ಯಾದಗಿರಿಯಲ್ಲಿ ಕಾರು-ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ 6 ಮಂದಿ ಸಜೀವ ದಹನ
ಯಾದಗಿರಿಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಬಳಿ ಕಾರು ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೆಂಕಿ ಹತ್ತಿಕೊಂಡಿದ್ದು ಘಟನೆಯಲ್ಲಿ 6 ಮಂದಿ ಸಜೀವ ದಹನವಾಗಿದ್ದಾರೆ.
ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 4 ಮಂದಿ ಸಜೀವ ದಹನ
ಸುರಪುರ : ಬಸ್ ಮತ್ತು ಕಾರಿನ ಮಧ್ಯೆ ಉಂಟಾದ ಭೀಕರ ಅಪಘಾತದಲ್ಲಿ 4 ಮಂದಿ ಸಜೀವ ದಹನವಾಗಿರುವ ಘಟನೆ ತಾಲೂಕಿನ ತಿಂಥಣಿ ಸೇತುವೆ ಬಳಿಯ ಶಾಂತಪುರ ಕ್ರಾಸ್ ಹತ್ತಿರ ಬೀದರ್ ಬೆಂಗಳೂರು ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಲಿಂಗಸುಗೂರಿನಿಂದ ಕಲಬುರ್ಗಿ ಕಡೆಗೆ ಹೊರಟಿದ್ದ ಖಾಸಗಿ ಬಸ್ ಹಾಗೂ ಲಿಂಗಸುಗೂರು ಕಡೆಗೆ ಬರುತ್ತಿದ್ದ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಢಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಕಾರು ಮತ್ತು ಬಸ್ ಸಂಪೂರ್ಣ ಸುಟ್ಟು ಕರಕಲಾಗಿವೆ. ಖಾಸಗಿ ಬಸ್ಸಿನಲ್ಲಿದ್ದ ಯಾರಿಗೂ ಕೂಡ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿಲ್ಲ. ಆದರೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ. ಸುಟ್ಟ ಅವಶೇಷಗಳ ಮಧ್ಯೆ ನಾಲ್ಕು ಜನರ ತಲೆ ಬುರುಡೆಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸುರಪುರ ಠಾಣೆಯ ಪಿ.ಐ ಉಮೇಶ ಎಂ ಸೇರಿದಂತೆ ಸಿಬ್ಬಂದಿಗಳು ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 4ಕ್ಕೂ ಅಧಿಕ ಮಂದಿ ಸಜೀವ ದಹನ
ಸುರಪುರ : ಬಸ್ ಮತ್ತು ಕಾರಿನ ಮಧ್ಯೆ ಉಂಟಾದ ಭೀಕರ ಅಪಘಾತದಲ್ಲಿ 4ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರುವ ಘಟನೆ ತಾಲೂಕಿನ ತಿಂಥಣಿ ಸೇತುವೆ ಬಳಿಯ ಶಾಂತಪುರ ಕ್ರಾಸ್ ಹತ್ತಿರ ಬೀದರ್ ಬೆಂಗಳೂರು ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಲಿಂಗಸುಗೂರಿನಿಂದ ಕಲಬುರ್ಗಿ ಕಡೆಗೆ ಹೊರಟಿದ್ದ ಖಾಸಗಿ ಬಸ್ ಹಾಗೂ ಲಿಂಗಸುಗೂರು ಕಡೆಗೆ ಬರುತ್ತಿದ್ದ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಢಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಕಾರು ಮತ್ತು ಬಸ್ ಸಂಪೂರ್ಣ ಸುಟ್ಟು ಕರಕಲಾಗಿವೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲಿರುವವರು ನೀಡಿರುವ ಮಾಹಿತಿ ಪ್ರಕಾರ ಆರು ಜನ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಸುಟ್ಟ ಅವಶೇಷಗಳ ಮಧ್ಯೆ ನಾಲ್ಕು ಜನರ ತಲೆ ಬುರುಡೆಗಳು ಪತ್ತೆಯಾಗಿದ್ದು ಇನ್ನೂ ಇಬ್ಬರ ಮೃತ ದೇಹಗಳ ಹುಡುಕಾಟ ನಡೆಯುತ್ತಿದೆ. ಕಾರಿನಲ್ಲಿ ಆರು ಜನ ಪ್ರಯಾಣಿಸುತ್ತಿದ್ದರಾ ಅಥವಾ ನಾಲ್ಕೇ ಜನರು ಮಾತ್ರ ಇದ್ದರಾ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಖಾಸಗಿ ಬಸ್ಸಿನಲ್ಲಿದ್ದ ಯಾರಿಗೂ ಕೂಡ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿಲ್ಲ. ಆದರೆ ಕಾರಿನಲ್ಲಿರುವ ಎಲ್ಲರೂ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸುರಪುರ ಠಾಣೆಯ ಪಿ.ಐ ಉಮೇಶ ಎಂ ಸೇರಿದಂತೆ ಸಿಬ್ಬಂದಿಗಳು ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮತ್ತೆ ಕುಸಿದ ಚಿನ್ನ-ಬೆಳ್ಳಿಯ ಬೆಲೆ; ಇಂದಿನ ದರವೆಷ್ಟು?
ಶುಕ್ರವಾರ ಡಾಲರ್ ಬೆಲೆಗಳು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಯ ಆಶಾವಾದದ ನಡುವೆ ಚಿನ್ನದ ಬೆಲೆಗಳು ಅಲ್ಪ ಮಟ್ಟಿಗೆ ಏರಿದ್ದವು. ಆದರೆ, ಶುಕ್ರವಾರ ಡಾಲರ್ ಬೆಲೆಗಳು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಡಾಲರ್ ಮೌಲ್ಯ ಆರು ವಾರಗಳಷ್ಟು ಕಡಿಮೆಗೆ ಕುಸಿದ ನಂತರ ಇದೀಗ ಚೇತರಿಸಿಕೊಂಡಿದೆ. ಜನವರಿಯಲ್ಲಿ ಅತ್ಯಧಿಕ ಪ್ರತಿ ಗ್ರಾಂಗೆ 18,000ಕ್ಕೆ ಏರಿದ್ದ ಶುದ್ಧ ಚಿನ್ನ ನಂತರ ಕುಸಿಯುತ್ತಲೇ ಬಂದಿದೆ. ಕಳೆದೊಂದು ತಿಂಗಳಿಂದ ಶುದ್ಧ ಚಿನ್ನದ ಬೆಲೆ ಗ್ರಾಂಗೆ 15,000-16,000 ರೂ. ಒಳಗೆ ಉಳಿದಿವೆ. ಆಭರಣ ಚಿನ್ನದ ಬೆಲೆ 13 ಸಾವಿರದಿಂದ 14 ಸಾವಿರ ರೂ. ನಡುವೆ ನಿಂತಿದೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 17ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 137 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,54,200 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 125 ರೂ. ಕಡಿಮೆಯಾಗಿ ಹತ್ತು ಗ್ರಾಂಗೆ 1,41,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 103 ರೂ. ಕುಸಿದು ಹತ್ತು ಗ್ರಾಂಗೆ 1,15,650 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 17ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,420 (-137) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,135 (-125) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,565 (-103) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ದರ ಕುಸಿತ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಎಪ್ರಿಲ್ ಆರಂಭದಲ್ಲಿ 2,50,000 ರೂ. ಗೆ ಬಂದು ತಲುಪಿದ ನಂತರ ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿ ನಿಂತಿತ್ತು. ಸೋಮವಾರ ಪ್ರತಿ ಗ್ರಾಂಗೆ 5 ರೂ. ಕುಸಿದಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,55,000 ರೂ.ಗೆ ತಲುಪಿದೆ. ಮಂಗಳವಾರವೂ ಇದೇ ದರದಲ್ಲಿ ಮುಂದುವರಿಯಿತು. ಬುಧವಾರ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 15 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,70,000 ಗೆ ಬಂದು ತಲುಪಿದ್ದು, ಗುರುವಾರವೂ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಇದೀಗ ಶುಕ್ರವಾರ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,65,000 ಗೆ ಬಂದು ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,435 (-137) ರೂ., 22 ಕ್ಯಾರೆಟ್ ಚಿನ್ನದ ದರ 14,150 (-125) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,420 (-137) ರೂ., 22 ಕ್ಯಾರೆಟ್ ಚಿನ್ನದ ದರ 14,135 (-125) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,425 (-137) ರೂ., 22 ಕ್ಯಾರೆಟ್ ಚಿನ್ನದ ದರ 14,140 (-125) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,502 (-164) ರೂ., 22 ಕ್ಯಾರೆಟ್ ಚಿನ್ನದ ದರ 14,210 (-150) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,420 (-137) ರೂ., 22 ಕ್ಯಾರೆಟ್ ಚಿನ್ನದ ದರ 14,135 (-125) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,420 (-137) ರೂ., 22 ಕ್ಯಾರೆಟ್ ಚಿನ್ನದ ದರ 14,135 (-125) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,435 (-137) ರೂ., 22 ಕ್ಯಾರೆಟ್ ಚಿನ್ನದ ದರ 14,150 (-125) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,435 (-137) ರೂ., 22 ಕ್ಯಾರೆಟ್ ಚಿನ್ನದ ದರ 14,150 (-125) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,435 (-137) ರೂ., 22 ಕ್ಯಾರೆಟ್ ಚಿನ್ನದ ದರ 14,150 (-125) ರೂ.
Women Reservation Bill : 37 ನಿಮಿಷ ಮೋದಿಯ ಮಾಸ್ಟರ್’ಸ್ಟ್ರೋಕ್- ಚರ್ಚೆಯ ವಿಷಯ ಸಾಕಾರಗೊಳಿಸಿದ PM ಭಾಷಣ
PM Modi Women's Quota Bill speech : ಲೋಕಸಭೆಯಲ್ಲಿ ಮೂರು ಮಸೂದೆಗಳ ಕುರಿತ ಮೇಲಿನ ಚರ್ಚೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ. 37ನಿಮಿಷಗಳ ತಮ್ಮ ಭಾಷಣದಲ್ಲಿ ಮಹಿಳಾ ಕೋಟಾದ ಬಗ್ಗೆ ವಿವರಣೆಯನ್ನು ನೀಡಿದರು, ಅಲ್ಲಲ್ಲಿ ವಿಪಕ್ಷಗಳ ಕಾಲೆಳೆದರು, ದೇಶದ ಮಹಿಳಾ ವರ್ಗಕ್ಕೆ ಏನು ಸಂದೇಶವನ್ನು ನೀಡಬೇಕೋ ಅದನ್ನು ಪ್ರಧಾನಿ ಮೋದಿಯವರು ಸಮರ್ಥವಾಗಿ ನೀಡಿದರು ಎಂದು ಅವರ ಭಾಷಣವನ್ನು ವಿಶ್ಲೇಷಿಸಲಾಗುತ್ತಿದೆ.
ಎ.16ರಿಂದಲೇ ಮಹಿಳಾ ಮೀಸಲಾತಿ ಕಾನೂನು ಜಾರಿ: ಅಧಿಸೂಚನೆ ಹೊರಡಿಸಿದ ಕೇಂದ್ರ ಸರಕಾರ
ಸಂಸತ್ತಿನಲ್ಲಿ ತಿದ್ದುಪಡಿಗಳ ಕುರಿತು ಚರ್ಚೆ ಮಧ್ಯೆಯೇ ಬೆಳವಣಿಗೆ
ಸಂದರ್ಶನ: ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಮುಸ್ಲಿಮರು ಹೊರಬರಲಿ, ಸಿಎಂ ಇಬ್ರಾಹಿಂ ಕರೆ
ಹುಬ್ಬಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವಕರು ಜೈಲಿನಲ್ಲಿದ್ದಾರೆ. ಮುಸ್ಲಿಮರಿಗಿದ್ದ ನಾಲ್ಕು ಶೇಕಡಾ ಮೀಸಲಾತಿ ಕಸಿದುಕೊಳ್ಳಲಾಗಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ರದ್ದು ಮಾಡಿಲ್ಲ. ಈ ಬಗ್ಗೆ ಯಾಕೆ ಮುಸ್ಲಿಂ ಶಾಸಕರು ಮಾತನಾಡುತ್ತಿಲ್ಲ? ಎಂದು ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ. ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ಕಲಬುರಗಿ: ಜೇವರ್ಗಿ ರಸ್ತೆಯಲ್ಲಿರುವ ಕಟ್ಟಿಸಂಗಾವಿ ಸೇತುವೆಗೆ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕಲಬುರಗಿ ನಗರದ ಹೊರವಲಯದ ಫರಹತಾಬಾದ್ ಗ್ರಾಮದ ನಿವಾಸಿ ಪ್ರಭುದೇವ ಈಶ್ವರರಾವ್ (32) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ತಿಳಿದ ತಕ್ಷಣ ಫರಹತಾಬಾದ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಅಸಮಾನತೆಯ ವಿರುದ್ಧ ಬಾಬಾ ಸಾಹೇಬರು ಸಂಘರ್ಷದ ಹಾದಿ ಹಿಡಿದಿದ್ದರು: ಎಲ್. ಹನುಮಂತಯ್ಯ
ರಾಯಚೂರು: ಬಾಬಾ ಸಾಹೇಬ್ ಅಂಬೇಡ್ಕರ್ ಮನಸ್ಸು ಮಾಡಿದ್ದರೆ ದೊಡ್ಡ ಅಧಿಕಾರಿ, ಕುಲಪತಿಯಾಗಿ ಕಾರ್ಯನಿರ್ವಹಿಸಿ ಆರಾಮದಾಯಕ ಬದುಕು ನಡೆಸಬಹುದಾಗಿತ್ತು. ಆದರೆ ಅವರು ಆಯ್ಕೆ ಮಾಡಿಕೊಂಡದ್ದು ಸ್ವತಃ ಹೋರಾಟದ ದಾರಿಯಾಗಿತ್ತು. ಅಸಮಾನತೆಯಿಂದ ಬಳಲುತ್ತಿದ್ದ ಸಮಾಜವನ್ನು ನೋಡಿ ಸುಮ್ಮನಿರಲಾಗದೆ ಇಂಥದ್ದೊಂದು ಸಂಘರ್ಷದ, ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡರು ಎಂದು ರಾಜ್ಯಸಭಾ ಮಾಜಿ ಸದಸ್ಯ, ಚಿಂತಕ ಡಾ. ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಆಧುನಿಕ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಸಾಮಾಜಿಕ ವಾತಾವರಣ ಸುಧಾರಿಸದೆ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಎಂದು ಹೇಳಿದರು. ಅಂಬೇಡ್ಕರ್ ಮಂಡಿಸಿದ ಹಿಂದೂ ಕೋಡ್ಬಿಲ್ ದೇಶದ ಎಲ್ಲ ವರ್ಗದ ಮಹಿಳೆಯರಿಗೆ ಅನುಕೂಲವಾಯಿತು. ಈ ಬಿಲ್ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸಿಗಬೇಕೆಂದು ಪ್ರತಿಪಾದಿಸಿತು. ವಿಧವಾ ವಿವಾಹ ಪದ್ಧತಿ ಜಾರಿಗೊಳಿಸುವ ಮೊದಲ ಪ್ರಯತ್ನ ಮಾಡಿದ್ದು ಅಂಬೇಡ್ಕರ್. ಅವರು ತಳಸಮುದಾಯಗಳ ಮೀಸಲಾತಿಗಾಗಿಯಷ್ಟೇ ಹೋರಾಟ ಮಾಡಲಿಲ್ಲ, ದೇಶದ ಎಲ್ಲ ಜನರ ಒಳಿತಿಗಾಗಿ ಹೋರಾಡಿದರು ಎಂದರು. ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಿಂದೂವಾಗಿ ಸಾಯಲಾರೆ ಎಂದು ಹೇಳಿದ್ದಾರೆ. ದೇವರು ಮತ್ತು ಮನುಷ್ಯರ ನಡುವೆ ಸಂಬಂಧವಿರುವ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ. ಬದಲಾಗಿ ಮನುಷ್ಯ–ಮನುಷ್ಯರ ನಡುವೆ ಸಂಬಂಧವೇರ್ಪಡುವ ಧರ್ಮದ ಬಗ್ಗೆ ನಂಬಿಕೆ ಇದೆ. ಅಂಥ ಧರ್ಮವೆಂದರೆ ಬೌದ್ಧ ಧರ್ಮವೆಂದು ಪ್ರತಿಪಾದಿಸಿದ ಅಂಬೇಡ್ಕರ್ ಕೊನೆಗೆ ಲಕ್ಷಾಂತರ ಜನರೊಂದಿಗೆ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದರು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಅಂಬೇಡ್ಕರ್ ಅವರ ಆರ್ಥಿಕ ನೀತಿ, ಸಮಾಜವಾದಿ ದೃಷ್ಟಿಕೋನ ಬಹಳ ಮಹತ್ವದ್ದು. ಸಮಾಜದಲ್ಲಿನ ಆರ್ಥಿಕ ಅಸಮಾನತೆಗಳನ್ನು ನಿವಾರಿಸಿದಾಗ ಮಾತ್ರ ನೈಜ ಅಭಿವೃದ್ಧಿ ಸಾಧ್ಯ ಎಂಬುದನ್ನು ನಂಬಿದ್ದರು. ರಾಜಕೀಯ ಅಧಿಕಾರದ ಹಂಚಿಕೆಯಾಗಬೇಕು, ಜಾತಿ ಅಸಮಾನತೆ ತೊಲಗಬೇಕು, ತಳಸಮುದಾಯದ ಕಡುಬಡವರಿಗೆ ಭೂಮಿ ದೊರೆಯಬೇಕು ಎಂಬುದು ಅಂಬೇಡ್ಕರ್ ಕನಸಾಗಿತ್ತು. ಆ ಕನಸು ಈಡೇರಿಕೆಗೆಗಾಗಿ ಹಗಲಿರುಳು ಅವರು ಹೋರಾಡಿದರು ಎಂದು ಹೇಳಿದರು. ಕುಲಸಚಿವ ಡಾ. ಎ. ಚೆನ್ನಪ್ಪ ಮಾತನಾಡಿ, ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು. ಅದಕ್ಕಿಂತ ಶ್ರೇಷ್ಠವಾದ ಗ್ರಂಥ ಮತ್ತೊಂದಿಲ್ಲ. ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು. ವೇದಿಕೆಯ ಮೇಲೆ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಹಣಕಾಸು ಅಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು. ಎನ್ಎಸ್ಎಸ್ ಅಧಿಕಾರಿ ಡಾ. ಜಿ. ಎಸ್. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ‘ಡಾ. ಬಾಬಾಸಾಹೇಬ್ ಅಂಬೇಡ್ಕರ್ರವರ ಚಿಂತನೆಗಳು ಮತ್ತು ಸಮಕಾಲೀನ ಭಾರತ’ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವೆಂಕಟೇಶ್ ಎನ್., ಶಿವರಾಜ, ಸಂಗೀತ ನಾಯಕ, ವೆಂಕಟೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಪನ್ಯಾಸಕ ದುರುಗಪ್ಪ ಗಣೇಕಲ್ ಸ್ವಾಗತಿಸಿದರು. ಉಪನ್ಯಾಸಕಿ ಶಿವಲೀಲಾ ನಿರೂಪಿಸಿದರು. ಡಾ. ಪದ್ಮಜಾ ದೇಸಾಯಿ ವಂದಿಸಿದರು.
ಜನಸಂಖ್ಯೆಯ ಅನುಸಾರ ಡಿಲಿಮಿಟೇಶನ್ ದಕ್ಷಿಣ ರಾಜ್ಯಗಳಿಗೆ ಎಸಗುವ ಘೋರ ಅನ್ಯಾಯ: ಮಧು ವೈ.ಎನ್. ಬರಹ
ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುಹಂಚಿಕೆ (Delimitation) ಮಾಡುವುದು ದಕ್ಷಿಣದ ರಾಜ್ಯಗಳಿಗೆ ಎಸಗುವ ಘೋರ ಅನ್ಯಾಯ ಎಂದು ಕನ್ನಡದ ಪ್ರಮುಖ ತಂತ್ರಜ್ಞಾನ ಆಧಾರಿತ ಬರಹಗಾರ ಮಧು ವೈ.ಎನ್.ಅಭಿಪ್ರಾಯಪಟ್ಟಿದ್ದಾರೆ. ಅವರ ಫೇಸ್ಬುಕ್ ಬರಹ ಇಲ್ಲಿದೆ. 'ಜನಸಂಖ್ಯೆಯ ಅನುಸಾರ ಡಿಲಿಮಿಟೇಶನ್ ಮಾಡುವುದು ದಕ್ಷಿಣ ರಾಜ್ಯಗಳಿಗೆ ಎಸಗುವ ಘೋರ ಅನ್ಯಾಯ. ಬಿಜೆಪಿ ಸಂಸದರು ಅಭಿಮಾನಿಗಳು ಅಷ್ಟೇ ಯಾಕೆ ದೇಶದ ಸಮಗ್ರತೆ
ಘಟನೆಯಲ್ಲಿ ಮೃತರ ಸಂಖ್ಯೆ 20ಕ್ಕೆ ಏರಿಕೆ
ಶೋಚನೀಯ ಪರಿಸ್ಥಿತಿಯಲ್ಲಿ ಮಹಿಳಾ ಅತಿಥಿ ಉಪನ್ಯಾಸಕರು
ಮಾತೃತ್ವ ರಜೆ ಕರ್ನಾಟಕದಲ್ಲಿ ಮಹಿಳಾ ಸರಕಾರಿ ನೌಕರರ ಮೊದಲ ಎರಡು ಮಕ್ಕಳಿಗೆ 180 (6 ತಿಂಗಳು) ದಿನಗಳು ವೇತನ ಸಹಿತ ಪ್ರಸೂತಿ ರಜೆ ಹಾಗೂ ಖಾಸಗಿ ವಲಯದಲ್ಲಿ 1961ರ ಹೆರಿಗೆ ಪ್ರಯೋಜನ ಕಾಯ್ದೆ ಅಡಿ 26 ವಾರಗಳು (6 ತಿಂಗಳು) ರಜೆ ಸಿಗುತ್ತದೆ. ಈ ರಜೆಯನ್ನು ಹೆರಿಗೆ ಮುನ್ನ ಅಥವಾ ನಂತರ ಬಳಸಿಕೊಳ್ಳಬಹುದು. ಇದನ್ನು ಹೊರಗುತ್ತಿಗೆ ಮಹಿಳಾ ನೌಕರರಿಗೆ ಮಾತೃತ್ವ ರಜೆ ಸೌಲಭ್ಯ ವಿಸ್ತರಿಸಲಾಗಿದೆ ಹಾಗೂ ಎಲ್ಲಾ ಖಾಸಗಿ ವಲಯದಲ್ಲಿ ಕೂಡ ಈ ರಜೆಯನ್ನು ನೀಡಲಾಗುತ್ತಿದೆ. ಮಹಿಳೆಯರಿಗೆ ಮಾತೃತ್ವ ರಜೆ ನೀಡುತ್ತಿರುವ ಉದ್ದೇಶವೇ ಬಹಳ ಮಹತ್ವದ್ದು. ಗರ್ಭಧಾರಣೆ ಹಾಗೂ ಹೆರಿಗೆಯೂ ಮಹಿಳೆಯರ ದೇಹದ ಮೇಲಿನ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ಹೆರಿಗೆ ನಂತರ ದೇಹವು ಸಹಜ ಸ್ಥಿತಿಗೆ ಮರಳಲು ಮತ್ತು ವಿಶ್ರಾಂತಿ ಪಡೆಯಲು ಸಮಯದ ಅಗತ್ಯವಿದೆ. ನವಜಾತ ಶಿಶುವಿಗೆ ಮೊದಲ ಕೆಲವು ತಿಂಗಳು ತಾಯಿಯ ನಿರಂತರ ಆರೈಕೆ ಮತ್ತು ಹಾಲುಣಿಸುವುದು, ಪೋಷಣೆ ಮಾಡುವುದು, ತಾಯಿ ಹಾಗೂ ಮಗುವಿನ ನಡುವಿನ ಬಾಂಧವ್ಯ ಬೆಳೆಸಲು ಹೆರಿಗೆಯ ನಂತರದ ಒತ್ತಡ ಮತ್ತು ಭಾವನಾತ್ಮಕ ಬದಲಾವಣೆ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮಾತೃತ್ವ ರಜೆ ಸಹಕಾರಿಯಾಗಿದೆ. ಮೇಲಿನ ವಿಷಯವನ್ನು ಚರ್ಚಿಸುತ್ತಿರುವ ಕಾರಣವೆಂದರೆ ಪ್ರಸ್ತುತ ಮಾರ್ಚ್ 2026ರ ಬಜೆಟ್ನಲ್ಲಿ ಮಹಿಳಾ ಅತಿಥಿ ಉಪನ್ಯಾಸಕರಿಗೆ ಕರ್ನಾಟಕ ಸರಕಾರ 90 ದಿನಗಳ (3 ತಿಂಗಳು) ಮಾತೃತ್ವ ರಜೆ ಘೊಷಿಸಿದೆ. ಸರಕಾರಿ ಮತ್ತು ಖಾಸಗಿ ವಲಯದಲ್ಲಿ 1961ರ ಹೆರಿಗೆ ಪ್ರಯೋಜನ ಕಾಯ್ದೆ ಅಡಿ ಮತ್ತು ಗುತ್ತಿಗೆ ನೌಕರರನ್ನು ಒಳಗೊಂಡಂತೆ ಆರು ತಿಂಗಳ ಮಾತೃತ್ವ ರಜೆ ಸೌಲಭ್ಯವನ್ನು ನೀಡಲಾಗಿದೆ. ಆದರೆ ಸರಕಾರ ಮಹಿಳಾ ಅತಿಥಿ ಉಪನ್ಯಾಸಕರಿಗೆ ಮಾತ್ರ ಮೂರು ತಿಂಗಳ ಸೌಲಭ್ಯ ಘೋಷಿಸಿದೆ. ದೈಹಿಕ ಚೇತರಿಕೆ, ಮಗುವಿನ ಆರೈಕೆ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತಿಥಿ ಉಪನ್ಯಾಸಕರಿಗೂ ಆರು ತಿಂಗಳು ಬೇಕಾಗುವುದಿಲ್ಲವೇ? ಅಥವಾ ಅವರು 3 ತಿಂಗಳಲ್ಲಿ ಚೇತರಿಸಿಕೊಳ್ಳಬಹುದು ಎಂದು ಸರಕಾರ ಅವರ ಮೇಲೆ ಇಟ್ಟಿರುವ ಬಲವಾದ ನಂಬಿಕೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದು ಮಹತ್ವದ ವಿಷಯವೆಂದರೆ ಸರಕಾರಿ ಮತ್ತು ಖಾಸಗಿ ವಲಯದ ಮಹಿಳಾ ನೌಕರರು ಹೆಚ್ಚು ವೇತನ ಪಡೆಯುತ್ತಿದ್ದು ಕೇರ್ಟೇಕರ್ಗಳನ್ನು ನೇಮಿಸಿಕೊಂಡು ಮಗು ಪೋಷಣೆಯೊಂದಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಿದೆ. ಆದರೆ ಮಹಿಳಾ ಅತಿಥಿ ಉಪನ್ಯಾಸಕರಿಗೆ ಬರುವ ಅತ್ಯಲ್ಪ ಸಂಬಳದಲ್ಲಿ ಕುಟುಂಬ ನಿಭಾಯಿಸುವುದು ಕಷ್ಟವಾಗಿರುವಾಗ ಕೇರ್ ಟೇಕರ್ ಇಟ್ಟು ಮಗುವನ್ನು ನೋಡಿಕೊಳ್ಳುವುದು ಅಸಾಧ್ಯವಾದ ಮಾತಾಗಿದೆ. ಇದರ ಮುಂದುವರಿದ ಭಾಗವಾಗಿ ಪ್ರತೀ ವರ್ಷ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಹತ್ತಿರದ ಕಾಲೇಜಿನಲ್ಲಿ ಕಾರ್ಯಭಾರದ ಕೊರತೆಯಾದಾಗ ಕೆಲಸದ ಅನಿವಾರ್ಯತೆಯಿಂದ ದೂರದ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು 100 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣ ಮಾಡಿ ಕರ್ತವ್ಯ ಮಾಡುತ್ತಿದ್ದಾರೆ. ಪ್ರಸ್ತುತ ಬಜೆಟ್ನಲ್ಲಿ ಸರಕಾರ ಘೋಷಿಸಿರುವ 90 ದಿನಗಳ ಮಾತೃತ್ವ ರಜೆ ಮುಗಿದ ನಂತರ ಮಗುವಿಗೆ ಹಾಲುಣಿಸಿ, ಆರೈಕೆ ಮಾಡಲು ತೆರಳುವುದಾದರೂ ಹೇಗೆ? ಮಹಿಳಾ ಅತಿಥಿ ಉಪನ್ಯಾಸಕರು ಮನುಷ್ಯ ವರ್ಗಕ್ಕೆ ಸೇರುವುದಿಲ್ಲವೇ? ಋತುಚಕ್ರ ರಜೆ ‘ಋತುಚಕ್ರ ರಜೆ ಪಾಲಿಸಿ 2025’ ಕರ್ನಾಟಕ ಸರಕಾರವು ಮಹಿಳಾ ಉದ್ಯೋಗಿಗಳಿಗೆ ಪ್ರತೀ ತಿಂಗಳು ಒಂದು ದಿನದ ವೇತನ ಸಹಿತ ಋತುಚಕ್ರ ರಜೆ ನೀಡುವುದನ್ನು ಅನುಮೋದಿಸಿದೆ. ಈ ನೀತಿಯು 18ರಿಂದ 52 ವಯಸ್ಸಿನ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಸ್ಥ ಮಹಿಳೆಯರಿಗೆ ಅನ್ವಯವಾಗುತ್ತದೆ. ಇದಕ್ಕೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ವರ್ಷಕ್ಕೆ ಒಟ್ಟು 12 ದಿನಗಳ ರಜೆ ನೀಡುವುದಾಗಿ ನವೆಂಬರ್ 2025ರಲ್ಲಿ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಈ ಸೌಲಭ್ಯವನ್ನು ಸಾರ್ವಜನಿಕ ಮತ್ತು ಖಾಸಗಿ ವಲಯವೆಂಬ ತಾರತಮ್ಯವಿಲ್ಲದೆ ನೀಡಲಾಗಿದೆ. ಆದರೆ ಶಿಕ್ಷಣ ಕ್ಷೇತ್ರದ ವ್ಯವಸ್ಥೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಬಹುತೇಕ ಕಾಲೇಜುಗಳಲ್ಲಿ ಈ ಸೌಲಭ್ಯ ನೀಡಿಲ್ಲ. ಕೆಲವು ಕಾಲೇಜುಗಳಲ್ಲಿ ಪೂರ್ಣಾವಧಿಯ ಮಹಿಳಾ ಅತಿಥಿ ಉಪನ್ಯಾಸಕರಿಗೆ ಈ ಸೌಲಭ್ಯ ಲಭ್ಯವಾದರೂ ಅಲ್ಪಾವಧಿಯ ಅಂದರೆ ವಾರಕ್ಕೆ ಕನಿಷ್ಠ 4, 6, 8, 10, 12, 14 ಗಂಟೆಗಳ ಕಾರ್ಯಭಾರವಿದ್ದಲ್ಲಿ ಅದು ಅಲ್ಪಾವಧಿಯ ಕಾರ್ಯಭಾರವಾಗಿದ್ದು, ಈ ಅವಧಿ ಹೊಂದಿರುವ ಬಹುತೇಕ ಮಹಿಳಾ ಅತಿಥಿ ಉಪನ್ಯಾಸಕರು ವಾರದಲ್ಲಿ 2, 3, 4 ದಿನ ಹೆಚ್ಚೆಂದರೆ 5 ದಿನ ಮಾತ್ರ ಕಾಲೇಜಿಗೆ ಬರುತ್ತಾರೆ. ವಾರದಲ್ಲಿ ಈ ರೀತಿ ಬರುವ ಮಹಿಳಾ ಅತಿಥಿ ಉಪನ್ಯಾಸಕರಿಗೆ ಈ ಋತುಚಕ್ರ ರಜೆ ದೊರೆಯುವುದೇ ಅಥವಾ ಕೇವಲ 2 ರಿಂದ 3 ದಿನ ಬರುವುದರಿಂದ ಈ ಸೌಲಭ್ಯವಿಲ್ಲದಂತಾಗುತ್ತದೆಯೇ? ಎಂಬ ಗೊಂದಲವಿದೆ. ಕಾರಣ 2-3 ದಿನ ಕಾಲೇಜಿಗೆ ಬರುವ ಮಹಿಳಾ ಅತಿಥಿ ಉಪನ್ಯಾಸಕರು ಆ ದಿನಗಳಲ್ಲಿ ಋತು ಚಕ್ರವಾಗಬಾರದೆಂಬ ನಿಯಮವಿಲ್ಲ. ಇವರಿಗೆ ರಜೆ ಇಲ್ಲ ಎಂಬುದಾದರೆ ಈ ಕಾರ್ಯಕ್ರಮದ ಪ್ರಯೋಜನ ಮಹಿಳಾ ಅತಿಥಿ ಉಪನ್ಯಾಸಕರಿಗೆ ಎಲ್ಲಿ ದೊರಕಿದಂತಾಯಿತು? ಈ ಪ್ರಕಾರ ಅತಿಥಿ ಉಪನ್ಯಾಸಕಿಯರು ಮಹಿಳೆಯರಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಸರಕಾರಗಳ ನಿಲುವು ಮತ್ತು ಘೋಷಣೆಗಳು ಮಹಿಳೆಯರ ಸಮಾನತೆಗೆ ಪ್ರಾಧ್ಯಾನತೆ ನೀಡುತ್ತಿರುವುದಾಗಿ ಹೇಳಲಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಮಹಿಳಾ ಸಮಾನತೆಯ ಹೆಸರಿನಲ್ಲಿ ಇವರೇ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎನಿಸುತ್ತದೆ. ಆದ್ದರಿಂದ ಮಹಿಳೆಯರ ನಡುವೆಯೇ ಇಂತಹ ತಾರತಮ್ಯ ಮಾಡುವುದನ್ನು ಇಲ್ಲಿಗೆ ನಿಲ್ಲಿಸಿ ಸರಕಾರ ಸಂಬಂಧಿಸಿದ ಅಧಿಕಾರಿಗಳು ಮತ್ತು ವಿಶೇಷವಾಗಿ ಮಹಿಳಾ ಆಯೋಗಗಳು ಎಚ್ಚೆತ್ತುಕೊಂಡು ಸರಕಾರಿ, ಖಾಸಗಿ ಮಹಿಳಾ ಅತಿಥಿ ಉಪನ್ಯಾಸಕರು ಹಾಗೂ ಅಲ್ಪಾವಧಿ, ದೀರ್ಘಾವಧಿ ಮಹಿಳಾ ಅತಿಥಿ ಉಪನ್ಯಾಸಕರು ಎಂಬ ಭೇದಭಾವ ಮಾಡದೆ ಸಂಪೂರ್ಣವಾಗಿ ಪ್ರಸೂತಿ ರಜೆ ಮತ್ತು ಋತುಚಕ್ರ ರಜೆಯ ಸೌಲಭ್ಯ ಎಲ್ಲರಿಗೂ ದೊರೆಯುವಂತೆ ಮಾಡಬೇಕಿದೆ.
ಸಾಟಿ ಇಲ್ಲದ ಸ್ವರ ಸಾಮ್ರಾಜ್ಞಿ -ಆಶಾ ಭೋಸಲೆ
ಹಂ ದೋನೋ ಚಿತ್ರದ ‘‘ಅಭೀ ನಾ ಜಾವೋ ಚೋಡ್ ಕರ್’’, ಯಾದೋಂಕಿ ಬಾರಾತ್ ಚಿತ್ರದ ‘‘ಚುರಾಲಿಯಾ ಹೈ ತುಮ್ ನೆ ಜೊ ದಿಲ್ ಕೋ’’, ಖೇಲ್ ಖೇಲ್ ಮೆ ಚಿತ್ರದ ‘‘ಸಪ್ನಾ ಮೆರಾ ಟೂಟ್ ಗಯಾ’’, ಗೀತ್ ಗಾಯಾ ಪತ್ಥರೋನೆ ಚಿತ್ರದ ‘‘ತೇರೇ ಖಯಾಲೋಂ ಮೆ ಹಮ್’’, ನವರಂಗ್ ಚಿತ್ರದ ‘‘ಆಧಾ ಹೈ ಚಂದ್ರಮಾ ರಾತ್ ಆಧೀ’’, ಬಂದಿನಿ ಚಿತ್ರದ ‘‘ಅಬ್ ಕೆ ಬರಸ್ ಭೇಜೋ ಭಯ್ಯಾ ಕೊ ಬಾಬುಲ್’’, ಕಾರವಾನ್ ಚಿತ್ರದ ‘‘ಪಿಯಾ ತೂ ಅಬ್ ತೊ ಆಜಾ’’, ಉಮ್ರಾವ್ ಜಾನ್ ಚಿತ್ರದ ‘‘ಯೇ ಕ್ಯಾ ಜಗಾ ಹೈ ದೋಸ್ತೋ’’...ಈ ಮಧುರ ಕಂಠದ ಹಾಡುಗಳಿಗೆ ಒಡತಿಯಾಗಿರುವ ಆಶಾ ಭೋಸಲೆ ಕೇವಲ ರೊಮ್ಯಾಂಟಿಕ್ ಹಾಡುಗಳಿಗೆ ಹೇಗೆ ಸೀಮಿತವಾಗಲು ಸಾಧ್ಯ? ಆದರೂ ಇತ್ತೀಚೆಗೆ ತಮ್ಮ ಪಯಣ ಮುಗಿಸಿದ ಆಶಾ ಜೀ ಅವರನ್ನು ನೆನಪಿಸಿಕೊಳ್ಳುವುದೇ ಹೀಗೆ. ಬಹುಶಃ ಆಕೆಯ ಸ್ವರದಲ್ಲೇ ಅಡಗಿದ್ದ ರೊಮ್ಯಾಂಟಿಸಿಸಂನ ಛಾಯೆ ಈ ವಿಶೇಷ ಬಿರುದಿಗೆ ಕಾರಣವಾಗಿರಬಹುದು. ಆದರೆ 1948ರಿಂದ 2025ರವರೆಗೆ ಆಶಾ ಜೀ ನಡೆದುಬಂದ ಹಾದಿಯಲ್ಲಿ ಒಮ್ಮೆ ಪಯಣಿಸಿದಾಗ, ಈ ಸ್ವರದಲ್ಲಿ ಶಾಸ್ತ್ರೀಯ ಮಾಧುರ್ಯ, ಭಾವನಾತ್ಮಕ ಆರ್ದ್ರತೆ, ಪ್ರಣಯದ ಸವಿ, ತುಂಟಾಟದ ಕಚಗುಳಿ, ದುಃಖದ ಛಾಯೆ, ಹುಡುಗಾಟಿಕೆಯ ಚೇಷ್ಟೆ ಇವೆಲ್ಲವನ್ನೂ ಗುರುತಿಸಬಹುದು. ಸಾವಿರಾರು ಗೀತೆಗಳ ಒಡತಿ ಕೊನೆಯುಸಿರೆಳೆದಾಗ ಒಂದು ಕ್ಷಣ ಆವರಿಸಿದ ಶೂನ್ಯ ಸುಲಭವಾಗಿ ಮರೆಯುವಂತಹುದಲ್ಲ. ಭಾವನೆಗಳನ್ನು ತಟ್ಟುತ್ತಿದ್ದ ಗಾಯನ ಯಾರೇ ಸಂಗೀತ ಪ್ರಿಯರಾದರೂ ತಮ್ಮ ಮೂಡ್ಗೆ ತಕ್ಕಂತಹ ಸಿನೆಮಾ ಹಾಡುಗಳನ್ನು ಕೇಳಬಯಸಿದರೆ ಅಲ್ಲಿ ಥಟ್ಟನೆ ನೆನಪಾಗುವ ಮಧುರ ಕಂಠಗಳೆಂದರೆ ಮುಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಆಶಾ ಭೋಸಲೆ ಎಂಬ ಸುಮಧುರ ಕಂಠದ ಗಾಯಕಿ. ಮನಸ್ಥಿತಿ ಮತ್ತು ಅಭಿವ್ಯಕ್ತಿ (Mood and Expression) ಎರಡನ್ನೂ ಮೇಳೈಸಿ ಗಾಯನದಲ್ಲಿ ತಲ್ಲೀನವಾಗುವ ಗಾಯಕಿಯರಲ್ಲಿ ಅಗ್ರಶ್ರೇಣಿಯಲ್ಲಿ ನಿಲ್ಲುವ ಪ್ರತಿಭೆಯ ಮೇರು ಆಶಾ ಭೋಸಲೆ. ಉಮ್ರಾವ್ ಜಾನ್ ಚಿತ್ರದ ಹಾಡುಗಳು ಇದಕ್ಕೊಂದು ಅತ್ಯುತ್ತಮ ನಿದರ್ಶನ. ಬಹುಶಃ ಈ ಮಾತುಗಳು ಕೆಲವರಿಗಾದರೂ ಉತ್ಪ್ರೇಕ್ಷೆ ಎನಿಸಬಹುದು. ಆದರೆ 55 ವರ್ಷಗಳಿಂದ ಕೇಳುತ್ತಲೇ ಬಂದಿರುವ ಈ ಮಧುರ ಕಂಠವನ್ನು ನೆನಪಿಸಿಕೊಳ್ಳುವಾಗೆಲ್ಲಾ, ಈ ಉತ್ಪ್ರೇಕ್ಷೆಯೇ ಸಹಜ ಎನಿಸಿಬಿಡುತ್ತದೆ. ಹಾಡುವ ಧಾಟಿ- ಶೈಲಿ, ಗಾಯನದ ಲಾಲಿತ್ಯ, ಕಂಠ ವೈವಿಧ್ಯತೆ ಮತ್ತು ಧ್ವನಿಯ ಏರಿಳಿತಗಳನ್ನು ಒಂದೇ ಹಾಡಿನಲ್ಲಿ ಗುರುತಿಸಬಹುದಾದ ಸಾವಿರಾರು ಮಧುರ ಗೀತೆಗಳನ್ನು ಆಶಾ ಜೀ ಬಿಟ್ಟುಹೋಗಿದ್ದಾರೆ. ಹೆಲೆನ್, ಅರುಣಾ ಇರಾನಿಯ ಕ್ಲಬ್ ಡ್ಯಾನ್ಸ್ ಇರಲಿ, ಜಯಾಬಾಧುರಿ-ರೇಖಾ ಅವರ ತುಂಟತನ ಇರಲಿ, ಮೀನಾ ಕುಮಾರಿ ಅವರ ಗಾಂಭೀರ್ಯ ಇರಲಿ, ಹೇಮಾ ಮಾಲಿನಿಯ ಪ್ರಣಯ ಗೀತೆಯಾಗಲೀ, ಉರ್ಮಿಳಾ ಮಾತೋಂಡ್ಕರ್ ‘‘ರಂಗೀಲಾ ರೇ’’ ಅಂತಹ ರಸಭರಿತ ಯವ್ವನದ ಹಾಡಾಗಲೀ ಆಶಾ ಜೀ ಅಲ್ಲಿ ತಮ್ಮ ಮಧುರ ಕಂಠದ ಮೂಲಕ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಸೋದರಿ ಲತಾಮಂಗೇಶ್ಕರ್ ಅವರಷ್ಟು Deep Voice ಅಥವಾ ನಾಭಿ ಸ್ವರ ಹೊರಹೊಮ್ಮಿಸುವ ಸಾಮರ್ಥ್ಯ ಇಲ್ಲ ಎಂದು ಹೇಳಲಾದರೂ, ಗೀತ್ ಗಾಯಾ ಪತ್ಥರೋನೇ ಚಿತ್ರದ ‘‘ತೇರೇ ಖಯಾಲೋ ಮೆ ಹಮ್’’ ಮತ್ತು ನವರಂಗ್ ಚಿತ್ರದ ‘‘ತೂ ಚುಪೀ ಹೈ ಕಹ್ಞಾ’’ (ಮನ್ನಾಡೇ ಅವರೊಂದಿಗೆ) ಹಾಡುಗಳನ್ನು ಕೇಳಿದಾಗ ಇದು ಅರ್ಧಸತ್ಯ ಎನಿಸಿಬಿಡುತ್ತದೆ. ಆಶಾ ಜೀ ಅವರ ಧ್ವನಿಯಲ್ಲಿ ಶೃಂಗಾರ ರಸ, ಪ್ರಣಯ ಭಾವ ಇದ್ದಷ್ಟೇ ಆಳವಾಗಿದ್ದುದು ಭಕ್ತಿ ರಸವೂ ಇದ್ದುದನ್ನು ಕಾಜಲ್ ಚಿತ್ರದ ‘‘ತೊರಾ ಮನ್ ದರ್ಪಣ್ ಕೆಹಲಾಯೇ’’ ಹಾಡಿನಲ್ಲಿ ಗುರುತಿಸಬಹುದು. ಇದೇ ತನ್ಮಯತೆಯನ್ನೇ ಆಶಾ ಜೀ ಮಾದಕ ವ್ಯಸನಿ ಹಾಡುವ ‘‘ದಂ ಮಾರೋ ದಂ’’ (ಹರೇರಾಮ ಹರೇಕೃಷ್ಣ) ಹಾಡಿನಲ್ಲಿ ತೋರುತ್ತಾರೆ. ಅವರ ರೊಮ್ಯಾಂಟಿಕ್ ಹಾಡುಗಳನ್ನೂ ದಾಟಿ ನೋಡುವುದಾದರೆ, ಆಶಾ ಜೀ ಲತಾ ದೀದಿಗೆ ಸರಿಸಾಟಿಯಾಗಿ ನಿಲ್ಲುವ ಕ್ಷಮತೆ ಹೊಂದಿದ್ದರು. ಆದರೆ 1950ರ ಆರಂಭದಲ್ಲಿ ಗಾಯನ ಲೋಕ ಪ್ರವೇಶಿಸಿದಾಗ ಅವರಿಗೆ ಲತಾ ಫೋಬಿಯಾ ಇದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. 1950ರ ಸುವರ್ಣ ಯುಗದಲ್ಲಿ 1940ರ ದಶಕದಲ್ಲಿ ಹಿಂದಿ ಗಾಯಕರಾಗಿ ಪ್ರವೇಶಿಸಿದ ಗಾಯಕರಿಗೆ ಕೆ.ಎಲ್. ಸೈಗಲ್ ಮತ್ತು ಗಾಯಕಿಯರಿಗೆ ನೂರ್ ಜಹಾನ್ ಮಾದರಿಯಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕರೂ ಸಹ ಇವರ ಧಾಟಿಯಲ್ಲೇ ಹಾಡಲು ಗಾಯಕರಿಂದ ನಿರೀಕ್ಷಿಸುತ್ತಿದ್ದರು. ಮುಖೇಶ್ ಅವರ ‘‘ದಿಲ್ ಜಲ್ತಾ ಹೈ ಓ ಜಲ್ನೇ ದೋ’’ (ಪೆಹಲಿ ನಜರ್) ಮತ್ತು ಮುಹಮ್ಮದ್ ರಫಿ ಅವರ ‘‘ಯಹ್ಞಾ ಬದಲಾ ವಫಾ ಕಾ ಬೇವಫಾಯಿ ಕೆ ಸಿವಾ ಕ್ಯಾ ಹೈ’’ (ಚಿತ್ರ ಜುಗ್ನು ನೂರ್ ಜಹಾನ್ ಜೊತೆಗೆ) ಇದರ ಉದಾಹರಣೆಗಳು. ಲತಾ ದೀದಿ ಅವರ ಈ ದಶಕದ ಹಾಡುಗಳಲ್ಲೂ ನೂರ್ ಜಹಾನ್ ಛಾಯೆ ಕಾಣಬಹುದಿತ್ತು. ಆದರೆ 1950ರ ಆರಂಭದ ವೇಳೆಗೆ ಲತಾ ಮಂಗೇಷ್ಕರ್ ತಮ್ಮದೇ ಆದ ವಿಶಿಷ್ಟ ಕಂಠದಿಂದ ಸಂಗೀತ ನಿರ್ದೇಶಕರನ್ನು ಆಕರ್ಷಿಸಿದ್ದರು. ಮಹಲ್ ಚಿತ್ರದ ‘‘ಆಯೇಗಾ ಆಯೇಗಾ ಆಯೇಗಾ ಆನೇವಾಲ’’ ಹಾಡು ಲತಾ ದೀದಿಯ ವಿಶಿಷ್ಟ ಕಂಠದ ಪೇಟೆಂಟ್ ಆಗಿಹೋಗಿತ್ತು. ಈ ಸಮಯದಲ್ಲೇ ಗಾನಲೋಕ ಪ್ರವೇಶಿಸಿದ ಆಶಾ ಭೋಸಲೆಗೆ ಲತಾ ಫೋಬಿಯಾ, ಅಂದರೆ ಲತಾ ಧಾಟಿಯಲ್ಲೇ ಹಾಡಬೇಕಾದ ಅನಿವಾರ್ಯತೆಯ ಭೀತಿ ಕಾಡತೊಡಗಿತ್ತು. ಈ ಭೀತಿಯನ್ನು ಹೋಗಲಾಡಿಸಿದ್ದು Foot Tapping ಸಂಗೀತ ನಿರ್ದೇಶಕ ಒ.ಪಿ. ನಯ್ಯರ್. ಲತಾ ಮಂಗೇಷ್ಕರ್ ಅವರಿಂದ ಒಂದು ಹಾಡನ್ನೂ ಹಾಡಿಸದ ನಯ್ಯರ್ ಅವರಿಗೆ ಆಶಾ ಅವರ ಧ್ವನಿಯಲ್ಲಿ ವಿಶಿಷ್ಟ ಶೈಲಿ ಗೋಚರಿಸಿತ್ತು. ಎಲ್ಲಾ ಖ್ಯಾತ ಸಂಗೀತ ನಿರ್ದೇಶಕರೂ ಲತಾ ಮಂಗೇಷ್ಕರ್ ಅವರ ವಿಶಿಷ್ಟ ಸ್ವರ ಶ್ರುತಿ ಮತ್ತು ವೈವಿಧ್ಯತೆಯ ಶ್ರೇಣಿಯನ್ನು ಗುರುತಿಸಿ ಅವರೇ ಹಾಡಬೇಕೆಂಬ ಅಲಿಖಿತ ನಿಯಮವನ್ನು ಪಾಲಿಸುತ್ತಿದ್ದುದುಂಟು. ಬೇರೆ ಗಾಯಕಿಯರಿಂದಲೂ ಇದೇ ಧಾಟಿ-ಶೈಲಿಯನ್ನು ಅಪೇಕ್ಷಿಸುತ್ತಿದ್ದರು. ಈ ನಡುವೆ ಒ.ಪಿ. ನಯ್ಯರ್ ತಮ್ಮ ಕೈಡಿದು ಲತಾ ಫೋಬಿಯಾ ಹೋಗಲಾಡಿಸಿದರು ಎಂದು ಆಶಾ ಹೇಳಿಕೊಂಡಿದ್ದಾರೆ. ತನ್ನ ಧ್ವನಿಯಲ್ಲಿ ನವಿರಾದ ಕೆಳಸ್ಥಾಯಿಯ ಲಕ್ಷಣವಿದೆ, ದೀರ್ಘಕಾಲ ಶ್ವಾಸ ಹಿಡಿದು ಹಾಡುವ ಕ್ಷಮತೆ ಇದೆ ಎಂದು ಗುರುತಿಸಿದ ನಯ್ಯರ್, ಈ ಗುಣಗಳನ್ನೇ ಬಳಸಿಕೊಂಡು, ಮಂದಗತಿಯ, ದುಃಖಭರಿತ, ವಿಷಣ್ಣತೆಯ ಭಾವವನ್ನು ಅವರ ಹಾಡುಗಳಲ್ಲಿ ಸೃಷ್ಟಿಸುತ್ತಿದ್ದರು ಎಂದು ಆಶಾಭೋಸಲೆ ಸಂದರ್ಶನವೊಂದರಲ್ಲಿ ಹೇಳುತ್ತಾರೆ. (ರಾಜು ಭರತನ್ ಅವರA Musical Biography). ವಿಶಿಷ್ಟ ಕಂಠದ ಪ್ರಯೋಗಶೀಲ ಆಶಾ ಇತರ ಸಂಯೋಜಕರು ಕಟ್ಟುನಿಟ್ಟಾಗಿ ಗಾಯಕರು ಅವರ ಸಂಯೋಜನೆಗಳನ್ನು ಹಾಗೆಯೇ ಹಾಡುವಂತೆ ಅಪೇಕ್ಷಿಸುತ್ತಿದ್ದರು, ಆದರೆ ನಯ್ಯರ್ ಆಶಾ ಭೋಸಲೆಗೆ ‘ಈಗ ಮುಂದಿನ ಚರಣವನ್ನು ನೀವು ಬಯಸಿದ ರೀತಿಯಲ್ಲಿ ಹಾಡಿ’ ಎಂದು ಮುಕ್ತ ಸ್ವಾತಂತ್ರ್ಯ ನೀಡುತ್ತಿದ್ದರು ಎಂದು ಆಶಾ ಜೀ ನೆನಪಿಸಿಕೊಳ್ಳುತ್ತಾರೆ. ಇದೇ ರೀತಿ ತಮ್ಮ ಪತಿ ರಾಹುಲ್ ದೇವ್ ಬರ್ಮನ್ ಅವರ ಸಂಗೀತ ನಿರ್ದೇಶನದಲ್ಲೂ ಆಶಾ ಜೀ ತಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದರು. ಕಟೀ ಪತಂಗ್ ಚಿತ್ರದ ಒಂದು ಕ್ಲಬ್ ದೃಶ್ಯದಲ್ಲಿ ಚಿತ್ರದ ನಿರ್ದೇಶಕರು ಸಂಭಾಷಣೆಯಾಗಿ ಬರೆದಿದ್ದ ಸಾಲುಗಳನ್ನು ಉನ್ನತ್ತತೆಯ ಹಾಡನ್ನಾಗಿ ಪರಿವರ್ತಿಸಿದ್ದ ಆರ್.ಡಿ. ಬರ್ಮನ್ ‘‘ಮೇರಾ ನಾಮ್ ಹೈ ಶಬ್ನಮ್’’ ಹಾಡಿನ ಮೂಲಕ ಆಶಾ ಭೋಸಲೆಯ ವಿಶಿಷ್ಟ ಕಂಠಶೈಲಿಗೆ ಮೆರುಗು ನೀಡಿದ್ದರು. ಸಿಐಡಿ (1956) ಚಿತ್ರದ ‘‘ಲೇಕೆ ಪೆಹಲಾ ಪೆಹಲಾ ಪ್ಯಾರ್’’ (ರಫಿ-ಶಂಶಾದ್ ಬೇಗಂ ಜೊತೆಗೂಡಿ) ರೊಮ್ಯಾಂಟಿಕ್ ಹಾಡಿನಿಂದ ತಮ್ಮದೇ ಆದ ವಿಶಿಷ್ಟ ಹಾಡುಗಳೊಂದಿಗೆ ರಂಜಿಸಿದ ಒ.ಪಿ. ನಯ್ಯರ್ ಆಶಾಭೋಸಲೆ ಮತ್ತು ಮುಹಮ್ಮದ್ ರಫಿ ಅವರ ಗಾಯನ ಜೋಡಿಯನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದ್ದರು. ನಯಾದೌರ್ ಚಿತ್ರದ ‘‘ಮಾಂಗ್ ಕೆ ಸಾಥ್ ತುಮ್ಹಾರಾ’’ , ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರದ ‘‘ಬಹುತ್ ಶುಖ್ರಿಯಾ ಬಡೀ ಮೆಹರ್ಬಾನಿ’’ ಮೊಹಬ್ಬತ್ ಜಿಂದಗಿ ಹೈ (1966) ಚಿತ್ರದ ‘‘ರಾತೋಂ ಕೋ ಚೋರಿ ಚೋರಿ’’ ಮೊದಲಾದ ಸುಮಧುರ ಗೀತೆಗಳು ನಯ್ಯರ್-ಆಶಾ ಜೋಡಿಯಿಂದ ಸಿನಿರಸಿಕರನ್ನು ರಂಜಿಸಿದೆ, ಇಂದಿಗೂ ರಂಜಿಸುತ್ತಲೇ ಇದೆ. ‘‘ನನ್ನ ಸುದೀರ್ಘ ವೃತ್ತಿಜೀವನದಲ್ಲಿ, ನಾನು ವಿಭಿನ್ನ ಶೈಲಿಗಳನ್ನು ಹೊಂದಿದ್ದ ಮತ್ತು ತಮ್ಮದೇ ಆದ ಪರಿಣತಿ ವಿಭಾಗದಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ಎಲ್ಲಾ ಸಂಯೋಜಕರೊಂದಿಗೆ ಹಾಡಿದ್ದೇನೆ. ಆದರೆ ಕೆಲವೇ ಕೆಲವು ಟ್ರೆಂಡ್ಗಳು ಇದ್ದವು. ಅವರು ವಿಭಿನ್ನ ವೈಯಕ್ತಿಕ ಶೈಲಿಯನ್ನು ಅಳವಡಿಸಿದ್ದೇ ಅಲ್ಲದೆ ಇತರರು ಅದನ್ನು ಅನುಸರಿಸುವಂತೆ ಪ್ರಭಾವ ಬೀರಿದರು. ಒ.ಪಿ. ನಯ್ಯರ್ ಅಂತಹ ಕ್ರಾಂತಿಕಾರಿ ಟ್ರೆಂಡ್ ಸೃಷ್ಟಿಸಿದರು’’ ಎಂದು ಆಶಾ ಒ.ಪಿ. ನಯ್ಯರ್ ಅವರಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಇದೇ ರೀತಿ ಆಶಾ ಭೋಸಲೆ ಅವರ ವೈವಿಧ್ಯತೆಯನ್ನು ಬಳಸಿಕೊಂಡು ಟ್ರೆಂಡ್ ಸೃಷ್ಟಿಸಿದವರು ರಾಹುಲ್ ದೇವ್ ಬರ್ಮನ್. ತೀಸ್ರಿ ಮಂಝಿಲ್ ಚಿತ್ರದ ‘‘ಆಜಾ ಆಜಾ ಮೈ ಹ್ಞೂ ಪ್ಯಾರ್ ತೆರಾ’’ ಹಾಡಿನಲ್ಲಿ ಆಶಾ ಜೀ ಪ್ರಯೋಗಿಸಿದ ಧ್ವನಿ ಏರಿಳಿತ ಮತ್ತು ಶ್ವಾಸ ಬಿಗಿಹಿಡಿದು ಹಾಡುವ ಶೈಲಿ ಈ ಜೋಡಿಯನ್ನು ಜನಪ್ರಿಯತೆಯ ಶಿಖರಕ್ಕೇರಿಸಿತ್ತು. ವಿದಾಯ ಹೇಳುವ ಮುನ್ನ... ಅಶಾ ಭೋಸಲೆ ಹಲವು ರಾಷ್ಟ್ರೀಯ, ಫಿಲಂ ಫೇರ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇಜಾಝತ್ (1987) ಚಿತ್ರದ ‘‘ಮೇರಾ ಕುಚ್ ಸಾಮಾನ್ ತುಮ್ಹಾರಿ ಪಾಸ್ ’’ ಮತ್ತು 1981 ಉಮ್ರಾವ್ ಜಾನ್ ಚಿತ್ರದ ದಿಲ್ ಚೀಜ್ ಕ್ಯಾ ಹೈ ಆಪ್ ಮೆರಿ ಜಾನ್ ಲೀಜಿಯೇ’’ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಹಲವು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1977ರಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರೊಡನೆ ‘ಐegಚಿಛಿಥಿ’ ಆಲ್ಬಮ್ ಗ್ರಾಮಿ ಅವಾರ್ಡ್ಗೆ ನಾಮ ನಿರ್ದೇಶನ ಪಡೆದಿತ್ತು. 2008ರಲ್ಲಿ ಪದ್ಮವಿಭೂಷಣ್ ಮತ್ತು 2000ದಲ್ಲಿ ಜೀವಮಾನ ಸಾಧನೆಗೆ ನೀಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಶಾ ಭೋಸಲೆ ಪಾತ್ರರಾಗಿದ್ದಾರೆ. ಆದರೆ 55 ವರ್ಷಗಳಿಂದ ಈ ಸುಮಧುರ ಕಂಠದ ಸವಿಯನ್ನು ಆನಂದಿಸಿರುವವರಿಗೆ, ನನ್ನನ್ನೂ ಸೇರಿದಂತೆ, ಆಶಾ ಮತ್ತು ಲತಾ ಸಂಗೀತ ಲೋಕದ ಎರಡು ಹೃದಯಗಳಂತೆಯೇ ಕಾಣುತ್ತಾರೆ. ಈಗ ಇಬ್ಬರೂ ನಮ್ಮೊಡನಿಲ್ಲ. ಸಂಗೀತ ಸಾಮ್ರಾಜ್ಞಿ ಆಶಾ ಜೀಯವರಿಗೆ ಅಂತಿಮ ನಮನಗಳು. ಪ್ರತಿಭೆಯಿಂದಲೇ ಸಿಕ್ಕ ಅವಕಾಶಗಳು 1950-60ರ ದಶಕದಲ್ಲಿ ಎಸ್.ಡಿ. ಬರ್ಮನ್ ಮತ್ತು ಲತಾ ಮಂಗೇಷ್ಕರ್ ನಡುವೆ ವಿರಸ ಏರ್ಪಟ್ಟು ಕೆಲವು ವರ್ಷಗಳ ಕಾಲ ಎಸ್.ಡಿ. ಬರ್ಮನ್ ಲತಾ ದೀದಿಗೆ ಹಾಡುಗಳನ್ನು ನೀಡಿರಲಿಲ್ಲ. ಈ ಅವಧಿಯಲ್ಲಿ ಆಶಾ ಭೋಸಲೆ, ಬರ್ಮನ್ ನಿರ್ದೇಶನದಲ್ಲಿ ಸುಮಧುರ ಗೀತೆಗಳನ್ನು ಹಾಡಿದ್ದರು. ಸುಜಾತಾ ಚಿತ್ರದ ‘‘ಕಾಲಿ ಘಟಾ ಛಾಯಿ’’ ಹಾಡು ಏಕ್ದಂ ಜನಪ್ರಿಯವಾಗಿತ್ತು. ದೇವಾನಂದ್ ನಟನೆಯ ಜೆವೆಲ್ ಥೀಫ್ ಚಿತ್ರದಲ್ಲಿ ಬರ್ಮನ್-ಲತಾ ಪುನಃ ಒಂದಾಗಿದ್ದರು, ‘‘ದಿಲ್ ಪುಕಾರೇ ಆರೆ ಆರೆ ಆರೆ’’ ಹಾಡಿನ ಮೂಲಕ. ಆದರೆ ಈ ಚಿತ್ರದಲ್ಲಿ ಆಶಾ ಹಾಡಿರುವ ‘‘ರಾತ್ ಅಖೇಲಿ ಹೈ ಬುಜ್ಗಯೆ ದಿಯೇ’’ ಹಾಡು ರಸಿಕರ ಹೃದಯ ಗೆದ್ದಿತ್ತು. ಈ ಹಾಡಿನಲ್ಲಿ ಆಶಾ ಭೋಸಲೆಯ ಶ್ವಾಸ ನಿಯಂತ್ರಣ ಅಭೂತಪೂರ್ವ ಎನ್ನಬಹುದು. ಆರ್.ಡಿ. ಬರ್ಮನ್-ಆಶಾ ಭೋಸಲೆ ನಿಜ ಜೀವನದಲ್ಲಿ ದಂಪತಿಯಾಗಿದ್ದಂತೆಯೇ ಸಿನೆಮಾ ಹಾಡುಗಳಲ್ಲೂ ಮರೆಯಲಾಗದ ಜೋಡಿಯಾಗಿದ್ದರು. ಹರೇ ರಾಮ ಹರೇಕೃಷ್ಣ ಚಿತ್ರದಿಂದ ಆರಂಭವಾದ ಈ ಜೋಡಿಯ ಪಯಣದಲ್ಲಿ ನೂರಾರು ಹಾಡುಗಳು ಚಿರಸ್ಮರಣೀಯವಾಗಿವೆ. 1981ರಲ್ಲಿ ಬಂದ ಅಮಿತಾಭ್ ಬಚ್ಚನ್ ನಟನೆಯ ಕಾಲಿಯಾ ಚಿತ್ರದಲ್ಲಿ ‘‘ಸನಮ್ ತುಮ್ ಜಹ್ಞಾ ಮೆರಾ ದಿಲ್ ವಹ್ಞಾ’’ ಎಂಬ ಹಾಡು ಆಶಾಭೋಸಲೆಯ ಸ್ವರ ವೈವಿಧ್ಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಅದೇ ರೀತಿ ಸದಾ ನೆನಪಾಗುವ ಹಾಡು ಡಾನ್ ಚಿತ್ರದ (1978) ‘‘ಏ ಮೆರಾ ದಿಲ್ ಪ್ಯಾರ್ ಕಾ ದೀವಾನಾ’’ ದೇವಾನಂದ್ ಅವರ ಲೂಟ್ ಮಾರ್ ಚಿತ್ರದ (1980) ‘‘ಜಬ್ ಛಾಯೇ ಮೇರಾ ಜಾದೂ’’ ಹಾಡುಗಳು ಆಶಾ ಭೋಸಲೆಯ ಸ್ವರ ವೈವಿಧ್ಯತೆ ಮತ್ತು ವಿಶಿಷ್ಟ ಶೈಲಿಗೆ ಉದಾಹರಣೆಗಳು. 1940-90ರ ದಶಕದ ಹಿಂದಿ ಚಲನಚಿತ್ರ ಗಾಯಕ-ಗಾಯಕಿಯರ ಶ್ರೇಷ್ಠತೆಯನ್ನು ಅವರು ಪಡೆದ ಪ್ರಶಸ್ತಿಗಳಿಂದ ಅಳೆಯುವುದು ಸಾಧ್ಯವೇ ಇಲ್ಲ. ಏಕೆಂದರೆ ಅವರಲ್ಲೇ ಇದ್ದ ಸ್ಪರ್ಧೆ ಕೆಲವರನ್ನು ಪ್ರಶಸ್ತಿಯಿಂದ ವಂಚಿಸುತ್ತಿತ್ತು. ಕೆಲವೊಮ್ಮೆ ಅತ್ಯುತ್ತಮ ಎನಿಸುವ ಹಾಡುಗಳಿಗೆ ಬದಲು ಸಾಧಾರಣ ಹಾಡುಗಳಿಗೂ ಪ್ರಶಸ್ತಿ ಲಭಿಸುತ್ತಿತ್ತು. ಮೇರಾ ನಾಮ್ ಜೋಕರ್ ಚಿತ್ರದ ‘‘ಭಾಯ್ ಜರ ದೇಖ್ ಕೆ ಚಲೋ’’ ಹಾಡಿಗೆ ರಾಷ್ಟ್ರಪ್ರಶಸ್ತಿ ಬಂದಾಗ ಖ್ಯಾತ ಗಾಯಕ ಮನ್ನಾ ಡೇ ವಿವಿಧ್ ಭಾರತಿಯ ಸಂದರ್ಶನವೊಂದರಲ್ಲಿ ‘‘ನನ್ನ ಬಸಂತ್ ಬಹಾರ್, ಮೇರಿ ಸೂರತ್ ತೇರಿ ಆಂಖೆ, ಕಾಬೂಲಿವಾಲಾ, ಉಪಕಾರ್ ಚಿತ್ರದ ಹಾಡುಗಳಿಗೆ ಹೋಲಿಸಿದರೆ ಇದು ಪ್ರಶಸ್ತಿಗೆ ಅರ್ಹವಾಗುವ ಹಾಡೇ ಅಲ್ಲ, ಆದರೆ ಆ ಹಾಡುಗಳಿಗೆ ಇಂತಹ ಅದೃಷ್ಟ ಇರಲಿಲ್ಲ’’ ಎಂದು ಹೇಳುತ್ತಾರೆ.
ಐಟಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ: ಹಳ್ಳ ಹಿಡಿದ ಅಭಿವ್ಯಕ್ತಿ ಸ್ವಾತಂತ್ರ್ಯ
ಸರಕಾರದ ಹಿಡಿತ ಬಲಪಡಿಸುವುದು. ಜನರು ಏನು ಹೇಳುತ್ತಾರೆ, ನೋಡುತ್ತಾರೆ, ಕೇಳುತ್ತಾರೆ ಮತ್ತು ಆನ್ಲೈನ್ನಲ್ಲಿ ಏನು ಹಂಚಿಕೊಳ್ಳುತ್ತಾರೆ ಎನ್ನುವುದನ್ನು ನೋಡುವ ಅಧಿಕಾರವನ್ನು ಕಾರ್ಯಾಂಗದಲ್ಲಿ ಕೇಂದ್ರೀಕರಿಸಲಾಗಿದೆ; ಇದರಿಂದ ಅಧಿಕಾರವು ನ್ಯಾಯಾಲಯಗಳಿಂದ ಕಾರ್ಯಾಂಗಕ್ಕೆ ವರ್ಗಾವಣೆಯಾಗಿದೆ. ಉತ್ತರದಾಯಿತ್ವವಿಲ್ಲದ ಅಧಿಕಾರ ಕಾಲಕ್ರಮೇಣ ಎಲ್ಲರ ಮೇಲೆ ಪ್ರಯೋಗಿಸಲ್ಪಡುತ್ತದೆ. ಸರ್ವಾಧಿಕಾರಗಳು ಒಂದೇ ದಿನದಲ್ಲಿ ಉದ್ಭವಿಸುವುದಿಲ್ಲ; ಭಯದ ಸೃಷ್ಟಿ ಮತ್ತು ನಿಯಂತ್ರಣದ ಮೂಲಕ ಕಾಲಕ್ರಮೇಣ ರೂಪುಗೊಳ್ಳುತ್ತವೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ)ವು ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿಗಳು ಹಾಗೂ ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು 2021ಕ್ಕೆ ಮತ್ತೊಂದು ತಿದ್ದುಪಡಿ ತರಲು ಕರಡು ಪ್ರಸ್ತಾವವನ್ನು ಪ್ರಕಟಿಸಿದೆ. ಒಂದು ವೇಳೆ ಅಂಗೀಕೃತಗೊಂಡರೆ, ವಾಕ್ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಇನ್ನಷ್ಟು ಬಿಗಿಯಾಗಲಿದೆ. ಶಾಸಕಾಂಗದ ಸಮ್ಮತಿ ಇಲ್ಲದೆ, ಸಂಸತ್ನಲ್ಲಿ ಚರ್ಚೆ ನಡೆಸದೆ ಜನರ ಮೂಲಭೂತ ಹಕ್ಕುಗಳನ್ನು ಕಸಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಐಟಿ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಸುಪ್ರೀಂ ಕೋರ್ಟ್ ಆನ್ಲೈನ್ ಗೋಪ್ಯತೆ ಮತ್ತು ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ದಿಲ್ಲಿ ಹೈಕೋರ್ಟ್ಗೆ ವರ್ಗಾಯಿಸಿದೆ. ನ್ಯಾಯಾಲಯ ಈ ಅರ್ಜಿಗಳನ್ನು ಕ್ರೋಡೀಕರಿಸಿದ್ದು, ಮೊದಲಿಗೆ ಡಿಜಿಟಲ್ ಮೀಡಿಯಾ ಮತ್ತು ಆನಂತರ ಮಧ್ಯವರ್ತಿ ಮಾರ್ಗಸೂಚಿಗಳ ಕುರಿತು ವಿಚಾರಣೆ ನಡೆಯಲಿದೆ. ಸರಕಾರ ನ್ಯಾಯಾಲಯದ ತೀರ್ಪಿಗೆ ಕಾಯುವ ಬದಲು ಕಾಯ್ದೆಗೆ ತರಾತುರಿಯಿಂದ ಇನ್ನೊಂದು ತಿದ್ದುಪಡಿ ತರಲು ಮುಂದಾಗಿದೆ. ನಾಲ್ಕನೇ ತಿದ್ದುಪಡಿ ಐಟಿ ಕಾಯ್ದೆಗೆ 2021ರ ನಂತರ ನಾಲ್ಕು ತಿದ್ದುಪಡಿ ತರಲಾಗಿದೆ. ಅಕ್ಟೋಬರ್ 2022ರ ತಿದ್ದುಪಡಿ ಮೂಲಕ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ಸೃಷ್ಟಿಸಲಾಯಿತು. ಸಾಮಾಜಿಕ ವೇದಿಕೆಗಳ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗುವ ಮನವಿಗಳ ಪರಿಶೀಲನೆಗೆ ಅಧಿಕಾರಿಗಳ ಮಂಡಳಿ ರಚನೆ ಹಾಗೂ ನಿಯಮ 3ಕ್ಕೆ ತಿದ್ದುಪಡಿ ಮಾಡಿ, ‘ಮಧ್ಯವರ್ತಿ ವೇದಿಕೆಗಳು ಅನುಸರಣೆಯನ್ನು ಖಾತ್ರಿಗೊಳಿಸಬೇಕು’ ಮತ್ತು ನಿಷೇಧಿತ ವಿಷಯಗಳನ್ನು ತೆಗೆದುಹಾಕಲು ‘ತಾರ್ಕಿಕ ಪ್ರಯತ್ನ’ ನಡೆಸಬೇಕು ಎಂದು ಹೇಳಲಾಯಿತು. ವಿಷಯವೊಂದನ್ನು ತೆಗೆದುಹಾಕಲು ನೀಡಿದ್ದ ಕಾಲಾವಧಿಯನ್ನು 72 ಗಂಟೆಗೆ ಕಡಿಮೆ ಮಾಡಲಾಯಿತು. ಇದರಿಂದ ವೇದಿಕೆಗಳು ವಿಷಯವನ್ನು ಶೀಘ್ರವಾಗಿ ಪರಿಶೀಲಿಸಿ, ತ್ವರಿತವಾಗಿ ಹಾಗೂ ಹೆಚ್ಚು ಸಂಖ್ಯೆಯಲ್ಲಿ ತೆಗೆದುಹಾಕುವಂತೆ ಆಯಿತು. ಏನು ಪ್ರಕಟಿಸಬಹುದು/ಬಾರದು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕೇಂದ್ರಕ್ಕೆ ನೀಡಿತು. ಜನರ ಮಾತುಗಳು ಅಂಕುಶಕ್ಕೆ ಸಿಲುಕಿದವು. ಎಪ್ರಿಲ್ 2023ರ ತಿದ್ದುಪಡಿ ಇನ್ನೊಂದು ಹೆಜ್ಜೆ ಮುಂದೆ ಹೋಯಿತು. ಆನ್ಲೈನ್ ಆಟ ಕುರಿತ ನಿಯಮಗಳೊಟ್ಟಿಗೆ, ನಿಯಮ 3(1)(ಬಿ) ಅಡಿ ನಿಜಾಂಶ ಪತ್ತೆ ಅಧಿಕಾರವನ್ನು ನೀಡಿತು. ಸಚಿವಾಲಯದ ಸತ್ಯಾಂಶ ಪರಿಶೀಲನೆ ಘಟಕವು ನಕಲಿ, ಸುಳ್ಳು ಇಲ್ಲವೇ ಹಾದಿ ತಪ್ಪಿಸುತ್ತದೆ ಎಂದು ಗುರುತಿಸಿದ ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ತಡೆಯಲು ವೇದಿಕೆಗಳು ತಾರ್ಕಿಕ ಪ್ರಯತ್ನ ಮಾಡಬೇಕು ಎಂದು ವಿಧಿಸಿತು. ಸೆಪ್ಟಂಬರ್ 2024ರಲ್ಲಿ ಬಾಂಬೆ ಹೈಕೋರ್ಟ್, ಈ ತಿದ್ದುಪಡಿ ಅಸಾಂವಿಧಾನಿಕ ಎಂದು ಹೇಳಿ ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಾರ್ಚ್ 2026ರಲ್ಲಿ ನಿರಾಕರಿಸಿತು. ಅಕ್ಟೋಬರ್ 2025ರ ತಿದ್ದುಪಡಿಯು ಸಹಯೋಗ್ ಪೋರ್ಟಲ್ನ್ನು ವಿಧ್ಯುಕ್ತಗೊಳಿಸಿತು; ಈ ಪೋರ್ಟಲ್ ಪೊಲೀಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ವಿಷಯವೊಂದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಲು ರೂಪಿಸಿದ ಏಕೀಕೃತ ಆನ್ಲೈನ್ ವೇದಿಕೆ. ನಿಯಮ 3(1)(ಡಿ) ಪ್ರಕಾರ, ನ್ಯಾಯಾಂಗದ ಆದೇಶ ಅಥವಾ ಜಂಟಿ ಕಾರ್ಯದರ್ಶಿ ಇಲ್ಲವೇ ಅದಕ್ಕಿಂತ ಮೇಲ್ಮಟ್ಟದ ಅಧಿಕಾರಿ(ಪೊಲೀಸ್ ಆಗಿದ್ದರೆ ಡಿಐಜಿ) ಹೇಳಿದಲ್ಲಿ ವಿಷಯ ತೆಗೆದುಹಾಕಬೇಕು; ಆನಂತರ ಕಾರ್ಯದರ್ಶಿ ಹಂತದ ಅಧಿಕಾರಿಯಿಂದ ವೇದಿಕೆಯ ಮಾಸಿಕ ಪರಿಶೀಲನೆ ನಡೆಸಬೇಕು. ಸೂಕ್ತವಲ್ಲ ಎಂದು ಪರಿಗಣಿಸಿದ ವಿಷಯವನ್ನು 36 ಗಂಟೆಗಳೊಳಗೆ ತೆಗೆದುಹಾಕಬೇಕು. ಈ ತಿದ್ದುಪಡಿಯು ಕೇಂದ್ರೀಕೃತ, ಪೋರ್ಟಲ್ ಆಧರಿತ ಸೆನ್ಸರ್ಶಿಪ್ಗೆ ದಾರಿ ಮಾಡಿಕೊಟ್ಟಿದೆ. ವಿಷಯ ತೆಗೆಯಲು ಸೆಕ್ಷನ್ 69 ಹೇಳುವ ಪ್ರಕ್ರಿಯೆಗಳನ್ನು ಅನುಸರಿಸುತ್ತಿಲ್ಲ ಮತ್ತು 2009ರ ಬ್ಲಾಕಿಂಗ್ ನಿಯಮಗಳು ಪಾಲನೆಯಾಗುತ್ತಿಲ್ಲ; ವಿಷಯದ ಮೂಲಲೇಖಕ ಇಲ್ಲವೇ ಬಳಕೆದಾರರಿಗೆ ನೋಟಿಸ್ ನೀಡುವುದಿಲ್ಲ ಮತ್ತು ಅಹವಾಲು ಆಲಿಸುವುದಿಲ್ಲ. ಮಾರ್ಚ್ 30, 2026ರ ತಿದ್ದುಪಡಿ ಕರಡು ಗಾವುದ ದೂರ ಮುಂದೆ ಹೋಗಿದೆ. ಡಿಜಿಟಲ್ ಸೇವೆ ಒದಗಿಸುವ ವೇದಿಕೆಗಳು/ಮಧ್ಯವರ್ತಿಗಳಿಗೆ ಸ್ಪಷ್ಟೀಕರಣ, ಸಲಹೆ, ನಿರ್ದೇಶನ ಮತ್ತು ಇನ್ನಿತರ ಆದೇಶ ನೀಡಲು ಎಂಇಐಟಿವೈಗೆ ಅಧಿಕಾರ ನೀಡಲಿದೆ. ಐಟಿ ಕಾಯ್ದೆಯ ಸೆಕ್ಷನ್ 79ರಡಿ ಲಭ್ಯವಿರುವ ನಿರ್ದಿಷ್ಟ ಹೊಣೆಗಾರಿಕೆಯಿಂದ ರಕ್ಷಣೆ ನೀಡುವ ‘ಸೇಫ್ ಹಾರ್ಬರ್’ ಸವಲತ್ತು ಉಳಿಸಿಕೊಳ್ಳಲು ವೇದಿಕೆಗಳು ಸಚಿವಾಲಯದ ನಿರ್ದೇಶನಗಳನ್ನು ಪಾಲಿಸುವುದು ಅನಿವಾರ್ಯ ಆಗಲಿದೆ. ಈ ಮೊದಲು, ಸೇಫ್ ಹಾರ್ಬರ್ ಸವಲತ್ತಿಗೆ ಸರಕಾರದ ನಿರ್ಬಂಧಗಳು ಅನ್ವಯಿಸುತ್ತಿರಲಿಲ್ಲ; ತಿದ್ದುಪಡಿ ಮೂಲಕ ವೇದಿಕೆಗಳು ಪ್ರಕಟಿಸುವ ವಿಷಯಗಳಿಗೆ ಅವುಗಳನ್ನೇ ಸಂಪೂರ್ಣ ಹೊಣೆಗಾರರನ್ನಾಗಿಸುವ ಪ್ರಯತ್ನ ನಡೆದಿದೆ. ಇದರಿಂದಾಗಿ ವೇದಿಕೆಗಳು ಸರಕಾರದ ದೃಷ್ಟಿಗೆ ಬೀಳುವುದನ್ನು ತಪ್ಪಿಸಿಕೊಳ್ಳಲು ಹೆಚ್ಚು ಎಚ್ಚರಿಕೆಯಿಂದ ವರ್ತಿಸಲು ತೊಡಗುತ್ತವೆ. ಎರಡನೆಯದಾಗಿ, ಪ್ರಸ್ತಾವದಲ್ಲಿ ಮೇಲ್ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸುವ ಅಂಶವೊಂದು ಇದೆ-ಅಂತರ್ ವಿಭಾಗೀಯ ಸಮಿತಿಯೊಂದನ್ನು ರಚಿಸಿ, ಅದಕ್ಕೆ ಮಧ್ಯವರ್ತಿಗಳು/ಬಳಕೆದಾರರು ಸೃಷ್ಟಿಸುವ ವಿಷಯಗಳ ಪರಿಶೀಲನೆ ನಡೆಸುವ ಅಧಿಕಾರ ಕೊಡುವುದು. ಇದರಿಂದ ಆನ್ಲೈನ್ ಸಂವಹನ ಕಠಿಣ ಪರಿಶೀಲನೆಗೆ ಸಿಲುಕಲಿದೆ. ಡಿಜಿಟಲ್ ಸುದ್ದಿ ವೇದಿಕೆಗಳಲ್ಲದೆ, ಬಾಹ್ಯ ಮೂಲಗಳ ಸುದ್ದಿಯನ್ನು ಹಂಚಿಕೊಳ್ಳುವ ಬಳಕೆದಾರರು-ಇನ್ಫ್ಲುಯನ್ಸರ್ಗಳನ್ನು ಬಾಧ್ಯಸ್ಥರನ್ನಾಗಿ ಮಾಡುವ ಸಾಧ್ಯತೆಯಿದೆ. ಜೊತೆಗೆ, ನಿಯಮ 3(1)(ಡಿ) ಅಡಿ ವಿಷಯವನ್ನು ತೆಗೆದುಹಾಕಬೇಕಿರುವ ಅವಧಿಯನ್ನು 30ರಿಂದ 3 ಗಂಟೆಗೆ, ಕುಂದುಕೊರತೆ ಪರಿಹಾರ ಅವಧಿಯನ್ನು 15ರಿಂದ 7 ದಿನಕ್ಕೆ, ಸೂಕ್ಷ್ಮ/ಅನ್ಯೋನ್ಯ ವಿಷಯಗಳನ್ನು ತೆಗೆದುಹಾಕಬೇಕಿರುವ ಅವಧಿಯನ್ನು 24ರಿಂದ 2 ಗಂಟೆಗೆ ಹಾಗೂ ಇನ್ನಿತರ ವಿಷಯಗಳಿಗೆ 72 ರಿಂದ 36 ಗಂಟೆಗೆ ಕಡಿಮೆಮಾಡಿದೆ. ಹೊಸ ಪರಿಶೀಲನೆ ವ್ಯವಸ್ಥೆ ‘ಸಿಂಥೆಟಿಕಲಿ ಜನರೇಟೆಡ್ ಇನ್ಫರ್ಮೇಷನ್(ಕೃತಕವಾಗಿ ಸೃಷ್ಟಿಸಿದ ಮಾಹಿತಿ)’ ಯನ್ನು ಪರಿಚಯಿಸಿದೆ- ಇಂಥ ವಿಷಯವನ್ನು ಸೃಷ್ಟಿಸುವ ಇಲ್ಲವೇ ವಿತರಿಸುವ ವೇದಿಕೆಗಳು ತಾರ್ಕಿಕ ಹಾಗೂ ಸೂಕ್ತವಾದ ತಾಂತ್ರಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು; ಮಧ್ಯವರ್ತಿಗಳು ಪ್ರಕಟಣೆಗೆ ಮುನ್ನ ಬಳಕೆದಾರರಿಂದ ಹೇಳಿಕೆ, ವಿಷಯದ ತಾಂತ್ರಿಕ ಪರಿಶೀಲನೆ ಹಾಗೂ ಅದು ಸಿಂಥೆಟಿಕ್ ವಿಷಯ ಎಂದು ಖಾತ್ರಿಪಡಿಸಿಕೊಳ್ಳಬೇಕು; ಇಲ್ಲವಾದಲ್ಲಿ ನಿರ್ಲಕ್ಷ್ಯ ಧೋರಣೆ ಎಂದು ಪರಿಗಣಿಸಲಾಗುತ್ತದೆ ಎಂದಿದೆ. ಸಿಂಥೆಟಿಕ್ ಕಂಟೆಂಟ್ ಎಂದರೇನು? ಅದರ ವಿವರಣೆ ಏನು? ಇದರಿಂದಾಗಿ ವೇದಿಕೆಗಳು ಸಮಸ್ಯಾತ್ಮಕ ಎನ್ನಬಹುದಾದ ವಿಷಯಗಳ ಪ್ರಕಟಣೆಯನ್ನೇ ಸ್ಥಗಿತಗೊಳಿಸುತ್ತವೆ. ವಿಷಯವೊಂದರ ವಸ್ತುನಿಷ್ಠತೆ, ಅಧಿಕೃತತೆಯನ್ನು ಪರಿಶೀಲಿಸಲು ಕಾಲಾವಕಾಶ ಅಗತ್ಯವಿದೆ. ಕಾಲಾವಧಿಯನ್ನು ಕಡಿತಗೊಳಿಸಿರುವುದರಿಂದ, ಪರಿಶೀಲನೆ ಅಸಾಧ್ಯವಾಗುತ್ತದೆ ಮತ್ತು ವಿಷಯವನ್ನು ತೆಗೆದುಹಾಕಲಾಗಿದೆ ಎಂಬುದೇ ಬಳಕೆದಾರನಿಗೆ ತಿಳಿಯುವುದಿಲ್ಲ. ಈ ತಿದ್ದುಪಡಿಯು ವಿಷಯ ತೆಗೆದುಹಾಕುವಿಕೆಯನ್ನು ದಾಟಿ, ಪ್ರಕಟಣೆಗೆ ಮುನ್ನ ಸೆನ್ಸರ್ ವ್ಯವಸ್ಥೆ ಆಗಲಿದೆ ಹಾಗೂ ವೇದಿಕೆಗಳ ನಿರಂತರ ಸರ್ವೇಕ್ಷಣೆ ನಡೆಯಲಿದೆ. ಮುಖ್ಯವಾಹಿನಿ ಮಾಧ್ಯಮಗಳು ಸರಕಾರಗಳ ಕೈಗೊಂಬೆಯಾಗಿರುವ ಸನ್ನಿವೇಶದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಜನರಿಗೆ ಇರುವ ಏಕೈಕ ಮಾರ್ಗವಾದ ಸಾಮಾಜಿಕ ಮಾಧ್ಯಮಗಳ ಬಾಗಿಲು ಮುಚ್ಚಿಹೋಗುತ್ತದೆ. ಸಂಘರ್ಷದ ಇನ್ನೊಂದು ಆಯಾಮ ತಿದ್ದುಪಡಿ ಪ್ರಸ್ತಾವವು ರಾಜ್ಯದಿಂದ ಡಿಜಿಟಲ್ ಕ್ಷೇತ್ರದ ಕೈವಶ-ನಿಯಂತ್ರಣ ಪ್ರಯತ್ನ ಮತ್ತು ಮುಕ್ತ ಅಭಿವ್ಯಕ್ತಿ ನಡುವಿನ ದೀರ್ಘಕಾಲೀನ ಸಂಘರ್ಷದ ಇನ್ನೊಂದು ಆಯಾಮವನ್ನು ತೆರೆದಿಡುತ್ತವೆ. ಈ ಮೊದಲು ಅಂತರ್ ಇಲಾಖಾ ಸಮಿತಿ(ಐಡಿಸಿ)ಯು ಪ್ರಕಟಿತ ವಿಷಯಗಳ ಪರಿಶೀಲನೆಗೆ ಸೀಮಿತವಾಗಿತ್ತು; ಈಗ ಅದು ವೇದಿಕೆಯಲ್ಲಿ ಬಳಕೆದಾರರು ಸೃಷ್ಟಿಸುವ ವಿಷಯವನ್ನೂ ಪರಿಶೀಲಿಸಬಹುದು ಮತ್ತು ಸಚಿವಾಲಯ ತನಗಿಷ್ಟ ಬಂದ ಯಾವುದೇ ವಿಷಯವನ್ನು ಐಡಿಸಿಗೆ ಪರಿಶೀಲನೆಗೆ ಕಳಿಸಬಹುದು. ಕರಡಿನ ಭಾಷೆ ಅಸ್ಪಷ್ಟವಾಗಿದೆ; ವಿಷಯದ ಪರಿಶೀಲನೆ ನಡೆಸಬೇಕೆಂದು ಯಾರೂ ದೂರು ನೀಡಬೇಕಿಲ್ಲ, ನೀತಿಸಂಹಿತೆಯ ಉಲ್ಲಂಘನೆ ಆಗಿದೆ ಎಂದು ಸಾಬೀತುಪಡಿಸಬೇಕಿಲ್ಲ ಮತ್ತು ದೂರನ್ನು ಐಡಿಸಿಗೆ ಕಳಿಸುವ ಮುನ್ನ ಸಂತ್ರಸ್ಥರ ಅಹವಾಲು ಆಲಿಸಲಾಗುತ್ತದೆ ಎಂಬ ಖಾತ್ರಿಯಿಲ್ಲ. ಇದರಿಂದ ಇಡೀ ಪರಿಶೀಲನೆ ವ್ಯವಸ್ಥೆ ಕೇಂದ್ರೀಕೃತ ಹಾಗೂ ಅಧಿಕಾರಶಾಹಿ ನಿಯಂತ್ರಣ ದಲ್ಲಿರುವ ಪ್ರಕ್ರಿಯೆ ಆಗಲಿದೆ. ಯುಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಎಕ್ಸ್ ನಂಥ ವೇದಿಕೆಗಳು ನಿಯಮಗಳನ್ನು ಅನುಸರಿಸದಿದ್ದರೆ, ಸೇಫ್ ಹಾರ್ಬರ್ ಸವಲತ್ತಿನ ಮೇಲೆ ಪರಿಣಾಮ ಆಗಲಿದೆ. ಎಕ್ಸ್ನ ಕಮ್ಯುನಿಟಿ ನೋಟ್ಸ್ (ಸಮುದಾಯದ ಟಿಪ್ಪಣಿಗಳು) ಸುದ್ದಿ, ರಾಜಕೀಯ ಅಥವಾ ಸಾರ್ವಜನಿಕ ನೀತಿಗೆ ಸಂಬಂಧಿಸಿದ್ದರೆ, ಅವುಗಳನ್ನು ಪರಿಶೀಲಿಸಬಹುದು. ಆದರೆ, ಈ ಟಿಪ್ಪಣಿಗಳನ್ನು ಒಬ್ಬ ವ್ಯಕ್ತಿ ಬದಲು ಬಹುಬಳಕೆದಾರರು ರೂಪಿಸಿರುತ್ತಾರೆ. ಅಂಥ ಸನ್ನಿವೇಶದಲ್ಲಿ ಯಾರ ಮೇಲೆ ಹೊಣೆಗಾರಿಕೆ ಹೊರಿಸಲಾಗುತ್ತದೆ? ಇಡೀ ಸಮುದಾಯದ ಮೇಲೆ? ಅಂತರ ಇಲಾಖೆ ಸಮಿತಿ ಸ್ವೀಕರಿಸಿದ ಕುಂದುಕೊರತೆಗಳಲ್ಲಿ ಸ್ವತಂತ್ರ ಸುದ್ದಿ ಸೃಷ್ಟಿಕರ್ತರು ತಪ್ಪಿತಸ್ಥರೆಂದು ಕಂಡುಬಂದರೆ, ಅವರನ್ನು ನಿರ್ಬಂಧಿಸಲು ಸರಕಾರ ಆದೇಶ ಹೊರಡಿಸಬಹುದು. ಸರಕಾರದ ಸೂಚನೆ, ನಿರ್ದೇಶನ ಹಾಗೂ ಮಾರ್ಗದರ್ಶಿ ಸೂತ್ರಗಳ ಅನುಸರಣೆ ಮಾಡಬೇಕೆಂಬ ಷರತ್ತಿನಿಂದ ವಿಷಯಗಳನ್ನು ತೆಗೆದುಹಾಕುವ ಸಾಧ್ಯತೆ ಹೆಚ್ಚುತ್ತದೆ. ರಾಣಾ ಅಯ್ಯೂಬ್ ಪ್ರಕರಣವನ್ನು ನೋಡೋಣ: ಅಯ್ಯೂಬ್ ಅವರ ಹಳೆಯ ಪೋಸ್ಟ್ಗಳನ್ನು ತೆಗೆದುಹಾಕಲು ಎಕ್ಸ್ ವಿಫಲವಾದರೆ, ಸೇಫ್ ಹಾರ್ಬರ್ ರಕ್ಷಣೆ ಕಳೆದುಕೊಳ್ಳಲಿದೆ ಎಂದು ಸರಕಾರ ಮತ್ತು ಪೊಲೀಸರು ದಿಲ್ಲಿ ಹೈಕೋರ್ಟ್ಗೆ ಎಪ್ರಿಲ್ 10, 2026ರಂದು ಹೇಳಿದ್ದಾರೆ. 2013-2017ರ ಅವಧಿಯಲ್ಲಿ ಅಯ್ಯೂಬ್ ಅವರು ಹಿಂದೂ ದೇವತೆಗಳು ಮತ್ತು ಸಾವರ್ಕರ್ ಬಗ್ಗೆ ಮಾಡಿದ ಆರು ಪೋಸ್ಟ್ಗಳನ್ನು ತೆಗೆದುಹಾಕಬೇಕು. ಇವು ಕೋಮುಸೌಹಾರ್ದಕ್ಕೆ ಭಂಗ ತರಬಹುದು ಎಂದು ಅಮಿತಾ ಸಚ್ದೇವ ಎಂಬ ವಕೀಲರು ಜನವರಿ 2025ರಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾ. ಪುರುಷೇಂದ್ರ ಕುಮಾರ್ ಕೌರವ್ ಅವರು ಅಯ್ಯೂಬ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ‘ಎಕ್ಸ್ನಲ್ಲಿನ ತಮ್ಮ ಪೋಸ್ಟ್ ಗಳು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಇದು ನನ್ನನ್ನು ಬೆದರಿಸುವ ಮತ್ತು ಬಾಯಿ ಮುಚ್ಚಿಸುವ ಮತ್ತೊಂದು ಪ್ರಯತ್ನ’ ಎಂದು ಅಯ್ಯೂಬ್ ಪ್ರತಿಕ್ರಿಯಿಸಿದ್ದಾರೆ. ವಿಷಯವನ್ನು ಅಪ್ಲೋಡ್ ಮಾಡಿದ ಅಯ್ಯೂಬ್ ಅವರಿಗೆ ತೆಗೆದುಹಾಕುವಂತೆ ನಿರ್ದೇಶನ ನೀಡಬೇಕು ಎಂದು ಎಕ್ಸ್ ನ್ಯಾಯಾಲಯಕ್ಕೆ ತಿಳಿಸಿದೆ. ಜನವರಿ-ಜೂನ್ 2025ರಲ್ಲಿ ಎಕ್ಸ್ಗೆ 29,118 ಪೋಸ್ಟ್/ಟ್ವೀಟ್ಗಳನ್ನು ತೆಗೆದುಹಾಕಿ ಆದೇಶ ನೀಡಲಾಗಿದ್ದು, ಇದರಲ್ಲಿ ಎಷ್ಟನ್ನು ಜಂಟಿಕಾರ್ಯದರ್ಶಿ ಪರಿಶೀಲಿಸಿದ್ದಾರೆ? ಪರಿಶೀಲನೆ ಪ್ರಕ್ರಿಯೆ ಆಂತರಿಕವಾದದ್ದು; ಆರಂಭಿಕ ಆದೇಶ ನೀಡಿದವರೇ ಪರಿಶೀಲನೆ ಮಾಡುವ ಸಾಧ್ಯತೆಯೂ ಇರುತ್ತದೆ. ಆಗ ದೂರು ನೀಡಿದವರಿಗೆ ಹೇಗೆ ನ್ಯಾಯ ಸಿಗುತ್ತದೆ? ಶ್ರೇಯಾ ಸಿಂಘಾಲ್ ವಿ/ಎಸ್ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 69ನ್ನು ತೆಗೆದುಹಾಕದೆ ಇರಲು ಕಾರಣಗಳಿದ್ದವು. ಆದರೆ, ಹಾಲಿ ತಿದ್ದುಪಡಿ ಸಾಂವಿಧಾನಿಕ ಹಕ್ಕುಗಳನ್ನೇ ಘರ್ಷಣೆ ಎಂದು ಪರಿಗಣಿಸುತ್ತವೆ ಹಾಗೂ ಸೇಫ್ ಹಾರ್ಬರ್ ನೆಪದಲ್ಲಿ ಸೆನ್ಸರ್ಶಿಪ್ ನಡೆಸುತ್ತದೆ. ಸ್ವತಂತ್ರ ವ್ಯಾಖ್ಯಾನಕಾರರಿಗೆ ಅಂಕುಶ ಮಾರ್ಚ್ 30, 2026ರ ತಿದ್ದುಪಡಿಯು ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ವ್ಯಾಖ್ಯಾನ/ವಿಮರ್ಶೆ ಮಾಡುವವರನ್ನು ಅಂಕೆಯಲ್ಲಿಡಲು ಬಳಕೆಯಾಗಲಿದೆ. ಮುಖ್ಯವಾಹಿನಿ ಮಾಧ್ಯಮ ಉದ್ಯಮಿ-ರಾಜಕಾರಣಿಗಳ ಜೇಬಿನಲ್ಲಿರುವುದರಿಂದ, ಸ್ವತಂತ್ರ ವ್ಯಾಖ್ಯಾನಕಾರರು ಮತ್ತು ಪರ್ಯಾಯ ಮಾಧ್ಯಮಗಳು ಹೆಚ್ಚಿವೆ. ದೇಶಿ-ವಿದೇಶಿ ಅನುದಾನಕ್ಕೆ ಕೊಕ್ಕೆ ಹಾಕುವ ಮೂಲಕ ಇವುಗಳ ನಿಯಂತ್ರಣ ಪ್ರಯತ್ನ ನಡೆದಿದೆ. ತಿದ್ದುಪಡಿಯು ಮೂಲ ಕಾಯ್ದೆಯ ವ್ಯಾಪ್ತಿಯನ್ನು ಮೀರಿರುವುದಲ್ಲದೆ, ಮಧ್ಯವರ್ತಿ ವೇದಿಕೆಗಳ ಮರುವಿನ್ಯಾಸಕ್ಕೆ ಒತ್ತಡ ಹೇರುತ್ತದೆ. ಉದಾಹರಣೆಗೆ, ಕಮ್ಯುನಿಟಿ ನೋಟ್ಸ್ ಮತ್ತು ಬಳಕೆದಾರರಿಂದ ಸತ್ಯಾಂಶ ಪರಿಶೀಲನೆಗೆ ವೇದಿಕೆಗಳನ್ನು ಉತ್ತರದಾಯಿಯಾಗಿ ಮಾಡಿದರೆ, ಅವು ಆ ವೈಶಿಷ್ಟ್ಯಗಳನ್ನೇ ತೆಗೆದುಹಾಕುತ್ತವೆ. ತಿದ್ದುಪಡಿ ಪ್ರಸ್ತಾವ ದೇಶದ ಸೆನ್ಸರ್ಶಿಪ್ ವಸ್ತ್ರದ ಇನ್ನೊಂದು ಪದರ; ಬಳಕೆದಾರರೊಬ್ಬರ ಪೋಸ್ಟ್ ಇಲ್ಲವೇ ಇಡೀ ಖಾತೆಯನ್ನೇ ತೆಗೆದುಹಾಕಿದರೂ, ತೆಗೆದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ ಮತ್ತು ಕಾನೂನಿನಡಿ ಪ್ರಶ್ನಿಸಲು ಅವಕಾಶ ಇರುವುದಿಲ್ಲ. ಇದಕ್ಕೆ ಐಟಿ ಕಾಯ್ದೆ 2000ದ 2 ಅಂಶಗಳು ಕಾರಣ: ಬ್ಲಾಕ್ ಮಾಡಲು ಅವಕಾಶ ನೀಡುವ ಸೆಕ್ಷನ್ 69ಎ ಮತ್ತು ವೇದಿಕೆಗಳಿಗೆ ಬಳಕೆದಾರರ ಪೋಸ್ಟ್ಗಳಿಂದ ರಕ್ಷಣೆ ನೀಡುವ ಸೇಫ್ ಹಾರ್ಬರ್ ಖಾತ್ರಿ. ಶ್ರೇಯಾ ಸಿಂಘಾಲ್ ವಿ/ಎಸ್ ಭಾರತ ಸರಕಾರ ಪ್ರಕರಣ(ಮಾರ್ಚ್ 24, 2015)ದಲ್ಲಿ ಎಂಇಐಟಿವೈ ಉಲ್ಲೇಖಿಸಿದ್ದ ಸುರಕ್ಷಾ ಕ್ರಮಗಳನ್ನು ಆಧರಿಸಿ, ಇವೆರಡನ್ನೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಆದರೆ, ಕಳೆದ 10 ವರ್ಷದಲ್ಲಿ ಇಲಾಖೆ ತಿದ್ದುಪಡಿಗಳ ಮೂಲಕ ಕಾಯ್ದೆಯನ್ನು ದುರ್ಬಲಗೊಳಿಸಿದೆ; ಸೆಕ್ಷನ್ 69ಎ ಅಡಿ ಬ್ಲಾಕಿಂಗ್ ಆದೇಶಗಳನ್ನು ಅತಿ ಶೀಘ್ರವಾಗಿ, ಅತ್ಯಂತ ಹೆಚ್ಚು ಪ್ರಕರಣ ಗಳಲ್ಲಿ ನೀಡಲಾಗಿದೆ. ಏಕೆ ಆದೇಶ ನೀಡಲಾಗಿದೆ ಎಂದು ತಿಳಿಸುವುದಿಲ್ಲ ಹಾಗೂ ಆದೇಶದ ನಕಲನ್ನು ಗ್ರಾಹಕರಿಗೆ ನೀಡುವುದಿಲ್ಲ. ಏನು ತಪ್ಪಾಗಿದೆ ಎನ್ನುವುದನ್ನೇ ವಿವರಿಸದೆ ವಿಚಾರಣೆಗೆ ದಿಲ್ಲಿಗೆ ಕರೆಸಲಾಗುತ್ತದೆ. ಸೆಕ್ಷನ್ 79ನ್ನು ಇನ್ನಷ್ಟು ತಿರುಚಲಾಗಿದೆ. ಸಾಮಾಜಿಕ ವೇದಿಕೆಗಳು(ಯುಟ್ಯೂಬ್, ಇನ್ಸ್ಟಾಗ್ರಾಂ, ಸ್ನ್ಯಾಪ್ಚಾಟ್, ಫೇಸ್ಬುಕ್, ಎಕ್ಸ್, ಲಿಂಕ್ಡ್ಇನ್ ಇತ್ಯಾದಿ) ವಾಣಿಜ್ಯಿಕ ಉದ್ದೇಶವುಳ್ಳವು. ಇವು 103 ಕೋಟಿ ಅಂತರ್ಜಾಲ ಬಳಕೆದಾರರು ಹಾಗೂ 106 ಕೋಟಿ ಮೊಬೈಲ್ ಗ್ರಾಹಕರಿರುವ ದೇಶದ ಸರಕಾರವನ್ನು ಎದುರುಹಾಕಿಕೊಳ್ಳುತ್ತವೆ ಮತ್ತು ಜನರ ಹಕ್ಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತವೆ ಎಂದುಕೊಳ್ಳುವುದು ಭ್ರಮೆ. ಇಲ್ಲಿ ಅಂದಾಜು 500 ದಶಲಕ್ಷ ಯುಟ್ಯೂಬ್, 481 ದಶಲಕ್ಷ ಇನ್ಸ್ಟಾಗ್ರಾಂ, 213 ದಶಲಕ್ಷ ಸ್ನ್ಯಾಪ್ಚಾಟ್, 403 ದಶಲಕ್ಷ ಫೇಸ್ಬುಕ್, 22 ದಶಲಕ್ಷ ಎಕ್ಸ್ ಹಾಗೂ 120 ದಶಲಕ್ಷ ಲಿಂಕ್ಡ್ ಇನ್ ಬಳಕೆದಾರರು ಇದ್ದಾರೆ(ಮಾಹಿತಿ:ಜಚಿಣಚಿಡಿeಠಿoಡಿಣಚಿಟ). ಇವರಲ್ಲಿ ಹೆಚ್ಚಿನವರು ಜೆನ್ ಝಿಗೆ ಸೇರಿದವರು ಮತ್ತು ಆರ್ಥಿಕತೆಯನ್ನು ಮುನ್ನಡೆಸುವವರು. ಇಂಥ ಪರಿಸ್ಥಿತಿಯಲ್ಲಿ ಬಳಕೆದಾರರ ಜಾಗೃತಿಯಿಂದಷ್ಟೇ ಸರಕಾರವನ್ನು ಮಣಿಸಬಹುದು. ಸುಳ್ಳು ಮಾಹಿತಿಗೆ ತೆ ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿ, ವದಂತಿ ಮತ್ತು ದ್ವೇಷದ ವಿಷಯಗಳು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿವೆ ಎನ್ನುವುದು ನಿಜ. ಇದನ್ನು ನಿಯಂತ್ರಿಸಬೇಕು; ತಪ್ಪು ಮಾಹಿತಿಗೆ ತಡೆ, ನಿರ್ಬಂಧ ಹೇರಬೇಕು ಎನ್ನುವುದು ಸಮರ್ಥನೀಯ. ‘ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಉತ್ತರದಾಯಿತ್ವ ಇರುವ ಅಂತರ್ಜಾಲ ಸೇವೆ ವ್ಯವಸ್ಥೆಯನ್ನು ಖಾತ್ರಿಗೊಳಿಸುವುದು ನನ್ನ ಕರ್ತವ್ಯ’ ಎಂದು ಸರಕಾರ ಹೇಳುತ್ತದೆ; ಆದರೆ, ತಿದ್ದುಪಡಿ ವೇದಿಕೆಗಳಲ್ಲಿ ಜನರ ಧ್ವನಿಯನ್ನು ಉಡುಗಿಸಲಿದೆ; ಮುಕ್ತ ಅಭಿವ್ಯಕ್ತಿಗೆ ಧಕ್ಕೆ ತರುತ್ತದೆ ಮತ್ತು ಅಧಿಕ ನಿಯಂತ್ರಣಕ್ಕೆ ಅವಕಾಶ ಕಲ್ಪಿಸಲಿದೆ. ಸರಕಾರ ತನಗೆ ತಾನೇ ಪರಮಾಧಿಕಾರ ಕೊಟ್ಟುಕೊಂಡಿದೆ ಮತ್ತು ಏಕಪಕ್ಷೀಯವಾಗಿ ಕಾಯ್ದೆಗೆ ಒಪ್ಪಿಗೆ ಪಡೆಯಲು ಮುಂದಾಗಿದೆ! ಕಾನೂನಿನ ಸಮರ್ಪಕ ಅನುಷ್ಠಾನ, ವೇದಿಕೆಗಳ ಉತ್ತರದಾಯಿತ್ವ ಹೆಚ್ಚಳ ಮತ್ತು ಡಿಜಿಟಲ್ ಸಾಕ್ಷರತೆ ಹೆಚ್ಚಳದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಆದರೆ, ಇದು ಸರಕಾರಕ್ಕೆ ಅಪಥ್ಯ. ಈ ಎಲ್ಲ ತಿದ್ದುಪಡಿಗಳ ಲಕ್ಷ್ಯ ಒಂದೇ ಸರಕಾರದ ಹಿಡಿತ ಬಲಪಡಿಸುವುದು. ಜನರು ಏನು ಹೇಳುತ್ತಾರೆ, ನೋಡುತ್ತಾರೆ, ಕೇಳುತ್ತಾರೆ ಮತ್ತು ಆನ್ಲೈನ್ನಲ್ಲಿ ಏನು ಹಂಚಿಕೊಳ್ಳುತ್ತಾರೆ ಎನ್ನುವುದನ್ನು ನೋಡುವ ಅಧಿಕಾರವನ್ನು ಕಾರ್ಯಾಂಗದಲ್ಲಿ ಕೇಂದ್ರೀಕರಿಸಲಾಗಿದೆ; ಇದರಿಂದ ಅಧಿಕಾರವು ನ್ಯಾಯಾಲಯಗಳಿಂದ ಕಾರ್ಯಾಂಗಕ್ಕೆ ವರ್ಗಾವಣೆಯಾಗಿದೆ. ಉತ್ತರದಾಯಿತ್ವವಿಲ್ಲದ ಅಧಿಕಾರ ಕಾಲಕ್ರಮೇಣ ಎಲ್ಲರ ಮೇಲೆ ಪ್ರಯೋಗಿಸಲ್ಪಡುತ್ತದೆ. ಸರ್ವಾಧಿಕಾರಗಳು ಒಂದೇ ದಿನದಲ್ಲಿ ಉದ್ಭವಿಸುವುದಿಲ್ಲ; ಭಯದ ಸೃಷ್ಟಿ ಮತ್ತು ನಿಯಂತ್ರಣದ ಮೂಲಕ ಕಾಲಕ್ರಮೇಣ ರೂಪುಗೊಳ್ಳುತ್ತವೆ. ಆದರೆ, 16 ವರ್ಷ ಆಡಳಿತ ನಡೆಸಿದ್ದ ಹಂಗರಿಯ ಅಧ್ಯಕ್ಷ ವಿಕ್ಟರ್ ಒರ್ಬನ್ಗೆ ಜನ ಚುನಾವಣೆಯಲ್ಲಿ ಸೋಲುಣಿಸಿದರು ಎಂಬುದನ್ನು ಮರೆಯಬಾರದು.
ಚಾಮರಾಜನಗರ : ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ; ಬೈಕ್ ಸವಾರ ಮೃತ್ಯು
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲ್ಲಯ್ಯನಪುರ ಬಳಿಯ ಮಹದೇಶ್ವರಬೆಟ್ಟ ಮುಖ್ಯ ರಸ್ತೆಯಲ್ಲಿ ಕೆಎಸ್ಸಾರ್ಟಿಸಿ ಬಸ್, ಗೂಡ್ಸ್ ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತ ಬೈಕ್ ಸವಾರನನ್ನು ಬೆಳಕವಾಡಿ ಗ್ರಾಮದ ಯೋಗೇಶ್ (36) ಎಂದು ತಿಳಿದು ಬಂದಿದೆ. ಹನೂರು ತಾಲ್ಲೂಕಿನ ಮಲ್ಲಯ್ಯನಪುರ ಬಳಿ, ಕೆಎಸ್ಸಾರ್ಟಿಸಿ ಬಸ್ ಹನೂರು ಕಡೆಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದಾಗ, ಕೌದಳ್ಳಿ ಕಡೆಯಿಂದ ಎದುರುಗಡೆಯಿಂದ ಬರುತ್ತಿದ್ದ ಗೂಡ್ಸ್ ಆಟೋಗೆ ಢಿಕ್ಕಿ ಹೊಡೆದಿದೆ. ನಂತರ ಗೂಡ್ಸ್ ಆಟೋ ಹಿಂದಿನಿಂದ ಬರುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ . ಘಟನಾ ಸ್ಥಳಕ್ಕೆ ರಾಮಾಪುರ ಪೊಲೀಸರು ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Second PUC Exam-2: ದ್ವಿತೀಯ ಪಿಯುಸಿ ಪರೀಕ್ಷೆ-2: ಅರ್ಜಿ ಸಲ್ಲಿಕೆ ಅವಧಿ ನಾಳೆವರೆಗೆ ವಿಸ್ತರಣೆ
ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಿಹಿ ಸುದ್ದಿ ನೀಡಿದೆ. ಅರ್ಜಿ ಸಲ್ಲಿಕೆಯ ಅವಧಿಯನ್ನು ಏಪ್ರಿಲ್ 18ರವರೆಗೆ ವಿಸ್ತರಿಸಲಾಗಿದ್ದು, ಈ ಕುರಿತು ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಹಿಂದೆ ಏಪ್ರಿಲ್ 17ರವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು, ಆದರೆ ವಿದ್ಯಾರ್ಥಿಗಳಿಂದ
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ ಇಸ್ರೇಲ್-ಲೆಬನಾನ್ ಯುದ್ಧಕ್ಕೆ 10 ದಿನಗಳ ಕದನವಿರಾಮವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿರುವ ಟ್ರಂಪ್ ಈವರೆಗೂ ತಾನು 9 ಯುದ್ಧಗಳನ್ನು ನಿಲ್ಲಿಸಿದ್ದು, ಇದು 10ನೇ ಯುದ್ಧವಾಗಿರಲಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಉಭಯದೇಶಗಳ ನಾಯಕರನ್ನು ಮಾತುಕತೆಗಾಗಿ USಗೆ ಆಹ್ವಾನಿವುದಾಗಿ ತಿಳಿಸಿದ್ದಾರೆ. ಈ ಕದನವಿರಾಮವನ್ನು ಉಭಯದೇಶಗಳು ದೃಢಿಕರಿಸಿವೆ. ಆದಾಗ್ಯೂ, ಹೆಜ್ಬೊಲ್ಲಾ ಮಾತುಕತೆ ನಡೆಸಿದ್ದಾಕ್ಕಾಗಿ ಲೆಬನಾನ್ ಸರ್ಕಾರದ ಮೇಲೆ ಕಿಡಿಕಾರಿದೆ. ಈ ಬೆನ್ನಲ್ಲೇ, ಕದನವಿರಾಮದ ಕುರಿತು ಒಳ್ಳೆಯ ರೀತಿಯಲ್ಲಿ ವರ್ತಿಸಿ ಎಂದು ಹೆಜ್ಬೊಲ್ಲಾ ಪಡೆಗಳಿಗೆ ಟ್ರಂಪ್ ಸಂದೇಶ ರವಾನಿಸಿದ್ದಾರೆ. ಈ ಕುರಿತು ವಿವರ ಇಲ್ಲಿದೆ..
ಡಿಕೆಶಿ 'ಶಿಸ್ತಿನ’ ಅಸ್ತ್ರವನ್ನು ಅವರಿಗೇ ತಿರುಗುಸಿದರೇ ಜಮೀರ್ ಅಹ್ಮದ್ : ಇದು ಪಾರ್ಟಿ ನಿಷ್ಠೆಯೋ, ಪರೋಕ್ಷ ತಿರುಗೇಟೋ?
Zameer Ahmed Vs DK Shivakumar : ಶಾಮನೂರು ಶಿವಶಂಕರಪ್ಪನವರಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವಿದ್ಯಮಾನಗಳು, ಕಾಂಗ್ರೆಸ್ಸಿನ ಮುಸ್ಲಿಂ ನಾಯಕರನ್ನು ಬೇರೆಬೇರೆ ಮಾಡುವಂತೆ ಮಾಡಿದೆ. ನಜೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ಸಿನಿಂದ ಅಮಾನತುಗೊಳಿಸಲಾಗಿದೆ. ಡಿಕೆ ಶಿವಕುಮಾರ್ ಅವರ ಶಿಸ್ತು ಮುಖ್ಯ ಎನ್ನುವ ಹೇಳಿಕೆಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
FSSAI: ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ರಾಸಾಯನಿಕ ಬಳಕೆ: ಕಟ್ಟುನಿಟ್ಟಿನ ಕ್ರಮಕ್ಕೆ ಎಫ್ಎಸ್ಎಸ್ಎಐ ಸೂಚನೆ
ಮಾರುಕಟ್ಟೆಯಲ್ಲಿ ಮಾವು, ಬಾಳೆಹಣ್ಣು ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿರುವುದರ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಕಟ್ಟುನಿಟ್ಟಿನ ತಪಾಸಣೆ ನಡೆಸಿ, ಕಾನೂನುಬಾಹಿರವಾಗಿ ಹಣ್ಣು ಮಾಡುವ
ಮಧ್ಯಪ್ರಾಚ್ಯ ಸಂಘರ್ಷ | ಇರಾನ್ ಜಾಗತಿಕ ಮಟ್ಟದಲ್ಲಿ ಬೆದರಿಕೆ, ಪೋಪ್ ಅದನ್ನು ಅರ್ಥಮಾಡಿಕೊಳ್ಳಬೇಕು: ಟ್ರಂಪ್
ವಾಶಿಂಗ್ಟನ್: ಇರಾನ್ ಜಾಗತಿಕ ಮಟ್ಟದಲ್ಲಿ ದೊಡ್ಡ ಬೆದರಿಕೆಯಾಗಿದೆ. ಈ ವಿಚಾರವನ್ನು ಪೋಪ್ ಲಿಯೋ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪೋಪ್ ಲಿಯೋ ಅವರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯವಿದೆ. ಆದರೆ ಇರಾನ್ ಯಾವತ್ತೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂಬುದನ್ನು ಅವರು ಗಮನಿಸಬೇಕು ಎಂದು ಟ್ರಂಪ್ ಒತ್ತಿಹೇಳಿದ್ದಾರೆ. ಇತ್ತೀಚಿನ ವಾರಗಳಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕ–ಇಸ್ರೇಲ್ ಸಂಘರ್ಷದ ಬಗ್ಗೆ ಪೋಪ್ ಲಿಯೋ ಅವರು ಟೀಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಪೋಪ್ ವಿರುದ್ಧ ಟ್ರಂಪ್ ಪದೇಪದೇ ವಾಗ್ದಾಳಿ ನಡೆಸುತ್ತಿದ್ದಾರೆ. ಪೋಪ್ ಲಿಯೋ ಅವರನ್ನು ನೇಮಿಸಲು ತಾವು ಕಾರಣವೆಂದು ಟ್ರಂಪ್ ಹೇಳಿಕೊಂಡಿದ್ದು, ವಿದೇಶಾಂಗ ನೀತಿಯಲ್ಲಿ ಅವರು ದುರ್ಬಲ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಬಹಳ ಸರಳ ವಿಷಯ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ. ಇಲ್ಲವಾದರೆ ಜಗತ್ತು ದೊಡ್ಡ ಅಪಾಯಕ್ಕೆ ಸಿಲುಕುತ್ತದೆ, ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಮಿಳುನಾಡು ಚುನಾವಣೆ: ವಿಜಯ್ ಪ್ರಣಾಳಿಕೆಯಲ್ಲಿ ‘ಭರ್ಜರಿ ಗಿಫ್ಟ್’ ಆಫರ್!
ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್ ಗುರುವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಜನತೆಗೆ ಭರ್ಜರಿ ಗಿಫ್ಟ್ ಆಫರ್ಗಳನ್ನು ಮುಂದಿಟ್ಟಿದ್ದಾರೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್ಪಿಜಿ ಸಿಲಿಂಡರ್, ವಾರ್ಷಿಕ 200 ಯುನಿಟ್ ಉಚಿತ ವಿದ್ಯುತ್, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಮಾಸಿಕ 2,500 ರೂ., ಕುಟುಂಬಕ್ಕೆ 25 ಲಕ್ಷ ರೂ. ಮೌಲ್ಯದ ವಿಮಾ ಸುರಕ್ಷೆ ಒದಗಿಸುವ ಭರವಸೆಗಳು ಪ್ರಣಾಳಿಕೆಯಲ್ಲಿ ಸೇರಿವೆ. ಇದರ ಜೊತೆಗೆ 100 ಕಾಮರಾಜರ್ ಸ್ಕೂಲ್ ಆಫ್ ಎಕ್ಸಲೆನ್ಸ್ ಆರಂಭಿಸುವ ಘೋಷಣೆಯನ್ನೂ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ನಟ ವಿಜಯ್ ಮಾಡಿದರು. ಇದಲ್ಲದೆ, ಬಡ ಮಹಿಳೆಯರಿಗೆ ವಿವಾಹಕ್ಕಾಗಿ 8 ಗ್ರಾಂ ಉಚಿತ ಚಿನ್ನ ನೀಡುವ ಭರವಸೆಯೂ ಸೇರಿದೆ. ಪ್ರಮುಖ ದ್ರಾವಿಡ ಪಕ್ಷಗಳು ನೀಡಿರುವ ಕೊಡುಗೆಗಳನ್ನು ಮೀರಿಸುವ ರೀತಿಯಲ್ಲಿ ಟಿವಿಕೆ ಪಕ್ಷ ಆಫರ್ಗಳನ್ನು ನೀಡಿದೆ. ಚೆನ್ನೈನಲ್ಲಿ ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದ ವಿಜಯ್, ತಮ್ಮ ಪಕ್ಷ ಡಿಎಂಕೆ ಹಾಗೂ ಎಐಎಡಿಎಂಕೆಗಿಂತ ಭಿನ್ನವಾಗಿದೆ ಎಂದು ಹೇಳಿದರು. ಉಭಯ ಪಕ್ಷಗಳು ಒಂದೇ ರೀತಿಯ ಪ್ರಣಾಳಿಕೆ ನೀಡಿದ್ದು, ಭ್ರಷ್ಟಾಚಾರದಲ್ಲೂ ಒಂದೇ ರೀತಿಯ ಪಕ್ಷಗಳೆಂದು ದೂರಿದರು. ನಿರುದ್ಯೋಗಿ ಪದವೀಧರರಿಗೆ ಮಾಸಿಕ 4,000 ರೂ. ನಿರುದ್ಯೋಗ ಭತ್ಯೆ, ಡಿಪ್ಲೋಮಾ ಮಾಡಿದ ಯುವಕರಿಗೆ ಮಾಸಿಕ 2,000 ರೂ. ನಿರುದ್ಯೋಗ ಭತ್ಯೆ, ಯುವ ಉದ್ಯಮಶೀಲರಿಗೆ 25 ಲಕ್ಷ ರೂ. ಜಾಮೀನು ರಹಿತ ಸಾಲ, ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂ. ಬಡ್ಡಿರಹಿತ ಸಾಲ, 20 ಲಕ್ಷ ರೂ. ಜಾಮೀನು ರಹಿತ ಶಿಕ್ಷಣ ಸಾಲದಂತಹ ಕೊಡುಗೆಗಳು ಪ್ರಣಾಳಿಕೆಯಲ್ಲಿ ಸೇರಿವೆ.
ಬ್ಯಾಗಿನಲ್ಲಿ ಗಾಂಜಾ ಪತ್ತೆ: ಏರ್ ಇಂಡಿಯಾ ಸಹ ಪೈಲಟ್ ಅಮೆರಿಕದಿಂದ ಗಡೀಪಾರು
ಹೊಸದಿಲ್ಲಿ: ಬ್ಯಾಗಿನಲ್ಲಿ ಗಾಂಜಾ ಒಯ್ಯುತ್ತಿದ್ದ ಆರೋಪದಲ್ಲಿ ಏರ್ ಇಂಡಿಯಾ ಸಹ ಪೈಲಟ್ ಒಬ್ಬರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ಈ ಪೈಲಟ್ ದೆಹಲಿ–ಸ್ಯಾನ್ಫ್ರಾನ್ಸಿಸ್ಕೊ ವಿಮಾನದಲ್ಲಿ ಮಂಗಳವಾರ ಪ್ರಯಾಣಿಕರ ಕ್ಯಾಬಿನ್ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹೆಸರಿನಲ್ಲಿ ಪ್ರಯಾಣಿಸುತ್ತಿದ್ದ. ಈತ ವಿಮಾನ ದೆಹಲಿಗೆ ವಾಪಸ್ಸಾಗುವ ಸಂದರ್ಭದಲ್ಲಿ ವಿಮಾನ ಚಾಲನೆ ಕರ್ತವ್ಯ ನಿರ್ವಹಿಸಬೇಕಿತ್ತು. ಸ್ಯಾನ್ಫ್ರಾನ್ಸಿಸ್ಕೊಗೆ ವಿಮಾನ ಆಗಮಿಸಿದ ವೇಳೆ ಈತನ ಬ್ಯಾಗಿನಲ್ಲಿ ಅಮೆರಿಕ ಅಧಿಕಾರಿಗಳು ಗಾಂಜಾ ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಆ ಬಳಿಕ ವಿಮಾನ ನಿಲ್ದಾಣದಿಂದ ಹೊರಹೋಗಲು ಆತನಿಗೆ ಅವಕಾಶ ನೀಡಲಿಲ್ಲ ಹಾಗೂ ತಕ್ಷಣವೇ ಲಭ್ಯವಿರುವ ವಿಮಾನದಲ್ಲಿ ಆತನನ್ನು ವಾಪಸ್ಸು ಭಾರತಕ್ಕೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ. ಏರ್ ಇಂಡಿಯಾ ಈ ಬಗ್ಗೆ ಡಿಜಿಸಿಎಗೆ ಮಾಹಿತಿ ನೀಡಿದ್ದು, ಆರೋಪಿ ಪೈಲಟ್ ಗುರುವಾರ ದೆಹಲಿಗೆ ಆಗಮಿಸುವ ಸಾಧ್ಯತೆ ಇದೆ. ಈ ಪ್ರಕರಣವನ್ನು ಏರ್ ಇಂಡಿಯಾ ವಕ್ತಾರರು ದೃಢಪಡಿಸಿದ್ದಾರೆ. ಆದರೆ ಪೈಲಟ್ ಗಾಂಜಾ ಸೇವಿಸಿರಲಿಲ್ಲ; ಆತನ ಬ್ಯಾಗಿನಲ್ಲಿ ಹೊಂದಿದ್ದ ಎಂದು ಪ್ರಕರಣದ ಬಗ್ಗೆ ಅರಿವು ಇರುವ ಮೂಲಗಳು ಹೇಳಿವೆ. ಕೆಲ ದೇಶಗಳಲ್ಲಿ ಗಾಂಜಾ ಬಳಸುವುದಕ್ಕೆ ವೈದ್ಯಕೀಯವಾಗಿ ಕೂಡಾ ಅವಕಾಶವಿದೆ.
ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 23ರಿಂದ 25ರ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲದಿದ್ದರೂ, ತಾಪಮಾನವು ಕ್ರಮೇಣ ಹೆಚ್ಚಾಗುತ್ತಾ ಹೋಗಲಿದೆ. ವಿಶೇಷವಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಿಸಿಗಾಳಿ (Heat wave) ಬೀಸುವ ಸಾಧ್ಯತೆ ಇರುವುದರಿಂದ
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮತ್ತಷ್ಟು ವ್ಯವಸ್ಥಿತಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಬರೋಬ್ಬರಿ 320 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೊಸ ಟರ್ಮಿನಲ್ನಲ್ಲಿ ಹುಬ್ಬಳ್ಳಿಯ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನದ ಗರ್ಭಗುಡಿಯ ಗಂಟೆ ಮಾದರಿಯ ಕೆನೋಪಿ ವಿನ್ಯಾಸ ಅಳವಡಿಕೆಗೆ ಸಿದ್ದತೆ ನಡೆಯುತ್ತಿದೆ. ಇನ್ನು, ಅಷ್ಟೇ ಅಲ್ಲದೆ, ಈ ಟರ್ಮಿನಲ್ನಲ್ಲಿ ಹಳೆಯ ಟರ್ಮಿನಲ್ ಸಾಮರ್ಥ್ಯಕ್ಕಿಂತ 8ಪಟ್ಟು ಹೆಚ್ಚಾಗಿರುವಂತೆ ಗಮನವಹಿಸುತ್ತಿದ್ದು, ಪ್ರಯಾಣಿಕರ ಅನೂಕೂಲಕ್ಕಾಗಿ ಹಲವು ಸೌಲಭ್ಯಗಳು ಸಿಗಲಿವೆ. ಈ ಕುರಿತ ಮಾಹಿತಿ ಇಲ್ಲಿದೆ.
ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಪ್ರಕರಣಗಳಲ್ಲಿ ಆಯೋಗ ವಿಧಿಸಿರುವ ದಂಡ ಕಟ್ಟಲೂ ಸರ್ಕಾರಿ ಅಧಿಕಾರಿಗಳಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕರ್ನಾಟಕ ಮಾಹಿತಿ ಹಕ್ಕು ಆಯೋಗ ರಾಜ್ಯದಲ್ಲಿ ಸುಮಾರು 10,843 ಪ್ರಕರಣಗಳಲ್ಲಿ ಸಕಾಲಕ್ಕೆ ಮಾಹಿತಿ ನೀಡದಿರುವುದೂ ಸೇರಿದಂತೆ ವಿವಿಧ ನಿಯಮಗಳ ಉಲ್ಲಂಘನೆಯಿಂದ ಬರೋಬ್ಬರಿ ಕೋಟಿ ದಂಡ ವಿಧಿಸಿದೆ. ಆದರೆ, ಇದರಲ್ಲಿ ಈವರೆಗೂ ಕೇವಲ ಕೋಟಿ ಮಾತ್ರ ವಸೂಲಿಯಾಗಿದೆ. ಈ ಕುರಿತಂತೆ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಈ ವಿಚಾರ ತಿಳಿಸಿದ್ದು, ಇಲಾಖೆಗಳಿಗೆ
ದಕ್ಷಿಣ ಕನ್ನಡ ಸೇರಿ ರಾಜ್ಯದ 12 ಜಿಲ್ಲೆಗಳ ವಾರ್ತಾ ಇಲಾಖೆಗೆ ನೂತನ ಮಿನಿ ಬಸ್ ಭಾಗ್ಯ!
ರಾಜ್ಯದ 2ನೇ ಮಹಾನಗರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಪ್ರತಿನಿತ್ಯವೂ ಹಲವಾರು ಸರ್ಕಾರಿ ಕಾರ್ಯಕ್ರಮಗಳು ನಡೆಯಲಿದ್ದು, ರಾಜಕಾರಣಿಗಳು ಅಧಿಕಾರಿಗಳ ಭೇಟಿ ನಿರಂತರವಾಗಿರುತ್ತದೆ. ಇಂತಹ ಕಾರ್ಯಕ್ರಮಗಳ ಸಮರ್ಪಕ ಪ್ರಚಾರ ಹಾಗೂ ಸುದ್ದಿ ನಿರ್ವಹಣೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಪತ್ರಕರ್ತ ಓಡಾಟಕ್ಕಾಗಿ ಸೂಕ್ತ ಬಸ್ ವ್ಯವಸ್ಥೆ ಇರಲಿಲ್ಲ. ಈ ಕುರಿತು ವಿಜಯ ಕರ್ನಾಟಕ ವಿಶೇಷ ವರದಿಯ ಮೂಲಕ ಸಿಎಂ ಅವರ ಗಮನಸೆಳೆದಿದ್ದು, ಇದೀಗ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಸುಮಾರು 12 ಜಿಲ್ಲೆಗಳಲ್ಲಿ ಪತ್ರಕರ್ತರ ಓಡಾಟಕ್ಕಾಗಿ ಹವಾನಿಯಂತ್ರಿತ ನೂತನ ಮಿನಿ ಬಸ್ ಮಂಜೂರಾಗಿದೆ. ಈ ಕುರಿತ ವರದಿ ಇಲ್ಲಿದೆ..
ಮನೆ ಮನೆ ಗಣತಿಗೆ ವಿಧ್ಯುಕ್ತ ಚಾಲನೆ- 23 ಸಾವಿರಕ್ಕೂ ಹೆಚ್ಚಿನ ಗಣತಿದಾರರ ನೇಮಕ; ಏನೆಲ್ಲಾ ಪ್ರಶ್ನೆ ಕೇಳ್ತಾರೆ?
ಬೆಂಗಳೂರಿನಲ್ಲಿ ಸ್ವಯಂ ಗಣತಿಗೆ ನಾಗರಿಕರಿಂದ ನಿರಾಶೆಯ ಪ್ರತಿಕ್ರಿಯೆ ಸಿಕ್ಕಿದ್ದು, ಕೇವಲ ಶೇ.2ರಷ್ಟು ನಾಗರಿಕರು ಮಾತ್ರ ಸ್ವಯಂ ಗಣತಿಯಲ್ಲಿ ಭಾಗವಹಿಸಿದ್ದಾರೆ. ಈ ಬೆನ್ನಲ್ಲೇ, ಇದೀಘ GBA ವ್ಯಾಪ್ತಿಯ 5 ಪಾಲಿಕೆಗಳಲ್ಲಿ ರಾಷ್ಟ್ರೀಯ ಜನಗಣತಿ-2027ರ ಮನೆ ಮನೆ ಗಣತಿ ಕಾರ್ಯ ಆರಂಭವಾಗಿದ್ದು, ಈ ಕಾರ್ಯಕ್ಕಾಗಿ ಸುಮಾರು 23 ಸಾವಿರಕ್ಕೂ ಅಧಿಕ ಗಣತಿದಾರರು ಹಾಗೂ 2900 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇನ್ನು, ಮೊದಲ ಹಂತದಲ್ಲಿ ಏ.16ರಿಂದ ಮೇ.16ರವರೆಗೆ ಮನೆ ಪಟ್ಟಿ ಹಾಗೂ ಮನೆ ಗಣತಿ ನಡೆಯಲಿದ್ದು, 2027ರ ಏಪ್ರಿಲ್ ನಿಂದ 2ನೇ ಹಂತದ ಜನಗಣತಿ ಆರಂಭವಾಗಲಿದೆ. ಹಾಗಾದ್ರೆ ಈ ಕಾರ್ಯ ಯಾವ ಸಮಯದಿಂದ ನಡೆಯಲಿದೆ? ಗಣತಿದಾರರು ಏನೆಲ್ಲಾ ಪ್ರಶ್ನೆಗಳನ್ನು ಕೇಳಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ..
‘ಎಲ್ಲ ಕ್ಷೇತ್ರಗಳ ಪ್ರಶಸ್ತಿ ಆಯಾ ವರ್ಷವೇ ಕೊಡಬೇಕು’ ಸಿಎಂ ಆಶಯದಂತೆ ಕೆಲಸ : ಕೆ.ವಿ.ಪ್ರಭಾಕರ್
ಬೆಂಗಳೂರು : ಸಿನಿಮಾ, ಸಾಹಿತ್ಯ, ಕಲೆ, ಪತ್ರಿಕೋದ್ಯಮ ಸೇರಿ ಎಲ್ಲ ಕ್ಷೇತ್ರಗಳ ಪ್ರಶಸ್ತಿ, ಪುರಸ್ಕಾರಗಳನ್ನು ಆಯಾ ವರ್ಷವೇ ಕೊಡಬೇಕು ಎನ್ನುವುದು ಸಿಎಂ ಸಿದ್ದರಾಮಯ್ಯರ ಖಚಿತ ನಿಲುವಾಗಿದ್ದು, ಇದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು. ಗುರುವಾರ ಪ್ರೆಸ್ಕ್ಲಬ್ನಲ್ಲಿ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಮತ್ತು ಸಹಾಯ ಧನ ಆಯ್ಕೆ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇವತ್ತು ನನಗೆ ಅಭಿನಂದನೆ ಸಲ್ಲಿಸಲು ಆಹ್ವಾನಿಸಿದ ಎಲ್ಲ ಆತ್ಮೀಯರಿಗೂ, ಸ್ನೇಹಿತರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ, ಈ ಅಭಿನಂದನೆ ಸಲ್ಲಬೇಕಾದ್ದು ಸಿಎಂ ಅವರಿಗೆ ಎಂದು ಹೇಳಿದರು. ಸಿಎಂ ಆಶಯದಂತೆ ಹಿಂದಿನ ಸರಕಾರದ ಅವಧಿಯಿಂದ ಬಾಕಿ ಉಳಿದ ಹಿಂದಿನ ವರ್ಷಗಳ ಪ್ರಶಸ್ತಿಗಳನ್ನು ಕೊಡ ಮಾಡಿದ್ದೇವೆ. ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವುದು ಅತ್ಯಂತ ಸೂಕ್ಷ್ಮ ಮತ್ತು ಸಹನೆಯಿಂದ ಆಗಬೇಕಾದ ಕಾರ್ಯ. ಎಲ್ಲ ಹೆಸರುಗಳೂ ಆಯ್ಕೆ ಸಮಿತಿ ಮೂಲಕವೇ ಬರಬೇಕು. ಆಯ್ಕೆ ಸಮಿತಿಗೆ ಅಗತ್ಯವಾದ ಸಮಯಾವಕಾಶ ಕೊಡಬೇಕು ಎನ್ನುವ ಕಾರಣಕ್ಕೇ ಹಂತ ಹಂತವಾಗಿ ಕೆಲಸಗಳು ನಡೆಯುತ್ತಿವೆ ಎಂದವರು ಸ್ಪಷ್ಟಪಡಿಸಿದರು. ಪ್ರಶಸ್ತಿಗೆ ಅರ್ಹರನ್ನು ಆರಿಸುವುದು ಎಷ್ಟು ಸೂಕ್ಷ್ಮವಾದ ವಿಷಯವೋ, ಆಯ್ಕೆ ಸಮಿತಿ ಸದಸ್ಯರನ್ನು ಆರಿಸುವುದೂ ಅಷ್ಟೇ ಸೂಕ್ಷ್ಮ ಸಂಗತಿ. ಹತ್ತು ಹಲವು ಸೂಕ್ಷ್ಮಗಳನ್ನು ಗಮನದಲ್ಲಿ ಇಟ್ಟುಕೊಂಡು ಯಾವುದೇ ತಕರಾರುಗಳು ಇಲ್ಲದಂತೆ ಪ್ರಶಸ್ತಿಗಳಿಗೆ ಆಯ್ಕೆ ವಿತರಣೆ ನಡೆದಿರುವುದು ಸಮಾಧಾನಕರ ಸಂಗತಿ ಎಂದರು. ಪ್ರಶಸ್ತಿ ಗಳಿಸದ ಸಿನಿಮಾಗಳು, ವ್ಯಕ್ತಿಗಳಿಗೆ ಬೇಸರ ಆಗುವುದು ಸಹಜ. ಆದರೆ ಮಾನದಂಡಗಳಿಗೆ ಸೀಮಿತವಾದಾಗ, ಸಾಮಾಜಿಕ-ಪ್ರಾದೇಶಿಕ ನ್ಯಾಯದ ವಿಚಾರಗಳು ಬಂದಾಗ ಕೆಲ ಅನಿವಾರ್ಯತೆಗಳನ್ನು ಪಾಲಿಸಬೇಕಾಗುತ್ತದೆ. ಸಿಎಂ ನನಗೆ ಅವಕಾಶ ಒದಗಿಸಿ, ನನ್ನ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ, ಜವಾಬ್ದಾರಿ ನಿಭಾಯಿಸಿದ್ದೇನೆ ಎಂದು ಆಯ್ಕೆ ಪ್ರಕ್ರಿಯೆಯಲ್ಲಿ ಸಹಕಾರ ನೀಡಿದ ಇಲಾಖೆಯ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು. ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಹಿರಿಯ ಪತ್ರಕರ್ತ ಸದಾಶಿವ ಶೆಣೈ, ಸಮಿತಿಗಳ ಅಧ್ಯಕ್ಷರಾದ ಬಾ.ನಾ.ಸುಬ್ರಮಣ್ಯ, ಬಿ.ಎಸ್.ಲಿಂಗದೇವರು, ಬಿ.ರಾಮಮೂರ್ತಿ, ವೀರಪ್ಪ ಮರಳವಾಡಿ, ನಟಿ ಪ್ರೇಮಾ, ಗಾಯಕಿ ಚಂದ್ರಿಕಾ ಗುರುರಾಜ್, ಪಂಚಮಿ ಅನ್ಸಾರಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಜಾನಪದ ಅಧ್ಯಯನಕ್ಕೆ ಒತ್ತು ನೀಡಿರುವ ಬಗ್ಗೆ ಪರಿಶೀಲಿಸಲು ಸಮಿತಿ ರಚನೆ
ಬೆಂಗಳೂರು : ಜಾನಪದ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ಜಾನಪದ ಅಧ್ಯಯನಕ್ಕೆ ಒತ್ತು ನೀಡಿರುವ ಬಗ್ಗೆ ಪರಿಶೀಲಿಸಿ 15 ದಿನಗಳೊಳಗಾಗಿ ವರದಿಯನ್ನು ನೀಡುವಂತೆ ಜಾನಪದ ಲೋಕದ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ರಾಜ್ಯ ಸರಕಾರವು ಆದೇಶ ಹೊರಡಿಸಿದೆ. 2018-19ರಿಂದ ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದಕ್ಕೆ ಹೊರತಾಗಿ ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಮಾಜ ಕಾರ್ಯ ಸೇರಿದಂತೆ ಹಲವು ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಿ ಶೈಕ್ಷಣಿಕ ಗೊಂದಲಕ್ಕೆ ಎಡೆ ಮಾಡಿ ಮಾಡಿಕೊಟ್ಟಿದೆ. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗಿದ್ದು, ವಿವಿಯ ಎಲ್ಲ ಸ್ನಾತಕೋತ್ತರ ಕೋರ್ಸುಗಳ ಪಠ್ಯಕ್ರಮಗಳಲ್ಲಿ ಜಾನಪದ ಅಧ್ಯಯನಕ್ಕೆ ಒತ್ತುಕೊಡಲಾಗಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಪರಿಷತ್ತು ತಿಳಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಆರ್. ಕೇಶವ, ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಆರ್. ರಾಜೇಶ್, ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ರೀಕೀರ್ತಿ ಬಿ.ಎನ್., ಪ್ರದರ್ಶನ ಕಲೆಗಳ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ರಾಮಕೃಷ್ಣಯ್ಯ, ದೃಶ್ಯ ಕಲೆಗಳ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜಯಕುಮಾರ್ ರೆಡ್ಡಿ ಹಾಗೂ ತುಮಕೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಜಿ. ಪರಶುರಾಮ ಸಮಿತಿಯ ಸದಸ್ಯರಾಗಿದ್ದಾರೆ. ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಕೆ.ಜಿ. ಚಂದ್ರಶೇಖರ್ ಸದಸ್ಯ ಕಾರ್ಯದರ್ಶಿಯಾಗಿರುತ್ತದೆ.
ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿಯಂತೆ ಒಳಮೀಸಲಾತಿ ಕಲ್ಪಿಸಿದರೆ ಕಾನೂನು ಹೋರಾಟ : ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ
ಬೆಂಗಳೂರು : ಸರಕಾರವು ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ಆಧಾರದಲ್ಲಿಯೇ ಒಳಮೀಸಲಾತಿ ಕಲ್ಪಿಸಿದರೆ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಬಲಗೈ ಸಮುದಾಯ ಒಕ್ಕೂಟದ ರಾಜ್ಯಾಧ್ಯಕ್ಷ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನ್ಯಾ. ನಾಗಮೋಹನ್ ದಾಸ್ ವರದಿಯಿಂದ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ವರದಿ ನೀಡಿದ ನ್ಯಾ. ನಾಗಮೋಹನ್ ದಾಸ್ ಆಯೋಗ ನೀಡಿದ ವರದಿಯಲ್ಲಿರುವ ಅಂಕಿ-ಅಂಶಗಳು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿವೆ. ಹೀಗಾಗಿ ವರದಿಯಂತೆ ಒಳ ಮೀಸಲಾತಿಯನ್ನು ಕಲ್ಪಿಸಿದರೆ, ಕಾನೂನು ಹೋರಾಟ ಮಾಡಲಾಗುತ್ತದೆ ಎಂದರು. ಇದೇ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್, ಒಕ್ಕೂಟದ ರಾಜ್ಯ ಸಂಚಾಲಕ ಸಿದ್ದಯ್ಯ, ಬಲಗೈ ಸಮುದಾಯಗಳ ಒಕ್ಕೂಟದ ಸಂಚಾಲಕ ಶಿವಣ್ಣ ಬಿ. ಕನಕಪುರ, ಡಾ. ದೀಪಕ್ ಅಪ್ಪಾಜಿ, ಡಾ. ಈಶ್ವರ್ ಸಿರಿಗೇರಿ, ಗೌರಿಶಂಕರ್ ಉಪಸ್ಥಿತರಿದ್ದರು.
Hassan | ಸಾಕಾನೆ ತುಳಿತ: ಕಾವಾಡಿಗ ಗಂಭೀರ
ಹಾಸನ : ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಸಾಕಾನೆ ಕ್ಯಾಂಪ್ನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಸಾಕಾನೆ ‘ಸುಗ್ರೀವ’ ಕಾವಾಡಿಗನ ಮೇಲೆಯೇ ದಾಳಿ ನಡೆಸಿ ತುಳಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ರಾಜು ಎಂಬವರನ್ನು ಹಾಸನ ನಗರದ ಹಿಮ್ಸ್ ಆಸ್ಪತ್ರೆಗೆ ತುರ್ತು ವಾಹನದಲ್ಲಿ ರವಾನಿಸಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ. ಮಾಹಿತಿಯಂತೆ, ಬುಧವಾರ ರಾತ್ರಿ ಸೆರೆ ಹಿಡಿದ ಬಳಿಕ ತಪ್ಪಿಸಿಕೊಂಡು ಹೋಗಿದ್ದ ನರಹಂತಕ ಒಂಟಿಕೋರೆ ಕಾಡಾನೆಯನ್ನು ಮರು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗರು ಬೆಳಗ್ಗಿನಿಂದಲೇ ಸಿದ್ಧತೆ ನಡೆಸುತ್ತಿದ್ದರು. ಕ್ಯಾಂಪ್ ಪ್ರದೇಶದಲ್ಲಿ ಕಾರ್ಯಾಚರಣೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿದ್ದ ವೇಳೆ, ಅಕಸ್ಮಿಕವಾಗಿ ಸಾಕಾನೆ ‘ಸುಗ್ರೀವ’ ಆಕ್ರೋಶಗೊಂಡು ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲೇ ಸಮೀಪದಲ್ಲಿದ್ದ ಕಾವಾಡಿಗ ರಾಜು ಮೇಲೆ ದಾಳಿ ನಡೆಸಿದ ಸುಗ್ರೀವ, ಅವನನ್ನು ತುಳಿದು ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯ ತೀವ್ರತೆಯಿಂದ ರಾಜು ನೆಲಕ್ಕುರುಳಿದ್ದು, ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಆತಂಕಗೊಂಡು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಗಾಯಗೊಂಡ ರಾಜುಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಕೂಡಲೇ ಆಂಬುಲೆನ್ಸ್ ಮೂಲಕ ಹಾಸನ ನಗರದ ಜಿಲ್ಲಾ ಹಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅಲ್ಲಿ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ, ರಾಜುವಿನ ಸ್ಥಿತಿ ಗಂಭೀರವಾಗಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ವೇತನ ಹೆಚ್ಚಳ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ಕೊಡಗಿನಲ್ಲಿ ಗ್ರಾಪಂ ನೌಕರರಿಂದ ಧರಣಿ
ಮಡಿಕೇರಿ : ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಬೃಹತ್ ಧರಣಿ ನಡೆಸಲಾಯಿತು. ಗ್ರಾಮ ಪಂಚಾಯತ್ ನೌಕರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮ ಪಂಚಾಯತ್ ನೌಕರರಿಗೆ ಸರಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು ಮತ್ತು ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಧರಣಿ ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೂಲಕ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿಯಲ್ಲಿ ಪ್ರಮುಖವಾಗಿ ಗ್ರಾಪಂ ನೌಕರರಿಗೆ ತಾರತಮ್ಯವಿಲ್ಲದೆ ವೈಜ್ಞಾನಿಕವಾಗಿ ಕನಿಷ್ಠ ವೇತನ ಜಾರಿಗೊಳಿಸಬೇಕು, ನೌಕರರ ಸೇವಾ ಭದ್ರತೆ ಮತ್ತು ಬಾಕಿ ಇರುವ ವೇತನವನ್ನು ತಕ್ಷಣವೇ ಪಾವತಿಸಬೇಕೆನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು. ಧರಣಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಂಧ್ಯ, ಉಪ ಕಾರ್ಯದರ್ಶಿ ವಿಜಯ್, ಉಪಾಧ್ಯಕ್ಷರಾದ ರಂಗಸ್ವಾಮಿ ಮತ್ತು ಮಹಾದೇವ್, ಸಮಿತಿ ಸದಸ್ಯರಾದ ವೀರಭದ್ರ ಹಾಗೂ ಸತೀಶ್, ಜಿಲ್ಲೆಯ ವಿವಿಧ ಗ್ರಾಪಂಗಳ ನೌಕರರು ಭಾಗವಹಿಸಿದ್ದರು.
ದಾವಣಗೆರೆ : ಪಂಚಮಸಾಲಿ ಸಮಾಜದ ಉಚ್ಚಾಟಿತ ವಚನಾನಂದ ಶ್ರೀ ವಾರದೊಳಗೆ ಮಠ ತೊರೆಯದಿದ್ದರೆ ಸಮಾಜದ ಸಾವಿರಾರು ಜನರೊಂದಿಗೆ ಮಠಕ್ಕೆ ಬಂದು ವಚನಾನಂದ ಶ್ರೀಯನ್ನು ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಎಚ್.ಎಸ್.ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಏಳಿಗೆಗಾಗಿ ಕಟ್ಟಿರುವ ಟ್ರಸ್ಟ್ನನ್ನು ನಿಮ್ಮ ಸ್ವಂತಕ್ಕೆ ಬಳಸಿಕೊಳ್ಳುವ ಮೂಲಕ ಸಮಾಜಕ್ಕೆ ದ್ರೋಹ ಮಾಡಿದ್ದೀರಿ. ಅಲ್ಲದೆ, ಲೆಕ್ಕ ಕೊಡುವ ವಿಚಾರದಲ್ಲಿ ನಿಮ್ಮ ವರ್ತನೆ ಸಹಿಸಲು ಸಾಧ್ಯವಿಲ್ಲ. ಮುಂದಿನ ವಾರದೊಳಗೆ ಮಠ ಖಾಲಿ ಮಾಡದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಸಿದರು. ಸಮಾಜದ ಉದ್ಧಾರಕ್ಕಾಗಿ ಪೀಠಕ್ಕೆ ಶ್ರೀಗಳ ನೇಮಿಸಲಾಗಿತ್ತು. ಆದರೆ, ಅವರು ತಮ್ಮ ಸ್ವಂತ ಬೆಳವಣಿಗೆಗೆ ಮಠ ಬಳಸಿಕೊಂಡರೇ ವಿನಃ ಸಮಾಜೋದ್ಧಾರಕ್ಕಾಗಿ ಏನು ಮಾಡಿಲ್ಲ. ಮಠಕ್ಕಾಗಿ ಮುರುಗೇಶ್ ನಿರಾಣಿ ಅವರು ನೀಡಿದ 2 ಕೋಟಿ ರೂ. ತಮ್ಮ ಐಷಾರಾಮಿ ಜೀವನಕ್ಕಾಗಿ ಬಳಸಿದ್ದಾರೆ ಎಂದು ಆರೋಪಿಸಿದರು. ಟ್ರಸ್ಟ್ ಮೂಲಕವೇ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲಾಗುತ್ತದೆ. ಆದರೆ, ಶ್ರೀಗೆ ಹಣ ಏಕೆ ಬೇಕು? ಎಂದು ಗೊತ್ತಾಗುತ್ತಿಲ್ಲ. ಈಗ ಸ್ವಾಮೀಜಿ ಪರವಾಗಿ ಲೆಕ್ಕ ಕೊಡಿ ಚಳುವಳಿ ಆರಂಭಿಸಿರುವ ಎಲ್ಲರ ಇತಿಹಾಸಗಳು ನಮಗೆ ಗೊತ್ತಿವೆ. ಅವರೆಲ್ಲರೂ ಹತ್ತಿದ ಏಣಿಯನ್ನು ಒದೆಯುವಂತಹ ಜಾಯಮಾನದವರು. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾತನಾಡದೆ ಇರುವುದೇ ಸೂಕ್ತ ಎಂದು ಹೇಳಿದರು. ಟ್ರಸ್ಟಿನ ಧರ್ಮದರ್ಶಿ ಉಮಾಪತಿಯವರು ಸಮಾಜಕ್ಕೆ ಸಾಕಷ್ಟು ತ್ಯಾಗ, ಸಹಕಾರ ಮಾಡಿದ್ದಾರೆ. ಸಮಾಜದ ಬೆಳವಣಿಗೆಗೆ ಅವರ ಕೊಡುಗೆ ಅನನ್ಯ. ಇಂಥವರನ್ನು ಲೆಕ್ಕ ಕೊಡಿ ಎಂದು ಪ್ರಶ್ನಿಸುವ ನಿಮಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಸಂದರ್ಭ ಸಾವಿರಾರೂ ಕ್ವಿಂಟಲ್ ಸಂಗ್ರಹವಾಗಿದ್ದ ಅಕ್ಕಿ, ಧವಸ ಧಾನ್ಯವನ್ನು ಮಾರಾಟ ಮಾಡಿದ ಹಣ ಎಲ್ಲಿ ಹೋಗಿತು. ಕೂಡಲ ಸಂಗಮ ಪೀಠಕ್ಕಾಗಿ ಈ ಭಾಗದಿಂದ ಸಂಗ್ರಹಿಸಿದ ಹಣ, ಅಕ್ಕಿ ಸೇರಿದಂತೆ ಕೋಟ್ಯಂತರ ರೂ. ದುರುಪಯೋಗಪಡಿಸಿಕೊಂಡವರ ಬಗ್ಗೆ ನಾವೂ ಶೀಘ್ರದಲ್ಲಿಯೇ ಲೆಕ್ಕ ಕೊಡಿ ಚಳುವಳಿ ಆರಂಭಿಸಲಿದ್ದೇವೆ ಎಂದು ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಅಶೋಕ ಗೋಪನಾಳು, ಹಾಲೇಶ್ ಕಾಯಿಪೇಟೆ, ರುದ್ರಣ್ಣ ಸೋಗಿ, ಚನ್ನಬಸಪ್ಪ, ಜಗದೀಶ್ ಉಪಸ್ಥಿತರಿದ್ದರು.
ಒಳಗೊಳ್ಳುವುದು ಪ್ರಬುದ್ಧತೆ, ಹೊರಗಿಡುವುದು ಅಪ್ರಬುದ್ಧತೆ : ಪ್ರೊ.ರಹಮತ್ ತರೀಕೆರೆ
ಮೈಸೂರು : ಒಳಗೊಳ್ಳುವುದು ಪ್ರಬುದ್ಧತೆ. ಹೊರಗಿಡುವುದು ಅಪ್ರಬುದ್ಧತೆ. ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಭಾರತಕ್ಕೆ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ ಒಳಗೊಳ್ಳುವ ಬದುಕು, ಜ್ಞಾನ, ತತ್ವ ಮತ್ತು ಸಂವಿಧಾನದಲ್ಲಿ ಪರಿಹಾರ ಇದೆ ಎಂದು ಚಿಂತಕ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಉಳುಮೆ ಪ್ರತಿಷ್ಠಾನದ ಸಹಯೋಗದಲ್ಲಿ ಗುರುವಾರ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ 135ನೇ ಜಯಂತಿಯಲ್ಲಿ ಒಳಗೊಳ್ಳುವ ಪ್ರಬುದ್ಧ ಭಾರತ: ಡಾ.ಬಿ.ಆರ್.ಅಂಬೇಡ್ಕರ್ ಪರಿಕಲ್ಪನೆ ವಿಷಯ ಕುರಿತು ಮಾತನಾಡಿದರು. ಪ್ರಬುದ್ಧತೆ ಬೌದ್ಧದ ಧಮ್ಮದ ಸಾರ. ಅಲ್ಲಿ ತತ್ವ, ಕರುಣೆ, ಮೈತ್ರಿ ಇದೆ. ಅತ್ಯಂತ ಶ್ರೇಷ್ಠ ಮೌಲ್ಯಗಳು ಭಾರತದ ಆತ್ಮವಾಗಬೇಕು. ದಾರಿ ದೀಪಕವಾಗಬೇಕು. ಜಾತಿ, ಧರ್ಮದ ಸಮಸ್ಯೆಗಳಿಂದ ಭಾರತದ ಅಪ್ರಬುದ್ಧವಾಗಿದೆ. ಪ್ರಬುದ್ಧತೆ ಬೆಳೆಸಿಕೊಂಡು ವಿವೇಕ ಮತ್ತು ಮಾನವೀಯತೆ ಕಡೆ ಸಾಗಬೇಕು ಎಂದರು. ಸ್ವಚ್ಛತಾಕರ್ಮಿ ಶಾಂತಮ್ಮ ಬಾಬಾ ಸಾಹೇಬರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸಮಾರಂಭ ಉದ್ಘಾಟಿಸಿದರು. ಉಳುಮೆ ಪ್ರತಿಷ್ಠಾನದ ಅಧ್ಯಕ್ಷ ಅವಿನಾಶ್ ಟಿಜೆಎಸ್ ಪರಿಸರ ಮತ್ತು ಪ್ರಕೃತಿ: ಡಾ.ಬಿ.ಆರ್. ಅಂಬೇಡ್ಕರ್ ದಾರ್ಶನಿಕತೆ ಕುರಿತು ವಿಷಯ ಮಂಡಿಸಿದರು. ಚರಿತ್ರಾ ಸಂವಿಧಾನ ಪೀಠಿಕೆ ಓದಿದರು. ಮೈಸೂರು ವಿವಿ ಕಲಾ ನಿಕಾಯದ ಡೀನ್ ಪ್ರೊ.ಎಂ.ಎಸ್ ಶೇಖರ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಕವಿ ಶಂಕನಪುರ ಮಹಾದೇವ, ಮುಕ್ತವಿವಿ ಸಿಂಡಿಕೇಟ್ ಸದಸ್ಯ ಮಹೇಶ್ ಸೊಸ್ಲೆ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಮೈಸೂರು ವಿವಿ ಗ್ರಂಥಪಾಲಕಿ ಸರಸ್ವತಿ, ಪ್ರಾಧ್ಯಾಪಕರಾದ ಪ್ರೊ.ಮಮತಾ, ಪ್ರೊ. ವಿಜಯಲಕ್ಷ್ಮೀ ಮನಾಪುರ, ಪ್ರೊ.ಪುಷ್ಪಾ ಮುಂತಾದವರಿದ್ದರು. ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಜೇಂದ್ರಎಂ ಸ್ವಾಗತಿಸಿದರು. ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್ ವಂದಿಸಿದರು. ದೇವಾನಂದ ವರಪ್ರಸಾದ್, ಅಮ್ಮರಾಮಚಂದ್ರ, ಶೇಷಣ್ಣ ಮತ್ತು ತಂಡದವರು ಭೀಮಗೀತೆ ಹಾಡಿದರು. ಭಾರತದ ಚರಿತ್ರೆ ಬಹುಜನರನ್ನು ಹೊರಗಿಟ್ಟ ಚರಿತ್ರೆಯಾಗಿದೆ. ಸಮಾಜವನ್ನು ಜಾತಿ, ಧರ್ಮ, ಲಿಂಗ, ಭಾಷೆಯ ಆಧಾರ ದಲ್ಲಿ ವಿಭಜನೆ ಮಾಡುವುದು. ಸಂಪತ್ತಿನ ಹಂಚಿಕೆ, ಅಧಿಕಾರ ಕೆಲವರ ಬಳಿಯೇ ಇರ ಬೇಕೆಂದು ಆದೇಶಿಸುವುದು ಹೊರಗಿಡುವ ಗುಣವಾಗಿದೆ. ಭಾರತದ ಅಭಿವೃದ್ದಿಯ ಬಲಿಪಶುಗಳು ಆದಿವಾಸಿಗಳು. ಶಿಕ್ಷಣ, ಅಭಿವೃದ್ಧಿ, ರಾಜಕಿಯ ಹೊರಗಿಟ್ಟಾಗ ಪ್ರಬುದ್ಧವಾಗಿಲ್ಲ. ಅರಸು ಉಳುವವನಿಗೆ ಭೂಮಿ ಕೊಟ್ಟಾಗ, ನಾಲ್ವಡಿ ಮಿಲ್ಲರ್ ಆಯೋಗ ರಚಿಸಿದಾಗ ಒಳಗೊಳ್ಳುವ ಗುಣಗಳನ್ನು ಕಾಣಬಹುದು. ಇವರ ಮೇಲೆ ಅಂಬೇಡ್ಕರ್ರ ಪ್ರಭಾವ ಬೀರಿದೆ. -ಪ್ರೊ.ರಹಮತ್ ತರೀಕೆರೆ, ಚಿಂತಕ
Hanur | ಸ್ವಜಾತಿಯವರಿಂದ ಬಹಿಷ್ಕಾರ ಆರೋಪ ; ನ್ಯಾಯಕ್ಕಾಗಿ ಪೊಲೀಸರ ಮೊರೆ
ಹನೂರು : ತಾಲೂಕಿನ ಗಡಿ ಗ್ರಾಮಗಳಲ್ಲಿ ಸ್ವಜಾತಿಗಳಿಂದಲೇ ಸಾಮಾಜಿಕ ಬಹಿಷ್ಕಾರ ಹೇರಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ನೊಂದ ಕುಟುಂಬಗಳು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಮೊರೆ ಹೋಗಿರುವ ಘಟನೆ ವರದಿಯಾಗಿದೆ. ರಾಮಾಪುರ ಹೋಬಳಿಯ ಹೂಗ್ಯಂ ಮತ್ತು ಮಿಣ್ಯಂ ಗ್ರಾಮಗಳಲ್ಲಿ ಅನಧಿಕೃತ ಸಮುದಾಯ ಪಂಚಾಯತ್ಗಳು ನಡೆಯುತ್ತಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಪಂಚಾಯತ್ಗಳ ಮೂಲಕ ನಗದು ದಂಡ ವಸೂಲಿ, ಸಾಮಾಜಿಕ ಬಹಿಷ್ಕಾರ ಹೇರಿಕೆ, ಹಾಗೂ ಮನೆತನದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಮುನಿಯಪ್ಪ ಅವರು ಮಾರ್ಚ್ 22, 2026ರಂದು ರಾಮಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಬಳಿಕ ಹನೂರು ತಾಲೂಕು ದಂಡಾಧಿಕಾರಿಗೆ ಮನವಿ ನೀಡಿದ್ದಾರೆ. ದೂರಿನಲ್ಲಿ 2018ರಿಂದಲೇ ಈ ರೀತಿಯ ಸಾಮಾಜಿಕ ದಬ್ಬಾಳಿಕೆ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದ್ದು, ಮಹಿಳೆಯರು ಹಾಗೂ ಕುಟುಂಬಗಳು ನಿರಂತರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಶುಭ ಸಮಾರಂಭಗಳು, ಅಂತ್ಯಕ್ರಿಯೆಗಳು ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ತಡೆಹಿಡಿಯಲಾಗುತ್ತಿದೆ ಎಂಬ ಗಂಭೀರ ಅಂಶವೂ ಬೆಳಕಿಗೆ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ದಂಡಾಧಿಕಾರಿಗಳು ಚ್ಯೆತ್ರಾ ಗುರುವಾರ ನಡೆಸಿದ ಸಭೆಗೆ ಕೆಲ ಮುಖಂಡರು ಹಾಜರಾಗದ ಹಿನ್ನೆಲೆಯಲ್ಲಿ, ಎ.23ರಂದು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದ್ದು ಕಾನೂನುಬಾಹಿರ ಚಟುವಟಿಕೆಗಳು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೋಹಿತ್ ವೇಮುಲಾ ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು : ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಘನತೆಯ ಹಕ್ಕು ರಕ್ಷಣೆಗಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಕರ್ನಾಟಕ ರೋಹಿತ್ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದ್ದಾರೆ. ಈ ಹಿಂದೆಯೂ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕ ಚರ್ಚೆಗೆ ಬಂದಿತ್ತಾದರೂ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಬದಲಿಗೆ ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ನೀಡಲು ಸಂಪುಟ ಸಭೆಯಲ್ಲಿ ಸೂಚಿಸಿ, ವಿಧೇಯಕದ ಬಗೆಗಿನ ನಿರ್ಧಾರವನ್ನು ಮುಂದೂಡಲಾಗಿತ್ತು. ಇದೀಗ ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ನೀಡಿದ್ದು, ವಿಧೇಯಕದ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗದಂತೆ ರಕ್ಷಣೆ ನೀಡುವುದು ವಿಧೇಯಕದ ಆಶಯವಾಗಿದೆ. ವಿಧೇಯಕದಲ್ಲಿನ ಅಂಶಗಳ ಉಲ್ಲಂಘನೆಯು ಜಾಮೀನುರಹಿತ ಅಪರಾಧವಾಗಲಿದ್ದು, ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಜತೆಗೆ ಸಂಬಂಧಪಟ್ಟ ಸಂಸ್ಥೆಗೆ ಸರಕಾರದಿಂದ ಹಣಕಾಸು ನೆರವು ಮತ್ತು ಅನುದಾನ ನಿಲ್ಲಿಸುವ ಅಂಶಗಳು ಈ ಹಿಂದೆ ವಿಧೇಯಕದಲ್ಲಿ ಸೇರಿಸಲಾಗಿತ್ತು ಎಂದೂ ಸಚಿವರು ನುಡಿದರು. ಅದೇ ರೀತಿ, ಜಿಬಿಎ ವ್ಯಾಪ್ತಿಯಲ್ಲಿರುವ ರಾಜಭವನ, ಕುಮಾರ ಕೃಪಾ ಅತಿಥಿ ಗೃಹ, ಶ್ರೀ ಕಂಠೀರವ ಕ್ರೀಡಾಂಗಣ, ಕೋರಮಂಗಲ ಕ್ರೀಡಾಂಗಣ, ಈ ಎಲ್ಲಾ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. ಕಾರವಾರ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವರ್ಗಾಯಿಸಲು ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. -ಎಚ್.ಕೆ.ಪಾಟೀಲ್, ಕಾನೂನು ಸಚಿವ
13,262 ಕೋಟಿ ರೂಪಾಯಿ ವೆಚ್ಚದ ಬೃಹತ್ 'ಎಲಿವೇಟೆಡ್ ಕಾರಿಡಾರ್' ಯೋಜನೆ ಸಂಪುಟ ಸಭೆ ಒಪ್ಪಿಗೆ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸುಮಾರು 13,262 ಕೋಟಿ ರೂಪಾಯಿ ವೆಚ್ಚದ ಬೃಹತ್ 'ಎಲಿವೇಟೆಡ್ ಕಾರಿಡಾರ್' ಯೋಜನೆ ಒಪ್ಪಿಗೆ ನೀಡಿ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು. ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 75.6 ಕಿ.ಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್ಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಬೃಹತ್ ಯೋಜನೆಗೆ 13,262 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ತಗ್ಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಮೇಲ್ಸೇತುವೆ ಹಾಗೂ ರೈಲ್ವೆ ಓವರ್ ಬ್ರಿಡ್ಜ್ ಐಓಸಿ ಜಂಕ್ಷನ್ನಲ್ಲಿ ಎಲಿವೇಟೆಡ್ ರೋಟರಿ ಫ್ಲೈಓವರ್ ಮತ್ತು ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೆಚ್ಚುವರಿ 2-ಲೇನ್ ROB ನಿರ್ಮಾಣಕ್ಕೆ 436.44 ಕೋಟಿ ರೂ.ಗಳ ಪರಿಷ್ಕೃತ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದೂ ಉಲ್ಲೇಖಿಸಿದರು. ಬೆಂಗಳೂರು ಜಲಮಂಡಳಿಯ 5 ತ್ಯಾಜ್ಯನೀರು ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಕೆಸರನ್ನು ಬಳಸಿ ಬಯೋಗ್ಯಾಸ್ ಉತ್ಪಾದಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಇದೇ ವೇಳೆ, ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು. ಅಲ್ಲದೆ, ಸರ್ಕಾರದಲ್ಲಿ ಖಾಲಿ ಇರುವ 56,000 ಹುದ್ದೆಗಳ ಭರ್ತಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
Bengaluru | ಮನೆಗಳ್ಳತನ ಪ್ರಕರಣ : ಆರೋಪಿ ಬಂಧನ; 35 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳ ವಶ
ಬೆಂಗಳೂರು : ಮನೆಯೊಳಗೆ ನುಗ್ಗಿ ಹಣ, ಆಭರಣ ದೋಚಿ ಪರಾರಿಯಾಗಿದ್ದ ಪ್ರಕರಣದಡಿ ಆರೋಪಿಯೊಬ್ಬನನ್ನು ಇಲ್ಲಿನ ತಿಲಕನಗರ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಯನಗರ 4ನೇ ಬ್ಲಾಕ್ನ ನಿವಾಸಿಯೊಬ್ಬರು ಮನೆಯ ಬಾಗಿಲ ಚಿಲಕ ಹಾಕಿಕೊಂಡು ದಿನಸಿ ತರಲು ಸಮೀಪದ ಅಂಗಡಿಗೆ ತೆರಳಿದ್ದಾರೆ. ಕೆಲ ಸಮಯದ ಬಳಿಕ ನಿವಾಸಿಯ ತಂದೆ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿರುವುದು ಗಮನಿಸಿ ಒಳಗೆ ನೋಡಿದಾಗ ಬೀರುವಿನಲ್ಲಿಟ್ಟಿದ್ದ 423 ಗ್ರಾಂ ಚಿನ್ನಾಭರಣ, 110 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 50 ಸಾವಿರ ರೂ. ಹಣ ಕಳುವಾಗಿರುವುದು ಕಂಡುಬಂದಿದ್ದು, ತಕ್ಷಣ ಅವರು ತಿಲಕ್ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಬಾಣಸವಾಡಿಯ ಹೋಟೇಲ್ವೊಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿ ಗಿರಿನಗರ ಹಾಗೂ ಕೆ.ಆರ್.ಪುರ ಜ್ಯುವೆಲ್ಲರಿ ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದ ಸ್ವಲ್ಪ ಪ್ರಮಾಣದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ರಾಮಮೂರ್ತಿನಗರದ ಪಾರ್ಕ್ವೊಂದರ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟಿದ್ದ ಆಭರಣಗಳು ಸೇರಿದಂತೆ ಒಟ್ಟು 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐಎಎಸ್ ಅಧಿಕಾರಿ ಸೋಗಿನಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯರಿಗೇ ಮಕ್ಮಲ್ ಟೋಪಿ ಇಟ್ಟವ ಈಗ ಪೊಲೀಸರ ಅತಿಥಿ!
Chikkamagaluru Fraud Case- ತನ್ನನ್ನು ಐಎಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಚಿಕ್ಕಮಗಳೂರಿನ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಮೆಡಿಕಲ್ ಶಾಪ್ ಮಾಲೀಕರಿಗೆ 41 ಲಕ್ಷ ರೂ. ವಂಚಿಸಿದ್ದ ಮಿಥುನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಇಲಾಖೆಯ ಉಸ್ತುವಾರಿ ಎಂದು ನಂಬಿಸಿದ್ದ ಈತ, ಔಷಧ ಸರಬರಾಜು ಆದೇಶ ಕೊಡಿಸುವುದಾಗಿ ನಕಲಿ ಗುರುತಿನ ಚೀಟಿ ತೋರಿಸಿ ಹಣ ಪಡೆದಿದ್ದ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಂದ್ರಶೇಖರ್ ಅವರೂ ಸಹ ಈತನ ನಕಲಿ ಐಡಿ ನಂಬಿ ಮೋಸ ಹೋಗಿರುವುದಾಗಿ ತಿಳಿಸಿದ್ದಾರೆ. ಮೆಡಿಕಲ್ ಶಾಪ್ ಮಾಲೀಕ ಸತೀಶ್ ನೀಡಿದ ದೂರಿನ ಆಧಾರದ ಮೇಲೆ ಈ ನಕಲಿ ಅಧಿಕಾರಿಯ ವಂಚನೆ ಜಾಲ ಬಯಲಾಗಿದೆ.
Bengaluru | ಹೆತ್ತ ತಾಯಿಯನ್ನು ಮನೆಯ ನಾಲ್ಕನೆ ಮಹಡಿಯಿಂದ ತಳ್ಳಿ ಹತ್ಯೆಗೈದ ಮಗ
ಬೆಂಗಳೂರು : ಪಾಶ್ರ್ವವಾಯುವಿನಿಂದ(ಸ್ಟ್ರೋಕ್)ಬಳಲುತ್ತಿದ್ದ ಹೆತ್ತ ತಾಯಿಯನ್ನು ಮನೆಯ 4ನೇ ಮಹಡಿಯಿಂದ ತಳ್ಳಿ ಹತ್ಯೆಗೈದ ಮಗನೊಬ್ಬನನ್ನು ಇಲ್ಲಿನ ಆರ್.ಆರ್.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಬಂಧಿತ ಮಗ ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ(73) ಹತ್ಯೆಯಾದ ತಾಯಿ. ಎ.15ರಂದು ಮಧ್ಯಾಹ್ನ ಬೆಂಗಳೂರಿನ ಬಿಇಎಂಎಲ್ ಬಡಾವಣೆಯ 3ನೇ ಹಂತದಲ್ಲಿರುವ ಮನೆಯೊಂದರಲ್ಲಿ ಘಟನೆ ನಡೆದಿದೆ. ಈ ಸಂಬಂಧ ಮನೆ ಮಾಲಕ ವಿಕ್ರಮ್ ಎಂಬುವರು ನೀಡಿದ ದೂರು ಆಧರಿಸಿ ಬಿಎನ್ಎಸ್ ಸೆಕ್ಷನ್ 103(ಕೊಲೆ) ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೆಂಕಟೇಶ್ ಬಿಇಎಂಎಲ್ ಬಡಾವಣೆಯಲ್ಲಿ 2ನೇ ಮಹಡಿಯಲ್ಲಿ ತಾಯಿ ಹಾಗೂ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದರು. ಆರೋಪಿ ಶೋ ರೂಮ್ವೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿ. ಸಾವಿತ್ರಮ್ಮ ನಾಲ್ಕು ವರ್ಷಗಳಿಂದ ಪಾಶ್ರ್ವವಾಯು ಪೀಡಿತರಾಗಿ ಅಂಗಾಂಗಗಳ ಸ್ವಾಧೀನ ಕಳೆದುಕೊಂಡಿದ್ದರು. ಚಿಕಿತ್ಸೆ ನೀಡಿದರೂ ಗುಣಮುಖರಾಗಿರಲಿಲ್ಲ. ಆರೈಕೆ ಮಾಡುವುದೇ ಕಷ್ಟವಾಗಿತ್ತು. ಎ.15ರಂದು ಬುಧವಾರ ಮಧ್ಯಾಹ್ನ ಮನೆಗೆ ಬಂದ ಆರೋಪಿಯು ತಾಯಿ ಬಳಲುತ್ತಿರುವುದು ನೋಡಿ ಕಂಗಾಲಾಗಿದ್ದ. ಮಲಗಿದ್ದ ತಾಯಿಯನ್ನು ನಾಲ್ಕನೇ ಮಹಡಿಗೆ ಎತ್ತುಕೊಂಡು ಹೋಗಿ ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಕಂಡು ಮೇಲಿನಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಮಾಹಿತಿ ನೀಡಿದ್ದಾರೆ.
ಎ.18ರಂದು ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಬಂಟ್ವಾಳ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದೊಂದಿಗೆ ಮೇ 12 ರಂದು ಪಾಣೆಮಂಗಳೂರು ಸಮೀಪದ ಎಸ್ ಎಸ್ ಹಾಲ್ ನಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಎಪ್ರಿಲ್ 18 ರಂದು ಸಂಜೆ 4.00 ಕ್ಕೆ ಬಿ.ಸಿ.ರೋಡಿನ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಇದೇ ವೇಳೆ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಗುವುದು. ಬಂಟ್ವಾಳ ತಾಲೂಕಿನ ಬ್ಯಾರಿ ಭಾಷೆ ಮತ್ತು ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದು ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
IPL 2026 | ಮುಂಬೈ ವಿರುದ್ಧ ಪಂಜಾಬ್ ಕಿಂಗ್ಸ್ ಗೆ ಜಯ
ಕ್ವಿಂಟನ್ ಡಿಕಾಕ್ ಶತಕ ವ್ಯರ್ಥ, ಪ್ರಭ್ಸಿಮ್ರನ್ ಅರ್ಧಶತಕ
ಮುಂಬೈಗೆ ಮುಳುವಾದ ಶ್ರೇಯಸ್ ಅಯ್ಯರ್- ಪ್ರಭಸಿಮ್ರಾನ್ ಜೊತೆಯಾಟ; ಪಂಜಾಬ್ ಕಿಂಗ್ಸ್ ಅಜೇಯ ಓಟ
ಆರಂಭಕಾರ ಪ್ರಭಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅಮೋಘ ಶತಕದ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಬಳಗದ ಅಜೇಯ ಯಾತ್ರೆ ಮುಂದುವರಿದಿದೆ. ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ರದ್ದಿನಿಂದಾಗಿ ಒಟ್ಟು 9 ಅಂಕಗಳನ್ನು ಗಳಿಸಿರುವ ಪಂಜಾಬ್ ಇದೀಗ ಯಲ್ಲಿ ಆರ್ ಸಿಬಿಯನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದೆ. ಏತನ್ಮಧ್ಯೆ ಮುಂಬೈ ಇಂಡಿಯನ್ಸ್ ನ ಆರಂಭಕಾರ ಕ್ವಿಂಟನ್ ಡಿಕಾಕ್ ಅವರು ಹೊಡೆದ ಭರ್ಜರಿ ವ್ಯರ್ಥವಾಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 16ರ ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಇದಕ್ಕುತ್ತರವಾಗಿ ಪಂಜಾಬ್ ಕಿಂಗ್ಸ್ ತಂಡ ಇನ್ನೂ 21 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ಜಯಗಳಿಸಿತು. () ಸಂಕ್ಷಿಪ್ತ ಸ್ಕೋರ್ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 195/6, ಕ್ಲಿಂಟನ್ ಡಿ ಕಾಕ್ ಅಜೇಯ 112(60), ನಮನ್ ಧಿರ್ 50(31), ಹಾರ್ದಿಕ್ ಪಾಂಡ್ಯ 14(12), ಅರ್ಶದೀಪ್ ಸಿಂಗ್ 22ಕ್ಕೆ 3, ಮಾರ್ಕೋ ಯಾನ್ಸನ್ 30ಕ್ಕೆ 1, ಶಶಾಂಕ್ ಸಿಂಗ್ 19ಕ್ಕೆ 1. ಪಂಜಾಬ್ ಕಿಂಗ್ಸ್ 16.3 ಓವರ್ ಗಳಲ್ಲಿ 198/3, ಪ್ರಭಸಿಮ್ರಾನ್ ಸಿಂಗ್ ಅಜೇಯ 80(39), ಶ್ರೇಯಸ್ ಅಯ್ಯರ್ 68(35), ಕೂಪರ್ ಕಾನಲಿ17(12), ಗಜನಫರ್ 31ಕ್ಕೆ 2, ಶಾರ್ದೂಲ್ ಠಾಕೂರ್ 42ಕ್ಕೆ 1.
ಹೆಚ್ಚುತ್ತಿರುವ ವೆಚ್ಚಗಳು, ಸ್ಥಗಿತಗೊಂಡ ವೇತನ: ಭಾರತದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದೇಕೆ?
ಸೋಮವಾರ ನೋಯ್ಡಾದಲ್ಲಿ ಸಾವಿರಾರು ಕಾರ್ಖಾನೆ ಕಾರ್ಮಿಕರು ನಡೆಸಿದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು. ಕನಿಷ್ಠ ವೇತನ ಹೆಚ್ಚಳ, ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಹೆಚ್ಚುವರಿ ಕೆಲಸದ ಪಾವತಿಗಳನ್ನು ಕೋರಿ ಅವರ ಪ್ರತಿಭಟನೆ ಎಪ್ರಿಲ್ 8 ರಂದು ಪ್ರಾರಂಭವಾಗಿತ್ತು. ಎಪ್ರಿಲ್ 9 ರಂದು ನೆರೆಯ ಹರಿಯಾಣದಲ್ಲಿ ಶೇ. 35 ರಷ್ಟು ಕನಿಷ್ಠ ವೇತನ ಹೆಚ್ಚಳವನ್ನು ಘೋಷಿಸುವ ಅಧಿಸೂಚನೆಯ ನಂತರ ಈ ಪ್ರತಿಭಟನೆ ಭುಗಿಲೆದ್ದಿತು, ಇದರ ನಂತರ ಕೈಗಾರಿಕಾ ಕೇಂದ್ರವಾದ ಮಾನೇಸರ್ ನಲ್ಲಿಯೂ ಇದೇ ರೀತಿಯ ಪ್ರತಿಭಟನೆ ನಡೆಯಿತು. ಪಶ್ಚಿಮ ಏಷ್ಯಾ ಯುದ್ಧದ ಮಧ್ಯೆ ಬೆಲೆ ಏರಿಕೆಯೇ ಈ ಪ್ರತಿಭಟನೆಗಳ ಹಿಂದಿನ ಕಾರಣ. ಒಟ್ಟಾರೆ ಮಾಸಿಕ ಕನಿಷ್ಠ ವೇತನವನ್ನು ರೂಪಿಸುವ ಎರಡು ಅಂಶಗಳಲ್ಲಿ ಒಂದಾದ ಮೂಲ ಕನಿಷ್ಠ ವೇತನವನ್ನು ಪರಿಷ್ಕರಿಸುವಲ್ಲಿ ರಾಜ್ಯಗಳ ವಿಳಂಬದಿಂದ ಇದು ಜಟಿಲವಾಗಿದೆ. ಮೂಲ ಕನಿಷ್ಠ ವೇತನ ಪರಿಷ್ಕರಣೆ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯಬೇಕಿತ್ತು. ಆದರೆ ಹರಿಯಾಣ 10 ವರ್ಷಗಳ ನಂತರವೇ ಅದನ್ನು ಪರಿಷ್ಕರಿಸಿತು. ಈಗ ಮಧ್ಯಂತರ ಹೆಚ್ಚಳದೊಂದಿಗೆ ಹೆಜ್ಜೆ ಹಾಕಿರುವ ಉತ್ತರ ಪ್ರದೇಶವು ಕೊನೆಯದಾಗಿ 2012 ರಲ್ಲಿ ಅದನ್ನು ಪರಿಷ್ಕರಿಸಿತ್ತು. ಪರಿಷ್ಕರಣೆಗೆ ಮುನ್ನ, ಹರಿಯಾಣದಲ್ಲಿ ಕೌಶಲ್ಯರಹಿತ ಕಾರ್ಮಿಕರ ಒಟ್ಟಾರೆ ಮಾಸಿಕ ಕನಿಷ್ಠ ವೇತನ 11,274.60 ರೂ.ಗಳಷ್ಟಿತ್ತು. ಇದು ಈಗ ಎಪ್ರಿಲ್ 1 ರಿಂದ ಜಾರಿಗೆ ಬರುವಂತೆ 15,220.71 ರೂ.ಗಳಾಗಿದೆ. ಉತ್ತರ ಪ್ರದೇಶದಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಅದೇ ದರ 11,313 ರೂ. ಇತ್ತು. ಈಗ ಮಧ್ಯಂತರ ಪರಿಷ್ಕರಣೆಯಿಂದ ವೇತನ ನೋಯ್ಡಾ (ಗೌತಮ್ ಬುದ್ಧ ನಗರ) ಮತ್ತು ಗಾಜಿಯಾಬಾದ್ನಲ್ಲಿ 13,690 ರೂ., ಪುರಸಭೆಗಳಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ 13,006 ರೂ. ಮತ್ತು ಇತರ ಪ್ರದೇಶಗಳಿಗೆ 12,356 ರೂ. ಆಗಿ ಬದಲಾಗಿದೆ. ಇದು ಒಟ್ಟು ಮಾಸಿಕ ಕನಿಷ್ಠ ವೇತನದ ಎರಡನೇ ಅಂಶಕ್ಕೆ ಕಾರಣವಾಗುತ್ತದೆ. ಅದೇ ಜೀವನ ವೆಚ್ಚ. ಇದನ್ನು ವಾರ್ಷಿಕವಾಗಿ ಎರಡು ಬಾರಿ ಪರಿಷ್ಕರಿಸಲು ಉದ್ದೇಶಿಸಲಾಗಿದೆ, ಇದು ಗ್ರಾಹಕ ಬೆಲೆ ಸೂಚ್ಯಂಕ-ಕೈಗಾರಿಕಾ ಕಾರ್ಮಿಕರ (CPI-IW) ನಿರ್ಧರಿಸಿದಂತೆ ಕೈಗಾರಿಕಾ ಕಾರ್ಮಿಕರ ಹಣದುಬ್ಬರ ದರಗಳನ್ನು ಪ್ರತಿಬಿಂಬಿಸುತ್ತದೆ. ಹೆಚ್ಚಿನ ರಾಜ್ಯಗಳು ಅರ್ಧ-ವಾರ್ಷಿಕ ಪರಿಷ್ಕರಣೆಗಳನ್ನು ಕೈಗೊಂಡಿದ್ದರೂ, ವಿಶೇಷವಾಗಿ ಕೋವಿಡ್-19 ನಂತರದ ವರ್ಷಗಳಲ್ಲಿ ಅವರು ಮೂಲ ಕನಿಷ್ಠ ವೇತನ ಪರಿಷ್ಕರಣೆಗಳನ್ನು ಮಾಡಿಲ್ಲ. ►ಜೀವನ ವೆಚ್ಚ ಏರಿಕೆ 2016 ರ ಇತ್ತೀಚಿನ ನವೀಕರಿಸಿದ ಮೂಲ ವರ್ಷದೊಂದಿಗೆ, CPI-IW ದತ್ತಾಂಶದ ಪ್ರಕಾರ, ಫೆಬ್ರವರಿ 2021 ಮತ್ತು ಫೆಬ್ರವರಿ 2026 ರ ನಡುವೆ, ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಹಣದುಬ್ಬರ ದರವು 24.8% ರಷ್ಟಿತ್ತು. ಹರಿಯಾಣದಲ್ಲಿ, ಈ ಅವಧಿಯಲ್ಲಿ ಹಣದುಬ್ಬರ ದರವು ಗುರುಗ್ರಾಮ್ನಲ್ಲಿ 27.9% ಮತ್ತು ಫರಿದಾಬಾದ್ ನಲ್ಲಿ 27.2% ರಷ್ಟಿತ್ತು. ಉತ್ತರ ಪ್ರದೇಶದಲ್ಲಿ, ಈ ಅಂಕಿ ಅಂಶವು ಘಾಝಿಯಾಬಾದ್ ಮತ್ತು ನೋಯ್ಡಾದಲ್ಲಿ 27.4% ರಷ್ಟಿತ್ತು. ದೆಹಲಿಯಲ್ಲಿ ಫೆಬ್ರವರಿ 2021 ಮತ್ತು ಫೆಬ್ರವರಿ 2026 ರ ನಡುವೆ ಕೈಗಾರಿಕಾ ಕಾರ್ಮಿಕರ ಹಣದುಬ್ಬರ ದರವು 27.4% ರಷ್ಟು ಏರಿಕೆಯಾಗಿದೆ. ಹೋಲಿಸಿ ನೋಡಿದರೆ ಹರಿಯಾಣದಲ್ಲಿ ಒಟ್ಟಾರೆ ಕನಿಷ್ಠ ವೇತನ ದರವು ಜುಲೈ 2021 ರಲ್ಲಿ 9,803.24 ರೂ.ಗಳಿಂದ ಜುಲೈ 2025 ರಲ್ಲಿ 11,274.60 ರೂ.ಗಳಿಗೆ (ಎಪ್ರಿಲ್ 2026 ರ ಪರಿಷ್ಕರಣೆಯ ಮೊದಲು) ಕೇವಲ 15% ರಷ್ಟು ಹೆಚ್ಚಾಗಿದೆ. ಅದೇ ರೀತಿ, ಉತ್ತರ ಪ್ರದೇಶಕ್ಕೆ, ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನವು ಎಪ್ರಿಲ್ 2021 ರಲ್ಲಿ ರೂ. 9,078 ರಿಂದ ರೂ. 11,313 ಕ್ಕೆ ಶೇ. 24.6 ರಷ್ಟು ಹೆಚ್ಚಾಗಿದೆ. ಆದ್ದರಿಂದ, ಕನಿಷ್ಠ ವೇತನ ಪರಿಷ್ಕರಣೆಗಳು ದೆಹಲಿ-ಎನ್ಸಿಆರ್ನಲ್ಲಿನ ಕೈಗಾರಿಕಾ ಕಾರ್ಮಿಕರ ಹಣದುಬ್ಬರ ದರಕ್ಕೆ ಅನುಗುಣವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ಕೈಗಾರಿಕಾ ಘಟಕಗಳು ಇನ್ ಪುಟ್ ವೆಚ್ಚದ ಒತ್ತಡದಲ್ಲಿ ಸಿಲುಕಿರುವುದರಿಂದ ಇದರ ಪರಿಣಾಮ ಹದಗೆಟ್ಟಿದೆ. ಆರಂಭದಲ್ಲಿ ಅಮೆರಿಕದ ಸುಂಕಗಳು ಇದಕ್ಕೆ ಕಾರಣವಾದರೆ, ಪ್ರಸ್ತುತ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದ ಇದು ಮತ್ತಷ್ಟು ಜಟಿಲವಾಗಿದೆ. ಇದು ಕಾರ್ಮಿಕರಿಗೆ ವಿಳಂಬವಾದ ಪಾವತಿಗಳಿಗೆ ಮತ್ತು ಅನೇಕ ಸಂದರ್ಭಗಳಲ್ಲಿ ಅವರ ಉದ್ಯೋಗಗಳ ಬಗ್ಗೆ ಅನಿಶ್ಚಿತತೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾ ಯುದ್ಧದ ಹೊಡೆತವನ್ನು ಈ ಕಾರ್ಖಾನೆ ಕಾರ್ಮಿಕರು ಅನುಭವಿಸುತ್ತಿದ್ದಾರೆ, ಅವರಲ್ಲಿ ಹಲವರು ವಲಸಿಗರು. ಅವರು ಹೆಚ್ಚಾಗಿ ಎಲ್ಪಿಜಿ ಸಿಲಿಂಡರ್ ಗಳಿಗಾಗಿ ಕಾಳದಂಧೆಯನ್ನು ಅವಲಂಬಿಸಬೇಕಾಗುತ್ತದೆ, ಅಲ್ಲಿ ಬೆಲೆ 4,000 ರೂ.ಗಳಷ್ಟು ಹೆಚ್ಚಿರಬಹುದು. ಇದು, ಕೊಠಡಿ ಬಾಡಿಗೆ ಮತ್ತು ಹೊರಗಿನಿಂದ ಬೇಯಿಸಿದ ಆಹಾರದ ಬೆಲೆಗಳ ಏರಿಕೆಯೊಂದಿಗೆ, ಅವರ ಹೊರೆಯನ್ನು ಹೆಚ್ಚಿಸಿದೆ. ►ಕಾರ್ಮಿಕ ಸಂಹಿತೆಗಳು ನೋಯ್ಡಾ ಮತ್ತು ಮಾನೇಸರ್ ನಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಕಾರ್ಮಿಕರು ಎತ್ತಿದ ಕಳವಳಗಳಲ್ಲಿ ಸಾಮಾನ್ಯವಾದ ಅಂಶವೆಂದರೆ, ನವೆಂಬರ್ 2025 ರಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯ ನಂತರ ವೇತನ ಹೆಚ್ಚಾಗುವ ನಿರೀಕ್ಷೆ ಇತ್ತು, ಆದರೆ ಅದು ಆಗಲಿಲ್ಲ. ಮಂಗಳವಾರ ಹೇಳಿಕೆಯಲ್ಲಿ, ಉತ್ತರ ಪ್ರದೇಶ ಸರ್ಕಾರವು ತಿಂಗಳಿಗೆ 20,000 ರೂ.ಗಳ ಏಕರೂಪದ ಕನಿಷ್ಠ ವೇತನದ ಬಗ್ಗೆ ಹೇಳಿಕೆಗಳು ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದೆ. ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಮತ್ತು ಕಾರ್ಮಿಕರು 2024 ಸೆಪ್ಟೆಂಬರ್ 26 ರಂದು ಕೇಂದ್ರ ಸರ್ಕಾರದ ಬಿಡುಗಡೆಯಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ, ಅದು 'A ಪ್ರದೇಶ'ದಲ್ಲಿ ನಿರ್ಮಾಣ, ಗುಡಿಸುವುದು, ಸ್ವಚ್ಛಗೊಳಿಸುವುದು, ಲೋಡ್ ಮಾಡುವುದು ಮತ್ತು ಇಳಿಸುವ ಕೆಲಸಕ್ಕಾಗಿ ಕೌಶಲ್ಯರಹಿತ ಕಾರ್ಮಿಕರಿಗೆ ದಿನಕ್ಕೆ 783 ರೂ. ಅಥವಾ ತಿಂಗಳಿಗೆ 20,358 ರೂ. ಆಗಿರುತ್ತದೆ ಎಂದು ಹೇಳಿದೆ. ಈ ದರವು ಕೇಂದ್ರ ವಲಯದ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುತ್ತದೆ. ನವೆಂಬರ್ 2025 ರಲ್ಲಿ ಸೂಚಿಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳ ಮಾದರಿಯಲ್ಲಿ ಹೆಚ್ಚಿನ ರಾಜ್ಯಗಳು ರೂಪಿಸಿದ ಅಂತಿಮ ನಿಯಮಗಳನ್ನು ಕೇಂದ್ರ ಅಥವಾ ಹೆಚ್ಚಿನ ರಾಜ್ಯಗಳು ಇನ್ನೂ ಅಧಿಸೂಚನೆ ಹೊರಡಿಸದ ಕಾರಣ ಕಾರ್ಖಾನೆ ಕಾರ್ಮಿಕರಲ್ಲಿ ಅವರ ಕೆಲಸದ ಸಮಯ ಮತ್ತು ವಿಶ್ರಾಂತಿ ಮಧ್ಯಂತರಗಳ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ. 2025 ನವೆಂಬರ್ 21 ರಿಂದ ಜಾರಿಗೆ ಬರುವಂತೆ, ವೇತನ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು (OSH) ಸಂಹಿತೆ ಎಂಬ ನಾಲ್ಕು ಕಾರ್ಮಿಕ ಸಂಹಿತೆಗಳು ತರಲಾಯಿತು. ಇದು ಉದ್ಯೋಗದಾತರಿಗೆ ನಿಯಮಗಳು ಮತ್ತು ಅನುಸರಣೆ ಮಾನದಂಡಗಳನ್ನು ಸರಾಗಗೊಳಿಸಲು ಮತ್ತು ವೇತನ ರಚನೆ ಹಾಗೂ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ರಕ್ಷಣೆಯಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತವೆ. ಕೇಂದ್ರ ಸರ್ಕಾರ 2025 ಡಿಸೆಂಬರ್ನಲ್ಲಿ ಕರಡು ನಿಯಮಗಳನ್ನು ಹೊರಡಿಸಿದ್ದು, ಅಂತಿಮ ನಿಯಮಗಳನ್ನು ಇನ್ನೂ ತಿಳಿಸಲಾಗಿಲ್ಲ. ಹಿಂದಿನ ಕಾರ್ಖಾನೆಗಳ ಕಾಯ್ದೆ, 1948 ರಂತೆ, ದೈನಂದಿನ ಮತ್ತು ವಾರದ ಕೆಲಸದ ಸಮಯ ಮತ್ತು 'ವಿಸ್ತರಿಸಿದ' ಗಂಟೆಗಳು (ಉದ್ಯೋಗಿಯ ಒಟ್ಟು ಕೆಲಸದ ಸಮಯ ಮತ್ತು ವಿಶ್ರಾಂತಿ ವಿರಾಮಗಳನ್ನು ಒಳಗೊಂಡಂತೆ) ಹೊಸ ಕಾರ್ಮಿಕ ಸಂಹಿತೆಗಳು ಎಂಟು ಗಂಟೆಗಳ ಕೆಲಸದ ದಿನ ಮತ್ತು 48 ಗಂಟೆಗಳ ವಾರದ ಕೆಲಸದ ಮಿತಿಯನ್ನು ವ್ಯಾಖ್ಯಾನಿಸುತ್ತವೆ, ಇದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿರುತ್ತದೆ. ಡಿಸೆಂಬರ್ ನಲ್ಲಿ ಹೊರಡಿಸಲಾದ ತನ್ನ ಕರಡು ನಿಯಮಗಳಲ್ಲಿ, ಕೇಂದ್ರ ಸರ್ಕಾರವು ಪ್ರತಿ ದಿನದ ಕೆಲಸದ ಅವಧಿಯನ್ನು, ಮಧ್ಯಂತರಗಳು ಮತ್ತು ಸ್ಪ್ರೆಡ್ ಓವರ್ ಗಳೊಂದಿಗೆ, ಕಾಲಕಾಲಕ್ಕೆ ಪ್ರತ್ಯೇಕವಾಗಿ ತಿಳಿಸುವುದಾಗಿ ಹೇಳಿತ್ತು. ಉದಾಹರಣೆಗೆ, ನಾಲ್ಕು ಕೆಲಸದ ದಿನಗಳವರೆಗೆ 12 ಗಂಟೆಗಳ ಪಾಳಿಯೊಂದಿಗೆ ತಮ್ಮ ಉದ್ಯೋಗಿಗಳಿಗೆ ಮೂರು ದಿನಗಳ ವಾರದ ರಜೆಯನ್ನು ನೀಡಲು ಬಯಸಬಹುದಾದ ಉದ್ಯೋಗದಾತರಿಗೆ ಫ್ಲೆಕ್ಸಿಬಿಲಿಟಿ ಒದಗಿಸಲು ಇದು ಉದ್ದೇಶಿಸಲಾಗಿತ್ತು. ಆದರೆ ಇದು ಉದ್ಯೋಗದಾತರು ಹಾಗೂ ಉದ್ಯೋಗಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ, ಇದು ಹೆಚ್ಚಾಗಿ ಫ್ಲೆಕ್ಸಿಬಿಲಿಟಿ ಹೆಸರಿನಲ್ಲಿ ಹೆಚ್ಚಿನ ಕೆಲಸಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. “ಇತ್ತೀಚಿನ ಕಾರ್ಮಿಕ ಕಾನೂನು ಸುಧಾರಣೆಗಳು ಸಂಸತ್ತಿನಿಂದ ಕಾರ್ಯಾಂಗಕ್ಕೆ ನಿಯಮಗಳನ್ನು ರಚಿಸುವ ಅಧಿಕಾರವನ್ನು ವರ್ಗಾಯಿಸಿವೆ, ಇದರಿಂದಾಗಿ ರಾಜ್ಯ ಸರ್ಕಾರಗಳು ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಕೆಲಸದ ಸಮಯದ ಮಿತಿಯನ್ನು ನಿರ್ದಿಷ್ಟಪಡಿಸಿದ ಹಿಂದಿನ ಕಾರ್ಮಿಕ ಕಾನೂನುಗಳಿಗಿಂತ ಭಿನ್ನವಾಗಿ, ಹೊಸ ಸಂಹಿತೆಗಳು ಅದನ್ನು ನಮ್ಯತೆಯನ್ನಾಗಿ ಇರಿಸಿಕೊಂಡಿದ್ದು ನಿಯಮಗಳ ಭಾಗವನ್ನಾಗಿ ಮಾಡಿವೆ. ಆದರೆ ಇದನ್ನು ನಮ್ಯತೆಯ ಹೆಸರಿನಲ್ಲಿ ಉದ್ಯೋಗದಾತರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ಐಟಿ ಕ್ಷೇತ್ರದಂತಹ ಕೆಲವು ವಲಯಗಳಲ್ಲಿ ಉದ್ಯೋಗಿಗಳು ವರ್ಷಪೂರ್ತಿ ಕೆಲಸ ಮಾಡುವುದನ್ನು ನೋಡುತ್ತಿವೆ. ಯಾವುದೇ ಕಾನೂನಿನ ಅನುಷ್ಠಾನಕ್ಕೆ ಬಹಳ ಮುಖ್ಯವಾದ ಕಾರ್ಮಿಕ ಸಂಹಿತೆಗಳ ನಿಯಮಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಈ ಪ್ರಕ್ರಿಯೆಯಲ್ಲಿ, ಕಾನೂನು ರಚನೆಗೆ ಅನಿರೀಕ್ಷಿತ ಹಾನಿಯಾಗಿದೆ̧” ಎಂದು XLRI ಯ ಕಾರ್ಮಿಕ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಪ್ರಾಧ್ಯಾಪಕ ಕೆ.ಆರ್. ಶ್ಯಾಮ್ ಸುಂದರ್ ಹೇಳಿರುವುದಾಗಿ The Indian Express ವರದಿ ಉಲ್ಲೇಖಿಸಿದೆ. ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕ ಸಂಘಗಳ ಮಾನ್ಯತೆಯನ್ನು ರಾಜ್ಯಗಳಿಗೆ ಬಿಟ್ಟುಕೊಡುವುದರ ಜೊತೆಗೆ ಸಾಮೂಹಿಕ ಚೌಕಾಸಿಗೆ ಅವಕಾಶವನ್ನು ಸಹ ನೀಡುತ್ತವೆ, ಇದರಿಂದಾಗಿ ಕಾರ್ಮಿಕ ಕಾನೂನು ಸುಧಾರಣೆಗಳಿಗೆ ಯಾವುದೇ ವಿಶ್ವಾಸಾರ್ಹ ಪ್ರಕ್ರಿಯೆಯನ್ನು ಅನುಸರಿಸಲಾಗುವುದಿಲ್ಲ. X ರಾಜ್ಯಗಳು ಹೊಸ ಕನಿಷ್ಠ ವೇತನ ದರಗಳು ಮತ್ತು ಕೆಲಸದ ಸಮಯವನ್ನು ತಿಳಿಸಿದರೆ ಮತ್ತು Y ರಾಜ್ಯಗಳು ಹಾಗೆ ಮಾಡದಿದ್ದರೆ, ಈ ಪ್ರಕ್ರಿಯೆಯು ಪ್ರಾದೇಶಿಕ ಅಸಮಾನತೆಗಳನ್ನು ಸೃಷ್ಟಿಸುತ್ತದೆ. ಕೇಂದ್ರವು ಸಂಹಿತೆಗಳಲ್ಲಿಯೇ ವಿವರಗಳನ್ನು ನಿರ್ದಿಷ್ಟಪಡಿಸಬೇಕಾಗಿತ್ತು, ಎಂದಿದ್ದಾರೆ ಶ್ಯಾಮ್. ಕಾರ್ಖಾನೆಗಳ ಕಾಯ್ದೆಯು ಕೆಲಸದ ಸಮಯವನ್ನು ದಿನಕ್ಕೆ 10.5 ಗಂಟೆಗಳವರೆಗೆ ಮಿತಿಗೊಳಿಸಿತು, ಇದನ್ನು ಮುಖ್ಯ ನಿರೀಕ್ಷಕರ ಲಿಖಿತ ಅನುಮತಿಯೊಂದಿಗೆ 12 ಗಂಟೆಗಳವರೆಗೆ ಮತ್ತು ದೈನಂದಿನ ಕೆಲಸದ ಸಮಯವನ್ನು ದಿನಕ್ಕೆ ಒಂಭತ್ತು ಗಂಟೆಗಳವರೆಗೆ ವಿಸ್ತರಿಸಬಹುದು. ಸಾಂಕ್ರಾಮಿಕ ಸಮಯದಲ್ಲಿ, ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಕೆಲಸದ ಸಮಯವನ್ನು 10-12 ಗಂಟೆಗಳವರೆಗೆ ಹೆಚ್ಚಿಸಿದವು. ಯಾವುದೇ ಕಾರ್ಮಿಕನು ಯಾವುದೇ ವಾರದಲ್ಲಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಒಂದು ಸಂಸ್ಥೆಯಲ್ಲಿ ಕೆಲಸ ಮಾಡಬೇಕಾಗಿಲ್ಲ ಅಥವಾ ಅನುಮತಿಸಬೇಕಾಗಿಲ್ಲ. ಪ್ರತಿ ದಿನದ ಕೆಲಸದ ಅವಧಿ ಮಧ್ಯಂತರಗಳು ಮತ್ತು ಸ್ಪ್ರೆಡ್ ಓವರ್ ಗಳೊಂದಿಗೆ, ಕೇಂದ್ರ ಸರ್ಕಾರವು ಸೂಚಿಸಿದಂತೆ ಇರುತ್ತದೆ ಎಂದು ಹೊಸ ಕಾರ್ಮಿಕ ಸಂಹಿತೆಯ ಕರಡು ನಿಯಮಗಳು ಹೇಳಿವೆ. ಈ ನಿಯಮಗಳು ಕೇಂದ್ರ ವಲಯದ ಸಂಸ್ಥೆಗಳಿಗೆ ಅನ್ವಯವಾಗಿದ್ದರೂ, ಇದು ಕಾರ್ಖಾನೆಗಳಂತಹ ಸಂಸ್ಥೆಗಳಿಗೆ ಅನ್ವಯವಾಗುವ ರಾಜ್ಯಗಳ ಅಂತಿಮ ಅಧಿಸೂಚನೆಯಾಗಿದೆ.
Kalaburagi | ಆಡಳಿತ, ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಮಾನತೆಯ ದಿಟ್ಟ ಹೆಜ್ಜೆ : ಅರುಣಕುಮಾರ ಪಾಟೀಲ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
Afzalpur | ಪ್ರಕಾಶ್ ಜಮಾದಾರ ಹೇಳಿಕೆಗೆ ಮಾಲಿಕಯ್ಯ ಗುತ್ತೇದಾರ್ ಬೆಂಬಲಿಗರಿಂದ ತಿರುಗೇಟು
ಅಫಜಲಪುರ: ದಿವಂಗತ ವಿಠ್ಠಲ್ ಹೇರೂರ ಅವರ ಹೆಸರನ್ನು ಬಳಸಿ ರಾಜಕಾರಣ ಮಾಡುತ್ತಿರುವ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ತಮ್ಮ ಹಿಂದಿನ ಇತಿಹಾಸವನ್ನು ಮರೆತಿದ್ದಾರೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ರಾಮಣ್ಣಾ ನಾಯಕೋಡಿ ಆರೋಪಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಠ್ಠಲ್ ಹೇರೂರ ಅವರು ಚುನಾವಣೆಗೆ ಸ್ಪರ್ಧಿಸಿದ ವೇಳೆ ಮೋಸ ಮಾಡಿ ಎಂ.ವೈ. ಪಾಟೀಲ್ ಅವರಿಗೆ ಬೆಂಬಲ ನೀಡಿದ ವಿಚಾರವನ್ನು ಕೋಲಿ ಸಮಾಜ ಮರೆತಿಲ್ಲ ಎಂದು ಹೇಳಿದರು. ನೀವು ಎಂ.ವೈ. ಪಾಟೀಲ್ ಹಿಂಬಾಲಕರಾಗಿ ಕೋಲಿ ಸಮಾಜಕ್ಕೆ ಎಷ್ಟು ನ್ಯಾಯ ಒದಗಿಸಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಕೇವಲ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದು, ಯಾವುದೇ ಪಕ್ಷದ ಸಿದ್ಧಾಂತ ಅಥವಾ ಬದ್ಧತೆ ಇಲ್ಲ ಎಂದು ಟೀಕಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಮುಖಂಡ ದೇವಿಂದ್ರ ಜಮಾದಾರ ಮಾತನಾಡಿ, ಮಾಲಿಕಯ್ಯ ಗುತ್ತೇದಾರ್ ಅವರ ಅವಧಿಯಲ್ಲಿ ಕೋಲಿ ಸಮಾಜದ ಅನೇಕ ಮಂದಿಗೆ ಪ್ರಮುಖ ಹುದ್ದೆಗಳು ಲಭಿಸಿವೆ. ಜ್ಯೋತಿ ಜಮಾದಾರ, ರುಕ್ಮಿಣಿ ಜಮಾದಾರ ತಾಪಂ ಅಧ್ಯಕ್ಷರಾಗಿ, ರಾಮಣ್ಣಾ ನಾಯಕೋಡಿ ಎಪಿಎಂಸಿ ಅಧ್ಯಕ್ಷರಾಗಿ, ಪುಂಡಲೀಕ ಕಟ್ಟಿಮನಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇರಿದಂತೆ ಹಲವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಮುಸ್ಲಿಂ ಸಮುದಾಯದ ಮುಖಂಡ ಜಮೀಲ್ ಗೌಂಡಿ ಮಾತನಾಡಿ, ಮಕ್ಬೂಲ್ ಪಟೇಲ್, ಪಪ್ಪು ಪಟೇಲ್, ಚಾಂದಪಾಷಾ ಅರ್ಜುಣಗಿ, ಅಕಲಾಕ್ ಸೋಲಾಪುರ, ಫಿರೋಜ್ ಜಾಗಿರದಾರ, ನಬೀಲಾಲ್ ಮಾಶಾಳಕರ ಸೇರಿದಂತೆ ಅನೇಕ ಮಂದಿಗೆ ವಿವಿಧ ಹುದ್ದೆಗಳ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಂಜೂರು ಅಹ್ಮದ್ ಅಗರಖೇಡ, ಶಂಕರಲಿಂಗ ಮೇತ್ರಿ, ಸುರೇಶ್ ಹಲಸಂಗಿ, ನಿಜಾಮುದ್ದೀನ್ ಜಮಾದಾರ, ಅವಧೂತ ಜಮಾದಾರ ಬನ್ನಟ್ಟಿ, ವಿಜುಗೌಡ ಪಾಟೀಲ್, ಶ್ರೀಮಂತ ಭಂಡಾರಿ, ರವಿ ಪಾಟೀಲ್, ವೀರಣ್ಣ ಬೂಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಇಸ್ರೇಲ್ ಹಾಗೂ ಲೆಬನಾನ್ ದೇಶಗಳು 10 ದಿನಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದ್ದಾರೆ. ಗಡಿಭಾಗದಲ್ಲಿ ಕಳೆದ ಹಲವು ವಾರಗಳಿಂದ ತೀವ್ರಗೊಂಡಿದ್ದ ಉದ್ವಿಗ್ನತೆಯ ನಡುವೆ ಈ ಅನಿರೀಕ್ಷಿತ ರಾಜತಾಂತ್ರಿಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ. ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್
The French Open | ಬಹುಮಾನ ಮೊತ್ತ ಶೇ.9.5ರಷ್ಟು ಹೆಚ್ಚಳ
ಪ್ಯಾರಿಸ್, ಎ.16: ಈ ವರ್ಷದ ಫ್ರೆಂಚ್ ಓಪನ್ ನಲ್ಲಿ ಬಹುಮಾನದ ಮೊತ್ತವು ಶೇ.9.5ರಷ್ಟು ಏರಿಕೆಯಾಗಲಿದ್ದು, ಒಟ್ಟು ಮೊತ್ತವು 61.7 ಮಿಲಿಯನ್ ಯುರೋಗಳಿಗೆ (72.69 ಮಿಲಿಯನ್ ಡಾಲರ್) ತಲುಪಿದೆ ಎಂದು ಪಂದ್ಯಾವಳಿಯ ಸಂಘಟಕರು ಗುರುವಾರ ತಿಳಿಸಿದ್ದಾರೆ. 2025ಕ್ಕೆ ಹೋಲಿಸಿದರೆ 5.4 ಮಿಲಿಯನ್ ಯುರೋ ಹೆಚ್ಚಳವಾಗಿದ್ದು, ಇದು ಮಣ್ಣಿನ ಟೆನಿಸ್ ಅಂಗಣದಲ್ಲಿ ಗ್ರ್ಯಾಂಡ್ ಸ್ಲಾಮ್ ಆಟಗಾರರ ಗಳಿಕೆಯಲ್ಲಿ ಸ್ಥಿರವಾದ ಏರಿಕೆಯನ್ನು ಸೂಚಿಸುತ್ತದೆ. ಆಯೋಜಕರು ಇತ್ತೀಚಿನ ವರ್ಷಗಳಲ್ಲಿ ಚಾಂಪಿಯನ್ ಗಳಿಗೆ ಮಾತ್ರವಲ್ಲದೆ, ಆರಂಭಿಕ ಹಂತಗಳಲ್ಲಿ ನಿರ್ಗಮಿಸುವ ಆಟಗಾರರಿಗೂ ಎಲ್ಲಾ ಸುತ್ತುಗಳಲ್ಲಿ ಬಹುಮಾನದ ಮೊತ್ತವನ್ನು ಹೆಚ್ಚಿಸುವತ್ತ ಗಮನಹರಿಸಿದ್ದಾರೆ. ರೋಲ್ಯಾಂಡ್-ಗ್ಯಾರೋಸ್ನಲ್ಲಿ ವರ್ಷಂಪ್ರತಿ ಆಯೋಜಿಸಲಾಗುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಸಮಾನ ಬಹುಮಾನ ಮೊತ್ತವನ್ನು ವಿತರಿಸಲಾಗುತ್ತಿದೆ. ಆದಾಯದ ಹೆಚ್ಚಿನ ಪಾಲಿಗಾಗಿ ಆಟಗಾರರಿಂದ ಒತ್ತಡ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ಯು.ಎಸ್. ಓಪನ್ ಆಯೋಜಕರು ಕಳೆದ ವರ್ಷ ಗ್ರ್ಯಾಂಡ್ ಸ್ಲಾಮ್ ಗಳಲ್ಲಿ ಅತಿ ದೊಡ್ಡ ಬಹುಮಾನ ಮೊತ್ತವಾದ 90 ಮಿಲಿಯನ್ ಡಾಲರ್ ನೀಡಿದ್ದರು. ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ 53.5 ಮಿಲಿಯನ್ ಪೌಂಡ್ ಗಳನ್ನು (72.40 ಮಿಲಿಯನ್ ಡಾಲರ್) ಪಾವತಿಸಲಾಗಿತ್ತು. ಈ ವರ್ಷದ ಆಸ್ಟ್ರೇಲಿಯನ್ ಓಪನ್ ನಲ್ಲಿ ದಾಖಲೆಯ 111.5 ಆಸ್ಟ್ರೇಲಿಯನ್ ಮಿಲಿಯನ್ (79.92 ಮಿಲಿಯನ್ ಡಾಲರ್) ಬಹುಮಾನ ನೀಡಲಾಗಿತ್ತು.
ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್; ಎಡಗೈ ವೇಗಿಗಳ ಕ್ಲಬ್ ಗೆ ಸೇರಿದ ಅರ್ಷದೀಪ್ ಸಿಂಗ್
ಹೊಸದಿಲ್ಲಿ, ಎ.16: ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಗಳನ್ನು ಪಡೆದರು. ಈ ಮೂಲಕ ಐಪಿಎಲ್ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿಗಳ ವಿಶೇಷ ಕ್ಲಬ್ ಗೆ ಪ್ರವೇಶಿಸಿದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅರ್ಷದೀಪ್ ಅವರು ಇನಿಂಗ್ಸ್ನ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಮುಂಬೈ ತಂಡದ ಆರಂಭಿಕ ಆಟಗಾರ ರಿಯಾನ್ ರಿಕೆಲ್ಟನ್ ಅವರನ್ನು 2 ರನ್ ಗೆ ಔಟ್ ಮಾಡಿದರು. ಇದರೊಂದಿಗೆ ಐಪಿಎಲ್ ನಲ್ಲಿ ತಮ್ಮ 100ನೇ ವಿಕೆಟ್ ಪೂರೈಸಿದರು. ಮುಂಬೈ ತಂಡವು ಚೇತರಿಸಿಕೊಳ್ಳುವ ಮೊದಲೇ ಅರ್ಷದೀಪ್ ಮತ್ತೊಮ್ಮೆ ಆಘಾತ ನೀಡಿದರು. ಎರಡನೇ ಓವರ್ ನ ಎರಡನೇ ಎಸೆತದಲ್ಲಿ ಮಾಜಿ ನಾಯಕ ಸೂರ್ಯಕುಮಾರ ಯಾದವ್ (0) ಅವರ ವಿಕೆಟ್ ಪಡೆದರು. ಅವಳಿ ವಿಕೆಟ್ ಪಡೆದ ಅರ್ಷದೀಪ್ ಅವರು ಐಪಿಎಲ್ ಇತಿಹಾಸದಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಎಡಗೈ ವೇಗಿಗಳಾದ ಟ್ರೆಂಟ್ ಬೌಲ್ಟ್, ಜಯದೇವ್ ಉನದ್ಕಟ್, ಆಶೀಷ್ ನೆಹ್ರಾ ಹಾಗೂ ಝಹೀರ್ ಖಾನ್ ಅವರನ್ನು ಒಳಗೊಂಡ ವಿಶೇಷ ಪಟ್ಟಿಗೆ ಸೇರಿದರು. ಅರ್ಷದೀಪ್ ಅವರಿಗೆ ಹಿಂದಿನ 11 ಐಪಿಎಲ್ ಇನಿಂಗ್ಸ್ಗಳಲ್ಲಿ ಪವರ್ ಪ್ಲೇನಲ್ಲಿ ಪಡೆದ ಮೊದಲ ವಿಕೆಟ್ ಇದಾಗಿದೆ. ಅರ್ಷದೀಪ್ ಅವರ ಸ್ಪೆಲ್ ಮುಂಬೈಗೆ ಆರಂಭಿಕ ಆಘಾತ ನೀಡಿದಷ್ಟೇ ಅಲ್ಲದೆ, ಪಂಜಾಬ್ ಪಾಳಯದಲ್ಲಿ ಹರ್ಷ ಮೂಡಿಸಿತು. ಆರು ಓವರ್ ಗಳ ನಂತರ 48 ರನ್ಗೆ ಎರಡು ವಿಕೆಟ್ ಕಳೆದುಕೊಂಡ ಮುಂಬೈ ತಂಡ ಸಂಕಷ್ಟಕ್ಕೆ ಸಿಲುಕಿತು. ಆಗ ಜೊತೆಯಾದ ಕ್ವಿಂಟನ್ ಡಿಕಾಕ್ ಹಾಗೂ ನಮನ್ ಧೀರ್ ತಂಡಕ್ಕೆ ಆಸರೆಯಾದರು. ///
ಅನಿಲ್ ಅಂಬಾನಿ ಕುರಿತು ವರದಿಯಲ್ಲಿ ಅನಗತ್ಯ ವಿವರಗಳನ್ನು ಸೇರಿಸಬೇಡಿ: ರಿಪಬ್ಲಿಕ್ ಟಿವಿಗೆ ಬಾಂಬೆ ಹೈಕೋರ್ಟ್ ಸೂಚನೆ
ಮುಂಬೈ, ಎ.16: ಉದ್ಯಮಿ ಅನಿಲ್ ಅಂಬಾನಿಯವರ ಹಣಕಾಸು ವಹಿವಾಟುಗಳು ಮತ್ತು ಅವರ ವಿರುದ್ಧ ನಡೆಯುತ್ತಿರುವ ತನಿಖೆಗಳ ಕುರಿತು ವರದಿ ಮಾಡುವಾಗ ಯಾವುದೇ ಅನಗತ್ಯ ವಿವರಗಳನ್ನು ಸೇರಿಸಬಾರದು ಎಂದು ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ರಿಪಬ್ಲಿಕ್ ಟಿವಿ ಮತ್ತು ಅದರ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಮೌಖಿಕವಾಗಿ ಸೂಚಿಸಿದೆ. ನ್ಯಾ. ಆರಿಫ್ ಡಾಕ್ಟರ್ ಅವರು ಸುದ್ದಿವಾಹಿನಿಯ ವಿರುದ್ಧ ಯಾವುದೇ ನಿಷೇಧಾಜ್ಞೆಯನ್ನು ಹೊರಡಿಸಲಿಲ್ಲ. ಆದರೆ ಅಂಬಾನಿ ವಿರುದ್ಧ ವರದಿ ಮಾಡುವಾಗ ಭಾಷೆ ಮತ್ತು ಶೈಲಿಯನ್ನು ಮಿತಗೊಳಿಸುವಂತೆ ಗೋಸ್ವಾಮಿಯವರಿಗೆ ಸೂಚಿಸಿದರು. ಕಾನೂನು ಕಲಾಪಗಳನ್ನು ವರದಿ ಮಾಡದಂತೆ ಯಾರನ್ನೂ ತಡೆಯಲು ಸಾಧ್ಯವಿಲ್ಲ. ಆದರೆ ಅದು ನ್ಯಾಯಾಲಯದ ಆದೇಶಗಳು ಮತ್ತು ದಾಖಲೆಗಳಲ್ಲಿನ ವಾಸ್ತವಾಂಶಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ನ್ಯಾಯಾಧೀಶರು ಹೇಳಿದರು. ಕಳೆದ ಮಾರ್ಚ್ನಲ್ಲಿ ರಿಪಬ್ಲಿಕ್ ಟಿವಿ ಮತ್ತು ಗೋಸ್ವಾಮಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದ ಅಂಬಾನಿ, ತನ್ನ ಹಣಕಾಸು ವಹಿವಾಟುಗಳ ಕುರಿತು ಸುದ್ದಿವಾಹಿನಿಯ ವರದಿಗಳು ತನ್ನ ವರ್ಚಸ್ಸಿಗೆ ಸರಿಪಡಿಸಲಾಗದ ಹಾನಿ ಉಂಟುಮಾಡಿವೆ ಎಂದು ಆರೋಪಿಸಿದ್ದರು. ರಿಪಬ್ಲಿಕ್ ಟಿವಿಯ ಒಡೆತನ ಹೊಂದಿರುವ ಎಆರ್ಜಿ ಔಟ್ ಲೈಯರ್, ಗೋಸ್ವಾಮಿ ಮತ್ತು ಇತರ ಅಪರಿಚಿತ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಅವರ ಅರ್ಜಿಯಲ್ಲಿ ಕೋರಲಾಗಿತ್ತು. ಹಿಂದಿನ ವಿಚಾರಣೆಯಲ್ಲಿಯೂ ನ್ಯಾಯಾಲಯವು ‘ಕೆಳಮಟ್ಟದ’ ಸುದ್ದಿಗಳನ್ನು ಪ್ರಕಟಿಸಬಾರದು ಮತ್ತು ವರದಿಗಾರಿಕೆಯಲ್ಲಿ ಅತಿಶಯೋಕ್ತಿಗಳನ್ನು ಕಡಿಮೆ ಮಾಡಬೇಕು ಎಂದು ರಿಪಬ್ಲಿಕ್ ಟಿವಿ ಹಾಗೂ ಗೋಸ್ವಾಮಿಗೆ ಸೂಚಿಸಿತ್ತು. ಗುರುವಾರದ ವಿಚಾರಣೆ ವೇಳೆ ಅಂಬಾನಿ ಪರ ವಕೀಲ ಮಹೇಶ್ ಜೇಠ್ಮಲಾನಿ, ಅಂಬಾನಿಯವರು ಆಕ್ಷೇಪ ಹೊಂದಿರುವ ರಿಪಬ್ಲಿಕ್ ಟಿವಿಯ ಕಾಮೆಂಟ್ ಗಳ ಪಟ್ಟಿಯನ್ನು ಒದಗಿಸಿದರೆ ಮತ್ತು ಇಂತಹ ಹೇಳಿಕೆಗಳು ನಿಜಕ್ಕೂ ಆಕ್ರಮಣಕಾರಿ ಎಂದು ಸುದ್ದಿ ವಾಹಿನಿಯು ಭಾವಿಸಿದರೆ ಅವುಗಳನ್ನು ಪುನರ್ಪರಿಶೀಲಿಸಬಹುದು ಎಂದು ತಿಳಿಸಿದರು. ನ್ಯಾಯಾಧೀಶರು ವಾಸ್ತವಿಕ ವರದಿಗಾರಿಕೆ ಮತ್ತು ಪ್ರಕರಣದಲ್ಲಿ ಆಸಕ್ತಿಯನ್ನು ಮೂಡಿಸುವ ವ್ಯಾಖ್ಯಾನಗಳ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದರು. ಸಾರ್ವಜನಿಕರಿಗೆ ವಿಷಯ ತಿಳಿಸುವ ಆಸಕ್ತಿ ಒಂದು ವಿಷಯ. ಆದರೆ ಅನಗತ್ಯ ವಿವರಗಳನ್ನು ಅಥವಾ ಅತಿಶಯೋಕ್ತಿಗಳನ್ನು ಸೇರಿಸುವ ಮೂಲಕ ಆಸಕ್ತಿ ಹುಟ್ಟಿಸುವುದು ಮತ್ತು ಪ್ರಚೋದಿಸುವುದು ಬೇರೆ ವಿಷಯ ಎಂದು ಹೇಳಿದರು. ಪರಸ್ಪರ ಮಾತುಕತೆಗಳ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬಹುದು ಎಂದೂ ಅವರು ಅಭಿಪ್ರಾಯಪಟ್ಟರು. ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಎ.29ಕ್ಕೆ ಮುಂದೂಡಿದರು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 13,262 ಕೋಟಿ ರೂ. ವೆಚ್ಚದ 11 ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಶಿಕ್ಷಣದಲ್ಲಿ ತಾರತಮ್ಯ ತಡೆಯಲು 'ಕರ್ನಾಟಕ ರೋಹಿತ್ ವೇಮುಲ ವಿಧೇಯಕ' ಜಾರಿಗೆ ಅನುಮೋದನೆ ದೊರೆತಿದೆ. ಜೊತೆಗೆ 436 ಕೋಟಿ ರೂ. ವೆಚ್ಚದ ಐಓಸಿ ಮೇಲ್ಸೇತುವೆ, ರಾಜಭವನ ಸೇರಿದಂತೆ ಕೆಲವು ಸರ್ಕಾರಿ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಎಎಐಗೆ ವಹಿಸಲು ನಿರ್ಧರಿಸಲಾಗಿದೆ.
ಆರೆಸ್ಸೆಸ್ ಶತಮಾನೋತ್ಸವ | ಮುದ್ರಣ ಜಾಹೀರಾತುಗಳಿಗೆ 76.13 ಲಕ್ಷ ರೂ. ವ್ಯಯಿಸಿದ ಕೇಂದ್ರ: RTI ಮಾಹಿತಿ
ಹೊಸದಿಲ್ಲಿ, ಎ.16: ಆರೆಸ್ಸೆಸ್ ನ ಶತಮಾನೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು ವಿವಿಧ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ 76,13,129 ಲಕ್ಷ ರೂ. ವೆಚ್ಚ ಮಾಡಿದೆ. RTI ಕಾರ್ಯಕರ್ತ ಅಜಯ ಬಸುದೇವ ಬೋಸ್ ಅವರು ಆರೆಸ್ಸೆಸ್ ಶತಮಾನೋತ್ಸವಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ವೆಚ್ಚಗಳ ವಿವರಗಳನ್ನು ಕೋರಿ ಸಲ್ಲಿಸಿದ್ದ RTI ಅರ್ಜಿಗೆ ಉತ್ತರವಾಗಿ ಸಚಿವಾಲಯವು ಈ ಮಾಹಿತಿಯನ್ನು ಒದಗಿಸಿದೆ.
ಬೆಂಗಳೂರು : ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತಾಗಿ ಕೇಂದ್ರ ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಲೇಖಕರು ಬಹಿರಂಗ ಪತ್ರ ಬರೆದಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಮಸೂದೆಯನ್ನು ತಡೆಯಲು ಅವರು ನಾಯಕತ್ವವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಮಾಜಿ ಪ್ರಧಾನಿಗೆ ಬಹಿರಂಗ ಪತ್ರ ಬರೆದಿರುವ ಲೇಖಕರಾದ ನಾಗೇಗೌಡ ಕೀಲಾರ ಹಾಗೂ ರಾಜೇಂದ್ರ ಪ್ರಸಾದ್ ಅವರು, ಕಳೆದ ಒಂದೂಕಾಲು ದಶಕದಲ್ಲಿ ದೆಹಲಿಯ ಒಕ್ಕೂಟ ಸರಕಾರವು (ಮೋದಿ ಸರಕಾರ) ರಾಜ್ಯ ಸರಕಾರಗಳ ಅಧಿಕಾರ, ಹಣ, ಸ್ವಾಯತ್ತತೆಗಳನ್ನು ಕಸಿದುಕೊಳ್ಳುವಂತಹ ಹಲವು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಬಂದಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಒಂದು ಕೇಂದ್ರೀಕೃತ ವ್ಯವಸ್ಥೆಯೊಳಗೆ ತರುವ ಬಹುದೊಡ್ಡ ಹುನ್ನಾರದಂತೆ ಕಾಣುತ್ತಿದೆ. ಈ ಬಗ್ಗೆ ವಿರೋಧ ಪಕ್ಷಗಳು ಅಲ್ಲಲ್ಲಿ ಪ್ರತಿರೋಧ ತೋರಿದ್ದರಾದರೂ ಸಫಲರಾಗಲು ಸಾಧ್ಯವಾಗಿಲ್ಲ. ಇದೆಲ್ಲವೂ ತಮ್ಮ ಗಮನದಲ್ಲಿರುತ್ತದೆಯಾದರೂ ನೆನಪಿಸುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಮೋದಿ ಅವರ ನೇತೃತ್ವದ ಒಕ್ಕೂಟ ಸರಕಾರವು 'ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ'ಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸಕಲ ಸಿದ್ದತೆ ನಡೆಸಿದೆ. ಇದು ದಕ್ಷಿಣ ಭಾರತದ ನಾಡು, ನುಡಿ ಮತ್ತು ಜನರನ್ನು ಉತ್ತರ ಭಾರತೀಯರ ದಾಸ್ಯಕ್ಕೆ ದೂಡುವ ಅಧಿಕೃತ ಶಾಸನವಾಗಿ ಹೊರಹೊಮ್ಮಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯಾನಂತರದ ಏಳೆಂಟು ದಶಕಗಳ ನಂತರವೂ ಉತ್ತರದ ಹಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣವನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಅಲ್ಲಿನ ಜನಸಂಖ್ಯೆ ಅತಿಯಾಗಿ, ದಕ್ಷಿಣದ ರಾಜ್ಯಗಳಿಗೆಡೆಗೆ ವಲಸೆ ವಿಪರೀತವಾಗಿದೆ. ಇದರಿಂದಾಗಿ ಇಲ್ಲಿನ ಸ್ಥಳೀಯರಿಗೆ ಉದ್ಯೋಗ, ವೃತ್ತಿಪರ ಅವಕಾಶಗಳು ಕಡಿಮೆಯಾಗಿ ಪೈಪೋಟಿ ಅನಾರೋಗ್ಯಕರವಾಗಿದೆ. ಇದೀಗ ಜನಸಂಖ್ಯೆಯ ಆಧಾರದ ಮೇಲೆ ಉತ್ತರದ ರಾಜ್ಯಗಳು ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಲಿವೆ. ಜನಸಂಖ್ಯೆ ನಿಯಂತ್ರಿಸಿದ್ದು ದಕ್ಷಿಣದ ಭಾರತದ ಜನರ ಅಪರಾಧವಾಯಿತೇ?!. ತೆರಿಗೆ ಹಣದ ಪಾಲು, ಅನುದಾನಗಳ ಪಾಲು ಸೇರಿದಂತೆ ಹಲವು ನಿಧಿಗಳ ಹಣದಲ್ಲಿ ದಕ್ಷಿಣದ ರಾಜ್ಯಗಳಿಗೆ ಮೋಸವಾಗುತ್ತಿದೆ. ಒಕ್ಕೂಟ ಸರಕಾರವು ಉತ್ತರ ರಾಜ್ಯಗಳ ಸಂವರ್ಧನೆಗಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ಪ್ಯಾಕೇಜು ನೀಡುತ್ತಿದ್ದು. ದಕ್ಷಿಣಕ್ಕೆ ಸಿಗುತ್ತಿರುವುದು ಬಿಡಿಗಾಸು ಮಾತ್ರ. ಮುಂದೆ ದಕ್ಷಿಣ ದ್ರಾವಿಡ ರಾಜ್ಯಗಳ ಒಟ್ಟು ಕ್ಷೇತ್ರಗಳಿಗಿಂತಲೂ ಉತ್ತರ ಪ್ರದೇಶ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೇ ಅಧಿಕವಾಗುತ್ತದೆ. ಅಲ್ಲಿಗೆ ದಕ್ಷಿಣದ ಕನ್ನಡಿಗರ, ಉಳಿದವರ ಗತಿಯೇನು? ಎಂದು ಅವರು ಪ್ರಶ್ನಿಸಿದ್ದಾರೆ. ಹಿಂದಿ ಭಾಷೆಯನ್ನು ಅಧಿಕೃತವಾಗಿ ಹೇರಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಒಕ್ಕೂಟ ಸರಕಾರವು ಅನುಸರಿಸುತ್ತಿದೆ. ಶಿಕ್ಷಣ, ಬ್ಯಾಂಕಿಂಗ್, ನಾಗರೀಕ ಸೇವಾ ಪರೀಕ್ಷೆಗಳು ಮತ್ತು ಆಡಳಿತದಲ್ಲೂ ಮೂರನೇ ಭಾಷೆಯಾಗಿ ಹೇರುತ್ತಿದೆ. ಆದರೆ ಉತ್ತರದ ರಾಜ್ಯಗಳು ಎರಡು ಭಾಷೆಗಳ ಪದ್ದತಿಯನ್ನು ಮಾತ್ರ ಅನುಸರಿಸುತ್ತಿವೆ. ಇದೆಂಥಾ ನೀತಿ. ಹಿಂದಿ ಪ್ರಚಾರ ಮತ್ತು ಬಳಕೆಗಾಗಿ ಸಾವಿರಾರು ಕೋಟಿಗಳನ್ನು ವ್ಯಯಿಸುತ್ತಿದೆ. ಆದರೆ ಕನ್ನಡಕ್ಕೆ ಸಿಗುತ್ತಿರುವುದೆಷ್ಟು ಎಂದು ನೋಡಿದರೆ ಬಹಳ ಸಂಕಟವಾಗುತ್ತದೆ. ಮುಂದೆ ಹೆಚ್ಚಿನ ಲೋಕಸಭಾ ಕ್ಷೇತ್ರಗಳು 'ಹಿಂದಿ ಭಾಗದವೇ' ಆದಾಗ ನಮ್ಮ ಪರಿಸ್ಥಿತಿ ಏನು?!ಇದುವರೆಗಿನ ಭಾರತದ ಪ್ರಧಾನಿಗಳನ್ನು ಗಮನಿಸಿದರೆ, ಒಟ್ಟು 15 ಜನರಲ್ಲಿ ನೀವು ಮತ್ತು ಪಿ ವಿ ನರಸಿಂಹರಾವ್ ಇಬ್ಬರನ್ನು ಬಿಟ್ಟು ಉಳಿದವರೆಲ್ಲಾ ಉತ್ತರ ಭಾರತೀಯರು. ರಾಜಕೀಯವಾಗಿ ಸಮಾನ ಅವಕಾಶವನ್ನು ದಕ್ಷಿಣ ಭಾರತದ ಜನನಾಯಕರಿಗೆ ಇದುವರೆಗೂ ನೀಡಲಾಗಿಲ್ಲ! ಇನ್ನು ಮುಂದೆ ಅಂತಹ ಆದ್ಯತೆ ಸಿಗುವ ಭರವಸೆ ಇಡಲಾಗುವುದೇ?! ಎಷ್ಟು ದಿನ ಉತ್ತರ ಭಾರತೀಯರ ದಾಸ್ಯದಲ್ಲಿರುವುದು?! ಸಂವಿಧಾನದ ಸಮಾನ ಅವಕಾಶ ಮತ್ತು ಸ್ಥಾನಮಾನ ದಕ್ಷಿಣಕ್ಕೆ ಸಿಗುವುದು ಯಾವಾಗ?! 543 ಕ್ಷೇತ್ರಗಳು ಇದ್ದಾಗಲೇ ಇಲ್ಲದ ಆದ್ಯತೆ, ಅಂದಾಜು 850 ಕ್ಷೇತ್ರಗಳು ಆದಾಗ, ಅದರಲ್ಲೂ ಅಂದಾಜು 305-10 ಕ್ಷೇತ್ರಗಳು ಬಿಮಾರು ಉತ್ತರ ರಾಜ್ಯಗಳೇ ಅದಾಗ ನಮ್ಮ ಪಾಡು ಏನು?! ಎಂದು ಕೇಳಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯು ದಕ್ಷಿಣದ ರಾಜ್ಯಗಳ ಸಾಂವಿಧಾನಿಕ ಸಾರ್ವಭೌಮತ್ವದ ಅಸ್ತಿತ್ವಕ್ಕೇ ಧಕ್ಕೆಯುಂಟುಮಾಡಲಿದೆ. ನಮ್ಮ ಜನರು ಜನಸಂಖ್ಯೆ ನಿಯಂತ್ರಿಸಿ, ಹಗಲಿರುಳು ದುಡಿದು ಸಂಪಾದಿಸಿ, ವಲಸಿಗರಿಗೂ ಅವಕಾಶಕೊಟ್ಟು, ತಾಯ್ನುಡಿಯನ್ನು ಉಸಿರಾಗಿಸಿಕೊಂಡು ಬಾಳಿ ಬದುಕಿದ್ದಾರೆ. ಅಂತಹ ಬದುಕನ್ನು ಉತ್ತರದ ದಾಸ್ಯಕ್ಕೆ ತಳ್ಳುವ ಈ ಮಸೂದೆಯನ್ನು ಜಾರಿಗೊಳ್ಳಲು ನಿಮ್ಮಂತಹ ಹಿರಿಯ ಸಂಸದೀಯ ನಾಯಕರು ಬಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಸಂಸತ್ತಿನ ಎರಡೂ ಸದನಗಳಲ್ಲಿರುವ ಅತ್ಯಂತ ಹಿರೀಕ ಸಂಸದೀಯ ಪಟುವೂ ನೀವೇ ಆಗಿದ್ದೀರಿ. ಅಷ್ಟಲ್ಲದೆ ದಕ್ಷಿಣವನ್ನು ಪ್ರತಿನಿಧಿಸಿರುವ ಪ್ರಧಾನಿಯೂ ನೀವಾಗಿದ್ದಿರಿ. ನಿಮ್ಮ ಪಕ್ಷವು ಬಿಜೆಪಿಯನ್ನು ಬೆಂಬಲಿಸಿರಬಹುದು, ಆದರೆ ಇಂತಹ ಮೋಸದ ಮಸೂದೆಯು ಮಂಡನೆಯನ್ನು ನೀವು ತಡೆಗಟ್ಟಬೇಕು. ನಿಮ್ಮ ಬದುಕಿನ ಸಮಯದಲ್ಲಿ ಇದು ಮಂಡನೆಯಾಗಿ ಜಾರಿಯಾದರೆ ಮುಂದಿನ ಪೀಳಿಗೆಗಳು ನಿಮ್ಮನ್ನು ನೆನೆಯಲಾರವು. ನೀವು ಕೂಡ ಉತ್ತರದ ವಂಚಕರೊಂದಿಗೆ ಸೇರಿ ನಮ್ಮ ನಾಡು, ನುಡಿ, ಜನಕ್ಕೆ ವಂಚಿಸಿದಂತಾಗುತ್ತದೆ ಎಂದು ಹೇಳಿದ್ದಾರೆ. ದಕ್ಷಿಣ ರಾಜ್ಯಗಳ ಎಲ್ಲಾ ಜನ ನಾಯಕರನ್ನು ಒಗ್ಗೂಡಿ, ಸಮಾಲೋಚಿಸಿ ಈ ಕ್ಷೇತ್ರ ಪುನರ್ವಿಂಗಡಣೆಯ ಮಸೂದೆಯನ್ನು ರದ್ದುಪಡಿಸಲು ನೀವು ನೇತೃತ್ವವಹಿಸಿ. ದಕ್ಷಿಣದ ಭಾರತದ ಜನರಿಗೆ ಒಕ್ಕೂಟ ಸರಕಾರದಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನ ಮುಂದಾದರೂ ದೊರೆಯುವಂತಾಗಲಿ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Telangana SEEEPC Survey | 12 ಲಕ್ಷಕ್ಕೂ ಹೆಚ್ಚು ಮಂದಿಯಿಂದ ‘ಜಾತಿಯಿಲ್ಲ’ ಎಂಬ ಆಯ್ಕೆ!
ಹೈದರಾಬಾದ್: 2024ರ ತೆಲಂಗಾಣ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಸಮೀಕ್ಷೆ (SEEEPC)ಯಲ್ಲಿ ಅನಿರೀಕ್ಷಿತ ಅಂಶಗಳು ಪತ್ತೆಯಾಗಿದ್ದು, ಗಮನಾರ್ಹ ಪ್ರಮಾಣದ ಹಾಗೂ ವೈವಿಧ್ಯಮಯ ಗುಂಪಿನ ನಾಗರಿಕರು ತಮ್ಮನ್ನು ತಾವು ಯಾವುದೇ ಜಾತಿಗೆ ಸೇರಿದವರಲ್ಲ ಎಂದು ಗುರುತಿಸಿಕೊಂಡಿದ್ದಾರೆ. ಸದ್ಯ ತೆಲಂಗಾಣ ಜನಸಂಖ್ಯೆಯಲ್ಲಿ 10ನೇ ಅತಿ ದೊಡ್ಡ ಸಮುದಾಯವಾಗಿರುವ ಈ ಗುಂಪಿನ 12 ಲಕ್ಷ ಮಂದಿ ಸಾಂಪ್ರದಾಯಿಕ ಜಾತಿ ಪ್ರವರ್ಗದಲ್ಲಿ ಗುರುತಿಸಿಕೊಳ್ಳಲು ನಿರಾಕರಿಸಿ, ಅದನ್ನು ಮೀರುವ ನಾಗರಿಕ ಗುರುತನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ದತ್ತಾಂಶದಲ್ಲಿ ಪ್ರಧಾನವಾಗಿ ನಗರವಾಸಿ, ಸಾಕಷ್ಟು ಸುಶಿಕ್ಷಿತ ಹಾಗೂ ವೃತ್ತಿಪರ ಮತ್ತು ಅರ್ಹತೆ ಆಧಾರಿತ ವಲಯಗಳನ್ನು ಪ್ರತಿನಿಧಿಸುವ ವ್ಯಕ್ತಿಗಳ ವಿವರಗಳಿವೆ. ‘ಜಾತಿಯಿಲ್ಲ’ ಎಂದು ಹೇಳಿಕೊಂಡಿರುವ ಬಹುತೇಕ ನಾಗರಿಕರು ಹೈದರಾಬಾದ್ ನ ವಿಸ್ತರಿತ ಮಹಾನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಶಿಕ್ಷಣ ಪಡೆದ ವೃತ್ತಿಪರರು. ವಿಶೇಷವಾಗಿ ಐಎಎಸ್ ಅಥವಾ ಐಪಿಎಸ್ನಂತಹ ಉನ್ನತ ಸರ್ಕಾರಿ ಸೇವೆಗಳಲ್ಲಿ ಉದ್ಯೋಗದಲ್ಲಿರುವವರು ಅಥವಾ ಸಾಫ್ಟ್ವೇರ್, ಬಿಪಿಒ ಹಾಗೂ ಔಷಧ ಕ್ಷೇತ್ರದಂತಹ ನಗರ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಅವರ ಕುಟುಂಬಗಳು ಸಾಮಾನ್ಯವಾಗಿ ಮಧ್ಯಮದಿಂದ ಮೇಲ್ಮಧ್ಯಮ ವರ್ಗಕ್ಕೆ ಸೇರಿದ್ದು, ಉತ್ತಮ ಮನೆಗಳಲ್ಲಿ ವಾಸಿಸುತ್ತಿದ್ದು, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಮೇಲೆ ಸೀಮಿತ ಪ್ರಮಾಣದಲ್ಲಿ ಅವಲಂಬಿತರಾಗಿದ್ದಾರೆ. ಸಾರ್ವಜನಿಕವಾಗಿ ‘ಜಾತಿಯಿಲ್ಲ’ ಎಂದು ಹೇಳಿಕೊಂಡಿರುವ ಶೇ. 43 ಮಂದಿ ತಮ್ಮ ಬಳಿ ಜಾತಿ ಪ್ರಮಾಣಪತ್ರವಿದೆ ಎಂದು ತಿಳಿಸಿದ್ದಾರೆ. ಇವರಲ್ಲಿ ಶೇ. 13.5 ಮಂದಿ ಈ ಹಿಂದೆ ಮೀಸಲಾತಿ ಸೌಲಭ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ. ಈ ವ್ಯಕ್ತಿವಿವರಗಳು ಜಾತಿ ಸಂಬಂಧಿತ ಮಾರ್ಗಗಳ ಮೂಲಕ ಅವರ ಚಲನಶೀಲತೆಯ ಪಥ ರೂಪುಗೊಂಡಿರುವುದನ್ನು ಸೂಚಿಸುತ್ತವೆ. ಇದೀಗ ಜಾತಿ ತಟಸ್ಥತೆಯನ್ನು ಆಯ್ಕೆ ಮಾಡಿಕೊಂಡಿರುವುದಾದರೂ, ಅವರು ಇನ್ನೂ ಸಂಪೂರ್ಣವಾಗಿ ಸಮಾನವಾದ ಸಾಂಸ್ಥಿಕ ಮತ್ತು ವೃತ್ತಿಪರ ಜಾಗಗಳಲ್ಲಿ ನೆಲೆಗೊಳ್ಳಿಲ್ಲವೆಂಬುದು ಗಮನಾರ್ಹ. ತೆಲಂಗಾಣ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಸಮೀಕ್ಷೆಯಲ್ಲಿ ‘ಜಾತಿಯಿಲ್ಲ’ ಎಂಬ ಹೊಸ ಪ್ರವರ್ಗವನ್ನು ಪರಿಚಯಿಸಲಾಗಿದ್ದು, ಅದಕ್ಕೆ ಕ್ರಮ ಸಂಖ್ಯೆ 999 ಅನ್ನು ನೀಡಲಾಗಿದೆ. ಈ ಪ್ರವರ್ಗವನ್ನು ವಿಶಾಲವಾಗಿ ಇತರೆ ಜಾತಿಗಳು ಅಥವಾ ಸಾಮಾನ್ಯ ವರ್ಗಗಳಡಿ ವರ್ಗೀಕರಿಸಲಾಗಿದ್ದರೂ, ಇದು ಸಾಮಾಜಿಕವಾಗಿ ವಿಶಿಷ್ಟ ಗುಂಪನ್ನು ಪ್ರತಿನಿಧಿಸುತ್ತದೆ. ‘ಜಾತಿಯಿಲ್ಲ’, ‘ಧರ್ಮವಿಲ್ಲ’ ಹಾಗೂ ‘ಯಾವುದೇ ಸಾಮಾಜಿಕ ಪ್ರವರ್ಗವಿಲ್ಲ’ ಎಂಬ ತಟಸ್ಥ ಪ್ರವರ್ಗಗಳನ್ನು ಪರಿಗಣಿಸಬೇಕು ಎಂದು ಸಲ್ಲಿಸಿದ್ದ ರಿಟ್ ಅರ್ಜಿಗೆ ಪ್ರತಿಯಾಗಿ ತೆಲಂಗಾಣ ಸರ್ಕಾರ ಈ ಸೇರ್ಪಡೆ ಮಾಡಿದೆ. ಸೌಜನ್ಯ: deccanherald.com
ಮೀಸಲಾತಿ ವಿರೋಧಿಸಿದವರನ್ನು ಈ ದೇಶದ ಮಹಿಳೆಯರು ಕ್ಷಮಿಸಿಲ್ಲ: ಪ್ರಧಾನಿ ಮೋದಿ
ಹೊಸದಿಲ್ಲಿ, ಎ. 16: ದೇಶವೊಂದರ ಇತಿಹಾಸದಲ್ಲಿ ಕೆಲವು ‘‘ಮಹತ್ವದ ಕ್ಷಣಗಳು’’ ಇರುತ್ತವೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯು ಅಂತಹ ಕ್ಷಣಗಳಲ್ಲಿ ಒಂದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ‘‘ಮಹಿಳಾ ಮೀಸಲಾತಿಯು ಸುಮಾರು 30 ವರ್ಷಗಳ ಹಿಂದಿನ ಕಲ್ಪನೆಯಾಗಿದೆ ಎಂದು ಮಸೂದೆಯ ಜಾರಿ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸುತ್ತಾ ಅವರು ಹೇಳಿದರು. ‘‘25-30 ವರ್ಷಗಳ ಹಿಂದೆಯೇ ಇಂಥ ಮಸೂದೆಯೊಂದರ ಅಗತ್ಯವಿತ್ತು. ಈ ಕಲ್ಪನೆ ಮೊದಲು ಬಂದಾಗಲೇ ನಾವು ಅದನ್ನು ಜಾರಿಗೊಳಿಸಬೇಕಾಗಿತ್ತು. ಅದು ಸಾಧ್ಯವಾಗಿದ್ದರೆ, ಇಂದು ಆ ಕಲ್ಪನೆಯು ಗಣನೀಯವಾಗಿ ಪಕ್ವವಾಗಿರುತ್ತಿತ್ತು. ಅದು ಕಾಲ ಕಾಲಕ್ಕೆ ಅಗತ್ಯವಿದ್ದಂತೆ ಸುಧಾರಣೆಗಳನ್ನು ಕಂಡಿರುತ್ತಿತ್ತು. ಅಂತಿಮವಾಗಿ, ಪ್ರಜಾಪ್ರಭುತ್ವದ ನೈಜ ಸೌಂದರ್ಯವೇ ಇದಾಗಿದೆ’’ ಎಂದು ಮೋದಿ ಹೇಳಿದರು. ‘‘ದೇಶವೊಂದರ ಇತಿಹಾಸದಲ್ಲಿ ಕೆಲವು ಮಹತ್ವದ ಕ್ಷಣಗಳಿರುತ್ತವೆ. ಆ ಕಾಲದ ಸಮಾಜದ ಮಾನಸಿಕ ಸ್ಥಿತಿ ಮತ್ತು ಆ ಕ್ಷಣವನ್ನು ಗುರುತಿಸುವ ನಾಯಕತ್ವದ ಸಾಮರ್ಥ್ಯವು ಆ ಕ್ಷಣವನ್ನು ರಾಷ್ಟ್ರೀಯ ಪರಂಪರೆಯಾಗಿ ಮಾರ್ಪಡಿಸುತ್ತದೆ. ಇದು ಭಾರತದ ಸಂಸದೀಯ ಇತಿಹಾಸದಲ್ಲಿ ನಿಖರವಾಗಿ ಅಂಥ ಒಂದು ಕ್ಷಣವಾಗಿದೆ’’ ಎಂದು ಮೋದಿ ಅಭಿಪ್ರಾಯಪಟ್ಟರು. ಈ ನಿರ್ಧಾರವು ಒಂದು ರಾಜಕೀಯ ಪಕ್ಷಕ್ಕೆ ಲಾಭ ತರುವುದಿಲ್ಲ, ಇದು ದೇಶದ ಪ್ರಜಾಪ್ರಭುತ್ವದ ಪರವಾಗಿದೆ ಎಂದು ಅವರು ಹೇಳಿದರು. ‘‘ಈ ಹಕ್ಕನ್ನು ಮಹಿಳೆಯರಿಗೆ ನೀಡುವುದನ್ನು ವಿರೋಧಿಸಿದವರನ್ನು ಈ ದೇಶದ ಮಹಿಳೆಯರು ಕ್ಷಮಿಸಿಲ್ಲ. ಅವರು ಅದರ ಪರಿಣಾಮಗಳನ್ನು ಎದುರಿಸಿದ್ದಾರೆ. ನಾವೆಲ್ಲಾ ಜೊತೆಯಾಗಿ ಮುಂದುವರಿದರೆ, ಈ ನಿರ್ಧಾರದ ಪ್ರಯೋಜನವನ್ನು ಯವುದೇ ಒಂದು ರಾಜಕೀಯ ಪಕ್ಷ ಪಡೆದುಕೊಳ್ಳುವುದಿಲ್ಲ, ಬದಲಿಗೆ ಅದು ದೇಶದ ಪ್ರಜಾಪ್ರಭುತ್ವಕ್ಕೆ ಪೂರಕವಾಗಿರುತ್ತದೆ’’ ಎಂದು ಪ್ರಧಾನಿ ಮೋದಿ ನುಡಿದರು.
Shreyas Iyer Stunning Catch- ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅದ್ಭುತ 'ರಿಲೇ ಕ್ಯಾಚ್' ಮೂಲಕ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯಲು ನೆರವಾದರು. ಬೌಂಡರಿ ಗೆರೆಯ ಬಳಿ ಸುಮಾರು 6 ಅಡಿ ಎತ್ತರಕ್ಕೆ ಜಿಗಿದು ಚೆಂಡನ್ನು ಹಿಡಿದ ಅಯ್ಯರ್, ತಾವು ಗೆರೆ ದಾಟುವ ಮುನ್ನ ಅದನ್ನು ಕ್ಸೇವಿಯರ್ ಬಾರ್ಟ್ಲೆಟ್ಗೆ ಎಸೆದರು. ಈ ಸ್ಮರಣೀಯ ಫೀಲ್ಡಿಂಗ್ ಪ್ರದರ್ಶನ ಕಂಡು ರೋಹಿತ್ ಶರ್ಮಾ ಬೆರಗಾದರು. ಈ ಸಾಹಸದ ನಂತರ ಅಯ್ಯರ್ ವಾಂಖೆಡೆ ಪ್ರೇಕ್ಷಕರನ್ನು ಕೆಣಕುವಂತೆ ಸಂಭ್ರಮಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ: ಪೋಪ್ ಲಿಯೋ
ಕ್ಯಾಮರೂನ್, ಎ.16: ಜಾಗತಿಕ ರಾಜಕೀಯ ಮತ್ತು ಯುದ್ಧ ಪರಿಸ್ಥಿತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೋಪ್ ಲಿಯೋ, “ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ” ಎಂದು ಹೇಳಿದ್ದಾರೆ. ಕ್ಯಾಮರೂನ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗಳಿಗೆ ಶತಕೋಟಿ ಡಾಲರ್ ಗಳನ್ನು ಖರ್ಚು ಮಾಡುವ ಪ್ರವೃತ್ತಿಯನ್ನು ಖಂಡಿಸಿದರು. “ಕೆಲವೇ ನಿರಂಕುಶ ನಾಯಕರು ಜಗತ್ತನ್ನು ಧ್ವಂಸಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದರು. ತಮ್ಮ ವಿರುದ್ಧ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ ಬಳಿಕ ಪ್ರತಿಕ್ರಿಯಿಸಿದ ಪೋಪ್, “ಯುದ್ಧದ ಮಾಸ್ಟರ್ಸ್ ಗೆ ನಾಶಮಾಡಲು ಒಂದು ಕ್ಷಣ ಸಾಕು. ಆದರೆ ಪುನರ್ ನಿರ್ಮಾಣಕ್ಕೆ ಇಡೀ ಜೀವನ ಸಾಲದು ಎಂಬುದನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ” ಎಂದು ಹೇಳಿದರು. “ಕೊಲೆ ಮತ್ತು ವಿನಾಶಕ್ಕೆ ಶತಕೋಟಿ ಹಣ ಖರ್ಚಾಗುತ್ತದೆ. ಆದರೆ ಚಿಕಿತ್ಸೆ, ಶಿಕ್ಷಣ ಮತ್ತು ಪುನರ್ ಸ್ಥಾಪನೆಗೆ ಅಗತ್ಯವಾದ ಸಂಪನ್ಮೂಲಗಳು ಎಲ್ಲಿಯೂ ಕಾಣುತ್ತಿಲ್ಲ” ಎಂದು ಪೋಪ್ ಲಿಯೋ ಅವರು ಬೇಸರ ವ್ಯಕ್ತಪಡಿಸಿದರು. ಜಗತ್ತಿನ ನಾಯಕರು ಶಾಂತಿ, ಮಾನವೀಯತೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಪೋಪ್ ಲಿಯೋ ಕರೆ ನೀಡಿದರು.
ಕಾಳಗಿ | ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಉತ್ಸವ
ಕಾಳಗಿ: ದಕ್ಷಿಣಕಾಶಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೀಲಕಂಠ ಕಾಳೇಶ್ವರ ಅಲಂಕೃತ ಬೆಳ್ಳಿ ಮೂರ್ತಿ ಪಲ್ಲಕ್ಕಿ ಉತ್ಸವವು ಜರುಗುವುದರೊಂದಿಗೆ ಜಾತ್ರೆ ತೆರೆ ಕಂಡಿತು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ದೇವಸ್ಥಾನದಿಂದ ಪ್ರಾರಂಭವಾದ ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಉತ್ಸವ ಅಪಾರ ಭಕ್ತ ಸಮೂಹದ ಮಧ್ಯೆ ಪಟ್ಟಣದ ಮುತ್ತನಕಟ್ಟಿ ಅಂಬಿಗರ ಚೌಡಯ್ಯ ದೇವಸ್ಥಾನ, ಚಾಮುಂಡೇಶ್ವರ ದೇವಸ್ಥಾನ, ಮರ್ಗಮ್ಮ ದೇವಸ್ಥಾನ, ಮುಖ್ಯಬಜಾರ ರಸ್ತೆ, ಚೌವಡಿ ಕಟ್ಟಿ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ಅರ್ಚಕರ ಮನೆಗೆ ತಲುಪಿತು. ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ಕಲಾ ತಂಡಗಳು ಹಾಗೂ ಡೊಳ್ಳು ಭಾಜ, ಭಜಂತ್ರಿ, ಹಲಗೆ, ಭಜನೆಗಳು ಮೆರಗು ನೀಡಿದವು. ಯುವಕರ ತಂಡ ಪಲ್ಲಕ್ಕಿ ಉತ್ಸವದಲ್ಲಿ ದಾಸೋಹ ವ್ಯವಸ್ಥೆ ಮಾಡಿತ್ತು. ನಂತರ ದೇವಸ್ಥಾನ ಆವರಣದಲ್ಲಿ ಪೈಲ್ವಾನರಿಂದ ನಡೆದ ಜಂಗಿ ಕುಸ್ತಿಯಲ್ಲಿ ವಿಜೇತರಿಗೆ ಬೆಳ್ಳಿ ಖಡ್ಗ ನೀಡಲಾಯಿತು. ವಿಧಾನ ಪರಿಷತ್ ಸದಸ್ಯ ಹಾಗೂ ನೀಲಕಂಠ ಕಾಳೇಶ್ವರ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಜಗದೇವ ಗುತ್ತೇದಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ಶರಣಗೌಡ ಪೊಲೀಸ್ ಪಾಟೀಲ, ಜಗದೀಶ್ ಮಾಲಿಪಾಟೀಲ, ನೀಲಕಂಠ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ಅನೀಲಕುಮಾರ ಮಾಲಿಪಾಟೀಲ, ವೇದಪ್ರಕಾಶ ಮೊಟಗಿ, ಸಂತೋಷ ಪಂತಗೆ, ಪರಮೇಶ್ವರ ಮಡಿವಾಳ, ಬಂಡಪ್ಪ ಬೊಮ್ಮಣ್ಣಿ, ಸೋಮಣ್ಣ ಮಕಪನೋರ, ಜಗನ್ನಾಥ ಚಂದನಕೇರಿ, ಶರಣಪ್ಪ ಮುಕರಂಬಿ, ಶಿವಕಿರಣ ಪ್ಯಾಟಿಮಠ, ನಾಗಯ್ಯಸ್ವಾಮಿ ಮಠಪತಿ, ಬಸವರಾಜ ಸಿಂಗಶೆಟ್ಟಿ, ಸಂತೊಷ ಕಡಬೂರ, ಯಲ್ಲಾಲಿಂಗ ಉನ್ನಿ, ಉದಯಕುಮಾರ ಸುಂಠಾಣ, ರೇವಣಸಿದ್ದ ಕಲಶೆಟ್ಟಿ, ಶಾಮರಾವ ಕಡಬೂರ, ಸುನೀಲ್ ರಾಜಾಪೂರ ಸೇರಿದಂತೆ ಅನೇಕರು ಇದ್ದರು.
ಸುರಪುರ | ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ವಿವರವುಳ್ಳ ಗ್ರಂಥ ಬಿಡುಗಡೆ
ಸುರಪುರ: ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಅಪರೂಪದ ಐತಿಹಾಸಿಕ ಘಟನೆಗಳನ್ನು ಒಳಗೊಂಡ ಅಪ್ಪಾರಾವ್ ವಕೀಲರ ಆತ್ಮಚರಿತ್ರೆ ಆಟೋ ಬಯೋಗ್ರಾಫಿ ಆಫ್ ಆನ್ ಅನಾನಿಮಸ್ ಫ್ರೀಡಮ್ ಫೈಟರ್ ಗ್ರಂಥವನ್ನು ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿರುವ ಡಾ. ಲಕ್ಷ್ಮಾರೆಡ್ಡಿ ಅವರ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರೊಫೆಸರ್ ಕೊಂಡ ರಾಮಚಂದ್ರರೆಡ್ಡಿ ಮಾತನಾಡಿ, ಹೈದರಾಬಾದ್ ವಿಮೋಚನ ಹೋರಾಟದ ಅಜ್ಞಾತ ಪುಟಗಳನ್ನು ದಿವಂಗತ ಅಪ್ಪಾರಾವ್ ವಕೀಲರು ಈ ಕೃತಿಯ ಮೂಲಕ ಸಮಾಜದ ಮುಂದೆ ತಂದಿದ್ದು, ಇದು ಮಹತ್ವದ ಐತಿಹಾಸಿಕ ದಾಖಲೆಯಾಗಲಿದೆ ಎಂದು ಹೇಳಿದರು. ಗ್ರಂಥದ ಮುದ್ರಣ ವೆಚ್ಚವನ್ನು ಡಾ. ಲಕ್ಷ್ಮಾರೆಡ್ಡಿ ವಹಿಸಿಕೊಂಡಿದ್ದು, ಸುರಪುರ ಕನ್ನಡ ಸಾಹಿತ್ಯ ಸಂಘದಿಂದ ಈ ಕೃತಿ ಪ್ರಕಟಿಸಲಾಗಿದೆ. ಕಾರ್ಯಕ್ರಮದಲ್ಲಿ ಸುರಪುರ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ ಹಾಗೂ ಗ್ರಂಥದ ಸಂಪಾದಕ ಮಂಡಳಿಯ ಸದಸ್ಯರಾದ ಜೆ ಆಗಸ್ಟಿನ್ ನ್ಯಾಯವಾದಿ, ಕೋಶ್ಯಾಧ್ಯಕ್ಷರಾದ ಪ್ರಕಾಶ್ ಚಂದ್ ಜೈನ್, ಉಸ್ಮಾನಿಯಾ ವಿಶ್ವವಿದ್ಯಾಲಯ ಹೈದರಾಬಾದ್ ನ ಕಲಾ ವಿಭಾಗದ ಡೀನ್ ಆಗಿರುವ ಡಾ.ಲಿಂಗಪ್ಪ ಗೋನಾಳ ಹಾಗೂ ಉಸ್ಮಾನಿಯಾ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರೊಫೆಸರ್ ಕೊಂಡ ರಾಮಚಂದ್ರರೆಡ್ಡಿ, ಆಂಧ್ರ ಪ್ರದೇಶದ ಮಾಜಿ ಹೈಕೋರ್ಟ್ ಗೌರ್ನ್ಮೆಂಟ್ ಅಡ್ವೊಕೇಟ್ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಡಾ. ಲಕ್ಷ್ಮಾರೆಡ್ಡಿ ಅವರು ಸೇರಿದಂತೆ ಇತರ ಬಂಧು ಬಳಗದವರು ಉಪಸ್ಥಿತರಿದ್ದರು.
ಸುರಪುರ | ರಾಜುಗೌಡ, ಶರಣಗೌಡ ಕಂದಕೂರ ಮುಂಬರುವ ದಿನಗಳಲ್ಲಿ ಸಚಿವರಾಗುತ್ತಾರೆ : ರಂಭಾಪುರಿ ಶ್ರೀ
ಸುರಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಯುವ ರಾಜಕಾರಣಿಗಳಾದ ನರಸಿಂಹ ನಾಯಕ ರಾಜುಗೌಡ ಹಾಗೂ ಶರಣಗೌಡ ಕಂದಕೂರು ಅವರು ಮುಂದಿನ ದಿನಗಳಲ್ಲಿ ಸಚಿವರಾಗಲಿದ್ದಾರೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದರು. ತಾಲೂಕಿನ ದೇವಪುರ ಗ್ರಾಮದಲ್ಲಿ ಜಡಿ ಶಾಂತಲಿಂಗೇಶ್ವರ ದೇವಸ್ಥಾನದ ಕಳಸಾರೋಹಣದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಸರ್ಕಾರ ರಚನೆಯಾಗಲಿದ್ದು, ಆ ಸರ್ಕಾರದಲ್ಲಿ ಈ ಇಬ್ಬರು ನಾಯಕರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳಿದರು. ರಾಜುಗೌಡ ಮತ್ತು ಶರಣಗೌಡ ಇಬ್ಬರೂ ಅಭಿವೃದ್ಧಿ ಪರ ಧೋರಣೆಯ ಯುವ ನಾಯಕರು ಆಗಿದ್ದು, ವಿಧಾನಸೌಧದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಧ್ವನಿಯನ್ನು ಗಟ್ಟಿಯಾಗಿ ಪ್ರತಿನಿಧಿಸುತ್ತಿದ್ದಾರೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಗೌರವ ನೀಡುವ ಇವರಿಂದ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ರಾಜುಗೌಡ ಅವರು ನನಗೆ ಸದಾ ಮಾರ್ಗದರ್ಶಕರಾಗಿದ್ದಾರೆ. ರಂಭಾಪುರಿ ಶ್ರೀಗಳ ಆಶೀರ್ವಾದದಿಂದ ನಮ್ಮ ಕುಟುಂಬ ರಾಜಕೀಯವಾಗಿ ಬೆಳೆದಿದ್ದು, ಮುಂದಿನ ದಿನಗಳಲ್ಲಿ ರಾಜುಗೌಡ ಅವರಿಗೆ ಸಹ ಆಶೀರ್ವಾದ ದೊರೆಯಲಿ ಎಂದು ವಿನಂತಿಸಿದರು. ಮಾಜಿ ಸಚಿವ ರಾಜುಗೌಡ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ಶರಣಗೌಡ ಕಂದಕೂರು ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ರಂಭಾಪುರಿ ಶ್ರೀಗಳು ಮಾಜಿ ಸಚಿವ ರಾಜುಗೌಡ ಶಾಸಕ ಶರಣಗೌಡ ಕಂದಕೂರ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಿಎಸ್ ಮ್ಯಾಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ ದಯಾನಂದ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ದೇವಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆಳಗೆ ಮುದ್ರ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯ, ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯರು, ಕಲಬುರ್ಗಿಯ ಚವದಾಪುರಿ ಮಠದ ಡಾ. ರಾಜಶೇಖರ ಶಿವಾಚಾರ್ಯ, ತೊನಸನಹಳ್ಳಿಯ ರೇವಣಸಿದ್ದ ಶಿವಾಚಾರ್ಯ, ನವಲಕಲ್ಲದ ಸೋಮನಾಥ ಶಿವಾಚಾರ್ಯ, ರುಕ್ಮಾಪುರ ಹಿರೇಮಠದ ಗುರು ಶಾಂತ ಮೂರ್ತಿ ಶಿವಾಚಾರ್ಯ, ಲಕ್ಷ್ಮಿಪುರ ಶ್ರೀ ಗಿರಿ ಮಠದ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಹಾಗೂ ಮುಖಂಡರಾದ ರಾಜಾ ಹನುಮಪ್ಪ ನಾಯಕ ತಾತಾ, ವೇಣು ಮಾಧವ ನಾಯಕ, ಸುರೇಶ ಆರ್ ಸಜ್ಜನ್, ವೀರೇಶ ಚಿಂಚೋಳಿ, ಸಿದ್ದನಗೌಡ ಕರಿಬಾವಿ, ಶಂಕರ ನಾಯಕ, ಮಹೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆ-02: ನೋಂದಣಿಗೆ ವಿದ್ಯಾರ್ಥಿಗಳ ಪರದಾಟ
ಉಡುಪಿ: ಎ.30ರಿಂದ ಪ್ರಾರಂಭಗೊಳ್ಳುವ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕಾಗಿ ಆನ್ಲೈನ್ ಮೂಲಕ ನೋಂದಾಯಿ ಸಲು ಎ.17 ಶುಕ್ರವಾರ ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದ ತಾಂತ್ರಿಕ ತೊಂದರೆಯಿಂದಾಗಿ ವೆಬ್ಸೈಟ್ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಇದರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೊಂದಾಯಿಸಲು ವಿದ್ಯಾರ್ಥಿಗಳು ಪರದಾಡುತಿದ್ದಾರೆ ಎಂದು ಉಡುಪಿ ಸ್ನೇಹ ಟ್ಯುಟೋರಿಯಲ್ನ ಪ್ರಾಂಶುಪಾಲರಾದ ಉಮೇಶ್ ಚೇರ್ಕಾಡಿ ತಿಳಿಸಿದ್ದಾರೆ. ಕಾರಣಾಂತರಗಳಿಂದ ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಗೆ ಗೈರುಹಾಜರಾದ ಅಥವಾ ಫಲಿತಾಂಶ ಪೂರ್ಣ ಗೊಳಿಸದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ-2 ನಡೆಸಲು ಮಂಡಳಿ ಪ್ರಕಟಿಸಿದ್ದು, ಎ.30ರಂದು ಈ ಪರೀಕ್ಷೆ ನಡೆಯುವು ದಾಗಿ ಪ್ರಕಟಿಸಿದೆ. ಪರೀಕ್ಷೆಗೆ ಹೆಸರು ನೊಂದಾಯಿಸಲು ಎ.17ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದ ತಾಂತ್ರಿಕ ತೊಂದರೆಯಿಂದ ಮೊಬೈಲ್ ರಿಜಿಸ್ಟರ್ ಮಾಡಲಾಗದೇ, ಒಟಿಪಿ ಬಾರದೇ ಸೈಬರ್ ಸೆಂಟರ್ನ ಮೂಲಕ ನೊಂದಾಯಿಸಲು ಸಾದ್ಯವಾಗುತ್ತಿಲ್ಲ. ಅಲ್ಲದೇ ಆಪ್ಲೈನ್ನಲ್ಲಿ ಕಾಲೇಜಿ ನಲ್ಲಿ ನೊಂದಾಯಿಸಲು ಸಹ ಪ್ರಾಂಶುಪಾಲರಿಗೆ ಸಾಧ್ಯವಾಗದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಮಂಡಳಿ ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಕಣ್ಣುಮುಚ್ಚಿ ಕುಳಿತಿದೆ. ಇದರಿಂದಾಗಿ ಪುನರಾವರ್ತಿತ ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ವಿದ್ಯಾರ್ಥಿಗಳು ಸೈಬರ್ ಸೆಂಟರ್ನಿಂದ ಕಾಲೇಜಿಗೆ ಅಲೆದಾಡುತಿದ್ದಾರೆ ಎಂದು ಉಮೇಶ್ ಚೇರ್ಕಾಡಿ ಹೇಳಿದ್ದಾರೆ.
ಉತ್ತರ ಪ್ರದೇಶ| ಅಕ್ರಮ ನಿರ್ಮಾಣ ಆರೋಪ: ಸಂಭಲ್ನಲ್ಲಿ ಈದ್ಗಾ, ಇಮಾಮ್ಬಾರಾ ನೆಲಸಮಗೊಳಿಸಿದ ಅಧಿಕಾರಿಗಳು
ಲಕ್ನೋ, ಎ. 15: ಉತ್ತರಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ನಾಲ್ಕು ಬುಲ್ಡೋಝರ್ಗಳನ್ನು ಬಳಸಿ ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಈದ್ಗಾ ಹಾಗೂ ಇಮಾಮ್ಬಾರಾವನ್ನು ನೆಲಸಮಗೊಳಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆ ಕೊಟ್ವಾಲಿ ಸಂಭಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಿಚೋಲಿ ಗ್ರಾಮದಲ್ಲಿ ನಡೆದಿದೆ. ಈದ್ಗಾವನ್ನು ಸುಮಾರು 7 ಬಿಗಾ ಮೇವು ಭೂಮಿಯಲ್ಲಿ ನಿರ್ಮಿಸಲಾಗಿದೆ. ಇಮಾಮ್ಬಾರಾವನ್ನು ಗೊಬ್ಬರ ಗುಂಡಿಗೆ ಮೀಸಲಿರಿಸಲಾಗಿದ್ದ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸ್ಥಳದಲ್ಲಿ ಐದು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಹಾಗೂ ಪ್ರೊವಿನಿಕಲ್ ಆರ್ಮಡ್ ಕಾನ್ಸ್ಟೆಬ್ಯುಲರಿ (ಪಿಎಸಿ) ಯ ಒಂದು ಕಂಪೆನಿಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಭಟನೆಯ ಭೀತಿಯಿಂದ ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರನ್ನು ಚದುರಿಸಲಾಯಿತು. ಗ್ರಾಮಸ್ಥರ ದೂರುಗಳ ಹಿನ್ನೆಲೆಯಲ್ಲಿ ಲೇಖಪಾಲ್ ಸ್ಪರ್ಶ ಗುಪ್ತಾ ಅವರು ಜನವರಿ 18ರಂದು ತಹಶೀಲ್ದಾರ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಜನವರಿ 31ರಂದು ದಿನಪತ್ರಿಕೆಗಳಲ್ಲಿ ನೋಟಿಸನ್ನು ಪ್ರಕಟಿಸಲಾಗಿತ್ತು. ಯಾರಿಗಾದರೂ ಆಕ್ಷೇಪ ಇದ್ದರೆ, ಪ್ರತಿಕ್ರಿಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ, ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ. ಗುರುವಾರ ಬೆಳಗ್ಗೆ ಸುಮಾರು 7.30ಕ್ಕೆ ಅಪರ ಜಿಲ್ಲಾಧಿಕಾರಿ ನಿಧಿ ಪಟೇಲ್ ನಾಯಬ್ ತಹಶೀಲ್ದಾರ್ ದೀಪಕ್ ಕುಮಾರ್ ಜುರೈಲ್ ತಂಡದೊಂದಿಗೆ ಸ್ಥಳಕ್ಕೆ ತಲುಪಿದರು. ಕೆಲವರು ಉಳಿ ಹಾಗೂ ಸುತ್ತಿಗೆಗಳನ್ನು ಬಳಸಿ ಇಮಾಮ್ಬಾರವನ್ನು ನೆಲಸಮಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂತು. ಆದರೆ, ಅಧಿಕಾರಿಗಳು ಅವರನ್ನು ತೆರವುಗೊಳಿಸಿದರು. ಬಳಿಕ ಅವರು ಈದ್ಗಾ ಹಾಗೂ ಇಮಾಮ್ಬಾರವನ್ನು ನೆಲಸಮಗೊಳಿಸಿದರು. ಜಿಲ್ಲಾಡಳಿತದ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಸ್ಥಳೀಯ ಗ್ರಾಮಸ್ಥೆ ಝುಬೈದಾ, ಈ ಪ್ರದೇಶದಲ್ಲಿರುವ ಪ್ರತಿಯೊಬ್ಬರೂ ಇಮಾಮ್ಬಾರಾ ಹಾಗೂ ಈದ್ಗಾವನ್ನು ಬಳಸುತ್ತಾರೆ. ಬಡ ಕುಟುಂಬಗಳು ವಿವಾಹದ ಮೆರವಣಿಗೆ ಸಂದರ್ಭ ಇಲ್ಲಿ ತಂಗುತ್ತಾರೆ ಎಂದಿದ್ದಾರೆ. ಕಾನೂನು ಪ್ರತಿಯೊಬ್ಬರಿಗೂ ಒಂದೇ ಆಗಿದ್ದರೆ, ಈ ಕ್ರಮವನ್ನು ದೇವಾಲಯಗಳಿಗೆ ಕೂಡ ಅನ್ವಯಿಸಬೇಕು ಎಂದು ಝುಬೈದಾ ಹೇಳಿದ್ದಾರೆ.
ಮಂಗಳೂರು ಲಾಠಿ ಚಾರ್ಜ್ ಪ್ರಕರಣದ 101 ಆರೋಪಿಗಳ ಖುಲಾಸೆ
ಮಂಗಳೂರು, ಎ.16: ನಗರ ಪೊಲೀಸ್ ಕಮಿಷನರ್ ಕಚೇರಿಯ ಮುಂದೆ 2017ರ ಎ.4ರಂದು ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಎಲ್ಲಾ 101 ಆರೋಪಿಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಹ್ಮದ್ ಖುರೇಶಿ ಎಂಬಾತನನ್ನು ಅಕ್ರಮವಾಗಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೆ ದೌರ್ಜನ್ಯ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾಗಿದ್ದರು. ಈ ಸಂದರ್ಭ ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಕಲ್ಲುತೂರಾಟ ನಡೆದಿದೆ ಎಂಬ ಆರೋಪದಲ್ಲಿ ಹಲವರ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 101 ಮಂದಿಯ ವಿರುದ್ಧ ಅಂತಿಮ ವರದಿ ಸಲ್ಲಿಸಲಾಗಿತ್ತು. ಆ ಪೈಕಿ ಎರಡು ಪ್ರಕರಣಗಳು ಎರಡನೇ ಜೆಎಂಎಫ್ಸಿ ನ್ಯಾಯಾಲಯ ಮತ್ತು ಇನ್ನೊಂದು ಪ್ರಕರಣದ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಗಳನ್ನು ಸಾಬೀತುಪಡಿಸಲು ಸರಕಾರಿ ಪರ ವಕೀಲರು ವಿಫಲವಾಗಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟು ಪ್ರಕರಣದಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ವಕೀಲರಾದ ಆಸಿಫ್ ಬೈಕಾಡಿ, ಮುಫೀದಾ ರಹ್ಮಾನ್, ಇರ್ಷಾದ್ ಸಖಾಫಿ ಮೊಂಟೆಪದವು, ಅಯಾಝ್ ಚಾರ್ಮಾಡಿ, ಮುಹಮ್ಮದ್ ಆದಿಲ್, ನಿಶಾನ್ ಎಂ.ಕೆ, ರುಬೀನ, ಅಂಸೀನ ವಾದಿಸಿದ್ದರು.
Yadgiri | ಎ.15ರಿಂದ ಹೀಟ್ ವೇವ್ ಯಲ್ಲೋ ಅಲರ್ಟ್: ಮುನ್ನೆಚ್ಚರಿಕೆ ಕ್ರಮಗಳಿಗೆ ಜಿಲ್ಲಾಧಿಕಾರಿ ಸಲಹೆ
ಯಾದಗಿರಿ: ಜಿಲ್ಲೆಯಲ್ಲಿ ಏಪ್ರಿಲ್ 15ರಿಂದ 19ರವರೆಗೆ ಬಿಸಿಗಾಳಿ ತೀವ್ರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ‘ಹೀಟ್ ವೇವ್ ಯಲ್ಲೋ ಅಲರ್ಟ್’ ನೀಡಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬಿಸಿಗಾಳಿ (ಹೀಟ್ ವೇವ್) ಹಾಗೂ ಹೀಟ್ ಸ್ಟ್ರೋಕ್ನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ. ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಸಾಕಷ್ಟು ನೀರು ಕುಡಿಯುವುದು, ಹಗುರವಾದ ಹತ್ತಿ ಬಟ್ಟೆ ಧರಿಸುವುದು, ಟೋಪಿ ಅಥವಾ ಛತ್ರಿ ಬಳಸುವುದು ಅಗತ್ಯ. ಬಿಸಿಲಿನ ಅವಧಿಯಲ್ಲಿ ಶ್ರಮದಾಯಕ ಕೆಲಸಗಳನ್ನು ತಗ್ಗಿಸಬೇಕು ಎಂದು ಸಲಹೆ ನೀಡಲಾಗಿದೆ. ದೇಹದ ನಿರ್ಜಲೀಕರಣ ತಪ್ಪಿಸಲು ಮಜ್ಜಿಗೆ, ನಿಂಬೆ ನೀರು, ಓಆರ್ಎಸ್ ಮುಂತಾದ ದ್ರವ ಪದಾರ್ಥಗಳನ್ನು ಸೇವಿಸಬೇಕು. ಚಹಾ, ಕಾಫಿ, ಮದ್ಯಪಾನ ಹಾಗೂ ಕಾರ್ಬೋನೇಟೆಡ್ ಪಾನೀಯಗಳನ್ನು ಕಡಿಮೆ ಮಾಡಬೇಕು ಎಂದು ಸೂಚಿಸಲಾಗಿದೆ. ಶಿಶುಗಳು, ವೃದ್ಧರು ಹಾಗೂ ದೀರ್ಘಕಾಲದ ಕಾಯಿಲೆ ಇರುವವರು ವಿಶೇಷ ಜಾಗ್ರತೆ ವಹಿಸಬೇಕು. ಅನಾರೋಗ್ಯ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರೈತರು ಮತ್ತು ಕೃಷಿ ಕಾರ್ಮಿಕರು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾತ್ರ ಕೆಲಸ ನಿರ್ವಹಿಸಬೇಕು. ಜಾನುವಾರುಗಳಿಗೆ ಸಾಕಷ್ಟು ನೀರು ಮತ್ತು ನೆರಳು ಒದಗಿಸಬೇಕು ಎಂದು ತಿಳಿಸಲಾಗಿದೆ. ಬಿಸಿಗಾಳಿಯ ಪರಿಣಾಮ ಕಡಿಮೆಗೊಳಿಸಲು ಸಾರ್ವಜನಿಕರು ಸರ್ಕಾರ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ : ಉಡುಪಿ ಜಿಲ್ಲಾ ಸಮಿತಿ ರಚನೆ
ಮೂಳೂರು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ರಿ) ಇದರ ನೂತನ ಉಡುಪಿ ಜಿಲ್ಲಾ ಸಮಿತಿ ರಚಿಸುವ ಸಲುವಾಗಿ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಸಭಾಂಗಣದಲ್ಲಿ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಲ್ರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಳ್ರವರ ದುಆದೊಂದಿಗೆ ಸಭೆಯು ಪ್ರಾರಂಭವಾಯಿತು. ಸಂಸ್ಥೆಯ ಮ್ಯಾನೇಜರ್ ಅಲ್ ಹಾಜ್ ಯು.ಕೆ. ಮುಸ್ತಫ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಕೆ.ಎಸ್.ಸಿ ವಿಝನ್ 30 ಚೇರ್ಮೆನ್ ಹಾತಿಂ ಕೂಳೂರು ಹಾಗೂ ಕೇಂದ್ರ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಅರಮೆಕ್ಸ್ ಹಾಜರಿದ್ದರು. ವಿಝನ್ 30 ಚೇರ್ಮ್ಯಾನ್ ಹಾತಿಂ ಕೂಳೂರು ಮಾತನಾಡಿ ಶುಭಾಶಂಸೆಗೈದರು. ಚುನಾವನಾಧಿಕಾರಿ ಕೇಂದ್ರ ಸಮಿತಿಯ ಸದಸ್ಯ ಅಬ್ದುಲ್ ಅಝೀಝ್ ಮೂಳೂರುರವರ ನೇತೃತ್ವದಲ್ಲಿ ಡಿ.ಕೆ.ಎಸ್.ಸಿ ನೂತನ ಉಡುಪಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ ಕುಂಬೋಳ್, ಡೆವಲಪ್ಮೆಂಟ್ ಚೇರ್ಮೆನ್ ಆಗಿ ಅಬ್ದುಲ್ಲಾಹ್ ಹಾಜಿ ಸೂಪರ್ ಸ್ಟೋರ್, ಕಾಪು ಅಧ್ಯಕ್ಷರಾಗಿ ಹಾಜಿ ಅಬೂಬಕ್ಕರ್ ನೇಜಾರ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಅಹ್ಮದ್ ಕರ್ನಿರೆ ಆಯ್ಕೆಯಾದರು. ಹಣಕಾಸು ಕಾರ್ಯದರ್ಶಿಯಾಗಿ ಎ.ಹೆಚ್ ಅಬ್ದುಲ್ ಖಾದರ್ ಪಡುಬಿದ್ರಿ, ಉಪ ಹಣಕಾಸು ಕಾರ್ಯದರ್ಶಿಯಾಗಿ ನಝೀರ್ ಅಹ್ಮದ್ ಕೋಡಿ ಕನ್ನಂಗಾರ್, ಉಪಾಧ್ಯಕ್ಷರುಗಳಾಗಿ ಕೆ.ಎಚ್. ಮುಹಮ್ಮದ್ ಕನ್ನಂಗಾರ್, ಅಬ್ಬು ಹಾಜಿ ಮೂಳೂರು ಹಾಗೂ ಸಯ್ಯಿದ್ ಅಲಿ ಪಡುಬಿದ್ರಿ ಜೊತೆ ಕಾರ್ಯದರ್ಶಿಗಳಾಗಿ ಮೊಹಿದಿನ್ ಪಡುಬಿದ್ರಿ,(Ex.D.S.P) ಅಬ್ದುಲ್ಲ ಮೂಳೂರು ಹಾಗೂ ಹಮೀದ್ ಯೂಸುಫ್ ಮೂಳೂರು. ಸಂವಹನ ಕಾರ್ಯದರ್ಶಿಯಾಗಿ ವೈ.ಬಿ.ಸಿ. ಬಶೀರ್ ಅಲಿ, ಸಲಹೆಗಾರರಾಗಿ ಇಕ್ಬಾಲ್ ಕಲ್ಯಾಣಪುರ, ಲೆಕ್ಕಪರಿಶೋಧಕರಾಗಿ ಹಮೀದ್ ಅದ್ದು ಮುಂತಾದವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ದ.ಕ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷರಾದ ಮನ್ಸೂರ್ ರಯ್ಯಾನ್ ಕೃಷ್ಣಾಪುರ, ಸಂಘಟನಾ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಹಾಗೂ ಇನ್ನಿತರ ಸದಸ್ಯರು, ಘಟಕಗಳ ನಾಯಕರು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸಾಕ್ ಬೊಳ್ಳಾಯಿ ಕಾರ್ಯಕ್ರಮವನ್ನು ನಿರೂಪಿಸಿ, ಉಡುಪಿ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿ ಫಾರೂಕ್ ಅಹ್ಮದ್ ಕರ್ನಿರೆ ಧನ್ಯವಾದಗೈದರು.
Bidar | ಜಿಲ್ಲೆಯ ಎಲ್ಲಾ ಇಲಾಖೆಗಳು ಕೆ-ಜಿಐಎಸ್ ಆವೃತ್ತಿ 2.0ರ ಪ್ರಯೋಜನ ಪಡೆಯಿರಿ : ಎಡಿಸಿ ಶಿವಾನಂದ್ ಕರಾಳೆ
ಬೀದರ್: ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಸುಧಾರಿತ ಆವೃತ್ತಿಯಾದ ಕೆ-ಜಿಐಎಸ್ 2.0 ಅನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಆಯೋಜಿಸಿದ ಕಾರ್ಯಾಗಾರದಲ್ಲಿ ಎಲ್ಲಾ ಇಲಾಖೆಗಳು ಇದರ ಪ್ರಯೋಜನ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಹೇಳಿದರು. ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ನಡೆದ ಕೆ-ಜಿಐಎಸ್ 2.0 ತಾಂತ್ರಿಕ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಆಸ್ತಿಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ನಿಖರ ಮೇಲ್ವಿಚಾರಣೆಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಅತ್ಯಂತ ಅಗತ್ಯವಾಗಿದೆ. ಕೆ-ಜಿಐಎಸ್ 2.0 ಆವೃತ್ತಿ ಭೂಮಿಯ ಅಂಕಿ-ಅಂಶಗಳು, ನಕ್ಷೆಗಳು ಹಾಗೂ ಇಲಾಖಾವಾರು ದತ್ತಾಂಶಗಳನ್ನು ವೇಗವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡಲಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜೇಶ್ ಎನ್.ಎಲ್. ಅವರು, ಕೆ-ಜಿಐಎಸ್ ಯೋಜನೆಯ ಉದ್ದೇಶಗಳು ಹಾಗೂ ಅಭಿವೃದ್ಧಿ ಕುರಿತು ವಿವರಿಸಿದರು. 2016ರಲ್ಲಿ ಕೆ-ಜಿಐಎಸ್ 1.0 ಜಾರಿಗೆ ಬಂದಿದ್ದು, ಸುಮಾರು 600 ಜಿಐಎಸ್ ಪದರಗಳು ಹಾಗೂ 20 ಲಕ್ಷಕ್ಕೂ ಹೆಚ್ಚು ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಜೊತೆಗೆ 41 ಮೊಬೈಲ್ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸಿ ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ಕೆ-ಜಿಐಎಸ್ ಯೋಜನೆಗೆ 2024ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ ಲಭಿಸಿರುವುದನ್ನು ಉಲ್ಲೇಖಿಸಿ, ಸ್ಥಳೀಯ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಆಧಾರದಲ್ಲಿ ಪರಿಹಾರ ಕಂಡುಕೊಳ್ಳಲು ಈ ತಂತ್ರಜ್ಞಾನ ಸಹಾಯಕವಾಗಲಿದೆ ಎಂದರು. ಕಾರ್ಯಾಗಾರದಲ್ಲಿ ಇ-ಆಡಳಿತ ಇಲಾಖೆಯ ವೈಜ್ಞಾನಿಕ ಅಧಿಕಾರಿಗಳಾದ ಕರುಣಾಕರ್ ಸಂಗನಬಸಪ್ಪ ಹಾಗೂ ಲಕ್ಷ್ಮೀಜಿ ಅವರು ಕೆ-ಜಿಐಎಸ್ 2.0 ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶರಣಪ್ಪ ಕೊಟ್ಟಪ್ಪಗೊಳ್, ಡಿವೈಎಸ್ಪಿ ದೂದಪೀರ್ ಮುಲ್ಲಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Bidar | ಬ್ರೀಮ್ಸ್ನಲ್ಲಿ ಅಕ್ರಮ ನೇಮಕ ಆರೋಪ: ಗುತ್ತಿಗೆ ನೌಕರರ ವಜಾಗೆ ಕರವೇ ಒತ್ತಾಯ
ಬೀದರ್: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಬ್ರೀಮ್ಸ್ ಸಂಸ್ಥೆಯಲ್ಲಿ ಕಾನೂನುಬಾಹಿರವಾಗಿ ನೇಮಕಗೊಂಡಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬ್ರೀಮ್ಸ್ನ ಮಾಜಿ ನಿರ್ದೇಶಕರಾಗಿದ್ದ ಡಾ. ಶಿವಕುಮಾರ್ ಶೆಟಕರ್ ಅವರ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಸುಮಾರು 10ರಿಂದ 12 ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳನ್ನು ಕಾನೂನುಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶುಶ್ರೂಷಕ ಅಧಿಕಾರಿ ಲಿಂಗರಾಜ್ ಹಿರೇಮಠ್, ಟ್ಯೂಟರ್ ಡಾ. ಜೈಸಿಂಗ್ ಡಿ. ಹಾಗೂ ಕಚೇರಿ ಅಧಿಕ್ಷಕ ಶ್ರೀನಿವಾಸ್ ಜಮಾದಾರ್ ಸೇರಿದಂತೆ ಕೆಲವರು ಸೇರಿ ಈ ನೇಮಕಾತಿಗಳನ್ನು ನಡೆಸಿದ್ದಾರೆ ಎಂದು ದೂರಲಾಗಿದೆ. ನೇಮಕಗೊಂಡ ಕೆಲ ಸಿಬ್ಬಂದಿಗಳು ಸಂಸ್ಥೆಯಲ್ಲಿ ನಿಯಮಿತವಾಗಿ ಸೇವೆ ಸಲ್ಲಿಸದೇ, ಅಕ್ರಮವಾಗಿ ಹಾಜರಾತಿ ತೋರಿಸಿ ವೇತನ ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಿಬ್ಬಂದಿಗಳನ್ನು ಗುರುತಿಸಿ 15 ದಿನಗಳೊಳಗೆ ಸೇವೆಯಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಬ್ರೀಮ್ಸ್ ಸಂಸ್ಥೆ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮರ್ಜಾಪುರ್, ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾವ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗೇಶ್ ರಾಯಣ್ಣೂರ್, ಜಿಲ್ಲಾ ಸಹ ಕಾರ್ಯದರ್ಶಿ ಅಲೆಕ್ಸಾಂಡರ್, ಜಿಲ್ಲಾ ಮುಖಂಡ ಸಂಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಗಿರೀಶ್ ಓಂಕಾರೆ, ದಕ್ಷಿಣ ಕ್ಷೇತ್ರದ ಉಪಾಧ್ಯಕ್ಷ ಧನರಾಜ್ ಚಿಟ್ಟಾವಾಡಿ, ದಕ್ಷಿಣ ಕ್ಷೇತ್ರದ ಕಾರ್ಯದರ್ಶಿ ರಾಜಗೊಂಡ, ಅನಿಲ್ ಕಮಠಾಣಾ ಹಾಗೂ ಸುಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ| ಹರ್ಯಾಣದ ಐವರು ಶಾಸಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್
ಚಂಡಿಗಢ, ಎ.15: ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸತೀಶ್ ನಂದಲ್ ಪರವಾಗಿ ಅಡ್ಡ ಮತದಾನ ಮಾಡಿರುವುದಕ್ಕಾಗಿ ಕಾಂಗ್ರೆಸ್ ಹರ್ಯಾಣದ ಐವರು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ರಾಜ್ಯ ಶಿಸ್ತು ಸಮಿತಿಯ ಶಿಫಾರಸು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಔಪಚಾರಿಕ ಅನುಮೋದನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಾರಾಯಣಗಢದ ಶೆಲ್ಲಿ ಚೌಧರಿ, ಸಡೌರದ ರೇಣು ಬಾಲಾ, ರತಿಯಾದ ಜರ್ನೈಲ್ ಸಿಂಗ್, ಹಥಿನ್ನ ಮುಹಮ್ಮದ್ ಇಸ್ರೈಲ್ ಹಾಗೂ ಪುನಹಾನದ ಮುಹಮ್ಮದ್ ಇಲ್ಯಾಸ್ ಅಮಾನತುಗೊಂಡ ಶಾಸಕರಾಗಿದ್ದಾರೆ. ಧರ್ಮಪಾಲ್ ಮಲಿಕ್ ನೇತೃತ್ವದ ಪಕ್ಷದ ರಾಜ್ಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ಗೆ ಅವರ ಪ್ರತಿಕ್ರಿಯೆ ಪರಿಶೀಲಿಸಿದ ಬಳಿಕ ಅಮಾನತು ಮಾಡಲು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಐವರು ಶಾಸಕರಲ್ಲಿ ಶೆಲ್ಲಿ ಚೌಧರಿ, ರೇಣು ಬಾಲಾ ಹಾಗೂ ಜರ್ನೈಲ್ ಸಿಂಗ್ ಅಡ್ಡ ಮತದಾನದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಹಮ್ಮದ್ ಇಲ್ಯಾಸ್ ಹಾಗೂ ಮುಹಮ್ಮದ್ ಇಸ್ರೈಲ್ ಪ್ರತಿಕ್ರಿಯೆ ನೀಡಿಲ್ಲ. ರೇಣು ಬಾಲಾ ಹಾಗೂ ಶೆಲ್ಲಿ ಚೌಧರಿ ಇಬ್ಬರೂ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕಿದ್ದೇವೆ. ತಮ್ಮನ್ನು ವಿನಾ ಕಾರಣ ಸಿಲುಕಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಡ್ಡ ಮತದಾನದ ಆರೋಪವನ್ನು ಜರ್ನೈಲ್ ಸಿಂಗ್ ಕೂಡ ನಿರಾಕರಿಸಿದ್ದಾರೆ. ತಾವು ಮತಗಳನ್ನು ಪರಿಶೀಲಿಸಲು ಪಕ್ಷದಿಂದ ಅಧಿಕಾರ ಪಡೆದಿದ್ದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಮತಗಳನ್ನು ತೋರಿಸಿರುವುದಾಗಿ ಮೂವರು ಶಾಸಕರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ‘‘ಗಂಭೀರ ಅಶಿಸ್ತು’’ ಪ್ರಕರಣ ಎಂದು ಕರೆದ ಹರ್ಯಾಣದ ಕಾಂಗ್ರೆಸ್ ಅಧ್ಯಕ್ಷ ರಾವ್ ನರೇಂದರ್ ಸಿಂಗ್, ಪಕ್ಷದ ಅಧಿಕೃತ ಅಭ್ಯರ್ಥಿ ಕರಮ್ವೀರ್ ಸಿಂಗ್ ಬೌದ್ಧ್ ವಿರುದ್ಧ ಮತ ಚಲಾಯಿಸಿರುವುದರಿಂದ ಈ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಗಳಿ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದರು.
ಅಮೆರಿಕದ ನೆಲೆಗಳನ್ನು ಗುರಿಯಾಗಿಸಲು ಚೀನಾದ ಬೇಹುಗಾರಿಕಾ ಉಪಗ್ರಹ ಬಳಸಿದ ಇರಾನ್: ವರದಿ
ನ್ಯೂಯಾರ್ಕ್, ಎ.16: ಇರಾನ್ 2024ರ ಅಂತ್ಯದಲ್ಲಿ ರಹಸ್ಯವಾಗಿ ಚೀನಾದ ಬೇಹುಗಾರಿಕಾ ಉಪಗ್ರಹವನ್ನು ಪಡೆದಿದ್ದು, ಇದು ಪ್ರಸ್ತುತ ಯುದ್ಧದ ಸಂದರ್ಭದಲ್ಲಿ ಮಧ್ಯಪ್ರಾಚ್ಯದಾದ್ಯಂತ ಅಮೆರಿಕ ಮಿಲಿಟಿರಿ ನೆಲೆಗಳನ್ನು ಗುರಿಯಾಗಿಸಲು ನೆರವಾಗಿತ್ತು ಎಂದು `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ. `ಅರ್ಥ್ ಐ ಕಂಪೆನಿ' ಎಂಬ ಚೀನೀ ಸಂಸ್ಥೆ ನಿರ್ಮಿಸಿದ್ದ `ಟಿಇಇ-01ಬಿ' ಉಪಗ್ರಹವನ್ನು ಚೀನಾ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಬಳಿಕ ಅದನ್ನು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಖರೀದಿಸಿತ್ತು ಎಂದು ಸೋರಿಕೆಯಾದ ಇರಾನ್ ಮಿಲಿಟರಿ ದಾಖಲೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ. ಇರಾನ್ನ ಮಿಲಿಟರಿ ಕಮಾಂಡರ್ಗಳು ಉಪಗ್ರಹವನ್ನು ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಮೇಲ್ವಿಚಾರಣೆ ಮಾಡಲು ನಿರ್ದೇಶಿಸಿದರು ಎಂದು ಉಪಗ್ರಹ ಚಿತ್ರಣ ಮತ್ತು ಕಕ್ಷೆಯ ವಿಶ್ಲೇಷಣೆಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ. ಒಪ್ಪಂದದ ಭಾಗವಾಗಿ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಇತರ ಪ್ರದೇಶಗಳಾದ್ಯಂತ ವಿಸ್ತರಿಸಿರುವ ನೆಟ್ವರ್ಕ್ನೊಂದಿಗೆ ಬೀಜಿಂಗ್ ಮೂಲದ ಉಪಗ್ರಹ ನಿಯಂತ್ರಣ ಮತ್ತು ಡೇಟಾ ಸೇವೆಗಳ ಪೂರೈಕೆದಾರ `ಎಂಪೋಸ್ಯಾಟ್' ನಿರ್ವಹಿಸುವ ಕೇಂದ್ರಗಳಿಗೆ ಐಆರ್ಜಿಸಿ ಪ್ರವೇಶವನ್ನು ಪಡೆದುಕೊಂಡಿದೆ ಎಂದು ವರದಿ ಹೇಳಿದೆ. ಚೀನಾದ ವಿದೇಶಾಂಗ ಇಲಾಖೆ ವರದಿಯನ್ನು ನಿರಾಕರಿಸಿದೆ. ಇತ್ತೀಚೆಗೆ, ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಚೀನಾದ ಹೆಸರಿಗೆ ಕಳಂಕ ತರುವ ಕಾರ್ಯವನ್ನು ನಡೆಸುತ್ತಿದ್ದು, ಈ ವರದಿ ಇಂತಹ ಪ್ರಯತ್ನಗಳ ಭಾಗವಾಗಿದೆ ಎಂದು ವಿದೇಶಾಂಗ ಇಲಾಖೆ ಖಂಡಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತುಕತೆಗೆ ನಿರಾಕರಿಸಿದ ಲೆಬನಾನ್ ಅಧ್ಯಕ್ಷ
ಬೈರೂತ್, ಎ.16: ಯೋಜಿತ ಸಭೆಗೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಲು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ನಿರಾಕರಿಸಿದ್ದಾರೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಗುರುವಾರ ವರದಿ ಮಾಡಿದೆ. ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಇಸ್ರೇಲ್ ಮತ್ತು ಲೆಬನಾನ್ ನಾಯಕರ ನಡುವೆ ನೇರ ಮಾತುಕತೆ ನಡೆಯಲಿದೆ. ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಸ್ಥಗಿತಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದರು. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತನಾಡಲು ಲೆಬನಾನ್ ಅಧ್ಯಕ್ಷರು ನಿರಾಕರಿಸಿದ್ದಾರೆ. ಈ ವಿಷಯವನ್ನು ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಜೊತೆ ಫೋನ್ನಲ್ಲಿ ನಡೆಸಿದ ಮಾತುಕತೆ ಸಂದರ್ಭ ಸ್ಪಷ್ಟಪಡಿಸಿದ್ದಾರೆ. ಮತ್ತು ಅಮೆರಿಕವು ಲೆಬನಾನ್ನ ಸ್ಥಿತಿಯನ್ನು ಅರ್ಥ ಮಾಡಿಕೊಂಡಿದೆ ಎಂದು ಲೆಬನಾನ್ ಸರಕಾರದ ಮೂಲಗಳು ಹೇಳಿವೆ.
Humnabad | ವಿವಿಧ ಕಳ್ಳತನ ಪ್ರಕರಣ : 34.55 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ, 26 ಆರೋಪಿಗಳ ಬಂಧನ
ಹುಮನಾಬಾದ್: ಚಿಟಗುಪ್ಪಾ, ಬಸವಕಲ್ಯಾಣ, ಮುಡಬಿ, ಮಂಠಾಳ್ ಹಾಗೂ ಹುಮನಾಬಾದ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ, ಒಟ್ಟು 34 ಲಕ್ಷ 55 ಸಾವಿರ ರೂ. ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ 26 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ 4.15 ಲಕ್ಷ ರೂ. ಮೌಲ್ಯದ ಕೇಬಲ್ ವೈರ್, ಕಬ್ಬಿಣದ ರಾಡು, ಮೋಟಾರ್ ಸೇರಿದಂತೆ ಸಾಮಾನುಗಳನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಲಾಗಿದೆ ಎಂದರು. ಹಂದಿಕೇರಾ ಗ್ರಾಮದಲ್ಲಿ 2 ಎಮ್ಮೆ ಹಾಗೂ 1 ಕೋಣ ಕಳ್ಳತನ ಪ್ರಕರಣದಲ್ಲಿ 3.50 ಲಕ್ಷ ರೂ. ಮೌಲ್ಯದ ಒಂದು ಎಮ್ಮೆ, 1 ಲಕ್ಷ ರೂ. ನಗದು ಮತ್ತು ಒಂದು ಗೂಡ್ಸ್ ವಾಹನವನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ. ಮಾಣಿಕ್ ನಗರದಲ್ಲಿ ಮನೆ ಬೀಗ ಮುರಿದು 8 ಲಕ್ಷ ರೂ. ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 7.52 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಚಿಟಗುಪ್ಪಾ ಠಾಣೆ ವ್ಯಾಪ್ತಿಯ ಹಳ್ಳಿಖೇಡ (ಕೆ) ಗ್ರಾಮದಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 5.50 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಮಹಿಳೆಯ ಕೊರಳಿಂದ ಚಿನ್ನದ ಸರ ಕಳವು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 80 ಸಾವಿರ ರೂ. ಮೌಲ್ಯದ ಸರವನ್ನು ವಶಪಡಿಸಿಕೊಂಡಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಬಸವಕಲ್ಯಾಣ ಠಾಣೆ ವ್ಯಾಪ್ತಿಯಲ್ಲಿ ಸೋಯಾಬಿನ್ ಕಳ್ಳತನ ಹಾಗೂ 70 ಸಾವಿರ ರೂ. ಜೇಬು ಕಳ್ಳತನ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 80 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯ 40 ಸಾವಿರ ರೂ. ಕಳ್ಳತನ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು 35 ಸಾವಿರ ರೂ. ಜಪ್ತಿ ಮಾಡಿ ನೋಟಿಸ್ ನೀಡಿ ಬಿಡಲಾಗಿದೆ. ಮುಡಬಿ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಆಕಳು ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 1 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಾರ್ನಲ್ಲಿ ನಡೆದ 22 ಸಾವಿರ ರೂ. ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 25 ಸಾವಿರ ರೂ. ಮೌಲ್ಯದ ನಗದು ಮತ್ತು ಸ್ಕೂಟಿ ವಶಪಡಿಸಿಕೊಂಡಿದ್ದಾರೆ. ಪಲ್ಸರ್ ಬೈಕ್ ಕಳ್ಳತನ ಪ್ರಕರಣದಲ್ಲಿ 80 ಸಾವಿರ ರೂ. ಮೌಲ್ಯದ ಬೈಕ್ ಕಲಬುರಗಿ ಗಂಜ್ನಲ್ಲಿ ಪತ್ತೆಯಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ. ಮಂಠಾಳ್ ಠಾಣೆ ವ್ಯಾಪ್ತಿಯಲ್ಲಿ 70 ಸಾವಿರ ರೂ. ಮೌಲ್ಯದ ಬೈಕ್ ಕಳ್ಳತನ ಪ್ರಕರಣದಲ್ಲಿ ಬೆರಳು ಮುದ್ರೆಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬೈಕ್ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ ಲಭ್ಯ
ಉಡುಪಿ, ಎ.16: ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಉಡುಪಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ವಿಭಾಗದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಈಗ ತನ್ನ ಸೇವಾವ್ಯಾಪ್ತಿಯನ್ನು ವಿಸ್ತರಿಸಿದ್ದು ಸಮಾಜದ ಶ್ರಮಜೀವಿಗಳಾದ ಕಾರ್ಮಿಕ ವರ್ಗದವರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ನೌಕರರ ರಾಜ್ಯ ವಿಮಾ (ಇಎಸ್ಐ) ಸೌಲಭ್ಯವನ್ನು ಅಧಿಕೃತವಾಗಿ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿವಿ ಭಂಡಾರಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಆಸ್ಪತ್ರೆಯು ಇಎಸ್ಐ ನಿಯಮ ಗಳನ್ನು ಅಕ್ಷರಶಃ ಪಾಲಿಸುವ ಮೂಲಕ, ಅದರ ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ಅರ್ಹ ಫಲಾನುಭವಿಗಳಿಗೆ ಅತ್ಯಂತ ಪ್ರಾಮಾಣಿಕ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲು ಬದ್ಧವಾಗಿದೆ. ವಿಮೆ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ಗೌರವಯುತ ಮತ್ತು ನಗದು ರಹಿತ ಚಿಕಿತ್ಸೆ ತಲುಪಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ಪ್ರಮುಖ ಚಿಕಿತ್ಸಾ ಸೌಲಭ್ಯಗಳನ್ನು ವಿವರಿಸಿದ ಅವರು, ಮನೋವೈದ್ಯಕೀಯ ಚಿಕಿತ್ಸೆ, ಅಮಲು ಪದಾರ್ಥ ವಿಮುಕ್ತಿ ಚಿಕಿತ್ಸೆ, ಆಟಿಸಂ ಮತ್ತು ಕಲಿಕಾ ನ್ಯೂನತೆಗಳ ಚಿಕಿತ್ಸೆ, ವಾಕ್ ಚಿಕಿತ್ಸೆ, ವೃತ್ತಿಪರ ಚಿಕಿತ್ಸೆ, ಕಣ್ಣಿನ ಮತ್ತು ದಂತ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸಾ ಸೇವೆ ಇಲ್ಲಿ ಲಭ್ಯವಿದೆ ಎಂದರು. ಆಸ್ಪತ್ರೆ ಈಗಾಗಲೇ ಸರ್ಕಾರದ ಹಲವಾರು ಮಹತ್ವಾಕಾಂಕ್ಷಿ ಯೋಜನೆ ಗಳೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆ, ಐಟಿಡಿಪಿ ಹಾಗೂ ಕೊಂಕಣ ರೈಲ್ವೆ ಸಿಬ್ಬಂದಿಗಳ ಆರೋಗ್ಯ ಸೇವೆ, ಕರ್ನಾಟಕ ಸರಕಾರ ಸಹಭಾಗಿತ್ವದ ‘ಮಾನಸಧಾರ’ ಯೋಜನೆ, ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಇರುವ ಸರಕಾರದ ಇಸಿಆರ್ಸಿ ಕೇಂದ್ರದ ನಿರ್ವಹಣೆ (ಬೀದಿಯಲ್ಲಿ ಅಲೆದಾಡುವ ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ ಚಿಕಿತ್ಸೆ ನೀಡುವುದು) ಆಸ್ಪತ್ರೆ ಮಾಡುತ್ತಿದೆ ಎಂದರು. ಇಎಸ್ಐ ಸೌಲಭ್ಯದ ಪ್ರಯೋಜನ ಪಡೆಯಲು ಇಚಿಸುವ ಫಲಾನುಭವಿ ಗಳು ತಮ್ಮ ಇಎಸ್ಐ ಕಾರ್ಡ್ ಇ-ಪೆಹಚಾನ್ ಕಾರ್ಡ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ಆಸ್ಪತ್ರೆಯನ್ನು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ. ದೂರವಾಣಿ: 0820-2535299 / 2535399 ಸಂಪರ್ಕಿಸಬಹುದು ಎಂದು ನಾಡಿನ ಖ್ಯಾತ ಮನೋವೈದ್ಯರಾದ ಡಾ.ಭಂಡಾರಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರುಮನೆ, ಡಾ.ದೀಪಕ್ ಮಲ್ಯ, ಡಾ.ಮಾನಸ್ ಇ.ಆರ್ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.
ಡಾ.ಎಂ.ಎ.ಸಲೀಂ ಅವಧಿ ವಿಸ್ತರಣೆ: 2027ರ ಆ.29ರ ವರೆಗೆ ಡಿಜಿ-ಐಜಿಪಿಯಾಗಿ ಕರ್ತವ್ಯ
ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಎಂ.ಎ.ಸಲೀಂ ಅವರ ಸೇವಾ ಅವಧಿಯನ್ನು ವಿಸ್ತರಿಸಿ ರಾಜ್ಯ ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿದ್ದು, 2027ರ ಆಗಸ್ಟ್ 29ರವರೆಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ. 1993ರ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿರುವ ಡಾ.ಎಂ.ಎ.ಸಲೀಂ ಅವರು, ಈ ಹಿಂದೆ ಅಪರಾಧ ತನಿಖಾ ದಳ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ(ಡಿಜಿಪಿ) ಸೇವೆ ಸಲ್ಲಿಸಿದ್ದರು.
Raichur | ಬಿಎಸ್ಎನ್ಎಲ್ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ವಿಳಂಬ: ಪ್ರತಿಭಟನೆ
ರಾಯಚೂರು: ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಂಸ್ಥೆಗಳಿಂದ ನಿವೃತ್ತರಾದ ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ನೀಡುವಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಅಖಿಲ ಭಾರತ ಬಿಎಸ್ಎನ್ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಿಂಚಣಿದಾರರು, ಫೆಬ್ರವರಿ 27ರಂದು ಹೊರಡಿಸಲಾದ ಡಿಪಿಇ ಆದೇಶವನ್ನು ತಕ್ಷಣ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಕೈಗಾರಿಕಾ ತುಟ್ಟಿ ಭತ್ಯೆ ಪರಿಷ್ಕರಣೆ ಮಾಡುವ ಪದ್ಧತಿ ಇದ್ದರೂ, ಈ ಬಾರಿ ಅನಗತ್ಯ ವಿಳಂಬವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 1997, 2007 ಹಾಗೂ 2017ರ ವೇತನ ಮಾಪಕಗಳ ಅಡಿಯಲ್ಲಿ ಸಿಪಿಎಸ್ಇ ಉದ್ಯೋಗಿಗಳಿಗೆ ಜನವರಿ 1ರಿಂದ ಅನ್ವಯವಾಗುವ ಐಡಿಎ ದರಗಳನ್ನು ನಿಗದಿಪಡಿಸಲಾಗಿದೆ. 2007ರ ವೇತನ ಮಾಪಕಕ್ಕೆ ಅನುಗುಣವಾಗಿ ಡಿಒಟಿ (ಐಡಿಎ) ಪಿಂಚಣಿದಾರರು ಡಿಆರ್ ಹೆಚ್ಚಳಕ್ಕೆ ಅರ್ಹರಾಗಿದ್ದಾರೆ. ಆದಾಗ್ಯೂ, ಸಂಬಂಧಿತ ದೂರಸಂಪರ್ಕ ಇಲಾಖೆ ಇನ್ನೂ ಆದೇಶ ಜಾರಿಗೆ ತರದಿರುವುದು ಲಕ್ಷಾಂತರ ಪಿಂಚಣಿದಾರರಲ್ಲಿ ಆತಂಕ ಮೂಡಿಸಿದೆ ಎಂದು ತಿಳಿಸಿದರು. ದೇಶಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಪಿಂಚಣಿದಾರರು ಇದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಫೆ.27ರ ಆದೇಶವನ್ನು ತಕ್ಷಣ ಜಾರಿಗೆ ತರಬೇಕು, ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಿದ ಡಿಆರ್ ನೀಡಬೇಕು, ಆದೇಶದ ಪ್ಯಾರಾ 5 ಅನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ತುಟ್ಟಿ ಪರಿಹಾರವನ್ನು ಸ್ವಯಂಚಾಲಿತವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಏಪ್ರಿಲ್ 30ರಂದು ದೇಶಾದ್ಯಂತ ಸಿಸಿಎ/ಬಿಎಸ್ಎನ್ಎಲ್ ಕಚೇರಿಗಳ ಮುಂದೆ ಬೃಹತ್ ಶಾಂತಿಯುತ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ವಲಯ ಉಪಾಧ್ಯಕ್ಷ ಎಸ್.ವಿ.ಅರಳಿ, ಜಿಲ್ಲಾಧ್ಯಕ್ಷ ಸಿದ್ದಪ್ಪ, ಜಿಲ್ಲಾ ಕಾರ್ಯದರ್ಶಿ ಸೈಯದ್ ಅಕ್ಬರ್ ಹುಸೇನ್, ಖಜಾಂಚಿ ಮೊಹ್ಮದ್ ಯೂನೂಸ್, ಗೌರವಾಧ್ಯಕ್ಷ ಬಸವರಾಜ, ಬಾಬುಲಾಲ್, ಮುಕ್ತಾ ಯರನಾಕರ ಸೇರಿದಂತೆ ಅನೇಕರಿದ್ದರು.
ಕುಂದಾಪುರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಇಚ್ಛಾಶಕ್ತಿ ತೋರದ ಅಧಿಕಾರಿಗಳ ವಿರುದ್ಧ ಶಾಸಕರ ಆಕ್ರೋಶ
ಕುಂದಾಪುರ, ಎ.16: ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೂರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಪ್ರಸ್ತಾಪಗೊಂಡ ಸಮಸ್ಯೆಗಳಿಗೆ ಇವತ್ತಿಗೂ ಪರಿಹಾರ ಸಿಕ್ಕಿಲ್ಲ. ಕಳೆದ ಸಭೆಗೂ ಇಂದಿನ ಸಭೆಗೂ ನಡುವೆ ಕೇವಲ ಪತ್ರ ವ್ಯವಹಾರ ನಡೆದಿದ್ದು ಬಿಟ್ಟರೆ ಬೇರೆನೂ ಪ್ರಗತಿ ಆಗಿಲ್ಲ. ಪತ್ರ ಬರೆದು ಸುಮ್ಮನೆ ಕುಳಿತರೆ ಹೇಗೆ? ಸಮಸ್ಯೆ ಪರಿಹಾರಕ್ಕೆ ಇಚ್ಚಾಶಕ್ತಿ ತೋರಿಸುತ್ತಿಲ್ಲ. ಸಭೆಯಲ್ಲಿ ಪ್ರತಿಬಾರಿ ಅದೇ ಸಮಸ್ಯೆಗಳನ್ನು ಮತ್ತೆ ಮತ್ತೆ ಹೇಳಿದರೆ ಏನು ಮಾಡಲು ಸಾಧ್ಯ ಎಂದು ಕುಂದಾಪುರ ಶಾಸಕ ಕಿರಣ್ಕುಮಾರ್ ಕೊಡ್ಗಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಜೆಜೆಎಂ ಯೋಜನೆಯಡಿ 3 ವರ್ಷಗಳಿಂದ ಏನೂ ಕೆಲಸ ಆಗಿಲ್ಲ. ಅವರಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಒಂದು ಹೆಜ್ಜೆ ಕೂಡ ಮುಂದೆ ಹೋಗಿಲ್ಲ, ಎಲ್ಲ ಕಡೆ ಪೈಪ್ಲೈನ್ ಆಗಿದೆ ಬಿಟ್ಟರೆ ನೀರಿಲ್ಲ. ಯಾವುದಕ್ಕೂ ಒಂದು ಪ್ಲಾನ್ ಇಲ್ಲ. ಭೂಸ್ವಾಧೀನ ಮಾಡಿಕೊಂಡಿಲ್ಲ. ಹೊಸ ಟ್ಯಾಂಕ್ ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಪೈಪ್ಲೈನ್ ಮಾಡಿದ ಬಳಿಕ ಮೀಸಲು ಅರಣ್ಯ ಅನುಮತಿಗೆ ಬರೆದರೆ ಹೇಗೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿ ಎಂದರು. ಕೋಟೇಶ್ವರದಲ್ಲಿ ಹಾನಿಯಾದ 280 ಮೀ. ಪೈಪ್ಲೈನ್ನ್ನು ಗ್ರಾ.ಪಂ. ಮೂಲಕ ಸರಿಪಡಿಸಲಾಗಿದೆ ಎಂದು ಕೋಟೇಶ್ವರ ಪಿಡಿಒ ಹೇಳಿದರೆ, ಗೋಪಾಡಿಯಲ್ಲಿ 340 ಮೀ. ಪೈಪ್ಲೈನ್ ಹಾನಿಯಾಗಿದ್ದು, ನೀರು ಸರಬರಾಜು ಮಾಡುವ ಬಾವಿಯಲ್ಲಿ ಎಪ್ರಿಲ್ ಅಂತ್ಯಕ್ಕಾಗುವಷ್ಟು ನೀರಿದ್ದು, ಮೇನಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಗೋಪಾಡಿ ಪಿಡಿಒ ಹೇಳಿದರು. ಗೋಪಾಡಿಯಲ್ಲಿ ಶಾಲೆ ಸಮೀಪ ಟ್ಯಾಂಕ್ ನಿರ್ಮಿಸಲು ಸ್ಥಳೀಯರ ಆಕ್ಷೇಪವಿದ್ದು, ಕೋಟೇಶ್ವರದ ಕುಂಬ್ರಿ ಭಾಗದಲ್ಲಿ ನೀರು ಕಲುಷಿತವಾಗಿದೆ ಎಂದು ಶಾಸಕರು ಸಭೆಯ ಗಮನಕ್ಕೆ ತಂದರು. ಬೀಜಾಡಿಯಲ್ಲಿ ಕುಡಿಯುವ ನೀರು ಸರಬರಾಜು ಬಾವಿಯನ್ನು ಆಳ ಗೊಳಿಸಬೇಕು ಎಂದು ಬೀಜಾಡಿ ಪಿಡಿಒ ಹೇಳುತ್ತಿದ್ದಂತೆಯೇ, ಕಳೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಈಗ ಮತ್ತೆ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಗೊಂಡರು. ಮಲ್ಯಾಡಿಯಲ್ಲಿ ತೆರೆದ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದೆ. ಕೊರ್ಗಿ ಗ್ರಾಮದ ಕುಂಜನಕಟ್ಟೆ ಎಂಬಲ್ಲಿ ಬಾವಿಗೆ ಫಿಲ್ಟರ್ ಅಳವಡಿಸಬೇಕು. ಗುಡ್ಡಟ್ಟು ಎಂಬಲ್ಲಿ ಬಾವಿಗೆ ಫಿಲ್ಟರ್ ಅಳವಡಿಸಬೇಕು. ಯಡಾಡಿ- ಮತ್ಯಾಡಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ, ಮಡಾಮಕ್ಕಿ-ಶೇಡಿಮನೆ ಭಾಗದಲ್ಲಿ ನೀರಿನ ಸಮಸ್ಯೆ ಇದೆ ಎಂದು ಪಿಡಿಒಗಳು ಸಭೆಯ ಗಮನಕ್ಕೆ ತಂದರು. ಗಿಳಿಯಾರು ಭಾಗದಲ್ಲಿ ನೀರಿನ ಸಮಸ್ಯೆ ಇದ್ದು 2 ದಿನಕ್ಕೊಮ್ಮೆ ನೀರು ನೀಡಲಾಗುತ್ತಿದೆ. ಐರೋಡಿಯಲ್ಲಿ ದಿನ ಬಿಟ್ಟು ದಿನ ನೀರು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಆವರ್ಸೆ ಗ್ರಾಮದ ನಾಲ್ಕು ಟ್ಯಾಂಕ್ಗಳಿಗೆ ವಾರಾಹಿ ನೀರಿನ ಹರಿವು ತುಂಬಾ ಕಡಿಮೆಯಿದ್ದು, ಟ್ಯಾಂಕ್ ತುಂಬಲು ತುಂಬಾ ಸಮಯ ಬೇಕಾಗುತ್ತದೆ. ನೀರು ರಭಸವಾಗಿ ಬರುವಂತೆ ಮಾಡಬೇಕು ಎಂದು ಪಿಡಿಒ ಸಭೆಯ ಗಮನಕ್ಕೆ ತಂದರು. ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್, ಕುಂದಾಪುರ ಇಒ ಮಹೇಶ ಕೆ.ಜಿ., ಬ್ರಹ್ಮಾವರ ಇಒ ಎಚ್.ವಿ. ಇಬ್ರಾಹಿಂಪುರ, ಕಾರ್ಕಳ ಇಒ ಪ್ರಶಾಂತ್, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಉದಯ ಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.
ಲೆಬನಾನ್–ಇಸ್ರೇಲ್ ನಡುವೆ 10 ದಿನಗಳ ಕದನ ವಿರಾಮ ಒಪ್ಪಂದ ಜಾರಿ: ಡೊನಾಲ್ಡ್ ಟ್ರಂಪ್ ಘೋಷಣೆ
ವಾಷಿಂಗ್ಟನ್, ಎ.16: ಲೆಬನಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಗೆ ತಾತ್ಕಾಲಿಕ ಶಮನವಾಗಿ 10 ದಿನಗಳ ಕದನ ವಿರಾಮ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಟ್ರೂತ್ ಸೋಷಿಯಲ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ‘ಬೀಬಿ’ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದ್ದು, ಕದನ ವಿರಾಮ ಒಪ್ಪಂದಕ್ಕೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. “ಲೆಬನಾನ್ ಸ್ಥಳೀಯ ಕಾಲಮಾನ ರಾತ್ರಿ 12 ಗಂಟೆಯ ನಂತರ 10 ದಿನಗಳ ಕಾಲ ಕದನ ವಿರಾಮ ಜಾರಿಯಾಗಲಿದೆ. ಮಂಗಳವಾರ, 34 ವರ್ಷಗಳ ಬಳಿಕ ಮೊದಲ ಬಾರಿಗೆ ಲೆಬನಾನ್ ಮತ್ತು ಇಸ್ರೇಲ್ ಪ್ರತಿನಿಧಿಗಳು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಚರ್ಚೆ ನಡೆಸಿದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರೊಂದಿಗೆ ಶಾಶ್ವತ ಕದನ ವಿರಾಮಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ”, ಎಂದು ಟ್ರಂಪ್ ತಿಳಿಸಿದ್ದಾರೆ. “ವಿಶ್ವದ ವಿವಿಧ ಭಾಗಗಳಲ್ಲಿ ಒಂಭತ್ತು ಯುದ್ಧಗಳನ್ನು ನಿಲ್ಲಿಸುವಲ್ಲಿ ಭಾಗಿಯಾಗಿರುವುದು ಗೌರವದ ಸಂಗತಿ. ಇದು ನನ್ನ 10ನೇ ಪ್ರಯತ್ನವಾಗಿದ್ದು, ಇದನ್ನೂ ಅಂತ್ಯಗೊಳಿಸಲು ಬದ್ಧನಾಗಿದ್ದೇನೆ” ಎಂದು ಟ್ರಂಪ್ ಅವರು ಹೇಳಿದ್ದಾರೆ.
Raichur | ಜನನ–ಮರಣ ಪ್ರಮಾಣಪತ್ರ ವಿಭಾಗದಲ್ಲಿ ಅವ್ಯವಸ್ಥೆ ಆರೋಪ : ಕ್ರಮಕ್ಕೆ ಕರವೇಯಿಂದ ಆಗ್ರಹ
ರಾಯಚೂರು: ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಹಾಗೂ ಅಧಿಕ ಶುಲ್ಕ ವಸೂಲಿ ಆರೋಪಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾ ಘಟಕದವರು ಗುರುವಾರ ಜಿಲ್ಲಾಡಳಿತ ಭವನದ ಎದುರು ಮನವಿ ಸಲ್ಲಿಸಿದರು. ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ಸಿಬ್ಬಂದಿಗಳು ಸಮರ್ಪಕ ಪರಿಶೀಲನೆ ನಡೆಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದರಿಂದ ಜನರು ಹಲವು ಬಾರಿ ಕಚೇರಿಗೆ ಸುತ್ತಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ, ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ ಎಂದು ದೂರಿದರು. ಮಹಬೂಬ್ ಪಾಶಾ ಅವರ ಜನನ ಪ್ರಮಾಣಪತ್ರ ಪ್ರಕರಣವನ್ನು ಉದಾಹರಿಸಿ, ಕೋರ್ಟ್ ಆದೇಶದಂತೆ ಸಲ್ಲಿಸಿದ ಅರ್ಜಿಯಲ್ಲಿಯೂ ತಪ್ಪು ಮಾಹಿತಿಯನ್ನು ನಮೂದಿಸಿ ಪ್ರಮಾಣಪತ್ರ ನೀಡಲಾಗಿದೆ. ನಂತರ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೂ ಮತ್ತೆ ಮತ್ತೆ ತಪ್ಪುಗಳನ್ನು ಮಾಡಲಾಗುತ್ತಿದ್ದು, ಪ್ರತಿ ಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದೇ ರೀತಿ ಹಲವು ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ದಾಖಲೆಗಳನ್ನು ನಮೂದಿಸಿ ನಂತರ ತಿದ್ದುಪಡಿ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ದಾಖಲೆಗಳಿಲ್ಲದಿದ್ದರೆ ರೂ.500 ರಿಂದ 1000ರವರೆಗೆ ಲಂಚ ಪಡೆದು ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಖಲೀಲ್ ಪಾಷಾ, ರಾಚಯ್ಯ ಸ್ವಾಮಿ, ಬಂದೇನವಾಜ್, ಜಾಫರ್, ಸೈಯದ್ ಮನ್ಸೂರ್, ಮನ್ನಾನ್, ಫಾರೂಕ್, ತಾಹೇರ್, ಸುದರ್ಶನರೆಡ್ಡಿ, ಈರಣ್ಣ, ಅಬ್ದುಲ್ ಹಬೀಬ್, ಮೌಲಾ, ಬಾಬು, ಗುರು, ಪಾಂಡುರಂಗ, ಮಹೆಬೂಬ್, ಹುಸೇನ್, ಬಾಬಾಫಕ್ರುದ್ದಿನ್, ಆನಂದ, ಶಕ್ಷಾವಲಿ, ಸೈಯದ್ ಮಹೆಬೂಬ್, ಸಾದೀಕ್, ನಿಸಾರ್ ಸೇರಿದಂತೆ ಅನೇಕರಿದ್ದರು.
ಕ್ಷೇತ್ರ ಮರುವಿಂಗಡಣೆ ಮೂಲಕ ಗೆಲ್ಲುವ ಕ್ಷೇತ್ರಗಳನ್ನು ಹೆಚ್ಚಿಸಲು ಬಿಜೆಪಿಯಿಂದ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ ಆರೋಪ
ಹೊಸದಿಲ್ಲಿ, ಎ. 16: ದೋಷಪೂರಿತ ಕ್ಷೇತ್ರ ಮರುವಿಂಗಡಣೆ ಮಸೂದೆ ಮೂಲಕ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ತಾನು ಗೆಲ್ಲುವ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ. ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವ ಸೋಗಿನಲ್ಲಿ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಪುನರ್ ರೂಪಿಸಲು ಈ ಮಸೂದೆಯು ಅವಕಾಶ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ‘‘ಮಹಿಳಾ ಮೀಸಲಾತಿಯ ಸೋಗಿನಲ್ಲಿರುವ ದೋಷಪೂರಿತ ಕ್ಷೇತ್ರ ಮರುವಿಂಗಡಣಾ ಮಸೂದೆಗಳು ಸಂಸತ್ತನ್ನು ಅಪಹರಿಸಲು ಪ್ರತಿಪಕ್ಷವು ಬಿಡುವುದಿಲ್ಲ. ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯ ವಿರುದ್ಧ ನಾವು ಹೋರಾಡುತ್ತೇವೆ’’ ಎಂದು ಅವರು ಹೇಳಿದರು. ‘‘ಕ್ಷೇತ್ರಗಳನ್ನು ಪುನರ್ವಿಂಗಡಿಸಿ ಆಡಳಿತಾರೂಢ ಪಕ್ಷವು ಪ್ರಬಲವಾಗಿರುವ ಪ್ರದೇಶಗಳಲ್ಲಿ ಸ್ಥಾನಗಳನ್ನು ಹೆಚ್ಚಿಸುವ ಯೋಜನೆಯನ್ನು ಸರಕಾರ ಹೊಂದಿದೆ’’ ಎಂದು ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು. ‘‘ಹೀಗೆ ಮಾಡಲು ಅವರು ನೆಪವಾಗಿ ಮಹಿಳಾ ಮೀಸಲಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ, ಅವರು ಈಗಾಗಲೇ 2023ರಲ್ಲಿ ತಂದಿರುವ ಸಾಂವಿಧಾನಿಕ ತಿದ್ದುಪಡಿಗಳಿಗೆ ಮತ್ತೆ ತಿದ್ದುಪಡಿಗಳನ್ನು ತರುತ್ತಿದ್ದಾರೆ’’ ಎಂದು ಅವರು ಬೆಟ್ಟು ಮಾಡಿದರು.
Rohit Sharma Injury- ಐಪಿಎಲ್ 2026ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಮುಂಬೈ ಇಂಡಿಯನ್ಸ್ನ ರೋಹಿತ್ ಶರ್ಮಾ ಗಾಯದ ಕಾರಣ ಹೊರಗುಳಿದಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹ್ಯಾಮ್ಸ್ಟ್ರಿಂಗ್ ಸಮಸ್ಯೆಗೆ ಒಳಗಾಗಿದ್ದ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ರಾಂತಿ ಪಡೆದಿದ್ದಾರೆ. ರೋಹಿತ್ ಚೇತರಿಸಿಕೊಳ್ಳಲು ಇನ್ನು ಎರಡು ಪಂದ್ಯಗಳ ಕಾಲಾವಕಾಶ ಬೇಕಾಗಬಹುದು ಎಂದು ನಾಯಕ ಹಾರ್ದಿಕ್ ಪಾಂಡ್ಯ ಖಚಿತಪಡಿಸಿದ್ದಾರೆ. ಭರ್ಜರಿ ಫಾರ್ಮ್ನಲ್ಲಿದ್ದ ರೋಹಿತ್ ಅನುಪಸ್ಥಿತಿಯು ತಂಡದ ಬ್ಯಾಟಿಂಗ್ ಸಂಯೋಜನೆಗೆ ದೊಡ್ಡ ಹಿನ್ನಡೆಯಾಗಿದ್ದು, ಅವರ ಬದಲಿಗೆ ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಸ್ಯಾಂಟ್ನರ್ ಕೂಡ ಅನಾರೋಗ್ಯದಿಂದ ಪಂದ್ಯ ತಪ್ಪಿಸಿಕೊಂಡಿದ್ದಾರೆ.
ನವದೆಹಲಿ: ಮಹಿಳಾ ಮೀಸಲಾತಿ ಮತ್ತು ನೂತನ ಸಂಸದೀಯ ಕ್ಷೇತ್ರ ನಿರ್ಣಯಕ್ಕೆ ಸಂಬಂಧಿಸಿದ ಸಾಂವಿಧಾನಿಕ ಕ್ರಮಗಳನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಲೋಕಸಭೆಯಲ್ಲಿ ಬಲವಾಗಿ ಬೆಂಬಲಿಸಿ ಮಾತನಾಡಿದ್ದು, ಈ ಕ್ರಮಗಳನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. 2029 ರಿಂದ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಈ ಕ್ರಮ ಅತ್ಯಂತ ಅವಶ್ಯಕ ಎಂದು ವಿವರಿಸಿದ್ದಾರೆ. ದಕ್ಷಿಣದ ಹಾಗೂ ಸಣ್ಣ ರಾಜ್ಯಗಳ
ಶಾಸಕ ವಿನಯ್ ಕುಲಕರ್ಣಿ ಕಣ್ಣೀರು! ಶಿಕ್ಷೆ ಪ್ರಕಟಕ್ಕೂ ಮುನ್ನ ಜಡ್ಜ್ ಮುಂದೆ ಕೊನೆ ಮಾತು ಹೇಳಿದ್ದೇನು?
ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಲಯದಲ್ಲಿ ಕಣ್ಣೀರಿಟ್ಟಿದ್ದು, ಶಿಕ್ಷೆ ಪ್ರಕಟಕ್ಕೂ ಮುನ್ನ ನ್ಯಾಯಾಧೀಶರ ಮುಂದೆ ಕೊನೆಯ ಮಾತುಗಳನ್ನಾಡಿದ್ದಾರೆ. ಮಕ್ಕಳು, ಕ್ಷೇತ್ರ ಹಾಗೂ ತಮ್ಮ ಕೃಷಿ ಜೀವನ, ರಾಜಕೀಯ ಪಿತೂರಿ ಉಲ್ಲೇಖಿಸಿ ಶಿಕ್ಷೆ ಪ್ರಮಾಣ ಕಡಿಮೆ ನೀಡುವಂತೆ ಮನವಿ ಮಾಡಿದ್ದಾರೆ.
National Highway: ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಿಗ್ ಅಪ್ಡೇಟ್
National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಕೆಲವು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲವಯ ಹೆದ್ದಾರಿಗಳು ಅಭಿವೃದ್ಧಿ ಕಾಮಗಾರಿಗಳ ಹಂತದಲ್ಲಿವೆ. ಈ ಸಾಲಿಗೆ ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕವನ್ನು ಸಂಪರ್ಕಿಸುವ NH ಕೂಡ ಸೇರಿದೆ. ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766Cಯಡಿ ಬರುವ ಬೈಂದೂರು- ಕೊಲ್ಲೂರು ನಡುವಿನ 38 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ವೇಗ
ವಿರಾಟ್ ಕೊಹ್ಲಿಗೆ ಮರೆತು ಹೋಯಿತೇ ತಮ್ಮದೇ ಮಾತು? ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಾಗ ಅಭಿಮಾನಿಗಳಿಗೆ ನೆನಪಾಯ್ತು!
Virat Kohli And Impact Player Rule 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವ ದಿನವೇ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದ ವಿರಾಟ್ ಕೊಹ್ಲಿ, ಲಖನೌ ವಿರುದ್ಧದ ಪಂದ್ಯದಲ್ಲಿ ಅನಿವಾರ್ಯವಾಗಿ ಅದೇ ನಿಯಮದಡಿ ಕಣಕ್ಕಿಳಿದಿದ್ದಾರೆ. ಪಾದದ ನೋವಿನ ಕಾರಣ ಫೀಲ್ಡಿಂಗ್ ಮಾಡದ ಅವರು, ಸುಯಶ್ ಶರ್ಮಾ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿ 48 ರನ್ ಗಳಿಸಿದರು. ಈ ಮೂಲಕ ತಮ್ಮ ಹಳೆಯ ಹೇಳಿಕೆಯಿಂದ ಅವರು ಹಿಂದೆ ಸರಿದರಾ ಎಂಬ ಚರ್ಚೆ ಶುರುವಾಗಿದೆ. ಪೂರ್ಣ ಫಿಟ್ನೆಸ್ ಇದ್ದರೆ ಮಾತ್ರ ಆಡುವುದಾಗಿ ಈ ಹಿಂದೆ ಅವರು ಸಂದರ್ಶನದಲ್ಲಿ ತಿಳಿಸಿದ್ದರು.
Indian Railway: ಭಾರತದ ಟಾಪ್ 6 ಅತಿ ಉದ್ದವಾದ ರೈಲು ಪ್ಲಾಟ್ಫಾರ್ಮ್ಗಳ ಪಟ್ಟಿ ಇಲ್ಲಿದೆ
ವಿಶ್ವದಲ್ಲೇ ಅತಿ ದೊಡ್ಡ ರೈಲು ಜಾಲಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಂಪರ್ಕಿಸುವ ಅತಿ ದೊಡ್ಡ ವ್ಯವಸ್ಥೆಯಲ್ಲಿ ಕೆಲವು ರೈಲು ನಿಲ್ದಾಣಗಳು ತಮ್ಮ ದೇಶದಲ್ಲೆ ಅತಿ ಉದ್ದವಾದ ಪ್ಲಾಟ್ಫಾರ್ಮ್ಗಳಿಂದ ವಿಶೇಷ ಗಮನ ಸೆಳೆಯುತ್ತಿವೆ. ಇಂತಹ ಉದ್ದವಾದ ಪ್ಲಾಟ್ಫಾರ್ಮ್ಗಳು ರೈಲುಗಳನ್ನು ಸುಲಭವಾಗಿ ನಿಲುಗಡೆಗೊಳಿಸಲು ಸಹಾಯ ಮಾಡುವುದರ ಜೊತೆಗೆ, ಹೆಚ್ಚಿನ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಸಹಕಾರಿಯಾಗುತ್ತವೆ.
ಗುರುಗ್ರಾಮ| ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿ ಆತ್ಮಹತ್ಯೆ
ಗುರುಗ್ರಾಮ,ಎ.16: ಸಿಬಿಎಸ್ಇ 10ನೇ ತರಗತಿಯ ಫಲಿತಾಂಶಗಳು ಬುಧವಾರ ಪ್ರಕಟಗೊಂಡ ಬೆನ್ನಲ್ಲೆ ಇಲ್ಲಿಯ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು. ಕುನಾಲ್ (16) ಮೃತ ವಿದ್ಯಾರ್ಥಿಯಾಗಿದ್ದು,ನಿರೀಕ್ಷಿತ ಅಂಕಗಳು ಬಾರದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಜತೋಲಿ ಪ್ರದೇಶದ ಬಾಬಾ ಹರದೇವ ಕಾಲನಿಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಕುನಾಲ್ ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದ. ಆದರೆ ಫಲಿತಾಂಶ ತನ್ನ ನಿರೀಕ್ಷೆಯಂತೆ ಬರದಿದ್ದರಿಂದ ಬೇಸರಗೊಂಡಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ಪೋಷಕರು ಮರುಪರೀಕ್ಷೆ ಬರೆಯುವಂತೆ ಮಗನಿಗೆ ಉತ್ತೇಜನವನ್ನೂ ನೀಡಿದ್ದರು. ಆದರೆ ಆತ ಖಿನ್ನತೆಗೆ ಒಳಗಾಗಿದ್ದ. ಫಲಿತಾಂಶ ಪ್ರಕಟಗೊಂಡ ಬಳಿಕ ಕುನಾಲ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಎ.18ರಿಂದ ಪದವು ಕುಲಶೇಖರದಲ್ಲಿ ಬಿಂಬಪ್ರತಿಷ್ಠೆ, ಬ್ರಹ್ಮಕಲಶೋತ್ಸವ
ಮಂಗಳೂರು: ನಗರದ ಪದವು ಕುಲಶೇಖರದಲ್ಲಿ ಹಿಂದು ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಶನೈಶ್ಚರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಎ. 18 ರಿಂದ 24 ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಅವರು ದೇವಾಲಯದ ಆವರಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಎಂ. ಗಿರಿಧರ ಭಟ್ ಮತ್ತು ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಏಪ್ರಿಲ್ 18ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದೆ. 108 ಕಾಯಿ ಗಣಯಾಗ, ರುದ್ರಯಾಗ ಹಾಗೂ ಏಪ್ರಿಲ್ 22 ರವರೆಗೆ ಲಕ್ಷ್ಮೀನಾರಾಯಣ ಪ್ರಧಾನ ಹೋಮ ನಡೆಯಲಿದ್ದು, ಏಪ್ರಿಲ್ 23 ರಂದು ಗಣಪತಿ, ದುರ್ಗಾ, ನವಗ್ರಹ ಸಹಿತ ಶ್ರೀ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲ ಶಾಭಿಷೇಕ ನೆರವೇರಲಿದೆ. ಏಪ್ರಿಲ್ 24 ರಂದು ಚಂಡಿಕಾಯಾಗ ಮತ್ತು ಸಮಗ್ರ ಶನೈಶ್ಚರ ಮಹಾಯಾಗದೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ. ಉತ್ಸವದ ಅಂಗವಾಗಿ ಏಪ್ರಿಲ್ 19 ರಂದು ಬೆಳಿಗ್ಗೆ 9 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಪದವು ದೇವಸ್ಥಾನದವರೆಗೆ ಹಸಿರುವಾಣಿ (ಹೊರೆಕಾಣಿಕೆ) ಮೆರವಣಿಗೆ ನಡೆಯಲಿದ್ದು, ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಚಾಲನೆ ನೀಡಲಿದ್ದಾರೆ. ಅಂದು ಸಂಜೆ ಶಿವಾಜಿ ಮಂಟಪದಲ್ಲಿ ಹಿಂದು ಯುವಸೇನೆಯ ಸಮಾವೇಶ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಯಕ್ಷಗಾನ, ನಾಟಕ ಹಾಗೂ ಸಂಗೀತ ಲಹರಿಗಳು ಪ್ರದರ್ಶನ ಗೊಳ್ಳಲಿವೆ. ಪ್ರತಿದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ವೇದವ್ಯಾಸ ಕಾಮತ್, ಪ್ರದಾನ ಕಾರ್ಯದರ್ಶಿ ಬಾಸ್ಕರ ಚಂದ್ರ ಶೆಟ್ಟಿ, ಶನಿಶ್ಚರ ಪೂಜಾ ಸಮಿತಿ ಅದ್ಯಕ್ಷರಾದ ರಾಮಚಂದ್ರ ಚೌಟ, ಮಾತೃಮಂಡಳಿ ಅಧ್ಯಕ್ಷರಾದ ವಿಜಯ ಅರುಣ್, ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ ಮತ್ತು ಉಮೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
Raichur | ಬಿಸಿಲಿನಿಂದ ಜನರಿಗೆ ರಕ್ಷಣೆ ನೀಡಲು ನೆರಳಿನ ವ್ಯವಸ್ಥೆ ಮಾಡಲು ಎಐಡಿಎಸ್ಒ ಮನವಿ
ರಾಯಚೂರು: ನಗರದ ವಿವಿಧ ವೃತ್ತಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಉರಿ ಬಿಸಿಲಿನಿಂದ ಜನರನ್ನು ರಕ್ಷಿಸಲು ನೆರಳಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಪದಾಧಿಕಾರಿಗಳು ಮಹಾನಗರ ಪಾಲಿಕೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ನಗರದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು, 43 ಡಿಗ್ರಿ ಸೆಲ್ಸಿಯಸ್ವರೆಗೆ ದಾಖಲಾಗುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟುಮಾಡಿದೆ. ಬೆಳಿಗ್ಗೆ 10 ಗಂಟೆಯಿಂದಲೇ ಜನರು ಹೊರಗೆ ಬರಲು ಕಷ್ಟಪಡುತ್ತಿದ್ದಾರೆ. ಬಿಸಿಲಿನ ತೀವ್ರತೆ ಮತ್ತು ಬಿಸಿ ಗಾಳಿ ಜನರನ್ನು ಹೈರಾಣಾಗಿಸುತ್ತಿದ್ದು, ಸಂಜೆ 4.30 ಆದರೂ ಸಹ ತಾಪಮಾನದಲ್ಲಿ ಇಳಿಕೆಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಟ್ರಾಫಿಕ್ ಸಿಗ್ನಲ್ಗಳಲ್ಲಿ ನಿಂತುಕೊಳ್ಳುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ವೃದ್ಧರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಬಿಸಿಲಿನ ಪರಿಣಾಮವಾಗಿ ದೇಹದ ಅಸ್ವಸ್ಥತೆ, ದಾಹ, ತಲೆ ಸುತ್ತುವುದು ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ, ನಗರದ ಎಲ್ಲಾ ಪ್ರಮುಖ ಟ್ರಾಫಿಕ್ ಸಿಗ್ನಲ್ಗಳಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ನೆರಳಿನ ವ್ಯವಸ್ಥೆ (ಶೆಡ್ಗಳು/ಷೆಲ್ಟರ್ಗಳು) ಕಲ್ಪಿಸುವುದು ಅಗತ್ಯವಾಗಿದೆ ಎಂದು ಆಗ್ರಹಿಸಿದರು. ಇನ್ನೂ ಒಂದೂವರೆ ತಿಂಗಳ ಕಾಲ ಬಿಸಿಲಿನ ತೀವ್ರತೆ ಮುಂದುವರಿಯಲಿದ್ದು, ಮುಂದಿನ ಒಂದು ವಾರದಲ್ಲಿ 42ರಿಂದ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಉಲ್ಲೇಖಿಸಿ ತಿಳಿಸಿದರು. ಈಗಾಗಲೇ ಮಹಾನಗರ ಪಾಲಿಕೆ ಕೆಲವು ಸ್ಥಳಗಳಲ್ಲಿ ‘ಅಮೃತ ನೆರಳು’ ಕೇಂದ್ರಗಳನ್ನು ಸ್ಥಾಪಿಸಿರುವುದು ಸ್ವಾಗತಾರ್ಹವಾದರೂ, ಅವು ಕೆಲವೇ ವೃತ್ತಗಳಿಗೆ ಸೀಮಿತವಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ಇಂತಹ ವ್ಯವಸ್ಥೆಗಳನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ನಂತರ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಐಡಿವೈಒ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಜಿಲ್ಲಾ ಕಾರ್ಯದರ್ಶಿ ವಿನೋದ ಕುಮಾರ, ಸಂಘಟನೆಯ ಪದಾಧಿಕಾರಿ ಮೌನೇಶ, ನೂರ್ ಪಾಶಾ, ಅಶೋಕ, ಹಿರಿಯ ನಾಗರಿಕರಾದ ವೀರೇಶ ಬಾಬು, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ರುದ್ರಯ್ಯ ಗುಣಾರಿ, ಅಣ್ಣಪ್ಪ, ತಾಯಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಹೊರಟ ಸರಕಾರ: ಗೌರವ್ ಗೊಗೋಯ್
ಹೊಸದಿಲ್ಲಿ, ಎ. 16: ಸರಕಾರ ಮಂಡಿಸಿರುವ ಮೂರು ಮಸೂದೆಗಳು ‘‘ಮಹಿಳಾ ವಿರೋಧಿ, ಜಾತಿ ಗಣತಿ ವಿರೋಧಿ, ಸಂವಿಧಾನ ವಿರೋಧಿ ಮತ್ತು ದೇಶದ ಒಕ್ಕೂಟ ವ್ಯವಸ್ಥೆ ವಿರೋಧಿಯಾಗಿದೆ ಎಂಬುದಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ ಗುರುವಾರ ಲೋಕಸಭೆಯಲ್ಲಿ ಆರೋಪಿಸಿದ್ದಾರೆ. ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೊಳಿಸುವ ನೈಜ ಬದ್ಧತೆ ಸರಕಾರಕ್ಕೆ ಇದ್ದರೆ, ಲೋಕಸಭೆಯ ಪ್ರಸಕ್ತ ಬಲದ ಆಧಾರದಲ್ಲೇ ತಕ್ಷಣ ಜಾರಿಗೊಳಿಸಬೇಕು ಎಂದು ಅವರು ಹೇಳಿದರು. ಸರಕಾರವು ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ತನಗೆ ಬೇಕಾದಂತೆ ಕ್ಷೇತ್ರಗಳನ್ನು ವಿಭಜಿಸುವ ಮೂಲಕ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಸೂದೆಗಳ ಚರ್ಚೆ ವೇಳೆ ಮಾತನಾಡಿದ ಗೊಗೋಯಿ ಆರೋಪಿಸಿದರು. ‘‘ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಮ್ನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮೂಲಕ ಅವರು ಏನು ಮಾಡಿರುವರೋ, ಅದನ್ನು ಮಹಿಳಾ ಮೀಸಲಾತಿ ಹೆಸರಿನಲ್ಲಿ ಇಡೀ ದೇಶದಲ್ಲಿ ಮಾಡಲು ಬಯಸಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು. ಸರಕಾರದ ಕೃತ್ಯಗಳು ‘‘ನಾಚಿಕೆಗೇಡಿನವು’’ ಎಂದು ಅವರು ಬಣ್ಣಿಸಿದರು.
Delhi | ಇಂದಿರಾಗಾಂಧಿ ಏರ್ ಪೋರ್ಟ್ ನಲ್ಲಿ ಆಕಾಸ ಏರ್ ಗೆ ಢಿಕ್ಕಿ ಹೊಡೆದ ಸ್ಪೈಸ್ ಜೆಟ್ ವಿಮಾನ
ಹೊಸದಿಲ್ಲಿ, ಎ.16: ದಿಲ್ಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಆಕಾಸ ಏರ್ ವಿಮಾನಕ್ಕೆ ಸ್ಪೈಸ್ ಜೆಟ್ ವಿಮಾನ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಎರಡೂ ವಿಮಾನಗಳಿಗೆ ಹಾನಿಯಾಗಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ರನ್ವೇ ಮೇಲೆ ಸಾಗುವ ವೇಳೆ ಸ್ಪೈಸ್ ಜೆಟ್ ಸಂಸ್ಥೆಯ ಬೋಯಿಂಗ್ ಬಿ737-700 ವಿಮಾನ ನಿಯಂತ್ರಣ ತಪ್ಪಿ ಮುಂದೆ ಸಾಗಿದ್ದು, ನಿಂತಿದ್ದ ಆಕಾಸ ಏರ್ ವಿಮಾನದ ಹಿಂಭಾಗದ ಎಡ ಭಾಗಕ್ಕೆ ಢಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಸ್ಪೈಸ್ ಜೆಟ್ ವಿಮಾನದ ಬಲ ರೆಕ್ಕೆಗೂ ಹಾನಿಯಾಗಿದೆ. ಆ ಸಮಯದಲ್ಲಿ ಆಕಾಸ ಏರ್ ವಿಮಾನ ದಿಲ್ಲಿಯಿಂದ ಹೈದರಾಬಾದ್ ಗೆ ತೆರಳಲು ಸಿದ್ಧವಾಗಿತ್ತು. ಘಟನೆಯ ಬಳಿಕ ಸುರಕ್ಷತಾ ಕ್ರಮವಾಗಿ ವಿಮಾನವನ್ನು ಸೇವೆಯಿಂದ ಹಿಂತೆಗೆದು ಟರ್ಮಿನಲ್ ಗೆ ಕಳುಹಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಆಕಾಸ ಏರ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸ್ಪೈಸ್ ಜೆಟ್ ವಿಮಾನವನ್ನೂ ತಕ್ಷಣವೇ ಸೇವೆಯಿಂದ ಹಿಂತೆಗೆದು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ಘಟನೆಯ ನಿಖರ ಕಾರಣ ತಿಳಿದುಬರಬೇಕಿದ್ದು, ವಿಮಾನಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

33 C