ಶಬರಿಮಲೆ ದೇಗುಲದಲ್ಲಿನ ಕಲಾಕೃತಿಗಳಿಂದ ಇನ್ನೂ ಹೆಚ್ಚು ಪ್ರಮಾಣದ ಚಿನ್ನ ಕಾಣೆಯಾಗಿದೆ: ನ್ಯಾಯಾಲಯಕ್ಕೆ SIT ಮಾಹಿತಿ
ತಿರುವನಂತಪುರ, ಜ.1: ಶಬರಿಮಲೆ ದೇವಾಲಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಕಲಾಕೃತಿಗಳಲ್ಲಿದ್ದ ಚಿನ್ನ ಕಾಣೆಯಾಗಿದೆ ಎಂದು ಈ ಪ್ರಸಿದ್ಧ ಕ್ಷೇತ್ರದಲ್ಲಿ ನಡೆದಿರುವ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತಿಳಿಸಿದೆ. ದೇವಾಲಯದ ಗರ್ಭಗೃಹದ ಬಾಗಿಲಿನ ಚೌಕಟ್ಟುಗಳಲ್ಲಿರುವ ‘ಶಿವ’ ಹಾಗೂ ‘ಯಾಲಿ ರೂಪಂ’ ಕೆತ್ತನೆಯ ಬಿಂಬಗಳಿಗೆ ಹೊದಿಸಲಾಗಿದ್ದ ಚಿನ್ನ ನಾಪತ್ತೆಯಾಗಿದೆಯೆಂದು ಸಿಟ್ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಶಬರಿಮಲೆ ದೇವಾಲಯದಿಂದ ಅಪಹರಿಸಲಾದ ಚಿನ್ನವನ್ನು ಸಂಪೂರ್ಣವಾಗಿ ಪತ್ತೆಹಚ್ಚಲು ತನಿಖಾ ತಂಡಕ್ಕೆ ಇನ್ನೂ ಸಾಧ್ಯವಾಗಿಲ್ಲವೆಂದು ಸಿಟ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಕೇವಲ 584 ಗ್ರಾಂ ಚಿನ್ನವನ್ನಷ್ಟೇ ವಶಪಡಿಸಿಕೊಳ್ಳಲಾಗಿದ್ದು, ದೇವಾಲಯದಲ್ಲಿ ಇದಕ್ಕಿಂತಲೂ ಅಧಿಕ ಪ್ರಮಾಣದ ಚಿನ್ನ ಕಳವಾಗಿದೆಯೆಂದು ಅದು ಹೇಳಿದೆ. ಚೆನ್ನೈನ ಸ್ಮಾರ್ಟ್ ಕ್ರಿಯೇಶನ್ಸ್ನಿಂದ 110 ಗ್ರಾಂ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಯಿಂದ 474 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಸಿಟ್ ನ್ಯಾಯಾಲಯಕ್ಕೆ ತಿಳಿಸಿದೆ. ಚೆನ್ನೈನ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯು ಚಿನ್ನದ ಪ್ರತಿಮೆಯ ಮಾಡುವಿಕೆ ಹಾಗೂ ಇಲೆಕ್ಟ್ರೋಪ್ಲೇಟಿಂಗ್ ಕೆಲಸಗಳಿಗೆ ಶುಲ್ಕವಾಗಿ ಚಿನ್ನವನ್ನು ಪಡೆದುಕೊಂಡಿದ್ದರೆ, ಉಳಿದ ಚಿನ್ನವನ್ನು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಗೆ ಕಳುಹಿಸಲಾಗಿತ್ತು. ರೊದ್ದಂ ಜ್ಯುವೆಲ್ಲರಿಯ ಮಾಲಕನಾದ ಗೋವರ್ಧನ್ನನ್ನು ನ್ಯಾಯಾಂಗ ಕಸ್ಟಡಿಯಲ್ಲಿ ಇರಿಸಲಾಗಿದೆ. ಈ ಎರಡೂ ಜ್ಯುವೆಲ್ಲರಿ ಅಂಗಡಿಗಳಿಂದ ವಶಪಡಿಸಿಕೊಳ್ಳಲಾದ ಚಿನ್ನವನ್ನು ಪರೀಕ್ಷೆಗಾಗಿ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ವಿಜ್ಞಾನ ಕೇಂದ್ರ (ವಿಎಸ್ಎಸ್ಸಿ)ಕ್ಕೆ ಕಳುಹಿಸಲಾಗಿದೆ. ಪರೀಕ್ಷೆಯ ಫಲಿತಾಂಶಗಳು ದೊರೆತ ನಂತರವಷ್ಟೇ ವಶಪಡಿಸಿಕೊಳ್ಳಲಾದ ಚಿನ್ನವು ದೇವಾಲಯದ ಚಿನ್ನಲೇಪಿತ ಶೀಟುಗಳಿಂದ ತೆಗೆಯಲ್ಪಟ್ಟಿದ್ದೇ ಎಂಬುದನ್ನು ದೃಢಪಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಹೊಂದಿಕೆಯಾಗದೆ ಇದ್ದಲ್ಲಿ, ಕಳವುಗೈದ ಚಿನ್ನವನ್ನು ಅಮೂಲ್ಯ ಕಲಾಕೃತಿಗಳ ಕಳ್ಳಸಾಗಣೆಯಲ್ಲಿ ನಿರತವಾಗಿರುವ ಜಾಲಗಳಿಗೆ ಹಸ್ತಾಂತರಿಸಲಾಗಿದೆಯೆಂಬ ಸಂದೇಹವು ಸಾಬೀತುಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಯಾದಗಿರಿ | ರಸ್ತೆ ಸುರಕ್ಷತಾ ನಿಯಮ ಪಾಲನೆ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಿಕೊಳ್ಳಿ : ನ್ಯಾ.ಮರಿಯಪ್ಪ
37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ
Wildlife: ದೇಶದಲ್ಲಿ 2025ರಲ್ಲಿ 166 ಹುಲಿಗಳು ಸಾವು!
ಕಳೆದ ವರ್ಷಕ್ಕೆ ಹೋಲಿಸಿದರೆ 40 ಅಧಿಕ
2026ರಲ್ಲಿ ಭಾರತದ ಕ್ರಿಕೆಟ್ | ಸೂರ್ಯಕುಮಾರ್ ಫಾರ್ಮ್, ಗಂಭೀರ್ ಕಾರ್ಯ ವೈಖರಿ ಮೇಲೆ ಎಲ್ಲರ ಚಿತ್ತ
ಹೊಸದಿಲ್ಲಿ, ಜ.1: ಭಾರತೀಯ ಕ್ರಿಕೆಟ್ ತಂಡವು 2026ರ ಸಾಲಿನಲ್ಲಿ ಮೂರು ವಿಶ್ವ ಪ್ರಶಸ್ತಿಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದು, ಟೆಸ್ಟ್ ತಂಡವಾಗಿ ಅಗ್ರ ಸ್ಥಾನಕ್ಕೇರುವುದು ಭಾರೀ ಸವಾಲಾಗಿದೆ. ಅಂಡರ್-19 ವಿಶ್ವಕಪ್ (ಜನವರಿ–ಫೆಬ್ರವರಿ), ಪುರುಷರ ಟಿ-20 ವಿಶ್ವಕಪ್ (ಫೆಬ್ರವರಿ–ಮಾರ್ಚ್) ಹಾಗೂ ಮಹಿಳೆಯರ ಟಿ-20 ವಿಶ್ವಕಪ್ (ಜೂನ್) ಈ ವರ್ಷ ನಡೆಯಲಿದೆ. ಭಾರತದ ಕೋಚ್ ಗೌತಮ್ ಗಂಭೀರ್ ಹಾಗೂ ಟಿ-20 ತಂಡದ ನಾಯಕ ಸೂರ್ಯಕುಮಾರ ಯಾದವ್ ಖ್ಯಾತಿಗೆ ಧಕ್ಕೆಯಾಗಿದ್ದು, ಈ ಇಬ್ಬರ ಮೇಲೆಯೇ ಎಲ್ಲರ ಚಿತ್ತ ಹರಿದಿದೆ. ಸೂರ್ಯಕುಮಾರ್ ಟಿ-20 ಫಾರ್ಮ್ 2024ರ ಟಿ-20 ವಿಶ್ವಕಪ್ ತನಕವೂ ಸೂರ್ಯಕುಮಾರ್ ಅವರು ಭಾರತದ ಶ್ರೇಷ್ಠ ಟಿ-20 ಬ್ಯಾಟರ್ ಆಗಿದ್ದರು. ಮೆಗಾ ಸ್ಪರ್ಧೆಯಲ್ಲಿ ಭಾರತವು ವಿಶ್ವಕಪ್ ಟ್ರೋಫಿ ಗೆದ್ದ ನಂತರ ಹಿರಿಯ ಬ್ಯಾಟರ್ಗೆ ನಾಯಕತ್ವದ ಜವಾಬ್ದಾರಿ ಲಭಿಸಿತು. 2024ರ ಜುಲೈ ಹಾಗೂ ಅಕ್ಟೋಬರ್ನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಉತ್ತಮ ಪ್ರದರ್ಶನ ನೀಡಿ ತನ್ನ ಮೇಲಿಟ್ಟಿದ್ದ ವಿಶ್ವಾಸ ಉಳಿಸಿಕೊಂಡರು. 2024ರ ಅ.12ರಂದು ಬಾಂಗ್ಲಾದೇಶ ವಿರುದ್ಧ 35 ಎಸೆತಗಳಲ್ಲಿ 75 ರನ್ ಗಳಿಸಿದ್ದರು. ಆದರೆ ಇದು ಟಿ-20 ಕ್ರಿಕೆಟ್ನಲ್ಲಿ ಸೂರ್ಯ ಗಳಿಸಿದ ಕೊನೆಯ ಅರ್ಧಶತಕವಾಗಿದೆ. ಸೂರ್ಯ ಆ ನಂತರದ ಇನಿಂಗ್ಸ್ ಗಳಲ್ಲಿ 2025ರ ಅಂತ್ಯದವರೆಗೆ ಇನ್ನೂ 22 ಪಂದ್ಯಗಳನ್ನು ಆಡಿದ್ದರು. ಕೇವಲ ಎರಡು ಬಾರಿ ಮಾತ್ರ 25 ರನ್ ದಾಟಿದ್ದರು. 2025ರ ಏಶ್ಯಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಔಟಾಗದೆ 47 ರನ್ ಅವರ ಗರಿಷ್ಠ ಮೊತ್ತವಾಗಿತ್ತು. ಕಳಪೆ ದಾಖಲೆಯ ಹೊರತಾಗಿಯೂ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಗಿಲ್ ಕೈಬಿಟ್ಟ ಕಾರಣ ಸೂರ್ಯಕುಮಾರ್ ತಮ್ಮ ನಾಯಕತ್ವವನ್ನು ಉಳಿಸಿಕೊಂಡಿದ್ದಾರೆ. ಗೌತಮ್ ಗಂಭೀರ್ ಕೋಚಿಂಗ್ ಭಾರತೀಯ ಕ್ರಿಕೆಟ್ ತಂಡದ ಮೊದಲ ವರ್ಷದ ಕೋಚಿಂಗ್ ಅವಧಿಯಲ್ಲಿ ಗೌತಮ್ ಗಂಭೀರ್ ಅವರು ಏಶ್ಯಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಮಾರ್ಗದರ್ಶನ ನೀಡಿದ್ದರು. ಆದರೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡವು ಗಂಭೀರ್ ಕೋಚಿಂಗ್ನಲ್ಲಿ ನೀರಸ ಪ್ರದರ್ಶನ ನೀಡಿದೆ. ಟಿ-20 ವಿಶ್ವಕಪ್ ಟೂರ್ನಿಯ ನಂತರ 2024ರ ಜುಲೈ ನಲ್ಲಿ ಗಂಭೀರ್ ಅವರು ಭಾರತದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಆ ಬಳಿಕ ಭಾರತ ತಂಡವು 19 ಟೆಸ್ಟ್ ಪಂದ್ಯಗಳಲ್ಲಿ 7ರಲ್ಲಿ ಗೆಲುವು, 10ರಲ್ಲಿ ಸೋಲು ಹಾಗೂ 2ರಲ್ಲಿ ಡ್ರಾ ಸಾಧಿಸಿದೆ. ಗಂಭೀರ್ ಕೋಚಿಂಗ್ ನಲ್ಲಿ ಭಾರತವು ಸ್ವದೇಶದಲ್ಲಿ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿದ್ದು, ಮೂರರಲ್ಲಿ ಸೋತಿದೆ (ಸ್ವದೇಶದಲ್ಲಿ ಎರಡು ಹಾಗೂ ಆಸ್ಟ್ರೇಲಿಯಾದಲ್ಲಿ ಒಂದು). ಸ್ವದೇಶದಲ್ಲಿ ಸತತ ಎರಡು ಟೆಸ್ಟ್ ಸರಣಿಗಳಲ್ಲಿ ಕ್ಲೀನ್ಸ್ವೀಪ್ ಗೆ ಒಳಗಾಗಿರುವುದು ಭಾರತಕ್ಕೆ ತೀವ್ರ ಹಿನ್ನಡೆಯಾಗಿತ್ತು. ಭಾರತವು 2025–27 ಆವೃತ್ತಿಯಲ್ಲಿ ಇನ್ನೂ 9 ಟೆಸ್ಟ್ ಪಂದ್ಯಗಳನ್ನು ಆಡಲು ಬಾಕಿ ಇದೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲು ಭಾರತ ತಂಡವು ಕನಿಷ್ಠ ಆರು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಗಂಭೀರ್ ಕೋಚ್ ಆದ ನಂತರ 2024ರಲ್ಲಿ ಸ್ವದೇಶದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 0–3 ಅಂತರದಿಂದ ಟೆಸ್ಟ್ ಸರಣಿ ಸೋತಿತ್ತು. 2013ರ ಫೆಬ್ರವರಿಯಿಂದ ಅಕ್ಟೋಬರ್ 2024ರ ತನಕ ಭಾರತವು ಸ್ವದೇಶದಲ್ಲಿ ಒಂದೂ ಟೆಸ್ಟ್ ಸರಣಿಯನ್ನು ಸೋತಿರಲಿಲ್ಲ. ಕಿವೀಸ್ ಪಡೆ ಭಾರತದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿತು. 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಮ್ಮೆ ಟೆಸ್ಟ್ ಸರಣಿಯನ್ನು 0–2 ಅಂತರದಿಂದ ಸೋತಿತ್ತು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಂತಹ ಹಿರಿಯ ಆಟಗಾರರ ನಿವೃತ್ತಿ, ಹೊಸ ತಲೆಮಾರಿನ ಆಟಗಾರರು ಟೆಸ್ಟ್ಗೆ ಅಗತ್ಯವಿರುವ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳದೇ ಇರುವುದು, ಬೌಲರ್ಗಳು ಒತ್ತಡಕ್ಕೆ ಸಿಲುಕಿರುವುದು ಭಾರತದ ಟೆಸ್ಟ್ ಸರಣಿ ಸೋಲಿಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಹಾಸ್ಟಲ್, ಪಿಜಿಗಳಲ್ಲಿ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಅನುಸರಣೆ ಕಡ್ಡಾಯ
ಬೆಂಗಳೂರು : ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಸರ್ವೀಸ್ ಅಪಾರ್ಟ್ಮೆಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳಲ್ಲಿ ಸುರಕ್ಷತಾ ನಿಯಮಗಳು ಅನುಸರಣೆ ಮಾಡುವುದು ಕಡ್ಡಾಯವಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ತಿಳಿಸಿದ್ದಾರೆ. ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಇತ್ತೀಚೆಗೆ ಸಂಭವಿಸಿರುವ ಅನಿಲ ಸ್ಫೋಟ ಹಾಗೂ ಅಗ್ನಿ ಅವಘಡಗಳಂತಹ ದುರಂತಗಳು ಪುನರಾವೃತಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರ ಜೀವ ಹಾಗೂ ಆಸ್ತಿ ಸುರಕ್ಷತೆಯನ್ನು ಖಚಿತಪಡಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದ್ದು, ಎಲ್ಲ ಸಂಸ್ಥೆಗಳು ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ. ಎಲ್ಲ ಸರ್ವೀಸ್ ಅಪಾಟ್ಮೆರ್ಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳ ಮಾಲಕರು ತಮ್ಮ ಸಂಸ್ಥೆಗಳಲ್ಲಿ ಎಲ್ಲ ಸುರಕ್ಷತಾ ನಿಯಮಗಳು ಪಾಲನೆಯಾಗುತ್ತಿರುವ ಬಗ್ಗೆ ಏಳು ದಿನಗಳ ಒಳಗಾಗಿ ಖಚಿತಪಡಿಸಿಕೊಳ್ಳಬೇಕು. ನಿಗದಿತ ಕಾಲಾವಕಾಶ ಮುಗಿದ ನಂತರ ನಗರ ಪಾಲಿಕೆ ವತಿಯಿಂದ ವಿಶೇಷ ತಪಾಸಣಾ ಅಭಿಯಾನವನ್ನು ಕೈಗೊಳ್ಳಲಾಗುವುದು. ಸುರಕ್ಷತೆ ಪಾಲನೆಯಾಗದಿದ್ದಲ್ಲಿ, ಸಂಸ್ಥೆಗಳ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ–2024 ಹಾಗೂ ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ದಂಡ ವಿಧಿಸಲಾಗುವುದು. ಉಲ್ಲಂಘನೆಗಳು ಜೀವ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡಿದಲ್ಲಿ ಸಂಬಂಧಿತ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಪಾಲಿಸಬೇಕಾದ ಪ್ರಮುಖ ಸುರಕ್ಷತಾ ನಿಯಮಗಳು : •ಅಕ್ರಮ ಹಾಗೂ ಅಸುರಕ್ಷಿತ ಅನಿಲ ಸಿಲಿಂಡರ್ಗಳ ಸಂಪೂರ್ಣ ನಿಷೇಧ •ಸರಿಯಾದ ಗಾಳಿ ಮತ್ತು ಅಗ್ನಿ ಸುರಕ್ಷತಾ ಕ್ರಮಗಳು •ವಿದ್ಯುತ್ ಸುರಕ್ಷತೆ ಹಾಗೂ ಓವರ್ಲೋಡ್ ತಪ್ಪಿಸುವ ಕ್ರಮಗಳು •ಅಸ್ತಿತ್ವದಲ್ಲಿರುವ ವ್ಯಾಪಾರ ಪರವಾನಗಿ ಮತ್ತು ಅಗತ್ಯ ನೋಂದಣಿಗಳು
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬ್ರಿಟನ್ ಬಾಕ್ಸರ್ ಜೋಶುವಾ ಆಸ್ಪತ್ರೆಯಿಂದ ಬಿಡುಗಡೆ
ಲಂಡನ್, ಜ.1: ಬ್ರಿಟಿಷ್ ಬಾಕ್ಸರ್ ಆಂಥೋನಿ ಜೋಶುವಾರನ್ನು ಬುಧವಾರ ತಡರಾತ್ರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ನೈಜೀರಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಬಾರಿಯ ಮಾಜಿ ಹೇವಿ ವೇಯ್ಟ್ ಚಾಂಪಿಯನ್ ಹಾಗೂ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತ ಜೋಶುವಾ ಪ್ರಯಾಣಿಸುತ್ತಿದ್ದ ವಾಹನವು ಸೋಮವಾರ ಲಾಗೋಸ್ ಸಮೀಪ ನಿಂತಿದ್ದ ಟ್ರಕ್ ಗೆ ಢಿಕ್ಕಿ ಹೊಡೆದ ಪರಿಣಾಮ, ಜೋಶುವಾ ಅವರೊಂದಿಗಿದ್ದ ಇಬ್ಬರು ಆಪ್ತರು ಹಾಗೂ ತಂಡದ ಸದಸ್ಯರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಜೋಶುವಾ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಗಾಯಗೊಳ್ಳುವ ಕೇವಲ 10 ದಿನಗಳ ಮೊದಲು ಜೋಶುವಾ ಅವರು ಮಿಯಾಮಿಯಲ್ಲಿ ನಡೆದಿದ್ದ ನೆಟ್ಫ್ಲಿಕ್ಸ್ ಪಂದ್ಯವೊಂದರಲ್ಲಿ ಬಾಕ್ಸರ್ ಆಗಿ ಪರಿವರ್ತನೆಗೊಂಡಿರುವ ಯೂಟ್ಯೂಬರ್ ಜೇಕ್ ಪಾಲ್ ಅವರನ್ನು ಸೋಲಿಸಿದ್ದರು. ಭವಿಷ್ಯದಲ್ಲಿ ಪ್ರಮುಖ ಬಾಕ್ಸಿಂಗ್ ಪ್ರಶಸ್ತಿಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಫಿಟ್ನೆಸ್ ಸುಧಾರಿಸಿಕೊಳ್ಳುವತ್ತ ಗಮನ ಹರಿಸಿದ್ದರು.
ಗೋವಾ ವಿರುದ್ಧ ಅಬ್ಬರಿಸಿದ್ದ ಸರ್ಫರಾಝ್ ಖಾನ್ ಪರ ಅಶ್ವಿನ್ ಬ್ಯಾಟಿಂಗ್
ಹೊಸದಿಲ್ಲಿ, ಜ. 1: ದೇಶೀಯ ಕ್ರಿಕೆಟ್ನಲ್ಲಿ ಸರ್ಫರಾಝ್ ಖಾನ್ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದ್ದಾರೆ. ಸರ್ಫರಾಝ್ ಪರ ಬ್ಯಾಟ್ ಬೀಸಿರುವ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, 2026ರ ಆವೃತ್ತಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಸರ್ಫರಾಝ್ ನಿಯಮಿತ ಬ್ಯಾಟರ್ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅಶ್ವಿನ್, ‘‘ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ಔಟಾಗದೆ 100 (47 ಎಸೆತ), 52 (40 ಎಸೆತ), 64 (25 ಎಸೆತ), 73 ರನ್ (22 ಎಸೆತ) ಗಳಿಸಿರುವ ಸರ್ಫರಾಝ್ ಬುಧವಾರ ವಿಜಯ್ ಹಝಾರೆ ಏಕದಿನ ಟೂರ್ನಿಯಲ್ಲಿ 14 ಸಿಕ್ಸರ್ಗಳ ಸಹಿತ 75 ಎಸೆತಗಳಲ್ಲಿ 157 ರನ್ ಗಳಿಸಿ ಅಬ್ಬರಿಸಿದ್ದಾರೆ. ಸ್ವೀಪ್ಸ್ ಹಾಗೂ ಸ್ಲಾಗ್ ಸ್ವೀಪ್ಸ್ಗಳ ಮೂಲಕ ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ಗಳ ಮೇಲೆ ಸವಾರಿ ಮಾಡಿದ್ದಾರೆ. ಅವರು ಕದವನ್ನು ತಟ್ಟಿಲ್ಲ, ಕದವನ್ನು ತೆರೆದಿದ್ದಾರೆ. ಸಿಎಸ್ಕೆ ತಂಡವು ಸರ್ಫರಾಝ್ ಅವರ ಉತ್ತಮ ಫಾರ್ಮ್ ಅನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಆಡುವ 11ರ ಬಳಗದಲ್ಲಿ ಅವರಿಗೆ ಸ್ಥಾನ ಕಲ್ಪಿಸಬೇಕು. ಈ ಋತುವಿನಲ್ಲಿ ಸಿಎಸ್ಕೆ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. 2026ರ ಐಪಿಎಲ್ಗಾಗಿ ಕಾತರದಿಂದಿದ್ದೇನೆ’’ ಎಂದು ಬರೆದಿದ್ದಾರೆ. ಮುಂಬೈನ ಬಲಗೈ ಬ್ಯಾಟರ್ ಸರ್ಫರಾಝ್ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಅಬುಧಾಬಿಯಲ್ಲಿ ನಡೆದಿದ್ದ ಐಪಿಎಲ್ ಮಿನಿ ಹರಾಜಿನಲ್ಲಿ ಸಿಎಸ್ಕೆ ತಂಡವು 75 ಲಕ್ಷ ರೂ. ನೀಡಿ ಕೊನೆಯ ಕ್ಷಣದಲ್ಲಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಈಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಗೋವಾ ತಂಡದ ವಿರುದ್ಧ ಸರ್ಫರಾಝ್ ಖಾನ್ ಕೇವಲ 75 ಎಸೆತಗಳಲ್ಲಿ 9 ಬೌಂಡರಿ ಹಾಗೂ 14 ಸಿಕ್ಸರ್ಗಳನ್ನು ಸಿಡಿಸಿದ್ದರು. ಕೇವಲ 56 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನ್ ಅವರು ಸರ್ಫರಾಝ್ ಬೆಂಬಲಕ್ಕೆ ನಿಂತಿದ್ದಾರೆ. ಅಶ್ವಿನ್ ಅವರು ಇತ್ತೀಚೆಗೆ ಕೊನೆಗೊಂಡಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸರ್ಫರಾಝ್ ಅವರ ಪ್ರದರ್ಶನವನ್ನು ಎತ್ತಿ ತೋರಿಸಿದ್ದು, ಈ ಟೂರ್ನಿಯಲ್ಲಿ ಸರ್ಫರಾಝ್ ಅವರು 65.80ರ ಸರಾಸರಿಯಲ್ಲಿ 203.08ರ ಸ್ಟ್ರೈಕ್ರೇಟ್ನಲ್ಲಿ ಏಳು ಪಂದ್ಯಗಳಲ್ಲಿ ಒಟ್ಟು 329 ರನ್ ಕಲೆ ಹಾಕಿದ್ದರು.
ಹೊಸ ವರ್ಷದ ಸಂಭ್ರಮದಲ್ಲಿದ್ದವರ ಮೇಲೆ ಉಕ್ರೇನ್ನಿಂದ ಡ್ರೋನ್ ದಾಳಿ; ಮಗು ಸೇರಿ 24 ಮಂದಿ ಸಾವು
ಹೊಸ ವರ್ಷಾಚರಣೆ ಮಧ್ಯೆ ರಷ್ಯಾ ನಿಯಂತ್ರಣದ ದಕ್ಷಿಣ ಉಕ್ರೇನ್ನ ಖೆರ್ಸನ್ ಪ್ರಾಂತ್ಯದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. 24 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ರಷ್ಯಾ 'ಯುದ್ಧಾಪರಾಧ' ಎಂದು ಕರೆದಿದೆ. ಇನ್ನೊಂದೆಡೆ, ಉಕ್ರೇನ್ ರಷ್ಯಾದ ಪ್ರಮುಖ ತೈಲ ಘಟಕಗಳ ಮೇಲೆ ದಾಳಿ ನಡೆಸಿದ್ದು, ಶಾಂತಿ ಮಾತುಕತೆಗಳ ನಡುವೆಯೂ ಉಭಯ ದೇಶಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.
ಕಂಪ್ಲಿ | ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಕಂಪ್ಲಿ : ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಗುರುವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಜೂಗಲ್ ಮಂಜುನಾಯಕ ಅವರು, ನಾಡಿಗೆ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ರಾಜ್ಯ ವಿಶ್ವಕರ್ಮ ಸಮಾಜದ ಸಹ ಕಾರ್ಯದರ್ಶಿ ಡಿ. ಮೌನೇಶ ಮಾತನಾಡಿ, ಪ್ರತೀ ವರ್ಷ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ತಾಲೂಕು ಆಡಳಿತದಿಂದ ಇದುವರೆಗೂ ಯಾವುದೇ ಸಹಾಯಧನ ಲಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಿನಾಚರಣೆಯಲ್ಲಿ ಶಿಲ್ಪಿಗಳಿಗೆ ಸನ್ಮಾನಿಸುವ ಪದ್ಧತಿಯನ್ನು ತಾಲೂಕು ಆಡಳಿತ ಅನುಸರಿಸದೇ ಇರುವುದರಿಂದ ವಿಶ್ವಕರ್ಮ ಸಮಾಜಕ್ಕೆ ಬೇಸರ ಉಂಟಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಪಟ್ಟಣದ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪುನಸ್ಕಾರ ಸಲ್ಲಿಸಲಾಯಿತು. ನಂತರ ಅಮರಶಿಲ್ಪಿ ಜಕಣಾಚಾರಿ ವೃತ್ತದ ನಾಮಫಲಕಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಲ್ಪಿ ವಿಶ್ವನಾಥ ಅವರನ್ನು ವಿಶ್ವಕರ್ಮ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿರಸ್ತೇದಾರ ರಮೇಶ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ. ರುದ್ರಪ್ಪ ಆಚಾರಿ, ಉಪಾಧ್ಯಕ್ಷರಾದ ಡಿ. ಕಾಳಾಚಾರಿ, ಎ. ಚಂದ್ರಶೇಖರ, ಖಜಾಂಚಿ ರಾಮಚಂದ್ರ, ಮಹಿಳಾ ಮಂಡಳಿ ಅಧ್ಯಕ್ಷೆ ಡಿ. ವೀಣಾ, ಕಾರ್ಯದರ್ಶಿ ಸವಿತಾ, ಮುಖಂಡರಾದ ಎ. ರಾಘವೇಂದ್ರ, ಎ. ಮೌನೇಶ, ನಾರಾಯಣಿ, ವೀರಭದ್ರ, ವಿಜಯಕುಮಾರ, ಆನಂದ, ವಿಜಯ, ರತ್ನಮ್ಮ, ಜ್ಯೋತಿ, ವಾಣಿ ಸೇರಿದಂತೆ ಸಮಾಜದ ಸದಸ್ಯರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಐದನೇ ಆ್ಯಶಸ್ ಟೆಸ್ಟ್ | ಆಸ್ಟ್ರೇಲಿಯ ಕ್ರಿಕೆಟ್ ತಂಡ ಪ್ರಕಟ; ಸ್ಥಾನ ಉಳಿಸಿಕೊಂಡ ಉಸ್ಮಾನ್ ಖ್ವಾಜಾ, ಕಮಿನ್ಸ್ ಅಲಭ್ಯ
ಮೆಲ್ಬರ್ನ್, ಜ.1: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್ಸಿಜಿ) ಜನವರಿ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ತಂಡದ ವಿರುದ್ಧ ಐದನೇ ಹಾಗೂ ಕೊನೆಯ ಆ್ಯಶಸ್ ಟೆಸ್ಟ್ ಪಂದ್ಯಕ್ಕಾಗಿ 15 ಸದಸ್ಯರನ್ನು ಒಳಗೊಂಡ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ ಎಂದು ಕ್ರಿಕೆಟ್ ಡಾಟ್ಕಾಮ್ ಎಯು ಖಚಿತಪಡಿಸಿದೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಅವರು ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಬೆನ್ನುನೋವಿನಿಂದ ಸರಿಯಾದ ಸಮಯಕ್ಕೆ ಚೇತರಿಸಿಕೊಳ್ಳುವಲ್ಲಿ ವಿಫಲರಾಗಿರುವ ಖಾಯಂ ನಾಯಕ ಕಮಿನ್ಸ್ ಅವರು ಆ್ಯಶಸ್ ಸರಣಿಯ ಮೊದಲೆರಡು ಪಂದ್ಯಗಳಿಂದ ವಂಚಿತರಾಗಿದ್ದರು. ಅಡಿಲೇಡ್ ಟೆಸ್ಟ್ಗೆ ಕಮಿನ್ಸ್ ವಾಪಸಾಗಿದ್ದರು. ಆಗ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕಮಿನ್ಸ್ ಅವರು ಸ್ವದೇಶಿ ನೆಲದಲ್ಲಿ ಆ್ಯಶಸ್ ಸರಣಿಯನ್ನು ಗೆಲ್ಲುವಲ್ಲಿ ನೆರವಾಗಿದ್ದರು. ಇದೀಗ ಟೀಮ್ ಮ್ಯಾನೇಜ್ಮೆಂಟ್ ಸರಣಿಯ ಉಳಿದಿರುವ ಪಂದ್ಯಗಳಿಗೆ ವೇಗದ ಬೌಲರ್ ಕಮಿನ್ಸ್ಗೆ ವಿಶ್ರಾಂತಿ ನೀಡಲು ಮುಂದಾಗಿದೆ. ಕಮಿನ್ಸ್ ಅವರ ಕೆಲಸದ ಒತ್ತಡವನ್ನು ಎಚ್ಚರಿಕೆಯಿಂದ ನಿಭಾಯಿಸಲು ಹಾಗೂ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಸಂಪೂರ್ಣ ಫಿಟ್ ಆಗಿರುವುದನ್ನು ಖಚಿತಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾಗತಿಕ ಕ್ರಿಕೆಟ್ ಪಂದ್ಯಾವಳಿಗೆ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ತಾತ್ಕಾಲಿಕ ತಂಡದಲ್ಲಿ ಕಮಿನ್ಸ್ಗೆ ಅವಕಾಶ ನೀಡಲಾಗಿದೆ. ಟೆಸ್ಟ್ ಭವಿಷ್ಯದ ಕುರಿತು ಊಹಾಪೋಹಗಳು ಸುತ್ತುವರಿದಿದ್ದರೂ ಉಸ್ಮಾನ್ ಖ್ವಾಜಾ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. 39ರ ಹರೆಯದ ಖ್ವಾಜಾ ಸರಣಿಯ ಆರಂಭದಲ್ಲಿ ಆಸ್ಟ್ರೇಲಿಯದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಆದರೆ ಬೆನ್ನುನೋವಿನಿಂದಾಗಿ ಪರ್ತ್ ಟೆಸ್ಟ್ ನ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ. ಬ್ರಿಸ್ಬೇನ್ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದರು. ಅಡಿಲೇಡ್ ಟೆಸ್ಟ್ನಲ್ಲಿ ಆರಂಭದಲ್ಲಿ ಹೊರಗುಳಿದಿದ್ದ ಖ್ವಾಜಾ ಅವರು ಸ್ಟೀವ್ ಸ್ಮಿತ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಆಡುವ 11ರ ಬಳಗ ಸೇರಿದ್ದರು. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಖ್ವಾಜಾ ಮೊದಲ ಇನಿಂಗ್ಸ್ ನಲ್ಲಿ 29 ರನ್ ಗಳಿಸಿ ಮಧ್ಯಮ ಸರದಿಯಲ್ಲಿ ಟ್ರಾವಿಸ್ ಹೆಡ್ ಹಾಗೂ ಜೇಕ್ ವೆದರಾಲ್ಡ್ ಅವರೊಂದಿಗೆ ತಂಡವನ್ನು ಆಧರಿಸಿದ್ದರು. ಎರಡನೇ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಸರಣಿಯಲ್ಲಿ ಈ ತನಕ ಮೂರು ಪಂದ್ಯಗಳ ಐದು ಇನಿಂಗ್ಸ್ ಗಳಲ್ಲಿ 30.60ರ ಸರಾಸರಿಯಲ್ಲಿ ಒಟ್ಟು 153 ರನ್ ಗಳಿಸಿದ್ದು, ಅಡಿಲೇಡ್ನಲ್ಲಿ ಏಕೈಕ ಅರ್ಧಶತಕ ಗಳಿಸಿದ್ದರು. ಮೆಲ್ಬರ್ನ್ನಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ನಾಲ್ಕು ವಿಕೆಟ್ಗಳ ಅಂತರದಿಂದ ಸೋತ ನಂತರ ಆಸ್ಟ್ರೇಲಿಯ ತಂಡವು ಸಿಡ್ನಿ ಟೆಸ್ಟ್ನಲ್ಲಿ ತಿರುಗೇಟು ನೀಡುವತ್ತ ಚಿತ್ತ ಹರಿಸಿದೆ. ಐದನೇ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ತಂಡ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡಾಗೆಟ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕಲ್ ನೆಸರ್, ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್ಸ್ಟರ್.
ಆಕ್ರಮಿತ ಖೆರ್ಸಾನ್ ಪ್ರದೇಶದಲ್ಲಿ ಡ್ರೋನ್ ದಾಳಿಯಲ್ಲಿ 24 ಮೃತ್ಯು: ರಶ್ಯ
ಮಾಸ್ಕೋ, ಜ.1: ಉಕ್ರೇನ್ನಿಂದ ವಶಕ್ಕೆ ಪಡೆದಿರುವ ಖೆರ್ಸಾನ್ ಪ್ರದೇಶದ ಮೇಲೆ ಬುಧವಾರ ತಡರಾತ್ರಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ನಾಗರಿಕರು ಗಾಯಗೊಂಡಿರುವುದಾಗಿ ರಶ್ಯದ ಅಧಿಕಾರಿಗಳು ಹೇಳಿದ್ದಾರೆ. ಕಪ್ಪು ಸಮುದ್ರದ ಕರಾವಳಿಯ ಖೋರ್ಟಿ ಗ್ರಾಮದಲ್ಲಿ ಕೆಫೆ ಮತ್ತು ಹೋಟೆಲ್ ಮೇಲೆ ದಾಳಿ ನಡೆದಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಸೇರಿದ್ದ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಒಂದು ಮಗುವೂ ಸೇರಿದೆ. ದಾಳಿಯ ಬಳಿಕ ಬೆಂಕಿ ಹರಡಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಗುರುವಾರ ಬೆಳಿಗ್ಗೆ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಖೆರ್ಸಾನ್ ನಲ್ಲಿ ರಶ್ಯ ನೇಮಿಸಿರುವ ಮುಖ್ಯಾಧಿಕಾರಿ ವ್ಲಾದಿಮಿರ್ ಸಾಲ್ದೊ ಹೇಳಿದ್ದಾರೆ.
ಮಂಗಳೂರು| ಹೊಸ ವರ್ಷಾಚರಣೆಯ ವೇಳೆ ಪೊಲೀಸರಿಂದ ಕಾರ್ಯಾಚರಣೆ; 52 ಮಂದಿ ಮಾದಕ ವಸ್ತು ಸೇವಿಸಿರುವುದು ದೃಢ
ಮಂಗಳೂರು, ಜ.1: ಹೊಸ ವರ್ಷಾಚರಣೆಯ ವೇಳೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ 52 ಮಂದಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಪೊಲೀಸರ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಒಟ್ಟು 1,000 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 52 ಮಂದಿ ಮಾದಕ ವಸ್ತು ಸೇವಿಸಿರುವುದು ಗೊತ್ತಾಗಿದೆ. 52 ಮಂದಿಯಲ್ಲಿ ಪೈಕಿ 25 ಮಂದಿ ವಿದ್ಯಾರ್ಥಿಗಳು (2 ಸ್ಥಳಿಯರು, 23 ಹೊರ ಜಿಲ್ಲೆಯವರು), ವಿದ್ಯಾಥಿಗಳಲ್ಲದವರು 17 ಮಂದಿ (ಕಾರ್ಮಿಕರು 17, ನಾನಾ ಕೆಲಸ ನಿರತರು 10) ಸೇರಿದ್ದಾರೆ. ಮಾದಕ ವಸ್ತು ಸೇವಿಸಿ ಸಿಕ್ಕಿ ಬಿದ್ದವರಿಗೆ ಕೌನ್ಸೆಲಿಂಗ್ ಮತ್ತು ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಾಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ತಿಳಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಮಂಗಳೂರಿಗೆ ಮಾದಕ ವಸ್ತುಗಳು ಹರಿದು ಬರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಡಿ.30ರಂದು ನಗರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದರು. ಒಬ್ಬ ಆರೋಪಿಯ ವಶದಲ್ಲಿ 50 ಗ್ರಾಂ ಎಂಡಿಎಂ ಮತ್ತು ಇಬ್ಬರಲ್ಲಿ 200 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು. ಮೂವರೂ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ . ಇವರ ಬಂಧದೊಂದಿಗೆ ಸರಬರಾಜು ಜಾಲಗಳನ್ನು ಕಿತ್ತುಹಾಕುವ ನಿಟ್ಟಿನಲ್ಲಿ ಪೊಲೀಸರು ಗಮನ ಹರಿಸಿದ್ದರು. ಮಂಗಳೂರಿನ ಸ್ಥಳೀಯ ನಾಗರಿಕರ ಮತ್ತು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ, ಒಗ್ಗಟ್ಟಿನಿಂದ ಕಾರ್ಯ ಪ್ರವೃತ್ತರಾದರೆ ಮಾದಕ ವಸ್ತುಗಳ ಪಿಡುಗನ್ನು ತೊಡೆದು ಹಾಕಲು ಮತ್ತು ಮಂಗಳೂರು ನಗರವನ್ನು ಸುರಕ್ಷಿತವಾಗಿ ಮತ್ತು ಸ್ವಚ್ಛವಾಗಿಡಬಹುದು ಎಂಬ ವಿಶ್ವಾಸ ನಮಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗುವ ಅಗತ್ಯವಿದೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ
‘ಸಾಮಾಜಿಕ ಸಮಾನತಾ ದಿನ’ ಕಾರ್ಯಕ್ರಮ
ಸರ್ಕಾರಿ ನೌಕರರ ಸಂಘದ ಕಲಬುರಗಿ ಉತ್ತರ ವಲಯದ ಮಾಧ್ಯಮ ಪ್ರತಿನಿಧಿಯಾಗಿ ಜಹಾಂಗೀರ್ ಆಯ್ಕೆ
ಕಲಬುರಗಿ : ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ (ರಿ), ಕಲಬುರಗಿ ಉತ್ತರ ವಲಯ ತಾಲೂಕು ಘಟಕದ ಮಾಧ್ಯಮ ಪ್ರತಿನಿಧಿಯಾಗಿ ಜಹಾಂಗೀರ್ ರಹಮತ್ ಉಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಹೇಶಕುಮಾರ್ ಹೆಬ್ಬಾಳೆ ತಿಳಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಅವರು, ನಗರದ ಮದೀನಾ ಕಾಲೋನಿಯಲ್ಲಿರುವ ಕೆ.ಪಿ.ಎಸ್. ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಜಹಾಂಗೀರ್ ರಹಮತ್ ಉಲ್ಲಾ ಅವರನ್ನು ಸಂಘದ ಮಾಧ್ಯಮ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದ್ದು, ಕೇಂದ್ರ ಸಂಘದ ಅಡಿಯಲ್ಲಿ ಸಂಘವನ್ನು ಬಲಪಡಿಸಲು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕೆಂದು ತಿಳಿಸಿದ್ದಾರೆ.
ʼಅಕ್ಷರದವ್ವ ಸಾವಿತ್ರಿಬಾಯಿ ಫುಲೆʼ ಪ್ರಶಸ್ತಿಗೆ ಕಲಬುರಗಿಯಿಂದ ಮೂವರು ಆಯ್ಕೆ
ಕಲಬುರಗಿ : ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗುರುತಿಸಿ, ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ “ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ” ನೀಡಲಾಗುತ್ತಿದ್ದು, 2026ನೇ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಈ ಬಾರಿ ಕಲಬುರಗಿ ಜಿಲ್ಲೆಯಿಂದ ಮೂವರು ಮಹಿಳಾ ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಎಂ.ಕಾಂಬಳೆ ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿಯಾದ ಡಾ.ಪುಟ್ಟಮಣಿ ದೇವಿದಾಸ ಅವರನ್ನು ಶೈಕ್ಷಣಿಕ ಮತ್ತು ಸಾಹಿತ್ಯಕ ಕ್ಷೇತ್ರ ಮತ್ತು ಸರ್ಕಾರಿ ಆಟೋನೂಮಸ್ ಪದವಿ ಮಹಾವಿದ್ಯಾಲಯ ಕಲಬುರಗಿಯ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರನ್ನು ಶೈಕ್ಷಣಿಕ ಕ್ಷೇತ್ರ ಹಾಗೂ ಪತ್ರಕರ್ತೆ ಗೀತಾ ಹೊಸಮನಿ ಅವರನ್ನು ಮಾಧ್ಯಮ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಆಯ್ಕೆಯಾದ ಮೂವರು ಸಾಧಕಿಯರು ತಮ್ಮ ವೃತ್ತಿಪರ ಸೇವೆಯ ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಮಾಜಕ್ಕೆ ಆದರ್ಶರಾಗಿದ್ದಾರೆ ಎಂದು ಅವರು ಹೇಳಿದರು. ಇವರಿಗೆ ಇದೇ ಜ.3ರಂದು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಮಾತೆ ಸಾವಿತ್ರಿಬಾಯಿ ಫುಲೆ ಅವರ 195ನೇ ಜನ್ಮ ಜಯಂತಿ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ʼಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿʼ ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Dehradun | ಏಂಜೆಲ್ ಚಕ್ಮಾ ಸಾವು ಪ್ರಕರಣ; ಈಶಾನ್ಯದ ವಿದ್ಯಾರ್ಥಿಗಳಿಂದ ಮೊಂಬತ್ತಿ ಮೆರವಣಿಗೆ
ಡೆಹ್ರಾಡೂನ್, ಜ. 1: ತ್ರಿಪುರಾದ 24 ವರ್ಷದ ಏಂಜೆಲ್ ಚಕ್ಮಾ ಅವರ ಹತ್ಯೆ ಖಂಡಿಸಿ ಹಾಗೂ ನ್ಯಾಯ ಒದಗಿಸುವಂತೆ ಆಗ್ರಹಿಸಿ ಈಶಾನ್ಯದ ವಿದ್ಯಾರ್ಥಿಗಳು ಡೆಹ್ರಾಡೂನ್ನಲ್ಲಿ ಗುರುವಾರ ಮೊಂಬತ್ತಿ ಮೆರವಣಿಗೆ ನಡೆಸಿದರು. ‘‘ಯುನಿಫೈಡ್ ತ್ರಿಪುರಾ ಸ್ಟೂಡೆಂಟ್ಸ್ ಅಸೋಸಿಯೇಶನ್’’ (ಯುಟಿಎಸ್ಎ) ಅಡಿಯಲ್ಲಿ ಈ ಪ್ರತಿಭಟನೆ ನಡೆಯಿತು. ಗಾಂಧಿ ಪಾರ್ಕ್ನಿಂದ ಆರಂಭವಾದ ರ್ಯಾಲಿ ಘಂಟಾಗರ್ ನಲ್ಲಿ ಸಮಾಪನಗೊಂಡಿತು. ರ್ಯಾಲಿಯಲ್ಲಿ ಪ್ರತಿಭಟನಕಾರರು ಮೊಂಬತ್ತಿ ಹಿಡಿದುಕೊಂಡು ಪಾಲ್ಗೊಂಡರು. ಈ ಸಂದರ್ಭ ‘‘ಜನಾಂಗೀಯತೆ ನಿಲ್ಲಿಸಿ’’, ‘‘ನಾವು ಭಾರತೀಯರು’’, ಹಾಗೂ ‘‘ನಮಗೆ ನ್ಯಾಯ ಬೇಕು’’ ಮೊದಲಾದ ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದರು. ಏಕತೆ ಪ್ರದರ್ಶಿಸಲು ರ್ಯಾಲಿಯಲ್ಲಿ ಇತರ ರಾಜ್ಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರು ಜನಾಂಗೀಯತೆಯ ಆಯಾಮವನ್ನು ಪರಿಗಣಿಸಿಲ್ಲ ಎಂದು ಯುಟಿಎಸ್ಎ ಪ್ರಧಾನ ಕಾರ್ಯದರ್ಶಿ ಚುರಾಂಟಾ ತ್ರಿಪುರಾ ಆರೋಪಿಸಿದ್ದಾರೆ. ಹೊಸ ವರ್ಷವಾದುದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ ಎಂದು ಉಲ್ಲೇಖಿಸಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ಅಧಿಕಾರಿಗಳು ಪ್ರತಿಭಟನಕಾರರಿಗೆ ಸೂಚಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. ಏಂಜೆಲ್ ಚಕ್ಮಾ ಅವರ ಮೇಲೆ ಡಿಸೆಂಬರ್ 9ರಂದು ಚಾಕು ಹಾಗೂ ಬಳೆಯಿಂದ ದಾಳಿ ನಡೆಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ 17 ದಿನಗಳ ಜೀವನ–ಮರಣಗಳ ನಡುವೆ ಹೋರಾಟ ನಡೆಸಿ ಡಿಸೆಂಬರ್ 27ರಂದು ಸಾವನ್ನಪ್ಪಿದ್ದರು.
ಇಂದೋರ್, ಜ. 1: ಇಲ್ಲಿನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆಯ ಕುರಿತಂತೆ ಅಧಿಕಾರಿಗಳು ಹಾಗೂ ಸ್ಥಳೀಯರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ವಾಂತಿ ಹಾಗೂ ಅತಿಸಾರ ಹರಡಿ 6 ತಿಂಗಳ ಮಗು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಪ್ರತಿಪಾದಿಸಿದ್ದಾರೆ. ಈ ನಡುವೆ ಸಂತ್ರಸ್ತ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಸಾವನ್ನಪ್ಪಿದವರ ಸಂಖ್ಯೆ ನಾಲ್ಕು ಎಂದು ಹೇಳಿದ್ದಾರೆ. ಗಂಟೆಗಳ ಬಳಿಕ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ 7 ಮಂದಿ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ಸೋರಿಕೆಯಿಂದಾಗಿ ಚರಂಡಿ ನೀರು ಕುಡಿಯುವ ನೀರಿನ ಪೈಪ್ಲೈನ್ಗೆ ಪ್ರವೇಶಿಸಿದೆ. ಇದು ಭಗೀರಥಪುರದಲ್ಲಿ ರೋಗ ಹರಡಲು ಕಾರಣವಾಯಿತು ಎಂದು ಪ್ರಾಥಮಿಕ ಅಂದಾಜು ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಖಾತೆ ಸಚಿವ ಕೈಲಾಸ್ ವಿಜಯವರ್ಗೀಯ ಅವರ ಇಂದೋರ್–1 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಗೀರಥಪುರ ಇದೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯವರ್ಗೀಯ ಅವರು, 1,400ರಿಂದ 1,500 ಜನರಿಗೆ ರೋಗ ತಗುಲಿದೆ. ಇವರಲ್ಲಿ ಸುಮಾರು 200 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ. ವಿಭಿನ್ನ ಸಾವಿನ ಸಂಖ್ಯೆ ಕುರಿತಂತೆ ವಿಜಯವರ್ಗೀಯ, ‘‘ವಾಂತಿ ಹಾಗೂ ಅತಿಸಾರದಿಂದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಆಡಳಿತಾಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ. ಆದರೆ ಅಲ್ಲಿ 8ರಿಂದ 9 ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ. ಮಾಹಿತಿಯನ್ನು ಪರಿಶೀಲಿಸಲಾಗುವುದು. ಇದು ಸರಿಯೆಂದು ತಿಳಿದು ಬಂದರೆ, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಮೋಹನ್ ಯಾದವ್ ಘೋಷಿಸಿದಂತೆ ಪರಿಹಾರ ನೀಡಲಾಗುವುದು’’ ಎಂದು ಹೇಳಿದ್ದಾರೆ.
ಜಾನ್ ಬೆಲ್ ನ ಕ್ವಾಂಟಮ್ ಎಂಟಾನ್ ಗ್ಲ್ ಮೆಂಟ್ ಹಾಗೂ ದೂರದ 'ಭೂತಚೇಷ್ಟೆ'! (ವಿಜ್ಞಾನ ಸಾಗರ - 37)
ಒಂದು ಭೌತಿಕ ವಸ್ತು ಅಣುಗಳಿಂದ ರಚನೆಯಾಗಿರುತ್ತದೆ. ಹೌದಲ್ಲವೇ? ಆ ಅಣುಗಳೊಳಗೆ ಒಂದು ಪ್ರಪಂಚವಿರುತ್ತದೆ. ಅದೊಂದು ಅನೂಹ್ಯವಾದ ಪ್ರಪಂಚ. ಇದೆಲ್ಲ ನಾವು ಕೇಳಿದ್ದೇವೆ. ಆದರೆ, ಅಣುಗಳಿಗಿಂತ ಚಿಕ್ಕದಾದ ಕಣಗಳದ್ದೊಂದು ಪ್ರತ್ಯೇಕ ಪ್ರಪಂಚವಿದೆ. ಆ ಪ್ರಪಂಚದಲ್ಲಿ ಅನೇಕ ವಿದ್ಯಮಾನಗಳು ನಡೆಯುತ್ತಿರುತ್ತವೆ. ಮಾತ್ರಾ-ಭೌತಶಾಸ್ತ್ರ ಎಂದು ಕರೆಯಲ್ಪಡುವ ಈ ಪ್ರಪಂಚದಲ್ಲಿನ ಶಕ್ತಿಯ ಬಗ್ಗೆ ಐನ್ ಸ್ಟೈನ್ ಹಿಂದೆಯೇ ಹೇಳಿದ್ದರು. ಏನದು? ಅಸಲಿಗೆ, ಆ ವಿಜ್ಞಾನವೇನು ಎಂಬುದರ ವಿವರಣೆ ಇಲ್ಲಿದೆ.
5 ಕೋಟಿ ರೂ. ಮೌಲ್ಯದ 7 ಬಿಎಂಡಬ್ಲ್ಯು ಕಾರು ಖರೀದಿಸಲ್ಲ; ಟೆಂಡರ್ ರದ್ದುಗೊಳಿಸಿದ ಲೋಕಪಾಲ್
ಹೊಸದಿಲ್ಲಿ, ಜ. 1: ಒಟ್ಟು ಸುಮಾರು 5 ಕೋ. ರೂ. ಮೌಲ್ಯದ 7 ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸುವ ವಿವಾದಾತ್ಮಕ ಟೆಂಡರ್ ಅನ್ನು ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ್ 2 ತಿಂಗಳ ಬಳಿಕ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಈ ಐಷಾರಾಮಿ ಕಾರುಗಳನ್ನು ಖರೀದಿಸುವ ಲೋಕಪಾಲ್ನ ನಿರ್ಧಾರವನ್ನು ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಹೋರಾಟಗಾರರು ಟೀಕಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಲೋಕಪಾಲ್ ತನ್ನ ಪೂರ್ಣ ಪೀಠದ ನಿರ್ಣಯದ ಬಳಿಕ ಖರೀದಿ ಪ್ರಸ್ತಾವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಅನಂತರ 2025 ಡಿಸೆಂಬರ್ 25ರಂದು ತಿದ್ದುಪಡಿ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೋಕಪಾಲ್ 2025 ಅಕ್ಟೋಬರ್ 16ರಂದು 7 ಬಿಎಂಡಬ್ಲ್ಯು 3 ಸಿರೀಸ್ 33ಎಲ್ಐ ಕಾರುಗಳ ಪೂರೈಕೆಗೆ ಪ್ರತಿಷ್ಠಿತ ಕಂಪೆನಿಗಳಿಂದ ಟೆಂಡರ್ಗಳನ್ನು ಆಹ್ವಾನಿಸಿತ್ತು. ಲೋಕಪಾಲ್ ಅಧ್ಯಕ್ಷರು ಮತ್ತು ಅದರ ಆರು ಸದಸ್ಯರಿಗೆ ತಲಾ ಒಂದು ಬಿಎಂಡಬ್ಲ್ಯು ಕಾರನ್ನು ಒದಗಿಸುವ ಉದ್ದೇಶವನ್ನು ಈ ಖರೀದಿ ಹೊಂದಿತ್ತು. ಪ್ರಸ್ತುತ ಲೋಕಪಾಲ್ನ ನೇತೃತ್ವವನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ (ನಿವೃತ್ತ) ವಹಿಸಿದ್ದಾರೆ. ಇದು ಒಬ್ಬ ಅಧ್ಯಕ್ಷರನ್ನು ಹೊಂದಿದ್ದು, 8 ಸದಸ್ಯರನ್ನು ಹೊಂದಬಹುದು. ಇವರಲ್ಲಿ ನಾಲ್ವರು ನ್ಯಾಯಾಂಗ ಹಾಗೂ ನಾಲ್ವರು ಇತರ ಸದಸ್ಯರು ಸೇರಿರುತ್ತಾರೆ.
ಕೇರಳವನ್ನು ಯುಡಿಎಫ್ ಮತ್ತು ಬಿಜೆಪಿ ಮತ ರಾಜ್ಯವನ್ನಾಗಿಸಲು ಶ್ರಮಿಸುತ್ತಿವೆ: ಶಾಸಕ ಎಂ.ರಾಜಗೋಪಾಲನ್
ಮಂಜೇಶ್ವರ: ಸಮಸ್ತ ಸುಂದರ ದೇವರ ರಾಜ್ಯವೆಂದು ಹೆಸರು ಪಡೆದ ಕೇರಳವನ್ನು ಯುಡಿಎಫ್ ಮತ್ತು ಬಿಜೆಪಿ ಮತ ರಾಜ್ಯವನ್ನಾಗಿಸಲು ಶ್ರಮಿಸುತ್ತಿವೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ, ಶಾಸಕ ಎಂ ರಾಜಗೋಪಾಲನ್ ತಿಳಿಸಿದ್ದಾರೆ. ಅವರು ಸಿಪಿಐಎಂ ನೇತಾರ, ರೈತ ಮುಖಂಡರಾಗಿದ್ದ ಬಿ.ಎಂ ರಾಮಯ್ಯ ಶೆಟ್ಟಿ ಅವರ 23ನೇ ಸಂಸ್ಮರಣೆ ದಿನಾಚರಣೆಯನ್ನು ಹೊಸಂಗಡಿಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಬಿಜೆಪಿ ಆಡಳಿತದ ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ಮತ ಅಲ್ಪಸಂಖ್ಯಾತರ ನಿವಾಸಗಳ ಮೇಲೆ ಬುಲ್ಡೋಸರ್ ಹತ್ತಿಸಿದಾಗ ಅದಕ್ಕೆದುರಾಗಿ ಹೋರಾಟ ನಡೆಸಿದ್ದು ಸಿಪಿಎಂ ಆಗಿದೆ. ಸಿಪಿಎಂ ನ ಪೋಲೀಟ್ ಬ್ಯೂರೋ ಸದಸ್ಯೆ ಬೃಂದಾ ಕಾರಾಟ್ ಅವರ ನೇತೃತ್ವದಲ್ಲಿ ಬುಲ್ಡೋಸರನ್ನು ತಡೆದು ನಿಲ್ಲಿಸಿ ನ್ಯಾಯಾಂಗದ ಮುಖಾಂತರ ಹೋರಾಟಕ್ಕೆ ನೇತೃತ್ವ ನೀಡಿದ್ದಾರೆ. ಈಗ ಬೆಂಗಳೂರು ಫಕೀರ್ ಕಾಲನಿಯಲ್ಲಿ ದಟ್ಟ ದರಿದ್ರರಾದ ಸಾವಿರಾರು ಮಂದಿಯ ಗುಡಿಸಲುಗಳನ್ನು ಅತೀ ಶೀತದ ಸಮಯದಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರನ್ನು ಬೀದಿಗೆ ತಳ್ಳಿ ರಾತ್ರಿಯ ಸಮಯದಲ್ಲಿ ಕಾಂಗ್ರೆಸ್ ಸರಕಾರ ಬುಲ್ಡೋಸರ್ ನೀತಿಯನ್ನು ಜ್ಯಾರಿಗೊಳಿಸಿದ್ದಾರೆ. ಸಿಪಿಎಂ ಪಕ್ಷದ ಜನ ಪ್ರತಿನಿಧಿಗಳು, ಕೇರಳ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿದ ನಂತರ ಅದು ದೊಡ್ಡ ವಾರ್ತೆಯಾಯಿತು. ಕೇರಳದ ಮುಖ್ಯಮಂತ್ರಿಯ ಮಧ್ಯಪ್ರವೇಶವನ್ನು ಬಿಜೆಪಿ ಮತ್ತು ಕರ್ನಾಟಕದ ಕಾಂಗ್ರೆಸ್ ಎದುರಿಸಿದಾಗ ಕೇರಳದ ಮುಸ್ಲಿಂ ಲೀಗ್ ಮತ್ತು ಬೆಂಗಳೂರು ಕೆಎಂಸಿಸಿ ಸಹ ಬುಲ್ಡೋಸರ್ನ ಒಟ್ಟಿಗೆ ನಿಂತ ಚಿತ್ರ ಕಾಣುವಂತೆ ಆಯಿತು. ಕೇರಳದ ಪಂಚಾಯತ್ ಚುನಾವಣೆಯಲ್ಲಿ ಕೋಲೀಬಿ ಸಖ್ಯದ ರೀತಿಯಲ್ಲಿ ಬೆಂಗಳೂರಿನ ಈ ವಿಷಯದಲ್ಲಿ ಕೊಳೀಬಿಗಳು ಒಂದಾದನ್ನು ಕಾಣಬಹುದು ಎಂದು ಹೇಳಿದರು. ಸಭೆಯಲ್ಲಿ ಕೆಆರ್ ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಬೇಬಿ ಶೆಟ್ಟಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಚಿಪ್ಪಾರ್, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ತ್ರಿಥಲ ಪಂಚಾಯತ್ ಚುನಾವಣೆಯಲ್ಲಿ ವಿಜಯಗೊಳಿಸಿದವರಿಗೆ ಸನ್ಮಾನಿಸಲಾಯಿತು. ಬೆಳಗ್ಗೆ ಬಿಎಂ ರಾಮಯ್ಯ ಶೆಟ್ಟಿಯವರ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಕಾಞಂಗಾಡ್ ಮುನಿಸಿಪಾಲಿಟಿ ಚೆಯರ್ಮ್ಯಾನ್ ವಿವಿ ರಮೇಶನ್ ಉದ್ಘಾಟಿಸಿದರು. ಕೆಆರ್ ಜಯಾನಂದ ಮಾತನಾಡಿದರು. ಕೆ ಕಮಲಾಕ್ಷ ಸ್ವಾಗತಿಸಿ, ಬಿಎಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹುಮನಾಬಾದ್ | ಬ್ರೇಕ್ ವಿಫಲಗೊಂಡ ರಾಶಿ ಯಂತ್ರ ಆಟೋಗೆ ಢಿಕ್ಕಿ : ತಪ್ಪಿದ ಭಾರಿ ಅನಾಹುತ
ಹುಮನಾಬಾದ್ : ತಾಲೂಕಿನ ಚಿಟಗುಪ್ಪ ಪಟ್ಟಣದಲ್ಲಿ ರಾಶಿ ಮಾಡುವ ದೊಡ್ಡ ಯಂತ್ರವೊಂದು ಬ್ರೇಕ್ ವಿಫಲಗೊಂಡ ಪರಿಣಾಮ ಡಿವೈಡರ್ಗೆ ಗುದ್ದಿ, ನಂತರ ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಗುರುವಾರ ರಾಶಿ ಮಾಡುವ ಯಂತ್ರವು ನಿಯಂತ್ರಣ ತಪ್ಪಿ ಮೊದಲು ರಸ್ತೆಯ ಮಧ್ಯದ ಡಿವೈಡರ್ಗೆ ಗುದ್ದಿದ್ದು, ಬಳಿಕ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಸಂಪೂರ್ಣವಾಗಿ ನುಚ್ಚುನೂರಾಗಿದ್ದು, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳವು ಚಿಟಗುಪ್ಪ ಪಟ್ಟಣದ ಪ್ರಮುಖ ರಸ್ತೆ ಆಗಿದ್ದು, ಸದಾ ಜನಸಂದಣಿಯಿಂದ ಕೂಡಿರುತ್ತದೆ. ಆದರೆ ಘಟನೆ ವೇಳೆ ರಸ್ತೆ ಮೇಲೆ ಜನರು ಇರದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.
ಆಪರೇಶನ್ ಸಿಂಧೂರ್ | ಭಾರತ–ಪಾಕ್ ನಡುವೆ ಮಧ್ಯಸ್ಥಿಕೆ; ಚೀನಾದ ಹೇಳಿಕೆಯನ್ನು ಕೇಂದ್ರ ಖಂಡಿಸಲಿ: ಉವೈಸಿ ಆಗ್ರಹ
ಹೊಸದಿಲ್ಲಿ, ಜ. 1: ಆಪರೇಶನ್ ಸಿಂಧೂರ್ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಧಾನ ಏರ್ಪಡಿಸಲು ಚೀನಾ ಮಧ್ಯಸ್ಥಿಕೆ ವಹಿಸಿತ್ತೆಂಬ ಚೀನಿ ವಿದೇಶಾಂಗ ಸಚಿವರ ಹೇಳಿಕೆ ಭಾರತಕ್ಕೆ ಆಗಿರುವ ಮುಖಭಂಗವಾಗಿದ್ದು, ಅದನ್ನು ಕೇಂದ್ರ ಸರಕಾರ ಖಂಡಿಸಬೇಕೆಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಅಸಾದುದ್ದೀನ್ ಉವೈಸಿ ಆಗ್ರಹಿಸಿದ್ದಾರೆ. ಭಾರತದ ಗೌರವ ಅಥವಾ ಸಾರ್ವಭೌಮತೆಯ ಬೆಲೆ ತೆತ್ತು ಚೀನಾದೊಂದಿಗೆ ಬಾಂಧವ್ಯವನ್ನು ಸಹಜ ಸ್ಥಿತಿಗೆ ತರಬೇಕಾಗಿಲ್ಲವೆಂದು ಅವರು ಹೇಳಿದರು. ‘‘ಭಾರತ–ಪಾಕ್ ಸಂಘರ್ಷದ ನಡುವೆ ಕದನವಿರಾಮವನ್ನು ತಾನು ಏರ್ಪಡಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಹಾಗೂ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ವಾಣಿಜ್ಯ ನಿರ್ಬಂಧಗಳನ್ನು ತಾನು ಬಳಸಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ಇದೀಗ ಚೀನಾದ ವಿದೇಶಾಂಗ ಸಚಿವರೂ ಅಧಿಕೃತವಾಗಿ ಇಂತಹದ್ದೇ ಹೇಳಿಕೆಗಳನ್ನು ನೀಡಿದ್ದಾರೆ. ಇದು ಭಾರತಕ್ಕಾದ ಮುಖಭಂಗವಾಗಿದೆ. ಕೇಂದ್ರ ಸರಕಾರವು ಚೀನಾದ ಈ ಹೇಳಿಕೆಯನ್ನು ಅಧಿಕೃತವಾಗಿ ತಿರಸ್ಕರಿಸಬೇಕು ಹಾಗೂ ತೃತೀಯ ಪಕ್ಷದ ಯಾವುದೇ ಮಧ್ಯಸ್ಥಿಕೆಯ ಅಗತ್ಯವಿಲ್ಲವೆಂದು ದೇಶಕ್ಕೆ ಭರವಸೆ ನೀಡಬೇಕು’’ ಎಂದು ಹೈದರಾಬಾದ್ನ ಸಂಸದರೂ ಆದ ಉವೈಸಿ ತಿಳಿಸಿದ್ದಾರೆ. ಈ ವರ್ಷ ಚೀನಾ ಮಧ್ಯಸ್ಥಿಕೆ ವಹಿಸಿದ ಜ್ವಲಂತ ಸಮಸ್ಯೆಗಳ ಪೈಕಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆಯೂ ಒಂದಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಮಂಗಳವಾರ ಹೇಳಿಕೆ ನೀಡಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವೆ ಈ ವರ್ಷದ ಆರಂಭದಲ್ಲಿ ಭುಗಿಲೆದ್ದ ಸೈನಿಕ ಸಂಘರ್ಷವನ್ನು ನಿಲ್ಲಿಸಲು ಅಮೆರಿಕ ಸೇರಿದಂತೆ ಯಾವುದೇ ತೃತೀಯ ದೇಶವು ಮಧ್ಯಸ್ಥಿಕೆ ವಹಿಸಿರುವುದನ್ನು ಭಾರತ ತಳ್ಳಿಹಾಕಿದೆ. ಕದನವಿರಾಮ ಏರ್ಪಡಿಸುವಂತೆ ಪಾಕಿಸ್ತಾನವೇ ಭಾರತವನ್ನು ಕೇಳಿಕೊಂಡಿತು ಎಂದು ಕೇಂದ್ರ ಸರಕಾರ ಹೇಳುತ್ತಲೇ ಬಂದಿದೆ.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಸಮೀಪ ಎರಡು ಗುಂಪುಗಳ ನಡುವೆ ಘರ್ಷಣೆ, ಕಲ್ಲು ತೂರಾಟ - ಯಾಕೆ, ಏನಾಯ್ತು?
ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿ ಜನಾರ್ದನ ರೆಡ್ಡಿಯವರ ಮನೆ ಬಳಿ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ ಕಲ್ಲು ತೂರಾಟಕ್ಕೆ ತಿರುಗಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
‘ಕೋಗಿಲು ಪ್ರಕರಣ’ ಮನೆ ಕೊಟ್ಟರೆ ಕೋರ್ಟ್ನಲ್ಲಿ ಪ್ರಶ್ನೆ, ರಾಜ್ಯಪಾಲರಿಗೆ ದೂರು : ಬಿಜೆಪಿ
ಬೆಂಗಳೂರು : ಕೋಗಿಲು ಅಕ್ರಮ ಮನೆ ತೆರವು ಪ್ರಕರಣದ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಇದರ ವಿರುದ್ಧ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ ಎಂದು ಬಿಜೆಪಿಯ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಶೆಡ್ ಕಟ್ಟಿಕೊಂಡಿದ್ದಾರೆ. ನಿಜವಾದ ಫಲಾನುಭವಿ 10.5ಲಕ್ಷ ರೂ.ಹಣ ಕಟ್ಟಬೇಕಾಗುತ್ತದೆ. ಬ್ಯಾಂಕ್ ಸಾಲ, ಇಲ್ಲವೇ ಸ್ವಂತ ಪ್ರಯತ್ನದಿಂದ ಇದನ್ನು ಕಟ್ಟಬೇಕು. ಇವರಿಗೆ ಬಿಬಿಎಂಪಿಯಿಂದ 5ಲಕ್ಷ ರೂ., ಅಲ್ಪಸಂಖ್ಯಾತ ಇಲಾಖೆಯಿಂದ 2.5ಲಕ್ಷ ರೂ., ಇವೆಲ್ಲವನ್ನು ಕೊಟ್ಟು ಕೇವಲ 2.5 ಲಕ್ಷ ರೂ.ನಲ್ಲಿ ಮನೆ ಕೊಡ್ತೀವಿ ಅಂದರೆ ಹೇಗೆ? ಎಂದು ಪ್ರಶ್ನಿಸಿದರು. ಸಿಎಂ ವಸತಿ ಯೋಜನೆಯಡಿ 1ಲಕ್ಷ ಮನೆಗಳನ್ನ ಕಟ್ಟುತ್ತಿದ್ದಾರೆ. ಬೆಂಗಳೂರು ಸುತ್ತುಮುತ್ತಲು 45ಸಾವಿರ ಮನೆಗಳು ಆಗುತ್ತಿವೆ. ಅವರು ಯಾರು ಹಣವನ್ನು ಕಟ್ಟಲ್ಲ. ಅವರೆಲ್ಲ 2.5 ಲಕ್ಷ ರೂ.ಗಳಿಗೆ ಸಮೀತವಾಗಲಿದ್ದು, ಇದು ಸರಕಾರಕ್ಕೆ ಮುಜುಗರ ಆಗಲಿದೆ. ಇದಕ್ಕೂ ಮೀರಿ ಏನಾದರೂ ಮನೆಗಳನ್ನು ಕೊಟ್ಟರೆ ಕೋರ್ಟ್ಗೆ ಹೋಗುತ್ತೇವೆ. ಈಗಾಗಲೇ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದೇವೆ ಎಂದರು. ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡುವುದಲ್ಲದೇ ರಾಜ್ಯಪಾಲರಿಗೆ ಇದರ ಬಗ್ಗೆ ಮನವಿ ಕೊಡುತ್ತೇವೆ. ಕಾಂಗ್ರೆಸ್ ಹೈಕಮಾಂಡ್ ಹೇಳಿದೆ, ಕೇರಳದ ಮುಖ್ಯಮಂತ್ರಿ ಹೇಳಿದರು ಎಂದು ತಕ್ಷಣವೇ ವಲಸಿಗರಿಗೆ ಮನೆ ನೀಡಿದರೆ ರಾಜ್ಯದ ಜನರ ಗತಿ ಏನು ಎಂದು ಕೇಳಿದ ಅವರು, ಇದು ಅಲ್ಪಸಂಖ್ಯಾತರನಮ್ಮು ಮತಕ್ಕಾಗಿ ತುಷ್ಟೀಕರಣದ ಮುಂದುವರೆದ ಭಾಗ ಎಂದು ಟೀಕಿಸಿದರು. 5ಕ್ಕೆ ಹೋರಾಟಕ್ಕೆ ನಿರ್ಧಾರ : ಕೋಗಿಲು ಅಕ್ರಮ ಮನೆ ತೆರವು ಪ್ರಕರಣದಲ್ಲಿ ವಾಸಸ್ಥಳ ಕಳಕೊಂಡವರಿಗೆ ಮನೆ ನೀಡಲು ಮುಂದಾದ ಸರಕಾರದ ಕ್ರಮದ ವಿರುದ್ಧ ಇದೇ 5ರಂದು ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದ್ದೇವೆ. ಅಲ್ಲಿನ ಸರ್ವೇ ನಂಬರ್, ಯಾವ ರಾಜ್ಯದವರು, ಯಾವ ದೇಶದವರು ಎಂಬಿತ್ಯಾದಿ ಮಾಹಿತಿಯನ್ನು ಸಂಗ್ರಹಿಸಲಿದ್ದೇವೆ ಎಂದು ಅವರು ತಿಳಿಸಿದರು. ಸರಕಾರಿ ಜಾಗಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು ಅಕ್ರಮವಲ್ಲವೇ?, ಅಲ್ಲಿ ಮನೆ ಕಟ್ಟಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕಿತ್ತು. ವಿದ್ಯುತ್ ಸಂಪರ್ಕ ನೀಡಿದವರ ಮೇಲೂ ಕ್ರಮ ಕೈಗೊಳ್ಳಬೇಕಿತ್ತು. ಸರಕಾರ ತರಾತುರಿಯಲ್ಲಿ ಮನೆ ನೀಡಲು ಹೊರಟಿರುವುದು ಸರಿಯಲ್ಲ ಎಂದು ವಿಶ್ವನಾಥ್ ಆಕ್ಷೇಪಿಸಿದರು.
ಈಶಾನ್ಯ ರಾಜ್ಯದ ಜನರ ಮೇಲಿನ ದೌರ್ಜನ್ಯ; ಮತ್ತೆ ಕೇಳಿಸಿದೆ Anti-racial law ಜಾರಿಗೆ ಒತ್ತಾಯದ ಕೂಗು
ತ್ರಿಪುರಾದ ಏಂಜಲ್ ಚಕ್ಮಾ ಎಂಬ ವಿದ್ಯಾರ್ಥಿಯನ್ನು ಉತ್ತರಾಖಂಡದ ಡೆಹ್ರಾಡೂನ್ ನಗರದಲ್ಲಿ ಐವರು ಯುವಕರು ಇರಿದು ಕೊಂದಿದ್ದರು. ಉತ್ತರಾಖಂಡದಲ್ಲಿ ನಡೆದ ಜನಾಂಗೀಯ ದ್ವೇಷ ಪ್ರಕರಣವು ಈಶಾನ್ಯ ಭಾರತದ ಅನೇಕರಿಗೆ 2014ರಲ್ಲಿ ದಿಲ್ಲಿಯಲ್ಲಿ ಅರುಣಾಚಲ ಪ್ರದೇಶದ ವಿದ್ಯಾರ್ಥಿ ನಿಡೋ ತಾನಿಯಮ್ ಹತ್ಯೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಈಶಾನ್ಯ ಜನರ ಮೇಲೆ ನಡೆಯುವ ಜನಾಂಗೀಯ ತಾರತಮ್ಯದ ಸುದ್ದಿ ಇದು ಹೊಸದೇನಲ್ಲ. ಅವರು ನಮ್ಮಂತಿಲ್ಲ, ಅವರ ಚರ್ಮ, ಮೂಗು, ಕಣ್ಣು, ದೇಹರಚನೆ ನೋಡಿ ಗೇಲಿ ಮಾಡುವುದು ಭಾರತದ ಇತರ ಪ್ರದೇಶಗಳಲ್ಲಿ ‘ಸಾಮಾನ್ಯ’ವೆಂಬಂತಾಗಿದೆ. ಭಾರತದಲ್ಲಿ ಜನಾಂಗೀಯವಾಗಿ ವ್ಯಾಖ್ಯಾನಿಸಲಾದ ಸ್ಟೀರಿಯೊಟೈಪ್ಗಳು ಎಲ್ಲೆಡೆಯೂ ಇವೆ. ಬೆಳ್ಳಗಿನ ಚರ್ಮದ ಬಗ್ಗೆ ಮೆಚ್ಚುಗೆ, ಕಪ್ಪು ಚರ್ಮದ ಬಗ್ಗೆ ತಾತ್ಸಾರ, ಲೇವಡಿ ಒಂದೆಡೆಯಾದರೆ, ಈಶಾನ್ಯ ಭಾರತದ ಜನರ ದೇಹಾಕೃತಿಗಳನ್ನು ನೋಡಿ 'ಬಾಡಿ ಶೇಮಿಂಗ್' ಮಾಡುವುದು ಹಿಂದಿನಿಂದಲೂ ನಡೆದು ಬರುತ್ತಿದೆ. *ಯಾರು ಈ ಏಂಜಲ್ ಚಕ್ಮಾ? ಡೆಹ್ರಾಡೂನ್ನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಏಂಜಲ್ ಚಕ್ಮಾ (24) ಎಂಬ ಯುವಕನ ಮೇಲೆ ಡಿಸೆಂಬರ್ 9ರಂದು ದಾಳಿ ನಡೆದಿತ್ತು. ಚಕ್ಮಾ ಮತ್ತು ಆತನ ಸಹೋದರ ಸೆಲಾಕುಯಿ ಪ್ರದೇಶದಲ್ಲಿ ದಿನಸಿ ಖರೀದಿಸುತ್ತಿದ್ದಾಗ, ಕುಡಿದ ಮತ್ತಿನಲ್ಲಿದ್ದ ಪುರುಷರ ಗುಂಪೊಂದು ಅವರನ್ನು ಜನಾಂಗೀಯ ನಿಂದನೆ ಮಾಡಿದೆ. ಚಕ್ಮಾ ಈ ಹೇಳಿಕೆಗಳನ್ನು ಆಕ್ಷೇಪಿಸಿದಾಗ, ಆ ಗುಂಪು ರಾಡ್ ಮತ್ತು ಚಾಕುಗಳಿಂದ ಹಲ್ಲೆ ನಡೆಸಿದೆ ಎಂದು FIR ನಲ್ಲಿ ಉಲ್ಲೇಖಿಸಲಾಗಿದೆ. ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ 16 ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ಡಿಸೆಂಬರ್ 25ರಂದು ಚಕ್ಮಾ ಕೊನೆಯುಸಿರೆಳೆದಿದ್ದರು. *ನಾವು ಚೈನೀಸ್ ಅಲ್ಲ, ಇಂಡಿಯನ್ಸ್ “ನಾವು ಚೀನಿಯರಲ್ಲ… ನಾವು ಭಾರತೀಯರು. ಅದನ್ನು ಸಾಬೀತುಪಡಿಸಲು ನಾವು ಯಾವ ಪ್ರಮಾಣಪತ್ರವನ್ನು ತೋರಿಸಬೇಕು?” ಜನಾಂಗೀಯ ದಾಳಿಗೊಳಗಾಗುವ ಮುನ್ನ ಚಕ್ಮಾ ಹೇಳಿದ ಮಾತು ಇದು. ಚಕ್ಮಾರನ್ನು ಚೀನಾದವರು ಎಂದು ಕೂಗಿ ನಿಂದಿಸಲಾಗಿತ್ತು. ಈಶಾನ್ಯ ಭಾರತೀಯರ ಮೇಲಿನ ತಾರತಮ್ಯದ ಕೂಗು, ಕೀಟಲೆಗಳು ಇತರರಿಗೆ ತಮಾಷೆಯಾಗಿ ಕಾಣಬಹುದು. ಆದರೆ ತಮ್ಮದೇ ದೇಶದಲ್ಲಿ ತಮ್ಮದೇ ದೇಶದ ಜನರು ಪರಕೀಯರೆಂದು ಮೂದಲಿಸುವಾಗ ಈಶಾನ್ಯ ರಾಜ್ಯಗಳ ಜನರಿಗೆ ಹೇಗಾಗಿರಬೇಡ? ಉತ್ತರ ಭಾರತದ ಹುಡುಗಿ ತನ್ನನ್ನು ಜಪಾನೀಸ್, ದಕ್ಷಿಣ ಕೊರಿಯನ್ ಅಥವಾ ಚೈನೀಸ್ ಎಂದು ಗುರುತಿಸಿಕೊಂಡರೆ ಅವಳನ್ನು ಗೌರವಿಸಲಾಗುತ್ತದೆ. ಆದರೆ ಅವಳು ಈಶಾನ್ಯದವಳು ಎಂದು ಹೇಳಿದರೆ ಆಕೆಯನ್ನು ಅಪಹಾಸ್ಯ ಮಾಡಲಾಗುತ್ತದೆ. ಅವರ ವಿಶಿಷ್ಟ ಮಂಗೋಲಾಯ್ಡ್ ವೈಶಿಷ್ಟ್ಯಗಳಿಂದಾಗಿ ಅವರು ಇತರ ರಾಜ್ಯದ ಜನರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅವರು ಭಾರತೀಯರಾಗಿದ್ದರೂ ‘ಚಿಂಕಿ’, ‘ಮೊಮೊ’, ‘ಚೌಮೇನ್’ ಎಂಬ ಅಡ್ಡಹೆಸರುಗಳಿಂದ ಅವರನ್ನು ಗುರುತಿಸಲಾಗುತ್ತದೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಸ್ಟೀರಿಯೊಟೈಪ್ ಗಳೇ ಇದಕ್ಕೆಲ್ಲ ಕಾರಣ. *ಈಶಾನ್ಯ ಭಾರತದಲ್ಲೂ ಇದೆ ತಾರತಮ್ಯ ದುರದೃಷ್ಟವಶಾತ್, ಈಶಾನ್ಯ ಭಾರತದಲ್ಲೂ ಆ ರೀತಿಯ ತಾರತಮ್ಯವಿದೆ. ಅಲ್ಲಿ ಬಿಳಿ ಮತ್ತು ಕಪ್ಪು ಚರ್ಮದ ಬಗ್ಗೆ ಇರುವ ವರ್ತನೆಗಳು ಭಾರತದ ಮುಖ್ಯಭೂಭಾಗದಲ್ಲಿರುವಂತೆಯೇ ಇರುತ್ತವೆ. ಪ್ರಮುಖ ವ್ಯತ್ಯಾಸವೆಂದರೆ ಪೂರ್ವ ಏಷ್ಯಾದ ಜನರ ವಿರುದ್ಧ ತಾರತಮ್ಯ ಮಾಡುವ ಬದಲು, ದಕ್ಷಿಣ ಏಷ್ಯಾದ ಜನರೇ ಅಲ್ಲಿಗೆ ಆಗಾಗ್ಗೆ ಗುಂಪು ಹಿಂಸಾಚಾರವನ್ನು ಎದುರಿಸುತ್ತಾರೆ. ಭಾರತದ ಈಶಾನ್ಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ನಡುವಿನ ರೇಖೆಯು ಬ್ರಿಟಿಷ್ ವಸಾಹತುಶಾಹಿ ನೀತಿ ನಿರೂಪಕರು ಎಳೆದ ಕಾಲ್ಪನಿಕ ರೇಖೆಯೊಂದಿಗೆ ಹೆಚ್ಚಾಗಿ ಹೊಂದಿಕೆಯಾಗುತ್ತದೆ. ಇದು ಪೂರ್ವ ಏಷ್ಯಾದ ಜನಾಂಗೀಯ ಪ್ರಕಾರದ ಬುಡಕಟ್ಟು ಜನಾಂಗದವರು ವಾಸಿಸುವ ಬೆಟ್ಟಗಳನ್ನು ದಕ್ಷಿಣ ಏಷ್ಯಾದಂತೆ ಕಾಣುವ ಜನರು ವಾಸಿಸುವ ಸುತ್ತಮುತ್ತಲಿನ ಬಯಲು ಪ್ರದೇಶಗಳಿಂದ ಬೇರ್ಪಡಿಸುತ್ತದೆ. ಆ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಭಾಗ ಬಾಂಗ್ಲಾದೇಶದಲ್ಲಿದೆ. ಭಾರತದ ಅತಿ ಉದ್ದದ ಭೂ ಗಡಿ ಬಾಂಗ್ಲಾದೇಶದೊಂದಿಗೆ ಇದ್ದು, ಇದು ನಾಲ್ಕು ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ, ಮಿಜೋರಾಂ ಮತ್ತು ಅಸ್ಸಾಂಗಳೊಂದಿಗೆ ಗಡಿಗಳನ್ನು ಹಂಚಿಕೊಳ್ಳುತ್ತದೆ. 1971ರಲ್ಲಿ ಬಾಂಗ್ಲಾದೇಶ ರಚನೆಗಿಂತ ಬಹಳ ಹಿಂದೆಯೇ “ಬಾಂಗ್ಲಾದೇಶಿ” ವಲಸೆಯ ಸಮಸ್ಯೆ ಇತ್ತು. 1950 ಮತ್ತು 1960ರ ದಶಕಗಳಲ್ಲಿ ನಡೆದ ಅಸ್ಸಾಂ ಗಲಭೆಗಳು ಹಾಗೂ 1987, 1991 ಮತ್ತು 1992ರಲ್ಲಿ ಮೇಘಾಲಯದಲ್ಲಿ “ವಿದೇಶಿಯರನ್ನು” ಹೊರಹಾಕುವ ಗುರಿಯನ್ನು ಹೊಂದಿದ್ದ ಗುಂಪು ಹಿಂಸಾಚಾರಗಳು ನಡೆದವು. ಈ ಸಂದರ್ಭದಲ್ಲಿ ಬೀದಿಗಳಲ್ಲಿ ಅನ್ಯ ದೇಶೀಯರು ಯಾರು ಎಂಬುದನ್ನು ದೈಹಿಕ ನೋಟದಿಂದಲೇ ಕಂಡುಹಿಡಿಯಲಾಗುತ್ತಿತ್ತು. ಈ ಹೊತ್ತಿನಲ್ಲಿ “ಬಾಂಗ್ಲಾದೇಶಿಯಂತೆ ಕಾಣುವ” ಜನರು ಗುರಿಯಾಗುವ ಸಾಧ್ಯತೆ ಇತ್ತು. ಇಲ್ಲಿ ಬಂಗಾಳಿ ಭಾಷೆಯನ್ನು ಮಾತನಾಡುವವರಾಗಿರುವುದು ದೃಢೀಕರಣ ಪರೀಕ್ಷೆಯಾಗಿತ್ತು. ಈ ಹಿಂಸಾಚಾರವು ಅಂತಿಮವಾಗಿ ಬಿಹಾರಿಗಳು ಮತ್ತು ಮಾರ್ವಾಡಿಗಳಂತಹ ಮುಖ್ಯಭೂಭಾಗದ ಭಾರತೀಯ ಸಮುದಾಯಗಳ ವಿರುದ್ಧ ಸಶಸ್ತ್ರ ಉಗ್ರಗಾಮಿ ಗುಂಪುಗಳ ನೇತೃತ್ವದಲ್ಲಿ ಸಾಮಾನ್ಯೀಕೃತ ದಾಳಿಗಳಾಗಿ ರೂಪಾಂತರಗೊಂಡಿತು. *ನಾವು ಚೀನಾದವರಲ್ಲ; ನ್ಯಾಯಕ್ಕಾಗಿ ವಿದ್ಯಾರ್ಥಿಗಳ ಕೂಗು ಹೊಸ ವರ್ಷದ ಮುನ್ನಾದಿನದಂದು ದಿಲ್ಲಿಯ ಜಂತರ್ ಮಂತರ್ ನಲ್ಲಿ “Justice for Anjel Chakma” ಮತ್ತು “We are not Chinese” ಎಂಬ ಘೋಷಣೆಗಳು ಪ್ರತಿಧ್ವನಿಸಿದವು. ಡೆಹ್ರಾಡೂನ್ ನಲ್ಲಿ ಜನಾಂಗೀಯ ಪ್ರೇರಿತ ದಾಳಿಯ ನಂತರ ಸಾವಿಗೀಡಾದ ತ್ರಿಪುರಾದ ಏಂಜಲ್ ಚಕ್ಮಾ ಸಾವು ಖಂಡಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ ವಿದ್ಯಾರ್ಥಿಗಳ ಘೋಷಣೆಯಾಗಿತ್ತು ಅದು. ನಗರದಾದ್ಯಂತದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲಿ ಸೇರಿದ್ದು, ಕೆಲವರು “ಈಶಾನ್ಯ ಸಮುದಾಯವನ್ನು ರಕ್ಷಿಸಿ”, “ಜನಾಂಗೀಯ ವಿರೋಧಿ ಕಾನೂನುಗಳನ್ನು ಜಾರಿಗೆ ತನ್ನಿ” ಮತ್ತು “ಜನಾಂಗೀಯ ಅಪರಾಧಕ್ಕೆ ಶೂನ್ಯ ಸಹಿಷ್ಣುತೆ” ಎಂಬ ಬರಹಗಳನ್ನು ಹೊಂದಿರುವ ಪೋಸ್ಟರ್ಗಳನ್ನು ಹಿಡಿದಿದ್ದರು. *ಈಶಾನ್ಯ ಜನರನ್ನು ರಕ್ಷಿಸಲು ಜನಾಂಗೀಯ ವಿರೋಧಿ ಕಾನೂನು ಜಾರಿಗೆ ಒತ್ತಾಯ ದೇಶದ ವಿವಿಧ ಭಾಗಗಳಲ್ಲಿ ವಾಸಿಸುವ ಈಶಾನ್ಯ ಜನರ ರಕ್ಷಣೆಗಾಗಿ ಸಮಗ್ರ ಜನಾಂಗೀಯ ವಿರೋಧಿ ಕಾನೂನನ್ನು ಜಾರಿಗೆ ತರುವಂತೆ ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿಯ ಕಿರಿಯ ಮಿತ್ರಪಕ್ಷವಾದ ತಿಪ್ರಾ ಮೋಥಾ ಪಕ್ಷ (TMP) ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟಿಎಂಪಿ ವಕ್ತಾರರಾದ ರಾಜೇಶ್ವರ್ ದೇಬ್ಬರ್ಮಾ, ಸಿ.ಕೆ. ಜಮಾತಿಯಾ ಮತ್ತು ಆಂಥೋನಿ ದೇಬ್ಬರ್ಮಾ, ನಿರ್ದಿಷ್ಟ ಜನಾಂಗೀಯ ವಿರೋಧಿ ಕಾನೂನಿನ ಅನುಪಸ್ಥಿತಿಯು ತಾರತಮ್ಯ ಮತ್ತು ಜನಾಂಗೀಯ ಪ್ರೇರಿತ ಹಿಂಸಾಚಾರದ ಘಟನೆಗಳು ಅನಿಯಂತ್ರಿತವಾಗಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ ಎಂದರು. ಅಂತಹ ಕಾನೂನನ್ನು ಜಾರಿಗೆ ತರುವುದರಿಂದ ಜನಾಂಗೀಯತೆಯ ವಿರುದ್ಧ ವ್ಯವಸ್ಥಿತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದು ತಾರತಮ್ಯದ ಮನಸ್ಥಿತಿಗಳನ್ನು ನಿಗ್ರಹಿಸಲು ಮತ್ತು ಈಶಾನ್ಯದ ಜನರನ್ನು ಗುರಿಯಾಗಿಸಿಕೊಂಡು ನಡೆಯುವ ಘೋರ ಕೃತ್ಯಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. *M.P. Bezbaruah ಸಮಿತಿ ಏನು ಹೇಳುತ್ತದೆ? ಅರುಣಾಚಲ ಪ್ರದೇಶದ 19 ವರ್ಷದ ವಿದ್ಯಾರ್ಥಿ ನಿಡೋ ತಾನಿಯಮ್ ಸಾವಿನ ನಂತರ ಈಶಾನ್ಯ ಮಂಡಳಿಯ ಸದಸ್ಯರಾದ ಎಂ.ಪಿ. ಬೆಜ್ಬರುವಾ ನೇತೃತ್ವದಲ್ಲಿ ಬೆಜ್ಬರುವಾ ಸಮಿತಿಯನ್ನು ಸ್ಥಾಪಿಸಲಾಗಿತ್ತು. ದೇಶದ ಇತರ ಪ್ರದೇಶಗಳಲ್ಲಿ, ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ವಾಸಿಸುವ ಈಶಾನ್ಯ ಭಾರತದ ಜನರ ಸಮಸ್ಯೆಗಳನ್ನು ಆಲಿಸುವುದು ಸಮಿತಿಯ ಕರ್ತವ್ಯವಾಗಿತ್ತು. ಈಶಾನ್ಯ ಭಾರತದ ಜನರ ವಿರುದ್ಧದ ಜನಾಂಗೀಯ ತಾರತಮ್ಯವನ್ನು ಪರಿಹರಿಸಲು ಬೆಜ್ಬರುವಾ ಸಮಿತಿಯು ಹೊಸ ಜನಾಂಗೀಯ ವಿರೋಧಿ ಕಾನೂನು ಅಥವಾ ಐಪಿಸಿ (ಭಾರತೀಯ ದಂಡ ಸಂಹಿತೆ)ಗೆ ತಿದ್ದುಪಡಿಗಳನ್ನು ಶಿಫಾರಸು ಮಾಡಿತ್ತು. ಹೊಸ ಸೆಕ್ಷನ್ಗಳು 153C (ಪೂರ್ವಾಗ್ರಹಪೀಡಿತ ಕೃತ್ಯಗಳು) ಮತ್ತು 509A (ಜನಾಂಗವನ್ನು ಆಧರಿಸಿದ ಅವಮಾನಕರ ಪದಗಳು/ಸನ್ನೆಗಳು) ಅಡಿಯಲ್ಲಿ ಕಠಿಣ ದಂಡಗಳೊಂದಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬೇಕೆಂದು ಸೂಚಿಸಿತ್ತು. ಜನಾಂಗೀಯ ತಾರತಮ್ಯವನ್ನು ಪರಿಹರಿಸಲು ಕಾನೂನು ಜಾರಿಗೆ ತರಬೇಕೆಂದು ಸಮಿತಿ ಶಿಫಾರಸು ಮಾಡಿದ್ದರೂ ಅದು ಇನ್ನೂ ಜಾರಿಯಾಗಿಲ್ಲ. ಜನಾಂಗೀಯ ದಾಳಿಗಳನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಒತ್ತಾಯಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ. *ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಏನಿದೆ? ಚಕ್ಮಾ ಪ್ರಕರಣದ ನಂತರ ಸುಪ್ರೀಂ ಕೋರ್ಟ್ನ ವಕೀಲ ಅನೂಪ್ ಪ್ರಕಾಶ್ ಅವಸ್ಥಿ ಸಲ್ಲಿಸಿದ ಅರ್ಜಿಯಲ್ಲಿ, ದ್ವೇಷದಿಂದ ಕೂಡಿದ ಮತ್ತು ಜನಾಂಗೀಯ ಪ್ರೇರಣೆಯಿಂದ ಈ ಅಪರಾಧ ನಡೆದಿದ್ದರೂ, ನಮ್ಮ ಆರಂಭಿಕ ಕ್ರಿಮಿನಲ್ ನ್ಯಾಯ ಪ್ರತಿಕ್ರಿಯೆ ವ್ಯವಸ್ಥೆಯಲ್ಲಿ ಜನಾಂಗೀಯ ಅಪರಾಧಗಳನ್ನು ಸಾಮಾನ್ಯ ಅಪರಾಧವೆಂದು ಪರಿಗಣಿಸುವ ಯಾವುದೇ ಕಾರ್ಯವಿಧಾನ ಲಭ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ. ಏಂಜಲ್ ಚಕ್ಮಾ ಅವರ ಹತ್ಯೆ ಒಂದು ಪ್ರತ್ಯೇಕ ಘಟನೆಯಲ್ಲ, ಆದರೆ ಈಶಾನ್ಯ ರಾಜ್ಯಗಳ ನಾಗರಿಕರ ವಿರುದ್ಧದ ದೀರ್ಘಕಾಲದ ಜನಾಂಗೀಯ ಹಿಂಸಾಚಾರದ ಮಾದರಿಯ ಭಾಗವಾಗಿದೆ. ಇದರಲ್ಲಿ 2014ರಲ್ಲಿ ದಿಲ್ಲಿಯಲ್ಲಿ ಅರುಣಾಚಲದ ವಿದ್ಯಾರ್ಥಿ ನಿಡೋ ತಾನಿಯಮ್ ಸಾವು ಹಾಗೂ ಮೆಟ್ರೋಪಾಲಿಟನ್ ನಗರಗಳಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಮೇಲೆ ನಡೆದ ಹಲವಾರು ಹಲ್ಲೆಗಳು ಸೇರಿವೆ. ಈ ವಿದ್ಯಮಾನವನ್ನು ಭಾರತ ಒಕ್ಕೂಟವು ಸಂಸತ್ತಿನ ಪ್ರತಿಕ್ರಿಯೆಗಳಲ್ಲಿ ಔಪಚಾರಿಕವಾಗಿ ಒಪ್ಪಿಕೊಂಡಿದ್ದರೂ, ಯಾವುದೇ ಮೀಸಲಾದ ಶಾಸಕಾಂಗ ಅಥವಾ ಸಂಸ್ಥಾತ್ಮಕ ಚೌಕಟ್ಟಿನ ಮೂಲಕ ಇದನ್ನು ಪರಿಹರಿಸಲಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ‘ಜನಾಂಗೀಯ ನಿಂದನೆ’ಯನ್ನು ದ್ವೇಷ ಅಪರಾಧದ ಪ್ರತ್ಯೇಕ ವರ್ಗವೆಂದು ಗುರುತಿಸುವ ಶಾಸನ ಜಾರಿಗೆ ಬರುವವರೆಗೆ ಮಧ್ಯಂತರವಾಗಿ ಸೂಕ್ತ ರಿಟ್ ಹೊರಡಿಸುವಂತೆ, ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವಂತೆ, ಜನಾಂಗೀಯ ನಿಂದನೆಯನ್ನು ದ್ವೇಷ ಅಪರಾಧಗಳ ಪ್ರತ್ಯೇಕ ವರ್ಗವೆಂದು ಗುರುತಿಸಿ ಅದರ ಅನುಗುಣ ಶಿಕ್ಷಾ ಪ್ರಮಾಣವನ್ನು ನಿಗದಿಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಜನಾಂಗೀಯ ಅಪರಾಧಗಳನ್ನು ವರದಿ ಮಾಡಲು ಮತ್ತು ಮರುಪರಿಶೀಲಿಸಲು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ನೋಡಲ್ ಏಜೆನ್ಸಿ ಅಥವಾ ಶಾಶ್ವತ ಸಂಸ್ಥೆ, ಆಯೋಗ ಅಥವಾ ನಿರ್ದೇಶನಾಲಯ ಸ್ಥಾಪಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜನಾಂಗೀಯ ಅಪರಾಧಗಳನ್ನು ನಿಭಾಯಿಸಲು ಮೆಟ್ರೋ ಪ್ರದೇಶ ಅಥವಾ ಜಿಲ್ಲಾವಾರು ವಿಶೇಷ ಪೊಲೀಸ್ ಘಟಕ ಸ್ಥಾಪಿಸುವುದನ್ನೂ ಅರ್ಜಿಯಲ್ಲಿ ಕೋರಲಾಗಿದೆ. ಈಶಾನ್ಯ ವ್ಯಕ್ತಿಗಳ ಮೇಲಿನ ಪುನರಾವರ್ತಿತ ದಾಳಿಗಳನ್ನು “ನಿರಂತರ ಸಾಂವಿಧಾನಿಕ ವೈಫಲ್ಯ” ಎಂದು ಹೇಳಿದ್ದು, “ಸಮದರ್ಶನ ಮತ್ತು ವಸುಧೈವ ಕುಟುಂಬಕಂ” ತತ್ವಗಳು ಜನಾಂಗೀಯ ತಾರತಮ್ಯಕ್ಕೆ ವಿರುದ್ಧವಾಗಿವೆ. ಆದ್ದರಿಂದ ಜನಾಂಗೀಯ ಹಿಂಸಾಚಾರದ ಕೃತ್ಯಗಳು ಅಸಂವಿಧಾನಿಕ ಮಾತ್ರವಲ್ಲದೆ ನಾಗರಿಕತೆಯ ವಿರೋಧಿಯೂ ಆಗಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
23 ಮಂದಿ ಐಎಫ್ಎಸ್ ಅಧಿಕಾರಿಗಳಿಗೆ ಭಡ್ತಿ
ಬೆಂಗಳೂರು : ರಾಜ್ಯ ಸರಕಾರವು ಹೊಸ ವರ್ಷದ ಪ್ರಯುಕ್ತ 23 ಮಂದಿ ಐಎಫ್ಎಸ್ ಅಧಿಕಾರಿಗಳಿಗೆ ಭಡ್ತಿ ನೀಡಿ ಬುಧವಾರ ರಾತ್ರಿ ಆದೇಶ ಹೊರಡಿಸಿದೆ. ಧಾರವಾಡ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ., ಅವರನ್ನು ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು(ಕಾರ್ಯ ಯೋಜನೆ) ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ ಅವರನ್ನು ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು(ಹುಲಿ ಯೋಜನೆ) ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಪಿ., ಅವರನ್ನು ಮೈಸೂರು(ಹುಲಿ ಯೋಜನೆ)ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ಭಡ್ತಿ ನೀಡಲಾಗಿದೆ. ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯಕ ಕೆ. ಅವರನ್ನು ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು(ಕೇಂದ್ರ ಕಚೇರಿ) ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಅವರನ್ನು ಬೆಂಗಳೂರಿನ ಅರಣ್ಯ ಸಂಪನ್ಮೂಲ ನಿರ್ವಹಣಾ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ, ಕೇಂದ್ರ ಸರಕಾರದ ನಿಯೋಜನೆ ಮೇರೆಗೆ ಡೆಹ್ರಾಡೂನ್ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಿಜ್ಞಾನಿ ಮಾರಿಯಾ ಕ್ರಿಸ್ತು ರಾಜ ಡಿ. ಅವರನ್ನು ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿ ನೀಡಲಾಗಿದೆ. ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಅವರನ್ನು ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿ(ಕಾರ್ಯ ಯೋಜನೆ), ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಡಿ., ಅವರನ್ನು ಚಿಕ್ಕಮಗಳೂರು ಅರಣ್ಯ ಸಂರಕ್ಷಣಾಧಿಕಾರಿ(ಕಾರ್ಯ ಯೋಜನೆ)ಯಾಗಿ ಭಡ್ತಿ ನೀಡಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯಕಾರಿ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯ ಸೇನ್, ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್., ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾರವಾರ ಕರ್ನಾಟಕ ಮತ್ಸ್ಯ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ.ಸಿ.ಬಾಲಚಂದ್ರ, ಬೆಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ(ಸಂಶೋಧನೆ) ರಮೇಶ್ ಬಿ.ಆರ್, ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನವರ್ ಅವರರನ್ನು ಭಡ್ತಿ ನೀಡಿ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪಿ.ಕೆ.ಎಂ., ಹುಣಸೂರು ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಫೀಲ್ಡ್ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಪಿ.ಎ., ಚಾಮರಾಜನಗರ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಬಿ.ಎಸ್., ಕೊಪ್ಪಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ ಎನ್.ಕೆ. ಅವರನ್ನು ಭಡ್ತಿ ನೀಡಿ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ವಿಜಯನಗರದ ಹೊಸಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರುಬನಾಥನ್ ಆರ್.ಟಿ. ಅವರನ್ನು ಹುಣಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರದ ಬಿಆರ್ಟಿ ಯಳಂದೂರು ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ಕರ್ ಅಕ್ಷಯ್ ಅಶೋಕ್ ಅವರನ್ನು ಹಾವೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿ ನೀಡಲಾಗಿದೆ. ಕೊಳ್ಳೇಗಾಲದ ಮಲೇಮಹದೇಶ್ವರ ಬೆಟ್ಟದ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಮನೋಹರ್ ಆಹಿರೆ ಅವರನ್ನು ಕೊಳ್ಳೇಗಾಲ ಮಲೇಮಹದೇಶ್ವರ ಬೆಟ್ಟದ ವನ್ಯಜೀವಿ ಉಪ ವಿಭಾಗದ ಹಿರಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಹಾವೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಝೀಝ್ ಅವರನ್ನು ಕುಂದಾಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಣಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಹಮ್ಮದ್ ಫಯಾಝುದ್ದೀನ್ ಅವರನ್ನು ಸಾಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿ ನೀಡಿ ಆದೇಶಿಸಲಾಗಿದೆ.
ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು; ಸರಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ
ಅರ್ಜಿಯಲ್ಲೇನಿದೆ?
ಉಪ್ಪಿನಂಗಡಿ: ಬ್ಯಾಂಕ್ ಪ್ರಬಂಧಕ ನಾಪತ್ತೆ
ಉಪ್ಪಿನಂಗಡಿ: ಇಲ್ಲಿನ ಪೆರ್ನೆ ಎಂಬಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಉಪ ಶಾಖಾ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಲುಗುಜ್ಜು ಸುಬ್ರಹ್ಮಣ್ಯಂ (30) ಎಂಬವರು ಡಿ. 17 ರಿಂದ ನಾಪತ್ತೆಯಾಗಿರುವುದಾಗಿ ಅವರ ಸಹೋದರ ದೂರು ನೀಡಿದ್ದಾರೆ. ಬಿ.ಸಿ.ರೋಡಿನಲ್ಲಿ ವಿಷ್ಣು ಎಂಬವರ ಜೊತೆ ರೂಮೊಂದರಲ್ಲಿ ವಾಸ್ತವ್ಯವನ್ನು ಹೊಂದಿದ್ದ ಸುಬ್ರಹ್ಮಣ್ಯಂ ಡಿ. 17 ರಂದು ತಮ್ಮನಿಗೆ ಹುಷಾರಿಲ್ಲ ಎಂದು ರೂಮಿಗೆ ಹೋಗುತ್ತೇನೆಂದು ಹೇಳಿ ಹೋದವರು ಬಳಿಕ ಪತ್ತೆಯಾಗಿರುವುದಿಲ್ಲವೆಂದೂ, ವಿಷ್ಣುವಿನಲ್ಲಿ ತಾನು ಊರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದಾನೆನ್ನಲಾಗಿದ್ದು, ಊರಿಗೂ ಹೋಗದೆ ಎಲ್ಲಿಯೂ ಕಾಣಿಸದೆ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನ್ಯೂಯಾರ್ಕ್: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಬಂಧನದಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ ಕೈಬರಹದ ಪತ್ರ ಬರೆದಿದ್ದಾರೆ. ಡೆಮಾಕ್ರಟಿಕ್ ಸಮಾಜವಾದಿ ಝೊಹ್ರಾನ್ ಮಮ್ದಾನಿ ಗುರುವಾರ ಮಧ್ಯರಾತ್ರಿಯ ನಂತರ ಅಮೆರಿಕದ ಅತಿದೊಡ್ಡ ನಗರದ ಮೊದಲ ಮುಸ್ಲಿಂ ಮತ್ತು ಭಾರತೀಯ ಮೂಲದ ಮೇಯರ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಸ್ತುತ ದಿಲ್ಲಿಯ ತಿಹಾರ್ ಜೈಲಿನಲ್ಲಿ ಬಂಧನದಲ್ಲಿರುವ ಖಾಲಿದ್ ರೊಂದಿಗೆ ಹಿಂದೆ ನಡೆದ ಸಂವಾದಗಳನ್ನು ಸ್ಮರಿಸಿಕೊಂಡಿರುವ ಮಮ್ದಾನಿ, ತಮ್ಮ ಪತ್ರದಲ್ಲಿ ಒಗ್ಗಟ್ಟು ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು Deccan Chronicle ವರದಿ ಮಾಡಿದೆ. “ಪ್ರಿಯ ಉಮರ್, ಕಹಿಯ ಬಗ್ಗೆ ನಿಮ್ಮ ಮಾತುಗಳನ್ನು ನಾನು ಆಗಾಗ್ಗೆ ನೆನಪಿಸಿಕೊಳ್ಳುತ್ತೇನೆ. ಅದು ಒಬ್ಬರ ಆತ್ಮವನ್ನು ಆವರಿಸದಂತೆ ನೋಡಿಕೊಳ್ಳಬೇಕೆಂಬ ನಿಮ್ಮ ಮಾತುಗಳು ನನಗೆ ಆಗಾಗ್ಗೆ ನೆನಪಾಗುತ್ತವೆ. ನಿಮ್ಮ ಪೋಷಕರನ್ನು ಭೇಟಿಯಾದುದು ಸಂತೋಷವಾಯಿತು” ಎಂದು ಅವರು ಬರೆದಿದ್ದಾರೆ. ಈ ಪತ್ರದ ಚಿತ್ರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ವೈರಲ್ ಆಗಿದ್ದು, ಖಾಲಿದ್ರ ಸ್ನೇಹಿತೆ ಬನೋಜ್ಯೋತ್ಸ್ನಾ ಲಹಿರಿ ಅದನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ನಲ್ಲಿ ಖಾಲಿದ್ ರ ಪೋಷಕರು ಅಮೆರಿಕಕ್ಕೆ ತೆರಳಿದ್ದ ವೇಳೆ ಮಮ್ದಾನಿ ಸೇರಿದಂತೆ ಹಲವು ಜನರನ್ನು ಭೇಟಿಯಾದರು ಎಂದು ಅವರು ತಿಳಿಸಿದ್ದಾರೆ. ಆದರೆ ಪತ್ರವನ್ನು Telegraph Online ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. 2020ರ ಸೆಪ್ಟೆಂಬರ್ನಲ್ಲಿ ದಿಲ್ಲಿ ಗಲಭೆಗೆ ಸಂಬಂಧಿಸಿದ ಪಿತೂರಿ ಪ್ರಕರಣದಲ್ಲಿ ಖಾಲಿದ್ ಅವರನ್ನು ಬಂಧಿಸಲಾಗಿತ್ತು. ಒಂದು FIR ನಲ್ಲಿ ದೆಹಲಿ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಿದರೂ, UAPA ಅಡಿಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಅವರು ಇನ್ನೂ ಬಂಧನದಲ್ಲೇ ಇದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಜಾಮೀನು ಅರ್ಜಿಗಳನ್ನು ಹಲವು ಬಾರಿ ತಿರಸ್ಕರಿಸಲಾಗಿದೆ. ಡಿಸೆಂಬರ್ 2025ರಲ್ಲಿ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಮಮ್ದಾನಿ ಈ ಹಿಂದೆಯೂ ಖಾಲಿದ್ ರ ಬೆಂಬಲವಾಗಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಜೂನ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೆ ಮುನ್ನ ನ್ಯೂಯಾರ್ಕ್ನಲ್ಲಿ ನಡೆದ ‘ಹೌಡಿ, ಡೆಮಾಕ್ರಸಿ?!’ ಕಾರ್ಯಕ್ರಮದಲ್ಲಿ, ಅವರು ಖಾಲಿದ್ ರ ಜೈಲು ಬರಹಗಳ ಆಯ್ದ ಭಾಗಗಳನ್ನು ಓದಿದ್ದರು. ಆ ವೇಳೆ ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಯ ಸದಸ್ಯರಾಗಿದ್ದ ಮಮ್ದಾನಿ, ಸಭಿಕರನ್ನು ಉದ್ದೇಶಿಸಿ, “ನಾನು ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ವಾಂಸ ಹಾಗೂ ಮಾಜಿ ವಿದ್ಯಾರ್ಥಿ, ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರ ಪತ್ರವನ್ನು ಓದಲಿದ್ದೇನೆ. ಅವರು ಗುಂಪು ಹಲ್ಲೆ ಮತ್ತು ದ್ವೇಷದ ವಿರುದ್ಧ ಅಭಿಯಾನ ನಡೆಸಿದ್ದರು. UAPA ಅಡಿಯಲ್ಲಿ ಅವರು 1,000 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ. ಜಾಮೀನು ಅರ್ಜಿಗಳನ್ನು ಪದೇಪದೇ ತಿರಸ್ಕರಿಸಲಾಗಿದ್ದರೂ ಇನ್ನೂ ವಿಚಾರಣೆ ಆರಂಭವಾಗಿಲ್ಲ. ಹತ್ಯೆಯ ಪ್ರಯತ್ನದ ಆರೋಪವನ್ನೂ ಅವರು ಎದುರಿಸಿದ್ದಾರೆ” ಎಂದು ಹೇಳಿದ್ದರು. ಡೆಮಾಕ್ರಟಿಕ್ ಸಮಾಜವಾದಿಯಾಗಿರುವ ಮಮ್ದಾನಿ, ತಳಮಟ್ಟದ ರಾಜಕೀಯ ಸಂಘಟನೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದವರು. ಮೇಯರ್ ಹುದ್ದೆ ಅಲಂಕರಿಸುವ ಮೊದಲು ಅವರು ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿ: ಅರ್ಜಿ ಆಹ್ವಾನ
ಉಡುಪಿ, ಜ.1: ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೆಜ್ಮೆಂಟ್ ಮೂಡುಬಿದಿರೆ ಇದರ ವತಿಯಿಂದ ಜನವರಿ ತಿಂಗಳಿನಿಂದ ಪ್ರಾರಂಭವಾಗುವ 6 ತಿಂಗಳ ಅವಧಿಯ ರೆಗ್ಯೂಲರ್ ಮತ್ತು ದೂರಶಿಕ್ಷಣ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಕೋರ್ಸ್ ತರಬೇತಿಗೆ ಉಡುಪಿ ಜಿಲ್ಲೆಯ ಸಾಮಾನ್ಯ ಹಾಗೂ ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಂದ ಮತ್ತು ಎಲ್ಲಾ ವಿಧದ ಸಹಕಾರ ಸಂಘ/ಬ್ಯಾಂಕ್ಗಳ ಉದ್ಯೋಗಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನ. ಕನಿಷ್ಠ ವಿದ್ಯಾರ್ಹತೆ ಎಸೆಸೆಲ್ಸಿ ತೇರ್ಗಡೆಯಾಗಿದ್ದು, ಪ್ರವೇಶ ಪಡೆದ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ ಮಾಸಿಕ 600ರೂ. ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ 500ರೂ. ಶಿಷ್ಯ ವೇತನ ನೀಡಲಾಗುವುದು. ಸಹಕಾರ, ಸಹಕಾರ ಪತ್ತು ಮತ್ತು ಬ್ಯಾಂಕಿಂಗ್, ಸಹಕಾರ ಸಂಘಗಳ ನಿರ್ವಹಣೆ, ಸಹಕಾರ ಸಂಘಗಳ ಕಾಯಿದೆ ಅಂಶಗಳು, ಸಹಕಾರ ಲೆಕ್ಕಪತ್ರ ಗಳು ಮತ್ತು ಲೆಕ್ಕಪರಿಶೋಧನೆ ಹಾಗೂ ಕಂಪ್ಯೂಟರ್ ಅಪರೇಷನ್ ಬಗ್ಗೆ ಪಠ್ಯಕ್ರಮವಿರುತ್ತದೆ. ಸಹಕಾರ ಡಿಪ್ಲೊಮಾ ಕೋರ್ಸ್ ಪಡೆದ ಅಭ್ಯರ್ಥಿಗಳಿಗೆ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಮತ್ತು ಇತರೆ ಎಲ್ಲಾ ರೀತಿಯ ಸಹಕಾರ ಸಂಘ/ಸಂಸ್ಥೆಗಳು ಮತ್ತು ಬ್ಯಾಂಕ್ಗಳ ಉದ್ಯೋಗ ಅವಕಾಶ ಗಳಲ್ಲಿ ನೇಮಕಾತಿಗೆ ಸಹಕಾರ ಕಾಯಿದೆ ಮತ್ತು ನಿಯಮಗಳಿಗೆ ಅನುಸಾರವಾಗಿ ಆದ್ಯತೆ ಕಲ್ಪಿಸಲಾಗುವುದು. ಜೊತೆಗೆ ಈ ಪಠ್ಯಕ್ರಮವು ಕೆಎಎಸ್ ಪರೀಕ್ಷೆಯ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯ ಮತ್ತು ಸಹಕಾರ ಇಲಾಖೆಯ ಕೋ- ಆಪರೇಟಿವ್ ಇನ್ಸ್ಪೆಕ್ಟರ್ ಹುದ್ದೆ ಹಾಗೂ ಎಲ್ಲಾ ಸಹಕಾರ ಸಂಘ/ಸಂಸ್ಥೆಗಳ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಪೂರಕವಾಗಿದೆ. ಸಹಕಾರ ಕಾಯ್ದೆ ನಿಯಮಗಳ ಅನ್ವಯ ಸಹಕಾರ ಸಂಘಗಳ ಅಧಿಕಾರಿ/ ಸಿಬ್ಬಂದಿಗಳಿಗೆ ಡಿಸಿಎಂ. ಕೋರ್ಸ್ ಕಡ್ಡಾಯವಾಗಿದ್ದು, ಸಹಕಾರ ಸಂಘ/ಸಂಸ್ಥೆಗಳಲ್ಲಿನ ಖಾಯಂ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದೂರ ಶಿಕ್ಷಣ ಕೋರ್ಸ್ಗೆ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ: 08258-236561, ಮೊ:7022429440, 8971361396 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಮ್ಮ ಕ್ಲಿನಿಕ್ನಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ
ಉಡುಪಿ, ಜ.1: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲಿನಿಕ್ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 16 ಕೊನೆಯ ದಿನ. ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ -udupi.nic.in-ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ನಮ್ಮ ಕ್ಲಿನಿಕ್ನಲ್ಲಿ ಶುಶ್ರೂಷಕ ಹುದ್ದೆ ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲಿನಿಕ್ಗಳಲ್ಲಿ ಖಾಲಿ ಇರುವ ಶುಶ್ರೂಷಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಒಳಮೀಸಲಾತಿಯ ವರ್ಗೀಕರಣದಿಂದ ತಡೆ ಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆಗೆ ಪರಿಷ್ಕೃತ ರೋಸ್ಟರ್ಗಳನ್ನು ಅಳವಡಿಸಿ ಮರು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 16 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿ ಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ- udupi.nic.in- ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಕೊರಗರ ಅಹೋರಾತ್ರಿ ಧರಣಿ: ಸಂಸದ ಕೋಟ, ಶಾಸಕ ಗುರ್ಮೆ ಭೇಟಿ
ಉಡುಪಿ, ಜ.1: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ವತಿಯಿಂದ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಕಳೆದ ಡಿಸೆಂಬರ್ 15ರಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿಯ ಅಹೋರಾತ್ರಿ ಧರಣಿ ಸತ್ಯಾಗ್ರಹ 18ನೇ ದಿನವಾದ ಗುರುವಾರವೂ ಮುಂದುವರಿದಿದೆ. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಇಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ, ಧರಣಿನಿರತರ ಬೇಡಿಕೆಗಳ ಕುರಿತಂತೆ ಚರ್ಚಿಸಿ ಅವರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಮಾಜಿ ಉಪಾಧ್ಯಕ್ಷ ಶೇಖರ ಕೆಂಜೂರು, ಸಂಯೋಜಕ ಪುತ್ರನ್ ಹೆಬ್ರಿ, ಸುರೇಶ ಎಲ್ಲೂರು, ಭಾರತಿ ಎಲ್ಲೂರು, ಶೇಖರ ಕುಂದಾಪುರ, ಸಂಜೀವ ಬಾರ್ಕೂರು, ಶಕುಂತಲಾ ನೇಜಾರು, ಶೀನ ಬೆಳ್ಮಣ್, ನಾಗು ನಾಡ ಹಾಗೂ ಇತರ ಮುಖಂಡರು ಹಾಜರಿದ್ದರು.
ಕಾರು ಮಾಲೀಕರಿಗೆ ಹೊಸವರ್ಷಕ್ಕೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ. ಫಾಸ್ಟ್ಟ್ಯಾಗ್ ವಿತರಿಸಿದ ನಂತರ ಗ್ರಾಹಕರಿಗೆ ನೀಡಲಾಗುತ್ತಿದ್ದ ಕೆವೈವಿ ಪ್ರಕ್ರಿಯೆಯಿಂದ ವಾಹನ ಸವಾರರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಫೆಬ್ರವರಿ 1ರಿಂದ ಕೆವೈವಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಪರಿಶೀಲನೆ ಫಾಸ್ಟ್ಯಾಗ್ ಸಕ್ರಿಯಗೊಳಿಸುವ ಮೊದಲೇ ಪೂರ್ಣಗೊಳ್ಳಲಿದೆ.
ವರ್ಣಾಶ್ರಮ ವ್ಯವಸ್ಥೆಯ ಪೋಷಣೆಗೆ ಕರೆ ನೀಡಿದ ಕನೇರಿಮಠದ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ : ಆರ್.ಮಾನಸಯ್ಯ
ಲಿಂಗಸುಗೂರು : ವರ್ಣಾಶ್ರಮ ವ್ಯವಸ್ಥೆಯ ಪೋಷಣೆಗೆ ಕರೆ ನೀಡಿರುವ ಕನೇರಿಮಠದ ಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹಿರಿಯ ಹೋರಾಟಗಾರ ಆರ್. ಮಾನಸಯ್ಯ ಆಗ್ರಹಿಸಿದರು. ಪಟ್ಟಣದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ಜೈ ಭೀಮ್ ರೆಜಿಮೆಂಟ್ ಪಥ ಸಂಚಲನ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಲ್ಯಾಣದ ಶರಣರು ಯಾವುದೇ ಒಂದು ಧರ್ಮಕ್ಕೆ ಸೀಮಿತರಾಗದೆ ಸಹೋದರತೆಯನ್ನು ಸಾರುತ್ತ ಜಾತಿ ನಾಶಕ್ಕೆ ಕರೆ ನೀಡಿದ್ದರು. ಅವರು ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಅಂಥಹ ಮಹಾನ್ ಶರಣರನ್ನು ‘ಹಿಂದೂ’ ಎಂಬ ಒಂದೇ ಚೌಕಟ್ಟಿನಲ್ಲಿ ಬಂಧಿಸಲು ಪ್ರಯತ್ನ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವು ದಲಿತರ ಸ್ವಾಭಿಮಾನದ ಗೆಲುವಾಗಿದೆ. ಈ ಯುದ್ಧದಲ್ಲಿ ಮಹರ್ ಪಡೆಯ ಜಯವನ್ನು ಇತಿಹಾಸದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿತ್ತು. ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ವಿಜಯದ ಕುರಿತು ಚರಿತ್ರೆಯನ್ನು ದಾಖಲಿಸಿ ಇತಿಹಾಸಕ್ಕೆ ಬೆಳಕು ತಂದರು ಎಂದು ಅವರು ಹೇಳಿದರು. “ಈ ಯುದ್ಧದ ಗೆಲುವು ದಲಿತ ಸಮುದಾಯಕ್ಕೆ ಸ್ವಾಭಿಮಾನವನ್ನು ತಂದುಕೊಟ್ಟಿದೆ. ಇನ್ನು ಮುಂದೆ ದಲಿತರು ಜಾತಿ ನಾಶದ ಹೋರಾಟವನ್ನು ಮತ್ತಷ್ಟು ಬಲಪಡಿಸಬೇಕು” ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಸಿ.ದಾನಪ್ಪ ನಿಲೊಗಲ್, ದೊಡ್ಡಪ್ಪ ಮುರಾರಿ, ಹೆಚ್.ಎನ್. ಬಡಿಗೇರ, ಚಿದಾನಂದ ನಾಯಕ, ಮೀನಾ ಕುಮಾರಿ, ಗಂಗಾಧರ ನೀರಲಕೇರಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಅಫಜಲಪುರ | ಕಬ್ಬು ಕಟಾವು ಹೆಸರಿನಲ್ಲಿ ರೈತರಿಗೆ ವಂಚನೆ ಆರೋಪ : ರೇಣುಕಾ ಸಕ್ಕರೆ ಕಾರ್ಖಾನೆ ಎದುರು ರೈತರ ಪ್ರತಿಭಟನೆ
ಅಫಜಲಪುರ : ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಹೆಸರಿನಲ್ಲಿ ರೈತರನ್ನು ವ್ಯವಸ್ಥಿತವಾಗಿ ವಂಚಿಸುತ್ತಿವೆ ಎಂದು ಆರೋಪಿಸಿ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘಗಳ ನೇತೃತ್ವದಲ್ಲಿ ಗುರುವಾರ ತಾಲೂಕಿನ ಹವಳಗಾ ರೇಣುಕಾ ಸಕ್ಕರೆ ಕಾರ್ಖಾನೆ ಎದುರು ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಪರ ಹೋರಾಟಗಾರರಾದ ಶ್ರೀಮಂತ ಬಿರಾದಾರ, ಗುರು ಚಾಂದಕವಟೆ ಮತ್ತು ರಮೇಶ್ ಪಾಟೀಲ ಅವರು, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿರುವ ಸಕ್ಕರೆ ಕಾರ್ಖಾನೆಗಳು, ಇದೀಗ ಕಬ್ಬು ಕಟಾವು ಗ್ಯಾಂಗ್ಗಳ ಮೂಲಕ ಅಕ್ರಮ ಹಣ ವಸೂಲಿಗೆ ಇಳಿದಿರುವುದು ಅಸಹ್ಯಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಎಕರೆಗೆ ರೂ.5,000 ರಿಂದ ರೂ.10,000 ವರೆಗೆ ಹಣ ವಸೂಲಿಗೆ ಇಳಿದಿದ್ದಾರೆ ಇದು ರೈತರ ಮೇಲೆ ಶೋಷಣೆ ಆಗುತ್ತಿದೆ ಎಂದು ಆರೋಪಿಸಿದರು. ಒಂದು ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ವಿಭಾಗ, ಸಾಗಾಣಿಕೆ ಹಾಗೂ ಕಟಾವು ವಿಭಾಗಗಳಲ್ಲಿ 70ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೂ, ಕಬ್ಬು ನಾಟಿಯಿಂದ ಸರ್ವೆ ಹಾಗೂ ಅಂತಿಮ ಕಟಾವುವರೆಗೆ ಜವಾಬ್ದಾರಿ ಹೊಂದಿರುವ ಈ ವಿಭಾಗಗಳು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರು 12 ತಿಂಗಳು ಪೂರ್ತಿಯಾಗುವ ಮೊದಲು ಕಬ್ಬು ಕಟಾವು ಮಾಡಬಾರದು. ಅದಕ್ಕಿಂತ ಮುಂಚಿತವಾಗಿ ಕಟಾವು ಮಾಡಿದರೆ ಇಳುವರಿ ಕುಂಠಿತವಾಗುತ್ತದೆ. ಈ ಕುರಿತು ರೈತರು ಪರಸ್ಪರ ಸಹಕಾರದಿಂದ ನಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಒಂದು ಕಡೆ ಕಬ್ಬಿಗೆ ಸಮರ್ಪಕ ಬೆಂಬಲ ಬೆಲೆ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ಔಷಧಿ ಹಾಗೂ ಗೊಬ್ಬರದ ಬೆಲೆ ಏರಿಕೆಯಿಂದ ಕೃಷಿ ವೆಚ್ಚ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆ ಸಿಬ್ಬಂದಿಯ ವರ್ತನೆ ‘ಗಾಯದ ಮೇಲೆ ಬರೆ ಎಳೆದಂತೆ’ ರೈತರ ಮೇಲೆ ಮತ್ತಷ್ಟು ಹೊರೆ ಹಾಕುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಹಿರಿಯತನದ ಆಧಾರದ ಮೇಲೆ ಕಬ್ಬು ಕಟಾವು ನಡೆಯದೆ ಇರುವುದರಿಂದ ಇಳುವರಿ ಕುಸಿಯುವ ಭೀತಿ ಹೆಚ್ಚಿದ್ದು, 12 ತಿಂಗಳೊಳಗೆ ಕಟಾವು ಆಗದಿದ್ದರೆ ಉತ್ಪಾದನೆಗೆ ಭಾರೀ ಹಾನಿಯಾಗಲಿದೆ. ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ತಕ್ಷಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ಪ್ರತಿಭಟನೆ ವೇಳೆ ರೇಣುಕಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ರೈತರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಬ್ಬು ಅಭಿವೃದ್ಧಿ ಮಂಡಳಿ ಅಧಿಕಾರಿ ಚಿದಾನಂದ ಹಿರೇಮಠ ಮಾತನಾಡಿ, ತಕ್ಷಣ ಸಭೆ ಕರೆದು ಅಕ್ರಮ ಹಣ ವಸೂಲಿಯನ್ನು ತಡೆಯಲಾಗುವುದು ಹಾಗೂ ಹಿರಿಯತನದ ಆಧಾರದ ಮೇಲೆ ಕಬ್ಬು ಕಟಾವು ನಡೆಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯಲ್ಲಪ್ಪ ಮ್ಯಾಕೇರಿ, ಬಸವರಾಜ ಪಾಟೀಲ, ಜಗಲೆಪ್ಪ ಪೂಜಾರಿ, ಸಂತೋಷ ಮಾಲಿಪಾಟೀಲ, ಸಂಗಣ್ಣ ನಾರಶೇರ, ಬಸವರಾಜ ಗಾಣೂರ, ರಾಜುಗೌಡ ಬಿರಾದಾರ, ಅರ್ಜುನ ಕುಂಬಾರ, ಭೀಮನಗೌಡ, ಪುಂಡಲಿಕ ಸೋಲಾಪೂರ, ಸುರೇಶ್ ಪಾಟೀಲ, ಕಾಮಣ್ಣ ಹೂಗಾರ, ಕಾಮಣ್ಣಗೌಡ ಪಾಟೀಲ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.
ಕೋಗಿಲು ಕ್ರಾಸ್ಗೆ ಅಶೋಕ್ ಭೇಟಿ : ಮಹಿಳಾ ಒತ್ತುವರಿದಾರರ ಜೊತೆ ಮಾತುಕತೆ - ಬೆಚ್ಚಿ ಬೀಳಿಸುವ ಸತ್ಯ ಬಹಿರಂಗ!
Explosive facts of Kogilu Encroachment : ಮನೆ ಕಟ್ಟಿಕೊಡುವುದೇ ಮಾನದಂಡವಾದರೆ ಇನ್ನು ಮುಂದೆ ಸರ್ಕಾರ ಯಾವ ಮುಖ ಇಟ್ಟುಕೊಂಡು ಒತ್ತುವರಿ ತೆರವು ಮಾಡಲಿದೆ? ಬೆಂಗಳೂರಿನಲ್ಲಿ 40 ಕಡೆ 150-200 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ ಹೇಳಿದ್ದಾರೆ. ಅವರು ಕೋಗಿಲು ಕ್ರಾಸ್’ನಲ್ಲಿ ಅಕ್ರಮ ಒತ್ತುವಾರಿದಾರರ ಜೊತೆ ಸಂವಾದ ನಡೆಸಿದರು.
ಕುಂದಾಪುರ ಹೋಲಿ ರೊಜರಿ ಚರ್ಚಿನಲ್ಲಿ ಹೊಸ ವರ್ಷಾಚರಣೆ
ಕುಂದಾಪುರ, ಜ.1: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2025ರ ಸಂಜೆ ಹೊಸ ವರ್ಷ 2026ರ ಪ್ರಯುಕ್ತ ಕುಂದಾಪುರ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಹೊಸ ವರ್ಷವನ್ನು ಆಚರಿಸಲಾಯಿತು. ಬಲಿದಾನದ ನೇತೃತ್ವವನ್ನು ವಹಿಸಿಕೊಂಡ ತ್ರಾಸಿ ಡಾನ್ ಬಾಸ್ಕೊ ಸಂಸ್ಥೆಯ ಆಡಳಿತಗಾರ ಧರ್ಮಗುರು ವಂ.ಅರ್ನಾಲ್ಡ್ ಮಥಾಯಸ್, ನಮ್ಮ ಈ ಹೊಸ ವರ್ಷವನ್ನು ನಾವು ಮೇರಿ ಮಾತೆಗೆ ಸಮರ್ಪಿಸುತ್ತಿದ್ದೆವೆ. ಯೇಸು ಕ್ರಿಸ್ತರು ನಮಗೊಸ್ಕರ, ನಮ್ಮ ಮುಕ್ತಿಗೊಸ್ಕರ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದರು. ಅಂದರೆ ಯೇಸು ಕ್ರಿಸ್ತರು ದೈವತ್ಯ ಹಾಗೂ ಮನುಷತ್ವದ ಗುಣಗಳಿಂದ ವೀಶೆಷತ್ವವನ್ನು ಹೊಂದಿದವರಾಗಿದ್ದಾರೆ. ದೇವ ಪುತ್ರನಾದರೂ ಮಾತೆ ಮೇರಿಯ ಗರ್ಭದೊಳಗೆ ಮಾನವನಾಗಿ ಹುಟ್ಟಿದಕ್ಕೆ ಪವಿತ್ರ ಸಭೆಯು ಮೇರಿ ಮಾತೆ ಯೇಸುವಿನ ಮಾತೆ ಎಂದು ನಂಬುತ್ತದೆ. ಅದಕ್ಕಾಗಿ ಹೊಸ ವರ್ಷವನ್ನು ಮೇರಿ ಮಾತೆಗೆ ಸಮರ್ಪಿಸುತ್ತದೆ ಎಂದು ಸಂದೇಶ ನೀಡಿದರು. ಪ್ರಧಾನ ಧರ್ಮಗುರು ಅ.ವಂ.ಪೌಲ್ ರೇಗೊ ಹೊಸ ವರ್ಷದ ಶುಭಾಷಯಗಳನ್ನು ಕೋರಿ, ಮೇರಿ ಮಾತೆ ನಮಗೊಂದು ಆಶೀರ್ವಾದ, ಅದರಂತೆ ನಾವು ಇತರರಿಗೆ ಆಶೀರ್ವದಾಗಳಾಗೋಣ ಎಂದು ತಿಳಿಸಿ ವಂದಿಸಿದರು. ಈ ಸಂದರ್ಭದಲ್ಲಿ ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗ ಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.
ಶಿರ್ವ, ಜ.1: ಮೂಲತಃ ಮುದರಂಗಡಿ ಸಮೀಪದ ಸಾಂತೂರಿನವರಾದ ಇನ್ನಂಜೆ ಎಸ್.ವಿ.ಎಚ್.ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಸಂಸ್ಕೃತ ಪಂಡಿತರಾಗಿದ್ದ ಮುರಲೀಧರ ಭಟ್(85) ಗುರುವಾರ ವಯೋಸಹಜ ಕಾರಣದಿಂದ ಇನ್ನಂಜೆಯ ಸ್ವಗೃಹದಲ್ಲಿ ನಿಧನರಾದರು. ಇವರು ಉಂಡಾರು ಶ್ರಿ ವೀಷ್ಣುಮೂರ್ತಿ ದೇವಳದಲ್ಲಿ ವೈದಿಕರಾಗಿಯೂ ಸೇವೆ ಸಲ್ಲಿಸಿದ್ದು, ಜನಾನುರಾಗಿಯಾಗಿದ್ದರು. ಇವರು ಪತ್ನಿ ಅಹಲ್ಯಾ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ನಮ್ ಟೀಮ್ ಮಣಿಪಾಲ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ
ಮಣಿಪಾಲ, ಜ.1: ಮಣಿಪಾಲ ನಮ್ ಟೀಮ್ನ 23ನೇ ವಾರ್ಷಿಕೋತ್ಸವವನ್ನು ಸರಳಬೆಟ್ಟುವಿನ ಡಾ.ರಾಜಕುರ್ಮಾ ಮಾರ್ಗದಲ್ಲಿ ಡಿ.31ರಂದು ಕಾಂಗ್ರೆಸ್ನ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಹಾರ ಅರಸಿ ಬರುವ ಬೀಡಾಡಿ ದನಗಳಿಗೆ ನಿತ್ಯ ಆಹಾರ ನೀಡುತ್ತಿರುವ ತೀರ್ಥಳ್ಳಿ ಪುರಸಭಾ ಮಾಜಿ ಉಪಾಧ್ಯಕ್ಷ ಕೆ.ಆರ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಹಿರಿಯಡ್ಕ ಸುಧೀರ್ ಶೆಟ್ಟಿ, ಜಯದೀಪ್ ನಾಯಕ್, ಪರ್ಕಳ ನಮ್ ಟೀನ ಕಾರ್ಯಕ್ರಮ ಸಂಘಟಕ ಗಣೇಶ್ರಾಜ್ ಸರಳಬೆಟ್ಟು, ಸಿಸ್ಟರ್ ಜ್ಯೋತಿ ಗಣೇಶ ರಾಜ್, ರಾಜೇಶ್ ಪ್ರಭು ಪರ್ಕಳ. ಸುಜಾತ ವಿ.ಪುತ್ರನ್, ಸರಳಬೆಟ್ಟು ರಾಜಣ್ಣ, ರಾಣಿ, ಮೇರಿ ಸುಬ್ರಾಯ ಕಾಮತ್, ಮಂಜುಳಾ ನಾಯ್ಕ್, ದಿವ್ಯ ನಾಯ್ಕ್, ದಿನೇಶ್ ಹಾವಂಜೆ, ಹರೀಶ್ ಪೂಜಾರಿ ಕೀಳಂಜೆ ಮೊದಲಾದವರು ಉಪಸ್ಥಿತರಿದ್ದರು ಮಕ್ಕಳಿಗೆ ದಾನಿಗಳ ಸಹಕಾರದಿಂದ ನೋಟ್ ಬುಕ್ ಹಾಗೂ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ವಿವಿಧ ಆಟೋಟ ಸ್ಪರ್ಧೆ ನಂತರ ಹೊಸ ವರ್ಷ ಆಚರಿಸಲಾಯಿತು.
ಕಲಬುರಗಿ | ಭೀಮಾ ಕೊರೆಗಾಂವ್ ಸ್ವಾಭಿಮಾನಕ್ಕಾಗಿ ನಡೆದ ಯುದ್ಧ: ಡಾ.ಅಶೋಕ ದೊಡ್ಮನಿ
ಕಲಬುರಗಿ(ಯಡ್ರಾಮಿ): ದೇಶದ ಇತಿಹಾಸದಲ್ಲಿ ಹೆಣ್ಣು, ಹೊನ್ನು, ಮಣ್ಣು ಮತ್ತು ಸಾಮ್ರಾಜ್ಯಕ್ಕಾಗಿ ಯುದ್ಧ ನಡೆದರೆ, ಭೀಮಾ ಕೋರೆಗಾಂವ್ ಸ್ವಾಭಿಮಾನಕ್ಕಾಗಿ ನಡೆದ ಯುದ್ಧವಾಗಿದೆ ಎಂದು ಉಪನ್ಯಾಸಕ ಡಾ.ಅಶೋಕ ದೊಡ್ಮನಿ ಹೇಳಿದರು. ಇಜೇರಿ ಗ್ರಾಮದಲ್ಲಿ ಏರ್ಪಡಿಸಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ರುಕುಮ್ ಪಟೇಲ್ ಇಜೇರಿ, ಲಾಲಯ್ಯ ಗುತ್ತೇದಾರ, ಈರಣ್ಣ ಅವರಾದಿ, ಅಣ್ಣರಾಯ ಯಂಕಂಚಿ, ಅಮೀರ್ ಹಮೀಝ್ ಲಖನಾಪುರ, ಅಲ್ಲಪಟೇಲ್, ಈರಣ್ಣ ತಳವಾರ, ನಂದಕುಮಾರ್ ಪಿಡಿಒ, ಕಾಲಿದಮಿಯಾ, ದೇವು ಪೂಜಾರಿ, ಕಳ್ಳೆಪ್ಪಾ ಬೋವಿ, ಸೋಮನಾಳ , ಮಹಿಬೂಬ್ ಸೌದಗರ, ಸೈದಪ್ಪ ಶ್ರುತಿ, ಸೈದಪ್ಪ ಹೊಸಮನಿ, ನಿಂಗಣ್ಣ ಗುಳ್ಯಾಳ್, ಅಮೀನಪ್ಪ ಕಟ್ಟಿಮನಿ, ಸೈದಪ್ಪ ಮೂಡಬೂಳ, ಡಿಎಸ್ ಪಿ ಪ್ರಕಾಶ, ಸದಾಶಿವ ಹಳ್ಳಿಗಡ ಸೇರಿದಂತೆ ಇತರರು ಇದ್ದರು.
ಕೊರಗರ ಅಹೋರಾತ್ರಿ ಧರಣಿ: ಶಾಸಕ ಗುರ್ಮೆ ಭೇಟಿ
ಉಡುಪಿ, ಜ.1: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ವತಿಯಿಂದ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 18ನೇ ದಿನವಾದ ಗುರುವಾರವೂ ಮುಂದುವರೆದಿದೆ. ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ, ಧರಣಿನಿರತರ ಬೇಡಿಕೆಯ ಬಗ್ಗೆ ಚರ್ಚಿಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ ಹಾಗೂ ಇತರ ಮುಖಂಡರು ಹಾಜರಿದ್ದರು.
ಉಡುಪಿಯಲ್ಲಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಉಡುಪಿ, ಜ.1: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಇಂದು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋಟ, ಜಕಣಾಚಾರಿ ಅವರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿರುವುದು ಅವರ ಪ್ರತಿಭೆಗೆ ಸಿಕ್ಕಿರುವ ಮನ್ನಣೆಯಾಗಿದೆ. ಹಾಗೂ ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಸಾಕ್ಷಿಯಾಗಿದೆ ಎಂದರು. ಅಮರಶಿಲ್ಪಿ ಜಕಣಾಚಾರಿ ಹೊಯ್ಸಳ ಮತ್ತು ಕಲ್ಯಾಣ ಚಾಲುಕ್ಯ ಶೈಲಿಯ ಅದ್ಭುತ ದೇವಾಲಯಗಳನ್ನು ನಿರ್ಮಿಸಿದ ಶಿಲ್ಪಿ. ಬೇಲೂರು ಮತ್ತು ಹಳೇಬೀಡಿನ ಕೆತ್ತನೆಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ. ಭಾರತೀಯ ಕಲಾಕ್ಷೇತ್ರಕ್ಕೆ ಅವರು ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ಇವರು ನಿರ್ಮಿಸಿದ ದೇವಾಲಯಗಳು ಅತ್ಯಂತ ಸೂಕ್ಷ್ಮ ಮತ್ತು ನಾಜೂಕಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ ಎಂದರು. ಜಕಣಾಚಾರಿ ಅವರ ಶಿಲ್ಪಕಲೆ, ಕರಕುಶಲತೆ, ಅವರ ಐತಿಹಾಸಿಕ ವಿಚಾರಗಳು ಸಮಾಜಕ್ಕೆ ಆದರ್ಶವಾಗಿದ್ದು, ಮುಂದಿನ ಜನಾಂಗ ಇದನ್ನೆಲ್ಲ ಅರಿತುಕೊಳ್ಳಬೇಕು. ಜಕಣಾಚಾರಿಯವರ ಆದರ್ಶವನ್ನು ಇಟ್ಟುಕೊಂಡು ವಿಶ್ವಕರ್ಮ ಸಮಾಜ ತನ್ನ ಕುಸುರಿ ಕೆಲಸದ ಮೂಲಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದ ಅವರು, ನಶಿಸಿಹೋಗುತ್ತಿರುವ ಕಲೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕುಶಲಕರ್ಮಿಗಳಿಗೆ ಕೇಂದ್ರ ಸರಕಾರ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದೆ ಎಂದರು. ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಅಮರಶಿಲ್ಪ ಜಕಣಾಚಾರಿ ನಾಡಿನ ಶಿಲ್ಪಕಲೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುವುದರೊಂದಿಗೆ ಶಿಲ್ಪಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಅಮರಶಿಲ್ಪಕಾರರು ಹಲವು ಶತಮಾನದವರಿಗೂ ಅವಿಸ್ಮರಣೀಯರಾಗಿದ್ದಾರೆ ಎಂದರು. ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಜಕಣಾಚಾರಿ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶಿಲ್ಪಕಲೆಗೆ ತನ್ನದೇ ಆದ ವೈಶಿಷ್ಟವಿದೆ. ಶಿಲ್ಪಿಗಳು ಭಾವನಾತ್ಮಕವಾಗಿ ಕೆಲಸ ನಿರ್ವಹಿಸುವವರು. ನಾಡಿನ ಪರಂಪರೆ ಹಾಗೂ ಸಂಸ್ಕೃತಿ ವಿಜೃಂಭಿಸುವ ಗುಡಿ-ಗೋಪುರಗಳನ್ನು ನಿರ್ಮಿಸುವುದರೊಂದಿಗೆ, ತಮ್ಮ ಅಂತಃಕರಣಗಳಲ್ಲಿ ರೂಪುಗೊಂಡ ದೇವಾನುದೇವತೆಗಳ ರೂಪಗಳನ್ನು ಯಥಾವತ್ತಾಗಿ ಶಿಲ್ಪ, ಪ್ರತಿಮೆ, ವಿಗ್ರಹ, ಪುತ್ಥಳಿಗಳಲ್ಲಿ ಪಡಿಮೂಡಿಸುತ್ತಾರೆ. ವಿಶ್ವಕರ್ಮ ಪರಂಪರೆ ಪ್ರತಿಭಾ ಸಂಪನ್ನರ, ಸೃಜನಶೀಲರ, ಕ್ರಿಯಾಶೀಲರ ಹಾಗೂ ಜ್ಞಾನವಿಜ್ಞಾನಿಗಳ ಪರಂಪರೆಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಿಲ್ಪಿ ಕಾರ್ಕಳದ ಕೆ.ಸತೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ದ.ಕ ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಕುಂಜಿಬೆಟ್ಟು ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾಸಂಘದ ಉಪಾಧ್ಯಕ್ಷ ನಾಗರಾಜ್ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರೆ, ನಿವೃತ್ತ ತಹಶೀಲ್ದಾರ್ ಮುರುಳಿಧರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವಿರಾಟ್ ಕೊಹ್ಲಿ ಹೊಸ ವರ್ಷದ ಮೊದಲ ಪೋಸ್ಟ್; ಅಬ್ಬಬ್ಬಾ ಕೇವಲ ಐದೇ ಗಂಟೆಯಲ್ಲಿ ಸಿಕ್ಕ ಲೈಕ್ ಗಳೆಷ್ಟು ನೋಡಿ!
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲೂ ಸ್ಟಾರ್ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. 2025ರ ಕೊನೆಯಲ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಹಾಕಿದ್ದ ಪೋಸ್ಟ್ ಹಾಕಿದ ಒಂದು ಗಂಟೆಯೊಳಗಾಗಿ 40 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿತ್ತು. ಇದೀಗ ಜನವರಿ 1ರಂದು ಹೊಸವರ್ಷವನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಅವರ ಈ ಪೋಸ್ಟ್ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾ.ಹೆ.ಕಾಮಗಾರಿ| ಹಾನಿಗೊಂಡ ನೀರಿನ ಪೈಪ್ಲೈನ್ ದುರಸ್ಥಿ ಮಾಡಿ: ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕೋಟ ಸೂಚನೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಹಾನಿಗೊಂಡಿರುವ ಗ್ರಾಮಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರು ಸರಬರಾಜಿನ ಪೈಪ್ಲೈನ್ನ್ನು ದುರಸ್ತಿಗೊಳಿಸಿ, ಮರು ಅಳವಡಿಕೆ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆಯಲ್ಲಿ ಆದ ಸಮಸ್ಯೆಯ ಬಗ್ಗೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗಳನ್ನು ಕುಂದಾಪುರ ತಾಲೂಕಿನ ಕೋಟೇಶ್ವರ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಹಾಗೂ ಬ್ರಹ್ಮಾವರದ ಸಾಲಿಗ್ರಾಮ, ಕೋಟತಟ್ಟು, ಕೋಟ, ಮಣೂರು, ಪಾಂಡೇಶ್ವರ ಹಾಗೂ ಸಾಸ್ತಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿದ್ದು, ಈ ವೇಳೆ ವಿವಿಧ ಯೋಜನೆ ಯಡಿ ಅಳವಡಿಸಿರುವ ಸಾರ್ವಜನಿಕ ಕುಡಿಯುವ ನೀರು ಸರಬರಾಜಿನ ಪೈಪ್ಲೈನ್ಗಳು ಹಾನಿಗೊಂಡು ಸಾರ್ವಜನಿಕರ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆ. ಇವುಗಳ ದುರಸ್ತಿ ಕಾರ್ಯಗಳನ್ನು ಆದ್ಯತೆಯ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಬೇಕೆಂದು ಸೂಚಿಸಿದರು. ಅಗಲೀಕರಣ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿಯೂ ಪೈಪ್ಲೈನ್ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಅಲ್ಲದೇ ಪೈಪ್ಲೈನ್ಗಳು ರಸ್ತೆ ಕ್ಯಾರೇಜ್ ವೇ ಮಧ್ಯದಲ್ಲಿ ಬರುತ್ತಿರುವುದರಿಂದ ಪ್ರತ್ಯೇಕ ಪೈಪ್ಲೈನ್ ಅಳವಡಿಕೆ ಅವಶ್ಯಕತೆ ಇದೆ. ದುರಸ್ತಿ ಹಾಗೂ ಪ್ರತ್ಯೇಕ ಪೈಪ್ಲೈನ್ ಅಳವಡಿಕೆಗೆ ಗ್ರಾಮ ಪಂಚಾಯತ್ಗಳಲ್ಲಾಗಲಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅನುದಾನದ ಲಭ್ಯತೆ ಇಲ್ಲದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ದುರಸ್ತಿ ಸೇರಿದಂತೆ ಇತರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದವರು ನುಡಿದರು. ಹಾಲಿ ರಸ್ತೆ ಮಧ್ಯ ಭಾಗದಲ್ಲಿರುವ ಪೈಪ್ಲೈನ್ಗಳಿಗೆ ಬದಲಿಯಾಗಿ ಹೊಸದಾಗಿ ಪೈಪ್ಲೈನ್ ಕಾಮಗಾರಿಗಳನ್ನು ಸರ್ವಿಸ್ ರಸ್ತೆಯಲ್ಲಿ ಬಾಕಿ ಉಳಿದಿರುವ 2.5 ಮೀಟರ್ ಜಾಗದಲ್ಲಿ ಅಳವಡಿಸುವುದು ಸೂಕ್ತ ಎಂದು ಸಂಸದ ಕೋಟ ಹೇಳಿದರು. ಪ್ರಸ್ತುತ ದುರಸ್ತಿ ಸೇರಿದಂತೆ ಹೊಸ ಪೈಪ್ಲೈನ್ಗಳನ್ನು ಅಳವಡಿಸಲು ತಯಾರಿಸಿರುವ ಅಂದಾಜು ಪಟ್ಟಿಯ ವೆಚ್ಚ ಹೆಚ್ಚಿದ್ದು, ಈ ಬಗ್ಗೆ ಮರು ಪರಿಶೀಲಿಸಿ, ಸರಿಯಾದ ಅಂದಾಜು ವೆಚ್ಚ ತಯಾರಿಸಿ ನೀಡಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರಿಗೆ ತಿಳಿಸಿದ ಅವರು, ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೈಗೊಂಡ ನಿರ್ಣಯದ ನಡವಳಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಕಚೇರಿಗೆ ಕಳುಹಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಎ ಸುವರ್ಣ ಹಾಗೂ ಎ.ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮಿಷನರ್ ರಶ್ಮಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.
ಬಳ್ಳಾರಿ | ಗ್ರಾಮೀಣ ಸ್ವಚ್ಛತೆಯಲ್ಲಿ ಘನ ತಾಜ್ಯ ನಿರ್ವಹಣಾ ಸಿಬ್ಬಂದಿಯ ಪಾತ್ರ ಪ್ರಮುಖ : ಶಶಿಕಾಂತ ಶಿವಪೂರೆ
ಮೂರು ದಿನಗಳ ವಸತಿ ಸಹಿತ ತರಬೇತಿ ಕಾರ್ಯಗಾರ ಉದ್ಘಾಟನೆ
ಬಳ್ಳಾರಿ | ಅಮರಶಿಲ್ಪಿ ಜಕಣಾಚಾರಿಯ ಶಿಲ್ಪಕಲೆ ರಾಜ್ಯದ ಶ್ರೀಮಂತ ಪರಂಪರೆ : ಕೆ.ಇ. ಚಿದಾನಂದಪ್ಪ
ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ
Vijayapura | ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಗೆ ಸ್ವಾಮೀಜಿಯಿಂದ ಕಪಾಳಮೋಕ್ಷ; ವಿಡಿಯೋ ವೈರಲ್
ವಿಜಯಪುರ : ಕಳೆದ 106 ದಿನಗಳಿಂದ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ ಹುಣಶ್ಯಾಳದ ಸಂಗನಬಸವೇಶ್ವರ ಸ್ವಾಮೀಜಿ, ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಅಣಿಯಾಗುತ್ತಿದ್ದಂತೆ ಮುಗಳಖೋಡ ಮಠದ ಸಮೀಪ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಮುಂದಾದರು. ಆಗ ವಾಗ್ವಾದ ನಡೆದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸ್ವಾಮೀಜಿಯನ್ನು ಹಿಡಿಯಲು ಮುಂದಾದರು. ಇದರಿಂದಾಗಿ ಅಸಮಾಧಾನಗೊಂಡ ಸ್ವಾಮೀಜಿ ಅಧಿಕಾರಿಯ ಕಪಾಳಕ್ಕೆ ಬಾರಿಸಿದ ವಿಡಿಯೋ ಹರಿದಾಡುತ್ತಿದೆ. ಶ್ರೀಗಳ ಜೊತೆ ಪೊಲೀಸರು ಅಗೌರವ ತೋರಿರುವುದು ಸರಿಯಲ್ಲ ಎಂದು ಅನೇಕ ಪ್ರತಿಭಟನಾಕಾರರು ಪೊಲೀಸರ ಜೊತೆ ವಾಗ್ವಾದ ಸಹ ನಡೆಸಿದರು. ಆಗ ತಕ್ಷಣವೇ ಪೊಲೀಸರು ಅಲ್ಲಿದ್ದ ಎಲ್ಲ ಪ್ರತಿಭಟನಾಕಾರರನ್ನು ಪೊಲೀಸ್ ವ್ಯಾನ್ನಲ್ಲಿ ಹೊರ್ತಿಗೆ ಕರೆದುಕೊಂಡು ಹೋಗಿದ್ದಾರೆ.
ಬಸವಕಲ್ಯಾಣ | ಜೀವನಕ್ಕೆ ದಾರಿ ತೋರುವವನೇ ನಿಜವಾದ ಆದರ್ಶ ಶಿಕ್ಷಕ : ಸಿದ್ಧವೀರಯ್ಯ ರುದ್ನೂರ
ಮಿರಖಲ್ನಲ್ಲಿ ಶಿಕ್ಷಕ ರಮೇಶ ಘಾಳೆ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮ
ಬಾಯಿ ಸುಡಲಿದೆ ಸಿಗರೇಟ್! ಫೆ.1ರಿಂದ ತಂಬಾಕು ಉತ್ಪನ್ನಗಳ ಮೇಲೆ ಶೇ.40 ತೆರಿಗೆ, ಸೆಸ್ ಹೇರಿಕೆ
ನವದೆಹಲಿ:ಸಂಸತ್ನಲ್ಲಿ ಇತ್ತೀಚೆಗೆ ಅಂಗೀಕರಿಸಿದ ಬೆನ್ನಲ್ಲೆ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಗಳ ಮೇಲೆ ಹೊಸ ಸೆಸ್ ವಿಧಿಸಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ತೆರಿಗೆ ಹೆಚ್ಚಳವು ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಅಲ್ಲಿಂದ ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಬೆಲೆ ಮತ್ತಷ್ಟು ದುಬಾರಿ ಆಗಲಿದೆ. ಹೊಸ ವರ್ಷಕ್ಕೆ ತಂಬಾಕು ವ್ಯಸನಿಗಳಿಗೆ
ಜನವರಿ 6 ಕ್ಕೆ ಅರಸು ದಾಖಲೆ ಮುರಿಯಲಿರುವ ಸಿದ್ದರಾಮಯ್ಯ: ಸಿದ್ದು ದಾಖಲೆಗೆ ನಾಟಿಕೋಳಿ ಔತಣಕೂಟದ ಸಂಭ್ರಮ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 6ರಂದು ರಾಜ್ಯದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ದಿವಂಗತ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿ, ಹೊಸ ದಾಖಲೆ ಬರೆಯಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಬರೆಯಲಿದ್ದು, ಈ ವಿಶೇಷ ದಿನವನ್ನು ಆಚರಿಸಲು ಅಭಿಮಾನಿಗಳು ನಾಟಿಕೋಳಿ ಔತಣಕೂಟವನ್ನು ಏರ್ಪಡಿಸಿದ್ದಾರೆ. ಯುವ ಅಹಿಂದ
ಡಾ.ಅಂಬೇಡ್ಕರ್ ಸರ್ವ ಕಾಲಕ್ಕೂ ಪ್ರಸ್ತುತ : ಸಚಿವ ಸತೀಶ್ ಜಾರಕಿಹೊಳಿ
ಬೆಂವಿವಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ
ಬೀದರ್ | ಅಸಮಾನತೆ ವಿರುದ್ಧ ನಡೆದ ಯುದ್ಧವೇ ಭೀಮಾ ಕೋರೆಗಾಂವ್ ಯುದ್ಧ : ಮಹೇಶ್ ಗೋರನಾಳಕರ್
ಬೀದರ್ : ಅಸಮಾನತೆ ವಿರುದ್ಧ ನಡೆದ ಯುದ್ಧವೇ ಭೀಮಾ ಕೋರೆಗಾಂವ್ ಯುದ್ಧವಾಗಿದೆ ಎಂದು ʼಮನೆ ಮನೆಗೆ ಅಂಬೇಡ್ಕರ್ ಅಭಿಯಾನʼದ ಸಂಚಾಲಕ ಮಹೇಶ್ ಗೋರನಾಳಕರ್ ಅವರು ತಿಳಿಸಿದರು. ಗುರುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಮನೆ ಮನೆಗೆ ಅಂಬೇಡ್ಕರ್ ಅನುಷ್ಠಾನ ಸಮಿತಿ ಹಾಗೂ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಜರುಗಿದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜ.1ರ, 1818ರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧವು ಅಸಮಾನತೆಯ ವಿರುದ್ದ ನಡೆದ ಸ್ವಾಭಿಮಾನದ ಯುದ್ಧವಾಗಿದೆ. ಆ ಯುದ್ಧದಲ್ಲಿ 500 ಜನರ ದಲಿತರು 28 ಸಾವಿರ ಮೇಲ್ಜಾತಿಯ ಪೆಶ್ವೆಗಳನ್ನು ಸೋಲಿಸಿದ್ದರು. ಇಂತಹ ಸ್ವಾಭಿಮಾನದ ಐತಿಹಾಸಿಕ ಯುದ್ಧವನ್ನು ಮುಚ್ಚಿಡಲಾಗಿತ್ತು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶ ಮತ್ತು ವಿಶ್ವಕ್ಕೆ ಈ ಯುದ್ಧದ ಬಗ್ಗೆ ಪರಿಚಯಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಉಷಾಬಾಯಿ ಬನಸೂಡೆ ಮತ್ತು ಜ್ಞಾನೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ದಶರಥ್ ಗುರು ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಂದಮ್ಮಾ ಕುಂದೆ, ಸೊನಮ್ಮಾ ಕಸ್ತೂರೆ, ಶೆಶಿಕಲಾ ಕಾಂಬಳೆ, ಇಂದುಮತಿ ಸಾಗರ್, ನಿವೃತ್ತ ಪೋಲಿಸ್ ಅಧಿಕಾರಿ ಬಸವರಾಜ್ ಮೆತ್ರೆ, ಸಿದ್ರಾಮಪ್ಪಾ, ಅಂಬಾದಾಸ್ ಗಾಯಕವಾಡ್, ಮುಖೇಶ್ ರಾಯ್, ಪ್ರಮುಖರಾದ ಚಂದ್ರಕಾಂತ್ ನಿರಾಟೆ, ಅರುಣ ಪಟೇಲ್, ಜಗನಾಥ್ ಗಾಯಕವಾಡ್, ಗೋಪಾಲ್ ದೊಡ್ಡಿ, ಹರ್ಷಿತ್ ದಾಂಡೆಕರ್, ಜೈ ಭೀಮ್ ಮಿಠಾರೆ, ಸುಬ್ಬಣ್ಣ ಕರಕನಳ್ಳಿ, ಶರಣು ಫುಲೆ, ನವನಾಥ್ ವಂಟೆ, ಪ್ರಶಾಂತ್ ಭಾವಿಕಟ್ಟಿ, ರಾಜಶೇಖರ್ ಹಲಮಡಗೆ, ಶಿವರಾಜ್ ಅಮಲಾಪೂರ್, ನಾಗೇಶ್ ಸಾಗರ್, ಧನರಾಜ್, ಸತೀಶ್ ದಿನೆ, ಎಂ.ಡಿ ಅನ್ವರಶಾ, ಮುಹಮ್ಮದ್ ಖಾಲಿದ್, ಜಗನಾಥ್ ಮಹೇಂದ್ರ ನಗರ ಹಾಗೂ ಮಾರುತಿ ಚಿಟ್ಟಾ ಅಮಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಟನೆಗೂ ಸೈ ಎಂದ ಎ.ಆರ್. ರಹಮಾನ್; ಪ್ರಭುದೇವಾ ಜೊತೆ 'ಮೂನ್ ವಾಕ್' - 'ಕಾದಲನ್' ಜೋಡಿಯ ಮಾಡುತ್ತಾ ಕಮಾಲ್?
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಪ್ರಭುದೇವ ಅವರೊಂದಿಗೆ 'ಮೂನ್ವಾಕ್' ಚಿತ್ರದಲ್ಲಿ ನಟನೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯಭರಿತ ಮತ್ತು ಕೋಪದ ಯುವ ನಿರ್ದೇಶಕನ ಪಾತ್ರದಲ್ಲಿ ರೆಹಮಾನ್ ಅಭಿನಯಿಸಲಿದ್ದು, ಚಿತ್ರದ ಐದು ಹಾಡುಗಳಿಗೂ ಅವರೇ ಧ್ವನಿ ನೀಡಿದ್ದಾರೆ. ಮೇ 2026 ರಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಪ್ರಭುದೇವ 'ಬಬೂಟ್ಟಿ' ಎಂಬ ಯುವ ನೃತ್ಯ ಸಂಯೋಜಕರಾಗಿ ಅಭಿನಯಿಸಲಿದ್ದಾರೆ.
ಬೀದರ್ | ಟೇಬಲ್ ಟೆನಿಸ್ ಹಾಲ್ ಸೌಲಭ್ಯಗಳ ನವೀಕರಣಕ್ಕೆ ಮನವಿ
ಬೀದರ್ : ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಟೇಬಲ್ ಟೆನಿಸ್ ಹಾಲ್ನ ಮೂಲಸೌಕರ್ಯಗಳನ್ನು ನವೀಕರಿಸುವಂತೆ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಯುವ ಸೇವೆಗಳ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಮನವಿ ಪತ್ರದಲ್ಲಿ, ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಮಕ್ಕಳು ಹಾಗೂ ಯುವಕರ ಭಾಗವಹಿಸುವಿಕೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತರಬೇತಿ ಹಾಗೂ ಪಂದ್ಯಾವಳಿಗಳನ್ನು ಸುರಕ್ಷಿತ ಮತ್ತು ವೃತ್ತಿಪರ ರೀತಿಯಲ್ಲಿ ಆಯೋಜಿಸಲು ಅಗತ್ಯವಾದ ಮೂಲಸೌಕರ್ಯ ಒದಗಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ. ಹಾಲ್ನಲ್ಲಿ ಆಟಗಾರರಿಗೆ ಗಾಯಗಳಾಗದಂತೆ ಹಾಗೂ ಆಟದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ರಬ್ಬರ್ ಅಥವಾ ಮರದ ಕ್ರೀಡಾ ನೆಲಹಾಸು ಅಳವಡಿಕೆ, ಹಳೆಯದಾಗಿ ನಾಶಗೊಂಡಿರುವ ಟೇಬಲ್ ಟೆನಿಸ್ ಮೇಜುಗಳನ್ನು ತೆಗೆದು ಹೊಸ ಮೇಜುಗಳನ್ನು ಒದಗಿಸುವುದು, ಜೊತೆಗೆ ಆಟಗಾರರ ಸುರಕ್ಷತೆ ಮತ್ತು ಉತ್ತಮ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಮಿಂಚಿಲ್ಲದ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಬೀದರ್ ಜಿಲ್ಲೆಯ ಕ್ರೀಡಾಪಟುಗಳು ಸುರಕ್ಷಿತ ಹಾಗೂ ಮಾನದಂಡಗಳಿಗೆ ಅನುಗುಣವಾದ ಸೌಲಭ್ಯಗಳನ್ನು ಪಡೆಯುವಂತೆ ಈ ಮನವಿಯನ್ನು ತ್ವರಿತವಾಗಿ ಪರಿಗಣಿಸಬೇಕೆಂದು ಅಸೋಸಿಯೇಷನ್ ಕೋರಿದೆ. ಈ ಸಂದರ್ಭದಲ್ಲಿ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ರಾಜಶೇಖರ್ ಜವಳೆ, ಕಾರ್ಯದರ್ಶಿ ವಿರೇಶ್ ಎಸ್. ವಡ್ಡಿ ಹಾಗೂ ಅಸೋಸಿಯೇಷನ್ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ: ಸಲಹಾ ಸಮಿತಿ ರಚನೆಗೆ ಸರಕಾರ ಆದೇಶ
ಮಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಧೀನದಲ್ಲಿ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಸಲಹಾ ಸಮಿತಿಗಳನ್ನು ರಚಿಸಲು ಸರಕಾರ ಗುರುವಾರ ಮಂಜೂರಾತಿ ನೀಡಿ ಆದೇಶ ನೀಡಿದೆ. ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಎಜಾಸ್ ಪಾಷಾ ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ರಾಜ್ಯಾ ದ್ಯಂತ ಕ್ರಿಶ್ಚಿಯನ್ ಸಮದಾಯ ಅಭಿವೃದ್ಧಿಯ ಆನೇಕ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಚಟುವಟಿಕೆ ಗಳನ್ನು ಜಾರಿಗೆ ತರಲಾಗುತ್ತದೆ. ಈ ಯೋಜನೆಗಳ ರೂಪುರೇಷೆ ಸಿದ್ದಪಡಿಸುವುದು, ಫಲಾನುಭವಿಗಳ ಆಯ್ಕೆ ಹಾಗೂ ಪರಿಣಾಮಕಾರಿಯಾದ ಅನುಷ್ಠಾನಕ್ಕಾಗಿ ಸಮುದಾಯದ ಪ್ರತಿನಿಧಿಗಳ ನೇರ ಪಾಲ್ಗೊಳ್ಳುವಿಕೆ ಮತ್ತು ಮಾರ್ಗದರ್ಶನದ ಅಗತ್ಯವಿರುವುದರಿಂದ ರಾಜ್ಯ ,ಜಿಲ್ಲಾ , ಮತ್ತು ತಾಲೂಕು ಮಟ್ಟದ ಸಲಹಾ ಸಮಿತಿ ರಚನೆಯ ಬಗ್ಗೆ ಆ.21ರಂದು ನಡೆದ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದ ಸಭೆಯಲ್ಲಿ ನಿರ್ಧರಿಸಲಾ ಗಿತ್ತು. ಇದೀಗ ಸಲಹಾ ಸಮಿತಿ ರಚನೆಗೆ ಸರಕಾರ ಅನುಮತಿ ನೀಡಿದೆ. ವಿವರ ಇಂತಿವೆ:- *ರಾಜ್ಯ ಮಟ್ಟದ ಸಮಿತಿ: ರಾಜ್ಯ ಮಟ್ಟದ ಸಮಿತಿಗೆ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಕ್ರಿಚ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಮಟ್ಟದ ಸಮಿತಿ ಕಾರ್ಯದರ್ಶಿ/ ಸಂಚಾಲಕರಾಗಿರುತ್ತಾರೆ. ಎಲ್ಲ ಕ್ಯಾಥೊಲಿಕ್, ಸಿಎಸ್ಐ, ಮೆಥೋಡಿಸ್ಟ್ ಬಿಷಪ್ಗಳು(ಕರ್ನಾಟಕ) , ಕ್ರಿಚ್ಚಿಯನ್ ಚರ್ಚ್ ಮತ್ತು ಸಂಘಟನೆಗಳ ಒಕ್ಕೂಟ(ಎಫ್ಸಿಸಿಒ) , ಪಾಸ್ಟಾರ್ಸ್ ಫೆಲೋಶಿಪ್ ಪ್ರತಿನಿಧಿಗಳು, ಚರ್ಚ್ ರಿಲೀಜನ್ ಇಂಡಿಯಾ( ಸಿಆರ್ಐ) ಅಧ್ಯಕ್ಷರು ಮತ್ತು ಸಮುದಾಯದ ಶಿಕ್ಷಣ ತಜ್ಞರು, ಉದ್ಯಮಿಗಳು, ನಿವೃತ್ತ ಸರಕಾರಿ ಅಧಿಕಾರಿಗಳು, ಕಾನೂನು ತಜ್ಞರು, ವೈದ್ಯರು, ಸೇವಾನುಭವಿಗಳು, ರಾಜಕಾರಣಿಗಳು , ಕೈಗಾರಿಕೋದ್ಯಮಿಗಳು ಹಾಗೂ ಎನ್ಜಿಒ ಪ್ರತಿನಿಧಿ ಗಳು (ವಿವಿಧ ಕ್ಷೇತ್ರಗಳಿಂದ 5 ಮಂದಿ ಸದಸ್ಯರನ್ನು ಆಯ್ಕೆ ಮಾಡಬಹುದು). ಕೆಸಿಸಿಡಿಸಿಯ ದೂರದೃಷ್ಟಿ , ಧ್ಯೇಯ, ಗುರಿ, ನೀತಿಗಳು, ಯೋಜನೆಗಳ ರೂಪುರೇಷೆ, ಸಿದ್ದಪಡಿಸಲು ಸಹಕರಿಸುವು, ಚಾಲ್ತಿಯಲ್ಲಿರುವ ಯೋಜನೆಗಳ ಅನುಷ್ಠಾನ ಮಾರ್ಗಸೂಚಿಗಳನ್ನು ಪರಿಶೀಲಿಸುವುದು, ಯೋಜನೆಗಳನ್ನು ಬಲಪಡಿ ಸಲು ಹಾಗೂ ಪರಿಣಾಮಕಾರಿಯಾದ ಅಭಿವೃದ್ಧಿಗೆ ಶಿಫಾರಸುಗಳನ್ನು ನೀಡುವುದು, ರಾಜಕೀಯ ನಾಯಕರು ಮತ್ತು ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಸಾಧಿಸುವುದು ಹಾಗೂ ಆಧ್ಮಾತಿಕ ಹಾಗೂ ನೈತಿಕ ಮಾರ್ಗದರ್ಶನ ಒದಗಿಸುವುದು ರಾಜ್ಯ ಮಟ್ಟದ ಸಮಿತಿಯ ಜವಾಬ್ದಾರಿಯಾಗಿರುತ್ತದೆ. *ಜಿಲ್ಲಾ ಮಟ್ಟದ ಸಮಿತಿ: ಜಿಲ್ಲಾಧಿಕಾರಿ ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಕ್ಯಾಥೊಲಿಕ್ ಸಿಎಸ್ಐ, ಮೆಥೋಡಿಸ್ಟ್ ಬಿಷಪ್ಗಳು ಅಥವಾ ಅವರ ಪ್ರತಿನಿಧಿಗಳು, ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಅಥವಾ ಪ್ರತಿನಿಧಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಎಫ್ಸಿಸಿಒ ಜಿಲ್ಲಾ ಪ್ರತಿನಿಧಿಗಳು, ಪಾಸ್ಟಾರ್ಸ್ ಫೆಲೋಶಿಪ್ ಪ್ರತಿನಿಧಿಗಳು, ಸಿಆರ್ಐ ವಲಯಾಧ್ಯಕ್ಷರು ಅಥವಾ ಕಾರ್ಯದರ್ಶಿಗಳು , ಮತ್ತು ಸಮುದಾಯದ ಶಿಕ್ಷಣ ತಜ್ಞರು, ಉದ್ಯಮಿಗಳು, ನಿವೃತ್ತ ಆಡಳಿತ ಅಧಿಕಾರಿಗಳು, ಕಾನೂನು ತಜ್ಞರು, ವೈದ್ಯರು, ಸೇವಾನುಭವಿಗಳು, ರಾಜಕಾರಣಿಗಳು , ಕೈಗಾರಿಕೋದ್ಯಮಿಗಳು ಹಾಗೂ ಎನ್ಜಿಒ ಪ್ರತಿನಿಧಿಗಳು (ವಿವಿಧ ಕ್ಷೇತ್ರಗಳಿಂದ 5 ಮಂದಿ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ). *ತಾಲೂಕು ಮಟ್ಟದ ಸಮಿತಿ: ತಾಲೂಕು ತಹಶೀಲ್ದಾರ್ ಅಧ್ಯಕ್ಷರು, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾ ಅಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಸದಸ್ಯರಾಗಿ ಕ್ಯಾಥೊಲಿಕ್ ಸಿಎಸ್ಐ ಹಾಗೂ ಮೆಥೋಡಿಸ್ಟ್ ಬಿಷಪ್ಗಳ ಪ್ರತಿನಿಧಿಗಳು, ಎಫ್ಸಿಸಿಒ ತಾಲೂಕು ಪ್ರತಿನಿಧಿ, ಪಾಸ್ಟಾರ್ಸ್ ಫೆಲೋಶಿಪ್ ಪ್ರತಿನಿಧಿ ಗಳು, ಸಿಆರ್ಐ ತಾಲೂಕು ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ಮತ್ತು ಸಮುದಾಯದ ಶಿಕ್ಷಣ ತಜ್ಞರು, ಉದ್ಯಮಿಗಳು, ಕಾನೂನು ತಜ್ಞರು, ವೈದ್ಯರು, ಸೇವಾನುಭವಿಗಳು, ರಾಜಕಾರಣಿಗಳು , ಕೈಗಾರಿಕೋದ್ಯಮಿಗಳು ಹಾಗೂ ಎನ್ಜಿಒ ಪ್ರತಿನಿಧಿಗಳು (ವಿವಿಧ ಕ್ಷೇತ್ರಗಳಿಂದ 5 ಮಂದಿ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬಹುದು).
ಉಳ್ಳಾಲದಲ್ಲಿ ಎಪಿ ಉಸ್ತಾದ್ರ ಕೇರಳ ಯಾತ್ರೆಗೆ ಚಾಲನೆ
ಉಳ್ಳಾಲ: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕು, ಮಾನವೀಯ ಮೌಲ್ಯಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕೇರಳ ಯಾತ್ರೆ ಆರಂಭಿಸಲಾಗಿದೆ ಮನುಷ್ಯ ರೊಂದಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಯಾತ್ರೆ ನಡೆಯಲಿದೆ. ತಾಜುಲ್ ಉಲಮಾ ಉಳ್ಳಾಲ ತಂಙಳ್ ಶಿಕ್ಷಣ ಕೈ ಒತ್ತು ನೀಡಿದ್ದರು. ಅದನ್ನು ಉಳಿಸುವ ಕಾರ್ಯ ನಮ್ಮಿಂದ ಆಗಬೇಕು ಎಂದು ಉಳ್ಳಾಲ ಸಂಯುಕ್ತ ಖಾಝಿ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ಮನುಷ್ಯರೊಂದಿಗೆ ಎಂಬ ಧ್ಯೇಯವಾಕ್ಯದಲ್ಲಿ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆಯೋಜಿಸಿರುವ ಕೇರಳ ಯಾತ್ರೆಗೆ ಗುರುವಾರ ಮಧ್ಯಾಹ್ನ ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಚಾಲನೆ ನೀಡಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಮನುಷ್ಯತ್ವ ಉಳಿಯಬೇಕು.ಅರಾಜಕತೆ,ಅಧರ್ಮ ನಮಗೆ ಬೇಡ.ಇದನ್ನು ಅಳಿಸಿ ಜನರು ಸನ್ಮಾರ್ಗದಲ್ಲಿ ನಡೆಯಬೇಕು.ಐಕ್ಯತೆ ಬೆಳೆಯಬೇಕು ಎಂದು ಕರೆ ನೀಡಿದರು. ಅಸಯ್ಯಿದ್ ಇಬ್ರಾಹೀಮ್ ಖಲೀಲ್ ತಂಙಳ್ ಕಡಲುಂಡಿ ಮಾತನಾಡಿ, ಎ.ಪಿ. ಉಸ್ತಾದ್ ಅವರ ನೇತೃತ್ವದಲ್ಲಿ ಇಂದು ನಡೆಯುವುದು ಮೂರನೇ ಯಾತ್ರೆ ಆಗಿದೆ. ಮನುಷ್ಯರೊಂದಿಗೆ ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡು ಈ ಯಾತ್ರೆ ಆರಂಭಗೊಂಡಿದ್ದು, ಚೆರ್ಕಳ ದಲ್ಲಿ ಉದ್ಘಾಟನೆ ನಡೆಯಲಿದೆ. ಜ16 ರಂದು ತಿರುವನಂತಪುರಂ ನಲ್ಲಿ ಸಮಾಪ್ತಿ ಗೊಳ್ಳಲಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಸ್ಪೀಕರ್ ಯುಟಿ ಖಾದರ್ ಮಾತನಾಡಿ, ಈ ಕೇರಳ ಯಾತ್ರೆ ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಂಡಿದ್ದು, ಉಳ್ಳಾಲ ದರ್ಗಾ ಕರ್ನಾಟಕ ಮತ್ತು ಕೇರಳ ಕ್ಕೆ ಸೌಹಾರ್ದಕೊಂಡಿಯಾಗಿ ಬೆಳೆಯ ಲಿದೆ. ಮನುಷ್ಯತ್ವ ಉಳಿಸುವ ನಿಟ್ಟಿನಲ್ಲಿ ನಡೆಯುವ ಈ ಯಾತ್ರೆ ಯಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದರು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮ ದಲ್ಲಿ ಸಯ್ಯಿದ್ ಆಟಕೋಯ ತಂಙಳ್ ಕುಂಬೋಲ್ , ರಈಸುಲ್ ಉಲಮಾ ಇ. ಸುಲೈಮಾನ್ ಉಸ್ತಾದ್, ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ ಊದ್ ತಂಙಳ್, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಅಶ್ರಫ್ ತಂಙಳ್ ಆದೂರು, ಡಾ.ಹಕೀಮ್ ಅಝ್ಹರಿ, ಹೈದರ್ ಪರ್ತಿಪ್ಪಾಡಿ, ಅತ್ತಾವುಲ್ಲ ತಂಙಳ್ ಉದ್ಯಾವರ, ಯುಟಿ ಇಫ್ತಿಕಾರ್, ಯೆನೆಪೋಯ ಕುಲಪತಿ ಅಬ್ದುಲ್ಲಾ ಕುಂಞಿ ಹಾಜಿ, ಮಂಜೇಶ್ವರ ಶಾಸಕ ಅಶ್ರಫ್, ಸಿದ್ದೀಕ್ ಮೋಂಟುಗೋಳಿ, ಎಸ್ ಎಂ ರಶೀದ್ ಹಾಜಿ, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ಯು.ಎಸ್. ಹಂಝ ಹಾಜಿ,ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ , ಕೋಶಾಧಿಕಾರಿ ನಾಝಿಮ್ ರಹ್ಮಾನ್, ಕಾರ್ಯದರ್ಶಿ ಮುಹಮ್ಮದ್ ಇಸಾಕ್, ಮುಸ್ತಫಾ ಮದನಿ ನಗರ , ಅಬ್ಬಾಸ್ ಕೋಟೆಪುರ, ಮುಸ್ತಫಾ ಅಬ್ದುಲ್ಲಾ, ಅಲ್ತಾಫ್ ಹಳೆಕೋಟೆ, ಹಮೀದ್ ಬಸ್ತಿಪಡ್ಪು, ಆಸೀಫ್ ಅಳೇಕಲ ಹಮೀದ್ ಪೇಟೆ, ಎಸ್ ಕೆ ಖಾದರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಕನಕಗಿರಿ | ಭೀಮ ಕೋರೆಂಗಾವ್ ಯುದ್ದ ದಲಿತರ ಸ್ವಾಭಿಮಾನಕ್ಕಾಗಿ ರಕ್ತ ಹರಿಸಿದ ಸುದಿನವಾಗಿದೆ : ಅರಳಿಗನೂರು
ಕನಕಗಿರಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ 208ನೇ ಭೀಮ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಗುರುವಾರ ಆಚರಿಸಲಾಯಿತು. ದಲಿತ ಮುಖಂಡ ಪ್ರಗತಿಪರ ಹೋರಾಟಗಾರ ಪಾಮಣ್ಣ ಅರಳಿಗನೂರು ಮಾತನಾಡಿ, ಭೀಮಕೋರೆಂಗಾವ್ ಯುದ್ದ ದಲಿತರ ಸ್ವಾಭಿಮಾನಕ್ಕಾಗಿ ರಕ್ತ ಹರಿಸಿದ ಸುದಿನವಾಗಿದೆ. ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಅಸ್ಪೃಶ್ಯತೆ, ಮೂಡನಂಬಿಕೆಗಳ ವಿರುದ್ದ ಹೋರಾಡಿ ವಿಜಯ ಸಾಧಿಸಿದ ವಿಜಯದ ದಿನ ಭೀಮಕೋರೆಂಗಾವ್ ಯುದ್ದವಾಗಿದೆ ಎಂದರು. ಪಟ್ಟಣ ಪಂಚಾಯತ್ ಹಂಗಾಮಿ ಅಧ್ಯಕ್ಷ ಕಂಠಿ ರಂಗ ನಾಯಕ, ಸದಸ್ಯರಾದ ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡ, ತಹಶೀಲ್ದಾರ್ ವಿಶ್ವನಾಥ ಮುರುಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ದಲಿತ ಮುಖಂಡರಾದ ಲಿಂಗಪ್ಪ ಪೂಜಾರ, ನಾಗೇಶ ಪೂಜಾರ, ನೀಲಕಂಠ ಬಡಿಗೇರ್, ಯುವ ಮುಂದಾಳು ಅನ್ನು ಚಳ್ಳಮರದ್ ಇದ್ದರು.
ಕೊಪ್ಪಳ | ಹಾಲವರ್ತಿಯಲ್ಲಿ ಗ್ರಾಮ ಪಂಚಾಯತ್ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಗ್ರಾಮ ಸಭೆ
ಗಾಂಧಿಜೀಯವರ ಕನಸಿನ ಗ್ರಾಮ ಸ್ವರಾಜ್ಯ ಮಾಡಲು ಎಲ್ಲರೂ ಶ್ರಮಿಸಬೇಕಿದೆ : ಡಿ.ಆರ್.ಪಾಟೀಲ
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ
ಬೈಂದೂರು, ಜ.1: ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ, ಸಮೃದ್ಧ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ಲಯನ್ಸ್ ಕ್ಲಬ್ ಉಪ್ಪುಂದ, ಜೋಗಿ ಮನೆ ಟ್ರಸ್ಟ್ ಹಳೆಗೇರಿ, ಸರಕಾರಿ ಪ್ರೌಢ ಶಾಲೆ ಕಿರಿಮಂಜೇಶ್ವರ ಇವುಗಳ ಸಹಯೋಗದೊಂದಿಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ ‘ಪ್ರೇರಣಾ -2025’ ಕಾರ್ಯಕ್ರಮವನ್ನು ಕಿರಿಮಂಜೇಶ್ವರ ಸರಕಾರಿ ಪ್ರೌಢಶಾಲೆ ಯಲ್ಲಿ ಇತ್ತೀಚಿಗೆ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಖಾರ್ವಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಅನಿತಾ ಎಂ., ಜೋಗಿ ಮನೆ ಟ್ರಸ್ಟ್ನ ವಸಂತ ಜೋಗಿ, ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಅಧ್ಯಕ್ಷ ಅಬ್ದುಲ್ ಮುನಾಫ್, ಸೀನಿಯರ್ ಚೇಂಬರ್ನ ರಾಷ್ಟ್ರೀಯ ನಿರ್ದೇಶಕೆ ಹುಸೇನ್ ಹೈಕಾಡಿ, ಎಸ್ಡಿಎಂಸಿ ಅಧ್ಯಕ್ಷ ಭಾಸ್ಕರ್ ಖಾರ್ವಿ, ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಲಯನ್ಸ್ ಸುಂದರ ಕೋಟಾರಿ, ರಹಿಮಾನ್, ಕರಾಮಾತುಲ್ಲ, ಮಂಜುನಾಥ್ ನಾಯಕ್, ಸಂಪನ್ಮೂಲ ವ್ಯಕ್ತಿಯಾಗಿ ಸರೋಜ ಉಪಸ್ಥಿತರಿದ್ದರು. ಅಕಾಡೆಮಿ ಆಫ್ ಪರ್ಸನಾಲಿಟಿ ಎಕ್ಸೆಲೆನ್ಸ್ ತರಬೇತುದಾರ ಕೆ.ಕೆ. ಶಿವರಾಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಮುಖ್ಯ ಶಿಕ್ಷಕ ಮಂಜು ಎಂ.ಪೂಜಾರಿ ಸ್ವಾಗತಿಸಿ ವಂದಿಸಿದರು, ಸುಮಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ | ಸವಾಲುಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳಿ : ವಿದ್ಯಾರ್ಥಿಗಳಿಗೆ ತೃಪ್ತಿ ಎಸ್.ಲಾಖೆ ಕರೆ
ಕಲಬುರಗಿ: ವಿದ್ಯಾರ್ಥಿಗಳು ಬದುಕಿನಲ್ಲಿ ಬರುವ ಅನೇಕ ಸವಾಲು ಹಾಗೂ ತಿರುವುಗಳನ್ನು ಧೈರ್ಯದಿಂದ ಎದುರಿಸಿ ಸಫಲರಾಗಬೇಕು ಎಂದು ಕಲಬುರಗಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ತೃಪ್ತಿ ಎಸ್.ಲಾಖೆ ಕರೆ ನೀಡಿದರು. ನಗರದ ಬಸವ ಮಂಟಪದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಕಲಬುರಗಿ ಘಟಕದಿಂದ ಆಯೋಜಿಸಲಾಗಿದ್ದ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಬರುವ ಕಷ್ಟ ನಷ್ಟಗಳಿಗೆ ಹೆದರಬಾರದು. ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಸೋಲು ಒಪ್ಪಿಕೊಳ್ಳದೆ ಮುನ್ನಡೆಯಬೇಕು ಎಂದರು. ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ-ಸಾಹಿತಿ ಡಾ.ಶಿವರಂಜನ ಸತ್ಯಂಪೇಟೆ ಮಾತನಾಡಿ, ಬದುಕು ಹಾಗೂ ಭವಿಷ್ಯಕ್ಕೆ ಗುರಿ ಮುಖ್ಯ. ಆ ಗುರಿ ಗಾಳಿಗೆ ಚಲಿಸುವ ಮೋಡಗಳಂತಾಗಬಾರದು. ಅದು ನಿರ್ಧಿಷ್ಟವಾಗಿ, ನಿಖರವಾಗಿ ಚಲಿಸುವ ಮಶಿನ್ ಗನ್ ರೀತಿಯಲ್ಲಿ ಇರಬೇಕು. ನಮ್ಮಲ್ಲಿರುವ ಆಸ್ತಿ, ಐಶ್ವರ್ಯವನ್ನು ಯಾರಾದರೂ ಕಸಿದುಕೊಳ್ಳಬಹುದು. ಆದರೆ ಜ್ಞಾನವನ್ನು ಮಾತ್ರ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿದ್ದ ಕಲಬುರಗಿ ಮಹಾನಗರ ಪಾಲಿಕೆ ವಲಯ ಕಚೇರಿ-1 ಆಯುಕ್ತ ಗೌತಮ ಕಾಂಬಳೆ, ಹಿರಿಯ ವಕೀಲ ಸೈಯದ್ ಮಜರ್ ಹುಸೇನ್, ಕೋಲಿ ಸಮಾಜದ ಮುಖಂಡ ಹುಲಿಗೆಪ್ಪ ಕನಕಗಿರಿ, ವಸತಿ ನಿಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಧರ ಕಾಂಬಳೆ ಅವರು ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ವೇದಿಕೆಯಲ್ಲಿದ್ದರು. ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕೆ. ಜವಳಿ ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಸುನಿಲ್ ಮಾನಪಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರವಣಕುಮಾರ ಮೋಸಲಗಿ, ಮೈಲಾರಿ ದೊಡ್ಡಮನಿ, ಭಗವಂತ ವಗ್ಗೆ, ಮಂಜುನಾಥ ಗಂಗಕರ್, ಮಲ್ಲಿಕಾರ್ಜುನ ಬೋಳಣಿ, ಕಾಶಿನಾಥ ಸಿಂಧೆ, ಆಕಾಶ ನಂದಾ ಇತರರು ಭಾಗವಹಿಸಿದ್ದರು. ಇದೇ ವೇಳೆಯಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು.
ಜ.9-11ರವರೆಗೆ ಕಟಪಾಡಿ ದರ್ಗಾ ಉರೂಸ್
ಕಟಪಾಡಿ, ಜ.1: ಇತಿಹಾಸ ಪ್ರಸಿದ್ಧ ಕಟಪಾಡಿಯ ಜುಮ್ಮಾ ಮಸಿದಿ ಸಮೀಪ ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟಪಾಡಿ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾ ದರ್ಗಾದ ವಾರ್ಷಿಕ ಉರೂಸ್ ಯಾನೆ ಝಿಯಾರತ್ ಕಾರ್ಯಕ್ರಮವು ಜ.9ರಿಂದ ಜ.11ರವರೆಗೆ ನಡೆಯಲಿದೆ. ಜ.9ರರಂದು ಇಶಾ ನಮಾಝಿನ ಬಳಿಕ ಕಾರ್ಯಕ್ರಮವನ್ನು ಮಲ್ಲಾರು ಖದೀಮ್ ಜಮಾ ಮಸಿದಿ ಇಮಾಂ ಧರ್ಮಗುರು ಮೌಲಾನಾ ಮುಫ್ತಿ ಹಾಫಿಝ್ ಮಹ್ಬೂಬ್ ಅಲಿಖಾನ್ ಉದ್ಘಾಟಿಸಲಿದ್ದಾರೆ. ತೈಬಾ ಗಾರ್ಡನ್ ಬಂಗ್ಲಗುಡ್ಡೆಯ ಉಸ್ತಾದ್ ಶರೀಫ್ ಸಅದಿ ಕಿಲ್ಲೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜ.10ರಂದು ಮಗ್ರಿಬ್ ನಮಾಝಿನ ಬಳಿಕ ಸಂದಲ್ ಮೆರವಣಿಗೆ ಜರಗಲಿದೆ. ಇಶಾ ನಮಾಝಿನ ಬಳಿಕ ಜಲಾಲಿಯ್ಯ ಮಜ್ಲಿಸ್, ಬುರ್ದಾ ಆಲಾಪನೆ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಇದರ ನೇತೃತ್ವವನ್ನು ಅಸ್ಸಯ್ಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ವಸಲಿದ್ದಾರೆ. ಜ.11ರಂದು ಬೆಳಿಗ್ಗೆ ಮೌಲೂದ್ ಪಾರಾಯಣ ನಡೆಯ ಲಿದ್ದು, ನಂತರ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ವರ್ಷವೇ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಪಾಲಿಕೆಗಳು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2025ರ ವರ್ಷದಲ್ಲಿ ನಾವು ಉತ್ತಮ ಆಡಳಿತ ನೀಡಿದ್ದೇವೆ. ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಟೆಕ್ ಸಮ್ಮೇಳನ ಮೂಲಕ ನಾವು ಕರ್ನಾಟಕವನ್ನು ಮುನ್ನಡೆಸಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದರು. ನೀರಾವರಿ ಇಲಾಖೆಯಲ್ಲಿ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ತುಂಗಾಭದ್ರ ಯೋಜನೆಯಲ್ಲಿ ನಾವು ಕೈಗೊಂಡ ತೀರ್ಮಾನ, ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಇಟ್ಟಿದ್ದಾರೆ, ಇದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಅವರ ನಂಬಿಕೆ ಉಳಿಸಿಕೊಳ್ಳಲು, ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ನನ್ನ 35 ವರ್ಷಗಳ ರಾಜಕಾರಣದಲ್ಲಿ ಬೆಂಗಳೂರಿಗೆ ಇಷ್ಟು ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ. ಪ್ರಧಾನಮಂತ್ರಿಗಳು ಬೆಂಗಳೂರಿಗೆ ಬಂದಾಗ ಈ ನಗರವನ್ನು ಕೊಂಡಾಡಿದರು. ಅವರು ನಮ್ಮ ನಗರಕ್ಕೆ ಅನುದಾನ ನೀಡದಿದ್ದರೂ ನಾವು ಈ ನಗರಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು. ಗೃಹ ಇಲಾಖೆ ಭದ್ರತೆಯಿಂದ ಬೆಂಗಳೂರಿನಲ್ಲಿ ಜನ 2025ಕ್ಕೆ ಬೀಳ್ಕೊಡುಗೆ ನೀಡಿ, 2026ರ ವರ್ಷವನ್ನು ಸ್ವಾಗತಿಸಿದೆ. ಎಲ್ಲೂ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡ ಗೃಹ ಸಚಿವ ಪರಮೇಶ್ವರ್ ಅವರ ನೇತೃತ್ವದ ಇಡೀ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಕಲಬುರಗಿಯ ವಿವಿಧೆಡೆ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ
ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲಾದ್ಯಂತ ವಿವಿಧ ತಾಲೂಕು, ಹೋಬಳಿಗಳಲ್ಲಿ 208ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಯಿತು. ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ವಿವಿಧ ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಇದೇ ಆವರಣದಲ್ಲಿರುವ ಭೀಮಾ ಕೋರೆಗಾಂವ್ ಸ್ಮಾರಕಕ್ಕೆ ವಿವಿಧ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಭೀಮ್ ಆರ್ಮಿ, ದಲಿತ ಸಂಘರ್ಷ ಸಮಿತಿ, ಮಾದಿಗ ಸಮುದಾಯದ ಒಕ್ಕೂಟದ ಸಂಘಟನೆಗಳು ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಪ್ರಮುಖ ಮುಖಂಡರು ಅನ್ನ ಸಂತರ್ಪಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಭೀಮಾ ಕೋರೆಗಾಂವ್ ಉತ್ಸವ ಸಮಿತಿಯ ಅಧ್ಯಕ್ಷ ಭೀಮಾ ವಿಶಾಲ ನವರಂಗ, ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್ ಸಂಘಟನೆಯ ರಾಜ್ಯಾಧ್ಯಕ್ಷ ಮುಖಂಡ ಎಸ್.ಎಸ್.ತಾವಡೆ, ದೇವೇಂದ್ರ ಸಿನ್ನೂರ್, ಕಿಶೋರ ಗಾಯಕವಾಡ, ನಾಗರಾಜ ಗಾಯಕವಾಡ, ಮಾದಿಗ ಸಮುದಾಯದ ಮುಖಂಡ ದಶರಥ ಕಲಗುರ್ತಿ, ಮಲ್ಲಿಕಾರ್ಜುನ ಜೀನಕೇರಿ, ಮಲ್ಲಿಕಾರ್ಜುನ್ ದೊಡ್ಮನಿ, ಬಂಡೇಶ್ ರತ್ನಡಗಿ, ಸಚಿನ್ ಕಟ್ಟಿಮನಿ, ಮಲ್ಲಿಕಾರ್ಜುನ್ ಸರಡಗಿ, ಪ್ರಕಾಶ್ ಗುಲ್ಲವಾಡಿ, ಶಿವರಾಜ್ ಬೆಳಗುಂದಿ, ದತ್ತು ಹಯ್ಯಳ್ಕರ್, ಕೃಷ್ಣ ತಂಗಡಗಿ, ಚಂದಪ್ಪ ಕಟ್ಟಿಮನಿ, ಅಮೃತ್ ಕೊರಳ್ಳಿ, ದತ್ತು ಶಿವರುದ್ರ, ಪ್ರೇಮ್ ರನ್, ಶಿವಶಂಕರ್ ಬಂದರವಾಡ, ಅಮೃತ್ ಕೊರಳಿ, ದೇವು ವಾಲಿಕರ್, ಅರ್ಜುನ್ ಎನ್.ಕೆ., ಮಹೇಶ್ ಕರ್ಕಳ್ಳಿ, ಪ್ರದೀಪ್ ಬಾಚನಳ್ಕರ್, ದತ್ತು ಕರ್ಕಳ್ಳಿ, ಶಿವಶಂಕರ ದೊಡ್ಡಮನಿ, ಶರಣ ಅಮೃತ ಕೋರಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ನಗರದ ಜಗತ್ ವೃತ್ತ, ಹೀರಾಪುರ ಕ್ರಾಸ್ ವೃತ್ತ, ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಡಾ.ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಆವರಣದಲ್ಲಿ ವಿದ್ಯುತ್ ದೀಪ ಹಾಗೂ ಪುಷ್ಪಾಲಂಕಾರದಿಂದ ಆಕರ್ಷಿಸಿದವು.
‘ಫ್ಲೈಯಿಂಗ್ ಸಾಸರ್' ಅಲ್ಲ ‘ಫ್ಲೈಯಿಂಗ್ ಬುಲ್ಡಾಗ್’!
ದಟ್ಟಾರಣ್ಯದಲ್ಲಿ ನೆಲೆಸಿರುವ ಈ ಹಾರುವ ಬುಲ್ಡಾಗ್ ಗೊತ್ತೆ?
ಕಲಬುರಗಿ | ಜಿಲ್ಲಾಡಳಿತದಿಂದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ
ಕಲಬುರಗಿ: ಭಾರತ ಸೇರಿದಂತೆ ಹಾಗೂ ವಿಶ್ವದ ವಿವಿಧ ಕಡೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿದೆ. ಶಿಲ್ಪಕಲೆಗೆ ಅವರು ನೀಡಿರುವ ಬೇಲೂರು, ಹಳೇಬಿಡು, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆಗಳೆ ಸಾಕ್ಷಿ ಎಂದು ಬೀದರ್ ಬಿ.ವಿ.ಬಿ. ಕಾಲೇಜಿನ ಉಪನ್ಯಾಸಕ ಡಾ.ಚಿದಾನಂದ ಮೋನಪ್ಪ ಸುತಾರ ಹೇಳಿದರು. ಗುರುವಾರದಂದು ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ 2026ರ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಅಂಗವಾಗಿ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ನಶಿಸಿಹೋಗುತ್ತಿರುವ ವಿಶ್ವಕರ್ಮದ ಕುಲಕಸುಬುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳಸಿ ಮುಂದುವರಿಸಲು ಎಲ್ಲರೂ ಪ್ರಯತ್ನ ಮಾಡಬೇಕೆಂದು ಅವರು ಕರೆ ನೀಡಿದರು. ಅಮರಶಿಲ್ಪಿ 12ನೇ ಶತಮಾನದಲ್ಲಿ ವಿಷ್ಣುವರ್ಧನ ಆಸ್ಥಾನದಲ್ಲಿ ಶ್ರೇಷ್ಠ ಶಿಲ್ಪಿಗಳಾಗಿದ್ದರು. ಜಗತ್ತಿನ ಅದ್ಭುತ ಶಿಲ್ಪಗಳ ಸಾಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದು ನಮ್ಮ ಸೌಭಾಗ್ಯ. ಮಾಡುವ ಕೆಲಸ ಬಗ್ಗೆ ತಿಳುವಳಿಕೆ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಲಭಿಸುತ್ತದೆ ಎಂದರು. ಸುಲೇಪೇಟ್ ವಿಶ್ವಕರ್ಮ ಏಕದಂಡಿಯ ದೊಡೇಂದ್ರ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ದೇಶ ಶಿಲ್ಪಕಲೆಯ ಮೂಲಕ ಶ್ರೀಮಂತಗೊಳಿಸಬೇಕು. ವಿದೇಶಿಗರು ನಮ್ಮ ನಾಡಿನ ಶಿಲ್ಪಕಲೆಯನ್ನು ನೋಡಲು ಬೆರಗಾಗುವಂತೆ ಶಿಲ್ಪಕಲೆಯನ್ನು ನಿರೂಪಿಸಲಾಗಿದೆ ಎಂದು ಹೇಳಿದರು. ಕಲಬುರಗಿ ಮತ್ತು ಅಫಜಲಪೂರ ಮಠದ ಮಹಾಸ್ವಾಮಿಗಳು ವಿಶ್ವಕರ್ಮ ಮೂರು ಜಾವಾದೀಶ್ವರ ಮಠದ ಪ್ರಣವ ನಿರಂಜನ ಸ್ವಾಮಿಗಳು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕರಕುಶಲ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ವೈ.ಶಿಲ್ಪಿ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕಾರ್ಯಾಲಯ ಕಚೇರಿಯ ಸಹಾಯಕರಾದ ಶಿವಪ್ರಭು ಹಿರೇಮಠ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರಾದ ಕಮಲಾಕರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಅರವಿಂದ ಪೋದ್ದಾರ, ಚಿತ್ರಲೇಖ ಟೆಂಗಳಿಕರ್, ಮೌನೇಶ್ವರ ದೇವಸ್ಥಾನದ ಅರ್ಚಕರಾದ ಶಿವರಾಜ ಶಾಸ್ತ್ರಿ, ದೇವೆಂದ್ರ ದೇಸಾಯಿ, ದೇವೆಂದ್ರಪ್ಪ ಸುತ್ತಾರ, ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.
ಜಾತಿಯ ಹೆಸರಿನಲ್ಲಿ ಮಾನ್ಯ ಕಗ್ಗೊಲೆ; ಪ್ರತ್ಯೇಕ ಕಾಯ್ದೆ ರೂಪಿಸಲು ಚಿಂತನೆ : ಸಚಿವ ಡಾ.ಮಹದೇವಪ್ಪ
ಹುಬ್ಬಳ್ಳಿ : ಜಾತಿಯ ಹೆಸರಿನಲ್ಲಿ ‘ಮಾರ್ಯಾದೆ’ ನೆಪದಲ್ಲಿ ನಡೆಯುತ್ತಿರುವ ಕಗ್ಗೊಲೆಯನ್ನು ತಡೆಗಟ್ಟಲು ‘ಮಾನ್ಯ’ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಸರಕಾರ ಚಿಂತನೆ ನಡೆಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ಗುರುವಾರ ಇಲ್ಲಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ್ ಹತ್ಯೆ ಪ್ರಕರಣದ ಹಿನ್ನೆಲೆ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 16 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ಪರಿಹಾರದ ಚೆಕ್ ಅನ್ನು ನೀಡಲಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು. ಜಾತಿಯ ಹೆಸರಿನಲ್ಲಿ ಮಾನ್ಯರ ಕುಟುಂಬಸ್ಥರೇ ಆಕೆಯನ್ನು ಹತ್ಯೆ ಮಾಡಿದ್ದು ಅಮಾನವೀಯ ಕೃತ್ಯ. ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಮನುವಾದದ ಮನಸ್ಸುಗಳನ್ನು ಹತ್ತಿಕ್ಕಬೇಕು. ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರು, ಅದಕ್ಕೆ ಉತ್ತೇಜನ ಕೊಟ್ಟವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಮಹದೇವಪ್ಪ ತಿಳಿಸಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಹೆಚ್ಚಾಗಿ ನಡೆಯುತ್ತಿರಲಿಲ್ಲ. ರಾಜಸ್ತಾನ ಸೇರಿದಂತೆ ಇನ್ನಿತರ ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು. ನಮ್ಮದು ನಾಗರಿಕ ಮತ್ತು ಮುಂದುವರೆದ ರಾಜ್ಯ ಎಂದರು. ವಯಸ್ಸಿಗೆ ಬಂದ ಯುವಕ-ಯುವತಿಯರು ತಮ್ಮ ಒಪ್ಪಿಗೆ ಮೇರೆಗೆ ಯಾವ ಧರ್ಮ, ಯಾವುದೇ ಜಾತಿಯವರನ್ನು ಮದುವೆಯಾಗಲು ಮುಕ್ತವಾದ ಅವಕಾಶವಿದೆ. ಅದು ಅವರ ಮೂಲಭೂತ ಹಕ್ಕು, ಇದನ್ನು ಹತ್ತಿಕ್ಕುವ ಕೆಲಸ ಯಾರೂ ಮಾಡಬಾರದು. ಈ ರೀತಿಯಾಗಿ ಕೆಲಸ ಮಾಡಿದರೆ ಅದಕ್ಕೆ ಬೆಂಬಲಿಸುವ ವ್ಯಕ್ತಿಗಳನ್ನು ಸರಕಾರ ಬಿಡುವುದಿಲ್ಲ. ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ' ಎಂದು ಮಹದೇವಪ್ಪ ಹೇಳಿದರು. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಏನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಸಿಎಂ, ಗೃಹ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇಂತಹ ಮಾರ್ಯಾದೆ ಹತ್ಯೆ ತಡೆಗೆ ಕಾನೂನು ತರಲು ಮುಂದಿನ ಅಧಿವೇಶನದಲ್ಲಿ ಪ್ರಯತ್ನ ಮಾಡಲಾಗುವುದು. ಮಹಿಳೆಯ ಇಚ್ಛೆಯ ವಿರುದ್ಧವಾಗಿ ವಿವಾಹ ಆಗಬಾರದೆಂದು ಅಂಬೇಡ್ಕರ್ ಹೇಳಿದ್ದಾರೆ. ಅವಳ ಆಸೆಯಂತೆ ಮದುವೆ ಆಗಬೇಕು ಎಂಬುದನ್ನು ಹಿಂದೂ ಕೋಡ್ ಬಿಲ್ ಹೇಳುತ್ತದೆ. ಈ ಘಟನೆಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ. ಇಂತಹ ಘಟನೆಗಳನ್ನು ನಮ್ಮ ಸರಕಾರ ಸಹಿಸುವುದಿಲ್ಲ' ಎಂದು ಮಹದೇವಪ್ಪ ಎಚ್ಚರಿಸಿದರು. ಈ ಘಟನೆ ನಡೆದ ಕೂಡಲೇ ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ)ಕಾಯ್ದೆ ಅಡಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿಗೆ ಕರೆ ಮಾಡಿ ಸೂಚನೆ ನೀಡಿದ್ದೆ. ಈ ಘಟನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೇ ಅಂತವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಹದೇವಪ್ಪ ನುಡಿದರು.
ತಪ್ಪು ತಿದ್ದಿಕೊಳ್ಳುವ ಅವಕಾಶ ನಮ್ಮ ಕೈಯಲ್ಲಿದೆ: ವಿಶು ಶೆಟ್ಟಿ
35ನೇ ಮದ್ಯವ್ಯಸನ ವಿಮುಕ್ತಿ -ವಸತಿ ಶಿಬಿರ ಉದ್ಘಾಟನೆ
ಕಲಬುರಗಿ-ಮೈಸೂರು, ಕಲಬುರಗಿ-ಚಿತ್ರದುರ್ಗ ಮಾರ್ಗಗಳಲ್ಲಿ ನಾನ್ ಎ.ಸಿ. ಸ್ಲೀಪರ್ ಬಸ್ಗಳ ಕಾರ್ಯಾಚರಣೆ
ಕಲಬುರಗಿ: ಪ್ರಯಾಣಿಕರ ಬೇಡಿಕೆ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 (ಕಲಬುರಗಿ ಘಟಕ-1) ವತಿಯಿಂದ ಕಲಬುರಗಿ-ಮೈಸೂರು-ಕಲಬುರಗಿ ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ (ಅಮೋಘವರ್ಷ) ಸಾರಿಗೆ ಹಾಗೂ ಕಲಬುರಗಿ-ಚಿತ್ರದುರ್ಗ-ಕಲಬುರಗಿ ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ ಸಾರಿಗೆಯನ್ನು ಈಗಾಗಲೇ ಡಿ.29 ರಿಂದ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕೆಂದು ನಿಗಮದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಕಲಬುರಗಿ-ಮೈಸೂರು ನಾನ್ ಎ.ಸಿ. ಸ್ಲೀಪರ್ (ಅಮೋಘವರ್ಷ) ಸಾರಿಗೆಯು ಸಂಜೆ 5 ಗಂಟೆಗೆ ಕಲಬುರಗಿಯಿಂದ ಬಸ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 7 ಗಂಟೆಗೆ ಮೈಸೂರಿಗೆ ತಲುಪಲಿದೆ. ಅದೇ ರೀತಿ ಮೈಸೂರು ಬಸ್ ನಿಲ್ದಾಣದಿಂದ ಸಂಜೆ 5.30 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 7.30 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಈ ಬಸ್ ವ್ಹಾಯಾ: ಜೇವರ್ಗಿ, ಶಹಾಪೂರ, ಲಿಂಗಸೂರ, ಸಿಂಧನೂರ, ಬಳ್ಳಾರಿ, ಚಳ್ಳಿಕೇರೆ, ಹಿರಿಯೂರ, ನಾಗಮಂಗಲ ಮತ್ತು ಪಾಂಡವಪುರ ಮಾರ್ಗವಾಗಿ ಸಂಚರಿಸಲಿದೆ. ಕಲಬುರಗಿ-ಚಿತ್ರದುರ್ಗ ನಾನ್ ಎ.ಸಿ. ಸ್ಲೀಪರ್ ಸಾರಿಗೆಯು ರಾತ್ರಿ 10.45 ಗಂಟೆಗೆ ಕಲಬುರಗಿ ಬಸ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಚಿತ್ರದುರ್ಗಕ್ಕೆ ತಲುಪಿದೆ. ಅದೇ ರೀತಿ ಚಿತ್ರದುರ್ಗ ಬಸ್ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5.20 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಈ ಬಸ್ಸು ವ್ಹಾಯಾ: ಜೇವರ್ಗಿ, ಶಹಾಪೂರ, ಲಿಂಗಸೂರ, ಸಿಂದನೂರ, ಗಂಗಾವತಿ ಮತ್ತು ಹೊಸಪೇಟ ಮಾರ್ಗವಾಗಿ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ ಚಾಲಕ; ಬೆಂಗಳೂರಿನ ಮಾಲ್ ಆಫ್ ಏಷ್ಯಾ ಬಳಿ ಅಪಘಾತ, ಏಳು ಮಂದಿಗೆ ಗಾಯ
ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಬಳಿ ನಿಯಂತ್ರಣ ತಪ್ಪಿದ ಕಾರೊಂದು ಪಾದಚಾರಿ ಮಾರ್ಗದಲ್ಲಿದ್ದ ಬ್ಯಾರಿಕೇಡ್ ಮೇಲೆ ನುಗ್ಗಿದ ಪರಿಣಾಮ, ಸ್ಥಳದಲ್ಲೇ ಇದ್ದ ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಜನರು ಗಾಯಗೊಂಡಿದ್ದಾರೆ. ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಎಂಟು ಲಕ್ಷ ಜನ ಭಾಗಿ; ಎಲ್ಲೂ ಅಹಿತಕರ ಘಟನೆ ನಡೆದಿಲ್ಲ: ಜಿ.ಪರಮೇಶ್ವರ್
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಈ ಹೊಸ ವರ್ಷಕ್ಕೆ ಎಂಟು ಲಕ್ಷ ಜನ ಭಾಗವಹಿಸಿದ್ದರು. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ, ಸಂಚಾರ ದಟ್ಟಣೆ ಕೂಡಾ ಆಗಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಗುರುವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೊಸ ವರ್ಷಕ್ಕೆ ಬೆಂಗಳೂರಿನ ವಿವಿಧೆಡೆಗಳಲ್ಲಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇತ್ತು. ಒಂದು ಲೆಕ್ಕದ ಪ್ರಕಾರ ಏಳೆಂಟು ಲಕ್ಷ ಜನ ಭಾಗವಹಿಸಿದ್ದರು. ನಾನೂ ಕೂಡಾ ಕಮಾಂಡ್ ಸೆಂಟರ್ಗೆ ಹೋಗಿ ವೀಕ್ಷಿಸಿದೆ. ಈ ಬಾರಿ ಜವಾಬ್ದಾರಿಯಿಂದ ಜನ ಹೊಸವರ್ಷ ಆಚರಿಸಿದ್ದಾರೆ ಎಂದರು. ಯಾರೂ ಅಪಘಾತ ಮಾಡಿಕೊಂಡು ಪ್ರಾಣ ಹಾನಿ ಮಾಡಿಕೊಳ್ಳಲಿಲ್ಲ. ಮಾಧ್ಯಮದವರೂ ಸಹ ಹೊಸ ವರ್ಷಾಚರಣೆಗೆ ಸಹಕರಿಸಿದರು. 20 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಎಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಜಿ.ಪರಮೇಶ್ವರ್ ಹೇಳಿದರು. 30ಕ್ಕೂ ಹೆಚ್ಚು ಜನ ಡಿಐಜಿ, ಐಜಿಗಳಿಗೆ ಪದೋನ್ನತಿ ಕೊಡಲಾಗಿದೆ. ಇಷ್ಟೊಂದು ಮಂದಿಗೆ ಈ ಮೊದಲು ಒಟ್ಟಿಗೆ ಪದೋನ್ನತಿ ಸಿಕ್ಕಿರಲಿಲ್ಲ. ಎಲ್ಲರಿಗೂ ಜವಾಬ್ದಾರಿ ಕೊಡಲಾಗಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು. ಬೆಳಗಾವಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಹೊರಗಡೆಯಿಂದ ಕಳ್ಳರ ತಂಡ ಬಂದಿರಬಹುದಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳ ಸಭೆ ಮಾಡಿದ್ದು, ಕ್ರಮ ಕೈಗೊಳ್ಳುತ್ತೇವೆ ಎಂದು ಜಿ.ಪರಮೇಶ್ವರ್ ಹೇಳಿದರು. ಇತ್ತೀಚೆಗೆ ಹುಬ್ಬಳ್ಳಿಯ ಮರ್ಯಾದೆಗೇಡು ಹತ್ಯೆ ನಡೆದ ಸ್ಥಳಕ್ಕೆ ಹೋಗಿದ್ದೆ. ಮರ್ಯಾದೆಗೇಡು ಹತ್ಯೆಗಳು ಈ ಕಾಲದಲ್ಲೂ ನಡೆಯುತ್ತಿವೆ. ಸಮಾಜಕ್ಕೆ ಸರಿಯಾದ ಸಂದೇಶ ಹೋಗುತ್ತಿಲ್ಲವೇನೋ? ಕಾನೂನಿನ ಬಗ್ಗೆ ಜನರಲ್ಲಿ ಅರಿವೂ ಬರಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದರು.
ಕಲಬುರಗಿ | ಮಕ್ಕಳು, ಮಹಿಳೆಯರ ತಕ್ಷಣದ ರಕ್ಷಣೆಗೆ ʼಅಕ್ಕಪಡೆʼ ರಚನೆ : ಎಸ್ಪಿ ಅಡ್ಡೂರು ಶ್ರೀನಿವಾಸಲು
ಕಲಬುರಗಿ : ಸಂಕಷ್ಟದಲ್ಲಿರುವ ಮಹಿಳೆಯರ ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಅಕ್ಕಪಡೆ ಯೋಜನೆ ಜಾರಿಗೆ ತಂದಿದೆ ಎಂದು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಹೇಳಿದರು. ಅವರು ಬುಧವಾರ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಅಕ್ಕಪಡೆ ಯೋಜನೆಯ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ಕಪಡೆಯ ಅನುಷ್ಠಾನಕ್ಕಾಗಿ ರಾಜ್ಯ ಸರಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕಲಬುರಗಿ ಜಿಲ್ಲೆಗೆ ಮಹೇಂದ್ರ ಬೊಲೆರೋ ವಾಹನವನ್ನು ಪೊಲೀಸ್ ಇಲಾಖೆಗೆ ಒದಗಿಸಿದ್ದು, ಶಾಲೆ, ಕಾಲೇಜು, ವಿದ್ಯಾರ್ಥಿನಿಯರ ಹಾಗೂ ಬಾಲಕಿಯವರ ವಸತಿ ಗೃಹಗಳಿಗೆ ಭೇಟಿ ನೀಡುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯುವುದು, ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರ ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವುದು, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದು ಅಕ್ಕಪಡೆ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ಅಕ್ಕಪಡೆ ಯೋಜನೆಯಡಿ 5 ಮಹಿಳಾ ಗೃಹ ರಕ್ಷಕರವರನ್ನೊಳಗೊಂಡ ತಂಡವು ಸ್ಥಳೀಯ ಪೊಲೀಸರ ನಿಕಟ ಸಹಯೋಗದೊಂದಿಗೆ ಬೆಳಿಗ್ಗೆ 7 ಗಂಟೆಯಿoದ ರಾತ್ರಿ 8 ರವರೆಗೆ 2 ಪಾಳಿಗಳಲ್ಲಿ ಅಂದರೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಬೇಕು. ಮಹಿಳಾ ಕಿರುಕುಳ ಪ್ರಕರಣಗಳ ಬಗ್ಗೆ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ವರದಿ ಮಾಡಬೇಕು. ಮಹಿಳೆಯರ ಮೇಲಿನ ಕಿರುಕುಳ ಮತ್ತು ಈವ್–ಟಿಸಿಂಗ್ ತಡೆಗಟ್ಟಲು ಶಾಲೆ, ಕಾಲೇಜು, ಉದ್ಯಾನವನ, ಸಿನಿಮಾ ಮಂದಿರ, ಸ್ಥಳೀಯ ಮಾರುಕಟ್ಟೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ಫೋಕ್ಸೋ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ, ಮಾದಕ ವಸ್ತುಗಳ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವುದು, ಸಂಚಾರ ನಿಯಮಗಳ ಬಗ್ಗೆ, ಉಚಿತ ಸಹಾಯವಾಣಿಗಳಾದ 1098, 181, 112 ಇವುಗಳ ಬಗ್ಗೆ ಜಾಗೃತಿ ಮೂಡಿಸುವುದು ಅಕ್ಕಪಡೆ ಯೋಜನೆಯ ಜವಾಬ್ದಾರಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಅಕ್ಕಪಡೆ ಯೋಜನೆ ಅನುಷ್ಠಾನಕ್ಕಾಗಿ ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ವಾಹನವನ್ನು ತೆಗೆದುಕೊಂಡು ಬರುತ್ತಿದ್ದು, ವಾಹನ ಬಂದ ತಕ್ಷಣ ಅಕ್ಕಪಡೆ ಯೋಜನೆಗೆ ಕಲಬುರಗಿ ಜಿಲ್ಲೆಯಲ್ಲಿ ಚಾಲನೆಗೊಳಿಸಲಾಗುತ್ತದೆ. ಸಮಿತಿಯ ಸದಸ್ಯರು ತಮ್ಮ ಇಲಾಖೆಗೆ ಸಂಬoಧಪಟ್ಟ ಶಾಲಾ ಕಾಲೇಜುಗಳ, ವಸತಿ ನಿಲಯಗಳ ಪಟ್ಟಿಯನ್ನು ಸಲ್ಲಿಸಬೇಕು. ಅಕ್ಕಪಡೆ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಲು 5 ಮಹಿಳಾ ಗೃಹ ರಕ್ಷಕ ಸಿಬ್ಬಂದಿಗಳಿಗೆ ಹಾಗೂ ಮಹಿಳಾ ಪೋಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಿ ತಂಡ ಸಿದ್ದಗೊಳಿಸಿ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು ಎಂದರು. ಸಭೆಯಲ್ಲಿ ಸಮಿತಿಯ ಸದಸ್ಯರಾದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಕಣಾಧಿಕಾರಿಗಳಾದ ಮಂಜುಳಾ ಪಾಟೀಲ, ಗೃಹರಕ್ಷಕ ದಳದ ತರಬೇತಿದಾರರಾದ ಹಣಂತರಾಯ ಗೌಡ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ರಾಜಕುಮಾರ ರಾಠೋಡ ಸ್ವಾಗತಿಸಿದರು. ಕೊನೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ ವಂದಿಸಿದರು.
ಭಾರತದ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15ರಿಂದ ಅಧಿಕೃತವಾಗಿ ಆರಂಭ! ರೈಲಿನ ವೇಗ ಎಷ್ಟು? ವಿಶೇಷತೆ ಏನು?
ದೇಶದ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15ರಂದು ಸಂಚಾರ ಆರಂಭಿಸಲಿದೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಈ ಹೈ-ಸ್ಪೀಡ್ ರೈಲು ಹಂತ ಹಂತವಾಗಿ ಕಾರ್ಯನಿರ್ವಹಿಸಲಿದೆ. ಸೂರತ್ ಮತ್ತು ಬಿಲಿಮೋರಾ ನಡುವೆ ಮೊದಲ ಸಂಚಾರ ಆರಂಭವಾಗಲಿದೆ. ಈ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.
Switzerland| ಕ್ರಾನ್ಸ್–ಮೊಂಟಾನಾದ ಬಾರ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಮೃತ್ಯು: ವರದಿ
ಕ್ರಾನ್ಸ್–ಮೊಂಟಾನಾ,ಜ.1: ಸ್ವಿಟ್ಜರ್ಲ್ಯಾಂಡ್ನ ಐಷಾರಾಮಿ ಆಲ್ಪೈನ್ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್–ಮೊಂಟಾನಾದ ಬಾರ್ವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದು,100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು indiatoday ವರದಿ ಮಾಡಿದೆ. ಸ್ವಿಟ್ಜರ್ಲ್ಯಾಂಡ್ನ ಐಷಾರಾಮಿ ಬಾರ್ನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿದೆ. ಘಟನೆಯನ್ನು ಭಯೋತ್ಪಾದಕ ದಾಳಿಯಲ್ಲ ಎಂದು ಸ್ವಿಸ್ ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟದ ಸಮಯದಲ್ಲಿ ಬಾರ್ನಲ್ಲಿ 150ಕ್ಕೂ ಹೆಚ್ಚು ಜನರು ಇದ್ದರು. ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ ವೀಡಿಯೊಗಳಲ್ಲಿ ಸ್ಫೋಟ ಸಂಭವಿಸಿದ ಬಳಿಕ ಕಟ್ಟಡ ಬೆಂಕಿಗಾಹುತಿಯಾಗಿರುವುದು ಕಂಡುಬಂದಿದೆ. ಸ್ಫೋಟದ ಕಾರಣದ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಪಟಾಕಿ ಸಿಡಿಸಿದ್ದರಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಸ್ವಿಸ್ ಮಾಧ್ಯಮಗಳು ಅಂದಾಜಿಸಿದೆ. ಆದರೆ ಸ್ಪೋಟಕ್ಕೆ ಕಾರಣ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರಾನ್ಸ್-ಮೊಂಟಾನಾದಲ್ಲಿನ ಆಸ್ಪತ್ರೆಗಳಲ್ಲಿ ಸುಟ್ಟಗಾಯಗಳಿಂದ ಜನರು ತುಂಬಿಕೊಂಡಿದ್ದಾರೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಪೊನ್ನಂಪೇಟೆ | ಚಾಲಕನ ಸಂಶಯಾಸ್ಪದ ಸಾವು : ಹಲ್ಲೆಯ ಗುರುತುಗಳು ಪತ್ತೆ!
ಮಡಿಕೇರಿ : ಗೋಣಿಕೊಪ್ಪಲು ಗ್ರಾಮದ ಹರಿಶ್ಚಂದ್ರಪುರದ ನಿವಾಸಿ, ಚಾಲಕ ವೃತ್ತಿಯ ನವಾಜ್(36) ಎಂಬುವವರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಮಾರಣಾಂತಿಕ ಹಲ್ಲೆಯೇ ಸಾವಿಗೆ ಕಾರಣವೆಂದು ಆರೋಪಿಸಲಾಗಿದೆ. ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತೀವ್ರ ಗಾಯಗಳಿಂದ ನವಾಜ್ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಇವರ ದೇಹವನ್ನು ಪರಿಶೀಲಿಸಿದ ಸಂದರ್ಭ ಬೆನ್ನು ಮತ್ತು ಇತರ ಭಾಗಗಳಲ್ಲಿ ದೊಣ್ಣೆ, ಮತ್ತಿತ್ತರ ವಸ್ತುಗಳಿಂದ ತೀವ್ರ ಹಲ್ಲೆ ನಡೆಸಿರುವ ಗುರುತುಗಳು ಕಂಡು ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ, ಮೃತದೇಹದ ಮರಣೋತ್ತರ ಪರೀಕ್ಷೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.
`ಹೀಗೆ ಆಡಿದ್ರೆ ಹೇಗೆ?': BBLನಲ್ಲಿ ಅರ್ಧಶತಕ ಗಳಿಸಿದ್ರೂ ಬಾಬರ್ ಆಝಂ ಬಗ್ಗೆ ಆ್ಯಡಂ ಗಿಲ್ ಕ್ರಿಸ್ಟ್ ಗರಂ!
Babar Azam Slow Half Century- ಹೇಳಿಕೇಳಿ ಟಿ20 ಅಬ್ಬರದ ಆಟ. ಏಕದಿನ ಪಂದ್ಯದಂತೆ ತಾಳ್ಮೆಯ ಇನ್ನಿಂಗ್ಲ್ ಇಲ್ಲಿನ ಅಗತ್ಯವಲ್ಲ. ರನ್ ಹೊಡೆಯುತ್ತಲೇ ವಿಕೆಟ್ ಬೀಳುವುದನ್ನೂ ತಡೆಯಬೇಕು. ಅಂದರೆ ಮಾತ್ರ ಮರ್ಯಾದೆ. ಹೀಗಿರುವಾಗ ಬಿಗ್ ಬ್ಯಾಷ್ ಲೀಗ್ ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರ ನಿಧಾನಗತಿಯ ಬ್ಯಾಟಿಂಗ್ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಅವರು ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರೂ ಕ್ರಿಕೆಟ್ ತಜ್ಞರ ಮೆಚ್ಚುಗೆಗೆ ಪಾತ್ರವಾಗಲಿಲ್ಲ. ಆ್ಯಡಂ ಗಿಲ್ ಕ್ರಿಸ್ಟ್ ಅವರಂತೂ ತೀವ್ರ ತರಾಟೆಗೆಗೆ ತೆಗೆದುಕೊಂಡಿದ್ದಾರೆ.
ಪ್ರತಿ ಹೆಕ್ಟೇರ ಗೆ 8500 ರೂ ಪರಿಹಾರ: ರೈತರಿಗೆ ತುಸು ನೆಮ್ಮದಿ ಎಂದ ಸಿದ್ದರಾಮಯ್ಯ
ಬೆಂಗಳೂರು: ಉತ್ತಮ ಮಳೆಬೆಳೆಯಿಂದ ಹೆಚ್ಚಿನ ಸಮಸ್ಯೆ ಪರಿಹಾರವಾಗುತ್ತದೆ. 2025 ರಲ್ಲಿ ಉತ್ತಮ ಮಳೆಯಾದ ಜೊತೆಗೆ ಬೆಳೆಹಾನಿಯೂ ಸಂಭವಿಸಿತು. 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿ, ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಇಂದು ಹೊಸ ವರ್ಷದ ಪ್ರಯುಕ್ತ ಸರ್ಕಾರದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಶುಭಕೋರಿದ ನಂತರ
ಜನರಿಗೆ ಅವಶ್ಯವಿರುವ ಸರಕಾರದ ಸೇವೆಗಳನ್ನು ವಿಳಂಬ ಮಾಡದೇ ಪೂರೈಸಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ
ಹೊಸ ವರ್ಷದ ಪ್ರಯುಕ್ತ ಹಿರಿಯ ಅಧಿಕಾರಿಗಳಿಗೆ ಶುಭಕೋರಿದ ಸಿಎಂ
ಏರ್ ಇಂಡಿಯಾ ಪೈಲಟ್ ಮದ್ಯ ಸೇವನೆ ಶಂಕೆ: ಕೆನಡಾದ ವ್ಯಾಂಕೋವರ್ ಏರ್ಪೋರ್ಟ್ನಲ್ಲಿ ಅರೆಸ್ಟ್
ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಕಳೆದ ವಾರ ದೆಹಲಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಒಬ್ಬರು ಮದ್ಯಪಾನ ಮಾಡಿರುವ ಆರೋಪದ ಮೇಲೆ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ವಿಮಾನ ಹಾರಾಟಕ್ಕೆ ಕೆಲವೇ ಕ್ಷಣಗಳ ಮೊದಲು ಈ ಘಟನೆ ನಡೆದಿದ್ದು, ಕೆನಡಾ ಅಧಿಕಾರಿಗಳು ಪೈಲಟ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ವಿಮಾನದ ಪ್ರಯಾಣ ವಿಳಂಬವಾಗಿದ್ದು, ಏರ್ ಇಂಡಿಯಾ ಸಂಸ್ಥೆಯು ಪೈಲಟ್ನ್ನು ಕೆಲಸದಿಂದ ವಜಾಗೊಳಿಸಿದೆ.
ಸ್ವಚ್ಛ ನಗರಿ ಇಂದೋರ್ನಲ್ಲಿ ಕಲುಷಿತ ನೀರು ದುರಂತ ಸಂಭವಿಸಿದೆ. ಭಗೀರಥಪುರದಲ್ಲಿ ಕುಡಿಯುವ ನೀರಿನಲ್ಲಿ ಶೌಚಾಲಯದ ತ್ಯಾಜ್ಯ ಬೆರೆತು ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 150 ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದೆ. ಸರ್ಕಾರ ಪರಿಹಾರ ಘೋಷಿಸಿದ್ದು, ತನಿಖೆ ಆರಂಭಿಸಿದೆ.
IMD Weather Forecast: ಮೈಕೊರೆಯುವ ಚಳಿ ನಡುವೆ ಈ ಭಾಗಗಳಲ್ಲಿ ನಾಲ್ಕು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಶೀತಗಾಳಿ ಬೀಸುತ್ತಿದೆ. ಈ ನಡುವೆಯೇ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ನಾಲ್ಕು ದಿನ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಉತ್ತರ ಭಾರತದ
H-1B ವೀಸಾ ವಿಳಂಬ: ಭಾರತೀಯ ಉದ್ಯೋಗಿಗಳಿಗೆ Work From Homeಗೆ ಅವಕಾಶ
H-1B ವೀಸಾ ನೀಡುವ ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರು ಹಾಗೂ ಇತರ ವಿದೇಶಿಯರಿಗೆ ಮರಳಿ ಅಮೆರಿಕಕ್ಕೆ ಹೋಗುವಲ್ಲಿ ತೊಂದರೆ ಎದುರಾಗಿದೆ. ಕಚೇರಿಗೆ ಕಡ್ಡಾಯವಾಗಿ ಹಾಜರಾಗಿ ಕೆಲಸ ಮಾಡಬೇಕು ಎನ್ನುವ Amazon ಕಂಪೆನಿಯ ನಿಯಮವನ್ನು ಭಾರತೀಯ ಹಾಗೂ ವಿದೇಶಿ ಕಾರ್ಮಿಕರಿಗಾಗಿ ಸಡಿಲಿಸಲಾಗಿದೆ. H-1B ವೀಸಾ ವಿಳಂಬದಿಂದಾಗಿ ರಜಾದಲ್ಲಿ ಭಾರತಕ್ಕೆ ಆಗಮಿಸಿ ಅಮೆರಿಕಕ್ಕೆ ಮರಳಲಾಗದ ಉದ್ಯೋಗಿಗಳಿಗೆ 2026 ಮಾರ್ಚ್ 2ರವರೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲಾಗಿದೆ. H-1B ವೀಸಾ ವಿಳಂಬದಿಂದಾಗಿ ಅಮೆರಿಕಕ್ಕೆ ಮರಳಲಾಗದ Amazon ನ ಭಾರತೀಯ ಉದ್ಯೋಗಿಗಳಿಗೆ ಇದೀಗ ಕಂಪೆನಿಯಿಂದ ನಿಯಮ ಸಡಿಲಿಕೆ ಸಿಕ್ಕಿದೆ. ವಾರದಲ್ಲಿ ಐದು ದಿನ ಕಚೇರಿಯಲ್ಲಿ ಕೆಲಸ ಮಾಡುವುದು ಕಡ್ಡಾಯ ಎನ್ನುವ ನೀತಿಯನ್ನು Amazon ತಾತ್ಕಾಲಿಕವಾಗಿ ಸಡಿಲಿಸಿದೆ. 2025 ಡಿಸೆಂಬರ್ 13ರಂದು ಭಾರತದಲ್ಲಿದ್ದ ಉದ್ಯೋಗಿಗಳಿಗೆ 2026 ಮಾರ್ಚ್ 2ರವರೆಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಒದಗಿಸಲಾಗಿದೆ. ಈ ಕುರಿತಾಗಿ Amazon HR ಪೋರ್ಟಲ್ ಮೂಲಕ ಆಂತರಿಕ ಮೆಮೊ ಕಳುಹಿಸಲಾಗಿದೆ. H-1B ವೀಸಾ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಅಮೆರಿಕದ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರು ಹಾಗೂ ವಿದೇಶಿಯರಿಗೆ ಪ್ರಯಾಣದ ಅನಿಶ್ಚಿತತೆ ಎದುರಾಗಿದೆ. Amazonನ ಅನೇಕ ಉದ್ಯೋಗಿಗಳು ಖಾಸಗಿ ಕಾರಣಗಳಿಂದ ಡಿಸೆಂಬರ್ ನಲ್ಲಿ ಭಾರತಕ್ಕೆ ಪ್ರಯಾಣಿಸಿದ್ದರು. ಆದರೆ ಮರಳುವ ವೇಳೆಗೆ ವೀಸಾ ಅಪಾಯಿಂಟ್ಮೆಂಟ್ ಸ್ಲಾಟ್ಗಳು ಲಭ್ಯವಿಲ್ಲ ಅಥವಾ ವಿಳಂಬವಾಗಿದೆ ಎಂಬ ಮಾಹಿತಿಯಷ್ಟೇ ದೊರೆತಿದೆ. ಮರಳಲು ಸ್ಪಷ್ಟವಾದ ಸಮಯಾವಧಿ ಇಲ್ಲದ ಕಾರಣ ರಜೆಯನ್ನು ವಿಸ್ತರಿಸುವ ಬದಲಾಗಿ ಕಂಪೆನಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದೆ. ಸಾಮಾನ್ಯ ನಿಯಮಗಳ ಪ್ರಕಾರ Amazon ವಿದೇಶಿ ಉದ್ಯೋಗಿಗಳಿಗೆ 20 ಕಾರ್ಯದಿನಗಳನ್ನು ಮೀರಿಸಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಆದರೆ ಈ ಸಡಿಲಿಕೆಯಲ್ಲೂ ಹಲವು ಮಿತಿಗಳನ್ನು ವಿಧಿಸಲಾಗಿದೆ. ಉದ್ಯೋಗಿಗಳು ಮಾಡುವ ಕೆಲಸದ ಸ್ವರೂಪವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಲಾಗಿದೆ. ಕೋಡಿಂಗ್ಗೆ ನಿಷೇಧ ಹೇರಲಾಗಿದೆ. ಸಾಫ್ಟ್ವೇರ್ ಟೆಸ್ಟಿಂಗ್ ಅಥವಾ ಅಭಿವೃದ್ಧಿ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿಲ್ಲ. ಕೋಡ್ ಡಿಪ್ಲಾಯ್ ಮಾಡುವುದು, ಗುಣಮಟ್ಟದ ಭರವಸೆ (ಕ್ವಾಲಿಟಿ ಅಶೂರನ್ಸ್) ಕಾರ್ಯಗಳು ಅಥವಾ ಇತರೆ ತಾಂತ್ರಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ. ಮತ್ತೊಂದು ಪ್ರಮುಖ ಮಿತಿಯೆಂದರೆ ಉದ್ಯೋಗಿಗಳು ಭಾರತದಲ್ಲಿರುವ Amazon ಕಚೇರಿಗಳಿಗೆ ಪ್ರವೇಶಿಸುವಂತಿಲ್ಲ. Amazon ಇಂಡಿಯಾ ಕಚೇರಿಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕುವುದು, ತಂಡದ ಮೇಲ್ವಿಚಾರಣೆ ಅಥವಾ ಕಾರ್ಯಯೋಜನಾ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೂ ನಿರ್ಬಂಧವಿದೆ. ಎಲ್ಲಾ ವಿಶ್ಲೇಷಣೆ, ಅಂತಿಮ ನಿರ್ಧಾರಗಳು ಹಾಗೂ ಸಹಿ ಸಂಬಂಧಿತ ಪ್ರಕ್ರಿಯೆಗಳು ಭಾರತದಿಂದ ಹೊರಗೆ ನಡೆಯಬೇಕಿದೆ. ಇದು ಅಮೆರಿಕ ಮತ್ತು ಭಾರತದ ಕಾನೂನು ಅಗತ್ಯಗಳ ಪಾಲನೆಗಾಗಿ ಎಂದು ತಿಳಿಸಲಾಗಿದೆ. ಈ ನಿಯಮಗಳಿಗೆ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಉದ್ಯೋಗಿಗಳು ತಮ್ಮ ದೈನಂದಿನ ಚಟುವಟಿಕೆಗಳು ಅನುಮತಿಸಲಾದ ಮಿತಿಗಳೊಳಗೇ ಇವೆ ಎಂಬುದನ್ನು ತಮ್ಮ ಮ್ಯಾನೇಜರ್ಗಳು ಹಾಗೂ ಎಚ್ಆರ್ ತಂಡಗಳೊಂದಿಗೆ ಖಚಿತಪಡಿಸಿಕೊಳ್ಳಬೇಕು. ಮಿತಿಗಳನ್ನು ಮೀರಿ ಕೆಲಸ ಮಾಡಿದರೆ ಕಾನೂನು ಅಥವಾ ನೀತಿ ಉಲ್ಲಂಘನೆಯಾಗುತ್ತದೆ ಎಂದು ಅಮೆಜಾನ್ ಎಚ್ಚರಿಕೆ ನೀಡಿದೆ. H-1B ವೀಸಾ ವಿಳಂಬದಿಂದ Amazonಗೆ ಮಾತ್ರ ಸಮಸ್ಯೆಯಾಗಿಲ್ಲ. Google, ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳೂ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಿವೆ. ವೀಸಾ ನೀಡಿಕೆಯಲ್ಲಿ ವಿಳಂಬದಿಂದಾಗಿ ವಿದೇಶದಲ್ಲಿ ತಿಂಗಳುಗಳ ಕಾಲ ಅಥವಾ ವರ್ಷಗಳವರೆಗೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ಕಂಪೆನಿಗಳು ಸೂಚಿಸಿವೆ. Amazonಗೆ ಭಾರತೀಯ ಹಾಗೂ ವಿದೇಶಿ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಿಸುವ ಒತ್ತಡ ಹೆಚ್ಚಾಗಿದೆ. 2024ರ ಅಮೆರಿಕದ ಹಣಕಾಸು ವರ್ಷದಲ್ಲೇ ಕಂಪೆನಿ 14,783 H-1B ಅರ್ಜಿಗಳಿಗೆ ಪ್ರಾಯೋಜಕತ್ವ ವಹಿಸಿತ್ತು. ಇದರಿಂದ ಕಂಪೆನಿ ವಿದೇಶಿ ಕಾರ್ಮಿಕರ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಉಡುಪಿ|ಸಂಚಾರ ನಿಯಮ ಉಲ್ಲಂಘನೆ; 1,199 ಪ್ರಕರಣ ದಾಖಲು
ಹೊಸ ವರ್ಷಾಚರಣೆ, ಹಬ್ಬಗಳಿಗೆ ವಿಶೇಷ ಕಾರ್ಯಾಚರಣೆ
2026ರಲ್ಲಿ ಭಾರತದ ಅರ್ಥವ್ಯವಸ್ಥೆಗೆ ಅಗತ್ಯವಾಗಿರುವ ಒಂದು ವಿಷಯ ಏನು ಗೊತ್ತೆ?
ಪ್ರಸ್ತುತ ರಫ್ತು ಪ್ರಾಬಲ್ಯವು ತಾತ್ಕಾಲಿಕ ಹೊಂದಿಕೆಗಳ ಮೇಲೆ ನಿಂತಿದೆ. ಈ ಹೊಂದಾಣಿಕೆಯನ್ನು ಸ್ಥಿರತೆ ಎಂದು ಮಾರುಕಟ್ಟೆಯನ್ನು ವಿಶ್ಲೇಷಿಸಬಾರದು. 2026ರಲ್ಲಿ ಈ ಹೊಂದಾಣಿಕೆಯ ಪರಿಣಾಮವು ಸ್ಪರ್ಧಾತ್ಮಕತೆ ನಷ್ಟ, ಕಳಪೆ ಹೂಡಿಕೆ ಅವಕಾಶ, ಉದ್ಯೋಗದ ಮೇಲಿನ ಒತ್ತಡ ಮತ್ತು ಕಾರ್ಯಯೋಜನೆಯ ಅನಿಶ್ಚಿತತೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳಬಹುದು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ 50ರಷ್ಟು ಸುಂಕವನ್ನು ವಿಧಿಸಿರುವ ಹೊರತಾಗಿಯೂ, ಏಪ್ರಿಲ್ನಿಂದ ನವೆಂಬರ್ವರೆಗೆ ಅಮೆರಿಕಕ್ಕೆ ಭಾರತದ ಸರಕುಗಳ ರಫ್ತು ಗಣನೀಯವಾಗಿ ಏರಿಕೆಯಾಗಿದೆ. ಈ ಅವಧಿಯಲ್ಲಿ ವರ್ಷಾನುವರ್ಷದ ಶೇ 11.38ರಷ್ಟು ವೃದ್ಧಿ ಕಂಡಿದ್ದು, ನವೆಂಬರ್ನಲ್ಲಿ ಮಾತ್ರವೇ ವರ್ಷಾನುವರ್ಷದ ಶೇ 22ರಷ್ಟು ಏರಿಕೆಯಾಗಿದೆ. ಆದರೆ ಅಮೆರಿಕಕ್ಕೆ ಭಾರತದ ರಫ್ತು ಪ್ರಮಾಣದಲ್ಲಿ ಕಾಣುತ್ತಿರುವ ಈ ವಿರೋಧಾಭಾಸವನ್ನು ಭಾರತದ ನೀತಿ ನಿರೂಪಕರು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಮೊದಲ ನೋಟಕ್ಕೆ ಈ ದೃಢತೆ ಧೈರ್ಯ ತುಂಬಿಸಬಹುದು. ಆದರೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಪ್ರಸ್ತುತ ಸ್ಥಿರತೆಯ ನೆಲೆಗಟ್ಟು ಅಲುಗಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. 2026ರಲ್ಲಿ ಭಾರತೀಯ ಅರ್ಥವ್ಯವಸ್ಥೆಯ ಅತ್ಯಗತ್ಯ ವಿಚಾರವೆಂದರೆ ಅಮೆರಿಕದ ಜೊತೆಗೆ ಸಮಗ್ರ ಹಾಗೂ ಉತ್ತಮ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡು ಮುಂದುವರಿಯುವುದು. ಅಂತಹ ಒಪ್ಪಂದವಿಲ್ಲದೆ ಅತಿಯಾದ ಸುಂಕದ ಪರಿಣಾಮ ಪ್ರಗತಿ, ಉದ್ಯೋಗ ಮತ್ತು ಸ್ಪರ್ಧಾತ್ಮಕತೆಯ ಮೇಲೆ ಸ್ಪಷ್ಟವಾಗಿ ಬೀಳಲಿದೆ. *ತೆರಿಗೆಯ ಪರಿಣಾಮ ಇನ್ನೂ ಏಕೆ ಕಾಣಿಸಿಕೊಂಡಿಲ್ಲ? ಅಮೆರಿಕಕ್ಕೆ ಆಗುತ್ತಿರುವ ರಫ್ತುಗಳಲ್ಲಿ ಇತ್ತೀಚೆಗೆ ಕಂಡುಬಂದ ಪುನಶ್ಚೇತನವನ್ನು ತೆರಿಗೆಯಿಂದ ಸುರಕ್ಷತೆ ಎಂದು ತಪ್ಪಾಗಿ ಅರ್ಥೈಸಬಾರದು. ಜಾಗತಿಕ ವ್ಯಾಪಾರ ಸಂಶೋಧನಾ ಯೋಜನೆ (ಜಿಟಿಆರ್ಐ) ಮುಂದಿಟ್ಟಿರುವ ವಿವರಗಳ ಪ್ರಕಾರ, ಸೆಪ್ಟೆಂಬರ್ ನಂತರ ಕಂಡ ಚೇತರಿಕೆ ಕಠಿಣ ತೆರಿಗೆಗೆ ಹೊಂದಿಕೊಳ್ಳುವಿಕೆಯ ಸಂಕೇತವೇ ಹೊರತು, ಅದರ ಪರಿಣಾಮದಿಂದ ಶಮನ ಪಡೆದಿರುವುದಲ್ಲ. ಆರಂಭದಲ್ಲಿ ಅನಿಶ್ಚಿತತೆಯ ಕಾರಣ ಅಮೆರಿಕದ ಖರೀದಿದಾರರು ಮತ್ತು ಭಾರತೀಯ ರಫ್ತುದಾರರು ವ್ಯವಹಾರಗಳನ್ನು ವಿಳಂಬಗೊಳಿಸಿದ್ದರು. ಅದೇ ಕಾರಣಕ್ಕೆ ಮೇ ಮತ್ತು ಸೆಪ್ಟೆಂಬರ್ ನಡುವೆ ರಫ್ತು ಕುಸಿತ ಕಂಡುಬಂದಿತ್ತು. ಒಮ್ಮೆ ತೆರಿಗೆ ಖಚಿತವಾದ ನಂತರ, ಬೆಲೆಗಳನ್ನು ಮರುಹೊಂದಿಸಿಕೊಂಡು, ಕಾರ್ಯಯೋಜನೆಗೆ ಅಗತ್ಯವಿರುವ ಉತ್ಪನ್ನಗಳಿಗೆ ಆದ್ಯತೆ ನೀಡಿ, ವೆಚ್ಚವನ್ನು ಹೀರಿಕೊಂಡು ವ್ಯವಹಾರ ಮುಂದುವರಿಸಲಾಗಿದೆ. ಜಿಟಿಆರ್ಐ ಪ್ರಕಾರ, ಈ ಹೊಂದಾಣಿಕೆಯೇ ತೆರಿಗೆಯ ನಿಜವಾದ ಪರಿಣಾಮವನ್ನು ತಾತ್ಕಾಲಿಕವಾಗಿ ಮರೆಯುವಂತೆ ಮಾಡಿದೆ. ಸರಬರಾಜು ಸರಪಳಿ ಮರುಹೊಂದಿಕೆ, ಅಮೆರಿಕದ ಹಬ್ಬದ ಅವಧಿಗೆ ಮೊದಲು ದಾಸ್ತಾನು ಮರುಸ್ಥಾಪನೆ ಮತ್ತು ಅಲ್ಪಾವಧಿಯ ಕಾರ್ಯಯೋಜನೆಗಳಿಂದ ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ರತ್ನಗಳು ಮತ್ತು ಆಭರಣಗಳು, ಔಷಧೋದ್ಯಮ, ಜವಳಿ ಹಾಗೂ ಆಟೋ ಭಾಗಗಳಂತಹ ಕ್ಷೇತ್ರಗಳು ಲಾಭ ಪಡೆದಿವೆ. ಆದರೆ ರಫ್ತು ವ್ಯವಸ್ಥೆ ರಚನಾತ್ಮಕವಾಗಿ ಭದ್ರವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. *ತೆರಿಗೆಗಳು ಇನ್ನೂ ಅರ್ಥವ್ಯವಸ್ಥೆಗೆ ಏಕೆ ಬೆದರಿಕೆ? ರಫ್ತು ಕ್ಷೇತ್ರ ಈವರೆಗೆ ದೃಢತೆ ತೋರಿದರೂ, ಶೇ 50ರಷ್ಟು ಸುಂಕವು ಆರ್ಥಿಕವಾಗಿ ಅಸಮತೋಲನಕಾರಿ ಮತ್ತು ದೀರ್ಘಾವಧಿಯಲ್ಲಿ ಸಹಿಸಲಾಗದ ಮಟ್ಟದಲ್ಲಿದೆ. ವಿಶೇಷವಾಗಿ ಲಾಭದ ಮಾರ್ಜಿನ್ ಕಡಿಮೆಯಿರುವ ಕ್ಷೇತ್ರಗಳಲ್ಲಿ, ಇತರ ದೇಶಗಳ ತೀವ್ರ ಸ್ಪರ್ಧೆಯ ನಡುವೆ ಇಂತಹ ಸುಂಕವು ಬೆಲೆಯ ಸ್ಪರ್ಧಾತ್ಮಕತೆಯನ್ನು ಸಂಪೂರ್ಣವಾಗಿ ಕುಂದಿಸುತ್ತದೆ. ಭಾರತೀಯ ರಫ್ತುದಾರರು ತಾತ್ಕಾಲಿಕವಾಗಿ ನಷ್ಟವನ್ನು ಭರಿಸಬಹುದು ಅಥವಾ ಲಾಭದ ಅಂಚನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದರಿಂದ ಹೂಡಿಕೆ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲಾಗುವುದಿಲ್ಲ. ಉದ್ಯೋಗ ಮತ್ತು ಉತ್ಪಾದನಾ ಸಾಮರ್ಥ್ಯ ವೃದ್ಧಿಯ ಮೇಲೂ ಇದರ ಪ್ರಭಾವ ಬೀಳಲಿದೆ. ಕಾಲಕ್ರಮೇಣ ಅಮೆರಿಕದ ಖರೀದಿದಾರರು ಕಡಿಮೆ ಸುಂಕ ಇರುವ ದೇಶಗಳತ್ತ ತಿರುಗುವ ಸಾಧ್ಯತೆ ಇದೆ. ಪ್ರಸ್ತುತ ಭಾರತೀಯ ಉತ್ಪನ್ನಗಳಿಗೆ ಪರ್ಯಾಯಗಳು ಸೀಮಿತವಾಗಿದ್ದರೂ, ಈ ಪರಿಸ್ಥಿತಿ ಶಾಶ್ವತವಲ್ಲ. ಇಂದಿಗೆ ಅರ್ಧ ವೆಚ್ಚವನ್ನು ಭರಿಸಿಕೊಂಡಿರುವ ಖರೀದಿದಾರರು, ಮುಂದಿನ ಹಂತದಲ್ಲಿ ಆರ್ಡರ್ಗಳನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ. ಜವಳಿ, ಉಡುಪು, ಕಾರ್ಪೆಟ್ಗಳು, ರತ್ನಗಳು ಮತ್ತು ಆಭರಣಗಳಂತಹ ಕಾರ್ಮಿಕ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಉದ್ಯೋಗದ ಮೇಲಿನ ಒತ್ತಡ ಸಾಮಾಜಿಕ ಮಟ್ಟದಲ್ಲಿಯೂ ಪರಿಣಾಮ ಬೀರುವ ಅಪಾಯವಿದೆ. *ಉತ್ಪಾದನೆ ಮತ್ತು ಉದ್ಯೋಗದ ಮೇಲೆ ಒತ್ತಡ ಭಾರತದ ಆರ್ಥಿಕ ಕಾರ್ಯಯೋಜನೆ ಮುಖ್ಯವಾಗಿ ಉತ್ಪಾದನಾ ನೇತೃತ್ವದ ಪ್ರಗತಿಯನ್ನು ಆಧರಿಸಿದೆ. ರಫ್ತು ವ್ಯಾಪ್ತಿ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿ ಇದರ ಕೇಂದ್ರಬಿಂದುವಾಗಿವೆ. ದೇಶದ ಅತಿದೊಡ್ಡ ರಫ್ತು ಮಾರುಕಟ್ಟೆಯಲ್ಲೇ ಅತಿಯಾದ ಸುಂಕ ವಿಧಿಸಿದರೆ, ಈ ಕಾರ್ಯಯೋಜನೆಗೆ ನೇರ ಹೊಡೆತ ಬೀಳಬಹುದು. ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ವಾಹನಗಳು ಮತ್ತು ಆಟೋಮೊಬೈಲ್ ಭಾಗಗಳು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಅತ್ಯಂತ ಮಹತ್ವಾಕಾಂಕ್ಷೆಯ ಕ್ಷೇತ್ರಗಳಾಗಿವೆ. ಅಮೆರಿಕದ ಮಾರುಕಟ್ಟೆಗೆ ಪ್ರವೇಶ ಸೀಮಿತವಾದರೆ, ಸಂಸ್ಥೆಗಳು ಉತ್ಪಾದನೆ ವಿಸ್ತರಿಸಲು ಅಥವಾ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಹಿಂಜರಿಯಬಹುದು. ಉದ್ಯೋಗ ಸೃಷ್ಟಿಯ ಮೇಲೂ ಇದರಿಂದ ನೇರ ಪರಿಣಾಮ ಬೀಳಲಿದೆ. *ಇತರ ಮಾರುಕಟ್ಟೆಗಳ ಹುಡುಕಾಟದ ಮಿತಿಗಳು ಭಾರತ ಅಮೆರಿಕ ಹೊರತಾದ ಮಾರುಕಟ್ಟೆಗಳತ್ತ ಗಮನ ಹರಿಸುತ್ತಿರುವುದು ಅಗತ್ಯವಾದ ಕಾರ್ಯಯೋಜನೆಯೇ. ಆದರೆ ಹೊಸ ಮಾರುಕಟ್ಟೆಗಳ ಹುಡುಕಾಟಕ್ಕೆ ಪ್ರಾಯೋಗಿಕ ಮಿತಿಗಳಿವೆ. ಅಮೆರಿಕ ಒದಗಿಸುವಷ್ಟು ಖರೀದಿ ಶಕ್ತಿ ಮತ್ತು ವ್ಯಾಪಕ ಬೇಡಿಕೆಯನ್ನು ಇತರೆ ಮಾರುಕಟ್ಟೆಗಳು ನೀಡಲು ಸಾಧ್ಯವಿಲ್ಲ. ಸ್ಮಾರ್ಟ್ಫೋನ್ಗಳು ಮತ್ತು ಔಷಧೋದ್ಯಮದಿಂದ ಹಿಡಿದು ಆಹಾರ ವಸ್ತುಗಳು ಮತ್ತು ರಾಸಾಯನಿಕಗಳವರೆಗೆ ಅಮೆರಿಕ ಭಾರತದ ಅತಿ ದೊಡ್ಡ ರಫ್ತು ಗಮ್ಯಸ್ಥಾನವಾಗಿದೆ. ಈ ಮಟ್ಟದ ಬೇಡಿಕೆಯನ್ನು ಬೇರೆಡೆ ಪೂರೈಸುವುದು ವಾಸ್ತವವಾಗಿ ಕಷ್ಟಕರ. ಜೊತೆಗೆ, ಯುರೋಪಿಯನ್ ಒಕ್ಕೂಟದ ಕಾರ್ಬನ್ ಸುಂಕ ಮತ್ತು ಏಷ್ಯಾದ ಮಾರುಕಟ್ಟೆಗಳ ಮೇಲೆ ಚೀನಾದ ಪ್ರಭಾವ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ. *ಅನಿಶ್ಚಿತತೆಯ ವ್ಯಾಪಾರ ನಷ್ಟ ವ್ಯಾಪಾರ ನೀತಿಯ ಅನಿಶ್ಚಿತತೆಯಲ್ಲೇ ಆರ್ಥಿಕ ನಷ್ಟ ಅಡಗಿದೆ. ಮೇ ಮತ್ತು ಸೆಪ್ಟೆಂಬರ್ ನಡುವೆ ಅನಿಶ್ಚಿತತೆಯ ಕಾರಣ ರಫ್ತು ಕುಸಿತ ಕಂಡಿರುವುದು ಇದಕ್ಕೆ ಉದಾಹರಣೆ. ಖರೀದಿದಾರರ ಮನೋಭಾವ ಎಷ್ಟು ಸೂಕ್ಷ್ಮವಾಗಿರುತ್ತದೆ ಮತ್ತು ಯಾವಾಗ ಬೇಕಾದರೂ ಬದಲಾಗಬಹುದು ಎಂಬುದನ್ನು ಇದು ತೋರಿಸುತ್ತದೆ. ಅಮೆರಿಕದ ಜೊತೆಗೆ ಸಮಗ್ರ ವ್ಯಾಪಾರ ಒಪ್ಪಂದವೊಂದು ಸ್ಥಿರತೆಯ ಸ್ಪಷ್ಟ ಸಂಕೇತವನ್ನು ನೀಡಲಿದೆ. ರಫ್ತು ಆಧಾರಿತ ಕ್ಷೇತ್ರಗಳಲ್ಲಿ ಹೂಡಿಕೆಗೂ ಇದು ಉತ್ತೇಜನ ನೀಡಬಹುದು. 2026ರಲ್ಲಿ ವ್ಯಾಪಾರ ಒಪ್ಪಂದ ಏಕೆ ಅಗತ್ಯ? ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ ನೀಡಿರುವ ಹೇಳಿಕೆಗಳು, ಭಾರತ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಸುಧಾರಣೆಯ ಹಂತದಲ್ಲಿವೆ ಎಂಬುದನ್ನು ಸೂಚಿಸುತ್ತವೆ. ಈ ಮಾತುಕತೆಗಳನ್ನು ಪೂರ್ಣಗೊಳಿಸಲು ಸರ್ಕಾರವೂ ತುರ್ತು ಪ್ರಯತ್ನದಲ್ಲಿದೆ ಎನ್ನುವುದು ಸ್ಪಷ್ಟವಾಗಿದೆ. ಭಾರತ ಅಮೆರಿಕದ ಶೇ 50ರಷ್ಟು ಸುಂಕದ ಹೊರತಾಗಿಯೂ ಹೊಂದಿಕೊಳ್ಳುವ ಸಾಮರ್ಥ್ಯ ತೋರಿಸಿದೆ. ಆದರೆ ಹೊಂದಿಕೊಳ್ಳುವಿಕೆಯನ್ನೇ ಭದ್ರತೆ ಎಂದು ತಪ್ಪಾಗಿ ಅರ್ಥೈಸಬಾರದು. ಪ್ರಸ್ತುತ ರಫ್ತು ಪ್ರಾಬಲ್ಯವು ತಾತ್ಕಾಲಿಕ ಹೊಂದಿಕೆಗಳ ಮೇಲೆ ನಿಂತಿದೆ. ಈ ಹೊಂದಾಣಿಕೆಯನ್ನು ಸ್ಥಿರತೆ ಎಂದು ಮಾರುಕಟ್ಟೆ ವಿಶ್ಲೇಷಿಸಬಾರದು. 2026ರಲ್ಲಿ ಈ ಹೊಂದಾಣಿಕೆಯ ಪರಿಣಾಮ ಸ್ಪರ್ಧಾತ್ಮಕತೆ ನಷ್ಟ, ಕಳಪೆ ಹೂಡಿಕೆ ಅವಕಾಶಗಳು, ಉದ್ಯೋಗದ ಮೇಲಿನ ಒತ್ತಡ ಮತ್ತು ಕಾರ್ಯಯೋಜನೆಯ ಅನಿಶ್ಚಿತತೆಯಾಗಿ ಬಹಿರಂಗವಾಗಿ ಕಾಣಿಸಿಕೊಳ್ಳಲಿದೆ. ಕೃಪೆ: Economic Times
ನವದೆಹಲಿ: ಭಾರತೀಯ ರೈಲ್ವೆಯು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಿಚಾರದಲ್ಲಿ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಬೆಂಗಳೂರು ಮತ್ತು ಕರ್ನಾಟಕ ಸೇರಿದಂತೆ ದೇಶದಾದ್ಯಂತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪರಿಚಯಿಸಲಾಗಿದೆ. ಆದರೆ ಇದೀಗ ವಂದೇ ಭಾರತ್ ರೈಲಿನಲ್ಲೇ ಮತ್ತೊಂದು ಭರ್ಜರಿ ಗುಡ್ನ್ಯೂಸ್ ಕೊಡಲಾಗಿದೆ. ಅದೇನು ಎನ್ನುವ ವಿವರ ನೋಡೋಣ. ಭಾರತೀಯ ರೈಲ್ವೆಯು ವಂದೇ ಭಾರತ್ ಸ್ಲೀಪರ್ ರೈಲಿನ ವಿಚಾರದಲ್ಲಿ
Vaishnavi Sharma- ಕ್ರಿಕೆಟರ್ ಆಗ್ತಾಳೆಂದು ಜ್ಯೋತಿಷ್ಯ ನುಡಿದಿದ್ದ ತಂದೆ! ನ್ಯಾಶನಲ್ ಕ್ರಶ್ ಆದ ಪ್ರತಿಭಾವಂತೆ!
Vaishnavi Sharma Father Narendra Sharma -ಕೇವಲ ತಿಂಗಳ ಹಿಂದಷ್ಟೇ ಯಾರೂ ಆರಿಯದ ವೈಷ್ಣವಿ ಶರ್ಮಾ ಇಂದು ಭಾರತದ ಕ್ರಿಕೆಟ್ ನ ಉದಯೋನ್ಮುಖ ತಾರೆ. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ 20ರ ಹರೆಯದ ತರುಣಿ ಈ ಎಡಗೈ ಸ್ಪಿನ್ನರ್ ನ್ಯಾಶನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಅವರ ತಂದೆ, ಜ್ಯೋತಿಷಿ ನರೇಂದ್ರ ಶರ್ಮಾ, ವೈಷ್ಣವಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತಾರೆ ಎಂದು ಬಾಲ್ಯದಲ್ಲೇ ಭವಿಷ್ಯ ನುಡಿದಿದ್ದರಂತೆ. ತಂದೆಯ ಮಾರ್ಗದರ್ಶನದಿಂದ ವೈಷ್ಣವಿ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ.
Wildlife | ಕಾಡಿನಲ್ಲಿ ಹುಲಿಗಳ ಟೆರಿಟರಿ ಫೈಟ್!
ಕಾದಾಡಿ ಸಾಯುತ್ತಿರುವ Tigers; 2025ರಲ್ಲಿ 166 ಹುಲಿಗಳ ಸಾವು
Hebbal Flyover : 2ನೇ ಲೂಪ್ ಉದ್ಘಾಟನೆ - ರಾಜಧಾನಿಗೆ 3 ಮಹತ್ವದ ಯೋಜನೆಯ ಸುಳಿವು ಕೊಟ್ಟ ಡಿಸಿಎಂ
DCM DK Shivakumar on Hebbal Flyover : ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಹೆಬ್ಬಾಳ ಎರಡನೇ ಫ್ಲೈಓವರ್ ಲೂಪ್ ಉದ್ಘಾಟನೆಗೊಂಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಜೊತೆಗೆ, ನಾಲ್ಕು ಯೋಜನೆಗಳ ಸುಳಿವನ್ನು ನೀಡಿದ್ದಾರೆ.
ಗಿಗ್ ಕಾರ್ಮಿಕರ ಐಡಿಗಳನ್ನು ನಿರ್ಬಂಧಿಸಿದ ವಿತರಣಾ ಪ್ಲಾಟ್ ಫಾರ್ಮ್ ಗಳು!
ಗಿಗ್ ಕಾರ್ಮಿಕರಿಂದ ರಾಷ್ಟ್ರವ್ಯಾಪಿ ಮುಷ್ಕರ; ಬೇಡಿಕೆಗಳೇನು? ವಿದೇಶಗಳಲ್ಲಿ ಗಿಗ್ ಕಾರ್ಮಿಕರಿಗೆ ಯಾವ ರೀತಿಯ ಹಕ್ಕುಗಳಿವೆ?
ಸೇಡಂ | ಭೀಮಾ ಕೋರೆಗಾಂವ್ ಯುದ್ಧ ಹಕ್ಕುಗಳಿಗೆ ಸಂದ ಹೋರಾಟ : ಸುನೀಲಕುಮಾರ ಕೋಳಿ
ಸೇಡಂ: 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನವು ದಲಿತ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ ಹೋರಾಟಕ್ಕೆ ಸಂದ ಜಯ ಎಂದು ಮಹಾಬೋಧಿ ಚಾರಿಟೇಬಲ್ ವೇಲ್ ಫೇರ್ ಟ್ರಸ್ಟ್ ಸೇಡಂ ತಾಲೂಕು ಅಧ್ಯಕ್ಷರು ಸುನೀಲಕುಮಾರ ಕೋಳಿ ಅವರು ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಅವರಣದಲ್ಲಿ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಮಹಾಬೋಧಿ ಚಾರಿಟೇಬಲ್ ವೇಲ್ ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಾರುತಿ ಹುಳಗೋಳಕರ, ದಲಿತ ಮುಖಂಡ ದೇವಿಂದ್ರ ಹೆಗಡೆ, ಉಪಾಧ್ಯಕ್ಷರಾದ ಹಣಮಂತ ಸಾಗರ, ತಾಲೂಕು ಸಂಚಾಲಕರಾದ ರಾಜು ಡಿ. ಟಿ, ಮನೋಹರ ದೊಡ್ಡಮನಿ, ದಶರಥ ಚಿಟಕನಪಲ್ಲಿ, ಸುರೇಶ ಸೇಡಂಕರ, ದೇವಿಂದ್ರ ಛೋಟಿಗಿರಣಿ ಇತರರು ಇದ್ದರು.
ಕಲಬುರಗಿ | ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಕಲಬುರಗಿ:ಸಾಲಬಾಧೆಯಿಂದ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೇವರ್ಗಿ ತಾಲ್ಲೂಕಿನ ಕೆಲ್ಲೂರ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಕೆಲ್ಲೂರ ಗ್ರಾಮದ ನಿವಾಸಿ ನಿಂಗಣ್ಣ ಮಲ್ಲೇಶಪ್ಪ ದೇಸಾಯಿ (37) ಎಂದು ಗುರುತಿಸಲಾಗಿದೆ. ನಿಂಗಣ್ಣ ಅವರು 2.21 ಎಕರೆ ಸ್ವಂತ ಜಮೀನು ಹೊಂದಿದ್ದು, ಜೊತೆಗೆ ಹತ್ತಾರು ಎಕರೆ ಜಮೀನನ್ನು ಲೀಝ್ ಪಡೆದುಕೊಂಡು ಕೃಷಿ ಮಾಡುತ್ತಿದ್ದರು. ಈ ಬಾರಿ ಹತ್ತಿ ಸೇರಿದಂತೆ ಇತರೆ ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣವಾಗಿ ನಾಶವಾಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದರು. ತೆಗೆದುಕೊಂಡ ಸಾಲವನ್ನು ಹೇಗೆ ತೀರಿಸಬೇಕೆಂಬ ಚಿಂತೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತರು ಡಿಸಿಸಿ ಬ್ಯಾಂಕಿನಲ್ಲಿ 22 ಸಾವಿರ ರೂ. ಹಾಗೂ ಖಾಸಗಿಯಾಗಿ ಸುಮಾರು 10.5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲದ ಒತ್ತಡದಿಂದ ಮನನೊಂದು ತಮ್ಮ ಹೊಲದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ವಿಜಯಲಕ್ಷ್ಮೀ ತಿಳಿಸಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

22 C