ಅಡುಗೆ ಅನಿಲ ಪೂರೈಕೆ ವ್ಯತ್ಯಯ | ಕೋವಿಡ್ ಕಾಲದ ಸ್ಥಿತಿಗೆ ತಳ್ಳಿದರೆ ಆಶ್ಚರ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ಕೇಂದ್ರ ಸರಕಾರವೇ ವಾಣಿಜ್ಯ ಬಳಕೆಯ ಎಲ್ಪಿಜಿ ಮತ್ತು ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಏರಿಸಿದೆ. ಮೋದಿಯವರ ‘ಹಿಹಿಹಿಹಿಹಿ ಫಾರಿನ್ ಪಾಲಿಸಿ’ಯು ಜನರನ್ನು ಮತ್ತೊಮ್ಮೆ ಗರಿಷ್ಠ ಮೊತ್ತದ ನೋಟ್ ರದ್ದತಿ, ಕೋವಿಡ್ ಕಾಲದ ಸ್ಥಿತಿಗೆ ತಳ್ಳಿದರೆ ಯಾವುದೇ ಆಶ್ಚರ್ಯವಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ. ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕೇಂದ್ರ ಸರಕಾರ ಮಾತಲ್ಲಿ ‘ಸಬ್ ಚೆಂಗಾಸಿ’ ಎನ್ನುತ್ತಿದೆ, ಕೃತಿಯಲ್ಲಿ ವಾಸ್ತವದ ಆತಂಕ ವ್ಯಕ್ತವಾಗುತ್ತಿದೆ. ಎರಡು ತಿಂಗಳಿಗೆ ಬೇಕಾದ ಇಂಧನ ತೈಲ ಹಾಗೂ ಅಡುಗೆ ಅನಿಲದ ಶೇಖರಣೆ ಇದೆ, ನಾವೆಲ್ಲವನ್ನೂ ನಿಭಾಯಿಸುತ್ತೇವೆ ಎನ್ನುತ್ತಿದ್ದ ಕೇಂದ್ರ ಸರ್ಕಾರ, ಎಸ್ಮಾ ಜಾರಿಗೊಳಿಸಿ, ಜನರ ಅಗತ್ಯದ ವಸ್ತುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಹೊರಟಿದೆ’ ಎಂದು ಟೀಕಿಸಿದ್ದಾರೆ. ‘ಎಲ್ಪಿಜಿ ಸಿಲಿಂಡರ್ ವ್ಯತ್ಯಯದ ಕಾರಣ ದೇಶದಲ್ಲಿನ ಹೋಟೆಲ್ ಮುಚ್ಚಬೇಕಾಗಬಹುದೆಂದು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಕೇಂದ್ರ ಸರಕಾರ ಎಲ್ಪಿಜಿ ಗ್ಯಾಸ್ ರಿಫಿಲ್ ಅವಧಿಯನ್ನು 25ದಿನಗಳಿಗೆ ವಿಸ್ತರಿಸಿದೆ, ಜನ ಸಿಲಿಂಡರ್ ಗಳಿಗಾಗಿ ಪರದಾಡುವ ದೃಶ್ಯಗಳು ದಾರಾಳವಾಗಿವೆ, ನೋಟ್ ನಿಷೇಧದ ಸಮಯದಲ್ಲಿ ಎಟಿಎಂ ಮುಂದೆ ಪರದಾಡಿದಂತೆಯೇ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಮಾತಲ್ಲಿ ಸಬ್ ಚೆಂಗಾಸಿ ಎನ್ನುತ್ತಿದೆ, ಕೃತಿಯಲ್ಲಿ ವಾಸ್ತವದ ಆತಂಕ ವ್ಯಕ್ತವಾಗುತ್ತಿದೆ. - ಎರಡು ತಿಂಗಳಿಗೆ ಬೇಕಾದ ಇಂಧನ ತೈಲ ಹಾಗೂ ಅಡುಗೆ ಅನಿಲದ ಶೇಖರಣೆ ಇದೆ, ನಾವೆಲ್ಲವನ್ನೂ ನಿಭಾಯಿಸುತ್ತೇವೆ ಎನ್ನುತ್ತಿದ್ದ ಕೇಂದ್ರ ಸರ್ಕಾರ, ಎಸ್ಮಾ (Essential Commodities Act, 1955 - ECA) ಜಾರಿಗೊಳಿಸಿ, ಜನರ ಅಗತ್ಯದ… pic.twitter.com/AwntIN4C5d — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 12, 2026
Bengaluru: 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಿಸಲು ಆಗ್ರಹಿಸಿ ಬೃಹತ್ ಧರಣಿ
ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಆಧರಿಸಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿ, ‘ಒಳ ಮೀಸಲಾತಿ ಹೋರಾಟ ಸಮಿತಿ’ ವತಿಯಿಂದ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಯಿತು. ಸರಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ (ಮಾದಿಗ) ಸಮುದಾಯಗಳಿಗೆ ಮತ್ತೆ ವಂಚಿಸುತ್ತಿದೆ ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಜನ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಒಳಮೀಸಲಾತಿ ಜಾರಿಗಾಗಿ ಅನೇಕರು ಮನೆ ಬಿಟ್ಟು ಹೋರಾಟ ಮಾಡುತ್ತಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಒಳಮೀಸಲಾತಿ ಈಗಾಗಲೇ ಜಾರಿಯಾಗಿದೆ. ಈ ರಾಜ್ಯಗಳಲ್ಲಿ ಇಲ್ಲದ ಕಾನೂನು ತೊಡಕು, ಕರ್ನಾಟಕದಲ್ಲಿ ಮಾತ್ರ ಯಾಕಿದೆ ಎಂದು ಪ್ರಶ್ನಿಸಿದರು. ಒಳಮೀಸಲಾತಿ ಕುರಿತು ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಗೆ ಒಂದು ದಿನ ಸಾಕು. ಮಾದಿಗ ಹಾಗೂ ಇತರೆ ಸಮುದಾಯಕ್ಕೆ ಮೀಸಲಾತಿ ಕೊಡಲು ಇಷ್ಟವಿಲ್ಲವೆಂದರೆ ಸರಕಾರ ತನ್ನ ನಿಲುವು ತಿಳಿಸಬೇಕು. ನಾವು ಮುಂದಿನ ದಾರಿ ನೋಡಿಕೊಳ್ಳುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು. ಒಳ ಮೀಸಲಾತಿ ಹೋರಾಟಗಾರ ಬಸವರಾಜ್ ಕೌತಾಳ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾ.27ರ ವರೆಗೂ ಕಾಯದೆ, ಎರಡು ದಿನದಲ್ಲಿ ಸಂಪುಟ ಸಭೆ ನಡೆಸಿ, ತೀರ್ಮಾನ ಪ್ರಕಟಿಸಬೇಕು. ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ನೇಮಕಾತಿಗಳಲ್ಲಿ ವಿವಿಗಳನ್ನು ಒಂದು ಘಟಕ ಎಂದು ಪರಿಗಣಿಸಬೇಕು ಎನ್ನುವ ಪ್ರಸ್ತಾವ ಕೈಬಿಡಬೇಕು. ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಮಾತನಾಡಿ, ‘ಒಳಮೀಸಲಾತಿ ಜಾರಿ ಮಾಡಲು ಸರಕಾರ ಹಿಂದೇಟು ಹಾಕಬಾರದು. ದಲಿತರು, ಮುಸ್ಲಿಂ ಸಮುದಾಯದವರು ಒಂದಾದರೆ 131 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು. ಮೀಸಲಾತಿ ಪಡೆಯುವವರೆಗೂ ಹೋರಾಟ ನಿಲ್ಲಿಸಬೇಡಿ’ ಎಂದು ಕರೆ ನೀಡಿದರು. ಇದೇ ವೇಳೆ ಧರಣಿಯಲ್ಲಿ ವಿವಿಧ ಕಲಾವಿದರು ಕ್ರಾಂತಿಗೀತೆಗಳನ್ನು ಹಾಡಿದರು. ಧರಣಿಯಲ್ಲಿ ಒಳಮೀಸಲಾತಿ ಹೋರಾಟಗಾರರಾದ ಮಾರಸಂದ್ರ ಮುನಿಯಪ್ಪ, ಎಸ್.ಮಾರಪ್ಪ, ಅಂಬಣ್ಣ ಅರೋಲಿಕರ್, ನರಸಪ್ಪ ದಂಡೋರ, ಬಿ.ಆರ್.ಭಾಸ್ಕರ್ಪ್ರಸಾದ್, ಹರಿರಾಮ್, ಶಿವರಾಯ ಅಕ್ಕರಕಿ, ಕೇಶವಮೂರ್ತಿ, ಫನಾರ್ಂಡಿಸ್ ಇಪ್ಪಳಗಾಂವ್, ಕರಿಯಪ್ಪ ಗುಡಿಮನಿ ಮತ್ತಿತರರು ಭಾಗವಹಿಸಿದ್ದರು. ಒಳಮೀಸಲಾತಿ ಅನ್ವಯಕ್ಕೆ ಹುದ್ದೆಗಳ ಭರ್ತಿ: ಸಿಎಂ ಭರವಸೆ ‘ಸಿಎಂಗೆ ಮನವಿ ಸಲ್ಲಿಸಿದ್ದು, ಒಳಮೀಸಲಾತಿ ಅನ್ವಯಿಸಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿ ಒಳಮೀಸಲಾತಿ ಜಾರಿಗೊಳಿಸುತ್ತೇವೆ. 56 ಸಾವಿರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮಾ.27ರ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ತೀರ್ಮಾನಿಸುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಅನುಷ್ಠಾನಕ್ಕೆ ನಾವು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದು ಒಳಮೀಸಲಾತಿ ಹೋರಾಟಗಾರ ಬಸವರಾಜ ಕೌತಾಳ್ ಮಾಹಿತಿ ನೀಡಿದ್ದಾರೆ. ಪ್ರಮುಖ ಆಗ್ರಹಗಳು: ಒಳಮೀಸಲಾತಿ ತಪ್ಪಿಸುವ ಹುನ್ನಾರದಿಂದ ಸರಕಾರ ಫೆ.27ರಂದು ಹೊರಡಿಸಿದ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ನೇಮಕಾತಿಯಲ್ಲಿ ಒಳಮೀಸಲಾತಿ ಕಡ್ಡಾಯಗೊಳಿಸಿ ಜಾರಿಗೊಳಿಸಬೇಕು. ನೇರ ನೇಮಕಾತಿ, ಭಡ್ತಿ ಮತ್ತು ಮುಂಭಡ್ತಿ, ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು. ನೇಮಕಾತಿಗಳಲ್ಲಿ ವಿವಿಗಳನ್ನು ಒಂದು ಘಟಕ ಎಂದು ಪರಿಗಣಿಸಬೇಕು ಎನ್ನುವ ಪ್ರಸ್ತಾವ ಕೈಬಿಡಬೇಕು. ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ಸಮರ್ಪಕವಾಗಿ ನಿರ್ವಹಿಸದೇ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪರನ್ನು ಸಚಿವ ಸ್ಥಾನದಿಂದ ಬದಲಾಯಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು. ‘ಪರಿಶಿಷ್ಟರ ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಇದೀಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರನ್ನು ನಿಯಂತ್ರಿಸುವವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಖರ್ಗೆ ಹೊಲೆಯ ಸಮುದಾಯದವರು. ಅವರು ಒಳಮೀಸಲಾತಿ ಜಾರಿಗೊಳಿಸಲು ಹೈಕಮಾಂಡ್ಗೆ ಬಿಡುತ್ತಿಲ್ಲ. ಕರ್ನಾಟಕದಲ್ಲಿ ಒಳಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯರ ಸರಕಾರ ನಿರ್ಧಾರ ತೆಗೆದುಕೊಳ್ಳಲು ಇದೇ ಬಲಗೈ ಸಮುದಾಯದ ಡಾ.ಪರಮೇಶ್ವರ್, ಡಾ.ಮಹದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಬಿಡುತ್ತಿಲ್ಲ’ -ಮಂದಕೃಷ್ಣ ಮಾದಿಗ, ತೆಲಂಗಾಣದ ಒಳಮೀಸಲಾತಿ ಹೋರಾಟಗಾರ
ವಿಜಯನಗರ | ಜಿಲ್ಲೆಯಲ್ಲಿ ಅಡುಗೆ ಅನಿಲ ಕೊರತೆ ಇಲ್ಲ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ವಿಜಯನಗರ : ಇತ್ತೀಚೆಗೆ ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿವೆ. ಆದರೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಿಲ ಕೊರತೆಯಾಗದೇ ಎಂದಿನಂತೆ ಪೂರೈಕೆ ನಡೆಯಲಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸ್ಪಷ್ಟಪಡಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅಡುಗೆ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಯುದ್ಧದ ಸನ್ನಿವೇಶವನ್ನು ಮುಂದಿಟ್ಟುಕೊಂಡು ಅನಿಲದ ಕೊರತೆ ಉಂಟಾಗಲಿದೆ ಎಂಬ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಿಲ ಕೊರತೆ ಇಲ್ಲ. ಸರ್ಕಾರದ ನಿಯಮಾನುಸಾರ ಅನಿಲ ವಿತರಕ ಸಂಸ್ಥೆಗಳ ಮೂಲಕ ಪೂರೈಕೆ ಎಂದಿನಂತೆ ಸುಗಮವಾಗಿ ನಡೆಯಲಿದೆ ಎಂದು ತಿಳಿಸಿದರು. ಯಾರಾದರೂ ಅಕ್ರಮವಾಗಿ ಸಿಲಿಂಡರ್ಗಳನ್ನು ಸಂಗ್ರಹಿಸಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಸಂಬಂಧಿತ ಅನಿಲ ವಿತರಕ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗಬಾರದು ಎಂದು ಸಲಹೆ ನೀಡಿದರು. ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಅನಿಲ ಪೂರೈಕೆ ಉದ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ: ಶುಕ್ರವಾರ ರಾಜ್ಯದ 41.40 ಲಕ್ಷ ರೈತರ ಖಾತೆಗೆ ನೇರ ಹಣ ವರ್ಗಾವಣೆ
ಬೆಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಅಡಿಯಲ್ಲಿ 22ನೆ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ನಾಳೆ (ಮಾ.13) ಸಂಜೆ 5 ಗಂಟೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾದ ಬೃಹತ್ ಸಮಾರಂಭದಲ್ಲಿ ದೇಶಾದ್ಯಂತದ ರೈತರಿಗೆ ಹಣ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕದ ಒಟ್ಟು 41,40,106 ರೈತ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಕೇಂದ್ರ ಸರಕಾರವು ರಾಜ್ಯದ ರೈತರಿಗಾಗಿ ಒಟ್ಟು 828.02ಕೋಟಿ ರೂ.ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ. ಮಾ.13ರಂದು ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ‘ಪಿ.ಎಂ. ಕಿಸಾನ್ ಉತ್ಸವ ದಿವಸ’ ಎಂದು ಆಚರಿಸಲಾಗುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅರ್ಹ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ pmkisan.gov.inಗೆ ಭೇಟಿ ನೀಡಬಹುದು ಎಂದು ಅಪರ ಕೃಷಿ ನಿರ್ದೇಶಕರು(ಮಾಹಿತಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಲು ಬಂಡೆ ಸ್ಪೋಟ: ಬೆಚ್ಚಿಬಿದ್ದ ಹರಪನಹಳ್ಳಿ ಜನರು
30ಕ್ಕೂ ಅಧಿಕ ಮನೆಗಳಿಗೆ ಹಾನಿ
ಯುದ್ಧದ ನಡುವೆ ಅವಧಿ ಮೀರಿದ ವೀಸಾಗಳಿಗೆ ಸಡಿಲಿಕೆ ಘೋಷಿಸಿದ ಯುಎಇ: ವರದಿ
ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ ವಿದೇಶಗಳಲ್ಲಿ ಸಿಲುಕಿಕೊಂಡಿರುವ ನಿವಾಸಿಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಸಡಿಲಿಕೆ ಘೋಷಿಸಿದೆ. ಫೆಬ್ರವರಿ 28ರಿಂದ ವಿದೇಶಗಳಲ್ಲಿ ಉಳಿದುಕೊಂಡಿರುವಾಗಲೇ ನಿವಾಸಿ ವೀಸಾ ಅವಧಿ ಮುಗಿದಿರುವವರು ತಮ್ಮ ದೀರ್ಘಾವಧಿಯ ವಾಸ್ತವ್ಯ ವೀಸಾಗಳನ್ನು ನವೀಕರಿಸಿಕೊಳ್ಳಲು ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಇರಾನ್–ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ವಾರಗಳಿಂದ ಯುಎಇ ಪ್ರದೇಶವು ಇರಾನ್ ನಿಂದ ಬರುವ ಕ್ಷಿಪಣಿಗಳು ಮತ್ತು ಡ್ರೋನ್ ಗಳ ಅಲೆಗಳನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯಿಂದಾಗಿ ಅನೇಕರು ವಿದೇಶಗಳಲ್ಲಿ ಸಿಲುಕಿಕೊಂಡಿದ್ದು, ಅವರ ವೀಸಾ ಅವಧಿ ಮುಗಿದಿರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ತಾತ್ಕಾಲಿಕ ಸಡಿಲಿಕೆಯನ್ನು ನೀಡಿದೆ. ಇದರ ಮೂಲಕ ಪ್ರಭಾವಿತ ನಿವಾಸಿಗಳು ಯಾವುದೇ ದಂಡ ಅಥವಾ ಕಾನೂನು ತೊಂದರೆ ಎದುರಿಸದೆ ತಮ್ಮ ದೀರ್ಘಾವಧಿಯ ವಾಸ್ತವ್ಯ ವೀಸಾಗಳನ್ನು ನವೀಕರಿಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಪ್ಪಳ | ಕೌಟುಂಬಿಕ ಕಲಹ : ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
ಯಲಬುರ್ಗಾ: ತಾಲ್ಲೂಕಿನ ಮಾರನಾಳ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುರುವಾರ ನಡೆದಿದೆ. ಮೃತರನ್ನು ಬಾಳವ್ವ ಕುರಿ (35) ಹುಲಿಗಮ್ಮ (9) ಮತ್ತು ವಿಜಯಮ್ಮ (8) ಎಂದು ಗುರುತಿಸಲಾಗಿದೆ. ಪತಿ ಶರಣಪ್ಪ ಮತ್ತು ಬಾಳವ್ವ ನಡುವೆ ನಡೆದ ಸಣ್ಣ ಜಗಳವು ತೀವ್ರ ಸ್ವರೂಪ ಪಡೆದು, ಮನನೊಂದು ಬಾಳವ್ವ ಈ ದಾರುಣ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಪತಿಯ ನಿರಂತರ ಕಿರುಕುಳವೇ ಈ ಘಟನೆಯ ಪ್ರಮುಖ ಕಾರಣವಾಗಿರಬಹುದು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೋಲೀಸರು ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿ ಮತ್ತು ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪತಿ ಶರಣಪ್ಪ ವಿಚಾರಣೆಗೆ ಒಳಗಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
‘ಸನ್ನಡತೆ’ಯ ಆಧಾರದ ಮೇಲೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 31 ಕೈದಿಗಳ ಬಿಡುಗಡೆ: ರಾಜ್ಯ ಸರಕಾರ ಆದೇಶ
ಬೆಂಗಳೂರು: ರಾಜ್ಯದ 9 ಕೇಂದ್ರ ಕಾರಾಗೃಹಗಳಲ್ಲಿ ದೀರ್ಘಕಾಲದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 31 ಮಂದಿ ಕೈದಿಗಳನ್ನು ಅವರ ‘ಸನ್ನಡತೆ’ಯ ಆಧಾರದ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ. ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯು ಈ ಆದೇಶವನ್ನು ಹೊರಡಿಸಿದ್ದು, ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಮಾನವೀಯ ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 14 ಮಂದಿ, ಮೈಸೂರು 2, ಬೆಳಗಾವಿ 2, ಕಲಬುರಗಿ 2, ಶಿವಮೊಗ್ಗ 1, ವಿಜಯಪುರ 5, ಬಳ್ಳಾರಿ 3, ಧಾರವಾಡ 1 ಹಾಗೂ ಶಿವಮೊಗ್ಗ ಕಾರಾಗೃಹದಲ್ಲಿ ಒಬ್ಬರನ್ನು ಬಿಡುಗಡೆಗೆ ನಿರ್ಣಯಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಬಿಡುಗಡೆಯಾಗುತ್ತಿರುವ ಕೈದಿಗಳು: ಶ್ರೀನಿವಾಸ್ ಯಾನೆ ಡ್ರೈವರ್ ಶ್ರೀನಿವಾಸ್, ಬಾಲರಾಜು, ವೆಂಕಟೇಶ್, ರಂಜಿತ್ ಕೆ. ಯಾನೆ ಭಟ್ಟ, ಭುವನೇಶ್ವರ ಟಿ.ಪಿ., ಛತ್ರಪತಿ ನಾಯ್ಕ ಯಾನೆ ಆಕಾಶ, ಶ್ರೀನಿವಾಸಮೂರ್ತಿ, ಲಿಂಗರಾಜು, ಯಮನಪ್ಪ, ನಿಲಕಂಠಾಚಾರ್, ಬಾಬು, ರಾಜಾಚಾರಿ, ನಾರಾಯಣಗೌಡ, ವೆಂಕಟೇಶ್, ಚಂದ್ರಮ್ಮ, ತಿಮ್ಮಣ್ಣ, ತುಕಾರಾಮ್, ಜಯಮ್ಮ, ಸುಭಾಷ್, ತಿಮ್ಮಪ್ಪ, ಅಶೋಕ್, ಶಿವಪ್ಪ, ಆನಂದ, ಪ್ರಕಾಶ್, ಸುರೇಶ್, ಎಚ್.ಕೆ.ರವಿಕುಮಾರ್, ಜಿ.ಎಲ್.ಮೋಹನ್ ಕುಮಾರ್, ಮಂಜಾನಾಯ್ಕ್, ಲಕ್ಷ್ಮೀಕಾಂತ್ ಹಾಗೂ ಸರಸ್ವತಿ ಸಹಿತ 31 ಮಂದಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗುತ್ತಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಳ್ಳಾರಿ | ಕಲಿಕಾ ಹಬ್ಬವು ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುತ್ತದೆ : ಅಯೋಧ್ಯ ವೆಂಕಟೇಶ
ಬಳ್ಳಾರಿ / ಕಂಪ್ಲಿ: ಕಲಿಕಾ ಹಬ್ಬಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು ಅವರ ಕಲಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಅಯೋಧ್ಯ ವೆಂಕಟೇಶ ಹೇಳಿದರು. ಸ್ಥಳೀಯ 8ನೇ ವಾರ್ಡ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ವಾರ್ಡ್ ಸಮೂಹ ಸಂಪನ್ಮೂಲ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಎಫ್ಎಲ್ಎನ್ ಆಧರಿತ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ, ಆತ್ಮವಿಶ್ವಾಸ ಮತ್ತು ಸಕ್ರೀಯ ಕಲಿಕೆ ಬೆಳೆಸುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ ಎಂದು ತಿಳಿಸಿದರು. ನಂತರ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್ಪಿ) ಎ.ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಕಲಿಕೆಯ ಮೇಲಿನ ಆಸಕ್ತಿ ಹೆಚ್ಚಿಸಲು ಎಫ್ಎಲ್ಎನ್ ಕಲಿಕಾ ಹಬ್ಬಗಳು ಮಹತ್ವದ್ದಾಗಿವೆ ಎಂದು ಹೇಳಿದರು. ಹಿಂದುಳಿದ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಜೊತೆಗೆ ಅವರಲ್ಲಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಸಹಕಾರಿ ಎಂದು ವಿವರಿಸಿದರು. ಕಲಿಕಾ ಹಬ್ಬದ ಏಳು ವಿವಿಧ ಚಟುವಟಿಕೆಗಳಲ್ಲಿ 8 ಶಾಲೆಗಳ 64 ಮಕ್ಕಳು ಭಾಗವಹಿಸಿದ್ದರು. 14 ಜನ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದು, ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಮುಖಂಡರಾದ ನಡವಿ ಮಲ್ಲಿಕಾರ್ಜುನ, ಈರಣ್ಣ, ಇಸಿಒ ರೇವಣ್ಣ, ಎನ್ಪಿಎಸ್ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ., ಸಿಆರ್ಪಿ ರೇಣುಕಾರಾಧ್ಯ, ವಿಕಲಚೇತನ ಸಂಘದ ಅಧ್ಯಕ್ಷ ಜೋಗಿ ರುದ್ರಪ್ಪ, ಮುಖ್ಯಶಿಕ್ಷಕಿ ಸುಮಿತ್ರ, ಸಾವಿತ್ರಿ ಬಾಯಿಪುಲೆ ಅಧ್ಯಕ್ಷೆ ಸುನಿತಾ ಪೂಜಾರಿ, ಕಂಪ್ಲಿ-ಕೋಟೆಯ ಸ.ಹಿ.ಪ್ರಾ ಶಾಲೆಯ ಮುಖ್ಯಗುರು ಹೊಸಗೇರಪ್ಪ, ಸಹ ಶಿಕ್ಷಕರಾದ ಪರಶುರಾಮ, ಪಂಪಾಪತಿ ಸೇರಿದಂತೆ ಶಿಕ್ಷಕ ವೃಂದದವರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು, ನಡವಳಿಕೆಗಳು ಮತ್ತು ನಡೆಗಳನ್ನು ಅಪಹಾಸ್ಯ ಮಾಡುವುದು, ಲೇವಡಿ ಮಾಡುವುದು ಅಥವಾ ತೀವ್ರವಾಗಿ ಟೀಕಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅನ್ನು ಬಳಸಿಕೊಂಡು ನಿರ್ಬಂಧಿಸುತ್ತಿದೆ. ಪ್ರಧಾನಿ ಇಸ್ರೇಲ್ಗೆ ನೀಡಿದ ಭೇಟಿಯ ಸಮಯ ಹಾಗೂ ಇರಾನ್ ಮೇಲಿನ ಅಮೆರಿಕ–ಇಸ್ರೇಲ್ ದಾಳಿ, ಅದರ ನಾಯಕನ ಹತ್ಯೆ ಮತ್ತು ಭಾರತದಿಂದ ದೂರದಲ್ಲಿರುವ ಇರಾನಿನ ನೌಕೆ ಮೇಲೆ ಅಮೆರಿಕ ನಡೆಸಿದ ದಾಳಿ ಕುರಿತು ಅವರ ಮೌನದ ನಂತರ, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿನ ಟೀಕೆಗಳನ್ನು ಸಕ್ರಿಯವಾಗಿ ನಿರ್ಬಂಧಿಸಲಾಗುತ್ತಿದೆ. ಇದರ ಜೊತೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ ಇಕ್ವಿಟಿ ನಿಯಮಗಳನ್ನು ಟೀಕಿಸುವ ಖಾತೆಗಳನ್ನು ಕೂಡ ಗುರಿಯಾಗಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಆದೇಶಗಳನ್ನು ಗೌಪ್ಯವಾಗಿಟ್ಟಿರುವುದರಿಂದ, ಬಳಕೆದಾರರು X ನಿಂದ ಸ್ವೀಕರಿಸುವ “ತೆಗೆದುಹಾಕುವಿಕೆ” ಸೂಚನೆಗಳನ್ನು ಹಂಚಿಕೊಂಡಾಗ ಮಾತ್ರ ಸಾರ್ವಜನಿಕರಿಗೆ ಈ ಸೆನ್ಸಾರ್ ಶಿಪ್ ಬಗ್ಗೆ ತಿಳಿಯುತ್ತದೆ. ಸರ್ಕಾರದ ಗೌಪ್ಯತೆಯಿಂದಾಗಿ ಈ ತೆಗೆದುಹಾಕುವಿಕೆಗಳ ಕುರಿತು ಸಂಪೂರ್ಣ ಅಂಕಿಅಂಶಗಳು ಲಭ್ಯವಿಲ್ಲ. ಪ್ಲಾಟ್ ಫಾರ್ಮ್ X ವೈಯಕ್ತಿಕ ಬಳಕೆದಾರರಿಗೆ ಅವರ ಪೋಸ್ಟ್ ಗಳನ್ನು ನಿರ್ಬಂಧಿಸಿದಾಗ ತಿಳಿಸುತ್ತದೆ. ಆದರೆ ಅದು ಸರ್ಕಾರದ ತೆಗೆದುಹಾಕುವಿಕೆಗಳ ಸಮಗ್ರ ಪಾರದರ್ಶಕತಾ ವರದಿಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿದೆ. ‘ದಿ ಹಿಂದೂ’ 2025ರ ಜನವರಿಯಿಂದ ಜೂನ್ ವರೆಗಿನ ಮೆಟಾದ ಡೇಟಾವನ್ನು ಪರಿಶೀಲಿಸಿದೆ. ಮೆಟಾ (ಇನ್ ಸ್ಟಾ ಗ್ರಾಮ್ ಮತ್ತು ಫೇಸ್ ಬುಕ್) ಡೇಟಾ ಸೆನ್ಸಾರ್ ಶಿಪ್ ನಲ್ಲಿ ಭಾರಿ ಹೆಚ್ಚಳವನ್ನು ತೋರಿಸುತ್ತದೆ. ಜನವರಿ ಮತ್ತು ಜೂನ್ 2025ರ ನಡುವೆ ಸರ್ಕಾರಿ ಆದೇಶಗಳಿಂದ ಅಳಿಸಲಾದ ಪೋಸ್ಟ್ಗಳ ಸಂಖ್ಯೆ 2023ರಲ್ಲಿ ಇದೇ ಅವಧಿಗೆ ಆದೇಶಿಸಿದ ಅಳಿಸುವಿಕೆಗಳಿಗೆ ಹೋಲಿಸಿದರೆ 300% ಹೆಚ್ಚಾಗಿದೆ. ಆದಾಗ್ಯೂ, @zerix_v ಎಂಬ ಬಳಕೆದಾರ ಸಂಗ್ರಹಿಸಿದ ಪುರಾವೆಗಳು ಮತ್ತು ಪಟ್ಟಿಗಳು ಅಂದಿನಿಂದ ಸೆನ್ಸಾರ್ ಶಿಪ್ ಪ್ರವೃತ್ತಿ ಇನ್ನಷ್ಟು ಏರಿಕೆಯಾಗಿದೆ ಎಂದು ಸೂಚಿಸುತ್ತವೆ. 2026 ಮಾರ್ಚ್ 10ರಂದು ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಭಾರತ–ಇರಾನ್ ಸಂಬಂಧಗಳು ಮತ್ತು ಅಮೆರಿಕವನ್ನು ಚಿತ್ರಿಸುವ ತಮ್ಮ ಎರಡು ವ್ಯಂಗ್ಯಚಿತ್ರಗಳನ್ನು X ತಡೆಹಿಡಿದಿದೆ ಎಂದು ತಿಳಿಸಿದ್ದಾರೆ. ಮೊದಲ ವ್ಯಂಗ್ಯಚಿತ್ರದಲ್ಲಿ ಮೋದಿ ನಗುತ್ತಿರುವ ಚಿತ್ರದ ಜೊತೆಗೆ “2016: ಭಾರತ–ಇರಾನ್ ದೋಸ್ತಿ ಇತಿಹಾಸದಷ್ಟು ಹಳೆಯದು!” ಎಂಬ ಶೀರ್ಷಿಕೆ ಇದೆ. ಅದರ ಪಕ್ಕದಲ್ಲಿ ಮತ್ತೊಂದು ಚಿತ್ರದಲ್ಲಿ 2026: ಆಯತುಲ್ಲಾ ಖಾಮಿನೈ ಯುಎಸ್ಎ ಮತ್ತು ಇಸ್ರೇಲ್ ನಿಂದ ಕೊಲ್ಲಲ್ಪಟ್ಟರು ಎಂದು ಬರೆದಿದ್ದು, ಅದರಲ್ಲಿ ಮೋದಿ ಕಣ್ಣುಮುಚ್ಚಿ ಕುಳಿತಿರುವುದನ್ನು ಚಿತ್ರಿಸಲಾಗಿದೆ. ಎರಡನೇ ಚಿತ್ರದಲ್ಲಿ “ಯುಎಸ್ ಜಲಾಂತರ್ಗಾಮಿ ನೌಕೆ ಹೊಡೆದುರುಳಿಸಿದ ಇರಾನ್ ನ ಐರಿಸ್ ಡೆನಾ ಹಡಗು ಭಾರತದಲ್ಲಿ ನೌಕಾ ಅಭ್ಯಾಸ ಮುಗಿಸಿ ಹಿಂತಿರುಗುತ್ತಿದೆ” ಎಂಬ ಸೂಚನೆಯಿದ್ದು, ಅದರಲ್ಲಿ ಮೋದಿ ಬಾಯಿಗೆ ಬಟ್ಟೆ ಕಟ್ಟಿಕೊಂಡಿರುವಂತೆ ಚಿತ್ರಿಸಲಾಗಿದೆ. ಅದರ ಮೇಲೆ “ಅತಿಥಿ ದೇವೋ ಭವ” ಎಂದು ಬರೆದಿದೆ. “ಈ ಸರ್ಕಾರದಲ್ಲಿ ಬಹಳಷ್ಟು ‘ತೇಜಸ್ವಿ ಲೋಗ್’ (ಪ್ರತಿಭಾನ್ವಿತ ಜನರು) ಇದ್ದರೂ, ನಾನು ಒಂದು ಸಲಹೆಯನ್ನು ಹಂಚಿಕೊಳ್ಳುತ್ತೇನೆ. ಕಳೆದ 15 ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಅನುಭವವು ನನಗೆ ಕಲಿಸಿದದ್ದೇನೆಂದರೆ, ಯಾವುದೇ ಸರ್ಕಾರ ಅಥವಾ ರಾಜಕಾರಣಿ ಬಲವಂತವಾಗಿ ವ್ಯಂಗ್ಯಚಿತ್ರವನ್ನು ತಡೆಯಲು ಪ್ರಯತ್ನಿಸಿದಾಗಲೆಲ್ಲಾ ಆ ವ್ಯಂಗ್ಯಚಿತ್ರವು ಸಾಮಾನ್ಯವಾಗಿ 10 ಪಟ್ಟು ಹೆಚ್ಚು ಓದುಗರನ್ನು ತಲುಪುತ್ತದೆ” ಎಂದು ಸತೀಶ್ ಆಚಾರ್ಯ ಹೇಳಿದ್ದಾರೆ. ಸಾರ್ವಜನಿಕರೊಂದಿಗೆ ತಮ್ಮ ಪದವಿಗಳ ಪ್ರತಿಯನ್ನು ಹಂಚಿಕೊಳ್ಳಲು ಬಯಸದ ಮೋದಿ ಅವರನ್ನು ಅಣಕಿಸುವ @Doc_RGM ಪೋಸ್ಟ್ ಮಾಡಿದ ವಿಡಿಯೊವನ್ನು ನಿರ್ಬಂಧಿಸಲು ಆದೇಶಿಸಲಾಗಿದೆ. ಬಳಕೆದಾರರು ಹಂಚಿಕೊಂಡ ಸೂಚನೆಗಳನ್ನು ಪರಿಶೀಲಿಸಿದಾಗ, ಸರ್ಕಾರವು ವಿಡಂಬನಾತ್ಮಕ ಮೀಮ್ ಗಳಿಂದ ಹಿಡಿದು ವಿರೋಧ ಪಕ್ಷದ ರಾಜಕೀಯ ವ್ಯಾಖ್ಯಾನದವರೆಗೆ ವ್ಯಾಪಕ ಶ್ರೇಣಿಯ ವಿಷಯವನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿದುಬರುತ್ತದೆ. X ಕಳುಹಿಸಿದ ಸೂಚನೆಗಳು ಬಳಕೆದಾರರಿಗೆ ತಿಳಿಸುವಂತೆ, ಭಾರತದಲ್ಲಿ ವಿಷಯವನ್ನು ತಡೆಹಿಡಿಯಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಕಾನೂನುಬದ್ಧವಾಗಿ ಬದ್ಧವಾಗಿವೆ. ಆದರೆ ಆದೇಶವನ್ನು ಪ್ರಶ್ನಿಸಲು ಬಯಸುವ ಬಳಕೆದಾರರು cyberlaw@meity.gov.in ನಲ್ಲಿ ನೇರವಾಗಿ MeitY ಅನ್ನು ಸಂಪರ್ಕಿಸಬಹುದು. ಕಳೆದ ತಿಂಗಳಿನಿಂದ ಪರಿಶೀಲಿಸಲಾದ ಎಲ್ಲಾ ಆದೇಶಗಳಿಗೆ ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ತೆಗೆದುಹಾಕಲಾಗಿದೆ ಎಂದು X ಬಳಕೆದಾರರಿಗೆ ಸ್ಪಷ್ಟವಾಗಿ ತಿಳಿಸಿದೆ. ಈ ರೀತಿಯ ಸ್ಪಷ್ಟ ಬಹಿರಂಗಪಡಿಸುವಿಕೆ ಹಿಂದೆ ಇರಲಿಲ್ಲ; ವೇದಿಕೆ ಈ ಹಿಂದೆ “ಕಾನೂನು ಬೇಡಿಕೆ” ಎಂದು ಮಾತ್ರ ಸಾಮಾನ್ಯವಾಗಿ ಉಲ್ಲೇಖಿಸುತ್ತಿತ್ತು. ಇನ್ನೂ ಅನೇಕ ಬಳಕೆದಾರರು ವೇದಿಕೆಗಳಾದ್ಯಂತ ಇದೇ ರೀತಿಯ ತೆಗೆದುಹಾಕುವಿಕೆ ಸೂಚನೆಗಳ ಸ್ಕ್ರೀನ್ ಶಾಟ್ ಗಳನ್ನು ಪೋಸ್ಟ್ ಮಾಡುತ್ತಿದ್ದರೂ, ಕೆಳಗೆ ವಿವರಿಸಿರುವ ಕೆಲವು ನಿದರ್ಶನಗಳನ್ನು The wire ಸ್ವತಂತ್ರವಾಗಿ ಪರಿಶೀಲಿಸಿದೆ. ಯಾವೆಲ್ಲ ಖಾತೆ, ವಿಷಯಗಳನ್ನು ಟಾರ್ಗೆಟ್ ಮಾಡಲಾಗಿದೆ? ಪತ್ರಕರ್ತ ಸುಶಾಂತ್ ಸಿಂಗ್, ವಕೀಲ ಪ್ರಶಾಂತ್ ಭೂಷಣ್ ಮತ್ತು ‘Amockx2022’ ಎಂಬ ಹ್ಯಾಂಡಲ್ ಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಹೇಳಿಕೆಗಳನ್ನು ಹೈಲೈಟ್ ಮಾಡಿದ ಪೋಸ್ಟ್ ಗಳಿಗಾಗಿ ನೋಟಿಸ್ ಗಳು ಬಂದಿವೆ. ಸುಶಾಂತ್ ಸಿಂಗ್ ಅವರ ತಡೆಹಿಡಿಯಲಾದ ಪೋಸ್ಟ್ ನಲ್ಲಿ ಸುದ್ದಿ ಕ್ಲಿಪ್ಪಿಂಗ್ ಇದ್ದು, ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ “ಸಾಬೀತಾದ ಸಂಪರ್ಕ” ಹೊಂದಿರುವ ಸಚಿವರನ್ನು ಸಂಪುಟದಲ್ಲಿ ಹೊಂದಿರುವುದು ದೇಶಕ್ಕೆ ವಿಶಿಷ್ಟವಾಗಿದೆ ಎಂದು ಬರೆಯಲಾಗಿತ್ತು. ಪ್ರಶಾಂತ್ ಭೂಷಣ್ ಅವರ ಪೋಸ್ಟ್ ನಲ್ಲಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಜಾಗತಿಕ ಬಂಧನಗಳು ಮತ್ತು ರಾಜೀನಾಮೆಗಳ ಗ್ರಾಫಿಕ್ ಇದ್ದು, ಎಪ್ಸ್ಟೀನ್ ಜೊತೆ ನಿಕಟ ಸಂಪರ್ಕ ಇದ್ದರೂ ಪುರಿ ಅಧಿಕಾರದಲ್ಲಿದ್ದಾರೆ ಎಂದು ಆರೋಪಿಸಲಾಗಿದೆ. ಭೂಷಣ್ ಅವರ ಪೋಸ್ಟ್ನಲ್ಲಿ ಮೋದಿ ಅವರ ಇಸ್ರೇಲ್ ಭೇಟಿಯನ್ನೂ ಉಲ್ಲೇಖಿಸಲಾಗಿದೆ. ಸಚಿವರ ಹೆಸರನ್ನು “ಕೇವಲ ಬ್ಲ್ಯಾಕ್ಮೇಲ್ ಮಾಡಲು” ಬಳಸಲಾಗುತ್ತಿದೆ. ಫೈಲ್ಗಳಲ್ಲಿ ಇತರ ಹೆಸರುಗಳಿರುವುದರಿಂದ ಮೋದಿ ಶರಣಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿರುವ ವಿಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ‘Amockx2022’ ಖಾತೆಗೆ ಇದೇ ರೀತಿಯ ನೋಟಿಸ್ ಬಂದಿದೆ. ಅಮೆರಿಕ ನೌಕಾಪಡೆಯಿಂದ ಇರಾನಿನ ಹಡಗು ಮುಳುಗಡೆ ಕುರಿತು ಭಾರತದ ಮೌನದ ಬಗ್ಗೆ @sandeep_PT ಮತ್ತು @iArpitSpeaks ಅವರ ಪೋಸ್ಟ್ ಗಳನ್ನು ಅಳಿಸಲು ಆದೇಶಿಸಲಾಗಿದೆ. ನಂತರದ ಪೋಸ್ಟ್ ನಲ್ಲಿ @iArpitSpeaks ಅವರು 2016ರಲ್ಲಿ ಮೋದಿ ಹಿಂದೂ ಮಹಾಸಾಗರ ಪ್ರದೇಶದ ಮಹತ್ವದ ಬಗ್ಗೆ ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿಯನ್ನು ಸುಳ್ಳುಗಾರ ಎಂದು ಹೇಳಿದ್ದಾರೆ. “ಒಮ್ಮೆ ಅವರು (ಮೋದಿ) ಹೀಗೆ ಹೇಳಿದ್ದರು — ‘ಈ ಸರ್ಕಾರವನ್ನು ಟೀಕಿಸಬೇಕೆಂದು ನಾನು ಬಯಸುತ್ತೇನೆ; ಟೀಕೆ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ’ ಎಂದು ಶರ್ಮಾ ತಮ್ಮ ಸೆನ್ಸಾರ್ ಮಾಡಲಾದ ಟ್ವೀಟ್ ಕುರಿತು ಪೋಸ್ಟ್ ಮಾಡಿದ್ದಾರೆ.” ‘Honest Cricket Lover’ ಎಂಬ ಬಳಕೆದಾರ ಪ್ರಧಾನಿ ವಿರುದ್ಧದ ಆರೋಪಗಳ ಪಟ್ಟಿಯನ್ನು ಪೋಸ್ಟ್ ಮಾಡಿದ್ದಕ್ಕೆ ಅದನ್ನು ತಡೆಹಿಡಿಯಲಾಗಿದೆ. ಅದರಲ್ಲಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸಿದರು, ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಅಮೆರಿಕ–ಭಾರತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ಅಮೆರಿಕದ ಆಜ್ಞೆಯ ಮೇರೆಗೆ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದರು ಎಂದು ಹೇಳಲಾಗಿತ್ತು. ಇರಾನಿನ ಹಡಗನ್ನು ಹೊಡೆದುರುಳಿಸಿದ ನಂತರ ಮೋದಿ ಭಾರತವನ್ನು “ಯುಎಸ್ಎಯ ಅನಧಿಕೃತ ಗುಲಾಮ”ನನ್ನಾಗಿ ಮಾಡಿದ್ದಾರೆಯೇ ಎಂದು ಪೋಸ್ಟ್ ಪ್ರಶ್ನಿಸಿತ್ತು. ಫೋನ್ ಹಿಡಿದು ನಗುತ್ತಿರುವ ಬಾಲಿವುಡ್ ನಟ ದಿನೇಶ್ ಹಿಂಗೂ ಅವರ ಚಿತ್ರದೊಂದಿಗೆ “ಈಗ ಭಾರತದ ವಿದೇಶಾಂಗ ನೀತಿ” ಎಂಬ ಶೀರ್ಷಿಕೆಯ ವಿಡಿಯೊ ಥಂಬ್ನೇಲ್ ಅನ್ನು ‘Gss’ ಎಂಬ ಬಳಕೆದಾರ ಪೋಸ್ಟ್ ಮಾಡಿದ್ದರು. ಅದನ್ನು ಡಿಲೀಟ್ ಮಾಡುವಂತೆ ಆದೇಶಿಸಲಾಗಿದೆ. ವಿದೇಶಿ ನಾಯಕರೊಂದಿಗೆ ಸಂವಹನ ನಡೆಸುವಾಗ ವಿಚಿತ್ರವಾಗಿ ನಗುವ ಮೋದಿಯವರ ಪ್ರವೃತ್ತಿಯನ್ನು ಅಪಹಾಸ್ಯ ಮಾಡಿದ @nkk_123 ಅವರ ಪೋಸ್ಟ್ ಅನ್ನು ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ನಿರ್ಬಂಧಿಸಲು ಆದೇಶಿಸಲಾಗಿದೆ. ವೈರಲ್ ಆಗಿದ್ದ ಮೋದಿ ಸಂಸ್ಕೃತ ಸುಭಾಷಿತದ ತಪ್ಪಾದ ಲಿಪ್ಯಂತರವನ್ನು ಉಲ್ಲೇಖಿಸಿ ಹಾಟ್ ಮೇಲ್ ಸಹ–ಸಂಸ್ಥಾಪಕ ಸಬೀರ್ ಭಾಟಿಯಾ ಮಾಡಿದ ಪೋಸ್ಟ್ ಗಳನ್ನು ಸಹ ತೆಗೆದುಹಾಕಲಾಗಿದೆ. ಟ್ರಂಪ್ ಗೆ ನಮಸ್ಕರಿಸುವ ಮೋದಿಯ ಎಡಿಟ್ ಮಾಡಿದ ಚಿತ್ರವನ್ನು ಒಳಗೊಂಡ “ಯೇ ತೋ ಢರ್ ಗಯಿ ಸರ್ಕಾರ್” (ಈ ಸರ್ಕಾರ ಹೆದರಿದೆ) ಎಂಬ ಸಾಲು ಇರುವ ‘Team Saath Official’ ಹ್ಯಾಂಡಲ್ ನ ಪೋಸ್ಟ್ ಅನ್ನು ನಿರ್ಬಂಧಿಸಲಾಗಿದೆ. ಆ ಚಿತ್ರದಲ್ಲಿ “ಸರ್, ನಾನು ಶೌಚಾಲಯಕ್ಕೆ ಹೋಗಬಹುದೇ?” ಎಂಬ ಪಠ್ಯವಿದೆ. ಮೋದಿಯ ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಮೊತ್ತದ ಕುರಿತು ಮಿಂಟ್ ಪತ್ರಿಕೆಯ ಟ್ವೀಟ್ ಗೆ ‘Totally ಪೋಸ್ಟ್ ಅನ್ನು ಕೂಡ ಅಳಿಸಲು ಆದೇಶಿಸಲಾಗಿದೆ. “Sher Paala Hai (Conditions Apply)” ಮತ್ತು “56 Inch only till 12 nautical miles” ಎಂಬ ಪಠ್ಯ ಪೋಸ್ಟ್ ಮಾಡಿದ್ದಕ್ಕಾಗಿ ‘SirKazam’ ಎಂಬ ಮತ್ತೊಬ್ಬ ಬಳಕೆದಾರರ ಪೋಸ್ಟ್ ಅನ್ನು ಅಳಿಸಲಾಗಿದೆ. ಮೋದಿಯನ್ನು ಒಳಗೊಂಡ ಎರಡು ವಿಡಂಬನಾತ್ಮಕ ಸಂಗೀತ ವಿಡಿಯೊಗಳಿಗಾಗಿ ‘the wire ’ ಅನ್ನು ಎಕ್ಸ್ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ ಟೇಕ್ ಡೌನ್ ನೋಟಿಸ್ ಗಳೊಂದಿಗೆ ಗುರಿಯಾಗಿಸಲಾಗಿದೆ. ಅದರ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರ ರೀಪೋಸ್ಟ್ ಅನ್ನು ಸಹ ತೆಗೆದುಹಾಕಲಾಗಿದೆ. ಫೆಬ್ರವರಿ 14ರಂದು ತಮ್ಮ ಪಕ್ಷದ ಒಂಬತ್ತು AI–ರಚಿತ ವಿಡಂಬನಾತ್ಮಕ ಪೋಸ್ಟ್ಗಳನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್ ತಿಳಿಸಿದ್ದಾರೆ. AI ಶೃಂಗಸಭೆಯಲ್ಲಿ ಪ್ರತಿಭಟನೆಯನ್ನು ಬೆಂಬಲಿಸಿ ಶಬ್ನಮ್ ಹಾಶ್ಮಿ ಮಾಡಿದ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ. ಪವನ್ ಝಾ ಅವರ ವೈರಲ್ ಹಾಡಿನ ‘All Izz Hell’ ನ ಆಯ್ದ ಭಾಗವನ್ನು ಪೋಸ್ಟ್ ಮಾಡಿದ ವಿಂಗ್ ಕಮಾಂಡರ್ (ನಿವೃತ್ತ) ಅನುಮಾ ಆಚಾರ್ಯ ಅವರ ಟ್ವೀಟ್ ಅನ್ನು ಭಾರತದಲ್ಲಿ ವೀಕ್ಷಕರಿಗೆ ನಿರ್ಬಂಧಿಸಲಾಗಿದೆ. ವೈರಲ್ ಹಾಡು ಸರ್ಕಾರದ ಮೇಲಿನ ಟೀಕೆಯಾಗಿದ್ದರೂ ಅದು ಮೋದಿಯ ಹೆಸರನ್ನಾಗಲೀ ಅಥವಾ ವ್ಯಕ್ತಿಯನ್ನಾಗಲೀ ನೇರವಾಗಿ ಉಲ್ಲೇಖಿಸುವುದಿಲ್ಲ. ತಮ್ಮ ಪೋಸ್ಟ್ ಗೆ ಮೋದಿಯ ಫೋಟೋ ಸೇರಿಸಿದ್ದರಿಂದ ಆಚಾರ್ಯ ಅವರ ಟ್ವೀಟ್ ಅನ್ನು ಸೆನ್ಸಾರ್ ಮಾಡಲಾಗಿದೆ. Instagram ನಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜಿಸುವ) ನಿಯಮಗಳು, 2026 ಅನ್ನು ಟೀಕಿಸುವ ಖಾತೆಗಳನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಇವುಗಳಲ್ಲಿ 2.7 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಹಿಂದೂ ಕಾರ್ಯಕರ್ತ ಸಾರ್ಥಕ್ ಭಗತ್ ಅವರ ಖಾತೆ ಮತ್ತು ಎರಡು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಬಲಪಂಥೀಯ ಖಾತೆ ‘@woke_kashmiri’ ಸೇರಿವೆ. The wire ಗೆ ಸ್ವಂತ ಸಾಮಾಜಿಕ ಮಾಧ್ಯಮ ಖಾತೆಗಳು ಸೆನ್ಸಾರ್ ಶಿಪ್ ನಿಂದಾಗಿ ಪದೇಪದೇ ಬ್ಲಾಕ್ ಮತ್ತು ಇತರ ಅಡಚಣೆಗಳನ್ನು ಎದುರಿಸಿವೆ. ಕಾನೂನು ಚೌಕಟ್ಟು ಮತ್ತು ಪಾರದರ್ಶಕತೆಯ ಕೊರತೆ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯ ಸಹ–ಸಂಸ್ಥಾಪಕ ಪ್ರಾಣೇಶ್ ಪ್ರಕಾಶ್ ಅವರು ‘Team Saath Official’ ಟೇಕ್ ಡೌನ್ ನೋಟಿಸ್ ಅನ್ನು #69A ಮತ್ತು #ಸೆನ್ಸಾರ್ಶಿಪ್ ಎಂಬ ಹ್ಯಾಶ್ ಟ್ಯಾಗ್ ಗಳೊಂದಿಗೆ X ನಲ್ಲಿ ಹಂಚಿಕೊಂಡು ಈ ಕ್ರಮಗಳನ್ನು ಹೈಲೈಟ್ ಮಾಡಿದ್ದಾರೆ. ಈ ಆದೇಶಗಳು “ಅಸಂವಿಧಾನಿಕ”, ಏಕೆಂದರೆ ಅವು ಬಳಕೆದಾರರಿಗೆ ಮುಂಚಿತವಾಗಿ ಕೇಳಿಸಿಕೊಳ್ಳುವ ಅವಕಾಶವನ್ನು ಕಡಿಮೆ ಮಾಡುತ್ತವೆ ಮತ್ತು “ಸಾರ್ವಜನಿಕ, ತಾರ್ಕಿಕ ಆದೇಶ”ವನ್ನು ಹೊಂದಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಜೂನ್ 2024ರಲ್ಲಿ ಇಂಡಿಯನ್ ಪಬ್ಲಿಕ್ ಪಾಲಿಸಿ ರಿವ್ಯೂ ನಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರಕಾಶ್ ಈ ನಿರ್ದೇಶನಗಳನ್ನು ಸಕ್ರಿಯಗೊಳಿಸುವ ಕಾನೂನು ಚೌಕಟ್ಟನ್ನು ಪರಿಶೀಲಿಸಿದ್ದಾರೆ. ಕಾನೂನುಬದ್ಧತೆ, ಕಾನೂನುಬದ್ಧ ಗುರಿಗಳು ಮತ್ತು ಅನುಪಾತದ ಬಗ್ಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ವಿಧಿಸಿರುವ ಅವಶ್ಯಕತೆಗಳನ್ನು ಈ ಕಾನೂನು ಪೂರೈಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಾಹಿತಿ ತಂತ್ರಜ್ಞಾನ (ಸಾರ್ವಜನಿಕರಿಂದ ಮಾಹಿತಿ ಪ್ರವೇಶವನ್ನು ನಿರ್ಬಂಧಿಸುವ ಕಾರ್ಯವಿಧಾನ ಮತ್ತು ಸುರಕ್ಷತೆಗಳು) ನಿಯಮಗಳು, 2009ರ ನಿಯಮ 16 ಈ ಸರ್ಕಾರಿ ವಿನಂತಿಗಳಿಗೆ “ಕಟ್ಟುನಿಟ್ಟಾದ ಗೌಪ್ಯತೆ” ಕಡ್ಡಾಯಗೊಳಿಸುತ್ತದೆ. ಈ ಪಾರದರ್ಶಕತೆಯ ಕೊರತೆಯಿಂದಾಗಿ ಪ್ರಭಾವಿತರಾದ ಯಾರಾದರೂ ನಿಷೇಧದ ವಿರುದ್ಧ ಹೋರಾಡುವುದು ಅಸಾಧ್ಯವಾಗುತ್ತದೆ. ಬಳಕೆದಾರರಿಗೆ ಬ್ಲಾಕ್ ಬಗ್ಗೆ ತಿಳಿಸಲಾಗಿದ್ದರೂ ಸಹ, ಯಾವ ಸಂಸ್ಥೆಯು ಅದನ್ನು ಆದೇಶಿಸಿದೆ, ಯಾವ ನಿರ್ದಿಷ್ಟ ಕಾನೂನು ಆಧಾರದ ಮೇಲೆ ಅಥವಾ ಪರಿಹಾರವನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಸಿಗುವುದಿಲ್ಲ. ಏತನ್ಮಧ್ಯೆ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಾರ್ಯವಿಧಾನದ ಸುರಕ್ಷತೆಗಳ ಅಸ್ತಿತ್ವದ ಆಧಾರದ ಮೇಲೆ ಸೆಕ್ಷನ್ 69A ನ ಸಾಂವಿಧಾನಿಕತೆಯನ್ನು ಎತ್ತಿಹಿಡಿದಿದ್ದರೂ, ನಿಯಮ 16ರಿಂದ ಸೃಷ್ಟಿಯಾಗಿರುವ ಅಪಾರದರ್ಶಕತೆ “ಅದೃಶ್ಯ ಸೆನ್ಸಾರ್ಶಿಪ್” ಅನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರಕಾಶ್ ಹೇಳಿದ್ದಾರೆ. ಶ್ರೇಯಾ ಸಿಂಘಾಲ್ ತೀರ್ಪು “ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ರಿಟ್ ಅರ್ಜಿಯಲ್ಲಿ ಅವುಗಳನ್ನು ಪ್ರಶ್ನಿಸಲು ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು” ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಗೌಪ್ಯತೆಯನ್ನು ಪ್ರಕಾಶ್ ಅವರು ಅನುರಾಧಾ ಭಾಸಿನ್ ಪ್ರಕರಣಕ್ಕೆ ಹೋಲಿಸಿದ್ದಾರೆ. ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯನ್ನು ಅಧಿಕೃತ ದಾಖಲೆಯಲ್ಲಿ ಸೇರಿಸಬೇಕು ಎಂದು ಹೇಳಿದ್ದರೂ, ವೆಬ್ಸೈಟ್ ನಿರ್ಬಂಧಿಸುವ ಆದೇಶಗಳು ಇನ್ನೂ ಅದೇ ಮಟ್ಟದ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂದು ತಿಳಿಸಿತ್ತು. “ಅಗತ್ಯ ಅಥವಾ ಸೂಕ್ತ” ಎಂದು ಕೇಂದ್ರ ಸರ್ಕಾರ ತೃಪ್ತಿ ಹೊಂದಿದ್ದರೆ ವಿಷಯವನ್ನು ನಿರ್ಬಂಧಿಸಲು ಸೆಕ್ಷನ್ 69A ಅವಕಾಶ ನೀಡುತ್ತದೆ ಎಂದು ಲೇಖನದಲ್ಲಿ ಹೇಳಲಾಗಿದೆ. ವಿಶೇಷವಾಗಿ ಅದು ಶಾಶ್ವತವಾಗಿ ಉಳಿಯುವಾಗ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ನಿರ್ಲಕ್ಷಿಸಿದಾಗ ಡಿಜಿಟಲ್ ನಿಷೇಧವು “ಸುಲಭ” ಅಥವಾ “ಪರಿಣಾಮಕಾರಿ” ಆಗಿರುವುದರಿಂದ ಅದು ಕಾನೂನುಬದ್ಧ ಅಥವಾ ಸರಿಯೇ ಆಗುವುದಿಲ್ಲ ಎಂದು ಪ್ರಕಾಶ್ ವಾದಿಸಿದ್ದಾರೆ. ಇದಲ್ಲದೆ, ಸಾಮಾಜಿಕ ಮಾಧ್ಯಮ ಕಂಪನಿಗಳು ತೀವ್ರ ಒತ್ತಡದಲ್ಲಿವೆ. ಈ ಹಿಂದೆ ಐಟಿ ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ಪೋಸ್ಟ್ ತೆಗೆದುಹಾಕಲು ಅವರಿಗೆ 24 ರಿಂದ 36 ಗಂಟೆಗಳ ಸಮಯವಿತ್ತು. ಈಗ ಅವರಿಗೆ ಕೇವಲ ಎರಡುರಿಂದ ಮೂರು ಗಂಟೆಗಳ ಕಾಲಾವಕಾಶ ನೀಡಲಾಗುತ್ತಿದೆ. ಈ ತ್ವರಿತ ಸೂಚನೆಗಳು ಪೂರ್ಣ ಕಾನೂನು ಆದೇಶದಂತೆ ಔಪಚಾರಿಕವಾಗಿಲ್ಲದಿದ್ದರೂ, ಪೋಸ್ಟ್ ನಿಜವಾಗಿಯೂ ಕಾನೂನನ್ನು ಉಲ್ಲಂಘಿಸುತ್ತದೆಯೇ ಎಂದು ಪರಿಶೀಲಿಸಲು ಅವರಿಗೆ ಸಾಕಷ್ಟು ಸಮಯವಿಲ್ಲದ ಕಾರಣ ಸಂಸ್ಥೆಗಳು ತ್ವರಿತವಾಗಿ ಅನುಸರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಪ್ರಕಾಶ್ ಹೇಳಿದ್ದಾರೆ. ಸೌಜನ್ಯ: thewire. in
ಬಳ್ಳಾರಿ | ಪವಿತ್ರ ಚಾರಿಟೆಬಲ್ ಸಂಸ್ಥೆಯಿಂದ ಮಹಿಳೆಯರ ಸ್ವಾವಲಂಬನೆ : ಎಂ.ರಜನಿ
ಬಳ್ಳಾರಿ / ಕಂಪ್ಲಿ: ಪವಿತ್ರ ಚಾರಿಟೆಬಲ್ ಸಂಸ್ಥೆಯು ತರಬೇತಿ ನೀಡುವ ಮೂಲಕ ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಆಸರೆಯಾಗಿದೆ ಎಂದು ಮುಖಂಡೆ ಎಂ.ರಜನಿ ಹೇಳಿದ್ಧಾರೆ. ಪಟ್ಟಣದ ಎಂ.ಡಿ.ಕ್ಯಾಂಪಿನ ಶಿರಡಿ ಸಾಯಿಬಾಬ ದೇವಸ್ಥಾನ ಸಮೀಪದ ಪವಿತ್ರ ಚಾರಿಟೆಬಲ್ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ವಿ.ಪವಿತ್ರಗೌಡರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಡ್ ಉಪಾಧ್ಯಕ್ಷ ವಿ.ಶಿವನಗೌಡ, ಸದಸ್ಯ ವಿ.ವಿವೇಕ್ಗೌಡ, ಸಿಬ್ಬಂದಿಗಳಾದ ಎಂ.ರಜನಿ, ಶಿವರಾಜ, ಉದಯಮೇರಿ, ಶೈಲಜಾ, ಪಾರ್ವತಿ, ವಾಣಿ ಇತರರು ಉಪಸ್ಥಿತರಿದ್ದರು.
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು
Gas Bill: ಇರಾನ್ -ಇಸ್ರೇಲ್ ಯುದ್ಧದ ಪರಿಣಾಮ ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಹಲವು ರಾಜ್ಯಗಳ ಪ್ರಮುಖ ನಗರದಲ್ಲಿ ಅಡುಗೆ ಅನಿಲದ ಅಭಾವ ಉಂಟಾಗಿದೆ. ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದ್ದು, ರೆಸ್ಟೋರೆಂಟ್ವೊಂದರಲ್ಲಿ ಬ್ರೇಕ್ಫಾಸ್ಟ್ ಮಾಡಿದವರಿಗೆ ಗ್ಯಾಸ್ ಶುಲ್ಕ ಸೇರಿಸಿ ಬಿಲ್ ನೀಡಲಾಗಿದೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಹಕರೊಬ್ಬರು ರೆಸ್ಟೋರೆಂಟ್ಗೆ
HD ಕುಮಾರಸ್ವಾಮಿ - IPS ಅಧಿಕಾರಿ ಚಂದ್ರಶೇಖರ್ ಜಟಾಪಟಿ: ಮಧ್ಯಸ್ಥಿಕೆದಾರರನ್ನು ನೇಮಿಸಲು ಹೈಕೋರ್ಟ್ ಇಂಗಿತ
ಎಚ್ಡಿ ಕುಮಾರಸ್ವಾಮಿ - ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ನಡುವಿನ ಜಗಳ ಪ್ರಕರಣವನ್ನು ಇತ್ಯರ್ಥಕ್ಕೆ ಮಧ್ಯಸ್ಥಿಕೆದಾರರ ನೇಮಿಸಲು ಹೈಕೋರ್ಟ್ ಇಂಗಿತ ಪಟ್ಟಿದೆ. ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರ ಪೀಠವು ಕೇಸ್ ವಿಚಾರಣೆ ನಡೆಸಿ ವೃತ್ತಿಪರ ಮಧ್ಯಸ್ಥಿಕೆದಾರರನ್ನು ನೇಮಿಸುವ ಸಲಹೆಯನ್ನು ಪರಿಗಣಿಸಬೇಕು ಎಂದು ಪೀಠ ಹೇಳಿಕೆ.
ಗಂಗಾವತಿ | ಗ್ಯಾಸ್ ಸಿಲಿಂಡರ್ ನೆಪ: ವಿದ್ಯಾರ್ಥಿಗಳಿಗೆ ಸಮಯಕ್ಕೆ ಊಟ ನೀಡದ ಆರೋಪ: ಎಸ್ಎಫ್ಐನಿಂದ ಪ್ರತಿಭಟನೆ
ಗಂಗಾವತಿ: ಬಿ.ಸಿ.ಎಂ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ನೆಪ ಹೇಳಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಊಟ ನೀಡಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಬದನಟ್ಟಿ, ವಸತಿ ನಿಲಯಪಾಲಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಮಧ್ಯಾಹ್ನ 4 ಗಂಟೆಯವರೆಗೆ ಊಟವಿಲ್ಲದೆ ಉಪವಾಸದಿಂದ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಆರೋಪಿಸಿದರು. ಅಧಿಕಾರಿಗಳಿಂದ “ಉಡಾಫೆಯಿಂದ ಮಾಡಿದದ್ದನ್ನು ತಿನ್ನಿ” ಎಂಬ ರೀತಿಯ ಪ್ರತಿಕ್ರಿಯೆ ನೀಡಿರುವುದು ಖಂಡನೀಯ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಸತಿ ನಿಲಯದ ಕಾರ್ಯನಿರ್ವಹಣಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿ ವಿಷಯವನ್ನು ಸಿಇಒ ಗಮನಕ್ಕೆ ತಂದು ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಊಟ ವ್ಯವಸ್ಥೆ ಮಾಡಲಾಯಿತು. ಹೋರಾಟದ ವೇಳೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಬಸಯ್ಯ ಹಿರೇಮಠ್, ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಬಿ., ಮೌನೇಶ್ ಮತ್ತು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Kodagu | ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳೆಗಾರ ಬಲಿ
ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಹೈಸ್ಕೂಲ್ ಪೈಸಾರಿ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಚೌರಿರ ಡಿ.ಗಣಪತಿ (49) ಎಂಬವರೇ ಆನೆ ದಾಳಿಗೆ ಸಿಲುಕಿ ಬಲಿಯಾದ ಬೆಳೆಗಾರ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾಡಾನೆ ದಾಳಿಗೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆಯೊಬ್ಬರು ಮೃತಪಟ್ಟ ಘಟನೆ ಸಮೀಪದ ಬಾಳೆಗುಂಡಿಯಲ್ಲಿ ನಡೆದಿತ್ತು. ಇದೀಗ ಬೆಳೆಗಾರರೊಬ್ಬರು ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವುದು ಈ ವ್ಯಾಪ್ತಿಯ ಗ್ರಾಮಸ್ಥರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ ಗಣಪತಿ ಅವರು ಕಾಫಿ ತೋಟಕ್ಕೆ ತೆರಳಿದ ಸಂದರ್ಭ ಕಾಡಾನೆ ದಾಳಿ ನಡೆಸಿದ್ದು, ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಗಣಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಫಿ ತೋಟದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದರೂ ಆನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯಾಧಿಕಾರಿ, ಸಿದ್ದಾಪುರ ಠಾಣಾಧಿಕಾರಿ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಆಗಮಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ, ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಾಪಂಡ ರವಿ ಕಾಳಪ್ಪ, ಕಾಡಾನೆ ಸೇರಿದಂತೆ ವಿವಿಧ ವನ್ಯಜೀವಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಜನ ಜಾನುವಾರುಗಳು ಬಲಿಯಾಗುತ್ತಿವೆ. ಹೀಗಿದ್ದೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಟೀಕಿಸಿದರು. ಸಿದ್ದಾಪುರದಲ್ಲಿ ಸೇರಿದ ಬೆಳೆಗಾರರು ಸಂಜೆಯವರೆಗು ಕಾಡಾನೆ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದರು.
ಎರಡು ವರ್ಷಗಳ ಸೇವೆ ಪೂರೈಸಿದ ಕಲಬುರಗಿ–ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್
ಕಲಬುರಗಿ: ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ಕಲಬುರಗಿ–ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಾ.12ರಂದು ತನ್ನ ಎರಡು ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದೆ. ಇದು ಆಧುನಿಕ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಕರ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಈ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2024ರ ಮಾ.12 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ್ದರು ಮತ್ತು ಫ್ಲ್ಯಾಗ್ ಶಿಪ್ ಮಾಡಿದ್ದರು ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕದ ರಾಜಧಾನಿ ಮತ್ತು ಐಟಿ ಕೇಂದ್ರ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ನಡುವೆ ವೇಗದ ಮತ್ತು ವಿಶ್ವ ದರ್ಜೆಯ ರೈಲು ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಯಿತು, ಇದು ಕಲ್ಯಾಣ ಕರ್ನಾಟಕ ಪ್ರದೇಶ ಮತ್ತು ರಾಜ್ಯ ರಾಜಧಾನಿಯ ನಡುವಿನ ವೇಗದ ಮತ್ತು ಆರಾಮದಾಯಕ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಈ ರೈಲು ಪ್ರಯಾಣದ ಸಮಯವನ್ನು ಕಡಿಮೆ ಮಾಡಿದೆ ಮತ್ತು ಅನುಕೂಲಕರ ಪ್ರಯಾಣವನ್ನು ಸಕ್ರಿಯಗೊಳಿಸಿದೆ, ಇದು ವ್ಯಾಪಾರ ಪ್ರಯಾಣಿಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಬಹು ಪ್ರಯೋಜನವನ್ನು ನೀಡಿದೆ. ಕಳೆದೆರಡು ವರ್ಷಗಳಲ್ಲಿ, ಇದು ಬೆಂಗಳೂರಿಗೆ ಆರ್ಥಿಕ, ಶೈಕ್ಷಣಿಕ ಮತ್ತು ಆರೋಗ್ಯ ಸಂಪರ್ಕವನ್ನು ಬಲಪಡಿಸಿದೆ, ಐಟಿ ಕೇಂದ್ರ ಮತ್ತು ಉತ್ತರ ಕರ್ನಾಟಕದ ಮಾರುಕಟ್ಟೆಗಳ ನಡುವಿನ ವ್ಯಾಪಾರವನ್ನು ಸಹ ಬೆಂಬಲಿಸುವುದರ ಜೊತೆಗೆ ರೋಗಿಗಳಿಗೆ ವೇಗದ ವೈದ್ಯಕೀಯ ಪ್ರಯಾಣವನ್ನು ಸುಗಮಗೊಳಿಸಿದೆ. ಈ ಸೇವೆಯು ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಮುಂತಾದ ಪ್ರಮುಖ ಪಟ್ಟಣಗಳಿಗೆ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಿದೆ. ಜೊತೆಗೆ ಮಂತ್ರಾಲಯ ಮತ್ತು ಪುಟ್ಟಪರ್ತಿಯಂತಹ ಸ್ಥಳಗಳಿಗೆ (ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೂಲಕ) ಸುಲಭ ಪ್ರವೇಶವನ್ನು ಒದಗಿಸುವ ಮೂಲಕ ತೀರ್ಥಯಾತ್ರೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಿದೆ. ರೈಲು ಸಂಖ್ಯೆ 22231/22232 ಕಲಬುರಗಿ-SMVT ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಕೇವಲ 8 ಗಂಟೆಗಳಲ್ಲಿ 561 ಕಿಮೀ ದೂರವನ್ನು ಕ್ರಮಿಸುತ್ತದೆ, ಅಸ್ತಿತ್ವದಲ್ಲಿರುವ ಸೂಪರ್ಫಾಸ್ಟ್ ಸೇವೆಗಳು 10 ರಿಂದ 12 ಗಂಟೆಗಳಿಗೆ ಹೋಲಿಸಿದರೆ, ಇದರಿಂದಾಗಿ ಸುಮಾರು 2 ರಿಂದ 4 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಪ್ರಸ್ತುತ, ರೈಲು ವಾರದಲ್ಲಿ ಆರು ದಿನಗಳು ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ, ಸಾಯಿ ಪಿ ನಿಲಯಂ ಮತ್ತು ಯಲಹಂಕದಲ್ಲಿ ನಿಲುಗಡೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. 8 ಬೋಗಿಗಳ ವಂದೇ ಭಾರತ್ ರೈಲು ಸೆಟ್ ಅನ್ನು ಹೊಂದಿರುವ ಈ ರೈಲು 400 ಚೇರ್ ಕಾರ್ (CC) ಸೀಟುಗಳು ಮತ್ತು 52 ಎಕ್ಸಿಕ್ಯುಟಿವ್ ಚೇರ್ ಕಾರ್ (EC) ಸೀಟುಗಳನ್ನು ಒಳಗೊಂಡ ಒಟ್ಟು 452 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ರೈಲಿನ ಅಪಾರ ಜನಪ್ರಿಯತೆಯು ಅದರ ಗಮನಾರ್ಹ ಕಾರ್ಯಕ್ಷಮತೆಯಲ್ಲಿ ಪ್ರತಿಫಲಿಸುತ್ತದೆ, ಫೆಬ್ರವರಿ 2026 ರವರೆಗೆ ಒಟ್ಟು 5,72,566 ಪ್ರಯಾಣಿಕರನ್ನು ಸಾಗಿಸಿದ್ದು, 2026 ರಲ್ಲಿ 103.52% ರಷ್ಟು ಪ್ರಭಾವಶಾಲಿ ಆಕ್ಯುಪೆನ್ಸಿಯನ್ನು ಹೊಂದಿದೆ. ಕಲಬುರಗಿ-SMVT ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಪ್ರಾದೇಶಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಸಂಪರ್ಕಕ್ಕೆ ಗಮನಾರ್ಹ ಕೊಡುಗೆ ನೀಡುವುದರೊಂದಿಗೆ ಆಧುನೀಕರಣ, ಪ್ರಯಾಣಿಕರ ಸೌಕರ್ಯ, ವೇಗ, ಸುರಕ್ಷತೆ ಮತ್ತು ಸುಸ್ಥಿರ ಸಾರಿಗೆಯ ಕಡೆಗೆ ಭಾರತೀಯ ರೈಲ್ವೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸೋಲಾಪುರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ವಾಡಿ | ಭೀಮ ಗಾಯನ ಹೆಸರಲ್ಲಿ ಇತಿಹಾಸ ಮರೆಮಾಚಿರುವ ಆರೋಪ
ವಾಡಿ: ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿದ ಹತ್ತು ಊರುಗಳಲ್ಲಿ ‘ಭೀಮ ಗಾಯನ’ ಕಾರ್ಯಕ್ರಮ ಹಮ್ಮಿಕೊಳ್ಳುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಅಂಬೇಡ್ಕರ್ ಭೇಟಿ ನೀಡಿದ್ದ ವಾಡಿ, ಕಲಬುರಗಿ ಪಟ್ಟಣವನ್ನು ಮರೆತು ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಇತಿಹಾಸ ಮರೆಮಾಚುವಂತಾಗಿದೆ ಎಂದು ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ತೇಜಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಅಂಬೇಡ್ಕರ್ ಅವರು 1944ರ ಸೆಪ್ಟೆಂಬರ್ 20 ಹಾಗೂ 1952ರ ಏಪ್ರಿಲ್ 27ರಂದು ಎರಡು ಬಾರಿ ವಾಡಿ ಪಟ್ಟಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದರು. ಆದರೆ ಈ ಬಗ್ಗೆ ಜನರಿಗೆ ಕನಿಷ್ಠ ಅರಿವು ಇಲ್ಲದಿರುವುದು ದುಃಖಕರವಾಗಿದೆ. ಇದು ವಾಡಿ ಜನತೆಗೆ ಮಾಡಿದ ಅನ್ಯಾಯವಾಗಿದ್ದು, ಅಂಬೇಡ್ಕರ್ ಭೇಟಿ ನೀಡಿದ ಇತಿಹಾಸವನ್ನು ತಿರುಚುವ ಕೆಲಸವಾಗಿದೆ ಎಂದು ಹೇಳಿದರು. ವಾಡಿ ಪಟ್ಟಣಕ್ಕೆ ಅಂಬೇಡ್ಕರ್ ಭೇಟಿ ನೀಡಿದ್ದ ನೆನಪಿಗಾಗಿ ‘ಭೀಮ ಗಾಯನ’ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಸ್ಥಳೀಯ ಜನತೆಗೆ ಸರಿಯಾದ ಮಾಹಿತಿ ನೀಡಿಲ್ಲ. ಅಂಬೇಡ್ಕರ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅಮೃತರಾವ ಕೋಮಟೆ ಅವರ ಪುತ್ರ ಹಾಗೂ ವಾಡಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅವರಿಗೆ ಆಹ್ವಾನ ನೀಡಿ ಅವರಿಂದ ಇತಿಹಾಸದ ಕುರಿತು ಮಾಹಿತಿ ಹಂಚಿಕೊಳ್ಳಬಹುದಿತ್ತು ಎಂದು ಅವರು ಹೇಳಿದರು. ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ನಡೆಸದೆ ಕೇವಲ ಸರ್ಕಾರದ ಆದೇಶದ ಮೇರೆಗೆ ಕಾಟಾಚಾರದ ಕಾರ್ಯಕ್ರಮ ನಡೆಸಲಾಗಿದೆ ಎಂದು ಅವರು ಆರೋಪಿಸಿದರು. ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಡಾ. ಅಂಬೇಡ್ಕರ್ ಪದವಿ ಕಾಲೇಜು ವಾಡಿ ಸಹಾಯಕ ಪ್ರಾಧ್ಯಾಪಕರಾದ ಅರುಣ ಜೋಳದಕೂಡ್ಲಗಿ ಮಾತ್ರ ಅಂಬೇಡ್ಕರ್ ಅವರ ವಾಡಿ ಭೇಟಿಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಇತರ ಅಧಿಕಾರಿಗಳಿಗೆ ಈ ಕುರಿತು ಸಮರ್ಪಕ ತಿಳುವಳಿಕೆ ಇಲ್ಲದಿರುವುದು ನೋವಿನ ಸಂಗತಿ ಎಂದು ಹೇಳಿದರು. ಇದಲ್ಲದೆ ಸ್ಥಳೀಯ ಕಲಾವಿದರಾದ ಸಿದ್ಧಾರ್ಥ ಚಿಮ್ಮ ಇದಲಾಯಿ, ದಲಿತ ಕಲಾ ಮಂಡಳಿ ಸೇರಿದಂತೆ ಹಲವು ಕಲಾ ತಂಡಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕಡೆಗಣಿಸಿರುವುದು ಅನ್ಯಾಯವಾಗಿದೆ ಎಂದು ಅವರು ದೂರಿದರು.
ರಾಯಚೂರು | ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ 43.78 ಲಕ್ಷ ರೂ. ವೇತನ ಪಾವತಿಗೆ ಆದೇಶ : ನಾಗಲಿಂಗಸ್ವಾಮಿ
ರಾಯಚೂರು: ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಬಾಕಿ ಉಳಿದಿದ್ದ 43,78,387 ರೂ. ವೇತನವನ್ನು ಪಾವತಿಸಲು ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದು ಕಾರ್ಮಿಕರ ಹೋರಾಟದ ಜಯವಾಗಿದೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ತಿಳಿಸಿದ್ದಾರೆ. ಗುರುವಾರ ರಾಯಚೂರಿಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನೀರವಾರಿ ನಿಗಮ ಲಿಮಿಟೆಡ್ ನ ಯರಮರಸ್, ಗಿಲ್ಲೆಸುಗೂರು ಹಾಗೂ ಸಿರವಾರ ವಿಭಾಗದ ಹಿರೇಕೊಟ್ನೆಕಲ್ ಉಪ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನವನ್ನು ಪಾವತಿಸದೆ ವಿಳಂಬ ಮಾಡಲಾಗಿತ್ತು ಎಂದು ಆರೋಪಿಸಿದರು. ಈ ಕುರಿತು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘವು ಕಾರ್ಮಿಕ ಇಲಾಖೆಗೆ ಅಧಿಕೃತವಾಗಿ ದೂರು ಸಲ್ಲಿಸಿತ್ತು. ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ಉಪ ಕಾರ್ಮಿಕ ಆಯುಕ್ತರು ವೇತನ ಪಾವತಿ ಕಾಯ್ದೆ 1936 ಅಡಿಯಲ್ಲಿ ಕಾರ್ಮಿಕರಿಗೆ ಬಾಕಿ ವೇತನದ ಜೊತೆಗೆ ಪರಿಹಾರ ಸಹಿತ ಪಾವತಿಸಲು ಆದೇಶ ನೀಡಿದ್ದಾರೆ ಎಂದು ಅವರು ವಿವರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಬಸವರಾಜ, ಎಐಸಿಸಿಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಜೀಜ್ ಜಾಗೀರ್ದಾರ್, ಸಿದ್ದಪ್ಪಗೌಡ, ರಾಜಾಸಾಬ್, ಲಕ್ಷ್ಮಣ, ಭೀಮಣ್ಣ ಉಡುಮಗಲ್, ವೆಂಕಟೇಶ ಬಾಗಲವಾಡ, ಪ್ರಹ್ಲಾದ್ ರಾವ್, ಜಗದೀಶ್, ನಿಸಾರ್ ಅಹ್ಮದ್, ಶಂಕರ್ ಜಾನೇಕಲ್ ಸೇರಿದಂತೆ ಉಪಸ್ಥಿತರಿದ್ದರು.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ವೈಭವದ ಮನ್ಮಹಾರಥೋತ್ಸವ
ಕುಂದಾಪುರ: ಇತಿಹಾಸ ಪ್ರಸಿದ್ದವಾದ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದ ವೈಭವದ ಮನ್ಮ ಹಾರಥೋತ್ಸವ ಗುರುವಾರ ವೈಭವದಿಂದ ಸಂಪನ್ನಗೊಂಡಿದೆ. ಮೂಕಾಂಬಿಕಾ ದೇವಿಯ ವಿಜೃಂಭಣೆಯ ಉತ್ಸವಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಅಲ್ಲದೇ ವಿದೇಶದಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾದರು. ದೇಗುಲದ ಹಿರಿಯ ಅರ್ಚಕ ಕೆ.ಎನ್.ಗೋವಿಂದ ಅಡಿಗ ಅವರ ನೇತೃತ್ವದಲ್ಲಿ ರಥೋತ್ಸವದ ಅಂಗವಾಗಿ ದೇವಸ್ಥಾನ ದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.ಬೆಳಗ್ಗೆ ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ ಜೋಡಿ ಉತ್ಸವ ಮೂರ್ತಿ ಗಳನ್ನು ಗರ್ಭಗುಡಿಯಿಂದ ಹೊರತಂದು, ಸುತ್ತ ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಿ, ಬಳಿಕ ಓಡು ಬಲಿ ಸೇವೆಗಾಗಿ ಸೌಪರ್ಣಿಕ ನದಿ ತೀರಕ್ಕೆ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ (ಎರಡು) ಉತ್ಸವ ಮೂರ್ತಿ ಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥ ಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯಘೋಷದ ನಡುವೆ, ಬೀದಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ರಥೋತ್ಸವ ನಡೆಸಲಾಯಿತು. ಸಂಜೆ 5 ಗಂಟೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುಳ್ಳಿರಿಸಿ ರಥಬೀದಿಯಲ್ಲಿ ಶಂಕರಾಶ್ರಮದವರೆಗೆ ಬ್ರಹ್ಮರಥ ಕೊಂಡೊಯ್ಯಲಾಯಿತು. ಪರಂಪರೆಯಂತೆ ರಥಬೀದಿಯ ಸಂಭ್ರಮದ ಉತ್ಸವಾಚರಣೆಯ ಬಳಿಕ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು. ದೇವಸ್ಥಾನದ ಖುತ್ವೀಜರಾದ ಎನ್.ನರಸಿಂಹ ಅಡಿಗ, ಶ್ರೀಧರ ಅಡಿಗ, ತಂತ್ರಿ ನಿತ್ಯಾನಂದ ಅಡಿಗ, ಅರ್ಚಕರಾದ ರಾಮಚಂದ್ರ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಘ್ನೇಶ್ ಅಡಿಗ, ಮೂರ್ತಿ ಕಾಳಿದಾಸ್ ಭಟ್, ಸುರೇಶ್ ಭಟ್, ಶ್ರೀಶ ಭಟ್, ಗಜಾನನ ಜೋಯಿಸ್, ಸುದರ್ಶನ್ ಜೋಯಿಸ್, ಶಿವಾನಂದ ಜೋಯಿಸ್, ಅಶ್ವಿನ್ ಭಟ್ ದಳಿ ಇದ್ದರು. ವೈಭವದ ರಥೋತ್ಸವದಲ್ಲಿ ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳಿದ್ದವು. ದೇವಸ್ಥಾನದ ಹೊರ ಹಾಗೂ ಒಳಾವರಣವನ್ನು ಹೂವು ಹಾಗೂ ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬ್ರಹ್ಮರಥ ಸಾಗುವ ಸುಮಾರು ಮುಕ್ಕಾಲು ಕಿ.ಮೀ ದೂರದ ರಥ ಬೀದಿಯಲ್ಲಿ ಹೂವಿನ ಹಾಸುಗಳಿಂದ ಅಲಂಕರಿಸಲಾಗಿತ್ತು. ಮಾ.5ರಂದು ಪ್ರಾರಂಭವಾದ ಕ್ಷೇತ್ರದ ವಾರ್ಷಿಕ ಉತ್ಸವಾಚರಣೆಯ ಅಂಗವಾಗಿ ಪ್ರತಿ ದಿನವೂ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸವದ ಅಂಗವಾಗಿ ದೇಗುಲದ ಆವರಣದಲ್ಲಿ ಪ್ರತಿದಿನ ಸಂಜೆ ದೇಶದ ವಿವಿಧ ಭಾಗದ ಕಲಾತಂಡಗಳು ಹಾಗೂ ಕಲಾವಿದರಿಂದ ಸೇವಾ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ರಾಜೇಶ್ ಕಾರಂತ್, ಡಾ.ಅಭಿಲಾಶ್ ಪಿ.ವಿ , ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್ , ಸುರೇಂದ್ರ ಶೆಟ್ಟಿ, ಧನಾಕ್ಷಿ ವಿಶ್ವನಾಥ್ ಪೂಜಾರಿ, ಕೆ.ಸುಧಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಸದಾಶಿವ ಪ್ರಭು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮುಜರಾಯಿ ಇಲಾಖೆ ಹಿರಿಯ ಅಧಿಕಾರಿಗಳಾದ ಎಸ್.ಪಿ.ಬಿ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
ರಾಯಚೂರು | ಸರಕಾರಿ ಶಾಲೆ ಉಳಿಸುವಂತೆ ಎಐಡಿಎಸ್ಒ ಅಭಿಯಾನ, ಪೋಸ್ಟರ್ ಬಿಡುಗಡೆ
ರಾಯಚೂರು: ಸರ್ಕಾರಿ ಶಾಲೆಗಳನ್ನು ಉಳಿಸಲು ನಡೆಯುತ್ತಿರುವ ಕಲ್ಯಾಣ ಕರ್ನಾಟಕ ವಲಯ ಮಟ್ಟದ ಸಮಾವೇಶದ ಭಾಗವಾಗಿ ಪೋಸ್ಟರ್ ಅನ್ನು ರಾಯಚೂರು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ರಾಯಚೂರಿನಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಗುರುವಾರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮೀಸಲಾಗಿರುವ ಕೆಕೆಆರ್ಡಿಬಿ ನಿಧಿಯನ್ನು ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಳಸುತ್ತಿರುವುದು ರಾಜ್ಯ ಸರ್ಕಾರ ಈ ಭಾಗದ ಜನರಿಗೆ ಮಾಡುತ್ತಿರುವ ದೊಡ್ಡ ದ್ರೋಹ ಎಂದು ಆರೋಪಿಸಿದರು. ಕರ್ನಾಟಕದಾದ್ಯಂತ ಜನರ ತೀವ್ರ ವಿರೋಧದ ನಡುವೆಯೂ ಈ ಬಾರಿ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಕೆಪಿಎಸ್ ಶಾಲೆಗಳ ಸ್ಥಾಪನೆ ಕುರಿತು ಘೋಷಣೆ ಮಾಡಿದ್ದು, ಕಲ್ಯಾಣ ಕರ್ನಾಟಕದಲ್ಲಿ ಈ ಶಾಲೆಗಳನ್ನು ಸ್ಥಾಪಿಸಲು ಕೆಕೆಆರ್ಡಿಬಿ ನಿಧಿಯನ್ನು ಬಳಸುವುದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಹೊಸ ಶಾಲೆಗಳ ಸ್ಥಾಪನೆಗಾಗಿ ಈ ಹಣವನ್ನು ಬಳಸಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ಹೇಳಿದರು. ಆದರೆ 2025ರ ಅಕ್ಟೋಬರ್ 15ರಂದು ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆ ಸ್ಥಾಪಿಸಿ ಅದರ ಸುತ್ತಮುತ್ತ 3 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಮುಚ್ಚುವ ಯೋಜನೆ ಇದೆ ಎಂದು ಅವರು ದೂರಿದರು. ಈ ಕ್ರಮದಿಂದ ಕೇವಲ ಸುಮಾರು 6 ಸಾವಿರ ಶಾಲೆಗಳನ್ನು ಉಳಿಸಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಪರಿಸ್ಥಿತಿ ಉಂಟಾಗಬಹುದು ಎಂದು ಆರೋಪಿಸಿದರು. ಪ್ರತಿಯೊಂದು ಮಗುವಿಗೂ ಉಚಿತ ಶಿಕ್ಷಣ ದೊರೆಯಬೇಕು ಎಂಬ ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ಈಶ್ವರಚಂದ್ರ ವಿದ್ಯಾಸಾಗರ್ ಮುಂತಾದ ಮಹಾನ್ ವ್ಯಕ್ತಿಗಳ ಆಶಯಗಳಿಗೆ ವಿರುದ್ಧವಾಗಿ ಈ ನೀತಿ ಸಾಗುತ್ತಿದೆ ಎಂದು ಅವರು ಹೇಳಿದರು. ಈ ಅನ್ಯಾಯದ ವಿರುದ್ಧ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ರಾಜ್ಯದಾದ್ಯಂತ ಹೋರಾಟಗಳು ನಡೆಯುತ್ತಿವೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ನೂರಾರು ಹಳ್ಳಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಹಾಗೂ ವಿವಿಧ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ನೇತೃತ್ವದಲ್ಲಿ ಮಾರ್ಚ್ 14ರಂದು ಕಲ್ಯಾಣ ಕರ್ನಾಟಕ ವಲಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದನ, ಯಶವಂತ, ನಂದಗೋಪಾಲ್, ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ, ವಿದ್ಯಾರ್ಥಿ ಸಂತೋಷ, ಸಮೀರ್, ರಾಘವೇಂದ್ರ ಪಾಲ್ಗೊಂಡಿದ್ದರು.
ಜುಬೈಲ್| ‘ರೈಟ್ ಚಾಯ್ಸ್’ ಕಂಪೆನಿಯಿಂದ ಸಂಭ್ರಮದ ಇಫ್ತಾರ್ ಕೂಟ
ಜುಬೈಲ್: ‘ರೈಟ್ ಚಾಯ್ಸ್’ ಕಂಪೆನಿ ವತಿಯಿಂದ ತಮ್ಮ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟವು ಜುಬೈಲ್ನ ಪುಲಿ ರೆಸ್ಟೋರೆಂಟ್ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಯಾಝ್ ಕೈಕಂಬ, ಅಲ್ ಮುಝೈನ್ ಸಂಸ್ಥೆಯ ಸಿಐಒ ಝಕರಿಯಾ ಜೋಕಟ್ಟೆ, ಝಹೀರ್ ಝಕರಿಯಾ, ನಝೀರ್, ಮಂಗಳೂರು ಸಿಸಿಬಿಯ ಇನ್ಸ್ಪೆಕ್ಟರ್ ರಫೀಕ್, ಜಬ್ಬಾರ್ ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿ ಇಫ್ತಾರ್ ಕೂಟಕ್ಕೆ ವಿಶೇಷ ಮೆರುಗು ನೀಡಿದರು. ರಮಝಾನ್ ತಿಂಗಳು ಮಾನವೀಯತೆ, ಸಹಾನುಭೂತಿ ಮತ್ತು ಹಂಚಿಕೊಳ್ಳುವಿಕೆಯ ಸಂದೇಶ ನೀಡುವ ಪವಿತ್ರ ಸಮಯ, ಉಪವಾಸಿಗರಿಗೆ ಉಪವಾಸ ಮುರಿಯಲು ವ್ಯವಸ್ಥೆ ಮಾಡುವುದು ನಿಜಕ್ಕೂ ಮಹತ್ವದ, ಪುಣ್ಯದ ಕಾರ್ಯವಾಗಿದೆ. ಇಂತಹ ಇಫ್ತಾರ್ ಕೂಟಗಳು ಸಮಾಜ ಮತ್ತು ಸಮುದಾಯದಲ್ಲಿ ಸಹೋದರತ್ವ, ಸ್ನೇಹ ಮತ್ತು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಬಲಪಡಿಸುವಂತಾಗಲಿ ಎಂದು ಗಣ್ಯರು ಹಾರೈಸಿದರು.
ಕೌಂಟರ್ ನಲ್ಲಿ ಟಿಕೆಟ್ ಖರೀದಿಸುವ ಗ್ರಾಹಕರಿಗೂ ರೈಲ್ವೆ ವಿಮೆ ನೀಡಲೇಬೇಕು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಆನ್ ಲೈನ್ ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವವರಿಗೆ ವಿಮೆ ಸೌಲಭ್ಯ ಪಡೆಯುವ ಅವಕಾಶ ಇರುವಾಗ, ಕೌಂಟರ್ ನಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೂ ವಿಮೆ ಸೌಲಭ್ಯದ ಅವಕಾಶ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾ. ಆರ್. ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ, ಆನ್ಲೈನ್ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಮೊತ್ತ ತೆತ್ತು ವಿಮೆ ಸೌಲಭ್ಯ ಪಡೆಯುವ ಅವಕಾಶವಿದೆ. ಆದರೆ, ರೈಲ್ವೆ ಟಿಕೆಟ್ ಕೌಂಟರ್ಗಳಲ್ಲಿ ಖುದ್ದಾಗಿ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೆ ಇದೇ ಆಯ್ಕೆಯಿಲ್ಲ ಎಂಬ ಸಂಗತಿಯನ್ನು ಗಮನಕ್ಕೆ ತೆಗೆದುಕೊಂಡಿತು. ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಶಿಖಿಲ್ ಸೂರಿ, ಈ ತಾರತಮ್ಯದ ಕುರಿತು ವ್ಯಕ್ತವಾಗಿರುವ ಕಳವಳಗಳ ಬಗ್ಗೆ ರೈಲ್ವೆ ಯಾವುದೇ ಸ್ಪಂದನೆ ವ್ಯಕ್ತಪಡಿಸಿಲ್ಲ ಎಂಬುದರತ್ತ ನ್ಯಾಯಾಲಯದ ಗಮನ ಸೆಳೆದರು. ಇದಕ್ಕೆ ಪ್ರತಿಯಾಗಿ, “ಕೌಂಟರ್ಗಳಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರನ್ನು ಗುರುತಿಸುವ ಯಾಂತ್ರಿಕತೆಯನ್ನು ಅಭಿವೃದ್ಧಿಪಡಿಸಲು ರೈಲ್ವೆ ಕಾರ್ಯನಿರತವಾಗಿದೆ. ಇದರಿಂದ ಅಂತಹ ಪ್ರಯಾಣಿಕರಿಗೆ ವಿಮೆ ಪ್ರಮಾಣಪತ್ರಗಳನ್ನು ವಿತರಿಸಬಹುದು ಹಾಗೂ ಅವರ ಹಕ್ಕುದಾರಿಕೆಯನ್ನು ವಿಲೇವಾರಿ ಮಾಡಬಹುದು,” ಎಂದು ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಂಜಿತ್ ಬ್ಯಾನರ್ಜಿ ತಿಳಿಸಿದರು. ಇಂತಹ ಪ್ರಕರಣಗಳಲ್ಲಿ ಗುರುತಿನ ವಿವರಗಳ ಲಭ್ಯತೆ ಇಲ್ಲದಿರುವುದರಿಂದ ವಿಮೆ ಪ್ರಮಾಣಪತ್ರಗಳ ಭಾರಿ ದುರ್ಬಳಕೆ ಹಾಗೂ ವಿಮಾದಾರರ ಪರವಾಗಿ ವಂಚನೆಯ ಪ್ರತಿಪಾದನೆಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಅವರು ವಾದಿಸಿದರು. ಆದರೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯ, ಇಂತಹ ಕಾರಣಗಳಿಗಾಗಿ ಒಂದು ವರ್ಗದ ಪ್ರಯಾಣಿಕರಿಗೆ ವಿಮಾ ಸೌಲಭ್ಯ ನಿರಾಕರಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಈ ಹಿಂದೆ ನ್ಯಾಯಾಲಯವು ರೈಲ್ವೆ ಸುರಕ್ಷತೆ ಮತ್ತು ಪ್ರಯಾಣಿಕರ ಕಲ್ಯಾಣದ ಕುರಿತು ನೀಡಿರುವ ಸೂಚನೆಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರೈಲ್ವೆ ತನ್ನ ವೆಚ್ಚದ ಆದ್ಯತೆಗಳ ವಿವರಗಳನ್ನು ಮಂಡಿಸಿರುವ ರೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅನುದಾನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಹಾಗೂ ಬಳಕೆ ಮಾಡಲಾಗುತ್ತಿದೆ ಎಂಬುದನ್ನು ವಿವರಿಸುವ ಸ್ಪಷ್ಟವಾದ ಪ್ರಮಾಣಪತ್ರವನ್ನು ಸಲ್ಲಿಸುವಂತೆ ರೈಲ್ವೆಗೆ ನಿರ್ದೇಶನ ನೀಡಿತು. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಎಪ್ರಿಲ್ 1, 2026ಕ್ಕೆ ಮುಂದೂಡಲಾಗಿದೆ.
ತೈಲ ಬೆಲೆ ಏರಿಕೆಯಾದರೆ ಅಮೆರಿಕ ಹೆಚ್ಚು ಆದಾಯ ಗಳಿಸಬಹುದು: ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್, ಮಾ.12: ಮಧ್ಯಪ್ರಾಚ್ಯ ಯುದ್ಧದ ಜೊತೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ತೈಲ ಬಿಕ್ಕಟ್ಟನ್ನು ಎದುರಿಸಲು ಜಗತ್ತು ಪರದಾಡುತ್ತಿರುವ ಸಂದರ್ಭದಲ್ಲಿ, `ತೈಲ ಬೆಲೆ ಏರಿದರೆ ಅಮೆರಿಕ ಹೆಚ್ಚು ಆದಾಯ ಗಳಿಸಬಹುದು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. `ಅಮೆರಿಕ ವಿಶ್ವದ ಅತೀ ದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದೆ. ಆದ್ದರಿಂದ ತೈಲ ಬೆಲೆಗಳು ಹೆಚ್ಚಾದಾಗ ನಾವು ಬಹಳಷ್ಟು ಹಣ ಮಾಡಬಹುದು' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. `ಆದರೆ ಹೆಚ್ಚುತ್ತಿರುವ ತೈಲ ಬೆಲೆಗಳಿಗಿಂತ ಇರಾನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ತಡೆಯುವುದು ಹೆಚ್ಚು ಮುಖ್ಯವಾಗಿದೆ. ಇರಾನ್ ಎಂಬ ದುಷ್ಟ ಸಾಮ್ರಾಜ್ಯ ಪರಮಾಣು ಶಸ್ತ್ರಾಸ್ತ್ರವನ್ನು ಪಡೆದು ಮಧ್ಯಪ್ರಾಚ್ಯ ಮತ್ತು ಜಗತ್ತನ್ನೇ ನಾಶಪಡಿಸುವುದನ್ನು ತಡೆಯುವುದು ಅಧ್ಯಕ್ಷನಾಗಿ ನನಗೆ ಹೆಚ್ಚಿನ ಆಸಕ್ತಿಯ ಮತ್ತು ಪ್ರಾಮುಖ್ಯದ ವಿಷಯವಾಗಿದೆ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಭಾರತದಲ್ಲಿ ಮೂತ್ರಪಿಂಡ ರೋಗ ಪೀಡಿತರ ಸಂಖ್ಯೆ 13.80 ಕೋಟಿಗೂ ಅಧಿಕ : ವರದಿ
ಹೊಸದಿಲ್ಲಿ, ಮಾ.12: ಭಾರತದಲ್ಲಿ ಮೂತ್ರಪಿಂಡ ರೋಗ ಪೀಡಿತರ ಪ್ರಮಾಣವು ಗಣನೀಯವಾಗಿ ಏರಿಕೆಯಾಗುತ್ತಿದ್ದು 2023ರಲ್ಲಿ 13.80 ಕೋಟಿ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಮೂತ್ರಾಶಯ ದಿನಾಚರಣೆಯ ಹಿನ್ನೆಲೆಯಲ್ಲಿ ಗುರುವಾರ ಬಿಡುಗಡೆಯಾದ ತಜ್ಞರ ವರದಿಯೊಂದು ತಿಳಿಸಿದೆ. ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಮೂತ್ರಾಂಗಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿರುವ ಜನರ ವೈದ್ಯಕೀಯ ತಪಾಸಣೆಗೊಳಪಡಿಸುವ ತುರ್ತು ಅಗತ್ಯವಿದೆಯೆಂದು ತಜ್ಞರು ತಿಳಿಸಿದ್ದಾರೆ. ಸೋಂಕು ರಹಿತ ರೋಗಗಳ ನಿಯಂತ್ರಣ ಮಾರ್ಗಸೂಚಿ ಕುರಿತ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ದೀರ್ಘಾವಧಿಯ ಮೂತ್ರಪಿಂಡ ರೋಗವನ್ನು ಸೇರ್ಪಡೆಗೊಳಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಇಂಡಿಯನ್ ಸೊಸೈಟಿ ಆಫ್ ನೆಫ್ರಾಲಜಿ(ಐಎಸ್ಎನ್) ತಿಳಿಸಿದೆ. ಭಾರತದಲ್ಲಿ ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆ ಪೀಡಿತರ ಪ್ರಮಾಣವು ಕಳವಳಕಾರಿ ಮಟ್ಟದಲ್ಲಿ ಅಂದರೆ ಶೇ.16ರಷ್ಟು ಹೆಚ್ಚಳವಾಗಿದೆ. ಈ ಪ್ರವೃತ್ತಿ ಹೀಗೆ ಮುಂದುವರಿದಲ್ಲಿ 2040ರ ವೇಳೆಗೆ ಭಾರತದಲ್ಲಿ ಸಾವಿಗೆ ಕಾರಣವಾಗುವ ಐದು ಪ್ರಮುಖ ಕಾರಣಗಳಲ್ಲಿ ಮೂತ್ರಪಿಂಡದ ಕಾಯಿಲೆಯೂ ಒಂದೆನಿಸಲಿದೆ ಎಂದು ವರದಿ ಹೇಳಿದೆ. ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆಯು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಬಾಣಂತನದ ಆರೋಗ್ಯ ಸಮಸ್ಯೆಗಳು, ಪಾರಿಸರಿಕ ತೊಂದರೆಗಳು,ಮೂತ್ರಪಿಂಡಕ್ಕೆ ಗಾಯ ಇತ್ಯಾದಿ ತೊಂದರೆಗಳ ಜೊತೆ ನಿಕಟ ನಂಟನ್ನು ಹೊಂದಿದೆ ಎಂದು ಐಎಸ್ಎನ್ ತಿಳಿಸಿದೆ. ಮೂತ್ರಪಿಂಡ ಕಾಯಿಲೆಯು ಉಲ್ಬಣಾವಸ್ಥೆಗೆ ತಲುಪುವರೆಗೂ ಅದನ್ನು ವೈದ್ಯಕೀಯ ತಪಾಸಣೆಗೊಳಗಾಗದೆ ಇರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಮೂತ್ರಾಂಗಶಾಸ್ತ್ರ ಹಾಗೂ ಮೂತ್ರಪಿಂಡ ಕಸಿ ಸಂಸ್ತೆಯ ಹಿರಿಯ ನಿರ್ದೇಶಕ ಡಾ.ಶ್ಯಾಮ್ ಬಿಹಾರಿ ಬನ್ಸಾಲ್ ತಿಳಿಸಿದ್ದಾರೆ.
ರಶ್ಯ-ಉಕ್ರೇನ್ ನಡುವೆ ಮುಂದುವರಿದ ಸಂಘರ್ಷ : ನಾಲ್ವರು ಮೃತ್ಯು, 27 ಮಂದಿಗೆ ಗಾಯ
ಕೀವ್, ಮಾ.12: ರಶ್ಯ ಮತ್ತು ಉಕ್ರೇನ್ನ ನಡುವೆ ಸಂಘರ್ಷ ಮತ್ತೆ ತೀವ್ರಗೊಂಡಿದ್ದು ಎರಡೂ ದೇಶಗಳ ನಡುವಿನ ಡ್ರೋನ್ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪೂರ್ವ ಉಕ್ರೇನ್ನ ಖಾರ್ಕಿವ್ ನಗರದ ಶೆವ್ಚೆಂಕಿವಸ್ಕಿ ಜಿಲ್ಲೆಯಲ್ಲಿ ರಶ್ಯದ ಡ್ರೋನ್ ದಾಳಿಯಲ್ಲಿ ಇಬ್ಬರು ಹತರಾಗಿದ್ದು ಮೂವರು ಮಹಿಳೆಯರ ಸಹಿತ ಇತರ 7 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಗವರ್ನರ್ ಒಲೆಗ್ ಸಿನೆಗುಬೊವ್ ಹೇಳಿದ್ದಾರೆ. ಆಗ್ನೇಯ ನಗರ ಖೆರ್ಸನ್ನಲ್ಲಿ ಮಿನಿ ಬಸ್ಸೊಂದರ ಮೇಲೆ ರಶ್ಯದ ನಡೆಸಿದ ಡ್ರೋನ್ ದಾಳಿಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ನ ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಝಪೊರಿಝಿಯಾದ ರಶ್ಯ ಆಕ್ರಮಿತ ಪ್ರದೇಶದ ವಾಸಿಲಿವ್ಕಾ ಪಟ್ಟಣದಲ್ಲಿ ಕಾರೊಂದರ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿರುವುದಾಗಿ ರಶ್ಯ ನೇಮಿಸಿರುವ ಗವರ್ನರ್ ಯೆವ್ಗಿನಿ ಬಲಿಟ್ಸ್ಕಿ ಹೇಳಿದ್ದಾರೆ.
ಲೋಕಸಭೆ ಕಲಾಪ ಕಟ್ಟುನಿಟ್ಟಾಗಿ ನಿಯಮಗಳಿಗೆ ಅನುಸಾರವಾಗಿ ನಡೆಯುತ್ತದೆ: ಸ್ಪೀಕರ್ ಓಂ ಬಿರ್ಲಾ
ಹೊಸದಿಲ್ಲಿ, ಮಾ. 12: ಸದನವು ಕಟ್ಟುನಿಟ್ಟಾಗಿ ನಿಯಮಗಳಿಗೆ ಅನುಸಾರವಾಗಿ ನಡೆಯುತ್ತದೆ ಹಾಗೂ ಯಾವುದೇ ಸಮಯದಲ್ಲಿ ಮತ್ತು ಯಾವುದೇ ವಿಷಯದ ಮೇಲೆ ಮಾತನಾಡಲು ಯಾವುದೇ ಸದಸ್ಯನಿಗೆ ಅವಕಾಶವಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗುರುವಾರ ಹೇಳಿದ್ದಾರೆ. ತನ್ನ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯವು ಸೋಲುಕಂಡ ಒಂದು ದಿನದ ಬಳಿಕ ಅವರು ಮಾತನಾಡುತ್ತಿದ್ದರು. ಸ್ಪೀಕರ್ ಹುದ್ದೆಯು ಯಾವುದೇ ವ್ಯಕ್ತಿಗೆ ಸೇರಿದ್ದಲ್ಲ ಎಂದು ಹೇಳಿದ ಅವರು, ಅದು ಸದನದ ಪ್ರತಿಷ್ಠೆಯ ಸಂಕೇತವಾಗಿದೆ ಎಂದರು. ಯಾವುದೇ ಸದಸ್ಯನಿಗೆ ಇಷ್ಟವಿರಲಿ, ಇಲ್ಲದಿರಲಿ ಚಾಲ್ತಿಯಲ್ಲಿರುವ ನಿಯಮಗಳು ಮತ್ತು ವಿಧಿವಿಧಾನಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವುದನ್ನು ಲೋಕಸಭೆಯು ಮುಂದುವರಿಸುತ್ತದೆ ಎಂದು ಹೇಳಿದ ಅವರು, ತಾನು ಪ್ರಾಮಾಣಿಕತೆ ಮತ್ತು ನ್ಯಾಯೋಚಿತವಾಗಿ ಕಲಾಪಗಳನ್ನು ನಡೆಸುತ್ತೇನೆ ಎಂದು ಹೇಳಿದರು. ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ತನ್ನ ಮೇಲೆ ವಿಶ್ವಾಸವಿರಿಸಿರುವುದಕ್ಕಾಗಿ ಸದನದ ಸದಸ್ಯರಿಗೆ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು. ತನ್ನ ಪರವಾಗಿ ಮತ್ತು ವಿರುದ್ಧವಾಗಿ ಮಾತನಾಡಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಸಚಿವ ಸಂಪುಟ ಅನುಮೊದನೆ
ಬೆಂಗಳೂರು: ‘ಕೆಎಚ್ಬಿ ಸೂರ್ಯ’ ಕ್ರೀಡಾ ಗ್ರಾಮ ಎಂಬ ಹೆಸರಿನಲ್ಲಿ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಸೂರ್ಯನಗರ 4ನೆ ಹಂತದ ಬಡಾವಣೆಯ 75 ಎಕರೆ ವಿಸ್ತೀರ್ಣದ ಜಮೀನಿನಲ್ಲಿ 1980 ಕೋಟಿ ರೂ.ವೆಚ್ಚದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ. ಕ್ರೀಡಾಂಗಣ ಸುತ್ತಲೂ ವಾಣಿಜ್ಯ ಕಟ್ಟಡಗಳ ನಿರ್ಮಾಣ ಹಾಗೂ ಇತರ ಕಟ್ಟಡ ಕಾಮಗಾರಿಗಳ ಪರಿಷ್ಕೃತ ವೆಚ್ಚದ ಮಾಹಿತಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇತರೆ ನಿರ್ಣಯಗಳು: ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾವೇರಿ ಶಾಖಾ ನಾಲೆ, ಕೆರಗೋಡು ಶಾಖಾ ನಾಲೆ, ಶಿಂಷಾ ಶಾಖಾ ನಾಲೆ ಮತ್ತು ಹೊಸ ಮದ್ದೂರು ಶಾಖಾ ನಾಲೆಗಳಡಿಯಲ್ಲಿನ ವಿತರಣಾ ನಾಲೆ ಹಾಗೂ ಪಿಕಲ್ ನಾಲೆಗಳ ಆಧುನೀಕರಣ ಕಾಮಗಾರಿಯನ್ನು 100 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ. ಮೈಸೂರು ಸಕ್ಕರೆ ಕಾರ್ಖಾನೆಯ ಬಾಯ್ಲಿಂಗ್ ಹೌಸ್ ದುರಸ್ತಿ ಮತ್ತು 5 ಸಾವಿರ ಟಿಸಿಡಿ ಕಬ್ಬು ನುರಿಸಲು ಸ್ಪಂದಿಸುವ ಹೊಸ ಯಂತ್ರೋಪಕರಣಗಳನ್ನು ಅಳವಡಿಸುವ 60 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧಿಕೃತ ಷೇರು ಬಂಡವಾಳವನ್ನು 95 ಕೋಟಿ ರೂ.ಗಳಿಂದ 125 ಕೋಟಿ ರೂ.ಗಳಿಗೆ ಹೆಚ್ಚಿಸಲು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಯನ್ನು 10.83 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ. ವಿಜಯಪುರ ನಗರದ ವಾರ್ಡ್ ಸಂಖ್ಯೆ 5ರಲ್ಲಿನ ಸಿಟಿಎಸ್ ಸಂಖ್ಯೆ 605ಎ, 1ಎ, 1ಎ1, ಎ2ರಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಿರುವ 6 ಎಕರೆ ಜಮೀನನ್ನು ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಆಯುರ್ವೇದ ಮಹಾವಿದ್ಯಾಲಯ ಕಟ್ಟಡ, ಆಟದ ಮೈದಾನ ಮತ್ತು ಆಯುರ್ವೇದ ಗಿಡಗಳನ್ನು ಬೆಳೆಸುವುದಕ್ಕಾಗಿ ಖಾಯಂ ಆಗಿ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ಸ.ನಂ.68ರಲ್ಲಿ 100 ಎಕರೆ ‘ಗೋಮಾಳ’ ಜಮೀನನ್ನು ಬೆಂಗಳೂರಿನ ನೊಳಂಬ ಲಿಂಗಾಯಿತ ಸಂಘ(ರಿ)ಕೆಕ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗಳ 11.60 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 2025-26ನೆ ಸಾಲಿನ 15ನೆ ಹಣಕಾಸು ಆಯೋಗದ ಅನುದಾನದಡಿ 27 ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು 17.55 ಕೋಟಿ ರೂ.ಅಂದಾಜು ಮೊತ್ತದಲ್ಲಿ ನಿರ್ಮಿಸಲು, ಕರ್ನಾಟಕ ಜಾಹೀರಾತು ನೀತಿ-2026 ಹಾಗೂ ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯ ಜಿಲ್ಲೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು 14 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ. ಲೀಪ್ ಕಾರ್ಯಕ್ರಮದಡಿ ಗ್ರಾಮೀಣ ಕೇಂದ್ರೀತ ಹಸ್ತಕ್ಷೇಪ ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಉತ್ಕøಷ್ಟತಾ ಕೇಂದ್ರವನ್ನು 16.05 ಕೋಟಿ ರೂ.ಗಳ ಮೊತ್ತದಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಲು ಅನುಮೋದನೆ ನಈಡಿ ಫೆ.24ರಂದು ಹೊರಡಿಸಿರುವ ಸರಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ರಾಯಚೂರು ಜಿಲ್ಲೆ ಮಾನ್ನಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ಜಲಸಂಗ್ರಹ ಗಾರ (Impounding Reservoir) ಕಾಮಗಾರಿ ಯನ್ನು ರೂ.38.50 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹಾಗೂ ಗದಗ, ಶಿರಹಟ್ಟಿ ಹಾಗೂ ಮುಂಡರಗಿ (ಮುಂಡರಗಿ ಪಟ್ಟಣ ಸೇರಿದಂತೆ) ತಾಲ್ಲೂಕುಗಳ ಗ್ರಾಮೀಣ ಪ್ರದೇಶದ ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಯಾ ಚರಣೆ ಹಾಗೂ ನಿರ್ವಹಣೆ ಕಾಮಗಾರಿಯನ್ನು ರೂ.110.65 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ. ಮಡಿಕೇರಿ ಪ್ರಾದೇಶಿಕ ವಿಭಾಗ, ಕುಶಾಲನಗರ ವ್ಯಾಪ್ತಿಯಲ್ಲಿ ಅಂಚೆತಿಟ್ಟು ಗಾರೆಕಟ್ಟೆ ಗಡಿಯಿಂದ ಜೋಜೋ ಥಾಮಸ್ ಮನೆ, ಘಟ್ಟದಳ್ಳ ಬೀಟ್ ಮಲ್ದಾರೆ ಸೆಕ್ಷನ್ ವರೆಗೆ ಒಟ್ಟು 6.95ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ಅನ್ನು ರೂ.12.40 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 76 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆಗಳನ್ನು ಹಾಗೂ 41 ಉರ್ದು ಮಾಧ್ಯಮ ಶಾಲೆಗಳನ್ನು ರೂ.683.33 ಕೋಟಿಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಹಾಗೂ ‘ಕರ್ನಾಟಕ ವೃತ್ತಿಗಳ, ಕಸುಬುಗಳ,ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕ,2026ಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)ವಿಧೇಯಕ 2026 ಹಾಗೂ ಕೊಪ್ಪಳ ಜಿಲ್ಲೆಯ ಕುಕನ್ನೂರು ತಾಲ್ಲೂಕಿನ ಕುಕನೂರು ಪಟ್ಟಣದ ಶ್ರೀ ಗುದ್ದೇಶ್ವರ ದೇವಸ್ಥಾನದ ಸ.ನಂ. 78ರಲ್ಲಿ 73.07 ಎಕರೆ ಜಮೀನಿನ ಪೈಕಿ 10 ಎಕರೆ ಜಮೀನನ್ನು ಕುಕನೂರು ಪಟ್ಟಣದ 100 ಹಾಸಿಗೆ ಆಸ್ಪತ್ರೆಗೆ ಮತ್ತು 7 ಎಕರೆ ಜಮೀನನ್ನು ಕುಕನೂರು ತಾಲ್ಲೂಕು ಕ್ರೀಡಾಂಗಣಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಕಂದಾಯ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, 2026 ಹಾಗೂ 2024ರ ಸೆ.11ರಂದು 25 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ 2500 ಕಾಫಿ ಕಿಯೋಸ್ಟ್ ಗಳನ್ನು ಸ್ಥಾಪಿಸಲು ನೀಡಿರುವ ಆಡಳಿತಾತ್ಮಕ ಆದೇಶವನ್ನು ಅನುಮೋದನೆಯ ಪರಿಷ್ಕರಿಸಿ ಅದೇ ವೆಚ್ಚದಲ್ಲಿ 1840 ಕಾಫಿ ಕಿಯೋಸ್ಕ್ ಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ದೇಶದಲ್ಲಿ LPG ಉತ್ಪಾದನೆ ಪ್ರಮಾಣದಲ್ಲಿ 25% ಹೆಚ್ಚಳ : ಕೇಂದ್ರ ಸಚಿವಾಲಯ ಸ್ಪಷ್ಟನೆ
ಹೊಸದಿಲ್ಲಿ,ಮಾ.13: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ತೀವ್ರ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಹೊಟೇಲ್ಗಳು ಹಾಗೂ ಕ್ಯಾಂಟೀನ್ಗಳು ಮುಚ್ಚುಗಡೆಗೊಂಡಿರುವ ನಡುವೆ ಕೇಂದ್ರ ತೈಲ ಸಚಿವಾಲಯ ಹೇಳಿಕೆಯೊಂದನ್ನು ನೀಡಿದ್ದು, ದೇಶದಲ್ಲಿ ನೈಸರ್ಗಿಕ ಅನಿಲ ಉತ್ಪಾದನೆಯನ್ನು ಶೇ.25ರಷ್ಟು ಹೆಚ್ಚಿಸಲಾಗಿದ್ದು ಜನರು ಆತಂಕಗೊಳ್ಳುವ ಅಗತ್ಯವಿಲ್ಲವೆಂದು ತಿಳಿಸಿದೆ. ಈಗಾಗಲೇ ಗುರುತಿಸಲಾದ ಆದ್ಯತೆಯ ವಲಯಗಳನ್ನು ಹೊರತುಪಡಿಸಿದ ಉದ್ಯಮಗಳು ಹಾಗೂ ಗ್ರಾಹಕರಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲು ಕೇಂದ್ರ ಸರಕಾರವು ನಿರ್ಧರಿಸಿದೆ. ಆದರೆ ಅದನ್ನು ಯಾರು ಪಡೆಯಬೇಕೆಂಬುದನ್ನು ನಿರ್ಧರಿಸುವಲ್ಲಿ ರಾಜ್ಯ ಸರಕಾರಗಳು ಮಖ್ಯ ಪಾತ್ರವಹಿಸಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಗುರುವಾರ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಸಕ್ತ ಸನ್ನಿವೇಶವು ಅತ್ಯಂತ ಸವಾಲುದಾಯಕವಾಗಿದೆ. ಭಾರತವು ತನ್ನ ಎಲ್ಪಿಜಿ ಅವಶ್ಯಕತೆಗಳ ಶೇ.60ರಷ್ಟನ್ನು ಹಾರ್ಮುಝ್ ಜಲಸಂಧಿ ಮಾರ್ಗವಾಗಿಯೇ ಆಮದು ಮಾಡಿಕೊಳ್ಳುತ್ತಿದೆ. ಇರಾನ್ ಹಾಗೂ ಇಸ್ರೇಲ್-ಅಮೆರಿಕ ನಡುವೆ ಮಿಲಿಟರಿ ಸಂಘರ್ಷ ಆರಂಭಗೊಂಡ 13 ದಿನಗಳ ಬಳಿಕ ವಾಣಿಜ್ಯ ಹಡಗುಗಾರಿಕೆ ಸ್ಥಗಿತಗೊಂಡಿದೆ. ಹೀಗಾಗಿ ಅತ್ಯಂತ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ದೇಶದಲ್ಲಿ ನೈಸರ್ಗಿಕ ಅನಿಲದ ಉತ್ಪಾದನೆಯನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ಗೃಹಬಳಕೆಯ ಗ್ರಾಹಕರಿಗೆ ಅಡುಗೆ ಅನಿಲ ದೊರೆಯುವುದನ್ನು ಖಾತರಿಪಡಿಸಲು ಕೇಂದ್ರ ಸರಕಾರವು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆಯೆಂದು ಅವರು ಹೇಳಿದ್ದಾರೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ವಿತರಣೆಗೆ ಆಗ್ರಹಿಸಿ ವಾಣಿಜ್ಯ ಬಳಕೆದಾರರ ಅಹವಾಲುಗಳನ್ನು ಸಾರ್ವಜನಿಕರಂಗದ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಎಚ್ಪಿಸಿಎಲ್ ಹಾಗೂ ಬಿಪಿಸಿಎಲ್ ಕಂಪೆನಿಗಳ ಕಾರ್ಯಕಾರಿ ನಿರ್ದೇಶಕರ ತ್ರಿಸದಸ್ಯ ಸಮಿತಿಯು ಪರಾಮರ್ಶೆ ನಡೆಸಿದೆ. ವಾಣಿಜ್ಯ ಸಿಲಿಂಡರ್ಗಳನ್ನು ಸೀಮಿತ ಪ್ರಮಾಣದಲ್ಲಿ ಬಿಡುಗಡೆಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಸುಜಾತ ಶರ್ಮಾ ತಿಳಿಸಿದ್ದಾರೆ. ವಾಣಿಜ್ಯ ಎಲ್ಪಿಜಿ ಪೂರೈಕೆಯಲ್ಲಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದೆಂದು ಕೇಂದ್ರ ಸರಕಾರವು ಮಂಗಳವಾರ ತಿಳಿಸಿತ್ತು.
ಸೇಡಂ | ಅತ್ಯುತ್ತಮ ಎಸ್.ಡಿ.ಎಂ.ಸಿ.ಯಾಗಿ ಊಡಗಿ ಪ್ರಾಥಮಿಕ ಉರ್ದು ಶಾಲೆ ಆಯ್ಕೆ
ಸೇಡಂ : 2025-26ನೇ ಸಾಲಿನ ಅತ್ಯುತ್ತಮ ಎಸ್.ಡಿ.ಎಂ.ಸಿ ಗಳ ಪಟ್ಟಿಯಲ್ಲಿ ಊಡಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ ಎಂದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಖಾಸಿಂ ಸಾಬ್ ತಿಳಿಸಿದ್ದಾರೆ. 2025-26 ನೇ ಸಾಲಿನಲ್ಲಿ BEST SDMC ಎಂದು ಕಲಬುರಗಿ ಜಿಲ್ಲೆಯಲ್ಲಿನ ಕೆಲ ತಾಲೂಕುವಾರು ಶಾಲೆಗಳಲ್ಲಿ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಅದರಲ್ಲಿ ತಾಲೂಕಿನ ಊಡಗಿ ಗ್ರಾಮದ ಉರ್ದು ಶಾಲೆಯು ಉತ್ತಮ ಎಸ್.ಡಿ.ಎಂ.ಸಿ.ಯನ್ನು ಹೊಂದಿದೆ ಎಂದು ಆಯ್ಕೆ ಮಾಡಲಾಗಿದೆ. ಈ ಆಯ್ಕೆಯಿಂದ ಸಿಆರ್ಪಿ ಮತ್ತು ತಾಲೂಕಿನ ಬಿಇಓ ಅವರು ಶಾಲೆ ಹಾಗೂ ಎಸ್ಡಿಎಂಸಿ ಅಧ್ಯಕ್ಷ್ಯರಿಗೆ, ಶಾಲೆಯ ಮುಖ್ಯಗುರುಗಳಿಗೆ, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಸವರಾಜ ಪಾಟೀಲ್ ಊಡಗಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿಯೇ ನಮ್ಮ ಊಡಗಿ ಗ್ರಾಮದ ಉರ್ದು ಶಾಲೆಯು ಅತ್ಯುತ್ತಮವಾದ ಎಸ್.ಡಿ.ಎಂ.ಸಿ.ಯಾಗಿ ಆಯ್ಕೆಯಾಗಿರುವುದು ನಿಜಕ್ಕೂ ಸಂತಸದ ಸುದ್ದಿಯಾಗಿದೆ. ಇದಕ್ಕೆ ಶ್ರಮಿಸಿದ ಎಸ್.ಡಿ.ಎಂಸಿ ಅಧ್ಯಕ್ಷರಿಗೆ, ಶಾಲೆಯ ಮುಖ್ಯಗುರುಗಳಿಗೆ, ಅಭಿನಂದನೆ ಸಲ್ಲಿಸಿದ್ದಾರೆ.
ಅಫಜಲಪುರ | ಮಾ.15 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು 135ನೇ ಜಯಂತ್ಯೋತ್ಸವದ ಪೂರ್ವಭಾವಿ ಸಭೆ
ಅಫಜಲಪುರ: ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಜಯಂತ್ಯೋತ್ಸವದ ನಿಕಟಪೂರ್ವ ಅಧ್ಯಕ್ಷ ಕುಮಾರ್ ಕೊಳಿಗೇರಿ ತಿಳಿಸಿದ್ದಾರೆ. ಸಭೆ ಮಾರ್ಚ್ 15 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಅಫಜಲಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆಯಲಿದೆ ಎಂದರು. ಜಯಂತ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ಸಭೆಯಲ್ಲಿ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಲಿದ್ದು, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಆದ್ದರಿಂದ ಅಫಜಲಪುರ ತಾಲ್ಲೂಕಿನ ಸಮಸ್ತ ಡಾ. ಅಂಬೇಡ್ಕರ್ ಅಭಿಮಾನಿಗಳು, ಸಮಾಜದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಈ ಪೂರ್ವಭಾವಿ ಸಭೆಗೆ ತಪ್ಪದೇ ಆಗಮಿಸಿ ತಮ್ಮ ಸಲಹೆಗಳನ್ನು ನೀಡುವ ಮೂಲಕ ಜಯಂತ್ಯೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಬೌದ್ಧ ಧರ್ಮದ ಕುರುಹು, ದೇವಾಲಯಗಳ ರಕ್ಷಣೆಗೆ ಉತ್ಖನನ ನಡೆಸುವಂತೆ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ಆಗ್ರಹ
ನವದೆಹಲಿ/ ಕಲಬುರಗಿ: ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರ್ವೆ ಹಾಗೂ ಉತ್ಖನನ ನಡೆಸಿ ಬೌದ್ಧ ಧರ್ಮ ದೇವಾಲಯಗಳ ಮತ್ತು ಕುರುಹುಗಳನ್ನು ರಕ್ಷಣೆ ಮಾಡುವಂತೆ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿದ್ದ ಅವರು ಕೃಷ್ಣಾ ಹಾಗೂ ಭೀಮಾ ನದಿ ತೀರದಲ್ಲಿ ಅದರಲ್ಲೂ ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಬೌದ್ಧ ಧರ್ಮದ ಕುರುಹುಗಳು ಇವು. ಸರ್ಕಾರ ಉತ್ಖನನ ನಡೆಸಿ ಅವುಗಳನ್ನು ರಕ್ಷಿಸುವಂತೆ ಈಗಾಗಲೇ ಮೂರು ನಾಲ್ಕು ಬಾರಿ ಪತ್ರ ಬರೆದಿದ್ದೇನೆ. ಆದರೂ ರಕ್ಷಿಸುವ ಕೆಲಸವಾಗಿಲ್ಲ ಎಂದು ರಾಜ್ಯಸಭೆ ಅಧ್ಯಕ್ಷರಾದ ಸಿ.ಪಿ.ರಾಧಾಕೃಷ್ಣನ್ ಅವರ ಗಮನಕ್ಕೆ ತಂದರು. ಅಮರಾವತಿ ರಾಜನಿಂದ ಆ ನಂತರ ನಾಗಾರ್ಜುನ ಆಚಾರ್ಯರವರೆಗೆ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಬೌದ್ದ ಧರ್ಮ ವಿಸ್ತಾರಗೊಂಡ ಇತಿಹಾಸವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಖರ್ಗೆ ಅವರು ಬೌದ್ಧ ಧರ್ಮದ ಕುರುಹುಗಳನ್ನು ಪತ್ತೆ ಹಚ್ಚುವ ಸಲುವಾಗಿ ಹಾಗೂ ಬೌದ್ಧ ಧರ್ಮದ ದೇಗುಲ ರಕ್ಷಿಸುವ ಸಲುವಾಗಿ ಉತ್ಖನನದ ಅಗತ್ಯೆತೆಯನ್ನು ಒತ್ತಿ ಹೇಳಿ, ಕೂಡಲೇ ಕೇಂದ್ರ ಸರ್ಕಾರ ಸಚಿವರು ಅಗತ್ಯ ಕ್ರಮವಹಿಸುವಂತೆ ಅವರು ಕೋರಿದರು.
ಕಲಬುರಗಿ | ಅನುಭವಿ ರಂಗ ಕಲಾವಿದರಿಂದ ಅರ್ಜಿ ಆಹ್ವಾನ
ಕಲಬುರಗಿ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ “ವಚನ ಕಲ್ಯಾಣ” ಎಂಬ ಅಹೋರಾತ್ರಿ (ಒಂಬತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಇಲಾಖೆ ಉದ್ದೇಶಿಸಿದೆ. ಈ ಸಂಬಂಧ ನುರಿತ ಹಾಗೂ ಆಸಕ್ತಿಯುಳ್ಳ ಯುವಕ-ಯುವತಿಯರು ಹಾಗೂ ಅನುಭವಿ ರಂಗಕಲಾವಿದರು /ಗಾಯಕರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ವಯೋಮಿತಿ 18 ರಿಂದ 40 ವರ್ಷದೊಳಗಿನ ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಅದ್ಯತೆಯನ್ನು ನೀಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು 2026ರ ಮಾ. 20 ರೊಳಗಾಗಿ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056. ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ತಲುಪುವಂತೆ ಅಥವಾ ಮೇಲ್ ವಿಳಾಸ: kanakaresearchcentre@gmail.com ದ ಮೂಲಕ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ-ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮಾಸಿಕ ಗೌರವಧನ ಮತ್ತು ಊಟ -ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಸಂಸ್ಕøತಿ ಇಲಾಖೆಯ kannadasiri.karnataka.gov.in ವೆಬ್ಸೈಟ್ದಿಂದ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಸಿ. ಬಸವಲಿಂಗಯ್ಯ (ವಚನ ಕಲ್ಯಾಣ ನಾಟಕದ ನಿರ್ದೇಶಕರು) ಇವರನ್ನು ಸಂಪರ್ಕಿಸಲು ಹಾಗೂ ಮೊಬೈಲ್ ಸಂಖ್ಯೆ-94485 38620ಗೆ ಸಂಪರ್ಕಿಸಬೇಕು. ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಇಲಾಖೆಯು ಯಾವುದೇ ಭತ್ಯೆ ನೀಡಲಾಗುವುದಿಲ್ಲ.
ಇಂಡಿಯನ್ಸ್ ವೇಲ್ಸ್ ಟೂರ್ನಿ | ಕಾಸ್ಪರ್ ರೂಡ್ ವಿರುದ್ಧ ಕಾರ್ಲೊಸ್ ಅಲ್ಕರಾಝ್ ಜಯಭೇರಿ
ಮೆಕ್ಸಿಕೊ ಸಿಟಿ, ಮಾ.12: ಇಂಡಿಯನ್ಸ್ ವೇಲ್ಸ್ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ನಾರ್ವೆಯ ಕಾಸ್ಪರ್ ರೂಡ್ರನ್ನು ಮಣಿಸಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಅಲ್ಕರಾಝ್ ಅವರು ರೂಡ್ರನ್ನು 6-1, 7-6(2)ಸೆಟ್ಗಳ ಅಂತರದಿಂದ ಮಣಿಸಿದರು. ರೂಡ್ ಅವರ ಸರ್ವ್ ಅನ್ನು ಮೂರು ಬಾರಿ ತುಂಡರಿಸಿದ ಸ್ಪೇನ್ ಆಟಗಾರ ಅಲ್ಕರಾಝ್ ಮೊದಲ ಸೆಟ್ಟನ್ನು ಕೇವಲ 37 ನಿಮಿಷಗಳಲ್ಲಿ ಗೆದ್ದುಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. 13ನೇ ಶ್ರೇಯಾಂಕದ ರೂಡ್ ಎರಡನೇ ಸೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಸ್ಪರ್ಧೆಯನ್ನು ಟೈ-ಬ್ರೇಕ್ಗೆ ಕೊಂಡೊಯ್ದರು. ಆದರೆ ಅಲ್ಕರಾಝ್ 7-6(2)ಅಂತರದಿಂದ ಜಯಶಾಲಿಯಾಗಿ ಈ ವರ್ಷ ಸತತ 15ನೇ ಗೆಲುವು ದಾಖಲಿಸಿದರು. ಸತತ ಐದನೇ ವರ್ಷ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟರು. ‘‘ನಿಜವಾಗಿಯೂ ಇಂದಿನ ವಾತಾವರಣ ಕಠಿಣವಾಗಿತ್ತು. ಚೆಂಡನ್ನು ನಿಯಂತ್ರಿಸಲು ಕಷ್ಟವಾಗುತ್ತಿತ್ತು. ಆದರೆ ನಾವಿಬ್ಬರೂ ಚೆನ್ನಾಗಿ ಆಡಿದ್ದೇವೆ’’ ಎಂದು ಎರಡು ಬಾರಿಯ ಚಾಂಪಿಯನ್ ಅಲ್ಕರಾಝ್ ಸುದ್ದಿಗಾರರಿಗೆ ತಿಳಿಸಿದರು. ಅಲ್ಕರಾಝ್ ಮುಂದಿನ ಸುತ್ತಿನಲ್ಲಿ 2021ರ ಚಾಂಪಿಯನ್ ಕ್ಯಾಮರೂನ್ ನೊರ್ರೆ ಅವರನ್ನು ಎದುರಿಸಲಿದ್ದಾರೆ. ನೊರ್ರೆ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಆಸ್ಟ್ರೇಲಿಯದ ರಿಂಕಿ ಹಿಜಿಕಾಟಾರನ್ನು 6-4, 6-2 ನೇರ ಸೆಟ್ಗಳಿಂದ ಸದೆಬಡಿದರು. ಅಲ್ಕರಾಝ್ ಕಳೆದ ವರ್ಷ ಪ್ಯಾರಿಸ್ ಮಾಸ್ಟರ್ಸ್ನಲ್ಲಿ ಬ್ರಿಟನ್ ಆಟಗಾರನ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇದೇ ವೇಳೆ, ರಶ್ಯದ 11ನೇ ಶ್ರೇಯಾಂಕದ ಆಟಗಾರ ಡೇನಿಯಲ್ ಮೆಡ್ವೆಡೆವ್ ಅವರು ಕೇವಲ ಒಂದು ಗಂಟೆ, 27 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅಮೆರಿಕದ ಆಟಗಾರ ಅಲೆಕ್ಸ್ ಮಿಚೆಲ್ಸನ್ರನ್ನು 6-2, 6-4 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಕಳೆದ ತಿಂಗಳು ದುಬೈ ಓಪನ್ ಪ್ರಶಸ್ತಿಯನ್ನು ಗೆದ್ದಿರುವ ಮೆಡ್ವೆಡೆವ್ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದರು. ಇಗಾ ಸ್ವಿಯಾಟೆಕ್ ಕ್ವಾರ್ಟರ್ ಫೈನಲ್ಗೆ ಲಗ್ಗೆ ಝೆಕ್ ಆಟಗಾರ್ತಿ ಕರೋಲಿನಾ ಮುಚೋವಾರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿರುವ ವಿಶ್ವದ ನಂ.2ನೇ ಆಟಗಾರ್ತಿ ಇಗಾ ಸ್ವಿಯಾಟೆಕ್ ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಪೋಲ್ಯಾಂಡ್ ಆಟಗಾರ್ತಿ ಸ್ವಿಯಾಟೆಕ್ 13ನೇ ಶ್ರೇಯಾಂಕದ ಆಟಗಾರ್ತಿ ಮುಚೋವಾರನ್ನು 6-2, 6-0 ನೇರ ಸೆಟ್ಗಳಿಂದ ಮಣಿಸಿದರು. ಸತತ 10 ಗೇಮ್ಗಳನ್ನು ಗೆದ್ದಿರುವ ಸ್ವಿಯಾಟೆಕ್ ಅವರು ಮುಚೋವಾ ವಿರುದ್ಧ ತನ್ನ ಐದನೇ ಜಯ ದಾಖಲಿಸಿದರು. ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸ್ವಿಯಾಟೆಕ್, ಕ್ವಾರ್ಟರ್ ಫೈನಲ್ನಲ್ಲಿ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ. ಅಮೆರಿಕದ ಆಟಗಾರ್ತಿ ಜೆಸ್ಸಿಕಾ ಪೆಗುಲಾ ಅವರು ತಮ್ಮದೇ ದೇಶದ ಬೆಲಿಂಡಾ ಬೆನ್ಸಿಕ್ರನ್ನು 6-3, 7-6(5) ಸೆಟ್ಗಳ ಅಂತರದಿಂದ ಮಣಿಸಿದರು. ಜೆಸ್ಸಿಕಾ ಅವರು ಬೆನ್ಸಿಕ್ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಮೊದಲ ಗೆಲುವು ದಾಖಲಿಸಿದರು.
ಸೇಡಂ | ಮಾ.14 ರಂದು ಗುಂಡೇಪಲ್ಲಿಯಲ್ಲಿ ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವ : ವಿವಿಧ ಕಾರ್ಯಕ್ರಮಗಳು
ಸೇಡಂ: ತಾಲ್ಲೂಕಿನ ಮುಧೋಳ ಹತ್ತಿರದ ಗುಂಡೇಪಲ್ಲಿ (ಕೆ) ಗ್ರಾಮದ ಶ್ರೀ ಸೋಮೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಮಾರ್ಚ್ 14 ಶನಿವಾರದಂದು ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಸದಾಶಿವರೆಡ್ಡಿ ಗೋಪಾನಪಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರ ದಿವ್ಯ ನೇತೃತ್ವದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಕುಂಭ ಕಳಸ, ವಾದ್ಯ ಮೇಳ, ಡೊಳ್ಳು ಕುಣಿತ, ಭಜನೆ ಹಾಗೂ ಪುರವಂತರ ಸೇವೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಮಠವನ್ನು ತಲುಪಲಿದೆ. ಮಧ್ಯಾಹ್ನ 2.30 ಗಂಟೆಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. ಕಬಡ್ಡಿ ಪಂದ್ಯಾವಳಿ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಕ್ಯಾನ್ಸರ್ ಹಾಗೂ ಶುಗರ್ (ಸಕ್ಕರೆ ಕಾಯಿಲೆ) ರೋಗಿಗಳಿಗೆ ವಿಶೇಷ ಉಚಿತ ಆಯುರ್ವೇದಿಕ್ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಶಿಬಿರವು ಪರಗಿಯ ಕೃಷ್ಣಗಿರಿ ಮಠದ ಶ್ರೀ ಶ್ರೀ ಮಹಾರಾಜಯೋಗಿ ಸದ್ಗುರು ಶ್ರೀ ಕೃಷ್ಣಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. ಧರ್ಮ ಸಭೆ, ಗೋವತ್ಸ ನಾಮಕರಣ, 2026ರ ಕ್ಯಾಲೆಂಡರ್ ಬಿಡುಗಡೆ ಹಾಗೂ 13ನೇ ತುಲಾಭಾರ ನಡೆಯಲಿದೆ. ವಾರಾಣಾಸಿ ಆದಿಮಠಂ ಪಾಟಮಿರಪಲ್ಲಿ ರುದ್ರಾರಂನ ಶ್ರೀ ಡಾ.ರಾಚೋಟೇಶ್ವರ ಶಿವಾಚಾರ್ಯ, ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ತೊಟ್ನಳ್ಳಿ ಮಹಾಂತೇಶ್ವರ ಮಠದ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ಮಂಗಲಗಿತ ಶ್ರೀ ಡಾ. ಶಾಂತಸೋಮನಾಥ ಶಿವಾಚಾರ್ಯ, ಸೂಗೂರ ಕೆ ಚನ್ನರುದ್ರಮುನೇಶ್ವರ ಶಿವಾಚಾರ್ಯ, ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸೇರಿದಂತೆ ಅನೇಕ ಪೂಜ್ಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಸಚಿವ ಡಾ.ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೆಲಂಗಾಣದ ಮಲ್ಕಜಗಿರಿ ಸಂಸದ ಈಟಲ ರಾಜೇಂದ್ರ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಬಾಲ ಭವನ ನಿಗಮ ಅಧ್ಯಕ್ಷ ಅನೀಲ ಕುಮಾರ ಜಮಾದಾರ, ಕೃಷ್ಣ ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಅಂದೆ ಬಾಬಯ್ಯ, ಕೊಂಡಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಿವ ಸಿದ್ದ ಸೋಮೇಶ್ವರ ಶಿವಾಚಾರ್ಯ, ಶರಣರೆಡ್ಡಿ ಪಾಟೀಲ ಕಡಚರ್ಲಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ರಾಜಶೇಖರ ನಿಲಂಗಿ, ಅನಂತರೆಡ್ಡಿ ದಾಚಿನ್, ಗೋವರ್ಧನರೆಡ್ಡಿ ಪಾಟೀಲ ಲಿಂಗಂಪಲ್ಲಿ, ಮಹಾದೇವಪ್ಪ ಗೋಣಿ, ರಾಮರೆಡ್ಡಿ, ನರಸರೆಡ್ಡಿ, ಶೇಖರರೆಡ್ಡಿ, ರಾಜಕುಮಾರ ಮಾಲಿಪಾಟೀಲ ಬಟಗೇರಾ, ಮಲ್ಲಪ್ಪ ಪೋಲೀಸ ಪಾಟೀಲ ಬಿಬ್ಬಳ್ಳಿ, ಮಲ್ಲನಗೌಡ, ಬಸವರಾಜ ಮಲಘಾಣ, ಮಲ್ಲಿಕಾರ್ಜುನ ಮೆಕ್ಯಾನಿಕ್, ಜಗನ್ನಾಥ ಬೆಡಪಳ್ಳಿ ಸೇರಿದಂತೆ ಇತರರು ಇದ್ದರು.
ಕಲಬುರಗಿ | ಪಿಯು ಡಿಡಿಗೆ ಸಿಇಓ ನಿಯಂತ್ರಿಸುವ ಆದೇಶ ಹಿಂಪಡೆಯುವಂತೆ ಆಗ್ರಹ
ಕಲಬುರಗಿ : ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ಬೆಂಗಳೂರು), ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಬೋಧಕೇತರ ಸಿಬ್ಬಂದಿಗಳ ಸಂಘಗಳ ವತಿಯಿಂದ ಸರ್ಕಾರದ ಪ್ರಸ್ತಾಪಿತ ಕಡತ ಸಂಖ್ಯೆ EP 10 DGD 2026 ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತಾಪಿತ ಆದೇಶದಂತೆ ಪದವಿ ಪೂರ್ವ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಕ್ರಮವು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸ್ವಾಯತ್ತತೆ, ಸಂಸ್ಥಾತ್ಮಕ ಅಸ್ತಿತ್ವ ಹಾಗೂ ಈಗಿರುವ ಆಡಳಿತಾತ್ಮಕ ವ್ಯವಸ್ಥೆಗೆ ಗಂಭೀರ ಧಕ್ಕೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಒಂದು ವೇಳೆ ಸರ್ಕಾರ ಈ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸುವಂತೆ ಸಂಘ ತೀರ್ಮಾನ ಕೈಗೊಳ್ಳಲಿದೆ ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶಿವಾನಂದ ಖಜೂರಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಬೋನಾಳ, ಬೋಧಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷರಾದ ನೆಸರ ಬೆಳಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳುಂಡಗಿ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ನಿವೃತ್ತ ಜಂಟಿ ನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ, ಶರಣಗೌಡ ಪಾಟೀಲ, ನಾಮದೇವ ಕಡಕೊಳ, ಭೀಮರಾಯ ಅರಕೇರಿ, ಬಿ.ಹೆಚ್. ನಿರಗುಡಿ, ಸಿ.ಚಿ. ಲಿಂಗಣ್ಣ, ಡಾ. ಪ್ರಹ್ಲಾದ ಬುಲಿ೯, ಉಮೇಶ ಅಷ್ಟಗಿ, ಮಹಾದೇವ ನಲಕಂಠೆ, ಸುಜಾತ ಬಿರಾದಾರ, ಭಾರತಿ ಕೊಭಾ, ಪ್ರಭಾತಿ ಪಾಟೀಲ, ದಶರಥ ರಾಠೋಡ, ಬಸವರಾಜ ಅಂಗಡಿ, ಜಯಶ್ರೀ ಪಾಟೀಲ, ಸವಿತಾ ನಾಸಿ, ಮಂಜುಳಾ, ಲಿಲಾವತಿ ನಾಗಶೆಟ್ಟಿ, ಸುವರ್ಣ ಬಿರಾದಾರ, ಜಮುನಾ ಟಿಳೆ, ನೀಲಮ್ಮ ಪಾಟೀಲ, ಶಾಂತಾ ಮಾಲಿ ಪಾಟೀಲ, ಸವಿತಾ ನಾಟೀಕಾರ, ಬಲರಾಮ ಚವ್ಹಾಣ, ಶಿವಶರಣಪ್ಪ ತಮ್ಮಾಗೊಳ, ತುಳಜಾ ರಾಮ್ಸರ, ನಾಗರತ್ನ ಇಂಡಿ, ರೇವಮ್ಮ ಸನ್ನತಿ, ವಿಠಲರಾವ್ ಬಾವಿಮನಿ, ಸುರಚಂದ ಗಾಂಧಿ, ಸುನಿಲ್ ರಾಥೋಡ್, ರಂಗಸ್ವಾಮಿ, ಕಾಶಿನಾಥ್ ಮುಖರ್ಜಿ, ಸಂತೋಷ್ ಪಾಂಚಳ್, ಹಮೀದಲಿ, ಜಟ್ಟಿಂಗ್ ರಾಯ್ ಶಾಕಾಪುರ್, ಅಂಬಾದಾಸ್ ಜಾಧವ್, ದೀಕ್ಷಿತ್, ಮಲ್ಲಿನಾಥ್, ಸುಮಂಗಲ ನಾಟಿಕರ್ ಸೇರಿದಂತೆ ಅನೇಕ ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಕರ್ನಾಟಕದ ಮುಂದಿನ ಸಿಎಂ ಎಚ್ಡಿಕೆ! ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ
ಕರ್ನಾಟಕದ ಮುಂದಿನ ಸಿಎಂ ಎಚ್ಡಿ ಕುಮಾರಸ್ವಾಮಿ ಎಂಬ ವಿಚಾರ ಗುರುವಾರ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸದಸ್ಯರಾದ ಸುನೀಲ್ ಕುಮಾರ್, ಸಿದ್ದು ಸವದಿ ನಡುವೆ ಮಾತಿನ ವಿನಿಮಯ ನಡೆಯಿತು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಿದ್ದು ಸವದಿ ಕರ್ನಾಟಕ ಮುಂದೆ ಕಾಂಗ್ರೆಸ್ ಮುಕ್ತ ರಾಜ್ಯವಾಗಲಿದೆ ಎಂದು ಹೇಳಿದರು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ 2028 ರಲ್ಲಿ ಬಿಜೆಪಿಯವರೇ ಸಿಎಂ ಆಗುತ್ತಾರೆ ಎಂದು ಸುನೀಲ್ ಕುಮಾರ್ ಭವಿಷ್ಯ ನುಡಿದರು.
ಎಲ್ಪಿಜಿ ಸಿಲಿಂಡರ್ ಸಮಸ್ಯೆ ಸರಿಪಡಿಸಲು ಕೇಂದ್ರ ಸರ್ಕಾರವು ಹೆಚ್ಚುವರಿ ಸ್ಟಾಕ್ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಗಳಿಂದ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ. ಇದರ ಜತೆಗೆ ಪರ್ಯಾಯವಾಗಿ 40,000 ಕಿ. ಲೀ ಸೀಮೆ ಎಣ್ಣೆ ಕೂಡ ರಾಜ್ಯಗಳಿಗೆ ನೀಡಲಾಗಿದೆ. ಇನ್ನು ಜನರು ಆತಂಕದ ಖರೀದಿಯನ್ನು ನಿಲ್ಲಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.
ಲೆಬನಾನ್ | ಇಸ್ರೇಲ್ ದಾಳಿಯಲ್ಲಿ 8 ಮಂದಿ ಮೃತ್ಯು
ಬೈರೂತ್, ಮಾ.12: ಮಧ್ಯ ಬೈರೂತ್ನ ಕರಾವಳಿ ಪ್ರದೇಶದ ಮೇಲೆ ಗುರುವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದು, 31 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್ನ ಆರೋಗ್ಯ ಇಲಾಖೆ ಹೇಳಿದೆ. ಬೈರುತ್ನ ದಕ್ಷಿಣ ಉಪನಗರಗಳಲ್ಲಿನ ಹಿಜ್ಬುಲ್ಲಾ ನೆಲೆಗಳ ಮೇಲೆ ಪ್ರತ್ಯೇಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಮಧ್ಯ ಬೈರೂತ್ನಲ್ಲಿ ಕಾರೊಂದನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದಿದೆ. ದಕ್ಷಿಣ ಲೆಬನಾನ್ನ ಟೈಬೆಹ್ ಮತ್ತು ಅಲ್-ಸುಲ್ತಾನಿಯಾ, ಟೈರ್ ನಗರದ ಬಳಿಯೂ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು ಹಲವು ಕಟ್ಟಡಗಳು ಹಾನಿಗೊಂಡಿವೆ ಎಂದು ಸರಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ(ಎನ್ಎನ್ಎ) ವರದಿ ಮಾಡಿದೆ. ಈ ಮಧ್ಯೆ, ಟೆಲ್ ಅವೀವ್ನ ಉಪನಗರದಲ್ಲಿರುವ ಇಸ್ರೇಲ್ ಮಿಲಿಟರಿ ಗುಪ್ತಚರ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪಿನ ಮೂಲಗಳು ಗುರುವಾರ ತಿಳಿಸಿವೆ.
‘ಕೆಪಿಎಸ್ಸಿ’ ಯುವಕರ ಕನಸನ್ನು ಹತ್ಯೆ ಮಾಡುವ ಕೇಂದ್ರವಾಗಿ ಮಾರ್ಪಾಡಾಗಿದೆ: ಸುನಿಲ್ ಕುಮಾರ್ ಆಕ್ರೋಶ
ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ) ಸರಕಾರಿ ನಿಯಂತ್ರಣದಲ್ಲಿ ಯುವಕರ ಕನಸನ್ನು ಹತ್ಯೆ ಮಾಡುವ ಕೇಂದ್ರವಾಗಿ ಮಾರ್ಪಾಡಾಗಿದೆ. ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಂಡು ನಾಗರಿಕ ಸೇವೆ ಸಲ್ಲಿಸುವ ಕನಸು ಕಾಣುತ್ತಿರುತ್ತಾರೆ. ಆದರೆ, ಸರಕಾರದ ಭ್ರಷ್ಟಾಚಾರದಿಂದ ಅವರ ಕನಸುಗಳು ಕಮರಿ ಹೋಗುತ್ತಿವೆ ಎಂದು ಬಿಜೆಪಿ ಸದಸ್ಯ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ವಿಧಾನಸಭೆಯಲ್ಲಿ ‘ರಾಜ್ಯ ಲೋಕಸೇವಾ ಆಯೋಗದಲ್ಲಿ ಪದೇ ಪದೇ ನಡೆಯುತ್ತಿರುವ ಅಕ್ರಮಗಳಿಂದಾಗಿ ಉದ್ಯೋಗದ ಕನಸು ಹೊತ್ತ ಯುವ ಜನಾಂಗಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆ ನಿಯಮ 69ರಡಿ ನಡೆದ ಸಾರ್ವಜನಿಕ ಮಹತ್ವದ ವಿಷಯ’ ಪ್ರಸ್ತಾವಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬರುವಂತಹ ಯುವಕರ ಕೈಗೆ ನಾವು ಮುಂದಿನ 30 ವರ್ಷಗಳ ರಾಜ್ಯದ, ಕಾರ್ಯಾಂಗದ ಭವಿಷ್ಯವನ್ನು ನೀಡುತ್ತೇವೆ. ಅಂತಹ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ನಡೆದರೆ, ಆ ಸರಕಾರಿ ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು. ಕೆಪಿಎಸ್ಸಿ ಅನ್ನೋದು ಒಂದು ನಿಗೂಢ ಸಂಸ್ಥೆ, ಪರೀಕ್ಷೆ ರಹಸ್ಯ, ಫಲಿತಾಂಶ ನಿಗೂಢವಾದದ್ದು. ಪ್ರತಿ ಬಾರಿ ಪರೀಕ್ಷೆಗಳು ನಡೆದಾಗಲೂ ಇಲ್ಲಿ ಕೋಟ್ಯಂತರ ರೂ.ಗಳ ವ್ಯವಹಾರ, ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನಗಳು ಮೂಡುತ್ತವೆ. ಕೆಪಿಎಸ್ಸಿ ಸುಧಾರಣೆ ಆಗಬೇಕು. ಇಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಿ, ಯಾರನ್ನಾದರೂ ಹೊಣೆ ಮಾಡಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು. ಎಇಇ, ಎಫ್ಡಿಎ, ಪಿಡಿಒಗಳ ಪರೀಕ್ಷೆಗಳಲ್ಲೂ ವಿವಿಧ ಆರೋಪಗಳು ಕೇಳಿ ಬಂದವು. ಈಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ಪರೀಕ್ಷೆಯ ಫಲಿತಾಂಶದ ಬಗ್ಗೆಯೂ ಅನುಮಾನಗಳು ಮೂಡಿವೆ. ಲಕ್ಷಾಂತರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಾರೆ. ಒಂದೇ ಒಂದು ಆರೋಪ ಕೇಳಿ ಬರುವುದಿಲ್ಲ. ಕೇವಲ 5 ಸಾವಿರ ಜನ ಭಾಗವಹಿಸುವ ಈ ಕೆಪಿಎಸ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪದೇ ಪದೇ ಆರೋಪಗಳು ಕೇಳಿ ಬರುತ್ತವೆ ಎಂದು ಅವರು ತಿಳಿಸಿದರು. 384 ಜನರನ್ನು ಭರ್ತಿ ಮಾಡಲು ನಡೆದ ಪರೀಕ್ಷೆ, ಮೌಲ್ಯಮಾಪನ ಹಾಗೂ ಫಲಿತಾಂಶ ಬರಲು ಮೂರು ವರ್ಷ ಆಯಿತು. ಇನ್ನು 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರಕಾರ ಘೋಷಿಸಿದೆ. ಈ ಹುದ್ದೆಗಳ ಭರ್ತಿಗೆ ಎಷ್ಟು ವರ್ಷ ಬೇಕಾಗಬಹುದು? ಕಳೆದ ನಾಲ್ಕು ವರ್ಷಗಳಲ್ಲಿ ಕೆಪಿಎಸ್ಸಿಯ ನಾಲ್ಕು ಕಾರ್ಯದರ್ಶಿಗಳು ಬದಲಾಗಿದ್ದಾರೆ ಯಾಕೆ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು. ಸರಕಾರಿ ಹುದ್ದೆಗಳು ಕೇವಲ ಪ್ರಭಾರಿಗಳು, ರಾಜಕಾರಣಿಗಳು, ಉಳ್ಳವರು, ಶ್ರೀಮಂತರಿಗೆ ಮಾತ್ರವೇ? ಎಂದು ಚರ್ಚೆಗಳು ಆಗುತ್ತಿವೆ. ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 11 ಅಭ್ಯರ್ಥಿಗಳು ಅರ್ಹತಾ ಪಟ್ಟಿಯಲ್ಲಿ ಕಾಣಿಸುತ್ತಾರೆ. ಒಂದೇ ಕುಂಟುಬದ ನಾಲ್ಕು ಮಂದಿ ಆಯ್ಕೆಯಾಗುತ್ತಾರೆ. ಉತ್ತರ ಪತ್ರಿಕೆ ಇದ್ದ ಬಂಡಲ್ ನ ಸೀಲ್ ಪರೀಕ್ಷೆ ಆರಂಭಕ್ಕೆ ಮುನ್ನವೆ ತೆಗೆಯಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ದೂರು ನೀಡಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು. ರಾಜ್ಯ ಸರಕಾರ ಕೆಪಿಎಸ್ಸಿ ಸುಧಾರಣೆಗೆ ಹೋಟ ಸಮಿತಿಯನ್ನು ರಚನೆ ಮಾಡಿತ್ತು. ಆ ಸಮಿತಿ ನೀಡಿರುವ ಶಿಫಾರಸ್ಸುಗಳ ಪೈಕಿ ಎಷ್ಟು ಶಿಫಾರಸ್ಸುಗಳನ್ನು ಸರಕಾರ ಒಪ್ಪಿಕೊಂಡು ಅನುಷ್ಠಾನ ಮಾಡಿದೆ ಎಂದು ತಿಳಿಸಬೇಕು ಎಂದು ಸುನಿಲ್ ಕುಮಾರ್ ಹೇಳಿದರು. ಬಿಜೆಪಿ ಹಿರಿಯ ಸದಸ್ಯ ಎಸ್.ಸುರೇಶ್ ಕುಮಾರ್ ಮಾತನಾಡಿ, ಕೆಪಿಎಸ್ಸಿ ಅನ್ನೋದು ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಅಲ್ಲ. ಅದರಲ್ಲಿ ಸರ್ವೀಸ್ ಕಾಣೆಯಾಗಿದೆ. ಉದ್ಯೋಗ ಮೂಲಭೂತ ಹಕ್ಕು. ಆದರೆ, ಇಂದು ಯುವಕರಿಗೆ ಆ ಮೂಲಭೂತ ಹಕ್ಕಿನಿಂದ ವಂಚಿಸಲಾಗುತ್ತಿದೆ. ಕೆಪಿಎಸ್ಸಿ ಕಚೇರಿಯ ಹೆಸರನ್ನು ಉದ್ಯೋಗ ಸೌಧ ಬದಲು, ನಿರುದ್ಯೋಗ ಸೌಧ ಎಂದು ಬದಲಾಯಿಸಬೇಕಿದೆ ಎಂದು ಹೇಳಿದರು. ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಪ್ರಕಟ ಮಾಡುವುದರಲ್ಲಿನ ವಿಳಂಬದಿಂದಾಗಿ ಯುವಕರು ಹತಾಶರಾಗುತ್ತಾರೆ. ಸರಕಾರವು ‘ಶಾಶ್ವತ ಪರೀಕ್ಷಾ ಮೌಲ್ಯಮಾಪಕರ ಮಂಡಳಿ’ ರಚನೆ ಮಾಡಿ, ಕೆಪಿಎಸ್ಸಿ ನಡೆಸುವ ಪರೀಕ್ಷೆಗಳ ಮೌಲ್ಯಮಾಪನಕ್ಕೆ ಈ ಮಂಡಳಿಯಿಂದಲೆ ತಜ್ಞರನ್ನು ಕಳುಹಿಸುವ ವ್ಯವಸ್ಥೆ ಮಾಡಬಹುದೆ? ಎಂದು ಅವರು ಪ್ರಶ್ನಿಸಿದರು. ಕಾನೂನು, ಶಿಕ್ಷೆಯ ಭಯವೂ ಇಲ್ಲವಲ್ಲ: ಪ್ರಿಯಾಂಕ್ ಖರ್ಗೆ ಸರಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಅಕ್ರಮ ನಡೆಸಿದರೆ 10 ಕೋಟಿ ರೂ.ವರೆಗೆ ದಂಡ, ಜೈಲು ಶಿಕ್ಷೆ ಹಾಗೂ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕುವ ಕಾಯ್ದೆಯನ್ನು ಇದೇ ಸದನದಲ್ಲಿ ಅಂಗೀಕರಿಸಲಾಗಿದೆ. ಆದರೂ, ಈ ಅಕ್ರಮಗಳನ್ನು ನಡೆಸುವವರಿಗೆ ಕಾನೂನು, ಶಿಕ್ಷೆಯ ಭಯ ಇಲ್ಲದಂತಾಗಿದೆ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಕೆಪಿಎಸ್ಸಿ ಬದಲು ಕೆಇಎ ಪರೀಕ್ಷೆ ನಡೆಸಿ ನೇಮಕಾತಿ ನಡೆದಿದೆ. ಯಾವುದೆ ಆರೋಪಗಳು ಇಲ್ಲ. ಕೆಪಿಎಸ್ಸಿ ರದ್ದು ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ 7-8ರಷ್ಟಿದೆ. ಆದರೆ, ನಮ್ಮ ರಾಜ್ಯದಲ್ಲಿ ಹತ್ತಾರು ಜನರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಯಾವ ಕಾರಣಕ್ಕಾಗಿ ಇಷ್ಟೊಂದು ಸದಸ್ಯರ ಅಗತ್ಯವಿದೆ. ಕೆಪಿಎಸ್ಸಿಯಲ್ಲಿ ಹೆಗ್ಗಣಗಳ ರೀತಿ ಸದಸ್ಯರು ಹೆಚ್ಚಾಗುತ್ತಾ ಹೋಗುತ್ತಿದ್ದಾರೆ. ಪಾಲುಗಳನ್ನು ಹಂಚಿಕೊಳ್ಳಲು ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆಯೇ? ಕೆಪಿಎಸ್ಸಿಯಲ್ಲಿ ಸುಧಾರಣೆ ತರದೆ ಹೋದರೆ ನಾವು ಇಲ್ಲಿ ಎಷ್ಟೇ ಚರ್ಚೆ ಮಾಡಿದರೂ ಪ್ರಯೋಜನವಿಲ್ಲ. -ಆರ್.ಅಶೋಕ್, ವಿಪಕ್ಷ ನಾಯಕ
ಯುದ್ಧ ಕೊನೆಗೊಳಿಸಲು 3 ಷರತ್ತು ಮುಂದಿರಿಸಿದ ಇರಾನ್ : ವರದಿ
ಟೆಹ್ರಾನ್, ಮಾ.12: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆ ಮತ್ತು ಅದಕ್ಕೆ ಇರಾನ್ನ ಪ್ರತಿ ದಾಳಿಯು ಮೂರನೇ ವಾರಕ್ಕೆ ಕಾಲಿರಿಸುತ್ತಿದ್ದಂತೆಯೇ ಯುದ್ಧವನ್ನು ಕೊನೆಗೊಳಿಸಲು ಇರಾನ್ 3 ಷರತ್ತುಗಳನ್ನು ಮುಂದಿರಿಸಿರುವುದಾಗಿ ವರದಿಯಾಗಿದೆ. ಇರಾನ್ ರಾಷ್ಟ್ರದ ಹಕ್ಕುಗಳ ಗುರುತಿಸುವಿಕೆ, ಪರಿಹಾರ ಪಾವತಿ ಮತ್ತು ಭವಿಷ್ಯದ ಆಕ್ರಮಣದ ವಿರುದ್ಧ ಖಾತರಿ- ಈ ಮೂರು ಷರತ್ತುಗಳನ್ನು ಇರಾನ್ ಮುಂದಿರಿಸಿದೆ. ಇರಾನ್ ಶಾಂತಿಗೆ ಬದ್ಧವಾಗಿದೆ, ಆದರೆ ತನ್ನ ಷರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್ ಒಪ್ಪಿಕೊಂಡರೆ ಮಾತ್ರ ಸಂಘರ್ಷ ಕೊನೆಗೊಳ್ಳಬಹುದು. ಇರಾನ್ನ ಭದ್ರತೆಗೆ ದೃಢವಾದ ಅಂತಾರಾಷ್ಟ್ರೀಯ ಭರವಸೆ ದೊರೆತರೆ ಮಾತ್ರ ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ಪ್ರಚೋದಿಸಲ್ಪಟ್ಟ ಯುದ್ಧವು ನಿಲ್ಲಬಹುದು ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ.
ಇರಾನ್ ಯುದ್ಧದಿಂದ ಮಧ್ಯಪ್ರಾಚ್ಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ತೀವ್ರ ಹೊಡೆತ: ವರದಿ
ಲಂಡನ್, ಮಾ.12: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಮಧ್ಯಪ್ರಾಚ್ಯದ ಪ್ರವಾಸೋದ್ಯಮ ಉದ್ಯಮದ ಮೇಲೆ ಗಮನಾರ್ಹ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತಿದೆ. ಪ್ರವಾಸಿಗರ ಕೊರತೆಯಿಂದಾಗಿ ದಿನಕ್ಕೆ ಕನಿಷ್ಠ 60 ಕೋಟಿ ಡಾಲರ್ನಷ್ಟು ನಷ್ಟವಾಗುತ್ತಿದೆ ಎಂದು ವಲ್ರ್ಡ್ ಟ್ರಾವೆಲ್ ಆ್ಯಂಡ್ ಟೂರಿಸಂ ಕೌನ್ಸಿಲ್(ಡಬ್ಯ್ಲೂಟಿಟಿಸಿ) ವರದಿ ಮಾಡಿದೆ. ವಾಯುಯಾನದಲ್ಲಿ ಅಡಚಣೆಗಳು, ಪ್ರಯಾಣಿಕರ ವಿಶ್ವಾಸ ಕಡಿಮೆಯಾಗುವುದು ಮತ್ತು ಪ್ರಾದೇಶಿಕ ಸಂಪರ್ಕ ಕಡಿತವು ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಪ್ರತೀ ದಿನ ಸುಮಾರು 5 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ದುಬೈ, ಅಬುಧಾಬಿ ಮತ್ತು ಬಹರೈನ್ ನಂತಹ ಪ್ರಮುಖ ಪ್ರಯಾಣ ಕೇಂದ್ರಗಳು ಸುಮಾರು 2 ವಾರಗಳ ಮುಚ್ಚುವಿಕೆ ಮತ್ತು ಕಾರ್ಯಾಚರಣೆಯ ಅವ್ಯವಸ್ಥೆಯನ್ನು ಅನುಭವಿಸಿವೆ. ಇದು ಜಾಗತಿಕ ಪ್ರಯಾಣದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷದಿಂದ ಆರೋಗ್ಯ ವ್ಯವಸ್ಥೆಗೆ ಅಪಾಯ | ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಜಿನೆವಾ, ಮಾ.12: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಿಸ್ತರಣೆಯು ಆರೋಗ್ಯ ವ್ಯವಸ್ಥೆ ಮತ್ತು ಜೀವಕ್ಕೆ ಮಾರಕವಾಗಿದ್ದು ವೈದ್ಯಕೀಯ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಫೆಬ್ರವರಿ 28ರ ಬಳಿಕ ಇರಾನ್ನಲ್ಲಿ ಸುಮಾರು 1,000, ಲೆಬನಾನ್ನಲ್ಲಿ 50, ಇಸ್ರೇಲ್ನಲ್ಲಿ 13 ಹಾಗೂ ಇತರ ಗಲ್ಫ್ ದೇಶಗಳಲ್ಲಿ 11 ಸಾವುಗಳು ವರದಿಯಾಗಿದೆ. ಇರಾನ್ನಲ್ಲಿ ಆರೋಗ್ಯ ರಕ್ಷಣೆಯ ಮೇಲೆ 13 ದಾಳಿಗಳು ಹಾಗೂ ಲೆಬನಾನ್ನಲ್ಲಿ 1 ದಾಳಿಗಳನ್ನು ಪರಿಶೀಲಿಸಲಾಗಿದೆ. ಎಲ್ಲಾ ಸಮಯಗಳಲ್ಲಿ ಮತ್ತು ಎಲ್ಲಾ ಸ್ಥಳಗಳಲ್ಲಿ ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ರಕ್ಷಿಸಬೇಕು, ಯುದ್ದದಲ್ಲಿಯೂ ಸಹ' ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇರಾನ್ ಮತ್ತು ಮಧ್ಯಪ್ರಾಚ್ಯದಲ್ಲಿ 16 ದೇಶಗಳು ಬಾಧಿತವಾಗಿರುವ ಘರ್ಷಣೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳಗೊಂಡಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನಡಿ ಆರೋಗ್ಯ ಸೇವೆಗಳನ್ನು ರಕ್ಷಿಸಬೇಕು ಮತ್ತು ದಾಳಿ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಘೆಬ್ರಯೇಸಸ್ ಹೇಳಿದ್ದಾರೆ. ಸಂಘರ್ಷವು ಗಮನಾರ್ಹ ಸ್ಥಳಾಂತರಕ್ಕೂ ಕಾರಣವಾಗಿದೆ. ಇದುವರೆಗೆ ಸುಮಾರು 1 ಲಕ್ಷ ಜನರು ಇರಾನ್ನಿಂದ ನಿರ್ಗಮಿಸಿದ್ದರೆ ಲೆಬನಾನ್ನಲ್ಲಿ 60,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಸ್ಥಳಾಂತರಗೊಳ್ಳಲು ಸೂಚನೆ ನೀಡಿದ ಬಳಿಕ ಕನಿಷ್ಠ 10 ಲಕ್ಷ ಜನರು ಸ್ಥಳಾಂತರಗೊಳ್ಳಲು ಸಿದ್ದರಾಗಿದ್ದಾರೆ. ಪರಮಾಣು ಸೌಲಭ್ಯಗಳ ಮೇಲಿನ ಬೆದರಿಕೆಯೂ ಆತಂಕಕ್ಕೆ ಕಾರಣವಾಗಿದೆ. ಪರಮಾಣು ಸುರಕ್ಷತೆಗೆ ಸಂಬಂಧಿಸಿದ ಯಾವುದೇ ರಾಜಿಯೂ ಗಂಭೀರವಾದ ಸಾರ್ವಜನಿಕ ಆರೋಗ್ಯ ಪರಿಣಾಮಗಳನ್ನು ಉಂಟು ಮಾಡಬಹುದು. ಆರೋಗ್ಯ ಸೇವೆಗಳ ವಿತರಣೆಯ ಮೇಲಿನ ಪರಿಣಾಮವನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿರುವಾಗ ಹಾಗೂ ವಿನಂತಿಸಿದಾಗ ಬೆಂಬಲವನ್ನು ಒದಗಿಸಲು ಪೀಡಿತ ದೇಶಗಳಲ್ಲಿನ ತಮ್ಮ ಕಚೇರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಬಿಪಿಎಲ್ ಕಾರ್ಡ್ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ.ಗೆ ಹೆಚ್ಚಿಸುವ ಕುರಿತು ಪರಿಶೀಲನೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳಿಗೆ ಏರಿಸಲು ರಾಜ್ಯ ಸರಕಾರ ಪರಿಶೀಲನೆ ನಡೆಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಗುರುವಾರ ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿ ಸದಸ್ಯ ಡಾ.ಅಶ್ವಥ್ ನಾರಾಯಣ ಅವರ ಪ್ರಶ್ನೆಗೆ ಆಹಾರ ಸಚಿವರ ಪರವಾಗಿ ಉತ್ತರಿಸಿದ ಅವರು, ವಾರ್ಷಿಕ ಆದಾಯ ಮಿತಿ ಪರಿಷ್ಕರಣೆಯಾಗಬೇಕು ಎಂಬ ಅಭಿಪ್ರಾಯ ಸರಕಾರದ್ದು ಆಗಿದೆ. ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ ನೀಡಿರುವ ವರದಿಯಲ್ಲಿ ಬಿಪಿಎಲ್ ಕಾರ್ಡುಗಳನ್ನು ಪಡೆಯಲು ವಾರ್ಷಿಕ ಆದಾಯ ನೀತಿಯನ್ನು 3 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂಬ ಶಿಫಾರಸ್ಸು ಇದೆ. ಅದನ್ನು ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದರು. ಕೇಂದ್ರ ಸರಕಾರದ ಮಾನದಂಡ ಪ್ರಕಾರ ರಾಜ್ಯದಲ್ಲಿ 1.09 ಕೋಟಿ ಪಡಿತರ ಚೀಟಿಗಳು ಇರಬೇಕು. ಆದರೆ ನಮ್ಮಲ್ಲಿ ಈ ಮಿತಿಗಿಂತಲೂ ಹೆಚ್ಚಿವೆ. ಅವುಗಳಿಗೆ ರಾಜ್ಯ ಸರಕಾರವೇ ಸ್ವಂತ ಖರ್ಚಿನಲ್ಲಿ ಪಡಿತರ ನೀಡುತ್ತಿದೆ ಎಂದೂ ಅವರು ಉಲ್ಲೇಖಿಸಿದರು. ಇದಕ್ಕೂ ಮೊದಲು ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ಎಂಟು ವರ್ಷಗಳ ಹಿಂದೆ ಆದಾಯ ಮಿತಿಯನ್ನು ನಿಗದಿ ಮಾಡಲಾಗಿದೆ. ಆದರೆ ಈಗ ಆದಾಯದ ಪ್ರಮಾಣ ಏರಿಕೆಯಾಗಿದೆ. ಹಳೆಯ ಮಿತಿಯನ್ನೆ ಮುಂದುವರೆಸುವುದು ಅಗತ್ಯ ಇಲ್ಲ ಎಂದು ಹೇಳಿದರು. ಮತ್ತೋರ್ವ ಬಿಜೆಪಿ ಸದಸ್ಯ ಎನ್.ಗೋಪಾಲಯ್ಯ ಮಾತನಾಡಿ, ಪ್ರತಿ ಕ್ಷೇತ್ರದಲ್ಲೂ 8 ಸಾವಿರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಬಡವರಿಗೆ ಅನ್ಯಾಯವಾಗಿದೆ. ಮನೆಮನೆ ಸಮೀಕ್ಷೆ ನಡೆಸದ ಹೊರತು ಪಡಿತರ ಚೀಟಿಗಳನ್ನು ರದ್ದುಗೊಳಿಸಬಾರದು ಎಂದು ಸರಕಾರಕ್ಕೆ ಮನವಿ ಮಾಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ ಬಾಬು ಮಾತನಾಡಿ, ಚಾಲಕ ವೃತ್ತಿ ನಡೆಸುವವರಿಗೆ ಕಡಿಮೆ ಆದಾಯ ಇರುತ್ತದೆ. ಅವರಿಗೂ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಪಡಿತರ ಚೀಟಿಗಳು ಕೇವಲ ಆಹಾರ ಪಡೆಯಲು ಸೀಮಿತವಾಗಿಲ್ಲ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಅಗತ್ಯಗಳಿಗೆ ಬಳಕೆಯಾಗುತ್ತಿವೆ ಎಂದರು.
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಶುಕ್ರವಾರ ಬಿಡುಗಡೆ: ಕರ್ನಾಟಕದ 41,40,106 ರೈತ ಫಲಾನುಭವಿಗಳಿಗೆ ಲಾಭ
ಪಿ.ಎಂ. ಕಿಸಾನ್ ಯೋಜನೆಯ 22ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಮಾರ್ಚ್ 13 ರಂದು ಸಂಜೆ 5 ಗಂಟೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಇದರಿಂದ ಕರ್ನಾಟಕದ 41,40,106 ರೈತ ಫಲಾನುಭವಿಗಳಿಗೂ ಲಾಭ ಆಗಲಿದೆ. ಅಸ್ಸಾಂನಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲ ಅಗುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ಅವಕಾಶ ಇದೆ.
ಎಲ್ಲಡೆ LPG ಹಾಹಾಕಾರ: ಅನ್ನಬ್ರಹ್ಮ ಕ್ಷೇತ್ರ ಉಡುಪಿಯಲ್ಲಿ ಹೇಗಿದೆ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ?
Anna Dasoha In Udupi : ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ, ಉಡುಪಿ ಕೃಷ್ಣಮಠದ ಅನ್ನದಾಸೋಹಕ್ಕೆ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ತೊಂದರೆಯಾಗಿದೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ, ಯಾಕೆಂದರೆ ಉಡುಪಿಗೆ ಅನ್ನಬ್ರಹ್ಮ ಕ್ಷೇತ್ರವೆಂದು ಕರಿಯುವುದು ವಾಡಿಕೆ. ಕೃಷ್ಣಮಠದ ಅಧಿಕಾರಿಗಳ ಪ್ರಕಾರ, ಇದುವರೆಗೆ ಯಾವುದೇ ತೊಂದರೆ ಗ್ಯಾಸ್ ಸಮಸ್ಯೆಯಿಂದ ಎದುರಾಗಿಲ್ಲ.
ಗುಡ್ನ್ಯೂಸ್: BPL ರೇಷನ್ ಕಾರ್ಡ್ ಆದಾಯ ಮಿತಿ ಏರಿಕೆ; ಮಾನದಂಡ ಬದಲಾವಣೆಗೆ ಸರ್ಕಾರ ಸಜ್ಜು
ಬಿಪಿಎಲ್ ಕಾರ್ಡ್ ಪಡೆಯಬೇಕು ಎಂದುಕೊಂಡವರಿಗೆ ಸರ್ಕಾರ ಗುಡ್ನ್ಯೂಸ್ ನೀಡಲು ಮುಂದಾಗಿದೆ. ಆದಾಯ ಮಿತಿಯನ್ನು 1.2 ಲಕ್ಷ ರೂ.ನಿಂದ 3 ಲಕ್ಷಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಆಹಾರ ಸಚಿವರ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಮೂಲಕ 8 ವರ್ಷಗಳ ಬಳಿಕ ಆದಾಯ ಮಿತಿ ಬದಲಾವಣೆಯಾಗುತ್ತಿದೆ. ಮತ್ತಷ್ಟು ಮಂದಿ ಕಾರ್ಡ್ ಪಡೆಯಲು ಈ ನಿಯಮ ನೆರವಾಗಲಿದೆ.
ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯಿಂದ ಶೈಕ್ಷಣಿಕ ಕಾರ್ಯಗಾರ
ಮಂಗಳೂರು: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ ಶೈಕ್ಷಣಿಕ ಕಾರ್ಯಗಾರವು ಡಾ. ಎ.ವಿ. ರಾವ್ ಸಭಾಂಗಣದಲ್ಲಿ ಶುಕ್ರವಾರ ( ಮಾ.6) ನೇತೃತ್ವದಲ್ಲಿ ಜರಗಿತು. ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿ ಡಾ| ಅನಿಮೇಶ್ ಜೈನ್ ಸಂಪಾದಕತ್ವದ ಸಂಘದ ವಾರ್ತಾಗೃಹ ಪತ್ರಿಕೆ ‘‘ಮೆಡಿಲೋರ್’’ನ್ನು ಅನಾವರಣಗೊಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನಗರದ ಎ.ಜೆ. ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ತಜ್ಞ ಡಾ| ರಾಘವೇಂದ್ರ ನಾಯಕ್ರವರು ಮೂತ್ರ ಪಿಂಡ ಮತ್ತು ಹೃದ್ರೋಗ ಶಾಸ್ತ್ರದಲ್ಲಿ ಇತ್ತೀಚಿಗಿನ ಬೆಳವಣಿಗೆಗಳು, ಪರಿಕಲ್ಪನೆಗಳು ಮತ್ತು ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞ ಡಾ. ಪ್ರದೀಪ್ ಪಿರೇರಾರವರು ಹೃದಯ ಆಘಾತ, ವೈಪಲ್ಯ ಸಂದರ್ಭದಲ್ಲಿ ತುರ್ತು ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು. ಮುಂಬಯಿ ನಗರದ ಹಿಂದುಜಾ ಆಸ್ಪತ್ರೆಯ ಅರ್ಬುದಾ ರೋಗ ಶಸ್ತ್ರ ಚಿಕಿತ್ಸಕ ಡಾ. ಮುರದ ಲಾಲ ಅವರು ತಮ್ಮ ಹವ್ಯಾಸಿ ಸಾಹಸಮಯ ವೃತ್ತಿಯ ಅಂಗವಾಗಿ 42 ದಿನ ಅವಧಿಯ ಅದ್ಭುತ 29000 ಅಡಿ ವಿಶ್ವದ ಅತಿ ಎತ್ತರದ ಮೌಂಟ್ ಎವೆರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಪರ್ವತಾರೋಹಣದ ಬಗ್ಗೆ ಹಾಗೂ ಅವರು ಈ ಸಂದರ್ಭದಲ್ಲಿ ಎದುರಿಸಿದ ಭಯಾನಕ ಸಮಸ್ಯೆ ಗಂಭೀರ ಸನ್ನಿವೇಶವನ್ನು ಸಾಕ್ಷ್ಯಧಾರಿತ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದ ಮೂಲಕ ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಸ್ವಾಗತಿಸಿ ಈ ಶೈಕ್ಷಣಿಕ ಕಾರ್ಯಗಾರವನ್ನು ಸಂಸ್ಥೆಯ ಸದಸ್ಯರ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ಆಯೋಜಿಸಲಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಡಾ. ಜುಲಿಯನ್ ಸಲ್ದಾನ ಉಪಸ್ಥಿತರಿದ್ದರು. ನಗರದ ರೆಡ್ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಗೆ ಆಯ್ಕೆಯಾದ ಡಾ. ಸತೀಶ್ ರಾವ್ ಅವರನ್ನು ಅಭಿನಂದಿಸಲಾಯಿತು. ಸಂಘದ ಚುನಾಯಿತ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.
ಕನಕಗಿರಿ | ದ್ವಿತೀಯ ಪಿಯುಸಿ ಪರೀಕ್ಷೆ : ಓರ್ವ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು 14 ಸಿಬ್ಬಂದಿ
ಕನಕಗಿರಿ: ಒಬ್ಬಳೇ ಪಿಯುಸಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದಲ್ಲಿ 14 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸಿದ ಅಪರೂಪದ ಘಟನೆ ಕನಕಗಿರಿ ಪಟ್ಟಣದಲ್ಲಿ ಎರಡನೇ ಬಾರಿ ನಡೆದಿದೆ. ತಾಲೂಕಿನ ಹುಲಿಹೈದರ್ ಗ್ರಾಮದ ನಿವಾಸಿ ಅಫ್ರೀನ ಭಾನು ಪರೀಕ್ಷೆ ಬರೆದ ವಿದ್ಯಾರ್ಥಿನಿಯಾಗಿದ್ದು, ಅವರು ಸರ್ಕಾರಿ ಪದವಿ ಪೂರ್ವ ಕಾಲೇಜು ಕನಕಗಿರಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗುರುವಾರ ಕನಕಗಿರಿಯ ಪರೀಕ್ಷಾ ಕೇಂದ್ರದಲ್ಲಿ ಅವರು ಹಿಂದಿ ವಿಷಯದ ಪರೀಕ್ಷೆ ಬರೆದರು. ಈ ಒಬ್ಬಳೇ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಕಾಲೇಜಿನ ಮುಖ್ಯ ಅಧೀಕ್ಷಕ, ಸಹ ಅಧೀಕ್ಷಕ, ಜಾಗೃತ ದಳದ ಸದಸ್ಯ, ಉತ್ತರಪತ್ರಿಕೆ ಪಾಲಕರು, ಕೇಂದ್ರದ ಕಚೇರಿ ಅಧೀಕ್ಷಕರು, ವಾಟರ್ಮ್ಯಾನ್, ಡಿ-ಗ್ರೂಪ್ ಸಿಬ್ಬಂದಿ, ಇಬ್ಬರು ಪೊಲೀಸ್ ಸಿಬ್ಬಂದಿ, ಇಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪ್ರಶ್ನೆ ಪತ್ರಿಕೆ ಸರಬರಾಜಿಗೆ ನಾಲ್ವರು ಸೇರಿ ಒಟ್ಟು 14 ಮಂದಿ ಕಾರ್ಯನಿರ್ವಹಿಸಿದ್ದು ವಿಶೇಷವಾಗಿದೆ. ಪರೀಕ್ಷಾ ನಿಯಮಾವಳಿಗಳ ಪ್ರಕಾರ ಸಿಬ್ಬಂದಿಯನ್ನು ನಿಯೋಜಿಸಲಾಗಿರುವುದರಿಂದ ಒಬ್ಬ ವಿದ್ಯಾರ್ಥಿನಿ ಇದ್ದರೂ ಪೂರ್ಣ ಪ್ರಮಾಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಡುಗೆ ಅನಿಲ ಕೊರತೆ | ಸಂಸದರು ಲೋಕಸಭೆಯಲ್ಲಿ ಮಾತನಾಡಿ ರಾಜ್ಯಕ್ಕೆ ನ್ಯಾಯ ಒದಗಿಸಲಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಬೇರೆ ವಿಚಾರಗಳ ಬಗ್ಗೆ ಮಾತನಾಡುವ ಸಂಸದರು ಅಡುಗೆ ಅನಿಲ ಸಿಲಿಂಡರ್ ಕೊರತೆ ವಿಚಾರವಾಗಿಯೂ ಲೋಕಸಭೆಯಲ್ಲಿ ಮಾತನಾಡಬೇಕು. ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಗುರುವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಡುಗೆ ಅನಿಲ್ ಸಿಲಿಂಡರ್ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ವಿಚಾರವಾಗಿ ಬಿಜೆಪಿಯ ಯಾವುದೇ ಸಂಸದರು ಬಾಯಿ ಬಿಡುತ್ತಿಲ್ಲ. ಹಳ್ಳಿ ಜನರು, ರೈತರು ಹಾಗೂ ಹೊಟೇಲ್ಗಳಿಗೆ ಸೌದೆ ಒಲೆ ಬಳಸಲು ಕಟ್ಟಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು. ಅಡುಗೆ ಅನಿಲ ಸೇರಿಂದತೆ ಇಂಧನ ಬೆಲೆ ಏರಿಕೆಯಿಂದ ಜನ ಪರದಾಡುತ್ತಿದ್ದಾರೆ. ಇದರಲ್ಲಿ ರಾಜ್ಯ ಸರಕಾರ ಏನೂ ಮಾಡಲು ಆಗುವುದಿಲ್ಲ. ಕೇಂದ್ರ ಸರಕಾರವೇ ನೇರ ಇದಕ್ಕೆ ಹೊಣೆ. ಕೇಂದ್ರ ವಿದೇಶಾಂಗ ನೀತಿ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಕೇಂದ್ರದ ಧೋರಣೆ ಖಂಡನೀಯ. ನಾಗರಕರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ ನೋಡಿಕೊಳ್ಳಬೇಕು. ಮುಂದೆ ಪರಿಸ್ಥಿತಿ ಹೇಗಿರುತ್ತದೆಯೋ ಏನೋ ಗೊತ್ತಿಲ್ಲ. ಈಗಾಗಲೇ ಅನಿಲ ಚಾಲಿತ ಆಟೋರಿಕ್ಷಾಗಳು ಬಂದ್ ಆಗಿದ್ದು, ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಿದರು.
ಜಲಜೀವನ್ ಮಿಷನ್; ಅಧಿಕಾರಿಗಳಿಂದ ಲೋಪವಾದರೆ ಜೈಲು ನಿಶ್ಚಿತ: ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು, ಮಾ.12: ಪ್ರತಿ ಮನೆ ಮನೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವ ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆಯಲ್ಲಿ ಅಧಿಕಾರಿಗಳಿಂದ ಲೋಪವಾದರೆ ಜೈಲು ನಿಶ್ಚಿತ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದ್ದಾರೆ. ಗುರುವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಆರಂಭ ದಿಂದ ಈ ಯೋಜನೆ ಪ್ರತಿ ಗ್ರಾಮದಲ್ಲೂ ಹತ್ತಾರು ಸಮಸ್ಯೆಯಿಂದ ಸುದ್ದಿಯಾಗಿದ್ದು ಹಲವು ಬಾರಿ ಸಭೆ ನಡೆಸಲಾ ಗಿದೆ. ಕಳೆದ ಬಾರಿ ಸಂಸದರು ಈ ಬಗ್ಗೆ ವಿಶೇಷ ಸಭೆ ನಡೆಸಿ ಗ್ರಾಮ ಪಂಚಾಯತ್ನ ಸಂರ್ಪಕಕ್ಕೆ ಜೋಡಣೆ ಮಾಡುವ ಸಲಹೆ ನೀಡಿದಾಗ ಒಂದಿಷ್ಟು ಕಡೆ ನೀರಿನ ಪೂರೈಕೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಂದ ಪೂರ್ಣ ಮಾಹಿತಿ ಪಡೆದು ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುವುದು ಎಂದರು. ಜಲಜೀವನ್ ಮಿಷನ್ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಈ ಯೋಜನೆಗೆ ಬೈಂದೂರು ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ದೊರೆಯಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಶಾಸಕನಾಗಿ ನಾನು ಈಗಾಗಲೇ ನಾಲ್ಕೈದು ಬಾರಿ ಈ ವಿಷಯದ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದರು. ಕಳೆದ ಹಲವು ದಿನಗಳಿಂದ ಬೈಂದೂರು ಶಾಸಕನಾದ ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ಒತ್ತಡ ಇದ್ದರೂ ಸಹ ನಾನು ಈ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ. ಎಲ್ಲವೂ ದೇವರಿಗೆ ಸಮರ್ಪಣೆ ಮಾಡುತ್ತೇನೆ. ಬ್ರಾಹ್ಮೀ ಶ್ರೀದುರ್ಗಾಪರಮೇಶ್ವರಿ ಎದುರು ಇಡೀ ಒಂದು ದಿನ ಕೂರುವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ, ಪ್ರಮುಖರಾದ ಗೋಪಾಲ ಪೂಜಾರಿ ವಸ್ರೆ, ಕರಣ್ ಪೂಜಾರಿ, ಸಮೃದ್ದ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ, ಶ್ರೀಗಣೇಶ ಉಪಸ್ಥಿತರಿದ್ದರು.
ಕೊಪ್ಪಳ | ಮನೆಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ: ಡಿಸಿ ಸುರೇಶ ಇಟ್ನಾಳ
ಕೊಪ್ಪಳ : ಜಿಲ್ಲೆಯಲ್ಲಿ ಮನೆಬಳಕೆಯ ಅಡುಗೆ ಅನಿಲ (ಎಲ್.ಪಿ.ಜಿ) ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು. ಅವರು ಗುರುವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸ್ತುತ ಗ್ಯಾಸ್ ಸಿಲಿಂಡರ್ ಪೂರೈಕೆ ಮತ್ತು ವಿತರಣೆಯಲ್ಲಿ ಉಂಟಾಗಿರುವ ಅಥವಾ ಉಂಟಾಗಬಹುದಾದ ಪರಿಸ್ಥಿತಿ ಕುರಿತು ಚರ್ಚಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಆತಂಕದಿAದ ಅತಿಯಾಗಿ ಗ್ಯಾಸ್ ಬುಕಿಂಗ್ ಮಾಡುತ್ತಿರುವುದು ಕಂಡುಬAದಿದೆ. ಇದರಿಂದಾಗಿ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತದೆ. ಜಿಲ್ಲೆಯಲ್ಲಿ ವಿವಿಧ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ದಾಸ್ತಾನು ಲಭ್ಯವಿದೆ. ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಆದರೆ ಗೃಹ ಉಪಯೋಗಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿರುವುದಿಲ್ಲ. ಗೃಹ ಉಪಯೋಗಿ ಅಡುಗೆ ಅನಿಲ ಸಿಲಿಂಡರ್ ಅನ್ನು ಬುಕ್ ಮಾಡಿದ 25 ದಿನದೊಳಗೆ ವಿತರಣೆ ಮಾಡಲಾಗುವುದು ಎಂದರು. ಹೋಟೆಲ್ಗಳಲ್ಲಿ ಗ್ಯಾಸ್ ಹೊರತಾಗಿ ಸೋಲಾರ್ ಬಳಕೆ, ಬಯೋಗ್ಯಾಸ್ ಬಳಕೆಯನ್ನು ಮಾಡಲು ಅವಕಾಶವಿದ್ದು, ಈ ಬಗ್ಗೆ ಹೋಟೆಲ್ಗಳಿಗೆ ಸೂಕ್ತ ಅರಿವು ಮೂಡಿಸಬೇಕು. ಖಾಸಗಿ ಕಂಪನಿಗಳು ಗ್ಯಾಸ್ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಇದರ ಬದಲಿಗೆ ಸೋಲಾರ್ ಹಾಗೂ ಇತರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಬೇಕು. ಅಗತ್ಯತೆಗಳಿಗೆ ತಕ್ಕಂತೆ ಅಡುಗೆ ಅನಿಲವನ್ನು ಬಳಕೆ ಮಾಡಲು ಮತ್ತು ಯಾವುದೇ ರೀತಿಯ ಗ್ಯಾಸ್ ವೇಸ್ಟ್ ಮಾಡದಿರಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅಗತ್ಯ ಸೇವೆಗಳಾದ ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅನಿಲ ಪೂರೈಕೆಗೆ ಮೊದಲ ಆದ್ಯತೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಗೃಹೋಪಯೋಗಿ ಅನಿಲ ಸಿಲಿಂಡರ್ ವಿತರಣೆ ವೇಳೆ ಬಿಲ್ ಮೊತ್ತಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುವಂತಿಲ್ಲ. ಹಾಗೇನಾದರೂ ತೆಗೆದುಕೊಂಡಲ್ಲಿ ಅಂತಹ ಗ್ಯಾಸ್ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲು ಮಾಡುವುದಷ್ಟೇ ಅಲ್ಲದೇ ಲೈಸನ್ಸ್ ರದ್ದು ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಗ್ಯಾಸ್ ಏಜೆನ್ಸಿಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ, ಸಹಾಯಕ ಆಯುಕ್ತರಾದ ಮಹೇಶ್ ಮಾಲಗಿತ್ತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿ ವಿಶ್ವನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ, ಕೊಪ್ಪಳ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ, ಕನಕಗಿರಿ ತಾಲೂಕು ಸಿ.ಡಿ.ಪಿ.ಒ ವಿರುಪಾಕ್ಷಿ, ಸೇರಿದಂತೆ ತಹಶೀಲ್ದಾರರು, ಆಹಾರ ಇಲಾಖೆ ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಐ.ಒ.ಸಿ., ಬಿ.ಪಿ.ಸಿ, ಹೆಚ್.ಪಿ.ಸಿ. ಗ್ಯಾಸ್ ಕಂಪನಿ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಗ್ಯಾಸ್ ಏಜೆನ್ಸಿ ಮಾಲೀಕರು ಉಪಸ್ಥಿತರಿದ್ದರು.
‘ವಚನ ಕಲ್ಯಾಣ’ 9 ಗಂಟೆಗಳ ಅಹೋರಾತ್ರಿ ನಾಟಕಕ್ಕೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ
ಉಡುಪಿ, ಮಾ.12: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ‘ವಚನ ಕಲ್ಯಾಣ’ ಎಂಬ ಅಹೋರಾತ್ರಿ (ಒಂಭತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಉದ್ದೇಶಿಸಿದೆ. ಈ ಸಂಬಂಧ ನುರಿತ ಹಾಗೂ ಆಸಕ್ತ ಯುವಕ ಯುವತಿಯರು ಹಾಗೂ ಅನುಭವಿ ರಂಗಕಲಾವಿದರು/ಗಾಯಕರುಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಇದಕ್ಕಾಗಿ 18ರಿಂದ 40 ವರ್ಷಗಳ ವಯೋಮಿತಿಯ ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿ ಅನುಭವ ಇರುವ ಕಲಾವಿದರಿಗೆ ಅದ್ಯತೆ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 20ರ ಒಳಗೆ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು -560056 ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ತಲುಪುವಂತೆ ಅಥವಾ ಈಮೇಲ್ ವಿಳಾಸ - kanakaresearchcentre@gmail.com- ಮೂಲಕ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ-ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮಾಸಿಕ ಗೌರವಧನ ಮತ್ತು ಊಟ-ವಸತಿ ವ್ಯವಸ್ಥೆಯನ್ನು ಮಾಡಲಾಗು ವುದು. ಅರ್ಜಿ ನಮೂನೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ವೆಬ್ಸೈಟ್ - annadasiri.karnataka.gov.in-ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿ-ವಿವರಗಳಿಗೆ ಸಿ. ಬಸವಲಿಂಗಯ್ಯ (ವಚನ ಕಲ್ಯಾಣ ನಾಟಕದ ನಿರ್ದೇಶಕರು), ಮೊಬೈಲ್ ಸಂಪರ್ಕ ಸಂಖ್ಯೆ- 9448538620 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಾಣಿಜ್ಯ ಅನಿಲ ಸಿಲಿಂಡರ್ಗಳ ಸಮಸ್ಯೆ: ಮಾ.13ರಂದು ಹೊಟೇಲ್ ಮಾಲಕರಿಂದ ಸಭೆ
ಉಡುಪಿ, ಮಾ.12: ಉಡುಪಿ ಜಿಲ್ಲೆಯಾದ್ಯಂತ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯ ಲ್ಲುಂಟಾಗಿರುವ ವ್ಯತ್ಯಯದಿಂದ ಹೊಟೇಲ್ ಉದ್ಯಮಕ್ಕೆ ಸಂಕಷ್ಟ ಎದುರಾಗಿದ್ದು, ಈ ಬಗ್ಗೆ ಚರ್ಚಿಸಲು ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ವತಿಯಿಂದ ಶುಕ್ರವಾರ ಉಡುಪಿಯಲ್ಲಿ ಸಭೆಯನ್ನು ಕರೆಯಲಾಗಿದೆ. ಪಶ್ಚಿಮ ಎಷ್ಯಾ ದೇಶಗಳಲ್ಲಿ ಉಂಟಾಗಿರುವ ಯುದ್ಥ ಸನ್ನಿವೇಶದಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಅಲಭ್ಯತೆ ಉಂಟಾಗಿದ್ದು, ಇದರಿಂದ ಹೋಟೆಲ್/ರೆಸ್ಟೋರೆಂಟ್ಗಳನ್ನು ನಡೆಸಲು ದೊಡ್ಡ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಚರ್ಚಿಸಲು ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ವತಿಯಿಂದ ಉಡುಪಿಯ ಡಯಾನಾ ಹೊಟೇಲ್ ನಲ್ಲಿ ಮಾ.13ರಂದು ಬೆಳಗ್ಗೆ 10:00ಗಂಟೆ ಜಿಲ್ಲೆಯ ಹೊಟೇಲ್ ಮಾಲಕರ ಸಭೆ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷರಾಗಿರುವ ತಲ್ಲೂರು ಶಿವರಾಮ ಶೆಟ್ಟಿ ಅವರ ಪ್ರಕಟಣೆ ತಿಳಿಸಿದೆ. ತಿಂಡಿಗಳ ಕಡಿತ: ವಾಣಿಜ್ಯ ಅನಿಲ ಸಿಲಿಂಡರ್ಗಳು ಸಿಗುವುದು ಅನಿಶ್ಚಿತ ವಾಗಿರುವುದರಿಂದ ಸಣ್ಣ ಸಣ್ಣ ಹೊಟೇಲ್ ಗಳಲ್ಲಿ ಕೆಲವು ಈಗಾಗಲೇ ಬಾಗಿಲು ಮುಚ್ಚಿವೆ. ಗ್ರಾಮೀಣ ಭಾಗದ ಕೆಲವು ಹೊಟೇಲ್, ಕ್ಯಾಂಟೀನ್ಗಳು ಮತ್ತೆ ಸೌದೆಗೆ ಮೊರೆ ಹೋಗಿದ್ದು, ಒಲೆ ಹೊತ್ತಿಸಿ ಮತ್ತೆ ಚಾ-ತಿಂಡಿ ತಯಾರಿಸಲು ಮುಂದಾಗಿವೆ. ಇನ್ನು ಕೆಲವು ಹೊಟೇಲ್ಗಳು ತಿಂಡಿಗಳ ವೈವಿಧ್ಯತೆಯನ್ನು ಸೀಮಿತ ಗೊಳಿಸಿದ್ದು, ಹೆಚ್ಚು ಗ್ಯಾಸ್ ಬೇಡುವ ತಿಂಡಿ ತಯಾರಿಯನ್ನು ನಿಲ್ಲಿಸಿವೆ. ಕೆಲವು ಹೊಟೇಲ್, ದರ್ಶನಿಗಳು ಇಂದು ಊಟವನ್ನು ನಿಲ್ಲಿಸಿವೆ. ತಾತ್ಕಾಲಿಕವಾಗಿ ಉಪಹಾರಕ್ಕೆ ತಮ್ಮನ್ನು ಸೀಮಿತಗೊಳಿಸಿವೆ. ಊಟ ನೀಡುತ್ತಿರುವ ಹೊಟೇಲ್ಗಳಲ್ಲೂ ಕೆಲವು ಕೇವಲ ಬೆಳ್ತಿಗೆ ಅಕ್ಕಿ ಅನ್ನ ಮಾತ್ರ ಗ್ರಾಹಕರಿಗೆ ನೀಡುತಿದ್ದು, ಬೇಯಲು ಸಮಯ ತೆಗೆದುಕೊಳ್ಳುವ ಕುಚ್ಚಲಕ್ಕಿ ಅನ್ನವನ್ನು ಕೆಲವು ದಿನ ನಿಲ್ಲಿಸುವ ನಿರ್ಧಾರ ಮಾಡಿವೆ. ಕೃಷ್ಣ ಮಠದಲ್ಲಿ ಅನ್ನದಾನಕ್ಕೆ ಸಮಸ್ಯೆ ಇಲ್ಲ: ಅನ್ನದಾನಕ್ಕೆ ಹೆಸರಾದ ಉಡುಪಿಯ ಶ್ರೀಕೃಷ್ಣಮಠದಲ್ಲಿ ನಡೆಯುವ ಅನ್ನದಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಅನಿಲಕ್ಕೆ ಸಮಸ್ಯೆಯಾದರೆ ಕಟ್ಟಿಗೆ ಒಲೆಯಲ್ಲಿ ಭೋಜನ ವ್ಯವಸ್ಥೆಯನ್ನು ಸಿದ್ಧಪಡಿಸಿ ಬರುವ ಭಕ್ತರಿಗೆ ಅನ್ನಪ್ರಸಾದ ವಿತರಿಸುವುದಾಗಿ ಪರ್ಯಾಯ ಶಿರೂರು ಮಠದ ದಿವಾನರಾದ ಡಾ.ಉದಯಕುಮಾರ ಸರಳತ್ತಾಯ ತಿಳಿಸಿದ್ದಾರೆ. ಪ್ರತಿ ದಿನ ಸಾವಿರಾರು ಭಕ್ತರು ಭೋಜನ ಸ್ವೀಕರಿಸುವ ಉಡುಪಿ ಕೃಷ್ಣಮಠದಲ್ಲಿ ಪರಂಪರೆಯಿಂದ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಪದ್ಧತಿ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಅಡುಗೆ ಕಾರ್ಯಕ್ಕೆ ಅನಿಲವನ್ನು ಬಳಸಲಾಗುತ್ತಿದೆ. ಸದ್ಯ ಅಡುಗೆ ಅನಿಲ ಲಭ್ಯವಿದ್ದು, ಯಾವುದೇ ತೊಂದರೆ ಇಲ್ಲ. ಆದರೆ ಅನಿಲ ಲಭ್ಯವಾಗದ ಪರಿಸ್ಥಿತಿ ಎದುರಾದರೂ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಉಡುಪಿ ಕೃಷ್ಣಮಠದಲ್ಲಿ ಮಠಕ್ಕೆ ಬರುವ ಭಕ್ತರ ಅಡುಗೆಗಾಗಿ ಪರ್ಯಾಯ ಪೂರ್ವವೇ ಕಟ್ಟಿಗೆ ಮುಹೂರ್ತ ನಡೆಸಿ ಕಟ್ಟಿಗೆಗಳನ್ನು ರಥದಾಕಾರದಲ್ಲಿ ಸಂಗ್ರಹಿಸಿಡಲಾಗುತ್ತದೆ. ಅದನ್ನು ಆಯಾ ಮಠದ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಅಡುಗೆಗೆ ಬಳಸುವ ಸಂಪ್ರದಾಯ ಇಂದಿಗೂ ಉಳಿದಿದೆ. ಈ ಉದ್ದೇಶಕ್ಕಾಗಿಯೇ ಮಠದ ವತಿಯಿಂದ ಕಾಡನ್ನೇ ಬೆಳೆಸಲಾಗುತ್ತದೆ.ಅಗತ್ಯ ಬಿದ್ದರೆ ಕಟ್ಟಿಗೆ ತರಿಸಿಕೊಂಡು ಎಷ್ಟು ಜನರಿಗಾದರೂ ಊಟೋಪಚಾರ ವ್ಯವಸ್ಥೆ ಮಾಡುವ ಧೈರ್ಯ ಮಠಕ್ಕೆ ಇದೆ ಎಂದು ಡಾ.ಸರಳತ್ತಾಯ ತಿಳಿಸಿದರು. ಇದರೊಂದಿಗೆ ಅಡುಗೆ ವ್ಯವಸ್ಥೆಯನ್ನು ಮತ್ತಷ್ಟು ಸ್ವಾವಲಂಬಿ ಮಾಡುವ ಉದ್ದೇಶದಿಂದ ಬಯೋಗ್ಯಾಸ್ ಘಟಕ ಅಳವಡಿಸುವ ಕಾರ್ಯವೂ ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಕುಂದಾಪುರ: ಮುಚ್ಚುವ ಭೀತಿಯಲ್ಲಿ ಹೊಟೇಲ್ಗಳು ಕುಂದಾಪುರ: ಮಧ್ಯಪ್ರಾಚ್ಯ ಯುದ್ದದ ಪರಿಣಾಮ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಕುಂದಾಪುರ-ಬೈಂದೂರು ತಾಲೂಕುಗಳಲ್ಲಿ ಹೊಟೇಲ್ ಉದ್ಯಮಗಳು, ದೇವಸ್ಥಾನಗಳು ಸಂಕಷ್ಟಕ್ಕೆ ಸಿಲುಕಿ ಕೊಂಡಿವೆ ಎಂದು ವರದಿಯಾಗಿದೆ. ಆದರೆ ಶಾಲೆಗಳಲ್ಲಿ ಬಿಸಿಯೂಟ ಯೋಜನೆಗೆ ಇನ್ನೂ ಯಾವುದೇ ಸಮಸ್ಯೆಗಳು ಈವರೆಗೆ ಕಂಡುಬಂದಿಲ್ಲ. ಕುಂದಾಪುರ ಹಾಗೂ ಬೈಂದೂರು ನಗರದಲ್ಲಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಇಲ್ಲದ ಕಾರಣ ಆಹಾರೋದ್ಯಮದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಎರಡೂ ತಾಲೂಕಿನ ಬಹುತೇಕ ಹೊಟೇಲ್ಗಳು ಮುಚ್ಚುವ ಭೀತಿ ಎದುರಾಗಿದೆ. ಕೆಲ ಕಡೆಗಳಲ್ಲಿ ಈಗಾಗಲೇ ಕಟ್ಟಿಗೆ ಒಲೆಯಲ್ಲಿ ಅಡುಗೆ ತಯಾರಿಸುತ್ತಿದ್ದು, ಕೆಲವೇ ಕೆಲವು ಆಯ್ದ ಆಹಾರ ಪದಾರ್ಥಗಳನ್ನು ಮಾತ್ರವೇ ತಯಾರಿಸಿ ಗ್ರಾಹಕರಿಗೆ ನೀಡುತ್ತಿವೆ. ಅಲ್ಲದೆ ಅನಿಲ ಸಮಸ್ಯೆ ಗ್ರಾಮೀಣ ಭಾಗಗಳಿಗೂ ತಟ್ಟಿದ್ದು ಉಭಯ ತಾಲೂಕಿನ ಬಹುತೇಕ ಹಳ್ಳಿ ಪ್ರದೇಶದಲ್ಲಿ ಚಿಕ್ಕಪುಟ್ಟ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದವರು ತಾಪತ್ರಯ ಪಡುವಂತಾಗಿದೆ. ಈ ಬಗ್ಗೆ ಬೈಂದೂರಿನ ಗೋಳಿಹೊಳೆ ಎಮಬಲ್ಲಿನ ಹೊಟೇಲ್ ವರ್ತಕರೊಬ್ಬರು ತಮ್ಮ ಸಮಸ್ಯೆ ಹೇಳಿಕೊಂಡಿದ್ದು ಹೀಗೆ ಮುಂದುವರಿದರೆ ಬಾಗಿಲು ಹಾಕಬೇಕಾದ ಅನಿವಾರ್ಯತೆ ಇದೆ ಎಂದರು. ಅಡುಗೆ ಅನಿಲ ಸಮಸ್ಯೆಯಿಂದಾಗಿ ಹೊಟೇಲ್ ಉದ್ಯಮ ನಡೆಸುವುದು ಕಷ್ಟಕರವಾಗಿದೆ. ಗ್ರಾಹಕರಿಗೆ ಯಾವ ರೀತಿಯಲ್ಲಿ ಸೇವೆ ಕೊಡಬೇಕು ಎನ್ನುವ ಪ್ರಶ್ನೆ ತಲೆದೋರಿದೆ. ಈ ಸಮಸ್ಯೆ ಹೀಗೆಯೇ ಮುಂದುವರಿದರೆ ಹೊಟೇಲ್ ಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಹೊಟೇಲ್ ಕಾರ್ಮಿಕರ ಬದುಕು ಬೀದಿಗೆ ಬರಲಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು. ಈಗಾಗಲೇ ಬಹಳಷ್ಟು ಆಹಾರಗಳ ತಯಾರಿಕೆ ನಿಲ್ಲಿಸಿದ್ದೇವೆ. ಕಟ್ಟಿಗೆ ಒಲೆ ಬಳಸುವ ಪ್ರಯತ್ನವೂ ಗುರುವಾರ ಮಾಡಿದ್ದು ಬಹಳ ದಿನ ಮುಂದುವರಿಸುವುದು ಕಷ್ಟವಾಗಲಿದೆ ಎಂದು ಸಹನಾ ಗ್ರೂಪ್ ಆಪ್ ಹೊಟೇಲ್ ಉದ್ಯಮಿ ಸುರೇಂದ್ರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಶಹಾಪೂರ | ಬಿ.ಗುಡಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಕರವೇ ವಿರೋಧ
ಯಾದಗಿರಿ: ಶಹಾಪೂರನ ಭೀಮರಾಯನಗುಡಿಯಲ್ಲಿ ನಿರ್ಮಿಸಲು ಮುಂದಾಗಿರುವ ಪ್ರಜಾ ಸೌಧ ಯೋಜನೆಯನ್ನು ರದ್ದುಗೊಳಿಸಿ, ಪಟ್ಟಣದ ಹೃದಯ ಭಾಗದಲ್ಲಿರುವ ಹಳೆ ತಹಶೀಲ್ ಸಂಕೀರ್ಣದ ನಾಲ್ಕು ಎಕರೆ ಸರ್ಕಾರಿ ಜಾಗದಲ್ಲೇ ಪ್ರಜಾ ಸೌಧ ಕಟ್ಟಡ ನಿರ್ಮಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಮುಖಂಡರು ಆಗ್ರಹಿಸಿದ್ದಾರೆ. ಈ ಕುರಿತು ಶಹಾಪುರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಹೋರಾಟಗಾರರು, ಪಟ್ಟಣದ ಸರ್ವೆ ನಂ.376ರಲ್ಲಿ ಇರುವ ಹಳೆ ತಹಸೀಲ್ ಸಂಕೀರ್ಣವು 1967ರಿಂದ 2015ರವರೆಗೆ ಯಾವುದೇ ತೊಂದರೆಗಳಿಲ್ಲದೆ ನಗರ ಮಧ್ಯಭಾಗದಲ್ಲೇ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿಸಿದ್ದಾರೆ. ಮುಖ್ಯ ರಸ್ತೆ ಸಂಪರ್ಕ ಹಾಗೂ ಬಸ್ ಸೌಲಭ್ಯ ಇರುವುದರಿಂದ ಗ್ರಾಮೀಣ ಪ್ರದೇಶದ ಜನರು ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಬಸವೇಶ್ವರ ಚೌಕ್, ಕೋರ್ಟ್, ಕೃಷಿ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ ಮತ್ತು ಪೋಸ್ಟ್ ಆಫೀಸ್ ಸೇರಿದಂತೆ ಪ್ರಮುಖ ಸ್ಥಳಗಳಿಂದ ಸುಲಭವಾಗಿ ತಲುಪಲು ಅನುಕೂಲವಾಗುತ್ತಿತ್ತು ಎಂದು ಹೇಳಿದ್ದಾರೆ. ಆದರೆ ಪ್ರಸ್ತುತ ಭೀಮರಾಯನಗುಡಿಯಲ್ಲಿ ಪ್ರಜಾ ಸೌಧ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರಿಗೆ ಸಂಕಷ್ಟ ಉಂಟುಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕು ಕಚೇರಿಗೆ ಬರುವವರಲ್ಲಿ ಸುಮಾರು 80 ಶೇಕಡಾ ಜನರು ಗ್ರಾಮೀಣ ಪ್ರದೇಶದವರಾಗಿದ್ದು, ಹೊಸ ಸ್ಥಳಕ್ಕೆ ತೆರಳಲು ಆಟೋಗಳ ಅವಲಂಬನೆ ಅಗತ್ಯವಾಗುತ್ತದೆ. ಇದರಿಂದ ರೂ.50 ರಿಂದ 100ರವರೆಗೆ ಹೆಚ್ಚುವರಿ ವೆಚ್ಚವಾಗುತ್ತಿದ್ದು, ಬಡಜನತೆಗೆ ಇದು ಆರ್ಥಿಕ ಹೊರೆ ಆಗುತ್ತದೆ ಎಂದು ತಿಳಿಸಿದ್ದಾರೆ. ಹಳೆ ತಹಸೀಲ್ ಸಂಕೀರ್ಣದ ಜಾಗವು ಕಳೆದ 10 ವರ್ಷಗಳಿಂದ ಖಾಲಿ ಬಿದ್ದಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಅಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ಅಂಬ್ರೇಶ ಕಟ್ಟಿಮನಿ, ಮಲ್ಲಿಕಾರ್ಜುನ ದೋರನಹಳ್ಳಿ, ಹನುಮಂತ್ ರಾಯ ಗೌಡ ಶಕಪುರ್, ಯುವ ಘಟಕದ ಅಧ್ಯಕ್ಷರಾದ ಬಸ್ಸು ನಾಯ್ಕೋಡಿ, ರಾಘು ಗಂಗಾನಾಳ, ಪವನ್ ಯಡ್ರಾಮಿಕ್ಕಾರ್, ಭೀಮರಾಯ ಹೈಯ್ಯಾಳಕರ್, ಭೀಮಣ್ಣ ಮಾಲಿ ಪಾಟೀಲ್, ಸುರೇಶ್ ಹುಮ್ಮರ ದೋಡ್ಡಿ, ಪ್ರದೀಪ್ ಅಣಬಿ, ಹೊನ್ನಪ್ಪ ನಾಟೇಕರ್, ಶಂಕರ್ ಮದ್ರಿಕಿ, ಯಲ್ಲಪ್ಪ ಸಗರ, ದೇವು ಮಕ್ತಪೂರ, ಪರಶುರಾಮ ಶಿಕಾರಿ ಇದ್ದರು.
ಶಹಾಬಾದ್ನಲ್ಲಿ ಡಾ.ಫಾರೂಕ್ ಮಣ್ಣೂರರಿಂದ ಸೌಹಾರ್ದ ಇಫ್ತಾರ್ ಕೂಟ
ಶಹಾಬಾದ : ಪವಿತ್ರ ರಮಝಾನ್ ಹಬ್ಬದ ಅಂಗವಾಗಿ ಒಂದು ತಿಂಗಳುಗಳ ಕಾಲ ನಡೆಯುವ ಉಪವಾಸ ವೃತದ ಹಿನ್ನೆಲೆಯಲ್ಲಿ ಶಹಾಬಾದ್ ಪಟ್ಟಣದಲ್ಲಿ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ.ಫಾರುಕ್ ಮಣ್ಣೂರ ಅವರ ನೇತೃತ್ವದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆ ಮುಖ್ಯಸ್ಥ ಡಾ.ಫಾರುಕ್ ಮಣ್ಣೂರ, ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವುದೇ ಇಫ್ತಾರ್ ಕೂಟದ ಉದ್ದೇಶವಾಗಿದೆ. ಪ್ರೀತಿ, ಭಾಂದವ್ಯ, ಭಾತೃತ್ವ ಭಾವನೆಯನ್ನು ಮೂಡಿಸಲು ಈ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಾಗಿದೆ ಎಂದರು. ಮಾನವ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು. ಜಮಿಯಾ ಮಸ್ಜಿದ್ ಕಮಿಟಿ ಅಧ್ಯಕ್ಷ ಮತೀನ್ ಪಟೇಲ್ ಮಾತನಾಡಿ, ʼಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಲು ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಭಿನ್ನ ಧರ್ಮಗಳ ಸಾರ ಒಂದೇ ಮಾನವೀಯ ಮೌಲ್ಯಗಳನ್ನು ಸಾರುತ್ತದೆ ಎಂಬುದನ್ನು ಜನರಿಗೆ ತಿಳಿಸಲು ಸೌಹಾರ್ದ ಕೂಟಗಳಂತಹ ಕಾರ್ಯಕ್ರಮಗಳು ಮುಖ್ಯ ಪಾತ್ರವಹಿಸುತ್ತವೆʼ ಎಂದರು. ಈ ಸಂದರ್ಭದಲ್ಲಿ ಪರುಶುರಾಮ ವನಾಜುಕರ್, ಜನಾಬ್ ಫಕ್ರುದ್ದೀನ್ ಸಾಹೇಬ್, ರಾಚಯ್ಯ ಸ್ವಾಮಿ, ಜನಾಬ್ ಜಮೀರ್ ಅಹ್ಮದ್ ಪಟ್ವೇರ್ಗರ್, ಮೊಹಮ್ಮದ್ ಮಸ್ತಾನ್, ಡಾ.ಅಹ್ಮದ್ ಪಟೇಲ್, ಜನಾಬ್ ಅಬ್ದುಲ್ ಗಣಿ, ಅಮ್ಜದ್ ಜಮಾದಾರ್, ಹರೀಶ್ ಕಾರ್ಣಿಕ್, ಮೊಹಮ್ಮದ್ ಜುನೈದ್, ಮೊಹಮದ್ ಇಮ್ರಾನ್, ಸೋಯಲ್ ಖುಸ್ರೊ ಸೇರಿದಂತೆ ಹಲವರು ಇದ್ದರು. ಪವಿತ್ರ ರಮಝಾನ್ ಮಾಸದಲ್ಲಿ ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳಲು ಇಂತಹ ಸೌಹಾರ್ದತೆಯ ಕೂಟಗಳು ಅತ್ಯಂತ ಅವಶ್ಯಕವಾಗಿವೆ. -ಡಾ. ಫಾರುಕ್ ಮಣ್ಣೂರ, (ಸಮಾಜ ಸೇವಕ)
ವಾಡಿ | ಜಗಜೀವನ್ ರಾಮ್ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾಗಿ ಶರಣು ಮರತೂರ ಆಯ್ಕೆ
ವಾಡಿ: ಪಟ್ಟಣದಲ್ಲಿ ಎ.12ರಂದು ನಡೆಯಲಿರುವ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮದಿನ ಆಚರಣೆಗೆ ಜಯಂತ್ಯೋತ್ಸವ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸ್ಥಳೀಯ ಮಾದಿಗ ಸಮಾಜದ ಅಧ್ಯಕ್ಷರಾದ ರಾಜು ಮುಕ್ಕಣ್ಣಾ ಹಾಗೂ ಸಮುದಾಯದ ಹಿರಿಯ ಮುಖಂಡರ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪದಾಧಿಕಾರಿಗಳು: ಚಂದಪ್ಪ ಕಟ್ಟಿಮನಿ (ಗೌರವಾಧ್ಯಕ್ಷರು), ಶರಣು ಮರತುರ (ಅಧ್ಯಕ್ಷರು), ಕುಮಾರ ರಾಮಚಂದರ ದಾಸ (ಕಾರ್ಯಾಧ್ಯಕ್ಷರು), ಜಗದೀಶ ಮುಕ್ಕನಾಳ (ಪ್ರಧಾನ ಕಾರ್ಯದರ್ಶಿ), ರಾಜು ರಾಮಪುರಹಳ್ಳಿ, ಸಿದ್ದಾರ್ಥ ಜಂಗಮ, ಶಶಿ ಅರೋಲಿಕರ, ಶಿವಕುಮಾರ ತುಮಕೂರಕರ (ಉಪಾಧ್ಯಕ್ಷರು), ವಿಜಯಕುಮಾರ ಯಲಗಟ್ಟಿ, ಮಲ್ಲಿಕಾರ್ಜುನ ಚಾಮನಳ್ಳಿ, ಈಶ್ವರ ಹೊಸಮನಿ, ಚಂದು ಕಾಂಬಳೆ (ಸಹ ಕಾರ್ಯದರ್ಶಿಗಳು) ಅನಿಲ್ ಮುದ್ನಾಳ (ಖಜಾಂಚಿ), ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಾಯಚೂರು | ಪದವಿಪೂರ್ವ ಶಿಕ್ಷಣ ಇಲಾಖೆಯ ಆಡಳಿತ ವರ್ಗಾವಣೆ ಪ್ರಸ್ತಾವನೆ ಖಂಡನೆ : ಉಪನ್ಯಾಸಕರ ಸಂಘದಿಂದ ಮನವಿ
ರಾಯಚೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಸರ್ಕಾರದ ಪ್ರಸ್ತಾವನೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ರಾಯಚೂರು ಜಿಲ್ಲಾ ಘಟಕವು ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಪದವಿಪೂರ್ವ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಪ್ರಸ್ತಾವನೆ ಜಾರಿಯಾದರೆ ಶಿಕ್ಷಣ ಇಲಾಖೆಯ ಸ್ವಾಯತ್ತತೆ ಹಾಗೂ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಶಿಕ್ಷಣ ಇಲಾಖೆಯಲ್ಲಿಯೇ ತೆಗೆದುಕೊಳ್ಳುವುದು ಸೂಕ್ತ. ಆಡಳಿತಾತ್ಮಕ ನಿಯಂತ್ರಣವನ್ನು ಬೇರೆ ಇಲಾಖೆಗೆ ವರ್ಗಾಯಿಸುವುದು ಶಿಕ್ಷಣ ವ್ಯವಸ್ಥೆಯ ಕಾರ್ಯಕ್ಷಮತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ನರಸಪ್ಪ ಭಂಡಾರಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಈ ಪ್ರಸ್ತಾವನೆಯನ್ನು ಹಿಂಪಡೆದು ಪದವಿಪೂರ್ವ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ನಿಯಂತ್ರಣವನ್ನು ಹಳೆಯಂತೆಯೇ ಮುಂದುವರಿಸಬೇಕು ಎಂದು ಉಪನ್ಯಾಸಕರ ಸಂಘವು ಮನವಿಯಲ್ಲಿ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷರಾದ ನರಸಪ್ಪ ಭಂಡಾರಿ , ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಪಾಟೀಲ್ , ಖಚಾಂಚಿ ನರಸಪ್ಪ ಐಲಿ , ಉಪನ್ಯಾಸಕರಾದ ಕುಟೆಂಪ್ಪ ಗೌರಿಪುರ , ವೀರೇಶ್ ಸೆರೆಗಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹುಲಸೂರು | ಕಿಡ್ನಿ ಸಂಬಂಧಿತ ಕಾಯಿಲೆ ತಡೆಯಲು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು : ಡಾ.ಶಶಿಕಾಂತ್ ಕಾನಡೆ
ಹುಲಸೂರು : ಕಿಡ್ನಿ ಸಂಬಂಧಿತ ಕಾಯಿಲೆ ತಡೆಯಲು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಡಾ.ಶಶಿಕಾಂತ್ ಕಾನಡೆ ಅವರು ಹೇಳಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಿಡ್ನಿ ದೇಹದ ಪ್ರಮುಖ ಅಂಗವಾಗಿದ್ದು, ಅದನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಮತೋಲನ ಆಹಾರ, ಸಾಕಷ್ಟು ನೀರು ಸೇವನೆ, ನಿಯಮಿತ ವ್ಯಾಯಾಮ ಮತ್ತು ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣ ಅಗತ್ಯವೆಂದು ತಿಳಿಸಿದರು. ಈ ವೇಳೆ ಕಿಡ್ನಿ ರೋಗಗಳ ಲಕ್ಷಣಗಳು, ತಡೆಗಟ್ಟುವ ಕ್ರಮಗಳು ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಮಾಹಿತಿ ನೀಡಲಾಯಿತು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ಕಿಡ್ನಿ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಹುಮನಾಬಾದೆ, ಸಂತೋಷ್ ಕಾಳೆ, ಆರೋಗ್ಯ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳಾದ ಪ್ರಣಾಮ್, ಸಚಿನ್, ಶಿವಶಾಂತ್ ಹಾಗೂ ರೋಹಿತ್ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
ವದಮುಂಬೈ, ಮಾ. 12: ಸೌದಿ ಅರೇಬಿಯದಿಂದ ಕಚ್ಚಾ ತೈಲವನ್ನು ಹೇರಿಕೊಂಡ ಲೈಬೀರಿಯ ಧ್ವಜಧಾರಿ ತೈಲ ಹಡಗು ‘ಶೆನ್ಲೋಂಗ್ ಸೂಝ್ಮ್ಯಾಕ್ಸ್’ ಬುಧವಾರ ಮುಂಬೈ ಬಂದರನ್ನು ತಲುಪಿದೆ. ಇದು ಇರಾನ್-ಅಮೆರಿಕ ಸಂಘರ್ಷ ಆರಂಭಗೊಂಡಂದಿನಿಂದ ಹಾರ್ಮುಜ್ ಜಲಸಂಧಿಯನ್ನು ಹಾದು ಭಾರತಕ್ಕೆ ಬಂದ ಮೊದಲ ತೈಲ ಹಡಗಾಗಿದೆ. ಸೌದಿ ಅರೇಬಿಯದ ರಾಸ್ ತನುರ ಬಂದರಿನಲ್ಲಿ ಮಾರ್ಚ್ ಒಂದರಂದು ಈ ತೈಲ ಹಡಗಿಗೆ ಕಚ್ಚಾತೈಲ ತುಂಬಿಸಲಾಗಿತ್ತು. ಅದು ಮಾರ್ಚ್ 3ರಂದು ಬಂದರಿನಿಂದ ಹೊರಟಿತ್ತು. ಮಾರ್ಚ್ 8ರಂದು ಅದು ಹಾರ್ಮುಜ್ ಜಲಸಂಧಿಯಲ್ಲಿ ಇರುವುದನ್ನು ಸಾಗರ ಮಾರ್ಗ ಜಾಡು ಪತ್ತೆ ಹಚ್ಚುವ ದತ್ತಾಂಶಗಳು ತೋರಿಸಿದ್ದವು. ಬಳಿಕ, ಅದು ತಾತ್ಕಾಲಿಕವಾಗಿ ಜಾಡು ಪತ್ತೆ ಜಾಲದಿಂದ ತಾತ್ಕಾಲಿಕವಾಗಿ ಮರೆಯಾಗಿತ್ತು. ತೈಲ ಹಡಗು ಅತ್ಯಂತ ಅಪಾಯಕಾರಿ ಹಾರ್ಮುಜ್ ಜಲಸಂಧಿಯನ್ನು ಹಾದು ಹೋಗುತ್ತಿರುವಾಗ ತನ್ನ ಸ್ವಯಂಚಾಲಿತ ಗುರುತು ವ್ಯವಸ್ಥೆ (ಎಐಎಸ್) ಟ್ರಾನ್ಸ್ಪೋಂಡರನ್ನು ಸ್ಥಗಿತಗೊಳಿಸಿತು ಹಾಗೂ ಮಾರ್ಚ್ 9ರಂದು ಜಾಡು ಪತ್ತೆ ಜಾಲದಲ್ಲಿ ಮತ್ತೆ ಪ್ರತ್ಯಕ್ಷವಾಯಿತು ಎನ್ನಲಾಗಿದೆ. ಈ ಟ್ರಾನ್ಸ್ಪೋಂಡರ್ ಕಡ್ಡಾಯವಾಗಿ ಹೊಂದಬೇಕಾದ ಸಾಗರಯಾನ ವಿಎಚ್ಎಫ್ ರೇಡಿಯೊ ವ್ಯವಸ್ಥೆಯಾಗಿದೆ. ಅದು ಢಿಕ್ಕಿಗಳನ್ನು ತಪ್ಪಿಸುವ ಮತ್ತು ಯಾನವನ್ನು ಸುಧಾರಿಸುವ ದೃಷ್ಟಿಯಿಂದ ಸಮೀಪದಲ್ಲಿರುವ ಹಡಗುಗಳು ಮತ್ತು ತೀರದಲ್ಲಿರುವ ನಿಯಂತ್ರಣ ಕೇಂದ್ರಗಳಿಗೆ ಸ್ವಯಂಚಾಲಿತವಾಗಿ ಹಡಗಿನ ಗುರುತು, ಅದು ಇರುವ ಸ್ಥಳ, ವೇಗ ಮತ್ತು ದಾರಿಯ ವಿವರಗಳನ್ನು ಪ್ರಸಾರಮಾಡುತ್ತದೆ. ಈ ತೈಲ ಹಡಗು ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ಮುಂಬೈ ಬಂದರಿನಲ್ಲಿ ಲಂಗರು ಹಾಕಿದೆ. ಅದರಲ್ಲಿ 1,35,335 ಮೆಟ್ರಿಕ್ ಟನ್ ಕಚ್ಚಾತೈಲವಿದೆ. ಅದನ್ನು ಪೂರ್ವ ಮುಂಬೈಯ ಮಹುಲ್ನಲ್ಲಿರುವ ತೈಲಗಾರಗಳಿಗೆ ಪೂರೈಸಲಾಗುವುದು. ತೈಲ ಹಡಗಿನ ಮಾಲೀಕತ್ವವನ್ನು ಶೆನ್ಲೋಂಗ್ ಶಿಪ್ಪಿಂಗ್ ಲಿಮಿಟೆಡ್ ಹೊಂದಿದೆ. ಅದರ ನಿರ್ವಹಣೆಯನ್ನು ಅತೆನ್ಸ್ನ ಡೈನಕೋಮ್ ಟ್ಯಾಂಕರ್ ಮ್ಯಾನೇಜ್ಮೆಂಟ್ ಲಿಮಿಟೆಡ್ ನಡೆಸುತ್ತಿದೆ. ಹಡಗಿನ ಕ್ಯಾಪ್ಟನ್ ಭಾರತೀಯನಾಗಿದ್ದು, ಭಾರತೀಯರು, ಪಾಕಿಸ್ತಾನೀಯರು ಮತ್ತು ಫಿಲಿಪ್ಪೀನ್ ರಾಷ್ಟ್ರೀಯರು ಸೇರಿದಂತೆ 29 ಸಿಬ್ಬಂದಿ ಇದ್ದಾರೆ. ಆಯಕಟ್ಟಿನ ಹೋರ್ಮುಝ್ ಜಲಸಂಧಿಯಲ್ಲಿ ಹಾದು ಹೋಗಲು ಬಯಸುವ ಹಡಗುಗಳು ಇರಾನ್ನಿಂದ ಅನುಮೋದನೆ ಪಡೆದುಕೊಳ್ಳಬೇಕು, ಇಲ್ಲದಿದ್ದರೆ ಅಂಥ ಹಡಗುಗಳ ಮೇಲೆ ಇರಾನ್ ದಾಳಿ ನಡೆಸುತ್ತದೆ ಎಂಬ ಎಚ್ಚರಿಕೆಯನ್ನು ಇರಾನ್ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್ಜಿಸಿ)ನ ಕಮಾಂಡರ್ ನೀಡಿದ್ದರು. 2 ಹಡಗುಗಳ ಮೇಲೆ ದಾಳಿ: ಇರಾನ್ ಇರಾನ್ನ ಎಚ್ಚರಿಕೆಯನ್ನು ಕಡೆಗಣಿಸಿದ್ದ ಎರಡು ಹಡಗುಗಳ ಮೇಲೆ ಬುಧವಾರ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್ಜಿಸಿ)ನ ರಿಯರ್ ಅಡ್ಮಿರಲ್ ಅಲಿರೆಝ ತಂಗ್ಸಿರಿ ಹೇಳಿದ್ದಾರೆ. ‘‘ಎಕ್ಸ್ಪ್ರೆಸ್ ರೋಮ್ ಮತ್ತು ಮಯೂರೀ ನಾರೀ ಎಂಬ ಹೆಸರಿನ ಎರಡು ಹಡಗುಗಳು ಪೊಳ್ಳು ಭರವಸೆಗಳನ್ನು ನಂಬಿ ಎಚ್ಚರಿಕೆಯನ್ನು ಗಾಳಿಗೆ ತೂರಿ ಹಾರ್ಮುಜ್ ಜಲಸಂಧಿಯನ್ನು ದಾಟಲು ತಯಾರಾಗಿದ್ದವು. ಆದರೆ, ಅವುಗಳನ್ನು ಹಿಡಿಯಲಾಯಿತು. ಈ ಜಲಸಂಧಿಯ ಮೂಲಕ ಹಾದು ಹೋಗ ಬಯಸುವ ಯಾವುದೇ ಹಡಗು ಇರಾನ್ನಿಂದ ಅನುಮತಿ ಪಡೆದುಕೊಳ್ಳಬೇಕು’’ ಎಂದು ಇರಾನ್ ಜನರಲ್ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ. ಥಾಯ್ಲೆಂಡ್ ಧ್ವಜ ಹೊಂದಿರುವ ಸರಕು ಹಡಗು ‘ಮಯೂರೀ ನಾರೀ’ ಗುಜರಾತ್ನ ಕಾಂಡ್ಲಾ ಬಂದರಿನತ್ತ ಪ್ರಯಾಣಿಸುತ್ತಿತ್ತು. ಹೋರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಬಯಸುವ ಹಡಗುಗಳ ಮೇಲಿನ ನಿರ್ಬಂಧಗಳನ್ನು ಇರಾನ್ ತೀವ್ರಗೊಳಿಸಿದೆ ಎಂದು ಇರಾನ್ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಮತ್ತು ಇಸ್ರೇಲ್ನ ಹಿತಾಸಕ್ತಿಗಳಿಗಾಗಿ ಕೆಲಸ ಮಾಡದಿರುವ ಹಡಗುಗಳು ಈ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದುಹೋಗಬಹುದಾಗಿದೆ ಎಂದು ಅವು ಹೇಳಿವೆ.
ಬೀದರ್ | ರೈತರಿಗೆ ವಿದ್ಯುತ್ ಕೊರತೆ : ಕ್ರಮಕ್ಕೆ ಆಗ್ರಹ
ಬೀದರ್ : ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಹಗಲಲ್ಲಿಯೂ ವಿದ್ಯುತ್ ಕಂಬಗಳ ಮೇಲಿನ ಬೀದಿ ದೀಪಗಳು ಉರಿಯುತ್ತಿದ್ದರಿಂದ ವಿದ್ಯುತ್ ವ್ಯರ್ಥವಾಗುತ್ತಿದೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ದೊರೆಯುತ್ತಿಲ್ಲ. ಹಾಗಾಗಿ ಹಗಲಲ್ಲಿ ಬೀದಿ ದೀಪಗಳು ಉರಿಯುತ್ತಿರುವುದು ಬಂದ್ ಮಾಡಬೇಕು ಎಂದು ಕನ್ನಡ ಸೇನೆ ಕರ್ನಾಟಕ ಸಂಘಟನೆ ಆಗ್ರಹಿಸಿದೆ. ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಗುರುವಾರ ಸಲ್ಲಿಸಿದ ಮನವಿ ಪತ್ರದಲ್ಲಿ, ಹಲವು ಗ್ರಾಮಗಳಲ್ಲಿ ಹಗಲಲ್ಲಿಯೂ ಬೀದಿ ದೀಪಗಳು ಉರಿಯುತ್ತಿರುವುದರಿಂದ ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ಆದ್ದರಿಂದ ಬೆಳೆಗಳಿಗೆ ನೀರುಣಿಸಲು ತೊಂದರೆ ಉಂಟಾಗುತ್ತಿದೆ. ಇದರಿಂದ ರೈತರು ಬೆಳೆಗಳನ್ನು ಬೆಳೆಸಲು ಪರದಾಡುವ ಸ್ಥಿತಿ ಉಂಟಾಗಿದ್ದು, ಬೆಳೆಗಳು ಒಣಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದ್ದರಿಂದ ಗ್ರಾಮಗಳಲ್ಲಿ ಹಗಲಿನಲ್ಲಿಯೂ ಉರಿಯುತ್ತಿರುವ ಬೀದಿ ದೀಪಗಳನ್ನು ಒಂದು ವಾರದೊಳಗೆ ಸಂಪೂರ್ಣವಾಗಿ ಬಂದ್ ಮಾಡಬೇಕು. ಇಲ್ಲವಾದಲ್ಲಿ ತಾಲೂಕು ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಕನ್ನಡ ಸೇನೆಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ ನಿರ್ಣಾ, ಜಿಲ್ಲಾಧ್ಯಕ್ಷ ಸುಭಾಷ್ ಕೆನಾಡೆ, ನಾಗಶೆಟ್ಟಿ ಸಜ್ಜನಶೆಟ್ಟಿ, ಉಪಾಧ್ಯಕ್ಷ ಪ್ರಭುಶೆಟ್ಟಿ ಪಸರಗಿ, ಕಾರ್ಯದರ್ಶಿ ರಮೇಶ್, ತಾಲೂಕಾಧ್ಯಕ್ಷ ರಾಜು ಮಂಗಲಪೇಟ್, ಶಿವಕುಮಾರ್, ಆನಂದ್ ಸಿಕೆಂದ್ರಪೂರ್, ಸೂರ್ಯಕಾಂತ್ ರಾಂಪೂರ್, ಅಡೆಪ್ಪಾ ಶೇರಿಕರ್ ಹಾಗೂ ಮಾರುತಿ ಇದ್ದರು.
ಇಂಧನ ಭದ್ರತೆ ಬಗ್ಗೆ ಇರಾನ್ ಜೊತೆ 3 ಬಾರಿ ಮಾತುಕತೆ : ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ
ಹೊಸದಿಲ್ಲಿ, ಮಾ. 12: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇತ್ತೀಚಿನ ದಿನಗಳಲ್ಲಿ ಇರಾನ್ ವಿದೇಶ ಸಚಿವರೊಂದಿಗೆ ಮೂರು ಬಾರಿ ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ. ಈ ಮಾತುಕತೆಗಳ ವೇಳೆ, ಪಶ್ಚಿಮ ಏಶ್ಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಹಡಗುಗಳ ಸುರಕ್ಷತೆ ಮತ್ತು ಭಾರತದ ಇಂಧನ ಭದ್ರತೆ ಬಗ್ಗೆ ಚರ್ಚಿಸಲಾಯಿತು ಎಂದು ಅದು ಹೇಳಿದೆ. ಇಬ್ಬರು ನಾಯಕರ ನಡುವಿನ ಇತ್ತೀಚಿನ ಮಾತುಕತೆಯಲ್ಲಿ ಸಾಗರಯಾನ ಸುರಕ್ಷತೆ ಮತ್ತು ಇಂಧನ ಪೂರೈಕೆ ಬಗ್ಗೆ ಮಾತುಕತೆ ಮಾತುಕತೆ ನಡೆಸಲಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು. ‘‘ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ನ ವಿದೇಶ ಸಚಿವರು ಇತ್ತೀಚಿನ ದಿನಗಳಲ್ಲಿ ಮೂರು ಬಾರಿ ಮಾತುಕತೆಗಳನ್ನು ನಡೆಸಿದ್ದಾರೆ. ಈ ಪೈಕಿ, ಕೊನೆಯ ಮಾತುಕತೆಯಲ್ಲಿ ಹಡಗುಯಾನದ ಸುರಕ್ಷತೆ ಮತ್ತು ಭಾರತದ ಇಂಧನ ಭದ್ರತೆಯ ಬಗ್ಗೆ ಚರ್ಚೆ ನಡೆಸಲಾಯಿತು. ಇದಕ್ಕಿಂತ ಹೆಚ್ಚಿನದನ್ನು ನಾನು ಈಗಲೇ ಹೇಳಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದರು. ಭಾರತದ ಬಳಕೆಗೆ ಉದ್ದೇಶಿಸಿಲಾಗಿರುವ ತೈಲವನ್ನು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿಸಲು ಇರಾನ್ ಅನುಮತಿ ನೀಡಿದೆ ಎಂಬ ವರದಿಗಳ ಕುರಿತ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು. ಅಝರ್ಬೈಜಾನ್ ಮತ್ತು ಆರ್ಮೇನಿಯ ಜೊತೆಗಿನ ಭೂಗಡಿಗಳ ಮೂಲಕ ಇರಾನ್ ತೊರೆಯಲು ಬಯಸುವ ತನ್ನ ನಾಗರಿಕರಿಗೆ ಭಾರತ ಸಹಾಯ ಮಾಡುತ್ತಿದೆ ಎಂಬುದಾಗಿಯೂ ಜೈಸ್ವಾಲ್ ತಿಳಿಸಿದರು. ‘‘ಇರಾನ್ನಲ್ಲಿ ಸುಮಾರು 9,000 ಭಾರತೀಯ ರಾಷ್ಟ್ರೀಯರಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳು, ನಾವಿಕರು, ವ್ಯಾಪಾರಿಗಳು, ವೃತ್ತಿಪರರು ಮತ್ತು ಯಾತ್ರಿಕರಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಭಾರತೀಯರು ಈಗಾಗಲೇ ಇರಾನ್ ತೊರೆದು ಭಾರತಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳು ಮತ್ತು ಯಾತ್ರಿಗಳು ಸೇರಿದಂತೆ ಟೆಹರಾನ್ನಲ್ಲಿದ್ದ ಹಲವು ಭಾರತೀಯರನ್ನು ನಾವು ಬೇರೆ ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದೇವೆ’’ ಎಂದರು.
ಹುಮನಾಬಾದ್ | ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ರೈತರ ಮನವಿ
ಹುಮನಾಬಾದ್ : ಡಾಕುಳಗಿ ಗ್ರಾಮದ ರೈತರು ತಮ್ಮ ಹೊಲಗಳಲ್ಲಿ ಎದುರಾದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ರೈತರು ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರಿಗೆ ನಗರದಲ್ಲಿ ಭೇಟಿ ಮಾಡಿ ಗುರುವಾರ ಮನವಿ ಮಾಡಿದರು. ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಡಾಕುಳಗಿ ಗ್ರಾಮದ ಬಹುತೇಕ ರೈತರ ಹೊಲ ಗದ್ದೆಗಳಲ್ಲಿ ಬೆಳೆದ ಸಮೃದ್ಧ ಬೆಳೆ ಹಾಳಾಗಿ ಹೋಗುತ್ತಿದೆ. ಹೀಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾತನಾಡಿ, ನಮಗೆ ಎದುರಾಗಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದು ರೈತರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜಶೇಖರ್ ಪಾಟೀಲ್, ಡಾಕುಳಗಿ ಗ್ರಾಮದ ರೈತರಿಗೆ ಆಗುತ್ತಿರುವ ವಿದ್ಯುತ್ ಸಮಸ್ಯೆ ಕುರಿತು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಂ.ಡಿ. ಶಫಿ ಅಲಿಭಾಯ್, ಸಾಬೀರ್ ಇನಾಮದಾರ್, ಬಸವರಾಜ್ ಜೀವಣಗಿ, ಅನಿಲ್ ಹಲಬುರ್ಗಿ, ಸಿದ್ದಯ್ಯ ಸ್ವಾಮಿ, ವಿರೇಶ್ ಮಠಪತಿ, ಶಿವಕುಮಾರ್ ರೆಡ್ಡಿ ಹಾಗೂ ಮಲ್ಲಪ್ಪ ಎಖ್ಖೇಳ್ಳಿ ಇದ್ದರು.
ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ಗೆ ಷರತ್ತುಬದ್ಧ ಜಾಮೀನು ನೀಡಿದ ವಿಶೇಷ ನ್ಯಾಯಾಲಯ
ಬೆಂಗಳೂರು: ರೌಡಿ ಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು (Anticipatory Bail) ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದ ಬೆನ್ನಲ್ಲೇ ಬಂಧನಕ್ಕೊಳಗಾಗಿದ್ದ ಬೈರತಿ ಬಸವರಾಜ್ ನಿಯಮಿತ ಜಾಮೀನು (Regular Bail) ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಪ್ರಕರಣ ಸಂಬಂಧ ಅರ್ಜಿದಾರರನ್ನು ಈಗಾಗಲೇ ಪೊಲೀಸ್ ವಶದಲ್ಲಿಟ್ಟುಕೊಂಡು ನಡೆಸಿರುವ ವಿಚಾರಣೆ ಪೂರ್ಣಗೊಂಡಿದ್ದು, ಮತ್ತೆ ಪೊಲೀಸ್ ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂಬ ಅಂಶ ತನಿಖಾಧಿಕಾರಿಗಳು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಿಂದ ತಿಳಿಯಲಿದೆ. ಆದ್ದರಿಂದ, ಅರ್ಜಿದಾರರಿಗೆ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಅರ್ಜಿದಾರರು 2 ಲಕ್ಷ ರೂ. ಬಾಂಡ್ ನೀಡಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಸಾಕ್ಷ್ಯ ತಿರುಚಲು ಅಥವಾ ನಾಶಪಡಿಸಲು ಯತ್ನಿಸಬಾರದು. ತನಿಖಾಧಿಕಾರಿಗಳು ಸೂಚಿಸಿದಾಗ ಅವರ ಮುಂದೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು, ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ತೊರೆದು ಹೋಗಬಾರದು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಸಕಾರಣವಿಲ್ಲದೆ, ವಿಚಾರಣೆ ಮುಂದೂಡಲು ಕೋರಬಾರದು. ತಿಂಗಳಿಗೆ ಒಂದು ದಿನ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಪಾಸ್ಪೋರ್ಟ್ ಅನ್ನು ತನಿಖಾಧಿಕಾರಿಗಳಿಗೆ ನೀಡಿರುವ ಸಂಬಂಧ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಬೈರತಿ ಬಸವರಾಜ್ಗೆ ಜಾಮೀನು ಮಂಜೂರು ಮಾಡಲಾಗಿದೆ.
‘ಬೇರೆಯೇ ಕಾರಣಕ್ಕಾಗಿ ಮೋದಿ ಹೆದರಿಕೊಂಡಿದ್ದಾರೆ’ : ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಹೊಸದಿಲ್ಲಿ,ಮಾ.12: ದೇಶಾದ್ಯಂತ ಎಲ್ಪಿಜಿ ಪೂರೈಕೆ ಕೊರತೆಯುಂಟಾಗಿರುವ ಬಗ್ಗೆ ಉದ್ಭವಿಸಿರುವ ಕಳವಳಗಳ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘‘ಎಲ್ಪಿಜಿ ಪೂರೈಕೆ ಬಗ್ಗೆ ಜನರು ಗಾಬರಿಗೊಳ್ಳಬಾರದೆಂದು ಪ್ರಧಾನಿ ಹೇಳುತ್ತಿದ್ದಾರೆ. ಆದರೆ ವಾಸ್ತವಿಕವಾಗಿ ಅವರು ಸಂಪೂರ್ಣವಾಗಿ ಬೇರೆಯೇ ಆದ ಕಾರಣಕ್ಕಾಗಿ ಭಯಭೀತರಾಗಿದ್ದಾರೆ’’ ಎಂದು ಟೀಕಿಸಿದ್ದಾರೆ. ಎಪ್ಸ್ಟೈನ್ ಫೈಲ್ಸ್ ಹಗರಣ ಹಾಗೂ ಅಮೆರಿಕದಲ್ಲಿ ಆದಾನಿ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರು ಭಯಗೊಂಡಿದ್ದಾರೆಂದು ಗಾಂಧಿ ಆಪಾದಿಸಿದ್ದಾರೆ. ದೇಶದಲ್ಲಿ ಎಲ್ಪಿಜಿ ಕೊರತೆನ್ನು ಖಂಡಿಸಿ ಗುರುವಾರ ತಾನು ಹಾಗೂ ಪ್ರಿಯಾಂಕಾಗಾಂಧಿ ವಾದ್ರಾ ಸೇರಿದಂತೆ ಹಲವಾರು ಪ್ರತಿಪಕ್ಷ ಸಂಸದರು ಸಂಸತ್ಭವನ ಸಂಕೀರ್ಣದ ಮಕರದ್ವಾರದ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ರಾಹುಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ. ಸಂಸತ್ಭವನ ಸಂಕೀರ್ಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಿಯಾಂಕಾಗಾಂಧಿ ಸೇರಿದಂತೆ ಹಲವಾರು ಮಹಿಳಾ ಸಂಸದರು ಪಾಲ್ಗೊಂಡು ಇಟ್ಟಿಗೆ ಒಲೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಡಿಎಂಕೆ, ಟಿಎಂಸಿ ಹಾಗೂ ಎಸ್ಪಿ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಎಲ್ಪಿಜಿ ಕೊರತೆಯ ಬಗ್ಗೆ ಜನರು ಗಾಬರಿಗೊಳ್ಳಬೇಕಾಗಿಲ್ಲವೆಂದು ಪ್ರಧಾನಿ ಹೇಳುತ್ತಾರೆ. ಆದರೆ ಅವರು ಎಪ್ಸ್ಟೈನ್ ಕಾರಣಕ್ಕಾಗಿ, ಅಮೆರಿಕದಲ್ಲಿ ಆದಾನಿ ಪ್ರಕರಣದ ಕಾರಣಕ್ಕಾಗಿ ಭಯಗೊಂಡಿದ್ದಾರೆ. ಹೀಗಾಗಿ ಅವರಿಗೆ ಸದನಕ್ಕೆ ಬರಲು ಸಾಧ್ಯವಾಗುತ್ತಿಲ್ಲವೆಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಭಾಲ್ಕಿ | ಮಹಿಳೆಯ ಸಾಮರ್ಥ್ಯಕ್ಕೆ ಸಾಟಿ ಇಲ್ಲ : ನಿರ್ಮಲಾ ಬಿರಾದಾರ್
ಭಾಲ್ಕಿ : ಮಹಿಳೆ ಮನಸ್ಸು ಮಾಡಿದರೆ ಅವಳಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಮಹಿಳೆಯ ಸಾಮರ್ಥ್ಯಕ್ಕೆ ಸಾಟಿ ಇಲ್ಲ ಎಂದು ವಿಶ್ರಾಂತ ಉಪನ್ಯಾಸಕಿ ನಿರ್ಮಲಾ ಬಿರಾದಾರ್ ಅಭಿಪ್ರಾಯಪಟ್ಟರು. ಪಟ್ಟಣದ ಕೆ ಎಚ್ ಬಿ ಕಾಲೋನಿಯ ಶಿವಂ ಹಲ್ಲಿನ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಮಹಿಳಾ ಶಕ್ತಿ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯ ಸಾಮರ್ಥ್ಯಕ್ಕೆ ಸಾಟಿ ಇಲ್ಲ. ಆಕೆ ಉತ್ತುಂಗದ ಸಾಧನೆ ಮಾಡಬಹುದು. ತನ್ನ ಮಕ್ಕಳನ್ನು ದೇಶದ ಅತ್ಯುನ್ನತ ಸ್ಥಾನಕ್ಕೂ ಏರಿಸಬಹುದು ಎಂದು ಅವರು ತಿಳಿಸಿದರು. ದೇವಿಕಾ ಭಾಲ್ಕೆ ಅವರು ಮಾತನಾಡಿ, ಮಹಿಳೆ ಎಂದರೆ ಆದಿಶಕ್ತಿ ಸ್ವರೂಪ. ಅವಳಲ್ಲಿ ಪ್ರೀತಿ, ವಿಶ್ವಾಸ, ತಾಳ್ಮೆ ಇರುತ್ತದೆ. ಹೊಂದಾಣಿಕೆ ಸುಖಿ ಕುಟುಂಬದ ಸೂತ್ರಧಾರಿ ಮಹಿಳೆಯಾಗಿದ್ದಾಳೆ ಎಂದರು. ವನಮಾಲಾ ಪಾಟೀಲ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕಿ ಸಂಗೀತಾ ನಿಟ್ಟೂರೆ, ದೀಪಾ ಚಿಟಗುಪ್ಪೆ, ಪ್ರತಿಭಾ ಪಾಟೀಲ್, ಸಾವಿತ್ರಿ ದಾಡಗೆ, ಆರತಿ ಬಿರಾದಾರ್, ಸುವರ್ಣಾ ಡಿಗ್ಗೆ, ಮಹಾದೇವಿ ಬಿರಾದಾರ್, ಗೀತಾ ಪಾಟೀಲ್, ಸುನಿತಾ ಲಾಂಚಕರ್, ಕಾವೇರಿ ಪಂಚಾಕ್ಷರೆ, ಮಮತಾ ಬಿರಾದಾರ್, ಸಾವಿತ್ರಿ ಗುಂಗೆ, ಶಿಕ್ಷಕಿ ರಜನಿ, ಪ್ರೀಯಾ ಪಾಟೀಲ್, ಕವಿತಾ, ದಾಕ್ಷಾಯಣಿ, ಮಹಾದೇವಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತಾ ನಿಟ್ಟೂರೆ ಸ್ವಾಗತಿಸಿದರು. ಪ್ರೀಯಾ ಪಾಟೀಲ್ ವಂದಿಸಿದರು. ಮಹಿಳೆಯರು ಸಂವಿಧಾನಬದ್ಧವಾಗಿ ತಮಗೆ ದೊರೆತಿರುವ ಕಾನೂನು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿಕೊಂಡಾಗ ಮಾತ್ರ ಸಬಲೀಕರಣ ಸಾಧ್ಯ. ಮಹಿಳೆ ಅಬಲೆಯಲ್ಲ, ಸಬಲೆ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಅಡಿಗೆ ಮನೆಗೆ ಸೀಮಿತವಾಗದೆ ಸಮಾಜದ ಮುಖ್ಯ ವಾಹಿನಿಯಲ್ಲಿ ಭಾಗವಹಿಸಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. - ಸಂಗೀತಾ ವಿನಾಯಕ ನಿಟ್ಟೂರೇ, ಶಿಕ್ಷಕಿ ಮಹಿಳೆಯು ಭೋಗದ ವಸ್ತುವಲ್ಲ. ಆಕೆ ಕುಟುಂಬ ಮತ್ತು ಸಮಾಜವನ್ನು ಮುನ್ನಡೆಸುವ ಶಕ್ತಿಯಾಗಿದ್ದಾಳೆ. ಮಹಿಳೆಯರ ಶಿಕ್ಷಣ, ಆತ್ಮ ಗೌರವ ಹಾಗೂ ಸ್ವಾವಲಂಬನೆಯ ಮೂಲಕ ಮುಂದೆ ಬಂದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಸಮಾಜದಲ್ಲಿ ನಾಯಕತ್ವ ವಹಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. - ಶೃತಿ ಬಿಜಿ ಪಾಟೀಲ್, ಬಸವ ಭಾಗ್ಯ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ
ಭಾರತದಲ್ಲಿ ಇಂಧನದ ಕೊರತೆಯಿಲ್ಲ : ಸಂಸತ್ತಿಗೆ ಮಾಹಿತಿ ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿ
ಹೊಸದಿಲ್ಲಿ,ಮಾ.12: ಪಶ್ಚಿಮ ಏಶ್ಯಾ ಬಿಕ್ಕಟ್ಟು ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಸಾಗಣೆಗೆ ಅಡ್ಡಿಯ ಹೊರತಾಗಿಯೂ ಭಾರತದ ಕಚ್ಚಾತೈಲ ಪೂರೈಕೆ ಸ್ಥಿತಿ ಸುರಕ್ಷಿತವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು. ಜಗತ್ತು ಇಂಧನ ಕ್ಷೇತ್ರದಲ್ಲಿ ವರ್ತಮಾನದ ಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ ಎಂದು ಹೇಳಿದ ಪುರಿ, ದಾಖಲಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಬೆಟ್ಟು ಮಾಡಿದರು. ಪಶ್ಚಿಮ ಏಶ್ಯಾದಲ್ಲಿ ಸಂಘರ್ಷಕ್ಕೆ ಭಾರತವು ಯಾವುದೇ ರೀತಿಯಲ್ಲಿ ಕಾರಣವಲ್ಲದಿದ್ದರೂ ಅದರ ಪರಿಣಾಮಗಳನ್ನು ಎದುರಿಸಬೇಕಿದೆ ಎಂದು ಹೇಳಿದ ಅವರು, ತೈಲ ಸಂಸ್ಕರಣಾಗಾರಗಳು ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯಾಚರಿಸುತ್ತಿವೆ. ಹಲವಾರು ಸಂದರ್ಭಗಳಲ್ಲಿ ಅವು ಶೇ.100ಕ್ಕೂ ಹೆಚ್ಚಿನ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ. ಪೆಟ್ರೋಲ್, ಡೀಸಿಲ್, ಸೀಮೆಎಣ್ಣೆ ಅಥವಾ ವಿಮಾನ ಇಂಧನದ ಕೊರತೆಯಿಲ್ಲ. ಈ ಎಲ್ಲ ಇಂಧನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದರು. ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ವ್ಯಕ್ತಪಡಿಸಿದ ಕಳವಳಗಳಿಗೆ ಉತ್ತರಿಸಿದ ಪುರಿ, ಭಾರತದಲ್ಲಿಯ 33 ಕೋಟಿ ಕುಟುಂಬಗಳು ಯಾವುದೇ ಇಂಧನ ಕೊರತೆಯನ್ನು ಎದುರಿಸದಿರಲು ಮೋದಿ ಸರಕಾರವು ಅತ್ಯಂತ ಹೆಚ್ಚಿನ ಆದ್ಯತೆ ನೀಡಿದೆ. ಭಾರತವು ವರ್ಷಗಳಿಂದಲೂ ತನಗೆ ಕಚ್ಚಾತೈಲ ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸುತ್ತಲೇ ಬಂದಿದೆ ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ತೈಲ ಸಾಗಣೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದು ತಿಳಿಸಿದರು.
ಬೀದರ್ | ಎಲ್ಲಾ ಧರ್ಮಗಳನ್ನು ಪ್ರೀತಿಸಿ ಗೌರವಿಸಿ : ವಿಶ್ವನಾಥ್ ಸ್ವಾಮಿ
ಲಾಲ್ ಬಹಾದ್ದೂರ್ ಶಿಕ್ಷಣ ಸಂಸ್ಥೆಯಲ್ಲಿ ಸೌಹಾರ್ದ ಇಫ್ತಾರ್ ಕೂಟ
ಬೀದರ್ | ಜಿಲ್ಲೆಯಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ಇಲ್ಲ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್: ಜಿಲ್ಲೆಯಲ್ಲಿ ಗೃಹ ಬಳಕೆಯ ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ ಗ್ರಾಹಕರು ಗಾಬರಿಗೊಳ್ಳಬಾರದು ಹಾಗೂ ಹೆಚ್ಚುವರಿಯಾಗಿ ಸಿಲಿಂಡರ್ ಸಂಗ್ರಹಿಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೂಡಬಾರದು ಎಂದು ಮನವಿ ಮಾಡಿದ್ದಾರೆ. ಹೆಚ್ಚಿನ ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಐವಿಆರ್ಎಸ್ ಹಾಗೂ ಮಿಸ್ಡ್ ಕಾಲ್ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಸಿಸ್ಟಮ್ಗಳು ಕಾರ್ಯನಿರ್ವಹಿಸಲು ತೊಂದರೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಪರ್ಯಾಯವಾಗಿ Indian Oil Corporation (IOCL), Hindustan Petroleum (HPCL) ಹಾಗೂ Bharat Petroleum (BPCL) ಕಂಪನಿಗಳ ವಾಟ್ಸಾಪ್ ಸಂಖ್ಯೆಗಳ ಮೂಲಕವೂ ಗ್ರಾಹಕರು ಗ್ಯಾಸ್ ಬುಕ್ಕಿಂಗ್ ಮಾಡಬಹುದು ಎಂದು ತಿಳಿಸಿದ್ದಾರೆ. ಮಾರ್ಚ್ 11ರಂದು ಜಿಲ್ಲೆಯ ಗ್ಯಾಸ್ ಏಜೆನ್ಸಿದಾರರು ಹಾಗೂ ಹೋಟೆಲ್ ಉದ್ಯಮಿದಾರರ ಸಭೆ ನಡೆಸಲಾಗಿದ್ದು, ವಾಣಿಜ್ಯ ಸಿಲಿಂಡರ್ಗಳ ಲಭ್ಯತೆ ಕುರಿತು ಚರ್ಚೆ ಮಾಡಲಾಗಿದೆ. ಹೋಟೆಲ್ಗಳಲ್ಲಿ ಲಭ್ಯವಿರುವ ಸಿಲಿಂಡರ್ಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು ಹಾಗೂ ಗ್ಯಾಸ್ ಏಜೆನ್ಸಿಗಳಲ್ಲಿ ಇರುವ ಸ್ಟಾಕ್ ಅನ್ನು ಅಗತ್ಯವಿರುವ ಹೋಟೆಲ್ಗಳಿಗೆ ಸರಬರಾಜು ಮಾಡಲು ಸೂಚಿಸಲಾಗಿದೆ. ಯಾರೂ ಅನಗತ್ಯವಾಗಿ ಹೆಚ್ಚಿನ ಸಿಲಿಂಡರ್ಗಳನ್ನು ಸಂಗ್ರಹಣೆ ಮಾಡುವುದು ಅಥವಾ ಮಾರ್ಗಾಂತರ ಮಾಡುವುದನ್ನು ತಪ್ಪಿಸಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಅಗತ್ಯ ವಸ್ತುಗಳ ಕಾಯ್ದೆ 1955 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಎಲ್ಪಿಜಿ ಸಿಲಿಂಡರ್ಗಳ ಕೊರತೆ ಇಲ್ಲದಿರುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಭುಗಿಲೆದ್ದ ಯುದ್ಧದ ಕಿಚ್ಚು: ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ ಮೊಜ್ತಬಾ ಖಮೇನಿ!
Mojtaba Khamenei: ಅಮೆರಿಕ ಮತ್ತು ಇಸ್ರೇಲ್ನ ದಾಳಿಗಳಿಗೆ ಸಂಬಂಧಿಸಿದಂತೆ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಶತ್ರುಗಳಿಂದ ನಾವು ಪರಿಹಾರ ಪಡೆಯುತ್ತೇವೆ ಅಥವಾ ಅಷ್ಟೇ ಪ್ರಮಾಣದಲ್ಲಿ ಅವರ ಆಸ್ತಿಪಾಸ್ತಿಗಳನ್ನು ನಾಶ ಮಾಡುತ್ತೇವೆ ಎಂದು ಅವರು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ವಿರುದ್ಧ ಆರ್ಥಿಕ ಮತ್ತು ಭದ್ರತಾ ಒತ್ತಡ ಹೇರುವ ಉದ್ದೇಶದಿಂದ
ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತ್ಯು: ನ್ಯಾಯಯುತ ತನಿಖೆಗೆ ರಾಹುಲ್ ಗಾಂಧಿ ಆಗ್ರಹ
ಹೊಸದಿಲ್ಲಿ, ಮಾ.12: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರು ಜನವರಿ 28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣದ ಕುರಿತು ನ್ಯಾಯಯುತ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಯ ದಿವಂಗತ ನಾಯಕನ ಸಾವಿನ ಕುರಿತು ಅವರ ಕುಟುಂಬದವರು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಂಪೂರ್ಣ ತನಿಖೆ ನಡೆಸಬೇಕೆಂಬ ಪವಾರ್ ಕುಟುಂಬದ ಬೇಡಿಕೆಯನ್ನು ರಾಹುಲ್ ಗಾಂಧಿ ಬೆಂಬಲಿಸಿದರು. ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ‘ಎನ್ಸಿಪಿ–ಎಸ್ಪಿ ನಾಯಕ ರೋಹಿತ್ ಪವಾರ್ ಇಂದು ನನ್ನನ್ನು ಭೇಟಿ ಮಾಡಿ, ಅಜಿತ್ ಪವಾರ್ ಸೇರಿದಂತೆ ಇತರರ ಜೀವಹಾನಿಗೆ ಕಾರಣವಾದ ಬಾರಾಮತಿ ವಿಮಾನ ಅಪಘಾತದ ತನಿಖೆ ಕುರಿತು ಗಂಭೀರ ಕಳವಳ ವ್ಯಕ್ತಪಡಿಸುವ ಪತ್ರವನ್ನು ಸಲ್ಲಿಸಿದ್ದಾರೆ’ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಕಾನೂನಿನ ಮೂಲಭೂತ ತತ್ವಗಳನ್ನು ಪಾಲಿಸಿಲ್ಲವೆಂದು ತೋರುತ್ತಿದ್ದು, ಘಟನೆ ಗಂಭೀರವಾಗಿದ್ದರೂ ಇನ್ನೂ ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಈ ಘಟನೆಗೆ ನ್ಯಾಯಯುತ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ. ಎನ್ಸಿಪಿ ನಾಯಕ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವು ನಿಗೂಢ ಪರಿಸ್ಥಿತಿಯಲ್ಲಿ ಅಪಘಾತಕ್ಕೀಡಾದ ಹಿನ್ನೆಲೆ ಈ ಬೇಡಿಕೆಗಳು ಕೇಳಿಬಂದಿವೆ. ಬಲಿಪಶುವಿನ ಉನ್ನತ ರಾಜಕೀಯ ಸ್ಥಾನಮಾನವನ್ನು ಗಮನಿಸಿ ಮಹಾರಾಷ್ಟ್ರ ಸರ್ಕಾರವು ಪ್ರಕರಣವನ್ನು ತಕ್ಷಣವೇ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ಹಸ್ತಾಂತರಿಸಿತ್ತು. ಇದೇ ವೇಳೆ ಯಾವುದೇ ಅಕ್ರಮ ಅಥವಾ ಯಾಂತ್ರಿಕ ಹಾನಿ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಸಮಾನಾಂತರವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಿತ್ತು. ಆದಾಗ್ಯೂ ಅಂತಿಮ ತನಿಖಾ ವರದಿ ಹೊರಬರಲು ವಿಳಂಬವಾಗಿರುವುದು ರಾಜಕೀಯ ವಲಯಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಇದೀಗ ಸಚಿವರು ಮತ್ತು ಶಾಸಕರನ್ನು ಒಳಗೊಂಡ ಎನ್ಸಿಪಿ ನಿಯೋಗವು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ತನಿಖೆಯನ್ನು ತ್ವರಿತಗೊಳಿಸುವಂತೆ ಮನವಿ ಪತ್ರ ಸಲ್ಲಿಸಿದೆ. ಇದಕ್ಕೂ ಮುನ್ನ ಎನ್ಸಿಪಿ–ಎಸ್ಪಿ ನಾಯಕ ರೋಹಿತ್ ಪವಾರ್, ಅಪಘಾತ ನಿಜವಾಗಿಯೂ ದುರ್ಘಟನೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದನ್ನು ತಿಳಿಯಲು ಆಳವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಅವರ ಪ್ರಕಾರ, ಅಪಘಾತ ಸಂಭವಿಸಿದ ದಿನ ಬಾರಾಮತಿಯಲ್ಲಿ ಗೋಚರತೆ ಅತ್ಯಂತ ಕಡಿಮೆಯಾಗಿದ್ದು ಕೇವಲ 3,000 ಮೀಟರ್ ಮಾತ್ರ ಇತ್ತು. ವಿಮಾನದ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಅವರು ವಿಎಸ್ಆರ್ ವೆಂಚರ್ಸ್ ಸಂಸ್ಥೆಯ ಮಾಲೀಕ ವಿ.ಕೆ. ಸಿಂಗ್ ಅವರನ್ನು ಸಂಪರ್ಕಿಸಿ, ಹವಾಮಾನ ವೈಪರೀತ್ಯದಿಂದಾಗಿ ಟೇಕ್ಆಫ್ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆಯೆಂದು ರೋಹಿತ್ ಪವಾರ್ ಹೇಳಿದ್ದಾರೆ. ‘ಕ್ಯಾಪ್ಟನ್ ಕಪೂರ್ ಅವರು ಗೋಚರತೆ ಕಳಪೆಯಾಗಿದೆ ಮತ್ತು ವಿಮಾನ ಟೇಕ್ ಆಫ್ ಆಗಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ “ನೀವು ಟೇಕ್ಆಫ್ ಮಾಡಿ, ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ” ಎಂದು ಹೇಳಿ ಮುಂದುವರಿಯಲು ಸೂಚಿಸಲಾಗಿದೆ ಎಂಬ ಆರೋಪಗಳಿವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇರಾನ್ ನೂತನ ಸರ್ವೋಚ್ಚ ನಾಯಕನ ಮೊದಲ ಸಂದೇಶ; ಪ್ರತೀಕಾರದ ಶಪಥ! ಅಮೆರಿಕ ಜಾಗ ಖಾಲಿ ಮಾಡಬೇಕು, ಹಾರ್ಮುಜ್ ತೆರೆಯಲ್ಲ
ಅಮೆರಿಕ ಇಸ್ರೇಲ್ ಜತೆಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯ ಕುರಿತು ಇರಾನ್ನ ನೂತನ ಸರ್ವೋಚ್ಚ ನಾಯಕನ ಮೊದಲ ಸಂದೇಶ ನೀಡಿದ್ದಾರೆ. ಪ್ರತೀಕಾರದ ಶಪಥ ಮಾಡಿದ್ದು, ಅಮೆರಿಕವು ಇಸ್ರೇಲ್ನಿಂದ ಜಾಗ ಖಾಲಿ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಆರ್ಥಿಕ ಮತ್ತು ವಾಣಿಜ್ಯ ಒತ್ತಡ ಹೇರುವ ತಂತ್ರವಾಗಿ ಹಾರ್ಮುಜ್ ಜಲಸಂಧಿ ತೆರೆಯಲ್ಲ ಎಂದು ಮೊಜ್ತಬಾ ಖಮೇನಿ ಹೇಳಿದ್ದಾರೆ.
ಅಡುಗೆ ಅನಿಲ ಅಭಾವ ದೇಶದ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ?
LPG ಸಿಲಿಂಡರ್ ಸರಬರಾಜು ಸ್ಥಗಿತ: ಇಂಡಕ್ಷನ್ ಸ್ಟೌವ್ಗೆ ಹೆಚ್ಚಿದ ಬೇಡಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲು ಅಮೆರಿಕ ಇನ್ನೂ ಸಿದ್ಧವಾಗಿಲ್ಲ: ಕ್ರಿಸ್ ರೈಟ್
ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲು ಅಮೆರಿಕ ನೌಕಾಪಡೆ ಇನ್ನೂ ಸಿದ್ಧವಾಗಿಲ್ಲ ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. ಇರಾನ್ ವಿರುದ್ಧದ ಯುದ್ಧಕ್ಕೆ ವಾಷಿಂಗ್ಟನ್ ಸಂಪೂರ್ಣವಾಗಿ ಸಿದ್ಧವಾಗಿಲ್ಲದಿರಬಹುದು ಎಂಬುದಕ್ಕೆ ಇದನ್ನು ಮತ್ತೊಂದು ಸಂಕೇತವೆಂದು ಪರಿಗಣಿಸಲಾಗಿದೆ. ಇರಾನ್ ನ ಆಕ್ರಮಣಕಾರಿ ಸಾಮರ್ಥ್ಯಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳ ಮೇಲೆಯೇ ಅಮೆರಿಕ ಸೇನೆಯ ತಕ್ಷಣದ ಗಮನ ಕೇಂದ್ರೀಕೃತವಾಗಿದೆ ಎಂದು ರೈಟ್ ತಿಳಿಸಿದ್ದಾರೆ. CNBC ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು, “ಇದು ತುಲನಾತ್ಮಕವಾಗಿ ಶೀಘ್ರದಲ್ಲೇ ಸಾಧ್ಯವಾಗಬಹುದು. ಆದರೆ ಈಗಲೇ ಅದನ್ನು ಆರಂಭಿಸಲು ಸಾಧ್ಯವಿಲ್ಲ. ನಾವು ಇನ್ನೂ ಸಿದ್ಧರಾಗಿಲ್ಲ,” ಎಂದು ಹೇಳಿದ್ದಾರೆ. “ಪ್ರಸ್ತುತ ನಮ್ಮ ಎಲ್ಲಾ ಮಿಲಿಟರಿ ಸ್ವತ್ತುಗಳು ಇರಾನ್ ನ ಆಕ್ರಮಣಕಾರಿ ಸಾಮರ್ಥ್ಯಗಳನ್ನು ಹಾಗೂ ಅವುಗಳಿಗೆ ಬೆಂಬಲ ನೀಡುವ ಉತ್ಪಾದನಾ ಉದ್ಯಮವನ್ನು ನಾಶಮಾಡುವತ್ತ ಗಮನಹರಿಸಿವೆ,” ಎಂದು ಅವರು ತಿಳಿಸಿದ್ದಾರೆ. ತಿಂಗಳ ಅಂತ್ಯದ ವೇಳೆಗೆ ನೌಕಾಪಡೆ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡುವ ಕಾರ್ಯಾಚರಣೆಗಳನ್ನು ಆರಂಭಿಸಲು ಸಿದ್ಧವಾಗಬಹುದು ಎಂದು ರೈಟ್ ಹೇಳಿದ್ದಾರೆ. ಈ ವಿಷಯದ ಕುರಿತು ರಕ್ಷಣಾ ಅಧಿಕಾರಿಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
'ಮಹಾ ಮುಜುಗರ ತಪ್ಪಿಸಲು ಈ ಯುದ್ಧ’: ಡೊನಾಲ್ಡ್ ಟ್ರಂಪ್ ಮನಸ್ಥಿತಿ ತೆರೆದಿಟ್ಟು, ಛೀಮಾರಿ ಹಾಕಿದ ಸ್ವಂತ ಅಣ್ಣನ ಮಗಳು!
‘ಅವರು ಸಂಕಷ್ಟದಲ್ಲಿದ್ದಾರೆ. ಜನರ ಗಮನವನ್ನ ಬೇರೆಡೆ ಸೆಳೆಯಲು, ಅವಮಾನದಿಂದ ತಪ್ಪಿಸಿಕೊಳ್ಳಲು ಯುದ್ಧ ಸಾರಿದ್ದಾರೆ’ - ಹೀಗಂತ ಯಾರೋ ಹೇಳಿಲ್ಲ. ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಣ್ಣನ ಮಗಳು ಮೇರಿ ಎಲ್ ಟ್ರಂಪ್ ಬಹಿರಂಗವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲ… ‘’ಡೊನಾಲ್ಡ್ ಟ್ರಂಪ್ ಓರ್ವ ಲೂಸರ್ ಅಂಕಲ್’’ ಎಂದು ಛೀಮಾರಿ ಹಾಕಿದ್ದಾರೆ. ಸ್ವಂತ ಚಿಕ್ಕಪ್ಪನ ಮನಸ್ಥಿತಿ ಎಂಥದ್ದು ಅಂತ ಮೇರಿ ಎಲ್ ಟ್ರಂಪ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಎಎಸ್ಆರ್ ಫೌಂಡೇಶನ್ನಿಂದ ದ.ಕ. ಜಿಲ್ಲಾ ಮಟ್ಟದ ಆನ್ಲೈನ್ ಖಿರಾಅತ್ ಸ್ಪರ್ಧೆ
ಮಂಗಳೂರು, ಮಾ.12: ಮರ್ಹೂಮ್ ಮಾಚಾರ್ ಅಬ್ದುಲ್ಲಾ ಹಾಗೂ ಮರ್ಹೂಮ್ ಎಸ್.ಎ.ಮೋನಬ್ಬ ಮಿತ್ತೂರು ಸ್ಮರಣಾರ್ಥ ದ.ಕ. ಜಿಲ್ಲಾ ಮಟ್ಟದ ಆನ್ಲೈನ್ ಖಿರಾಅತ್ ಸ್ಪರ್ಧೆಯನ್ನು ಆನ್ಲೈನ್ ಮೂಲಕ ಏರ್ಪಡಿಸಲಾಗಿದೆ. ಸೌದಿ ಅರೇಬಿಯಾ ಉದ್ಯಮಿ ಶೌಕತ್ ಅಲಿ ಬಂಟ್ವಾಳ ಹಾಗೂ ಎಸ್.ಎ.ರಹಿಮಾನ್ ಮಿತ್ತೂರು ಇದರ ಪ್ರಾಯೋಜ ಕತ್ವ ವಹಿಸಲಿದ್ದಾರೆ. ಆಶಿಕ್ ಕುಕ್ಕಾಜೆ ಹಾಗೂ ಶಫೀಕ್ ಕೌಸರಿ ಕುಕ್ಕಾಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರಥಮ ಬಹುಮಾನ 11,111 ರೂ. ನಗದು ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ 5,555 ರೂ. ಹಾಗೂ ಪ್ರಶಸ್ತಿ ಪತ್ರ, ಮೂರನೇ ಬಹುಮಾನ 3,333 ರೂ.ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಉತ್ತಮ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಸ್ಪರ್ಧಾರ್ಥಿಗಳು ಕುರ್ಆನ್ನ ಸೂರತುಲ್ ಬಕರದ 185ರಿಂದ 187 ರವರೆಗೆ ಆಯತನ್ನು ಸರಿಯಾಗಿ ತಜ್ವೀದ್ ನಿಯಮ ಗಳೊಂದಿಗೆ ಓದಬೇಕು. ವಿಡಿಯೋವನ್ನು ಮೊಬೈಲ್ನಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಮಾಡಬೇಕು. ವಿಡಿಯೋದಲ್ಲಿ ಸ್ಪರ್ಧಾರ್ಥಿಯ ಮುಖ ಸ್ಪಷ್ಟವಾಗಿ ಕಾಣಬೇಕು. ವಿಡಿಯೋ 2ರಿಂದ 3 ನಿಮಿಷಗಳೊಳಗೆ ಇರಬೇಕು. ವಿಡಿಯೋದಲ್ಲಿ ಎಡಿಟ್, ಮ್ಯೂಸಿಕ್ ಅಥವಾ ಎಫೆಕ್ಟ್ಸ್ ಬಳಸಬಾರದು. ಸ್ಪರ್ಧಾರ್ಥಿಗಳ ಶುದ್ಧ ಉಚ್ಚಾರಣೆ, ತಜ್ವೀದ್ ಮತ್ತು ಧ್ವನಿ ಸೌಂದರ್ಯ ಆಧಾರವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ವಿಡಿಯೋವನ್ನು ಮಾ.18ರೊಳಗೆ +91 9591557448ಗೆ ವಾಟ್ಸ್ಆ್ಯಪ್ ಮಾಡಬಹುದು. ಪ್ರತಿ ಸ್ಪರ್ಧಿಯು ಒಂದು ವಿಡಿಯೋ ಕಳುಹಿಸಬಹುದು. ನಿರ್ಣಾಯಕರ ತೀರ್ಮಾನವೇ ಅಂತಿಮ ಆಗಿರುತ್ತದೆ. ಸ್ಪರ್ಧಾರ್ಥಿಯ ಹೆಸರು ಮತ್ತು ಪೂರ್ಣ ವಿಳಾಸ, ವಯಸ್ಸು, ತಂದೆ ಮತ್ತು ತಾಯಿಯ ಹೆಸರು, ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಹೆಚ್ಚಿನ ಮಾಹಿತಿಗೆ ಆಶಿಕ್ ಕುಕ್ಕಾಜೆ +91 9591557448 ಮತ್ತು ಶಫೀಕ್ ಕೌಸರಿ ಕುಕ್ಕಾಜೆ - +91 8495939365 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಯಕ್ಷಗಾನ ಕಲಾವಿದ ಉಲ್ಲಾಸ್ ಪಡ್ಪುಗೆ ಯಕ್ಷ ಧ್ರುಮ ಪ್ರಶಸ್ತಿ ಪ್ರದಾನ
ಮಂಗಳೂರು, ಮಾ.12: ಬೋಳಾರದ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ವಠಾರದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ, ಸಂಘಟಕ ದಿವಂಗತ ಬಿ.ನಾಗೇಶ ಪ್ರಭು ಸ್ಮರಣಾರ್ಥ ಶ್ರೀ ಮಾರಿಯಮ್ಮ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಜರಗಿದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭ ಹವ್ಯಾಸಿ ಯಕ್ಷಗಾನ ವೇಷಧಾರಿ, ಅರ್ಥಧಾರಿ, ಹಿಮ್ಮೇಳ ವಾದಕ ಉಲ್ಲಾಸ ಪಡ್ಪು ಅವರಿಗೆ ಯಕ್ಷ ಧ್ರುಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಕದ್ರಿ ನವನೀತ ಶೆಟ್ಟಿ, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಳದ ಅಧ್ಯಕ್ಷ ಸುರೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಯೋಗೀಶ ಕುಮಾರ್ ಜೆಪ್ಪು, ಯಕ್ಷಗುರು ರವಿ ಅಲೆವೂರಾಯ, ಉದಯ ಕುಂಜತ್ತೂರು, ಭುಜಂಗ ಕೊಟ್ಟಾರಿ, ಸಿ.ಎಸ್. ಭಂಡಾರಿ, ಉದ್ಯಮಿ ಗಳಾದ ಸುಭಾಶ್ಚಂದ್ರ ಪ್ರಭು, ರವೀಂದ್ರ ಮಲ್ಯ, ಶ್ರೀ ಜಗದಂಬಾ ಯಕ್ಷಗಾನ ಮಂಡಳಿಯ ಅಶೋಕ ಕುಮಾರ್ ಬಿ.ಎನ್., ವಂದನಾ ಪಡ್ಪು, ಸ್ಕಂದ, ರೇಖಾ, ಶಿವಪ್ರಸಾದ ಪ್ರಭು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಗೃಹಬಳಕೆ ಅನಿಲ ದಾಸ್ತಾನು; ಆತಂಕ ಬೇಡ: ಡಿಸಿ ಸ್ವರೂಪ ಭರವಸೆ
ಉಡುಪಿ, ಮಾ.12: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅಡುಗೆ ಅನಿಲ ಗ್ರಾಹಕರು ಆತಂಕ ಪಡ ಬೇಕಾದ ಅಗತ್ಯವಿಲ್ಲ; ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಜಿಲ್ಲೆಯ ಜನತೆಗೆ ಭರವಸೆ ನೀಡಿದ್ದಾರೆ. ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ ಗೃಹ ಬಳಕೆಯ ಎಲ್ಪಿಜಿ ಗ್ಯಾಸ್ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಕುರಿತಂತೆ ಅನಿಲ ಜಾಡಿ ಏಜೆನ್ಸಿ ಮಾಲಕರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕೊಲ್ಲಿ ರಾಷ್ಟ್ರಗಳೂ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಕೊರತೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಏಕಕಾಲದಲ್ಲಿ ಅನಿಲ ಸಂಪರ್ಕಕ್ಕೆ ಬುಕ್ಕಿಂಗ್ ಮಾಡುತ್ತಿದ್ದು, ಇದರಿಂದ ಬುಕ್ಕಿಂಗ್ ಕ್ರ್ಯಾಷ್ ಆಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳು, ವಸತಿ ನಿಲಯಗಳು, ಗೃಹ ಬಳಕೆ, ಅತೀ ಅವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳು, ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಆದ್ಯತೆಯ ಮೇಲೆ ಅನಿಲ ಪೂರೈಸಲು ಕ್ರಮಕೈಗೊಳ್ಳುವಂತೆ ಅವರು ಸಂಬಂಧಿತರಿಗೆ ಸೂಚನೆಗಳನ್ನು ನೀಡಿದರು. ಯುದ್ಧದ ಪರಿಣಾಮದಿಂದ ದೇಶದಲ್ಲಿ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳು, ವಂದತಿಗಳಿಗೆ ಜಿಲ್ಲೆಯ ಸಾರ್ವಜನಿಕರು ಕಿವಿಗೊಡದಂತೆ ಮನವಿ ಮಾಡಿದ ಅವರು, ಜನರಿಗೆ ಈ ಬಗ್ಗೆ ಪ್ರಸ್ತುತ ಇರುವ ಸನ್ನಿವೇಶವನ್ನು ವಿವರಿಸಿ, ಅರಿವು ಮೂಡಿಸಬೇಕು. ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ ಎಂಬುದನ್ನು ಗ್ರಾಹಕರಿಗೆ ಮನದಟ್ಟು ಮಾಡಿಸಬೇಕು ಎಂದರು. ಬಹುಸಂಖ್ಯಾತರಲ್ಲಿ ಎರಡು ಸಂಪರ್ಕ: ಜಿಲ್ಲೆಯಲ್ಲಿ ಅತಿಹೆಚ್ಚು ಗೃಹ ಬಳಕೆದಾರರು ಎರಡು ಅನಿಲ ಸಂಪರ್ಕ ಹೊಂದಿದ್ದು, ಏಕ ಸಿಲಿಂಡರ್ ಹೊಂದಿದ್ದವರಿಗೆ ಆದ್ಯತೆಯ ಮೇಲೆ ಅನಿಲ ಪೂರೈಕೆ ಮಾಡಬೇಕು. ಅನಿಲದ ಮಿತ ಬಳಕೆಯ ಬಗ್ಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮತ್ತು ಇತರರಿಗೆ ಜಾಗೃತಿ ಮೂಡಿಸಬೇಕು. ಆರೋಗ್ಯ, ವಾಣಿಜ್ಯ, ಕೈಗಾರಿಕೆ, ಇಂಧನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಅಗತ್ಯವಿರುವ ಅನಿಲ ಸಿಲಿಂಡರ್ಗಳ ಬೇಡಿಕೆಯ ಪಟ್ಟಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಬೇಡಿಕೆಯ ಭಾಗವನ್ನು ನಿರ್ವಹಿಸಲು ಪ್ರತಿ ಗ್ರಾಹಕರಿಗೆ ಕೊನೆಯ ಮರುಪೂರಣದ ದಿನಾಂಕದಿಂದ 25 ದಿನಗಳ ವರೆಗೆ ಇಂಟರ್-ಬುಕ್ಕಿಂಗ್ ಅವಧಿಯನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಆಹಾರ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ಪ್ರಚುರಪಡಿಸಬೇಕು ಎಂದ ಅವರು, ಜಿಲ್ಲೆಯ ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಸಹಾಯವಾಣಿ 112 ಸಂಪರ್ಕಿಸಿ: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅನಿಲ ಪೂರೈಕೆ ಕುರಿತು ಸಾರ್ವಜನಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ, ಸಾರ್ವಜನಿಕರು ತೊಂದರೆಗಳನ್ನು ನಿವಾರಿಸಲು ಸಹಾಯ ವಾಣಿ ಸಂಖ್ಯೆ 112ನ್ನು ಸಂಪರ್ಕಿಸುವಂತೆ ಪ್ರಚಾರ ಮಾಡಬೇಕು ಹಾಗೂ ಸ್ವೀಕರಿಸಿದ ದೂರುಗಳನ್ನು ತಕ್ಷಣವೇ ಪರಿಹರಿಸುವಂತೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಅನಾವಶ್ಯಕವಾಗಿ ಜನರು ಗೃಹ ಬಳಕೆಯ ಅನಿಲಗಳನ್ನು ಆಟೋಮೊಬೈಲ್ಗಳಿಗೆ ಬಳಸದಂತೆ ನೋಡಿಕೊಳ್ಳಬೇಕು. ಅನಿಲಗಳು ಕಾಳಸಂತೆಯಲ್ಲಿ ಮಾರಾಟ ಆಗದಂತೆ ನೋಡಿಕೊಳ್ಳಲು ಗ್ಯಾಸ್ ಏಜೆನ್ಸಿಗಳ ಸಪ್ಲಯರ್ಸ್, ಡೀಲರ್ಸ್ ಹಾಗೂ ಕಂಪೆನಿಗಳ ಸಹಕಾರ ಅತ್ಯಗತ್ಯ ಎಂದರು. ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಜಿಲ್ಲೆಯ ವಿವಿಧ ಗ್ಯಾಸ್ ಏಜೆನ್ಸಿಗಳ ಮಾಲಕರು, ಸರಬರಾಜುದಾರರು ಮತ್ತಿತರರು ಉಪಸ್ಥಿತರಿದ್ದರು. ಕಾಳಸಂತೆ ಮಾರಾಟ ವಿರುದ್ಧ ಎಚ್ಚರಿಕೆ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ, ಸಂಗ್ರಹಣೆ, ಶೇಖರಣೆ ಹಾಗೂ ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾಡಳಿತದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಎಚ್ಚರಿಸಿದರು. ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್ಗಳ ದಾಸ್ತಾನು, ಸಾಗಾಣಿಕೆ ಹಾಗೂ ರಿಫಿಲ್ಲಿಂಗ್ ಪ್ರಕರಣಗಳು ಕಂಡುಬಂದಲ್ಲಿ ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಲ ಉತ್ಪಾದಕರಿಗೆ ಗುಡ್ನ್ಯೂಸ್: ಬಮೂಲ್ನಿಂದ ಪ್ರೋತ್ಸಾಹ ಧನ ಘೋಷಣೆ; ಪ್ರತಿ ಲೀಟರ್ಗೆ ಎಷ್ಟು ದರ? ಸಹಾಯ ಧನವೆಷ್ಟು?
2025 - 26ನೇ ಸಾಲಿನಲ್ಲಿ ಪ್ರತಿ ಲೀಟರ್ ಗೆ 1 ರೂ.ನಂತೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಸರ್ಕಾರದ 5 ರೂ. ಸಹಾಯ ಧನದ ಜತೆ ಪ್ರೋತ್ಸಾಹ ಧನವು ಸಿಗಲಿದೆ. ಇದು ಯುಗಾದಿ ಹಬ್ಬಕ್ಕೆ ಹೈನುಗಾರರಿಗೆ ಉಡುಗೊರೆ ಎನ್ನಲಾಗಿದೆ.
ಶಹಾಪುರ | ಕಾಲುವೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು
ಯಾದಗಿರಿ: ಸ್ನೇಹಿತರೊಂದಿಗೆ ಕಾಲುವೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬನು ನೀರುಪಾಲಾದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಭೀಮರಾಯನಗುಡಿ ಕೃಷಿ ಕಾಲೇಜಿನ ವಿದ್ಯಾರ್ಥಿ ಹರೀಶ್ ರೆಡ್ಡಿ (19) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬೇಸಿಗೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ KBJNL ಕಾಲುವೆಗೆ ಈಜಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದನ್ನು ಗಮನಿಸಿದ ಸ್ನೇಹಿತರು ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ 14,151 ಪರೀಕ್ಷಾರ್ಥಿಗಳು: ಡಿಸಿ ಸ್ವರೂಪಾ ಟಿ.ಕೆ.
ಮಾ.18ರಿಂದ ಎಸೆಸೆಲ್ಸಿ ಪರೀಕ್ಷೆ
ಯಾದಗಿರಿಯಲ್ಲಿ ಅಡುಗೆ ಅನಿಲದ ಕೊರತೆ ಇಲ್ಲ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್
ಯಾದಗಿರಿ: ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದಲ್ಲಿ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಂದತಿಗಳಿಗೆ ಜಿಲ್ಲೆಯ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯಲ್ಲಿ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ. ದೇಶಾದ್ಯಂತ ಎಲ್ಪಿಜಿ ಉತ್ಪಾದನೆ ಮತ್ತು ಬಾಟಲಿಂಗ್ ಎರಡೂ ಹೆಚ್ಚಿರುವುದರಿಂದ ದೇಶಿಯ ಎಲ್ಪಿಜಿಯ ಕೊರತೆಯಿಲ್ಲ, ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ಗಳು ಸಾಕಷ್ಟು ಪ್ರಮಾಣದಲ್ಲಿ ಸದ್ಯ ದಾಸ್ತಾನು ಲಭ್ಯವಿರುವುದ್ದರಿಂದ ಗ್ರಾಹಕರು ಯಾರು ಗಾಬರಿಗೊಳ್ಳಬಾರದು. ಅಲ್ಲದೆ ಸಾರ್ವಜನಿಕರು ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಳ್ಳಬಾರದು. ಹೆಚ್ಚಿನ ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಐವಿಆರ್ಎಸ್/ಮಿಸಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಈ ಸಿಸ್ಟಮ್ಗಗಳು ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಪರ್ಯಾಯವಾಗಿ ಐಒಸಿಎಲ್, ಹೆಚ್ ಪಿಸಿಎಲ್ ಮತ್ತು ಬಿಪಿಸಿಎಲ್ ಎಲ್ಪಿಜಿ ತೈಲ ಕಂಪನಿಗಳು ಗ್ರಾಹಕರಿಗೆ 6 ಬುಕಿಂಗ್ ವಿಧಾನಗಳನ್ನು ಲಭ್ಯವಿದೆ-IVRS, Missed Call, Whatssap, Mobile Application, OMC Portal ಪೋರ್ಟಲ್ಗಳು ಮತ್ತು ಪಾವತಿ ಅಪ್ಲಿಕೇಶನ್ಗಳು (Paytm/Phone Pay) ನಂತಹ ಇತ್ಯಾದಿ ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದಾಗಿದೆ. ಬೇಡಿಕೆಯ ಭಾಗವನ್ನು ನಿರ್ವಹಿಸಲು ಪ್ರತಿ ಗ್ರಾಹಕರಿಗೆ ಕೊನೆಯ ಮರುಪೂರಣದ ದಿನಾಂಕದಿಂದ 25 ದಿನಗಳವರೆಗೆ ಇಂಟರ್-ಬುಕಿಂಗ್ ಅವಧಿಯನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಎಲ್.ಪಿ.ಜಿ ಸಿಲಿಂಡರ್ಗಳ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವಂದತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಒಂದುವೇಳೆ ಯಾವದೇ ಸಮಸ್ಯೆ ಕಂಡುಬಂದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಗೆ ದೂರವಾಣಿ ಸಂಖ್ಯೆ: 08473-253707ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ | ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಅಗತ್ಯ ಕ್ರಮ: ಡಿಸಿ ಹರ್ಷಲ್ ಭೋಯರ್
ಯಾದಗಿರಿ: ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಕುರಿತು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. 2025ರಲ್ಲಿ ಸರಾಸರಿಗಿಂತ ಶೇ.33ರಷ್ಟು ಹೆಚ್ಚು ಮಳೆಯಾಗಿತ್ತು. ಆದರೆ 2026ರಲ್ಲಿ ಇದುವರೆಗೆ ಸರಾಸರಿ 8.5 ಮಿ.ಮೀ ಮಳೆಯಾಗಬೇಕಾಗಿದ್ದರೆ, ಕೇವಲ 6.4 ಮಿ.ಮೀ ಮಾತ್ರ ಮಳೆಯಾಗಿದ್ದು, ಸುಮಾರು ಶೇ.25ರಷ್ಟು ಕಡಿಮೆ ಮಳೆಯಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಜಲಾಶಯಗಳಾದ ನಾರಾಯಣಪುರ ಜಲಾಶಯ ಕರ್ನಾಟಕದಲ್ಲಿ 491.15 ಮೀ., ಸನ್ನತಿ ಬ್ಯಾರೇಜ್ ನಲ್ಲಿ 373.90 ಮೀ. ಹಾಗೂ ಗುರುಸುನಗಿ ಜಲಾಶಯ ನಲ್ಲಿ 357.80 ಮೀ. ನೀರು ಸಂಗ್ರಹವಾಗಿದೆ ಎಂದು ಹೇಳಿದರು. ಮಾರ್ಚ್ ತಿಂಗಳಲ್ಲಿ ಇದುವರೆಗೆ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಈ ತಿಂಗಳಲ್ಲಿ 16 ಗ್ರಾಮಗಳು, ಏಪ್ರಿಲ್ನಲ್ಲಿ 25 ಗ್ರಾಮಗಳು ಹಾಗೂ ಮೇ ತಿಂಗಳಲ್ಲಿ 24 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಭೀಮರಾಯನಗುಡಿ, ಕಕ್ಕೇರಾ ಹಾಗೂ ಸುರಪುರ ಪಟ್ಟಣಗಳ ಎಲ್ಲಾ ವಾರ್ಡ್ಗಳಲ್ಲಿ ಮತ್ತು ಕೆಂಭಾವಿಯ 8 ವಾರ್ಡ್ಗಳಲ್ಲಿ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಶಹಾಪುರ, ಯಾದಗಿರಿ, ಹುಣಸಗಿ ಹಾಗೂ ಗುರುಮಿಠಕಲ್ ಪಟ್ಟಣಗಳ ಎಲ್ಲಾ ವಾರ್ಡ್ಗಳಲ್ಲಿ ಮತ್ತು ಕೆಂಭಾವಿಯ 15 ವಾರ್ಡ್ಗಳಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ವರ್ಷ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ಅವರು ತಿಳಿಸಿದರು. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪ್ರತಿ 15 ದಿನಗಳಿಗೊಮ್ಮೆ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲು ಹಾಗೂ ಯೋಗ್ಯವೆಂದು ವರದಿ ಬರುವ ನೀರನ್ನು ಮಾತ್ರ ಪೂರೈಸಲು ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಬಾವಿ, ಕೊಳವೆ ಬಾವಿ, ಓವರ್ ಹೆಡ್ ಟ್ಯಾಂಕ್, ಆರ್ಒ ಪ್ಲಾಂಟ್ ಸೇರಿದಂತೆ ಎಲ್ಲಾ ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಬೇಸಿಗೆ ಹಂಗಾಮಿನಲ್ಲಿ 67,885 ಹೆಕ್ಟೇರ್ ಬಿತ್ತನೆ ಗುರಿ ಇಡಲಾಗಿದ್ದು, ಇದರಲ್ಲಿ ಈಗಾಗಲೇ 65,535 ಹೆಕ್ಟೇರ್ ಅಂದರೆ ಶೇ.96.54ರಷ್ಟು ಬಿತ್ತನೆ ಪೂರ್ಣಗೊಂಡಿದೆ ಎಂದು ಹೇಳಿದರು. ಕಳೆದ ವರ್ಷ ಜಿಲ್ಲೆಯಲ್ಲಿ ಗರಿಷ್ಠ 44.2°C ತಾಪಮಾನ ದಾಖಲಾಗಿತ್ತು. ಈ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗ್ರಾಮಗಳಲ್ಲಿ ಕಾರ್ಯಾಗಾರ, ಡಂಗೂರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಇನ್ನೂ ಸಿಡಿಲು ಹಾಗೂ ಬಿಸಿಗಾಳಿಯಿಂದಾಗುವ ಅವಘಡಗಳಿಂದ ರಕ್ಷಣೆ ಪಡೆಯಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಳೆದ ವರ್ಷ ಜಿಲ್ಲೆಯಲ್ಲಿ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದರು ಎಂದು ತಿಳಿಸಿದರು. ಜಿಲ್ಲೆಯಲ್ಲಿ 58 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹಣೆ ಇದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲಾ ಪಂಚಾಯತ್ ಸಿಇಒ ಗರಿಮಾ ಪನ್ವಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನಷ್ಟು ಬೋರ್ವೆಲ್ಗಳ ಮೇಲೆ ಅವಲಂಬನೆಯಿರುವುದರಿಂದ ಈಗಾಗಲೇ 65 ಗ್ರಾಮಗಳಲ್ಲಿ ಬೋರ್ವೆಲ್ ಫ್ಲಷಿಂಗ್ ಹಾಗೂ ಖಾಸಗಿ ಬಾಡಿಗೆ ಬೋರ್ವೆಲ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಳೆದ ವರ್ಷ ನೀರಿನ ಸಮಸ್ಯೆ ಎದುರಿಸಿದ್ದ ಎಂಪಾಡ್, ರಸ್ತಾಪುರ, ಬೆನಕನಹಳ್ಳಿ ಮತ್ತು ಹೊಸಕೇರ ಗ್ರಾಮಗಳಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಕುಡಿಯುವ ನೀರಿನ ಸರಬರಾಜಿಗೆ 08473-253758 ಸಹಾಯವಾಣಿ ಆರಂಭಿಸಲಾಗಿದೆ ಎಂದು ಹೇಳಿದರು. ನೀರಿನ ಗುಣಮಟ್ಟ ಪರೀಕ್ಷೆಗೆ ಯಾದಗಿರಿ ನಗರದಲ್ಲಿ ಮೈಕ್ರೋ ಬಯಾಲಾಜಿಕಲ್ ಲ್ಯಾಬ್ ಆರಂಭಿಸಲಾಗಿದ್ದು, ಓವರ್ ಹೆಡ್ ಟ್ಯಾಂಕ್ಗಳ ಸ್ವಚ್ಛತೆ, ಕ್ಲೋರಿನೇಶನ್ ಹಾಗೂ ಬೋರ್ವೆಲ್ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಸೂಚಿಸಲಾಗಿದೆ. 52 ಶಾಲೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜು ಕಾಮಗಾರಿಗಳು, 92 ಆರ್ಒ ಪ್ಲಾಂಟ್ ದುರಸ್ತಿ ಕಾಮಗಾರಿಗಳು ಹಾಗೂ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ 338 ಕಾಮಗಾರಿಗಳು ಪ್ರಗತಿಯಲ್ಲಿವೆ. Jal Jeevan Mission India ಯೋಜನೆಯಡಿ 525 ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗಿದೆ. ಜೊತೆಗೆ ಜಲಧಾರೆ ಯೋಜನೆಯಡಿ ಶೇ.60ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ್ ಸುಗೂರ್, ಡಿಯುಡಿಸಿ ಯೋಜನಾ ನಿರ್ದೇಶಕ ಲಕ್ಷ್ಮಿ ಕಾಂತ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ದೊಡ್ಡಕೆರೆ ಬಳಿ ಹಾಡಹಗಲೇ ಯುವಕನ ಕುತ್ತಿಗೆ ಸೀಳಿ ಕೊಲೆಗೈದ ಆಘಾತಕಾರಿ ಘಟನೆ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮೂಖ ಹಳ್ಳಿ ಗ್ರಾಮದ ಕರಿಯಯ್ಯ ಎಂಬವರ ಪುತ್ರ ನಂಜುಂಡ ಸ್ವಾಮಿ (22) ಕೊಲೆಯಾದ ಯುವಕ. ನಂಜುಂಡಸ್ವಾಮಿ ತನ್ನ ಸ್ನೇಹಿತರೊಂದಿಗೆ ಬೈಕ್ನಲ್ಲಿ ದೊಡ್ಡಕೆರೆಗೆ ತೆರಳಿದ್ದ. ಬಳಿಕ ಆತ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಎಸ್ಪಿ ಸ್ನೇಹರಾಜ್ ಕೂಡಾ ಭೇಟಿ ನೀಡಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಎನ್.ಜಯಕುಮಾರ್, ಸಿಬ್ಬಂದಿ ಇದ್ದರು. ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಂಪಾದಕೀಯ | ಲಸಿಕೆ ಅಡ್ಡ ಪರಿಣಾಮ : ಸಂತ್ರಸ್ತರಿಗೆ ಸಿಗದ ನ್ಯಾಯ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಜಾಮೀನು ಮಂಜೂರು
ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಜಾಮೀನು ಮಂಜೂರು ಮಾಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. 2025ರ ಜುಲೈ 15ರಂದು ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ನಡೆದಿತ್ತು. ಈ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರು ಐದನೇ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಲ್ಲೂ ನಿರೀಕ್ಷಣಾ ಜಾಮೀನು ಸಿಗದೆ ಇದ್ದಾಗ ಅವರು ಪೊಲೀಸರಿಗೆ ಶರಣಾಗಿದ್ದರು. ಇದೀಗ ಅವರಿಗೆ ಜಾಮೀನು ನೀಡಲಾಗಿದೆ.
ಕಚ್ಚಾತೈಲ ಬೆಲೆ 12,000 ರೂಪಾಯಿ ದಾಟುವ ಸಾಧ್ಯತೆ, ಶುರುವಾಯ್ತು ಹೊಸ ಆತಂಕ | Operation Roaring Lion
ಇರಾನ್ ವಿರುದ್ಧ ಶುರುವಾಗಿರುವ ಭೀಕರ ಯುದ್ಧದ ಪರಿಣಾಮ ಈಗಾಗಲೇ ಪೆಟ್ರೋಲ್ &ಡೀಸೆಲ್ ಬೆಲೆ ಪ್ರಪಂಚದ ಬಹುತೇಕ ದೇಶಗಳಲ್ಲಿ ಮುಗಿಲು ಮುಟ್ಟಿದೆ. ಹೀಗೆ ಆಕಾಶ ತಲುಪಿರುವ ಇಂಧನದ ಬೆಲೆ ಬಡವರ ಹೊಟ್ಟೆ ಉರಿಯುವಂತೆ ಮಾಡಿದ್ದು, ಜೀವನ ನಡೆಸುವುದೇ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲಿ ಎಲ್ಲಾ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಾ ಇರುವುದು &
ಸಂಪಾದಕೀಯ | ನಮ್ಮ ಮನೆಬಾಗಿಲಿಗೆ ಬಂದ ಯುದ್ಧವೆಂಬ ನಾಗರ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
BPL Card: ಪಡಿತರ ಚೀಟಿ ನಿಯಮ ಪರಿಷ್ಕರಣೆ: ಆದಾಯ ಮಿತಿ ಹೆಚ್ಚಿಸಲು ಸರ್ಕಾರ ಗಂಭೀರ ಚಿಂತನೆ
ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ನಕಲಿ ಪಡಿತರ ಚೀಟಿ ಪತ್ತೆ, ನಕಲಿ ದಾಖಲಾತಿ ನೀಡಿ ರೇಷನ್ ಕಾರ್ಡ್ ಪಡೆದವರ ಪತ್ತೆ ನಡೆಸಿತ್ತು. ಎಪಿಎಲ್, ಬಿಪಿಎಲ್ ಕಾರ್ಡ್ಗೆ ಸಂಬಂಧಿಸಿದಂತೆ ಅಕ್ರಮ ತಡೆಗೆ ಮುಂದಾಗಿತ್ತು. ಇದೀಗ ಪಡಿತರ ಚೀಟಿಗಳನ್ನು (PHH/BPL) ಪಡೆಯಲು ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಯಾರೆಲ್ಲ ವಾರ್ಷಿಕ ಆದಾಯ
Hardik Pandya: ರಾಷ್ಟ್ರಧ್ವಜ ಹೊದ್ದುಕೊಂಡು ಪ್ರೇಯಸಿ ಜೊತೆ ಮಲಗಿದ್ದ ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು
Hardik Pandya: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಜಯಗಳಿಸಿದ ನಂತರ, ಆಟಗಾರರು ಮೈದಾನದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯ ಅವರು ಭಾರತದ ರಾಷ್ಟ್ರಧ್ವಜವನ್ನು ತಮ್ಮ ಹೆಗಲ ಮೇಲೆ ಹೊದ್ದುಕೊಂಡು, ಮೈದಾನದಲ್ಲಿ ತಮ್ಮ ಗೆಳತಿಯೊಂದಿಗೆ ಕುಣಿದಾಡಿ ನಂತರ ನೆಲದ ಮೇಲೆ ಮಲಗಿದ್ದ ವಿಡಿಯೋಗಳು ಸಾಮಾಜಿಕ
ಕಲಬುರಗಿ| ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಕೊರತೆ ಇಲ್ಲ: ಡಿಸಿ ಬಿ.ಫೌಝಿಯಾ ತರನ್ನುಮ್ ಸ್ಪಷ್ಟನೆ
ಕಲಬುರಗಿ: ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಲಭ್ಯವಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ನಂಬಿಕೊಂಡು ಗ್ರಾಹಕರು ಗಾಬರಿಗೊಂಡು ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಳ್ಳಲು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಐವಿಆರ್ಎಸ್/ಮಿಸಡ್ ಕಾಲ್ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಸದರಿ ಸಿಸ್ಟಮ್ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡಲು ಪರ್ಯಾಯವಾಗಿ ಐ.ಓ.ಸಿ.ಎಲ್., ಹೆಚ್.ಪಿ.ಸಿ.ಎಲ್ ಮತ್ತು ಬಿ.ಪಿ.ಸಿ.ಎಲ್ ಎಲ್ಪಿಜಿ ತೈಲ ಕಂಪನಿಗಳ ವಾಟ್ಸ್ಯಾಪ್ ಮೊಬೈಲ್ ತಂತ್ರಾಂಶದ ಮುಖಾಂತರ ಬುಕ್ಕಿಂಗ್ ಮಾಡಬಹುದಾಗಿದೆ. ಇದಲ್ಲದೇ, ಐವಿಆರ್ಎಸ್ ವ್ಯವಸ್ಥೆಯು ಶೀಘ್ರದಲ್ಲಿಯೇ ಸರಿಹೋಗುವುದಾಗಿ ಸಂಬಂಧಪಟ್ಟ ಎಲ್ಪಿಜಿ ಡೀಲರ್ಗಳು ತಿಳಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

21 C