ಹರಿಯಾಣದಲ್ಲಿ 1,500 ಕೋಟಿ ರೂ.ಗಳ ವರ್ಕ್ ಸ್ಲಿಪ್ ‘ಹಗರಣ’ ಬಯಲಾಗಿದ್ದು ಹೇಗೆ?
ಹರಿಯಾಣ ಕಾರ್ಮಿಕ ಸಚಿವ ಅನಿಲ್ ವಿಜ್ ಅವರು ಸ್ವತಃ ಮುಖ್ಯಸ್ಥರಾಗಿರುವ ಇಲಾಖೆಯೊಳಗೆ 1,500 ಕೋಟಿ ರೂ.ಗಳ ಬೃಹತ್ ಹಗರಣವೊಂದು ನಡೆದಿದೆ. ಆಪಾದಿತ ಹಗರಣವು ನಿರ್ಮಾಣ ಕಾರ್ಮಿಕರ ಕೆಲಸದ ರಸೀದಿಗಳು (Work Slip) ಮತ್ತು ನೋಂದಣಿ ಪ್ರಮಾಣಪತ್ರಗಳು, ಈ ದುರ್ಬಲ ಕಾರ್ಮಿಕ ಗುಂಪಿನ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಕೇಂದ್ರ ದಾಖಲೆಗಳನ್ನು ಒಳಗೊಂಡಿದೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಗುರುವಾರ ಈ ವಿಷಯದ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಆಪಾದಿತ ಹಗರಣ ಹೇಗೆ ಬಯಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು, ಮೊದಲಿಗೆ ಕೆಲಸದ ರಸೀದಿಗಳು ಮತ್ತು ನೋಂದಣಿ ಪ್ರಮಾಣಪತ್ರಗಳು ಕಾರ್ಮಿಕರಿಗೆ ಯಾವ ರೀತಿಯ ಪ್ರಯೋಜನ ನೀಡುತ್ತವೆ ಎಂಬುದನ್ನು ನೋಡೋಣ. ►ನಿರ್ಮಾಣ ಕಾರ್ಮಿಕರಿಗೆ ಕೆಲಸದ ರಸೀದಿಗಳು ಮತ್ತು ನೋಂದಣಿ ಪ್ರಮಾಣಪತ್ರಗಳು ಏಕೆ ಮುಖ್ಯ? ಭಾರತದಲ್ಲಿ ನಿರ್ಮಾಣ ಕಾರ್ಮಿಕರು ಸಾಮಾನ್ಯವಾಗಿ ಅಸಂಘಟಿತ ಕಾರ್ಮಿಕ ವರ್ಗದವರಾಗಿದ್ದಾರೆ. ಇವರು ಕೆಲಸದ ಭದ್ರತೆಯನ್ನು ಹೊಂದಿರುವುದಿಲ್ಲ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಶಾಸನಬದ್ಧ ಸಂಸ್ಥೆಯಾಗಿದ್ದು, ಅವರಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ನಿರ್ವಹಿಸುತ್ತದೆ. ಈ ಯೋಜನೆಗಳಿಗೆ ಅರ್ಹರಾಗಲು, ಒಬ್ಬ ವ್ಯಕ್ತಿ ಮೊದಲು ಕಲ್ಯಾಣ ಮಂಡಳಿಯಲ್ಲಿ ನಿರ್ಮಾಣ ಕಾರ್ಮಿಕನಾಗಿ ನೋಂದಾಯಿಸಿಕೊಳ್ಳಬೇಕು. ಆನಂತರ ವರ್ಷಕ್ಕೆ ಅಥವಾ ತಿಂಗಳಿಗೆ ಕೆಲಸದ ರಸೀದಿಯನ್ನು ಪಡೆಯಬೇಕು. ಇದು ಆ ಕಾರ್ಮಿಕರು ಕನಿಷ್ಠ ನಿರ್ದಿಷ್ಟ ಅವಧಿಗೆ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಪ್ರಮಾಣೀಕರಿಸುತ್ತದೆ. ಈ ಕನಿಷ್ಠ ಅವಧಿ ಸಾಮಾನ್ಯವಾಗಿ ವರ್ಷಕ್ಕೆ 90 ದಿನಗಳು. ನೋಂದಣಿ ಪ್ರಮಾಣಪತ್ರವು ಒಬ್ಬ ವ್ಯಕ್ತಿಯನ್ನು ನಿರ್ಮಾಣ ಕಾರ್ಮಿಕ ಎಂದು ಗುರುತಿಸುತ್ತದೆ. ಆದರೆ ಕೆಲಸದ ರಸೀದಿ ಅವರು ಕನಿಷ್ಠ ಕೆಲಸದ ಅವಶ್ಯಕತೆಯನ್ನು ಪೂರೈಸಿದ್ದಾರೆ ಎಂಬುದಕ್ಕೆ ಸಾಕ್ಷಿ. ಆರ್ಥಿಕ ಬೆಂಬಲ, ಪಿಂಚಣಿ ಮತ್ತು ಶಿಕ್ಷಣ ಸಹಾಯದಂತಹ ಪ್ರಯೋಜನಗಳನ್ನು ಪಡೆಯಲು ಈ ದಾಖಲೆಗಳು ಅಗತ್ಯ. ಸರಳವಾಗಿ ಹೇಳುವುದಾದರೆ, ಕೆಲಸದ ರಸೀದಿಗಳು ಮತ್ತು ಗುರುತಿನ ದಾಖಲೆಗಳು ನಿರ್ಮಾಣ ಕಾರ್ಮಿಕರಿಗೆ ರಾಜ್ಯನಿಧಿಯ ಪ್ರಯೋಜನಗಳನ್ನು ಸಕ್ರಿಯಗೊಳಿಸುವ ಸಾಧನಗಳಾಗಿವೆ. ಕಾರ್ಮಿಕರನ್ನು ಆರ್ಥಿಕ ಅಭದ್ರತೆಯಿಂದ ರಕ್ಷಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ► ಕೆಲಸದ ರಸೀದಿಗಳನ್ನು ಹೇಗೆ ನೀಡಲಾಗುತ್ತದೆ? ಅಧಿಕೃತ ನಿಯಮಗಳ ಅಡಿಯಲ್ಲಿ, ಒಬ್ಬ ಕೆಲಸಗಾರನು ಗುರುತಿನ ಪುರಾವೆ, ವಯಸ್ಸು ಹಾಗೂ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವುದರ ಪುರಾವೆಯೊಂದಿಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ನೋಂದಾಯಿಸಿದ ನಂತರ, ಅವರು ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಉದ್ಯೋಗದಾತರ ಪ್ರಮಾಣಪತ್ರಗಳಂತಹ ಪುರಾವೆಗಳನ್ನು ಒದಗಿಸಬೇಕು. ಇದರ ಆಧಾರದಲ್ಲಿ, ಮಂಡಳಿ ಆ ವರ್ಷಕ್ಕೆ ಅಗತ್ಯವಿರುವ ಕನಿಷ್ಠ ನಿರ್ಮಾಣ ಕಾರ್ಮಿಕ ದಿನಗಳನ್ನು (90 ದಿನಗಳು) ಪೂರ್ಣಗೊಳಿಸಲಾಗಿದೆ ಎಂದು ಸೂಚಿಸುವ ಕೆಲಸದ ರಸೀದಿಯನ್ನು ಸಾಮಾನ್ಯವಾಗಿ ಡಿಜಿಟಲ್ ರೂಪದಲ್ಲಿ ನೀಡುತ್ತದೆ. ಅನೇಕ ಜಿಲ್ಲೆಗಳಲ್ಲಿ ಈ ಕೆಲಸದ ರಸೀದಿಗಳನ್ನು ಆನ್ಲೈನ್ನಲ್ಲಿ ನಮೂದಿಸಲಾಗುತ್ತದೆ. ಪ್ರಮಾಣೀಕರಣಕ್ಕೂ ಮುನ್ನ ಸ್ಥಳ ಪರಿಶೀಲನೆ ಸೇರಿದಂತೆ ಭೌತಿಕ ಪುರಾವೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು. ►ಹರಿಯಾಣದಲ್ಲಿ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಕಾರ್ಮಿಕ ಸಚಿವ ವಿಜ್ ಅವರ ಪ್ರಕಾರ, ಸುಮಾರು ನಾಲ್ಕು ತಿಂಗಳ ಹಿಂದೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೆಲಸದ ರಸೀದಿಗಳಲ್ಲಿ ಅಕ್ರಮಗಳನ್ನು ಗಮನಿಸಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಕಾರ್ಮಿಕರ ಕೆಲಸದ ರಸೀದಿಗಳನ್ನು ಒಬ್ಬನೇ ಅಧಿಕಾರಿ ಭೌತಿಕವಾಗಿ ಪರಿಶೀಲಿಸಿದ್ದಾನೆ ಎಂಬುದು ಪತ್ತೆಯಾಯಿತು. ಅಚ್ಚರಿಯ ಸಂಗತಿಯೆಂದರೆ, ಊಹಿಸಲೂ ಸಾಧ್ಯವಾಗದಷ್ಟು ಕಡಿಮೆ ಸಮಯದಲ್ಲಿ ಈ ಪರಿಶೀಲನೆ ನಡೆದಿದೆ. ಉದಾಹರಣೆಗೆ, ಒಂದು ಪ್ರಕರಣದಲ್ಲಿ ಒಬ್ಬ ಉದ್ಯೋಗಿ ಒಂದೇ ದಿನದಲ್ಲಿ 2,646 ರಸೀದಿಗಳನ್ನು ಪರಿಶೀಲಿಸಿದ್ದಾನೆ. ಅವುಗಳಲ್ಲಿ ಭೌತಿಕ ಸ್ಥಳ ಪರಿಶೀಲನೆಗಳೂ ಸೇರಿವೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ಪ್ರಾಥಮಿಕ ತನಿಖೆ ಆರಂಭಿಸಲಾಯಿತು. ಇದರಿಂದ ವ್ಯಾಪಕ ಅಕ್ರಮಗಳು ಬಹಿರಂಗಗೊಂಡವು. ನಂತರ ಪ್ರತಿ ಜಿಲ್ಲೆಯಲ್ಲಿ ಬಹುಸದಸ್ಯ ಸಮಿತಿಗಳಿಂದ ಮನೆ-ಮನೆಗೆ ಭೌತಿಕ ಪರಿಶೀಲನೆ ನಡೆಸುವಂತೆ ಇಲಾಖೆಯು ಆದೇಶಿಸಿತು. 13 ಜಿಲ್ಲೆಗಳಲ್ಲಿ ನಾಲ್ಕು ತಿಂಗಳು ನಡೆದ ಪರಿಶೀಲನೆಯಲ್ಲಿ, ಆಗಸ್ಟ್ 2023 ರಿಂದ ಮಾರ್ಚ್ 2025ರ ನಡುವೆ ನೀಡಲಾದ ಒಟ್ಟು 5,99,758 ಕೆಲಸದ ರಸೀದಿಗಳಲ್ಲಿ ಕೇವಲ 53,249 ಮಾತ್ರ ಮಾನ್ಯವಾಗಿವೆ. ಅದೇ ರೀತಿ, 2,21,517 “ನೋಂದಾಯಿತ ನಿರ್ಮಾಣ ಕಾರ್ಮಿಕರಲ್ಲಿ” ಕೇವಲ 14,240 ಜನ ಮಾತ್ರ ಕಾನೂನುಬದ್ಧ ಕಾರ್ಮಿಕರು ಎಂಬುದು ಕಂಡುಬಂದಿದೆ. ಅನೇಕ ಸಂದರ್ಭಗಳಲ್ಲಿ ಇಡೀ ಹಳ್ಳಿಗಳನ್ನು ನಕಲಿ ಗುರುತಿನ ಚೀಟಿಗಳೊಂದಿಗೆ ನೋಂದಾಯಿಸಿರುವುದು ಪತ್ತೆಯಾಗಿದ್ದು, ಇಲ್ಲಿ ಹಲವರು ನಿರ್ಮಾಣ ಕೆಲಸದಲ್ಲೇ ತೊಡಗಿಸಿಕೊಳ್ಳದೆ ಕೆಲಸದ ರಸೀದಿಗಳನ್ನು ಪಡೆದಿದ್ದಾರೆ. ►ಸರ್ಕಾರದ ಪ್ರತಿಕ್ರಿಯೆ ಏನು? ಅನಿಲ್ ವಿಜ್ ಅವರು ಇದನ್ನು ಭಾರಿ ಹಗರಣವೆಂದು ಬಣ್ಣಿಸಿದ್ದು, ಸುಮಾರು 1,500 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ. ಒಬ್ಬ ಉದ್ಯೋಗಿ ಸಾವಿರಾರು ಕೆಲಸದ ರಸೀದಿಗಳಿಗೆ ಸಹಿ ಹಾಕಿರುವುದು ಕಂಡುಬಂದಿದ್ದು, ಇದು ಕಾನೂನುಬದ್ಧ ಪರಿಶೀಲನೆಯ ಗತಿಗಿಂತ ಅಸಾಧ್ಯ ವೇಗದಲ್ಲಿದೆ ಎಂದು ಹೇಳಿದ್ದಾರೆ. ಅನರ್ಹ ವ್ಯಕ್ತಿಗಳು ತಮಗೆ ಯಾವುದೇ ಹಕ್ಕಿಲ್ಲದ ಪ್ರಯೋಜನಗಳನ್ನು ಪಡೆಯುತ್ತಿರುವುದು ಲೂಟಿಗಿಂತ ಕಡಿಮೆಯಲ್ಲ ಎಂದು ಹೇಳಿದ ಅವರು, ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಗುರುವಾರ ಮುಖ್ಯಮಂತ್ರಿ ಸೈನಿ ಅವರು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ, ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಬಾಕಿ ಉಳಿದ ಒಂಭತ್ತು ಜಿಲ್ಲೆಗಳನ್ನೂ ಸೇರಿಸಿ ಎಲ್ಲಾ ಜಿಲ್ಲೆಗಳಿಂದ ವರದಿಗಳನ್ನು ಸಂಗ್ರಹಿಸಬೇಕು ಎಂದು ನಿರ್ದೇಶಿಸಿದ್ದಾರೆ. ► ನೋಂದಾಯಿತ ನಿರ್ಮಾಣ ಕಾರ್ಮಿಕರು ಯಾವೆಲ್ಲ ಪ್ರಯೋಜನಗಳಿಗೆ ಅರ್ಹರು? ಹರಿಯಾಣದಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬಗಳು ಮಾತೃತ್ವ ಭತ್ಯೆಯಿಂದ ಶೈಕ್ಷಣಿಕ ನೆರವಿನವರೆಗೆ ವ್ಯಾಪಕ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ. ಮಹಿಳಾ ಕಾರ್ಮಿಕರು ಹಾಗೂ ಕುಟುಂಬದ ಮಹಿಳಾ ಸದಸ್ಯರ ವಿವಾಹಕ್ಕೆ ಸರ್ಕಾರ ಹಣಕಾಸಿನ ನೆರವು ನೀಡುತ್ತದೆ. ಮಾತೃತ್ವ ಭತ್ಯೆ 36,000 ರೂ., ಪಿತೃತ್ವ ಭತ್ಯೆ 21,000 ರೂ., ಮಕ್ಕಳಿಗೆ ವಾರ್ಷಿಕವಾಗಿ 8,000 ರೂ.ವಿನಿಂದ 20,000 ರೂ. ವರೆಗೆ ಶೈಕ್ಷಣಿಕ ನೆರವು, 10 ಮತ್ತು 12ನೇ ತರಗತಿಯಲ್ಲಿ 60%–90% ಅಂಕ ಪಡೆದವರಿಗೆ 21,000 ರಿಂದ ರೂ. 51,000 ವರೆಗೆ ವಿದ್ಯಾರ್ಥಿವೇತನ, ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್ಗಳಿಗೆ ಸಂಪೂರ್ಣ ಶುಲ್ಕ ಮರುಪಾವತಿ ಹಾಗೂ ವಸತಿ ನೆರವು (ರೂ. 1.2 ಲಕ್ಷವರೆಗೆ) ಲಭ್ಯ. ವಿದ್ಯುತ್ ಸ್ಕೂಟರ್ ಖರೀದಿಗೆ ಹೆಣ್ಣುಮಕ್ಕಳಿಗೆ 50,000 ರೂ., ಲ್ಯಾಪ್ಟಾಪ್ ಅನುದಾನ 49,000 ರೂ., ಸೈಕಲ್ ಖರೀದಿಗೆ 5,000 ರೂ., ಉಪಕರಣ ಅನುದಾನ 8,000 ರೂ., ಹೊಲಿಗೆ ಯಂತ್ರಕ್ಕೆ 4,500 ರೂ. ಅನುದಾನ ನೀಡಲಾಗುತ್ತದೆ. ಮದುವೆ ನೆರವು (ಕನ್ಯಾದಾನ ಯೋಜನೆ) ಅಡಿಯಲ್ಲಿ ನೋಂದಾಯಿತ ಕಾರ್ಮಿಕರ ಮೂರು ಹೆಣ್ಣುಮಕ್ಕಳ ಮದುವೆಗೆ ತಲಾ 1,01,000 ರೂ., ಮಹಿಳಾ ಕಾರ್ಮಿಕರ ವಿವಾಹಕ್ಕೆ 50,000 ರೂ., ದೀರ್ಘಕಾಲದ ಕಾಯಿಲೆ ಚಿಕಿತ್ಸೆಗೆ 1 ಲಕ್ಷ ರೂ., ಅಂಗವೈಕಲ್ಯಕ್ಕೆ 1.5 ರಿಂದ 3 ಲಕ್ಷ ರೂ., ವೃದ್ಧಾಪ್ಯ ಪಿಂಚಣಿ 3,500 ರೂ. ವಿಧವಾ ಪಿಂಚಣಿ 3,000 ರೂ. ಕೆಲಸದ ಸ್ಥಳದಲ್ಲಿ ಆಕಸ್ಮಿಕ ಮರಣಕ್ಕೆ 5,15,000 ರೂ.ಪರಿಹಾರ, ಮನೆ ಖರೀದಿ ಅಥವಾ ನಿರ್ಮಾಣಕ್ಕೆ 2 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಹಾಗೂ ನೋಂದಣಿ ಪ್ರೋತ್ಸಾಹವಾಗಿ 1,100 ರೂ. ಸಹ ಲಭ್ಯ.
ಮೋದಿ ಸರಕಾರ ಶುದ್ಧ ಗಾಳಿ ಅಥವಾ ನೀರು ಒದಗಿಸುವಲ್ಲಿ ವಿಫಲವಾಗಿದೆ: ಖರ್ಗೆ
ಹೊಸದಿಲ್ಲಿ, ಜ. 2: ಪ್ರಧಾನಿ ನರೇಂದ್ರ ಮೋದಿ ಅವರು ‘ಜಲಜೀವನ್ ಮಿಷನ್’ ಅನ್ನು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ ಸಂಭವಿಸಿದ ಸಾವಿನ ಕುರಿತು ಅವರು ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ. ಮೋದಿ ಸರಕಾರ ಹಾಗೂ ಬಿಜೆಪಿ ದೇಶಕ್ಕೆ ಶುದ್ಧ ಗಾಳಿ ಅಥವಾ ಶುದ್ಧ ನೀರು ಒದಗಿಸುವಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದರು. ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಸತತ ಎಂಟು ಬಾರಿ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿ ಪಡೆದಿರುವ ಇಂದೋರ್ ನಗರದಲ್ಲಿ ಈ ಘಟನೆ ಸಂಭವಿಸಿರುವುದು ನಾಚಿಕೆಗೇಡಿನ ವಿಷಯ ಎಂದು ಖರ್ಗೆ ಹೇಳಿದ್ದಾರೆ. ಬಿಜೆಪಿಯ ಅಸಮರ್ಥತೆಯಿಂದಾಗಿ ಅಲ್ಲಿನ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಚಿವರನ್ನು ಪ್ರಶ್ನಿಸಿದರೆ ಅವರು ನಿಂದಿಸುತ್ತಾರೆ ಹಾಗೂ ಬೆದರಿಸುತ್ತಾರೆ. ಅಧಿಕಾರದ ಮದದಿಂದ ಬೀಗುತ್ತಿರುವ ಅವರು ಪತ್ರಕರ್ತರನ್ನೇ ದೂಷಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ. ಬಿಜೆಪಿ ಸರಕಾರದ ದುರಾಡಳಿತವನ್ನು ಮುಚ್ಚಿ ಹಾಕಲು ಸಂಪೂರ್ಣ ಆಡಳಿತ ಯಂತ್ರ ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜವಳಿ ನೀತಿಯಲ್ಲಿ ಕೈಮಗ್ಗ ಉದ್ದಿಮೆಗೆ ಉತ್ತೇಜನ: ಸಚಿವ ಶಿವಾನಂದ ಪಾಟೀಲ್
ಬೆಂಗಳೂರು, ಜ.2: ಕೈಮಗ್ಗ ಉತ್ಪನ್ನಗಳ ಉತ್ತೇಜನಕ್ಕೆ ಪೂರಕವಾದ ಅಂಶಗಳನ್ನು ನೂತನ ಜವಳಿ ನೀತಿಯಲ್ಲಿ ಅಳವಡಿಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಶುಕ್ರವಾರ ಮಹಾಲಕ್ಷ್ಮೀ ಲೇಔಟ್ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಜವಳಿ ಮಂತ್ರಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಆಯೋಜಿಸಿರುವ 15 ದಿನಗಳ ರಾಷ್ಟ್ರೀಯ ಕೈಮಗ್ಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸತನ ಅಳವಡಿಸಿಕೊಂಡರೆ ಮಾತ್ರ ಕೈಮಗ್ಗ ಉದ್ಯಮಕ್ಕೆ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ಪೂರಕ ಅಂಶಗಳನ್ನು ಜವಳಿ ನೀತಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು. ನೇಕಾರ ಸಮ್ಮಾನ್ ಯೋಜನೆಯಲ್ಲಿ ನೀಡುತ್ತಿದ್ದ 2 ಸಾವಿರ ರೂ. ಆರ್ಥಿಕ ನೆರವನ್ನು ರಾಜ್ಯ ಸರಕಾರ 5 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿದೆ. 2024-25ನೇ ಸಾಲಿನಲ್ಲಿ 1,17,459 ನೇಕಾರರ ಬ್ಯಾಂಕ್ ಖಾತೆಗಳಿಗೆ 58.69 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. 2025-26ನೇ ಸಾಲಿನಲ್ಲಿ 1.2 ಲಕ್ಷ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರನ್ನು ಈ ಯೋಜನೆಯಲ್ಲಿ ಅಳವಡಿಸಲು 60 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಮೊದಲ ಕಂತಿನಲ್ಲಿ ತಲಾ 2,500 ರೂ.ಗಳಂತೆ 29.99 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ನೇಕಾರರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹದ ದೃಷ್ಟಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ 2,843 ವಿದ್ಯಾರ್ಥಿಗಳಿಗೆ 1.65 ಕೋಟಿ ರೂ. ಹಾಗೂ 2025-26ನೇ ಸಾಲಿನಲ್ಲಿ ಇದುವರೆಗೆ 1,137 ವಿದ್ಯಾರ್ಥಿಗಳಿಗೆ 62.62 ಲಕ್ಷ ರೂ. ನೀಡಲಾಗಿದೆ. ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ಪ್ರತಿಶತ 20ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ಈ ಉದ್ದೇಶಕ್ಕೆ 5.04 ಕೋಟಿ ರೂ., 2025-26ನೇ ಸಾಲಿನಲ್ಲಿ 54.93 ಲಕ್ಷ ರೂ.ಗಳನ್ನು ಸರಕಾರ ಕೈಮಗ್ಗ ನೇಕಾರರ ಸಹಕಾರ ಸಂಘ ಹಾಗೂ ಕೈಮಗ್ಗ ಮಹಾಮಂಡಳಗಳಿಗೆ ನೀಡಲಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು. ವಿದ್ಯುತ್ ಮಗ್ಗಗಳಿಗೆ ಹತ್ತು ಎಚ್ಪಿವರೆಗೆ ಪ್ರತಿಶತ ನೂರರಷ್ಟು ವಿದ್ಯುತ್ ರಿಯಾಯಿತಿ ನೀಡಲಾಗಿದೆ. 10.1 ರಿಂದ 20 ಎಚ್ಪಿ ವರೆಗಿನ ಮಗ್ಗಗಳಿಗೆ ಪ್ರತಿ ಯೂನಿಟ್ಗೆ 1.25 ರೂ.ಗಳಂತೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ ವಿದ್ಯುತ್ ಸಹಾಯ ಯೋಜನೆಗೆ 252.97 ಕೋಟಿ ರೂ. ಗಳನ್ನು ಜವಳಿ ಇಲಾಖೆಯಿಂದ ಇಂಧನ ಇಲಾಖೆಗೆ ಭರಿಸಲಾಗಿದೆ ಎಂದು ಹೇಳಿದರು. ಕಲಬುರಗಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಸಮಗ್ರ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು 390.26 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜವಳಿ ಪಾರ್ಕ್ಗೆ 180 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಗೆ ಪವರ್ ಸ್ಟೇಷನ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ ನಂದಿಕೂರು ಗ್ರಾಮದ ಎಸ್ಟಿಪಿಯಿಂದ 12.09 ಎಂಎಲ್ಡಿ ನೀರು ಪೂರೈಕೆ ಮಾಡಲು ಸಮೀಕ್ಷೆ ಕೈಗೊಂಡಿದ್ದು, ಪೈಪ್ಲೈನ್ ಡಿಸೈಜ್ ಕಾರ್ಯ ಪ್ರಗತಿಯಲ್ಲಿದೆ ಎಂದು ಶಿವಾನಂದ ಪಾಟೀಲ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಕೆ.ಗೋಪಾಲಯ್ಯ, ಕಾವೇರಿ ಹ್ಯಾಂಡ್ಲೂಮ್ ಅಧ್ಯಕ್ಷ ಜೆ.ಬಿ.ಗಣೇಶ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಜವಳಿ ಅಭಿವೃದ್ಧಿ ಆಯುಕ್ತೆ ಕೆ.ಜ್ಯೋತಿ, ಕೆಎಸ್ಟಿಐಡಿಸಿ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಬಾಲಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಾರತೀಯ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಆಗಿ ಮರಳಿದ ಶೋರ್ಟ್ ಮರೀನ್
ಹೊಸದಿಲ್ಲಿ, ಜ. 2: ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ಮುಖ್ಯ ಕೋಚ್, ನೆದರ್ಲ್ಯಾಂಡ್ಸ್ನ ಶೋರ್ಟ್ ಮರೀನ್ ಮತ್ತೆ ತಂಡದ ಮುಖ್ಯ ಕೋಚ್ ಆಗಿ ವಾಪಸಾಗಲಿದ್ದಾರೆ. ಈ ವಿಷಯವನ್ನು ಹಾಕಿ ಇಂಡಿಯಾ ಶುಕ್ರವಾರ ಅಧಿಕೃತವಾಗಿ ಖಚಿತಪಡಿಸಿದೆ. ಮಹಿಳಾ ತಂಡದ ಮುಖ್ಯ ಕೋಚ್ ಆಗಿದ್ದ ಹರೇಂದ್ರ ಸಿಂಗ್ ರಾಜೀನಾಮೆ ನೀಡಿದ ಒಂದು ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಹರೇಂದ್ರ ಸಿಂಗ್ ಕಿರುಕುಳ ನೀಡುತ್ತಾರೆ ಮತ್ತು ಅವರ ತರಬೇತಿ ಪರಿಣಾಮಕಾರಿಯಾಗಿಲ್ಲ ಎಂದು ಆಟಗಾರ್ತಿಯರು ದೂರಿದ ಬಳಿಕ ಅವರು ರಾಜೀನಾಮೆ ನೀಡಿದ್ದರು. ಮರೀನ್ ಉಸ್ತುವಾರಿಯಲ್ಲಿದ್ದ ಭಾರತೀಯ ಮಹಿಳಾ ತಂಡವು 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ನಾಲ್ಕನೇ ಸ್ಥಾನವನ್ನು ಪಡೆದಿತ್ತು. ಹರೇಂದ್ರ ಸಿಂಗ್ ರಾಜೀನಾಮೆಗೆ ಮುನ್ನವೇ ಅವರ ಸ್ಥಾನಕ್ಕೆ ಮರೀನ್ ಅವರನ್ನು ನೇಮಿಸುವ ಕುರಿತು ಮಾತುಕತೆ ನಡೆದಿತ್ತು ಎನ್ನಲಾಗಿದೆ. ಈಗ ಮರೀನ್ ಮೂರು ತಿಂಗಳ ಅವಧಿಯಲ್ಲಿ ತಮ್ಮ ‘ಮ್ಯಾಜಿಕ್’ ಅನ್ನು ಪುನರಾವರ್ತಿಸುವ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಮಾರ್ಚ್ನಲ್ಲಿ ಹೈದರಾಬಾದ್ನಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತೀಯ ಮಹಿಳಾ ತಂಡ ಪಾಲ್ಗೊಳ್ಳಲಿದೆ. ಹಾಕಿ ಇಂಡಿಯಾದೊಂದಿಗೆ ಕೋಚ್ ಸಹಿ ಹಾಕಿರುವ ಗುತ್ತಿಗೆಯಂತೆ, ಅವರ ಎರಡನೇ ಅವಧಿ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ವರೆಗೆ ಇರುತ್ತದೆ. ಅವರು ತಮ್ಮೊಂದಿಗೆ ಹಲವು ಸಹಾಯಕ ಸಿಬ್ಬಂದಿಯನ್ನೂ ಕರೆತಂದಿದ್ದಾರೆ. ಅರ್ಜೆಂಟೀನಾದ ಮಾಜಿ ರಕ್ಷಣಾ ಆಟಗಾರ ಹಾಗೂ ಒಲಿಂಪಿಯನ್ ಮಟಿಯಾಸ್ ವಿಲ್ಲಾ ಎದುರಾಳಿ ಆಟಗಾರರ ಬಲಾಬಲಗಳನ್ನು ವಿಶ್ಲೇಷಿಸುವ ಅನಾಲಿಟಿಕಲ್ ಕೋಚ್ ಆಗಿ ತಂಡವನ್ನು ಸೇರಲಿದ್ದಾರೆ. ವೇನ್ ಲೊಂಬಾರ್ಡ್ ಅತ್ಲೆಟಿಕ್ ಪರ್ಫಾರ್ಮನ್ಸ್ನ ಮುಖ್ಯಸ್ಥರಾಗಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಭಾರತೀಯ ಆಟಗಾರರ ಅಮೋಘ ದೈಹಿಕ ಕ್ಷಮತೆಯ ಯಶಸ್ಸಿನ ಶ್ರೇಯಸ್ಸು ಅವರಿಗೆ ನೀಡಲಾಗಿತ್ತು. ದಕ್ಷಿಣ ಆಫ್ರಿಕಾದ ರೋಡೆಟ್ ಯಿಲ್ ಮತ್ತು ಸಿಯಾರಾ ಯಿಲ್ ವೈಜ್ಞಾನಿಕ ಸಲಹೆಗಾರರಾಗಿ ಲೊಂಬಾರ್ಡ್ ಅವರಿಗೆ ಸಹಾಯ ಮಾಡಲಿದ್ದಾರೆ.
ಉಡುಪಿ: ಕುರ್ಚಿಯಲ್ಲಿ ಕುಳಿತಲ್ಲಿಯೇ ಹೋಂ ನಸ್೯ ಮೃತ್ಯು
ಉಡುಪಿ: ಕುರ್ಚಿಯ ಮೇಲೆ ಕೂತಲ್ಲಿಯೇ ಹೋಮ್ ನರ್ಸೊಬ್ಬರು ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ಗರಡಿರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಹೊಮ್ ನರ್ಸ್ ಪ್ರದೀಪ್ ಅಜ್ಜರಕಾಡು(55) ಎಂದು ಗುರುತಿಸಲಾಗಿದೆ. ಇವರು ತನ್ನ ಬಾಡಿಗೆ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು ಇದೇ ವೇಳೆ ತೀವ್ರ ಅಸ್ವಸ್ಥಗೊಂಡಿದ್ದರೆನ್ನಲಾಗಿದೆ. ತಕ್ಷಣ ತಾಳಿಯರು ನೀಡಿದ ಮಾಹಿತಿಯಂತೆ ಆಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಪ್ರದೀಪ್ ಅವರನ್ನು ಆಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಪರಿಕ್ಷೀಸಿದ ವೈದ್ಯರಿಂದ ಪ್ರದೀಪ್ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತ ವ್ಯಕ್ತಿ ಸಮಾಜಮುಖಿಯಾಗಿದ್ದು, ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೇತ್ರತ್ವ ನಡೆಯುವ ಅನಾಥ ಶವಗಳ ಅಂತ್ಯಸಂಸ್ಕಾರ ನೇರವೆರಿಸುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದರು.
ಜ.3-4: ತಣ್ಣೀರುಬಾವಿ ಮ್ಯೂಸಿಕ್ ಫೆಸ್ಟಿವಲ್; ವಾಹನ ಪಾರ್ಕಿಂಗ್ ಸ್ಥಳ ನಿಗದಿ, ಸಂಚಾರ ನಿಯಮ ಪಾಲನೆಗೆ ಸೂಚನೆ
ಮಂಗಳೂರು: ದ.ಕ. ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ತಣ್ಣೀರುಬಾವಿ ಬೀಚ್ನಲ್ಲಿ ಜ.3 ಮತ್ತು 4ರಂದು ಸಂಜೆ ಮ್ಯೂಸಿಕ್ ಫೆಸ್ಟಿವಲ್, ಕೈಲಾಶ್ ಖೇರ್ ನೈಟ್, ವಿಜಯ ಪ್ರಕಾಶ್ ನೈಟ್ ಕಾರ್ಯಕ್ರಮಗಳು ನಡೆಯಲಿದೆ. ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಕಾರ್ಯಕ್ರಮಗಳು ನಡೆಯುವ ಸಮಯ ಕುದುರೆಮುಖ ಜಂಕ್ಷನ್ನಿಂದ ತಣ್ಣೀರುಬಾವಿ ಬೀಚ್ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಸಾರ್ವಜನಿಕರು ತನ್ನ ವಾಹನಗಳನ್ನು ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಫ್ಲೆಕ್ಸ್ಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು ಹಾಗೂ ಕಾರ್ಯಕ್ರಮ ಪ್ರಾರಂಭವಾಗುವ ಮುಂಚಿತವಾಗಿ ಬಂದು ನಿರ್ಧಿಷ್ಟ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು:- 1. ಫೀಜಾ ಕ್ರಿಕೆಟ್ ಗ್ರೌಂಡ್ (ಹೊಟೇಲ್ ನಿತ್ಯಾಧರ ಮುಂಭಾಗದ ಪಾಕಿರ್ಂಗ್ ಮೈದಾನ) 2. ಡೆಲ್ಟಾ ಮೈದಾನ ಪಾರ್ಕಿಂಗ್ 3. ರಫ್ತಾರ್ ಪಾರ್ಕಿಂಗ್ 4. ಬೆಂಗ್ರೆ ತಣ್ಣೀರುಬಾವಿ ಮಸೀದಿ ಪಾರ್ಕಿಂಗ್ ಸ್ಥಳ 5. ಕಟ್ಟೆ ಗ್ರೌಂಡ್ ಪಾರ್ಕಿಂಗ್ ಸ್ಥಳ 6. ದೋಸ್ತ್ ಗ್ರೌಂಡ್ 7. ಫಾತಿಮ ಚರ್ಚ್ ಪಾರ್ಕಿಂಗ್ 8. ಎ.ಜೆ ಶೆಟ್ಟಿ ರವರ ಗ್ರೌಂಡ್ (ಎಸ್.ಇ.ಝ್ ರಸ್ತೆ) ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸುಲ್ತಾನ್ ಬತ್ತೇರಿಯಿಂದ ಫೇರಿಯನ್ನು ಬಳಸಬಹುದಾಗಿದೆ. ಕಾರ್ಯಕ್ರಮಗಳ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಅನಾವಶ್ಯಕವಾಗಿ ನಿಲ್ಲದೆ ಶಿಸ್ತನ್ನು ಕಾಪಾಡಬೇಕು. ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಲು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೂಚನೆ ನೀಡಿದ್ದಾರೆ.
ಬಳ್ಳಾರಿ | ಮಹಿಳೆಯ ಮೃತ ದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ, ಜ. 2: ನಗರದ ಸತ್ಯಂ ಕಾಲೇಜಿನ ಮುಂಭಾಗದಲ್ಲಿ ಎಚ್ಎಲ್ಸಿ ಉಪ ಕಾಲುವೆಯಲ್ಲಿ ಸುಮಾರು 60ರಿಂದ 65 ವರ್ಷದ ಮೃತ ಮಹಿಳೆಯೊಬ್ಬರ ಮೃತದೇಹ ಜ.2ರಂದು ತೇಲಿಕೊಂಡು ಬಂದಿದ್ದು, ವಾರಸುದಾರರ ಪತ್ತೆಗೆ ಸಹರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ ಅಂದಾಜು 5.4 ಅಡಿ, ಕೆಂಪು ಮೈಬಣ್ಣ, ದುಂಡು ಮುಖ, ಹಸಿರು ಬಣ್ಣದ ಸೀರೆ ಮತ್ತು ಕಪ್ಪು ಬಣ್ಣದ ಕುಪ್ಪಸ, ಎರಡು ಕೈಗಳಿಗೆ ಹಸಿರು ಬಳೆ ಧರಿಸಿರುತ್ತಾರೆ. ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392258100 ಅಥವಾ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ದೂ.08392-276461 ಹಾಗೂ ಮೊ.9480803049 ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ ರವಾನೆ: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಜ.2: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಹಾಗೂ ಅವಹೇಳನಾಕಾರಿ ಕಾಮೆಂಟ್ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಾಣಾವರ ನಿವಾಸಿ ಆಟೋ ಚಾಲಕ ಚಂದ್ರಶೇಖರ್(45) ಹಾಗೂ ದಾವಣಗೆರೆಯ ಸಾಫ್ಟ್ವೇರ್ ಇಂಜಿನಿಯರ್ ನಿತಿನ್(31) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಈ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ಕುಟುಂಬದ ಸದಸ್ಯರ ಕುರಿತು ಅಶ್ಲೀಲ ಕಮೆಂಟ್, ಪೋಸ್ಟ್ಗಳನ್ನು ಮಾಡಲಾಗುತ್ತಿದೆ ಎಂದು ವಿಜಯಲಕ್ಷ್ಮೀ ಆರೋಪಿಸಿದ್ದರು. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಸುಮಾರು 18 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಈ ದೂರಿನನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು. ಸದ್ಯ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಬಡವರು ಮೃತಪಟ್ಟಾಗ ಪ್ರಧಾನಿ ಮೌನ: ರಾಹುಲ್ ಗಾಂಧಿ
ಇಂದೋರ್, ಜ. 2: ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ 10 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರಕಾರವನ್ನು ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಡವರು ಸಾವನ್ನಪ್ಪಿದಾಗ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸುತ್ತಾರೆ ಎಂದು ಅವರು ಆರೋಪಿಸಿದರು. ಮಧ್ಯಪ್ರದೇಶ ದುರಾಡಳಿತದ ಕೇಂದ್ರಬಿಂದು ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದು, ಕೆಮ್ಮಿನ ಸಿರಪ್ ಪ್ರಕರಣ, ಸರಕಾರಿ ಆಸ್ಪತ್ರೆಗಳ ನೈರ್ಮಲ್ಯ ಕೊರತೆ ಮತ್ತು ಈಗ ಕಲುಷಿತ ನೀರಿನಿಂದಾದ ಸಾವುಗಳನ್ನು ಉದಾಹರಿಸಿದರು. ‘‘ಇಂದೋರ್ನಲ್ಲಿ ನೀರಲ್ಲ, ವಿಷವನ್ನೇ ಪೂರೈಕೆ ಮಾಡಲಾಯಿತು. ಆಡಳಿತ ಗಾಢ ನಿದ್ರೆಯಲ್ಲಿತ್ತು,’’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘‘ಪ್ರತಿಯೊಂದು ಮನೆಯಲ್ಲೂ ಶೋಕವಿದೆ. ಬಡವರು ಅಸಹಾಯಕರಾಗಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ದುರಹಂಕಾರದ ಹೇಳಿಕೆ ನೀಡಿದ್ದಾರೆ. ಜನರಿಗೆ ಸಾಂತ್ವನ ಅಗತ್ಯವಿತ್ತು. ಆದರೆ ಸರಕಾರ ಅಹಂಕಾರದಿಂದ ಪ್ರತಿಕ್ರಿಯಿಸಿತು,’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಯಾದಗಿರಿ | ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧ : ನಾಲ್ವಡಗಿಯಲ್ಲಿ AIDSO ನೇತೃತ್ವದಲ್ಲಿ ಪ್ರತಿಭಟನೆ
ಯಾದಗಿರಿ : ಸರ್ಕಾರಿ ಶಾಲೆಗಳನ್ನು ಮುಚ್ಚುವ ಉದ್ದೇಶದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಶುಕ್ರವಾರ ನಾಲ್ವಡಗಿಯ ಶಹಾಪುರ ಗೇಟ್ ಬಳಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ AIDSO ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಅವರು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ರಾಜ್ಯ ಸರ್ಕಾರ ಸುಮಾರು 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಬಡ ಜನ ವಿರೋಧಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಯೋಜನೆಯ ವಿರುದ್ಧ ರಾಜ್ಯಾದ್ಯಂತ ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಪ್ರೇಮಿಗಳು ಧ್ವನಿ ಎತ್ತುತ್ತಿದ್ದಾರೆ. ಕರ್ನಾಟಕದ ಹಿರಿಯ ಸಾಹಿತಿಗಳು ಸಹ ಶಾಲೆಗಳ ಉಳಿವಿಗಾಗಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು “ಒಂದೇ ಒಂದು ಮಗು ಇದ್ದರೂ ಶಾಲೆ ಮುಚ್ಚುವುದಿಲ್ಲ” ಎಂದು ಹೇಳಿಕೆ ನೀಡುತ್ತಿದ್ದರೂ, ವಾಸ್ತವದಲ್ಲಿ ಶಾಲೆ ವಿಲೀನಕ್ಕೆ ಸರ್ಕಾರವೇ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು. ಸ್ವಯಂ ಪ್ರೇರಿತ ವಿಲೀನ ಎನ್ನುವ ಹೆಸರಿನಲ್ಲಿ ಸರ್ಕಾರ ನಯವಾದ ವಂಚನೆ ನಡೆಸುತ್ತಿದೆ. ಕೆಪಿಎಸ್ ಯೋಜನೆ ರೂಪಿಸುವ ಮುನ್ನ ಎಸ್ಡಿಎಂಸಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಜೊತೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಅವರು ದೂರಿದರು. ಎಡಿಬಿ ಬ್ಯಾಂಕ್ ಸಾಲ ಯೋಜನೆ, ಕೆಕೆಆರ್ಡಿಬಿ, ಮೈನಿಂಗ್ ಹಾಗೂ ಸಿಎಸ್ಆರ್ ಹಣ ಬಳಸಿ ಕೆಪಿಎಸ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ನೇರ ಸರ್ಕಾರಿ ಅನುದಾನ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಇದು ಶಿಕ್ಷಣದ ಸಂಪೂರ್ಣ ಖಾಸಗೀಕರಣಕ್ಕೆ ನಡೆಸುತ್ತಿರುವ ಷಡ್ಯಂತ್ರ ಎಂದು ಹೇಳಿದರು. ಸರ್ಕಾರಕ್ಕೆ ನಿಜವಾಗಿಯೂ ಶಿಕ್ಷಣದ ಬಗ್ಗೆ ಕಾಳಜಿ ಇದ್ದರೆ 61,000 ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಿ, ಶಾಲೆಗಳಿಗೆ ಸುಸಜ್ಜಿತ ಕಟ್ಟಡಗಳು ಹಾಗೂ ಶೌಚಾಲಯಗಳನ್ನು ಒದಗಿಸಲಿ. ಆದರೆ ಶಾಲೆಗಳನ್ನು ಮುಚ್ಚಲು ಬಂದರೆ ರಾಜ್ಯದ ಜನತೆ ಒಪ್ಪುವುದಿಲ್ಲ. ಅಗತ್ಯವಿದ್ದರೆ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಮಿತಿ ಸದಸ್ಯ ನಾಗರಾಜ್ ವಹಿಸಿದ್ದರು. ಪ್ರತಿಭಟನೆಯಲ್ಲಿ ಮಲ್ಲಪ್ಪ, ಅಯ್ಯಪ್ಪ, ಮಾಳಿಂಗರಾಯ, ತಿಮ್ಮಪ್ಪ, ಮರೆಪ್ಪ ಸೇರಿದಂತೆ ನಾಲ್ವಡಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಇಂದೋರ್ ದುರಂತ | 10 ವರ್ಷದ ಪ್ರಾರ್ಥನೆ, ಹರಕೆ ಬಳಿಕ ಜನಿಸಿದ ಮಗು ಮೃತ್ಯು
ಸರಕಾರದ ಪರಿಹಾರ ತಿರಸ್ಕರಿಸಿದ ಕುಟುಂಬ
ಇ-ಸ್ವತ್ತು ಆನ್ಲೈನ್ ಅರ್ಜಿ ಸಲ್ಲಿಕೆಯಲ್ಲಿ ಎನ್ಐಸಿ ತಾಂತ್ರಿಕ ದೋಷ ಸರಿಪಡಿಸಲು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜ.2: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು-2025 ಅನ್ನು ಅಧಿಸೂಚನೆ ಹೊರಡಿಸಲಾಗಿದ್ದು, ಈ ನಿಯಮಗಳನ್ವಯ, ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ಮಾರ್ಪಡಿಸಿ ಚಾಲನೆಗೊಳಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ತಂತ್ರಾಂಶದಲ್ಲಿ ಈವರೆಗೂ ಒಟ್ಟು 8886 ಅರ್ಜಿಗಳನ್ನು ಆನ್ಲೈನ್ ಮೂಲಕ ಸ್ವೀಕರಿಸಲಾಗಿದ್ದು, ತಂತ್ರಾಂಶ ಸಿದ್ಧಪಡಿಸಿರುವ ಎನ್.ಐ.ಸಿ ತಂತ್ರಾಂಶದ ದೋಷದಿಂದಾಗಿ ಕೆಲವೊಂದು ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಅವುಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶವನ್ನು ನಿಯಮಗಳನ್ವಯ ಮಾರ್ಪಡು ಮಾಡಲಾಗಿದ್ದು, ಸಾರ್ವಜನಿಕರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಲಾಗಿನ್ ಸೃಜಿಸಲಾಗಿದೆ. ಇ-ಸ್ವತ್ತು 2.0 ತಂತ್ರಾಂಶವನ್ನು ‘ಭೂಮಿ’, ‘ಕಾವೇರಿ’, ‘ಪಂಚತಂತ್ರ’, ‘ಮೋಜಿಣಿ’ ಹಾಗೂ ಎಸ್ಕಾಂಗಳ ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗಿದೆ. ಈ ಸಂಯೋಜನೆಯಿಂದ ತಾಂತ್ರಿಕ ಸಮಸ್ಯೆಗಳು/ಎಪಿಐ ಸಮಸ್ಯೆಗಳು ಉಂಟಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಹಾಯವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈಗಾಗಲೆ ತರಬೇತಿಯನ್ನು ನೀಡಲಾಗಿದ್ದು, ಮತ್ತೊಮ್ಮೆ ಪುನಶ್ಚೇತನ ತರಬೇತಿಯನ್ನು ಆಯೊಜೀಸಲಾಗಿದೆ. ಇ-ಸ್ವತ್ತು 2.0 ತಂತ್ರಾಂಶದಲ್ಲಿ ಸಾರ್ವಜನಿಕ ಪೋರ್ಟಲ್ ಮೂಲಕ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆ-11ಎ ಅಥವಾ ನಮೂನೆ 11-ಬಿ ಗಳನ್ನು ತಾವಿರುವಲ್ಲಿಯೇ ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಇ-ಸ್ವತ್ತು 2.0 ತಂತ್ರಾಂಶದಲ್ಲಿ ಸಾರ್ವಜನಿಕ ಪೋರ್ಟಲ್ ಮೂಲಕ ಪಂಚತಂತ್ರ ತಂತ್ರಾಂಶದಲ್ಲಿನ ಆಸ್ತಿಗಳ ಅರ್ಜಿ, ತೆರಿಗೆ ವ್ಯಾಪ್ತಿಯಿಂದ ಹೊರಗಿನ ಆಸ್ತಿಗಳ ಅರ್ಜಿ, ನಮೂನೆ-11 ಎ/ 11ಬಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಹೊಸ ಬಡವಾಣೆ ಮತ್ತು ಬಹುಮಹಡಿ (ಅಪಾಟ್ಮೆರ್ಂಟ್) ಕಟ್ಟಡಗಳಿಗೆ ಅರ್ಜಿಗಳನ್ನು ಸಲ್ಲಿಸಲು ಇ-ಸ್ವತ್ತು 2.0 ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ, ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಇ-ಸ್ವತ್ತು 2.0 ತಂತ್ರಾಂಶದಲ್ಲಿ ಸಲ್ಲಿಸುವ ಅರ್ಜಿಗಳನ್ನು ನಿಯಮಗಳ ಅನ್ವಯ ಪರಿಶೀಲಿಸಿ ನಮೂನೆಗಳನ್ನು ವಿತರಿಸಲು ಕ್ರಮವಹಿಸಲಾಗುತ್ತಿದ್ದು, ಇಲಾಖೆಯೊಂದಿಗೆ ಸಹಕರಿಸಬೇಕೆಂದು ಪ್ರಿಯಾಂಕ್ ಖರ್ಗೆ ಸಾರ್ವಜನಿಕರನ್ನು ಕೋರಿದ್ದಾರೆ.
ಯಾದಗಿರಿ | ಜ.6ರಂದು ಫ್ರೀಡಂ ಪಾರ್ಕ್ನಲ್ಲಿ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ : ಮರೆಪ್ಪ ಬುಕ್ಕಲ್
ಯಾದಗಿರಿ: ಬೋಧಗಯಾ ಮಹಾಬೋಧಿ ಮಹಾವಿಹಾರವನ್ನು ಬೌದ್ಧರ ಆಡಳಿತಕ್ಕೆ ಒಪ್ಪಿಸಬೇಕು ಹಾಗೂ ಬೋಧಗಯಾ ಟೆಂಪಲ್ ಆಕ್ಟ್–1949ನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದ ವತಿಯಿಂದ ಜ.6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆಯ ಮುಖಂಡ ಮರೆಪ್ಪ ಬುಕ್ಕಲ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿಗೆ ಶಾಂತಿ, ಕರುಣೆ ಮತ್ತು ಪ್ರೀತಿಯ ಸಂದೇಶ ನೀಡಿದ ಭಗವಾನ್ ಬುದ್ಧರ ಪಾವನ ಕ್ಷೇತ್ರವಾದ ಬೋಧಗಯಾದ ಮಹಾಬೋಧಿ ಮಹಾವಿಹಾರವನ್ನು, ಬೋಧಗಯಾ ಟೆಂಪಲ್ ಆಕ್ಟ್–1949 ಎಂಬ ಅಸಂವಿಧಾನಿಕ ಕಾಯ್ದೆಯ ಮೂಲಕ ಬೌದ್ಧರ ಆಡಳಿತದಿಂದ ವಂಚಿಸಿ ಇತರರ ನಿಯಂತ್ರಣಕ್ಕೆ ನೀಡಲಾಗಿದೆ. ಇದು ಬೌದ್ಧ ಸಮುದಾಯದ ಮೇಲೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಸ್ವಾತಂತ್ರ್ಯ ಪೂರ್ವದಿಂದಲೂ ಈ ಕುರಿತು ಹೋರಾಟ ನಡೆಯುತ್ತಿದ್ದರೂ ಇದುವರೆಗೆ ನ್ಯಾಯ ಸಿಕ್ಕಿಲ್ಲ. ಸಂವಿಧಾನದ ಕಾಲಂ 13, 25, 26 ಮತ್ತು 29ರ ಅಡಿಯಲ್ಲಿ ದೊರಕಿರುವ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬೋಧಗಯಾ ಟೆಂಪಲ್ ಆಕ್ಟ್–1949ನ್ನು ರದ್ದುಗೊಳಿಸಿ, ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದರು. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ, ದೇಶದ ಬಿಕ್ಕು ಮಹಾಸಂಘವು ಫೆ.12ರ, 2026ರಂದು “ದೆಹಲಿ ಚಲೋ- ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ” ಎಂಬ ಘೋಷಣೆಯೊಂದಿಗೆ ರಾಷ್ಟ್ರಮಟ್ಟದ ಹೋರಾಟಕ್ಕೆ ಕರೆ ನೀಡಿದೆ ಎಂದರು. ಮನವಿಯಲ್ಲಿ ಬೋಧಗಯಾ ಟೆಂಪಲ್ ಆಕ್ಟ್–1949 ರದ್ದುಪಡಿಸುವುದು, ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಬೌದ್ಧರಿಗೆ ಒಪ್ಪಿಸುವುದು, ಬೋಧಗಯಾ ಆವರಣದ ಅತಿಕ್ರಮಿತ ಜಾಗ ವಾಪಸು ನೀಡುವುದು, ಸನ್ನತಿ ಅಭಿವೃದ್ಧಿ ಪ್ರಾಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ರಚಿಸುವುದು, ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ, ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ, ಬುದ್ಧ ವಿಹಾರಗಳಿಗೆ ಭೂಮಿ ಹಾಗೂ ಮೂಲಸೌಕರ್ಯ ಒದಗಿಸುವುದು ಹಾಗೂ ಅಶೋಕ ಶಿಲಾಶಾಸನಗಳ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸುವಂತೆ ಆಗ್ರಹಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಹೊಸಮನಿ, ನಾಗಣ್ಣ ಕಲ್ಲದೇವನಹಳ್ಳಿ, ಶರಣು ನಾಟೇಕಾರ್, ರಾಹುಲ್ ಹುಲಿಮನಿ, ಡಾ. ಭಗವಂತ ಅನ್ವಾರ, ಕಾಶಿನಾಥ ನಾಟೇಕಾರ್, ಚಂದ್ರಕಾಂತ ಚಲುವಾದಿ, ಮಾಳಪ್ಪ ಕೀರದಳ್ಳಿ ಸೇರಿದಂತೆ ಅನೇಕ ದಲಿತ ಹಾಗೂ ಬೌದ್ಧ ಮುಖಂಡರು ಉಪಸ್ಥಿತರಿದ್ದರು.
ರಾಯಚೂರು : ಯರಮರಸ್ ನೂಲಿ ಗಿರಣಿಯಲ್ಲಿ ಕೆಲಸ ಮಾಡಿದ್ದ ಸುಮಾರು 550 ಕಾರ್ಮಿಕರಿಗೆ ಬಾಕಿ ವೇತನ, ಗ್ರಾಚ್ಯುಟಿ ಹಾಗೂ ಪಿಎಫ್ ಹಣ ಪಾವತಿಸದೆ ವಂಚಿಸಲಾಗಿದ್ದು, ಜೊತೆಗೆ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಹರಾಜು ಮಾಡಿ ಗಂಭೀರ ಅನ್ಯಾಯ ಮಾಡಲಾಗಿದೆ. ಒಂದು ತಿಂಗಳೊಳಗೆ ಪ್ರಕರಣ ಇತ್ಯರ್ಥಗೊಳಿಸದಿದ್ದಲ್ಲಿ ನ್ಯಾಯಾಂಗ ಮೊರೆ ಹೋಗುವುದರ ಜೊತೆಗೆ ಕಾರ್ಮಿಕರ ಅನಿರ್ದಿಷ್ಟ ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರ ಶಿವಕುಮಾರ ಮ್ಯಾಗಳಮನಿ ಎಚ್ಚರಿಕೆ ನೀಡಿದರು. ಅವರು ಮಂಗಳವಾರ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರಿ ಜಮೀನಿನಲ್ಲಿ ಸ್ಥಾಪಿತವಾಗಿದ್ದ ಸಹಕಾರಿ ನೂಲಿ ಗಿರಣಿಯನ್ನು 1997ರಲ್ಲಿ ಮುಚ್ಚಲಾಗಿದ್ದು, ಗಿರಣಿಗೆ ಮಾಲಕತ್ವವೇ ಇಲ್ಲದಿದ್ದರೂ ಸಹಕಾರಿ ಇಲಾಖೆ ಅಧಿಕಾರಿಗಳು 40 ಎಕರೆ 25 ಗುಂಟೆ ಸರ್ಕಾರಿ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಹರಾಜು ಮಾಡಿದ್ದಾರೆ ಎಂದು ಆರೋಪಿಸಿದರು.ಸರ್ವೆ ನಂ.55/1 ರಲ್ಲಿ ಒಂದು ಎಕರೆ, 16ಎ ಯಲ್ಲಿ 35 ಗುಂಟೆ, ಸರ್ಕಾರಿ ಗೈರಾಣಿ 55/2ಸಿ ಯಲ್ಲಿ 6 ಎಕರೆ 13 ಗುಂಟೆ, ಏಗನೂರು ಗ್ರಾಮದ ಸರ್ವೆ ನಂ.254/3/2 ರಲ್ಲಿ 17 ಎಕರೆ 37 ಗುಂಟೆ ಹಾಗೂ ಸರ್ವೆ ನಂ.254/4 ರಲ್ಲಿ 1 ಎಕರೆ 20 ಗುಂಟೆ ಸೇರಿ ಒಟ್ಟು 40 ಎಕರೆ 25 ಗುಂಟೆ ಭೂಮಿ ನೂಲಿ ಗಿರಣಿಗೆ ಮಂಜೂರಾಗಿರಲಿಲ್ಲ ಎಂದು ವಿವರಿಸಿದರು. ಈ ಸರ್ಕಾರಿ ಜಮೀನನ್ನು ಬಸಂತ ಟೆಕ್ಸಟೈಲ್ ಕಂಪನಿ, ಮರ್ಸೆಂಟೈಲ್ ಹಾಗೂ ಮೋಹಿನಿ ಇನ್ಫ್ರಾ ಕಂಪನಿಗಳಿಗೆ ಹರಾಜು ಮಾಡಲಾಗಿದೆ. 2011ರಲ್ಲಿ ಸಹಾಯಕ ಆಯುಕ್ತರು ಈ ಭೂಮಿ ಕರ್ನಾಟಕ ಸರ್ಕಾರಕ್ಕೆ ಸೇರಿದ್ದೆಂದು ದಾಖಲಿಸಿದ್ದರೂ, 2017–18ರಲ್ಲಿ ದೀಪಕ್ ಇನ್ನಾಣಿ ಹೆಸರನ್ನು ಪಹಣಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಆದರೆ ಗಿರಣಿಯ ಕಾರ್ಮಿಕರಿಗೆ ಇಂದಿಗೂ ಬಾಕಿ ವೇತನ, ಗ್ರಾಚ್ಯುಟಿ ಹಾಗೂ ಪಿಎಫ್ ಹಣ ಪಾವತಿಯಾಗಿಲ್ಲ ಎಂದು ದೂರಿದರು. 550 ಕಾರ್ಮಿಕರಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಜಿಲ್ಲಾಮಟ್ಟದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಇ. ನಸದುಲ್ಲಾ, ರುದ್ರಗೌಡ, ಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಳ್ಳಾರಿ ಗುಂಪು ಘರ್ಷಣೆ| ಜನಾರ್ಧನ ರೆಡ್ಡಿಯನ್ನು ಗುರಿಯಾಗಿಸಿ ಗುಂಡು ಹಾರಿಸಲಾಗಿದೆ : ಆರ್.ಅಶೋಕ್ ಆರೋಪ
ಬೆಂಗಳೂರು, ಜ.2: ಬಳ್ಳಾರಿ ಶಾಸಕ ಜನಾರ್ಧನ ರೆಡ್ಡಿಯನ್ನು ಗುರಿಯಾಗಿಟ್ಟುಕೊಂಡು ಗುಂಡು ಹಾರಿಸಲಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಬಳ್ಳಾರಿಯಲ್ಲಿ ಕಳೆದ ರಾತ್ರಿ ನಡೆದ ಗಲಭೆಗೆ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಹಾಗೂ ಬೆಂಬಲಿಗರು ಕಾರಣಕರ್ತರು ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ. ರಾಜಕೀಯವಾಗಿ ಬೆಳೆಯುತ್ತಿರುವ ಜನಾರ್ಧನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ ಎಂದು ದೂರಿದರು. ರೆಡ್ಡಿ ಅವರನ್ನು ಗುರಿಯಾಗಿಟ್ಟುಕೊಂಡು ಗುಂಡು ಹಾರಿಸಲಾಗಿತ್ತು. ಆದರೆ ಅದು ಕಾಂಗ್ರೆಸ್ ಕಾರ್ಯಕರ್ತನಿಗೆ ತಗುಲಿದ್ದರಿಂದ ಆತ ಮೃತಪಟ್ಟಿದ್ದಾನೆ. ಬಳ್ಳಾರಿಯಲ್ಲಿ ವ್ಯಕ್ತಿಯ ಸಾವಿಗೆ ಭರತ್ ರೆಡ್ಡಿಯೇ ಕಾರಣ. ತಕ್ಷಣವೇ ಸರಕಾರ ಗೂಂಡಾ ಕಾಯ್ದೆಯಡಿ ಅವರನ್ನು ಬಂಧಿಸಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ನ್ಯಾಯಾಂಗ ತನಿಖೆ ನಡೆಸಬೇಕು ಜೊತೆಗೆ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲುಗೆ ಸರಕಾರ ರಕ್ಷಣೆ ಕೊಡಬೇಕೆಂದು ಮನವಿ ಮಾಡಿದರು. ನಿನ್ನೆ ರಾತ್ರಿ ರೆಡ್ಡಿಯವರ ಮನೆ ಮುಂದೆ ಗುಂಪು ಕಟ್ಟಿಕೊಂಡು ಬಂದಿದ್ದರು. ಸತೀಶ್ ರೆಡ್ಡಿ, ಜನಾರ್ಧನ ರೆಡ್ಡಿ ಮನೆ ಮುಂದೆನೇ ಕಾಲು ಮೇಲೆ ಕಾಲು ಹಾಕಿ ಕೂತು ಬ್ಯಾನರ್ ಕಟ್ಟಿಸುತ್ತಿದ್ದರು. ಜನಾರ್ದನ ರೆಡ್ಡಿ ಮೇಲೆ ಹಲ್ಲೆ ಮಾಡಬೇಕು, ಅವರನ್ನು ಹತ್ಯೆ ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಕಾಂಗ್ರೆಸ್ನವರು ಬಂದಿದ್ದರು. ಇದು ಪೂರ್ವಯೋಜಿತ ಕೃತ್ಯ ಎಂದು ಅಶೋಕ್ ಆರೋಪಿಸಿದರು. ಈ ಗಲಭೆ ನಡೆದಿದ್ದು ಕಾಂಗ್ರೆಸ್ನಿಂದಲೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮಾತ್ರ ಅಲ್ಲ, ವಿಕೋಪಕ್ಕೆ ಹೋಗಿದೆ. ಇದು ಸರಕಾರಿ ಪ್ರಾಯೋಜಕತ್ವದ ದಾಳಿ ಎಂದು ವಾಗ್ದಾಳಿ ನಡೆಸಿದರು.
ಏ.23, 24ರಂದು ಸಿಇಟಿ 2026; ಆನ್ಲೈನ್ ಅರ್ಜಿ ಸಲ್ಲಿಕೆಗೆ ಈ ದಿನದಿಂದ ಅವಕಾಶ
2026ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 23 ಮತ್ತು 24 ರಂದು ಪರೀಕ್ಷೆ ನಡೆಯಲಿದೆ. ಜನವರಿ 17 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಏಪ್ರಿಲ್ 22 ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಆಧಾರ್ ಮೂಲಕ ಅಭ್ಯರ್ಥಿಗಳ ವಿವರಗಳನ್ನು ಪ್ರಮಾಣೀಕರಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ರಾಯಚೂರು | ಕುಡಿಯುವ ನೀರಿನ ಪೈಪ್ಲೈನ್ ದುರಸ್ತಿಗೆ ಸಮಾಜ ಸೇವಾ ಸಂಘ ಒತ್ತಾಯ
ರಾಯಚೂರು: ನಗರದ ವಾರ್ಡ್ ನಂ.28 ಮತ್ತು 29ರಲ್ಲಿ ಕುಡಿಯುವ ನೀರಿನ ಪೈಪ್ಲೈನ್ಗಳು ಒಡೆದು ಹೋಗಿರುವುದರಿಂದ ಹಾಗೂ ಕಸ ವಿಲೇವಾರಿ ಮತ್ತು ಚರಂಡಿ ಸ್ವಚ್ಛತೆ ಸರಿಯಾಗಿ ನಡೆಯದ ಕಾರಣ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಸಮಾಜ ಸೇವಾ ಸಂಘದಿಂದ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಅವರಿಗೆ ಮನವಿ ಸಲ್ಲಿಸಲಾಯಿತು. ನಗರದ ವಾರ್ಡ್ ನಂ.28 ಮತ್ತು 29ರಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕಲುಷಿತವಾಗಿ ಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಪೈಪ್ಲೈನ್ಗಳಲ್ಲಿ ಉಂಟಾಗಿರುವ ಲೀಕೇಜ್ ಹಾಗೂ ಚರಂಡಿ ಸ್ವಚ್ಛತೆ, ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅದರಂತೆ, ಕೂಡಲೇ ಕುಡಿಯುವ ನೀರಿನ ಪೈಪ್ಲೈನ್ಗಳನ್ನು ದುರಸ್ತಿ ಮಾಡಿಸಿ, ಚರಂಡಿ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆ. ವೀರೇಶ, ರಾಜು, ಖತಲ್, ರಾಘು, ಆಸೀಫ್, ನಿಜಾಮ್, ಕಮೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Hyderabad | ಐಐಟಿ ವಿದ್ಯಾರ್ಥಿಗೆ 2.5 ಕೋಟಿ ರೂ. ವೇತನದ ಆಫರ್
ಹೊಸದಿಲ್ಲಿ, ಜ. 2: ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ (21) ಅವರು 2.5 ಕೋಟಿ ರೂ.ಗಳ ವಾರ್ಷಿಕ ವೇತನದ ಅದ್ಭುತ ಪ್ಯಾಕೇಜ್ ಪಡೆದು ಐಐಟಿ ಹೈದರಾಬಾದ್ ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇದು ಸಂಸ್ಥೆ 2008ರಲ್ಲಿ ಸ್ಥಾಪನೆಯಾದ ಬಳಿಕ ಸ್ವೀಕರಿಸಿರುವ ಅತ್ಯಂತ ದೊಡ್ಡ ಪ್ಯಾಕೇಜ್ ಆಗಿದೆ. ನೆದರ್ಲ್ಯಾಂಡ್ಸ್ನ ಜಾಗತಿಕ ಟ್ರೇಡಿಂಗ್ ಕಂಪೆನಿ ಆಪ್ಟಿವರ್ ಈ ಆಫರ್ ನೀಡಿದೆ. ಎಡ್ವರ್ಡ್ ಜುಲೈನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಂಪೆನಿಯನ್ನು ಸೇರಿಕೊಳ್ಳಲಿದ್ದಾರೆ. ಆಪ್ಟಿವರ್ನಲ್ಲಿ ಎರಡು ತಿಂಗಳ ಬೇಸಿಗೆ ಇಂಟರ್ನ್ಶಿಪ್ ಪೂರ್ಣಗೊಳಿಸಿ ಪೂರ್ವ ನೇಮಕಾತಿ ಆಫರ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಇದರಿಂದ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದ ಇನ್ನೊಬ್ಬ ವಿದ್ಯಾರ್ಥಿಯನ್ನು ಹಿಂದಿಕ್ಕಿದ್ದಾರೆ. ತಮ್ಮ ಯಶಸ್ಸಿಗೆ ಐಐಟಿ ಟ್ಯಾಗ್, ಅನುಕೂಲಕರ ಶೈಕ್ಷಣಿಕ ಪಠ್ಯಕ್ರಮ ಹಾಗೂ ಇಂಜಿನಿಯರಿಂಗ್ನ ಮೊದಲ ವರ್ಷದಿಂದಲೇ ಕೋಡಿಂಗ್ ಮತ್ತು ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ ಮೇಲೆ ಗಮನ ಕೇಂದ್ರೀಕರಿಸಿದ್ದೇ ಕಾರಣ ಎಂದು ವರ್ಗೀಸ್ ತಿಳಿಸಿದ್ದಾರೆ. ಪೂರ್ವ ನೇಮಕಾತಿ ಪ್ರಕ್ರಿಯೆಯಲ್ಲಿ ತಾವು ಸಂದರ್ಶನ ನೀಡಿದ್ದ ಮೊದಲ ಹಾಗೂ ಏಕೈಕ ಕಂಪೆನಿ ಆಪ್ಟಿವರ್ ಆಗಿತ್ತು ಎಂದು ವರ್ಗೀಸ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಹೈದರಾಬಾದ್ ನಲ್ಲಿ ಹುಟ್ಟಿ ಬೆಳೆದ ವರ್ಗೀಸ್, ಏಳರಿಂದ 12ನೇ ತರಗತಿವರೆಗೆ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದರು. 2022ರಲ್ಲಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 1100ನೇ ರ್ಯಾಂಕ್ ಹಾಗೂ ಜೆಇಇ ಅಡ್ವಾನ್ಸ್ಡ್ನಲ್ಲಿ 558ನೇ ರ್ಯಾಂಕ್ ಗಳಿಸಿದ್ದರು. 2025ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ)ಯಲ್ಲಿ ಶೇ. 99.96 ಅಂಕಗಳೊಂದಿಗೆ 120ನೇ ರ್ಯಾಂಕ್ ಪಡೆದಿದ್ದರು. ಎಡ್ವರ್ಡ್ ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವರು ಐಐಟಿ ಹೈದರಾಬಾದ್ ನ ವೃತ್ತಿಜೀವನ ಸೇವೆಗಳ ಕಚೇರಿಯ ಮುಖ್ಯಸ್ಥರಾಗಿದ್ದು, ಪ್ಲೇಸ್ಮೆಂಟ್ ಮತ್ತು ಇಂಟರ್ನ್ಶಿಪ್ಗಳಿಗೆ ಸಂಬಂಧಿಸಿದ ವಿವಿಧ ಸೆಲ್ಗಳ ಎಂಟು ವಿದ್ಯಾರ್ಥಿ ಮ್ಯಾನೇಜರ್ ಗಳು ಹಾಗೂ 250 ಸಂಯೋಜಕರ ತಂಡವನ್ನು ಮುನ್ನಡೆಸಿದ್ದಾರೆ. ಅದಕ್ಕೂ ಮುನ್ನ ಸುಮಾರು 11 ತಿಂಗಳುಗಳ ಕಾಲ ಇಂಟರ್ನ್ಶಿಪ್ ಸೆಲ್ ನ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.
ಕಲುಷಿತ ನೀರು ಸೇವನೆ: ದಂಪತಿಗೆ 10 ವರ್ಷಗಳ ನಂತರ ಜನಿಸಿದ್ದ ಹಸುಗೂಸು ಸಾವು
ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಲುಷಿತ ನೀರಿನಿಂದಾಗಿ ಹಸುಗೂಸು ಜನಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ. ದಂಪತಿಗೆ 10 ವರ್ಷಗಳ ನಂತರ ಈ ಮಗು ಜನಿಸಿತ್ತು. ಭಗೀರಥಪುರ ಪ್ರದೇಶದ ಮರಾಠಿ ಮೊಹಲ್ಲಾದ ಒಂದು ಗಲ್ಲಿಯಲ್ಲಿ ಈ ಭಯಾನಕ ಘಟನೆ ಸಂಭವಿಸಿದೆ. ಈ ಭಾಗದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ಜನರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದರಿಂದ ಅವ್ಯಾನ್ ಸಾಹು
ಬಳ್ಳಾರಿ ಗುಂಪು ಘರ್ಷಣೆ| ಪರಿಸ್ಥಿತಿ ಅವಲೋಕಿಸಲು ಕಾಂಗ್ರೆಸ್ ನಿಯೋಗ ರವಾನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು,ಜ.2: ಬಳ್ಳಾರಿ ನಗರದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಮಧ್ಯೆ ನೆಡೆದಿರುವ ಅಹಿತಕರ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದು, ಈ ಘಟನೆಯಿಂದ ಬಳ್ಳಾರಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಆ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಲು ಕಾಂಗ್ರೆಸ್ ಮುಖಂಡರ ನಿಯೋಗವನ್ನು ರವಾನಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಟಿ. ರಘುಮೂರ್ತಿ, ಸಂಸದ ಕುಮಾರ್ ನಾಯಕ್, ಪರಿಷತ್ ಸದಸ್ಯರಾದ ಜಕ್ಕಪ್ಪನವರ್, ಬಸವನಗೌಡ ಬಾದರ್ಲಿ ಅವರು ನಿಯೋಗದಲಿ ಇದ್ದಾರೆ. ತಕ್ಷಣವೇ ಬಳ್ಳಾರಿಗೆ ತೆರಳಿ ಘಟನೆ ನಡೆದಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಘಟನೆಯನ್ನು ಸಂಪೂರ್ಣವಾಗಿ ಅವಲೋಕಿಸಿ ಮಾಹಿತಿಯನ್ನು ನೀಡಬೇಕು ಎಂದು ಶಿವಕುಮಾರ್ ಸೂಚನೆ ನೀಡಿದ್ದಾರೆ.
ಉಪ್ಪಿನಂಗಡಿ| ಬ್ಯಾಂಕ್ ಉದ್ಯೋಗಿ ಪುಲುಗುಜ್ಜು ಸುಬ್ರಹ್ಮಣ್ಯಂ ನಾಪತ್ತೆ ಪ್ರಕರಣಕ್ಕೆ ಮಹತ್ವದ ತಿರುವು
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೆರ್ನೆ ಎಂಬಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಉಪ ಶಾಖಾ ಪ್ರಬಂಧಕನಾಗಿ ಕಾರ್ಯನಿರ್ವಹಿಸುತ್ತಿದ್ದ ಪುಲುಗುಜ್ಜು ಸುಬ್ರಹ್ಮಣ್ಯಂ (30) ನಾಪತ್ತೆ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ. ನಾಪತ್ತೆಯಾಗಿರುವ ಬ್ಯಾಂಕ್ ಉದ್ಯೋಗಿ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕಿಗೆ 71.41 ಲಕ್ಷ ರೂ. ವಂಚನೆ ನಡೆಸಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಬಿ.ಸಿ.ರೋಡಿನಲ್ಲಿ ವಿಷ್ಣು ಎಂಬವರ ಜೊತೆ ರೂಮೊಂದರಲ್ಲಿ ವಾಸ್ತವ್ಯ ಹೊಂದಿದ್ದ ಎನ್ನಲಾದ ಸುಬ್ರಹ್ಮಣ್ಯಂ ಡಿ. 17ರಂದು ತನ್ನ ತಮ್ಮನಿಗೆ ಹುಷಾರಿಲ್ಲ ಎಂದು ರೂಮಿಗೆ ಹೋಗುತ್ತೇನೆಂದು ಬ್ಯಾಂಕಿನಲ್ಲಿ ಹೇಳಿ ಹೋದವ ಬಳಿಕ ಪತ್ತೆಯಾಗಿರುವುದಿಲ್ಲವೆಂದೂ, ತನ್ನ ರೂಂನಲ್ಲಿ ಜೊತೆಯಾಗಿ ವಾಸ್ತವ್ಯ ಹೊಂದಿದ್ದ ವಿಷ್ಣುವಿನಲ್ಲಿ ತಾನು ಊರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದಾನೆನ್ನಲಾಗಿದ್ದು, ಊರಿಗೂ ಹೋಗದೆ ಎಲ್ಲಿಯೂ ಕಾಣಿಸದೆ ನಾಪತ್ತೆ ಯಾಗಿರುವುದಾಗಿ ದೂರಲಾಗಿತ್ತು. ಈ ಸಂಬಂಧ ಸುಬ್ರಹ್ಮಣ್ಯಂ ಅವರ ಸಹೋದರ ಪುಲುಗುಜ್ಜು ನಾಗ ಫಣೀಂದ್ರ ಅವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ. ಈ ಮಧ್ಯೆ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿ.ಎಸ್. ಚಂದ್ರಶೇಖರ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ 2023ರ ಸೆಪ್ಟೆಂಬರ್ ತಿಂಗಳ 4 ರಿಂದ 2025 ರ ಡಿಸೆಂಬರ್ ತಿಂಗಳ 19 ರವರೆಗೆ ಪೆರ್ನೆ ಶಾಖೆಯಲ್ಲಿ ಉಪ ಶಾಖಾ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯಂ ಸದ್ರಿ ಬ್ರಾಂಚಿನ ಎ.ಟಿ.ಎಂ. ನ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದು, ದಿನಾಂಕ 06-02-2024 ರಿಂದ ದಿನಾಂಕ 16-12-2025 ರ ಅವಧಿಯಲ್ಲಿ ಆರೋಪಿಯು ಅದೇ ಬ್ಯಾಂಕಿನ ಎ.ಟಿ.ಎಂ ಮಿಷನ್ ಗೆ ಪ್ರತಿ ದಿನ ನಿಗದಿ ಪಡಿಸಿದ ಹಣವನ್ನು ಜಮಾ ಮಾಡದೇ ಕಡಿಮೆ ನಗದು ಹಣವನ್ನು ಜಮಾ ಮಾಡಿ ಸತತವಾಗಿ ಬ್ಯಾಂಕಿನ ಹಣವನ್ನು ದುರುಪಯೋಗಪಡಿಸಿಕೊಂಡು ಒಟ್ಟು ರೂ 70,86,000 ರೂ. ಹಣವನ್ನು ವಂಚನೆ ಮಾಡಿರುತ್ತಾರೆಂದೂ ಹಾಗೂ ಸೇಫ್ ಲಾಕರ್ ನ್ನು ಪರಿಶೀಲಿಸಿದಾಗ 4.400 ಗ್ರಾಂ ತೂಕದ ರೂ 55,000/- ಅಂದಾಜು ಮೌಲ್ಯದ 1 ಪ್ಯಾಕೆಟ್ ಚಿನ್ನವನ್ನು ಲಪಟಾಯಿಸಿ ವಂಚಿಸಿರುತ್ತಾರೆಂದೂ ಆರೋಪಿಸಿದ್ದಾರೆ. ಆರೋಪಿಯು ದುರುಪಯೋಗ ಪಡಿಸಿದ ಹಣದ ವ್ಯವಹಾರಗಳು ಬೆಳಕಿಗೆ ಬಂದಿರುವುದು ತಿಳಿದು ಬಂದಾಗ ದಿನಾಂಕ 17-12-2025 ರಂದು ಅಸೌಖ್ಯದ ಕಾರಣ ಹೇಳಿ ಕಚೇರಿಯಿಂದ ನಿರ್ಗಮಿಸಿದವರು ಬಳಿಕ ನಾಪತ್ತೆಯಾಗಿದ್ದಾರೆಂದೂ, ಈ ಮೂಲಕ ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ ಒಟ್ಟು ಮೌಲ್ಯ ರೂ 71,41,000 ರೂ. ವಂಚನೆ ಮಾಡಿರುವುದಾಗಿ ದೂರಲಾಗಿದೆ. ದೂರನ್ನು ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ರಾಯಚೂರು ನಗರದಲ್ಲಿ ಜ.3ರಂದು ವಿದ್ಯುತ್ ವ್ಯತ್ಯಯ
ರಾಯಚೂರು : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾದ ಕಂಡಕ್ಟರಿಂಗ್ ದುರಸ್ತಿ ಕಾಮಗಾರಿ ನಿರ್ವಹಿಸುತ್ತಿರುವ ಪ್ರಯುಕ್ತ ಜ.3ರ ಬೆಳಿಗ್ಗೆ 10:30 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬನಶಂಕರಿ ರೊಟ್ಟಿ ಕೇಂದ್ರದಿಂದ ಮಾರೆಮ್ಮ ಗುಡಿ ರಾಂಪೂರು ರೋಡ್ವರೆಗೆ, ಮಾರೆಮ್ಮ ಗುಡಿ ರಾಂಪೂರು ರೋಡ್ರಿಂದ ವಿಜಿಲೆನ್ಸ್ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವ ದೀಪಕ್ ಮನೆವರೆಗೆ ಮತ್ತು ಬೆಲ್ಲಂ ಕಾಲೋನಿಯ ಸುಬ್ರಮಣ್ಯ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999, 9480845955 ಮತ್ತು 9448395624ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ | ಕೈದಿಗಳ ಜೂಜಾಟದ ವೀಡಿಯೊ ವೈರಲ್ ಪ್ರಕರಣ : ನಾಲ್ವರ ವಿರುದ್ಧ ಪ್ರಕರಣ ದಾಖಲು
ಉನ್ನತ ಮಟ್ಟದ ತನಿಖೆ ಆರಂಭ
T20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ
ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್ಗೆ ಸ್ಥಾನವಿಲ್ಲ!
ಆಸ್ಟ್ರೇಲಿಯನ್ ಓಪನ್ | ವೀನಸ್ ವಿಲಿಯಮ್ಸ್ಗೆ ವೈಲ್ಡ್ ಕಾರ್ಡ್ ಪ್ರವೇಶ
ಮೆಲ್ಬರ್ನ್, ಜ.2: ಏಳು ಬಾರಿ ಗ್ರ್ಯಾನ್ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ವೀನಸ್ ವಿಲಿಯಮ್ಸ್, ಮೆಲ್ಬರ್ನ್ನಲ್ಲಿ ಜನವರಿ 18ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದಾರೆ. 28 ವರ್ಷಗಳ ಹಿಂದೆ ಮೊದಲ ಪಂದ್ಯವನ್ನಾಡಿದ್ದ ಮೆಲ್ಬರ್ನ್ ಪಾರ್ಕ್ ಗೆ 45ರ ಹರೆಯದ ವೀನಸ್ ವಿಲಿಯಮ್ಸ್ ವಾಪಸಾಗುತ್ತಿದ್ದಾರೆ. 1998ರಲ್ಲಿ ವೀನಸ್ ತಮ್ಮ ಕಿರಿಯ ಸಹೋದರಿ ಸೆರೆನಾರನ್ನು ದ್ವಿತೀಯ ಸುತ್ತಿನಲ್ಲಿ ಸೋಲಿಸಿದ್ದರು. ಕ್ವಾರ್ಟರ್ ಫೈನಲ್ ನಲ್ಲಿ ತಮ್ಮದೇ ದೇಶದ ಲಿಂಡ್ಸೆ ಡವೆನ್ ಪೋರ್ಟ್ ವಿರುದ್ಧ ಸೋಲು ಕಂಡಿದ್ದರು. ನ್ಯೂಝಿಲ್ಯಾಂಡ್ ನ ಆಕ್ಲೆಂಡ್ ನಲ್ಲಿ ಆಡುವುದಾಗಿ ವೀನಸ್ ಅವರು ನವೆಂಬರ್ನಲ್ಲಿ ಘೋಷಿಸಿದ್ದರು. ಅಲ್ಲಿ ಕೂಡ ಅವರು ವೈಲ್ಡ್ ಕಾರ್ಡ್ ಪಡೆದಿದ್ದರು. ಆಸ್ಟ್ರೇಲಿಯನ್ ಓಪನ್ ಆರಂಭವಾಗಲು ಎರಡು ವಾರಗಳ ಮುನ್ನ ಆಕ್ಲೆಂಡ್ ಓಪನ್ ಆರಂಭವಾಗಲಿದೆ. 2021ರಲ್ಲಿ ಮೆಲ್ಬರ್ನ್ನಲ್ಲಿ ಕೊನೆಯ ಬಾರಿ ಆಡಿದ್ದ ವೀನಸ್, 2003 ಹಾಗೂ 2017ರಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಸೆರೆನಾಗೆ ಎರಡು ಬಾರಿ ಸೋಲನುಭವಿಸಿ ರನ್ನರ್ ಅಪ್ ಆಗಿದ್ದರು. ‘‘ಆಸ್ಟ್ರೇಲಿಯಕ್ಕೆ ಮರಳಲು ನಾನು ಉತ್ಸುಕಳಾಗಿದ್ದೇನೆ. ಆಸ್ಟ್ರೇಲಿಯನ್ ಸಮ್ಮರ್ನಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಅಲ್ಲಿ ನನಗೆ ಸಾಕಷ್ಟು ಸ್ಮರಣೀಯ ನೆನಪುಗಳಿವೆ. ನನ್ನ ವೃತ್ತಿ ಬದುಕಿಗೆ ಅರ್ಥ ನೀಡಿರುವ ಸ್ಥಳಕ್ಕೆ ಮರಳುವ ಅವಕಾಶ ಲಭಿಸಿದ್ದಕ್ಕೆ ಆಭಾರಿಯಾಗಿದ್ದೇನೆ’’ ಎಂದು ವಿಲಿಯಮ್ಸ್ ಹೇಳಿದ್ದಾರೆ. ವೀನಸ್ ವಿಲಿಯಮ್ಸ್ ಅವರು ಮೆಲ್ಬರ್ನ್ ಪಾರ್ಕ್ನಲ್ಲಿ 54 ಪಂದ್ಯಗಳಲ್ಲಿ ಗೆಲುವು ಹಾಗೂ 21 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಸ್ಪರ್ಧಿಸುವ ಹಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ವೀನಸ್ ಮುರಿಯಲಿದ್ದಾರೆ. ಇದುವರೆಗೆ ಈ ದಾಖಲೆ ಜಪಾನ್ನ ಕಿಮಿಕೊ ಡೇಟ್ ಅವರ ಹೆಸರಿನಲ್ಲಿ ಇತ್ತು. ಕಿಮಿಕೊ 2015ರಲ್ಲಿ 44ರ ವಯಸ್ಸಿನಲ್ಲಿ ಮೆಲ್ಬರ್ನ್ ಪಾರ್ಕ್ ನಲ್ಲಿ ಆಡಿದ್ದರು.
ಉದ್ಯಾವರ ಸೇತುವೆಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
ಕಾಪು, ಜ.2: ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆ ತಡೆಗೋಡೆಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಸುಕಿನ ವೇಳೆ 1.50ರ ಸುಮಾರಿಗೆ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯದ ಯುವರಾಜ್ ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕಿನಲ್ಲಿ ಮಂಗಳೂರಿನಿಂದ ಬ್ರಹ್ಮಾವರದಲ್ಲಿ ತನ್ನ ರೂಂಗೆ ಹೊರಟಿದ್ದು, ದಾರಿ ಮಧ್ಯೆ ಬೈಕ್ ಅತಿ ವೇಗ ಹಾಗೂ ಅಜಾಗರೂಕತೆ ಯಿಂದಾಗಿ ನಿಯಂತ್ರಣ ತಪ್ಪಿ ಉದ್ಯಾವರ ಸೇತುವೆಯ ತಡೆಗೋಡೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಯುವರಾಜ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತದೇಹವನ್ನು ಉಚ್ಚಿಲದ ಎಸ್ಡಿಪಿಐ ಆಂಬುಲೆನ್ಸ್ನಲ್ಲಿ ಕೆಎಂ ಸಿರಾಜ್, ಜಲಾಲುದ್ದೀನ್ ಅಜ್ಜರಕಾಡು ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ| ಅಂತರಾಜ್ಯ ಕಳವು ಆರೋಪಿ ಉಮೇಶ್ ಬಳೆಗಾರ ಬಂಧನ
ಉಡುಪಿ, ಜ.2: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರಾಜ್ಯ ಕಳವು ಆರೋಪಿಯೊಬ್ಬನನ್ನು ಕಾಪು ಪೊಲೀಸರು ಜ.2ರಂದು ಬಂಧಿಸಿದ್ದಾರೆ. ಮಲ್ಲಾರು ಗ್ರಾಮದ ಫಕೀರ್ಣಕಟ್ಟೆಯ ಮೂಲದ ಪ್ರಸ್ತುತ ತಮಿಳುನಾಡು ಕನ್ಯಾಕುಮಾರಿಯ ಉಮೇಶ್ ಬಳೆಗಾರ ಯಾನೆ ಉಮೇಶ್ ಪಿ ಯಾನೆ ಉಮೇಶ್ ರೆಡ್ಡಿ(47) ಬಂಧಿತ ಆರೋಪಿ. ಡಿ.4ರಂದು ಕಾಪು ಮಲಾರು ಗ್ರಾಮದ ರಾಘವೇಂದ್ರ ಕಿಣಿ ಎಂಬವರ ಮನೆಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಒಟ್ಟು 3,90,000ರೂ. ಮೌಲ್ಯದ ಸುಮಾರು 72 ಗ್ರಾಂ ತೂಕದ ಚಿನ್ನಾಭರಣ ಹಾಗೂ 1,500ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಉಮೇಶ್ ಬಳೆಗಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತನ ವಿರುದ್ಧ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 16 ಪ್ರಕರಣಗಳು ಹಾಗೂ ಕರ್ನಾಟಕ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಸುಮಾರು 8 ಪ್ರಕರಣಗಳಲ್ಲಿ ಆತನಿಗೆ ಶಿಕ್ಷೆಯಾಗಿದೆ. ಈತನ ವಿರುದ್ಧ ಕೇರಳ ರಾಜ್ಯದ ತನ್ನಿಪಲಂ, ಮಾವೂರು, ತ್ರಿಶೂರ್ ಹಾಗೂ ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ನಗರ, ಮೂಡಬಿದ್ರೆ, ಉತ್ತರ ಕನ್ನಡ ಜಿಲ್ಲೆಯ ಶಿಶಿರ ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ, ಪೊಲೀಸ್ ಠಾಣೆಗಳಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಾಮೀನು ರಹಿತ ದಸ್ತಗಿರಿ ವಾರಂಟ್ ಹೊರಡಿಸಿವೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಈತ ದಸ್ತಗಿರಿಗೆ ಸಿಗದೇ ಇದ್ದುದರಿಂದ ಎಲ್.ಪಿ.ಸಿ ವಾರಂಟ್ ಕೂಡ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಎರಡು ಪ್ರಕರಣಗಳಲ್ಲಿ ನ್ಯಾಯಾಲಯವು ಪ್ರೊಮೇಶನ್ ಹೊರಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಡುಬಿದ್ರೆ ಎಸ್ಸೈ ಅನಿಲ್ ಕುಮಾರ್ ಟಿ. ನಾಯ್ಕ, ಕಾಪು ಎಸ್ಸೈ ಶುಭಕರ ಮತ್ತು ಸಿಬ್ಬಂದಿ ರಾಜೇಶ್, ಮೋಹನಚಂದ್ರ, ರಘು, ಜೀವನ್, ಜೀಪು ಚಾಲಕರಾದ ಜಗದೀಶ್ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಮತ್ತು ನಿತಿನ್ ಭಾಗವಹಿಸಿದ್ದಾರೆ.
ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನಿಯಂತ್ರಣಕ್ಕೆ ಸಂಘದ ಆಗ್ರಹ
ಉಡುಪಿ, ಜ.2: ಇತ್ತೀಚೆಗೆ ಉಡುಪಿ-ಮಣಿಪಾಲದಲ್ಲಿ ಹೊರ ರಾಜ್ಯದ ಖಾಸಗಿ ಸಂಸ್ಥೆಯೊಂದು ‘ನಮ್ಮ ಯಾತ್ರಿ’ ಆ್ಯಪ್ ಮೂಲಕ, ರಾಜ್ಯ ಸರಕಾರ ಟ್ಯಾಕ್ಸಿಗಳಿಗೆ ನಿಗದಿ ಪಡಿಸಿದ ದರಕ್ಕಿಂತ ಕಡಿಮೆ ಬೆಲೆಗೆ ಜಿಲ್ಲೆಯಾದ್ಯಂತ ಟ್ಯಾಕ್ಸಿ ಮತ್ತು ಅಟೋರಿಕ್ಷಾಗಳ ಬಾಡಿಗೆ ಮಾಡುತಿದ್ದು, ಇದಕ್ಕೆ ನಿಯಂತ್ರಣ ಹೇರಬೇಕು ಎಂದು ಜಿಲ್ಲಾ ಟ್ಯಾಕ್ಸಿಮನ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ರಮೇಶ್ ಕೆ.ಕೋಟ್ಯಾನ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ಇದನ್ನು ತಡೆಯದಿದ್ದರೆ ಸ್ಥಳೀಯ ಟ್ಯಾಕ್ಸಿ ಚಾಲಕ ಮತ್ತು ಮಾಲಕರಿಗೆ ದೊಡ್ಡ ರೀತಿಯಲ್ಲಿ ಹೊಡೆತ ಬೀಳಲಿದ್ದು, ಪ್ರಯಾಣಿಕರಿಗೂ ಇದರಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅವರು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. ಆ್ಯಪ್ ಮೂಲಕ ನಿಗದಿಗಿಂತ ಕಡಿಮೆ ದರದಲ್ಲಿ ಬಾಡಿಗೆ ಮಾಡುವುದರಿಂದ ಜಿಲ್ಲೆಯ ಸಾವಿರಾರು ಮಂದಿ ಟ್ಯಾಕ್ಸಿ ಚಾಲಕ-ಮಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಸರಕಾರದ ದರಪಟ್ಟಿಯಂತೆ ನಾವು ಮಣಿಪಾಲದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ 1,700 ರೂ. ಬಾಡಿಗೆ ತೆಗೆದುಕೊಳ್ಳು ತಿದ್ದೇವೆ. ಆದರೆ ನಮ್ಮ ಯಾತ್ರಿ ಆ್ಯಪ್ ಮೂಲಕ ಬುಕ್ ಮಾಡಿದವರಿಗೆ 1050ರೂ. ಬಾಡಿಗೆ ಪಡೆಯಲಾಗುತ್ತಿದೆ ಎಂದವರು ವಿವರಿಸಿದರು. ಇಲ್ಲಿಂದ ಸ್ಥಳೀಯ ಟ್ಯಾಕ್ಸಿಗಳು ಪ್ರಯಾಣಿಕರನ್ನು ಮಂಗಳೂರಿಗೆ ಕರೆದೊಯ್ದು, ಖಾಲಿಯಾಗಿ ಮರಳಿ ಬರುತ್ತವೆ. ಆದರೆ ಆ್ಯಪ್ನಲ್ಲಿ ಹೋಗುವಾಗ ಮಾತ್ರ ಕಡಿಮೆ ದರ ಪಡೆದು ಬರುವಾಗ ಸ್ಥಳೀಯ ಟ್ಯಾಕ್ಸಿಗಿಂತಲೂ ದುಬಾರಿ ದರವಿದೆ. ಅವರು 2000ರೂ. ಪಡೆಯುತಿದ್ದಾರೆ ಎಂದು ರಮೇಶ್ ಕೋಟ್ಯಾನ್ ದೂರಿದರು. ಈಗಾಗಲೇ ಜಿಲ್ಲೆಯಾದ್ಯಂತ ಖಾಸಗಿ ವಾಹನಗಳು (ವೈಟ್ ಬೋರ್ಡ್) ಬಾಡಿಗೆ ಮಾಡುತ್ತಿರುವುದು ಹಾಗೂ ಸರಕಾರಗಳ ಪ್ಯಾನಿಕ್ ಬಟನ್ ಅಳವಡಿಕೆಯ ಅವೈಜ್ಞಾನಿಕ ನಿರ್ಧಾರದಿಂದ ಟ್ಯಾಕ್ಸಿ ಚಾಲಕರು ಬಹಳಷ್ಟು ಕಷ್ಟ ಅನುಭವಿಸುತಿದ್ದಾರೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ಯಾನಿಕ್ ಬಟನ್ನ ವಾರ್ಷಿಕ ನಿರ್ವಹಣಾ ವೆಚ್ಚವೆಂದು 1,800ರೂ. ಬದಲಿಗೆ 4,000ರೂ.ಗಳನ್ನು ಖಾಸಗಿ ಕಂಪೆನಿ ಮೂಲಕ ವಸೂಲಿ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಆದ್ದರಿಂದ ನಮ್ಮ ಯಾತ್ರಿ ಆ್ಯಪ್ನ ಮಾಲಕರನ್ನು ಕರೆಸಿ ಅವರಿಗೆ ಸರಕಾರದ ನಿಯಮಾವಳಿಯನ್ನು ಪಾಲಿಸಲು ಸೂಚಿಸಬೇಕು. ಇಲ್ಲದಿದ್ದರೆ ಉಡುಪಿ ಜಿಲ್ಲೆ ಯಲ್ಲಿ ಆ್ಯಪ್ನ್ನು ನಿಷ್ಕೃಿಯಗೊಳಿಸಬೇಕು ಹಾಗೂ ಪ್ಯಾನಿಕ್ ಬಟನ್ಗೆ ನ್ಯಾಯಾಲಯದ ಆದೇಶದಂತೆ ಸಾರಿಗೆ ಇಲಾಖೆ ನಿಗದಿ ಪಡಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ಜಿ.ಆರ್.ಷಣ್ಮುಗಪ್ಪ, ಶಿವಣ್ಣ, ಪ್ರಕಾಶ್ ಅಡಿಗ, ಸತೀಶ್ ನಾಯಕ್, ಸತೀಶ್ ಶೆಟ್ಟಿ, ಕೃಷ್ಣ, ಮಹೇಶ್ಕುಮಾರ್, ಜಾನ್ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾಸ್ಪತ್ರೆಯ ಸೇವಾ ನಿವೃತ್ತ ವೈದ್ಯರಿಗೆ ಬೀಳ್ಕೋಡುಗೆ
ಉಡುಪಿ, ಜ.2: ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಡಿ.31ರಂದು ವೈದ್ಯಕೀಯ ಸೇವೆಯಿಂದ ನಿವೃತ್ತರಾದ ಜನರಲ್ ಸರ್ಜನ್ (ಅಂಕೋಲಾಜಿಸ್ಟ್) ಡಾ. ವೆಂಕಟೇಶ್ ಎನ್. ಹಾಗ ಹಿರಿಯ ಅರವಳಿಕೆ ತಜ್ಞ ಡಾ.ಉಮೇಶ್ ಉಪಾಧ್ಯ ಇವರಿಗೆ ಜಿಲ್ಲಾ ಆಸ್ಪತ್ರೆ ವತಿಯಿಂದ ಬೀಳ್ಕೋಡುಗೆ ಕಾರ್ಯಕ್ರಮವನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ನಿವೃತ್ತ ವೈದ್ಯರ ನಿವೃತ್ತ ಜೀವನಕ್ಕೆ ಶುಭ ಹಾರೈಸಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್, ಇಬ್ಬರು ತಜ್ಞ ವೈದ್ಯರು ನಗುಮೊಗದ ಉತ್ತಮ ಸೇವೆಯ ಮೂಲಕ ಕ್ಯಾನ್ಸರ್ ರೋಗಿಗಳ ಪಾಲಿಗೆ ಆಶಾಕಿರಣವಾ ಗಿದ್ದರು ಎಂದರು. ಈ ಸಂದರ್ಭದಲ್ಲಿ ಇಬ್ಬರು ವೈದ್ಯರಿಗೂ ಶಾಲು ಹೊದಿಸಿ, ಸ್ಮರಣಿಕೆಗಳನ್ನು ನೀಡಿ ಗೌರವಿಸಿ ಬೀಳ್ಕೊಡಲಾಯಿತು. ಡಾ. ಎಚ್.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಕಾಯಕ್ರಮದಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ.ವಾಸುದೇವ್, ತಜ್ಞ ವೈದ್ಯರಾದ ಡಾ ನಿಖಿನ್ ಶೆಟ್ಟಿ, ಇಎನ್ಟಿ ತಜ್ಞರಾದ ಡಾ.ಮುರಳೀಧರ್ ಪಾಟೀಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರು, ನರ್ಸಿಂಗ್ ಅಧಿಕಾರಿ ಗಳು, ಸಿಬ್ಬಂದಿಗಳು, ತಾಯಿ ಮಕ್ಕಳ ಆಸ್ಪತ್ರೆಯ ಎಲ್ಲಾ ತಜ್ಞ ವೈದ್ಯರು ಉಪಸ್ಥಿತರಿದ್ದರು.
ನಾಡ ಕಚೇರಿಯಿಂದ ತ್ವರಿತ ಸೇವೆ: ರಾಜ್ಯದಲ್ಲಿಯೇ ಕಲಬುರಗಿ ನಂಬರ್-1
ಕಲಬುರಗಿ: ಅಟಲ್ಜೀ ಜನಸ್ನೇಹಿ ಕೇಂದ್ರದ ಮೂಲಕ ಡಿಸೆಂಬರ್-2025ರ ಮಾಹೆಯಲ್ಲಿ ಸ್ವೀಕರಿಸಿದ 39,964 ಅರ್ಜಿಗಳಲ್ಲಿ 38,133 ಅರ್ಜಿಗಳನ್ನು ಕಾಲಮಿತಿಯಲ್ಲಿಯೇ ವಿಲೇವಾರಿ ಮಾಡಿ ಶೇ.95.42ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ಮತ್ತೆ ನಂಬರ್-1 ಸ್ಥಾನ ಪಡೆದಿದೆ. ನಾಡ ಕಚೇರಿಯಿಂದ ಕಂದಾಯ ಇಲಾಖೆಯ 41 ಸೇವೆ ನೀಡಲು ಡಿಸೆಂಬರ್ -2025ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗಧಿತ ಅವಧಿಯಲ್ಲಿ 9.31 ವಿಲೇವಾರಿ ಸೂಚ್ಯಂಕದ ಪ್ರಕಾರ ವಿಲೇವಾರಿ ಮಾಡುವ ಮೂಲಕ ಈಶಾನ್ಯದ ತುದಿಯಲ್ಲಿರುವ ಕಲಬುರಗಿ ಜಿಲ್ಲೆ ಸಾರ್ವಜನಿಕರ ಸೇವೆ ವಿಲೇವಾರಿಯಲ್ಲಿ ರಾಜ್ಯದ ಗಮನ ಸೆಳೆದಿದೆ. ಕಳೆದ 2025ರ ಜುಲೈ ಮಾಹೆಯಲ್ಲಿಯೂ ಕಲಬುರಗಿ ಜಿಲ್ಲೆ ಅಟಲ್ಜೀ ಜನಸ್ನೇಹಿ ಕೇಂದ್ರದಿಂದ ಅರ್ಜಿ ವಿಲೇವಾರಿಯಲ್ಲಿ ಮೊದಲನೇ ಸ್ಥಾನ ಪಡೆದಿತ್ತು. ಇದೀಗ ಮತ್ತೆ ವಿಲೇವಾರಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದು, ಕಲಬುರಗಿ ಜಿಲ್ಲಾಡಳಿತ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನಲ್ಲಿ ಸ್ವೀಕೃತ 3,344 ರಲ್ಲಿ 3,070, ಆಳಂದದಲ್ಲಿ 4,880 ರಲ್ಲಿ 4,572, ಚಿಂಚೋಳಿಯಲ್ಲಿ ಸ್ವೀಕೃತ 2,654 ರಲ್ಲಿ 2,599, ಚಿತ್ತಾಪುರನಲ್ಲಿ ಸ್ವೀಕೃತ 3,330 ರಲ್ಲಿ 3,285, ಜೇವರ್ಗಿಯಲ್ಲಿ ಸ್ವೀಕೃತ 5,081 ರಲ್ಲಿ 4,905, ಕಲಬುರಗಿಯಲ್ಲಿ ಸ್ವೀಕೃತ 9,566 ರಲ್ಲಿ 8,926, ಕಾಳಗಿಯಲ್ಲಿ ಸ್ವೀಕೃತ 1,950 ರಲ್ಲಿ 1,881, ಕಮಲಾಪುರನಲ್ಲಿ ಸ್ವೀಕೃತ 1,782 ರಲ್ಲಿ 1,691, ಸೇಡಂನಲ್ಲಿ ಸ್ವೀಕೃತ 3,101 ರಲ್ಲಿ 3,051, ಶಹಾಬಾದ್ ನಲ್ಲಿ ಸ್ವೀಕೃತ 2,043 ರಲ್ಲಿ 2,008, ಯಡ್ರಾಮಿಯಲ್ಲಿ ಸ್ವೀಕೃತ 2,233 ರಲ್ಲಿ 2,145 ಅರ್ಜಿ ವಿಲೇವಾರಿ ಮಾಡುವ ಜಿಲ್ಲೆಯ ಜನತೆಗೆ ನಾಡ ಸೇವೆ ಕಚೇರಿ ತ್ವರಿತವಾಗಿ ಸ್ಪಂದಿಸಿದಿರುವುದು ಅಂಕಿ ಅಂಶಗಳು ಖಚಿತಪಡಿಸಿವೆ. ಜಿಲ್ಲೆಯಲ್ಲಿನ ಈ ಕಾರ್ಯ ಸಾಧನೆಗೆ ನಾಡ ಕಚೇರಿ ಮತ್ತು ಆಟಲ್ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳ ಸಹಕಾರ, ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿರುವ ಡಿ.ಸಿ ಬಿ.ಫೌಜಿಯಾ ತರನ್ನುಮ್ ಅವರು, ಮುಂದಿನ ದಿನಗಳಲ್ಲಿ ಇದೇ ರೀತಿಯ ಸಾಧನೆ ಮಾಡುವಂತೆ ಸಿಬ್ಬಂದಿಗಳನ್ನು ಹುರಿದುಂಬಿಸಿದ್ದಾರೆ. ಟಾಪ್ 10ರಲ್ಲಿ ಕಲ್ಯಾಣದ 4 ಜಿಲ್ಲೆಗಳು: ಇನ್ನು ರಾಜ್ಯದಾದ್ಯಂತ ಜಿಲ್ಲಾವಾರು ಅರ್ಜಿ ವಿಲೇವಾರಿ ಪಟ್ಟಿ ಅವಲೋಕಿಸಿದಾಗ ಅಗ್ರ 10 ರಲ್ಲಿ ಕಲಬುರಗಿ, ವಿಜಯನಗರ ಜಿಲ್ಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರೆ, ರಾಯಚೂರು ನಾಲ್ಕನೇ ಮತ್ತು ಯಾದಗಿರಿ ಜಿಲ್ಲೆ ಒಂಭತ್ತನೇ ಸ್ಥಾನ ಪಡೆದಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ 4 ಜಿಲ್ಲೆಗಳು ಸಾರ್ವಜನಿಕ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಂತಾಗಿದೆ.
ಬೆಂಗಳೂರು ರೈಲು ನಿಲ್ದಾಣದಲ್ಲಿ ನವೀಕರಣದ ಹಿನ್ನೆಲೆ: ಯಲಹಂಕದವರೆಗೆ ರೈಲು ಸಂಚಾರ
ಕಲಬುರಗಿ: ಬೆಂಗಳೂರು (SMVT) ಎಸ್.ಎಮ್.ವಿ.ಟಿ. ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯ ನವೀಕರಣ ಕಾರ್ಯಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಎರಡು ವಿಶೇಷ ರೈಲುಗಳು ಯಲಹಂಕ ರೈಲು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದ್ದು, ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಮಾಡಬೇಕೆಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜನವರಿ 3 ರಂದು ಬೀದರ್ನಿಂದ ಹೊರಡುವ ಬೀದರ್-(SMVT) (ಎಸ್.ಎಮ್.ವಿ.ಟಿ.) ಬೆಂಗಳೂರು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06540) ರೈಲು ಹಾಗೂ ಜನವರಿ 4 ರಂದು ಕಲಬುರಗಿ ರೈಲು ನಿಲ್ದಾಣದಿಂದ ಹೊರಡುವ ಕಲಬುರಗಿ-(SMVT) (ಎಸ್.ಎಮ್.ವಿ.ಟಿ.) ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 22231) ರೈಲುಗಳು ಯಲಹಂಕ ರೈಲು ನಿಲ್ದಾಣದವರೆಗೆ ಮಾತ್ರ ಪ್ರಯಾಣಿಸಲಿದೆ. ಅದೇ ರೀತಿ ಜನವರಿ 4 ರಂದು (SMVT) ((ಎಸ್.ಎಮ್.ವಿ.ಟಿ.) ಬೆಂಗಳೂರು-ಕಲಬುರಗಿ (ರೈಲು ಸಂಖ್ಯೆ 22232) ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹಾಗೂ (SMVT) (ಎಸ್.ಎಮ್.ವಿ.ಟಿ.) ಬೆಂಗಳೂರು-ಬೀದರ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06539) ರೈಲು ಯಲಹಂಕ ರೈಲು ನಿಲ್ದಾಣದಿಂದ ನಿಗದಿತ ಸಮಯದಲ್ಲಿ ಸಂಚಾರ ಆರಂಭಿಸಲಿದೆ.
Madhya Pradesh | ಕಲುಷಿತ ಆಹಾರ ಸೇವಿಸಿ 200 ಗಿಳಿಗಳ ಸಾವು
ಖರ್ಗೋನ್, ಜ. 2: ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ನರ್ಮದಾ ನದಿಯ ದಡದಲ್ಲಿ ಕಲುಷಿತ ಆಹಾರ ಸೇವನೆಯಿಂದಾಗಿ ಕನಿಷ್ಠ 200 ಗಿಳಿಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಬದ್ವಾ ಪ್ರದೇಶದಲ್ಲಿ ನದಿ ದಡದಲ್ಲಿನ ನೀರನ್ನು ಸಾಗಿಸುವ ಕಾಲುವೆಯ ಬಳಿ ಕಳೆದ ನಾಲ್ಕು ದಿನಗಳಲ್ಲಿ ಮೃತ ಗಿಳಿಗಳು ಪತ್ತೆಯಾಗಿವೆ. ಶಂಕಿತ ಹಕ್ಕಿ ಜ್ವರದಿಂದ ಅವು ಮೃತಪಟ್ಟಿವೆ ಎಂಬ ಊಹಾಪೋಹವನ್ನು ಮರಣೋತ್ತರ ಪರೀಕ್ಷೆ ವರದಿ ತಳ್ಳಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ಗಿಳಿಗಳು ಜೀವಂತವಾಗಿದ್ದರೂ, ಆಹಾರದಲ್ಲಿದ್ದ ವಿಷತ್ವದ ತೀವ್ರತೆಯಿಂದಾಗಿ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ವಿಷಾದ ವ್ಯಕ್ತಪಡಿಸಿದರು. ಹಕ್ಕಿ ಜ್ವರದ ಶಂಕೆಯಿಂದಾಗಿ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಪಶುವೈದ್ಯಕೀಯ ಪರೀಕ್ಷೆಗಳಲ್ಲಿ ಸೋಂಕಿನ ಯಾವುದೇ ಕುರುಹು ಕಂಡುಬಂದಿಲ್ಲ. ಈ ಕಾಲುವೆಯ ಬಳಿ ಹಕ್ಕಿಗಳಿಗೆ ಆಹಾರ ನೀಡುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಿಷೇಧಿಸಿದ್ದು, ಆದೇಶದ ಕಟ್ಟುನಿಟ್ಟಿನ ಜಾರಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೃತ ಗಿಳಿಗಳ ವಿಸೆರಾ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಬಲ್ಪುರಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಕಲುಷಿತ ಹಾಗೂ ಅಸಮರ್ಪಕ ಆಹಾರ ಸೇವನೆಯಿಂದ ಈ ಸಾವುಗಳು ಸಂಭವಿಸಿವೆ. ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ ಬಳಿಕ ಕಳೆದ ನಾಲ್ಕು ದಿನಗಳಿಂದ ಪಶುವೈದ್ಯಕೀಯ, ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ತಂಡಗಳು ಈ ಪ್ರದೇಶದ ಮೇಲೆ ನಿಗಾ ಇರಿಸಿವೆ. ಗಿಳಿಗಳಲ್ಲಿ ಕಲುಷಿತ ಆಹಾರ ಸೇವನೆಯ ಲಕ್ಷಣಗಳು ಪತ್ತೆಯಾಗಿವೆ. ಆದರೆ ಹಕ್ಕಿ ಜ್ವರದ ಯಾವುದೇ ಕುರುಹು ಕಂಡುಬಂದಿಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯೆ ಡಾ. ಮನೀಷಾ ಚೌಹಾಣ್ ತಿಳಿಸಿದ್ದಾರೆ. ಜನಸಾಮಾನ್ಯರು ಅನಾಯಾಸವಾಗಿ ಹಕ್ಕಿಗಳ ಜೀರ್ಣಾಂಗ ವ್ಯವಸ್ಥೆಗೆ ಮಾರಕವಾಗುವ ಆಹಾರವನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ಮೃತ ಗಿಳಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಸಾವುಗಳು ಅಸಮರ್ಪಕ ಆಹಾರ ಸೇವನೆಯಿಂದ ಸಂಭವಿಸಿರುವುದು ಕಂಡುಬರುತ್ತದೆ ಎಂದು ಪಶುವೈದ್ಯಕೀಯ ವಿಸ್ತರಣಾಧಿಕಾರಿ ಡಾ. ಸುರೇಶ್ ಬಘೇಲ್ ಹೇಳಿದ್ದಾರೆ. ಕೀಟನಾಶಕ ಸಿಂಪಡಿಸಿದ ಹೊಲಗಳಲ್ಲಿ ಬೆಳೆದ ಧಾನ್ಯಗಳು ಹಾಗೂ ನರ್ಮದಾ ನದಿ ನೀರಿನ ಸೇವನೆ ಸಾವುಗಳಿಗೆ ಕಾರಣವಾಗಿರಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಕಾಲುವೆಗೆ ಭೇಟಿ ನೀಡುವ ಸಂದರ್ಶಕರು ಬೇಯಿಸಿದ ಆಹಾರ ಅಥವಾ ಉಳಿದ ಆಹಾರವನ್ನು ನೀಡುವುದು ಹಕ್ಕಿಗಳಿಗೆ ಮಾರಣಾಂತಿಕವಾಗುತ್ತದೆ ಎಂದೂ ಅವರು ಎಚ್ಚರಿಸಿದರು.
ಬಳ್ಳಾರಿ ಗುಂಪು ಘರ್ಷಣೆ| ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬಂಧಿಸುವಂತೆ ಡಿಜಿಪಿಗೆ ಬಿಜೆಪಿ ನಿಯೋಗ ದೂರು
ಬೆಂಗಳೂರು, ಜ.2: ಬಳ್ಳಾರಿ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ನರ ಭರತ್ ರೆಡ್ಡಿ ಅನ್ನು ಕೂಡಲೇ ಬಂಧಿಸಿ ಎಂದು ಬಿಜೆಪಿ ನಾಯಕರ ನಿಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ದೂರು ಸಲ್ಲಿಸಿ ಒತ್ತಾಯಿಸಿದೆ. ಶುಕ್ರವಾರ ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಿ ದೂರು ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಗೊತ್ತಿಲ್ಲದೇ ಗುಂಡು ಹಾರಿದೆ, ಗೊತ್ತಿಲ್ಲದೇ ಸತ್ತಿದ್ದಾರೆ ಎಂದು ನಾಳೆ ಹೇಳಬಹುದು. ಇವರು ನಾಳೆ ಏನು ಹೇಳಬಹುದೆಂದು ಇವತ್ತೇ ಹೇಳಿದ್ದೇನೆ. ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದರು. ಅವರು ಶಾಸಕ ಜನಾರ್ದನ ರೆಡ್ಡಿ ಮನೆ ಗೋಡೆಗೆ ಹೋಗಿ ಹೇಗೆ ಬ್ಯಾನರ್ ಕಟ್ಟಿದರು? ಈ ಬಗ್ಗೆ ನಾವು ಪೊಲೀಸ್ ದೂರು ಕೊಟ್ಟಿದ್ದೇವೆ. ಆದರೂ ಎಫ್ಐಆರ್ ಆಗಿಲ್ಲ. ಅವರು ಕೊಟ್ಟ ದೂರಿಗೆ ಸಂಬಂಧಿಸಿ ತಕ್ಷಣ ಎಫ್ಐಆರ್ ಮಾಡಿದ್ದಾರೆ ಎಂದು ಟೀಕಿಸಿದರು. ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇದು ಗೂಂಡಾ ರಾಜ್ಯದ ಸಂದೇಶವಾಗಿದೆ. ಈ ಬಗ್ಗೆ ಶಾಸಕ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಬೇಕಿತ್ತು ಎಂದು ಹೇಳಿದರು.
ಮೋದಿಯವರ ಅಂಧಾಭಿಮಾನಿ ನಡೆಸಿದ ಸಮೀಕ್ಷೆ ಹಿಡಿದು ರಾಹುಲ್ ಆರೋಪ ತಿರುಚುವ ಯತ್ನ: ಸಿದ್ದರಾಮಯ್ಯ ಕಿಡಿ
ರಾಜ್ಯದಲ್ಲಿನ ಚುನಾವಣಾ ಅಕ್ರಮಗಳ ಕುರಿತು ರಾಹುಲ್ ಗಾಂಧಿಯವರು ಎತ್ತಿರುವ ಪ್ರಶ್ನೆಗಳನ್ನು ದಿಕ್ಕು ತಪ್ಪಿಸುವ ಸಲುವಾಗಿ, ಮೇ 2025ರಲ್ಲಿ ಚುನಾವಣಾ ಆಯೋಗವು ಮತಜಾಗೃತಿಗಾಗಿ ನಡೆಸಿದ ಹಳೆಯ ಸಮೀಕ್ಷೆಯನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 5 ಕೋಟಿಗೂ ಹೆಚ್ಚು ಮತದಾರರಿರುವಲ್ಲಿ ಕೇವಲ 5,100 ಜನರ ಸ್ಯಾಂಪಲ್ ಪಡೆದು ನಡೆಸಲಾದ ಈ ಸಮೀಕ್ಷೆಯು ಅವೈಜ್ಞಾನಿಕ ಎಂದಿರುವ ಅವರು, ಇದನ್ನು ನಡೆಸಿದ ಸಂಸ್ಥೆಯು ಬಿಜೆಪಿ ಪರ ಒಲವು ಹೊಂದಿದೆ ಎಂದು ದೂರಿದ್ದಾರೆ.
ಕೇಂದ್ರದ ಹಸ್ತಕ್ಷೇಪಕ್ಕೆ ಆಗ್ರಹ
ಬಳ್ಳಾರಿ ಗಲಭೆ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಎಸ್ಪಿ ಪವನ್ ನೆಜ್ಜೂರು ಸಸ್ಪೆಂಡ್
ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ಹೊಸ ವರ್ಷದ ದಿನವೇ ಗಲಭೆ ನಡೆದಿದೆ. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಡುವಿನ ಗಲಾಟೆಯಲ್ಲಿ ಖಾಸಗಿ ಗನ್ ಮ್ಯಾನ್ ಮಾಡಿದ ಫೈರಿಂಗ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ಈ ಘಟನೆ ಸಂಬಂಧ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಲಾಗಿದೆ.
Uttar Pradesh | ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಕೊಲೆಗೈದ ಯುವತಿಯ ಬಂಧನ
ಬಂಡಾ, ಜ. 2: ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದನೆನ್ನಲಾದ ಮಧ್ಯವಯಸ್ಕನೊಬ್ಬನನ್ನು 18 ವರ್ಷದ ಯುವತಿಯೊಬ್ಬಳು ಹರಿತವಾದ ಆಯುಧದಿಂದ ಕಡಿದು ಹತ್ಯೆಗೈದ ಘಟನೆ ಉತ್ತರಪ್ರದೇಶದ ಬಂಡಾ ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ವಿಚಾರಣೆ ನಡೆಯುತ್ತಿದೆ. ಉತ್ತರಪ್ರದೇಶದ ಮುರ್ವಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಸ್ಥಳೀಯ ನಿವಾಸಿ ಸುಖರಾಜ್ ಪ್ರಜಾಪತಿ (50) ಅವರ ಮೃತದೇಹ ಆತನ ಮನೆಯಲ್ಲಿ ಪತ್ತೆಯಾಗಿದೆ. ಮೃತನ ತಲೆಗೆ ಹರಿತವಾದ ಆಯುಧದಿಂದ ಕಡಿದ ಗಾಯದ ಗುರುತುಗಳು ಕಂಡುಬಂದಿವೆ. ಮೃತನ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಿದ ಆಯುಧವನ್ನು ಆಕೆಯಿಂದ ವಶಪಡಿಸಿಕೊಂಡಿದ್ದಾರೆ. ಹತ್ಯೆಯಾದ ವ್ಯಕ್ತಿ ಸುಖರಾಜ್ ಪ್ರಜಾಪತಿ ತನ್ನ ಮನೆಗೆ ಪ್ರವೇಶಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದನೆಂದು ಬಂಧಿತ ಯುವತಿ ವಿಚಾರಣೆ ವೇಳೆ ತಿಳಿಸಿದ್ದಾಳೆ. ಆತ್ಮರಕ್ಷಣೆಯ ಪ್ರಯತ್ನವಾಗಿ ತನ್ನ ಮನೆಯಲ್ಲಿದ್ದ ‘ಫರ್ಸಾ’ ಎಂಬ ಹರಿತವಾದ ಆಯುಧದಿಂದ ಆತನನ್ನು ಕಡಿದು ಹತ್ಯೆಗೈದಿರುವುದಾಗಿ ಬಂಧಿತ ಯುವತಿ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಸಿಂಗ್ ರಜಾವತ್ ತಿಳಿಸಿದ್ದಾರೆ.
ಸಫಾರಿ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರು, ಜ.2: ಸಫಾರಿ ವಾಹನಗಳ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿವೆಯೇ ಎನ್ನುವ ಕುರಿತು ಹಾಗೂ ಬಂಡೀಪುರ-ನಾಗರಹೊಳೆಯಲ್ಲಿ ಸಫಾರಿ ವಾಹನಗಳ ಧಾರಣಾ ಸಾಮರ್ಥ್ಯವೆಷ್ಟು ಎಂಬ ಬಗ್ಗೆ ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ 20ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅರಣ್ಯ ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಫಾರಿ ಬಗೆಗಿನ ನಿರ್ಣಯವನ್ನು ಪುನರ್ ಪರಿಶೀಲಿಸಲು ಪರಿಣಿತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಿ, ಅಭಿಪ್ರಾಯ ಪಡೆಯಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಇದಕ್ಕೂ ಮೊದಲು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಳೆದ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಹುಲಿಗಳ ದಾಳಿಯಿಂದ ಮೂವರು ಮೃತಪಟ್ಟು ಒಬ್ಬರು ಶಾಶ್ವತ ವಿಶೇಷಚೇತನರಾದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಳಿಸಲಾಗಿತ್ತು. ಈ 2 ತಿಂಗಳ ಅವಧಿಯಲ್ಲಿ ಕಾಡಿನ ಹೊರಗೆ ಹುಲಿ ದಾಳಿ ನಡೆದಿಲ್ಲ, ಯಾವುದೇ ಜೀವಹಾನಿ ಆಗಿಲ್ಲ ಎಂದು ವಿವರಿಸಿದರು. ಸಫಾರಿ ವಾಹನದ ಕಿರಿಕಿರಿಯಿಂದ, ವಾಹನಗಳ ಬೆಳಕಿನಿಂದ ವನ್ಯಜೀವಿಗಳು ಹೊರಬರುತ್ತವೆ ಎಂಬುದು ಸ್ಥಳೀಯರು ಮತ್ತು ರೈತರ ಆರೋಪವಾಗಿದೆ. ಈ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿ ಇತ್ತು. ಇಂದು ಸುಮಾರು 175-200 ಹುಲಿಗಳಿವೆ. ಒಂದು ಹುಲಿ ಸ್ವಚ್ಛಂದವಾಗಿ ಜೀವಿಸಲು 10 ಚದರ ಕಿಲೋ ಮೀಟರ್ ಪ್ರದೇಶ ಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ 900 ಚದರ ಕಿಲೋ ಮೀಟರ್ ಕಾಡಿನಲ್ಲಿ 2 ಪಟ್ಟು ಹುಲಿಗಳಿವೆ. ಇದು ಸಹ ಹುಲಿಗಳು ಕಾಡಿನಿಂದ ನಾಡಿನತ್ತ ಬರಲು ಕಾರಣವಾಗಿದೆ ಎಂದು ಉಲ್ಲೇಖಿಸಿದರು. ವನ ಮತ್ತು ವನ್ಯಜೀವಿ ವಿಭಾಗದ ರಾಯಭಾರಿ ಅನಿಲ್ ಕುಂಬ್ಳೆ ಮಾತನಾಡಿ, ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುವುದಕ್ಕೂ ಸಫಾರಿಗೂ ಸಂಬಂಧವಿಲ್ಲ. ಸಫಾರಿಗೆ ಕೇವಲ ಶೇ.8ರಷ್ಟು ಅರಣ್ಯ ಪ್ರದೇಶವೂ ಬಳಕೆ ಆಗುವುದಿಲ್ಲ. ಸ್ಥಳೀಯರ ಜೀವನೋಪಾಯವೂ ಇದರಲ್ಲಿ ಅಡಗಿದೆ. ಹೀಗಾಗಿ ಪುನರ್ ಪರಿಶೀಲಿಸಬೇಕು ಎಂದು ಸಲಹೆ ಮಾಡಿದರು. ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಸಫಾರಿ ಸ್ಥಗಿತಗೊಳಿಸಿರುವುದರಿಂದ ಸ್ಥಳೀಯರ ಜೀವನೋಪಾಯಕ್ಕೂ ತೊಂದರೆ ಆಗಿದೆ. ಪ್ರವಾಸೋದ್ಯಮಕ್ಕೂ ಪೆಟ್ಟು ಬಿದ್ದಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಚಿವ ಭೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಜೇವರ್ಗಿ | ಅಮರಶಿಲ್ಪಿ ಜಕಣಾಚಾರ್ಯ ಜಯಂತೋತ್ಸವ
ಜೇವರ್ಗಿ: ಪಟ್ಟಣದ ಬುಟ್ನಾಳ ರಸ್ತೆಯ ಪಕ್ಕದಲ್ಲಿರುವ ನಾಟ್ಯಲೋಕ ಡ್ಯಾನ್ಸ್ ಅಕಾಡೆಮಿ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯ ಜಯಂತೋತ್ಸವ ಆಚರಿಸಲಾಯಿತು. ವಿಶ್ವಕರ್ಮ ಸಮಾಜದ ಜಕಣಾಚಾರಿ ಜಯಂತಿಯ ಕುರಿತು ಸವಿಸ್ತಾರವಾಗಿ ಕರುಣಾಸಾಗರ ಪತ್ತಾರವರು ಮಾತನಾಡಿದರು. ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಜಗದೀಶ್ ವಿಶ್ವಕರ್ಮ ಅವರು ಪೂಜೆಯನ್ನು ನೆರವೇರಿಸಿದರು. ಅಕಾಡೆಮಿಯ ಮಾಸ್ಟರ್ ಗಳಾದ ಮೋಹನ್ ಬಡಿಗೇರ ಮಾಸ್ಟರ್ ಮತ್ತು ರಾಜು ಮಾಸ್ಟರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರವೀಣ್ ಪತ್ತಾರ್,ರಮೇಶ್ ವಿಶ್ವಕರ್ಮ, ನಿಂಗರಾಜ ವಿಶ್ವಕರ್ಮ, ಮಂಜುನಾಥ ವಿಶ್ವಕರ್ಮ, ಸುಧಾಕರ್ ಪತ್ತಾರ, ಗಿರೀಶ ಪತ್ತಾರ, ಮಹಾಂತೇಶ ವಿಶ್ವಕರ್ಮ, ಗುಂಡಪ್ಪ ಪತ್ತಾರ, ವಿಜಯಕುಮಾರ್ ಪತ್ತಾರ, ಶರಣು ವಿಶ್ವಕರ್ಮ ಇದ್ದರು.
ಶಹಾಬಾದ್ | ಸರಕಾರಿ ನೌಕರರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
ಶಹಾಬಾದ್ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮುದ್ರಿಸಿರುವ 2026ರ ನೂತನ ವರ್ಷದ ಕ್ಯಾಲೆಂಡರ್ನ್ನು ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ತಹಶೀಲ್ದಾರ್ ನೀಲಪ್ರಭಾ ಬಬಲಾದ ಅವರು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್ ಅವರು ಮಾತನಾಡಿ, ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 2026ನೇ ಸಾಲಿನ ಆಕರ್ಷಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಸುಮಾರು 6 ಲಕ್ಷ ನೌಕರರಿಗೆ ಉಚಿತವಾಗಿ ವಿತರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಿಡುಗಡೆಯಾದ ಈ ಕ್ಯಾಲೆಂಡರ್ ಸರ್ಕಾರಿ ಯೋಜನೆಗಳು, ಜವಾಬ್ದಾರಿಗಳ ಕುರಿತು ಮಾಹಿತಿ ನೀಡುತ್ತದೆ ಎಂದರು. ತಹಶೀಲ್ದಾರ್ ನೀಲಪ್ರಭಾ ಬಬಲಾದ ಮಾತನಾಡಿ, ಈ ಕ್ಯಾಲೆಂಡರ್ ಕೇವಲ ದಿನಾಂಕಗಳನ್ನು ಹೊಂದಿಲ್ಲದೆ, ಸರ್ಕಾರದ ಯೋಜನೆಗಳು, ನೌಕರರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ ಕ್ಯಾಲೆಂಡರ್ ಆಗಿದೆ. ದೇಶದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ನೌಕರರಿಗೆ ಉಚಿತ ಕ್ಯಾಲೆಂಡರ್ ವಿತರಿಸುತ್ತಿರುವ ಮೊದಲ ಸಂಘ ಎಂಬ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪಾತ್ರವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ, ರವಿಕುಮಾರ ಮುತ್ತಗಿಕರ್, ಅಣ್ಣಾರಾವ, ಗಫರ್, ಮುನೀರ್, ಶಕುಂತಲಾ ಸಾಕ್ರೆ, ಕಲಾವತಿ, ವಿಠಾಬಾಯಿ, ಸುಲೋಚನಾ ಜಾಧವ, ಸುಶೀಲ, ಶಶಿಕಾಂತ, ನರಸಪ್ಪ, ನಝೀರ್, ಹಬೀಬ್, ಯುಸೂಫ್ ನಾಕೇದಾರ, ಮುಹಮ್ಮದ್ ಖಾದ್ರಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.
19 ರಾಜ್ಯಗಳಲ್ಲಿ ಭೂಆಸ್ತಿ ನಕ್ಷೆಗಳು ಡಿಜಿಟಲ್!
ಮನೆಯಿಂದಲೇ ಭೂದಾಖಲೆಗಳ ಡೌನ್ಲೋಡ್ಗೆ ಅವಕಾಶ
ಕಲಬುರಗಿ | ಮನೆಗೊಂದು ಗ್ರಂಥಾಲಯ ಯೋಜನೆ ಅಭಿಯಾನ
ಕಲಬುರಗಿ: ಇಲ್ಲಿನ ಶಹಾಬಜಾರ ನಾಕಾದಲ್ಲಿರುವ ಶಿಕ್ಷಣ ಪ್ರೇಮಿ ರಾಜಶೇಖರ ಚೌದ್ರಿ ಅವರ ಮನೆಯಲ್ಲಿ ಗ್ರಂಥಾಲಯ ನಿರ್ಮಿಸುವ ಮೂಲಕ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಗೆ ಚಾಲನೆ ನೀಡಲಾಯಿತು. ಮನೆಯ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಇಂದಿನ ಒತ್ತಡದ ಬದುಕಿನಲ್ಲಿ ಮಕ್ಕಳಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗಿದೆ. ಈ ದಿಸೆಯಲ್ಲಿ ಓದುವ ಅಭಿರುಚಿ ಬೆಲೆಸುವ ನಿಟ್ಟಿನಲ್ಲಿ ಮನೆಯಿಂದಲೇ ಆರಂಭವಾಗಲಿ ಎಂಬ ಆಶಯದೊಂದಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಹೊಸ ಯೋಜನೆ ಅನುಷ್ಠಾನಗೊಳಿಸಿದ್ದು, ಅದರ ಸದುಪಯೋಗವಾಗಬೇಕಾದರೆ ಮಕ್ಕಳಿಗೆ ಪುಸ್ತಕ ಓದು, ಬರಹಗಳತ್ತ ಆಸಕ್ತಿ ಮೂಡಿಸಬೇಕು ಎಂದರು. ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯ ರಾಜಶೇಖರ ಚೌದ್ರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಪ್ರಕಟಿಸಿದ ಕೃತಿಗಳನ್ನು ಗ್ರಂಥಾಲಯಕ್ಕೆ ಉಡುಗೊರೆಯಾಗಿ ನೀಡಿದರು. ಜಿಲ್ಲಾ ಕಸಾಪದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ನ್ಯಾಯವಾದಿ ವಿನೋದಕುಮಾರ ಜೆ.ಎಸ್., ಅಫಜಲಪೂರ ಕಸಾಪ ನೂತನ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಕಾರ್ಯದರ್ಶಿ ಪರಮಾನಂದ ಸರಸಂ, ಜಯಶ್ರೀ ಚೌದ್ರಿ, ಬಸವರಾಜ ಸಜ್ಜನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಬ್ರಹ್ಮಾವರ: ಅಕ್ರಮ ಮರಳುಗಾರಿಕೆ ಆರೋಪ; 17 ದೋಣಿಗಳು ವಶ
ಬ್ರಹ್ಮಾವರ, ಜ.2: ಬ್ರಹ್ಮಾವರ ಪೊಲೀಸ್ ವ್ಯಾಪ್ತಿಯ ವಿವಿಧೆಡೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಪ್ರದೇಶಗಳಿಗೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸರು ಒಟ್ಟು 17 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿವಿಧೆಡೆ ದೋಣಿಗಳನ್ನು ಬಳಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸರು, ಹಾವಂಜಿ ಗ್ರಾಮದ ಮುಗ್ಗೇರಿ ಹಾಗೂ ಉಳ್ಳೂರು ಗ್ರಾಮದ ಅಮ್ಮುಂಜೆ ಪರಿಸರದ ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ 17 ದೋಣಿಗಳನ್ನು ವಶ ಪಡಿಸಿಕೊಂಡರೆನ್ನಲಾಗಿದೆ. ಉಡುಪಿ ಎಸ್ಪಿ ಹರಿರಾಂ ಶಂಕರ್ ನಿರ್ದೇಶನದಂತೆ ಹೆಚ್ಚುವರಿ ಎಸ್ಪಿ ಸುಧಾಕರ ನಾಯ್ಕ, ಡಿವೈಎಸ್ಪಿ ಪ್ರಭು ಡಿ.ಟಿ. ಮತ್ತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಉಪ ನಿರೀಕ್ಷಕರುಗಳಾದ ಅಶೋಕ ಮಾಳಾಬಗಿ, ಸುದರ್ಶನ್ ದೊಡಮನಿ ಹಾಗೂ ಠಾಣಾ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಜೇವರ್ಗಿ | ಹಿಂಗಾರು ಬೆಳೆ ಸಮಿಕ್ಷೆ ನಡೆಸಿ ಪಹಣಿಯಲ್ಲಿ ನೋಂದಾಯಿಸುವಂತೆ ಆಗ್ರಹ
ಜೇವರ್ಗಿ : ಹಿಂಗಾರು ಬೆಳೆಗಳ ಸಮೀಕ್ಷೆ ನಡೆಸಿ ರೈತರ ಪಹಣಿಯಲ್ಲಿ ಕೂಡಲೇ ನೋಂದಣಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಲ್ಯಾಣ ಕರ್ನಾಟಕ ವಿಭಾಗ ಸಂಚಾಲಕರಾದ ರಾಜಶೇಖರ ಚವಡಿ ಆಗ್ರಹಿಸಿದರು. ಈ ಸಂಬಂಧ ಜೇವರ್ಗಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಮುಂಗಾರು ಬೆಳೆ ಅತಿಯಾದ ಮಳೆಯಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಇದೀಗ ತಮ್ಮ ಜಮೀನಿನಲ್ಲಿ ಹಿಂಗಾರು ಬೆಳೆ ಬೆಳೆಸುತ್ತಿದ್ದಾರೆ. ಆದರೆ ಹಿಂಗಾರು ಬೆಳೆಗಳ ಸಮೀಕ್ಷೆ ನಡೆಸಿ ಪಹಣಿಯಲ್ಲಿ ನೋಂದಣಿ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಹಿಂಗಾರು ಬೆಳೆ ಸಮೀಕ್ಷೆ ನಡೆಸಿ ಪಹಣಿಯಲ್ಲಿ ನೋಂದಣಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ವಿಳಂಬವಿಲ್ಲದೆ ಸಮೀಕ್ಷೆ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷಗೌಡ ಮಾಲಿ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ರಮೇಶ ಹವಲ್ದಾರ, ಸಂಚಾಲಕ ವಿಶ್ವನಾಥ ದೊರೆ, ಜೇವರ್ಗಿ ತಾಲೂಕ ಖಜಾಂಚಿ ಮಲ್ಲಣ್ಣಗೌಡ ಹಳ್ಳಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
ಚಂದ್ರಶೇಖರ ಕಂಬಾರಗೆ ರಾಮನಾಥ ಗೋಯಂಕಾ ‘ಜೀವಮಾನ ಸಾಧನೆ’ ಪ್ರಶಸ್ತಿ
ನಾಲ್ವರು ಲೇಖಕರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರು, ಜ.2: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕೈದಿ ಟಿ.ನಸೀರ್ಗೆ ನೆರವು ನೀಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಎರಡನೇ ದೋಷಾರೋಪ ಪಟ್ಟಿ ಇದಾಗಿದ್ದು, ಆರೋಪಿ ಜುನೈದ್ನ ತಾಯಿ ಅನೀಸ್ ಫಾತಿಮಾ, ಎಎಸ್ಐ ಚಾಂದ್ಪಾಷಾ ಎ. ಹಾಗೂ ಕಾರಾಗೃಹದ ವೈದ್ಯ ಡಾ.ನಾಗರಾಜ್ ಎಸ್. ವಿರುದ್ಧ ಐಪಿಸಿ, ಯುಎ(ಪಿ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಕಾರಾಗೃಹ ಕಾಯ್ದೆಯ ವಿವಿಧ ವಿಭಾಗಗಳಡಿಯಲ್ಲಿ ಆರೋಪಿಗಳು ಎಂದು ದೋಷಾರೋಪ ಪಟ್ಟಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ. ಈ ಹಿಂದೆಯೂ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪರಾರಿಯಾಗಿದ್ದ ಆರೋಪಿ ಜುನೈದ್ ಸಹಿತ 9 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು. ಇದೀಗ ಹೆಚ್ಚುವರಿಯಾಗಿ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಜುನೈದ್ನ ತಾಯಿ ಅನೀಸ್ ಫಾತಿಮಾ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಕೈದಿ ಟಿ.ನಸೀರ್ಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದರು. ಮಗನ ನಿರ್ದೇಶನದ ಮೇರೆಗೆ ಮದ್ದುಗುಂಡುಗಳು ಮತ್ತು ವಾಕಿ-ಟಾಕಿಗಳನ್ನು ಸಂಗ್ರಹಿಸಿ ಪ್ರಕರಣದ ವಿವಿಧ ಆರೋಪಿಗಳ ನಡುವೆ ಸಂವಹನವನ್ನು ಸುಗಮಗೊಳಿಸಿದ್ದರು. ಅಲ್ಲದೆ, ಪ್ರಮುಖ ಆರೋಪಿ ಸಲ್ಮಾನ್ ಖಾನ್ಗೆ ಆಶ್ರಯ ನೀಡುವಲ್ಲಿ ಮತ್ತು ಅವನ ಪ್ರಯಾಣ ದಾಖಲೆಗಳನ್ನು ವ್ಯವಸ್ಥೆ ಮಾಡುವ ಮೂಲಕ ದುಬೈಗೆ ಪರಾರಿಯಾಗಲು ಸಹಾಯ ಮಾಡಿದ್ದರು ಎಂಬುದು ಎನ್ಐಎ ತನಿಖೆಯಿಂದ ಬಹಿರಂಗವಾಗಿತ್ತು. ನಂತರ ಆಫ್ರಿಕಾದ ರುವಾಂಡಾ ರಿಪಬ್ಲಿಕ್ನಲ್ಲಿದ್ದ ಸಲ್ಮಾನ್ ಖಾನ್ನನ್ನು ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಬೆಂಗಳೂರು ನಗರದ ನಗರ ಸಶಸ್ತ್ರ ಮೀಸಲು- ದಕ್ಷಿಣ ವಿಭಾಗದಲ್ಲಿ ಎಎಸ್ಐ ಆಗಿದ್ದ ಚಾಂದ್ ಪಾಷಾ ಕೈದಿಗಳ ಬೆಂಗಾವಲು ಕರ್ತವ್ಯದಲ್ಲಿದ್ದಾಗ ಟಿ.ನಸೀರ್ನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಸಮಯ, ಮಾರ್ಗದ ವಿವರಗಳನ್ನು ಆರೋಪಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ಮತ್ತು ಇದಕ್ಕಾಗಿ ಆರೋಪಿ ಸಲ್ಮಾನ್ ನಿಂದ ಪ್ರತಿಫಲವನ್ನು ಪಡೆಯುತ್ತಿದ್ದ. ಪರಪ್ಪನ ಅಗ್ರಹಾರ ಕಾರಾಗೃಹದ ಆಸ್ಪತ್ರೆಯಲ್ಲಿ ಮನೋವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ನಾಗರಾಜ್, ಕಾನೂನು ಬಾಹಿರವಾಗಿ ಜೈಲಿನಲ್ಲಿ ಕೈದಿಗಳಿಂದ ಹಣ ಪಡೆದು ಮೊಬೈಲ್ ಮಾರಾಟ ಮಾಡುತ್ತಿದ್ದ. ಟಿ.ನಸೀರ್ಗೂ ಮೊಬೈಲ್ ಮಾರಾಟ ಮಾಡಿದ್ದ ಎಂದು ಎನ್ಐಎ ವಿವರಿಸಿರುವುದಾಗಿ ಮೂಲಗಳು ತಿಳಿಸಿವೆ.
ಜೇವರ್ಗಿ | ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ
ಜೇವರ್ಗಿ : 30 ಸಾವಿರ ಪೇಶ್ವೆಗಳನ್ನು ಕೇವಲ 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ಐತಿಹಾಸಿಕ ದಿನವನ್ನು ಭೀಮಾ ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ ಹಾಗೂ ಮೇಲುಕೀಳು ವ್ಯವಸ್ಥೆಗಳ ವಿರುದ್ಧ ನಿಂತು ಮಾನವೀಯ ಮೌಲ್ಯಗಳಿಗಾಗಿ ಹೋರಾಡಿದ ಮಹಾರ್ ಸೈನಿಕರ ಧೈರ್ಯ, ಸಾಹಸ ಮತ್ತು ಕೆಚ್ಚೆದೆಯ ಹೋರಾಟ ಮೆಚ್ಚುವಂತದ್ದು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು. ಪಟ್ಟಣದ ಡಾ.ಅಂಬೇಡ್ಕರ್ ಪುತ್ಥಳಿ ಬಳಿ ಭೀಮಾ ಕೋರೆಗಾಂವ್ ವಿಜಯೋತ್ಸವ ತಾಲ್ಲೂಕು ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ 208ನೇ ಶೌರ್ಯ ದಿನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಮಾತನಾಡಿದರು. ಬಹುಜನ ಚಿಂತಕ ಅನಿಲ ಟೆಂಗಳಿ ಹಾಗೂ ನಿಜಲಿಂಗ ದೊಡ್ಡಮನಿ ಪಂಡಿತ ಮುದಗುಣಗಿ ಉಪನ್ಯಾಸ ನೀಡಿ, ಕೋರೆಗಾಂವ್ ಯುದ್ಧದ ಐತಿಹಾಸಿಕ ಮಹತ್ವ ಮತ್ತು ಅದರ ಸಾಮಾಜಿಕ ಸಂದೇಶವನ್ನು ವಿವರಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸಂತೋಷ ಚನ್ನೂರ, ರೇಣುಕಾ ಗಾಯಕವಾಡ, ಖಾಜಪ್ಪ ಮಯೂರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಹರನಾಳ, ಮಲ್ಲಣ್ಣ ಕೊಡಚಿ, ಜಗದೇವಿ ಜಟ್ನನಕರ, ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಮರೆಪ್ಪ ಬೇಗಾರ, ಡಾ. ಅಶೋಕ ದೊಡ್ಡಮನಿ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿದ್ದರಾಮ ಕಟ್ಟಿ, ಮಾಪಣ್ಣ ಕಟ್ಟಿ, ಗ್ಯಾರಂಟಿ ಸಮಿತಿ ಸದಸ್ಯ ಶರಣಬಸವಪ್ಪ ರೇವನೂರ, ದೇವೇಂದ್ರ ಮುದವಾಳ, ಬೆಣ್ಣೆಪ್ಪ ಕೊಂಬಿನ, ಪ್ರಭಾಕರ ಸಾಗರ್, ಪುರಸಭೆ ಸದಸ್ಯ ಶಿವುಬಾಯಿ ಕೊಂಬಿನ, ಗುಂಡಪ್ಪ ಜಡಗಿ, ಸಂಗಣ್ಣ ಗುಡುರ್, ಸಂಗಣ್ಣ ಕಟ್ಟಿ ಸಂಗಾವಿ, ಶರಣಬಸವಪ್ಪ, ರಮೇಶ್ ಧನಕರ, ಮೌನೇಶ್ ಹಂಗಾರಗಿ, ಮಾರುತಿ ಕನ್ನಾ, ವಿಜಯಕುಮಾರ ಜಟ್ನಾಕರ, ಆನಂದ ಕೊಂಬಿನ, ಮಿತೇಶ್ ಡುಗನಕರ್, ಮಿಲಿಂದ್ ಸಾಗರ, ವಿಶ್ವ ಬಾರಿಗಿಡ, ಶ್ರೀಮಂತ ಕಿಲ್ಲದಾರ, ಭಾಗಣ್ಣ ಕಟ್ಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಯಶವಂತ ಬಡಿಗೇರ ಕ್ರಾಂತಿಗೀತೆ ಹಾಡಿದರು. ಸಿದ್ದು ಕೆರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯಕಾಂತ ಡುಗನಕರ್ ಸ್ವಾಗತಿಸಿದರು. ಶರಣಪ್ಪ ಬಡಿಗೇರ ನಿರೂಪಿಸಿದರು. ಶ್ರೀಹರಿ ಕರಕಿಹಳ್ಳಿ ವಂದಿಸಿದರು.
ರಾಹುಲ್ ಗಾಂಧಿಗೂ ಅಮೆರಿಕ ಸಂಸದರ ಪತ್ರಕ್ಕೂ ತಳುಕು ಹಾಕಿದ ಬಿಜೆಪಿ
ಹೊಸದಿಲ್ಲಿ, ಜ. 2: ಬಂಧನದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ಅವರ ನ್ಯಾಯಯುತ ಮತ್ತು ಸಕಾಲಿಕ ವಿಚಾರಣೆಗೆ ಆಗ್ರಹಿಸಿ ಅಮೆರಿಕದ ಎಂಟು ಸಂಸದರು ಭಾರತಕ್ಕೆ ಪತ್ರ ಬರೆದಿರುವುದನ್ನು ಬಲವಾಗಿ ಆಕ್ಷೇಪಿಸಿರುವ ಬಿಜೆಪಿಯು, ಆ ಪತ್ರದ ಹಿಂದಿನ ‘ಭಾರತ ವಿರೋಧಿ’ ಗುಂಪಿಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ತಳುಕು ಹಾಕಿದೆ. ಅಮೆರಿಕದ ಎಂಟು ಸಂಸದರ ಪೈಕಿ ಒಬ್ಬರಾಗಿರುವ ಜಾನ್ ಶಾಕೋವಸ್ಕಿ ಅವರು 2024ರಲ್ಲಿ ರಾಹುಲ್ ಗಾಂಧಿಯವರೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ‘ಭಾರತ ವಿರೋಧಿ’ ಇಲ್ಹಾನ್ ಉಮರ್ ಉಪಸ್ಥಿತರಿದ್ದರು ಎಂದು ಬಿಜೆಪಿ ನಾಯಕ ಪ್ರದೀಪ ಭಂಡಾರಿ ಶುಕ್ರವಾರ ಆರೋಪಿಸಿದರು. ರಾಹುಲ್ ಅವರು ಶಾಕೋವಸ್ಕಿ, ಸ್ಯಾಮ್ ಪಿತ್ರೋಡಾ ಮತ್ತು ಇತರರೊಂದಿಗೆ ಇದ್ದ ಛಾಯಾಚಿತ್ರವನ್ನು ಹಂಚಿಕೊಂಡ ಭಂಡಾರಿ, ‘ವಿದೇಶಗಳಲ್ಲಿ ಭಾರತ ವಿರೋಧಿ ನಿರೂಪಣೆ ಹರಡಿಕೊಂಡಾಗಲೆಲ್ಲ ಹಿನ್ನೆಲೆಯಲ್ಲೊಂದು ಹೆಸರು ಅನುರಣಿಸುತ್ತಲೇ ಇರುತ್ತದೆ: ರಾಹುಲ್ ಗಾಂಧಿ’ ಎಂದು ಆರೋಪಿಸಿದರು. 2024ರಲ್ಲಿ ರಾಹುಲ್ ಅವರನ್ನು ಭೇಟಿಯಾದ ಬಳಿಕ, ಮರುವರ್ಷ ಶಾಕೋವಸ್ಕಿ ಭಾರತವನ್ನು ಹೆಸರಿಸಿ ಮುಸ್ಲಿಂ ಸಮುದಾಯಗಳ ಮೇಲೆ ದಾಳಿಗಳು ನಡೆದಿವೆ ಎಂದು ಆರೋಪಿಸಿ ‘ಅಂತರರಾಷ್ಟ್ರೀಯ ಇಸ್ಲಾಮೋಫೋಬಿಯಾ ವಿರುದ್ಧ ಕಾಯ್ದೆ’ಯನ್ನು ಮಂಡಿಸಿದ್ದರು. ಈಗ ಇದೇ ಶಾಕೋವಸ್ಕಿ, ಗಲಭೆಗಳು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಗಂಭೀರ ಪ್ರಕರಣಗಳಲ್ಲಿ ಯುಎಪಿಎ ಅಡಿ ಆರೋಪಿ ಆಗಿರುವ ಉಮರ್ ಖಾಲಿದ್ ಕುರಿತು ಕಳವಳ ವ್ಯಕ್ತಪಡಿಸಿ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಭಂಡಾರಿ ಹೇಳಿದರು. ಭಾರತವನ್ನು ಅಸ್ಥಿರಗೊಳಿಸಲು, ಅದರ ಚುನಾಯಿತ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮತ್ತು ಭಯೋತ್ಪಾದನೆ ನಿಗ್ರಹ ಕಾನೂನುಗಳನ್ನು ದುರ್ಬಲಗೊಳಿಸಲು ಬಯಸುವವರು ರಾಹುಲ್ ಸುತ್ತ ಸೇರಿರುವಂತೆ ಕಾಣುತ್ತಿದೆ ಎಂದೂ ಭಂಡಾರಿ ಹೇಳಿದರು.
ಬನಶಂಕರಿ ಅಮ್ಮನವರ ರಥೋತ್ಸವ; ಯಾವ್ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗವೇನು?
ಶನಿವಾರ(ಜ.3)ರಂದು ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ ಇರುವ ಕಾರಣ ಕನಕಪುರ ಮತ್ತು ಸಾರಕ್ಕಿ ಮಾರುಕಟ್ಟೆ ಸುತ್ತಮುತ್ತ ಸಂಚಾರ ನಿರ್ಬಂಧಿಸಲಾಗಿದೆ. ಸುಗಮ ವಾಹನ ಸಂಚಾರಕ್ಕಾಗಿ ಬದಲಿ ಮಾರ್ಗಗಳ ಪಟ್ಟಿಯನ್ನು ದಕ್ಷಿಣ ವಿಭಾಗದ ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಯಾವ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಯಾವ ರಸ್ತೆ ಬಳಸಬೇಕು ಎನ್ನುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ವಿನಯ ಹೆಗ್ಡೆಯಂತಹ ಮತ್ತೊಬ್ಬ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ: ಡಾ.ಬಿ.ಎ.ವಿವೇಕ ರೈ
ಸಾರ್ವಜನಿಕ ಶ್ರದ್ಧಾಂಜಲಿ ಸಭೆ
ಶಹಾಬಾದ್ | ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿದವರು ಅಂಬೇಡ್ಕರ್ : ಮರಿಯಪ್ಪ ಹಳ್ಳಿ
ಶಹಾಬಾದ್ : ಹುಟ್ಟಿನಿಂದ ಹಿಡಿದು ಅವರ ಕೊನೆ ಉಸಿರು ಇರುವ ತನಕ ಅನೇಕ ಹೋರಾಟಗಳನ್ನು ಮಾಡಿ ಈ ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿ ಹೊಸ ಬದಲಾವಣೆಯನ್ನು ತಂದಂತಹ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು. ಅವರು ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದಲ್ಲಿ ಆಯೋಜಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸಬಾಕಾದವರು ಬೇಕಾಗಿದೆ. ಕೇವಲ ಅವರ ಭಾವಚಿತ್ರಕ್ಕೆ ಮತ್ತು ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪೂಜೆ ಮಾಡುವುದಕ್ಕಿಂತಲೂ ಅವರ ಚರಿತ್ರೆಯನ್ನು ಅರಿತು ನಡೆಯಬೇಕಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಮುತ್ತಮ್ಮ ಶಿವರಾಯ ಮರತೂರ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ ಧ್ವಜಾರೋಹಣ ನೆರವೇರಿಸಿದರು. ತಹಶೀಲ್ದಾರ್ ನೀಲಪ್ರಭಾ ಬಬಲಾದ, ಅಣದೂರಿನ ಬೌದ್ಧ ವಿಹಾರದ ವರಜ್ಯೋತಿ ಭಂತೆಜೀ, ಅಲ್ಲಮಪ್ರಭು ಸಂಸ್ಥಾನದ ಡಾ.ಮಲ್ಲಣಪ್ಪ ಮಹಾಸ್ವಾಮಿಗಳು ಮಾತನಾಡಿದರು. ಮುಖಂಡರಾದ ಬಸವರಾಜ ಬೆಣ್ಣೂರ್, ಮಲ್ಲಪ್ಪ ಹೊಸಮನಿ, ನಗರಸಭೆ ಆಯುಕ್ತ ಕೆ.ಗುರಲಿಂಗಪ್ಪ, ತಾಪಂ ಇಓ ಮಲ್ಲಿನಾಥ ರಾವೂರ, ಕೋತ್ತಲಪ್ಪ ಮುತ್ಯಾ ,ಅಜಿತ್ಕುಮಾರ ಪಾಟೀಲ, ಅಪ್ಪುಗೌಡ ತರನಳ್ಳಿ, ಪಿಡಿಓ ನಿಂಗಪ್ಪ ಕೆಂಭಾವಿ, ಮಲ್ಲಣ್ಣ ಮರತೂರ, ಕರವೇ ಅಧ್ಯಕ್ಷ ಯಲ್ಲಾಲಿಂಗ ಹೈಯ್ಯಾಳಕರ್, ಗ್ರಾಪಂ ಸರ್ವ ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.
ಮಹಿಳೆಯರ ಅಸಭ್ಯ ಚಿತ್ರಗಳನ್ನು ರಚಿಸುತ್ತಿದೆ Grok AI; ಏನ್ ನಡೀತಿದೆ?
ಸಾಮಾಜಿಕ ಜಾಲತಾಣದಲ್ಲಿ ಫೊಟೋ ಅಪ್ಲೋಡ್ ಮಾಡಿದ್ದೀರಾ? ದುರುಪಯೋಗದ ಬಗ್ಗೆ ಇರಲಿ ಎಚ್ಚರ!
ದಾವಣಗೆರೆ: ಚಲಿಸುವ ರೈಲಿನಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ, ಲ್ಯಾಪ್ಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಆರ್ ಪಿಎಒಫ್ ಮತ್ತು ಜಿಆರ್ ಪಿ ಪೊಲೀಸರು ಬಂಧಿಸಿ 3.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದಾರೆ. ಮುಹಮ್ಮದ್ ಅಮ್ಜದ್ ಬಂಧಿತ ಆರೋಪಿ. ಕಳೆದ ಡಿ.21ರಂದು ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯ ಮೇಲುಗಿರಿ ಶಿರೂರ್ ಪಾಕ್೯ ಸಮೀಪದ ನಿವಾಸಿ ಎಂ.ವಿನಯ್ ಪ್ರಯಾಣಿಸುತ್ತಿದ್ದಾಗ ಅವರ ಬಳಿಯಿದ್ದ 3.43 ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್ಟಾಪ್ ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಆನ್ ಲೈನ್ ಮೂಲಕ ಆರ್ ಪಿಎಫ್ ಠಾಣೆಗೆ ದೂರು ನೀಡಲಾಗಿತ್ತು. ಈ ಕುರಿತು ಜಿಆರ್ ಪಿ ಇನ್ಸ್ ಪೆಕ್ಟರ್ ಕೃಷ್ಣ ನಾಯಕ್ ಹಾಗೂ ಆರ್ ಪಿಎಫ್ ಇನ್ಸ್ ಪೆಕ್ಟರ್ ರಂಜನ್ ಕುಮಾರ್ ಭಾರಾಧ್ವಜ ನೇತೃತ್ವದ ಜಂಟಿ ತಂಡ ಪರಿಶೀಲಿಸಿ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಹಮ್ಮದ್ ಅಮ್ಜದ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಭೀಮಾ ಕೋರೆಗಾಂವ್ ಕಥೆಗಳನ್ನು ಕೇಳುತ್ತಲೇ ಯುವ ಪೀಳಿಗೆಯೊಳಗೆ ಹೋರಾಟದ ಕಿಚ್ಚು ಹಚ್ಚುತ್ತದೆ : ಡಾ.ಅರುಣ ಜೋಳದಕೂಡ್ಲಗಿ
ವಾಡಿ : ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸುವುದೆಂದರೆ ಸ್ವಾಭಿಮಾನದ ಹೋರಾಟವನ್ನು ನೆನೆಸಿಕೊಳ್ಳುವ ದಿನವಾಗಿದ್ದು, ಆ ಹೋರಾಟದ ಕಥೆಗಳನ್ನು ಕೇಳುತ್ತಲೇ ಯುವ ಪೀಳಿಗೆಯೊಳಗೆ ಹೋರಾಟದ ಕಿಚ್ಚು ಹಚ್ಚುತ್ತದೆ ಎಂದು ಡಾ. ಅಂಬೇಡ್ಕರ್ ಪದವಿ ಕಾಲೇಜಿನ ಉಪನ್ಯಾಸಕ ಹಾಗೂ ಯುವ ಬರಹಗಾರ ಡಾ.ಅರುಣ ಜೋಳದಕೂಡ್ಲಗಿ ಹೇಳಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಹಾಗೂ ಸ್ಥಳೀಯ ಬೌದ್ಧ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವ ಅಂಗವಾಗಿ ನಡೆದ ಶೌರ್ಯ ದಿನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಂದು ಪೇಶ್ವೆಗಳ ಆಡಳಿತದ ಮಾದರಿಯಲ್ಲೇ ಇಂದು ಬಿಜೆಪಿ ಆಡಳಿತ ನಡೆಯುತ್ತಿದೆ ಎಂಬ ವಿಚಾರದ ಕುರಿತು 2018ರಲ್ಲಿ ಭೀಮಾ ಕೋರೆಗಾಂವ್ ನಲ್ಲಿ ದೇಶದ ಹಲವು ವಿದ್ವಾಂಸರು ನಡೆಸಿದ ಮಹತ್ವದ ಚರ್ಚೆಯಿಂದ ಕೇಂದ್ರ ಬಿಜೆಪಿ ಸರ್ಕಾರ ಭಯಗೊಂಡು ಅನೇಕ ವಿದ್ವಾಂಸರು ಹಾಗೂ ಹೋರಾಟಗಾರರನ್ನು ವರ್ಷಗಟ್ಟಲೆ ಜೈಲಿನಲ್ಲಿ ಬಂಧಿಸಿದೆ. ಇಂದಿಗೂ ಹಲವರು ಜೈಲಿನಲ್ಲೇ ಇದ್ದಾರೆ ಎಂದು ಆರೋಪಿಸಿದರು. ಶಿವಾಜಿ ಕಾಲದಲ್ಲಿ ಸೈನ್ಯ ಮತ್ತು ಆಡಳಿತದ ವಿವಿಧ ವಿಭಾಗಗಳಲ್ಲಿ ಮೇಲ್ಜಾತಿಯ ಮರಾಠ ಹಾಗೂ ಬ್ರಾಹ್ಮಣರು ಷಡ್ಯಂತ್ರ ರೂಪಿಸುತ್ತಿದ್ದರು. ಇದನ್ನು ಅರಿತ ಶಿವಾಜಿ, ಅವರನ್ನು ತಡೆಗಟ್ಟಲು ಮಹಾರರನ್ನು ಸೈನ್ಯಕ್ಕೆ ಸೇರಿಸಿಕೊಂಡಿದ್ದರು. ಈ ಇತಿಹಾಸವನ್ನು ಅಧ್ಯಯನ ಮಾಡಿದ ಬ್ರಿಟಿಷರು 1750ರಲ್ಲಿ ಮೊದಲ ಬಾರಿಗೆ ಮಹಾರರನ್ನು ಸೈನ್ಯಕ್ಕೆ ಸೇರಿಸಿಕೊಂಡರು. 1818ರಲ್ಲಿ ನಡೆದ ಯುದ್ಧವು ಬ್ರಿಟಿಷ್ ಪರವಲ್ಲ, ನಾತನವಾದಿ ಪೇಶ್ವೆಗಳ ವಿರುದ್ಧ ಸ್ವಾಭಿಮಾನಕ್ಕಾಗಿ ನಡೆದ ಹೋರಾಟ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ ಮಾತನಾಡಿ, ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಭಾವನಾತ್ಮಕವಾಗಿ ಆಚರಿಸದೆ, ಅದರ ಐತಿಹಾಸಿಕ ಸತ್ಯವನ್ನು ಅರಿತು ಸಂವಿಧಾನ ರಕ್ಷಣಾ ಪಡೆಗಳಾಗಿ ನಿಲ್ಲಬೇಕು ಎಂದರು. ಆರೆಸ್ಸೆಸ್ ಸನಾತನಿಗಳ ಪ್ರಭಾವದಲ್ಲಿರುವ ಬಿಜೆಪಿ, ಅಸ್ಪೃಶ್ಯ ದಲಿತ ಸಮುದಾಯವನ್ನು ಗುರಿಯಾಗಿಸಿಕೊಂಡು ಸಂವಿಧಾನದಲ್ಲಿ ಅಪಾಯಕಾರಿ ಬದಲಾವಣೆ ತರಲು ಯತ್ನಿಸುತ್ತಿದೆ. ಇದನ್ನು ತಡೆಯಲು ಎಲ್ಲರೂ ಒಗ್ಗಟ್ಟಾಗುವುದು ಇಂದಿನ ಅಗತ್ಯ ಎಂದು ಎಚ್ಚರಿಸಿದರು. ಉಪನ್ಯಾಸಕ ವಸಂತ ನಾಸಿ, ಸಾಮಾಜಿಕ ಕಾರ್ಯಕರ್ತ ಪ್ರಬುದ್ಧ ಲಕ್ಷ್ಮಿಕಾಂತ ಹುಬ್ಳಿ, ಸ್ಥಳೀಯ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿದರು. ಕಲಬುರಗಿ ಸಿದ್ಧಾರ್ಥ ವಿಹಾರನ ಪೂಜ್ಯ ಭಂತೆ ಚನ್ನ, ಸಾನಿದ್ಯ ವಹಿಸಿದ್ದರು. ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮೆಹಮೂದ್ ಚಿಸ್ತಿ, ಮರಿಯಪ್ಪ ಬುಕ್ಕುಲಕರ, ಶರಣಬಸು ಸಿರೂರಕರ, ರವಿ ಸಿಂಗೆ, ಶ್ರಾವಣಕುಮಾರ ಮೋಸಲಗಿ, ಸಾಯಬಣ್ಣ ಬನ್ನಟ್ಟಿ, ಮಲ್ಲೇಶಿ ಚುಕ್ಕೇರ, ನಾಗೇಂದ್ರ ಜೈಗಂಗ, ಭಾಗಪ್ಪ ಯಾದಗಿರಿ, ಶರಣು ನಾಟೇಕರ, ಚಂದ್ರಸೇನ ಮೇನಗಾರ, ಉದಯ ಯಾದಗಿರಿ, ಅನೀಲ ಸಿಬನೂರ, ಮಲ್ಲು ತಳವಾರ, ಮಲ್ಲಣ್ಣ ಮಸ್ಕಿ, ಸುನೀಲ ಚವಣೂರ, ಅರುಣ ಬರ್ಮಾ, ಶಿವು ಬೆಳಗೇರಿ, ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ರಾಜ್ಯ ಸಂಯೋಜಕರಾದ ಸಂದೀಪ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಚಂದ್ರು ಸಂಗನ ಸ್ವಾಗತಿಸಿಸರು. ರಾಜಕುಮಾರ ಸಂಕಾ ನಿರೂಪಿಸಿದರು.
ಬಸವಕಲ್ಯಾಣ | ಆರೋಗ್ಯಕರ ಸಮಾಜಕ್ಕೆ ವಚನ ಸಾಹಿತ್ಯ ಅಧ್ಯಯನ ಅವಶ್ಯಕ : ನ್ಯಾ.ಶಿವಶಂಕರ ಅಮರಣ್ಣನವರ
ಬಸವಕಲ್ಯಾಣ : 12ನೇ ಶತಮಾನದ ಶರಣರು ಸಮಾಜಕ್ಕೆ ಸಾರಿದ ವಚನ ಸಾಹಿತ್ಯವನ್ನು ಕೇವಲ ಬೋಧನೆ ಮತ್ತು ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೆ, ಅದರಲ್ಲಿ ಅಡಗಿರುವ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ ಹೇಳಿದರು. ನಗರದ ಹರಳಯ್ಯ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಆಯೋಜಿಸಿದ್ದ ಶರಣು–ಶರಣಾರ್ಥಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ಬದುಕು ಅಗತ್ಯವಾಗಿದ್ದು, ಉತ್ತಮ ಆಡಳಿತಗಾರರಾಗಲು ಸಹ ವಚನ ಸಾಹಿತ್ಯದ ಅಧ್ಯಯನ ಮತ್ತು ಅದರ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು. ಲೋಕಾಯುಕ್ತ ನ್ಯಾಯವಾದಿ ಸಂತೋಷ ನಾಗರಾಳೆ ಮಾತನಾಡಿ, ಶರಣರು ಹಾಗೂ ಸಂತರ ಸಂಗದಿಂದ ತನ್ನ ತಾನರಿತು ದೇವನಾಗುವ ಮಾರ್ಗವನ್ನು ಕಂಡುಕೊಳ್ಳಬಹುದು. “ಶರಣರ ಸಂಗದಿಂದಲಾನು ಪರಮಸುಖಿ” ಎಂದು ಅಕ್ಕ ಮಹಾದೇವಿ ಹೇಳಿದ ಮಾತುಗಳಲ್ಲಿ ಶರಣರ ಸಂಗದ ಮಹಿಮೆ ಅಡಗಿದೆ ಎಂದು ಹೇಳಿದರು. ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ.ಗಂಗಾಂಬಿಕಾ ಅಕ್ಕ ಅವರು, ವಚನಗಳು ಜಗತ್ತಿನ ಶ್ರೇಷ್ಠ ಸಂಪತ್ತಾಗಿದ್ದು, ಅವುಗಳ ನಿರಂತರ ಅಧ್ಯಯನದಿಂದ ವ್ಯಕ್ತಿಯ ಮನಸ್ಸಿನ ಮೈಲಿಗೆ ತೊಳೆಯಬಹುದು. ವಚನಗಳ ವೈಭವವನ್ನು ಜಗತ್ತು ಅರಿಯಬೇಕು. ಶರಣ ಸಂಸ್ಕೃತಿ ಬದುಕಲು ಶಕ್ತಿ ನೀಡುತ್ತದೆ. ನಡೆ–ನುಡಿ ಒಂದಾಗಿರಬೇಕು. ಮಕ್ಕಳಲ್ಲಿ ವಚನಗಳ ಮೌಲ್ಯಗಳನ್ನು ಬಿತ್ತುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ನಾಗರಾಳೆ ಅವರು 2026ರ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಡಿಪಿಸಿ ನಿರ್ದೇಶಕ ಅನಿಲಕುಮಾರ್ ರಗಟೆ ಅಧ್ಯಕ್ಷತೆ ವಹಿಸಿದ್ದರು. ಡಾ.ನಿವೇದಿತಾ ನಾಗರಾಳೆ, ಶಾಂತಯ್ಯ ಸ್ವಾಮಿ, ಡಾ.ಶೈಲೆಂದ್ರ ವಾಘ್ಮಾರೆ ಉಪಸ್ಥಿತರಿದ್ದರು. ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ ಧ್ವಜಾರೋಹಣ ನೆರವೇರಿಸಿದರು. ರಂಜನಾ ಭೂಶೆಟ್ಟಿ ಹಾಗೂ ಮಂಜುನಾಥ ವಚನ ಸಂಗೀತ ಕಾರ್ಯಕ್ರಮ ನೀಡಿದರೆ, ಲಲಿತಾ ನಾಗರಾಳೆ ವಚನ ಗಾಯನ ಮಾಡಿದರು. ಕವಿತಾ ರಾಜೋಳೆ ಸ್ವಾಗತಿಸಿದರು, ಜಯಶ್ರೀ ಬಿರಾದಾರ ನಿರೂಪಿಸಿದರು. ಶಿಕ್ಷಕ ಶಾಲಿವಾನ ಕಾಕನಾಳೆ ಪ್ರಸಾದ ದಾಸೋಹ ನಡೆಸಿಕೊಟ್ಟರು.
ಬಳ್ಳಾರಿ ಗುಂಪು ಘರ್ಷಣೆ| ನಿಷ್ಪಕ್ಷಪಾತ ತನಿಖೆಗೆ ಸಿಟಿ ರವಿ ಆಗ್ರಹ
ಚಿಕ್ಕಮಗಳೂರು, ಜ.2: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಫೈರಿಂಗ್ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ಹಾಗೂ ನ್ಯಾಯಯುತವಾದ ತನಿಖೆಯಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಆಗ್ರಹಿಸಿದರು. ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ.ರವಿ, ವಾಲ್ಮೀಕಿ ಜಯಂತಿ ಆಚರಿಸಲು ಪ್ರಾರಂಭಿಸಿದ್ದು ಬಿಜೆಪಿ ಸರಕಾರ, ಕಾಂಗ್ರೆಸ್ ರಾಮನ ಅಸ್ತಿತ್ವವನ್ನೇ ನಿರಾಕರಿಸಿ ಪರೋಕ್ಷವಾಗಿ ವಾಲ್ಮೀಕಿ ಅಸ್ತಿತ್ವವನ್ನು ನಿರಾಕರಿಸುವ ಕೆಲಸ ಮಾಡಿತ್ತು. ರಾಮಸೇತು ವೇಳೆ ಸುಪ್ರೀಂಕೋರ್ಟ್ಗೆ ರಾಮ ಇತಿಹಾಸವಲ್ಲ, ಕಥೆ ಎಂದು ಕಾಂಗ್ರೆಸ್ ಕಥೆ ಹೇಳಿತ್ತು. ಬಳ್ಳಾರಿಯಲ್ಲಿ ನಡೆದ ಘಟನೆ ಬಗ್ಗೆ ಸಮಗ್ರವಾಗಿ ತನಿಖೆಯಾಗಲಿ. ಪೂರ್ವಗ್ರಹ ಅಥವಾ ದ್ವೇಷ ತನಿಖೆಯಲ್ಲಿ ವ್ಯಕ್ತವಾಗಬಾರದು. ಯಾರು ಗುಂಡು ಹಾರಿಸಿದರು? ಕೊಲೆಗೆ ಯಾರು ಕಾರಣ ಎನ್ನುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು. ದುರುದ್ದೇಶದಿಂದ ಪ್ರಕರಣ ದಾಖಲಿಸುವುದು, ಕ್ರಮ ಕೈಗೊಳ್ಳುವುದು ಸಮಂಜಸವಲ್ಲ. ಅನುಮತಿ ಪಡೆದು ಬ್ಯಾನರ್ ಹಾಕಿದರೂ, ಅನುಮತಿ ಪಡೆಯದೆ ಬ್ಯಾನರ್ ಹಾಕಿದರೂ ತೆರವುಗೊಳಿಸುವುದು ತಪ್ಪು. ಅನುಮತಿ ಪಡೆಯದೆ ಬ್ಯಾನರ್ ಹಾಕಿದ್ದರೆ ದೂರು ಕೊಡಬಹುದಿತ್ತು. ಬಲಾಬಲ ಪ್ರದರ್ಶನಕ್ಕೆ ಜನಾರ್ಧನ ರೆಡ್ಡಿ ಮನೆ ಬಳಿ ಹೋಗಿದ್ದನ್ನು ಸರಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ. ಇದನ್ನೆಲ್ಲಾ ಗಮನಿಸಿದರೆ ಬ್ಯಾನರ್ ನೆಪವಷ್ಟೆ, ಹಿಂದೆ ಬೇರೆ ಏನೋ ಇರೋ ಸಾಧ್ಯತೆಗಳಿವೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಧಾರವಾಡಕ್ಕೆ ಮತ್ತೆ ಬಂತು ಆಧಾರ್ ಸೇವಾ ಕೇಂದ್ರ: ಸಚಿವ ಪ್ರಹ್ಲಾದ್ ಜೋಶಿ ಸಿಹಿಸುದ್ದಿ
ಧಾರವಾಡದಲ್ಲಿದ್ದ ಆಧಾರ್ ಸೇವಾ ನಿರ್ವಹಣಾ ಕೇಂದ್ರವನ್ನು ಈ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಈ ಕೇಂದ್ರವನ್ನು ಮತ್ತೆ ಆರಂಭಿಸಬೇಕು ಎಂಬ ಆಗ್ರಹ ಕೂಡ ಕೇಳಿಬಂದಿತ್ತು. ಈ ಹಿನ್ನೆಲೆ ಈ ಭಾಗದ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದೀಗ ಧಾರವಾಡದಲ್ಲಿ ಶೀಘ್ರವೇ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆಯಾಗಲಿದೆ ಎಂದು ಜೋಶಿ ಸಿಹಿಸುದ್ದಿ
ಬೀದರ್ | ಚಾಂಬೋಳ ಗ್ರಾಮದಲ್ಲಿ ಹಿರಿಯ ನಾಗರಿಕರಿಂದ ಹೊಸ ವರ್ಷಾಚರಣೆ, ಪರಿಸರ ಜಾಗೃತಿ ಅಭಿಯಾನ
ಬೀದರ್ : ಹಿರಿಯ ನಾಗರಿಕರು ಪಿಝಾ, ಬರ್ಗರ್, ಜಂಕ್ ಫುಡ್, ಬೇಕರಿ ತಿನಿಸುಗಳಂತಹ ಅನಾರೋಗ್ಯಕರ ಆಹಾರ ಸೇವನೆ ತ್ಯಜಿಸಿ, ಸಾತ್ವಿಕ ಹಾಗೂ ರಾಸಾಯನಿಕ ರಹಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಕುಲಕರ್ಣಿ ಅವರು ಸಲಹೆ ನೀಡಿದರು. ಜೈಹಿಂದ್ ಹಿರಿಯ ನಾಗರಿಕರ ಸಂಘದ ವತಿಯಿಂದ ಬೀದರ್ ಸಮೀಪದ ಚಾಂಬೋಳ ಗ್ರಾಮದಲ್ಲಿರುವ ಪ್ರೊ.ಕುಲಕರ್ಣಿ ಅವರ ಫಾರ್ಮ್ ಹೌಸ್ನಲ್ಲಿ ಆಯೋಜಿಸಿದ್ದ ನೂತನ ವರ್ಷಾಚರಣೆ ಹಾಗೂ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಯು, ಜಲ ಹಾಗೂ ಶಬ್ದ ಮಾಲಿನ್ಯದಿಂದ ದೂರವಿದ್ದು, ಶುದ್ಧ ಗಾಳಿ ಇರುವ ಹೊಲಗಳು, ಉದ್ಯಾನಗಳು ಹಾಗೂ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್, 22 ಎಕರೆ ಬಂಜರು ಭೂಮಿಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ರೂಪಾಂತರಿಸಿ, 2 ಸಾವಿರ ಮಾವಿನ ಗಿಡಗಳು ಸೇರಿದಂತೆ ವಿವಿಧ ಹಣ್ಣು, ತರಕಾರಿ, ಕಬ್ಬು, ತೊಗರಿ ಹಾಗೂ ಬಟಾಣಿ ಬೆಳೆಸಿರುವ ಪ್ರೊ.ಕುಲಕರ್ಣಿ ಅವರ ಪರಿಶ್ರಮವನ್ನು ಶ್ಲಾಘಿಸಿದರು. ಇತ್ತೀಚೆಗೆ ಅನಾರೋಗ್ಯದಿಂದ ಚೇತರಿಸಿಕೊಂಡ ಸಂಘದ ಅಧ್ಯಕ್ಷ ರಾಮಕೃಷ್ಣ ಮುನಿಗ್ಯಾಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರೊ.ವಿಜಯಕುಮಾರ್ ಸೂರ್ಯಾನ್, ಹಿರಿಯ ಕಲಾವಿದ ರಾಜೇಂದ್ರಸಿಂಗ್ ಪವಾರ್, ಕೋಶಾಧ್ಯಕ್ಷ ಗಂಗಪ್ಪ ಸಾವಳೆ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವಿಶ್ವಮಟ್ಟದ ಚೆಸ್ ಪಂದ್ಯಾವಳಿಗೆ ಆರಾಧ್ಯ ಶೆಟ್ಟಿ ಆಯ್ಕೆ
ಕುಂದಾಪುರ, ಜ.2: ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶಾಲಾ ಚೆಸ್ ಚಾಂಪಿಯನ್ ಶಿಪ್ನಲ್ಲಿ ಬ್ರಹ್ಮಾವರ ಲಿಟಲ್ ರಾಕ್ ಶಾಲೆ 9ನೆ ತರಗತಿ ವಿದ್ಯಾರ್ಥಿನಿ ಆರಾಧ್ಯ ಎಸ್.ಶೆಟ್ಟಿ ಬೆಳ್ಳಿ ಪದಕ ಗೆದ್ದು ವಿಶ್ವಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ಕುಂದಾಪುರ ಕಶ್ವಿ ಚೆಸ್ ಸ್ಕೂಲ್ನ ನರೇಶ್ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಳ್ವಾಡಿ ಗ್ರಾಮದ ಶ್ರೀಕಾಂತ್ ಶೆಟ್ಟಿ, ಉಷಾಲತಾ ಶೆಟ್ಟಿ ಅವರ ಪುತ್ರಿ ಆರಾಧ್ಯ 2019ರಲ್ಲಿ ಕಶ್ವಿ ಚೆಸ್ ಸ್ಕೂಲ್ ಮೂಲಕ ಮೊದಲ ಅಂತಾರಾಷ್ಟ್ರೀಯ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ, 2025 ನವಂಬರ್ನಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಚೆಸ್ ಚಾಂಪಿಯನ್ ಶಿಪ್ನ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದರು. ಅಸ್ಸಾಂನಲ್ಲಿ ನಡೆದ ರಾಷ್ಟ ಮಟ್ಟದ ಅಂಡರ್-17 ವಿಭಾಗದಲ್ಲಿ ನಡೆದ 9 ಸುತ್ತಿನ ಪಂದ್ಯಗಳಲ್ಲಿ 7 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಎಪ್ರಿಲ್ ತಿಂಗಳಿನಲ್ಲಿ ನಡೆಯಲಿ ರುವ ವಿಶ್ವಮಟ್ಟದ ಚೆಸ್ ಸ್ಕೂಲ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಬೀದರ್ | ಎಸೆಸೆಲ್ಸಿಯಲ್ಲಿ ಜಿಲ್ಲೆಗೆ ಶೇ.95ರಷ್ಟು ಫಲಿತಾಂಶ ತರಲು ಪ್ರಯತ್ನಿಸಿ : ಸಿಇಒ ಡಾ.ಗಿರೀಶ್ ಬದೋಲೆ
ನಾಗರಿಕ ಸನ್ಮಾರ್ಗ ಸಮಿತಿಯಿಂದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಪ್ರತಿನಿಧಿಗಳಿಗೆ ಕಾರ್ಯಾಗಾರ
Blood Sugar ಪ್ರಮಾಣವನ್ನು ಏರಿಸದ 6 ಹಣ್ಣುಗಳು ಯಾವುವು ಗೊತ್ತೇ?
ಹಣ್ಣುಗಳು ಮಧುಮೇಹಿಗಳಿಗೆ ಶತ್ರುಗಳಲ್ಲ. ಕೆಲವು ಹಣ್ಣುಗಳನ್ನು ಜಾಣತನದಿಂದ ಮತ್ತು ಸಮತೋಲನದಲ್ಲಿ ಸೇವಿಸಿದರೆ, ಅವು ನಿತ್ಯ ಆಹಾರದ ಭಾಗವಾಗಿ ರಕ್ತದಲ್ಲಿನ ಸಕ್ಕರೆಯ ಆರೋಗ್ಯಕರ ಪ್ರಮಾಣವನ್ನು ಕಾಪಾಡಲು ನೆರವಾಗುತ್ತವೆ. ಎಲ್ಲಾ ಹಣ್ಣುಗಳೂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸುತ್ತವೆ ಎಂದು ಭಾವಿಸುವವರು ಹೆಚ್ಚು. ಆದರೆ ಅದು ಸಂಪೂರ್ಣವಾಗಿ ನಿಜವಲ್ಲ. ಕೆಲವು ಹಣ್ಣುಗಳನ್ನು ಜಾಣತನದಿಂದ ಹಾಗೂ ಮಿತಿಯೊಳಗೆ ಸೇವಿಸಿದಲ್ಲಿ, ಅವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ತಜ್ಞರ ಪ್ರಕಾರ, ಹಣ್ಣುಗಳು ನೈಸರ್ಗಿಕ ಸಕ್ಕರೆಗಳು, ಫೈಬರ್, ವಿಟಮಿನ್ಗಳು, ಖನಿಜಗಳು ಮತ್ತು anti ಆಕ್ಸಿಡೆಂಟ್ ಗಳ ಉತ್ತಮ ಮೂಲವಾಗಿವೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕೆಲವು ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದರೆ ಸರಿಯಾದ ಹಣ್ಣುಗಳ ಆಯ್ಕೆ ಮತ್ತು ಸಮತೋಲಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. ಹಾಗಾದರೆ ಜಾಣತನದಿಂದ ಸೇವಿಸಬೇಕಾದ ಹಣ್ಣುಗಳು ಯಾವುವು? ►ಸೇಬು : ಹೊರಪದರದ ಸಮೇತ ಸೇವಿಸಿದರೆ ಹೆಚ್ಚಿನ ಫೈಬರ್ ಸಿಗುತ್ತದೆ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಪಾಲಿಫಿನಾಲ್ಗಳು ಇವುಗಳಲ್ಲಿ ಇದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಕೆಯನ್ನು ನಿಧಾನಗೊಳಿಸುತ್ತವೆ. ►ಬೆಣ್ಣೆಹಣ್ಣು : ಆರೋಗ್ಯಕರ ಕೊಬ್ಬು ಮತ್ತು ಫೈಬರ್ ಹೊಂದಿರುವ ಹಣ್ಣು. ಹೀಗಾಗಿ ಗ್ಲುಕೋಸ್ ಮಟ್ಟವನ್ನು ಸ್ಥಿರಗೊಳಿಸಲು ನೆರವಾಗುತ್ತದೆ. ►ಬ್ಲೂಬೆರಿಗಳು : ಜೀವಕೋಶಗಳು ಇನ್ಸುಲಿನ್ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಸುಧಾರಿಸುವ ಆಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತವೆ. ►ಗ್ರೇಪ್ಫ್ರೂಟ್ : ಇದರಲ್ಲಿ ನಾರಿಂಜೆನಿನ್ (ಸಿಟ್ರಸ್ ಹಣ್ಣುಗಳಲ್ಲಿ ಕಂಡುಬರುವ ನೈಸರ್ಗಿಕ ಫ್ಲೇವನಾಯ್ಡ್) ಇರುತ್ತದೆ. ಇದು ಇನ್ಸುಲಿನ್ ಕ್ರಿಯೆಯನ್ನು ಸುಧಾರಿಸುವ ನೈಸರ್ಗಿಕ ಸಂಯುಕ್ತ. ►ಕಿತ್ತಳೆ ಹಣ್ಣು : ಫೈಬರ್ ಮತ್ತು ವಿಟಮಿನ್ ಸಿ ಹೊಂದಿದ್ದು, ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ. ಆದರೆ ಕಿತ್ತಳೆ ಹಣ್ಣಿನ ರಸದಲ್ಲಿ ಈ ಲಾಭಗಳು ಇರುವುದಿಲ್ಲ. ►ಹಸಿರು ಸೇಬು : ಕಡಿಮೆ ಸಕ್ಕರೆ ಹೊಂದಿರುವ ಉತ್ತಮ ಆಯ್ಕೆ. ಸಕ್ಕರೆ ಪ್ರಮಾಣ ಹೆಚ್ಚಿಸದೆ ಹಸಿವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ►ಹಾಗಾದರೆ ಈ ಹಣ್ಣುಗಳು ಮಧುಮೇಹಿಗಳಿಗೆ ಸಂಪೂರ್ಣವಾಗಿ ಉತ್ತಮವೇ? ಎಲ್ಲವೂ ಸಮತೋಲನದ ವಿಷಯ. ಮಧುಮೇಹಿಗಳು ಹಣ್ಣಿನ ರಸಗಳು ಮತ್ತು ಒಣ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬಾರದು. ಅವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತ್ವರಿತವಾಗಿ ಏರಿಸಬಹುದು. ಆದರೆ ತಾಜಾ ಹಣ್ಣುಗಳನ್ನು—ವಿಶೇಷವಾಗಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಹಣ್ಣುಗಳನ್ನು—ಸಾಧಾರಣ ಪ್ರಮಾಣದಲ್ಲಿ ಸೇವಿಸಬಹುದು. ಹಣ್ಣುಗಳನ್ನು ಪ್ರೋಟೀನ್ ಅಥವಾ ಕೊಬ್ಬಿನ ಅಂಶಗಳ ಜೊತೆಗೆ ಸೇರಿಸಿ ಸೇವಿಸಿದರೆ, ಗ್ಲುಕೋಸ್ ಏರಿಕೆಯನ್ನು ಮತ್ತಷ್ಟು ಕಡಿಮೆಗೊಳಿಸಬಹುದು. ಹೀಗಾಗಿ, ಹಣ್ಣುಗಳು ಶತ್ರುಗಳಲ್ಲ. ಕೆಲವು ಹಣ್ಣುಗಳನ್ನು ಜಾಣತನದಿಂದ ಹಾಗೂ ಸಮತೋಲನದಲ್ಲಿ ಸೇವಿಸಿದರೆ, ಅವು ನಿತ್ಯ ಆಹಾರದ ಭಾಗವಾಗಿ ರಕ್ತದಲ್ಲಿನ ಸಕ್ಕರೆಯ ಆರೋಗ್ಯಕರ ಪ್ರಮಾಣಕ್ಕೆ ಬೆಂಬಲ ನೀಡುತ್ತವೆ.
ಸಿದ್ದಾಪುರ ಏತ ನೀರಾವರಿ ಯೋಜನೆ ಮೂಲ ಡಿಪಿಆರ್ನಂತೆ ಮಾಡಲಿ: ರೋಹಿತ್ ಶೆಟ್ಟಿ
ಕುಂದಾಪುರ, ಜ.2: ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಮೂಲ ಡಿಪಿಆರ್ ಪ್ರಕಾರ ಮಾಡಬೇಕು. ಮೂಲ ಯೋಜನೆಯನ್ನು ಕೈಬಿಟ್ಟು ಒಂದು ವೇಳೆ ರೈತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪಕ್ಷಾ ತೀತವಾದ ಎಲ್ಲರನ್ನು ಒಗ್ಗೂಡಿಸಿಕೊಂಡು ಸತ್ಯಾಗ್ರಹ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಪಂ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಯೋಜನೆಗೆ 2018ರಲ್ಲಿ ಸೌಕೂರು ಸಿದ್ದಾಪುರ ಏತ ನೀರಾವರಿ ಎಂದು ಆಗಿ ಬಳಿಕ ಸಿದ್ದಾಪುರ ಬಿಟ್ಟು ಹೋಗಿದೆ. 2019ರಲ್ಲಿ ಡಿಪಿಆರ್ ಆಗಿ 2021ರಲ್ಲಿ 165 ಕೋ.ರೂ. ಮಂಜೂರಾಗಿತ್ತು. ಮೊದಲ ಗುತ್ತಿಗೆದಾರರು ಕಾಮಗಾರಿ ಮಾಡದೇ ಇನ್ನೊಬ್ಬರು ಗುತ್ತಿಗೆ ವಹಿಸಿ 2 ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದೆ. ಪೈಪ್ಲೈನ್ ಮಾಡಿ ಪಂಪ್ ಹೌಸ್ ಮಾಡುವಾಗ ಕೆಲಸಕ್ಕೆ ತಡೆ ನೀಡಲಾಯಿತು ಎಂದರು. ಮಾಜಿ ಶಾಸಕ ಗೋಪಾಲ ಪೂಜಾರಿ ಮುಖ್ಯಮಂತ್ರಿಗೆ ನೀಡಿದ ಪತ್ರವನ್ನು ತಡೆಗೆ ಕಾರಣವಾಗಿ ಕೊಡಲಾಯಿತು. ಪ್ರಸ್ತುತ ವಿನ್ಯಾಸವು ವಾರಾಹಿ ಮೂಲ ನದಿಯ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ನೀಡುವಂತಿದೆ. ಶಿವನ ಲಿಂಗಕ್ಕೆ ತೊಂದರೆ ಆಗುತ್ತದೆ. ಮೂಲ ನದಿಯಲ್ಲಿ ನೀರು ಬತ್ತಿಹೋದರೆ ಜಲಚರಗಳು ನಾಶವಾಗುತ್ತವೆ. ಅಲ್ಲದೆ, ನದಿ ಪಾತ್ರದ ಅಂತರ್ಜಲ ಮಟ್ಟ ಕುಸಿದು ಸುತ್ತಮುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿ ಬಂಜರಾಗುವ ಭೀತಿ ಇದೆ ಎನ್ನುವುದು ಸುಳ್ಳು ಆರೋಪ. ಇದಕ್ಕೆ ಆಧಾರಗಳು ಏನು ಎಂದು ಅವರು ಪ್ರಶ್ನಿಸಿದರು. 4 ಗೇಟ್ ತೆರೆದರೆ 4500 ಕ್ಯುಸೆಕ್ ನೀರು ಬರುತ್ತದೆ. 3 ಗೇಟ್ ತೆರೆದರೆ 3375 ಕ್ಯುಸೆಕ್ ನೀರು ಬರುತ್ತದೆ. ಈಗ 6 ಸಾವಿರ ಹೆಕ್ಟೇರು ಕೃಷಿ ಭೂಮಿಗೆ ನೀರು ಹೋಗುತ್ತದೆ. ಇದು ಮೂಲ ಯೋಜನೆಯಂತೆಯೇ 15 ಸಾವಿರ ಹೆಕ್ಟೇರಿಗೆ ಹೋಗಬೇಕು. 1 ದಿನಕ್ಕೆ 66 ಕ್ಯೂಸೆಕ್ ನೀರು ಮಾತ್ರ ಏತ ನೀರಾವರಿಗೆ ಬೇಕಾಗುವುದು. ಹೊಳೆ ಶಂಕರ ನಾರಾಯಣದ ಶಿವಲಿಂಗಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಮೂಲ ಯೋಜನೆ ಪ್ರಕಾರ ಸರಕಾರದ ಅಣೆಕಟ್ಟಿನಿಂದಲೇ ಎಡದಂಡೆ, ಬಲದಂಡೆಗೆ ನೀರು ತೆಗೆಯಬೇಕು ಎಂದು ಅವರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಹರ್ಷ ಜಿ., ಭೋಜರಾಜ ಶೆಟ್ಟಿ, ಸಿದ್ದಾಪುರ ಪಂಚಾಯತ್ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಮಾಜಿ ಅಧ್ಯಕ್ಷ ಶೇಖರ ಕುಲಾಲ್, ಪ್ರಕಾಶ್ ಶೆಟ್ಟಿ, ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.
ಬಳ್ಳಾರಿ ಗುಂಪು ಘರ್ಷಣೆ | ಎಸ್ಪಿ ಪವನ್ ನೆಜ್ಜೂರ್ ಅಮಾನತು
ಬಳ್ಳಾರಿ: ಗುಂಪು ಘರ್ಷಣೆ ಹಿನ್ನೆಲೆ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿ ಡಿಪಿ ಎಆರ್ ನ ಸರಕಾರದ ಅಧೀನ ಕಾರ್ಯದರ್ಶಿ ಆದೇಶವನ್ನು ಹೊರಡಿಸಿದ್ದಾರೆ. ಗುರುವಾರ ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿ ಆಗಿ ಪವನ್ ನೆಜ್ಜೂರ್ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಮೂರೇ ಗಂಟೆಯೊಳಗೆ ರೆಡ್ಡಿ ಬಣಗಳ ನಡುವೆ ಬ್ಯಾನರ್ ವಿಚಾರಕ್ಕೆ ಗಲಾಟೆ ತಾರಕಕ್ಕೇರಿ ರಾಜಶೇಖರ ಎಂಬಾತನ ಹತ್ಯೆಯಾಗಿತ್ತು. ಈ ಹಿನ್ನೆಲೆ ಡಿಪಿಎಆರ್ ನ ಸರಕಾರದ ಅಧೀನ ಕಾರ್ಯದರ್ಶಿ ಕೆ.ವಿ. ಅಶೋಕ್ ಅವರು ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಗಿಗ್ ಕಾರ್ಮಿಕರಿಗೆ ವರ್ಷಕ್ಕೆ 90 ದಿನಗಳ ಕೆಲಸ ಕಡ್ಡಾಯ: ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲೇನಿದೆ?
ಭಾರತದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಗಿಗ್ ಮತ್ತು ಪ್ಲಾಟ್ ಫಾರ್ಮ್ ಆರ್ಥಿಕತೆಯು ರೈಡ್ ಶೇರಿಂಗ್, ವಿತರಣಾ ಸೇವೆಗಳು, ಲಾಜಿಸ್ಟಿಕ್ಸ್ ಮತ್ತು ವೃತ್ತಿಪರ ಕೆಲಸದಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ನೀತಿ ಆಯೋಗದ ಪ್ರಕಾರ, ಈ ವಲಯದಲ್ಲಿ 2029–30ರ ವೇಳೆಗೆ ಕಾರ್ಮಿಕರ ಸಂಖ್ಯೆ 2.35 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಿದ ಕರಡು ನಿಯಮಗಳ ಪ್ರಕಾರ, ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹರಾಗಲು ಗಿಗ್ ಮತ್ತು ಪ್ಲಾಟ್ ಫಾರ್ಮ್ ಕಾರ್ಮಿಕರು ಈಗ ಒಂದು ಆರ್ಥಿಕ ವರ್ಷದೊಳಗೆ ಕನಿಷ್ಠ 90 ದಿನಗಳವರೆಗೆ ಅಗ್ರಿಗೇಟರ್ ನೊಂದಿಗೆ ಅಥವಾ ಒಂದಕ್ಕಿಂತ ಹೆಚ್ಚು ಅಗ್ರಿಗೇಟರ್ ಗಳಾದರೆ ಕನಿಷ್ಠ 120 ದಿನಗಳವರೆಗೆ ತೊಡಗಿಸಿಕೊಂಡಿರಬೇಕು. 2025 ಡಿಸೆಂಬರ್ 30ರಂದು ಕೇಂದ್ರ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದೆ. ►ಗಿಗ್ ಕೆಲಸಗಾರರಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳು: ಕರಡು ನಿಯಮದಲ್ಲೇನಿದೆ? ಕರಡು ನಿಯಮಗಳ ಅಡಿಯಲ್ಲಿ, ಕೇಂದ್ರವು ಸ್ಥಾಪಿಸಿದ ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹತೆ ಪಡೆಯಲು ಗಿಗ್ ಮತ್ತು ಪ್ಲಾಟ್ ಫಾರ್ಮ್ ಕೆಲಸಗಾರರು ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 90 ದಿನಗಳವರೆಗೆ ಅಗ್ರಿಗೇಟರ್ ನೊಂದಿಗೆ ಕೆಲಸ ಮಾಡಬೇಕು. ಒಂದಕ್ಕಿಂತ ಹೆಚ್ಚು ಅಗ್ರಿಗೇಟರ್ ಗಳೊಂದಿಗೆ ಕೆಲಸ ಮಾಡುವವರಾದರೆ 120 ದಿನ ಕೆಲಸ ಮಾಡಬೇಕು. ಎಷ್ಟೇ ಆದಾಯ ಗಳಿಸಿದರೂ, ನಿರ್ದಿಷ್ಟ ಕ್ಯಾಲೆಂಡರ್ ದಿನದಂದು ಅಗ್ರಿಗೇಟರ್ ಗಾಗಿ ನಿರ್ವಹಿಸಿದ ಕೆಲಸಕ್ಕೆ ಆದಾಯವನ್ನು ಗಳಿಸಿದ್ದರೆ, ಆತನನ್ನು ಕಾರ್ಮಿಕ ಎಂದು ಪರಿಗಣಿಸಲಾಗುತ್ತದೆ ಎಂದು ನಿಯಮಗಳು ವ್ಯಾಖ್ಯಾನಿಸುತ್ತವೆ. ಒಬ್ಬ ಗಿಗ್ ಕಾರ್ಮಿಕ ಅಥವಾ ಪ್ಲಾಟ್ ಫಾರ್ಮ್ ಕೆಲಸಗಾರನು ಬಹು ಅಗ್ರಿಗೇಟರ್ ಗಳಿಗೆ ಕೆಲಸ ಮಾಡಿದರೆ, ಎಲ್ಲಾ ಅಗ್ರಿಗೇಟರ್ ಗಳ ಜತೆ ಆತ ಮಾಡಿದ ಕೆಲಸವನ್ನು ಲೆಕ್ಕ ಹಾಕಲಾಗುತ್ತದೆ. ಒಬ್ಬ ಗಿಗ್ ಕಾರ್ಮಿಕ ಅಥವಾ ಪ್ಲಾಟ್ ಫಾರ್ಮ್ ಕೆಲಸಗಾರನು ಒಂದೇ ಕ್ಯಾಲೆಂಡರ್ ದಿನ ಮೂರು ಅಗ್ರಿಗೇಟರ್ ಗಳ ಜತೆ ಕೆಲಸಮಾಡಿದ್ದರೆ, ಅದನ್ನು ಮೂರು ದಿನಗಳ ಕೆಲಸ ಎಂದು ಎಣಿಸಲಾಗುತ್ತದೆ. ಅಗ್ರಿಗೇಟರ್ ಜತೆ ನೇರವಾಗಿ ಅಥವಾ ಅಸೋಸಿಯೇಟ್ ಕಂಪೆನಿ, ಹೋಲ್ಡಿಂಗ್ ಕಂಪೆನಿ, ಅಂಗಸಂಸ್ಥೆ ಕಂಪೆನಿ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಅಥವಾ ಮೂರನೇ ವ್ಯಕ್ತಿಯ ಮೂಲಕ ತೊಡಗಿಸಿಕೊಂಡಿದ್ದರೂ ಆತನನ್ನು ಗಿಗ್ ಅಥವಾ ಪ್ಲಾಟ್ ಫಾರ್ಮ್ ಕಾರ್ಮಿಕ ಎಂದು ಪರಿಗಣಿಸಲಾಗುತ್ತದೆ. ಆತನು ಈ ಸೌಲಭ್ಯಗಳಿಗೆ ಅರ್ಹನಾಗಿರುತ್ತಾನೆ. ►ಅಸಂಘಟಿತ ಕಾರ್ಮಿಕರಿಗೆ ನೋಂದಣಿ, ಡಿಜಿಟಲ್ ಐಡಿಗಳು ಕೇಂದ್ರದ ಗೊತ್ತುಪಡಿಸಿದ ಪೋರ್ಟಲ್ ನಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿಯನ್ನು ಕಡ್ಡಾಯಗೊಳಿಸುವಾಗ, ಪ್ರತಿಯೊಬ್ಬ ಅರ್ಹ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಅವರ ಫೋಟೋ ಮತ್ತು ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಿದ ಇತರ ವಿವರಗಳನ್ನು ಹೊಂದಿರುವ ಡಿಜಿಟಲ್ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಕಾರ್ಮಿಕ ಸಚಿವಾಲಯವು ಈಗಾಗಲೇ ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದು ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ಡೇಟಾಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ವೇದಿಕೆಯ ಮೂಲಕ, ನೋಂದಾಯಿತ ಕಾರ್ಮಿಕರು ಮಾನ್ಯತೆಯನ್ನು ಪಡೆಯಬಹುದು ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯಬಹುದು. ಅರ್ಹ ಅಸಂಘಟಿತ ಕಾರ್ಮಿಕರು ವಿಳಾಸ, ಉದ್ಯೋಗ, ಮೊಬೈಲ್ ಸಂಖ್ಯೆ, ಕೌಶಲ್ಯ ಅಥವಾ ಯಾವುದೇ ಇತರ ಅಗತ್ಯ ಮಾಹಿತಿಯಂತಹ ವಿವರಗಳನ್ನು ನಿಯಮಿತವಾಗಿ ನವೀಕರಿಸಬೇಕಾಗುತ್ತದೆ. ಈ ವಿವರಗಳನ್ನು ನವೀಕರಿಸಲು ವಿಫಲವಾದರೆ, ಕಾರ್ಮಿಕರು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅನರ್ಹರಾಗಬಹುದು ಎಂದು ಕರಡು ನಿಯಮಗಳು ಹೇಳುತ್ತವೆ. ಹೊಸ ಕಾರ್ಮಿಕ ಸಂಹಿತೆಯಡಿಯಲ್ಲಿ, ಅರ್ಹ ಗಿಗ್ ಕಾರ್ಮಿಕರು ಆರೋಗ್ಯ, ಜೀವ ಮತ್ತು ಅಪಘಾತ ವಿಮೆಗೆ ಅರ್ಹರಾಗಿರುತ್ತಾರೆ. ►ಅರ್ಹತೆಯನ್ನು ಕಾಪಾಡಿಕೊಳ್ಳಲು ನವೀಕರಣ ಕಡ್ಡಾಯ ನೋಂದಾಯಿತ ಕಾರ್ಮಿಕರು ಪೋರ್ಟಲ್ ನಲ್ಲಿ ವಿಳಾಸ, ಉದ್ಯೋಗ, ಮೊಬೈಲ್ ಸಂಖ್ಯೆ ಮತ್ತು ಕೌಶಲ್ಯಗಳಂತಹ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳನ್ನು ನಿಯಮಿತವಾಗಿ ನವೀಕರಿಸಬೇಕಾಗುತ್ತದೆ. ಮಾಹಿತಿಯನ್ನು ನವೀಕರಿಸಲು ವಿಫಲವಾದರೆ, ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹತೆ ಕಳೆದುಕೊಳ್ಳಬಹುದು ಎಂದು ನಿಯಮಗಳು ಎಚ್ಚರಿಸುತ್ತವೆ. ►ಅತಿ ಹೆಚ್ಚು ನೋಂದಣಿಗಳನ್ನು ವರದಿ ಮಾಡಿರುವ ಪ್ರಮುಖ ರಾಜ್ಯಗಳು ಉತ್ತರ ಪ್ರದೇಶ (8.39 ಕೋಟಿ), ಬಿಹಾರ (3.00 ಕೋಟಿ) ಮತ್ತು ಪಶ್ಚಿಮ ಬಂಗಾಳ (2.64 ಕೋಟಿ) ರಾಜ್ಯಗಳಿಂದ ಪೋರ್ಟಲ್ ಅತಿ ಹೆಚ್ಚು ನೋಂದಣಿಗಳನ್ನು ದಾಖಲಿಸಿದೆ. ಈ ಸಂಖ್ಯೆಗಳು ಈ ರಾಜ್ಯಗಳಲ್ಲಿನ ಅಸಂಘಟಿತ ಕಾರ್ಯಪಡೆ ಮತ್ತು ದೇಶಾದ್ಯಂತ ಕಾರ್ಮಿಕರನ್ನು ನೋಂದಾಯಿಸಲು ಮತ್ತು ಬೆಂಬಲಿಸಲು ಸರ್ಕಾರದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ. ಈ ನೋಂದಣಿಗಳಲ್ಲಿ ಮಹಿಳೆಯರು ಗಮನಾರ್ಹ ಭಾಗವನ್ನು ಹೊಂದಿದ್ದಾರೆ. ಉತ್ತರ ಪ್ರದೇಶವು 4.41 ಕೋಟಿ ಮಹಿಳಾ ನೋಂದಣಿದಾರರೊಂದಿಗೆ ಮುಂಚೂಣಿಯಲ್ಲಿದ್ದು, ನಂತರ ಬಿಹಾರ (1.72 ಕೋಟಿ) ಮತ್ತು ಪಶ್ಚಿಮ ಬಂಗಾಳ (1.44 ಕೋಟಿ) ಸ್ಥಾನದಲ್ಲಿವೆ. ►ತಜ್ಞರು ಏನಂತಾರೆ? ಕೇಂದ್ರವು ಈ ಕರಡು ನಿಯಮಾವಳಿಯ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿದ್ದು, ಇದು ಉದ್ಯಮದ ಪ್ರತಿಕ್ರಿಯೆಯ ಆಧಾರದ ಮೇಲೆ ಚೌಕಟ್ಟನ್ನು ಪರಿಷ್ಕರಿಸುವ ಉದ್ದೇಶವನ್ನು ಸೂಚಿಸುತ್ತದೆ. ಪ್ಲಾಟ್ ಫಾರ್ಮ್ ಕಂಪೆನಿಗಳು ಬಹು ಅಪ್ಲಿಕೇಶನ್ಗಳಲ್ಲಿ ಕೆಲಸದ ದಿನಗಳನ್ನು ಟ್ರ್ಯಾಕ್ ಮಾಡುವ ಸಂಬಂಧ ಕಾರ್ಯಾಚರಣೆಯ ಸವಾಲುಗಳನ್ನು ಎತ್ತುವ ನಿರೀಕ್ಷೆಯಿದೆ. ಆದರೆ ಕಾರ್ಮಿಕ ಸಂಘಗಳು ಕಡಿಮೆ ಅರ್ಹತಾ ಮಿತಿ ಮತ್ತು ವಿಶಾಲ ವ್ಯಾಪ್ತಿಗೆ ಒತ್ತಾಯಿಸುವ ಸಾಧ್ಯತೆಯಿದೆ. ಗಿಗ್ ಮತ್ತು ಪ್ಲಾಟ್ ಫಾರ್ಮ್ ಕಾರ್ಮಿಕರನ್ನು ಮೊದಲ ಬಾರಿಗೆ ಔಪಚಾರಿಕವಾಗಿ ಗುರುತಿಸಿದ ಸಾಮಾಜಿಕ ಭದ್ರತಾ ಸಂಹಿತೆಯ ಜಾರಿಗೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಅಧಿಸೂಚಿತ ನಿಯಮಗಳ ಅನುಪಸ್ಥಿತಿಯು ಪ್ರಯೋಜನಗಳ ಜಾರಿಯನ್ನು ವಿಳಂಬಗೊಳಿಸಿತ್ತು. ಕೇಂದ್ರ ಸರ್ಕಾರದ ಈ ನಿಯಮಾವಳಿ ಗಿಗ್ ಕೆಲಸಗಾರರಿಗೆ ಸಾಮಾಜಿಕ ಭದ್ರತೆಯನ್ನು ನೀಡಬಹುದು. ಆದರೆ ಅದರ ಪರಿಣಾಮ ಅಂತಿಮ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ. 90 ದಿನಗಳ ಮಾನದಂಡವು ಪೂರ್ಣಕಾಲಿಕ ಉದ್ಯೋಗಕ್ಕಿಂತ ಹೆಚ್ಚಾಗಿ ಪೂರಕ ಆದಾಯದ ಮೂಲವಾಗಿ ಗಿಗ್ ಪ್ಲಾಟ್ ಫಾರ್ಮ್ಗಳನ್ನು ಅವಲಂಬಿಸಿರುವ ಕಾರ್ಮಿಕರ ದೊಡ್ಡ ವರ್ಗವನ್ನು ಹೊರಗಿಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮಾಲೋಚನೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಕೇಂದ್ರವು ಅಂತಿಮ ನಿಯಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇದು ರಾಜ್ಯಗಳು ಮತ್ತು ಡಿಜಿಟಲ್ ಕಾರ್ಮಿಕ ವೇದಿಕೆಗಳೊಂದಿಗೆ ಸಮನ್ವಯದೊಂದಿಗೆ ಅನುಷ್ಠಾನಕ್ಕೆ ದಾರಿ ಮಾಡಿಕೊಡುತ್ತದೆ. ಗಿಗ್ ಆರ್ಥಿಕತೆಯಲ್ಲಿ ನಿಯಂತ್ರಣದ ವಿಕಸನಗೊಳ್ಳುತ್ತಿರುವ ಸ್ವರೂಪವನ್ನು ಒತ್ತಿಹೇಳುವ ಮೂಲಕ ಅಂತಿಮ ಆವೃತ್ತಿಯನ್ನು ರೂಪಿಸುವಲ್ಲಿ ಪಾಲುದಾರರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರ ಸೂಚಿಸಿದೆ. ಗಿಗ್ ಕಾರ್ಮಿಕರು ಮತ್ತು ಪ್ಲಾಟ್ ಫಾರ್ಮ್ ಒಕ್ಕೂಟಗಳು ಡಿಸೆಂಬರ್ 31ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದವು. 22 ನಗರಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು. ಇದರಲ್ಲಿ ದಿಲ್ಲಿ ಮತ್ತು ಮುಂಬೈನಂತಹ ಪ್ರಮುಖ ನಗರ ಕೇಂದ್ರಗಳಿಂದ ಸುಮಾರು 14,000 ಸದಸ್ಯರು ಸೇರಿದ್ದಾರೆ ಎಂದು ಗಿಗ್ & ಪ್ಲಾಟ್ ಫಾರ್ಮ್ ಸೇವಾ ಕಾರ್ಮಿಕರ ಸಂಘ (GIPSWU) ಹೇಳಿದೆ. ಆದರೆ ಆಹಾರ ವಿತರಣಾ ಪ್ಲಾಟ್ ಫಾರ್ಮ್ಗಳು ಕಾರ್ಮಿಕರ ಈ ಪ್ರತಿಭಟನೆಯು ತಮ್ಮ ಕಾರ್ಯಾಚರಣೆಗಳ ಮೇಲೆ ಕಡಿಮೆ ಪರಿಣಾಮ ಬೀರಿದೆ ಎಂದು ಹೇಳಿವೆ. ಸ್ವಿಗ್ಗಿ, ಝೊಮಾಟೊ ಮತ್ತು ಮ್ಯಾಜಿಕ್ಪಿನ್ ಹೊಸ ವರ್ಷದ ಮುನ್ನಾದಿನದಂದು ಹೆಚ್ಚಿನ ಆರ್ಡರ್ಗಳನ್ನು ಸ್ವೀಕರಿಸಿರುವುದಾಗಿ ವರದಿ ಮಾಡಿವೆ.
ಜ.4: ಉಡುಪಿಯಲ್ಲಿ ಊತ್ತುಕ್ಕಾಡು ವೆಂಕಟಕವಿ ಆರಾಧನೋತ್ಸವ
ಉಡುಪಿ, ಜ.2: ಉಡುಪಿಯ ರಂಜನಿ ಮೆಮೋರಿಯಲ್, ಸೈ ಆರ್ಟ್ ಸರ್ವಿಸಸ್ ಅಮೇರಿಕ, ಮಣಿ ಕೃಷ್ಣಸ್ವಾಮಿ ಅಕಾಡೆಮಿ, ರಾಗಧನ ಉಡುಪಿ, ಸರಿಗಮ ಭಾರತಿ ಸಂಗೀತ ಶಾಲೆ ಪರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಗೀತದ ಶ್ರೇಷ್ಠ ವಾಗ್ಗೇಯಕಾರರಾದ ಊತ್ತುಕ್ಕಾಡು ವೆಂಕಟ ಕವಿ ಅವರ ಆರಾಧನೋತ್ಸವನ್ನು ಇದೇ ಜ.4ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಿದೆ. ಜ.4ರ ರವಿವಾರ ಅಪರಾಹ್ನ 1:00ರಿಂದ ರಾತ್ರಿ 8:00ಗಂಟೆಯವೆರೆಗೆ ಊತ್ತುಕ್ಕಾಡು ವೆಂಕಟಕವಿ ಆರಾಧನೋತ್ಸವವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುವುದು ಎಂದು ರಂಜನಿ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಪ್ರೊ.ವಿ.ಅರವಿಂದ ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಊತ್ತುಕ್ಕಾಡು ವೆಂಕಟ ಕವಿ ಅವರ ಕೃತಿಗಳನ್ನು ಜನಪ್ರಿಯಗೊಳಿಸುವ ಯೋಜನೆಯನ್ನು ಅವಿರತವಾಗಿ ನಾಡಿನ ವಿವಿದೆಡೆ ಆಯೋಜಿಸಿಕೊಂಡು ಬರುತ್ತಿರುವ ಸಂಗೀತ ಸಾಮ್ರಾಟ್ ಚಿತ್ರವೀಣಾ ಎನ್ ರವಿಕಿರಣ್ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಉಡುಪಿ -ದಕ್ಷಿಣ ಕನ್ನಡ ಜಿಲ್ಲೆಗಳ 21 ಯುವ ಕಲಾವಿದರು ಮತ್ತು ಅಮೆರಿಕದಲ್ಲಿ ನೆಲೆಸಿರುವ 8 ಮಂದಿ ಯುವ ಕಲಾವಿದರು ಉತ್ತುಕ್ಕಾಡು ವೆಂಕಟಕವಿ ಅವರ ಕೃತಿಗಳನ್ನು ಪ್ರಸ್ತುತ ಪಡಿಸುವರು ಎಂದರು. ಸಂಜೆ 4:30ರಿಂದ ಊತ್ತುಕ್ಕಾಡು ಅವರ ಸುಪ್ರಸಿದ್ದ ಸಪ್ತರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಲಿದೆ. ಬಳಿಕ ನಡೆಯಲಿರುವ ಸರಳ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರವೀಣಾ ಕಲಾವಿದ ಎನ್. ರವಿಕಿರಣ್ ಅವರನ್ನು ಗೌರವಿಸಲಾಗುವುದು. ಕೊನೆಯಲ್ಲಿ ಚಿತ್ರವೀಣಾ ಎನ್ ರವಿಕಿರಣ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎನ್.ರವಿಕಿರಣ್ ಅವರಿಗೆ ವಯಲಿನ್ನಲ್ಲಿ ಸಂಜಯ್ ಸುರೇಶ್ ಹಾಗೂ ಮೃದಂಗದಲ್ಲಿ ತುಮಕೂರು ಬಿ ರವಿಶಂಕರ್ ಸಹಕರಿಸಲಿರುವರು ಎಂದು ವಿ.ಅರವಿಂದ ಹೆಬ್ಬಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ ನಿತ್ಯಾನಂದ ರಾವ್, ಶ್ರೀವಿಭು ರಾವ್, ರಾಗಧನ ಸಂಸ್ಥೆಯ ಅಧ್ಯಕ್ಷ ಡಾ. ಕಿರಣ್ ಹೆಬ್ಬಾರ್, ಖಜಾಂಚಿ ಪ್ರೊ ಕೆ ಸದಾಶಿವ ರಾವ್, ಸರಿಗಮ ಭಾರತಿ ಸಂಸ್ಥೆಯ ಅಧ್ಯಕ್ಷೆ ಉಮಾಶಂಕರಿ ಉಪಸ್ಥಿತರಿದ್ದರು.
ಬೀದರ್ | ಯುವ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಸಂಯೋಜಕರಾಗಿ ಪ್ರಥ್ವಿರಾಜ ನೇಮಕ
ಬೀದರ್ : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ ಸಾಮಾಜಿಕ, ಮಾಧ್ಯಮ ವಿಭಾಗದ ರಾಜ್ಯ ಸಂಯೋಜಕರಾಗಿ ಔರಾದ್ ತಾಲೂಕಿನ ತುಳಜಾಪೂರ್ ಗ್ರಾಮದ ಪ್ರಥ್ವಿರಾಜ ಮುಧೋಳಕರ ಅವರನ್ನು ನೇಮಕ ಮಾಡಲಾಗಿದೆ. ಯುವ ಕಾಂಗ್ರೆಸ್ನ ಕರ್ನಾಟಕ ಉಸ್ತುವಾರಿಗಳಾದ ನಿಗಮ್ ಭಂಡಾರಿ, ರಾಜ್ಯಾಧ್ಯಕ್ಷರ ಮಂಜುನಾಥ್ ಗೌಡ, ರಾಷ್ಟ್ರೀಯ ಸಂಯೋಜಕಿ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ಉಸ್ತುವಾರಿ ಶ್ವೇತಾ ಸೋನಿ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯಾಧ್ಯಕ್ಷ ಸಿದ್ದು ಹಳೇಗೌಡ ಅವರ ನೇತೃತ್ವದಲ್ಲಿ ಈ ನೇಮಕಾತಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಕೆಲಸವನ್ನು ಗುರುತಿಸಿ ರಾಜ್ಯ ಮಟ್ಟದ ಜವಾಬ್ದಾರಿ ನೀಡಿರುವುದು ಸಂತಸ ತಂದಿದೆ ಎಂದು ಪ್ರಥ್ವಿರಾಜ ಮುಧೋಳಕರ ಸಂತಸ ವ್ಯಕ್ತಪಡಿಸಿದ್ದಾರೆ.
ಔರಾದ್ | ಫೆ.4ರಂದು ಕಸಾಪ ವತಿಯಿಂದ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ : ಬಿ.ಎಂ.ಅಮರವಾಡಿ
ಔರಾದ್ : ಫೆ.4ರಂದು ಕಸಾಪ ವತಿಯಿಂದ ತಾಲೂಕು ಮಟ್ಟದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಬಿ.ಎಂ.ಅಮರವಾಡಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಔರಾದ್ ತಾಲೂಕು ಮಟ್ಟದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಇತ್ತೀಚಿಗೆ ಕನ್ನಡ ಭವನದಲ್ಲಿ ತಾಲೂಕಿನ ವಿವಿಧ ಕನ್ನಡಪರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಸಮ್ಮೇಳನದ ಕುರಿತು ಚರ್ಚಿಸಲಾಗಿತ್ತು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕನ್ನಡಪರ ಹೋರಾಟಗಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗಡಿಯಲ್ಲಿ ಮತ್ತೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲಾಗುವುದು. ಶೀಘ್ರದಲ್ಲೇ ಕಸಾಪ ಪದಾಧಿಕಾರಿಗಳ ಸಭೆ ಕರೆದು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಹೆಸರು ಘೋಷಣೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇಂದೋರ್ ಕಲುಷಿತ ನೀರು ಪ್ರಕರಣ: ಇಲ್ಲಿಯವರೆಗೆ ಏನೇನಾಯ್ತು?
ಮಧ್ಯಪ್ರದೇಶದ ಇಂದೋರ್ ನ ಭಾಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ 10 ಮಂದಿ ಸಾವಿಗೀಡಾಗಿದ್ದು, 150 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 2,456 ಜನರಲ್ಲಿ ವಾಂತಿ ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಪ್ರಕರಣದ ಬಗ್ಗೆ ಪ್ರಾರಂಭಿಸಲಾದ ತನಿಖೆಯಲ್ಲಿ ಕುಡಿಯುವ ನೀರಿನಲ್ಲಿ “ಸಾಮಾನ್ಯವಾಗಿ ಒಳಚರಂಡಿ ನೀರಿನಲ್ಲಿ ಕಂಡುಬರುವ” ಬ್ಯಾಕ್ಟೀರಿಯಾಗಳಿರುವುದು ಕಂಡುಬಂದಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ. ಅಂದಹಾಗೆ, ಇಂದೋರ್ ಭಾರತದಲ್ಲಿನ ಅತ್ಯಂತ ಸ್ವಚ್ಛ ನಗರವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ಭಾಗೀರಥಪುರ ಪ್ರದೇಶದಲ್ಲಿ ಪುರಸಭೆ ಪೂರೈಸುತ್ತಿರುವ ಕುಡಿಯುವ ನೀರಿನ ಗುಣಮಟ್ಟ ಕಳಪೆಯಾಗಿತ್ತು. ಇದನ್ನು ಕುಡಿದ ಸ್ಥಳೀಯ ನಿವಾಸಿಗಳಿಗೆ ವಾಂತಿ, ಅತಿಸಾರ, ನಿರ್ಜಲೀಕರಣ, ತೀವ್ರ ಜ್ವರ ಕಾಣಿಸಿಕೊಂಡಿದ್ದು, ಹಲವಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಲ ಮಾಲಿನ್ಯವು ಜಾಗತಿಕ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ. ಕಲುಷಿತ ನೀರನ್ನು ಸೇವಿಸುವುದರಿಂದ ಬ್ಯಾಕ್ಟೀರಿಯಾದ ಗ್ಯಾಸ್ಟ್ರೋಎಂಟರೈಟಿಸ್, ಕಾಲರಾ, ಟೈಫಾಯಿಡ್ ಮತ್ತು ಭೇದಿ ಮುಂತಾದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಇದು ಜನರ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗುತ್ತದೆ. ಇಂದೋರ್ ನಲ್ಲಿ ಕುಡಿಯುವ ನೀರಿನೊಂದಿಗೆ ಕೊಳಚೆನೀರು ಸೇರಿಕೊಂಡಿದ್ದೇ ಜನರ ಸಾವಿಗೆ ಕಾರಣ ಎಂದು ಆರಂಭಿಕ ತನಿಖೆಗಳು ಸೂಚಿಸುತ್ತವೆ. ಇದು ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಗಳು ಮತ್ತು ಜಾಗರೂಕ ಮೇಲ್ವಿಚಾರಣೆಯ ಮಹತ್ವವನ್ನು ಒತ್ತಿಹೇಳುತ್ತದೆ. ►ಇಂದೋರ್ ನಲ್ಲಿ ಏನೇನಾಯ್ತು? 2025 ಡಿಸೆಂಬರ್ ತಿಂಗಳ ಮಧ್ಯದಲ್ಲಿ, 15,000 ಜನರು ವಾಸಿಸುವ ಜನನಿಬಿಡ ಪ್ರದೇಶವಾದ ಭಾಗೀರಥಪುರದ ನಿವಾಸಿಗಳು ತಮಗೆ ಪೂರೈಕೆಯಾಗುತ್ತಿರುವ ನೀರು ಬಣ್ಣ ಕಳೆದುಕೊಂಡು ದುರ್ವಾಸನೆ ಬೀರುತ್ತಿರುವುದನ್ನು ಗಮನಿಸಿದ್ದಾರೆ. ಸ್ಥಳೀಯರು ನೀರಿನ ಗುಣಮಟ್ಟದ ಬಗ್ಗೆ ನಾಗರಿಕ ಅಧಿಕಾರಿಗಳಿಗೆ ಪದೇಪದೇ ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. 2025 ಡಿಸೆಂಬರ್ 25ರಂದು ನೀರಿನ ವಿತರಣೆ ಮುಂದುವರಿದಿತ್ತು. ಅನೇಕ ಕುಟುಂಬಗಳು ನೀರು ಕಹಿ ರುಚಿ ಹಾಗೂ ದುರ್ವಾಸನೆಯಿಂದ ಕೂಡಿದೆ ಎಂದು ದೂರಿದ್ದವು. ಆದರೆ ಬೇರೆ ಮಾರ್ಗವಿಲ್ಲದೆ ಕುಡಿಯಲು ಮತ್ತು ಅಡುಗೆ ಮಾಡಲು ಅದೇ ನೀರನ್ನು ಬಳಸಿದ್ದವು. ಡಿಸೆಂಬರ್ 27–28ರಂದು ಹಲವರು ಅಸ್ವಸ್ಥರಾದರು. ನಲ್ಲಿ ನೀರನ್ನು ಸೇವಿಸಿದ ನಂತರ ಹಲವಾರು ಮಂದಿಗೆ ವಾಂತಿ, ತೀವ್ರ ಅತಿಸಾರ, ನಿರ್ಜಲೀಕರಣ ಕಾಣಿಸಿಕೊಂಡಿತು. ಇವರಿಗೆ ಸ್ಥಳೀಯ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ನಂತರ ಆರೋಗ್ಯ ತಂಡಗಳು ರೋಗಿಗಳ ಸಮೀಕ್ಷೆಯನ್ನು ಪ್ರಾರಂಭಿಸಿವೆ. ಡಿಸೆಂಬರ್ 29ರಂದು ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾದ ರೋಗಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿತು. ಅತಿಸಾರದಿಂದ ಕನಿಷ್ಠ ಮೂರು ಸಾವುಗಳನ್ನು ಮೇಯರ್ ಪುಷ್ಯಮಿತ್ರ ಭಾರ್ಗವ ದೃಢಪಡಿಸಿದ್ದಾರೆ. 2025 ಡಿಸೆಂಬರ್ 30ರಂದು ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ 100 ಕ್ಕಿಂತ ಹೆಚ್ಚಾಯಿತು. ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ 1,100 ಕ್ಕೂ ಹೆಚ್ಚು ನಿವಾಸಿಗಳು ಅಸ್ವಸ್ಥರಾಗಿದ್ದಾರೆ. ಡಿಸೆಂಬರ್ 31, 2025: ಸಾವಿನ ಸಂಖ್ಯೆ ಏಳಕ್ಕೆ ಏರಿತು. ಆರು ತಿಂಗಳ ಮಗು ಕೂಡ ಸಾವಿಗೀಡಾಗಿರುವುದು ವರದಿಯಾಗಿದೆ. ಕಲುಷಿತ ನೀರು ಸೇವನೆಯಿಂದ ಸಾವಿಗೀಡಾದವರ ಕುಟುಂಬಗಳಿಗೆ ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಯಿತು. ವಲಯ ಅಧಿಕಾರಿ ಮತ್ತು ಸಹಾಯಕ ಎಂಜಿನಿಯರ್ ಸೇರಿದಂತೆ ನೀರು ಸರಬರಾಜು ಮೇಲ್ವಿಚಾರಣೆಯಲ್ಲಿನ ಲೋಪಕ್ಕಾಗಿ ಉಸ್ತುವಾರಿ ಉಪ ಎಂಜಿನಿಯರ್ ವಜಾಗೊಳಿಸಲ್ಪಟ್ಟರು. ►ಇಂದೋರ್ ಮೇಯರ್ ಪ್ರತಿಕ್ರಿಯೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ ಅವರು, ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಭಾಗೀರಥಪುರದಲ್ಲಿ ಅತಿಸಾರದಿಂದ ನಾಲ್ಕು ಜನರು ಸಾವಿಗೀಡಾಗಿದ್ದಾರೆ ಎಂದರು. ಆದರೆ ಈ ಸಾಂಕ್ರಾಮಿಕ ರೋಗದಿಂದಾಗಿ 10 ಸಾವುಗಳ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದೂ ಹೇಳಿದರು. ಭಾಗೀರಥಪುರದಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಗಳ ಪ್ರಾಥಮಿಕ ಪರೀಕ್ಷಾ ವರದಿಗಳ ಆಧಾರದ ಮೇಲೆ ಪ್ರದೇಶದಲ್ಲಿ ಕಾಲರಾ ಹರಡಿರುವ ಶಂಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಆರೋಗ್ಯ ಇಲಾಖೆ ಮಾತ್ರ ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಬಹುದು ಎಂದು ಮೇಯರ್ ಉತ್ತರಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ನಗರದ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯ ಪರೀಕ್ಷಾ ವರದಿಗಳು ಪೈಪ್ಲೈನ್ ಸೋರಿಕೆಯಿಂದಾಗಿ ಪ್ರದೇಶದ ಕುಡಿಯುವ ನೀರು ಕಲುಷಿತವಾಗಿದೆ ಎಂದು ದೃಢಪಡಿಸಿವೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಡಾ. ಮಾಧವ್ ಪ್ರಸಾದ್ ಹಸಾನಿ ಹೇಳಿದ್ದಾರೆ. ಆದರೆ ಸಿಎಂಎಚ್ಒ ವರದಿಯ ವಿವರವಾದ ಸಂಶೋಧನೆಗಳನ್ನು ಹಂಚಿಕೊಳ್ಳಲಿಲ್ಲ. ಆಡಳಿತಾಧಿಕಾರಿಗಳು ಸಹ ಈ ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ. ಗುರುವಾರ ರಾತ್ರಿಯವರೆಗೆಗಿನ ಪರಿಸ್ಥಿತಿಯನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಈ ಪ್ರದೇಶದ ಆಸ್ಪತ್ರೆಗಳಿಗೆ 272 ರೋಗಿಗಳನ್ನು ದಾಖಲಿಸಲಾಗಿದ್ದು, ಅವರಲ್ಲಿ 71 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳಿದರು. ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ 201 ರೋಗಿಗಳಲ್ಲಿ 32 ಮಂದಿ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ►ಇಂದೋರ್ ನಲ್ಲಿ ನೀರಿನ ಗುಣಮಟ್ಟ ಕಳಪೆ 2025ರಲ್ಲಿ ಇಂದೋರ್ ನಗರಾದ್ಯಂತ ನೀರಿನ ಗುಣಮಟ್ಟ ಕಳಪೆಯಾಗಿದೆ ಎಂಬ ಸಂಬಂಧ 266 ದೂರುಗಳು ದಾಖಲಾಗಿವೆ. ಭಾಗೀರಥಪುರವನ್ನು ಒಳಗೊಂಡಿರುವ ವಲಯ–4ರಲ್ಲಿ 23 ಅಧಿಕೃತ ದೂರುಗಳು ದಾಖಲಾಗಿವೆ. ಇಂದೋರ್ ಮೇಯರ್ ಸಹಾಯವಾಣಿಯ ದಾಖಲೆಗಳ ಪ್ರಕಾರ, ಕಳೆದ ವರ್ಷದಲ್ಲಿ ಕಲುಷಿತ ನೀರಿನ ಕುರಿತು 16 ಪ್ರಕರಣಗಳನ್ನು ಸಹಾಯಕ ಎಂಜಿನಿಯರ್ ಯೋಗೇಶ್ ಜೋಶಿಗೆ ವಹಿಸಲಾಗಿದೆ. ಆ 16 ಪ್ರಕರಣಗಳಲ್ಲಿ ಐದು ಪ್ರಕರಣಗಳನ್ನು ಪರಿಹರಿಸಲಾಗಿದೆ. ಏಳು ಪ್ರಕರಣಗಳನ್ನು ಪೂರ್ಣಗೊಂಡಿವೆ ಎಂದು ಗುರುತಿಸಲಾಗಿದೆ. ಇದಲ್ಲದೆ, ಇಂದೋರ್ ಪುರಸಭೆಯ ಉನ್ನತ ಸ್ಥಾನದಲ್ಲಿರುವ ಮೂಲಗಳ ಪ್ರಕಾರ, ಒಂದು ವರ್ಷದ ಹಿಂದೆಯೇ ಹೊಸ ನರ್ಮದಾ ನೀರಿನ ಪೈಪ್ಲೈನ್ ಹಾಕಲು ಕಡತ ಸಿದ್ಧಪಡಿಸಲಾಗಿತ್ತು. ಹಿರಿಯ ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೀರಿನ ಪೈಪ್ಲೈನ್ಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಕಂಡುಹಿಡಿದ ನಂತರ ಟೆಂಡರ್ ಕರೆಯಲಾಗಿತ್ತು. 2024 ನವೆಂಬರ್ 1ರಂದು ಕಡತ ಸಿದ್ಧವಾಗಿದ್ದು, 2025 ಜುಲೈ 30ರಂದು ಟೆಂಡರ್ ಕರೆಯಲಾಯಿತು. ಯೋಜನೆಯ ಅಂತಿಮ ಹಂತವನ್ನು ಕಾರ್ಯಗತಗೊಳಿಸಲು ಕೆಲಸದ ಆದೇಶವನ್ನು 2025 ಡಿಸೆಂಬರ್ 26ರಂದು ಅಂಗೀಕರಿಸಲಾಯಿತು. ಇದೇ ಹೊತ್ತಿನಲ್ಲಿ ಕಲುಷಿತ ನೀರು ಸೇವನೆಯಿಂದ ಜನರ ಸಾವಿನ ಪ್ರಕರಣ ಬೆಳಕಿಗೆ ಬಂತು. ಹೊಸ ನರ್ಮದಾ ನೀರಿನ ಪೈಪ್ಲೈನ್ ಹಾಕುವ ಬೇಡಿಕೆಯನ್ನು ಕಳೆದ ವರ್ಷ ಮುಂದಿಟ್ಟಿದ್ದು, ನಂತರ ಕಡತವನ್ನು ಸಿದ್ಧಪಡಿಸಲಾಗಿತ್ತು. ಆದರೆ ಈ ಕಡತವನ್ನು “ಸುಮಾರು ಏಳು ತಿಂಗಳಿನಿಂದ ಹಾಗೇ ಇಡಲಾಗಿತ್ತು” ಎಂದು ಭಾಗೀರಥಪುರದ ಕಾರ್ಪೊರೇಟರ್ ಕಮಲ್ ವಘೇಲಾ ಹೇಳಿದ್ದಾರೆ ಎಂದು Indian Express ವರದಿ ಮಾಡಿದೆ. ಡಿಸೆಂಬರ್ 31ರಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ವಘೇಲಾ ಪತ್ರ ಬರೆದಿದ್ದರು. ಅದರಲ್ಲಿ, ಹಲವು ಫಾಲೋಅಪ್ಗಳ ಹೊರತಾಗಿಯೂ ಅಧಿಕಾರಿಗಳು ಈ ವಿಷಯ “ಪ್ರಕ್ರಿಯೆಯಲ್ಲಿದೆ” ಎಂದು ಮಾತ್ರ ಪ್ರತಿಕ್ರಿಯಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಮೇಯರ್ ಅವರನ್ನು ಸಂಪರ್ಕಿಸಿದ ನಂತರವೇ 2025 ಜುಲೈ 30ರಂದು ಟೆಂಡರ್ ನೀಡಲಾಯಿತು. ಆದರೂ ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. ಈ ಘಟನೆ ಕೇವಲ ಆಡಳಿತಾತ್ಮಕ ಲೋಪವಲ್ಲ, ಸಾರ್ವಜನಿಕ ಆರೋಗ್ಯಕ್ಕೆ ಉದ್ದೇಶಪೂರ್ವಕವಾಗಿ ಅಪಾಯ ಉಂಟುಮಾಡಿದ ಗಂಭೀರ ಕ್ರಿಮಿನಲ್ ನಿರ್ಲಕ್ಷ್ಯದ ಪರಿಣಾಮವಾಗಿದೆ. ಮೇಲ್ನೋಟಕ್ಕೆ ಈ ಪ್ರಕರಣವು ಕರ್ತವ್ಯ ಲೋಪ, ಆದೇಶಗಳ ತಿರಸ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಕಾನೂನುಗಳ ಉಲ್ಲಂಘನೆಯ ಅಡಿಯಲ್ಲಿ ಬರುತ್ತದೆ ಎಂದು ವಘೇಲಾ ಬರೆದಿದ್ದಾರೆ. ಜಲ ಮಾಲಿನ್ಯದ ದೂರುಗಳನ್ನು ಪರಿಹರಿಸದ ಕಾರಣ ಅಮಾನತುಗೊಂಡಿರುವ ವಲಯ–4ರ ಜವಾಬ್ದಾರಿಯುತ ಸಹಾಯಕ ಎಂಜಿನಿಯರ್ ಯೋಗೇಶ್ ಜೋಶಿ ಅವರನ್ನು ಸಂಪರ್ಕಿಸಿದಾಗ, “ನಾನು ಮೂರು ವಲಯಗಳನ್ನು ನಿರ್ವಹಿಸುತ್ತೇನೆ. ಇದನ್ನು ಒಬ್ಬಂಟಿಯಾಗಿ ನಿರ್ವಹಿಸುವುದು ಅಸಾಧ್ಯ. ಸ್ಥಳೀಯ ಸಿಬ್ಬಂದಿ ಈಗಾಗಲೇ ಈ ಪರಿಸ್ಥಿತಿಯ ಬಗ್ಗೆ ನನಗೆ ತಿಳಿಸಿದ್ದರು. ವಾಸ್ತವವಾಗಿ, ಈ ಪ್ರದೇಶದ ನೀರಿನ ಪೈಪ್ಲೈನ್ಗಳು ಕನಿಷ್ಠ ಒಂದು ವರ್ಷದ ಹಿಂದೆಯೇ ಹಾನಿಗೊಳಗಾಗಿವೆ ಎಂದು ಮುಖ್ಯ ಕಚೇರಿಗೆ ತಿಳಿದಿತ್ತು. ದುರಸ್ತಿಗಾಗಿ ಟೆಂಡರ್ ಕರೆಯಲಾಗಿದ್ದರೂ, ಕೆಲಸದ ಆದೇಶವನ್ನು ಕೇವಲ ಎರಡು ಅಥವಾ ಮೂರು ದಿನಗಳ ಹಿಂದೆ ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ ಎಂದು Indian Express ವರದಿ ಉಲ್ಲೇಖಿಸಿದೆ. ►ಇದಕ್ಕೆ ಅಧಿಕಾರಿಗಳು ಏನಂತಾರೆ? ಟೆಂಡರ್ಗಳನ್ನು ಪರಿಶೀಲಿಸುವ ಜವಾಬ್ದಾರಿಯುತ ಅಧಿಕಾರಿ ಹೆಚ್ಚುವರಿ ಆಯುಕ್ತ ರೋಹಿತ್ ಸಿಸೋನಿಯಾ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಒಟ್ಟು ಮೂರು ಲೈನ್ಗಳಿವೆ. ಮೊದಲನೆಯದು ಮುಖ್ಯ ಪೈಪ್ಲೈನ್, ಎರಡನೆಯದು ವಿತರಣಾ ಪೈಪ್ಲೈನ್, ಮೂರನೆಯದು ಮನೆಗಳಿಗೆ ನೀರು ಸರಬರಾಜು ಮಾಡುವ ಪೈಪ್ಲೈನ್. “ನೀರಿನ ಪೈಪ್ಲೈನ್ಗಳನ್ನು ದುರಸ್ತಿ ಮಾಡಲಾಗಿಲ್ಲ ಎಂದು ಹೇಳುವುದು ಸುಳ್ಳು. ದುರಸ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿಲ್ಲ. ಟೆಂಡರ್ ಅನ್ನು ಹಲವು ತಿಂಗಳ ಹಿಂದೆಯೇ ಪ್ರಾರಂಭಿಸಲಾಗಿದೆ. AMRUT 2.0 ಯೋಜನೆಯಡಿಯಲ್ಲಿ ನಾವು ಈಗಾಗಲೇ ನಗರದಾದ್ಯಂತ ನೀರಿನ ಪೈಪ್ಲೈನ್ ಜೋಡಣೆಯ ಮೇಲೆ ಕೆಲಸ ಮಾಡುತ್ತಿದ್ದೇವೆ” ಎಂದು ಸಿಸೋನಿಯಾ ಹೇಳಿದ್ದಾರೆ. ಈ ನಿರ್ದಿಷ್ಟ ಪ್ರದೇಶದಲ್ಲಿ, ಎರಡು ಪ್ರಮುಖ ಪೈಪ್ಲೈನ್ಗಳಲ್ಲಿ ಸುಮಾರು 80 ಪ್ರತಿಶತ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಡಿಸೆಂಬರ್ 26ರಂದು ಮೂರನೇ ಪೈಪ್ಲೈನ್ ಕೆಲಸ ಪ್ರಾರಂಭಿಸಲಾಗಿದೆ. ಡಿಪಿಆರ್ ಮಂಜೂರಾಗಿದೆ, ಟೆಂಡರ್ ನೀಡಲಾಗಿದೆ ಮತ್ತು ಗುತ್ತಿಗೆದಾರರನ್ನು ಗುರುತಿಸಲಾಗಿದೆ. ನಾನು ಕೇವಲ ಎರಡು ತಿಂಗಳಿನಿಂದ ಉಸ್ತುವಾರಿ ವಹಿಸಿದ್ದೇನೆ. ಇದು ಸುಮಾರು 30 ವರ್ಷ ಹಳೆಯದಾದ ಮಾರ್ಗವಾಗಿದ್ದು, ಈಗಾಗಲೇ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ತನಿಖಾ ತಂಡಗಳು ಮಾಲಿನ್ಯದ ಮೂಲವನ್ನು ಗುರುತಿಸಿವೆ. ಮುಖ್ಯ ಪೈಪ್ಲೈನ್ ಮೇಲೆಯೇ ಸಣ್ಣ ಪೊಲೀಸ್ ಚೌಕಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಸೆಪ್ಟಿಕ್ ಟ್ಯಾಂಕ್ ಇಲ್ಲದ ಶೌಚಾಲಯವಿದ್ದು, ಎಲ್ಲಾ ಕಲುಷಿತ ತ್ಯಾಜ್ಯವನ್ನು ಒಂದು ಗುಂಡಿಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಆ ಗುಂಡಿಯ ಕೆಳಗಡೆಯೇ ಮುಖ್ಯ ಪೈಪ್ಲೈನ್ ಒಡೆದಿದ್ದು, ಅದರಿಂದ ಮಾಲಿನ್ಯ ಉಂಟಾಗಿದೆ. ಸ್ಥಳದಿಂದ ಸಂಗ್ರಹಿಸಿದ ಮಾದರಿಗಳು ಕಲುಷಿತವಾಗಿವೆ ಎಂದು ಪರೀಕ್ಷೆಗಳು ದೃಢಪಡಿಸಿವೆ. ಇದುವೇ ಅತಿಸಾರಕ್ಕೆ ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ. ಒಡೆದ ನೀರಿನ ಪೈಪ್ಲೈನ್ಗಳು ಮತ್ತು ಮಾಲಿನ್ಯದ ದೂರುಗಳನ್ನು ಪರಿಹರಿಸಲು ಪುರಸಭೆಯ ಅಧಿಕಾರಿಗಳು ಈಗ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದಾರೆ. ಈ ಘಟನೆ ಮತ್ತೆ ಪುನರಾವರ್ತನೆಯಾಗದಂತೆ ತಡೆಯಲು ಈ ಪ್ರಕರಣದಲ್ಲಿ ಕೆಲಸ ಮಾಡಲು ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಎಂದು ಸಿಸೋನಿಯಾ ಹೇಳಿದ್ದಾರೆ.
ಜ.3-11: ಲಯನ್ಸ್ ಕ್ಲಬ್ನಿಂದ ಹಸಿವು ನಿವಾರಣಾ ಸೇವಾ ವಾರ
ಉಡುಪಿ, ಜ.2: ಹಸಿವು ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಹಾಗೂ ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿ ಸುವ ಉದ್ದೇಶದಿಂದ ಲಯನ್ಸ್ ಜಿಲ್ಲೆ 317ಸಿ, ಲಯನ್ಸ್ ಕ್ಲಬ್ ಮಣಿಪಾಲದ ಸಹಯೋಗದಲ್ಲಿ ಉಡುಪಿಯಲ್ಲಿ ಜ.3ರಿಂದ 11ರವರೆಗೆ ಹಸಿವು ನಿವಾರಣಾ ಸೇವಾ ವಾರ ವನ್ನು ಆಚರಿಸುತ್ತಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಸ್ವಪ್ನಾ ಸುರೇಶ್ ತಿಳಿಸಿದ್ದಾರೆ. ಲಯನ್ಸ್ ಇಂಟರ್ನೇಶನಲ್ನ ಸೂಚನೆಯಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹಸಿವು ನಿವಾರಣಾ ಸಪ್ತಾಹವನ್ನು ಆಚರಿಸಲಾಗುತಿದ್ದು, ಈ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದರಿಂದ ಒಂದೂವರೆ ಲಕ್ಷ ಜನರಿಗೆ ಪೌಷ್ಠಿಕ ಆಹಾರವನ್ನು ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು. ಈ ಅವಧಿಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಸೇವಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜ.3ರಂದು ಬೆಳಗ್ಗೆ 9:30ಕ್ಕೆ ಮಣಿಪಾಲದ ಟೈಗರ್ ಸರ್ಕಲ್ನಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದೂ ಸ್ವಪ್ನಾ ಸುರೇಶ್ ಹೇಳಿದರು. ನಗರಸಭೆ ಹಾಗೂ ಕಾರ್ಪೋರೇಟರ್ಗಳ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತಿದ್ದು, ಮಹಾ ಆಹಾರ ವಿತರಣಾ ಅಭಿಯಾನಕ್ಕೆ ಧ್ವಜಾರೋಹಣ ನೆರವೇರಿಸಿ, ಹಸಿವು ನಿವಾರಣಾ ವಾರದ ಪ್ರತಿಜ್ಞಾ ಕಾರ್ಡ್ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು. ಪ್ರತಿದಿನವೂ ಒಂದೊಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಒಂದು ದಿನ ಸಮುದಾಯ ಅಡುಗೆಮನೆ ಎಂಬ ವಿಶೇಷ ಅಭಿಯಾನದಡಿ ಪ್ರತಿಯೊಂದು ಕ್ಲಬ್ ಒಂದೊಂದು ಸಮುದಾಯ ಅಡುಗೆಮನೆ ನಡೆಸಲು ಅಥವಾ ಬೆಂಬಲಿಸಲು ಮುಂದಾಗಲಿದೆ. ಪ್ರತಿ ಕ್ಲಬ್ ಕನಿಷ್ಠ 250 ಜನರಿಗೆ ಬಿಸಿ ಊಟ ವಿತರಿಸುವ ಗುರಿ ಹೊಂದಿದೆ. ಶಾಲಾ ಪೌಷ್ಟಿಕ ಆಹಾರ ದಿನದಂದು ಸರಕಾರಿ ಶಾಲಾ ಮಕ್ಕಳಿಗೆ ಉಪಹಾರ ಅಥವಾ ಹಣ್ಣುಗಳ ಕಿಟ್ ವಿತರಿಸಲಾಗುವುದು. ಜೊತೆಗೆ ಮಕ್ಕಳ ಪಾಲಕರಿಗೆ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾ ಗುತ್ತದೆ. ಹಸಿವು ರಹಿತ ಸ್ಲಂ ಅಭಿಯಾನದಡಿ ಸ್ಲಂ ಪ್ರದೇಶಗಳನ್ನು ಗುರುತಿಸಿ (ಮ್ಯಾಪಿಂಗ್), ಪ್ರತಿ ಕುಟುಂಬಕ್ಕೆ ಒಂದು ವಾರದ ರೇಷನ್ ಕಿಟ್ ವಿತರಿಸಲಾಗುತ್ತದೆ. ಇದಲ್ಲದೆ ಆಹಾರ ವ್ಯರ್ಥದಿಂದ ಆಹಾರ ತಟ್ಟೆಗೆ ಎಂಬ ಅಭಿಯಾನದಡಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಮದುವೆ ಮಂಟಪಗಳೊಂದಿಗೆ ಸಹಕರಿಸಿ, ಉಳಿದ ಆಹಾರವನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ವಿತರಿಸಲಾಗುತ್ತದೆ. ರೈತರು ಮತ್ತು ಲಯನ್ಸ್ ಸಂಪರ್ಕ ದಿನದಂದು ಆಶ್ರಮ ಗಳು, ಅನಾಥಾಶ್ರಮಗಳು ಹಾಗೂ ವೃದ್ಧಾಶ್ರಮಗಳಿಗೆ ನೇರ ಆಹಾರ ವಿತರಣೆ ಮಾಡಲಾಗುತ್ತದೆ ಎಂದು ಕಾರ್ಯಕ್ರಮದ ಸಂಯೋಜಕ ಡಾ.ಗಣೇಶ್ ಪೈ ವಿವರಿಸಿದರು. ಹಿರಿಯ ನಾಗರಿಕರು ಮತ್ತು ಆಶ್ರಯ ಗೃಹ ದಿನದಂದು ವೃದ್ಧಾಶ್ರಮಗಳಲ್ಲಿ ಬಿಸಿ ಊಟ ವಿತರಣೆ, ರಾಗಿ, ಖರ್ಜೂರ, ಬಹುಧಾನ್ಯಗಳನ್ನೊಳಗೊಂಡ ವಿಶೇಷ ಪೌಷ್ಟಿಕ ಕಿಟ್ಗಳ ವಿತರಣೆ ಹಾಗೂ ಆಶ್ರಮವಾಸಿಗಳ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗುತ್ತದೆ. ಆಸ್ಪತ್ರೆ ಮತ್ತು ರೋಗಿ ಸಹಾಯಕ ದಿನದಂದು ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಬಂಧಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜೊತೆಗೆ ಆಸ್ಪತ್ರೆ ಆಡಳಿತದ ಸಹಕಾರದಲ್ಲಿ ಲಯನ್ಸ್ ಅನ್ನಪೂರ್ಣ ಕೌಂಟರ್ (ಪೈಲಟ್ ಯೋಜನೆ) ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು. ಹಸಿವು ನಿವಾರಣಾ ಸೇವಾ ವಾರದ ಸಮಾರೋಪವಾಗಿ ಮಹಾ ಆಹಾರ ಸೇವಾ ಉತ್ಸವ ವನ್ನು ಹಮ್ಮಿಕೊಳ್ಳಲಾ ಗುತ್ತದೆ. ಇದು ಹಲವು ಜಿಲ್ಲೆಗಳ ಸಂಯುಕ್ತ ಸೇವಾ ದಿನವಾಗಿದ್ದು, ಸಮಾರೋಪ ರ್ಯಾಲಿಯೊಂದಿಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಕ್ಲಬ್ಗಳಿಗೆ ಗೌರವ ಪ್ರಮಾಣಪತ್ರ ವಿತರಿಸಲಾಗುತ್ತದೆ. ಸಮಾಜದ ಪ್ರತಿಯೊಬ್ಬರಿಗೂ ಆಹಾರ ದೊರಕುವ ಮೂಲಕ ಹಸಿವು ಮುಕ್ತ ಸಮಾಜದ ನಿರ್ಮಾಣಗೊಳ್ಳಬೇಕೆಂಬ ಸಂಕಲ್ಪದೊಂದಿಗೆ ಹಮ್ಮಿಕೊಂಡಿರುವ ಹಸಿವು ನಿವಾರಣಾ ಸೇವಾವಾರವನ್ನು ಯಶಸ್ವಿ ಗೊಳಿಸುವಂತೆ ಡಾ.ಪೈ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಎರಡನೇ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಕಾರ್ಯಕ್ರಮ ಸಂಚಾಲಕ ಕೇಶವ ಅಮೀನ್, ಲಯನ್ಸ್ ಮಣಿಪಾಲ ಅಧ್ಯಕ್ಷ ಡಾ. ನಿಶಾಂತ್ ಭಟ್ ಉಪಸ್ಥಿತರಿದ್ದರು.
ಭಾಲ್ಕಿ | ಹೃದಯಾಘಾತದಿಂದ ಮುಖ್ಯ ಶಿಕ್ಷಕ ಮೃತ್ಯು
ಭಾಲ್ಕಿ : ಶಾಲೆಯಲ್ಲಿ ಶಿಕ್ಷಕರೊಬ್ಬರು ಹೃದಯಾಘಾತದಲ್ಲಿ ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದಲ್ಲಿ ನಡೆದಿದೆ. ಮೃತರನ್ನು ತಾಲೂಕಿನ ಬಾಜೋಳಗಾ ಗ್ರಾಮದ ನಿವಾಸಿ, ಲಂಜವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸೂರ್ಯಕಾಂತ ಅಮದಾಬಾದೆ ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಬಾಜೋಳಗಾದಲ್ಲಿ ಶನಿವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜ.5-11: ಉಡುಪಿ ತುಳುಕೂಟದ ಕೆಮ್ತೂರು ತುಳು ನಾಟಕ ಪರ್ಬ
ಉಡುಪಿ, ಜ.2: ತುಳುಕೂಟ ಉಡುಪಿ ವತಿಯಿಂದ 24ನೇ ವರ್ಷದ ಕಸ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆಯನ್ನು ಇದೇ ಜನವರಿ 5ರಿಂದ 11ರವರೆಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪ ದಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಎಂಜಿಎಂ ಕಾಲೇಜು ಉಡುಪಿ, ಅಖಿಲ ಭಾರತ ತುಳುಕೂಟ ಕುಡ್ಲ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಕೆಗಳ ಸಹಯೋಗದೊಂದಿಗೆ ನಡೆಯುವ ಈ ನಾಟಕ ಸ್ಪರ್ಧೆಯಲ್ಲಿ ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಈ ಬಾರಿ ಒಟ್ಟು 14 ನಾಟಕಗಳು ಸ್ಪರ್ಧೆಗೆ ಬಂದಿದ್ದು, ಇವುಗಳಲ್ಲಿ ವಿವಿಧ ಪ್ರದೇಶಗಳ 7 ಪ್ರಸಿದ್ದ ತಂಡಗಳಿಗೆ ಅವಕಾಶ ನೀಡಲಾಗಿದೆ. ನಾಟಕ ಸ್ಪರ್ಧೆಯನ್ನು ಜ.5ರಂದು ಸಂಜೆ 5:00 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಅಧ್ಯಕ್ಷತೆಯಲ್ಲಿ, ಉದ್ಯಮಿ ಕೆ.ಎಂ.ಶೆಟ್ಟಿ ಉದ್ಘಾಟಿಸಲಿ ದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವನಿತಾ ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು. ಪ್ರತಿದಿನ 6:30ರಿಂದ ಪ್ರದರ್ಶನಗೊಳ್ಳುವ ನಾಟಕಗಳ ವಿವರ: ಮೊದಲ ದಿನವಾದ ಜ.5ರಂದು ಕಲಾಮಂದಿರ ಉಡುಪಿ ಇವರಿಂದ ‘ಪಿಲಿ’ (ನಿರ್ದೇಶನ-ದಿನೇಶ್ ಆಚಾರ್ಯ ಸುಬ್ರಹ್ಮಣ್ಯ ನಗರ), ಜ.6ರಂದು ರಂಗ ಮಿಲನ, ಮುಂಬಯಿ ಇವರಿಂದ ‘ನಾಗ ಸಂಪಿಗೆ’ (ಮನೋಹರ ಶೆಟ್ಟಿ ನಂದಳಿಕೆ) ನಾಟಕ, ಜ.7ರಂದು ಶ್ರೀ ವಿಷ್ಣು ಕಲಾವಿರ್ದೆ ಮದ್ದಡ್ಡ ಇವರಿಂದ ‘ಕಾಶಿ ತೀರ್ಥ’ (ಅಂತ್ ಎಸ್. ಇರ್ವತ್ರಾಯ ತಂಗೋಯಿ) ನಾಟಕ ಪ್ರದರ್ಶನಗೊಳ್ಳಲಿದೆ. ಜ.8ರಂದು ಕರಾವಳಿ ಕಲಾವಿದರು ಮಲ್ಪೆ ಇವರಿಂದ ‘ಮುಗಿಯಂದಿ ಕಥೆ’ (ನೂತನ್ಕುಮಾರ್ ಕೊಡಂಕೂರು) ನಾಟಕ, ಜ.9ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಟ ಇವರಿಂದ ‘ನೆಲ ನೀರ್ದ ದುನಿಪು’ (ಸಂತೋಷ್ ನಾಯಕ್ ಪಟ್ಲ) ನಾಟಕ, ಜ.10ರಂದು ಸುಮನಸಾ ಕೊಡವೂರು ಇವರಿಂದ ‘ಯೇಸ’ (ವಿದ್ದು ಉಚ್ಚಿಲ) ನಾಟಕ ಹಾಗೂ ಜ.11ರಂದು ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ‘ಮಾಯೊಕದ ಮಣ್ಣಕರ’ (ರಮೇಶ್ ಬೆಣಕಲ್) ನಾಟಕ ಪ್ರದರ್ಶನಗೊಳ್ಳಲಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳೊಂದಿಗೆ ಕ್ರಮವಾಗಿ 20,000, 15,000, 10,000ರೂ. ನಗದು ಬಹುಮಾನ ನೀಡಲಾಗುವುದು. ಅಲ್ಲದೇ ಉತ್ತಮ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ 1,000ರೂ. ಮತ್ತು ದ್ವಿತೀಯ, ತೃತೀಯ ಬಹುಮಾನ ಕೊಡಲಾಗು ವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ 5,000ರೂ. ಹಾಗೂ ಹೊರ ರಾಜ್ಯದ ತಂಡಗಳಿಗೆ 10,000ರೂ. ನೀಡಲಾಗುತ್ತದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಉಪಾಧ್ಯಕ್ಷ ರಾದ ಭುವನಪ್ರಸಾದ್ ಹೆಗ್ಡೆ, ವಿ.ಕೆ.ಯಾದವ್, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೆಮ್ತೂರು ತುಳು ನಾಟಕ ಪರ್ಬದ ಸಂಚಾಲಕ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು.
ಚಿನ್ನಸ್ವಾಮಿ ದುರಂತ ಕಾರಣಕ್ಕಾಗಿ ಕ್ರಿಕೆಟ್ ಪಂದ್ಯಾಟ ನಿಲ್ಲಿಸೋದು ಸರಿಯಲ್ಲ: ಅನಿಲ್ ಕುಂಬ್ಳೆ ವಾದ
ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಕಾರಣಕ್ಕೆ ಕ್ರಿಕೆಟ್ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಹೇಳಿದ್ದಾರೆ. ದುರಂತ ಮರುಕಳಿಸದಂತೆ ಸೂಕ್ತ ಕ್ರಮಗಳೊಂದಿಗೆ ಪಂದ್ಯಗಳನ್ನು ಮುಂದುವರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ನ್ಯಾ. ಕುನ್ಹಾ ವರದಿಯ ಶಿಫಾರಸುಗಳನ್ನು ಅಳವಡಿಸಿದರೆ ಪಂದ್ಯಗಳಿಗೆ ಅನುಮತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಬೀದರ್ | ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಐಶ್ವರ್ಯ ಗೆ ತೃತೀಯ ಸ್ಥಾನ
ಬೀದರ್: 2025–26ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬೀದರ್ ಜಿಲ್ಲೆಯ ವಿದ್ಯಾರ್ಥಿನಿ ಐಶ್ವರ್ಯ ಅವರು ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಈ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಬೀದರ್ ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಐಶ್ವರ್ಯ ಅವರು ಶ್ರೇಷ್ಠ ಪ್ರದರ್ಶನ ನೀಡಿ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಐಶ್ವರ್ಯ ಅವರ ಈ ಸಾಧನೆ ಬೀದರ್ ಜಿಲ್ಲೆಗೆ ಮಾತ್ರವಲ್ಲದೆ ಕರ್ನಾಟಕ ರಾಜ್ಯಕ್ಕೂ ಹೆಮ್ಮೆಯ ವಿಷಯವಾಗಿದೆ. ಅವರ ಶಿಸ್ತು, ಪರಿಶ್ರಮ ಮತ್ತು ನಿರಂತರ ಅಭ್ಯಾಸವೇ ಈ ಸಾಧನೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ವಿಶ್ವಾಸವಿದೆ ಎಂದುಕರಾಟೆ ತರಬೇತಿದಾರ ನಾಗೇಶ್ ಎಂ. ಮಂದಕನಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕ್ರೀಡಾಭಿಮಾನಿಗಳು, ಪೋಷಕರು ಹಾಗೂ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ತೀವ್ರ ಚಳಿ ಹಿನ್ನೆಲೆ: ಬೀದರ್ ಜಿಲ್ಲೆಯ ಶಾಲೆಗಳ ಶನಿವಾರದ ಸಮಯ ಬದಲಾವಣೆ
ಬೀದರ್ : ವಿಪರೀತ ಚಳಿ ಹಾಗೂ ತೀವ್ರ ಶೀತಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಮಯವನ್ನು ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ) ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಚಳಿಗಾಲ ತೀವ್ರವಾಗಿದ್ದು, ಬೆಳಿಗ್ಗೆ ಸಮಯದಲ್ಲಿ ಶೀತಗಾಳಿ ಹೆಚ್ಚಾಗಿ ಬೀಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ಆಗಮಿಸಲು ತೀವ್ರ ತೊಂದರೆಯಾಗುತ್ತಿದೆ. ಶನಿವಾರದಂದು ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 12:00 ಗಂಟೆವರೆಗೆ ಶಾಲಾ ಸಮಯ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಲಾ ಸಮಯ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಶಿಕ್ಷಕರ ಸಂಘದ ಮನವಿಯನ್ನು ಪರಿಗಣಿಸಿದ ಇಲಾಖೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶನಿವಾರದಂದು ಶಾಲಾ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಆದೇಶದಂತೆ, ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶನಿವಾರದಂದು ಶಾಲಾ ಸಮಯವನ್ನು ಬೆಳಿಗ್ಗೆ 9:50 ರಿಂದ ಮಧ್ಯಾಹ್ನ 1:30 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮುಖ್ಯಗುರುಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಸರಕಾರಿ ಆದೇಶಗಳಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ: ಡಾ.ಪುರುಷೋತ್ತಮ ಬಿಳಿಮಲೆ
ತುಮಕೂರು,ಜ.02: ಕನ್ನಡವನ್ನು ಕೇವಲ ಸರಕಾರಿ ಆದೇಶಗಳ ಮೂಲಕ ಉಳಿಸಲು ಸಾಧ್ಯವಿಲ್ಲ. ಅದು ಹೃದಯದ ಭಾಷೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಬಳಕೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು,ಕನ್ನಡ ಎಂದರೆ ಕೇವಲ ಭಾಷೆ ಅಲ್ಲ ಅದು ಒಂದು ಸಂಸ್ಕೃತಿ. ಕೇವಲ ಬಲವಂತವಾಗಿ ಆದೇಶ ಅಥವಾ ಅನುಷ್ಠಾನದ ಒತ್ತಾಯದಿಂದ ಉಳಿಸಬಹುದೆಂಬುದು ಸುಳ್ಳು. ಕನ್ನಡ ಹೃದಯದ ಭಾಷೆಯಾದಲ್ಲಿ ಮಾತ್ರ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂವಹನ ನಡೆಸಲು ಭಾಷೆ ಅತ್ಯುತ್ತಮ ಸೇತುವೆಯಾಗಿ ಕೆಲಸ ಮಾಡಬೇಕು. ಆಡಳಿತದಲ್ಲಿ ಕನ್ನಡದ ಅನುಷ್ಠಾನವು ಕೇವಲ ಸಾಂಪ್ರದಾಯಿಕ ಕೆಲಸವಲ್ಲ, ಅದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವಾಗಿದೆ. ಸ್ವಭಾಷೆಯನ್ನು ಗೌರವಿಸುತ್ತಲೇ ಅನ್ಯ ಭಾಷೆಗಳನ್ನು ಕಲಿಯುವುದು ನಿಜವಾದ ಪ್ರಜಾಪ್ರಭುತ್ವದ ಲಕ್ಷಣ ಎಂದ ಅವರು, 1956ರ ಏಕೀಕರಣದ ನಂತರ ಕನ್ನಡ ಪರವಾಗಿ 3ಸಾವಿರಕ್ಕೂ ಹೆಚ್ಚು ಸರಕಾರಿ ಆದೇಶಗಳು ಹೊರಬಿದ್ದಿವೆ. ಆದರೆ, ವಾಸ್ತವದಲ್ಲಿ ಶೇ.10ರಷ್ಟು ಆದೇಶಗಳೂ ಸರಿಯಾಗಿ ಜಾರಿಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ವರದಿಯೊಂದನ್ನು ಉಲ್ಲೇಖಿಸಿದ ಅವರು, 2001ರ ಜನಗಣತಿಯಲ್ಲಿದ್ದ ಸುಮಾರು 254 ಭಾಷೆಗಳು ಇಂದು ಅಸ್ತಿತ್ವ ಕಳೆದುಕೊಂಡಿವೆ. ಕನ್ನಡಕ್ಕೂ ಇಂತಹ ಸ್ಥಿತಿ ಬರದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಕನ್ನಡ ಅನುಷ್ಠಾನದಲ್ಲಿ ವಿಫಲರಾಗುವ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ, ಸಮಗ್ರ ಕನ್ನಡ ಅನುಷ್ಠಾನ ಅಧಿನಿಯಮ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಭಾಷೆ ಅನುಷ್ಠಾನದಲ್ಲಿ ಲೋಪವೆಸಗುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಕಾನೂನುಗಳಿಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದ್ದು ಸದ್ಯದಲ್ಲೇ ಕಾನೂನು ಜಾರಿಗೊಳ್ಳಲಿದೆ ಎಂದರು. ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೀಹಾ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ತುಮಕೂರು ಉಪ ವಿಭಾಗಾಧಿಕಾರಿ ನಹೀದಾ , ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.
ಕೊಪ್ಪಳ | ಎರಡು ಬೈಕ್ಗಳು ಮುಖಾಮುಖಿ ಢಿಕ್ಕಿ : ಇಬ್ಬರು ಮೃತ್ಯು
ಕೊಪ್ಪಳಕುಕನೂರು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಕನೂರು ತಾಲೂಕಿನ ಬನಾಪುರ ಕ್ರಾಸ್ ಬಳಿ ನಡೆದಿದೆ. ಈ ಘಟನೆ ಹೇಗೆ ನಡೆಯಿತು ಎನ್ನುವುದು ಇನ್ನು ತಿಳಿದು ಬಂದಿಲ್ಲ. ಕನಿಷ್ಟ ಇಬ್ಬರು ಮೃತಪಟ್ಟಿರಬಹುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿ ಗುಂಪು ಘರ್ಷಣೆ| ಮೃತ ವ್ಯಕ್ತಿಯ ಕುಟುಂಬಕ್ಕೆ 1ಕೋಟಿ ರೂ. ಪರಿಹಾರ ನೀಡುವಂತೆ ರೈತ ಸಂಘ ಆಗ್ರಹ
ಮೈಸೂರು,ಜ.2: ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಳ್ಳಾರಿ ನಗರದ ಹವಂಬಾವಿಯಲ್ಲಿ ನಡೆದ ಘರ್ಷಣೆಯಲ್ಲಿ ಅಮಾಯಕ ಯುವಕನೊಬ್ಬ ಮೃತಪಟ್ಟಿದ್ದಾನೆ. ಸರಕಾರ ಗುಂಡಿಕ್ಕಿದ ವ್ಯಕ್ತಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮೃತ ವ್ಯಕ್ತಿಯ ಕುಟುಂಬದವರಿಗೆ 1 ಕೋಟಿ ರೂ ತಾತ್ಕಾಲಿಕ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಆಗ್ರಹಿಸಿದರು. ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಂಗಲಗುಪ್ಪೆ ಕೃಷ್ಣೇಗೌಡ, ಕೆಲವು ರಾಜಕಾರಣಿಗಳು ಪಿಸ್ತೂಲನ್ನು ಆಟಿಕೆಯ ವಸ್ತು ಎಂದುಕೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿ ಪೊಲೀಸರಿಗೆ ಇದ್ದ ಮೇಲೆ ಭರತ್ರೆಡ್ಡಿ ಅಂಗರಕ್ಷಕ ಎನ್ನಲಾದ ವ್ಯಕ್ತಿ ಗುಂಡು ಹಾರಿಸುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಪಕ್ಷಪಾತ ಮಾಡದೆ ತಪ್ಪಿತಸ್ತರನ್ನು ಶಿಕ್ಷೆಗೆ ಒಳಪಡಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಈ ಕುರಿತು ಈಗಾಗಲೇ ಮಾಜಿ ಸಚಿವರಾದ ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪರಿಸ್ಥಿತಿ ತಣ್ಣಗಾಗುವ ತನಕ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಪ್ರತಿಮೆ ಅನಾವರಣ ತಾತ್ಕಾಲಿಕ ಮುಂದೂಡಿಕೆ, ಜನಾರ್ದನ ರೆಡ್ಡಿ ವಿರುದ್ಧ ನಾಗೇಂದ್ರ ಕಿಡಿ
ಬಳ್ಳಾರಿಯಲ್ಲಿ ಜನವರಿ 3ರಂದು ನಡೆಯಬೇಕಿದ್ದ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಬಿ ನಾಗೇಂದ್ರ ಘೋಷಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಳ್ಳಾರಿಯಲ್ಲಿ ಇನ್ನುಮುಂದೆ ದಬ್ಬಾಳಿಕೆ ನಡೆಯುವುದಿಲ್ಲ ಎಂದರು. ಕಲ್ಲು, ಖಾರದ ಪುಡಿ ಬಳಸಿ ಗಲಭೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಿದ ನಾಗೇಂದ್ರ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕನ್ನರ್ಪಾಡಿ: ಶೀರೂರು ಪರ್ಯಾಯ ಸಮಾಲೋಚನಾ ಸಭೆ
ಉಡುಪಿ, ಜ.2: ಕಳೆದ 36 ವರ್ಷಗಳಿಂದ ನಿರಂತರವಾಗಿ ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪರ್ಯಾಯದ ಹೊರೆಕಾಣಿಕೆ ಅತ್ಯಂತ ವಿಜೃಂಭಣೆಯಿಂದ ಸಮರ್ಪಣೆಯಾಗಿದ್ದು ಈ ಬಾರಿಯ ಶೀರೂರು ಪರ್ಯಾಯಕ್ಕೂ ಶ್ರೀಕ್ಷೇತ್ರದಿಂದ ವೈಭವದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಶ್ರೀಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ. ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಶೀರೂರು ಪರ್ಯಾಯದ ಪೂರ್ವಭಾವೀ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಪರ್ಯಾಯ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಮಾತನಾಡಿ, ಶೀರೂರು ಶ್ರೀವೇದವರ್ಧನ ತೀರ್ಥರ ಸಂಕಲ್ಪದಂತೆ ಶ್ರೀ ಕೃಷ್ಣ ದೇವರ ನೈವೇದ್ಯದ ಪ್ರತಿಯಾಗಿ ಪ್ರತಿ ಮನೆಯಿಂದ ಹದಿನಾಲ್ಕು ತೆಂಗಿನಕಾಯಿ ಸಮರ್ಪಣೆ ಸಹಿತ ಹೊರೆಕಾಣಿಕೆಯ ವಿವರಗಳನ್ನು ನೀಡಿದರು. ಸಭೆಯಲ್ಲಿ ಎ.ಸಂಜೀವ, ರಘುನಾಥ್ ಕೋಟ್ಯಾನ್, ನವೀನ್ ಶೆಟ್ಟಿ, ಜಯಕರ ಶೇರಿಗಾರ್, ಗುರುರಾಜ್ ಉಪಾಧ್ಯ, ಎಂ.ರಾಜೇಂದ್ರ, ನಿರುಪಮ ಪ್ರಸಾದ್, ದಾಮೋದರ ಶೇರಿಗಾರ್, ವಿಷ್ಣು ಪ್ರಸಾದ್ ಪಾಡಿಗಾರ್, ರಘುನಾಥ್ ಕೋಟ್ಯಾನ್, ನಾರಾಯಣ ರಾವ್ ಕನ್ನರ್ಪಾಡಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪಾದಾಧಿಕಾರಿಗಳು ಉಪಸ್ಥಿತರಿದ್ದರು. ಸಂದೀಪ್ ಮಂಜ ಕಾರ್ಯಕ್ರಮ ನಿರೂಪಿಸಿದರು.
ನಾಟಕಗಳಿಂದ ಸಾಮಾಜಿಕ ಸಮಸ್ಯೆ ಪರಿಹಾರ: ಡಾ.ವಿಜಯ ಬಲ್ಲಾಳ್
ಅಂಬಲಪಾಡಿ ನಾಟಕೋತ್ಸವ ಸಮಾರೋಪ, ರಂಗ ಸನ್ಮಾನ
ಯಲಬುರ್ಗಾ | ಕೊನಸಾಗರದಲ್ಲಿ ʼಮದ್ಯವ್ಯಸನ ಮುಕ್ತ ಗ್ರಾಮ ಆಂದೋಲನʼ ಗ್ರಾಮಸಭೆ
ಯಲಬುರ್ಗಾ : ತಾಲ್ಲೂಕಿನ ಕೊನಸಾಗರ ಗ್ರಾಮದಲ್ಲಿ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಗ್ರಾಮ ಪಂಚಾಯತ್ಗಳ ಸಹಯೋಗದಲ್ಲಿ ಮದ್ಯವ್ಯಸನ ಮುಕ್ತ ಗ್ರಾಮ ಆಂದೋಲನದ ಅಂಗವಾಗಿ ಗ್ರಾಮಸಭೆ ನಡೆಸಲಾಯಿತು. ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ಮದ್ಯವ್ಯಸನದಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳು ಹಾಗೂ ಅವುಗಳ ನಿಯಂತ್ರಣ ಕುರಿತು ವಿಸ್ತೃತ ಚರ್ಚೆ ನಡೆಯಿತು. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು. ಯಾರಾದರೂ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿರುವುದು ಕಂಡುಬಂದಲ್ಲಿ ತಕ್ಷಣವೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಕುಷ್ಟಗಿ ವೃತ್ತ ನಿರೀಕ್ಷಕ ರವಿಕುಮಾರ, ಅಬಕಾರಿ ಉಪನಿರೀಕ್ಷಕರಾದ ನೀಲಾ ಆನಂದ್, ಅಬಕಾರಿ ಸಿಬ್ಬಂದಿ ವಿಜಯ ಪ್ರತಾಪ್, ಯಲಬುರ್ಗಾ ಪೊಲೀಸ್ ಠಾಣೆಯ ಎಫ್ಐ ಸಿಬ್ಬಂದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹನಮಂತರಾಯ ಯಂಕಂಚಿ ಹಾಗೂ ಅಧಿಕಾರಿಗಳಾದ ವಜ್ರಬಂಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಹಿರಿಯರಾದ ಬಸವಣ್ಣೆಪ್ಪ ಈಳಗೇರ, ಯಮನೂರಸಾಬ ಕುದರಿಮೋತಿ, ಮಳಿಯಪ್ಪ ಕಮ್ಮಾರ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಾಕ್ಷಾಯಿಣಿ ಬೈರೇಗೌಡ ಬನ್ನಿಕೊಪ್ಪ, ಸದಸ್ಯರಾದ ಯಮನಪ್ಪ ಕುರ್ನಾಳ, ನಾಗಪ್ಪ ಭಜಂತ್ರಿ, ಈಶಪ್ಪ ಅರಳಿ, ಫಕೀರಪ್ಪ ಇಳಗೇರ, ಯಮನಕ್ಕೆ ಪೂಜಾರ, ಪರಶುರಾಮ ಹರಿಜನ, ಧರ್ಮಪ್ಪ ಸೇರಿದಂತೆ ಮಹಿಳಾ ಸಂಘಗಳ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಮ್ಮು, ಜ.2: ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗಿಯಾಗಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಫೆಲೆಸ್ತೀನ್ ನ ಧ್ವಜದ ಚಿಹ್ನೆಯಿರುವ ಹೆಲ್ಮೆಟ್ ಧರಿಸಿ ಆಡಿದ್ದ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟಿಗನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಫುರ್ಖಾನ್ ಭಟ್ ಎಂಬ ಆಟಗಾರ ಜಮ್ಮು ಜಿಲ್ಲೆಯಲ್ಲಿ ಬುಧವಾರ ನಡೆದ ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಈ ಪಂದ್ಯಾವಳಿಯನ್ನು ಕಾಶ್ಮೀರ ನಿವಾಸಿ ಸಾಜಿದ್ ಭಟ್ ಖಾಸಗಿಯಾಗಿ ಆಯೋಜಿಸಿದ್ದರು. ಪ್ರಕರಣ ಸಂಬಂಧ ಆಯೋಜಕರನ್ನೂ ಡೊಮನಾ ಪೊಲೀಸ್ ಠಾಣೆಗೆ ಕರೆಸಿ ಪ್ರಶ್ನಿಸಲಾಗಿದೆ ಎಂದು ತಿಳಿದುಬಂದಿದೆ. ಪಂದ್ಯದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆದ ಬಳಿಕ, ಫುರ್ಖಾನ್ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿವೆ. ಗುರುವಾರ ಸಂಜೆ ವೇಳೆಗೆ ಈ ಸಂಬಂಧ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟನೆ ನೀಡಿದ್ದು, ಸಂಬಂಧಿತ ಪಂದ್ಯಾವಳಿ ಖಾಸಗಿ ಸ್ವರೂಪದ್ದಾಗಿದ್ದು, ಅಸೋಸಿಯೇಷನ್ ನೊಂದಿಗೆ ಯಾವುದೇ ಅಧಿಕೃತ ಸಂಪರ್ಕ ಇಲ್ಲ ಎಂದು ತಿಳಿಸಿದೆ. ಇದು ಸ್ಥಳೀಯ ಆಟಗಾರರನ್ನು ಒಳಗೊಂಡ ಸೀಮಿತ ಮಟ್ಟದ ಪಂದ್ಯಾವಳಿಯಾಗಿದ್ದು, ಪ್ರೇಕ್ಷಕರಿಗೂ ಅವಕಾಶ ನೀಡಲಾಗಿರಲಿಲ್ಲ ಎಂದು ಹೇಳಿದೆ. ಅಸೋಸಿಯೇಷನ್ ಅಧಿಕೃತ ಉಸ್ತುವಾರಿ ಬ್ರಿಗೇಡಿಯರ್ ಅನಿಲ್ ಗುಪ್ತಾ, ಘಟನೆ ತಮ್ಮ ಗಮನಕ್ಕೆ ಬಂದಿದ್ದು, ಆದರೆ ಇದು ಸಂಘದ ಅಧಿಕಾರ ವ್ಯಾಪ್ತಿಗೆ ಸೇರದ ವಿಷಯವಾಗಿರುವುದರಿಂದ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ BJP ಯೂ ಆಕ್ಷೇಪ ವ್ಯಕ್ತಪಡಿಸಿದ್ದು, ಫುರ್ಖಾನ್ ಭಟ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಉಡುಪಿ ಭೀಮಾ ಜ್ಯವೆಲ್ಲರ್ಸ್ನಿಂದ ಪೊಲೀಸ್ ಇಲಾಖೆಗೆ ಜೀಪು ಹಸ್ತಾಂತರ
ಉಡುಪಿ, ಜ.2: ಭೀಮಾ ಜ್ಯವೆಲ್ಲರ್ಸ್ ಉಡುಪಿ ಇದರ ಸಿಎಸ್ಆರ್ ನಿಧಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ನ್ನು ಗುರುವಾರ ನೀಡಲಾಯಿತು. ಭೀಮ ಜ್ಯುವೆಲ್ಲರ್ಸ್ ಉಡುಪಿ ಇದರ ಸೇಲ್ಸ್ ಮತ್ತು ಅಪರೇಷನ್ ಮುಖ್ಯಸ್ಥ ಗುರುಪ್ರಸಾದ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ಜೀಪಿನ ಕೀಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ರವಿ ಕುಮಾರ್ ಹಾಗೂ ಭೀಮ ಜ್ಯುವೆಲರ್ಸ್ ಉಡುಪಿ ಬ್ರ್ಯಾಂಚ್ ಮ್ಯನೇಜರ್ ಆಶಿಶ್, ಡೆಪ್ಯುಟಿ ಮ್ಯಾನೇಜರ್ ಸುಧೀರ್ ಶೆಟ್ಟಿ, ಅಸಿಸ್ಟೆಂಟ್ ಮ್ಯಾನೇಜರ್ ಪ್ರಸನ್ನ ಕುಮಾರ್, ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್ನ ಮಂಜುನಾಥ ಅಮೀನ್, ಸೇಲ್ಸ್ ಮತ್ತು ಅಪರೇಶನ್ ಹೆಡ್ ರಾಘವೆಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಅಫಜಲಪುರ | ನೀರಾವರಿ ವ್ಯರ್ಥ ವಿರೋಧಿಸಿ 900 ಕಿ.ಮೀ. ಅಧ್ಯಯನ ಪಾದಯಾತ್ರೆ
ಅಫಜಲಪುರ : ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿರುವ 11 ಜಲಾಶಯಗಳಿಂದ ಕಾಲುವೆ ನೀರಾವರಿ ಸಮರ್ಪಕವಾಗಿ ರೈತರ ಜಮೀನುಗಳಿಗೆ ತಲುಪದೆ ಎಲ್ಲೆಡೆ ವ್ಯರ್ಥವಾಗುತ್ತಿದ್ದು, ಈ ಕುರಿತು ಆಡಳಿತದಲ್ಲಿ ಇರುವವರು ಗಂಭೀರವಾಗಿ ಗಮನ ಹರಿಸಬೇಕೆಂದು ಆಗ್ರಹಿಸಿ ಅಧ್ಯಯನ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಭೀಮಾ ಮಿಷನ್ ಅಧ್ಯಕ್ಷ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಭೀಮಶೆಟ್ಟಿ ಮುಕ್ಕಾ ತಿಳಿಸಿದ್ದಾರೆ. ಅಫಜಲಪುರ ತಾಲೂಕಿನ ಬಳೂಂಡಗಿ ಗ್ರಾಮದಲ್ಲಿ ಮೂರು ಜಿಲ್ಲೆಗಳ ನೀರಾವರಿ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಆಯೋಜಿಸಿರುವ ಸುಮಾರು 900 ಕಿ.ಮೀ. ಉದ್ದದ ಕಾಲುವೆ ಮಾರ್ಗದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ಜಿಲ್ಲೆಗಳ 11 ಜಲಾಶಯಗಳಲ್ಲಿ ಶೇ.90ರಷ್ಟು ನೀರು ಸಂಗ್ರಹವಾಗಿದ್ದರೂ, ನಿರ್ಮಿತ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರು ತಲುಪದೆ ವ್ಯರ್ಥವಾಗುತ್ತಿದೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಿ ರೈತರಿಗೆ ನೀರು ಪೂರೈಸಬೇಕು ಎಂದು ಮನವಿ ಮಾಡಿದರು. ಕಲಬುರಗಿಯಲ್ಲಿ ಆರು ಜಲಾಶಯಗಳಿದ್ದು, 14.848 ಟಿಎಂಸಿ ಸಂಗ್ರಹ ಸಾಮರ್ಥ್ಯವಿದೆ. ಇದರಿಂದ 1.67 ಲಕ್ಷ ಎಕರೆ ನೀರಾವರಿ ಆಗಬೇಕಿತ್ತು. ಬೀದರ್ ಜಿಲ್ಲೆಯಲ್ಲಿ ಮೂರು ಜಲಾಶಯಗಳಿದ್ದು, 9.378 ಟಿಎಂಸಿ ಸಾಮರ್ಥ್ಯವಿದ್ದು, 73,950 ಸಾವಿರ ಎಕರೆ ನೀರಾವರಿ ಆಗಬೇಕಿತ್ತು.ಯಾದಗಿರಿ ಜಿಲ್ಲೆಯಲ್ಲಿ ಎರಡು ಜಲಾಶಯಗಳಿದ್ದು, 0.639 ಟಿಎಂ ಸಾಮರ್ಥ್ಯವಿದ್ದು, 8 ಸಾವಿರ ಎಕರೆನೀರಾವರಿ ಆಗಬೇಕಿತ್ತು. ಆದರೆ ಇದುವರೆಗೆ ರೈತರಿಗೆ ಅನುಕೂಲವಾಗಿಲ್ಲ.ಇದಕ್ಕೆ ಪರಿಹಾರ ದೊರೆಯಬೇಕು ಎಂದು ಹೇಳಿದರು. ಪ್ರಮುಖರಾದ ಗಿರೀಶಗೌಡ ಇನಾಮದಾರ, ಪ್ರೊ ಬಸವರಾಜ್ ಕುಮನೂರ, ಮಲ್ಲಿಕಾರ್ಜುನ ಹುಳಗೇರಾ ಆದಿನಾಥ ಹೀರಾ, ಮಲ್ಲಿನಾಥ ಪಾಟೀಲ್, ವಿಜಯಕುಮಾರ ಚೆಗಟ್ಟಿ, ಪ್ರಿಯಾ ಹೊಸಗೌಡ, ಶಿವರಾಜ ಬಿರಾದಾರ, ಶಿವಕುಮಾರ ಪಾಟೀಲ್, ಸುಂದರ್ , ಅಭಿಷೇಕ್ ಪಾಟೀಲ್, ನಾಗರೆಡ್ಡಿ ಇತರರಿದ್ದರು. ಗಂಗಾ ಪೂಜೆಯೊಂದಿಗೆ ಪಾದಯಾತ್ರೆ ಆರಂಭ : ಬಳ್ಳೂಂಡಗಿ ಬಳಿ ಗಂಗಾ ಪೂಜೆ ನೆರವೇರಿಸಿ ಪಾದಯಾತ್ರೆ ಆರಂಭಿಸಲಾಗಿದ್ದು, ಮಾದಬಾಳ ತಾಂಡಾ ಹಾಗೂ ಅಫಜಲಪುರ ತಾಂಡಾ ಮೂಲಕ ಸಾಗಿದ ಪಾದಯಾತ್ರೆಯ ಮೊದಲ ದಿನ ರೈತರೊಬ್ಬರ ಜಮೀನಿನಲ್ಲಿ ವಾಸ್ತವ್ಯ ಮಾಡಲಾಯಿತು. ಗುರುವಾರ 12 ಕಿ.ಮೀ. ಪಾದಯಾತ್ರೆ ನಡೆಸಲಾಗಿದೆ. ಈ ಪಾದಯಾತ್ರೆ ಮಾರ್ಚ್ 30ರವರೆಗೆ ಮುಂದುವರಿಯಲಿದೆ. ಕಲಬುರಗಿ ಜಿಲ್ಲೆಯಲ್ಲಿ 558 ಕಿ.ಮೀ., ಬೀದರ್ ಜಿಲ್ಲೆಯಲ್ಲಿ 323 ಕಿ.ಮೀ. ಹಾಗೂ ಯಾದಗಿರಿ ಜಿಲ್ಲೆಯಲ್ಲಿ 25 ಕಿ.ಮೀ. ಸೇರಿ ಒಟ್ಟು 906 ಕಿ.ಮೀ. ಉದ್ದದ ಕಾಲುವೆ ಮಾರ್ಗದಲ್ಲಿ ಪಾದಯಾತ್ರೆ ಸಾಗಲಿದ್ದು, ಹೇರೂರ ಸಮೀಪದ ಬೆಣ್ಣೆತೋರಾ ಡ್ಯಾಂ ಬಳಿ ಮಾ.30ರಂದು ಸಮಾರೋಪಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. “ಸರ್ಕಾರ ನೀರಾವರಿ ಮಾಡುತ್ತಿದೆ ಎಂದು ಸುಳ್ಳು ಹೇಳುತ್ತಿದೆ. ಜಲಾಶಯಗಳ ವಾಸ್ತವ ಸ್ಥಿತಿ, ಅಪೂರ್ಣ ಮುಖ್ಯ ಕಾಲುವೆಗಳು, ವಿತರಣೆ ಹಾಗೂ ಮರಿ ಕಾಲುವೆಗಳ ದುಸ್ಥಿತಿ ಕುರಿತು ಅಧ್ಯಯನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.” -ಭೀಮಶೆಟ್ಟಿ ಮುಕ್ಕಾ, ಅಧ್ಯಕ್ಷ, ಭೀಮಾ ಮಿಷನ್ “ಭೀಮಾ, ಅಮರ್ಜಾ, ಚುಳಕಿ ನಾಲಾ, ಕಾರಂಜಾ, ಚಂದ್ರಂಪಳ್ಳಿ, ಮುಲ್ಲಾಮರಿ, ಹತ್ತಿಕುಣಿ, ಸೌದಾಗರ, ಗಂಡೋರಿ ನಾಲಾ ಸೇರಿದಂತೆ ಮಧ್ಯಮ ನೀರಾವರಿ ಯೋಜನೆಗಳು ಸಂಪೂರ್ಣ ವಿಫಲವಾಗಿವೆ. ಹೋರಾಟ ಮತ್ತು ಅಧ್ಯಯನದ ಮೂಲಕವೇ ಸ್ಪಷ್ಟ ಸಂದೇಶ ನೀಡಬೇಕಾಗಿದೆ.” -ಡಾ. ಬಸವರಾಜ ಕುಮ್ನೂರ್, ಸಾಮಾಜಿಕ ಹೋರಾಟಗಾರ “ಮೊದಲ ದಿನವೇ ಹಲವೆಡೆ ಕಾಲುವೆಗಳಲ್ಲಿ ಮುಳ್ಳು-ಕಂಟಿ ಬೆಳೆದಿದ್ದು, ನೀರಿನ ಸದ್ಬಳಕೆ ಆಗುತ್ತಿಲ್ಲ. ಅಧಿಕಾರಿಗಳು ಹಾಗೂ ರೈತರು ಎಚ್ಚೆತ್ತು ನೀರಿನ ಜಾಗೃತಿ ಮೂಡಿಸಬೇಕು.” -ಗಿರೀಶಗೌಡ ಇನಾಮದಾರ, ಅಧ್ಯಕ್ಷ, ರಾಜ್ಯ ಕೃಷಿ ಕಾರ್ಮಿಕರ ರೈತ ಸಂಘ
ಮೈಸೂರು| ವಾಟ್ಸಾಪ್ಗೆ ಬಂದ ಮೆಸೇಜ್ಗೆ ಕ್ಲಿಕ್ ಮಾಡಿ 1.43 ಲಕ್ಷ ರೂ. ಕಳೆದುಕೊಂಡ ವ್ಯಾಪಾರಿ!
ಮೈಸೂರು,ಜ.2: ಕಬಾಬ್ ಅಂಗಡಿ ನಡೆಸುತ್ತಿದ್ದ ಸಣ್ಣ ವ್ಯಾಪಾರಿಯೋರ್ವನ ಯುಪಿಐ ಖಾತೆಗೆ ಕನ್ನ ಹಾಕಿರುವ ವಂಚಕರು ಆನ್ಲೈನ್ ಮೂಲಕ 1.43 ಲಕ್ಷ ರೂ. ವಂಚನೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿನಕಲ್ ಸುರೇಶ್ ವಂಚನೆಗೆ ಒಳಗಾದ ವ್ಯಾಪಾರಿ. ಕಳೆದ ಡಿಸೆಂಬರ್ 25ರಂದು ವಾಟ್ಸಾಪ್ ಖಾತೆಗೆ ಬಂದ ಮೆಸೇಜ್ಗೆ ಕ್ಲಿಕ್ ಮಾಡಿದಾಗ ಸುರೇಶ್ ಅವರ ಖಾತೆಯಿಂದ ಎರಡು ಬಾರಿ ಒಟ್ಟು 1.43 ಲಕ್ಷ ರೂ ಹಣ ಕಡಿತವಾಗಿದೆ. ಈ ಬಗ್ಗೆ ಸುರೇಶ್ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನಿಕಟಪೂರ್ವ ಬ್ಲಾಕ್ ಅಧ್ಯಕ್ಷ ಕೆ.ಎಂ.ಅನುರಾಜ್ ಪ್ರತಿಕ್ರಿಯಿಸಿ, ಬಹುತೇಕ ಸಣ್ಣ ವ್ಯಾಪಾರಿಗಳು ಅನಕ್ಷರಸ್ತರಾಗಿದ್ದು, ತಮಗೆ ಬರುವ ಮೆಸೆಜ್ ಬಗ್ಗೆ ಅವರಿಗೆ ನಿಖರ ಮಾಹಿತಿ ಇರುವುದಿಲ್ಲ. ವಂಚಕ ಮೊದಲು ಸುರೇಶ್ ಖಾತೆಗೆ ಒಂದು ರೂಪಾಯಿ ಕಳಿಸಿ ನಂತರ ಆಪ್ ಹಾಕಿ ಕ್ಲಿಕ್ ಮಾಡಲು ಹೇಳಿದ್ದಾನೆ. ಸುರೇಶ್ ಗೊತ್ತಾಗದೆ ಆ ಆಪ್ ಒತ್ತಿದ ತಕ್ಷಣ ಖಾತೆಯಲ್ಲಿದ್ದ ಹಣ ಮಾಯವಾಗಿದೆ. ಪೊಲೀಸರು ಆನ್ಲೈನ್ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ದಿಲ್ಲಿಯಲ್ಲಿ ಕುಳಿತ ವಂಚಕರು ಗ್ರಾಮೀಣ ಪ್ರದೇಶದ ಜನರಿಗೆ ಆಮೀಷಗಳನ್ನು ಒಡ್ಡಿ ಈ ರೀತಿ ವಂಚನೆ ಮಾಡುತ್ತಿದ್ದಾರೆ. ಸೂಕ್ತ ಪರಿಶೀಲನೆ ನಡೆಸಿ ಸುರೇಶ್ ಅವರಿಗೆ ಹಣವನ್ನು ವಾಪಸ್ ಕೊಡಿಸುವ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರಿಗೆ ಆನ್ಲೈನ್ ವಂಚನೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅಫಜಲಪುರ | ತಾಲೂಕು ಕಸಾಪದ ಹಂಗಾಮಿ ಅಧ್ಯಕ್ಷರಾಗಿ ಪ್ರಭಾವತಿ ನೇಮಕ
ಅಫಜಲಪುರ: ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ಪ್ರಭು ಪುಲಾರಿ ಕಾರಣಾಂತರಗಳಿಂದ ರಾಜೀನಾಮೆ ಸಲ್ಲಿಸಿದರಿಂದ ನೂತನ ಹಂಗಾಮಿ ಅಧ್ಯಕ್ಷರಾಗಿ ಅಫಜಲಪುರ ಪಟ್ಟಣದ ಆಶಾಕಿರಣ ಸೇವಾ ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಎಸ್.ಮೇತ್ರಿ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಅಧ್ಯಕ್ಷ ಪ್ರಭು ಪುಲಾರಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಸಾಪ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಅವರಿಗೆ ಸಲ್ಲಿಸಿದ ನಂತರ ಹಂಗಾಮಿ ಅಧ್ಯಕ್ಷರನ್ನಾಗಿ ಪ್ರಭಾವತಿ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
`ತಲೆನೋವು ರಜೆ ಕೊಡಿ ಎಂದಿದ್ದಕ್ಕೆ ಲೈವ್ ಲೊಕೇಶನ್ ಕೇಳಿದ ಬಾಸ್'; ಉದ್ಯೋಗಿಯೊಬ್ಬರ ಪೋಸ್ಟ್ ವೈರಲ್
ಉದ್ಯೋಗಿಯೊಬ್ಬರು ರೆಡ್ಡಿಟ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ವೊಂದು ವೈರಲ್ ಆಗಿದೆ. ತಲೆನೋವಿನ ಕಾರಣಕ್ಕೆ ರಜೆ ಕೇಳಿದ ಉದ್ಯೋಗಿಯೊಬ್ಬರಿಗೆ, ಅವರ ಬಾಸ್ ನಿಮ್ಮ ಲೈವ್ ಲೊಕೇಶನ್ ಶೇರ್ ಮಾಡಿ ಎಂದು ಪಟ್ಟು ಹಿಡಿದ ಘಟನೆ ರೆಡ್ಡಿಟ್ನಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಇದು ವೈಯಕ್ತಿಕ ಗೌಪ್ಯತೆಯ ಉಲ್ಲಂಘನೆ. ಇಂತವರಿಂದಲೇ ಕಂಪನಿಗಳ ಉದ್ಧಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ | ರಾಜ್ಯಮಟ್ಟದ ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನ
ಕಲಬುರಗಿ: ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2025ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ. ಸಾಹಿತ್ಯ, ಮಕ್ಕಳ ಸಾಹಿತ್ಯ, ಕಲೆ ಮತ್ತು ವಿಜ್ಞಾನ ಪ್ರಕಾರಗಳ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಲ್ಲಿಸಬಹುದಾಗಿದೆ. ಪುಸ್ತಕಗಳು 2025ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿರಬೇಕು. ಪುಸ್ತಕದ ತಾಂತ್ರಿಕ ಪುಟದಲ್ಲಿ ಅಥವಾ ಯಾವುದೇ ಪುಟಗಳಲ್ಲಿ ಮೊಹರು ಹಾಕಿರುವ, ಕೈಬರಹ ಹೊಂದಿರುವ, ಸ್ಟಿಕ್ಕರ್ ಅಂಟಿಸಿರುವ ಯಾವುದೇ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಪುಸ್ತಕಗಳ ನೋಂದಣಿ ಕಾಯ್ದೆ ಅನ್ವಯ ಪ್ರಕಾಶಕರು 2025 ರಲ್ಲಿ ಮುದ್ರಿಸಿ ಪ್ರಕಟಿಸಿದ ಮೊದಲ ಆವೃತ್ತಿಯ ಪುಸ್ತಕಗಳ 3 ಪ್ರತಿಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಪಾರ್ಕ್, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು. ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯು ಆಯ್ಕೆಗಾಗಿ ಸಲ್ಲಿಸಲಾದ 3 ಪ್ರತಿಗಳಲ್ಲಿ ಒಂದನ್ನು ಪರಿಗಣಿಸಲಾಗುತ್ತದೆ. 2025 ರಲ್ಲಿ ಕರ್ನಾಟಕದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪ್ರತಿ ಶೀರ್ಷಿಕೆ ಮೂರು ಪ್ರತಿಗಳನ್ನು ಮುಫತ್ತಾಗಿ 2026ರ ಜನವರಿ 31 ರ ಸಂಜೆ 5.30 ರೊಳಗಾಗಿ ಸಲ್ಲಿಸಿ ನೋಂದಣಿ ಮಾಡಿಸಬೇಕು. ಸದರಿ ಪುಸ್ತಕಗಳನ್ನು ಮಾತ್ರ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುತ್ತದೆ. ಅಂತಿಮ ದಿನಾಂಕದ ನಂತರ ನೋಂದಣಿಯಾಗುವ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹೊರ ರಾಜ್ಯಗಳಲ್ಲಿ 2025ರಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟವಾಗುವ ಆಂಗ್ಲ, ಹಿಂದಿ ಅಥವಾ ಯಾವುದೇ ಭಾಷೆಯ ಪುಸ್ತಕಗಳನ್ನು ಆಯಾ ರಾಜ್ಯ ಕೇಂದ್ರ ಗ್ರಂಥಾಲಯಗಳಲ್ಲಿ ಅಥವಾ ಕೇಂದ್ರ/ಆಯಾ ರಾಜ್ಯ ಸರ್ಕಾರಗಳಿಂದ ಅಧಿಸೂಚಿಸಲ್ಪಟ್ಟ ಅಧಿಕೃತ ಪುಸ್ತಕ ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ, ನೋಂದಣಿ ಪ್ರಮಾಣ ಪತ್ರದ ನಕಲು ಪತ್ರದ ಪ್ರತಿಯೊಂದಿಗೆ ಮತ್ತು ಸದರಿ ಪುಸ್ತಕದ ಒಂದು ಪ್ರತಿಯನ್ನು 2026ರ ಜನವರಿ 31 ರ ಸಂಜೆ 5.30 ಗಂಟೆಯೊಳಗಾಗಿ ಆಯ್ಕೆಗಾಗಿ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಸಲ್ಲಿಸಬೇಕು. ತಡವಾಗಿ ಸಲ್ಲಿಸುವ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. 2025ನೇ ವರ್ಷದಲ್ಲಿ ಪ್ರಕಟಗೊಂಡ ಪುಸ್ತಕಗಳ ಆಯ್ಕೆಗೆ ಪ್ರತ್ಯೇಕವಾಗಿ ಆಯುಕ್ತರ ಕಚೇರಿಯಲ್ಲಿ ಯಾವುದೇ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಆಯ್ಕೆ ಸಮಿತಿಗೆ ಆಯ್ಕೆಗಾಗಿ ಪುಸ್ತಕಗಳನ್ನು ಸಲ್ಲಿಸಲಿಚ್ಛಿಸುವ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಯವರು ನಿಗದಿತ ಅವಧಿಯೊಳಗೆ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳ ನೋಂದಣಿ ಅಧಿನಿಯಮದಡಿ ನಿಯಮಾನುಸಾರ ಪುಸ್ತಕಗಳನ್ನು ಸಲ್ಲಿಸಬೇಕು. ನಿಬಂಧನೆಗಳು, ನೋಂದಣಿಗಾಗಿ ನಿಗದಿತ ಅರ್ಜಿ ನಮೂನೆ ಹಾಗೂ ಮತ್ತಿತರ ಮಾಹಿತಿಯನ್ನು ಇಲಾಖೆಯ www.dpl.karnataka.gov.in ವೆಬ್ಸೈಟ್ನ್ನು ಮತ್ತು ರಾಜ್ಯದ ಎಲ್ಲಾ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಉಪ ನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿಯಿಂದ ಅಥವಾ ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 221543 ಗೆ ಸಂಪರ್ಕಿಸಿ ಪಡೆಯಲು ಕೋರಲಾಗಿದೆ.
ಜ.4: ಗುರುಪುರ ಕೈಕಂಬದಲ್ಲಿ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ
ಮಂಗಳೂರು, ಜ.2: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಜ.4ರಂದು ಮಂಗಳೂರು ತಾಲೂಕಿನ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಹಮ್ಮಿ ಕೊಂಡಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 9:30ಕ್ಕೆ ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್ಬಿರ್ರ್ ಶಾಲಾ ವಠಾರದಿಂದ ಸಭಾಂಗಣದ ತನಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಜಿ ಎಂ.ಎಚ್. ಮೊಹಿದಿನ್ ಅಡ್ಡೂರು ಮೆರವಣಿಗೆ ಉದ್ಘಾಟಿಸಲಿದ್ದು, ಬೆಳಗ್ಗೆ 10ಕ್ಕೆ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 10:15ಕ್ಕೆ ಸ್ಪೀಕರ್ ಯು.ಟಿ. ಖಾದರ್ ಸಮ್ಮೇಳನ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸಮ್ಮೇಳನದಲ್ಲಿ ಶಮೀಮಾ ಕುತ್ತಾರ್ರ ಪಡಿಞ್ಞಿರ್ರೊ ಪೂ (ಕಥಾ ಸಂಕಲನ), ಹಸೀನ ಮಲ್ನಾಡ್ರ ಮಿನ್ನಾಂಪುಲು (ಹನಿಗವನ ಸಂಕಲನ), ಎನ್.ಎಂ. ಹನೀಫ್ ನಂದರಬೆಟ್ಟು ಅವರ ಸಂಪುಕಾತ್ (ಕವನ ಸಂಕಲನ), ಬಶೀರ್ ಅಹ್ಮದ್ ಬೆಳ್ಳಾಯಿರು ಅವರ ಬೆಲ್ಚ (ಕವನ ಸಂಕಲನ), ಹೈದರಲಿ ಕಾಟಿಪಳ್ಳ ಅವರ ನಸೀಅತ್ (ಕವನ ಸಂಕಲನ) ಕೃತಿಗಳು ಬಿಡುಗಡೆಗೆಯಾಗಲಿವೆ. ಮಧ್ಯಾಹ್ನ 12ಕ್ಕೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ನಡೆಯಲಿರುವ ಚರ್ಚಾಗೋಷ್ಠಿಯಲ್ಲಿ ಪ್ರಾಧ್ಯಾಪಕ ಹೈದರ್ ಅಲಿ, ಪತ್ರಕರ್ತ ಏ.ಕೆ. ಕುಕ್ಕಿಲ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಬ್ಯಾರಿ ಅಕಾಡಮಿಯ ಸದಸ್ಯೆ ಹಫ್ಸಾ ಬಾನು ಪಾಲ್ಗೊಳ್ಳಲಿದ್ದಾರೆ. ಮಂಗಳೂರು ವಿ.ವಿ. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಚರ್ಚಾಗೋಷ್ಠಿ ನಿರೂಪಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಬ್ಯಾರಿ ಕವಿಗೋಷ್ಠಿಯಲ್ಲಿ ಬದ್ರುದ್ದೀನ್ ಕೂಳೂರು, ಖಲಂದರ್ ಬೀವಿ ಅಮಾನುಲ್ಲಾ, ಅಶ್ಫಾಕ್ ಅಹ್ಮದ್ ಕಾಟಿಪಳ್ಳ, ಶಾಹಿದಾ ಮಂಗಳೂರು, ಶಮೀಮ್ ಕುಟ್ಟಿಕಳ, ಅಸ್ಮತ್ ವಗ್ಗ, ನಾಫಿಲ ಶಬೀನ್ ಕೈಕಂಬ, ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು ಕವನ ವಾಚಿಸಲಿದ್ದಾರೆ. ಅಪರಾಹ್ನ 3ಕ್ಕೆ ಮೂಡುಬಿದರೆಯ ಆಳ್ವಾಸ್ ಕಾಲೇಜಿನ ದಫ್ ತಂಡದಿಂದ ದಫ್ ಹಾಡು ಮತ್ತು ಬ್ಯಾರಿ ಹಾಡುಗಾರರ ತಂಡದಿಂದ ಹಾಡುಗಳ ಸಂಭ್ರಮವಿರಲಿದೆ. ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಬ್ದುಲ್ ಲತೀಫ್ ಗುರುಪುರ, ಪಾತುಂಞಿ ಮೂಡುಶೆಡ್ಡೆ, ಎಂ.ಪಿ. ಉಸ್ಮಾನ್ ಮುಕ್ರಿಕ ಸೂರಲ್ಪಾಡಿ, ಸುಲೈಮಾನ್ ಗುರುಪುರ, ಸಲೀಕಾ ಸೂರಲ್ಪಾಡಿ, ಆರ್.ಎಸ್. ಅಶ್ರಫ್ ಸೂರಲ್ಪಾಡಿ, ಅಬ್ದುಲ್ ಶರೀಫ್ ಸಾಮರಸ್ಯ ನ್ಯೂಸ್ ಮತ್ತು ಮುಹಮ್ಮದ್ ನಝೀರ್ ಬಜ್ಪೆಅವರನ್ನು ಸನ್ಮಾನಿಸಲಾಗುತ್ತದೆ. ಕರ್ನಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ದ.ಕ. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಕಸಪಾ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬ್ಯಾರಿ ಇನ್ಫೋ.ಕಾಂನ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಸಮಾರೋಪ ಭಾಷಣ ಮಾಡಲಿದ್ದು, ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸಂಜೆ 6:30ರಿಂದ ರಾತ್ರಿ 8ರ ತನಕ ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಬ್ರೋಕರ್ ಪೋಕರ್ ಬ್ಯಾರಿ ನಾಟಕ ಮತ್ತು ಗುರುಪುರದ ಎಂ.ಜಿ.ಎಂ. ತಾಲೀಮು ತಂಡದಿಂದ ತಾಲೀಮು ಪ್ರದರ್ಶನ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಇ.ಕೆ.ಎ. ಸಿದ್ದೀಕ್ ಅಡ್ಡೂರು, ಕಾರ್ಯಕ್ರಮದ ಸದಸ್ಯ ಸಂಚಾಲಕ ತಾಜುದ್ದೀನ್ ಅಮ್ಮುಂಜೆ, ಅಕಾಡಮಿಯ ಸದಸ್ಯರಾದ ಯು.ಎಚ್. ಖಾಲಿದ್ ಉಜಿರೆ, ಅನ್ಸಾರ್ ಕಾಟಿಪಳ್ಳ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎಂ.ಜಿ. ಸಾಹುಲ್ ಹಮೀದ್ ಗುರುಪುರ, ಸಲೀಂ ಹಂಡೇಲ್, ಕಾರ್ಯದರ್ಶಿಗಳಾದ ಅಬ್ದುಲ್ ಜಲೀಲ್ ಅರಳ ಎಂ.ಡಿ. ನವಾಝ್ ಉಪಸ್ಥಿತರಿದ್ದರು. *ಬ್ಯಾರಿ ಭವನಕ್ಕೆ ಹೊಸ ನೀಲ ನಕ್ಷೆ: ಉಮರ್ ಯು.ಎಚ್. ಉಳ್ಳಾಲ ತಾಲೂಕಿನ ಅಸೈಗೋಳಿಯ 51 ಸೆಂಟ್ಸ್ ಜಮೀನಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ಭವನ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆ ನಡೆದಿದ್ದು, ಮುಂದಿನ ತಿಂಗಳೊಳಗೆ ಬ್ಯಾರಿ ಭವನಕ್ಕೆ ಶಿಲಾನ್ಯಾಸ ನೆರವೇರುವ ಸಾಧ್ಯತೆ ಇದೆ. ಈ ಹಿಂದಿನ ಅವಧಿಯಲ್ಲಿ ತಯಾರಿಸಲಾದ ನೀಲನಕ್ಷೆಯನ್ನು ಬದಲಾಯಿಸಿ ಹೊಸ ನಕ್ಷೆಯನ್ನು ತಯಾರಿಸಲಾಗಿದೆ. ಇದರಲ್ಲಿ ಮ್ಯೂಸಿಯಂ, ಗ್ರಂಥಾಲಯ, ವಾಚನಾಲಯ, ಸಂಶೋಧನಾ ಕೇಂದ್ರ, ಬಹುವಿಧದ ಸಭಾಂಗಣ, ವಾಣಿಜ್ಯ ಕೊಠಡಿ ಇತ್ಯಾದಿ ಇರಲಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜ.4ರಂದು ವೇದವರ್ಧನ ತೀರ್ಥರ ಪುರ ಪ್ರವೇಶ
ಮಂಗಳೂರು, ಜ.2: ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿಯ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರು ಜ.4ರಂದು ಸಂಜೆ 4 ಗಂಟೆಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರಿಗೆ ಪುರ ಪ್ರವೇಶ ಮಾಡಲಿರುವರು. ಈ ಸಂದರ್ಭದಲ್ಲಿ ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ವತಿಯಿಂದ ಹಾಗೂ ಭಕ್ತ ಸಮೂಹದಿಂದ ಉರ್ವಸ್ಟೋರ್ ಶ್ರೀ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ಶೀರೂರು ಶ್ರೀ ಅವರನ್ನು ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಗುವುದು ಎಂದು ಉಡುಪಿ ಶೀರೂರು ಪರ್ಯಾಯ -2026 ಸ್ವಾಗತ ಸಮಿತಿ ಮಂಗಳೂರು ಗೌರವಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜ. 4ರಿಂದ 8ತನಕ ಶೀರೂರು ಶ್ರೀ ಮಂಗಳೂರಿನ ಭಕ್ತಾದಿಗಳ ಮನೆಗೆ ಭೇಟಿ ಮತ್ತು ಹಲವಾರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರ್ಯಾಯ ರಾಯಸವನ್ನು ಭಕ್ತಾದಿಗಳಿಗೆ ನೀಡಲಿದ್ದಾರೆ ಎಂದರು. ಸಮಿತಿ ಕಾರ್ಯಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಜ.8ರಂದು ಸಂಜೆ 4 ಗಂಟೆಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಭವ್ಯವಾದ ಮೆರವಣಿಗೆ ಮೂಲಕ ಆಗಮಿಸಿ, ಕೊಡಿಯಾಲ್ಬೈಲ್ ಶಾರದಾ ವಿದ್ಯಾಲಯದ ಹೊರಾಂಗಣದಲ್ಲಿರುವ ವೇದಿಕೆಯಲ್ಲಿ ಮಂಗಳೂರಿನ ಜನತೆಯ ಪರವಾಗಿ ಭಾವೀ ಪರ್ಯಾಯ ಶ್ರೀಪಾದರು ಪೌರ ಸನ್ಮಾನ ಸ್ವೀಕರಿಸಲಿರುವರು. ಶೀರೂರು ಶ್ರೀಪಾದರ ನಗರ ಸಂಚಾರ ಸಂದರ್ಭದಲ್ಲಿ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಲು ಇಚ್ಛಿಸುವ ಭಕ್ತರು ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ಕಾರ್ಯದರ್ಶಿ ಸುಧಾಕರ್ ರಾವ್ ಪೇಜಾವರ (ಮೊ: 9448546051)ಅಥವಾ ಸಂಚಾಲಕ ಗುರುಪ್ರಸಾದ್ ಕಡಂಬಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು. ಜ.15ರಂದು ಮಂಗಳೂರಿನಿಂದ ಉಡುಪಿ ಪರ್ಯಾಯಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದರು. ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಪ್ರಧಾನ ಸಂಚಾಲಕ ಗುರುಪ್ರಸಾದ್ ಕಡಂಬಾರ್, ಕೋಶಾಧಿಕಾರಿ ಬಿ. ಸುಬ್ರಹ್ಮಣ್ಯ ರಾವ್, ಉಪಾಧ್ಯಕ್ಷ ಎಂ. ರವೀಂದ್ರ ಶೇಟ್ ಉಪಸ್ಥಿತರಿದ್ದರು.

22 C