ಮಹಾಶಿವರಾತ್ರಿ ಉತ್ಸವಕ್ಕೆ ಭಟ್ಕಳ ಮುರ್ಡೇಶ್ವರದಲ್ಲಿ ಸಿದ್ಧತೆ: ಸಚಿವ ಮಂಕಾಳ ವೈದ್ಯ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ಕಳೆದ ವರ್ಷದಿಂದ ಆರಂಭಗೊಂಡ ಮಹಾಶಿವರಾತ್ರಿ ಉತ್ಸವವನ್ನು ಈ ಬಾರಿಯೂ ವಿಜೃಂಭಣೆಯೊಂದಿಗೆ ಆಚರಿಸಲು ಸಿದ್ಧತೆಗಳು ನಡೆಯುತ್ತಿದ್ದು, ಸ್ಥಳೀಯರು ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿನಂತಿಸಿದ್ದಾರೆ. ಬುಧವಾರ ತಾಲೂಕು ಆಡಳಿತ ಭವನದಲ್ಲಿ ನಡೆದ ಮಹಾಶಿವರಾತ್ರಿ ಉತ್ಸವದ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿ ದರು. ಹಿಂದಿನ ವರ್ಷದಂತೆ ಈ ವರ್ಷವೂ ದೇವಾಲಯವನ್ನು ನಸುಕಿನ ಜಾವ 4 ಗಂಟೆಗೆ ತೆರೆಯಲು ಆಡಳಿತ ಮಂಡಳಿಯವರಿಗೆ ವಿನಂತಿಸಲಾಗಿದೆ. ಇದರಿಂದ ಪಾದಯಾತ್ರೆ ನಡೆಸಿ ಬರುವ ಭಕ್ತರಿಗೆ ಬೆಳಿಗ್ಗೆಯಿಂದಲೇ ದೇವರ ದರ್ಶನ ಸಾಧ್ಯವಾಗಲಿದೆ. ಶಿವರಾತ್ರಿ ಪ್ರಯುಕ್ತ ಶಿರೂರು, ಭಟ್ಕಳ, ಉತ್ತರಕೊಪ್ಪ, ಮಂಕಿ, ಹೊನ್ನಾವರದಿಂದ ಬರುವ ಭಕ್ತರಿಗೆ ವಿಶೇಷ ಬಸ್ ಸೌಲಭ್ಯ ಒದಗಿಸಲು ಕನಿಷ್ಠ 20 ಬಸ್ಗಳ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಶಿವರಾತ್ರಿಯ ಜಾಗರಣೆಯ ಅಂಗವಾಗಿ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ರಾಜ್ಯದ ಪ್ರಸಿದ್ಧ ಕಲಾವಿದರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳಿಗೆ ಸಹ ಅವಕಾಶ ನೀಡಲಾಗಿದೆ. ಆಸಕ್ತರು ಶುಕ್ರವಾರದೊಳಗೆ ತಹಸೀಲ್ದಾರ ಅಥವಾ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹೆಸರು ನೊಂದಾಯಿಸಬಹುದು. ಭಕ್ತಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಇತರ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಮಾತನಾಡಿ, ಶಿವರಾತ್ರಿಯಂದು ಸರಬರಾಜಾಗುವ ಆಹಾರದ ಗುಣಮಟ್ಟವನ್ನು ಮುಂಚಿತ ವಾಗಿ ಪರೀಕ್ಷಿಸಬೇಕು. ನೀರಿನ ಸ್ವಚ್ಛತೆ, ಸ್ಥಳದ ಪರಿಸರ ಸುಧಾರಣೆ, ವಿದ್ಯುತ್ ಸಂಪರ್ಕ, ಅಗ್ನಿಶಾಮಕ ವ್ಯವಸ್ಥೆ, ಮೊಬೈಲ್ ಶೌಚಾಲಯಗಳು ಮುಂತಾದ ಸೌಲಭ್ಯಗಳನ್ನು ಪರಿಶೀಲಿಸಿ, ಯಾವುದೇ ಅಸೌಕರ್ಯ ಉಂಟಾಗದಂತೆ ನೋಡಿಕೊಳ್ಳಬೇಕೆಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಮಾತನಾಡಿ, ಕಳೆದ ಬಾರಿಗೆ ಶಿವನ ಮೂರ್ತಿಯನ್ನು ವಿಕೃತಗೊಳಿಸಿ ಶಾಂತಿ ಭಂಗ ಮಾಡಲು ಯತ್ನಿಸಿದ ಅಕ್ರಮ ಚಟುವಟಿಕೆಯನ್ನು ತಡೆದು ಆರೋಪಿಗಳನ್ನು ಬಂಧಿಸಿದ್ದೆವು. ಈ ಬಾರಿ ಅಂತಹ ಯಾವುದೇ ಪ್ರಯತ್ನಗಳು ನಡೆದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಸಂದೇಶಗಳನ್ನು ಹರಡಿದರೆ, ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭ ಎಸಿ ಕಾವ್ಯಾರಾಣಿ, ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಡಿವೈಎಸ್ಪಿ ಮಹೇಶ್ ಎಮ್. ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸಭೆಯಲ್ಲಿ ಜನತೆ ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ದೇಶ ಕಂಡ ಅಪ್ರತಿಮ ವೀರ ಶಿವಾಜಿ ಮಹಾರಾಜ : ಸುಧೀಂದ್ರ ಇಜೇರಿ
ಕಲಬುರಗಿ: ತಮ್ಮ ಆಡಳಿತಾವಧಿಯಲ್ಲಿ ಸರ್ವ ಜನರಿಗೂ ಜಾತಿ, ಧರ್ಮದ ಬೇಧವಿಲ್ಲದೆ ಸಮಾನ ಆಧ್ಯತೆಯನ್ನು ನೀಡುತ ಜನಪರವಾದ ಆಡಳಿತ ನಡೆಸಿದ ದೇಶ ಕಂಡ ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಾಹಾರಜರು ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಸುಧೀಂದ್ರ ಇಜೇರಿ ಅಭಿಮತಪಟ್ಟರು. ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಚತ್ರಪತಿ ಶಿವಾಜಿ ಮಾಹಾರಾಜರ 395 ಜಯಂತಿ ಕಾರ್ಯಕ್ರಮವನ್ನುದ್ದೆಶಿಸಿ ಸುಧೀಂದ್ರ ಇಜೇರಿ ಮಾತನಾಡಿ ಶಿವಾಜಿ ಮಾಹಾರಾಜರ ಜೀವನ ಚರಿತ್ರೆಯನ್ನ ಪ್ರತಿಯೋಬ್ಬರು ಓದಲೇಬೇಕು. ಸ್ವಾಭಿಮಾನಿ ರಾಷ್ಟ್ರ ನೀರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರ ಧೈರ್ಯ ಮತ್ತು ದೇಶಭಕ್ತಿ ನಮ್ಮ ಯುವಜನ ಅರಿಯಬೇಕು. ಅಪ್ರತಿಮ ವೀರ ಹಾಗೂ ಯುದ್ಧ ಚತುರನಾಗಿದ್ದರು ಎಂದರು. ಈ ಸಂದರ್ಭದಲ್ಲಿ ತಾಲೂಕ ದಂಡಾಧೀಕಾರಿ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಧೀಕಾರಿ ಶಂಭುಲಿಂಗ ದೇಸಾಯಿ, ಪುರಸಭೆ ಅಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ್, ಜಟ್ಟೆಪ್ಪ ಮಂದ್ರವಾಡ, ಮಲ್ಲಿಕಾರ್ಜುನ ಭಜಂತ್ರಿ, ಚಂದನ ಮಹೇಂದ್ರಕರ್, ಸಂಗಣ್ಣಗೌಡ ರದ್ದೆವಾಡಗಿ, ರಾಜು ತಳವಾರ, ವೇಂಕಠರಾವ ಆಂದೋಲ, ಸತೀಶ ಜಾಗಿರ್ದಾರ, ಸಿದ್ದಣ್ಣ, ಶಿವಣ್ಣಗೌಡ, ಶರಣು ಗುತ್ತೆದಾರ, ಮರೆಪ್ಪ ಸರಡಗಿ, ರವಿ, ಸಂತೋಷ ಸಂಗಮ, ಲಕ್ಷ್ಮೀಕಾಂತ ಸಾಸನೂರ, ಸಾಯಬಣ್ಣ ಕಲ್ಯಾಣಕರ್, ವಿಶ್ವ ಆಲೂರ, ದೇವಿಂದ್ರ ಬಡಿಗೇರ, ಭಿಮು ಬಡಿಗೇರ, ಪ್ರಕಾಶ ಮಾರಡಗಿ ಸೇರಿದಂತೆ ಅನೇಕರಿದ್ದರು.
ಬೆಂಗಳೂರು: ಅಂಗನವಾಡಿ ಫಲಾನುಭವಿಗಳಿಗೆ ವಿತರಿಸುವ ಪೌಷ್ಠಿಕ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಧಾರವಾಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಹುಲಿಗೆವ್ವ ಹೆಚ್ ಕುಕನೂರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಮುತ್ತಣ್ಣ ಸಿ.ಎ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಯೋಜನಾ ವ್ಯಾಪ್ತಿಯ ಹಳೇ ಹುಬ್ಬಳಿ ವಲಯದ ಸಮೀಪವಿರುವ ಗಬ್ಬೂರು ಕ್ರಾಸ್ ಬಳಿ ಇರುವ ಆಹಾರ ಗೋದಾಮಿನಲ್ಲಿ ಅಂಗನವಾಡಿ ಫಲಾನುಭವಿಗಳಿಗೆ ವಿತರಿಸುವ ಪೌಷ್ಠಿಕ ಸಾಮಗ್ರಿಗಳಾದ ತೊಗರಿ ಬೇಳೆ, ಹೆಸರು ಕಾಳು, ಬೆಲ್ಲ, ಸಕ್ಕರೆ, ಗೋಧಿಹಿಟ್ಟನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಧಾರವಾಡ ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಪೌಷ್ಠಿಕ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ನಿರೂಪಣಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಂಗನವಾಡಿಗೆ ಸರಬರಾಜು ಮಾಡಿರುವಂತ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳು ಪತ್ತೆಯಾಗಿದ್ದವು. ಸದರಿ ಸಾಮಗ್ರಿಗಳ ಅಕ್ರಮ ದಾಸ್ತಾನಿಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳುವಂತೆ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ಸಮಗ್ರ ತನಿಖೆಗೆ ಸಚಿವರ ಆದೇಶ ಅಕ್ರಮ ದಾಸ್ತಾನು ಕುರಿತು ಮಾಧ್ಯಮಗಳಲ್ಲಿ ಬಂದ ವರದಿ ಗಮನಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು. ಜೊತೆಗೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೂ ಆದೇಶಿಸಿದ್ದಾರೆ.
ಕಲಬುರಗಿ: ನಿಯಮ ಉಲ್ಲಂಘಿಸಿ ಹೆಚ್ಚಿನ ಬಡ್ಡಿ ವಿಧಿಸಿದ್ದಲ್ಲಿ ದೂರು ನೀಡಲು ಸೂಚನೆ
ಕಲಬುರಗಿ; ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ಹೆಚ್ಚುವರಿ ಬಡ್ಡಿ ವಿಧಿಸುತ್ತಿರುವ ಲೇವಾದೇವಿದಾರರು ಹಾಗೂ ಗಿರವಿದಾರರರು ವಿರುದ್ಧ ಸಾರ್ವಜನಿಕರು ಈ ಕೆಳಕಂಡ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ ಎಂದು ಕಲಬುರಗಿ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ. ಜಿಲ್ಲೆಯ ಲೇವಾದೇವಿದಾರರು ಹಾಗೂ ಗಿರವಿದಾರರರು ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ಮತ್ತು ಕರ್ನಾಟಕ ಗಿರವಿದಾರರ ಅಧಿನಿಯಮ 1961ರಡಿ ಪರವಾನಿಗೆ ಪಡೆದ ಪರವಾನಗಿದಾರರು ಸರಕಾರದ ದಿನಾಂಕ: 28-08-2003 ರನ್ವಯ ಅಧಿಸೂಚನೆಯನ್ವಯ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 14 ರಷ್ಟು ಹಾಗೂ ಭದ್ರತೆ ಇಲ್ಲದೇ ಇರುವ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 16 ರಷ್ಟು ಮಾತ್ರ ಬಡ್ಡಿ ವಿಧಿಸಬೇಕು ಎಂದು ತಿಳಿಸಿದ್ದಾರೆ. ಸಹಾಯವಾಣಿ: ಕಲಬುರಗಿ ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಮೊಬೈಲ್ ಸಂಖ್ಯೆ-9448813536, ಕಲಬುರಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯ-9902777816, ಕಲಬುರಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ (ಕಲಬುರಗಿ, ಆಳಂದ, ಅಫಜಲಪುರ, ಜೇವರ್ಗಿ, ಕಮಲಾಪುರ, ಯಡ್ರಾಮಿ ತಾಲೂಕುಗಳಿಗೆ ಸಂಬಂಧಿಸಿದಂತೆ) ಕಚೇರಿಯ- 9986377522 ಹಾಗೂ ಸೇಡಂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯ (ಸೇಡಂ, ಚಿತ್ತಾಪುರ, ಚಿಂಚೋಳಿ, ಕಾಳಗಿ ಹಾಗೂ ಶಹಾಬಾದ ತಾಲೂಕುಗಳಿಗೆ ಸಂಬಂಧಿಸಿದಂತೆ)-8861875737 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ವಕ್ಫ್| ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಮನವಿ
ಮಂಗಳೂರು : ಭಾರತದ ಮುಸಲ್ಮಾನರ ಅಭಿವೃದ್ಧಿಗಾಗಿ ತನ್ನ ಭೂಮಿಯನ್ನು ದಾನ ಮಾಡಿದ ವಕ್ಫ್ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾಧಿಕಾರಿಯ ಮೂಲಕ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸರಕಾರಕ್ಕೆ ಮನವಿ ಸಲ್ಲಿಸಿದೆ. ಲೀಗ್ ಜಿಲ್ಲಾಧ್ಯಕ್ಷ ಸಿ. ಅಬ್ದುಲ್ ರಹ್ಮಾನ್, ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ, ಜಿಲ್ಲಾ ಉಪಾಧ್ಯಕ್ಷ ಸೈಯದ್ ಬಂಗೇರ ಕಟ್ಟೆ ಬೆಳ್ತಂಗಡಿ, ಹಾಜಿ ಆದಂ ಎಚ್., ಮುಹಮ್ಮದ್ ಇಸ್ಮಾಯಿಲ್, ಮುಖಂಡರಾದ ಬಿ.ಎ.ಮುಹಮ್ಮದ್ ಕರಾಮತ್ ಕುಡ್ಪಾಡಿ, ಕೆ.ಸಿ. ಖಾದರ್ ಕಾವೂರು, ಎಚ್.ಕೆ. ಕುಂಞಿ ದೇರಳಕಟ್ಟೆ, ಅಬೂಬಕರ್ ಸಿದ್ದೀಕ್, ಶೌಕತ್ ಆಲಿ ಜೋಕಟ್ಟೆ ಉಪಸ್ಥಿತರಿದ್ದರು.
ಕಾಟಿಪಳ್ಳ 3ನೇ ವಾರ್ಡ್ ಕಾಂಗ್ರೆಸ್ ಸಮಿತಿಯ ನೂತನ ಕಚೇರಿ ಉದ್ಘಾಟನೆ
ಸುರತ್ಕಲ್: ಜನರ ಮಧ್ಯದಲ್ಲಿದ್ದು, ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಪಕ್ಷಕಟ್ಟುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಐತ್ ಅಲಿ ಕಾರ್ಯಕರ್ತರಿಗೆ ಕರೆ ನೀಡಿದರು. ಸುರತ್ಕಲ್ ಕಾಟಿಪಳ್ಳದ ಗಣೇಶಪುರ ದೇವಸ್ಥಾನ ಬಳಿಯ ಹವ್ವ ಬಿ ರೆಸಿಡೆನ್ಸಿಯಲ್ಲಿ ನೂತನವಾಗಿ ನಿರ್ಮಿಸಲಾದ ಕಾಟಿಪಳ್ಳ 3ನೇ ವಾರ್ಡ್ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯ ಉದ್ಘಾಟಿಸಿ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಮೀರ್ ಕಾಟಿಪಳ್ಳ ಅವರು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಕೊಡ ಮಾಡಿದ ಆಟೊ ರಿಕ್ಷಾವನ್ನು ಹಸ್ತಾಂತರ ಮಾಡಿ ಅವರು ಮಾತನಾಡಿದರು. ಮಂಗಳೂರು ಉತ್ತರದ ಎಲ್ಲಾ ವಾರ್ಡ್ ಗಳಲ್ಲೂ ವಾರ್ಡ್ ಕಚೇರಿಗಳನ್ನು ತೆರೆದು ಜನರ ಅಹವಾಲುಗಳನ್ನು ಸ್ವೀಕರಿಸುವ ಕೆಲಸಮಾಡಲಾಗುವುದು. ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು, ಅವರೇ ಪಕ್ಷದ ಆಸ್ತಿ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮುಖಂಡರು ಮಾಡಬೇಕು. ಮುಖಂಡರು, ಕಾರ್ಯಕರ್ತರು ಜನರ ಮಧ್ಯದಲ್ಲಿದ್ದು ಅವರ ಕಷ್ಟ ಸುಖಗಳಲ್ಲಿ ಪಾಲುದಾರರಾಗುವ ಮೂಲಕ ಪಕ್ಷವನ್ನು ಕಟ್ಟುವ ಕೆಲಸಮಾಡಬೇಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ವಹಿಸಿದ್ದರು. ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಮೀರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಕಾಮತ್, ಪ್ರಧಾನ ಕಾರ್ಯದರ್ಶಿ ಶಶಿಕಲಾ ಪದ್ಮನಾಭ, ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ, ಮಾಜಿ ಮೇಯರ್ ಗುಲ್ಝಾರ್ ಬಾನು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾಹುಲ್ ಹಮೀದ್, ಕೆಪಿಸಿಸಿ ಹಿಂದುಳಿದ ವರ್ಗದ ಕಾರ್ಯದರ್ಶಿ ದೀಪಕ್ ಪೆರ್ಮುದೆ, 3ನೇ ವಲಯಾಧ್ಯಕ್ಷ ನಿತ್ಯಾನಂದ, ಮಾಜಿ ಕಾರ್ಪೊರೇಟರ್ ಬಶೀರ್ ಅಹ್ಮದ್, ಮೂಡ ಸದಸ್ಯ ಅಬ್ದುಲ್ ಜಲೀಲ್, ಯುವ ಕಾಂಗ್ರೆಸ್ ಮುಖಂಡ ಸುಹೇಲ್ ಕಂದಕ್, ಜಲೀಲ್ ಬದ್ರಿಯಾ ಮೊದಲಾದವರು ಉಪಸ್ಥಿತರಿದ್ದರು.
BJP: ಬಿಜೆಪಿ ಆಡಳಿತ ರಾಜ್ಯಗಳ ಏಕೈಕ ಮಹಿಳಾ ಸಿ.ಎಂ, ಆಯ್ಕೆಯ ಲೆಕ್ಕಾಚಾರವೇನು ?!
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ (50) ಅವರು ಆಯ್ಕೆಯಾಗಿದ್ದಾರೆ. ಬಿಜೆಪಿ ಮಹಿಳಾ ಶಾಸಕಿಗೆ ಮಣೆ ಹಾಕಿದ್ದು. ಬಿಜೆಪಿ ಹೈಕಮಾಂಡ್ನ ಲೆಕ್ಕಾಚಾರ ಹಲವು ಕಾರಣಗಳಿಗೆ ಅಚ್ಚರಿ ಮೂಡಿಸಿದೆ. ಇನ್ನು ಇದೀಗ ದೆಹಲಿಯಲ್ಲಿ ರೇಖಾ ಗುಪ್ತಾ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ದೇಶದಲ್ಲಿ ಇಬ್ಬರು ಮಹಿಳಾ ಮುಖ್ಯಮಂತ್ರಿಗಳು ಆಡಳಿತ ನಡೆಸುವಂತೆ ಆಗಿದೆ. ಹೌದು ಇಲ್ಲಿಯ ವರೆಗೆ ದೇಶದಲ್ಲಿ ಏಕೈಕ
ಅಮಾನವೀಯವಾಗಿ ಕಾರ್ಮಿಕನ ಮೃತದೇಹ ಎಳೆದೊಯ್ದ ಘಟನೆ ಖಂಡಿಸಿದ ಕೆ. ನೀಲಾ; ಸಿಮೆಂಟ್ ಕಾರ್ಖಾನೆ ಮಾಲಕನ ಬಂಧನಕ್ಕೆ ಆಗ್ರಹ
ಕಲಬುರಗಿ: ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಹತ್ತಿರದ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಿಹಾರ ಮೂಲದ ಚಂದನಸಿಂಗ್ (34) ಎಂಬ ಕಾರ್ಮಿಕನ ಮೃತದೇಹವನ್ನು ಕಾರ್ಮಿಕರ ಮೂಲಕ ರಸ್ತೆಯ ಮೇಲಿನಿಂದ ಎಳೆದೊಯ್ಯಲಾಗಿರುವ ಅಮಾನವೀಯ ಘಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಖಂಡಿಸಿದ್ದಾರೆ. ಯುವಕನ ಮೃತದೇಹವನ್ನು ಗೌರವಯುತವಾಗಿ ಸಾಗಿಸಬೇಕಾದ ವ್ಯವಸ್ಥೆ ಮಾಡಬೇಕಾಗಿರುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದ್ದು, ತನ್ನ ಜವಾಬ್ದಾರಿ ನಿಭಾಯಿಸದ ಆಡಳಿತ ಮಂಡಳಿಯು ಇಂತಹ ಅಮಾನವೀಯತೆಗೆ ಕಾರಣವಾಗಿದೆ. ಈ ಅಮಾನವೀಯತೆಯು ಸಿಮೆಂಟ್ ಕಾರ್ಖಾನೆಯ ಮಾಲಕರ ಕಾರ್ಮಿಕರ ವಿರೋಧಿ ಕ್ರೌರ್ಯದ ಧೋರಣೆಯ ಅನಾವರಣಗೊಂಡಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಟೀಕಿಸಿದ್ದಾರೆ. ಕಾರ್ಮಿಕನ ಮೃತದೇಹವನ್ನು ಸಾಗಿಸಲು ವ್ಯವಸ್ಥೆ ಮಾಡಲಾರದ ಸಿಮೆಂಟ್ ಕಾರ್ಖಾನೆಯ ಮಾಲಕರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಮತ್ತು ಮೃತ ಕಾರ್ಮಿಕನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನ ಒದಗಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಯು ಕಾರ್ಖಾನೆಯ ಮಾಲಕರ ಮೇಲೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಮಕ್ಕಳ ರಕ್ಷಣಾ ನೀತಿ ಅನುಷ್ಠಾನಗೊಳಿಸಲು ತಿಪ್ಪೇಸ್ವಾಮಿ ಸೂಚನೆ
ಮಂಗಳೂರು, ಫೆ.19: ಮಕ್ಕಳ ರಕ್ಷಣಾ ನೀತಿ-2016ರ ಪ್ರಕಾರ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಗುಣಮಟ್ಟದ ಕಲಿಕೆಯ ಜೊತೆ ಮಕ್ಕಳ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ನೀತಿ-2016ನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಹಂತದ ಅಧಿಕಾರಿಗಳು ಪ್ರಯತ್ನಿಸಬೇಕು. ಸರಕಾರಿ, ಖಾಸಗಿ ಸೇರಿದಂತೆ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುವ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ. ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ದ.ಕ.ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ನಡೆದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ -2009 ರ ಕುರಿತು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಉಸ್ತುವಾರಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡದೆ ಸತ್ತಾಯಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಆಯೋಗಕ್ಕೆ ಬರುತ್ತಿದೆ. ಈ ಬಗ್ಗೆ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಖಾಸಗಿ ಶಾಲೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಅನುದಾನ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಆರ್ಟಿಇ ಸೆಲ್ನ ಸಂಪೂರ್ಣ ಮಾಹಿತಿಯುಳ್ಳ ಫಲಕವನ್ನು ಕಡ್ದಾಯವಾಗಿ ಅಳವಡಿಸಬೇಕು. ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಪಿಟಿಎ ರಚನೆ ಮಾಡಿ, ಪೋಷಕರು ಮತ್ತು ಆಡಳಿತ ಮಂಡಳಿ ಚರ್ಚಿಸಿ ಶುಲ್ಕ ನಿಗದಿಪಡಿಸಬೇಕು ಎಂದರು. ಶಾಲೆ ಬಿಟ್ಟ ಮಕ್ಕಳಿಗೆ ಕೇವಲ ಮನವೊಲಿಕೆ ಅಥವಾ ನೋಟಿಸ್ ನೀಡಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಸಾಧ್ಯವಿಲ್ಲ. ಮಕ್ಕಳು ಯಾವ ಕಾರಣಕ್ಕೆ ಶಾಲೆ ಬಿಟ್ಟಿದ್ದಾರೆ ಎಂಬುದರ ಕುರಿತು ನಿರ್ದಿಷ್ಟ ಕಾರಣ ಗುರುತಿಸಿ ರಚನಾತ್ಮಕ ಪರಿಹಾರ ನೀಡಬೇಕು. ಶಾಲೆ ಬಿಟ್ಟ ಮಕ್ಕಳ ತಾಲೂಕುವಾರು ಪಟ್ಟಿ ತಯಾರಿಸಿ ಪ್ರತಿ 3 ತಿಂಗಳಿಗೊಮ್ಮೆ ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಇಲಾಖೆಯಿಂದ ಸಮಸ್ಯೆ ಮತ್ತು ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸಿದಾಗ ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು ಎಂದರು. ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗೋವಿಂದ ಮಡಿವಾಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ ರಾಜಲಕ್ಷ್ಮಿ ಮತ್ತು ಎಲ್ಲಾ ತಾಲೂಕು ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಉಸ್ತುವಾರಿ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಗಡಿಪಾರಾದವರಲ್ಲಿ ಪಂಜಾಬ್ ನವರದ್ದೇ ದೊಡ್ಡ ಪಾಲು: ಕೇಂದ್ರ ಸರಕಾರ
ಹೊಸದಿಲ್ಲಿ: ಗಡಿಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತು ತರುತ್ತಿರುವ ಅಮೆರಿಕ ವಿಮಾನಗಳು ಅಮೃತಸರದಲ್ಲಿ ಬಂದಿಳಿಯುತ್ತಿರುವ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಿಗೇ, ಅಕ್ರಮ ವಲಸಿಗರ ಪೈಕಿ ಪಂಜಾಬ್ ರಾಜ್ಯದ್ದೇ ದೊಡ್ಡ ಪಾಲಿದೆ ಎಂದು ಬುಧವಾರ ಕೇಂದ್ರ ಸರಕಾರದ ಮೂಲಗಳು ಈ ನಡೆಯನ್ನು ಸಮರ್ಥಿಸಿಕೊಂಡಿವೆ. ಫೆಬ್ರವರಿ 5ರಿಂದ ಭಾರತಕ್ಕೆ ಆಗಮಿಸಿರುವ ಮೂರು ವಿಮಾನಗಳ ಅಂಕಿ-ಸಂಖ್ಯೆಯನ್ನು ಹಂಚಿಕೊಂಡಿರುವ ಕೇಂದ್ರ ಸರಕಾರದ ಮೂಲಗಳು, ಅಮೆರಿಕ ಸೇನಾ ವಿಮಾನದಲ್ಲಿ ಗಡಿಪಾರಿಗೊಳಗಾಗಿರುವ ಒಟ್ಟು 333 ಜನರ ಪೈಕಿ 126 ಮಂದಿ ಪಂಜಾಬ್ ಗೆ ಸೇರಿದ್ದು, ನಂತರದಲ್ಲಿ ಹರ್ಯಾಣದ 110 ಮಂದಿ ಹಾಗೂ ಗುಜರಾತ್ ನ 74 ಮಂದಿ ಇದ್ದಾರೆ ಎಂದು ಹೇಳಿವೆ. ಉಳಿದಂತೆ ಉತ್ತರ ಪ್ರದೇಶದ ಎಂಟು ಮಂದಿ, ಮಹಾರಾಷ್ಟ್ರದ ಐವರು, ಹಿಮಾಚಲ ಪ್ರದೇಶ, ಚಂಡೀಗಢ, ರಾಜಸ್ಥಾನ ಮತ್ತು ಗೋವಾದ ತಲಾ ಇಬ್ಬರು ಹಾಗೂ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡದ ತಲಾ ಒಬ್ಬರು ಸೇರಿದ್ದಾರೆ ಎಂದು ಮಾಹಿತಿ ನೀಡಿವೆ. ಫೆಬ್ರವರಿ 5, 15 ಹಾಗೂ 16ರಂದು ಭಾರತಕ್ಕೆ ಬಂದಿಳಿದ ಮೂರು ವಿಮಾನಗಳು ತಲಾ 100ಕ್ಕೂ ಹೆಚ್ಚು ಭಾರತೀಯರನ್ನು ಕರೆ ತಂದಿದ್ದು, ಈವರೆಗೆ 333 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದೆ ಎಂದೂ ಅವು ಹೇಳಿವೆ. ಗಡಿಪಾರಿಗೊಳಗಾಗಿರುವ ಪೈಕಿ 262 ಪುರುಷರು, 42 ಮಹಿಳೆಯರು ಹಾಗೂ 29 ಅಪ್ರಾಪ್ತರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇ 2020ರಿಂದ ಇಲ್ಲಿಯವರೆಗೆ ಗಡಿಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತ ಸುಮಾರು 23 ವಿಮಾನಗಳು ದೇಶಕ್ಕೆ ಆಗಮಿಸಿದ್ದು, ಅವೆಲ್ಲವೂ ಅಮೃತಸರದಲ್ಲೇ ಬಂದಿಳಿದಿವೆ ಎಂದು ಅವು ಹೇಳಿವೆ. ತಮ್ಮ ಚುನಾವಣಾ ಪ್ರಚಾರದಲ್ಲಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂದು ಭರವಸೆ ನೀಡಿದ್ದ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ, ಇದುವರೆಗೆ ಗಡಿಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತ ಮೂರು ಸೇನಾ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಗಡಿಪಾರಿಗೊಳಗಾಗಿರುವ ಭಾರತೀಯರಿಗೆ ಕೋಳ ತೊಡಿಸಿರುವುದೂ ಸೇರಿದಂತೆ, ಅವರನ್ನು ನಡೆಸಿಕೊಂಡಿರುವ ರೀತಿಯ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ಈ ವಿಷಯವನ್ನು ಭಾರತ ಸರಕಾರ ಅಮೆರಿಕದೊಂದಿಗೆ ಚರ್ಚಿಸಬೇಕು ಎಂದು ಆಗ್ರಹಿಸಿವೆ.
ಬೈಕ್ ಸ್ಕಿಡ್: ಗಾಯಾಳು ಮಹಿಳೆ ಮೃತ್ಯು
ಮಂಗಳೂರು, ಫೆ.19: ಬೈಕ್ ಸ್ಕಿಡ್ಡಾಗಿ ರಸ್ತೆಗೆ ಉರುಳಿದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿರುವ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.15ರಂದು ಜಲಜಾ (54) ಎಂಬವರು ದೇಲಂತಬೆಟ್ಟು ಅಂಚೆ ಕಚೇರಿಗೆ ಹೋಗಲು ತನ್ನ ಮಗ ಸುಜಿತ್ನ ಬೈಕ್ನಲ್ಲಿ ತೆರಳುತ್ತಿದ್ದರು. ಬೈಕನ್ನು ಸುಜಿತ್ನ ಸ್ನೇಹಿತ ಚೇತನ್ ಚಲಾಯಿಸುತ್ತಿದ್ದ. ರಾಜೀವನಗರ ಎಂಬಲ್ಲಿ ಮಧ್ಯಾಹ್ನ 12ರ ವೇಳೆಗೆ ಸವಾರನ ನಿಯಂತ್ರಣ ತಪ್ಪಿದ ಬೈಕ್ನ ಹಿಂಬದಿ ಕುಳಿತಿದ್ದ ಜಲಜಾ ಬಿದ್ದು ಗಂಭೀರ ಗಾಯಗೊಂಡಿದ್ದರು.ತಕ್ಷಣ ಕಟೀಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರಾವಳಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ವೇಳೆ ಸೂಕ್ಷ್ಮ ಪ್ರದೇಶಗಳ ರಕ್ಷಣೆ ಅಗತ್ಯ: ಸಂಸದ ಬ್ರಿಜೇಶ್ ಚೌಟ
ಮಂಗಳೂರು, ಫೆ.19: ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವಾಗ ದ್ವೀಪಗಳು ಸೇರಿದಂತೆ ಸೂಕ್ಷ್ಮ ಕರಾವಳಿ ಪ್ರದೇಶಗಳನ್ನು ರಕ್ಷಿಸಬೇಕಾಗಿರುವುದು ಅಗತ್ಯ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕರ್ನಾಟಕ ಪ್ರವಾಸೋದ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆಯೂ ಸೇತುವೆಗಳ ಕುಸಿತಕ್ಕೂ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಕರಾವಳಿ ಕರ್ನಾಟಕದಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಅನೇಕ ಹೂಡಿಕೆದಾರರು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು. *ತಪ್ಪು ಕಲ್ಪನೆ ದೂರ ಮಾಡಬೇಕು: ಮಂಗಳೂರು ಅಪಾಯಕಾರಿ ಅಥವಾ ಅಸುರಕ್ಷಿತವಲ್ಲ. ಆದರೆ ಇಲ್ಲಿನ ಕೆಲವು ಘಟನೆಗಳಿಂದಾಗಿ ಹೊರಗಿನವರಲ್ಲಿ ಮಂಗಳೂರಿನ ಬಗ್ಗೆ ತಪ್ಪು ಕಲ್ಪನೆ ಇದೆ. ಇದು ದೂರವಾಗಬೇಕು ಎಂದು ಅವರು ಹೇಳಿದರು. ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಪ್ರವಾಸೋದ್ಯಮ ಪ್ರಸ್ತಾವನೆಗಳಲ್ಲಿ ಕನಿಷ್ಠ ಎರಡು ಕ್ರೀಡೆಗಳನ್ನು ಸೇರಿಸಬೇಕೆಂದು ಆಡಳಿತವನ್ನು ಒತ್ತಾಯಿಸಿದರು. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಗೌರವ್ ಹೆಗ್ಡೆ ಅವರು ಕರಾವಳಿ ಅಭಿವೃದ್ಧಿಗೆ ಆರು ಪ್ರಮುಖ ಅಂಶಗಳು ಎಂಬ ವಿಷಯದ ಕುರಿತು ಮಾತನಾಡಿದರು. ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ‘ರೋಡ್ ಮ್ಯಾಪ್ : ಡಾ. ಕೆ.ಎ. ರಾಜೇಂದ್ರ ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆದು ರೋಡ್ ಮ್ಯಾಪ್ ತಯಾರಿಸಲಾಗುವುದು ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ. ಕೆ.ಎ. ರಾಜೇಂದ್ರ ತಿಳಿಸಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಯೋಜನೆಯನ್ನು ಮಂಗಳೂರಿನಿಂದಲೇ ಆರಂಭಿಸಲು ಚಿಂತನೆ ನಡೆಸಲಾ ಗಿದೆ. ಕರಾವಳಿ ಸಂಸ್ಕೃತಿ, ಆಹಾರ , ಸಂಪ್ರದಾಯ ವಿದೇಶಿಯರಿಗೂ ಗೊತ್ತಾಗಬೇಕು. ಅವರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಂಬಳ, ಭೂತದಕೋಲ ಮತ್ತು ಈ ಪ್ರದೇಶದ ವಾರ್ಷಿಕ ಕಾರ್ಯಕ್ರಮಗಳು, ಉತ್ಸವಗಳ ಕ್ಯಾಲೆಂಡರ್ಅನ್ನು ಸಿದ್ಧಪಡಿಸಲಾಗುವುದು ಎಂದು ಡಾ. ರಾಜೇಂದ್ರ ಹೇಳಿದರು. ಪ್ರವಾಸೋದ್ಯಮದ ಹೆಸರಲ್ಲಿ ಇಂತಹ ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ವಾಣಿಜ್ಯೀಕರಿಸುವುದು ನಮ್ಮ ಗುರಿಯಲ್ಲ. ಆದರೆ ಪ್ರವಾಸಿಗರು ಅದನ್ನು ನೋಡಿ ಅನುಭವಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. *ಕರ್ನಾಟಕ ಟ್ರಾವೆಲ್ ಎಕ್ಸ್ಪೊ: ಫೆಬ್ರವರಿ 26 ರಿಂದ 28 ರವರೆಗೆ ಬೆಂಗಳೂರಿನಲ್ಲಿ ಕರ್ನಾಟಕ ಇಂಟರ್ನ್ಯಾಶನಲ್ ಎಕ್ಸ್ಪೊ ಆಯೋಜಿಸಲಾಗಿದ್ದು, ಇದರಲ್ಲಿ 120 ವಿದೇಶಿ ಪ್ರವಾಸ ಆಯೋಜಕರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸ್ಟೇಕ್ಹೋಲ್ಡರ್ಗಳು ಕರಾವಳಿಯ ಉತ್ಪನ್ನಗಳೊಂದಿಗೆ ಸ್ಟಾಲ್ಗಳನ್ನು ಇಡುವಂತೆ ಅವರು ಕರೆ ನೀಡಿದರು. *ಡಿಜಿಟಲ್ ಮೂಲಸೌಕರ್ಯ ವೇದಿಕೆ ಅಭಿವೃದ್ಧಿ: ಪ್ರವಾಸೋದ್ಯಮ ತಾಣಗಳನ್ನು ಉತ್ತೇಜಿಸಲು ಕರ್ನಾಟಕದಲ್ಲಿ ಡಿಜಿಟಲ್ ಮೂಲಸೌಕರ್ಯ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ರಾಜೇಂದ್ರ ಹೇಳಿದರು. ಪ್ರವಾಸಿ ತಾಣಗಳು, ಪ್ರವಾಸ ನಿರ್ವಾಹಕರು, ಹತ್ತಿರದ ಹೋಟೆಲ್, ರೆಸಾರ್ಟ್ಗಳು ಮತ್ತು ಕಡಲತೀರಗಳ ವಿವರಗಳನ್ನು ಒಳಗೊಂಡ ವೆಬ್ಸೈಟ್ಗಳು ಸಂದರ್ಶಕರಿಗೆ ಸ್ಥಳಗಳ ಭೇಟಿಗಾಗಿ ಯೋಜನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಎಂದು ಅಭಿಪ್ರಾಯಪಟ್ಟರು. *ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ : ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ ಫಾಹಿಮ್ ಮಾತನಾಡಿ ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದ್ದರೂ, ನಮಗೆ ಅದರ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಿಲ್ಲ. 321 ಕಿಮೀ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಎಲ್ಲಿ ಹೆಚ್ಚು ಅವಕಾಶ ಇದೆ ಎನ್ನುವು ದನ್ನು ಕಂಡು ಹಿಡಿಯಲು ಈ ತನಕ ಸಾಧ್ಯವಾಗಲಿಲ್ಲ. ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ವಿಚಾರದ ಬಗ್ಗೆ ಹಲವು ಸಮಯಗಳಿಂದ ಚಿಂತನೆ ನಡೆಯುತ್ತಿದೆ. ಈಗ ಯೋಜನೆ ರೂಪಿಸಲು ಕಾಲ ಸನ್ನಿಹಿತವಾಗಿದೆ ಎಂದರು. ಪ್ರವಾಸೋದ್ಯಮ ನೀತಿಯು ಸುಸ್ಥಿರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಪ್ರವಾಸೋದ್ಯಮವನ್ನು ಸಮತೋಲನ ಗೊಳಿಸುವ ಗುರಿಯನ್ನು ಹೊಂದಿದೆ ಎಂದರು. ಇದೀಗ ಬೇರೆ ಸಂಘ ಸಂಸ್ಥೆಗಳ ಅಭಿಪ್ರಾಯವನ್ನು ಪಡೆದು ಯೋಜನೆ ರೂಪಿಸಲು ಕಾರ್ಯಾಗಾರವನ್ನು ಆಯೋಜಿಸ ಲಾಗಿದೆ. ಕರ್ನಾಟಕ ಮರೈನ್ ಬೋರ್ಡ್ , ಸ್ಮಾರ್ಟ್ ಸಿಟಿ, ಸಿಆರ್ಝೆಡ್ ಮತ್ತಿತರ ಇಲಾಖೆಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. ಪ್ರವಾಸೋದ್ಯಮ ಇಲಾಖೆಯ ಕೆಪಿಎಂಜಿಯ ಯೋಜನಾ ವ್ಯವಸ್ಥಾಪಕ ಯಶ್ ಸಿನ್ಹಾ ಮಾತನಾಡಿ ಪ್ರವಾಸೋದ್ಯಮ ನೀತಿ 2024-29ರಲ್ಲಿ 25 ಪ್ರವಾಸೋದ್ಯಮ ವಿಷಯಗಳು ಮತ್ತು 44 ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ ಎಂದರು. ಕಾರ್ಯಾಗಾರದಲ್ಲಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಶಾಸಕರಾದ ಡಿ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ, ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮತ್ತಿತರರು ಭಾಗವಹಿಸಿದ್ದರು.
ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ ಬಿಜೆಪಿ-ಜೆಡಿಎಸ್ಗೆ ಮುಖಭಂಗ : ಎಂ.ಲಕ್ಷ್ಮಣ್
ಮೈಸೂರು : ಮುಡಾ ವಿಷಯ ಮುಂದಿಟ್ಟುಕೊಂಡು ಸ್ನೇಹಮಯಿ ಕೃಷ್ಣ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದ ಬಿಜೆಪಿ ಮತ್ತು ಜೆಡಿಎಸ್ಗೆ ಲೋಕಾಯುಕ್ತ ವರದಿಯಿಂದ ಮುಖಭಂಗವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು. ಬುಧವಾರ ಸಂಜೆ ಮುಡಾ ಕಚೇರಿ ಎದುರು ಸತ್ಯಮೇವ ಜಯತೆ ಫ್ಲೆಕ್ಸ್ ಹಿಡಿದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಬದಲಿ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಸಿದ್ದ ದೂರಿಗೆ ಸಾಕ್ಷ್ಯಧಾರಗಳ ಕೊರತೆ ಇದೆ ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು. ನಾವು ಈ ಪ್ರಕರಣ ಸಂಬಂಧ ರಾಜ್ಯಪಾಲರು ತನಿಖೆಗೆ ಆದೇಶ ಮಾಡಿದ ಮೊದಲ ದಿನದಿಂದಲೇ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆದರಿಸಲು, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಬಾಡಿಗೆ ಕಲಾವಿದರ ಮೂಲಕ ಹೂಡಿದ ಸಂಚು ಎಂದು ಹೇಳುತ್ತಲೇ ಬಂದಿದ್ದೇವೆ. ಇದೀಗ ಸತ್ಯಾಂಶ ಬಯಲಾಗಿದೆ. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಆದಿಯಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಯಾರಿಗೂ ಉಪಯೋಗವಾಗದ ವ್ಯರ್ಥ ಪಾದಯಾತ್ರೆ ಮಾಡಿದರು ಎಂದು ಲಕ್ಷ್ಮಣ್ ವ್ಯಂಗ್ಯವಾಡಿದರು. ಲೋಕಾಯುಕ್ತ ತನಿಖಾಧಿಕಾರಿ ಉದೇಶ್ ಅವರು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ನೀಡಿರುವ ನೋಟಿಸ್ನಲ್ಲಿ ಇದೊಂದು ಸಿವಿಲ್ ಸ್ವರೂಪದ ಪ್ರಕರಣ, ಸಾಕ್ಷ್ಯಾಧಾರಗಳ ಕೊರತೆ ಇದೆ, ತನಿಖೆ ನಡೆಸಲು ತಕ್ಕುದ್ದಲ್ಲ, ಕಾನೂನಿನ ತಪ್ಪು ತಿಳುವಳಿಕೆಯಿಂದ ದೂರು ನೀಡಲಾಗಿದೆ. ಕ್ರಮ ಜರುಗಿಸತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಸ್ನೇಹಮಯಿ ಕೃಷ್ಣ ಗೌರವಿಸುವದನ್ನು ಬಿಟ್ಟು ತನಿಖಾಧಿಕಾರಿ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ತನಿಖಾಧಿಕಾರಿಗಳು ದೂರು ದಾಖಲಿಸಬೇಕು ಎಂದರು. ಲೋಕಾಯುಕ್ತ ಒಂದು ಸ್ವಾಯುತ್ತ ಸಂಸ್ಥೆಯಾಗಿದೆ. ರಾಜ್ಯಪಾಲರೇ ತನಿಖೆಗೆ ಆದೇಶಿಸಿದ್ದಾರೆ, ಆದಾಗ್ಯೂ ತನಿಖಾ ವರದಿಯನ್ನು ದೂರುದಾರರು ಗೌರವಿಸುತ್ತಿಲ್ಲ. ಇನ್ನು ಮುಂದಾದರೂ ಕೃಷ್ಣ ಅವರು ಸುಳ್ಳು ಆರೋಪಗಳನ್ನು ಮಡುವುದನ್ನು ಬಿಟ್ಟು ನ್ಯಾಯಯುತವಾಗಿ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು. ಇದೇ ವೇಳೆ ಜಿಲ್ಲಾ ಮಾಧ್ಯಮ ವಕ್ತಾರ ಕೆ.ಮಹೇಶ್ ಜೊತೆಯಲ್ಲಿದ್ದರು.
ದೆಹಲಿಗೆ ಮತ್ತೆ ಮಹಿಳಾ ಸಿಎಂ; ನಾಲ್ಕು ತಿಂಗಳ ಹಿಂದೆ ಕರ್ನಾಟಕದ ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿದ ಮಾತು ಸತ್ಯವಾಯ್ತು!
Rekha Gupta as Delhi CM 2025 - ದೆಹಲಿಯ ಹೊಸ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ದೆಹಲಿಗೆ ನಾಲ್ಕನೇ ಬಾರಿಗೆ ಮಹಿಳೆಯೊಬ್ಬರು ಮುಖ್ಯಮಂತ್ರಿಯಾದಂತಾಗಿದೆ. 2025ರಲ್ಲಿ ದೆಹಲಿಗೆ ಮಹಿಳಾ ಮುಖ್ಯಮಂತ್ರಿಯಾಗುತ್ತಾರೆ ಎಂದು ದಕ್ಷಿಣ ಕನ್ನಡದ ಜ್ಯೋತಿಷಿ ಪ್ರಶಾಂತ್ ಕಿಣಿಯವರು ಭವಿಷ್ಯ ನುಡಿದಿದ್ದರು. ಅದೀಗ ನಿಜವಾಗಿದೆ. 2023ರಲ್ಲಿ ಅವರು ಕೇಜ್ರಿವಾಲ್ ಸರ್ಕಾರ ಪತನವಾಗುವುದಾಗಿಯೂ ಹೇಳಿದ್ದರು. ಅದೂ ಸಹ ಈಗ ನಿಜವಾಗಿದೆ.
ಭೋಪಾಲ್: ಮಧ್ಯಪ್ರದೇಶದ ನರಸಿಂಗ್ಗಢದಲ್ಲಿ 11ರ ಹರೆಯದ ಶ್ರವಣ ಮತ್ತು ವಾಕ್ ದೋಷವಿರುವ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಮೇಶ್ ಸಿಂಗ್ನನ್ನು ಬಂಧಿಸಲಾಗಿದೆ. ಈತನ ಇತಿಹಾಸವನ್ನು ಕೆದಕಿದಾಗ ಈತ ಈ ಮೊದಲು ಇಂತಹ ಸರಣಿ ಕೃತ್ಯಗಳನ್ನು ನಡೆಸಿರುವುದು ಬಯಲಾಗಿದೆ. ಫೆಬ್ರವರಿ 1ರಂದು 11ರ ಹರೆಯದ ಶ್ರವಣ ಮತ್ತು ವಾಕ್ ದೋಷವಿರುವ ಬಾಲಕಿ ನರಸಿಂಗ್ಗಢದ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಮರುದಿನ ಬೆಳಿಗ್ಗೆ ಬಾಲಕಿ ಪೊದೆಯೊಂದರ ಬಳಿ ಅಸ್ವಸ್ಥಗೊಂಡು ಬಿದ್ದುಕೊಂಡಿದ್ದಳು. ಬಾಲಕಿಯ ದೇಹದ ಮೇಲೆ ಗಂಭೀರ ಸ್ವರೂಪದ ಗಾಯಗಳು ಕಂಡು ಬಂದಿತ್ತು. ವೈದ್ಯಕೀಯ ಪರೀಕ್ಷೆಯಲ್ಲೂ ಬಾಲಕಿಯ ಮೇಲೆ ಹಲ್ಲೆ ನಡೆದಿರುವುದು ದೃಢಪಟ್ಟಿದೆ. ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಾಗ ಭೋಪಾಲ್ನ ಹಮಿಡಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಫೆಬ್ರವರಿ 8ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. 46 ಸ್ಥಳಗಳಲ್ಲಿನ 136 ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೆಂಪು ಶಾಲು ಮತ್ತು ನೀಲಿ-ಕಪ್ಪು ಬಣ್ಣದ ಶೂ ಧರಿಸಿದ ಶಂಕಿತ ವ್ಯಕ್ತಿ ಕೃತ್ಯ ನಡೆದ ಸ್ಥಳದಲ್ಲಿ ತಿರುಗಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ರಮೇಶ್ ಸಿಂಗ್ ಅಪರಾಧಿ ಎಂದು ಪತ್ತೆ ಹಚ್ಚಿದ್ದಾರೆ. ಪೊಲೀಸರು ಆತನನ್ನು ಜೈಪುರಕ್ಕೆ ಹೋಗುವ ರೈಲಿನಲ್ಲಿ ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಜಗಢ ಎಸ್ಪಿ ಆದಿತ್ಯ ಮಿಶ್ರಾ, ಪ್ರಕರಣದ ಕುರಿತು ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸಾಕ್ಷ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಮರಣದಂಡನೆ ಶಿಕ್ಷೆಯಿಂದ ಪಾರಾಗಿದ್ದ ಆರೋಪಿ! ರಮೇಶ್ ಸಿಂಗ್ ಈ ಮೊದಲು ಕೂಡ ಅಪ್ರಾಪ್ತ ಬಾಲಕಿಯರನ್ನು ಗುರಿಯಾಗಿಸಿಕೊಂಡು ಅತ್ಯಾಚಾರ, ಕೊಲೆಯಂತಹ ಕೃತ್ಯವನ್ನು ನಡೆಸಿದ್ದಾನೆ. ಆದರೆ ನ್ಯಾಯಾಲಯಗಳಿಂದ ಪದೇ ಪದೇ ಖುಲಾಸೆಗೊಂಡಿದ್ದಾನೆ. 2003ರಲ್ಲಿ ಮಧ್ಯಪ್ರದೇಶದ ಶಜಾಪುರ ಜಿಲ್ಲೆಯ ಮುಬರಿಕ್ಪುರ ಗ್ರಾಮದಲ್ಲಿ 5ರ ಹರೆಯದ ಬಾಲಕಿಯ ಮೇಲೆ ಪೋಲಯ್ಕಲದ ದಬ್ರಿಪುರ ನಿವಾಸಿ ರಮೇಶ್ ಸಿಂಗ್ ಅತ್ಯಾಚಾರ ಎಸಗಿದ್ದ. ಆತನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಶಿಕ್ಷೆಯನ್ನು ಅನುಭವಿಸಿ 2013ರಲ್ಲಿ ಬಿಡುಗಡೆಯಾಗಿದ್ದ. 2014ರಲ್ಲಿ ಮಧ್ಯಪ್ರದೇಶದ ಅಷ್ಟಾ(ಸೆಹೋರ್)ನಲ್ಲಿ 8ರ ಹರೆಯದ ಬಾಲಕಿಯನ್ನು ಅಪಹರಿಸಿ ರಮೇಶ್ ಸಿಂಗ್ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. 2019ರಲ್ಲಿ ಹೈಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿತ್ತು.
ಫೆ.21ರಿಂದ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನ
ಕುಂದಾಪುರ, ಫೆ.19: ಭಂಡಾರ್ಕಾರ್ಸ್ ಆರ್ಟ್ಸ್ ಆ್ಯಂಡ್ ಸಾಯನ್ಸ್ ಕಾಲೇಜು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಂಗಳೂರು ಹಾಗೂ ಧಾರವಾಡ ವಲಯ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘಗಳ ಸಹಯೋಗದಲ್ಲಿ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನ ಫೆ.21ರಿಂದ 23ರವರೆಗೆ ಕುಂದಾಪುರದ ಭಂಡಾರ್ಕಾರ್ಸ್ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಇತಿಹಾಸ ಪರಿಷತ್ತಿನ ಸ್ಥಳೀಯ ಕಾರ್ಯದರ್ಶಿ ಗೋಪಾಲ ಕೆ. ಮಾತನಾಡಿ, ಫೆ.21ರ ಬೆಳಗ್ಗೆ 10ಗಂಟೆಗೆ ಮಾಹೆ ವಿವಿಯ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಉದ್ಘಾಟಿಸಲಿದ್ದು, ಕಾಲೇಜಿನ ಹಿರಿಯ ವಿಶ್ವಸ್ಥ ಕೆ. ಶಾಂತರಾಮ ಪ್ರಭು ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ವಿವಿ, ದಿಲ್ಲಿ ವಿವಿಯ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಕೇಶವನ್ ವೇಳುತಾಟ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವರು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಪುಸ್ತಕ ಬಿಡುಗಡೆ, ಸುಮಾರು 150 ಪ್ರಬಂಧ ಮಂಡನೆ, ದತ್ತಿನಿಧಿ ಉಪನ್ಯಾಸಗಳಲ್ಲಿ ತುಳುನಾಡಿನ ಬುಡಕಟ್ಟು ದೈವಗಳು, ಆಧುನಿಕ ಮುಖಾ ಮುಖಿ, ಉತ್ತರ ಕನ್ನಡ ಜಿಲ್ಲೆಯ ಶಾಸನಗಳು, ಫೆ.22ರಂದು ಬೆಳಗ್ಗೆ 10ಕ್ಕೆ ಕುದ್ಮಲ್ ರಂಗರಾವ್, ಸ್ವಾತಂತ್ರ್ಯ ಹೋರಾಟಗಾರ್ತಿ ಉಮಾಬಾಯಿ ಕುಂದಾಪುರ ಕುರಿತು ಉಪನ್ಯಾಸ ನಡೆಯಲಿದೆ. ಫೆ.23ರ ಬೆಳಗ್ಗೆ 10ಗಂಟೆಗೆ ಅವಿಭಜಿತ ದ.ಕ. ಜಿಲ್ಲೆಯ ಇತಿಹಾಸ - ಸಂಸ್ಕೃತಿ ಚಿಂತನಾ- ಮಂಥನದಲ್ಲಿ ಉಪನ್ಯಾಸ ನಡೆಯಲಿದೆ. ಮಂಗಳೂರು ವಿವಿ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಕೆ.ಎಂ.ಲೋಕೇಶ್ ಸಮಾರೋಪ ಭಾಷಣ ಮಾಡಲಿರುವರು. ಈ ಸಂದರ್ಭದಲ್ಲಿ ಐತಿಹಾಸಿಕ ನೆಲೆಯನ್ನು ಪರಿಚಯಿಸುವ ಪುಸ್ತಕಗಳ ಬಿಡುಗಡೆ ನಡೆಯಲಿದೆ. ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾಂಸರುಗಳಿಗೆ ರಾಜರ್ಷಿ ಡಾ.ಡಿ.ವಿರೇಂದ್ರ ಹೆಗ್ಗಡೆ ಪ್ರಶಸ್ತಿ, ಡಾ.ಬಿ.ಶೇಕ್ ಅಲಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಒನಕೆ ಓಬವ್ವ ಪ್ರಶಸ್ತಿ, ಕುಂದಣ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಶುಭಕರಾಚಾರಿ, ಇತಿಹಾಸ ಪರಿಷತ್ನ ಪ್ರಧಾನ ಕಾರ್ಯದರ್ಶಿ ಪ್ರೊ.ಐ.ಕೆ. ಪತ್ತಾರ, ಹೊನ್ನೂರು ಸರಕಾರಿ ಪದವಿ ಕಾಲೇಜಿನ ಮುಖ್ಯಸ್ಥ ಡಾ. ಎನ್.ವಿ.ಅಸ್ಕಿ, ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ, ಕಚೇರಿ ಅಧೀಕ್ಷಕ ಗೋಪಾಲ್, ಉಪನ್ಯಾಸಕ ಶರಣ್ ಎಸ್.ಜೆ., ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.
ಉಡುಪಿ ಮಹಾನಗರಪಾಲಿಕೆಯನ್ನಾಗಿಸುವ ಪ್ರಸ್ತಾವ| 9 ಗ್ರಾಪಂಗಳನ್ನು ತಾಪಂ, ಜಿಪಂ ಚುನಾವಣೆಯಲ್ಲಿ ಕೈಬಿಡಲು ಮನವಿ
ಉಡುಪಿ, ಫೆ.19: ಉಡುಪಿ ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಹಿನ್ನೆಲೆಯಲ್ಲಿ ಪಾಲಿಕೆಗೆ ಸೇರಿಸಲು ಉದ್ದೇಶಿಸಿರುವ 9 ಗ್ರಾಪಂಗಳನ್ನು ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಕೈಬಿಡುವಂತೆ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲಾಡಳಿತ ಮಹಾನಗರ ಪಾಲಿಕೆ ರಚನೆ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಅಂಕಿ ಸಂಖ್ಯೆಗಳ ಸಂಗ್ರಹಣೆ, ಜನಾಭಿಪ್ರಾಯ ಮತ್ತು ಸ್ಥಳೀಯ ಆಡಳಿತಗಳ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಗಾಗಲೇ ಅವಧಿ ಪೂರ್ಣಗೊಂಡಿರುವ ತಾಪಂ ಮತ್ತು ಜಿಪಂ ಚುನಾವಣೆಗಳನ್ನು ಮುಂಬರುವ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಈ ಚುನಾವಣೆ ಘೋಷಣೆ ಸಂದರ್ಭದಲ್ಲಿ ಪ್ರಸ್ತುತ ಉದ್ದೇಶಿತ ಉಡುಪಿ ಮಹಾನಗರ ಪಾಲಿಕೆಗೆ ಸೇರಿಸಲು ಹೊರಟಿರುವ ಗ್ರಾಪಂಗಳನ್ನು ಕೈ ಬಿಡುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಉಡುಪಿ ನಗರಸಭೆಯ ಅವಧಿಯು ಇನ್ನು 8 ತಿಂಗಳುಗಳಲ್ಲಿ ಮುಕ್ತಾಯ ಗೊಳ್ಳಲಿದೆ. ಇದರಿಂದಾಗಿ ತಾಪಂ ಮತ್ತು ಜಿಪಂ ಚುನಾವಣೆಯ ಅನಗತ್ಯ ವೆಚ್ಚವನ್ನು ತಡೆಯಬಹುದಾಗಿದೆ. ಆದುದರಿಂದ ಉಡುಪಿ ತಾಲೂಕಿನ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ 9 ಗ್ರಾಪಂಗಳಾದ ಅಲೆವೂರು, ಉದ್ಯಾವರ, ಕಡೆಕಾರ್, ಅಂಬಲಪಾಡಿ, ತೆಂಕನಿಡಿಯೂರು, ಬಡಾ ನಿಡಿಯೂರು, ಕೆಮ್ಮಣ್ಣು, ಕಲ್ಯಾಣಪುರ, 80 ಬಡಗಬೆಟ್ಟು ಗ್ರಾಪಂಗಳ ವ್ಯಾಪ್ತಿಯನ್ನು ತಾಪಂ ಮತ್ತು ಜಿಪಂ ಚುನಾವಣೆಯ ಸಂದರ್ಭದಲ್ಲಿ ಹೊರತು ಪಡಿಸಿ ಚುನಾವಣೆ ನಡೆಸುವಂತೆ ಮನವಿ ತಿಳಿಸಲಾಗಿದೆ.
ಜಿಮ್ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಅಪಘಾತ ; ರಾಷ್ಟ್ರ ಮಟ್ಟದ ವೈಟ್ಲಿಪ್ಟರ್ ಮೃತ್ಯು
ಬಿಕೇನರ್: ಇಲ್ಲಿನ ಜಿಮ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭ ರಾಷ್ಟ್ರ ಮಟ್ಟದ ವೈಟ್ ಲಿಫ್ಟರ್ ಯಸ್ಟಿಕಾ ಆಚಾರ್ಯ ಸಾವನ್ನಪ್ಪಿದ ಆಘಾತಕಾರಿ ಘಟನೆ ಬುಧವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಶ್ಟಿಕಾ ಅವರು ಜಿಮ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅವರ ಕೈಯಿಂದ 270 ಕಿ.ಗ್ರಾಂ.ನ ಸ್ಕ್ವಾಟ್ ರಾಡ್ ಜಾರಿ ಕುತ್ತಿಗೆ ಮೇಲೆ ಬಿತ್ತು. ಇದ್ದಕ್ಕಿದ್ದಂತೆ ಭಾರವಾದ ಸ್ಕ್ವಾಟ್ ರಾಡ್ ಕುತ್ತಿಗೆ ಮೇಲೆ ಬಿದ್ದಾಗ ಅವರು ಪ್ರಜ್ಞೆ ಕಳೆದುಕೊಂಡರು. ಕೂಡಲೇ ಸಮೀಪ ಇದ್ದ ಜಿಮ್ ತರಬೇತುದಾರ ಹಾಗೂ ಇತರರು ಅವರಿಗೆ ಶುಶ್ರೂಷೆ ನೀಡಿದರು. ಸಿಪಿಆರ್ಗೆ ಒಳಪಡಿಸಿದರು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರು ದಾರಿ ಮಧ್ಯೆಯೇ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ. ಜಿಮ್ನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗಿದೆ. ಯಶ್ಚಿಕಾ ಸಾವಿಗೆ ಅಭ್ಯಾಸದ ಸಂದರ್ಭದ ಅಪಘಾತವೇ ಕಾರಣ ಎಂಬುದು ದೃಢವಾಗಿದೆ ಎಂದು ನಯಾ ಶಹರ್ ಪೊಲೀಸ್ ಠಾಣೆಯ ಅಧಿಕಾರಿ ವಿಕ್ರಮ್ ತಿವಾರಿ ತಿಳಿಸಿದ್ದಾರೆ. खौफनाक VIDEO.. बीकानेर में 17 वर्षीय वेटलिफ्टर यष्टिका आचार्य की मौत, ट्रेनिंग के दौरान उठा रही थी 270 किलो वजन #Bikaner । #Rajasthan pic.twitter.com/2L9UAb1Jeu — NDTV India (@ndtvindia) February 19, 2025 ಯಶ್ಟಿಕಾ ಅವರ ಕುಟುಂಬ ಘಟನೆಗೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಿಸಿಲ್ಲ. ಅವರ ಮರಣೋತ್ತರ ಪರೀಕ್ಷೆ ನಡೆಸಲು ಬಯಸಿಲ್ಲ. ಅಂತಿಮ ಸಂಸ್ಕಾರಕ್ಕೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ ರಾಜ್ಯಾದ್ಯಂತ ವಿಸ್ತರಣೆ : ದಿನೇಶ್ ಗುಂಡೂರಾವ್
ತುಮಕೂರು : ರಾಜ್ಯದ 80 ತಾಲ್ಲೂಕು ಆಸ್ಪತ್ರೆಗಳಲ್ಲಿ ಆರಂಭಿಸಿರುವ ‘ಪುನೀತ್ ರಾಜ್ಕುಮಾರ್’ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ರವರು ಹೇಳಿದ್ದಾರೆ. ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಸ್ಥಾಪಿಸಿರುವ 2ನೇ ಕ್ಯಾಥ್ ಲ್ಯಾಬ್ನ್ನು ಫೆ.19ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಿದ ಅವರು ಮಾತನಾಡುತ್ತಾ ಹೃದಯ ಜ್ಯೋತಿ ಸೌಲಭ್ಯದಿಂದ ಈವರೆಗೆ ಸುಮಾರು 250 ಕ್ಕೂ ಹೆಚ್ಚು ಜನರ ಜೀವ ಕಾಪಾಡಲಾಗಿದೆ ಎಂದು ತಿಳಿಸಿದರು. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೆ-ಕೇರ್ ಮತ್ತು ಕಿಮೋಥೊರಫಿ ಸೌಲಭ್ಯ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಸದ್ಯದಲ್ಲಿಯೇ ಈ ಯೋಜನೆಗೆ ಚಾಲನೆ ನೀಡಲಾಗುವುದು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಜೊತೆಗೂಡಿ ಜನರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ತುಮಕೂರಿನ ಶ್ರೀದೇವಿ ಆಸ್ಪತ್ರೆ ಮತ್ತು ಸಿದ್ದಾರ್ಥ ವೈದ್ಯಕೀಯ ಸಂಸ್ಥೆಗಳಿಗೆ ಡೆ-ಕೇರ್ ಮತ್ತು ಕಿಮೋಥೆರಫಿ ಚಿಕಿತ್ಸಾ ನಿರ್ವಹಣೆಯನ್ನು ವಹಿಸಿಕೊಂಡುವುದಾಗಿ ಸಚಿವರು ಪ್ರಕಟಿಸಿದರು. ವೈದ್ಯಕೀಯ ಲೋಕದಲ್ಲಿ ಪ್ರತಿನಿತ್ಯ ಹೊಸ-ಹೊಸ ಬದಲಾವಣೆಗಳಾಗುತ್ತವೆ. ಮುಂದಿನ ದಿನಗಳಲ್ಲ್ಲಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೂ ಪರಿಹಾರ ದೊರಕಲಿದೆ. ಭವಿಷ್ಯದಲ್ಲಿ ಮನುಷ್ಯನ ಆಯಸ್ಸು 120 ವರ್ಷದವರೆಗೂ ಹೋದರೂ ಅಚ್ಚರಿಪಡಬೇಕಿಲ್ಲ ಎಂದು ಅವರು ನುಡಿದರು. ರೋಗಗಳಿಂದಾಗಿ ಮನುಷ್ಯನ ಜೀವ ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ವೈದ್ಯರಿಗೆ ಮತ್ತು ದಾದಿಯರಿಗೆ ಜೀವ ಉಳಿಸುವಂತಹ ಶಕ್ತಿಯಿರುತ್ತದೆ. ದೇವರಿಗೆ ಬಿಟ್ಟರೇ ಇತಂಹ ಅದ್ಭುತ ಶಕ್ತಿಯಿರುವುದು ವೈದ್ಯಕೀಯ ಸಮುದಾಯಕ್ಕೆ ಮಾತ್ರ. ಹೀಗಾಗಿ ವೈದ್ಯರು ವೃತ್ತಿ ಧರ್ಮ ಕಾಪಾಡಬೇಕು ಎಂದರು. ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿರುವ ತುಮಕೂರಿನ ಶ್ರೀದೇವಿ ಆಸ್ಪತ್ರೆ ರಾಜ್ಯದ ದೊಡ್ಡ ಆಸ್ತಿಯಾಗಿದ್ದು, ಈ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸಿ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಭವಿಷ್ಯದಲ್ಲಿ ಉಜ್ವಲ ಉಜ್ವಲ ಸಂಸ್ಥೆಯಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕರಾದ ಡಾ.ಎಂ.ಆರ್. ಹುಲಿನಾಯ್ಕರ್ರವರು ಮಾತನಾಡುತ್ತಾ, ದಿನೇಶ್ ಗುಂಡೂರಾವ್ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಸರ್ಕಾರಿ ಆಸ್ಪತ್ರೆಗಳ ಸೇವೆಯ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚಾಗುವಂತೆ ಮಾಡಿದ್ದಾರೆ. ಅನ್ನಭಾಗ್ಯ ಮತ್ತು ಯಶಸ್ವಿನಿ ಯೋಜನೆ ಜಾರಿಗೊಳಿಸುವಲ್ಲಿ ಸಚಿವರ ಪಾತ್ರ ಬಹಳ ಮುಖ್ಯವಾಗಿತ್ತು. ಈಗಿನ ಕಾಲಘಟ್ಟ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. 2ನೇ ಕ್ಯಾಥ್ ಲ್ಯಾಬ್ ಆರಂಭದಿಂದ ಈ ಭಾಗದ ಜನರಿಗೆ ಇನ್ನೂ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಎಂ.ನಾಗರಾಜ್ ಜೀವನ ಚರಿತ್ರೆ ಕುರಿತು ಡಾ ಕೆ.ಆರ್. ಕಮಲೇಶ್ ಕನ್ನಡದಲ್ಲಿ ಬರೆದಿದ್ದ “A Beacon of Light Dedicated to Srevice - Acharya Dr. M. Nagaraju`s Life Mission’ ಕೃತಿಯನ್ನು ಡಿ.ಆರ್.ಡಿಸೋಜಾ ಇಂಗ್ಲೀಷ್ಗೆ ಅನುವಾದ ಮಾಡಿದ್ದು, ಇದನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಲೋಕಾರ್ಪಣೆ ಮಾಡಿದರು ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ಬಾಬು ಸೇರಿ ಮುಂತಾದವರು ಭಾಗವಹಿಸಿದ್ದರು.
ಹೆಚ್ಚಿನ ಲಾಭಾಂಶದ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು
ಬ್ರಹ್ಮಾವರ, ಫೆ.19: ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಆನ್ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂದಾಡಿ ಗ್ರಾಮದ ನಿಶಾ ಮೇರಿ ರೋಚ್ ಎಂಬವರಿಗೆ ಅಪರಿಚಿತರು ಮೊಬೈಲ್ನಿಂದ ಸಂದೇಶ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಹಾಗೆ ಇವರು ಜ.23 ಹಾಗೂ 27ರಂದು ಒಟ್ಟು 1,92,750 ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಯಾವುದೇ ಲಾಭಾಂಶವಾಗಲೀ ಹೂಡಿಕೆ ಮಾಡಿದ ಹಣವನ್ನಾಗಲಿ ವಾಪಾಸ್ಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
ಕಾರು ಶೋರೂಂನಲ್ಲಿ ಕಳವಿಗೆ ಯತ್ನ: ಪ್ರಕರಣ ದಾಖಲು
ಕುಂದಾಪುರ, ಫೆ.19: ಕಾರು ಶೋರೂಮ್ನಲ್ಲಿ ಕಳವಿಗೆ ಯತ್ನಿಸಿರುವ ಘಟನೆ ಫೆ.19ರಂದು ನಸುಕಿನ ವೇಳೆ ಬೀಜಾಡಿ ಎಂಬಲ್ಲಿ ನಡೆದಿದೆ. ಇಶಾನ್ ಮತ್ತು ಯಾಹಿನ್ ಕುಂಭಾಶಿ ಎಂಬವರು ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಶೋರೂಮ್ನ ಬೀಗವನ್ನು ಒಡೆಯುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಅದರಂತೆ ಮಾಲಕರು ಸ್ಥಳಕ್ಕೆ ಬಂದು ನೋಡಿದಾಗ ಶೋರೂಮ್ನ ಶಟರ್ಗೆ ಅಳವಡಿಸಿದ ಬೀಗವನ್ನು ಜಖಂಗೊಳಿಸಿ ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ವೀಕ್ಷಿಸುತ್ತಿದ್ದ ವ್ಯಕ್ತಿ ಕುಳಿತಲ್ಲಿಯೇ ಮೃತ್ಯು
ಮಣಿಪಾಲ, ಫೆ.19: ಇಯರ್ ಫೋನ್ ಮೂಲಕ ಮೊಬೈಲ್ ನೋಡುತ್ತಿದ್ದ ವ್ಯಕ್ತಿಯೊಬ್ಬರು ಬೆಡ್ ಮೇಲೆ ಕುಳಿತಲ್ಲಿಯೇ ಮೃತಪಟ್ಟ ಘಟನೆ ಫೆ.18ರಂದು ಬೆಳಗ್ಗೆ ಪರ್ಕಳ ಗ್ಯಾಡ್ಸನ್ ಎಂಬಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಗುರುಪ್ರಸಾದ್(49) ಎಂದು ಗುರುತಿಸ ಲಾಗಿದೆ. ಇವರು ರಾತ್ರಿ ಊಟ ಮಾಡಿ ಮಲಗಲು ಕೋಣೆಗೆ ಹೋಗಿದ್ದರು. ಅಲ್ಲಿ ಬೆಡ್ ಮೇಲೆ ಕುಳಿತು ಕಿವಿಗೆ ಇಯರ್ ಫೋನ್ ಹಾಕಿ ಮೊಬೈಲ್ ನೋಡುತ್ತಿದ್ದರು. ಈ ವೇಳೆ ಅವರು ಹೃದಯ ಸ್ತಂಭನ ಅಥವಾ ಇತರ ಯಾವುದೋ ಕಾರಣಗಳಿಂದ ಮೃತಪಟ್ಟಿರಬಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯವಹಾರದಲ್ಲಿ ನಷ್ಟ: ಪೂನಾದ ಹೊಟೇಲ್ ಉದ್ಯಮಿ ಆತ್ಮಹತ್ಯೆ
ಕೋಟ, ಫೆ.19: ಹೊಟೇಲ್ ಉದ್ಯಮದಲ್ಲಿ ನಷ್ಟ ಉಂಟಾದ ಚಿಂತೆಯಲ್ಲಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಿಯಾರ ಸಮೀಪದ ದೇಲಟ್ಟಿ ಎಂಬಲ್ಲಿ ಫೆ.18ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಸದಾಶಿವ ಎಂದು ಗುರುತಿಸಲಾಗಿದೆ. ಪೂನಾದಲ್ಲಿ ಹೊಟೇಲ್ ಉದ್ಯಮ ಮಾಡಿಕೊಂಡಿದ್ದ ಇವರು, ಉದ್ಯಮದಲ್ಲಿ ನಷ್ಟ ಉಂಟಾದ ಕಾರಣದಿಂದ ಮನನೊಂದು ಮನೆಯ ಮಹಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ರೈಲು ಢಿಕ್ಕಿ ಹೊಡೆದು ಅಪರಿಚಿತ ಮೃತ್ಯು
ಕುಂದಾಪುರ, ಫೆ.19: ಚಲಿಸುತ್ತಿದ್ದ ರೈಲು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.18ರಂದು ಬೆಳಗ್ಗೆ ಕಟ್ಬೇಲ್ತೂರು ಗ್ರಾಮದ ಶ್ರೀಭದ್ರ ಮಹಾಕಾಳಿ ದೇವಸ್ಥಾನದ ಬಳಿ ನಡೆದಿದೆ. ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಪಂಚಗಂಗಾ ಎಕ್ಸ್ಪ್ರೆಸ್ ರೈಲು ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿ ದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ, ಫೆ.19: ತಾಲೂಕಿನ ಶಿವಪುರದ ನಿವೃತ್ತ ಮುಖ್ಯಶಿಕ್ಷಕ ಟಿ.ಭೋಜ ಶೆಟ್ಟಿ(88) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಲಬುರಗಿ | ರೈತರ ಪರವಾಗಿ ಕೆಲಸ ಮಾಡಿ: ಸಿದ್ದುಗೌಡ ಅಫಜಲಪೂರಕರ್
ಕಲಬುರಗಿ: ಮರತೂರ ಗ್ರಾಮದ ವ್ಯವಸಾಯ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ರೈತರ ಪರವಾಗಿ ಕೆಲಸ ಮಾಡಿ ಎಂದು ಚಿತ್ತಾಪೂರ ಎಪಿಎಂಸಿ ಮಾಜಿ ಅಧ್ಯಕ ಮುಖಂಡರಾದ ಸಿದ್ದುಗೌಡ ಅಫಜಲಪೂರಕರ್ ಸಲಹೆ ನೀಡಿದರು. ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಮರತೂರ ಗ್ರಾಮದ ವ್ಯವಸಾಯ ಸರಕಾರಿ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತೆವೆ. ಆತ ದುಡಿದು ಆಹಾರ ಬೆಳೆದರೆ ಮಾತ್ರ ನಮ್ಮ ನಿಮ್ಮ ಜೀವನ ನಡೆಯೋದು. ಆದರೆ ಅಂತಹ ರೈತರು ಸದ್ಯ ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗಳು ಕೈಕೊಡುತ್ತಿದ್ದು, ಮಾಡಿದ ಸಾಲವೂ ತೀರಿಸದಂತಹ ಸ್ಥಿತಿ ಅವರದ್ದಾಗಿದೆ. ಹಾಗಾಗಿ, ಈಗ ವ್ಯವಸಾಯ ಸಹಕಾರಿ ಸಂಘದ ನಿದೇಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅದರ ಸದುಪಯೋಗ ಪಡೆದುಕೊಂಡು ರೈತರ ಪರವಾಗಿ ದುಡಿಯಬೇಕು ಎಂದು ನೂತನ ನಿರ್ದೇಶಕರಿಗೆ ಸಲಹೆ ನೀಡಿದರು. ಚಿತ್ತಾಪೂರ ಎಪಿಎಂಸಿ ಅಧ್ಯಕ್ಷನಾಗಿದ್ದ ವೇಳೆ ಸಾಕಷ್ಟು ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದೆನೆ. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ಕೊಡಿಸಿದ್ದೆನೆ. ರೈತನ ಮಗನಾಗಿದ್ದರಿಂದ ರೈತಪರ ಕಾಳಜಿ ಹೊಂದಿದ್ದೆನೆ. ಆಗ ನಾನು ಮಾಡಿದ ಒಳ್ಳೆಯ ಕೆಲಸದಿಂದಾಗಿ ಈಗಲೂ ರೈತರು ನಮಗೆ ಕರೆ ಮಾಡಿ, ಅವರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆನೆ ಎಂದರು. ರೈತರ ಪರವಾಗಿ ನಿಂತು, ಸರಕಾರದಿಂದ ಬರುವ ಸೌಲಭ್ಯಗಳನ್ನು ಕೊಡಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು. ಸದ್ಯದಲ್ಲಿಯೇ ತಾಪಂ, ಜಿಪಂ ಚುನಾವಣೆಗಳು ಬರ್ತಿದ್ದು, ಅದಕ್ಕೂ ಕೂಡ ಎಲ್ಲರೂ ಸಿದ್ದರಾಬೇಕು. ಮೀಸಲಾತಿ ಯಾವುದೇ ಬಂದರೂ ಅವರ ಪರವಾಗಿ ಕೆಲಸ ಮಾಡೋಣ. ಸಾಮಾನ್ಯ ಮೀಸಲಾತಿ ಬಂದ್ರೆ ನಾನು ಕಣದಲ್ಲಿ ಇಳಿಯಲು ಸಿದ್ದನಾಗಿದ್ದೆನೆ. ನಮ್ಮ ಮೇಲೆ ಪಕ್ಷದ ಮುಖಂಡರ ಆಶೀರ್ವಾದವೂ ಇದೆ ಎಂದು ಹೇಳಿದರು. ಹಿರಿಯರಾದ ಹುಣಚಪ್ಪ ಪೂಜಾರಿ ಅವರು ಮಾತನಾಡಿ, ಮರತೂರ ಗ್ರಾಮದ ವ್ಯವಹಾಯ ಸಹಕಾರಿ ಸಂಘದ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿತ್ತು. ಆದರೂ ಪಟ್ಟು ಬಿಡದೇ ನಮ್ಮವರನ್ನು ಅವಿರೋಧ ಆಯ್ಕೆ ಮಾಡಿದ್ದೆವೆ. ಇದು ನಮ್ಮ ಶ್ರಮಕ್ಕೆ ಸಿಕ್ಕ ಜಯ ಆಗಿದೆ ಎಂದರು. ಮುಖಂಡ ಶೇರ್ ಅಲಿ ಮಾತನಾಡಿ, ಮರತೂರ ಗ್ರಾಮದ ವ್ಯವಸಾಯ ಸರಕಾರಿ ಸಂಘದ ಚುನಾವಣೆಯಲ್ಲಿ ಎರಡು ಗುಂಪುಗಳ ಮಧ್ಯೆ ಪೈಪೋಟಿ ಏರ್ಪಟ್ಟಿತು. ಚುನಾವಣೆಗೂ ನಾನು ಸಿದ್ದರಾಗಿದ್ದೆವು. ಆದರೆ ನಮ್ಮವರು ಅವಿರೋಧವಾಗಿ ಆಯ್ಕೆಯಾದರು. ಇವರ ಆಯ್ಕೆಯಲ್ಲಿ ಕೇವಲ ನನ್ನ ಶ್ರಮ ಮಾತ್ರವಲ್ಲ, ಪ್ರತಿಯೊಬ್ಬ ಮುಖಂಡರ ಶ್ರಮವೂ ಇದೆ ಎಂದ ಅವರು, ಮುಂಬರುವ ಚುನಾವಣೆಗಳನ್ನೂ ಇದೇ ರೀತಿ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು. ಚಂದ್ರಶೇಖರ ಎಸ್. ಪೊಲೀಸ್ ಪಾಟೀಲ ಮಾತನಾಡಿ, ಯಾವುದೇ ಎಲೆಕ್ಷನ್ಗಳು ಬಂದರೂ ನಾವು ಒಗ್ಗಟ್ಟಿನಲ್ಲಿ ಮಾಡಿದರೆ ಗೆಲುವು ಗ್ಯಾರಂಟಿ. ಈಗ ಮರತೂರ ವ್ಯವಸಾಯ ಸಹಕಾರಿ ಸಂಘದ ನೂತನ ನಿರ್ದೇಶಕರಾದವರು ರೈತರ ಪರವಾಗಿ ಗಟ್ಟಿಧ್ವನಿಯಾಗಿ ನಿಂತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಮರತೂರ ಗ್ರಾಮದ ವ್ಯವಸಾಯ ಸಹಕಾರಿ ಸಂಘದ ನೂತನ ನಿರ್ದೇಶಕರಾದ ಮನೋಹರ ಕಂಠಿ, ದತ್ತುಸಿಂಗ್ ಠಾಕೂರ್ ಮತ್ತು ಕುಶಾಲ ಚನಮಗೋಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚುನಾವಣೆಯಲ್ಲಿ ಶ್ರಮಿಸಿದ ಅಫ್ಸರ್ ಅಲಿ, ಹುಣಚಪ್ಪ ಪೂಜಾರಿ ಹಾಗೂ ಸಿದ್ದುಗೌಡ ಅಫಜಲಪೂರಕರ್ ಮತ್ತು ಶೇರ್ ಅಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ ಮೋಕಾಶಿ, ವಿನೋದಕುಮಾರ ಉದಯಕರ್, ರುದ್ರಮುನಿ ಸ್ಥಾವರಮಠ ಹರಸೂರ, ದೇವಾನಂದ ಚನಮಾಗೋಳ, ಅಶೋಕ ಸಾಹುಕಾರ್, ನೀಲಕಂಠ ಚವ್ಹಾಣ್, ಮಹೇಶ ಕಟ್ಟಿಮನಿ, ವಿಜಯಕುಮಾರ ಅಟ್ಟೂರಕರ್, ರುಕ್ಮೋದ್ದಿನ್, ಶಫಿ ಮೋಜನ್, ಶಾಂತಕುಮಾರ ನಾಟೀಕಾರ್ ಇನ್ನಿತರರಿದ್ದರು.
ಪರ್ಕಳ: ಫೆ. 23ಕ್ಕೆ ಮಂಗಳ ಕಲಾ ವೇದಿಕೆಯಿಂದ ‘ಕಲಾ ಸಂಗಮ’
ಉಡುಪಿ, ಫೆ.19: ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆ ತನ್ನ 21ನೇ ವರ್ಷದ ಸಂಭ್ರಮ ‘ಕಲಾ ಸಂಗಮ’ ಕಾರ್ಯಕ್ರಮವನ್ನು ಫೆ.23ರ ರವಿವಾರ ಅಪರಾಹ್ನ 2 ರಿಂದ ಪರ್ಕಳದ ಶ್ರೀವಿಘ್ನೇಶ್ವರ ಸಭಾಭವನದಲ್ಲಿ ಆಯೋಜಿಸಿದೆ ಎಂದು ವೇದಿಕೆಯ ಸಂಚಾಲಕ ಎಂ.ಮಂಜುನಾಥ ಉಪಾಧ್ಯ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಪರ್ಕಳ ಇವರು 2 ಗಂಟೆಗೆ ಉದ್ಘಾಟಿಸಲಿದ್ದಾರೆ. ಪರ್ಕಳದ ಉದ್ಯಮಿ ಮೋಹನದಾಸ ನಾಯಕ್ ಉಪಸ್ಥಿತರಿರುವರು ಎಂದರು. ಅಪರಾಹ್ನ 2:15ಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ತೋನ್ಸೆ ಪುಷ್ಕಳಕುಮಾರ್ ಇವರಿಂದ ‘ಗಜಗೌರಿ ವ್ರತ’ ಹರಿಕಥಾ ಕಾಲಕ್ಷೇಪವಿದೆ. ಸಂಜೆ 4 ರಿಂದ ಸಾನ್ವಿ ರವೀಂದ್ರ ನಾಯಕ್ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ ಎಂದರು. ಸಂಜೆ 4:45ಕ್ಕೆ ಸಭಾ ಕಾರ್ಯಕ್ರಮವು ವೇದಿಕೆಯ ಗೌರವಾಧ್ಯಕ್ಷ ಶ್ರೀನಿವಾಸ ಉಪಾಧ್ಯ ಪರ್ಕಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ ಮಧ್ವರಾಜ್, ಆಕಾಶವಾಣಿ ಮಂಗಳೂರಿನ ನಿವೃತ್ತ ನಿಲಯ ನಿರ್ದೇಶಕ ಡಾ.ಪೆರ್ಲ ವಸಂತಕುಮಾರ್, ಪ್ರಸಿದ್ಧ ತುಳು ಕಲಾವಿದ ಭೋಜರಾಜ ವಾಮಂಜೂರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್, ಉದ್ಯಮಿ ಪ್ರಸಾದ್ರಾಜ್ ಕಾಂಚನ್, ಚಿತ್ರನಟ ಯೋಗೀಶ್ ಶೆಟ್ಟಿ ಡಿ. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ರಂಗ ಕಲಾವಿದ ಹಾಗೂ 80 ಬಡಗುಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ ಕೋಟ್ಯಾನ್, ಮಣಿಪಾಲದ ದೂರದರ್ಶಕ ತಯಾರಕ ಆರ್. ಮನೋಹರ ಪರ್ಕಳ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು, ಚಿತ್ರಕಲಾವಿದ ಮಹೇಶ್ ಆಚಾರ್ಯ ಮರ್ಣೆ ಇವರನ್ನು ಸನ್ಮಾನಿಸಲಾಗುವುದು ಎಂದು ಮಂಜುನಾಥ ಉಪಾಧ್ಯ ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6:15ರಿಂದ ಮಹಾಲಿಂಗೇಶ್ವರ ನಾಟ್ಯ ತಂಡ ಮರ್ಣೆ ಇವರಿಂದ ನೃತ್ಯರೂಪಕಗಳು, ಮಾ.ಸಂಪ್ರೀತ್ನಾಯಕ್ ಹಾಗೂ ಸೃಜನ್ ನಾಯಕ್ರಿಂದ ಕೊಳಲು ವಾದನ ಹಾಗೂ 7 ಗಂಟೆಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಸಂದೀಪ್ ನಾಯ್ಕ್ ಪರ್ಕಳ, ಸಹ ಸಂಚಾಲಕ ಗೋಪಿ ಹಿರೇಬೆಟ್ಟು, ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಚಕ್ರತೀರ್ಥ ಹಾಗೂ ಕೋಶಾಧಿಕಾರಿ ಗಣೇಶ್ ಸಣ್ಣಕ್ಕಿಬೆಟ್ಟು ಉಪಸ್ಥಿತರಿದ್ದರು.
ಕಲಬುರಗಿ | ರಸ್ತೆ ಅಗಲೀಕರಣ ಪೂರ್ಣಗೊಳಿಸಲು ಆಗ್ರಹ
ಕಲಬುರಗಿ: ನಗರದ ಸಾಯಿಮಂದಿರ ರಸ್ತೆಯಿಂದ ಗಂಗಾ ಅರ್ಪಾಟಮೆಂಟ್ ರವರೆಗಿನ ರಸ್ತೆ ಅಗಲೀಕರಣ ಸ್ಥಗಿತಗೊಳಿಸಲಾಗಿದ್ದು, ಇದನ್ನು ಪುನಃ ಪ್ರಾರಂಭಿಸುವಂತೆ ಆಗ್ರಹಿಸಿ ಜೈಕನ್ನಡ ಸೇನೆಯ ವತಿಯಿಂದ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿನ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಂಡು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು, ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಖಂಡನೀಯ, ಇಲ್ಲಿನ ರಸ್ತೆ ಬದಿಯಲ್ಲಿ ಬರುವ ಅನಧಿಕೃತ ಅಪಾರ್ಟಮೆಂಟ್, ಮನೆಗಳನ್ನು ತೆರವುಗೊಳಿಸದೆ ಕಾಮಗಾರಿಯು ಸ್ಥಗಿತಗೊಳಿಸಿರುತ್ತಾರೆ ಎಂದು ಮನವಿಯಲ್ಲಿ ಆರೋಪಿದ್ದ ಅವರು ಈ ಕಾಮಗಾರಿಯನ್ನು ವೀಕ್ಷಿಸಲು ಈ ಹಿಂದೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳ ಪರಿಶೀಲನೆ ಮಾಡಿ ಎಲ್ಲಾ ಅರ್ಪಾಟಮೆಂಟ್ ಹಾಗೂ ಮನೆಗಳನ್ನು ಡೆಮಾಲಿಶ ಮಾಡಿ 60 ಫೀಟ್ ರಸ್ತೆ ನಿರ್ಮಿಸಲು ಸೂಚಿಸಿರುತ್ತಾರೆ. ಆದರೆ ಇಲ್ಲಿಯವರೆಗೆ ಲ್ಯಾಂಡ್ ಆರ್ಮಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಈ ಕಾಮಗಾರಿಗೆ ಮತ್ತು ತಮ್ಮ ಇಲಾಖೆಗೆ ಸಂಬಂಧವಿಲ್ಲದಂತೆ ಮೌನವಹಿಸಿದ ಕಾರಣ ಕಾಮಗಾರಿಯನ್ನು ಸ್ಥಗಿ-ತಗೊಳಿಸಿ ಕಳಪೆ ಕಾಮಗಾರಿಯನ್ನು ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್. ಭಾಸಗಿ, ಮುಖಂಡರಾದ ಮಲ್ಲು ಆಲಗೂಡ, ನವೀನ ಧುಮ್ಮನಸೂರ, ವಿಠಲ ವಾಲಿಕಾರ, ಅಭಿ ಗೌಡ, ಹುಸೇನ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ದಿಲ್ಲಿಗೂ ಅಚ್ಚರಿಯ ಸಿಎಂ; ದಿಲ್ಲಿಯ ನೂತನ ಸಿಎಂ ರೇಖಾ ಗುಪ್ತಾ ಯಾರು?
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಮತ್ತು ಶಾಲಿಮಾರ್ ಬಾಗ್ ಶಾಸಕಿ ರೇಖಾ ಗುಪ್ತಾ ಅವರನ್ನು ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ ಎಂದು ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಬಿಜೆಪಿ ಮೂಲಗಳು ದೃಢಪಡಿಸಿವೆ. ಈ ಮೂಲಕ ಮಧ್ಯ ಪ್ರದೇಶ ಹಾಗು ರಾಜಸ್ಥಾನದಂತೆ ದಿಲ್ಲಿಗೂ ಅಚ್ಚರಿಯ ಸಿಎಂ ಅನ್ನು ಮೋದಿ, ಶಾ ಜೋಡಿ ನೀಡಿದೆ. ಸಿಎಂ ಆಗುವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಪರ್ವೇಶ್ ವರ್ಮಾ ಅವರು ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ಬಿಜೆಪಿ ಮೂರು ಬಾರಿ ಕೌನ್ಸಿಲರ್ ಆಗಿರುವ ರೇಖಾ ಗುಪ್ತಾ ಅವರನ್ನು ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆ ಗೆಲ್ಲುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡುವ ಮೂಲಕ, ಬಿಜೆಪಿ ತನ್ನ ಮಹಿಳಾ ಮತದಾರರಿಗೆ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದೆ. ರೇಖಾ ಗುಪ್ತಾ ಮೂರು ಬಾರಿ ಬಿಜೆಪಿ ಕೌನ್ಸಿಲರ್ ಮತ್ತು ದಕ್ಷಿಣ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ನ ಮೇಯರ್ ಆಗಿದ್ದವರು.ಬುಧವಾರ ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ರೇಖಾ ಗುಪ್ತಾ ಅವರು ಮೊದಲ ಬಾರಿಗೆ ಶಾಸಕರಾಗಿರಬಹುದು, ಆದರೆ ಅವರು ರಾಜಕೀಯದಲ್ಲಿ ದೀರ್ಘ ಇನ್ನಿಂಗ್ಸ್ ಆಡಿದವರು. ಬಿಜೆಪಿ ರಾಜಕಾರಣದಲ್ಲಿ ರಾಜಧಾನಿ ದಿಲ್ಲಿಯಲ್ಲೇ ಪಳಗಿದವರು ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಸೇರಿದಂತೆ ಇತರ ಪ್ರಮುಖ ಮುಖಗಳಿಗಿಂತ ಅವರನ್ನು ದಿಲ್ಲಿ ಸಿಎಂ ಆಗಿ ಆಯ್ಕೆ ಮಾಡುವ ಮೂಲಕ, ಬಿಜೆಪಿ ಮಹಿಳೆಯರ ಓಟ್ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳಲು ಹೊರಟಿದೆ. 41 ವರ್ಷದ ರೇಖಾ ಗುಪ್ತಾ ಅವರು ಇತ್ತೀಚಿನ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಾಲಿಮಾರ್ ಬಾಗ್ ವಿಧಾನ ಸಭಾ ಸ್ಥಾನವನ್ನು ಸುಮಾರು 30,000 ಮತಗಳ ಅಂತರದಿಂದ ಗೆದ್ದಿದ್ದರು. ಕಾಮ್ ಹೀ ಪೆಹಚಾನ್ (ನನ್ನ ಕೆಲಸ ನನ್ನ ಗುರುತು). ಇದು ಬಿಜೆಪಿ ನಾಯಕಿ ತಮ್ಮ ವೆಬ್ಸೈಟ್ನಲ್ಲಿ ತಮ್ಮ ಪ್ರಚಾರಕ್ಕಾಗಿ ಬಳಸಿದ ಟ್ಯಾಗ್ಲೈನ್ ಆಗಿತ್ತು. ದಿಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ ಮತ್ತು ಜಿತೇಂದ್ರ ಮಹಾಜನ್ ಹಾಗು ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರು ಸಿಎಂ ಸ್ಥಾನಕ್ಕೆ ಕೆಲವು ಪ್ರಮುಖ ಸ್ಪರ್ಧಿಗಳಾಗಿದ್ದರು. ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚುನಾವಣೆಯೊಂದಿಗೆ ರೇಖಾ ಗುಪ್ತಾ ರಾಜಕೀಯಕ್ಕೆ ಕಾಲಿಟ್ಟರು. ಅವರು ಮೂರು ಬಾರಿ ಕೌನ್ಸಿಲರ್ ಮತ್ತು ದಕ್ಷಿಣ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ನ ಮಾಜಿ ಮೇಯರ್ ಆಗಿದ್ದಾರೆ. ರೇಖಾ ಗುಪ್ತಾ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿದ್ದಾರೆ. ಅವರು ಈ ಹಿಂದೆ ದಿಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ರೇಖಾ ಗುಪ್ತ ದೌಲತ್ ರಾಮ್ ಕಾಲೇಜಿನಿಂದ ಪದವಿ ಪಡೆದವರು ಮತ್ತು 1996-97ರ ಅವಧಿಯಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ DUSU ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಮೊದಲು 2007 ರಲ್ಲಿ ಉತ್ತರ ಪಿತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾದವರು. ರೇಖಾ ಗುಪ್ತಾ ಅವರನ್ನು ದಿಲ್ಲಿ ಸಿಎಂ ಮಾಡುವ ಮೂಲಕ, ಬಿಜೆಪಿ ಮಹಿಳಾ ಮುಖ್ಯಮಂತ್ರಿಗಳ ಪರಂಪರೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ನ ಶೀಲಾ ದೀಕ್ಷಿತ್ ಅವರ 15 ವರ್ಷಗಳ ಆಳ್ವಿಕೆ ಸೇರಿದಂತೆ ದಿಲ್ಲಿ ಇನ್ನೂ ಇಬ್ಬರು ಮಹಿಳಾ ಮುಖ್ಯಮಂತ್ರಿಗಳನ್ನು ಈಗಾಗಲೇ ಕಂಡಿದೆ. ದಿಲ್ಲಿಯ ಇತರ ಮಹಿಳಾ ಮುಖ್ಯಮಂತ್ರಿಗಳು ಎಎಪಿಯ ಅತಿಶಿ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ಆಗಿದ್ದರು. ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನೇ ಕೆಡವಿದ ಪರ್ವೇಶ್ ವರ್ಮಾ ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಅವರಿಗೆ ನಿರಾಸೆಯಾಗಿದೆ. ಅವರು ಈಗ ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಇವರು ದಿಲ್ಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಮಾಜಿ ಸಂಸದ. ದ್ವೇಷ ಭಾಷಣಕ್ಕೆ ಕುಖ್ಯಾತಿ ಪಡೆದವರು. ಖಟ್ಟರ್ ಹಿಂದುತ್ವವಾದಿಯಾಗಿ ಗುರುತಿಸಿಕೊಂಡವರು. ಕೇಜ್ರಿವಾಲ್ ಗೆ ಸರಿಸಮಾನ ನಾಯಕರಿಲ್ಲ ಎಂಬ ಅಂದಾಜನ್ನು ಸುಳ್ಳಾಗಿಸಿ ಕೇಜ್ರಿವಾಲ್ ರನ್ನೇ ಸೋಲಿಸಿದ ಪರ್ವೇಶ್ ವರ್ಮಾ ಸಿಎಂ ಸ್ಥಾನಕ್ಕೆ ವರಿಷ್ಠರ ಮೊದಲ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಆದರೆ ಬಿಜೆಪಿ ವರಿಷ್ಠರ ಲೆಕ್ಕಾಚಾರ ಬೇರೇನೇ ಇತ್ತು. ರಾಜಧಾನಿಯ ಸಿಎಂ ಪಟ್ಟ ಎಲ್ಲ ಹಿರಿಯರನ್ನು ಬದಿಗೊತ್ತಿ ಮಹಿಳಾ ನಾಯಕಿಗೆ ಒಲಿದಿದೆ. ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 44 ಸ್ಥಾನಗಳ ಸ್ಪಷ್ಟ ಬಹುಮತವನ್ನು ಗಳಿಸುವ ಮೂಲಕ 27 ವರ್ಷಗಳ ನಂತರ ಬಿಜೆಪಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಮರಳಿದೆ. ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭವು ಫೆಬ್ರವರಿ 20 ರಂದು ರಾಮಲೀಲಾ ಮೈದಾನದಲ್ಲಿ ನಡೆಯಲಿದೆ.
ಕಲಬುರಗಿ | ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ
ಕಲಬುರಗಿ: ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ರಾಜ್ಯ ಘಟಕ ನಿರ್ಗತಿಕ ಮಹಿಳೆಯರ ಮತ್ತು ದೇವದಾಸಿಯರ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ರಾಜ್ಯದ 15 ಜಿಲ್ಲೆಗಳಲ್ಲಿ 1982 ಮತ್ತು 1994ರಲ್ಲಿ ದೇವದಾಸಿ ಮಹಿಳೆಯರನ್ನು ಸಮೀಕ್ಷೆ ಮಾಡುವಾಗ ತಾರತಮ್ಯವಾಗಿದ್ದು, ಇದನ್ನು ಸರಿಪಡಿಸಬೇಕು. ಸರ್ಕಾರ ಸಮೀಕ್ಷೆ (ಜಾತಿ ಗಣತಿ ಸಮೀಕ್ಷೆಯಲ್ಲಿ) ದೇವದಾಸಿ ಮಹಿಳೆಯರ ದೃಢೀಕರಣಮಂಡಿಸಬೇಕು 2ನೇ ಮರು ಸಮೀಕ್ಷೆ ಮಾಡುವಾಗ ದೇವದಾಸಿ ಮಹಿಳೆಯರಿಗೆ 2 ತಿಂಗಳ ಕಾಲಾವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದರು. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಅಂಬಣ್ಣ ಕಿಣಗಿಕರ್, ವಿಭಾಗೀಯ ಅಧ್ಯಕ್ಷೆ ಬಸಮ್ಮ ಆಲೂಕುಂಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಜೈರಾಜ ಕಿಣಗಿಕರ, ಜಿಲ್ಲಾ ಅಧ್ಯಕ್ಷೆ ಸರಸ್ವತಿ ಹೊಸಮನಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಾಲಾ ಕಲಿಕಾ ಸ್ಪರ್ಧೆಗಳು ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸಹಕಾರಿ: ಸತ್ಯನಾರಾಯಣ
ಕಲಬುರಗಿ: ಅಂತರ ಶಾಲಾ ಶೈಕ್ಷಣಿಕ ಕಲಿಕಾ ಸ್ಪರ್ಧೆಗಳು ವಿದ್ಯಾರ್ಥಿಗಳನ್ನು ಪ್ರದರ್ಶನ ನೀಡಲು, ಉತ್ತಮ ಸಾಧನೆ ಮಾಡಲು ಮತ್ತು ಆತ್ಮವಿಶ್ವಾಸವನ್ನು ಗಳಿಸಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಹಾಬಾದ ಸಿ ಆರ್ ಪಿ ಸತ್ಯನಾರಾಯಣ ರವರು ಹೇಳಿದರು. ಅವರು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಆಯೋಜಿಸಿದ್ದ 2025 ರ ಅಂತರ ಶಾಲಾ ಶೈಕ್ಷಣಿಕ ಕಲಿಕಾ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿರುವ, ಇದು ನಿಜಕ್ಕೂ ಕಲಿಕೆಯ ನಿಜವಾದ ಆಚರಣೆಯಾಗಿದೆ, ಇಲ್ಲಿ ಯಾವುದೇ ನಾಟಕ ವಾಗಲಿ, ನೃತ್ಯವಾಗಲಿ, ಫ್ಯಾಷನ್ ಶೋ ಆಯೋಜಿಸಿಲ್ಲದಿರುವದೆ ಶೈಕ್ಷಣಿಕ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯ ಗುರು ಅಲೀಮಾ ಜಾನ್ ಮಾತನಾಡಿ, ಶಾಲೆಗಳ ವಿವಿಧ ಕೌಶಲ್ಯ ಮತ್ತು ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಹೆಚ್ಚಾಗಿ ಶಿಕ್ಷಣಕ್ಕೆ ಪ್ರೋತ್ಸಾಹಿಸಿ ದಂತಾಗುತ್ತದೆ, ಅಂತರ ಶಾಲಾ ಕಲಿಕಾ ಸ್ಪರ್ಧೆಯು ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಮತ್ತು ಶೈಕ್ಷಣಿಕ ಸ್ಪರ್ಧೆ ಹಾಗೆ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ವೇದಿಕೆ ಮೇಲೆ ಪ್ರಾಚಾರ್ಯ ನಾನಾಗೌಡ ಹಿಪ್ಪರಗಿ, ಉಪನ್ಯಾಸಕ ಪೀರ ಪಾಷ, ನಾಗೇಂದ್ರ ಬೇಲೂರು, ಈರಣ್ಣ ಇಟಗಿ ಇದ್ದರು. ನಗರದ ಅಂತರ ಶಾಲಾ ಕಲಿಕಾ ವಿವಿಧ ಸ್ಪರ್ಧೆಗಳಾದ ಭಾಷಣ ಸ್ಫರ್ಧೆ, ಪ್ರಬಂಧ ಸ್ಪರ್ಧೆ, ಬರವಣಿಗೆ ಸುಧಾರಣೆ ಮತ್ತು ರಸ ಪ್ರಶ್ನೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು, ನಗರದ 10 ಪ್ರೌಢ ಶಾಲೆಗಳ 60 ವಿದ್ಯಾರ್ಥಿಗಳು ಕಲಿಕಾ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಶಾಲೆಯ ಚೇರ್ಮನ್ ಅನಿಲ ಜೋಸೆಫ್ ಜಾನ್, ರಾಕೇಶ ಬನಸೋಡೆ, ವಿಲ್ಸನ್ ಮಾರಿಷ, ಶಗುಪ್ತ, ಸಂಗೀತಾ ಸಜ್ಜನ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಾರ್ವತಿ ಸ್ವಾಗತಿಸಿದರು. ಸ್ಟೇಫಿ ನಿರೂಪಿಸಿದರು. ಆಶ್ಮಾ ಖಾನಂ ವಂದಿಸಿದರು.
ಜಮ್ಮ-ಕಾಶ್ಮೀರ: ಪೊಲೀಸ್ ಕಸ್ಟಡಿಯಲ್ಲಿ ಯುವಕ ಮೃತ್ಯು; ತನಿಖೆಗೆ ಆದೇಶಿಸಿದ ಮ್ಯಾಜಿಸ್ಟ್ರೇಟ್
ಜಮ್ಮು : ಜಮ್ಮು ಹಾಗೂ ಕಾಶ್ಮೀರದ ರಾಂಬಾನ್ ಜಿಲ್ಲೆಯಲ್ಲಿ ಯುವಕನೋರ್ವ ಪೊಲೀಸ್ ಕಸ್ಟಡಿಯಲ್ಲಿ ಅನಾರೋಗ್ಯಕ್ಕೆ ತುತ್ತಾದ ಬಳಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದಾನೆ. ಮೃತಪಟ್ಟ ಯುವಕನನ್ನು ಮುಹಮ್ಮದ್ ಅಬೀದ್ (27) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಬಟೋಟೆಯ ತೋಪಾಲ್ ಗ್ರಾಮದ ನಿವಾಸಿ ಮುಹಮ್ಮದ್ ಅಬೀದ್ ಸಾವಿನ ಹಿನ್ನೆಲೆಯಲ್ಲಿ ರಾಂಬಾನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಬಶೀರ್ ಉಲ್ ಹಕ್ ಚೌಧರಿ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಈ ತನಿಖೆ ಪೂರ್ಣಗೊಳಿಸಲು ಮೂರು ವಾರಗಳ ಕಾಲಾವಕಾಶ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಅಬಿದ್ನನ್ನು ಪೊಲೀಸರು ಕರೆದೊಯ್ದಿದ್ದರು. ಅಬೀದ್ ಲಾಕಪ್ ನಲ್ಲಿ ಮಂಗಳವಾರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಬಟೋಟೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಿದ್ ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಸ್ಗರ್ ಅವರನ್ನು ನೇಮಿಸಿದ್ದಾರೆ. ‘‘ವಿಚಾರಣಾ ಅಧಿಕಾರಿಯು ಅಬೀದ್ನ ಸಾವಿಗೆ ಕಾರಣ ಹಾಗೂ ಸಂದರ್ಭಗಳನ್ನು ಪರಿಶೀಲಿಸಬೇಕು ಹಾಗೂ ಹೊಣೆಗಾರರನ್ನು ನಿರ್ಧರಿಸಬೇಕು. ಅಲ್ಲದೆ, ಒಂದು ವಾರಗಳ ಒಳಗೆ ವರದಿ ಸಲ್ಲಿಸಬೇಕು’’ ಎಂದು ಮಂಗಳವಾರ ಸಂಜೆ ನೀಡಿದ ಆದೇಶದಲ್ಲಿ ಚೌಧರಿ ಹೇಳಿದ್ದಾರೆ.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಕೇಂದ್ರ ಉದ್ಘಾಟನೆ
ಕೊಣಾಜೆ: ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಮಾರ್ಗದರ್ಶನದಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದಲ್ಲಿ ಭಾರತೀಯ ಪಾರಂಪರಿಕ ಜ್ಞಾನ ವ್ಯವಸ್ಥೆಗಳ ಕೇಂದ್ರವನ್ನು ಬುಧವಾರ ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ಜ್ಞಾನ ಪರಂಪರೆ ವಿಶ್ವದಲ್ಲೆಡೆ ಹರಡಿದ್ದು ಅದು ಹೊಟ್ಟೆ ತುಂಬಿಸುವ ವಿದ್ಯೆ ಅಲ್ಲ ಅದು ಜ್ಞಾನದ ಹೃದಯವಾಗಿದೆ. ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಕೇಂದ್ರ ವನ್ನು ಸ್ಥಾಪಿಸುವುದರ ಮೂಲಕ ಭಾರತೀಯ ಜ್ಞಾನವನ್ನು ಉಳಿಸುವ, ಅಧ್ಯಯನ ಮತ್ತು ಪ್ರಾಯೋಗಿಕವಾಗಿ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ಮಹತ್ವದ ಹೆಜ್ಜೆಯನ್ನಿರಿಸಲಾಗಿದೆ ಎಂದು ಹೇಳಿದರು. ಉಪಕುಲಾಧಿಪತಿ ಡಾ. ಎಮ್. ಶಾಂತಾರಾಮ್ ಶೆಟ್ಟಿ ಮುಖ್ಯ ಭಾಷಣ ಮಾಡಿ 2020ರಲ್ಲಿ ಎನ್ ಇ ಪಿ ಜಾರಿಗೆ ಬಂತು. ನೂತನ ಶೈಕ್ಷಣಿಕ ವಿಧಾನದಿಂದ ಒಬ್ಬ ಉತ್ತಮ ಪ್ರಜೆಯನ್ನು ಸೃಷ್ಟಿಸುವುದೇ ಮೊದಲ ಆದ್ಯತೆ. ವೈದ್ಯಕೀಯ ಶಾಸ್ತ್ರದಲ್ಲಿ ಚರಕ, ಶುಶ್ರುತ, ಗಣಿತ ಶಾಸ್ತ್ರದ ದಿಕ್ಕನ್ನೇ ಬದಲಿಸಿದ ಅರ್ಯಭಟ, ಪತಂಜಲಿ, ಅರ್ಥಶಾಸ್ತ್ರದ ಚಾಣಕ್ಯ, ನಾಗಾರ್ಜುನ, ಆಚಾರ್ಯ ಕಪಿಲ, ಭಾಸ್ಕರ, ಕಣ್ವ ಮಹರ್ಷಿ ಅವರ ಸಂಶೋಧನೆ ಎಲ್ಲವೂ ಪ್ರಪಂಚಕ್ಕೆ ಪುರಾತನ ಜ್ಞಾನವನ್ನು ಸಾರಿದೆ. ಪುರಾತನ ನಳಂದ, ಮೊಹೆಂಜಾದಾರೋ, ತಕ್ಷಶಿಲ ವಿವಿಗಳು ನಮ್ಮ ಜ್ಞಾನ ಸಂಪತ್ತು. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಭಾರತೀಯ ಪಾರಂಪರಿಕ ಜ್ಞಾನ ಮತ್ತೆ ಸಾರುವ ಪ್ರಯತ್ನ ನಡೆಯುತ್ತಿದೆ ಎಂದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಮ್. ಎಸ್. ಮೂಡಿತ್ತಾಯ ಸ್ವಾಗತಿಸಿದರು. ಹಣಕಾಸು ಮತ್ತು ಯೋಜನಾ ನಿರ್ದೇಶಕ ರಾಜೇಂದ್ರ, ಕುಲಸಚಿವ ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು. ಡಾ.ಸಿ.ಎಸ್.ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಭಾರತೀಯ ಜ್ಞಾನ ಪದ್ದತಿ ಕೇಂದ್ರದ ನಿರ್ದೇಶಕ ಪ್ರೊ.ಸುಧೀರ್ ರಾಜ್ ವಂದಿಸಿದರು.
ಹುಂಜದಿಂದ ನಿದ್ರೆಗೆ ಕುತ್ತು: ಕೇರಳದ ವ್ಯಕ್ತಿಯ ದೂರು
ಪಟ್ಟಣಂತಿಟ್ಟ : ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಲ್ಲಿಕಲ್ ಗ್ರಾಮದಲ್ಲಿ ವಿಲಕ್ಷಣ ಕಾನೂನು ವಿವಾದವೊಂದು ಬೆಳಕಿಗೆ ಬಂದಿದೆ. ಇದು ಭೂಮಿ ಅಥವಾ ಹಣಕ್ಕೆ ಸಂಬಂಧಿಸಿದ್ದಲ್ಲ, ಬೆಳಗಿನ ಜಾವದಲ್ಲಿ ನಿರಂತರವಾಗಿ ಕೂಗುವ ಹುಂಜದ ಕುರಿತಾಗಿದೆ. ನೆರೆಮನೆಯಾತ ಸಾಕಿದ್ದ ಹುಂಜ ನಸುಕಿನ ಮೂರು ಗಂಟೆಗೆ ಕೂಗಲು ಆರಂಭಿಸುತ್ತಿದ್ದರಿಂದ ಗ್ರಾಮದ ನಿವಾಸಿ, ಹಿರಿಯ ನಾಗರಿಕ ರಾಧಾಕೃಷ್ಣನ್ ಕುರುಪ್ ಅವರ ನೆಮ್ಮದಿ ಹಾಳಾಗಿ ನಿದ್ರೆ ಮಾಡುವುದೂ ಕಷ್ಟವಾಗಿತ್ತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುರುಪ್ ಈ ತೋದರೆಯನ್ನು ಇನ್ನಷ್ಟು ಸಹಿಸಲು ಸಾಧ್ಯವಾಗದೆ ತಾನೇ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅದರಂತೆ ಮಧ್ಯಪ್ರವೇಶಿಸುವಂತೆ ಮತ್ತು ಹುಂಜದ ಅಸಹನೀಯ ಕೂಗಿನಿಂದ ತನ್ನನ್ನು ಪಾರು ಮಾಡುವಂತೆ ಕೋರಿ ಆಡೂರು ಕಂದಾಯ ವಿಭಾಗ ಕಚೇರಿಗೆ ವಿಧ್ಯುಕ್ತ ದೂರು ಸಲ್ಲಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ತನಿಕೆಯನ್ನು ಆರಂಭಿಸಿದ್ದರು. ಹುಂಜ ಎಲ್ಲ ಸಮಸ್ಯೆಗೂ ಮೂಲ ಎನ್ನುವುದನ್ನು ಕಂಡುಕೊಂಡ ಅವರು ಕುರುಪ್ ಮತ್ತು ಅವರ ನೆರೆಮನೆ ನಿವಾಸಿ ಅನಿಲ್ ಕುಮಾರ್ ಅವರನ್ನು ಕರೆಸಿ ಚರ್ಚಿಸಿದ ಬಳಿಕ ಪರಿಸ್ಥಿತಿಯನ್ನು ಪ್ರತ್ಯಕ್ಷ ತಿಳಿದುಕೊಳ್ಳಲು ಸ್ಥಳಕ್ಕೆ ಭೇಟಿ ನೀಡಿದ್ದರು. ಕುಮಾರ ತನ್ನ ಹುಂಜಗಳನ್ನು ಮನೆಯ ಮೇಲಂತಸ್ತಿನಲ್ಲಿ ಇರಿಸಿದ್ದು, ಅವುಗಳ ಜೋರಾದ ಮತ್ತು ನಿರಂತರ ಕೂಗುವಿಕೆ ನಿಜಕ್ಕೂ ಕುರುಪ್ ನಿದ್ರೆಗೆ ಅಡ್ಡಿಯನ್ನುಂಟು ಮಾಡುತ್ತಿದೆ ಎನ್ನುವುದನ್ನು ದೃಢಪಡಿಸಿಕೊಂಡ ಅಧಿಕಾರಿಗಳು, ಶಬ್ದವನ್ನು ಕಡಿಮೆ ಮಾಡಲು 14 ದಿನಗಳಲ್ಲಿ ಹುಂಜಗಳನ್ನು ಮೇಲಂತಸ್ತಿನಿಂದ ಮನೆಯ ದಕ್ಷಿಣ ಭಾಗಕ್ಕೆ ಸ್ಥಳಾಂತರಿಸುವಂತೆ ಕುಮಾರ್ಗೆ ಆದೇಶಿಸಿದ್ದಾರೆ. ಇದು ಈ ವಿಲಕ್ಷಣ ವಿವಾದಕ್ಕೆ ವಿಧ್ಯುಕ್ತ ಅಂತ್ಯವನ್ನು ಹಾಡಿದ್ದು, ಕುರುಪ್ ಅವರಲ್ಲಿ ಸುಖನಿದ್ರೆಯ ಭರವಸೆ ಮೂಡಿಸಿದೆ.
ತೆಲಂಗಾಣ: ಹೈಕೋರ್ಟ್ನಲ್ಲಿ ವಾದಿಸುತ್ತಿದ್ದ ವಕೀಲ ಹೃದಯಾಘಾತದಿಂದ ಮೃತ್ಯು
ಹೈದರಾಬಾದ್: ಪ್ರಕರಣವೊಂದರಲ್ಲಿ ವಾದಿಸುತ್ತಿದ್ದ ಹಿರಿಯ ವಕೀಲರೋರ್ವರು ಹೃದಯಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ತೆಲಂಗಾಣ ಉಚ್ಛ ನ್ಯಾಯಾಲಯದಲ್ಲಿ ಸಂಭವಿಸಿದೆ. ಪಸ್ನೂರು ವೇಣುಗೋಪಾಲ ರಾವ್(66) ಅವರು ಅಪರಾಹ್ನ 12:30ರ ಸುಮಾರಿಗೆ ನ್ಯಾಯಾಧೀಶ ಲಕ್ಷ್ಮೀನಾರಾಯಣ ಆಲಿಶೆಟ್ಟಿಯವರ ಮುಂದೆ ವಾದ ಮಂಡಿಸುತ್ತಿದ್ದಾಗ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಸಹ ವಕೀಲರು ತಕ್ಷಣವೇ ಅವರಿಗೆ ಸಿಪಿಆರ್ ನಡೆಸಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತೆಲಂಗಾಣ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ರೆಡ್ಡಿಯವರು ಸುದ್ದಿಸಂಸ್ಥೆಗೆ ತಿಳಿಸಿದರು. ರಾವ್ 1998ರಿಂದಲೂ ತೆಲಂಗಾಣ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದರು
ಸಿಎಂ ಆದಿತ್ಯನಾಥ್ ಅವರಿಂದ ಶಿಕ್ಷಣದ ನಿರ್ಲಕ್ಷ್ಯ: ಅಖಿಲೇಶ್ ಯಾದವ್
ಹೊಸದಿಲ್ಲಿ: ಉರ್ದು ಭಾಷೆಯ ಕುರಿತ ಹೇಳಿಕೆಗೆ ಸಂಬಂಧಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಕಾರ್ಯ ನಿರ್ವಹಿಸದ ಶಾಲೆಗಳನ್ನು ಹೊಂದಿರುವ ರಾಜ್ಯ ಉತ್ತರಪ್ರದೇಶ ಎಂದು ಅವರು ಹೇಳಿದ್ದಾರೆ. ಶಿಕ್ಷಣ ಹಾಗೂ ರಾಜ್ಯದ ಪ್ರಗತಿಯ ಕುರಿತು ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡ ಅಖಿಲೇಶ್ ಯಾದವ್, ದೇಶದಲ್ಲಿ 11 ಲಕ್ಷ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಅದರಲ್ಲಿ ಹೆಚ್ಚಿನ ಶಾಲೆಗಳು ಉತ್ತರಪ್ರದೇಶದಲ್ಲಿವೆ ಎಂಬುದನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರು ಭಾಷೆ ಹಾಗೂ ಪ್ರಗತಿಗಾಗಿ ಏನನ್ನೂ ಮಾಡಿಲ್ಲ ಎಂಬುದು ಇದರಿಂದ ಸ್ಪಷ್ಟ. ನೀವು ದಾಖಲೆಗಳನ್ನು ಪರಿಶೀಲಿಸಿದರೆ, 11 ಲಕ್ಷ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಎಷ್ಟು ಪ್ರೌಢ ಶಾಲೆಗಳು ಬಾಗಿಲು ತೆರೆದಿವೆ? ಅದು ಪಾಲಿಟೆಕ್ನಿಕ್, ಐಐಟಿ ಅಥವಾ ಎಂಜಿನಿಯರಿಂಗ್ ಆಗಿರಲಿ. ಅದನ್ನು ಎಷ್ಟು ಸರಕಾರ ನೋಡಿಕೊಳ್ಳುತ್ತಿದೆ. ಹೀಗಾದರೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ. ಆದಿತ್ಯನಾಥ್ ಅವರು ಉದ್ದೇಶಪೂರ್ವಕವಾಗಿ ಈ ಹಿಂದೂ-ಮುಸ್ಲಿಂ ವಿಷಯವನ್ನು ಎತ್ತುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಇನ್ನೋರ್ವ ನಾಯಕ ಮಾತಾ ಪ್ರಸಾದ್ ಪಾಂಡೆ ಆರೋಪಿಸಿದ್ದಾರೆ. ಉರ್ದು ಕೂಡ ಒಂದು ಭಾಷೆ. ವಿಧಾನ ಸಭೆಯಲ್ಲಿ ಇನ್ನೊಂದು ದೃಷ್ಟಿಕೋನದಲ್ಲಿ ಈ ವಿಷಯವನ್ನು ಎತ್ತಲಾಗಿದೆ. ಆದರೆ, ಅವರು (ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್) ಹಿಂದೂ ಮುಸ್ಲಿಂ ಕಾರ್ಯ ಸೂಚಿಯನ್ನು ಮುಂದುವರಿಸುವ ಕುರಿತು ಮಾತನಾಡಿದ್ದಾರೆ. ವಿಧಾನ ಸಭೆಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದನ್ನು ನಾವು ವಿರೋಧಿಸಿದ್ದೇವೆ. ಆದರೆ, ಹೇಗೋ ಚರ್ಚೆ ಉರ್ದು ಭಾಷೆಯತ್ತ ತಿರುಗಿತು ಎಂದು ಅವರು ಹೇಳಿದ್ದಾರೆ. ಭೋಜಪುರಿ ಹಾಗೂ ಅವಧಿ ಭಾಷೆಯನ್ನು ವಿರೋಧಿಸುತ್ತಿರುವುದಕ್ಕೆ ಯೋಗಿ ಆದಿತ್ಯನಾಥ್ ಮಂಗಳವಾರ ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಮಾಜವಾದಿ ಪಕ್ಷ ಮಕ್ಕಳನ್ನು ಮೌಲವಿಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದರು. ಪ್ರಮುಖ ಪ್ರತಿಪಕ್ಷವಾಗಿರುವ ಸಮಾಜವಾದಿ ಪಕ್ಷ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಸಮಾಜವಾದಿ ಪಕ್ಷದ ನಾಯಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ. ಆದರೆ, ಉರ್ದು ಭಾಷೆಗೆ ಆಗ್ರಹಿಸುತ್ತಾರೆ ಎಂದು ಅವರು ಹೇಳಿದ್ದರು.
ಮೊದಲ ಬಾರಿಯ ಶಾಸಕಿ, ಯಾರೀಕೆ ದಿಲ್ಲಿಯ 4ನೇ ಮಹಿಳಾ ಸಿಎಂ ರೇಖಾ ಗುಪ್ತಾ? ಏನಿವರ ಹಿನ್ನೆಲೆ?
ಈ ಬಾರಿಯ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲೇ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದ ರೇಖಾ ಗುಪ್ತಾ ಅವರನ್ನು ಬಿಜೆಪಿ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆ. ಶಾಲಿಮಾರ್ಬಾಗ್ನಿಂದ ಸ್ಪರ್ಧಿಸಿದ್ದ ಇವರು ಎಎಪಿ ಬಂದನಾ ಕುಮಾರಿ ಅವರನ್ನು ಬರೋಬ್ಬರಿ 29,595 ಮತಗಳಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ಈ ಹಿಂದೆ ಇವರು ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು.
ಕೇರಳ: ಫುಟ್ಬಾಲ್ ಪಂದ್ಯ ವೀಕ್ಷಕರ ಮೇಲೆ ಬಿದ್ದ ಪಟಾಕಿ; 50ಕ್ಕೂ ಅಧಿಕ ಮಂದಿಗೆ ಗಾಯ
ಮಲಪ್ಪುರಂ: ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದವರ ಮೇಲೆ ತಪ್ಪಾಗಿ ಸಿಡಿದ ಪಟಾಕಿಗಳು ಬಿದ್ದು 50ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಲಪ್ಪುರಂನಲ್ಲಿ ಮಂಗಳವಾರ ಸಂಭವಿಸಿದೆ. ಇವರಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯುನೈಟೆಡ್ ಎಫ್ಸಿ ನೆಲ್ಲಿಕೂತು ಹಾಗೂ ಕೆಎನ್ಜಿ ಮಾವೂರು ನಡುವಿನ ಸೆವೆನ್ಸ್ ಫುಟ್ಬಾಲ್ನ ಅಂತಿಮ ಪಂದ್ಯದ ವೇಳೆ ಸಿಡಿಸಿದ ಪಟಾಕಿ ಬಿದ್ದು ಈ ಅವಘಡ ಸಂಭವಿಸಿದೆ. ಈ ಅವಘಢದ ಸಂದರ್ಭ ಕ್ರೀಡಾಂಗಣದಲ್ಲಿ ಸಾವಿರಾರು ವೀಕ್ಷಕರು ಇದ್ದರು. ಘಟನೆಗೆ ಸಂಬಂಧಿಸಿ ಪುಟ್ಬಾಲ್ ಪಂದ್ಯದ ಆಯೋಜಕರ ವಿರುದ್ಧ ಪೊಲೀಸರು ಬುಧವಾರ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಾಯಗೊಂಡ ವ್ಯಕ್ತಿಗಳ ಚಿಕಿತ್ಸೆಯ ವೆಚ್ಚವನ್ನು ತಾವು ಭರಿಸುವುದಾಗಿ ಪುಟ್ಬಾಲ್ ಪಂದ್ಯದ ಆಯೋಜಕರು ತಿಳಿಸಿದ್ದಾರೆ.
Rekha Gupta: ದೆಹಲಿ ಸಿಎಂ ಆಗಿ ಆಯ್ಕೆಯಾದ ರೇಖಾ ಗುಪ್ತಾ ಯಾರು, ಅವರ ಹಿನ್ನೆಲೆ ಏನು?
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರು ಆಯ್ಕೆಯಾಗಿದ್ದು. ಈ ಮೂಲಕ ದೆಹಲಿಗೆ ಮತ್ತೊಮ್ಮೆ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸುದೀರ್ಘ ಚರ್ಚೆಯ ನಂತರ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ದೆಹಲಿಯಲ್ಲಿ ಬರೋಬ್ಬರಿ 27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದ್ದು. ಅತ್ಯಂತ ಜಾಣ್ಮೆಯಿಂದ ಹೆಜ್ಜೆಯನ್ನು ಇರಿಸಿದೆ. ರೇಖಾ ಗುಪ್ತಾ ಅವರ ಹಿನ್ನೆಲೆ ಏನು ಹಾಗೂ ಅವರು ಯಾರು ಎನ್ನುವ ವಿವರ ಇಲ್ಲಿದೆ.
ಫೆ.21ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಉಡುಪಿ, ಫೆ.19: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಶಾಖೆ, ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು, ಸಿಎಸ್ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಮತ್ತು ಆಯ್ದ ಬಡ ಫಲಾನುಭವಿಗಳಿಗೆ ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ ಫೆಬ್ರವರಿ 21ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನುಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಲಿದ್ದು, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಲೂಯಿಸ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಎಸ್ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ದೇರಳಕಟ್ಟೆ ಯೆನಪೋಯ ಕಾಲೇಜಿನ ಡಾ.ರಚನಾ ಪ್ರಭು, ಹಿರಿಯ ನಾಗರಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ. ನಾಗರಾಜ್ ರಾವ್, ರೆಡ್ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಲಯನ್ ವಿ.ಜಿ ಶೆಟ್ಟಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಮತ್ತು ಸಾರ್ವಜನಿಕರಿಗೆ ಉಚಿತ ಸ್ತ್ರೀರೋಗ ಮ್ಯಾಮೊಗ್ರಾಫಿ ಪರೀಕ್ಷೆ, ಪ್ಯಾಪ್ ಸ್ಮೀಯರ್ ಪರೀಕ್ಷೆ (ಗರ್ಭ ಕೋಶ ಕಂಠ ಪರೀಕ್ಷೆ - ಸುಸಜ್ಜಿತ ಹೈಟೆಕ್ ಮೊಬೈಲ್ ಬಸ್ಸಿನಲ್ಲಿ ತಪಾಸಣೆ), ಹೃದಯ ಸಂಬಂಧಿತ ಕಾಯಿಲೆಗಳು, ಮಧುಮೇಹ ತಪಾಸಣೆ (ಖಾಲಿ ಹೊಟ್ಟೆ ಮತ್ತು ಆಹಾರ ಸೇವಿಸಿದ ನಂತರ), ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ, ಕೀಲು ಮತ್ತು ಎಲುಬು, ದಂತ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು. ಶಿಬಿರದಲ್ಲಿ ಮಿಷನ್ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ದೀಪಾ ವೈ. ರಾವ್, ಡಾ. ಪವಿತ್ರ, ಡಾ. ಅಕ್ಷತಾ, ನೇತ್ರ ತಜ್ಞರಾದ ಡಾ. ಅಭಿನಯ್ ಅಶೋಕ್, ಕೀಲು ಮತ್ತು ಎಲುಬು ತಜ್ಞರಾದ ಡಾ. ಅರ್ಜುನ್ ಬಳ್ಳಾಲ್, ಸಾಮಾನ್ಯ ಆರೋಗ್ಯ ತಜ್ಞರಾದ ಡಾ. ಧನಂಜಯ ಭಟ್ ಹಾಗೂ ಡಾ. ಗಣೇಶ್ ಕಾಮತ್, ಮತ್ತು ದಂತ ತಜ್ಞರಾದ ಡಾ.ನಾಗೇಶ್ ನಾಯಕ್, ಡಾ. ಸಾರಿಕಾ ಭಾಗವಹಿಸಿ ಸಾರ್ವಜನಿಕರ ತಪಾಸಣೆ ನಡೆಸಲಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ:0820-2532222, 8310311448ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಯುವಜನರು ಶಿವಾಜಿ ಮಹಾರಾಜರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಆರ್.ಬಿ. ಜಗದಾಳೆ
ಕಲಬುರಗಿ; ಶಿವಾಜಿ ಮಹಾರಾಜರಂತಹ ರಾಜರಿಲ್ಲ, ಅವರ ದೇಶಭಕ್ತಿ, ರಾಷ್ಟ್ರಪ್ರೇಮ, ಯುದ್ಧನೀತಿ, ಧೈರ್ಯ, ಶೌರ್ಯ ಜಾತ್ಯಾತೀತ ಮನೋಭಾವನೆ ಇತರೇ ರಾಜರಲ್ಲಿ ಕಾಣುವುದು ತೀರ ಕಡಿಮೆ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಅಧ್ಯಕ್ಷ ಆರ್.ಬಿ. ಜಗದಾಳೆ ಹೇಳಿದರು. ಬುಧುವಾರ ಪ್ರಕಾಶ ಮಾಲ್ ಹತ್ತಿರದಲ್ಲಿರುವ ಮಯಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಪಂಚಾಯತ್ ಕಲಬುರಗಿ ಇವರು ಸಂಯುಕ್ತಾಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡಿಮಾತನಾಡಿ, ಶಿವಾಜಿ ಮಹಾರಾಜರು ಪ್ರಸುತ್ತ ದಿನಗಳಲ್ಲಿ ಹುಟ್ಟು ಹೋರಾಟಗಾರರಾಗಿದ್ದು, ಮಹಾರಾಜರ ಆದರ್ಶ ತತ್ವಗಳನ್ನು ಇಂದಿನ ಯುವ ಜನಾಂಗವೂ ಅಳವಡಿಸಿಕೊಳ್ಳುವ ಅಗತ್ಯವಿದೆಯೆಂದು ಹೇಳಿದರು. ರಾಜ್ಯ ಕಾನೂನು ಸಲಹೆಗಾರ ಕೆ.ಕೆ.ಎಂ.ಪಿ. ಬೆಂಗಳೂರುಸೂರ್ಯಕಾಂತ ಕದಮ್ಮ ಮಾತನಾಡಿ, ಛತ್ರಪತಿ ಶಿವರಾಜ ಮಹಾರಾಜರ 398 ನೇ ಜಯಂತ್ಯೋತ್ಸವ ಇಡಿದೇಶದಲ್ಲಿ ಆಚರಣೆ ಮಾಡುತ್ತಿದ್ದೇವೆ ಮರಾಠ ಸಮುದಾಯದಲ್ಲಿ ಬಹಳಷ್ಟು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದವರಿದ್ದಾರೆ ಮಹಾನ ವ್ಯಕ್ತಿಯ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಸಮಾಜದ ಜನರನ್ನು ಮುಖ್ಯವಾಹಿನಿಗೆ ತರುವುದರ ಮೂಲಕ ಮರಾಠ ಸಮುದಾಯವರು ಆರ್ಥಿಕವಾಗಿ ಸ್ವವಲಂಬಿಗಳಾಗುವಂತೆ ಮಾಡಬೇಕೆಂದು ತಿಳಿಸಿದರು. ಯಾವುದೇ ಮೀಸಲಾತಿ ಸೌಲಭ್ಯ ಇಲ್ಲ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ವಸತಿ ನಿಲಯ ಇಲ್ಲವಸತಿ ಶಾಲೆಗಳು ಇರುವುದಿಲ್ಲ ಸರ್ಕಾರ ಇಂತಹ ಸೌಲಭ್ಯಗಳನ್ನು ನಮ್ಮ ಸಮುದಾಯ ಒದಗಿಸಬೇಕೆಂದರು. ಗೌರವ ಅಧ್ಯಕ್ಷ ಡಾ. ದಿನಕರ್ ಮೊರೆ, ಅವರು ಮಾತನಾಡಿ,ಎಲ್ಲ ಜನಾಂಗದವರಿಗೆ ಸಮನ್ವಯ ದೃಷ್ಠಿಯಿಂದ ಕಂಡ ಮಹಾನವ್ಯಕ್ತಿ ಶಿವಾಜಿ ಮಹಾರಾಜರು ಬದಕಲು ಅವಕಾಶ ನೀಡಿದವರು ಅನ್ಯಾಯದ ವಿರುದ್ಧ ಹೋರಾಡಿದ ಮಹಾನ ವ್ಯಕ್ತಿ,ಶಿವಾಜಿ ಮಹಾರಾಜ ಇವತ್ತಿಗೂ ಶ್ರೇಷ್ಠವ್ಯಕ್ತಿ ಎನಿಸಿಕೊಂಡರು ಎಂದರು. ದುರ್ಗಾ ಪ್ರಸಾದ ಮಹಾರಾಜ ಉಪನ್ಯಾಸ ನೀಡಿ ಆರ್ಶೀವಚನ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆಯ, ಪಂಪಯ್ಯ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ದತ್ತಪ್ಪ ಸಾಗನೂರ, ಮರಾಠಾ ಸಮಾಜದ ಕಾರ್ಯದರ್ಶಿ ರಾಜು ಕಾಕಡೆ, ಖಜಾಂಚಿ ರಮೇಶ, ಶಿವಾಜಿ ಮಹಾರಾಜರ ವೇಷಧಾರಿ ವಿಶಾಲ ಪವಾರ. ಸಮಾಜದ ಮುಖಂಡರಾದ ವೆಂಕಟೇಶ ಮಾನೆ,ಸುರೇಶ, ಸುಭಾಷ ಚೌಧವ, ಕಿಶೋರ ಮಾನಿ, ರಾಜುಪಾಟೀಲ, ಪ್ರತಾಪ ಕಾಕಡೆ ಹಾಗೂ ಮಹಿಳೆಯರು ಇದ್ದರು. ಮೆರವಣಿಗೆಯೂ ಹುಮನ್ನಾಬಾದ ಬೇಸನಿಂದ ತಹಶೀಲ್ ಆಫೀಸ್ನಿಂದ ಮಯಾಮಂದಿರಲ್ಲಿ ಮುಕ್ತಾಯಗೊಂಡಿತು.
ಭಾಷಾ ಸಮರಕ್ಕೆ ತಮಿಳುನಾಡು ಸಿದ್ಧ: ಉದಯ ನಿಧಿ ಸ್ಟಾಲಿನ್
ಚೆನ್ನೈ: ಕೇಂದ್ರದ ತ್ರಿ ಭಾಷಾ ನೀತಿ ಹಾಗೂ ಹಿಂದಿ ಹೇರಿಕೆಯ ಕುರಿತಂತೆ ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ಹಾಗೂ ಬಿಜೆಪಿ ನಡುವೆ ವಾಗ್ಯುದ್ಧ ತೀವ್ರಗೊಂಡಿದೆ. ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಹಿಂದಿಯನ್ನು ಸ್ವೀಕರಿಸುವ ರಾಜ್ಯಗಳು ತಮ್ಮ ಮಾತೃ ಭಾಷೆಯನ್ನು ಕಳೆದುಕೊಳ್ಳುತ್ತವೆ. ತನ್ನ ರಾಜ್ಯ ‘ಭಾಷಾ ಸಮರ’ಕ್ಕೆ ಸಿದ್ಧವಾಗಿದೆ ಎಂದು ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ. ಕೇಂದ್ರ ಹಣಕಾಸು ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ‘‘ಬ್ಲಾಕ್ಮೇಲ್’’ ಎಂದು ತರಾಟೆಗೆ ತೆಗೆದುಕೊಂಡಿರುವುದನ್ನು ಅವರು ಉದಯನಿಧಿ ಸ್ಟಾಲಿನ್ ಪುನರುಚ್ಛರಿಸಿದ್ದಾರೆ. ಶಿಕ್ಷಣಕ್ಕೆ ಕೇಂದ್ರ ಸರಕಾರದಿಂದ ಬರಬೇಕಾಗಿರುವ ಹಣ ಹಾಗೂ ತೆರಿಗೆಯ ಪಾಲಿನಿಂದ ಬರಬೇಕಾಗಿರುವ ಹಣವನ್ನು ಮಾತ್ರ ರಾಜ್ಯ ಸರಕಾರ ಕೇಳುತ್ತಿದೆ ಎಂದು ಅವರು ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳದೇ ಇದ್ದರೆ, ಸಮಗ್ರ ಶಿಕ್ಷಾ ಅಭಿಯಾನಕ್ಕಿರುವ ಸುಮಾರು 2,400 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನ್ ಘೋಷಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನ ನಾಯಕರು ಈ ವಾಗ್ದಾಳಿ ನಡೆಸಿದ್ದಾರೆ. ‘‘ನಾವು ಕೇವಲ ನಮ್ಮ ತೆರಿಗೆಯ ಹಣ ಹಾಗೂ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಾವು ನ್ಯಾಯಯುತವಾಗಿ ನಮ್ಮ ಹಣವನ್ನು ಕೇಳುತ್ತಿದ್ದೇವೆ. ತ್ರಿ ಭಾಷಾ ನೀತಿಯನ್ನು ನಾವು ಸ್ವೀಕರಿಸಿದರೆ ಮಾತ್ರವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಧರ್ಮೇಂದ್ರ ಪ್ರದಾನ್ ಬಹಿರಂಗವಾಗಿ ಬೆದರಿಕೆ ಒಡ್ಡಿದ್ದಾರೆ. ಆದರೆ, ನಾವು ನಿಮ್ಮ ಅಪ್ಪನ ಹಣ ಕೇಳುತ್ತಿಲ್ಲ. ನಾವು ಭಿಕ್ಷೆ ಬೇಡುತ್ತಿಲ್ಲ’’ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ‘‘ನಾವು ಬಾಕಿ ಪಾಲನ್ನು ಕೇಳುತ್ತಿದ್ದೇವೆ. ಒಂದು ವೇಳೆ ನಮಗೆ ಬೆದರಿಕೆ ಒಡ್ಡಬಹುದು ಎಂದು ನೀವು (ಬಿಜೆಪಿ) ಭಾವಿಸಿದರೆ, ಅದು ತಮಿಳುನಾಡಿನಲ್ಲಿ ಎಂದಿಗೂ ನಡೆಯಲಾರದು. ತಮಿಳುನಾಡು ಜನರು ಗಮನಿಸುತ್ತಿದ್ದಾರೆ. ಅವರು ಸೂಕ್ತ ಸಮಯದಲ್ಲಿ ಪ್ರತ್ಯುತ್ತರ ನೀಡಬಹುದು’’ ಎಂದು ಚೆನ್ನೈಯಲ್ಲಿ ನಡೆದ ಡಿಎಂಕೆ ನೇತೃತ್ವದ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಹೇಳಿದರು. ಇದು ದ್ರಾವಿಡ ನೆಲ. ಪೆರಿಯಾರ್ ಅವರ ಭೂಮಿ ಎಂದು ಉದಯನಿಧಿ ಸ್ಟಾಲಿನ್ ಬಿಜೆಪಿಗೆ ನೆನಪಿಸಿದರು.
ಎಲ್ಲ ಶಾಲೆಗಳಿಗೆ ಸಮಗ್ರ ಭಾಷಾ ನೀತಿಯನ್ನು ರೂಪಿಸುವಂತೆ ಒತ್ತಾಯ
ಬೆಂಗಳೂರು : ಸರಕಾರ ಹಾಗೂ ಶಿಕ್ಷಣ ಸಚಿವರು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಬದಲು ಎಲ್ಲ ಶಾಲೆಗಳಿಗೆ ಅನ್ವಯವಾಗುವ ಒಂದು ಸಮಗ್ರ ಭಾಷಾ ನೀತಿಯನ್ನು ರೂಪಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ Niranjanaradhya V.P. ಒತ್ತಾಯಿಸಿದ್ದಾರೆ. ಬುಧವಾರ ಪ್ರಕಟನೆ ಹೊರಡಿಸಿರುವ ಅವರು, ಮಾತೃ ಭಾಷಾ ಕಲಿಕಾ ವಿಷಯವನ್ನು ತಂದೆ-ತಾಯಿ ವಿವೇಚನೆಗೆ ಬಿಡಲು ಹೇಗೆ ಸಾಧ್ಯ. 2014ರಲ್ಲಿ ನ್ಯಾಯಾಲಯವು ಈ ಬಗೆಯ ಅವೈಜ್ಞಾನಿಕ ಅಂಶವನ್ನು ಆಧರಿಸಿ ತೀರ್ಪು ನೀಡಿತ್ತು. ಪಾಲಕರು ತಮ್ಮ ತಪ್ಪು ಕಲ್ಪನೆಯ ಭಾಗವಾಗಿ ಆಂಗ್ಲ ಭಾಷೆ ಅಮಲಿನಿನಲ್ಲಿದ್ದಾರೆ ಎಂದಿದ್ದಾರೆ. ಪಾಲಕರು ತಮ್ಮ ತಪ್ಪು ತಿಳುವಳಿಕೆಯಿಂದ, ಒಂದು ರೀತಿಯಲ್ಲಿ ಅವರ ಮಕ್ಕಳ ಪ್ರತಿಭೆ ಹಾಗೂ ಸೃಜನಾತ್ಮಕತೆಯನ್ನು ಅವರೇ ಚಿವುಟುತ್ತಿದ್ದಾರೆ. ಕನಿಷ್ಟ ಶಾಲಾ ಹಂತದಲ್ಲಿಯಾದರೂ, ಕಲಿಕಾ ಮಾಧ್ಯಮ ಮಗುವಿನ ಮಾತೃ ಭಾಷೆಯಾಗಿರಬೇಕು. ಜಗತ್ತಿನ ಹಲವು ರಾಷ್ಟ್ರಗಳು ಇದನ್ನು ಜಾರಿಗೆ ತಂದಿವೆ ಎಂದು ಅವರು ತಿಳಿಸಿದರು.
ಯಾವುದೇ ಹೇಳಿಕೆ, ಸುದ್ದಿ, ಅಭಿಪ್ರಾಯ ಪ್ರಕಟಿಸುವ ಮುನ್ನ ಮಾಧ್ಯಮಗಳು ಅತ್ಯಂತ ಎಚ್ಚರಿಕೆ ವಹಿಸಬೇಕು: ಸುಪ್ರೀಂ
ಹೊಸದಿಲ್ಲಿ: ಮಾಧ್ಯಮಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಯಾವುದೇ ಹೇಳಿಕೆಗಳು, ಸುದ್ದಿಗಳು ಅಥವಾ ಅಭಿಪ್ರಾಯಗಳನ್ನು ಪ್ರಕಟಿಸುವ ಮುನ್ನ ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯನ್ನು ವಹಿಸಬೇಕು ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅತ್ಯುನ್ನತವಾಗಿದೆ ಎಂದು ಅಭಿಪ್ರಾಯಿಸಿದೆ. ಮಂಗಳವಾರ ಮಾನನಷ್ಟ ಪ್ರಕರಣವೊಂದರ ವಿಚರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು, ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮಾಧ್ಯಮಗಳ ಶಕ್ತಿ ಮಹತ್ವದ್ದಾಗಿದೆ. ಪತ್ರಿಕಾರಂಗವು ಗಮನಾರ್ಹ ವೇಗದಲ್ಲಿ ಸಾರ್ವಜನಿಕರ ಭಾವನೆಗಳನ್ನು ಪ್ರಭಾವಿಸುವ ಮತ್ತು ಗ್ರಹಿಕೆಗಳನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಒತ್ತಿ ಹೇಳಿತು. ಬಿಡ್ ಆ್ಯಂಡ್ ಹ್ಯಾಮರ್ ಸಂಸ್ಥೆಯು ಹರಾಜು ಮಾಡಲಿರುವ ಕೆಲವು ವರ್ಣಚಿತ್ರ ಕಲಾಕೃತಿಗಳ ಸತ್ಯಾಸತ್ಯತೆಯ ಕುರಿತು ಮಾನಹಾನಿಕರ ವರದಿಯನ್ನು ಪ್ರಕಟಿಸಿದ ಆರೋಪದಲ್ಲಿ ಇಂಗ್ಲಿಷ್ ದೈನಿಕ ಟೈಮ್ಸ್ ಆಫ್ ಇಂಡಿಯಾದ ಸಂಪಾದಕೀಯ ನಿರ್ದೇಶಕರು ಮತ್ತು ಇತರ ಪತ್ರಕರ್ತರ ವಿರುದ್ಧ ದಾಖಲಿಸಲಾಗಿದ್ದ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ‘ಭಾರತೀಯ ಸಂವಿಧಾನದ ವಿಧಿ 19(1)(ಎ) ಅಡಿ ಖಾತರಿಪಡಿಸಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅತ್ಯುನ್ನತವಾಗಿದೆ ಎಂದು ನಾವು ಒತ್ತಿ ಹೇಳುವುದು ಅಗತ್ಯವಾಗಿದೆ. ಇದೇ ವೇಳೆ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರು, ವಿಶೇಷವಾಗಿ ಪ್ರಮುಖ ಹುದ್ದೆಗಳಲ್ಲಿರುವ ವ್ಯಕ್ತಿಗಳು,ಲೇಖಕರು ಮತ್ತಿತರರು ಯಾವುದೇ ಹೇಳಿಕೆಗಳು, ಸುದ್ದಿಗಳು ಅಥವಾ ಅಭಿಪ್ರಾಯಗಳನ್ನು ಪ್ರಕಟಿಸುವ ಮುನ್ನ ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯನ್ನು ವಹಿಸಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿರುವ ಪೀಠವು, ಇಂಗ್ಲಿಷ್ ಲೇಖಕ ಬುಲ್ವರ್ ಲಿಟ್ಟನ್ ಅವರ ‘ಖಡ್ಗಕ್ಕಿಂತ ಲೇಖನಿ ಬಲಿಷ್ಠ ’ಎಂಬ ಹೇಳಿಕೆಯನ್ನು ಉಲ್ಲೇಖಿಸಿದೆ. ವಿಶಾಲ ವ್ಯಾಪ್ತಿಯನ್ನು ಪರಿಗಣಿಸಿದರೆ ಒಂದೇ ಲೇಖನ ಅಥವಾ ವರದಿಯು ಲಕ್ಷಾಂತರ ಜನರೊಂದಿಗೆ ಅನುರಣಿಸುತ್ತದೆ. ಅವರ ನಂಬಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ರೂಪಿಸುತ್ತದೆ. ದೂರಗಾಮಿ ಮತ್ತು ಶಾಶ್ವತವಾಗಿರಬಹುದಾದ ಪರಿಣಾಮಗಳೊಂದಿಗೆ ಸಂಬಂಧಿಸಿದವರ ಪ್ರತಿಷ್ಠೆಗೆ ತೀವ್ರ ಹಾನಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದು ಬೆಟ್ಟು ಮಾಡಿದ ಪೀಠವು,ಇದು ಮಾಧ್ಯಮ ವರದಿಗಾರಿಕೆಯಲ್ಲಿ, ವಿಶೇಷವಾಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಸಮಗ್ರತೆಯ ಮೇಲೆ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿರುವ ವಿಷಯಗಳನ್ನು ನಿರ್ವಹಿಸುವಾಗ ನಿಖರತೆ ಮತ್ತು ನ್ಯಾಯ ಸಮ್ಮತತೆಯ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಲೇಖನಗಳನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ಮತ್ತು ಉತ್ತಮ ನಂಬಿಕೆಯೊಂದಿಗೆ ಪ್ರಕಟಿಸಬೇಕು ಎಂದು ಹೇಳಿತು. ತಮ್ಮ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮಗಳನ್ನು ಪ್ರಶ್ನಿಸಿದ್ದ ತಮ್ಮ ಅರ್ಜಿಗಳನ್ನು ವಜಾಗೊಳಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ರಕರ್ತರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ಮ್ಯಾನುಯಲ್ ಸ್ಕ್ಯಾವೆಂಜರ್ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ : ನ್ಯಾ.ನಾಗಮೋಹನ್ ದಾಸ್
ಬೆಂಗಳೂರು : ಭಾರತದಲ್ಲಿ ಜಾರಿಗೆ ತಂದಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ ಎಂದು ಒಳಮೀಸಲಾತಿ ಜಾರಿಗಾಗಿ ಏಕಸದಸ್ಯ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ತಿಳಿಸಿದ್ದಾರೆ. ಬುಧವಾರ ನಗರದ ರಾಷ್ಟ್ರೀಯ ಕಾನೂನು ಶಾಲೆ ವಿವಿಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ, ಸಫಾಯಿ ಕರ್ಮಚಾರಿ ಕಾವಲು ಸಮಿತಿ, ತಮಟೆ, ಸಖಿ ಟ್ರಸ್ಟ್ ಸಹಯೋಗದೊಂದಿಗೆ ಮಲ ಹೊರುವ ವೃತ್ತಿಯಲ್ಲಿ ನೇಮಕ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013ರ ಅನುಷ್ಠಾನ ಮತ್ತು ಸವಾಲುಗಳು ಕುರಿತ ‘ರಾಷ್ಟೀಯ ಸಮಾವೇಶ’ದಲ್ಲಿ ಮಾತನಾಡಿದ ಅವರು, ಮ್ಯಾನುಯಲ್ ಸ್ಕ್ಯಾವೆಂಜರ್ ವೃತ್ತಿಗೂ ಮತ್ತು ಜಾತಿಗೆ ಸಂಬಂಧವಿದೆ. ವಂಶ ಪಾರಂಪರಿಕವಾಗಿ ಕೆಲವೇ ಕೆಲವು ಜಾತಿಗಳು ಈ ವೃತ್ತಿಯನ್ನುಮಾಡುತ್ತಾ ಬಂದಿವೆ. ಅದರಲ್ಲೂ ಶೇ.90ರಷ್ಟು ಜನ ಒಂದೇ ಜಾತಿಯವರಾಗಿದ್ದಾರೆ. ಕೇವಲ ಒಂದೇ ಜಾತಿಯವರು ಈ ಕೆಲಸ ಮಾಡುತ್ತಿರುವುದು ಏಕೆ ಎಂಬುವುದು ಪ್ರಶ್ನೆಯಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯ ಬಂದು 76 ವರ್ಷಗಳಾಗಿದ್ದರೂ ಮಲಹೊರುವ ಪದ್ಧತಿ ಹಾಗೆಯೇ ಮುಂದುವರೆದಿದೆ. ಭಾರತವು ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಯಾಗುತ್ತಿದ್ದರೂ ಈ ರೀತಿಯ ವೃತ್ತಿಗಳನ್ನು ಯಾಕೆ ಯಾಂತ್ರೀಕರಣಗೊಳಿಸುತ್ತಿಲ್ಲ. 2013ರ ಕಾಯ್ದೆ ಅನುಸಾರ ಸಮಗ್ರವಾದ ಸಮೀಕ್ಷೆಯನ್ನು ಸರಕಾರಗಳು ಕೈಗೊಳ್ಳಬೇಕು. ಕಾಯ್ದೆಯಡಿಯಲ್ಲಿ ಸಮಗ್ರ ಪುನರ್ವಸತಿಯನ್ನು ನೀಡಬೇಕು. ಜನರೂ ಸಹ ತಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಬೇಕು. ಅನಿವಾರ್ಯತೆಗಳಿದ್ದರೂ ಈ ವೃತ್ತಿಯನ್ನು ಮಾಡಬಾರದು. ಇತರೆ ಉದ್ಯೋಗಳನ್ನು ಆಯ್ಕೆಮಾಡಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞೆ ಅಶ್ವಿನಿ ಕೆ.ಪಿ. ಮಾತನಾಡಿ, ಮ್ಯಾನುಯಲ್ ಸ್ಕ್ಯಾವೆಂಜರ್ ಕುರಿತು ಅಂತರ್ ರಾಷ್ಟ್ರೀಯಮಟ್ಟದಲ್ಲಿ ಚರ್ಚಿಸಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ನಾವೆಲ್ಲರೂ ಕೆಲಸ ಮಾಡೋಣ. ಭಾರತದಲ್ಲಿ ಜಾತಿ ಆಧಾರಿತ ವೃತ್ತಿಗಳಿಂದ ನಾವು ಹೊರ ಬರಬೇಕಾಗಿದೆ. ಅಂತರ್ ರಾಷ್ಟ್ರೀಯಮಟ್ಟದಲ್ಲಿ ಇದೇ ರೀತಿಯ ತಾರತಮ್ಯಗಳನ್ನು ಚರ್ಚಿಸಲಾಗುತ್ತದೆ. ಅದಕ್ಕೆ ಪೂರಕವಾಗಿ ನಾವು ಭಾರತದಲ್ಲಿರುವ ಜಾತಿ ಆಧಾರಿತವಿಷಯಗಳನ್ನು ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಲ್ಲಿ ಮತ್ತು ವಿಶ್ವಸಂಸ್ಥೆಯಲ್ಲಿ ಚರ್ಚಿಸಲು ಪ್ರಯತ್ನಿಸಬೇಕಾಗಿದೆ ಎಂದು ತಿಳಿಸಿದರು. ಸಮಾವೇಶದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಸಾರ್ವಜನಿಕ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಬಾಬು ಮ್ಯಾಥೂ, ಪ್ರಾಧ್ಯಾಪಕ ಚಂದ್ರಶೇಖರ್, ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಯಾಗರಾಜ್ ನದಿ ನೀರಿನ ಗುಣಮಟ್ಟ ಕುರಿತು ಉತ್ತರ ಪ್ರದೇಶ ಸರಕಾರದ ವರದಿಯಲ್ಲಿ ವಿವರಗಳ ಕೊರತೆಯಿದೆ: ಎನ್ಜಿಟಿ
ಹೊಸದಿಲ್ಲಿ: ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿರುವ ಗಂಗಾನದಿಯಲ್ಲಿ ಮಾನವರ ಮತ್ತು ಪ್ರಾಣಿಗಳ ಮಲದಲ್ಲಿರುವ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಮತ್ತು ಇತರ ಜಲ ಗುಣಮಟ್ಟ ಮಾನದಂಡಗಳ ಕುರಿತು ಸಾಕಷ್ಟು ವಿವರಗಳನ್ನು ಸಲ್ಲಿಸದಿದ್ದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ಜಿಟಿ)ಯು ಬುಧವಾರ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ(ಯುಪಿಪಿಸಿಬಿ) ಮತ್ತು ಉತ್ತರ ಪ್ರದೇಶ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದೆ. ಮಹಾ ಕುಂಭಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಗಂಗಾ ನದಿಯ ವಿವಿಧ ಭಾಗಗಳಿಂದ ಇತ್ತೀಚಿನ ಜಲ ಗುಣಮಟ್ಟ ವಿಶ್ಲೇಷಣಾ ವರದಿಗಳನ್ನು ಸಲ್ಲಿಸಲು ಎನ್ಜಿಟಿ ರಾಜ್ಯ ಸರಕಾರಕ್ಕೆ ಒಂದು ವಾರದ ಸಮಯಾವಕಾಶವನ್ನು ನೀಡಿದೆ. ತನ್ನ ಡಿಸೆಂಬರ್ ಆದೇಶದ ಪಾಲನೆಯ ಕುರಿತು ಎನ್ಜಿಟಿ ಅಧ್ಯಕ್ಷ ನ್ಯಾ.ಪ್ರಕಾಶ ಶ್ರೀವಾಸ್ತವ್, ನ್ಯಾಯಾಂಗ ಸದಸ್ಯ ಸುಧೀರ್ಅಗರವಾಲ್ ಮತ್ತು ತಜ್ಞ ಸದಸ್ಯ ಎ.ಸೆಂಥಿವೇಲ್ ಅವರ ಪೀಠವು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಗಂಗಾ ಮತ್ತು ಯಮುನಾ ನದಿಗಳ ನೀರು ಕುಡಿಯಲು ಮತ್ತು ಕುಂಭ ಸಂದರ್ಭದಲ್ಲಿ ಸ್ನಾನ ಮಾಡಲು ಯೋಗ್ಯವಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವಂತೆ ಎನ್ಜಿಟಿ ಡಿಸೆಂಬರ್ 23ರಂದು ಉತ್ತರ ಪ್ರ.ಸರಕಾರ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಗೆ ಆದೇಶಿಸಿತ್ತು. ಸೋಮವಾರ ಡಿಸೆಂಬರ್ ಆದೇಶಕ್ಕೆ ಅನುಗುಣವಾಗಿ ಸಿಪಿಸಿಬಿ ಎನ್ಜಿಟಿಗೆ ಸಲ್ಲಿಸಿರುವ ವರದಿಯು, ಜನವರಿ ಎರಡನೇ ವಾರದಲ್ಲಿ ನಡೆಸಲಾದ ತಪಾಸಣೆಯ ಸಂದರ್ಭದಲ್ಲಿ ಗಂಗಾನದಿಯ ನೀರು ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿತ್ತು ಮತ್ತು ಜೀವರಾಸಾಯನಿಕ ಆಮ್ಲಜನಕ ಮಾನದಂಡಕ್ಕೆ ಅನುಗುಣವಾಗಿರಲಿಲ್ಲ ಹಾಗೂ ಸ್ನಾನಕ್ಕೆ ಯೋಗ್ಯವಾಗಿರಲಿಲ್ಲ ಎಂದು ಹೇಳಿದೆ. ಸಿಪಿಸಿಬಿಯ ವರದಿಯನ್ನು ಸೋಮವಾರ ದಾಖಲಿಸಿಕೊಂಡ ಎನ್ಜಿಟಿಯು, ಯುಪಿಪಿಸಿಬಿ ತನ್ನ ಡಿ.23ರ ಆದೇಶಕ್ಕೆ ಅನುಗುಣವಾಗಿ ಕ್ರಮಾನುಷ್ಠಾನ ವರದಿಯನ್ನು ಸಲ್ಲಿಸಿಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತ್ತು. ತಾನು ಪಾಲನಾ ವರದಿಯನ್ನು ಸಲ್ಲಿಸಿದ್ದೇನೆ ಎಂದು ಬುಧವಾರ ಹೇಳಿದ ಯುಪಿಪಿಸಿಬಿ, ಆದರೆ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದ ನಿಖರವಾದ ಸ್ಥಳಗಳ ಕುರಿತು ವಿವರಗಳನ್ನು ಸಿಪಿಸಿಬಿಯಿಂದ ಕೋರಿದ್ದಾಗಿ ತಿಳಿಸಿತು. ಇದರಿಂದ ಕೆರಳಿದ ಪೀಠವು, ನೀವು ಸಿಪಿಸಿಬಿ ವರದಿಯನ್ನು ಅಲ್ಲಗಳೆಯುತ್ತೀದ್ದೀರಾ ಎಂದು ಪ್ರಶ್ನಿಸಿತಾದರೂ ನೀರಿನ ಮಾದರಿಗಳನ್ನು ಸಂಗ್ರಹಿಸಿದ ಸ್ಥಳಗಳ ವಿವರಗಳನ್ನು ಮತ್ತು ಪ್ರಯೋಗಾಲಯ ಪರೀಕ್ಷಾ ವರದಿಗಳನ್ನು ಸಲ್ಲಿಸುವಂತೆ ಸಿಪಿಸಿಬಿ ವಕೀಲರಿಗೆ ಸೂಚಿಸಿತು. ನೀರಿನ ಗುಣಮಟ್ಟದ ಕುರಿತು ಯುಪಿಪಿಸಿಬಿಯ ವರದಿಯು ಜೀವರಾಸಾಯನಿಕ ಆಮ್ಲಜನಕ,ರಾಸಾಯನಿಕ ಆಮ್ಲಜನಕ ಮತ್ತು ಮಲ ಕೋಲಿಫಾರ್ಮ್ ಕುರಿತು ವಿವರಗಳನ್ನು ಒಳಗೊಂಡಿಲ್ಲ ಎಂದೂ ಗಮನಿಸಿದ ಪೀಠವು ಫೆ.18ರವರೆಗಿನದು ಸೇರಿದಂತೆ ಇತ್ತೀಚಿನ ವರದಿಗಳನ್ನು ಸಲ್ಲಿಸುವಂತೆ ಯುಪಿಪಿಸಿಬಿಗೆ ನಿರ್ದೇಶನ ನೀಡಿತು.
Gruha Lakshmi Scheme: 'ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯಿತ್ ಚುನಾವಣೆ ಘೋಷಣೆ ಆದರೆ ಗೃಹಲಕ್ಷ್ಮಿ ಹಣ ಹಾಕ್ತಾರೆ'
ಹಾಸನ, ಫೆಬ್ರವರಿ 19: ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ಯಾರಂಟಿ ನೀಡುತ್ತಿದ್ದಾರೆ. ಗೃಹಲಕ್ಷ್ಮಿ ಹಣಕ್ಕಾಗಿ ರಾಜ್ಯದಲ್ಲಿ ತಾಯಂದಿರು ಕಾದು ಕುಳಿತಿದ್ದಾರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ಯಾರಂಟಿ, ಉಪಚುನಾವಣೆ ಚುನಾವಣೆ ವೇಳೆ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಮಹಿಳೆಯರಿಗೆ ಹಣ ಬಂತು. ಮುಂದೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಆದರೆ ಗೃಹಲಕ್ಷ್ಮಿ
ಮುಂಬೈ ಕ್ರಿಕೆಟ್ ದಿಗ್ಗಜ ಮಿಲಿಂದ್ ರೇಗೆ ನಿಧನ
ಹೊಸದಿಲ್ಲಿ: ಮುಂಬೈ ಕ್ರಿಕೆಟ್ನ ‘ವಿಶ್ವಕೋಶ’ ಎಂದೇ ಖ್ಯಾತಿ ಪಡೆದಿದ್ದ ಮುಂಬೈ ತಂಡದ ಮಾಜಿ ನಾಯಕ ಮಿಲಿಂದ್ ರೇಗೆ ಬುಧವಾರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಆಫ್ ಸ್ಪಿನ್ನಿಂಗ್ ಆಲ್ರೌಂಡರ್ ರೇಗೆ ಮುಂಬೈ ಕ್ರಿಕೆಟ್ನ ಸುವರ್ಣ ಯುಗದಲ್ಲಿ 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಸತತ ಐದು ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯರಾಗಿದ್ದರು. 20ರ ದಶಕದ ಅಂತ್ಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಅವರ ಕ್ರಿಕೆಟ್ ವೃತ್ತಿಜೀವನ ಮೊಟಕುಗೊಂಡಿತು. ಆದರೆ ಅವರು ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಿದ್ದಲ್ಲದೆ, ಮೈದಾನದ ಹೊರಗೆ ಅದ್ಭುತ ವೃತ್ತಿಜೀವನ ಅನುಭವಿಸಿದರು. ಆಯ್ಕೆಗಾರನಾಗಿ ಸಚಿನ್ ತೆಂಡುಲ್ಕರ್ರಿಂದ ಯಶಸ್ವಿ ಜೈಸ್ವಾಲ್ ತನಕ ಹಲವು ಪ್ರತಿಭೆಯನ್ನು ಹುಡುಕಿ ಉನ್ನತಮಟ್ಟಕ್ಕೇರಲು ನೆರವಾದ ಮಾಜಿ ಕ್ರಿಕೆಟಿಗರ ಪೈಕಿ ರೇಗೆ ಮೊದಲಿಗರು. ಕಳೆದ 4 ವರ್ಷಗಳಿಂದ ಮುಂಬೈ ಕ್ರಿಕೆಟ್ ಸಂಸ್ಥೆಯ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ರೇಗೆ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಗುರುವಾರ ಮುಂಬೈನಲ್ಲಿ ನೆರವೇರಲಿದೆ.
ಯಾದಗಿರಿ | ಪರಸನಳ್ಳಿ ಗ್ರಾಮದೇವತೆ ಜಾತ್ರೆಯಲ್ಲಿ ಪ್ರಾಣಿ ಬಲಿ
ಕೆಂಭಾವಿ: ಪಟ್ಟಣದ ವಾರ್ಡ್ ನಂ 23 ರಲ್ಲಿ ಬರುವ ಪರಸನಳ್ಳಿ ಗ್ರಾಮದಲ್ಲಿ ಕೋಣವನ್ನು ಬಲಿ ಕೊಡಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಪರಸನಳ್ಳಿ ಗ್ರಾಮದ ಗ್ರಾಮದೇವಿ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಬುಧವಾರ ನಸುಗಿನ ಜಾವ ಪ್ರಾಣಿ ಬಲಿ ನೀಡಿದ್ದು , ಸದ್ಯ ಈ ಘಟನೆಯು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗಾಸವಾಗಿದೆ. ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಂಡಿದ್ದ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲೇ ಕೋಣವನ್ನು ಬಲಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ನಾಳೆ ಭಾರತದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭ, ಬಾಂಗ್ಲಾದೇಶ ಎದುರಾಳಿ
ದುಬೈ: ‘ಎ’ ಗುಂಪಿನ ಪಂದ್ಯದಲ್ಲಿ ಗುರುವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿರುವ ಟೀಮ್ ಇಂಡಿಯಾ 2025ರ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಪ್ರತೀ ಗುಂಪಿನಿಂದ ಕೇವಲ ಎರಡು ತಂಡಗಳು ಮಾತ್ರ ಸೆಮಿ ಫೈನಲ್ ಗೆ ಅರ್ಹತೆ ಪಡೆಯುತ್ತಿರುವ ಕಾರಣ ಪ್ರತಿ ಗ್ರೂಪ್ ಪಂದ್ಯವೂ ನಿರ್ಣಾಯಕವಾಗಿದೆ. ರೋಹಿತ್ ಪಡೆ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ತೋರಿದ್ದ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ. ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯವು ದುಬೈನ ಇಂಟರ್ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತದ ಬೌಲಿಂಗ್ ವಿಭಾಗವು ಪ್ರಮುಖ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅನುಪಸ್ಥಿತಿ ಕಾಡದಂತೆ ಆಡುವುದೇ? ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಮ್ಮ ಗತವೈಭವವನ್ನು ನೆನಪಿಸುತ್ತಾರೆಯೇ? ಶುಭಮನ್ ಗಿಲ್ ರಂತಹ ಯುವ ಆಟಗಾರರು ಬಹು ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಒತ್ತಡವನ್ನು ಮೀರಿ ಸ್ಥಿರ ಪ್ರದರ್ಶನ ನೀಡಬಲ್ಲರೇ ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ತಂಡಗಳು ಉಂಟು ಮಾಡಿರುವ ಆಘಾತದಿಂದ ಭಾರತ ತಂಡ ಇನ್ನೂ ಹೊರಬಂದಿಲ್ಲ. ನಾಯಕ ರೋಹಿತ್ ಶರ್ಮಾ ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿರುವುದು, ಕೊಹ್ಲಿ ಅರ್ಧಶತಕ ಗಳಿಸಿರುವುದು ತಂಡಕ್ಕೆ ಸಮಾಧಾನ ತಂದಿದೆ. ಭಾರತವು ಗೌತಮ್ ಗಂಭೀರ್ ರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಮವಾಗಿ ಟಿ-20 ಹಾಗೂ ಏಕದಿನ ಸರಣಿಯಲ್ಲಿ 4-1 ಹಾಗೂ 3-0 ಅಂತರದಿಂದ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ. ಆಂಗ್ಲರ ವಿರುದ್ಧದ ಏಕದಿನ ಸರಣಿಯಲ್ಲಿ 2 ಅರ್ಧ ಶತಕ ಹಾಗೂ ಒಂದು ಶತಕ ಗಳಿಸಿದ್ದ ಗಿಲ್ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಎದುರಾಗುವ ಸವಾಲು ಸ್ವದೇಶಿ ಸರಣಿಗಿಂತ ಸಂಪೂರ್ಣ ಭಿನ್ನವಾಗಿದೆ. ‘ಎ’ ಗುಂಪಿನಲ್ಲಿ ಭಾರತ ತಂಡಕ್ಕೆ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ಎದುರಾಳಿಗಳಾಗಿವೆ. ಒಂದು ಸೋಲು ಕೂಡ ಇಡೀ ಲೀಗ್ ಹಂತದ ಸಮೀಕರಣವನ್ನು ನಾಟಕೀಯವಾಗಿ ಬದಲಾಯಿಸಬಹುದು. ಭಾರತವು 50 ಓವರ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಬಾಂಗ್ಲಾದೇಶವನ್ನು ಎದುರಿಸುವ ಮೊದಲು ಕೆಲವು ಆಯ್ಕೆಯ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. ಕೆ.ಎಲ್.ರಾಹುಲ್ ಬ್ಯಾಟಿಂಗ್ ಕ್ರಮಾಂಕದಿಂದ ಗೊಂದಲ ಆರಂಭವಾಗುತ್ತದೆ. ರಾಹುಲ್ ತನ್ನ ನೆಚ್ಚಿನ ಕ್ರಮಾಂಕ 5ರಲ್ಲಿ ಆಡುತ್ತಾರೋ ಅಥವಾ ಆರನೇ ಕ್ರಮಾಂಕದಲ್ಲಿ ಆಡುತ್ತಾರೋ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರಾಹುಲ್ ಅಂತಿಮ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಟೀಮ್ ಮ್ಯಾನೇಜ್ಮೆಂಟ್ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಅಂತಿಮ ನಿರ್ಧಾರ ತಳೆಯಬಹುದು. ಗಾಯಗೊಂಡಿರುವ ಬುಮ್ರಾ ಅನುಪಸ್ಥಿತಿಯಲ್ಲಿ ಬೌಲಿಂಗ್ ವಿಭಾಗದಲ್ಲಿ ಸರಿಯಾದ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ವೇಗದ ಬೌಲರ್ ಮುಹಮ್ಮದ್ ಶಮಿಗೆ ಹೊಸ ಚೆಂಡಿನ ಜೊತೆಗಾರನಾಗಿ ಕಣಕ್ಕಿಳಿಯಲು ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ನಡುವೆ ಸ್ಪರ್ಧೆ ಏರ್ಪಟ್ಟಿದೆ. ರಾಣಾ ಇಲ್ಲಿಯ ತನಕ ತನ್ನ ಬೌಲಿಂಗ್ ನಲ್ಲಿ ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದು, ಅತ್ಯಂತ ನಿಧಾನಗತಿಯ ಪಿಚ್ ನಲ್ಲೂ ವೇಗ ಹಾಗೂ ಬೌನ್ಸ್ ಮೂಲಕ ಬ್ಯಾಟರ್ ಗಳನ್ನು ಕಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಈ ಕ್ಷಣದಲ್ಲಿ ಎಡಗೈ ವೇಗಿ ಅರ್ಷದೀಪ್ ಹೊಸ ಚೆಂಡಿನ ಜವಾಬ್ದಾರಿಯನ್ನು ಶಮಿ ಜೊತೆ ಹಂಚಿಕೊಳ್ಳುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಮತ್ತೊಂದೆಡೆ ಭಾರತ ತಂಡವು ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ಮೂವರು ಸ್ಪಿನ್ನರ್ ಗಳನ್ನು ಆಡಿಸುವ ಸಾಧ್ಯತೆಯಿದೆ. ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್ ಜೊತೆಗೆ ಮೂರನೇ ಸ್ಪಿನ್ನರ್ ಯಾರೆಂಬ ಪ್ರಶ್ನೆ ಕಾಡುತ್ತಿದೆ. ಎಡಗೈ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ನಡುವೆ ಆಯ್ಕೆ ಮಾಡಬೇಕಾದ ಕಠಿಣ ಸವಾಲಿದೆ. ಇತ್ತೀಚೆಗಿನ ಫಾರ್ಮ್ ಪರಿಗಣಿಸಿದರೆ ವರುಣ್ ಮೊದಲ ಆಯ್ಕೆಯಾಗಿದ್ದಾರೆ. ಆದರೆ, ಕುಲದೀಪ್ ಮಂಗಳವಾರ ನೆಟ್ ನಲ್ಲಿ ಕೆಲವು ಪ್ರಮುಖ ಬ್ಯಾಟರ್ಗಳೊಂದಿಗೆ ಅಭ್ಯಾಸ ನಡೆಸುವ ಮೂಲಕ ತಾನು ಸ್ಪರ್ಧೆಗೆ ಸಿದ್ದ ಎಂಬ ಸಂದೇಶ ನೀಡಿದ್ದಾರೆ. ಈ ಹಿಂದಿನ ಜಾಗತಿಕ ಟೂರ್ನಿಗಳಲ್ಲಿ ತನ್ನನ್ನು ಕಾಡಿರುವ ಬಾಂಗ್ಲಾದೇಶ ತಂಡ ತಿರುಗಿಬೀಳುವ ಯಾವುದೇ ಅವಕಾಶ ನೀಡದಿರಲು ಭಾರತ ತಂಡ ಪಣತೊಟ್ಟಿದೆ.
ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡದ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್
ಕೇಂದ್ರ ಸರ್ಕಾರವು ಏಳು ವಿವಿಧ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಕಳೆದ ಏಳು ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ನ್ಯಾಯಮೂರ್ತಿ ಅನಂತ್ ರಮಾನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ. ಈ ಬಗ್ಗೆ ವಿವರ ಇಲ್ಲಿದೆ.
ಮಲ್ಪೆಯಲ್ಲಿ ಛತ್ರಪತಿ ಶಿವಾಜಿ ಜಯಂತಿ
ಉಡುಪಿ, ಫೆ.19: ಛತ್ರಪತಿ ಶಿವಾಜಿ ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿದ್ದ ಆದರ್ಶ, ತತ್ವಗಳು ಎಲ್ಲರಿಗೂ ಮಾದರಿ ಯಾಗಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದ್ದಾರೆ. ಬುಧವಾರ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಿವಾಜಿಯ ಜೀವನ ಚರಿತ್ರೆಯನ್ನು ಅವಲೋಕಿಸಿ ಇತಿಹಾಸಕ್ಕೆ ನೀಡಿದ ಅವರ ಕೊಡುಗೆಗಳನ್ನು, ವ್ಯಕ್ತಿತ್ವ ಗುಣಗಳನ್ನು ಅರಿತುಕೊಳ್ಳಬೇಕು. ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಶಿವಾಜಿಯವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ನಾಗರಾಜ್ ನಾಯಕ್ ಮಾತನಾಡಿ, ಅಂದಿನ ಕಾಲಘಟ್ಟದಲ್ಲಿ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ ಧೀಮಂತ ನಾಯಕ ಶಿವಾಜಿಯಾಗಿದ್ದು, ಒಳ್ಳೆಯ ಆಡಳಿತಕ್ಕೆ ಆತ ಹೆಸರಾಗಿದ್ದ ಎಂದರು. ಲೇಖಕ ಮತ್ತು ಕಥೆಗಾರರಾದ ಮಂಜುನಾಥ ಹಿಲಿಯಾಣ ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯ ಕ್ರಮದಲ್ಲಿ ಸಮುದಾಯದ ವತಿ ಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ್ ರಾವ್ ಬಡಾನಿಡಿಯೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಮೃದ್ಧಿ ಆರ್ ಇವರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್, ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ, ಮರಾಠ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರೆ, ತೇಜಸ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಹಿರಿಯ ಶಿಕ್ಷಕ ಸತೀಶ್ ಭಟ್ ವಂದಿಸಿದರು.
ವಿಜಯೇಂದ್ರ ವಿದೂಷಕನ ಪಾತ್ರ ಹಾಕಿದರೆ ಜನರ ಮನ್ನಣೆ ಸಿಗಬಹುದು : ರಮೇಶ್ ಬಾಬು ಲೇವಡಿ
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಟಕದ ಕಂಪೆನಿ ಸೇರಿ ವಿದೂಷಕನ ಪಾತ್ರ ಹಾಕಿದರೆ ಜನರ ಮನ್ನಣೆ ಸಿಗಬಹುದು ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಲೇವಡಿ ಮಾಡಿದ್ದಾರೆ. ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿದೂಷಕನ ಪಾತ್ರವನ್ನು ಯಾರು ವಹಿಸಬೇಕು ಎಂಬುದಕ್ಕೆ ಅವರಲ್ಲಿಯೇ ಪೈಪೋಟಿ ಬಿದ್ದಿದೆ. ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ಈ ರೇಸ್ನಲ್ಲಿದ್ದಾರೆ. ಅವರಲ್ಲಿ ವಿಜಯೇಂದ್ರ ವಿದೂಷಕನ ಪಾತ್ರ ಹಾಕಿದರೆ ಸ್ವಲ್ಪ ಜನ ಮನ್ನಣೆ ಸಿಗಬಹುದು ಎಂದರು. ರಾಜಕೀಯದಲ್ಲಿ ತಮ್ಮ ತಂದೆಯವರಾದ ಯಡಿಯೂರಪ್ಪ ಅವರ ಹೆಸರನ್ನು ಹೇಳಿಕೊಂಡು ಬೆಳೆಯುತ್ತಿರುವ ವಿಜಯೇಂದ್ರ ಅವರು ಒಬ್ಬ ರಾಜಕಾರಣಿಯ ಪಾತ್ರವನ್ನು ವಹಿಸಲಿ. ಆದರೆ ವಿದೂಷಕನ ಪಾತ್ರ ಮಾತ್ರ ವಹಿಸಬೇಡಿ ಎಂದು ರಮೇಶ್ ಬಾಬು ಹೇಳಿದರು. ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ತಮ್ಮಲ್ಲಿರುವ ಉಳುಕನ್ನು ಮುಚ್ಚಿಕೊಳ್ಳಲು ಆಗದೇ ಪದೇ, ಪದೇ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ಈ ಕೆಲಸವನ್ನು ಆರು ತಿಂಗಳಿನಿಂದ ಮಾಡುತ್ತಿದ್ದಾರೆ. ಈ ಮೂರು ಬಿಜೆಪಿಯಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ದೂರಿದರು. ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ, ನಾಯಕರ ಮೇಲೆ ಬಿಜೆಪಿಯವರು ಟೀಕೆ ಮಾಡುವ ಅವಶ್ಯಕತೆಯಿಲ್ಲ. ನಮ್ಮ ಜನರಿಗೆ ಯಾವ ಕಾರ್ಯಕ್ರಮಗಳನ್ನು ನೀಡಬೇಕು ಎನ್ನುವ ಅರಿವು ಕಾಂಗ್ರೆಸ್ ಸರಕಾರಕ್ಕಿದೆ ಎಂದು ರಮೇಶ್ ಬಾಬು ತಿಳಿಸಿದರು. ಕಾಂಗ್ರೆಸ್ನಲ್ಲಿ ಕ್ಷಿಪ್ರಕ್ರಾಂತಿ ಆಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ, ಅವರ ಪಕ್ಷದಲ್ಲಿ ಆಗುವ ಕ್ಷಿಪ್ರ ಕ್ರಾಂತಿಗಳನ್ನು ಅವರು ಮೊದಲು ತಡೆಯಲಿ. ವಿಜಯೇಂದ್ರ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ದಿನದಿಂದಲೂ ಕಾಂಗ್ರೆಸ್ ಸರಕಾರ ಬಿದ್ದು ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಅವರ ಸ್ಥಾನವೇ ಬಿದ್ದು ಹೋಗುವ ಸ್ಥಿತಿಯಲ್ಲಿದೆ ಎಂದು ರಮೇಶ್ ಬಾಬು ಟೀಕಿಸಿದರು. ‘ಮುಡಾ ಪ್ರಕರಣದ ಕುರಿತಾದ ಲೋಕಾಯುಕ್ತ ವರದಿ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮೇಶ್ ಬಾಬು, ಎಚ್.ಡಿ.ಕುಮಾರಸ್ವಾಮಿಯವರು ಈ ರೀತಿ ಅನುಮಾನ ವ್ಯಕ್ತಪಡಿಸುವುದರಲ್ಲಿ ಅತಿಶಯೋಕ್ತಿಯಿಲ್ಲ. ಆದರೆ, ಅವರ ಮನೆಯವರ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಮನೋರೋಗವನ್ನು ಅವರು ಸರಿಪಡಿಸಿಕೊಳ್ಳಲಿ. ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಕ್ಷಿಪ್ರಕ್ರಾಂತಿಯಾಗಿದೆ ಅದನ್ನು ಅವರು ಮೊದಲು ಸರಿಪಡಿಸಿಕೊಳ್ಳಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್, ಕಾನೂನು ಘಟಕದ ಉದಾಧ್ಯಕ್ಷ ಆನಂದ್, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ ಉಪಸ್ಥಿತರಿದ್ದರು.
ಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರ ಸ್ಥಾನಕ್ಕೇರಿದ ಶುಭಮನ್ ಗಿಲ್
ಹೊಸದಿಲ್ಲಿ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆರಂಭವಾದ ದಿನದಂದೇ ಬುಧವಾರ ಬಿಡುಗಡೆಯಾಗಿರುವ ಐಸಿಸಿ ರ್ಯಾಂಕಿಂಗ್ ನಲ್ಲಿ ಭಾರತ ಕ್ರಿಕೆಟ್ ತಂಡದ ಉಪ ನಾಯಕ ಶುಭಮನ್ ಗಿಲ್ ಪಾಕಿಸ್ತಾನದ ಬ್ಯಾಟರ್ ಬಾಬರ್ ಆಝಮ್ರನ್ನು ಹಿಂದಿಕ್ಕಿ ಅಗ್ರ ರ್ಯಾಂಕಿನ ಏಕದಿನ ತಂಡದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಗಿಲ್, ದೀರ್ಘ ಸಮಯದಿಂದ ಅಗ್ರ ಸ್ಥಾನದಲ್ಲಿದ್ದ ಬಾಬರ್ ರನ್ನು ಹಿಂದಿಕ್ಕಿ ನಂ.1 ಬ್ಯಾಟರ್ ಎನಿಸಿಕೊಂಡರು. 25ರ ಹರೆಯದ ಭಾರತದ ಆರಂಭಿಕ ಆಟಗಾರ ಗಿಲ್ ಎರಡು ಅರ್ಧಶತಕ ಹಾಗೂ ಒಂದು ಶತಕ ಗಳಿಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 3-0 ಅಂತರದಿಂದ ಸರಣಿ ಗೆದ್ದು ಕ್ಲೀನ್ಸ್ವೀಪ್ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಗಿಲ್ 796 ರೇಟಿಂಗ್ ಪಾಯಿಂಟ್ಸ್ ಪಡೆದರೆ, ಬಾಬರ್ 773 ಅಂಕ ಗಳಿಸಿದರು. ಗಿಲ್ ವೃತ್ತಿಜೀವನದಲ್ಲಿ ಎರಡನೇ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ 2023ರ ಆವೃತ್ತಿಯ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳೆ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದರು. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 761 ಅಂಕದೊಂದಿಗೆ 3ನೇ ಸ್ಥಾನ ಪಡೆದರೆ, ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಹಾಗೂ ನ್ಯೂಝಿಲ್ಯಾಂಡ್ನ ಡ್ಯಾರಿಲ್ ಮಿಚೆಲ್ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನ ಪಡೆದಿದ್ದಾರೆ. ►ಏಕದಿನ ಬೌಲಿಂಗ್ ರ್ಯಾಂಕಿಂಗ್: ಮಹೀಶ್ ತೀಕ್ಷಣಗೆ ಅಗ್ರ ಸ್ಥಾನ ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ಮಹೀಶ್ ತೀಕ್ಷಣ ಅಫ್ಘಾನಿಸ್ತಾನದ ರಶೀದ್ ಖಾನ್ರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ತಂಡ ಭಾಗವಹಿಸದೇ ಇದ್ದರೂ ಆಸ್ಟ್ರೇಲಿಯ ವಿರುದ್ಧ ಕೊಲಂಬೊದಲ್ಲಿ 4 ವಿಕೆಟ್ ಗೊಂಚಲು ಸಹಿತ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ತೀಕ್ಷಣ 680 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ರಶೀದ್ 2ನೇ ಸ್ಥಾನದಲ್ಲಿದ್ದು, ಕೇವಲ 11 ಅಂಕ ಹಿಂದಿದ್ದಾರೆ. ಮತ್ತೊಮ್ಮೆ ಅಗ್ರ ಸ್ಥಾನಕ್ಕೇರುವ ವಿಶ್ವಾಸದಲ್ಲಿದ್ದಾರೆ. ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಮತ್ತೊಮ್ಮೆ ಏಕದಿನ ಆಲ್ರೌಂಡರ್ಗಳ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ.
ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಿ: ಡಿಸಿ ವಿದ್ಯಾಕುಮಾರಿ
ಮಣಿಪಾಲ: ಜಿಲ್ಲೆಯಲ್ಲಿ ತಾಯಿ ಹಾಗೂ ಮಕ್ಕಳ ಸಾವು ಕನಿಷ್ಠ ಪ್ರಮಾಣದಲ್ಲಿದೆ. ಪ್ರತೀ ತಾಯಿ ಮತ್ತು ಮಗುವಿನ ಸಾವನ್ನು ತಡೆಯಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸರ್ವ ಪ್ರಯತ್ನಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿ ಯಾನ ಉಡುಪಿ ಜಿಲ್ಲೆ ಹಾಗೂ ಮಣಿಪಾಲ ಮಾಹೆಯ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗಗಳ ಸಹಯೋಗದೊಂದಿಗೆ ಪ್ರಸೂತಿ ತಜ್ಞರು ಹಾಗೂ ವೈದ್ಯಾಧಿಕಾರಿಗಳಿಗೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯದ ಸಮಗ್ರ ಅಧ್ಯಯನದ ಕುರಿತು ಕೆಎಂಸಿಯ ಡಾ.ಟಿಎಂಎ ಪೈ ಅಡಿಟೋರಿಯಂನಲ್ಲಿ ಇಂದು ಆಯೋಜಿಸಲಾದ ತರಬೇತಿ ಕಾರ್ಯಾಗಾರ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯಲ್ಲಿ ಸ್ವಾಭಾವಿಕ ಹೆರಿಗೆಗೆ ಹೆಚ್ಚಿನ ಒತ್ತು ನೀಡಬೇಕು. ಅನಿವಾರ್ಯ ವೆನಿಸಿದರೆ, ತುರ್ತು ಸಂದರ್ಭಗಳಲ್ಲಿ ಮಾತ್ರ ಸಿಝೇರಿಯನ್ ಮೂಲಕ ಹೆರಿಗೆ ಮಾಡಿಸಬೇಕು ಎಂದವರು ವೈದ್ಯರಿಗೆ ಸಲಹೆ ನೀಡಿದರು. ಹದಿಹರೆಯದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಸೇವನೆ ಸೇರಿದಂತೆ ಸದೃಢ ಆರೋಗ್ಯ ಹೊಂದಲು ತೆಗೆದುಕೊಳ್ಳ ಬೇಕಾದ ಎಚ್ಚರಿಕೆ ಕುರಿತಂತೆ ಮಾಹಿತಿಗಳನ್ನು ನೀಡಬೇಕು. ಹೆರಿಗೆಗೂ ಮುನ್ನ ಹೆಣ್ಣು ಮಕ್ಕಳಿಗೆ ಆಗಿಂದಾಗ್ಗೆ ಆರೋಗ್ಯ ತಪಾಸಣೆಗಳನ್ನು ನಿಯುಮಿತವಾಗಿ ಮಾಡುವುದರೊಂದಿಗೆ ಆರೋಗ್ಯ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರಲ್ಲದೇ, ಪ್ರತೀ ಜಿಲ್ಲೆಯಲ್ಲಿ ನಡೆಯುತ್ತಿರುವ ಸಿಝೇರಿಯನ್ ಡೆಲಿವರಿಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಅಗತ್ಯತೆಗಳ ಬಗ್ಗೆ ಹೆಚ್ಚು ತಿಳುವಳಿಕೆ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ಜಿಲ್ಲೆಯಲ್ಲಿ ಕಸ್ತೂರ್ಬಾ ಸಮೂಹ ಆಸ್ಪತ್ರೆಗಳು ಹಾಗೂ ಸಂಸ್ಥೆಯು ಗ್ರಾಮೀಣ ಆರೋಗ್ಯ ಕೇಂದ್ರಗಳ ಮೂಲಕ ತಾಯಿ-ಮಕ್ಕಳ ಮರಣ ಪ್ರಮಾಣ ತಡೆಯಲು ನೀಡುತ್ತಿರುವ ನಿರಂತರ ಸಹಕಾರಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರತ್ನ, ಮಣಿಪಾಲ ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕರ್ನಾಟಕ ವೈದ್ಯಕೀಯ ಪರಿಷತ್ತಿನ ವೀಕ್ಷಕ ಡಾ. ಪ್ರೇಮಾನಂದ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕೆಎಂಸಿ ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ. ಕೆ. ಸ್ವಾಗತಿಸಿ, ಡಾ. ರಕ್ಷಿತಾ ಆರ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಹಪ್ರಾಧ್ಯಾಪಕಿ ಡಾ. ಈಶ್ವರೀ ಕೆ. ವಂದಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ 10 ಮಂದಿ ತಜ್ಞ ವೈದ್ಯರು ಹೆರಿಗೆ ಸಮಯದಲ್ಲಿ ಮಹಿಳೆ ಹಾಗೂ ಮಗುವಿನ ಆರೋಗ್ಯದಲ್ಲಾಗಬಹುದಾದ ಕ್ಲಿಷ್ಟಕರ ಸಂದರ್ಭಗಳ ನಿರ್ವಹಣೆ ಹಾಗೂ ಅವರ ಆರೋಗ್ಯ ರಕ್ಷಣೆ, ಸುಧಾರಣೆ ಕ್ರಮಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.ಸುಮಾರು 207 ಮಂದಿ ವೈದ್ಯರು ಹಾಗೂ ಇತರರು ಇದರಲ್ಲಿ ಭಾಗವಹಿಸಿದ್ದರು.
ಕಾರವಾರ| ಲಾರಿ ಢಿಕ್ಕಿ: ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಮೃತ್ಯು
ಯಲ್ಲಾಪುರ: ಕಾರವಾರ ಸಮೀಪ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ. ಮೃತರನ್ನು ಆರ್ ವೆಂಕಟೇಶ್, ಚೈತ್ರಾ ಹಾಗೂ 4 ವರ್ಷದ ಮಗು ಶ್ರೀಹಾನ್ ಎಂದು ಗುರುತಿಸಲಾಗಿದೆ. ವೇಗದಲ್ಲಿ ಬಂದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದ್ದು, ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಕೊಪ್ಪಳದಿಂದ ಪ್ರವಾಸಕ್ಕೆಂದು ಅಂಕೋಲಾ ಕಡೆಗೆ ಹೊರಟಿದ್ದರು ಎನ್ನಲಾಗಿದೆ. ವೆಂಕಟೇಶ್ ಅವರ ಸಹೋದರ ಶ್ರೀಕಾಂತ ಎಂಬವರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.
ಮುಂಬೈ: 2019ರ ಚುನಾವಣೆಯ ನಂತರ, ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂದೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿಸಲು ಬಯಸಿದ್ದರು. ಆದರೆ, ಮೊದಲಿಗೆ ಬಿಜೆಪಿ, ನಂತರ ಶರದ್ ಪವಾರ್ ಒಳಗೊಂಡಂತೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಅದಕ್ಕೆ ತಡೆಯೊಡ್ಡಿದವು ಎಂದು ಬುಧವಾರ ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, “ಮುಖ್ಯಾಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲಾಗುವುದು ಎಂಬ ತನ್ನ ಭರವಸೆಯನ್ನು ಬಿಜೆಪಿ ಈಡೇರಿಸಲಿಲ್ಲ. ಹೀಗಾಗಿಯೇ ಶಿಂದೆ ಸರಕಾರವನ್ನು ಮುನ್ನಡೆಸುವ ಅವಕಾಶ ಕಳೆದುಕೊಂಡರು” ಎಂದು ತಿಳಿಸಿದ್ದಾರೆ. “ಶಿಂದೆ ಮುಖ್ಯಮಂತ್ರಿಯಾಗಲು ಬಯಸಿದ್ದರು. ಆದರೆ, ಅವರು ತಮಗಿಂತ ಕಿರಿಯರು ಎಂಬ ಕಾರಣಕ್ಕೆ ಮಹಾವಿಕಾಸ್ ಅಘಾಡಿ ನಾಯಕರು ಅವರ ಕೈಕೆಳಗೆ ಕೆಲಸ ಮಾಡಲು ನಿರಾಕರಿಸಿದರು” ಎಂದೂ ಅವರು ಹೇಳಿದ್ದಾರೆ. “ಶಿಂದೆಯನ್ನು ಮುಖ್ಯಮಂತ್ರಿಯನ್ನಾಗಿಸುವ ಯೋಜನೆಯನ್ನು ವಿರೋಧಿಸಿದ್ದು ಆಗ ಎನ್ಸಿಪಿಯ ಅಧ್ಯಕ್ಷರಾಗಿದ್ದ ಶರದ್ ಪವಾರ್ ಹಾಗೂ ಅಜಿತ್ ಪವಾರ್” ಎಂದು ಅವರು ದೂರಿದ್ದಾರೆ. “2019ರಲ್ಲಿ ಶಿಂದೆಯನ್ನು ಮುಖ್ಯಮಂತ್ರಿಯನ್ನಾಗಿಸಲು ಉದ್ಧವ್ ಠಾಕ್ರೆ ಬಯಸಿದ್ದರು. ಶಿಂದೆಯನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರನ್ನಾಗಿಸಿದ್ದು, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಸಂಕೇತವಾಗಿತ್ತು” ಎಂದು ಅವರು ಪ್ರತಿಪಾದಿಸಿದ್ದಾರೆ. ಅವಿಭಜಿತ ಶಿವಸೇನೆಯ ಮುಖ್ಯಸ್ಥರಾಗಿದ್ದ ಉದ್ಧವ್ ಠಾಕ್ರೆ, 2019ರ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡು, ಕಾಂಗ್ರೆಸ್ ಹಾಗೂ ಅವಿಭಜಿತ ಎನ್ಸಿಪಿಯೊಂದಿಗೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟವನ್ನು ರಚಿಸಿದ್ದರು. ನಂತರ, ತಾವೇ ಮುಖ್ಯಮಂತ್ರಿ ಆಗಿದ್ದರು. ಜೂನ್ 2022ರಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದ ಏಕನಾಥ್ ಶಿಂದೆ, ಶಿವಸೇನೆಯನ್ನು ವಿಭಜಿಸಿ ಬಿಜೆಪಿಯೊಂದಿಗೆ ಸರಕಾರ ರಚಿಸಿದ್ದರು. ಅವರೀಗ ದೇವೇಂದ್ರ ಫಡ್ನವಿಸ್ ನೇತೃತ್ವದ ಸರಕಾರದಲ್ಲಿ ಕಳೆದ ವರ್ಷ ಎನ್ಸಿಪಿಯನ್ನು ವಿಭಜಿಸಿದ್ದ ಅಜಿತ್ ಪವಾರ್ ರೊಂದಿಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಂಡಿದ್ದಾರೆ.
ಕಲಬುರಗಿ | ರಾಷ್ಟ್ರ ಮಟ್ಟದ ʼನಮ್ಮ ಸರಸ್ ಮೇಳ-2025ʼ ಆಯೋಜನೆ; ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ
ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಜಾತ್ರೆ ಮೈದಾನದಲ್ಲಿ ಫೆಬ್ರವರಿ 24 ರಿಂದ ಮಾರ್ಚ್ 5ರ ವರೆಗೆ 10 ದಿನಗಳ ಕಾಲ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿದ ವಸ್ತುಗಳ ರಾಷ್ಟ್ರ ಮಟ್ಟದ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುವುದರಿಂದ ಬುಧವಾರ ಶ್ರೀ ಶರಣಬಸವೇಶ್ವರ ಜಾತ್ರೆ ಮೈದಾನಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. 20 ರಾಜ್ಯಗಳ ಮಹಿಳಾ ಸ್ವ-ಸಹಾಯ ಗುಂಪುಗಳು ಈ ಮಾರಾಟ ಮೇಳದಲ್ಲಿ ಭಾಗಿಯಾಗುವುದರಿಂದ ಎಲ್ಲಾ ರೀತಿಯ ಸಿದ್ಧತೆ ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಸ್ಟಾಲ್ ಸ್ಥಾಪನೆ, ಸ್ವಚ್ಛತೆ, ಬಯೋ ಟಾಯಲೆಟ್ ವ್ಯವಸ್ಥೆ ಕಲ್ಪಿಸಬೇಕು. ಸಂಚಾರ ದಟ್ಟಣೆಯಾಗದಂತೆ ನಗರ ಪೊಲೀಸ್ ಮತ್ತು ಸಂಚಾರಿ ಪೊಲೀಸರು ಸಮಾಲೋಚನೆ ನಡೆಸಿ ವಾಹನ ಸಂಚಾರದ ಮಾರ್ಗಗಳು, ವಾಹನಗಳ ಪಾರ್ಕಿಂಗ್ ಸ್ಥಳದ ಕುರಿತು ಖಚಿತಪಡಿಸಿಕೊಳ್ಳಬೇಕೆಂದರು. ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಳೀಧರ ರತ್ನಗಿರಿ ಮತ್ತಿತರಿದ್ದರು.
ಪ್ರತಿಯೊಬ್ಬ ಭೂಮಾಪಕರಿಗೂ ರೋವರ್ ನೀಡಲು ಕ್ರಮ : ಕೃಷ್ಣ ಬೈರೇಗೌಡ
ಬೆಂಗಳೂರು : ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತ್ವರಿತ ಸರ್ವೇ ಮಾಡಿಕೊಡುವುದು ಮತ್ತು ಅಧಿಕಾರಿಗಳ ಒತ್ತಡ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಭೂಮಾಪಕರಿಗೂ ಒಂದು ರೋವರ್ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ. ಬುಧವಾರ ಇಲ್ಲಿನ ಕೆ.ಆರ್.ವೃತ್ತದಲ್ಲಿರುವ ಸರ್ವೇ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಆಧುನಿಕ 465 ‘ರೋವರ್’ ಉಪಕರಣಗಳನ್ನು ಭೂಮಾಪಕರಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚೈನ್ ಸರ್ವೇ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸರ್ವೇಯಲ್ಲಿ ಬದಲಾವಣೆ ಮಾಡಬಹುದು. ಇದರಿಂದ ಕೆಲವರು ಇಂದಿಗೂ ಕೋರ್ಟ್ ಕಚೇರಿಗೆ ಅಲೆಯುವಂತಾಗಿದೆ. ಆದರೆ, ರೋವರ್ ಸರ್ವೇಯಲ್ಲಿ ಇಂತಹ ಅಕ್ರಮಗಳಿಗೆ ಆಸ್ಪದ ಇರುವುದಿಲ್ಲ. ಹೀಗಾಗಿ ಎಲ್ಲ ಭೂಮಾಪಕರಿಗೂ ರೋವರ್ ನೀಡಲಾಗುವುದು ಎಂದು ಅವರು ತಿಳಿಸಿದರು. ಸರ್ವೇ ಕೆಲಸವನ್ನು ಹಿಂದಿನಿಂದಲೂ ಚೈನ್ ಹಿಡಿದೇ ಭೂಮಿಯನ್ನು ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಬಿಸಿಲಿನಲ್ಲಿ ಸರ್ವೇಯರ್ ಜೊತೆಗೆ ಇಬ್ಬರು ಸಹಾಯಕರೂ ಕೆಲಸ ಮಾಡಬೇಕಿತ್ತು. ಸರ್ವೇ ಮಾಡಿ, ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷಕ್ಕೆ ಮುಗಿಸಲಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ 1830 ರಿಂದ 1870ರ ವರೆಗೆ ಮಾತ್ರ ಸರ್ವೇ ಕೆಲಸ ಆಗಿದೆ. 1967 ರಲ್ಲಿ ಅಲ್ಪ ಸಲ್ಪ ಸರ್ವೇ ಆಗಿದೆ ಎಂಬುದನ್ನು ಬಿಟ್ಟರೆ ಉಳಿದಂತೆ ಸರ್ವೇ ಆಗಿಲ್ಲ. ಆದರೆ, ಪ್ರಸ್ತುತ ರೈತರ ನಾನಾ ಸಮಸ್ಯೆಗಳಿಗೆ ಸರ್ವೇ ಹಾಗೂ ರೀ ಸರ್ವೇ ಕೆಲಸಗಳಿಗೆ ವೇಗ ತುಂಬುವ ಅಗತ್ಯವಿದೆ. ಆದರೆ, 1806ರಿಂದಲೂ ಸರ್ವೇ ಕೆಲಸಗಳಿಗೆ ಬಳಸಿದ ಚೈನ್ ವ್ಯವಸ್ಥೆಯನ್ನು ಈಗಲೂ ಮುಂದುವರೆಯುತ್ತಿರುವುದು ಆಘಾತಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು. 200 ವರ್ಷದಲ್ಲಿ ಪ್ರಪಂಚ ಇಷ್ಟು ಬದಲಾದರೂ ನಮ್ಮ ವಿಧಿ-ವಿಧಾನ ಹಾಗೆಯೇ ಇದೆ. ಪ್ರಪಂಚದ ಮುಖ ಅಂತರಾಳ ಬದಲಾದರೂ, ಇಲಾಖೆ ಕೆಲಸ ಮಾಡುವ ರೀತಿ ನೀತಿ ಮಾತ್ರ ಬದಲಾಗಿಲ್ಲ. ಆದರೆ, ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಕೆಲಸ ಮಾಡುವುದಕ್ಕೆ ಜನ ಇದ್ದಾರೆ ಎಂದು ಉಡಾಫೆಯಿಂದ ನೌಕರರ ಮೇಲೆ ಹೊರೆ ಹಾಕುವುದು ಅಮಾನವೀಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತ ಸುನೀಲ್ ಕುಮಾರ್ ಹಾಗೂ ಭೂ ಮಾಪನಾ ಇಲಾಖೆ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.
ಅಕ್ರಮ ವಲಸಿಗರಿಗೆ ಕೈಕೋಳ ತೊಡಿಸಿ, ಅಮೆರಿಕದಿಂದ ಗಡಿಪಾರು ಮಾಡುತ್ತಿರುವ ವೀಡಿಯೊ ಹಂಚಿಕೊಂಡ ಶ್ವೇತ ಭವನ
ವಾಶಿಂಗ್ಟನ್: ಇಲ್ಲಿನ ಸಿಯಾಟಲ್ ವಿಮಾನ ನಿಲ್ದಾಣದಿಂದ ಅಕ್ರಮ ಹಾಗೂ ದಾಖಲೆರಹಿತ ವಲಸಿಗರಿಗೆ ಕೈಕೋಳ ತೊಡಿಸಿ ಗಡಿಪಾರು ಮಾಡುತ್ತಿರುವ ವೀಡಿಯೊ ಹಂಚಿಕೊಂಡಿರುವ ಶ್ವೇತ ಭವನ, ಅದಕ್ಕೆ “ಅನ್ಯಗ್ರಹದ ಜೀವಿಗಳ ಗಡಿಪಾರು ವಿಮಾನ” ಎಂಬ ವ್ಯಂಗ್ಯಭರಿತ ಶೀರ್ಷಿಕೆ ನೀಡಿದೆ. ಈ ವೀಡಿಯೊವನ್ನು ಮರು ಟ್ವೀಟ್ ಮಾಡಿರುವ ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್, “ಹ್ಹ..ಹ್ಹ.. ವಾವ್” ಎಂದು ಉದ್ಗರಿಸಿದ್ದಾರೆ. ಹೊಸದಾಗಿ ಬಿಡುಗಡೆಯಾಗಿರುವ ವೀಡಿಯೊದಲ್ಲಿ ಅಮೆರಿಕ ವಲಸೆ ಮತ್ತು ಸುಂಕ ಜಾರಿ ಪ್ರಾಧಿಕಾರವು ಅಕ್ರಮ ಹಾಗೂ ದಾಖಲೆರಹಿತ ವಲಸಿಗರನ್ನು ಅವರ ಸ್ವದೇಶಗಳಿಗೆ ವಾಪಸು ಕಳಿಸಲು ಸಿದ್ಧಗೊಳಿಸುತ್ತಿರುವ ದೃಶ್ಯ ದಾಖಲಾಗಿದೆ. ಪ್ರಾಧಿಕಾರದ ವಿಮಾನ ಕಾರ್ಯಾಚರಣೆ ಘಟಕವು ಅಕ್ರಮ ವಲಸಿಗರನ್ನು ವಾಣಿಜ್ಯ ವಿಮಾನಗಳು ಹಾಗೂ ಚಾರ್ಟರ್ಡ್ ವಿಮಾನಗಳಲ್ಲಿ ಸ್ಥಳಾಂತರಿಸುವ ಹಾಗೂ ಹೊರದೂಡುವ ಕೆಲಸಕ್ಕೆ ನೆರವು ನೀಡುತ್ತಿದೆ. ಇತ್ತೀಚೆಗೆ ವಲಸೆ ಮತ್ತು ಸುಂಕ ಜಾರಿ ಪ್ರಾಧಿಕಾರದ ವಿಮಾನ ಕಾರ್ಯಾಚರಣೆ ಘಟಕವು ಸಿಯಾಟಲ್ ವಿಮಾನ ನಿಲ್ದಾಣದಿಂದ ದಾಖಲೆರಹಿತ ವಲಸಿಗರ ಗುಂಪೊಂದನ್ನು ಅವರ ಸ್ವದೇಶಗಳಿಗೆ ವಾಪಸು ಕಳಿಸಿತ್ತು. ಈ ಕಾರ್ಯಾಚರಣೆಯ ವೀಡಿಯೊವನ್ನು ವಲಸೆ ಮತ್ತು ಸುಂಕ ಜಾರಿ ಪ್ರಾಧಿಕಾರ ಹಂಚಿಕೊಂಡಿದೆ. ಈ ವೀಡಿಯೊ ವಲಸೆ ಮತ್ತು ಸುಂಕ ಜಾರಿ ಪ್ರಾಧಿಕಾರ ಹಾಗೂ ಹೊರದೂಡುವ ಕಾರ್ಯಾಚರಣೆ ಏಜೆಂಟ್ ಗಳು ವಿಮಾನ ನಿಲ್ದಾಣದ ಟಾರ್ಮ್ಯಾಕ್ ಮೇಲೆ ನಿಂತಿರುವುದು ಹಾಗೂ ಉಳಿದ ಏಜೆಂಟ್ ಗಳು ಕೋಳಗಳಿಗೆ ಹೊಂದಿಕೊಂಡಿರುವ ಸರಪಣಿಗಳನ್ನು ಪ್ಲಾಸ್ಟಿಕ್ ಪೆಟ್ಟಿಗೆಯಿಂದ ಹೊರತೆಗೆಯುತ್ತಿರುವ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಹಲವು ಅಕ್ರಮ ವಲಸಿಗರನ್ನು ವಿಮಾನಕ್ಕೆ ಏರಿಸುವುದಕ್ಕೂ ಮುನ್ನ, ಅವರ ಕೈಗಳನ್ನು ಸರಪಣಿ ಹಾಗೂ ಕೋಳಗಳೊಂದಿಗೆ ಬಿಗಿದಿರುವುದನ್ನೂ ಈ ವೀಡಿಯೊ ತೋರಿಸುತ್ತದೆ. ಅಮೆರಿಕದ ಈ ನಡೆಯ ವಿರುದ್ಧ ಜಾಗತಿಕ ಖಂಡನೆ ವ್ಯಕ್ತವಾಗಿದ್ದು, ಶ್ವೇತ ಭವನ ಹಂಚಿಕೊಂಡಿರುವ ವೀಡಿಯೊವನ್ನು ಕೀಳು ಅಭಿರುಚಿಯದ್ದು ಎಂದು ಹಲವಾರು ಸಾಮಾಜಿಕ ಬಳಕೆದಾರರು ಟೀಕಿಸಿದ್ದಾರೆ. ಎಲಾನ್ ಮಸ್ಕ್ ಅವರು ವಾವ್ ಎಂದಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟೆಕ್ ದೈತ್ಯ ಮಸ್ಕ್ ಕೂಡ ವಿದೇಶಿಯರಾಗಿದ್ದು ದಕ್ಷಿಣ ಆಫ್ರಿಕಾದಿಂದ ಬಂದವರು. ಅವರ ವಿಮಾನ ಯಾವಾಗ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು 1990ರಲ್ಲಿ ಎಲಾನ್ ಮಸ್ಕ್ ವಿದ್ಯಾರ್ಥಿಯಾಗಿದ್ದ ವೀಸಾ ಅವಧಿ ಮುಗಿದು ಅಮೆರಿಕದಲ್ಲಿ ನೆಲೆಸಿದ್ದರು ಎಂದು ನೆನಪಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಅಮೆರಿಕಕ್ಕೆ ಅಗತ್ಯವಿದ್ದಾಗ ಸಂಕೋಲೆ ಹಾಕಿ ಆಫ್ರಿಕಾದಿಂದ ಜನರನ್ನು ಕರೆತರಲಾಗಿತ್ತು. ಈಗ ಅವರು ಬೇಡವೆನಿಸಿದಾಗ ಅದೇ ರೀತಿ ಕೋಳ ತೊಡಿಸಿ ವಾಪಾಸ್ ಕಳುಹಿಸಲಾಗುತ್ತಿದೆ ಎಂದು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಹಲವು ಬಳಕೆದಾರರು ಶ್ವೇತಭವನದ ಅಧಿಕೃತ ಖಾತೆಯಿಂದ ಈ ರೀತಿಯ ವೀಡಿಯೊ ಹಂಚಿಕೊಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನಕಲಿ ಖಾತೆ ಆಗಿರಬಹುದೇ ಎಂದು ಕಮೆಂಟ್ ಮಾಡಿದ್ದಾರೆ. ಅಕ್ರಮ ವಲಸಿಗರನ್ನು ಕಳುಹಿಸುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಅಮಾನವೀಯ ನಡೆ ಸರಿಯಲ್ಲ ಎಂದು ಹಲವರು ಆಕ್ಷೇಪಿಸಿದ್ದಾರೆ.
ರೇಖಾ ಗುಪ್ತಾ ದಿಲ್ಲಿಯ ನೂತನ ಮುಖ್ಯಮಂತ್ರಿ, ಮಹಿಳೆಗೆ ಮಣೆ ಹಾಕಿದ ಬಿಜೆಪಿ
Delhi New CM Announcement: ರೇಖಾ ಗುಪ್ತಾ ಅವರನ್ನು ದಿಲ್ಲಿ ಸಿಎಂ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಿದೆ. ಫೆಬ್ರವರಿ 8ರಂದು ಹೊರಬಿದ್ದ ದಿಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಆಡಳಿತರೂಢ ಆಮ್ ಆದ್ಮಿ ಪಕ್ಷವನ್ನು ಹಿಮ್ಮೆಟ್ಟಿಸಿ ಬಿಜೆಪಿ ಅಧಿಕಾರಕ್ಕೇರಿತ್ತು. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದುಕೊಂಡು ಭರ್ಜರಿ ಜಯ ದಾಖಲಿಸಿತ್ತು. ಎಎಪಿ ಕೇವಲ 22 ಸ್ಥಾನ ಗೆದ್ದು 10 ವರ್ಷಗಳ ಆಡಳಿತ ಅಂತ್ಯಗೊಳಿಸಿತ್ತು.
ರಾಯಚೂರು| ರಿಮ್ಸ್ ಆಸ್ಪತ್ರೆಯಲ್ಲಿ ಅಸ್ಪೃಶ್ಯತೆ ಆಚರಣೆ ಆರೋಪ; ಪ್ರಕರಣ ದಾಖಲು: ಸಾಕ್ಷಿ ನೀಡಲು ಮನವಿ
ರಾಯಚೂರು: ಇಲ್ಲಿನ ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಮೇಲೆ ಅಸ್ಪೃಶ್ಯತೆ ಆಚರಣೆಯ ನಡೆದ ಬಗ್ಗೆ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಧಿತರು ಅಥವಾ ಇತರರು ಸಾಕ್ಷಿದಾರರು ಹೇಳಿಕೆ ನೀಡಬಹುದು ಎಂದು ಜಿಲ್ಲಾ ಪೊಲೀಸ್ ಉಪಾ ಅಧೀಕ್ಷಕರು ತಿಳಿಸಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಗುನ್ನೆ ನಂ:39/2023ರ ಪ್ರಕರಣದಲ್ಲಿ ರಾಯಚೂರಿನ ರಿಮ್ಸ್ ಹಾಗೂ ಇನ್ನಿತರೆ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿರುವುದರಿಂದ ಕಲಂ 7(1)ಎ ಪಿ.ಸಿ.ಆರ್ ಕಾಯ್ದೆ ಪ್ರಕಾರ ರಾಯಚೂರಿನ ಪೊಲೀಸ್ ಉಪಾಧೀಕ್ಷಕರು ಜನವರಿ 02ರಿಂದ ತನಿಖೆ ಪ್ರಾರಂಭಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಧಿತರ ಪರವಾಗಿ ಸಾರ್ವಜನಿಕರು ಪ್ರತ್ಯಕ್ಷ ಅಥವಾ ಪರೋಕ್ಷ ಸಾಕ್ಷಿಯಾಗಿರುವವರು ಅಸ್ಪೃಶ್ಯತೆ ಆಚರಣೆ ಆಗಿರುವ ಬಗ್ಗೆ ತಮ್ಮಲ್ಲಿರುವ ಸಾಕ್ಷಿಯನ್ನು ತನಿಖಾಧಿಕಾರಿಗಳಾದ ಪೊಲೀಸ್ ಉಪಾಧೀಕ್ಷಕರಿಗೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಪೂರ್ವ-ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಕಾಮಗಾರಿ; ರೈಲು ಸೇವೆಗಳಲ್ಲಿ ಬದಲಾವಣೆ
ಬೆಂಗಳೂರು : ಸುರಕ್ಷತಾ ಕ್ರಮಗಳು, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ನಡೆಯುತ್ತಿರುವ ರಸ್ತೆ ಕೆಳಸೇತುವೆ ಕಾಮಗಾರಿಗಳ ಹಿನ್ನೆಲೆಯಲ್ಲಿ, ಕೆಲವು ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ರೈಲುಗಳ ಸಂಚಾರ ಭಾಗಶಃ ರದ್ದು: ಫೆ.24 ಮತ್ತು 27ರಂದು ರೈಲು ಸಂಖ್ಯೆ 16521 ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ರೈಲು ಬೈಯ್ಯಪ್ಪನಹಳ್ಳಿ ಮತ್ತು ಕೆಎಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಿದೆ. ಇದು ಬೈಯ್ಯಪ್ಪನಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ರೈಲು ಸಂಖ್ಯೆ 56520 ಹೊಸಪೇಟೆ-ಕೆಎಸ್ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲು ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಿದೆ. ಇದು ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ. ಫೆ.25 ಮತ್ತು 28ರಂದು ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲು ಯಶವಂತಪುರದಿಂದ ಪ್ರಾರಂಭವಾಗಲಿದೆ. ಫೆ.23 ಮತ್ತು 26ರಂದು ಹೊರಡುವ ರೈಲು ಸಂಖ್ಯೆ 07339 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ. ಫೆ.24 ಮತ್ತು 27ರಂದು ಹೊರಡುವ ರೈಲು ಸಂಖ್ಯೆ 07340 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲು ಯಶವಂತಪುರದಿಂದ ಹೊರಡಲಿದೆ. ರೈಲುಗಳ ಮಾರ್ಗ ಬದಲಾವಣೆ : ಫೆ.24 ಮತ್ತು 27ರಂದು ಹೊರಡುವ ರೈಲು ಸಂಖ್ಯೆ 12658 ಕೆಎಸ್ಆರ್ ಬೆಂಗಳೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ ಮತ್ತು ಬಂಗಾರಪೇಟೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಎಸ್ಎಂವಿಟಿ ಬೆಂಗಳೂರು, ಬಾಣಸವಾಡಿ, ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ರೈಲು ಸಂಖ್ಯೆ 16022 ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಬಾಣಸವಾಡಿ, ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರಂ ಮೂಲಕ ಸಂಚರಿಸಲಿದೆ. ರೈಲು ಸಂಖ್ಯೆ 06269 ಮೈಸೂರು-ಎಸ್ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಬಾಣಸವಾಡಿ ಮತ್ತು ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ಮೇಲಿನ ರೈಲುಗಳು (12658, 16593, 06270, 16022 ಮತ್ತು 06269) ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ. ಫೆ.23 ಮತ್ತು 26ರಂದು ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್-ಕೊಯಮತ್ತೂರು ಡೈಲಿ ಎಕ್ಸ್ ಪ್ರೆಸ್ ರೈಲು ಗೌರಿಬಿದನೂರು, ಯಲಹಂಕ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಕಾರ್ಮೆಲಾರಾಮ್ ಮತ್ತು ಹೊಸೂರು ಮಾರ್ಗವಾಗಿ ಸಂಚರಿಸಲಿದೆ. ಮಾರ್ಗ ಬದಲಾವಣೆಯಿಂದ ಈ ರೈಲು ಬೆಂಗಳೂರು ಪೂರ್ವ, ಬೆಂಗಳೂರು ಕಂಟೋನ್ಮೆಂಟ್, ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಯಮಿತ ನಿಲುಗಡೆ ತಪ್ಪಿರುತ್ತದೆ. ರೈಲುಗಳ ಮರು ವೇಳಾಪಟ್ಟಿ : ಫೆ.24 ಮತ್ತು 27ರಂದು ಹೊರಡುವ ರೈಲು ಸಂಖ್ಯೆ 12658 ಕೆಎಸ್ಆರ್ ಬೆಂಗಳೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ 45 ನಿಮಿಷ ತಡವಾಗಿ ಹೊರಡಲಿದೆ. ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ 75 ನಿಮಿಷ ತಡವಾಗಿ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪಾಕಿಸ್ತಾನ ಪರ ಬೇಹುಗಾರಿಕೆ ಪ್ರಕರಣ| ವೇತನ್ ಲಕ್ಷ್ಮಣ, ಅಕ್ಷಯ್ ರವಿ ಸಹಿತ ಒಟ್ಟು 8 ಮಂದಿ ಸೆರೆ: ಎನ್ಐಎ ವರದಿ
ಕಾರವಾರ: ಇಲ್ಲಿನ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಪಾಕಿಸ್ತಾನಿ ಐಎಸ್ಐ-ಸಂಬಂಧಿತ ವಿಶಾಖಪಟ್ಟಣಂ ಬೇಹುಗಾರಿಕೆ ಪ್ರಕರಣದಲ್ಲಿ ಸೂಕ್ಷ್ಮ ಮತ್ತು ರಹಸ್ಯವಾದ ನೌಕಾ ರಕ್ಷಣಾ ಮಾಹಿತಿಯನ್ನು ಇಟ್ಟುಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಾಧ್ಯಮ ಹೇಳಿಕೆಯನ್ನು ಬುಧುವಾರ ಬಿಡುಗಡೆ ಮಾಡಿದೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಿಂದ ವೇತನ್ ಲಕ್ಷ್ಮಣ ತಾಂಡೇಲ ಮತ್ತು ಅಕ್ಷಯ್ ರವಿ ನಾಯ್ಕ ಎಂಬವರನ್ನು ಬಂಧಿಸಲಾಗಿದೆ. ಕೇರಳದ ಕೊಚ್ಚಿಯಿಂದ ಅಭಿಲಾಷ್ ಪಿ.ಎ. ಎಂಬಾತನನ್ನು ಬಂಧಿಸಲಾಗಿದ್ದು, ಇದರೊಂದಿಗೆ ಪ್ರಕರಣದ ಒಟ್ಟು ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ ಎಂದು ಎನ್ ಐ ಎ ಹೇಳಿದೆ. ಮಂಗಳವಾರ ಬಂಧಿತರಾಗಿರುವ ಎಲ್ಲಾ ಮೂವರು ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಗುಪ್ತಚರ ಆಪರೇಟಿವ್ಗಳೊಂದಿಗೆ (ಪಿಐಒ) ಸಂಪರ್ಕದಲ್ಲಿರುವುದು ಕಂಡುಬಂದಿದೆ. ಅವರು ಕಾರವಾರ ನೌಕಾನೆಲೆ ಮತ್ತು ಕೊಚ್ಚಿ ನೌಕಾನೆಲೆಯಲ್ಲಿ ಭಾರತೀಯ ರಕ್ಷಣಾ ಸಂಸ್ಥೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು ಮತ್ತು ಎನ್ಐಎ ತನಿಖೆಯ ಪ್ರಕಾರ, ಮಾಹಿತಿಯ ವಿನಿಮಯವಾಗಿ ಪಿಐಒಗಳಿಂದ ಹಣವನ್ನು ಪಡೆಯುತ್ತಿದ್ದರು ಎಂದು ಎನ್ ಐಎ ಹೇಳಿದೆ. ಬಂಧಿತ ಯುವಕರ ವಿರುದ್ಧ ಐಪಿಸಿಯ ಸೆಕ್ಷನ್ 120 ಬಿ ಮತ್ತು 121 ಎ, ಯುಎ (ಪಿ) ಕಾಯಿದೆಯ ಸೆಕ್ಷನ್ 17 ಮತ್ತು 18 ಮತ್ತು ಸೆಕ್ಷನ್ 3 ರ ಅಡಿಯಲ್ಲಿ ಆಂಧ್ರಪ್ರದೇಶದ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಮೂಲತಃ ದಾಖಲಿಸಿದ ಪ್ರಕರಣದಲ್ಲಿ ಎನ್ಐಎ ಇದುವರೆಗೆ ಇಬ್ಬರು ಪಾಕಿಸ್ತಾನಿ ಆಪರೇಟಿವ್ಗಳು ಸೇರಿದಂತೆ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಭಾರತ ವಿರೋಧಿ ಪಿತೂರಿಯ ಭಾಗವಾಗಿ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಸೂಕ್ಷ್ಮ ಪ್ರಮುಖ ಮಾಹಿತಿ ಸೋರಿಕೆಗೆ ಸಂಬಂಧಿಸಿದ ಬೇಹುಗಾರಿಕೆ ದಂಧೆಯಲ್ಲಿ ಬಂಧಿತ ಆರೋಪಿ ಆಕಾಶ್ ಸೋಲಂಕಿ ಜೊತೆಗೆ ಪಾಕಿಸ್ತಾನಿ ಪ್ರಜೆ ಮೀರ್ ಬಾಲಾಜ್ ಖಾನ್ ಭಾಗಿಯಾಗಿರುವುದಾಗಿ ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ. ಮೀರ್ ಬಾಲಾಜ್ ಮತ್ತು ಸೋಲಂಕಿ ಅವರಲ್ಲದೆ ಎನ್ಐಎ ಜೂನ್ 2023ರಲ್ಲಿ ಅಧಿಕಾರ ವಹಿಸಿಕೊಂಡ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಪಿಐಒ ಅಲ್ವೆನ್, ಮನಮೋಹನ್ ಸುರೇಂದ್ರ ಪಾಂಡ ಮತ್ತು ಅಮಾನ್ ಸಲೀಂ ಶೇಖ್ ಎಂದು ಗುರುತಿಸಲಾಗಿದೆ. ಪಾಕ್ ಮೂಲದ ಮತ್ತು ಇತರ ದೇಶವಿರೋಧಿ ಅಂಶಗಳ ಸಂಪೂರ್ಣ ಬೇಹುಗಾರಿಕೆ ಪಿತೂರಿಯನ್ನು ಬಯಲಿಗೆಳೆಯಲು ಭಯೋತ್ಪಾದನಾ ನಿಗ್ರಹ ಸಂಸ್ಥೆ ಪ್ರಕರಣದ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ ಕರ್ನಾಟಕದಾದ್ಯಂತ ವಿಸ್ತರಣೆ! ಸಚಿವ ದಿನೇಶ್ ಗುಂಡೂರಾವ್
Puneeth Rajkumar Hrudaya Jyoti Scheme : ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ ಕರ್ನಾಟಕದಾದ್ಯಂತ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ರಾಜ್ಯದ 80 ತಾಲೂಕು ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿಯೂ ಜಾರಿಗೊಳಿಸಲಾಗುತ್ತದೆ. ಈ ಬಗ್ಗೆ ವಿವರ ಇಲ್ಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ: ತನ್ನನ್ನೇ ಆಯ್ಕೆ ಮಾಡುವ ವಿಶ್ವಾಸದಲ್ಲಿ ಬಿವೈ ವಿಜಯೇಂದ್ರ! ಘೋಷಣೆ ಯಾವಾಗ?
ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ಶೀಘ್ರದಲ್ಲಿಯೇ ನಡೆಯಲಿದೆ. ಈ ಸಂದರ್ಭದಲ್ಲಿ ತನ್ನನ್ನೇ ಆಯ್ಕೆ ಮಾಡುವ ವಿಶ್ವಾಸದಲ್ಲಿ ಬಿವೈ ವಿಜಯೇಂದ್ರ ಇದ್ದಾರೆ. ಫೆಬ್ರವರಿ ತಿಂಗಳ ಅಂತ್ಯದಲ್ಲಿ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ಇತ್ತ ರೆಬೆಲ್ ಟೀಂ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಪ್ರಯತ್ನ ನಡೆಸಿದ್ದರೂ ಅದು ಯಶಸ್ವಿಯಾಗಿಲ್ಲ. ಈ ಬಗ್ಗೆ ವಿವರ ಇಲ್ಲಿದೆ.
Champions Trophy - ಅಂತೂ ಕರಾಚಿ ಕ್ರೀಡಾಂಗಣದಲ್ಲಿ ಅರಳಿದ ತ್ರಿವರ್ಣಧ್ವಜ!: ನಮ್ಮದು ವಿಶಾಲ ಹೃದಯ ಎಂದ ಪಾಕಿಗಳು!
ಅಂತೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ ವೇಳೆ ಉಂಟಾಗಿದ್ದ ರಾಷ್ಟ್ರಧ್ವಜ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ಬುಧವಾರ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಗಳ ನಡುವೆ ನಡೆದ ಉದ್ಘಾಟನಾ ಪಂದ್ಯದ ವೇಳೆ ಭಾರತದ ತ್ರಿವರ್ಣ ಧ್ವಜವೂ ರಾರಾಜಿಸಿದೆ. ಕೆಲ ದಿನಗಳ ಹಿಂದಷ್ಟೇ ಕ್ರೀಡಾಂಗಣದಲ್ಲಿ ಟೂರ್ನಿ ಉದ್ಘಾಟನಾ ಸಮಾರಂಭ ನಡೆದಿತ್ತು. ಆ ವೇಳೆ ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳಲ್ಲಿ 7 ತಂಡಗಳ ರಾಷ್ಟ್ರಧ್ವಜಗಳು ಮಾತ್ರ ಕ್ರೀಡಾಂಗಣದಲ್ಲಿ ಕಂಡು ಬಂದಿದ್ದವು. ಭಾರತದ ತ್ರಿವರ್ಣ ಧ್ವಜ ಕಾಣಿಸಿಕೊಳ್ಳಲೇ ಇಲ್ಲ. ಇದು ಬಹುದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(PCB) ಇಂತಹ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿದು ಬಂದಿತ್ತು. ಆದರೆ ಇದು ಐಸಿಸಿಯ ನಿರ್ಧಾರದಂತೆ ಭಾರತದ ಧ್ವಜವನ್ನು ಹಾರಿಸಲಾಗಿಲ್ಲ ಎಂದು ಪಿಸಿಬಿ ಸ್ಪಷ್ಟನೆ ನೀಡಿತ್ತು. ಇದಕ್ಕೂ ಮೊದಲು ಭಾರತ ತಂಡದ ಜೆರ್ಸಿಯಲ್ಲಿ ಆತಿಥೇಯ ದೇಶವಾದ ಪಾಕಿಸ್ತಾನದ ಹೆಸರು ಇರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಆಟಗಾರರು ಅದನ್ನು ಧರಿಸಿ ಮೊದಲ ಬಾರಿ ಫೋಟೋ ಶೂಟ್ ನೀಡಿದಾಗ ಪಾಕಿಸ್ತಾನದ ಹೆಸರು ಇರುವುದು ಸ್ಪಷ್ಟವಾಗಿತ್ತು. ಅಲ್ಲಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವಿವಾದದಿಂದ ದೂರ ಉಳಿಯಿತು. ಈ ಬೆಳವಣಿಗೆಯ ಬೆನ್ನಲ್ಲೇ ಕರಾಚಿ ಕ್ರೀಡಾಂಗಣದ ಛಾವಣೆಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಉಳಿದ 7 ದೇಶಗಳ ಧ್ವಜಗಳೊಂದಿಗೆ ಅನಾವರಣಗೊಳಿಸಲಾಗಿದೆ. ಇದರ ಫೋಟೋ ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದು ತಾನಾಗಿಯೇ ತೆಗೆದುಕೊಂಡ ನಿರ್ಧಾರವೇ ಅಥವಾ ಬಿಸಿಸಿಐ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿತೇ? ಇಲ್ಲಾ ಐಸಿಸಿ ನಿರ್ದೇಶನದಂತೆ ತಿರಂಗಾ ಅಳವಡಿಸಲಾಗಿದೆಯೇ ಎಂದು ತಿಳಿದು ಬಂದಿಲ್ಲ. ಪಿಸಿಬಿ ಸಹ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಪಾಕಿಸ್ತಾನದ ನೆಟ್ಟಿಗರು ಮಾತ್ರ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ``ನಮ್ಮದು ವಿಶಾಲ ಹೃದಯ. ನಾವು ಎಂದು ಬೆನ್ನುತಟ್ಟಿಕೊಂಡಿದ್ದಾರೆ.
ರಾಯಚೂರು| ಲಾರಿ- ಬೈಕ್ ಮುಖಾಮುಖಿ ಢಿಕ್ಕಿ: ಬೈಕ್ ಸವಾರ ಸಾವು
ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ರಸ್ತೆಯ ಬಳಿ ಸಂಜೆ ಲಾರಿ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸಂಗಾಪುರ ಗ್ರಾಮದ ನಿವಾಸಿ ಬಸನಗೌಡ (60) ಎಂದು ಗುರುತಿಸಲಾಗಿದೆ. ಬಸನಗೌಡ ಬೈಕ್ ನಲ್ಲಿ ಸ್ವಗ್ರಾಮದಿಂದ ರಾಯಚೂರಿಗೆ ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದರು. ಮಾನ್ವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ.
ಮುಡಾದಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್: ಅವರು ಹೇಳಿದಂತೆ ತನಿಖೆ ಮಾಡಬೇಕಾ? ಬಿಜೆಪಿ ಆರೋಪಕ್ಕೆ ಪೊನ್ನಣ್ಣ ಕಿಡಿ
ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಲೋಕಾಯುಕ್ತ ಪೊಲೀಸರ ಈ ನಡೆಗೆ ಬಿಜೆಪಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಈ ಸಂಬಂಧ ಬಿಜೆಪಿ ವಿರುದ್ಧ ಸಿಎಂ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅವರು ಹೇಳಿದಂತೆ ತನಿಖೆ ಮಾಡಬೇಕಾ? ಹೇಗೆ ತನಿಖೆ ಮಾಡಬೇಕು ಎಂದು ಅವರ ಅಧ್ಯಕ್ಷರು ಬಂದು ಹೇಳುತ್ತಾರಾ? ಎಂದು ಪೊನ್ನಣ್ಣ ಪ್ರಶ್ನಿಸಿದ್ದಾರೆ.
ಉದ್ಯೋಗ ಮೇಳ ನಿರುದ್ಯೋಗಿಗಳ ಆಶಾಕಿರಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಉದ್ಯೋಗ ಮೇಳಗಳು ನಿರುದ್ಯೋಗಿಗಳಿಗೆ ಆಶಾಕಿರಣವಾಗಿದ್ದು, ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದರ ಜೊತೆಗೆ ಅವರ ಆರ್ಥಿಕ ಸಬಲೀಕರಣಕ್ಕೂ ಅನುಕೂಲವಾಗಲಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದ ಅಜ್ಜರಕಾಡಿನ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕೌಶಲ್ಯ ರೋಜ್ಗಾರ್ ಮೇಳ - ಉದ್ಯೋಗ ಮೇಳ-ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಯುವ ಸಂಪತ್ತನ್ನು ಹೊಂದಿರುವ ದೇಶವಾಗಿದ್ದು, ಸೃಜನಾತ್ಮಕ ಕೌಶಲ್ಯಗಳನ್ನು ನಮ್ಮ ಯುವಪೀಳಿಗೆ ಹೊಂದಿವೆ. ಅವರಲ್ಲಿರುವ ಕೌಶಲ್ಯವನ್ನು ಹೊರತರುವಲ್ಲಿ ಉದ್ಯೋಗ ಮೇಳಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಅವರು ನುಡಿದರು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪೆನಿಗಳು ಉದ್ಯೋಗ ಪತ್ರ ನೀಡಿದ ಅಭ್ಯರ್ಥಿಗಳಿಗೆ ಕನಿಷ್ಠ ಹದಿನೈದು ದಿನಗಳ ಒಳಗೆ ಉದ್ಯೋಗ ನೀಡಿದಲ್ಲಿ, ಉದ್ಯೋಗ ಮೇಳಗಳು ಸಾರ್ಥಕವಾಗುತ್ತದೆ ಎಂದ ಅವರು, ಉದ್ಯೋಗಾಕಾಂಕ್ಷಿಗಳ ಅರ್ಹತೆಗೆ ಅನುಗುಣವಾಗಿ ಕೆಲಸ ಸಿಗುವಂತಾಗಲಿ ಎಂದು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದ್ದು, ಉದ್ಯೋಗ ದೊರಕುವುದೇ ಕಷ್ಟ ವಾಗಿದೆ. ಈ ನಿಟ್ಟಿನಲ್ಲಿ ಅಲ್ಲಲ್ಲಿ ಉದ್ಯೋಗ ಮೇಳಗಳ ಆಯೋಜನೆ ಅತ್ಯವಶ್ಯಕವಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗದೇ ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಸಂದರ್ಶನವನ್ನು ಎದುರಿಸಬೇಕು ಎಂದರು. ಅಲ್ಲದೇ ಸ್ವ-ಉದ್ಯೋಗ ಮಾಡಲು ಆಸಕ್ತಿ ಹೊಂದಿರುವವರಿಗೂ ಈಗ ಸಾಕಷ್ಟು ಅವಕಾಶಗಳಿವೆ. ಸರಕಾರದ ವತಿಯಿಂದ ಸಾಲ ಸೌಲಭ್ಯ ಹಾಗೂ ಸಹಾಯಧನವನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಯುವ ಜನತೆ ಪಡೆದು ಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಅಭ್ಯರ್ಥಿಗಳು ಉದ್ಯೋಗ ಮೇಳದ ಸಂದರ್ಶ ದಲ್ಲಿ ತಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ ಸಿ.ಎಂ.ಕೆ.ಕೆ.ವೈ ಯೋಜನೆಯಡಿ ಸೆಲ್ಫ್ ಎಂಪ್ಲಾಯ್ಮೆಂಟ್ ಟೈಲರ್ ಜಾಬ್ ರೋಲ್ನಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಟೂಲ್ಕಿಟ್ಗಳನ್ನು ವಿತರಿಸಲಾಯಿತು. ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸೀತಾರಾಮ ಶೆಟ್ಟಿ, ಡಾ.ಜಿ.ಶಂಕರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಪ್ರಸಾದ್, ಉದ್ಯೋಗದಾತರು, ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎ.ಶ್ರೀನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೀಕ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ವಂದಿಸಿದರು. ಉದ್ಯೋಗ ಮೇಳದಲ್ಲಿ 2000ಕ್ಕೂ ಅಧಿಕ ಮಂದಿ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು, 40ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗಕ್ಕೆ ಸಂದರ್ಶನ ನಡೆಸಿದರು. ‘ವಿವಿಧ ಇಲಾಖೆಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಇಲಾಖೆ ಕೌಶಲ್ಯಾಭಿವೃದ್ಧಿ ನಿಗಮವನ್ನು 2016ರಲ್ಲಿ ಪ್ರಾರಂಭಿಸಿದೆ. ಈ ಮೂಲಕ 16ರಿಂದ 35 ವರ್ಷದೊಳಗಿನ ಯುವಕ ಯುವತಿಯರಿಗೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ, ಉದ್ಯೋಗ ಅವಕಾಶ ಕಲ್ಪಿಸುವುದು ನಿಗಮದ ಮಹತ್ತರ ಉದ್ದೇಶವಾಗಿದೆ.’ -ಎ.ಶ್ರೀನಿವಾಸ ರಾವ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ.
ಮಾಹಿತಿ ಹಕ್ಕು ಕಾಯ್ದೆ ದುರುಪಯೋಗ ತಪ್ಪಿಸಿ : ಕೆ.ವಿ.ಪ್ರಭಾಕರ್
ಬೆಂಗಳೂರು : ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗ ಮತ್ತು ದುರ್ಬಲಗೊಳಿಸುವ ಪ್ರಯತ್ನವನ್ನು ತಪ್ಪಿಸಿ ಸರಕಾರದ ಸಾಮಾಜಿಕ ನ್ಯಾಯದ ಗುರಿಯನ್ನು ಈಡೇರಿಸಿ ಎಂದು ನೂತನವಾಗಿ ನೇಮಕಗೊಂಡ ಮಾಹಿತಿ ಹಕ್ಕು ಆಯುಕ್ತರಿಗೆ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಾಹಿತಿ ಆಯುಕ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಬದ್ರುದ್ದೀನ್, ಮಮತಾಗೌಡ, ರಾಜಶೇಖರ್ ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ, ಚಿದಾನಂದ ಪಾಟೀಲ್ ಅವರನ್ನು ಸನ್ಮಾನಿಸಿ ಮಾತನಾಡಿದರು. 2005ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆಗೆ ಅ.12ಕ್ಕೆ 20 ವರ್ಷ ತುಂಬುತ್ತಿದೆ. ರಾಜಸ್ಥಾನದ ದೇವದುಂಗ್ರಿ ಎಂಬ ಹಳ್ಳಿಯಲ್ಲಿ ಅರುಣಾ ರಾಯ್ ಮತ್ತು ನಿಖಿಲ್ ದವೆ ಮತ್ತಿತರ ಚಳವಳಿಗಾರರ ಮೂಲಕ 1987ರಲ್ಲಿ ಮೊಳಕೆಯೊಡೆದ ಈ ಕನಸು, ಚಳವಳಿ ರೂಪ ಪಡೆದು ಕಾಯ್ದೆಯಾಗಿ ಅನುಷ್ಠಾನಕ್ಕೆ ಬರಲು 2005ರ ತನಕ ಕಾಯಬೇಕಾಯಿತು. ಕೇಂದ್ರದಲ್ಲಿದ್ದ ಯುಪಿಎ-1 ಕಾಂಗ್ರೆಸ್ ಸರಕಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾಗಾಂಧಿಯವರ ಒಟ್ಟು ಇಚ್ಚಾಶಕ್ತಿಯ ಫಲವಾಗಿ ಕಾಯ್ದೆ ಜಾರಿಗೆ ಬಂದಿದೆ ಎಂದು ಪ್ರಭಾಕರ್ ಮಾಹಿತಿ ನೀಡಿದರು. 20 ವರ್ಷಗಳಲ್ಲಿ ಈ ಕಾಯ್ದೆಯನ್ನು ಕೇಂದ್ರ ಸರಕಾರ ದುರ್ಬಲಗೊಳಿಸುತ್ತಿದೆ ಎನ್ನುವ ಅಸಮಾಧಾನ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ಸುಪ್ರೀಂಕೋರ್ಟ್ ಇದೇ ಅಸಮಾಧಾನವನ್ನು ಹೊರ ಹಾಕಿದೆ. ಮಾಹಿತಿ ಹಕ್ಕು, ಸಂವಿಧಾನದ 19(1)(ಎ) ವಿಧಿಯನ್ವಯ ಮೂಲಭೂತವಾದ ಹಕ್ಕು ಎಂದು ನ್ಯಾಯಾಂಗವು ಹಲವು ಬಾರಿ ಹೇಳಿದೆ. ಇದಕ್ಕೆ ಪೂರಕವಾಗಿ ಆಯುಕ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದರು. ಕಾಯ್ದೆಯನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಳ್ಳುವವರ ಮತ್ತು ಬ್ಲಾಕ್ ಲಿಸ್ಟ್ ಗೆ ಸೇರುವ ಮಾಹಿತಿ ಹಕ್ಕು ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದು ಕಡೆ ಆರ್ಟಿಐ ಕಾರ್ಯಕರ್ತರ ಕೊಲೆ ಪ್ರಕರಣಗಳೂ ವರದಿ ಆಗುತ್ತಲೇ ಇವೆ. ವಿಳಂಬಿತ ನ್ಯಾಯವೂ ನ್ಯಾಯದ ನಿರಾಕರಣೆಯೇ ಎನ್ನುತ್ತದೆ ನ್ಯಾಯಶಾಸ್ತ್ರ. ಪರಿಣಾಮಕಾರಿಯಾದ ಕಾನೂನೊಂದರ ಸುಗಮ ಅನುಷ್ಠಾನಕ್ಕೆ ಹಿಂಬಾಗಿಲ ಅಡ್ಡಿಗಳನ್ನು ಒಡ್ಡುವ ಮೂಲಕ, ಆ ಕಾನೂನನ್ನು ಕೆಲಸಕ್ಕೆ ಬಾರದಂತೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಹೆಚ್ಚು ಮಂದಿ ಪತ್ರಕರ್ತರು ಮಾಹಿತಿ ಆಯೋಗದ ಆಯುಕ್ತರಾಗಿರುವುದು ಮತ್ತು ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿರುವುದು ಇತಿಹಾಸದಲ್ಲಿ ಇದು ಮೊದಲು. ಈ ಸವಾಲುಗಳನ್ನೂ ನೂತನ ಆಯುಕ್ತರಾದ ಪತ್ರಕರ್ತರು ನಿರ್ವಹಿಸಬೇಕು ಎಂದು ಪ್ರಭಾಕರ್ ಕರೆ ನೀಡಿದರು. ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್, ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಖಜಾಂಚಿ ವಾಸುದೇವ ಹೊಳ್ಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಲ್ಪೆ ದ್ವೀಪಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಡಿಸಿ ವಿದ್ಯಾಕುಮಾರಿ ಸೂಚನೆ
ಉಡುಪಿ, ಫೆ.19: ಮಲ್ಪೆ-ಪಡುಕೆರೆ ಆಸುಪಾಸಿನಲ್ಲಿರುವ ದರಿಯಾ ಬಹದ್ದೂರ್ ಹಾಗೂ ಮಾಲ್ತಿದ್ವೀಪಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಲು ಅಗತ್ಯವಿರುವ ಮಾಸ್ಟರ್ ಪ್ಲಾನ್ ತಯಾರಿಸುವಂತೆ, ಪ್ರವಾಸಿಗರ ಅನುಕೂಲಕ್ಕಾಗಿ ವಿವಿಧ ಚಟುವಟಿಕೆಗಳು ಸೇರಿದಂತೆ ಮೂಲ ಸೌಕರ್ಯ ಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮಲ್ಪೆ-ಪಡುಕೆರೆ ಸಮೀಪದಲ್ಲಿರುವ ದರಿಯಾ ಬಹದ್ದೂರ್ ಹಾಗೂ ಮಾಲ್ತಿದ್ವೀಪಗಳು ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು, ಪ್ರವಾಸಿ ತಾಣವಾಗಿ ಅಭಿವೃಧ್ಧಿ ಪಡಿಸಲು ಸೂಕ್ತವೆನಿಸಿದೆ. ಇಲ್ಲಿನ ಸಹಜ ಸೊಬಗು ಪ್ರವಾಸಿಗರನ್ನು ಮನಸೂರೆಗೊಳಿಸುವಂತಿದೆ. ಈ ದ್ವೀಪಗಳಲ್ಲಿ ಪ್ರವಾಸಿಗರ ಚಟುವಟಿಕೆಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು. ಬೈಂದೂರಿನ ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಾಗ ಆಧುನಿಕತೆ ಯೊಂದಿಗೆ, ಆಕರ್ಷಕ ವಾಗಿರುವಂತೆ ನೋಡಿಕೊಳ್ಳಬೇಕು. ಪ್ರವಾಸಿಗರಿಗೆ ಅಗತ್ಯವಿರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಆಸನದ ವ್ಯವಸ್ಥೆ ಸೇರಿದಂತೆ ಎಲ್ಲಾ ಅತ್ಯಗತ್ಯ ಸೌಕರ್ಯ ಗಳನ್ನು ಕಲ್ಪಿಸಬೇಕು ಎಂದರು. ತ್ರಾಸಿ ಬೀಚ್ನ ನಿರ್ವಹಣೆ ಹಾಗೂ ಅಲ್ಲಿನ ಜಲಸಾಹಸ ಚಟುವಟಿಕೆ ಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಟೆಂಡರ್ ಕರೆಯಲಾಗಿತ್ತು. ಆದರೆ ಯಾವುದೇ ಅಭ್ಯರ್ಥಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇರುವುದು ಕಂಡುಬಂದಿದೆ. ಕೆಲವು ಗುತ್ತಿಗೆದಾರರು ಕಡಲ ತೀರ ಹಾಗೂ ನದಿಯಲ್ಲಿಯೂ ಜಲಸಾಹಸ ಚಟುವಟಿಕೆ ಕೈಗೊಳ್ಳಲು ಹಾಗೂ ಪಾರ್ಕಿಂಗ್ ವ್ಯವ ಸ್ಥೆಯ ಸ್ಥಳ ಬದಲಾವಣೆ ಸೇರಿದಂತೆ ಕೆಲವು ವ್ಯವಸ್ಥೆಗಳನ್ನು ಕಲ್ಪಿಸಲು ಕೋರಿದ್ದಾರೆ. ಇವುಗಳನ್ನು ಪರಿಶೀಲಿಸಿ, ಸೂಕ್ತ ವ್ಯವಸ್ಥೆ ಸೇರಿದಂತೆ ಜಲಸಾಹಸ ಚಟುವಟಿಕೆ ಗಳಲ್ಲಿ ಭಾಗವಹಿಸುವವರಿಗೆ ಮೂರನೇ ವ್ಯಕ್ತಿಗಳ ವಿಮಾ ಸೌಲಭ್ಯ ಕಲ್ಪಿಸಲು ಸಹ ಷರತ್ತು ವಿಧಿಸಬೇಕು ಎಂದರು. ಮಲ್ಪೆ ಬೀಚ್ ಪ್ರದೇಶದಲ್ಲಿ ವ್ಯಾಪಾರ ಮಾಡುವ ಅಂಗಡಿಗಳು, ಕಾಟೇಜ್ ಸೇರಿದಂತೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ನೀಡಲಾದ ಸ್ಥಳದ ಬಾಡಿಗೆ ಪಾವತಿಗೆ ಕ್ರಮ ಕೈಗೊಳ್ಳಬೇಕು. ತ್ರಾಸಿ ಬೀಚ್ ಪಕ್ಕದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೀಚ್ ಉದ್ದಕ್ಕೂ ದಾರೀದೀಪ ಅಳವಡಿಸಬೇಕು ಎಂದರು. ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಪೌರಾಯುಕ್ತ ಉದಯ್ಕುಮಾರ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಮಿಕನ ಮೃತದೇಹ ಎಳೆದೊಯ್ದ ಪ್ರಕರಣ | ಆರೋಪಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ: ಸಂತೋಷ್ ಲಾಡ್
ಧಾರವಾಡ : ಕಲಬುರಗಿಯ ಖಾಸಗಿ ಕಂಪೆನಿಯಲ್ಲಿ ಮೃತ ಕಾರ್ಮಿಕನ ದೇಹವನ್ನು ಇತರೆ ಕಾರ್ಮಿಕರು ಎಳೆದೊಯ್ದಿರುವ ಘಟನೆ ತೀವ್ರ ಆಘಾತ ಮೂಡಿಸಿದೆ. ಕೃತ್ಯ ಎಸಗಿದವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬುಧವಾರ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಜೊತೆಯಲ್ಲೇ ಕೆಲಸ ಮಾಡುವ ಕಾರ್ಮಿಕ ಮೃತಪಟ್ಟಾಗ ಕಾರ್ಮಿಕರು ಈ ರೀತಿ ಅಮಾನುಷವಾಗಿ ಮೃತದೇಹದೊಂದಿಗೆ ನಡೆದುಕೊಂಡಿದ್ದಾರೆ ಎಂಬುದೇ ಅರಗಿಸಿಕೊಳ್ಳಲಾಗುತ್ತಿಲ್ಲ. ಕಾರ್ಮಿಕರೇ ಮೃತದೇಹವನ್ನು ಎಳೆದೊಯ್ದಿದ್ದನ್ನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಇಂತಹುದು ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಇದು ನಮ್ಮ ಮನಸ್ಥಿತಿಯನ್ನು ತೋರಿಸುತ್ತದೆ. ಘಟನೆ ಬಗ್ಗೆ ವಿಷಾದವಿದೆ. ಮನುಷ್ಯರಲ್ಲಿ ಮಾನವೀಯತೆಯೇ ಮುಖ್ಯವಾಗಬೇಕು. ಮೃತದೇಹಕ್ಕೆ ಗೌರವ ಕೊಡಬೇಕು ಎಂಬ ಬಗ್ಗೆ ನಾವು ತಿಳಿದಿರಬೇಕು. ಘಟನೆ ಬಗ್ಗೆ ಈಗಾಗಲೇ ಕಲಬುರಗಿ ಪೆÇಲೀಸ್ ವರಿಷ್ಠಾಧಿಕಾರಿಗಳೊಡನೆ ಮಾತನಾಡಿ ಮಾಹಿತಿ ತರಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಸುಂದರ ಮಲೆಕುಡಿಯ ಅವರ ಕೊಲೆಯತ್ನ ಪ್ರಕರಣ: ನಾಲ್ಕು ಮಂದಿ ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ
ಮಂಗಳೂರು: ಸುಮಾರು ಹತ್ತು ವರ್ಷಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗೋಪಾಲ ಗೌಡ ಯಾನೆ ಗೋಪಾಲಕೃಷ್ಣ ಗೌಡ, ಮಂಗಳೂರಿನ ಕುಡುಪು ಪಾಲ್ಡನೆಯ ಎ.ದಮಯಂತಿ, ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ವಸಂತ ಗೌಡ ಯಾನೆ ರಾಮಣ್ಣ ಗೌಡ, ನೆರಿಯ ಗ್ರಾಮದ ಪುಷ್ಪಲತಾ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಆರೋಪಿ ಗೋಪಾಲ ಗೌಡನಿಗೆ 3 ವರ್ಷಗಳ ಕಾಲ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ ಹಾಗೂ ದಂಡ ತೆರಲು ವಿಫಲವಾದಲ್ಲಿ ಮತ್ತೆ 6 ತಿಂಗಳ ಸಾದಾ ಸಜೆ, ಆರೋಪಿಗಳಾದ ದಮಯಂತಿ, ವಸಂತ ಗೌಡ, ಪುಷ್ಪಲತಾರಿಗೆ 2 ವರ್ಷ ಗಳ ಶಿಕ್ಷೆ ಮತ್ತು ತಲಾ 15 ಸಾವಿರ ರೂ. ದಂಡ ಹಾಗೂ ದಂಡ ತೆರಲು ವಿಫಲವಾದಲ್ಲಿ ಮತ್ತೆ 3 ತಿಂಗಳ ಸಾದಾ ಶಿಕ್ಷೆ ವಿಧಿಸಲಾಗಿದೆ. ಸೆ.506ರ ಅಡಿ ನಾಲ್ಕು ಮಂದಿ ಆರೋಪಿಗಳಿಗೆ 6 ತಿಂಗಳ ಸಾದಾ ಶಿಕ್ಷೆ ವಿಧಿಸಿ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ತೀರ್ಪು ನೀಡಿದ್ದಾರೆ. ದಂಡದ ಮೊತ್ತ 1.45 ಲಕ್ಷ ರೂ.ವನ್ನು ಗಾಯಾಳು ಸುಂದರ ಮಲೆಕುಡಿಯ ಅವರಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ. *ಘಟನೆಯ ವಿವರ: 2015ರ ಜು. 26ರಂದು ಸಂಜೆ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿನ ಜಮೀನಿನಲ್ಲಿದ್ದ ಕಾಡನ್ನು ರೇವತಿ ಮತ್ತು ಬಿ.ಎ. ಸುಂದರ ಮಲೆಕುಡಿಯ ಅವರು ಮಕ್ಕಳಾದ ಪೂರ್ಣೇಶ್ ಮತ್ತು ಪೂರ್ಣಿಮಾರೊಂದಿಗೆ ಕಡಿಯುತ್ತಿ ದ್ದಾಗ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ಧದಿಂದ ಬೈದು ಕಳೆ ಕತ್ತರಿಸುವ ಯಂತ್ರದಿಂದ ಸುಂದರ ಮಲೆಕುಡಿಯರ ಕೈಬೆರಳುಗಳನ್ನು ತುಂಡರಿಸಿ ಗಂಭೀರ ಗಾಯಗೊಳಿಸಿದ್ದರು. ಬಳಿಕ ಪರಾರಿಯಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಂಟ್ವಾಳ ಉಪವಿಭಾಗದ ಅಂದಿನ ಡಿವೈಎಸ್ಪಿ ರಾಹುಲ್ ಕುಮಾರ್ ತನಿಖೆ ನಡೆಸಿದ್ದರು. ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ. ನಮ್ರತ್ ಭಾನು ಮತ್ತು ಎ.ಜೆ. ಆಸ್ಪತ್ರೆಯ ವೈದ್ಯ ಡಾ. ದಿನೇಶ್ ಕದಮ್, ಫೊರೆನ್ಸಿಕ್ ಲ್ಯಾಬ್ನ ಡಿಎನ್ಎ ವಿಭಾಗದ ತಜ್ಞೆ ಡಾ. ಶಹನಾಝ್ ಫಾತಿಮಾ ಸಹಿತ 29 ಮಂದಿ ಸರಕಾರದ ಪರವಾಗಿ ಸಾಕ್ಷಿ ನುಡಿದಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದಿಸಿದ್ದರು.
ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆ : ಮುಖ್ಯಮಂತ್ರಿ ಚಂದ್ರು
ಬೆಂಗಳೂರು : ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ಸಿಎಂ ನಡೆಸುತ್ತಿರುವ ಬಜೆಟ್ ಪೂರ್ವಭಾವಿ ಸಭೆಗಳಿಗೆ ಅಲ್ಪಸಂಖ್ಯಾತರ ಮುಖಂಡರುಗಳನ್ನು ಕರೆದು ಸಭೆ ನಡೆಸದಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಾಕಾರಕ್ಕೆ ಧಕ್ಕೆ ತರುವಂತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುಧವಾರ ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು, ಈಗಾಗಲೇ ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ಮತ್ತು ನಾಯಕರುಗಳ ಸಭೆಗಳನ್ನು ನಡೆಸಿ ಸಿಎಂ, ಅವರ ಬೇಡಿಕೆಗಳನ್ನು ಆಲಿಸಿ ಬಜೆಟ್ ಪೂರ್ವ ತಯಾರಿಯನ್ನು ನಡೆಸಿದ್ದಾರೆ. ಆದರೆ, ರಾಜ್ಯದ ಅಲ್ಪಸಂಖ್ಯಾತರ ಯಾವುದೇ ಸಭೆಯನ್ನು ಇದುವರೆಗೂ ನಡೆಸದೆ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ. ಕೇವಲ ತಮ್ಮ ಮಂತ್ರಿಮಂಡಲದ ಪ್ರಮುಖ ಸಚಿವರೊಬ್ಬರೇ ಎಲ್ಲ ಅಲ್ಪಸಂಖ್ಯಾತರ ಧ್ವನಿ ಎಂಬಂತೆ ಭಾಸವಾಗುತ್ತಿರುವುದು ಕಂಡುಬರುತ್ತಿದೆ ಎಂದು ಟೀಕಿಸಿದ್ದಾರೆ. ಅಲ್ಪಸಂಖ್ಯಾತರಲ್ಲಿ ಮುಸ್ಲಿಮ್ ಸಮುದಾಯದವರೊಂದಿಗೆ ಕ್ರೈಸ್ತ, ಜೈನ, ಬೌದ್ಧ, ಪಾರ್ಸಿ, ಸಿಖ್ ಸಮುದಾಯಗಳು ಸಹ ಸೇರಿರುವುದು ಆಳುವವರು ಮರೆಯುತ್ತಿರುವಂತಿದೆ. ಆದುದರಿಂದ ಕೂಡಲೇ ಅಲ್ಪಸಂಖ್ಯಾತರ ಎಲ್ಲ ವರ್ಗಗಳ ಮುಖಂಡರುಗಳನ್ನು, ಸಂಘ-ಸಂಸ್ಥೆಗಳನ್ನು ತಮ್ಮ ಬಜೆಟ್ ಪೂರ್ವ ಸಭೆಗೆ ಕರೆದು ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾರ್ವಜನಿಕರಿಗೆ ತುರ್ತು ಔಷಧಿ ಲಭ್ಯವಾಗುವಂತೆ ನಿಗಾ ವಹಿಸಿ : ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ಆಸ್ಪತ್ರೆಗೆ ಬರುವ ಸಾಮಾನ್ಯ ಹಾಗೂ ಬಡ ರೋಗಿಗಳಿಗೆ ಅಗತ್ಯ ತುರ್ತು ಔಷಧಿಗಳು ಲಭ್ಯವಾಗುವಂತೆ ಆರೋಗ್ಯಾಧಿಕಾರಿಗಳು ನಿಗಾ ವಹಿಸುವಂತೆ ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ಇಂದು ಬಿದ್ರಿ ಕಾಲೋನಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹೊರ ರೋಗಿಗಳೊಂದಿಗೆ ಚರ್ಚೆ ನಡೆಸಿದರು. ಹಾವು ಮತ್ತು ನಾಯಿ ಕಡಿತ ಸೇರಿದಂತೆ ಇತರ ತುರ್ತು ಔಷಧಿಗಳು ಆಸ್ಪತ್ರೆಗೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಶಂಕರ್ ಟಿ. ಅವರಿಗೆ ಸೂಚನೆ ನೀಡಿದರು.
ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಕಿವೀಸ್ ಬೃಹತ್ ಮೊತ್ತ
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಅಂಗವಾಗಿ ಫೆ. 19ರಂದು ನಡೆದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಗಳ ಬೃಹತ್ ಮೊತ್ತ ಪೇರಿಸಿದೆ. ಟಾಮ್ ಲಾಥಮ್ ಹಾಗೂ ವಿಲ್ ಯಂಗ್ ಅವರು ಶತಕದಿಂದ ನ್ಯೂಜಿಲೆಂಡ್ ಇಷ್ಟು ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು.
ಯುವಕರು ಶಿವಾಜಿ ಮಹಾರಾಜರ ಆದರ್ಶ, ತತ್ವ ಅಳವಡಿಸಿಕೊಳ್ಳಿ: ಸಚಿವ ಈಶ್ವರ ಖಂಡ್ರೆ
ಬೀದರ್: ರಾಷ್ಟ್ರವೀರ, ಧರ್ಮನಿರಪೇಕ್ಷ, ಜಾತ್ಯಾತೀತ ಮಹಾವೀರ, ಸ್ವದೇಶ ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಅವರ ಆದರ್ಶ ತತ್ವಗಳು ಇಂದಿನ ಯುವ ಜನಾಂಗ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿವಾಜಿ ಅವರ ದೇಶಭಕ್ತಿ, ರಾಷ್ಟ್ರಪ್ರೇಮ, ಯುದ್ಧನೀತಿ ಧೈರ್ಯ, ಶೌರ್ಯ, ಮಹಿಳಾ ಗೌರವ, ಜಾತ್ಯಾತೀತ ಮನೋಭಾವನೆ ಇತರೇ ರಾಜರಲ್ಲಿ ಕಾಣುವುದು ತೀರ ವಿರಳ. ಅವರು ರೈತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಮೊಘಲರೊಂದಿಗೆ ಯುದ್ಧ ಮಾಡಿ ಗೆದ್ದರು. ಗೆರಿಲ್ಲಾ ಯುದ್ಧ ಪರಿಣಿತರಾಗಿದ್ದ ಅವರು ಸ್ವರಾಜ್ಯ ನಿರ್ಮಿಸಿದರು ಎಂದು ತಿಳಿಸಿದರು. ಶಿವಾಜಿ ಮಹಾರಾಜ್ ಅವರನ್ನು ಹಿಂದವಿ ಸ್ವರಾಜ್ ಅಥವಾ ಧರ್ಮದ ಆಧಾರದ ಮೇಲೆ ಕೆಲ ಜನ ಗೊಂದಲ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದರೆ ಶಿವಾಜಿ ಮಹಾರಾಜ್ ಅವರ ಇತಿಹಾಸ ನೋಡಿದರೆ ಅವರೊಬ್ಬ ಜಾತ್ಯತೀತ, ಧರ್ಮನಿರಪೇಕ್ಷ, ಜನಪರ, ರೈತಪರ ರಾಜರಾಗಿದ್ದರು. ಅವರ ಕೆಲ ಅಂಗರಕ್ಷಕರು ಮುಸ್ಲಿಮರಾಗಿದ್ದರು. ಎಲ್ಲ ಸಮುದಾಯದ ಜನರನ್ನು ಸಮಾನತೆಯಿಂದ ತೆಗೆದುಕೊಂಡು ಹೋಗುವ ರಾಜ ಎಂದರೆ ಅದು ಶಿವಾಜಿ ಮಾಹಾರಾಜ್. ಆದರೆ ಇತ್ತೀಚೆಗೆ ಕೆಲವರು ಜಾತಿ ಜಾತಿಗಳಲ್ಲಿ ಕೋಮುದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದು, ಎಲ್ಲ ಸಮುದಾಯಗಳು ಒಟ್ಟಾಗಿ ಸಹೋದರತ್ವದಿಂದ ಬಾಳಬೇಕು ಎಂದರು. ಕರ್ನಾಟಕ, ಮಹಾರಾಷ್ಟ್ರದ ಸಂಬಂಧಗಳು ಶತಶತಮಾನಗಳಿಂದಲೂ ಭಾತೃತ್ವ ರೀತಿಯಲ್ಲಿದೆ. ಶಿವಾಜಿ ತಂದೆಯ ಸಮಾಧಿ ದಾವಣಗೆರೆಯಲ್ಲಿದೆ. ಶಿವಾಜಿಯು ಕರ್ನಾಟಕದಲ್ಲಿ ಅನೇಕ ದಿನ ಉಳಿದು ಅನನ್ಯವಾದ ಸಂಬಂಧ ಹೊಂದಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇತ್ತೀಚೆಗೆ ಉತ್ತಮ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು. ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಮಾತನಾಡಿ, ಶಿವಾಜಿ ಮಹಾರಾಜರು ಈ ದೇಶ ಕಂಡ ಅತೀ ಪ್ರಸಿದ್ಧ ಮಹಾಪುರುಷರಾಗಿದ್ದಾರೆ. ಶಿವಾಜಿಯು ಯಾರ ವಿರುದ್ಧವೂ ಇರಲಿಲ್ಲ. ಎಲ್ಲ ಸಮುದಾಯ ಒಗ್ಗಟ್ಟು ಮಾಡಿ ರಾಜ್ಯಭಾರ ಮಾಡುತ್ತಿದ್ದರು. ಅವರು ಅನೇಕ ದೊಡ್ಡ ಹುದ್ದೆ ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಿದ್ದರು. ಸಮಾಜದಲ್ಲಿ ವೈವಿದ್ಯತೆ ಇದೆ. ಬೀದರ್ ನಲ್ಲಿ ಎಲ್ಲ ಸಮುದಾಯಗಳು ಶಾಂತಿಯಿಂದ, ಸೌಹಾರ್ದದಿಂದ ಜೀವಿಸುತ್ತಿದ್ದಾರೆ ಎಂದು ನುಡಿದರು. ಮಹಾರಾಷ್ಟ್ರದ ಮಾಜಿ ಸಂಸದ ಪ್ರೊ.ರವೀಂದ್ರ ವಿಶ್ವನಾಥರಾವ್ ಗಾಯಕವಾಡ್ ಮಾತನಾಡಿ, ದೇವರನ್ನು ಕಾಣುವ ವ್ಯವಸ್ಥೆಯಲ್ಲಿಯೂ ವೈವಿದ್ಯತೆ ಇದೆ. ಬೀದರ್, ಕರ್ನಾಟಕ, ದೇಶ, ವಿದೇಶಗಳಲ್ಲಿಯೂ ಆಯಾ ಪ್ರದೇಶಕ್ಕನುಗುಣವಾಗಿ ದೇವರನ್ನು ಕಾಣುವ ರೀತಿ, ತತ್ವ, ಕಲ್ಪನೆ ವೈವಿದ್ಯಮಯವಾಗಿದೆ. ಆದರೆ ಈ ಮನುಷ್ಯ ಮಾತ್ರ ಎಲ್ಲೆಡೆ ಒಂದೇ ರೀತಿ ಆಗಿದ್ದಾನೆ. ಈ ನೆಲ, ಜಲ, ವಾಯು ಎಲ್ಲರಿಗೂ ಒಂದೇ ಆಗಿದೆ. ರಕ್ತವೂ ಒಂದೇ, ಸಸ್ಯಹಾರ, ಮಾಂಸಾಹಾರ ಅವರವರ ಆಹಾರ ಪದ್ಧತಿಯಷ್ಟೆ. ಎಲ್ಲ ಸಮುದಾಯದವರು ಸೇರಿ ಜಿಲ್ಲೆಯನ್ನು ಅಭಿವೃದ್ಧಿಗೊಳಿಸೋಣ ಎಂದು ತಿಳಿಸಿದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೇಪ್ಪ ಖಾಶಂಪೂರ್ ಹಾಗೂ ಈಶ್ವರಸಿಂಗ್ ಠಾಕೂರ್ ಸೇರಿದಂತೆ ಸಮಾಜದ ಗಣ್ಯರಿಂದ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಅಪರ್ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಪಾಟೀಲ್ ಘಾಟಬೋರಾಳ್, ಸಮಾಜದ ಮುಖಂಡರಾದ ಮದನರಾವ್ ಬಿರಾದಾರ್, ರಘುನಾಥ್ ಜಾಧವ್, ಅರ್ಜುನ್ ಬಿಲ್ಲೆ ಹಾಗೂ ಪಂಡಿತ್ ಜಾಧವ್ ಬಾಳೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದವರಿಗೆ ದಂಡ : ಕೆ.ಎಚ್.ಮುನಿಯಪ್ಪ
ಬೆಂಗಳೂರು : ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದಿರುವವರು ಕೂಡಲೇ ವಾಪಸ್ ಮಾಡಬೇಕು, ಇಲ್ಲದಿದ್ದರೆ ಕಾನೂನಿನ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಹತೆ ಇಲ್ಲದೇ ಇರುವ ಸಾಕಷ್ಟು ಜನರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಇವರಿಗೆ ಕಾರ್ಡ್ ವಾಪಸ್ ಕೊಡಲು ಮನವಿ ಮಾಡುತ್ತೇವೆ. ಈ ಸಂಬಂಧ ಇನ್ನೊಂದು ವಾರದಲ್ಲಿ ಜಾಹೀರಾತು ಹೊರಡಿಸುತ್ತೇವೆ. ಮನವಿ ಮಾಡಿದ ಮೇಲೂ ಕಾರ್ಡ್ ವಾಪಸ್ ಕೊಡದಿದ್ದರೆ ದಂಡ ಪ್ರಯೋಗ ಮಾಡಲಾಗುವುದು ಎಂದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಡ್ ಪರಿಶೀಲನೆ ಪ್ರಾರಂಭ ಮಾಡಲಾಗುತ್ತದೆ. ಮನವಿ ಬಳಿಕವೂ ಕಾರ್ಡ್ ವಾಪಸ್ ಕೊಡದೇ ಹೋದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿದ ಬಳಿಕ ಸಿಕ್ಕಿ ಹಾಕಿಕೊಂಡರೆ ಕಾನೂನಿನ ಅಡಿಯಲ್ಲಿ ದಂಡ ಪ್ರಯೋಗ ಮಾಡಲಾಗುವುದು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು. ಆಹಾರ ಇಲಾಖೆಯ ಸಮಗ್ರ ಸುಧಾರಣೆಗೆ ಸಂಬಂಧಿಸಿದಂತೆ ಹಾಗೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಎಂಎಸ್ಪಿ ಖರೀದಿ ಪ್ರಕ್ರಿಯೆಯಲ್ಲಿ ಪಾದರ್ಶಕವಾದ ಅನುಷ್ಠಾನ ತರಲು ತಿಳಿಸಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಲೋಪ ಕಂಡು ಬಂದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದರು. ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಯ್ದೆಗಳಾದ ಅಗತ್ಯ ವಸ್ತುಗಳು ಕಾಯ್ದೆ-1955, ಕಾಳಸಂತೆ ನಿಯಂತ್ರಣ ಕಾಯ್ದೆ-1980, ಆಹಾರ ಭದ್ರತಾ ಕಾಯ್ದೆ-2013 ಹಾಗೂ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆ-2019ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು. ಕಾನೂನು ಮಾಪನಶಾಸ್ತ್ರ ಇಲಾಖೆ ಪುನಾರಚನೆ ಮಾಡಿ, ಅವರಿಗೆ ಅವಶ್ಯಕ ವಾಹನಗಳನ್ನು ಒದಗಿಸಿ, ಇಲಾಖೆಯ ಅಧಿಕಾರಿಗಳು ತಪಾಸಣಾ ಹೆಚ್ಚು ಮಾಡಲು ಗುರಿ ನಿಗದಿಪಡಿಸಲಾಗಿತ್ತು. ಇದರಿಂದ 2023-24ರಲ್ಲಿ ರಾಜಸ್ವ ಸಂಗ್ರಹಕ್ಕೆ 53.33 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು. 83.19 ಕೋಟಿ ರೂ. ರಾಜಸ್ವವನ್ನು ಸಂಗ್ರಹಿಸಲಾಗಿತ್ತು ಎಂದು ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದರು. 2024-25ನೇ ಸಾಲಿನಲ್ಲಿ 66 ಕೋಟಿ ರೂ. ರಾಜಸ್ವ ಸಮಗ್ರ ಗುರಿಯಿತ್ತು. ಜನವರಿ 63 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಮಾರ್ಚ್-2025ರ ಅಂತ್ಯಕ್ಕೆ 20 ಕೋಟಿ ರೂ. ರಾಜಸ್ವ ಸಂಗ್ರಹಿಸುವ ನಿರೀಕ್ಷೆ ಅಳತೆ ಮತ್ತು ತೂಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಪ್ರಕರಣವನ್ನು ದಾಖಲಿಸಲು ಮತ್ತು ದಂಡ ವಸೂಲಿ ಮಾಡಲು ನಿರ್ದೇಶನ ನೀಡಲಾಗಿದೆ. ಇಲಾಖೆಯಲ್ಲಿ ಬಹಳ ವರ್ಷಗಳಿಂದ ಇದ್ದ ಸರ್ವರ್ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು. ಇಲಾಖೆಯ ಬಹುದಿನದ ಬೇಡಿಕೆ ಆಹಾರ ಇಲಾಖೆಯ ಕಛೇರಿಗಳ ಸಂಕೀರ್ಣ ಆಹಾರಸೌಧವನ್ನು 50.00 ಕೋಟಿ ರೂ. ವೆಚ್ಚದಲ್ಲಿ ಆಲಿ ಆಸ್ಕರ್ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು. ರಾಗಿ-ಭತ್ತ-ಜೋಳಕ್ಕೆ ಕೇಂದ್ರ ಬೆಂಬಲ : ಕೇಂದ್ರ ಸರಕಾರ ರಾಗಿಗೆ ಕನಿಷ್ಠ ಬೆಂಬಲ ಬೆಲೆ 4,290 ರೂ. ನಿಗದಿಪಡಿಸಿದೆ. ಮತ್ತು ಖರೀದಿ ಗುರಿಯನ್ನು 4.40 ಎಲ್ಎಂಟಿ ನಿಗದಿಪಡಿಸಿದೆ. ಅದೇ ರೀತಿ ಸಾಮಾನ್ಯ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 2,300 ರೂ. ‘ಎ’ಗ್ರೇಡ್ ಭತ್ತಕ್ಕೆ 2,320 ರೂ. ನಿಗದಿಪಡಿಸಿದೆ. ಇನ್ನು ಹೈಬ್ರೀಡ್ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ 3,371 ರೂ., ಮಾಲ್ಡಂಡಿ ಜೋಳಕ್ಕೆ 3,421 ರೂ. ಕೇಂದ್ರ ನಿಗದಿಪಡಿಸಿದೆ ಎಂದು ಕೆ.ಎಚ್.ಮುನಿಯಪ್ಪ ವಿವರಿಸಿದರು.
Israel VS Lebanon: ಲೆಬನಾನ್ ನೆಲದಿಂದ ಇಸ್ರೇಲ್ ಸೇನೆ ವಾಪಸ್, ಶಾಂತಿ ಮಾತುಕತೆ ಯಶಸ್ವಿ
ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಹಲವು ದೇಶಗಳ ನಡುವೆ ಯುದ್ಧ ಆರಂಭವಾಗಿ, ಸಖತ್ ಟೆನ್ಷನ್ ಶುರುವಾಗಿತ್ತು. ಈ ಬಡಿದಾಟ ನೋಡಿ 3ನೇ ಮಹಾಯುದ್ಧ ಇಲ್ಲಿಂದ ಶುರುವಾಗುತ್ತಾ? ಎಂಬ ಅನುಮಾನ ಕೂಡ ಮೂಡಿತ್ತು. ಮೊದಲಿಗೆ ಇಸ್ರೇಲ್ &ಗಾಜಾ ಪಟ್ಟಿ ನಡುವೆ ಭಾರಿ ದೊಡ್ಡ ಕದನ ಆರಂಭವಾಗಿ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರುವ ಮುನ್ಸೂಚನೆಯೂ ಸಿಕ್ಕಿತ್ತು. ಇದಾದ ನಂತರ ಲೆಬನಾನ್
ಬೆಂಗಳೂರು | ಸರಕಾರಿ ಕೆಲಸ ಹೆಸರಿನಲ್ಲಿ ವಂಚನೆ : ಮಾಜಿ ಪಿಡಿಒ ಬಂಧನ
ಬೆಂಗಳೂರು : ಸರಕಾರಿ ಕೆಲಸ ಹೆಸರಿನಲ್ಲಿ ಹಣ ಪಡೆದು ಹಲವರಿಗೆ ವಂಚಿಸಿದ್ದ ಆರೋಪ ಪ್ರಕರಣ ಸಂಬಂಧ ಮಾಜಿ ಪಿಡಿಒ ಅಧಿಕಾರಿಯೊಬ್ಬರನ್ನು ಇಲ್ಲಿನ ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ಪಿಡಿಒ ಯೋಗೇಂದ್ರ ಎಂಬಾತ ಬೆಂಗಳೂರಿನ ಏರ್ ಪೋರ್ಟ್ಗೆ ಬಂದಿಳಿಯುತ್ತಿದ್ದಂತೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಯೋಗೇಂದ್ರ, 2020ರಲ್ಲಿ ಕರ್ತವ್ಯದಿಂದ ವಜಾಗೊಂಡಿದ್ದ. 2023ರಲ್ಲಿ ಸರಕಾರಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 17 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಆರೋಪದ ಮೇಲೆ ಯೋಗೇಂದ್ರ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊರ್ವ ವ್ಯಕ್ತಿಯಿಂದ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ 1.35 ಕೋಟಿ ರೂ., ಪಡೆದು ವಂಚಿಸಿದ್ದ ಆರೋಪದ ಮೇಲೆ ಯೋಗೇಂದ್ರ ವಿರುದ್ಧ 2024ರಲ್ಲಿ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಶ್ರೀಲಂಕಾ, ನಂತರ ಅಲ್ಲಿಂದ ದುಬೈಗೆ ತೆರಳಿ ತಲೆಮರೆಸಿಕೊಂಡಿದ್ದ. ಅಂದಿನಿಂದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಆತ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಬಂಧಿಸಿದ್ದಾರೆ.
ಮುಡಾ ಪ್ರಕರಣ | ಉಪ್ಪು ತಿಂದ ಸಿದ್ದರಾಮಯ್ಯ ನೀರು ಕುಡಿಯಲೇಬೇಕು: ಆರ್.ಅಶೋಕ್
ಬೆಂಗಳೂರು : ‘ನ್ಯಾಯಾಲಯಕ್ಕೆ ಸಂಪೂರ್ಣ ಸಾಕ್ಷ್ಯ ಒದಗಿಸದೆ ಪ್ರಕರಣವನ್ನ ಮುಚ್ಚಿಹಾಕಿ ಸತ್ಯದ ಸಮಾಧಿ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ. ಇಂದಲ್ಲ ನಾಳೆ, ಉಪ್ಪು ತಿಂದ ಸಿದ್ದರಾಮಯ್ಯನವರು ನೀರು ಕುಡಿಯಲೇಬೇಕು’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅಶೋಕ್, ‘ಮುಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆಯು ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ ಇರಲಿಲ್ಲ ಎಂದು ಟೀಕಿಸಿದ್ದಾರೆ. ‘ಮುಡಾ ಹಗರಣದಲ್ಲಿ ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಕಾಂಗ್ರೆಸ್ ಶಾಸಕರು ಆರೋಪಿ ಸಿದ್ದರಾಮಯ್ಯ ಹಾಗು ಅವರ ಧರ್ಮಪತ್ನಿ ಅವರಿಗೆ ಕ್ಲೀನ್ಚಿಟ್ ನೀಡಿದ್ದರು. ಇದನ್ನೇ ಲೋಕಾಯುಕ್ತ ಪೋಲೀಸರೂ ಸ್ವಲ್ಪ ತಡವಾಗಿ ‘ಬಿ ರಿಪೋರ್ಟ್' ರೂಪದಲ್ಲಿ ನೀಡಿದ್ದಾರೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದು ಅಶೋಕ್ ಲೇವಡಿ ಮಾಡಿದ್ದಾರೆ. ‘ಒಂದು ದಿನ ನೆಪಮಾತ್ರಕ್ಕೆ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಅವರ ಪತ್ನಿ ಅವರನ್ನು ವಿಚಾರಣೆ ನಡೆಸಿ ಕ್ಲೀನ್ಚಿಟ್ ನೀಡಿರುವುದು ರಾಜ್ಯ ಕಂಡ ‘ಐತಿಹಾಸಿಕ ದುರಂತ'. ಭ್ರಷ್ಟ ಕಾಂಗ್ರೆಸ್ ಸರಕಾರದಲ್ಲಿ ‘ನ್ಯಾಯ' ಮಣ್ಣುಪಾಲಾಗಿದೆ. ಸಮರ್ಪಕ ತನಿಖೆಯನ್ನೇ ನಡೆಸದೆ ಕ್ಲೀನ್ಚಿಟ್ ನೀಡಿ ‘ನ್ಯಾಯದ ಸಮಾಧಿ' ಮಾಡಿದೆ ಈ ದುಷ್ಟ ಕಾಂಗ್ರೆಸ್ ಸರಕಾರ’ ಎಂದು ಅಶೋಕ್ ಆರೋಪಿಸಿದ್ದಾರೆ. ಬಿಜೆಪಿ ಹೋರಾಟ ನಿಲ್ಲದು: ‘ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಲು ಲೋಕಾಯುಕ್ತ ಮುಂದಾಗಿದೆ. ಪೂರ್ವ ನಿಯೋಜಿತವಾಗಿ ತನಿಖಾ ವರದಿ ರೂಪಿಸಲಾಗಿದೆ. ಆದರೆ, ಬಿಜೆಪಿಯಿಂದ ಹೋರಾಟ ಮುಂದುವರಿಯಲಿದೆ. ಈ ಹಗರಣದಲ್ಲಿ ತಪ್ಪಿಲ್ಲ ಎಂದಾದರೆ ಸಿದ್ದರಾಮಯ್ಯನವರು ನಿವೇಶನಗಳನ್ನು ಯಾಕೆ ಮರಳಿಸಬೇಕಿತ್ತು? ಲೇಔಟ್ ಮಾಡಿರುವುದೇ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಅವರು ಅಷ್ಟು ಪ್ರಾಮಾಣಿಕರು ಹಾಗೂ ಸಭ್ಯಸ್ತರು. ಇದು ಪೂರ್ವ ನಿಯೋಜಿತವಾಗಿ ತಯಾರಿಸಿದ ವರದಿ’ -ಆರ್.ಅಶೋಕ್, ವಿಪಕ್ಷ ನಾಯಕ
ಒತ್ತಡ ಅಥವಾ ಬೆದರಿಕೆ ತಂತ್ರಗಳನ್ನು ಬಳಸಿ ಉದ್ಯೋಗಿಗಳನ್ನು ವಜಾಗೊಳಿಸಿಲ್ಲ: ಇನ್ಫೋಸಿಸ್ ಸ್ಪಷ್ಟನೆ
ಹೊಸದಿಲ್ಲಿ: ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಮೈಸೂರು ಕ್ಯಾಂಪಸ್ ನ ತರಬೇತಿ ನಿರತ ಉದ್ಯೋಗಿಗಳನ್ನು ವಜಾಗೊಳಿಸುವಾಗ ಯಾವುದೇ ಒತ್ತಡ ಅಥವಾ ಬೆದರಿಕೆ ತಂತ್ರಗಳನ್ನು ಬಳಸಿಲ್ಲ ಎಂದು ಬುಧವಾರ ಸ್ಪಷ್ಟನೆ ನೀಡಿರುವ ಐಟಿ ವಲಯದ ದೈತ್ಯ ಸಂಸ್ಥೆ ಇನ್ಫೋಸಿಸ್, ಅಂತಹ ಕ್ರಮಕ್ಕೆ ಕಾರಣವಾದ ಸನ್ನಿವೇಶಗಳ ಕುರಿತು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ವಿವರಿಸಲಾಗುತ್ತಿದೆ ಎಂದು ಹೇಳಿದೆ. ಆದರೆ, ಈ ಹಿಂದಿಗಿಂತ ಈ ಬಾರಿ ಮೌಲ್ಯಮಾಪನ ಪರೀಕ್ಷೆಯಲ್ಲಿನ ಅನುತ್ತೀರ್ಣತೆಯ ಶೇಕಡಾವಾರು ಪ್ರಮಾಣ ಕೊಂಚ ಹೆಚ್ಚಿತ್ತು ಎಂದು PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಇನ್ಫೋಸಿಸ್ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶಾಜಿ ಮ್ಯಾಥ್ಯೂ ಒಪ್ಪಿಕೊಂಡಿದ್ದಾರೆ. ಆದರೆ, ಪರೀಕ್ಷೆಗಳನ್ನು ಅನುತ್ತೀರ್ಣಗೊಳಿಸಲೆಂದೇ ವಿನ್ಯಾಸಗೊಳಿಸಲಾಗಿತ್ತು ಎಂಬ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ. 2026ನೇ ಹಣಕಾಸು ವರ್ಷದಲ್ಲಿ ಕ್ಯಾಂಪಸ್ ನೇಮಕಾತಿಗೆ ತೆರಳಲಿರುವ ಇನ್ಫೋಸಿಸ್ ನ ಬ್ರ್ಯಾಂಡ್ ಖ್ಯಾತಿಗೆ ಈ ವಜಾಗಳೇನಾದರೂ ಚ್ಯುತಿ ತರಲಿವೆಯೆ ಎಂಬ ಪ್ರಶ್ನೆಕಗೆ ಉತ್ತರಿಸಿರುವ ಶಾಜಿ ಮ್ಯಾಥ್ಯೂ, ನಾವು ಮುಂದಿನ ಹಣಕಾಸು ವರ್ಷದಲ್ಲಿ 20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸುತ್ತಿದ್ದು, ಅವರು ಅತ್ಯುತ್ತಮ ಕಾರ್ಪೊರೇಟ್ ತರಬೇತಿ ಪಡೆಯಲಿರುವುದರಿಂದ, ಅವರು ಕಳವಳ ಪಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಇತ್ತೀಚೆಗೆ ಮೈಸೂರು ಕ್ಯಾಂಪಸ್ ನಲ್ಲಿ 300ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವಾಗ ಪರೀಕ್ಷಾ ಮಾನದಂಡಗಳು, ಮೌಲ್ಯಮಾಪನ ಮಾನದಂಡ ಹಾಗೂ ಪಠ್ಯಕ್ರಮವನ್ನು ಬದಲಿಸಲಾಗಿತ್ತು ಹಾಗೂ ಬೆದರಿಕೆ ತಂತ್ರಗಳನ್ನು ಅನುಸರಿಸಲಾಗಿತ್ತು ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಅವರು, “ತರಬೇತಿ ನಿರತ ಉದ್ಯೋಗಿಗಳನ್ನು ಆಯ್ಕೆ ಮಾಡಲು ಹಾಗೂ ಅವರನ್ನು ತರಬೇತಿ ಕಾರ್ಯಕ್ರಮದಲ್ಲಿ ತೊಡಗಿಸಲು ಕಂಪನಿಯು ಹಣ ಹಾಗೂ ಶ್ರಮವನ್ನು ವ್ಯಯಿಸುವುದರಿಂದ, ಇನ್ಫೋಸಿಸ್ ಹಿತದೃಷ್ಟಿಯಿಂದ ಈ ಎಲ್ಲ ಉದ್ಯೋಗಿಗಳೂ ಯಶಸ್ವಿಯಾಗುವುದನ್ನು ಕಾಣಲು ಬಯಸುತ್ತೇವೆ. ಆಗ ಮಾತ್ರ, ಅವರನ್ನೆಲ್ಲ ನಮ್ಮ ಯೋಜನೆಗಳಲ್ಲಿ ತೊಡಗಿಸಲು ಸಾಧ್ಯ” ಎಂದು ಸ್ಪಷ್ಟನೆ ನೀಡಿದ್ದಾರೆ.
ಬಲವಂತದ ಸಾಲ ವಸೂಲಿ ಮಾಡಿದ್ರೆ 10 ವರ್ಷ ಜೈಲು; 5 ಲಕ್ಷ ರೂ. ದಂಡ! ಕರ್ನಾಟಕದ ಜಿಲ್ಲಾಡಳಿತಗಳಿಂದ ಎಚ್ಚರಿಕೆ
ರಾಜ್ಯದಲ್ಲಿ ಹೊಸ ಕಾನೂನು ಜಾರಿಯಾಗಿದ್ದು, ಬಲವಂತದ ಸಾಲ ವಸೂಲಿ ಮಾಡಿದ್ರೆ 10 ವರ್ಷ ಜೈಲು ಶಿಕ್ಷೆ, 5 ಲಕ್ಷ ರೂ. ದಂಡ ಬೀಳಲಿದೆ. ಈ ಬಗ್ಗೆ ಕರ್ನಾಟಕದ ವಿವಿಧ ಜಿಲ್ಲೆಗಳ ಜಿಲ್ಲಾಡಳಿತಗಳಿಂದ ಎಚ್ಚರಿಕೆ ನೀಡಲಾಗಿದೆ. ಮೈಕ್ರೋ ಫೈನಾನ್ಸ್ ಮುಖ್ಯಸ್ಥರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.
ಭಟ್ಕಳ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
ಭಟ್ಕಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಲಯನ್ಸ್ ಕ್ಲಬ್ ಮುರುಡೇಶ್ವರ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಭಟ್ಕಳದ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ಈ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 95ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಡಾ. ಅಶೋಕ ಕಾಮತ್ ಶಿಬಿರವನ್ನು ಉದ್ಘಾಟಿಸಿ, ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾರ್ಗಗಳನ್ನು ವಿವರಿಸಿದರು. ಬೆಳಿಗ್ಗೆ ಬೇಗ ಏಳುವುದು, ಧ್ಯಾನ ಮತ್ತು ಪ್ರಾಣಾಯಾಮಗಳ ಮೂಲಕ ಸ್ಮರಣಶಕ್ತಿ ಹೆಚ್ಚಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ, ಸಾಮಾಜಿಕ ಮಾಧ್ಯಮದ ಆಕರ್ಷಣೆಯಿಂದ ಶಿಕ್ಷಣಕ್ಕೆ ಉಂಟಾಗುವ ಹಾನಿಯನ್ನು ಮನನೆ ಮಾಡಿಸಿ, ಅದರಿಂದ ದೂರ ಉಳಿಯುವಂತೆ ಕಿವಿಮಾತು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಪ್ರಾಸ್ತಾವಿಕ ಭಾಷಣ ನೀಡಿ, ಭಟ್ಕಳದ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು. ಈ ಗುರಿ ಸಾಧಿಸಲು ವಿವಿಧ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಘವೇಂದ್ರ ನಾಯ್ಕ, ಲಯನ್ಸ್ ಕ್ಲಬ್ನ ಅಧ್ಯಕ್ಷ ವಿಶ್ವನಾಥ ಮಡಿವಾಳ, ಸದಸ್ಯ ಎಂ.ವಿ. ಹೆಗಡೆ, ಕಾರ್ಯದರ್ಶಿ ನಾಗೇಶ ಮಡಿವಾಳ, ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯಾಧ್ಯಾ ಪಕಿ ರೂಪಾ ಖಾರ್ವಿ, ಎನ್.ಇ.ಎಸ್. ಮುಖ್ಯಾಧ್ಯಾಪಕ ಗಣಪತಿ ಶಿರೂರು, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ನಿರ್ವಹಣೆ ಮಾಡಿದರು. ಶಿಕ್ಷಣ ಸಂಯೋಜಕ ಅಶೋಕ ಆಚಾರಿ ವಂದಿಸಿದರು. ಶಿಬಿರದ ಬಳಿಕ, ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ನೀಡಲಾಯಿತು. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ಕಲ್ಪಿಸಿ, ಹೆಚ್ಚು ಅಂಕ ಗಳಿಸಲು ಸೂಕ್ತ ಅಧ್ಯಯನ ವಿಧಾನಗಳನ್ನು ತಿಳಿಸಲಾಯಿತು. ಶಿಬಿರದಲ್ಲಿ ಭಟ್ಕಳ ತಾಲೂಕಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.
ಬೆಂಗಳೂರು ಬಳಿ ರೈಲ್ವೆ ಕಾಮಗಾರಿ; ಚೆನ್ನೈ, ಹುಬ್ಬಳ್ಳಿ ಮಾರ್ಗದ ಹಲವು ರೈಲು ರದ್ದು, ಮಾರ್ಗ ಬದಲಾವಣೆ
ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ಸಮೀಪ ರೈಲ್ವೆ ಕೆಳ ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಹಲವು ರೈಲುಗಳು ಭಾಗಶಃ ರದ್ದು, ಮಾರ್ಗ ಬದಲಾವಣೆ, ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆಯಿಂದ ಮಾಹಿತಿ ನೀಡಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ.
ಪ್ರತಿ ಯೂನಿಟ್ಗೆ ₹2.94 ಹೆಚ್ಚಳಕ್ಕೆ ಸೆಸ್ಕ್ ಪ್ರಸ್ತಾಪ, ದರ ಏರಿಕೆಗೆ ಗ್ರಾಹಕರಿಂದ ಭಾರೀ ವಿರೋಧ
ನಷ್ಟ ಸರಿದೂಗಿಸಲು ಸೆಸ್ಕ್ ಎಂಡಿ ಜೆ ಶೀಲಾ ಅವರು 2025-26ನೇ ಸಾಲಿನಲ್ಲಿ ಯುನಿಟ್ಗೆ 0.68 ರೂಪಾಯಿ, 2026-27ರಲ್ಲಿ 1.03 ರೂಪಾಯಿ ಹಾಗೂ 2027-28ರಲ್ಲಿ 1.23 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ದರ ಹೆಚ್ಚಳ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕರೆಯಲಾಗಿದ್ದ ವಿದ್ಯುತ್ ದರ ಪರಿಷ್ಕರಣೆ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಸೆಸ್ಕ್ ಪ್ರಸ್ತಾವನೆಗೆ ಜನರು ಸೇರಿದಂತೆ ಸಂಘ-ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮುಡಾ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್: ಆರ್.ಅಶೋಕ್ ವ್ಯಂಗ್ಯ
ಬೆಂಗಳೂರು, ಫೆಬ್ರವರಿ 19: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿನ ನಿವೇಶನ ಹಂಚಿಕೆ ಹಗರಣ ಪ್ರಕರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ಪೊಲೀಸರು ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ಮೈಸೂರು ಲೋಕಾಯುಕ್ತ ಕ್ಲೀಚ್ ಚಿಟ್ ನೀಡಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ
ರಾಯಚೂರು: ಮನೆ ಬೀಗ ಮುರಿದು ಚಿನ್ನ,-ಬೆಳ್ಳಿ ಹಣ ಕಳವು
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ವಾರ್ಡ್ ನಂಬರ್ 03 ರ ಗಿರಿಜಾಶಂಕರ ಕಾಲನಿ ಯಲ್ಲಿ ಮನೆಯಲ್ಲಿನ ಹಣ, ಬಂಗಾರದ ಆಭರಣಗಳು ಹಾಗು ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ ಘಟನೆ ಬೆಳಕಿಗೆ ಬಂದಿದೆ. ಮನೆಯ ಮಾಲಕ ಕುಮಾರ ಭಜಂತ್ರಿ ಕುಟುಂಬದವರು ಒಂದು ವಾರ ಊರಲ್ಲಿ ಇಲ್ಲದ್ದನ್ನು ಅರಿತ ಕಳ್ಳರು ಮನೆಯ ಬೀಗ ಮುರಿದು ಅಲ್ಮರಾದಲ್ಲಿದ್ದ ಚಿನ್ನ, ಬೆಳ್ಳಿ, ಹಾಗು ನಗದು ಹಣ, ಬೆಲೆ ಬಾಳುವ ರೇಶ್ಮೆ ಸೀರೆಗಳು ಸೇರಿದಂತೆ ಸುಮಾರು 1.5 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯ ಠಾಣೆಯ ಪಿಎಸ್ ಐ ಅಮರೇಗೌಡ ಗಿಣಿವಾರ ಹಾಗು ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿದ್ದು, ಕಳ್ಳರ ಪತ್ತೆಗೆ ತಂತ್ರ ರೂಪಿಸಿದ್ದಾರೆ.
ಹೊಸದಿಲ್ಲಿ : ʼಕುದುರೆಯಂತೆ ವೇಗವಾಗಿ ಓಡಲುʼ ಮತ್ತು ʼಯೌವನದಿಂದಿರಲುʼ ಪತಂಜಲಿ ಉತ್ಪನ್ನಗಳನ್ನು ತೆಗೆದುಕೊಳ್ಳಿ ಎಂದು ಪ್ರಚಾರ ಮಾಡಿದ್ದ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕೆ ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ರಾಮ್ದೇವ್ ಎಕ್ಸ್ನಲ್ಲಿ ನಿರ್ಬಂಧಿಸಿದ್ದಾರೆ(ಬ್ಲಾಕ್ ಮಾಡಿದ್ದಾರೆ) ಎಂದು ಅಮೆರಿಕ ಮೂಲದ ಉದ್ಯಮಿ, ಏಜ್-ರಿವರ್ಸಿಂಗ್(Age-reversing) CEO ಮಿಲಿಯನೇರ್ ಬ್ರಿಯಾನ್ ಜಾನ್ಸನ್ ಹೇಳಿದ್ದಾರೆ. 'ಸ್ವರ್ಣ ಶಿಲಾಜಿತ್'(Swarna Shilajit) ಮತ್ತು 'ಇಮ್ಯುನೊಗ್ರಿಟ್ ಗೋಲ್ಡ್(Immunogrit Gold) ಉತ್ಪನ್ನದ ಪ್ರಚಾರದ ವೀಡಿಯೊದಲ್ಲಿ ರಾಮ್ ದೇವ್ ಕುದುರೆ ಜೊತೆ ಓಡುತ್ತಿರುವುದು ಕಂಡು ಬಂದಿದೆ. ರಾಮ್ದೇವ್ ಹಿಂದಿಯಲ್ಲಿ ಬರೆದಿರುವ ಪೋಸ್ಟ್ ನಲ್ಲಿ, ಜನರು ಕುದುರೆಯಂತೆ ವೇಗವಾಗಿ ಓಡಲು ಮತ್ತು ಯೌವನದಿಂದಿರಲು ಪತಂಜಲಿಯ ಉತ್ಪನ್ನಗಳನ್ನು ತೆಗೆದುಕೊಳ್ಳಿ, ಈ ಉತ್ಪನ್ನಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಶಕ್ತಿಯನ್ನು ವೃದ್ಧಿಸುತ್ತದೆ, ಯೌವ್ವನವನ್ನು ಕಾಯ್ದುಕೊಂಡು ಬೇಗನೆ ಮುಪ್ಪಾಗುವುದನ್ನು ತಡೆಯುತ್ತದೆ ಎಂದು ಹೇಳಿದ್ದರು. I replied with this comment and he hid it and blocked me: Air quality in Haridwar right now is PM₂.₅ 36 µg/m³ which is equal to smoking 1.6 cigarettes a day. This raises risks of heart disease by 40–50%, lung cancer by 3x, Chronic Obstructive Pulmonary Disease, and early death… pic.twitter.com/z99RZDjXar — Bryan Johnson /dd (@bryan_johnson) February 19, 2025 ರಾಮ್ದೇವ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ಬ್ರಿಯಾನ್ ಜಾನ್ಸನ್, ಹರಿದ್ವಾರದ ಪತಂಜಲಿಯ ಪ್ರಧಾನ ಕಚೇರಿಯಲ್ಲಿನ ಗಾಳಿಯ ಗುಣಮಟ್ಟವು ಬಹಳ ಕಳಪೆಯಾಗಿದೆ. ನಗರದಲ್ಲಿ ಉಸಿರಾಡುವುದರಿಂದ ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳ ಅಪಾಯ ಹೆಚ್ಚಿದೆ. ಹರಿದ್ವಾರದಲ್ಲಿ ಗಾಳಿಯ ಗುಣಮಟ್ಟ PM 2.5 36 µg/m³ ವರೆಗಿದೆ. ಇದು ದಿನಕ್ಕೆ 1.6 ಸಿಗರೇಟ್ ಸೇದುವುದಕ್ಕೆ ಸಮಾನವಾಗಿದೆ. ಇದು 40 ರಿಂದ 50% ಹೃದ್ರೋಗದ ಅಪಾಯವನ್ನು ಹೊಂದಿದೆ. ಶ್ವಾಸಕೋಶದ ಕ್ಯಾನ್ಸರ್ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯ ಅಪಾಯ ಹೊಂದಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಎಕ್ಸ್ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ ಜಾನ್ಸನ್, ರಾಮ್ದೇವ್ ಅವರು ಎಕ್ಸ್ನಲ್ಲಿ ನಿರ್ಬಂಧಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.