ಬೆಂಗಳೂರು: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಂಚಿಕೆಯಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಆರೋಪ ಸಂಬಂಧದ ತನಿಖೆಗೆ ಹಾಜರಾಗಿ ಎಲ್ಲ ರೀತಿಯ ಸಹಕಾರ ನೀಡಿದ್ದರೂ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರನ್ನೂ ತನಿಖೆಗೆ ಒಳಪಡಿಸಲು ಬಯಸುತ್ತಿದ್ದಾರೆ ಎಂದು ಹೈಕೋರ್ಟ್ನಲ್ಲಿ ಶುಕ್ರವಾರ ಆರೋಪಿಸಿದೆ.ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಝೀ ಎಂಟರ್ಪ್ರೈಸಸ್ನ ಪ್ರತಿನಿಧಿ ದೀಪಕ್ ಶ್ರೀರಾಮುಲು ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ. ಅನಿಲ್ ಕುಮಾರ್ ಅವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ಕುರಿತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ತೀರ್ಪುಗಾರರಿಗೆ ಯಾಕೆ ತೊಂದರೆ? ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ,''ಅರ್ಜಿದಾರರು ತನಿಖೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರಾದ ತಾರಾ, ಜಗ್ಗೇಶ್ ಹಾಗೂ ಮತ್ತೊಬ್ಬ ಸೆಲೆಬ್ರಿಟಿಯನ್ನೂ ತನಿಖೆಗೆ ಹಾಜರಾಗಬೇಕೆಂದು ಬಯಸಿದ್ದಾರೆ. ವಿದ್ಯುನ್ಮಾನ ಸಾಕ್ಷ್ಯಗಳು ಲಭ್ಯವಿದೆಯಾದರೂ, ತೀರ್ಪುಗಾರರನ್ನು ತನಿಖೆಗೆ ಕರೆಸುವಷ್ಟು ಕಠಿಣ ನಿಲುವು ತಾಳುವ ಅಗತ್ಯವಿಲ್ಲ,'' ಎಂದರು.ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ತೀರ್ಪುಗಾರರನ್ನು ಏಕೆ ಕರೆಸಬೇಕು? ಅವರಿಗೆ ಏಕೆ ತೊಂದರೆ ಕೊಡುತ್ತೀರಿ,' ಎಂದು ಸರಕಾರಿ ಪರ ವಕೀಲರನ್ನು ಪ್ರಶ್ನಿಸಿತಲ್ಲದೆ, 'ತೀರ್ಪುಗಾರರಿಗೆ ಪೊಲೀಸರು ನೀಡಿರುವ ಸಮನ್ಸ್ ಪ್ರತಿ ಎಲ್ಲಿ' ಎಂದು ವಕೀಲರನ್ನು ಕೇಳಿತು. ಇದಕ್ಕೆ ಸಂದೇಶ್ ಚೌಟ ಪ್ರತಿಕ್ರಿಯಿಸಿ, 'ಪೊಲೀಸರು ಸಮನ್ಸ್ ನೀಡಿಲ್ಲ. ನಾವು ತನಿಖೆಗೆ ಹಾಜರಾದ ಸಂದರ್ಭದಲ್ಲಿ ನಮ್ಮ ಮೂಲಕ ತೀರ್ಪುಗಾರರನ್ನು ಕರೆಸುವ ಯತ್ನ ಮಾಡುತ್ತಿದ್ದಾರೆ. ಅವರ ವಿಳಾಸ ಮತ್ತಿತರ ವಿವರಗಳನ್ನು ನೀಡುವಂತೆ ಕೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಫೆಬ್ರವರಿ 27ಕ್ಕೆ ವಿಚಾರಣೆ ಮುಂದೂಡಿಕೆ ಹೈಕೋರ್ಟ್ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು. ಆ ವೇಳೆ ವಕೀಲರು, 'ಮುಂದಿನ ವಿಚಾರಣೆ ವೇಳೆ ವಿವಾದಿತ ಸಂಚಿಕೆಯನ್ನು ನ್ಯಾಯಾಲಯಕ್ಕೆ ತೋರಿಸಲು ಅನುಮತಿಸಬೇಕು. ನಾಟಕವೊಂದರ ರಿಹರ್ಸಲ್ ಅನ್ನು ಹಾಸ್ಯದ ಮೂಲಕ ತೋರಿಸಲಾಗಿದೆಯಷ್ಟೇ' ಎಂದರು. ಅದರ ಬಗ್ಗೆ ಮುಂದಿನ ವಿಚಾರಣೆ ವೇಳೆ ನೋಡೋಣ ಎಂದು ತಿಳಿಸಿದ ನ್ಯಾಯಪೀಠ, ಝೀ ವಾಹಿನಿ, ಕಾರ್ಯಕ್ರಮದ ಕಲಾವಿದರು, ನಿರ್ದೇಶಕರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿತು.
Chikkamagaluru | ದೇವಾಲಯಕ್ಕೆ ಪರಿಶಿಷ್ಟರ ಪ್ರವೇಶ ನಿರ್ಬಂಧ ಸಮಸ್ಯೆ ಇತ್ಯರ್ಥ
ಚಿಕ್ಕಮಗಳೂರು : ತಾಲೂಕಿನ ಹೊಸಕೋಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಗ್ರಾಮಸ್ಥರು ಪರಿಶಿಷ್ಟರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿ ಪರಿಶಿಷ್ಟರು ದೇವಸ್ಥಾನ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಗ್ರಾಮದಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಪ್ರವೇಶಿಸುವಂತಿಲ್ಲವೆಂದು ಗ್ರಾಮಸ್ಥರು ನಿರ್ಬಂಧವನ್ನು ವಿಧಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದ ಪರಿಶಿಷ್ಟ ಸಮುದಾಯದವರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಸಮಸ್ಯೆಯನ್ನು ಅರಿತ ಜಿಲ್ಲಾಡಳಿತ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ.
ನಾಳೆಯಿಂದ ಸಫಾರಿ ಪುನಾರಂಭ | ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ : ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ಸೂಚನೆ
ಮೈಸೂರು : ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ನವೆಂಬರ್ 7ರಂದು ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಫೆ.21ರಿಂದ ಷರತ್ತುಬದ್ಧವಾಗಿ ಪುನರಾರಂಭಿಸಲು ನಿರ್ಧರಿಸಿದ್ದು, ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಮೈಸೂರು, ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಹುತೇಕ ಫೆ.21ರಿಂದ ಸಫಾರಿ ಆರಂಭಿಸಲು ಅಧಿಕೃತ ಆದೇಶ ಹೊರಡಿಸಲಾಗುವುದು. ಈ ಆದೇಶದಲ್ಲಿರುವ ಷರತ್ತುಗಳ ಉಲ್ಲಂಘನೆ ಆದರೆ, ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು. ನ.7ಕ್ಕೆ ಮೊದಲು ಬಳಕೆಯಾಗುತ್ತಿದ್ದ ಸಫಾರಿ ವಾಹನಗಳ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಮಾತ್ರವೇ ಬಳಕೆ ಮಾಡಬೇಕು. ಹೆಚ್ಚಾಗಿ ಬಸ್ ಗಳ ಮೂಲಕ ಸಫಾರಿ ನಡೆಸಬೇಕು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕ್ಯಾಂಪರ್ ಮತ್ತು ಜೀಪ್ ಬಳಕೆ ಮಾಡಬೇಕು ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಲಾಗುವುದು ಎಂದರು. ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶವನ್ನು ಗುರುತಿಸಬೇಕು. ಆ ಪ್ರದೇಶದಲ್ಲಿ ಗಸ್ತು ಹೆಚ್ಚಿಸಬೇಕು. ವನ್ಯಜೀವಿಗಳು ವಸತಿ ಪ್ರದೇಶಕ್ಕೆ ಬಾರದಂತೆ, ಜೀವಹಾನಿ, ಬೆಳೆ ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಆಗಬೇಕಾದರೆ ಸ್ಥಳೀಯರ ನೆರವು, ಸಹಕಾರ, ಸಹಯೋಗ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಅರಣ್ಯ ಸಿಬ್ಬಂದಿ ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಸಂರಕ್ಷಣೆ ಮಾಡಬೇಕು ಎಂದರು. ಸಭೆಯಲ್ಲಿ ಸಿಸಿಎಫ್ ಮಾಲತಿ ಪ್ರಿಯಾ, ಹುಲಿ ಯೋಜನೆಯ ನಿರ್ದೇಶಕ ರಮೇಶ್ ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಪತಿ, ಸೋನಾಲ್, ಪ್ರಭಾಕರನ್, ಸೀಮಾ ಮತ್ತಿತರರು ಪಾಲ್ಗೊಂಡಿದ್ದರು. ಮಾನವ ಜೀವ ರಕ್ಷಣೆಗೆ ಆದ್ಯತೆ : ವನ್ಯಜೀವಿಗಳ ರಕ್ಷಣೆಯ ಜೊತೆಗೆ ಕಾಡಿನಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳ ಜೀವ ರಕ್ಷಣೆಯೂ ಅರಣ್ಯ ಇಲಾಖೆಯ ಪ್ರಥಮ ಆದ್ಯತೆ ಆಗಿದೆ. ಇದರ ಜೊತೆಗೆ ಬೆಳೆ ರಕ್ಷಣೆಗೂ ಒತ್ತು ನೀಡಬೇಕು. ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟು ಹಣವನ್ನು ಅರಣ್ಯದಂಚಿನ ವಸತಿ ಪ್ರದೇಶಗಳಲ್ಲಿನ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು, ಜಾನುವಾರುಗಳಿಗೆ ಮೇವು ಒದಗಿಸಲು, ಮಕ್ಕಳಿಗೆ ಶಿಕ್ಷಣ ಕೊಡಿಸಲು ವಿನಿಯೋಗಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಪ್ರಮುಖ ಅಂಶಗಳು ► ಬಂಡೀಪುರ ಅರಣ್ಯದ ಗಡಿಯಲ್ಲಿ 100 ಕಿ.ಲೋ. ಮೀಟರ್ ಅತ್ಯಂತ ಸೂಕ್ಷ್ಮಪ್ರದೇಶ ► 5 ಕಿ.ಮೀ.ಗೆ ಒಂದರಂತೆ 25 ಶಿಬಿರ ನಿರ್ಮಾಣ ► ಪ್ರತಿ ಶಿಬಿರದಲ್ಲಿ ಸ್ಥಳೀಯರನ್ನು ಕಾಡಿನ ಮಿತ್ರ ಎಂದು ನೇಮಕ ಮಾಡಿಕೊಳ್ಳಬೇಕು ► ಥರ್ಮಲ್ ಡ್ರೋನ್, ವಾಹನ ಇತ್ಯಾದಿ ಸೌಲಭ್ಯ ಬೇಕಿದ್ದರೂ ಲಿಖಿತ ಪ್ರಸ್ತಾವ ಸಲ್ಲಿಸಬೇಕು ► ಅರಣ್ಯ ಇಲಾಖೆ ಆಂತರಿಕವಾಗಿ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶ ಬಳಕೆ ಮಾಡಬೇಕು ► ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊರಗುತ್ತಿಗೆಯ ಸಿಬ್ಬಂದಿ ಇ-ಸ್ಟ್ರೈಪ್ ಬಳಕೆ ಮಾಡಬೇಕು ► ಸಮಗ್ರ ಕಮಾಂಡ್ ಕೇಂದ್ರದಲ್ಲಿ ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಡಬೇಕು ► 1926 ದೂರವಾಣಿ ಸಂಖ್ಯೆಗೆ ಬರುವ ದೂರು ಮತ್ತು ಮಾಹಿತಿಗೆ ತಕ್ಷಣ ಸ್ಪಂದಿಸಬೇಕು
Kalaburagi | ಮಕ್ಕಳು ಕೊಡುಗೈ ದಾನಿಯಾಗಬೇಕು: ಬಸವರಾಜ ಪಾಟೀಲ ಸೇಡಂ
ಕಲಬುರಗಿ: ಮಕ್ಕಳು ಕೊಡುವವರಾಗಬೇಕು, ಬೇಡುವವರಾಗಬಾರದು. ಸಮಾಜಕ್ಕೆ ದಾನಿಯಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಆಕಾಶದಲ್ಲಿ ಹಾರುವ ಹಕ್ಕಿಗಳಂತೆ ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಬದುಕಲು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಅವಕಾಶ ಕಲ್ಪಿಸಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು. ನಗರದ ರಾಮತೀರ್ಥ ದೇವಸ್ಥಾನದ ಸಮೀಪದ ಕಲ್ಯಾಣ ಮಂಟಪದಲ್ಲಿ ಶ್ರೀ ಮಂದಾರ ಪುಷ್ಪ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಲಕ್ಷ್ಮೀಬಾಯಿ ಸಾತಲಿಂಗಪ್ಪ ಮೇತ್ರೆ ಪ್ರಾಥಮಿಕ ಶಾಲೆ ಹಾಗೂ ಶ್ರೀ ಮಂದಾರ ಪುಷ್ಪ ಶಾಲೆಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ ‘ರಂಗಿತರಂಗ ವೈಭವ’ ಕಾರ್ಯಕ್ರಮವು ಭಾನುವಾರ ಅದ್ದೂರಿಯಾಗಿ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, ಮಕ್ಕಳಿಗೆ ಪ್ರೀತಿ ಮತ್ತು ಶಿಸ್ತು ಎರಡೂ ಅಗತ್ಯ. ಶಿಕ್ಷಕರು ಮಕ್ಕಳನ್ನು ತಿದ್ದಿದಾಗ ಪಾಲಕರು ಪ್ರಶ್ನಿಸುವ ಬದಲು ಸಹಕರಿಸಬೇಕು. ಆಗ ಮಾತ್ರ ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರವೂ ಬೆಳೆಯುತ್ತದೆ. ಇಲ್ಲವಾದರೆ ತಪ್ಪು ದಾರಿಯಲ್ಲಿ ಹೋಗಿ ಜೀವನ ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು. ನಿವೃತ್ತ ತಹಶೀಲ್ದಾರ್ ಜಿ.ಎಲ್. ಮೇತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ವೇದಿಕೆಯಲ್ಲಿ ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ಬಿಐಇಆರ್ಟಿ ಮಲ್ಲಮ್ಮ ಆಲ್ಗೂಡ, ಸಿಆರ್ಪಿ ಅಶ್ವಿನಿ ಕುಲಕರ್ಣಿ, ಕಲ್ಲನಗೌಡ ಎಸ್., ಶಿಕ್ಷಕ ಸೂರ್ಯಕಾಂತ್ ಯಲ್ದೆ ಹಾಗೂ ಉದ್ಯಮಿ ಬಸವರಾಜ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿಕುಮಾರ ನೀಲೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲೋಹಿತ್ ಕುಮಾರ್ ನೀಲೂರ, ಸಂಯೋಗಿತ ಲೋಹಿತ್, ಮಲ್ಲಿನಾಥ ಅಷ್ಟಗಿ, ಮಹದೇವಪ್ಪ ಪಗಡೆ, ಗುರುನಾಥ ಶಿವಪೂರೆ ಸೇರಿದಂತೆ ಅನೇಕ ಗಣ್ಯರು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಿಕ್ಷಕ ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನಮೋಹಕವಾಗಿ ಪ್ರದರ್ಶಿಸಿ ಸಭಿಕರ ಮನಗೆದ್ದರು. ನೃತ್ಯ, ನಾಟಕ, ಗಾನ ಹಾಗೂ ದೇಶಭಕ್ತಿ ಆಧಾರಿತ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು. ಕಾರ್ಯಕ್ರಮವು ಶಿಸ್ತಿನಿಂದ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.
ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣ; ಆರೋಪಿ ಸೆರೆ
ಬಂಟ್ವಾಳ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಇಲ್ಲಿನ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ಮೇರಮಜಲು ನಿವಾಸಿ ಪ್ರಶಾಂತ್ @ ಪ್ರಸಾದ್ (30) ಎಂದು ಗುರುತಿಸಲಾಗಿದೆ. ಬಂಧಿತನನ್ನು ವಿಚಾರಣೆ ನಡೆಸಿದ ಪೊಲೀಸರು ಈತ ಗಾಂಜಾವನ್ನು ಶೇಖರಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದ, ತಪಾಸಣೆಯ ವೇಳೆ ಆತನ ಬಳಿ 180 ಗ್ರಾಂ ಗಾಂಜಾವನ್ನು ಪತ್ತೆಯಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕವಸ್ತು, ದ್ವಿಚಕ್ರ ವಾಹನ ಸಹಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸಪೇಟೆ | ಕುಡುಕರ ಅಡ್ಡೆಯಾದ ಯೋಗ ಮಂದಿರ
ಹೊಸಪೇಟೆ : ನಗರದ ಹೊರವಲಯದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ ಜೋಳದರಾಶಿ ಗುಡ್ಡದ ಮೇಲಿನ ಯೋಗ ಮಂದಿರದಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಜೋಳದರಾಶಿ ಗುಡ್ಡದ ಮೇಲೆ ಬೃಹತ್ ಶ್ರೀ ಕೃಷ್ಣದೇವರಾಯನ ಪ್ರತಿಮೆ ಪ್ರತಿಷ್ಠಾಪನೆಗೆ ಯೋಜನೆ ರೂಪಿಸಲಾಗಿತ್ತು. ಗುಡ್ಡದ ಮೇಲಿನಿಂದ ಹಂಪಿ, ಅಂಜನಾದ್ರಿ ಹಾಗೂ ತುಂಗಭದ್ರಾ ಜಲಾಶಯ ವೀಕ್ಷಣೆಗೆ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಯೋಜನೆ ಅಪೂರ್ಣವಾಗಿದ್ದು, ಸ್ಥಳವು ಇದೀಗ ಕುಡುಕರ ಹಾಗೂ ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಯೋಗ ಮಂದಿರದ ಬಾಗಿಲು ಮತ್ತು ಕಿಟಕಿಗಳು ಒಡೆದು ಹಾನಿಗೊಳಪಡಿಸಲಾಗಿದೆ. ಅಲ್ಲದೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಆದಷ್ಟು ಬೇಗ ಯೋಗ ಮಂದಿರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ, ರಾಜಕೀಯ ಭೇದಭಾವ ಬದಿಗೊತ್ತಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಸ್ಥಾಪಿಸಲು ಆರ್.ವಿ.ದೇಶಪಾಂಡೆ ಮನವಿ
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಜನರ ದೀರ್ಘಕಾಲದ ಬೇಡಿಕೆಯಾಗಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹೆಚ್ಚುವರಿ ಮೂಲಸೌಕರ್ಯಗಳಿಂದ ಬಲಪಡಿಸಿ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯಾಗಿ ಅಭಿವೃದ್ಧಿಪಡಿಸಲು ಬಜೆಟ್ನಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ. ಶುಕ್ರವಾರ ಈ ಸಂಬಂಧ ಸಿಎಂ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ಉತ್ತರಕನ್ನಡ ಜಿಲ್ಲೆಯು ವಿಶಾಲ ಭೌಗೋಳಿಕ ವ್ಯಾಪ್ತಿ ಹೊಂದಿರುವ ಜಿಲ್ಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಪ್ರಮಾಣ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲೇ ಆಸ್ಪತ್ರೆಯ ಕೊರತೆಯಿಂದ ರೋಗಿಗಳು ಹುಬ್ಬಳ್ಳಿ, ಮಣಿಪಾಲ, ಬೆಳಗಾವಿ, ಗೋವಾ, ಬೆಂಗಳೂರಿಗೆ ಚಿಕಿತ್ಸೆಗಾಗಿ ತೆರಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದು ಗಮನ ಸೆಳೆದಿದ್ದಾರೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಹೋರಾಟಗಳು ನಡೆಯುತ್ತಿವೆ. ಪ್ರಸ್ತುತ ಜಿಲ್ಲಾಕೇಂದ್ರ ಕಾರವಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್)ಈಗಾಗಲೇ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಈ ಸಂಸ್ಥೆಗೆ ಅಗತ್ಯ ಹೆಚ್ಚುವರಿ ಮೂಲಸೌಕರ್ಯ ಒದಗಿಸಿ ಅದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಿದಲ್ಲಿ, ಜಿಲ್ಲೆಯ ಜನತೆಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಅನೇಕ ಜೀವಗಳನ್ನು ರಕ್ಷಿಸಲು ಸಹಕಾರಿಯಾಗಲಿದೆ ಎಂದು ಅವರು ಕೋರಿದ್ದಾರೆ.
ವಿಜಯನಗರ | ಬಿಜೆಪಿ ಕಾರ್ಯಕರ್ತರ ಸಂಘಟನಾ ಸಮಾವೇಶ
ವಿಜಯನಗರ: ಕಾಂಗ್ರೆಸ್ನ ಭ್ರಷ್ಟಾಚಾರ ತಡೆಯಲು ಬಿಜೆಪಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಮಾಜಿ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ವರ ಕರೆ ನೀಡಿದರು. ನಗರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ವಿಬಿ ಜಿ ರಾಮ್ ಜಿ ಜನಜಾಗೃತಿ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದರು. ಮುಂದಿನ ದಿನಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 60 ಕೆರೆ ನೀರು ಪೂರೈಕೆ ಯೋಜನೆ ಸಾಕಾರವಾಗದಿರುವುದನ್ನು ಖಂಡಿಸಿದರು. ನೀರಿನ ಸದ್ಬಳಕೆ ಮೂಲಕ ಗುಳೆ ಹೋಗುವ ಪರಿಸ್ಥಿತಿಯನ್ನು ತಡೆಯಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಬಿ.ಪಿ ಹರೀಶ್, ಮಾಜಿ ಸಂಸದ ವೈ.ದೇವೇಂದ್ರಪ್ಪ, ಗಾಯತ್ರಿ ಸಿದ್ದೇಶ್ವರ, ಡಾ.ರಮೇಶ್, ಮುತ್ತಿಗೆ ವಾಗೇಶ್, ಕಂಚಿಕೆರೆ ಕೆಂಚಪ್ಪ ಮಾತಾನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಎಸ್.ಟಿ ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಣಿವೆಹಳ್ಳಿ, ಮಾಜಿ ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ್, ಎಸ್.ಪಿ ನಾಯ್ಕ, ಓಂಕಾರ ಗೌಡ, ಬಂದೋಳ ಮಂಜುನಾಥ್, ಪಾಟೀಲ್ ಕೆಂಚನಗೌಡ, ಮಂಜುನಾಥ್ ಹಿಜಂತ್ಕರ್, ಸಣ್ಣ ಹಾಲಪ್ಪ, ಕುಸುಮಾ ಜಗದೀಶ್, ಕೆ.ಎಂ ಪ್ರಾಣೇಶ್, ಕೆ.ಮಲ್ಲಿಕಾರ್ಜುನ, ಕೆ.ಲಿಂಗಾನಂದ ಇತರರು ಭಾಗಿಯಾಗಿದ್ದರು.
ಕುಡಿಯುವ ನೀರನ್ನು ಆಗಾಗ ಪರೀಕ್ಷೆ ಮಾಡಿಸಲು ಸೂಚನೆ : ಡಾ.ಶಾಲಿನಿ ರಜನೀಶ್
ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿಗಳ ಮೂಲಕ ನೀಡಲಾಗುತ್ತಿರುವ ಕುಡಿಯುವ ನೀರನ್ನು ಆಗಾಗ ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೇಂದ್ರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಬರುವ ಜಲ ಜೀವನ ಮಿಷನ್ ಅನುಷ್ಟಾನ ಸಮಿತಿ ಸಭೆಯನ್ನು ನಡೆಸಿದ ಅವರು, ‘ಯೋಜನೆಯಡಿ ನಲ್ಲಿಗಳನ್ನು ಅಳವಡಿಸಿದರೆ ಕೆಲಸ ಮುಗಿಯುವುದಿಲ್ಲ. ಅಳವಡಿಸಿರುವ ನಲ್ಲಿ ಗಳಲ್ಲಿ ನೀರು ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೇಲ್ವಿಚಾರಣೆ ಮಾಡುವ ಜೊತೆಗೆ ನೀರಿನ ಗುಣಮಟ್ಟವನ್ನು ಆಗಾಗ ಪರೀಕ್ಷೆ ಮಾಡಿಸಬೇಕೆಂದು ನಿರ್ದೇಶನ ನೀಡಿದರು. ಬಳಿಕ ಪ್ರತಿಕ್ರಿಯಿಸಿದ ನೀರು ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ, ‘ಇದುವರೆವಿಗೂ 26,591 ಹಳ್ಳಿಗಳ ಪೈಕಿ 24,558 ಹಳ್ಳಿಗಳಲ್ಲಿ ಒದಗಿಸಲಾಗುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸಾರ್ವಜನಿಕರಿಗೆ ತಾವು ಕುಡಿಯುತ್ತಿರುವ ನೀರಿನ ಸುರಕ್ಷತೆಯನ್ನು ಸ್ವತಃ ಅವರೇ ಖಾತ್ರಿ ಪಡಿಸಿಕೊಳ್ಳಬಹುದಾದ ವರದಿ ನೀಡುವ ಕ್ಯೂ ಆರ್ ಕೋಡ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ, ಹಾಗೂ ನೀರಿನ ಟ್ಯಾಂಕ್ಗಳನ್ನು ಜನರ ಸಮ್ಮುಖದಲ್ಲಿಯೇ ಸ್ವಚ್ಛ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಜನರು ಕುಡಿಯು ನೀರಿನ ಪರೀಕ್ಷೆಯು ನೂರಕ್ಕೆ ನೂರಷ್ಟು ಆಗಲೇಬೇಕು. ಹಾಗೆಯೇ ಕೆಲದಿನಗಳಲ್ಲೇ ಬೇಸಿಗೆ ಬರಲಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಶಾಲಿನಿ ರಜನೀಶ್ ಸೂಚಿಸಿದರು. ಕೇಂದ್ರ ಜಲಶಕ್ತಿ ಸಚಿವಾಲಯದ ಹಿರಿಯ ಅಧಿಕಾರಿ ಅಂಕಿತಾ ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿ, ಕೇಂದ್ರ ಸರಕಾರದಿಂದ ಜಲ ಜೀವನ ಮಿಷನ್ ಅಡಿ ಆಗಿರುವ ಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿ ಅವರಿಗೆ ಮಾಹಿತಿಯನ್ನು ನೀಡಿದರು. ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಉತ್ತಮವಾಗಿ ಅನುಷ್ಟಾನ ಗೊಳಿಸುತ್ತಿರುವುದರಿಂದ ಕೇಂದ್ರದಿಂದ ಬರಬೇಕಾದ ಅನುದಾನವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಿಸಬೇಕೆಂದು ಶಾಲಿನಿ ರಜನೀಶ್, ಕೇಂದ್ರ ಸರಕಾರದ ಅಧಿಕಾರಿಗೆ ಮನವಿ ಮಾಡಿದರು. ನೀರು ಸರಬರಾಜು ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡುವ ಸಲುವಾಗಿ ಪರಿಚಯಿಸಿಲಾಗಿರುವ ಜಲ ಸೇವಾ ಅಂಕಲನ್ ಅನ್ನು ರಾಜ್ಯದಲ್ಲಿ ಒಟ್ಟು 870 ಗ್ರಾ.ಪಂ.ತಿಗಳಲ್ಲಿ ಅಳವಡಿಸಲಾಗಿದ್ದು, ಅವುಗಳಲ್ಲಿ 855 ಗ್ರಾ. ಪಂ.ಗಳಲ್ಲಿ ಮೌಲ್ಯಮಾಪನವನ್ನು ಪೂರ್ಣಗೊಳಿಸಲಾಗಿದ್ದು, ಉಳಿದ 15 ಗ್ರಾ.ಪಂ.ಗಳಲ್ಲಿ ಪ್ರಗತಿಯಲ್ಲಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಕೊಟ್ಟೂರು | ಮಹಾವಿದ್ಯಾಲಯದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಕೊಟ್ಟೂರು : ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿಯನ್ನು ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ರವಿಕುಮಾರ್ ಅವರು, ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ರಾಷ್ಟ್ರಪ್ರೇಮಿ ಹಾಗೂ ಶೂರ ಯೋಧರಾಗಿದ್ದು, ಅವರ ಜಯಂತಿಯನ್ನು ಆಚರಿಸುವುದರಿಂದ ಅವರು ನೀಡಿದ ಸೈನಿಕ ಹಾಗೂ ಆಡಳಿತಾತ್ಮಕ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶಿವಾಜಿ ಮಹಾರಾಜರ ಚರಿತ್ರೆಯನ್ನು ಓದಿ ಅವರ ಆದರ್ಶ ವ್ಯಕ್ತಿತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಂತರ ವಿಶೇಷ ಉಪನ್ಯಾಸ ನೀಡಿದ ಎಸ್.ಜಿ.ಎಸ್. ಸರ್ಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಸಕ್ರಪ್ಪ ರಡ್ಡಿ ಅವರು, ಶಿವಾಜಿ ಮಹಾರಾಜರು ದೇಶಭಕ್ತಿಯ ಪ್ರತೀಕವಾಗಿದ್ದು, ಅವರ ಜೀವನ ಚರಿತ್ರೆ, ಸೈನಿಕ ಸಾಧನೆಗಳು ಹಾಗೂ ಆಡಳಿತಾತ್ಮಕ ಸುಧಾರಣೆಗಳು ಇಂದಿಗೂ ಪ್ರೇರಣಾದಾಯಕವಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಡಾ.ಶಿವಕುಮಾರ್ (ದೈಹಿಕ ಶಿಕ್ಷಣ ನಿರ್ದೇಶಕರು), ರಶ್ಮಿ, ಚಂದ್ರಕಾಂತ್, ವಿ. ಕೊಟ್ರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸಿಂಧು ನೆರವೇರಿಸಿದರೆ, ಪ್ರಾರ್ಥನೆಯನ್ನು ಕುಮಾರಿ ಭಾರತಿ ನಡೆಸಿದರು. ಇತಿಹಾಸ ಉಪನ್ಯಾಸಕರಾದ ಶಿವಪ್ರಕಾಶ್ ಅವರು ಸ್ವಾಗತಿಸಿ ವಂದಿಸಿದರು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಿಬಿಎ ಸದಸ್ಯರ ಸಂಖ್ಯೆ ಹೆಚ್ಚಿಸಿ ಪರಿಷ್ಕೃತ ಆದೇಶ ಹೊರಡಿಸಿದ ಸರಕಾರ
ಬೆಂಗಳೂರು : ರಾಜ್ಯ ಸರಕಾರವು ಹಿಂದೆ ಹೊರಡಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆ ಆದೇಶವನ್ನು ಪರಿಷ್ಕರಣೆ ಮಾಡಿದ್ದು, ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಿ ಹೊಸ ಆದೇಶವನ್ನು ಹೊರಡಿಸಿದೆ. 2025ರ ಆ.26ರಂದು ಹೊರಡಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆಯ ಆದೇಶದಲ್ಲಿ ವಿಧಾನ ಸಭೆಯ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು, ಅಧಿಕಾರಿಗಳು ಸೇರಿ 73 ಪದನಿಮಿತ್ತ ಸದಸ್ಯರಿದ್ದರು. ಈಗ ಪರಿಷ್ಕೃತ ಆದೇಶದಲ್ಲಿ 84 ಮಂದಿ ಪದನಿಮಿತ್ತ ಸದಸ್ಯರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಾಧ್ಯಕ್ಷರಾಗಿದ್ದಾರೆ.
ರೈತರ ಕೃಷಿ ಚಟುವಟಿಕೆಗಳಿಗಾಗಿ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ : ಸಂತೋಷ್ ಲಾಡ್
ಧಾರವಾಡ : ಬೇಸಿಗೆ ಆರಂಭವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಹೆಸ್ಕಾಂ ಸಂಸ್ಥೆಯವರು ಕ್ರಮ ವಹಿಸಬೇಕು. ಸರಕಾರದ ನಿಯಮದಂತೆ ಕೃಷಿ ಪಂಪ್ಸೆಟ್ಗಳಿಗೆ ಪ್ರತಿದಿನ 7 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ರೈತರಿಗೆ ಅನುಕೂಲವಾಗುವಂತೆ, ಆದಷ್ಟೂ ಹಗಲು ಅಥವಾ ಸಂಜೆ ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ಶುಕ್ರವಾರ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಹೆಸ್ಕಾಂ ಸಂಸ್ಥೆಯ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಬೇಸಿಗೆ ಅವಧಿಯ ವಿದ್ಯುತ್ ಪೂರೈಕೆ ಸಿದ್ದತೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 67 ಕೃಷಿ ವಿದ್ಯುತ್ ಫೀಡರ್ಗಳಿವೆ. ಇದರಲ್ಲಿ 41 ಫೀಡರ್ಗಳಿಂದ ಬೆಳಗ್ಗೆ 7 ರಿಂದ ಸಂಜೆ 4 ಗಂಟೆಯೊಳಗೆ, 12 ಫೀಡರ್ಗಳಿಗೆ ಸಂಜೆ 6 ರಿಂದ ರಾತ್ರಿ 9 ಗಂಟೆ ಹಾಗೂ ರಾತ್ರಿ 10 ರಿಂದ ಮಧ್ಯರಾತ್ರಿ 1 ಗಂಟೆಯೊಳಗೆ ಮತ್ತು 8 ಫೀಡರ್ಗಳಿಂದ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮತ್ತು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಹೀಗೆ ನಿಗದಿತ ಫೀಡರ್ಗಳಿಂದ ವಿವಿಧ ಅವಧಿಯಲ್ಲಿ ಒಟ್ಟು 7 ತಾಸು ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು. ಹಿಂಗಾರು ಗೋಧಿ, ಭತ್ತ, ಕಬ್ಬು ಬೆಳೆಗಳಿಗೆ ಹೆಚ್ಚು ನೀರಿನ ಅಗತ್ಯವಿದ್ದು, ರೈತರು ನೀರಾವರಿಗಾಗಿ ಕೊಳವೆ ಬಾವಿಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಕಲಘಟಗಿ, ಅಳ್ನಾವರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ತಡ ರಾತ್ರಿ ವಿದ್ಯುತ್ ನೀಡುವುದರಿಂದ ನೀರು ಹಾಯಿಸಲು ತೊಂದರೆಯಾಗುತ್ತಿದೆ ಎಂದು ರೈತರು ಕರೆ ಮಾಡಿ, ಸಮಸ್ಯೆ ಹೇಳುತ್ತಿದ್ದಾರೆ ಎಂದು ಸಂತೋಷ್ ಲಾಡ್ ತಿಳಿಸಿದರು. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ಪಾಳಿ ಆಧಾರದಲ್ಲಿ ಮಾಡಿದರೂ ಪರವಾಗಿಲ್ಲ, ಆದರೆ ತೀರಾ ಮಧ್ಯರಾತ್ರಿ ವಿದ್ಯುತ್ ಪೂರೈಸಿದರೆ, ರಾತ್ರಿ ಹೊತ್ತಲ್ಲಿ ರೈತರಿಗೆ ತೊಂದರೆ ಆಗುತ್ತದೆ. ಇದನ್ನು ಪರಿಶೀಲಿಸಿ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು. ಅತೀ ಹೆಚ್ಚು ಸಮಸ್ಯೆ ಉಂಟಾಗುತ್ತಿರುವ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರವನ್ನು ಉನ್ನತಿಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳು, ಹೆಸ್ಕಾಂ ಅಧಿಕಾರಿ, ಇಂಜನೀಯರ್ಗಳೊಂದಿಗೆ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸಲು ಸಚಿವರು ಸೂಚಿಸಿದರು. ನಿಗದಿ ಮತ್ತು ಅರಳಿಕಟ್ಟಿ ಕ್ರಾಸ್, ಬಮ್ಮಿಗಟ್ಟಿ ಸೇರಿ ಮೂರು ಗ್ರಾಮಗಳಿಗೆ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರಕಾರದಿಂದ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಟೆಂಡರ್, ಗುತ್ತಿಗೆದಾರ ಸಮಸ್ಯೆಗಳಿಂದ ವಿಳಂಬವಾಗುತ್ತಿದೆ ಎಂದು ಹೇಳಿದ ಸಂತೋಷ್ ಲಾಡ್, ಕೆಪಿಟಿಸಿಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣೆ ಬಗ್ಗೆ ಸರಿಯಾದ ಕ್ರಮ ವಹಿಸಬೇಕು. ಕಾಮಗಾರಿಗಳನ್ನು ತೀವ್ರಗೊಳಿಸಿ, ಬೇಗ ಮುಗಿಸಬೇಕು. ರೈತರು ಟಿಸಿ ಬಯಸಿದಲ್ಲಿ ಬೇಗನೆ ಪೂರೈಸಬೇಕು. ಅಗತ್ಯಗಳಿಗೆ ಅನುಗುಣವಾಗಿ ಟಿಸಿಗಳ ಹೆಚ್ಚು ದಾಸ್ತಾನು ಹೊಂದಬೇಕು ಎಂದು ತಿಳಿಸಿದರು. ಹೆಸ್ಕಾಂ ಅಧ್ಯಕ್ಷ ಸೈಯದ್ ಅಝೀಮ್ ಪೀರ್ ಎಸ್.ಖಾದ್ರಿ, ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ವೇದಿಕೆಯಲ್ಲಿ ಇದ್ದರು.
ಕೊಟ್ಟೂರು | ಕವಿ ಸರ್ವಜ್ಞ ಜಯಂತಿ ಆಚರಣೆ
ಕೊಟ್ಟೂರು: ನಗರದ ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಕವಿ ಸರ್ವಜ್ಞ ಜಯಂತಿಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಮರೇಶ್ ಜಿ.ಕೆ., ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಕೊಟ್ರೇಶಪ್ಪ, ಹೆಚ್ ಜಿ, ಮುಖಂಡರಾದ ವಿರೇಶ ಸಿ., ನಾಗರಾಜ ಕೆ., ಕೊಟ್ರೇಶ್ ಸಿ, ಮೂಗಣ್ಣ ಸಿ., ಶಾಂತಲಿಂಗಪ್ಪ ಸಿ., ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಗ್ರಾ.ಆ.ಅ ಶರಣಪ್ಪ, ರಮೇಶ, ಸಿದ್ದೇಶ, ಹರೀಶ್, ಭೂಮಾಪನ ಸೂಪರ್ವೈಜರ್ ಬಸವರಾಜ, ಭೂಮಾಪಕ ಭರಮಣ್ಣ, ಗುರುಬಸವರಾಜ ಹಾಗೂ ಇತರರು ಉಪಸ್ಥಿತರಿದ್ದರು.
ನಟರಾಜ್ ಗೌಡ ಅವರಿಗೆ ಸಚಿವ ಸ್ಥಾನಮಾನ ನೀಡಿದ ರಾಜ್ಯ ಸರಕಾರ
ಬೆಂಗಳೂರು : ರಾಜ್ಯ ಸರಕಾರವು ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಎನ್. ನಟರಾಜ್ ಗೌಡ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನವನ್ನು ನೀಡಿ ಆದೇಶಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿನಿಯಮ/ನಿಯಮಗಳು ತಕ್ಷಣದಿಂದ ಅಧ್ಯಕ್ಷರಿಗೆ ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸಿ, ರಾಜ್ಯ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಎಂದು ಆಡಳಿತ ಇಲಾಖೆಗೆ ಸೂಚಿಸಿದೆ.
ಮರಳು ದಂಧೆ ಬಗ್ಗೆ ಸಚಿವ ಪರಮೇಶ್ವರ್ ಅಸಹಾಯಕತೆ: ಉತ್ತರಿಸಲು ಸರಕಾರಕ್ಕೆ 4 ವಾರದ ಗಡುವು ನೀಡಿದ ಹೈಕೋರ್ಟ್
Sand Mafia In Karnataka- ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ನೀಡಿರುವ ಹೇಳಿಕೆಯನ್ನು ಕರ್ನಾಟಕ ಹೈಕೋರ್ಟ್ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮರಳು ಮರಳು ಗಣಿಗಾರಿಕೆ ತಡೆಗೆ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಉತ್ತರಿಸಲು 4 ವಾರಗಳ ಗಡುವನ್ನು ನೀಡಿದೆ. ಸಚಿವ ಪರಮೇಶ್ವರ ಅವರ ಹೇಳಿಕೆಯ ಬಗ್ಗೆ ಮಾಧ್ಯಮ ವರದಿಗಳನ್ನು ಆಧರಿಸಿ ನ್ಯಾಯಾಲಯವೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ ವಿಚಾರಣೆಗೆ ಮುಂದಾಗಿದೆ.
Ballari | ಸ್ವಾಗತ ಫಲಕ ಕಳಚಿ ಬಿದ್ದು ಕಾರ್ಮಿಕ ಮೃತ್ಯು, ಇಬ್ಬರಿಗೆ ಗಾಯ
ಬಳ್ಳಾರಿ / ಕಂಪ್ಲಿ : ಕೋಟೆಯ ತುಂಗಭದ್ರಾ ನದಿ ಸೇತುವೆ ದ್ವಾರದಲ್ಲಿ ಕಬ್ಬಿಣದ ಸ್ವಾಗತ ಫಲಕವನ್ನು ಕ್ರೇನ್ನಿಂದ ಅಳವಡಿಸುವ ವೇಳೆ ಫಲಕ ಕಳಚಿ ಬಿದ್ದು ಒರ್ವ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ. ಪಟ್ಟಣದ 4ನೇ ವಾರ್ಡ್ ನಿವಾಸಿ, ವೆಲ್ಡಿಂಗ್ ಲೇಬರ್ ಶೆಕ್ಷಾ (35) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡ ಅವರನ್ನು ತಕ್ಷಣ ಕಂಪ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಗಂಗಾವತಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಇನಾಯತ್ (32) ಅವರಿಗೆ ಗಂಭೀರ ಗಾಯಗಳಾಗಿದ್ದು, ಕರೀಮ್ (21) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಿಐ ಕೆ.ಬಿ. ವಾಸುಕುಮಾರ್ ಹಾಗೂ ಪಿಎಸ್ಐ ಅವಿನಾಶ್ ಕಾಂಬ್ಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಬಮೂಲ್ನಿಂದ ಜಿಪಿಎಸ್ ಸೌಲಭ್ಯಯುಳ್ಳ ಇ-ಹಾಲು ಡೆಲಿವರಿ ವಾಹನ ಪರಿಚಯ
ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಕಾಪಾಡುವ ಜೊತೆಗೆ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಲು ಬೆಂಗಳೂರು ಸಹಕಾರ ಹಾಲು ಒಕ್ಕೂಟವು (ಬಮೂಲ್) ಮಹತ್ವದ ಕ್ರಮ ಕೈಗೊಂಡಿದೆ. ಬಮೂಲ್ ಕೇಂದ್ರ ಕಚೇರಿಯಲ್ಲಿ ಇ-ಹಾಲು ಡೆಲಿವರಿ ವಾಹನಗಳ (EV) ಮಾದರಿಯನ್ನು ಪರೀಕ್ಷಾರ್ಥವಾಗಿ ಪರಿಶೀಲಿಸಲಾಗಿದ್ದು, ಶೀಘ್ರದಲ್ಲೇ ಹಂತ ಹಂತವಾಗಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಅಧಿಕೃತ ಮಾರಾಟಗಾರರಿಗೆ ಹಾಲು ಮತ್ತು ಹಾಲಿನ
ಕಂಪ್ಲಿ | ಶಾಸಕರ ನಿವಾಸದ ಮುಂದೆ ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ
ಬಳ್ಳಾರಿ / ಕಂಪ್ಲಿ : ಬೇರೆ ಬೇರೆ ಜನಾಂಗದವರು ವಾಲ್ಮೀಕಿ ನಾಯಕ ಸಮಾಜದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದನ್ನು ತಡೆಯುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದ ಸದಸ್ಯರು ಕಂಪ್ಲಿ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕ ಜೆ.ಎನ್. ಗಣೇಶ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮಾರೆಪ್ಪ ನಾಯಕ ಮಗದಂಪೂರ ಅವರು, ಎಸ್ಸಿ-ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ್ ಡಿ. ನಾಯಕ ಹಾಗೂ ಇತರ ಮುಖಂಡರು, ಹಿಂದುಳಿದ ಪ್ರವರ್ಗ-1ರಲ್ಲಿ ಬರುವ ಕೋಲಿ/ಕಬ್ಬಿಲಿಗ ಜನಾಂಗದ ತಳವಾರರು ಪರಿಶಿಷ್ಟ ಪಂಗಡದ ನಾಯಕ, ನಾಯ್ಕಡ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದನ್ನು ತಕ್ಷಣ ತಡೆಯಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ 13777/2023ರ ಮಧ್ಯಂತರ ಆದೇಶದಂತೆ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರು ಮತ್ತು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಪ್ರೋತ್ಸಾಹಧನ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ವೇತನ ಮತ್ತು ವಸತಿ ಭತ್ಯೆ ತಕ್ಷಣ ಬಿಡುಗಡೆ ಮಾಡಬೇಕೆಂದು ಬೇಡಿಕೆ ಸಲ್ಲಿಸಿದರು. ಇದೇ ವೇಳೆ, ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಗೆ 15 ಸಾವಿರ ಕೋಟಿ ರೂ. ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ 1,000 ಕೋಟಿ ರೂ. ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಶಾಸಕ ಜೆ.ಎನ್. ಗಣೇಶ್ ಅವರು ದೂರವಾಣಿಯಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಹಾಜರಾಗಲು ಸಾಧ್ಯವಾಗಿಲ್ಲ. ಮನವಿ ಪತ್ರವನ್ನು ತಮ್ಮ ಆಪ್ತರ ಮೂಲಕ ಸ್ವೀಕರಿಸಿ ಸಂಬಂಧಿತ ಸಚಿವರು ಹಾಗೂ ಶಾಸಕರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಶಾಸಕರ ಆಪ್ತರಾದ ಕೆ.ಶಣ್ಮುಖ ಮತ್ತು ನಾಗರಾಜ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಕಂಪ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರಕ್ಕೆ ನೆದರ್ಲ್ಯಾಂಡ್ನ ಪ್ರಧಾನಿ ಮೆಚ್ಚುಗೆ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ನಿರ್ವಹಣೆಗಾಗಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಸಂಯೋಜಿಸಿರುವ ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರಕ್ಕೆ ನೆದರ್ಲ್ಯಾಂಡ್ ನ ಪ್ರಧಾನಿ ಡಿಕ್ ಸ್ಕೂಫ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಶುಕ್ರವಾರ ಇಲ್ಲಿನ ಟಿಎಂಸಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ವಿಶ್ಲೇಷಿಸಲು ಮತ್ತು ನಿರ್ವಹಿಸಲು ತಂತ್ರಜ್ಞಾನ ಆಧಾರಿತ ವಿಧಾನವಾದ ಅಸ್ತ್ರಂನ ಬಳಕೆ ಹಾಗೂ ಅದರ ಪ್ರಗತಿಯ ಕುರಿತು ಮಾಹಿತಿ ಪಡೆದರು. ಸುರಕ್ಷಿತ ಸಂಚಾರಕ್ಕಾಗಿ ಪೊಲೀಸರು ಬಳಸುತ್ತಿರುವ ಎಐ ಕ್ಯಾಮೆರಾಗಳು, ರಿಯಲ್-ಟೈಮ್ ಟ್ರಾಫಿಕ್ ಮಾನಿಟರಿಂಗ್ ಮತ್ತು ಅಡ್ವಾನ್ಸ್ಡ್ ಸಿಗ್ನಲ್ ಸಿಸ್ಟಮ್ಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ತಂತ್ರಜ್ಞಾನದ ಮೂಲಕ ಸಂಚಾರ ವ್ಯವಸ್ಥೆಯನ್ನು ಹೇಗೆ ಸುಧಾರಿಸಲಾಗುತ್ತಿದೆ ಎಂಬುದನ್ನು ಅವರು ವೀಕ್ಷಿಸಿದರು. ಇದೇ ವೇಳೆ ಸಂಚಾರ ಪೊಲೀಸ್ ಅಧಿಕಾರಿಗಳು, ಅಸ್ತ್ರಂ ವ್ಯವಸ್ಥೆಯು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದ್ದು, ಇತರ ನಗರಗಳ ಪೊಲೀಸ್ ಇಲಾಖೆಗಳೂ ಸಹ ಇದನ್ನ ಅಳವಡಿಸಿಕೊಳ್ಳಲು ಬಯಸುತ್ತಿವೆ. ಇತ್ತೀಚೆಗೆ ಹೈದರಾಬಾದ್ ಸಹ ಈ ತಂತ್ರಜ್ಞಾನವನ್ನು ಬಯಸಿದ್ದು, ಅಸ್ತ್ರಂನ ಒಂದು ಸಣ್ಣ ಭಾಗವನ್ನು ತನ್ನ ಪೊಲೀಸ್ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ತಾಂತ್ರಿಕ ಏಕೀಕರಣದ ಬಗ್ಗೆ ತಿಳಿದುಕೊಳ್ಳಲು ಹೊಸದಿಲ್ಲಿ ಪೊಲೀಸರು ಸಹ TMC ಬೇಟಿ ನೀಡಿದ್ದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೆÇಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಗಾಂಧಿ ಪ್ರತಿಮೆ ಮುಂದೆ ಪತ್ರಕರ್ತರ ಮೌನ ಪ್ರತಿಭಟನೆ
ಬೆಂಗಳೂರು : ವಿಧಾನಸೌಧದಲ್ಲಿ ಮೀಸಲಿಟ್ಟ ಜಾಗದಲ್ಲಿ ಮಾತ್ರ ಮಾಧ್ಯಮ ಪ್ರತಿನಿಧಿಗಳು ಹೇಳಿಕೆಗಳನ್ನು ಪಡೆಯಬೇಕು ಎಂದು ಸೂಚಿಸಿರುವ ‘ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ’ (ಡಿಪಿಎಆರ್) ಆದೇಶವನ್ನು ವಿರೋಧಿಸಿ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧ-ವಿಕಾಸಸೌಧದಲ್ಲಿ ಮಧ್ಯೆದಲ್ಲಿರುವ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸಿದರು. ಶುಕ್ರವಾರ ಬೆಳಗ್ಗೆ ಇಲ್ಲಿನ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪತ್ರಕರ್ತರು, ಕಪ್ಪು ಬಟ್ಟೆ ಹಾಗೂ ಮುಖಕ್ಕೆ ಕಪ್ಪು ಮಾಸ್ಕ್ ಧರಿಸಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಹೊಸ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದರು. ಶಾಂತಿಯುತ ಪ್ರತಿರೋಧದ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಲು, ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಪಾರದರ್ಶಕ ಹಾಗೂ ಸ್ವತಂತ್ರ ಪತ್ರಿಕೋದ್ಯಮಕ್ಕೆ ಅಡ್ಡಿಯಾಗುವ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಯಿತು. ಪ್ರತಿಭಟನೆ ವಿಚಾರ ತಿಳಿದು ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಸಿಎಂ ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮನವಿ ಪತ್ರ ಸ್ವೀಕರಿಸಿ, ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ರದಲ್ಲಿ ಏನಿದೆ?: ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಬರೆದಿರುವ ಪತ್ರದಲ್ಲಿನ ಕೋರಿಕೆಯ ಮೇರೆಗೆ ವಾರ್ತಾ ಮತ್ತು ಪ್ರಚಾರ ಇಲಾಖೆಯು ಶಿಫಾರಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಡಿಪಿಎಆರ್(ಕಾರ್ಯಕಾರಿ) ಗುರುತಿನ ಚೀಟಿ ವಿತರಿಸುತ್ತಿದೆ. ಈ ಗುರುತಿನ ಚೀಟಿ ಹೊಂದಿರುವ ಎಲ್ಲ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳು, ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೊ ಬಳಿ ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರ ಹೇಳಿಕೆಗಳನ್ನು(ಬೈಟ್) ಪಡೆದುಕೊಳ್ಳಬೇಕು. ವಿಧಾನಸೌಧದ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ಹೇಳಿಕೆಯನ್ನು ತೆಗೆದುಕೊಳ್ಳಲು, ಸಂದರ್ಶನ ನಡೆಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಗಣ್ಯರನ್ನು ಹಿಂಬಾಲಿಸದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪತ್ರದಲ್ಲಿ ಡಿಪಿಎಆರ್ ಕಾರ್ಯದರ್ಶಿ ತಿಳಿಸಿದ್ದಾರೆ.
ಬೆಂಗಳೂರು: ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಮಾಣೀಕೃತ ಕಾರ್ಯವಿಧಾನದ (ಎಸ್ಒಪಿ) ಪ್ರಮುಖ ಅಂಶಗಳನ್ನು ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯಲ್ಲಿ ಸೇರ್ಪಡೆ ಮಾಡುವ ಸಲಹೆ ಕುರಿತು ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ಇದಕ್ಕೂ ಮುನ್ನ ಪ್ರಕರಣ ಅಮೈಕಸ್ ಕ್ಯೂರಿಯಾದ ಹಿರಿಯ ವಕೀಲೆ ಎಸ್. ಸುಶೀಲಾ ಅವರು, 2025ರ ಸೆಪ್ಟೆಂಬರ್ 1ರಂದು ರಾಜ್ಯ ಸರ್ಕಾರ ಎಸ್ಒಪಿ ರೂಪಿಸಿದ್ದು, ನಮಗೆ ಸಲಹೆ ನೀಡಲು ಕೋರಲಾಗಿತ್ತು. ಅದರಂತೆ, ನವೆಂಬರ್ 3ರಂದು ನಾವು ನಮ್ಮ ಸಲಹೆ ನೀಡಿದ್ದೇವೆ. ನವೆಂಬರ್ 26ರಂದು ಮತ್ತೆ ಹೆಚ್ಚುವರಿಯಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇದೆಲ್ಲವನ್ನೂ ಅಡಕಗೊಳಿಸಿ 2026 ಜನವರಿ 13ರಂದು ರಾಜ್ಯ ಸರ್ಕಾರ ಪರಿಷ್ಕೃತ ಎಸ್ಒಪಿ ರೂಪಿಸಿದೆ. ಈ ಮಧ್ಯೆ, 2025ರ ಆಗಸ್ಟ್ 20ರಂದು ರಾಜ್ಯ ಸರ್ಕಾರ ಜನಸಂದಣಿ ನಿಯಂತ್ರಣಕ್ಕೆ ಮಸೂದೆ ರೂಪಿಸಿದ್ದು, ಅದು ಸದನ ಸಮಿತಿಯ ಪರಿಗಣನೆಯಲ್ಲಿದೆ. ಮಸೂದೆಗೆ ಹೋಲಿಕೆ ಮಾಡಿದರೆ ಎಸ್ಒಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಇಲ್ಲಿನ ಅಂಶಗಳನ್ನು ಅಲ್ಲಿ ಅಡಕಗೊಳಿಸಿದರೆ ಒಳ್ಳೆಯದು ಎಂದರು. ಮುಂದುವರಿದು, ಆರ್ಸಿಬಿಯು ಮುಂದಿನ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಇಲ್ಲಿ ನಡೆಸಲು ಬಯಸಿದೆ ಎನ್ನಲಾಗಿದೆ. ಅದಕ್ಕೂ ಮುನ್ನ ಎಸ್ಒಪಿಯನ್ನು ಜಾರಿಗೊಳಿಸಬೇಕು. ಏನಾಗುತ್ತದೆ ಎಂಬುದನ್ನು ಇಡೀ ದೇಶ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು. ಹಿರಿಯ ವಕೀಲ ಸಿ.ಕೆ. ನಂದಕುಮಾರ್ ಅವರು, ಎಸ್ಒಪಿ ಮತ್ತು ಕಾಯ್ದೆಯು ವಿಭಿನ್ನ ಉದ್ದೇಶಕ್ಕಾಗಿ ರೂಪಿಸಲಾಗಿದೆ. ಎಲ್ಲರೂ ಸಮಾನ ಉದ್ದೇಶಕ್ಕಾಗಿ ಕೆಲಸ ಮಾಡಬೇಕು ಎಂದರು. ಆಗ ನ್ಯಾಯಪೀಠ, ಎಸ್ಒಪಿಯಲ್ಲಿ ಸೂಚಿಸಿರುವ ಕೆಲವು ಕ್ರಮಗಳನ್ನು ಮಸೂದೆಯಲ್ಲಿ ಅಡಕಗೊಳಿಸಬೇಕು. ಒಂದೊಮ್ಮೆ ಮಸೂದೆ ಕಾಯ್ದೆಯಾದರೂ ಎಸ್ಒಪಿಯನ್ನು ಯಾವಾಗ ಬೇಕಾದರೂ ಜಾರಿಗೊಳಿಸಬಹುದು. ಹೇಗೆ ಮುನ್ನಡೆಯಲು ಬಯಸುತ್ತೀರಿ ಎಂದು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಸರ್ಕಾರದ ಪರ ಹಾಜರಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು, ಅಡ್ವೊಕೇಟ್ ಜನರಲ್ ಸೋಮವಾರ ವಿಚಾರಣೆಯಲ್ಲಿ ಭಾಗಿಯಾಗಲಿದ್ದು, ಕಾಲವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಎಸ್ಒಪಿಯ ಪ್ರಮುಖ ಅಂಶಗಳನ್ನು ಸೇರಿಸುವ ಸಲಹೆ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು. ಈ ಮಧ್ಯೆ, ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದನ್ನು ಸರಿಪಡಿಸುವ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ಪರಿಗಣಿಸಬೇಕು ಎಂದು ವಕೀಲ ರಮೇಶ್ ನಾಯ್ಕ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಪರಿಗಣಿಸಲು ನಿರಕಾರಿಸಿದ ಪೀಠ, ಮಧ್ಯಂತರ ಅರ್ಜಿ ವಜಾಗೊಳಿಸಿತು.
ಬೆಂಗಳೂರು : ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಪಿಐಎಲ್ ಸಂಬಂಧ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅಕ್ರಮ ಮರಳುಗಾರಿಗೆ ಒಂದು ದೊಡ್ಡ ದಂಧೆಯಾಗಿದ್ದು, ಬಲಾಢ್ಯರು ಮತ್ತು ಪ್ರಭಾವಿಗಳು ಇದರಲ್ಲಿ ಇದ್ದಾರೆ ಎಂದು ಅಕ್ರಮ ಮರಳು ಗಣಿಗಾರಿಕೆ ತಡೆಯುವ ವಿಚಾರದಲ್ಲಿ ಅಸಹಾಯಕತೆ ವ್ಯಕ್ತಪಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸಭೆ ಅಧಿವೇಶನದಲ್ಲಿ ನೀಡಿದ್ದ ಹೇಳಿಕೆ ಉಲ್ಲೇಖಿಸಿ ಜನವರಿ 28ರಂದು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದವು. ಮಾಧ್ಯಮಗಳ ವರದಿ ಆಧರಿಸಿ ಜನವರಿ 29ರಂದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳಲು ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶಿಸಿತ್ತು. ಅಲ್ಲದೇ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣಾ ವ್ಯಾಪ್ತಿ ಹೊಂದಿರುವ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಈ ಅರ್ಜಿ ಮಂಡಿಸುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಈ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು. ರಾಜ್ಯ ಸರ್ಕಾರದ ಪರ ವಕೀಲರು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಮತ್ತು ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿತು. ಗೃಹ ಸಚಿವರು ಏನು ಹೇಳಿದ್ದರು? ದೇವದುರ್ಗ ಕ್ಷೇತ್ರದ ಶಾಸಕಿ ಅವರಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವರು, ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅಕ್ರಮ ಮರಳು ಗಣಿಗಾರಿಕೆ ಒಂದು ದೊಡ್ಡ ದಂಧೆ. ಇದು ಸ್ವಲ್ಪ ಮುಜುಗರದ ಸಂಗತಿಯಾಗಿರುವುದರಿಂದ ನಾನು ಯಾವುದೇ ವಿವರಣೆಯನ್ನು ನೀಡುವುದಿಲ್ಲ ಅಥವಾ ಯಾರ ಹೆಸರನ್ನೂ ಹೇಳುವುದಿಲ್ಲ. ನಾನು ಸೀಮಿತವಾಗಿ ಉತ್ತರವನ್ನು ಮಾತ್ರ ನೀಡಿದ್ದೇನೆ. ಆದರೆ, ಇದು ಅನೇಕ ಪ್ರಭಾವಿ ಜನರನ್ನು ಒಳಗೊಂಡಿದೆ. ಈ ವಿಷಯವನ್ನು ಚರ್ಚಿಸಲು ನಾನು ಸಭೆ ಕರೆಯುತ್ತೇನೆ ಎಂದಿದ್ದರು. ಗೃಹ ಸಚಿವರೇ ಅಸಹಾಯಕರಾದರೆ ಭರವಸೆ ಉಳಿಯದು: ಗೃಹ ಸಚಿವರ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದ ವರದಿಗಳನ್ನು ಉಲ್ಲೇಖಿಸಿದ್ದ ಹೈಕೋರ್ಟ್, ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಎಲ್ಲ ಪಕ್ಷಗಳ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಗೃಹ ಸಚಿವರು ಸದನದಲ್ಲಿ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ಗೃಹ ಸಚಿವರು ಅಸಹಾಯಕತೆ ವ್ಯಕ್ತಪಡಿಸಿದ ಬಗ್ಗೆಯೂ ಮಾಧ್ಯಮಗಳು ವರದಿ ಮಾಡಿವೆ. ಮೈನಿಂಗ್ ಮಾಫಿಯಾಗೆ ಕಡಿವಾಣ ಹಾಕಲು ಈ ರೀತಿ ಒಬ್ಬ ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದರೆ, ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ರಾಜ್ಯದ ಆಡಳಿತ ಯಂತ್ರದಿಂದ ತಡೆಯಬಹುದು ಎಂಬ ನಿರೀಕ್ಷೆಯಿಲ್ಲ. ಇದೊಂದು ಗಂಭೀರ ವಿಷಯವಾಗಿದ್ದು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೇಂದ್ರ ತನಿಖಾ ದಳ ಅಥವಾ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಯಬೇಕಾಗಿದೆ ಎಂದು ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಜನವರಿ 29ರಂದು ಹೇಳಿತ್ತು.
Epstein files | ಸಂತ್ರಸ್ತರಿಗೆ 35 ದಶಲಕ್ಷ ಡಾಲರ್ ಪರಿಹಾರ ಪಾವತಿಸಲು ಎಪ್ಸ್ಟೀನ್ ಎಸ್ಟೇಟ್ ಒಪ್ಪಿಗೆ
ನ್ಯೂಯಾರ್ಕ್, ಫೆ.20: ಲೈಂಗಿಕ ಅಪರಾಧಿ ಜೆಫ್ರೀ ಎಪ್ಸ್ಟೀನ್ನ ಇಬ್ಬರು ಸಲಹೆಗಾರರು ಯುವತಿಯರು ಮತ್ತು ಹದಿಹರೆಯದ ಹುಡುಗಿಯರ ಲೈಂಗಿಕ ಕಳ್ಳಸಾಗಣೆಗೆ ಸಹಾಯ ಮತ್ತು ಉತ್ತೇಜನ ನೀಡುತ್ತಿದ್ದರು ಎಂದು ಆರೋಪಿಸಿ ದಾಖಲಿಸಲಾದ ಪ್ರಕರಣವನ್ನು ಇತ್ಯರ್ಥಗೊಳಿಸಲು ಸಂತ್ರಸ್ತರಿಗೆ 35 ದಶಲಕ್ಷ ಡಾಲರ್ ಪರಿಹಾರ ಪಾವತಿಸಲು ಜೆಫ್ರೀ ಎಪ್ಸ್ಟೀನ್ ಎಸ್ಟೇಟ್ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಎಪ್ಸ್ಟೀನ್ ಪ್ರಕರಣದ ಸಂತ್ರಸ್ತರನ್ನು ಪ್ರತಿನಿಧಿಸುವ ಕಾನೂನು ಸಂಸ್ಥೆ ಈ ಬಗ್ಗೆ ಗುರುವಾರ ಮಾಹಿತಿ ನೀಡಿದೆ. ಇದನ್ನು ನ್ಯಾಯಾಧೀಶರು ಅನುಮೋದಿಸಿದರೆ ಎಪ್ಸ್ಟೀನ್ ಎಸ್ಟೇಟ್ನ ಸಹ- ನಿರ್ವಾಹಕರಾದ, ಎಪ್ಸ್ಟೀನ್ನ ಮಾಜಿ ವಕೀಲ ಡ್ಯಾರೆನ್ ಇಂಡೈಕ್ ಮತ್ತು ಮಾಜಿ ಲೆಕ್ಕಪತ್ರಾಧಿಕಾರಿ ರಿಚರ್ಡ್ ಕಹ್ನ್ ವಿರುದ್ದ 2024ರಲ್ಲಿ ದಾಖಲಿಸಿರುವ ಮೊಕದ್ದಮೆ ಅಂತ್ಯಗೊಳ್ಳಲಿದೆ. 1995ರ ಜನವರಿ 1ರಿಂದ 2019ರ ಆಗಸ್ಟ್ 10ರವರೆಗೆ ಅಂದರೆ ಎಪ್ಸ್ಟೀನ್ ಜೈಲಿನಲ್ಲಿ ಮೃತಪಟ್ಟ ದಿನಾಂಕದವರೆಗೆ, ಆತನಿಂದ ಲೈಂಗಿಕ ದೌರ್ಜನ್ಯ, ಶೋಷಣೆ ಅಥವಾ ಮಾನವ ಕಳ್ಳಸಾಗಣೆಗೆ ಒಳಗಾದವರು ಈ ಪರಿಹಾರದ ವ್ಯಾಪ್ತಿಗೆ ಒಳಪಡಲಿದ್ದಾರೆ. 40 ಅಥವಾ ಅದಕ್ಕಿಂತ ಹೆಚ್ಚು ಮಂದಿ ಪರಿಹಾರ ಪಡೆಯಲು ಅರ್ಹರಿದ್ದರೆ ಎಪ್ಸ್ಟೀನ್ ಎಸ್ಟೇಟ್ ಅವರಿಗೆ 35 ಮಿಲಿಯನ್ ಡಾಲರ್ ಪಾವತಿಸಲಿದೆ. ಅರ್ಹರ ಸಂಖ್ಯೆ 40 ಕ್ಕಿಂತ ಕಡಿಮೆಯಿದ್ದರೆ 25 ಮಿಲಿಯನ್ ಡಾಲರ್ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಇತ್ಯರ್ಥಕ್ಕೆ ನ್ಯೂಯಾರ್ಕ್ ನ ಫೆಡರಲ್ ನ್ಯಾಯಾಧೀಶರಿಂದ ಅಂತಿಮ ಅನುಮೋದನೆ ದೊರಕಬೇಕಿದೆ. ಎಪ್ಸ್ಟೀನ್ ಎಸ್ಟೇಟ್ ನ ಸಹ-ಕಾರ್ಯನಿರ್ವಾಹಕರಾಗಿ ಎಪ್ಸ್ಟೀನ್ ನ ಮಾಜಿ ವಕೀಲ ಡ್ಯಾರೆನ್ ಇಂಡೈಕ್ ಹಾಗೂ ಮಾಜಿ ಲೆಕ್ಕಪರಿಶೋಧಕ ರಿಚರ್ಡ್ ಕಾನ್ ಕಾರ್ಯನಿರ್ವಹಿಸುತ್ತಿದ್ದಾರೆ. ಸಂತ್ರಸ್ತರನ್ನು ಪ್ರತಿನಿಧಿಸುತ್ತಿರುವ ಕಾನೂನು ಸಂಸ್ಥೆ ಬೋಯೀಸ್ ಷಿಲ್ಲರ್ ಫ್ಲೆಕ್ಸ್ನರ್ LLP, ಮೊಕದ್ದಮೆಯಲ್ಲಿ ಎಷ್ಟು ಮಂದಿ ಸೇರಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಆದರೆ ಬ್ಲೂಮ್ಬರ್ಗ್ ನ್ಯೂಸ್ ವರದಿ ಪ್ರಕಾರ, ಕನಿಷ್ಠ 40 ಮಂದಿ ಸಂತ್ರಸ್ತರಿದ್ದಾರೆ ಎನ್ನಲಾಗಿದೆ. ಎಪ್ಸ್ಟೀನ್ ವಿರುದ್ಧದ ತನಿಖೆಗೆ ಸಂಬಂಧಿಸಿದ ಲಕ್ಷಾಂತರ ದಾಖಲೆಗಳು, ಫೊಟೋಗಳು ಹಾಗೂ ವೀಡಿಯೊಗಳನ್ನು ಅಮೆರಿಕದ ನ್ಯಾಯ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ಇತ್ಯರ್ಥದ ಪ್ರಸ್ತಾವನೆಗೆ ಹೆಚ್ಚಿನ ಗಮನ ಸೆಳೆದಿದೆ. ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಪ್ಸ್ಟೀನ್ ಪ್ರಕರಣವು ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಮದುವೆಯಾಗಲು ಹೊರಟಿದ್ದ ಪ್ರೇಮಿಗಳ ಕಾರು ಹಿರೇಕೆರೂರಲ್ಲಿ ಪಲ್ಟಿ: ಮರ್ಯಾದೆಗಂಜಿ ಪ್ರೇಯಸಿ ಪರಾರಿ!
ಹಾವೇರಿ: ಇದು ಏನೋ ಮಾಡಲು ಇನ್ನೇನೋ ಆದ ಘಟನೆ. ಮದುವೆಯಾಗಲೆಂದು ಹೊರಟಿದ್ದ ಜೋಡಿಯ ಕಾರು ಅಪಘಾತಕ್ಕೀಡಾಗಿ ಹುಡುಗ ಆಸ್ಪತ್ರೆ ಸೇರಿದ್ದರೆ, ಹುಡುಗಿ ಮರ್ಯಾದೆಗಂಜಿ ಪರಾರಿಯಾಗಿದ್ದಾರೆ. ಹಾವೇರಿ ಜಿಲ್ಲೆಯಿಂದ ಹೀಗೊಂದು ಘಟನೆ ವರದಿಯಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮದುವೆಯಾಗಲು ಹೋಗುತ್ತಿದ್ದ ವೇಳೆ ಕಾರು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡು, ಯುವತಿ ಪರಾರಿಯಾದ ಘಟನೆ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ಗ್ರಾಮದ ಬಳಿ ನಡೆದಿದೆ. ಗಾಯಗೊಂಡ ಯುವಕ ಮತ್ತು ಆತನ ಇಬ್ಬರು ಸ್ನೇಹಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ಸ್ವಲ್ಪದರಲ್ಲಿಯೇ ಪಾರಾದ ಯುವತಿ ಮರ್ಯಾದೆಗಂಜಿ ಪರಾರಿಯಾಗಿದ್ದಾಳೆ ಘಟನೆ ವಿವರ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಹಿರೇಕೆರೂರು ತಾಲೂಕಿನ ಯುವತಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಪೋಷಕರ ಕಣ್ಣು ತಪ್ಪಿಸಿ ಮದುವೆಯಾಗುವ ಯೋಚನೆಯಲ್ಲಿದ್ದರು. ಕೆಲ ದಿನಗಳ ಹಿಂದೆ ಯುವತಿ ಜಾತ್ರೆಗೆಂದು ಊರಿಗೆ ಬಂದಿದ್ದಳು. ಈ ವೇಳೆ ಯುವತಿಯನ್ನು ಕರೆದುಕೊಂಡು ಹೋಗಿ ಮದುವೆ ಆಗುವ ತಯಾರಿಯಲ್ಲಿದ್ದ ಯುವಕ, ಇದಕ್ಕಾಗಿ ಇಬ್ಬರು ಸ್ನೇಹಿತರ ಜೊತೆಗೆ ಹಿರೇಕೆರೂರು ತಾಲೂಕಿಗೆ ಬಂದಿದ್ದರು.ಯುವಕನಿಗೆ ಆತ ಇಬ್ಬರು ಗೆಳೆಯರು ಸಾಥ್ ಕೊಟ್ಟಿದ್ದು, ಯುವತಿಯನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಯುವತಿಯ ಪೋಷಕರು ಹುಡುಕುತ್ತಾ ಬರಬಹುದು ಎಂಬ ಭಯದಲ್ಲಿ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಚನ್ನಹಳ್ಳಿ ತಾಂಡಾ ಬಳಿ ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ. ಯುವತಿ ಬೆಂಗಳೂರಿಗೆ ಅಪಘಾತದ ತೀವ್ರತೆಗೆ ಕಾರಿನೊಳಗಿದ್ದ ಮೂವರು ಯುವಕರಿಗೂ ಗಂಭೀರ ಗಾಯಗಳಾಗಿವೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವತಿ ಮಾತ್ರ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಕೆಗೆ ದೊಡ್ಡ ಮಟ್ಟಿನ ಗಾಯವಾಗಿರಲಿಲ್ಲ ಎಂದು ಹೇಳಲಾಗಿದೆ. ಊರ ಬಳಿಯೇ ಕಾರು ಪಲ್ಟಿಯಾದ ಕಾರಣ ರಕ್ಷಣೆಗೆ ಜನ ಸೇರಿದ್ದಾರೆ. ಸಹಜವಾಗಿಯೇ ಯಾರು ಏನು ಎತ್ತ ಎಂದು ವಿಚಾರಿಸತೊಡಗಿದ್ದಾರೆ. ಈ ವೇಳೆ ಪ್ರಿಯಕರ ಮತ್ತು ಅವರ ಉಳಿದ ಗೆಳೆಯರು ಆಸ್ಪತ್ರೆಯ ಕಡೆಗೆ ತೆರಳಿದರೆ ಯುವತಿ ಮಾತ್ರ ಮರ್ಯಾದೆಗೆ ಅಂಜಿ ಅಲ್ಲಿಂದ ಹೊರಡಲು ತೀರ್ಮಾನಿಸಿದರು. ಬಳಿಕ ಅವರಿವರ ಬಳಿ ಡ್ರಾಪ್ ಪಡೆದು ಬೆಂಗಳೂರಿಗೆ ತೆರಳುವ ಬಸ್ ಹಿಡಿದು ಮನೆ ಸೇರಿದ್ದಾಳೆ. ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನೀರ್ಕೆರೆ ಸೇತುವೆ ಕಾಮಗಾರಿ : ಸಂಪಿಗೆ-ಅಶ್ವತ್ಥಪುರ ವಾಹನ ಸಂಚಾರ ನಿರ್ಬಂಧ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಸಂಪಿಗೆ–ಅಶ್ವತ್ಥಪುರ–ನೀರ್ಕೆರೆ–ಮಂಜನಕಟ್ಟೆ ರಸ್ತೆಯಲ್ಲಿರುವ ನೀರ್ಕೆರೆ ಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಎಲ್ಲಾ ತರದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸುಮಾರು ರೂ.9.90 ಕೋಟಿ ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರದ ಸುಗಮತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್ಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುತ್ತದೆ. ನಿಯಮ ಉಲ್ಲಂಘಿ ಸುವವರ ವಿರುದ್ಧ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ಸೆಕ್ಷನ್ 198(ಎ) ಅನ್ವಯ ಕ್ರಮ ಕೈಗೊಳ್ಳಲಾ ಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪರ್ಯಾಯ ಮಾರ್ಗಗಳು:- ನೀರ್ಕೆರೆ–ಸಂಪಿಗೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ನೀರ್ಕೆರೆ–ಮುದಿಪು–ಮುಲ್ಕಿ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಬೇಕು. ಮಂಜನಕಟ್ಟೆ–ಅಶ್ವತ್ಥಾಪುರ ಭಾಗದ ವಾಹನಗಳು ಸಮೀಪದ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ. ಈ ಆದೇಶವು ಫೆಬ್ರವರಿ 23, 2026ರಿಂದ ಫೆಬ್ರವರಿ 22, 2028ರವರೆಗೆ, ಅಂದರೆ 24 ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟೆಕಾರು ಪ.ಪಂ ಸದಸ್ಯ ಸುಜಿತ್ ಮಾಡೂರು ಬಿಜೆಪಿಯಿಂದ ಉಚ್ಚಾಟನೆ
ಉಳ್ಳಾಲ: ಪಟ್ಟಣ ವ್ಯಾಪ್ತಿಯ ಬಡ ವಸತಿ ರಹಿತರಿಗೆ ನಿವೇಶನ ಹಂಚುವಂತೆ ಬಿಜೆಪಿ ಅಧಿಕಾರದ ಆಡಳಿತವನ್ನೇ ನಿರಂತರವಾಗಿ ಪ್ರಶ್ನಿಸಿ ಕೊನೆಗೆ ಅದೇ ವಿಚಾರದಲ್ಲಿ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಧರಣಿಯನ್ನೂ ನಡೆಸಿದ್ದ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಸುಜಿತ್ ಮಾಡೂರು ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಫೆ.19-ರಂದು ಹೊರಡಿಸಿದ ಆದೇಶದ ಪ್ರತಿಯಲ್ಲಿ ಸುಜಿತ್ ಮಾಡೂರು ಅವರು ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಆದೇಶದ ಪ್ರತಿಯು ನಿನ್ನೆಯೇ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಇಂದು ಮದ್ಯಾಹ್ನ ಸುಜಿತ್ ಮಾಡೂರು ಕೈ ಸೇರಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಕೋಟೆಕಾರು ಪ.ಪಂ ನಲ್ಲಿ ಸತತ ಎರಡನೇ ಭಾರಿ ಬಿಜೆಪಿಯು ಅಧಿಕಾರದ ಗದ್ದುಗೆ ಹಿಡಿದಿತ್ತು. ಪ್ರತೀ ತಿಂಗಳ ಸಾಮಾನ್ಯ ಸಭೆಯಲ್ಲಿ ಆಡಳಿತ ಬಿಜೆಪಿ ಪಕ್ಷದ ಕೌನ್ಸಿಲರ್ ಸುಜಿತ್ ಮಾಡೂರು ಅವರು ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಡ ನಿವೇಶನ ರಹಿತರ ಅರ್ಜಿಗಳ ವಿಲೇವಾರಿ ಮಾಡದಿರುವ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದ್ದರು. ಕಳೆದ ಜನವರಿ 29 ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಸುಜಿತ್ ಮಾಡೂರು ಅವರು ನಿವೇಶನ ರಹಿತರ ಅರ್ಜಿಗಳ ವಿಲೇವಾರಿ ಮಾಡದಿರುವ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತ ಪಡಿಸಿದ್ದಲ್ಲದೆ,ವಿಪಕ್ಷದವರ ಜತೆ ಸಾಮಾನ್ಯ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ಗ್ರಾಮಕರಣಿಕರಿಗೆ ಧಿಕ್ಕಾರ ಕೂಗಿದ್ದರು.
ಕೇರಳ ಸ್ಟೋರಿ-2 ಚಿತ್ರದ ವಿರುದ್ಧ ಟೀಕೆ: ವಿರೋಧಿಗಳಿಗೆ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ತಿರುಗೇಟು
ತಿರುವನಂತಪುರಂ: “ಇನ್ನೇನು ಬಿಡುಗಡೆಯಾಗಲಿರುವ ಕೇರಳ ಸ್ಟೋರಿ-2 ಚಲನಚಿತ್ರವು ಕೋಮು ವಿಭಜನೆಯನ್ನು ಪ್ರಚೋದಿಸುವ ಗುರಿ ಹೊಂದಿರುವ ದ್ವೇಷ ಕಾರುವ ಚಿತ್ರ” ಎಂದು ಹೇಳಿಕೆ ನೀಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಿರುಗೇಟು ನೀಡಿರುವ ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್, “ನಿಮ್ಮದು ಸೋಗಲಾಡಿತನ ಮತ್ತು ರಾಜಕೀಯ ವಿಮುಖತೆ” ಎಂದು ಆರೋಪಿಸಿದ್ದಾರೆ. ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಜೀವ್ ಚಂದ್ರಶೇಖರ್, “ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆಯ್ಕೆ ಮಾಡಿದಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯ ವಿರುದ್ಧದ ಚಲನಚಿತ್ರ ಬಿಡುಗಡೆಯಾದಾಗ ನಾವು ಪ್ರತಿಭಟಿಸಲಿಲ್ಲ. ಅವರು ಆಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ್ದರು. ಅವರ ರಾಜಕೀಯ ಚಿಂತನೆಗೆ ವಿರುದ್ಧವಾಗಿ ಯಾರಾದರೂ ಚಲನಚಿತ್ರ ಮಾಡಿದ ಕೂಡಲೇ ಅದು ಹೇಗೆ ಸಮಸ್ಯೆಯಾಗುತ್ತದೆ?” ಎಂದು ಪ್ರಶ್ನಿಸಿದ್ದಾರೆ. “ಎಡ ಪ್ರಜಾಸತ್ತಾತ್ಮಕ ರಂಗದ ಹತ್ತು ವರ್ಷಗಳ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಚಿತ್ರ ನಿರ್ಮಾಪಕರು ಹಾಗೂ ಪ್ರೇಕ್ಷಕರಿಗೆ ಸಮಾನ ಹಕ್ಕುಗಳಿದ್ದು, ಯಾರೂ ಕೂಡ ಮುಖ್ಯಮಂತ್ರಿಯನ್ನು ಸಮುದಾಯಗಳ ರಕ್ಷಕರನ್ನಾಗಿ ನೇಮಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ. “ಇಂದು ಪ್ರತಿಯೊಬ್ಬ ಭಾರತೀಯನಿಗೂ, ಪ್ರತಿಯೊಬ್ಬ ಮಲಯಾಳಿಗೂ ಒಂದೇ ಮೂಲಭೂತ ಹಕ್ಕುಗಳು ದೊರೆತಿವೆ. ಇದರಲ್ಲಿ ನಿಮಗೆ ಸಮಸ್ಯೆ ಕಂಡುಬಂದರೆ, ಅಥವಾ ಚಲನಚಿತ್ರದಲ್ಲಿ ಏನಾದರೂ ಕಾನೂನುಬಾಹಿರ ಅಂಶ ಕಂಡುಬಂದರೆ, ನ್ಯಾಯಾಲಯಕ್ಕೆ ಹೋಗಿ. ಆದರೆ ಜನರನ್ನು ಬೆದರಿಸಲು ಪ್ರಯತ್ನಿಸಬೇಡಿ. ಭಯವನ್ನು ಸೃಷ್ಟಿಸಲು ನಿಮ್ಮ ಮುಖ್ಯಮಂತ್ರಿ ಸ್ಥಾನವನ್ನು ಬಳಸಿಕೊಳ್ಳಬೇಡಿ. ಚಲನಚಿತ್ರ ಪ್ರದರ್ಶನಗೊಳ್ಳಲಿದೆ” ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ, ಗುರುವಾರ ಬೆಳಗ್ಗೆ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಎರಡನೇ ಭಾಗಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ಚಲನಚಿತ್ರವು ಧಾರ್ಮಿಕ ದ್ವೇಷವನ್ನು ಪ್ರಚೋದಿಸುತ್ತದೆ” ಎಂದು ಪುನರುಚ್ಚರಿಸಿದ್ದರು. ಈ ಚಿತ್ರವು ನಮ್ಮ ಜಾತ್ಯತೀತ ಹೆಣಿಗೆಗೆ ಧಕ್ಕೆ ತರುವ ಮತ್ತೊಂದು ಪ್ರಯತ್ನ ಎಂದು ಅವರು ದೂರಿದ್ದರು.
ಅಮೆರಿಕದ ಸಾಮ್ರಾಜ್ಯಶಾಹಿತ್ವ ಜಗತ್ತಿನಲ್ಲಿ ಅಶಾಂತಿ, ಹಸಿವಿಗೆ ಕಾರಣವಾಗುತ್ತಿದೆ: ಪ್ರೊ. ರಾಜೇಂದ್ರ ಉಡುಪ
► ಮಂಗಳೂರಿನಲ್ಲಿ ಕೆಂಪು ಪುಸ್ತಕ ದಿನಾಚರಣೆ ►ಯುಎಸ್ ಸಾಮ್ರಾಜ್ಯಶಾಹಿ-ಭಾರತದ ಜನತೆಯ ಶತ್ರು ಕೃತಿ ಬಿಡುಗಡೆ
ಇರಾನ್ನೊಂದಿಗೆ ಒಪ್ಪಂದ ಅಥವಾ ಮಿಲಿಟರಿ ಕಾರ್ಯಾಚರಣೆ ಬಗ್ಗೆ 10 ದಿನಗಳಲ್ಲಿ ಸ್ಪಷ್ಟವಾಗಲಿದೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಫೆ.20: ಇರಾನ್ ಒಪ್ಪಂದಕ್ಕೆ ಸಮ್ಮತಿಸುತ್ತದೆಯೇ ಅಥವಾ ಕೆಟ್ಟ ಸಂಗತಿ ಸಂಭವಿಸುತ್ತದೆಯೇ ಎಂಬುದನ್ನು 10 ದಿನಗಳಲ್ಲಿ ಜಗತ್ತು ನೋಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗುರುವಾರ ವಾಷಿಂಗ್ಟನ್ನಲ್ಲಿ ಶಾಂತಿ ಮಂಡಳಿ ಸಭೆಯಲ್ಲಿ ಮಾತನಾಡಿದ ಟ್ರಂಪ್ ಇರಾನ್ ಜೊತೆಗಿನ ಪರಮಾಣು ಮಾತುಕತೆಯನ್ನು ಉಲ್ಲೇಖಿಸಿದರು. ನಮ್ಮ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜರೆಡ್ ಕುಷ್ನರ್ ಇರಾನ್ನೊಂದಿಗೆ ಉತ್ತಮ ಸಭೆ ನಡೆಸಿದ್ದಾರೆ. ನಾವು ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಕೆಟ್ಟ ಸಂಗತಿಗಳು ಘಟಿಸಬಹುದು. ಬಹುಷಃ ಮುಂದಿನ 10 ದಿನಗಳಲ್ಲಿ ಈ ಎರಡರಲ್ಲಿ ಒಂದರ ಬಗ್ಗೆ ತೀರ್ಮಾನವಾಗಲಿದೆ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
ಅಮೆರಿಕ| ಟ್ರಂಪ್ ಸುಂಕಾಸ್ತ್ರದ ವಿರುದ್ಧ ತೀರ್ಪು ನೀಡಿದ ಸುಪ್ರೀಂಕೋರ್ಟ್
ವಾಷಿಂಗ್ಟನ್, ಫೆ.20: ಅಮೆರಿಕದ ಸುಪ್ರೀಂಕೋರ್ಟ್ ಅಧ್ಯಕ್ಷ ಟ್ರಂಪ್ ಅವರ ವ್ಯಾಪಕವಾದ ಜಾಗತಿಕ ಸುಂಕಗಳ ಕಾನೂನುಬದ್ಧತೆಯ ವಿರುದ್ಧ ತೀರ್ಪು ನೀಡಿದೆ ಮತ್ತು ಟ್ರಂಪ್ ಆಡಳಿತದ ಕ್ರಮವನ್ನು ಖಂಡಿಸಿರುವುದಾಗಿ ವರದಿಯಾಗಿದೆ. 1967ರ `ಇಂಟರ್ನ್ಯಾಷನಲ್ ಎಮರ್ಜೆನ್ಸಿ ಇಕನಾಮಿಕ್ ಪವರ್ ಆ್ಯಕ್ಟ್' ಅಧ್ಯಕ್ಷರಿಗೆ ತೆರಿಗೆ ವಿಧಿಸಲು ಅಧಿಕಾರ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ 6-3ರ ಬಹುಮತದ ತೀರ್ಪಿನಲ್ಲಿ ತಿಳಿಸಿದೆ.
ಗಾಝಾ ಶಾಂತಿ ಮಂಡಳಿ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಪಾಲ್ಗೊಂಡ ಭಾರತ
ವಾಷಿಂಗ್ಟನ್, ಫೆ.20: ವಾಷಿಂಗ್ಟನ್ನಲ್ಲಿ ಗುರುವಾರ ನಡೆದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಗಾಝಾ ಶಾಂತಿ ಮಂಡಳಿಯ ಉದ್ಘಾಟನಾ ಸಭೆಯಲ್ಲಿ ಭಾರತ ವೀಕ್ಷಕ ರಾಷ್ಟ್ರವಾಗಿ ಪಾಲ್ಗೊಂಡಿದೆ. ಸಭೆಯಲ್ಲಿ ಸುಮಾರು 50 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು ವಾಷಿಂಗ್ಟನ್ನಲ್ಲಿ ಭಾರತದ ರಾಯಭಾರಿ ಕಚೇರಿಯ ಉನ್ನತ ರಾಜತಾಂತ್ರಿಕ ಅಧಿಕಾರಿ ನಮ್ಗ್ಯಾ ಸಿ. ಖಂಪಾ ಅವರು ಭಾರತವನ್ನು ಪ್ರತಿನಿಧಿಸಿದ್ದರು. ದಾವೋಸ್ನಲ್ಲಿ ಜನವರಿ 22ರಂದು ಟ್ರಂಪ್ ಶಾಂತಿ ಮಂಡಳಿಗೆ ಅಧಿಕೃತವಾಗಿ ಚಾಲನೆ ನೀಡಿದ ಸಭೆಯಲ್ಲಿ ಭಾರತ ಪಾಲ್ಗೊಂಡಿರಲಿಲ್ಲ.
ಟಿ20 ವಿಶ್ವಕಪ್| ಅಭಿಷೇಕ್ರನ್ನು ತಂಡದಿಂದ ಕೈಬಿಡುವ ಬಗ್ಗೆ ಚರ್ಚೆ ನಡೆದಿಲ್ಲ: ಕೋಚ್
ಹೊಸದಿಲ್ಲಿ, ಫೆ. 20: ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಭಾರತೀಯ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕಳಪೆ ಫಾರ್ಮ್ನಲ್ಲಿದ್ದಾರೆ. ಅವರು ಗುಂಪು ಹಂತದಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅವರ ಕಳಪೆ ನಿರ್ವಹಣೆ ಬಗ್ಗೆ ಕಳವಳ ವ್ಯಕ್ತವಾಗಿದ್ದರೂ, ತಂಡಾಡಳಿತವು ಈಗಲೂ ಬಲವಾಗಿ ಅವರ ಬೆಂಬಲಕ್ಕೆ ನಿಂತಿದೆ. ಅವರನ್ನು ತಂಡದಿಂದ ಕೈಬಿಡುವ ಯಾವುದೇ ಸಾಧ್ಯತೆಯನ್ನು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮೋರ್ನ್ ಮೊರ್ಕೆಲ್ ತಳ್ಳಿಹಾಕಿದ್ದಾರೆ. ‘‘ಅಭಿಷೇಕ್ ಶರ್ಮಾ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅವರು ತಂಡ ಮತ್ತು ಪ್ರೇಕ್ಷಕರಿಗಾಗಿ ಉತ್ತಮ ನಿರ್ವಹಣೆ ನೀಡಲಿದ್ದಾರೆ. ಅವರ ಬ್ಯಾಟಿಂಗ್ ನೋಡುವುದೇ ಆನಂದ. ಅವರು ನೆಟ್ನಲ್ಲಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ’’ ಎಂದು ಅವರು ಹೇಳಿದರು. 25 ವರ್ಷದ ಬ್ಯಾಟರ್ ಅಭಿಷೇಕ್ ಶರ್ಮಾರ ಮೇಲೆ ಒತ್ತಡವು ಪರಿಣಾಮ ಬೀರುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯಪಡುತ್ತಾರೆ. ಅವರು ಕ್ರೀಸ್ನಲ್ಲಿ ನೆಲೆಯೂರುವ ಬದಲು, ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಹೊಡೆಯಲು ಭಾರೀ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದರು. ‘‘ಅಭಿಷೇಕ್ ಶರ್ಮಾ ಉತ್ತಮ ಆಟಗಾರ. ಆದರೆ, ನಿರೀಕ್ಷೆಗಳ ಭಾರ ಅವರ ಮೇಲಿದೆ. ಅವರು ಅಮೆರಿಕ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭವನ್ನು ಮಾಡಿದ್ದರೆ, ಕತೆಯೇ ಬೇರೆಯಾಗಿರುತ್ತಿತ್ತು. ಈಗ, ದೊಡ್ಡ ಸಿಕ್ಸರ್ ಹೊಡೆತಗಾರ ಹಾಗೂ ಶ್ರೇಷ್ಠ ಬ್ಯಾಟರ್ ಎಂಬ ಒತ್ತಡ ಕಾಣಿಸಿಕೊಳ್ಳುತ್ತಿದೆ’’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು.
ಭಾರತ ಹಲವು ವೈಶಿಷ್ಟ್ಯಗಳ ಸಂಗಮ : ಪ್ರಹ್ಲಾದ್ ಜೋಶಿ
ಲಿಂಗಸುಗೂರು: ಭಾರತವು ಸಾಂಸ್ಕೃತಿಕ ನೆಲೆಯುಳ್ಳ ರಾಷ್ಟ್ರವಾಗಿದ್ದು, ಅನೇಕ ವೈಶಿಷ್ಟ್ಯಗಳ ಸಂಗಮವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ತಾಲೂಕಿನ ಗೆಜ್ಜಲಗಟ್ಟಾದ ವೀರನಾಗಮ್ಮ ದೇವಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜ್ಞಾನ, ವಿಜ್ಞಾನ, ಧರ್ಮ ಮತ್ತು ಸಂಪ್ರದಾಯಗಳ ಪರಿಕಲ್ಪನೆ ಭಾರತದಲ್ಲಿ ಅಗಾಧವಾಗಿದೆ. ಈ ಹಿನ್ನಲೆಯಲ್ಲಿ ಭಾರತದ ಹಿರಿಮೆಯನ್ನು ವಿಶ್ವವೇ ಕೊಂಡಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಅಸ್ಪೃಶ್ಯತೆ ಎಂಬ ಅಂಶವನ್ನು ಒಪ್ಪಲು ಸಾಧ್ಯವಿಲ್ಲ. ಅಸ್ಪೃಶ್ಯತೆಯನ್ನು ನಿವಾರಿಸಿ ದೇಶ ಮತ್ತು ಸಮಾಜವನ್ನು ಒಗ್ಗೂಡಿಸುವಲ್ಲಿ ಮಠಾಧೀಶರು ಮುನ್ನಡೆಯಬೇಕು ಎಂದು ಆಶಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪುನರುತ್ಥಾನ ಕಾರ್ಯಗಳು ನಡೆಯುತ್ತಿವೆ. ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ಡಾ. ಕೆ.ಎನ್. ನರಸಿಂಹ ಅಡಿಗರವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿತು. ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಮಾನಪ್ಪ ವಜ್ಜಲ, ಶಿವರಾಜ ಪಾಟೀಲ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಸಿರು ಜಲಜನಕ ಭವಿಷ್ಯದ ಇಂಧನ ಶಕ್ತಿ: ಅಭಯ್ ಬಾಕ್ರೆ
ಮಂಗಳೂರು: ನವೀಕರಿಸಬಹುದಾಗ ನೈಸರ್ಗಿಕ ಅನಿಲ ಹಾಗೂ ಹಸಿರು ಜಲಜನಕ (ಗ್ರೀನ್ ಹೈಡ್ರೋಜನ್) ಭವಿಷ್ಯದ ಇಂಧನ ಶಕ್ತಿಯಾಗಿದ್ದು, ಈ ಮೂಲಕ ನಾವು ಶತಮಾನಗಳ ಹಿಂದಿನಂತೆ ನಮ್ಮ ಮಾತೃ ಭೂಮಿಯಲ್ಲಿ ಸ್ವಚ್ಛ ಪರಿಸರದ ಜತೆ ಪ್ರಕೃತಿಯೊಂದಿಗೆ ಜೀವಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಇಂಧನ ಕಾರ್ಯಕ್ಷಮತೆ ಬ್ಯೂರೊದ ಮಹಾನಿರ್ದೇಶಕ ಅಭಯ್ ಭಾಕ್ರೆ ಹೇಳಿದರು. ಮಂಗಳೂರಿನ ಟಿಎಂಎ ಪೈ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಶುಕ್ರವಾರ ಇಟಲಿಯ ಮಿರ್ ಗ್ರೂಪ್ ಆಯೋಜಿ ಸಿದ್ದ ಮಿರ್ ನೆಟ್ ಝೀರೊ ವಿಷನ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಸಿರು ಜಲಜನಕ ಭವಿಷ್ಯದಲ್ಲಿ ಇತರ ಇಂಧನಗಳಿಗೆ ಪರ್ಯಾಯವಾಗಲಿದ್ದು, ಪ್ರಸಕ್ತ ಡೀಸೆಲ್ನಲ್ಲಿ ಓಡಿಸಲಾಗುತ್ತಿ ರುವ ಟ್ರಕ್ ಮತ್ತು ಬಸ್ಗಳಿಗೆ ಹಸಿರು ಜಲಜನಕ ಬಳಕೆಯ ಪ್ರಯೋಗಗಳು ನಡೆಯುತ್ತಿವೆ. ವಿಶ್ವದಲ್ಲಿ ಮೆಥನಾಲ್ ಬದಲಿಗೆ 60 ಹಡಗುಗಳು ಈಗಾಗಲೇ ಹಸಿರು ಇಂಧನದ ಮೂಲಕ ಕಾರ್ಯಾಚರಿಸುತ್ತಿವೆ. ಹಸಿರು ಅಮೋನಿಯಾ ವನ್ನು ರಸಗೊಬ್ಬರವಾಗಿಯೂ ಬಳಸಬಹುದಾಗಿದೆ. ಭಾರತದಲ್ಲಿ ಸೂರ್ಯನ ಬೆಳಕು ಮತ್ತು ನೀರಿನ ಮೂಲಗಳು ಅಗಾಧವಾಗಿರುವುದರಿಂದ ಹಸಿರು ಇಂಧನವನ್ನು ಅತ್ಯಂತ ಕಡಿಮೆ ವ್ಯಯದಲ್ಲಿ ಬಳಕೆ ಮಾಡಬಹುದಾಗಿದೆ ಎಂದವರು ಹೇಳಿದರು. ಸಾವಿರಾರು ವರ್ಷಗಳ ಹಿಂದೆಯೂ ಸಮುದ್ರದಲ್ಲಿ ಹಡಗುಗಳನ್ನು ನೈಸರ್ಗಿಕ ಇಂಧನದ ಮೂಲಕ ಚಲಾಯಿಸಲಾಗು ತ್ತಿತ್ತು. 19ನೆ ಶತಮಾನದ ಬಳಿಕ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಹೆಚ್ಚುತ್ತಾ ಸಾಗಿ ಈಗಾಗಲೇ ನಮ್ಮ ತಾಯ್ನೆಲವನ್ನು ಭಾರೀ ಪ್ರಮಾಣದಲ್ಲಿ ಅಗೆದು ಬಿಟ್ಟಿದ್ದೇವೆ. ಈ ಮೂಲಕ ಪ್ರಕೃತಿಯನ್ನು ನಾಶ ಮಾಡುತ್ತಾ ಸಾಗಿದ್ದೇವೆ. ಇದೀಗ ಮತ್ತೆ ನಾವು ನೈಸಗಿಕ ಇಂಧನಗಳ ಬಗ್ಗೆ ಮಾತನಾಡುವಂತಾಗಿದೆ ಎಂದವರು ಹೇಳಿದರು. ಹಸಿರು ಜಲಜನಕವನ್ನು ಪೈಪ್ಗಳಲ್ಲಿ ನೈಸರ್ಗಿಕ ಅನಿಲವಾಗಿ ಮನೆಗಳಲ್ಲಿ ಅಡುಗೆಗೂ ಬಳಸುವ ಪೈಲಟ್ ಯೋಜನೆ ಜಾರಿಯಲ್ಲಿದೆ ಈ ತಂತ್ರಜ್ಞಾನಕ್ಕೆ ಹೂಡಿಕೆಯ ಅಗತ್ಯವಿದ್ದು, ಇದರಿಂದ ಸಾಕಷ್ಟು ಉದ್ಯೋಗಗಳೂ ಸೃಷ್ಟಿಯಾಗಲಿವೆ. ಸರಕಾರಿ ಕಟ್ಟಡಗಳು, ಕ್ಯಾಂಪಸ್ಗಳು, ಕೈಗಾರಿಕೆಗಳು ಮತ್ತು ಸಾರಿಗೆ ಹಬ್ಗಳನ್ನು ಸೌರ ಮತ್ತು ಪವನ ಇಂಧನಕ್ಕೆ ಒಳಪಡಿಸಬಹುದಾಗಿದೆ. ಈಗಾಗಲೇ ನಮ್ಮ ಸಚಿವಾಲಯದ ಕಚೇರಿಯೂ ಹಸಿರು ಇಂಧನದಡಿ ಕಾರ್ಯ ನಿರ್ವಹಿಸುತ್ತಿದೆ ಎಂದವರು ಹೇಳಿದರು. ಮಿರ್ ಗ್ರೂಪ್ನ ಸಿಇಒ ರಫೋಲೋ ಮೊರಾರೊ ಮಾತನಾಡಿ, ಹಸಿರು ಇಂಧನದ ಮೂಲಕ ಸುಸ್ಥಿರ ಅಭಿವೃದ್ಧಿ ಸಾದ್ಯವಾಗಲಿದೆ. ಇದರಿಂದ ನೈಸರ್ಗಿಕ ಸಂಪನ್ಮೂಲವನ್ನು ಉಳಿಸಿ ತ್ಯಾಜ್ಯವನ್ನು ಸಮರ್ಪಕ ನಿರ್ವಹಣೆ, ಪ್ಲಾಸ್ಟಿಕ್ಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಹಸಿರು ಇಂಧನ ಬಳಕೆಗೆ ಒತ್ತು ನೀಡಬಹುದಾಗಿದೆ ಎಂದರು. ಇಟಲಿಯ ಕಾನ್ಸುಲೇಟ್ ಜನರಲ್ ಗಿಯಾಂಡೊ ಮೆಡಿಕೊ ಮಿಲಾನೊ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಎಸ್ಇಝಡ್ ಸಿಇಒ ಸೂರ್ಯನಾರಾಯಣ, ಮಿರ್ ಗ್ರೂಪ್ನ ಪ್ರಮೋದ್ ಪಿಂಟೊ, ನಿತಿನ್ ಶೆಟ್ಟಿ, ಎನ್ಐಟಿಕೆ ನಿರ್ದೇಶಖ ಪ್ರೊ. ಬಿ. ರವಿ, ಗೋಕುಲ್ ದಾಸ್ ಉಪಸ್ಥಿತರಿದ್ದರು. ‘ಮಂಗಳೂರನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣದ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿದ್ದು, ಶೀಘ್ರವೇ ಉದ್ಘಾಟ ನೆಗೊಳ್ಳಲಿದೆ. ಮಂಗಳೂರಿನಲ್ಲಿ ಸಮಗ್ರ ವೈದ್ಯಕೀಯ ಪ್ರವಾಸೋದ್ಯಮಕ್ಕಾಗಿ ಕೇಂದ್ರ ಬಜೆಟ್ ಸಂದರ್ಭ ಪ್ರಸ್ತಾವಿ ಸಲಾಗುವುದು. ಹೆದ್ದಾರಿಯ ವಾಹನ ದಟ್ಟಣೆ ನಿಯ್ರಿಸಲು ನಂತೂರಿನಿಂದ ಕೂಳೂರು ಮತ್ತು ಕೆಐಒಸಿಎಲ್ ಜಂಕ್ಷನ್ನಿಂದ ಬೈಕಂಪಾಡಿವರೆಗೆ ಕಾರಿಡಾರ್ ಪ್ರಸ್ತಾವಿಸಲಾಗಿದೆ. -ಬ್ರಿಜೇಶ್ ಚೌಟ, ಸಂಸದರು, ದ.ಕ. ‘ಕರ್ನಾಟಕವು ತನ್ನ ಪವನ ವಿದ್ಯುತ್ ಸಾಮರ್ಥ್ಯವನ್ನು 1,331.48 ಮೆಗಾವ್ಯಾಟ್ಗೆ ಹೆಚ್ಚಿಸಿಕೊಂಡಿದ್ದು, 2024 - 25 ರ ಆರ್ಥಿಕ ವರ್ಷದಲ್ಲಿ ಪವನ ವಿದ್ಯುತ್ ಸಾಮರ್ಥ್ಯ ಸೇರ್ಪಡೆಯಲ್ಲಿ ರಾಜ್ಯವು ದೇಶದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಭೂ ಪರಿವರ್ತನಾ ನಿಯಮವನ್ನು ರಾಜ್ಯದಲ್ಲಿ ಸರಳೀಕರಿಸಲಾಗಿದೆ. -ಟಿ.ಡಿ. ರಾಜೇಗೌಡ, ಶೃಂಗೇರಿ ಶಾಸಕರು ಮತ್ತು ಕೆಆರ್ಇಡಿಎಲ್ ಅಧ್ಯಕ್ಷರು
AI ಶೃಂಗಸಭೆಯಲ್ಲಿ ಮಳಿಗೆ ಸ್ಥಾಪನೆ: ಗಲ್ಗೋಟಿಯಾಸ್ ವಿವಿಗೆ ಸಿಂಹಪಾಲು?
ಹೊಸದಿಲ್ಲಿ, ಫೆ.20: ರೊಬೊಡಾಗ್ ವಿವಾದದ ಮೂಲಕ ದೇಶಕ್ಕೆ ಮುಜುಗರವನ್ನು ಸೃಷ್ಟಿಸಿದ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯಕ್ಕೆ ಎಐ ಶೃಂಗಸಭೆಯ ವಸ್ತುಪ್ರದರ್ಶನ ಸ್ಥಳದಲ್ಲಿ, ದೇಶದ ನಾಲ್ಕು ಪ್ರತಿಷ್ಠಿತ ಐಐಟಿಗಳು ಹಾಗೂ ಒಂದು ಸಂಶೋಧನಾ ಸಂಸ್ಥೆಗೆ ಮಳಿಗೆಗಳ ಸ್ಥಾಪನೆಗೆ ನೀಡಲಾಗಿದ್ದ ಒಟ್ಟು ಸ್ಥಳಾವಕಾಶಕ್ಕಿಂತಲೂ ಹೆಚ್ಚು ವಿಸ್ತೀರ್ಣದ ಜಾಗವನ್ನು ಪಡೆದಿರುವುದು ಈಗ ಬೆಳಕಿಗೆ ಬಂದಿದೆ. ಎಐ ಶೃಂಗಸಭೆಯ ವಸ್ತುಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದ ಭಾರತ ಮಂಡಪಂನ ಹಾಲ್ ಸಂಖ್ಯೆ 6ರಲ್ಲಿ ಖಾಸಗಿ ಶಿಕ್ಷಣಸಂಸ್ಥೆಯಾದ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯಕ್ಕೆ 155 ಚದರ ಮೀಟರ್ನ ಬೂತ್ ನೀಡಲಾಗಿತ್ತು. ಇದು ದೇಶದ ನಾಲ್ಕು ಐಐಟಿಗಳು ಹಾಗೂ ಸಂಶೋಧನಾ ಸಂಸ್ಥೆಗೆ ನೀಡಲಾಗಿದ್ದ ಸ್ಥಳವಕಾಶದ ಶೇ.15ಕ್ಕಿಂತಲೂ ಅಧಿಕವೆಂದು ವರದಿಯೊಂದು ಬೆಟ್ಟು ಮಾಡಿ ತೋರಿಸಿದೆ. ಐಐಟಿ ಬಾಂಬೆ (35 ಚದರ ಮೀಟರ್, ಐಐಟಿ ಮದ್ರಾಸ್ (35 ಚದರ ಮೀಟರ್), ಐಐಟಿ ಗಾಂಧಿನಗರ (18 ಚದರ ಮೀಟರ್) ಹಾಗೂ ಐಐಟಿ ಕಾನ್ಪುರದ ಐರಾವತ ಸಂಶೋಧನಾ ಪ್ರತಿಷ್ಠಾನ (18 ಚದರ ಮೀಟರ್) ಇವುಗಳಿಗೆ ನೀಡಲಾಗಿದ್ದ ಒಟ್ಟು ಸ್ಥಳಾವಕಾಶವು 130 ಚದರ ಮೀಟರ್ ಆಗಿದೆ. ಈ ಐಐಟಿಗಳು, ಕೃತಕಬುದ್ದಿಮತ್ತೆ ಆಧಾರಿತ ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಗಳು, ಭಾಷಣ ಸಿಂಥೆಸಿಸ್ ಹಾಗೂ ತ್ಯಾಜ್ಯ ಬೇರ್ಪಡುವಿಕೆ ವಿಧಾನಗಳು ಇತ್ಯಾದಿಗಳನ್ನು ಪ್ರದರ್ಶಿಸಿದ್ದವು. ಗಲ್ಗೋಟಿಯಾಸ್ ವಿವಿಯು ತನ್ನ ಮಳಿಗೆಯಲ್ಲಿ ಪ್ರದರ್ಶಿಸಿದ್ದ ರೊಬೊಡಾಗ್ ಚೀನಾ ನಿರ್ಮಿತ ‘ನೂನಿಟ್ರೀ ಜಿಓ2 ರೊಬೊಟ್’ ಎಂಬುದು ಬೆಳಕಿಗೆ ಬಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆನಂತರ ಈ ವಿಶ್ವವಿದ್ಯಾನಿಲಯವನ್ನು ವಸ್ತುಪ್ರದರ್ಶನ ಮಳಿಗೆಯಿಂದ ತೆರವುಗೊಳಿಸಲಾಗಿತ್ತು ಮತ್ತು ಎಐ ಶೃಂಗಸಭೆಯಿಂದ ಹೊರಗಿಡಲಾಗಿತ್ತು. ರೊಬೊಡಾಗ್ ವಿವಾದದ ಬಳಿಕ ನೇಹಾಸಿಂಗ್ ಅವರು ಸಾಮಾಜಿಕ ಜಾಲತಾಣ ಲಿಂಕ್ಡೆನ್ನಲ್ಲಿರುವ ತನ್ನ ಪ್ರೊಫೈಲ್ನಲ್ಲಿ ಓಪನ್ ಟು ವರ್ಕ್ ಎಂದು ಹ್ಯಾಶ್ಟಾಗ್ ಮಾಡಿದ್ದರು. ಸಾಮಾನ್ಯವಾಗಿ ಹೊಸ ಉದ್ಯೋಗ ಅರಸುವವರು ತಮ್ಮ ಪ್ರೊಫೈಲ್ ಟೂಲ್ಗಳಲ್ಲಿ ಈ ರೀತಿ ಹ್ಯಾಶ್ಟ್ಯಾಗ್ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ನೇಹಾಸಿಂಗ್ ಅವರು ಗೊಲ್ಗೋಟಿಯಾಸ್ ವಿವಿಯನ್ನು ತೊರೆದಿದ್ದಾರೆಯೇ ಎಂಬ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು.
ಮಧ್ಯಪ್ರದೇಶ| ಜಬಲ್ಪುರ ಸಮೀಪ ಎರಡು ಸಮುದಾಯಗಳ ನಡುವೆ ಘರ್ಷಣೆ: 49 ಮಂದಿಯ ಬಂಧನ
ಜಬಲ್ಪುರ,ಫೆ.20: ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸಿಲ್ಹೋರಾ ಪಟ್ಟಣದಲ್ಲಿ ಎರಡು ಸಮುದಾಯಗಳಿಗೆ ಸೇರಿದ ಗುಂಪುಗಳ ನಡುವೆ ಶುಕ್ರವಾರ ಘರ್ಷಣೆ ಭುಗಿಲೆದ್ದಿದ್ದು, ಕಲ್ಲೂತೂರಾಟ ಹಾಗೂ ದಾಂಧಲೆ ನಡೆದಿದೆ. ಗಲಭೆ ನಿರತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಹಾಗೂ ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದಾರೆ. ಗಲಭೆಗೆ ಸಂಬಂಧಿಸಿ 49 ಮಂದಿಯನ್ನು ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆಝಾದ್ ಚೌಕ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಗೆ ಗಲಭೆ ಭುಗಿಲೆದ್ದಿದ್ದು, ಆನಂತರ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಪ್ರದೇಶದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ. ಆಝಾದ್ಚೌಕ ಪ್ರದೇಶದಲ್ಲಿ ದೇವಾಲಯ ಹಾಗೂ ಮಸೀದಿ ಆಸುಪಾಸಿನಲ್ಲಿವೆ. ಶುಕ್ರವಾರ ಪೂಜೆಯ ವೇಳೆ ದೇವಾಲಯದ ಸುರಕ್ಷತಾ ಕಂಬಿಗೆ ಹಾನಿಯಾಗಿದೆಯೆಂಬ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದವುಂಟಾಗಿತ್ತು. ಆನಂತರ ಇತ್ತಂಡಗಳೂ ಪರಸ್ಪರ ಕಲ್ಲುತೂರಾಟದಲ್ಲಿ ತೊಡಗಿದವು ಮತ್ತು ಪರಿಸರದಲ್ಲಿದ್ದ ಅಂಗಡಿ ಮತ್ತು ವಾಹನಗಳಿಗೆ ಹಾನಿಯೆಸಗಿದರೆಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.
ಕನಕಗಿರಿ | ಪಿನಾಯಿಲ್ ಕುಡಿದು ಯುವಕ ಆತ್ಮಹತ್ಯೆ
ಕನಕಗಿರಿ: ಮದ್ಯ ವ್ಯಸನಕ್ಕೆ ಒಳಗಾಗಿದ್ದ ಯುವಕನೊರ್ವ ಮನೆಯಲ್ಲಿ ಬಾಗಿಲು ಹಾಕಿಕೊಂಡು ಪಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಸುಳೇಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ನಾಗರಾಜ ಚನ್ನದಾಸರ (37) ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ವಿಪರೀತ ಮದ್ಯಪಾನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಮೃತನ ಪತ್ನಿ ಲಲಿತಮ್ಮ ನೀಡಿದ ದೂರಿನಲ್ಲಿ, ಗಂಡನಿಗೆ ಮದ್ಯಪಾನ ಬಿಡುವಂತೆ ನಾನು ಹಾಗೂ ಮಾವ ಹನುಮೇಶ ಮತ್ತು ಸಮಾಜದ ಹಿರಿಯರು ಹಲವು ಬಾರಿ ಸಲಹೆ ನೀಡಿದ್ದರೂ ದಿನನಿತ್ಯ ಮದ್ಯ ಸೇವನೆ ಮುಂದುವರಿಸಿದ್ದರು. ಗುರುವಾರ ಬೆಳಿಗ್ಗೆ ಕುಡಿದ ಅಮಲಿನಲ್ಲಿ ಪಿನಾಯಿಲ್ ಸೇವಿಸಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಬಾಗಿಲು ತೆರೆಯುವಾಗ ಪಿನಾಯಿಲ್ ಕುಡಿದಿರುವುದು ಗೊತ್ತಾಗಿ ಮೊದಲು ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪಿ.ಐ ವಿ. ನಾರಾಯಣ ತಿಳಿಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಉಡುಪಿ: ಕುರ್ಚಿಯಿಂದ ಕುಸಿದು ಬಿದ್ದು ಯುವಕ ಮೃತ್ಯು
ಕಾರ್ಕಳ, ಫೆ.20: ಮನೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಯರ್ಲಪಾಡಿ ಎಂಬಲ್ಲಿ ಫೆ.19ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಯರ್ಲಪಾಡಿ ಗ್ರಾಮದ ಹೇಮಲತಾ ಎಂಬವರ ಮಗ ಸುಹೇಶ್(22) ಎಂದು ಗುರುತಿಸಲಾಗಿದೆ. ಕಳೆದ 15 ದಿನಗಳಿಂದ ಕೆಮ್ಮು ವಿನಿಂದ ಬಳಲುತ್ತಿದ್ದ ಇವರು ಔಷಧಿ ಸೇವಿಸುತ್ತಿದ್ದರು. ಫೆ.19ರಂದು ಮಧ್ಯಾಹ್ನ ಮನೆಯ ಡೈನಿಂಗ್ ರೂಮ್ನ ಕುರ್ಚಿಯಲ್ಲಿ ಕುಳಿತು ಕೊಂಡಿದ್ದ ಸುಹೇಶ್, ಒಮ್ಮೆಲೆ ಬೊಬ್ಬೆ ಹಾಕುತ್ತಾ ಕೆಳಗೆ ಬಿದ್ದರೆನ್ನಲಾಗಿದೆ. ಬಳಿಕ ನರಳಾಡಿ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕಾರ್ಕಳದ ಖಾಸಗಿ ಆಸ್ಫತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಸುಹೇಶ್ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಪೊಲೀಸ್ ಇಲಾಖೆಗೆ ಜೀಪು ಹಸ್ತಾಂತರ
ಉಡುಪಿ, ಫೆ.20: ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸಂಸ್ಥೆಯ ಸಿಎಸ್ಆರ್ ಅಡಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ವಾಹನವನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಈ ವಾಹನವನ್ನು ಕಾರವಾರ ರೀಜನಲ್ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ವಾಹನವನ್ನು ಹಸ್ತಾಂತರಿಸಿದರು.
ಕರ್ತವ್ಯ ನಿರತ ಖಾಸಗಿ ಬಸ್ ನಿರ್ವಾಹಕನ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ಮನವಿ
ಬಂಟ್ವಾಳ, ಫೆ.20: ಕರ್ತವ್ಯ ನಿರತ ಖಾಸಗಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ರಾಣಿ ಅಬ್ಬಕ್ಕ ಬಸ್ ವರ್ಕರ್ಸ್ ಯೂನಿಯನ್. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗೆ ಮನವಿ ಸಲ್ಲಿಸಿದೆ. ಹಲ್ಲೆಯಿಂದ ಗಾಯಗೊಂಡ ನಿರ್ವಾಹಕನನ್ನು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಸಂಘದ ಪದಾಧಿಕಾರಿಗಳು ಕರ್ತವ್ಯದಲ್ಲಿದ್ದ ನೌಕರರ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯವಾಗಿದೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ನೌಕರರ ಭದ್ರತೆ ಹಾಗೂ ಗೌರವ ಕಾಪಾಡುವ ನಿಟ್ಟಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ಮನವಿ ಮಾಡಿದ್ದಾರೆ.
Bengaluru | ಹಳಿ ತಪ್ಪಿದ ಚಾಲಕರಹಿತ ಮೆಟ್ರೋ ರೈಲು
ಬೆಂಗಳೂರು : ನಗರದ ಹಳದಿ ಮಾರ್ಗದಲ್ಲಿ ಸಂಚಾರ ಮಾಡುತ್ತಿರುವ ಚಾಲಕರಹಿತ ಮೆಟ್ರೋ ರೈಲು ಹಳಿ ತಪ್ಪಿದ ಘಟನೆ ಜ.15ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಹೆಬ್ಬಗೋಡಿ ಡಿಪೋದಲ್ಲಿ ಈ ಅವಘಡ ಸಂಭವಿಸಿದ್ದು, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಚಾಲಕರಹಿತ ರೈಲು ಹಳಿ ತಪ್ಪಿರುವುದು ತಿಳಿದುಬಂದಿದೆ. ಘಟನೆಯ ಕುರಿತಾಗಿ ರೈಲು ಆಪರೇಟರ್, ಡಿಪೋ ಕಂಟ್ರೋಲರ್ ಹಾಗೂ ಇತರ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಳಿ ತಪ್ಪಿದ ಪರಿಣಾಮ ಟ್ರ್ಯಾಕ್ ಸ್ಲೀಪರ್ಗಳು(ಹಳಿ ಆಧಾರಗಳು) ಹಾಗೂ ರೋಲಿಂಗ್ ಸ್ಟಾಕ್ ಘಟಕಗಳಿಗೆ ಹಾನಿಯಾಗಿದೆ.
ಮಂಗಳೂರು: ಹರ್ಷ ಶೋ ರೂಂನಲ್ಲಿ ಎಲ್ಜಿ ಬ್ರ್ಯಾಂಡ್ನ ನೂತನ ಬಿಡುಗಡೆ
ಮಂಗಳೂರು, ಫೆ.20: ನಗರದ ಫಳ್ನೀರ್ನಲ್ಲಿರುವ ಹರ್ಷ ಶೋ ರೂಂ ಮಳಿಗೆಯಲ್ಲಿ ಎಲ್ಜಿ ಬ್ರ್ಯಾಂಡ್ನ ನೂತನ ರೆಫ್ರಿಜರೇಟರ್, ಎಐ ತಂತ್ರಜ್ಞಾನದ ವಾಷಿಂಗ್ ಮೆಷಿನ್, ಡಿಷ್ವಾಶ್ ಉತ್ಪನ್ನಗಳನ್ನು ಶುಕ್ರವಾರ ಬಿಡುಗಡೆ ಗೊಳಿಸಲಾಯಿತು. ಎಲ್ಜಿ ಬ್ರಾಂಚ್ ಮ್ಯಾನೇಜರ್ ರಾಜ್ ವಿಜಯ್ ಕುಮಾರ್ ಮಾತನಾಡಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೊಂಡು ಎಲ್ಜಿ ನೂತನ 3 ಉತ್ಪನ್ನಗಳನ್ನು ತಯಾರಿಸಲಾಗಿದೆ. ಹರ್ಷ ಮತ್ತು ಎಲ್ಜಿ ಹಿಂದಿನಿಂದಲೂ ಉತ್ತಮ ಬಾಂಧವ್ಯವಿದ್ದು, ಈ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಹರ್ಷವಾಗುತ್ತದೆ. ಗ್ರಾಹಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಹರ್ಷದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಿದ್ದಾರ್ಥ ಪ್ರಭು ಮಾತನಾಡಿ ಹರ್ಷ ಸಂಸ್ಥೆಯು 39 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ನಿರತವಾಗಿದೆ. ಎಲ್ಜಿ ವಿಶ್ವದ ಉತ್ತಮ ದರ್ಜೆಯ ಉತ್ಪನ್ನವಾಗಿದ್ದು, ಕಳೆದ 29 ವರ್ಷದಿಂದ ಹರ್ಷದ ಜತೆ ಒಡನಾಟವಿರಿಸಿಕೊಂಡು ಬಂದಿದೆ. ಬಿಡುಗಡೆಯಾದ 3 ಉತ್ಪನ್ನಗಳು ಗ್ರಾಹಕರ ಮನಗೆಲ್ಲುವ ವಿಶ್ವಾಸವಿದೆ ಎಂದರು. ಎಲ್ಜಿ ಬ್ರ್ಯಾಂಚ್ ಮಾರ್ಕೆಟಿಂಗ್ ಮ್ಯಾನೇಜರ್ ಸುಕುಮಾರ್ ರೈ, ವಲಯ ಪ್ರಬಂಧಕ ರಕ್ಷಿತ್, ಶಾಖಾ ಪ್ರೊಡಕ್ಟ್ ತರಬೇತುದಾರ ರಾಜೇಶ್ ಶೆಟ್ಟಿ, ಶಾಖಾ ಮಾರ್ಕೆಟಿಂಗ್ ಸಮನ್ವಯಕಾರ ಲತೀಶ್, ಹರ್ಷ ಕ್ಲಸ್ಟರ್ ಮ್ಯಾನೇಜರ್ ರಿತೇಶ್, ಸ್ಟೋರ್ ಮ್ಯಾನೇಜರ್ ಸರಫತ್, ಫ್ಲೋರ್ ಮ್ಯಾನೇಜರ್ ಸುರೇಶ್ ಉಪಸ್ಥಿತರಿದ್ದರು. *ಎಲ್ಜಿ ರೆಫ್ರಿಜರೇಟರ್: ನೂತನ ರೆಫ್ರಿಜರೇಟರ್ ಎಲ್ಲಾ ವ ರ್ಗದ ಗ್ರಾಹಕರನ್ನು ಸೆಳೆಯಲಿದ್ದು, ಸುಲಭ ದರದಲ್ಲಿ ಲಭ್ಯವಾಗಲಿದೆ. 225 ಲೀಟರ್ ಸಾಮಥ್ಯ ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಇನ್ವರ್ಟರ್ ಕಂಪ್ರೆಸರ್, ಮಲ್ಟಿ ಏರ್ಫೋ ಕೂಲಿಂಗ್, ಅಟೋ ಸ್ಟಾ ರ್ಟ್ ಸಂಪರ್ಕ ಹೊಂದಿದೆ. *ಎಐ ಡಿಡಿ ವಾಷಿಂಗ್ ಮೆಷಿನ್: ಡೈರೆಕ್ಟರ್ ಡ್ರೈವ್ ಎಐ ತಂತ್ರಜ್ಞಾನ ಹೊಂದಿದೆ. ಸೆನ್ಸೆಬಲ್ ಸಿಸ್ಟಂ, 20 ಸಾವಿರ ಮಾದರಿ ವಾಷಿಂಗ್, 360 ಡಿಗ್ರಿ ಟರ್ಬೊ ವಾಷ್, ಸ್ಟೀಮ್, ಡಿಜಿಟಲ್ ಡಯಲ್, ಮೈಕ್ರೋಪ್ಲಾಸ್ಟಿಕ್ ಕೇರ್, 10ವರ್ಷದ ವಾರಂಟಿಯಿದೆ. *ಡಿಷ್ ವಾಷ್: 15 ಕಡೆಗಳಲ್ಲಿ ಸೆಟ್ಟಿಂಗ್ ವ್ಯವಸ್ಥೆ, 94 ವಸ್ತುಗಳನ್ನು ಏಕಕಾಲಕ್ಕೆ ಇಡಬಹುದು. ಡಿಡಿ ತಂತ್ರಜ್ಞಾನ, ಕ್ವಾಡ್ವಾಶ್, ಅಟೋ ಓಪನ್ ಡ್ರೈ, ಹೆಚ್ಚುವರಿ ರ್ಯಾಕ್ ಸಿಸ್ಟಂ, ಇನ್ವರ್ಟರ್ ಡೈರೆಕ್ಟ್ ಡ್ರೈವ್ ಮೋಟಾರ್ ಹೊಂದಿದೆ.
ಬಾಗಲಕೋಟೆ ಘಟನೆ ಖಂಡನೀಯ: ಪ್ರಹ್ಲಾದ್ ಜೋಶಿ
ಕಲಬುರಗಿ: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರ ಮೂರ್ತಿಗೆ ಚಪ್ಪಲಿ ಎಸೆದ ಘಟನೆ ಖಂಡನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತವೆ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೆ ತಪ್ಪಿತಸ್ಥರನ್ನೇ ಬಂಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಪೊಲೀಸರ ಮೇಲೆ ಒತ್ತಡ ಹೇರುವ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ ಅವರು, “ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಕೇವಲ ಒಂದು ಸಮುದಾಯದ ಮತಬ್ಯಾಂಕ್ ದೃಷ್ಟಿಯಿಂದ ನಡೆದುಕೊಳ್ಳುವುದು ಸರಿಯಲ್ಲ” ಎಂದು ಟೀಕಿಸಿದರು. ಎಐ ಸಮ್ಮಿಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ದಾಳಿಯನ್ನು ಖಂಡಿಸಿದ ಅವರು, “ದೇಶದ ಮಾನ-ಮರ್ಯಾದೆಗೆ ಧಕ್ಕೆಯಾಗುವಂತಹ ವರ್ತನೆ ಇದು. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ಅವರ ಹೇಳಿಕೆಗಳು ಜವಾಬ್ದಾರಿಯುತವಾಗಿಲ್ಲ. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಫ್ರೀ ಗ್ಯಾರೆಂಟಿ ಯೋಜನೆಗಳ ಕುರಿತು ಮಾತನಾಡಿದ ಪ್ರಹ್ಲಾದ್ ಜೋಶಿ, “ಸ್ವತಃ ಕಾಂಗ್ರೆಸ್ ನಾಯಕರು ಗ್ಯಾರೆಂಟಿಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಉಂಟಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮುಂದೆ ಯಾವುದೇ ಪಕ್ಷ ಗ್ಯಾರೆಂಟಿ ನೀಡುವ ಮುನ್ನ ಆರ್ಥಿಕ ಪರಿಣಾಮಗಳನ್ನು ಪರಿಗಣಿಸಬೇಕು,” ಎಂದು ಹೇಳಿದರು.
ಗಾಝಾ ನಿವಾಸಿಗಳ ಮೇಲೆ ಇಸ್ರೇಲ್ ನಿಷೇಧಿತ ಅಧಿಕ-ತಾಪಮಾನದ ಥರ್ಮೋಬಾರಿಕ್ ವ್ಯಾಕ್ಯೂಮ್ ಬಾಂಬ್ ಬಳಸಿದೆ ಎಂದು Aljazeera ವರದಿ ಮಾಡಿದೆ. ಅ.2023 ರಿಂದ ಸುಮಾರು 2,842 ಜನರು ಕಣ್ಮರೆಯಾಗಿದ್ದಾರೆ ಎಂದು ಗಾಝಾ ನಾಗರಿಕ ರಕ್ಷಣಾ ತಂಡಗಳು ದಾಖಲಿಸಿವೆ ಎಂದು Aljazeera ನಡೆಸಿದ ತನಿಖಾ ವರದಿ ಹೇಳಿದೆ. ತನಿಖೆಯ ಪ್ರಕಾರ, ದಾಳಿ ನಡೆದ ಸ್ಥಳಗಳಲ್ಲಿ ಈ ಜನರು ಕಣ್ಮರೆಯಾಗಿದ್ದಾರೆ. ಕ್ಷಿಪಣಿ ದಾಳಿಯಲ್ಲಿ ಕಣ್ಮರೆಯಾದವರನ್ನು ಗುರುತಿಸಲು ತನಿಖೆಯು method of elimination ವಿಧಾನವನ್ನು ಬಳಸುತ್ತದೆ. ಗುರಿಯಿಟ್ಟ ಕಟ್ಟಡದೊಳಗೆ ಎಷ್ಟು ಜನರಿದ್ದಾರೆಂದು ತಂಡಗಳು ಮೊದಲು ನಿಖರವಾಗಿ ನಿರ್ಧರಿಸುತ್ತವೆ. ನಂತರ ಆ ಸಂಖ್ಯೆಯನ್ನು ಅಲ್ಲಿ ಪತ್ತೆಯಾದ ಶವಗಳೊಂದಿಗೆ ಹೋಲಿಸುತ್ತವೆ. ಒಂದು ಕುಟುಂಬವು ಐದು ಜನರು ಇದ್ದಾರೆ ಎಂದು ದೃಢಪಡಿಸಿದ್ದರೆ, ಅಲ್ಲಿ ಕೇವಲ ಮೂರು ಶವಗಳು ಕಂಡುಬಂದರೆ, ಸಮಗ್ರ ಹುಡುಕಾಟವು ಯಾವುದೇ ಅವಶೇಷಗಳನ್ನು ಪತ್ತೆಹಚ್ಚಲು ವಿಫಲವಾದ ನಂತರವೇ ಉಳಿದ ಎರಡು ಶವಗಳು ಆವಿಯಾಗಿವೆ ಎಂದು ವರ್ಗೀಕರಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಉಳಿದಿರುವ ಏಕೈಕ ಪುರಾವೆಗಳು ಗೋಡೆಗಳ ಮೇಲೆ ರಕ್ತದ ಗುರುತುಗಳು ಅಥವಾ ದೇಹದ ಸಣ್ಣ ತುಣುಕುಗಳಂತಹ ಕುರುಹುಗಳಾಗಿರುತ್ತವೆ ಎಂದು ಗಾಝಾ ನಾಗರಿಕ ರಕ್ಷಣಾ ವಕ್ತಾರ ಮಹಮೂದ್ ಬಸಲ್ ವಿವರಿಸಿದ್ದಾರೆ. ಥರ್ಮೋಬಾರಿಕ್ ಅಥವಾ ನಿರ್ವಾತ ಬಾಂಬ್ಗಳು ಎಂದರೇನು? ನಿರ್ವಾತ ಅಥವಾ ಏರೋಸಾಲ್ ಬಾಂಬ್ಗಳು ಎಂದೂ ಕರೆಯಲ್ಪಡುವ ಥರ್ಮೋಬಾರಿಕ್ ಅಥವಾ ಥರ್ಮಲ್ ಬಾಂಬ್ಗಳು ವಿಷಕಾರಿ ಪುಡಿ ಲೋಹಗಳು ಮತ್ತು ಸಾವಯವ ಪದಾರ್ಥಗಳನ್ನು ಒಳಗೊಂಡ ವಿವಿಧ ಇಂಧನಗಳಿಂದ ಕೂಡಿರುತ್ತವೆ. ಇದು ಸ್ಫೋಟಿಸಿದ ನಂತರ ಆಮ್ಲಜನಕದ ಸಹಾಯದಿಂದ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಳ್ಳುತ್ತದೆ. ಇದರಿಂದ ತೀವ್ರ ತಾಪಮಾನ ಮತ್ತು ಒತ್ತಡದ ಅಲೆಗಳು ಉಂಟಾಗುತ್ತವೆ. Aljazeera ಜೊತೆ ಮಾತನಾಡಿದ ರಷ್ಯಾದ ಮಿಲಿಟರಿ ತಜ್ಞ ವಾಸಿಲಿ ಫಟಿಗರೋವ್, ಈ ಶಸ್ತ್ರಾಸ್ತ್ರಗಳು ಕೇವಲ ಕೊಲ್ಲುವುದಲ್ಲ, ಅವು ವಸ್ತುವನ್ನೇ ಅಳಿಸಿಹಾಕುತ್ತವೆ ಎಂದು ಹೇಳಿದ್ದಾರೆ. ಥರ್ಮೋಬಾರಿಕ್ ಬಾಂಬ್ನಲ್ಲಿ ಎರಡು ಹಂತದ ಸ್ಫೋಟ ಉಂಟಾಗುತ್ತದೆ. ಮೊದಲ ಹಂತದಲ್ಲಿ ಇಂಧನ ಅಥವಾ ಸೂಕ್ಷ್ಮ ಕಣಗಳು ಗಾಳಿಯಲ್ಲಿ ಹರಡುತ್ತವೆ. ನಂತರ ಸ್ಫೋಟ ಸಂಭವಿಸುತ್ತದೆ. ಈ ಸ್ಫೋಟವು ಆಮ್ಲಜನಕದೊಂದಿಗೆ ಸೇರಿ ಬೆಂಕಿಯುಂಡೆಯಾಗಿ ಮಾರ್ಪಡುತ್ತದೆ. ಸ್ಫೋಟದ ತಾಪಮಾನವು 3,500 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಬಹುದು. ಹೆಚ್ಚು ಹೊತ್ತು ಉರಿಯುವಂತೆ ಮಾಡಲು ಅಲ್ಯೂಮಿನಿಯಂ, ಮೆಗ್ನೀಸಿಯಮ್ ಮತ್ತು ಟೈಟಾನಿಯಂ ಪುಡಿಗಳನ್ನು ರಾಸಾಯನಿಕ ಮಿಶ್ರಣಕ್ಕೆ ಸೇರಿಸಲಾಗುತ್ತದೆ. ಇದರಿಂದ ಸ್ಫೋಟದ ತಾಪಮಾನವು 2,500 ರಿಂದ 3,000 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚುತ್ತದೆ ಎಂದು ಫಟಿಗರೋವ್ ತಿಳಿಸಿದ್ದಾರೆ. ಈ ಶಾಖವು ಹೆಚ್ಚಾಗಿ TNT ಮತ್ತು ಅಲ್ಯೂಮಿನಿಯಂ ಪುಡಿಯ ಮಿಶ್ರಣದಿಂದ ಉತ್ಪತ್ತಿಯಾಗುತ್ತದೆ. ಇದನ್ನು ಟ್ರೈಟೋನಲ್ ಎಂದು ಕರೆಯಲಾಗುತ್ತದೆ. ಇದನ್ನು ಹೆಚ್ಚಾಗಿ MK-84 ನಂತಹ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳಲ್ಲಿ ಬಳಸಲಾಗುತ್ತದೆ. Aljazeera ವರದಿಯು ಗಾಝಾದಲ್ಲಿರುವ ಅಲ್-ತಾಬಿನ್ ಶಾಲೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದೆ. ಇಸ್ರೇಲಿ ದಾಳಿಯ ನಂತರ, ದಾಳಿಯ ಮೊದಲು ಸ್ಥಳದಲ್ಲಿದ್ದ ಜನರ ಶವಗಳನ್ನು ಕುಟುಂಬಗಳಿಗೆ ಹುಡುಕಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ. ಗಾಝಾದಲ್ಲಿರುವ ಪ್ಯಾಲೆಸ್ಟೀನಿಯನ್ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಡಾ. ಮುನೀರ್ ಅಲ್-ಬರ್ಷ್ ಅವರು, ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್ ಆಗಿದೆ. ದೇಹವು ಬೃಹತ್ ಒತ್ತಡ ಮತ್ತು ಆಕ್ಸಿಡೇಶನ್ ಸೇರಿ 3,000 ಡಿಗ್ರಿಗಿಂತ ಹೆಚ್ಚಿನ ಶಕ್ತಿಗೆ ಒಡ್ಡಿಕೊಂಡಾಗ ದ್ರವಗಳು ತಕ್ಷಣವೇ ಕುದಿಯುತ್ತವೆ. ಆಗ ಅಂಗಾಂಶಗಳು ಆವಿಯಾಗಿ ಬೂದಿಯಾಗುತ್ತವೆ ಎಂದು ತಿಳಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ವಿಶಾಲ ಪ್ರದೇಶದಲ್ಲಿ ದೊಡ್ಡ ಸ್ಫೋಟ ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಸ್ಫೋಟಕಗಳಂತೆ ಇಲ್ಲಿ ಸಹ ಅತಿಯಾದ ಒತ್ತಡದಿಂದ ಹಾನಿ ಉಂಟಾಗುತ್ತದೆ. ಗಾಝಾದಲ್ಲಿ ಬಳಸಲಾದ ಮೂರು ವಿಭಿನ್ನ ಯುಎಸ್ ನಿರ್ಮಿತ ಬಾಂಬ್ಗಳು MK-84 'ಹ್ಯಾಮರ್': 3,500 ಡಿಗ್ರಿ ಸೆಲ್ಸಿಯಸ್ ವರೆಗೆ ಶಾಖ ಉತ್ಪಾದಿಸುವ ಟ್ರೈಟೋನಲ್ನಿಂದ ತುಂಬಿದ ದೊಡ್ಡ ಬಾಂಬ್. BLU-109 ಬಂಕರ್ ಬಸ್ಟರ್: PBXN-109 ಸ್ಫೋಟಕ ಮಿಶ್ರಣವನ್ನು ಬಳಸಿಕೊಂಡು ಸ್ಫೋಟಗೊಳ್ಳುವ ಮೊದಲು ಸ್ವತಃ ನೆಲದೊಳಗೆ ಹೂತುಹೋಗುವ ಬಾಂಬ್. GBU-39: ಇದು ನಿಖರ-ನಿರ್ದೇಶಿತ ಬಾಂಬ್ ಆಗಿದ್ದು, ಕಟ್ಟಡವನ್ನು ಸಂಪೂರ್ಣವಾಗಿ ಧ್ವಂಸಗೊಳಿಸದೆ ಕೋಣೆಯೊಳಗಿನವರನ್ನು ಕೊಲ್ಲುವಂತೆ ವಿನ್ಯಾಸಗೊಳಿಸಲಾಗಿದೆ. ರಚನೆಗಳನ್ನು ಪುಡಿಮಾಡಲು ಬೃಹತ್ ಸ್ಫೋಟವನ್ನು ಅವಲಂಬಿಸುವ ಬದಲು, ಇದು AFX-757 ಎಂಬ ವಿಶೇಷ ಸ್ಫೋಟಕವನ್ನು ಬಳಸುತ್ತದೆ. ಮೊದಲಿಗೆ ಹೆಚ್ಚಿನ ತೀವ್ರತೆಯ ಒತ್ತಡದ ತರಂಗವು ಶ್ವಾಸಕೋಶದಂತಹ ಆಂತರಿಕ ಅಂಗಗಳನ್ನು ಛಿದ್ರಗೊಳಿಸುತ್ತದೆ. ನಂತರ ತಕ್ಷಣವೇ ಉಷ್ಣ ತರಂಗ ಬಂದು ಮಾನವ ಅಂಗಾಂಶವನ್ನು ಸುಡುವ ಸಾಮರ್ಥ್ಯವಿರುವ ತೀವ್ರ ಶಾಖವನ್ನು ಉಂಟುಮಾಡುತ್ತದೆ. ಅಲ್-ತಾಬಿನ್ ಶಾಲೆಯ ದಾಳಿಯಲ್ಲಿ GBU-39 ತುಣುಕುಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ. ಅವುಗಳನ್ನು ಎಲ್ಲಿ ಬಳಸಲಾಗಿದೆ? ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಸೈನ್ಯ ಥರ್ಮೋಬಾರಿಕ್ ಬಾಂಬ್ ಬಳಸಿತ್ತು. 1960ರ ದಶಕದಲ್ಲಿ ಅಮೆರಿಕ ವಿಯೆಟ್ನಾಂ ಯುದ್ಧದಲ್ಲಿ ಅವುಗಳನ್ನು ಬಳಸಿದಾಗ ಅವು ವ್ಯಾಪಕವಾಗಿ ಅಭಿವೃದ್ಧಿಪಡಿಸಲ್ಪಟ್ಟವು. 1960ರ ದಶಕದಿಂದಲೂ ರಷ್ಯಾ ಮತ್ತು ಪಾಶ್ಚಿಮಾತ್ಯ ಪಡೆಗಳು ಈ ಬಾಂಬ್ಗಳನ್ನು ಬಳಸುತ್ತಿವೆ. ಅಮೆರಿಕವು ಅವುಗಳನ್ನು ಅಫ್ಘಾನಿಸ್ತಾನದಲ್ಲಿ ಬಳಸಿತ್ತು. 2001ರಲ್ಲಿ ಟೋರಾ ಬೋರಾ ಪರ್ವತಗಳ ಗುಹೆಗಳಲ್ಲಿ ಅಡಗಿದ್ದ ಅಲ್-ಖೈದಾ ಪಡೆಗಳ ವಿರುದ್ಧ ಮತ್ತು 2017ರಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ. ರಷ್ಯಾವು ಸಣ್ಣ ಯುದ್ಧತಂತ್ರದ ಶಸ್ತ್ರಾಸ್ತ್ರಗಳಿಂದ ಹಿಡಿದು ಬೃಹತ್ ಬಾಂಬ್ಗಳವರೆಗೆ ಹಲವು ವ್ಯವಸ್ಥೆಗಳನ್ನು ಹೊಂದಿದೆ. ಡಾನ್ಬಾಸ್ ಪ್ರದೇಶದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಇದನ್ನು ಹಲವು ವರ್ಷಗಳಿಂದ ಬಳಸುತ್ತಿದ್ದಾರೆ ಎಂದು ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ನ ಹಿರಿಯ ವಿಶ್ಲೇಷಕ ಡಾ. ಮಾರ್ಕಸ್ ಹೆಲ್ಲಿಯರ್ ತಿಳಿಸಿದ್ದಾರೆ. 1999ರಲ್ಲಿ ಚೆಚೆನ್ಯಾ ಯುದ್ಧದಲ್ಲಿ ರಷ್ಯಾ ಅವುಗಳನ್ನು ಬಳಸಿದ್ದು, ಮಾನವ ಹಕ್ಕುಗಳ ಆಯೋಗ ಇದನ್ನು ಖಂಡಿಸಿತ್ತು. ಸಿರಿಯನ್ ಅಂತರ್ಯುದ್ಧದಲ್ಲಿ ಬಶರ್ ಅಲ್-ಅಸ್ಸಾದ್ ಆಡಳಿತವು ರಷ್ಯಾ ನಿರ್ಮಿತ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ವರದಿಯಾಗಿದೆ. 2022ರಲ್ಲಿ ಉಕ್ರೇನ್ ಯುದ್ಧದ ಆರಂಭದಲ್ಲಿ ರಷ್ಯಾ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ಉಕ್ರೇನಿಯನ್ ಸರ್ಕಾರ ಆರೋಪಿಸಿತ್ತು. ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ನಿಷೇಧಿಸಲಾಗಿದೆಯೇ? ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ನಿರ್ದಿಷ್ಟವಾಗಿ ನಿಷೇಧಿಸಲಾಗಿಲ್ಲ. ಆದರೆ ಅಂತರರಾಷ್ಟ್ರೀಯ ಮಾನವೀಯ ಕಾನೂನು ಈ ಶಸ್ತ್ರಾಸ್ತ್ರಗಳ ಬಳಕೆಯನ್ನು ಎರಡು ಪ್ರಮುಖ ತತ್ವಗಳ ಮೂಲಕ ನಿಯಂತ್ರಿಸುತ್ತದೆ: ವ್ಯತ್ಯಾಸ (Distinction) ಮತ್ತು ಅನುಪಾತ (Proportionality). ಈ ನಿಯಮಗಳ ಪ್ರಕಾರ, ಮಿಲಿಟರಿ ಪಡೆಗಳು ಬಾಂಬ್ ಬಳಸುವ ಮೊದಲು ನಾಗರಿಕರನ್ನು ಮಿಲಿಟರಿ ಗುರಿಗಳಿಂದ ಬೇರ್ಪಡಿಸುವ ಅಗತ್ಯವಿದೆ. ನೇರ ಮಿಲಿಟರಿ ಲಾಭಕ್ಕೆ ಹೋಲಿಸಿದರೆ ನಿರೀಕ್ಷಿತ ನಾಗರಿಕ ಸಾವುನೋವುಗಳು ವಿಪರೀತವಾಗಿರುವಲ್ಲಿ ದಾಳಿಗಳನ್ನು ನಡೆಸುವುದು ನಿಷೇಧಿಸಲಾಗಿದೆ. ಈ ಸ್ಫೋಟಕಗಳು ಬೃಹತ್ ಹಾಗೂ ನಿಯಂತ್ರಿಸಲಾಗದ ಸ್ಫೋಟವನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ, ಜನನಿಬಿಡ ಪ್ರದೇಶಗಳಲ್ಲಿ ಅವುಗಳ ಬಳಕೆಯ ಬಗ್ಗೆ ಮಾನವ ಹಕ್ಕುಗಳ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.
ಹೊಸದಿಲ್ಲಿ, ಫೆ. 20: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಬಳಿಕ, ಗುಜರಾತ್, ಲಕ್ಷದ್ವೀಪ ಮತ್ತು ಪುದುಚೇರಿಯ ಮತದಾರರ ಪಟ್ಟಿಗಳಿಂದ ಸುಮಾರು 69 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಚುನಾವಣಾ ಆಯೋಗವು ಶುಕ್ರವಾರ ಈ ಸಂಬಂಧಿ ಅಂಕಿಅಂಶಗಳನ್ನು ಬಿಡುಗಡೆ ಗೊಳಿಸಿದೆ. ಕಳೆದ ವರ್ಷದ ಅಕ್ಟೋಬರ್ 27ರಂದು ವಿಶೇಷ ತೀವ್ರ ಪರಿಷ್ಕರಣೆಯನ್ನು ಘೋಷಿಸಿದ ಬಳಿಕ, ಗುಜರಾತ್ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತದಾರರ ಸಂಖ್ಯೆ 5.19 ಕೋಟಿ ಆಗಿತ್ತು. ಪರಿಷ್ಕರಣೆಯ ಬಳಿಕ ಪ್ರಕಟಿಸಲಾದ ಅಂತಿಮ ಪಟ್ಟಿಗಳಲ್ಲಿ ಒಟ್ಟು ಮತದಾರರ ಸಂಖ್ಯೆ 4.50 ಕೋಟಿ ಆಗಿದೆ. ಅಂದರೆ ಮತದಾರರ ಸಂಖ್ಯೆ ಮೊದಲಿನ ಪಟ್ಟಿಗಿಂತ 68.9 ಲಕ್ಷ ಕಡಿಮೆ ಆಗಿದೆ. ಎಸ್ಐಆರ್ ಮೊದಲು, ಗುಜರಾತ್ ಮತದಾರರ ಪಟ್ಟಿಯಲ್ಲಿ 5.08 ಕೋಟಿ ಮತದಾರರಿದ್ದಿರು. ಈಗ ಪಟ್ಟಿಯು 4.40 ಕೋಟಿಗೆ ಇಳಿದಿದೆ. ಪಟ್ಟಿಯಿಂದ 68.12 ಲಕ್ಷ, ಅಂದರೆ 13.40 ಶೇಕಡ ಮತದಾರರು ಹೊರಬಿದ್ದಿದ್ದಾರೆ. ಲಕ್ಷದ್ವೀಪದಲ್ಲಿ, ಮೊದಲು 57,813 ಮತದಾರರಿದ್ದರು. ಈಗ ಅದು 57,607ಕ್ಕೆ ಇಳಿದಿದೆ. 206, ಅಂದರೆ 0.36 ಶೇಕಡ ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಚುನಾವಣೆಗೆ ಸಜ್ಜಾಗುತ್ತಿರುವ ಪುದುಚೇರಿಯಲ್ಲಿ, ಎಸ್ಐಆರ್ಗಿಂತ ಮೊದಲು 10.21 ಲಕ್ಷ ಮತದಾರರಿದ್ದರು. ಈಗ ಅದು 9.44 ಲಕ್ಷಕ್ಕೆ ಇಳಿದಿದೆ. 7.57 ಶೇಕಡ ಮತದಾರರು ಹೊರಬಿದ್ದಿದ್ದಾರೆ.
Kalaburagi | ಜೀವ ರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ: ಡಾ.ಸಂಗಮೇಶ ಶೇರಿ
ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ
ಟ್ರಂಪ್ ಜಾರಿಗೆ ತಂದಿದ್ದ ಬಹುತೇಕ ಸುಂಕ ರದ್ದು! ತುರ್ತು ಕಾನೂನು ದುರ್ಬಳಕೆಗೆ ಅಮೆರಿಕದ ಸುಪ್ರೀಂ ಕೋರ್ಟ್ ಚಾಟಿಯೇಟು
Donald Trump Tariffs- ಡೊನಾಲ್ಡ್ ಟ್ರಂಪ್ ಅವರು ತುರ್ತು ಕಾನೂನು ದುರ್ಬಳಕೆ ಮಾಡಿ ಭಾರತವೂ ಸೇರಿದಂತೆ ಬಹುತೇಕ ದೇಶಗಳಿಗೆ ವಿಪರೀತ ಸುಂಕ ಹೇರಿ ತಲೆನೋವು ಉಂಟುಮಾಡಿದ್ದರು. ಆದರೆ ಅವರು ಜಾರಿಗೊಳಿಸಿದ ಬಹುತೇಕ ಸುಂಕವನ್ನು ಅಕ್ರಮ ಎಂದು ತಿಳಿಸಿರುವ ಅಲ್ಲಿನ ಸುಪ್ರೀಂ ಕೋರ್ಟ್ ಅಮಾನ್ಯಗೊಳಿಸಿವೆ. ಹೀಗಾಗಿ ಈ ಸುಂಕನೀತಿಯಿಂದ ತತ್ತರಿಸಿದ್ದ ದೇಶಗಳು ಇದೀಗ ನಿರಾಳವಾಗಿವೆ. ಇದು ಡೊನಾಲ್ಡ್ ಟ್ರಂಪ್ ಅವರ ಆಡಳಿತ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಈ ತೀರ್ಪು ಎಲ್ಲಾ ಸುಂಕಗಳಿಗೆ ಅನ್ವಯಿಸುವುದಿಲ್ಲ ಎಂಬುದು ಸಹ ಗಮನಿಸಬೇಕಾದ ಅಂಶವಾಗಿದೆ.
ಉಡುಪಿ ಅಗ್ನಿಶಾಮಕ ದಳದ ಸತೀಶ್ಗೆ ಕೇಂದ್ರ ಗೃಹ ಮಂತ್ರಾಲಯದ ಪದಕ
ಉಡುಪಿ, ಫೆ.20: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕರಾಗಿ ಕರ್ತವ್ಯ ನಿರ್ವಸುತ್ತಿರುವ ಸತೀಶ್ ಅವರಿಗೆ, ಇಲಾಖೆಯು ಉತ್ತಮ ಹಾಗೂ ನಿಷ್ಠೆಯ ಸೇವೆಗಾಗಿ, ತುರ್ತು ಪರಿಸ್ಥಿತಿಯಲ್ಲಿ ಶ್ರೇಷ್ಠ ಕಾರ್ಯಕ್ಕಾಗಿ ಕೇಂದ್ರ ಸರಕಾರದ ಗೃಹ ಮಂತ್ರಾಲಯವು ನೀಡುವ ಪ್ರಶಸ್ತಿಯನ್ನು ಪಡೆದಿದ್ದಾರೆ. ಸತೀಶ್ ಅವರು ಈ ಪದಕವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಪಡೆದಿದ್ದಾರೆ. 2005ರಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಆರ್.ಎ. ಮುಂಡ್ಕೂರ್ ತರಬೇತಿ ವಿದ್ಯಾಲಯ ದಲ್ಲಿ ತರಬೇತಿ ಪಡೆದು 2006ರಲ್ಲಿ ಮೂಡಬಿದ್ರೆ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯಕ್ಕೆ ಸೇರ್ವಡೆಗೊಂಡರು. 2018ರಲ್ಲಿ ಮೈಸೂರು ಹೆಬ್ಬಾಳ ಅಗ್ನಿಶಾಮಕ ಠಾಣೆಗೆ ಪದೋನ್ನತಿ ವರ್ಗಾವಣೆ ಪಡೆದು ಪ್ರಸ್ತುತ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಜನರ ಪ್ರಾಣ ಹಾಗೂ ಆಸ್ತಿಗಳ ರಕ್ಷಣೆಗಾಗಿ ಹಲವು ಪುರಸ್ಕಾರಗಳು ಹಾಗೂ ಸೆಲ್ಯೂಟ್ದ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕೋರ್ಟ್ ಆದೇಶದ ಹೊರತಾಗಿಯೂ ಎಸ್ಐಟಿ ರಚಿಸಲು ವಿಫಲ; ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾತಿಗೆ ಹೈಕೋರ್ಟ್ ತಾಕೀತು
ಬೆಂಗಳೂರು : ನ್ಯಾಯಾಲಯ ಆದೇಶ ಹೊರಡಿಸಿ 5 ತಿಂಗಳು ಕಳೆದರೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್ ಉದ್ಯೋಗಿ ಶ್ರೀಧರ್ ಎಂಬುವರ ಸಾವಿನ ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಯ ಖುದ್ದು ಹಾಜರಾತಿಗೆ ನಿರ್ದೇಶಿಸಿದೆ. ಸಾರಾ ಫಾರ್ಮ್ಸ್ ಮ್ಯಾನೇಜರ್ ಹರೀಶ್ ಮುಗರೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಶ್ರೀಧರ್ ಸಾವಿನ ಪ್ರಕರಣದ ಮರು ತನಿಖೆ ಮಾಡಲು ರಾಜ್ಯ ಸರ್ಕಾರ 4 ವಾರದಲ್ಲಿ ಎಸ್ಐಟಿ ರಚನೆ ಮಾಡಬೇಕು. ತನಿಖೆ ಆರಂಭಿಸಿದ ದಿನದಿಂದ 4 ತಿಂಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಎಸ್ಐಟಿ ಅಂತಿಮ ವರದಿ ಸಲ್ಲಿಸಬೇಕು ಎಂದು 2025ರ ಸೆಪ್ಟೆಂಬರ್ 9ರಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಈವರೆಗೂ ಎಸ್ಐಟಿ ರಚನೆಯಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದ್ದರಿಂದ, ಈ ಕುರಿತು ವಿವರಣೆ ನೀಡಲು ಫೆಬ್ರವರಿ 21ರ (ಶನಿವಾರ) ಮಧ್ಯಾಹ್ನ 2.30ಕ್ಕೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ. ಪ್ರಕರಣವೇನು? ಅರ್ಜಿದಾರ ಹರೀಶ್ ಮುಗರೆ 2025ರ ಏಪ್ರಿಲ್ನಲ್ಲಿ ಹೈಕೊರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಗಂಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಫಾರ್ಮ್ನ ಉದ್ಯೋಗಿಯಾಗಿದ್ದ ಶ್ರೀಧರ್ ಮೇಲೆ 2022ರ ಡಿಸೆಂಬರ್ 17ರಂದು ಕೆಲವರು ಹಲ್ಲೆ ಮಾಡಿದ್ದರು. ಆಗ ನಾನು ಆತನಿಗೆ ಚಿಕಿತ್ಸೆ ನೀಡಿ, ಫಾರ್ಮ್ ಕರೆದೊಯ್ದು ಅಲ್ಲೇ ತಂಗಲು ಸೂಚಿಸಿದ್ದೆ. ಮರು ದಿನ ಡಿಸೆಂಬರ್ 18ರಂದು ಬೆಳಗ್ಗೆ 6.30ಕ್ಕೆ ಫಾರ್ಮ್ಗೆ ಹೋದಾಗ, ಯಾರೋ ಕೆಲ ಆರೋಪಿಗಳು ಫೆನ್ಸ್ ತುಂಡು ಮಾಡಿ, ಒಳಗೆ ಪ್ರವೇಶಿಸಿದ್ದರು. ಶ್ರೀಧರ್ ಅನ್ನು ಕೊಲೆಗೈದು ಫಾರ್ಮ್ ಮಧ್ಯದಲ್ಲಿ ಮೃತದೇಹ ಬಿಸಾಡಿದ್ದರು. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಗೆ ನಾನು ದೂರು ನೀಡಿದ್ದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 393 (ದರೋಡೆ) ಅಪರಾಧದಡಿಯಲ್ಲದೆ ಐಪಿಸಿ ಸೆಕ್ಷನ್ 323 ಅಡಿಯಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಅಪರಾಧ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದು ಗಂಭೀರ ಸ್ವರೂಪವಲ್ಲದ ಅಪರಾಧವಾಗಿದೆ. ಇನ್ನೂ ಪೊಲೀಸರಿಗೆ ದಾರಿ ತಪ್ಪಿಸಿದ ಆರೋಪದಲ್ಲಿ ನನ್ನ ವಿರುದ್ಧವೇ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ, ಶ್ರೀಧರ್ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಹರೀಶ್ ಮುಗರೆ ಅರ್ಜಿಯಲ್ಲಿ ಕೋರಿದ್ದರು. ಅರ್ಜಿಯನ್ನು 2025ರ ಸೆಪ್ಟೆಂಬರ್ 9ರಂದು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ, ಶ್ರೀಧರ್ ಸಾವು ಪ್ರಕರಣದ ಮರು ತನಿಖೆಗೆ ಎಸ್ಐಟಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ಪಾಲನೆಯಾಗಿಲ್ಲ ಎಂದು ಅರ್ಜಿದಾರರು ಶುಕ್ರವಾರ ನ್ಯಾಯಾಲಯದ ಗಮನಕ್ಕೆ ತಂದರು.
ಸರಳ ತ್ರಿಪದಿಗಳ ಮೂಲಕ ಸಮಾಜದ ಅಂಧಕಾರ ಸರಿಸಿದ ಕವಿ: ಎಂ.ಎ. ಗಫೂರ್
ಉಡುಪಿ: ಸರ್ವಜ್ಞ ಜಯಂತಿ
ಕಲಬುರಗಿ | ಮುರುಗೇಶ ನಿರಾಣಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್: ಡಾ.ಉಮೇಶ್ ಜಾಧವ್ ಅಭಿನಂದನೆ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ನಾಡಿನ ಹಿರಿಯ ಮುಖಂಡರಾದ ಮುರುಗೇಶ್ ನಿರಾಣಿ, ಪಿ.ಜಿ.ಆರ್ ಸಿಂಧ್ಯಾ ಮತ್ತು ಹೋರಾಟಗಾರ ಕೇದಾರ ಲಿಂಗಯ್ಯ ಹಿರೇಮಠ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿರುವುದಕ್ಕೆ ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅಭಿನಂದನೆ ಸಲ್ಲಿಸಿದ್ದಾರೆ. ಸಮಾಜಮುಖಿಯಾಗಿ ಕೆಲಸ ಮಾಡಿದ ಮೂವರು ಮಹನೀಯರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯವು ಗುರುತಿಸಿ ರಾಜ್ಯಪಾಲರು ಆದ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸಂತಸದ ಸಂಗತಿಯಾಗಿದೆ. ಮೂವರು ಕೂಡ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಪಾರ ಕೊಡುಗೆಯನ್ನು ನೀಡಿ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ ಎಂದರು. ಮುರುಗೇಶ್ ನಿರಾಣಿಯವರು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಸಚಿವರಾಗಿ ಮತ್ತು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಈ ಭಾಗಕ್ಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಮಾತ್ರವಲ್ಲ ಉದ್ಯಮಿಗಳಾಗಿ ರಾಷ್ಟ್ರ ಕಂಡ ಶ್ರೇಷ್ಠ ಕೈಗಾರಿಕೋದ್ಯಮಿಯಾಗಿ ಸಹಕಾರಿ ಸಂಘವನ್ನು ಬೆಳೆಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಡಾ. ಜಾಧವ್ ತಿಳಿಸಿದ್ದಾರೆ. ಮೂವರು ಗಣ್ಯರನ್ನು ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಶಿಕಾಂತ ಉಡಿಕೇರಿ ಅವರಿಗೂ ಕೂಡ ಅಭಿನಂದನೆ ಹಾಗೂ ಫೆ.24ರಂದು ನಡೆಯಲಿರುವ ವಿವಿಯ 43ನೇ ಘಟಿಕೋತ್ಸವ ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂಬುದಾಗಿ ಜಾಧವ್ ತಿಳಿಸಿದ್ದಾರೆ.
ಕಲಬುರಗಿ | ಶರಣ ಹಡಪದ ಅಪ್ಪಣ್ಣನವರ ಮೂರ್ತಿ ಸ್ಥಾಪನೆಗೆ ಮನವಿ
ಕಲಬುರಗಿ: ಬಸವಕಲ್ಯಾಣದಲ್ಲಿರುವ ವಿಶ್ವಗುರು ಬಸವಣ್ಣ ಅವರ ಅರಿವಿನ ಮನೆಯ ಪಕ್ಕದಲ್ಲಿರುವ ಶರಣ ಹಡಪದ ಅಪ್ಪಣ್ಣ ಅವರ ಅರಿವಿನ ಗವಿಯಲ್ಲಿ ಅಪ್ಪಣ್ಣನವರ ಮೂರ್ತಿಯನ್ನು ಸ್ಥಾಪಿಸಬೇಕೆಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಆಗ್ರಹಿಸಿದೆ. ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಅರಿವಿನ ಗವಿಯು ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿದೆ ಎಂದು ತಿಳಿಸಿದ್ದಾರೆ. ಈ ಗವಿಯಲ್ಲಿ ಕಾನೂನುಬಾಹಿರವಾಗಿ ಹಾಗೂ ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರದ ಆದೇಶವನ್ನು ಮೀರಿ ಬೇರೆ ಶರಣರ-ಶರಣೀಯರ ಮೂರ್ತಿಯನ್ನು ಬಸವೇಶ್ವರ ದೇವಸ್ಥಾನದ ಪಂಚಕಮಿಟಿ ಸ್ಥಾಪಿಸಿದೆ ಎಂದು ಅವರು ಆರೋಪಿಸಿದ್ದಾರೆ. ಆದ್ದರಿಂದ ಗವಿಯಲ್ಲಿ ಸ್ಥಾಪಿಸಿರುವ ಬೇರೆ ಮೂರ್ತಿಯನ್ನು ತೆರವುಗೊಳಿಸಿ, ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಹಡಪದ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ, ಕಾರ್ಯದರ್ಶಿ ರಮೇಶ್ ಕವಲಗಾ, ವಿನೋದ ಅಂಬಲಗಾ, ಭಗವಂತ ಹಡಪದ ಕಿರಣಗಿ, ರಮೇಶ್ ಹಡಪದ ನಿಲೂರು, ಆಕಾಶ್ ತಳವಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೆ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಕಳಕ್ಕೆ ಭೇಟಿ
ಉಡುಪಿ, ಫೆ.20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.25ರಂದು ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ.25ರಂದು ಬೆಳಗ್ಗೆ 11ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ 11:30ಕ್ಕೆ ಕಾರ್ಕಳದ ತಾಲೂಕು ಕ್ರೀಡಾಂಗಣದ ಹೆಲಿಪ್ಯಾಡ್ನಲ್ಲಿ ಬಂದಿಳಿಯಲಿದ್ದಾರೆ. ಮೊದಲು ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಏಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಆಯೋಜಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡವನ್ನು ಕಾರ್ಕಳ ಕಾಬೆಟ್ಟು ನಲ್ಲಿ ಉದ್ಘಾಟಿಸಲಿದ್ದಾರೆ. ಬಳಿಕ ಕುಕ್ಕುಂದೂರು ಕಿಸಾನ್ ಸಭಾ ಟ್ರಸ್ಟ್ ಆಯೋಜಿಸಿರುವ ಟ್ರಸ್ಟ್ನ ಮಹಾತ್ಮಗಾಂಧಿ ವಸತಿ ಪ್ರೌಢ ಶಾಲೆಯಲ್ಲಿ ‘ಕಿಸಾನ್ ಸಭಾ ಸಭಾಂಗಣವನ್ನು ಉದ್ಘಾಟಸಲಿದ್ದಾರೆ. ಅಲ್ಲದೇ ಶಾಲೆಯ 35ನೇ ವರ್ಷದ ಸಮಾರಂಭದಲ್ಲೂ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಬಳಿಕ ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮುಖ್ಯಮಂತ್ರಿಗಳು ಸಂಜೆ 4ಗಂಟೆಗೆ ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕಲಬುರಗಿ | ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ
ಕಲಬುರಗಿ: “ಕರ್ನಾಟಕ ಒನ್” ಯೋಜನೆಯಡಿ ಒಂದೇ ಸೂರಿನಡಿ ಎಲ್ಲಾ ರೀತಿಯ ನಾಗರಿಕ ಸೇವೆ ಪೂರೈಸಲು 2025-26ನೇ ಸಾಲಿಗೆ ಕಲಬುರಗಿ ಜಿಲ್ಲೆಯ ಈ ಕೆಳಕಂಡ ತಾಲೂಕುಗಳಲ್ಲಿ ಫ್ರಾಂಚೈಸಿಗಳ ಮೂಲಕ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕರ್ನಾಟಕ ಒನ್ ಸ್ಥಾಪನೆಗಾಗಿ ಬಾಕಿಯಿರುವ ಕಲಬುರಗಿ ಜಿಲ್ಲೆಯ ಅಫಜಲಪುರ, ಚಿಂಚೋಳಿ, ಜೇವರ್ಗಿ, ಕಲಬುರಗಿ, ಕಾಳಗಿ, ಕಮಲಾಪುರ, ಸೇಡಂ ಹಾಗೂ ಶಹಾಬಾದ ತಾಲೂಕುಗಳಲ್ಲಿ ಫ್ರಾಂಚೈಸಿಗಳ ಮೂಲಕ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು https://www.karnatakaone.gov.in/Public/FrachiseeTerms ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ 2026ರ ಮಾರ್ಚ್ 2ರ ಸಂಜೆ 6 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಬೇರೆ ಯಾವುದೇ ರೂಪದಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ om-edcs@karnataka.gov.in ಹಾಗೂ ದೂರವಾಣಿ ಸಂಖ್ಯೆ 080-24410574 ಗೆ ಸರ್ಕಾರಿ ರಜೆಯನ್ನು ಹೊರತುಪಡಿಸಿ ಎಲ್ಲಾ ಕೆಲಸ ದಿನಗಳಂದು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.
ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದ ಬಾಗಲಕೋಟೆ ಸಂಘರ್ಷ: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಘಟನೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಗೆ ಕಾರಣವಾಗುತ್ತಿದೆ. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಒಂದು ವರ್ಗದ ತುಷ್ಟೀಕರಣ ನೀತಿಯೇ ಗಲಭೆಗೆ ಕಾರಣ ಎಂದು ಆರೋಪ ಮಾಡಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಈ ಕುರತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಬಾಗಲಕೋಟೆ ಘಟನೆ ಯಾವ ರೀತಿಯಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ? ಮತ್ತಷ್ಟು ವಿವರ ಇಲ್ಲಿದೆ.
ಗೂಡ್ಸ್ ವಾಹನ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
ಬ್ರಹ್ಮಾವರ, ಫೆ.20: ಗೂಡ್ಸ್ ವಾಹನವೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಆರೂರು ಕ್ರಾಸ್ (ಕುಂಜಾಲು) ಎಂಬಲ್ಲಿ ಫೆ.20ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಆರೂರಿನ ಶೇಖರ್ ಟಿ.ಕುಲಾಲ್ ಎಂದು ಗುರುತಿಸಲಾಗಿದೆ. ಆರೂರು ಮುಖ್ಯ ರಸ್ತೆಯನ್ನು ದಾಟಿ ಡಿವೈಡರ್ ಪಾಸ್ ಮಾಡುತ್ತಿದ್ದ ಸ್ಕೂಟರ್ಗೆ ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶೇಖರ್ ಕುಲಾಲ್ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ | ನಾಟಕ ನೋಡುವುದರಿಂದ ಯೋಚನಾ ಲಹರಿ ಬದಲಾವಣೆ : ಅರುಂಧತಿ ನಾಗ್
ಕಲಬುರಗಿ: ರಂಗಭೂಮಿಯ ಚಟುವಟಿಕೆಗಳು ಮುಖ್ಯ ನಗರಗಳಿಗೆ ಸೀಮಿತವಾಗಿರುವ ಇಂದಿನ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಳ್ಳುತ್ತಿರುವುದು ಹಾಗೂ ಅದಕ್ಕೆ ರಂಗಶಂಕರ ಸಹಯೋಗ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಮತ್ತು ರಂಗಶಂಕರ ಸಹಯೋಗದಲ್ಲಿ ಫೆ.21ರಿಂದ 28ರವರೆಗೆ ನಡೆಯಲಿರುವ ‘ಕಲಬುರಗಿ ನಾಟಕೋತ್ಸವ-26’ ಪೂರ್ವತಯಾರಿ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಂಗಭೂಮಿ ಬದುಕಿನ ಪ್ರತಿರೂಪವಾಗಿದ್ದು, ನಾಟಕ ವೀಕ್ಷಣೆ ಮನುಷ್ಯರ ಚಿಂತನಾ ಲಹರಿಯನ್ನು ಬದಲಿಸುತ್ತದೆ. ರಂಗಶಂಕರಕ್ಕೆ ಈಗ 21 ವರ್ಷ ಪೂರ್ಣಗೊಂಡಿದ್ದು, ತಾವು ಹವ್ಯಾಸಿ ರಂಗಕರ್ಮಿಯಾಗಿ 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ನಾಟಕೋತ್ಸವ ವೈಯಕ್ತಿಕವಾಗಿ ಮಹತ್ವದ್ದಾಗಿದೆ ಎಂದು ಹೇಳಿದರು. ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿರುವುದಾಗಿ ತಿಳಿಸಿದ ಅವರು, ಬೆಂಗಳೂರಿನ ಅತ್ಯುತ್ತಮ ಕಲಾತಂಡಗಳು ಹಾಗೂ ಹಿಂದಿ ನಾಟಕಗಳು ಸಹ ಇಲ್ಲಿ ಪ್ರದರ್ಶನಗೊಳ್ಳಲಿವೆ. ರಾಷ್ಟ್ರೀಯ ಮಟ್ಟದ ರಂಗಾನುಭವವನ್ನು ಇಲ್ಲಿನ ಜನರಿಗೆ ನೀಡುವುದು ಉದ್ದೇಶ ಎಂದು ತಿಳಿಸಿದರು. ತಮ್ಮ ರಂಗಭೂಮಿ ಪಯಣದ ಆರಂಭದಲ್ಲಿ ಶಂಕರ್ ನಾಗ್ ಅವರೊಂದಿಗೆ ಕಂಡ ಅನುಭವಗಳನ್ನು ಸ್ಮರಿಸಿ, ಮೊಬೈಲ್ ಮತ್ತು ಟಿವಿ ಬಿಟ್ಟು ಜನರು ನಾಟಕ ವೀಕ್ಷಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಕಲಬುರಗಿಯ ಸರ್ವತೋಮುಖ ಅಭಿವೃದ್ಧಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ. ಈ ನಾಟಕೋತ್ಸವದ ಜೊತೆಗೆ ಮುಂದಿನ ದಿನಗಳಲ್ಲಿ ಚಲನಚಿತ್ರೋತ್ಸವ ಮತ್ತು ಸಾಹಿತ್ಯೋತ್ಸವಗಳನ್ನೂ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ತಿಳಿಸಿದರು. ಪ್ರತಿದಿನ ಸಂಜೆ 7 ಗಂಟೆಗೆ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಅದಕ್ಕೂ ಮೊದಲು ಬೀದಿನಾಟಕ, ಜಾನಪದ ಗೀತೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮುಖ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ. ಒಂದು ನಾಟಕಕ್ಕೆ 100 ರೂ. ಟಿಕೆಟ್ ನಿಗದಿಪಡಿಸಲಾಗಿದ್ದು, ಆನ್ಲೈನ್ ಹಾಗೂ ಸ್ಥಳದಲ್ಲಿಯೇ ಲಭ್ಯವಿರುತ್ತದೆ. ಮಕ್ಕಳಿಗಾಗಿ ಕಲಬುರಗಿ ರಂಗಾಯಣದಲ್ಲಿ ವಿಶೇಷ ನಾಟಕಗಳನ್ನು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಂಗಶಂಕರದ ಹಿರಿಯ ಸದಸ್ಯ ಸುರೇಂದ್ರನಾಥ ಅವರು, ರಾಜ್ಯ ಹಾಗೂ ಇತರೆ ಭಾಷೆಗಳ ಅತ್ಯುತ್ತಮ ನಾಟಕಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳ ಕಾಲ ನಾಟಕೋತ್ಸವವನ್ನು ನಿರಂತರವಾಗಿ ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದ್ದು, ಕಲಬುರಗಿಯಲ್ಲಿ ರಂಗಸಂಸ್ಕೃತಿ ಬೆಳೆಸುವ ಉದ್ದೇಶವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರು ಹಾಗೂ ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಉಪಸ್ಥಿತರಿದ್ದರು.
ಇರಾನ್ ಮೇಲೆ ದಾಳಿಗೆ ತನ್ನ ಸೇನಾನೆಲೆ ಬಳಸಲು ಅಮೆರಿಕಕ್ಕೆ ಅನುಮತಿ ನಿರಾಕರಿಸಿದ ಬ್ರಿಟನ್
ಲಂಡನ್, ಫೆ.20: ಇರಾನ್ ಮೇಲಿನ ಯಾವುದೇ ಸಂಭಾವ್ಯ ದಾಳಿಗೆ ತನ್ನ ಪ್ರಮುಖ ಮಿಲಿಟರಿ ನೆಲೆಯನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡುವುದನ್ನು ಬ್ರಿಟನ್ ಸರಕಾರ ತಡೆಹಿಡಿದಿರುವುದಾಗಿ ವರದಿಯಾಗಿದೆ. ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಯುತ್ತಿರುವಂತೆಯೇ ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಬಲವನ್ನು ಹೆಚ್ಚಿಸುವ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ಮೇಲೆ ಒತ್ತಡ ತೀವ್ರಗೊಳಿಸುತ್ತಿದ್ದಾರೆ. ಇರಾನ್ ಮೇಲಿನ ಅಮೆರಿಕದ ಯಾವುದೇ ದಾಳಿಯಲ್ಲಿ ಹಿಂದೂ ಮಹಾಸಾಗರದಲ್ಲಿರುವ ಆಯಕಟ್ಟಿನ ಸೇನಾನೆಲೆ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಟ್ರಂಪ್ ಬುಧವಾರ ಹೇಳಿದ್ದರು. ಆದರೆ ಇಂತಹ ದಾಳಿಗೆ ತನ್ನ ಮಿಲಿಟರಿ ನೆಲೆಯನ್ನು ಬಳಸಲು ಬ್ರಿಟನ್ ಅನುಮತಿ ನೀಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ `ಇಂಡಿಯಾ ಟುಡೆ' ವರದಿ ಮಾಡಿದೆ. ನೈಋತ್ಯ ಇಂಗ್ಲೆಂಡಿನ ಸ್ವಿಂಡನ್ ನಗರದ ಬಳಿಯ ಫೇರ್ಫೋರ್ಡ್ ವಾಯುನೆಲೆಯ ಮೂಲಕ ಅಮೆರಿಕದ ದೀರ್ಘಶ್ರೇಣಿಯ ಬಾಂಬರ್ ವಿಮಾನಗಳ ಕಾರ್ಯಾಚರಣೆಗೆ ಬ್ರಿಟನ್ ಸರಕಾರ ಅನುಮತಿ ನಿರಾಕರಿಸಿದೆ. ಅನುಮತಿ ನೀಡಿದರೆ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ.
ಫೆ.22ರಂದು ಅಭಯಹಸ್ತ ಟ್ರಸ್ಟ್ನ 300ನೇ ರಕ್ತದಾನ ಶಿಬಿರ
ಉಡುಪಿ, ಫೆ.20: ಜಿಲ್ಲೆ ಕೊರೋನಾದಿಂದ ಬಸವಳಿದು ರೋಗಿಗಳ ಜೀವ ಉಳಿಸಲು ರಕ್ತದ ಕೊರತೆ ಉಂಟಾದಾಗ, ತುರ್ತು ರಕ್ತದಾನಕ್ಕಾಗಿ ವಾಟ್ಸಪ್ ಗ್ರೂಪ್ ಮೂಲಕ ಹುಟ್ಟಿಕೊಂಡ ಸಂಸ್ಥೆ ಅಭಯಹಸ್ತ ಬೆಳೆದು ಇದೀಗ 300ನೇ ರಕ್ತದಾನ ಶಿಬಿರಕ್ಕೆ ಮುಂದಾಗಿದೆ ಎಂದು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ ತಿಳಿಸಿದ್ದಾರೆ. ಅಭಯಹಸ್ತ ಟ್ರಸ್ಟ್ನ 300ನೇ ರಕ್ತದಾನ ಶಿಬಿರ ‘ಹೆಗ್ಗುರುತು-300’ ಕುರಿತು ಮಾಹಿತಿ ನೀಡಲು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಕ್ತದಾನ ಶಿಬಿರ ಫೆ.22ರಂದು ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಹಾಲ್ನಲ್ಲಿ ನಡೆಯಲಿದೆ ಎಂದರು. ಜಿಲ್ಲೆಯಲ್ಲಿ 1000ಕ್ಕೂ ಅಧಿಕ ರಕ್ತದಾನ ಶಿಬಿರ ನಡೆಸಿರುವ ಮೊಗವೀರ ಯುವ ವೇದಿಕೆಯನ್ನು ಹೊರತು ಪಡಿಸಿದರೆ ಅತ್ಯಧಿಕ ರಕ್ತದಾನ ಶಿಬಿರ ನಡೆಸಿದ ಹೆಗ್ಗಳಿಕೆ ನಮ್ಮ ಟ್ರಸ್ಟ್ಗಿದೆ ಎಂದ ಸತೀಶ್ ಸಾಲ್ಯಾನ್, ಈ ಬಾರಿ 200ರಿಂದ 30 ಯುನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು. ತುರ್ತು ಸಂದರ್ಭದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಮೂರ್ತರೂಪಕ್ಕೆ ಬಂದ ನಮ್ಮ ಟ್ರಸ್ಟ್, ಕೊರೋನಾದ ವಿಷಮ ಪರಿಸ್ಥಿತಿಯಲ್ಲಿ ಉಡುಪಿ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿದ್ದ ರಕ್ತದ ಕೊರತೆಯನ್ನು ನೀಗಿಸುವ ಪ್ರಯತ್ನ ನಡೆಸಿತ್ತು. 2020ರ ಮೇ 9ರಂದು ಮೊದಲ ರಕ್ತದಾನ ಶಿಬಿರ ನಡೆಸಿದ ಟ್ರಸ್ಟ್ ಕಳೆದ ಆರು ವರ್ಷಗಳ ಅವಧಿಯಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆಸಿದ ರಕ್ತದಾನ ಶಿಬಿರಗಳಲ್ಲಿ 40,000ಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸಿ ಸಾವಿರಾರು ಜೀವನಗಳನ್ನು ಉಳಿಸಿದ ಧನ್ಯತೆಯನ್ನು ಹೊಂದಿದೆ ಎಂದರು. ಟ್ರಸ್ಟ್ ಉಡುಪಿ ಮಾತಞ್ರವಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಹಾಗೂ ದುಬಾಯಿಗಳಲ್ಲೂ ರಕ್ತದಾನ ಶಿಬಿರ ಹಾಗೂ ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿವಿದ ಆಸ್ಪತ್ರೆಗಳಿಗೆ ತುರ್ತು ರಕ್ತವನ್ನು ಪೂರೈಕೆ ಮಾಡಿದೆ ಎಂದರು. ಒಂದು ವರ್ಷದ ಅವಧಿಯಲ್ಲಿ (2023) ನಾವು 8000 ಯುನಿಟ್ ರಕ್ತ ಸಂಗ್ರಹಿಸಿ ರಾಜ್ಯ ಆರೋಗ್ಯ ಇಲಾಖೆಯಿಂದ ಸನ್ಮಾನಿತರಾಗಿದ್ದೇವೆ ಎಂದು ಸಾಲ್ಯಾನ್ ತಿಳಿಸಿದರು. 300ನೇ ರಕ್ತದಾನ ಶಿಬಿರ ಬೆಳಗ್ಗೆ 8:30ರಿಂದ ಅಪರಾಹ್ನ 1:00ಗಂಟೆಯ ವರೆಗೆ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಲಿದ್ದಾರೆ. ಟ್ರಸ್ಟ್ನ ಪ್ರದಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಐಟಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ, ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್, ಕೆಎಂಸಿಯ ರಕ್ತ ಕೇಂದ್ರದ ಮುಖ್ಯಸ್ಥ ಡಾ.ಗಣೇಶ್ ಮೋಹನ್ ಹಾಗೂ ಇತರರು ಉಪಸ್ಥಿತರಿರಲಿದ್ದಾರೆ. 11:00ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಇತರರು ಪಾಲ್ಗೊಳ್ಳಲಿದ್ದು, ರಕ್ತದಾನಿಗಳಿಗೆ ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರಗಳನ್ನು ವಿತರಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಹರಿಪ್ರಸಾದ್, ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಶರತ್ ಕಾಂಚನ್ ಹಾನಗಲ್ಲು ಉಪಸ್ಥಿತರಿದ್ದರು.
ಫೆ.22ರಿಂದ ಸುಮನಸಾ ಕೊಡವೂರು ‘ರಂಗಹಬ್ಬ-14’ ನಾಟಕೋತ್ಸವ
ಉಡುಪಿ, ಫೆ.20: ಉಡುಪಿಯ ಪ್ರಮುಖ ರಂಗ ತಂಡಗಳಲ್ಲೊಂದಾದ ಸುಮನಸಾ ಕೊಡವೂರು ಇವರ 14ನೇ ವರ್ಷದ ನಾಟಕೋತ್ಸವ ‘ರಂಗ ಹಬ್ಬ-14’ ಇದೇ ಫೆ.22ರಿಂದ 28ರವರೆಗೆ ವೈವಿದ್ಯಮಯ ನಾಟಕಗಳ ಪ್ರಸ್ತುತಿ ಯೊಂದಿಗೆ ನಡೆಯಲಿದೆ ಎಂದು ಸುಮನಸಾದ ಗೌರವಾಧ್ಯಕ್ಷ ಎಂ. ಎಸ್.ಭಟ್ ತಿಳಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಉಡುಪಿ ನಗರಸಭೆ ಹಾಗೂ ಸಂಸ್ಕೃತಿ ನಿರ್ದೇಶನಾಲಯ ಹೊಸದಿಲ್ಲಿ ಇವರ ಸಹಯೋಗದೊಂದಿಗೆ ಈ ಬಾರಿಯ ನಾಟಕೋತ್ಸವ ನಡೆಯಲಿದೆ ಎಂದರು. ನಾಟಕೋತ್ಸವ ಎಂದಿನಂತೆ ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕ್ನ ಬಯಲು ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 6:30ಕ್ಕೆ ಪ್ರಾರಂಭಗೊಳ್ಳಲಿದೆ. ಈ ಬಾರಿಯ ರಂಗಹಬ್ಬವನ್ನು ತುಳು ರಂಗಭೂಮಿಯ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರರಂಗದ ಹಿರಿಯ ನಟ ಡಾ.ಪಿ. ಸಂಜೀವ ದಂಡೇಕೇರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಯಮಿ ಗಳಾದ ಮುಂಬಯಿಯ ಸೂರ್ಯಕಾಂತ್ ಜೆ.ಸುವರ್ಣ, ನಾಗರಾಜ್ ಸುವರ್ಣ, ರವೀಂದ್ರ ಕೆ.ಶೆಟ್ಟಿ, ರತ್ನಾಕರ್ ಅಮೀನ್, ಸಂತೋಷ್ ಉದ್ಯಾವರ ಉಪಸ್ಥಿತರಿರುವರು ಎಂದರು. ಪ್ರತಿದಿನದ ನಾಟಕದ ಸಂದರ್ಭದಲ್ಲಿ ಜಿಲ್ಲೆಯ ಓರ್ವ ರಂಗ ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೇ ಅದೃಷ್ಟದ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್ ಕೊಡುಗೆ ನೀಡಲಾಗುತ್ತದೆ. ಪ್ರತಿದಿನವೂ ವಿಭಿನ್ನ ಅಭಿವ್ಯಕ್ತಿಯ ನಾಟಕಗಳನ್ನು ಪ್ರಸ್ತುತ ಪಡಿಲಾಗುತ್ತದೆ ಎಂದು ಎಂ.ಎಸ್.ಭಟ್ ತಿಳಿಸಿದರು. ಫೆ.22ರಂದು ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಕನ್ನಡ ನಾಟಕ ‘ಸಾಹೇಬರು ಬರುತ್ತಾರೆ’ ಪ್ರದರ್ಶಿಸಲಿದೆ. ಹಿರಿಯ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ ಸನ್ಮಾನಗೊಳ್ಳಲಿದ್ದಾರೆ. 23ರಂದು ಸುಮನತಾ ಕೊಡವೂರು ತಂಡದ ಪ್ರಶಸ್ತಿ ವಿಜೇತ ತುಳು ನಾಟಕ ‘ಯೇಸ’ ಪ್ರದರ್ಶನಗೊಳ್ಳಲಿದೆ. ಸಾಧಕ ಕೃಷ್ಣಪ್ಪ ಮಲ್ಪೆ ಇವರು ಸನ್ಮಾನಗೊಳ್ಳಲಿದ್ದಾರೆ. ಫೆ.24ರಂದು ಶಿವಮೊಗ್ಗದ ಸಹ್ಯಾದ್ರಿ ಕಲಾತಂಡದ ಕನ್ನಡ ನಾಟಕ ‘ಜೋಕುಮಾರ ಸ್ವಾಮಿ’ ಪ್ರದರ್ಶನಗೊಳ್ಳಲಿದ್ದು, ರಮೇಶ್ ಕೆ.ಪುತ್ತೂರು ಸನ್ಮಾನಗೊಳ್ಳಲಿದ್ದಾರೆ. 25ರಂದು ಸುಮನಸಾ ಕೊಡವೂರು ಇವರಿಂದ ಕನ್ನಡ ಯಕ್ಷ ನಾಟಕ ‘ಮೈಂದ ದ್ವಿವಿದ ಕಾಳಗ’ ನಡೆಯಲಿದ್ದು, ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ ಅವರನ್ನು ಸನ್ಮಾನ ಸ್ವೀಕರಿಸಲಿದ್ದಾರೆ. ಫೆ.26ರಂದು ಪಾಂಡಿಚೇರಿಯ ಆದಿಶಕ್ತಿ ಥಿಯೇಟರ್ ‘ಎ ಉಮೆನ್ ಆರ್ ನಾಟ್ ಟು ಬಿ’ ಇಂಗ್ಲೀಷ್ ನಾಟಕ ಪ್ರಸ್ತುತ ಪಡಿಸಲಿದ್ದಾರೆ. ಅಂದು ಕುಸುಮಾ ಕಾಮತ್ ಅವರನ್ನು ಸನ್ಮಾನಿಸಲಾಗುತ್ತದೆ. 27ರಂದು ಸುಮನಸಾ ಕೊಡವೂರು ತಂಡದ ಪ್ರಶಸ್ತಿ ವಿಜೇತ ಕನ್ನಡ ನಾಟಕ ‘ಈದಿ’ ಪ್ರದರ್ಶನ ಗೊಳ್ಳಲಿದೆ. ರಮೇಶ್ ಕೆ.ಪಣಿಯಾಡಿ ಅವರನ್ನು ರಂಗಸಾಧಕರಾಗಿ ಅಭಿನಂದಿಸಲಾಗುವುದು ಎಂದರು. ಕೊನೆಯ ದಿನವಾದ ಫೆ.28ರಂದು ಮೈಸೂರಿನ ರಂಗವಲ್ಲಿ ತಂಡ ‘ಪರಮೇಶಿ ಪ್ರೇಮ ಪ್ರಸಂಗ’ ನಾಟಕವನ್ನು ಪ್ರದರ್ಶಿಸಲಿದೆ. ಅಂದು ಯಕ್ಷಗುರು ಯು.ದುಗ್ಗಪ್ಪ ಅವರ ನೆನಪಿನಲ್ಲಿ ನೀಡುವ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷ ಗಾನ ಗುರುಗಳಾದ ಬಿ.ಕೃಷ್ಣಸ್ವಾಮಿ ಜೋಷಿ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಭಟ್ ವಿವರಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಹರಿಯಪ್ಪ ಕೋಟ್ಯಾನ್ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಪ್ರಮೋದ್ ಮಧ್ವರಾಜ್, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಉದ್ಯಮಿ ಮಹಮ್ಮದ್ ಮೌಲಾ, ಜನಾರ್ದನ ಕೊಡವೂರು ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ವಿನಯಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್, ಸಂಚಾಲಕ ಭಾಸ್ಕರ್ ಪಾಲನ್ ಹಾಗೂ ನಿರ್ದೇಶಕ ದಿವಾಕರ್ ಕಟೀಲ್ ಉಪಸ್ಥಿತರಿದ್ದರು.
Rahul Chahar Divorce: ಟೀಂ ಇಂಡಿಯಾ ಕ್ರಿಕೆಟರ್ ರಾಹುಲ್ ಚಹರ್ ಬಾಳಲ್ಲಿ ಬಿರುಗಳಿ
Rahul Chahar Divorce: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಅನ್ನುವು ಒಂದು ಟ್ರೆಂಡ್ ಆಗಿಬಿಟ್ಟಿದೆ. ಅದರಲ್ಲೂ, ಹೆಚ್ಚಾಗಿ ಸೆಲೆಬ್ರೆಟಿಗಳು ಇಂತಹ ದಾರಿ ಹಿಡಿಯುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಹಾಗೂ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ರಾಹುಲ್ ಚಹರ್ ಅವರು (ಫೆಬ್ರವರಿ 20)ರಂದು ತಮ್ಮ ಪತ್ನಿ ಇಶಾನಿ ಜೋಹರ್ನಿಂದ ವಿಚ್ಛೇದನ ಪಡೆದಿದ್ದಾರೆ. ಈ ಬಗ್ಗೆ ಚಹರ್ ಸಾಮಾಜಿಕ
ಪಾಮ್ಬೀಚ್ ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರು ಮರುನಾಮಕರಣಕ್ಕೆ ನಿರ್ಧಾರ
ನ್ಯೂಯಾರ್ಕ್, ಫೆ.19: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೌರವಾರ್ಥವಾಗಿ ಫ್ಲೋರಿಡಾ ಸಂಸದರು ಪಾಮ್ಬೀಚ್ ವಿಮಾನ ನಿಲ್ದಾಣವನ್ನು `ಡೊನಾಲ್ಡ್ ಜೆ. ಟ್ರಂಪ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಮರುನಾಮಕರಣ ಮಾಡಲು ನಿರ್ಧರಿಸಿರುವಂತೆಯೇ ಈ ಹೆಸರನ್ನು ಟ್ರೇಡ್ಮಾರ್ಕ್ ಮಾಡಲು ಟ್ರಂಪ್ ಅವರ ವಕೀಲರು ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ. ಪಾಮ್ ಬೀಚ್ ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರು ಮರುನಾಮಕರಣ ಮಾಡುವ ಮಸೂದೆಯನ್ನು ಗುರುವಾರ ರಾಜ್ಯದ ಸಂಸತ್ತಿನಲ್ಲಿ ಅಂಗೀಕರಿಸಲಾಗಿದ್ದು ಮಸೂದೆಗೆ ಗವರ್ನರ್ ಸಹಿ ಹಾಕುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವುದನ್ನು ಫೆಡರಲ್ ವಾಯುಯಾನ ಪ್ರಾಧಿಕಾರ ಅನುಮೋದಿಸಬೇಕಿದೆ. ಈ ಮಧ್ಯೆ, ಅಮೆರಿಕದ ಪೇಟೆಂಟ್ ಮತ್ತು ಟ್ರೇಡ್ಮಾರ್ಕ್ ಕಚೇರಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ `ಡಿಜೆಟಿ(ಡೊನಾಲ್ಡ್ ಜೆ.ಟ್ರಂಪ್) ಎಂಬ ಹೆಸರನ್ನೂ ಟ್ರೇಡ್ಮಾರ್ಕ್ ಮಾಡಲು ಕೋರಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್ ಅವರ ಕುಟುಂಬದ ವ್ಯವಹಾರಗಳ ಪ್ರತಿನಿಧಿ `ಅತ್ಯಂತ ಗುರುತಿಸಲ್ಪಟ್ಟಿರುವ ಜಾಗತಿಕ ಬ್ರ್ಯಾಂಡ್(ಟ್ರಂಪ್)ನ ವಾಣಿಜ್ಯ ದುರ್ಬಳಕೆಯನ್ನು ತಪ್ಪಿಸುವ ಉದ್ದೇಶದ ಕ್ರಮ ಇದಾಗಿದೆ' ಎಂದು ಹೇಳಿದ್ದಾರೆ.
ಎಲ್ಲಾ ಒಂದೇ ಎತ್ತರ, ಹೆಲ್ಮೆಟ್ ತೆಗೆದರೆ ಅವರ ತಲೆ ಮೇಲೆ ಬಿಲಿಯಡ್ರ್ಸ್ ಆಡಬಹುದು: ಚೀನೀ ಸೈನಿಕರ ಬಗ್ಗೆ ಟ್ರಂಪ್ ಹೇಳಿಕೆ
ವಾಷಿಂಗ್ಟನ್, ಫೆ.20: ಗುರುವಾರ ವಾಷಿಂಗ್ಟನ್ನಲ್ಲಿ ನಡೆದ ಶಾಂತಿ ಮಂಡಳಿ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹಿಂದಿನ ಚೀನಾ ಭೇಟಿಯನ್ನು ನೆನಪಿಸಿಕೊಂಡು ಚೀನೀ ಅಧ್ಯಕ್ಷರು ತನ್ನನ್ನು ಅತ್ಯುತ್ತಮವಾಗಿ ಸತ್ಕರಿಸಿದ್ದರು ಎಂದು ಸ್ಮರಿಸಿಕೊಂಡರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಬಾರಿ ನಾನು ಚೀನಾಕ್ಕೆ ಹೋಗಿದ್ದಾಗ ಅಧ್ಯಕ್ಷ ಕ್ಸಿ ಜಿಂಪಿಂಗ್ ಉತ್ತಮವಾಗಿ ಸತ್ಕರಿಸಿದರು. ಯೋಧರಿಂದ ಗೌರವ ವಂದನೆ ಕಾರ್ಯಕ್ರಮ ಏರ್ಪಡಿಸಿದ್ದರು. ಇದು ಬಹಳ ಅದ್ಭುತವಾಗಿತ್ತು. ಒಂದೇ ಎತ್ತರದ ಅನೇಕ ಸೈನಿಕರನ್ನು ನಾನು ಅದುವರೆಗೆ ನೋಡಿರಲಿಲ್ಲ. ಅವರು ತಮ್ಮ ಹೆಲ್ಮೆಟ್ಗಳನ್ನು ಕೆಳಗಿಳಿಸಿದರೆ ಅವರ ತಲೆಯ ಮೇಲೆ ಬಿಲಿಯಡ್ರ್ಸ್ ಆಡಬಹುದು ಎಂದು ನಾನು ಹೇಳಿದೆ. ಇದು ಬಹಳ ಅದ್ಭುತ ವಿಷಯ' ಎಂದು ಗುರುವಾರದ ಸಭೆಯಲ್ಲಿ ಟ್ರಂಪ್ ಹೇಳಿದಾಗ ಸಭೆ ನಗೆಗಡಲಲ್ಲಿ ಮುಳುಗಿತ್ತು ಎಂದು ವರದಿಯಾಗಿದೆ. ಶಾಂತಿ ಮಂಡಳಿಯಲ್ಲಿ ಚೀನಾ ಮತ್ತು ರಶ್ಯ ಇರಬೇಕೆಂಬುದು ನಮ್ಮ ಆಶಯ. ಅವರನ್ನೂ ಆಹ್ವಾನಿಸಿದ್ದೇವೆ ಎಂದ ಟ್ರಂಪ್ `ಯುದ್ಧದಿಂದ ಜರ್ಝರಿತಗೊಂಡ ಗಾಝಾದಲ್ಲಿ ಶಾಂತಿ ಮರುಸ್ಥಾಪಿಸಲಾಗುವುದು. ನಾವು ಗಾಝಾಕ್ಕೆ ನೆರವಾಗಲಿದ್ದೇವೆ. ಅದನ್ನು ಸರಿಪಡಿಸುತ್ತೇವೆ ಮತ್ತು ಯಶಸ್ವಿಗೊಳಿಸುತ್ತೇವೆ. ಈ ಉಪಕ್ರಮಕ್ಕೆ ಅಮೆರಿಕ 10 ಶತಕೋಟಿ ಡಾಲರ್ ದೇಣಿಗೆ ನೀಡುತ್ತದೆ' ಎಂದು ಘೋಷಿಸಿದರು. ಗಾಝಾ ಮರು ನಿರ್ಮಾಣ ಉಪಕ್ರಮಗಳಿಗೆ ಖತರ್, ಸೌದಿ ಅರೆಬಿಯಾ ಮತ್ತು ಯುಎಇ ಸೇರಿದಂತೆ ಹಲವು ದೇಶಗಳು ತಲಾ 1 ಶತಕೋಟಿ ಡಾಲರ್ ದೇಣಿಗೆ ನೀಡಲು ಒಪ್ಪಿಕೊಂಡಿವೆ ಎಂದು ಶ್ವೇತಭವನ ಹೇಳಿದೆ.
ಕಾಂಗ್ರೆಸ್ ಸರಕಾರದ ಒಳಜಗಳದಿಂದ ಜನರು ಬೇಸತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ
ಲಿಂಗಸುಗೂರು: ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಹಾಗೂ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಸಚಿವರ ಹೇಳಿಕೆ ಆಕ್ಷೇಪಾರ್ಹವಾಗಿದೆ. “ರಾಜ್ಯದಲ್ಲಿ ಹಿಂದೆ ಭ್ರಷ್ಟಾಚಾರ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ” ಎಂಬ ಹೇಳಿಕೆಯ ಮೂಲಕ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದರು. ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಲ್ಲ. ಟಿಎಸ್ಪಿ ಹಾಗೂ ಎಸ್ಸಿ/ಎಸ್ಟಿ ಮೀಸಲು ನಿಧಿಗಳನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದೊಳಗಿನ ಕೆಲ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿ, ಒಳಜಗಳ ಮತ್ತು ಗುಂಪು ರಾಜಕೀಯ ಮುಂದುವರಿದರೆ ಜನರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯ
ಹೊಸದಿಲ್ಲಿ, ಫೆ.20: ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಫೆ.15ರಂದು ನಡೆದಿದ್ದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿದ್ದವು. ಪ್ರಸಕ್ತ ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಜಿಯೋ ಹಾಟ್ಸ್ಟಾರ್ನಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ. ಭಾರತದ ಅಧಿಕೃತ ಪ್ರಸಾರ ಹಾಗೂ ಡಿಜಿಟಲ್ ಪಾಲುದಾರ ಜಿಯೋಸ್ಟಾರ್ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೆ ಜಿಯೋ ಹಾಟ್ಸ್ಟಾರ್ನಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಬರೋಬ್ಬರಿ 163 ಮಿಲಿಯನ್(16.30 ಕೋಟಿ)ವೀಕ್ಷಣೆ ಕಂಡಿದೆ. ಇದು ಯಾವುದೇ ಟಿ-20 ವಿಶ್ವಕಪ್ ಪಂದ್ಯಕ್ಕಿಂತಲೂ ಅತಿ ಹೆಚ್ಚಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 2024ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಫೈನಲ್ನ ಡಿಜಿಟಲ್ ವೀಕ್ಷಕರ ಸಂಖ್ಯೆಯನ್ನು ಸಹ ಇದು ಮೀರಿಸಿದೆ. 2024ರ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳ ಮುಖಾಮುಖಿಗೆ ಹೋಲಿಸಿದರೆ, 2026ರ ಈ ಪಂದ್ಯವು ಶೇ.56ರಷ್ಟು ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ. ಮೊಬೈಲ್ನಲ್ಲಿ ಇದು ಯಾವುದೆ ಐಸಿಸಿ ಟಿ-20 ಲೀಗ್ ಹಂತದ ಪಂದ್ಯಕ್ಕಿಂತಲೂ ಅತಿ ಹೆಚ್ಚು ವೀಕ್ಷಣೆ ಕಂಡಿದೆ. ಇದು ಹಿಂದಿನ ಭಾರತ-ಪಾಕಿಸ್ತಾನ ಮುಖಾಮುಖಿಗಿಂತ 1.2ಪಟ್ಟು ಹೆಚ್ಚಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪೈಪೋಟಿಯು ಸಾಕಷ್ಟು ಜನಪ್ರಿಯತೆ ಹೊಂದಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಪಂದ್ಯವು ಭಾರೀ ಗಮನ ಸೆಳೆದಿದ್ದು, 20 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ. ಇದು ಹಿಂದಿನ ಟಿ-20 ವಿಶ್ವಕಪ್ ಪಂದ್ಯಕ್ಕಿಂತ ಶೇ.42ರಷ್ಟು ಹೆಚ್ಚಾಗಿದೆ. ಇತ್ತೀಚೆಗೆ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 61 ರನ್ಗಳ ಅಂತರದಿಂದ ಜಯ ಸಾಧಿಸುವ ಮೂಲಕ ಭಾರತ ತಂಡ ಪ್ರಾಬಲ್ಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 7 ವಿಕೆಟ್ಗಳ ನಷ್ಟಕ್ಕೆ 175 ರನ್ ಗಳಿಸಿತ್ತು. ಇಶಾನ್ ಕಿಶನ್ 77 ರನ್ ಗಳಿಸಿದ್ದರು. ಗೆಲ್ಲಲು 176 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡವು ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ಬೌಲಿಂಗ್ ದಾಳಿಗೆ ತತ್ತರಿಸಿ 114 ರನ್ಗೆ ಆಲೌಟಾಯಿತು. ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟು 9 ಬಾರಿ ಮುಖಾಮುಖಿಯಾಗಿದ್ದು, ಕೇವಲ ಒಂದು ಬಾರಿ ಮಾತ್ರ ಪಾಕಿಸ್ತಾನ ಪಂದ್ಯವನ್ನು ಗೆದ್ದಿತ್ತು. ಭಾರತ ಹಾಗೂ ಪಾಕಿಸ್ತಾನ ಪಂದ್ಯವು ಟೆಲಿವಿಷನ್ ರೇಟಿಂಗ್ನಲ್ಲಿ(ಟಿವಿಆರ್)ಶೇ.71ರಷ್ಟು ಏರಿಕೆ ಕಂಡಿದೆ. ಇದು 2021ರ ನಂತರ ಟಿವಿಯಲ್ಲಿ ಅತ್ಯಂತ ಹೆಚ್ಚು ರೇಟಿಂಗ್ ಪಡೆದ ಟಿ-20 ಪಂದ್ಯವಾಗಿದೆ. ‘‘ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಅಭೂತಪೂರ್ವ ವೀಕ್ಷಕರ ಸಂಖ್ಯೆ ಹಾಗೂ ಭಾಗವಹಿಸುವಿಕೆಯ ಸಂಖ್ಯೆಯು ಐಸಿಸಿ ಪುರುಷರ ಟಿ-20 ವಿಶ್ವಕಪ್ನ ಕುರಿತು ಅಭಿಮಾನಿಗಳು ಹೊಂದಿರುವ ಗೀಳಿಗೆ ಮತ್ತಷ್ಟು ಪುರಾವೆಯಾಗಿದೆ’’ಎಂದು ಜಿಯೋಸ್ಟಾರ್ನ ಕ್ರೀಡಾವಿಭಾಗದ ಮುಖ್ಯಸ್ಥ ಸಿದ್ದಾರ್ಥ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಅಫ್ಘಾನಿಸ್ತಾನಕ್ಕೆ ವಿದಾಯ ಕೋರಿದ ಕೋಚ್ ಜೋನಾಥನ್ ಟ್ರಾಟ್
ಹೊಸದಿಲ್ಲಿ, ಫೆ.20: ಅಫ್ಘಾನಿಸ್ತಾನ ಕ್ರಿಕೆಟ್ ತಂಡ 2026ರ ಟಿ-20 ವಿಶ್ವಕಪ್ನಲ್ಲಿ ಕೊನೆಯ ಗ್ರೂಪ್ ಹಂತದ ಪಂದ್ಯ ಆಡಿದ ನಂತರ ನಿರ್ಗಮನ ಕೋಚ್ ಜೋನಾಥನ್ ಟ್ರಾಟ್, ಅಫ್ಘಾನ್ ತಂಡದೊಂದಿಗೆ ಕಳೆದ ತನ್ನ ಅವಧಿಯನ್ನು ನೆನಪಿಸಿಕೊಂಡರು. ಭವಿಷ್ಯದ ಕೋಚಿಂಗ್ ಅವಕಾಶಗಳ ಬಗ್ಗೆ ತನ್ನ ಯೋಚನೆಗಳನ್ನು ಹಂಚಿಕೊಂಡರು. ಚೆನ್ನೈನಲ್ಲಿ ಗುರುವಾರ ಕೆನಡಾ ತಂಡದ ವಿರುದ್ಧ 82 ರನ್ಗಳ ಅಂತರದಿಂದ ಗೆದ್ದ ಹೊರತಾಗಿಯೂ ಅಫ್ಘಾನಿಸ್ತಾನ ತಂಡವು ಪಂದ್ಯಾವಳಿಯಿಂದ ನಿರ್ಗಮಿಸಿದೆ. ಟ್ರಾಟ್ 2022ರಲ್ಲಿ ಅಫ್ಘಾನ್ ತಂಡದ ಕೋಚ್ ಹುದ್ದೆ ವಹಿಸಿಕೊಂಡ ನಂತರ ಆಟಗಾರರೊಂದಿಗೆ ಮುಕ್ತವಾಗಿ ಬೆರೆತಿದ್ದರು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟ್ರಾಟ್ ತರಬೇತಿಯಡಿಯಲ್ಲಿ ಅಫ್ಘಾನಿಸ್ತಾನ ತಂಡ ಅತ್ಯಂತ ಮಹತ್ವದ ಸಾಧನೆಯನ್ನು ಮಾಡಿದೆ. 2024ರಲ್ಲಿ ಮೊದಲ ಬಾರಿ ಟಿ-20 ವಿಶ್ವಕಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದು ಹಾಗೂ ಅಗ್ರ ರ್ಯಾಂಕಿನ ತಂಡಗಳ ವಿರುದ್ದ ಐತಿಹಾಸಿಕ ಗೆಲುವು ಇದರಲ್ಲಿ ಸೇರಿದೆ. ಈ ಎಲ್ಲ ಮೈಲಿಗಲ್ಲುಗಳು ದೇಶದ ಜಾಗತಿಕ ಕ್ರಿಕೆಟ್ ಘನತೆಯನ್ನು ಬಲಗೊಳಿಸಿದೆ. ‘‘ಅಫ್ಘಾನಿಸ್ತಾನ ತಂಡಕ್ಕೆ ಕೋಚಿಂಗ್ ನೀಡುವುದು ನನ್ನ ಯೋಜನೆಯ ಭಾಗವಾಗಿರಲಿಲ್ಲ. ಗ್ರಹಾಂ ಥೋರ್ಪೆ ಕೋಚ್ ಆಗಬೇಕಾಗಿತ್ತು. ದುರದೃಷ್ಟವಶಾತ್ ಅವರು ಕೋಚ್ ಆಗಲಿಲ್ಲ. ಆಗ ನನಗೆ ಈ ಹುದ್ದೆಯನ್ನು ನೀಡಲಾಯಿತು. ಅದನ್ನು ನಾನು ಸಂತೋಷದಿಂದ ಸ್ವೀಕರಿಸಿದ್ದೆೆ. ಕೋಚ್ ಆಗಿ ನನ್ನ ಬೆಳವಣಿಗೆಯಲ್ಲಿ ಗ್ರಹಾಂ ಪ್ರಮುಖ ಪಾತ್ರವಹಿಸಿದ್ದಾರೆ. ಇಸಿಬಿಯಲ್ಲಿ ನನಗೆ ಅವಕಾಶ ನೀಡಿದ್ದರು. ಕೋಚ್ ಆಗಿ ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು’’ ಎಂದು ಟ್ರಾಟ್ ಹೇಳಿದರು.
’ಕುರಿಗಾಹಿ ಸಿಎಂ ಆಗಿದ್ದು ಹಲವರ ಕಣ್ಣು ಕೆಂಪಾಗಲು ಕಾರಣ’ : ಸಿಎಂ ಹೂಡಿದ ಜಾತಿ ಅಸ್ತ್ರದ ಗುರಿ ಯಾರತ್ತ?
CM Siddaramaiah on Social Justice : ಕುರಿ ಕಾಯುವವನು ರಾಜ್ಯದ ಮುಖ್ಯಮಂತ್ರಿ ಆಗಿ ಬಿಟ್ಟನಲ್ಲಾ ಎನ್ನುವ ಅಸಹನೆ, ಅಸೂಯೆ ಕೆಲವರಲ್ಲಿ ಕುದಿಯುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಯಾರನ್ನು ಟಾರ್ಗೆಟ್ ಮಾಡಿ ಈ ಹೇಳಿಕೆಯನ್ನು ನೀಡಿದ್ದಾರೆ ಎನ್ನುವ ಕುತೂಹಲವಂತೂ ಇದೆ. ಇದನ್ನು, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಟಾರ್ಗೆಟ್ ಮಾಡಿ ಸಿದ್ದರಾಮಯ್ಯ ಹೇಳಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಪಾಕಿಸ್ತಾನದ ಮಾಜಿ ಆಟಗಾರರ ನಿಂದನೆ: ಶಾದಾಬ್ ಖಾನ್ಗೆ ಛೀಮಾರಿ ಹಾಕಿದ ಪಿಸಿಬಿ
ಕರಾಚಿ, ಫೆ.20: ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ವೇಳೆ ಮಾಜಿ ಆಟಗಾರರನ್ನು ನಿಂದಿಸಿದ ಶಾದಾಬ್ ಖಾನ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ತನ್ನ ಆಯ್ಕೆಯನ್ನು ಟೀಕಿಸಿದ್ದ ಮಾಜಿ ಆಟಗಾರರ ಬಗ್ಗೆ ಆಲ್ರೌಂಡರ್ ಖಾನ್ ನೀಡಿದ್ದ ಹೇಳಿಕೆ ಬಗ್ಗೆ ಕ್ರಿಕೆಟ್ ಮಂಡಳಿ ಅಸಮಾಧಾನಗೊಂಡಿದೆ. ಕೊಲಂಬೊದಲ್ಲಿ ಬುಧವಾರ ನಡೆದ ನಮೀಬಿಯಾ ತಂಡ ವಿರುದ್ಧ ಪಾಕಿಸ್ತಾನ ತಂಡವು 102 ರನ್ಗಳ ಅಂತರದಿಂದ ಜಯಶಾಲಿಯಾಗಲು ಪ್ರಮುಖ ಪಾತ್ರವಹಿಸಿದ ನಂತರ ತನ್ನ ಟೀಕಾಕಾರರ ಕುರಿತು ಶಾದಾಬ್ ಖಾನ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ‘‘ಮಾಜಿ ಆಟಗಾರರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರು(ಮಾಜಿ ಆಟಗಾರರು)ಲೆಜೆಂಡ್ಗಳು, ಆದರೆ ಅವರು ನಾವು ಸಾಧಿಸಿದ್ದನ್ನು ಸಾಧಿಸಿಲ್ಲ. ನಾವು ವಿಶ್ವಕಪ್ನಲ್ಲಿ ಭಾರತವನ್ನು ಮಣಿಸಿದ್ದೆವು’’ ಎಂದು ನಮೀಬಿಯಾ ವಿರುದ್ದ 22 ಎಸೆತಗಳಲ್ಲಿ 36 ರನ್ ಹಾಗೂ 13 ರನ್ಗೆ ಮೂರು ವಿಕೆಟ್ಗಳನ್ನು ಪಡೆದಿದ್ದ ಶಾದಾಬ್ ಹೇಳಿದ್ದಾರೆ. ‘‘ಬುಧವಾರ ರಾತ್ರಿ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾದಾಬ್ ಮಿತಿಯನ್ನು ಮೀರಿದ್ದಾರೆ. ಮಾವ ಸಕ್ಲೇನ್ ಮುಷ್ತಾಕ್ ಸಹಿತ ಎಲ್ಲ ಮಾಜಿ ಆಟಗಾರರ ಬಗ್ಗೆ ಶಾದಾಬ್ಗೆ ಚೆನ್ನಾಗಿ ಗೊತ್ತಿದೆ. ಸಕ್ಲೇನ್ ಮುಷ್ತಾಕ್ ಗೌರವಾನ್ವಿತ ಹಾಗೂ ಪಾಕಿಸ್ತಾನದ ಶ್ರೇಷ್ಠ ಆಟಗಾರನಾಗಿದ್ದಾರೆ. ಶಾದಾಬ್ ಎಲ್ಲರಿಗೂ ಗೌರವ ನೀಡಬೇಕಾಗಿತ್ತು. ಇಂತಹ ಭಾಷೆ ಬಳಸಬಾರದಿತ್ತು’’ಎಂದು ಟೀಮ್ ಮ್ಯಾನೇಜರ್ ನವೀದ್ ಚೀಮಾ ಹೇಳಿಕೆಯನ್ನು ಉಲ್ಲೇಖಿಸಿ ‘ಟೆಲಿಕಾಮ್ ಏಶ್ಯ ಸ್ಪೋರ್ಟ್ಸ್’ ವರದಿ ಮಾಡಿದೆ. ಪಾಕಿಸ್ತಾನ ತಂಡವು ಶನಿವಾರ ಕೊಲಂಬೊದಲ್ಲಿ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಆನಂತರ ಫೆ.24ರಂದು ಪಲ್ಲೆಕೆಲೆಯಲ್ಲಿ ಇಂಗ್ಲೆಂಡ್ ತಂಡ ಹಾಗೂ ನಾಲ್ಕು ದಿನಗಳ ನಂತರ ಅದೇ ಮೈದಾನದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಸೆಣಸಾಡಲಿದೆ.
ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡುವ ಆ್ಯಂಟಿಬಯೋಟಿಕ್ ಗಳಲ್ಲಿ ಅರ್ಧದಷ್ಟು ಸೂಕ್ತವಲ್ಲ: ಅಧ್ಯಯನ ವರದಿ
ಆಸ್ಟ್ರೇಲಿಯಾದಲ್ಲಿ ಆ್ಯಂಟಿಬಯೋಟಿಕ್ ಬಳಕೆಯ ಕುರಿತ ಇತ್ತೀಚಿನ ಅಧ್ಯಯನ ವರದಿಯೊಂದು ಅದರಲ್ಲಿನ ಪ್ರಗತಿ ಮತ್ತು ಸಮಸ್ಯೆಗಳನ್ನು ತೋರಿಸಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಹೆಚ್ಚಾಗಿ ತಪ್ಪಾಗಿ ಬಳಸಲಾಗುತ್ತಿದೆ ಮತ್ತು ವೃದ್ಧಾಶ್ರಮಗಳಲ್ಲಿ ದೀರ್ಘಕಾಲದವರೆಗೆ ಅವುಗಳನ್ನು ಬಳಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ವೃದ್ಧರ ಆರೈಕೆ ಕೇಂದ್ರಗಳಲ್ಲಿ ದೀರ್ಘಾವಧಿಯ ಪ್ರಿಸ್ಕ್ರಿಪ್ಷನ್ ಗಳು ಅಧಿಕವಾಗಿದ್ದು, ಇದು ವಯಸ್ಸಾದ ರೋಗಿಗಳಿಗೆ ಅಡ್ಡಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತದೆ. ಒಂದು ದಶಕದ ಹಿಂದೆ ಇದ್ದಕ್ಕಿಂತ ಸಮುದಾಯದಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಶಿಫಾರಸು ಮಾಡುವ ಪ್ರಮಾಣ ಕಡಿಮೆಯಾಗಿದ್ದರೂ, ಆಸ್ಪತ್ರೆಗಳಲ್ಲಿ ಆ್ಯಂಟಿಬಯೋಟಿಕ್ ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಸುಧಾರಿಸಲು ಇನ್ನೂ ಅವಕಾಶವಿದೆ ಎಂದು ವರದಿ ಸೂಚಿಸುತ್ತದೆ. ಆ್ಯಂಟಿಬಯೋಟಿಕ್ ಬಳಕೆ ಮತ್ತು ಪ್ರತಿರೋಧ ಏಕೆ ಮುಖ್ಯ? ಆಸ್ಪತ್ರೆಗಳಲ್ಲಿ ಮತ್ತು ಸಮುದಾಯದಲ್ಲಿ ಆ್ಯಂಟಿಬಯೋಟಿಕ್ ಬಳಕೆಯನ್ನು ಪ್ರೇರೇಪಿಸುವ ಅಂಶಗಳು ಸಾಮಾನ್ಯವಾಗಿ ವಿಭಿನ್ನವಾಗಿರುತ್ತವೆ. ಆಸ್ಪತ್ರೆಗಳಲ್ಲಿ ಸೋಂಕು ಹೊಂದಿರುವ ಹೆಚ್ಚಿನ ರೋಗಿಗಳು ಇರುತ್ತಾರೆ. ಇವು ರೋಗಿಗಳು ನಿರೋಧಕ ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಇರುವ ಸ್ಥಳಗಳಾಗಿವೆ. ಇಲ್ಲಿ ಮುಖ್ಯ ಸವಾಲು ಎಂದರೆ ಅನಾರೋಗ್ಯಪೀಡಿತ ರೋಗಿಗಳು ಆ್ಯಂಟಿಬಯೋಟಿಕ್ ಗಳನ್ನು ತ್ವರಿತವಾಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅವುಗಳನ್ನು ಅನಗತ್ಯವಾಗಿ ಅತಿಯಾಗಿ ಬಳಸುವುದನ್ನು ತಪ್ಪಿಸುವುದಾಗಿದೆ. ಸಮುದಾಯದಲ್ಲಿ ವೈದ್ಯರು ಆ್ಯಂಟಿಬಯೋಟಿಕ್ ಗಳ ಅಗತ್ಯವಿದೆಯೇ ಅಥವಾ ರೋಗಿಯು ಅವುಗಳಿಲ್ಲದೆ ಚೇತರಿಸಿಕೊಳ್ಳಬಹುದೇ ಎಂದು ಎಚ್ಚರಿಕೆಯಿಂದ ತೀರ್ಮಾನಿಸಬೇಕು. ಈ ಸಮಸ್ಯೆಯನ್ನು ವೈಯಕ್ತಿಕ ರೋಗಿಗಳ ಮಟ್ಟದಲ್ಲಿ ನೋಡಿದರೆ ಅಪಾಯಗಳು ಸಣ್ಣದಾಗಿ ಅನಿಸಬಹುದು. ಆದರೆ ಹೆಚ್ಚಿನ ಜನರಿಗೆ ತಪ್ಪಾದ ಆ್ಯಂಟಿಬಯೋಟಿಕ್ ಬಳಕೆ ಅಥವಾ ಅಗತ್ಯವಿಲ್ಲದ ಬಳಕೆ ದೀರ್ಘಕಾಲದಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧದ ಅಪಾಯವನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾಗಳು ಸಾಮಾನ್ಯ ಚಿಕಿತ್ಸಾ ಆಯ್ಕೆಗಳಿಗೆ ನಿರೋಧಕವಾಗುವುದರಿಂದ, ಚಿಕಿತ್ಸೆಯಿದ್ದರೂ ಸೋಂಕುಗಳು ಮುಂದುವರಿಯಬಹುದು. ಇದು ಆಯ್ಕೆಯ ಒತ್ತಡದಿಂದ ಸಂಭವಿಸುತ್ತದೆ. ಇದರರ್ಥ ಬ್ಯಾಕ್ಟೀರಿಯಾಗಳು ಆ್ಯಂಟಿಬಯೋಟಿಕ್ ಗಳ ಪರಿಣಾಮವನ್ನು ತಪ್ಪಿಸಲು ಸಹಾಯಕವಾಗುವ ಬದಲಾವಣೆಗಳನ್ನು ಅಭಿವೃದ್ಧಿಪಡಿಸುತ್ತವೆ. ಈ ನಿರೋಧಕ ತಳಿಗಳು ಬೆಳೆಯುತ್ತಲೇ ಇರುತ್ತವೆ ಮತ್ತು ಹರಡುತ್ತಲೇ ಇರುತ್ತವೆ. ►ಶಸ್ತ್ರಚಿಕಿತ್ಸೆಯಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಏಕೆ ಬಳಸಲಾಗುತ್ತದೆ? ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೋಂಕು ತಡೆಗಟ್ಟುವ ಕ್ರಮವಾಗಿ ಆ್ಯಂಟಿಬಯೋಟಿಕ್ ಗಳನ್ನು ಬಳಸಲಾಗುತ್ತದೆ. ಸೋಂಕಿನ ಹೆಚ್ಚಿನ ಅಪಾಯವಿರುವ ಕಾರ್ಯವಿಧಾನಗಳಿಗೆ ಮಾತ್ರ ಮತ್ತು ಅಲ್ಪಾವಧಿಗೆ — ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಗೆ ಮೊದಲು ಒಂದೇ ಡೋಸ್ ಅಥವಾ ನಂತರ 24 ಗಂಟೆಗಳವರೆಗೆ — ಅವು ಅಗತ್ಯವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸಲಾಗುವ ಸುಮಾರು 43% ಆ್ಯಂಟಿಬಯೋಟಿಕ್ ಗಳನ್ನು ತಪ್ಪಾಗಿ ನೀಡಲಾಗುತ್ತದೆ ಎಂದು ವರದಿ ಬಹಿರಂಗಪಡಿಸಿದೆ. ಇದನ್ನು ಸರಿಪಡಿಸಲು ವೈದ್ಯರು ಮೂರು ಪ್ರಮುಖ ಗುರಿಗಳ ಮೇಲೆ ಕೇಂದ್ರೀಕರಿಸಬೇಕು: • ಅಗತ್ಯವಿದ್ದಾಗ ಮಾತ್ರ : ಸೋಂಕಿನ ಹೆಚ್ಚಿನ ಅಪಾಯವಿರುವ ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ಆ್ಯಂಟಿಬಯೋಟಿಕ್ ಬಳಕೆ. • ಸರಿಯಾದ ಸಮಯ : ಔಷಧವನ್ನು ಸರಿಯಾದ ಸಮಯದಲ್ಲಿ ನೀಡಬೇಕು; ಶಸ್ತ್ರಚಿಕಿತ್ಸೆಗೆ ಒಂದು ಗಂಟೆ ಮೊದಲು ನೀಡುವುದು ಸೂಕ್ತ. • ಸರಿಯಾದ ಹೊಂದಾಣಿಕೆ : ಅನಗತ್ಯ ಅಡ್ಡಪರಿಣಾಮಗಳನ್ನು ಉಂಟುಮಾಡದೆ ನಿರ್ದಿಷ್ಟ ಸೂಕ್ಷ್ಮಜೀವಿಗಳನ್ನು ನಾಶಮಾಡುವಷ್ಟು ಬಲವಾದ ಔಷಧವನ್ನು ಆರಿಸಬೇಕು. ಶಸ್ತ್ರಚಿಕಿತ್ಸೆಯಲ್ಲಿ ಅನುಚಿತ ಆ್ಯಂಟಿಬಯೋಟಿಕ್ ಬಳಕೆಯಿಂದ ಹಲವಾರು ಪರಿಣಾಮಗಳು ಉಂಟಾಗಬಹುದು. ತಪ್ಪು ಸಮಯದಲ್ಲಿ (ತುಂಬಾ ಬೇಗ ಅಥವಾ ತಡವಾಗಿ) ನೀಡುವುದರಿಂದ ಅದರ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ. ಸೋಂಕಿನ ಕಡಿಮೆ ಅಪಾಯವಿರುವ ಶಸ್ತ್ರಚಿಕಿತ್ಸೆಗಳಲ್ಲಿ ಅಥವಾ ಅನಗತ್ಯವಾಗಿ ದೀರ್ಘಾವಧಿಗೆ ಬಳಸುವುದರಿಂದ ರೋಗಿಗಳು ಅತಿಸಾರದಂತಹ ಅಡ್ಡಪರಿಣಾಮಗಳಿಗೆ ಒಳಗಾಗುವ ಅಪಾಯವಿದೆ. ಜೊತೆಗೆ ಆ್ಯಂಟಿಬಯೋಟಿಕ್ ಪ್ರತಿರೋಧದ ಅಪಾಯವೂ ಹೆಚ್ಚುತ್ತದೆ. ►ವೃದ್ಧಾಶ್ರಮಗಳಲ್ಲಿ ವೃದ್ಧಾಶ್ರಮಗಳಲ್ಲಿ ಇರುವ ಹಿರಿಯ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಪಡೆಯುತ್ತಾರೆ ಎಂದು ವರದಿ ತೋರಿಸಿದೆ. ಐದು ನಿವಾಸಿಗಳಲ್ಲಿ ನಾಲ್ವರು (79.5%) ಪ್ರತಿ ವರ್ಷ ಕನಿಷ್ಠ ಒಂದು ಆ್ಯಂಟಿಬಯೋಟಿಕ್ ಪ್ರಿಸ್ಕ್ರಿಪ್ಷನ್ ಪಡೆಯುತ್ತಾರೆ. ಸುಮಾರು ಮೂವರಲ್ಲಿ ಒಬ್ಬರಿಗೆ (34.7%) ಆರು ತಿಂಗಳಿಗಿಂತ ಹೆಚ್ಚು ಕಾಲ ಆ್ಯಂಟಿಬಯೋಟಿಕ್ ನೀಡಲಾಗಿದೆ. ವೃದ್ಧರು ಸೋಂಕುಗಳಿಗೆ ಹೆಚ್ಚು ಒಳಗಾಗುವ ಅಪಾಯ ಹೊಂದಿರುತ್ತಾರೆ. ಕೆಲವೊಮ್ಮೆ ಇವರಲ್ಲಿ ಸೋಂಕಿನ ಲಕ್ಷಣಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸೋಂಕು ತಡೆಗಟ್ಟಲು ಕೆಲವೊಮ್ಮೆ ಆ್ಯಂಟಿಬಯೋಟಿಕ್ ಬಳಕೆ ಸೂಕ್ತವಾಗಬಹುದು. ಆದರೆ ಅದು ಕೊನೆಯ ಆಯ್ಕೆಯಾಗಿರಬೇಕು. ಏಕೆಂದರೆ ಆ್ಯಂಟಿಬಯೋಟಿಕ್ ತೆಗೆದುಕೊಂಡ ನಂತರವೂ ಸೋಂಕು ಸಂಭವಿಸಿದರೆ, ಸೂಕ್ಷ್ಮಜೀವಿಗಳು ಔಷಧಿಗೆ ನಿರೋಧಕವಾಗಿವೆ ಎಂಬುದನ್ನು ಸೂಚಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆ ನೀಡುವುದು ಕಷ್ಟಕರವಾಗುತ್ತದೆ. ►ವರದಿಯಲ್ಲಿ ಏನಿದೆ? ವರದಿ ಗಂಭೀರ ಆಂಟಿಮೈಕ್ರೊಬಿಯಲ್ ಪ್ರತಿರೋಧಗಳನ್ನು ಸಹ ಎತ್ತಿ ತೋರಿಸಿದೆ. ಇವು ಪ್ರಮುಖ ಬೆದರಿಕೆ ಉಂಟುಮಾಡುವ ಸೂಪರ್ಬಗ್ಗಳು. ಈ ಸೂಕ್ಷ್ಮಜೀವಿಗಳು ಅತ್ಯಂತ ಶಕ್ತಿಶಾಲಿಯಾಗಿದ್ದು, ಆ್ಯಂಟಿಬಯೋಟಿಕ್ ಗಳಿಗೆ ಗಂಭೀರ ಸವಾಲು ಎಸೆದುತ್ತವೆ. ಈ ಸೋಂಕುಗಳನ್ನು ನಿವಾರಿಸುವುದು ಕಷ್ಟವಾಗುವುದರಿಂದ, ರೋಗಿಗಳಿಗೆ ವಿಶೇಷ ಔಷಧಗಳು ಮತ್ತು ತೀವ್ರ ವೈದ್ಯಕೀಯ ಆರೈಕೆ ಅಗತ್ಯವಾಗುತ್ತದೆ. 2022ರಿಂದ ವರದಿಯಾಗುತ್ತಿದ್ದ ಈ ಜೀವಿಗಳ ಸಂಖ್ಯೆ 2024ರಲ್ಲಿ ದ್ವಿಗುಣಗೊಂಡಿದ್ದು, ಪ್ರತಿದಿನ ಒಂಭತ್ತು ಪ್ರಕರಣಗಳಿಗೆ ತಲುಪಿದೆ. ಈ ಸೂಪರ್ಬಗ್ಗಳು ಹಲವಾರು ಬಾರಿ ವಿದೇಶ ಪ್ರಯಾಣದ ವೇಳೆ ಪತ್ತೆಯಾಗುತ್ತವೆ ಎಂದು ವರದಿ ಉಲ್ಲೇಖಿಸಿದೆ. ಇದು ಆ್ಯಂಟಿಬಯೋಟಿಕ್ ಪ್ರತಿರೋಧವು ಕೇವಲ ಸ್ಥಳೀಯ ಸಮಸ್ಯೆಯಲ್ಲ, ಗಡಿಗಳನ್ನು ಮೀರಿ ಹರಡುವ ಜಾಗತಿಕ ಸಮಸ್ಯೆಯಾಗಿದೆ ಎಂಬುದನ್ನು ತೋರಿಸುತ್ತದೆ. ►ಆ್ಯಂಟಿಬಯೋಟಿಕ್ ಪ್ರತಿರೋಧವನ್ನು ಕಡಿಮೆ ಮಾಡಲು ಏನು ಮಾಡಬಹುದು? • ಹಲವಾರು ಸೋಂಕುಗಳು ತಾವಾಗಿಯೇ ಗುಣವಾಗುತ್ತವೆ; ಆ್ಯಂಟಿಬಯೋಟಿಕ್ ಗಳ ಅಗತ್ಯವಿಲ್ಲ ಎಂಬ ಅರಿವು ಮೂಡಿಸುವುದು. • ವಯಸ್ಸಾದವರಿಗೆ ನೀಡುವ ಔಷಧಿಗಳನ್ನು ನಿಯಮಿತವಾಗಿ ಪರಿಶೀಲಿಸಿ, ಅವು ಇನ್ನೂ ಅಗತ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು. • ಆ್ಯಂಟಿಬಯೋಟಿಕ್ ಗಳನ್ನು ಅಗತ್ಯವಿರುವ ಕಡಿಮೆ ಅವಧಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಬಳಸುವುದು. • ಆಸ್ಪತ್ರೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೇಲ್ವಿಚಾರಣಾ ಕಾರ್ಯಕ್ರಮಗಳಿಗೆ ಬಲವಾದ ಬೆಂಬಲ ಒದಗಿಸುವುದು. • ನಿರೋಧಕ ಬ್ಯಾಕ್ಟೀರಿಯಾ ಸೋಂಕುಗಳ ಮೇಲ್ವಿಚಾರಣೆ ಮಾಡಿ ನಿಯಂತ್ರಣ ನೀತಿಗಳನ್ನು ರೂಪಿಸುವುದು. • ಆಸ್ಪತ್ರೆಗಳಲ್ಲಿ ಮತ್ತು ಸಮುದಾಯದಲ್ಲಿ ನಿರೋಧಕ ಜೀವಿಗಳ ಅಡ್ಡ-ಪ್ರಸರಣವನ್ನು ಕಡಿಮೆ ಮಾಡುವುದು. • ಶುದ್ಧ ನೀರು, ನೈರ್ಮಲ್ಯ ಮತ್ತು ಲಸಿಕೆಗಳ ಮೂಲಕ ಸೋಂಕು ತಡೆಗಟ್ಟುವುದು. • ಹೊಸ ಆ್ಯಂಟಿಬಯೋಟಿಕ್ ಗಳು ಮತ್ತು ಇತರ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ಕಂಪನಿಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ಒದಗಿಸುವುದು. ಆಸ್ಟ್ರೇಲಿಯಾದಾದ್ಯಂತ ಆ್ಯಂಟಿಬಯೋಟಿಕ್ ಬಳಕೆಯ ಒಟ್ಟಾರೆ ಚಿತ್ರವನ್ನು ಈ ವರದಿ ಭಾಗಶಃ ಮಾತ್ರ ನೀಡುತ್ತದೆ. ದೇಶದ ಸುಮಾರು 60% ಆ್ಯಂಟಿಬಯೋಟಿಕ್ ಗಳನ್ನು ಪ್ರಾಣಿಗಳಲ್ಲಿ ಬಳಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ಉದಾಹರಣೆಯಾಗಿ ಟ್ಯಾಸ್ಮೆನಿಯನ್ ಸಾಲ್ಮನ್ ಸಾಕಾಣಿಕೆ ಕೇಂದ್ರಗಳಲ್ಲಿ ಫ್ಲೋರ್ಫೆನಿಕಾಲ್ ಬಳಕೆಯನ್ನು ಉಲ್ಲೇಖಿಸಲಾಗಿದೆ. ಇದು ಮಾನವರಿಗೆ ಚಿಕಿತ್ಸೆ ನೀಡಲು ಬಳಸುವ ಕ್ಲೋರಂಫೆನಿಕಾಲ್ಗೆ ನಿಕಟ ಸಂಬಂಧ ಹೊಂದಿದೆ. ►ಭಾರತದಲ್ಲಿ ಆಂಟಿಬಯೋಟಿಕ್ ಬಳಕೆ ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಪ್ರಕಾರ, 2023ರಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಆ್ಯಂಟಿಬಯೋಟಿಕ್ ಗಳಿಗೆ ಸುಮಾರು ಮೂರು ಬ್ಯಾಕ್ಟೀರಿಯಾ ಸೋಂಕುಗಳು ನಿರೋಧಕವಾಗಿವೆ. ಜಾಗತಿಕವಾಗಿ ಇದು ಆರು ದೃಢಪಟ್ಟ ಸೋಂಕುಗಳಲ್ಲಿ ಒಂದಾಗಿದೆ. ಲ್ಯಾನ್ಸೆಟ್ ಕ್ಲಿನಿಕಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ, ಶೇ. 80 ಕ್ಕಿಂತ ಹೆಚ್ಚು ಭಾರತೀಯ ರೋಗಿಗಳು ಬಹುಔಷಧ ನಿರೋಧಕ ಜೀವಿಗಳನ್ನು (MDROs) ಹೊಂದಿದ್ದಾರೆ. 2025ರಲ್ಲಿ ಪ್ರಕಟವಾದ ವರದಿ ಪ್ರಕಾರ ಭಾರತದಲ್ಲಿ ಶೇ. 83 ರಷ್ಟು ರೋಗಿಗಳು ಔಷಧ ನಿರೋಧಕ ಬ್ಯಾಕ್ಟೀರಿಯಾವನ್ನು ಹೊಂದಿದ್ದರು. ಇಟಲಿಯಲ್ಲಿ ಶೇ. 31.5, ಅಮೆರಿಕದಲ್ಲಿ ಶೇ. 20.1 ಮತ್ತು ನೆದರ್ಲ್ಯಾಂಡ್ಸ್ನಲ್ಲಿ ಶೇ. 10.8 ರಷ್ಟು ರೋಗಿಗಳು ಇಂತಹ ಸೋಂಕು ಹೊಂದಿದ್ದರು ಎಂದು ತಿಳಿಸಲಾಗಿದೆ. ಕಳೆದ ವರ್ಷದ ‘ಮನ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿ, ಆ್ಯಂಟಿಬಯೋಟಿಕ್ ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವರದಿಯನ್ನು ಉಲ್ಲೇಖಿಸಿದ ಅವರು, ಆ್ಯಂಟಿಬಯೋಟಿಕ್ ಗಳ ದುರುಪಯೋಗವು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ. ಬ್ಯಾಕ್ಟೀರಿಯಾಗಳು ಚಿಕಿತ್ಸೆಗೆ ಹೆಚ್ಚು ನಿರೋಧಕವಾಗುತ್ತಿರುವ ಸಂದರ್ಭದಲ್ಲಿ, ಪ್ರಿಸ್ಕ್ರಿಪ್ಷನ್ ಇಲ್ಲದೆ ಅಥವಾ ಆಕಸ್ಮಿಕವಾಗಿ ಆ್ಯಂಟಿಬಯೋಟಿಕ್ ಗಳನ್ನು ಬಳಸುವುದು ಸೋಂಕುಗಳ ಹರಡುವಿಕೆಗೆ ಕಾರಣವಾಗುತ್ತದೆ ಎಂದು ICMR ಸಂಶೋಧನೆಗಳು ಸೂಚಿಸುತ್ತವೆ. ಸ್ವಯಂ-ಔಷಧಿ ಮಾಡುವ ಪ್ರವೃತ್ತಿ ವಿರುದ್ಧ ಎಚ್ಚರಿಕೆ ನೀಡಲಾಗಿದೆ. ಅನೇಕರು ಒಂದೇ ಮಾತ್ರೆ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ನಂಬುವುದು ತಪ್ಪು. ಇದು ಆ್ಯಂಟಿಬಯೋಟಿಕ್ ದುರುಪಯೋಗದಿಂದ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. 2025 ಡಿಸೆಂಬರ್ 28ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ನಾಗರಿಕರು ಔಷಧಿಗಳನ್ನು ಜವಾಬ್ದಾರಿಯಿಂದ ಬಳಸಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.
Bhadravathi | ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಪೊಲೀಸ್ ಸಿಬ್ಬಂದಿಯೇ ಕಾರಣ; ಆರೋಪ
Raichur | ಮಾನ್ವಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಭೇದನೆ: ಎಎಸ್ಐ ಹುಸೇನ್ ಸಾಬ್ ಸೇರಿ ಪೊಲೀಸರಿಗೆ ಎಸ್ಪಿ ಪ್ರಶಂಸೆ
ರಾಯಚೂರು: ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ, ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿದ ಹಿನ್ನೆಲೆಯಲ್ಲಿ ಎಎಸ್ಐ ಹುಸೇನ್ ಸಾಬ್ ಸೇರಿ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಅಭಿನಂದನಾ ಪತ್ರ ನೀಡಿ ಪ್ರಶಂಸಿಸಿದ್ದಾರೆ. ಇತ್ತಿಚೆಗೆ ನಡೆದಿದ್ದ ಕೊಲೆ ಪ್ರಕರಣಗಳ ಆರೋಪಿಗಳ ತ್ವರಿತಗತಿಯಲ್ಲಿ ಪತ್ತೆ, ಕಾಣೆಯಾದ ಪ್ರಕರಣಗಳಲ್ಲಿಯೂ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು. ಡಕಾಯಿತ ಪ್ರಕರಣದಲ್ಲಿ ಆರೋಪಿಗಳ ನಿಖರ ಮಾಹಿತಿ ಸಂಗ್ರಹಿಸಿ ಕಿಯಾ ಕಾರು, 2 ಮೊಬೈಲ್ ಗಳು ಹಾಗೂ 23,200 ರೂ. ನಗದು ಹಾಗೂ ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸರ ಸಮಯಪ್ರಜ್ಞೆ, ಸೇವಾ ಅನುಭವ ಮತ್ತು ಸಾರ್ವಜನಿಕ ಭದ್ರತೆಗೆ ನೀಡಿದ ಕೊಡುಗೆಯನ್ನು ಮೆಚ್ಚಿ ಎಸ್ಪಿ ಅವರು ಈ ಗೌರವ ಸಲ್ಲಿಸಿದ್ದಾರೆ.
ಆರೋಗ್ಯ ಇಲಾಖೆಯಿಂದ ಮಹತ್ವದ ಹೆಜ್ಜೆ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಸಿಗಲಿದೆ ಚಾಲನೆ
ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಚಾಲನೆ ಸಿಗಲಿದೆ. ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ ಆರೋಗ್ಯ ಇಲಾಖೆ ಇತಿಹಾಸದಲ್ಲಿ ಈ ಹಿಂದೆ ಎಂದೂ ಕಾಣದ ವೇಗದಲ್ಲಿ ನೇಮಕಾತಿ ಆದೇಶವನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತಾಗಿ ಮಾತನಾಡಿದ ಅವರು ವಿವರಗಳನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಗಳು ಸ್ಥಗಿತ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು : ಕೃಷ್ಣ ಡಯಾಗ್ನಸ್ಟಿಕ್ಸ್ ಕಂಪೆನಿ ವತಿಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ಎಂಆರ್ಐ ಹಾಗೂ ಸಿಟಿ ಸ್ಕ್ಯಾನ್ಗಳು ಸ್ಥಗಿತಗೊಂಡಿರುವ ವಿಚಾರದಲ್ಲಿ ವಿರೋಧ ಪಕ್ಷದವರು ಸತ್ಯಕ್ಕೆ ದೂರವಾದ ಆಪಾದನೆಗಳನ್ನು ಮಾಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಹಣ ಕೊಟ್ಟಿಲ್ಲ ಎಂದು ಆ ಕಂಪನಿಯವರು ಪತ್ರ ಬರೆದಿದ್ದಕ್ಕೆ, ವಿಪಕ್ಷಗಳು ಇದನ್ನ ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ ಎಂದು ಹೇಳಿದರು. ಸರಕಾರಕ್ಕೆ ಹಣಕಾಸಿನ ಕೊರತೆ ಇದೆ, ಆರೋಗ್ಯ ಇಲಾಖೆಗೆ ಪಾಶ್ರ್ವವಾಯು ಆಗಿದೆ ಹೀಗೆ ಏನೇನೋ ಟೀಕೆಗಳನ್ನು ಮಾಡುತ್ತಿದ್ದಾರೆ. ನಾನು ಅವರ ಹಾಗೆ ಟೀಕೆಗಳನ್ನು ಮಾಡಲು ಹೋಗುವುದಿಲ್ಲ. ಕೆಲಸ ಮಾಡುವುದು ನಮ್ಮ ಕರ್ತವ್ಯ. ಜನರಿಗೆ ಸಮಸ್ಯೆ ಆಗಬಾರದು ಎಂಬುದು ನಮ್ಮ ಉದ್ದೇಶ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಖಾಸಗಿ ಕಂಪೆನಿ ಬರೆದ ಪತ್ರಕ್ಕೆ ಇವರ ವಿಪಕ್ಷಗಳ ಪ್ರತಿಕ್ರಿಯೆ ನೋಡಿದರೆ ಏನೆನ್ನಬೇಕು ಎಂಬುದೇ ಅರ್ಥವಾಗುವುದಿಲ್ಲ. ಮೊದಲು ಇದಕ್ಕೊಂದು ವ್ಯವಸ್ಥೆಯೆ ಇರಲಿಲ್ಲ. ಕಂಪೆನಿಯವರು ಹೇಳಿದ್ದೆ ಲೆಕ್ಕ. ನಾವು ಇದಕ್ಕೊಂದು ವ್ಯವಸ್ಥೆ, ನಿಯಮವನ್ನು ತಂದ ನಂತರ ಸ್ಕ್ಯಾನಿಂಗ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಾ ಬಂತು. ಇದು ಯಾವುದನ್ನೂ ತಿಳಿಯದೆ ವಿಪಕ್ಷಗಳು ಕಂಪೆನಿಯ ಪರವಾಗಿ ವಕಾಲುತ್ತು ವಹಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಕಂಪೆನಿಯಿಂದ ಸರಕಾರಕ್ಕೆ ಸಾಕಷ್ಟು ನಷ್ಟವಾಗಿದೆ ಎಂಬುದನ್ನು ವಿಪಕ್ಷಗಳು ಅರ್ಥೈಸಿಕೊಂಡಿಲ್ಲ. ಕಂಪೆನಿಯವರು ಏನೆ ಹೇಳಲಿ. ನಮ್ಮ ಉದ್ದೇಶ ಜನರಿಗೆ ಸಮಸ್ಯೆ ಆಗಬಾರದು. ಸರಕಾರದ ಹಣ ದುರುಪಯೋಗ ಆಗಲು ಅವಕಾಶ ನೀಡಬಾರದು. 2019 ರಿಂದ ಹಿಂಬಾಕಿ ಹಣ 143 ಕೋಟಿ ರೂ.ಕೊಡಿ ಎಂದು ಕಂಪೆನಿಯವರು ಕೇಳಿದ್ದಾರೆ. ನಾವು ಅಷ್ಟು ಕೊಡೋಕೆ ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. 2019 ರಿಂದ ಪ್ರತಿ ವರ್ಷ ಶೇ.5 ಹೆಚ್ಚುವರಿ ಹಣ ನೀಡಬೇಕು ಎಂದು ಕೇಳಿದ್ದಾರೆ. ಅದನ್ನು ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ರಾಜ್ಯದ 13 ಆಸ್ಪತ್ರೆಗಳಲ್ಲಿ ಮಾತ್ರ ಇದರಿಂದ ಸಮಸ್ಯೆ ಆಗಿದೆ. ಹೆಚ್ಚಿನ ಆಸ್ಪತ್ರೆಗಳಿಗೆ ನಾವು ಪರ್ಯಾಯ ವ್ಯವಸ್ಥೆ ತಕ್ಷಣ ಮಾಡಿದ್ದೇವೆ. ಉಳಿದ ಆಸ್ಪತ್ರೆಗಳಲ್ಲಿ ನಾಳೆ ಹೊತ್ತಿಗೆ ಪರ್ಯಾಯ ವ್ಯವಸ್ಥೆ ಆಗುತ್ತದೆ. ಇನ್ನು ಮುಂದೆ ಈ ಕಂಪೆನಿ ಜೊತೆ ಒಡಂಬಡಿಕೆ ಆದರೂ ಸ್ಥಳೀಯ ಮಟ್ಟದ ಆಸ್ಪತ್ರೆಗಳ ಜೊತೆಗೂ ಸಹಭಾಗಿತ್ವ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಹಳೆಯ ಸ್ಕ್ಯಾನ್ಗಳ ದೃಢೀಕರಣ ಮಾಡಿದರೆ ಮಾತ್ರ ನಾವು ದುಡ್ಡು ಕೊಡುತ್ತೇವೆ ಎಂದು ಹೇಳಿದ್ದೇವೆ. ಎಳು ಸರಕಾರಿ ಆಸ್ಪತ್ರೆಗಳಲ್ಲಿ ಎಂಆರ್ ಐ ಹಾಗೂ ಮೂರು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ಗಳಿಗೆ ಟೆಂಡರ್ ಕರೆಯಲಾಗಿದೆ. ಇಲಾಖೆ ವತಿಯಿಂದ ಸದ್ಯದಲ್ಲೇ ಯಂತ್ರ ಪೂರೈಕೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಇದಕ್ಕೊಂದು ನಿಯಮ ಮಾಡಿದ್ದರಿಂದ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 200 ಕೋಟಿ ರೂ.ಗಳನ್ನು ಎಂಆರ್ ಐ, ಸಿಟಿ ಸ್ಕ್ಯಾನ್ಗಳಲ್ಲಿ ಉಳಿಸಿದ್ದೇನೆ. ಸರಕಾರದ ಹಣ ಉಳಿಸಿದ್ದಕ್ಕೆ ವಿರೋಧ ಪಕ್ಷದವರು ನಮಗೆ ಧನ್ಯವಾದ ಹೇಳಬೇಕು. ವೃಥಾ ಟೀಕೆ ಮಾಡಬಾರದು ಎಂದು ಅವರು ಹೇಳಿದರು. ಕೇಂದ್ರದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್ಎಚ್ಎಂ)ದಡಿ ಸರಿಯಾದ ಸಮಯಕ್ಕೆ ಅನುದಾನ ಬರದಿದ್ದರೂ ಆರೋಗ್ಯ ಇಲಾಖೆ ಎಲ್ಲ ಯೋಜನೆಗಳಿಗೂ ಹಣ ನೀಡುತ್ತಿದೆ. ನಮ್ಮ ಇಲಾಖೆಗೆಪಾರ್ಶ್ವವಾಯು ಆಗಿಲ್ಲ. ಆರೋಗ್ಯದಿಂದಲೆ ಇದೆ ಇದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ರಾಜ್ಯ ಸರಕಾರವು ಯುವಜನತೆಗೆ ನೀಡಿದ್ದ ‘ಉದ್ಯೋಗ ಗ್ಯಾರಂಟಿ’ಯನ್ನು ‘ಅಭಯ ಹಸ್ತ’ದ ಮೂಲಕ ಸಾಕಾರಗೊಳಿಸಿದೆ. ಕಲ್ಯಾಣ ಕರ್ನಾಟಕ ಭಾಗದ 320 ಅಭ್ಯರ್ಥಿಗಳಿಗೆ ಹಾಗೂ ರಾಜ್ಯದ ಇತರ ವೃಂದಗಳ 650 ವಿವಿಧ ಅರೆ ವೈದ್ಯಕೀಯ ಖಾಯಂ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆ.21ರಂದು ಬೆಳಗ್ಗೆ 11 ಗಂಟೆಗೆ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಲಿದ್ದಾರೆ. -ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
Yadgiri | ದ್ವಿತೀಯ ಪಿಯುಸಿ ಪರೀಕ್ಷೆ-1; ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ; ಡಿಸಿ ಹರ್ಷಲ್ ಭೋಯರ್
ಯಾದಗಿರಿ: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ನ್ನು ನಕಲುಮುಕ್ತ ಹಾಗೂ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯುವ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 20 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಶಹಾಪೂರದಲ್ಲಿ 5, ಸುರಪುರದಲ್ಲಿ 4, ಯಾದಗಿರಿಯಲ್ಲಿ 7, ಗುರುಮಿಠಕಲ್ನಲ್ಲಿ 2, ಕೆಂಭಾವಿಯಲ್ಲಿ 1 ಹಾಗೂ ಹುಣಸಗಿಯಲ್ಲಿ 1 ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 11,760 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 105 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರವೇಶ ಪತ್ರಗಳನ್ನು ಆನ್ಲೈನ್ ಮೂಲಕ ಕಾಲೇಜುಗಳಿಗೆ ವಿತರಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸಂಪೂರ್ಣ ಜವಾಬ್ದಾರಿ ಹೊತ್ತು, ನಿಯಮಾನುಸಾರ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಬೇಕು. ಸೂಕ್ಷ್ಮ ಕೇಂದ್ರಗಳಲ್ಲಿ ವಿಶೇಷ ಕಟ್ಟೆಚ್ಚರ ವಹಿಸಬೇಕು. ನಕಲು ಅಥವಾ ಸಾಮೂಹಿಕ ನಕಲು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ವದಂತಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬಾರದು. ಇಂತಹ ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆಗಳ ಭದ್ರತೆ ಕುರಿತು ಸಂಬಂಧಿತ ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು. ಪರೀಕ್ಷೆ ಸಿಸಿಟಿವಿ ಕಣ್ಗಾವಲು ಮತ್ತು ವೆಬ್ಕಾಸ್ಟಿಂಗ್ ಮೂಲಕ ನಡೆಸಲಾಗುತ್ತದೆ. ಪರೀಕ್ಷಾ ಕೊಠಡಿಗಳೊಳಗೆ ಮೊಬೈಲ್, ಪೆನ್ ಡ್ರೈವ್, ಇಯರ್ಫೋನ್, ಮೈಕ್ರೋಫೋನ್, ಬ್ಲೂಟೂತ್ ಸಾಧನ, ಕೈಗಡಿಯಾರ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಮೊಬೈಲ್ ಬಳಕೆ ಮತ್ತು ಫೋಟೋಗ್ರಫಿಗೆ ಸಂಪೂರ್ಣ ನಿಷೇಧವಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ನಿರಂತರ ವಿದ್ಯುತ್, ಸಿಸಿಟಿವಿ ಹಾಗೂ ವಾಹನ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸೂಚಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಕೆ. ಶಂಕರ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಉಪನಿರ್ದೇಶಕ ಪಂಡಿತರಾವ್ ಪವಾರ್ ಸ್ವಾಗತಿಸಿದರು.
ChatGPT, Geminiಗೆ ಸೆಡ್ಡು ಹೊಡೆದ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪೆನಿಯ Sarvam AIಯ ವಿಶೇಷತೆಗಳೇನು?
ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಬೆಂಗಳೂರಿನ ನವೋದ್ಯಮ ‘Sarvam AI’ ಜಾಗತಿಕ ತಂತ್ರಜ್ಞಾನ ದಿಗ್ಗಜರ ಗಮನ ಸೆಳೆದಿದೆ. 2026ರ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸರ್ವಂ AIಯ ಕೆಲಸವನ್ನು ಶ್ಲಾಘಿಸಿದರು. “ನಾನು ಪ್ರತೀ ಬಾರಿ ಭಾರತಕ್ಕೆ ಭೇಟಿ ನೀಡಿದಾಗಲೂ ಸಾಫ್ಟ್ವೇರ್ ಡೆವಲಪರ್ ಗಳ ಶಕ್ತಿಗೆ ಬೆರಗಾಗುತ್ತೇನೆ. ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿದೆ. ಸರ್ವಂ ಸ್ಥಳೀಯ AI ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಾಡಿದ ಕೆಲಸದಲ್ಲಿ ನನಗೆ ಯಾವುದೇ ಅಡೆತಡೆಗಳು ಕಾಣುತ್ತಿಲ್ಲ. ಅದು ತುಂಬಾ ಉತ್ತಮ ಸ್ಥಾನದಲ್ಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಪಿಚೈ ಹೇಳಿದ್ದಾರೆ. ►ಭಾರತದ ಸರ್ವಂ AI 2023ರ ಆಗಸ್ಟ್ನಲ್ಲಿ ವಿವೇಕ್ ರಾಘವನ್ ಮತ್ತು ಪ್ರತ್ಯುಷ್ ಕುಮಾರ್ ಅವರು ಸರ್ವಂ ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಿದರು. ತನ್ನ ಸರ್ವಂ AI ಮಾದರಿಯು ಚಿತ್ರ ಶೀರ್ಷಿಕೆ, ದೃಶ್ಯ ಪಠ್ಯ ಗುರುತಿಸುವಿಕೆ, ಚಾರ್ಟ್ ವ್ಯಾಖ್ಯಾನ ಮತ್ತು ಸಂಕೀರ್ಣ ಟೇಬಲ್ ಪಾರ್ಸಿಂಗ್ ಸೇರಿದಂತೆ ಹಲವಾರು ದೃಶ್ಯ ತಿಳುವಳಿಕೆ ಕಾರ್ಯಗಳಿಗೆ ಸಮರ್ಥವಾಗಿದೆ ಎಂದು ಸರ್ವಂ ತನ್ನ ಬ್ಲಾಗ್ ಪೋಸ್ಟ್ನಲ್ಲಿ ವಿವರಿಸಿದೆ. ವಿವೇಕ್ ರಾಘವನ್ ಅವರು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಅನುಭವ ಹೊಂದಿದ್ದಾರೆ. ಪ್ರತ್ಯುಷ್ ಕುಮಾರ್ ಭಾರತೀಯ ಭಾಷೆಗಳಲ್ಲಿ ದೇಶದ ಓಪನ್ ಸೋರ್ಸ್ AI ಪ್ರಯತ್ನಗಳನ್ನು ಮುನ್ನಡೆಸಿದ್ದಾರೆ ಎಂದು ವೆಬ್ಸೈಟ್ ತಿಳಿಸಿದೆ. ಭೌತಿಕ ದಾಖಲೆಗಳು, ಸ್ಕ್ಯಾನ್ ಮಾಡಿದ ಆರ್ಕೈವ್ಗಳು ಮತ್ತು ಐತಿಹಾಸಿಕ ಸಂಗ್ರಹಗಳಲ್ಲಿ ಹುದುಗಿರುವ ವಿಷಯಗಳನ್ನು ಅನ್ಲಾಕ್ ಮಾಡುವುದು ಕಂಪೆನಿಯ ಗುರಿಗಳಲ್ಲಿ ಒಂದಾಗಿದೆ. ಸರ್ವಂ AI, ChatGPT ಮತ್ತು Gemini ನಂತಹ ಜಾಗತಿಕ AI ಮಾದರಿಗಳಲ್ಲಿನ ಪ್ರಮುಖ ದೋಷವನ್ನು ಪರಿಹರಿಸಲು ಮುಂದಾಗಿದೆ. ChatGPT ಅಥವಾ Gemini ಸಾಮಾನ್ಯವಾಗಿ ಭಾರತೀಯ ಭಾಷೆಗಳನ್ನು ಎರಡನೇ ದರ್ಜೆಯಲ್ಲಿ ಪರಿಗಣಿಸುವುದರಿಂದ ಪ್ರಾದೇಶಿಕ ಲಿಪಿಗಳಲ್ಲಿ ನಿಖರತೆ ಕಡಿಮೆಯಾಗುತ್ತದೆ. ಇದನ್ನು ಪರಿಹರಿಸಲು ಸರ್ವಂ ಒಂದು ಉನ್ನತ ಕಾರ್ಯಕ್ಷಮತೆಯ “3B state-space model” ನಿರ್ಮಿಸಿದೆ. ಸರ್ವಂ AI ಮಾದರಿಯು ವಿವಿಧ ಹಣಕಾಸು ದಾಖಲೆಗಳು, ಸಾಹಿತ್ಯ, ಪತ್ರಿಕೆಗಳು ಹಾಗೂ ಐತಿಹಾಸಿಕ ಪಠ್ಯಗಳನ್ನು ಒಳಗೊಂಡ 22 ಅಧಿಕೃತ ಭಾರತೀಯ ಭಾಷೆಗಳ ಉತ್ತಮ ಗುಣಮಟ್ಟದ ಡೇಟಾಸೆಟ್ಗಳ ಮೇಲೆ ತರಬೇತಿ ಪಡೆದಿದೆ ಎಂದು ಕಂಪೆನಿ ಹೇಳಿದೆ. ಹೆಚ್ಚುವರಿಯಾಗಿ, ಸರ್ವಂ ಕೇವಲ 294MB ಗಾತ್ರದ ಧ್ವನಿ ಗುರುತಿಸುವಿಕೆ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದು ಪ್ರಮಾಣಿತ ಸ್ಮಾರ್ಟ್ಫೋನ್ನಲ್ಲಿ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಈ ಉಪಕರಣವು 10 ವಿಭಿನ್ನ ಭಾರತೀಯ ಭಾಷೆಗಳನ್ನು ಗುರುತಿಸಬಲ್ಲದು. ಅತ್ಯಂತ ಪ್ರಭಾವಶಾಲಿ ಅಂಶವೆಂದರೆ, ಯಾವ ಭಾಷೆಯನ್ನು ಮಾತನಾಡಲಾಗುತ್ತಿದೆ ಎಂಬುದನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಸಾಮರ್ಥ್ಯ. ಹೀಗಾಗಿ ಬಳಕೆದಾರರು ತಮ್ಮ ಸೆಟ್ಟಿಂಗ್ ಗಳನ್ನು ಹಸ್ತಚಾಲಿತವಾಗಿ ಬದಲಾಯಿಸಬೇಕಾಗಿಲ್ಲ. ಉನ್ನತ ಮಟ್ಟದ ಸ್ಮಾರ್ಟ್ಫೋನ್ನಲ್ಲಿ (ಸ್ನಾಪ್ಡ್ರಾಗನ್ 8 ಜೆನ್ 3 ಚಿಪ್ನಂತಹ) ಕಾರ್ಯನಿರ್ವಹಿಸುವಾಗ, ಇದು ಮನುಷ್ಯ ಮಾತನಾಡುವುದಕ್ಕಿಂತ 8.5 ಪಟ್ಟು ವೇಗವಾಗಿ ಮಾತನ್ನು ಪ್ರಕ್ರಿಯೆಗೊಳಿಸಬಹುದು. ಮೊದಲ ಪದವನ್ನು ನೀಡಲು ಇದು 0.3 ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದರ ಧ್ವನಿ ಸಂಶ್ಲೇಷಣೆ ಮಾದರಿಯು ಸುಮಾರು 60MB ಗಾತ್ರ ಹೊಂದಿದ್ದು 24 ಮಿಲಿಯನ್ ನಿಯತಾಂಕಗಳನ್ನು ಒಳಗೊಂಡಿದೆ. ಪ್ರಮಾಣಿತ ಮಾನದಂಡದಲ್ಲಿ ಸರಾಸರಿ ಅಕ್ಷರ ದೋಷ ದರ 0.0173 ಅನ್ನು ಸಾಧಿಸಿದೆ. ಇದರಿಂದ ಸಂಶ್ಲೇಷಿತ ಧ್ವನಿ ಉದ್ದೇಶಿತ ಪಠ್ಯಕ್ಕೆ ಅತ್ಯಂತ ಸಮೀಪವಾಗಿ ಹೊಂದಿಕೆಯಾಗುತ್ತದೆ ಎಂಬುದು ಸೂಚಿಸುತ್ತದೆ. ಕಸ್ಟಮ್ ಧ್ವನಿ ಕ್ಲೋನಿಂಗ್ ಸೌಲಭ್ಯವೂ ಇದರಲ್ಲಿ ಲಭ್ಯ. ಸುಮಾರು ಒಂದು ಗಂಟೆಯ ಆಡಿಯೊ ಡೇಟಾವನ್ನು ಬಳಸಿ ಹೊಸ ಧ್ವನಿಯನ್ನು ಸೇರಿಸಬಹುದು ಮತ್ತು ಅದೇ 60MB ಮಾದರಿ ಫೈಲ್ನಲ್ಲಿ ನಿಯೋಜಿಸಬಹುದು. ಅನುವಾದ ಮಾದರಿಯು 150 ಮಿಲಿಯನ್ ನಿಯತಾಂಕಗಳನ್ನು ಬಳಸುತ್ತದೆ. ಇದು ಫೋನ್ನಲ್ಲಿ ಕೇವಲ 334MB ಜಾಗವನ್ನು ಮಾತ್ರ ತೆಗೆದುಕೊಳ್ಳುತ್ತದೆ. ಮಧ್ಯಂತರ ಭಾಷೆಯ ಮೂಲಕ ರೂಟಿಂಗ್ ಮಾಡದೆ 10 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ಸೇರಿ 110 ಭಾಷಾ ಜೋಡಿಗಳಲ್ಲಿ ದ್ವಿಮುಖ ಅನುವಾದವನ್ನು ನಿರ್ವಹಿಸುತ್ತದೆ. ►Gemini ಮತ್ತು ChatGPTಯಿಂದ ಹೇಗೆ ಭಿನ್ನ? Gemini ಮತ್ತು ChatGPT ಇಂಗ್ಲಿಷ್ಗೆ ಆದ್ಯತೆ ನೀಡಿ ಉಳಿದ ಭಾಷೆಗಳನ್ನು ಎರಡನೇ ದರ್ಜೆಯಲ್ಲಿ ಪರಿಗಣಿಸುತ್ತವೆ. ಸರ್ವಂ AI 22 ಭಾರತೀಯ ಭಾಷೆಗಳ ಮೇಲೆ ತರಬೇತಿ ಪಡೆದಿರುವುದರಿಂದ ಪ್ರಾದೇಶಿಕ ಲಿಪಿಗಳಿಗೆ ಹೆಚ್ಚಿನ ನಿಖರತೆಯನ್ನು ಒದಗಿಸುತ್ತದೆ. ಇತರ ಮಾದರಿಗಳು ದಾಖಲೆಗಳು ಅಥವಾ ಚಿತ್ರಗಳಿಂದ ಪಠ್ಯವನ್ನು ಹೊರತೆಗೆಯಲು ಮಾತ್ರ ಸಮರ್ಥವಾಗಿದ್ದರೆ, ಸರ್ವಂ AI ದೃಶ್ಯದ ಅಂಶಗಳನ್ನು ಸಹ ಅರ್ಥೈಸಿ ಹೆಚ್ಚುವರಿ ತಿಳುವಳಿಕೆ ಒದಗಿಸುತ್ತದೆ. ಇದು ಭಾರತೀಯ ಭಾಷೆಗಳಿಗೆ ದೊಡ್ಡ ಪ್ರಮಾಣದ ಇಂಡಿಕ್ OCR ಮಾನದಂಡದೊಂದಿಗೆ ಸಂಕೀರ್ಣ ದಾಖಲೆಗಳಲ್ಲಿಯೂ ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ►ಸರ್ವಂ AI ಮಾದರಿ ಲಭ್ಯತೆ 2026ರ ಫೆಬ್ರವರಿ ತಿಂಗಳಲ್ಲಿ ಡಾಕ್ಯುಮೆಂಟ್ ಇಂಟೆಲಿಜೆನ್ಸ್ API ಮತ್ತು ಸರ್ವಂ ವಿಷನ್ ಅನ್ನು ಉಚಿತವಾಗಿ ಬಳಸಬಹುದು. ಸರ್ವಂ ವಿಷನ್ ಬಳಕೆದಾರರಿಗೆ ದೊಡ್ಡ ಪ್ರಮಾಣದಲ್ಲಿ ಅನ್ವೇಷಣೆ ಮತ್ತು ಅಭಿವೃದ್ಧಿಗೆ ಅವಕಾಶ ಒದಗಿಸುತ್ತದೆ. ►ಸರ್ವಂ AI: ಪ್ರಮುಖ ಲಕ್ಷಣಗಳು ಮಲ್ಟಿಮೋಡಲ್ ವಿಷನ್-ಲ್ಯಾಂಗ್ವೇಜ್: ಚಿತ್ರಗಳು ಮತ್ತು ಪಠ್ಯಗಳನ್ನು ಒಟ್ಟಿಗೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ಚಿತ್ರ ಶೀರ್ಷಿಕೆ, ಚಾರ್ಟ್ ಅಥವಾ ಟೇಬಲ್ ವ್ಯಾಖ್ಯಾನವನ್ನು ಸುಲಭಗೊಳಿಸುತ್ತದೆ. ಡಾಕ್ಯುಮೆಂಟ್ ತಿಳುವಳಿಕೆ (ಭಾರತೀಯ ಭಾಷೆಗಳ ಕೇಂದ್ರೀಕರಣ): ಹಳೆಯ ಐತಿಹಾಸಿಕ ಪಠ್ಯ ಅಥವಾ ಮಸುಕಾದ ಸ್ಕ್ಯಾನ್ ದಾಖಲೆಗಳನ್ನೂ 22 ಭಾರತೀಯ ಭಾಷೆಗಳಲ್ಲಿ ನಿಖರವಾಗಿ ಡಿಜಿಟಲೀಕರಣಗೊಳಿಸುವ ಸಾಮರ್ಥ್ಯ. ಚಾರ್ಟ್ ಮತ್ತು ಡೇಟಾ ವ್ಯಾಖ್ಯಾನ: ಕೇವಲ ಪಠ್ಯ ಓದುವುದಷ್ಟೇ ಅಲ್ಲ; ದಾಖಲೆಯೊಳಗಿನ ಚಾರ್ಟ್ಗಳು, ಡೇಟಾ ಮತ್ತು ಇತರ ದೃಶ್ಯ ಅಂಶಗಳನ್ನು ವಿಶ್ಲೇಷಿಸಿ ಸಾರಾಂಶ ನೀಡುತ್ತದೆ. ಬಹುಭಾಷಾ ದೃಶ್ಯ ಅರಿವು: ಒಂದೇ ದಾಖಲೆಯಲ್ಲಿ ಬಹು ಭಾಷೆಗಳ ದೃಶ್ಯ ಅಂಶಗಳನ್ನು ಅರ್ಥೈಸುವ ಸಾಮರ್ಥ್ಯ. ಪ್ರಮುಖ ಕಾರ್ಯಕ್ಷಮತೆ: ಇಂಗ್ಲಿಷ್ನಲ್ಲಿ ವಿಶ್ವದ ಅತ್ಯುತ್ತಮ ಮಾದರಿಗಳ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಜೊತೆಗೆ ಭಾರತೀಯ ಭಾಷೆಗಳ ನಿಖರತೆಗೆ “ಸರ್ವಂ ಇಂಡಿಕ್ OCR ಬೆಂಚ್” ಎಂಬ ಮಾನದಂಡವನ್ನು ಸ್ಥಾಪಿಸಿದೆ. ಪ್ರವೇಶಿಸಬಹುದಾದ API : ಫೆಬ್ರವರಿ 2026ರಿಂದ ದಾಖಲೆ-ಓದುವ APIಗಳು ವ್ಯವಹಾರ ಬಳಕೆಗೆ ಸಿದ್ಧವಾಗಿದ್ದು, ಪ್ರಸ್ತುತ ಉಚಿತವಾಗಿ ಪರೀಕ್ಷಿಸಲು ಲಭ್ಯ. ‘AI for All from India’ ಎಂಬ ಟ್ಯಾಗ್ಲೈನ್ನೊಂದಿಗೆ, ಭಾರತದಲ್ಲಿ ಎಲ್ಲರಿಗೂ AI ಪ್ರವೇಶಿಸಬಹುದಾದ ಭವಿಷ್ಯ ನಿರ್ಮಿಸುವುದೇ ಸರ್ವಂ ಗುರಿಯಾಗಿದೆ. “ನಮ್ಮ ಕಾಲದ ಪ್ರಮುಖ ತಾಂತ್ರಿಕ ಬದಲಾವಣೆಯನ್ನು ಭಾರತ ವಿಶ್ವಾಸ ಮತ್ತು ನಿಯಂತ್ರಣದೊಂದಿಗೆ ಸ್ವೀಕರಿಸಬೇಕೆಂದು ನಾವು ಬಯಸುತ್ತೇವೆ. ಮೂಲಭೂತ ಘಟಕಗಳನ್ನು ನಿರ್ಮಿಸಿ ಅವುಗಳನ್ನು ದೇಶದ ವಿಶಿಷ್ಟ ಅಗತ್ಯಗಳಿಗೆ ಅನ್ವಯಿಸುವುದು ನಮ್ಮ ಮಹತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ AI ವೇದಿಕೆಯನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿ, ನಿಯೋಜಿಸಿ ಮತ್ತು ನಿರ್ವಹಿಸುತ್ತಿದ್ದೇವೆ” ಎಂದು ಸ್ಟಾರ್ಟ್ಅಪ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಭಾರತೀಯ ಭಾಷೆಗಳು ಮತ್ತು ಬಳಕೆಯ ಸಂದರ್ಭಗಳಿಗೆ ಜನರೇಟಿವ್ AI ಪರಿಹಾರಗಳನ್ನು ರಚಿಸಲು Qualcomm ಜೊತೆ ಸಹಯೋಗ ಮಾಡಲಾಗಿದೆ. ಕಾರು ಫಲಕಗಳಿಗೆ AI ತಂತ್ರಜ್ಞಾನವನ್ನು ತರಲು ಜರ್ಮನ್ ಸಂಸ್ಥೆ ಬಾಷ್ ಜೊತೆಗೆ ಸಹ ಪಾಲುದಾರಿಕೆ ಘೋಷಿಸಲಾಗಿದೆ.
ಹೆಣ್ಣು ಮಕ್ಕಳ ಕೈಗೆ ಸೌಲಭ್ಯ ನೀಡಿದರೆ ಅದು ಕುಟುಂಬಕ್ಕೆ ಬಳಕೆ: ಡಾ. ಶರಣ ಬಸವ ಪಾಟೀಲ
ಸ್ವಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ವಸ್ತು ಪ್ರದರ್ಶನ ‘ಸರಸ್ ಮೇಳ’ಕ್ಕೆ ಚಾಲನೆ
ಯಾದಗಿರಿ | ನಾಯ್ಕಲ್-ನಾಲ್ವಡಗಿ ಸೇತುವೆಗಳ ಮೇಲ್ದರ್ಜೆಗೆ ಒತ್ತಾಯ: ಮೀನು ಬಲೆ ಬೀಸಿ ವಿನೂತನ ಪ್ರತಿಭಟನೆ
ಯಾದಗಿರಿ: ವಡಗೇರಾ ತಾಲ್ಲೂಕಿನ ನಾಯ್ಕಲ್ ಮತ್ತು ನಾಲ್ವಡಗಿ ಗ್ರಾಮಗಳಿಂದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿ, ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ರೈತರು ಸೇತುವೆ ಮೇಲೆ ಮೀನು ಬಲೆ ಬೀಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಸೇತುವೆಗಳು ಜಾವೃತಿಯಾಗುತ್ತಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ. ಆದ್ದರಿಂದ ಸೇತುವೆಗಳನ್ನು ತಕ್ಷಣವೇ ಮೇಲ್ದರ್ಜೆಗೆ ಏರಿಸಿ, ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯ ಬಳಿಕ ಮಾತನಾಡಿದ ಉಮೇಶ್ ಕೆ. ಮುದ್ನಾಳ್, ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಈ ಸೇತುವೆಗಳು ಇಂದಿಗೂ ಮೇಲ್ದರ್ಜೆಗೆ ಏರಿಸದಿರುವುದು ದುರಾದೃಷ್ಟಕರ. ಪ್ರತಿ ವರ್ಷ ಮಳೆಗಾಲದಲ್ಲಿ ಜನರ ಜೀವಕ್ಕೆ ಅಪಾಯ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸೇತುವೆಗಳ ಮೂಲಕ ದಿನನಿತ್ಯ ಟ್ರ್ಯಾಕ್ಟರ್, ಎತ್ತಿನಬಂಡಿ, ಟಂಟಂ ಹಾಗೂ ಪಶುಸಂಪತ್ತು ಸಂಚರಿಸುತ್ತಿವೆ. ವಿಶೇಷವಾಗಿ ರಾತ್ರಿ ವೇಳೆ ಹೊಸಬರು ಈ ರಸ್ತೆಯಲ್ಲಿ ಸಂಚರಿಸಿದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಕಾರಣ ಎಂದು ಆರೋಪಿಸಿದರು. ಸೇತುವೆ ಮತ್ತು ತಡೆಗೋಡೆ ಕಾಮಗಾರಿ ತಕ್ಷಣ ಕೈಗೊಳ್ಳದಿದ್ದರೆ ಯಾದಗಿರಿ–ಶಹಾಪೂರ ಮುಖ್ಯರಸ್ತೆಯನ್ನು ತಡೆದು ಮತ್ತೊಂದು ಹಂತದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಂದೆ ಯಾವುದೇ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿ, ವಡಗೇರಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಹೋರಾಟಗಾರರು ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಖಾಜಾಮೈನುದ್ದಿನ್, ಪವನ, ಭೀಮರಾಯ, ಮಲ್ಲಿಕಾರ್ಜುನರೆಡ್ಡಿ, ಶಬ್ಬಿರ್, ಮೌಲಾಸಾಬ, ಶಿವರಾಜ, ಮಹ್ಮದ್ ಸದರಿ, ಸಿದ್ದಲಿಂಗಪ್ಪ, ಅಜೀರ್ಸಾಬ, ಬಾಷುಮಿಯಾ, ಮಹ್ಮದ್ ಜಾನಿ, ಖಾಜಾಸಾಬ, ಗುಲಾಮ, ಮಶಾಕ್, ಮೌನೇಶ, ನಬಿಚಂದ, ಸಿರಾಜ್, ಖಾಸಿಂಸಾಬ, ಮಲ್ಲಪ್ಪ ಈಶಪ್ಪ, ಸಾಬಣ್ಣ, ಶರಣಪ್ಪ, ಶಿವಣ್ಣ, ತೋಟಪ್ಪ, ಸಿದ್ದಣ್ಣ, ಮಜಂಪ್ಪ, ಪರಮಣ್ಣ, ಲಕ್ಷ್ಮಣ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.
Abhishek Sharma Poor Form- ಭಾರತ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಇದೀಗ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ 2 ಅರ್ಧಶತಕ ಗಳಿಸಿದರೂ ಅವರು ತಮ್ಮ ಕೊನೆಯ 8 ಪಂದ್ಯಗಳಲ್ಲಿ 5 ಬಾರಿ ಶೂನ್ಯಕ್ಕೆ ಔಟಾಗಿರುವುದು ಭಾರತ ತಂಡಕ್ಕೆ ಕಳವಳದ ಸಂಗತಿಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಕಣಕ್ಕಿಳಿವ ಅವಕಾಶ ಸಿಗುತ್ತದೋ ಇಲ್ಲವೇ ಎಂಬ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಮಲ್ಪೆ: ಮೀನಿನ ವ್ಯಾಪಾರಿಯ ಮುಖಕ್ಕೆ ಖಾರದ ಪುಡಿ ಎರಚಿ ಚಿನ್ನದ ಸರ ಸುಲಿಗೆ
ಮಲ್ಪೆ, ಫೆ.20: ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ ಮುಖಕ್ಕೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ಚಿನ್ನದ ಸರ ಸುಲಿಗೆ ಮಾಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ 4.30ರ ಸುಮಾರಿಗೆ ನಡೆದಿದೆ. ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದ ಎಂಬವರು ಫೆ.20ರಂದು ಬೆಳಗಿನ ಜಾವ ಬಂದರಿಗೆ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಅವರು ಬೆಳಗ್ಗೆ 4.30ರ ಸುಮಾರಿಗೆ ಕಚೇರಿಯ ಶೌಚಾಲಯಕ್ಕೆ ಹೋಗಿ ವಾಪಾಸು ಬಂದರು ಕಡೆಗೆ ಬರುತ್ತಿದ್ದರು. ಆಗ ಅಪರಿಚಿತ ವ್ಯಕ್ತಿಯೊಬ್ಬ ದಯಾನಂದ ಕುಂದರ್ ಅವರಲ್ಲಿ ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ಹತ್ತಿರ ಬಂದು, ಮುಖಕ್ಕೆ ಖಾರದ ಪುಡಿಯಲ್ಲಿ ಎರಚಿದನು. ಬಳಿಕ ಅವರನ್ನು ಅಲ್ಲೇ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದ್ದು, ನಂತರ ಅಲ್ಲಿದ್ದ ಇಬ್ಬರು ಅಪರಿಚಿತರು ಒಟ್ಟು ಸೇರಿ ದಯಾನಂದ ಕುಂದರ್ ಅವರಿಗೆ ಚಾಕು ತೋರಿಸಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಡು ವಂತೆ ಕೇಳಿದರು. ಕೊಡದೆ ಇದ್ದಾಗ ಆರೋಪಿ ಮುತ್ತಣ್ಣ ಮತ್ತು ಇಬ್ಬರು ಅಪರಿಚಿತರು ಸೇರಿ ದಯಾನಂದ ಕುಂದರ್ ಅವರ ಮುಖಕ್ಕೆ ಮತ್ತು ಬೆನ್ನಿಗೆ ಕೈಯಿಂದ ಹಲ್ಲೆ ಮಾಡಿ 6ಲಕ್ಷ ರೂ. ಮೌಲ್ಯದ ಸುಮಾರು 6 ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿದರು. ಅಲ್ಲದೆ ಘಟನೆಯ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಂದು ಬಿಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ | ಅಜ್ಮೀರ್ ದರ್ಗಾಕ್ಕೆ ಶಾಸಕ ತುನ್ನೂರ್ ಭೇಟಿ
ಯಾದಗಿರಿ: ದೇಶದ ಹೆಸರಾಂತ ಧಾರ್ಮಿಕ ಕ್ಷೇತ್ರವಾಗಿರುವ ರಾಜಸ್ಥಾನ ರಾಜ್ಯದ ಅಜ್ಮೀರ್ ದರ್ಗಾಕ್ಕೆ ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಗಿರಿಜಿಲ್ಲೆ ಯಾದಗಿರಿ ಸೇರಿದಂತೆಯೇ ನಾಡಿನ ರೈತಾಪಿ ವರ್ಗ ಸೇರಿದಂತೆಯೇ ನಾಡಿನ ಎಲ್ಲರಿಗೂ ದೇವರು ಒಳ್ಳೆಯದಾಗಲಿ ಎಂದು ಬೇಡಿಕೊಂಡಿರುವುದಾಗಿ ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ತುನ್ನೂರ್ ಅವರಿಗೆ ಹಝರತ್ ಖಾಜಾ ಗರೀಬ್ ಅಜಯ್ ಮೈನುದ್ದಿನ್ ದರ್ಗಾದ ಕಮಿಟಿ ಸದಸ್ಯರು ಸನ್ಮಾನಿಸಿದರು. ಈ ವೇಳೆ ಸುಕ್ಷೇತ್ರ ನಾರಾಯಣಪುರದ ರಶೀದ್ ಮುತ್ಯಾ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಪಾಟೀಲ್, ತಾಯಪ್ಪ ಯಾದವ,ಸೇರಿದಂತೆಯೇ ಇತರರಿದ್ದರು.
ಅಮೆರಿಕದ ಯಾವುದೇ ಮಿಲಿಟರಿ ಆಕ್ರಮಣಕ್ಕೆ ನಿರ್ಣಾಯಕವಾಗಿ ಪ್ರತಿಕ್ರಿಯೆ ನೀಡಲಾಗುವುದು: ಇರಾನ್ ಎಚ್ಚರಿಕೆ
ಟೆಹ್ರಾನ್: ಅಮೆರಿಕದ ಯಾವುದೇ ಮಿಲಿಟರಿ ಆಕ್ರಮಣಕ್ಕೆ ಇರಾನ್ ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿದೆ ಎಂದು, ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಬೆದರಿಕೆಗಳನ್ನು ಖಂಡಿಸುವಂತೆ ಒತ್ತಾಯಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬರೆದ ಪತ್ರದಲ್ಲಿ ಇರಾನ್ನ ರಾಯಭಾರಿ ತಿಳಿಸಿದ್ದಾರೆ. ಇರಾನ್ ಮೇಲಿನ ಸಂಭಾವ್ಯ ದಾಳಿಗಾಗಿ ಹಿಂದೂ ಮಹಾಸಾಗರದಲ್ಲಿರುವ ಚಾಗೋಸ್ ದ್ವೀಪಗಳಲ್ಲಿ ಇರುವ ವಾಯುನೆಲೆಯನ್ನು ಬಳಸುವುದಾಗಿ ಟ್ರಂಪ್ ಇತ್ತೀಚೆಗೆ ನೀಡಿದ ಬೆದರಿಕೆಯನ್ನು ಉಲ್ಲೇಖಿಸಿ, ಭದ್ರತಾ ಮಂಡಳಿಯ ಸದಸ್ಯರು ಹಾಗೂ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕ್ರಮ ಕೈಗೊಳ್ಳಬೇಕೆಂದು ಇರಾನ್ ನ ವಿಶ್ವಸಂಸ್ಥೆಯ ರಾಯಭಾರಿ ಅಮೀರ್ ಸಯೀದ್ ಇರಾವಾನಿ ಆಗ್ರಹಿಸಿದ್ದಾರೆ. ಈ ಪ್ರದೇಶದಲ್ಲಿ ಉಂಟಾಗಿರುವ ಅಸ್ಥಿರ ಪರಿಸ್ಥಿತಿ ಹಾಗೂ ಅಮೆರಿಕ ನಿರಂತರವಾಗಿ ಸೇನಾ ಉಪಕರಣಗಳನ್ನು ಸಂಗ್ರಹಿಸುತ್ತಿರುವ ಹಿನ್ನೆಲೆ, ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಕೇವಲ ವಾಗ್ವಾದ ಅಥವಾ ಸಾಮಾನ್ಯ ಹೇಳಿಕೆಯೆಂದು ಪರಿಗಣಿಸಬಾರದು ಎಂದು ಇರಾವಾನಿ ತಿಳಿಸಿದ್ದಾರೆ. ಇರಾನ್ ದೇಶವು ಉದ್ವಿಗ್ನತೆ ಅಥವಾ ಯುದ್ಧವನ್ನು ಬಯಸುವುದಿಲ್ಲ ಮತ್ತು ಯಾವುದೇ ಯುದ್ಧವನ್ನು ಪ್ರಾರಂಭಿಸುವುದಿಲ್ಲ. ಇರಾನ್ ಮೇಲೆ ದಾಳಿ ನಡೆದರೆ, ಈ ಪ್ರದೇಶದಲ್ಲಿನ ಶತ್ರು ಪಡೆಗಳ ಎಲ್ಲಾ ನೆಲೆಗಳು ಮತ್ತು ಸ್ವತ್ತುಗಳನ್ನು ಗುರಿಗಳೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಮೆರಿಕದೊಂದಿಗೆ ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳಲು ಟೆಹ್ರಾನ್ ಗೆ 10ರಿಂದ 15 ದಿನಗಳ ಕಾಲಾವಕಾಶವಿದೆ ಎಂದು ಟ್ರಂಪ್ ಗುರುವಾರ ಎಚ್ಚರಿಸಿದ್ದರು.
ಜಮ್ಮುಕಾಶ್ಮೀರ: ರಮಝಾನ್ ದಾನ ನಿಯಂತ್ರಣಕ್ಕೆ ಕಿಷ್ತವಾರ್ ಆಡಳಿತದ ಆದೇಶ; ರಾಜಕೀಯ ಪಕ್ಷಗಳ ಟೀಕೆ
ಶ್ರೀನಗರ: ಪವಿತ್ರ ರಮಝಾನ್ ತಿಂಗಳಲ್ಲಿ ‘ವ್ಯಕ್ತಿಗಳಿಂದ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆ ಸಂಗ್ರಹಗಳನ್ನು’ ತಡೆಯಲು ಕಿಷ್ತವಾರ್ ಜಿಲ್ಲಾಧಿಕಾರಿಗಳು ಗುರುವಾರ ಆದೇಶವನ್ನು ಹೊರಡಿಸಿದ್ದು, ಜಮ್ಮುಕಾಶ್ಮೀರದ ಹಲವಾರು ರಾಜಕೀಯ ಪಕ್ಷಗಳು ಇದನ್ನು ಕಟುವಾಗಿ ಟೀಕಿಸಿವೆ ಎಂದು The Hindu ವರದಿ ಮಾಡಿದೆ. ಪವಿತ್ರ ರಮಝಾನ್ ತಿಂಗಳಲ್ಲಿ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆಗಳ ಸಂಗ್ರಹದ ಪ್ರವೃತ್ತಿಯಿದ್ದು,ಇದಕ್ಕೆ ತಕ್ಷಣ ಕಡಿವಾಣ ಹಾಕುವ ಅಗತ್ಯವಿದೆ ಎಂದು ತನ್ನ ಆದೇಶದಲ್ಲಿ ಹೇಳಿರುವ ಜಿಲ್ಲಾಧಿಕಾರಿ ಪಂಕಜಕುಮಾರ ಶರ್ಮಾ ಅವರು,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 163ನ್ನು ಉಲ್ಲೇಖಿಸಿದ್ದಾರೆ. ಪರಿಹಾರ, ಕಲ್ಯಾಣ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿರುವ ಸಾರ್ವಜನಿಕ ದೇಣಿಗೆಗಳು ದುರುಪಯೋಗವಾದಂತೆ, ಅಕ್ರಮವಾಗಿ ವರ್ಗಾವಣೆಯಾಗದಂತೆ ಅಥವಾ ವಿಧ್ವಂಸಕ ಚಟುವಟಕೆಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಶಾಸನಬದ್ಧ ಹೊಣೆಗಾರಿಕೆಯಾಗಿದೆ. ಸಂಬಂಧಿತ ಕಾಯ್ದೆಗಳಡಿ ನೋಂದಣಿ ಹೊಂದಿರದ ವ್ಯಕ್ತಿಗಳು, ಎನ್ಜಿಒಗಳು, ಟ್ರಸ್ಟ್ಗಳು, ಸೊಸೈಟಿಗಳು ಅಥವಾ ಸಮಿತಿಗಳು ದೇಣಿಗೆಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದಕ್ಕಾಗಿ ವಕ್ಫ್ ಮಂಡಳಿಯ ಕಿಷ್ತವಾರ್ ಘಟಕದ ಕಾರ್ಯ ನಿರ್ವಹಣಾಧಿಕಾರಿ, ಜಾಮಿಯಾ ಮಸೀದಿ ಕಿಷ್ತವಾರ್ನ ಇಮಾಮ್ ಅಥವಾ ಸಂಬಂಧಿತ ತಹಶೀಲ್ದಾರರಿಂದ ಪೂರ್ವ ಲಿಖಿತ ಅನುಮತಿಯನ್ನು ಪಡೆಯಬೇಕು ಎಂದು ಆದೇಶದಲ್ಲಿ ಒತ್ತಿ ಹೇಳಲಾಗಿದೆ. ಆದೇಶವು ಕಟ್ಟುನಿಟ್ಟಾಗಿ ಜಾರಿಯಾಗುವುದನ್ನು ಖಚಿತ ಪಡಿಸಿಕೊಳ್ಳುವಂತೆ ಹಿರಿಯ ಎಸ್ಪಿ,ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ಗಳಿಗೆ ಸೂಚಿಸಲಾಗಿದೆ. ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪದ ವಿರುದ್ಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಮ್ಮುಕಾಶ್ಮೀರದ ಉಪ ಮುಖ್ಯಮಂತ್ರಿ ಸುರಿಂದರ್ ಕುಮಾರ ಚೌಧರಿಯವರು,ಸರಕಾರವು ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಬದ್ಧವಾಗಿದೆ. ಆದಾಗ್ಯೂ ಅಧಿಕಾರಿಗಳು ಸಾವಿಧಾನಿಕ ಮತ್ತು ಆಡಳಿತಾತ್ಮಕ ಮಿತಿಗಳನ್ನು ಮೀರದೇ ಕೆಲಸ ಮಾಡಬೇಕು ಎಂದು ಹೇಳಿದರು. ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಹೊಂದಿರುವ ಅಧಿಕಾರಿಗಳು ಇಂತಹ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ಹೇಳಿದ ಜಮ್ಮುಕಾಶ್ಮೀರ ಸಚಿವ ಸತೀಶ ಶರ್ಮಾ,ಇದು ದುರದೃಷ್ಟಕರವಾಗಿದೆ. ಅವರು ತಮ್ಮನ್ನು ತಾವು ಬದಲಿಸಲಿಕೊಳ್ಳುವ ಅಗತ್ಯವಿದೆ ಎಂದರು. ಆದೇಶವು ಅಸಾಂವಿಧಾನಿಕವಾಗಿದೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿದ ಪಿಡಿಪಿ ನಾಯಕ ಹಾಗೂ ಶಾಸಕ ಆಗಾ ಸೈಯದ್ ಮುಂತಾಜಿರ್ ಮೆಹ್ದಿ ಅವರು, ಈ ಆದೇಶವು ಮುಸ್ಲಿಂ ದತ್ತಿಗಳ ಸ್ವಾಯತ್ತತೆಗೆ ಬೆದರಿಕೆಯೊಡ್ಡಿದೆ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಅನಗತ್ಯ ಸರಕಾರಿ ಹಸ್ತಕ್ಷೇಪವನ್ನು ಸೂಚಿಸುತ್ತದೆ ಎಂದು ಹೇಳಿದರು.
Yadgiri | ತಡಿಬಿಡಿ-ಗುಂಡಗುರ್ತಿ ಗ್ರಾಮಗಳಲ್ಲಿ ಬಸ್ ನಿಲುಗಡೆಗೆ ಒತ್ತಾಯ: ನಕಸೆ ಮನವಿ
ಯಾದಗಿರಿ: ಯಾದಗಿರಿಯಿಂದ ಸುರಪುರಕ್ಕೆ ಸಂಚರಿಸುವ ಬಸ್ಸುಗಳು ತಡಿಬಿಡಿ, ಹುಂಡೆಕಲ್, ಗುಂಡಗುರ್ತಿ ಹಾಗೂ ಅನವಾರ ಗ್ರಾಮಗಳಲ್ಲಿ ನಿಲುಗಡೆ ಮಾಡದೆ ಮುಂದುವರಿಯುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ನಮ್ಮ ಕರ್ನಾಟಕ ಸೇನೆ (ನಕಸೆ) ವಡಗೇರಾ ತಾಲೂಕು ಯುವ ಘಟಕವು ಸಂಬಂಧಿತ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸಿ ಮಾತನಾಡಿದ ನಕಸೆ ವಡಗೇರಾ ತಾಲೂಕು ಯುವ ಅಧ್ಯಕ್ಷ ರಾಜು ಬಿ. ಮ್ಯಾಗಿನಮನಿ ಅವರು, ಯಾದಗಿರಿ–ಸುರಪುರ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಬಸ್ಸುಗಳು ರಶ್ ಕಾರಣದಿಂದ ನಿಗದಿತ ಗ್ರಾಮಗಳಲ್ಲಿ ನಿಲ್ಲದೆ ಮುಂದೆ ಸಾಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವೃದ್ಧರು, ಮಹಿಳೆಯರು ಹಾಗೂ ಬಾಣಂತಿಯರೂ ಸಹ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು. ಮಾರ್ಗ ಮಧ್ಯದ ಗ್ರಾಮಗಳಲ್ಲಿ ಬಸ್ ನಿಲುಗಡೆ ಕಡ್ಡಾಯಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದನೆ ದೊರಕದಿದ್ದಲ್ಲಿ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳೊಂದಿಗೆ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶ್ರೀದೇವಿ ಕಟ್ಟಿಮನಿ, ರಾಜು ಗುಂಡಗುರ್ತಿ, ರಂಗನಾಥ ಗುಂಡಗುರ್ತಿ, ಸಿದ್ದು ಹುಂಡೆಕಲ್, ಮೌನೇಶ್, ಆದ್ಯಪ್ಪ ಹುಂಡೆಕಲ್ ಸೇರಿದಂತೆ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀನಗರ,ಫೆ.20: ಪವಿತ್ರ ರಮಝಾನ್ ತಿಂಗಳಲ್ಲಿ ‘ವ್ಯಕ್ತಿಗಳಿಂದ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆ ಸಂಗ್ರಹಗಳನ್ನು’ ತಡೆಯಲು ಕಿಷ್ತವಾರ್ ಜಿಲ್ಲಾಧಿಕಾರಿಗಳು ಗುರುವಾರ ಆದೇಶವನ್ನು ಹೊರಡಿಸಿದ್ದು, ಜಮ್ಮುಕಾಶ್ಮೀರದ ಹಲವಾರು ರಾಜಕೀಯ ಪಕ್ಷಗಳು ಇದನ್ನು ಕಟುವಾಗಿ ಟೀಕಿಸಿವೆ. ಪವಿತ್ರ ರಮಝಾನ್ ತಿಂಗಳಲ್ಲಿ ಅನಿಯಂತ್ರಿತ ಮತ್ತು ಅನಧಿಕೃತ ದೇಣಿಗೆಗಳ ಸಂಗ್ರಹದ ಪ್ರವೃತ್ತಿಯಿದ್ದು,ಇದಕ್ಕೆ ತಕ್ಷಣ ಕಡಿವಾಣ ಹಾಕುವ ಅಗತ್ಯವಿದೆ ಎಂದು ತನ್ನ ಆದೇಶದಲ್ಲಿ ಹೇಳಿರುವ ಜಿಲ್ಲಾಧಿಕಾರಿ ಪಂಕಜಕುಮಾರ ಶರ್ಮಾ ಅವರು,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 163ನ್ನು ಉಲ್ಲೇಖಿಸಿದ್ದಾರೆ. ಪರಿಹಾರ,ಕಲ್ಯಾಣ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿರುವ ಸಾರ್ವಜನಿಕ ದೇಣಿಗೆಗಳು ದುರುಪಯೋಗವಾದಂತೆ, ಅಕ್ರಮವಾಗಿ ವರ್ಗಾವಣೆಯಾಗದಂತೆ ಅಥವಾ ವಿಧ್ವಂಸಕ ಚಟುವಟಕೆಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಶಾಸನಬದ್ಧ ಹೊಣೆಗಾರಿಕೆಯಾಗಿದೆ. ಸಂಬಂಧಿತ ಕಾಯ್ದೆಗಳಡಿ ನೋಂದಣಿ ಹೊಂದಿರದ ವ್ಯಕ್ತಿಗಳು, ಎನ್ಜಿಒಗಳು, ಟ್ರಸ್ಟ್ಗಳು, ಸೊಸೈಟಿಗಳು ಅಥವಾ ಸಮಿತಿಗಳು ದೇಣಿಗೆಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದಕ್ಕಾಗಿ ವಕ್ಫ್ ಮಂಡಳಿಯ ಕಿಷ್ತವಾರ್ ಘಟಕದ ಕಾರ್ಯ ನಿರ್ವಹಣಾಧಿಕಾರಿ, ಜಾಮಿಯಾ ಮಸೀದಿ ಕಿಷ್ತವಾರ್ನ ಇಮಾಮ್ ಅಥವಾ ಸಂಬಂಧಿತ ತಹಶೀಲ್ದಾರರಿಂದ ಪೂರ್ವ ಲಿಖಿತ ಅನುಮತಿಯನ್ನು ಪಡೆಯಬೇಕು ಎಂದು ಆದೇಶದಲ್ಲಿ ಒತ್ತಿ ಹೇಳಲಾಗಿದೆ. ಆದೇಶವು ಕಟ್ಟುನಿಟ್ಟಾಗಿ ಜಾರಿಯಾಗುವುದನ್ನು ಖಚಿತ ಪಡಿಸಿಕೊಳ್ಳುವಂತೆ ಹಿರಿಯ ಎಸ್ಪಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ಗಳಿಗೆ ಸೂಚಿಸಲಾಗಿದೆ. ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪದ ವಿರುದ್ಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಮ್ಮುಕಾಶ್ಮೀರದ ಉಪ ಮುಖ್ಯಮಂತ್ರಿ ಸುರಿಂದರ್ ಕುಮಾರ ಚೌಧರಿಯವರು, ಸರಕಾರವು ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಬದ್ಧವಾಗಿದೆ. ಆದಾಗ್ಯೂ ಅಧಿಕಾರಿಗಳು ಸಾವಿಧಾನಿಕ ಮತ್ತು ಆಡಳಿತಾತ್ಮಕ ಮಿತಿಗಳನ್ನು ಮೀರದೇ ಕೆಲಸ ಮಾಡಬೇಕು ಎಂದು ಹೇಳಿದರು. ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಹೊಂದಿರುವ ಅಧಿಕಾರಿಗಳು ಇಂತಹ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ಹೇಳಿದ ಜಮ್ಮುಕಾಶ್ಮೀರ ಸಚಿವ ಸತೀಶ ಶರ್ಮಾ, ಇದು ದುರದೃಷ್ಟಕರವಾಗಿದೆ. ಅವರು ತಮ್ಮನ್ನು ತಾವು ಬದಲಿಸಿಕೊಳ್ಳುವ ಅಗತ್ಯವಿದೆ ಎಂದರು. ಆದೇಶವು ಅಸಾಂವಿಧಾನಿಕವಾಗಿದೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿದ ಪಿಡಿಪಿ ನಾಯಕ ಹಾಗೂ ಶಾಸಕ ಆಗಾ ಸೈಯದ್ ಮುಂತಾಜಿರ್ ಮೆಹ್ದಿ ಅವರು, ಈ ಆದೇಶವು ಮುಸ್ಲಿಂ ದತ್ತಿಗಳ ಸ್ವಾಯತ್ತತೆಗೆ ಬೆದರಿಕೆಯೊಡ್ಡಿದೆ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಅನಗತ್ಯ ಸರಕಾರಿ ಹಸ್ತಕ್ಷೇಪವನ್ನು ಸೂಚಿಸುತ್ತದೆ ಎಂದು ಹೇಳಿದರು. ರಾಜಕೀಯಗೊಳಿಸಬೇಡಿ: ಉಮರ್ ಅಬ್ದುಲ್ಲಾ ದೇಣಿಗೆಗಳನ್ನು ನಿಯಂತ್ರಿಸುವ ಆದೇಶವನ್ನು ಸಮರ್ಥಿಸಿಕೊಂಡ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು, ಧಾರ್ಮಿಕ ವಿಷಯಗಳನ್ನು ರಾಜಕೀಯಗೊಳಿಸಬೇಡಿ ಎಂದು ತನ್ನ ಪಕ್ಷದವರೂ ಸೇರಿದಂತೆ ರಾಜಕೀಯ ನಾಯಕರನ್ನು ಕೇಳಿಕೊಂಡರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಮಝಾನ್ ಸಂದರ್ಭದಲ್ಲಿ ದಾನರೂಪದ ದೇಣಿಗೆಗಳ ದುರುಪಯೋಗವನ್ನು ತಡೆಯಲು ಧಾರ್ಮಿಕ ನಾಯಕರ ಶಿಫಾರಸುಗಳ ಆಧಾರದಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ರೋಗಿಗಳ ಅಥವಾ ದತ್ತಿ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಕೆಲವೊಮ್ಮೆ ಅಂತಹ ರೋಗಿಗಳು ನಿಜಕ್ಕೂ ಅಸ್ತಿತ್ವದಲ್ಲಿದ್ದಾರೆಯೇ ಎನ್ನುವುದೂ ಗೊತ್ತಿರುವುದಿಲ್ಲ ಎಂದು ಹೇಳಿದರು. ಯಾವುದೇ ನಿಯಂತ್ರಣವಿಲ್ಲದೆ ದೇಣಿಗೆಗಳ ಸಂಗ್ರಹವು ಹಣದ ದುರುಪಯೋಗಕ್ಕೆ ಕಾರಣವಾಗುತ್ತದೆ ಮತ್ತು ನಿಜವಾಗಿಯೂ ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಕಿಷ್ತವಾರ್ನಲ್ಲಿನ ಧಾರ್ಮಿಕ ನಾಯಕರು ಆದೇಶವನ್ನು ಸ್ವಾಗತಿಸಿದ್ದಾರೆ ಎಂದ ಅವರು, ಧಾರ್ಮಿಕ ವಿಷಯಗಳನ್ನು ರಾಜಕೀಯಗೊಳಿಸದಂತೆ ಶಾಸಕರಿಗೆ ಸೂಚಿಸಿದರು. ಆದೇಶವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ಅದು ದೇಶವಿರೋಧಿ ಚಟುವಟಿಕೆಗಳಿಗಾಗಿ ದೇಣಿಗೆಗಳ ದುರುಪಯೋಗವನ್ನು ತಡೆಯುತ್ತದೆ ಎಂದು ಹೇಳಿದೆ.
ಶಹಾಬಾದ್ | ವೀರ ಶೂರ ಚಾರಿತ್ರ್ಯವಂತ ಮಹಾರಾಜ ಶಿವಾಜಿ: ರಮೇಶ ಜೋಗದನಕರ್
ಶಹಾಬಾದ್: ಜಗತ್ತಿನ ಅನೇಕ ವೀರ ಮಹಾರಾಜರಲ್ಲಿ ಜಾಣತನ ಮತ್ತು ಚಾರಿತ್ರ್ಯವನ್ನು ಒಂದೇ ಸಾಥಿನಲ್ಲಿ ಹೊಂದಿದ್ದ ಯುಗಪುರುಷರಾದರೆ ಅವರು ಛತ್ರಪತಿ ಶಿವಾಜಿ ಮಹಾರಾಜ ಎಂದು ಶಿವಾಜಿ ಯುವಕ ಮಂಡಳಿ ಅಧ್ಯಕ್ಷ ರಮೇಶ ಜೋಗದನಕರ್ ಹೇಳಿದರು. ಗುರುವಾರ ಹಳೆ ಶಹಾಬಾದ್ನ ಶಿವಾಜಿ ಚೌಕ್ನಲ್ಲಿ ಶಿವಾಜಿ ಯುವ ಮಂಡಳಿ ವತಿಯಿಂದ ಆಯೋಜಿಸಲಾದ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶಿವಾಜಿ ಮಹಾರಾಜರು ಜಾತಿ, ಭಾಷಾ ಭೇದವಿಲ್ಲದೆ ಸಂಘಟಿತ ಸಮಾಜ ನಿರ್ಮಿಸಿದ್ದರು. ಮಹಿಳೆಯರನ್ನು ತಾಯಿಯ ಸ್ವರೂಪದಲ್ಲಿ ಕಂಡು ಗೌರವಿಸುತ್ತಿದ್ದರು. 17ನೇ ಶತಮಾನದಲ್ಲಿ ಧರ್ಮ ಮತ್ತು ರಾಜ್ಯ ವ್ಯವಸ್ಥೆ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ತಮ್ಮ ಸ್ವಸಾಮರ್ಥ್ಯದಿಂದ ಮೊಘಲರನ್ನು ಎದುರಿಸಿ ಸಾಮ್ರಾಜ್ಯ ಸ್ಥಾಪಿಸಿದ ಪರಾಕ್ರಮಿ ನಾಯಕರು. ಅವರ ದೇಶಭಕ್ತಿ ಅನುಪಮ ಹಾಗೂ ಅನುಕರಣೀಯವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಕಲೆಗೆ ಅರ್ಥ ತಂದ ಮಹಾನ್ ವ್ಯಕ್ತಿತ್ವ ಎಂದು ಪ್ರಶಂಸಿಸಿದರು. ಉಪನ್ಯಾಸಕ ಗಿರಿರಾಜ ಪವಾರ ಹಾಗೂ ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗಪುರುಷರಾದ ಶ್ರೀ ಸವಿತಾ ಮಹರ್ಷಿಗಳ ಆದರ್ಶಗಳನ್ನು ಅನುಸರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮರಾಠಾ ಸಮಾಜದ ತಾಲೂಕಾಧ್ಯಕ್ಷ ಸುನೀಲ ಭಗತ್, ನಗರಸಭೆಯ ಮಾಜಿ ಸದಸ್ಯ ವಾಜೀದ್ ಜಮಾದಾರ, ಶಿವಯೋಗಿ ಪಟ್ಟಣಕರ್, ಮಹೇಶ ಜೋಗದನಕರ್, ಶರಣು ಪೂಜಾರಿ, ಶಿವಾಜಿ ಪವಾರ, ಸುನೀಲ ಫಂಡ್, ರಾಜು ಮಾನೆ, ದಿನೇಶ್ ಗೌಳಿ, ಸ್ನೇಹಲ್, ಜಾಯಿ, ಮಹಾದೇವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಸಮಿತಿ ರಚನೆ : ರಾಜ್ಯ ಸರಕಾರ ಆದೇಶ
ಬೆಂಗಳೂರು : ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ರಚನೆ ಮಾಡಿ, ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಮಿತಿಯ ಸಂಚಾಲಕರಾಗಿರುತ್ತಾರೆ. ಹಣಕಾಸು ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸೇರಿ ಯೋಜನೆ, ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿತ್ತಾರೆ. ಸಮಿತಿಯು ಖಾಲಿ ಇರುವ ನಿರ್ಣಾಯಕ(ಕ್ರಿಟಿಕಲ್) ಹುದ್ದೆಗಳನ್ನು ಒಪ್ಪಂದ ಅಥವಾ ಹೊರಗುತ್ತಿಗೆ ಮೂಲಕ ಭರ್ತಿ ಮಾಡಲು ಅನುಮತಿ ನೀಡುವ ಅಧಿಕಾರವನ್ನು ಹೊಂದಿದೆ. ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅಧಿಕಾರಗಳು ಮತ್ತು ನಿರ್ದಿಷ್ಟ ಕಾರ್ಯಗಳಿಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ತಾಯಂದಿರ ಮರಣ ಅನುಪಾತವನ್ನು 40ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಸಾಧಿಸುವಂತೆ ಸಮಿತಿಯು ಕಾರ್ಯನಿರ್ವಹಿಸಬೇಕು. ಎಲ್ಲಾ ಗರ್ಭಿಣಿ ಮಹಿಳೆಯರಿಗೆ ತಾಯಂದಿರ ಆರೋಗ್ಯ ಸೇವೆಗಳ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಬೇಕು. ವಿಶೇಷವಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ತಾಯಂದಿರ ಆರೋಗ್ಯ ಆರೈಕೆಯ ಅಸಮಾನತೆಗಳನ್ನು ಪರಿಹರಿಸಬೇಕು ಎಂದು ಸಮಿತಿಗೆ ಸೂಚನೆ ನೀಡಲಾಗಿದೆ.
ಬಟಾಟೆ ಚಿಪ್ಸ್ ನೆನಪಿಸುತ್ತದೆ: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರತಿಪಕ್ಷವನ್ನು ಟೀಕಿಸಿದ ಸಚಿವ ಅಶ್ವಿನಿ ವೈಷ್ಣವ್
ಹೊಸದಿಲ್ಲಿ,ಫೆ.20: ಇಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಶುಕ್ರವಾರ ಭಾರತವು ಅಮೆರಿಕ ನೇತೃತ್ವದ ಪ್ರಮುಖ ಉಪಕ್ರಮ ಪ್ಯಾಕ್ಸ್ ಸಿಲಿಕಾಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡಿದೆ. ಈ ವೇಳೆ ವೇದಿಕೆಯಲ್ಲಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಪಕ್ಷವನ್ನು ಟೀಕಿಸುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಕೃತಕ ಬುದ್ಧಿಮತ್ತೆ (ಎಐ) ಚಿಪ್ಗಳ ಕುರಿತು ಮಾತನಾಡಿದ ವೈಷ್ಣವ್,‘ಚಿಪ್’ಗಳ ಬಗ್ಗೆ ಮಾತನಾಡುವ ಕೆಲವರಿದ್ದಾರೆ ಮತ್ತು ಅದು ನನಗೆ ‘ಬಟಾಟೆ ಚಿಪ್ಸ್’ನ್ನು ಮಾತ್ರ ನೆನಪಿಸುತ್ತದೆ. ಅವರು ಅಳುತ್ತಲೇ ಇರುತ್ತಾರೆ. ಕೆಲವೊಮ್ಮೆ ಸಂಸತ್ತಿನಲ್ಲಿಯೂ ಅಳುತ್ತಾರೆ. ಅವರು ಅಳುತ್ತಲೇ ಇರಲಿ, ಆದರೆ ನಾವು ಸ್ಪಷ್ಟ ದಿಕ್ಕಿನತ್ತ ಮುನ್ನಡೆಯುತ್ತಲೇ ಇರಬೇಕು ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು. ‘ಈ ಎಲ್ಲವನ್ನೂ ಸಾಧ್ಯವಾಗಿಸಿದ್ದಕ್ಕಾಗಿ’ ತನ್ನ ಸಹೋದ್ಯೋಗಿಗಳಾದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಷ್ಣವ್ ಧನ್ಯವಾದಗಳನ್ನು ಸಲ್ಲಿಸಿದರು. ‘ಎಲ್ಲವೂ’ ಎಂದರೆ ಈ ಇಡೀ ಎಐ ಇಂಪ್ಯಾಕ್ಟ್ ಶೃಂಗಸಭೆ, ನಾವು ನಿರ್ಮಿಸುತ್ತಿರುವ ಸಿಲಿಕಾನ್ ಪೂರೈಕೆ ಸರಪಳಿ ಮತ್ತು ನಮ್ಮ ಯುವಜನರನ್ನು ಅರಸಿಕೊಂಡು ಬರಲಿರುವ ಬೃಹತ್ ಹೊಸ ಅವಕಾಶಗಳು ಎಂದು ಅವರು ತಿಳಿಸಿದರು. ‘28 ವರ್ಷಗಳ ಸರಾಸರಿ ವಯಸ್ಸಿನೊಂದಿಗೆ ಭಾರತವು ಇಂದು ಯುವ ರಾಷ್ಟ್ರವಾಗಿದೆ. ಅದು ತನ್ನ ಮುಂದೆ ಸುದೀರ್ಘ ಬೆಳವಣಿಗೆಯ ಮಾರ್ಗವನ್ನು ಹೊಂದಿದೆ. 2047ರಲ್ಲಿಯೂ 37 ವರ್ಷಗಳ ಸರಾಸರಿ ವಯಸ್ಸಿನೊಂದಿಗೆ ಭಾರತವು ಯುವ ರಾಷ್ಟ್ರವಾಗಿಯೇ ಇರಲಿದೆ. ಅಂದರೆ 2047ರ ಬಳಿಕವೂ ಇನ್ನೂ 50 ವರ್ಷಗಳ ಬೆಳವಣಿಗೆ ಅವಧಿಯು ನಮ್ಮದಾಗಿರಲಿದೆ’ ಎಂದು ಪ್ಯಾಕ್ಸ್ ಸಿಲಿಕಾಗೆ ಸಹಿ ಹಾಕಿದ ಸಂದರ್ಭದಲ್ಲಿ ತನ್ನ ಭಾಷಣದಲ್ಲಿ ವೈಷ್ಣವ್ ಹೇಳಿದರು.
ಶಹಾಬಾದ್ | ಶಿವಾಜಿ ಮಹಾರಾಜರು ದೇಶದ ಹೆಮ್ಮೆಯ ಪ್ರತೀಕ: ಸುನೀಲ ಫಂಡ್
ಶಹಾಬಾದ್: ಶಿವಾಜಿ ಮಹಾರಾಜರು ಕೇವಲ ಐತಿಹಾಸಿಕ ಮಹಾರಾಜರಷ್ಟೇ ಅಲ್ಲ, ಇಂದಿಗೂ ಸಹ ಇಡೀ ಭಾರತ ದೇಶಕ್ಕೆ ಸ್ಪೂರ್ತಿಯ ಸೆಲೆ ಹಾಗೂ ಹೆಮ್ಮೆಯ ಪ್ರತೀಕ ಎಂದು ಮರಾಠಾ ಸಮಾಜದ ಮುಖಂಡ ಸುನೀಲ ಫಂಡ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜ ಅವರು ಭಾರತೀಯ ಸಂಸ್ಕೃತಿ ಹಾಗೂ ಕಲೆಗೆ ಅರ್ಥ ತಂದ ಮಹಾನ್ ವ್ಯಕ್ತಿ. ಕಡಿಮೆ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಶಕ್ತಿಶಾಲಿ ಸಾಮ್ರಾಜ್ಯ ಕಟ್ಟಿದ ಪರಾಕ್ರಮಿ ನಾಯಕರು. ಧೈರ್ಯ ಮತ್ತು ಸಾಹಸದ ಸಂಕೇತವಾಗಿದ್ದ ಶಿವಾಜಿ ಮಹಾರಾಜರು ಯುವಜನತೆಗೆ ಸದಾ ಆದರ್ಶಪ್ರಾಯರು ಎಂದು ಹೇಳಿದರು. ಅರುಣ ಪಟ್ಟಣಕರ ಹಾಗೂ ರಾಜು ಮಾನೆ ಮಾತನಾಡಿ, ಶಿವಾಜಿ ಮಹಾರಾಜರು ವಿಶ್ವಚೇತನರು. ಅವರ ತಾಯಿ ಜೀಜಾಬಾಯಿ ಬಾಲ್ಯದಲ್ಲಿಯೇ ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ದೇಶಕ್ಕಾಗಿ ಹೋರಾಡಿದ ಮಹಾಪುರುಷರ ಜೀವನ ಸಾಧನೆಗಳನ್ನು ಹೇಳಿ ಅವರಲ್ಲಿದೇಶಭಕ್ತಿ ಮತ್ತು ಆದರ್ಶಗಳನ್ನು ಬೆಳೆಸಿದರು. ಜೀಜಾಬಾಯಿಯವರಂತೆ ಪ್ರತಿಯೊಬ್ಬ ತಾಯಿ ತಮ್ಮ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಬೋಧಿಸಬೇಕು. ಶಿವಾಜಿಯವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ದೇವದಾಸ ಜಾಧವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದೀನೆಶ ಗೌಳಿ ವಂದಿಸಿದರು. ಈ ಸಂದರ್ಭದಲ್ಲಿ ಮಂಡಲ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರ ಪ್ರಮುಖರು, ಮೊರ್ಚಾ ಹಾಗೂ ಪ್ರಕೊಷ್ಠಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಮರಾಠಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಫರೀದಾಬಾದ್,ಫೆ.20: ಸ್ಥಳೀಯ ನಿವಾಸಿಯೋರ್ವ ಕಸದ ರಾಶಿಯಲ್ಲಿ ಬಚ್ಚಿಟ್ಟಿದ್ದ 15 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಹಿಂದಿರುಗಿಸುವ ಮೂಲಕ ಗುಜರಿ ವ್ಯಾಪಾರಿ ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ. ಜನವರಿ 2024ರಲ್ಲಿ ಅಶೋಕ ಶರ್ಮಾ ತನ್ನ ಕುಟುಂಬದೊಂದಿಗೆ ಪ್ರಯಾಗರಾಜ್ನಲ್ಲಿ ನಡೆಯುತ್ತಿದ್ದ ಕುಂಭಮೇಳಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳರು ನುಗ್ಗಬಹುದು ಎಂದು ಆತಂಕಗೊಂಡಿದ್ದ ಅವರು ಕುಟುಂಬದ 100 ಗ್ರಾಂ ತೂಕದ ಚಿನ್ನಾಭರಣಗಳನ್ನು ರಕ್ಷಿಸಲು ವಿನೂತನ ಉಪಾಯವನ್ನು ಕಂಡುಕೊಂಡಿದ್ದರು. ಚಿನ್ನಾಭರಣಗಳನ್ನು ಹಳೆಯ ಪೆಟ್ಟಿಗೆಯೊಂದರಲ್ಲಿ ತುಂಬಿ, ಮನೆಯಲ್ಲಿನ ಗುಜರಿ ವಸ್ತುಗಳು ತುಂಬಿದ್ದ ಚೀಲದಲ್ಲಿ ಬಚ್ಚಿಟ್ಟಿದ್ದರು. ಕುಟುಂಬವು ಯಾತ್ರೆಯಿದ ವಾಪಸಾದ ಬಳಿಕ ಬದುಕು ಎಂದಿನಂತೆ ಸಾಗಿತ್ತು. ಶರ್ಮಾಗೆ ಚಿನ್ನಾಭರಣಗಳ ನೆನಪೇ ಇರಲಿಲ್ಲ. ಸುಮಾರು 10 ತಿಂಗಳುಗಳ ಬಳಿಕ ದೀಪಾವಳಿಗೆ ಮುನ್ನ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಶರ್ಮಾ ಕುಟುಂಬವು ತಿಳಿಯದೆ ಚಿನ್ನಾಭರಣಗಳಿದ್ದ ಹಳೆಯ ವಸ್ತುಗಳ ಚೀಲವನ್ನು ಗುಜರಿ ವ್ಯಾಪಾರಿ ಹಾಜಿ ಅಖ್ತರ್ ಖಾನ್ಗೆ ಮಾರಾಟ ಮಾಡಿತ್ತು. ದೀಪಾವಳಿ ಸಂದರ್ಭದಲ್ಲಿ ಪೂಜೆಗೆ ನಗದು ಹಣ ಮತ್ತು ಚಿನ್ನಾಭರಣಗಳನ್ನು ಇರಿಸಲು ಮುಂದಾದಾಗ ಕುಟುಂಬಕ್ಕೆ ತನ್ನ ತಪ್ಪಿನ ಅರಿವಾಗಿತ್ತು. ತಕ್ಷಣವೇ ಖಾನ್ ಗೋದಾಮಿಗೆ ಧಾವಿಸಿದ ಶರ್ಮಾ ಅಲ್ಲೆಲ್ಲ ಚಿನ್ನಾಭರಣಗಳಿಗಾಗಿ ವಿಫಲ ಹುಡುಕಾಟ ನಡೆಸಿದ್ದರು. ಕುಟುಂಬವು ಹತಾಶಗೊಂಡಿತ್ತು. ಚಿನ್ನಾಭರಣಗಳನ್ನು ಕಳ್ಳರಿಂದ ರಕ್ಷಿಸುವ ಪ್ರಯತ್ನದಲ್ಲಿ ಶರ್ಮಾ ಗೊತ್ತಿಲ್ಲದೇ ಅದನ್ನು ಗುಜರಿ ವ್ಯಾಪಾರಿಗೆ ನೀಡಿದ್ದರು. ತಿಂಗಳುಗಳ ಬಳಿಕ ತನ್ನ ಅಂಗಡಿಯಲ್ಲಿನ ಗುಜರಿ ವಸ್ತುಗಳನ್ನು ಪರಿಶೀಲಿಸುತ್ತಿದ್ದ ಖಾನ್ ಕಣ್ಣಿಗೆ ಆ ರಾಶಿಯಲ್ಲಿ ಹಳೆಯ ಪೆಟ್ಟಿಗೆಯು ಕಣ್ಣಿಗೆ ಬಿದ್ದಿತ್ತು. ತೆರೆದು ನೋಡಿದಾಗ ಅದರಲ್ಲಿ ಚಿನ್ನಾಭರಣಗಳನ್ನು ಕಂಡು ದಂಗಾಗಿದ್ದರು. ತಕ್ಷಣವೇ ಅವರಿಗೆ ಶರ್ಮಾರ ನೆನಪಾಗಿತ್ತು. ಪರರ ಸೊತ್ತುಗಳಿಗೆ ಆಶೆ ಪಡದ ಖಾನ್ ಹೆಚ್ಚುವರಿ ಪೋಲಿಸ್ ಆಯುಕ್ತ ಜಿತೇಶ್ ಮಲ್ಹೋತ್ರಾರ ಸಮ್ಮುಖದಲ್ಲಿ 15 ಲ.ರೂ.ಗಳ ಚಿನ್ನಾಭರಣಗಳನ್ನು ಶರ್ಮಾರಿಗೆ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಸಂಪೂರ್ಣ ಸರಳ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆಗೆ ಸರ್ಕಾರದ ಹೆಜ್ಜೆ! ಏನಿದು ಯುಎಲ್ಎಂಎಸ್
ಅನೇಕರಿಗೆ ಭೂ ಮಾಲಿಕತ್ವದ ವ್ಯವಸ್ಥೆ ಆರ್ಥಿಕ ಶಕ್ತಿಮತ್ತು ನೆಮ್ಮದಿ ನೀಡುವುದರ ಬದಲಿಗೆ ಗೊಂದಲ, ಅನಿಶ್ಚಿತತೆ, ವ್ಯಾಜ್ಯಗಳು ಗೂಡಾಗಿ ಪರಿಣಮಿಸಿದೆ. ಹಾಲಿ ವ್ಯವಸ್ಥೆ ಆಸ್ತಿಗಳಆರ್ಥಿಕ ಮೌಲ್ಯ, ಆದಾಯ, ಉತ್ಪಾದನೆಯನ್ನು ತಗ್ಗಿಸುತ್ತಿದೆ.ಜನಗಳಿಗೆ ನೆಮ್ಮದಿಯಿಲ್ಲ ಮತ್ತು ಸಮಾಜಕ್ಕೆ ಲಾಭವಿಲ್ಲ. ದೇಶದ ನ್ಯಾಯಾಲಯಗಳಲ್ಲಿರುವ ಶೇ. 50ಕ್ಕೂ ಹೆಚ್ಚು ವ್ಯಾಜ್ಯಗಳು ಭೂಮಿ/ಮಾಲಿಕತ್ವ ಸಂಬಂಧಿಸಿದವುಗಳು. ಈ ಭೂವ್ಯಾಜ್ಯಗಳಿಂದ ಮತ್ತು ಅನಿಶ್ಚಿತತೆಯಿಂದ ನಾವು ಭೂ ಗ್ಯಾರಂಟಿಯಡಿಗೆ ಸಾಗಲು ULMS ಪರಿಣಾಮಕಾರಿ ಮಾರ್ಗವಾಗಲಿದೆ. ಇದರಿಂದ ಜನಗಳ ಕೇಂದ್ರಿತ, ಜನಪರ ಆಡಳಿತ ಸುಧಾರಣೆ ಸಾಧ್ಯ. ಈ ಏಕೀಕೃತ ವ್ಯವಸ್ಥೆಯನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳು ಮುಂದಿನ 6 ತಿಂಗಳುಗಳಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಲಾಗಿದೆ.

20 C