ಕಾವೇರಿ 2.0 ಪರಿಷ್ಕರಿಸಿ, ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ ಸೌಲಭ್ಯ ಸೇರಿಸಿ: ಹೈಕೋರ್ಟ್ ಸಲಹೆ
ಕಾವೇರಿ 2.0 ತಂತ್ರಾಂಶದಲ್ಲಿ ಹೊಸ ಬದಲಾವಣೆ ತರಲು ಹೈಕೋರ್ಟ್ ಆದೇಶಿಸಿದೆ. ಸಿವಿಲ್ ಕೋರ್ಟ್ ತೀರ್ಪುಗಳನ್ನು ಪರಿಶೀಲಿಸಲು ಅವಕಾಶವಿಲ್ಲದ ಕಾರಣ ಕಾನೂನು ನಿರ್ವಾತ ಸೃಷ್ಟಿಯಾಗುತ್ತಿದೆ. ಇದನ್ನು ಸರಿಪಡಿಸಲು 'ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ' ಸೇರಿಸಲು ಸೂಚಿಸಲಾಗಿದೆ. ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಯೋಗದೊಂದಿಗೆ ಈ ಕಾರ್ಯ ನಡೆಯಲಿದ್ದು, ಇದರಿಂದ ನಾಗರಿಕರಿಗೆ ಅನುಕೂಲವಾಗಲಿದೆ.
ಕೆಸೆಟ್-2025 | ಕ್ಲೀಮ್ ಪ್ರಕಾರ ದಾಖಲೆ ಇದ್ದರೆ ಮಾತ್ರ ಪ್ರಮಾಣ ಪತ್ರ
ಬೆಂಗಳೂರು : ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ(ಕೆಸೆಟ್-25) ಅರ್ಹರಾದವರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದ್ದು, ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಕ್ಷೇಮ್ ಪ್ರಕಾರ ಮೂಲ ದಾಖಲೆಗಳನ್ನು ಸಲ್ಲಿಸಿದವರಿಗೆ ಮಾತ್ರ ಕೆಸೆಟ್ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಬುಧವಾರ ಪ್ರಕಟಣೆ ಹೊರಡಿಸಿರುವ ಅವರು, ದಾಖಲೆ ಪರಿಶೀಲನೆಗೆ ಆಹ್ವಾನಿಸುವ ದಿನದಂದು ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಮೀಸಲಾತಿ ಸಂಬಂಧಿತ ದಾಖಲೆ ಹಾಗೂ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ಹಾಜರುಪಡಿಸುವುದು ಕಡ್ಡಾಯ. ದಾಖಲೆಗಳನ್ನು ಪರಿಶೀಲಿಸಿ, ಸರಿ ಇದ್ದರೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಪ.ಜಾತಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು RD ಸಂಖ್ಯೆ ಇರುವ, ತಹಶೀಲ್ದಾರರಿಂದ ವಿತರಿಸಲ್ಪಟ್ಟ ಪ್ರಮಾಣ ಪತ್ರವನ್ನು ದಾಖಲೆ ಪರಿಶೀಲನೆ ವೇಳೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಒಂದು ವೇಳೆ ಹಾಜರುಪಡಿಸದಿದ್ದಲ್ಲಿ ಪ್ರಮಾಣ ಪತ್ರ ನೀಡಲಾಗುವುದಿಲ್ಲ. ಹಾಗೂ ಆ ಪ್ರವರ್ಗಕ್ಕೆ ನಿಗದಿಯಾಗಿರುವ ಸ್ಲಾಟ್ಗಳನ್ನು ಭರ್ತಿ ಮಾಡಲು ಅವರ ನಂತರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿಯಮ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂವಿಧಾನ ಬಯಸಿದಂತಹ ಪರಿಪೂರ್ಣ ಅಭಿವೃದ್ಧಿಯನ್ನು ಮಾಡಲು ಇನ್ನೂ ಸಾಧ್ಯವಾಗಿಲ್ಲ: ಮಹದೇವಪ್ಪ
ಸಂವಿಧಾನ ದಿನಾಚರಣೆ-2025 ಸಮಾರಂಭ
ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳೊಂದಿಗೆ ಸಿಎಂ ಸಭೆ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೆಎಸ್ಸಾರ್ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೆ ಸಭೆ ನಡೆಸಿದರು. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಯ ಮುಖಂಡ ಅನಂತಸುಬ್ಬರಾವ್ ಮತ್ತು ಸಾರಿಗೆ ನಿಗಮಗಳ ಅಧ್ಯಕ್ಷರು, ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಹಣಕಾಸು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಸಾರಿಗೆ ನೌಕರರಿಗೆ 38 ತಿಂಗಳ ವೇತನ ಬಾಕಿ ಬರಬೇಕು. ಅದರಲ್ಲಿ 14 ತಿಂಗಳ ವೇತನ ಕೊಡುವುದಾಗಿ ಹೇಳುತ್ತಿದ್ದಾರೆ. 2024ರಲ್ಲಿ ವೇತನ ಪರಿಷ್ಕರಣೆಯಾಗಬೇಕಿತ್ತು. ಆದರೆ, 2026ರಲ್ಲಿ ಮಾಡುವುದಾಗಿ ಹೇಳುತ್ತಿದ್ದಾರೆ. ಒಂದು ಸಾವಿರ ಕೋಟಿ ರೂ.ವಿಚಾರಕ್ಕೆ ಚೌಕಾಸಿ ನಡೆಯುತ್ತಿದೆ. ಡಿ.6ರಂದು ಮತ್ತೆ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಅನಂತ ಸುಬ್ಬರಾವ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಸಮಾಜಕ್ಕೆ ಆರೆಸ್ಸೆಸ್ ಕೊಡುಗೆ ಏನು? : ಚಿಂತಕಿ ಕೆ.ನೀಲಾ
ಕೋಲಾರ : ಸಂವಿಧಾನ ರಥ ಸಂಚಲನ ಜಾಥಾ ಕಾರ್ಯಕ್ರಮ
ರಾಜ್ಯದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೇಂದ್ರದ ಒಲವು
ಹೊಸದಿಲ್ಲಿ : ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪ್ರಸ್ತಾಪಿತ ಕರ್ನಾಟಕದ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕರ್ನಾಟಕದ ಕೈಗಾರಿಕೆ ಹಾಗೂ ಸಾಗಣೆ ಕ್ಷೇತ್ರಗಳಿಗೆ ಪರಿವರ್ತನಾತ್ಮಕ ಕಾಯಕಲ್ಪ ನೀಡುವ ಈ ಯೋಜನೆಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂಭತ್ತು ಕೈಗಾರಿಕಾ ಪಾರ್ಕ್ ಗಳನ್ನು ಸ್ಥಾಪಿಸುವ ಬಗ್ಗೆ ಒಲವು ತೋರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ನ.13ರಂದು ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ಸುವಿಶಾಲವಾದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಮಾಡಬೇಕೆಂದು ಕೋರಿ ಮನವಿಯನ್ನು ಸಲ್ಲಿಸಿ ಮಾತುಕತೆ ನಡೆಸಿದ್ದರು. ಕುಮಾರಸ್ವಾಮಿ ಅವರ ಪ್ರಸ್ತಾವನೆಯನ್ನು ರಾಜ್ಯದ ಅಭಿವೃದ್ಧಿಗೆ ಪರಿವರ್ತನಾತ್ಮಕ ಪರಿಕಲ್ಪನೆ ಎಂದು ಶ್ಲಾಘಿಸಿದ್ದ ಗೋಯಲ್, ಈ ಬಗ್ಗೆ ಉತ್ತರವನ್ನು ಬರೆದಿದ್ದಾರೆ. ಕರ್ನಾಟಕದ ಪ್ರಾದೇಶಿಕ ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ಇದು ಪೂರಕವಾಗಿದೆ. ಇಂಥ ಆಕಾಂಕ್ಷೆಗಳನ್ನು ಈಡೇರಿಸುವ ಕೇಂದ್ರದ ರಚನಾತ್ಮಕ ಕೇಂದ್ರ ನೀತಿಯನ್ನು ಕಾರ್ಯರೂಪಕ್ಕೆ ತರುವಲ್ಲಿ ಈ ಕ್ರಮವು ಒಂದು ಪ್ರಮುಖ ಆರಂಭಿಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಕೈಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕದಾದ್ಯಂತ ಸೂಕ್ತ ಕೈಗಾರಿಕಾ ಕಾರಿಡಾರ್ ಯೋಜನೆಯ ಚೌಕಟ್ಟಿನಡಿಯಲ್ಲಿ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸುವ ಕುರಿತಂತೆ ಗೋಯಲ್ ಅವರನ್ನು ಕುಮಾರಸ್ವಾಮಿ ಮನವೊಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪದಂತೆ ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಯನ್ನು ಬಲಪಡಿಸಿ ಉತ್ತೇಜಿಸಲು, ಸಾಗಾಣಿಕೆಯ ಮೂಲಸೌಕರ್ಯವನ್ನು ಅಧಿಕವಾಗಿ ಅಭಿವೃದ್ಧಿಪಡಿಸಲು ಹಾಗೂ ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಈ ಯೋಜನೆಯು ಬಹುದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂಬ ಅಂಶವನ್ನು ಗೋಯಲ್ ಅವರ ಜತೆ ಕುಮಾರಸ್ವಾಮಿ ಚರ್ಚಿಸಿದ್ದರು. ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಕರ್ನಾಟಕದಲ್ಲಿ ಸರಕು, ಕೈಗಾರಿಕೆ ಉತ್ಪನ್ನಗಳ ಸಾಗಣೆ ಸುಲಭವಾಗಿ ಕೈಗಾರಿಕಾಭಿವೃದ್ಧಿ ವೇಗಗತಿಯಲ್ಲಿ ಸಾಗುತ್ತದೆ. ಉದ್ದೇಶಿತ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದರೆ ಇಡೀ ರಾಜ್ಯಕ್ಕೆ ನಾಲ್ಕು ದಿಕ್ಕುಗಳ್ಳಿಯೂ ಅನುಕೂಲ ಆಗುತ್ತದೆ. ಈ ಪ್ರಸ್ತಾವಿತ ಕೈಗಾರಿಕಾ ಪಾರ್ಕುಗಳನ್ನು ಸೂಕ್ತವಾದ ಕೈಗಾರಿಕಾ ಕಾರಿಡಾರ್ ಇಲ್ಲವೇ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ ಚೌಕಟ್ಟಿನ ಅಡಿಯಲ್ಲಿ ಪರಿಗಣಿಸಬೇಕೆಂದು ವಿನಂತಿಸಿದ ಕುಮಾರಸ್ವಾಮಿ, ಈ ಜಿಲ್ಲೆಗಳನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ಗಳಿಗೆ ಸಂಯೋಜಿಸುವ ಮೂಲಕ ಕರ್ನಾಟಕವು ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಅನುಕೂಲವಾಗುತ್ತದೆ. ಅಲ್ಲದೆ, ಸಾಕಾಣಿಗೆ ಸುಲಭವಾಗಿ ಖಾಸಗಿ ಬಂಡವಾಳ ಹೂಡಿಕೆಯಲ್ಲೂ ಗಮನಾರ್ಹ ಪ್ರಗತಿ ಸಾಧಿಸಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಸಮಾನ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ: ಪ್ರಸ್ತಾವಿತ ಈ ಕೈಗಾರಿಕಾ ಪಾರ್ಕುಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ, ಪ್ರಾದೇಶಿಕ ಪೂರೈಕೆ ಸರಪಳಿಯ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸುವ ಹಾಗೂ ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಲ್ಲಿ ಸಾಗಣೆ ಮತ್ತು ಉತ್ಪಾದನೆಯಿಂದ ಮೊದಲುಗೊಂಡು ರಾಯಚೂರಿನಲ್ಲಿ ಕೃಷಿ ಸಂಸ್ಕರಣೆ, ಮೈಸೂರು ಮತ್ತು ಕೋಲಾರದಲ್ಲಿ ಮೌಲ್ಯವರ್ಧಿತ ವಲಯಗಳ ವಿಸ್ತರಣೆವರೆಗೆ ವಿಶೇಷ ಕೈಗಾರಿಕಾ ಸಮೂಹಗಳನ್ನು ಉತ್ತೇಜಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ. ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚೆ ಉತ್ತಮವಾಗಿತ್ತು. ಅವರು ಈ ಪ್ರಸ್ತಾವನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಸಾಕಾರಕ್ಕೆ ಈ ಯೋಜನೆ ಪೂರಕವಾಗಿದೆ. ಉತ್ಪಾದನೆ ಮತ್ತು ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಕೇಂದ್ರ ಸರ್ಕಾರದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಬೃಹತ್ ಮತ್ತು ಉಕ್ಕು ಖಾತೆ ಸಚಿವ
ಬೆಂಗಳೂರು | ಉದ್ಯಮಿ ಅಪಹರಿಸಿ ಸುಲಿಗೆ ಪ್ರಕರಣ; ರೌಡಿಶೀಟರ್ ಬೇಕರಿ ರಘು ಬಂಧನ
ಬೆಂಗಳೂರು : ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ರೌಡಿಶೀಟರ್ ರಾಘವೇಂದ್ರ ಯಾನೆ ಬೇಕರಿ ರಘುನನ್ನು ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(ಕೋಕಾ)ಯಡಿ ರಘುನನ್ನು ಬಂಧಿಸಲಾಗಿದೆ. ಉದ್ಯಮಿ ಎಚ್.ವಿ.ಮನೋಜ್ ಎಂಬವರನ್ನು ಅಪಹರಿಸಿ ಬೆದರಿಸಿದ್ದ ಆರೋಪದಡಿ 2025ರ ಆಗಸ್ಟ್ನಲ್ಲಿ ರಾಜೇಶ್ ಯಾನೆ ಅಪ್ಪಿ, ಸೀನಾ ಯಾನೆ ಬಾಂಬೆ ಸೀನ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಎಂಬ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ಬೇಕರಿ ರಘು ಕೈವಾಡವಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ಆತನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಉದ್ಯಮಿ ಎಚ್.ವಿ.ಮನೋಜ್ ಅವರಿಗೆ ಪರಿಚಿತನಾಗಿದ್ದ ರಾಜೇಶ್, ಸಿನೆಮಾ ನಿರ್ದೇಶಕರೊಬ್ಬರಿಗೆ 1.20 ಲಕ್ಷ ರೂಪಾಯಿ ಸಾಲ ಕೊಡಿಸಿದ್ದ. ಆದರೆ, ಒಂದು ವರ್ಷ ಕಳೆದರೂ ಸಾಲದ ಹಣವನ್ನು ನಿರ್ದೇಶಕ ಹಿಂತಿರುಗಿಸದಿದ್ದಾಗ ರಾಜೇಶ್ ಮೇಲೆ ಎಚ್.ವಿ.ಮನೋಜ್ ಒತ್ತಡ ಹೇರಿದ್ದರು. ಆ.26ರಂದು ಸಂಜೆ ಹಣ ಕೊಡುವುದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್ಗೆ ಎಚ್.ವಿ.ಮನೋಜ್ ಅವರನ್ನು ರಾಜೇಶ್ ಕರೆಸಿಕೊಂಡಿದ್ದ. ಬಳಿಕ ದೊಡ್ಡವರು ಹಣ ಕೊಡು ತ್ತಾರೆ ಎಂದು ಕಾರಿಗೆ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದ. ಮಾರ್ಗ ಮಧ್ಯೆ ಎಚ್.ವಿ.ಮನೋಜ್ ಅವರನ್ನು ಮತ್ತೊಂದು ಕಾರಿನಲ್ಲಿ ಕೂರಿಸಿಕೊಂಡು ಆರೋಪಿಗಳು ಅಪಹರಿಸಿದ್ದರು ಎಂದು ಉದ್ಯಮಿ ಎಚ್.ವಿ.ಮನೋಜ್ ದೂರು ದಾಖಲಿಸಿದ್ದರು. ಅಲ್ಲದೇ, ಡ್ಯಾಗರ್ ತೋರಿಸಿ, ಬೆದರಿಸಿ ಮನೋಜ್ ಅವರ ಎರಡು ಖಾತೆಗಳಿಂದ ಒಟ್ಟು 2.96 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ನಂತರವೂ 10 ಲಕ್ಷ ರೂ. ಕೊಡುವಂತೆ ಬೆದರಿಸಿದ್ದರು. ಹಣ ನೀಡುವುದಾಗಿ ಮನೋಜ್ ಒಪ್ಪಿಕೊಂಡ ಬಳಿಕ ಮಾರನೇ ದಿನ ಮಧ್ಯಾಹ್ನ ಅವರನ್ನು ಜ್ಞಾನಭಾರತಿ ಕ್ಯಾಂಪಸ್ ಬಳಿ ಕಾರಿನಿಂದ ಇಳಿಸಿ ಹೊರಟು ಹೋಗಿದ್ದರು. ಬಳಿಕ ಸಿಸಿಬಿ ಪೊಲೀಸರಿಗೆ ಮನೋಜ್ ದೂರು ನೀಡಿದ್ದರು. ಆರೋಪಿ ಬೇಕರಿ ರಘು ವಿರುದ್ಧ ಬೆಂಗಳೂರಿನ 10 ಠಾಣೆಗಳಲ್ಲಿ ಸುಮಾರು 20ಕ್ಕೂ ಅಧಿಕ ಪ್ರಕರಣಗಳಿದ್ದವು. ನ.25ರ ಮಂಗಳವಾರ ಮಂಡ್ಯದ ಎನ್.ಎಸ್.ಡಾಬಾ ಬಳಿ ಆತನನ್ನು ಬಂಧಿಸಲಾಗಿದೆ. ಬಂಧನಕ್ಕೆ ತೆರಳಿದ್ದಾಗ ಮಹಿಳೆಯೊಬ್ಬರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಅವರ ವಿರುದ್ಧ ಮಂಡ್ಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. -ಶ್ರೀಹರಿಬಾಬು ಬಿ.ಎಲ್., ಸಿಸಿಬಿ ಡಿಸಿಪಿ
ಮೂಡುಬಿದಿರೆ | ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ : ಶಾಸಕ ಉಮಾನಾಥ ಎ.ಕೋಟ್ಯಾನ್
ಮೂಡುಬಿದಿರೆ : ಜಗತ್ತಿನ ಶ್ರೇಷ್ಠ ಮತ್ತು ಪವಿತ್ರವಾದ ಸಂವಿಧಾನ ವಿದ್ದರೆ ಅದು ಭಾರತದ ಸಂವಿಧಾನ ಮಾತ್ರ. ನಮ್ಮ ಸಂವಿಧಾನಕ್ಕೆ ನಾವು ಗೌರವವನ್ನು ನೀಡಬೇಕು, ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಓದಿ ತಿಳಿದುಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು. ಅವರು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಸಮಾಜ ಕಲ್ಯಾಣ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದರು. ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಮಾತನಾಡಿ, ವಿದ್ಯಾರ್ಥಿಗಳು ತಾವು ಯಾವ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಇಚ್ಛೆ ಇಟ್ಟಿರುವಿರೋ ಅದಕ್ಕಿಂತ ಮೊದಲು ಸಂವಿಧಾನದ ಮೂಲ ಆಶಯಗಳನ್ನು ತಿಳಿದುಕೊಳ್ಳಬೇಕು. ಜನಪರ ಕಾಳಜಿ, ಸಮಾಜಮುಖಿ ಚಿಂತನೆ ದೀನ ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ವಿಶೇಷ ಆದ್ಯತೆಯಲ್ಲಿ ಸೇವೆ ನೀಡಬೇಕು ಎಂದ ಅವರು, ಸಮಗ್ರ ಹಾಗೂ ಸದೃಢ ಕಟ್ಟಲು ಸಂವಿಧಾನವನ್ನು ಸರಿಯಾಗಿ ಅಥೈ೯ಸಿಕೊಳ್ಳಬೇಕೆಂದು ಸಲಹೆ ನೀಡಿದರು. ಶ್ರೀ ಮಹಾವೀರ ಕಾಲೇಜಿನ ಉಪನ್ಯಾಸಕಿ ಪದ್ಮಶ್ರೀ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂವಿಧಾನದ ಬಗ್ಗೆ ಮಾತನಾಡಿದರು. ಸನ್ಮಾನ : ಮೂಡುಬಿದಿರೆ ತಾಲೂಕಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲಬೆಟ್ಟುವಿನ ಅಪೂರ್ವ, ಚಿತ್ರಕಲೆ ಸ್ಪರ್ಧೆಯಲ್ಲಿ ಬಿ.ಆರ್.ಪಿ ಯ ಸಾನ್ವಿ, ನಿಲಿಮಾ ಜೆನವಿವ್ ಫೆರ್ನಾಂಡಿಸ್ ಹಾಗೂ ಜೈನ ಪ್ರೌಢಶಾಲೆಯ ಸಮರ್ಥ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ರಾಜೇಶ್ ಕಡಲಕೆರೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನವೀನ್ ಪುತ್ರನ್, ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಉಪಸ್ಥಿತರಿದ್ದರು. ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ಉಪ ತಹಶೀಲ್ದಾರ್ ರಾಮ ಕೆ. ಸಂವಿಧಾನ ಪೀಠಿಕೆ ಓದಿದರು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು.
ಬಳಕೆದಾರರ ಖಾತೆಯ ಮಾಹಿತಿ ಕೋರಿಕೆ; ಫೋನ್ಪೇ ಮೇಲ್ಮನವಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು : ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖಾಧಿಕಾರಿಯು ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ಒದಗಿಸಲು ನೀಡಿದ್ದ ನೋಟಿಸ್ ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಫೋನ್ಪೇ ಸಲ್ಲಿಸಿರುವ ಮೇಲ್ಮನವಿ ಕುರಿತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ಒದಗಿಸುವಂತೆ ಪೊಲೀಸರು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 91ರ ಅಡಿ ನೀಡಿರುವ ನೋಟಿಸ್ ಪ್ರಶ್ನಿಸಿ ಫೋನ್ಪೇ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಫೋನ್ಪೇ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಮೇಲ್ಮನವಿದಾರರ ಪರವಾಗಿ ವಾದ ಮಂಡಿಸಿದ ವಕೀಲ ನಿತಿನ್ ರಮೇಶ್ ಅವರು, ಸಿಆರ್ಪಿಸಿ ಸೆಕ್ಷನ್ 91 ಹಾಗೂ 'ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆ ಕಾಯ್ದೆ' ಸೆಕ್ಷನ್ 22 ಹಾಗೂ 'ಬ್ಯಾಂಕರ್ಸ್ ಬುಕ್ ಸಾಕ್ಷ್ಯ ಕಾಯ್ದೆ' ಸಂಬಂಧಿಸಿದ ಪ್ರಕರಣ ಇದಾಗಿದೆ. ಸಿಆರ್ಪಿಸಿ ಸೆಕ್ಷನ್ 91ರ ಅಡಿ ನೋಟಿಸ್ ಜಾರಿ ಮಾಡಿ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆ ಕಾಯ್ದೆ ಆಡಳಿತಕ್ಕೆ ಒಳಪಡುವ ಯುಪಿಐ ಸೇವೆ ನೀಡುವ ಸಂಸ್ಥೆಯಿಂದ ಇಡೀ ಮಾಹಿತಿಯನ್ನು ಕೋರಬಹುದೇ? ಕಾಯ್ದೆ ಅಡಿ ನಮಗೆ ಪರವಾನಗಿ ಸಹ ನೀಡಲಾಗಿದೆ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆ ಕಾಯ್ದೆ ಸೆಕ್ಷನ್ 22ರ ಪ್ರಕಾರ ಯುಪಿಐ ಸೇವೆ ನೀಡುವವರನ್ನು ಬ್ಯಾಂಕರ್ಸ್ ಬುಕ್ ಸಾಕ್ಷ್ಯ ಕಾಯ್ದೆ ಅಡಿ ಬ್ಯಾಂಕ್ಗಳಿಗೆ ಸಮನಾಗಿ ಪರಿಗಣಿಸಲಾಗುತ್ತದೆ. ಏಕಸದಸ್ಯ ನ್ಯಾಯಪೀಠವು ಯುಪಿಐ ಮಧ್ಯಸ್ಥಿಕೆ ಸಂಸ್ಥೆಗಳಿಗೆ ರಕ್ಷಣೆ ನೀಡಿರುವುದನ್ನು ಗುರುತಿಸಿಲ್ಲ ಎಂದು ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆ ಮತ್ತು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು 2026ರ ಫೆಬ್ರವರಿ 12ಕ್ಕೆ ಮುಂದೂಡಿತು. ಪ್ರಕರಣವೇನು? ವ್ಯಕ್ತಿಯೊಬ್ಬರು ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯಕ್ಕೆ ಬೆಟ್ಟಿಂಗ್ ಮಾಡುವ ಸಂಬಂಧ ಕ್ರೀಡಾ ವೆಬ್ಸೈಟ್ ಒಂದಕ್ಕೆ ಸುಮಾರು 6 ಸಾವಿರ ರೂ. ಠೇವಣಿ ಇಡಲು ಫೋನ್ ಪೇ ಬಳಕೆ ಮಾಡಿದ್ದರು. ಆದರೆ, ಆನಂತರ ಅವರು ತಮ್ಮ ವರ್ಚುವಲ್ ವಾಲೆಟ್ ಮೂಲಕ ಹಣ ಹಿಂಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ವೆಬ್ಸೈಟ್ ಅನ್ನು ನಿರ್ಬಂಧಿಸಲಾಗಿತ್ತು. ಇದರಿಂದ, ಆ ವ್ಯಕ್ತಿಯು ತನಗೆ ವಂಚನೆಯಾಗಿದೆ ಎಂದು ಆರೋಪಿಸಿ, ಹಣ ವಾಪಸ್ ಕೊಡಿಸುವಂತೆ ದೂರು ಸಲ್ಲಿಸಿದ್ದರು. ಇದರ ಆಧಾರದಲ್ಲಿ ಫೋನ್ಪೇಗೆ ಅದರ ವೇದಿಕೆ ಬಳಕೆ ಮಾಡಿ ಜೂಜಿನ ವೆಬ್ಸೈಟ್ಗೆ ಹಣ ಠೇವಣಿ ಇಟ್ಟಿರುವ ಸಂಬಂಧ ಮಾಹಿತಿ ನೀಡುವಂತೆ ಸಿಆರ್ಪಿಸಿ ಸೆಕ್ಷನ್ 91ರ ಅಡಿ 2022ರ ಡಿಸೆಂಬರ್ನಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಬಳಕೆದಾರ ಯಾರಿಗೆ ಹಣ ಪಾವತಿಸಿದ್ದಾರೆ? ಅಂಥ ಗ್ರಾಹಕರನ್ನು ಸೇರ್ಪಡೆ ಮಾಡುವುದಕ್ಕೂ ಮುನ್ನ ಫೋನ್ಪೇ ಅವರಿಗೆ ವಿವರಣೆ ನೀಡಿತ್ತೇ? ವಂಚನೆ ಆಗುತ್ತಿರುವ ಬಗ್ಗೆ ಫೋನ್ಪೇಗೆ ತಿಳಿದಿತ್ತೇ? ತನ್ನ ವೇದಿಕೆಯಲ್ಲಿ ಆನ್ಲೈನ್ ಜೂಜು ನಡೆಯುತ್ತಿರುವುದು ಪತ್ತೆ ಮಾಡಿತ್ತೇ ಎನ್ನುವ ಪ್ರಶ್ನೆಗಳೂ ಸೇರಿದಂತೆ ಆನ್ಲೈನ್ ಜೂಜಿನಲ್ಲಿ ತೊಡಗಿರುವ ಗ್ರಾಹಕರ ಪಟ್ಟಿ ಒದಗಿಸುವಂತೆ ಪೊಲೀಸ್ ನೋಟಿಸ್ನಲ್ಲಿ ಕೋರಲಾಗಿತ್ತು. ಇದನ್ನು ಪ್ರಶ್ನಿಸಿ ಫೋನ್ಪೇ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಗೌಪ್ಯವಾಗಿಡಬೇಕಾದ ಮಾಹಿತಿಯನ್ನು ಬಹಿರಂಗಗೊಳಿಸಲಾಗದು ಎಂಬ ಫೋನ್ಪೇ ವಾದವನ್ನು ಒಪ್ಪಲಾಗದು. ಕಾನೂನುಬದ್ಧವಾಗಿ ಸಾಕ್ಷಿ ಸಂಗ್ರಹಿಸಿ, ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತನಿಖಾಧಿಕಾರಿಯ ಕೈಯನ್ನು ಗ್ರಾಹಕರ ಖಾಸಗಿತನ ರಕ್ಷಣೆ ಹೆಸರಿನ ನೆಪದಲ್ಲಿ ಕಟ್ಟಿಹಾಕಲಾಗದು. ಹೊಣೆಗಾರಿಕೆ ಮತ್ತು ಗೌಪ್ಯತೆ ಒಟ್ಟೊಟ್ಟಿಗೆ ಸಾಗಬೇಕು ಎಂದು ಆದೇಶಿಸಿತ್ತು. ಕ್ರಿಮಿನಲ್ ಚಟುವಟಿಕೆಯ ವಾಸನೆ ಕಂಡುಬಂದಾಗ ಸಂಸ್ಥೆಗಳು ತನಿಖಾ ಸಮನ್ಸ್ನಿಂದ ಹಿಂದೆ ಸರಿಯಲಾಗದು ಎಂದು ಬಾಂಬೆ, ಮದ್ರಾಸ್ ಮತ್ತು ಕೇರಳ ಹೈಕೋರ್ಟ್ ಹೇಳಿವೆ. ಆದ್ದರಿಂದ, ಸಾರ್ವಜನಿಕ ಹಿತಾಸಕ್ತಿ ಮತ್ತು ಕ್ರಿಮಿನಲ್ ತನಿಖೆಯ ವಿಷಯ ಬಂದಾಗ ದತ್ತಾಂಶ ರಕ್ಷಣೆಯ ಕರ್ತವ್ಯ ತಲೆಬಾಗಬೇಕಾಗುತ್ತದೆ. ತನಿಖಾಧಿಕಾರಿ ಕೇಳುವ ಮಾಹಿತಿಯು ನಿರ್ದಿಷ್ಟವಾಗಿರಬೇಕು. ಈ ನೆಲೆಯಲ್ಲಿ ಪೊಲೀಸರು ಫೋನ್ಪೇಗೆ ಜಾರಿ ಮಾಡಿರುವ ನೋಟಿಸ್ ಕಾನೂನುಬಾಹಿರವಲ್ಲ. ಇಲ್ಲಿ ಹಲವು ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದ್ದು, ಅಕ್ರಮ ಹಣಕಾಸು ವ್ಯವಹಾರ ಪತ್ತೆ ಮಾಡುವ ಗುರಿಯನ್ನು ತನಿಖೆ ಹೊಂದಿದೆ ಎಂದು ಅಭಿಪ್ರಾಯಪಟ್ಟು ಫೋನ್ಪೆ ಅರ್ಜಿ ವಜಾಗೊಳಿಸಿತ್ತು.
ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ - ಅಯೋಧ್ಯೆ ಸಮಾರಂಭ ಟೀಕಿಸಿದ್ದಕ್ಕೆ ಭಾರತ ತಿರುಗೇಟು
ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಟೀಕೆಗಳಿಗೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. 'ಇತರರಿಗೆ ನೀತಿ ಪಾಠ ಹೇಳುವ ನೈತಿಕ ಅರ್ಹತೆ ಪಾಕಿಸ್ತಾನಕ್ಕಿಲ್ಲ' ಎಂದು ಭಾರತ ಸ್ಪಷ್ಟಪಡಿಸಿದೆ. ಸ್ವದೇಶದ ಮಾನವ ಹಕ್ಕುಗಳ ಪರಿಸ್ಥಿತಿಯತ್ತ ಗಮನ ಹರಿಸುವಂತೆ ಪಾಕಿಸ್ತಾನಕ್ಕೆ ಭಾರತ ಕಿವಿಮಾತು ಹೇಳಿದೆ. ಬಿಜೆಪಿ ಕೂಡ ಪಾಕಿಸ್ತಾನದ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದು, ಇದು ರಾಮ ಮಂದಿರ ನಿರ್ಮಾಣದ ಯಶಸ್ವಿ ಮುಕ್ತಾಯದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮಂಗಳೂರು | ಕದ್ರಿ ಹುತಾತ್ಮ ಯೋಧರ ಸ್ಮಾರಕದಲ್ಲಿ ಗೌರವಾರ್ಪಣೆ : ಸಂವಿಧಾನದ ಪೀಠಿಕೆ ವಾಚನ
ಮಂಗಳೂರು,ನ.26 : ಕದ್ರಿಯ ಹುತಾತ್ಮ ಯೋಧರ ಸ್ಮಾರಕದ ಬಳಿ ಹಾಗೂ ಕದ್ರಿ ಉದ್ಯಾನವನದಲ್ಲಿ ನಿರ್ಮಿಸಲಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವೇದಿಕೆಯಲ್ಲಿ ಬುಧವಾರ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮಂಗಳೂರು ಇದರ ವತಿಯಿಂದ ಹಮ್ಮಿಕೊಂಡ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ ಮತ್ತು ಸಂವಿಧಾನ ದಿನದ ಅಂಗವಾಗಿ ಯೋಧರ ಸ್ಮಾರಕದ ಬಳಿ ಹುತಾತ್ಮ ಯೋಧರನ್ನು ಸ್ಮರಿಸಿ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಲಾಯಿತು. ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಸ್ಕೇಟಿಂಗ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಮುಂಬಯಿಯಲ್ಲಿ 2008ರಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಿ ದೇಶದ ಸಂವಿಧಾನವನ್ನು ಸಮರ್ಪಿಸಿದ ನ.26 ದಿನದ ಮಹತ್ವದ ಬಗ್ಗೆ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ.ಮೆಲ್ವಿನ್ ಜೊಸೆಫ್ ಪಿಂಟೊ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಆರ್.ಪಿ.ರೈ, ಕಮಾಂಡ ರ್ ಲಿಬನ್ ಎ ಜೋನ್ಸನ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ನಿವೃತ್ತ ಶಿಕ್ಷಕ ಕೊಜಂಪಾಡಿ ಸುಬ್ರಹ್ಮಣ್ಯ ಭಟ್, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮಂಗಳೂರು ಫ್ರಾಂಕ್ಲಿನ್ ಮೊಂತೆರೋ, ನಿವೃತ್ತ ಯೋಧರು ಹಾಗೂ ಯೋಧರ ಕುಟುಂಬದ ಸದಸ್ಯರು ಸೇರಿದಂತೆ ಎನ್ ಸಿಸಿ, ಎನ್ ಎಸ್ಎಸ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿ ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭರತ ನಾಟ್ಯದ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ವಿದುಷಿ ರೆಮೋನಾ ಇವೆಟ್ ಪಿರೇರಾ ಅವರ ನೃತ್ಯ ಕಾರ್ಯಕ್ರಮ ನಡೆಯಿತು.
ಮಂಗಳೂರು | ಬಿ.ಫಾರ್ಮ್ ಪರೀಕ್ಷೆ : ಫಾದರ್ ಮುಲ್ಲರ್ ಕಾಲೇಜಿಗೆ ಶೇ.94 ಫಲಿತಾಂಶ
ಮಂಗಳೂರು, ನ.26: ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ನಡೆಸಿದ 2ನೇ ಸೆಮಿಸ್ಟರ್ ಬಿ. ಫಾರ್ಮ್ ಪರೀಕ್ಷೆಯಲ್ಲಿ ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಶೇ.94 ಫಲಿತಾಂಶ ದಾಖಲಿಸಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 4 ವಿದ್ಯಾರ್ಥಿಗಳು ಪ್ರಥಮ ದರ್ಜೆ ಗಳಿಸಿದ್ದಾರೆ. ರೋಗಶಾಸ್ತ್ರ ಮತ್ತು ಔಷಧೀಯ ಸಾವಯವ ರಸಾಯನಶಾಸ್ತ್ರ ಶೇ.100, ಜೀವರಸಾಯನಶಾಸ್ತ್ರ, ಮಾನವ ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ ವಿಷಯದಲ್ಲಿ ಶೇ.94 ಫಲಿತಾಂಶ ಬಂದಿದೆ. ಕಾಲೇಜಿನ ಸಾಧನೆಗೆ ಎಫ್ಎಂಸಿಐ ನಿರ್ದೇಶಕ ಫಾ.ಫೌಸ್ಟಿನ್ ಲ್ಯೂಕಾಸ್ ಲೋಬೊ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ. ಆಡಳಿತಾಧಿಕಾರಿ ಫಾ.ಡೊನಾಲ್ಡ್ ನೀಲೇಶ್ ಕ್ರಾಸ್ತಾ ಮತ್ತು ಪ್ರಾಂಶುಪಾಲ ಡಾ.ಎಸ್.ಸತೀಶ್ರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಬಂಟ್ವಾಳ | ಪುದು ಗ್ರಾಮ ಪಂಚಾಯತ್ ನಿಂದ ತ್ಯಾಜ್ಯ ಎಸೆದ ವ್ಯಕ್ತಿಗೆ 3,000 ರೂ. ದಂಡ
ಬಂಟ್ವಾಳ : ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೆಮಾರ್ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯಲು ಮುಂದಾದ ವ್ಯಕ್ತಿಯಿಂದ ಪಂಚಾಯತ್ ಮೂರು ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ. ಪುದು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರಮ್ಲಾನ್ ಮಾರಿಪಳ್ಳ ಅವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಥಮ ಸಭೆಯಲ್ಲೇ ನಿರ್ಣಯ ಕೈಗೊಂಡಿದ್ದರು. ಅದೂ ಅಲ್ಲದೆ ಕಸ ಎಸೆಯುವವರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದವರಿಗೆ ಒಂದು ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು. ಅಮೆಮಾರ್ ಎಂಬಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವವರು ತಡರಾತ್ರಿ ತ್ಯಾಜ್ಯವನ್ನು ಎಸೆಯಲು ಬಂದಾಗ ಸ್ಥಳೀಯರು ತಡೆದು ಕಸ ಎಸೆದವರ ಮಾಹಿತಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ರವರಿಗೆ ತಿಳಿಸಿದ್ದರು. ಅಧ್ಯಕ್ಷರು ಪೋಲಿಸರ ಸಹಕಾರದೊಂದಿಗೆ ಮಾಹಿತಿ ಕಲೆ ಹಾಕಿ ಅದರಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ಸ್ಮೃತಿ ಯು., ಅವರು ಕಸ ಎಸೆಯಲು ಬಂದವರಿಂದ 3,000 ರೂ. ದಂಡವನ್ನು ವಸೂಲಿ ಮಾಡಿ ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆ ಎಂದು ಪುದು ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ.
ಮಂಗಳೂರು | ಮೃತದೇಹದ ಗುರುತು ಪತ್ತೆಗೆ ಮನವಿ
ಮಂಗಳೂರು, ನ.26: ನಗರದ ಬಲ್ಮಠ ರಸ್ತೆಯಲ್ಲಿರುವ ದೀಪಕ್ ಅಟೋ ಸ್ಪೇರ್ ಅಂಗಡಿಯ ಎದುರು ಬಿದ್ದುಕೊಂಡಿದ್ದ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ನ.24ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಚಹರೆ: 5.11 ಅಡಿ ಎತ್ತರ, ಗೋಧಿ ಮೈ ಬಣ್ಣ, ದೃಢಕಾಯ ಶರೀರದ ಈ ವ್ಯಕ್ತಿ ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರು. ಈ ಮೃತದೇಹದ ಗುರುತು ಸಿಕ್ಕಲ್ಲಿ ಬಂದರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
ಸುಳ್ಯ | ಮನೆಗೆ ನುಗ್ಗಿ ಕಾಣಿಕೆ ಡಬ್ಬಿ ಕಳವು
ಸುಳ್ಯ, ನ.26: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿ ಕಳವುಗೈದ ಘಟನೆ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬಿಳಿಯಾರು ಬಸ್ ನಿಲ್ದಾಣ ಬಳಿ ಇರುವ ಅಬ್ದುಲ್ಲ ಮಾವಿನಕಟ್ಟೆ ಅವರ ಮನೆಯ ಹಿಂಬಾಗಿಲು ಮುರಿದು ಒಳನು ಗ್ಗಿದ ಕಳ್ಳರು ಮನೆಯನ್ನು ಜಾಲಾಡಿದ್ದಾರೆ. ಈ ವೇಳೆ ಏನು ಸಿಗದಿದ್ದಾಗ ನಾಲ್ಕು ಕಾಣಿಕೆ ಡಬ್ಬಿಗಳನ್ನು ಕದ್ದೊಯ್ದಿದ್ದಾರೆ. ಮಾಹಿತಿ ತಿಳಿದ ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು | ಕಸ್ಟಮ್ಸ್ ಶುಲ್ಕದ ನೆಪದಲ್ಲಿ 13.38 ಲಕ್ಷ ರೂ. ವಂಚನೆ : ಪ್ರಕರಣ ದಾಖಲು
ಮಂಗಳೂರು, ನ.26: ಕಸ್ಟಮ್ಸ್ ಶುಲ್ಕ ಪಾವತಿಸಬೇಕು ಎಂದು ಸುಳ್ಳು ಹೇಳಿ 13.38 ಲಕ್ಷ ರೂ. ಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್ಬುಕ್ನಲ್ಲಿ ಫೆಬ್ರವರಿ ತಿಂಗಳಿನಲ್ಲಿ ಲಂಡನ್ನ ಲಿಲ್ಲಿಯನ್ ಮೇರಿ ಜಾರ್ಜ್ ಎಂಬಾಕೆಯ ಪರಿಚಯವಾಗಿದ್ದು, ಬಳಿಕ ಆಕೆಯೊಂದಿಗೆ ಚಾಟಿಂಗ್ ಮಾಡಲಾರಂಭಿಸಿದೆ. ಆಕೆ ನವೆಂಬರ್ನಲ್ಲಿ ಹಣ ತೆಗೆದುಕೊಂಡು ಭಾರತಕ್ಕೆ ಬರುವುದಾಗಿ ತಿಳಿಸಿದ್ದಳು. ಅದರಂತೆ ನ.15ರಂದು ಸೊನಾಲಿ ಗುಪ್ತ ಎಂಬ ಅಪರಿಚಿತ ಮಹಿಳೆ ಕರೆ ಮಾಡಿ ಲಂಡನ್ ಮಹಿಳೆ ಲಿಲ್ಲಿಯನ್ ಮೇರಿ ಜಾರ್ಜ್ ಮುಂಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರು 25,000 ಪೌಂಡ್ಸ್ ಮತ್ತು 1 ಕೆ.ಜಿ. ಚಿನ್ನವನ್ನು ತಂದಿದ್ದು ಭಾರತದ ರೂಪಾಯಿ ಮೌಲ್ಯದಲ್ಲಿ ಪೌಂಡ್ಸ್ಗೆ ಸುಮಾರು 30 ಲಕ್ಷ ರೂ. ಆಗುತ್ತದೆ ಎಂದಿದ್ದಳು. ಬಳಿಕ ಆ ಕರೆಯನ್ನು ಲಿಲ್ಲಿಯನ್ಗೆ ಕೊಟ್ಟಿದ್ದಳು. ಲಿಲ್ಲಿಯನ್ ಮಾತನಾಡಿ, ಪೌಂಡ್ಸ್ ಕುರಿತು ಎಕ್ಸ್ ಚೇಂಜ್ ರಿಜಿಸ್ಟ್ರೇಷನ್, ಡಿಸ್ಕೌಂಟ್ ಚಾರ್ಜಸ್, ಕಸ್ಟಮ್ಸ್ ಡಿಕ್ಲರೇಷನ್ ಫಾರ್ಮ್ ನಲ್ಲಿ ನಮೂದಿಸದೆ ಇರುವ ಬಗ್ಗೆ, ಮನಿ ಲ್ಯಾಂಡರಿಂಗ್ ಚಾರ್ಜ್ ಮತ್ತಿತರ ಕಾರಣಗಳನ್ನು ತಿಳಿಸಿ ಬೇರೆ ಬೇರೆ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ ಹಣ ಪಾವತಿಸಲು ತಿಳಿಸಿದ್ದು, ಆ ಹಣವನ್ನು ಭೇಟಿ ಮಾಡುವ ಸಮಯದಲ್ಲಿ ನೀಡುವುದಾಗಿ ಹೇಳಿ ನಂಬಿಸಿದ್ದಾಳೆ. ಅದರಂತೆ ತಾನು ನ.15ರಿಂದ 18ರವರೆಗೆ ಹಂತ ಹಂತವಾಗಿ 13,38,900 ರೂ. ವರ್ಗಾಯಿಸಿದ್ದೇನೆ. ಬಳಿಕ ತಾನು ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಎರಡು ದಿನದಲ್ಲಿ ನೀಡುವುದಾಗಿ ಲಿಲ್ಲಿಯನ್ ತಿಳಿಸಿದ್ದಾಳೆ. ಬಳಿಕ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ ಎಂದು ಹಣ ಕಳಕೊಂಡವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Gaza: ಗಾಜಾ ಜನರಿಗೆ ಪ್ರಕೃತಿಯ ಸಂಕಷ್ಟ, ಜೀವ ಉಳಿಸಿಕೊಳ್ಳಲು ಪರದಾಟ...
ಗಾಜಾ ಪಟ್ಟಿಯಲ್ಲಿ ಯುದ್ಧದ ಪರಿಣಾಮ ಜನರ ಬದಕು ಈಗಾಗಲೇ ನರಳಿ ನರಕವಾಗಿ ಹೋಗಿದೆ. ಈ ಸಮಯದಲ್ಲೇ ಪ್ರಾಕೃತಿಕ ವಿಕೋಪ ಕೂಡ ಗಾಜಾ ಪಟ್ಟಿ ನಿವಾಸಿಗಳನ್ನು ಕಾಡುತ್ತಿದೆ. ಹೀಗೆ, ಕಳೆದ ಕೆಲವು ದಿನಗಳಿಂದ ಪ್ರವಾಹದ ಒತ್ತಡಕ್ಕೆ ಸಿಲುಕಿ ಪರದಾಡಿರುವ ಗಾಜಾ ಜನರಿಗೆ ಕನಿಷ್ಠ ಅನ್ನ &ಆಹಾರ ಕೂಡ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಷ್ಟೆಲ್ಲಾ ಒತ್ತಡದ ನಡುವೆ
ನ.28: ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಮಂಗಳೂರು, ನ.26: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನ.28ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 9:55ಕ್ಕೆ ಮಂಗಳೂರಿಗೆ ಆಗಮಿಸುವರು. 11:05ಕ್ಕೆ ವಿಮಾನ ನಿಲ್ದಾಣದಲ್ಲಿ ಪ್ರಧಾನ ಮಂತ್ರಿ ಅವರನ್ನು ಸ್ವಾಗತಿಸಲಿರುವರು. ಮಂಗಳೂರು ವಿಮಾನ ನಿಲ್ದಾಣ ಸಭಾಂಗಣದಲ್ಲಿ 11:30ಕ್ಕೆ ಕರಾವಳಿ ಉತ್ಸವದ ಬಗ್ಗೆ ಪೂರ್ವಭಾವಿ ಸಭೆ, 12:30ಕ್ಕೆ ನಂದಿನಿ ನದಿಗೆ ತ್ಯಾಜ್ಯ ನೀರು ಸೇರಿ ಕಲುಷಿತಗೊಂಡು ಸಮಸ್ಯೆಯಾಗುತ್ತಿರುವ ಬಗ್ಗೆ ಚರ್ಚಿಸಲು ಸಭೆ ನಡೆಸಲಿದ್ದಾರೆ. ಅಪರಾಹ್ನ 3 ಗಂಟೆಗೆ ಪಡೀಲ್ನ ಪ್ರಜಾಸೌಧದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕೊಠಡಿ ಉದ್ಘಾಟನೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ, 5:15ಕ್ಕೆ ಗುರುಪುರ ಕೈಕಂಬದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ ಹಾಗೂ ಹೊಸ ಅಧ್ಯಕ್ಷರ ಪದಗ್ರಹಣ ಮತ್ತು ಕಾರ್ಯಕರ್ತರ ಸಭೆ. ಮಂಗಳೂರಿನಲ್ಲಿ ವಾಸ್ತವ್ಯ.
ಉ.ಕನ್ನಡ ಜಿಲ್ಲಾದ್ಯಂತ 30 ಸಾವಿರಕ್ಕೂ ಹೆಚ್ಚು ಆಕ್ಷೇಪ ಪತ್ರಗಳ ಸಲ್ಲಿಕೆ : ರವೀಂದ್ರ ನಾಯ್ಕ
ಭಟ್ಕಳ,ನ.26 : ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾದ ಅಂಗವಾಗಿ ಕಾರವಾರದಲ್ಲಿ ಜರುಗಲಿರುವ ಬೃಹತ್ ಅರಣ್ಯವಾಸಿಗಳ ಸಮಾವೇಶದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾದ್ಯಂತ ಅರಣ್ಯ ಅತಿಕ್ರಮಣದಾರರ ಪರವಾಗಿ 30 ಸಾವಿರಕ್ಕೂ ಹೆಚ್ಚು ಆಕ್ಷೇಪ ಪತ್ರಗಳನ್ನು ಡಿ. 6ರಂದು ಜಿಲ್ಲಾಧಿಕಾರಿಗೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಂಟಗೋಡ ಮಹಾಸತಿ ದೇವಸ್ಥಾನದ ಆವರಣದಲ್ಲಿ ನಡೆದ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯಿದೆಯ ಅನುಷ್ಠಾನದಲ್ಲಿನ ಗಂಭೀರ ವೈಫಲ್ಯಗಳನ್ನು ಉದಾಹರಿಸಿ, ನೈಜ ಅರಣ್ಯವಾಸಿಗಳು ತಮ್ಮ ಭೂಮಿ ಹಕ್ಕುಗಳಿಂದ ವಂಚಿತರಾಗುತ್ತಿರುವುದಾಗಿ ಆರೋಪಿಸಿದರು. ಸುಪ್ರೀಂ ಕೋರ್ಟ್ ನಿರ್ದೇಶನವನ್ನು ನಿರ್ಲಕ್ಷಿಸಿ, ಅರಣ್ಯ ಹಕ್ಕು ಸಮಿತಿಯು ಅರಣ್ಯವಾಸಿಗಳ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ದುಃಖಕರ. ತದ್ವಿರುದ್ಧವಾಗಿ, ಅರ್ಜಿಗಳ ಪುನರ್ಪರಿಶೀಲನೆಗೆ ಮುನ್ನವೇ ಅರಣ್ಯ ಇಲಾಖೆಯು ಅರಣ್ಯವಾಸಿಗಳ ಅರ್ಜಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭಿಸಿರುವುದು ಖಂಡನೀಯ ಹಾಗೂ ಕಾನೂನುಬಾಹಿರ ಕ್ರಮ ಅರಣ್ಯವಾಸಿಗಳಿಗೆ ಹಕ್ಕುಗಳ ಕುರಿತು ಕಾನೂನು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ರಾಜ್ಯವ್ಯಾಪಿ ಜಾಗೃತ ಜಾಥವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಭಟ್ಕಳ ತಾಲೂಕಿನ ಯಲ್ವೋಡಿಕವೂರು, ಮುಟ್ಟಳ್ಳಿ, ಕೋಣಾರ, ಹಾಡುವಳ್ಳಿ ಮತ್ತು ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗೃತ ಜಾಥ ಕಾರ್ಯಕ್ರಮಗಳು ನೆಡೆದವು. ಈ ವೇಳೆ ಸಂಚಾಲಕರಾದ ಪಾಂಡು ನಾಯ್ಕ, ದೇವರಾಜ ಗೊಂಡ, ಚಂದ್ರ ನಾಯ್ಕ, ರಾಮ ನಾಯ್ಕ ಶಿರಜ್ಜಿಮನೆ, ಶಂಕರ ನಾಯ್ಕ (ಭಟ್ಕಳ), ಗಿರಿಜಾ ಮೋಗೇರ, ವಿಮಲಾ ಮೋಗೇರ, ನಾಗಮ್ಮ ಮೋಗೇರ, ನಾರಾಯಣ ಗೊರಟೆ, ಲಕ್ಷ್ಮೀ ಶಿರಜ್ಜಿ ಮನೆ, ನಾರಾಯಣ ಶನಿಯಾರ, ಕುಪ್ಪಯ್ಯ ನಾಯ್ಕ, ಮಂಜಪ್ಪ ಮುಡಗಾರಮನೆ, ವೆಂಕಟ, ಸುಬ್ರಾಯ ಕಟಗೇರಿ, ಜೋಗಿ ಶಿರಜ್ಜಿಮನೆ, ಚಂದ್ರು ಸೊಮಪ್ಪ ನಾಯ್ಕ, ರತ್ನಾ ನಾಯ್ಕ ಉಪಸ್ಥಿತರಿದ್ದರು. ದಾಖಲೆ ಬೇಡಿಕೆ ಕಾನೂನುಬಾಹಿರ : ಅರಣ್ಯ ಹಕ್ಕು ಸಮಿತಿಗಳು ಮೂರು ತಲೆಮಾರಿನ ದಾಖಲೆಗಳನ್ನು ಕೇಳುತ್ತಿರುವುದು ಅವೈಜ್ಞಾನಿಕ ಮತ್ತು ಕಾನೂನುಬಾಹಿರ ಕಾನೂನು ಮಾನ್ಯ ದಾಖಲೆಗಳ ಆಧಾರದ ಮೇಲೆ ಅರಣ್ಯ ಭೂಮಿ ಹಕ್ಕು ನೀಡುವಂತೆ ಆಗ್ರಹಿಸಿ ಈ ಬೇಡಿಕೆಯನ್ನು ಡಿ. 6ರಂದು ಕಾರವಾರದಲ್ಲಿ ಜರುಗಲಿರುವ ಮಹಾಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿರುವ ಆಕ್ಷೇಪ ಪತ್ರಗಳ ಮೂಲಕ ಗಟ್ಟಿಯಾಗಿ ಮಂಡಿಸಲಿದ್ದಾರೆ.
ಉಡುಪಿ | ಲಕ್ಷಕಂಠ ಗೀತಾ ಪಠಣ; ಸಾರ್ವಜನಿಕರಿಗೆ ಮುಕ್ತ ಅವಕಾಶ: ಪುತ್ತಿಗೆ ಶ್ರೀ
ಉಡುಪಿ, ನ.26: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷ್ಣ ಮಠಕ್ಕೆ ಭೇಟಿ ನೀಡಿ, ನಂತರ ಲಕ್ಷಕಂಠ ಗೀತಾ ಪಠಣ ಮಹಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಗಣ್ಯರಿಗೆ ಮಾತ್ರ ಪಾಸ್ ಅಗತ್ಯವಾಗಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಮಠದ ಗೀತಾ ಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 12 ಗಂಟೆಗೆ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಸಲ್ಲಿಸಲಾಗುತ್ತದೆ. ನಂತರ ಅವರು ಕನಕ ಗುಡಿಯಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿ, ಮಧ್ವ ಸರೋವರದಲ್ಲಿ ಪಾದಪ್ರಾಲನೆ ಮಾಡಿಕೊಂಡು ಮಠದೊಳಗೆ ಆಗಮಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಧಾನಿ ನೂತನ ಸುವರ್ಣ ತೀರ್ಥ ಮಂಟಪ ಉದ್ಘಾಟಿಸಲಿರುವರು. ಬಳಿಕ ಅವರು ಚಂದ್ರಶಾಲೆಯಲ್ಲಿ ವಿವಿಧ ಮಠಾಧೀಶರ ಆಶೀರ್ವಾದ ಪಡೆಯಲಿದ್ದಾರೆ. ಮೋದಿಯವರು ಸಾಗುವ ದಾರಿಯುದ್ದಕ್ಕೂ ಮಂಗಳವಾದ್ಯಗಳು, ವಿದ್ವಾಂಸರಿಂದ ಭಗವದ್ಗೀತೆ, ವೇದ, ಉಪನಿಷತ್ ಪಾರಾಯಣ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಭಗವದ್ಗೀತೆಯ ಶ್ಲೋಕಗಳನ್ನು ಒಂದು ಲಕ್ಷ ಜನರು ಏಕಕಂಠದಲ್ಲಿ ಪಠಿಸುವ ‘ಲಕ್ಷಕಂಠ ಗೀತೆ’ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ನ.28ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಶ್ರೀಕೃಷ್ಣ ಮಠಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುತ್ತದೆ. ಈ ಹಿನ್ನೆಲೆಯಲ್ಲಿ ದರ್ಶನದ ಸಮಯದಲ್ಲಿ ಭಕ್ತರು ಸಹಕರಿಸಿ, ಪರಿಷ್ಕೃತ ವೇಳಾಪಟ್ಟಿಗೆ ಅನುಸರಿಸಬೇಕು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಠದ ದಿವಾನ್ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು | ನ.30ರಂದು ರೋಟರಿ ಚಿಣ್ಣರ ಉತ್ಸವ : ಕ್ರೀಡಾ, ಸಾಂಸ್ಕೃತಿಕ ಸ್ಪರ್ಧಾಕೂಟ
ಮಂಗಳೂರು ನ.26: ರೋಟರಿಯ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ರೋಟರಿ ಮಂಗಳೂರು ಸೆಂಟ್ರಲ್, ರೋಟರ್ಯಾಕ್ಟ್, ಮಂಗಳೂರು ಸಿಟಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ‘25ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕ್ರತಿಕ ಸ್ಪರ್ಧಾಕೂಟ ನ.30ರಂದು ಬೆಳಗ್ಗೆ 9:00 ಗಂಟೆಗೆ ನಗರದ ಉರ್ವದ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಸಭಾಪತಿ ಡಾ.ಬಿ.ದೇವದಾಸ ರೈ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಒಂದು ದಿನದ ಕ್ರೀಡಾ ಸ್ಪರ್ಧಾಕೂಟ ಮತ್ತು ಮನೋರಂಜನಾ ಉತ್ಸವದಲ್ಲಿ ಜಿಲ್ಲೆಯ ವಿವಿಧ 10 ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರಗಳಿಂದ ಸುಮಾರು 434 ನಿವಾಸಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆ ಮತ್ತು ಕಲಾ ಕೌಶಲ್ಯವನ್ನು ಪ್ರದರ್ಶಿಸಲಿರುವರು ಎಂದರು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟವನ್ನು ಕನ್ನಡ ಚಲನಚಿತ್ರ ನಟ ಡಾ.ಗುರುಕಿರಣ್ ಉದ್ಘಾಟಸಲಿರುವರು. ರೋಟರಿ ಜಿಲ್ಲೆಯ ಸಹಾಯಕ ಗವರ್ನರ್ ಚಿನ್ನಗರಿಗೌಡ ಮತ್ತು ವಲಯ ಸೇನಾನಿ ರವಿ ಜಲನ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ರೈ ಕಟ್ಟ್ಟ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು. ಸಾಂಸ್ಕೃತಿಕ ಸ್ಪರ್ಧಾಕೂಟ ಮತ್ತು ಸಮಾರೋಪ ಸಮಾರಂಭವು ಸಂಜೆ 4:00 ಗಂಟೆಗೆ ಜರಗಲಿದೆ. ರೋಟರಿ ಜಿಲ್ಲೆ 3,181 ಚುನಾಯಿತ ಗವರ್ನರ್ ಸತೀಶ್ ಬೋಳಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ವಿವರಿಸಿದರು. ಮಕ್ಕಳು ಕ್ರೀಡಾ ಮತ್ತು ಮನೋರಂಜನಾ ಉತ್ಸವದಲ್ಲಿ ತಮ್ಮ ಆಕರ್ಷಕ ಪಥ ಸಂಚಲನ ಮತ್ತು ಪ್ರತಿಭಾ, ಕೌಶಲ್ಯ, ಅನಾವರಣ ಮತ್ತು ಸಾಧನೆಯನ್ನು ಪ್ರದರ್ಶಿಸಲಿರುವರು. ಕ್ರೀಡಾಕೂಟವನ್ನು ರೋಟರಿ ಸಂಸ್ಥೆಯು 1996ರಿಂದ ಸತತವಾಗಿ ಆಯೋಜಿಸುತ್ತಿದೆ ಎಂದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್ , ಮಾಧ್ಯಮ ಸಲಹೆಗಾರ ಎಂ. ವಿ. ಮಲ್ಯ , ರೋಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷ ಅಕ್ಷಯ್ ಬಿ ರೈ ಮತ್ತು ಕಾರ್ಯದರ್ಶಿ ವಿವೇಕ ರಾವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನ.29ರಂದು ಮಂಗಳೂರಿನಲ್ಲಿ ನಶಮುಕ್ತ ಕ್ಯಾಂಪಸ್ ಬೃಹತ್ ವಾಕಥಾನ್
ಮಂಗಳೂರು , ನ.26 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಇದರ ಆಶ್ರಯದಲ್ಲಿ ‘ನಶಮುಕ್ತ ಭಾರತ, ನಶಮುಕ್ತ ಕ್ಯಾಂಪಸ್ ’ ಧ್ಯೇಯದೊಂದಿಗೆ ಬೃಹತ್ ವಾಕಥಾನ್ ಕಾರ್ಯಕ್ರಮವು ನ.29 ರಂದು ಬೆಳಗ್ಗೆ 7:00ಗೆ ಮಂಗಳೂರಿನ ಮಂಗಳ ಕ್ರೀಡಾಂಗಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ನಡೆಯಲಿದೆ ಎಂದು ನ್ಯಾಶನಲ್ ಅಲೈಡ್ ಆ್ಯಂಡ್ ಹೆಲ್ತ್ ಕೌನ್ಸಿಲ್ ನ ರಾಜ್ಯ ಅಧ್ಯಕ್ಷ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಯು.ಟಿ.ಇಫ್ತಿಕರ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ವ್ಯಾಪ್ತಿಗೊಳಪಟ್ಟ 113 ವೈದ್ಯಕೀಯ, ಅರೆವೈದ್ಯಕೀಯ ಸೇರಿದಂತೆ, ವಿವಿಧ ಕಾಲೇಜುಗಳ ಸಹಕಾರಲ್ಲಿ ವಾಕಥಾನ್ ನಡೆಯಲಿದ್ದು, ಕಾರ್ಯಕ್ರಮದ ವೇಳೆ ಅಂಗಾಂಗ ದಾನ ಕುರಿತಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮಕ್ಕೆ ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಚಾಲನೆ ನೀಡಲಿರುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ , ಆರ್ಜಿಯುಎಚ್ಎಸ್ ಉಪಕುಲಪತಿ ಡಾ.ಭಗವಾನ್ ಭಾಗವಹಿಸಲಿರುವರು ಎಂದು ಸಿಂಡಿಕೇಟ್ ಸದಸ್ಯ ಡಾ. ಶಿವಶರಣ್ ಶೆಟ್ಟಿ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಿತ ಶಿಕ್ಷಕರು, ಸಿಬ್ಬಂದಿ, ಆಡಳಿತ ಮಂಡಳಿಯ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಆರ್ಜಿಯುಎಚ್ಎಸ್ ಸೆನೆಟ್ ಸದಸ್ಯೆ ಪ್ರೊ. ವೈಶಾಲಿ ಶ್ರೀಜಿತ್ , ಕಾರ್ಯಕ್ರಮ ಸಂಯೋಜಕ ಡಾ.ಶಣ್.ಜೆ ಶೆಟ್ಟಿ, ಸಂಚಾಲಕ ಪ್ರೊ.ಮುಹಮ್ಮದ್ ಸುಹೈಲ್, ಪ್ರಮುಖರಾದ ಡಾ.ಅಜಿತ್, ಡಾ.ಸಲೀಮುಲ್ಲಾ , ಡಾ.ವಿಜಯ್ ಉಪಸ್ಥಿತರಿದ್ದರು.
ಮಂಗಳೂರು | ಡಿ.20ರಂದು ಹಳೆ ವಿದ್ಯಾರ್ಥಿ ಸಮಾವೇಶ ‘ನಿಟ್ಟೆ ನೆಕ್ಸಸ್’
ಮಂಗಳೂರು, ನ.26: ವೆನಮಿತಾ ( ಎನ್ಎಂಎಎಂಐಟಿ ಹಳೆ ವಿದ್ಯಾರ್ಥಿ ಸಂಘ ) ಮತ್ತು ಮಾಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ (ಎನ್ಎಂಎಎಂಐಟಿ) ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶ ‘ನಿಟ್ಟೆ ನೆಕ್ಸಸ್ -2025’ ಮುಲ್ಕಿಯ ಸುಂದರ ರಾಮ ಶೆಟ್ಟಿ ಕನ್ವೆನ್ಶನ್ ಸೆಂಟರ್ ನಲ್ಲಿ ಡಿಸೆಂಬರ್ 20ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ವೆನಮಿತಾ ಅಧ್ಯಕ್ಷ ಮುಲ್ಕಿ ಜೀವನ್ ಕೆ. ಶೆಟ್ಟಿ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1986ರಲ್ಲಿ ಸ್ಥಾಪಿತವಾದ ಹಳೆ ವಿದ್ಯಾರ್ಥಿ ಸಂಘವು 25,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಹಳೆಯ ಸ್ನೇಹಿತರೊಂದಿಗೆ ಪುನರ್ ಸಂಪರ್ಕ, ವೃತ್ತಿ ನೆಟ್ವರ್ಕಿಂಗ್ ಹಾಗೂ ಉದ್ಯಮ-ಶೈಕ್ಷಣಿಕ ಸಹಯೋಗ ಬೆಳೆಸುವ ಉದ್ದೇಶದಿಂದ ಈ ಜಾಗತಿಕ ಮಹಾಸಂಗಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ನಿಟ್ಟೆ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರು ಹಾಗೂ ನಿಟ್ಟೆ ವಿವಿಯ ಚಾನ್ಸಲರ್ ಎನ್. ವಿನಯ್ ಹೆಗ್ಡೆ ಉದ್ಘಾಟಿಸಲಿರುವರು. ವಿಶ್ವದ ಅನೇಕ ಭಾಗಗಳಿಂದ ಸುಮಾರು 1,000 ಹಳೆಯ ವಿದ್ಯಾರ್ಥಿಗಳು ಈ ಬಹುನಿರೀಕ್ಷಿತ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ವೆನಮಿತಾ ಉಪಾಧ್ಯಕ್ಷ ಅವಿನಾಶ ಕೃಷ್ಣ ಕುಮಾರ್, ಸಂಚಾಲಕ ಸಂದೀಪ್ ರಾವ್ ಇಡ್ಯಾ, ಸಹ ಸಂಚಾಲಕರಾದ ಮಹೇಶ್ ಕಾಮತ್ ಮತ್ತು ಮೇಘನಾ ಶೆಟ್ಟಿ ಉಪಸ್ಥಿತರಿದ್ದರು.
ದೇಶದ ಭವಿಷ್ಯ ರೂಪಿಸುವಲ್ಲಿ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ
ವಿಜಯನಗರ(ಹೊಸಪೇಟೆ) : ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಸಂವಿಧಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂವಿಧಾನವು ಮೂಲಭೂತ ಹಕ್ಕುಗಳನ್ನು ನೀಡಿದ್ದು, ಇವುಗಳು ಪ್ರಜೆಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ದಿಗೆ ಅವಶ್ಯಕವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು. ನಗರದ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇ.ಬಾಲಕೃಷ್ಣಪ್ಪ, 1949ರ ನವೆಂಬರ್ 26ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿದ ಐತಿಹಾಸಿಕ ದಿನದ ನೆನಪಿಗಾಗಿ ಮತ್ತು ಸಂವಿಧಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸವ ನಿಟ್ಟಿನಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮೂಲಭೂತ ಹಕ್ಕುಗಳಾದ ಸಮಾನತೆ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಮತ್ತು ಸಂವಿಧಾನಾತ್ಮಕ ಪರಿಹಾರ ಹಕ್ಕುಗಳ ಬಗ್ಗೆ ನಾವು ತಿಳಿದುಕೊಳ್ಳುವುದು ಅಗತ್ಯವಿದೆ. ಸಂವಿಧಾನದಲ್ಲಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಇಂತಹ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಲು ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸಲು ಸರ್ಕಾರದ ಜತೆಗೆ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಬೇಕಿದೆ. ಸಂವಿಧಾನವನ್ನು ಅರ್ಥೈಸಿಕೊಂಡು ಪಾಲಿಸುವುದು ನಾಗರಿಕರ ಕರ್ತವ್ಯವಾಗಬೇಕು ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರು ಮಾತನಾಡಿ, ನಮ್ಮ ಸಂವಿಧಾನವು ಮಾನವ ಘನತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಅತ್ಯುನ್ನತ ಮೌಲ್ಯವನ್ನು ನೀಡುತ್ತದೆ. ಇದು ನಮಗೆ ಹಕ್ಕುಗಳನ್ನು ನೀಡುತ್ತದೆ. ಹಲವಾರು ಮಹನೀಯರ ಪ್ರಾಣ ಬಲಿದಾನ ಮತ್ತು ನಿರಂತರ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಸಂವಿಧಾನ ಜೀವಂತಾಗಿರುತ್ತದೆ. ಸಂವಿಧಾನ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಜತೆ ದೇಶದ ಆಡಳಿತ ಮತ್ತು ಅಧಿಕಾರಿವನ್ನು ತಿಳಿಸುತ್ತದೆ. ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಸಂಸತ್ತನ್ನು ಪರಿಚಯ ಮಾಡಿಕೊಟ್ಟವರು ಬಸವಣ್ಣನವರು ಎಂದರು. ಕಾರ್ಯಕ್ರಮದಲ್ಲಿ ಥಿಯೋಸಾಫಿಕಲ್ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕಿಚಡಿ ಚನ್ನಪ್ಪ ಅವರು ಭಾರತದ ಸಂವಿಧಾನದ ರಚನಾ ಸಭೆ ಹಾಗೂ ಸಂವಿಧಾನದ ಮುಖ್ಯಾಂಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶಾಹೇಖಾ ಆಹ್ಮದಿ, ಪ್ರಮುಖರಾದ ರಾಮಣ್ಣ, ಉದಯ ಕುಮಾರ್, ಭರತ್ ನಾಗರಾಜ, ಪಿ.ವಸಂತಕುಮಾರ್, ಭೀಮಪ್ಪ ನಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಗಳೂರು | ನ.29ರಂದು ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ-ಪ್ರಶಸ್ತಿ ಪ್ರದಾನ
ಮಂಗಳೂರು, ನ.26: ಯಕ್ಷ ಪ್ರತಿಭೆ ಮಂಗಳೂರು ಇದರ 17ನೇ ವರ್ಷದ ಸಂಭ್ರಮ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ-ಪ್ರಶಸ್ತಿ ಪ್ರದಾನ-ಅಭಿನಂದನಾ ಕಾರ್ಯಕ್ರಮ ನ. 29ರಂದು ಸಂಜೆ 5:45ರಿಂದ ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ಸಂಘಟಕರಾದ ಸಂಜಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ವರುಷದ ಅಸ್ರಣ್ಣ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಯಕ್ಷ ಪ್ರತಿಭೆಯಿಂದ ಕೊಡ ಮಾಡುವ ಗೌರವ ಪ್ರಶಸ್ತಿಯನ್ನು ಅದಾನಿ ಗ್ರೂಪ್ ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಅಳ್ವವರವರಿಗೆ ‘ಸಾಧಕ ರತ್ನ ಎಂಬ ಬಿರುದನಿತ್ತು ಪ್ರದಾನಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ‘ಕಾಯಕ ರತ್ನ’ಎಂಬ ಬಿರುದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಯಕ್ಷ ಸಮ್ಮಾನವನ್ನು ಯಕ್ಷಗಾನ ಹಾಗೂ ತಾಳಮದ್ದಳೆ ಕ್ಷೇತ್ರದ ಪ್ರತಿಭಾವಂತ ಕಲಾವಿದ ಸದಾಶಿವ ಆಳ್ವ ತಲಪಾಡಿ ಅವರಿಗೆ, ಯುವಪ್ರತಿಭೆ ವಾರುಣಿ ನಾಗರಾಜ ಆಚಾರ್ಯ ಮಂಗಳಾದೇವಿ ಇವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಪ್ರಶಸ್ತಿ ಪ್ರದಾನ ಮಾಡಲಿರುವರು ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ಆಶೀರ್ವಚನದ ನೀಡಲಿರುವರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು ಎಂದರು. ಸುಧಾಕರ ರಾವ್ ಪೇಜಾವರ ಸಂಸ್ಮರಣಾ ಭಾಷಣ ಮಾಡಲಿರುವರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ವಕೀಲ ಮೋಹನದಾಸ್ ರೈ, ಯಕ್ಷಗಾನ ಕಲಾವಿದರಾದ ರವಿ ಅಲೆವೂರಾಯ, ಅಶೋಕ್ ಶೆಟ್ಟಿ, ಸುಜತಾ ಆಳ್ವ ಉಪಸ್ಥಿತರಿದ್ದರು.
ನನ್ನ ವಿರುದ್ಧ ಆರೋಪಗಳಿದ್ದರೆ ಅವಿಶ್ವಾಸ ಮಂಡನೆ ಮಾಡಲಿ : ಬಸವರಾಜ ಹೊರಟ್ಟಿ
ಹುಬ್ಬಳ್ಳಿ : ಇಲ್ಲಿಯವರೆಗೆ ಏಕಾಏಕಿ ಸಭಾಪತಿಗಳ ಮೇಲೆ ಅವಿಶ್ವಾಸ ಮಂಡನೆ ಮಾಡಿದ ಘಟನೆಗಳು ನಡೆದಿಲ್ಲ. ಸಭಾಪತಿಗಳು ಏನಾದರೂ ಭ್ರಷ್ಟಾಚಾರ ಹಾಗೂ ಏಕಪಕ್ಷೀಯವಾಗಿ ವರ್ತನೆ ಮಾಡಿದ್ದರೆ, ಅವಿಶ್ವಾಸ ಮಂಡನೆ ಮಾಡಲಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ತಮ್ಮ ವಿರುದ್ಧ ಅವಿಶ್ವಾಸ ಮಂಡನೆಯ ಚರ್ಚೆಗಳು ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬಗ್ಗೆ ವದಂತಿಗಳು ಕೇಳಿ ಬರುತ್ತಿವೆ ಎನ್ನುವ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಯಾವುದೇ ಆರೋಪಗಳಿಲ್ಲ. ಅವಿಶ್ವಾಸ ಮಂಡನೆ ಮಾಡಲು ನನ್ನ ವಿರುದ್ಧ ಏನಾದರೂ ಬೇಕಲ್ಲವಾ ಎಂದು ಪ್ರಶ್ನಿಸಿದರು. ನಾನು ಸಭಾಪತಿಯಾಗಿ ಇಲ್ಲಿಯವರೆಗೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗೆ ಇದೆ. ಪ್ರಜಾಪ್ರಭುತ್ವದಲ್ಲಿ ಅವರವರ ಅಧಿಕಾರದ ಬಗ್ಗೆ ನಾನು ಏನೂ ಹೇಳಲ್ಲ. ಇಲ್ಲಿವರೆಗೆ 24 ಸಭಾಪತಿಗಳಾಗಿದ್ದಾರೆ. ಆದರೆ, ಯಾರ ಮೇಲೂ ಅವಿಶ್ವಾಸ ಮಂಡನೆಯಾಗಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಸಭಾಪತಿಯಾಗಿರಬೇಕು. ಆದರೆ, ಅವರು(ಕಾಂಗ್ರೆಸ್) ಮಾಡಲೇಬೇಕು ಎಂದರೆ ಮಾಡಲಿ. ಯಾಕೆ ಮಾಡಿದ್ದಾರೆ ಅಂತ ನಾನೂ ಕೇಳುತ್ತೇನೆ ಎಂದರು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಆಗಲಿ ಅನ್ನುವ ಉದ್ದೇಶದಿಂದ ಬುಧವಾರ ಚರ್ಚೆಗೆ ಅವಕಾಶ ಕೊಡಲಾಗುತ್ತದೆ. ಅಂದು ಉತ್ತರ ಕರ್ನಾಟಕ ಸದಸ್ಯರ ಪ್ರಶ್ನೆಗೆ ಹೆಚ್ಚಿ ನ ಅವಕಾಶ ನೀಡುತ್ತೇನೆ ಎಂದು ಸಭಾಪತಿ ಹೇಳಿದರು. ಶಾಸಕರು ತಂಗಲು ಶಾಸಕರ ಭವನ ಕಟ್ಟಿಸುವ ಅವಶ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು. ಅನೇಕ ಶಾಸಕರು, ಸಚಿವರು ಇಂತಹದ್ದೇ ಹೊಟೇಲ್ನಲ್ಲಿ ಕೋಣೆ ಬೇಕು ಅಂತ ಪತ್ರ ಬರೆದಿದ್ದಾರೆ. ಅದನ್ನು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದು ಹೊರಟ್ಟಿ ವಿವರಿಸಿದರು. ಬೆಳಗಾವಿ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ಆಗಲಿ : ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಎಲ್ಲ ಶಾಸಕರು ಆಸಕ್ತಿ ವಹಿಸಿ ಸದನದಲ್ಲಿ ಭಾಗಿಯಾಗಬೇಕು. ಅಧಿವೇಶನದ ಕಲಾಪದಲ್ಲಿ ಬರೀ ಪ್ರತಿಭಟನೆ ಮಾಡುವುದು, ಬಾವಿಗೆ ಇಳಿದು ಕೂರುವುದನ್ನು ಮಾಡಬೇಡಿ ಅಂತ ಎಲ್ಲ ಶಾಸಕರಿಗೆ ಹೇಳಿದ್ದು, ಬೆಳಗಾವಿ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ಆಗಲಿ ಎಂದು ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ಉಡುಪಿಯಲ್ಲಿ ಉಸಿರಾಡುವಾಗ ಮಾಸ್ಕ್ ಧರಿಸುವ ಸ್ಥಿತಿ ನಿರ್ಮಾಣ: ಪ್ರೇಮಾನಂದ ಕಲ್ಮಾಡಿ
ಉಡುಪಿ, ನ.26: ಸುಂದರ ಕರಾವಳಿ ಪಟ್ಟಣವಾದ ಉಡುಪಿಯ ವಾಯುಗುಣ ಗುಣಮಟ್ಟ ಕ್ಷೀಣಿಸುತ್ತಿದ್ದು, ಮಾಲಿನ್ಯ ಮಟ್ಟ 80ಕ್ಕೆ ಕುಸಿತ ಕಾಣುತ್ತಿದೆ. ಇದೇ ರೀತಿ ಮುಂದುವರಿದರೆ ಮಾಸ್ಕ್ ಬಳಸುವುದು ನಮ್ಮ ದೈನಂದಿನ ಅಸ್ತಿತ್ವದ ಭಾಗವಾಗಬಹುದು ಎಂದು ಪ್ರೇಮಾನಂದ ಕಲ್ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲೆ ಆಯೋಜಿಸಿದ ಪರಿಸರ ಉಳಿಸಿ, ಉಡುಪಿ ಬೆಳೆಸಿ ಎಂಬ ವಿಷಯದ ಕುರಿತು ದುಂಡು ಮೇಜಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಹೆಚ್ಚುತ್ತಿರುವ ಮಾಲಿನ್ಯ, ಅಂತರ್ಜಾಲ ಕುಸಿತ, ಹೆಚ್ಚುತ್ತಿರುವ ತ್ಯಾಜ್ಯ ಮತ್ತು ಮೀನು ಇಳುವರಿ ಕುಸಿಯುತ್ತಿದೆ. ರೆಸಾರ್ಟ್ಗಳ ಅನಿಯಂತ್ರಿತ ಬೆಳವಣಿಯು ಪರಿಸರ ವ್ಯವಸ್ಥೆಗೆ ಸಮಸ್ಯೆ ಉಂಟುಮಾಡುತ್ತಿದೆ. ಸಿಆರ್ಝೆಡ್-3 ರಿಂದ ಸಿಆರ್ಝೆಡ್-2 ಗೆ ಬದಲಾಯಿಸುವ ಮಾನದಂಡಗಳು ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಬಾವಿಗಳಿಂದ ಬರುವ ಸಿಹಿನೀರು ಉಪ್ಪುನೀರಿನ ಶೋಧನೆಗೆ ಒಡ್ಡಿಕೊಳ್ಳುತ್ತದೆ ಎಂದರು. ಕೊಡಚಾದ್ರಿ ಕೇಬಲ್ ಕಾರುಗಳಂತಹ ಅನೇಕ ಯೋಜನೆಗಳನ್ನು ಅವರು ಈ ಸಂದರ್ಭದಲ್ಲಿ ಪಟ್ಟಿ ಮಾಡಿ ಅದರ ದುಷ್ಪರಿಣಾಮದ ಕುರಿತು ಬೆಳಕು ಚೆಲ್ಲಿದರು. ಇದು ಪರಿಸರ ಸುಸ್ಥಿರತೆಗೆ ಹೊಂದಿಕೆಯಾಗುವುದಿಲ್ಲ. ದೀರ್ಘಕಾಲೀನ ಹಾನಿಯನ್ನುಂಟುಮಾಡುತ್ತದೆ. ಗ್ರಾಪಂ ಪುರಸಭೆ ಮಟ್ಟದವರೆಗಿನ ಕ್ರಿಯಾ ಯೋಜನೆಯಲ್ಲಿ ಬೇರೂರಿರುವ ಸುಸ್ಥಿರ ಉಡುಪಿಗಾಗಿ ಸೂಕ್ಷ್ಮತೆಯನ್ನು ಅಭಿವೃದ್ಧಿಪಡಿಸಲು ಮತ್ತು ಪರಿಸರಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ಸಭಿಕರನ್ನು ಪ್ರೇರೇಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ನಿಹಾಲ್ ಕಿದಿಯೂರು ಮಾತನಾಡಿ, ಇಂದು ಸಮಾಜ ತನ್ನ ಜವಾಬ್ದಾರಿಯನ್ನು ಸರಕಾರ, ಸಂಸ್ಥೆ ಅಥವಾ ಬಾಹ್ಯ ವ್ಯವಸ್ಥೆಯ ಮೇಲೆ ಹೊರಿಸಲು ಮುಂದಾಗುತ್ತದೆ. ಸಮಾಜವು ಸ್ವತಃ ಸಮಸ್ಯೆಯನ್ನು ಪರಿಹರಿಸಲು ಮುಂದಾದಾಗ ನಮ್ಮ ನೆರೆಹೊರೆ ಸ್ವಸ್ಥವಾಗಿರಲು ಸಾಧ್ಯವಾಗುತ್ತದೆ. ಆ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ನಾವೆಲ್ಲರೂ ಸೇರಿ ಸಂರಕ್ಷಿಸುವ ಹೊಣೆ ಹೊತ್ತುಕೊಳ್ಳಬೇಕು. ಅದಕ್ಕಾಗಿ ಗ್ರಾಮ ಮಟ್ಟದಲ್ಲಿ ಕೆಲವೊಂದು ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದರು. ಡಾ.ಅಬ್ದುಲ್ ಅಝೀಜ್ ಉಡುಪಿಯ ಪರಿಸರಕ್ಕೆ ಸಂಬಂಧಿಸಿದಂತೆ ತಮ್ಮ ವಿಚಾರ ಮಂಡಿಸಿದರು. ಸಾಮಾಜಿಕ ಕಾರ್ಯಕರ್ತ ನಿತ್ಯನಂದಾ ಒಳಕಾಡು, ಸಂತೋಷ್ ಕೆಮ್ಮಣ್ಣು, ನಮನ ಶ್ರೀ ಅವರನ್ನು ಸನ್ಮಾನಿಸಲಾಯಿತು. ಜಮಾತೆ ಇಸ್ಲಾಮಿ ಹಿಂದ್ ಅವರ ರಾಷ್ಟ್ರೀಯ ಮಟ್ಟದ ಆದರ್ಶ ನೆರೆಹೊರೆ ಅಭಿಯಾನದ ಭಾಗವಾಗಿ ಈ ಚರ್ಚೆ ನಡೆಯಿತು. ಸಾಮಾಜಿಕ ಕಾರ್ಯಕರ್ತ ಮೋಹನ್ ಕುಮಾರ್, ಸಂವರ್ತ್ ಸಾಹೀಲ್, ಸಾಲಿಡಾರಿಟಿಯ ಅಫ್ವಾನ್ ಹೂಡೆ, ಇದ್ರಿಸ್ ಹೂಡೆ, ಸಿರಾಜ್ ಮಲ್ಪೆ, ನಿರ್ಸಾ ಉಡುಪಿ, ಅನ್ವರ್ ಅಲಿ ಕಾಪು, ಸರ್ಮೀ ತೀರ್ಥಹಳ್ಳಿ, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಆಗಮನ ಹಿನ್ನೆಲೆ: ಉಡುಪಿಯಲ್ಲಿ ಬಿಗಿ ಪೊಲೀಸ್ ಭದ್ರತೆ : ಎಸ್ಪಿ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ ಭದ್ರತೆಗಾಗಿ ಸುಮಾರು 3000ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 10 ಮಂದಿ ಎಸ್ಪಿ ಹಾಗೂ ಹೆಚ್ಚುವರಿ ಎಸ್ಪಿಗಳನ್ನು ನೇಮಕ ಮಾಡಲಾಗಿದೆ. ಒಟ್ಟಾರೆ ಈ ಭದ್ರತೆ ನೇತೃತ್ವವನ್ನು ಎಸ್ ಪಿ ಜಿ ವಹಿಸಿಕೊಂಡಿದ್ದು, ಈಗಾಗಲೇ ಎಸ್ಪಿಜಿ ತಂಡ ಉಡುಪಿಗೆ ಆಗಮಿಸಿ ನಮ್ಮ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದೆ. ಈ ಬಂದೋಬಸ್ತಿಗೆ ರಾಜ್ಯದ ಎಂಟಕ್ಕೂ ಅಧಿಕ ಜಿಲ್ಲೆಯ ಪೊಲೀಸ್ ತಂಡಗಳು ಉಡುಪಿಗೆ ಆಗಮಿಸಿದೆ. ರಾಜ್ಯದ ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಹಿತೇಂದ್ರ ಅವರ ನೇತೃತ್ವದಲ್ಲಿ ಐಜಿಗಳಾದ ಸಂದೀಪ್ ಪಾಟೀಲ್ ಹಾಗೂ ಚಂದ್ರಗುಪ್ತ ಮಾರ್ಗದರ್ಶನದಲ್ಲಿ ಈ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಎಸ್ ಪಿ ಮಾಹಿತಿ ನೀಡಿದರು
ʻಜಾತಿ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ಬಗ್ಗೆ ಸ್ವಯಂಪ್ರೇರಿತ ತನಿಖೆ ಕೈಗೊಳ್ಳುವ ಅಧಿಕಾರವಿಲ್ಲʼ: ಹೈಕೋರ್ಟ್
ಸ್ವಯಂಪ್ರೇರಿತವಾಗಿ ಜಾತಿ ಪ್ರಮಾಣಪತ್ರಗಳ ಸಿಂಧುತ್ವದ ಬಗ್ಗೆ ತನಿಖೆ ನಡೆಸಲು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಶಿಫಾರಸಿನ ಮೇರೆಗೆ ಮಾತ್ರ ತನಿಖೆ ಕೈಗೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನಿವೃತ್ತ ಶಿಕ್ಷಕ ಟಿ.ಎಚ್.ಹೊಸಮನಿ ಅವರ ಅರ್ಜಿ ವಿಚಾರಣೆ ನಡೆಸಿದ ನಂತರ ಈ ಬಗ್ಗೆ ಸೂಚನೆ ಕೊಟ್ಟಿದೆ.
ನಾಯಕತ್ವ ಬದಲಾವಣೆ ವಿಚಾರ | ಎಲ್ಲಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ : ಬಿ.ಕೆ.ಹರಿಪ್ರಸಾದ್
ಚಿಕ್ಕಮಗಳೂರು : ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಏನೂ ಇಲ್ಲ, ಮುಖ್ಯಮಂತ್ರಿ ಬದಲಾವಣೆ ಮಾಡಬೇಕೇ?, ಬೇಡವೇ? ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಹುಲ್ ಗಾಂಧಿ ಬಳಿ ನಾನು ಮತ್ತು ಡಿ.ಕೆ.ಶಿವಕುಮಾರ್ ಸಮಯ ಕೇಳಿದ್ದು ಬೇರೆ ಬೇರೆ ವಿಷಯಕ್ಕೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ದಿಲ್ಲಿಗೆ ರಾಜ್ಯದ ವಿಷಯದ ಬಗ್ಗೆ ಚರ್ಚೆ ಮಾಡಲು ಹೋಗಿಲ್ಲ. ರಾಮಲೀಲಾ ಮೈದಾನದಲ್ಲಿ ವೋಟ್ ಚೋರಿ ಸಮಾವೇಶದ ಕುರಿತು ಚರ್ಚೆಗೆ ಹೋಗಿದ್ದೆ. ರಾಜ್ಯದ ವಿಚಾರವನ್ನು ನಾನು ಚರ್ಚೆ ಮಾಡುವುದೇ ಇಲ್ಲ ಎಂದರು. ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದು ಸಿಎಲ್ಪಿ ಸಭೆ. ವೀಕ್ಷಕರೂ ಇದ್ದರು. ಏನಾದರೂ ತೀರ್ಮಾನ ಆಗಬೇಕಿದ್ದರೆ ಅಲ್ಲೆ ಆಗಬೇಕು. ಬೇರೆ ಎಲ್ಲ ವಿಚಾರವೂ ಊಹಪೋಹ ಎಂದ ಹರಿಪ್ರಸಾದ್, ಕೆಲವರ ಮಧ್ಯೆ ಮಾತಾಗಿರಬಹುದು. ಅದನ್ನು ನಾನು ವ್ಯಾಪಾರ ಎಂದು ಹೇಳಲ್ಲ. ರಾಜಕೀಯವಾಗಿ ಹಲವು ವಿಶ್ಲೇಷಣೆ, ಚಿಂತನೆ ನಡೆಯುತ್ತವೆ. ಹೆಚ್ಚಿನ ಎಚ್ಚರ ವಹಿಸಬೇಕಾದ ವಿಷಯದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಲ್ಲಿಯವರೆಗೂ ಎಲ್ಲರೂ ಕಾಯಬೇಕೆಂದು ಹೇಳಿದರು. ಕೆಲವರು ಅಧಿಕಾರ ದೊಡ್ಡದು ಎಂದು ಭಾವಿಸಿರಬಹುದು. ನನಗೆ ಅದು ದೊಡ್ಡದಲ್ಲ, ಸಿದ್ಧಾಂತ ದೊಡ್ಡದು ಎಂದ ಹರಿಪ್ರಸಾದ್, ಇತ್ತೀಚಿನ ಬೆಳವಣಿಗೆಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ದೊಡ್ಡವರು ಯೋಚನೆ ಮಾಡಬೇಕೆಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿರುವ ಸಚಿವರ ಆಪ್ತರ ಮನೆಗಳ ಮೇಲೆ ಇ.ಡಿ ದಾಳಿ
ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಮುಖ ಬಿಲ್ಡರ್ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಕೆಲವು ಸಚಿವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ವರದಿಯ ಮೇರೆಗೆ ನಡೆದ ಈ ಕಾರ್ಯಾಚರಣೆ, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಸಚಿವರು, ಶಾಸಕರು ಮುಂದಿನ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಕಾಸರಗೋಡು : ಇಲ್ಲಿನ ಆಲಿಯಾ ಅರೇಬಿಕ್ ಕಾಲೇಜಿನಲ್ಲಿ 5 ದಶಕಗಳಿಗೂ ಸುದೀರ್ಘ ಕಾಲದಿಂದ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎಂ.ಹೈದರ್ ಅವರು ಬುಧವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮಂಗಳೂರಿನ ದಿವಂಗತ ಕುದ್ರೋಳಿ ಹಸನಬ್ಬ ಅವರ ಹಿರಿಯ ಪುತ್ರರಾದ ಕೆ.ಎಂ.ಹೈದರ್ ಅವರು ಕಾಸರಗೋಡಿನ ಆಲಿಯಾ ಅರೇಬಿಕ್ ಕಾಲೇಜಿನಲ್ಲಿ ಪದವಿ ಹಾಗೂ ಸೌದಿ ಅರೇಬಿಯಾದ ಮದೀನ ವಿಶ್ವವಿದ್ಯಾನಿಲಯದಲ್ಲಿ ತರಬೇತಿ ಬಳಿಕ ಆಲಿಯಾ ಅರೇಬಿಕ್ ಕಾಲೇಜಿನಲ್ಲಿ 1973ರಲ್ಲಿ ಅಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು. ಜಮಾಅತೆ ಇಸ್ಲಾಂ ಹಿಂದ್ ನಲ್ಲಿ ಸಕ್ರಿಯವಾಗಿದ್ದ ಹೈದರ್ ಅವರು ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಶಿಕ್ಷಣ ನೀಡಿದ್ದರು. ಮೃತರರು ಪತ್ನಿ, 4 ಗಂಡು, 4 ಹೆಣ್ಣು ಮಕ್ಕಳು , ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಗುರುವಾರ ಪರವನಡ್ಕಂ ನಲ್ಲಿ ನಡೆಯಲಿದೆ.
ಬಂತು.. ಬಂತು.. 20 ವರ್ಷಗಳ ನಂತರ ಭಾರತಕ್ಕೆ ಬಂತು ಒಲಿಂಪಿಕ್ ಸಮಾನವಾದ ಜಾಗತಿಕ ಕ್ರೀಡಾಕೂಟ!
ಭಾರತ ಬೆಳೆಯುತ್ತಿದೆ, ಹಾಗೇ ಭಾರತದ ಕ್ರೀಡಾ ಲೋಕ ಕೂಡ ಜಾಗತಿಕ ಮಟ್ಟದಲ್ಲಿ ಮಿರಮಿರ ಮಿಂಚಲು ಶುರು ಮಾಡಿದೆ. ಕ್ರಿಕೆಟ್ ಮಾತ್ರವಲ್ಲದೆ ಭಾರತದಲ್ಲಿ ಪ್ರತಿಯೊಂದು ಕ್ರೀಡೆಗೂ ಇದೀಗ ಮಹತ್ವ ನೀಡುತ್ತಿರುವ ಕಾರಣಕ್ಕೆ ಎಲ್ಲಾ ವಿಭಾಗದಲ್ಲೂ ಭಾರತದ ಕ್ರೀಡಾಪಟುಗಳು ಸಾಧನೆಯ ಹಾದಿ ತಲುಪಿದ್ದಾರೆ. ಅದರಲ್ಲೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಾಧಕರು ಈಗ ಮಾಡುತ್ತಿರುವ ಸಾಧನೆ ಹೆಮ್ಮೆಯನ್ನೇ ತಂದಿದೆ. ಇಂತಹ
ಕಲಬುರಗಿ | ಸಂವಿಧಾನದಿಂದಲೇ ಸಮಾನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ : ಅಲ್ಲಮಪ್ರಭು ಪಾಟೀಲ್
ಕಲಬುರಗಿ : ಸ್ವಾತಂತ್ರ ಪೂರ್ವದಲ್ಲಿ ಮತಾಂಧತೆ, ಜಾತಿಯತೆ, ಮೂಢನಂಬಿಕೆ, ಅಸ್ಪೃಶ್ಯತೆ ದೇಶದಲ್ಲಿ ತಾಂಡವಾಡುತ್ತಿತ್ತು. ಇಂತಹ ಎಲ್ಲಾ ಕಷ್ಟಗಳನ್ನು ಅನುಭವಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಸಂವಿಧಾನ ಜಾರಿಯಾದ ಪರಿಣಾಮ ಇಂದು ದೇಶದಲ್ಲಿ ಜಾತಿ, ಧರ್ಮ, ವರ್ಣವಿಲ್ಲದೆ ಸರ್ವರು ಸಮಾನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು. ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ “ಸಂವಿಧಾನ ದಿನಾಚರಣೆ-2025” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಅಮೆರಿಕಾದಿಂದ ಬಂದ ಅಕ್ಕಿ ತಿನ್ನಬೇಕಿತ್ತು. ಸ್ವಾತಂತ್ರ್ಯ ಬಂದ ನಂತರ ದೇಶದ ಸಮಗ್ರ ಅಭಿವೃದ್ಧಿಗೆ ಮತ್ತು ಸರ್ವರ ಏಳಿಗೆಗೆ ಅಂಬೇಡ್ಕರ್ ಅವರು ಸಂವಿಧಾನ ಎಂಬ ಮಹಾಗ್ರಂಥ ನೀಡಿದ ಫಲವಾಗಿ ಇಂದು ವಿಶ್ವಕ್ಕೆ ಆಹಾರ ಧಾನ್ಯ ನೀಡುವ ಸಾಮರ್ಥ್ಯ ನಮಗಿದೆ. ಬರಿ ಇಷ್ಟೆ ಅಲ್ಲ ವಿಶ್ವಕ್ಕೆ ಡಾಕ್ಟರ್, ಇಂಜಿನೀಯರ್ ಗಳನ್ನು ನಾವು ಪೂರೈಸುತ್ತಿದೇವೆ. ಅಷ್ಟರ ಮಟ್ಟಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಲಬುರಗಿಯಲ್ಲಿ ಪದವಿ ಕಾಲೇಜು ಇರಲಿಲ್ಲ. ಉನ್ನತ ಶಿಕ್ಷಣಕ್ಕೆ ಹೈದರಾಬಾದ್ಗೆ ಹೋಗಬೇಕಿತ್ತು. ಇಂದು ಇಲ್ಲಿಯೇ 4 ರಿಂದ 5 ವಿಶ್ವವಿದ್ಯಾಲಯಗಳಿವೆ. ಇಂತಹ ಕ್ರಾಂತಿಕಾರಿ ಬದಲಾವಣೆಯ ಹಿಂದೆ ಸಂವಿಧಾನ ಮತ್ತು ಅದರ ಮೂಲಾಶಯ ಅಡಗಿದೆ ಎಂಬುದನ್ನು ಯಾರು ಮರೆಯಬಾರದು ಎಂದರು. ಈ ವೇಳೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಮಾತನಾಡಿ, ಸಂವಿಧಾನ ಜಾರಿಗೆ ಬಂದು 75 ವರ್ಷ ಗತಿಸಿದರೂ ಇನ್ನು ಕೆಲವರು ಅದು ಒಂದು ವರ್ಗಕ್ಕೆ ಸೀಮಿತ, ಅಂಬೇಡ್ಕರ್ ಅವರೊಬ್ಬರೆ ಬರೆಯಲಿಲ್ಲ ಎಂಬಿತ್ಯಾದಿಯಾಗಿ ಶ್ರೇಷ್ಠ ಗ್ರಂಥವನ್ನು ಅನುಮಾನ ಮತ್ತು ಕೀಳರಿಮೆ ಮನೋಭಾವದಿಂದ ನೋಡುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ. ಪ್ರತಿಯೊಬ್ಬರು ಸಂವಿಧಾನ ಓದಬೇಕು ಮತ್ತು ಅದರ ಮೂಲ ಆಶಯ ಅರಿಯಬೇಕು. ಸಂವಿಧಾನ ಮರೆತರೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಹೇಳಿದರು. ಭಾರತದ ಸಂವಿಧಾನವನ್ನು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಎರಡು ರೂಪದಲ್ಲಿ ಗ್ರಹಿಸಿದಾಗ ಇದರ ಮಹತ್ವ ಮತ್ತು ಪ್ರಾಮುಖ್ಯತೆ ನಮ್ಮ ಅರಿವಿಗೆ ಬರುತ್ತೆ. ಸ್ವಾತಂತ್ರ್ಯ ಪೂರ್ವ ಶಿಕ್ಷಣ, ಉದ್ಯೋಗ ಉಳ್ಳವರ ಪಾಲಾಗಿತ್ತು. ಮಹಿಳೆಯರನ್ನು ಕೆಟ್ಟದಾಗಿ ಕಾಣಲಾಗುತ್ತಿತ್ತು. ಬಾಲ್ಯ ವಿವಾಹ, ಜಾತಿ ವ್ಯವಸ್ಥೆ ಪದ್ದತಿ ಜಾರಿಯಲ್ಲಿತ್ತು. ಸ್ವಾತಂತ್ರ್ಯದ ನಂತರ ಸರ್ವರು ಗೌರವಯುತವಾಗಿ ಬದುಕು ಸಾಗಿಸುವಂತಾಗಿದೆ. ಶಿಕ್ಷಣ, ಆಹಾರ ಹಕ್ಕಾಗಿ ಪರಿಗಣಿಸಲಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಪ್ರತಿ ವ್ಯಕ್ತಿಗೆ ಒಂದು ವೋಟಿನ ರಾಜಕೀಯ ಮೌಲ್ಯ ಸಿಕ್ಕಿದೆ. ಇದು ಸಂವಿಧಾನದ ಫಲ ಎಂದರು. ಇದಕ್ಕು ಮುನ್ನ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥಾವು ಜಗತ್ ವೃತ್ತ ಮಾರ್ಗವಾಗಿ ರಂಗಮಂದಿರದವರೆಗೆ ಬಂದು ಸಂಪನ್ನಗೊಂಡಿತ್ತು. ಇನ್ನು ಜಗತ್ ವೃತ್ತದಲ್ಲಿ ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಆದಿಯಾಗಿ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಸಹಾಯಕ ನಿರ್ದೇಶಕ ವಿಜಯಕುಮಾರ ಫುಲಾರೆ, ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರಕಾರಿ, ಅರೆ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬ್ಳಿ ಸೇರಿದಂತೆ ಇತರೆ ಅಧಿಕಾರಿಗಳು, ಗಣ್ಯರು, ಶಾಲಾ-ಕಾಲೇಜು ಹಾಗೂ ವಸತಿ ನಿಲಯದ ಮಕ್ಕಳು ಭಾಗವಹಿಸಿದ್ದರು.
ಅಹಮದಾಬಾದ್ ಗೆ 2030 ಕಾಮನ್ವೆಲ್ತ್ ಗೇಮ್ಸ್ ಆತಿಥ್ಯ
2030ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅಹಮದಾಬಾದ್ ಸಜ್ಜಾಗುತ್ತಿದೆ! ಭಾರತದ ಕ್ರೀಡಾ ಶಕ್ತಿಯನ್ನು ಜಗತ್ತಿಗೆ ತೋರಿಸುವ ಈ ಮಹತ್ವದ ಕಾರ್ಯಕ್ರಮಕ್ಕಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್ಕ್ಲೇವ್ ನಿರ್ಮಾಣ ಹಂತದಲ್ಲಿದೆ. ಇದು 2036ರ ಒಲಿಂಪಿಕ್ಸ್ ಕನಸಿಗೆ ಬಲ ತುಂಬುವ ಹೆಜ್ಜೆ. ಕಬಡ್ಡಿ, ಖೋ-ಖೋ ಮುಂತಾದ ದೇಶೀಯ ಕ್ರೀಡೆಗಳೂ ಈ ವೈಭವದಲ್ಲಿ ಮಿಂಚಲಿವೆ.
ಉಡುಪಿ | ಸಂವಿಧಾನವನ್ನು ಆರಾಧಿಸುವುದಲ್ಲ, ಆಚರಿಸಬೇಕು: ಡಾ.ಜಯಪ್ರಕಾಶ್ ಶೆಟ್ಟಿ
ಉಡುಪಿ, ನ.26: ಸಮಾನತೆ, ಸಹಭಾಗಿತ್ವಕ್ಕೆ ಅಗತ್ಯವಾದ ಸಾಮರಸ್ಯದ ವಾತಾವರಣದಲ್ಲಿ ವೈಚಾರಿಕ ಮನೋಧರ್ಮದೊಂದಿಗೆ ದೇಶದ ನೈಸರ್ಗಿಕ ಮತ್ತು ಸಾರ್ವಜನಿಕ ಸಂಪತ್ತನ್ನು ಕಾದುಕೊಂಡು ಹೋಗುವ ಮೂಲಕ ಸಂವಿಧಾನವನ್ನು ನಮ್ಮ ನಿತ್ಯದ ಆಚರಣೆಯಾಗಿ ನಿಜವಾಗಿಸಬೇಕಲ್ಲದೆ ಅದರ ಪ್ರತಿಕೃತಿಯನ್ನು ಆರಾಧಿಸುವ ತೋರಿಕೆಯನ್ನು ನಡೆಸುವುದಲ್ಲ ಎಂದು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಹೇಳಿದ್ದಾರೆ. ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪರ್ಣ ಕೆ.ಯು. ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ. ಸಂವಿಧಾನ ಪೀಠಿಕೆ ಬೋಧಿಸಿದರು. ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷ ಈರ ಬಸು, ಉಪಾಧ್ಯಕ್ಷೆ ವೈಷ್ಣವಿ ಉಪಸ್ಥಿತರಿದ್ದರು. ಅಭೀಷ ಸ್ವಾಗತಿಸಿ, ಅಕ್ಷಯ ವಂದಿಸಿದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ | ಸಂವಿಧಾನದ ಆಶಯ ಪೂರ್ಣಪ್ರಮಾಣದಲ್ಲಿ ಈಡೇರಿಸುವಲ್ಲಿ ಎಲ್ಲರ ಪಾತ್ರ ಮುಖ್ಯ: ವಿನೋದ್ ಕ್ರಾಸ್ತ
ಕುಂದಾಪುರ, ನ.26: ನಮ್ಮದು ಅನೇಕ ಧರ್ಮಗಳಿರುವ ದೇಶ. ಎಲ್ಲ ಧರ್ಮಗಳಿಗೂ ಅವರದೇ ಆದ ಧರ್ಮಗ್ರಂಥಗಳಿವೆ. ಆದರೆ ಅದೆಲ್ಲದಕ್ಕೂ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ನಮ್ಮ ದೇಶದ ಸಂವಿಧಾನವೇ ಶ್ರೇಷ್ಠ ಗ್ರಂಥ. ಪವಿತ್ರವಾದ ಸಂವಿಧಾನದ ಆಶಯಗಳು ಪೂರ್ಣಪ್ರಮಾಣದಲ್ಲಿ ಈಡೇರಿಸುವಲ್ಲಿ ಎಲ್ಲರ ಪಾತ್ರವೂ ಮುಖ್ಯ ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ ಹೇಳಿದ್ದಾರೆ. ಕುಂದಾಪುರ ತಾಲೂಕು ಆಡಳಿತ, ತಾ.ಪಂ., ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಕುಂದಾಪುರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಜೂನಿಯರ್ ಕಾಲೇಜಿನ ಕಲಾ ಮಂದಿರದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಎಸ್. ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ವಿ., ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ದಲಿತ ಸಂಘಟನೆಯ ಪ್ರಮುಖರಾದ ರಾಜು ಬೆಟ್ಟಿನಮನೆ, ದೀಪಾ ಜಪ್ತಿ, ಮತ್ತಿತರರು ಉಪಸ್ಥಿತರಿದ್ದರು. ಯುವ ಲೇಖಕ ಮಂಜುನಾಥ ಹಿಲಿಯಾಣ ಸಂವಿಧಾನ ದಿನಾಚರಣೆಯ ಕುರಿತಂತೆ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸ್ಟೆಲ್ ಮೇಲ್ವಿಚಾರಕಿ ರಾಧಿಕಾ ರಾಣಿ ಕಾರ್ಯಕ್ರಮ ನಿರೂಪಿಸಿದರು. ಸಂವಿಧಾನ ದಿನಾಚರಣೆ ಅಂಗವಾಗಿ ಶಾಸ್ತ್ರಿ ಸರ್ಕಲ್ ನಿಂದ ಜೂನಿಯರ್ ಕಾಲೇಜಿನವರೆಗೆ ಸಂವಿಧಾನ ಜಾಥಾ ನಡೆಯಿತು. ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್. ಜಾಥಾಗೆ ಚಾಲನೆ ನೀಡಿದರು.
ವರ್ತೂರು-ಗುಂಜೂರು ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ ನಿಧಾನ; ಸವಾರರಿಗೆ ಇನ್ನೆರಡು ವರ್ಷ ತಪ್ಪದ ಗೋಳು
ಬೆಂಗಳೂರಿನ ಜನನಿಬಿಡ ರಸ್ತೆಯಾದ ವರ್ತೂರು-ಗುಂಜೂರು ಮಾರ್ಗದಲ್ಲಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಭಾರಿ ಸಮಸ್ಯೆ ಉಂಟಾಗಿದೆ. ಧೂಳು, ಟ್ರಾಫಿಕ್ ಸಮಸ್ಯೆಗೆ ಇನ್ನೂ ಎರಡು ವರ್ಷಗಳು ಒಗ್ಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವಂತಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಪಂಜಾಬ್ | ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ನಾಲ್ವರ ಸೆರೆ
ಟ್ರೈಸಿಟಿ, ಪಾಟಿಯಾಲ ಪ್ರಾಂತ್ಯಗಳಲ್ಲಿ ದಾಳಿ ನಡೆಸಲು ಯೋಜಿಸಿದ್ದ ಬಂಧಿತರು
ರಾಯಚೂರು | ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ, ಜಾಥಾ
ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಂವಿಧಾನ ಜಾಗೃತಿ ಜಾಥಾ ಆರಂಭವಾಯಿತು. ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್, ರಾಯಚೂರು ನಗರ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಪವನ ಕಿಶೋರ್ ಪಾಟೀಲ್, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕಾಂದೂ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ತಹಶೀಲ್ದಾರ್ ಸುರೇಶ ವರ್ಮಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಮಠಮಾರಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಜಾಥಾವು ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ, ತೀನ್ ಕಂದಿಲ್ ವೃತ್ತ, ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿ ನಗರದ ಶ್ರೀ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಸಮಾಪ್ತಿಯಾಗಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ನಿತೀಶ್ ಕೆ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಸುಭಾಷ್ ಚಂದ್ರ ಅವರು ವಿಶೇಷ ಉಪನ್ಯಾಸ ನೀಡಿದರು. ಜಾನ್ವೆಸ್ಲಿ ಟಿ ಕಾತರಕಿ ಅವರು ಡಾ.ಬಿ.ಆರ್.ಅಂಬೇಡ್ಕರ್ ವೇಷ ಧರಿಸಿ ಗಮನ ಸೆಳೆದರು. ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷರು ಹಾಗೂ ಕಲಾವಿದರಾದ ಪರಶುರಾಮ ಅರೋಲಿ ಅವರು ಕಾರ್ಯಕ್ರಮದಲ್ಲಿ ಪ್ರಾರ್ಥಿಸಿ, ಅಂಬೇಡ್ಕರ್ ಗೀತೆಗಳ ಗಾಯನ ನಡೆಸಿಕೊಟ್ಟರು. ಈ ವೇಳೆ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಇ.ಕುಮಾರ, ಎಂ.ಆರ್.ಭೇರಿ, ಅನಿತಾ ನವಲಕಲ್, ನಿವೇದಿತಾ ಎನ್, ವಿಶ್ವನಾಥ ಪಟ್ಟಿ, ಬಸವರಾಜ ಸಾಸಲಮರಿ, ಗಿರಿಯಪ್ಪ ನೆಲಹಾಳ, ಕರುಣಕುಮಾರ ಕಟ್ಟಿಮನಿ, ಪಿ.ಪ್ರಭಾಕರ, ಪ್ರಾಣೇಶ ಮಂಚಾಳ, ರವಿ ದಾದಸ, ಎಂ.ವೆಂಕಟೇಶ ಅರೋಲಿಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸಿಂಧೂ ರಘು ಹೆಚ್.ಎಸ್., ಆದಿ ಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜೇಂದ್ರ ಜಲ್ದಾರ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಮಾನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಸ್ರೇಲ್ ನಿಂದ ಮುಂದುವರಿದ ವೈಮಾನಿಕ ದಾಳಿ: ಅತಂತ್ರ ಸ್ಥಿತಿಯಲ್ಲಿ ಗಾಝಾ
ಗಾಝಾ: ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮವೇರ್ಪಟ್ಟ ನಂತರ, ಗಾಝಾದ ಮೇಲೆ ಇಸ್ರೇಲ್ ಸಾರಿದ್ದ ಯುದ್ಧ ಬಹುತೇಕ ಅಂತ್ಯಗೊಂಡಿತು ಎಂದೇ ಫೆಲೆಸ್ತೀನಿಯನ್ನರು ಭಾವಿಸಿದ್ದರು. ಆದರೆ, ಹಮಾಸ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ಪುನಾರಂಭಿಸಿರುವ ವೈಮಾನಿಕ ದಾಳಿಯಲ್ಲಿ ಇಲ್ಲಿಯವರೆಗೆ 342 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದು, ಈ ಪೈಕಿ 67 ಮಕ್ಕಳು ಸೇರಿದ್ದಾರೆ. ಕದನ ವಿರಾಮದ ನಂತರ, ಹೊಸದಾಗಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಫೆಲೆಸ್ತೀನಿಯನ್ನರು ಇಸ್ರೇಲ್ ನ ವೈಮಾನಿಕ ದಾಳಿಯಿಂದ ಕಂಗಾಲಾಗಿದ್ದು, “ಇದು ಕದನ ವಿರಾಮವಲ್ಲ; ನಮ್ಮ ಪಾಲಿನ ದುಃಸ್ವಪ್ನ” ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇಸ್ರೇಲ್ ವೈಮಾನಿಕ ದಾಳಿಯ ದುಃಸ್ವಪ್ನದ ಕುರಿತು ತಮ್ಮ ಅನುಭವ ಹಂಚಿಕೊಳ್ಳುವ ಫೈಕ್ ಅಜೌರ್, “ನಾನು ಪವಾಡಸದೃಶವಾಗಿ ಬದುಕುಳಿದೆ. ನಾನು ಆಗಷ್ಟೇ ಬೀದಿಯನ್ನು ದಾಟಿದ್ದೆ. ಹತ್ತಿರದ ತರಕಾರಿ ಅಂಗಡಿಯಿಂದ ಮನೆಗೆ ಒಂದಿಷ್ಟು ಸಾಮಗ್ರಿಗಳನ್ನು ಕೊಂಡುಕೊಳ್ಳಲೆಂದು ತೆರಳಿದಾಗ, ನನ್ನ ಮನೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು” ಎಂದು ಸ್ಮರಿಸುತ್ತಾರೆ. “ಆದರೆ ಇದಷ್ಟೇ ವಿಷಯವಾಗಿರಲಿಲ್ಲ. ನಾನು ನನ್ನ ಮನೆಗೆ ಓಡಿ ಬಂದಾಗ, ನನ್ನ ಕುಟುಂಬದ ಸದಸ್ಯರಿಗೆ ದೈಹಿಕವಾಗಿ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ, ನನ್ನ ಮೂವರು ಕಿರಿಯ ಪುತ್ರಿಯರು ಭಯದಿಂದ ಆಘಾತಕ್ಕೊಳಗಾಗಿದ್ದರು. ಅಕ್ಟೋಬರ್ ನಿಂದ ಜಾರಿಗೆ ಬಂದಿದ್ದ ಕದನ ವಿರಾಮ ಅಂತ್ಯಗೊಂಡು, ಗಾಝಾ ಮೇಲಿನ ಜನಾಂಗೀಯ ಹತ್ಯೆ ಮತ್ತೆ ಪ್ರಾರಂಭಗೊಂಡಿರಬಹುದು ಎಂದು ಗಾಬರಿಗೊಳಗಾಗಿದ್ದರು” ಎಂದು ಅವರು ಹೇಳುತ್ತಾರೆ. ಕದನ ವಿರಾಮ ಪ್ರಾರಂಭಗೊಂಡಾಗಿನಿಂದ, ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ಪದೇ ಪದೇ ಗಾಝಾ ಮೇಲೆ ದಾಳಿ ನಡೆಸುತ್ತಿದೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಹಮಾಸ್, ಕದನ ವಿರಾಮ ಪ್ರಾರಂಭಗೊಂಡಾಗಿನಿಂದ ಇಲ್ಲಿಯವರೆಗೆ 500 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿರುವ ಇಸ್ರೇಲ್, ತನ್ನ ವೈಮಾನಿಕ ದಾಳಿಯಲ್ಲಿ 67 ಮಕ್ಕಳು ಸೇರಿದಂತೆ ಒಟ್ಟು 342 ಫೆಲೆಸ್ತೀನ್ ನಾಗರಿಕರನ್ನು ಹತ್ಯೆಗೈದಿದೆ. ಈ ಪೈಕಿ, ಶನಿವಾರ ಗಾಝಾ ಪಟ್ಟಿಯಾದ್ಯಂತ ಹತ್ಯೆಗೀಡಾದ 24 ಮಂದಿಯ ಪೈಕಿ, ಫೈಕ್ ಅಜೌರ್ ವಾಸಿಸುತ್ತಿರುವ ಗಾಝಾದ ಅಲ್-ಅಬ್ಬಾಸ್ ಪ್ರದೇಶದಲ್ಲಿನ ನಿವಾಸಿಗಳು ಸೇರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸುವ ಫೈಕ್ ಅಜೌರ್, “ಇದು ಕದನ ವಿರಾಮವಲ್ಲ; ಇದು ದುಃಸ್ವಪ್ನವಾಗಿದೆ. ಒಂದು ಕ್ಷಣದ ಶಾಂತ ವಾತಾವರಣದ ಬಳಿಕ, ಇದು ಮತ್ತೆ ಯುದ್ಧವೇನೊ ಎಂಬ ಸ್ಥಿತಿಗೆ ಜೀವನ ಮರಳುತ್ತಿದೆ” ಎಂದು ಅಳಲು ತೋಡಿಕೊಳ್ಳುತ್ತಾರೆ. “ನೀವು ಈ ಪ್ರದೇಶದಾದ್ಯಂತ ದೇಹದ ಭಾಗಗಳು, ಹೊಗೆ, ಒಡೆದು ಹೋದ ಗಾಜು, ಹತ್ಯೆಗೀಡಾದ ಜನರು, ಆ್ಯಂಬುಲೆನ್ಸ್ ಗಳನ್ನು ಕಾಣಬಹುದು. ಈ ದೃಶ್ಯಗಳ ಆಘಾತದಿಂದ ನಾವೀಗಲೂ ಹೊರ ಬಂದಿಲ್ಲ ಮತ್ತು ಅವು ನಮ್ಮ ನೆನಪುಗಳಿಂದ ಅಳಿಸಿ ಹೋಗುತ್ತಿಲ್ಲ” ಎಂದು ಅವರು ಹೇಳಿದರು. ಮೂಲತಃ ಪೂರ್ವ ಗಾಝಾ ನಗರದ ನೆರೆಯ ತುಫಾದವರಾದ 29 ವರ್ಷದ ಫೈಕ್ ಅಜೌರ್, ಯುದ್ಧದ ವೇಳೆ ಸಾಕಷ್ಟು ಘಾಸಿಗೊಳಗಾಗಿದ್ದಾರೆ. ಫೈಕ್ ಅಜೌರ್ ಕುಟುಂಬಸ್ಥರು ವಾಸಿಸುತ್ತಿದ್ದ ಮನೆಯ ಮೇಲೆ ಫೆಬ್ರವರಿ 2024ರಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅವರು ತಮ್ಮ ಪೋಷಕರು, ತಮ್ಮ ಸಹೋದರನ ಮಕ್ಕಳು ಸೇರಿದಂತೆ ತಮ್ಮ ಅವಿಭಜಿತ ಕುಟುಂಬದ 30 ಮಂದಿ ಸದಸ್ಯರನ್ನು ಈವರೆಗೆ ಕಳೆದುಕೊಂಡಿದ್ದಾರೆ. ಈ ವೈಮಾನಿಕ ದಾಳಿಯಲ್ಲಿ ಅವರ ಪತ್ನಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಒಂದು ಬೆರಳನ್ನು ವೈದ್ಯರು ಕತ್ತರಿಸಬೇಕಾಗಿ ಬಂದಿದೆ. ಕದನ ವಿರಾಮದ ನಂತರ ಗಾಝಾಗೆ ಮರಳಿರುವ ಬಹುತೇಕ ಫೆಲೆಸ್ತೀನಿಯನ್ನರ ಪರಿಸ್ಥಿತಿಯೂ ಇದೇ ರೀತಿ ಇದೆ. ಸೌಜನ್ಯ: aljazeera.com
ನ.27-30: ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ನಾಟಕೋತ್ಸವ
ಮಂಗಳೂರು, ನ.26: ಅಸ್ತಿತ್ವ (ರಿ.) ಮಂಗಳೂರು ವತಿಯಿಂದ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಹಾಗೂ ಅರೆಹೊಳೆ ಪ್ರತಿಷ್ಠಾನದ ಸಹಯೋಗದಲ್ಲಿ ನ.27ರಿಂದ 30ರವರೆಗೆ ನಗರದ ಅಲೋಶಿಯಸ್ ಕಾಲೇಜಿನ ಎಲ್ಸಿಆರ್ಐ ಆಡಿಟೋರಿಯಂನಲ್ಲಿ ಸಂಜೆ 6:30ರಿಂದ ನಡೆಯಲಿದೆ. ನ.27ರಂದು ಸೈರನ್ (ಕನ್ನಡ), ನ.28ರಂದು ಪೊಲಿಟಿಕಲ್ ಪ್ರಿಸನರ್ಸ್ (ಕನ್ನಡ), ನ.29ರಂದು ಯೇನಾ ಜಾಲ್ಯಾರ್ ವಚಾನಾ (ಕೊಂಕಣಿ), ನ.30ರಂದು ಚಿರಿ... (ತೀಸ್ ನಾಣ್ಯಾಂಚಿ) (ಕೊಂಕಣಿ) ನಾಟಕ ಪ್ರದರ್ಶನಗೊಳ್ಳಲಿದೆ. ಎಲ್ಲಾ ನಾಟಕಗಳಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
6 ತಿಂಗಳಿನಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಪೋಷಕರ ಮಡಿಲು ಸೇರಿಸಿದ ಮುಂಬೈ ಪೊಲೀಸರು
ಮುಂಬೈ: ಕಳೆದ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮುಂಬೈನ ಬಾಲಕಿಯೊಬ್ಬಳನ್ನು ಪೊಲೀಸರು ತನ್ನ ಪೋಷಕರ ಮಡಿಲು ಸೇರಿಸಿದ ಘಟನೆ ನಡೆದಿದೆ. ಕಳೆದ ಮೇ 20ರಂದು ನಾಲ್ಕು ವರ್ಷದ ಬಾಲಕಿಯೊಬ್ಬಳು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ನಾಪತ್ತೆಯಾಗಿದ್ದಳು. ತಂದೆಯ ಚಿಕಿತ್ಸೆಗೆಂದು ಸೋಲಾಪುರಕ್ಕೆ ತೆರಳಿದ್ದ ಆಕೆಯ ಪೋಷಕರು ಬರೋಬ್ಬರಿ ಆರು ತಿಂಗಳ ಕಾಲ ಬಾಲಕಿಯ ಬರುವಿಕೆಗಾಗಿ ಶಬರಿಯಂತೆ ಕಾದು ಕುಳಿತಿದ್ದರು. ಅವರ ದೀರ್ಘಕಾಲದ ಕಾಯುವಿಕೆಯನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿರುವ ಮುಂಬೈ ಪೊಲೀಸರು, ಕಳೆದು ಹೋಗಿದ್ದ ಅವರ ನಾಲ್ಕು ವರ್ಷದ ಪುತ್ರಿಯನ್ನು ಅವರೊಂದಿಗೆ ಪುನರ್ಮಿಲನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಪುತ್ರಿ ನಾಪತ್ತೆಯಾದ ನಂತರ, ಆಕೆಯ ಪೋಷಕರು ಆಕೆಯ ಮುರುಟಿ ಹೋದ ಭಾವಚಿತ್ರವನ್ನು ಹಿಡಿದುಕೊಂಡು ಪದೇ ಪದೇ ಆರು ತಿಂಗಳ ಕಾಲ ಪೊಲೀಸ್ ಠಾಣೆಗೆ ಕಾಲು ಸವೆಸಿದ್ದರು. ತಮ್ಮ ಪುತ್ರಿಯೇನಾದರೂ ನಿಮ್ಮ ಕಣ್ಣಿಗೆ ಬಿದ್ದಳೆ ಎಂದು ಅಪರಿಚಿತರನ್ನು ಅಕ್ಷರಶಃ ಬೇಡಿಕೊಂಡಿದ್ದರು. ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಾದ್ಯಂತ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಮುಂಬೈನಿಂದ ವಾರಾಣಸಿಯವರೆಗೆ ಆಕೆಯ ಪೋಸ್ಟರ್ ಅನ್ನು ಹಂಚಿಕೊಂಡಿದ್ದ ಅವರು, ಆಕೆಯ ನಾಪತ್ತೆ ಪ್ರಕರಣದ ಕಡತವನ್ನು ಮುಚ್ಚಲು ನಿರಾಕರಿಸಿದ್ದರು. ಆದರೆ, ಕೊನೆಗೂ ನಾಪತ್ತೆಯಾಗಿದ್ದ ಬಾಲಕಿಯ ಸುಳಿವು ವಾರಾಣಸಿಯಲ್ಲಿ ಪತ್ತೆಯಾಗಿತ್ತು. ಆಕೆಯ ನಾಪತ್ತೆ ಪೋಸ್ಟರ್ ಅನ್ನು ಗಮನಿಸಿದ್ದ ಸ್ಥಳೀಯ ಪತ್ರಕರ್ತರೊಬ್ಬರು ಆ ಪುಟ್ಟ ಬಾಲಕಿಯನ್ನು ವಾರಾಣಸಿಯ ಅನಾಥಶ್ರಮವೊಂದರಲ್ಲಿ ಗುರುತು ಹಚ್ಚಿದ್ದರು. ಇದರ ಬೆನ್ನಿಗೇ, ವಾರಾಣಸಿಗೆ ತೆರಳಿದ್ದ ಮುಂಬೈ ಪೊಲೀಸರು, ಆಕೆಯ ಗುರುತನ್ನು ಪರಿಶೀಲಿಸಿ, ಆರು ತಿಂಗಳ ಕಾಲ ತಮ್ಮ ಪುತ್ರಿ ಜೀವಂತವಾಗಿರಲಿ ಎಂದು ಪ್ರಾರ್ಥಿಸಿದ್ದ ಆಕೆಯ ಪೋಷಕರ ಬಯಕೆಯನ್ನು ಅಕ್ಷರಷಃ ನಿಜವಾಗಿದ್ದರು. ಬಳಿಕ ಪೊಲೀಸರು ನವೆಂಬರ್ 14ರಂದು (ಮಕ್ಕಳ ದಿನಾಚರಣೆಯಂದು) ಆಕೆಯನ್ನು ಮತ್ತೆ ಮುಂಬೈಗೆ ಮರಳಿ ಕರೆ ತಂದರು. ಆಕೆಯು ಮುಂಬೈಗೆ ಬರುತ್ತಿದ್ದಂತೆಯೇ, ನೇರವಾಗಿ ಓಡಿರುವ ಆಕೆ, ಆಕೆಗಾಗಿ ಹಲವಾರು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದ ಪೋಷಕರ ತೆಕ್ಕೆಗೆ ಜಾರಿದ್ದಾಳೆ. ಕೆಲವೇ ಕ್ಷಣಗಳಲ್ಲಿ ಹಲವಾರು ತಿಂಗಳ ಭಯ, ನೋವು ಹಾಗೂ ದಣಿವರಿಯದ ಆಶಾವಾದದ ನಂತರ, ಆಕೆ ತಮಗೆ ಮರಳಿ ದೊರೆತದ್ದರಿಂದ ಆಕೆಯ ಪೋಷಕರು ಗದ್ಗದಿತರಾದರು ಎಂದು ತಿಳಿದು ಬಂದಿದೆ. ಆಕೆಯನ್ನು ಅಪಹರಿಸಿದ್ದ ಅಪಹರಣಕಾರನ ಪತ್ತೆಯಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ನಾಪತ್ತೆಯಾಗಿದ್ದ ಬಾಲಕಿಗಾಗಿ ಮುಂಬೈ ಪೊಲೀಸರು ದೇಶದಾದ್ಯಂತ ಸಂಚರಿಸಿದ್ದರು.
ನಿವೃತ್ತ ಶಿಕ್ಷಕಿ ಫೌಸ್ಟಿನ್ ಸುದಾನಾ ಫುರ್ಟಾಡೊ
ಮಂಗಳೂರು,ನ.26:ನಿವೃತ್ತ ಶಿಕ್ಷಕಿ, ಚರ್ಚ್ ಆಫ್ ಸೌತ್ ಇಂಡಿಯಾದ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ನಿವೃತ್ತ ಬಿಷಪ್ ಮಂಗಳೂರಿನ ರೆ.ಸಿ.ಎಲ್. ಫುರ್ಟಾಡೊರ ಪತ್ನಿ ಫೌಸ್ಟಿನ್ ಸುದಾನಾ ಫುರ್ಟಾಡೊ (84) ಮಂಗಳವಾರ ನಿಧನರಾದರು. ಮೃತರು ಪತಿ ಬಿಷಪ್ ಸಿ.ಎಲ್. ಫುರ್ಟಾಡೊ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಆಗಲಿದ್ದಾರೆ. ಫೌಸ್ಟಿನ್ ಸುದಾನಾ ಫುರ್ಟಾಡೊ ನಗರದ ಮಿಲಾಗ್ರಿಸ್ ಬಾಲಕರ ಶಾಲೆ ಮತ್ತು ಸೈಂಟ್ ಆಗ್ನೆಸ್ ಹೆಣ್ಮಕ್ಕಳ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ, ತುಮಕೂರು ಯುನಿಟಿ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷಕಿಯಾಗಿ, ನಗರದ ಬಲ್ಮಠ ಕರ್ನಾಟಕ ಥಿಯಾಲಜಿಕಲ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕರ್ತವ್ಯ ಸಲ್ಲಿಸಿದ್ದರು. ನಗರದ ಕೆಟಿಸಿಯಲ್ಲಿರುವ ಮೊಗ್ಲಿಂಗ್ ಇನ್ಸ್ಟಿಟ್ಯೂಟ್ ಆಫ್ ಜರ್ಮನ್ ಲಾಂಗ್ವೇಜ್ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲೆ ಹಾಗೂ ಜರ್ಮನ್ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದರು. ಕೆಟಿಸಿ ಮಂಗಳೂರು ಕೋಶಾಧಿಕಾರಿಯಾಗಿ, ಮಂಗಳೂರು ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಸಿಎಸ್ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ವಿಮನ್ಸ್ ಫೆಲೋಶಿಪ್ ಅಧ್ಯಕ್ಷರಾಗಿ, ವೈಎಂಸಿಎ ಮಂಗಳೂರು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಸಿಹಿ ಸುದ್ದಿ ಶೀಘ್ರದಲ್ಲೇ ಬರಲಿದೆ ಎಂದು ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ತುರ್ತಾಗಿ ಬೆಂಗಳೂರಿಗೆ ಕರೆದಿದ್ದು, ಅವರೊಂದಿಗೆ ನಿಲ್ಲುವುದು ತಮ್ಮ ಕರ್ತವ್ಯ ಎಂದಿದ್ದಾರೆ. ತಾವು ಒಬ್ಬ ಸಣ್ಣ ಶಾಸಕನಾಗಿದ್ದರೂ, ಜಿಲ್ಲೆಯ ಮಗನಾಗಿ ಡಿಕೆ ಶಿವಕುಮಾರ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಕೆಲಸ ಮಾಡಿದವರಿಗೆ ಕೂಲಿ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು | ನಿರ್ಲಕ್ಷ್ಯದ ಚಾಲನೆ ಆರೋಪ; ಸಿಟಿ ಬಸ್ ಪೊಲೀಸ್ ವಶಕ್ಕೆ
ಮಂಗಳೂರು, ನ.26: ನಗರದ ಬಿಜೈ ಸರಕಾರಿ ಬಸ್ ನಿಲ್ದಾಣದ ಎದುರಿನ ಜಂಕ್ಷನ್ನಲ್ಲಿ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಬಸ್ಸನ್ನು ಅಡ್ಡಗಟ್ಟಿದ ಸಾರ್ವಜನಿಕರು ಪಾಂಡೇಶ್ವರ ಸಂಚಾರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಬುಧವಾರ ನಗರದ ಲಾಲ್ಭಾಗ್ ಕಡೆಯಿಂದ ಮಂಗಳಾದೇವಿಗೆ ಹೋಗುತ್ತಿದ್ದ ರೂಟ್ ನಂಬ್ರ 15ರ ಬಸ್ಸನ್ನು ಅದರ ಚಾಲಕ ಜಂಕ್ಷನ್ನಲ್ಲಿ ಯದ್ವಾತದ್ವಾ ಚಲಾಯಿಸಿಕೊಂಡು ಓವರ್ಟೇಕ್ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಬಸ್ ಜಂಕ್ಷನ್ನಲ್ಲಿ ನಿಂತಿದ್ದ ಬೈಕ್ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಸ್ತೆಗೆ ಬಿದ್ದಿದ್ದರೆ, ಜಂಕ್ಷನ್ನಲ್ಲಿ ನಿಂತಿದ್ದ ಇತರರು ಯದ್ವಾತದ್ವಾ ಬಸ್ ಬರುತ್ತಿರುವುದನ್ನು ಕಂಡು ಆತಂಕಗೊಂಡರು.ಹಾಗೇ ಬಳಿಕ ಸಾರ್ವಜನಿಕರು ಬಸ್ ಚಾಲಕನನ್ನು ಕೆಳಗಿಳಿಸಿ ಪೊಲೀಸರಿಗೆ ಮಾಹಿತಿ ನೀಡಿ ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಬಸ್ಸನ್ನು ಕೊಂಡೊಯ್ದು ಠಾಣೆಯಲ್ಲಿಟ್ಟು, ದಂಡ ಪಾವತಿಸಿದ ಬಳಿಕ ಕೊಂಡೊಯ್ಯುವಂತೆ ಸೂಚಿಸಿದ್ದಾರೆ.
ಬಹರೈನ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅಬ್ದುಲ್ ಶಕೀಲ್ ಆಯ್ಕೆ
ಮಂಗಳೂರು,ನ.26: ಎನ್ಆರ್ಐ ಫೋರಂ ಕರ್ನಾಟಕ ಬಹರೈನ್ 2025ನೇ ಸಾಲಿನ ಬಹರೈನ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಕ, ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಅಬ್ದುಲ್ ಶಕೀಲ್ ಆಯ್ಕೆಯಾಗಿದ್ದಾರೆ. ಬಹರೈನ್ನ ಇಂಡಿಯನ್ ಕ್ಲಬ್ ಓಪನ್ ಗ್ರೌಂಡ್ನಲ್ಲಿ ನ.28ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2025 ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರಿ ಎಚ್.ಇ. ವಿನೋದ್ ಕೆ. ಜೇಕಬ್, ಸ್ಪೀಕರ್ ಡಾ.ಯು.ಟಿ.ಖಾದರ್ ಫರೀದ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ರಾಯಚೂರು : ದತ್ತು ಮಾಸಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ
ರಾಯಚೂರು : ಅನಾಥ, ನಿರ್ಗತಿಕ ಹಾಗೂ ಪರಿತ್ಯಕ್ತ ಮಕ್ಕಳಿಗೂ ಕೂಡ ಪ್ರೀತಿ, ವಾತ್ಸಲ್ಯ, ಮಮತೆ ನೀಡಬೇಕು. ಅನಾಥ ಮಕ್ಕಳನ್ನು ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಬೇಕು ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಗಣೇಶ್ ಕೆ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣಾ ಸಭಾಂಗಣದಲ್ಲಿ ದತ್ತು ಮಾಸಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಗಣೇಶ್ ಕೆ, ಪ್ರಸ್ತುತ ವರ್ಷ ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ದತ್ತು ತೆಗೆದುಕೊಂಡು ಹೊಸ ಬದುಕಿಗೆ ಅವಕಾಶ ಮಾಡಿಕೊಡಲು ಜನತೆಯು ಮುಂದೆ ಬರಲು ಜನಜಾಗೃತಿ ನೀಡಬೇಕು ಎಂದು ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಿರಲಿಂಗಪ್ಪ ಮಾತನಾಡಿ, ಯಾವುದೋ ಕಾರಣ, ಸಂದಿಗ್ಧ ಸನ್ನಿವೇಶಗಳಿಂದ ಕಂದಮ್ಮಗಳನ್ನು ಬೀದಿ, ತಿಪ್ಪೆ, ಕಾಲುವೆ ಬದಿ ಬಿಟ್ಟುಹೋಗುವ ಹಲವಾರ ಉದಾಹರಣೆಗಳಿವೆ. ಇಂತ ಸಂದರ್ಭದಲ್ಲಿ 1098ಗೆ ಕರೆಮಾಡಿ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ ಮಗುವನ್ನು ಒಪ್ಪಿಸಿದಲ್ಲಿ ಮಕ್ಕಳನ್ನು ಸಾಕುವ ಅದೆಷ್ಟೊ ಪಾಲಕರಿಗೆ ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ-2015 ರಡಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಮಾರ್ಗಸೂಚಿಯನ್ವಯ ದತ್ತು ನೀಡಲಾಗುತ್ತಿದೆ. ದಯವಿಟ್ಟು ಯಾರೂ ನವಜಾತ ಶಿಶು ಹಾಗೂ ಮಕ್ಕಳನ್ನು ಅನಾಥವಾಗಿಸಬೇಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಮ್ ಶಾಕೀರ್ ಮೊಹಿಯುದ್ದೀನ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಶಿವಕುಮಾರ್, ಡಾ.ಶೀತಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿವೈಹೆಚ್ಓ ಬಸಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಗಳೂರು | ಸಂವಿಧಾನವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ : ಹರೀಶ್ ಕುಮಾರ್
ಮಂಗಳೂರು, ನ.26: ಸಂವಿಧಾನದ ಬಗ್ಗೆ ಅರಿತು ಅದರ ಅನುಗುಣವಾಗಿ ನಡೆದರೆ ಭಾರತ ವಿಶ್ವಗುರು ಆಗಲಿದೆ. ಸಂವಿಧಾನವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ. ಸಂವಿಧಾನ ದಿನಾಚರಣೆ ಪ್ರಯುಕ್ತ ದ.ಕ.ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಮತ್ತು ಮಾಹಿತಿ ಹಕ್ಕು ಘಟಕದ ವತಿಯಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸಂವಿಧಾನ ಪೀಠಿಕೆ ಬೋಧಿಸಿ ಬಳಿಕ ಮಾತನಾಡುತ್ತಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ಬಹುತ್ವ ಭಾರತದ ಬುನಾದಿಯಾಗಿದೆ. ಭಾರತೀಯರಿಗೆ ಸಂವಿಧಾನ ಪವಿತ್ರ ಗ್ರಂಥವಾಗಿದ್ದು, ಸಂವಿಧಾನಕ್ಕೆ ಗೌರವ ನೀಡಿ ಸಂವಿಧಾನದ ಬಗ್ಗೆ ತಿಳಿಯುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಸಂವಿಧಾನ ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು. ಈ ಸಂದರ್ಭ ದ.ಕ.ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಮತ್ತು ಮಾಹಿತಿ ಹಕ್ಕು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ ಅವರು ಸಂವಿಧಾನದ ಮಹತ್ವದ ಬಗ್ಗೆ ವಿವರಿಸಿದರು. ಸಂವಿಧಾನ ಪೀಠಿಕೆ, ಅಂಬೇಡ್ಕರ್ ಭಾವಚಿತ್ರ ಅನಾವರಣ : ಇದಕ್ಕೂ ಮುನ್ನ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕಾನೂನು ಘಟಕದ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಅಳವಡಿಸಿದ ಸಂವಿಧಾನ ಪೀಠಿಕೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಂ, ಮುಖಂಡರಾದ ಶಾಹುಲ್ ಹಮೀದ್ ಕೆ.ಕೆ, ಜೋಕಿಂ ಡಿಸೋಜಾ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ದಿನೇಶ್ ಮುಳೂರು, ಶೈಲಜಾ ಬಂಟ್ವಾಳ, ಪ್ರೇಮ್ ನಾಥ್ ಬಳ್ಳಾಲ್ ಭಾಗ್, ನಿತ್ಯಾನಂದ ಶೆಟ್ಟಿ, ಕಾನೂನು ಘಟಕದ ವಿಧಾನಸಭಾ ಅಧ್ಯಕ್ಷರಾದ ಮೆಲ್ವಿನ್ ಜೋನ್ಸನ್ ಲೋಬೊ, ನವೀನ್ ಪೈಸ್, ಕ್ಸೆವಿಯರ್ ಪಾಲೇಲಿ ಮತ್ತಿತರರು ಉಪಸ್ಥಿತರಿದ್ದರು. ಡಿಸಿಸಿ ಉಪಾಧ್ಯಕ್ಷ ಶುಭೋದಯ ಆಳ್ವ ಸ್ವಾಗತಿಸಿದರು. ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ವಂದಿಸಿದರು.
ಮಂಗಳೂರು | ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದಲ್ಲಿ ಶೇ.50ರಷ್ಟು ರಿಯಾಯಿತಿಗೆ ಅವಕಾಶ
ಮಂಗಳೂರು,ನ.26 : ಸರಕಾರದ ಆದೇಶದಂತೆ ಸಾರಿಗೆ ಇಲಾಖೆಯಲ್ಲಿ 1991-92ರಿಂದ 2019-20ರ ಅವಧಿಯಲ್ಲಿ ಹಾಗೂ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾದ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಈ ರಿಯಾಯಿತಿಯು ಮುಂದಿನ ರಾಷ್ಟ್ರೀಯ ಲೋಕ ಅದಾಲತ್ ಡಿ.13ರ ನಿಟ್ಟಿನಲ್ಲಿ ಆದೇಶಿಸಲಾಗಿದೆ. ನ.21 ರಿಂದ ಡಿಸೆಂಬರ್ 12ರವರೆಗೆ ಬಾಕಿ ಇರುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಂಡು ಮೇಲೆ ಕಾಣಿಸಿದ ಪ್ರಕರಣಗಳಿಗೆ ಶೇ.50 ರಿಯಾಯಿತಿಯಲ್ಲಿ ದಂಡ ಪಾವತಿಸುವ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ದರೋಡೆ ಕೇಸ್: ಗರ್ಭಿಣಿ ಪತ್ನಿಯರಿಗೆ ಕರೆ ಮಾಡಿ ಸಿಕ್ಕಿಬಿದ್ದ ಖದೀಮರು, ಲೈಟರ್ ಹಿಡಿದು ಲೂಟಿ
ದರೋಡೆ ಬಳಿಕ ಪತ್ನಿಯರಿಗೆ ಕರೆ ಮಾಡಿ ಪೊಲೀಸರ ಬಲೆಗೆ ಬಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಯಾಣದ ವೇಳೆ ಗರ್ಭಿಣಿಯರಾಗಿರುವ ಪತ್ನಿಯರು ನೆನಪಾಗಿ ಕ್ಯಾಬ್ ಚಾಲಕನ ಮೊಬೈಲ್ನಿಂದ ಕರೆ ಮಾಡಿದ್ದರು. ಪೊಲೀಸರು ದೂರವಾಣಿ ಕರೆಗಳ ಮೇಲೆ ನಿಗಾ ಇಟ್ಟು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೈಟರನ್ನೇ ಪಿಸ್ತೂಲ್ ಆಗಿ ಬಳಸಿದ್ದ ಆರೋಪಿಗಳಿಂದ 54.74 ಲಕ್ಷ ರೂ. ಜಪ್ತಿ ಮಾಡಲಾಗಿದೆ.
ಮಂಗಳೂರು | ಉತ್ತಮ ನೈರ್ಮಲ್ಯ ಅಭ್ಯಾಸ ಮೈಗೂಡಿಸಿಕೊಳ್ಳಿ : ಜಯಪ್ರಕಾಶ್
ಮಂಗಳೂರು,ನ.26: ವಿಶಿಷ್ಟ ಕಲಿಕೆಯೊಂದಿಗೆ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾಗಿದೆ. ಪರಿಸರ ಕಾಳಜಿಯೊಂದಿಗೆ ಓದು ಉತ್ತಮಗೊಳ್ಳುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಜಯಪ್ರಕಾಶ್ ಹೇಳಿದರು. ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಡಿ ಜಿಪಂ ಹಾಗೂ ಕಳೆಂಜ ಗ್ರಾಪಂ ಸಹಭಾಗಿತ್ವದಲ್ಲಿ ಕಾಯತಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಏರ್ಪಡಿಸಲಾದ ಚಿತ್ರಕಲೆ ಬಿಡಿಸುವ ಸ್ಪರ್ಧೆ ಮತ್ತು ಮಾಹಿತಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂ ಪಿಡಿಒ ಹೊನ್ನಮ್ಮ, ಜಿಪಂ ಡಿಪಿಎಂ ವಿಜ್ಞೇಶ್ ರಾಜ್ ಮತ್ತಿತರರು ಉಪಸ್ಥಿತರಿದ್ದರು. ಸಂಯೋಜಕ ಶಿವರಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆನಂದ್ ಕಾರ್ಯಕ್ರಮ ನಿರೂಪಿಸಿದರು.
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ | 31 ಎಸೆತದಲ್ಲಿ ಶತಕ ಸಿಡಿಸಿದ ಉರ್ವಿಲ್ ಪಟೇಲ್
ಹೈದರಾಬಾದ್, ನ. 26: ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯಾವಳಿಯ ಆರಂಭಿಕ ದಿನವಾದ ಬುಧವಾರ ಸರ್ವಿಸಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ತಂಡದ ನಾಯಕ ಉರ್ವಿಲ್ ಪಟೇಲ್ 31 ಎಸೆತಗಳಲ್ಲಿ ಶತಕ ಸಿಡಿಸಿದರು. ಹೈದರಾಬಾದ್ ನ ಜಿಂಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅವರು 11 ಬೌಂಡರಿಗಳು ಮತ್ತು ಎಂಟು ಸಿಕ್ಸರ್ ಗಳನ್ನು ಸಿಡಿಸಿದರು. ಪಂದ್ಯವನ್ನು ಗುಜರಾತ್ ಇನ್ನೂ 45 ಎಸೆತಗಳು ಬಾಕಿಯಿರುವಂತೆಯೇ ಎಂಟು ವಿಕೆಟ್ ಗಳಿಂದ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸರ್ವಿಸಸ್ ಒಂಭತ್ತು ವಿಕೆಟ್ ಗಳ ನಷ್ಟಕ್ಕೆ 182 ರನ್ ಗಳನ್ನು ಗಳಿಸಿತು. ಅದಕ್ಕೆ ಉತ್ತರವಾಗಿ, ಗುಜರಾತ್ ತಂಡದ ಆರಂಭಿಕರಾದ ಉರ್ವಿಲ್ ಮತ್ತು ಆರ್ಯ ದೇಸಾಯಿ ಸರ್ವಿಸಸ್ ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. ಅವರು ಮೊದಲ ವಿಕೆಟ್ ಗೆ 174 ರನ್ ಗಳ ಬೃಹತ್ ಭಾಗೀದಾರಿಕೆಯನ್ನು ನಿಭಾಯಿಸಿದರು. ಉರ್ವಿಲ್ 37 ಎಸೆತಗಳಲ್ಲಿ 119 ರನ್ ಗಳಿಸಿ ಅಜೇಯವಾಗಿ ಉಳಿದರು. ಅವರು ತನ್ನ ಇನಿಂಗ್ಸ್ ನಲ್ಲಿ 12 ಬೌಂಡರಿಗಳು ಮತ್ತು 10 ಸಿಕ್ಸರ್ ಗಳನ್ನು ಬಾರಿಸಿದರು. ಐಪಿಎಲ್ನ ಕಳೆದ ಋತುವಿನಲ್ಲಿ ಉರ್ವಿಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ಐಪಿಎಲ್ ತಂಡವು ಅವರನ್ನು ಈ ಬಾರಿ ಮಿನಿ ಹರಾಜಿಗೆ ಮುನ್ನ ತನ್ನಲ್ಲೇ ಉಳಿಸಿಕೊಂಡಿದೆ.
224 ಕ್ಷೇತ್ರಗಳಲ್ಲಿ ಲೀಗಲ್ ಬ್ಯಾಂಕ್ ಸ್ಥಾಪಿಸಲು ನಿರ್ದೇಶನ : ಡಿ.ಕೆ.ಶಿವಕುಮಾರ್
ಬೆಂಗಳೂರು, ನ.26: ‘ವರ್ಡ್ ಪವರ್ ಈಸ್ ವರಲ್ಡ್ ಪವರ್’ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ರಾಷ್ಟ್ರಪತಿಗಳಾಗಲಿ, ನಾನಾಗಲೀ, ಯಾರೇ ಆಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬುಧವಾರ ನಗರದ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಪ್ರಜಾಪ್ರಭುತ್ವದ ಆತ್ಮ. ಸಂವಿಧಾನಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರ ಎದೆಯ ಮೇಲೆ ತ್ರಿವರ್ಣ ಧ್ವಜ, ಎದೆಯೊಳಗೆ ಸಂವಿಧಾನವಿದೆ ಎಂದರು. 100 ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿದರು. ಗಾಂಧೀಜಿ ಅವರ ನೇತೃತ್ವದ ಬೆಳಗಾವಿ ಎಐಸಿಸಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ 2024ರಲ್ಲಿ ಬೆಳಗಾವಿಯಲ್ಲಿ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು. ಆಗ ನಡೆಸಿದ ಸಮಾವೇಶಕ್ಕೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಟ್ಟು, ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಲೀಗಲ್ ಬ್ಯಾಂಕ್ : ಮತಕಳ್ಳತನ ನಡೆಯುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಬ್ಲಡ್ ಬ್ಯಾಂಕ್ ಮಾದರಿಯಲ್ಲಿ ಲೀಗಲ್ ಬ್ಯಾಂಕ್ ಸ್ಥಾಪಿಸಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಅದರಂತೆ ನಾನು ರಾಜ್ಯ ಕಾನೂನು ಘಟಕದ ಅಧ್ಯಕ್ಷ ಧನಂಜಯ ಅವರಿಗೆ ಆರು ತಿಂಗಳು ಕಾಲಾವಕಾಶ ನೀಡಿದ್ದು, 224 ಕ್ಷೇತ್ರಗಳಲ್ಲಿ ಕನಿಷ್ಠ 10 ವಕೀಲರಿರುವ ಲೀಗಲ್ ಬ್ಯಾಂಕ್ ಅನ್ನು ಸ್ಥಾಪಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ವಕೀಲರು ಏನೇ ವಾದ ಮಾಡಿದರೂ ಸಂವಿಧಾನ ಪುಸ್ತಕ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮೇಲೆ ಮಂಡಿಸುತ್ತಾರೆ. ಇದೆಲ್ಲವನ್ನು ಕೊಟ್ಟಿರುವುದು ಕಾಂಗ್ರೆಸ್ ಪಕ್ಷ. ಇದನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಲೀಗಲ್ ಬ್ಯಾಂಕ್ ಸ್ಥಾಪಿಸಬೇಕಿದೆ. ಲೀಗಲ್ ಬ್ಯಾಂಕ್ನ ವಕೀಲರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಆಚಾರ ವಿಚಾರ ರಕ್ಷಣೆಗೆ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಸಮಿತಿ ರಚಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಕಾನೂನು ಘಟಕದವರಿಗೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂಬ ಬೇಡಿಕೆಯನ್ನು ನಾನು ಒಪ್ಪುತ್ತೇನೆ. ಪಕ್ಷ ಇದ್ದರೆ ಸರಕಾರ, ಪಕ್ಷವೇ ಇಲ್ಲದಿದ್ದರೆ ಸರಕಾರ ಇಲ್ಲ. ಕಾರ್ಯಕರ್ತರು ಬಲಿಷ್ಠವಾಗಿದ್ದರೆ ನಾವು ಬಲಿಷ್ಠವಾಗಿರುತ್ತೇವೆ. ಕೆಪಿಸಿಸಿ ಆಸ್ತಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರ ಪಟ್ಟಿಯನ್ನು ಕೊಡಿ. ಈ ಆಸ್ತಿಗಳನ್ನು ಕಾನೂನು ಸಮಿತಿಗೆ ಸೇರಿಸಲು ನಾನು ಸಿದ್ಧನಿದ್ದೇನೆ. ಆದರೆ, ಅವರು ಇದನ್ನು ಸೇವೆಯಂತೆ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ನಾನು ನನ್ನ ಇಲಾಖೆಗಳಲ್ಲಿರುವ ನ್ಯಾಯಾಲಯ ಪ್ರಕರಣಗಳ ಬಗ್ಗೆ ಪರಿಶೀಲನೆ ಮಾಡಿದೆ. ಸುಮಾರು 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಕೆಲವು ಪ್ರಕರಣಗಳಲ್ಲಿ ವಕೀಲರು ಅರ್ಜಿದಾರರ ಜೊತೆ ರಾಜಿ ಮಾಡಿಕೊಂಡು ಭೂಸ್ವಾಧೀನ ಪ್ರಕ್ರಿಯೆಯಲ್ಲಿ 10 ಲಕ್ಷ ಪರಿಹಾರ ನಿಗದಿಯಾಗಿದ್ದರೆ, ನ್ಯಾಯಾಲಯದಲ್ಲಿ ಅರ್ಜಿದಾರರಿಗೆ 8-10 ಕೋಟಿ ಪರಿಹಾರ ನೀಡುವಂತೆ ತೀರ್ಪು ಬರುವಂತೆ ಮಾಡಿದ್ದಾರೆ. ಈ ರೀತಿ ಆದರೆ ಸರಕಾರದ ಗತಿ ಏನು? ಈ ರೀತಿ ಕರ್ತವ್ಯ ಲೋಪ ಎಸಗಿದ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ಗಳಲ್ಲಿ ನಮ್ಮ ಪರ ವಾದ ಮಾಡುವ ವಕೀಲರು ಮಂಡಿಸುವ ವಾದಗಳನ್ನು ದಾಖಲು ಮಾಡುವ ವ್ಯವಸ್ಥೆ ತರಲಾಗಿದೆ. ಈ ವಿಚಾರದಲ್ಲಿ ಜವಾಬ್ದಾರಿ ಹೊತ್ತುಕೊಳ್ಳದವರನ್ನು ಬದಲಿಸಬೇಕು ಎಂದು ಹೇಳಿದ್ದೇನೆ. ಸಂವಿಧಾನ ಬಳಸಿಕೊಂಡರೆ ನಾಯಕರಾಗಬಹುದು, ಮಾರಿಕೊಂಡರೆ ಗುಲಾಮರಾಗುತ್ತೀರಿ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಸೊರಕೆ, ಕಾರ್ಯಾಧ್ಯಕ್ಷ ಡಾ.ಜಿ.ಸಿ.ಚಂದ್ರಶೇಖರ್, ಶಾಸಕ, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ಮಾಜಿ ಸಚಿವ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ತೇಜಸ್ವಿನಿ, ವಿಧಾನಪರಿಷತ್ ಸದಸ್ಯ ರಮೇಶ್ ಬಾಬು, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಸಲಹೆಗಾರ ದೀಪಕ್ ತಿಮ್ಮಯ, ಕಾನೂನು ಘಟಕದ ರಾಜ್ಯಾಧ್ಯಕ್ಷ ಧನಂಜಯ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜು ಚುನಾವಣೆ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ..! ನಮ್ಮ ಕಾಲದಲ್ಲಿ ವಿದ್ಯಾರ್ಥಿ ನಾಯಕತ್ವ ಬಲಿಷ್ಠವಾಗಿತ್ತು. ಈಗ ಅದು ಇಲ್ಲವಾಗಿದೆ. ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ರಾಹುಲ್ ಗಾಂಧಿ ಅವರು ಪತ್ರ ಬರೆದು, ಕಾಲೇಜು ಚುನಾವಣೆ ಬಗ್ಗೆ ಆಲೋಚಿಸುವಂತೆ ಮಾರ್ಗದರ್ಶನ ನೀಡಿದ್ದಾರೆ. ಈ ಹಿಂದೆ ವಿದ್ಯಾರ್ಥಿ ಚುನಾವಣೆಗಳಲ್ಲಿ ಇದ್ದ ಅಪರಾಧ ಚಟುವಟಿಕೆ ನಿಯಂತ್ರಿಸಿ ಹೇಗೆ ಕಾಲೇಜು ಚುನಾವಣೆ ನಡೆಸಬಹುದು, ಇದರ ಸಾಧಕ, ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗುವುದು. ಇದಕ್ಕಾಗಿ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ನಮ್ಮ ಸಂವಿಧಾನ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಜಾತ್ಯಾತೀತತೆ, ಧರ್ಮ ಉಳಿಸಿಕೊಳ್ಳುವ ಹಕ್ಕನ್ನು ಕೊಟ್ಟಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಪೊನ್ನಣ್ಣಗೆ ಟಿಕೆಟ್ ನೀಡಬೇಡಿ ಎಂದಿದ್ದ ಬಿಜೆಪಿ ನಾಯಕ! ರಾಜ್ಯ ಕಾನೂನು ಘಟಕಕ್ಕೆ ಎ.ಎಸ್.ಪೊನ್ನಣ್ಣ ಅವರನ್ನು ಆಯ್ಕೆ ಮಾಡುವಾಗ ಅನೇಕರು ಅವರ ತಂದೆ ಆರೆಸ್ಸೆಸ್ ಹಾಗೂ ಬಿಜೆಪಿ ಹಿನ್ನೆಲೆ ಹೊಂದಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ಎ.ಎಸ್.ಪೊನ್ನಣ್ಣನಿಗೆ ವಿಧಾನಸಭೆಗೆ ಟಿಕೆಟ್ ನೀಡಬೇಡಿ ಎಂದೂ ಬಿಜೆಪಿ ನಾಯಕರೊಬ್ಬರು ಕರೆ ಮಾಡಿ ಹೇಳಿದ್ದರು. ಆದರೆ, ನಾನು ಅವರು ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ಅವರು ಪಕ್ಷದ ಪರವಾಗಿ ಕೆಲಸ ಮಾಡಿದರು. ಈಗ ವಿರಾಜಪೇಟೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಸರಕಾರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದಾರೆ. ಅನೇಕ ಕಾನೂನು ಸಂಕಟಗಳಲ್ಲಿ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಅಹ್ಮದಾಬಾದ್ ನಲ್ಲಿ ನಡೆಯಲಿದೆ 2030ರ ಕಾಮನ್ವೆಲ್ತ್ ಗೇಮ್ಸ್
ಗ್ಲಾಸ್ಗೋ, ನ. 26: 2030ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥೇಯ ಹಕ್ಕನ್ನು ಅಹ್ಮದಾಬಾದ್ ಗೆ ನೀಡಲಾಗಿದೆ. ಸ್ಕಾಟ್ ಲ್ಯಾಂಡ್ ರಾಜಧಾನಿ ಗ್ಲಾಸ್ಗೊದಲ್ಲಿ ಬುಧವಾರ ನಡೆದ ಕಾಮನ್ ವೆಲ್ತ್ ಸ್ಪೋರ್ಟ್ಸ್ನ ಮಹಾಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇದರೊಂದಿಗೆ, ಕಾಮನ್ವೆಲ್ತ್ ಕ್ರೀಡಾಕೂಟವು ಎರಡು ದಶಕಗಳ ಬಳಿಕ ಭಾರತಕ್ಕೆ ಮರಳುತ್ತಿದೆ. ಕಾಮನ್ವೆಲ್ತ್ ಕ್ರೀಡಾಕೂಟ ಮೌಲ್ಯಮಾಪನ ಸಮಿತಿಯ ಉಸ್ತುವಾರಿಯಲ್ಲಿ ನಡೆದ ಕ್ರೀಡಾಂಗಣ ಆಯ್ಕೆ ಪ್ರಕ್ರಿಯೆಯ ಕೊನೆಯಲ್ಲಿ ಈ ಶಿಫಾರಸು ಮಾಡಲಾಗಿದೆ. ‘‘ಭಾರತವು ಈ ಕ್ರೀಡಾಕೂಟಕ್ಕೆ ಬೃಹತ್ ಆಯಾಮ, ಮಹತ್ವಾಕಾಂಕ್ಷೆ, ಶ್ರೀಮಂತ ಸಂಸ್ಕೃತಿ, ಅಗಾಧ ಕ್ರೀಡಾ ಗೀಳನ್ನು ತರುತ್ತದೆ. ಕಾಮನ್ವೆಲ್ತ್ ಗೇಮ್ಸ್ನ ಮುಂದಿನ ಶತಮಾನವನ್ನು ನಾವು ಉತ್ತಮ ಆರೋಗ್ಯದೊಂದಿಗೆ ಆರಂಭಿಸುತ್ತೇವೆ’’ ಎಂದು ಕಾಮನ್ವೆಲ್ತ್ ಸ್ಪೋರ್ಟ್ ನ ಅಧ್ಯಕ್ಷ ಡಾ. ಡೊನಾಲ್ಡ್ ರುಕೇರ್ ಹೇಳಿದರು. 2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಮಹತ್ವಾಕಾಂಕ್ಷೆಗೆ ಈ ನಿರ್ಧಾರವು ಮತ್ತಷ್ಟು ಬಲ ನೀಡಿದೆ. ಒಲಿಂಪಿಕ್ಸ್ ಆತಿಥೆಯ ಹಕ್ಕುಗಳನ್ನು ಪಡೆಯುವ ಸ್ಪರ್ಧೆಯಲ್ಲಿರುವ ಅಹ್ಮದಾಬಾದ್ ಕಳೆದ ದಶಕದಲ್ಲಿ ತನ್ನ ಕ್ರೀಡಾ ಮೂಲಸೌಕರ್ಯವನ್ನು ಯುದ್ಧೋಪಾದಿಯಲ್ಲಿ ಮೇಲ್ದರ್ಜೆಗೇರಿಸಿದೆ. 2030ರ ಕಾಮನ್ವೆಲ್ತ್ ಕ್ರೀಡಾಕೂಟದ ಆಯೋಜನೆಗೆ ಅಹ್ಮದಾಬಾದ್ ಗೆ ಸ್ಪರ್ಧೆಯೊಡ್ಡಿದ್ದು ನೈಜೀರಿಯದ ಅಬುಜ ನಗರ. ಆದರೆ, 2034ರ ಕ್ರೀಡಾಕೂಟಕ್ಕೆ ಅಬುಜವನ್ನು ಪರಿಗಣಿಸಲು ಕಾಮನ್ವೆಲ್ತ್ ಸ್ಪೋರ್ಟ್ಸ್ ನಿರ್ಧರಿಸಿತು.
ಉಡುಪಿ | ನ.28ರಂದು ಪ್ರಧಾನಿ ಜೊತೆ ರಾಜ್ಯಪಾಲರ ಆಗಮನ
ಉಡುಪಿ, ನ.26: ನ.28ರಂದು ಉಡುಪಿಯಲ್ಲಿ ನಡೆಯುವ ಲಕ್ಷ ಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಕರ್ನಾಟಕ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಪಾಲ್ಗೊಳ್ಳಲಿದ್ದಾರೆ. ನ.28ರಂದು ಬೆಳಗ್ಗೆ 8:00ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟು 9:00ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಜ್ಯಪಾಲರು 11:05ಕ್ಕೆ ಆಗಮಿಸುವ ಪ್ರಧಾನ ಮಂತ್ರಿ ಅವರನ್ನು ಸ್ವಾಗತಿಸಿ ಅವರೊಂದಿಗೆ ಎಂ1-17 ಹೆಲಿಕಾಪ್ಟರ್ನಲ್ಲಿ 11:35ಕ್ಕೆ ಉಡುಪಿಯ ಆದಿಉಡುಪಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಅಪರಾಹ್ನ 12:00ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಗೆಹ್ಲೋಟ್ ಅವರು, 1:30ರವರೆಗೆ ಪ್ರಧಾನಿಯವರೊಂದಿಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿದ್ದಾರೆ. ಬಳಿಕ ಅವರೊಂದಿಗೆ ಆದಿಉಡುಪಿಯ ಮೂಲಕ ಪ್ರಧಾನಿಯವರೊಂದಿಗೆ ಹೆಲಿಕಾಫ್ಟರ್ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವರು. ಬಜ್ಪೆ ವಿಮಾನನಿಲ್ದಾಣದಲ್ಲಿ ಅಪರಾಹ್ನ 2:15ಕ್ಕೆ ಪ್ರಧಾನಿ ಅವರನ್ನು ಗೋವಾಕ್ಕೆ ಬೀಳ್ಕೋಡುವ ರಾಜ್ಯಪಾಲರು ವಿಶ್ರಾಂತಿಯ ಬಳಿಕ 2:50ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುವರು. ಪ್ರಹ್ಲಾದ್ ಜೋಷಿ ಉಡುಪಿಗೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರೂ ಪ್ರಧಾನಿಯವರೊಂದಿಗೆ ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನ.27ರಂದು ಸಂಜೆ 5:40ಕ್ಕೆ ಹೊರಟು ರಾತ್ರಿ 8:25ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಜೋಷಿ ಅವರು, ರಸ್ತೆ ಮಾರ್ಗವಾಗಿ 9:30ಕ್ಕೆ ಉಡುಪಿಗೆ ಆಗಮಿಸಿ ವಾಸ್ತ್ಯ ಮಾಡುವರು. ನ.28ರಂದು ಬೆಳಗ್ಗೆ 10ರಿಂದ ಅಪರಾಹ್ನ 2:00ಗಂಟೆಯವರೆಗೆ ಪ್ರಧಾನಿ ಅವರೊಂದಿಗೆ ಮಠದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಸಂಜೆ 4:00ಗಂಟೆಗೆ ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಅವರು ಬೆಂಗಳೂರಿಗೆ ತೆರಳುವರು.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಗೆ ಭರವಸೆ ತುಂಬಿದ ʼಅಜೇಯʼ ಟೆಂಬಾ ಬವುಮಾ
ಹೊಸದಿಲ್ಲಿ, ನ.26: ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 408 ರನ್ ಗಳ ಅಂತರದಿಂದ ಮಣಿಸಿ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಗೈದಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ನಾಯಕತ್ವದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಟೆಂಬಾ ಬವುಮಾ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಜೂನ್ ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಸ್ಟ್ರೇಲಿಯ ತಂಡವನ್ನು ಮಣಿಸಿದ್ದ ದಕ್ಷಿಣ ಆಫ್ರಿಕಾ ಕೊನೆಗೂ 27 ವರ್ಷಗಳ ನಂತರ ಐಸಿಸಿ ಟ್ರೋಫಿಯೊಂದನ್ನು ಗೆದ್ದುಕೊಂಡಿತು. 1998ರ ನಂತರ ದಕ್ಷಿಣ ಆಫ್ರಿಕಾದ ಯಾವ ನಾಯಕನೂ ಜಾಗತಿಕ ಪ್ರಶಸ್ತಿಯನ್ನು ಎತ್ತಿ ಹಿಡಿದಿರಲಿಲ್ಲ. ದಕ್ಷಿಣ ಆಫ್ರಿಕಾದ ಯಾವೊಬ್ಬ ನಾಯಕನೂ 25 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿರಲಿಲ್ಲ. ಟೆಂಬಾ ಬವುಮಾ ಈ ಎರಡು ಸಾಧನೆಯನ್ನು ಮಾಡಿದ್ದಾರೆ. 2025 ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ಮರೆಯಲಾರದ ವರ್ಷವಾಗಿದೆ. ಕಳೆದ ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ತಂಡ ಪ್ರಮುಖ ಪ್ರಶಸ್ತಿಯ ಹಾದಿಯಲ್ಲಿ ಸಾಕಷ್ಟು ಬಾರಿ ಎಡವಿತ್ತು. ಆದರೆ ಅದು ತನ್ನ ಪ್ರಯತ್ನವನ್ನು ಮುಂದುವರಿಸುತ್ತಾ ಬಂದಿತ್ತು. ಆತ್ಮವಿಶ್ವಾಸದೊಂದಿಗೆ ಭಾರತಕ್ಕೆ ಆಗಮಿಸಿದ್ದ ಆಫ್ರಿಕನ್ನರು ಐತಿಹಾಸಿಕ ಸಾಧನೆಯೊಂದಿಗೆ ತಾಯ್ನಾಡಿಗೆ ಮರಳುತ್ತಿದ್ದಾರೆ. ಕೋಲ್ಕತಾದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟರ್ ಗಳು ರನ್ ಗಳಿಸಲು ತಿಣುಕಾಡುತ್ತಿದ್ದಾಗ ಅರ್ಧಶತಕ ಗಳಿಸಿದ ಬವುಮಾ ತನ್ನ ತಂಡವು 30 ರನ್ ನಿಂದ ರೋಚಕವಾಗಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಕೋಸಾ ಭಾಷೆಯಲ್ಲಿ ಟೆಂಬಾ ಎಂದರೆ ಭರವಸೆ ಎಂದರ್ಥ. ಬವುಮಾಗೆ ಅವರ ಅಜ್ಜಿ ಈ ಹೆಸರು ಇಟ್ಟಿದ್ದರು. ಬವುಮಾ ದೇಶಕ್ಕೆ ಅತ್ಯಂತ ಅಗತ್ಯವಿದ್ದಾಗ ಭರವಸೆ ತುಂಬಿದ್ದಾರೆ. 12 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಬವುಮಾ 11ರಲ್ಲಿ ಗೆಲುವು ಹಾಗೂ 1ರಲ್ಲಿ ಡ್ರಾ ಸಾಧಿಸಿ ಅಜೇಯವಾಗುಳಿದಿದ್ದಾರೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿರುವ ಬವುಮಾ ಅವರು ಇದೀಗ ಭಾರತ ನೆಲದಲ್ಲಿ ಅಪರೂಪದ ಟೆಸ್ಟ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ. ದಕ್ಷಿಣ ಆಫ್ರಿಕಾವು 2000ರಲ್ಲಿ ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ಮಾತ್ರ ಭಾರತ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ದಕ್ಷಿಣ ಆಫ್ರಿಕಾವು ಭಾರತ ನೆಲದಲ್ಲಿ 2015 ಹಾಗೂ 2019ರಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು. ಟೆಸ್ಟ್ ನಾಯಕನಾಗಿ ಅಜೇಯ ದಾಖಲೆಯೊಂದಿಗೆ ಬವುಮಾ ಇದೀಗ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ ನಲ್ಲಿ 489 ರನ್ ಗಳಿಸಿದ ನಂತರ ಭಾರತ ತಂಡವನ್ನು 201 ರನ್ಗೆ ನಿಯಂತ್ರಿಸಿತು. ಆಗ ಭಾರತಕ್ಕೆ ಫಾಲೋ ಆನ್ ಹೇರದ ಬವುಮಾ ಅವರು 2ನೇ ಇನಿಂಗ್ಸ್ ಆರಂಭಿಸಲು ಒತ್ತು ನೀಡಿದರು. ಟ್ರಿಸ್ಟನ್ ಸ್ಟಬ್ಸ್ ಶತಕ ತಲುಪುವುದನ್ನು ಕಾದ ಪರಿಣಾಮ ಎರಡನೇ ಇನಿಂಗ್ಸ್ ಅನ್ನು ತಡವಾಗಿ ಡಿಕ್ಲೇರ್ ಮಾಡಲಾಯಿತು. ಬವುಮಾರ ಈ ನಿರ್ಧಾರವನ್ನು ಕೆಲವರು ಪ್ರಶ್ನಿಸಿದ್ದರು. ಐದನೇ ದಿನದಾಟದಲ್ಲಿ ಆರು ವಿಕೆಟ್ಗಳನ್ನು ಕಬಳಿಸಿ ಮೆರೆದಾಡಿದ ಸ್ಪಿನ್ನರ್ ಸೈಮನ್ ಹಾರ್ಮರ್ ನಾಯಕನ ನಿರ್ಧಾರವನ್ನು ಸಮರ್ಥಿಸಿ ಆಫ್ರಿಕಾ ತಂಡದ ಭರ್ಜರಿ ಗೆಲುವಿನ ಹಾದಿ ಸುಗಮಗೊಳಿಸಿದರು.
ತಮಿಳುನಾಡು: ಶಾಸಕ ಸ್ಥಾನಕ್ಕೆ ಸೆಂಗೊಟ್ಟೈಯನ್ ರಾಜೀನಾಮೆ
ಚೆನ್ನೈ,ನ.26: ಎಐಎಡಿಎಂಕೆಯಿಂದ ಉಚ್ಚಾಟಿತ ಮಾಜಿ ಸಚಿವ ಕೆ.ಎ.ಸೆಂಗೊಟ್ಟೈಯನ್ ಅವರು ಬುಧವಾರ ಗೋಬಿಚೆಟ್ಟಿಪಾಳ್ಯಂ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಒಂಭತ್ತು ಸಲ ಶಾಸಕರಾಗಿದ್ದ ಸೆಂಗೊಟ್ಟೈಯನ್ ಚೆನ್ನೈನ ಸಚಿವಾಲಯದಲ್ಲಿ ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಅವರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಸುದ್ದಿಗಾರರು ಸೆಂಗೊಟ್ಟೈಯನ್ ನಟ ವಿಜಯ ಅವರ ರಾಜಕೀಯ ಪಕ್ಷ ಟಿವಿಕೆಗೆ ಸೇರಲಿದ್ದಾರೆ ಎಂಬ ಊಹಾಪೋಹಗಳನ್ನು ಉಲ್ಲೇಖಿಸಿ ಅವರ ಭವಿಷ್ಯದ ನಡೆಯ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದರು. ಸೆಂಗೊಟ್ಟೈಯನ್ ಈ ತಿಂಗಳು ರಾಜೀನಾಮೆ ಸಲ್ಲಿಸಿರುವ ಎರಡನೇ ಎಐಎಡಿಎಂಕೆ ಶಾಸಕರಾಗಿದ್ದಾರೆ. ನ.4ರಂದು ಪಿ.ಎಚ್.ಮನೋಜ ಪಾಂಡ್ಯನ್ ಅವರು ಡಿಎಂಕೆಗೆ ಸೇರ್ಪಡೆಗೊಂಡ ಬೆನ್ನಲ್ಲೇ ಅಳಂಗುಳಂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸೆಂಗೊಟ್ಟೈಯನ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಉಚ್ಚಾಟಿತ ನಾಯಕ ಒ.ಪನ್ನೀರ್ ಸೆಲ್ವಂ ಮತ್ತು ಎಎಂಎಂಕೆ ಸ್ಥಾಪಕ ಟಿ.ಟಿ.ವಿ.ದಿನಕರನ್ ಜೊತೆ ಒಂದೇ ಕಾರಿನಲ್ಲಿ ಪಸುಂಪನ್ ಗೆ ಪ್ರಯಾಣಿಸಿದ್ದರು ಮತ್ತು ಅಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿಯೂ ಮಾತನಾಡಿದ್ದರು. ಮರುದಿನವೇ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇ.ಕೆ.ಪಳನಿಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.
ಅಕ್ರಮ ಬೆಟ್ಟಿಂಗ್ ಮೂಲಕ ಗಳಿಕೆಯು ಅಪರಾಧದ ಆದಾಯ: ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ,ನ.26: ಅಕ್ರಮ ಹಣ ವರ್ಗಾವಣೆ ತನಿಖೆಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದಾದ ಮಹತ್ವದ ತೀರ್ಪೊಂದರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು, ಅಕ್ರಮ ಬೆಟ್ಟಿಂಗ್ ನಿಂದ ಗಳಿಸಿದ ಆದಾಯವನ್ನು, ಅಂತಹ ಚಟುವಟಿಕೆಗೆ ಕಳಂಕಿತ ಹಣವು ಮೂಲವಾಗಿದ್ದರೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ‘ಅಪರಾಧದ ಆದಾಯ’ ಎಂದು ಪರಿಗಣಿಸಬಹುದು ಎಂದು ಎತ್ತಿ ಹಿಡಿದಿದೆ. ಹಣದ ಮೂಲವು ಕಾನೂನುಬಾಹಿರವಾಗಿದ್ದರೆ ಅದರಿಂದ ದೊರೆಯುವ ಪ್ರತಿಯೊಂದೂ ಲಾಭವೂ ಅದೇ ಕಾನೂನು ಬಾಹಿರತೆಯನ್ನು ಹೊಂದಿರುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಅನಿಲ ಕ್ಷೇತ್ರಪಾಲ ಮತ್ತು ಹರೀಶ್ ವಿ.ಶಂಕರ್ ಅವರ ಪೀಠವು, ಅದನ್ನು ‘ವಿಷಪೂರಿತ ಮರದ ಹಣ್ಣಿಗೆ’ ಹೋಲಿಸಿತು. ಮೂಲ ಅಪರಾಧ ಆದಾಯಗಳಿಗೆ ಅಂಟಿಕೊಂಡಿರುವ ಕಳಂಕವು ನಂತರದ ಚಟುವಟಿಕೆಗಳನ್ನು ಪಿಎಂಎಲ್ಎ ಅಡಿ ನಿಗದಿತ ಅಪರಾಧಗಳೆಂದು ಪಟ್ಟಿ ಮಾಡಿರದಿದ್ದರೂ ಅವುಗಳಿಗೂ ಮುಂದುವರಿಯುತ್ತದೆ ಎಂದು ಪೀಠವು ಒತ್ತಿ ಹೇಳಿತು. ವ್ಯಾಪಕ ಕ್ರಿಕೆಟ್ ಬೆಟ್ಟಿಂಗ್ ಕಾರ್ಯಾಚರಣೆ ಕುರಿತು 2015ರ ಜಾರಿ ನಿರ್ದೇಶನಾಲಯದ (ಈಡಿ) ತನಿಖೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ಹೊರಬಿದ್ದಿದೆ. ಈಡಿ ಪ್ರಕಾರ ಬೆಟ್ಟಿಂಗ್ ಜಾಲವು ಹಣದ ಚಲಾವಣೆಗಾಗಿ ಸಾಗರೋತ್ತರ ವೇದಿಕೆಗಳು, ಹವಾಲಾ ಆಪರೇಟರ್ ಗಳು ಮತ್ತು ದೇಶಿಯ ನಿರ್ವಾಹಕರನ್ನು ಬಳಸಿಕೊಂಡಿತ್ತು ಮತ್ತು ವಾರ್ಷಿಕ ಸುಮಾರು 2,400 ಕೋಟಿ ರೂ.ಗಳ ವಹಿವಾಟುಗಳು ನಡೆಯುತ್ತಿದ್ದವು. ಶೋಧ ಕಾರ್ಯಾಚರಣೆಗಳ ಸಂದರ್ಭದಲ್ಲಿ ತನಿಖಾಧಿಕಾರಿಗಳು ನಗದು ಹಣ,ದಾಖಲೆಗಳು ಮತ್ತು ಡಿಜಿಟಲ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು,ಇವು ಪ್ರಮುಖ ಆರೋಪಿಗಳು ವಿಶೇಷ ಲಾಗಿನ್ ಐಡಿಗಳ ಮೂಲಕ ವಿದೇಶಿ ಬೆಟ್ಟಿಂಗ್ ಪೋರ್ಟಲ್ ಗಳಿಗೆ ಪ್ರವೇಶವನ್ನು ನಿಯಂತ್ರಿಸಿದ್ದರು ಎನ್ನುವುದನ್ನು ಸೂಚಿಸಿತ್ತು. ಬೆಟ್ಟಿಂಗ್ ಲಾಭಗಳು ನೇರವಾಗಿ ನಿಗದಿತ ಅಪರಾಧದಿಂದ ಸೃಷ್ಟಿಯಾಗಿರದಿದ್ದರೂ ಅವುಗಳನ್ನು ಈಗಾಗಲೇ ಅಕ್ರಮ ಚಟುವಟಿಕೆಯೊಂದಿಗೆ ಗುರುತಿಸಿಕೊಂಡಿದ್ದ ಹಣವನ್ನು ಬಳಸಿ ಗಳಿಸಲಾಗಿತ್ತು ಎಂದು ಈಡಿವಾದಿಸಿತ್ತು. ಸೊತ್ತುಗಳನ್ನು ಜಪ್ತಿ ಮಾಡಿದ್ದನ್ನು ಪ್ರಶ್ನಿಸಿದ್ದ ಆರೋಪಿಗಳು, ಬೆಟ್ಟಿಂಗ್ ನಿಗದಿತ ಅಪರಾಧವಲ್ಲ,ಹೀಗಾಗಿ ಅದರ ಗಳಿಕೆಯನ್ನು ಪಿಎಂಎಲ್ಎ ಅಡಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಪ್ರತಿಪಾದಿಸಿದ್ದರು. ಆರೋಪಿಗಳ ವಾದವನ್ನು ತಿರಸ್ಕರಿಸಿದ ಉಚ್ಚ ನ್ಯಾಯಾಲಯವು, ‘ಅಪರಾಧದ ಆದಾಯ’ದ ಪಿಎಂಎಲ್ಎ ವ್ಯಾಖ್ಯಾನವು ಉದ್ದೇಶಪೂರ್ವಕವಾಗಿ ವಿಶಾಲವಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು. ಆರಂಭಿಕ ನಿಧಿಯ ಕ್ರಿಮಿನಲ್ ಸ್ವರೂಪ ಮುಖ್ಯವೇ ಹೊರತು ನಂತರದ ಚಟುವಟಿಕೆಗಳ ಸ್ವರೂಪವಲ್ಲ ಎಂದು ಪೀಠವು ಹೇಳಿತು. ಕಳಂಕಿತ ಹಣವನ್ನು ಬಂಡವಾಳವಾಗಿ ಬಳಸಿದಾಗ ಅದರಿಂದ ದೊರೆಯುವ ಯಾವುದೇ ಲಾಭವೂ ಕಳಂಕಿತವಾಗಿರುತ್ತದೆ ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಅರ್ಹವಾಗಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.
ಶಿರೂರು | ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ಉಡುಪಿ, ನ.26: ಖಿದ್ಮಾ ಫೌಂಡೇಶನ್ ವತಿಯಿಂದ ಶಿರೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಗುರುವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಖಿದ್ಮಾ ಫೌಂಡೇಶನ್ ಕುಂದಾಪುರ ಮತ್ತು ಬೈಂದೂರು ತಾಲೂಕು ಅಧ್ಯಕ್ಷ ಶೇಖ್ ಅಬು ಮುಹಮ್ಮದ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅಕಾಡೆಮಿ ಆಫ್ ಎಜುಕೇಶನಲ್ ಡೆವಲಪ್ಮೆಂಟ್ ಟ್ರಸ್ಟ್ ಉಡುಪಿ ಇದರ ಅಧ್ಯಕ್ಷ ಅಮ್ಜದ್ ಅಲಿ ಇಬ್ರಾಹಿಂ ಶೈಖ್ ವಿದ್ಯಾರ್ಥಿ - ಪೋಷಕರಿಗೆ ವೃತ್ತಿ ಮಾರ್ಗದರ್ಶನ ನೀಡಿದರು. ಎಸೆಸೆಲ್ಸಿ ಮತ್ತು ಪಿಯುಸಿ ನಂತರದ ಕೋರ್ಸ್ ಗಳ ವಿವರಣೆ ನೀಡಿದ ಅವರು, ಸರಿಯಾದ ವೃತ್ತಿಯನ್ನು ಹೇಗೆ ಆಯ್ಕೆ ಮಾಡಬಹುದು ಮತ್ತು ವೃತ್ತಿ ಮಾರ್ಗದರ್ಶನದಲ್ಲಿ ಪಾಲಕರ ಪಾತ್ರ ಏನು ಎಂಬುವುದರ ಬಗ್ಗೆ ಬೆಳಕು ಚೆಲ್ಲಿದರು. ಅತಿಥಿಗಳಾದ ಶಿರೂರು ಗ್ರಾಪಂ ಅಧ್ಯಕ್ಷ ನಾಗರತ್ನ, ಕಾಲೇಜಿನ ಪ್ರಾಂಶುಪಾಲ ದೇವೇಂದ್ರ ಕೆ.ಮೊಗೇರ, ಉಪಪ್ರಾಂಶುಪಾಲ ಜಯಂತಿ ಶೇಡ್ತಿ, ನಮ್ಮ ನಾಡ ಒಕ್ಕೂಟ, ಬೈಂದೂರು ತಾಲೂಕು ಅಧ್ಯಕ್ಷ ಸೈಯದ್ ಅಜ್ಮಲ್ ಶಿರೂರು, ಎಸ್.ಡಿ.ಎಂ.ಸಿ ಅಧ್ಯಕ್ಷ ಮುಹಮ್ಮದ್ ಗೌಸ್ ಮಾತನಾಡಿದರು. ಸಂಸ್ಥೆಯ ಸದಸ್ಯರಾದ ಅಬ್ದುಲ್ ರಹ್ಮಾನ್ ಶಿರೂರು, ಹನೀಫ್ ಖ್ವಾಜಾ ಕುಂದಾಪುರ, ಇಬ್ರಾಹಿಂ ಬೇಂದ್ರೆ, ಎನ್.ಎಸ್.ರಿಝ್ವಾನ್ ನಾಗೂರು, ಎನ್.ಎಸ್.ಇರ್ಫಾನ್ ನಾಗೂರು, ಅಶ್ರಫ್ ನಾಗೂರು, ಅಸ್ಲಂ ತಲ್ಲೂರು, ಜಲಾಲ್ ಕಂಡ್ಲೂರು ಮೊದಲಾದವರು ಉಪಸ್ಥಿತರಿದ್ದರು. ಮೌಲಾನಾ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಿದ್ಮಾ ಫೌಂಡೇಶನ್ ಕುಂದಾಪುರ ಮತ್ತು ಬೈಂದೂರು ತಾಲೂಕು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಥೈಲ್ಯಾಂಡ್: ಪ್ರವಾಹದಲ್ಲಿ ಮೃತರ ಸಂಖ್ಯೆ 33ಕ್ಕೆ ಏರಿಕೆ
ಬ್ಯಾಂಕಾಕ್, ನ.26: ಥೈಲ್ಯಾಂಡ್ ನಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಲ್ಲಿ ಬಲಿಯಾದವರ ಸಂಖ್ಯೆ 33ಕ್ಕೇರಿದ್ದು ಈ ವಾರ ಇನ್ನಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಥೈಲ್ಯಾಂಡ್ ನ 9 ಪ್ರಾಂತಗಳಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಸುಮಾರು 45,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 27 ಲಕ್ಷಕ್ಕೂ ಹೆಚ್ಚು ಮಂದಿಗೆ ಸಮಸ್ಯೆಯಾಗಿದ್ದು ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಆಹಾರ ಮತ್ತು ನೀರನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ಹ್ಯಾತ್ ಯಾಯ್ ನಗರದಲ್ಲಿ ಸುಮಾರು 600 ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಸರಕಾರಿ ಆಸ್ಪತ್ರೆ ಜಲಾವೃತಗೊಂಡಿದ್ದು ತುರ್ತು ನೆರವು ಒದಗಿಸಲು ಮತ್ತು ತೀವ್ರ ನಿಗಾ ಘಟಕದಲ್ಲಿರುವ ಸುಮಾರು 50 ರೋಗಿಗಳನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ ಬಳಸಲಾಗುತ್ತಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕಾಗಿ 200 ದೋಣಿಗಳು ಹಾಗೂ 20 ಹೆಲಿಕಾಪ್ಟರ್ ಗಳನ್ನು ಹ್ಯಾತ್ ಯಾಯ್ ನಗರಕ್ಕೆ ರವಾನಿಸಲಾಗಿದೆ. ಈ ನಗರದಲ್ಲಿ ಕಳೆದ ವಾರ ಒಂದೇ ದಿನದಲ್ಲಿ 13 ಇಂಚಿನಷ್ಟು ಮಳೆ ಸುರಿದಿದೆ. ಎಂದು ಸರ್ಕಾರದ ವಕ್ತಾರರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಕುಂದಾಪುರ | ಶ್ರಮನೀತಿ -2025ರ ಕರಡು ಪ್ರತಿ ದಹಿಸಿದ ಹಂಚು ಕಾರ್ಮಿಕರು !
ಕುಂದಾಪುರ, ನ.26: ಕುಂದಾಪುರ ಹಂಚು ಕಾರ್ಖಾನೆಗಳಲ್ಲಿ ಬುಧವಾರ ಹಂಚು ಕಾರ್ಮಿಕರು ಕೆಲಸ ಆರಂಭಕ್ಕೂ ಮುನ್ನ ಕಾರ್ಖಾನೆ ದ್ವಾರಗಳಲ್ಲಿ ಶ್ರಮಶಕ್ತಿ ನೀತಿ -2025ರ ಕರಡು ಪ್ರತಿಯನ್ನು ದಹಿಸಿ ಪ್ರತಿಭಟಿಸಿದರು. ಮಂಗಳೂರು ಟೈಲ್ಸ್ ನಲ್ಲಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಶ್ರಮಶಕ್ತಿ ನೀತಿ -2025 ಅನ್ನು 300 ಮಂದಿ ಕಾರ್ಮಿಕರು ಒಳಗೆ ಇರುವ ಕಾರ್ಖಾನೆಗಳನ್ನು ಮಾಲಕರು ಯಾವುದೇ ಸಮಯದಲ್ಲಿ ಸರಕಾರದ ಅನುಮತಿ ಇಲ್ಲದೆ ಬಂದ್ ಮಾಡಲು ಅವಕಾಶ ನೀಡುತ್ತದೆ. ಇದು ಬಹಳ ಅಪಾಯಕಾರಿಯಾಗಿದೆ ಎಂದರು. ಕಾರ್ಮಿಕರಿಗೆ ಅನ್ಯಾಯ ಮಾಲಕರಿಂದ ಆದಾಗ ಪ್ರತಿಭಟಿಸಿದರೆ ಅದು ಅಪರಾಧ ಎಂದು ಈ ಸಂಹಿತೆ ಹೇಳುತ್ತದೆ. ಕಾರ್ಮಿಕ ನಿರೀಕ್ಷಕರು ಕಾರ್ಮಿಕ ರಕ್ಷಣೆಗೆ ಕಾರ್ಖಾನೆಯೊಳಗೆ ಅವರ ಸುರಕ್ಷೆ ಬಗ್ಗೆ ಪರಿಶೀಲಿಸುವಂತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಶ್ರಮಶಕ್ತಿ -2025 ಕಾರ್ಮಿಕರ ಪಾಲಿನ ಮರಣ ಶಾಸನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂ ಕಾರ್ಖಾನೆಯಲ್ಲಿ ಸಿಐಟಿಯು ಮುಖಂಡರಾದ ಸುರೇಂದ್ರ ಎಚ್., ಗಣಪ, ಗ್ರೀನ್ಲ್ಯಾಂಡ್ ಕಾರ್ಖಾನೆಯಲ್ಲಿ ಚಂದ್ರ ಪೂಜಾರಿ, ಪ್ರಭಾಕಿರಣ ಕಾರ್ಖಾನೆಯಲ್ಲಿ ಪಂಜು ಪೂಜಾರಿ ಗುಲ್ವಾಡಿ, ನಾಗರಾಜ, ಭಾಸ್ಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಶೂ ಎಸೆದ ವಕೀಲನ ವಿರುದ್ಧ ಕ್ರಮ ಕೈಗೊಳ್ಳದಿರಲು ತಕ್ಷಣವೇ ನಿರ್ಧರಿಸಿದ್ದೆ: ನ್ಯಾ.ಗವಾಯಿ
ಹೊಸದಿಲ್ಲಿ,ನ.26: ಕಳೆದ ತಿಂಗಳು ಸುಪ್ರೀಂಕೋರ್ಟ್ನ ಒಳಗೆ ತನ್ನ ಮೇಲೆ ನ್ಯಾಯವಾದಿಯೊಬ್ಬ ಶೂ ಎಸೆಯಲು ಯತ್ನಿಸಿದ ಹೊರತಾಗಿಯೂ, ನನ್ನ ಸಹಜಪ್ರವೃತ್ತಿಯಿಂದಾಗಿ ತಾನು ನ್ಯಾಯಾಲಯದಲ್ಲಿ ವಿಚಾರಣಾ ಕಲಾಪವನ್ನು ಮುಂದುವರಿಸಲು ನಿರ್ಧರಿಸಿದ್ದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಬುಧವಾರ ತಿಳಿಸಿದ್ದಾರೆ. ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ‘‘ನಾನು ಬೆಳೆದುಬಂದ ರೀತಿಯಿಂದಾಗಿ ನಾನು ಈ ನಿರ್ಧಾರವನ್ನು ಕೈಗೊಂಡೆ. ನ್ಯಾಯಾಲಯದಲ್ಲಿ ನಾನು ಆಡಿದೆನ್ನಲಾದ ಮಾತುಗಳಿಗಾಗಿ ಅಥವಾ ನ್ಯಾಯಾಲಯದಲ್ಲಿ ನನ್ನ ವ್ಯಕ್ತಪಡಿಸಿದ ಅಭಿಪ್ರಾಯಗಳಿಗಾಗಿ ಹೀಗೆ ಮಾಡಲಾಯಿತೇ ಎಂಬುದು ನನಗೆ ಗೊತ್ತಿಲ್ಲ. ಆದಾಗ್ಯೂ ನಾನು ವಿಚಾರಣಾ ಕಲಾಪವನ್ನು ಮುಂದುವರಿಸಬೇಕೆಂಬ ನಿರ್ಧರಿಸಿದೆ. ಈ ಕುರಿತು ನಾನು ಕ್ಷಣ ಮಾತ್ರದಲ್ಲಿ ಈ ನಿರ್ಧಾರವನ್ನು ಕೈಗೊಂಡೆ ’’ಎಂದವರು ಹೇಳಿದರು. ಮಧ್ಯಪ್ರದೇಶದ ಖಜುರಾಹೋದಲ್ಲಿರುವ ಜವಾರಿ ದೇವಾಲಯದಲ್ಲಿರುವ ವಿಷ್ಣು ವಿಗ್ರಹದ ಪುನರ್ಸ್ಥಾಪನೆಗೆ ಕೋರಿ ನ್ಯಾಯವಾದಿ ರಾಕೇಶ್ ಕಿಶೋರ್ ಎಂಬಾತ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಯನ್ನು ಆಗ ಸಿಜೆಐ ಆಗಿದ್ದ ಗವಾಯಿ ಅವರು ತಿರಸ್ಕರಿಸಿದ್ದರು. ಈ ಸಂದರ್ಭದಲ್ಲಿ ಅವರೆಡೆಗೆ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದ. ಆದರೆ ಭದ್ರತಾ ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು, ಆದರೆ ಗವಾಯಿ ಅವರು ಅದನ್ನು ನಿರ್ಲಕ್ಷಿಸಿ ನ್ಯಾಯಾಲಯದ ಕಲಾಪವನ್ನು ಮುಂದುವರಿಸಲು ಸೂಚಿಸಿದರು. ಇಂತಹ ಕ್ಷುಲ್ಲಕ ವಿಷಯಗಳಿಗೆ ನ್ಯಾಯಾಲಯ ವಿಚಲಿತವಾಗಕೂಡದೆಂದು ಅವರು ಹೇಳಿದ್ದರು. ಭದ್ರತಾ ಸಿಬ್ಬಂದಿ ಕಿಶೋರ್ ನನ್ನು ಹೊರಗೊಯ್ಯುತ್ತಿದ್ದಾಗ, ಆತ ‘ಸನಾತನ್ ಕಾ ಅಪಮಾನ್ ನಹೀ ಸಹೇಂಗೇ’ (ಸನಾತನ ಧರ್ಮದ ಅಪಮಾನವನ್ನು ಸಹಿಸುವುದಿಲ್ಲ) ಎಂಬ ಘೋಷಣೆಯನ್ನು ಕೂಗಿದ್ದನು. ಇದೊದು ನ್ಯಾಯಾಂಗ ನಿಂದನೆಯ ಘಟನೆಯಾಗಿದ್ದರೂ, ಆರೋಪಿ ನ್ಯಾಯವಾದಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸಿಜೆಐ ಸೂಚಿಸಿದರು. ತರುವಾಯ ಭಾರತೀಯ ನ್ಯಾಯವಾದಿಗಳ ಮಂಡಳಿಯು ಕಿಶೋರ್ ನ ವಕೀಲಿ ವೃತ್ತಿಯ ಪರವಾನಗಿಯನ್ನು ರದ್ದುಪಡಿಸಿತ್ತು.
ವಿರಳ ಖನಿಜ ಕ್ಷೇತ್ರದಲ್ಲಿ ‘ಆತ್ಮನಿರ್ಭರತೆ’ಯ ಗುರಿ; REPM ಲೋಹಗಳ ಉತ್ಪಾದನೆ ಉತ್ತೇಜನಕ್ಕೆ 7200 ಕೋ.ರೂ. ಯೋಜನೆ
ಹೊಸದಿಲ್ಲಿ,ನ.26: ವಿರಳ ಖನಿಜಗಳನ್ನು ದೇಶಿಯವಾಗಿ ಉತ್ಪಾದಿಸುವ ಭಾರತದ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ನೇತತೃತ್ವದ ಕೇಂದ್ರ ಸಂಪುಟವು 7200 ಕೋಟಿ ರೂ.ಗೂ ಅಧಿಕ ಮೊತ್ತದ REPM (ರೇರ್ ಆರ್ಥ್ ಪರ್ಮಾನೆಂಟ್ ಮ್ಯಾಗ್ನೆಟ್) ಯೋಜನೆಗೆ ಅನುಮೋದನೆ ನೀಡಿದೆ. ವಾರ್ಷಿಕವಾಗಿ 6 ಸಾವಿರ ಮೆಟ್ರಿಕ್ಟನ್ (ಎಂಟಿಪಿಎ) ಸಾಮರ್ಥ್ಯದ REPM ಲೋಹಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ವಿರಳ ಖನಿಜಗಳ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯನ್ನು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಅದರ ಉಪಸ್ಥಿತಿಯನ್ನು ಬಲಪಡಿಸುವ ಭರವಸೆಯನ್ನ್ನು ಈ ಉಪಕ್ರಮವು ಹೊಂದಿದೆ. REPM ಲೋಹಗಳು, ಭೂಮಿಯಲ್ಲಿ ಲಭ್ಯವಿರುವ ಅತ್ಯಂತ ಶಕ್ತಿಶಾಲಿಯಾದ ಆಯಸ್ಕಾಂತಗಳಾಗಿವೆ. ವಿದ್ಯುತ್ಚಾಲಿತ ವಾಹನಗಳು, ಪುನರ್ನವೀಕರಣ ಯೋಗ್ಯ ಇಂಧನ, ಇಲೆಕ್ಟ್ರಾನಿಕ್ಸ್,ವ್ಯೋಮಯಾನ ಹಾಗೂ ರಕ್ಷಣಾ ಕೈಗಾರಿಕೆಗಳು ಸೇರಿದಂತೆ ವಿವಿಧ ಉತ್ಪಾದನಾ ವಲಯಗಳಿಗೆ ಇವು ಅತ್ಯವಶ್ಯವಾಗಿವೆ. ಪ್ರಸಕ್ತ ಭಾರತವು ತನ್ನ REPM ಲೋಹಗಳನ್ನು ತನ್ನ ಅಗತ್ಯಕ್ಕಾಗಿ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. REPM ಉತ್ಪಾದನಾ ಘಟಕಗಳ ಸ್ಥಾಪನೆಯ ಯೋಜನೆಯಿಂದಾಗಿ, ದೇಶದಲ್ಲಿ ಉದ್ಯೋಗ ಸೃಷ್ಟಿ, ಸ್ವಾವಲಂಬನೆಯ ವರ್ಧನೆಗೆ ಸಹಕಾರಿಯಾಗಲಿದೆ. ಪ್ರಸಕ್ತ ಭಾರತವು REPM ಲೋಹವನ್ನು ಪ್ರಮುಖವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ.
ಭೋಪಾಲ,ನ.26: ಮಧ್ಯಪ್ರದೇಶದ ಸೆಹೋರ್ನ ವಿಐಟಿ ವಿಶ್ವವಿದ್ಯಾನಿಲಯದಲ್ಲಿ ಕಳಪೆದರ್ಜೆಯ ಆಹಾರ ಹಾಗೂ ಮಲಿನಗೊಂಡ ನೀರಿನ ಸೇವನೆಯಿಂದಾಗಿ ಕ್ಯಾಂಪಸ್ ನಲ್ಲಿ ಹಳದಿಕಾಮಾಲೆ ರೋಗ ಹರಡಿದೆಯೆಂದು ಆರೋಪಿಸಿ ವಿದ್ಯಾರ್ಥಿಗಳು ಬುಧವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಉದ್ರಿಕ್ತ ವಿದ್ಯಾರ್ಥಿಗಳು ಬಸ್ಗಳು ಹಾಗೂ ಕಾರುಗಳಿಗೆ ಬೆಂಕಿ ಹಚ್ಚಿದ್ದು, ಆ್ಯಂಬುಲೆನ್ಸ್ ಒಂದನ್ನು ಜಖಂಗೊಳಿಸಿದ್ದಾರೆ. ವಿಶ್ವವಿದ್ಯಾನಿಲಯ ಕ್ಯಾಂಪಸ್ ನ ಹಲವು ವಿಭಾಗಗಳಿಗೆ ಹಾನಿಯೆಸಗಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಐದು ಪೊಲೀಸ್ ಠಾಣೆಗಳ ಪೊಲೀಸ್ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉದ್ವಿಗ್ನತೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು ನವೆಂಬರ್ 30ರವರೆಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಕಳಪೆ ಆಹಾರ ಹಾಗೂ ಅಸುರಕ್ಷಿತವಾದ ಕುಡಿಯುವ ನೀರು ವಿವಿ ಕ್ಯಾಂಪಸ್ ನಲ್ಲಿ ವ್ಯಾಪಕವಾಗಿ ಅಸ್ವಸ್ಥತೆಗೆ ಕಾರಣವಾಗಿದೆಯೆಂದು ವಿದ್ಯಾರ್ಥಿಗಳು ದೂರಿದ್ದಾರೆ. ಹಲವು ವಿದ್ಯಾರ್ಥಿಗಳು ಹಳದಿ ಕಾಮಾಲೆ ಪೀಡಿತರಾಗಿದ್ದಾರೆಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದಾಗ ಹಾಸ್ಟೆಲ್ ವಾರ್ಡನ್ ಗಳು ಹಾಗೂ ಭದ್ರತಾ ಕಾವಲುಗಾರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ದೂರು ನೀಡದಂತೆ ಒತ್ತಡ ಹೇರಿದ್ದರು. ವಿಶ್ವವಿದ್ಯಾನಿಲಯದ ಆಡಳಿತವರ್ಗದ ಜೊತೆ ಈ ಕುರಿತು ಮಾತನಾಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ತಮ್ಮ ದೂರುಗಳಿಗೆ ಯಾವುದೇ ಸ್ಪಂದನೆ ದೊರೆಯದೇ ಇದ್ದಾಗ, ಸುಮಾರು ನಾಲ್ಕು ಸಾವಿರದಷ್ಟಿದ್ದ ವಿದ್ಯಾರ್ಥಿಗಳಿಗೆ ಹಿಂಸಾಚಾರಕ್ಕಿಳಿದಿದ್ದಾರೆ. ಅವರು ಬಸ್, ಮೋಟಾರ್ ಸೈಕಲ್ ಹಾಗೂ ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿದ್ದಾರೆ. ಹಾಸ್ಟೆಲ್ನ ಕಿಟಕಿಗಾಜುಗಳು ಮತ್ತು ಕ್ಯಾಂಪಸ್ ನಲ್ಲಿರುವ ಹಲವಾರು ಸ್ಥಾಪನೆಗಳಿಗೆ ಹಾನಿಯೆಸಗಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಹಾಸ್ಟೆಲ್ನಲ್ಲಿ ಕಳಪೆ ದರ್ಜೆಯ ಆಹಾರ ಪೂರೈಕೆ ಹಾಗೂ ರೋಗ ಹರಡುವಿಕೆ ಮತ್ತು ಭದ್ರತಾಸಿಬ್ಬಂದಿಗಳಿಂದ ಹಲ್ಲೆ, ವ್ಯಾಪಕ ಗಲಭೆ ಸೇರಿದಂತೆ ಎಲ್ಲಾ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳ | NRCಯೇ SIRನ ನೈಜ ಉದ್ದೇಶ: ಮಮತಾ
ಕೋಲ್ಕತಾ, ನ. 26: ಸ್ವಾತಂತ್ರ್ಯ ಸಿಕ್ಕಿ ಎಷ್ಟೋ ವರ್ಷಗಳು ಗತಿಸಿದ ಬಳಿಕ ಜನರ ಪೌರತ್ವವನ್ನು ಪ್ರಶ್ನಿಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ. ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಹಿಂದಿನ ನಿಜವಾದ ಉದ್ದೇಶ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯೇ ಆಗಿದೆ ಎಂದು ಅವರು ಹೇಳಿದರು. ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಕೋಲ್ಕತದ ಕೆಂಪು ರಸ್ತೆಯಲ್ಲಿರುವ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಗೆ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ‘‘ಪ್ರಜಾಪ್ರಭುತ್ವ ಅಪಾಯದಲ್ಲಿರುವಾಗ, ಜಾತ್ಯತೀತತೆ ವಿನಾಶದ ಸುಳಿಯಲ್ಲಿ ಸಿಲುಕಿರುವಾಗ ಮತ್ತು ಒಕ್ಕೂಟ ವ್ಯವಸ್ಥೆಗೆ ಕೊಡಲಿ ಏಟು ಬೀಳುತ್ತಿರುವಾಗ ಜನರು ಸಂವಿಧಾನದ ರಕ್ಷಣೆಗೆ ಮುಂದಾಗಬೇಕು’’ ಎಂದು ಮುಖ್ಯಮಂತ್ರಿ ಹೇಳಿದರು. ಸಂವಿಧಾನವು ಭಾರತದ ಬೆನ್ನೆಲುಬಾಗಿದೆ ಎಂದು ಹೇಳಿದ ಅವರು, ಅದು ಭಾರತದ ಸಂಸ್ಕೃತಿಗಳು, ಭಾಷೆಗಳು ಮತ್ತು ಸಮುದಾಯಗಳ ವೈವಿಧ್ಯತೆಯನ್ನು ಪರಿಪೂರ್ಣವಾಗಿ ಜೊತೆಗೆ ಬೆಸೆದಿದೆ ಎಂದರು. ‘‘ಇಂದು, ಸಂವಿಧಾನ ದಿನದಂದು, ಭಾರತದಲ್ಲಿರುವ ನಮ್ಮನ್ನು ಒಗ್ಗೂಡಿಸಿರುವ ನಮ್ಮ ಶ್ರೇಷ್ಠ ಸಂವಿಧಾನಕ್ಕೆ ನಾನು ಮಹೋನ್ನತ ಗೌರವ ನೀಡುತ್ತಿದ್ದೇನೆ. ಇಂಥ ಶ್ರೇಷ್ಠ ಸಂವಿಧಾನವನ್ನು ರೂಪಿಸಿರುವ ದೂರದೃಷ್ಟಿಯ ನಾಯಕರಿಗೆ, ಅದರಲ್ಲೂ ಮುಖ್ಯವಾಗಿ ಅದರ ಪ್ರಧಾನ ರೂವಾರಿ ಡಾ. ಬಿ.ಆರ್. ಅಂಬೇಡ್ಕರ್ರಿಗೆ ನಾನಿಂದು ಗೌರವ ಸಲ್ಲಿಸುತ್ತೇನೆ’’ ಎಂದು ಬಳಿಕ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಉಳಿದ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬುದು ನನ್ನ, ಭಕ್ತರ ಮನದ ಮಾತು: ನಿರ್ಮಲಾನಂದನಾಥ ಸ್ವಾಮೀಜಿ
ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಡಿಕೆ ಶಿವಕುಮಾರ್ ಅವರು ಉಳಿದ ಅವಧಿಗೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯಿಂದ ಅಭಿವೃದ್ಧಿ ಕುಂಠಿತವಾಗುವುದನ್ನು ತಪ್ಪಿಸಲು ಕಾಂಗ್ರೆಸ್ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇಥಿಯೋಪಿಯಾದ ಜ್ವಾಲಾಮುಖಿ ಸ್ಫೋಟದಿಂದಾಗಿ ಭಾರತದಲ್ಲಿ ವಿಮಾನಯಾನಕ್ಕೆ ತೊಂದರೆಯಾಗಿದೆ. ಏರ್ ಇಂಡಿಯಾ 13 ವಿಮಾನಗಳನ್ನು ರದ್ದುಗೊಳಿಸಿದೆ. ದೋಹಾದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲೂ ವಿಮಾನ ರದ್ದು ಮತ್ತು ವಿಳಂಬವಾಗಿದೆ. ಈ ಪರಿಸ್ಥಿತಿಯಿಂದಾಗಿ ಹಲವು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಧಾನಿ ಭೇಟಿಯ ಹಿನ್ನೆಲೆ : ವಾಹನಗಳ ಪಾರ್ಕಿಂಗ್ಗೆ ಉಡುಪಿಯಲ್ಲಿ ಸ್ಥಳಗಳ ನಿಗದಿ
ಉಡುಪಿ, ನ.26: ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಉಡುಪಿ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳ ಅಡಿಯಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯ ವರೆಗೆ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧಿಸಿ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸುವ ಕುರಿತು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಕಾರ್ಯಕ್ರಮಕ್ಕೆ ಬರುವ ವಾಹನಗಳು: ► ಕುಂದಾಪುರದಿಂದ ಬರುವ ವಾಹನಗಳು ಸಿಲಾಸ್ ಶಾಲೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಬೇಕು. ಕುಂದಾಪುರದಿಂದ ಬರುವ ವಾಹನಗಳು ಗುಂಡಿಬೈಲು ಹತ್ತಿರ ಜನರನ್ನು ಇಳಿಸಿ ಯು ಟರ್ನ್ ಆಗಿ ಎಂಜಿಎಂ ಮೈದಾನಕ್ಕೆ ಹೋಗಬೇಕು. ► ಕಾರ್ಕಳ ಬೆಳ್ವೆ ಮಾರ್ಗವಾಗಿ ಉಡುಪಿಗೆ ಬರುವ ವಾಹನಗಳು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಬೈಲೂರು ಮುದ್ದಣ ಎಸ್ಟೇಟ್ನಲ್ಲಿ ಪಾರ್ಕ್ ಮಾಡಿ ರೋಡ್ ಶೋಗೆ ತೆರಳಬೇಕು. ► ಮಂಗಳೂರು ಕಡೆಯಿಂದ ರೋಡ್ ಶೋಗೆ ಬರುವ ವಾಹನಗಳು ಬೈಲೂರು ಮುದ್ದಣ್ಣ ಎಸ್ಟೇಟ್ನಲ್ಲಿ ಪಾರ್ಕ್ ಮಾಡಬೇಕು. ► ಮಲ್ಪೆ ಕಡೆಯಿಂದ ರೋಡ್ ಶೋ ಗೆ ಬರುವ ವಾಹನಗಳು ಶಾಮಿಲಿ ಎದುರು ಗ್ರೌಂಡ್ನಲ್ಲಿ ಪಾರ್ಕ್ ಮಾಡಬೇಕು. ► ಕಾರ್ಕಳ ಹೆಬ್ರಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಶಾರದಾ ಕಲ್ಯಾಣ ಮಂಟಪ ಮಾರ್ಗವಾಗಿ ಬೀಡಿನಗುಡ್ಡೆಯಲ್ಲಿ ಪಾರ್ಕ್ ಮಾಡಬೇಕು. ► ಮಲ್ಪೆ ಕಡೆಯಿಂದ ರೋಡ್ ಶೋಗೆ ಬರುವ ಜನರು ವಾಹನಗಳನ್ನು ವಿವೇಕಾನಂದ ಸ್ಕೂಲ್ ಪಾರ್ಕಿಂಗ್ನಲ್ಲಿ ಪಾರ್ಕ್ ಮಾಡಬೇಕು. ಬಸ್ಸುಗಳು ಮತ್ತು ಕಾರುಗಳು : ► ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ಗಳು ಉಡುಪಿ ಬಸ್ನಿಲ್ದಾಣಕ್ಕೆ ಬರುವಂತಿಲ್ಲ. ಅವುಗಳು ನೇರವಾಗಿ ಅಂಬಾಗಿಲು ಮಾರ್ಗವಾಗಿ ಮಣಿಪಾಲ ಅಲೆವೂರು ಮಾರ್ಗವಾಗಿ ಕೊರಂಗ್ರಪಾಡಿ ಮಾರ್ಗವಾಗಿ ಬಲೈಪಾದೆಯಾಗಿ ಚಲಿಸಬೇಕು. ► ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪಡುಕೆರೆ ಪಿತ್ರೋಡಿ, ಉದ್ಯಾವರ ಮಾರ್ಗವಾಗಿ ಚಲಿಸಬೇಕು. ಮಲ್ಪೆಯಿಂದ ಕುಂದಾಪುರಕ್ಕೆ ಹೋಗುವ ವಾಹನಗಳು ಸಂತೆಕಟ್ಟೆ ಮತ್ತು ನೇಜಾರು ಮುಖೇನ ಚಲಿಸಬೇಕು. ಮಂಗಳೂರಿನಿಂದ ಕುಂದಾಪುರ ಕಡೆಗೆ : ► ಕಟಪಾಡಿಯಿಂದ-ಮಣಿಪುರ-ದೆಂದೂರಕಟ್ಟೆ-ರಾಂಪುರ-ಅಲೆವೂರು, ಗುಡ್ಡೆ ಅಂಗಡಿ-ಮಣಿಪಾಲ-ಆರ್ಎಸ್ಬಿ ಸಭಾಭವನ-ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್- ಪೆರಂಪಳ್ಳಿ- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಅಂಬಾಗಿಲು ರಾ.ಹೆ.66ರ ಮೂಲಕ ಚಲಿಸಬೇಕು. ► ಕಟಪಾಡಿ ಉದ್ಯಾವರ ಕಡೆಯಿಂದ ಬಂದ ವಾಹನಗಳು-ಬಲೈಪಾದೆ -ಗುಡ್ಡೆಅಂಗಡಿ ಕೊರಂಗ್ರಪಾಡಿ ಕ್ರಾಸ್- ಕೊರಂಗ್ರಪಾಡಿ- ಕುಕ್ಕಿಕಟ್ಟೆ- ಜೋಡುರಸ್ತೆ- ಅಲೆವೂರು ಗುಡ್ಡೆಅಂಗಡಿ-ಮಣಿಪಾಲ-್ಕ ಆರ್ಎಸ್ಬಿ ಸಭಾ ಭವನ- ಸಿಂಡಿಕೇಟ್ ಸರ್ಕಲ್- ಕಾಯಿನ್ ಸರ್ಕಲ್- ಪೆರಂಪಳ್ಳಿ- ಅಂಬಾಗಿಲು ಪೆರಂಪಳ್ಳಿ ಕ್ರಾಸ್-ಅಂಬಾಗಿಲು ರಾ.ಹೆ.66ರ ಮೂಲಕ ಚಲಿಸಬೇಕು. ಕುಂದಾಪುರದಿಂದ-ಮಂಗಳೂರು ಕಡೆಗೆ : ► ಅಂಬಾಗಿಲು ಎನ್ ಹೆಚ್ 66- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಪೆರಂಪಳ್ಳಿ- ಕಾಯಿನ್ಸರ್ಕಲ್- ಸಿಂಡಿಕೇಟ್ ಸರ್ಕಲ್- ಮಣಿಪಾಲ ಆರ್ಎಸ್ಬಿ ಸಭಾ ಭವನ- ಅಲೆವೂರು ಗುಡ್ಡೆ ಅಂಗಡಿ- ರಾಂಪುರ- ದೆಂದೂರ್ಕಟ್ಟೆ- ಮಣಿಪುರ-ಕಟಪಾಡಿ ಮುಖಾಂತರ ಚಲಿಸಬೇಕು. ಮಂಗಳೂರಿನಿಂದ ಮಲ್ಪೆ ಕಡೆಗೆ : ► ರಾ.ಹೆದ್ದಾರಿ 66 ಕಿಯಾ ಶೋ ರೂಂ ಉದ್ಯಾವರ ಜಂಕ್ಷನ್-ಉದ್ಯಾವರ ಪೇಟೆ-ಪಿತ್ರೋಡಿ-ಸಂಪಿಗೆ ನಗರ ಕುತ್ಪಾಡಿ-ಕಡೆಕಾರು-ಕಿದಿಯೂರು-ಮಲ್ಪೆ ಮುಖಾಂತರ ಚಲಿಸಬೇಕು. ನ.28ರಂದು ಬೆಳಗ್ಗೆ 7:00ಗಂಟೆಯಿಂದ ಅಪರಾಹ್ನ 3:00 ಗಂಟೆಯ ವರೆಗೆ ಯಾವುದೇ ವಾಹನಗಳು ಕರಾವಳಿ ಕಡೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ ಮತ್ತು ಉಡುಪಿ ಸಿಟಿ ಕಡೆಗೆ ಬರುವಂತಿಲ್ಲ. ಈ ನಿಷೇಧ ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತುಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ʻಮೊದಲು ಪರಮೇಶ್ವರ್ರ ಕೂಲಿ ಚುಕ್ತಾ ಮಾಡಿ, ಆಮೇಲೆ ಡಿಕೆ ಶಿವಕುಮಾರ್ ಸಿಎಂ ಆಗಲಿʼ: ಕೆಎನ್ ರಾಜಣ್ಣ
ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು, ಡಿ.ಕೆ.ಶಿವಕುಮಾರ್ ಸಿಎಂ ಆಗುವ ಮುನ್ನ, ಪಕ್ಷಕ್ಕಾಗಿ ದುಡಿದ ಡಾ.ಜಿ.ಪರಮೇಶ್ವರ್ ಅವರ 'ಹಳೇ ಕೂಲಿ ಕೊಡಬೇಕಿದೆ. ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಬೇಕು, ಒಂದು ವೇಳೆ ಅನಿವಾರ್ಯತೆ ಬಂದರೆ ಪರಮೇಶ್ವರ್ ಅವರಿಗೆ ಅವಕಾಶ ನೀಡಬೇಕು ಎಂದು ಕೆಎನ್ ರಾಜಣ್ಣ ಅವರು ಮಾತನಾಡಿದರು.
ಉಡುಪಿ | ನ.28: ಪ್ರಧಾನಿ ಸಂಚರಿಸುವ ಮಾರ್ಗದ ಇಕ್ಕೆಲಗಳ ಅಂಗಡಿ ಮುಂಗಟ್ಟು ಮುಚ್ಚಲು ಜಿಲ್ಲಾಧಿಕಾರಿ ಆದೇಶ
ಡ್ರೋನ್ ಹಾರಾಟಕ್ಕೆ ನಿಷೇಧ
ಕಲಬುರಗಿ : ದಶಕದಲ್ಲಿ ನೆಲೆಯೂರಿರುವ ವೈವಿಧ್ಯಮಯ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ಜಾತಿ, ಧರ್ಮ, ವರ್ಣರಹಿತ ಜಾತ್ಯತೀತ ಮನೋಭಾವನೆಯೊಂದಿಗೆ ಸರ್ವರ ಪ್ರಗತಿಗೆ ದಾರದೀಪದಂತಹ ಸಂವಿಧಾನ ನೀಡಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ ಎಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ವಾಯ್ ರತ್ನಮ್ ಹೇಳಿದರು. ಬುಧವಾರ ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ವಿವಿಯ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ 76ನೇ ಸಂವಿಧಾನ ದಿನಾಚರಣೆ ನಿಮಿತ್ತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಪೀಠಿಕೆಯಲ್ಲಿನ ಪ್ರತಿಯೊಂದು ಪದಗಳು ಬಹಳಷ್ಟು ವಿಶಾಲವಾದ ಅರ್ಥವನ್ನು ನೀಡುತ್ತವೆ. ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ನಮಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿ ಸಮುದಾಯ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು ಮತ್ತು ಹೆಚ್ಚು ಪಸರಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಸಂವಿಧಾನ ಜಾರಿಯಾದ ಕಾರಣ ಇಂದು ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿದೆ. ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೆಬೇಕು ಎಂಬ ಮಾತಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದನೆಯನ್ನು ಮಾಡಬೇಕು. ಇಂದಿನ ಸಮಾಜದಲ್ಲಿ ಕಾಣಬಹುದಾದ ಅಸಮಾನತೆ, ಜೀತ ಪದ್ದತಿ ನಿರ್ಮೂಲನೆ, ಮರ್ಯಾದೆ ಹತ್ಯೆಗಳು ಹೋಗಲಾಡಿಸಲು ಶ್ರಮಿಸಬೇಕು ಎಂದರು. ರಾಷ್ಟ್ರೀಯ ವಿಚಾರ ಸಂಕಿರಣ ಅಂಗವಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ.ರಾಜನಾಳ್ಕರ್ ಲಕ್ಷ್ಮಣ್ ಇವರ ಅಧ್ಯಕ್ಷತೆಯಲ್ಲಿ ಮುಖ್ಯಗೋಷ್ಠಿ ನಡೆಯಿತು. ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಚಂದ್ರಕಾಂತ್ ಯಾತನೂರ್ ಅವರು ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಮಹೇಶ್ವರಿ ಎಸ್. ಚೆನ್ನಪ್ಪಗೊಳ ಮತ್ತು ಅತಿಥಿ ಉಪನ್ಯಾಸಕ ಡಾ.ಶಿವಾನಂದ ಕಡಗಂಚಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಮ್.ಭೈರಪ್ಪ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಎಸ್.ಎನ್. ಗಾಯಕ್ವಾಡ್, ಕುಲಸಚಿವ ಪ್ರೊ. ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ನಿಂಗಣ್ಣ ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕಾ ಸೇರಿದಂತೆ ಇತರೆ ಬೋಧಕ-ಬೋಧಕೇತರ ವೃಂದದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಡುಪಿ | ನ.28ರಂದು ಕೃಷ್ಣಮಠಕ್ಕೆ ಪ್ರವೇಶ ನಿರ್ಬಂಧ
ಉಡುಪಿ, ನ.26: ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಪ್ರಯುಕ್ತ ನ.28ರಂದು ನಡೆಯುವ ಲಕ್ಷಕಂಠ ಗೀತಾ ಪಾರಾಯಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿಸಲಿರುವ ಕಾರಣ ಶುಕ್ರವಾರದಂದು ಬೆಳಿಗ್ಗೆ 8:00ರಿಂದ ಅಪರಾಹ್ನ 3:00 ಗಂಟೆಯ ವರೆಗೆ ಶ್ರೀಕೃಷ್ಣ ಮಠಕ್ಕೆ ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಈ ಸೂಚನೆಯನ್ನು ಗಮನಿಸಿ ಸಹಕರಿಸಬೇಕೆಂದು ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ. ಪ್ರಧಾನಿಯವರು ಕೃಷ್ಣನ ಸನ್ನಿಧಾನಕ್ಕೆ ಆಗಮಿಸಿ, ಭಕ್ತ ಸಮೂಹದೊಂದಿಗೆ ಗೀತಾ ಪಾರಾಯಣವನ್ನು ನಡೆಸಿ ಕೃಷ್ಣನಿಗೆ ಸಮರ್ಪಿಸಲಿದ್ದಾರೆ. ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಅವರು ಆಗಮಿಸುವಾಗ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರು ಹಾಗೂ ಮಠದ ಗಣ್ಯರಿಂದ ಸಾಂಪ್ರದಾಯಿಕ ಸ್ವಾಗತ ಸಲ್ಲಿಸಲಾಗುತ್ತದೆ. ನರೇಂದ್ರ ಮೋದಿ ಅವರು ಎಂಟು ಶತಮಾನಗಳ ಇತಿಹಾಸವಿರುವ ಶ್ರೀಕೃಷ್ಣದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ದರ್ಶನ ಮಾಡಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷಕಂಠ ಗೀತೆ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುರ್ಚಿ ಬಿಕ್ಕಟ್ಟು | ಶೀಘ್ರದಲ್ಲಿಯೇ ಹೈಕಮಾಂಡ್ ಸಭೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ನ.26: ರಾಜ್ಯ ಸರಕಾರದಲ್ಲಿನ ಅಧಿಕಾರ ಹಂಚಿಕೆ ಚರ್ಚೆ ಕುರಿತು ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಭೆ ನಡೆಸಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಿಲ್ಲಿಯಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಸಭೆ ಇದೆ. ಬಿಹಾರ ಫಲಿತಾಂಶ ಬಗ್ಗೆಯೂ ಚರ್ಚೆ ನಡೆಯಲಿದೆ. ಆಗ ರಾಜ್ಯದ ಗೊಂದಲದ ಬಗ್ಗೆ ಮಾತನಾಡಿ ಬಗೆಹರಿಸುತ್ತಾರೆ ಎಂದು ಮಾಹಿತಿ ನೀಡಿದರು. ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ನಮ್ಮ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು. ಇವರ ಹೊರತಾಗಿ ಹೈಕಮಾಂಡ್ ತೀರ್ಮಾನಿಸಬೇಕು. ಅದೇ ರೀತಿ ಹೊಸ ಅಧ್ಯಕ್ಷರ ಬಗ್ಗೆಯೂ ಅವರೇ ತೀರ್ಮಾನಿಸಬೇಕು ಎಂದು ಅವರು ಹೇಳಿದರು.
ಧರ್ಮಸ್ಥಳ ಪ್ರಕರಣ | ದೂರು, ಮಾಹಿತಿಗಾಗಿ ವಿಶೇಷವಾದ ‘ಸಹಾಯವಾಣಿ’ ಸ್ಥಾಪಿಸುವಂತೆ ಒತ್ತಾಯ
ಬೆಂಗಳೂರು : ಧರ್ಮಸ್ಥಳ ಪ್ರದೇಶದಲ್ಲಿ ಆಗಿರುವ ಮಹಿಳೆಯರ ನಾಪತ್ತೆ ಮತ್ತು ಸಾವುಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಮಾಹಿತಿಗಾಗಿ ವಿಶೇಷವಾದ ‘ಸಹಾಯವಾಣಿ’ಯನ್ನು(ಹೆಲ್ಪ್ಲೈನ್) ಸ್ಥಾಪಿಸಬೇಕು. ಹಾಗೆಯೇ ಸಾಕ್ಷಿ ಮತ್ತು ದೂರುದಾರರಿಗೆ ಅಗತ್ಯವಾದ ರಕ್ಷಣೆ, ಸುರಕ್ಷತೆ ಮತ್ತು ಗೌಪ್ಯತೆಯನ್ನು ಒದಗಿಸಬೇಕು ಎಂದು ‘ಕೊಂದವರು ಯಾರು?’ ಎಂಬ ಸಂಘಟನೆಯು ಒತ್ತಾಯಿಸಿದೆ. ಬುಧವಾರದಂದು ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣಗಳ ತನಿಖೆಗೆ ಸರಕಾರ ನೇಮಿಸಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಿಗೆ ಸಂಘಟನೆಯು ಪತ್ರ ಬರೆದಿದ್ದು, ದೂರುದಾರಿಗೆ, ಸಾಕ್ಷಿದಾರರಿಗೆ ತಜ್ಞ ಸಂಸ್ಥೆಗಳ ಕಾನೂನಿನ ನೆರವು ನೀಡಬೇಕು. ಜೊತೆಗೆ ಸುರಕ್ಷಿತ ವಾಸಸ್ಥಾನ ಮತ್ತು ಜೀವನೋಪಾಯ ನೀಡುವ ನಿಯಮಗಳನ್ನು ಪರಿಶೀಲಿಸಬೇಕು. ನೊಂದ ಕುಟುಂಬಗಳಿಗೆ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿಯನ್ನು ಒದಗಿಸಬೇಕು ಎಂದು ತಿಳಿಸಿದೆ. ಲಿಂಗ ಆಧಾರಿತ ಹಿಂಸೆ ಮತ್ತು ದೌರ್ಜನ್ಯದ ಯಾವುದೇ ಸಾಕ್ಷಿ/ಬದುಕುಳಿದವರು ತಮ್ಮ ಜೀವ, ಆಸ್ತಿ, ಜೀವನೋಪಾಯ ಮತ್ತು ಬದುಕಿನ ಘನತೆಯ ದೃಷ್ಟಿಯಿಂದ ಬೆದರಿಕೆಗಳನ್ನು ಎದುರಿಸುತ್ತಾರೆ. ದೂರುದಾರರು, ಸಾಕ್ಷಿದಾರರು ತಮ್ಮ ಹೇಳಿಕೆಗಳು ಮತ್ತು ಹಂಚಿಕೊಂಡ ಸಾಕ್ಷ್ಯಗಳನ್ನು ದಾಖಲಿಸುವಲ್ಲಿ ಮಾನದಂಡಗಳನ್ನು ಅನುಸರಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. 2024ರ ಸೆ.13ರ ಹೈಕೋರ್ಟ್ನ ತೀರ್ಪಿನಂತೆ, ಸೌಜನ್ಯ ಪ್ರಕರಣದಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ತನಿಖಾಕಾಧಿಕಾರಿಗಳ ನಿರ್ಲಕ್ಷ್ಯವನ್ನು ಅಪರಾಧವಾಗಿ ಪರಿಗಣಿಸಿ, ರಾಜ್ಯ ಸರಕಾರವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಕಾನೂನಿನಂತೆ ಕ್ರಮ ತೆಗೆದುಕೊಳ್ಳದ ಸಾರ್ವಜನಿಕ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸುವ ಐಪಿಸಿ ಸೆಕ್ಷನ್ 166ಎ(ಅಥವಾ ತತ್ಸಮಾನ ಬಿಎನ್ಎಸ್ ಸೆಕ್ಷನ್) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ಎಸ್ಐಟಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಲಿಂಗ ನ್ಯಾಯ ಮತ್ತು ಜವಾಬ್ದಾರಿಯನ್ನು ಖಚಿತಪಡಿಸಲು ಒಂದು ಸ್ವತಂತ್ರ ಬೆಂಬಲ ಗುಂಪನ್ನು ಸ್ಥಾಪಿಸಿ, ಅದರಲ್ಲಿ ಮಹಿಳಾ ಹಕ್ಕುಗಳ ತಜ್ಞರನ್ನು ಸೇರಿಸಬೇಕು. ಸತ್ಯವನ್ನು ಮರೆಮಾಚುವ ಅಥವಾ ಜಾತಿ/ವರ್ಗ/ಧರ್ಮ/ರಾಜಕೀಯ ಪ್ರಾಬಲ್ಯ ಬಳಸಿ ಒತ್ತಡ ಹೇರುವ ಮೂಲಕ ಯಾರಾದರೂ ತನಿಖೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಡ್ಡಿಪಡಿಸಿದದಲ್ಲಿ ಅವರನ್ನು ಶಿಕ್ಷೆಗೊಳಪಡಬೇಕು ಎಂದು ಸಂಘಟನೆಯು ಹೇಳಿದೆ. ಧರ್ಮಸ್ಥಳ ಪ್ರದೇಶದಲ್ಲಿ ಅಸ್ವಾಭಾವಿಕ ಸಾವುಗಳ ಸಂಖ್ಯೆಯು ಅಸಾಮಾನ್ಯವಾಗಿ ಹೆಚ್ಚಾಗಿದ್ದು, ಇದನ್ನು ಉಗ್ರಪ್ಪ ಸಮಿತಿಯು ಗುರುತಿಸಿದೆ. ಎಸ್ಐಟಿ ನಡೆಸುವ ಸಮಗ್ರ ತನಿಖೆಯು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಿಗದ ನ್ಯಾಯವನ್ನು ಕೊಡಬೇಕು. ಅಲ್ಲದೇ, ಮುಂದಿನ ದಿನಗಳಲ್ಲಿ ಇಂತಹ ಅಪರಾಧಗಳು ನಡೆಯದಂತೆ ಸಮಾಜಕ್ಕೆ ಸಂದೇಶ ಕೊಡಬೇಕು ಎಂದು ಸಂಘಟನೆ ಆಗ್ರಹಿಸಿದೆ. ಸಾವುಗಳು, ಅತ್ಯಾಚಾರಗಳು, ನಾಪತ್ತೆ ಪ್ರಕರಣಗಳು ಮತ್ತು ದೌರ್ಜನ್ಯಗಳಿಗೆ ಸಂಬಂಧಿಸಿದ ಪೊಲೀಸ್ ತನಿಖೆಗಳು ಏಕೆ ನಿರಂತರವಾಗಿ ಕಳಪೆಯಾಗಿ ನಡೆದಿವೆ ಮತ್ತು ಅರೆಮನಸ್ಸಿನಿಂದ ಕೂಡಿದಂತಿವೆ? ಧರ್ಮಸ್ಥಳ ಪ್ರದೇಶದ ಬಹುತೇಕ ಪ್ರಕರಣಗಳಲ್ಲಿ ಸಾಕ್ಷಿಗಳ ನಾಪತ್ತೆ ಅಥವಾ ವಿವರಣೆಗೆ ನಿಲುಕದ ಸಾವುಗಳನ್ನು ಏಕೆ ತನಿಖೆ ಮಾಡಲಿಲ್ಲ? ಈ ಪ್ರಕರಣಗಳಲ್ಲಿ ಸಾಮ್ಯತೆ ಇರುವುದನ್ನು ಗಮನಿಸಿ, ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಅಧಿಕಾರಿಗಳು ವಿಫಲರಾಗಿರುವುದು ಏಕೆ ಎಂದು ಸಂಘಟನೆಯು ಸರಕಾರವನ್ನು ಪ್ರಶ್ನಿಸಿದೆ. ಪದ್ಮಲತಾ, ಯಮುನಾ/ನಾರಾಯಣ ಮತ್ತು ಹೇಮಾವತಿ ದೇವಾಡಿಗಾ ಮುಂತಾದ ಹಳೆಯ ಪ್ರಕರಣಗಳಿಗೆ ಸರಿಯಾದ ತನಿಖೆ ಇಲ್ಲದೆ, ಪ್ರಕರಣಗಳು ಮುಚ್ಚಲ್ಪಟ್ಟಿವೆ. ಇಂತಹ ಪ್ರಕರಣಗಳಿಗೆ ಮರುಚಾಲನೆ ನೀಡಬೇಕಾಗಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಸಂದೇಹಾಸ್ಪದವಾಗಿ ಸಾವಿಗೀಡಾದ ರವಿ ಪೂಜಾರಿ, ಗೋಪಾಲಕೃಷ್ಣ ಗೌಡ, ದಿನೇಶ್ ಗೌಡ, ವಾರಿಜಾ ಆಚಾರ್ಯ ಮತ್ತು ಹರೀಶ್ ಮಡಿವಾಳ ಮುಂತಾದ ಸಂದೇಹಾಸ್ಪದ ಸಾಕ್ಷಿಗಳ ಸಾವುಗಳನ್ನು ಮರುತನಿಖೆ ಮಾಡಬೇಕು ಎಂದು ‘ಕೊಂದವರು ಯಾರು?’ ಎಂಬ ಸಂಘಟನೆಯು ಆಗ್ರಹಿಸಿದೆ.
ದಯವಿಟ್ಟು ಕಾಯಿರಿ, ನಾನೇ ನಿಮಗೆ ಕರೆ ಮಾಡುವೆ: ಡಿ.ಕೆ.ಶಿವಕುಮಾರ್ಗೆ ರಾಹುಲ್ ಗಾಂಧಿ ಸಂದೇಶ
► ಹೈಕಮಾಂಡ್ ಅಂಗಳದಲ್ಲಿ ‘ನಾಯಕತ್ವ ಬದಲಾವಣೆ’; ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ► ನಾಯಕತ್ವ ಬದಲಾವಣೆ ಬಿಕ್ಕಟ್ಟು ಶೀಘ್ರವೇ ಇತ್ಯರ್ಥ: ಮಲ್ಲಿಕಾರ್ಜುನ ಖರ್ಗೆ
ಸಿಎಸ್ಜಿ ಸಹಯೋಗದೊಂದಿಗೆ ಕಾವೇರಿ 2.0 ತಂತ್ರಾಂಶ ಪರಿಷ್ಕರಿಸಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಚಾಲ್ತಿಯಲ್ಲಿರುವ ಕಾವೇರಿ 2.0 ತಂತ್ರಾಂಶ ಕಾನೂನು ನಿರ್ವಾತವನ್ನು ಸೃಷ್ಟಿಸುತ್ತಿದೆ. ಆದ್ದರಿಂದ, ಅದರಲ್ಲಿ 'ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ' ಎಂಬ ಹೊಸ ಕಾರ್ಯನಿರ್ವಹಣಾ ಶೀರ್ಷಿಕೆ ಸೇರ್ಪಡೆ ಮಾಡಿ ಪರಿಷ್ಕರಣೆ ಮಾಡುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಕಂದಾಯ ಇಲಾಖೆಗೆ ನಿರ್ದೇಶಿಸಿರುವ ಹೈಕೋರ್ಟ್, ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್ಜಿ) ಸಹಯೋಗದೊಂದಿಗೆ ಈ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸೆಷನ್ಸ್ ನ್ಯಾಯಾಲಯ ಮೂಲ ಮೊಕದ್ದಮೆಯಲ್ಲಿ ಅಂಗೀಕರಿಸಿದ ರಾಜಿ ಅಂತಿಮ ತೀರ್ಪಿನ ನಿಯಮಗಳ ಪ್ರಕಾರ ತಮ್ಮ ಹೆಸರಿಗೆ ಖಾತಾ ವರ್ಗಾವಣೆ ಮಾಡಲು ಬಂಟ್ವಾಳ ತಹಶೀಲ್ದಾರ್ಗೆ ನಿರ್ದೇಶಿಸುವಂತೆ ಕೋರಿ ಗಿಲ್ಬರ್ಟ್ ವಾಸ್ ಮತ್ತಿತರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ. ಹೈಕೋರ್ಟ್ ಆದೇಶವೇನು? ಚಾಲ್ತಿಯಲ್ಲಿರುವ ಕಾವೇರಿ 2.0 ಸದ್ಯ ಮಾರಾಟ, ಗಿಫ್ಟ್ ಡೀಡ್, ಅಡಮಾನ, ಪಿತ್ರಾರ್ಜಿತ ಆಸ್ತಿ ಕುರಿತ ವಹಿವಾಟುಗಳನ್ನು ಆಧರಿಸಿದೆ. ಅದರಲ್ಲಿ ಆಸ್ತಿ ವಿವಾದಗಳ ಕುರಿತಂತೆ ಸಿವಿಲ್ ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ. ಜತೆಗೆ ಇದು ನಾಗರಿಕರು ನ್ಯಾಯಾಲಯಗಳು ನಿರ್ಣಾಯಕವಾಗಿ ನಿರ್ಧರಿಸಿದ ವಿಷಯಗಳಿಗೆ ಹಲವು ಅನುಮೋದನೆಗಳು, ಪರಿಶೀಲನೆಗಳು ಮತ್ತು ಪ್ರಮಾಣೀಕರಣಗಳನ್ನು ಪಡೆಯಬೇಕೆಂದು ಸೂಚಿಸುತ್ತದೆ. ತಂತ್ರಾಂಶವು ಕೊಂಚ ಗೊಂದಲವನ್ನುಂಟು ಮಾಡುತ್ತಿರುವುದರಿಂದ ಅದರ ಪರಿಷ್ಕರಣೆ ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಾಂಗ ತೀರ್ಪು ಮತ್ತು ಆಡಳಿತಾತ್ಮಕ ಜಾರಿಗೊಳಿಸುವಿಕೆಯ ನಡುವಿನ ಸಮನ್ವಯವನ್ನು ಮರುಸ್ಥಾಪಿಸಲು ಹಾಗೂ ಸಿವಿಲ್ ನ್ಯಾಯಾಲಯದ ತೀರ್ಪುಗಳು ರಾಜ್ಯದ ಡಿಜಿಟಲ್ ಆದಾಯ ಮೂಲಸೌಕರ್ಯದಲ್ಲಿ ಸ್ವಯಂಚಾಲಿತವಾಗಿ ಮನ್ನಣೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ದೇಶನಗಳನ್ನು ನೀಡಲಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಇಂಡೋನೇಶ್ಯ ಕರಾವಳಿಗೆ ಅಪ್ಪಳಿಸಿದ ‘ಸೆನ್ಯಾರ್’ ಚಂಡಮಾರುತ
ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತ
ಎಸ್ಐಆರ್ ಪ್ರಶ್ನಿಸಿ ಅರ್ಜಿ: ಉತ್ತರಿಸುವಂತೆ ಚುನಾವಣಾ ಆಯೋಗಕ್ಕೆ ʼಸುಪ್ರೀಂʼ ನಿರ್ದೇಶನ
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಿಂದ ಅರ್ಜಿ
ಸಂವಿಧಾನ ದಿನದಲ್ಲಿ ಭಾಗವಹಿಸಿದ ವಿದೇಶಿ ನ್ಯಾಯಾಧೀಶರು
ಹೊಸದಿಲ್ಲಿ, ನ. 26: ಸುಪ್ರೀಂ ಕೋರ್ಟ್ನಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ವಿವಿಧ ದೇಶಗಳ ಮುಖ್ಯ ನ್ಯಾಯಾಧೀಶರು ಮತ್ತು ಹಿರಿಯ ನ್ಯಾಯಾಧೀಶರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಗಣ್ಯರನ್ನು ಭಾರತದ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಸ್ವಾಗತಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ, ವಿದೇಶಿ ನ್ಯಾಯಾಧೀಶರು ಭಾರತದ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಜೊತೆಗೆ ಕುಳಿತು ಸುಪ್ರೀಂ ಕೋರ್ಟ್ನ ನ್ಯಾಯಾಂಗ ಕಲಾಪಗಳನ್ನು ವೀಕ್ಷಿಸಿದರು. ಉಪಸ್ಥಿತರಿದ್ದ ವಿದೇಶಿ ಗಣ್ಯರಲ್ಲಿ ಭೂತಾನ್ ಮುಖ್ಯ ನ್ಯಾಯಾಧೀಶ ಲ್ಯೊನ್ಪೊ ನೊರ್ಬು ಶೆರಿಂಗ್, ಕೆನ್ಯದ ಮುಖ್ಯ ನ್ಯಾಯಾಧೀಶೆ ಮಾರ್ತಾ ಕೆ. ಕೂಮೆ, ಮಾರಿಶಸ್ ನ ಮುಖ್ಯ ನ್ಯಾಯಾಧೀಶೆ ರೆಹಾನಾ ಬೀಬಿ ಮುಂಗ್ಲಿ-ಗುಲ್ಬುಲ್ ಮತ್ತು ಶ್ರೀಲಂಕಾದ ಮುಖ್ಯ ನ್ಯಾಯಾಧೀಶ ಪ್ರೀತಿ ಪದ್ಮನ್ ಸೂರಸೇನ ಸೇರಿದ್ದಾರೆ. ಕೆನ್ಯ, ನೇಪಾಳ, ಶ್ರೀಲಂಕಾ ಮತ್ತು ಮಲೇಶ್ಯದ ಸರ್ವೋಚ್ಛ ನ್ಯಾಯಾಲಯಗಳ ಇತರ ಹಿರಿಯ ನ್ಯಾಯಾಧೀಶರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಕೇಶ್ ದ್ವಿವೇದಿ ಮುಂತಾದವರೂ ಈ ಸಂದರ್ಭದಲ್ಲಿ ಮಾತನಾಡಿದರು. 1949ರಲ್ಲಿ ಭಾರತದ ಸಂವಿಧಾನಕ್ಕೆ ನೀಡಲಾದ ಅಂಗೀಕಾರವನ್ನು ಸ್ಮರಿಸುವುದಕ್ಕಾಗಿ ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನವನ್ನು ಆಚರಿಸಲಾಗುತ್ತಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ: ಪ್ರಕರಣ ದಾಖಲು
ಮಂಗಳೂರು, ನ.26: ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ಬಗ್ಗೆ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಸುನಿಲ್ ಕುಮಾರ್ ಎನ್. ನ.25ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಪರಿಶೀಲಿಸುತ್ತಿದ್ದ ಫೇಸ್ ಬುಕ್ ನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಹೆಸರಿನ ಖಾತೆ ಕಂಡು ಬಂದಿದೆ. ಈ ಖಾತೆಯ ಬಗ್ಗೆ ಸಂಶಯಗೊಂಡು ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನಲ್ಲಿ ವಿಚಾರಿಸಿದಾಗ ನಕಲಿ ಖಾತೆ ಎಂಬುದಾಗಿ ದೃಢಪಟ್ಟಿದೆ. ಅದರಂತೆ ನಕಲಿ ಖಾತೆ ತೆರೆದು ವಂಚಿಸುವ ಹಾಗೂ ಸುಳ್ಳು ಸಂದೇಶ ಹರಡುವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದಿಲ್ಲಿ ಮತ್ತೊಮ್ಮೆ ಅತ್ಯಂತ ಕಲುಷಿತ ನಗರ: CREA
ಹೊಸದಿಲ್ಲಿ,ನ.26: ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿಲ್ಲಿ ಅತ್ಯಂತ ಕಲುಷಿತವಾಗಿದೆ ಎಂದು ಸೆಂಟರ್ ಫಾರ್ ರೀಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (CREA) ಬಿಡುಗಡೆಗೊಳಿಸಿರುವ ಹೊಸ ಉಪಗ್ರಹ ಆಧಾರಿತ ಮೌಲ್ಯಮಾಪನ ವರದಿಯು ಹೇಳಿದೆ. ದಿಲ್ಲಿಯು ವಾರ್ಷಿಕವಾಗಿ ಪ್ರತಿ ಘನ ಮೀಟರ್ ಗೆ 101 ಮೈಕ್ರೋಗ್ರಾಂ ಪಿಎಂ2.5 ಸಾಂದ್ರತೆಯನ್ನು ದಾಖಲಿಸಿದ್ದು, ಇದು ದೇಶದ ರಾಷ್ಟ್ರೀಯ ಪರಿಸರ ವಾಯು ಗುಣಮಟ್ಟ ಮಾನದಂಡಕ್ಕಿಂತ 2.5 ಪಟ್ಟು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ 20 ಪಟ್ಟು ಅಧಿಕವಾಗಿದೆ. ದಿಲ್ಲಿಯನ್ನು ಒಳಗೊಂಡಿರುವ ಸಿಂಧೂ-ಗಂಗಾ ವಾಯು ವಲಯದಲ್ಲಿ ಅತ್ಯಧಿಕ ಮಾಲಿನ್ಯ ಮಟ್ಟಗಳು ಮುಂದುವರಿದಿವೆ ಎಂದು CREA ಅಧ್ಯಯನವು ಸೂಚಿಸಿದೆ. ವಾಯುವಲಯವು ಸಾಮಾನ್ಯ ಹವಾಮಾನ ಮತ್ತು ಸ್ಥಳಾಕೃತಿಯಿಂದಾಗಿ ಒಂದೇ ರೀತಿಯ ವಾಯು ಗುಣಮಟ್ಟವನ್ನು ಹೊಂದಿರುವ ಭೌಗೋಳಿಕ ಪ್ರದೇಶವಾಗಿದ್ದು, ಇದು ಮಾಲಿನ್ಯಕಾರಕಗಳನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಪ್ರದೇಶದಾದ್ಯಂತ ಹರಡುತ್ತದೆ. ಸಾಂಪ್ರದಾಯಿಕವಾಗಿ, ತುಲನಾತ್ಮಕವಾಗಿ ಪರಿಗಣಿಸಲಾಗಿರುವ ಈಶಾನ್ಯ ಭಾರತವು ಕಳವಳಕಾರಿಯಾಗಿ ಮಾರ್ಪಡುತ್ತಿದ್ದು, ಅಸ್ಸಾಂ-ತ್ರಿಪುರಾ ವಾಯುವಲಯವು ನಿರಂತರವಾಗಿ ಹೆಚ್ಚಿನ ಮಾಲಿನ್ಯಕಾರಕಗಳ ಸಾಂದ್ರತೆಯನ್ನು ತೋರಿಸುತ್ತಿದೆ ಮತ್ತು ಸಿಂಧೂ-ಗಂಗಾ ಬಯಲು ಪ್ರದೇಶದ ಬಳಿಕ ಎರಡನೇ ಅತ್ಯಂತ ಕಲುಷಿತ ವಾಯುವಲಯವಾಗಿ ಬದಲಾಗುತ್ತಿದೆ ಎಂದು CREA ವಿಶ್ಲೇಷಕ ಮನೋಜ್ ಕುಮಾರ್ ಹೇಳಿದ್ದಾರೆ. ಸಿಂಧೂ-ಗಂಗಾ ಬಯಲು ಪ್ರದೇಶವು ಪಂಜಾಬಿನಿಂದ ಪಶ್ಚಿಮ ಬಂಗಾಳದವರೆಗೆ ವಿಸ್ತರಿಸಿಕೊಂಡಿದೆಯಾದರೂ ಋತುಮಾನವನ್ನು ಅವಲಂಬಿಸಿ ಅದು ಒಂದು ಅಥವಾ ಎರಡು ವಾಯುವಲಯಗಳನ್ನು ಹೊಂದಿರುತ್ತದೆ. ಇದೇ ರೀತಿ ಬದಲಾಗುತ್ತಿರುವ ಋತುಮಾನಗಳೊಂದಿಗೆ ಭಾರತವು 9ರಿಂದ 11ರವರೆಗೆ ಬಹು ವಾಯುವಲಯಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದರು. ಅಸ್ಸಾಂ ಮತ್ತು ದಿಲ್ಲಿ ದೇಶದ 50 ಅತ್ಯಂತ ಕಲುಷಿತ ಜಿಲ್ಲೆಗಳಲ್ಲಿ ಸುಮಾರು ಅರ್ಧದಷ್ಟು ಪಾಲನ್ನು ಹೊಂದಿದ್ದು, ಹರ್ಯಾಣ ಮತ್ತು ಬಿಹಾರದಂತಹ ರಾಜ್ಯಗಳು ಸಹ ಇವುಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿವೆ. ದೇಶಾದ್ಯಂತ 749 ಜಿಲ್ಲೆಗಳ ಪೈಕಿ 447 ಜಿಲ್ಲೆಗಳು ವಾರ್ಷಿಕ ಪಿಎಂ2.5 ಮಿತಿಯನ್ನು ಉಲ್ಲಂಘಿಸಿವೆ ಎಂದು ವರದಿಯು ಬೆಟ್ಟು ಮಾಡಿದೆ.
ದಿಲ್ಲಿ ಭಯೋತ್ಪಾದಕ ದಾಳಿ | ಉಮರ್ ಉನ್ ನಬಿಗೆ ನೆರವಾಗಿದ್ದ ವ್ಯಕ್ತಿಯನ್ನು ಬಂಧಿಸಿದ NIA
ಬಂಧಿತರ ಸಂಖ್ಯೆ ಏಳಕ್ಕೇರಿಕೆ
ರಾಷ್ಟ್ರೀಯತಾವಾದಿ ಚಿಂತನೆ ಅಳವಡಿಸಿಕೊಳ್ಳಲು ಸಂವಿಧಾನ ಮಾರ್ಗದರ್ಶಿ ದಾಖಲೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಹೊಸದಿಲ್ಲಿ,ನ.26: ಸಂವಿಧಾನವು ದೇಶದ ಅನನ್ಯತೆಯ ಅಡಿಪಾಯವಾಗಿದೆ. ಜೊತೆಗೆ ವಸಾಹತು ಮನಃಸ್ಥಿತಿಯನ್ನು ತೊರೆದು ರಾಷ್ಟ್ರೀಯತಾವಾದಿ ಚಿಂತನೆಯನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶಿ ದಾಖಲೆಯೂ ಆಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಪ್ರತಿಪಾದಿಸಿದರು. ಈಗ ‘ಸಂವಿಧಾನ ಸದನ’ ಎಂದು ಕರೆಯಲಾಗುತ್ತಿರುವ ಹಳೆಯ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್ ನಲ್ಲಿ ಸಂವಿಧಾನ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುರ್ಮು,ಭಾರತವು ಜಗತ್ತಿಗೆ ಅಭಿವೃದ್ಧಿಯ ಹೊಸ ಮಾದರಿಯನ್ನು ಪ್ರಸ್ತುತ ಪಡಿಸುತ್ತಿದೆ ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಹಲವಾರು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು. ‘ನಮ್ಮ ಸಂವಿಧಾನವು ರಾಷ್ಟ್ರೀಯ ಹೆಮ್ಮೆಯ ದಾಖಲೆಯಾಗಿದೆ. ಅದು ರಾಷ್ಟ್ರದ ಗುರುತಿನ ದಾಖಲೆಯಾಗಿದೆ. ಅದು ವಸಾಹತುಶಾಹಿ ಮನಃಸ್ಥಿತಿಯನ್ನು ತೊರೆದು ರಾಷ್ಟ್ರೀಯತಾವಾದಿ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲು ಮತ್ತು ದೇಶವನ್ನು ಮುಂದಕ್ಕೊಯ್ಯಲು ಮಾರ್ಗದರ್ಶಿ ದಾಖಲೆಯಾಗಿದೆ ’ಎಂದು ಹೇಳಿದ ರಾಷ್ಟ್ರಪತಿಗಳು, ಈ ದೃಷ್ಟಿಕೋನದೊಂದಿಗೆ ರಾಷ್ಟ್ರವು ಭಾರತೀಯ ನ್ಯಾಯ ಸಂಹಿತಾ,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಹೀಗೆ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಳವಡಿಸಿಕೊಂಡಿದೆ ಎಂದರು. ವೈಯಕ್ತಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಯಾವಾಗಲೂ ರಕ್ಷಿಸಬೇಕು ಎಂದು ದೇಶದ ಸಂವಿಧಾನ ನಿರ್ಮಾತೃರು ಬಯಸಿದ್ದರು ಎಂದು ಮುರ್ಮು ಹೇಳಿದರು. ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿ ರದ್ದತಿಯನ್ನು ಉಲ್ಲೇಖಿಸಿದ ಅವರು, ಅದನ್ನು ಅಂತ್ಯಗೊಳಿಸುವ ಮೂಲಕ ರಾಷ್ಟ್ರವು ರಾಜಕೀಯ ಅಡಚಣೆಯಿಂದ ಮುಕ್ತಗೊಂಡಿದೆ ಎಂದು ಹೇಳಿದರು. ‘ಕಳೆದೊಂದು ದಶಕದಲ್ಲಿ ನಮ್ಮ ಸಂಸತ್ತು ಜನತೆಯ ಆಶೋತ್ತರಗಳನ್ನು ಈಡೇರಿಸಲು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ’ ಎಂದರು. ತ್ರಿವಳಿ ತಲಾಖ್ಗೆ ನಿಷೇಧ ಮತ್ತು ಜಿಎಸ್ಟಿ ಜಾರಿಯನ್ನೂ ಉಲ್ಲೇಖಿಸಿದ ರಾಷ್ಟ್ರಪತಿಗಳು,ಇವು ಮಹಿಳೆಯರಿಗಾಗಿ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಅನುಕ್ರಮವಾಗಿ ಎರಡು ಅತ್ಯಂತ ಮಹತ್ವದ ಕ್ರಮಗಳಾಗಿವೆ ಎಂದು ತಿಳಿಸಿದರು. ನಮ್ಮ ರಾಷ್ಟ್ರವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಭರದಿಂದ ಮುನ್ನಡೆಯುತ್ತಿದೆ ಎಂದೂ ಅವರು ಹೇಳಿದರು. ಇದೇ ವೇಳೆ ರಾಷ್ಟ್ರಪತಿಗಳು ಮಲಯಾಳಂ,ಮರಾಠಿ,ನೇಪಾಳಿ, ಪಂಜಾಬಿ, ಬೋಡೊ,ಕಾಶ್ಮೀರಿ, ತೆಲುಗು, ಒಡಿಯಾ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಸಂವಿಧಾನದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿದರು.
AIನತ್ತ ಒಲವು, 2028ರ ವೇಳೆಗೆ ನಾಲ್ಕರಿಂದ ಆರು ಸಾವಿರ ಉದ್ಯೋಗ ಕಡಿತಕ್ಕೆ HP ಸಜ್ಜು!
ಕ್ಯಾಲಿಫೋರ್ನಿಯಾ(ಅಮೆರಿಕ),ನ.26: 2028ರ ವಿತ್ತವರ್ಷದ ವೇಳೆಗೆ ಜಾಗತಿಕವಾಗಿ 4,000ದಿಂದ 6,000ದಷ್ಟು ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿರುವುದಾಗಿ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ HP ಇಂಕ್ ಮಂಗಳವಾರ ಪ್ರಕಟಿಸಿದೆ. ತನ್ಮೂಲಕ ಕೃತಕ ಬುದ್ಧಿಮತ್ತೆ (AI) ಸಾಧನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಭರದಿಂದ ಸಾಗುತ್ತಿರುವ ತಂತ್ರಜ್ಞಾನ ಕಂಪೆನಿಗಳ ಗುಂಪಿಗೆ ಸೇರುತ್ತಿದೆ. ಸುದ್ದಿಸಂಸ್ಥೆಯ ಪ್ರಕಾರ, ತನ್ನ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು, ಉತ್ಪನ್ನಗಳ ಅಭಿವೃದ್ಧಿಗೆ ವೇಗ ನೀಡಲು, ಗ್ರಾಹಕರಿಗೆ ಹೆಚ್ಚಿನ ತೃಪ್ತಿಯನ್ನು ನೀಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು AIನ್ನು ಅಳವಡಿಸಿಕೊಳ್ಳಲು ಕಂಪೆನಿಯು ಪ್ರಯತ್ನಿಸುತ್ತಿರುವುದರಿಂದ ವೆಚ್ಚ ಕಡಿತ ಕ್ರಮಗಳಿಗೆ ಮುಂದಾಗಿದೆ. ಆದಾಗ್ಯೂ ಹೂಡಿಕೆದಾರರು ಈ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿಲ್ಲ. ಕಂಪೆನಿಯ ಪ್ರಕಟಣೆಯ ಬಳಿಕ ವಿಸ್ತೃತ ವಹಿವಾಟಿನಲ್ಲಿ ಅದರ ಶೇರುಗಳು ಶೇ.5.5ರಷ್ಟು ಕುಸಿತವನ್ನು ದಾಖಲಿಸಿವೆ. ಉದ್ಯೋಗ ಕಡಿತವು ಉತ್ಪನ್ನ ಅಭಿವೃದ್ಧಿ, ಆಂತರಿಕ ಕಾರ್ಯಾಚರಣೆಗಳು ಮತ್ತು ಗ್ರಾಹಕ ಬೆಂಬಲ ವ್ಯವಸ್ಥೆಯಲ್ಲಿ ತೊಡಗಿಕೊಂಡಿರುವ ತಂಡಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವುದನ್ನು HP ಸಿಇಒ ಎನ್ರಿಕ್ ಲೋರ್ಸ್ ದೃಢಪಡಿಸಿದ್ದಾರೆ. ಈ ಉಪಕ್ರಮದಿಂದ ಮೂರು ವರ್ಷಗಳಲ್ಲಿ ಒಂದು ಶತಕೋಟಿ ಡಾಲರ್ ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಲೋರ್ಸ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. HP ಫೆಬ್ರವರಿಯಲ್ಲಿ ತಾನು ಹಿಂದೆ ಘೋಷಿಸಿದ್ದ ಪುನರ್ರಚನೆ ಯೋಜನೆಯ ಭಾಗವಾಗಿ ಹೆಚ್ಚುವರಿ 1,000ದಿಂದ 2,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ವೆಚ್ಚಗಳನ್ನು ಕಡಿತಗೊಳಿಸಲು HP AI ಅನ್ನು ನೆಚ್ಚಿಕೊಂಡಿದ್ದರೂ ಹೆಚ್ಚುತ್ತಿರುವ ಬಿಡಿಭಾಗಗಳ ಬೆಲೆಗಳಿಂದಾಗಿ ಅದು ಹೊಸ ಹಣಕಾಸು ಸವಾಲುಗಳನ್ನು ಎದುರಿಸುತ್ತಿದೆ. AI ಮೂಲಸೌಕರ್ಯಕ್ಕೆ ಹೆಚ್ಚಿನ ಬೇಡಿಕೆಯಿಂದಾಗಿ ಜಾಗತಿಕವಾಗಿ ಮೆಮರಿ ಚಿಪ್ ಗಳ ಬೆಲೆಗಳ ಏರಿಕೆಯು HP, ಡೆಲ್ ಮತ್ತು ಏಸರ್ನಂತಹ ಪರ್ಸನಲ್ ಕಂಪ್ಯೂಟರ್ ತಯಾರಕರ ಲಾಭಗಳು ಕುಸಿಯಲು ಕಾರಣವಾಗಬಹುದು ಎಂದು ಮಾರ್ಗನ್ ಸ್ಟ್ಯಾನ್ಲಿಯ ವಿಶ್ಲೇಷಕರು ಎಚ್ಚರಿಸಿದ್ದಾರೆ.
ಹಾಂಗ್ ಕಾಂಗ್ನಲ್ಲಿ ಭೀಕರ ಅಗ್ನಿ ದುರಂತ: 7 ಬಹುಮಹಡಿ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ, 13 ಸಾವು
ಹಾಂಕ್ ಕಾಂಗ್ನಲ್ಲಿ ಏಳು ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭೀಕರ ಅಗ್ನಿ ದುರಂತದ ಪರಿಣಾಮ ಹದಿಮೂರು ಜನರು ಮೃತಪಟ್ಟಿದ್ದು, ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮಾಹಿತಿ ಹಂಚಿಕೊಂಡಿದೆ. ಏಳು ನೂರು ಜನರನ್ನು ಸ್ಥಳಾಂತರಿಸಲಾಗಿದೆ, ಅಗ್ನಿ ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ ಎಂದು ಅಗ್ನಿ ಶಾಮಕ ದಳ ತಿಳಿಸಿದೆ. ನಾವು ಗಳಿಸಿದ ಆಸ್ತಿಯೆಲ್ಲ ಕಣ್ಮುಂದೆಯೇ ನಾಶವಾಗ್ತಿದೆ ಎಂದು ವಸತಿ ಸಮುಚ್ಚಯದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರ ಹಂಚಿಕೆ ಚರ್ಚೆ ವಿಚಾರ | ಶೀಘ್ರದಲ್ಲಿಯೇ ಹೈಕಮಾಂಡ್ ಸಭೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯ ಸರಕಾರದಲ್ಲಿನ ಅಧಿಕಾರ ಹಂಚಿಕೆ ಚರ್ಚೆ ಕುರಿತು ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಭೆ ನಡೆಸಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಿಲ್ಲಿಯಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಸಭೆ ಇದೆ. ಬಿಹಾರ ಫಲಿತಾಂಶ ಬಗ್ಗೆಯೂ ಚರ್ಚೆ ನಡೆಯಲಿದೆ. ಆಗ ರಾಜ್ಯದ ಗೊಂದಲದ ಬಗ್ಗೆ ಮಾತನಾಡಿ ಬಗೆಹರಿಸುತ್ತಾರೆ ಎಂದು ಮಾಹಿತಿ ನೀಡಿದರು. ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ನಮ್ಮ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು. ಇವರ ಹೊರತಾಗಿ ಹೈಕಮಾಂಡ್ ತೀರ್ಮಾನಿಸಬೇಕು. ಅದೇ ರೀತಿ ಹೊಸ ಅಧ್ಯಕ್ಷರ ಬಗ್ಗೆಯೂ ಅವರೇ ತೀರ್ಮಾನಿಸಬೇಕು ಎಂದು ಅವರು ಹೇಳಿದರು.
ಮೋಹನ ಭಾಗವತ್ ರೈತರ, ದಲಿತರ ಮೇಲಾಗುವ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ : ಮಾವಳ್ಳಿ ಶಂಕರ್
ಬೀದರ್ : ಆರ್ಎಸ್ಎಸ್ ಸಂಘಟನೆ ಮಾಡುವ ತಾರತಮ್ಯ ನೀತಿಗೆ ನಮ್ಮ ಬೆಂಬಲವಿಲ್ಲ. ಆರ್ಎಸ್ಎಸ್ ಮುಖಂಡ ಮೋಹನ ಭಾಗವತ್ ಅವರು ವಿಷಕಾರಿ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ ದಲಿತರ, ರೈತರ ಮತ್ತು ಮಹಿಳೆಯರ ಮೇಲೆ ಆಗುವ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ. ಇದು ಹೀಗೆ ಮುಂದುವರಿದರೆ ಸಂವಿಧಾನ ಅಪಾಯಕ್ಕೆ ಸಿಲುಕುವ ಸಂಭವವಿದೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕಳವಳ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾವಳ್ಳಿ ಶಂಕರ್, ಇಂದಿನ ದಿನಗಳಲ್ಲಿ ದೇಶದಲ್ಲಿ ಉದಾರಿಕರಣ, ಜಾಗತಿಕರಣದಿಂದ ಎಲ್ಲವೂ ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ದಲಿತರ, ಹಿಂದುಳಿದವರ ಮತ್ತು ಶೋಷಿತರ ಹಕ್ಕುಗಳನ್ನು ಕಸಿಯುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದರು. ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುವ ಕಾರ್ಯ ಸಲ್ಲದು. ಯಾವುದೇ ಸರಕಾರವಿರಲಿ ಅಖಂಡ ರಾಷ್ಟ್ರದ ಪರಿಕಲ್ಪನೆ ಹೊಂದಬೇಕೆ ವಿನಃ ವಿಭಜಿಸುವ ಕಾರ್ಯಕ್ಕೆ ಮುಂದಾಗಬಾರದು. ಸಂವಿಧಾನದ ನಿಜಾಂಶಗಳು ಜನತೆಗೆ ತಲುಪುತ್ತಿಲ್ಲ. ಪ್ರಧಾನಮಂತ್ರಿಗಳ ಮಾತು ಕೇಳುತ್ತಿದ್ದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ದಲಿತ ಸಂಘರ್ಷ ಸಮಿತಿಯು ಜನತೆಗೆ ಸತ್ಯ ತಿಳಿಸುವ ಕಾರ್ಯ ಮಾಡುತ್ತಿದೆ. ಆರ್ಎಸ್ಎಸ್ ಮತ್ತು ಡಿಎಸ್ಎಸ್ ಮಾಡುವ ಕಾರ್ಯಗಳ ಕುರಿತು ಚರ್ಚೆ ಆಗಬೇಕಾಗಿದೆ. ಬೀದರ್ ಜಿಲ್ಲೆಯಿಂದಲೇ ದಲಿತ ಸಂಘರ್ಷ ಸಮಿತಿಯ ಸದಸ್ಯತ್ವಕ್ಕೆ ಚಾಲನೆ ನೀಡುತ್ತಿದ್ದೇವೆ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಸದಸ್ಯರಾಗಬಹುದು. 1 ಲಕ್ಷ ಸದಸ್ಯತ್ವದ ಗುರಿ ಹೊಂದಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಲಿತ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ, ಪತ್ರಕರ್ತ ಎನ್.ನಾಗರಾಜ್, ಡಿಎಸ್ಎಸ್ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ರಮೇಶ್ ಮಂದಕನಳ್ಳಿ, ರಾಜಕುಮಾರ್ ಬನ್ನೇರ್, ನಾಗಣ್ಣ ಬಡಿಗೇರ್, ರಾಮಣ್ಣ ಕಲದೇವನಹಳ್ಳಿ, ರಂಜಿತಾ ಜೈನೂರ್, ಜಗದೇವಿ ಭಂಡಾರಿ ಹಾಗೂ ದೈವಶೀಲಾ ಉಪಸ್ಥಿತರಿದ್ದರು.
ಕಡಬ | ಕೌಟುಂಬಿಕ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಮೃತ್ಯು
ಕಡಬ, ನ.26. ಕೌಟುಂಬಿಕ ಕಾರಣದಿಂದ ಮನನೊಂದು ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರದಂದು ವರದಿಯಾಗಿದೆ. ಕಡಬದ ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ರಾಕೇಶ್ ಕೆ.ಎಸ್ (37) ಮೃತ ಯುವಕ. ನ.19 ರಂದು ಅಮಲು ಪದಾರ್ಥದೊಂದಿಗೆ ಇಲಿ ಪಾಷಣ ಸೇವಿಸಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದ. ಅಸ್ವಸ್ಥಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರದಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆತನ ಪತ್ನಿಯೊಂದಿಗೆ ಆತನ ಗೆಳೆಯನೊಬ್ಬ ಮೊಬೈಲ್ ಪೋನ್ ಮೂಲಕ ಸಂಪರ್ಕದಲ್ಲಿರುವ ವಿಷಯ ತಿಳಿದು ತೀವ್ರ ನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮೃತ ಯುವಕನ ತಂದೆ ಸೊಲೊಮೊನ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ | ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ : ಆರೋಪಿಗಳ ಬಂಧನ
ಉಳ್ಳಾಲ: ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಓರ್ವ ತಲೆಮರೆಸಿಕೊಂಡ ಘಟನೆ ತೊಕ್ಕೊಟ್ಟಿನ ಹಣಕಾಸು ಸಂಸ್ಥೆಯೊಂದರಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ವಿಕ್ರಮ್, ಹರೇಕಳದ ಇಸ್ಮಾಯಿಲ್, ಮುಹಮ್ಮದ್ ಮಿಸ್ಬಾ, ಕಾಟಿಪಳ್ಳದ ಉಮರ್ ಫಾರೂಕ್, ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್, ಮಂಚಿಲದ ಝಹೀಮ್ ಅಹ್ಮದ್ ಬಂಧಿತರಾಗಿದ್ದು, ಹೆಜಮಾಡಿಯ ನೌಫಾಲ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೊಣಾಜೆ ವಿವಿ ರಸ್ತೆಯಲ್ಲಿರುವ ಹಣಕಾಸು ಸಂಸ್ಥೆಯೊಂದಕ್ಕೆ ನ.22ರಂದು ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಬಂದಿದ್ದ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು 41 ಗ್ರಾಂ ತೂಗುವ ಎರಡು ಚೈನ್ ಗಳನ್ನು ಅಡವಿರಿಸಿ ಸಾಲ ಕೊಡುವಂತೆ ಕೇಳಿದ್ದಾರೆ. ಈ ಸಂದರ್ಭ ಸಂಸ್ಥೆಯ ಮಾಲಕ ದಿನೇಶ್ ರೈ ಮತ್ತು ಸಿಬ್ಬಂದಿ ನಿಕೇಶ್ ಎಂಬವರು ಆರೋಪಿಗಳು ನೀಡಿದ ಚಿನ್ನಾಭರಣ ಪರಿಶೀಲಿಸಿದಾಗ ಚಿನ್ನದ ಪರಿಶುದ್ಧತೆಯ 916 ಸಂಕೇತ ಮತ್ತು ಓರೆ ಕಲ್ಲಿನಲ್ಲಿ ಉಜ್ಜಿದಾಗಲೂ ಅಸಲಿಯಂತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಝಹೀಮ್ ಅಹ್ಮದ್ ಹೆಸರಿನಲ್ಲಿ ಆಭರಣಗಳನ್ನು ಅಡವು ಇಟ್ಟು 3 ಲಕ್ಷದ 55 ಸಾವಿರ ರೂ. ಹಣವನ್ನು ಮಾಲಕ ಸಾಲ ನೀಡಿದ್ದಾರೆ. ನ.24ರ ಸಂಜೆ 5 ಗಂಟೆ ಹೊತ್ತಿಗೆ ಉಳ್ಳಾಲ ಮೇಲಂಗಡಿಯ ನಿವಾಸಿ ಇಮ್ತಿಯಾಝ್ ಎಂಬಾತ ಇದೇ ಹಣಕಾಸು ಸಂಸ್ಥೆಗೆ ಬಂದಿದ್ದು 55 ಗ್ರಾಂ ತೂಕದ ಎರಡು ಚೈನ್ ಮತ್ತು ಒಂದು ಬ್ರಾಸ್ಲೇಟ್ ಅಡವಿಟ್ಟು 4 ಲಕ್ಷ 80 ಸಾವಿರ ರೂಪಾಯಿ ಸಾಲ ಕೊಡುವಂತೆ ತಿಳಿಸಿದ್ದಾನೆ. ಆಭರಣ ಪರಿಶೀಲಿಸಿದಾಗ ಅದರಲ್ಲೂ 916 ಸಂಕೇತ ಮತ್ತು ಓರೆ ಕಲ್ಲಿಗೆ ಉಜ್ಜಿದಾಗ ಚಿನ್ನವೆಂದೇ ಕಂಡುಬಂದಿದೆ. ಚಿನ್ನ ಖರೀದಿ ಬಗ್ಗೆ ವಿಚಾರಿಸಿದಾಗ ದುಬೈಯ ಚಿನ್ನವೆಂದು ತಿಳಿಸಿದ್ದಾಗಿ ಹೇಳಲಾಗಿದೆ. ಆತನ ಮಾತಿನಿಂದ ಅನುಮಾನಗೊಂಡ ಸಂಸ್ಥೆಯ ಮಾಲಕ ದಿನೇಶ್ ರೈ ಅವರು ಇಮ್ತಿಯಾಝ್ ನೀಡಿದ ಆಭರಣ ಮತ್ತು ನ.22ರಂದು ಝಹೀಮ್ ಅಹ್ಮದ್ ಅಡವಿಟ್ಟಿದ್ದ ಆಭರಣಗಳನ್ನು ಮಂಗಳೂರಲ್ಲಿ ಚಿನ್ನದ ಕೆಲಸ ಮಾಡುವ ತನ್ನ ಸ್ನೇಹಿತ ಉದಯ್ ಆಚಾರ್ಯ ಎಂಬವರ ಬಳಿ ಹೋಗಿ ಪರೀಕ್ಷಿಸಿದ್ದಾರೆ. ಈ ವೇಳೆ ಆಭರಣಗಳನ್ನು ಆ್ಯಸಿಡ್ ಲ್ಲಿನ ಮುಳುಗಿಸಿ ಬಿಸಿ ಮಾಡಿದಾಗ ನೊರೆ ಬಂದಿದ್ದು ನಕಲಿ ಎನ್ನುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಯ ದಿನೇಶ್ ರೈ ಅವರು ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳಾದ ಝಹೀಮ್ ಅಹ್ಮದ್, ನೌಫಾಲ್ ಹಾಗೂ ಇಮ್ತಿಯಾಝ್ ಎಂಬವರ ಮೇಲೆ ಕೇಸು ದಾಖಲಿಸಿ, ಇಮ್ತಿಯಾಝ್ ನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆತ ನೀಡಿದ ಮಾಹಿತಿಯಾಧಾರದಲ್ಲಿ ಇತರ ಆರೋಪಿಗಳನ್ನು ಬಂಧಿಸಿದ್ದಾರೆ.

17 C