ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದ ಬ್ರಿಜೇಶ್ ಚೌಟ ಒತ್ತಾಯ
ಲೋಕಸಭೆಯಲ್ಲಿ ನಿಯಮ 377ರಡಿ ವಿಷಯ ಪ್ರಸ್ತಾಪಿಸಿದ ಸಂಸದ
Kalaburagi | ಚಾಕುವಿನಿಂದ ಇರಿದು ವ್ಯಕ್ತಿಯ ಭೀಕರ ಹತ್ಯೆ : ಪ್ರಕರಣ ದಾಖಲು
ಕಲಬುರಗಿ: ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಸಂಜೆ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಗಾಜಿಪುರ ಬಡಾವಣೆಯ ನಿವಾಸಿ ಶರಣಬಸಪ್ಪ ಗೌಳಿ (35) ಎಂದು ಗುರುತಿಸಲಾಗಿದೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶರಣು ಗೌಳಿ ಅವರು ಶುಕ್ರವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಸೂಪರ್ ಮಾರ್ಕೆಟ್ನ ನರ್ತಕಿ ಬಾರ್ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿದ್ದಾಗ, ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಎಸಿಪಿ ಶಿವನಗೌಡ ಪಾಟೀಲ ಹಾಗೂ ಬ್ರಹ್ಮಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಓಕೆ ಭಾರತದ ಭಾಗವೆಂದು ತೋರಿಸುವ ಭೂಪಟ| ಅಮೆರಿಕದ ಪೋಸ್ಟ್ ಡಿಲೀಟ್ ಮಾಡಿಸಿದ ಪಾಕಿಸ್ತಾನ
ಇಸ್ಲಾಮಾಬಾದ್,ಫೆ.13: ಅಮೆರಿಕವು ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಹಾಗೂ ಅಕ್ಸಾಯ್ ಚಿನ್ ಪ್ರದೇಶಗಳನ್ನು ಭಾರತದ ಪ್ರಾಂತಗಳೆಂದು ತೋರಿಸುವ ಭೂಪಟವನ್ನು ಪೋಸ್ಟ್ ಮಾಡಿದ್ದರಿಂದ ಮುಜುಗರಕ್ಕೀಡಾಗಿರುವ ಪಾಕಿಸ್ತಾನವು, ಈ ವಿಷಯವಾಗಿ ತಾನು ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾಗಿ ಹೇಳಿದೆ. ಈ ನಕ್ಷೆಯ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ ಬಳಿಕ ಈ ಪೋಸ್ಟ್ ಅನ್ನು ತೆಗೆದುಹಾಕಲಾಯಿತೆಂದು ಹೇಳಿದೆ. ಈ ವಿವಾದಿತ ನಕ್ಷೆಯನ್ನು ಕೆಲವು ನಿರ್ದಿಷ್ಟ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ನಾವು ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅದು ಅಕ್ರಮವೆಂದು ಅವರಿಗೆ ಅರಿವಾಯಿತು ಎಂದು ಪಾಕ್ ವಿದೇಶಾಂಗ ಇಲಾಖೆಯ ವಕ್ತಾರ ತಾಹಿರ್ ಅಂದ್ರಾಬಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
KSRTC Good News: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಭರ್ಜರಿ ಸಿಹಿಸುದ್ದಿ ನೀಡಿದೆ. ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸುವುದಾಗಿ ನಿಗಮ ಘೋಷಣೆ ಮಾಡಿದೆ. ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ
ಮಂಗಳೂರು ಇಎಸ್ಐ ಆಸ್ಪತ್ರೆ ಇಎಸ್ಐಸಿ ಸುಪರ್ದಿಯ ಪ್ರಕ್ರಿಯೆ ತ್ವರಿತಗೊಳಿಸಲು ಮನವಿ
ಕೇಂದ್ರ ಕಾರ್ಮಿಕ ಸಚಿವರನ್ನು ಭೇಟಿಯಾದ ಸಂಸದ ಬ್ರಿಜೇಶ್ ಚೌಟ
ವಿಜಯನಗರ | ಹಂಪಿ ಉತ್ಸವದ ವೇದಿಕೆ ಸಮೀಪ ಬೆಂಕಿ ಅವಘಡ
ವಿಜಯನಗರ/ಹಂಪಿ : ಹಂಪಿ ಉತ್ಸವದ ಮುಖ್ಯ ವೇದಿಕೆಯಾದ ಎಂ.ಪಿ.ಪ್ರಕಾಶ್ ವೇದಿಕೆಯ ಬಲಭಾಗದಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸಿಎಂ ವೇದಿಕೆಯ ಮೇಲೆ ಪೂಜೆ ಸಲ್ಲಿಸುವ ವೇಳೆ ಸಿಡಿದ ಪಟಾಕಿಯ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ವ್ಯಕ್ತವಾಗಿದೆ. ಪಟಾಕಿಯ ಕಿಡಿಯಿಂದ ವೇದಿಕೆ ಸಮೀಪದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿದುಬಂದಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
Vijayanagara | ಹಂಪಿ ಉತ್ಸವ : ವಸ್ತು ಪ್ರದರ್ಶನ ಮಳಿಗೆಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ
ವಿಜಯನಗರ : ಹಂಪಿ ಉತ್ಸವ–2026ರ ಅಂಗವಾಗಿ ಹಂಪಿ ಗ್ರಾಮದ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾದ ತೋಟಗಾರಿಕೆ, ಫಲಪುಷ್ಪ, ಕೃಷಿ, ಅರಣ್ಯ, ಮತ್ಸ್ಯ ಹಾಗೂ ವ್ಯಾಪಾರ ಮಳಿಗೆಗಳನ್ನು ಶುಕ್ರವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಉದ್ಘಾಟಿಸಿ, ವಸ್ತು ಪ್ರದರ್ಶನಗಳಿಗೆ ಚಾಲನೆ ನೀಡಿದರು. ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ. ಪುಷ್ಪಲೋಕದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ ಹಾಗೂ ಸಾಸಿವೆಕಾಳು ಗಣಪತಿ ಪ್ರಮುಖ ಆಕರ್ಷಣೆಯಾಗಿವೆ. ಬಿಳಿ, ಕೆಂಪು, ನೇರಳೆ, ಹಳದಿ ಬಣ್ಣದ ಸೇವಂತಿಗೆ, ಗುಲಾಬಿ ಹಾಗೂ ಚಂಡು ಹೂಗಳಿಂದ ಬಡವಿ ಶಿವಲಿಂಗ ಮತ್ತು ಸಾಸಿವೆಕಾಳು ಗಣಪತಿ ನಿರ್ಮಿಸಲಾಗಿದೆ. ಬಡವಿ ಶಿವಲಿಂಗ ನಿರ್ಮಾಣಕ್ಕೆ 10 ಸಾವಿರಕ್ಕೂ ಹೆಚ್ಚು ಹೂಗಳು ಹಾಗೂ ಸಾಸಿವೆಕಾಳು ಗಣಪತಿ ನಿರ್ಮಾಣಕ್ಕೆ 5 ಸಾವಿರ ಹೂಗಳನ್ನು ಬಳಕೆ ಮಾಡಲಾಗಿದೆ. ಈ ಕಲಾಕೃತಿಗಳು ಹೊಸಪೇಟೆಯ ಕಲಾವಿದ ಜಗದೀಶ್ ಅವರ ಕೈಚಳಕದಲ್ಲಿ ಮೂಡಿಬಂದಿವೆ. ವಿಜಯನಗರ ಸಾಮ್ರಾಜ್ಯದ ಸುವರ್ಣಯುಗವನ್ನು ನೆನಪಿಸುವ ಮುತ್ತು, ವಜ್ರ, ವೈಡೂರ್ಯ ಹಾಗೂ ಸ್ವರ್ಣಾಭರಣಗಳ ಪ್ರದರ್ಶನ ರಾಜಬೀದಿಯ ಗತವೈಭವವನ್ನು ಸಾರುತ್ತಿದೆ. ಹೂಗಳಿಂದ ನಿರ್ಮಿತವಾದ ರಾಯರರಾಯ ಹಾಗೂ ಯವನರಾಜ್ಯ ಪ್ರತಿಷ್ಠಾಪನಾಚಾರ್ಯ ಕೃಷ್ಣದೇವರಾಯರ ಪ್ರತಿಮೆ ಗಾಂಭೀರ್ಯ ಮೆಚ್ಚುವಂತಿದೆ. ಸಿರಿಧಾನ್ಯಗಳಲ್ಲಿ ಮೂಡಿಬಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ವಿನೀತ ಪ್ರತಿಮೆ ಪರಿಸರ ಸಂರಕ್ಷಣೆಯ ಸಂದೇಶ ಸಾರುತ್ತಿದೆ. ಬೋನ್ಸಾಯಿ ಕಲೆ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ಪರಿಚಯ ಫಲಪುಷ್ಪ ಪ್ರದರ್ಶನದ ವಿಶೇಷತೆಗಳಾಗಿವೆ. ಸುಗ್ಗಿ ಸಂಭ್ರಮ ಹಾಗೂ ಕೃಷಿ ವಸ್ತು ಪ್ರದರ್ಶನ ನಾಡಿನ ರೈತರ ಬದುಕಿನ ಚಿತ್ರಣ ನೀಡುತ್ತಿದೆ. ಪಾರಂಪರಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಸಂಯೋಜನೆಯೊಂದಿಗೆ ಸುಸ್ಥಿರ ಕೃಷಿ ಅಭಿವೃದ್ಧಿಯ ಸಾಧ್ಯತೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು, ದವಸ-ಧಾನ್ಯಗಳ ರಾಶಿಪೂಜೆ ನೆರವೇರಿಸಿ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿದರು. ಸಂಕ್ರಾಂತಿ ಹಬ್ಬದ ಸಂಭ್ರಮ, ಬೀಜ ಒಕ್ಕಣೆ, ಒಳಕಲ್ಲಿನಲ್ಲಿ ಧಾನ್ಯ ಬೀಸುವ ದೃಶ್ಯ ಹಾಗೂ ಜನಪದ ಗೀತೆಗಳ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಜೀವಂತವಾಗಿ ಬಿಂಬಿಸಲಾಗಿದೆ. ದೇಶಿ ಬೀಜ ಸಂಪತ್ತು, ಜವಾರಿ ಹಾಗೂ ನಾಟಿ ಬೀಜಗಳ ಮಹತ್ವ, ಜೀವ ವೈವಿಧ್ಯತೆ ಸಂರಕ್ಷಣೆಯ ಸಂದೇಶ ಪ್ರದರ್ಶನದಲ್ಲಿ ಮೂಡಿಬಂದಿದೆ. ಕೃಷಿಯಲ್ಲಿ ಡ್ರೋನ್ ಬಳಕೆ, ಸಮಗ್ರ ಕೃಷಿ ಪದ್ಧತಿ, ರೇಷ್ಮೆ ಕೃಷಿ, ಸಿರಿಧಾನ್ಯ ಖಾದ್ಯಗಳು ಹಾಗೂ ಸಾವಯವ ಉತ್ಪನ್ನಗಳ ಮಾರಾಟ ಪ್ರಮುಖ ಆಕರ್ಷಣೆಯಾಗಿವೆ. ಅರಣ್ಯ ಇಲಾಖೆಯ ಮಳಿಗೆಯಲ್ಲಿ ಜಿಲ್ಲೆಯ ಹೆಮ್ಮೆಯ ದರೋಜಿ ಕರಡಿ ಧಾಮ ಅನ್ನು ನೈಜವಾಗಿ ಮರುಸೃಷ್ಟಿಸಲಾಗಿದೆ. ಬೆಟ್ಟಗುಡ್ಡಗಳು, ಗುಹೆಗಳು ಹಾಗೂ ಹಸಿರು ವಾತಾವರಣದ ಪ್ರತಿಕೃತಿ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಹುಲಿ, ಚಿರತೆ, ಕರಡಿ ಹಾಗೂ ವಿವಿಧ ಉರಗಗಳ ಕಲಾತ್ಮಕ ಪ್ರತಿಕೃತಿಗಳು ಮಕ್ಕಳಿಗೆ ಅರಣ್ಯ ಲೋಕದ ಪರಿಚಯ ಮಾಡಿಸುತ್ತಿವೆ. ಪರಿಸರ ಸಂರಕ್ಷಣೆ ಹಾಗೂ ವನ್ಯಜೀವಿಗಳ ಮಹತ್ವ ಕುರಿತು ಮಾಹಿತಿ ಫಲಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಮೀನುಗಾರಿಕೆ ಇಲಾಖೆಯ ಮತ್ಸ್ಯ ಮೇಳದಲ್ಲಿ ದೇಶಿ ಹಾಗೂ ವಿದೇಶಿ ಮೂಲದ 50ಕ್ಕೂ ಹೆಚ್ಚು ತಳಿಯ ಅಲಂಕಾರಿಕ ಮೀನುಗಳು ಪ್ರದರ್ಶನದಲ್ಲಿವೆ. ವಿಂಡೋಸ್ ಏಂಜಲ್, ಕ್ಯಾಟ್ ಫಿಶ್, ಕೋಯಿ ಕಾರ್ಪ್, ಟೈಗರ್ ಆಸ್ಕರ್, ರೆಡ್ ಕ್ಯಾಪ್ ಗೋಲ್ಡ್ಫಿಶ್, ಲಯನ್ ಹೆಡ್, ಫೈಟರ್, ಚಿಚ್ಲಿಡ್ಸ್, ಮಲಬಾರ್ ಗೊರಾಮಿ, ಸ್ನೇಕ್ ಹೆಡ್, ಡಿಸ್ಕಸ್ ಸೇರಿದಂತೆ ಹಲವು ಬಣ್ಣಬಣ್ಣದ ಮೀನುಗಳು ಸಾರ್ವಜನಿಕರ ಕುತೂಹಲ ಕೆರಳಿಸುತ್ತಿವೆ. ಈ ಬಾರಿ ಜಿಲ್ಲೆಯ ಮತ್ಸ್ಯಸಂಪತ್ತಿನ ಆಕರವಾದ ತುಂಗಭದ್ರಾ ಜಲಾಶಯದ ಪ್ರತಿಕೃತಿ ವಿಶೇಷ ಆಕರ್ಷಣೆಯಾಗಿದೆ. ಜಲಾಶಯದ ರೂಪಕದ ಮೂಲಕ ಮೀನುಗಾರರ ಜೀವನೋಪಾಯ ಹಾಗೂ ಮೀನು ಸಂಪತ್ತಿನ ವೈವಿಧ್ಯತೆಯನ್ನು ಪರಿಚಯಿಸಲಾಗುತ್ತಿದೆ. ಒಟ್ಟಾರೆ, ಹಂಪಿ ಉತ್ಸವದ ವಸ್ತು ಪ್ರದರ್ಶನ ಮಳಿಗೆಗಳು ಸಂಸ್ಕೃತಿ, ಕೃಷಿ, ಅರಣ್ಯ ಹಾಗೂ ಮತ್ಸ್ಯೋದ್ಯಮದ ಸಮಗ್ರ ಚಿತ್ರಣವನ್ನು ನೀಡುತ್ತಾ ಜನಮನ ಸೆಳೆಯುತ್ತಿವೆ. ವಸ್ತುಪ್ರದರ್ಶನ ಮಳಿಗೆಗಳ ಉದ್ಘಾಟನೆ ವೇಳೆ ಉಪವಿಭಾಗಾಧಿಕಾರಿ ವಿವೇಕ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಭುರಾಜ್ ಹಿರೇಮಠ, ಕೃಷಿ ಜಂಟಿ ನಿರ್ದೇಶಕ ಬಿ.ಟಿ. ಮಂಜುನಾಥ, ಉಪನಿರ್ದೇಶಕ ಡಾ. ನಹೀಂಪಾಷಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ಮಲ್ಲೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು: ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಗಿಗಳನ್ನು ನೀಡಿದ ಹಾಗೂ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣ ಮಾಡಿದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆಯಡಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಆದೇಶಿಸುವಂತೆ ಹಾಗೂ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಎಪ್ರಿಲ್ 17ಕ್ಕೆ ಮುಂದೂಡಿದೆ. ಬೆಂಗಳೂರಿನ ಉದ್ಯಮಿ ಎಂ.ಪಿ. ವೇಣುಗೋಪಾಲ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಸತತ ಗೈರಾದ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಈ ಹಿಂದೆ ವಜಾಗೊಳಿಸಿತ್ತು. ಅರ್ಜಿದಾರರ ವಕೀಲರ ಮನವಿಯಂತೆ ಅರ್ಜಿಯನ್ನು ವಿಚಾರಣೆಗೆ ಮರು ಪರಿಗಣಿಸಲಾಗಿದೆ. ಆದರೆ, ಐದಾರು ಬಾರಿ ಕಾಲಾವಕಾಶ ಕೇಳಿದ್ದಾರೆ, ಈ ದಿನವೂ ಸಹ ಮತ್ತೆ ಕಾಲಾವಕಾಶ ಕೇಳುತ್ತಿದ್ದಾರೆ ಎಂದರು. ಮುಂದುವರಿದು, ಇದೇ ವಿಚಾರವಾಗಿ ಈ ಹಿಂದೆ ರಾಮಮೂರ್ತಿ ಗೌಡ ಎಂಬುವರು ಖಾಸಗಿ ದೂರು (ಪಿಸಿಆರ್) ಸಲ್ಲಿಸಿದ್ದರು. ಆ ಖಾಸಗಿ ದೂರಿನಲ್ಲಿದ್ದ ವಿಷಯ ಮತ್ತು ಅಂಶಗಳನ್ನೇ ಪುಟ ಸಂಖ್ಯೆಗಳ ಸಮೇತ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಕಲು ಮಾಡಲಾಗಿದೆ. ಆ ಖಾಸಗಿ ದೂರಿನಲ್ಲೂ ಸಿದ್ದರಾಮಯ್ಯ ಸೇರಿ ಈಗಿನ ಪಿಐಎಲ್ನಲ್ಲಿರುವ ಎಲ್ಲರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಖಾಸಗಿ ದೂರಿನ ಅಂಶಗಳನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಕಲು ಮಾಡಲಾಗಿದೆ ಎಂದು ಸಿಎಂ ಪರ ವಕೀಲರು ಹೇಳುತ್ತಿದ್ದಾರೆ. ಆದ್ದರಿಂದ, ಖಾಸಗಿ ದೂರಿನ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು. ಅರ್ಜಿಯಲ್ಲೇನಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು. ಗಣಿ ಗುತ್ತಿಗೆಗಳ ಕಾನೂನುಬಾಹಿರ ನವೀಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು. ಈ ವಿಚಾರವಾಗಿ ವರದಿ ನೀಡುವಂತೆ ಲೋಕಾಯುಕ್ತಕ್ಕೆೆ ಸೂಚಿಸಬೇಕು. ರಾಮಗಡ ಮಿನರಲ್ ಆ್ಯಂಡ್ ಮೈನಿಂಗ್ ಪ್ರೈ. ಲಿಮಿಟೆಡ್, ವೀರಭದ್ರಪ್ಪ ಸಂಗಪ್ಪ ಆ್ಯಂಡ್ ಕಂಪನಿಗಳಿಗೆ ನೀಡಲಾಗಿರುವ ಗಣಿ ಗುತ್ತಿಗೆ ರದ್ದುಪಡಿಸಬೇಕು. ಎಲ್ಲ ಗಣಿ ಗುತ್ತಿಗೆ ಪರವಾನಗಿಗಳನ್ನು ಕಾನೂನುಬಾಹಿರವೆಂದು ಘೋಷಿಸಬೇಕು. ಇದರಿಂದ, ಆಗಿರುವ ಆರ್ಥಿಕ ನಷ್ಟವನ್ನು ಅಕ್ರಮ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಸಿಎಂ ಸಿದ್ದರಾಮಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿಂದಿನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿ ಕೆಲ ಖಾಸಗಿ ಗಣಿ ಕಂಪನಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.
ಚಿನ್ನದ ಸಾಲ ನೀಡುವ ಕಂಪನಿಗಳು ಕದ್ದ ಚಿನ್ನವನ್ನು ಅಡಮಾನವಿರಿಸಿಕೊಳ್ಳಲಾಗದು: ಹೈಕೋರ್ಟ್ ಆದೇಶ
ಬೆಂಗಳೂರು: ಕದ್ದ ಆಸ್ತಿ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಪೊಲೀಸರು ಕೇಳಿದಾಗ ಅದನ್ನು ಹಸ್ತಾಂತರ ಮಾಡಲು ವಿಳಂಬಿಸುವ ಅಥವಾ ನಿರಾಕರಿಸುವ ಯಾವುದೇ ಕಾನೂನುಬದ್ಧ ಹಕ್ಕು ಹೊಂದಿರುವುದಿಲ್ಲ, ಚಿನ್ನದ ಸಾಲ ನೀಡುವ ಕಂಪನಿಯಾಗಿದ್ದರೂ ಸಹ ಬಡ್ಡಿ ಮತ್ತು ಭದ್ರತೆಯ ಕಾರಣ ನೀಡಿ ಕದ್ದ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕೆಂಗೇರಿಯ ಕರೂರು ವೈಶ್ಯ ಬ್ಯಾಂಕ್ ಶಾಖೆಯಿಂದ ಕದ್ದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಮಂಜೂರು ಮಾಡಿದ್ದ ಆರೋಪದಲ್ಲಿ ಕದ್ದ ಒಡವೆಗಳನ್ನು ಒಪ್ಪಿಸುವಂತೆ ಕೆಂಗೇರಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಐಐಎಫ್ಎಲ್ ಫೈನಾನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ಹಣಕಾಸುದಾರರ ಯಾವುದೇ ಭದ್ರತಾ ಹಿತಾಸಕ್ತಿ ಒಪ್ಪಂದದ ಪ್ರಕಾರ ಮಾನ್ಯವಾಗಿದ್ದರೂ ಸಹ ಕದ್ದ ಆಸ್ತಿಯ ನಿಜವಾದ ಮಾಲೀಕರ ಉನ್ನತ ಹಕ್ಕುಗಳನ್ನು ಅತಿಕ್ರಮಿಸಲು ಅಥವಾ ತನಿಖೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಒಡವೆಗಳನ್ನು ಹಿಂದಿರುಗಿಸಿದಲ್ಲಿ ತನಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂಬ ಕಾರಣ ನೀಡಿ ಅಂತಹ ವಸ್ತುಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆಯುವುದನ್ನು ವಿರೋಧಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) 2023ರ ಸೆಕ್ಷನ್ 94(1)ರ ಅಡಿಯಲ್ಲಿ ಚಿನ್ನದ ವಸ್ತುಗಳು ಇತರ ವಿಷಯದ ವ್ಯಾಪ್ತಿಗೆ ಬರುತ್ತವೆ. ಕದ್ದ ಒಡವೆಗಳನ್ನು ಹೊಂದಿದ್ದಾರೆ ಎಂದು ನಂಬಲಾದ ಯಾವುದೇ ವ್ಯಕ್ತಿಗಳಿಗೆ ಅವುಗಳನ್ನು ಒಪ್ಪಿಸಲು ಒತ್ತಾಯಿಸಿ ನೋಟಿಸ್ಗಳನ್ನು ಹೊರಡಿಸುವ ಅಧಿಕಾರ ತನಿಖಾಧಿಕಾರಿಗಳು ಹೊಂದಿದ್ದಾರೆ ಎಂದು ನ್ಯಾಯಪೀಠ ಆದೇಶಿಸಿದೆ. ಅರ್ಜಿದಾರ ಕಂಪನಿಯ ಮನವಿ ಪುರಸ್ಕರಿಸಲು ಯಾವುದೇ ಬಲವಾದ ಕಾರಣಗಳು ಲಭ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಚಿನ್ನದ ಆಭರಣಗಳನ್ನು ಕಂಪನಿಯು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು. ಆ ಒಡವೆಗಳು ಕರೂರು ವೈಶ್ಯ ಬ್ಯಾಂಕ್ ಕೆಂಗೇರಿ ಶಾಖೆಯಿಂದ ಕಳವು ಮಾಡಲಾಗಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿ, ಅದು ಸಾಬೀತಾದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಹೇಳಿದೆ. ಕಂಪನಿಯ ವಾದವೇನು? ವಿಚಾರಣೆ ವೇಳೆ ವಾದ ಮಂಡಿಸಿದ್ದ ಐಐಎಫ್ಎಲ್ ಫೈನಾನ್ಸ್ ಕಂಪನಿ ಪರ ವಕೀಲರು, ಚಿನ್ನವನ್ನು ಉತ್ತಮ ನಂಬಿಕೆಯಿಂದ ಸ್ವೀಕರಿಸಿದೆ ಮತ್ತು ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಸಾಲಗಳನ್ನು ವಿತರಿಸಲಾಗಿದೆ. ಒಪ್ಪಂದದ ಬಾಧ್ಯತೆಗಳು ಅಡವಿಟ್ಟ ಚಿನ್ನವನ್ನು ಬಿಟ್ಟುಕೊಡುವುದನ್ನು ತಡೆಯುತ್ತಿದ್ದವು. ಆದರೆ, ಚಿನ್ನವನ್ನು ವಶಪಡಿಸಿಕೊಳ್ಳದೆ ತನಿಖೆಗೆ ಸಹಕರಿಸಲು ಸಾಧ್ಯವಿದೆ ಎಂದಿದ್ದರು. ಕರೂರು ವೈಶ್ಯ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿ, ಕಳುವಾಗಿರುವ ಚಿನ್ನವನ್ನು ಸಾಲ ಪಡೆದ ಗ್ರಾಹಕರಿಗೆ ಹಿಂದಿರುಗಿಸುವುದು ತನ್ನ ಕಾನೂನುಬದ್ಧ ಕರ್ತವ್ಯ ಎಂದು ತಿಳಿಸಿದ್ದರು. ಸರ್ಕಾರದ ಪರ ವಕೀಲರು, ಐಐಎಫ್ಎಲ್ ಕಂಪನಿಯಲ್ಲಿ ಅಡಮಾನ ಇಡಲಾಗಿರುವ ಚಿನ್ನವನ್ನು ಬ್ಯಾಂಕ್ನ ಅಧಿಕಾರಿಯೇ ಕದ್ದಿದ್ದಾರೆನ್ನಲಾಗಿದೆ. ಆದ್ದರಿಂದ, ತನಿಖೆ ಮುಂದುವರಿಯಬೇಕು ಎಂದು ವಾದಿಸಿದ್ದರು. ಪ್ರಕರಣವೇನು? ಕರೂರು ವೈಶ್ಯ ಬ್ಯಾಂಕ್ನ ಕೆಂಗೇರಿ ಶಾಖೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು 2022ರಿಂದ ಸಹಾಯಕ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2025ರ ಅಕ್ಟೋಬರ್ ತಿಂಗಳಲ್ಲಿ ನಡೆದ ಅನಿರೀಕ್ಷಿತ ಮರು ಮೌಲ್ಯಮಾಪನದ ಸಮಯದಲ್ಲಿ ಸಹಾಯಕ ವ್ಯವಸ್ಥಾಪಕಿ ನಿರ್ವಹಿಸುವ ಚಿನ್ನದ ಸಾಲ ಖಾತೆಗಳ ಸಂಬಂಧ ಗಂಭೀರ ಅಕ್ರಮಗಳು ಪತ್ತೆಯಾಗಿದ್ದವು. ಈ ಕುರಿತು ಪರಿಶೀಲನೆ ನಡೆಸಿದಾಗ, ಗ್ರಾಹಕರು ಅಡವಿಟ್ಟಿದ್ದ ನಿಜವಾದ ಚಿನ್ನಾಭರಣಗಳನ್ನು ರಹಸ್ಯವಾಗಿ ತೆಗೆದು ನಕಲಿ ವಸ್ತುಗಳೊಂದಿಗೆ ಬದಲಾಯಿಸುವ ಮೂಲಕ ಕಳ್ಳತನ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹಕ್ಕೆ ಸಮನಾದ ಕೃತ್ಯಗಳಲ್ಲಿ ಅವರು ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿತ್ತಲ್ಲದೆ, ಕದ್ದ ಒಡವೆಗಳನ್ನು ಐಐಎಫ್ಎಲ್ ಫೈನಾನ್ಸ್ ಕಂಪನಿ ಸೇರಿ ವಿವಿಧೆಡೆಗಳಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದ ಆರೋಪವಿತ್ತು. ಈ ಸಂಬಂಧ ಕರೂರು ವೈಶ್ಯ ಬ್ಯಾಂಕ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಫೈನಾನ್ಸ್ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು. ಇದರಿಂದ, ನೋಟಿಸ್ ರದ್ದು ಕೋರಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
Parliament Budget Session| ಪ್ರತಿಪಕ್ಷಗಳ ಪ್ರತಿಭಟನೆ ಮಧ್ಯೆ ಲೋಕಸಭೆ ಅಧಿವೇಶನ ಮಾ.9ವರೆಗೆ ಮುಂದೂಡಿಕೆ
ಹೊಸದಿಲ್ಲಿ,ಫೆ.13: ಎಪ್ಸ್ಟೀನ್ ಕಡತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಸಂಕೀರ್ಣದಲ್ಲಿ ಪ್ರತಿಪಕ್ಷ ಸಂಸದರ ನಿರಂತರ ಪ್ರತಿಭಟನೆ, ಘೋಷಣೆಗಳು ಮತ್ತು ಕಲಾಪಕ್ಕೆ ವ್ಯತ್ಯಯಗಳ ನಡುವೆ ಮೊದಲ ಹಂತದ ಬಜೆಟ್ ಅಧಿವೇಶನದ ಕೊನೆಯ ದಿನವಾಗಿದ್ದ ಶುಕ್ರವಾರ ಲೋಕಸಭೆಯನ್ನು ಮಾರ್ಚ್ 9ರವರೆಗೆ ಮುಂದೂಡಲಾಯಿತು. ಇದಕ್ಕೂ ಮುನ್ನ, ಪುರಿ ಮತ್ತು ಜೆಫ್ರಿ ಎಪ್ಸ್ಟೀನ್ ನಡುವಿನದ್ದೆನ್ನಲಾಗಿರುವ ಇಮೇಲ್ಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಂಸತ್ ಸಂಕೀರ್ಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಗಳಿಂದಾಗಿ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿತ್ತು. ಸಂಪೂರ್ಣ ವಿವರಣೆಯನ್ನು ನೀಡುವವರೆಗೆ ಪುರಿ ಸಚಿವ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಪ್ರತಿಪಕ್ಷವು ಆಗ್ರಹಿಸಿತು. ಗದ್ದಲದ ನಡುವೆಯೇ ಬಿಜಿಪಿ ಸಂಸದ ನಿಶಿಕಾಂತ ದುಬೆಯವರು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಮಂಡಿಸಿರುವ ನಿರ್ಣಯವನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಿತು. ಆರಂಭದಲ್ಲಿ ಸದನವು ಇತ್ತೀಚಿಗೆ ನಿಧನರಾದ ಹರಿದ್ವಾರದ ಮಾಜಿ ಸಂಸದ ಭಗವಾನದಾಸ್ ರಾಠೋಡ್ ಅವರ ಗೌರವಾರ್ಥ ಒಂದು ನಿಮಿಷ ಮೌನವನ್ನು ಆಚರಿಸಿತು. ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಹಿಬಿ ಎಡೆನ್ ಅವರು,ಪಕ್ಷವನ್ನು ಬೆದರಿಸಲು ಸಾಧ್ಯವಿಲ್ಲ,ರೈತರು ಮತ್ತು ಭಾರತ-ಅಮೆರಿಕ ಒಪ್ಪಂದ ಸೇರಿದಂತೆ ಭಾರತದ ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ವಿಷಯಗಳನ್ನು ಎತ್ತುವುದನ್ನು ಪಕ್ಷವು ಮುಂದುವರಿಸಲಿದೆ ಎಂದು ತಿಳಿಸಿದರು.
ಬಲೂಚಿಸ್ತಾನದಲ್ಲಿ ಭೂಕಂಪನ|ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲು
ಇಸ್ಲಾಮಾಬಾದ್,ಫೆ.13: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಶುಕ್ರವಾರ ಭೂಕಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ. ಈಶಾನ್ಯ ಖುಝ್ದಾರ್ ಪಟ್ಟಣದಿಂದ 86 ಕಿ.ಮೀ. ಈಶಾನ್ಯಕ್ಕೆ, ಭೂಮಿಯಿಂದ 13 ಕಿ.ಮೀ. ಆಳದಲ್ಲಿ ಭೂಕಂಪನವಾಗಿದೆಯೆಂದು ಪಾಕಿಸ್ತಾನದ ಭೂಕಂಪಶಾಸ್ತ್ರ ಇಲಾಖೆ (ಪಿಎಂಡಿ) ತಿಳಿಸಿದೆ. ಮುಂಜಾನೆ 6:30ರ ಹೊತ್ತಿಗೆ ಭೂಕಂಪನವಾಗಿದ್ದು, ಬಲೂಚಿಸ್ತಾನದ ಝಾಲ್ ಮಾಗ್ಸಿ, ಜಾಫರಾಬಾದ್ ಹಾಗೂ ನಾಸಿರಾಬಾದ್ ಪಟ್ಟಣಗಳಲ್ಲಿ ಭೂಮಿ ಕಂಪಿಸಿದೆ. ಅಲ್ಲದೆ ಸಿಂಧ್ ಪ್ರಾಂತದ ಸುಕ್ಕೂರ್, ಖ್ವಾಂಬರ್, ಶಾಹದ್ಕೋಟ್ ಹಾಗೂ ದಾಡು ಜಿಲ್ಲೆಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲವೆಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಹಾಗೂ ಖೈಬರ್ ಪಖ್ತೂಂಖ್ವಾ ಪ್ರಾಂತದ ಕೆಲವು ಪ್ರದೇಶಗಳಲ್ಲಿ 5.8 ತೀವ್ರತೆಯ ಭೂಕಂಪನವಾಗಿತ್ತು.
ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಸಾವಿರಾರು ವೈಟ್ಕಾಲರ್
ಉದ್ಯೋಗಗಳನ್ನು ಕಸಿಯಲಿರುವ ಎಐ
ಜಾಗತಿಕವಾಗಿ ಮಕ್ಕಳ ಹಸಿವು ನಿವಾರಣೆಗೆ ಯುಎಇಯಿಂದ ಬೃಹತ್ ಅಭಿಯಾನ ಘೋಷಣೆ
ದುಬೈ,ಫೆ.13: ಪವಿತ್ರ ರಮಝಾನ್ ತಿಂಗಳು ಸಮೀಪಿಸುತ್ತಿರುವಂತೆಯೇ, ಯುಎಇನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಶುಕ್ರವಾರದಂದು, ವಿಶ್ವದಾದ್ಯಂತದ ಕೋಟ್ಯಂತರ ಬಡಮಕ್ಕಳ ಹಸಿವು ನಿವಾರಣೆಗಾಗಿ ‘ಎಡ್ಜ್ ಆಫ್ ಲೈಫ್’ ಅಭಿಯಾನವನ್ನು ಘೋಷಿಸಿದ್ದಾರೆ. ಈ ಕಾರ್ಯಕ್ರಮವು ಅಪೌಷ್ಟಿಕತೆ ಹಾಗೂ ಹಸಿವಿನಿಂದ ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಸಾವಿಗೀಡಾಗುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶೇಖ್ ಮೊಹಮ್ಮದ್ ಅವರು, ಪವಿತ್ರವಾದ ರಮಝಾನ್ ಅತ್ಯಂತ ಉದಾರತೆ ಹಾಗೂ ಮಮತೆಯ ಮಾಸವಾಗಿದೆ. ಯುಎಇನ ಜನತೆಯ ಬೆಂಬಲದೊಂದಿಗೆ ಜಗತ್ತಿನಾದ್ಯಂತ ಸಮುದಾಯಗಳಿಗಾಗಿ ಮಾನವೀಯ ಅಭಿಯಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಯುಎಇನ ವಾರ್ಷಿಕ ಸಂಪ್ರದಾಯವಾಗಿದೆ ಎಂದರು.
Ballari | ಅಖಿಲ ಭಾರತ ಮುಷ್ಕರ : ಕಂಪ್ಲಿಯಲ್ಲಿ ಪ್ರತಿಭಟನೆ
ಬಳ್ಳಾರಿ / ಕಂಪ್ಲಿ: ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ನೀತಿಗಳನ್ನು ಖಂಡಿಸಿ, ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಗ್ರಾಮ ಪಂಚಾಯತ್ ನೌಕರರು, ಕಟ್ಟಡ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ಹಾಗೂ ಹಮಾಲಿ ಕಾರ್ಮಿಕರ ಸಹಕಾರದೊಂದಿಗೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಂತರ ಸಿಐಟಿಯು ತಾಲೂಕು ಅಧ್ಯಕ್ಷ ಐ. ಹೊನ್ನೂರಸಾಬ್ ಹಾಗೂ ಕಾರ್ಯದರ್ಶಿ ಆರ್. ನಾಗರಾಜ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ಬದುಕಿಗೆ ಹಾನಿ ಉಂಟುಮಾಡುವ ಹೊಸ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿರುವುದು ದುರ್ಘಟನೆಯಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಶ್ರಮಶಕ್ತಿ ನೀತಿ ಕೈಬಿಡಬೇಕು. ಗ್ರಾಮ ಪಂಚಾಯತ್ಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ರಾಜಾಸಾಬ್ ನೆಲ್ಲುಡಿ, ತಾಲೂಕು ಅಧ್ಯಕ್ಷ ಜಡೆಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಾಂದ್ಬಾಷಾ, ಖಜಾಂಚಿ ಚಂದ್ರಶೇಖರ, ಮುಖಂಡರಾದ ಬಂಡಿ ಬಸವರಾಜ, ಶಾಂತಪ್ಪ, ಆರ್. ಏಸಯ್ಯ, ಹುಸೇನಿ, ಅನುರಾಧ, ತಿಪ್ಪಮ್ಮ, ಶಾಂತಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇರಾನ್ ಬಿಕ್ಕಟ್ಟು| ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಸಮರ ನೌಕೆ ನಿಯೋಜನೆಗೆ ಅಮೆರಿಕ ನಿರ್ಧಾರ
ಹೊಸದಿಲ್ಲಿ, ಫೆ.13: ಇರಾನ್ ಬಿಕ್ಕಟ್ಟನ ಹಿನ್ನೆಲೆಯಲ್ಲಿ ಅಮೆರಿಕವು ಜಗತ್ತಿನ ಅತಿ ದೊಡ್ಡ ಯುದ್ದವಿಮಾನ ವಾಹಕ ಹಡಗನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲು ನಿರ್ಧರಿಸಿದೆ. ಇರಾನ್ನ ಅಣುಶಕ್ತಿ ಕಾರ್ಯಕ್ರಮದ ವಿರುದ್ಧ ಆ ದೇಶದ ಮೇಲೆ ಒತ್ತಡ ಹೇರುವ ತಂತ್ರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಅಮೆರಿಕವು ಮಧ್ಯಪ್ರಾಚ್ಯದ ಸಮುದ್ರಪ್ರದೇಶದಲ್ಲಿ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯನ್ನು ನಿಯೋಜಿಸಿದ್ದು, ಇದೀಗ ಯುಎಸ್ಎಸ್ ಜೆರಾಲ್ಡ್ ಆರ್.ಫೋರ್ಡ್ ಯುದ್ಧನೌಕೆ ಕೂಡ ಅದರ ಜೊತೆಗೂಡಲಿದೆ. ಇರಾನ್ ಜೊತೆ ಇನ್ನೊಂದು ಸುತ್ತಿನ ಮಾತುಕತೆಯನ್ನು ನಡೆಸಲಾಗುವುದೆಂದು ಟ್ರಂಪ್ ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ ಎರಡನೇ ಯುದ್ಧನೌಕೆಯ ನಿಯೋಜನೆಯ ನಿರ್ಧಾರವನ್ನು ಘೋಷಿಸಲಾಗಿದೆ. ಈಗಾಗಲೇ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದಲ್ಲಿ ಈಗಾಗಲೇ ಇಸ್ರೇಲ್-ಹಮಾಸ್ ಸಂಘರ್ಷದಿಂದ ತತ್ತರಿಸಿರುವ ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಭೀಕರ ಪ್ರಾದೇಶಿಕ ಸಂಘರ್ಷಕ್ಕೆ ದಾರಿಮಾಡಿಕೊಡಲಿದೆ ಎಂದು ಈಗಾಗಲೇ ಗಲ್ಫ್ ಆರಬ್ರಾಷ್ಟ್ರಗಳು ಎಚ್ಚರಿಕೆ ನೀಡಿವೆ. ಈಗಾಗಲೇ ಮಧ್ಯಪ್ರಾಚ್ಯದ ಅರಬಿ ಸಮುದ್ರದಲ್ಲಿ ಯುಎಸ್ಎಸ್ ಅಬ್ರಹಾಂ ಲಿಂಕನ್ ಯುದ್ಧ ನೌಕೆಯ ಜೊತೆಗೆ ಕ್ಷಿಪಣಿ ಧ್ವಂಸಕ ನೌಕೆಗಳನ್ನು ಕೂಡಾ ನಿಯೋಜಿಸಲಾಗಿದೆ. ಅಮೆರಿಕದ ಜೊತೆಗೆ ಒಪ್ಪಂದಕ್ಕೆ ಬರಲು ವಿಫಲವಾದಲ್ಲಿ ಅದರ ಪರಿಣಾಮ ಅತ್ಯಂತ ಯಾತನಾಮಯವಾಗಿರುವುದು ಎಂದು ಟ್ರಂಪ್ ಗುರುವಾರ ಎಚ್ಚರಿಕೆ ನೀಡಿದ್ದರು. ಬುಧವಾರ ವಾಶಿಂಗ್ಟನ್ಗೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಜೊತೆ ಟ್ರಂಪ್ ಅವರು ವಿಸ್ತೃತ ಮಾತುಕತೆ ನಡೆಸಿದ್ದರು. ಇರಾನ್ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಹೇರಬೇಕು ಮತ್ತು ಹಮಾಸ್ ಹಾಗೂ ಹಿಝ್ಬುಲ್ಲಾದಂತಹ ಹೋರಾಟಗಾರ ಸಂಘಟನೆಗಳಿಗೆ ಬೆಂಬಲ ನೀಡದಂತೆ ಆ ದೇಶದ ಮೇಲೆ ಒತ್ತಡ ಹೇರಬೇಕೆಂದು ಬೆಂಜಮಿನ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿದ್ದರು.
2016ರಿಂದ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಅಧಿಕ ದೂರು ಸ್ವೀಕಾರ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ, ಫೆ.14: 2016ರಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿದೆ ಎಂದು ಲೋಕಸಭೆಗೆ ಶುಕ್ರವಾರ ಮಾಹಿತಿ ನೀಡಲಾಯಿತು. ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಲ್, 2016 ಹಾಗೂ 2025ರ ನಡುವೆ ಹಾಲಿ ನ್ಯಾಯಾಧೀಶರ ವಿರುದ್ಧ 8,639 ದೂರುಗಳನ್ನು ಸ್ವೀಕರಿಸಲಾಗಿದೆ ಎಂದರು. ಸಿಜೆಐ ಕಚೇರಿ 2024ರಲ್ಲಿ ಹಾಲಿ ನ್ಯಾಯಾಧೀಶರ ವಿರುದ್ಧ ಅತ್ಯಧಿಕ ದೂರು (1,170) ಗಳನ್ನು ಸ್ವೀಕರಿಸಿದೆ ಎಂದು ಅವರು ಹೇಳಿದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ನ್ಯಾಯಾಧೀಶರ ವಿರುದ್ಧ ಸ್ವೀಕರಿಸಲಾದ ದೂರುಗಳನ್ನು ನ್ಯಾಯಾಂಗದ ಆಂತರಿಕ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗಿದೆ ಎಂದು ತಿಳಿಸಿದರು.
ರವೀಂದ್ರ ಜಡೇಜಾರಂಥ ಘಟಾನುಘಟಿಯನ್ನೇ ಪಕ್ಕಕ್ಕಿಟ್ಟು ರಿಯಾನ್ ಪರಾಗ್ ಗೇ ರಾಜಸ್ಥಾನ ರಾಯಲ್ಸ್ ಪಟ್ಟ ಕಟ್ಟಿದ್ದೇಕೆ?
Rajasthan Royals Captain Riyan Parag- ಸಂಜು ಸ್ಯಾಮ್ಸನ್ ಅವರು ಟ್ರೇಡ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಾದ ಅವರ ಬದಲಿಗೆ ಅಲ್ಲಿಂದ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಬಿದ್ದ ಅನುಭವಿ ರವೀಂದ್ರ ಜಡೇಜಾ ಅವರಿಗೆ ನಾಯಕನ ಸ್ಥಾನ ಸಿಗಬಹುದೆಂದು ಅಂದುಕೊಂಡಿದ್ದರು. ಅವರನ್ನು ವಯಸ್ಸಿನ ಕಾರಣಕ್ಕೆ ಪರಿಗಣಿಸದಿದ್ದರೂ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಧ್ರುವ್ ಜ್ಯುರೆಲ್ ಇದ್ರು. ಆದ್ರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಲೆಕ್ಕಾಚಾರವೇ ವಿಭಿನ್ನವಾಗಿದೆ. ಅದಕ್ಕೇ ರಿಯಾನ್ ಪರಾಗ್ ಅವರಿಗೆ ಮಣೆ ಹಾಕಿದೆ.
44 ಕೋಟಿ ರೂ.ವಂಚನೆ ಪ್ರಕರಣ| ನಿರ್ಮಾಪಕ ವಿಕ್ರಮ ಭಟ್ ಪತ್ನಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಫೆ.13: ಸರ್ವೋಚ್ಚ ನ್ಯಾಯಾಲಯವು 44 ಕೋಟಿ.ರೂ.ವಂಚನೆ ಪ್ರಕರಣದಲ್ಲಿ ಚಿತ್ರ ನಿರ್ಮಾಪಕ-ನಿರ್ದೇಶಕ ವಿಕ್ರಮ ಭಟ್ ಅವರ ಪತ್ನಿ ಶ್ವೇತಾಂಬರಿ ಭಟ್ ಅವರಿಗೆ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದಂಪತಿಗೆ ಜಾಮೀನು ನಿರಾಕರಿಸಿದ್ದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠವು ನೋಟಿಸ್ಗಳನ್ನು ಹೊರಡಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ ರೋಹಟ್ಗಿಯವರು, ದೂರುದಾರರ ಜೀವನ ಕಥೆಯನ್ನು ಆಧರಿಸಿದ ಚಲನಚಿತ್ರ ನಿರ್ಮಾಣ ಯೋಜನೆಯಿಂದಾಗಿ ವಿವಾದವು ಉದ್ಭವಿಸಿದೆ ಮತ್ತು ಚಿತ್ರದ ವೈಫಲ್ಯವು ಕ್ರಿಮಿನಲ್ ಮೊಕದ್ದಮೆಗೆ ಕಾರಣವಾಗುವುದಿಲ್ಲ ಎಂದು ವಾದಿಸಿದರು. ಶ್ವೇತಾಂಬರಿ ಭಟ್ ಅವರಿಗೆ ಮಧ್ಯಂತರ ಪರಿಹಾರವನ್ನು ಒದಗಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ಇದನ್ನು ವಿರೋಧಿಸಿದ ದೂರುದಾರರ ಪರ ವಕೀಲರು ಪ್ರಕರಣವು 44 ಕೋಟಿ ರೂ.ಗಳ ವಂಚನೆಯನ್ನು ಒಳಗೊಂಡಿದೆ ಎಂದು ಹೇಳಿದರೆ ರಾಜಸ್ಥಾನ ಸರಕಾರವು ವಿವರವಾದ ಉತ್ತರವನ್ನು ಸಲ್ಲಿಸಲು ಸಮಯಾವಕಾಶವನ್ನು ಕೋರಿತು. ಹಣವನ್ನು ವಸೂಲು ಮಾಡಲು ಕ್ರಿಮಿನಲ್ ಮೊಕದ್ದಮೆಗಳನ್ನು ಬಳಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ ಪೀಠವು ಮಧ್ಯಂತರ ಜಾಮೀನಿನಲ್ಲಿ ಶ್ವೇತಾಂಬರಿ ಭಟ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಫೆ.19ರಂದು ನಡೆಯಲಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ರಾಜಸ್ಥಾನದ ಉದಯಪುರ ಪೋಲಿಸರು ಭಟ್ ದಂಪತಿಯನ್ನು ಮುಂಬೈನಿಂದ ಬಂಧಿಸಿದ್ದರು. ಈ ವರ್ಷದ ಜ.31ರಂದು ರಾಜಸ್ಥಾನ ಉಚ್ಚ ನ್ಯಾಯಾಲಯದ ಜೋಧಪುರ ಪೀಠವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ದಂಪತಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಅವರಿಗೆ ಲಘು ಹೃದಯಾಘಾತ; ಆಸ್ಪತ್ರೆಗೆ ದಾಖಲು
ಹಾವೇರಿ : ಹಾವೇರಿಯ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಆರೋಗ್ಯದಲ್ಲಿ ಏರುಪೇರು ಆಗಿದ್ದು ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ನಾಳೆ ಹಾವೇರಿಯಲ್ಲಿ ರಾಜ್ಯ ಸರಕಾರ 1000 ದಿನಗಳ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು ಇದರ ಪೂರ್ವ ಸಿದ್ದತೆಯ ಕೆಲಸವನ್ನು ವಿಕ್ಷಣೆ ಮಾಡಿ ಮನೆಗೆ ಹೋದಾಗ ಗುರುವಾರ ರಾತ್ರಿ ಆಯಾಸ ಹಾಗು ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸವರಾಜ್ ಶಿವಣ್ಣನವರಗೆ ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯಲ್ಲಿ ಹೃದಯ ಸಮಸ್ಯೆ ಇರುವದು ಪತ್ತೆಹಚ್ಚಿದ ವೈದ್ಯರು ನಂತರ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿ ಸ್ಟಂಟ್ ಗಳನ್ನ ಅಳವಡಿಕೆ ಮಾಡಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸಚಿವ ಶಿವಾನಂದ ಪಾಟೀಲ್ ಹಾಗು ವಿಧಾನ ಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹಾಗು ಕಾಂಗ್ರೆಸ್ ನ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಬಸವರಾಜ್ ಶಿವಣ್ಣನವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಮುಂಬೈ,ಫೆ.13: ಇಲ್ಲಿಯ ಕಾಲಾ ಘೋಡಾ ಕಲಾ ಉತ್ಸವದಲ್ಲಿ ಸಾಮಾಜಿಕ ಹೋರಾಟಗಾರ ಆನಂದ್ ತೇಲ್ತುಂಬ್ಡೆಯವರು ಭಾಗವಹಿಸಬೇಕಿದ್ದ ಪುಸ್ತಕ ಚರ್ಚೆಯನ್ನು ಪೊಲೀಸರ ಆದೇಶದ ಮೇರೆಗೆ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಉತ್ಸವದ ನಿರ್ದೇಶಕಿ ಬೃಂದಾ ಮಿಲ್ಲರ್ ಅವರು, ವಿವಾದವನ್ನು ಮತ್ತು ಅನಗತ್ಯ ಗೊಂದಲವನ್ನು ತಪ್ಪಿಸುವುದು ಉತ್ತಮ ಎಂದು ಶುಕ್ರವಾರ ಹೇಳಿದರು. ಪೋಲಿಸರು ತನ್ನನ್ನು ಸಂಪರ್ಕಿಸುವವರೆಗೂ ತನಗೆ ವಿಷಯವೇ ಗೊತ್ತಿರಲಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಮಿಲ್ಲರ್, ‘ನಂತರ ನಾನು ನನ್ನ ಸಾಹಿತ್ಯ ಮೇಲ್ವಿಚಾರಕರನ್ನು ಸಂಪರ್ಕಿಸಿದ್ದೆ. ಕಾರ್ಯಕ್ರಮವು ಕೇವಲ ತೇಲ್ತುಂಬ್ಡೆಯವರ ಪುಸ್ತಕದ (ದಿ ಸೆಲ್ ಆ್ಯಂಡ್ ಸೋಲ್:ಎ ಪ್ರಿಜನ್ ಮೆಮೊಯಿರ್) ಕುರಿತಾಗಿತ್ತು ಎಂದು ಅವರು ತಿಳಿಸಿದ್ದರು’ ಎಂದು ಹೇಳಿದರು. ಪುಸ್ತಕವು ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಅನುಮೋದನೆಯನ್ನು ಪಡೆದಿದೆ ಎಂದೂ ಅವರು ಬೆಟ್ಟು ಮಾಡಿದರು. ಪೊಲೀಸರು ತನ್ನನ್ನು ಸಂಪರ್ಕಿಸಿದ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಸಂಘಟಕರು ಪ್ಯಾನೆಲಿಸ್ಟ್ಗಳಿಗೆ ಅವರ ಪೋಸ್ಟ್ಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದರು. ಆದರೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದರು ಮತ್ತು ಜನರು ಅತಿಯಾಗಿ ಪ್ರತಿಕ್ರಿಯಿಸಿದ್ದರು ಎಂದರು. ಫೆ.6ರಂದು ನಡೆಯಬೇಕಿದ್ದ ಚರ್ಚಾ ಕಾರ್ಯಕ್ರಮದಲ್ಲಿ ತೇಲ್ತುಂಬ್ಡೆ ಮತ್ತು ಲೇಖಕಿ ನೀತಾ ಕೊಲ್ಹಾಟಕರ್ ಅವರು ಭಾಗವಹಿಸಲಿದ್ದರು. ಸುದ್ದಿ ಜಾಲತಾಣ ಸ್ಕ್ರೋಲ್ನ ಸಂಪಾದಕ ನರೇಶ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರ್ವಹಿಸಲಿದ್ದರು. ಆದರೆ ಫೆ.4ರಂದು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ತೇಲ್ತುಂಬ್ಡೆ ಪ್ರಸ್ತುತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ‘ನಾನು ತೇಲ್ತುಂಬ್ಡೆಯವರ ಪುಸ್ತಕವನ್ನು ಓದಿಲ್ಲ, ಓದುವ ಉದ್ದೇಶವೂ ಇಲ್ಲ’ ಎಂದು ಮಿಲ್ಲರ್ ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ. ‘ನಾನು ಪುಸ್ತಕದ ಪರವಾಗಿದ್ದೇನೆ ಅಥವಾ ವಿರುದ್ಧವಾಗಿದ್ದೇನೆ ಎಂದು ನಾನು ಹೇಳುತ್ತಿಲ್ಲ,ನಾನು ತಟಸ್ಥ ನಿಲುವನ್ನು ಹೊಂದಿದ್ದೇನೆ. ಏಕೆಂದರೆ ಕಾಲಾ ಘೋಡಾ ಕಲಾ ಉತ್ಸವದ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಮತ್ತು ಉತ್ಸವದ ನಿರ್ದೇಶಕಿಯಾಗಿ ಅದರ ಸುರಕ್ಷತೆ ನನಗೆ ಅತ್ಯಂತ ಮುಖ್ಯವಾಗಿದೆ ’ಎಂದು ಹೇಳಿದರು. ವಾರ್ಷಿಕ ಕಾಲಾ ಘೋಡಾ ಕಲಾ ಉತ್ಸವವು ಜ.31ರಂದು ಆರಂಭಗೊಂಡು ಫೆ.8ರಂದು ಸಮಾರೋಪಗೊಂಡಿತ್ತು.
ಹರ್ಷದಲ್ಲಿ ರಾಯಲ್ ರಿಪಬ್ಲಿಕ್ ಡೀಲ್ಸ್ ಕ್ಯಾಂಪೇನ್: ರಾಯಲ್ ಎನ್ಫೀಲ್ಡ್ ಬೈಕ್, ನಾಲ್ಕು ಅದೃಷ್ಟಶಾಲಿ ವಿಜೇತರ ಆಯ್ಕೆ
ಉಡುಪಿ, ಫೆ.13: ಹರ್ಷ ಗೃಹೋಪಯೋಗಿ 21 ಮಳಿಗೆಗಳಲ್ಲಿ ಜ. 22ರಿಂದ 27ರ ತನಕ ನಡೆದ ರಾಯಲ್ ರಿಪಬ್ಲಿಕ್ ಡೀಲ್ಸ್ ಕ್ಯಾಂಪೇನ್ ಅಂಗವಾಗಿ ರಾಯಲ್ ಎನ್ಫೀಲ್ಡ್ 350ಸಿಸಿ ಬೈಕ್ ವಿಜೇತ 4ಅದೃಷ್ಟಶಾಲಿ ಗ್ರಾಹಕರ ಆಯ್ಕೆ ಶುಕ್ರವಾರ ನಡೆಯಿತು. ಸಿಟಿ ಬಸ್ ನಿಲ್ದಾಣದ ಬಳಿಯ ಹರ್ಷ ಮಳಿಗೆಯಲ್ಲಿ ನಡೆದ ಸಮಾರಂಭ ದಲ್ಲಿ ನಾಲ್ವರು ಅದೃಷ್ಟಶಾಲಿ ಗ್ರಾಹಕರನ್ನು ರೋಶನಿ ಮಲ್ಪೆ, ವಿದ್ಯಾ ಶೆಟ್ಟಿ ನಿಟ್ಟೆ, ಉಮೇಶ್ ಶೆಟ್ಟಿ ಮಣಿಪಾಲ, ಪತ್ರಕರ್ತ ಆ್ಯಸ್ಟ್ರೋ ಮೋಹನ್ ಆಯ್ಕೆ ಮಾಡಿದರು. ಹರ್ಷ ಮಳಿಗೆಗಳಲ್ಲಿ 15,000ರೂ.ಗಳಿಗೂ ಅಧಿಕ ಶಾಪಿಂಗ್ ಮಾಡಿದವ ರಿಗೆ ನೀಡಿದ ಕೂಪನ್ಗಳ ಆಧಾರದಲ್ಲಿ ನಾಲ್ಕು ವಲಯವಾರು ರಾಯಲ್ ಎನ್ಫೀಲ್ಡ್ 350ಸಿಸಿ ಬೈಕ್ ವಿಜೇತರ ಆಯ್ಕೆ ಮಾಡಲಾಯಿತು. ಹರ್ಷ ಹೆಡ್ ಆಫ್ ಮಾರ್ಕೆಟಿಂಗ್ ಶ್ರೀವತ್ಸ ಬಲ್ಲಾಳ್, ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಡಿಸೋಜಾ, ಸ್ಟೋರ್ ಮ್ಯಾನೇಜರ್ ಅಭಿನ್, ಎಜಿಎಂ(ಸೇಲ್ಸ್) ಸ್ಟೀವನ್ ಲೋಬೊ ಹಾಗೂ ರಿಟೇಲ್ ಕಮರ್ಶಿಯಲ್ ಆಪರೇಶನ್ಸ್ವಿಭಾಗದ ಮ್ಯಾನೇಜರ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಾಯಲ್ ಎನ್ಫೀಲ್ಡ್: ಅದೃಷ್ಟಶಾಲಿ ವಿಜೇತರು *ಜ್ಯೋತಿ ಎಸ್., ಉಡುಪಿ ಕೆ.ಎಂ. ಮಾರ್ಗ ಸ್ಟೋರ್ (ಕೂಪನ್: 7414) *ನುಮಾನ್, ಮಂಗಳೂರು ಫಳ್ನೀರ್ ಸ್ಟೋರ್(ಕೂಪನ್: 5681) *ಪ್ರವೀಣ್, ಧಾರವಾಡ ಸ್ಟೋರ್(ಕೂಪನ್:4768) *ಗಣೇಶ್ ಟಿ. ಆರ್., ಶಿವಮೊಗ್ಗ ಸ್ಟೋರ್(ಕೂಪನ್:3700) ಪ್ರತಿಯೊಂದು ಹಬ್ಬವನ್ನು ಸಂಭ್ರಮದಿಂದ ಗ್ರಾಹಕರ ಸಹಭಾಗಿತ್ವದಲ್ಲಿ ಆಚರಿಸಲಾಗುತ್ತಿದೆ. ಹರ್ಷೋತ್ಸವ, ದೀಪಾವಳಿ ಹಾಗೂ ಮೊದಲ ಬಾರಿಗೆ ಗಣರಾಜ್ಯ ಅಂಗವಾಗಿ ರಾಯಲ್ ರಿಪಬ್ಲಿಕ್ ಡೀಲ್ಸ್ ಕ್ಯಾಂಪೇನ್ ನಡೆದಿದ್ದು ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರ್ಚ್ ತಿಂಗಳಲ್ಲಿ ಹಷೋತ್ಸವಕ್ಕೆ ಸಿದ್ಧತೆ ನಡೆದಿದೆ. -ಸಿದ್ಧಾರ್ಥ ಪ್ರಭು, ಹೆಡ್ ಆಫ್ ಮರ್ಚೆಂಡೈಸಿಂಗ್, ಹರ್ಷ ಪ್ರಧಾನ ಕಚೇರಿ, ಅಂಬಲಪಾಡಿ, ಉಡುಪಿ
ಉಡುಪಿ, ಫೆ.13:ಉಡುಪಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಬಸಪ್ಪ ಛಲವಾದಿ (50) ಎಂಬವರು ಕಳೆದ ಜುಲೈ6ರಂದು ಮನೆಯಿಂದ ಹೊರಗೆ ಹೋದವರು ವಾಪಾಸ್ಸುಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರ, ಅಗಲ ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ: 9480805448, ಪಿ.ಎಸ್.ಐ ಮೊ.ನಂ: 9480805475, 8277988945 ಹಾಗೂ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ:0820-2526444ನ್ನು ಸಂಪರ್ಕಿಸಬಹುದು ಎಂದು ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿ: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ
ಉಡುಪಿ, ಫೆ.13: ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಕಚೇರಿ, ಹೋಟೆಲ್, ಬ್ಯಾಂಕ್, ಕಂಪೆನಿಗಳು, ಅಂಗಡಿಗಳ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆಯಲ್ಲಿರುವಂತೆ ಹಾಗೂ ನಾಮಫಲಕದ ಜೊತೆಗೆ ಆ ಸ್ಥಳದ ಐತಿಹ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಊರಿನ ಹೆಸರನ್ನು ಸಹ ನಮೂದಿಸುವುದು ಕಡ್ಡಾಯವಾಗಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು, ತಮ್ಮ ಉದ್ದಿಮೆಯ ನಾಮಫಲಕದಲ್ಲಿ ಊರಿನ ಹೆಸರಿನೊಂದಿಗೆ ಕನ್ನಡದಲ್ಲಿ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಇತರೆ ಭಾಷೆಯ ನಾಮಫಲಕಕ್ಕಿಂತ ಕನ್ನಡ ನಾಮಫಲಕವನ್ನು ಶೇ.60ರಷ್ಟು ದೊಡ್ಡದಾಗಿ ಪ್ರದರ್ಶಿಸಬೇಕು. ಈವರೆಗೂ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳದ/ನವೀಕರಿಸದೇ ಇರುವ ಉದ್ದಿಮೆದಾರರು, ಉದ್ದಿಮೆ ಪರವಾನಿಗೆ ಪಡೆಯಲು ನಿಯಮಾ ನುಸಾರ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದರೂ, ಸಹ ಕೆಲವು ವಾಣಿಜ್ಯ ಮಳಿಗೆಗಳು ನಗರಸಭೆಯ ಸೂಚನೆಗಳನ್ನು ಪಾಲಿಸದೆ ಇರುವುದು ಕಂಡು ಬಂದಿದೆ. ಫೆಬ್ರವರಿ ತಿಂಗಳೊಳಗೆ ನಾಮ ಫಲಕಆಳವಡಿಸದಿದ್ದರೆ ದಂಡ ವಿಧಿಸಲಾಗುವುದು ಹಾಗೂ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಮಾದಕ ವಸ್ತು ಸೇವಿಸಿದ್ದ ಆರೋಪ: ಮೂವರ ಬಂಧನ
ಮಂಗಳೂರು, ಫೆ.13: ನಗರದ ಕೊಟ್ಟಾರಚೌಕಿ ಮತ್ತು ಕೂಳೂರು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ್ದ ಆರೋಪದಲ್ಲಿ ಮೂವರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಲೋಹಿತ್ ನಗರದ ಸುದೀಪ್ (23), ಗುರುಪುರ ಕೈಕಂಬದ ಶಿಖಿನ್ (25), ಶಕ್ತಿನಗರದ ಸೋಹನ್ ಶೆಟ್ಟಿ (25) ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಭಾರತ ಮತ್ತು ಬಾಂಗ್ಲಾದೇಶ ಮತ್ತೊಮ್ಮೆ ಒಟ್ಟಿಗೆ ಸಾಗುವ ಸಮಯ ಬಂದಂತೆ ಭಾಸವಾಗುತ್ತಿದೆ, ಈ ಮಾತು ಯಾಕಂದ್ರೆ ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಾಂಧವ್ಯ ಹಾಳಾಗಿ ಹೋಗಿತ್ತು. ಅದರಲ್ಲೂ ಶೇಖ್ ಹಸೀನಾ ಅಧಿಕಾರ ಬಿಟ್ಟು ಕೆಳಗೆ ಇಳಿದು, ಭಾರತಕ್ಕೆ ಬಂದು ಆಶ್ರಯ ಪಡೆದ ನಂತರ ಎರಡೂ ದೇಶಗಳ ಸಂಬಂಧ ಹಾಳು ಮಾಡಲು ಅನೇಕರು ಎಲ್ಲಾ
ದ.ಕ. ಜಿಲ್ಲೆಯ ಶಾಲಾ, ಕಾಲೇಜುಗಳ ಕುಂದುಕೊರತೆಗಳ ಅಹವಾಲು ಸಭೆ
ಮಂಗಳೂರು, ಫೆ.13: ದ.ಕ.ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಕುಂದು ಕೊರತೆಗಳ ಅಹವಾಲು ಮತ್ತು ಸ್ಪಂದನಾ ಸಭೆಯು ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡರ ಅಧ್ಯಕ್ಷತೆಯಲ್ಲಿ ಶುಕ್ರವಾರ ದ.ಕ.ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಶಿಕ್ಷಕರ ಸಂಘಟನೆಗಳು ಅನೇಕ ಪ್ರಮುಖ ವಿಚಾರಗಳ ಬಗ್ಗೆ ಸದಸ್ಯರ ಗಮನ ಸೆಳೆದರು. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸುವ ಈ ಅವಧಿಯಲ್ಲಿ ಶಿಕ್ಷಕರಿಗೆ ಚುನಾವಣೆಯ ಬಿಎಲ್ಒ ಜವಾಬ್ದಾರಿ ನೀಡಿರುವುದು ಸರಿಯಲ್ಲ. ಇದರಿಂದ ಎಸೆಸೆಲ್ಸಿ ಫಲಿತಾಂಶದ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ. 400 ಮಕ್ಕಳಿರುವ ಕೆಲವು ಶಾಲೆಗಳಲ್ಲಿ ಒಂದೆರಡು ಶಿಕ್ಷಕರು ಇದ್ದಾಗ ಅವರಿಗೂ ಬಿಎಲ್ಒ ಜವಾಬ್ದಾರಿ ನೀಡಿರುವುದರಿಂದ ಶಿಕ್ಷಣದ ಮೇಲೆ ಬಹುದೊಡ್ಡ ಪರಿಣಾಮ ಬೀಳಲಿದೆ ಎಂದು ಶಿಕ್ಷಕರ ಹಲವು ಸಂಘಟನೆಗಳ ಪ್ರಮುಖರು ಶಿಕ್ಷಣ ಇಲಾಖೆಯ ಗಮನಸೆಳೆದರು. ಚುನಾವಣೆ ಕೆಲಸ ತುಂಬಾ ಮುಖ್ಯ. ಜೊತೆಗೆ ಮಕ್ಕಳ ಶಿಕ್ಷಣವೂ ಮುಖ್ಯ. ಹಾಗಾಗಿ ಬಿಎಲ್ಒ ಕೆಲಸಗಳಿಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯವರನ್ನು ಬಿಟ್ಟು ಉಳಿದ ಇಲಾಖೆಯಲ್ಲಿ ಇರುವವರನ್ನು ಬಳಸಿಕೊಂಡರೆ ಉತ್ತಮ ಭೋಜೇಗೌಡ ಹೇಳಿದರು. ಶಿಕ್ಷಕ ತ್ಯಾಗಂ ಹರೇಕಳ ಮಾತನಾಡಿ ದೈಹಿಕ ಶಿಕ್ಷಕರನ್ನು ಕೂಡ ಬಿಎಲ್ಒಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅದೂ ಕೂಡ ತಾವಿರುವ ಪ್ರದೇಶದ ಬದಲು ಇತರ ಪ್ರದೇಶವನ್ನು ಗೊತ್ತುಪಡಿಸಲಾಗಿದೆ. ಇದರಿಂದ ಬಹಳಷ್ಟು ತೊಂದರೆ ಆಗುತ್ತಿದೆ ಎಂದರು. ಪ್ರಾಂಶುಪಾಲ ವಿಠಲ್ ಕೆ. ಮಾತನಾಡಿ ವಿದ್ಯಾರ್ಥಿಗಳ ಅನುಗುಣಕ್ಕೆ ಉಪನ್ಯಾಸಕರ ನೇಮಕ ಮಾಡುವುದು ಸರಿಯಾದ ಕ್ರಮವಲ್ಲ. ಕಡಿಮೆ ವಿದ್ಯಾರ್ಥಿಗಳು ಇರುವ ಕಾಲೇಜುಗಳಿಗೆ ಉಪನ್ಯಾಸಕ/ಪ್ರಾಂಶುಪಾಲರನ್ನು ನೇಮಿಸುವುದೇ ಇಲ್ಲ. ಇದರಿಂದ ಸೀಮಿತ ಸಂಖ್ಯೆಯಲ್ಲಿ ಮಕ್ಕಳಿರುವ ಶಾಲೆಯಲ್ಲಿ ಅನ್ಯಾಯವಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾತನಾಡಿ ಈ ಹಿಂದೆ ಚುನಾವಣೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಿಎಲ್ಒ ಕೆಲಸಗಳಿಗೆ ಬಳಸಲಾಗುತ್ತಿತ್ತು. ಈ ಬಾರಿ ಶಿಕ್ಷಕರನ್ನು ಬಳಸಿಕೊಳ್ಳುವಂತೆ ಆಯೋಗದ ಸೂಚನೆ ಇದೆ. ಹೀಗಾಗಿ ಇದರಲ್ಲಿ ನಮಗೆ ಏನೂ ಮಾಡುವಂತಿಲ್ಲ. ಅನಾರೋಗ್ಯದ ಸಮಸ್ಯೆ ಇರುವ ಮಂದಿಗೆ ವಿನಾಯಿತಿ ನೀಡುವ ಕೆಲಸವನ್ನು ಮಾಡಬಹುದಾಗಿದೆ ಎಂದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ದ.ಕ.ಜಿ.ಪಂ. ಸಿಇಒ ನರವಡೆ ವಿನಾಯಕ್ ಕರ್ಬಾರಿ, ಡಿಡಿಪಿಐ ಶಶಿಧರ್, ಡಿಡಿಪಿಯು ರಾಜೇಶ್ವರಿ, ಡಯೆಟ್ನ ಸದಾನಂದ ಪೂಂಜ, ಶಿಕ್ಷಣ ಕ್ಷೇತ್ರದ ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ನವೀನ್ ಶೆಟ್ಟಿ, ಮಂಜುನಾಥ ರೇವಣ್ಕರ್, ರಿಯಾಝ್, ಶಿವಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಫೆ.16ಕ್ಕೆ ಶಾಲಾ ಮಾನ್ಯತೆ ನವೀಕರಣ ಸಭೆ ರಾಜ್ಯಾದ್ಯಂತ ಶಾಲಾ ಮಾನ್ಯತಾ ನವೀಕರಣ ಸಮಸ್ಯೆ ಇದೆ. ಅದರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಫೆ.16ರಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸಹಿತ ಇಲಾಖೆಯ ಅಧಿಕಾರಿಗಳ ಜತೆಗೆ ಸಭೆ ನಡೆಯಲಿದೆ. ಶಾಲೆಗಳ ಮಾನ್ಯತಾ ನವೀಕರಣಕ್ಕೆ ಸಂಬಂಧಿಸಿ ಜಮೀನಿನ ಕನ್ವರ್ಶನ್ ವಿಚಾರವನ್ನು ಕೈ ಬಿಟ್ಟಾಗ ಸಾಕಷ್ಟು ಸಮಸ್ಯೆಗಳು ಬಗೆಹರಿ ಯುತ್ತದೆ. ನವೀಕರಣ ವಿಚಾರ ಭ್ರಷ್ಟಾಚಾರದ ದಂಧೆಯಾಗುತ್ತಿದೆ. ಎಂದು ಎಸ್.ಎಲ್. ಭೋಜೇಗೌಡ ಹೇಳಿದರು.
ಫಿಲ್ಮ್ ಚೇಂಬರ್ ನ ಸಭೆಯಲ್ಲಿ ಹೃದಯಾಘಾತ: ʼಸಾಹಸಸಿಂಹʼ ಖ್ಯಾತಿಯ ಚಲನಚಿತ್ರ ನಿರ್ದೇಶಕ ಜೋ ಸೈಮನ್ ನಿಧನ
ಬೆಂಗಳೂರು: ಶುಕ್ರವಾರ ನಗರದಲ್ಲಿ ಚಲನಚಿತ್ರ ನಿರ್ದೇಶಕ ಜೋ ಸೈಮನ್ ನಿಧನರಾಗಿದ್ದಾರೆ. ಫಿಲ್ಮ್ ಚೇಂಬರ್ ನ ಸಭೆಯಲ್ಲಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮೂಲತಃ ಮಂಡ್ಯ ಮೂಲದ ಜೋ ಸೈಮನ್ ಅವರು, 1967ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು. 1977ರಲ್ಲಿ ‘ಒಂದು ಪ್ರೇಮದ ಕಥೆ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶರಾಗಿದ್ದು, ನಂತರ ಕನ್ನಡದ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಸಾಹಸಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಫೆ.14 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆಯೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಚಿವ ಶಿವರಾಜ ತಂಗಡಗಿ ಸಂತಾಪ: ಚಲನಚಿತ್ರ ನಿರ್ದೇಶಕ ಜೋಸೈಮನ್ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು, ತಂತ್ರಜ್ಞರನ್ನು ಪರಿಚಯಿಸಿ ಕನ್ನಡ ಚಲನಚಿತ್ರ ರಂಗಕ್ಕೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಅವರ ನಿಧನದಿಂದ ಕನ್ನಡ ಚಲನಚಿತ್ರ ರಂಗ ಒಬ್ಬ ಕ್ರಿಯಾಶೀಲ, ಸೃಜನಶೀಲ ನಿರ್ದೇಶಕನನ್ನು ಕಳೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಫೆ.17ರಂದು ಸಂಭವಿಸಲಿರುವ ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸಲಿದೆಯೇ? ಇಲ್ಲಿದೆ ಸತ್ಯಾಸತ್ಯತೆ
ಬೆಂಗಳೂರು: ಖಗೋಳ ಪ್ರಿಯರ ಪಾಲಿಗೆ 2026 ನೇ ವರ್ಷವು ವಿಶೇಷವಾಗಿರಲಿದೆ. ಈ ವರ್ಷದ ಮೊದಲ ಖಗೋಳ ವಿಸ್ಮಯವಾದ 'ಕಂಕಣ ಸೂರ್ಯಗ್ರಹಣ' (Annular Solar Eclipse) ಫೆಬ್ರವರಿ 17 ರಂದು ಸಂಭವಿಸಲಿದೆ. ಆಕಾಶದಲ್ಲಿ ಸೂರ್ಯನು ಬೆಂಕಿಯ ಉಂಗುರದಂತೆ (Ring of Fire) ಕಾಣುವ ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜಗತ್ತು ಕಾತರದಿಂದ ಕಾಯುತ್ತಿದೆ. ಆದರೆ, ಪ್ರತಿಯೊಬ್ಬ ಭಾರತೀಯರ ಮನದಲ್ಲೂ
ಉಡುಪಿ| ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ನಗರಸಭೆಗೆ ವಂಚನೆ: ಮಹಿಳೆ ಸಹಿತ ಇಬ್ಬರು ಆರೋಪಿಗಳ ಬಂಧನ
ಉಡುಪಿ: ಉಡುಪಿ ನಗರಸಭೆಯಲ್ಲಿ ಆಸ್ತಿತೆರಿಗೆ ಪಾವತಿಯಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸರು 24 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬಡಗುಬೆಟ್ಟಿನ ಸುಪೇಶ್ ಹಾಗೂ ಕುಂತಳನಗರದ ಶಾಂತಾ ಎಂದು ಗುರುತಿಸಲಾಗಿದೆ. ಪ್ರಕರಣದ ಹಿನ್ನೆಲೆ: ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಅವರು ಗುರುವಾರ ನೀಡಿದ ದೂರಿನ ಪ್ರಕಾರ, ನಗರಸಭೆ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್ನ ನಗರಸಭೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇದೆ. ಫೆ.3ರಂದು ಆಸ್ತಿತೆರಿಗೆ ಪಾವತಿಗಳ ತುಲನೆ ಯಲ್ಲಿ, ಜನವರಿ 28ರಂದು ಪಾವತಿಯಾಗಿದೆ ಎಂದು ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಪತ್ತೆಯಾದರೂ, ಅದೇ ದಿನಾಂಕದ ಬ್ಯಾಂಕ್ ವಿವರ ಪಟ್ಟಿಯಲ್ಲಿ ಪಾವತಿ ದಾಖಲಾಗಿರಲಿಲ್ಲ ಎಂಬುದು ಗಮನಕ್ಕೆ ಬಂದಿದೆ. ಅದೇ ರೀತಿ ಫೆಬ್ರವರಿ 4ರಂದು ಪರಿಶೀಲನೆ ನಡೆಸಿದಾಗ, ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಕೆಲವು ಚಲನ್ಗಳು ಈಗಾಗಲೇ ಜನವರಿ 28ರಂದು ಜನರೇಟ್ ಆಗಿದ್ದ ಅದೇ ಚಲನ್ ಸಂಖ್ಯೆಯನ್ನು ಹೊಂದಿರುವುದು ಪತ್ತೆಯಾಗಿದೆ. ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಸೀಲ್ ಹೊಂದಿದ ಚಲನ್ಗಳು ದೊರೆತಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಯಾರೋ ಆರೋಪಿಗಳು ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಆಸ್ತಿತೆರಿಗೆ ಪಾವತಿಸಿದ ಹಣವನ್ನು ವಂಚನೆ ಮಾಡಿರುವ ಶಂಕೆಯ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ವೇಳೆ ಬಡಗುಬೆಟ್ಟು ಕಸ್ತೂರ್ಬಾ ನಗರದ ಸುಪೇಶ್ (25) ಹಾಗೂ ಮೂಡು ಅಲೆವೂರು ಕುಂತಲ ನಗರದ ಶಾಂತಾ (43) ಎಂಬಿಬ್ಬರು ಆರೋಪಿಗಳನ್ನು ಕೃಷ್ಣ ಮಠದ ರಾಜಾಂಗಣ ಸಮೀಪ ಬಂಧಿಸಲಾಗಿದೆ. ಆರೋಪಿಗಳಿಂದ ವಂಚನೆಗೆ ಬಳಸಿದ ಬ್ಯಾಂಕ್ ಸೀಲ್ ಹಾಗೂ ಸಂಬಂಧಿತ ದಾಖಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ (ಪ್ರಬಾರ) ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ಆರೋಪಿಗಳನ್ನು ಬಂಧಿಸಲಾಯಿತು.
HALನೊಂದಿಗೆ ₹2,312 ಕೋಟಿ ರೂ. ಮೊತ್ತದ ಖರೀದಿ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಸಹಿ
ನೌಕಾಪಡೆಗೆ 8 ಡಾರ್ನಿಯರ್, 228 ವಿಮಾನಗಳ ಖರೀದಿ
ಅಕ್ರಮ ಮರಳುಗಾರಿಕೆ: ಆರೋಪಿಗಳ ಬಂಧನ; ಸೊತ್ತುಗಳು ವಶ
ಉಡುಪಿ, ಫೆ.13: ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಇಪ್ಪತ್ತಕ್ಕೂ ಅಧಿಕ ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ದೇವಾನಂದ ಶೆಟ್ಟಿ ಹಳ್ನಾಡು, ಉತ್ತರ ಪ್ರದೇಶ ಮೂಲದ ಅಮರೇಶ(27), ಕೃಪಾಲ್(32), ಪರಶುರಾಮ(35), ಪ್ರಬೀನ್(20), ರಾಮಚರಣ್(35), ಸತ್ರೊಹನ್ (28), ರಾಮ ಅವತಾರ್ (21), ಬಿಮಲೇಶ್(23), ರಾಮಲಾಲ್(40), ಬೊಲಾ(23), ಸಂಜಯ (27), ಹಿರಿದೆ ರಾಮ(27), ಸರ್ವನ್(21), ಮುಖೇಶ(24), ಕರಣ್(21), ಪ್ರೀನ್ಸ್ (19), ಕಿಶುನ್(19), ಸುರಾಜ(30), ನೀರಾಜ(22), ಕಲ್ಲು(19), ರಾಜೀವ(26) ಎನ್ನುವವರ ವಿರುದ್ದ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಸುಮಾರು 8 ಲಕ್ಷ 50 ಸಾವಿರ ಮೌಲ್ಯದ 315 ಯುನಿಟ್ ಮರಳು, ಮರಳು ತೆಗೆಯಲು ಬಳಸಿದ 3 ಲಕ್ಷ ಮೌಲ್ಯದ ಮೂರು ಪೈಬರ್ ಬೋಟ್ ಗಳ ಸಹಿತ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಇವರ ಮಾರ್ಗದರ್ಶನದಲ್ಲಿ ಕೋಟ ಠಾಣಾ ಪಿಎಸ್ಐ ಪ್ರವೀಣ್ಕುಮಾರ್ ಆರ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ಸಾಲ ನೀಡುವ ಸಂಸ್ಥೆಗಳು ಕದ್ದ ಆಸ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಬೇಕು - ಕರ್ನಾಟಕ ಹೈಕೋರ್ಟ್ ಆದೇಶ
ಕದ್ದ ಆಸ್ತಿಯ ವಿಷಯನ್ನು ಹಿಂದಿರುಗಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಐಐಎಫ್ಎಲ್ ಫೈನಾನ್ಸ್ ಕಂಪನಿಯಿಂದ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ವಸ್ತುಗಳನ್ನು ಹಿಂದಿರುಗಿಸುವ ಅಧಿಕಾರನ್ನು ಹೊಂದಿದ್ದಾರೆ. ಆ ಬಗ್ಗೆ ನೋಟಿಸ್ಗಳನ್ನು ಹೊರಡಿಸುವ ಅಧಿಕಾರ ಪೊಲೀಸರಿಗೆ ಇದೆ ಎಂದು ಕೋರ್ಟ್ ಹೇಳಿದೆ.
ಬಳ್ಳಾರಿ | ಕಂಪ್ಲಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ
ಬಳ್ಳಾರಿ/ ಕಂಪ್ಲಿ: ನಾಡಿನ ಸಂಸ್ಕೃತಿ ವೈಭವವನ್ನು ಪ್ರತಿಬಿಂಬಿಸುವ ಕಂಪ್ಲಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳ ಪ್ರಮುಖ ಆಕರ್ಷಣೆಯಾಗಿವೆ. ಉತ್ಸವದ ಅಂಗವಾಗಿ ಸಕ್ಕರೆ ಕಾರ್ಖಾನೆಯ ಮುಖ್ಯ ವೇದಿಕೆಯ ಎದುರಿನ ಆವರಣದಲ್ಲಿ ತೋಟಗಾರಿಕೆ, ಕೃಷಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಸೇವಂತಿಗೆ ಹೂವುಗಳಿಂದ ಗಂಡುಗಲಿ ಕುಮಾರರಾಮನ ಕೋಟೆಯ ಮಾದರಿ ನಿರ್ಮಿಸಲಾಗಿದ್ದು, ಐತಿಹಾಸಿಕ ಸೋಮಪ್ಪ ಮೂರ್ತಿಯ ಪ್ರತಿರೂಪವೂ ಸಿದ್ಧಪಡಿಸಲಾಗಿತ್ತು. ಸಿರಿಧಾನ್ಯಗಳಿಂದ ವಿವಿಧ ಕಲಾಕೃತಿಗಳನ್ನು ರೂಪಿಸಲಾಗಿದ್ದು, ವೀಕ್ಷಕರ ಗಮನ ಸೆಳೆದವು. ಬುಧವಾರ ಸಂಜೆ ತುಂಗಭದ್ರಾ ಆರತಿ ಪ್ರಯುಕ್ತ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಗುರುವಾರ ಉತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಮೇಳ ಇನ್ನಷ್ಟು ರಂಗೇರಿಸಿತು. ಉತ್ಸವಕ್ಕೆ ಹರಿದು ಬಂದ ಅನೇಕ ವೀಕ್ಷಕರು ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ ಹಾಗೂ ಇತರೆ ಇಲಾಖೆಗಳ ವಸ್ತು ಪ್ರದರ್ಶನಗಳನ್ನು ಕಣ್ತುಂಬಿಕೊಂಡರು. ಈ ವಸ್ತು ಪ್ರದರ್ಶನಕ್ಕೆ ಶಾಸಕ ಜೆ.ಎನ್.ಗಣೇಶ್ ಸೇರಿದಂತೆ ಗಣ್ಯರು ಚಾಲನೆ ನೀಡಿದರು.
ಆರೋಗ್ಯ ಇಲಾಖೆಯ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು, ಸಿ.ಎಂ ಎಚ್ಚರಿಕೆ
ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಪತ್ರ ಬರೆದು ನಿರ್ದೇಶಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ
ಬೆಂಗಳೂರು: ‘ಸಿಎಂ ಸಿದ್ದರಾಮಯ್ಯರ ಹೆಸರಿನಲ್ಲಿ ನಕಲಿ ವರ್ಗಾವಣೆ ಪತ್ರವನ್ನು ಸೃಷ್ಟಿಸಿ ಜಾಲತಾಣಗಳಲ್ಲಿ ಹಂಚಿಕೆ ಮಾಡಿ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮತ್ತು ಪರಿಷತ್ ಸದಸ್ಯ ರವಿಕುಮಾರ್ ಹಾಗೂ ಇನ್ನಿತರರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ಬಾಬು, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಶುಕ್ರವಾರ ಈ ಸಂಬಂಧ ದೂರು ನೀಡಿರುವ ರಮೇಶ್ ಬಾಬು, ‘ಪ್ರಸಾರವಾಗಿರುವ ಪತ್ರವು ಸಂಪೂರ್ಣ ಕೃತಕ ಹಾಗೂ ದುರುದ್ದೇಶದಿಂದ ಕೂಡಿದೆ. ದಿನಾಂಕ ಇಲ್ಲದ 2024ರ ಸಂಖ್ಯೆ ಇಲ್ಲದ ಪತ್ರ ಸೃಷ್ಟಿ ಮಾಡಿ ಅಪಪ್ರಚಾರ ಮೂಲಕ ವ್ಯಕ್ತಿತ್ವಕ್ಕೆ ಮಸಿ ಬಳಿದು ಚಾರಿತ್ರ್ಯಹರಣ ಮಾಡುವ ಕೆಲಸ ಮಾಡಿ ಅಪರಾಧ ಎಸಗಿರುತ್ತಾರೆ. ಇದು ಜನರನ್ನು ತಪ್ಪುದಾರಿಗೆಳೆಯುವುದು, ಸಿಎಂ ಅವರ ಸಂವಿಧಾನಿಕ ಹುದ್ದೆಯ ಗೌರವ ಹಾನಿ, ಸರಕಾರದ ವಿರುದ್ಧ ಜನರಲ್ಲಿ ಅನುಮಾನ ಮತ್ತು ಅಶಾಂತಿ ಉಂಟುಮಾಡುವುದು, ರಾಜಕೀಯ ಲಾಭ ಪಡೆಯಲು ಸುಳ್ಳು ಪ್ರಚಾರ ನಡೆಸುವುದು ಆಗಿದ್ದು ಕ್ರಿಮಿನಲ್ ಅಪರಾಧದಿಂದ ಕೂಡಿರುತ್ತದೆ ಎಂದು ಉಲ್ಲೇಖಿಸಿದ್ದಾರೆ. ಈ ಕೃತ್ಯವು ಗಂಭೀರ ಅಪರಾಧವಾಗಿದ್ದು, ವಿಶೇಷವಾಗಿ, ಸರಕಾರಿ ದಾಖಲೆಗಳ ಕಟ್ಟುಕತೆ, ಸುಳ್ಳು ದಾಖಲೆಗಳನ್ನು ನಿಜವೆಂದು ಬಳಕೆ, ಮಾನಹಾನಿ, ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಸುಳ್ಳು ಮಾಹಿತಿ ಪ್ರಸಾರ, ಅಪರಾಧ ಸಂಚುಗಳಿಂದ ಕೂಡಿರುತ್ತದೆ. ಇವುಗಳುBharatiya Nyaya Sanhita-2023ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ. ಚುನಾಯಿತ ಜನಪ್ರತಿನಿಧಿಗಳಿಂದ ಇಂತಹ ಕೃತ್ಯ ನಡೆಯುವುದು ಗಂಭೀರ ವಿಷಯವಾಗಿದ್ದು, ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ, ದಯವಿಟ್ಟು ಸಂಬಂಧಪಟ್ಟ ಶಾಸಕ ಮತ್ತು ಪರಿಷತ್ ಸದಸ್ಯರ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಬೇಕು. ನಕಲಿ ಪತ್ರದ ಫೊರೆನ್ಸಿಕ್ ಪರಿಶೀಲನೆ ನಡೆಸಬೇಕು. ಜಾಲತಾಣಗಳಲ್ಲಿ ಪತ್ರವನ್ನು ಮೂಲವನ್ನು ಪತ್ತೆ ಹಚ್ಚಬೇಕು. ಅಲ್ಲದೆ, ಮುಂದಿನ ಪ್ರಸಾರ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ಬಾಬು ದೂರಿನಲ್ಲಿ ಆಗ್ರಹಿಸಿದ್ದಾರೆ.
ಬಳ್ಳಾರಿ | ವಿದ್ಯುತ್ ಖಾಸಗೀಕರಣಕ್ಕೆ ವಿರೋಧ: ಜೆಸ್ಕಾಂ ನೌಕರರಿಂದ ಪ್ರತಿಭಟನೆ
ಬಳ್ಳಾರಿ / ಕಂಪ್ಲಿ: ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಜೆಸ್ಕಾಂ ನೌಕರರು ಹಾಗೂ ಸಿಬ್ಬಂದಿಗಳು ಪಟ್ಟಣದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ನಂತರ ಎಇಇ ಶ್ರೀನಿವಾಸ ಪ್ರಸಾದ್ ಮಾತನಾಡಿ, ವಿದ್ಯುತ್ ಖಾಸಗೀಕರಣ ಕಾಯ್ದೆ ತರಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ. ಇದಕ್ಕೆ ವಿದ್ಯುತ್ ಇಲಾಖೆಯ ನೌಕರರ ತೀವ್ರ ವಿರೋಧವಿದೆ ಎಂದರು. ಇಂಧನ ಇಲಾಖೆ ಸಾರ್ವಜನಿಕರ ಆಸ್ತಿಯಾಗಿದ್ದು, ಅದನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಿದರೆ ರೈತರು ಹಾಗೂ ಸಾಮಾನ್ಯ ಗ್ರಾಹಕರಿಗೆ ಅನ್ಯಾಯವಾಗಲಿದೆ. ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ವಿದ್ಯುತ್ ಕಾಯ್ದೆ ತಿದ್ದುಪಡಿ ಬಿಲ್ ನೌಕರರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಸಾವಿರಾರು ನೌಕರರ ತ್ಯಾಗ ಮತ್ತು ಶ್ರಮದಿಂದ ನಿರ್ಮಿತವಾದ ಈ ಬೃಹತ್ ಸಂಸ್ಥೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನೌಕರರ ಒಗ್ಗಟ್ಟಿನಿಂದ ಮಾತ್ರ ಈ ಕಾಯ್ದೆಯನ್ನು ತಡೆಯಲು ಸಾಧ್ಯ. ಕೇಂದ್ರ ಸರ್ಕಾರ ಕೂಡಲೇ ಖಾಸಗೀಕರಣದ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸೆಕ್ಷನ್ ಅಧೀಕ್ಷಕ ವಿನೋದ್, ಜೆಇ ಭೀಮೇಶ, ಪಟ್ಟಣ ಶಾಖಾ ಅಧಿಕಾರಿ ಶಮಿವುಲ್ಲಾ ಸೇರಿದಂತೆ ಪಟ್ಟಣ ಮತ್ತು ಗ್ರಾಮೀಣ ಭಾಗದ ನೌಕರರು ಉಪಸ್ಥಿತರಿದ್ದರು.
Ballari | ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ
ಬಳ್ಳಾರಿ / ಕಂಪ್ಲಿ: ತಾಲೂಕಿನ ಚಿಕ್ಕ ಜಾಯಿಗನೂರು ಗ್ರಾಮದ ನೇತಾಜಿ ಸುಭಾಸ್ ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಅದೇ ಶಾಲೆಯ 1999–2000ನೇ ಸಾಲಿನ ಹತ್ತನೇ ತರಗತಿ ಹಳೆಯ ವಿದ್ಯಾರ್ಥಿಗಳು ಈ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಗಳನ್ನು ನೀಡಿದರು. ನಿವೃತ್ತ ಶಿಕ್ಷಕ ಚಂದ್ರಶೇಖರ ಮಾತನಾಡಿ, “ಸಮಾಜದಿಂದ ಏನಾದರೂ ಪಡೆಯುವುದಕ್ಕಿಂತ ಮೊದಲು ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಿ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು” ಎಂದು ಹೇಳಿದರು. ಹಳೆಯ ವಿದ್ಯಾರ್ಥಿಗಳಾದ ಮಂಗಮ್ಮ, ವೀರಭದ್ರ, ಶಿವರಾಮ ಪ್ರಸಾದ್, ಮಲ್ಲಿಕಾರ್ಜುನ ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು. ಶಿಕ್ಷಕರಾದ ಚಂದ್ರಶೇಖರ, ಮುರ್ತುಜಾ ಖಾದ್ರಿ, ಶಂಕ್ರಮ್ಮ, ಬಸನಗೌಡ, ರಾಮಚಂದ್ರ, ರಾಜಶೇಖರ, ಶಿವರುದ್ರ, ಜಡಿಯಪ್ಪ, ಚನ್ನಬಸಪ್ಪ ಅವರು ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದರು. ಎಲ್ಲಾ ಶಿಕ್ಷಕರಿಗೆ ಗ್ರಾಮದ ಈಶ್ವರ ದೇವಾಲಯದಿಂದ ಶಾಲಾ ಆವರಣದವರೆಗೆ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ವಿಶೇಷವಾಗಿ ಹಳೆಯ ಶಿಕ್ಷಕರಿಂದ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಹಾಗೂ ಭೋಜನದ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಳೆಯ ವಿದ್ಯಾರ್ಥಿಗಳಾದ ವೀರೇಶ್, ವೀರಭದ್ರ, ಮಲ್ಲಿಕಾರ್ಜುನ ಜೆ., ಗುರುರಾಜ್, ರವಿಕುಮಾರ್, ಮಂಗಮ್ಮ, ಮಂಗಳಗೌರಿ, ಪುಷ್ಪಾವತಿ, ಹನುಮಂತ ರೆಡ್ಡಿ, ವಿಶ್ವನಾಥ್, ಬಸವರಾಜ್ ಸೇರಿದಂತೆ 28ಕ್ಕೂ ಹೆಚ್ಚು ವಿದ್ಯಾರ್ಥಿ–ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಫೆಬ್ರವರಿ 9ರಂದು ವರ್ಮೊಂಟ್ನ ಯುಎಸ್ ಪ್ರತಿನಿಧಿ ಬೆಕ್ಕಾ ಬಾಲಿಂಟ್ ಸುಮಾರು 30 ನಿಮಿಷಗಳ ಕಾಲ ಪರಿಷ್ಕರಿಸದ ಎಪ್ಸ್ಟೀನ್ ಫೈಲ್ಗಳನ್ನು ಪರಿಶೀಲಿಸಿದ ನಂತರ, ಇಷ್ಟೊಂದು ಪ್ರಭಾವಿ ವ್ಯಕ್ತಿಗಳು ದುರುಪಯೋಗದ ಬಗ್ಗೆ ತಿಳಿದಿದ್ದರು; ಆದರೆ ಅದನ್ನು ತಡೆಯಲು ಏನನ್ನೂ ಮಾಡಲಿಲ್ಲವಲ್ಲ ಎಂದು ಹೇಳಿದ್ದಾರೆ. ಬಾಲಿಂಟ್ ಅವರದ್ದು ರಾಜಕೀಯ ಹೇಳಿಕೆಯಾಗಿರಲಿಲ್ಲ; ಅದು ಆ ಹೊತ್ತಿಗೆ ಅವರು ವ್ಯಕ್ತಪಡಿಸಿದ ತೀಕ್ಷ್ಣ ಪ್ರತಿಕ್ರಿಯೆಯಾಗಿತ್ತು. ಎಪ್ಸ್ಟೀನ್ ಎಸಗಿದ ಅಪರಾಧಗಳ ಸಂಪೂರ್ಣ ದಾಖಲೆಗಳು ಹೊರಬರಲು ವರ್ಷಗಳೇ ಬೇಕಾಗಬಹುದು. ಆದರೆ ಆತ ಎಸಗುತ್ತಿದ್ದ ಕುಕೃತ್ಯಗಳ ಬಗ್ಗೆ ಅರಿವಿದ್ದರೂ ಪ್ರಭಾವಿ ವ್ಯಕ್ತಿಗಳು ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ಈಗ ಬಹಿರಂಗವಾಗಿರುವ ಪುರಾವೆಗಳು ಸಾಬೀತುಪಡಿಸುತ್ತವೆ. ಮುಂದಿನ ಪ್ರಶ್ನೆ ಎಪ್ಸ್ಟೀನ್ ಅಪರಾಧಗಳ ಬಗ್ಗೆ ಅಲ್ಲ. ಅವು ಸಾಬೀತಾಗಿವೆ. ಆದರೆ ಅವನ ಅಪರಾಧಗಳು ಬಹಿರಂಗಗೊಂಡ ನಂತರವೂ ಪ್ರಭಾವಿ ವ್ಯಕ್ತಿಗಳು ಯಾಕೆ ಅವನೊಂದಿಗೆ ಸಹವಾಸ ಮುಂದುವರಿಸಿದರು? ಅಪ್ರಾಪ್ತ ವಯಸ್ಸಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆ ವ್ಯಕ್ತಿಯೊಡನೆ ಅವರು ಯಾಕೆ ಸಂಪರ್ಕದಲ್ಲಿದ್ದರು ಎಂಬುದು. ಸತ್ಯಗಳು ಹೊರಬಂದ ನಂತರವೂ ಕಡಿದಿರಲಿಲ್ಲ ಸಂಪರ್ಕ ಎಪ್ಸ್ಟೀನ್ ಅಪರಾಧಗಳ ಬಗ್ಗೆ ನೈಜ ಸಮಯದಲ್ಲೇ ತಿಳಿದಿತ್ತು. ಅವುಗಳ ಬಗ್ಗೆ ವರದಿಯಾಗಿತ್ತು. ಆದರೆ ಪ್ರಭಾವಿ ವ್ಯಕ್ತಿಗಳು ಅವೆಲ್ಲವನ್ನೂ ನಿರ್ಲಕ್ಷಿಸಿದರು. ಅದಕ್ಕೆ ಒಂದು ಪ್ರಮುಖ ಉದಾಹರಣೆಯೆಂದರೆ ವಿಕಿ ವಾರ್ಡ್ ಬರೆದ 2003ರ ವ್ಯಾನಿಟಿ ಫೇರ್ ಲೇಖನ. ಅಲ್ಲಿ ಇಬ್ಬರು ಸಂತ್ರಸ್ತರಾದ ಮರಿಯಾ ಮತ್ತು ಆಕೆಯ ಸಹೋದರಿ ಆನಿ ಫಾರ್ಮರ್ ಅವರ ಸಾಕ್ಷ್ಯವನ್ನು ಸಂಪಾದಕ ಗ್ರೇಡನ್ ಕಾರ್ಟರ್ ಪ್ರಕಟವಾಗುವುದಕ್ಕೆ ಬಿಡಲಿಲ್ಲ. ಆ ಸತ್ಯವನ್ನು ಆಗ ಪ್ರಕಟಿಸಿದ್ದರೆ, ಇತರ ಅನೇಕ ಮಹಿಳೆಯರು ಭವಿಷ್ಯದ ದೌರ್ಜನ್ಯದಿಂದ ತಪ್ಪಿಸಿಕೊಳ್ಳಬಹುದಿತ್ತು. ಎಪ್ಸ್ಟೀನ್ ಎಸಗಿದ ಅಪರಾಧಗಳು ಬಹಿರಂಗವಾದಾಗಲೂ ಆತನ ಜತೆಗಿನ ಪ್ರಭಾವಿಗಳ, ಶ್ರೀಮಂತರ ಭೇಟಿ ಮುಂದುವರಿಯುತ್ತಲೇ ಇತ್ತು. ಆತನ ಇಮೇಲ್ಗಳಿಗೆ ಇವರು ಪ್ರತಿಕ್ರಿಯಿಸುತ್ತಿದ್ದರು. ಆತನ ಆಹ್ವಾನಗಳಿಗೆ ಈ ಪ್ರಭಾವಿ ವ್ಯಕ್ತಿಗಳು ‘ಇಲ್ಲ’ ಎಂದು ಹೇಳುತ್ತಿರಲಿಲ್ಲ. ಆತನನ್ನು ದೂರವಿಡುವ ಬದಲು ದಾರಿತಪ್ಪಿಸುವ ಕೆಲಸಗಳು ನಡೆದವು. ಹೆಸರುಗಳು ಮುಖ್ಯವಾಗುವುದು ಇಲ್ಲಿಯೇ. 2003ರ ಲೇಖನದಲ್ಲಿನ ಹೆಸರುಗಳನ್ನು ಓದಿದರೆ ಗೊತ್ತಾಗುತ್ತದೆ, ಆತನ ಸಾಮಾಜಿಕ ವಲಯದ ವ್ಯಾಪ್ತಿ ಎಷ್ಟಿತ್ತು ಎಂಬುದು. ಇದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಪ್ಸ್ಟೀನ್ ನಡುವಿನ ಸಂಬಂಧ ಮಹತ್ವದ್ದಾಗಿದೆ. ಟ್ರಂಪ್ ಅವರನ್ನು ಹೆಚ್ಚಾಗಿ ಪ್ರಜಾಪ್ರಭುತ್ವ ಮೌಲ್ಯಗಳಿಂದ ಬೇರೆ ದಾರಿ ಹಿಡಿದವರು ಎಂದು ಕರೆಯಲಾಗುತ್ತದೆ. ಎಪ್ಸ್ಟೀನ್ ಜಗತ್ತಿನಲ್ಲಿ ಟ್ರಂಪ್ ಮುಖ್ಯ ಭಾಗವಾಗಿದ್ದರು ಎಂದು ಫೈಲ್ಗಳು ತೋರಿಸುತ್ತವೆ. ಅಹಿತಕರ ಸತ್ಯವೆಂದರೆ, ನೈತಿಕ ಎಂದು ಹೇಳಿಕೊಳ್ಳುವ ಆಧುನಿಕ ‘ಗಣ್ಯ’ರು ಅವರನ್ನು ಟೀಕಿಸುವವರಂತೆಯೇ ಈ ವಿಷಯದಲ್ಲಿ ಮೌನವಾಗಿದ್ದರು. ಇದು ಬೇರೆಬೇರೆ ವ್ಯಕ್ತಿಗಳ ದೀರ್ಘಕಾಲೀನ ಸಂಬಂಧಗಳಿಂದ ಸಾಬೀತಾಗಿದೆ. ಎಪ್ಸ್ಟೀನ್ ಅವರು ಫೈನಾನ್ಸಿಯರ್ ಲೆಕ್ಸ್ ವೆಕ್ಸ್ನರ್ ಜೊತೆ ದೀರ್ಘ ಸಂಬಂಧ ಹೊಂದಿದ್ದರು. ವಿಶ್ವಪ್ರಸಿದ್ಧ ಭಾಷಾಶಾಸ್ತ್ರಜ್ಞ ಮತ್ತು ಚಿಂತಕ ನೋಮ್ ಚೋಮ್ಸ್ಕಿ ಅವರು ಎಪ್ಸ್ಟೀನ್ನೊಂದಿಗೆ ಹಣಕಾಸಿನ ವಹಿವಾಟು ನಡೆಸಿದ ಬಗ್ಗೆ ಇಮೇಲ್ಗಳು ಇವೆ. ಸಿನಿಮಾ ನಿರ್ಮಾಪಕ ವುಡಿ ಅಲೆನ್ ಜತೆಗಿನ ಸಂಭಾಷಣೆಗಳೂ ಬಹಿರಂಗವಾಗಿವೆ. ಅಮೆರಿಕದ ಮಾಜಿ ಖಜಾನೆ ಕಾರ್ಯದರ್ಶಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಲಾರೆನ್ಸ್ ಸಮ್ಮರ್ಸ್ ಅವರು ಎಪ್ಸ್ಟೀನ್ ಜತೆ ಆರ್ಥಿಕ ಸಲಹೆಗಳ ಬಗ್ಗೆ ಚರ್ಚಿಸಿದ್ದ ಇಮೇಲ್ಗಳೂ ಇದರಲ್ಲಿ ಸೇರಿವೆ. ಇಸ್ರೇಲಿನ ಮಾಜಿ ಪ್ರಧಾನಿ ಎಹುದ್ ಬರಾಕ್ ಆಪ್ತ ಸ್ನೇಹಿತ ಹಾಗೂ ವ್ಯಾಪಾರ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಡಿಪಿ ವರ್ಲ್ಡ್ ಸಿಇಒ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಎಪ್ಸ್ಟೀನ್ ಅವರೊಂದಿಗೆ ವ್ಯವಹಾರ ಮತ್ತು ಖಾಸಗಿ ವಿಷಯಗಳೆರಡನ್ನೂ ಚರ್ಚಿಸಿದರು. ಅವರ ಖಾಸಗಿ ದ್ವೀಪವನ್ನು ಖರೀದಿಸಲು ಸಹಾಯ ಮಾಡಲು ಕಂಪನಿಯನ್ನು ಸಹ ಬಳಸಿದರು. ಇವು ಯಾವುದೂ ಆಕಸ್ಮಿಕ ಭೇಟಿಗಳಾಗಿರಲಿಲ್ಲ. ಎಪ್ಸ್ಟೀನ್ ಅವರನ್ನು ದೂರವಿಡಬೇಕಾಗಿದ್ದ ನಂತರವೂ ಗಣ್ಯರು ದೀರ್ಘಕಾಲ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಇಮೇಲ್ಗಳು ತೋರಿಸುತ್ತವೆ. ಎಪ್ಸ್ಟೀನ್ನ ಅಪರಾಧಗಳ ಬಗ್ಗೆ ತಿಳಿದಿದ್ದರೂ ಇವರ್ಯಾರೂ ಆತನೊಂದಿನ ಸಂಪರ್ಕ ಕಡಿತ ಮಾಡಿಲ್ಲ. ಅತ್ಯಂತ ಆಘಾತಕಾರಿ ವಿಷಯವೆಂದರೆ ಎಲ್ಲರೂ ಎಷ್ಟು ಬಿಂದಾಸ್ ಆಗಿದ್ದರು ಎಂಬುದು. ಅವರ ಇಮೇಲ್ ವ್ಯವಹಾರಗಳನ್ನು ನೋಡಿದರೆ ಗೊತ್ತಾಗುತ್ತದೆ. ಅಲ್ಲಿ ಅವರಿಗೆ ಸಿಕ್ಕಿಬೀಳುವ ಭಯ ಇರಲಿಲ್ಲ. ಅವರು ಏನನ್ನೂ ಮರೆಮಾಡಲು ಪ್ರಯತ್ನಿಸುತ್ತಿರಲಿಲ್ಲ. ಒಂದು ವೇಳೆ ಸಿಕ್ಕಿಬಿದ್ದರೂ ಯಾವುದೇ ಪರಿಣಾಮಗಳನ್ನು ಎದುರಿಸಲು ಅವರು ತುಂಬಾ ಶಕ್ತಿಶಾಲಿಗಳು ಎಂದು ಖಚಿತವಾಗಿ ನಂಬಿದ್ದರು. ಎಪ್ಸ್ಟೀನ್ ಫೈಲ್ಗಳು ಭಾರತೀಯರೂ ಈತನ ಜತೆ ಸಂಪರ್ಕ ಹೊಂದಿದ್ದರು ಎಂಬುದನ್ನು ತೋರಿಸುತ್ತವೆ. ಅನಿಲ್ ಅಂಬಾನಿ ಜರೆಡ್ ಕುಶ್ನರ್ ಮತ್ತು ಸ್ಟೀವ್ ಬ್ಯಾನನ್ ಅವರಂತಹ ಜನರೊಂದಿಗೆ ಸಂಪರ್ಕ ಸಾಧಿಸಲು ಎಪ್ಸ್ಟೀನ್ ಅವರನ್ನು ಮಧ್ಯವರ್ತಿಯಾಗಿ ಬಳಸಿಕೊಂಡರು. ದಾಖಲೆಗಳ ಪ್ರಕಾರ, 2017ರಿಂದ 2019ರವರೆಗೆ ಎಪ್ಸ್ಟೀನ್ ಮತ್ತು ಅಂಬಾನಿ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು. ಎಪ್ಸ್ಟೀನ್ ಅವರ ಅಪರಾಧ ದಾಖಲೆಯು ಅವರನ್ನು ತಡೆಯಲಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಹಾಲಿ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಎಪ್ಸ್ಟೀನ್ ನಡುವೆ 2014ರಿಂದ ಇಮೇಲ್ ವಿನಿಮಯವಾಗಿದೆ. ಎಪ್ಸ್ಟೀನ್ ಪುರಿ ಅವರಿಗೆ ಇಮೇಲ್ ಮಾಡಿ ಲಿಂಕ್ಡ್ಇನ್ ತಾಣದ ಸಹ ಸಂಸ್ಥಾಪಕ ರೀಡ್ ಹಾಫ್ಮನ್ ಅವರ ಭಾರತ ಭೇಟಿಗೆ ವ್ಯವಸ್ಥೆ ಮಾಡುವ ಬಗ್ಗೆ ಮಾತನಾಡಿದ್ದರು. ಪುರಿ ಅವರು ಭಾರತದಲ್ಲಿನ ಹೂಡಿಕೆ ಅವಕಾಶಗಳು, ಮೋದಿ ಸರ್ಕಾರದ ಆರ್ಥಿಕ ಯೋಜನೆಗಳ ಬಗ್ಗೆ ವಿವರಿಸಿದ್ದರು. ಅವರು ಮ್ಯಾನ್ಹಟನ್ನಲ್ಲಿರುವ ಎಪ್ಸ್ಟೀನ್ ಮನೆಯಲ್ಲೇ ಆತನನ್ನು ಭೇಟಿ ಮಾಡಿದ್ದರು ಎಂದು ದಾಖಲೆಗಳು ತೋರಿಸಿವೆ. ಈ ಎಲ್ಲವನ್ನೂ ಗಮನಿಸಿದರೆ ಅಸಮಾನತೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಸಂತ್ರಸ್ತರು ಸಹಾಯಕ್ಕಾಗಿ ಬೇಡಿಕೊಂಡಾಗ ಸಂಸ್ಥೆಗಳು ಬಸವನ ಹುಳುವಿನಂತೆ ನಿಧಾನವಾಗಿ ಚಲಿಸಿದವು. ಆದರೆ ಪ್ರಬಲ ಜನರು ತಮ್ಮ ಖ್ಯಾತಿಯನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಕ್ಷಣದಲ್ಲಿ ಅವು ಮಿಂಚಿನ ವೇಗದಲ್ಲಿ ಚಲಿಸಿದವು. ಸಂತ್ರಸ್ತರು ವರ್ಷಗಳ ಕಾಲ ನ್ಯಾಯಕ್ಕಾಗಿ ಕಾದರು; ಆದರೆ ಪ್ರಭಾವಿಗಳ ರಕ್ಷಣೆಗೆ ಎಲ್ಲವೂ ಸಿದ್ಧವಾಗಿತ್ತು. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಹೆಸರು ಎಪ್ಸ್ಟೀನ್ ಫೈಲ್ಗಳಲ್ಲಿ ಕಾಣಿಸಿಕೊಂಡರೂ ಅವರ ಕಚೇರಿ ಅದನ್ನು ನಿರಾಕರಿಸಿತು. ಮಾಜಿ ಪ್ರಧಾನಿ ಪಾಲ್ ಕೀಟಿಂಗ್ ಅವರ ಮಗಳು ಕ್ಯಾಥರೀನ್ ಕೀಟಿಂಗ್ ಸಾಮಾಜಿಕ ಮಧ್ಯವರ್ತಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಯುರೋಪ್ನಲ್ಲಿ ಪೀಟರ್ ಮ್ಯಾಂಡೆಲ್ಸನ್ ಮತ್ತು ಥಾರ್ಬ್ಜೋರ್ನ್ ಜಗ್ಲ್ಯಾಂಡ್ ಅವರಂತಹ ವ್ಯಕ್ತಿಗಳೂ ಎಪ್ಸ್ಟೀನ್ ಜತೆ ಸಂಪರ್ಕದಲ್ಲಿದ್ದರು ಎಂಬುದನ್ನು ಫೈಲ್ಗಳು ತೋರಿಸುತ್ತವೆ. ನಾರ್ವೆಯ ಕ್ರೌನ್ ಪ್ರಿನ್ಸೆಸ್ ಮೆಟ್ಟೆ–ಮಾರಿಟ್ ಅವರ ಹೆಸರು ಎಪ್ಸ್ಟೀನ್ ಸಂಬಂಧಿತ ಪತ್ರವ್ಯವಹಾರದಲ್ಲಿ ಪುನರಾವರ್ತನೆಯಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರ ಹೆಸರೂ ಇಮೇಲ್ಗಳಲ್ಲಿ ಇದೆ. ಮಾನವ ಹಕ್ಕುಗಳ ಶಾಶ್ವತ ಸಮಿತಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಯುಎಇ ರಾಜತಾಂತ್ರಿಕ ಹಿಂದ್ ಅಲ್–ಒವೈಸ್ ಅವರ ಹೆಸರು ಕೂಡಾ ಇಮೇಲ್ಗಳಲ್ಲಿ ಇದೆ. ಇತ್ತೀಚೆಗೆ ಬಿಡುಗಡೆಯಾದ ಫೈಲ್ಗಳು ಅವರು 2011 ಮತ್ತು 2012ರ ನಡುವೆ ಎಪ್ಸ್ಟೀನ್ ಜೊತೆ 400ಕ್ಕೂ ಹೆಚ್ಚು ಇಮೇಲ್ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಸೂಚಿಸುತ್ತವೆ. ಇದರಲ್ಲಿ ಒವೈಸ್ ತಮ್ಮ ಸಹೋದರಿಯ ಬಗ್ಗೆ ಮಾತ್ರವಲ್ಲದೆ ಹುಡುಗಿಯರನ್ನು ಏರ್ಪಾಡು ಮಾಡುವ ಬಗ್ಗೆಯೂ ಮಾತನಾಡಿದ್ದಾರೆ ಎಂಬ ಉಲ್ಲೇಖಗಳಿವೆ. ಪ್ರತಿಯೊಂದು ಉಲ್ಲೇಖವೂ ಒಂದೇ ವಿಷಯವನ್ನು ಸೂಚಿಸುವುದಿಲ್ಲ. ಪ್ರತಿಯೊಂದು ಸಂವಹನವೂ ವಿಭಿನ್ನವಾಗಿದೆ. ಆದರೆ ಇವೆಲ್ಲವನ್ನು ಒಟ್ಟಿಗೆ ತೆಗೆದುಕೊಂಡರೆ ಗಣ್ಯರ ಇಮೇಲ್ಗಳು ಎಪ್ಸ್ಟೀನ್ ಅವರನ್ನು ಹೊರಗಿಡುವ ಬದಲು ಪ್ರಮುಖ ವ್ಯಕ್ತಿಯಾಗಿ ಪರಿಗಣಿಸಿದ್ದನ್ನು ತೋರಿಸುತ್ತವೆ. ಜೆಫ್ರಿ ಎಪ್ಸ್ಟೀನ್ ಯಾರು? ಏನಿದು ಎಪ್ಸ್ಟೀನ್ ಫೈಲ್ಗಳು? ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್. ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ 30 ಲಕ್ಷ ಪುಟಗಳ ದಾಖಲೆಗಳೇ ಎಪ್ಸ್ಟೀನ್ ಫೈಲ್ಗಳು. ಅದರಲ್ಲಿ 1.8 ಲಕ್ಷ ಚಿತ್ರಗಳು ಮತ್ತು ಎರಡು ಸಾವಿರ ವಿಡಿಯೊಗಳು ಇವೆ. ಇವು ಜಗತ್ತಿನ ವಿವಿಧ ದೇಶಗಳ ನಾಯಕರು, ಪ್ರಭಾವಿಗಳ ಹೆಸರುಗಳನ್ನು ಒಳಗೊಂಡಿವೆ. ನ್ಯೂಯಾರ್ಕ್ನಲ್ಲಿ ಹುಟ್ಟಿ ಬೆಳೆದ ಜೆಫ್ರಿ ಎಪ್ಸ್ಟೀನ್ ಮ್ಯಾನ್ಹಟನ್ನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ. ಆಮೇಲೆ ಹಣಕಾಸು ಸಂಸ್ಥೆಯೊಂದರಲ್ಲಿ ಪಾಲುದಾರನಾಗಿ ಸೇರಿ ಶ್ರೀಮಂತನಾದ. ಈತ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರ ಜತೆ ಒಡನಾಟವಿರಿಸಿಕೊಂಡಿದ್ದ. ದೇಶ–ವಿದೇಶಗಳ ಗಣ್ಯರು, ಪ್ರಭಾವಿಗಳು, ಖ್ಯಾತನಾಮರು ಈತನೊಂದಿಗೆ ಸಂಪರ್ಕ ಹೊಂದಿದ್ದರು. ಈತ ತನ್ನ ಕಾಮತೃಷೆಗೆ ಅನೇಕ ಅಪ್ರಾಪ್ತ ವಯಸ್ಸಿನ ಮಹಿಳೆಯರು, ಬಾಲಕಿಯರನ್ನು ಬಳಸಿಕೊಂಡಿದ್ದ ಎಂಬ ವರದಿ ಬಹಿರಂಗವಾದೊಡನೆ ಇವನ ಅಪರಾಧಗಳು ಒಂದೊಂದಾಗಿ ಹೊರಬರಲು ಆರಂಭವಾದವು. ಈ ಮಹಿಳೆಯರನ್ನು ಕಳ್ಳಸಾಗಣೆ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಹೀಗೆ ಕರೆದುಕೊಂಡು ಬಂದ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ. 2005ರಲ್ಲಿ ಲೈಂಗಿಕ ಅಪರಾಧಗಳಿಗಾಗಿ ಆತನನ್ನು ಬಂಧಿಸಲಾಯಿತು; 2008ರಲ್ಲಿ ಆರೋಪಗಳು ಸಾಬೀತಾದವು. ಪ್ರಭಾವ ಬಳಸಿ ಆತ ಜೈಲು ಶಿಕ್ಷೆಯಿಂದ ಬಚಾವಾದ. ಆಮೇಲೆ ಕಳ್ಳಸಾಗಣೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ 2019ರಲ್ಲಿ ಮತ್ತೆ ಬಂಧಿತನಾದ ಎಪ್ಸ್ಟೀನ್ ವಿಚಾರಣೆಗೆ ಮುನ್ನವೇ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು.
ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ | ಸಂಸತ್ತಿಗೆ ಏಳು ಮಹಿಳಾ ಸಂಸದರ ಆಯ್ಕೆ
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ಸಂಸತ್ತಿಗೆ ಏಳು ಮಂದಿ ಮಹಿಳಾ ಸಂಸದರು ಆಯ್ಕೆಯಾಗಿದ್ದು, ಈ ಪೈಕಿ ಬಹುತೇಕರು ಬಿಎನ್ಪಿ ಪಕ್ಷಕ್ಕೆ ಸೇರಿದ್ದಾರೆ ಎಂದು ಶುಕ್ರವಾರ ಮಾಧ್ಯಮವೊಂದು ವರದಿ ಮಾಡಿದೆ. ನಿಶ್ಚಿತ ಬಹುಮತ ಪಡೆದು ಸರ್ಕಾರ ರಚಿಸಲು ಸಜ್ಜಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಆರು ಮಂದಿ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ ಎಂದು ಅನಧಿಕೃತ ಫಲಿತಾಂಶಗಳನ್ನು ಉಲ್ಲೇಖಿಸಿ The Dhaka Tribune ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾಣಿಕ್ಗಂಜ್–3 ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಫ್ರೋಜಾ ಖಾನ್ ರೀತು, ಝಾಲೋಕಾಠಿ–2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಸ್ರತ್ ಸುಲ್ತಾನಾ ಎಲೆನ್ ಭುಟ್ಟೊ, ಸಿಲ್ಹೆಟ್–2 ಕ್ಷೇತ್ರದಿಂದ ಸ್ಪರ್ಧಿಸಿದ್ದ ತಹ್ಸೀನಾ ರುಶ್ದೀಶರ್ ಲೂನಾ, ಫರೀದ್ಪುರ್–2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಮಾ ಒಬೈದ್, ಫರೀದ್ಪುರ್–3 ಕ್ಷೇತ್ರದಿಂದ ಸ್ಪರ್ಧಿಸಿದ್ದ ಯೂಸುಫ್ ಕಮಾಲ್ ಹಾಗೂ ನಟೋರ್–1 ಕ್ಷೇತ್ರದಿಂದ ಸ್ಪರ್ಧಿಸಿದ್ದ ಫರ್ಝಾನಾ ಶರ್ಮೀನ್ ಪುತುಲ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಬ್ರಹ್ಮಣಬಾರಿಯಾ–2 ಕ್ಷೇತ್ರದಿಂದ ಬಿಎನ್ಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಬ್ಯಾರಿಸ್ಟರ್ ರುಮೀನ್ ಫರ್ಹಾನಾ ಗೆಲುವು ಸಾಧಿಸಿದ್ದಾರೆ. ದೇಶಾದ್ಯಂತ ನಡೆದ ಮತದಾನ ಹಾಗೂ ಮತ ಎಣಿಕೆ ಮುಕ್ತಾಯದ ನಂತರ ಪ್ರಕಟವಾಗಿರುವ ಅನಧಿಕೃತ ಪಟ್ಟಿಯನ್ನು ಆಧರಿಸಿ ಈ ಫಲಿತಾಂಶಗಳನ್ನು ನೀಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಬಾಂಗ್ಲಾದೇಶ ಸಂಸತ್ತಿನ 300 ಕ್ಷೇತ್ರಗಳ ಪೈಕಿ ಬಿಎನ್ಪಿ ಕೇವಲ 10 ಕ್ಷೇತ್ರಗಳಲ್ಲಿ ಮಾತ್ರ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಬಿಎನ್ಪಿಯ ಆರು ಮಂದಿ ಅಭ್ಯರ್ಥಿಗಳು ಹಾಗೂ ಬಿಎನ್ಪಿಯಿಂದ ಉಚ್ಚಾಟಿತರಾಗಿದ್ದ ಓರ್ವ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ ಎಂದು ವರದಿಯಾಗಿದೆ.
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ಗೆ ಸಂಬಂಧಿಸಿ ಭಾರತೀಯ ಮೂಲದ ಬ್ರಿಟಿಷ್ ವೈದ್ಯ ಹಾಗೂ ಯೂಟ್ಯೂಬರ್ ಡಾ. ಸಂಗ್ರಾಮ್ ಪಾಟೀಲ್ ವಿರುದ್ಧ ದಾಖಲಾಗಿರುವ ಪ್ರಕರಣದ ಹಿನ್ನೆಲೆ ಅವರು ಯುನೈಟೆಡ್ ಕಿಂಗ್ಡಮ್ (ಯುಕೆ)ಗೆ ಮರಳಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಬದಲಾಗಿ, ಪಾಟೀಲ್ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ವಿಧಿಸಲಾದ ಪ್ರಯಾಣ ನಿರ್ಬಂಧಗಳ ಕಾನೂನುಬದ್ಧತೆಯನ್ನು ನ್ಯಾಯಾಲಯವು ಪರಿಶೀಲಿಸುತ್ತಿದೆ. ಕಳೆದ ಮೂರು ತಿಂಗಳಿಂದ ಅವರು ಯುಕೆಗೆ ಹಿಂತಿರುಗಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಡಿಸೆಂಬರ್ 14ರಂದು ಬಿಜೆಪಿ ಮಹಾರಾಷ್ಟ್ರ ಘಟಕದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ನಿಖಿಲ್ ಭಮ್ರೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಡಿಸೆಂಬರ್ 18ರಂದು ಲೋವರ್ ಪರೇಲ್ ನ ಎನ್.ಎಂ. ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೋಸ್ಟ್ನಲ್ಲಿ ಪಾಟೀಲ್, ಮೋದಿಯವರ ವಿರುದ್ಧ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಆರೋಪ ಉಲ್ಲೇಖಿಸಿ, ಬಿಜೆಪಿ ಸೇರಿದಂತೆ ಕೆಲವರು ಹಣ ಪಡೆದು ಮೌನವಾಗಿದ್ದಾರೆ ಎಂದು ಹೇಳಿದ್ದರು. ಆ ಪೋಸ್ಟ್ನ ಲಿಂಕ್ ಅನ್ನು ಎಫ್ಐಆರ್ನಲ್ಲಿ ಸೇರಿಸಲಾಗಿದೆ. ಈ ಕುರಿತು ಭಮ್ರೆ ತಮ್ಮ ದೂರಿನಲ್ಲಿ, “ಆಕ್ಷೇಪಾರ್ಹ ಹಾಗೂ ಮಾನನಷ್ಟಕರ ವಿಷಯವನ್ನು ಅಪ್ಲೋಡ್ ಮಾಡಿದ್ದಾರೆ. ಅದು ದಾರಿತಪ್ಪಿಸುವ ಮತ್ತು ಸಾರ್ವಜನಿಕ ಸಾಮರಸ್ಯವನ್ನು ಕೆಡಿಸುವ ಉದ್ದೇಶ ಹೊಂದಿದೆ” ಎಂದು ಆರೋಪಿಸಿದ್ದಾರೆ. ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಹಾಗೂ ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ಸಲಹೆಗಾರರಾಗಿರುವ ಡಾ. ಪಾಟೀಲ್ ಭಾರತದಲ್ಲಿಯೂ ವೃತ್ತಿಪರ ಮತ್ತು ವೈಯಕ್ತಿಕ ಸಂಪರ್ಕ ಹೊಂದಿದ್ದಾರೆ. ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಮತ್ತು ಫೇಸ್ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅವರು, ಪ್ರಸ್ತುತ ಯೂಟ್ಯೂಬ್ ನಲ್ಲಿ ಸುಮಾರು 4.73 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಅವರ ಆನ್ಲೈನ್ ಚಟುವಟಿಕೆಗಳಲ್ಲಿ ಸಾರ್ವಜನಿಕ ವಿಚಾರಗಳು ಮತ್ತು ರಾಜಕೀಯ ಬೆಳವಣಿಗೆಗಳ ಕುರಿತ ಅಭಿಪ್ರಾಯಗಳು ಪ್ರಮುಖವಾಗಿದ್ದು, ಇವುಗಳನ್ನು ತಾವು ವಾಕ್ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಮಾಡುತ್ತಿರುವುದಾಗಿ ಪಾಟೀಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎಫ್ಐಆರ್ ದಾಖಲಾಗುವ ಸಮಯದಲ್ಲಿ ಅವರು ಪ್ರವಾಸಿ ವೀಸಾದ ಮೇಲೆ ಭಾರತದಲ್ಲಿದ್ದರು ಎಂದು ಹೈಕೋರ್ಟ್ಗೆ ತಿಳಿಸಿರುವ ಪಾಟೀಲ್, ಯುಕೆಗೆ ಹಿಂತಿರುಗುವ ಮೊದಲು ಸಣ್ಣ ವೈಯಕ್ತಿಕ ಭೇಟಿಗಾಗಿ ಮುಂಬೈಗೆ ಬಂದಿದ್ದಾಗಿ ವಿವರಿಸಿದ್ದಾರೆ. ಪೊಲೀಸರು ಹೊರಡಿಸಿದ ಲುಕ್ಔಟ್ ಸರ್ಕ್ಯುಲರ್ (ಎಲ್ಒಸಿ) ಕಾರಣದಿಂದ ಭಾರತವನ್ನು ತೊರೆಯಲು ಸಾಧ್ಯವಾಗದೇ, ಸುಮಾರು ಮೂರು ತಿಂಗಳ ಕಾಲ ಯುಕೆಯಲ್ಲಿನ ತಮ್ಮ ವೈದ್ಯಕೀಯ ಕರ್ತವ್ಯಗಳಿಗೆ ಹಾಜರಾಗಲು ಅಡಚಣೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)–2023ರ ಸೆಕ್ಷನ್ 353(2) ಅಡಿ ಗುಂಪುಗಳ ನಡುವೆ ದ್ವೇಷ ಪ್ರಚೋದನೆಗೆ ಸಂಬಂಧಿಸಿದ ವಿಧಿಗಳು ಹಾಗೂ ಸೆಕ್ಷನ್ 356 ಅಡಿ ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದ ವಿಧಿಗಳನ್ನು ಮುಂಬೈ ಪೊಲೀಸರು ಅನ್ವಯಿಸಿದ್ದಾರೆ. ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಸಾರ್ವಜನಿಕ ವ್ಯಕ್ತಿಗಳ ಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂಬುದು ಪೊಲೀಸರ ಆರೋಪವಾಗಿದೆ. ಫೆಬ್ರವರಿ 6ರಂದು ಹೈಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, “ಈ ವಿಷಯವು ಸಾಮಾನ್ಯ ರಾಜಕೀಯ ಟೀಕೆಯ ಮಿತಿಯನ್ನು ಮೀರಿರುವುದಾಗಿ ಕಂಡುಬರುತ್ತಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಕೆಣಕುವ ಸಂಘಟಿತ ಪ್ರಯತ್ನವಿದೆಯೇ ಎಂಬುದನ್ನು ನಿರ್ಧರಿಸಲು ಸಮಗ್ರ ತನಿಖೆ ಅಗತ್ಯ” ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಫೆಬ್ರವರಿ 9ರಂದು ಸಲ್ಲಿಸಿದ ಮರು–ಅಫಿಡವಿಟ್ನಲ್ಲಿ ಪಾಟೀಲ್ ಅವರು ಆರೋಪಗಳನ್ನು ತಳ್ಳಿ ಹಾಕಿ, “ನಾನು ವಾಕ್ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ; ಯಾವುದೇ ದ್ವೇಷ ಪ್ರಚೋದನೆ ಉದ್ದೇಶ ಇರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಕಾರ್ಯಕರ್ತನೊಬ್ಬರು ನೀಡಿದ ಮಾಹಿತಿಯಲ್ಲಿ, “ನಾನು ಪ್ರತಿದಿನ ಸುಮಾರು 12 ಗಂಟೆಗಳ ಕಾಲ ಸಾಮಾಜಿಕ ಜಾಲತಾಣ ವೀಕ್ಷಿಸುತ್ತೇನೆ. ಆ ಪೋಸ್ಟ್ ಕಂಡ ತಕ್ಷಣ ಉಲ್ಲೇಖಿಸಿದೆ. ಇದೇ ರೀತಿಯ ಮತ್ತೊಂದು ಪೋಸ್ಟ್ ‘ಶಹರ್ ವಿಕಾಸ್ ಅಘಾಡಿ’ ಎಂಬ ಪುಟದಲ್ಲಿಯೂ ಕಂಡುಬಂದಿತ್ತು. ಅದನ್ನೂ ಉಲ್ಲೇಖ ಮಾಡಲಾಗಿತ್ತು. ಆ ಪೋಸ್ಟ್ ಈಗ ಲಭ್ಯವಿಲ್ಲ. ಆದರೆ ಪೊಲೀಸರು ಅವರನ್ನು ಗುರುತಿಸಿ ಸಂಪೂರ್ಣ ತನಿಖೆ ನಡೆಸಲು ಸಾಧ್ಯ”, ಎಂದು ಹೇಳಿದ್ದಾರೆ. ಸೌಜನ್ಯ: theprint.in
ಐಪಿಎಲ್ 2026| ರಾಜಸ್ಥಾನ ರಾಯಲ್ಸ್ ನಾಯಕನಾಗಿ ರಿಯಾನ್ ಪರಾಗ್
ಹೊಸದಿಲ್ಲಿ, ಫೆ.13: ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ 2026ರ ಆವೃತ್ತಿಯ ಐಪಿಎಲ್ಗಿಂತ ಮೊದಲು ರಾಜಸ್ಥಾನ ರಾಯಲ್ಸ್ ತಂಡದ ನೂತನ ನಾಯಕನಾಗಿ ರಿಯಾನ್ ಪರಾಗ್ರನ್ನು ನೇಮಿಸಲಾಗಿದೆ. 24ರ ವಯಸ್ಸಿನ ಪರಾಗ್ ಕಳೆದ ಋತುವಿನಲ್ಲಿ ಸ್ಯಾಮ್ಸನ್ ಗಾಯಗೊಂಡಿದ್ದಾಗ ಎಂಟು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ವಹಿಸಿದ್ದರು. ಆ ಎಂಟು ಪಂದ್ಯಗಳ ಪೈಕಿ ರಾಜಸ್ಥಾನ ತಂಡ ಕೇವಲ ಎರಡರಲ್ಲಿ ಗೆಲುವು ದಾಖಲಿಸಿತ್ತು. ಪರಾಗ್ ಅವರ ವೈಯಕ್ತಿಕ ಪ್ರದರ್ಶನ ಅತ್ಯುತ್ತಮವಾಗಿದ್ದು, 38.57ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಕೋಲ್ಕತಾದ ಈಡನ್ಗಾರ್ಡನ್ಸ್ನಲ್ಲಿ ಕೆಕೆಆರ್ ವಿರುದ್ಧ ಜೀವನಶ್ರೇಷ್ಠ ಸಾಧನೆ(95 ರನ್)ಮಾಡಿದ್ದರು. 2019ರಲ್ಲಿ ಐಪಿಎಲ್ಗೆ ಕಾಲಿಟ್ಟ ನಂತರ ಪರಾಗ್ ಅವರು ರಾಜಸ್ಥಾನ ತಂಡದಲ್ಲಿದ್ದಾರೆ. ಆ ನಂತರ ಪ್ರತೀ ಋತುವಿನಲ್ಲೂ ಆಡಿದ್ದರು. ಕಳೆದ ಎರಡು ವರ್ಷ ಪ್ರತಿಯೊಂದು ಪಂದ್ಯ ಆಡಿದ್ದರು. 2024ರಲ್ಲಿ 52.09ರ ಸರಾಸರಿಯಲ್ಲಿ 149.21ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 573 ರನ್ ಗಳಿಸಿದ್ದರು. ಒಟ್ಟಾರೆ ಪರಾಗ್ ಅವರು ರಾಜಸ್ಥಾನ ಪರ 84 ಪಂದ್ಯಗಳನ್ನು ಆಡಿ 1,566 ರನ್ ಗಳಿಸಿದ್ದರು. ಏಳು ವಿಕೆಟ್ಗಳನ್ನು ಉರುಳಿಸಿದ್ದರು.
ಏಶ್ಯನ್ ಚಾಂಪಿಯನ್ಶಿಪ್| 13 ಚಿನ್ನ ಸಹಿತ 33 ಪದಕ ಗೆದ್ದ ಭಾರತ
ಹೊಸದಿಲ್ಲಿ, ಫೆ.13: ಭಾರತದ ಪಿಸ್ತೂಲ್ ಶೂಟರ್ ಅಮನ್ಪ್ರೀತ್ ಸಿಂಗ್ ಏಶ್ಯನ್ ಚಾಂಪಿಯನ್ಶಿಪ್ನ 25 ಮೀ. ಸೆಂಟರ್ಫೈಯರ್ ಇವೆಂಟ್ನಲ್ಲಿ ಚಿನ್ನದ ಪದಕ ಜಯಿಸಿ ವೃತ್ತಿಬದುಕಿನಲ್ಲಿ ಮಹತ್ವದ ಸಾಧನೆ ಮಾಡಿದರು. ಕೊನೆಯ ದಿನವಾದ ಶುಕ್ರವಾರ ಭಾರತದ ಶೂಟರ್ಗಳು ಕ್ಲೀನ್ಸ್ವೀಪ್ ಸಾಧಿಸಿದರು. 38ರ ವಯಸ್ಸಿನ ಅಮನ್ಪ್ರೀತ್ 589 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಭಾರತದ ಒಲಿಂಪಿಯನ್ ಗುರುಪ್ರೀತ್ ಸಿಂಗ್(584)ಹಾಗೂ ಅಂಕುರ್ ಗೊಯೆಲ್(570)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದು, ಈ ಮೂಲಕ ಭಾರತವು 25ಮೀ.ಸೆಂಟರ್ಫೈಯರ್ ಇವೆಂಟ್ನಲ್ಲಿ ಕ್ಲೀನ್ಸ್ವೀಪ್ ಸಾಧಿಸಿತು. ಭಾರತದ ಮೂವರು ಶೂಟರ್ಗಳು ಟೀಮ್ ಸ್ಪರ್ಧೆಯಲ್ಲೂ ಪ್ರಾಬಲ್ಯ ಸಾಧಿಸಿದ್ದು,1,743 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ವಿಯೆಟ್ನಾಂ(1,671 ಅಂಕ)ಬೆಳ್ಳಿ ಪದಕ ಗೆದ್ದಿದೆ. ಕೊನೆಯ ದಿನದ ಸ್ಪರ್ಧೆಯಲ್ಲಿ ಭಾರತವು ಒಟ್ಟು ಏಳು ಪದಕಗಳನ್ನು ಜಯಿಸಿ ಪಾರಮ್ಯ ಮೆರೆದಿದೆ. ಭಾರತೀಯ ತಂಡವು ಸೀನಿಯರ್ ರೈಫಲ್ ಹಾಗೂ ಪಿಸ್ತೂಲ್ ಸ್ಪರ್ಧೆಗಳಲ್ಲಿ 13 ಚಿನ್ನ, 11 ಬೆಳ್ಳಿ ಹಾಗೂ 9 ಕಂಚು ಸಹಿತ ಚಾಂಪಿಯನ್ಶಿಪ್ನಲ್ಲಿ ಒಟ್ಟು 33 ಪದಕಗಳನ್ನು ಗೆದ್ದುಕೊಂಡು ಗಮನ ಸೆಳೆದಿದೆ. ಭಾರತೀಯ ಶೂಟರ್ ಸಿಫ್ಟ್ ಕೌರ್ ಸಾಮ್ರಾ ಮಹಿಳೆಯರ 50ಮೀ.ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರು. ಕೊನೆಯ ತನಕ ಹೋರಾಡಿ ಬೆಳ್ಳಿ ಪದಕ ಗೆದ್ದರು. ಹಿರಿಯ ಶೂಟರ್ ತೇಜಸ್ವಿನಿ ಸಾವಂತ್ ಕಂಚಿನ ಪದಕ ಜಯಿಸಿದ್ದು, ಭಾರತ ಒಟ್ಟು ಎರಡು ಪದಕಗಳನ್ನು ಜಯಿಸಿದೆ. ಚಿನ್ನದ ಪದಕ ಕಝಕ್ಸ್ತಾನದ ಯೆಲಿಝವೆಟಾ ಪಾಲಾಯಿತು. ಕಳೆದ ವರ್ಷ ಐಎಸ್ಎಸ್ಎಫ್ ವರ್ಲ್ಡ್ ಕಪ್ ಹಾಗೂ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ 50 ಮೀ. ರೈಫಲ್ 3-ಪೊಸಿಶನ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ 24ರ ಹರೆಯದ ಸಾಮ್ರಾ 623.2 ಅಂಕ ಗಳಿಸಿದರು. ಕೇವಲ 0.2 ಅಂಕದಿಂದ ಚಿನ್ನದ ಪದಕದಿಂದ ವಂಚಿತರಾದರು. ಕಝಕ್ಸ್ತಾನದ ಯೆಲಿಝವೆಟಾ 623.4 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಒಲಿಂಪಿಯನ್ ಸಾವಂತ್ 621.0 ಅಂಕ ಗಳಿಸಿ ಕಂಚಿನ ಪದಕ ಗೆದ್ದುಕೊಂಡರು. ಭಾರತದ ತ್ರಿವಳಿ ಶೂಟರ್ಗಳಾದ ಸಾಮ್ರಾ, ಸಾವಂತ್ ಹಾಗೂ ಜೈಪುರದ ಶೂಟರ್ ಮಾನಿನಿ ಕೌಶಿಕ್ ಒಟ್ಟು 1862.9 ಅಂಕ ಗಳಿಸಿ ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಕಝಕ್ಸ್ತಾನದ ಜೋಡಿ 1862.8 ಅಂಕ ಗಳಿಸಿ ಬೆಳ್ಳಿ ಗೆದ್ದುಕೊಂಡಿತು.
ಪ್ರಧಾನಿ ಹುದ್ದೆಯನ್ನೆ ಕೇಳುತ್ತಿರುವ ಬಿಜೆಪಿ ಅಭ್ಯರ್ಥಿ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಬೆಂಗಳೂರು, ಫೆ. 13: ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಈಗ ಪ್ರಧಾನಿ ಮೋದಿ ಹುದ್ದೆಯನ್ನೇ ಕೇಳುತ್ತಿದ್ದಾರೆ. ಮೋದಿಯವರ ಕುರ್ಚಿಗೆ ಕಣ್ಣು ಹಾಕಿರುವ ಈ ವ್ಯಕ್ತಿಯ ಪರವಹಿಸಿ ಬಿಜೆಪಿಯ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಇಡೀ ಬಿಜೆಪಿ ತಂಡ ಕಲಬುರಗಿಯಲ್ಲಿ ‘ಸದಾರಮೆ ನಾಟಕ’ ಪ್ರದರ್ಶಿಸಿದ್ದರು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಶುಕ್ರವಾರ ಈ ಸಂಬಂಧ ಎಕ್ಸ್ ನಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಅವರು, ಅದೇ ವ್ಯಕ್ತಿ ಈಗ ಹಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ, ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಉತ್ತರ ಹೇಳಲೇಬೇಕಾಗಿದೆ. ಶೋಷಿತ ಸಮುದಾಯಗಳ ಮೀಸಲಾತಿ ರದ್ದುಗೊಳಿಸಬೇಕು, ಸಮುದಾಯ ಆಧಾರಿತ ಮೀಸಲಾತಿ ಕೇಳುವವರನ್ನು ಜೈಲಿಗಟ್ಟಬೇಕು ಎಂಬ ಮಾತುಗಳನ್ನು ಆಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬಿಜೆಪಿಯವರು ಮೌನವಹಿಸಿರುವುದೇಕೆ? ಇದು ಬಿಜೆಪಿಯ ಒಳಮನಸಿನ ಮಾತುಗಳೇ? ಈ ಮಾತುಗಳನ್ನು ಬಿಜೆಪಿ ಅನುಮೋದಿಸುತ್ತದೆಯೇ? ಈ ವ್ಯಕ್ತಿಯ ಪರವಹಿಸಿ, ದಂಡೆತ್ತಿ ಬಂದು ‘ದಂಡ'ಯಾತ್ರೆ ಮಾಡಿದ್ದ ಆರ್.ಅಶೋಕ್, ವಿಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರೇ, ಈತನ ಮಾತುಗಳಿಗೆ ನಿಮ್ಮ ಉತ್ತರವೇನು? ಈತನ ಅಭಿಪ್ರಾಯ ನಿಮ್ಮ ಅಭಿಪ್ರಾಯವೂ ಆಗಿದೆಯೇ? ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ಚಿಂತನಾ ಕ್ರಮಗಳಿಂದಲೆ ಇಂತಹ ಮೂರ್ಖತನಗಳು ಸೃಷ್ಟಿಯಾಗುತ್ತಿವೆ ಎಂದು ಟೀಕಿಸಿದ್ದಾರೆ.
113 ಸ್ಥಾನ ಗೆದ್ದರೆ ಎಚ್ಡಿಕೆ ಸಿಎಂ ಆಗಲಿ: ಛಲವಾದಿ ನಾರಾಯಣಸ್ವಾಮಿ
‘‘ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅಧಿಕಾರ ಬಿಡಲ್ಲ ಎನ್ನುತ್ತಾರೆ. ಡಿಕೆಶಿ ಅಧಿಕಾರ ಕಿತ್ತುಕೊಳ್ಳುತ್ತೇನೆ ಎನ್ನುತ್ತಾರೆ. ಇದು ಒಂದು ರೀತಿ ರಾಜಕೀಯ ಸರ್ಕಸ್,’’ ಎಂದು ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.
Kalaburagi | ಫೆ.28 ರಿಂದ ಮಾ.17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1 : ನಿಷೇಧಾಜ್ಞೆ ಜಾರಿ
ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಫೆ.28 ರಿಂದ ಮಾ.17ರ ವರೆಗೆ ಕಲಬುರಗಿ ನಗರದಲ್ಲಿ 25 ಸೇರಿ ಒಟ್ಟಾರೆ ಜಿಲ್ಲೆಯಾದ್ಯಂತ 51 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಜರುಗಲಿದ್ದು, ಪರೀಕ್ಷೆ ಶಾಂತಿಯುತವಾಗಿ ನಡೆಯಲು ಪರೀಕ್ಷೆ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೆಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ. ಕಲಬುರಗಿ ನಗರದಲ್ಲಿ 25, ಕಮಲಾಪೂರ-2, ಜೇವರ್ಗಿ-4, ಆಳಂದ-5, ಅಫಜಲಪೂರ-4, ಕಾಳಗಿ-1, ಚಿಂಚೋಳಿ-3, ಚಿತ್ತಾಪುರ-2, ಶಹಾಬಾದ್-3 ಹಾಗೂ ಸೇಡಂ-2 ಸೇರಿ ಒಟ್ಟಾರೆ 51 ಕೇಮದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಬಿ.ಎನ್.ಎಸ್.ಎಸ್ ಕಾಯ್ದೆ-2023ರ ಕಲಂ 163 ರನ್ವಯ ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಪರೀಕ್ಷೆ ಕೇಂದ್ರದ 200 ಮೀಟರ್ ಸುತ್ತ ಪ್ರದೇಶದಲ್ಲಿ ಬರುವ ಎಲ್ಲಾ ಜೆರಾಕ್ಸ್ ಅಂಗಡಿಗಳು, ಪುಸ್ತಕ ಅಂಗಡಿಗಳು ಮತ್ತು ಕಂಪ್ಯೂಟರ್ / ಸೈಬರ್ ಅಂಗಡಿಗಳು ಮುಚ್ಚುವಂತೆ ಆದೇಶಿಸಲಾಗಿದೆ. ಇದಲ್ಲದೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಿಬ್ಬಂದಿ ವರ್ಗದವರು ಹೊರತುಪಡಿಸಿ. ಯಾವುದೇ ಬೇರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮೊಬೈಲ್ ಫೋನ್, ಪೇಜರ್, ಬ್ಲೂಟೂತ್, ವೈರಲ್ಸ್ ಸೆಟ್ ಗಳು ಹಾಗೂ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಪಯೋಗಿಸುವುದನ್ನು ಸಹ ಕರ್ನಾಟಕ ಪೊಲೀಸ್ ಅಧಿನಿಯಮ-1963ರ ಕಲಂ-35(ಸಿ) ರಡಿಯಲ್ಲಿ ನಿಷೇಧಿಸಿ ಡಿ.ಸಿ. ಅವರು ಆದೇಶ ಮಾಡಿದ್ದಾರೆ.
Kalaburagi | ಯೋಜನಾ ಸಲಹೆಗಾರರ ನೇಮಕಕ್ಕೆ ಅರ್ಜಿ ಆಹ್ವಾನ
ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಕಾರ್ಯಾಲಯದಲ್ಲಿ ಯೋಜನಾ ಸಲಹೆಗಾರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಡಳಿಯ ಉಪ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಯೋಜನಾ ಸಲಹೆಗಾರರ 1 ಹುದ್ದೆಗೆ ಮಾಸಿಕ 90,000 ರೂ.ಗಳ ಗೌರವಧನ (ಸ್ಟೈಪೆಂಡ್) ನೀಡಲಾಗುವುದು ಹಾಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. ಜಿಲ್ಲಾ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ವಿಷಯಗಳಲ್ಲಿ ಪಿ.ಎಚ್.ಡಿ ಪಡೆದಿರಬೇಕು, ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿರಬೇಕು ಮತ್ತು ಅರ್ಥಶಾಸ್ತ್ರ ವಿಭಾಗದ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರಬೇಕು, ರಾಜ್ಯ ಸರಕಾರದಿಂದ ನೇಮಿಸಿದ ವಿವಿಧ ಆಯೋಗ/ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಸರಕಾರದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಅನುಭವವಿರಬೇಕು, ಯೋಜನಾ ಇಲಾಖೆಯಡಿ ಕನಿಷ್ಟ 5 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜೊತೆಗೆ ಕಾರ್ಯ ನಿರ್ವಹಿಸಿರುವಂತಂಹ ಅನುಭವವಿರಬೇಕು ಹಾಗೂ ಕಲಬುರಗಿಯಲ್ಲಿ ವಾಸಿಸುತ್ತಿರಬೇಕು ಎಂದು ಹೇಳಿದರು. ಕಲಬುರಗಿ ಹೊರತುಪಡಿಸಿ, ಮಂಡಳಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಿಗೆ ಹಾಜರಾದಲ್ಲಿ ಗ್ರೂಪ್ “ಎ” ಅಧಿಕಾರಿಗಳಿಗೆ ಅನ್ವಯಿಸುವ ಪ್ರಯಾಣ ಭತ್ಯ ಹಾಗೂ ದಿನಭತ್ಯೆಗಳನ್ನು ಪಾವತಿಸಲಾಗುವುದು. ಮೇಲ್ಕಾಣಿಸಿದ ಅರ್ಹತಾ ಮಾನದಂಡಗಳನ್ನು ಹೊಂದಿದ ಅಭ್ಯರ್ಥಿಗಳು ಅವಶ್ಯಕ ದಾಖಗಳೊಂದಿಗೆ (Resume) ಅನ್ನು ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಕಚೇರಿಯಲ್ಲಿ 2026ರ ಫೆ.16 ರೊಳಗಾಗಿ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮಂಡಳಿಯ www.hkrdb.kar.nic.in ವೆಬ್ಸೈಟ್ ವಿಕ್ಷೀಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾರ್ಖಂಡ್| ಕಾಡಾನೆಗಳ ದಾಳಿಗೆ 1 ವರ್ಷದ ಮಗು ಸಹಿತ 6 ಮಂದಿ ಮೃತ್ಯು
ರಾಂಚಿ, ಫೆ. 14: ಜಾರ್ಖಂಡ್ನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಹಝಾರಿಬಾಗ್ನ ಚರ್ಚ್ ಬ್ಲಾಕ್ ವ್ಯಾಪ್ತಿಯ ಗೊಂಡ್ವಾರ್ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಆನೆಗಳ ಹಿಂಡು ಮತ್ತೆ ಆರು ಜನರನ್ನು ತುಳಿದು ಹತ್ಯೆ ಮಾಡಿದೆ. ಐದು ಆನೆಗಳ ಗುಂಪು ಮನೆಯ ಗೇಟಿಗೆ ಹಾನಿ ಉಂಟು ಮಾಡಿತು. ಅನಂತರ ಮನೆಯ ಒಳಗೆ ನಿದ್ರಿಸುತ್ತಿದ್ದವರ ಮೇಲೆ ದಾಳಿ ಮಾಡಿತು ಎಂದು ಸ್ಥಳೀಯರು ಹೇಳಿದ್ದಾರೆ. ಆನೆಗಳ ದಾಳಿಯಲ್ಲಿ ಸುಮನಾ ಕುಮಾರಿ (26), ಧನೇಶ್ವರ್ ರಾಮ್ (52), ಸೂರಜ್ ರಾಮ್ (50), ಸವಿತಾ ದೇವಿ (25), ಅನುರಾಗ್ ರಾಮ್ (1) ಹಾಗೂ ಸಂಜನಾ ಕುಮಾರಿ (3 ತಿಂಗಳು) ಮೃತಪಟ್ಟಿದ್ದಾರೆ. ಆನೆಗಳ ದಾಳಿ ನಡೆಯುವ ಸಂದರ್ಭ ಎಲ್ಲರೂ ತಮ್ಮ ಮನೆಯಲ್ಲಿ ಮಲಗಿದ್ದರು ಎಂದು ಅವರು ತಿಳಿಸಿದ್ದಾರೆ. ಸೂರಜ್ ರಾಮ್, ಸವಿತಾ ದೇವಿ, ಅನುರಾಗ್ ರಾಮ್ ಹಾಗೂ ಸಂಜನಾ ಕುಮಾರಿ ಒಂದೇ ಕುಟುಂಬದ ಸದಸ್ಯರು. ಆನೆಗಳು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ತಮ್ಮ ಜೀವ ಹಾಗೂ ಸೊತ್ತುಗಳಿಗೆ ಬೆದರಿಕೆಯಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆನೆಗಳ ದಾಳಿಯಿಂದ ಮೃತಪಟ್ಟವರಿಗೆ ಕೂಡಲೇ ಪರಿಹಾರ ನೀಡುವಂತೆ ಹಾಗೂ ಆನೆಗಳ ದಾಳಿಯನ್ನು ತಡೆಯಲು ಶಾಶ್ವತ ಪರಿಹಾರ ರೂಪಿಸುವಂತೆ ಅವರು ಆಗ್ರಹಿಸಿದ್ದಾರೆ. ಘಟನೆಯನ್ನು ದೃಢಪಡಿಸಿರುವ ಪೂರ್ವ ಅರಣ್ಯ ವಿಭಾಗದ ಡಿಎಫ್ಒ ವಿಕಾಸ್ ಕುಮಾರ್ ಉಜ್ವಲ್, ಆನೆಗಳ ಹಿಂಡು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದರಿಂದ ಟ್ರಾಂಕ್ವಿಲೈಜರ್ ಇಂಜೆಕ್ಷನ್ ಬಳಸಿ ಅವುಗಳನ್ನು ಶಾಂತಗೊಳಿಸಲು ಅನುಮತಿ ಕೋರಲಾಗಿದೆ ಎಂದಿದ್ದಾರೆ.
Kalaburagi | ಫೆ.16ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಕಲಬುರಗಿ: ಕಲಬುರಗಿ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆ(ಪುರುಷ) ವತಿಯಿಂದ 2025-26ನೇ ಸಾಲಿನ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿದಾರರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಫೆ.16 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಕ್ರೀಡಾಕೂಟ ಉದ್ಘಾಟಿಸಲ್ಲಿದ್ದು, ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಆಗಮಿಸುವರು. ಕಲಬುರಗಿ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ(ಪು) ಪ್ರಾಚಾರ್ಯ ಮುರಲಿಧರ ರತ್ನಗಿರಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ಕೈಗಾರಿಕೆ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕಿ ಮಂಜುಳಾ ಎಸ್., ದಾವಣಗೆರೆಯ ಐ.ಟಿ.ಓ.ಟಿ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ, ಕಲಬುರಗಿ ಕೆ.ಜಿ.ಟಿ.ಟಿ.ಐ ನಿರ್ದೇಶಕ ರಾಜೇಶ ಬಾವಗಿ, ಆದರ್ಶ ಶಿಕ್ಷಣ ಸಂಸ್ಥೆಯ ಸಂಯೋಜಕ ಬಸವರಾಜ ಯಲ್ಲೇರಿ, ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಸರಕಾರಿ ನೌಕರರ ಸಂಘದ ಹಿರಿಯ ಉಪಾಧಕ್ಷ ಸುರೇಶ ವಗ್ಗೆ, ವಿ.ಇ.ಎಸ್. ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಕೀಲ ಅನ್ಸಾರಿ ಭಾಗವಹಿಸಲಿದ್ದಾರೆ.
ಚಿಂಚೋಳಿ| ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ, ನಿರ್ವಾಹಕ ಮೇಲೆ ಹಲ್ಲೆ ಆರೋಪ : ಪ್ರಕರಣ ದಾಖಲು
ಚಿಂಚೋಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಕೆಕೆಆರ್ಟಿಸಿ (KKRTC) ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಚಿಂಚೋಳಿ ತಾಲೂಕಿನ ಗಾರಂಪಳ್ಳಿ–ಹುಡದಳ್ಳಿ ನಡುವಿನ ರಸ್ತೆಯಲ್ಲಿ ನಡೆದಿದೆ. ಪ್ರಯಾಣಿಕನೊಂದಿಗೆ ಉಂಟಾದ ವಾಗ್ವಾದವು ಮಾರಾಮಾರಿಗೆ ತಿರುಗಿ, ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಚಾಲಕನ ಕಿವಿಗೆ ಪೆಟ್ಟಾಗಿರುವುದರಿಂದ ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಸಂಬಂಧಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮಿಳುನಾಡು| ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ: ಟಿವಿಕೆ ಮುಖ್ಯಸ್ಥ ವಿಜಯ್ ಸ್ಪಷ್ಟನೆ
ಚೆನ್ನೈ, ಫೆ. 14: ಮುಂಬರುವ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ತನ್ನ ಪಕ್ಷ ಸ್ಪರ್ಧಿಸಲಿದೆ ಎಂದು ನಟ, ರಾಜಕಾರಣಿ ಹಾಗೂ ಟಿವಿಕೆಯ ಮುಖ್ಯಸ್ಥ ವಿಜಯ್ ಶುಕ್ರವಾರ ಹೇಳಿದ್ದಾರೆ. ತನ್ನ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಸರಕಾರ ರಚಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿಜಯ್, ಟಿವಿಕೆ ಚುನಾವಣೆಯ ಮೊದಲು ಅಥವಾ ಅನಂತರ ಇಂಡಿಯಾ ಮೈತ್ರಿಕೂಟ ಅಥವಾ ಬಿಜೆಪಿ ನೇತೃತ್ವದ ಎನ್ಡಿಎಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ತನ್ನ ರಾಜಕೀಯ ಪ್ರತಿಸ್ಪರ್ಧಿಗಳು ಮತದಾರರಿಗೆ ಹಣ ವಿತರಿಸುವ ಸಾಧ್ಯತೆ ಇದೆ. ಆದರೆ, ಜನರು ಟಿವಿಕೆಯನ್ನು ಬೆಂಬಲಿಸಲಿದ್ದಾರೆ ಎಂದು ತನಗೆ ಭರವಸೆ ಇದೆ ಎಂದು ಹೇಳಿದ್ದಾರೆ. ‘‘ಕೊರೋನಾ ಸಂದರ್ಭದಲ್ಲಿ ನಾನು ರಾಜಕೀಯ ಪ್ರವೇಶಿಸಲು ನಿರ್ಧರಿಸಿದೆ. ಅದು ಸರಿಯಾದ ಸಮಯ ಎಂಬುದು ನನಗೆ ಗೊತ್ತಿತ್ತು’’ ಎಂದು ವಿಜಯ್ ತಿಳಿಸಿದ್ದಾರೆ.
4 ಜನರಿಗೆ ಹೊಸ ಬದುಕು ಕೊಟ್ಟ ಪುಟ್ಟ ಕಂದಮ್ಮ: ವೈದ್ಯಕೀಯ ಇತಿಹಾಸದಲ್ಲೇ ಇದು ದಾಖಲೆ
ಭೂಮಿಯ ಮೇಲೆ ಒಂದು ವರ್ಷವೂ ಪೂರ್ಣವಾಗಿ ಕಳೆಯದ ಪುಟಾಣಿ ಕಂದಮ್ಮ ನಾಲ್ವರಿಗೆ ಹೊಸ ಬದುಕು ಕೊಟ್ಟಿದೆ. ರಸ್ತೆ ಅಪಘಾತದಲ್ಲಿ ಅಲಿನ್ ಶೆರಿನ್ ಎನ್ನುವ ಮಗು ಮೃತಪಟ್ಟಿದ್ದು, ನಾಲ್ವರ ಬಾಳಿನಲ್ಲಿ ಆಶಾಕಿರಣವಾಗಿದೆ. 4 ಜನರಿಗೆ ಹೊಸ ಬದುಕು ಕೊಟ್ಟ ಪುಟ್ಟ ಕಂದಮ್ಮ... ವೈದ್ಯಕೀಯ ಇತಿಹಾಸದಲ್ಲೇ ಇದು ದಾಖಲೆ. ಸಂಕಷ್ಟದ ಸಮಯದಲ್ಲೂ ಮಗುವಿನ ಪೋಷಕರು ತೆಗೆದುಕೊಂಡ ನಿರ್ಧಾರದಿಂದ ಇದು ಸಾಧ್ಯವಾಗಿದೆ.
ವಿರೋಧ ಪಕ್ಷದ ವೈಫಲ್ಯದಿಂದ ಆಡಳಿತ ಪಕ್ಷಕ್ಕೆ ಲಾಭ: ಶಾಸಕ ಯತ್ನಾಳ್
ಕುಂದಾಪುರ, ಫೆ.13: ರಾಜ್ಯದಲ್ಲಿ ವಿರೋಧ ಪಕ್ಷದ ವೈಫಲ್ಯದ ಲಾಭವನ್ನು ಆಡಳಿತ ಪಕ್ಷ ಬಳಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯ ಸರಕಾರದ ವಿರುದ್ಧದ ಅಬಕಾರಿ ಹಗರಣದ ಅದರ ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ಅಬಕಾರಿ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನ್ನೇ ಆಡಿಲ್ಲ ಎಂದು ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಕ್ಷವನ್ನು ಕಟುವಾಗಿ ಟೀಕಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಂದಾಪುರಕ್ಕೆ ಆಗಮಿಸಿದ ಯತ್ನಾಳ್ ಇಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಅಬಕಾರಿ ಇಲಾಖೆಯ ಭ್ರಷ್ಟಾಚಾರವನ್ನು ವಿಪಕ್ಷ ಸರಿಯಾಗಿ ನಿಭಾಯಿಸಿಲ್ಲ ಎಂದವರು ಗಂಭೀರ ಆರೋಪ ಮಾಡಿದರು. ವಿಜಯೇಂದ್ರ ಅವರು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿಲ್ಲ. ವಿಧಾನಸಭೆಯಲ್ಲೂ ಮಾತಾಡೋಲ್ಲ, ಬಹಿರಂಗವಾಗಿಯೂ ಮಾತನಾಡಲ್ಲ. ಸದನದಲ್ಲಿ ಕುಳಿತುಕೊಳ್ಳುತ್ತಿಲ್ಲ, ಚರ್ಚೆಯಲ್ಲೂ ಭಾಗವಹಿಸುತ್ತಿಲ್ಲ ಎಂದು ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೆರೆದರು. ರಾಮ್ಜಿ ಬಗ್ಗೆ ರಾಜ್ಯ ಸರಕಾರ ಜನತೆಯಲ್ಲಿ ಮೂಡಿಸಿದ್ದ ತಪ್ಪು ಅಭಿಪ್ರಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹೋಗಲಾಡಿಸಲು ವಿಫಲರಾಗಿ ದ್ದಾರೆ. ಅವರಿಗೆ ಎಲ್ಲಿ ತಮ್ಮ ಫೈಲ್ಗಳನ್ನು ಹೊರ ತೆಗೆಯುತ್ತಾರೋ ಎಂಬ ಭಯ.ಈ ಭಯದಲ್ಲಿ ಸದನದಿಂದ ಓಡಿಹೋಗಿದ್ದಾರೆ ಎಂದು ಲೇವಡಿ ಮಾಡಿದ ಯತ್ನಾಳ್, ಸದನದಲ್ಲಿ ವಿರೋಧ ಪಕ್ಷದ ನಾಯರೇನೊ ಪ್ರಯತ್ನ ಮಾಡಿದ್ದಾರೆ ಎಂದು ಆಶೋಕರನ್ನು ಹೊಗಳಿದರು. ಅರ್ಥಹೀನ ಅಧಿವೇಶನ: ರಾಜ್ಯ ವಿಧಾನಮಂಡಲದ ಈ ಬಾರಿಯ ಅಧಿವೇಶನವನ್ನು ಅರ್ಥಹೀನ ಅಧಿವೇಶನ ಎಂದು ಟೀಕಿಸಿದ ಯತ್ನಾಳ್, ಇದರಲ್ಲಿ ಜನರ ತೆರಿಗೆ ಹಣವನ್ನು ಹಾಳು ಮಾಡುವ ಕೆಲಸವಾಯಿತು ಎಂದರು. ಇದು ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಅವರನ್ನು ಟೀಕಿಸಲು ಕರೆದ ಅಧಿವೇಶನ. ರಾಮ್ಜಿ ಬಗ್ಗೆ ಸರಿಯಾಗಿ ಚರ್ಚೆಯೇ ಆಗಿಲ್ಲ. ಶಾಸಕರ ಸಂಬಳ ಭತ್ಯೆಗಾಗಿ ನಡೆದ ಅಧಿವೇಶನ ಇದಾಗಿದೆ ಎಂದು ಹೇಳಿದರು. ಮಾಜಿ ಸಂಸದ ಅನಂತ್ಕುಮಾರ್ ಹೆಗಡೆ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಈ ಬಗ್ಗೆ ಹೆಗಡೆ ಎಲ್ಲೂ ವೈಯಕ್ತಿಕವಾಗಿ ಪ್ರತಿಕ್ರಿಯೆ ಕೊಟ್ಟಿಲ್ಲ. ಯಾವುದೇ ದೃಢವಾದ ಮಾಹಿತಿ ಇಲ್ಲ . ರಾಜ್ಯ ರಾಜಕಾರಣಕ್ಕೆ ಬರಲು ಮನಸ್ಸಿದ್ದರೆ ಅವರೇ ಬಹಿರಂಗ ಪಡಿಸಬೇಕು ಎಂದರು. ಬಿಜೆಪಿಯಲ್ಲಿ ಒಳ್ಳೆಯ ನಾಯಕತ್ವವನ್ನು ಮುಗಿಸಲಾಗುತ್ತದೆ.ತಂದೆ-ಮಕ್ಕಳ ಸಹವಾಸದಿಂದ ಹೀಗೆ ಆಗಿದೆ. ಇಂಥವರಿಗೆ ನಾಯಕತ್ವ ನೀಡಬೇಕೇ ಎಂಬುದನ್ನು ಕೇಂದ್ರ ಸರಕಾರ ನಿರ್ಧರಿಸಬೇಕು.ಇವರದು ಹೊಂದಾಣಿಕೆಯ ರಾಜಕೀಯ ಎಂದು ಮತ್ತೆ ಟೀಕಿಸಿದರು. ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತಂತೆ ಮಾತನಾಡಿದ ಯತ್ನಾಳ್, ವಿದೇಶಕ್ಕೆ ಹೋಗಿ ಅವರು ಅಧ್ಯಯನ ಮಾಡುವುದು ಏನಿದೆ. ಬೇಕಿದ್ದರೆ ಭ್ರಷ್ಟಾಚಾರವನ್ನು ಹೇಗೆ ಕಡಿಮೆ ಮಾಡಬೇಕು ಎಂದು ಅಧ್ಯಯನ ಮಾಡಲಿ ಎಂದು ವ್ಯಂಗ್ಯವಾಡಿದರು. ಅವರು ಅಧ್ಯಯನಕ್ಕೆ ವಿದೇಶಕ್ಕೆ ಹೋಗಿಲ್ಲ, ಶಕ್ತಿಪ್ರದರ್ಶನಕ್ಕೆ ಹೋಗಿದ್ದಾರೆ. ನಮ್ಮ ಬಳಿ ಎಷ್ಟು ಶಾಸಕರ ಒಲವಿದೆ ಎಂದು ತೋರಿಸಲು ಹೋಗಿದ್ದಾರೆ ಎಂದರು. ರಾಜ್ಯ ಸರಕಾರ ಪತನದ ಅಂಚಿಗೆ: ಯತ್ನಾಳ್ ಸಿದ್ಧರಾಮಯ್ಯ ನೇತೃತ್ವದ ಸರಕಾರ ಪತನವಾಗುವ ಹಂತಕ್ಕೆ ಬರುತ್ತೆ.ಡಿ.ಕೆ. ಶಿವಕುಮಾರ್ ಯಾವುದೇ ಪರಿಸ್ಥಿತಿ ಯಲ್ಲಿ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಸರಕಾರ ಬಿದ್ದರೂ ತೊಂದರೆ ಇಲ್ಲ ಎಂಬ ಹಂತಕ್ಕೆ ತಲುಪಿದ್ದಾರೆ. ಕಳೆದ ಎರಡು ಮೂರು ದಿನಗಳ ಹೇಳಿಕೆಯಲ್ಲಿ ಇದನ್ನು ಗಟ್ಟಿಯಾಗಿ ಮಾತನಾಡಿದ್ದಾರೆ. ಹೊಸದಿಲ್ಲಿಗೆ ಗಾಳಿ ಬಿಸಿಲು ನೋಡಲು ಬಂದಿಲ್ಲ ಎಂದು ಅವರೇ ಹೇಳಿದ್ದಾರೆ. ಹೀಗಾಗಿ ಶೀಘ್ರವೇ ರಾಜ್ಯ ಸರಕಾರ ಪತನವಾದರೂ ಆಶ್ಚರ್ಯ ಇಲ್ಲ ಎಂದು ಬಸವನಗೌಡ ಯತ್ನಾಳ್ ನುಡಿದರು.
Epstein files| ಹರ್ದೀಪ್ ಸಿಂಗ್ ಪುರಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ವಿಪಕ್ಷಗಳಿಂದ ಸಂಸತ್ನ ಹೊರಗೆ ಪ್ರತಿಭಟನೆ
ಹೊಸದಿಲ್ಲಿ, ಫೆ. 14: ಅಮೆರಿಕದಲ್ಲಿ ಬಿಡುಗಡೆಯಾದ ‘ಎಪ್ಸ್ಟೀನ್ ಫೈಲ್’ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೆಸರು ಕಾಣಿಸಿಕೊಂಡ ನಂತರ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂಸತ್ತಿನ ಕಟ್ಟಡದ ಹೊರಗೆ ಸಾಲಾಗಿ ನಿಂತ ಕಾಂಗ್ರೆಸ್ನ ಹಲವು ಸಂಸದರು ಪುರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಉತ್ತರಿಸುವಂತೆ ಆಗ್ರಹಿಸಿದರು. ಪುರಿ ಹಾಗೂ ಜೆಫ್ರಿ ಎಪ್ಸ್ಟೀನ್ನ ಭಾವಚಿತ್ರಗಳನ್ನು ಒಳಗೊಂಡ ದೊಡ್ಡ ಬ್ಯಾನರ್ ಅನ್ನು ಕೂಡ ಹಿಡಿದುಕೊಂಡಿದ್ದರು. ತನ್ನ ವಿರುದ್ಧ ‘‘ಪರೋಕ್ಷ ಆರೋಪ’’ ಮಾಡಿರುವುದಕ್ಕೆ ಪುರಿ ಅವರು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ನಾನು ಅಮೆರಿಕದ ಲೈಂಗಿಕ ಅಪರಾಧಿ ಎಪ್ಸ್ಟೀನ್ನನ್ನು ಕೆಲವು ಬಾರಿ ಭೇಟಿಯಾಗಿದ್ದೇನೆ. ಆದರೆ, ಆತ ನಡೆಸಿದ ಅಪರಾಧಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಹಿಮಾಚಲ ಪ್ರದೇಶ| ಸರಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯ ಹತ್ಯೆ
ಶಿಮ್ಲಾ, ಫೆ. 14: ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ಡೆಹ್ರಾದಲ್ಲಿರುವ ಚಿನೌರ್ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವ 58 ವರ್ಷದ ಕೆಲಸಗಾರ್ತಿಯನ್ನು ವಿದ್ಯಾರ್ಥಿಗಳ ಎದುರು ಹಾಡ ಹಗಲೇ ಹತ್ಯೆಗೈಯಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ಗುರುವಾರ ಅಪರಾಹ್ನ ನಡೆದಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶಾಲೆಯ ಆವರಣ ಪ್ರವೇಶಿಸಿ ಚಿನೌರ್ನ ನಿವಾಸಿ ಸಲೋಚನಾ ದೇವಿ ಅವರ ಮೇಲೆ ಕುಡಗೋಲಿನಿಂದ ದಾಳಿ ನಡೆಸಿದ್ದಾನೆ. ಮಕ್ಕಳ ಚೀರಾಟ ಕೇಳಿದ ಶಿಕ್ಷಕರು ತರಗತಿಯಿಂದ ಹೊರಗೆ ಓಡಿ ಬಂದರು. ಅಡುಗೆ ಮಾಡುವ ಪ್ರದೇಶದಲ್ಲಿ ಆರೋಪಿ ರಾಕೇಶ್ ಕುಮಾರ್ (48) ಹರಿತವಾದ ಕುಡುಗೋಲು ಹಿಡಿದುಕೊಂಡು ನಿಂತಿದ್ದ. ಸಲೋಚನಾ ಅವರ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ತೆರಳುವಂತೆ ಶಿಕ್ಷಕರು ರಾಕೇಶ್ ಕುಮಾರ್ಗೆ ಸೂಚಿಸಿದರು. ಆದರೆ, ಆತ ಅವರಿಗೆ ಬೆದರಿಕೆ ಒಡ್ಡಿದ. ಕೂಡಲೇ ಸಮೀಪದ ಶಾಲೆಯ ಶಿಕ್ಷಕರು ಸ್ಥಳಕ್ಕೆ ಧಾವಿಸಿದರು. ಆತನ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಆತ ಹೆದರಿ ಓಡಿ ಹೋದ ಎಂದು ಅವರು ಹೇಳಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಲೋಚನಾ ಅವರನ್ನು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಸುದ್ದಿ ಹರಡಲು ಆರಂಭವಾಗುತ್ತಿದ್ದಂತೆ, ವಿದ್ಯಾರ್ಥಿಗಳ ಹೆತ್ತವರು ಶಾಲೆಗೆ ಆಗಮಿಸಿದರು ಹಾಗೂ ಶಾಲೆಯ ಆವರಣದ ಒಳಗೆ ಹೊರಗಿನವರು ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು. ಈ ನಡುವೆ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಹಾಗೂ ಅದೇ ಗ್ರಾಮದ ನಿವಾಸಿಯಾಗಿರುವ ಆರೋಪಿ ರಾಕೇಶ್ ಕುಮಾರ್ನನ್ನು ಬಂಧಿಸಲಾಗಿದೆ. ಈ ಬರ್ಬರ ಕೃತ್ಯದ ಹಿಂದಿನ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kalaburagi | ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ: ಮಾ.15ರವರೆಗೆ ವಿಶೇಷ ನೋಂದಣಿ ಅಭಿಯಾನ : ಅವಿನಾಶ ಶಿಂಧೆ
ಕಲಬುರಗಿ: ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ಅವಧಿಯಲ್ಲಿ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಮಾರ್ಚ್ 15ರವರೆಗೆ ವಿಶೇಷ ನೋಂದಣಿ ಅಭಿಯಾನ ನಡೆಯುತ್ತಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ತಿಳಿಸಿದ್ದಾರೆ. ಈ ಯೋಜನೆ ಎನ್ಪಿಎಸ್ (NPS) ಮಾದರಿಯ ವಂತಿಗೆ ಆಧಾರಿತ ಪಿಂಚಣಿ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಗುರುತಿಸಿರುವ ಸುಮಾರು 170 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಹೆಸರು ನೋಂದಾಯಿಸಲು ಅವಕಾಶವಿದೆ. 18ರಿಂದ 40 ವರ್ಷ ವಯಸ್ಸಿನ ಕಾರ್ಮಿಕರು, ಇಪಿಎಫ್ಒ (EPFO) ಮತ್ತು ಇಎಸ್ಐಸಿ (ESIC) ಸದಸ್ಯರಾಗಿರಬಾರದು. ಜೊತೆಗೆ ಆದಾಯ ತೆರಿಗೆ ಪಾವತಿಸುವವರಾಗಿರಬಾರದು. ಇಂತಹ ಅರ್ಹ ಅಸಂಘಟಿತ ಕಾರ್ಮಿಕರು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗಾಗಿ ಆರಂಭಿಕ ವಂತಿಗೆ ಮೊತ್ತ, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪಾಸ್ಬುಕ್, ಸಕ್ರಿಯ ಮೊಬೈಲ್ ಸಂಖ್ಯೆ ಮತ್ತು ನಾಮನಿರ್ದೇಶಿತರ ವಿವರಗಳೊಂದಿಗೆ ಕಾಮನ್ ಸರ್ವಿಸ್ ಸೆಂಟರ್ಗೆ (CSC) ಭೇಟಿ ನೀಡಬೇಕು. ನಂತರ ಮಾಸಿಕ ವಂತಿಗೆ ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಡಿತಗೊಳ್ಳುತ್ತದೆ. ಫಲಾನುಭವಿಯು 60 ವರ್ಷ ವಯಸ್ಸು ಪೂರ್ಣಗೊಳಿಸಿದ ಬಳಿಕ ತಿಂಗಳಿಗೆ ರೂ. 3,000 ಖಚಿತ ಪಿಂಚಣಿ ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ, ಇಪಿಎಫ್ಒ, ಇಎಸ್ಐಸಿ, ಎಲ್ಐಸಿ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ. ಹಾಗೆಯೇ http://locator.crccloud.in ವೆಬ್ಸೈಟ್ ಮೂಲಕವೂ ಮಾಹಿತಿ ಪಡೆಯಬಹುದು.
DHO ವರ್ಗಾವಣೆ: ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? BJP ನಾಯಕರ ವಿರುದ್ಧ ಆರೋಗ್ಯ ಸಚಿವ ಗರಂ
ಮಂಡ್ಯ ಜಿಲ್ಲಾಧಿಕಾರಿಗಳ ವರ್ಗಾವಣೆಯ ನಕಲಿ ಪತ್ರ ರಾಜಕೀಯವಾಗಿ ಭಾರೀ ಸದ್ದು ಮಾಡುತ್ತಿದೆ. ನಕಲಿ ಪತ್ರ ಹಂಚುತೀರಲ್ಲ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಎಂದು BJP ನಾಯಕರ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗರಂ ಆಗಿದ್ದಾರೆ. ಶಾಸಕ ಸುನೀಲ್ ಕುಮಾರ್ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಸಚಿವರು ಮಾಡಿದ್ದಾರೆ.
ಆರೋಗ್ಯಾಧಿಕಾರಿ, ಅಬಕಾರಿ ಇಲಾಖೆಗೆ ನಿಯೋಜನೆ ಸಂಬಂಧ ಸಿಎಂ ಹೆಸರಿನಲ್ಲಿ ಪತ್ರ ವೈರಲ್: ಪೊಲೀಸರಿಗೆ ದೂರು
ಬೆಂಗಳೂರು: ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ. ಮೋಹನ್ ಅವರನ್ನು ಮೈಸೂರು ಅಬಕಾರಿ ಇಲಾಖೆ ಉಪ ಆಯುಕ್ತರನ್ನಾಗಿ ನಿಯೋಜಿಸುವ ಸಂಬಂಧದ ಸಿಎಂ ಹೆಸರಿನಲ್ಲಿ ಪತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸದರಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶುಕ್ರವಾರ ಈ ಸಂಬಂಧ ಸಿಎಂ ಜಂಟಿ ಕಾರ್ಯದರ್ಶಿ ಅರುಣ್ ಪುರ್ಟಾಡೋ ದೂರು ನೀಡಿದ್ದು, ‘ಅಧಿಕೃತ ಸಂಖ್ಯೆ ಮತ್ತು ದಿನಾಂಕವಿಲ್ಲದ ಈ ಟಿಪ್ಪಣಿಯು ಸಿಎಂ ಸಚಿವಾಲಯದಲ್ಲಿ ಇ-ತಂತ್ರಾಂಶದಲ್ಲಿ ನೊಂದಾಯಿಸಿರುವುದಿಲ್ಲ. ಟಿಪ್ಪಣಿಯನ್ನು ಯಾವುದೇ ಇಲಾಖೆಗೆ ರವಾನಿಸಿರುವುದಿಲ್ಲ. ಅಲ್ಲದೆ, ಯಾವುದೇ ವರ್ಗಾವಣೆ/ನಿಯೋಜನೆ ಆದೇಶ ಹೊರಡಿಸಿರುವುದಿಲ್ಲ. ಆದಾಗ್ಯೂ ಸಿಎಂ ಹಾಗೂ ಸರಕಾರಕ್ಕೆ ಕೆಟ್ಟ ಹೆಸರನ್ನು ತರುವ ದುರುದ್ದೇಶದಿಂದ ಈ ಕೃತ್ಯವನ್ನು ಎಸಗಿದ್ದು, ತಪ್ಪಿತಸ್ಥರನ್ನು ಪತ್ತೆ ಮಾಡಬೇಕೆಂದು ಕೋರಿದ್ದಾರೆ. ಕಮಿಷನ್ ದಂಧೆಗೆ ಕನ್ನಡಿ: ಆರ್.ಅಶೋಕ್ ‘ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಿ, ಸ್ವತಃ ಸಿಎಂ ಅವರೇ ಆರೋಗ್ಯಾಧಿಕಾರಿಯನ್ನು ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಪತ್ರ ಬರೆದು ನಿರ್ದೇಶನ ನೀಡಿರುವುದು ಈ ಸರಕಾರದಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ, ಅಬಕಾರಿ ಇಲಾಖೆಯ ಕಮಿಷನ್ ದಂಧೆಗೆ ಕನ್ನಡಿ ಹಿಡಿದಿದೆ. ಅದರಲ್ಲೂ ಸಿಎಂ ಅವರೇ ಶಿಫಾರಸ್ಸು ಮಾಡಿದ್ದು, ವರ್ಗಾವಣೆ ಮಾಡಿರುವ ಅಧಿಕಾರಿ ಡಾ.ಮೋಹನ್ ಕೃಷಿ ಸಚಿವ ಚಲುವರಾಯಸ್ವಾಮಿ ಸಂಬಂಧಿ ಎನ್ನುವ ಮಾಹಿತಿ ಇದೆ. ಏನು ನಡೆಯುತ್ತಿದೆ ಸ್ವಾಮಿ ನಿಮ್ಮ ಸರಕಾರದಲ್ಲಿ? ಇದೇನು ಸರಕಾರವೋ? ಅಥವಾ ತುಘಲಕ್ ದರ್ಬಾರೋ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ವಾಡಿ | ಫೆ.15ರಂದು ಶ್ರೀ ಸೇವಾಲಾಲ್ ಜಯಂತಿ
ವಾಡಿ: ಫೆಬ್ರವರಿ 15ರಂದು ಬಂಜಾರಾ (ಲಂಬಾಣಿ) ಸೇವಾ ಸಂಘದ ವತಿಯಿಂದ ಪಟ್ಟಣದಲ್ಲಿ ಸಂತ ಸಂತ ಶ್ರೀ ಸೇವಾಲಾಲ್ ಮಹಾರಾಜ ಅವರ 287ನೇ ಜಯಂತಿ ಸಮಾರಂಭ ಹಾಗೂ ಸರ್ವಧರ್ಮ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪೋಮಾ ರಾಠೋಡ ಹಾಗೂ ಬಂಜಾರಾ ಸಮಾಜದ ಅಧ್ಯಕ್ಷ ರಮೇಶ್ ಕಾರಬಾರಿ ತಿಳಿಸಿದ್ದಾರೆ. ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ಬಂಜಾರಾ ಸಮಾಜದ ಯುವ ಪ್ರತಿಭೆ, ಕಿರುತೆರೆಯ ಸರಿಗಮಪ ಕನ್ನಡ ಸೀಸನ್ 15ರ ರನ್ನರ್ ಅಪ್ ಹಾಗೂ ಬಿಗ್ ಬಾಸ್ ಕನ್ನಡ ವಿಜೇತ ಗಾಯಕ ಹಣಮಂತ ಲಮಾಣಿ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಆಚರಿಸಿದ ಕೀರ್ತಿ ವಾಡಿ ಬಂಜಾರಾ ಸಮಾಜಕ್ಕೆ ಸಲ್ಲುತ್ತದೆ. ಈ ವರ್ಷ ಜಯಂತಿ ಸಂಭ್ರಮಕ್ಕೆ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಫೆ.14ರಂದು ಬೆಳಗ್ಗೆ 11:30ಕ್ಕೆ ಸಮುದಾಯದ ಗುರುಗಳ ಸಮ್ಮುಖದಲ್ಲಿ ತಾಯಿ ಮರಿಯಮ್ಮ ದೇವಿ ಹಾಗೂ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಫೆ.15ರಂದು ಬೆಳಗ್ಗೆ 8 ಗಂಟೆಗೆ ಭೋಗ ಪೂಜೆ, 8:30ಕ್ಕೆ ಬೈಕ್ ರ್ಯಾಲಿ, 10:30ಕ್ಕೆ ಸೇವಾಲಾಲ್ ಮಹಾರಾಜರ ಭವ್ಯ ಭಾವಚಿತ್ರ ಮೆರವಣಿಗೆ 84 ತಾಂಡಾಗಳ ಸಾವಿರಾರು ಜನರ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ವೇಳೆ ಲಂಬಾಣಿ ಯುವತಿಯರಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶನವೂ ಜರುಗಲಿದೆ ಎಂದು ತಿಳಿಸಿದರು. ಮಧ್ಯಾಹ್ನ 1:30ಕ್ಕೆ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಪೌರಾಘಡ ಸೇವಾಲಾಲ್ ಪೀಠದ ಸದ್ಗುರು ಶ್ರೀಬಾಬುಸಿಂಗ್ ಮಹಾರಾಜ್ ಉದ್ಘಾಟಿಸಲಿದ್ದಾರೆ. ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ಮಾಜಿ ಸಂಸದ ಡಾ. ಉಮೇಶ ಜಾಧವ್, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮಹಮೂದ್ ಸಾಹೇಬ್, ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುಗುಳನಾಗಾಂವ ಯಲ್ಲಾಲಿಂಗ ಪುಣ್ಯಶ್ರಮದ ಶ್ರೀ ಜೇಮಸಿಂಗ್ ಮಹಾರಾಜ್, ಗೊಬ್ಬರ ಮಠದ ಶ್ರೀ ಬಳಿರಾಮ ಮಹಾರಾಜ, ಚಿತ್ತಾಪುರ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ, ನಾಲವಾರ ಮಠದ ಶ್ರೀ ತೋಟೇಂದ್ರ ಸ್ವಾಮೀಜಿ, ಹಲಕರಟಿ ಮಠದ ಶ್ರೀ ಮುನೀಂದ್ರ ಶಿವಾಚಾರ್ಯ, ರಾವೂರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಲಕರಟಿ ಸಿದ್ದೇಶ್ವರ ಮಠದ ಶ್ರೀ ರಾಜಶೇಖರ ಸ್ವಾಮೀಜಿ, ಹಲಕರಟಿ ಖದೀರ್ ದರ್ಗಾ ಶರೀಫ್ ಅಬುತುರಾಬ್ ಶಹಾ ಖಾದ್ರಿ, ಅಳ್ಕೊಳ್ಳಿ ಸಾವಿರ ದೇವರ ಮಠದ ಶ್ರೀ ಸಂಗಮನಾಥ ದೇವರು, ದೇವಾಪುರ ಪೀಠದ ಮಾತಾ ಸರಸ್ವತಿ, ವಾಡಿ ಮೆಥೋಡಿಸ್ಟ್ ಚರ್ಚ್ ಫಾದರ್ ಸುಧೀರ ರವಿಕುಮಾರ, ಶ್ರೀ ಠಾಕೂರ ಮಹಾರಾಜ ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಗೆ ಸೂಪರ್ ವೇಗ: ನಿಮ್ಮ ರಿಫಂಡ್ ಸ್ಟೇಟಸ್ ಆನ್ ಲೈನ್ ನಲ್ಲಿ ಚೆಕ್ ಮಾಡುವುದು ಹೇಗೆ?
Income Tax Refund Process- ಕಳೆದ ವರ್ಷ ಸರಿಯಾದ ಸಮಯಕ್ಕೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರೂ ಈವರೆಗೂ ನಿಮಗೆ ರಿಫಂಡ್ ಆಗಿಲ್ಲವೇ? ಚಿಂತಿಸಬೇಡಿ ಆದಾಯ ಇಲಾಖೆ ಇದೀಗ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸುತ್ತಿದ್ದು ಕಳೆದ 24 ಗಂಟೆಯಲ್ಲಿ ಬಹುತೇಕ ಮಂದಿಯ ಖಾತೆಗೆ ಮೊತ್ತ ಜಮೆ ಆಗಿದೆ. ಹಂತಹಂತವಾಗಿ ಮರುಪಾವತಿ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಯಾರೂ ಆತಂಕಕ್ಕೀಡಾಗುವ ಅಗತ್ಯವಿಲ್ಲ. ನಿಮ್ಮ ಮರುಪಾವತಿ ಸ್ಟೇಟಸ್ ಆನ ಲೈನ ನಲ್ಲಿಯೇ ಪರಿಶೀಲಿಸಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಬೀದಿಬದಿ ವ್ಯಾಪಾರಸ್ಥರ ಸಂಘ ಉಳ್ಳಾಲ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ
ಉಳ್ಳಾಲ: ದೇಶದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಮಾಡಿರುವ ಕಾನೂನು,ನಿಯಮಮಾವಳಿಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಬಡ ಬೀದಿಬದಿ ವ್ಯಾಪಾರಿಗಳ ಮೇಲಿನ ಬುಲ್ಡೋಜರ್ ದಾಳಿಯು ಸರಕಾರಕ್ಕೆ ಶೋಭೆ ತರುವುದಿಲ್ಲ. ಅತ್ಯಂತ ಭ್ರಷ್ಟವಾಗಿರುವ ಲೋಕೋಪಯೋಗಿ ಮತ್ತು ಹೆದ್ದಾರಿ ಇಲಾಖೆಗಳ ದಬ್ಬಾಳಿಕೆ ಎದುರಿಸಲು ಬೀದಿಬದಿ ವ್ಯಾಪಾರಿಗಳು ಸಿದ್ಧರಾಗಿದ್ದಾರೆಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದರು. ಲೋಕೋಪಯೋಗಿ ಇಲಾಖೆಯವರು ತೊಕ್ಕೊಟ್ಟುವಿನಿಂದ ನಾಟೆಕಲ್ ವರೆಗಿನ ಬೀದಿಬದಿ ವ್ಯಾಪಾರಿಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸಿರುವುದನ್ನು ಖಂಡಿಸಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಉಳ್ಳಾಲ ತಾಲೂಕು ಸಮಿತಿ (ಸಿಐಟಿಯು) ನೇತೃತ್ವದಲ್ಲಿ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯನ್ನು ದ್ಧೇಶಿಸಿ ಅವರು ಮಾತನಾಡಿದರು. ಸ್ಥಳೀಯಾಡಳಿತಗಳು ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸದೆ ಅವರ ಕಾನೂನು ಬದ್ಧ ಹಕ್ಕನ್ನು ನಿರಾಕರಿಸಿರು ವುದೇ ಈ ರೀತಿಯ ಬುಲ್ಡೋಜರ್ ದಾಳಿಗಳಿಗೆ ಕಾರಣ ಎಂದು ಆರೋಪಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬೀದಿಬದಿ ವ್ಯಾಪಾರಿಗಳು ಆರ್ಥಿಕವಾಗಿ ದುರ್ಬಲರಾಗಿದ್ದು ಕೌಶಲ್ಯ ಮತ್ತು ಶಿಕ್ಷಣದಿಂದ ವಂಚಿತರಾದವರಾಗಿದ್ದಾರೆ. ಅಂತಹ ದುರ್ಬಲರ ಮೇಲೆ ಬುಲ್ಡೋಜರ್ ಪ್ರಯೋಗಿಸಿ ಅವರ ಬದುಕನ್ನು ನಾಶ ಮಾಡಲು ಹೊರಟಿರುವುದು ಖೇದಕರ.ಬಡವರ ವಿರುದ್ಧ ನಡೆಸಿರುವ ಇಂತಹ ಕಾರ್ಯಾಚರಣೆಗಳು ಸರಕಾರದ ಸಾಧನೆಯೇ ಎಂದು ಪ್ರಶ್ನಿಸಿದರು. ಹಿರಿಯ ರೈತ ನಾಯಕ ಕೃಷ್ಣಪ್ಪ ಸಾಲಿಯಾನ್,ಡಿವೈಎಫ್ಐ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ,ಸಂಘದ ಅಧ್ಯಕ್ಷ ಮುಝಾಫರ್ ಅಹ್ಮದ್, ಪ್ರಮುಖರಾದ ಶೇಖರ್ ಕುಂದರ್, ಸಿಐಟಿಯು ಜಿಲ್ಲಾ ಮುಖಂಡ ಸುಂದರ ಕುಂಪಲ, ಪ್ರಮೋದಿನಿ ಕಲ್ಲಾಪು, ಅಬ್ದುಲ್ ಖಾದರ್ ವಾಮಂಜೂರು, ಸಿಕಂದರ್ ಬೇಗ್, ವಿನಾಯಕ್ ಶೆಣೈ, ಹರೀಶ್ ಕೆರೆಬೈಲ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರ.ಕಾರ್ಯದರ್ಶಿ ಸಂತೋಷ್ ಆರ್.ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆ, ನಾಟೆಕಲ್, ಕೋಟೆಕಾರ್, ತಲಪಾಡಿ ಭಾಗದ ಹಲವಾರು ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Bidar | ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳ ನೇಮಕ
ಬೀದರ್ : ಆಮ್ ಆದ್ಮಿ ಪಕ್ಷ ಕರ್ನಾಟಕ ಘಟಕದ ವತಿಯಿಂದ ಬೀದರ್ ಜಿಲ್ಲೆಯಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಜಾವಿದ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಫೂಲಾರಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಜಿಲ್ಲಾ ಯುವ ಘಟಕ ಅಧ್ಯಕ್ಷರಾಗಿ ಜಗನ್ನಾಥ್ ಹೂಗಾರ್ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ರಾಜಕುಮಾರ್ ಪಾಟೀಲ್ ಬಾವಗಿ ಅವರನ್ನು ನೇಮಕ ಮಾಡಲಾಗಿದೆ. ಪಕ್ಷದ ಬೆಳವಣಿಗೆ ಹಾಗೂ ಸಂಘಟನಾತ್ಮಕ ಬಲವರ್ಧನೆಗಾಗಿ ಇವರನ್ನು ಆಯ್ಕೆ ಮಾಡಲಾಗಿದ್ದು, ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ತಕ್ಷಣದಿಂದಲೇ ತಮ್ಮ ಕಾರ್ಯಭಾರವನ್ನು ಸ್ವೀಕರಿಸಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವಾಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಪ್ರಧಾನ ಕಾರ್ಯದರ್ಶಿ ಎಂ.ಡಿ.ಜಾವಿದ್ ಹಾಗೂ ಜಿಲ್ಲಾ ಘಟಕ ಅಧ್ಯಕ್ಷ ಸಿದ್ದಪ್ಪ ಫೂಲಾರಿ ಅವರು, ಪಕ್ಷದ ಉನ್ನತ ಮಟ್ಟದ ಕಾರ್ಯಚಟುವಟಿಕೆಗಳಿಗೆ ಹೊಸ ಪದಾಧಿಕಾರಿಗಳಿಂದ ಹೆಚ್ಚಿನ ಸಹಕಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿ-20 ವಿಶ್ವಕಪ್| ಐರ್ಲ್ಯಾಂಡ್ ನಾಯಕ ಪೌಲ್ ಸ್ಟಿರ್ಲಿಂಗ್ ಪಂದ್ಯಾವಳಿಯಿಂದ ಔಟ್
ಚೆನ್ನೈ, ಫೆ.13: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಐರ್ಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಪೌಲ್ ಸ್ಟಿರ್ಲಿಂಗ್ ಈಗ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಐರ್ಲ್ಯಾಂಡ್ ತಂಡಕ್ಕೆ ಸ್ಟಿರ್ಲಿಂಗ್ ಬದಲಿಗೆ ಸ್ಯಾಮ್ ಟೋಪ್ಪಿಂಗ್ರನ್ನು ಸೇರ್ಪಡೆಗೊಳಿಸಲು 2026ರ ಅವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯ ಈವೆಂಟ್ ಟೆಕ್ನಿಕಲ್ ಕಮಿಟಿ ಶುಕ್ರವಾರ ಅನುಮೋದನೆ ನೀಡಿದೆ. ಆಸ್ಟ್ರೇಲಿಯ ತಂಡದ ವಿರುದ್ಧ ಬುಧವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಸ್ಟಿರ್ಲಿಂಗ್ ಮೊಣಕಾಲು ನೋವಿಗೆ ಒಳಗಾಗಿದ್ದರು. ಅದೇ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕ್ಷಿಪ್ರವಾಗಿ ಒಂದು ರನ್ ಗಳಿಸುವ ಧಾವಂತದಲ್ಲಿದ್ದಾಗ ನೋವು ಉಲ್ಬಣಗೊಂಡಿತ್ತು. ಹೊಸ ಆಟಗಾರ ಟೋಪ್ಪಿಂಗ್ 15 ಸದಸ್ಯರನ್ನು ಒಳಗೊಂಡ ಐರ್ಲ್ಯಾಂಡ್ ತಂಡವನ್ನು ಶೀಘ್ರವೇ ಸೇರಲಿದ್ದಾರೆ. 20ರ ವಯಸ್ಸಿನ ಎಡಗೈ ಆರಂಭಿಕ ಬ್ಯಾಟರ್ ಕಳೆದ ವರ್ಷ ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ‘ಎ’ ವಿರುದ್ಧ ಚತುರ್ದಿನ ಪಂದ್ಯದಲ್ಲಿ ಐರ್ಲ್ಯಾಂಡ್ ‘ಎ’ ಪರವಾಗಿ ಆಡಿದ್ದರು. ಐರ್ಲ್ಯಾಂಡ್ ತಂಡವು ಶನಿವಾರ ಕೊಲಂಬೊದಲ್ಲಿ ಒಮಾನ್ ತಂಡದ ವಿರುದ್ಧ ಸೆಣಸಾಡಲಿದೆ.
ಟಿ-20 ವಿಶ್ವಕಪ್ನಿಂದ ಹೊರಗುಳಿದ ಝಿಂಬಾಬ್ವೆ ಬ್ಯಾಟರ್ ಬ್ರೆಂಡನ್ ಟೇಲರ್
ಹೊಸದಿಲ್ಲಿ, ಫೆ.13: ಮಂಡಿರಜ್ಜುನೋವಿನಿಂದ ಬಳಲುತ್ತಿರುವ ಹಿರಿಯ ವಿಕೆಟ್ಕೀಪರ್-ಬ್ಯಾಟರ್ ಬ್ರೆಂಡನ್ ಟೇಲರ್ ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಬದಲಿಗೆ ಅಗ್ರ ಸರದಿಯ ಬ್ಯಾಟರ್ ಬೆನ್ ಕರ್ರನ್ ತಂಡವನ್ನು ಸೇರಲಿದ್ದಾರೆ ಎಂದು ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಝಾ ಶುಕ್ರವಾರ ದೃಢಪಡಿಸಿದರು. 40ರ ಹರೆಯದ ಟೇಲರ್ ಪಂದ್ಯಾವಳಿಯಲ್ಲಿ ಝಿಂಬಾಬ್ವೆ ತಂಡ ಒಮಾನ್ ವಿರುದ್ಧ ಆಡಿರುವ ಮೊದಲ ಪಂದ್ಯದ ವೇಳೆ ಮಂಡಿರಜ್ಜು ನೋವಿಗೆ ಒಳಗಾಗಿದ್ದರು. ಈ ಪಂದ್ಯದಲ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದ ನಂತರ ಟೇಲರ್ ಗಾಯಗೊಂಡು ನಿವೃತ್ತಿಯಾಗಿದ್ದರು. ವಿಕೆಟ್ಕೀಪರ್ ಆಗಿ ಮೂರು ಕ್ಯಾಚ್ಗಳನ್ನು ಪಡೆದು ಒಮಾನ್ ತಂಡದ ವಿರುದ್ದ ಜಯ ಸಾಧಿಸಲು ನೆರವಾಗಿದ್ದರು. ಪಂದ್ಯಾವಳಿಯಲ್ಲಿ ಕನಿಷ್ಠ ಇನ್ನೆರಡು ಪಂದ್ಯಗಳನ್ನು ಆಡಲಿರುವ ಝಿಂಬಾಬ್ವೆ ತಂಡಕ್ಕೆ ಕರ್ರನ್ರನ್ನು ಸೇರಿಸಿಕೊಳ್ಳಲಾಗಿದೆ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ದಾಖಲಿಸಿರುವ ಕರ್ರನ್ ಈ ತನಕ ಟಿ-20 ಕ್ರಿಕೆಟ್ನಲ್ಲಿ ಸ್ಥಾನ ಪಡೆದಿಲ್ಲ. ಕರ್ರನ್ 40 ಟಿ-20 ಇನಿಂಗ್ಸ್ಗಳಲ್ಲಿ 126.1ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 872 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ತದಿವಾನಶೆ ಮರುಮಾನಿ ವಿಕೆಟ್ಕೀಪಿಂಗ್ ಮಾಡಿದ್ದಾರೆ. ಆಲ್ರೌಂಡರ್ ಟೋನಿ ಮುನ್ಯೊಂಗಾ ಝಿಂಬಾಬ್ವೆ ತಂಡದ ಆಡುವ 11ರ ಬಳಗಕ್ಕೆ ಟೇಲರ್ ಸ್ಥಾನದಲ್ಲಿ ಆಡಿದ್ದಾರೆ. ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಮೂರೂವರೆ ವರ್ಷ ನಿಷೇಧಕ್ಕೆ ಒಳಗಾಗಿದ್ದ ಟೇಲರ್ 2025ರ ಜುಲೈನಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗಿದ್ದರು. ಆಗಸ್ಟ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಝಿಂಬಾಬ್ವೆ ತಂಡಕ್ಕೆ ಸೇರಿದ್ದರು. ಕ್ರಿಕೆಟಿಗೆ ಮರಳಿದ ನಂತರ ಎರಡು ಏಕದಿನ ಹಾಗೂ 14 ಟಿ-20 ಪಂದ್ಯಗಳನ್ನಾಡಿದ್ದು, ಒಟ್ಟು 282 ರನ್ ಗಳಿಸಿದ್ದಾರೆ.
ಟಿ-20 ವಿಶ್ವಕಪ್| ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ
ಹೊಸದಿಲ್ಲಿ, ಫೆ.13: ಆರಂಭಿಕ ಆಟಗಾರ ಆರ್ಯಾಂಶ್ ಶರ್ಮಾ(ಔಟಾಗದೆ 74, 53 ಎಸೆತ, 6 ಬೌಂಡರಿ, 3 ಸಿಕ್ಸರ್)ಹಾಗೂ ಶುಐಬ್ ಖಾನ್(ಔಟಾಗದೆ 51, 29 ಎಸೆತ, 4 ಬೌಂಡರಿ,4 ಸಿಕ್ಸರ್)ಅರ್ಧಶತಕದ ಕೊಡುಗೆ, ಜುನೈದ್ ಸಿದ್ದೀಕ್ ಅಮೋಘ ಬೌಲಿಂಗ್ ನೆರವಿನಿಂದ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು ವಿಕೆಟ್ಗಳ ಅಂತರದಿಂದ ರೋಚಕವಾಗಿ ಮಣಿಸಿತು. ಯುಎಇ ತಂಡ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳ ಪೈಕಿ ಎರಡನೇ ಗೆಲುವು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಶುಕ್ರವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಗೆಲ್ಲಲು 151 ರನ್ ಗುರಿ ಬೆನ್ನಟ್ಟಿದ ಯುಎಇ ತಂಡವು 19.4 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 151 ರನ್ ಗಳಿಸಿತು. ಯುಎಇ ತಂಡವು 12.3 ಓವರ್ಗಳಲ್ಲಿ 66 ರನ್ ಸೇರಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ಆರ್ಯಾಂಶ್ ಹಾಗೂ ಶುಐಬ್ ಖಾನ್ ಐದನೇ ವಿಕೆಟ್ಗೆ ಕೇವಲ 43 ಎಸೆತಗಳಲ್ಲಿ 84 ರನ್ ಜೊತೆಯಾಟದಲ್ಲಿ ಭಾಗಿಯಾಗಿ ಯುಎಇ ತಂಡಕ್ಕೆ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ರೋಚಕ ಜಯ ತಂದುಕೊಟ್ಟರು. 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಐಬ್ ಖಾನ್ ಪಂದ್ಯದ ಚಿತ್ರಣ ಬದಲಿಸಿದರು. ನಾಯಕ ಮುಹಮ್ಮದ್ ವಸೀಂ(4 ರನ್), ಅಲಿಶನ್ ಶರಾಫು(5 ರನ್), ಮಯಾಂಕ್ ಕುಮಾರ್(4 ರನ್)ಹಾಗೂ ಹರ್ಷಿತ್ ಕೌಶಿಕ್(5 ರನ್)ಅಲ್ಪ ಮೊತ್ತಕ್ಕೆ ಔಟಾದರು. ಕೆನಡಾದ ಪರವಾಗಿ ಸಾದ್ ಬಿನ್ ಝಾಫರ್(3-14)ಯಶಸ್ವಿ ಪ್ರದರ್ಶನ ನೀಡಿದರು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆನಡಾ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 150 ರನ್ ಗಳಿಸಿತು. 5.1 ಓವರ್ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡ ಕೆನಡಾ ತಂಡ ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಹರ್ಷ ಥಾಕರ್(50 ರನ್, 41 ಎಸೆತ, 2 ಬೌಂಡರಿ, 3 ಸಿಕ್ಸರ್)ಹಾಗೂ ನವನೀತ್ ಧಲಿವಾಲ್(34 ರನ್, 28 ಎಸೆತ, 4 ಬೌಂಡರಿ)ನಾಲ್ಕನೇ ವಿಕೆಟ್ಗೆ 58ರನ್ ಸೇರಿಸಿ ತಂಡವನ್ನು ಆಧರಿಸಿದರು. ವಿಕೆಟ್ಕೀಪರ್ ಶ್ರೇಯಸ್ ಮೊವಾ(21 ರನ್, 21 ಎಸೆತ)ತಂಡದ ಮೊತ್ತ 150ಕ್ಕೆ ತಲುಪುವಲ್ಲಿ ನೆರವಾದರು. ಯುಎಇ ತಂಡದ ಪರವಾಗಿ ಜುನೈದ್ ಸಿದ್ದೀಕಿ(5-35)ಐದು ವಿಕೆಟ್ ಗೊಂಚಲು ಕಬಳಿಸಿದರು. ಟಿ-20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಯುಎಇ ತಂಡದ ಮೂರನೇ ಬೌಲರ್ ಎನಿಸಿಕೊಂಡರು. ಅಹ್ಮದ್ ರಝಾ(5-19)ಹಾಗೂ ಝುಬೈರ್ (5-21)ಈ ಸಾಧನೆೆ ಮಾಡಿದ್ದ ಇನ್ನಿಬ್ಬರು ಬೌಲರ್ಗಳಾಗಿದ್ದಾರೆ.
ಐಪಿಎಲ್ ಆಯೋಜನೆಗೆ ಸಮಿತಿ ಕ್ರಮ ಕೈಗೊಳ್ಳಲಿದೆ: ಡಾ.ಜಿ. ಪರಮೇಶ್ವರ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಈಗಾಗಲೇ ಸಮಿತಿ ರಚನೆ ಮಾಡಲಾಗಿದ್ದು, ಎಲ್ಲವನ್ನು ಸಮಿತಿಯೇ ನಿರ್ವಹಣೆ ಮಾಡಿ, ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನ ನಡೆಸಲು ಸಮಿತಿ ರಚನೆ ಮಾಡಿದ್ದೇವೆ. ಐಪಿಎಲ್ ಚೆನ್ನಾಗಿ ನಡೆಸಲು ಸಮಿತಿ ಕ್ರಮ ಕೈಗೊಳ್ಳಲಿದೆ. ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸುವಂತೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಉಲ್ಲೇಖಿಸಿದರು. ಬಿಜೆಪಿ ಶಾಸಕ ಭೈರತಿ ಬಸವರಾಜ್ ಬಂಧನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿತ್ತು. ಹೀಗಾಗಿ ಭೈರತಿ ಬಸವರಾಜ್ ನಿನ್ನೆ ಶರಣಾಗಿದ್ದಾರೆ. ಈ ಸಂಬಂಧ ಸಿಐಡಿ ಅಧಿಕಾರಿಗಳು ಮುಂದೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಯಾದಗಿರಿ | ಚಾಮನಳ್ಳಿ ಚೆಕ್ ಡ್ಯಾಂ ಗೇಟ್ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಉಮೇಶ್ ಮುದ್ನಾಳ್ ಆಕ್ರೋಶ
ಯಾದಗಿರಿ: ತಾಲೂಕಿನ ಹತ್ತಿಕುಣಿ ಜಲಾಶಯದ ಉಪಹಳ್ಳವಾದ ಚಾಮನಳ್ಳಿ ಹಳ್ಳದಲ್ಲಿರುವ ಚೆಕ್ ಡ್ಯಾಂ ಗೇಟ್ಗಳು ಹಾಳಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳದಿರುವುದನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚೆಕ್ ಡ್ಯಾಂ ಗೇಟ್ಗಳು ಜಾಮ್ ಆಗಿರುವುದರಿಂದ ಅವುಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಪ್ರತಿ ಮಳೆಗಾಲದಲ್ಲಿ ಗೇಟ್ಗಳ ಮೇಲಿಂದ ನೀರು ಹರಿದು ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿರುವುದು ಅಕ್ಷಮ್ಯವೆಂದು ಅವರು ಆರೋಪಿಸಿದರು. ಚಾಮನಳ್ಳಿ ಹಳ್ಳದಲ್ಲಿನ ಚೆಕ್ ಡ್ಯಾಂನಿಂದ ಹತ್ತಾರು ಗ್ರಾಮಗಳ ರೈತರಿಗೆ ಅನುಕೂಲವಾಗಬೇಕಿತ್ತು. ಆದರೆ ನಿರ್ಲಕ್ಷ್ಯದ ಕಾರಣದಿಂದ ಡ್ಯಾಂ ತನ್ನ ಉದ್ದೇಶವನ್ನು ಸಾಧಿಸಲು ವಿಫಲವಾಗುತ್ತಿದೆ. ಜೊತೆಗೆ ಹಳ್ಳದಲ್ಲಿ ನೀರು ಪಾಚಿಗಟ್ಟಿ, ಅಪಾರ ಪ್ರಮಾಣದಲ್ಲಿ ಹಾಪ್ ಬೆಳೆದು ನಿಂತಿರುವುದರಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪ್ರತಿ ವರ್ಷ ಎರಡು–ಮೂರು ಸಾವುಗಳು ಸಂಭವಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದರು. ಆದ್ದರಿಂದ ಕೂಡಲೇ ಹಳ್ಳದ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. ಹಳೆಯ ಗೇಟ್ಗಳನ್ನು ತೆರವುಗೊಳಿಸಿ ಹೊಸ ಹೈಡ್ರಾಲಿಕ್ ಗೇಟ್ಗಳನ್ನು ಅಳವಡಿಸಬೇಕು ಎಂದು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರಡ್ಡಿ ಪೂಜಾರಿ ಠಾಣಾಗುಂದಿ, ರಾಜು ಜಾಧವ್ (ಉಮ್ಲಾನಾಯಕ ತಾಂಡಾ), ರಡ್ಡೆಪ್ಪ ಗಂಗಾನಗರ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.
ಬೆಳ್ತಂಗಡಿ| ನ್ಯಾಯಾಲಯಕ್ಕೆ ಹಾಜರಾಗದೆ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಬೆಳ್ತಂಗಡಿ; ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಆಲ್ವಿನ್ ರಾಡ್ರಿಗಸ್(53) ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ 2013ರಲ್ಲಿ ಮಡಂತ್ಯಾರು ನಿವಾಸಿ ಚಿತ್ರಶೇಖರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 13ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ಪೊಲೀಸರು ಬೆಂಗಳೂರಿನ ಸಂಪಿಗೆ ರಾಮನಗರದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಯಾದಗಿರಿ | ಅಂಬಿಗರ ಚೌಡಯ್ಯ ನಿಗಮಕ್ಕೆ 500 ಕೋಟಿ ರೂ. ಅನುದಾನಕ್ಕೆ ಮನವಿ
ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 2026–27ನೇ ಸಾಲಿನಲ್ಲಿ 500 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಮೊಗವೀರ, ಕಬ್ಬೇರ, ಗಂಗಾಮಾತಸ್ತ ಸೇರಿದಂತೆ 37 ಪರ್ಯಾಯ ಪದಗಳನ್ನು ಒಳಗೊಂಡ ಸಮುದಾಯಗಳ ಆರ್ಥಿಕ ಹಾಗೂ ಶೈಕ್ಷಣಿಕ ಉತ್ತೇಜನಕ್ಕಾಗಿ ನಿಗಮ ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಸಮುದಾಯದ ಜನಸಂಖ್ಯೆ ಹೆಚ್ಚು ಇದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ, ಸ್ವಯಂ ಉದ್ಯೋಗ ಯೋಜನೆಗಳು ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ. 2025–26ರವರೆಗೆ ವಿವಿಧ ಯೋಜನೆಗಳಡಿ 35,248 ಅರ್ಜಿಗಳು ಸ್ವೀಕರಿಸಲಾಗಿದ್ದು, ಎಲ್ಲ ಅರ್ಹರಿಗೆ ಸಾಲ ಮತ್ತು ಸೌಲಭ್ಯ ಒದಗಿಸಲು ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ 2026–27ನೇ ಸಾಲಿಗೆ 500 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸರ್ಕಾರವನ್ನು ಕೋರಲಾಗಿದೆ. ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಫೆ.15ರಂದು ಮಹಾಶಿವರಾತ್ರಿ ಅಂಗವಾಗಿ ಮುರ್ಡೇಶ್ವರಕ್ಕೆ 16ನೇ ಪಾದಯಾತ್ರೆ
ಭಟ್ಕಳ: ಮಹಾಶಿವರಾತ್ರಿ ಅಂಗವಾಗಿ ಪ್ರಸಿದ್ಧ ಮುರ್ಡೇಶ್ವರ ಶಿವ ದೇವಸ್ಥಾನಕ್ಕೆ 16ನೇ ವಾರ್ಷಿಕ ಪಾದಯಾತ್ರೆ ಫೆ.15ರಂದು ನಡೆಯಲಿದೆ. ಈ ಬಾರಿ 10 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಭಟ್ಕಳದ ರಂಜನ್ ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಏಜೆನ್ಸಿ ಮಾಲಕಿ ಶಿವಾನಿ ಶಾಂತರಾಮ್ ಈ ಮಾಹಿತಿ ನೀಡಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. 15 ವರ್ಷಗಳ ಹಿಂದೆ ಕೆಲವೇ ಭಕ್ತರೊಂದಿಗೆ ಆರಂಭವಾದ ಈ ಪಾದಯಾತ್ರೆ ವರ್ಷದಿಂದ ವರ್ಷಕ್ಕೆ ಭವ್ಯವಾಗಿ ರೂಪುಗೊಂಡಿದೆ ಎಂದು ಅವರು ತಿಳಿಸಿದರು. ಪ್ರತಿವರ್ಷ ಮಹಾಶಿವರಾತ್ರಿ ದಿನದಂದು ನಡೆಯುವ ಈ ಪಾದ ಯಾತ್ರೆ ಭಟ್ಕಳದ ಚೋಳೇಶ್ವರ ದೇವಸ್ಥಾನದಿಂದ ಆರಂಭವಾಗಿ ಮುರ್ಡೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವ ಮೂಲಕ ಪೂರ್ಣಗೊಳ್ಳುತ್ತದೆ. ಫೆ. 15ರಂದು ಬೆಳಿಗ್ಗೆ 4 ಗಂಟೆಗೆ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಹಿಂದಿನ ವರ್ಷಗಳಂತೆ ಮಹಿಳೆಯರು ಹಾಗೂ ಮಕ್ಕಳನ್ನೂ ಒಳಗೊಂಡು ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಬೈಂದೂರು, ಶಿರೂರು ಮತ್ತು ಹೊನ್ನಾವರ ಭಾಗಗಳಿಂದಲೂ ಭಕ್ತರು ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮ ಸುಗಮವಾಗಿ ನಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳು ಸಹಕಾರ ನೀಡಲಿವೆ. ಪಾದಯಾತ್ರಿಕರಿಗೆ ‘ಕ್ರೀಯಾಶೀಲ ಗೆಳೆಯರ ಬಳಗ’ ವತಿಯಿಂದ ನಿಂಬೆಹಣ್ಣು ಪಾನೀಯ ವ್ಯವಸ್ಥೆ ಮಾಡಲಾಗಿದೆ. ಮಾರ್ಗ ಮಧ್ಯೆ ಆಹಾರ ಪ್ಯಾಕೆಟ್, ಹಣ್ಣು ಹಾಗೂ ಕುಡಿಯುವ ನೀರು ವಿತರಿಸಲಾಗುತ್ತದೆ. ಮುರ್ಡೇಶ್ವರ ತಲುಪಿದ ಬಳಿಕ ದೇವಾಲಯದ ವತಿಯಿಂದ ಶೀಘ್ರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಹಾಗೂ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಯಾದಗಿರಿ | ಕೇಂದ್ರ ಸರಕಾರದಿಂದ ಜನವಿರೋಧಿ ಆಡಳಿತ : ಡಾ.ಭೀಮಣ್ಣ ಮೇಟಿ ಆರೋಪ
ಯಾದಗಿರಿ: ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದಿಂದ ದೇಶದ ಜನತೆ ಸಂಪೂರ್ಣವಾಗಿ ಬೇಸತ್ತು ಹೋಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಯಮಿಗಳ ಪರ ಆಡಳಿತ ನಡೆಸಿರುವುದೇ ಅವರ ದೊಡ್ಡ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ವಿಚಾರ ಅವರಿಗೆ ಹಿನ್ನಡೆಯಾಗಿ ಪರಿಣಮಿಸಲಿದೆ ಎಂದು ಅಭಿಪ್ರಾಯಪಟ್ಟರು. ಯುವಕರು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಕಾರ್ಮಿಕರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕೈಗಾರಿಕಾ ವಲಯ ಸಂಪೂರ್ಣವಾಗಿ ಶ್ರೀಮಂತರ ಪಾಲಾಗಿದ್ದು, ಕೇಂದ್ರದ ಬಿಜೆಪಿ ಆಡಳಿತ ದಿಕ್ಕುತೋಚದ ಸ್ಥಿತಿಗೆ ತಲುಪಿದೆ. ದೇಶದ ಜನರು ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ ಎಂದರು. ಕೃಷಿ ಕ್ಷೇತ್ರವನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ರೂಪಿಸುತ್ತಿಲ್ಲ. ಅನ್ನದಾತರ ಸ್ಥಿತಿ ಗಂಭೀರವಾಗಿದೆ. ಕೈಗಾರಿಕೆಗಳ ಹೆಸರಿನಲ್ಲಿ ಅನಿಯಂತ್ರಿತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕ್ರಮ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದೆ. ವರ್ಷಕ್ಕೆ ಕೋಟ್ಯಂತರ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಯುವಕರನ್ನು ಇದೀಗ ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಟೀಕಿಸಿದರು. ಜನರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ಉಂಟಾಗುವ ಮುನ್ನವೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದು ಅವರು ಎಚ್ಚರಿಕೆ ನೀಡಿದರು.
ಶಿವಮೊಗ್ಗ - ಹುಬ್ಬಳ್ಳಿಯ ಪ್ರಮುಖ ರೈಲುಗಳು ರದ್ದು, ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ
ಶಿವಮೊಗ್ಗ ಹಾಗೂ ಹುಬ್ಬಳ್ಳಿಗೆ ತೆರಳುವ ಹಲವು ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆಯು ರದ್ದುಪಡಿಸಿದೆ. ನಾಲ್ಕು ಪ್ರಮುಖ ರೈಲುಗಳ ಸಂಚಾರವನ್ನು ಬದಲಾಯಿಸಲಾಗಿದ್ದರೆ, ಎರಡು ಪ್ರಮುಖ ರೈಲುಗಳ ಸಂಚಾರವು ವಿಳಂಬವಾಗಲಿದೆ. ಒಟ್ಟಾರೆ ಯಾವ ಮಾರ್ಗದ ಹಾಗೂ ಯಾವ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ರಾಷ್ಟ್ರೀಯ ಹೆದ್ದಾರಿ- 206ರಲ್ಲಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 128
ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಶೇ.31ರಷ್ಟು ಪೂರ್ಣ : ನಂಜಯ್ಯನಮಠ
ರಾಯಚೂರು: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಫೆ.13ರಂದು ರಾಯಚೂರು ಜಿಲ್ಲೆಗೆ ಭೇಟಿ ನೀಡಿ, ಯರಮರಸ್ ಸಮೀಪದ ವಿಮಾನ ನಿಲ್ದಾಣ ಕಾಮಗಾರಿ ಸ್ಥಳವನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ 322 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇ.31ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಎರಡೂವರೆ ತಿಂಗಳಲ್ಲಿ ರನ್ವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಈ ವರ್ಷ ಮಳೆ ನಿರಂತರವಾಗಿ ಸುರಿದ ಪರಿಣಾಮ ರನ್ವೇ ಕಾಮಗಾರಿ ಸ್ವಲ್ಪ ಮಂದಗತಿಯಲ್ಲಿ ಸಾಗಿತ್ತು. ಆದರೂ ಒಟ್ಟಾರೆ ಮುಂದಿನ ಒಂದೂವರೆ ವರ್ಷದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದರು. ಇನ್ನೂ ಮೂರು ತಿಂಗಳ ಬಳಿಕ ಮತ್ತೆ ರಾಯಚೂರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸುವುದಾಗಿ ಹೇಳಿದರು. ಏಗನೂರು ಗ್ರಾಮದಲ್ಲಿ 30 ಮನೆಗಳನ್ನು ಸ್ಥಳಾಂತರಿಸಲು ಮೂರು ಎಕರೆ ಜಮೀನು ಮೀಸಲಿಡಲಾಗಿದ್ದು, ದಂಡ ಗ್ರಾಮದಲ್ಲಿನ 108 ಮನೆಗಳನ್ನು ಸ್ಥಳಾಂತರಿಸಲು ಆರು ಎಕರೆ ಜಮೀನಿನಲ್ಲಿ ಲೇಔಟ್ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳಾಂತರವಾಗುವ ಎರಡು ಗ್ರಾಮಗಳ ನಿವಾಸಿಗಳಿಗೆ ಅವರ ಮನೆಗಳ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರಧನ ನೀಡಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಜು ಬಂಡಿಕೇರಿ, ರಾಜು ಹರಿಳಯ್ಯಮಠ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬರವಣಿಗೆಯಿಂದ ನನಗೆ ಬಿಡುಗಡೆಯ ಭಾವ: ಸುಬ್ರಾಯ ಚೊಕ್ಕಾಡಿ
‘ಮುನಿಸು ತರವೇ’ ಕವಿಗೆ ಪ್ರೊ.ಎಸ್ವಿಪಿ ಪ್ರಶಸ್ತಿ ಪ್ರದಾನ
Maski | ಪರೀಕ್ಷೆಯನ್ನು ಭಯಪಡದೇ ಧೈರ್ಯವಾಗಿ ಎದುರಿಸಿ : ಅಮರೇಶ ಯಾದವ್ ಸಲಹೆ
ಮಸ್ಕಿ: ಪರೀಕ್ಷೆಯನ್ನು ಹುಲಿಯಾಗಿ ಕಂಡು ಭಯಪಡುವುದಕ್ಕಿಂತ, ಜಿಂಕೆಯಂತೆ ಧೈರ್ಯದಿಂದ ವೇಗವಾಗಿ ಮುಂದೆ ಸಾಗುವ ಮೂಲಕ ಜೀವನದಲ್ಲಿ ಗೆಲುವು ಸಾಧಿಸಬೇಕು ಎಂದು ಮಸ್ಕಿ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶುಕ್ರವಾರ ಬೆಳಿಗ್ಗೆ ಮಸ್ಕಿಯ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಭಾಭವನದಲ್ಲಿ ನಡೆದ 2025–26ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಂಟೆಗೆ 90 ಕಿಲೋಮೀಟರ್ ವೇಗದಲ್ಲಿ ಓಡುವ ಜಿಂಕೆ, ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಓಡುವ ಹುಲಿ ಬೆನ್ನಟ್ಟಿದಾಗ ಹೆದರಿದರೆ ಅದು ಹುಲಿಗೆ ಆಹಾರವಾಗುತ್ತದೆ. ಅದೇ ರೀತಿ ಪರೀಕ್ಷೆ ಎಂಬ ಹುಲಿಗೆ ನೀವು ಹೆದರಿದರೆ ಅನುತ್ತೀರ್ಣರಾಗುವ ಸಾಧ್ಯತೆ ಇದೆ. ಆದರೆ ಧೈರ್ಯದಿಂದ, ಓದಿದ್ದನ್ನು ನೆನಪಿಟ್ಟುಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದರೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಬಹುದು ಎಂದು ಹೇಳಿದರು. ವಿದ್ಯಾರ್ಥಿಗಳು ಪಾಲಕರು, ಶಿಕ್ಷಕರು ಮತ್ತು ಆತ್ಮಸಾಕ್ಷಿ ಹೇಳಿದ ಮಾತುಗಳನ್ನು ಪಾಲಿಸಿದರೆ ಆದರ್ಶ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಮಾದರಿಯಾಗಬಹುದು ಎಂದು ಅವರು ತಿಳಿಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ಸಮನ್ವಯಾಧಿಕಾರಿ ಅಮೀನ್ ಸಾಬ್, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರಾದ ಅಮರೇಶಗೌಡ ಪಾಟೀಲ್, ಹೇಮಣ್ಣ ಹಾದಿಮನಿ, ಮಹಾಂತೇಶ ತಾರಿವಾಳ, ಯಂಕೋಬ ದೇವಾಪುರ, ನಾಗಭೂಷಣ, ಪ್ರಕಾಶ ಹಾಗೂ ಪ್ರಭಾರಿ ಪ್ರಾಂಶುಪಾಲ ನಾಗೇಶ ಸಿ.ಟಿ. ಉಪಸ್ಥಿತರಿದ್ದರು.
Raichur | ಕ್ಯಾನ್ಸರ್ ಚಿಕಿತ್ಸೆಗೆ ನೂತನ ತಂತ್ರಜ್ಞಾನ: ಮಣಿಪಾಲ್ ಆಸ್ಪತ್ರೆಯಲ್ಲಿ ‘ಎಲೆಕ್ಟಾ ಇವೊ’ ಪರಿಚಯ
ರಾಯಚೂರು: ಕ್ಯಾನ್ಸರ್ ರೋಗಿಗಳಿಗೆ ಹೆಚ್ಚು ನಿಖರ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಬೆಂಗಳೂರಿನ ಯಲಹಂಕದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ‘ಎಲೆಕ್ಟಾ ಇವೊ’ ಡಿಜಿಟಲ್ ಲೀನಿಯರ್ ಆಕ್ಸಿಲರೇಟರ್ ಪರಿಚಯಿಸಲಾಗಿದೆ ಎಂದು ರೆಡಿಯೇಷನ್ ಆಂಕಾಲಜಿ ವಿಭಾಗದ ಪ್ರಮುಖ ಸಲಹೆಗಾರ ಡಾ. ವಿಕ್ರಮ ಮಯ್ಯ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಎದುರಿಸುತ್ತಿರುವ ರೋಗಿಗಳಿಗೆ ಯಲಹಂಕದ ಮಣಿಪಾಲ್ ಆಸ್ಪತ್ರೆಯಲ್ಲಿ ನೂತನ ತಂತ್ರಜ್ಞಾನ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ‘ಎಲೆಕ್ಟಾ ಇವೊ’ ಮುಂದಿನ ಪೀಳಿಗೆಯ ತಂತ್ರಜ್ಞಾನವಾಗಿದ್ದು, ಕೃತಕ ಬುದ್ಧಿಮತ್ತೆ (AI), ಆನ್ಲೈನ್ ಅಡಾಪ್ಟಿವ್ ರೇಡಿಯೇಶನ್ ಥೆರಪಿ, ನಾನ್-ಕೋಪ್ಲಾನರ್ VMAT ಥೆರಪಿ ಹಾಗೂ 5-ರಿಂಗ್ ಡಿಸ್ಕವರಿ IQ ಪೆಟ್-ಸಿಟಿ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ವಿವರಿಸಿದರು. ಈ ತಂತ್ರಜ್ಞಾನವು ಪ್ರತಿದಿನವೂ ಚಿಕಿತ್ಸೆಯನ್ನು ವೈಯಕ್ತೀಕರಿಸಲು, ಟ್ಯೂಮರ್ಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ಆರೋಗ್ಯಕರ ಅಂಗಾಂಗಗಳಿಗೆ ಹಾನಿಯಾಗದಂತೆ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಡಿಸ್ಕವರಿ IQ ಮಾದರಿಯ ಉನ್ನತ ರೆಸಲ್ಯೂಶನ್ ಪಿಇಟಿ-ಸಿಟಿ ವ್ಯವಸ್ಥೆಗಳು ಹಾಗೂ ‘ಮಾಲಿಕ್ಯುಲರ್ ಮತ್ತು ಫಂಕ್ಷನಲ್ ಇಮೇಜಿಂಗ್’ ವಿಧಾನಗಳು ಕ್ಯಾನ್ಸರ್ನ್ನು ಪ್ರಾರಂಭದಲ್ಲೇ ಪತ್ತೆಹಚ್ಚಲು, ಚಿಕಿತ್ಸೆಯ ಪ್ರತಿಕ್ರಿಯೆಯನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡಲು ಮತ್ತು ಹೆಚ್ಚು ನಿಖರವಾದ ಚಿಕಿತ್ಸಾ ಯೋಜನೆ ರೂಪಿಸಲು ನೆರವಾಗುತ್ತವೆ ಎಂದರು. ಈ ಸಂದರ್ಭದಲ್ಲಿ ಡಾ.ಆರನ್ ಫರ್ನಾಂಡಿಸ್ ಮಾತನಾಡಿ, ಸರ್ಜಿಕಲ್ ಆಂಕಾಲಜಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ರೋಬೋಟಿಕ್ ಸಹಾಯದಿಂದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಬಹುದಾಗಿದೆ. ಮಣಿಪಾಲ್ ಆಸ್ಪತ್ರೆ ಅನೇಕ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದರು.
ಸಂಗೀತ–ಡ್ರಾಮಾದಿಂದ ಜೀವನದ ಪಾಠ ಕಾಣುತ್ತಿರುವ ಹದಿಹರೆಯ; ಭಾರತದಲ್ಲಿ ಕೊರಿಯನ್ ಅಲೆ ಹರಡಲು ಕಾರಣವೇನು?
ಒಂದು ಅಧ್ಯಯನದ ಪ್ರಕಾರ, ಎಂದಿಗೂ ಭೇಟಿಯಾಗದ ತಾರೆಯರೊಂದಿಗೆ ಭಾರತೀಯ ಮಕ್ಕಳು ತೀವ್ರವಾದ ಏಕಪಕ್ಷೀಯ ಭಾವನಾತ್ಮಕ ಬಂಧಗಳನ್ನು ರೂಪಿಸಿಕೊಂಡು, ಒಂದು ರೀತಿಯ ಪ್ಯಾರಾಸೋಷಿಯಲ್ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ಕೊರಿಯನ್ ಪಾಪ್ ಹಾಡುಗಳು ಮತ್ತು ಡ್ರಾಮಾಗಳು ಸೇರಿ ಕೊರಿಯನ್ ಸಂಸ್ಕೃತಿಯನ್ನು ಜಾಗತಿಕವಾಗಿ ಲಕ್ಷಾಂತರ ಮಕ್ಕಳು ಕೇವಲ ಮನರಂಜನೆಯಾಗಿ ಮಾತ್ರವಲ್ಲದೆ ಭಾವನಾತ್ಮಕ ಪರಿಸರ ವ್ಯವಸ್ಥೆಯಾಗಿ ಸ್ವೀಕರಿಸಿದ್ದಾರೆ. ಒಂದು ಕಾಲದಲ್ಲಿ ಕೆಲವು ಅಭಿಮಾನಿ ವಲಯಕ್ಕೆ ಸೀಮಿತವಾಗಿದ್ದ ಕೊರಿಯನ್ ಡ್ರಾಮಾಗಳು ಮತ್ತು ಪಾಪ್ ಸಂಸ್ಕೃತಿ ಇದೀಗ ಜಾಗತಿಕವಾಗಿ ಸಾಂಸ್ಕೃತಿಕ ಶಕ್ತಿಯಾಗಿ ಬೆಳೆದಿದೆ. ಹೀಗಾಗಿ ಭಾರತವೂ ಇದಕ್ಕೆ ಹೊರತಲ್ಲ. ಮಾಧ್ಯಮವೊಂದರಲ್ಲಿ ಪತ್ರಕರ್ತೆಯಾಗಿರುವ 21 ವರ್ಷದ ವರ್ಷಾ ಅವರ ಪ್ರಕಾರ, “ಕೊರಿಯನ್ ತಾರೆಯರ ಸಂಗೀತ ತುಂಬಾ ಹಿತ ನೀಡುವಂತದ್ದು. ಜೊತೆಗೆ ಹಲವು ಹಾಡುಗಳನ್ನು ನಾವು ಕೇಳುವಾಗ ನಮಗೆ ಜೀವನದ ಮೌಲ್ಯಗಳನ್ನು ಹೇಳಿಕೊಡುವ ರೀತಿಯಲ್ಲಿರುತ್ತವೆ. ಅಷ್ಟೇ ಅಲ್ಲದೆ, ಭಾರತೀಯ ತಾರೆಯರು ಯಾವಾಗಲೂ ತಮ್ಮ ಅಭಿಮಾನಿಗಳೊಂದಿಗೆ ಹೆಚ್ಚು ನೇರವಾಗಿ ಸಂಪರ್ಕ ಸಾಧಿಸುವುದನ್ನು ನೋಡಲು ಸಿಗುವುದಿಲ್ಲ. ಅವರು ಪಾತ್ರಗಳ ಮೂಲಕವೇ ಹೆಚ್ಚು ಪರಿಚಿತರಾಗಿರುತ್ತಾರೆ; ವ್ಯಕ್ತಿಗಳಾಗಿ ನಮಗೆ ತುಂಬಾ ಹತ್ತಿರವಾಗಿರುವುದು ಬಹಳ ವಿರಳ. ಆದರೆ ಕೊರಿಯಾದ ಪ್ರತಿಯೊಬ್ಬ ಐಡಲ್ ಕೂಡ ತಮ್ಮ ಅಭಿಮಾನಿಗಳೊಂದಿಗೆ ನೇರ ಒನ್–ಟು–ಒನ್ ಸಂಪರ್ಕ ಸಾಧಿಸಲು ಬಯಸುತ್ತಾರೆ. ಇದು ಬಹುತೇಕವಾಗಿ ಅವರ ಲೈವ್ ಸ್ಟ್ರೀಂಗಳಲ್ಲಿ ಕಾಣುತ್ತದೆ. ಅವರು ಕೇವಲ ತಾರೆಯರಾಗಿ ಅಲ್ಲ, ವ್ಯಕ್ತಿಗಳಾಗಿ ಹೇಗಿರುತ್ತಾರೆ ಎಂಬುದನ್ನು ನಾವು ನೋಡಬಹುದು.” ಸಂಸ್ಕೃತಿಯನ್ನು ಬಿಂಬಿಸುವ ಕೊರಿಯನ್ ಅಲೆ ವರ್ಷಾ 10ನೇ ತರಗತಿಯಿಂದಲೇ ಕೊರಿಯನ್ ಸಂಗೀತ ಮತ್ತು ಡ್ರಾಮಾಗಳನ್ನು ವೀಕ್ಷಿಸುತ್ತಾ ಬಂದಿದ್ದಾರೆ. ಅವರು ಕೊರಿಯನ್ ಪಾಪ್ ತಂಡ ‘ಬಿಟಿಎಸ್’ ಅಭಿಮಾನಿ ಹಾಗೂ ಅದರ ಅಭಿಮಾನಿ ಬಳಗ ‘ಆರ್ಮಿ’ಯ ಅಧಿಕೃತ ಸದಸ್ಯೆ. ಅವರ ಪ್ರಕಾರ, “ಕೊರಿಯನ್ ತಾರೆಯರು ಬಹಳ ವಿಭಿನ್ನರು. ಕೊರಿಯನ್ ಹಾಡು ಅಥವಾ ಅಲ್ಲಿನ ಸಂಸ್ಕೃತಿಯನ್ನು ನೋಡಿದಾಗ ಅವರು ತಮ್ಮ ಮೂಲ ಸಂಸ್ಕೃತಿಯನ್ನು ಎಲ್ಲಾ ಕೆಲಸಗಳಲ್ಲಿ ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಹಾಗೆಂದರೆ ಅವರು ಪಾಶ್ಚಾತ್ಯ ಸಂಸ್ಕೃತಿಯನ್ನು ಆಚರಿಸುವುದಿಲ್ಲ ಅನ್ನುವುದಲ್ಲ; ಆದರೆ ತಮ್ಮ ಮೂಲವನ್ನು ಎಲ್ಲ ವಿಚಾರಗಳಲ್ಲೂ ಉಳಿಸಿಕೊಳ್ಳಲು ಯತ್ನಿಸುತ್ತಾರೆ.” ಹದಿಹರೆಯದ ಪ್ಯಾರಾಸೋಷಿಯಲ್ ಸಂಬಂಧ ಒಂದು ಅಧ್ಯಯನದ ಪ್ರಕಾರ, ಎಂದಿಗೂ ಭೇಟಿಯಾಗದ ತಾರೆಯರೊಂದಿಗೆ ತೀವ್ರ ಏಕಪಕ್ಷೀಯ ಭಾವನಾತ್ಮಕ ಬಂಧಗಳನ್ನು ರೂಪಿಸಿಕೊಂಡಿರುವ ಯುವ ಭಾರತೀಯರು ಪ್ಯಾರಾಸೋಷಿಯಲ್ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ಹೀಗಾಗಿ ಭಾರತೀಯ ಹೆತ್ತವರು ತಮ್ಮ ಹದಿಹರೆಯದ ಮಕ್ಕಳು ಅತಿಯಾಗಿ ಮೊಬೈಲ್ ಪರದೆ ಮುಂದೆ ಕಾಲ ಕಳೆಯುವುದು, ಭಾವನಾತ್ಮಕ ಅವಲಂಬನೆ ಹೆಚ್ಚಾಗುವುದು ಮತ್ತು ನೈಜ ಜೀವನದ ಸಂಬಂಧಗಳಿಗಿಂತ ಆನ್ಲೈನ್ ವ್ಯಕ್ತಿಗಳೊಂದಿಗೆ ಹೆಚ್ಚು ಆಪ್ತತೆ ಬೆಳೆಸಿಕೊಳ್ಳುವುದು ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. 2025ರ ಮೇ ತಿಂಗಳಲ್ಲಿ ನಡೆದ ಕ್ಲಿನಿಕಲ್ ಅಧ್ಯಯನದ ಪ್ರಕಾರ, “ಹದಿಹರೆಯದವರು ಇಂತಹ ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚು ಒಳಗಾಗುತ್ತಾರೆ. ಪ್ಯಾರಾಸೋಷಿಯಲ್ ಸಂವಹನವು ಮಾಧ್ಯಮ ಬಳಕೆಯ ಸಮಯದಲ್ಲಿ ಸಂಭವಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ಕ್ಷಣಿಕವಾಗಿರುತ್ತದೆ. ಆದರೆ ಕೆಲವೊಮ್ಮೆ ಇಂತಹ ಸಂಬಂಧಗಳು ಶಾಶ್ವತವಾಗಬಹುದು ಮತ್ತು ಕಾಲಾನಂತರದಲ್ಲಿ ಭಾವನಾತ್ಮಕ ತೊಡಗಿಸಿಕೊಳ್ಳುವಿಕೆ ಹೆಚ್ಚಾಗುತ್ತದೆ. ಮುಖ್ಯವಾಗಿ ಗಂಡುಮಕ್ಕಳಲ್ಲಿ ಇಂತಹ ಸಂಬಂಧ ಆಳವಾಗಿರುವುದಿಲ್ಲ; ಹೆಣ್ಣುಮಕ್ಕಳಲ್ಲಿ ಹೆಚ್ಚು ಆಳವಾದ ಪ್ಯಾರಾಸೋಷಿಯಲ್ ಸಂಬಂಧಗಳು ರೂಪುಗೊಳ್ಳುತ್ತವೆ” ಎಂದು ಅಧ್ಯಯನ ಹೇಳುತ್ತದೆ. ಕೊರಿಯನ್ ಅಲೆಯಿಂದ ಪಾರಾದ ಸಮಾಧಾನ 20 ವರ್ಷದ ಖುಷಿಯ ತಾಯಿ ಸಪ್ನಾ ತಮ್ಮ ಮಗಳು ಈ ಕೊರಿಯನ್ ಅಲೆಯಲ್ಲಿ ಬಿದ್ದು ಹೊರಬಂದಿದ್ದಾಳೆ ಎಂದು ಸಮಾಧಾನ ವ್ಯಕ್ತಪಡಿಸುತ್ತಾರೆ. “8ನೇ ತರಗತಿಯಿಂದಲೇ ನನ್ನ ಮಗಳು ಕೊರಿಯನ್ ಸಂಗೀತ ಮತ್ತು ಸರಣಿಗಳನ್ನು ನೋಡಲು ಆರಂಭಿಸಿದ್ದಳು. ನಂತರ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂತು. ಸದಾ ಮೊಬೈಲ್ನಲ್ಲಿ ತೊಡಗಿಸಿಕೊಂಡಿರುತ್ತಿದ್ದಳು. ಕೊರಿಯನ್ ಭಾಷೆಯನ್ನೂ ಕಲಿಯಲು ಆರಂಭಿಸಿದ್ದಳು. ಕೋವಿಡ್ ಸಮಯದಲ್ಲಿ ಈ ಪ್ರವೃತ್ತಿ ಹೆಚ್ಚಾಯಿತು. ತಾರೆಯರನ್ನೇ ಸಂಗಾತಿಯಾಗಿ ಸ್ವೀಕರಿಸುವ ಭಾವನೆಯಲ್ಲೂ ಇದ್ದಳು. ಫ್ಯಾಂಟಸಿ ಜಗತ್ತು ಅವಳನ್ನು ಆವರಿಸಿಕೊಂಡಿತ್ತು. ಆದರೆ ಒಮ್ಮೆ ಕೊರಿಯನ್ ಜನರು ಭಾರತೀಯರ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿದ್ದಾರೆ ಎಂಬುದು ತಿಳಿದ ಬಳಿಕ ಅವಳ ಆಸಕ್ತಿ ಕಡಿಮೆಯಾಯಿತು. ಈಗ ಅದರ ಹಿಂದೆ ಹೆಚ್ಚು ಬೀಳುವುದಿಲ್ಲ” ಎನ್ನುತ್ತಾರೆ ಸಪ್ನಾ. ಡಿಜಿಟಲ್ ವಾಹಿನಿಗಳಿಂದ ಹರಿದ ಕೊರಿಯನ್ ಅಲೆ 1990ರ ದಶಕದಿಂದ ಕೊರಿಯನ್ ಸಿನಿಮಾಗಳು, ಟಿವಿ ಡ್ರಾಮಾಗಳು, ಸಂಗೀತ ಮತ್ತು ಡಿಜಿಟಲ್ ವಿಷಯಗಳು ‘ಕೊರಿಯನ್ ಅಲೆ’ ಅಥವಾ ‘ಹಲ್ಯು’ ಎಂಬ ಹೆಸರಿನಲ್ಲಿ ಜಾಗತಿಕವಾಗಿ ಹರಡುತ್ತಿವೆ. ಭಾರತದಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಸೇವೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಅಲೆ ವ್ಯಾಪಿಸಿದೆ. ಕೆ–ಕಲ್ಚರ್ ಅಭಿಮಾನಿಗಳು ಇದನ್ನು ಸಾಮಾನ್ಯವಾಗಿ ‘ಹಲ್ಯು’ ಎಂದು ಕರೆಯುತ್ತಾರೆ. 2024ರಲ್ಲಿ ನಡೆದ ಅಧ್ಯಯನವೊಂದು ಈ ಅಲೆ ಭಾರತವನ್ನೂ ಪ್ರವೇಶಿಸಿರುವುದನ್ನು ತಿಳಿಸಿದೆ. ಕೊರಿಯನ್ ಅಲೆ ಭಾರತಕ್ಕೆ ಬಂದ ನಂತರ ದಕ್ಷಿಣ ಕೊರಿಯಾಗೆ ಭೇಟಿ ನೀಡುವ ಭಾರತೀಯರ ಆಸಕ್ತಿ ಹೆಚ್ಚಾಗಿದೆ ಎಂದು ಅಧ್ಯಯನ ಹೇಳಿದೆ. ಇಂದು ಭಾರತದಲ್ಲಿ BTS, Blackpink, Girls’ Generation, EXO, TWICE ಮತ್ತು SHINee ಮುಂತಾದ ಸಂಗೀತ ತಂಡಗಳಿಗೆ ದೊಡ್ಡ ಅಭಿಮಾನಿ ಬಳಗಗಳಿವೆ. ಸಂಶೋಧಕರ ಪ್ರಕಾರ, ಕೊರಿಯನ್ ಅಲೆ ಕೇವಲ ಪಾಪ್ ವೀಡಿಯೋಗಳು ಮತ್ತು ಡ್ರಾಮಾಗಳಿಗೆ ಸೀಮಿತವಲ್ಲ; ಕೊರಿಯನ್ ಸೌಂದರ್ಯ ಬ್ರ್ಯಾಂಡ್ಗಳು, ಫ್ಯಾಷನ್, ಆಹಾರ, ಆಟಗಳು ಮತ್ತು ಅನಿಮೇಶನ್ಗಳಿಗೂ ಯುವಜನರಲ್ಲಿ ಆಕರ್ಷಣೆ ಹೆಚ್ಚಾಗಿದೆ. ಆರು ವಿಚಾರಗಳಲ್ಲಿ ಹರಡಿರುವ ಕೊರಿಯನ್ ಸಂಸ್ಕೃತಿ ಅಧ್ಯಯನದಲ್ಲಿ ಭಾಗವಹಿಸಿದ 153 ಯುವಕರನ್ನು ಕೊರಿಯನ್ ಡ್ರಾಮಾ, ಸಂಗೀತ, ಸಿನಿಮಾಗಳು, ಫ್ಯಾಷನ್ ಉತ್ಪನ್ನಗಳು ಮತ್ತು ಕಾಸ್ಮೆಟಿಕ್ಸ್, ಆಹಾರ ಹಾಗೂ ಆಟಗಳು ಎಂಬ ಆರು ವಿಚಾರಗಳಲ್ಲಿ ಪರಿಶೀಲಿಸಲಾಯಿತು. ದತ್ತಾಂಶದ ಪ್ರಕಾರ, ಕೊರಿಯನ್ ಸಂಗೀತ ಆಲ್ಬಂಗಳಿಗೆ ಅತಿ ಹೆಚ್ಚಿನ ಆಕರ್ಷಣೆ ವ್ಯಕ್ತವಾಗಿದ್ದು, ನಂತರ ಕೊರಿಯನ್ ಡ್ರಾಮಾಗಳಿಗೆ ಸ್ಥಾನ ದೊರೆತಿದೆ. “ಕೊರಿಯನ್ ಅಲೆಯ ಪರಿಣಾಮವಾಗಿ ಭಾರತೀಯ ಯುವಕರಲ್ಲಿ ಕೊರಿಯನ್ ಸಂಸ್ಕೃತಿ ಬಗ್ಗೆ ಆಸಕ್ತಿ ಹೆಚ್ಚಿದ್ದು, ಕೊರಿಯಾಗೆ ಪ್ರವಾಸ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ” ಎಂದು ಹೊಸದಿಲ್ಲಿಯ ಕೊರಿಯಾ ಪ್ರವಾಸೋದ್ಯಮ ಸಂಸ್ಥೆಯ ಮಿಯಾಂಗ್ ಕಿಲ್ ಯುನ್ ತಿಳಿಸಿದ್ದಾರೆ. ಬಾಲಿವುಡ್ ಸಿನಿಮಾಗಳ ಆಕರ್ಷಣೆ ಏಕಮುಖಿಯಾಗಿತ್ತು. ಜನರು ಸಿನಿಮಾ ನೋಡಿ ದೂರದಿಂದ ತಾರೆಯರನ್ನು ಮೆಚ್ಚಿಕೊಳ್ಳುತ್ತಿದ್ದರು. ಆದರೆ ಕೊರಿಯನ್ ಪಾಪ್ ಈ ಪರಿಕಲ್ಪನೆಯನ್ನು ಬದಲಿಸಿದೆ. ತಾರೆಯರು ನಿಯಮಿತವಾಗಿ ಲೈವ್ ಸ್ಟ್ರೀಮ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುವುದರಿಂದ ಆಪ್ತತೆ ಹೆಚ್ಚುತ್ತಿದೆ. ಇದು ಮಕ್ಕಳು ಮತ್ತು ತಾರೆಯರ ನಡುವೆ ಪ್ಯಾರಾಸೋಷಿಯಲ್ ಸಂಬಂಧಗಳಿಗೆ ಕಾರಣವಾಗುತ್ತಿದೆ. ಹದಿಹರೆಯದವರಲ್ಲೇ ತಾರೆಯರ ಕುರಿತ ಕಾಳಜಿ ಹೆಚ್ಚು ಪ್ಯಾರಾಸೋಷಿಯಲ್ ಸಂಬಂಧಗಳ ಕುರಿತ ಸಂಶೋಧನೆ ಪ್ರಕಾರ, ಹದಿಹರೆಯದವರು ಇತರ ವಯೋಮಾನದವರಿಗಿಂತ ತಾರೆಯರ ಬಗ್ಗೆ ಹೆಚ್ಚು ಕಾಳಜಿ ವ್ಯಕ್ತಪಡಿಸುತ್ತಾರೆ. Frontiers in Psychology ಜರ್ನಲ್ನಲ್ಲಿ ಪ್ರಕಟವಾದ 2017ರ ಅಧ್ಯಯನದ ಪ್ರಕಾರ, ಕಡಿಮೆ ವಯಸ್ಸಿನ ಹದಿಹರೆಯದವರಲ್ಲಿ ಶೇ.61.1 ಮಂದಿ ತಮ್ಮ ನೆಚ್ಚಿನ ತಾರೆಯರನ್ನು ಸಂಗಾತಿಯಂತೆ ಭಾವಿಸುತ್ತಾರೆ. ಈ ಬಗ್ಗೆ ವರ್ಷಾ ಹೇಳುವಂತೆ, “ಇದು ಕೆಲವು ಮಟ್ಟಿಗೆ ನಿಜ. ಆದರೆ ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಬಹುತೇಕ ಕೆ–ಪಾಪ್ ಐಡಲ್ಗಳು ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಸ್ಪರ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಾರೆ. ಅವರ ಹಾಡುಗಳು ಮತ್ತು ಲೈವ್ ಮಾತುಕತೆಗಳು ಅನೇಕ ಜನರಿಗೆ ಬದುಕಿನ ಮೌಲ್ಯಗಳನ್ನು ತಿಳಿಸಿವೆ. ಕೆಲವರಿಗೆ ಸ್ಪೂರ್ತಿಯೂ ಆಗಿವೆ. ಆದ್ದರಿಂದ ಇದು ಬಹುಪಾಲು ಸಂದರ್ಭಗಳಲ್ಲಿ ಟು–ವೇ ರಿಲೇಶನ್ಶಿಪ್ ಎಂದೇ ಹೇಳಬಹುದು.”
ಫೆ.21 ಕ್ಕೆ ಅಸ್ಸಾಂಗೆ ಅಮಿತಾ ಶಾ; ಭಾರತ-ಬಾಂಗ್ಲಾ ಅಂತಾರಾಷ್ಟ್ರೀಯ ಗಡಿಗೆ ಭೇಟಿ
ಫೆ.21 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂನ ಕರ್ಚಾ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಗೆ ಭೇಟಿ ನೀಡಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಅದಕ್ಕೂ ಮುಂಚಿತವಾಗಿ ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಜೆಪಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈ ಭೇಟಿ ಮಹತ್ವದ್ದಾಗಿದೆ.
Kalaburagi | ಆಶ್ರಯ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹ
ಕಲಬುರಗಿ: ಇಲ್ಲಿನ ಕೆಸರಟಗಿ ಗ್ರಾಮದ ಹತ್ತಿರವಿರುವ ಆಶ್ರಯ ಕಾಲೋನಿಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಿಟಿಜನ್ ಫೋರಂ ಫಾರ್ ಪೀಸ್ ಆ್ಯಂಡ್ ಜಸ್ಟೀಸ್ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕಿನ ಕೆಸರಟಗಿ ಗ್ರಾಮದ ಸಮೀಪದ ಆಶ್ರಯ ಕಾಲೋನಿಯ ಸುಮಾರು 102 ಮನೆಗಳಲ್ಲಿ ವಾಸಿಸುವ 492 ಮಂದಿ ಕಳೆದ ಹತ್ತು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಹಾಳಾಗಿದ್ದ ಮನೆಗಳನ್ನು ಸ್ವಯಂ ದುರಸ್ತಿ ಮಾಡಿಕೊಂಡು ವಾಸಿಸುತ್ತಿದ್ದರೂ ಇಂದಿಗೂ ಹಕ್ಕುಪತ್ರ ವಿತರಣೆ ಆಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಮನೆಗಳಿಗೆ ಅಧಿಕೃತ ಸಂಖ್ಯೆ ಇಲ್ಲದ ಕಾರಣ ಜನನ ಹಾಗೂ ಮರಣ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳ ಕೊರತೆಯಿಂದ ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುತ್ತಿದೆ ಎಂದರು ಹೇಳಿದರು. ಈ ಕೂಡಲೇ ಹಕ್ಕುಪತ್ರ ನೀಡುವುದು ಸೇರಿದಂತೆ ಅಗತ್ಯ ನಾಗರಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ನಿವಾಸಿಗಳು ಒತ್ತಾಯಿಸಿದರು. ಸಂಘಟನೆಯ ಸಂಚಾಲಕ ಎಂ.ಬಿ.ಸಜ್ಜನ್, ಶರಣಬಸಪ್ಪ ಮಮಶೆಟ್ಟಿ, ದೇವು ಬಿರಾದಾರ, ಜಾವೀದ್ ಹುಸೇನ್, ನಾಗಯ್ಯ ಸ್ವಾಮಿ, ಅಶ್ವಿನಿ, ಸೈಯದ್ ಹುಸೇನ್, ಮೋಹನ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಆಳಂದ | ಮೂರು ದಿನಗಳ ವಿಶ್ವ ಸಾಮಾಜಿಕ ಕಾರ್ಯ ದಿನಾಚರಣೆಗೆ ಚಾಲನೆ
ಆಳಂದ : ಸಮಾಜದ ಅತ್ಯಂತ ದುರ್ಬಲ ವರ್ಗಗಳಿಗೆ ನ್ಯಾಯ ಒದಗಿಸುವಲ್ಲಿ, ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತರುವಲ್ಲಿ, ಜನಜಾಗೃತಿ ಮೂಡಿಸುವಲ್ಲಿ ಹಾಗೂ ಸೌಲಭ್ಯಗಳನ್ನು ನೇರವಾಗಿ ತಲುಪಿಸುವಲ್ಲಿ ಸಾಮಾಜಿಕ ಕಾರ್ಯಕರ್ತರ ಪಾತ್ರ ಅನನ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು. ತಾಲೂಕಿನ ಕಡಗಂಚಿ ಸಮೀಪದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ವಿಶ್ವ ಸಾಮಾಜಿಕ ಕಾರ್ಯ ದಿನಾಚರಣೆಯ ಉದ್ಘಾಟಿಸಿ ಅವರು ಮಾತನಾಡಿದರು. ಇಎಸ್ಐಸಿ ಮತ್ತು ಪಿಂಚಣಿ ಯೋಜನೆಗಳಂತಹ ಮಹತ್ವದ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸುವುದು, ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವುದು, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳನ್ನು ಸಬಲಗೊಳಿಸುವುದು ಮತ್ತು ಸೇವೆಗಳ ಮಧ್ಯೆ ಇರುವ ಅಂತರವನ್ನು ತುಂಬುವುದು ಸಾಮಾಜಿಕ ಕಾರ್ಯಕರ್ತರ ಪ್ರಮುಖ ಕರ್ತವ್ಯಗಳಾಗಿವೆ. ಇಂತಹ ಕಾರ್ಯಗಳಿಂದ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಇಎಸ್ಐಸಿ ಸಂಯುಕ್ತ ನಿರ್ದೇಶಕ ಯುವರಾಜ್ ಸಿಂಗ್ ಮಾತನಾಡಿ, ಇಎಸ್ಐಸಿ ಕಾಯ್ದೆಯಡಿ ಆಸ್ಪತ್ರೆಗಳು, ಹೋಟೆಲ್ಗಳು ಹಾಗೂ ವಿವಿಧ ಸಂಸ್ಥೆಗಳ ಕಾರ್ಮಿಕರನ್ನು ಒಳಪಡಿಸಿ ನೋಂದಣಿ ಮಾಡಲಾಗುತ್ತದೆ. ಮಾತೃತ್ವ ರಜೆ ಅವಧಿಯಲ್ಲಿ ನೌಕರರಿಗೆ ವೇತನ ಪಾವತಿ, ಅಪಘಾತ ಮತ್ತು ಗಾಯ ಚಿಕಿತ್ಸೆಗೆ ವಿಮಾ ಸೌಲಭ್ಯಗಳಂತಹ ಅನೇಕ ಪ್ರಯೋಜನಗಳನ್ನು ಈ ಯೋಜನೆ ನೀಡುತ್ತಿದೆ ಎಂದು ವಿವರಿಸಿದರು. ಇಪಿಎ ಪ್ರಾದೇಶಿಕ ಆಯುಕ್ತ ಎಂ. ಸುಬ್ರಹ್ಮಣ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಇಎಸ್ಐಸಿ ಉಪನಿರ್ದೇಶಕ ರಮೇಶ್ ರೈ, ಸಹಾಯಕ ಆಯುಕ್ತ ಡಾ.ಭಾರತ್ ಲಾಲ್ ಮೀನಾ, ಪ್ರೊ.ಅಂಗಡಿ, ಪ್ರೊ.ಪಸೋಡಿ, ಪ್ರೊ.ಪಾಂಡುರಂಗ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡೀನ್ ಹಾಗೂ ವಿಭಾಗ ಮುಖ್ಯಸ್ಥರಾದ ಪ್ರೊ.ಪವಿತ್ರ ಆರ್.ಅಲೂರ್ ಸ್ವಾಗತಿಸಿದರು. ಡಾ.ಹರೀಶ್ ಕುಮಾರ್ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಲಕ್ಷ್ಮಣ ವಂದಿಸಿದರು.
ಮಸ್ಕತ್ - ಮಂಗಳೂರು ನಡುವೆ ಮಾರ್ಚ್ನಲ್ಲಿ ನೇರ ವಿಮಾನ ಸೇವೆ ಪುನಾರಾರಂಭ: ಸಂಸದರಿಗೆ ಪತ್ರ
ಉಡುಪಿ, ಫೆ.13: ವಾಣಿಜ್ಯ ಕಾರಣಗಳಿಂದ 2025ರ ಜುಲೈ 15ರಿಂದ ನಿಂತಿರುವ ಮಸ್ಕತ್ ಮತ್ತು ಮಂಗಳೂರು ನಡುವಿನ ನೇರ ವಿಮಾನ ಸೇವೆಯನ್ನು ಮಾರ್ಚ್ ತಿಂಗಳಲ್ಲಿ ಪುನರಾರಂಭಿಸುವ ಕುರಿತಂತೆ ಏರ್ ಇಂಡಿಯಾ ದೃಢವಾದ ನಿರ್ಧಾರ ತೆಗೆದುಕೊಂಡಿದೆ ಎಂದು ಕೇಂದ್ರ ವಿಮಾನ ಯಾನ ಸಚಿವ ರಾಮಮೋಹನ್ ನಾಯ್ಡು ಕಿಂಜರಾಪು, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮಸ್ಕತ್- ಮಂಗಳೂರು ನಡುವಿನ ನೇರ ವಿಮಾನ ಯಾನವನ್ನು ಪುನರಾರಂಭಿಸುವಂತೆ ಆಗ್ರಹಿಸಿ ಕೋಟ ಶ್ರೀನಿವಾಸ ಪೂಜಾರಿ ಅವರು 2025ರ ಅಕ್ಟೋಬರ್ 8ರಂದು ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಈ ಪತ್ರಕ್ಕೆ ಜ.31ರಂದು ಉತ್ತರಿಸಿರುವ ಕೇಂದ್ರ ಸಚಿವರು ಈಗಾಗಲೇ ಏರ್ಇಂಡಿಯಾದೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಏರ್ಇಂಡಿಯಾ ಸಂಸ್ಥೆಯು 2026ರ ಮಾರ್ಚ್ ತಿಂಗಳಲ್ಲಿ ಮಸ್ಕತ್ ಮತ್ತು ಮಂಗಳೂರು ಮಾರ್ಗ ದಲ್ಲಿ ವಿಮಾನಯಾನ ಸಂಚಾರವನ್ನು ಪುನರಾರಂಭಿಸುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ ಎಂದು ಪತ್ರದಲ್ಲಿ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಇದರ ಟಿಕೇಟ್ ಬುಕ್ಕಿಂಗ್ ಸಹ ಅತೀ ಶೀಘ್ರವೇ ಪ್ರಾರಂಭ ಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ನೆಹರೂ ಮಾಡಿದಷ್ಟು ಕೆಲಸ ಮೋದಿ ಅವರು ಮಾಡಿಲ್ಲ : ಸಚಿವ ರಾಮಲಿಂಗಾರೆಡ್ಡಿ
ಕಲಬುರಗಿ : ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಬಗ್ಗೆ ಸದಾ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು, ನೆಹರೂ ಮಾಡಿದ ಒಂದು ರೂಪಾಯಿ ಕೆಲಸದಲ್ಲಿ 10 ಪೈಸೆಯಾದರೂ ಮಾಡಿಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದರು. ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆಹರೂ ನಿಧನವಾಗಿ ಹಲವು ವರ್ಷಗಳಾಗಿದ್ದರೂ ಮೋದಿ ಪ್ರತಿಯೊಂದು ವಿಚಾರದಲ್ಲೂ ನೆಹರೂ ಹೆಸರನ್ನು ಪ್ರಸ್ತಾಪಿಸುತ್ತಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನೆಹರೂ ಸುಮಾರು 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಆದರೆ ಬಿಜೆಪಿ ಹಾಗೂ ಅವರ ಪೂರ್ವಜರು ಜೈಲು ಶಿಕ್ಷೆ ಅನುಭವಿಸಿಲ್ಲ, ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗವಹಿಸಿಲ್ಲ ಎಂದು ಆರೋಪಿಸಿದರು. ಎಪ್ಸ್ಟೀನ್ ಫೈಲ್ನಲ್ಲಿ ಮೋದಿ ಹೆಸರು ಇರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಬಹಿರಂಗಪಡಿಸಿದ್ದಾರೆ. ತಾವು ವಿಶ್ವಗುರು ಎಂದು ಕೊಂಡಾಡುತ್ತಿದ್ದ ಮೋದಿ ಕುರಿತು ಸತ್ಯಾಂಶ ಈಗ ಜಗತ್ತಿಗೆ ಗೊತ್ತಾಗಿದೆ. ನಿಜ ವಿಷಯವನ್ನು ಸಹಿಸದೇ ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ದೂರಿದರು. ಗಾಣಗಾಪುರ ಸಮಗ್ರ ಅಭಿವೃದ್ಧಿಗೆ ಬದ್ಧತೆ : ಸುಕ್ಷೇತ್ರ ಗಾಣಗಾಪುರ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ತಿಳಿಸಿದರು. ಈ ಕುರಿತು ಈಗಾಗಲೇ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಅನುದಾನ ಬಿಡುಗಡೆಗೆ ಸರ್ಕಾರ ಬದ್ಧವಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಎಂ.ವೈ. ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಂಡ್ಲೂರು ಸೇತುವೆಯ ಪುನರ್ ನಿರ್ಮಾಣ: ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಹರ್ಷ
ಕುಂದಾಪುರ, ಫೆ.13: ತಾಲೂಕಿನ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ 79.00ಕಿ.ಮೀ.ನಲ್ಲಿ ಬಳ್ಕೂರು- ಕಂಡ್ಲೂರು ಮಧ್ಯದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಸೇತುವೆಯ ಮರು ನಿರ್ಮಾಣದ ಕುರಿತ ರಾಜ್ಯ ಸರಕಾರದ ನಿರ್ಧಾರಕ್ಕೆ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೊಡ್ಗಿ ಅವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದೀಗ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅತಿ ಹತ್ತಿರದ ಈ ಮಾರ್ಗದ ಕಿ.ಮೀ 79.00ರಲ್ಲಿ ಬಳ್ಕೂರು - ಕಂಡ್ಲೂರು ಮಧ್ಯ ಸೇತುವೆ ಇದ್ದು ಇದು 1972ರಲ್ಲಿ ನಿರ್ಮಾಣಗೊಂಡಿದೆ. ಸೇತುವೆಯು 10 ಅಂಕಣಗಳನ್ನು ಒಳಗೊಂಡಿದ್ದು ಒಟ್ಟು 312ಮೀ. ಉದ್ದವಿದೆ. ಈ ಸೇತುವೆ ಈಗಾಗಲೇ ಶಿಥಿಲ ಗೊಂಡಿರುವ ಕಾರಣ ಇದರ ಮೇಲೆ ಅಧಿಕ ಭಾರ ಹೊತ್ತ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಸೇತುವೆ ಕುಸಿಯುವ ಸಾಧ್ಯತೆಯೊಂದಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಸಂಭವವಿದೆ. ಹೀಗಾಗಿ ಸೇತುವೆಯ ಮರುನಿರ್ಮಾಣಕ್ಕೆ ಅಂದಾಜು 40 ಕೋಟಿ ರೂ. ಅನುದಾನವನ್ನು ಮಂಜೂರು ಮಾಡುವಂತೆ ಕೊಡ್ಗಿ, ಸಚಿವ ಸತೀಶ್ ಜಾರಕಿಹೊಳೆ ಅವರಲ್ಲಿ ವಿನಂತಿಸಿದ್ದರು. ಶಾಸಕರ ಮನವಿಗೆ ಸಚಿವರು ಶೀಘ್ರವಾಗಿ ಸ್ಪಂದಿಸಿದ್ದು ಸೇತುವೆಯ ಮರು ನಿರ್ಮಾಣಕ್ಕೆ 55 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಬಳ್ಕೂರು - ಕಂಡ್ಲೂರು ನಡುವಿನ ಸೇತುವೆಯ ಪುನರ್ನಿರ್ಮಾಣ ಮತ್ತು ಪುನಶ್ವೇತನ ಕಾಮಗಾರಿಗಳಿಗೆ ಅನುಮೋದನೆ ದೊರಕಿರುವುದಕ್ಕೆ ಶಾಸಕರು ಹರ್ಷ ವ್ಯಕ್ತಪಡಿಸಿದ್ದಾಗಿ ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ನಲ್ಲಿ ಗೊಂದಲದ ಗೂಡಾಗುತ್ತಿರುವ ನಾಯಕತ್ವ ಬದಲಾವಣೆ: ಅಂತ್ಯ ಹಾಡಲು ಹೈಕಮಾಂಡ್ ಹಿಂದೇಟು, ಕಾರಣ ಏನು?
ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಮತ್ತೆ ಭುಗಿಲೆದ್ದಿದೆ. ಒಂದು ಕಡೆಯಲ್ಲಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಕಾಂಗ್ರೆಸ್ ದೆಹಲಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಡಿಕೆಶಿ ದೆಹಲಿ ಭೇಟಿ ನಾನಾ ರೀತಿಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಹಾಗಾದರೆ ಮುಂದೇನಾಗಲಿದೆ? ಬಜೆಟ್ ನಂತರದಲ್ಲಿ ಆಗಲಿರುವ ಬದಲಾವಣೆ ಏನೇನು? ಈ ಕುರಿತಾದ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಕುಂದಾಪುರ ರಿಂಗ್ರೋಡ್ ಕಾಮಗಾರಿ ಅಂತಿಮ ಹಂತದಲ್ಲಿ: ವಾಹನ ದಟ್ಟಣೆ ನೀಗಿಸಲು ಪರ್ಯಾಯ ವ್ಯವಸ್ಥೆ
ಕುಂದಾಪುರ, ಫೆ.13:ಕುಂದಾಪುರ ನಗರದ ಫೆರಿ ರೋಡ್ನಿಂದ ಸಂಗಮ್ಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ರಿಂಗ್ರೋಡ್ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳುವ ಹಂತದಲ್ಲಿದೆ. ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿ ಸುವ, ನಗರದೊಳಗಿನ ಸಂಚಾರ ದಟ್ಟಣೆ ತಡೆಯುವಲ್ಲಿ ಈ ರಿಂಗ್ರೋಡ್ ಪರ್ಯಾಯ ವ್ಯವಸ್ಥೆ ಎಂದು ಹೇಳಲಾಗಿದೆ. 2006-07ರಲ್ಲಿ ಆಗಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿಯಲ್ಲಿ ಆರಂಭಗೊಂಡ ಈ ಯೋಜ ನೆಗೆ 20 ಕೋಟಿ ರೂ. ಮಂಜೂರಾಗಿದ್ದು, 19.8 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. 2023ರಲ್ಲಿ ಹಾಲಿ ಶಾಸಕ ಕಿರಣ್ ಕೊಡ್ಗಿ ಅವರ ಮನವಿಯಂತೆ ಈ ಅನುದಾನಕ್ಕೆ ಸಿಎಂ ಅನುಮೋದನೆ ನೀಡಿದ್ದರು. ರಿಂಗ್ ರೋಡ್ ನಿರ್ಮಾಣವಾದರೆ ನಗರದೊಳಗೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಗರದೊಳಗೆ ಪ್ರವೇಶ ಪಡೆಯದೆ ಕೋಡಿ ಮೊದಲಾದ ಭಾಗಗಳಿಗೆ, ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್ ರೋಡ್ ಮೂಲಕ ಹೋಗಲು ಸಾಧ್ಯವಿದೆ. ಸುಮಾರು 1 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ರಿಂಗ್ರೋಡ್ ಅನಂತರದ ದಿನಗಳಲ್ಲಿ ನಿರ್ವಹಣೆ ಕಾಣದೆ ವರ್ಷಗಳೇ ಕಳೆದುಹೋಗಿದ್ದವು. ಮಳೆಯ ಅಬ್ಬರಕ್ಕೆ ರಿಂಗ್ ರೋಡ್ನಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿ ವಾಹನ ಓಡಾಟ ದುಸ್ತರವೆನಿಸಿತ್ತು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾಮಗಾರಿಗಿದ್ದ ಒಂದಷ್ಟು ತಾಂತ್ರಿಕ ತೊಡಕುಗಳನ್ನು ಸರಪಡಿಸಲು ಪ್ರಯತ್ನಿಸಿ ದ್ದರು. ಸಿಆರ್ಝೆಡ್ ನಿರಾಕ್ಷೇಪಣೆ, ಮೆಸ್ಕಾಂ ಕಂಬ ಹಾಕುವ ವಿಚಾರವನ್ನು ಶಾಸಕರು ಪರಿಹರಿಸಿದ್ದರು. ಹಾಲಿ ಸರಕಾರದ ಸಚಿವರ ಸಹಿತ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕೂಡಾ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದರು. ನಗರದ ಮಹತ್ವಾಕಾಂಕ್ಷೆಯ ಈ ರಿಂಗ್ರೋಡ್ ಕಾಮಗಾರಿ ಇದೀಗ ಪೂರ್ಣತೆಯ ಹಂತಕ್ಕೆ ಬಂದಿದೆ. ಮೀನುಗಾರಿಕಾ ವಲಯಗಳೆಂದು ಗುರುತಿಸಿಕೊಂಡಿರುವ ಖಾರ್ವಿಕೇರಿ, ಪಂಚಗಂಗಾವಳಿ, ಮದ್ದುಗುಡ್ಡೆ ಮೂಲಕ ಹೋಗಿ ಪಂಚಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್ರೋಡ್ ರಾಷ್ಟ್ರೀಯ ಹೆದ್ದಾರಿಯ ಸಂಗಮ್ ಜಂಕ್ಷನ್ನಿಂದ ನಗರದೊಳಗಿನ ಫೆರ್ರಿ ರಸ್ತೆಯವರೆಗೆ ಸಂಪರ್ಕ ದಾರಿಯಾಗಲಿದೆ. ನಗರ ಸೌಂದರ್ಯ ಹೆಚ್ಚಿಸುವ ರಿಂಗ್ರೋಡ್ ಪಾದಚಾರಿಗಳಿಗೆ ನಡೆಯಲು ದಾರಿ, ನದಿಗೆ ತಡೆಗೋಡೆ, ಚರಂಡಿ, ವಿದ್ಯುತ್ ದೀಪಗಳ ಬೆಳಕಿನ ವ್ಯವಸ್ಥೆ ಆಗಿ ರಿಂಗ್ ರೋಡ್ ಅತ್ಯಾಕರ್ಷಕವಾಗಿ ಕಾಣುವಂತೆ ನಿರ್ಮಾಣವಾಗುತ್ತಿದೆ. ಕೊನೆ ಹಂತದ ಕಾಂಕ್ರಿಟ್ ಹಾಕುವ ಕಾರ್ಯ ನಡೆದಿದ್ದು ನೀರು ಕೊಟ್ಟು ಕ್ಯೂರಿಂಗ್ ಮಾಡಲಾಗುತ್ತಿದೆ. ಇನ್ನು ಪಾದಚಾರಿ ಪಥ ನಿರ್ಮಾಣ ನಡೆಯಬೇಕಿದೆ. ಉಳಿದಂತೆ ಬಹುತೇಕ ಕೆಲಸಗಳು ನಡೆದಿವೆ. ವಾಹನಗಳ ವೇಗ ನಿಯಂತ್ರಣಕ್ಕೆ ಅಗತ್ಯವಿರುವ ಕಡೆಗಳಲ್ಲಿ ಹಂಪ್ ನಿರ್ಮಿಸಬೇಕು ಎಂಬುದು ಸ್ಥಳೀಯರು ಹಾಗೂ ನಿತ್ಯ ಸವಾರರ ಆಗ್ರಹವಾಗಿದೆ. ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಮಾ.15ರ ಒಳಗೆ ಎಲ್ಲವನ್ನೂ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಮಗಾರಿ ನಡೆಯುವಾಗ ಗುಣಮಟ್ಟದ ಪರಿಶೀಲನೆ ನಡೆಸಲಾಗಿದೆ. -ರಾಮಣ್ಣ ಗೌಡ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಂದಾಪುರ.
Raichur | ಬಸ್-ಬೈಕ್ ನಡುವೆ ಢಿಕ್ಕಿ : ಸವಾರ ಮೃತ್ಯು
ರಾಯಚೂರು : ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮುಧೋಳ ಕ್ರಾಸ್ ಬಳಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಸಂಜೀವ್ ರಡ್ಡಿ (45) ಎಂದು ಗುರುತಿಸಲಾಗಿದೆ. ಕಲಬುರಗಿ ವಿಭಾಗಕ್ಕೆ ಸೇರಿದ ಸಾರಿಗೆ ಬಸ್ ಮಸ್ಕಿ ಕಡೆಗೆ ಸಾಗುತ್ತಿದ್ದ ವೇಳೆ, ಮಸ್ಕಿಯಿಂದ ಮುಧೋಳ ಕಡೆಗೆ ಬರುತ್ತಿದ್ದ ಬೈಕ್ ತಿರುವು ಪಡೆಯುವಾಗ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಬಸ್ ಚಾಲಕ ಅತಿವೇಗದಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಢಿಕ್ಕಿಯ ತೀವ್ರತೆಗೆ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯ ಮಾಹಿತಿ ಪಡೆದ ಮಸ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಸ್ ಅನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಸ್ಕಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
T20 World Cup- ಭಾರತ Vs ಪಾಕ್ ಕ್ರಿಕೆಟ್ ಸಮರಕ್ಕೆ ಮಳೆ ಭೀತಿ!: ಹೀಗಿದೆ ನೋಡಿ ಕೊಲಂಬೊದ ಹವಾಮಾನ ವರದಿ
Indo Pakistan Cricket Rivalry- ಕ್ರಿಕೆಟ್ ಪ್ರೇಮಿಗಳೆಲ್ಲರೂ ಫೆಬ್ರವರಿ 15ರಂದು ನಡೆಯಲಿರುವ ಭಾರತ Vs ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕೊಲಂಬೊದಲ್ಲಿ ಪಂದ್ಯ ನಡೆಯುವ ದಿನವಾದ ಭಾನುವಾರದಂದು ಮಳೆಯಾಗಲಿದೆ ಎಂದ ಹವಾಮಾನ ವರದಿ ತಿಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಆ ದಿನ ಪಂದ್ಯ ನಡೆಯುವ ವೇಳೆ ಶೇಕಡಾ 85ರಷ್ಟು ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಮಳೆ ನಿಂತು ಪಂದ್ಯ ನಡೆದರೆ ಇದರ ಭರಪೂರ ಲಾಭ ಸ್ಪಿನ್ನರ್ ಗಳಿಗೆ ಆಗಲಿದೆ ಎಂಬುದು ಮತ್ತೊಂದು ಇಂಟರೆಸ್ಟಿಂಗ್ ಸಂಗತಿ.
ಮಹಾರಾಷ್ಟ್ರದ ಸೌಂದಲದಲ್ಲಿ ಐತಿಹಾಸಿಕ ನಿರ್ಣಯ: ಜಾತಿ ವ್ಯವಸ್ಥೆ ತೊರೆದು ‘ಮಾನವೀಯತೆ’ ಎತ್ತಿ ಹಿಡಿದ ಗ್ರಾಮಸ್ಥರು
ಭಾರತದ ಹಳ್ಳಿಗಳಲ್ಲಿ ಇಂದಿಗೂ ಜಾತಿ ಪದ್ಧತಿಯ ಬೇರುಗಳು ಆಳವಾಗಿವೆ. ಆದರೆ, ಮಹಾರಾಷ್ಟ್ರದ ಅಹಲ್ಯಾನಗರ (ಹಿಂದಿನ ಅಹ್ಮದ್ನಗರ) ಜಿಲ್ಲೆಯ ಹಳ್ಳಿಯೊಂದು ಈ ವ್ಯವಸ್ಥೆಗೆ ಸೆಡ್ಡು ಹೊಡೆದು ನಿಂತಿದೆ. ಇಲ್ಲಿನ ನೆವಾಸಾ ತಾಲೂಕಿನ 'ಸೌಂದಲ' ಗ್ರಾಮವು ತನ್ನನ್ನು ತಾನು ಜಾತಿ ಮುಕ್ತ ಗ್ರಾಮ ಎಂದು ಘೋಷಿಸಿಕೊಳ್ಳುವ ಮೂಲಕ ದೇಶಕ್ಕೇ ಮಾದರಿಯಾಗಿ ನಿಂತಿದೆ. ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಈ ಸಂಬಂಧ ಅವಿರೋಧ
ಯೋಗೇಶ್ ಅವರ 50ನೇ ಸಿನಿಮಾ ‘ಕಿಂಗ್’ ಟೀಸರ್ ರಿಲೀಸ್
‘ಕಿಂಗ್’ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದೆ. ಸಿನಿಮಾವೂ ಈ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ದುನಿಯಾ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟು ‘ಲೂಸ್ ಮಾದ’ ಎಂದೇ ಜನಪ್ರಿಯವಾಗಿರುವ ಯೋಗೇಶ್ ತಮ್ಮ 50ನೇ ಸಿನಿಮಾದ ಟೈಟಲ್ ಲಾಂಚ್ ಮೂಲಕ ಸುದ್ದಿಯಾಗಿದ್ದಾರೆ. ಕಣ್ಣಿಗೆ ಮತ್ತು ಹಣೆಗೆ ಪಟ್ಟಿಕಟ್ಟಿಕೊಂಡು ಒಂದೇ ಕಣ್ಣು ತೋರಿಸುವ ಫೋಟೋ ಜೊತೆಗೆ ಟೀಸರ್ ಲಿಂಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಟೀಸರ್ ಅನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ‘ಕಿಂಗ್’ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದೆ. ಸಿನಿಮಾವೂ ಈ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. Another #King !! pic.twitter.com/kp6JEKA0qR — D E V A (@rajkriishna) February 13, 2026 “ಯೋಗಿ ನಂಗೆ ತುಂಬಾನೇ ಆಪ್ತ. ಅವರು ನನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪುನೀತ್ ಜೊತೆ ತುಂಬಾ ಆಪ್ತವಾಗಿದ್ದರು. ಹೀಗಾಗಿ, ಯೋಗಿಯನ್ನು ನೋಡಿದಾಗೆಲ್ಲ ಅಪ್ಪುನ ನೆನಪಾಗುತ್ತದೆ. ಈ ಸಿನಿಮಾ ಗೆಲ್ಲಲೇಬೇಕು. ಈ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ನಾನು ಭಾಗಿ ಆಗುತ್ತೇನೆ” ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಜಾಕ್ ಅವರು ‘ಕಿಂಗ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಹೇಂದರ್, ಸಿದ್ದೇಶ್, ಸಂತೋಷ್ ಬಸವರಾಜ್ ಮೊದಲಾದವರು ನಿರ್ದೇಶನ ತಂಡದಲ್ಲಿದ್ದಾರೆ. ಶಶಾಂಕ್ ಶೇಷಗಿರಿ ಈ ಚಿತ್ರವನ್ನು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಾಗರ್ ಎಂಬ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ಟೈಟಲ್ ಅಲ್ಲಿ ಬಾಲಿವುಡ್ನಲ್ಲೂ ಸಿನಿಮಾ ಬರುತ್ತಿದೆ. ‘ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ನಾವು ಮೂರು ವರ್ಷಗಳ ಹಿಂದೆಯೇ ಚಿತ್ರಕ್ಕೆ ಟೈಟಲ್ ಇಟ್ಟಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಜಾಕ್.
ಸಂಪಾದಕೀಯ | ‘ವಂದೇ ಮಾತರಂ’ ದುರ್ಬಳಕೆಯಾಗದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಸಾಹಸ ಸಿಂಹ’ ಖ್ಯಾತಿಯ ಸ್ಯಾಂಡಲ್ವುಡ್ ಹಿರಿಯ ನಿರ್ದೇಶಕ ಜೋ ಸೈಮನ್ ಹಠಾತ್ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಜೋ ಸೈಮನ್ ಭಾಗವಹಿಸಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿ ಜೋ ಸೈಮನ್ ಚಿರನಿದ್ರೆಗೆ ಜಾರಿದ್ದಾರೆ.

24 C