೀಯವೋ ಅಷ್ಟೇ ಮಟ್ಟಿಗೆ ಹಿಂದಿಯೂ ಅನ್ಯ ದೇಶೀಯವೇ. ಉದಾಹರಣೆಗೆ ಭಾರತೀಯ ಭಾಷಾ ಲೋಕದಲ್ಲಿ ದ್ರಾವಿಡ ಭಾಷಾ ಕುಟುಂಬಗಳ ಲೋಕ ಸಂಸ್ಕೃತ ಭಾಷಾ ಲೋಕಕ್ಕಿಂತ ಸಂಪೂರ್ಣ ಅನ್ಯವೂ ಮತ್ತು ಪರಕೀಯವೂ ಆಗಿದೆ. ದ್ರಾವಿಡ ಭಾಷಾ ಲೋಕದ ಮೇಲೆ ಹಿಂದಿ ಹೇರುವುದು ಸಂಸ್ಕೃತ ಹಿಟ್ಲರ್ ಶಾಹಿಯ ಭಾಷಿಕ ವಸಾಹತೀಕರಣ ಯೋಜನೆಯ ಭಾಗವಾಗಿದೆ. ಆದ್ದರಿಂದಲೇ ಹಿಂದಿಯ ಯಾಜಮಾನಿಕೆಯನ್ನು ನ್ಯೂ ನಾರ್ಮಲ್ ಮಾಡುವ ಯಾವ ಪ್ರಯತ್ನಗಳನ್ನೂ ಈ ಭಾರತೀಯ ನಾಝಿಗಳು ಬಿಟ್ಟುಕೊಡುತ್ತಿಲ್ಲ. ಬಹುಭಾಷಿಕ ಭಾರತದ ಮೇಲೆ ಆಡಳಿತಾತ್ಮಕವಾಗಿ ಹಿಂದಿ ಹೇರಲು ಸಾಂವಿಧಾನಾತ್ಮಕ ತೊಡಕಿರುವುದರಿಂದ, ಆರೆಸ್ಸೆಸ್-ಬಿಜೆಪಿ ಸರಕಾರ ಹುಸಿ ರಾಷ್ಟ್ರೀಯತೆಯ ಪ್ಯಾಕೇಜಿನಲ್ಲಿ ಹಿಂದಿಯನ್ನು ಹೇರುತ್ತಿದೆ. ಅದಕ್ಕಾಗಿ ಅದು ಹಲವಾರು ಸುಳ್ಳುಗಳನ್ನು ಹೇಳುತ್ತಿದೆ: ಅ) ಹಿಂದಿಯು ಇತರ ದೇಶೀಯ ಭಾಷೆಗಳಂತೆ ಒಂದು ಭಾಷೆ ಮಾತ್ರವಲ್ಲ, ಹಿಂದಿ ರಾಷ್ಟ್ರ ಭಾಷೆ. ಆ) ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಆಡುವ ಭಾಷೆ ಇ) ಒಂದು ದೇಶಕ್ಕೆ ಒಂದೇ ಭಾಷೆ ಇದ್ದರೆ ವಿಶ್ವಮಾನ್ಯವಾಗಬಹುದು..ಇತ್ಯಾದಿ. ಇದರ ಜೊತೆಗೆ ‘‘ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕು’’ ಎಂದು ಹೇಳುತ್ತಿದೆ. ಆದರೆ ಇವೆಲ್ಲವೂ ಹಸಿಸುಳ್ಳು ಮತ್ತು ಅರ್ಧಸತ್ಯಗಳಿಂದ ಕೂಡಿದ ಪ್ರಚಾರವಾಗಿದೆ ಹಾಗೂ ಅವೈಜ್ಞಾನಿಕ, ಅಪ್ರಜಾತಾಂತ್ರಿಕ ಮತ್ತು ವಿದ್ಯಾರ್ಥಿ-ಶಿಕ್ಷಣ ವಿರೋಧಿ ಪ್ರಸ್ತಾವಗಳೂ ಆಗಿವೆ. ಹಿಂದಿ ರಾಷ್ಟ್ರಭಾಷೆಯಲ್ಲ ಮೊದಲನೆಯದಾಗಿ ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರಭಾಷೆಯೆಂಬ ಪರಿಕಲ್ಪನೆಯೇ ಇಲ್ಲ. ಏಕೆಂದರೆ ಅಖಂಡ ಭಾರತದ ವಿಭಿನ್ನ ಜನಜೀವನದಲ್ಲಿ ಹಾಗೂ ನಾಗರಿಕತೆಯಲ್ಲಿ ಹಲವು ಸಾಮ್ಯತೆಗಳಿರುವುದು ನಿಜ. ಆದರೆ ಒಂದು ಆಧುನಿಕ ಅರ್ಥದಲ್ಲಿ ಭಾರತವು ಎಂದಿಗೂ ಒಂದು ರಾಷ್ಟ್ರೀಯತೆಯೂ ಆಗಿರಲಿಲ್ಲ. ರಾಷ್ಟ್ರವೂ ಆಗಿರಲಿಲ್ಲ. ಆದ್ದರಿಂದಲೇ ಇಡೀ ಭಾರತಕ್ಕೆ ಒಂದು ಎಂಬ ಯಾವ ರಾಷ್ಟ್ರಭಾಷೆಯೂ ವಿಕಸಿತಗೊಳ್ಳಲಿಲ್ಲ. ಹಾಗೆ ನೋಡಿದರೆ ಭಾರತ ಎಂಬ ಈ ಉಪಖಂಡದಲ್ಲಿ ಕನ್ನಡ, ತಮಿಳು, ಬಂಗಾಳಿ, ತೆಲುಗು, ಮರಾಠಿಯಂಥ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೇ ಹೊರತು ಹಿಂದಿಗಲ್ಲ. ವಾಸ್ತವವಾಗಿ ಈಗ ನಾವು ಬಳಸುತ್ತಿರುವ ದೇವನಾಗರಿ ಲಿಪಿಯ ಮತ್ತು ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿಗೆ ಇರುವುದು ಕೇವಲ 120 ವರ್ಷಗಳ ಇತಿಹಾಸ ಮಾತ್ರ. ಹಾಗೆಯೇ ತಮಿಳು, ತೆಲುಗು, ಬಂಗಾಳಿ ಭಾಷೆಯಾಧಾರಿತ ರಾಷ್ಟ್ರೀಯತೆಗಳು ವಿಕಸನಗೊಂಡು ನೂರಾರು ವರ್ಷಗಳಾಗಿವೆ. ಆದರೆ ಭಾರತ ಎಂಬ ರಾಷ್ಟ್ರದ ಪರಿಕಲ್ಪನೆ ಉಗಮಗೊಂಡಿದ್ದೇ ಬ್ರಿಟಿಷ್ ವಿರೋಧಿ ಹೋರಾಟದ ಪ್ರಕ್ರಿಯೆಯಲ್ಲಿ.. ಅಂದರೆ ಕೇವಲ 200 ವರ್ಷಗಳಿಂದೀಚೆಗೆ. ಹೀಗಾಗಿ ಕರ್ನಾಟಕವು ಭಾರತ ಜನನಿಯ ತನುಜಾತೆಯಲ್ಲ. ಬದಲಿಗೆ ಭಾರತವೇ ಕರ್ನಾಟಕವನ್ನೂ ಒಳಗೊಂಡಂತೆ ಈ ಉಪಖಂಡದ ಹಲವಾರು ರಾಷ್ಟ್ರೀಯತೆಗಳು ಒಟ್ಟುಗೂಡಿ ಜನ್ಮವಿತ್ತ ರಾಷ್ಟ್ರವಾಗಿದೆ. ದೇವನಾಗರಿ ಹಿಂದಿ-ಕೋಮುವಾದದ ತನುಜಾತೆ ಇಂದು ನಮ್ಮ ಸಂವಿಧಾನದಲ್ಲಿ ಬಳಸುತ್ತಿರುವ ಹಿಂದಿ ಭಾಷೆಯ ಹುಟ್ಟೂ ಸಹ ಭಾರತವನ್ನು ಆವರಿಸಿಕೊಂಡ ಕೋಮುವಾದಿ ರಾಜಕಾರಣದ ಫಲಿತಾಂಶವೇ ಆಗಿದೆ. ಹಿಂದಿಯ ಮೂಲ ಆಗಿನ ಮೊಗಲ್ ಸಂಸ್ಥಾನದ ರಾಜಧಾನಿಯಾಗಿದ್ದ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ಸೈನಿಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿದ್ದ ಖರಿಬೋಲಿ ಅಥವಾ ಹಿಂದೂಸ್ಥಾನಿಯಾಗಿದೆ. ಖರಿಬೋಲಿ ಅಂದರೆ ಕಟ್ಟರ್ ಭಾಷೆ ಎಂದರ್ಥ. ಇದು ಒಂದು ರೀತಿಯಲ್ಲಿ ಪರ್ಷಿಯನ್ ಹಾಗೂ ಸ್ಥಳೀಯ ಭಾಷೆಗಳ ಮಿಶ್ರಣವೇ ಆಗಿತ್ತು. ಆದರೆ ದೇಶದ ಕೋಮುವಾದೀ ರಾಜಕಾರಣದ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಖರಿಬೋಲಿಯ ಪರ್ಷಿಯನೀಕರಣ ಹೆಚ್ಚಾಗಿ ಉರ್ದು ಭಾಷೆ ಹುಟ್ಟಿಕೊಂಡು ಪಾಕಿಸ್ತಾನದ ಆಡಳಿತ ಭಾಷೆಯಾಯಿತು. ಹಾಗೆಯೇ ಖರಿಬೋಲಿಯ ಸಂಸ್ಕೃತೀಕರಣ-ದೇವನಾಗರೀಕರಣದ ಮೂಲಕ ಹಿಂದಿ ಹುಟ್ಟುಕೊಂಡಿತು. ಹಾಗೆ ನೋಡಿದರೆ ಸ್ವಾತಂತ್ರ್ಯಾನಂತರದ ಇತ್ತೀಚಿನ ದಶಕಗಳವರೆಗೂ ಹಿಂದಿಯ ಖ್ಯಾತ ಬರಹಗಾರರೆಲ್ಲಾ ಉರ್ದು ವಿದ್ವಾಂಸರೂ ಅಗಿರುತ್ತಿದ್ದರು. ಆದರೆ ಭಾರತದ ಕೋಮುವಾದಿ ರಾಜಕಾರಣ ಭಾಷಿಕ ವಿಶ್ವಕ್ಕೂ ಹರಡಿ ಭಾರತದ ಗುರುತಿಗೆ ಒಂದು ಭಾಷೆಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತು. ಈ ಐತಿಹಾಸಿಕ ಕಾರಣದಿಂದಾಗಿಯೇ ಸಂವಿಧಾನ ರಚನಾ ಸಭೆಯಲ್ಲೂ ಈ ಪ್ರಶ್ನೆ ಗಂಭೀರವಾಗಿ ಚರ್ಚೆಯಾಯಿತು. ಇದರ ಬಗ್ಗೆ ಅಧ್ಯಯನ ಮಾಡಿ ಸಲಹೆ ಕೊಡಲು ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಕೆ.ಎಂ. ಮುನ್ಷಿಯವರ ಸಮಿತಿಯೊಂದನ್ನು ರಚಿಸಲಾಗಿತ್ತು. (ಹಾಗೆ ನೋಡಿದರೆ ಈ ಕೆ.ಎಂ. ಮುನ್ಷಿಯೆಂಬವರು ಭಾರತೀಯ ವಿದ್ಯಾ ಭವನದ ಸಂಸ್ಥಾಪಕರು, ಹಿಂದುತ್ವಾವಾದಿಯೂ ಆಗಿದ್ದರು. 1971ರಲ್ಲಿ ನಿಧನವಾಗುವವರೆಗೆ ಸಂಘಪರಿವಾರದ ವಿಶ್ವ ಹಿಂದೂ ಪರಿಷತ್ತಿನ ಸದಸ್ಯರಾಗಿದ್ದವರು) ಆ ಸಮಿತಿಯು ಭಾರತದಲ್ಲಿ ಯಾವ ಒಂದು ಭಾಷೆಯೂ ಅದರಲ್ಲೂ ಹಿಂದಿ ಭಾಷೆಯು ರಾಷ್ಟ್ರ ಭಾಷೆಯಾಗುವ ಅಗತ್ಯವಿಲ್ಲ, ಸಾಧ್ಯವೂ ಇಲ್ಲ ಎಂದು ವರದಿ ಕೊಟ್ಟಿತು. ರಾಜ್ ಎಂದರೆ ರಾಷ್ಟ್ರವಲ್ಲ! ಈ ಎಲ್ಲಾ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನವು ಹಿಂದಿ ಮತ್ತು ಇಂಗ್ಲಿಷನ್ನು ರಾಜ್ಭಾಷೆಯನ್ನಾಗಿ ಅಂಗೀಕರಿಸಿತು. ರಾಷ್ಟ್ರಭಾಷೆಯಾಗಿ ಅಲ್ಲ. ಸಂವಿಧಾನದ ಆರ್ಟಿಕಲ್ 343ರಿಂದ 351ರವರೆಗಿನ ವಿಧಿಗಳು ಇದನ್ನು ಸ್ಪಷ್ಟಪಡಿಸುತ್ತದೆ. ಅದು ‘‘ದೇವನಾಗರಿ ಲಿಪಿಯಲ್ಲಿ ಬರೆಯಲ್ಪಡುವ ಹಿಂದಿಯನ್ನು ಸರಕಾರದ ಅಧಿಕೃತ ಭಾಷೆಯನ್ನಾಗಿಯೂ, ಮುಂದಿನ 15 ವರ್ಷಗಳವರೆಗೆ ಇಂಗ್ಲಿಷನ್ನು ಸಹ ಹಿಂದಿಯ ಜೊತೆಗೆ ಅಧಿಕೃತ ಭಾಷೆಯನ್ನಾಗಿ ಮುಂದುವರಿಸಬೇಕು’’ ಎಂದು ಸ್ಪಷ್ಟಪಡಿಸುತ್ತದೆ. 1963ರ ಅಧಿಕೃತ ಭಾಷಾ ಮಸೂದೆಯು ಜಾರಿಯಾದ ನಂತರ ಇಂಗ್ಲಿಷನ್ನೂ ಸಹ ಕಾಲಾವಧಿಯ ಮಿತಿಯಲ್ಲದೆ ಅಧಿಕೃತ ಭಾಷೆಯಾಗಿ ಮುಂದುವರಿಸಲು ಆದೇಶಿಸಲಾಗಿದೆ. ಅಷ್ಟು ಮಾತ್ರವಲ್ಲ. ಆರ್ಟಿಕಲ್ 348ರ ಪ್ರಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ವ್ಯವಹಾರದ ಅಧಿಕೃತ ಭಾಷೆ ಇಂಗ್ಲಿಷೇ ಆಗಿದೆ. ಅಲ್ಲದೆ ಎಲ್ಲಾ ಶಾಸನಸಭೆಗಳಲ್ಲೂ ಆಯಾ ರಾಜ್ಯಗಳ ಮಾತೃಭಾಷೆಯೊಂದಿಗೆ ಇಂಗ್ಲಿಷ್ನಲ್ಲೂ ಮಸೂದೆಯನ್ನು ಮಂಡಿಸಬೇಕಿದೆ. ಹಾಗೂ ಕೇಂದ್ರದ ಸಂಸತ್ನಲ್ಲಿ ಮಸೂದೆಗಳು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಂಡಿಸಬೇಕಾಗುತ್ತದೆ. ಆದರೆ ಮಸೂದೆಗಳ ಮೂಲ ಅಧಿಕೃತ ರೂಪ ಇಂಗ್ಲಿಷೇ ಆಗಿದ್ದು ಹಿಂದಿ ಅದರ ಅನುವಾದವಾಗಿರುತ್ತದೆ. ಹೀಗೆ ಸಾರಾಂಶದಲ್ಲಿ ಹಿಂದಿಯು ಸರಕಾರಗಳ ನಡುವಿನ ಮತ್ತು ಸರಕಾರ ಹಾಗೂ ಹಿಂದೀ ಭಾಷಿಕ ಜನರ ನಡುವಿನ ಸಂಪರ್ಕದ ಅಧಿಕೃತ ಭಾಷೆಯಾಗಿದೆಯೇ ವಿನಾ ಸಂವಿಧಾನದಲ್ಲಿ ಎಲ್ಲೂ ಅದನ್ನು ರಾಷ್ಟ್ರಭಾಷೆಯೆಂದು ಹೆಚ್ಚುಗಾರಿಕೆಯನ್ನು ನೀಡಿಲ್ಲ. ಗುಜರಾತ್ ಹೈಕೋರ್ಟ್ನ ತೀರ್ಮಾನ ಅಷ್ಟು ಮಾತ್ರವಲ್ಲ. ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿ ಎಲ್ಲಾ ಮಾರಾಟದ ಸರಕುಗಳ ಮೇಲೆ ಕಡ್ಡಾಯವಾಗಿ ಅದರ ವಿವರಗಳನ್ನು ಹಿಂದಿಯಲ್ಲಿ ನಮೂದಿಸಬೇಕೆಂದು ಆಗ್ರಹಿಸಿ 2010ರಲ್ಲಿ ಸುರೇಶ್ ಕಚ್ಚಡಿಯಾ ಎಂಬವರು ಗುಜರಾತಿನ ಹೈಕೋರ್ಟ್ನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ದ್ವಿಸದಸ್ಯ ಪೀಠವು ಹಿಂದಿಯು ಭಾರತದ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲವೆಂದೂ ಹಾಗೂ ರಾಷ್ಟ್ರಭಾಷೆಯೆಂಬ ವರ್ಗೀಕರಣವೇ ಸಂವಿಧಾನದಲ್ಲಿಲ್ಲವೆಂದು ಸ್ಪಷ್ಟವಾದ ತೀರ್ಮಾನ ನೀಡಿದೆ. ಇದಲ್ಲದೆ ಸಂವಿಧಾನದ 8ನೇ ಶೆಡ್ಯೂಲಿನಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಅಸ್ಸಾಮಿ ಇನ್ನಿತರ 22 ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಅದರಲ್ಲಿ ಹಿಂದಿ ಭಾಷೆ ಕೂಡ ಇಪ್ಪತ್ತೆರಡರಲ್ಲಿ ಒಂದು ಅಷ್ಟೇ. ಈ ಎಲ್ಲಾ ಭಾಷೆಗಳನ್ನು ಅಭಿವೃದ್ಧಿ ಮಾಡಲು ಸರಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಸಂವಿಧಾನವು ನಿರ್ದೇಶನವನ್ನೂ ನೀಡಿದೆ. ಹೀಗೆ ರಾಜ್ ಭಾಷಾ ಮತ್ತು ಶೆಡ್ಯೂಲ್ 8ರ ಭಾಷೆ ಎಂಬ ಎರಡು ವರ್ಗೀಕರಣಗಳನ್ನು ಬಿಟ್ಟರೆ ನಮ್ಮ ಸಂವಿಧಾನದಲ್ಲೆಲ್ಲೂ ರಾಷ್ಟ್ರ ಭಾಷೆಯೆಂಬ ವರ್ಗೀಕರಣವಿಲ್ಲ. ಶೆಡ್ಯೂಲ್-8-ಹಿಂದಿ ವಸಾಹತುಶಾಹಿಯ ಅಸ್ತ್ರ? ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯನ್ನಾಗಿ ಹೇರಲು ಅಮಿತ್ ಶಾ ಹಾಗೂ ಇತರ ಆರೆಸ್ಸೆಸಿಗರೆಲ್ಲರೂ ಬಳಸುವ ಮತ್ತೊಂದು ವಾದವೆಂದರೆ ಹಿಂದಿಯನ್ನು ಭಾರತದಲ್ಲಿ ಅತಿ ಹೆಚ್ಚು ಜನ ಬಳಸುತ್ತಾರೆ ಎಂಬುದು. 2011ರ ಭಾಷಿಕ ಸೆನ್ಸಸ್ನಲ್ಲಿ ಹಿಂದಿ ಮಾತನಾಡುವವರ ಭಾಷೆ ಶೇ.43 ಎಂದು ತೋರಿಸಲಾಗಿರುವುದನ್ನೂ ಸಹ ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ. ಆದರೆ, ಈ ಭಾಷಾ ಸೆನ್ಸಸ್ ಮಾಡುವಾಗ ಜನರನ್ನು ಹಿಂದಿ ತಿಳಿದಿದೆಯೇ ಎಂದು ಕೇಳಲಾಗಿದೆಯೇ ವಿನಾ ಹಿಂದಿ ಮಾತೃಭಾಷೆಯೇ ಅಥವಾ ಮಾತನಾಡಬಲ್ಲರೇ ಎಂದಲ್ಲ. ಎರಡನೆಯದಾಗಿ 1950ರಲ್ಲಿ ಶೇ. 20ರಷ್ಟು ಮಾತ್ರ ಹಿಂದಿ ಭಾಷಿಕರಿದ್ದದ್ದು 2011ರ ವೇಳೆಗೆ ಅದರ ಪ್ರಮಾಣ ಶೇ.43 ಆಗಿದ್ದರ ಹಿಂದೆ ದೊಡ ಭಾಷಿಕ ವಸಾಹತು ರಾಜಕಾರಣವಿದೆ. ಉದಾಹರಣೆಗೆ, ಉತ್ತರ ಭಾರತದಲ್ಲಿ ಎಲ್ಲಾ ಕಡೆ ಹಿಂದಿಯೇ ಮಾತೃ ಭಾಷೆ ಎಂಬ ಅಭಿಪ್ರಾಯವನ್ನು ಹರಿಬಿಡಲಾಗಿದೆ. ಆದರೆ 2011ರ ಬಿಹಾರದ ಭಾಷಿಕ ಸೆನ್ಸಸ್ನ ವರದಿಯನ್ನೇ ಗಮನಿಸಿದರೆ ಸಾಕು. ಅದು ಎಂಥಾ ರಾಜಕೀಯ ಮಿಥ್ಯೆ ಎಂಬುದು ಅರ್ಥವಾಗುತ್ತದೆ. ಬಿಹಾರದಲ್ಲಿ ಶೇ.31 ಭಾಗ ಭೋಜ್ಪುರಿಯನ್ನೂ, ಶೇ.25 ಭಾಗ ಮಗಹಿಯನ್ನೂ ಮಾತನಾಡುತ್ತಾರೆ. ಆದರೆ ಶೇ.21 ಭಾಗ ಮಾತ್ರ ಹಿಂದಿ ಮಾತನಾಡುತ್ತಾರೆ. ಆದರೆ ಭೋಜ್ಪುರಿ ಮತ್ತು ಮಗಹಿ ಭಾಷೆಗಳು ಶೆಡ್ಯೂಲ್ 8ರಲ್ಲಿ ಇಲ್ಲ. ಆದರೆ ಭಾಷಿಕ ಸೆನ್ಸಸ್ ನಡೆಸುವಾಗ ತಮ್ಮ ತಮ್ಮ ಮಾತೃಭಾಷೆಯನ್ನು ನೋಂದಾಯಿಸುವಾಗ ಶೆಡ್ಯೂಲ್ 8ರಲ್ಲಿರುವ ಭಾಷೆಯನ್ನು ಮಾತ್ರ ದಾಖಲಿಸಲಾಗುತ್ತದೆ!. ಹೀಗಾಗಿ ಭಾಷಿಕ ಸೆನ್ಸಸ್ನಲ್ಲಿ ಇವರೆಲ್ಲರ ಮಾತೃಭಾಷೆಗಳೂ ಹಿಂದಿಯೆಂದೇ ನೋಂದಾಯಿತವಾಗುತ್ತದೆ.; ಶೆಡ್ಯೂಲ್ 8ರಲ್ಲಿ ಕೇವಲ 25,000 ಜನರು ಮಾತ್ರ ತಮ್ಮ ಮಾತೃಭಾಷೆಯೆಂದು ನೋಂದಾಯಿಸಿಕೊಂಡಿರುವ ಸಂಸ್ಕೃತಕ್ಕೂ ಸ್ಥಾನವಿದೆ. ಆದರೆ ತಲಾ 2 ಕೋಟಿ ಭಾಷಿಕರಿರುವ ಭೋಜ್ಪುರಿ ಮತ್ತು ಮಗಹಿಗಳಿಗೆ ಶೆಡ್ಯೂಲ್ 8ರಲ್ಲಿ ಸ್ಥಾನ ನೀಡಲಾಗಿಲ್ಲ. ಇತ್ತೀಚೆಗೆ ಭೋಜ್ಪುರಿಗೆ ಶೆಡ್ಯೂಲ್ 8ರಲ್ಲಿ ಸ್ಥಾನಮಾನ ಸಿಗಬೇಕೆಂದು ನಡೆಸಿದ ಹೋರಾಟವನ್ನು ಬಿಜೆಪಿ ವಿರೋಧಿಸಿದೆ. ಕಾರಣ ಹಿಂದಿ ಭಾಷಿಕರ ಅಧಿಕೃತ ಸಂಖ್ಯೆ ಕಡಿಮೆಯಗುತ್ತದೆಂದು! ಈ ಕಾರಣದಿಂದಲೇ ಬಿಹಾರ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಕೋಟ್ಯಂತರ ಜನ ಮಾತನಾಡುತ್ತಿದ್ದ ಅವಧಿ ಭಾಷೆಯೂ ಸೆನ್ಸಸ್ನಿಂದ ಕಣ್ಮರೆಯಾಗಿದೆ. ಅದೇ ರೀತಿ ಬುಂದೇಲ್ಖಂಡಿ, ಚತ್ತೀಸ್ಘರಿ, ರಾಜಸ್ಥಾನಿ, ಹರಿಯಾಣ್ವಿ ಭಾಷೆಗಳು ಉತ್ತರ ಭಾರತದ ಕೋಟ್ಯಂತರ ಜನರ ಮಾತೃಭಾಷೆಯಾದರೂ ಅವುಗಳು ಶೆಡ್ಯೂಲ್8ರಲ್ಲಿ ಇಲ್ಲವಾದ್ದರಿಂದ ಅವೆಲ್ಲವೂ ಹಿಂದಿ ಎಂದೇ ನೋಂದಾಯಿತವಾಗುತ್ತವೆ. ಶೆಡ್ಯೂಲ್ 8ರಲ್ಲಿರುವ ಭಾಷೆಗಳಿಗೆ ಮಾತ್ರ ಸರಕಾರದ ಮನ್ನಣೆ ಮತ್ತು ಉತ್ತೇಜನ ಸಿಗುವುದರಿಂದ ಅವು ಸೆನ್ಸಸ್ನಿಂದ ಮಾತ್ರವಲ್ಲದೆ ನಿಧಾನಕ್ಕೆ ಒಂದೆರಡು ಪೀಳಿಗೆಯ ನಂತರದಲ್ಲಿ ಇತಿಹಾಸದಿಂದಲೇ ಮರೆಯಾಗುತ್ತವೆ. ಪ್ರಖ್ಯಾತ ಭಾಷಾ ಶಾಸ್ತ್ರಜ್ಞ ಗಣೇಶ್ ದೇವಿಯವರ ಪ್ರಕಾರ ಭಾರತದಲ್ಲಿ 750 ಭಾಷೆಗಳಿದ್ದು ಇಂತಹ ವಸಾಹತುಶಾಹಿ ಪ್ರಕ್ರಿಯೆಗಳಿಂದಾಗಿ ಈಗಾಗಲೇ 120 ಭಾಷೆಗಳು ಮೃತವಾಗಿವೆ. ಇದಲ್ಲದೆ ಉತ್ತರಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ದಕ್ಷಿಣ ಭಾರತಕ್ಕೆ ಹೋಲಿಸಿ ನೋಡಿದಲ್ಲಿ ಹೆಚ್ಚು. ಹೀಗಾಗಿಯೂ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಭಾಷಿಕರ ಸಂಖ್ಯೆ ಕಡಿಮೆಯಾಗಿ ‘ಹಿಂದಿ ಭಾಷಿಕರ’ ಸಂಖ್ಯೆ ಹೆಚ್ಚಾಗಿ ನಮೂದಾಗಿಬಿಡುತ್ತದೆ. ಆದ್ದರಿಂದಲೇ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದರ ಹಿಂದೆ ಹಾಗೂ ಹಿಂದಿಯನ್ನು ಅತಿ ಹೆಚ್ಚು ಜನರು ಮಾತನಾಡುತ್ತಾರೆ ಎನ್ನುವ ಹಿಂದೆ ಕೋಮುವಾದಿ ಹಾಗೂ ಭಾಷಿಕ ವಸಾಹತುಶಾಹಿ ಹುನ್ನಾರಗಳಿವೆ. ಹಿಂದಿ-ಹಿಂದೂ-ಹಿಂದುತ್ವ-ಹಿಂದೂರಾಷ್ಟ್ರದ ಹುನ್ನಾರ ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಬೇಕು ಎಂದು ಸಲಹೆ ಸ್ವರೂಪದ ಅಜೆಂಡಾವನ್ನು ದೇಶದ ಮುಂದಿಟ್ಟ ಎರಡೇ ದಿನಗಳಲ್ಲಿ ಅಮಿತ್ ಶಾ ಅವರು ಭಾರತಕ್ಕೆ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಏಕೆ ಬೇಕು ಎಂಬ ಪ್ರಶ್ನೆಯನ್ನು ಸಹ ದೇಶದ ಮುಂದಿಟ್ಟಿದ್ದರು. ಎರಡನೇ ಬಾರಿ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರಕಾರ ತನ್ನ ಹಿಂದಿ-ಹಿಂದೂ-ಹಿಂದೂರಾಷ್ಟ್ರದ ಅಜೆಂಡಾವನ್ನು ವೇಗಗತಿಯಲ್ಲಿ ಜಾರಿ ಮಾಡಲು ಹೊರಟಿರುವುದು ಸುಸ್ಪಷ್ಟವಾಗಿದೆ. ಒಂದು ದೇಶ -ಒಂದೇ ಮಾರುಕಟ್ಟೆ- ಅರ್ಥಾತ್ ಅಂಬಾನಿ-ಅದಾನಿ ಅಥವಾ ಮೋದಾನಿ ಮಾರುಕಟ್ಟೆ ಒಂದು ದೇಶ- ಒಂದು ತೆರಿಗೆ ಅರ್ಥಾತ್ ಬಡವರಿಗೆ ಹೆಚ್ಚುವರಿ ತೆರಿಗೆ. ಒಂದು ದೇಶ- ಒಂದು ಧರ್ಮ ಅರ್ಥಾತ್ ಬ್ರಾಹ್ಮಣವಾದಿ ಧರ್ಮ-ಮರ್ಮ ಒಂದು ದೇಶ- ಒಂದು ಭಾಷೆ ಅರ್ಥಾತ್ ದೇವನಾಗರಿ ಲಿಪಿಯ ಹಾಗೂ ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿ ಭಾಷೆ. ಒಂದು ದೇಶ- ಒಂದು ಪಕ್ಷ ಅರ್ಥಾತ್ ಬಿಜೆಪಿ ಪಕ್ಷ. ಒಂದು ದೇಶ- ಒಬ್ಬ ನಾಯಕ ಅರ್ಥಾತ್ ಮೋದಿ (ಅಥವಾ ಶಾ!) ಇದು ಈ ಆಜೆಂಡಾದ ತಾತ್ಪರ್ಯ. ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದದ್ದೂ ಸಹ ಇದೇ ಸರ್ವಾಧಿಕಾರಿ ಪ್ರಣಾಳಿಕೆಯ ಮೇಲೆ. ಹಿಂದಿ ಕಡ್ಡಾಯ ತೇರ್ಗಡೆಯ ನಿಯಮವನ್ನು ಕಾಂಗ್ರೆಸ್ ತೆಗೆದುಹಾಕಿದ್ದರೂ ಭಾರತವನ್ನು ನಿಜವಾಗಿ ಬಹುಜನರ ಭಾರತ ಮತ್ತು ಬಹುತ್ವ ಭಾರತವನ್ನಾಗಿ ರೂಪಿಸುವುದು ಕಾಂಗ್ರೆಸ್ಗೂ ಅಪಥ್ಯವೇ. ಆದ್ದರಿಂದಲೇ ಹಿಂದಿ ಹೇರಿಕೆಯಿಂದ ಕನ್ನಡವನ್ನು ಉಳಿಸುವ ಭಾಷಾ ಚಳವಳಿ ಈ ದೇಶವನ್ನು ಹಿಂದುತ್ವ ಹಿಟ್ಲರ್ಶಾಹಿಯಿಂದ ಉಳಿಸುವ ಪ್ರಜಾತಾಂತ್ರಿಕ ಸಮರದ ಭಾಗವೇ ಆಗಿದೆ. ಅಗಬೇಕಾಗಿದೆ.
Adani: 2026ರಲ್ಲಿ 5GW ಗುರಿ ತಲುಪಿದ ಅದಾನಿ ಗ್ರೀನ್ ಎನರ್ಜಿ: ಗ್ರೀನ್ಫೀಲ್ಡ್ ವಿಸ್ತರಣೆಯಲ್ಲಿ ಜಾಗತಿಕ ಮುಂಚೂಣಿ
Adani: ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ 2025-26ರ ಆರ್ಥಿಕ ವರ್ಷದಲ್ಲಿ 5 ಗಿಗಾವ್ಯಾಟ್ಗಳಿಗಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿದೆ. ಇದು ಚೀನಾದ ಹೊರಗೆ ಜಾಗತಿಕವಾಗಿ ಅತಿ ಹೆಚ್ಚು ವಾರ್ಷಿಕ ಗ್ರೀನ್ಫೀಲ್ಡ್ ವಿಸ್ತರಣೆ ಯೋಜನೆಗಳಲ್ಲಿ ಒಂದಾಗಿದೆ. ಕಂಪನಿಯು ಈ ವರ್ಷದಲ್ಲಿ ಒಟ್ಟು 5,051 ಮೆಗಾವ್ಯಾಟ್ಗಳ ಸಾಮರ್ಥ್ಯವನ್ನು ಹೆಚ್ಚಳ ಮಾಡಿದೆ. ಇದು ಭಾರತದ

29 C