ಅಸ್ಸಾಂ: 12,500 ಕೋಟಿ ರೂ.ಗಳ ಬೃಹತ್ ವಿದ್ಯುತ್ ಹಗರಣ ಬಹಿರಂಗ
► ಮುಂಬರುವ ವರ್ಷಗಳಲ್ಲಿ ತಾನು ಬಳಸಲಾಗದ ಹೆಚ್ಚುವರಿ ವಿದ್ಯುತ್ತಿಗೂ ಆದಾನಿಗೆ ಹಣ ಪಾವತಿಸಲು ಸರಕಾರದ ಅಸ್ತು►the reporters' collective ವರದಿ
ಕರ್ನಾಟಕ ರಾಜ್ಯಾದ್ಯಂತ ಶಾಲಾ ವಿದ್ಯಾರ್ಥಿಗಳ ಜೀವನದ ಅತಿ ಪ್ರಮುಖ ಘಟ್ಟವಾದ ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆಗಳು ಇಂದಿನಿಂದ (ಮಾರ್ಚ್ 18) ಆರಂಭವಾಗುತ್ತಿವೆ. ಏಪ್ರಿಲ್ 2ರವರೆಗೆ ನಡೆಯಲಿರುವ ಈ ಮಹತ್ವದ ಪರೀಕ್ಷೆ ಬರೆಯಲು ರಾಜ್ಯಾದ್ಯಂತ ಒಟ್ಟು 8,65,988 ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಭಯ, ಆತಂಕವಿಲ್ಲದೆ ಪರೀಕ್ಷೆ ಎದುರಿಸಲು ಅನುಕೂಲವಾಗುವಂತೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬಿಜೆಪಿ ಗೆಲುವಿಗೆ ಕ್ರಾಸ್ ವೋಟ್ ಮಾಡಿದ ಮೊದಲ ಮಹಿಳಾ ಮುಸ್ಲಿಂ ಶಾಸಕಿ : ಯಾರಿದು ಸೋಫಿಯಾ ಫಿರ್ದೌಸ್ ?
Expelled INC MLA Sofia Firdous : ಹಲವು ರಾಜ್ಯಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹರ್ಯಾಣ ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ ಎದುರಾಗಿದೆ. ಒಡಿಶಾದಲ್ಲಿನ ಚುನಾವಣೆ, ದೇಶಾದ್ಯಂತ ಗಮನವನ್ನು ಸೆಳೆದಿತ್ತು. ಇದಕ್ಕೆ ಕಾರಣ, ಕ್ರಾಸ್ ವೋಟಿಂಗ್ ಭೀತಿಯಲ್ಲಿ ಕೈನ ಕೆಲವು ಶಾಸಕರನ್ನು ಬೆಂಗಳೂರಿಗೆ ಕಳುಹಿಸಿದ್ದು. ಆದರೂ, ಕಾಂಗ್ರೆಸ್ ಅಲ್ಲಿ ಮುಖಭಂಗ ಎದುರಿಸುವಂತಾಯಿತು. ಕ್ರಾಸ್ ವೋಟ್ ಮಾಡಿದವರಲ್ಲಿ ಒಬ್ಬರು ಸೋಫಿಯಾ ಫಿರ್ದೌಸ್.
ಮೌಲಾನಾ ಆಜಾದ್ ಶಾಲೆಗಳಲ್ಲಿ ಎಲ್ಕೆಜಿ ತರಗತಿಗೆ ಬೇಡಿಕೆ ಹೆಚ್ಚು: ವಿಸ್ತರಣೆಗೆ ಸಜ್ಜು
ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನಾ ಆಜಾದ್ ಮಾದರಿ ಶಾಲೆಗಳ ಪೈಕಿ ಇನ್ನೂ 100 ಶಾಲೆಗಳಲ್ಲಿ ಎಲ್ಕೆಜಿ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಈಗಾಗಲೇ 100 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 3000 ಸೀಟುಗಳ ಪೈಕಿ 2,600ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ನಲ್ಲಿ ಯುದ್ಧದ ಹೆಸರಿನಲ್ಲಿ ಶಾಲೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿ ನೂರಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಬಲಿತೆಗೆದುಕೊಂಡ ಕೃತ್ಯದಿಂದ ಜಗತ್ತು ಇನ್ನೂ ಚೇತರಿಸಿಲ್ಲ. ಇತ್ತ ಪಾಕಿಸ್ತಾನ ಅಫ್ಘಾನಿಸ್ತಾನದ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿ 400ಕ್ಕೂ ಅಧಿಕ ಮಂದಿಯನ್ನು ಕೊಂದು ಹಾಕಿದೆ. ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 440 ಮಂದಿ ಮೃತಪಟ್ಟು 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರಕಾರ ಪ್ರಕಟಿಸಿದೆ. ಮಾದಕ ವ್ಯಸನಕ್ಕಿಂತಲೂ ಅಪಾಯಕಾರಿಯಾದುದು ಯುದ್ಧವೆಂಬ ವ್ಯಸನ. ಇರಾನ್ನಲ್ಲಿ ಮಕ್ಕಳ ಮೇಲೆ ನಡೆದ ನರಮೇಧ ಮತ್ತು ಅಫ್ಘಾನಿಸ್ತಾನದಲ್ಲಿ ರೋಗಿಗಳ ಮಾರಣ ಹೋಮ ಕೃತ್ಯಗಳೆರಡೂ ಅಮೆರಿಕದ ಕಿರೀಟಕ್ಕೆ ಜೋಡಿಸಿದ ರಕ್ತಸಿಕ್ತ ಗರಿಗಳು. ಯುದ್ಧದ ಹೆಸರಿನಲ್ಲಿ ನಡೆದ ಈ ನರಮೇಧಗಳನ್ನ್ನು ಜಗತ್ತು ಸಹಿಸಿಕೊಂಡಿರುವುದನ್ನು ನೋಡಿ ಗೋರಿಯೊಳಗಿರುವ ಹಿಟ್ಲರ್ ಗಹಗಹಿಸಿ ನಗುತ್ತಿರಬಹುದು. ಹಿಟ್ಲರ್ ನಡೆಸಿದ ನರಮೇಧಗಳೇ ಎರಡನೇ ಮಹಾಯುದ್ಧಕ್ಕೆ ಕಾರಣ ಎಂದು ನಾವೆಲ್ಲ ನಂಬಿಕೊಂಡು ಬಂದಿದ್ದೇವೆ. ಆದರೆ ಇಸ್ರೇಲ್ ಕೆಲವು ವರ್ಷಗಳಿಂದ ಗಾಝಾದಲ್ಲಿ ನಡೆಸುತ್ತಾ ಬಂದಿರುವ ಮಕ್ಕಳು ಮತ್ತು ಮಹಿಳೆಯರ ನರಮೇಧದ ಮುಂದೆ ಹಿಟ್ಲರ್ ಅಮಾಯಕನಂತೆ ಗೋಚರಿಸುತ್ತಾನೆ. ತಾನು ಮಾಡಿದ ಕೃತ್ಯಕ್ಕಾಗಿ ಹಿಟ್ಲರ್ ಇತಿಹಾಸದಲ್ಲಿ ನರಹಂತಕನಾಗಿ ದಾಖಲಾಗಿದ್ದಾನೆ. ಆದರೆ, ಇಂದು ಗಾಝಾ, ಇರಾನ್, ಅಫ್ಘಾನಿಸ್ತಾನದಲ್ಲಿ ಅಮಾಯಕರ ಮಾರಣ ಹೋಮ ನಡೆಸುತ್ತಿರುವ ಅಮೆರಿಕ ತನ್ನನ್ನು ತಾನು ಜಗದ್ರಕ್ಷಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಮಾರಣಹೋಮದ ಬಗ್ಗೆ ಅರಿವಿದ್ದೂ ಅದರ ವಿರುದ್ಧ ಧ್ವನಿಯೆತ್ತಲಾಗದ ಸ್ಥಿತಿಯಲ್ಲಿದೆ ಜಗತ್ತು. ರಶ್ಯ ಮತ್ತು ಚೀನಾದಂತಹ ಬಲಾಢ್ಯ ದೇಶಗಳು ಈ ರಕ್ತದಮಡುವಿನಲ್ಲಿ ಮೀನು ಹಿಡಿಯುವ ಕೆಲಸವನ್ನಷ್ಟೇ ಮಾಡುತ್ತಿದೆ. 2014ರಲ್ಲಿ ಅಫ್ಘಾನಿಸ್ತಾನಕ್ಕಾಗಿ ತಾಲಿಬಾನ್ ಹೋರಾಟಗಾರರು ಅಮೆರಿಕದ ವಿರುದ್ಧ್ದ ಹೋರಾಟ ನಡೆಸುತ್ತಿರುವಾಗ, ಉಗ್ರರು ಪಾಕಿಸ್ತಾನದ ಸೇನಾ ನೆಲೆಯಲ್ಲಿರುವ ಶಾಲೆಯೊಂದರ ಮೇಲೆ ದಾಳಿ ನಡೆಸಿದ್ದರು. 130ಕ್ಕೂ ಅಧಿಕ ಮಕ್ಕಳು ಈ ದಾಳಿಗೆ ಬಲಿಯಾಗಿದ್ದರು. ಪಾಕಿಸ್ತಾನ ಸೇನೆಯು ನಡೆಸುತ್ತಿರುವ ಉಗ್ರ ವಿರೋಧಿ ಕಾರ್ಯಾಚರಣೆಗೆ ಪ್ರತಿಯಾಗಿ ಈ ದಾಳಿಯನ್ನು ನಡೆಸಿದ್ದೇವೆ ಎಂದು ತಾಲಿಬಾನ್ ಹೋರಾಟಗಾರರು ಸಮರ್ಥಿಸಿಕೊಂಡಿದ್ದರು. ಅದಾಗಲೇ ಉಗ್ರರ ವಿರುದ್ಧದ ಕಾರ್ಯಾಚರಣೆಯ ಹೆಸರಿನಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಪಡೆಗಳಿಗೆ ಅಫ್ಘಾನಿಸ್ತಾನದ ನೂರಾರು ಮಕ್ಕಳು ಬಲಿಯಾಗಿದ್ದರು. ಆದರೆ ಅವೆಲ್ಲವನ್ನೂ ಅಮೆರಿಕ ‘ಉಗ್ರ ವಿರೋಧಿ ಕಾರ್ಯಾಚರಣೆ’ಯ ಹೆಸರಿನಲ್ಲಿ ದಕ್ಕಿಸಿಕೊಂಡಿತ್ತು. ತಾಲಿಬಾನ್ ಉಗ್ರರು ಶಾಲಾ ಮಕ್ಕಳ ಮೇಲೆ ನಡೆದ ದಾಳಿಯನ್ನು ಇಡೀ ಜಗತ್ತು ವಿರೋಧಿಸಿತ್ತು ಮಾತ್ರವಲ್ಲ, ಭಯೋತ್ಪಾದನೆಯ ಜೊತೆಗೆ ಧರ್ಮವನ್ನು ತಳಕು ಹಾಕಿ ಜಗತ್ತು ಅತ್ಯುತ್ಸಾಹದಿಂದ ಚರ್ಚಿಸಿತ್ತು. ಆದರೆ ಅಮೆರಿಕ ಎಲ್ಲವನ್ನೂ ಸರ್ವನಾಶ ಮಾಡಿ ಅಂತಿಮವಾಗಿ ಅಫ್ಘಾನಿಸ್ತಾನವನ್ನು ತಾಲಿಬಾನ್ಗಳ ಕೈಗೆ ಒಪ್ಪಿಸಿ ಪಲಾಯನ ಮಾಡಿತು. ತಾಲಿಬಾನ್ ಸರಕಾರ ರಚನೆಯಾದ ದಿನದಿಂದ ಅಫ್ಘಾನಿಸ್ತಾನ ಮತ್ತೆ ನಿಧಾನಕ್ಕೆ ಚೇತರಿಸತೊಡಗಿತ್ತು ಮಾತ್ರವಲ್ಲ, ಇತರ ದೇಶಗಳ ಜೊತೆಗೆ ಸಂಬಂಧ ಸುಧಾರಣೆಗೆ ಆದ್ಯತೆ ನೀಡತೊಡಗಿತ್ತು. ಭಾರತವೂ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ಜೊತೆಗೆ ಕೈ ಜೋಡಿಸಿತು. ಯಾಕೆಂದರೆ, ಭಾರತವು ಅಫ್ಘಾನಿಸ್ತಾನದಲ್ಲಿ ಭಾರೀ ಹೂಡಿಕೆಯನ್ನು ಮಾಡಿದೆ. ಆದರೆ ಅಮೆರಿಕದ ಹಸ್ತಕ್ಷೇಪ ಮತ್ತೆ ಅಫ್ಘಾನಿಸ್ತಾನವನ್ನು ವಿಚ್ಛಿದ್ರಗೊಳಿಸತೊಡಗಿದೆ. ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಅಮೆರಿಕ ಪರೋಕ್ಷ ಯುದ್ಧವನ್ನು ಮಾಡುತ್ತಿದೆ. ಅದರ ಭಾಗವಾಗಿಯೇ ಇದೀಗ ಪಾಕಿಸ್ತಾನವು ಅಫ್ಘಾನಿಸ್ತಾನದ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿದೆ. ಇತ್ತೀಚೆಗೆ ಅಫ್ಘಾನಿಸ್ತಾನವು ಭಾರತಕ್ಕೆ ಹತ್ತಿರವಾಗುತ್ತಿರುವುದು ಪಾಕಿಸ್ತಾನಕ್ಕೆ ಸಹ್ಯವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ದಾಳಿಯಲ್ಲಿ ತಾಲಿಬಾನ್ಗಳ ಕೈವಾಡವನ್ನು ಪಾಕಿಸ್ತಾನ ಶಂಕಿಸುತ್ತಿದೆ. ಜೊತೆಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಮೆರಿಕಕ್ಕೆ ಜೀ ಹುಜೂರ್ ಎನ್ನಲೇ ಬೇಕಾದಂತಹ ಅನಿವಾರ್ಯ ಸ್ಥಿತಿಗೆ ಪಾಕಿಸ್ತಾನ ಬಂದು ನಿಂತಿದೆ. ಇರಾನ್ನ ವಿರುದ್ಧ ದಾಳಿ ನಡೆಸಲು ಇಸ್ರೇಲ್ ಒಡ್ಡಿದ ನೆಪವನ್ನೇ, ಅಫ್ಘಾನಿಸ್ತಾನದ ವಿರುದ್ಧ ದಾಳಿ ನಡೆಸಲು ಪಾಕಿಸ್ತಾನ ಮುಂದಿಟ್ಟಿದೆ. ಸ್ವತಃ ಪಾಕಿಸ್ತಾನವೇ ಬಿತ್ತಿ ಬೆಳೆದ ಫಸಲು ತಾಲಿಬಾನ್ಗಳು. ಅಫ್ಘಾನಿಸ್ತಾನದಲ್ಲಿ ರಶ್ಯದ ವಿರುದ್ಧ ತಾಲಿಬಾನ್ಗಳು ಹೋರಾಡುತ್ತಿದ್ದಾಗ ಇದೇ ಅಮೆರಿಕ ಅವರನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಕರೆದಿತ್ತು. ಅಮೆರಿಕವು ಪಾಕಿಸ್ತಾನದ ಮೂಲಕ ತಾಲಿಬಾನ್ಗಳನ್ನು ಪೋಷಿಸಿತ್ತು. ಇಂದು ಅದೇ ಅಮೆರಿಕವು ಪಾಕಿಸ್ತಾನದ ಮೂಲಕವೇ ತಾಲಿಬಾನ್ ಸರಕಾರದ ಮೇಲೆ ದಾಳಿ ನಡೆಸುತ್ತಿದೆ. ಆದರೆ, ಅದಕ್ಕೆ ಮತ್ತೆ ಬಲಿಯಾಗುತ್ತಿರುವುದು ಅಘ್ಘಾನಿಸ್ತಾನದ ಅಮಾಯಕರು. ಒಂದು ಕಾಲದಲ್ಲಿ ತಾಲಿಬಾನ್ಗಳು ಪಾಕಿಸ್ತಾನದ ಶಾಲಾ ಮಕ್ಕಳ ಮೇಲೆ ದಾಳಿ ನಡೆಸಿದ ಕೃತ್ಯವನ್ನು ಖಂಡಿಸಿದ್ದ ಜಗತ್ತು, ಇಂದು ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಎಸಗಿದ ಈ ನರಮೇಧದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಯುದ್ಧದ ಹೆಸರಿನಲ್ಲಿ ಅಮಾಯಕ ಮಕ್ಕಳು, ರೋಗಿಗಳನ್ನು ಕೊಲ್ಲುವುದು ಭಯೋತ್ಪಾದನಾ ಕೃತ್ಯದಷ್ಟೇ ನೀಚತನದಿಂದ ಕೂಡಿದ್ದು. ಉಗ್ರರು ಎಸಗಿದಾಗ ಖಂಡನಾರ್ಹವಾದ ಕೃತ್ಯ, ದೇಶವೊಂದು ಯುದ್ಧ ಹೆಸರಿನಲ್ಲಿ ನಡೆಸಿದಾಗ ಅದು ಮಾನ್ಯವಾಗಬಾರದು. ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ನಡೆಸಿದ ದಾಳಿಯನ್ನು ಭಾರತವು ತೀವ್ರವಾಗಿ ಖಂಡಿಸಿದೆ. ತಾಲಿಬಾನ್ ಸರಕಾರದ ಜೊತೆಗಿನ ಭಾರತದ ಸಂಬಂಧವೂ ಸಾಕಷ್ಟು ಚರ್ಚೆ, ಟೀಕೆಗಳಿಗೆ ಗುರಿಯಾಗಿದೆ. ತಾಲಿಬಾನ್ಗಳನ್ನು ತೋರಿಸಿ ಭಾರತದ ಮುಸ್ಲಿಮರ ತಲೆಗೆ ಭಯೋತ್ಪಾದಕ ಪಟ್ಟ ಕಟ್ಟಲು ತುದಿಗಾಲಲ್ಲಿ ನಿಂತಿರುವ ನಾಯಕರೇ ತಾಲಿಬಾನ್ ಸರಕಾರದ ಜೊತೆಗೆ ಕೈಜೋಡಿಸಿರುವುದರ ಬಗ್ಗೆ ಸ್ವತಃ ಬಿಜೆಪಿಯೊಳಗೇ ಅಸಮಾಧಾನವಿದೆ. ಅಫ್ಘಾನಿಸ್ತಾನದಲ್ಲಿ ಅಮಾಯಕರ ಮೇಲಿನ ದಾಳಿಯ ವಿರುದ್ಧ ಭಾರತದ ಖಂಡನೆ ಪ್ರಾಮಾಣಿಕವೇ ಆಗಿದ್ದರೆ, ಇರಾನ್ನ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರ ಹತ್ಯಾಕಾಂಡದ ಕುರಿತಂತೆ ಭಾರತ ಯಾಕೆ ಇನ್ನೂ ಮೌನವಾಗಿದೆ ಎನ್ನುವ ಪ್ರಶ್ನೆಯೇಳುತ್ತದೆ. ಅಫ್ಘಾನಿಸ್ತಾನಕ್ಕೆ ಹೋಲಿಸಿದರೆ ಇರಾನ್ ಭಾರತಕ್ಕೆ ಹೆಚ್ಚು ನಿಕಟವಾಗಿರುವ ದೇಶ. ಎರಡೂ ದೇಶಗಳ ನಡುವೆ ನಡೆಯುತ್ತಿರುವ ವ್ಯಾಪಾರಗಳ ಮೇಲೆ ಈ ದಾಳಿ ಭಾರೀ ದುಷ್ಪರಿಣಾಮ ಬೀರಿದೆ. ಅದನ್ನು ಭಾರತದ ಜನರು ಬೇರೆ ಬೇರೆ ರೂಪದಲ್ಲಿ ಈಗಾಗಲೇ ಅನುಭವಿಸತೊಡಗಿದ್ದಾರೆ. ಈ ಕಾರಣದಿಂದಲೇ, ಇರಾನ್ಗೆ ಬೆಂಬಲ ವ್ಯಕ್ತಪಡಿಸದೇ ಇದ್ದರೂ, ಇರಾನ್ನ ಅಮಾಯಕ ಮಕ್ಕಳ ಮೇಲೆ, ನಾಗರಿಕರ ಮೇಲೆ ನಡೆದ ದಾಳಿಯನ್ನು ಭಾರತ ಖಂಡಿಸುವ ನೈತಿಕ ಸ್ಥೈರ್ಯವನ್ನು ಪ್ರದರ್ಶಿಸಬೇಕಾಗಿತ್ತು. ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿರುವುದು ಪಾಕಿಸ್ತಾನವೇ ಆಗಿದ್ದರೂ ಅದಕ್ಕೆ ಕುಮ್ಮಕ್ಕು ನೀಡಿರುವುದು ಮತ್ತೆ ಅಮೆರಿಕವೇ ಆಗಿದೆ. ಇಂದು ಎಲ್ಲ ಉಗ್ರಗಾಮಿ ಸಂಘಟನೆಗಳನ್ನು ಮೀರಿಸುವ ಉಗ್ರವಾದಿಯಾಗಿ, ಭಯೋತ್ಪಾದಕನಾಗಿ ಅಮೆರಿಕ ಬೆಳೆದು ನಿಂತಿದೆ. ಅದು ಎಸಗುತ್ತಿರುವ ನರಮೇಧಗಳನ್ನು, ಭಯೋತ್ಪಾದನಾ ಕೃತ್ಯಗಳನ್ನು ಕಂಡೂ ಕಾಣದಂತೆ ಇದ್ದು, ಆಯ್ದ ಪ್ರಕರಣಗಳಿಗೆ ಅನುಕೂಲಕ್ಕೆ ತಕ್ಕಂತೆ ನೀಡುವ ಖಂಡನೆಗಳು ಯಾವ ಪರಿಣಾಮವನ್ನೂ ಉಂಟು ಮಾಡಲಾರವು.
ವಿದ್ಯಾರ್ಥಿನಿ ಮೇಲೆ ದಾಳಿ : ಕೊಡಗಿನಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಹಿನ್ನಡೆ
ಮಡಿಕೇರಿ ಹೊರವಲಯದ ಮದೆನಾಡು ಸಮೀಪದ ಬೆಟ್ಟತ್ತೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜಾ ಫೆ.28ರಂದು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಳು. ಈ ಘಟನೆ ಖಂಡಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಕೂಡಲೇ ಕಾಡಾನೆಯನ್ನು ಸೆರೆ ಹಿಡಿಯಲು ಸರಕಾರದ ಆದೇಶವೂ ಆಗಿತ್ತು. ಆದರೆ ಘಟನೆ ನಡೆದು 17 ದಿನ ಕಳೆದಿದ್ದು ಇನ್ನೂ ಕಾಡಾನೆಯನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ.
ಹಾಕಿ ವಿಶ್ವಕಪ್: ಗುಂಪು ಹಂತದಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿ
ಹೊಸದಿಲ್ಲಿ: ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಜಂಟಿ ಆತಿಥ್ಯದಲ್ಲಿ ಈ ವರ್ಷದ ಉತ್ತರಾರ್ಧದಲ್ಲಿ ನಡೆಯುವ ಹಾಕಿ ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣೆಸಲಿದೆ. ಎಫ್ಐಎಚ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಡಿ ಗುಂಪಿನಲ್ಲಿವೆ. ಪುರುಷರ ತಂಡದ ಈ ಗುಂಪಿನಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ವೇಲ್ಸ್ ಇರುತ್ತವೆ. ಮಂಗಳವಾರ ಆ್ಯಮ್ಸ್ಟರ್ಡ್ಯಾಮ್ನ ವೆಜೆನರ್ ಸ್ಟೇಡಿಯಂನಲ್ಲಿ ಡ್ರಾ ನಡೆದು ಗುಂಪುಗಳನ್ನು ವಿಂಗಡಿಸಲಾಗಿದೆ. ಭಾರತೀಯ ಮಹಿಳಾ ಹಾಕಿ ತಂಡ ಚೀನಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾವನ್ನು ಗುಂಪು ಹಂತದಲ್ಲಿ ಎದುರಿಸಬೇಕಾಗುತ್ತದೆ. ಆಗಸ್ಟ್ 15ರಿಂದ 30ರವರೆಗೆ ಟೂರ್ನಿ ನಡೆಯುತ್ತದೆ. ಇಂಟರ್ನ್ಯಾಷನಲ್ ಹಾಕಿ ಫೆಡರೇಷನ್ ಮೂಲಗಳ ಪ್ರಕಾರ, ಭಾರತದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಗುಂಪು ಹಂತದ ಎಲ್ಲ ಪಂದ್ಯಗಳನ್ನು ನೆದರ್ಲೆಂಡ್ಸ್ನಲ್ಲಿ ಆಡಲಿವೆ. ಇಡೀ ಪಂದ್ಯಗಳ ವೇಳಾಪಟ್ಟಿ ಬುಧವಾರ ಬಿಡುಗಡೆಯಾಗಲಿದೆ. ಪುರುಷರ ವಿಭಾಗದಲ್ಲಿ, ಭುವನೇಶ್ವರದಲ್ಲಿ ನಡೆದ 2023ರ ಟೂರ್ನಿಯಲ್ಲಿ ಬೆಲ್ಜಿಯಂ ಸವಾಲನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಜರ್ಮನಿ ತಂಡ ಬಿ ಗುಂಪಿನಲ್ಲಿ ಬೆಲ್ಜಿಯಂ, ಫ್ರಾನ್ಸ್ ಹಾಗೂ ಮಲೇಷ್ಯಾ ಜತೆ ಸೆಣೆಸಲಿದೆ. ಎ ಗುಂಪಿನಲ್ಲಿ ನೆದರ್ಲೆಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್, ಜಪಾನ್, ಸಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಆಡಲಿವೆ. ಮಹಿಳೆಯರ ವಿಭಾಗದಲ್ಲಿ ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಚಿಲಿ ಹಾಗೂ ಜಪಾನ್, ಬಿ ಗುಂಪಿನಲ್ಲಿ ಅರ್ಜೆಂಟೀನಾ, ಜರ್ಮನಿ, ಅಮೆರಿಕಾ ಹಾಗೂ ಸ್ಕಾಟ್ಲೆಂಡ್, ಸಿ ಗುಂಪಿನಲ್ಲಿ ಬೆಲ್ಜಿಯಂ, ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ ಇರುತ್ತವೆ.
ಯುಗಾದಿಗೆ ಭರದ ಸಿದ್ಧತೆ ; ತರಕಾರಿ, ಹೂ ಬೆಲೆ ಏರಿಕೆಯಿಲ್ಲ; ರೈತರಿಗೆ ನಿರಾಸೆ, ಗ್ರಾಹಕರಿಗೆ ಸಂತಸ
ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮಕ್ಕೆ ಬೆಲೆ ಇಳಿಕೆಯೂ ಜತೆಯಾಗಿದೆ. ಪ್ರತಿ ವರ್ಷ ಯುಗಾದಿ ವೇಳೆಗೆ ಅಗತ್ಯ ವಸ್ತುಗಳಾದ ಹಣ್ಣು, ತರಕಾರಿ, ಹೂಗಳ ದರ ಗಗನಕ್ಕೇರುತ್ತಿತ್ತು. ಆದರೆ ಈ ಬಾರಿ ಇವುಗಳ ಬೆಲೆ ಹೆಚ್ಚಿನ ಪ್ರಮಾಣದಲ್ಲಿಏರಿಯಾಗಿಲ್ಲ. ಬಹುತೇಕ ಅಗತ್ಯ ವಸ್ತುಗಳ ದರದಲ್ಲಿಇಳಿಕೆ ಕಂಡಿದ್ದು, ಬೆಳೆಗಾರರಿಗೆ ನಿರಾಸೆ ಉಂಟು ಮಾಡಿದೆ. ಆದರೆ ಮಧ್ಯಪ್ರಾಚ್ಯದ ಯುದ್ಧ ಬಿಸಿ ಯುಗಾದಿ ಹಬ್ಬಕ್ಕೂ ತಟ್ಟಿದ್ದು, ಸಿಹಿ ತಿಂಡಿ, ಹೋಳಿಗೆ ತಯಾರಿಕೆಯ ಪ್ರಮಾಣದಲ್ಲಿಪ್ರತಿ ವರ್ಷಕ್ಕೆ ಹೋಲಿಸಿದರೆ ಗಣನೀಯ ಕುಸಿತವಾಗಿದೆ.
ಹೋಟೆಲ್ಗಳಿಗೆ ಏಕಾಏಕಿ ಅನಿಲ ಪೂರೈಕೆ ಸ್ಥಗಿತ: ರಾಜ್ಯ, ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್
ಹೋಟೆಲ್ಗಳಿಗೆ ದಿಢೀರನೆ ಎಲ್ಪಿಜಿಯನ್ನು ಸ್ಥಗಿತಗೊಳಿಸಿದ್ಯಾಕೆ ಎಂದು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ. ಇದರಿಂದ 60 ಲಕ್ಷ ಜನ ಬೆಂಗಳೂರಲ್ಲಿ ಇದೇ ಉದ್ಯೋಗದಲ್ಲಿ ಅವಲಂಬಿಸಿದ್ದು, ತೊಂದರೆಯಾಗಿದೆ. ಇದು ಉದ್ಯೋಗ ಹಾಗೂ ವ್ಯಾಪರ ನಡೆಸುವ ಹಕ್ಕಿಗೆ ಧಕ್ಕೆ ತಂದಂತೆ ಎಂದು ಅರ್ಜಿ ಹಾಕಿದೆ.
ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವರುಣನ ಅಬ್ಬರ ತುಸು ಹೆಚ್ಚಾಗಿದ್ದರೆ, ಉತ್ತರ ಒಳನಾಡಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಳೆ ವರದಿಯಾಗಿದೆ. ರಾಜ್ಯದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಹವಾಮಾನ ತಂಪಾಗಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದು, ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ
ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್ ಸಿಲಿಂಡರ್ ಬಿಸಿ, ಮುಂದಿನ 15 ದಿನಗಳ ತನಕ ಮಕ್ಕಳಿಗೆ ಊಟ ವಿತರಣೆ ಸವಾಲು
ನಗರ ವಲಯದಲ್ಲಿನ್ನೂ ಸಿಲಿಂಡರ್ ಕೊರತೆ ಕಂಡುಬಂದಿಲ್ಲ. ಆದರೆ, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ನಾಲ್ಕು ದಿನಗಳಿಂದ ಪೂರೈಕೆಯಾಗುತ್ತಿಲ್ಲ. ಏ.10ರ ತನಕ ಶಾಲೆ ನಡೆಯಲಿದ್ದು, ಬರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲೇಬೇಕೆಂದು ಸರಕಾರದ ಆದೇಶವಿದೆ. ಆದರೆ, ಸಿಲಿಂಡರ್ ಪೂರೈಕೆ ವ್ಯತ್ಯಯವಾಗಿದ್ದರಿಂದ ಬಿಸಿಯೂಟ ತಯಾರಿಕೆಗೆ ತೊಡಕಾಗಿದೆ ಎಂದು ವಿಜಯಪುರ ಜಿಲ್ಲೆಯ ಗ್ರಾಮೀಣ ಪ್ರದೇಶ ಅನೇಕ ಶಾಲೆಗಳ ಶಿಕ್ಷಕರು ಅಳಲು ತೋಡಿಕೊಂಡರು.
UAE ಅಧ್ಯಕ್ಷ ಶೇಖ್ ಝಾಯೆದ್ ಅಲ್ ನಹ್ಯಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ; ದುಬೈ ಮೇಲಿನ ದಾಳಿಗೆ ಖಂಡನೆ
ಹೊಸದಿಲ್ಲಿ, ಮಾ.18: ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು ಎಂದು ಪ್ರಧಾನಿ ಎಕ್ಸ್ ನಲ್ಲಿ ತಿಳಿಸಿದ್ದಾರೆ. Spoke with my brother HH Sheikh Mohamed bin Zayed Al Nahyan, President of the UAE and conveyed advance Eid greetings. We discussed the current situation in West Asia. Reiterated India’s strong condemnation of all attacks on the UAE that have resulted in loss of innocent lives… — Narendra Modi (@narendramodi) March 17, 2026 ಇದೇ ಸಂದರ್ಭದಲ್ಲಿ ಈದ್ ಶುಭಾಶಯ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಯುಎಇಯನ್ನು ಗುರಿಯಾಗಿಸಿಕೊಂಡು ನಡೆದ ಎಲ್ಲಾ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಪುನರುಚ್ಚರಿಸಿದ್ದಾರೆ. ಈ ದಾಳಿಗಳ ಪರಿಣಾಮವಾಗಿ ಅಮಾಯಕರ ಜೀವಹಾನಿ ಸಂಭವಿಸಿರುವುದು ಹಾಗೂ ನಾಗರಿಕ ಮೂಲಸೌಕರ್ಯಗಳಿಗೆ ಹಾನಿ ಉಂಟಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಹಾರ್ಮುಝ್ ಜಲಸಂಧಿಯ ಮೂಲಕ ನೌಕಾಯಾನದ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವದ ಬಗ್ಗೆ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ. ಜಾಗತಿಕ ವ್ಯಾಪಾರ ಹಾಗೂ ಇಂಧನ ಸರಬರಾಜಿಗೆ ಈ ಜಲಮಾರ್ಗದ ಪಾತ್ರ ಮಹತ್ತರವಾಗಿರುವುದರಿಂದ ಅದರ ಭದ್ರತೆ ಅತ್ಯವಶ್ಯಕ ಎಂದು ಅವರು ಹೇಳಿದ್ದಾರೆ. “ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಲು ನಾವು ಒಟ್ಟಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ,” ಎಂದು ಮೋದಿ ಹೇಳಿದ್ದಾರೆ. ಇದಕ್ಕೂ ಮೊದಲು, ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಜೊತೆಗೆ ಸರಕು ಹಾಗೂ ಇಂಧನದ ಅಡೆತಡೆಯಿಲ್ಲದ ಸಾಗಣೆ ಭಾರತಕ್ಕೆ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದರು.
ಲಾರಿಜಾನಿ ಹತ್ಯೆ | ಸಂಘರ್ಷ ಶಮನಕ್ಕಿದ್ದ ‘ಕಿಟಕಿ’ ಮುಚ್ಚಿದ ಇಸ್ರೇಲ್?: ವರದಿ
ಟೆಹ್ರಾನ್, ಮಾ.18: ಇರಾನ್ ನ ಪ್ರಮುಖ ರಾಜಕೀಯ ನಾಯಕ ಅಲಿ ಲಾರಿಜಾನಿಯ ಹತ್ಯೆ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಯುದ್ಧವನ್ನು ಅಂತ್ಯಗೊಳಿಸಲು ಸಾಧ್ಯವಿದ್ದ ಮಾತುಕತೆಗಳ ಅವಕಾಶವನ್ನೇ ಕುಂಠಿತಗೊಳಿಸುವ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು Aljazeera ವರದಿ ಮಾಡಿದೆ. ಲಾರಿಜಾನಿ ಸಾಮಾನ್ಯ ರಾಜಕಾರಣಿ ಅಲ್ಲ. ಇರಾನ್ ಆಡಳಿತ ವ್ಯವಸ್ಥೆಯ ಬಹುತೇಕ ಎಲ್ಲಾ ಪ್ರಮುಖ ಹಂತಗಳನ್ನು ಅವರು ಅಲಂಕರಿಸಿದ್ದರು. ಯುದ್ಧರಂಗದ ಹೋರಾಟಗಾರನಾಗಿ ತಮ್ಮ ಪಯಣ ಆರಂಭಿಸಿದ ಅವರು, ನಂತರ ದೇಶದ ಟೆಲಿವಿಶನ್ ಸಂಸ್ಥೆಯ ಮುಖ್ಯಸ್ಥರಾಗಿಯೂ, ಬಳಿಕ ಇರಾನ್ ಸಂಸತ್ತಿನ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಈ ಹುದ್ದೆಗಳ ಮೂಲಕ ಅವರು ಆಡಳಿತದ ಕೇಂದ್ರದೊಂದಿಗೆ ಆಪ್ತ ಸಂಪರ್ಕ ಹೊಂದಿದ್ದು, ಪ್ರಭಾವಶಾಲಿ ಮತ್ತು ಅನುಭವೀ ನಾಯಕನಾಗಿ ಗುರುತಿಸಿಕೊಂಡಿದ್ದರು. ಆಡಳಿತದೊಳಗಿನ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಲಾರಿಜಾನಿ, ಭವಿಷ್ಯದಲ್ಲಿ ಮಾತುಕತೆಗಳಿಗೆ ದಾರಿ ತೆರೆದಿಡಬಲ್ಲ ನಾಯಕನಾಗಿ ಪರಿಗಣಿಸಲ್ಪಟ್ಟಿದ್ದರು. ಇಂತಹ ಸಮತೋಲನ ಸಾಧಕ ಮತ್ತು ಅನುಭವೀ ನಾಯಕನನ್ನು ಗುರಿಯಾಗಿಸಿ ಹತ್ಯೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾತುಕತೆಗೆ ಅವಕಾಶ ನೀಡುವ ಶಕ್ತಿಗಳನ್ನು ದುರ್ಬಲಗೊಳಿಸುವ ಉದ್ದೇಶ ಇದೆಯೇ ಎಂಬ ಪ್ರಶ್ನೆ ಮೂಡಿದೆ. ಇದಲ್ಲದೆ, ಇಸ್ರೇಲ್ ಆಡಳಿತ ಸರಪಳಿಯನ್ನು ಬದಲಾಯಿಸಿ, ಹೆಚ್ಚು ಕಠಿಣ ಮತ್ತು ಕೇಂದ್ರೀಕೃತ ಕಮಾಂಡ್ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುತ್ತಿದೆಯೇ ಎಂಬುದರ ಕುರಿತು ಕೂಡ ಚರ್ಚೆಗಳು ಆರಂಭವಾಗಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಲಾರಿಜಾನಿಯವರ ಹತ್ಯೆ ಕೇವಲ ವ್ಯಕ್ತಿಯ ನಷ್ಟವಷ್ಟೇ ಅಲ್ಲ; ಅದು ಪ್ರದೇಶದ ರಾಜಕೀಯ ಸಮತೋಲನಕ್ಕೂ ಹಾಗೂ ಭವಿಷ್ಯದ ಶಾಂತಿ ಪ್ರಯತ್ನಗಳಿಗೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇಸ್ರೇಲ್ ದಾಳಿಯಲ್ಲಿ ಅಲಿ ಲಾರಿಜಾನಿ ಹತ್ಯೆ: ದೃಢಪಡಿಸಿದ ಇರಾನ್
ಟೆಹ್ರಾನ್, ಮಾ.18: ಇಸ್ರೇಲ್ ಮಂಗಳವಾರ ಮುಂಜಾನೆ ನಡೆಸಿದ ದಾಳಿಯಲ್ಲಿ ಇರಾನ್ ನ ಹಿರಿಯ ಭದ್ರತಾ ನಾಯಕ ಅಲಿ ಲಾರಿಜಾನಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರ ದೃಢಪಡಿಸಿದೆ ಎಂದು Aljazeera ವರದಿ ಮಾಡಿದೆ. ಇರಾನ್ನ ಅರೆ ಸರಕಾರಿ ಸುದ್ದಿ ಮಾಧ್ಯಮ ‘ಮೆಹರ್ ನ್ಯೂಸ್’ ವರದಿಯ ಪ್ರಕಾರ, ದೇಶದ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯು ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಿದೆ. ಇಸ್ರೇಲ್ ತನ್ನ ದಾಳಿಯಲ್ಲಿ ಲಾರಿಜಾನಿಯವರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ನಂತರ ಈ ದೃಢೀಕರಣ ಹೊರಬಂದಿದೆ. “ಇರಾನ್ನ ಅಭಿವೃದ್ಧಿ ಮತ್ತು ಇಸ್ಲಾಮಿಕ್ ಕ್ರಾಂತಿಗಾಗಿ ಜೀವನವಿಡೀ ಸೇವೆ ಸಲ್ಲಿಸಿದ ಅವರು, ಕೊನೆಗೆ ಹುತಾತ್ಮರಾಗಿದ್ದಾರೆ,” ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಲಾರಿಜಾನಿಯವರನ್ನು “ವಿಶಿಷ್ಟ ಚಿಂತಕ ಮತ್ತು ಕ್ರಾಂತಿಕಾರಿ ನಾಯಕ” ಎಂದು ಕರೆದಿದೆ. ತಸ್ನಿಮ್ ಸುದ್ದಿ ಸಂಸ್ಥೆ ಪ್ರಕಟಿಸಿದ ಹೇಳಿಕೆಯಲ್ಲಿ, “ಅವರ ರಕ್ತವು ದೇಶದಲ್ಲಿ ಶಕ್ತಿ ಮತ್ತು ರಾಷ್ಟ್ರೀಯ ಜಾಗೃತಿಗೆ ಕಾರಣವಾಗುತ್ತದೆ,” ಎಂದು ಐಆರ್ಜಿಸಿ ಹೇಳಿದೆ. “ಈ ದಾಳಿಯನ್ನು ನಾವು ಮರೆಯುವುದಿಲ್ಲ,” ಎಂದು ಐಆರ್ಜಿಸಿ ಎಚ್ಚರಿಕೆ ನೀಡಿದೆ.
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹ: ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಪತ್ರ
ಬೆಂಗಳೂರು : ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಮತ್ತು ಪದೋನ್ನತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರನ್ನು ಆಗ್ರಹಿಸಿದ್ದಾರೆ. ಮಂಗಳವಾರ ಈ ಈ ಕುರಿತಂತೆ ಪತ್ರವನ್ನು ಬರೆದಿರುವ ಬಿಳಿಮಲೆ, ಪ್ರಸ್ತುತ ರೈಲ್ವೆ ನೇಮಕಾತಿ ಹಾಗೂ ಪದೋನ್ನತಿ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿ ಲಭ್ಯವಿಲ್ಲದಿರುವುದರಿಂದ ಕನ್ನಡ ಭಾಷಾಭಿಮಾನಿಗಳಲ್ಲಿ ಹಾಗೂ ಅಭ್ಯರ್ಥಿಗಳಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ರಾಜ್ಯ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವು ಅಭ್ಯರ್ಥಿಗಳ ಮೂಲಭೂತ ಸಾಂವಿಧಾನಿಕ ಹಕ್ಕಾಗಿದ್ದು, ಇದು ಸಮಾನ ಅವಕಾಶಗಳ ಸಿದ್ಧಾಂತಕ್ಕೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ರೈಲ್ವೆ ಇಲಾಖೆಯು ಕರ್ನಾಟಕದಲ್ಲಿ ನಡೆಸುತ್ತಿದ್ದ ಮುಂಭಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ದೊರಕದೇ ಇರುವ ಕುರಿತು ಪ್ರತಿಭಟನೆ ಬಂದ ಕಾರಣ ರೈಲ್ವೆ ಇಲಾಖೆಯು ಪರೀಕ್ಷೆಗಳನ್ನು ಅನಿರ್ದಿಷ್ಠಾ ವಧಿಗೆ ಮುಂದೂಡಿರುವುದು ಕನ್ನಡಿಗರ ತಾತ್ಕಾಲಿಕ ಗೆಲುವಾದರೂ ಇದನ್ನು ಶಾಶ್ವತ ಪರಿಹಾರವೆಂದು ಭಾವಿಸಲು ಬರುವುದಿಲ್ಲ. ರಾಜ್ಯದ ಎಲ್ಲ ಸಂಸದರು ಒಗ್ಗಟಾಗಿ ಸಂಸತ್ತಿನಲ್ಲಿ ಈ ವಿಷಯವನ್ನು ಕೇಂದ್ರ ಹಾಗೂ ಸಂಬಂಧಿತ ಸಚಿವಾಲಯದ ಗಮನಕ್ಕೆ ತಂದು ಕ್ರಮಕ್ಕೆ ಆಗ್ರಹಿಸಬೇಕು ಎಂದು ಅವರು ಕೋರಿದ್ದಾರೆ. ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಸಂಸದರು ಒತ್ತಾಯಿಸಬೇಕು. ಕನ್ನಡಿಗರ ಭಾಷಾ ಹಕ್ಕುಗಳ ದೃಷ್ಠಿಯಿಂದ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
Mysuru | ಲಕ್ಷಾಂತರ ರೂ. ವಂಚನೆ; ಕೆಎಸ್ಯು ಮಾಜಿ ಕುಲಸಚಿವ, ಸಿಬ್ಬಂದಿಗೆ ಜೈಲು ಶಿಕ್ಷೆ
ಮೈಸೂರು : ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾಜಿ ಉಪ ಕುಲಸಚಿವ ಎಂ.ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ಮಂಜುನಾಥ್ಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಮೈಸೂರಿನ ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ ಇಬ್ಬರಿಗೂ ತಲಾ 2.5 ವರ್ಷ ಜೈಲು ಶಿಕ್ಷೆ ಹಾಗೂ ರೂ. 40 ಸಾವಿರ ದಂಡ ವಿಧಿಸಿದೆ. ಉಪ ಕುಲಸಚಿವರಾಗಿದ್ದ ವೇಳೆ ಕೃಷ್ಣಮೂರ್ತಿ, ಮಂಜುನಾಥ್ ಜೊತೆಗೂಡಿ ವಿವಿಯಲ್ಲಿ ಎಫ್ಡಿಎ ಮತ್ತು ಎಸ್ಡಿಎ ಹುದ್ದೆ ಕೊಡಿಸುವುದಾಗಿ ರೂ.8 ಲಕ್ಷ ಹಣ ಪಡೆದು ವಂಚನೆ ನಡೆಸಿದ್ದರು. ದೂರು ಆಧರಿಸಿ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎ.ಜಿ. ಶಿಲ್ಪಾ ಶಿಕ್ಷೆ ಪ್ರಕಟಿಸಿದರು. ಸರಕಾರದ ಪರವಾಗಿ ಕೆ. ಪ್ರಕಾಶ ವಾದ ಮಂಡಿಸಿದರು.
ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು; ಅಂತಿಮ ವರದಿ ಸಲ್ಲಿಕೆಗೆ ಎ.29ರವರೆಗೆ ಕಾಲಾವಕಾಶ ನೀಡಿದ ಹೈಕೋರ್ಟ್
ಬೆಂಗಳೂರು: ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿನ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ನಿರ್ಗತಿಕರಾಗಿರುವವರು ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವ ಕುರಿತ ಮಾಹಿತಿ ಒಳಗೊಂಡ ಅಂತಿಮ ವರದಿ ಸಲ್ಲಿಸಲು ಪ್ರಕರಣದ ಅಮೈಕಸ್ ಕ್ಯೂರಿಗೆ ಹೈಕೋರ್ಟ್ ಎಪ್ರಿಲ್ 29ರವರೆಗೆ ಕಾಲಾವಕಾಶ ನೀಡಿದೆ. ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರಕರಣ ಅಮೈಕಸ್ ಕ್ಯೂರಿ ಬಿ.ವಿ.ವಿದ್ಯುಲ್ಲತಾ ಅವರು, ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವುದು ಮತ್ತು ನಿರ್ಗತಿಕರಾಗಿರುವವರ ಮಾಹಿತಿ ಒಳಗೊಂಡ ಅಂತಿಮ ವರದಿಯನ್ನು ಎರಡು-ಮೂರು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಆದರೆ, ನಿರಾಶ್ರಿತರು ತಾವಿದ್ದ ಜಾಗ ತೊರೆದು ಪುನರ್ವಸತಿ ಕೇಂದ್ರಕ್ಕೆ ಹೋಗಲು ಇಷ್ಟಪಡುತ್ತಿಲ್ಲ. ಬಡಾವಣೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ಪುನರ್ವಸತಿ ವ್ಯವಸ್ಥೆ ಕುರಿತು ಅಂತಿಮ ವರದಿ ಸಲ್ಲಿಸಲು ಎಪ್ರಿಲ್ 29ರವರೆಗೆ ಅಮೈಕಸ್ ಕ್ಯೂರಿ ಅವರಿಗೆ ಕಾಲಾವಕಾಶ ನೀಡಿ, ಅರ್ಜಿ ವಿಚಾರಣೆ ಮುಂದೂಡಿತು.
ಬೆಂಗಳೂರು : ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಸರಬರಾಜು ನಿಲ್ಲಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಇದೇ ವೇಳೆ, ರಾಜ್ಯವಾರು ಎಲ್ಪಿಜಿ ಸಿಲಿಂಡರ್ಗಳ ಹಂಚಿಕೆ ಪ್ರಕ್ರಿಯೆ, ಮಾರ್ಚ್ ತಿಂಗಳಲ್ಲಿ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಎಷ್ಟು? ಮತ್ತು ರಾಜ್ಯದಲ್ಲಿ ಪ್ರಸ್ತುತ ಸಿಲಿಂಡರ್ ದಾಸ್ತಾನು ಎಷ್ಟಿದೆ? ಎಂಬ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಬೆಂಗಳೂರು ಹೋಟೆಲ್ಗಳ ಸಂಘ ಮತ್ತದರ ಪದಾಧಿಕಾರಿಗಳು ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿತಲ್ಲದೆ, ಅರ್ಜಿಯಲ್ಲಿ ಹೋಟೆಲ್ ಉದ್ಯಮದವರು ಎತ್ತಿರುವ ಎಲ್ಲ ವಿಚಾರಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. ಇದಕ್ಕೂ ಮುನ್ನ ಅರ್ಜಿದಾರ ವಕೀಲ ಕೆ. ಸತೀಶ್ ಭಟ್ ವಾದ ಮಂಡಿಸಿ, ಬೆಂಗಳೂರು ನಗರದಲ್ಲಿ 40 ಸಾವಿರಕ್ಕೂ ಅಧಿಕ ಹೋಟೆಲ್-ರೆಸ್ಟೋರೆಂಟ್ಗಳಿದ್ದು, ಅಲ್ಲಿ ಸುಮಾರು 6 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಏಕಾಏಕಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಸರಬರಾಜನ್ನು ನಿಲ್ಲಿಸಲಾಗಿದೆ. ಇದರಿಂದ, ಹೋಟೆಲ್ಗಳು ಮುಚ್ಚುಲ್ಪಡುತ್ತಿವೆ, ಅವುಗಳ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇಡೀ ರಾಜ್ಯಕ್ಕೆ ನಿತ್ಯ 1 ಸಾವಿರ ಸಿಲಿಂಡರ್ ಸರಬರಾಜು ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಹೀಗಾದಾರೆ ಸಿಲಿಂಡರ್ ಸರಬರಾಜು ಬಿಕ್ಕಟ್ಟು ಪರಿಹಾರ ಹೇಗೆ ಮಾಡಲಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ಪರ ವಕೀಲರು, ಈ ಅರ್ಜಿಯಲ್ಲಿ ಎತ್ತಲಾಗಿರುವ ವಿಚಾರದ ಬಗ್ಗೆ ಮುಂಬೈ ಹೈಕೋರ್ಟ್ ನಿನ್ನೆಯಷ್ಟೇ ವಿಚಾರಣೆ ಮಾಡಿದೆ ಎಂದು ತಿಳಿಸಿ ಆ ಕುರಿತ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಮುಂದುವರಿದು, ಸಿಲಿಂಡರ್ ಪೂರೈಕೆಯು ಸರಕಾರದ ನೀತಿ-ನಿಯಮದ ವಿಚಾರವಾಗಿದೆ. ಪ್ರಕರಣದ ಕುರಿತು ಕೇಂದ್ರ ಸರಕಾರದಿಂದ ಅಗತ್ಯ ಮಾಹಿತಿ-ಸೂಚನೆಗಳನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಸೋಮವಾರವಷ್ಟೇ ಅಗತ್ಯ ಮಾಹಿತಿ ನಮಗೆ ಲಭ್ಯವಾಗಲಿದೆ. ಆದ್ದರಿಂದ, ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಬೇಕು ಎಂದು ಕೋರಿದರು. ರಾಜ್ಯ ಸರಕಾರದ ಪರ ವಕೀಲರು ಸಹ ಅರ್ಜಿಗೆ ವಿವರಣೆ ನೀಡಲಾಗುವುದು ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಎಲ್ಪಿಜಿ ಹಂಚಿಕೆ ಕುರಿತ ವಿವರವಾದ ಮಾಹಿತಿ ಒದಗಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಮಮತಾ ಬ್ಯಾನರ್ಜಿಗೆ ಸೋಲಿನ ರುಚಿ ತೋರಿಸಲು ಸಜ್ಜಾದ ಬಿಜೆಪಿ ನಾಯಕರು | West Bengal Election
ಪಶ್ಚಿಮ ಬಂಗಾಳ ಚುನಾವಣೆ ಅಖಾಡದಲ್ಲಿ ಈ ಬಾರಿ ಮಮತಾ ಬ್ಯಾನರ್ಜಿಗೆ ಎಲ್ಲಾ ಉಲ್ಟಾ ಆಗ್ತಾ ಇದೆ ಎನ್ನಬಹುದು. ಒಂದು ಕಡೆ ಪಕ್ಷದಲ್ಲೇ ಎದುರಾಗಿರುವ ಆಂತರಿಕ ತಿಕ್ಕಾಟ ಹಾಗೂ ಇಷ್ಟು ವರ್ಷಗಳ ಕಾಲ ಸತತ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿರುವ ಟಿಎಂಸಿ ಪಕ್ಷಕ್ಕೆ ಅದೇ ರಾಜ್ಯದಲ್ಲಿ, ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಕೂಡ ಜೋರಾಗಿದೆ. ಇದು ಸಾಲದು
ತಮಿಳುನಾಡು ಅಖಾಡದಲ್ಲಿ ಬಿಜೆಪಿ ಗೆಲುವಿಗೆ ನಾನಾ ತಂತ್ರ, ದಕ್ಷಿಣ ಜಯಕ್ಕಾಗಿ ಭರ್ಜರಿ ಪ್ಲಾನ್ | Tamil Nadu Election
ತಮಿಳುನಾಡು ಚುನಾವಣೆ ಅಖಾಡ ರಂಗೇರಿದ್ದು, ಗೆಲುವಿಗೆ ಭರ್ಜರಿ ಲೆಕ್ಕಾಚಾರ ಆರಂಭ ಆಗುತ್ತಿದೆ. ಒಂದು ಕಡೆ ಡಿಎಂಕೆ ಪಕ್ಷ ಅಧಿಕಾರದಲ್ಲಿ ಇದ್ದು, ಮತ್ತೊಂದು ಬಾರಿ ಭರ್ಜರಿ ಗೆಲುವು ದಾಖಲಿಸಲು ಹವಣಿಸುತ್ತಿದೆ. ಇದೇ ಸಮಯದಲ್ಲಿ ನಟ ವಿಜಯ್ ಅವರ ಟಿವಿಕೆ ಪಾರ್ಟಿ ಕೂಡ ವಿಜಯ ಪತಾಕೆ ಹಾರಿಸಲು ಕಾಯುತ್ತಿದ್ದು, ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದರೂ ವಿಜಯ್ ಹಾವಾ ಈ
Gautam Gambhir: ನನಗೆ ಪ್ರಾಮಾಣಿಕತೆಯೇ ಮುಖ್ಯ ಎಂದ ಗಂಭೀರ್; ಕೊಹ್ಲಿ-ರೋಹಿತ್ ನಿವೃತ್ತಿ ಹಿಂದಿದೆಯೇ ಕೋಚ್ ಕೈವಾಡ?
Gautam Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ತಮ್ಮ ಸಂಬಂಧವನ್ನು ತಾವು ಬಯಸಿದ ರೀತಿಯಲ್ಲಿ ನಿರ್ವಹಿಸಿಲ್ಲವೇನೋ ಎಂಬ ಸುಳಿವು ನೀಡಿದ್ದಾರೆ. ಈ ಹೇಳಿಕೆ ಇದೀಗ ಕ್ರಿಕೆಟ್ ವಯಲದಲ್ಲಿ ಹಾಗೂ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗಂಭೀರ್ ಅವರ ತರಬೇತಿಯ ಮೊದಲ ವರ್ಷದಲ್ಲೇ, ಇಂಗ್ಲೆಂಡ್
ಬಳ್ಳಾರಿ | ಶಾಲಾ ವಾರ್ಷಿಕೋತ್ಸವ, ಬೀಳ್ಕೊಡುಗೆ ಕಾರ್ಯಕ್ರಮ
ಬಳ್ಳಾರಿ/ಸಂಡೂರು: ತಾಲೂಕಿನ ತಾರಾನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಶಾರದಾ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವನ್ನು ತಾಲೂಕು ಪಂಚಾಯತಿ ಸದಸ್ಯೆ ಲಕ್ಷ್ಮಿ ತಿಮ್ಮಪ್ಪ, ಎಸ್ಡಿಎಂಸಿ ಅಧ್ಯಕ್ಷ ಎನ್. ಪಾಲಯ್ಯ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ಹಾದಿಮನಿ, ಸಿಆರ್ಪಿ ಜಗದೀಶ್ ಹಾಗೂ ಮುಖ್ಯೋಪಾಧ್ಯಾಯ ಹೇಮಂತ್ ರಾಜ್ ಕೆ ಉದ್ಘಾಟಿಸಿದರು. ಏಳನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅನುಶ್ರೀ ಎಂ.ಎನ್ (ಪ್ರಥಮ), ಕಲ್ಪನಾ (ದ್ವಿತೀಯ), ಕವನ (ತೃತೀಯ) ಹಾಗೂ ಉತ್ತಮ ವಿದ್ಯಾರ್ಥಿ ಸುರೇಶ್ ಬಿ.ಎನ್ ಅವರನ್ನು ನಗದು ಬಹುಮಾನ ಹಾಗೂ ಸ್ಮರಣಿಕೆಯಿಂದ ಸನ್ಮಾನಿಸಲಾಯಿತು. ಡಾ. ಕೌಲೂರು ಬಹುಮಾನ ವಿತರಿಸಿ, ಮುಂದಿನ ವರ್ಷಗಳಲ್ಲಿಯೂ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಿ ತಿಮ್ಮಪ್ಪ ಅವರು ಶಾಲೆಗೆ ಬ್ಲೂಟೂತ್ ಸ್ಪೀಕರ್ ದೇಣಿಗೆಯಾಗಿ ನೀಡಿದರು. ನಲಿ-ಕಲಿ ವಿದ್ಯಾರ್ಥಿಗಳ ಆಟೋ ವ್ಯವಸ್ಥೆಗೆ ಆರ್ಥಿಕ ಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು. ಅಕ್ಷರಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಿಕ್ಷಕಿ ಡಾ. ಸುಮಿತ್ರ ಎನ್ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿ ಮನರಂಜನೆ ನೀಡಿದರು. ಈ ವೇಳೆ ಗ್ರಾಮದ ಮುಖಂಡರಾದ ಮಾರುದ್ರೇಗೌಡ, ದೇವೇಂದ್ರಪ್ಪ, ಆನಂದಪ್ಪ, ವಿಜಯ್ ಕುಮಾರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಜ್-2026 | ಮಾ.23ರಿಂದ ಯಾತ್ರಿಗಳಿಗಾಗಿ ಲಸಿಕಾ ಶಿಬಿರ: ಝುಲ್ಫಿಖಾರ್ ಅಹ್ಮದ್ ಖಾನ್
ಬೆಂಗಳೂರು : ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ರಾಜ್ಯದಿಂದ ತೆರಳುತ್ತಿರುವ ಯಾತ್ರಿಗಳಿಗಾಗಿ ಮಾ.23 ರಿಂದ 28ರವರೆಗೆ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಖಾರ್ ಅಹ್ಮದ್ ಖಾನ್(ಟಿಪ್ಪು) ತಿಳಿಸಿದ್ದಾರೆ. ಮಂಗಳವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮಾ.23 ರಿಂದ 26ರವರೆಗೆ ಬೆಂಗಳೂರಿನ ಹೆಗಡೆ ನಗರ ಮುಖ್ಯರಸ್ತೆಯಲ್ಲಿರುವ ಹಜ್ ಭವನದಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ 4,229 ಯಾತ್ರಿಗಳಿಗಾಗಿ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಮಾ.23: ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ 115 ಯಾತ್ರಿಗಳಿಗಾಗಿ ಕೊಪ್ಪಳದ ಭಾಗ್ಯನಗರದಲ್ಲಿರುವ ಲಕ್ಷ್ಮಿ ಪ್ಯಾಲೇಸ್ನಲ್ಲಿ(ಹೆಚ್ಚಿನ ಮಾಹಿತಿಗಾಗಿ ಅಮ್ಜದ್ ಕೊಪ್ಪಳ, ಮೊ.9480666786 ಇವರನ್ನು ಸಂಪರ್ಕಿಸಬಹುದಾಗಿದೆ), ಕಲಬುರಗಿ ಜಿಲ್ಲೆಯ 572 ಯಾತ್ರಿಗಳಿಗಾಗಿ ಕಲಬುರಗಿಯ ನಯಾ ಮೊಹಲ್ಲಾ ಮಜ್ಲಿಸೆ ರಹ್ಬರೆ ಹುಜ್ಜಾಜ್ ಸಂಸ್ಥೆಯ ಕಚೇರಿಯಲ್ಲಿ(ಮಝರ್ ಹುಸೇನ್, ಮೊ.9448278611) ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ 150 ಯಾತ್ರಿಗಳಿಗಾಗಿ ಚಿಕ್ಕಮಗಳೂರಿನ ಫುರ್ಖಾನಿಯಾ ಶಾದಿ ಮಹಲ್(ಶೇಕ್ ಫರೀದ್, ಮೊ.9481576667). ವಿಜಯಪುರ ಜಿಲ್ಲೆಯ 268 ಯಾತ್ರಿಗಳಿಗಾಗಿ ವಿಜಯಪುರದ ಸೆಂಟ್ರಲ್ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಲಮ್ಗೇರಿ ಶಾದಿ ಮಹಲ್(ಹಾಜಿ ಅಬ್ದುಲ್ ಹಮೀದ್, ಮೊ.8317446742). ದಾವಣಗೆರೆ ಜಿಲ್ಲೆಯ 229 ಯಾತ್ರಿಗಳಿಗಾಗಿ ಜಗಳೂರು ಬಸ್ ನಿಲ್ದಾಣದ ಸಮೀಪದ ಎಸ್.ಎಸ್.ಆಸ್ಪತ್ರೆಯಲ್ಲಿ (ವಸೀಮ್ ಚಾರ್ಲಿ, ಮೊ.9900196596) ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಾ.24: ತುಮಕೂರು ಜಿಲ್ಲೆಯ 209 ಯಾತ್ರಿಗಳಿಗಾಗಿ ಹಝ್ರತ್ ಮದಾರ್ ಶಾ ಮಕಾನ್(ಖಲೀಲ್, ಮೊ.9972293897). ಚಿತ್ರದುರ್ಗ ಜಿಲ್ಲೆಯ 98 ಯಾತ್ರಿಗಳಿಗಾಗಿ ಆಝಾದ್ ಮಿಲ್ ರಸ್ತೆಯಲ್ಲಿರುವ ಎಂ.ಕೆ.ಪ್ಯಾಲೇಸ್(ದಾದಾಪೀರ್, ಮೊ.9611148482), ಹಾಸನ ಜಿಲ್ಲೆಯ 126 ಯಾತ್ರಿಗಳಿಗಾಗಿ ಹಾಸನದ ಹಳೆ ಈದ್ಗಾ ರಸ್ತೆಯಲ್ಲಿರುವ ಶರೀಫ್ ಚಾರಿಟೀಸ್ನಲ್ಲಿ(ನದೀಮುರ್ರಹ್ಮಾನ್, ಮೊ.9480941919) ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ 70 ಯಾತ್ರಿಗಳಿಗಾಗಿ ಹಳೆ ಎಂ.ಸಿ.ರಸ್ತೆಯಲ್ಲಿರುವ ಮದ್ರಸಾ ಫಾರೂಕ್ ಉಲ್ ಉಲೂಮ್(ಉಬೇದ್, ಮೊ.9448414560), ಚಾಮರಾಜನಗರ ಜಿಲ್ಲೆಯ 60 ಯಾತ್ರಿಗಳಿಗಾಗಿ ಕೊಳ್ಳೇಗಾಲದ ನೂರ್ ಮೊಹಲ್ಲ ಸಮೀಪದ ಕೆಂಪಯ್ಯನಪಾಳ್ಯ ಮುಖ್ಯರಸ್ತೆಯಲ್ಲಿರುವ ಆರ್.ಎಂ.ಕನ್ವೆಂಷನ್ ಹಾಲ್(ಮುಹಮ್ಮದ್ ಝಈಮ್, ಮೊ.9902311066), ಕೋಲಾರ ಜಿಲ್ಲೆಯ 246 ಯಾತ್ರಿಗಳಿಗಾಗಿ ಪ್ರಭಾತ್ ಚಲನಚಿತ್ರ ಮಂದಿರ ಸಮೀಪದ ಹಳೆ ಅಂಚೆ ಕಚೇರಿ ರಸ್ತೆಯಲ್ಲಿರುವ ಆಕ್ಸ್ ಫರ್ಡ್ ಪ್ರೌಢ ಶಾಲೆಯಲ್ಲಿ(ಡಾ.ಇಕ್ಬಾಲ್, ಮೊ.9448209778) ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಾ.25: ಯಾದಗಿರಿ ಜಿಲ್ಲೆಯ 94 ಯಾತ್ರಿಗಳಿಗಾಗಿ ಯಾದಗಿರಿ ಕಾಂಗ್ರೆಸ್ ಕಚೇರಿ ಹಿಂಭಾಗದಲ್ಲಿರುವ ಜಿಲ್ಲಾ ಆರೋಗ್ಯ ಕಚೇರಿ(ಫರೀದ್, ಮೊ.9742199181), ಶಿವಮೊಗ್ಗ ಜಿಲ್ಲೆಯ 250 ಯಾತ್ರಿಗಳಿಗಾಗಿ ಶಿವಮೊಗ್ಗದ 100 ಅಡಿ ರಸ್ತೆಯಲ್ಲಿರುವ ಫಾರೂಖಿಯಾ ಶಾದಿ ಮಹಲ್(ಶಫೀಉಲ್ಲಾ, ಮೊ.9845791016, ಮೈಸೂರಿನ 617 ಯಾತ್ರಿಗಳಿಗಾಗಿ ಮಾ.25 ಹಾಗೂ 26ರಂದು ಉದಯಗಿರಿಯ ಪಿ ಅಂಡ್ ಟಿ ಕ್ವಾಟ್ರಸ್ ರಸ್ತೆಯಲ್ಲರುವ ಆರ್.ಕೆ.ಪ್ಯಾಲೇಸ್(ಮುಮ್ತಾಝ್, ಮೊ.9741789000)ನಲ್ಲಿ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ 196 ಯಾತ್ರಿಗಳಿಗಾಗಿ ಮಲ್ಪೆ ಸೈಯದಿನ ಅಬೂಬಕ್ಕರ್ ಸಿದ್ದೀಖ್ ಜಾಮಿಯಾ ಮಸೀದಿ(ಯಾಹ್ಯಾ, ಮೊ.9945565905), ಚಿಕ್ಕಬಳ್ಳಾಪುರ ಜಿಲ್ಲೆಯ 150 ಯಾತ್ರಿಗಳಿಗಾಗಿ ಚಿಕ್ಕಬಳ್ಳಾಪುರದ ಜಮಾಅತೆ ಅಹ್ಲೆ ಇಸ್ಲಾಮ್ ಮದೀನಾ ಶಾದಿ ಮಹಲ್(ಬಿ.ಎಸ್.ರಫಿಉಲ್ಲಾ, ಮೊ.9845073780), ಬಳ್ಳಾರಿ ಜಿಲ್ಲೆಯ 132 ಯಾತ್ರಿಗಳಿಗಾಗಿ ಕೌಲ್ ಬಝಾರ್ನ ಜಾಗೃತಿ ನಗರದಲ್ಲಿರುವ ಮಸ್ಜಿದೆ ಅಬುತವಾಬ್(ಹುಮಾಯೂನ್, ಮೊ.9880678786)ನಲ್ಲಿ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಾ.26: ಬೆಳಗಾವಿಯ 550 ಯಾತ್ರಿಗಳಿಗಾಗಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎದುರು ಇರುವ ಅಂಜುಮನ್ ಎ ಇಸ್ಲಾಮ್ ಕಲ್ಯಾಣ ಮಂಟಪ(ಸಮೀಉಲ್ಲಾ ಮಡಿವಾಳೆ, ಮೊ.7676686778 ಹಾಗೂ ಹಾಫಿಝ್ ಬಶೀರ್, ಮೊ.9845497627), ಬೀದರ್ ಜಿಲ್ಲೆಯ 306 ಯಾತ್ರಿಗಳಿಗಾಗಿ ಬೀದರ್ನ ಚೌಬಾರ ಸಮೀಪದ ಜಾಮಿಯಾ ಮಸ್ಜಿದ್ ಫಂಕ್ಷನ್ ಹಾಲ್( ಮಾನ್ಸೂರ್ ಖಾದ್ರಿ, ಮೊ.9900137481)ನಲ್ಲಿ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ರಾಯಚೂರಿನ 154 ಯಾತ್ರಿಗಳಿಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸಂಕೀರ್ಣ(ಶಾ ಆಲಮ್ ಸಾಬ್, ಮೊ.9845034065, ಕೊಡಗು ಜಿಲ್ಲೆಯ 215 ಯಾತ್ರಿಗಳಿಗಾಗಿ ಕೊಡಗು ಜಿಲ್ಲಾ ಆಸ್ಪತ್ರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ 281 ಯಾತ್ರಿಗಳಿಗಾಗಿ ಭಟ್ಕಳದ ತಂಝೀಮ್ ಕಚೇರಿ(ಇಮ್ರಾನ್, ಮೊ.9886199998, ಯಾಹ್ಯಾ, ಮೊ.9945565905)ಯಲ್ಲಿ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಾ.28: ಬಾಗಲಕೋಟೆಯ 193 ಯಾತ್ರಿಗಳಿಗಾಗಿ ಜಮಖಂಡಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಶಾಲೆ(ಸಮೀರ್, ಮೊ.9448119386), ಧಾರವಾಡ ಹಾಗೂ ಹಾವೇರಿಯ 590 ಯಾತ್ರಿಗಳಿಗಾಗಿ ಧಾರವಾಡದ ಮಾಲಪುರದಲ್ಲಿರುವ ಸಿಟಿ ಪ್ಯಾರಡೈಸ್ ಪಠಾಣ್ ಕಮ್ಯುನಿಟಿ ಹಾಲ್(ಹಮೀದ್, ಮೊ.8095123611), ರಾಮನಗರ ಜಿಲ್ಲೆಯ 140 ಯಾತ್ರಿಗಳಿಗಾಗಿ ರಾಮನಗರ ಜಿಲ್ಲಾ ಆಸ್ಪತ್ರೆ(ಜೀಲಾನಿ, ಮೊ.8660977800)ಯಲ್ಲಿ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 1357 ಯಾತ್ರಿಗಳಿಗಾಗಿ ಮಂಗಳೂರಿನ ಯೆನಪೋಯ ಆಸ್ಪತ್ರೆ(ಅಶ್ರಫ್ ತಂಙಳ್, ಮೊ.9074245781, ಹನೀಫ್ ಹಾಜಿ, ಮೊ.9019144555) ಹಾಗೂ ಗದಗ ಜಿಲ್ಲೆಯ 85 ಯಾತ್ರಿಗಳಿಗಾಗಿ ಎಸ್.ಎಸ್.ಪಾಟೀಲ್ ನಗರದ ಮದ್ರಸಾ(ಮಕಾಂದಾರ್, ಮೊ.9686022264)ದಲ್ಲಿ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಯಾತ್ರಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಎಂದು ಅವರು ಮಾಹಿತಿ ನೀಡಿದ್ದಾರೆ.
ಧೋನಿಯೊಂದಿಗೆ CSK ಪರ ಆಡಲು ಉತ್ಸುಕನಾಗಿರುವೆ: ಸಂಜು ಸ್ಯಾಮ್ಸನ್
ತಿರುವನಂತಪುರ, ಮಾ.17: ಭಾರತ ತಂಡಕ್ಕೆ T20 ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಕೊಡುಗೆ ನೀಡಿದ್ದ ಸಂಜು ಸ್ಯಾಮ್ಸನ್ ಇದೀಗ ತನ್ನ ಗಮನವನ್ನು ಐಪಿಎಲ್ ನತ್ತ ಹರಿಸಿದ್ದಾರೆ. T20 ವಿಶ್ವಕಪ್ ನಲ್ಲಿನ ತನ್ನ ಶ್ರೇಷ್ಠ ಫಾರ್ಮ್ ಅನ್ನು ಪ್ರಮುಖ T20 ಪಂದ್ಯಾವಳಿಯಲ್ಲಿ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ‘‘T20 ವಿಶ್ವಕಪ್ ಗೆದ್ದಿರುವುದು ನನ್ನ ವೃತ್ತಿ ಬದುಕಿನ ಮಹತ್ವದ ಕ್ಷಣ. ಇದೀಗ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸುವೆ. ಎಂ.ಎಸ್. ಧೋನಿ ಅವರೊಂದಿಗೆ ಆಡಲು ಎದುರು ನೋಡುತ್ತಿರುವೆ. CSKಯೊಂದಿಗೆ ಆಡಲು ನಿಜಕ್ಕೂ ಉತ್ಸುಕನಾಗಿರುವೆ. ಫೋನ್ ನಲ್ಲಿ ಧೋನಿ ಅವರೊಂದಿಗೆ ಮಾತನಾಡಿರುವೆ. ಭಾರತೀಯ ತಂಡದಲ್ಲಿದ್ದಾಗ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೆ. CSKಯಲ್ಲಿ ಧೋನಿ ಅವರೊಂದಿಗೆ ಸುಮಾರು ಎರಡು ತಿಂಗಳ ಕಾಲ ಇರುವುದು ವಿಭಿನ್ನ ಅನುಭವ ನೀಡಲಿದೆ. ಅವರನ್ನು ಹತ್ತಿರದಿಂದ ನೋಡುತ್ತಾ, ಅವರಿಂದ ಪಾಠ ಕಲಿಯುವುದು ನನಗೆ ಲಭಿಸಿದ ಸುವರ್ಣಾವಕಾಶ’’ ಎಂದು ಸಂಜು ಹೇಳಿದ್ದಾರೆ. ‘‘ವಿಶ್ವಕಪ್ ವೇಳೆ ಚೆನ್ನೈನ ಪ್ರೇಕ್ಷಕರಿಂದ ಪಡೆದ ಬೆಂಬಲದಿಂದ ಅಚ್ಚರಿಗೊಂಡಿರುವೆ. ನಾನು ನಿಜವಾಗಿಯೂ ಅದೃಷ್ಟವಂತ. ಐಪಿಎಲ್ ನಲ್ಲಿ ಅಭಿಮಾನಿಗಳನ್ನು ನಿರಾಶೆಗೊಳಿಸಲು ಬಯಸುವುದಿಲ್ಲ. CSK ಒಳಿತಿಗಾಗಿ ತನ್ನ ಶ್ರೇಷ್ಠ ಪ್ರದರ್ಶನ ನೀಡುವೆ’’ ಎಂದು ಸಂಜು ಹೇಳಿದ್ದಾರೆ.
ಸಂಚಾರಿ ಆರೋಗ್ಯ ಘಟಕಗಳ ಬಲವರ್ಧನೆ: ದಿನೇಶ್ ಗುಂಡೂರಾವ್
ಬೆಂಗಳೂರು : ರಾಜ್ಯದ ಗ್ರಾಮೀಣ, ಗುಡ್ಡಗಾಡು ಮತ್ತು ದುರ್ಗಮ ಪ್ರದೇಶಗಳ ಜನರಿಗೆ ತುರ್ತು ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಸಂಚಾರಿ ಆರೋಗ್ಯ ಘಟಕಗಳ ಕಾರ್ಯವೈಖರಿಯನ್ನು ಮತ್ತಷ್ಟು ಚುರುಕುಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಮಂಗಳವಾರ ವಿಧಾನ ಪರಿಷತ್ತಿನ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ್ ಅವರು ನಿಯಮ 72ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಸಂಚಾರಿ ಆರೋಗ್ಯ ಘಟಕಗಳ ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಪ್ರಸ್ತುತ ರಾಜ್ಯಾದ್ಯಂತ ಒಟ್ಟು 81 ಸಂಚಾರಿ ಆರೋಗ್ಯ ಘಟಕಗಳು ಕಾರ್ಯಾಚರಣೆ ನಡೆಸುತ್ತಿವೆ. ಇವುಗಳನ್ನು ಜಿಲ್ಲಾವಾರು ಅವಶ್ಯಕತೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಪಿಎಂ-ಜನ್ಮನ್ ಯೋಜನೆಯಡಿ 5 ಜಿಲ್ಲೆಗಳ ಜೇನು ಕುರುಬ ಮತ್ತು ಕೊರಗ ಸಮುದಾಯಗಳ ಅಭಿವೃದ್ಧಿಗೆ ಹಾಗೂ ಶೇ.50ಕ್ಕಿಂತ ಹೆಚ್ಚು ಪರಿಶಿಷ್ಟ ಪಂಗಡದ ಜನಸಂಖ್ಯೆ ಇರುವ ಗ್ರಾಮಗಳಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಆರೋಗ್ಯ ಕೇಂದ್ರಗಳಿಂದ ದೂರವಿರುವ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದ ದುರ್ಗಮ ಪ್ರದೇಶಗಳ ಆಯ್ಕೆ ಮಾಡಿಕೊಂಡು ಅದ್ಯತೆ ನೀಡಲಾಗುವುದು. ಸಂಚಾರಿ ಘಟಕಗಳ ದುರುಪಯೋಗ ತಡೆಯಲು ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇವುಗಳ ಚಲನವಲನವನ್ನು ಕೇಂದ್ರ ಸರಕಾರದ ‘ಘಟಿ ಶಕ್ತಿ’ ಪೋರ್ಟಲ್ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರಸ್ತುತ ಘಟಕಗಳ ಸೇವೆಯನ್ನು 19ನೇ ಡಿಸೆಂಬರ್ 2025 ರಿಂದ ಹೊಸ ರೂಪದಲ್ಲಿ ಪ್ರಾರಂಭಿಸಲಾಗಿದ್ದು, ಈ ಹಿಂದಿನ ಅನುದಾನ ದುರುಪಯೋಗದ ಆರೋಪಗಳನ್ನು ಸಚಿವ ದಿನೇಶ್ ಗುಂಡೂರಾವ್ ತಳ್ಳಿಹಾಕಿದರು. ಸಂಚಾರಿ ಆರೋಗ್ಯ ಘಟಕಗಳಲ್ಲಿ ತಜ್ಞ ವೈದ್ಯರು, ನರ್ಸ್ಗಳು ಮತ್ತು ಲ್ಯಾಬ್ ತಂತ್ರಜ್ಞರ ಕೊರತೆಯನ್ನು ನೀಗಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಸುಸಜ್ಜಿತ ವಾಹನ ಮತ್ತು ಅಗತ್ಯ ಸಿಬ್ಬಂದಿಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಪ್ರತಿ ಸಂಚಾರಿ ಘಟಕವು ನಿಗದಿತ ದಿನದಂದು ಬೆಳಗ್ಗೆ ಒಂದು ಗ್ರಾಮ ಮತ್ತು ಮಧ್ಯಾಹ್ನ ಮತ್ತೊಂದು ಗ್ರಾಮಕ್ಕೆ ಭೇಟಿ ನೀಡಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆಯಾ ಭಾಗದ ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಈ ಭೇಟಿಯ ಸಮಯದಲ್ಲಿ ಹಾಜರಿರಲು ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ನಾಳೆಯಿಂದ(ಮಾ.18) ಎಸೆಸೆಲ್ಸಿ ಪರೀಕ್ಷೆ ಆರಂಭ
ಬೆಂಗಳೂರು : ರಾಜ್ಯಾದ್ಯಂತ ಮಾ.18ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಈ ಬಾರಿ 2,871 ಕೇಂದ್ರಗಳಲ್ಲಿ ಒಟ್ಟು 9,02,889 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. 8,12,855 ಹೊಸಬರು, 62,845 ಪುನರಾವರ್ತಿತ, 27,189 ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಮಾ.18ರಿಂದ ಎ.2ರವರೆಗೆ ಪರೀಕ್ಷೆ ನಡೆಯುವ ದಿನಗಳಂದು ಮತ್ತು ಪರೀಕ್ಷೆ ನಡೆಯುವ ಸಮಯದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಜೆರಾಕ್ಸ್, ಸೈಬರ್ / ಕಂಪ್ಯೂಟರ್ ಸೆಂಟರ್ ಅಂಗಡಿಗಳನ್ನು ಮುಚ್ಚುವಂತೆ ಪ್ರತಿಬಂಧಕಾಜ್ಞೆಯನ್ನು ವಿಧಿಸಲಾಗಿದೆ. ಉಚಿತ ಸಾರಿಗೆ ವ್ಯವಸ್ಥೆ: ಎಸೆಸೆಲ್ಸಿ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗಿದೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳು ಬಿಎಂಟಿಬಸ್ ಹಾಗೂ ಕೆಎಸ್ಸಾರ್ಟಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಪ್ರವೇಶ ಪತ್ರಗಳನ್ನು ತೋರಿಸಿ ಪರೀಕ್ಷೆ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಬೆಂಗಳೂರು ನಗರದಲ್ಲಿ ಆಲಿಕಲ್ಲು ಸಹಿತ ಮಳೆ
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದೆ. ನಗರದ ಕೆಂಗೇರಿ, ಬಾಪೂಜಿನಗರ, ಚಾಮರಾಜಪೇಟೆ, ಪುರಭವನ ಮತ್ತು ವಿಧಾನಸೌಧ ಸೇರಿದಂತೆ ಸುತ್ತುಮುತ್ತಲ ಪ್ರದೇಶಗಳಲ್ಲಿ ಗಾಳಿ ಸಹಿತ ಮಳೆ ಸುರಿದಿದೆ. ಕರ್ನಾಟಕದಲ್ಲಿ ಯುಗಾದಿ ಹಬ್ಬದ ಮುನ್ನವೇ ಬೇಸಿಗೆ ಮಳೆ ಆರಂಭವಾಗಿದ್ದು, ಬಿಸಿಲ ಧಗೆಗೆ ತತ್ತರಿಸಿದ ಜನರಿಗೆ ಮತ್ತು ಭೂಮಿಗೆ ತಂಪೆರೆದಿದೆ. ಸೋಮವಾರ ರಾತ್ರಿ ನಗರದ ಹಲವೆಡೆ ತುಂತುರು ಮಳೆ ಆಗಿತ್ತು. ವಿಜಯನಗರ, ದೀಪಾಂಜಲಿನಗರ, ಮೈಸೂರು ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿತ್ತು. ಇನ್ನೂ ಮೂರ್ನಾಲ್ಕು ದಿನ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸೇಡಿನ ಸಮಯದಲ್ಲಿ ಮಾತುಕತೆಯೇ? ಅಸಾಧ್ಯ ಎಂದು ಗುಡುಗಿದ ಮೊಜ್ತಾಬಾ ಖಮೇನಿ; ಯುದ್ಧಭೂಮಿಯಲ್ಲಿ ಇಡೀದಿನ ನಡೆದದ್ದೇನು?
Isreal Vs Iran War- ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅಮೆರಿಕ-ಇಸ್ರೇಲ್ ಜೊತೆ ಕದನ ವಿರಾಮ ಅಥವಾ ಶಾಂತಿ ಮಾತುಕತೆ ಸಾಧ್ಯವೇ ಇಲ್ಲ ಎಂದು ಇರಾನ್ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಸ್ಪಷ್ಟಪಡಿಸಿದ್ದಾರೆ. ನಮ್ಮ ನಾಯಕರ ಬಲಿಗೆ ಪ್ರತೀಕಾರ ತೀರಿಸಿಕೊಳ್ಳಬೇಕಿದೆ ಎಂದು ಇರಾನ್ ತಿಳಿಸಿದೆ. ಏತನ್ಮಧ್ಯೆ ಗಾಯಗೊಂಡಿರುವ ಮೊಜ್ತಾಬಾ ಖಮೇನಿ ಚಿಕಿತ್ಸೆಗಾಗಿ ರಷ್ಯಾಕ್ಕೆ ತೆರಳಿದ್ದು ಮಾಸ್ಕೋದಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ಯುದ್ಧ ಕೊನೆಗಾಣಿಸಲು ಭಾರತ ಮಧ್ಯಸ್ಥಿಕೆ ವಹಿಸಬೇಕೆಂದು ಫಿನ್ಲೆಂಡ್ ಅಧ್ಯಕ್ಷರು ಒತ್ತಾಯಿಸಿದ್ದಾರೆ.
ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪೆರೆದ ಮಳೆ: ವಿಜಯಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ
ವಿಜಯಪುರ : ವಿಜಯಪುರ ಜಿಲ್ಲೆಯಾದ್ಯಂತ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ನಗರದಲ್ಲಿ ಸಾಯಂಕಾಲ ಭಾರೀ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆ ತಂಪೆರೆದಿದೆ. ಮುದ್ದೇಬಿಹಾಳ ಪಟ್ಟಣ ಹಾಗೂ ಸುತ್ತಮುತ್ತಲು ಆಲಿಕಲ್ಲು ಮಳೆ ಸುರಿದಿದೆ. ಜಿಲ್ಲೆಯ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ವಿಶೇಷವಾಗಿ ಮುದ್ದೇಬಿಹಾಳ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ರಸ್ತೆಗಳೆಲ್ಲಾ ಮಂಜಿನಿಂದ ಆವೃತವಾದಂತೆ ಬಿಳಿ ಬಣ್ಣಕ್ಕೆ ತಿರುಗಿದ್ದವು. ಬಿರುಗಾಳಿಯ ಅಬ್ಬರಕ್ಕೆ ಕೆಲವೆಡೆ ಮರಗಿಡಗಳು ಧರೆಗುರುಳಿವೆ. ಅಕಾಲಿಕ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತುಸು ತೊಂದರೆ ಅನುಭವಿಸಿದರೂ, ಮಳೆಯಿಂದಾಗಿ ಉಂಟಾದ ತಂಪಾದ ವಾತಾವರಣಕ್ಕೆ ಜಿಲ್ಲೆಯ ಜನತೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ಪದವೀಧರರಲ್ಲಿ ಶೇ. 40 ಜನರಿಗೆ ಉದ್ಯೋಗ ಸಿಗುತ್ತಿಲ್ಲ: ವರದಿ
ಹೊಸದಿಲ್ಲಿ, ಮಾ. 17: ಭಾರತದ ಪದವೀಧರರಲ್ಲಿ ಶೇ. 40 ಜನರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಅಝೀಮ್ ಪ್ರೇಮ್ಜಿ ವಿಶ್ವವಿದ್ಯಾನಿಲಯದ ವರದಿ ಹೇಳಿದೆ. ಭಾರತದಲ್ಲಿ 20ರಿಂದ 29 ವರ್ಷದೊಳಗಿನ 6.3 ಕೋಟಿ ಪದವೀಧರರಲ್ಲಿ 1.1 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಪದವಿ ಪಡೆದ ಒಂದು ವರ್ಷದೊಳಗೆ ಪದವೀಧರರ ಕೇವಲ ಒಂದು ಸಣ್ಣ ಭಾಗ ಮಾತ್ರ ಸ್ಥಿರ ವೇತನದ ಉದ್ಯೋಗಗಳನ್ನು ಪಡೆಯುತ್ತಿದೆ ಎಂದು ಅದು ಹೇಳಿದೆ. ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ’ ವರದಿಯು ತಮ್ಮನ್ನು ನಿರುದ್ಯೋಗಿಗಳೆಂದು ವರದಿ ಮಾಡಿದ ಒಂದು ವರ್ಷದೊಳಗೆ ಕೇವಲ ಶೇ. 7ರಷ್ಟು ಪದವೀಧರರು ಮಾತ್ರ ಶಾಶ್ವತ ವೇತನದ ಉದ್ಯೋಗವನ್ನು ಪಡೆಯುತ್ತಾರೆ ಎಂದು ತಿಳಿಸಿದೆ. ಪದವೀಧರ ನಿರುದ್ಯೋಗಿಗಳ ಸಂಖ್ಯೆ ಅತ್ಯಧಿಕವಾಗಿದೆ. 15ರಿಂದ 25 ವರ್ಷ ವಯಸ್ಸಿನವರಲ್ಲಿ ಇದು ಸುಮಾರು ಶೇ. 40ರಷ್ಟಿದೆ. 25ರಿಂದ 29 ವರ್ಷ ವಯಸ್ಸಿನವರಲ್ಲಿ ಇದು ಸುಮಾರು ಶೇ. 20ರಷ್ಟಿದೆ. ‘‘ಪದವಿ ಪಡೆದ ಒಂದು ವರ್ಷದೊಳಗೆ ಕೇವಲ ಪದವೀಧರರ ಸಣ್ಣ ಭಾಗ ಮಾತ್ರ ಸ್ಥಿರ ವೇತನದ ಉದ್ಯೋಗ ಪಡೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ’’ ಎಂದು ವರದಿ ಹೇಳಿದೆ. ವರದಿಯ ಪ್ರಕಾರ, ಕಳೆದ ಕೆಲವು ದಶಕಗಳಲ್ಲಿ ಯುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಉನ್ನತ ಶಿಕ್ಷಣದ ದಾಖಲಾತಿ ಸಂಖ್ಯೆಯೂ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಯುವ ಪದವೀಧರರ ಒಟ್ಟು ಸಂಖ್ಯೆಯೂ ಹೆಚ್ಚಾಗಿದೆ.
ಮಗುವಿನ ವಯಸ್ಸು ಏನೇ ಇದ್ದರೂ ದತ್ತು ತಾಯಂದಿರು ಮಾತೃತ್ವ ರಜೆಗೆ ಅರ್ಹರು: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಮಾ.17: ಮೂರು ತಿಂಗಳೊಳಗಿನ ಮಕ್ಕಳನ್ನು ದತ್ತು ಪಡೆಯುವ ದತ್ತು ತಾಯಂದಿರಿಗೆ ಮಾತ್ರ ಮಾತೃತ್ವ ರಜೆಗೆ ಅವಕಾಶ ನೀಡಿದ್ದ 2020ರ ಸಾಮಾಜಿಕ ಸುರಕ್ಷಾ ಸಂಹಿತೆಯ (ಎಸ್ಎಸ್ಸಿ) ಕಲಮ್ವೊಂದನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ರದ್ದುಗೊಳಿಸಿತು. ದತ್ತು ಸ್ವೀಕಾರವು ಸಂತಾನೋತ್ಪತ್ತಿ ಸಾಯತ್ತತೆಯ ಭಾಗವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿತು. ದತ್ತು ಪಡೆಯಲಾದ ಮಗುವಿನ ವಯಸ್ಸು ಏನೇ ಆಗಿದ್ದರೂ ದತ್ತು ತಾಯಿಗೆ 12 ವಾರಗಳ ಮಾತೃತ್ವ ರಜೆಯನ್ನು ಪಡೆಯುವ ಹಕ್ಕು ಇರಲೇಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಸ್ಪಷ್ಟಪಡಿಸಿತು. ಮೂರು ತಿಂಗಳುಗಳಿಗಿಂತ ಹೆಚ್ಚಿನ ಪ್ರಾಯದ ಮಕ್ಕಳನ್ನು ದತ್ತು ಪಡೆಯುವ ತಾಯಂದಿರಿಗೆ ಮಾತೃತ್ವ ರಜೆಯನ್ನು ನಿರ್ಬಂಧಿಸಿರುವ ಎಸ್ಎಸ್ಸಿಯ ಕಲಂ 60(4) ಅವರ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ. ಏಕೆಂದರೆ ಅವರೂ ಮೂರು ತಿಂಗಳುಗಳಿಗಿಂತ ಕಡಿಮೆ ಪ್ರಾಯದ ಮಕ್ಕಳನ್ನು ದತ್ತು ಪಡೆಯುವ ತಾಯಂದಿರಂತೆಯೇ ಹೊಣೆಯನ್ನು ಹೊಂದಿರುತ್ತಾರೆ ಎಂದು ನ್ಯಾಯಾಲಯವು ಹೇಳಿತು. ಕಲಂ 60(4) ಜೀವ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸಿರುವ ಸಂವಿಧಾನದ 21ನೇ ವಿಧಿಯನ್ನೂ ಉಲ್ಲಂಘಿಸುತ್ತದೆ ಎಂದು ಪೀಠವು ತಿಳಿಸಿತು. ನ್ಯಾಯವಾದಿ ಹಂಸನಂದಿನಿ ನಂದೂರಿ ಅವರು 2021ರಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ಹೊರಬಿದ್ದಿದೆ.
ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ: ಮಸೂದೆಯಲ್ಲಿನ ಪ್ರಮುಖ ಬದಲಾವಣೆಗಳು ಏನೇನು?
ಸಂಸತ್ತಿನಲ್ಲಿ ಪರಿಚಯಿಸಲಾದ ಹೊಸ ತಿದ್ದುಪಡಿಯು ಲಿಂಗತ್ವ ಅಲ್ಪಸಂಖ್ಯಾತರ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರಲ್ಲಿ ಪ್ರಮುಖ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ. ಈ ತಿದ್ದುಪಡಿಯು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ Vs ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ತತ್ವಗಳಿಗಿಂತ ಭಿನ್ನವಾಗಿದೆ ಎಂದು ಪ್ರಸ್ತುತ ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರರು ಆರೋಪಿಸಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಶುಕ್ರವಾರ (ಮಾರ್ಚ್ 13) ಟ್ರಾನ್ಸ್ ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಇತರ ತಿದ್ದುಪಡಿಗಳ ಜೊತೆಗೆ ಇದನ್ನು ಪ್ರಸ್ತಾಪಿಸುವ ಮಸೂದೆಯನ್ನು ಮಂಡಿಸಿದರು. ಈ ಕ್ರಮವು ದೇಶಾದ್ಯಂತ ಟ್ರಾನ್ಸ್ ಜೆಂಡರ್ ಮತ್ತು LGBT+ ಗುಂಪುಗಳಿಂದ ಟೀಕೆಗೆ ಗುರಿಯಾಗಿದೆ. ►ಟ್ರಾನ್ಸ್ ಜೆಂಡರ್ ಗಳ ವ್ಯಾಖ್ಯಾನಗಳು 2019 ರ ಕಾಯಿದೆಯು ಟ್ರಾನ್ಸ್ ಜೆಂಡರ್ ವ್ಯಕ್ತಿಯನ್ನು ಹುಟ್ಟಿನಿಂದಲೇ ಆ ವ್ಯಕ್ತಿಗೆ ನಿಗದಿಪಡಿಸಿದ ಲಿಂಗಕ್ಕೆ ಹೊಂದಿಕೆಯಾಗದ ವ್ಯಕ್ತಿ ಎಂದು ವ್ಯಾಖ್ಯಾನಿಸಿದೆ. ಈ ವ್ಯಾಖ್ಯಾನವು ವಿವಿಧ ಗುರುತುಗಳನ್ನು ಒಳಗೊಂಡಿದೆ. ಟ್ರಾನ್ಸ್ ಜೆಂಡರ್ ಪುರುಷರು ಮತ್ತು ಮಹಿಳೆಯರು: ಲಿಂಗ ದೃಢೀಕರಿಸುವ (ಅಧಿಕೃತವಾಗಿ ಲಿಂಗ ಬದಲಾವಣೆ) ಶಸ್ತ್ರಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆ ಅಥವಾ ಇತರ ರೀತಿಯ ಚಿಕಿತ್ಸೆಗಳಿಗೆ ಒಳಗಾಗಿದ್ದರೂ ಸಹ. ಇಂಟರ್ಸೆಕ್ಸ್ ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳು ಜೆಂಡರ್ ಕ್ವೀರ್ ವ್ಯಕ್ತಿಗಳು ಕಿನ್ನರ್, ಹಿಜ್ರಾ, ಅರವಣಿ ಮತ್ತು ಜೋಗ್ತಾ ಮುಂತಾದ ಸಾಮಾಜಿಕ-ಸಾಂಸ್ಕೃತಿಕ ಗುರುತುಗಳನ್ನು ಹೊಂದಿರುವ ವ್ಯಕ್ತಿಗಳು ಈ ವ್ಯಾಖ್ಯಾನವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯು ಬಳಸುವ ವ್ಯಾಖ್ಯಾನದೊಂದಿಗೆ ಹೊಂದಿಕೆಯಾಗುತ್ತದೆ. ಟ್ರಾನ್ಸ್ ಜೆಂಡರ್ ಎಂಬುದು ಹುಟ್ಟಿನಿಂದಲೇ ಅವರಿಗೆ ನೀಡಲಾದ ಲಿಂಗದೊಂದಿಗೆ ಲಿಂಗ ಗುರುತು ಹೊಂದಿಕೆಯಾಗದವರು ಎಂದು ಹೇಳುತ್ತದೆ. ಈ ವ್ಯಾಖ್ಯಾನವು ಲಿಂಗವನ್ನು (Sex) ಅಂಗರಚನಾಶಾಸ್ತ್ರ ಮತ್ತು ವರ್ಣತಂತುಗಳಂತಹ ಜೈವಿಕ ಲಕ್ಷಣಗಳಿಂದ ಮತ್ತು ಪಾತ್ರಗಳು ಹಾಗೂ ನಡವಳಿಕೆಗಳ ಸಾಮಾಜಿಕ ಚೌಕಟ್ಟಾದ ಲಿಂಗದಿಂದ (Gender) ಬೇರ್ಪಡಿಸುತ್ತದೆ. ಲಿಂಗವು ಒಂದು ಸಾಮಾಜಿಕ ರಚನೆ ಮತ್ತು ಆಂತರಿಕ ಸ್ವಯಂ ಪ್ರಜ್ಞೆಯಾಗಿರುವುದರಿಂದ, ವ್ಯಕ್ತಿಯ ಲಿಂಗ ಗುರುತು (gender identity) ಹುಟ್ಟಿನಿಂದಲೇ ಅವರಲ್ಲಿರುವ ಜೈವಿಕ ಲಿಂಗಕ್ಕಿಂತ ಭಿನ್ನವಾಗಿರಬಹುದು. ►2014 ರ ತೀರ್ಪಿನಲ್ಲೇನಿದೆ? NALSA v Union of India (2014) ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಎರಡು ಕೆಲಸಗಳನ್ನು ಮಾಡಿದೆ. ಒಂದು, ಅದು ಟ್ರಾನ್ಸ್ ಜೆಂಡರ್ ಸಮುದಾಯವನ್ನು 'ತೃತೀಯ ಲಿಂಗಿ' ಎಂದು ಗುರುತಿಸಿತು. ಅದು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕುಗಳ ಸಮಾನ ಅನ್ವಯವನ್ನು ಟ್ರಾನ್ಸ್ ಜೆಂಡರ್ ವ್ಯಕ್ತಿಗಳಿಗೆ ನೀಡಿತು. ಎರಡನೆಯದಾಗಿ, ಅದು ಲಿಂಗದ ಸ್ವಯಂ-ಗುರುತಿಸುವಿಕೆಯ ಹಕ್ಕನ್ನು ದೃಢಪಡಿಸಿತು, ಅಂದರೆ ಒಬ್ಬ ವ್ಯಕ್ತಿಯು ಪುರುಷ, ಮಹಿಳೆ ಅಥವಾ ತೃತೀಯ ಲಿಂಗಿ ಎಂದು ಗುರುತಿಸಬಹುದು. ಸುಪ್ರೀಂ ಕೋರ್ಟ್ ತರುವಾಯ ಕೇಂದ್ರ ಸರ್ಕಾರವು ಟ್ರಾನ್ಸ್ ಜೆಂಡರ್ ಸಮುದಾಯವನ್ನು ತೃತೀಯ ಲಿಂಗಿ ಎಂದು ಕಾನೂನು ಮಾನ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಕಾನೂನುಗಳನ್ನು ರೂಪಿಸಲು ಮತ್ತು ಅವರ ಕಲ್ಯಾಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿತು. 2019 ರಲ್ಲಿ, ಕೇಂದ್ರ ಸರ್ಕಾರವು ಟ್ರಾನ್ಸ್ ಜೆಂಡರ್ ವ್ಯಕ್ತಿಗಳು (ಹಕ್ಕುಗಳ ರಕ್ಷಣೆ) ಕಾಯ್ದೆಯನ್ನು ಜಾರಿಗೆ ತಂದಿತು, ಇದು ಸಮುದಾಯದ ಕಾನೂನು ಮಾನ್ಯತೆಯನ್ನು ಒದಗಿಸಿತು. ಇದರರ್ಥ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ತೃತೀಯ ಲಿಂಗವನ್ನು (ಇತರೆ) ಸೇರಿಸುವುದು, ಜೊತೆಗೆ ಟ್ರಾನ್ಸ್ ಜೆಂಡರ್ ಗುರುತಿನ ಚೀಟಿಗಳನ್ನು ವಿತರಿಸಲು ಒಂದು ಕಾರ್ಯವಿಧಾನವನ್ನು ಸ್ಥಾಪಿಸುವುದು. ಈ ಕಾರ್ಡ್ಗಳು ವ್ಯಕ್ತಿಗಳನ್ನು ತೃತೀಯ ಲಿಂಗಿ ಎಂದು ಕಾನೂನುಬದ್ಧವಾಗಿ ಗುರುತಿಸಲು ಅವಕಾಶ ಮಾಡಿಕೊಟ್ಟಿದ್ದು ಮಾತ್ರವಲ್ಲದೆ ಅವರ ಹಕ್ಕುಗಳನ್ನು ರಕ್ಷಿಸಿದವು. ಸಾಮಾಜಿಕ ನ್ಯಾಯ ಸಚಿವಾಲಯವು ಟ್ರಾನ್ಸ್ ಜೆಂಡರ್ ಕಲ್ಯಾಣ ಮಂಡಳಿಯನ್ನು ರಚಿಸಿದ್ದು, ರಾಜ್ಯಗಳು ಇದನ್ನು ಅನುಸರಿಸುತ್ತವೆ. 2019 ರ ಕಾಯ್ದೆಯ ಪರಿಣಾಮವಾಗಿ ಬಂದ ಪ್ರಮುಖ ಯೋಜನೆಗಳಲ್ಲಿ ಒಂದಾದ ಟ್ರಾನ್ಸ್ ಜೆಂಡರ್ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಗಳು, ಟ್ರಾನ್ಸ್ ಜೆಂಡರ್ ವ್ಯಕ್ತಿಗಳಿಗೆ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳನ್ನು ಪ್ರವೇಶಿಸಲು ಅವಕಾಶ ಮಾಡಿಕೊಡುತ್ತವೆ. ಟ್ರಾನ್ಸ್ ಜೆಂಡರ್ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್ ಪ್ರಕಾರ, ಇಲ್ಲಿಯವರೆಗೆ 32,424 ಅಂತಹ ಕಾರ್ಡ್ಗಳನ್ನು ನೀಡಲಾಗಿದೆ. ►2026 ರ ತಿದ್ದುಪಡಿಯಿಂದ ಪ್ರಸ್ತಾಪಿಸಲಾದ ಬದಲಾವಣೆಗಳು ತಮ್ಮದೇ ಆದ ತಪ್ಪಿಲ್ಲದೆ ಮತ್ತು ಸ್ವಂತ ಆಯ್ಕೆಯಿಲ್ಲದೆ ಜೈವಿಕ ಕಾರಣಗಳಿಂದಾಗಿ ತೀವ್ರ ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿರುವವರನ್ನು ಮಾತ್ರ ರಕ್ಷಿಸುವ ಪ್ರಯತ್ನವಾಗಿ ಸರ್ಕಾರ ಇತ್ತೀಚಿನ ತಿದ್ದುಪಡಿಯನ್ನು ಮಂಡಿಸಿದೆ. ಈ ವಿಧಾನವು 2014 ರ ಪೂರ್ವದ ದೃಷ್ಟಿಕೋನಕ್ಕೆ ಮರಳುವಿಕೆಯನ್ನು ಸೂಚಿಸುತ್ತದೆ. ಇದು ಅರ್ಹತೆಗೆ ಪ್ರಾಥಮಿಕ ಮಾನದಂಡವಾಗಿ ಸ್ವಯಂ-ಗುರುತಿಸುವಿಕೆಗಿಂತ ಜೈವಿಕ ಗುಣಲಕ್ಷಣಗಳನ್ನು ಆದ್ಯತೆ ನೀಡುತ್ತದೆ. ಈ ಮಸೂದೆಯು ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಗಮನಾರ್ಹವಾಗಿ ಹೆಚ್ಚು ನಿರ್ಬಂಧಿತ ವ್ಯಾಖ್ಯಾನವನ್ನು ಪರಿಚಯಿಸುತ್ತದೆ. ಇದು ನಿರ್ದಿಷ್ಟವಾಗಿ ಎರಡು ವರ್ಗಗಳಿಗೆ ಗುರುತಿಸುವಿಕೆಯನ್ನು ಸೀಮಿತಗೊಳಿಸುತ್ತದೆ: ಸಾಂಪ್ರದಾಯಿಕ ಸಾಮಾಜಿಕ-ಸಾಂಸ್ಕೃತಿಕ ಗುರುತುಗಳನ್ನು ಹೊಂದಿರುವವರು (ಕಿನ್ನಾರ್, ಹಿಜ್ರಾ, ಅರಾವಣಿ, ಜೋಗ್ತಾ ಮತ್ತು ನಪುಂಸಕ) ಮತ್ತು ನಿರ್ದಿಷ್ಟ ಜನ್ಮಜಾತ ಜೈವಿಕ ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳು. ಈ ಕಿರಿದಾದ, ವೈದ್ಯಕೀಯ ಮಾನದಂಡವು 2019 ರ ಕಾಯಿದೆಯ ಅಂತರಲಿಂಗ ವಿಶಾಲ ಪರಿಕಲ್ಪನೆಯನ್ನು ಬಾಹ್ಯ ಜನನಾಂಗ, ವರ್ಣತಂತು ಮಾದರಿಗಳು, ಗೊನಾಡಲ್ ಬೆಳವಣಿಗೆ ಮತ್ತು ಹಾರ್ಮೋನ್ ಉತ್ಪಾದನೆ ಸೇರಿದಂತೆ ದೈಹಿಕ ಗುಣಲಕ್ಷಣಗಳ ಕಟ್ಟುನಿಟ್ಟಾದ ಪರಿಶೀಲನಾಪಟ್ಟಿಯೊಂದಿಗೆ ಬದಲಾಯಿಸುತ್ತದೆ. ಈ ಮಸೂದೆಯು ಹೊಸ ಮತ್ತು ವಿಶಿಷ್ಟ ವರ್ಗವನ್ನು ಸಹ ಸೃಷ್ಟಿಸುತ್ತದೆ: ಅದೇನೆಂದರೆ ಬಲವಂತ, ಆಮಿಷ, ಪ್ರಚೋದನೆ, ವಂಚನೆ ಅಥವಾ ಅನಗತ್ಯ ಪ್ರಭಾವದಿಂದ ಅಂಗವಿಕಲತೆ, ವೃಷಣ ತೆಗೆಯುವಿಕೆ, ಕ್ಯಾಸ್ಟ್ರೇಶನ್, ಅಂಗಚ್ಛೇದನ ಅಥವಾ ಶಸ್ತ್ರಚಿಕಿತ್ಸಾ, ರಾಸಾಯನಿಕ ಅಥವಾ ಹಾರ್ಮೋನ್ ವಿಧಾನದ ಮೂಲಕ ಟ್ರಾನ್ಸ್ ಜೆಂಡರ್ ಗುರುತನ್ನು ಪಡೆದುಕೊಳ್ಳಲು ಒತ್ತಾಯಿಸಲ್ಪಟ್ಟ ಯಾವುದೇ ವ್ಯಕ್ತಿ ಅಥವಾ ಮಗು ಈ ವರ್ಗಕ್ಕೆ ಸೇರುತ್ತದೆ. ►ಇನ್ನು ಸ್ವಯಂ ಗುರುತಿಸುವಿಕೆ ಇಲ್ಲ: ಸ್ವಯಂ ಗುರುತಿಸುವಿಕೆಯ ಹಕ್ಕನ್ನು ಪ್ರತಿಪಾದಿಸಿದ 2019 ರ ಕಾಯ್ದೆಯ ಸೆಕ್ಷನ್ 4(2) ಅನ್ನು ಮಸೂದೆ ತೆಗೆದುಹಾಕುತ್ತದೆ. ಈ ಕಾಯ್ದೆಯು ವಿವಿಧ ಲಿಂಗ ಗುರುತುಗಳು, ಸ್ವಯಂ ಗ್ರಹಿಸಿದ ಲಿಂಗ/ಗುರುತುಗಳು ಅಥವಾ ಲಿಂಗ ಅಸ್ಥಿರತೆಗಳನ್ನು ಹೊಂದಿರುವ ಪ್ರತಿಯೊಂದು ವರ್ಗದ ವ್ಯಕ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಅದು ಹೇಳುತ್ತದೆ. 2019 ರ ವ್ಯಾಖ್ಯಾನವು ಅಸ್ಪಷ್ಟವಾಗಿದ್ದು, ಅದು ನಿಜವಾಗಿಯೂ ತುಳಿತಕ್ಕೊಳಗಾದ ಉದ್ದೇಶಿತ ಫಲಾನುಭವಿಗಳನ್ನು ಗುರುತಿಸುವುದು ಅಸಾಧ್ಯವಾಗಿಸಿದೆ. ಇದು ಶಿಕ್ಷಾರ್ಹ, ನಾಗರಿಕ ಮತ್ತು ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಹಲವಾರು ನಿಬಂಧನೆಗಳ ಕಾರ್ಯಾಚರಣೆ ಮತ್ತು ಜಾರಿಗೊಳಿಸುವಿಕೆಯನ್ನು ಅಸಾಧ್ಯವಾಗಿಸಿದೆ ಎಂದು ಮಸೂದೆ ಹೇಳುತ್ತದೆ. ►ಪ್ರಮಾಣೀಕರಣಕ್ಕಾಗಿ ವೈದ್ಯಕೀಯ ಮಂಡಳಿ: 2019 ರ ಕಾಯ್ದೆಯಡಿಯಲ್ಲಿ, ಟ್ರಾನ್ಸ್ ಜೆಂಡರ್ ಗುರುತಿನ ಚೀಟಿಗಳನ್ನು ನೀಡುವ ಪ್ರಕ್ರಿಯೆಯು ಆಡಳಿತಾತ್ಮಕವಾಗಿತ್ತು. ಟ್ರಾನ್ಸ್ ಜೆಂಡರ್ ವ್ಯಕ್ತಿಯೊಬ್ಬರು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಅರ್ಜಿ ಸಲ್ಲಿಸಿದರೆ, ವೈದ್ಯಕೀಯ ಪರೀಕ್ಷೆ ಅಥವಾ ಇತರ ಕ್ಲಿನಿಕಲ್ ಗೇಟ್-ಕೀಪಿಂಗ್ ಅಗತ್ಯವಿಲ್ಲದೆ ಗುರುತಿನ ಪ್ರಮಾಣಪತ್ರವನ್ನು ಪಡೆಯಬಹುದಾಗಿತ್ತು. ಆದರೆ ಇಲ್ಲಿ ಮಸೂದೆಯು ಕೇಂದ್ರ ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿ ಅಥವಾ ಉಪ ಮುಖ್ಯ ವೈದ್ಯಕೀಯ ಅಧಿಕಾರಿ ನೇತೃತ್ವದಲ್ಲಿ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಕರೆ ನೀಡುತ್ತದೆ. ಈ ಮಂಡಳಿಯು ಈಗ ಡಿಎಂಗೆ ಶಿಫಾರಸುಗಳನ್ನು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ; ಗುರುತಿನ ಪ್ರಮಾಣಪತ್ರವನ್ನು ನೀಡುವ ಮೊದಲು ಇತರ ವೈದ್ಯಕೀಯ ತಜ್ಞರ ಸಲಹೆಯೊಂದಿಗೆ ಇದನ್ನು ಪರಿಗಣಿಸಬೇಕು. 2020 ರಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅರ್ಹತೆ ಪಡೆಯಲು ಈ ಕಾಯ್ದೆಯು ಯಾವುದೇ ಕನಿಷ್ಠ ಅರ್ಹತೆಗಳನ್ನು ನೀಡದಿದ್ದರೂ, ಮಂಡಳಿಯಲ್ಲಿರುವ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಈಗ ಸಂಬಂಧಿತ ಸಚಿವಾಲಯ ಅಥವಾ ಇಲಾಖೆಯಲ್ಲಿ ನಿರ್ದೇಶಕರ ಶ್ರೇಣಿಗಿಂತ ಕಡಿಮೆಯಿರಬಾರದು ಎಂದು ಮಸೂದೆ ಪ್ರತಿಪಾದಿಸುತ್ತದೆ. ►ಶಿಕ್ಷೆಯ ಪ್ರಮಾಣ: ಟ್ರಾನ್ಸ್ ಜೆಂಡರ್ ವ್ಯಕ್ತಿಯನ್ನು ಬಲವಂತದ ಅಥವಾ ಬಂಧಿತ ದುಡಿಮೆಗೆ ತಳ್ಳುವುದು, ಸಾರ್ವಜನಿಕ ಸ್ಥಳಕ್ಕೆ ಪ್ರವೇಶ ಅಥವಾ ಹಾದಿಯ ಹಕ್ಕನ್ನು ನಿರಾಕರಿಸುವುದು, ಟ್ರಾನ್ಸ್ ಜೆಂಡರ್ ವ್ಯಕ್ತಿಯನ್ನು ಅವರ ವಾಸಸ್ಥಳ, ಮನೆ ಅಥವಾ ಗ್ರಾಮವನ್ನು ಬಿಡಲು ಒತ್ತಾಯಿಸುವುದು, ದೈಹಿಕ, ಮಾನಸಿಕ, ಲೈಂಗಿಕ, ಮೌಖಿಕ, ಭಾವನಾತ್ಮಕ ಅಥವಾ ಆರ್ಥಿಕ ಹಾನಿ, ಗಾಯ ಅಥವಾ ಅಪಾಯವನ್ನುಂಟುಮಾಡುವುದಕ್ಕಾಗಿ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಈ ಕಾಯ್ದೆ ಅಧಿಕಾರ ನೀಡಿದೆ. ಈ ಮಸೂದೆಯು ನಾಲ್ಕು ಹೊಸ ಷರತ್ತುಗಳನ್ನು ಪರಿಚಯಿಸುವ ಮೂಲಕ ಕ್ರಿಮಿನಲ್ ಅಪರಾಧಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ, ಪ್ರತಿಯೊಂದೂ ಕಠಿಣ ಶಿಕ್ಷೆಗಳನ್ನು ಒಳಗೊಂಡಿರುತ್ತದೆ. ಹೊಸ ನಿಬಂಧನೆಗಳ ಅಡಿಯಲ್ಲಿ, ವಯಸ್ಕರನ್ನು ಅಪಹರಿಸಿ ಟ್ರಾನ್ಸ್ ಜೆಂಡರ್ ಗುರುತನ್ನು ಅಳವಡಿಸಿಕೊಳ್ಳಲು ಒತ್ತಾಯಿಸಲು ಗಂಭೀರವಾದ ಗಾಯ ಅಥವಾ ಶಾಶ್ವತ ಗಾಯವನ್ನು ಉಂಟುಮಾಡುವುದು 10 ವರ್ಷಗಳವರೆಗೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತದೆ, ಜೊತೆಗೆ ಕನಿಷ್ಠ ರೂ.2 ಲಕ್ಷ ದಂಡ ವಿಧಿಸಲಾಗುತ್ತದೆ. ಮಗುವಿನ ವಿರುದ್ಧ ಅದೇ ಅಪರಾಧ ಎಸಗಿದರೆ, ಶಿಕ್ಷೆಯು ಕಡ್ಡಾಯ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ ರೂ.5 ಲಕ್ಷ ದಂಡ ವಿಧಿಸಲಾಗುತ್ತದೆ. ಅದೇ ರೀತಿ, ವಯಸ್ಕನನ್ನು ಟ್ರಾನ್ಸ್ ಜೆಂಡರ್ ಆಗಿ ಪ್ರಸ್ತುತಪಡಿಸಲು ಮತ್ತು ಭಿಕ್ಷಾಟನೆ, ಜೀತಪದ್ಧತಿ ಅಥವಾ ಜೀತದಾಳು ಕೆಲಸದಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಿದರೆ, ಮಸೂದೆಯು ಐದರಿಂದ 10 ವರ್ಷಗಳ ಕಠಿಣ ಶಿಕ್ಷೆ ಜೊತೆಗೆ ಕನಿಷ್ಠ 1 ಲಕ್ಷ ರೂ. ದಂಡ ವಿಧಿಸಲು ಸೂಚಿಸುತ್ತದೆ. ಮಗುವಿನ ವಿರುದ್ಧದ ಅದೇ ಅಪರಾಧಕ್ಕೆ 10–14 ವರ್ಷಗಳ ಕಠಿಣ ಶಿಕ್ಷೆ ಮತ್ತು ಕನಿಷ್ಠ 3 ಲಕ್ಷ ರೂ. ದಂಡ ವಿಧಿಸಬಹುದು. ►ಮಸೂದೆ ಬಗ್ಗೆ ಟೀಕೆ ಅಂಚಿನಲ್ಲಿರುವವರ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಟ್ರಾನ್ಸ್ ಜೆಂಡರ್ ವ್ಯಕ್ತಿಗಳು ಮತ್ತು ಕಾರ್ಯಕರ್ತರು ಈ ತಿದ್ದುಪಡಿಯು ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯ ಮತ್ತು ಲಿಂಗದ ಸ್ವಯಂ-ನಿರ್ಣಯದ ಹಕ್ಕನ್ನು ಕಸಿದುಕೊಂಡಿದೆ ಎಂದು ಹೇಳಿದ್ದಾರೆ. ಪುಣೆಯ ಟ್ರಾನ್ಸ್ ಜೆಂಡರ್ ಕಾರ್ಯಕರ್ತೆ ಕಾದಂಬರಿ ಶೇಖ್, ತಮ್ಮ ಗುರುತನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಮಾನವ ಹಕ್ಕುಗಳ ಪ್ರಮುಖ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. “ನಮ್ಮ ಗುರುತಿಗೆ ಇತರರಿಂದ ಅನುಮೋದನೆ ಅಗತ್ಯವಿಲ್ಲ. ಇದು ನಾವು ಪ್ರತಿದಿನ ಬದುಕುವ ವಿಷಯ. ಕಾನೂನಿನಲ್ಲಿನ ಯಾವುದೇ ಬದಲಾವಣೆಯು ಈ ಹಕ್ಕನ್ನು ರಕ್ಷಿಸಬೇಕು ಮತ್ತು ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಸ್ವಾತಂತ್ರ್ಯ ಮತ್ತು ಘನತೆಯನ್ನು ಬೆಂಬಲಿಸಬೇಕು” ಎಂದು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಉಲ್ಲೇಖಿಸಿದೆ. ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕೆಲಸ ಮಾಡುವ ಟ್ರಸ್ಟ್ ಯುಟಕ್ನ ಸಂಸ್ಥಾಪಕ ಅನಿಲ್ ಉಕಾರಂಡೆ ಅವರು, ಪ್ರಸ್ತುತ ತಿದ್ದುಪಡಿಯು ವ್ಯಕ್ತಿಯ ಮೇಲೆ ಅವರ ಗುರುತನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಹಾಕಿದೆ, ಅದು ಎಂದಿಗೂ ಆಗಬಾರದು ಎಂದು ಹೇಳಿದ್ದಾರೆ. ತಿದ್ದುಪಡಿಯು ವೈದ್ಯಕೀಯ ಮಂಡಳಿಯ ಬಗ್ಗೆ ಮಾತನಾಡಿದೆ. ಪ್ರಮಾಣಪತ್ರವನ್ನು ನೀಡುವ ಮೊದಲು ಆಸ್ಪತ್ರೆಗಳು ದಾಖಲೆಗಳನ್ನು ಸಲ್ಲಿಸಲು ಕೇಳಿದೆ. ಟ್ರಾನ್ಸ್ ಜೆಂಡರ್ ವ್ಯಕ್ತಿಗೆ, ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಆಳವಾದ ಭಯವನ್ನು ಗಮನಿಸಿದರೆ ಇದು ತುಂಬಾ ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ತಿದ್ದುಪಡಿಯು ಕೆಲವು ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಟ್ರಾನ್ಸ್ ಜೆಂಡರ್ ವ್ಯಕ್ತಿಗಳನ್ನು ಮಾತ್ರ ಗುರುತಿಸಲು ಅವಕಾಶ ನೀಡಿದೆ. ಪ್ರಾಚೀನ ಗುರು-ಚೇಲಾ ವ್ಯವಸ್ಥೆಯು ವ್ಯಕ್ತಿಗಳ ರಕ್ಷಣೆಗೆ ಅವಕಾಶ ನೀಡುತ್ತದೆ ಮತ್ತು ಸಮುದಾಯದ ಪ್ರಜ್ಞೆಯನ್ನು ಬೆಳೆಸುತ್ತದೆ. ಆದರೆ ಅವು ಅಧಿಕಾರದ ಕೇಂದ್ರಗಳ ಜೊತೆಗೆ ಶೋಷಣೆಯೂ ಆಗಿವೆ. ಅನೇಕ ವ್ಯಕ್ತಿಗಳು ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಗಳ ಭಾಗವಾಗದೆ ಪರಿವರ್ತನೆಗೊಂಡಿದ್ದಾರೆ. ಈ ತಿದ್ದುಪಡಿ ಅವರ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಇರಿಸುತ್ತದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಬಳ್ಳಾರಿ | ಎಸೆಸೆಲ್ಸಿ ಪರೀಕ್ಷೆಗೆ ಕಂಪ್ಲಿ ತಾಲೂಕು ಸಜ್ಜು: 6 ಕೇಂದ್ರಗಳಲ್ಲಿ 2,034 ವಿದ್ಯಾರ್ಥಿಗಳಿಗೆ ಪರೀಕ್ಷೆ
ಬಳ್ಳಾರಿ/ಕಂಪ್ಲಿ: ಮಾ.18ರಿಂದ ಎ.2ರವರೆಗೆ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ಕಂಪ್ಲಿ ತಾಲೂಕು ಸಂಪೂರ್ಣ ಸಜ್ಜಾಗಿದ್ದು, ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನಾದ್ಯಂತ 6 ಪರೀಕ್ಷಾ ಕೇಂದ್ರಗಳು ಮತ್ತು 91 ಕೊಠಡಿಗಳನ್ನು ಗುರುತಿಸಲಾಗಿದ್ದು, ಒಟ್ಟು 2,034 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಇದರಲ್ಲಿ 961 ಬಾಲಕಿಯರು ಹಾಗೂ 1,073 ಬಾಲಕರು ಸೇರಿದ್ದಾರೆ. ಪರೀಕ್ಷಾ ಪಾರದರ್ಶಕತೆಗಾಗಿ 110 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲಾ ಕೇಂದ್ರಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಮುಖ್ಯಸ್ಥರು, ಕಸ್ಟೋಡಿಯನ್ನರು, ಜಾಗೃತದಳ, ಮೇಲ್ವಿಚಾರಕರು ಸೇರಿದಂತೆ ಒಟ್ಟು 150 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳು : ಷಾಮಿಯಚಂದ್ ಸರ್ಕಾರಿ ಪ್ರೌಢಶಾಲೆ (ಬಾಲಕರ), ಬಾಲಕಿಯರ ಪ್ರೌಢಶಾಲೆ ಕಂಪ್ಲಿ, ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಎಮಿಗನೂರು ಸರ್ಕಾರಿ ಪ್ರೌಢಶಾಲೆ, ವಿದ್ಯಾಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಗ್ಗನಹಳ್ಳಿ ಹಾಗೂ ಓದ್ಸೋ ಜಡೆಮ್ಮ ಗುರುಸಿದ್ದಯ್ಯ ಪ್ರೌಢಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪ್ರತಿ ಕೇಂದ್ರದಲ್ಲೂ ಕುಡಿಯುವ ನೀರು, ಗಾಳಿ, ಬೆಳಕು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ನಿಷೇಧ ಕ್ರಮಗಳು : ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಲಾಗಿದ್ದು, ಝೆರಾಕ್ಸ್ ಹಾಗೂ ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತರಲು ನಿಷೇಧಿಸಲಾಗಿದೆ. ವಿಶೇಷ ಸೌಲಭ್ಯ : ವಿಶೇಷಚೇತನ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಒಂದು ಗಂಟೆ ಕಾಲಾವಕಾಶ, ವಾಚಕರು ಮತ್ತು ಸಹಾಯಕರ ವ್ಯವಸ್ಥೆ ಮಾಡಲಾಗಿದೆ. ನೆಲ ಮಹಡಿಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆಗಾಗಿ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಪೊಲೀಸ್ ಭದ್ರತೆಯೊಂದಿಗೆ ವಿತರಣೆ ನಡೆಯಲಿದೆ. ಪರೀಕ್ಷೆಗಳು ಯಾವುದೇ ಅಡಚಣೆ ಇಲ್ಲದೆ ಪಾರದರ್ಶಕವಾಗಿ ನಡೆಯಲಿವೆ ಎಂದು ಬಿಇಒ ಸಿದ್ದಲಿಂಗಯ್ಯ ಮೂರ್ತಿ ಹಾಗೂ ನೋಡಲ್ ಅಧಿಕಾರಿ ವಿಶ್ವನಾಥ್ ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಶದೀಪ್ ಎಡವಟ್ಟು; ಡೆರಿಲ್ ಮಿಚೆಲ್ಗೆ ಕ್ಷಮೆ ಯಾಚಿಸಿದ ಕ್ಯಾಪ್ಟನ್ SKY!
ಹೊಸದಿಲ್ಲಿ: ಕ್ರಿಕೆಟ್ ಪಂದ್ಯಗಳು ಆಗುವ ವೇಳೆ ಮೈದಾನಗಳಲ್ಲಿ ಪ್ರತಿನಿತ್ಯ ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಮಾಡಿರುವ ತಪ್ಪನ್ನು ಅರ್ಥೈಸಿಕೊಂಡು ಕ್ಷಮೆ ಕೇಳುವುದು ದೊಡ್ಡತನ. ಇತ್ತೀಚೆಗೆ ವಿಶ್ವಕಪ್ ಫೈನಲ್ ವೇಳೆ ವೇಗಿ ಅರ್ಶದೀಪ್ ಸಿಂಗ್ ಅವ ನ್ಯೂಜಿಲೆಂಡ್ ತಂಡದ ಬ್ಯಾಟರ್ ಡೆರಿಲ್ ಮಿಚೆಲ್ ಅವರ ಕಡೆಗೆ ಚೆಂಡೆಸೆದಿದ್ದರು. ಈ ವೇಳೆ ಅವರ ಬಳಿ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದೆ ಎಂದು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬಹಿರಂಗಪಡಿಸಿದ್ದಾರೆ.ಎದುರಾಳಿ ತಂಡದ ಆಟಗಾರನ ವಿರುದ್ಧ ಚೆಂಡು ಎಸೆದು ಐಸಿಸಿ ನಿಮಯ ಉಲ್ಲಂಘಿಸಿದ ಕಾರಣಕ್ಕಾಗಿ ಅರ್ಶದೀಪ್ ಪಂದ್ಯದ ಶುಲ್ಕದಲ್ಲಿ ಶೇಕಡಾ 15ರಷ್ಟು ದಂಡಕ್ಕೆ ಗುರಿಯಾದರು. ಜತೆಗೆ ಒಂದು ಡಿ ಮೆರಿಟ್ ಪಾಯಿಂಟ್ಸ್ಗೂ ಒಳಗಾದರು. ಘಟನೆ ವೇಳೆ ವೇಗಿ ಅರ್ಶದೀಪ್ ಸಿಂಗ್ ಅವರು ಬಳಿ ಕ್ಷಮೆ ಯಾಚಿಸಲಿಲ್ಲ. ಉಭಯ ಆಟಗಾರರರ ನಡುವೆ ವಾಗ್ವಾದ ಸಂಭವಿಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಆನ್ಫೀಲ್ಡ್ ಅಂಪೈರ್ಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇದಕ್ಕಾಗಿ ಐಸಿಸಿಯು ಅರ್ಶದೀಪ್ ಸಿಂಗ್ ಅವರಿಗೆ ಪಂದ್ಯದ ಶೇಕಡಾ 15ರಷ್ಟು ದಂಡ ಜೊತೆಗೆ ಒಂದು ಡಿಮೆರಿಟ್ ಅಂಕವನ್ನೂ ನೀಡಿತು. ನೇರವಾಗಿ ತೆರಳಿ ಕ್ಷಮೆ ಕೇಳಿದ SKY ಆದರೆ ಪಂದ್ಯ ಮುಗಿದ ಬಳಿಕ ಅರ್ಶದೀಪ್ ಸಿಂಗ್ ಅವರು ಡೆರಿಲ್ ಮಿಚೆಲ್ ಅವರ ಬಳಿ ತೆರಳಿ ಕ್ಷಮೆ ಕೋರಿದರು. ಉಭಯ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿದರು. ಇದನ್ನು ಗೆಲುವಿನ ಬಳಿಕ ಟಿವಿ ನಿರೂಪಕರು ಕೇಳಿದಾಗ ಅರ್ಶದೀಪ್ ಸಿಂಗ್ ಅವರು ಸಹ ಸ್ಪಷ್ಟಪಡಿಸಿದ್ದರು. ಈ ವಿಚಾರಕ್ಕಾಗಿ ಮಿಚೆಲ್ ಬಳಿ ನಾನು ಕ್ಷಮೆ ಯಾಚಿಸಲು ಬಯಸುತ್ತೇನೆ. ನನ್ನ ಎಸೆತ ರಿವರ್ಸ್-ಸ್ವಿಂಗ್ ಆಗಿ ಅವನಿಗೆ ಹೊಡೆದಿದೆ. ಆದ್ದರಿಂದ ಅದಕ್ಕಾಗಿ ಅವನಿಗೆ ಕ್ಷಮಿಸಿ ಎಂದು ಹೇಳಲು ಬಯಸಿದ್ದೆ. ಆ ಘಟನೆ ಉದ್ದೇಶಪೂರ್ವಕವಾಗಿ ನಡೆದದ್ದಲ್ಲ, ಎಂದು ಅವರು ಹೇಳಿದ್ದರು.ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಸೂರ್ಯಕುಮಾರ್ ಯಾದವ್ ಅವರು, ‘‘ಇದೊಂದು ಸಣ್ಣ ಘಟನೆ. ಪಂದ್ಯದ ರೋಚಕ ಘಟ್ಟದಲ್ಲಿ ಇಂತವೆಲ್ಲಾ ನಡೆಯುತ್ತಿರುತ್ತವೆ. ಈ ಬಗ್ಗೆ ನಾನು ನೇರವಾಗಿ ಡೆರಿಲ್ ಮಿಚೆಲ್ ಅವರ ಬಳಿಯೇ ಮಾತನಾಡಿದೆ. ಹಾಗೆಯೇ ವೈಯಕ್ತಿಕವಾಗಿ ಕ್ಷಮೆ ಕೋರಿದೆ. ಅರ್ಶದೀಪ್ ಇದನ್ನ ಉದ್ದೇಶಪೂರ್ವಕವಾಗಿ ಮಾಡಲಿ ಅಥವಾ ಮಾಡದಿರಲಿ, ನೀವು ಅವರನ್ನು ಕ್ಷಮಿಸಿಬಿಡಿ ಎಂದು ಹೇಳಿದೆ’’ ಎಂದು ತಿಳಿಸಿದ್ದಾರೆ. ಇದೇ ವೇಳೆ, ‘‘ಶಾಲೆ ಓದಿನಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಆದರೆ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮಾತ್ರ ಉತ್ತಮ ಅಂಕ ಗಳಿಸಿದ್ದೇನೆ,’’ ಎಂದು ನಗುತ್ತಾ ತಿಳಿಸಿದರು. ಇತಿಹಾಸ ನಿರ್ಮಿಸಿದ ಭಾರತ ತಂಡ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು ಆಯಿತು. ಜಸ್ಪ್ರೀತ್ ಬುಮ್ರಾ ಅವರು ಪಂದ್ಯಶ್ರೇಷ್ಠ ಮತ್ತು ಸಂಜು ಸ್ಯಾಮ್ಸನ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈಗೆ ರಶ್ಯಾದಲ್ಲಿ ಚಿಕಿತ್ಸೆ : ವರದಿ
ಟೆಹರಾನ್,ಮಾ.17: ಅಮೆರಿಕ- ಇಸ್ರೇಲ್ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಅವರನ್ನು ಉನ್ನತ ವೈದ್ಯಕೀಯ ಚಿಕಿತ್ಸೆಗಾಗಿ ರಶ್ಯಕ್ಕೆ ಕೊಂಡೊಯ್ಯಲಾಗಿದೆಯೆಂದು ಸುದ್ದಿಪತ್ರಿಕೆ ಅಲ್-ಜರಿದಾ ವರದಿ ಮಾಡಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಝೆಕಿಸ್ತಾನ್ ಜೊತೆ ನಡೆಸಿದ ದೂರವಾಣಿ ಸಂಭಾಷಣೆಯೊಂದರಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅವರು 56 ವರ್ಷ ವಯಸ್ಸಿನ ಮೊಜ್ತಾಬಾ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಭರವಸೆ ನೀಡಿದ ಬಳಿಕ ಅವರನ್ನು ಮಾಸ್ಕೊಗೆ ಸ್ಥಳಾಂತರಿಸಲಾಗಿದೆ. ರಶ್ಯದ ಸೇನಾ ವಿಮಾನವೊಂದರಲ್ಲಿ ಖಾಮಿನೈ ಅವರನ್ನು ಮಾಸ್ಕೊಗೆ ಕೊಂಡೊಯ್ಯಲಾಯಿತೆಯೆಂದು ವರದಿ ಹೇಳಿದೆ. ಆದಾಗ್ಯೂ ರಶ್ಯವು ಈ ವರದಿಯನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ. ‘‘ ಇಂತಹ ವರದಿಗಳ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ’’ ಎಂದು ರಶ್ಯ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೊವ್ ಅವರು ರಶ್ಯದ ತಾಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಮೊಜ್ತಾಬಾ ಖಾಮಿನೈ ಗಾಯಗೊಂಡಿದ್ದು, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆಂದು ಇರಾನ್ನ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ಕೆಲವು ಮೂಲಗಳ ಪ್ರಕಾರ ಮೊಜ್ತಾಬಾ ಅವರ ಕೈ, ಕಾಲಿಗೆ ತೀವ್ರ ಗಾಯಗಳಾಗಿವೆಯೆನ್ನಲಾಗಿದೆ.
Budget Session 2026 | ‘ಗೋವುಗಳನ್ನು ದತ್ತು ತೆಗೆದುಕೊಳ್ಳದ ಬಿಜೆಪಿ ಶಾಸಕರುʼ: ವಿಧಾನಸಭೆಯಲ್ಲಿ ಮಾತಿನ ಚಕಮಕಿ
ಬೆಂಗಳೂರು : ʼಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಗೋವು ದತ್ತು ಯೋಜನೆಯಡಿ ಬಿಜೆಪಿ ಶಾಸಕರೇ, ನಾಯಕರೇ ಗೋವುಗಳನ್ನು ದತ್ತು ತೆಗೆದುಕೊಂಡಿಲ್ಲʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಜರುಗಿತು. ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಶರಣು ಸಲಗಾರ, ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೆ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳು ರೈತರಲ್ಲಿ ವಿಶ್ವಾಸ ತುಂಬುತ್ತಿಲ್ಲ. ಹೀಗಾಗಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ, ಗೋ ರಕ್ಷಣೆ ಹಾಗೂ ಗೋ ಹತ್ಯೆ ತಡೆಯುವ ಬಗ್ಗೆ ರಾಜ್ಯದಲ್ಲಿ ಚರ್ಚೆ ಮಾಡುತ್ತಿಲ್ಲ. ಇದು ಆತ್ಮವಂಚನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವಿದೇಶಕ್ಕೆ ಗೋಮಾಂಸ ರಫ್ತು ಮಾಡಲು ರೆಂಬಲ್ ಲ್ಯಾಗ್ರೋ ಎಂಬ ಕಂಪೆನಿ ಇದೆ. ಅದು ಯಾರಿಗೆ ಸೇರಿದ್ದು ಎಂಬ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ತಕ್ಷಣವೇ ಎದ್ದು ನಿಂತ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವಥ್ ನಾರಾಯಣ, ನೀವು ರಾಜ್ಯದ ವಿಚಾರವನ್ನು ಹೇಳಬೇಕು. ಆದರೆ, ದೇಶದ ಎಲ್ಲೋ ಇರುವ ಕಂಪೆನಿಯ ಬಗ್ಗೆ ಇಲ್ಲಿ ಚರ್ಚೆ ಮಾಡುವುದು ಬೇಡ ಎಂದರು. ಆಗ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ ಅವರು ಎದ್ದು ನಿಂತು ಮಾತನಾಡುತ್ತಿದ್ದಾರೆ ಎಂದರೆ, ಸದರಿ ಕಂಪೆನಿ ಯಾರಿಗೆ ಸೇರಿದ್ದು ಎಂದು ಅವರಿಗೆ ಮಾಹಿತಿ ಇರಬಹುದು ಎಂದು ವ್ಯಂಗ್ಯವಾಡಿದರು. ಆಗ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಇತ್ತ ಬಿಜೆಪಿ ಸದಸ್ಯರು ಮಾತನಾಡಿ, ರಾಜ್ಯ ಸರಕಾರ ಸೂಕ್ಷ್ಮತೆಯಿಂದ ವರ್ತಿಸುತ್ತಿಲ್ಲ. ಬದಲಾಗಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಅಲ್ಲದೆ, ಗೋವು ರಕ್ಷಣೆ ಬದಲಾಗಿ ಸಚಿವರು ಕಂಪೆನಿ ಯಾರದು ಎಂದು ರಸ ಪ್ರಶ್ನೆ ನಡೆಸಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು. ಈ ನಡುವೆ ಮಧ್ಯ ಪ್ರವೇಶಿಸಿದ ಸಚಿವ ಡಾ.ಎಂ.ಸಿ.ಸುಧಾಕರ್, ಹೈನೋದ್ಯಮದಲ್ಲಿ ಇರುವವರಿಗೆ ನಿಜವಾದ ಕಷ್ಟ ಗೊತ್ತು. ಸಂತೆಗೆ ಗೋವುಗಳನ್ನು ಸಾಗಿಸಿದರೆ ಅದನ್ನು ತಡೆದು ಅನೈತಿಕ ಪೊಲೀಸ್ ಗಿರಿ ಮಾಡಲಾಗುತ್ತಿದೆ. ಸ್ಥಳೀಯವಾಗಿ ಯಾರು ಗೋವುಗಳ ವ್ಯಾಪಾರ ಮಾಡುತ್ತಿಲ್ಲ. ಸೀಮೆ ಹಸುಗೆ ಗಂಡು ಕರು ಹುಟ್ಟಿದರೆ ರೈತರು ಎರಡು ದಿನದ ಮೇಲೆ ಅದನ್ನು ಉಳಿಸಿಕೊಳ್ಳುವುದಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ವಸ್ತು ಸ್ಥಿತಿಯ ನೆಲೆಯಲ್ಲಿ ಮಾತನಾಡಬೇಕು ಎಂದು ಹೇಳಿದರು. ಮತ್ತೆ ಸಭಾಧ್ಯಕ್ಷ ಯು.ಟಿ.ಖಾದರ್, ನೀವು ಸಚಿವರಾಗಿದ್ದೀರಾ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. ಪುನಃ ಮತ್ತೆ ಎದ್ದು ನಿಂತ ಸಚಿವ ಪ್ರಿಯಾಂಕ ಖರ್ಗೆ, ಈ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಿಜೆಪಿ ಸರಕಾರ ಗೋವು ದತ್ತು ಯೋಜನೆ ಪ್ರಾರಂಭಿಸಿತ್ತು. ಆನಂತರ ಸ್ವತಃ ಬಸವರಾಜ್ ಬೊಮ್ಮಾಯಿ ಅವರು ಐದಾರು ಗೋವುಗಳನ್ನು ದತ್ತು ತೆಗೆದುಕೊಂಡರು. ಆಗಿನ ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ್ 11 ಗೋವುಗಳನ್ನು ದತ್ತು ಪಡೆದರು. ಒಟ್ಟು ಬಿಜೆಪಿಯವರು ದತ್ತು ಪಡೆದ ಗೋವುಗಳ ಸಂಖ್ಯೆ ಮೂರು ಅಂಕೆಯನ್ನು ದಾಟಲಿಲ್ಲ. ಇದು ಹಾಸ್ಯಾಸ್ಪದ ಮಾತ್ರವಲ್ಲದ, ಬಿಜೆಪಿಯ ಯಾವ ಶಾಸಕರು ಎಷ್ಟು ಗೋವುಗಳನ್ನು ದತ್ತು ಪಡೆದುಕೊಂಡು ಕಾಳಜಿ ತೋರಿಸಿದ್ದಾರೆ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಸೇರಿದಂತೆ ಹಲವು ಸದಸ್ಯರು, ನಮ್ಮ ಪಕ್ಷದ ಗೋವು ರಕ್ಷಣೆಯ ಬದ್ಧತೆ ಬಗ್ಗೆ ಕಾಂಗ್ರೆಸ್ ನಿಂದ ನಾವು ಪಾಠ ಕಲಿಯಬೇಕಿಲ್ಲ. ಗೋವು ಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿದೆ ಎಂದು ಆರೋಪಿಸಿದರು. ಹೀಗೆ, ಈ ವಿಚಾರ ಇದು ಕೆಲಕಾಲ ಕಾವೇರಿದ ಚರ್ಚೆಗೆ ಕಾರಣವಾಯಿತು.
ಇರಾನ್, ಲೆಬನಾನ್ಗೆ ಮಾನವೀಯ ನೆರವು ಘೋಷಿಸಿದ ಚೀನಾ
ಬೀಜಿಂಗ್,ಮಾ.17: ಇರಾನ್ ಹಾಗೂ ಲೆಬನಾನ್ ಸೇರಿದಂತೆ ಪಶ್ಚಿಮ ಏಶ್ಯದ ಯುದ್ಧಪೀಡಿತ ರಾಷ್ಟ್ರಗಳಿಗೆ ಮಾನವೀಯ ನೆರವನ್ನು ಒದಗಿಸುವುದಾಗಿ ಚೀನಾ ಮಂಗಳವಾರ ಘೋಷಿಸಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಮೂರನೇ ವಾರವನ್ನು ಪ್ರವೇಶಿಸಿರುವಂತೆಯೇ ಚೀನಾ ಈ ನಿರ್ಧಾರವನ್ನು ಪ್ರಕಟಿಸಿದೆ. ಇರಾನ್ ಮೇಲೆ ನಡೆಸುತ್ತಿರುವ ದಳಿಗಳನ್ನು ತಕ್ಶಣವೇ ನಿಲ್ಲಿಸುವಂತೆಯೂ ಚೀನಾವು ಅಮೆರಿಕ ಹಾಗೂ ಇಸ್ರೇಲ್ಗೆ ಮನವಿ ಮಾಡಿದೆ ಹಾಗೂ ಅಮೆರಿಕದ ಸೇನಾನೆಲೆಗಳಿರುವ ಗಲ್ಫ್ರಾಷ್ಟ್ರಗಳ ಮೇಲೆ ಇರಾನ್ ದಾಳಿ ನಡೆಸಿರುವುದನ್ನು ಕೂಡಾ ಖಂಡಿಸಿದೆ. ಪಶ್ಚಿಮ ಏಶ್ಯಾ ಯುದ್ಧವು ಇರಾನ್ ಮತ್ತಿತರ ಪಶ್ಚಿಮ ಏಶ್ಯದ ರಾಷ್ಟ್ರಗಳಲ್ಲಿ ಘೋರವಾದ ಮಾನವೀಯ ದುರಂತಗಳನ್ನು ಸೃಷ್ಟಿಸಿದೆಯೆಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘‘ಚೀನಾವು ಇರಾನ್, ಲೆಬನಾನ್, ಜೋರ್ಡಾನ್ ಹಾಗೂ ಇರಾಕ್ಗೆ ತುರ್ತು ಮಾನವೀಯ ನೆರವನ್ನು ಒದಗಿಸಲು ನಿರ್ಧರಿಸಿದೆ. ಈ ನೆರವು ಸ್ಥಳೀಯ ಜನತೆ ಎದುರಿಸುತ್ತಿರುವ ಯಾತನೆಯನ್ನು ಶಮನಗೊಳಿಸಲು ನೆರವಾಗಲಿದೆಯೆಂದು ಅದು ಆಶಿಸುತ್ತದೆ’’ ಎಂದು ಲಿನ್ ಅವರು ಸುದ್ದಿಗೊಷ್ಠಿಯೊಂದರಲ್ಲಿ ತಿಳಿಸಿದ್ದಾರೆ. ಅಲ್ಲದೆ ಅಮೆರಿಕವು ಇರಾನ್ನ ಮಿನಾಬ್ನಲ್ಲಿ ಶಾಲೆಯೊಂದರ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತರ ಕುಟುಂಬಗಳಿಗೆ ಒಟ್ಟು 2 ಲಕ್ಷ ಡಾಲರ್ಗಳ ದೇಣಿಗೆಯನ್ನು ನೀಡುವುದಾಗಿಯೂ ಚೀನಾ ಘೋಷಿಸಿದೆ. ಚೀನಾದ ವಿಶೇಷ ಪ್ರತಿನಿಧಿ ಝಾಯಿ ಝುನ್ ಅವರು ಇತ್ತೀಚೆಗೆ ಸೌದಿ ಆರೇಬಿಯ ವಿದೇಶಾಂಗ ಸಚಿವರನ್ನು ಭೇಟಿಯಾದ ಸಂದರ್ಭ ಪಶ್ಚಿಮ ಏಶ್ಯಾ ಯುದ್ಧವನ್ನು ಕೊನೆಗೊಳಿಸಲು ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಲು ಬೀಜಿಂಗ್ ಸಿದ್ಧವಿದೆಯೆಂದು ತಿಳಿಸಿದ್ದರು. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ತನ್ನ ಯೋಜಿತ ಚೀನಾ ಪ್ರವಾಸವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೂಡಿದ್ದಾರೆ ಹಾಗೂ ಇರಾನ್ ಮುಚ್ಚುಗಡೆಗೊಳಿಸಿರುವ ಹಾರ್ಮುಝ್ ಜಲಸಂಧಿಯನ್ನು ಮರಳಿ ತೆರೆಯುಲು ನೆರವಾಗುವಂತೆಯೂ ಚೀನಾದ ಮೇಲೆ ಅವರು ಒತ್ತಡ ಹೇರಿದ್ದಾರೆಂದು ವರದಿಯಾಗಿದೆ.
ಪಶ್ಚಿಮದಂಡೆ ಪ್ರದೇಶದಲ್ಲಿ ವಸಾಹತು ವಿಸ್ತರಣೆ ನಿಲ್ಲಿಸಿ : ಇಸ್ರೇಲ್ಗೆ ವಿಶ್ವಸಂಸ್ಥೆ ಆಗ್ರಹ
ವಿಶ್ವಸಂಸ್ಥೆ,ಮಾ.17: ಪಶ್ಚಿಮದಂಡೆ ಪ್ರದೇಶದಲ್ಲಿ ಇಸ್ರೇಲ್ ನಾಟಕೀಯವಾಗಿ ಅದರ ವಸಾಹತನ್ನು ವಿಸ್ತರಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ವಿಶ್ವಸಂಸ್ಥೆ ಮಂಗಳವಾರ ಆಗ್ರಹಿಸಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ 36 ಸಾವಿರಕ್ಕೂ ಅಧಿಕ ಫೆಲೆಸ್ತೀನಿಯರನ್ನು ಸ್ಥಳಾಂತರಿಸಿದೆಯೆಂದು ಅದು ಆತಂಕ ವ್ಯಕ್ತಪಡಿಸಿದೆ. ಇಸ್ರೇಲ್ ತನ್ನ ಕಾನೂನುಬಾಹಿರ ವಸಾಹತುಪ್ರದೇಶಗಳ ವಿಸ್ತರಿಸುತ್ತಿದೆ ಹಾಗೂ ಪಶ್ಚಿಮದಂಡೆಯ ವಿಸ್ತಾರವಾದ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಹಿಂದೆಂದೂ ನಡೆದಿರದ ಹಾಗೆ ಫೆಲೆಸ್ತೀನಿಯರನ್ನು ನಿರ್ವಸಿತರನ್ನಾಗಿಸಿದೆ ಎಂದು ವಿಶ್ವಸಂಸ್ಥೆಯ ಹಕ್ಕುಗಳ ಕಾರ್ಯಾಲಯದ ವರದಿ ತಿಳಿಸಿದೆ. ಆಕ್ರಮಿತ ಪ್ರದೇಶದುದ್ದಕ್ಕೂ ಫೆಲೆಸ್ತೀನಿಯರನ್ನು ಬಲವಂತವಾಗಿ ತೆರವುಗೊಳಿಸುವ ಮೂಲ ಅವರನ್ನು ಶಾಶ್ವತವಾಗಿ ಸ್ಥಳಾಂತರಿಸುತ್ತಿರುವುದು, ಜನಾಂಗೀಯ ನಿರ್ಮೂಲನೆ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಇಸ್ರೇಲ್ ಪೂರ್ವ ಜೆರುಸಲೇಂನಲ್ಲಿ 36973 ಮನೆಗಳನ್ನು ಹಾಗೂ ಪಶ್ಚಿಮದಂಡೆಯ ಉಳಿದೆಡೆ 27,200 ಮನೆಗಳನ್ನು ಒಳಗೊಂ ವಹಾಹತುಗಳ ನಿರ್ಮಾಣವನ್ನು ಚುರುಕುಗೊಳಿಸಿದೆ ಎಂದು ವರದಿ ಹೇಳಿದೆ. ಪಶ್ಚಿಮದಂಡೆಯಲ್ಲಿ 30 ಲಕ್ಷ ಫೆಲೆಸ್ತೀನಿಯರು ವಾಸವಾಗಿದ್ದರೆ, ಹೊಸದಾಗಿ ನಿರ್ಮಿಸಲಾದ ವಸಾಹತುಗಳಲ್ಲಿ 5 ಲಕ್ಷಕ್ಕೂ ಅಧಿಕ ಇಸ್ರೇಲ್ ಪ್ರಜೆಗಳು ನೆಲೆಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಅಕ್ರಮವಾಗಿದೆ.
ಸುರತ್ಕಲ್| ಯಕ್ಷಯಾನ ಅಗರಿ ಸಂಸ್ಕರಣೆ, ಪ್ರಶಸ್ತಿ ಪ್ರದಾನ ಸಮಾರಂಭ
ಸುರತ್ಕಲ್: ಗೋವಿಂದ ದಾಸ್ ಕಾಲೇಜ್ ಹಾಗೂ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ಆಶ್ರಯ ದಲ್ಲಿ ಯಕ್ಷಯಾನ ಅಗರಿ ಸಂಸ್ಕರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯು ಮಾರ್ಚ್ 21ರಂದು ಶನಿವಾರ ಗೋವಿಂದ ದಾಸ ಕಾಲೇಜಿನ ಯಕ್ಷಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ನಡೆಯಲಿದೆ ಎಂದು ಅಗರಿ ರಾಘವೇಂದ್ರ ರಾವ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸುರತ್ಕಲ್ ಅಗರಿ ಎಂಟರ್ ಪ್ರೈಸಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯ ಕ್ರಮವನ್ನು ಸುರತ್ಕಲ್ ನ ಉದ್ಯಮಿ ಆರ್ಯ ಫಯರ್ ಆಯಂಡ್ ಸೇಫ್ಟಿಯ ರಘುನಾಥ ಶೆಟ್ಟಿ ಕೃಷ್ಣಾಪುರ ಅವರು ಉದ್ಘಾಟಿಸಲಿದ್ದಾರೆ. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ. ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಕುಂತಳ ರಮಾನಂದ ಭಟ್ ಅವರು ದೀಪ ಪುಜ್ವಲನೆಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘ (ರಿ.) ಇದರ ಕಾರ್ಯದರ್ಶಿ ಶ್ರೀರಂಗ ಎಚ್., ಅಗರಿ ಎಂಟರ್ ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಪಾಲ್ಗೊಳ್ಳಲಿದ್ದಾರೆ ಎಂದರು. ಸಂಜೆ 4:40ಕ್ಕೆ ಯಕ್ಷಯಾನ-2026 ಸಮಾರೋಪ ಸಮಾರಂಭವು ನಡೆಯಲಿದ್ದು, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ಶ್ರೀದೇವಿಪ್ರಸಾದ್ ಶೆಟ್ಟಿ ಅವರಿಗೆ 35 ಸಾವಿರ ರೂ. ಮೌಲ್ಯದ ನಗದು ಪುರಸ್ಕಾರದ ಜೊತೆಗೆ 'ಅಗರಿ ಪ್ರಶಸ್ತಿ'ನೀಡಿ ಗೌರವಿಸಲಾಗುವುದು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಗೆ ಅಗರಿ ರಘುರಾಮೆ ಭಾಗವತ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದು ಅವರು ನುಡಿದರು. ಇದೇ ವೇಳೆ ಯಕ್ಷನಾನ 2026ರ ಆಮಂತ್ರಣ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಯಕ್ಷ ಯಾನದ ಸಂಚಾಲಕಿ ಪೂರ್ಣಿಮಾ ಯತೀಶ್ ರೈ, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ., ಗಂಗಾದರ ಪೂಜಾರಿ, ಪುಂಡಲೀಕ ಹೊಸಬೆಟ್ಟು, ಪ್ರಕಾಶ್ ಕುಳಾಯಿ ಮೊದಲಾದವರು ಇದ್ದರು.
ಎಲ್ಪಿಜಿ ಕೊರತೆ ಇದೆಯೆಂದು ಕೊನೆಗೂ ಹೈಕೋರ್ಟ್ನಲ್ಲಿ ಒಪ್ಪಿಕೊಂಡ ಕೇಂದ್ರ ಸರಕಾರ
ಮುಂಬೈ,ಮಾ.17: ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಎಲ್ಪಿಜಿ ಕೊರತೆಯಿಂದಾಗಿ ಉಂಟಾಗಿರುವ ತೊಂದರೆಗಳನ್ನು ನಿವಾರಿಸಲು ದೇಶೀಯ ಮತ್ತು ಅಂತರರಾಷ್ಟ್ರೀಯ ರಂಗಗಳಲ್ಲಿ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರವು ಮಂಗಳವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಕೇಂದ್ರದ ಹೇಳಿಕೆಯನ್ನು ಅಂಗೀಕರಿಸಿದ ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು ಎಲ್ಪಿಜಿ ವಿತರಕರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿಗೊಳಿಸಿತು. ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರವು ಈ ವಿಷಯದಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವುದನ್ನು ಅದು ಗಮನಕ್ಕೆ ತೆಗೆದುಕೊಂಡಿತು. ಇರಾನ್ ಯುದ್ಧದಿಂದಾಗಿ ಸೃಷ್ಟಿಯಾಗಿರುವ ಇಂಧನ ಬಿಕ್ಕಟ್ಟಿನ ನಡುವೆ ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳ ಹೆಚ್ಚಿನ ಪೂರೈಕೆಯನ್ನು ಕೋರಿ ಆರು ವಿತರಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಮಾ.12ರಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಖಾಸಗಿ ಕಂಪೆನಿಯೊಂದಕ್ಕೆ ನೋಟಿಸ್ಗಳನ್ನು ಹೊರಡಿಸಿತ್ತು. ಗೃಹಬಳಕೆ ಎಲ್ಪಿಜಿಯ ದಾಸ್ತಾನು ಮತ್ತು ಪೂರೈಕೆಯು ಪ್ರಚಲಿತ ನೀತಿಗೆ ಅನುಗುಣವಾಗಿರಬೇಕು ಎಂದೂ ನ್ಯಾಯಾಲಯವು ನಿರ್ದೇಶನವನ್ನು ನೀಡಿತು. ರಫ್ತಿನ ಬದಲು ದೇಶೀಯ ವಿತರಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರದ ನಿರ್ದೇಶನದ ಹೊರತಾಗಿಯೂ ನಾಗ್ಪುರ ಮೂಲದ ಕಾನ್ಫಿಡೆನ್ಸ್ ಪೆಟ್ರೋಲಿಯಂ ಇಂಡಿಯಾ ಲಿ.ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಹೆಚ್ಚಿಸಲು ವಿಫಲಗೊಂಡಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ಸಿಂಧನೂರು | ವಿದ್ಯಾರ್ಥಿಗಳು ಸಾಹಿತ್ಯ ಓದುವ ಹವ್ಯಾಸ ರೂಢಿಸಿಕೊಳ್ಳಲಿ: ದೊಡ್ಡಬಸವರಾಜ
ಸಿಂಧನೂರು: ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಾಹಿತ್ಯಾಭಿರುಚಿಯಿಂದ ದೂರವಾಗುತ್ತಿರುವುದರಿಂದ, ಕಲಿಕೆಯೊಂದಿಗೆ ಸಾಹಿತ್ಯ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕನಕದಾಸ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಂ. ದೊಡ್ಡಬಸವರಾಜ ಹೇಳಿದರು. ನಗರದ ಕನಕದಾಸ ಬಿಇಡಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ದಿ. ಕೆ. ವಿಜಯಶಂಕರ್, ದಿ. ಸಿದ್ದಪ್ಪ ಶಂಭೋಜಿ, ದಿ. ಕರಿಬಸಯ್ಯ ಸ್ವಾಮಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬರವಣಿಗೆಗೆ ಸಾಹಿತ್ಯ ಅತ್ಯವಶ್ಯಕವಾಗಿದ್ದು, ವಿದ್ಯಾರ್ಥಿಗಳು ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಂಡು ಸಮಾಜಮುಖಿಯಾಗಬೇಕು. ವಿಶೇಷವಾಗಿ ಶಿಕ್ಷಕರಾಗುವವರಿಗೆ ಸಾಹಿತ್ಯ ಜ್ಞಾನ ಬಹಳ ಮುಖ್ಯವಾಗಿದ್ದು, ಕಥೆ-ಕವನ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಸಿಂಧನೂರಿನಲ್ಲಿ ಅನೇಕ ಸಾಹಿತಿಗಳು ಇದ್ದು, ಅವರ ಕೃತಿಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಹೇಳಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿನ ಕೆಡುಕುಗಳನ್ನು ಸರಿಪಡಿಸುವ ಚುಟುಕು ಸಾಹಿತ್ಯ ರಚನೆಗೆ ಮುಂದಾಗಬೇಕು. ಕಡಿಮೆ ಪದಗಳಲ್ಲಿ ಅರ್ಥಗರ್ಭಿತವಾಗಿ ಸಂದೇಶ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಪತ್ರಕರ್ತ ಚಂದ್ರಶೇಖರ ಬೆನ್ನೂರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಸಾಪ ಅಧ್ಯಕ್ಷ ಎಚ್.ಎಫ್.ಮಸ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚುಸಾಪ ತಾಲೂಕಾಧ್ಯಕ್ಷ ಎಂ.ಭಾಸ್ಕರ್, ಕರ್ನಾಟಕ ರಕ್ಷಣಾ ಪಡೆಯ ತಾಲೂಕಾಧ್ಯಕ್ಷ ಮೌನೇಶ ದೊರೆ, ಬಿಇಡಿ ಕಾಲೇಜಿನ ಪ್ರಾಚಾರ್ಯ ಮಲ್ಲನಗೌಡ ಸೇರಿದಂತೆ ಇತರರು ಇದ್ದರು. ಕಸಾಪ ಸಂಘಟನಾ ಕಾರ್ಯದರ್ಶಿ ಚಂದ್ರೇಗೌಡ ಹರೇಟನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧ್ಯಕ್ಷೆ ಶಾಂತಾ ಒಳಗಿನಮನಿ ಕೊನೆಯಲ್ಲಿ ವಂದಿಸಿದರು.
ಹರ್ಯಾಣ | ರೈಲ್ವೆ ಹಳಿಗೆ ಕಟ್ಟಿ ಹಾಕಿದ ದುಷ್ಕರ್ಮಿಗಳು: ರೈಲು ಹರಿದು ಯುವಕ ಮೃತ್ಯು
ಚಂಡಿಗಢ, ಮಾ. 17: ಸ್ನೇಹಿತನ ಪ್ರಿಯತಮೆಗೆ ಹೋಳಿ ಬಣ್ಣ ಹಚ್ಚಿದ ಆರೋಪದಲ್ಲಿ 23 ವರ್ಷದ ಯವಕನನ್ನು ಹತ್ಯೆಗೈದ ಘಟನೆ ಪಾಣಿಪತ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ ಯುವಕನನ್ನು ಕಲು ಎಂದು ಗುರುತಿಸಲಾಗಿದೆ. ಆರೋಪಿಗಳು ಈತನಿಗೆ ಬಲವಂತವಾಗಿ ವಿಪರೀತ ಮಧ್ಯ ಕುಡಿಸಿ ರೈಲು ಹಳಿಗೆ ಕಟ್ಟಿದ್ದಾರೆ. ಕಲು ರೈಲು ಹರಿದು ಮೃತಪಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ. ಕಲು ಹೋಳಿ ದಿನದಂದು ನಾಪತ್ತೆಯಾಗಿದ್ದ. ಅನಂತರ ಆತನ ಛಿದ್ರಗೊಂಡ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ರೈಲು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ, ಸರಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ತನಿಖೆ ಇದು ಪೂರ್ವ ನಿಯೋಜಿತ ಹಾಗೂ ಬರ್ಬರ ಹತ್ಯೆ ಎಂದು ಬಹಿರಂಗಪಡಿಸಿದೆ. ಪೊಲೀಸರ ಪ್ರಕಾರ, ಹೋಳಿ ಹಬ್ಬದ ಸಂದರ್ಭ ಗೆಳೆಯ ಸಂಜುವಿನ ಪ್ರಿಯತಮೆಗೆ ಕಲು ಬಣ್ಣ ಹಾಕಿದ್ದ. ಈ ಘಟನೆಯಿಂದ ಆಕ್ರೋಶಗೊಂಡ ಸಂಜು ಕಲುವನ್ನು ಹತ್ಯೆಗೈಯಲು ನಿರ್ಧರಿಸಿದ್ದ. ಸಂಜು ಹಾಗೂ ಆತನ ಸಹವರ್ತಿಗಳು ಅದೇ ದಿನ ಕಲುವನ್ನು ಮನೆಯಿಂದ ಕರೆದುಕೊಂಡು ಹೋಗಿ ಬಲವಂತವಾಗಿ ವಿಪರೀತ ಕುಡಿಸಿದ್ದರು. ಅನಂತರ ಅರೆ ಪ್ರಜ್ಞೆಯಲ್ಲಿದ್ದ ಕಲುವನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿ ರೈಲು ಹಳಿಗೆ ಕಟ್ಟಿದ್ದರು. ಅನಂತರ ಅವರು ಹಿಂದಿರುಗಿದ್ದರು. ಇದೇ ಸಂದರ್ಭ ಸಂಚರಿಸಿದ ರೈಲು ಕಲುವಿನ ದೇಹವನ್ನು ಛಿದ್ರಗೊಳಿಸಿದೆ ಎಂದು ಪಾಣಿಪತ್ ಜಿಆರ್ಪಿ ಸ್ಟೇಷನ್ ಉಸ್ತುವಾರಿ ಧರ್ಮಪಾಲ್ ತಿಳಿಸಿದ್ದಾರೆ.
ಸಿರವಾರ | ಪತ್ರಕರ್ತರಿಗೆ ಆರೋಗ್ಯ ವಿಮೆ, ಉಚಿತ ಪತ್ರಿಕಾ ಭವನಕ್ಕೆ ಮನವಿ
ಸಿರವಾರ: ಪಟ್ಟಣ ಪಂಚಾಯತಿ ವ್ಯಾಪ್ತಿಯ ಪತ್ರಕರ್ತರಿಗೆ ಆರೋಗ್ಯ ವಿಮೆ ಕಲ್ಪಿಸಲು ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಅವರನ್ನು ಪತ್ರಕರ್ತರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಸಿರವಾರ ಪಟ್ಟಣದಲ್ಲಿ ಪತ್ರಿಕಾ ಭವನಕ್ಕಾಗಿ ಈಗಾಗಲೇ ಮಂಜೂರಾದ ನಿವೇಶನಕ್ಕೆ ಪಾವತಿಸಬೇಕಿರುವ ಹಣವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಪತ್ರಕರ್ತರಿಗೆ ಸ್ಥಿರ ಆದಾಯದ ಮೂಲ ಇಲ್ಲದ ಹಿನ್ನೆಲೆ, ಸರ್ಕಾರವೇ ಉಚಿತವಾಗಿ ಭವನವನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು, ಜಿಲ್ಲಾ ಸಮಿತಿ ಸದಸ್ಯರು, ಪದಾಧಿಕಾರಿಗಳು ಹಾಗೂ ಪಟ್ಟಣದ ಪತ್ರಕರ್ತರು ಉಪಸ್ಥಿತರಿದ್ದರು.
ಜೆಡಿ(ಯು) ಪಕ್ಷಕ್ಕೆ ಮಾಜಿ ಸಂಸದ ಕೆ.ಸಿ. ತ್ಯಾಗಿ ರಾಜೀನಾಮೆ
ಹೊಸದಿಲ್ಲಿ, ಮಾ. 17: ಜನತಾದಳದ ನಾಯಕ ಹಾಗೂ ರಾಜ್ಯ ಸಭೆಯ ಮಾಜಿ ಸದಸ್ಯ ಕೆ.ಸಿ. ತ್ಯಾಗಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ತನ್ನ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದ್ದಾರೆ. ಜೆಡಿ(ಯು) ವರಿಷ್ಠ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ಸಭೆಗೆ ಆಯ್ಕೆಯಾದ ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಮಂಗಳವಾರ ನೀಡಿದ ಹೇಳಿಕೆಯಲ್ಲಿ ತ್ಯಾಗಿ, ‘‘ಜೆಡಿ (ಯು)ನ ನನ್ನ ಸದಸ್ಯತ್ವ ಮುಗಿದಿದೆ. ಆದರೆ, ನಾನು ಅದನ್ನು ನವೀಕರಿಸುವುದಿಲ್ಲ’’ ಎಂದಿದ್ದಾರೆ. ‘‘ಸಮಾಜದ ವಂಚಿತ ಸಮುದಾಯ ಸೇರಿದಂತೆ ದಮನಿತರ, ರೈತರ, ಕೃಷಿಕರ ಹಿತಾಸಕ್ತಿಗೆ ಸಂಬಂಧಿಸಿದ ಸಿದ್ಧಾಂತಕ್ಕೆ ನಾನು ಎಂದಿಗೂ ಬದ್ಧನಾಗಿದ್ದೇನೆ’’ಎಂದು ಅವರು ಹೇಳಿದ್ದಾರೆ. ‘‘ನಿತೀಶ್ ಜಿ ಅವರೊಂದಿಗೆ ನಮ್ಮ ಸಂಬಂಧ ಶಾಶ್ವತ. ಇದು ಉತ್ತರಪ್ರದೇಶದಲ್ಲಿ ಬೇರೆ ರಾಜಕೀಯ ಪಕ್ಷದ ಬ್ಯಾನರ್ ಅಡಿಯಲ್ಲಿ ಹೊಸ ರಾಜಕೀಯ ನೆಲೆಯ ಹುಡುಕಾಟ ಅಷ್ಟೆ’’ ಎಂದು ಕೆ.ಸಿ. ತ್ಯಾಗಿ ಹೇಳಿದ್ದಾರೆ.
ಉಪ್ಪಿನಂಗಡಿ: 40ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳವು `ಉಬಾರ್ ಕಂಬಳೋತ್ಸವ'ವಾಗಿ ವಿಜೃಂಭಣೆಯಿಂದ ಈ ಬಾರಿ ಮಾ.28ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಕೂಟೇಲು ಬಳಿಯ ಹಳೆಗೇಟುವಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯ ಬಳಿ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರು, 40ನೇ ವರ್ಷದ ಹೊನಲು ಬೆಳಕಿನ ಕಂಬಳ ಇದಾಗಿದ್ದು, ಹಿಂದೆಂದಿಗಿಂತಲೂ ಅದ್ದೂರಿಯಾಗಿ ನಡೆಯಬೇಕು. ಇದರಲ್ಲಿ ಸರ್ವ ಧರ್ಮದವರು ಪಾಲ್ಗೊಂಡು ನಮ್ಮ ತುಳುನಾಡ ಜನಪದ ಕ್ರೀಡೆಯ ಸವಿಯನ್ನು ಅನುಭವಿಸಬೇಕು. ಎಲ್ಲರಿಂಗೂ ಆಮಂತ್ರಣ ಪತ್ರ ಮುಟ್ಟುವಂತೆ ಸಮಿತಿಯವರು ನೋಡಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಇದರಲ್ಲಿ ಪಾಲ್ಗೊಂಡು ನನ್ನ ತುಳುನಾಡ ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸುವಂತಾಗಬೇಕೆಂದರು. ಈ ಸಂದರ್ಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಅಕ್ರಮ- ಸಕ್ರಮ ಸಮಿತಿಯ ಸದಸ್ಯ ರಾಮಣ್ಣ ಪಿಲಿಂಜ, ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಸಂಚಾಲಕ ಶಶಿಕುಮಾರ್ ರೈ ಬಾಳ್ಯೊಟ್ಟುಗುತ್ತು, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕಾರ್ಯದರ್ಶಿಗಳಾದ ಶಿವರಾಮ ಶೆಟ್ಟಿ ಗೋಳ್ತಮಜಲು, ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ಮುರಳೀಧರ ರೈ ಮಠಂತಬೆಟ್ಟು, ವಿಠಲ ಶೆಟ್ಟಿ ಕೊಲ್ಯೊಟ್ಟು, ಡಾ. ರಾಜಾ ರಾಮ್ ಕೆ.ಬಿ., ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಾರಿಸೇನ ಜೈನ್ ಕೋಡಿಯಾಡಿಗುತ್ತು, ಪ್ರವೀಣ್ ಕುಮಾರ್ ಕದಿಕ್ಕಾರು ಬೀಡು, ಉಮಾನಾಥ ಶೆಟ್ಟಿ ಪೆರ್ನೆ, ಜಗನ್ನಾಥ ಶೆಟ್ಟಿ ನಡುಮನೆ, ಶಿವಪ್ರಸಾದ್ ರೈ ಮಠಂತ ಬೆಟ್ಟು, ರಾಜೇಶ್ ಶೆಟ್ಟಿ ಮಠಂತಬೆಟ್ಟು, ಗೌರವ ಸಲಹೆಗಾರರಾದ ನಿರಂಜನ ರೈ ಮಠಂತಬೆಟ್ಟು, ಸದಾಶಿವ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಎಸ್. ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಶೆಟ್ಟಿ ಕರಾಯ, ವಿಜಯ ಪೂಜಾರಿ ಚೀಮುಳ್ಳು, ಸಹ ಸಂಚಾಲಕರಾದ ಜಯಪ್ರಕಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಕುಮಾರನಾಥ ಪಲ್ಲತ್ತಾರು, ವಿವಿಧ ಸಮಿತಿಯ ಪದಾಧಿಕಾರಿಗಳಾದ ವಿಕ್ರªಂ ಶೆಟ್ಟಿ ಅಂತರ, ರಾಘವೇಂದ್ರ ನಾಯಕ್ ಪಿಲಿಗುಂಡ, ಸತೀಶ್ ಶೆಟ್ಟಿ ಹೆನ್ನಾಳ, ಜಗದೀಶ್ ಕುಮಾರ್ ಪರಕಜೆ, ಯತೀಶ್ ಶೆಟ್ಟಿ, ಮಹಾಲಿಂಗ ಕೆಜೆಕ್ಕಾರು, ಮೋಹನ್ ಕಜೆಕ್ಕಾರು, ಖಾದರ್ ಆದರ್ಶನಗರ, ಶ್ರೀನಿವಾಸ ನಾಯ್ಕ, ಜಯಾನಂದ ಪಿಲಿಗುಂಡ ಮತ್ತಿತರರು ಉಪಸ್ಥಿತರಿದ್ದರು.
ವಾಷಿಂಗ್ಟನ್, ಮಾ.17: ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ವಿರೋಧಿಸಿ, ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಅವರು, ‘ಇರಾನ್ ನಿಂದ ಅಮೆರಿಕಕ್ಕೆ ತಕ್ಷಣದ ಯಾವುದೇ ಭದ್ರತಾ ಬೆದರಿಕೆ ಇರಲಿಲ್ಲ. ಇಸ್ರೇಲ್ ನ ಒತ್ತಡದ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಆರಂಭಿಸಲು ಮುಂದಾದರು’ ಎಂದು ಆರೋಪಿಸಿದ್ದಾರೆ. ‘ಇರಾನ್ ವಿರುದ್ಧದ ಯುದ್ಧವನ್ನು ಬೆಂಬಲಿಸಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ’ ಎಂದು ಸ್ಪಷ್ಟಪಡಿಸಿರುವ ಕೆಂಟ್, ತಮ್ಮ ನಿರ್ಧಾರ ನೈತಿಕ ನಿಲುವಿನ ಆಧಾರಿತವಾಗಿದೆ ಎಂದು ತಿಳಿಸಿದ್ದಾರೆ. ಇರಾನ್ ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ರಾಜೀನಾಮೆ ಸಲ್ಲಿಸಿರುವ ಟ್ರಂಪ್ ಆಡಳಿತದ ಮೊದಲ ಪ್ರಮುಖ ಅಧಿಕಾರಿ ಇವರಾಗಿದ್ದಾರೆ. ‘ನಾವು ಇಸ್ರೇಲ್ನ ಒತ್ತಡ ಹಾಗೂ ಅದರ ಅಮೆರಿಕದ ಒಳರಾಜಕೀಯದ ಮೇಲೆ ಇರುವ ಪ್ರಭಾವದ ಪರಿಣಾಮವಾಗಿ ಈ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ’ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಜೂನ್ 2025ರವರೆಗೆ ಮಧ್ಯಪ್ರಾಚ್ಯದ ಯುದ್ಧಗಳು ಅಮೆರಿಕದ ಜೀವಹಾನಿ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗಿವೆ ಎಂಬುದು ಟ್ರಂಪ್ ಅವರಿಗೆ ತಿಳಿದಿತ್ತು. ಆದರೆ ಬಳಿಕ ಹಿರಿಯ ಇಸ್ರೇಲ್ ಅಧಿಕಾರಿಗಳು ಹಾಗೂ ಅಮೆರಿಕದ ಪ್ರಭಾವಶಾಲಿ ಮಾಧ್ಯಮ ವಲಯಗಳು ತಪ್ಪು ಮಾಹಿತಿಯನ್ನು ಹರಡಿದ ಪರಿಣಾಮ, ಇರಾನ್ ವಿರುದ್ಧ ಯುದ್ಧದ ವಾತಾವರಣ ನಿರ್ಮಾಣವಾಯಿತು ಎಂದು ಕೆಂಟ್ ಆರೋಪಿಸಿದ್ದಾರೆ.
ಮಾ.19: ʼಉಲ್ಲಾಕುಳು ಆರಾಧನೆ ಅನನ್ಯತೆʼ ಕೃತಿ ಬಿಡುಗಡೆ
ಮಂಗಳೂರು, ಮಾ.17: ಅದಿ ಕುಕ್ಕೆಯಿಂದ ಕುಂಬ್ಳೆಯ ಅಂತ್ಯ ಪುತ್ತಿಗೆಯವರೆಗೆ ವ್ಯಾಪಿಸಿ ಆರಾಧನೆಯಗುತ್ತಿರುವ ಉಲ್ಲಾಕುಳು ಆರಾಧನೆಯನ್ನು ಕೇಂದ್ರೀಕರಿಸಿ ಡಾ. ಪೂವಪ್ಪ ಕಣಿಯೂರು ನಡೆಸಿದ ಅಧ್ಯಯನ ಗ್ರಂಥ ʼಉಲ್ಲಾಕುಳು ಆರಾಧನೆ ಅನನ್ಯತೆʼ ಕೃತಿ ಮಾ.19ರಂದು ಬೆಳಗ್ಗೆ 10:30ಕ್ಕೆ ನಗರದ ತುಳು ಸಾಹಿತ್ಯ ಅಕಾಡಮಿಯ ತುಳು ಭವನದ ಡಾ.ವಾಮನ ನಂದಾವರ ಚಾವಡಿಯಲ್ಲಿ ಬಿಡುಗಡೆಯಾಗಲಿದೆ. ತರಗಿಣಿ ಪ್ರಕಾಶನ ಸುಳ್ಯ ಮತ್ತು ಆಕೃತಿ ಆಶಯ ಪಬ್ಲಿಕೇಶನ್ ಮಂಗಳೂರು ಇದರ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ವಿಶ್ರಾಂತ ಕುಲಪತಿ ಪ್ರೊ.ಕೆ ಚಿನ್ನಪ್ಪಗೌಡ ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಬಾಗಲಕೋಟೆ ಉಪಚುನಾವಣೆ : ಮುಖ್ಯಮಂತ್ರಿಯೊಂದಿಗೆ ಎ.ವಸಂತ ಕುಮಾರ ನೇತೃತ್ವದಲ್ಲಿ ಸಭೆ
ರಾಯಚೂರು: ಬಾಗಲಕೋಟೆ ಉಪಚುನಾವಣೆಯ ದಿನಾಂಕ ಘೋಷಣೆಯಾದ ಹಿನ್ನೆಲೆ ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎ. ವಸಂತ ಕುಮಾರ್ ನೇತೃತ್ವದಲ್ಲಿ ಮಂಗಳವಾರ ಹಲವು ಮಹತ್ವದ ಸಭೆಗಳು ನಡೆಯುವುವು. ಮೊದಲು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಚುನಾವಣೆಯ ಸಿದ್ಧತೆ ಹಾಗೂ ರೂಪುರೇಷೆಗಳ ಕುರಿತು ಚರ್ಚೆ ನಡೆಯಿತು. ಈ ವೇಳೆ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳ ಬಗ್ಗೆ ಎ. ವಸಂತ ಕುಮಾರ್ ಮಾಹಿತಿ ನೀಡಿದರು. ಸಭೆಯಲ್ಲಿ ಬಾಗಲಕೋಟೆಯ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಚಿವರಾದ ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ಶಿವರಾಜ್ ತಂಗಡಗಿ, ಬೈರತಿ ಸುರೇಶ್, ರಹೀಂ ಖಾನ್, ಶಾಸಕ ನಾಗನಗೌಡ ಸೇರಿದಂತೆ ಹಲವು ನಾಯಕರು ಭಾಗವಹಿಸಿದರು. ಇದಲ್ಲದೆ ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನಪರಿಷತ್ ಸದಸ್ಯರು ಎಫ್.ಹೆಚ್. ಜಕ್ಕಪ್ಪ ಹಾಗೂ ಬಸವನಗೌಡ ಬಾದರ್ಲಿ ಸಹ ಸಭೆಯಲ್ಲಿ ಹಾಜರಿದ್ದರು.
ಸಿರವಾರ | ಸಾಮೂಹಿಕ ವಿವಾಹದಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಶ್ರೀಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ಸಿರವಾರ: ಸಾಮೂಹಿಕ ವಿವಾಹಗಳ ಮೂಲಕ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಮಂಗಳವಾರ ತಾಲೂಕಿನ ಬಲ್ಲಟಿಗಿ ಗ್ರಾಮದಲ್ಲಿ ಲಿಂ. ಶ್ರೀ ಬಸವಲಿಂಗಯ್ಯ ತಾತನವರ 17ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ಪುರಾಣ ಪ್ರವಚನ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲ, ಅದು ಭಾಗ್ಯವಂತರ ಮದುವೆಗಳಾಗಿವೆ. ಇವು ಸಮಾಜಮುಖಿ ಕಾರ್ಯವಾಗಿದ್ದು, ಆರ್ಥಿಕವಾಗಿ ಉಳಿತಾಯಕ್ಕೆ ಸಹಕಾರಿ ಆಗುತ್ತವೆ ಎಂದು ಹೇಳಿದರು. ಇಂತಹ ಮಹತ್ವದ ಕಾರ್ಯವನ್ನು ಕೈಗೊಂಡ ಬಸವರಾಜಯ್ಯ ತಾತನವರ ಸೇವೆ ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಕುರಿತು ದೇವರಭೂಪರ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು, ನವಲಕಲ್ ಅಭಿವೃದ್ಧಿ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಚಂದ್ರಶೇಖರ ಹಿರೇಮಠ ಆಲಮೇಲ ಮಾತನಾಡಿದರು. ಈ ಸಂದರ್ಭದಲ್ಲಿ ಕರೇಗುಡ್ಡದ, ಮಹಾಂತೇಶ ಸ್ವಾಮಿಗಳು, ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಯಂಕಂಚಿಶ್ರೀಗಳು, ಗುರುಬಸಯ್ಯಸ್ವಾಮಿ, ಬಸವರಾಜಯ್ಯಸ್ವಾಮಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ಬ್ಯಾಗವಾಟ್ ಮರಿಸ್ವಾಮಿ ಸಾಗರಮಠ, ಡಾ.ಟಿ.ಶರಣಪ್ಪ, ಮಲ್ಲಣ್ಣ ಸಾಹುಕಾರ್, ಟಿ.ಮಲ್ಲಿಕಾರ್ಜುನ ಪಾಟೀಲ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯರಾದ ನಿರ್ಮಲಾ, ನಾಗರತ್ನ ಹಾಗೂ ಗ್ರಾಮದ ಮುಖಂಡರು ಮಹಿಳೆಯರು, ಯುವಕರು ಸಹಸ್ರಾರು ಭಕ್ತರು ಭಾಗವಹಿಸಿದ್ದರು. 23 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.
Raichur | ಮಾರ್ಚ್ ಮಾಹೆಯ ಪಡಿತರ ಧಾನ್ಯ ವಿತರಣೆ: ಜಿಲ್ಲಾಧಿಕಾರಿ ನಿತೀಶ್ ಕೆ.
ರಾಯಚೂರು: ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮಾರ್ಚ್ 2026ರ ಪಡಿತರ ಧಾನ್ಯಗಳ ವಿತರಣೆ ಪ್ರಾರಂಭವಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ನಿತೀಶ್ ಕೆ. ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪ್ರತಿ ಚೀಟಿಗೆ 35 ಕೆ.ಜಿ ಸಾರವರ್ಧಿತ ಅಕ್ಕಿ ವಿತರಿಸಲಾಗುತ್ತದೆ. ಪಿ.ಹೆಚ್.ಹೆಚ್ (BPL) ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 5 ಕೆ.ಜಿ ಸಾರವರ್ಧಿತ ಅಕ್ಕಿ ನೀಡಲಾಗುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ, ಏಕ, ದ್ವಿ ಹಾಗೂ ತ್ರಿ ಸದಸ್ಯರ ಅಂತ್ಯೋದಯ ಚೀಟಿಗಳನ್ನು ಹೊರತುಪಡಿಸಿ, ನಾಲ್ಕು ಮತ್ತು ಹೆಚ್ಚು ಸದಸ್ಯರಿರುವ ಅಂತ್ಯೋದಯ ಹಾಗೂ ಪಿ.ಹೆಚ್.ಹೆಚ್ ಚೀಟಿದಾರರಿಗೆ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಯಡಿ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ, ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದಲ್ಲಿ ಪಡಿತರ ನೀಡಿದರೆ, ಹಣ ಕೇಳಿದರೆ ಅಥವಾ ಇತರೆ ದೂರುಗಳಿದ್ದಲ್ಲಿ ನಿಶುಲ್ಕ ದೂರವಾಣಿ ಸಂಖ್ಯೆ 1967ಗೆ ಅಥವಾ ಸಂಬಂಧಿತ ತಹಶೀಲ್ದಾರರ ಕಚೇರಿ ಹಾಗೂ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಈ ಯೋಜನೆಯಡಿ ನೀಡಲಾಗುವ ಧಾನ್ಯಗಳನ್ನು ಮಾರಾಟ ಮಾಡುವುದು ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದರೆ, ಅಂತಹ ಪಡಿತರ ಚೀಟಿದಾರರಿಗೆ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಿಧಿಸಿ, ಆ ಚೀಟಿಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.
Delhi Capitals Team- ಮುಂಬರುವ ಐಪಿಎಲ್ ಸೀಸನ್ನಲ್ಲಿ ಕರ್ನಾಟಕದ ಕಣ್ಮಣಿ ಕೆ.ಎಲ್. ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಹೊರಲಿದ್ದಾರೆ. ಕಳೆದ ಸೀಸನ್ ನಲ್ಲಿ ನಡೆದ ಹೆಚ್ಚಿನ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದು ಶತಕ ಬಾರಿಸಿದ್ದರು. ಈ ಬಾರಿಯೂ ಅವರಿಂದ ತಂಡ ಅಂತಹದ್ದೇ ಇನ್ನಿಂಗ್ಸ್ ಗಳನ್ನು ಎದುರು ನೋಡುತ್ತಿದೆ.
ಮಂಗಳೂರು| ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದು ಕೊಲೆಗೆ ಯತ್ನ ಪ್ರಕರಣ: ಆರೋಪಿ ಸೆರೆ
ಮಂಗಳೂರು : ಭೂ ವ್ಯವಹಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭೂ ವ್ಯವಹಾರಕ್ಕೆ ಸಂಬಂಧಿಸಿ ಆರೋಪಿ ಶರೀಫ್ ಎಂಬಾತನು ಸುರತ್ಕಲ್ ಕಾನ ಮತ್ತು ವಾವಂಜೂರಿನಲ್ಲಿ ಸುಮಾರು 2 ಕೋ.ರೂ.ವನ್ನು ಹೂಡಿಕೆ ಮಾಡಿದ್ದ. ಇದಕ್ಕೆ ಸಂಬಂಧಿಸಿ ನಗರದ ಮಲ್ಲಿಕಟ್ಟೆಯ ಮೋಹನ್ ದಾಸ್ ಶೆಟ್ಟಿ (56) ಎಂಬವರು ತನಗೆ ಮೋಸ ಮಾಡಿದ್ದಾರೆಂದು ಸಿಟ್ಟಿನಿಂದ ಮಂಗಳವಾರ ಪೂ.11ಕ್ಕೆ ನಗರದ ಆರ್ಯ ಸಮಾಜ ರಸ್ತೆಯ ಬದಿಯಲ್ಲಿ ಮಾತುಕತೆ ನಡೆಸಿದ್ದ. ಬಳಿಕ ಮೋಹನ್ ದಾಸ್ ಶೆಟ್ಟಿಯ ಮೊಬೈಲನ್ನು ಆರೋಪಿ ಕಸಿದುಕೊಂಡಿದ್ದ. ನಂತರ ಮೋಹನ್ದಾಸ್ ಶೆಟ್ಟಿ ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಆರೋಪಿ ಶರೀಫ್ ಸಿಟ್ಟಿನಿಂದ ತನ್ನ ಕಾರನ್ನು ಅತಿ ವೇಗವಾಗ ಚಲಾಯಿಸಿಕೊಂಡು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿಹೊಡೆದು ಕೊಲೆ ಮಾಡಲು ಯತ್ನಿಸಿದ್ದ ಎಂದು ದೂರಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ಆರೋಪಿ ಶರೀಫ್ನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಜೇವರ್ಗಿ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಡವಲರ್ಸ್ ವತಿಯಿಂದ ಜೇವರ್ಗಿ ನಿವಾಸಿಗಳಿಗೆ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ರಮಝಾನ್ ಹಬ್ಬವು ಕೇವಲ ಉಪವಾಸ ಮಾಡುವುದಲ್ಲ, ಅದೊಂದು ಪ್ರೀತಿ ಪ್ರೇಮದ ಸಂಖ್ಯೆಯಾವಾಗಿದೆ. ಜಾತಿ ಧರ್ಮ ಮೀರಿದ ಒಂದು ಪವಿತ್ರವಾದ ಮಾಸವಾಗಿದೆ. ಹಾಗಾಗಿ ಇಂದು ಸರ್ವರಿಗೂ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ ಎಂದು ಮುಖಂಡರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ಮೌಲಾನ ಆಫೀಜ್ ಜಹುರ್ ಸಾಬ್ ಫರತಬಾದ, ಮೌಲಾನ ವಸೀಂ ಸಾಬ್ ಬಿಲಾಲ ಮದರಸಾ, ಮೌಲಾನ ಶರೀಫೋದಿನ್ ಸಾಬ್, ಮಕ್ಕಾ ಮಜೀದ್, ಮುಫ್ತಿ ಅಬ್ದುಲ್ ಮಜೀದ್ ಸಾಬ್, ಅಲ್ಲಾಬಕಶ್ ಸೇಠ್ ಬಾಗಬಾನ್, ಕಲ್ಲಪ್ಪ ಯಾದವ್, ನಿಂಗಣಗೌಡ ನಂದಿಹಳ್ಳಿ, ದಾವುದ ಇನಾಮದಾರ್, ರಾಜಶೇಖರ ಸೀರಿ, ಷಣ್ಮುಖಪ್ಪ ಸಾಹು ಗೋಗಿ, ಬಾಪುಗೌಡ ಬಿರಾಳ, ಬಸವರಾಜ ಸಾಸಬಾಳ, ರೇವಣಸಿದ್ದಪ್ಪ ಸಂಕಾಲಿ, ಷಣ್ಮುಖಪ್ಪ ಹೀರೇಗೌಡ, ರಾಮಶೆಟ್ಟಿ ಹುಗ್ಗಿ, ಗುರುಶಾಂತಯ್ಯ ಹಿರೇಮಠ, ಸಂತೋಷ, ಶರಣು ರಾಂಪೂರ, ಫಾರುಕ್ ಲಕಪತಿ, ಮೈಹಿಬುಬ್ ಶಾನವಾಲೆ, ಜಾಕೀರ್ ಸುಸೇನ್ ಗೋಗಿ, ಅಬ್ದುಲ್ ವಾಜೀದ್ ಇನಾಮದಾರ, ಮೋಹಿಯೂನುದ್ದಿನ್ ಇನಾಮದಾರ, ಅಜ್ಜು ಲಕಪತಿ, ಅಬ್ದುಲ್ ರಹೇಮಾನ್ ಪಟೇಲ್, ರುಕುಂ ತೋಲಾ ಬಾಗಬಾನ್, ಯೂಸೂಫ್ ಜೇವರ್ಗಿ, ಇಬ್ರಾಹಿಂ ಸೇಠ್ ಮಿರ್ಚಿ, ಗುಂಡು ಬಡಿಗೇರ್, ಶ್ರೀಧರ್ ರತ್ನಗಿರಿ, ಮೊಹಮ್ಮದ್ ಅಲಿ, ನಿಸಾರ್ ಇನಾಮದಾರ, ಮುಜ್ಜು ಕಾನ್ ಸೇರಿದಂತೆ ಅನೇಕರಿದ್ದರು.
Kalaburagi | ಆತ್ಮ ವಿಶ್ವಾಸದಿಂದ ಎಸೆಸೆಲ್ಸಿ ಪರೀಕ್ಷೆ ಎದುರಿಸಿ : ಭಂವರ್ ಸಿಂಗ್ ಮೀನಾ
ಕಲಬುರಗಿ: 2025-26ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆ-1 ಮಾರ್ಚ್ 18ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಬಹಿರಂಗ ಪತ್ರದ ಮೂಲಕ ಶುಭ ಹಾರೈಸಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಕರೆ ನೀಡಿದ್ದಾರೆ. ಈ ಪರೀಕ್ಷೆಯು ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಹಂತವಾಗಿದ್ದು, ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಅವರು ತಿಳಿಸಿದ್ದಾರೆ. ಪರೀಕ್ಷೆಯನ್ನು ಒತ್ತಡವೆಂದು ಭಾವಿಸದೆ, ಸಾಧನೆಗೆ ಅವಕಾಶವೆಂದು ನೋಡಬೇಕು. ಪ್ರಶ್ನೆಪತ್ರಿಕೆಯನ್ನು ಗಮನದಿಂದ ಓದಿ, ಸ್ಪಷ್ಟ ಹಾಗೂ ಸುಂದರವಾಗಿ ಉತ್ತರ ಬರೆಯಬೇಕು. ಸಮಯದ ಸದ್ವಿನಿಯೋಗ ಅತ್ಯಗತ್ಯ ಎಂದು ಅವರು ಸಲಹೆ ನೀಡಿದ್ದಾರೆ. ಈ ಅವಧಿಯಲ್ಲಿ ಆರೋಗ್ಯದ ಕಡೆಗೂ ಸಮಾನ ಗಮನ ನೀಡಬೇಕು. ಸಮತೋಲನ ಆಹಾರ, ಸಮರ್ಪಕ ನಿದ್ರೆ, ಸಾಕಷ್ಟು ನೀರು ಮತ್ತು ಹಣ್ಣುಗಳ ಸೇವನೆ ಜೊತೆಗೆ ನಿಯಮಿತ ಅಭ್ಯಾಸ ಮಾಡಬೇಕು ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಿರಾಶೆಗೊಳಗಾಗದೆ ಪ್ರಾಮಾಣಿಕ ಪ್ರಯತ್ನ ಮುಂದುವರಿಸಬೇಕು. ಪರಿಶ್ರಮದ ಮೂಲಕ ಜೀವನವನ್ನು ಪ್ರಕಾಶಮಾನವಾಗಿಸಬಹುದು. ಗರಿಷ್ಠ ಫಲಿತಾಂಶಕ್ಕಾಗಿ ಎಲ್ಲಾ ವಿಷಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಿದ್ದು, ಈ ಬಾರಿ ಉತ್ತಮ ಫಲಿತಾಂಶ ನೀಡುವ ಮೂಲಕ ಜಿಲ್ಲೆಯ ಹೆಮ್ಮೆ ಹೆಚ್ಚಿಸಬೇಕು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲ್ಲಂಗಡಿ ಬೆಳೆ ಹಾನಿ; ರೈತರಿಗೆ ಸೂಕ್ತ ಪರಿಹಾರ ನೀಡಲು ಬೈಂದೂರು ಶಾಸಕರ ಆಗ್ರಹ
ಬೈಂದೂರು, ಮಾ.17: ಬೈಂದೂರು ವಿಧಾನಸಭಾ ಕ್ಷೇತ್ರ ವಾಪ್ತಿಯಲ್ಲಿ ಪ್ರಸ್ತುತ ವರ್ಷ ಕಲ್ಲಂಗಡಿ ಹಣ್ಣಿನ ಮೊದಲ ಬೆಳೆಗೆ ಸೊರಗು ರೋಗ ತಗುಲಿ ಬೆಳೆ ಹಾನಿ ಸಂಭವಿಸಿರುವುದರಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ಹಾಗೂ ಕಲ್ಲಂಗಡಿ ಬೆಳೆಗಾರರ ಹಿತ ಕಾಪಾಡಲು ಹಾಗೂ ಉತ್ತಮ ದರವನ್ನು ದೊರಕಿಸಿಕೊಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಬೆಂಗಳೂರಿನಲ್ಲಿ ಇಂದು ನಡೆದ ವಿಧಾನಸಭಾ ಅಧಿವೇಶದಲ್ಲಿ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಒತ್ತಾಯಿಸಿದರು. ಗಂಟಿಹೊಳೆ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ 180 ಎಕ್ರೆ ಕಲ್ಲಂಗಡಿ ಬೆಳೆ ಪ್ರದೇಶವಿದ್ದು, ಪ್ರಸ್ತುತ ವರ್ಷ ಕಲ್ಲಂಗಡಿ ಹಣ್ಣಿನ ಮೊದಲ ಬೆಳೆಗೆ ಸೊರಗು ರೋಗ ತಗುಲಿ ಕಟಾವು ಹಂತದಲ್ಲಿ 40 ಎಕ್ರೆ ಪ್ರದೇಶದಲ್ಲಿ ರೋಗಬಾಧೆ ಕಂಡು ಬಂದಿರುವುದಾಗಿ ಅಂದಾಜಿಸಲಾಗಿದೆ ಎಂದರು. ರೋಗ ಕಂಡು ಬಂದಿರುವ ತೋಟಗಳಲ್ಲಿ ಶೇ.40ರಿಂದ 50ರಷ್ಟು ಇಳುವರಿ ಕಡಿಮೆಯಾಗಿರುವುದಾಗಿ ಅಂದಾಜಿಸ ಲಾಗಿದೆ. ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಇಲಾಖೆಯಲ್ಲಿ ಇರುವುದಿಲ್ಲ ಹಾಗೂ ಕಲ್ಲಂಗಡಿ ಬೆಳೆಗಾರರ ಹಿತ ಕಾಪಾಡಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಯಡಿ ಹೊಸ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೆರ್ಗೆ ರೂ. 0.60 ಲಕ್ಷ ಘಟಕ ವೆಚ್ಚದ ಶೇ.40ರಂತೆ ರೂ.0.24 ಲಕ್ಷ ಸಹಾಯಧನ ನೀಡಲಾಗುತ್ತಿದೆ ಎಂದರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಲು 2 ಹೆಕ್ಟೆರ್ವರೆಗೆ ಶೇ.90 ರಷ್ಟು ಮತ್ತು 3ರಿಂದ 5 ಹೆಕ್ಟೆರ್ವರೆಗೆ ಶೇ.45ರಷ್ಟು ಸಹಾಯಧನ ನೀಡಲಾಗುತ್ತಿದೆ. ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ಲಾಸ್ಟಿಕ್ ಹೊದಿಕೆ ಹೊದಿಸಲು ಪ್ರತಿ ಹೆಕ್ಟೆರ್ಗೆ ರೂ. 0.40 ಲಕ್ಷ ಗಳ ಘಟಕ ವೆಚ್ಚದ ಶೇ.50ರಂತೆ 0.20 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಅಲ್ಲದೇ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಮಗ್ರ ಪೋಷಕಾಂಶ, ಕೀಟ/ರೋಗಗಳ ನಿರ್ವಹ ಣೆಗೆ ಸಹಾಯಧನ ಮತ್ತು ಕಲ್ಲಂಗಡಿ ಸೇರಿದಂತೆ ತೋಟಗಾರಿಕಾ ಉತ್ಪನ್ನಗಳ ದರ ಕುಸಿತದ ಸಂದರ್ಭದಲ್ಲಿ ಬೆಂಬಲ ಬೆಲೆ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಸಚಿವರು ಶಾಸಕರ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ 15651.65 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆಯುತಿದ್ದು, ಉಡುಪಿ ಜಿಲ್ಲೆಯಲ್ಲೂ 230 ಎಕರೆ ವಿಸ್ತೀರ್ಣದಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ ಎಂದು ಸಚಿವರು ನುಡಿದರು. ಕಲ್ಲಂಗಡಿ ಬೆಳೆಗೆ ಸೊರಗು ರೋಗ, ಕೀಟ ಬಾಧೆ ಸೇರಿದಂತೆ ಇನ್ನಿತರ ರೋಗ ನಿವಾರಣೆಗೆ ಬೆಳೆಗಾರರಿಗೆ ಅಗತ್ಯ ಮಾಹಿತಿಗಳನ್ನೊಳಗೊಂಡ ಮಾಹಿತಿ ಕೈಪಿಡಿ ಒದಗಿಸುವಂತೆ ಇದೇ ಸಂದರ್ಭದಲ್ಲಿ ಶಾಸಕರು ಸಚಿವರಿಗೆ ಮನವಿ ಮಾಡಿದರು.
ಮಾ.19ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ
ಉಡುಪಿ, ಮಾ.17: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯು ಮಾ.19ರ ಬೆಳಗ್ಗೆ 10 ಗಂಟೆಗೆ ಬ್ರಹ್ಮಗಿರಿ ನಾಯರ್ಕೆರೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನ್ವಿ ತಾಲೂಕಿಗೆ ಗಡಿಪಾರು; ಮಹೇಶ್ ಶೆಟ್ಟಿ ತಿಮರೋಡಿ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿದ್ದ ಕ್ರಮ ಮರುಪರಿಶೀಲಿಸಿ ಹೊಸದಾಗಿ ಆದೇಶಿಸಲು ಪುತ್ತೂರು ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಕ್ರಮ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2026ರ ಜನವರಿ 31ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ಪೀಠದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಇಲ್ಲವೆಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿತು. ಇದೇ ವೇಳೆ, ಏಕಸದಸ್ಯ ನ್ಯಾಯಪೀಠದ ಆದೇಶದ ಅನುಸಾರ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಮೂರನೇ ಬಾರಿಗೆ ಪುತ್ತೂರು ಉಪ ವಿಭಾಗಾಧಿಕಾರಿ ಈಗಾಗಲೇ ಆದೇಶ ಹೊರಡಿಸಿದ್ದಾರೆ ಎಂದು ಸರಕಾರದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಪ್ರಕರಣದ ಹಿನ್ನೆಲೆ: ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರಿನ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ 2025ರ ಸೆ.18ರಂದು ಆದೇಶ ಮಾಡಿದ್ದರು. ಈ ಆದೇಶ ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು 2025ರ ನವೆಂಬರ್ 17ರಂದು ಇತ್ಯರ್ಥಪಡಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಸಕಾರಣಗಳನ್ನು ನೀಡಿ ಅಗತ್ಯ ನಿಯಮಗಳನ್ನು ಪಾಲಿಸಿ 15 ದಿನಗಳಲ್ಲಿ ಹೊಸದಾಗಿ ಆದೇಶ ಹೊರಡಿಸುವಂತೆ ಸೂಚಿಸಿ ಪ್ರಕರಣವನ್ನು ಮತ್ತೆ ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸಿತ್ತು. ಅದರಂತೆ, ಪ್ರಕರಣವನ್ನು ಮರುಪರಿಶೀಲಿಸಿದ್ದ ಉಪ ವಿಭಾಗಾಧಿಕಾರಿ ಮತ್ತೊಮ್ಮೆ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ಸರಹದ್ದಿಗೆ ತಿಮರೋಡಿ ಅವರನ್ನು ಗಡಿಪಾರು ಮಾಡಿ 2025ರ ಡಿಸೆಂಬರ್ 16ರಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ತಿಮರೋಡಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಆಕ್ಷೇಪಣೆಗಳನ್ನು ಪರಿಗಣಿಸಿ ಮತ್ತು ಅವರ ಅಹವಾಲು ಆಲಿಸಿ 3 ವಾರದಲ್ಲಿ ಮತ್ತೆ ಪ್ರಕರಣದ ಕುರಿತು ಹೊಸದಾಗಿ ಆದೇಶ ಮಾಡಬೇಕು ಎಂದು ನಿರ್ದೇಶಿಸಿ 2026ರ ಜನವರಿ 31ರಂದು ಪುತ್ತೂರು ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ತಿಮರೋಡಿ, ಪ್ರಕರಣವನ್ನು ಎರಡನೇ ಬಾರಿಗೆ ಪುತ್ತೂರು ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸುವ ಅವಶ್ಯತೆ ಇರಲಿಲ್ಲ. ಗಡಿಪಾರು ಮಾಡುವ ಮೂಲಕ ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಅರ್ಜಿದಾರರಿಗೆ ಲಭ್ಯವಿರುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಆಕ್ಷೇಪಿಸಿದ್ದರು.
U.T Khader: ಸಂಸತ್ತು - ವಿಧಾನಮಂಡಲದಲ್ಲಿ ಬಿತ್ತಿದಂತೆ ಬೆಳೆ ಅಲ್ಲವೇ: ರಾಜಾರಾಂ ತಲ್ಲೂರು ಬರಹ
U.T Khader: ಸಂಸತ್ತು - ವಿಧಾನಮಂಡಲದಲ್ಲಿ ಬಿತ್ತಿದಂತೆ ಬೆಳೆ ಅಲ್ಲವೇ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ವಿಷಯ ಸರಳ... ನೀವು ವಿಧಾನಮಂಡಲ, ಸಂಸತ್ತುಗಳಿಗೆ ಯಾರನ್ನು ಆಯ್ಕೆ ಮಾಡಿ ಕಳುಹಿಸುತ್ತೀರಿ ಎಂಬುದನ್ನು ಆಧರಿಸಿ, ಆ ಸದನಗಳು ಹೇಗೆ ನಡೆಯುತ್ತವೆ ಎಂಬುದು ನಿರ್ಧಾರ ಆಗುತ್ತವೆ. ನಮ್ಮ ಸುಪಾರಿ ಸ್ಪೆಷಲಿಸ್ಟ್ - ಡಿಯರ್ ಮೀಡಿಯಾ ಮೊನ್ನೆಯಿಂದ ಕರ್ನಾಟಕ
ಇರಾನ್ ನೊಂದಿಗಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಟ್ರಂಪ್ ಎರಡು ವಿಭಿನ್ನ ನಿರೂಪಣೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಾರ್ವಜನಿಕವಾಗಿ, ಇರಾನ್ ನ ಮಿಲಿಟರಿ ಶಕ್ತಿಯನ್ನು ನಾಶಪಡಿಸಲಾಗಿದೆ, ಅದರ ನಾಯಕರನ್ನು ಹತ್ಯೆ ಮಾಡಲಾಗಿದೆ. ಟೆಹ್ರಾನ್ ನಲ್ಲಿ ಬದುಕುಳಿದಿರುವ ಕೆಲವೇ ಅಧಿಕಾರಿಗಳು ಮಾತುಕತೆಗಾಗಿ ನಮ್ಮಲ್ಲಿ ವಿನಂತಿ ಮಾಡುತ್ತಿದ್ದಾರೆ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಅವರು ಮಾತುಕತೆ ನಡೆಸಲು ಬಯಸುತ್ತಾರೆ. ಅವರು ಮಾತುಕತೆಗಾಗಿ ಹಾತೊರೆಯುತ್ತಿದ್ದಾರೆ ಎಂದು ಟ್ರಂಪ್ ರವಿವಾರ ರಾತ್ರಿ ಹೇಳಿದ್ದರು. ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ. ಅವರು ಸಿದ್ಧರಿಲ್ಲ ಎಂದು ನಾನು ಭಾವಿಸುತ್ತೇನೆ, ಆದರೆ ಅವರು ತೀರಾ ಹತ್ತಿರದಲ್ಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಅಂದಹಾಗೆ ಮಾತುಕತೆಗಾಗಿ ಕೇಳುತ್ತಿರುವುದು ಟ್ರಂಪ್ ಆಡಳಿತ. ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಕಳೆದ ವಾರ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಸೇರಿದಂತೆ ಟೆಹ್ರಾನ್ ನಲ್ಲಿರುವ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಇಬ್ಬರು ಇರಾನಿನ ಅಧಿಕಾರಿಗಳು ಡ್ರಾಪ್ ಸೈಟ್ ಗೆ ತಿಳಿಸಿದ್ದಾರೆ. ಅವರು ಮಾತುಕತೆಗಳನ್ನು ಪುನರಾರಂಭಿಸುವ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ. ಇರಾನ್ ವಿಟ್ಕಾಫ್ ಗೆ ಉತ್ತರಿಸಿಲ್ಲ. ಇರಾನ್ ಮೂರನೇ ದೇಶಗಳ ಮೂಲಕ ಶ್ವೇತಭವನದಿಂದ ಸಂದೇಶಗಳನ್ನು ಸ್ವೀಕರಿಸಿದೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿರುವುದಾಗಿ dropsitenews.com ನಲ್ಲಿ ಜೆರೆಮಿ ಸ್ಕ್ಯಾಹಿಲ್ ವರದಿ ಮಾಡಿದ್ದಾರೆ. ಇರಾನ್ ನ ಉನ್ನತ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳಿಂದಾಗಿ, ಅವರ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ಕಳುಹಿಸಲಾಗಿಲ್ಲ. ಇಲ್ಲಿ ಸಂದೇಶ ಸ್ಪಷ್ಟವಾಗಿದೆ. ಇರಾನ್ ಮತ್ತೊಮ್ಮೆ ಯಾವುದೇ ನೇರ ಮಾತುಕತೆಗಳಿಗೆ ಸಿದ್ಧವಿಲ್ಲ. ಕದನ ವಿರಾಮ ಘೋಷಿಸುವ ಅಧಿಕಾರವು ದೇಶದ ಸರ್ವೋಚ್ಚ ನಾಯಕನಿಗೆ ಮಾತ್ರ ಸೇರಿದೆ. ಇದು ವಿದೇಶಾಂಗ ಸಚಿವರು ಅಥವಾ ಇರಾನ್ ನಲ್ಲಿರುವ ಯಾವುದೇ ಅಧಿಕಾರಿ ಅಥವಾ ಸಂಘಟನೆಯು ಇನ್ನೊಂದು ದೇಶಕ್ಕೆ ಸಂದೇಶಗಳನ್ನು ಕಳುಹಿಸುವ ವಿಷಯವಲ್ಲ ಎಂದು ಇರಾನಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೋರಿ ಡ್ರಾಪ್ ಸೈಟ್ ಶ್ವೇತಭವನವನ್ನು ಸಂಪರ್ಕಿಸಿತ್ತು. ಅದಕ್ಕೆ ಶ್ವೇತಭವನದ ವಕ್ತಾರರು ಡ್ರಾಪ್ ಸೈಟ್ ಗೆ ಈ ಕೆಳಗಿನ ಸಂದೇಶವನ್ನು ಕಳುಹಿಸಿದ್ದಾರೆ. ಆಮೂಲಾಗ್ರ, ಎಡಪಂಥೀಯ ಡ್ರಾಪ್ ಸೈಟ್ ನ್ಯೂಸ್ ಇರಾನಿನ ಭಯೋತ್ಪಾದಕ ಆಡಳಿತವನ್ನು ಪ್ರಚಾರ ಮಾಡುತ್ತಿದೆ. ಕಟ್ಟುಕತೆ, ಹೆಸರಿಸದ ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿರುವ ಈ ರೀತಿಯ ವರದಿಗಳನ್ನು ತಕ್ಷಣವೇ ತಿರಸ್ಕರಿಸಬೇಕು. ಇರಾನ್ ಈ ನಕಲಿ ಸುದ್ದಿ ಮಾಧ್ಯಮದ ಪ್ರಚಾರವನ್ನು ಪೋಷಿಸುತ್ತದೆ. ಅವರು ಅದನ್ನು ಸತ್ಯವೆಂದು ಪ್ರಕಟಿಸುತ್ತಾರೆ. ಈ ವರದಿಯು ಅಸಹ್ಯಕರ ಮತ್ತು ನೈತಿಕವಾಗಿ ತಪ್ಪಾಗಿದೆ. ಕಮಾಂಡರ್-ಇನ್-ಚೀಫ್ ಆಗಿ ಅಧ್ಯಕ್ಷ ಟ್ರಂಪ್, ಇರಾನ್ ಇನ್ನು ಮುಂದೆ ಮಿಲಿಟರಿ ಬೆದರಿಕೆಯನ್ನು ಒಡ್ಡಬಾರದು ಎಂಬುದನ್ನೂ ಒಳಗೊಂಡಂತೆ ಆಪರೇಷನ್ ಎಪಿಕ್ ಫ್ಯೂರಿಯ ಗುರಿಗಳನ್ನು ಸಂಪೂರ್ಣವಾಗಿ ಸಾಧಿಸಲಾಗಿದೆ ಎಂದು ನಿರ್ಧರಿಸುವವರೆಗೆ ಅದು ನಿರಂತರವಾಗಿ ಮುಂದುವರಿಯುತ್ತದೆ. ಪ್ರತಿಕ್ರಿಯೆಯ ವಿನಂತಿಗೆ ವಿಟ್ಕಾಫ್ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಡ್ರಾಪ್ ಸೈಟ್ ಈ ವರದಿಯನ್ನು ಮೊದಲು ಪ್ರಕಟಿಸಿದ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ, ಅಮೆರಿಕದ ಅಧಿಕಾರಿಯೊಬ್ಬರು ಈ ಘಟನೆಗಳ ಪರ್ಯಾಯ ಆವೃತ್ತಿಯನ್ನು ಆಕ್ಸಿಯಾಸ್ ನಲ್ಲಿ ಪ್ರಕಟಿಸಿದರು. ವಾಸ್ತವವಾಗಿ ವಿಟ್ಕಾಫ್ ಅವರನ್ನು ಸಂಪರ್ಕಿಸಿದ್ದು ಅರಾಘ್ಚಿ. ಅರಾಘ್ಚಿಯೇ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಮೆರಿಕ ಇರಾನ್ ನೊಂದಿಗೆ 'ಮಾತನಾಡುತ್ತಿಲ್ಲ' ಎಂದು ಅಮೆರಿಕದ ಅಧಿಕಾರಿ ಹೇಳಿರುವುದಾಗಿ ಆಕ್ಸಿಯಾಸ್ನಲ್ಲಿ ಪ್ರಕಟವಾದ ವರದಿಯಲ್ಲಿದೆ. ಆಕ್ಸಿಯಾಸ್ ವರದಿ ಪ್ರಕಟವಾದ ಬೆನ್ನಲ್ಲೇ ಅರಾಘ್ಚಿ ಶ್ವೇತಭವನದ ಹೇಳಿಕೆಗಳನ್ನು ನಿರಾಕರಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಟ್ಕಾಫ್ ಅವರೊಂದಿಗಿನ ನನ್ನ ಕೊನೆಯ ಸಂಪರ್ಕವು ಅವರ ಆಡಳಿತಗಾರರು ಇರಾನ್ ಮೇಲೆ ಮತ್ತೊಂದು ಅಕ್ರಮ ಮಿಲಿಟರಿ ದಾಳಿ ನಡೆಸಿ ಅಧಿಕಾರಿಗಳನ್ನು ಕೊಲ್ಲುವ ನಿರ್ಧಾರಕ್ಕೆ ಮುಂಚೆಯೇ ಆಗಿತ್ತು. ಇದಕ್ಕೆ ವಿರುದ್ಧವಾದ ಯಾವುದೇ ಹಕ್ಕು ತೈಲ ವ್ಯಾಪಾರಿಗಳು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸಲು ಮಾತ್ರ ಉದ್ದೇಶಿಸಲಾಗಿದೆ ಎಂದು ತೋರುತ್ತದೆ ಎಂದು ಅರಾಘ್ಚಿ ಪೋಸ್ಟ್ ಮಾಡಿದ್ದಾರೆ. ವಾರಾಂತ್ಯದುದ್ದಕ್ಕೂ, ವಿದೇಶಾಂಗ ಸಚಿವ ಅರಾಘ್ಚಿ ಅಧ್ಯಕ್ಷ ಟ್ರಂಪ್ ಮಂಡಿಸಿದ ನಿರೂಪಣೆಯನ್ನು ಬಹಿರಂಗವಾಗಿ ವಿರೋಧಿಸಲು ವಿವಿಧ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡರು. ಸಂಘರ್ಷದ ಬಗ್ಗೆ ಅಧ್ಯಕ್ಷರ ವಿವರಣೆಗಳು ಮತ್ತು ರಾಜತಾಂತ್ರಿಕ ಸಂಪರ್ಕದ ಆರೋಪಗಳನ್ನು ಅವರು ತಳ್ಳಿಹಾಕಿದರು. ನಾವು ಎಂದಿಗೂ ಕದನ ವಿರಾಮವನ್ನು ಕೇಳಿಲ್ಲ. ನಾವು ಎಂದಿಗೂ ಮಾತುಕತೆಗಾಗಿ ಕೇಳಿಲ್ಲ ಎಂದು ಸಿಬಿಎಸ್ ಜತೆ ಮಾತಾಡಿದ ಅರಾಘ್ಚಿ ಹೇಳಿದ್ದಾರೆ. ನಾವು ಎಲ್ಲಿಯವರೆಗೆ ಬೇಕಾದರೂ ನಮ್ಮನ್ನು ರಕ್ಷಿಸಿಕೊಳ್ಳಲು ಸಿದ್ಧರಿದ್ದೇವೆ. ನಾವು ಇಲ್ಲಿಯವರೆಗೆ ಇದನ್ನೇ ಮಾಡಿದ್ದೇವೆ. ಇದು ಯಾವುದೇ ಗೆಲುವು ಇಲ್ಲದ ಕಾನೂನುಬಾಹಿರ ಯುದ್ಧ ಎಂದು ಅಧ್ಯಕ್ಷ ಟ್ರಂಪ್ ನಿರ್ಧರಿಸುವವರೆಗೆ ನಾವು ಅದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ. ಸಂಭಾವ್ಯ ಮಾತುಕತೆಗಳನ್ನು ಚರ್ಚಿಸಲು ಅಧಿಕಾರವಿಲ್ಲದ ಕಾರಣ ಹೆಸರು ಬಹಿರಂಗಪಡಿಸಲು ಬಯಸದ ಇರಾನಿನ ಹಿರಿಯ ಅಧಿಕಾರಿಯೊಬ್ಬರು ಡ್ರಾಪ್ ಸೈಟ್ನೊಂದಿಗೆ ಮಾತನಾಡಿ, ಟ್ರಂಪ್ ಆಡಳಿತವು ಇರಾನ್ ನ ಸಂಕಲ್ಪವನ್ನು ಕಡಿಮೆ ಅಂದಾಜು ಮಾಡಿದೆ ಎಂದು ಹೇಳಿದರು. ಅದು ಹಿಂದೆ ಸರಿಯಲು ಬಯಸುತ್ತಿದೆ ಎಂದು ಅಮೆರಿಕದ ಸಂಪರ್ಕವು ಸೂಚಿಸುತ್ತದೆ ಎಂದರು. ಕಳೆದ ವಾರದಿಂದ ಕದನ ವಿರಾಮಕ್ಕಾಗಿ ಅನೇಕ ನೇರ ಮತ್ತು ಪರೋಕ್ಷ ವಿನಂತಿಗಳು ಅಮೆರಿಕದಿಂದ ಬರುತ್ತಿವೆ. ಇರಾನ್ ಕಡೆಯವರು ಆ ವಿನಂತಿಗಳಿಗೆ ಸ್ಪಂದಿಸುತ್ತಿಲ್ಲ. ಅದರಿಂದ ಅವರು ಮಾಧ್ಯಮಗಳಲ್ಲಿನ ನಿರೂಪಣೆಯನ್ನು ತಿರುಚುವ ಮೂಲಕ ತಮ್ಮ ಮುಜುಗರವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇರಾನ್ ಕದನ ವಿರಾಮವನ್ನು ಕೇಳುತ್ತಿದೆ ಎಂಬುದು ಪೂರ್ತಿ ಸುಳ್ಳು ಎಂದಿದ್ದಾರೆ ಇರಾನಿನ ಅಧಿಕಾರಿ. ಕದನ ವಿರಾಮಕ್ಕಾಗಿ ನಾವು (ಮೂರನೇ ವ್ಯಕ್ತಿಯ ದೇಶಗಳಿಗೆ) ನೀಡುವ ಪ್ರತಿಕ್ರಿಯೆಗಳನ್ನು (ಟ್ರಂಪ್) ಅವರ ಸ್ವಂತ ನಿಲುವುಗಳಂತೆ ಸಾರ್ವಜನಿಕವಾಗಿ ಪ್ರಸ್ತುತಪಡಿಸುತ್ತಿದ್ದಾರೆ. ಇರಾನ್ ವಿರುದ್ಧ ಅಮೆರಿಕ ಅಥವಾ ಇಸ್ರೇಲ್ ಮಿಲಿಟರಿ ದಾಳಿಗಳನ್ನು ಮುಂದುವರಿಸಲು ಅನುವು ಮಾಡಿಕೊಡುವ ಯಾವುದೇ ಕದನ ವಿರಾಮ ಒಪ್ಪಂದವನ್ನು ತಿರಸ್ಕರಿಸುವುದಾಗಿ ಟೆಹ್ರಾನ್ ಎಲ್ಲಾ ಮಧ್ಯವರ್ತಿಗಳಿಗೆ ತಿಳಿಸಿದೆ. ಮೂಲಭೂತವಾಗಿ, ಭವಿಷ್ಯದ ದಾಳಿಗಳ ವಿರುದ್ಧ ಸಂಪೂರ್ಣ ಮತ್ತು ಶಾಶ್ವತ ಖಾತರಿಯನ್ನು ನೀಡದ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲು ಇರಾನ್ ನಿರಾಕರಿಸುತ್ತಿದೆ ಎಂದಿದ್ದಾರೆ. ಇಲ್ಲಿಯವರೆಗಿನ ಫಲಿತಾಂಶಗಳನ್ನು ನಿರ್ಣಯಿಸಲು ಮತ್ತು ಇರಾನ್ ನ ರಾಜಕೀಯ ವ್ಯವಸ್ಥೆಯಲ್ಲಿ ತನ್ನ ವಿಶಾಲ ಉದ್ದೇಶಗಳನ್ನು ಮುನ್ನಡೆಸಲು ರಾಜತಾಂತ್ರಿಕತೆ ಮತ್ತು ಒತ್ತಡದ ಸಂಯೋಜನೆಯನ್ನು ಬಳಸಿಕೊಳ್ಳಲು ಅಮೆರಿಕ ತಾತ್ಕಾಲಿಕ ಕದನ ವಿರಾಮವನ್ನು ಬಯಸುತ್ತಿರುವಂತೆ ತೋರುತ್ತಿದೆ. ಅನೇಕ ರಾಷ್ಟ್ರಗಳು ಅಮೆರಿಕದೊಂದಿಗೆ ಮಾತುಕತೆ ನಡೆಸುವಂತೆ ಟೆಹ್ರಾನ್ ಗೆ ಒತ್ತಾಯಿಸಿವೆ. ಆದರೆ ಅವರ ಪ್ರಯತ್ನಗಳು ಟ್ರಂಪ್ ಮತ್ತು ಅವರ ಆಡಳಿತವನ್ನು ಗುರಿಯಾಗಿರಿಸಿಕೊಳ್ಳಬೇಕು ಎಂಬುದಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ. ಪ್ರತಿದಿನ, ಟ್ರಂಪ್ ಮತ್ತು ಅವರ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕ್ಯಾಮೆರಾಗಳ ಮುಂದೆ ನಿಂತು ಇರಾನ್ ನ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯದ ನಾಶದ ಬಗ್ಗೆ ವ್ಯಾಪಕವಾದ ಮೌಲ್ಯಮಾಪನಗಳನ್ನು ನೀಡುತ್ತಾರೆ. ಯುಎಸ್ ಸೆಂಟ್ರಲ್ ಕಮಾಂಡ್ ವಿಮಾನಗಳು, ನೌಕಾ ಹಡಗುಗಳು ಮತ್ತು ಮೂಲಸೌಕರ್ಯಗಳನ್ನು ಸ್ಫೋಟಿಸುವ ದಾಳಿಗಳ ಸಣ್ಣ ವಿಡಿಯೊಗಳನ್ನು ಪೋಸ್ಟ್ ಮಾಡುತ್ತದೆ. ನಾವು ಅವರ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗಳಲ್ಲಿ 90% ಕಡಿತವನ್ನು ಮತ್ತು ಅವರ ಡ್ರೋನ್ ದಾಳಿಗಳಲ್ಲಿ 95% ಕಡಿತವನ್ನು ಸಾಧಿಸಿದ್ದೇವೆ. ಅವರ ಬಳಿ ಹೆಚ್ಚು ಕ್ಷಿಪಣಿಗಳು ಉಳಿದಿಲ್ಲ. ಈಗ ನಾವು ವ್ಯವಹರಿಸುತ್ತಿರುವುದು ಕಾಗದದ ಹುಲಿ ಜೊತೆ. ಎರಡು ವಾರಗಳ ಹಿಂದೆ ಅದು ಕಾಗದದ ಹುಲಿಯಾಗಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಆದರೂ ಎರಡೂ ಕಡೆಗಳಿಂದ ದಾಳಿ-ಪ್ರತಿದಾಳಿ ಮುಂದುವರಿದಿದೆ. ಕಳೆದ ಎರಡು ವಾರಗಳಲ್ಲಿ ಜಾಗತಿಕ ತೈಲ ಮತ್ತು ಅನಿಲ ಬೆಲೆಗಳು ಏರಿಕೆ ಕಂಡಿವೆ. ಏಕೆಂದರೆ ಇರಾನ್ ಹಾರ್ಮುಝ್ ಜಲಸಂಧಿಯನ್ನು ದಾಟುವ ಯಾವುದೇ ಯುಎಸ್ ಅಥವಾ ಇಸ್ರೇಲ್-ಸಂಬಂಧಿತ ಟ್ಯಾಂಕರ್ಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ. ಜಲಸಂಧಿಯ ಮೂಲಕ ಅಂತರರಾಷ್ಟ್ರೀಯ ತೈಲ ಸಾಗಣೆಗಳು ಯುದ್ಧಪೂರ್ವ ಮಟ್ಟಕ್ಕಿಂತ 10% ಕ್ಕಿಂತ ಕಡಿಮೆಗೆ ಇಳಿದಿವೆ. ಅದೇ ಸಮಯದಲ್ಲಿ, ಕಳೆದ ವಾರ ಇರಾನಿನ ರಫ್ತುಗಳು ಸಾಮಾನ್ಯ ಮಟ್ಟವನ್ನು ಮೀರಿವೆ. ಹಾರ್ಮುಝ್ ಜಲಸಂಧಿಯ ಪರಿಣಾಮಕಾರಿ ನಿರ್ವಹಣೆಯ ಮೂಲಕ, ಇರಾನ್ ಸಮುದ್ರದಲ್ಲಿ ಗಮನಾರ್ಹ ಪ್ರಯೋಜನವನ್ನು ಪಡೆದುಕೊಂಡಿದೆ ಎಂದು ಹಿರಿಯ ಇರಾನಿನ ಅಧಿಕಾರಿ ಹೇಳಿದರು. ಹಾರ್ಮುಝ್ ಜಲಸಂಧಿಯನ್ನು ಸಾಮಾನ್ಯವಾಗಿ ಮುಚ್ಚಲಾಗಿಲ್ಲ, ಅದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಮಾತ್ರ ಮುಚ್ಚಲ್ಪಟ್ಟಿದೆ. ದಾಳಿಗಳು ಮುಂದುವರಿಯುವವರೆಗೆ ನಾವು ಈ ನೀತಿಯನ್ನು ಮುಂದುವರಿಸುತ್ತೇವೆ ಎಂದು ಅರಾಘ್ಚಿ ಅಲ್ ಅರಬಿ ಅಲ್ ಜದೀದ್ಗೆ ತಿಳಿಸಿದರು. ಹಣಕಾಸಿನ ವಹಿವಾಟುಗಳನ್ನು ಚೀನೀ ಯುವಾನ್ ನಲ್ಲಿ ಪಾವತಿಸುವವರೆಗೆ ಈ ಪ್ರದೇಶದ ಮೂಲಕ ಸಂಚಾರ ಹರಿವನ್ನು ಹೆಚ್ಚಿಸಲು ಟೆಹ್ರಾನ್ ಮುಕ್ತವಾಗಿದೆ. ಇರಾನ್ ಹಡಗುಗಳಿಗೆ ಬಾಂಬ್ ದಾಳಿ ಮಾಡದೆ ಹಾರ್ಮುಝ್ ಮೂಲಕ ಹಾದುಹೋಗಲು ಅಮೆರಿಕ ಅವಕಾಶ ನೀಡುತ್ತಿದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸೋಮವಾರ ಹೇಳಿದ್ದಾರೆ. ಇರಾನಿನ ಹಡಗುಗಳು ಈಗಾಗಲೇ ಹೊರಬರುತ್ತಿವೆ. ನಾವು ಅದನ್ನು ಪ್ರಪಂಚದ ಉಳಿದ ಭಾಗಗಳಿಗೆ ಪೂರೈಸಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಅವರು ಸಿಎನ್ಬಿಸಿಗೆ ತಿಳಿಸಿದ್ದಾರೆ. ಕಳೆದ ಬುಧವಾರ, ಚೆವ್ರಾನ್, ಎಕ್ಸಾನ್ ಮೊಬಿಲ್ ಮತ್ತು ಕೊನೊಕೊಫಿಲಿಪ್ಸ್ನ ಸಿಇಒಗಳು ಶ್ವೇತಭವನದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತೈಲವು ಬ್ಯಾರೆಲ್ಗೆ 120 ಡಾಲರ್ ತಲುಪಿದರೆ, ಅದು ಆರ್ಥಿಕ ವಿನಾಶಕ್ಕೆ ಕಾರಣವಾಗುತ್ತದೆ ಎಂದು ತೈಲ ಕಾರ್ಯನಿರ್ವಾಹಕರೊಬ್ಬರು ವಾಲ್ ಸ್ಟ್ರೀಟ್ ಜರ್ನಲ್ಗೆ ತಿಳಿಸಿದ್ದಾರೆ. ಈ ವಾರಾಂತ್ಯದಲ್ಲಿ, ಟ್ರಂಪ್ ಹಡಗುಗಳಿಗೆ ಬೆಂಗಾವಲು ನೀಡಲು ಬಹುರಾಷ್ಟ್ರೀಯ ಒಕ್ಕೂಟವನ್ನು ಒಟ್ಟುಗೂಡಿಸುತ್ತಿರುವುದಾಗಿ ಹೇಳಿದ್ದಾರೆ. ಪೆಂಟಗನ್ ಇತ್ತೀಚೆಗೆ 31ನೇ ಸಾಗರ ಘಟಕದಿಂದ ಕನಿಷ್ಠ 2,000 ಯುಎಸ್ ಸೈನಿಕರನ್ನು ತ್ವರಿತವಾಗಿ ನಿಯೋಜಿಸಲು ಅನುಮೋದನೆ ನೀಡಿತು. ಈ ದೇಶಗಳು ಒಳಗೆ ಬಂದು ತಮ್ಮ ಸ್ವಂತ ಪ್ರದೇಶವನ್ನು ರಕ್ಷಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ, ಏಕೆಂದರೆ ಅದು ಅವರ ಪ್ರದೇಶವಾಗಿದೆ ಎಂದಿದ್ದಾರೆ ಟ್ರಂಪ್. NATO ರಾಷ್ಟ್ರಗಳು ಮತ್ತು ಚೀನಾ ಭಾಗವಹಿಸಬೇಕು. ಅವರು ನಮಗೆ ಸಹಾಯ ಮಾಡಬೇಕು. ನಮಗೆ ಅದರ ಅಗತ್ಯವಿಲ್ಲದ ಕಾರಣ ನಾವು ಅಲ್ಲಿ ಇರಬಾರದು ಎಂಬ ವಾದವನ್ನು ನೀವು ಮಾಡಬಹುದು. ನಮಗೆ ಸಾಕಷ್ಟು ತೈಲವಿದೆ ಎಂದಿದ್ದಾರೆ ಟ್ರಂಪ್. ಆದರೆ ಅಂತಹ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ಬಗ್ಗೆ ಅನೇಕ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿವೆ. ಜರ್ಮನಿ, ಗ್ರೀಸ್, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಕೆಲವು ದೇಶಗಳು ಯಾವುದೇ ಹಾರ್ಮುಝ್ ಕಾರ್ಯಾಚರಣೆಗೆ ಸೇರುವುದನ್ನು ತಳ್ಳಿಹಾಕಿವೆ. ಬೀಜಿಂಗ್ ಜಲಸಂಧಿಯಲ್ಲಿ ಯುಎಸ್ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ಒಪ್ಪದಿದ್ದರೆ ಈ ತಿಂಗಳ ಕೊನೆಯಲ್ಲಿ ನಿಗದಿಯಾಗಿದ್ದ ಚೀನಾ ಪ್ರವಾಸವನ್ನು ಮುಂದೂಡಬಹುದು ಎಂದು ಟ್ರಂಪ್ ಸೂಚಿಸಿದ್ದು, NATO ಭಾಗವಹಿಸದಿದ್ದರೆ ಭವಿಷ್ಯ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಯುದ್ಧಕ್ಕೂ NATOಗೂ ಯಾವುದೇ ಸಂಬಂಧವಿಲ್ಲ. ಇದು NATOಯ ಯುದ್ಧವಲ್ಲ. ಯುದ್ಧದ ಮೊದಲು ಅಮೆರಿಕ ಮತ್ತು ಇಸ್ರೇಲ್ ನಮ್ಮನ್ನು ಸಂಪರ್ಕಿಸಲಿಲ್ಲ. ಯುದ್ಧದ ಆರಂಭದಲ್ಲಿ ಯುರೋಪಿಯನ್ ನೆರವು ಅಗತ್ಯವಿಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ ಎಂದು ವಾಷಿಂಗ್ಟನ್ ಸ್ಪಷ್ಟವಾಗಿ ಹೇಳಿತ್ತು ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ ಎಂದು ಜರ್ಮನ್ ಚಾನ್ಸೆಲರ್ ವಕ್ತಾರ ಸ್ಟೀಫನ್ ಕೊರ್ನೆಲಿಯಸ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇರಾನ್ ನ ಖಾರ್ಗ್ ದ್ವೀಪದ ಮೇಲೆ ಇತ್ತೀಚೆಗೆ ಅಮೆರಿಕ ನಡೆಸಿದ ದಾಳಿಗಳೊಂದಿಗೆ, ನೌಕಾಪಡೆಗಳನ್ನು ನಿಯೋಜಿಸುವ ಟ್ರಂಪ್ ಅವರ ನಿರ್ಧಾರವು ಇರಾನ್ ನ ಪ್ರಮುಖ ತೈಲ ಟರ್ಮಿನಲ್ ಹೊಂದಿರುವ ದ್ವೀಪವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಅಮೆರಿಕ ಪರಿಗಣಿಸುತ್ತಿದೆ ಎಂದು ಸೂಚಿಸುತ್ತದೆ. ಈ ಮೂಲಕವೇ ಇರಾನ್ ನ ಕಚ್ಚಾ ತೈಲ ರಫ್ತುಗಳು 90 ಪ್ರತಿಶತದಷ್ಟು ನಡೆಯುತ್ತವೆ. ಖಾರ್ಗ್ನಲ್ಲಿರುವ ತೈಲ ಡಿಪೋಗಳ ಮೇಲೆ ನೇರವಾಗಿ ಬಾಂಬ್ ದಾಳಿ ಮಾಡುವುದಿಲ್ಲ, ಆದರೆ ಹಾರ್ಮುಝ್ ಜಲಸಂಧಿಯನ್ನು ಹಾದುಹೋಗುವ ಹಡಗುಗಳನ್ನು ಇರಾನ್ ನೇರವಾಗಿ ತಡೆದರೆ, ನಾನು ತಕ್ಷಣ ಈ ನಿರ್ಧಾರವನ್ನು ಮರುಪರಿಶೀಲಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ. ಆಕ್ರಮಣದ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಶ್ವೇತಭವನವು ಸಮರ್ಥಿಸಿಕೊಂಡಿದೆ. ಆದರೆ ಸಂಘರ್ಷದ ಆವೇಗವನ್ನು ನಿಯಂತ್ರಿಸಲು ಇರಾನ್ ಗೆ ಅಮೆರಿಕ ಅವಕಾಶ ನೀಡುವುದಿಲ್ಲ ಎಂದು ಅದು ಒತ್ತಿ ಹೇಳಿದೆ. ಹಾರ್ಮುಝ್ ಜಲಸಂಧಿಯಲ್ಲಿ ದಶಕಗಳ ಕಾಲ ಯುದ್ಧತಂತ್ರವನ್ನು ಆಡಿದ ಇರಾನಿನ ನೌಕಾಪಡೆಗಳು, ವೇಗದ ದೋಣಿಗಳು, ಡ್ರೋನ್ಗಳು ಮತ್ತು ಹಡಗು ವಿರೋಧಿ ಕ್ಷಿಪಣಿಗಳನ್ನು ಬಳಸಿಕೊಂಡು ಅಸಮಪ್ರಮಾಣದ ಯುದ್ಧಕ್ಕೆ ಹೆಚ್ಚು ಸಿದ್ಧವಾಗಿವೆ. ಈ ಕಿರಿದಾದ ನೀರಿನಲ್ಲಿ ಅಮೆರಿಕದ ಮಿಲಿಟರಿ ಮುಖಾಮುಖಿಯು ಪಡೆಗಳನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತದೆ. ಈ ಅವಧಿಯಲ್ಲಿ ಅವರು ಮಾಡಿದ್ದೆಲ್ಲವೂ ತಪ್ಪು ಲೆಕ್ಕಾಚಾರ ಮತ್ತು ದೋಷದ ಪರಿಣಾಮವಾಗಿದೆ. ಖಾರ್ಗ್ ಮೇಲಿನ ದಾಳಿ ಒಂದು ತಪ್ಪಾಗಿತ್ತು. ಖಾರ್ಗ್ ಅನ್ನು ಆಕ್ರಮಿಸಿಕೊಳ್ಳುವುದು ಇನ್ನೂ ದೊಡ್ಡ ತಪ್ಪಾಗುತ್ತದೆ. ನಾವು ಮೊದಲೇ ಹೇಳಿದಂತೆ, ಅಮೆರಿಕದ ನೆಲದ ಪಡೆಗಳು ನಮ್ಮ ಪ್ರದೇಶವನ್ನು ಪ್ರವೇಶಿಸಲು ನಾವು ಕಾಯುತ್ತಿದ್ದೇವೆ, ಏಕೆಂದರೆ ಅವರನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ ಎಂದು ಅರಾಘ್ಚಿ ಅಲ್ ಅರಬಿ ಅಲ್ ಜದೀದ್ಗೆ ತಿಳಿಸಿದರು. ಹಾರ್ಮುಝ್ ದಿಗ್ಬಂಧನವನ್ನು ತಪ್ಪಿಸಲು, ಸೌದಿ ಅರೇಬಿಯಾ ತೈಲ ರಫ್ತುಗಳನ್ನು ಕೆಂಪು ಸಮುದ್ರದ ಮೂಲಕ ತಿರುಗಿಸಿದೆ. ಈ ಹಡಗುಗಳು ಅಂತಿಮವಾಗಿ ಬಾಬ್ ಅಲ್ ಮಂಡೇಬ್ ಮೂಲಕ ತಮ್ಮ ಸರಕುಗಳನ್ನು ಸಾಗಿಸಬೇಕಾಗುತ್ತದೆ, ಅಲ್ಲಿ ಅವು ಯೆಮೆನ್ ನ ಅನ್ಸರ್ ಅಲ್ಲಾಹ್ನಿಂದ ದಿಗ್ಬಂಧನವನ್ನು ಎದುರಿಸಬಹುದು. ಯೆಮೆನ್ ನ ಹೆಚ್ಚಿನ ಭಾಗಗಳನ್ನು ನಿಯಂತ್ರಿಸುವ ಈ ಗುಂಪು ತಾಂತ್ರಿಕವಾಗಿ ಮೇ 2025ರಲ್ಲಿ ಅಮೆರಿಕದೊಂದಿಗೆ ಕದನ ವಿರಾಮ ಒಪ್ಪಂದವನ್ನು ಹೊಂದಿದ್ದರೂ, ಇರಾನ್ ನ ರಕ್ಷಣೆಗಾಗಿ ಅದು ಯುದ್ಧವನ್ನು ಪ್ರವೇಶಿಸುವ ಸೂಚನೆಗಳಿವೆ. ಅನ್ಸರ್ ಅಲ್ಲಾಹ್ನ ರಾಜಕೀಯ ಬ್ಯೂರೋದ ಹಿರಿಯ ಸದಸ್ಯ ಮೊಹಮ್ಮದ್ ಅಲ್-ಬುಖೈತಿ ಮಾರ್ಚ್ 14ರಂದು ಮಿಲಿಟರಿ ಕಾರ್ಯಾಚರಣೆಗಳ ಸಂಘಟಿತ ಅಭಿಯಾನ—ಶೂನ್ಯ ವೇಳೆ—ಶೀಘ್ರದಲ್ಲೇ ಘೋಷಿಸಬಹುದು. ಎಲ್ಲಾ ಆಯ್ಕೆಗಳು ನಮ್ಮ ಮುಂದಿವೆ ಎಂದು ಅಲ್-ಬುಖೈತಿ ಆರ್ಟಿ ಅರೇಬಿಕ್ಗೆ ತಿಳಿಸಿದ್ದಾರೆ. ನಾವು ಬಾಬ್ ಅಲ್-ಮಂದೇಬ್ ಕಾರ್ಡ್ ಆಡಲು ಒತ್ತಾಯಿಸಲ್ಪಟ್ಟರೆ, ಲೆಬನಾನ್ ಮತ್ತು ಇರಾನ್ ವಿರುದ್ಧದ ಆಕ್ರಮಣದಲ್ಲಿ ಭಾಗವಹಿಸುವ ಯಾವುದೇ ರಾಷ್ಟ್ರದ ಹಡಗುಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸುವ ಮೂಲಕ ನಾವು ಕಾರ್ಯತಂತ್ರಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಬಳಸುತ್ತೇವೆ ಎಂದಿದ್ದಾರೆ. ►ಯುದ್ಧದ ಅಂತ್ಯ ನಮ್ಮ ಕೈಯಲ್ಲಿದೆ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ತಮ್ಮ ದಾಳಿಗಳನ್ನು ಪ್ರಾರಂಭಿಸುವ ಮೊದಲೇ, ಜೂನ್ 2025ರ “12-ದಿನಗಳ ಯುದ್ಧ”ವನ್ನು ಪುನರಾವರ್ತಿಸುವುದಿಲ್ಲ ಎಂದು ಇರಾನ್ ಪ್ರತಿಜ್ಞೆ ಮಾಡಿತು. ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಮತ್ತೆ ಒಗ್ಗೂಡಲು ಕಾರ್ಯತಂತ್ರದ ವಿರಾಮವಾಗಿ ಕಾರ್ಯನಿರ್ವಹಿಸುವ ಯಾವುದೇ ಕದನ ವಿರಾಮವನ್ನೂ ಅದು ತಿರಸ್ಕರಿಸಿದೆ. ವಿದೇಶಾಂಗ ಸಚಿವ ಅರಾಘ್ಚಿ, ಟೆಹ್ರಾನ್ ಆವರ್ತಕ ಮಿಲಿಟರಿ ದಾಳಿಗಳಿಗೆ ಅಂತ್ಯವನ್ನು ಖಾತರಿಪಡಿಸುವ ನಿರ್ಣಾಯಕ ಮತ್ತು ಅಂತಿಮ ತೀರ್ಮಾನವನ್ನು ಮಾತ್ರ ಸ್ವೀಕರಿಸುತ್ತದೆ ಎಂದು ಒತ್ತಿ ಹೇಳಿದರು. ಯುದ್ಧದ ಅಂತ್ಯ ನಮ್ಮ ಕೈಯಲ್ಲಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಅನುಭವಿ ಕಮಾಂಡರ್ ಮೇಜರ್ ಜನರಲ್ ಮೊಹ್ಸೆನ್ ರೆಜೈ ಮಾರ್ಚ್ 14ರಂದು ಇರಾನಿನ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಯಾವುದೇ ಕದನ ವಿರಾಮ ಮಾತುಕತೆಯ ಭಾಗವಾಗಿ ಇರಾನ್ ಅಮೆರಿಕ-ಇಸ್ರೇಲಿ ಬಾಂಬ್ ದಾಳಿಯ ಸಮಯದಲ್ಲಿ ಉಂಟಾದ ಹಾನಿಗೆ ಪರಿಹಾರವನ್ನು ಕೋರುತ್ತದೆ. ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳುವಂತೆ ಟೆಹ್ರಾನ್ ನ ಕರೆನ್ನು ಅವರು ಪುನರುಚ್ಚರಿಸಿದರು. ಲೆಬನಾನ್ ಮತ್ತು ಇರಾಕ್ ಅನ್ನು ಸಹ ಸೇರಿಸಿಕೊಂಡು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟರೆ ಮಾತ್ರ ಟೆಹ್ರಾನ್ ಕದನ ವಿರಾಮವನ್ನು ಪರಿಗಣಿಸುತ್ತದೆ ಎಂದು ಹಿರಿಯ ಇರಾನಿನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇರಾನ್ ಈ ಪ್ರದೇಶದಲ್ಲಿ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ವಿರುದ್ಧ ಪ್ರತೀಕಾರದ ದಾಳಿಗಳನ್ನು ಮೊದಲೇ ರೂಪಿಸಿದ್ದ ಹಿಂದಿನ ಮಿಲಿಟರಿ ಮುಖಾಮುಖಿಗಳಿಗಿಂತ ಭಿನ್ನವಾಗಿ, ಕಳೆದ ಎರಡು ವಾರಗಳಲ್ಲಿ ಇರಾನ್ ಸೇನೆಯು ಪರ್ಷಿಯನ್ ಕೊಲ್ಲಿಯಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಟೆಹ್ರಾನ್ ಅಸಮಪ್ರಮಾಣದ ಯುದ್ಧವನ್ನು ನಡೆಸುತ್ತಿದೆ ಎಂದು ಅರ್ಥಮಾಡಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಬಾಂಬ್ ದಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯದಲ್ಲಿ ವಿಶ್ವಾಸ ಹೊಂದಿದೆ ಎಂದು ಇರಾನಿನ ಹಿರಿಯ ಅಧಿಕಾರಿ ಡ್ರಾಪ್ ಸೈಟ್ ಗೆ ತಿಳಿಸಿದ್ದಾರೆ. ಅಮೆರಿಕ-ಇಸ್ರೇಲ್ ಬಾಂಬ್ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, 18,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರಲ್ಲಿ ಕನಿಷ್ಠ 223 ಮಹಿಳೆಯರು ಮತ್ತು 200 ಮಕ್ಕಳು ಸೇರಿದ್ದಾರೆ. ಅವರಲ್ಲಿ 41 ಮಂದಿ ಎರಡು ವರ್ಷದೊಳಗಿನವರು. ಇರಾನ್ ಪಡೆಗಳು ಶೀಘ್ರದಲ್ಲೇ ಇಸ್ರೇಲ್ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿರುವ ಗೂಗಲ್, ಅಮೆಝಾನ್, ಮೈಕ್ರೋಸಾಫ್ಟ್, IBM, ಎನ್ ವಿಡಿಯಾ ಮತ್ತು ಪಲಾಂಟೀರ್ ಸೇರಿದಂತೆ ದೊಡ್ಡ ತಂತ್ರಜ್ಞಾನ ಕಂಪನಿಗಳ ಕಚೇರಿಗಳನ್ನು ಗುರಿಯಾಗಿಸಲು ಪ್ರಾರಂಭಿಸಬಹುದು ಎಂದು ಇರಾನಿನ ಸರ್ಕಾರಿ ಮಾಧ್ಯಮ ಮತ್ತು IRGCಗೆ ಹತ್ತಿರವಿರುವ ಸುದ್ದಿ ಸಂಸ್ಥೆಗಳು ಸೂಚಿಸಿವೆ. ಇರಾನಿನ ದಾಳಿಗಳು ಗಲ್ಫ್ ವಿಮಾನ ನಿಲ್ದಾಣಗಳನ್ನು ಮುಚ್ಚುವಂತೆ ಮಾಡಿದ್ದು, ಅಮೆರಿಕನ್ನರು, ಯುರೋಪಿಯನ್ನರು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್, ಖತರ್ ಮತ್ತು ಬಹರೇನ್ನಿಂದ ವಲಸೆಗೆ ಕಾರಣವಾಗಿವೆ. ಈ ದೇಶಗಳ ನಾಗರಿಕರಿಗೆ ಹಾನಿಯಾಗದಂತೆ ಯುದ್ಧ ಮುಂದುವರಿದರೆ, ಕದನ ವಿರಾಮವನ್ನು ಸಾಧಿಸಲು ಒತ್ತಡ ಹೇರುವಲ್ಲಿ ಬಹಳ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಅಮೆರಿಕನ್ ಕಂಪನಿಗಳು ಮತ್ತು ಈ ದೇಶಗಳ ನಡುವೆ ಬಹಳ ಗಟ್ಟಿಯಾದ ಆರ್ಥಿಕ ಸಂಬಂಧಗಳಿವೆ. ಆ ಹಿತಾಸಕ್ತಿಗಳಿಗೆ ಬೆದರಿಕೆ ಹಾಕುವುದು ಟ್ರಂಪ್ ಆಡಳಿತದ ಮೇಲೆ ಒತ್ತಡ ಹೇರಲು ಪ್ರಬಲ ಕ್ರಮವಾಗಿದೆ ಎಂದು ಹಿರಿಯ ಇರಾನಿನ ಅಧಿಕಾರಿ ಹೇಳಿದರು. ಒಮಾನ್ ಹೊರತುಪಡಿಸಿ, ಜಿಸಿಸಿ ರಾಷ್ಟ್ರಗಳು ಅಮೆರಿಕ-ಇಸ್ರೇಲಿ ದಾಳಿಗಳನ್ನು ಖಂಡಿಸಲು ನಿರಾಕರಿಸಿದ್ದು, ಇರಾನ್ ಅನ್ನು ಆಕ್ರಮಣಕಾರಿ ಎಂದು ಬಿಂಬಿಸಿವೆ. ತಮ್ಮ ಪ್ರದೇಶದ ಮೇಲಿನ ಇರಾನ್ ದಾಳಿಗಳನ್ನು ಸಾರ್ವಭೌಮತ್ವದ ಉಲ್ಲಂಘನೆ ಎಂದು ಅವರು ಖಂಡಿಸಿದ್ದು, ತಮ್ಮ ಗಡಿಯೊಳಗೆ ಇರುವ ಅಮೆರಿಕದ ಮಿಲಿಟರಿ ಸ್ವತ್ತುಗಳನ್ನು ಗುರಿಯಾಗಿಸುವ ಹಕ್ಕನ್ನು ಇರಾನ್ ಹೊಂದಿದೆ ಎಂಬ ಯಾವುದೇ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಮಾರ್ಚ್ 11ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇರಾನ್ ನ ಅಪರಾಧ ದಾಳಿಗಳನ್ನು ಖಂಡಿಸುವ ಮತ್ತು ಪ್ರಾಕ್ಸಿಗಳ ಮೂಲಕ ಪ್ರಚೋದನೆಗಳನ್ನು ಬೇಷರತ್ತಾಗಿ ಕೊನೆಗೊಳಿಸಬೇಕೆಂದು ಒತ್ತಾಯಿಸುವ ಬಹರೇನ್ ನ ಕರಡು ನಿರ್ಣಯವನ್ನು ಅಂಗೀಕರಿಸಿತು. ನಿರ್ಣಯವು ಗಮನಾರ್ಹವಾಗಿ ಇರಾನಿನ ನಾಗರಿಕ ಮೂಲಸೌಕರ್ಯ ಮತ್ತು ಪರಂಪರೆಯ ತಾಣಗಳ ನಾಶ ಸೇರಿದಂತೆ ಅಮೆರಿಕ ಅಥವಾ ಇಸ್ರೇಲಿ ಮಿಲಿಟರಿ ಕ್ರಮಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಬಿಟ್ಟುಬಿಟ್ಟಿದೆ. ವಿದೇಶಾಂಗ ಸಚಿವ ಅರಾಘ್ಚಿ ಜಿಸಿಸಿಯ ನಿಲುವಿನ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಅಮೆರಿಕ ಮತ್ತು ಇಸ್ರೇಲ್ ಯುದ್ಧವನ್ನು ಖಂಡಿಸಲು ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಅಮೆರಿಕದ ನೆಲೆಗಳ ಮೇಲಿನ ತನ್ನ ದಾಳಿಗಳಿಂದ ಹಾನಿ ಸಂಭವಿಸಿದೆ ಎಂದು ಒಪ್ಪಿಕೊಂಡರೂ, ಇರಾನ್ ತನ್ನ ಗುರಿಗಳು ಸಂಪೂರ್ಣವಾಗಿ ಮಿಲಿಟರಿ ಮತ್ತು ಗುಪ್ತಚರ ಸಂಬಂಧಿತವಾಗಿವೆ ಎಂದು ಹೇಳಿಕೊಂಡಿದೆ. ಮಾರ್ಚ್ 7ರಂದು ಅಧ್ಯಕ್ಷ ಪೆಜೆಶ್ಕಿಯಾನ್ ಅವರು ನೆರೆಯ ಅರಬ್ ರಾಷ್ಟ್ರಗಳಿಗೆ ಕ್ಷಮೆಯಾಚಿಸಿದ ನಂತರ ಈ ನಿಲುವು ಸ್ಪಷ್ಟವಾಯಿತು. ಇರಾನ್ ಮೇಲೆ ನೇರ ದಾಳಿ ನಡೆಸಲು ಕೆಲವು ಗಲ್ಫ್ ತಾಣಗಳನ್ನು ಬಳಸಲಾಗಿದೆ ಎಂದು ಟೆಹ್ರಾನ್ ಈ ದಾಳಿಗಳನ್ನು ಸಮರ್ಥಿಸುತ್ತದೆ. ಬಹರೇನ್ ನಲ್ಲಿರುವ ಯುಎಸ್ ನೌಕಾಪಡೆಯ 5ನೇ ಫ್ಲೀಟ್ ಪ್ರಧಾನ ಕಚೇರಿ ಅಥವಾ ಕತಾರ್ನಲ್ಲಿರುವ CENTCOMನಂತಹ ಪ್ರಮುಖ ಯುಎಸ್ ಸ್ಥಾಪನೆಗಳ ಹೊರತಾಗಿಯೂ, ತಮ್ಮ ಪ್ರದೇಶವನ್ನು ಯಾವುದೇ ದಾಳಿಯಲ್ಲಿ ಬಳಸಲಾಗುತ್ತಿಲ್ಲ ಎಂದು ಗಲ್ಫ್ ರಾಷ್ಟ್ರಗಳು ನಿರಾಕರಿಸಿವೆ. ಆದರೆ ಖಾರ್ಗ್ ದ್ವೀಪದ ಮೇಲಿನ ಕೆಲವು ದಾಳಿಗಳು ಯುಎಇಯಿಂದ ಉಡಾಯಿಸಲಾದ ಕ್ಷಿಪಣಿಗಳಿಂದ ಬಂದಿವೆ ಎಂದು ಇರಾನ್ ಗೆ ಗುಪ್ತಚರ ಮಾಹಿತಿ ಇದೆ ಎಂದು ಅರಾಘ್ಚಿ ಹೇಳಿದರು. ನ್ಯೂಯಾರ್ಕ್ ಟೈಮ್ಸ್ ಇತ್ತೀಚೆಗೆ ಬಹರೇನ್ನಿಂದ ಇರಾನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಪರಿಶೀಲಿಸಿದೆ. ಅಮೆರಿಕ ಅಥವಾ ಇಸ್ರೇಲ್ಗೆ ಯಾವುದೇ ಸಂಬಂಧವಿಲ್ಲದ ಗಲ್ಫ್ ದೇಶಗಳಲ್ಲಿನ ಯಾವುದೇ ನಾಗರಿಕ ತಾಣಗಳನ್ನು ಇರಾನ್ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂಬುದನ್ನು ಅರಾಘ್ಚಿ ನಿರಾಕರಿಸಿದರು. ಕೆಲವು ಸಂದರ್ಭಗಳಲ್ಲಿ, ಇರಾನ್ ಹೋಟೆಲ್ಗಳು ಅಥವಾ ಇತರ ನಾಗರಿಕ ಕಟ್ಟಡಗಳನ್ನು ಹೊಡೆದಿದೆ ಎಂದು ಒಪ್ಪಿಕೊಂಡಿದೆ, ಆದರೆ ಆ ತಾಣಗಳನ್ನು ಅಮೆರಿಕದ ಸೈನಿಕರು ಅಥವಾ ಇಸ್ರೇಲಿ ಗುಪ್ತಚರ ಸಂಸ್ಥೆಗಳು ಬಳಸುತ್ತಿವೆ ಎಂದು ಹೇಳಿಕೊಂಡಿದೆ. ಗಾಜಾದಲ್ಲಿನ ನಾಗರಿಕ ತಾಣಗಳ ಮೇಲಿನ ತನ್ನ ದಾಳಿಯನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್ ಪದೇ ಪದೇ ಬಳಸುತ್ತಿರುವ ಸಮರ್ಥನೆಯೂ ಇದಾಗಿದೆ. ಅಂತರರಾಷ್ಟ್ರೀಯ ಕಾನೂನು ತಜ್ಞರು ಈ ಪದ್ಧತಿಯನ್ನು ಕಾನೂನುಬಾಹಿರ ಎಂದು ವ್ಯಾಪಕವಾಗಿ ಖಂಡಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ ಸೈಪ್ರಸ್, ಟರ್ಕಿ ಮತ್ತು ಹಲವಾರು ಗಲ್ಫ್ ರಾಷ್ಟ್ರಗಳಲ್ಲಿ ನಡೆದ ವಿವಿಧ ದಾಳಿಗಳಲ್ಲಿ ಭಾಗಿಯಾಗಿರುವುದನ್ನು ಇರಾನ್ ಅಧಿಕೃತವಾಗಿ ನಿರಾಕರಿಸಿದೆ. ಇತರ ರಾಷ್ಟ್ರಗಳನ್ನು ಇರಾನ್ ನೊಂದಿಗೆ ಬಹಿರಂಗ ಸಂಘರ್ಷಕ್ಕೆ ಎಳೆಯಲು ಪ್ರಯತ್ನಿಸುವ ಉದ್ದೇಶದಿಂದ ಅಮೆರಿಕ ಮತ್ತು ಇಸ್ರೇಲ್ ಸುಳ್ಳು ಧ್ವಜ ದಾಳಿಗಳನ್ನು ನಡೆಸುತ್ತಿದೆ ಎಂದು ಅದು ಆರೋಪಿಸಿದೆ. ಈ ಪ್ರದೇಶದಲ್ಲಿನ ನಮ್ಮ ಸ್ನೇಹಿತರೊಂದಿಗೆ ಕುಳಿತು ಯಾವ ಗುರಿಗಳನ್ನು ಹೊಡೆದಿದೆ ಮತ್ತು ಅವು ಅಮೆರಿಕನ್ನರದ್ದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ತನಿಖಾ ಸಮಿತಿಯನ್ನು ರಚಿಸಲು ನಾವು ಸಿದ್ಧರಿದ್ದೇವೆ ಎಂದು ಅರಾಘ್ಚಿ ಅಲ್ ಅರಬಿ ಅಲ್ ಜದೀದ್ಗೆ ತಿಳಿಸಿದರು. ಇಸ್ರೇಲ್ ಮತ್ತು ಅಮೆರಿಕ ಟೆಹ್ರಾನ್ ನ ಶಹೀದ್ ಡ್ರೋನ್ಗಳನ್ನು ಕ್ಲೋನ್ ಮಾಡಿವೆ. ಕೊಲ್ಲಿಯಲ್ಲಿನ ನಾಗರಿಕ ತಾಣಗಳ ಮೇಲೆ ದಾಳಿ ನಡೆಸಲು ಅವುಗಳನ್ನು ಬಳಸುತ್ತಿವೆ ಎಂದು ಇರಾನ್ ಗೆ ಗುಪ್ತಚರ ಮಾಹಿತಿ ಇದೆ ಎಂದು ಅವರು ಹೇಳಿದ್ದಾರೆ. ಈ ಹಕ್ಕುಗಳನ್ನು ಬೆಂಬಲಿಸಲು ಇರಾನ್ ಯಾವುದೇ ಪುರಾವೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಭಾನುವಾರ ಸಾಮಾಜಿಕ ಮಾಧ್ಯಮ X ಪೋಸ್ಟ್ ನಲ್ಲಿ, CENTCOM ಈ ಆರೋಪಗಳನ್ನು ನಿರಾಕರಿಸಿತು. ಈ ಪ್ರದೇಶಕ್ಕೆ ಎದುರಾಗುವ ಬೆದರಿಕೆಗಳನ್ನು ತೊಡೆದುಹಾಕಲು ಯುಎಸ್ ದಾಳಿ ಡ್ರೋನ್ಗಳು ಇರಾನಿನ ಮಿಲಿಟರಿ ಸಾಮರ್ಥ್ಯಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಇದರಲ್ಲಿ ಬರೆದಿದೆ. ಸೋಮವಾರ, ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿಯ ಅಧ್ಯಕ್ಷರಾದ ಅಲಿ ಲಾರಿಜಾನಿ ಅವರು ಪ್ರಪಂಚದಾದ್ಯಂತದ ಮುಸ್ಲಿಮರಿಗೆ ಮತ್ತು ಇಸ್ಲಾಮಿಕ್ ಸರ್ಕಾರಗಳಿಗೆ ಆರು ಅಂಶಗಳ ಸಂದೇಶವನ್ನು ಪ್ರಕಟಿಸಿದರು. ಇದರಲ್ಲಿ ಅವರು ಯುಎಸ್-ಇಸ್ರೇಲ್ ಯುದ್ಧಕ್ಕೆ ಪ್ರತಿಕ್ರಿಯಿಸುವಲ್ಲಿ ಇರಾನ್ ನ ಕ್ರಮಗಳನ್ನು ಸಮರ್ಥಿಸಿಕೊಂಡರು. ಇಂದು ಮುಖಾಮುಖಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಒಂದು ಕಡೆ ಮತ್ತು ಇರಾನ್, ಮುಸ್ಲಿಂ ರಾಷ್ಟ್ರಗಳು ಮತ್ತು ಮತ್ತೊಂದೆಡೆ ಪ್ರತಿರೋಧದ ಶಕ್ತಿಗಳು ಇವೆ. ಹಾಗಾದರೆ ನೀವು ಯಾವ ಕಡೆ ನಿಲ್ಲುತ್ತೀರಿ? ಇಸ್ಲಾಮಿಕ್ ಪ್ರಪಂಚದ ಭವಿಷ್ಯದ ಬಗ್ಗೆ ಯೋಚಿಸಿ. ಅಮೆರಿಕ ನಿಮಗೆ ನಿಷ್ಠವಾಗಿಲ್ಲ. ಇಸ್ರೇಲ್ ನಿಮ್ಮ ಶತ್ರು ಎಂದು ನಿಮಗೆ ತಿಳಿದಿದೆ. ಒಂದು ಕ್ಷಣ ನಿಲ್ಲಿ, ನಿಮ್ಮ ಬಗ್ಗೆ ಮತ್ತು ಪ್ರದೇಶದ ಭವಿಷ್ಯದ ಬಗ್ಗೆ ಯೋಚಿಸಿ ಎಂದು ಲಾರಿಜಾನಿ ಹೇಳಿದ್ದಾರೆ.
ಕೇರಳ ವಿಧಾನ ಸಭಾ ಚುನಾವಣೆ : ಅಧಿಕಾರಿಗಳ ವರ್ಗಾವಣೆಗೆ ಕೇಂದ್ರ ಚುನಾವಣಾ ಆಯೋಗ ಆದೇಶ
ತಿರುವನಂತಪುರಂ, ಮಾ. 17: ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಚುನಾವಣಾ ಆಯೋಗ ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಮಂಗಳವಾರ ವರ್ಗಾವಣೆ ಮಾಡಿದೆ. ಬದಲಾವಣೆಗಳ ಭಾಗವಾಗಿ ಟಿ. ನಾರಾಯಣನ್ ಅವರನ್ನು ಕೋಝಿಕ್ಕೋಡ್ನ ಜಿಲ್ಲಾ ಪೊಲೀಸ್ ವರಿಷ್ಠರನ್ನಾಗಿ ನಿಯೋಜಿಸಲಾಗಿದೆ. ಥೋಮ್ಸನ್ ಜಾರ್ಜ್ ತ್ರಿಶೂರ್ ವಲಯದ ಡಿಐಜಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೆ. ಇನ್ಬಶೇಖರ್ ಅವರನ್ನು ಆಲಪ್ಪುಳದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಕೇರಳ ಆಡಳಿತಾತ್ಮಕ ಸೇವೆ (ಕೆಎಎಸ್)ಯ ಅಧಿಕಾರಿಗಳಲ್ಲಿ ವಂದನಾ ಎಸ್ ಅವರನ್ನು ತಳಿಪರಂಬದ ಕಂದಾಯ ವಿಭಾಗದ ಅಧಿಕಾರಿ (ಆರ್ಡಿಒ)ಯಾಗಿ ನಿಯೋಜಿಸಲಾಗಿದೆ. ಅವರು ಇರಿಕ್ಕುರ್ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಕೂಡ ಕಾರ್ಯ ನಿರ್ವಹಿಸಲಿದ್ದಾರೆ. ಸಚಿನ್ ಕೃಷ್ಣ ಅವರನ್ನು ಕಣ್ಣೂರಿನ ಜಿಲ್ಲಾ ರಿಜಿಸ್ಟ್ರಾರ್ ಜನರಲ್ ಆಗಿ ನಿಯೋಜಿಸಲಾಗಿದೆ. ಅವರು ಧರ್ಮದಮ್ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸಲಿದ್ದಾರೆ. ರಾಜ್ಯದ ಚುನಾವಣಾ ಸಿದ್ಧತೆಯ ಪರಿಶೀಲನೆಯ ಬಳಿಕ ಚುನಾವಣಾ ಆಯೋಗ ಮುಖ್ಯ ಕಾರ್ಯದರ್ಶಿ ಅವರಿಗೆ ಈ ನಿರ್ದೇಶನಗಳನ್ನು ನೀಡಿದೆ. ಈ ನಿಯೋಜನೆಯನ್ನು ತತ್ಕ್ಷಣದಿಂದ ಜಾರಿಗೆ ತರುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ. ಅಧಿಕಾರಿಗಳು ತಮ್ಮ ಹೊಸ ಹುದ್ದೆಯ ಅಧಿಕಾರ ವಹಿಸಿಕೊಂಡಿರುವುದನ್ನು ದೃಢೀಕರಿಸುವ ಅನುಸರಣಾ ವರದಿಯನ್ನು ಮಾಚ್ 18ರಂದು ಪೂರ್ವಾಹ್ನ 11ರ ಒಳಗೆ ಸಲ್ಲಿಸಬೇಕು ಎಂದು ಇಸಿಐ ನಿರ್ದೇಶನ ನೀಡಿದೆ.
ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗಾಗಿ 104 ಕೋಟಿ ರೂ.ಬಿಡುಗಡೆ ಮಾಡಿದ ಸರಕಾರ
ಬೆಂಗಳೂರು : ರಾಜ್ಯ ಸರಕಾರವು 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಮತ್ತು ಪಾದರಕ್ಷೆ ವಿತರಿಸಲು 104 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಶುಭಮಂಗಳ ಆರ್.ವಿ. ಆದೇಶ ಹೊರಡಿಸಿದ್ದು, ಸರಕಾರಿ ಶಾಲೆಗಳಲ್ಲಿ 1 ರಿಂದ 10ನೆ ತರಗತಿಗಳಲ್ಲಿ ಅಂದಾಜು 36.56 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ಒದಗಿಸಲಾಗುವುದು ಎಂದಿದ್ದಾರೆ. ಕೆ.ಟಿ.ಪಿ.ಪಿ. ಕಾಯ್ದೆ 1999 ಮತ್ತು ಅದರಡಿ ರೂಪಿಸಲಾದ ನಿಯಮಗಳನ್ವಯ ಪಾರದರ್ಶಕ ಟೆಂಡರ್ ಹೊರಡಿಸುವ ಮೂಲಕ ರಾಜ್ಯಮಟ್ಟದಲ್ಲಿ ಶೂ ಮತ್ತು ಸಾಕ್ಸ್ ಗಳನ್ನು ಖರೀದಿಸಿ ವಿತರಣೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಧಿಕ ಮಳೆಯಾಗುವ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲಾ ಎಸ್.ಡಿ.ಎಂ.ಸಿ.ಗಳ ಕೋರಿಕೆಯ ಮೇರೆಗೆ ಶೂಗಳ ಬದಲಿಗೆ ಗುಣಮಟ್ಟದ ಪಾದರಕ್ಷೆಗಳನ್ನು ಸರಬರಾಜು ಮಾಡಲು ಕ್ರಮ ವಹಿಸಬೇಕು. ಶೂ ಮತ್ತು ಸಾಕ್ಸ್ ಗಳ ಅಥವಾ ಪಾದರಕ್ಷೆಗಳ ಖರೀದಿಗಾಗಿ 1 ರಿಂದ 5ನೆ ತರಗತಿಯ ಒಬ್ಬ ವಿದ್ಯಾರ್ಥಿಗೆ 265 ರೂ., 6 ರಿಂದ 8ನೆ ತರಗತಿಯ ಒಬ್ಬ ವಿದ್ಯಾರ್ಥಿಗೆ 295 ರೂ., 9 ಮತ್ತು 10ನೆ ತರಗತಿಯ ಒಬ್ಬ ವಿದ್ಯಾರ್ಥಿಗೆ 325 ರೂ.ಗಳವರೆಗೆ ಖರ್ಚು ಮಾಡಬಹುದಾಗಿದೆ ಎಂದು ಸೂಚನೆ ನೀಡಲಾಗಿದೆ. ಶಾಲಾ ಸಮವಸ್ತ್ರ ಖರೀದಿ ಮತ್ತು ಸರಬರಾಜಿನ ಪ್ರಕ್ರಿಯೆಯಲ್ಲಿ ರಚಿಸಲಾದ ಸಮಿತಿಗಳಂತೆಯೇ ಶೂ, ಸಾಕ್ಸ್ ಮತ್ತು ಪಾದರಕ್ಷೆಗಳ ಖರೀದಿ ಹಾಗೂ ಪೂರೈಕೆ ಪ್ರಕ್ರಿಯೆಗೂ ವಿಷಯ ತಜ್ಞರನ್ನು ಹೊಂದಿರುವ ಸಮಿತಿಗಳನ್ನು ರಚಿಸಬೇಕು. ಖರೀದಿಸಲಾದ ಶೂ, ಸಾಕ್ಸ್ ಮತ್ತು ಪಾದರಕ್ಷೆಗಳ ಮಾದರಿಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಗುಣಮಟ್ಟ ಪರೀಕ್ಷೆಗೆ ಒಳಪಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ವಿಷಯ ತಜ್ಞ ತಾಂತ್ರಿಕ ಸಮಿತಿಯ ಶಿಫಾರಸ್ಸಿನಂತೆ ನಿಗದಿಪಡಿಸಿದ ಶೂ, ಸಾಕ್ಸ್ ತಾಂತ್ರಿಕ ವೈಶಿಷ್ಟ್ಯತೆಯ ವಿಸ್ತ್ರತವಾದ ವಿವರಗಳನ್ನು ಶಾಲಾ ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಅಳವಡಿಸಬೇಕು. ಹಿಂದಿನ ಸಾಲುಗಳಲ್ಲಿ ಕಳಪೆ ಗುಣಮಟ್ಟದ ಮತ್ತು ನಕಲಿ ಬ್ರಾಂಡೆಡ್ ಶೂ ಮತ್ತು ಸಾಕ್ಸ್ ಸರಬರಾಜು ಆಗಿರುವ ಬಗ್ಗೆ ಸಾಕಷ್ಟು ದೂರುಗಳು ಸ್ವೀಕೃತವಾಗಿವೆ. ಆದುದರಿಂದ ಪ್ರಸ್ತುತ ಸಾಲಿನಲ್ಲಿ ಜಾಗರೂಕತೆಯಿಂದ ಪರಿಶೀಲಿಸಿ, ಖರೀದಿಸಲು ಕ್ರಮವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಮಧ್ಯಪ್ರಾಚ್ಯದ ಸಂಘರ್ಷ | ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ LPG ಕೊರತೆ
ಹೊಸದಿಲ್ಲಿ, ಮಾ. 17: ಮಧ್ಯಪ್ರಾಚ್ಯದ ಸಂಘರ್ಷದ ನಡುವೆ ಭಾರತದ ಹಲವು ರಾಜ್ಯಗಳಲ್ಲಿ ಎಲ್ಪಿಜಿ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರ್ಯಾಯ ಪರಿಹಾರ ಹುಡುಕುತ್ತಿದ್ದಾರೆ. ಅಲ್ಲದೆ, ಎಲ್ಪಿಜಿ ಸಿಲಿಂಡರ್ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವರ ಹಾಗೂ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಎಲ್ಪಿಜಿ ಸಿಲಿಂಡರ್ಗೆ ಬದಲಿಯಾಗಿ ರಾಜ್ಯದಾದ್ಯಂತ ಪೆಟ್ರೋಲ್ ಪಂಪ್ಗಳಲ್ಲಿ ಸೀಮೆ ಎಣ್ಣೆ ಲಭ್ಯವಾಗಲಿದೆ ಎಂದು ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಛಗನ್ ಭುಜಬಲ್ ಅವರು ಘೋಷಿಸಿದ್ದಾರೆ. ಸ್ಥಳೀಯ ಬಳಕೆದಾರರಿಗೆ ಆದ್ಯತೆ ನೀಡಲು ಎಲ್ಪಿಜಿ ಉತ್ಪಾದನೆಯನ್ನು ಪ್ರತಿ ದಿನ 9,000 ಟನ್ಗಳಿಂದ 11,000 ಟನ್ಗಳಿಗೆ ಹೆಚ್ಚಿಸುವ ಪ್ರಯತ್ನವಾಗಿ ತಾನು ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ ಎಂದು ಭುಜಬಲ್ ಹೇಳಿದ್ದಾರೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವೃದ್ಧಾಶ್ರಮ, ಚಿತಾಗಾರ, ವೈದ್ಯಕೀಯ ಸೌಲಭ್ಯ ಹಾಗೂ ರಕ್ಷಣಾ ಕಾರ್ಖಾನೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಕಲಬೆರಕೆ ಹಾಗೂ ಸುರಕ್ಷಿತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲ್ ಪಂಪ್ಗಳ ಮೂಲಕ ಸೀಮೆ ಎಣ್ಣೆ ಪೂರೈಕೆ ಮಾಡಲಾಗುವುದು ಎಂದು ಅವರು ಒತ್ತಿ ಹೇಳಿದರು. ಗುಜರಾತ್ನಲ್ಲಿ ಅಂತ್ಯಕ್ರಿಯೆ ಸೇವೆಯ ವೆಚ್ಚಗಳು ಕೂಡ ಹೆಚ್ಚುತ್ತಿವೆ. ಸೂರತ್ನ ರಾಮನಾಥ್ ಘೇಲಾದಂತಹ ಚಿತಾಗಾರಗಳು ಈ ಹಿಂದೆ ಸಿಎಸ್ಆರ್ ಯೋಜನೆ ಅಡಿಯಲ್ಲಿ ಉಚಿತ ಎಲ್ಪಿಜಿ ಪಡೆಯುತ್ತಿದ್ದವು. ಈಗ ಅವರು ಎಲ್ಪಿಜಿಗಾಗಿ ಶುಲ್ಕ ಪಾವತಿಸಬೇಕಾಗಿದೆ. ಇದರಿಂದ ಪ್ರತಿ ಶವ ಸಂಸ್ಕಾರದ ಶುಲ್ಕವನ್ನು 1,100ರೂ. ಹೆಚ್ಚಿಸುವ ಸಾಧ್ಯತೆ ಇದೆ ಎಂದು ಚೀತಾಗಾರದ ವ್ಯವಸ್ಥಾಪಕರು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಅಧಿಕಾರಿಗಳು 1,025 ಸ್ಥಳಗಳ ಮೇಲೆ ದಾಳಿ ನಡೆಸಿ 1,357 ಎಲ್ಪಿಜಿ ಸಿಲಿಂಡರ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ 8 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ತೈಲ ಕಂಪೆನಿಗಳೊಂದಿಗೆ ಸಮನ್ವಯ ಸಾಧಿಸಲು ಹಾಗೂ ಪೆಟ್ರೋಲ್, ಡೀಸೆಲ್, ಸಿಎನ್ಜಿ, ಪಿಎನ್ಐ ಹಾಗೂ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯ ಮೇಲ್ವಿಚಾರಣೆ ನಡೆಸಲು ರಾಜ್ಯ ಮಟ್ಟದ 6 ಸದಸ್ಯರ ಸಮಿತಿಯನ್ನು ರೂಪಿಸಲಾಗಿದೆ.
ಮೋಟಾರು ವಾಹನ ಕಾಯಿದೆ ಪರಿಹಾರಕ್ಕೂ, ಗುಂಪು ವಿಮೆಗೂ ಸಂಬಂಧವಿಲ್ಲ; ಪರಿಹಾರದಲ್ಲಿ ಕಡಿತ ಸಲ್ಲದು - ಸುಪ್ರೀಂ ಕೋರ್ಟ್
ಮೋಟಾರು ವಾಹನ ಕಾಯಿದೆ ಪರಿಹಾರಕ್ಕೂ, ಉದ್ಯೋಗದಾತ ಕಂಪನಿಗಳು ನೀಡುವ ಗುಂಪು ವಿಮೆಗೂ ಸಂಬಂಧವಿಲ್ಲ. ಪರಿಹಾರದಲ್ಲಿ ಕಡಿತ ಸಲ್ಲದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕರ್ನಾಟಕಕ್ಕೆ ಸಂಬಂಧಿಸಿದ ಅಪಘಾತ ಪ್ರಕರಣದಲ್ಲಿ ವಿಮೆ ಮೊತ್ತಕ್ಕೆ ಸಂಬಂಧಿಸಿದಂತೆ ಈ ತೀರ್ಪು ಕೊಟ್ಟಿದೆ. ಒಂದು ಅಪಘಾತಕ್ಕೆ ಒಂದೇ ಪರಿಹಾರ ಎಂಬ ವಾದ ಒಪ್ಪಲಾಗದು ಎಂದು ಕೋರ್ಟ್ ಹೇಳಿದೆ.
ಮಾ.18ರಿಂದ ಎಸೆಸೆಲ್ಸಿ ಪರೀಕ್ಷೆ: ಮೂರು ಪೂರ್ವಸಿದ್ಧತಾ ಪರೀಕ್ಷೆಗಳೊಂದಿಗೆ ಅಂತಿಮ
ಪರೀಕ್ಷೆ ಬರೆಯಲು ಸಿದ್ಧರಾದ 13,516 ವಿದ್ಯಾರ್ಥಿಗಳು
ಜಾರ್ಖಂಡ್ | ಮಾಟಮಂತ್ರ ಮಾಡುತ್ತಿದ್ದಾರೆಂದು ಆರೋಪಿಸಿ ಬುಡಕಟ್ಟು ಕುಟುಂಬದ ಮೂವರ ಹತ್ಯೆ
ರಾಂಚಿ, ಮಾ. 17: ಜಾರ್ಖಂಡ್ನ ಗೊಡ್ಡದಲ್ಲಿ ಇನ್ನೊಂದು ಭೀಕರ ಹತ್ಯಾಕಾಂಡ ನಡೆದಿದ್ದು, ಮಾಟ ಮಾಡುತ್ತಿದ್ದರೆಂದು ಆರೋಪಿಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಮೂವರನ್ನು ದುಷ್ಕರ್ಮಿಗಳು ಥಳಿಸಿ ಹತ್ಯೆಗೈದಿದ್ದಾರೆ. ಗಂಡ, ಹೆಂಡತಿ ಮತ್ತು ಅವರ 12 ವರ್ಷದ ಮಗನ ಮೇಲೆ ಅಜ್ಞಾತ ವ್ಯಕ್ತಿಗಳು ಸೋಮವಾರ ರಾತ್ರಿ ಮಾರಕಾಸ್ತ್ರಗಳಿಂದ ಆಕ್ರಮಣ ಮಾಡಿದರು ಎಂದು ಪೊಲೀಸರು ತಿಳಿಸಿದರು. ದಾಳಿಯಲ್ಲಿ 50 ವರ್ಷದ ದರ್ಬಾರಿ ಮುರ್ಮು, ಅವರ 45 ವರ್ಷದ ಪತ್ನಿ ಮಕ್ಕು ಬಾಸ್ಕಿ ಮತ್ತು ಅವರ 12 ವರ್ಷದ ಮಗ ಜೀತ್ನಾರಾಯಣ್ ಮುರ್ಮು ಮೃತಪಟ್ಟರು. ಹತ್ಯಾಕಾಂಡದ ವಿಷಯ ಮಂಗಳವಾರ ಬೆಳಗ್ಗೆ ಹರಡಿದ ಬಳಿಕ ಇಡೀ ಗ್ರಾಮದಲ್ಲಿ ಭೀತಿಯ ವಾತಾವರಣ ನೆಲೆಸಿದೆ. ಮಂಗಳವಾರ ಬೆಳಗ್ಗೆ ಪೊಲೀಸರು ಸಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಹತ್ಯಾಕಾಂಡಕ್ಕೆ ಸಂಬಂಧಿಸಿ ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ‘‘ಗೊಡ್ಡದ ದಂಗ್ ತೊಲ ಎಂಬಲ್ಲಿ ಬುಡಕಟ್ಟು ಸಮುದಾಯದ ದಂಪತಿ ಮತ್ತು ಅವರ ಅಪ್ರಾಪ್ತ ಮಗನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಮಾಟ ಮಾಡುತ್ತಿದ್ದರೆಂಬ ಆರೋಪ ಹೊರಿಸಿ ಈ ಹತ್ಯೆ ನಡೆದಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ’’ ಎಂದು ಗೊಡ್ಡ ಪೊಲೀಸ್ ಅಧಿಕಾರಿ ಅಶೋಕ್ ಪ್ರಿಯದರ್ಶಿ ಹೇಳಿದರು.
ರಾಜ್ಯಸಭಾ ಚುನಾವಣೆ | ಹರ್ಯಾಣದಲ್ಲಿ ಕಾಂಗ್ರೆಸ್, ಬಿಜೆಪಿಗೆ ತಲಾ ಒಂದು ಸ್ಥಾನ
ಚಂಡೀಗಢ, ಮಾ. 17: ಹರ್ಯಾಣದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನ ಗೆದ್ದಿವೆ. ಮಾಜಿ ಲೋಕಸಭಾ ಸದಸ್ಯ, ಬಿಜೆಪಿ ಅಭ್ಯರ್ಥಿ ಸಂಜಯ್ ಭಾಟಿಯ ಮತ್ತು ಕಾಂಗ್ರೆಸ್ ಅಭ್ಯರ್ಥಿ 61 ವರ್ಷದ ಕರಮ್ವೀರ್ ಬೌದ್ಧ್ ಆದ್ಯತೆ ಮತಗಳಿಂದ ಗೆದ್ದರು. ಮತ ಎಣಿಕೆಯು ಸೋಮವಾರ ಸಂಜೆ 5 ಗಂಟೆಗೆ ಆರಂಭವಾಗಬೇಕಾಗಿತ್ತು. ಆದರೆ ಮತದಾರರ ಗೌಪ್ಯತೆ ಉಲ್ಲಂಘನೆಯಾಗಿದೆ ಎಂಬುದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರುಗಳನ್ನು ನೀಡಿದ ಬಳಿಕ ಮತ ಎಣಿಕೆಯು ಐದು ಗಂಟೆಗಳಷ್ಟು ವಿಳಂಬವಾಯಿತು. ಚುನಾವಣಾಧಿಕಾರಿ ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಕರವ್ಮೀರ್ ಸಿಂಗ್ ಬೌದ್ಧ್ ಚುನಾವಣಾ ಆಯೋಗಕ್ಕೆ ಇನ್ನೊಂದು ದೂರು ಸಲ್ಲಿಸಿದರು. ಇಬ್ಬರು ಕಾಂಗ್ರೆಸ್ ಶಾಸಕರು ‘‘ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ್ದಾರೆ’’ ಎಂದು ಆರೋಪಿಸಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ಹರ್ಯಾಣ ಸಚಿವ ಕೃಷನ್ ಕುಮಾರ್ ಬೇಡಿ ಹೇಳಿದರು. ‘‘ಕಾಂಗ್ರೆಸ್ ಶಾಸಕರು ತಮ್ಮ ಮತಪತ್ರಗಳನ್ನು ಮಡಿಚಿರಲಿಲ್ಲ. ಅದು ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದೆ. ನಾವು ಅದರ ವಿರುದ್ಧ ದೂರು ನೀಡಿದ್ದೇವೆ’’ ಎಂದು ಅವರು ಹೇಳಿದರು. ಚುನಾವಣಾ ಆಯೋಗವು ದೂರನ್ನು ತಳ್ಳಿಹಾಕಿದ ಬಳಿಕ ಮತ ಎಣಿಕೆ ಆರಂಭಗೊಂಡಿತು. ಅಡ್ಡ ಮತದಾನವನ್ನು ತಪ್ಪಿಸಲು ಕಾಂಗ್ರೆಸ್ ತನ್ನ 31 ಶಾಸಕರನ್ನು ಶಿಮ್ಲಾ ಸಮೀಪದ ಕುಫ್ರಿಯಲ್ಲಿರುವ ಖಾಸಗಿ ರಿಸಾರ್ಟ್ ಒಂದರಲ್ಲಿ ಇರಿಸಿತ್ತು. ಅಲ್ಲಿಂದ ಕಸೌಲಿಗೆ ಸ್ಥಳಾಂತರಿಸಲಾಯಿತು. ಬಳಿಕ ಅವರನ್ನು ಬಸ್ಸೊಂದರಲ್ಲಿ ಚಂಡೀಗಢಕ್ಕೆ ತರಲಾಯಿತು.
ಕೃಷಿ ಭೂಮಿಯಲ್ಲಿನ ಮನೆಗಳಿಗೂ ಅಧಿಕೃತ ದಾಖಲೆ ನೀಡಲು ಹಾದಿ ಸುಗಮ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಮನೆಗಳಿಗೂ ಅಧಿಕೃತ ದಾಖಲೆ ನೀಡಲು ಹಾದಿ ಸುಗಮಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಮಂಗಳವಾರ ವಿಧಾನಪರಿಷತ್ತಿನ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ನಿಯಮ 72ರ ಅಡಿಯಲ್ಲಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ವಸತಿ ಯೋಜನೆಗಳ ಅಡಿಯಲ್ಲಿ ತಮ್ಮದೇ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಇ-ಸ್ವತ್ತು ನೀಡುವಲ್ಲಿ ಇದ್ದ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025ಅನ್ನು ದಿನಾಂಕ: 07-04-2025ರಂದು ಅಧಿಸೂಚಿಸಲಾಗಿದ್ದು, ಇದರಲ್ಲಿ ಹೊಸದಾಗಿ ಪ್ರಕರಣ 199ಬಿ ಮತ್ತು 199ಸಿಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಹೇಳಿದರು. ದಿನಾಂಕ: 07-04-2025ಕ್ಕಿಂತ ಮೊದಲು ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು-2025’ ರನ್ವಯ ನಮೂನೆ 11ಬಿ ಅನ್ನು ಸಾರ್ವಜನಿಕರು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ದಿನಾಂಕ: 07-04-2025ರ ನಂತರದ ಪ್ರಕರಣಗಳಲ್ಲಿ, ಕಾಯ್ದೆಯ ಪ್ರಕರಣ 199ಬಿ ಹಾಗೂ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ರ ಉಪಬಂಧಗಳ ಅನ್ವಯ ಭೂ ಪರಿವರ್ತನೆ ಮತ್ತು ಅನುಮೋದನೆ ಪಡೆದ ಆಸ್ತಿಗಳಿಗೆ ನಮೂನೆ ಸೃಜಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸ ಖಾತಾ ಅಥವಾ ಪಿಐಡಿ ನೀಡುವ ಮೊದಲು, ಸಂಬಂಧಪಟ್ಟ ಯೋಜನಾ ಪ್ರಾಧಿಕಾರದ ಮೂಲಕ ಲೇಔಟ್ ಪ್ಲಾನ್ಗೆ ಪೂರ್ವಾನ್ವಯ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು. ಗ್ರಾಮೀಣ ಭಾಗದ ಜನರು ವಸತಿ ಯೋಜನೆಗಳ ಅಡಿಯಲ್ಲಿ ಮನೆ ಕಟ್ಟಿಕೊಂಡರೂ ಇ-ಸ್ವತ್ತು ದಾಖಲೆ ಇಲ್ಲದೆ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ನಮ್ಮ ಸರಕಾರವು ಕಾಯಿದೆಗೆ ತಿದ್ದುಪಡಿ ತಂದಿದೆ. ಇನ್ನು ಮುಂದೆ ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಮನೆಗಳಿಗೂ ಇ-ಸ್ವತ್ತು ತಂತ್ರಾಂಶದಲ್ಲಿ ಪ್ರತ್ಯೇಕ ವರ್ಗೀಕರಣ ಮಾಡಿ ದಾಖಲೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಸತಿ ಯೋಜನೆಯ ಫಲಾನುಭವಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಹರ್ದೀಪ್ ಸಿಂಗ್ ಮಗಳು, ಎಪ್ಸ್ಟೀನ್ಗೆ ನಂಟು ಕಲ್ಪಿಸುವ ಸಂದೇಶಗಳನ್ನು ತೆಗೆಯಲು ದಿಲ್ಲಿ ಹೈಕೋರ್ಟ್ ಸೂಚನೆ
ಹೊಸದಿಲ್ಲಿ, ಮಾ. 17: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯ ಮಗಳು ಮತ್ತು ಅಮೆರಿಕದ ಲೈಂಗಿಕ ಅಪರಾಧಿ ಜೆಪ್ರಿ ಎಪ್ಸ್ಟೀನ್ ನಡುವೆ ನಂಟು ಕಲ್ಪಿಸುವ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು 24 ಗಂಟೆಗಳೊಳಗೆ ತೆಗೆದುಹಾಕುವಂತೆ ದಿಲ್ಲಿ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಇಂಥ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಯಾವುದೇ ವಿಧದಲ್ಲಿ ಪ್ರಕಟಿಸದಂತೆ ಮತ್ತು ಪ್ರಸಾರಿಸದಂತೆಯೂ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಿರ್ಬಧಿಸಿದರು. ಹಿಮಯಾನಿ ಪುರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ, ಈ ಸಂದೇಶಗಳನ್ನು ಬಳಕೆದಾರರು ತೆಗೆಯದಿದ್ದರೆ ಸಾಮಾಜಿಕ ಮಾಧ್ಯಮಗಳು ತೆಗೆಯಬೇಕು ಅಥವಾ ಅವುಗಳು ಕಾಣಿಸದಂತೆ ಮಾಡಬೇಕು ಎಂಬ ನಿರ್ದೇಶನವನ್ನೂ ನೀಡಿದರು. ನ್ಯಾಯವು ಅರ್ಜಿದಾರೆಯ ಪರವಾಗಿ ಇರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ ಹಾಗೂ ಮಧ್ಯಂತರ ಆದೇಶ ನೀಡದಿದ್ದರೆ ಅವರಿಗೆ ಸರಿಪಡಿಸಲಾಗದ ಹಾನಿಯಾಗುತ್ತದೆ ಎಂಬ ಆತಂಕವನ್ನೂ ನ್ಯಾಯಾಲಯ ವ್ಯಕ್ತಪಡಿಸಿತು. ಹಿಮಯಾನಿ ಪುರಿ ತನ್ನ ಅರ್ಜಿಯಲ್ಲಿ 10 ಕೋಟಿ ಪರಿಹಾರ ಕೋರಿದ್ದರು ಹಾಗೂ ‘‘ಮಾನಹಾನಿಕರ ಸಂದೇಶಗಳನ್ನು’’ ತೆಗೆಯುವಂತೆ ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕು ಎಂದಿದ್ದರು. ಫೆಬ್ರವರಿ 22ರಿಂದ ಎಕ್ಸ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಲಿಂಕ್ಡ್ಇನ್ ಮತ್ತು ದಿಜಿಟಲ್ ಸುದ್ದಿ ಜಾಲಗಳಲ್ಲಿ ದಾರಿತಪ್ಪಿಸುವ ಹಾಗೂ ಮಾನಹಾನಿಕರ ಸಂದೇಶಗಳು, ಲೇಖನಗಳು, ವೀಡಿಯೊಗಳು ಮತ್ತು ಡಿಜಿಟಲ್ ಬರಹಗಳು ಪ್ರಕಟಗೊಳ್ಳುತ್ತಿವೆ ಎಂದು ತನ್ನ ಅರ್ಜಿಯಲ್ಲಿ ಅರ್ಜಿದಾರರು ಆರೋಪಿಸಿದ್ದಾರೆ.
ದಿಲ್ಲಿ | ಕುಸಿದು ಬಿದ್ದ ಕಬ್ಬಿಣದ ಸೇತುವೆ : ಮಹಿಳೆ ಮೃತ್ಯು
ಹೊಸದಿಲ್ಲಿ,ಮಾ.17: ಚರಂಡಿಯ ಮೇಲಿನ 60 ಅಡಿ ಉದ್ದದ ಕಬ್ಬಿಣದ ಸೇತುವೆ ಕುಸಿದು ಬಿದ್ದ ಪರಿಣಾಮ ಸುಮಾರು 50ರ ಹರೆಯದ ಅಪರಿಚಿತ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಉತ್ತರ ದಿಲ್ಲಿಯ ರೂಪನಗರ ಪ್ರದೇಶದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಥಿಲಗೊಂಡಿದ್ದ ಈ ಸೇತುವೆಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು ಮತ್ತು ಬ್ಯಾರಿಕೇಡ್ಗಳನ್ನು ಅಳವಡಿಸಿ ಸಾರ್ವಜನಿಕರ ಓಡಾಟಕ್ಕೆ ಮುಚ್ಚಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಭಿಕ್ಷುಕಿಯಂತೆ ಕಾಣುತ್ತಿದ್ದ ಮೃತ ಮಹಿಳೆ ಆಗಾಗ್ಗೆ ಸೇತುವೆಯ ಒಂದು ತುದಿಯಲ್ಲಿ ಕುಳಿತುಕೊಂಡಿರುತ್ತಿದ್ದಳು ಎಂದು ಸ್ಥಳೀಯರು ಹೇಳಿದ್ದಾರೆ. ರಕ್ಷಣಾ ತಂಡಗಳು ಮೃತದೇಹವನ್ನು ಚರಂಡಿಯಿಂದ ಹೊರತೆಗೆದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಶಿಥಿಲಗೊಂಡಿದ್ದ ಸೇತುವೆಯನ್ನು ಬ್ಯಾರಿಕೇಡ್ಗಳನ್ನು ಅಳವಡಿಸಿ ಮುಚ್ಚಲಾಗಿತ್ತು. ಆದರೆ ಎಚ್ಚರಿಕೆಗಳ ಹೊರತಾಗಿಯೂ ಜನರು ಅದರ ಮೇಲೆ ಸಂಚಾರವನ್ನು ಮುಂದುವರಿಸಿದ್ದರು ಎಂದು ಸ್ಥಳೀಯ ನಿವಾಸಿಯೋರ್ವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪ್ರಗತಿಪರ ಆಟೋ ರಿಕ್ಷಾ , ಟೂರಿಸ್ಟ್ ವಾಹನ ಚಾಲಕರ ಪ್ರತಿಭಟನೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಆಟೋರಿಕ್ಷಾ ಚಾಲಕರಿಗೆ ಆಗುತ್ತಿರುವ ಸಮಸ್ಯೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಆಟೋ ರಿಕ್ಷಾ , ಟೂರಿಸ್ಟ್ , ಭಾರೀ ವಾಹನ ಚಾಲಕರ ಸಂಘ (ಎಐಸಿಸಿಟಿಯು) ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಮಂಗಳವಾರ ರಿಕ್ಷಾ ಚಾಲಕರು ಪ್ರತಿಭಟನೆ ನಡೆಯಿತು. ವಾಹನಗಳ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಯಿಂದ ಆಟೋ ಚಾಲಕರು ತತ್ತರಿಸಿದ್ದಾರೆ. ಮಂಗಳೂರು ನಗರದಲ್ಲಿ ರಿಕ್ಷಾ ಪಾರ್ಕ್ ಮತ್ತು ಬೈಕ್ ಟ್ಯಾಕ್ಸಿ , ಓಲಾ ಉಬರ್ ,ನಮ್ಮ ಯಾತ್ರಿ. ಇಂತಹ ಕಂಪನಿಗಳಿಂದ ತೀವ್ರ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ನಡೆಸಿದ ಆಟೋ ಚಾಲಕಕರ ಸಂಘದವರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳು ಪರವಾನಿಗೆಯಿಲ್ಲದೆ ಜಿಲ್ಲೆಯಾದ್ಯಂತ ಸಂಚರಿಸಲು ಅವಕಾಶ ನೀಡಿರುವುದು ಖಂಡನೀಯ, ಆದಷ್ಟು ಬೇಗ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡುವಂತೆ ಆಗ್ರಹಿಸಿದರು, ಪರವಾನಿಗೆರಹಿತ ಅನಧಿಕೃತ ವಲಯ ಸಂಖ್ಯೆಯನ್ನು ಹಾಕಿ ಸಂಚರಿಸುತ್ತಿದ್ದು, ಇದನ್ನು ಪರಿಶೀಲಿಸಿ ಕ್ರಮಕ್ಕೆ ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ ಇ, ಜಿಲ್ಲಾ ಮುಖಂಡ ಅನ್ಸಾರ್, ದ.ಕ. ಆಟೋ ಚಾಲಕರ ಸಂಘದ ಅಧ್ಯಕ್ಷರಾದ ವಿಷ್ಣುಮೂರ್ತಿ ಮುಖಂಡರಾದ ಸಂದೀಪ್ , ಅಸ್ಪಕ್ ದಿನೇಶ್ ಬಾಬು, ಜಾವಿದ್, ಇಂಮ್ತಿಯಾಝ್, ಯೋಗೇಂದ್ರ , ಜಾರ್ಜ್ ಉಪಸ್ಥಿತರಿದ್ದರು.
ಮಹಿಳೆಯರ ಏಕದಿನ ರ್ಯಾಂಕಿಂಗ್ | 7ನೇ ಸ್ಥಾನಕ್ಕೇರಿದ ಹರ್ಮನ್ಪ್ರೀತ್ ; ಮಂಧಾನ ಅಗ್ರ ಸ್ಥಾನ ಭದ್ರ
ದುಬೈ, ಮಾ.17: ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಂಗಳವಾರ ಬಿಡುಗಡೆಯಾದ ಮಹಿಳೆಯರ ಏಕದಿನ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಉಪ ನಾಯಕಿ ಸ್ಮತಿ ಮಂಧಾನ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ನ್ಯೂಝಿಲ್ಯಾಂಡ್ನ ಹಿರಿಯ ಆಟಗಾರ್ತಿ ಸೋಫಿ ಡಿವೈನ್ ಎರಡು ಸ್ಥಾನ ಕಳೆದುಕೊಂಡ ನಂತರ 9ನೇ ಸ್ಥಾನದಲ್ಲಿದ್ದು, ಹರ್ಮನ್ಪ್ರೀತ್ ಏಳನೇ ಸ್ಥಾನಕ್ಕೇರಿದ್ದಾರೆ. ಜೆಮಿಮಾ ರೋಡ್ರಿಗ್ಸ್ 12ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಝಿಂಬಾಬ್ವೆ ವಿರುದ್ಧದ ಮಹಿಳೆಯರ ಚಾಂಪಿಯನ್ಶಿಪ್ ಸರಣಿಯ ಕೊನೆಯ ಪಂದ್ಯದಲ್ಲಿ 94 ರನ್ ಗಳಿಸಿದ್ದ ನ್ಯೂಝಿಲ್ಯಾಂಡ್ನ ಬ್ಯಾಟರ್ ಮ್ಯಾಡಿ ಗ್ರೀನ್ಸ್ ರ್ಯಾಂಕಿಂಗ್ನಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದಾರೆ. ಐದು ಸ್ಥಾನಗಳಲ್ಲಿ ಭಡ್ತಿ ಪಡೆದು 17ನೇ ಸ್ಥಾನ ತಲುಪಿದ್ದಾರೆ. ಟಿ-20 ರ್ಯಾಂಕಿಂಗ್ನಲ್ಲಿ ನಾಯಕಿ ಅಮೆಲಿಯಾ ಕೆರ್ರ್ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ 78 ರನ್ ಗಳಿಸಿದ ನಂತರ ಜೀವನಶ್ರೇಷ್ಠ 694 ಅಂಕ ಗಳಿಸಿ ಎಂಟನೇ ಸ್ಥಾನ ಉಳಿಸಿಕೊಂಡಿದ್ದಾರೆ. ಟಿ-20 ಬೌಲಿಂಗ್ ರ್ಯಾಂಕಿಂಗ್ನಲ್ಲಿ ಜೆಸ್ ಕೆರ್ರ್ 11 ಸ್ಥಾನ ಭಡ್ತಿ ಪಡೆದು 23ನೇ ಸ್ಥಾನ ಪಡೆದಿದ್ದಾರೆ.
Kalaburagi | ಒತ್ತಡವಿಲ್ಲದೆ ಖುಷಿಯಿಂದ ಎಸೆಸೆಲ್ಸಿ ಪರೀಕ್ಷೆ ಬರೆಯಿರಿ: ಡಿಸಿ ಫೌಝಿಯಾ ತರನ್ನುಮ್
ಕಲಬುರಗಿ: 2025-26ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಕರೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಬಹಿರಂಗ ಪತ್ರ ಬರೆದು ಶುಭ ಹಾರೈಸಿದ ಅವರು, ಈಗಾಗಲೇ ಪೂರ್ವಸಿದ್ಧತಾ ಪರೀಕ್ಷೆಗಳ ಮೂಲಕ ಅನುಭವ ಪಡೆದಿರುವುದರಿಂದ ಮುಖ್ಯ ಪರೀಕ್ಷೆಯನ್ನು ಹಬ್ಬದಂತೆ ಸಂತೋಷದಿಂದ ಎದುರಿಸಬೇಕು ಎಂದು ಸಲಹೆ ನೀಡಿದ್ದಾರೆ. ಪರೀಕ್ಷಾ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆಪತ್ರಿಕೆ, ಪಠ್ಯಾಧಾರಿತ ಪ್ರಶ್ನೆಕೋಶ, ನೀಲನಕ್ಷೆ ಸೇರಿದಂತೆ ವಿವಿಧ ರೀತಿಯ ಮಾರ್ಗದರ್ಶನ ನೀಡಿದ್ದು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ “40+ ಕ್ರಿಯಾ ಯೋಜನೆ” ಮೂಲಕ ಉತ್ತಮ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಆರೋಗ್ಯ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ಅರ್ಧಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು. ಪ್ರಶ್ನೆಪತ್ರಿಕೆಯನ್ನು ಚೆನ್ನಾಗಿ ಓದಿ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಪಷ್ಟ ಉತ್ತರ ಬರೆಯಬೇಕು ಎಂದು ಸಲಹೆ ನೀಡಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಮುಂದಿನ ವಿಷಯದತ್ತ ಗಮನಹರಿಸಬೇಕು. ತಪ್ಪುಗಳ ಬಗ್ಗೆ ಚಿಂತಿಸದೆ, ಅವು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ತಮ್ಮ ಸಾಮರ್ಥ್ಯವನ್ನು ಅರಿತು ಮುನ್ನಡೆದರೆ ಯಶಸ್ಸು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ 141 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸುಮಾರು 51,744 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
ಪಡುಬಿದ್ರಿ, ಮಾ.17: ಮದ್ಯ ಸೇವನೆ ಚಟ ಹೊಂದಿದ್ದ ತೆಂಕ ಗ್ರಾಮದ ನಿವಾಸಿ ಸುಧಾಕರ(52) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಮಾ.16ರಂದು ಬೆಳಗ್ಗೆ ಮನೆಯ ಕೋಣೆಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ: ಬ್ಯಾಂಕ್ನವರು ಜಾಗದ ಮೇಲೆ ಲೋನ್ ಕೊಡಲು ನಿರಾಕರಿಸಿದ ಕಾರಣಕ್ಕೆ ಮನನೊಂದು ಮಾ.12ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಳ್ಕೂರು ಗ್ರಾಮದ ಭರತ(30) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮಾ.16ರಂದು ಮಧ್ಯಾಹ್ನ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ 1.45ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಮಾ.17: ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೀಲಿ ಪ್ರೋರಿನ್ ಡಿಸಿಲ್ವಾ ಎಂಬವರಿಗೆ ಮಾ.11ರಂದು ಮುಂಬೈಯಿಂದ ವ್ಯಕ್ತಿಯೊಬ್ಬರು ಕರೆ ಮಾಡಿ, ಗ್ಯಾಸ್ಗೆ ಆನ್ಲೈನ್ನಲ್ಲಿ ಹಣ ಪಾವತಿಸಿರುವ ಬಗ್ಗೆ ಅಪ್ಡೇಟ್ ಆಗಿಲ್ಲ ಎಂದು ವಾಟ್ಸಾಪ್ನಲ್ಲಿ ಮಹಾನಗರ ಗ್ಯಾಸ್ ಎಪಿಕೆ ಆ್ಯಪ್ ಕಳುಹಿಸಿದ್ದು ಅದನ್ನು ಡೋನ್ಲೋಡ್ ಮಾಡುವಂತೆ ತಿಳಿಸಿದ್ದರು. ತಾಂತ್ರಿಕ ದೋಷ ಉಂಟಾಗಿರುವುದರಿಂದ ಮತ್ತೆ ಕರೆ ಮಾಡಿ, ಲೀಲಿ ಪ್ರೋರಿನ್ ಡಿಸಿಲ್ವಾ ಅವರ ಗಂಡನ ಬ್ಯಾಂಚ್ ಖಾತೆಗಳಿಂದ 1,45,022ರೂ. ಹಣ ಕಡಿತಗೊಳಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಆರ್ಸಿಬಿ, ಎಸ್ಆರ್ಎಚ್ಗೆ ಹಿನ್ನಡೆ | ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಹೇಝಲ್ವುಡ್, ಕಮಿನ್ಸ್ ಅಲಭ್ಯ
ಹೊಸದಿಲ್ಲಿ, ಮಾ.17: ಪುನಶ್ಚೇತನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡದ ವೇಗಿಗಳಾದ ಜೋಶ್ ಹೇಝಲ್ವುಡ್ ಹಾಗೂ ಪ್ಯಾಟ್ ಕಮಿನ್ಸ್ 2026ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್)ಆರಂಭಿಕ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಕೋಡ್ ಸ್ಪೋರ್ಟ್ಸ್ ವರದಿ ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಹೇಝಲ್ವುಡ್, ನಿರಂತರವಾಗಿ ಕಾಡುತ್ತಿರುವ ಮಂಡಿರಜ್ಜು ಹಾಗೂ ಸ್ನಾಯುರಜ್ಜು ಸಮಸ್ಯೆಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬಲಗೈ ವೇಗದ ಬೌಲರ್ ಕಮಿನ್ಸ್ ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಆಡಲಿರುವ ಕನಿಷ್ಠ ಮೊದಲೆರಡು ಪಂದ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಸುಮಾರು ಐದು ತಿಂಗಳ ಹಿಂದೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ವಿಕ್ಟೋರಿಯ ತಂಡವನ್ನು ನ್ಯೂ ಸೌತ್ ವೇಲ್ಸ್ ಶೀಫೀಲ್ಡ್ ಶೀಲ್ಡ್ ತಂಡ ಸೋಲಿಸಿದ ನಂತರ ಹೇಝಲ್ವುಡ್ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. 2025ರ ಆವೃತ್ತಿಯ ಆಟಗಾರರ ಹರಾಜಿನ ವೇಳೆ ಅರ್ಸಿಬಿ ಫ್ರಾಂಚೈಸಿಯು 12.5 ಕೋ.ರೂ.ಗೆ ಹೇಝಲ್ವುಡ್ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಇದರಿಂದ ಭರಪೂರ ಲಾಭ ಪಡೆದಿತ್ತು. ಹೇಝಲ್ವುಡ್ 12 ಪಂದ್ಯಗಳಲ್ಲಿ 17.54ರ ಸರಾಸರಿಯಲ್ಲಿ, 8.77ರ ಇಕಾನಮಿ ರೇಟ್ನಲ್ಲಿ ಒಟ್ಟು 22 ವಿಕೆಟ್ಗಳನ್ನು ಉರುಳಿಸಿ ಫ್ರಾಂಚೈಸಿಯು ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ವೇಳೆ, ಸನ್ರೈಸರ್ಸ್ ಹೈದರಾಬಾದ್ ನಾಯಕ ಕಮಿನ್ಸ್ ಅವರು ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದು, ಮಾರ್ಚ್ 28ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿರುದ್ಧ ತನ್ನ ತಂಡ ಆಡಲಿರುವ ಉದ್ಘಾಟನಾ ಪಂದ್ಯದಿಂದ ವಂಚಿತರಾಗಲಿದ್ದಾರೆ. ಕಮಿನ್ಸ್ ಪುನರಾಗಮನ ಕುರಿತು ಅನಿಶ್ಚಿತತೆ ಇರುವ ಕಾರಣ ಇಶಾನ್ ಕಿಶನ್ ಪಂದ್ಯಾವಳಿಯ ಆರಂಭಿಕ ಹಂತದಲ್ಲಿ ಎಸ್ಆರ್ಎಚ್ ತಂಡವನ್ನು ನಾಯಕನಾಗಿ ಮುನ್ನಡೆಸುವ ನಿರೀಕ್ಷೆ ಇದೆ. ಕಮಿನ್ಸ್ ಒಟ್ಟು 72 ಐಪಿಎಲ್ ಪಂದ್ಯಗಳನ್ನಾಡಿದ್ದು, 79 ವಿಕೆಟ್ಗಳನ್ನು ಕಬಳಿಸಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಎಸ್ಆರ್ಎಚ್ ಪರ 30 ಪಂದ್ಯಗಳನ್ನು ಆಡಿ ಒಟ್ಟು 34 ವಿಕೆಟ್ಗಳನ್ನು ಉರುಳಿಸಿದ್ದರು.
ಶ್ರೀಲಕ್ಷ್ಮೀ ಎಕ್ಸ್ಪ್ರೆಸ್ ಬಸ್ಗಳ ಮಾಲಕ ವಿಠಲ ಶೆಟ್ಟಿ ನಿಧನ
ಕುಂದಾಪುರ, ಮಾ.17: ಶ್ರೀಲಕ್ಷ್ಮೀ ಎಕ್ಸ್ಪ್ರೆಸ್ ಬಸ್ಗಳ ಮಾಲಕ ವಕ್ವಾಡಿ ದ್ಯಾಗಳಮನೆ ಮೂಲದ ಪ್ರಸ್ತುತ ಮಂದರ್ತಿ ಹೆಗ್ಗುಂಜೆ ನಿಡೂರು ನಿವಾಸಿ ವಿಠಲ ಶೆಟ್ಟಿ(96) ಎಂಬವರು ಮಂದರ್ತಿಯ ನಿವಾಸದಲ್ಲಿ ನಿಧನರಾದರು. ಗ್ರಾಮೀಣ ಭಾಗಕ್ಕೆ ಸಾರಿಗೆ ಸೌಕರ್ಯ ಸಿಗಬೇಕೆಂಬ ಉದ್ದೇಶದಿಂದ ಕಳೆದ 35 ವರ್ಷಗಳ ಹಿಂದೆ ಶ್ರೀಲಕ್ಷ್ಮೀ ಎಂಬ ಹೆಸರಿನ ಸಾರಿಗೆ ಉದ್ಯಮ ಸ್ಥಾಪಿಸಿದ ಇವರ ಬಳಿ ಪ್ರಸ್ತುತ 32 ಬಸ್ಸುಗಳಿವೆ. ಕುಂದಾಪುರ, ಹೆಬ್ರಿ, ಉಡುಪಿ, ಗೋಳಿಯಂಗಡಿ, ಮಂದರ್ತಿ, ಕೊಕ್ಕರ್ಣೆ, ಪೇತ್ರಿ ಮೊದಲಾದ ಭಾಗದಲ್ಲಿ ಲಕ್ಷ್ಮೀ ಎಕ್ಸ್ಪ್ರೆಸ್ ಸಂಚರಿಸುತ್ತದೆ. ಧಾರ್ಮಿಕವಾಗಿ ಸಕ್ರೀಯರಾಗಿದ್ದ ಅವರು ದಾನಿಯಾಗಿದ್ದರು. ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಆರು ಮಂದಿ ಪುತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಹಲವು ವರ್ಷಗಳಿಂದ ಕೆಲಸ ನೀಡಿದ ಉದ್ಯೋಗದಾತರ ಮರಣ ವಾರ್ತೆ ತಿಳಿಯುತ್ತಿದ್ದಂತೆಯೇ ಚಾಲಕರು-ನಿರ್ವಾಹಕರು ಬಸ್ಸುಗಳನ್ನು ಮಂಗಳವಾರ ಸಂಚರಿಸದೇ ವಿಠಲ ಶೆಟ್ಟಿಯವರ ಅಂತಿಮ ದರ್ಶನಕ್ಕಾಗಿ ದೌಡಾ ಯಿಸಿ ಬಂದರು. ಹೀಗಾಗಿ ಕೆಲ ಗ್ರಾಮೀಣ ಪ್ರದೇಶದಲ್ಲಿ ನಿತ್ಯದ ಬಸ್ ಬಾರದ್ದರಿಂದ ಸಮಸ್ಯೆಗಳಾದ ಬಗ್ಗೆ ವರದಿಯಾಗಿದೆ. ಹಲವು ವರ್ಷ ಹಾಗೂ ಬಸ್ ಸಂಸ್ಥೆ ಪ್ರಾರಂಭದ ಸಮಯಗಳಿಂದಿದ್ದ ನೌಕರರು ಅಂತಿಮ ದರ್ಶನಕ್ಕೆ ಬಂದ ಕಾರಣ ಸಂಚಾರ ಸೌಲಭ್ಯ ವ್ಯತ್ಯಯವಾಗಿದೆ. ಮಾ.18 ಬುಧವಾರ ಬಸ್ ಸಂಚಾರ ಎಂದಿನಂತೆ ಆರಂಭವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
Kalaburagi | ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ: ಡಾ.ಶರಣಪ್ಪ ಎಸ್.ಡಿ.
ಕಾರ್ಯನಿರತ ಪತ್ರಕರ್ತರಿಗೆ ಹೆಲ್ಮೆಟ್ ವಿತರಣೆ
ಉತ್ತರ ಪ್ರದೇಶ | ಪಂಚಾಯತಿ ಕಟ್ಟೆಯಲ್ಲಿ ಜೋಡಿ ಹತ್ಯೆ : ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಮೃತ್ಯು
ಬರೇಲಿ,ಮಾ.17: ಕೌಟುಂಬಿಕ ವಿವಾದವನ್ನು ಬಗೆಹರಿಸಲು ಸೋಮವಾರ ಕರೆಯಲಾಗಿದ್ದ ಪಂಚಾಯಿತಿ ಸಭೆಯಲ್ಲಿ ತನ್ನ ಅತ್ತೆ ಮತ್ತು ಬಾಮೈದನನ್ನು ಹತ್ಯೆ ಮಾಡಿ ಪತ್ನಿಯನ್ನು ಗಾಯಗೊಳಿಸಿದ್ದ ಅಫ್ಝರ್ ಖಾನ್ (38) ಎಂಬಾತ ಪೋಲಿಸ್ ಎನ್ಕೌಂಟರ್ನಲ್ಲಿ ಮೃತಪಟ್ಟ ಘಟನೆ ಮಂಗಳವಾರ ಬೆಳಗಿನ ಜಾವ ಬರೇಲಿಯ ಇಜ್ಜತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ‘ನಾವು ಆರೋಪಿಗಾಗಿ ಹುಡುಕುತ್ತಿದ್ದಾಗ ಆತ ಗ್ರಾಮದ ಹೊರವಲಯದಲ್ಲಿ ಅಡಗಿಕೊಂಡಿದ್ದಾನೆ ಮತ್ತು ಶಸ್ತ್ರಸಜ್ಜಿತನಾಗಿದ್ದಾನೆ ಎಂಬ ಮಾಹಿತಿ ಲಭಿಸಿತ್ತು. ಆತ ತನ್ನ ಪತ್ನಿಯನ್ನು ಕೊಲ್ಲಲು ಹೊಂಚು ಹಾಕುತ್ತಿದ್ದಾನೆ ಎಂದೂ ಬಾತ್ಮಿದಾರ ತಿಳಿಸಿದ್ದ. ಆತನನ್ನು ಬಂಧಿಸಲು ಸ್ಥಳಕ್ಕೆ ಧಾವಿಸಿದ್ದ ಪೊಲೀಸ್ ತಂಡದ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದ್ದ. ಆತ್ಮರಕ್ಷಣೆಗಾಗಿ ಪೊಲಿಸರು ಹಾರಿಸಿದ ಗುಂಡಿಗೆ ಖಾನ್ ಬಲಿಯಾಗಿದ್ದಾನೆ’ ಎಂದು ತಿಳಿಸಿದ ಬರೇಲಿ ಎಸ್ಎಸ್ಪಿ ಅನುರಾಗ ಆರ್ಯ, ಈ ವೇಳೆ ಇಬ್ಬರು ಪೋಲಿಸ್ ಸಿಬ್ಬಂದಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಕೌಟುಂಬಿಕ ವಿವಾದವನ್ನು ಬಗೆಹರಿಸಲು ಸೋಮವಾರ ಮಧ್ಯಾಹ್ನ ರಾಹಪುರ ಚೌಧರಿ ಬಡಾವಣೆಯಲ್ಲಿ ಪಂಚಾಯತಿಯನ್ನು ಕರೆಯಲಾಗಿತ್ತು. ಈ ವೇಳೆ ಖಾನ್ ಅಲಿಯಾಸ್ ಭುರಾ ತನ್ನ ಪತ್ನಿ ಸೈಮಾ ಖಾನ್ (30) ಮೇಲೆ ಚೂರಿಯಿಂದ ದಾಳಿ ನಡೆಸಿದ್ದ. ಪತಿಯೊಂದಿಗೆ ಆಗಾಗ್ಗೆ ಜಗಳದಿಂದ ಬೇಸತ್ತಿದ್ದ ಸೈಮಾ ಎರಡು ದಿನಗಳಿಂದ ತವರು ಮನೆಯಲ್ಲಿ ವಾಸವಿದ್ದಳು. ಮಧ್ಯಸ್ಥಿಕೆಗಾಗಿ ಕುಟುಂಬದ ಸದಸ್ಯರು ಮತ್ತು ಸ್ಥಳೀಯರು ಪಂಚಾಯತಿ ಕಟ್ಟೆಯಲ್ಲಿ ಸೇರಿದ್ದರು. ಈ ವೇಳೆ ಸೈಮಾಳ ಸೋದರ ಆದಿಲ್ (20 ) ಚಪ್ಪಲಿಯಿಂದ ಖಾನ್ನನ್ನು ಹೊಡೆದಿದ್ದ. ಕೋಪದ ಭರದಲ್ಲಿ ಖಾನ್ ಅತ್ತೆ ಆಸ್ಮಾ (54) ಮತ್ತು ಆದಿಲ್ ಅವರನ್ನು ಚೂರಿಯಿಂದ ಇರಿದಿದ್ದು,ತೀವ್ರ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧ್ಯಪ್ರವೇಶಿಸಿದ್ದ ಸೈಮಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವೇಳೆ ದಂಪತಿಯ ಮಕ್ಕಳಾದ ಫೈಝ್ (8) ಮತ್ತು ಆಯೇಶಾ (5) ಉಪಸ್ಥಿತರಿದ್ದು,ತೀವ್ರ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಖಾನ್ ಈ ಹಿಂದೆ ತನ್ನ ಚಿಕ್ಕಪ್ಪನ ಕೊಲೆಗಾಗಿ ಶಿಕ್ಷೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಏಶ್ಯಾ ಸಂಘರ್ಷ | ಗುಜರಾತ್ ಬಂದರಿಗೆ ಆಗಮಿಸಿದ ‘ನಂದಾದೇವಿ’ ಎಲ್ಪಿಜಿ ಟ್ಯಾಂಕರ್
ಅಹ್ಮದಾಬಾದ್,ಮಾ.17: 46,500 ಮೆ.ಟನ್ ಅನಿಲವನ್ನು ಹೊತ್ತ ಭಾರತದ ಎರಡನೇ ಎಲ್ಪಿಜಿ ಟ್ಯಾಂಕರ್ ‘ನಂದಾದೇವಿ’ ಪಶ್ಚಿಮ ಏಶ್ಯಾ ಸಂಘರ್ಷದ ನಡುವೆಯೇ ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಮಂಗಳವಾರ ಗುಜರಾತಿನ ದೇವಭೂಮಿ ದ್ವಾರಕಾ ಜಿಲ್ಲೆಯ ವಾಡಿನಾರ್ ಬಂದರಿಗೆ ಆಗಮಿಸಿದೆ. ಭಾರತದ ಮೊದಲ ಎಲ್ಪಿಜಿ ಟ್ಯಾಂಕರ್ ‘ಶಿವಾಲಿಕ್’ ಸೋಮವಾರ ಗುಜರಾತಿನ ಮುಂದ್ರಾ ಬಂದರನ್ನು ತಲುಪಿತ್ತು. ನಂದಾದೇವಿ ತಂದಿರುವ 46,500 ಮೆ.ಟನ್ ಎಲ್ಪಿಜಿಯನ್ನು ಬಿಡಬ್ಲ್ಯು ಬಿರ್ಚ್ ಹಡಗಿಗೆ ವರ್ಗಾಯಿಸಲಾಗುತ್ತಿದ್ದು,ಅದು ಅನಿಲವನ್ನು ಪೂರ್ವ ಕರಾವಳಿಯ ಎನ್ನೋರ್ (ತಮಿಳುನಾಡು) ಮತ್ತು ಹಾಲ್ದಿಯಾ (ಪ.ಬಂಗಾಳ) ಬಂದರುಗಳಿಗೆ ಸಾಗಿಸಲಿದೆ ಎಂದು ತಿಳಿಸಿದ ದೀನದಯಾಳ ಬಂದರು ಪ್ರಾಧಿಕಾರದ ಅಧ್ಯಕ್ಷ ಸುಶೀಲಕುಮಾರ್ ಸಿಂಗ್ ಅವರು, ಪ್ರತಿ ಗಂಟೆಗೆ 1,000 ಟನ್ ಅನಿಲವನ್ನು ವರ್ಗಾಯಿಸಲಾಗುತ್ತಿದ್ದು, ಎರಡು ದಿ
ಕೃಷಿಯಲ್ಲಿ ಗುಣಮಟ್ಟದ ಉತ್ಪನ್ನಗಳಿಗೆ ಯಾವತ್ತೂ ಬೇಡಿಕೆ ಇದೆ: ಡಾ. ಉದಯಕುಮಾರ್ ಶೆಟ್ಟಿ
ಉಡುಪಿ ಜಿಲ್ಲಾ, ತಾಲೂಕು ಮಟ್ಟದ ಕೃಷಿ ಪ್ರಶಸ್ತಿ ವಿತರಣೆ
ಹುಲಸೂರ್ | ಪಶುವೈದ್ಯರ ನಿರ್ಲಕ್ಷ್ಯ ಆರೋಪ: ಹುಚ್ಚನಾಯಿ ಕಡಿತಕ್ಕೆ ಎತ್ತು ಬಲಿ
ಹುಲಸೂರ್: ಹುಚ್ಚನಾಯಿ ಕಡಿತಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಎತ್ತು ಸಾವನ್ನಪ್ಪಿದ ಘಟನೆ ಮಂಗಳವಾರ ಪಟ್ಟಣದಲ್ಲಿ ಸಂಭವಿಸಿದ್ದು, ಪಶುವೈದ್ಯರ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ರೈತ ಕಂಟೆಪ್ಪ ಡೋಣಗಾಂವಕರ್ ಆರೋಪಿಸಿದ್ದಾರೆ. ಫೆಬ್ರವರಿ 12ರಂದು ತಮ್ಮ ಜಮೀನಿನ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತಿಗೆ ಹುಚ್ಚನಾಯಿ ಕಚ್ಚಿ ಗಾಯಗೊಳಿಸಿತ್ತು. ತಕ್ಷಣವೇ ಪಶು ಆಸ್ಪತ್ರೆಗೆ ಮಾಹಿತಿ ನೀಡಿದರೂ, ಸಿಬ್ಬಂದಿ ತಡವಾಗಿ ಸ್ಪಂದಿಸಿದ್ದಾರೆ ಎಂದು ಅವರು ದೂರಿದ್ದಾರೆ. ಫೆಬ್ರವರಿ 14ರಂದು ರೆಬಿಸ್ ಲಸಿಕೆ ನೀಡಲಾಗಿದ್ದು, ಅದು ಸರಿಯಾದ ಶೀತಲೀಕರಣದಲ್ಲಿ ಇರಲಿಲ್ಲದ ಕಾರಣ ಪರಿಣಾಮಕಾರಿಯಾಗಲಿಲ್ಲ ಎಂದು ಆರೋಪಿಸಲಾಗಿದೆ. ನಂತರ ಮಾ. 5ರವರೆಗೆ ಚಿಕಿತ್ಸೆ ನೀಡಿದರೂ ಎತ್ತಿನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಮಾ. 10ರಂದು ಎತ್ತು ಆಹಾರ ಸೇವನೆ ನಿಲ್ಲಿಸಿದ ಹಿನ್ನೆಲೆಯಲ್ಲಿ ಅಂಬುಲೆನ್ಸ್ ಕರೆಸಿದರೂ ಅದು ತಡವಾಗಿ ಬಂದಿದ್ದು, ವೈದ್ಯರಿಲ್ಲದೆ ಸಿಬ್ಬಂದಿಯೇ ಚಿಕಿತ್ಸೆ ನೀಡಿದರು ಎಂದು ರೈತ ಆರೋಪಿಸಿದ್ದಾರೆ. ನಂತರ ಕಮಠಾಣ ಜಿಲ್ಲಾ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅಲ್ಲಿಯೂ ವೈದ್ಯರು ಪರಿಶೀಲನೆ ನಡೆಸದೇ ಸಹಾಯಕ ಸಿಬ್ಬಂದಿಯೇ ಚಿಕಿತ್ಸೆ ನೀಡಿದ್ದು, ರಕ್ತ ಪರೀಕ್ಷೆಯ ವರದಿಯೂ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ನಿರ್ಲಕ್ಷ್ಯಗಳಿಂದ ಸುಮಾರು 1 ಲಕ್ಷ ರೂ. ಮೌಲ್ಯದ ಎತ್ತು ಮೃತಪಟ್ಟಿದ್ದು, ಸಂಬಂಧಪಟ್ಟ ಪಶುವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತ ಕಂಟೆಪ್ಪ ಆಗ್ರಹಿಸಿದ್ದಾರೆ.
E-Bike: ಗ್ರಾಮೀಣ ಆರೋಗ್ಯ ಸೇವೆಗೆ ಇ-ಬೈಕ್ ವೇಗ: ಮನೆ ಬಾಗಿಲಿಗೆ ವೈದ್ಯಕೀಯ ನೆರವು, ಏನಿದು ಯೋಜನೆ
ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಈಚೆಗೆ ಗೃಹ ಆರೋಗ್ಯ ಯೋಜನೆಯನ್ನು ಜಾರಿ ಮಾಡಿತ್ತು. ಇದೀಗ ಹಳ್ಳಿಗಳ ಆರೋಗ್ಯ ಸೇವೆಯಲ್ಲಿ ಹೊಸ ಕ್ರಾಂತಿ ಮೂಡಿಸುವ ನಿಟ್ಟಿನಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಾಗಿ 69 ಇ-ಬೈಕ್ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಿತರಿಸಿದ್ದಾರೆ. ಮಂಗಳವಾರ ಆರೋಗ್ಯಸೌಧದ ಆವರಣದಲ್ಲಿ ಯುನೈಟೆಡ್ ವೇ ಆಫ್ ಬೆಂಗಳೂರು (UWBe)
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ: ಒಡಿಶಾದ ಮೂವರು ಶಾಸಕರು ಕಾಂಗ್ರೆಸ್ನಿಂದ ಅಮಾನತು
ಭುವನೇಶ್ವರ,ಮಾ.17: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾದ ತನ್ನ ಮೂವರು ಶಾಸಕರನ್ನು ಕಾಂಗ್ರೆಸ್ ಮಂಗಳವಾರ ಅಮಾನತುಗೊಳಿಸಿದೆ. ಎ.2ರಂದು ತೆರವಾಗಲಿರುವ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗಾಗಿ ಸೋಮವಾರ ಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿಗಳಾದ ಮನಮೋಹನ ಸಮಲ್ ಮತ್ತು ಸುಜೀತ್ ಕುಮಾರ್, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ದಿಲೀಪ್ ರೇ ಹಾಗೂ ಪ್ರತಿಪಕ್ಷ ಬಿಜೆಡಿಯ ಸಂತೃಪ್ತ ಮಿಶ್ರಾ ಅವರು ಆಯ್ಕೆಯಾಗಿದ್ದಾರೆ. ಮತದಾನದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಭಕ್ತಚರಣ ದಾಸ್ ಅವರು, ಪಕ್ಷದ ಮೂವರು ಶಾಸಕರಾದ ರಮೇಶ್ ಜೇನಾ, ದಶರಥಿ ಗೋಮಾಂಗೊ ಮತ್ತು ಸೋಫಿಯಾ ಫಿರ್ದೌಸ್ ಅವರು ಆಡಳಿತಾರೂಢ ಬಿಜೆಪಿ ಪರವಾಗಿ ಮತಗಳನ್ನು ಚಲಾಯಿಸಿದ್ದಾರೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಈ ಶಾಸಕರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಜೇನಾ, ಗೋಮಾಂಗೊ ಮತ್ತು ಫಿರ್ದೌಸ್ ಮಂಗಳವಾರ ಕಾಂಗ್ರೆಸ್ನಿಂದ ಅಮಾನತುಗೊಂಡಿದ್ದಾರೆ. ಇದಕ್ಕೂ ಮುನ್ನ ಬಿಜೆಡಿಯ ಉಪ ಸಚೇತಕ ಪ್ರತಾಪ ಕೇಸರಿ ದೇವ್ ಅವರೂ, ತನ್ನ ಪಕ್ಷದ ಎಂಟು ಶಾಸಕರು ರೇ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿಸಿದ್ದರು. ಬಿಜೆಪಿ ‘ಕುದುರೆ ವ್ಯಾಪಾರ’ದಲ್ಲಿ ತೊಡಗಿದೆ ಎಂದು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಆರೋಪಿಸಿದ್ದರು. 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗಾಗಿ ಸೋಮವಾರ ಚುನಾವಣೆ ನಿಗದಿಯಾಗಿದ್ದು, 26 ಅಭ್ಯರ್ಥಿಗಳು ಅವಿರೋಧ ಗೆಲುವು ಸಾಧಿಸಿದ್ದರು. ಬಿಹಾರದ ಐದು, ಒಡಿಶಾದ ನಾಲ್ಕು ಮತ್ತು ಹರ್ಯಾಣದ ಎರಡು ಸೇರಿದಂತೆ ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಡಿಶಾದ ಮೂರು ಸ್ಥಾನಗಳ ಜೊತೆಗೆ ಬಿಹಾರದ ಎಲ್ಲ ಐದೂ ಸ್ಥಾನಗಳನ್ನು ಎನ್ಡಿಎ ಗೆದ್ದಿದೆ. ಹರ್ಯಾಣದ ಒಂದು ಸ್ಥಾನ ಎನ್ಡಿಎ ಪಾಲಾಗಿದ್ದರೆ,ಇನ್ನೊಂದು ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ.
ಹುಮನಾಬಾದ್ | ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರಿಂದ ಸೌಹಾರ್ದ ಇಫ್ತಾರ್ ಕೂಟ
ಹುಮನಾಬಾದ್ : ಪಟ್ಟಣದಲ್ಲಿ ಕ್ಷೇತ್ರದ ಮುಸಲ್ಮಾನ ಬಾಂಧವರಿಗೆ ಪ್ರತಿವರ್ಷದಂತೆ ಈ ವರ್ಷವು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರಿಂದ ಬೃಹತ್ ಮಟ್ಟದಲ್ಲಿ ಮಂಗಳವಾರ ಸಾಯಂಕಾಲ ಸೌಹಾರ್ದದ ಇಫ್ತಾರ್ ಕೂಟ ಹಮ್ಮಿಕೊಳ್ಳಲಾಗಿತ್ತು. ಇಫ್ತಾರ್ ಕೂಟದಲ್ಲಿ ಸರ್ವಧರ್ಮ ಬಾಂಧವರು ಭಾಗವಹಿಸಿ ಸಮಾನತೆಯ ಸಂದೇಶ ನೀಡಿದರು. ಹುಮನಾಬಾದ ಕ್ಷೇತ್ರದ ವಿವಿಧ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಇಫ್ತಾರ್ ಕೂಟದಲ್ಲಿ ಬಂದ ಎಲ್ಲಾ ಮುಸಲ್ಮಾನ್ ಬಾಂಧವರಿಗೆ ಇಫ್ತಾರ್ ಮುಗಿಸಿ ನಮಾಜ್ ಮಾಡಲು ಕೂಡ ಅವಕಾಶ ಮಾಡಿಕೊಡಲಾಯಿತು. ಅಲ್ಲದೇ ಎಲ್ಲರಿಗೂ ಊಟದ ವ್ಯವಸ್ಥೆ ಸಹ ಮಾಡಿಸಲಾಯಿತು. ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಅಭಿಷೇಕ ಆರ್. ಪಾಟೀಲ್ ಅವರು ಎಲ್ಲರಿಗೂ ಊಟ ಬಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ವೀರಣ್ಣ ಪಾಟೀಲ್, ಅಬ್ದುಲ್ ಮನ್ನಾನ್ ಸೇಠ್, ಅಪ್ಸರ್ ಮಿಯ್ಯಾ , ಉಮೇಶ್ ಜಮಗಿ , ಓಂಕಾರ್ ತುಂಬಾ ಹಾಗೂ ಮುಕ್ರಮ ಝಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೀದರ್ನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ
ಬೀದರ್ : ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ಸಾಯಂಕಾಲ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಸಾಯಂಕಾಲದ ಸಮಯದಲ್ಲಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದ್ದು, ಮಂಗಳವಾರ ಸಾಯಂಕಾಲ ಜೋರಾದ ಬಿರುಗಾಳಿ ಬಿಸಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ನಗರದ ಬ್ರಿಮ್ಸ್ ಆಸ್ಪತ್ರೆ, ಶಿವನಗರ್, ನೌಬಾದ್ ಸೇರಿದಂತೆ ಭಾಲ್ಕಿ, ಔರಾದ್, ಹುಮನಾಬಾದ್ ಹಾಗೂ ಬಸವಕಲ್ಯಾಣದ ತಾಲೂಕಿನ ಹಲವೆಡೆ ಮಳೆಯಾಗಿದೆ. ಮೂರು ದಿನಗಳಿಂದ ಮಳೆ ಬಿಳುತಿದ್ದು, ಸಾಯಂಕಾಲದ ಸಮಯದಲ್ಲಿ ಮಳೆಗಾಲದ ಹಾಗೆ ವಾತಾವರಣ ನಿರ್ಮಾಣವಾಗುತ್ತಿದೆ.
ಹುಲಸೂರ್ | ಮಾಹಿತಿ ಕೊರತೆಯಿಂದ ಜೆಸ್ಕಾಂ ಸಭೆ ವಿಫಲ
ಹುಲಸೂರ್: ಗ್ರಾಹಕರ ವಿದ್ಯುತ್ ಸಂಪರ್ಕ ಹಾಗೂ ಕುಂದು ಕೊರತೆ ನಿವಾರಣೆ ಕುರಿತು ಆಯೋಜಿಸಿದ್ದ ಜೆಸ್ಕಾಂ ಸಭೆಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಕಡಿಮೆಯಾಗಿದ್ದು, ಸಭೆ ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ವಿಫಲವಾಗಿದೆ. ಪಟ್ಟಣದಲ್ಲಿ ಜೆಸ್ಕಾಂ ವತಿಯಿಂದ ಮಂಗಳವಾರ ಈ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಸಭೆಗೆ ಸಾರ್ವಜನಿಕರು ಬಹುತೇಕ ಆಗಮಿಸದ ಕಾರಣ ಕಾರ್ಯಕ್ರಮ ನಡೆಯಲಿಲ್ಲ ಎಂದು ತಿಳಿದು ಬಂದಿದೆ. ಗ್ರಾಹಕರ ಸಮಸ್ಯೆಗಳು, ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಸಭೆ ಕರೆಯಲಾಗಿದ್ದರೂ, ಹಾಜರಾತಿ ಕೊರತೆಯಿಂದ ಅದರ ಉದ್ದೇಶ ಈಡೇರಲಿಲ್ಲ. ಸಭೆಯ ಕುರಿತು ಮುಂಚಿತವಾಗಿ ಸರಿಯಾದ ರೀತಿಯಲ್ಲಿ ಮಾಹಿತಿ ಹರಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸಭೆಗಳ ಬಗ್ಗೆ ಸಮಯೋಚಿತವಾಗಿ ಹಾಗೂ ವ್ಯಾಪಕವಾಗಿ ಮಾಹಿತಿ ನೀಡುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Kerala Story-2 ಬಿಡುಗಡೆ | ಮಹಾರಾಷ್ಟ್ರದಲ್ಲಿ ಚಿತ್ರಮಂದಿರದಲ್ಲಿ ಮುಸ್ಲಿಮರನ್ನು ಬಹಿಷ್ಕರಿಸುವ ಶಪಥ; ವೀಡಿಯೋ ವೈರಲ್
ವಸಾಯಿ (ಮಹಾರಾಷ್ಟ್ರ): ವಿವಾದಾತ್ಮಕ ಕೇರಳ ಸ್ಟೋರಿ-2 ಮತ್ತೊಮ್ಮೆ ಸದ್ದು ಮಾಡಿದೆ. ಆದರೆ, ಈ ಬಾರಿ ಬೇರೆಯದೇ ಕಾರಣಕ್ಕೆ ಸುದ್ದಿಯಾಗಿದೆ. ಕೇರಳ ಸ್ಟೋರಿ-2 ಚಲನಚಿತ್ರ ಬಿಡುಗಡೆಯಾಗಿರುವ ಚಿತ್ರಮಂದಿರವೊಂದರ ಮುಂದೆ ಜನಜಂಗುಳಿಯೊಂದು ಮುಸ್ಲಿಮರನ್ನು ಬಹಿಷ್ಕರಿಸುವ ಶಪಥ ಮಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋ ತುಣುಕು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯದ್ದು ಎಂದು ಹೇಳಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಕೇರಳ ಸ್ಟೋರಿ-2 ಚಲನಚಿತ್ರ ವೀಕ್ಷಿಸಿದ ಬಳಿಕ, ಮಾರ್ಚ್ 10ರಂದು ವಸಾಯಿಯಲ್ಲಿ ಈ ಘಟನೆ ನಡೆದಿದೆ ಎಂದು ಕಾಂಗ್ರೆಸ್ ಸಂಸದರೊಬ್ಬರು ಆರೋಪಿಸಿದ್ದಾರೆ. ಈ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು ಎಂದು ತಿಳಿದುಬಂದಿದ್ದು, ಚಿತ್ರ ಮುಗಿದ ಬಳಿಕ ಪ್ರೇಕ್ಷಕರು ಮುಸ್ಲಿಮರಿಗೆ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರ ಹಾಕುವ ಸಾಮೂಹಿಕ ಶಪಥ ಕೈಗೊಳ್ಳುತ್ತಿರುವುದು ಕಂಡು ಬಂದಿದೆ. ಈ ವೀಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ರಾಜ್ಯಸಭಾ ಸಂಸದ ಸೈಯದ್ ನಾಸೀರ್ ಹುಸೈನ್, “ಪಾಲ್ಘರ್ ನ ವಸಾಯಿಯಲ್ಲಿ ಕೇರಳ ಸ್ಟೋರಿ-2 ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿದ್ದು, ಚಿತ್ರವನ್ನು ವೀಕ್ಷಿಸಿದ ಬಳಿಕ ಪ್ರೇಕ್ಷಕರು ಮುಸ್ಲಿಮರಿಗೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕುವ ಸಾಮೂಹಿಕ ಶಪಥ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ” ಎಂದು ಹೇಳಿದ್ದಾರೆ. “ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಿರಂತರವಾಗಿ ಅಪಪ್ರಚಾರದ ನಿರೂಪಣೆಗಳಿಗೆ ಪ್ರೋತ್ಸಾಹ ದೊರೆಯುತ್ತಿದ್ದು, ಇವು ಮುಸ್ಲಿಮರನ್ನು ತೀವ್ರವಾಗಿ ಗುರಿಯಾಗಿಸಿಕೊಂಡಿವೆ ಹಾಗೂ ಕೋಮು ಧ್ರುವೀಕರಣ ಮಾಡುತ್ತಿವೆ. ಒಂದು ಸಮುದಾಯಕ್ಕೆ ಕಳಂಕ ತರಲು ಚಲನಚಿತ್ರಗಳನ್ನು ರಾಜಕೀಯ ಸಾಧನಗಳನ್ನಾಗಿ ಬಳಸಿದರೆ, ಅದರಿಂದ ಸಂಘಟಿತ ತಾರತಮ್ಯದ ಪೂರ್ವಗ್ರಹಕ್ಕೆ ತಿರುಗುತ್ತದೆ ಹಾಗೂ ಮುಸ್ಲಿಂ ವಿರೋಧಿ ಭಾವನೆಗಳನ್ನು ಮತ್ತಷ್ಟು ಮುಕ್ತವಾಗಿಸುತ್ತದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. “ಭಾರತದ ಪ್ರಜಾತಾಂತ್ರಿಕ ಮೌಲ್ಯಗಳು ದೃಢವಾಗಿ ಜಾತ್ಯತೀತತೆ, ಸಮಾನತೆ ಮತ್ತು ಭ್ರಾತೃತ್ವದ ಮೇಲೆ ನಿಂತಿವೆ. ಯಾವುದಾದರೂ ಸಮುದಾಯವನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು ಎಂದು ಕರೆ ನೀಡುವುದು ಸಂವಿಧಾನದ ಮೂಲ ಸ್ಫೂರ್ತಿಗೆ ಧಕ್ಕೆಯನ್ನುಂಟು ಮಾಡುತ್ತದೆ ಹಾಗೂ ಗಣರಾಜ್ಯದ ಬಹುತ್ವ ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣವನ್ನು ಸಂರಕ್ಷಿಸುವುದನ್ನು ದೃಢವಾಗಿ ನಿರಾಕರಿಸುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ @Nehr_who ಎಂಬ ಮತ್ತೊಬ್ಬ ಬಳಕೆದಾರರು, “ಕೇರಳ ಸ್ಟೋರಿ-2 ಚಿತ್ರವನ್ನು ವೀಕ್ಷಿಸಿದ ಬಳಿಕ ವಸಾಯಿಯಲ್ಲಿ ಹಿಂದೂಗಳು ಮುಸ್ಲಿಮರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಬಹಿಷ್ಕರಿಸುವ ಶಪಥ ಕೈಗೊಂಡಿದ್ದಾರೆ. ಈ ಚಿತ್ರ ಸಾಧಿಸಿರುವ ಒಂದೇ ಉದ್ದೇಶ ಇದು ಮಾತ್ರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. In Vasai, Palghar, after a free screening of the film The Kerala Story on March 10, participants reportedly took a collective oath calling for the economic and social boycott of Muslims. The continued encouragement of propaganda-driven narratives under the BJP government has… pic.twitter.com/FGDJ2ARHKJ — Dr Syed Naseer Hussain, M P (@NasirHussainINC) March 16, 2026 “ಇಂಧನ ಮತ್ತು ತೈಲ ಮುಸ್ಲಿಂ ದೇಶಗಳಿಂದ ಬರುತ್ತವೆ. ಗಣಿತ ಕೂಡ ಮುಸ್ಲಿಮರ ಕೊಡುಗೆ. ಹಾಗಾದರೆ, ಅವರು ಪೆಟ್ರೋಲ್, ಡೀಸೆಲ್ ಹಾಗೂ ಗಣಿತವನ್ನೀಗ ಬಹಿಷ್ಕರಿಸುತ್ತಾರೆಯೇ?” ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮೀರಾ-ಭಯಾಂಡರ್ ವಸಾಯಿ-ವಿರಾರ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಈ ವೀಡಿಯೋ ತುಣುಕಿನ ನೈಜತೆಯನ್ನು ಇನ್ನೂ ಪರಿಶೀಲಿಸಬೇಕಿದೆ” ಎಂದು ಮಂಗಳವಾರ ತಿಳಿಸಿದ್ದಾರೆ.
ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಪ್ರಕರಣ: ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಅಮಾನತು
ಮಂಗಳೂರು, ಮಾ.17: ಮೂಡುಬಿದಿರೆಯ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ . ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಆಡಿಯೋ ಮತ್ತು ವಿಡಿಯೋಗಳು ದೃಢಪಡಿಸುವುದರಿಂದ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಇನ್ ಸ್ಪೆಕ್ಟರ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಉತ್ತರ ಉಪವಿಭಾಗ (ಪಣಂಬೂರು)ದ ಎಸಿಪಿಗೆ ಸೂಚಿಸಿದ್ದರು. ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಅವರು ನೀಡಿರುವ ತನಿಖಾ ವರದಿಯನ್ನು ಆಧರಿಸಿ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ. ವಿರುದ್ಧ ತನ್ನ ಸಹೋದರಿ ಸುಮತಿ ನಾಯ್ಕ್ ಮಾಡಿದ ಆರೋಪಗಳೆಲ್ಲ ಸುಳ್ಳು ಎಂದು ಮೂಡುಬಿದಿರೆ ನಿವಾಸಿ ಪ್ರಫುಲ್ಲಾ ನಾಯ್ಕ್ ಎಂಬವರು ದೂರು ನೀಡಿದ್ದಾರೆ ಮತ್ತು ಮಾಧ್ಯಮ ಹೇಳಿಕೆಯನ್ನು ನೀಡಿರುವುದಾಗಿ ಎಸಿಪಿ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ. ಸುಮತಿ ಮತ್ತು ಪ್ರಫುಲ್ಲಾ ನಾಯ್ಕ್ ನಡುವೆ ಕೌಟುಂಬಿಕ ಕಲಹಗಳಿದ್ದು, ಸುಮತಿ ಮತ್ತು ಅವರ ಸಹೋದರಿಯ ವಿರುದ್ಧ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇನ್ಸ್ಪೆಕ್ಟರ್ ವಿರುದ್ಧ ದಾಖಲಾದ ಪ್ರಕರಣವೂ ಸೇರಿದಂತೆ ತನಿಖೆಯಲ್ಲಿರುವ ಒಂದು ಪ್ರಕರಣವನ್ನು ಹೊರತುಪಡಿಸಿ, ಉಳಿದೆಲ್ಲವಕ್ಕೂ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ. ಇನ್ಸ್ಪೆಕ್ಟರ್ ವಿರುದ್ಧ ಮಾಧ್ಯಮ ಹೇಳಿಕೆ ನೀಡಿದ ಎರಡನೇ ಮಹಿಳೆ ಅವಿತಾ ಮಿನೇಜಸ್ ಇವರ ಪತಿಯ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ (ಒಂದರಲ್ಲಿ ಖುಲಾಸೆಗೊಂಡಿದ್ದಾರೆ). ಬಡ ವ್ಯಕ್ತಿಯೊಬ್ಬರ ಕಿಡ್ನಿಯ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಇವರ ಮತ್ತು ಇವರ ಪತಿಯ ಮೇಲಿದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ ಇವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇವರ ಮೇಲೆ ಯಾವುದೇ ಕಿರುಕುಳ ನಡೆದ ಬಗ್ಗೆ ಸಾಕ್ಷ್ಯಗಳಿಲ್ಲ. ಇನ್ಸ್ಪೆಕ್ಟರ್ ಲಂಚ ಕೇಳಿದ್ದಾರೆ ಮತ್ತು ದುರ್ವರ್ತನೆ ತೋರಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಸಾಕ್ಷ್ಯಾಧಾರ ಲಭಿಸಿಲ್ಲ. ಅಲ್ಲದೆ ಆ ಸಮಯದಲ್ಲಿ ಇಬ್ಬರು ಮಾಧ್ಯಮದವರು ಮತ್ತು ಒಬ್ಬ ವಕೀಲರು ಸ್ಥಳದಲ್ಲಿ ಉಪಸ್ಥಿತರಿದ್ದರು. ಅವರು ಅಂತಹ ಯಾವುದೇ ಲಂಚದ ಬೇಡಿಕೆ ಅಥವಾ ಕಿರುಕುಳ ನಡೆದಿರುವುದನ್ನು ನಿರಾಕರಿಸಿದ್ದಾರೆ. ಲಭ್ಯವಿರುವ ವಿಡಿಯೋ ಮತ್ತು ಆಡಿಯೋದಲ್ಲಿ ಇನ್ಸ್ಪೆಕ್ಟರ್ ಅವರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿರುವುದು ಹಾಗೂ ಮಹಿಳೆಯೊಬ್ಬರ ಜೊತೆ ಪೋನ್ನಲ್ಲಿ ಅತ್ಯಂತ ಅಸಭ್ಯವಾಗಿ ಮಾತನಾಡಿರುವುದು ಕಂಡುಬಂದಿದೆ. ಆಡಿಯೋ ಮತ್ತು ವಿಡಿಯೋದಲ್ಲಿರುವ ಇಬ್ಬರೂ ಮಹಿಳೆಯರು ದೂರು ನೀಡಲು ನಿರಾಕರಿಸಿದ್ದಾರೆ. ಅವರು ಬಯಸಿದಲ್ಲಿ ಮುಂದಿನ ದಿನಗಳಲ್ಲಿ ಹೇಳಿಕೆ ನೀಡಬಹುದು ಎಂದು ಅವರಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಆಯಕ್ತರು ಸ್ಪಷ್ಟನೆ ನೀಡಿದ್ದಾರೆ.
Bidar | ಇಂದಿನ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ : ದೀಪಿಕಾ ನಾಯ್ಕರ್
ಬೀದರ್: ಇಂದಿನ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ಹುಮನಾಬಾದ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ. ನಾಯ್ಕರ್ ಹೇಳಿದರು. ಹುಮನಾಬಾದ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಡಿಜಿಟಲ್ ಸಖಿ ಯೋಜನೆಯ ವತಿಯಿಂದ ಮಂಗಳವಾರ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ಅಪಾರ ತಾಳ್ಮೆ ಮತ್ತು ಶಕ್ತಿ ಅಡಕವಾಗಿದೆ ಎಂದರು. ಡಿಜಿಟಲ್ ಸಖಿ ಯೋಜನೆಯ ಮೂಲಕ ಮಹಿಳೆಯರಿಗೆ ಉದ್ಯೋಗಾವಕಾಶಗಳು ಲಭಿಸುತ್ತಿದ್ದು, ವಿಮೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ವಿಮೆ ಮಾಡಿಸಿಕೊಳ್ಳುವುದು ಅಗತ್ಯವಿದೆ ಎಂದು ಸಲಹೆ ನೀಡಿದರು. 1091 ಮಹಿಳಾ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿ, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಪಂಚಾಯತ್ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಕಾನೂನು ಸಮಿತಿಗಳನ್ನು ರಚಿಸಲಾಗಿದ್ದು, ಭ್ರೂಣ ಹತ್ಯೆ, ಬಾಲ್ಯ ವಿವಾಹ ಸೇರಿದಂತೆ ಮಹಿಳೆಯರ ಮೇಲಿನ ಅನ್ಯಾಯಗಳ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಅಕ್ಕಾ ಪಡೆಯ ಭಾಗ್ಯಶ್ರೀ ಮಾತನಾಡಿ, ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳಬೇಕು. ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳು ಕಂಡುಬಂದಲ್ಲಿ ದೂರು ನೀಡಬೇಕು ಎಂದು ತಿಳಿಸಿದರು. ಮಹಿಳೆಯರು ಸಮಾಜಕ್ಕೆ ಮಾದರಿಯಾಗುವಂತೆ ಬದುಕಬೇಕು ಎಂದರು. ವೈಶಾಲಿ ಅವರು ಡಿಜಿಟಲ್ ಸಖಿ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಈ ಕಾರ್ಯಕ್ರಮವನ್ನು ಮುಂದುವರಿಸಲು ಅಧಿಕಾರಿಗಳಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಲಯ ವ್ಯವಸ್ಥಾಪಕ ಉಮೇಶ್ ನೇಳಗೆ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಲಕ್ಷ್ಮೀ ಪಾಟೀಲ್, ರೇಣುಕಾ, ಬಸವಕಲ್ಯಾಣದ ಕ್ಲಸ್ಟರ್ ವಲಯ ಮ್ಯಾನೇಜರ್ ಅಂಬರೀಷ್, ಬೀದರ್ ಕ್ಲಸ್ಟರ್ ಮ್ಯಾನೇಜರ್ ಬಸವರಾಜ್ ಅಷ್ಟಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್ಎಲ್ಸಿ ಪ್ರತಿನಿಧಿ ಆನಂದ್ ಹಾಗೂ ಪ್ರದೀಪ್ ಉಪಸ್ಥಿತರಿದ್ದರು. ಪೂಜಾ ಸ್ವಾಗತಿಸಿದರು. ಪಿಂಕಿ ನಿರೂಪಿಸಿದರು. ಮೀನಾ ವಂದನಾರ್ಪಣೆ ಮಾಡಿದರು.
ಬೆಂಗಳೂರು : ನಗರದ ಹೆಬ್ಬಗೋಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಶೆಡ್ಗಳ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ʼಜೈ ಬಾಂಗ್ಲಾʼ ಎಂದು ಘೋಷಣೆ ಕೂಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆಗೆ ಹೈಕೋರ್ಟ್ ಇತ್ತೀಚೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಪಶ್ಚಿಮ ಬಂಗಾಳದ ನಿವಾಸಿ ಸದ್ಯ ಆನೇಕಲ್ ತಾಲೂಕಿನ ಹುಲಿಮಂಗಲ ಪೊಡು ಗ್ರಾಮದಲ್ಲಿ ನೆಲೆಸಿರುವ ಸರ್ಬಾನು ಖಾತೂನ್ (25) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ಹೈಕೋರ್ಟ್ ಆದೇಶವೇನು? ಪ್ರಕರಣದ ದೂರಿನ ಸಾರಾಂಶ ಪರಿಶೀಲಿಸಿದರೆ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್ಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದ ಪ್ರಕ್ರಿಯೆಯನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸುತ್ತಿದ್ದರು. ಆ ಸಮಯದಲ್ಲಿ, ವ್ಯಕ್ತಿಯೊಬ್ಬರು ಅರ್ಜಿದಾರೆಯನ್ನು ಜೈ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವಂತೆ ಪ್ರಚೋದಿಸಿದ್ದರು. ಈ ವೇಳೆ, ಜೈ ಬಾಂಗ್ಲಾ ಎಂದು ಕೂಗಿದ ಮಹಿಳೆ ಆನಂತರ ಮೂರು ಬಾರಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹಾಗೂ ಸಂದರ್ಭಗಳನ್ನು ಪರಿಗಣಿಸಿ ಹಾಗೂ ಅರ್ಜಿದಾರೆಗೆ ಇಬ್ಬರು ಅಪ್ರಾಪ್ತ ಮಕ್ಕಳಿದ್ದು ಅವರನ್ನು ಆಕೆಯೇ ನೋಡಿಕೊಳ್ಳಬೇಕಿರುವುದರಿಂದ, ಸೂಕ್ತ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಆರೋಪಿ ಮಹಿಳೆ 1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಂದು ಸ್ಥಳೀಯ ಶ್ಯೂರಿಟಿ ಒದಗಿಸಬೇಕು. ಅರ್ಜಿದಾರರು ಇಂಥದೇ ಪ್ರಕರಣದಲ್ಲಿ ಭಾಗಿಯಾಗಬಾರದು. ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣದ ಎಲ್ಲ ವಿಚಾರಣಾ ದಿನಾಂಕಗಳಂದು ತಪ್ಪದೇ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ತಿರುಚಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿರುವ ನ್ಯಾಯಾಲಯ, ಇವುಗಳಲ್ಲಿ ಯಾವುದೇ ಷರತ್ತು ಉಲ್ಲಂಘನೆಯಾದರೂ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ಪ್ರಾಸಿಕ್ಯೂಷನ್ ಮುಕ್ತ ಅವಕಾಶ ಹೊಂದಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆರೋಪಿಯ ವಾದವೇನು? ವಿಚಾರಣೆ ವೇಳೆ ಮಹಿಳೆಯ ಪರ ವಕೀಲ ಮೊಹಮ್ಮದ್ ರಾಶೀಫ್ ವಾದ ಮಂಡಿಸಿ, ಅರ್ಜಿದಾರೆ ಪಶ್ಚಿಮ ಬಂಗಾಳದ ಖಾಯಂ ನಿವಾಸಿಯಾಗಿದ್ದು, ಹೆಬ್ಬಗೋಡಿಯಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದಾರೆ. ಭಾರತೀಯರ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ಆಕೆಗೆ ಇರಲಿಲ್ಲ. ಆಕೆಗೆ ಪ್ರಚೋದನೆ ನೀಡಿ, ಕೆರಳಿಸುವ ಮೂಲಕ ಕೃತ್ಯ ಎಸಗುವಂತೆ ಮಾಡಲಾಗಿದೆ. ಜೈ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವಂತೆ ಪ್ರಚೋದಿಸಿದಾಗ, ಮುಂದಿನ ಸಂಘರ್ಷ ತಪ್ಪಿಸಲು ಆಕೆ ಅಂತಹ ಘೋಷಣೆ ಕೂಗಿರಬಹುದು. ಅರ್ಜಿದಾರೆ ಸುಮಾರು 25 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಇಬ್ಬರು ಅಪ್ರಾಪ್ತ ಮಕ್ಕಳಿದ್ದಾರೆ. ಆಕೆಯೇ ಮಕ್ಕಳ ಆರೈಕೆ ಮಾಡಬೇಕಿದೆ. ಆದ್ದರಿಂದ, ಸೂಕ್ತ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬೇಕೆಂದು ಕೋರಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಸರಕಾರದ ಪರ ವಕೀಲೆ ಅನಿತಾ ಗಿರೀಶ್, ಆರೋಪಿ ಮಹಿಳೆ ಭಾರತೀಯಳಾಗಿದ್ದರೂ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿರುವುದು ಭಾರತೀಯರ ಭಾವನೆಗಳಿಗೆ ನಿಜಕ್ಕೂ ನೋವುಂಟು ಮಾಡುವಂತದ್ದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆಕೆ ಪಶ್ಚಿಮ ಬಂಗಾಳದ ಖಾಯಂ ನಿವಾಸಿಯಾಗಿರುವುದರಿಂದ, ಜಾಮೀನಿನ ಮೇಲೆ ಬಿಡುಗಡೆಯಾದರೆ ತಲೆಮರೆಸಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ, ಜಾಮೀನು ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಪ್ರಕರಣದ ಹಿನ್ನೆಲೆ: ಪ್ರಾಸಿಕ್ಯೂಷನ್ ದಾಖಲೆಗಳ ಪ್ರಕಾರ, 2026ರ ಜನವರಿಯಲ್ಲಿ ಹೆಬ್ಬಗೋಡಿಯಲ್ಲಿ ಅನಧಿಕೃತ ಶೆಡ್ಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ನಡೆದಿದ್ದೆನ್ನಲಾದ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಅದರಲ್ಲಿ ಮಹಿಳೆಯೊಬ್ಬರಿಗೆ ಜೈ ಭಾರತ್ ಮಾತಾ ಕಿ ಜೈ ಎಂದು ಹೇಳುವಂತೆ ಒತ್ತಾಯಿಸಲಾಗಿತ್ತು. ಆ ಸಮಯದಲ್ಲಿ ಆಕೆ ಮೊದಲು ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದ್ದು, ಬಳಿಕ ಜೈ ಭಾರತ್ ಮಾತಾ ಕಿ ಜೈ ಎಂದು ಹೇಳಿದ್ದರು. ಈ ವಿಡಿಯೊ ಗಮನಿಸಿದ್ದ ಹೆಬ್ಬಗೋಡಿ ಠಾಣೆಯ ಮುಖ್ಯಪೇದೆ ವೃಷಭೇಂದ್ರ ಅವರು ಜನವರಿ 11ರಂದು ದೂರು ನೀಡಿ, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದು ಶಾಂತಿ ಭಂಗ ಉಂಟು ಮಾಡಿದ, ಸಮುದಾಯಗಳ ನಡುವೆ ದ್ವೇಷ ಬಿತ್ತಿದ ಹಾಗೂ ಉದ್ದೇಶಪೂರ್ವಕವಾಗಿ ಜೈ ಬಾಂಗ್ಲಾ ಎಂದು ಘೋಷಣೆ ಕೂಗುವ ಮೂಲಕ ರಾಷ್ಟ್ರೀಯ ಏಕತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ಆರೋಪದಲ್ಲಿ ಅಪರಿಚಿತ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದರಲ್ಲದೆ, ಆಕೆಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು. ಆನಂತರ ಸರ್ಭಾನು ಖಾತೂನ್ನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದ್ದರಿಂದ ಆರೋಪಿ ಮಹಿಳೆ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು.

21 C