ಸಂಡೂರು ತಾಲ್ಲೂಕು ಪಂಚಾಯತ್ನಲ್ಲಿ ಸುರಕ್ಷಿತ ಕುಡಿಯುವ ನೀರಿನ ಗುಣಮಟ್ಟ ಕುರಿತು ಜಾಗೃತಿ
ಬಳ್ಳಾರಿ / ಸಂಡೂರು: ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ ಹಾಗೂ ಗುಣಮಟ್ಟ ಪರಿಶೀಲನೆಗೆ ಸಂಬಂಧಿಸಿದಂತೆ ಫೆಬ್ರವರಿ 6ರಂದು ಸಂಡೂರು ತಾಲ್ಲೂಕು ಪಂಚಾಯತ್ ಕೇಂದ್ರದಲ್ಲಿ ಗ್ರಾಮ ಮಟ್ಟದ ಫೀಲ್ಡ್ ಟೆಸ್ಟ್ ಕಿಟ್ (FTK) ಜಾಗೃತಿ ಮತ್ತು ತರಬೇತಿ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಜಲಜೀವನ ಮಿಷನ್ (JJM) ಅಡಿಯಲ್ಲಿ ಗ್ರಾಮಗಳಲ್ಲಿ ನೀರಿನ ಮಾದರಿ ಸಂಗ್ರಹಣೆ, H2S ವೈಯಲ್ ಪರೀಕ್ಷೆ, ಕ್ಲೋರಿನೇಷನ್ ವಿಧಾನ ಹಾಗೂ ನೀರಿನ ಸುರಕ್ಷತೆ ಕುರಿತಂತೆ ಸಮಗ್ರ ಮಾಹಿತಿ ನೀಡಲಾಯಿತು. ಮನೆಮನೆಗೆ ಸರಬರಾಜಾಗುವ ನೀರು, ಬೋರ್ವೆಲ್ ಹಾಗೂ ಓವರ್ಹೆಡ್ ಟ್ಯಾಂಕ್ಗಳಿಂದ ನೀರಿನ ಮಾದರಿ ಸಂಗ್ರಹಿಸಿ FTK ಮೂಲಕ ಪರೀಕ್ಷಿಸುವ ವಿಧಾನಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಮಾತನಾಡಿ, ಗ್ರಾಮ ಮಟ್ಟದಲ್ಲಿ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸುವುದು ಹಾಗೂ ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಜಲಜೀವನ ಮಿಷನ್ ಇಂಜಿನಿಯರ್ಗಳು, ಲ್ಯಾಬ್ ತಂತ್ರಜ್ಞರು, ವಾಟರ್ಮ್ಯಾನ್ಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕೆಲವು ಗ್ರಾಮ ಪಂಚಾಯತ್ ಪ್ರತಿನಿಧಿಗಳು, ನೀರಿನ ಗುಣಮಟ್ಟ ಕಾಪಾಡುವಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯವಿದ್ದು, ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಹೊಸದಿಲ್ಲಿ: ತನ್ನ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಮುಖ ದೃಢೀಕರಣವನ್ನು ಕಡ್ಡಾಯಗೊಳಿಸಿರುವ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ),ಕೆಲವು ಸೇವೆಗಳಲ್ಲಿ ಈಗಾಗಲೇ ನೇಮಕಗೊಂಡ ಅಭ್ಯರ್ಥಿಗಳಿಗೆ ಕಠಿಣ ಅರ್ಹತಾ ನಿಬಂಧನೆಗಳನ್ನು ವಿಧಿಸಿದೆ. ಗುರುವಾರ ಪ್ರಕಟಗೊಂಡ ನಾಗರಿಕ ಸೇವಾ ಪರೀಕ್ಷೆಗಳು (ಸಿಎಸ್ಇ) 2026ರ ಅಧಿಕೃತ ಅಧಿಸೂಚನೆಯಲ್ಲಿ ಈ ಬದಲಾವಣೆಗಳನ್ನು ಪ್ರಕಟಿಸಲಾಗಿದೆ. ಆಯೋಗವು ಈ ವರ್ಷದ ನೇಮಕಾತಿಗಾಗಿ 933 ಹುದ್ದೆಗಳನ್ನು ಪ್ರಕಟಿಸಿದ್ದು, ಈ ಪೈಕಿ 33 ಹುದ್ದೆಗಳು ಮಾನದಂಡ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಯ ಪ್ರಿಲಿಮಿನರಿ ಪರೀಕ್ಷೆಯನ್ನು ಮೇ 24ರಂದು ನಡೆಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಐಎಎಸ್,ಐಎಫ್ಎಸ್ ಮತ್ತು ಐಪಿಎಸ್ ಸೇರಿದಂತೆ ವಿವಿಧ ಸೇವೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ಯುಪಿಎಸ್ಸಿ ಪ್ರತಿ ವರ್ಷ ಈ ಪ್ರತಿಷ್ಠಿತ ಪರೀಕ್ಷೆಯನ್ನು ಪ್ರಿಲಿಮಿನರಿ,ಮೇನ್ ಮತ್ತು ಸಂದರ್ಶನ,ಹೀಗೆ ಮೂರು ಹಂತಗಳಲ್ಲಿ ನಡೆಸುತ್ತದೆ. ಸುಗಮ ಮತ್ತು ಸುಲಭ ಪರಿಶೀಲನೆಗಾಗಿ ಹಾಗೂ ಐಡಿ ಮತ್ತು ಇತರ ವಿವರಗಳ ದೃಢೀಕರಣಕ್ಕಾಗಿ ಅಭ್ಯರ್ಥಿಗಳು ಗುರುತಿನ ದಾಖಲೆಯಾಗಿ ತಮ್ಮ ಆಧಾರ್ ಕಾರ್ಡ್ಗಳನ್ನು ಬಳಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಧಿಸೂಚನೆಯಲ್ಲಿ ಹಿಂದಿನ ಪರೀಕ್ಷೆಗಳ ಮೂಲಕ ಈಗಾಗಲೇ ನೇಮಕಗೊಂಡಿರುವ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಹೊಸ ನಿರ್ಬಂಧಗಳನ್ನು ಪರಿಚಯಿಸಲಾಗಿದೆ. ಅದರಂತೆ ಪ್ರಸ್ತುತ ಐಎಎಸ್ ಅಥವಾ ಐಎಫ್ಎಸ್ನಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು 2026ರ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುವುದಿಲ್ಲ. ಈಗಾಗಲೇ ಐಪಿಎಸ್ ಹುದ್ದೆಗಳಲ್ಲಿರುವವರು 2026ರ ಪರೀಕ್ಷೆಯ ಮೂಲಕ ಮತ್ತೆ ಅದೇ ಸೇವೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.
ನಿರ್ಮಾಣ ಹಂತದಲ್ಲಿರುವ ಗಂಜಿಮಠ- ಸೂರಲ್ಪಾಡಿ ಟೋಲ್ ಪ್ಲಾಝಾಕ್ಕೆ ವಿವಿಧ ಸಂಘಟನೆಗಳ ಪ್ರಮುಖರ ಭೇಟಿ
ಬಜ್ಪೆ: ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿರುವ ಗಂಜಿಮಠ- ಸೂರಲ್ಪಾಡಿ ಟೋಲ್ ಪ್ಲಾಝಾಕ್ಕೆ ವಿವಿಧ ಸಂಘಟನೆಗಳ ಪ್ರಮುಖರನ್ನು ಒಳಗೊಂಡ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಶುಕ್ರವಾರ ಭೇಟಿ ನೀಡಿ ನಿಯಮಗಳ ಪಾಲನೆಯ ಕುರಿತಾಗಿ ಪರಿಶೀಲನೆ ನಡೆಸಿತು. ಸೂರಲ್ಪಾಡಿ ಟೋಲ್ ಪ್ಲಾಝಾ ನಿರ್ಮಾಣ ನಿಯಮ ಬಾಹಿರ. ಅಂತರದ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಯಲ್ಲಿ ಸಾಲಾಗಿ ಟೋಲ್ ಗೇಟ್ ಗಳನ್ನು ನಿರ್ಮಿಸಲಾಗುತ್ತಿದೆ. ಟೋಲ್ ಗೇಟ್ ಗಳ ನಡುವಿನ ಅಂತರ ಕನಿಷ್ಟ 60 ಕಿ. ಮೀ ಇರಬೇಕು ಎಂಬ ನಿಯಮವನ್ನು ಗಾಳಿಗೆ ತೂರಿ ಟೋಲ್ ಪ್ಲಾಝಾ ನಿರ್ಮಾಣ ಮಾಡುತ್ತಿರುವುದನ್ನು ಸಮಿತಿಯು ಖಂಡಿಸಿತು. ಬ್ರಹ್ಮರಕೂಟ್ಲು ಟೋಲ್ ಗೇಟ್ ಹಾಗೂ ತಲಪಾಡಿ ಟೋಲ್ ಗೇಟ್ ನಿಂದ ಗಂಜಿಮಠ ಟೋಲ್ ಪ್ಲಾಝಾ 33 ಕಿ. ಮೀ. ಹಾಗೂ 34 ಕಿ. ಮೀ ಅಂತರವನ್ನು ಮಾತ್ರ ಹೊಂದಿದೆ. ಹೆಜಮಾಡಿ ಟೋಲ್ ಗೇಟ್ ನಿಂದ 44 ಕಿ.ಮೀ. ದೂರದಲ್ಲಿದೆ. ಈ ರೀತಿ ಕಡಿಮೆ ಅಂತರದಲ್ಲಿ ಟೋಲ್ ಸಂಗ್ರಹ ಕೇಂದ್ರಗಳನ್ನು ರಚಿಸಲು ಹೆದ್ದಾರಿ ಪ್ರಾಧಿಕಾರ ರೂಪಿಸಿರುವ ನಿಮಯಗಳ ಪ್ರಕಾರ ಅವಕಾಶ ಇರುವುದಿಲ್ಲ. ಗಂಜಿಮಠ-ಸೂರಲ್ಪಾಡಿಯಲ್ಲಿ ಟೋಲ್ ಗೇಟ್ ನಿರ್ಮಾಣ ನಿಯಮಗಳ ನಿರ್ಲಜ್ಜ ಉಲ್ಲಂಘನೆಯಾಗುತ್ತಿದೆ, ಪ್ರಯಾಣಿಕರ ಸುಲಿಗೆಗೆ ಅವಕಾಶ ಕೊಡುತ್ತದೆ. ಸಾರ್ವಜನಿಕರಿಗೆ ಯಾವುದೆ ಮಾಹಿತಿ ಕೊಡದೆ, ಅಹವಾಲು ಸಭೆ ನಡೆಸದೆ ಟೋಲ್ ಪ್ಲಾಝಾ ತೆರೆಯುವ ಪ್ರಯತ್ನ ವನ್ನು ಯಾವುದೆ ಕಾರಣಕ್ಕೆ ಒಪ್ಪಲಾಗದು ಎಂದು ಹೋರಾಟ ಸಮಿತಿಯ ನಿಯೋಗ ತಿಳಿಸಿದೆ. ಹಾಗೆಯೆ, ಗಂಜಿಮಠ- ಸೂರಲ್ಪಾಡಿ ಸೇರಿದಂತೆ ಉಪ್ಪಿನಂಗಡಿಯ ವಳಾಲು, ಬೆಳ್ತಂಗಡಿ ರಸ್ತೆಯ ಪಣಪಿಲ ಬಳಿ ಟೋಲ್ ಪ್ಲಾಜ಼ಾಗಳು ನಿರ್ಮಾಣ ಹಂತದಲ್ಲಿದೆ. ಈ ಮೂಲಕ ಜಿಲ್ಲೆಯಲ್ಲಿ ಆರು ಟೋಲ್ ಗೇಟ್ ಗಳು ಸುಂಕ ವಸೂಲಿಗೆ ತೊಡಗಲಿದೆ. ಇದು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರ ಮಟ್ಟಿಗೆ ಭಯಾನಕ ಸ್ಥಿತಿಯನ್ನು ಉಂಟು ಮಾಡಲಿದೆ ಎಂದು ಹೋರಾಟ ಸಮಿತಿ ಆತಂಕ ವ್ಯಕ್ತಪಡಿಸಿದೆ. ವಳಾಲು ಹಾಗೂ ಪಣಪಿಲ ಟೋಲ್ ಪ್ಲಾಝಾಗಳೂ ಸಹ ಅಂತರದ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಗೊಳ್ಳುತ್ತಿದೆ. ವಳಾಲು ಟೋಲ್ ಪ್ಲಾಝಾ ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಂದ 35 ಕಿ ಮೀ ಅಂತರ ಹೊಂದಿದ್ದರೆ, ಮಡಂತ್ಯಾರು ಬಳಿಯ ಪಣಪಿಲ ಟೋಲ್ ಪ್ಲಾಜ಼ಾ ಬ್ರಹ್ಮರಕೂಟ್ಲು ವಿನಿಂದ ಕೇಲವ 27 ಕಿ. ಮೀ ಅಂತರ ಮಾತ್ರ ಹೊಂದಿದೆ. ಈ ಯಾವ ಟೋಲ್ ಗೇಟ್ ಗಳೂ ಅಂತರ ನಿಯಮವಾದ 60 ಕಿ ಮೀ ಯ ಹತ್ತಿರಕ್ಕೂ ಸುಳಿಯುತ್ತಿಲ್ಲ ಎಂಬ ಅಂಶವನ್ನು ಹೋರಾಟ ಸಮಿತಿಯ ನಿಯೋಗ ಬೊಟ್ಟು ಮಾಡಿ ತೋರಿಸಿದೆ. ಈ ಟೋಲ್ ಗೇಟ್ ಗಳು ಕಾರ್ಯಾಚರಣೆ ಆರಂಭಿಸಿದರೆ ಜಿಲ್ಲೆಯ ಹೆದ್ದಾರಿಗಳನ್ನು ದಾಟುವುದು ವಾಹನ ಸವಾರರ ಪಾಲಿಗೆ ಚಕ್ರವ್ಯೂಹವನ್ನು ಬೇಧಿಸಿದಷ್ಟು ಸವಾಲಿನ ಕೆಲಸವಾಗಲಿದೆ. ಜನತೆ ಹೆದ್ದಾರಿಯಲ್ಲಿ ಪ್ರಯಾಣಿಸಲೆ ಭಯ ಪಡುವ ಸ್ಥಿತಿ ನಿರ್ಮಾಣಗೊಳ್ಳಲಿದೆ. ಇದು ಜಿಲ್ಲೆಯ ವ್ಯಾಪಾರ, ಉದ್ಯಮ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ಗಂಭೀರ ಸ್ಥಿತಿ ಇದ್ದರೂ ಜಿಲ್ಲೆಯ ಸಂಸದರು, ಶಾಸಕರುಗಳು ಈ ಕುರಿತು ತಲೆ ಕೆಡಿಸಿಕೊಳ್ಳದಿರುವುದು ಅಚ್ಚರಿಯ ಸಂಗತಿ ಎಂದು ಹೇಳಿರುವ ಸಮಿತಿ, ಅಕ್ರಮ ಟೋಲ್ ಗೇಟ್ ಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮೌನ ಸಮ್ಮತಿ ತೋರುತ್ತಿದ್ದಾರೆ ಎಂದು ದೂರಿದೆ. ಈ ಕುರಿತಾಗಿ ಜಿಲ್ಲೆಯ ಸಂಸದರು, ಶಾಸಕರುಗಳ ಉಪಸ್ಥಿತಿಯಲ್ಲಿ ನಾಗರಿಕರನ್ನು ಒಳಗೊಂಡು ಜಿಲ್ಲಾಡಳಿತ ಹೆದ್ದಾರಿ ಪ್ರಾಧಿಕಾರದ ಆಲಿಕೆ ಸಭೆ ನಡೆಸಬೇಕು, ಟೋಲ್ ಗೇಟ್ ಗಳ ಸ್ಥಾಪನೆಗಳಲ್ಲಿ ಅಂತರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕು, ನಿಯಮಗಳ ಪಾಲನೆಯನ್ನು ಖಾತರಿ ಪಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ಈ ಕುರಿತು ನಿರಾಸಕ್ತಿ ತೋರಿದರೆ ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಟೋಲ್ ಗೇಟ್ ಗಳಿಂದ ಸ್ಥಳೀಯ ಹೋರಾಟ ಸಮಿತಿಗಳನ್ನು ರಚಿಸಿ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಏಕಕಾಲದಲ್ಲಿ ಪಾದಯಾತ್ರೆ ಗಳನ್ನು ಸಂಘಟಿಸುವುದಾಗಿ ಸಮಿತಿಯ ನಿಯೋಗ ಎಚ್ಚರಿಸಿದೆ. ನಿಯೋಗದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಪ್ರಾಂತ ರೈತ ಸಂಘದ ಪ್ರಮುಖರಾದ ಕೆ ಯಾದವ ಶೆಟ್ಟಿ, ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಕಾರ್ಮಿಕ ಮುಖಂಡರಾದ ನೋಣಯ್ಯ ಗೌಡ ಎಡಪದವು, ಹೊನ್ನಯ್ಯ ಅಮೀನ್ ತಿರುವೈಲು, ಡಿವೈಎಫ್ಐ ಮುಖಂಡರಾದ ನ್ಯಾಯವಾದಿ ಮನೋಜ್ ವಾಮಂಜೂರು, ರೈತ ಸಂಘದ ಆಲ್ವಿನ್ ಮಿನೇಜಸ್ ಮೂಡಬಿದ್ರೆ, ಭಾರತೀಯ ರೖತ ಸೇನೆ ಮೂಡಬಿದ್ರೆ ಘಟಕಾಧ್ಯಕ್ಷ ಹರಿಪ್ರಸಾದ್, ಸಾಮಾಜಿಕ ಕಾರ್ಯಕರ್ತರಾದ ಆನಂದ ಬಂಗೇರ, ಮಹಾಲಿಂಗ ನಾಯ್ಕ್ ಮಾಸ್ಟರ್, ಅಬ್ದುಲ್ ಮಜೀದ್ ಅಮ್ಮುಂಜೆ, ಕಾಂಗ್ರೆಸ್ ಮುಖಂಡರುಗಳಾದ ಇಕ್ಬಾಲ್ ಅಲಿಯಾರ್, ಅನ್ವರ್ ಕುಪ್ಪೆಪದವು, ಪತ್ರಕರ್ತರಾದ ಬಾವ ಪದರಂಗಿ, ಸಾಮಾಜಿಕ ಮುಖಂಡರಾದ ಖಾದರ್ ಇಡ್ಮ,ಅಬ್ದುಲ್ ಖಾದರ್ ಸೂರಲ್ಪಾಡಿ, ಬಾಬು ಸಾಲ್ಯಾನ್, ಹಮೀದ್ ಸಾಗರ್, ನಾಸಿರ್ ಅದ್ಯಪಾಡಿ, ಹನೀಫ್ ಪದರಂಗಿ ಮತ್ತಿತರರು ಉಪಸ್ಥಿತರಿದ್ದರು.
ಯಾದಗಿರಿ | ಫೆ.8ರಂದು ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ
ಯಾದಗಿರಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನು ಫೆಬ್ರವರಿ 8ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಚಾಲನೆ ನೀಡಲಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ವಹಿಸಲಿದ್ದು, ಅತಿಥಿಗಳಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಹಾಗೂ ರಾಜ್ಯ ಪರಿಷತ್ತು ಸದಸ್ಯ ಸಾಗರ್ ದೇಸಾಯಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಅದೇ ದಿನ ಸಂಜೆ 5 ಗಂಟೆಗೆ ನಡೆಯುವ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ ಹಾಗೂ ಜೆಡಿಎಸ್ ಯಾದಗಿರಿ ನಗರ ಘಟಕದ ಅಧ್ಯಕ್ಷ ಬಂದಪ್ಪ ಅರಳಿ ಅವರು ವಿವಿಧ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಲಿದ್ದಾರೆ ಎಂದರು. ಕ್ರೀಡೆಗಳ ವಿವರ : ಕಬಡ್ಡಿ, ವಾಲಿಬಾಲ್ ಮತ್ತು ಕ್ರಿಕೆಟ್ ನಲ್ಲಿ ವಿಜೇತ ತಂಡಗಳಿಗೆ ತಲಾ 5 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ವಿತರಿಸಲಾಗುವುದು. ರನ್ನರ್ ಅಪ್ ತಂಡಗಳಿಗೆ ಮೆಡಲ್ ನೀಡಲಾಗುವುದು ಎಂದರು. ಗುಂಡು ಎಸೆತ ಮತ್ತು ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ನಗದು ಬಹುಮಾನ ತಲಾ 1,000 ರೂಪಾಯಿ ಹಾಗೂ ಟ್ರೋಫಿ ನೀಡಲಾಗುವುದು. ಕೇರಂ ಮತ್ತು ಬ್ಯಾಡ್ಮಿಂಟನ್ ಸಿಂಗಲ್ ವಿಭಾಗ ಹಾಗೂ ಚೆಸ್ ನಲ್ಲಿ ವಿಜೇತರಿಗೆ ತಲಾ 500 ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು ಎಂದರು. ಕೇರಂ ಮತ್ತು ಬ್ಯಾಡ್ಮಿಂಟನ್ ಡಬಲ್ ವಿಭಾಗದಲ್ಲಿ ವಿಜೇತ ತಂಡಕ್ಕೆ ತಲಾ 1,000 ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
Ola, Uber, Rapido Drivers strike: ಭಾರತದಲ್ಲಿ ಆ್ಯಪ್ ಆಧಾರಿತ ಸಾರಿಗೆ ವಲಯದಲ್ಲಿ ಕೆಲಸ ಮಾಡುವ ಚಾಲಕರ ಸಂಘಟನೆಗಳು ಫೆಬ್ರವರಿ 7ರ ಶನಿವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಓಲಾ, ಉಬರ್ ಹಾಗೂ ರ್ಯಾಪಿಡೋ ಕಂಪನಿಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರು ಈ ಹೋರಾಟದಲ್ಲಿ ಭಾಗವಹಿಸುವ ಸಾಧ್ಯತೆಯಿದ್ದು, ಕರ್ನಾಟಕ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕ್ಯಾಬ್,
ದೇಶಿ ಆಟಗಳು ದೈಹಿಕ–ಮಾನಸಿಕ ಆರೋಗ್ಯಕ್ಕೆ ಔಷಧಿಯಂತೆ: ಶಾಸಕ ಚೆನ್ನಾರೆಡ್ಡಿ ಪಾಟೀಲ್
ಯಾದಗಿರಿ : ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವಿವಿಧ ಕ್ರೀಡೆಗಳು ಔಷಧಿಯಂತೆ ಕಾರ್ಯನಿರ್ವಹಿಸುತ್ತವೆ. ಅದರಲ್ಲೂ ದೇಶಿ ಆಟಗಳು ಮನುಷ್ಯನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಕ್ಷೇತ್ರ ಇಂದು ವ್ಯಾಪಕವಾಗಿ ಬೆಳೆಯುತ್ತಿದ್ದು, ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಜಿಲ್ಲೆಯ ಸರ್ಕಾರಿ ನೌಕರರು ಸಹ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಅವರು ಆಶಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ ಮಾತನಾಡಿ, ಸದಾ ಕೆಲಸದ ಒತ್ತಡದಲ್ಲಿರುವ ಸರ್ಕಾರಿ ನೌಕರರಿಗೆ ದೈಹಿಕ ಹಾಗೂ ಮಾನಸಿಕ ಉಲ್ಲಾಸ ನೀಡಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ನಿರೂಪಿಸಿದರು. ಈ ಸಂದರ್ಭದಲ್ಲಿ ಯುಡಾ ಅಧ್ಯಕ್ಷ ಬಾಬುರಾವ್ ಕಾಡ್ಲೂರು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಯೋಜನಾಧಿಕಾರಿ ಕುಂಬಳಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ, ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕಕುಮಾರ ಕಲಾಲ್, ಗೌರವಾಧ್ಯಕ್ಷ ಯಾಮರೆಡ್ಡಿ ಮುಂಡಾಸ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಬಂಗಾರಪ್ಪ, ಪದಾಧಿಕಾರಿಗಳಾದ ರಂಗನಾಥ ನಾಯಕ, ಸಾಯಪ್ಪ ಚಂಡ್ರಕಿ, ಬಸನಗೌಡ ಪಾಟೀಲ್, ಬಿಇಒ ವೀರಪ್ಪ ಸೇರಿದಂತೆ ತಾಲೂಕು ಅಧ್ಯಕ್ಷರು ಹಾಗೂ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು. ದೇಶಿ ಆಟಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಗಿರಿಜಿಲ್ಲೆ ಬಿಲ್ಲು–ಬಾಣದಂತಹ ಪಾರಂಪರಿಕ ಕ್ರೀಡೆಗಳನ್ನು ಹೊಂದಿದೆ. ಕಬ್ಬಡಿ, ಖೋ–ಖೋ ಆಟಗಳಿಗೆ ಉತ್ತೇಜನ ನೀಡಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ನೌಕರರು ನಿತ್ಯ ವಾಕಿಂಗ್, ರನ್ನಿಂಗ್, ಯೋಗ ಹಾಗೂ ಧ್ಯಾನವನ್ನು ಅಳವಡಿಸಿಕೊಳ್ಳಬೇಕು. -ಚೆನ್ನಾರೆಡ್ಡಿ ಪಾಟೀಲ್, ಶಾಸಕ, ಯಾದಗಿರಿ ಈ ಕ್ರೀಡಾಕೂಟದಲ್ಲಿ ಮಹಿಳೆ–ಪುರುಷರು ಸೇರಿ 800ಕ್ಕೂ ಹೆಚ್ಚು ಸರ್ಕಾರಿ ನೌಕರರು ಭಾಗವಹಿಸಿದ್ದಾರೆ. ಕ್ರಿಕೆಟ್, ವಾಲಿಬಾಲ್, ರನ್ನಿಂಗ್, ಕ್ಯಾರಂ, ಈಜು ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಸಂಸ್ಕೃತಿಗೆ ಶಕ್ತಿ ತುಂಬುವ ಕೆಲಸವಾಗಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಉಪ್ಪಿನಂಗಡಿ: ಹಲವಾರು ಸಂಸ್ಕೃತಿಗಳು ಸೇರಿದ ದೇಶ ನಮ್ಮದಾಗಿದ್ದು, ಸಂಸ್ಕೃತಿಯು ಈ ದೇಶದ ಆಸ್ತಿಯಾಗಿದೆ. ಅದಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡಬೇಕು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಕಾಂಚನದಲ್ಲಿ ನಿರ್ಮಾಣವಾದ ನೂತನ ಸಂಗೀತ ಶಾಲೆ, ಸಭಾಭವನವನ್ನು ಫೆ.6ರಂದು ಸಂಜೆ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಸಾಹಿತ್ಯ, ಸಂಗೀತ ಧರ್ಮದ ಭಾಗವಾಗಿದೆ. ಕಾಂಚನ ಸಂಗೀತದ ಮೂಲಕ ದೇಶದಾದ್ಯಂತ ಹೆಸರು ಗಳಿಸಿದೆ, ಇಲ್ಲಿನ ಸಂಗೀತ ಪಾವಿತ್ರತೆಯನ್ನು ಉಳಿಸಿಕೊಂಡಿದೆ, ದೇಶದಾದ್ಯಂತ ಇರುವ ಸಂಗೀತ ಕ್ಷೇತ್ರದ ಬಹಳಷ್ಟು ವಿದ್ವಾಂಸರು ಈ ಕಾಂಚನದಿಂದ ಅರ್ಪಣೆಯಾದವರು, ಹೀಗಿರುವಾಗ ಕಾಂಚನದ ಮಹಿಮೆಯನ್ನು ಉಳಿಸಿಕೊಂಡು ಸಂಗೀತ ಲೋಕಕ್ಕೆ ಶಕ್ತಿ ಕೊಡಬೇಕಾಗಿದೆ. ದೇವರು ವರನೂ ಕೊಡಲ್ಲ. ಶಾಪನೂ ಕೊಡಲ್ಲ. ಆದರೆ ಅವಕಾಶವನ್ನು ಕೊಡುತ್ತಾನೆ. ಅದನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳುವ ಮೂಲಕ ಸ್ವಸ್ಥ್ಯ ಸಮಾಜದ ನಿರ್ಮಾಣಕ್ಕೆ ನಾವೆಲ್ಲಾ ಮುಂದಾಗಬೇಕು ಎಂದರು. ಆಶೀರ್ವಚನ ನೀಡಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ, ಕಾಂಚನ ಎಂಬ ಈ ಊರು ಜಗತ್ ಪ್ರಸಿದ್ಧವಾಗಿದೆ. ಇಲ್ಲಿನ ಮಣ್ಣು, ನೀರು, ಗಾಳಿ, ಎಲ್ಲೆಲ್ಲೂ ಸಂಗೀತ ಇದೆ. ಇದೊಂದು ಮಾದರಿ ಗುರುಕುಲ ಪರಿಸರವಾಗಿದ್ದು, ಕಾಂಚನ ಸಂಗೀತ ಶಾಲೆಗೆ ಪರಂಪರೆ ಇದೆ. ಸಂಗೀತ ಮೋಕ್ಷ ವಿದ್ಯೆ ಯಾಗಿದ್ದು, ಕಾಂಚನ ಕುಟುಂಬದ ಉಸಿರಾಟ, ಊಟ ಎಲ್ಲವೂ ಸಂಗೀತವೇ ಆಗಿದೆ. ಬದುಕಿನಲ್ಲಿರುವ ನೋವು ದೂರ ಮಾಡಲು ಹಲವು ಕಲೆಗಳು ಇದ್ದರೂ, ಹತ್ತಿರದಲ್ಲಿ ಮತ್ತು ಸುಲಭದಲ್ಲಿ ಆಸ್ವಾದಿಸಲು ಸಾಧ್ಯವಾಗುವುದು ಸಂಗೀತದ ಮೂಲಕ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಾರಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಕಾಂಚನ ಇದೊಂದು ವಿಶೇಷವಾದ ಗುಡಿ. ಹಲವಾರು ಸಂಗೀತ ದಿಗ್ಗಜರನ್ನು ನೀಡಿದ ಕಾಂಚನ ದಕ್ಷಿಣ ಭಾರತದ ತಿರುವಯ್ಯೂರು ಎನ್ನುವುದರಲ್ಲಿ ತಪ್ಪಿಲ್ಲ. ಸಂಗೀತ ಕ್ಷೇತ್ರ ಬಹಳ ಖುಷಿ ಕೊಡುವ ಮತ್ತು ಬಹಳ ಕಷ್ಟದ ಕೆಲಸ. ಆದರೆ ಇವರ ಕುಟುಂಬ ಇದನ್ನು ಉಳಿಸಿಕೊಂಡು ಬಂದಿದೆ, ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಕೀಲ ರಾಜಶೇಖರ್ ಹಿಲ್ಯಾರು ಮಾತನಾಡಿದರು. ನಾಗರತ್ನ ವಿಷ್ಣುಪ್ರಸಾದ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಡಿ. ಹಷೇಂದ್ರ ಕುಮಾರ್, ಮೆಸ್ಕಾಂ ನಿಗಮದ ಹರೀಶ್ ಕುಮಾರ್, ಮುಖಂಡರಾದ ವಿನಯಕುಮಾರ್ ಸೊರಕೆ, ಪದ್ಮರಾಜ್ ಆರ್. ಪೂಜಾರಿ, ಇನಾಯತ್ ಆಲಿ, ಎಂ.ಎಸ್. ಮಹಮ್ಮದ್, ಮುರಳೀಧರ ರೈ, ಜಿ. ಕೃಷ್ಣಪ್ಪ ರಾಮಕುಂಜ, ಪಂಜಿಗುಡ್ಡೆ ಈಶ್ವರ ಭಟ್, ಧನ್ಯಕುಮಾರ್ ರೈ, ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜಿನಿ, ಕಾಂಚನ ಶ್ರುತಿರಂಜಿನಿ, ಕಾಂಚನ ಸುಮನಸರಂಜಿನಿ, ಶ್ರೀಧರ ಗೌಡ ನಡ್ಪ, ಮುಕುಂದ ಗೌಡ ಮೊದಲಾದವರು ಇದ್ದರು. ಕಾಂಚನ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಕೆ. ರೋಹಿಣಿ ಸುಬ್ಬರತ್ನಂ ಸ್ವಾಗತಿಸಿ ದರು. ಕೆ.ಯು. ಜಯಚಂದ್ರ ರಾವ್ ವಂದಿಸಿದರು. ಮೋಹನಚಂದ್ರ ಕಾಂಚನ, ಮಹೇಶ್ ಕಜೆ, ಗಣರಾಜ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ಹಕ್ಕು ಜಾರಿಗೆ ಆಗ್ರಹಿಸಿ ಯಾದಗಿರಿಯಲ್ಲಿ ಜಾಥಾ : ಜಿಲ್ಲಾಧಿಕಾರಿಗಳಿಗೆ ಮನವಿ
ಯಾದಗಿರಿ : ಡ್ರಗ್ ಎಕ್ಷನ್ ಫೋರಂ ಹಾಗೂ ವಿವಿಧ ಜನಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ “ಆರೋಗ್ಯ ಹಕ್ಕಿನ ಜಾಥಾ” ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಸುಭಾಷ್ ವೃತ್ತದಲ್ಲಿ ಬೆಳಗ್ಗೆ 11 ಗಂಟೆಗೆ ಬೇರು–ಬೆವರು ಸಂಸ್ಕೃತಿಕ ತಂಡ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನದ ಸಹಯೋಗದಲ್ಲಿ ಆರೋಗ್ಯ ಅರಿವು ಮೂಡಿಸುವ ಕಲಾಜಾಥ ಹಾಗೂ ಬೀದಿ ನಾಟಕ ಪ್ರದರ್ಶನ ನಡೆಯಿತು. ಬಳಿಕ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಡ್ರಗ್ ಎಕ್ಷನ್ ಫೋರಂ ಸದಸ್ಯೆ ಪ್ರೀಯಾಂಕಾ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸಾ ವೆಚ್ಚದಲ್ಲಿ ಶೇ.60ರಿಂದ 70ರಷ್ಟು ಹಣ ಔಷಧಗಳಿಗೆ ಖರ್ಚಾಗುತ್ತಿದೆ. ಆದ್ದರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಬೇಕು. ಸರ್ಕಾರಿ ವೈದ್ಯರು ರೋಗಿಗಳಿಗೆ ಹೊರಗಡೆ ಔಷಧ ಖರೀದಿಸಲು ಚೀಟಿ ಬರೆಯಬಾರದು ಮತ್ತು ಔಷಧಗಳ ಗುಣಮಟ್ಟಕ್ಕೆ ಸರ್ಕಾರವೇ ಹೊಣೆವಹಿಸಬೇಕು ಎಂದು ಒತ್ತಾಯಿಸಿದರು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಔಷಧ ಲಭ್ಯವಾಗಬೇಕು. ಜೊತೆಗೆ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಶುಲ್ಕಗಳಿಗೆ ಯಾವುದೇ ಮಿತಿ ಇಲ್ಲದಿರುವುದರಿಂದ ರೋಗಿಗಳು ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾರೆ. ಇದು ಸಂವಿಧಾನದ 21ನೇ ವಿಧಿಗೆ ವಿರುದ್ಧವಾಗಿದ್ದು, ಆಸ್ಪತ್ರೆ ಶುಲ್ಕಗಳ ಮೇಲೆ ಮಿತಿ ವಿಧಿಸುವುದು ರಾಜ್ಯ ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಹೇಳಿದರು. ತುಮಕೂರು, ವಿಜಯನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ ಹಾಗೂ ದಾವಣಗೆರೆ ಸೇರಿದಂತೆ ಏಳು ಜಿಲ್ಲಾ ಆಸ್ಪತ್ರೆಗಳನ್ನು ಪಿಪಿಪಿ (PPP) ಮಾದರಿಯಲ್ಲಿ ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಆರೋಗ್ಯವು ಎಲ್ಲಾ ಲಿಂಗ, ವರ್ಗ ಮತ್ತು ಜಾತಿಯವರ ಮೂಲಭೂತ ಹಕ್ಕಾಗಬೇಕು. ಬಡವರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಸ್ಲಂ ನಿವಾಸಿಗಳು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಶೋಷಿತ ಸಮುದಾಯಗಳಿಗೆ ಸಮಾನ ಹಾಗೂ ಸುಲಭ ಆರೋಗ್ಯ ಸೇವೆ ದೊರಕಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್, ಸಾಮಾಜಿಕ ಕಾರ್ಯಕರ್ತೆ ಮಾಯಾ ಎಸ್.ಆರ್. ನಾಯಕ, ಗೋಪಾಲ ತೆಳಗೇರಿ, ಕಲಾವಿದರಾದ ಶೃತಿ, ಮೌನಿಕ, ಚಲಪತಿ, ನಾರಾಯಣಸ್ವಾಮಿ, ಶರಣಬಸವ, ಚಿದಾನಂದಪ್ಪ ನರಸಿಂಹಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸೌದಿಯನ್ನು ಹಿಂದಿಕ್ಕಿ UAE ಈಗ ಭಾರತೀಯ ಕೈಗಾರಿಕಾ ಕಾರ್ಮಿಕರ ಆದ್ಯತೆಯ ದೇಶ
ಹೊಸದಿಲ್ಲಿ: ವಲಸೆ ಪ್ರವೃತ್ತಿಗಳ ಕುರಿತು ಸರಕಾರದ ಇತ್ತೀಚಿನ ದತ್ತಾಂಶಗಳ ಪ್ರಕಾರ, ಸಂಯುಕ್ತ ಅರಬ್ ಗಣರಾಜ್ಯವು (ಯುಎಇ) 2025ರಲ್ಲಿ ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಭಾರತೀಯ ಕೈಗಾರಿಕಾ ಕಾರ್ಮಿಕರ ಅತಿ ದೊಡ್ಡ ವಿದೇಶಿ ಗಮ್ಯಸ್ಥಾನವಾಗಿದೆ ಎಂದು ವರದಿಯಾಗಿದೆ. 2025ರಲ್ಲಿ 2,00,686 ಭಾರತೀಯ ಕೈಗಾರಿಕಾ ಕಾರ್ಮಿಕರು ಉದ್ಯೋಗಕ್ಕಾಗಿ ಯುಎಇಗೆ ತೆರಳಿದ್ದರೆ, ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದವರ ಸಂಖ್ಯೆ 1,36,812 ಆಗಿತ್ತು. ಹಿಂದಿನ ವರ್ಷ ಸೌದಿಗೆ 1,67,598 ಮತ್ತು ಯುಎಇಗೆ 1,11,308 ಭಾರತೀಯ ಕೈಗಾರಿಕಾ ಕಾರ್ಮಿಕರು ತೆರಳಿದ್ದರು. 2025ರಲ್ಲಿ ಒಟ್ಟು 4,49,110 ಕಾರ್ಮಿಕರು ಉದ್ಯೋಗವನ್ನರಸಿ 11 ಪ್ರಮುಖ ಕಾರ್ಮಿಕ ಆಮದು ದೇಶಗಳಿಗೆ ವಲಸೆ ಹೋಗಿದ್ದಾರೆ. 2024 ಮತ್ತು 2023ರಲ್ಲಿ ಈ ಸಂಖ್ಯೆ ಅನುಕ್ರಮವಾಗಿ 3,87,067 ಮತ್ತು 3,98,316 ಆಗಿತ್ತು. ಖತರ್ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಕೈಗಾರಿಕಾ ಕಾರ್ಮಿಕರಿಗೆ ಬೇಡಿಕೆ ಕ್ರಮೇಣ ಇಳಿಕೆಯಾಗಿದ್ದರೆ, ಒಮಾನ್ನಲ್ಲಿ ನಿರಂತರವಾಗಿ ಹೆಚ್ಚುತ್ತಿದೆ. ಭಾರೀ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ನಿರ್ಮಾಣ, ಲಾಜಿಸ್ಟಿಕ್ಸ್ ಮತ್ತು ತಯಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ, ಇತರ ದೇಶಗಳಿಗೆ ಹೋಲಿಸಿದರೆ ಶೇ.15ರಿಂದ ಶೇ.30ರಷ್ಟು ಹೆಚ್ಚಿನ ವೇತನ, ತೆರಿಗೆ ರಹಿತ ಆದಾಯ, ಗಳಿಕೆಯ ಸಂಪೂರ್ಣ ಹಣವನ್ನು ಭಾರತಕ್ಕೆ ಕಳುಹಿಸಲು ಅವಕಾಶ, ಭಾರತಕ್ಕೆ ಸಮೀಪತೆ, ಸುರಕ್ಷತೆ ಮತ್ತು ಕಡಿಮೆ ಪ್ರಯಾಣ ಅವಧಿ ಇವು ಯುಎಇ ಭಾರತೀಯ ಕೈಗಾರಿಕಾ ಕಾರ್ಮಿಕರ ನೆಚ್ಚಿನ ತಾಣವಾಗಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಾಗಿದೆ.
ಮುಲ್ಕಿ| ಶಾಫಿ ಜುಮಾ ಮಸೀದಿಯ ಅಧೀನಕ್ಕೊಳಪಟ್ಟ ನವೀಕೃತ ಮಸ್ಜಿದುನ್ನೂರ್ ಉದ್ಘಾಟನೆ
ಸರ್ವಧರ್ಮೀಯರ ಮಸೀದಿ ಸಂದರ್ಶನ ಕಾರ್ಯಕ್ರಮ
ಒಬಾಮಾರನ್ನು ಕೋತಿಗಳಂತೆ ಬಿಂಬಿಸುವ ವೀಡಿಯೊ ಪೋಸ್ಟ್ ಮಾಡಿದ ಟ್ರಂಪ್; ವ್ಯಾಪಕ ಖಂಡನೆ
ವಾಷಿಂಗ್ಟನ್: ಮಾಜಿ ಅಧ್ಯಕ್ಷ ಬರಾಕಾ ಒಬಾಮಾ ಮತ್ತು ಅವರ ಪತ್ನಿ ಮಿಷೆಲ್ ಒಬಾಮಾ ಅವರನ್ನು ಏಪ್ಸ್( ಬಾಲವಿಲ್ಲದ ದೊಡ್ಡ ಕೋತಿ)ಗಳಂತೆ ಬಿಂಬಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿದೆ. ಟ್ರುಥ್ ಸೋಷಿಯಲ್ ಅಕೌಂಟ್ನಲ್ಲಿ ಟ್ರಂಪ್ ಗುರುವಾರ ಪೋಸ್ಟ್ ಮಾಡಿರುವ 1 ನಿಮಿಷದ ವೀಡಿಯೊ, ತನ್ನ ವಿರುದ್ದ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ಎಸಗಲು ಮತ ಎಣಿಕೆ ಸಂಸ್ಥೆ ಡೊಮಿನಿಯನ್ ವೋಟಿಂಗ್ ಸಿಸ್ಟಮ್ಸ್ ಸಹಾಯ ಮಾಡಿದೆ ಎಂಬ ಸುಳ್ಳು ಆರೋಪಗಳನ್ನು ಪುನರಾವರ್ತಿಸಿದೆ. ವೀಡಿಯೊದ ಕೊನೆಯಲ್ಲಿ ಒಬಾಮಾ ಮತ್ತವರ ಪತ್ನಿ, `ದಿ ಲಯನ್ಸ್ ಸ್ಲೀಪ್ಟ್ ಟುನೈಟ್' ಹಾಡಿನೊಂದಿಗೆ ತಮ್ಮ ಮುಖಗಳನ್ನು ಕೋತಿಗಳ ದೇಹದಲ್ಲಿ ಇರಿಸಿಕೊಂಡು ಸಂಕ್ಷಿಪ್ತವಾಗಿ ಕಾಣಿಸಿಕೊಳ್ಳುತ್ತಾರೆ. ಶುಕ್ರವಾರದ ಬೆಳಗ್ಗಿನವರೆಗೆ 2,500ಕ್ಕೂ ಹೆಚ್ಚು `ಲೈಕ್ಸ್' ಪಡೆದಿರುವ ಈ ವೀಡಿಯೊ ಬಗ್ಗೆ ಡೆಮಾಕ್ರಟಿಕ್ ನಾಯಕರಿಂದ ಬಲವಾದ ಖಂಡನೆ, ಟೀಕೆ ವ್ಯಕ್ತವಾಗಿದೆ.
ಬೀದರ್ ನ ಕೆಕೆಆರ್ಟಿಸಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ : ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಬೀದರ್ : ಜಿಲ್ಲೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಕೆಕೆಆರ್ಟಿಸಿ) ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಬೀದರ್ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿ ಎದುರು ಸಮಿತಿ ಅಧ್ಯಕ್ಷ ಸೂರ್ಯಕಾಂತ್ ಟೈಗರ್ ಅವರ ನೇತೃತ್ವದಲ್ಲಿ ನೌಕರರು ಧರಣಿ ನಡೆಸಿದರು. ಈ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ, ಬೀದರ್ ವಿಭಾಗದ ಕೆಕೆಆರ್ಟಿಸಿಯಲ್ಲಿ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ದೀರ್ಘಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನಿಗಮದ ಸುತ್ತೋಲೆಗಳು ಹಾಗೂ ಸ್ಥಾಯಿ ಸಮಿತಿ ಆದೇಶಗಳನ್ನು ಉಲ್ಲಂಘಿಸಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಗೈರು ಹಾಜರಿದ್ದ ಸಿಬ್ಬಂದಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವೇತನ ಪಾವತಿ ಮಾಡಲಾಗಿದೆ. ಆಡಳಿತ ಸಿಬ್ಬಂದಿಗೆ ಸಡಿಲ ನೀತಿ ಅನುಸರಿಸಿ, ತಾಂತ್ರಿಕ ಸಿಬ್ಬಂದಿಗೆ ಮಾತ್ರ ಕಠಿಣ ಶಿಕ್ಷೆ ಜಾರಿಗೊಳಿಸಲಾಗುತ್ತಿದೆ. ಸ್ಥಾಯಿ ಸಮಿತಿ ಆದೇಶಗಳನ್ನು ಪಾಲಿಸದೆ ಅರ್ಹ ಸಿಬ್ಬಂದಿಯನ್ನು ವರ್ಗಾವಣೆ ಸೌಲಭ್ಯದಿಂದ ವಂಚಿಸಲಾಗಿದೆ. ಶಿಸ್ತು ಕ್ರಮಗಳನ್ನು ವಿಳಂಬಗೊಳಿಸುವ ಮೂಲಕ ನೌಕರರಿಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ದೂರಲಾಗಿದೆ. ಇದಲ್ಲದೆ, ಒಬ್ಬ ಬಿಡ್ದಾರರಿಗೆ ಎರಡು-ಮೂರು ಮಳಿಗೆಗಳನ್ನು ನೀಡಿರುವುದರಿಂದ ನಿಗಮಕ್ಕೆ ಆದಾಯ ನಷ್ಟ ಉಂಟಾಗಿದೆ. ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಿಸದೇ ನಿರ್ಲಕ್ಷ ವಹಿಸಲಾಗಿದೆ. ಕೆಲವು ಸಿಬ್ಬಂದಿಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸಲಾಗಿದೆ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಈ ಎಲ್ಲ ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತಕ್ಷಣ ಅಮಾನತು ಮಾಡಿ, ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಬೇಕು. ನೌಕರರ ಹಿತಾಸಕ್ತಿಗೆ ಧಕ್ಕೆ ತರುವ ಆಡಳಿತಾತ್ಮಕ ನಿರ್ಧಾರಗಳನ್ನು ಹಿಂಪಡೆಯಬೇಕು ಎಂದು ಸಂಘ ಒತ್ತಾಯಿಸಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ನೌಕರರ ಮೇಲೆ ಯಾವುದೇ ರೀತಿಯ ಕಿರುಕುಳ ಅಥವಾ ಶಿಸ್ತು ಕ್ರಮ ಕೈಗೊಂಡರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಪ್ರತಿಭಟನೆಯಲ್ಲಿ ಡಿಎಸ್ಎಸ್ ಜಿಲ್ಲಾಧ್ಯಕ್ಷ ಧನರಾಜ್ ಮುಸ್ತಪುರೆ, ಪರಮೇಶ್ವರ್ ವಾಘಮಾರೆ, ಪ್ರಕಾಶ್ ಸುಲೇಪೇಟಕರ್, ಯುವರಾಜ್ ಕೆ, ಗಣಪತಿ ಸಕ್ರಪನೂರ್, ಜಾನಸನ್ ಜನವಾಡಕ್, ರಾಮ್ ವಾಲಿಕರ್, ಅನಿಲ್ ಕುಮಾರ್ ಸಾಗರ್, ರಾಜಪ್ಪಾ ಬೋರಗಿ, ಪಂಡಿತ್ ಜನವಾಡ, ಚಂದ್ರಕಾಂತ್ ಉತ್ತಮ್, ಕುಪೇಂದ್ರ ಭಾಗ್ಯಕರ್, ಅಂಕುಶ್ ಕನಕಟ, ಅಬ್ರಾಮ್, ಜೀವನ್ ಧನ್ನೂರ್, ಮಲ್ಲಿಕಾರ್ಜುನ್ ಪಾಟೀಲ್, ವಿದ್ಯಾಧರ್ ಮೂಡಬಿ, ಕಾಶೀನಾಥ್ ಹಾಗೂ ರಾಜಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮುಂಬೈ: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ಷೇಪಾರ್ಹ ವಿಷಯವನ್ನು ತ್ವರಿತವಾಗಿ ನಿರ್ಬಂಧಿಸಲು, ತಕ್ಷಣವೇ ನಿಷ್ಕ್ರಿಯಗೊಳಿಸಲು ರಚಿಸಲಾದ ‘ಸಹಯೋಗ್ ಪೋರ್ಟಲ್’ ಅನ್ನು ರದ್ದುಗೊಳಿಸುವಂತೆ ಕೋರಿ ಸ್ಟ್ಯಾಂಡ್–ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತು ಹಿರಿಯ ವಕೀಲ ಹರೇಶ್ ಜಗ್ತಿಯಾನಿ ಬಾಂಬೆ ಹೈಕೋರ್ಟ್ಗೆ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ನಿಯಮ 3(1)(d) ಗೆ ಮಾಡಲಾದ ತಿದ್ದುಪಡಿಯನ್ನು ಕೂಡ ಅವರು ಪ್ರಶ್ನಿಸಿದ್ದಾರೆ. ನವೆಂಬರ್ 15, 2025 ರಿಂದ ಜಾರಿಗೆ ಬಂದ ನಿಯಮ 3(1)(d) ತಿದ್ದುಪಡಿಗಳ ಮೂಲಕ ಮಧ್ಯವರ್ತಿಗಳು ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪಾರದರ್ಶಕ ರೀತಿಯಲ್ಲಿ ನಡೆಸುವುದನ್ನು ಖಚಿತಪಡಿಸಲು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಆದರೆ ಅರ್ಜಿದಾರರು ಈ ತಿದ್ದುಪಡಿಗಳು ವಾಕ್ ಸ್ವಾತಂತ್ರ್ಯದ ಮೇಲೆ ಅಸಂವಿಧಾನಿಕ ಹಾಗೂ ಅಸಮಂಜಸ ನಿರ್ಬಂಧ ಹೇರುತ್ತವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಮಾರ್ಚ್ 16 ರಂದು ಈ ಅರ್ಜಿಗಳ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಫೆ. 4 ರಂದು ವಕೀಲ ಮೀನಾಜ್ ಕಾಕಾಲಿಯಾ ಮೂಲಕ ಸಲ್ಲಿಸಲಾದ ಅರ್ಜಿಗಳಲ್ಲಿ, “ಸಹಯೋಗ್ ಪೋರ್ಟಲ್ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾವಿರಾರು ಅಧಿಕಾರಿಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಕಡ್ಡಾಯಗೊಳಿಸಲಾದ ಕಾರ್ಯವಿಧಾನವನ್ನು ಅನುಸರಿಸದೇ, ಕಾನೂನುಬಾಹಿರವಾಗಿ ತೆಗೆದುಹಾಕುವ ಅಧಿಕಾರವನ್ನು ಕಾನೂನುಬಾಹಿರವಾಗಿ ನೀಡಲಾಗಿದೆ” ಎಂದು ಆರೋಪಿಸಲಾಗಿದೆ. ತಿದ್ದುಪಡಿ ಮಾಡಿದ ನಿಯಮ 3(1)(d) ಹಾಗೂ ಸಹಯೋಗ್ ಪೋರ್ಟಲ್ ಅಸಂವಿಧಾನಿಕವಾಗಿದ್ದು, ಇಂಟರ್ನೆಟ್ ಪ್ಲಾಟ್ಫಾರ್ಮ್ಗಳಲ್ಲಿನ ಮಾಹಿತಿಯನ್ನು ಸಂಪೂರ್ಣವಾಗಿ ಅಸ್ಪಷ್ಟ ಆಧಾರದ ಮೇಲೆ ನಿರ್ಬಂಧಿಸಲು ಅಥವಾ ತೆಗೆದುಹಾಕಲು ಅವಕಾಶ ಮಾಡಿಕೊಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. “ಇಂತಹ ಅಧಿಕಾರಗಳು ಸಂವಿಧಾನದ ವಿಧಿ 19(2) ಅಡಿಯಲ್ಲಿ ಸಮಗ್ರವಾಗಿ ಪಟ್ಟಿ ಮಾಡಲಾದ ಸಾಂವಿಧಾನಿಕವಾಗಿ ಅನುಮತಿಸಲಾದ ಆಧಾರಗಳನ್ನು ಮೀರಿದ ವಾಕ್ ಸ್ವಾತಂತ್ರ್ಯದ ಮೇಲೆ ಅಸಂವಿಧಾನಿಕ ನಿರ್ಬಂಧಕ್ಕೆ ಸಮನಾಗುತ್ತದೆ” ಎಂದು ಕುನಾಲ್ ಕಮ್ರಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿದಾರರ ಪ್ರಕಾರ, ತಿದ್ದುಪಡಿ ನಿಯಮ ಮತ್ತು ಪೋರ್ಟಲ್, ಸಂವಿಧಾನದ ವಿಧಿ 19(1)(a), 19(1)(g) ಹಾಗೂ ವಿಧಿ 14 ಅಡಿಯಲ್ಲಿ ದೊರೆಯುವ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇವು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ವ್ಯಾಪ್ತಿಯನ್ನು ಮೀರಿವೆ. ಆದ್ದರಿಂದ ಇವುಗಳನ್ನು “ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಅನೂರ್ಜಿತ” ಎಂದು ಘೋಷಿಸಿ ರದ್ದುಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ. “ಸಹಯೋಗ್ ಪೋರ್ಟಲ್ ಮೂಲಕ ನೋಟಿಸ್ ನೀಡುವುದು, ಸೇರಿದಂತೆ ಕಡ್ಡಾಯ ಕಾನೂನು ಕ್ರಮಗಳನ್ನು ಪಾಲಿಸದೇ ಇಂಟರ್ನೆಟ್ನಲ್ಲಿ ವಿಷಯವನ್ನು ಏಕಪಕ್ಷೀಯವಾಗಿ ನಿರ್ಬಂಧಿಸಲು ಅಥವಾ ತೆಗೆದುಹಾಕಲು ಸಾಧ್ಯವಾಗುತ್ತದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಯಲ್ಲಿ ಸಹಯೋಗ್ ಪೋರ್ಟಲ್ “ಅಂತರ್ಜಾಲದಲ್ಲಿನ ಎಲ್ಲಾ ಮಾಹಿತಿಯನ್ನು ಅನಿಯಂತ್ರಿತ ತೆಗೆದುಹಾಕುವಿಕೆಗೆ ಗುರಿಪಡಿಸುತ್ತದೆ. ಇಂತಹ ಕ್ರಮದ ವಿರುದ್ಧ ಯಾವುದೇ ಪರಿಹಾರವನ್ನು ಒದಗಿಸುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾವಿರಾರು ಸರ್ಕಾರಿ ಅಧಿಕಾರಿಗಳಿಗೆ ಇಂಟರ್ನೆಟ್ನಲ್ಲಿನ ಮಾಹಿತಿ ಹರಿವಿನ ಮೇಲೆ ಅನಿಯಂತ್ರಿತ ಅಧಿಕಾರವನ್ನು ಪರಿಣಾಮಕಾರಿಯಾಗಿ ನೀಡುತ್ತದೆ. ಇದು ಪ್ರಜಾಪ್ರಭುತ್ವ ಮತ್ತು ನಾಗರಿಕರ ಮಾಹಿತಿ ಹಕ್ಕಿನ ಮೇಲೆ ದಾಳಿ” ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ಅಕ್ಟೋಬರ್ 31, 2023 ರಂದು ಸಹಯೋಗ್ ಪೋರ್ಟಲ್ ರಚನೆಗೆ ಕಾರಣವಾದ ಮನವಿಯನ್ನು ರದ್ದುಗೊಳಿಸಲು ಹಾಗೂ ಅರ್ಜಿಯ ವಿಚಾರಣೆ ಮತ್ತು ಅಂತಿಮ ತೀರ್ಪು ಬಾಕಿ ಇರುವವರೆಗೆ ಪೋರ್ಟಲ್ ಅನ್ನು ಅಮಾನತುಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ. ನಿಯಮ 3(1)(d) ತಿದ್ದುಪಡಿ ಮತ್ತು ಸೆಕ್ಷನ್ 69A ಅಡಿಯಲ್ಲಿ ಅಗತ್ಯವಿರುವ ಕಾರ್ಯವಿಧಾನವಿಲ್ಲದೆ ಯಾವುದೇ ಮಾಹಿತಿಯನ್ನು ನಿರ್ಬಂಧಿಸುವ ಅಥವಾ ತೆಗೆದುಹಾಕುವ ಕುರಿತು ಯಾವುದೇ ಅಧಿಕಾರಿಯಿಂದ ಯಾವುದೇ ಆದೇಶಗಳನ್ನು ಹೊರಡಿಸಬಾರದು ಎಂದು ಮಧ್ಯಂತರ ನಿರ್ದೇಶನ ನೀಡುವಂತೆ ಕೂಡ ಮನವಿ ಮಾಡಿದ್ದಾರೆ. ಈ ಹಿಂದೆ, ಸೆಪ್ಟೆಂಬರ್ 2024 ರಲ್ಲಿ, ಕುನಾಲ್ ಕಾಮ್ರಾ ಮತ್ತು ಇತರರು ಸಲ್ಲಿಸಿದ ಮನವಿಯ ಮೇರೆಗೆ ಬಾಂಬೆ ಹೈಕೋರ್ಟ್ 2:1 ಬಹುಮತದ ತೀರ್ಪಿನ ಮೂಲಕ, ಸಾಮಾಜಿಕ ಮಾಧ್ಯಮದಲ್ಲಿ “ಸುಳ್ಳು ಸುದ್ದಿ” ಗುರುತಿಸಲು ಸತ್ಯ ಪರಿಶೀಲನಾ ಘಟಕವನ್ನು ಸ್ಥಾಪಿಸಲು ಸರ್ಕಾರಕ್ಕೆ ಅವಕಾಶ ನೀಡಿದ್ದ ತಿದ್ದುಪಡಿ ಐಟಿ ನಿಯಮಗಳನ್ನು ರದ್ದುಗೊಳಿಸಿತ್ತು.
ಕಲಬುರಗಿ ಜಿಲ್ಲಾ ಪಂಚಾಯತ್ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ
49.65 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿದೆ ಭವ್ಯ ಕಟ್ಟಡ
ಜನಾರ್ದನ ಪೂಜಾರಿ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ
ಬಂಟ್ವಾಳ : ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರ ಬಂಟ್ವಾಳದ ನಿವಾಸಕ್ಕೆ ರಾಜ್ಯದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶುಕ್ರವಾರ ಪುತ್ತೂರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿಎಂ ಅವರು ಈ ಮಧ್ಯೆ ಪೂಜಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ಜನಾರ್ದನ ಪೂಜಾರಿ ಅವರು ಸದಾ ಜನಪರ ಚಿಂತನೆಗ ಳೊಂದಿಗೆ ಕಾರ್ಯನಿರ್ವಹಿಸಿದವರು. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದದ್ದು ಸಂತಸವನ್ನುಂಟು ಮಾಡಿತು ಎಂದು ಡಿಕೆಶಿ ಹೇಳಿದ್ದಾರೆ. ಈ ಸಂದರ್ಭ ಮಾಜಿ ಸಚಿವ ಬಿ ರಮಾನಾಥ ರೈ, ಪಕ್ಷ ಪ್ರಮುಖರಾದ ಇನಾಯತ್ ಅಲಿ, ಬೇಬಿ ಕುಂದರ್, ಹರೀಶ್ ಕುಮಾರ್, ಪದ್ಮರಾಜ್ ಆರ್ ಪೂಜಾರಿ ಮೊದಲಾದವರು ಜೊತೆಗಿದ್ದರು.
ಬಿಡಿಎ ಕಾರ್ಯಾಚರಣೆ; ಜೆ.ಪಿ.ನಗರದಲ್ಲಿ 130 ಕೋಟಿ ರೂ.ಮೌಲ್ಯದ ಆಸ್ತಿ ವಶ
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಶುಕ್ರವಾರದಂದು ಜೆ.ಪಿ. ನಗರದ 9ನೇ ಫೇಸ್ ಬಡಾವಣೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿ 130 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಆಲಹಳ್ಳಿ ಗ್ರಾಮದ ಸರ್ವೆ ನಂ. 20ರಲ್ಲಿ 3 ಎಕರೆ ಪ್ರದೇಶಗಳಲ್ಲಿ ಅನಧಿಕೃವಾಗಿ ನಿರ್ಮಾಣಗಳನ್ನು ತೆರವುಗೊಳಿಸಿ, ಸುಮಾರು 130 ಕೋಟಿ ರೂ. ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ವಶಕ್ಕೆ ಪಡೆದಿದೆ. ಕಾರ್ಯಾಚರಣೆಯ ವೇಳೆ ಪ್ರಾಧಿಕಾರದ ಕಾರ್ಯನಿರತ ಪಡೆಯ ಉಪ ಆರಕ್ಷಕ ಅಧೀಕ್ಷಕರು, ವಲಯ ಆಯುಕ್ತರು, ಅಭಿಯಂತರ ಅಧಿಕಾರಿ, ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.
ಕಲಬುರಗಿ ನಗರದಲ್ಲಿ ಜಿಲ್ಲಾಧಿಕಾರಿಗಳಿಂದ ರಸ್ತೆ ದುರಸ್ತಿ, ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ
ಕಲಬುರಗಿ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಶುಕ್ರವಾರ ಕಲಬುರಗಿ ನಗರದಲ್ಲಿ ಸಂಚರಿಸಿ, ಮಹಾನಗರ ಪಾಲಿಕೆಯಿಂದ ನಗರಾದ್ಯಂತ ನಡೆಯುತ್ತಿರುವ ರಸ್ತೆ ಸುಧಾರಣೆ, ದುರಸ್ತಿ, ಒಳಚರಂಡಿ ನಿರ್ಮಾಣ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಪರಿಶೀಲಿಸಿದರು. ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಕೆಆರ್ಡಿಬಿ ವತಿಯಿಂದ 2 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಕಲ್ವರ್ಟ್ ಕಾಮಗಾರಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಈ ಪ್ರದೇಶದಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಂತರ ಹಳೇ ಜೇವರ್ಗಿ ರಸ್ತೆಯ ಮೋಹನ ಲಾಡ್ಜ್ನಿಂದ ರಾಮ ಮಂದಿರ ಸರ್ಕಲ್ ವರೆಗೆ ಎನ್ಸಿಎಪಿ ಯೋಜನೆಯಡಿ 1.20 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಹಾಗೂ ಮೂರು ವರ್ಷಗಳ ನಿರ್ವಹಣಾ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ಇದೇ ವೇಳೆ ಸುಮಾರು 87 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾದ ಪಾಟ್ಹೋಲ್ ಫಿಲ್ಲಿಂಗ್ ಯಂತ್ರಗಳ ಮೂಲಕ ನಡೆಯುತ್ತಿರುವ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನೂ ವೀಕ್ಷಿಸಿದರು. ಇದಲ್ಲದೆ, ನ್ಯಾಷನಲ್ ಗ್ರೀನ್ ಟ್ರಿಬುನಲ್ (ಎನ್ಜಿಟಿ) ಯೋಜನೆಯಡಿ 40 ಕೋಟಿ ರೂ. ವೆಚ್ಚದಲ್ಲಿ ಖರ್ಗೆ ಪೆಟ್ರೋಲ್ ಪಂಪ್ನಿಂದ ಅನ್ನಪೂರ್ಣ ಕ್ರಾಸ್ ರಸ್ತೆಯ ಸ್ವದೇಶಿ ಭವನವರೆಗೆ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರು ಜಂಟಿಯಾಗಿ ಪರಿಶೀಲಿಸಿದರು. ಖರ್ಗೆ ಪೆಟ್ರೋಲ್ ಪಂಪ್ ಹಾಗೂ ರಾಮ ಮಂದಿರ ಸರ್ಕಲ್ನಲ್ಲಿನ ಸಂಚಾರಿ ಸಿಗ್ನಲ್ಗಳನ್ನು ಒಂದು ವಾರದೊಳಗೆ ದುರಸ್ತಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ನಾಲ್ಕು ಸರ್ಕಲ್ ಸೌಂದರ್ಯೀಕರಣ : ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ತನ್ನ ಅನುದಾನದಲ್ಲಿ ರಾಮ ಮಂದಿರ ಸರ್ಕಲ್, ಅಫಜಲಪೂರ ಸರ್ಕಲ್, ಆಳಂದ ರಸ್ತೆ ಸರ್ಕಲ್ ಹಾಗೂ ಹುಮನಾಬಾದ್ ರಸ್ತೆ ಸರ್ಕಲ್ಗಳಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸೌಂದರ್ಯೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ರಾಮ ಮಂದಿರ ಸರ್ಕಲ್ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಪ್ರಾಧಿಕಾರದ ಪ್ರಭಾರಿ ಆಯುಕ್ತ ಶಿವಕುಮಾರ ಪಾಟೀಲ ಹಾಗೂ ಎಇಇ ಸುಭಾಷ ನಾಯಕ್ ಅವರು ಯೋಜನೆಗಳ ಕುರಿತು ಜಿಲ್ಲಾಧಿಕಾರಿಗೆ ವಿವರ ನೀಡಿದರು. ಇದೇ ವೇಳೆ ಮಹಾನಗರ ಪಾಲಿಕೆಯಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಖರ್ಗೆ ಪೆಟ್ರೋಲ್ ಪಂಪ್ ಸರ್ಕಲ್ನನ್ನೂ ಪರಿಶೀಲಿಸಲಾಯಿತು. ಪರಿಶೀಲನೆ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರ ದತ್ತಾತ್ರೇಯ, ಕಾರ್ಯನಿರ್ವಾಹಕ ಅಭಿಯಂತರ ಪುರುಷೋತ್ತಮ, ಕಲಬುರಗಿ ನಗರ ಸಂಚಾರ ವಿಭಾಗದ ಡಿಎಸ್ಪಿ ಸುಧಾ ಆದಿ, ಸಿಪಿಐ ಶಕೀಲ ಅಂಗಡಿ ಸೇರಿದಂತೆ ಪಾಲಿಕೆ, ಪ್ರಾಧಿಕಾರ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ
ಬಂಟ್ವಾಳ : ಯುವಕನೋರ್ವನ ಮೃತದೇಹ ಬಿ ಮೂಡ ಗ್ರಾಮದ ಗೂಡಿನಬಳಿ ಕಂಚಿಕಾರ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪ್ರಕಾಶ್ ಪೂಜಾರಿ (34) ಎಂದು ಹೆಸರಿಸಲಾಗಿದೆ. ಈತ ಕೂಲಿ ಕಾರ್ಮಿಕನಾಗಿದ್ದು, ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಎನ್ನಲಾಗಿದೆ. ಫೆ.4 ರಂದು ರಾತ್ರಿ 10 ಗಂಟೆಗೆ ಅಮ್ಮನಿಗೆ ಫೋನ್ ಮಾಡಿ ಮಾತನಾಡಿದ್ದು, ಬಳಿಕ ಫೆ 5 ರಂದು ಸಂಜೆ 6 ಗಂಟೆ ವೇಳೆಗೆ ಈತನ ಮೃತದೇಹ ಗೂಡಿನಬಳಿ ನೇತ್ರಾವತಿ ನದಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಬಳಿಕ ಸ್ಥಳೀಯ ಈಜುಗಾರ ಯುವಕರ ತಂಡ ನದಿಯಿಂದ ಮೇಲಕ್ಕೆತ್ತಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೃತರ ಸಹೋದರಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಾಜಕ್ಕೆ ಆದ ನೋವನ್ನು ಸಿನಿಮಾಗಳು ದಾಖಲಿಸಬೇಕು : ಪ್ರಕಾಶ್ ರಾಜ್
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಪ್ರದಾನ-ಸಮಾರೋಪ ಸಮಾರಂಭ
Kalaburagi | ಸರಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಕಲಬುರಗಿ : ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಶುಕ್ರವಾರ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿದರು. ಕಂದಾಯ ಇಲಾಖೆಯಿಂದ ಗುತ್ತಿಗೆ ಅವಧಿ ವಿಸ್ತರಣೆಯ ಹಿನ್ನೆಲೆಯಲ್ಲಿ ವಿಧಿಸಲಾದ 2 ಕೋಟಿ 3.7 ಲಕ್ಷ ರೂ. ಗುತ್ತಿಗೆ ಶುಲ್ಕವನ್ನು ಭರಿಸಲು ಆದೇಶಿಸಲಾಗಿದೆ. ಆದರೆ ಸರ್ಕಾರಿ ನೌಕರರ ಸಂಘಕ್ಕೆ ಯಾವುದೇ ಆದಾಯ ಮೂಲಗಳಿಲ್ಲ. ಹೀಗಾಗಿ ವಿಧಿಸಲಾದ ಗುತ್ತಿಗೆ ಶುಲ್ಕವನ್ನು ಸಂಪೂರ್ಣವಾಗಿ ವಿನಾಯಿತಿಗೊಳಿಸಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳುಂಡಗಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು, ಜಿಲ್ಲಾ ಸರ್ಕಾರಿ ನೌಕರರ ಭವನದ ನಿವೇಶನಕ್ಕೆ ವಿಧಿಸಲಾದ ಗುತ್ತಿಗೆ ಶುಲ್ಕವನ್ನು ವಿನಾಯಿತಿಗೊಳಿಸುವ ಕುರಿತು ಸರ್ಕಾರಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಧರ್ಮರಾಯ ಜವಳಿ, ಚಂದ್ರಕಾಂತ ಏರಿ, ಎಂ.ಬಿ. ಪಾಟೀಲ, ಕೃಷ್ಣಚಾರಿ ಜೋಶಿ, ರಾಜೇಶ ನೀಲಳ್ಳಿ, ಸಂತೋಷ ಸಲಗರ, ಅಣ್ಣಾರಾಯ ಹಾಬಾಳಕರ, ಪೀರಪ್ಪ, ರಾಜಶೇಖರ ಕುರಿಕೊಟಾ, ಆನಂದ, ಹುಸೇನ್ ಪಾಶಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
Kalaburagi | ಶಿಕ್ಷಣದ ಜ್ಯೋತಿ ಹೊತ್ತಿಸಿದವರು ಮಹಾದೇವಪ್ಪ ರಾಂಪುರೆ : ಡಾ.ಮಹೇಶ್ ಗಂವ್ಹಾರ
ಕಲಬುರಗಿ : ಅಂದಿನ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿ ಸಮಾಜಕ್ಕೆ ದಾರಿ ತೋರಿದ ಮಹಾನ್ ವ್ಯಕ್ತಿ ಮಹಾದೇವಪ್ಪ ರಾಂಪುರೆ ಅವರಾಗಿದ್ದಾರೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಮಹೇಶ್ ಗಂವ್ಹಾರ ಹೇಳಿದರು. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಲಿಂಗೈಕ್ಯ ಮಹಾದೇವಪ್ಪ ರಾಂಪುರೆ ಅವರ 53ನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಂಪುರೆ ಅವರು ತಮ್ಮ ಬದುಕನ್ನು ಮಾತ್ರವಲ್ಲದೆ ಈ ಭಾಗದ ಜನರ ಬದುಕನ್ನೂ ರೂಪಿಸಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಇಡೀ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕರಾದ ಆನಂದ ಪಾಟೀಲ, ಸವಿತಾ ಪಾಟೀಲ, ಜಾನಕಿ ಪಾಟೀಲ, ಸರಸ್ವತಿ ರಾಜಶ್ರೀ, ಝೈಬಾ ಅಖ್ತರ್, ಬೋಧಕೇತರ ಸಿಬ್ಬಂದಿ ಅನಸುಯಾ ಗಾದಾ, ಪ್ರೀತಿ ಸೊರಡೆ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಮಂಗಳೂರು ವಿಮಾನ ನಿಲ್ದಾಣ: ಜನವರಿಯಲ್ಲಿ 2,45,708 ಪ್ರಯಾಣಿಕರ ನಿರ್ವಹಣೆ
ಮಂಗಳೂರು: ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಜನವರಿಯಲ್ಲಿ ಒಟ್ಟು 2,45,708 ನಿರ್ವಹಿಸಲಾಗಿದೆ. ಈ ಪೈಕಿ ದೇಶೀಯ 1,63,966 ಅಂತರ್ರಾಷ್ಟ್ರೀಯ 81742 ಆಗಿರುತ್ತದೆ. 2020 ಅಕ್ಟೋಬರ್ 2020ರ ಬಳಿಕ ಗರಿಷ್ಠ ಪ್ರಯಾಣಿಕರ ನಿರ್ವಹಣೆ ಆಗಿದೆ. ಜನವರಿಯಲ್ಲಿ ಒಟ್ಟು ವಿಮಾನಗಳ ಹಾರಾಟ 1,624 , ದೇಶೀಯ 1,141, ಅಂತರ್ರಾಷ್ಟ್ರೀಯ 425, ಸಾಮಾನ್ಯ ವಿಮಾನಯಾನ 58. ಅಂತರ್ರಾಷ್ಟ್ರೀಯ ಮಟ್ಟದಲ್ಲಿ 425 ವಿಮಾನಗಳ ಹಾರಾಟ ಡಿಸೆಂಬರ್ 2025 ಬಳಿಕ ಗರಿಷ್ಠ ಆಗಿದೆ ಎಂ ಪ್ರಕಟನೆ ತಿಳಿಸಿದೆ.
ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಉಳಿಕೆ ಪ್ರಮಾಣ ಇಳಿಕೆ: ಸಚಿವ ಡಾ. ಸುಧಾಕರ್
76ನೇ ಭಾರತೀಯ ದಂತ ವೈದ್ಯಕೀಯ ಸಮ್ಮೇಳನಕ್ಕೆ ಚಾಲನೆ
ಕಲಬುರಗಿ | ವಿಧಾನ ಪರಿಷತ್ತಿನಲ್ಲಿ ಮಾಜಿ ಸಚಿವೆಗೆ ಏಕವಚನ ಸಂಭೋಧನೆ ಖಂಡನೀಯ: ಕ್ಷಮೆಯಾಚಿಸುವಂತೆ ಜನವಾದಿ ಸಂಘಟನೆ ಆಗ್ರಹ
ಕಲಬುರಗಿ : ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಭಾಧ್ಯಕ್ಷರು ಮಹಿಳಾ ಸದಸ್ಯೆಯನ್ನು ಏಕವಚನದಲ್ಲಿ ಸಂಭೋಧಿಸಿರುವುದು ಅತ್ಯಂತ ಖಂಡನೀಯವಾಗಿದ್ದು, ಇದು ಸದನದ ಘನತೆಗೆ ಧಕ್ಕೆ ತಂದಿರುವ ಗಂಭೀರ ಘಟನೆಯಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಲಬುರಗಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಕಿರಣಗಿ ಹಾಗೂ ಪ್ರಧಾನ ಕಾರ್ಯದರ್ಶಿ ಶಾಂತಾ ಸರಡಗಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ, ಮಾಜಿ ಸಚಿವೆ ಉಮಾಶ್ರೀ ಅವರನ್ನು ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಅವರು ಏಕವಚನದಲ್ಲಿ ಸಂಭೋಧಿಸಿ, ಸಿನಿಮಾ ರಂಗವನ್ನು ಉಲ್ಲೇಖಿಸಿ ಕೇವಲವಾಗಿ ಮಾತನಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಮಹಿಳೆಯರ ಗೌರವ ಮತ್ತು ಘನತೆಗೆ ಕುಂದುಂಟು ಮಾಡುವ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ತಿನ ಅತ್ಯಂತ ಹಿರಿಯ ಸದಸ್ಯರಾಗಿದ್ದು, ಹಲವು ಅವಧಿಗಳಲ್ಲಿ ಸಭಾಧ್ಯಕ್ಷರ ಸ್ಥಾನವನ್ನು ವಹಿಸಿಕೊಂಡ ಅನುಭವ ಹೊಂದಿದ್ದಾರೆ. ಇಂತಹ ಅನುಭವೀ ವ್ಯಕ್ತಿಯಿಂದ ಈ ರೀತಿಯ ವರ್ತನೆ ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಸಂಘಟನೆ ತಿಳಿಸಿದೆ. ಈ ಹಿಂದೆ ಕೂಡ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಕುರಿತು ಕೇವಲವಾಗಿ ಮಾತನಾಡಿದ ಘಟನೆ ನಡೆದಿದ್ದು, ಇದೀಗ ಅದೇ ರೀತಿಯ ಮತ್ತೊಂದು ಘಟನೆ ಮರುಕಳಿಸಿರುವುದು ಅತ್ಯಂತ ದುಃಖಕರ ಮತ್ತು ಖಂಡನೀಯವಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಸಭಾಧ್ಯಕ್ಷರು ಸೇರಿದಂತೆ ಪರಿಷತ್ತಿನ ಎಲ್ಲಾ ಸದಸ್ಯರು ತಮ್ಮ ಸ್ಥಾನಗಳ ಘನತೆಯನ್ನು ಕಾಪಾಡಿಕೊಂಡು ನಡೆದುಕೊಳ್ಳಬೇಕು. ಉಮಾಶ್ರೀ ಅವರನ್ನು ಅವಮಾನಕರವಾಗಿ ಸಂಭೋಧಿಸಿರುವುದಕ್ಕೆ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
ಆರ್ಬಿಐನ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ: ರೆಪೊ ದರದಲ್ಲಿ ಯಥಾಸ್ಥಿತಿ ಮುಂದುವರಿಕೆ
ಮುಂಬೈ: ಆರ್ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಿದ್ದು, ರೆಪೊ ದರದಲ್ಲಿ ಶೇ.5.25ರ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಸಂಜಯ ಮಲ್ಹೋತ್ರಾ ಅವರು,ವಿಕಸನಗೊಳ್ಳುತ್ತಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಒಟ್ಟಾರೆ ಆರ್ಥಿಕ ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ಬಳಿಕ ಎಂಪಿಸಿ ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು. ಇದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಬಜೆಟ್ ಮಂಡಿಸಿದ ನಂತರದ ಮೊದಲ ಹಣಕಾಸು ನೀತಿ ಪುನರ್ಪರಿಶೀಲನೆಯಾಗಿದೆ. ಹಿಂದಿನ ಎಂಪಿಸಿ ಸಭೆಯ ಬಳಿಕ ಬಾಹ್ಯ ಅಡೆತಡೆಗಳು ತೀವ್ರಗೊಂಡಿವೆಯಾದರೂ ಇತ್ತೀಚಿನ ವ್ಯಾಪಾರ ಒಪ್ಪಂದಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದು ಆರ್ಥಿಕ ಮುನ್ನೋಟಕ್ಕೆ ಪೂರಕವಾಗಿದೆ ಎಂದು ಮಲ್ಹೋತ್ರಾ ತಿಳಿಸಿದರು. ದೇಶೀಯ ಹಣದುಬ್ಬರ ಮತ್ತು ಬೆಳವಣಿಗೆ ಮುನ್ನೋಟ ಧನಾತ್ಮಕವಾಗಿ ಉಳಿದುಕೊಂಡಿವೆ ಎಂದ ಅವರು,ಭಾರತೀಯ ಆರ್ಥಿಕತೆಯು ಸ್ಥಿತಿ ಸ್ಥಾಪಕತ್ವವನ್ನು ಕಾಯ್ದುಕೊಂಡಿದೆ ಎಂದು ಹೇಳಿದರು. ಮುಂದಿನ ಎರಡು ತಿಂಗಳುಗಳಿಗೆ ನೈಜ ಜಿಡಿಪಿ ಬೆಳವಣಿಗೆಯನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ. 2025-26ನೇ ಸಾಲಿಗೆ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಶೇ.2.1 ಆಗಿರಲಿದೆ ಎಂದು ಅಂದಾಜಿಸಲಾಗಿದೆ ಎಂದು ಮಲ್ಹೋತ್ರಾ ತಿಳಿಸಿದರು. ಡಿ.5, 2025ರಂದು ನಡೆದಿದ್ದ ಹಿಂದಿನ ಎಂಪಿಸಿ ಸಭೆಯು ನೀತಿ ರೆಪೊ ದರವನ್ನು ಶೇ.0.25ರಷ್ಟು ತಗ್ಗಿಸಿ ಶೇ.5.25ಕ್ಕೆ ನಿಗದಿಗೊಳಿಸಿತ್ತು. ಲೀಡ್ ಬ್ಯಾಂಕ್ ದತ್ತಾಂಶಗಳ ಉತ್ತಮ ನಿರ್ವಹಣೆಗಾಗಿ ಏಕೀಕೃತ ಪೋರ್ಟಲ್ ಸ್ಥಾಪನೆ,ಎನ್ಬಿಎಫ್ಸಿಗಳು ಹೊಸ ಶಾಖೆಗಳನ್ನು ಆರಂಭಿಸಲು ಮಾನದಂಡಗಳಲ್ಲಿ ಸಡಿಲಿಕೆ ಸೇರಿದಂತೆ ಹಲವು ಪ್ರಸ್ತಾವಗಳನ್ನು ಆರ್ಬಿಐ ಗವರ್ನರ್ ಶುಕ್ರವಾರ ಪ್ರಕಟಿಸಿದರು. ಕೆಲವು ಸುರಕ್ಷತಾ ಕ್ರಮಗಳೊಂದಿಗೆ ಬ್ಯಾಂಕುಗಳು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ಗಳಿಗೆ ಸಾಲ ನೀಡಲು ಆರ್ಬಿಐ ಅನುಮತಿ ನೀಡಲಿದೆ ಎಂದು ಮಲ್ಹೋತ್ರಾತಿಳಿಸಿದರು. ಆರ್ಥಿಕತೆಯ ಉತ್ಪಾದಕ ಅಗತ್ಯಗಳನ್ನು ಪೂರೈಸಲು ಆರ್ಬಿಐ ನಗದು ಲಭ್ಯತೆ ನಿರ್ವಹಣೆಯಲ್ಲಿ ಸಕ್ರಿಯ ಪಾತ್ರವನ್ನು ಹೊಂದಿರಲಿದೆ ಎಂದರು.
ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ
ಉಡುಪಿ, ಫೆ.6: ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರ ವತಿಯಿಂದ 2024ರ ಜನವರಿಯಿಂದ ಡಿಸೆಂಬರ್ ತಿಂಗಳವರೆಗೆ ಹಾಗೂ 2025ರ ಜನವರಿಯಿಂದ ಡಿಸೆಂಬರ್ ತಿಂಗಳವರೆಗಿನ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಆಯ್ದ ಉತ್ತಮ ಪುಸ್ತಕಗಳಿಗೆ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ 2024 ಹಾಗೂ 2025ನೇ ಸಾಲಿನ ಅವಧಿಯಲ್ಲಿ ಅಂದರೆ ಜನವರಿ ತಿಂಗಳಿನಿಂದ ಡಿಸೆಂಬರ್ ತಿಂಗಳ ಅಂತ್ಯದವರೆಗೆ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, (ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಹೀಗೆ ಏಳು ಪ್ರಕಾರದ ಮಕ್ಕಳ ಸಾಹಿತ್ಯದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಪ್ರಶಸ್ತಿಗಾಗಿ ಪರಿಗಣಿಸಲು ಪ್ರತಿಯೊಂದು ಕೃತಿಯ 4 ಪ್ರತಿಗಳನ್ನು ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ಫೆಬ್ರವರಿ 20ರ ಒಳಗೆ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇ-ಔಟ್ ಹಿಂಭಾಗ, ಕೆ.ಹೆಚ್.ಬಿ ಕಾಲೋನಿ, ಲಕಮನಹಳ್ಳಿ, ಧಾರವಾಡ- 580004 ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:0836-2465490ನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ರಾಯಚೂರು | ಆಡಳಿತದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಪ್ರಮುಖ ಪಾತ್ರ ವಹಿಸಿದೆ: ಆಯುಕ್ತ ಜುಬಿನ್ ಮೊಹಪಾತ್ರ
ರಾಯಚೂರು : ಆಡಳಿತದ ಲೋಪದೋಷಗಳನ್ನು ಯಾವುದೇ ಮುಲಾಜಿಲ್ಲದೆ ಬಯಲಿಗೆಳೆಯುವ ಮೂಲಕ ಆಡಳಿತ ವ್ಯವಸ್ಥೆಯ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಹೊರಹೊಮ್ಮಿದೆ ಎಂದು ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಅಂಗವಾಗಿ ನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜ್ಞಾನಪ್ರವಾಹ ಮತ್ತು ಪತ್ರಿಕೋದ್ಯಮದ ಮಹತ್ವವನ್ನು ವಿವರಿಸಿದರು. ಮುದ್ರಣ ಯಂತ್ರದ ಆವಿಷ್ಕಾರದ ನಂತರ ವಿದ್ಯೆಯ ಪ್ರಸಾರ ವೇಗ ಪಡೆದಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಶ್ಲಾಘನೀಯವಾಗಿದೆ. ಬ್ರಿಟಿಷ್ ಆಡಳಿತದ ವಿರುದ್ಧ ಧ್ವನಿ ಎತ್ತಿದ ಅನೇಕ ಪತ್ರಕರ್ತರು ಹಿಂಸೆಗೆ ಒಳಗಾದ ಘಟನೆಯನ್ನು ಸ್ಮರಿಸಿದ ಅವರು, ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಫೇಕ್ ನ್ಯೂಸ್ ಹಿನ್ನೆಲೆಯಲ್ಲಿ ಪತ್ರಕರ್ತರು, ವಿಶೇಷವಾಗಿ ಮುದ್ರಣ ಮಾಧ್ಯಮದವರು ಹೆಚ್ಚಿನ ಎಚ್ಚರಿಕೆ ವಹಿಸಿ, ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು. ರಾಯಚೂರು ಜಿಲ್ಲಾ ಉತ್ಸವ ಯಶಸ್ವಿಯಾಗಿ ನಡೆಯಲು ಹಾಗೂ ಜನಪ್ರಿಯವಾಗಲು ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಅದೇ ರೀತಿ ನಗರ ಸ್ವಚ್ಛತೆಯ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕೈಗೊಂಡಿರುವ ದಿಟ್ಟ ಕ್ರಮಗಳಿಗೆ ಪತ್ರಿಕಾ ಮಾಧ್ಯಮಗಳು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಅವರು ಕೋರಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಯಚೂರು ವಾಣಿ ಸಂಪಾದಕ ಅರವಿಂದ ಕುಲಕರ್ಣಿ ಅವರು, ಉತ್ತಮ ಅಧಿಕಾರಿಗಳು ಬಂದಾಗ ಉತ್ತಮ ಕಾರ್ಯಗಳು ನಡೆಯುತ್ತವೆ ಮತ್ತು ಅವು ಚಿರಕಾಲ ಉಳಿಯುತ್ತವೆ ಎಂದು ಹೇಳಿದರು. ಕಂಪಿಲವಾಣಿ ಸಂಪಾದಕ ಭೀಮರಾಯ ಹದ್ದಿನಾಳ ಅವರು ಪತ್ರಕರ್ತರು ಮತ್ತು ಮಾಧ್ಯಮಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ವಿವರಿಸಿ, ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಗುರುನಾಥ ಅವರು ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಿದ್ದಯ್ಯಸ್ವಾಮಿ ನಿರೂಪಣೆ ಮಾಡಿದರು. ವಾರ್ತಾಧಿಕಾರಿ ಗವಿಸಿದ್ದಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಯಚೂರು ಜಿಲ್ಲಾ ಉತ್ಸವದಲ್ಲಿ ಐತಿಹಾಸಿಕ ಚಿತ್ರಕಲೆ: ಕಲಾವಿದರಿಗೆ ಜನರಿಂದ ಪ್ರಶಂಸೆ
ರಾಯಚೂರು : ಜಿಲ್ಲಾ ಉತ್ಸವದ ಅಂಗವಾಗಿ ತಾಲ್ಲೂಕಿನ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಬಿಡಿಸುತ್ತಿದ್ದ ಕಲಾವಿದರನ್ನು ನೋಡಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲ್ಲೂಕಿನ ಕೋಟೆ, ಐತಿಹಾಸಿಕ ಸ್ಮಾರಕಗಳ ಚಿತ್ರಗಳ ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್, ಭಗತ್ ಸಿಂಗ್, ಡಾ. ರಾಜಕುಮಾರ ಸೇರಿದಂತೆ ಅನೇಕ ಮಹನೀಯರ ಭಾವಚಿತ್ರಗಳನ್ನು ಕಲಾವಿದರು ಚಿತ್ರಿಸಿದ್ದರು. ನಿಸರ್ಗದ ಸೌಂದರ್ಯ, ಐತಿಹಾಸಿಕ ಹಿನ್ನೆಲೆ ಒಳಗೊಂಡ ವಿವಿಧ ಚಿತ್ರಕಲೆ ಪ್ರದರ್ಶನಗಳು ಜನಮನ ಸೆಳೆದವು. ಜಿಲ್ಲೆಯ 25ಕ್ಕೂ ಹೆಚ್ಚು ಕಲಾವಿದರಿಂದ ರಚಿಸಲಾದ ಐತಿಹಾಸಿಕ ಚಿತ್ರಗಳನ್ನು ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರದರ್ಶನಕ್ಕೆ ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ, ಇದು ಕಲಾವಿದರಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ಜೋಷಿ (ರಾಯಚೂರು), ಈರಣ್ಣ ಸರೋದೆ, ವೆಂಕಟೇಶ್, ರವಿಕುಮಾರ್, ಪ್ರಸನ್ನ ಮತ್ತಿತರ ಕಲಾವಿದರು ಭಾಗವಹಿಸಿದ್ದರು.
2025ರ ಡಿಸೆಂಬರ್ ನಲ್ಲಿ ಭಾರತಕ್ಕೆ ರಷ್ಯಾದಿಂದ ತೈಲ ಆಮದುಗಳು 38 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ
ಹೊಸದಿಲ್ಲಿ: 2025ರ ಡಿಸೆಂಬರ್ ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಆಮದುಗಳ ಮೌಲ್ಯವು 2.7 ಶತಕೋಟಿ ಡಾ.ಗಳಿಗೆ ಕುಸಿದಿದ್ದು,ಇದು 38 ತಿಂಗಳುಗಳಲ್ಲಿ ಕನಿಷ್ಠ ಮಟ್ಟವಾಗಿದೆ. ರಷ್ಯಾದ ತೈಲವು ಭಾರತದ ಆಮದುಗಳ ಕಾಲು ಭಾಗಕ್ಕಿಂತ ಕಡಿಮೆಯಿದ್ದು, ಕೇವಲ ಒಂದು ತಿಂಗಳ ಹಿಂದೆ ಅದು ಶೇ.34ರಷ್ಟಿತ್ತು ಎನ್ನುವುದನ್ನು ಇತ್ತೀಚಿನ ದತ್ತಾಶಗಳ ವಿಶ್ಲೇಷಣೆಯು ತೋರಿಸಿದೆ. ಇದೇ ವೇಳೆ ಡಿಸೆಂಬರ್ 2024ಕ್ಕೆ ಹೋಲಿಸಿದರೆ ಅಮೆರಿಕದಿಂದ ಕಚ್ಚಾ ತೈಲ ಆಮದು ಶೇ.31ರಷ್ಟು ಹೆಚ್ಚಾಗಿದೆ. ಅಮೆರಿಕವು ಭಾರತೀಯ ಆಮದುಗಳ ಮೇಲಿನ ಸುಂಕವನ್ನು ಶೇ.50ರಿಂದ ಶೇ.18ಕ್ಕೆ ಇಳಿಸಲಿದೆ ಮತ್ತು ಇದಕ್ಕೆ ಪ್ರತಿಯಾಗಿ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಅಧಿಕಾರಿಗಳು ಕಳೆದ ವಾರ ಪದೇ ಪದೇ ಹೇಳಿಕೊಂಡಿರುವ ಸಮಯದಲ್ಲಿ ಇತ್ತೀಚಿನ ದತ್ತಾಂಶಗಳು ಹೊರಬಿದ್ದಿವೆ. ಆದಾಗ್ಯೂ, ಭಾರತವು ಈ ನಿರ್ದಿಷ್ಟ ಹೇಳಿಕೆಯನ್ನು ದೃಢೀಕರಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ. ಬದಲಾಗಿ ವಾಸ್ತವಿಕ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ವಿಕಸನಗೊಳ್ಳುತ್ತಿರುವ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ತಾನು ಇಂಧನವನ್ನು ವಿವಿಧ ದೇಶಗಳಿಂದ ಖರೀದಿಸುವುದಾಗಿ ಅದು ಸ್ಪಷ್ಟಪಡಿಸಿದೆ. ಡಿ.2024ಕ್ಕೆ ಹೋಲಿಸಿದರೆ ಡಿ.2025ರಲ್ಲಿ ರಷ್ಯಾದಿಂದ ತೈಲ ಆಮದುಗಳಲ್ಲಿ ಶೇ.15ರಷ್ಟು ಇಳಿಕೆಯಾಗಿದ್ದು,2.7 ಶತಕೋಟಿ ಡಾಲರ್ ಗೆ ಕುಸಿದಿದೆ. ನವಂಬರ್ 2025ರಲ್ಲಿ ಆಮದು ಮಾಡಿಕೊಂಡಿದ್ದ 3.7 ಶತಕೋಟಿ ಡಾಲರ್ ಮೌಲ್ಯದ ತೈಲಕ್ಕೆ ಹೋಲಿಸಿದರೆ ಇದು ಶೇ.27.1ರಷ್ಟು ಕಡಿಮೆಯಾಗಿದೆ. ಪರಿಣಾಮವಾಗಿ ಡಿಸೆಂಬರ್ 2025ರಲ್ಲಿ ಭಾರತದ ಒಟ್ಟಾರೆ ತೈಲ ಆಮದುಗಳಲ್ಲಿ ರಷ್ಯಾದ ಪಾಲು ಶೇ.24.9ಕ್ಕೆ ಕುಸಿದಿದ್ದು,ಇದು ಮೂರು ವರ್ಷಗಳಲ್ಲಿ ಕನಿಷ್ಠ ಮಟ್ಟವಾಗಿದೆ. ಡಿಸೆಂಬರ್ನಲ್ಲಿ ಭಾರತವು 5.8 ಮಿ.ಟನ್ಗಳಷ್ಟು ರಷ್ಯನ್ ತೈಲವನ್ನು ಆಮದು ಮಾಡಿಕೊಂಡಿದ್ದು,ಇದು ಫೆ.2025ರಿಂದೀಚಿಗೆ ಕನಿಷ್ಠವಾಗಿದೆ. ಭಾರತವು ಡಿ.2025ರಲ್ಲಿ ಅಮೆರಿಕದಿಂದ 569.3 ಮಿ.ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿಕೊಂಡಿದ್ದು,ಇದು ನ.2025ರಲ್ಲಿ ಮಾಡಿಕೊಂಡಿದ್ದ ಆಮದಿಗಿಂತ ಶೇ.60.5ರಷ್ಟು ಕಡಿಮೆಯಿದೆ. ನವಂಬರ್ನಲ್ಲಿ ಅಮೆರಿಕದಿಂದ ತೈಲ ಆಮದು ಏಳು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಡಿ.2025ರಲ್ಲಿ ಭಾರತವು ಅಮೆರಿಕದಿಂದ 1.1 ಮಿ.ಟನ್ ತೈಲವನ್ನು ಆಮದು ಮಾಡಿಕೊಂಡಿದ್ದು,ಹಿಂದಿನ ವರ್ಷದ ಡಿಸೆಂಬರ್ಗೆ ಹೋಲಿಸಿದರೆ ಶೇ.58ರಷ್ಟು ಏರಿಕೆಯನ್ನು ದಾಖಲಿಸಿತ್ತು. ಡಿ.2025ರಲ್ಲಿ ಭಾರತವು 19 ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಡಿ.2024ರಲ್ಲಿ ಇಂತಹ ದೇಶಗಳ ಸಂಖ್ಯೆ 16 ಆಗಿತ್ತು. ಈ ಪೈಕಿ 10 ದೇಶಗಳು ಭಾರತದ ಕಚ್ಚಾ ತೈಲ ಆಮದುಗಳಲ್ಲಿ ತಮ್ಮ ಪಾಲು ಹೆಚ್ಚಿಸಿಕೊಂಡರೆ ಒಂಭತ್ತು ದೇಶಗಳ ಪಾಲು ಕುಸಿದಿದೆ.
ಗುಜರಾತ್ | ದಲಿತ ವಿದ್ಯಾರ್ಥಿಗೆ ಥಳಿತ: ನಾಲ್ವರ ವಿರುದ್ಧ ಪ್ರಕರಣ ದಾಖಲು
ಅಹ್ಮದಾಬಾದ್, ಫೆ. 6: ಗುಜರಾತ್ನ ಮೆಹ್ಸಾನದಲ್ಲಿರುವ ಕಾಲೇಜು ಹಾಸ್ಟೆಲ್ ಸಮೀಪ ಕ್ಷುಲ್ಲಕ ಜೋಕ್ಗಾಗಿ ದಲಿತ ವಿದ್ಯಾರ್ಥಿಯೊಬ್ಬನನ್ನು ನಾಲ್ವರು ಯುವಕರು ಬೆಲ್ಟ್ ಹಾಗೂ ದೊಣ್ಣೆಯಿಂದ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಕಾಲೇಜು ಓರ್ವ ವಿದ್ಯಾರ್ಥಿಯನ್ನು ಹಾಸ್ಟೆಲ್ನಿಂದ ಅಮಾನತುಗೊಳಿಸಿದೆ. ಮೆಹ್ಸಾನದ ಬಿಬಿಎ/ಬಿಸಿಎ ಕಾಲೇಜು ಹಾಸ್ಟೆಲ್ನಲ್ಲಿ ಪ್ರಸ್ತುತ ವಾಸಿಸುತ್ತಿರುವ ಪೋರ್ಬಂದರ್ನ ದಲಿತ ವಿದ್ಯಾರ್ಥಿಗೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಅವಮಾನ ಮಾಡಿದ್ದಾರೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಮೆಹ್ಸಾನ ಎ ವಿಭಾಗೀಯ ಪೊಲೀಸ್ ಠಾಣೆಯಲ್ಲಿ ಮಿತೇಶ್ ಹಾಗೂ ಆತನ ಇತರ ಮೂವರು ಸಹವರ್ತಿಗಳ ವಿರುದ್ಧ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮುಂದುವರಿದ ವಿಪಕ್ಷಗಳ ಪ್ರತಿಭಟನೆಗೆ ಕಲಾಪ ಬಲಿ
ಹೊಸದಿಲ್ಲಿ: ಎಸ್ಐಆರ್, ನರವಣೆ ಆತ್ಮಕಥೆ ವಿವಾದ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಗದ್ದಲ, ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶುಕ್ರವಾರವೂ ಲೋಕಸಭಾ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಫೆಬ್ರವರಿ 1ರಂದು ಮಂಡನೆಯಾದ ಕೇಂದ್ರ ಬಜೆಟ್ ಕುರಿತ ಚರ್ಚೆಯನ್ನು ಗುರುವಾರವೇ ಕೈಗೆತ್ತಿಕೊಳ್ಳಬೇಕಿತ್ತಾದರೂ, ಶುಕ್ರವಾರವೂ ಅದನ್ನು ಸದನದಲ್ಲಿ ಕೈಗೆತ್ತಿಕೊಳ್ಳಲಾಗಲಿಲ್ಲ. ಇಂದು ಬೆಳಗ್ಗೆ ಸದನ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಗದ್ದಲದ ನಡುವೆ ಕಲಾಪವನ್ನು ನಡೆಸುವುದು ಅಸಾಧ್ಯವೆನಿಸಿದಾಗ ಸ್ಪೀಕರ್ ಸದನನ್ನು ಮಧ್ಯಾಹ್ನದವರೆಗೆ ಮುಂದೂಡಿದರು. 12 ಗಂಟೆಗೆ ಸದನ ಮತ್ತೆ ಸೇರಿದಾಗ ಪ್ರತಿಭಟನೆಗಳನ್ನು ಮುಂದುವರಿಸಿದ ಪ್ರತಿಪಕ್ಷ ಸದಸ್ಯರು ಸದನದ ಬಾವಿಗೆ ಧಾವಿಸಿದರು. ಸದನದ ಕಲಾಪಗಳ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಪ್ರಸಾದ್ ತೆನ್ನೆಟ್ಟಿ ಅವರು ಸಂಸದರಿಗೆ ಅವರವರ ಸ್ಥಾನಗಳಲ್ಲಿ ಆಸೀನರಾಗುವಂತೆ ಹಾಗೂ ಘೋಷಣಾಫಲಕಗಳನ್ನು ಕೆಳಗಿರಿಸುವಂತೆ ಸೂಚಿಸಿದರು. ಆದರೆ ವಿಪಕ್ಷ ಸದಸ್ಯರು ಒಪ್ಪದೆ ಇದ್ದಾಗ, ಸದನವನ್ನು ಸೋಮವಾರದವರೆಗೆ ಮುಂದೂಡಿದರು. ಹಾಲಿ ಬಜೆಟ್ ಅಧಿವೇಶನದಲ್ಲಿ ಕಲಾಪಗಳಿಗೆ ಸದಸ್ಯರು ಅಡ್ಡಿಪಡಿಸಿದ್ದರಿಂದ ಈವರೆಗೆ 19 ತಾಸು ಹಾಗೂ 13 ನಿಮಿಷಗಳು ವ್ಯರ್ಥವಾಗಿವೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಳಿರುವ ಪ್ರಶ್ನೆ ಕೂಡಾ ಪಟ್ಟಿಯಲ್ಲಿದ್ದು, ಕಲಾಪಗಳು ಮುಂದುವರಿಯುವುದಕ್ಕೆ ಪ್ರತಿಭಟನಾ ಸದಸ್ಯರು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಮಾಜಿ ಸೇನಾ ವರಿಷ್ಠ ಎಂ.ಎಂ. ನರವಣೆ ಅವರು ತಮ್ಮ ಅಪ್ರಕಟಿತ ಆತ್ಮಕಥೆಯಲ್ಲಿ 2020ರ ಭಾರತ-ಚೀನಾ ಸಂಘರ್ಷಾವಸ್ಥೆಗೆ ಸಂಬಂಧಿಸಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ನೀಡಿರುವ ಕೆಲವು ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಸದನದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡದೆ ಇರುವುದನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಸದನದ ಹೊರಗೆ ಹಾಗೂ ಒಳಗೆ ಪ್ರತಿಭಟನೆಗನ್ನು ನಡೆಸುತ್ತಿವೆ. ಅಪರೂಪದ ಬೆಳವಣಿಗೆಯೊಂದರಲ್ಲಿ ಗುರುವಾರ ಪ್ರತಿಪಕ್ಷ ಗದ್ದಲದ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಕುರಿತ ವಂದನಾ ನಿರ್ಣಯವನ್ನು ಪ್ರಧಾನಿಯವರ ಸಾಂಪ್ರಾದಾಯಿಕ ಉತ್ತರವಿಲ್ಲದೆ ಅಂಗೀಕರಿಸಲಾಗಿತ್ತು. ಸದನಕ್ಕೆ ಅಗೌರವ: ಓಂ ಬಿರ್ಲಾ ಅಸಮಾಧಾನ ಕೋಲಾಹಲ, ಪ್ರತಿಭಟನೆಗಳಿಗೆ ಲೋಕಸಭಾ ಕಲಾಪಗಳು ಸತತವಾಗಿ ಬಲಿಯಾಗುತ್ತಿರುವ ಬಗ್ಗೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಕಳವಳ ವ್ಯಕ್ತಪಡಿಸಿದ್ದಾರೆ. ಚರ್ಚೆ ಹಾಗೂ ಸಂವಾದಗಳ ಮೂಲಕ ಸಂಸತ್ ಕಾರ್ಯನಿರ್ವಹಿಸಬೇಕೇ ಹೊರತು, ಘೋಷಣೆಗಳನ್ನು ಕೂಗುವುದರಿಂದಲ್ಲ. ರಚನಾತ್ಮಕವಾದ ರೀತಿಯಲ್ಲಿ ಚರ್ಚೆಗಳನ್ನು ನಡೆಸುವುದಕ್ಕಾಗಿ ಸಂಸದರರನ್ನು ಜನರು ಆಯ್ಕೆ ಮಾಡಿದ್ದಾರೆಂದು ಅವರು ಹೇಳಿದರು. ನಿರಂತರವಾಗಿ ಸದನದ ಕಲಾಪಗಳಿಗೆ ಅಡ್ಡಿಪಡಿಸುವುದು ಸದನಕ್ಕೆ ಅಗೌರವ ತೋರಿದಂತಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.
ಇಚ್ಚೆಗೆ ವಿರುದ್ಧವಾಗಿ ಗರ್ಭಾವಸ್ಥೆ ಮುಂದುವರಿಸಲು ಸ್ತ್ರೀಯನ್ನು ಬಲವಂತಪಡಿಸುವಂತಿಲ್ಲ: ಸುಪ್ರೀಂಕೋರ್ಟ್ ಆದೇಶ
ಹೊಸದಿಲ್ಲಿ: ಹದಿಹರೆಯದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ಕೊನೆಗೊಳಿಸಲು ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಸ್ತ್ರೀಯ ಇಚ್ಛೆಗೆ ವಿರುದ್ಧವಾಗಿ ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಆಕೆಯನ್ನು ಬಲವಂತಪಡಿಸುವಂತಿಲ್ಲ ಎಂದು ನ್ಯಾಯಾಲಯವು ಒತ್ತಿ ಹೇಳಿದೆ. ಹದಿಹರೆಯದ ತರುಣಿಯ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಅನುಮತಿ ನಿರಾಕರಿಸಿ, ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಆದೇಶಿಸಿದ ಮತ್ತು ಜನಿಸಿದ ಮಗುವನ್ನು ದತ್ತು ನೀಡಬಹುದೆಂಬ ಆಯ್ಕೆಯನ್ನು ಮುಂದಿಟ್ಟ ಬಾಂಬೆ ಹೈಕೋರ್ಟ್ನ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ. ಯಾವುದೇ ಮಹಿಳೆಗೆ ಇಚ್ಚೆಯಿಲ್ಲದೆ ಇದ್ದಲ್ಲಿ ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ನ್ಯಾಯಾಲಯವು ಆಕೆಯನ್ನು ಬಲವಂತಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಸಂತಾನೋತ್ಪತ್ತಿಯಲ್ಲಿ ಮಹಿಳೆಗೆ ಇರುವ ಸ್ವಾಯತ್ತೆಯನ್ನು ಪ್ರತಿಪಾದಿಸಿದೆ. ಅರ್ಜಿದಾರ ತರುಣಿಯು ಗರ್ಭಧರಿಸಿದಾಗ ಆಕೆಗೆ 17 ವರ್ಷ ವಯಸ್ಸಾಗಿದ್ದು, ಈಗ 18 ವರ್ಷ ಹಾಗೂ ನಾಲ್ಕು ತಿಂಗಳು ತುಂಬಿದೆ. ಗೆಳೆಯನ ಜೊತೆಗಿನ ದೈಹಿಕ ಸಂಬಂಧದಿಂದಾಗಿ ಆಕೆ ಗರ್ಭ ಧರಿಸಿದ್ದಾಳೆ. ಗರ್ಭಧಾರಣೆಯನ್ನು ಮುಂದುವರಿಸುವುದರಿಂದ ಯುವತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಯಾತನೆ ಅನುಭವಿಸುತ್ತಿದ್ದಾಳೆಂದು ನ್ಯಾಯಾಲಯ ಗಮನಸೆಳೆದಿದೆ. ಅರ್ಜಿದಾರಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಅನುಮತಿ ನೀಡಿದ ನ್ಯಾಯಪೀಠವು, ಆ ಪ್ರಕ್ರಿಯೆಗೆ ಅನುಮತಿ ನೀಡಿರುವುದನ್ನು ಲಿಖಿತವಾಗಿ ಬರೆದುಕೊಡುವಂತೆ ಆಕೆಗೆ ಸೂಚಿಸಿದೆ. ವೈದ್ಯಕೀಯವಾಗಿ ಗರ್ಭಾವಸ್ಥೆಯ ಕೊನೆಗೊಳಿಸುವಿಕೆ ಕುರಿತ ಭಾರತೀಯ ಕಾನೂನು, ಗರ್ಭಧರಿಸಿದ 20 ವಾರಗಳವರೆಗೆ ಗರ್ಭಿಣಿಯು ವೈದ್ಯಕೀಯವಾಗಿ ಗರ್ಭಪಾತ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. 24 ವಾರಗಳವರೆಗಿನ ಗರ್ಭಾವಸ್ಥೆಯಲ್ಲಿ ಭ್ರೂಣವನ್ನು ತೆಗೆದುಹಾಕುವುದರಿಂದ ತಾಯಿಯ ಆರೋಗ್ಯಕ್ಕೆ ಅಪಾಯವಿದೆಯೇ ಎಂಬುದನ್ನು ವೈದ್ಯಕೀಯ ಮಂಡಳಿಯು ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. 24 ವಾರಗಳ ಆನಂತರ ನ್ಯಾಯಾಲಯ ಮಾತ್ರವೇ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಅನುಮತಿ ನೀಡಬೇಕಾಗುತ್ತದೆ.
ಉಲಮಾಗಳು ಪ್ರೀತಿಯ ದೂತರು: ಸ್ಪೀಕರ್ ಯುಟಿ ಖಾದರ್
► ಸಮಸ್ತ ಸಮ್ಮೇಳನ ► ಜನರಲ್ ಕ್ಯಾಂಪ್ ಉದ್ಘಾಟನಾ ಸಮಾರಂಭ
ನಾಗರಭಾವಿಯಲ್ಲಿ ಮೆಟ್ರೋ ಮಾರ್ಗದ ರೀ-ಅಲೈನ್ಮೆಂಟ್ ಪ್ರಶ್ನಿಸಿದ್ದ ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್
ಬೆಂಗಳೂರು : ನಾಗರಭಾವಿ ಸಮೀಪ ನಮ್ಮ ಮೆಟ್ರೋ ಆರೆಂಜ್ ಲೈನ್ನ ಮಾರ್ಗ ಬದಲಾವಣೆ (ರೀ-ಅಲೈನ್ಮೆಂಟ್) ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಈ ಸಂಬಂಧ 'ನಾಗರಭಾವಿ ಆಸ್ತಿ ಮಾಲೀಕರು ಮತ್ತು ವಾಣಿಜ್ಯ ಸಂಸ್ಥೆಗಳ ಕಲ್ಯಾಣ ಸಂಘ' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಮೆಟ್ರೊ ಮಾರ್ಗದ ಅಲೈನ್ಮೆಂಟ್ ಪರಿಶೀಲಿಸಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಪರಿಗಣಿಸುವುದು ಸೂಕ್ತವಲ್ಲ. ಅದನ್ನು ನಿರ್ಧರಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಮೆಟ್ರೊ ಮಾರ್ಗದ ಅಲೈನ್ಮೆಂಟ್ ಅನ್ನು ನಿರ್ಧರಿಸಲು ಸೇವೆ ಪಡೆಯಲಿರುವ ಪ್ರಯಾಣಿಕರ ಸಂಖ್ಯೆ ಹಾಗೂ ಇತರ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ. ಅದಾಗ್ಯೂ, ನಾಗರಭಾವಿಯಲ್ಲಿ ಮೆಟ್ರೊ ಮಾರ್ಗದ ರೀ-ಅಲೈನ್ಮೆಂಟ್ನಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತ ವರದಿ ಲಗತ್ತಿಸಿ ಅರ್ಜಿದಾರರು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್ಸಿಎಲ್) ನಿರ್ದೇಶಿಸಿ, ಅರ್ಜಿ ವಿಲೇವಾರಿ ಮಾಡಿದೆ. ಮನವಿ ಏನು? ನಾಗರಭಾವಿ ವೃತ್ತದಿಂದ ವಿನಾಯಕ ಲೇಔಟ್, ಪಾಪಿರೆಡ್ಡಿ ಪಾಳ್ಯ ಮತ್ತು ಬಿಡಿಎ ಕಾಂಪ್ಲೆಕ್ಸ್ ಮೂಲಕ ನಾಗರಭಾವಿಗೆ ಹೋಗುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ, ನಾಗರಭಾವಿಯಲ್ಲಿ ಹಸಿರು ಹೊದಿಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, 600ಕ್ಕೂ ಅಧಿಕ ಮರಗಳನ್ನು ಕತ್ತರಿಸಬೇಕಾಗುತ್ತದೆ. ಜತೆಗೆ, 600ಕ್ಕೂ ಅಧಿಕ ಮನೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಅದರ ಬದಲು, ಮೂಲ ಯೋಜನೆಯಂತೆ ದ್ವಾರಕಾನಗರ ನಿಲ್ದಾಣದಿಂದ ಚೌಡೇಶ್ವರಿ ನಗರ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೊ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ಮತ್ತು ಬಿಎಂಆರ್ಸಿಎಲ್ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಮುಡಿಪು: ಕಾರಿನಲ್ಲಿ ಗಾಂಜಾ ಸಾಗಾಟ ಪ್ರಕರಣ: ಸೊತ್ತು ಸಹಿತ ಆರೋಪಿಗಳ ಬಂಧನ
ಕೊಣಾಜೆ: ಕಾರಿನಲ್ಲಿ ಗಾಂಜಾ ತುಂಬಿಸಿಕೊಂಡು ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮುಡಿಪು ಬಳಿ ಬಂಧಿಸಿ ಅಪಾರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನೌಶಾದ್ ಮತ್ತು ಇಬ್ರಾಹಿಂ ಎಂದು ಗುರುತಿಸಲಾಗಿದೆ. ಆರೋಪಿಗಳು ಮೇಲ್ಕಾರ್ - ಸಜೀಪ -ಬೋಳಿಯಾರು ಮಾರ್ಗವಾಗಿ ಗಾಂಜಾದ ಕಟ್ಟುಗಳನ್ನು ತೆಗೆದುಕೊಂಡು ಮುಡಿಪು ಮತ್ತು ಕೇರಳ ರಾಜ್ಯಕ್ಕೆ ಮಾರಾಟ ಮಾಡಲು ತರುತ್ತಿದ್ದಾರೆಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಪರಾರಿಗೆ ಯತ್ನಿಸಿದಾಗ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರ ಬಳಿ ಇದ್ದ ಸುಮಾರು 80 ಕೆಜಿ ಗಾಂಜಾ ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು, 3 ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಪ್ರಸಕ್ತ ವರ್ಷ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಎಲ್ಲಾ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಲು ನಿರ್ಧಾರ ಮಾಡಿದ್ದು, ಇದಕ್ಕೆ ಅಗತ್ಯವಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ತಿದ್ದುಪಡಿ ವಿಧೇಯಕಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಬಗ್ಗೆ ವಿವರ ಇಲ್ಲಿದೆ.
ಕೆ.ರಾಘವೇಂದ್ರ ಸೇರಿ 10 ಮಂದಿಗೆ ಶಿಲ್ಪಕಲಾ ಅಕಾಡಮಿಯ ʼಗೌರವ ಪ್ರಶಸ್ತಿ ʼ
ಹತ್ತು ಮಂದಿ ಕಲಾವಿದರಿಗೆ ʼಶಿಲ್ಪಶ್ರೀ ಪ್ರಶಸ್ತಿʼ
ಮರ್ಕಝುಲ್ ಹುದಾ ಸಲಾಲ ಘಟಕ: ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು, ಫೆ.6: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ನೂತನ ಘಟಕವನ್ನು ಒಮಾನಿನ ಸಲಾಲದ ಖಾಸಗಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಅವರ ನೇತೃತ್ವದಲ್ಲಿ ರಚಿಸಲಾಯಿತು. ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಸಮಿತಿಯ ಉಪಾಧ್ಯಕ್ಷ ನಾಸಿರ್ ನಂದಾವರ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಸಲಾಲ ಝೋನ್ ದಾಇ ಅಶ್ರಫ್ ಅಮ್ಜದಿ ಪಕ್ಷಿಕೆರೆ ಉದ್ಘಾಟಿಸಿದರು. ನೂತನ ಸಮಿತಿಗೆ ಮುಹಮ್ಮದ್ ಅಶ್ರಫ್ ಅಮ್ಜದಿ ಪಕ್ಷಿಕೆರೆ (ಸಲಹೆಗಾರ), ನಾಸಿರುದ್ದೀನ್ ನಂದಾವರ (ಗೌರವಾಧ್ಯಕ್ಷ), ಅಬ್ದುಲ್ ಖಾದರ್ ಮಣ್ಣಾಪು (ಅಧ್ಯಕ್ಷ), ಸದಖತುಲ್ಲಾಹ್ ಸಂಸೆ (ಉಪಾಧ್ಯಕ್ಷ), ಅಬ್ದುಲ್ಲತೀಫ್ ಸುಳ್ಯ (ಪ್ರಧಾನ ಕಾರ್ಯದರ್ಶಿ), ಮುಹಮ್ಮದ್ ಶರೀಫ್ ಕುತ್ತಾರ್ (ಕಾರ್ಯದರ್ಶಿ), ಅಬ್ದುಲ್ ಕಮಾಲ್ ಸುಳ್ಯ (ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸದಸ್ಯರಾಗಿ ಆದಿಲ್ ಮಾಚಾರ್, ಅಬ್ದುಲ್ ಖಾದರ್ ಪರ್ಪುಂಜ, ಫಾರೂಕ್ ಸುರಿಬೈಲ್ ತುಂರೀತ್, ಶರೀಫ್ ಕುಂಜತ್ಬೈಲ್, ಶಫೀಕ್ ಇನ್ನಾ ರು ಅವರನ್ನು ಆಯ್ಕೆ ಮಾಡಲಾಯಿತು.
ನಂತೂರು ಅಪಘಾತ: ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು
ಮಂಗಳೂರು,ಫೆ.6: ನಗರದ ನಂತೂರು ಬಳಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪ್ತಿಯ ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ ಕದ್ರಿ ಪೊಲೀಸ್ ಠಾಣೆಯ ಬಳಿ ತಂದು ಪ್ರತಿಭಟನೆ ನಡೆಸಿದ ಆರೋಪದಡಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಲ್ಲಾಳ್ಬಾಗ್ ಸಮೀಪದ ವಿವೇಕನಗರದ ಅಮೀತ್, ಕೀರ್ತನ್, ನವೀತ್, ಭರತ್ರಾಜ್, ಪವನ್, ಲೋಕೇಶ್ ಮಂಗಳಾದೇವಿ, ಮನ್ವೀತ್ ಬಲ್ಲಾಳ್ಬಾಗ್, ಅನಿಲ್ ಕುಮಾರ್ ಕಂಕನಾಡಿ, ಪ್ರೇಮನಾಥ ಬಲ್ಲಾಳ್ಬಾಗ್ ಹಾಗೂ ಇತರ ಸುಮಾರು 50 ಮಂದಿ ದ್ವಿಚಕ್ರ ವಾಹನ ಮತ್ತು ಕಾರಿನಲ್ಲಿ ಆಂಬುಲೆನ್ಸ್ನೊಂದಿಗೆ ಬಂದು ಕದ್ರಿ ಪೊಲೀಸ್ ಠಾಣೆಯ ಬಳಿ ಅಕ್ರಮಕೂಟ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಈ ರೀತಿ ಪ್ರತಿಭಟನೆ ಮಾಡುವುದು ಸರಿಯಲ್ಲವೆಂದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರೂ ಕೇಳದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸಾರ್ವಜನಿಕ ವಾಹನ ಸಂಚಾರಕ್ಕೂ ಇದರಿಂದ ಅಡಚಣೆಯಾಗಿದೆ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಉಚಿತ ಪಾಸ್; ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ ವಿಭಾಗೀಯ ಪೀಠ
ಬೆಂಗಳೂರು : ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ವಾಹನ ಸವಾರರಿಗೆ ಒಂದು ತಿಂಗಳ ಒಳಗೆ ಉಚಿತ ಪಾಸ್ಗಳನ್ನು ವಿತರಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ನಿರ್ದೇಶಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ತಡೆ ನೀಡಿದೆ. ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲಿಪುರ ಗ್ರಾಮಸ್ಥರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿ, ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎನ್ಎಚ್ಎಐ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ಮಾಡಿದೆ. ಇದಕ್ಕೂ ಮುನ್ನ ಎನ್ಎಚ್ಎಐ ಪರ ವಕೀಲರು ವಾದ ಮಂಡಿಸಿ, ಟೋಲ್ ಪ್ಲಾಜಾದಲ್ಲಿ ದ್ವಿಚಕ್ರ ವಾಹನಗಳು ಮತ್ತು ಟ್ರಾಕ್ಟರ್ಗಳನ್ನು ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಬಿಡಲಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಪ್ರತಿ ತಿಂಗಳಿಗೆ 340 ರೂ. ಗಳ ಪಾಸ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಆದರೆ, ಟೋಲ್ ಪ್ಲಾಜಾದಲ್ಲಿ ಸಂಚರಿಸುವ ಸ್ಥಳೀಯ ನಿವಾಸಿಗಳ ವಾಹನಗಳಿಗೆ ಉಚಿತವಾಗಿ ಪಾಸ್ ನೀಡಬೇಕು ಎಂದು ಏಕಸದಸ್ಯ ಪೀಠ ಆದೇಶಿಸಿದ್ದು, ಈ ಆದೇಶ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು. ವಾದ ಆಲಿಸಿದ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿತಲ್ಲದೆ, ಪ್ರತಿವಾದಿಗಳಾದ ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲೀಪುರ ಗ್ರಾಮಸ್ಥರಿಗೆ (ರಿಟ್ ಅರ್ಜಿದಾರರು) ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿತು.
ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು; ವಿಸ್ತೃತ ವರದಿ ಸಲ್ಲಿಸಲು ಅಮೈಕಸ್ ಕ್ಯೂರಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು : ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿನ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ ಹಾಗೂ ಸಂತ್ರಸ್ತರಿಗೆ ಕಲ್ಪಿಸಲಾಗಿರುವ ಪುನರ್ವಸತಿ ವ್ಯವಸ್ಥೆ ಕುರಿತ ಮಾಹಿತಿ ಒಳಗೊಂಡ ವಿವರವಾದ ವರದಿ ಸಲ್ಲಿಸುವಂತೆ ಪ್ರಕರಣದ ಅಮೈಕಸ್ ಕ್ಯೂರಿಗೆ ಹೈಕೋರ್ಟ್ ನಿರ್ದೇಶಿಸಿದೆ. ಅಕ್ರಮವಾಗಿ ಮನೆಗಳ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಅಮೈಕಸ್ ಕ್ಯೂರಿ ಬಿ.ವಿ. ವಿದ್ಯುಲ್ಲತಾ ಅವರನ್ನು ಕುರಿತು, ಮನೆಗಳ ತೆರವು ಕಾರ್ಯಾಚರಣೆಯಿಂದ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ. ಎಷ್ಟು ಜನರ ಮನೆ ತೆರವು ಮಾಡಲಾಗಿದೆ. ಎಷ್ಟು ಗುಡಿಸಲುಗಳನ್ನು ನಾಶಪಡಿಸಲಾಗಿದೆ. ಎಷ್ಟು ಕುಟುಂಬಗಳು ನಿರ್ಗತಿಕವಾಗಿವೆ. ಪುನರ್ವಸತಿಯ ವ್ಯವಸ್ಥೆ ಹೇಗಿದೆ ಎಂಬ ಅಂಶಗಳನ್ನೊಳಗೊಂಡ ವಿವರವಾದ ವರದಿ ಸಲ್ಲಿಸಬೇಕು ಎಂದು ಸೂಚಿಸಿತಲ್ಲದೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್ಎಲ್ಎಸ್ಎ) ಅಮೈಕಸ್ ಕ್ಯೂರಿ ಅವರಿಗೆ ಸಂಪೂರ್ಣ ನೆರವು ನೀಡಬೇಕು ಎಂದು ಆದೇಶಿಸಿತು. ಮತ್ತೊಂದು ಅರ್ಜಿಯಲ್ಲಿ ಸರ್ಕಾರಕ್ಕೆ ನೋಟಿಸ್: ಫಕೀರ್ ಕಾಲನಿಯಲ್ಲಿ 1990ರಿಂದ ನೆಲೆಸಿರುವ 15 ಮಂದಿಯ ನಿವಾಸಗಳನ್ನು ತೆರವು ಮಾಡಲಾಗಿರುವುದನ್ನು ಆಕ್ಷೇಪಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರತ್ಯೇಕ ನೋಟಿಸ್ ಜಾರಿಗೊಳಿಸಿದೆ. ಕೋಗಿಲು ಬಡಾವಣೆಯ ರಬಿಯಾ, ಮೊಹಮ್ಮದ್ ರಫೀಕ್ ಸೇರಿದಂತೆ 15 ಮಂದಿ ಸಲ್ಲಿಸಿರುವ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೊ ವಾದ ಮಂಡಿಸಿ, ಅರ್ಜಿದಾರರು ಫಕೀರ್ ಕಾಲನಿಯಲ್ಲಿ 1990ರಿಂದ ನೆಲೆಸಿದ್ದಾರೆ. ಎಲ್ಲರಿಗೂ ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94ಸಿಸಿ ಅನುಸಾರ ಹಕ್ಕು ಪತ್ರ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಗೂಗಲ್ ಅರ್ಥ್ ದಾಖಲೆ ಇದೆ. ಸರ್ಕಾರದ ದಾಖಲೆಯೇ ಇದೆ. ಅದಾಗ್ಯೂ, ಮನೆಗಳನ್ನು ತೆರವು ಮಾಡಲಾಗಿದೆ ಎಂದು ಆಕ್ಷೇಪಿಸಿದರು. ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು. ಜತೆಗೆ, ಈ ಪ್ರಕರಣದಲ್ಲೂ ನೆರವು ನೀಡುವಂತೆ ಅಮೈಕಸ್ ಕ್ಯೂರಿಗೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿತು.
ಉಡುಪಿ, ಫೆ.6: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಫೆ.5ರಂದು ರಾತ್ರಿ ವೇಳೆ ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಶ್ರೀಬಬ್ಬುಸ್ವಾಮಿ ದೈವಸ್ಥಾನದ ಬಳಿ ನಡೆದಿದೆ. ಮೃತರನ್ನು ಸೆಲ್ವ ಕುಮಾರ್ ಎಂದು ಗುರುತಿಸಲಾಗಿದೆ. ಕೊರಂಗ್ರಪಾಡಿ ಕಡೆಯಿಂದ ಮಾರ್ಪಳ್ಳಿ ಕಡೆಗೆ ಹೋಗುತ್ತಿದ್ದ ಬೈಕ್, ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಸೆಲ್ವ ಕುಮಾರ್, ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
U19 ವಿಶ್ವಕಪ್ | ಇಂಗ್ಲೆಂಡನ್ನು ಸೋಲಿಸಿ 6ನೇ ಬಾರಿ ಚಾಂಪಿಯನ್ ಆದ ಭಾರತ
ಹರಾರೆ: ಐಸಿಸಿ ಅಂಡರ್–19 ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 100 ರನ್ಗಳ ಅಂತರದ ಭರ್ಜರಿ ಜಯ ಸಾಧಿಸಿ ಆರನೇ ಬಾರಿ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ನಾಯಕ ಆಯುಷ್ ಮಾತ್ರೆ ಅವರ ನೇತೃತ್ವದಲ್ಲಿ ಭಾರತ ತಂಡ ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಆಟವಾಡಿತು. ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡ 50 ಓವರ್ಗಳಲ್ಲಿ 9 ವಿಕೆಟ್ಗೆ 411 ರನ್ಗಳ ಭಾರೀ ಮೊತ್ತ ಕಲೆಹಾಕಿತು. ಭಾರತದ ಪರ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ಇಂಗ್ಲೆಂಡ್ ಬೌಲರ್ಗಳಿಗೆ ತಲೆನೋವಾಗಿ ಪರಿಣಮಿಸಿದರು. ಅವರ ವೇಗದ ಶತಕ ಪಂದ್ಯದ ತಿರುವಾಗಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಮೇಲೆ ಭಾರತೀಯ ಬೌಲರ್ಗಳು ಆರಂಭದಲ್ಲೇ ಒತ್ತಡ ಹೇರುತ್ತಾ ಬಂದರು. ಆರ್ಎಸ್ ಅಂಬ್ರೀಶ್ 3 ವಿಕೆಟ್ ಪಡೆದು ಎದುರಾಳಿಗಳ ಬ್ಯಾಟಿಂಗ್ ಕ್ರಮಾಂಕ ಮುರಿದರು. ನಿರಂತರ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡ ಗುರಿ ತಲುಪಲು ವಿಫಲವಾಗಿ 100 ರನ್ಗಳ ಅಂತರದಲ್ಲಿ ಸೋಲು ಒಪ್ಪಿಕೊಳ್ಳಬೇಕಾಯಿತು. ಈ ಜಯದೊಂದಿಗೆ ಭಾರತ ಅಂಡರ್–19 ವಿಶ್ವಕಪ್ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿ ಆರನೇ ಬಾರಿ ಕಿರೀಟವನ್ನು ಕೈಸೇರಿಸಿಕೊಂಡಿತು.
ಬಣ್ಣದೊಡೆಯನ ಸಂಸ್ಮರಣೆ: ದಿಗ್ಗಜ ಕಲಾವಿದರಿಗೆ ಗೌರವಾರ್ಪಣೆ
ಕುಂದಾಪುರ, ಫೆ.6: ಸಕ್ಕಟ್ಟು ಶ್ರೀಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಸಮಿತಿಯ ವತಿಯಿಂದ ’ಯಕ್ಷ ಲೋಕದ ಮಾಸದ ಬಣ್ಣ-100’ ಕಾರ್ಯಕ್ರಮವು ಇತ್ತೀಚೆಗೆ ಶ್ರೀಕ್ಷೇತ್ರ ಕೂಡ್ಲು ಬಡಾಬೆಟ್ಟು ಕನ್ಯಾನದ ಪೆರ್ಡೂರು ರಂಗವೇದಿಕೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ರಿಗೆ ಮತ್ತು ಹಾಸ್ಯ ಕಲಾವಿದ ರವೀಂದ್ರ ದೇವಾ =ಡಿಗರಿಗೆ ’ಸಂಸ್ಮರಣಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕುಂದಾಪುರದ ವಕೀಲರಾದ ಟಿ.ಬಿ.ಶೆಟ್ಟಿ, ದೇವಳದ ಆಡಳಿತ ಧರ್ಮದರ್ಶಿಗಳಾದ ಜಯರಾಮ ಸ್ವಾಮಿ ಉಪಸ್ಥಿತರಿದ್ದರು. ಕುಂದಾಪುರದ ವಕೀಲ ಶರತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಕ್ಕಟ್ಟು ಕುಟುಂಬದ ಪರವಾಗಿ ಸಕ್ಕಟ್ಟು ಮಂಜುನಾಥಯ್ಯ ಮಾತನಾಡಿದರು. ಗೋಪಾಲಕೃಷ್ಣ ದೇವಾಡಿಗ ಬಡಾಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಆಯುಷ್ ಮ್ಹಾತ್ರೆ ಅವರ ಅಮೋಘ ಶತಕದ ನೆರವಿನಿಂದ ರನ್ ಪರ್ವತವನ್ನೇ ಏರಿ ನಿಂತ ಭಾರತ ತಂಡ ಇಂಗ್ಲೆಂಡ್ ಅನ್ನು ಭರ್ತಿ 100 ರನ್ ಗಳಿಂದ ಸೋಲಿಸುವ ಮೂಲಕ 6ನೇ ಬಾರಿ ಐಸಿಸಿ ಅಂಡರ್ 19 ವಿಶ್ವಕಪ್ ಅನ್ನು ಎತ್ತಿ ಹಿಡಿದಿದೆ. ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡ ಈ ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯವನ್ನೂ ಸೋಲದೆ ಅಜೇಯವಾಗಿ ಕಪ್ ಗೆದ್ದಿರುವುದು ಬಹು ದೊಡ್ಡ ಸಾಧನೆಯಾಗಿದ್ದು ಇಡೀ ದೇಶವೇ ಇದೀಗ ಎಳೆಯರ ಸಾಧನೆಯನ್ನು ಕೊಂಡಾಡುತ್ತಿದೆ. ಅದರಲ್ಲೂ 14ರ ಹರೆಯದ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ವೈಭವ ಇಡೀ ದಿನದ ಹೈಲೈಟ್ ಆಯಿತು. ಹರಾರೆಯಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡ 40.1 ಓವರ್ ಗಳಲ್ಲಿ 311 ರನ್ ಗಳಿಗೆ ಆಲೌಟ್ ಆಯಿತು. ಭಾರತ U19 ವಿಶ್ವಕಪ್ ವಿಕ್ರಮಗಳು ಕ್ರಮ ಸಂಖ್ಯೆ ವರ್ಷ ನಾಯಕತ್ವ ಎದುರಾಳಿ ತಂಡ 1 2000 ಮೊಹಮ್ಮದ್ ಕೈಫ್ ಶ್ರೀಲಂಕಾ 2 2008 ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ 3 2012 ಉನ್ಮುಕ್ತ್ ಚಾಂದ್ ಆಸ್ಟ್ರೇಲಿಯಾ 4 2018 ಪೃಥ್ವಿ ಶಾ ಆಸ್ಟ್ರೇಲಿಯಾ 5 2022 ಯಶ್ ಧುಲ್ ಇಂಗ್ಲೆಂಡ್ 6 2026 ಆಯುಷ್ ಮ್ಹಾತ್ರೆ ಇಂಗ್ಲೆಂಡ್ ಸಂಕ್ಷಿಪ್ತ ಸ್ಕೋರ್ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ಗೆ 411, ವೈಭವ್ ಸೂರ್ಯವಂಶಿ 175(80), ಆಯುಷ್ ಮ್ಹಾತ್ರೆ 53(51), ಅಭಿಜ್ಞಾನ್ ಕುಂಡು 40(31), ಕಾನಿಷ್ಕ್ ಚೌಹಾನ್ ನಾಟೌಟ್ 37(20), ಜೇಮ್ಸ್ ಮಿಂಟೋ 63ಕ್ಕೆ 3, ಸೆಬಾಸ್ಟಿಯನ್ ಮಾರ್ಗನ್ 74ಕ್ಕೆ2, ಎಲೆಕ್ಸ್ ಗ್ರೀನ್ 49ಕ್ಕೆ 2. ಇಂಗ್ಲೆಂಡ್ 40.1 ಓವರ್ ಗಳಲ್ಲಿ 311ಕ್ಕೆ ಆಲೌಟ್, ಕ್ಯಾಲೆಬ್ ಫಾಕ್ನರ್ 115(67), ಬೆನ್ ಡ್ವಾಕಿನ್ಸ್ 66(56), ಬೆನ್ ಮೇಯ್ಸ್ 45(28), ಅಂಬರೀಶ್ 56ಕ್ಕೆ 3, ದೀಪೇಶ್ ದೇವೇಂದ್ರನ್ 64ಕ್ಕೆ 2, ಕಾನಿಷ್ಕ್ ಚೌಹಾನ್ 63ಕ್ಕೆ 2.
ಮಂದರ್ತಿಯಲ್ಲಿ ಹೊಸ ಸರಕಾರಿ ಶಾಲೆ ಪ್ರಾರಂಭಿಸಲು ಶಿಕ್ಷಣ ಸಚಿವರಿಗೆ ಮನವಿ
ಕುಂದಾಪುರ, ಫೆ.6: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮದ ಮಂದರ್ತಿಯಲ್ಲಿ ಹೊಸದಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾರಂಭಿಸಲು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುರ್ಮಾ ಕೊಡ್ಗಿ, ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಹೆಗ್ಗುಂಜೆ ಗ್ರಾಮದ ಮಂದರ್ತಿ ಶ್ರೀದುರ್ಗಪರಮೇಶ್ವರಿ ದೇವಸ್ಥಾನದ ವತಿಯಿಂದ ಈಗಾಗಲೇ ಅನುದಾನಿತ ಪ್ರೌಢ ಶಾಲೆ ಮತ್ತು ಅನುದಾನ ಸಹಿತ ಪದವಿ ಪೂರ್ವ ಕಾಲೇಜು ನಡೆಯುತ್ತಿದ್ದು ಸರಕಾರಿ ಪ್ರಾಥಮಿಕ ಶಾಲೆ ಪ್ರಾರಂಭಿಸಿ ದ್ದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ವಾಗಲಿದೆ. ಅಲ್ಲಿಯೇ ಸಮೀಪದಲ್ಲಿರುವ ಮಂದರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 153 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಿಕ್ಷಕರ ಕೊರತೆ ಯಿಂದ ಶಾಲೆ ಮುಚ್ಚುವುದಾಗಿ ಆಡಳಿತ ಮಂಡಳಿಯು ತಿಳಿಸಿರುವುದರಿಂದ ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಪರದಾಡುವಂತಾಗುತ್ತದೆ. ಆದ್ದರಿಂದ ಈ ವ್ಯಾಪ್ತಿಯಲ್ಲಿ ಸರಕಾರದಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನಕ್ಕೆ ಸರ್ವೆ ನಂರ್ಬ 167/71ಬಿ ರಲ್ಲಿ ಹಂಚಿಕೆಯಾಗಿರುವ 0.88ಸೆಂಟ್ಸ್ ಜಾಗದಲ್ಲಿ ಸರಕಾರಿ ಶಾಲೆ ಪ್ರಾರಂಭಿಸಲು ಅನುಮತಿ ನೀಡಿದ್ದಲ್ಲಿ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ದೇವಸ್ಥಾನದ ವತಿಯಿಂದ ನೀಡುವುದಾಗಿ ಆಡಳಿತ ಮಂಡಳಿಯು ಲಿಖಿತವಾಗಿ ನೀಡಿದೆ. ಆದುದರಿಂದ ಹೆಗ್ಗುಂಜಿ ಗ್ರಾಮದ ಸರ್ವೆ ನಂ.1671ಬಿ ನಲ್ಲಿ 2026-27ನೇ ಸಾಲಿನಿಂದ ಸರಕಾರಿ ಶಾಲೆಯನ್ನು ಪ್ರಾರಂಭಿಸಲು ತಮ್ಮ ಅನುಮತಿ ನೀಡುವಂತೆ ಶಾಸಕರು ಸಚಿವರಲ್ಲಿ ಮನವಿ ಮಾಡಿದರು.
ಕೇವಲ ಪ್ರಶ್ನಿಸುವುದಕ್ಕಾಗಿ ವ್ಯಕ್ತಿಯನ್ನು ಬಂಧಿಸುವಂತಿಲ್ಲ: ಸುಪ್ರೀಂಕೋರ್ಟ್
ಹೊಸದಿಲ್ಲಿ,ಜ.6: ಕೇವಲ ಪ್ರಶ್ನಿಸುವುದಕ್ಕಾಗಿ ವ್ಯಕ್ತಿಯನ್ನು ಬಂಧಿಸುವಂತಿಲ್ಲವೆಂದು ಸುಪ್ರೀಂಕೋರ್ಟ್ ಶುಕ್ರವಾರ ಪ್ರತಿಪಾದಿಸಿದೆ. ಪ್ರಕರಣದ ತನಿಖೆಗೆ ಅತ್ಯವಶ್ಯಕವಾಗಿದ್ದರೆ ಮಾತ್ರವೇ ಆತನನ್ನು ಬಂಧಿಸಬಹುದೆಂದು ಅದು ಹೇಳಿದೆ. ಕನಿಷ್ಠ 7 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾದಂತಹ ದಂಡನೀಯ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳದೆ ತನಿಖೆ ನಡೆಸಲು ಸಾಧ್ಯವಿಲ್ಲವೆಂದು ಪೊಲೀಸ್ ಅಧಿಕಾರಿಯು ಖಚಿತಪಡಿಸಿಕೊಂಡ ಬಳಿಕವಷ್ಟೇ ಆತ ವ್ಯಕ್ತಿಯನ್ನು ಬಂಧಿಸಬಹುದಾಗಿದೆಯೇ ಹೊರತು ಕೇವಲ ಪ್ರಶ್ನಿಸುವುದಕ್ಕಾಗಿ ಆತನನ್ನು ಬಂಧಿಸುವಂತಿಲ್ಲ. ಎಂದು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಹಾಗೂ ಎನ್.ಕೆ.ಸಿಂಗ್ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಪೊಲೀಸ್ ಅಧಿಕಾರಿಯು ವರ್ತಿಸಿದಲ್ಲಿ, ಅದು ಭಾರತೀಯ ದಂಡಸಂಹಿತೆಯ 35(1)(ಬಿ) ಹಾಗೂ ಸೆಕ್ಷನ್ಗಳಾದ 35(3) ರಿಂದ 35(6) ಸೆಕ್ಷನ್ಗಳ ಉದ್ದೇಶ ಹಾಗೂ ಶಾಸನಾತ್ಮಕ ಆಶಯವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅದು ಹೇಳಿದೆ. ಅಲಹಾಬಾದ್ ಹೈಕೋರ್ಟ್ನ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಆ ಆದೇಶವನ್ನು ಹೊರಡಿಸಿದೆ. ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗೆ ಭಾರತೀ ದಂಡಸಂಹಿತೆಯ ಸೆಕ್ಷನ್ 35 (3)ರ ಅನ್ವಯ ಬಂಧನ ನೋಟಿಸ್ ಜಾರಿಗೊಳಿಸಬಹುದೇ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
ನಾಗರಮಠ ಮರಳುಗಾರಿಕೆಗೆ ನೀಡಿದ ಅನುಮತಿ ತಡೆಯುವಂತೆ ಗ್ರಾಮಸ್ಥರಿಂದ ಡಿಸಿಗೆ ಮನವಿ
ಉಡುಪಿ : ಬ್ರಹ್ಮಾವರ ತಾಲೂಕಿನ ಬಾರಕೂರು ಸಮೀಪದ ಹೊಸಾಳ ಗ್ರಾಮದ ನಾಗರಮಠದ ಸೀತಾನದಿಯಲ್ಲಿ ಮರಳುಗಾರಿಕೆಯನ್ನು ಸ್ಥಗಿತಗೊಳಿಸಿ ಕೃಷಿಭೂಮಿ ಉಳಿಸುವಂತೆ ಆಗ್ರಹಿಸಿ ನಾಗರಮಠ ಗ್ರಾಮಸ್ಥರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿ ನಡೆಯುವ ಮರಳು ಗಣಿಗಾರಿಕೆಯಿಂದ ಈಗಾಗಲೇ ಹಲವು ಕೃಷಿಭೂಮಿಗಳು ಮಣ್ಣಿನ ಸವೆತದಿಂದ ಸೀತಾ ನದಿಗೆ ಕೊಚ್ಚಿಕೊಂಡು ಹೋಗಿವೆ. 60 ಅಡಿ ಅಗಲ ಇದ್ದ ಸೀತಾನದಿ ಮರಳುಗಾರಿಕೆಯಿಂದ 160 ಅಡಿ ಅಗಲ ವಾಗಿದೆ. ಕೃಷಿಭೂಮಿಯಿಂದ ಕೂಡಿರುವ ಈ ಜಾಗ ಮರಳು ಗಾರಿಕೆಗೆ ಸೂಕ್ತವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇಲ್ಲಿ ಮರಳುಗಾರಿಕೆಗೆ ಅನುಮತಿ ನೀಡಿರುವ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಹೆರಾಡಿ ಮೂಲಕ ಶಂಖಾಡಿ ಮಾರ್ಗವಾಗಿ ನಾಗರಮಠ ನದಿಗೆ ಸುಮಾರು ಒಂದು ಕೋಟಿ ರೂ. ಮೌಲ್ಯದ 24 ಅಡಿ ಅಗಲದ ಕೆಂಪು ಮಣ್ಣಿನ ರಸ್ತೆಯನ್ನು ಅಕ್ರಮವಾಗಿ ನಿರ್ಮಿಸಿ ಮರಳು ಸಾಗಿಸಲು ಸಿದ್ಧತೆ ನಡೆಸಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಅವೈಜ್ಞಾನಿಕ ಮರಳುಗಾರಿಕೆಯಿಂದ ಇಲ್ಲಿನ ನದಿಯು ತನ್ನ ಹಾದಿಯನ್ನು ಬದಲಾಯಿಸುತ್ತಿದೆ. ಇದರಿಂದ ರೈತರು ತಮ್ಮ ಕೃಷಿಭೂಮಿಯನ್ನು ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ. ಮರಳುಗಾರಿಕೆ ಅವಕಾಶ ನೀಡಿರುವುದರಿಂದ ನಾಗರಮಠ ಅಣೆಕಟ್ಟಿನೊಳಗಿನ ಸಿಹಿನೀರು ಉಪ್ಪು ನೀರು ಆಗಿ ಪರಿವರ್ತನೆ ಆಗಲಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇಲ್ಲಿನ ಮರಳುಗಾರಿಕೆ ನೀಡಿದ ಅನುಮತಿಯನ್ನು ಕೂಡಲೇ ತಡೆಹಿಡಿಯ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಚಂದ್ರ ಕಾಂಚನ್, ಅಶೋಕ್ ಕುಂದರ್, ಗಣೇಶ್ ಶೆಟ್ಟಿ, ಆಶಾ ಅಮೀನ್, ಉಷಾ, ಚಂದ್ರ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಉಪ್ಪೂರು ಬೀದಿನಾಯಿ ಶೆಲ್ಟರ್ ನಿರ್ಮಾಣಕ್ಕೆ ವಿರೋಧ: ಗ್ರಾಮಸ್ಥರಿಂದ ಪ್ರತಿಭಟನೆ
ಉಡುಪಿ, ಫೆ.6: ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬೀದಿ ನಾಯಿ ಶೆಲ್ಟರ್ಗೆ ವಿರೋಧ ವ್ಯಕ್ತಪಡಿಸಿ ಉಪ್ಪೂರು, ಹಾವಂಜೆ ಹಾಗೂ ಆರೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಗರಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತವು ಉಪ್ಪೂರು ಗ್ರಾಮದ 9.9 ಎಕರೆ ಪ್ರದೇಶದಲ್ಲಿ ಬೀದಿನಾಯಿಗಳ ಶೆಲ್ಟರ್ ನಿರ್ಮಾಣ ಮಾಡಲು ಮುಂದಾಗಿದ್ದು, ಇದಕ್ಕೆ ಮೂರು ಗ್ರಾಮಗಳ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಕೂಡಲೇ ಈ ಶೆಲ್ಟರ್ನ್ನು ಕೈಬಿಟ್ಟು ಬೇರೆ ನಿರ್ಜನ ಪ್ರದೇಶಕ್ಕೆ ವರ್ಗಾಯಿಸಬೇಕೆಂದು ಆಗ್ರಹಿಸಿದರು. ‘ಉಡುಪಿ ಜಿಲ್ಲೆಯ ಸುಮಾರು 18ಸಾವಿರ ಬೀದಿ ನಾಯಿಗಳನ್ನು ಉಪ್ಪೂರಿನ ಚುಕ್ಕುಲಿಕಟ್ಟೆ ಹತ್ತಿರ 9.9 ಎಕರೆ ಜಾಗದಲ್ಲಿ ಆಶ್ರಯ ತಾಣ ನಿರ್ಮಿಸಲು ಸರ್ವೆ ಕಾರ್ಯ ನಡೆದಿದ್ದು, ಮುಂದಿನ ದಿನಗಳಲ್ಲಿ ಈ ಬೀದಿ ನಾಯಿಗಳ ಶೆಲ್ಟರ್ ನಿರ್ಮಾಣವಾದರೆ ಸುತ್ತಮುತ್ತಲಿನ ಗ್ರಾಮದ ಜನರಿಗೆ ಸಾಕಷ್ಟು ಸಮಸ್ಯೆ ತಲೆದೋರಲಿದೆ ಎಂದು ಸ್ಥಳೀಯರಾದ ಅಜಿತ್ ಶೆಟ್ಟಿ ಆರೋಪಿಸಿದರು. ‘ಬೀದಿ ನಾಯಿ ಶೆಲ್ಟರ್ ನಿರ್ಮಿಸಲು ಗುರುತಿಸಿರುವ ಜಾಗದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಯನ್ನು ತರಬಹು ದಾಗಿದೆ. ಈ ಜಾಗದ ಸುತ್ತಮುತ್ತ ಸುಮಾರು 200 ಮನೆಗಳಿವೆ. ನಾಯಿಗಳ ಮಲಮೂತ್ರ ವಿಸರ್ಜನೆಯ ನೀರು ಸಮೀಪದ ಬೆಳ್ಮಾರಿನ ತೋಡಿನಲ್ಲಿ ಹರಿದು ಹೊಳೆಗೆ ಸೇರುತ್ತದೆ. ಇದರಿಂದ ಬೆಳ್ಮಾರಿನ ಜನರಿಗೆ ಅನಾರೋಗ್ಯ ಕಾಡಲಿದೆ. ಅಲ್ಲದೆ ಬಾವಿಯ ನೀರು ಕೂಡ ಕಲುಷಿತವಾಗಲಿದೆ. ಚರ್ಮರೋಗದ ಭೀತಿ ಕೂಡ ಇಲ್ಲಿನ ಜನರಿಗೆ ಎದುರಾಗಲಿದೆ. ಅದೇ ರೀತಿ ಕಾಡು ಪ್ರಾಣಿಗಳ ಹಾವಳಿ ಕೂಡ ಹೆಚ್ಚಾಗಲಿದೆ’ ಎಂದು ಪ್ರತಿಭಟನಕಾರರು ದೂರಿದರು. ‘9.9. ಎಕರೆ ಜಾಗದಲ್ಲಿ ಬೀದಿ ನಾಯಿ ಶೆಲ್ಟರ್ ನಿರ್ಮಿಸಿದರೆ ಸುತ್ತಮುತ್ತಲಿನ ಉಳಿದ 90 ಎಕರೆ ಜಾಗದಲ್ಲಿ ಯಾವುದೇ ಉತ್ತಮ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈ ಜಾಗವು 2016ನೇ ಇಸವಿಯಿಂದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಸೂಚನೆಯಂತೆ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಗೂ ಈ ಜಾಗ ಬರಲಿದೆ. ಆದುದರಿಂದ ಇಲ್ಲಿ ಬೀದಿನಾಯಿ ಶೆಲ್ಟರ್ ನಿರ್ಮಿಸುವುದು ಸಮಂಜಸವಲ್ಲ’ ಎಂದು ಹೋರಾಟಗಾರ ಅಶ್ವಿನ್ರೋಚ್ ತಿಳಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್, ಉಪ್ಪೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಆರೂರು ಗ್ರಾಪಂ ಅಧ್ಯಕ್ಷ ಗುರುರಾಜ್ ಭಟ್, ಹಾವಂಜೆ ಗ್ರಾಪಂ ಅಧ್ಯಕ್ಷೆ ಆಶಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ತಾಪಂ ಮಾಜಿ ಅಧ್ಯಕ್ಷರಾದ ನಳಿನಿ ಪ್ರದೀಪ್, ವರೋನಿಕಾ ಕರ್ನೆಲಿಯೋ, ಧರ್ಮಗುರು ಫಾ.ಲಾರೆನ್ಸ್ ಡಿಸೋಜ, ಪ್ರಮುಖರಾದ ಅಶ್ವಿನ್ರಾಜ್, ಭಾಸ್ಕರ ಶೆಟ್ಟಿ ಅಮ್ಮುಂಜೆ, ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ‘ಜಿಲ್ಲಾಡಳಿತ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿಯಾಗಿ ಈ ಶೆಲ್ಟರ್ ನಿರ್ಮಿಸಲು ಮುಂದಾಗಿದೆ. ಈ ಜಾಗದಲ್ಲಿ ವಿಶ್ವವಿದ್ಯಾನಿಲಯ, ವಿಮಾನ ನಿಲ್ದಾಣದಂತಹ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಈ ಹಿಂದೆ ಚರ್ಚೆಗಳು ನಡೆದಿತ್ತು. ಮುಂದೆ ಈ ಶೆಲ್ಟರ್ ನಿರ್ಮಾಣವಾಗು ವುದರಿಂದ ಈ ಎಲ್ಲ ಅಭಿವೃದ್ಧಿ ಯೋಜನೆಗಳು ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಆದುದರಿಂದ ಇಲ್ಲಿಂದ ಈ ಯೋಜನೆಯನ್ನು ಬೇರೆ ಕಡೆ ವರ್ಗಾಯಿಸ ಬೇಕು’ -ಸತೀಶ್ ಪೂಜಾರಿ, ಸಾಮಾಜಿಕ ಕಾರ್ಯಕರ್ತರು ‘ಜನವಸತಿ ಪ್ರದೇಶದಲ್ಲಿ ಬೀದಿನಾಯಿಗಳ ಶೆಲ್ಟರ್ ನಿರ್ಮಿಸುವುದು ಸರಿಯಲ್ಲ. ನೀರು ಇಂಗುವ ಈ ಜಾಗದಲ್ಲಿ ನಾಯಿಗಳನ್ನು ಸಾಕಿದರೆ ಮುಂದೆ ಸುತ್ತಮುತ್ತಲಿನ ಬಾವಿ ನೀರು ಕೂಡ ಮಲೀನವಾಗಬಹುದು. ಜಿಲ್ಲಾಡಳಿತ ಈ ವಿಚಾರದಲ್ಲಿ ದೊಡ್ಡ ತಪ್ಪು ಮಾಡಿದೆ. ಜನರಿಗೆ ಸಮಸ್ಯೆಯಾಗುವ ಯೋಜನೆಗಳ ವಿರುದ್ಧ ಜನಪ್ರತಿನಿಧಿಗಳು ಧೈರ್ಯ ಹಾಗೂ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು. ಆಗ ಮಾತ್ರ ಇದಕ್ಕೆ ನ್ಯಾಯ ಸಿಗಲು ಸಾಧ್ಯ’ -ವರೋನಿಕಾ ಕರ್ನೆಲಿಯೋ, ಮಾಜಿ ತಾಪಂ ಅಧ್ಯಕ್ಷರು
ಮುಂದಿನ ವಾರ ಪಂಚ ಗ್ಯಾರಂಟಿ ಅದಾಲತ್: ರಮೇಶ್ ಕಾಂಚನ್
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ
ಇದೇ ಅವಧಿಯಲ್ಲೇ ಡಿಕೆಶಿ ಸಿಎಂ ಆಗುತ್ತಾರೆ : ಯತೀಂದ್ರಗೆ ಶಾಸಕ ಇಕ್ಬಾಲ್ ಹುಸೇನ್ ಟಕ್ಕರ್
ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕು. ಆಗೆಯೇ ಆಗುತ್ತಾರೆ. ಇದೇ ಅವಧಿಯಲ್ಲಿ ಅವರು ಸಿಎಂ ಆಗುತ್ತಾರೆ ಎಂದಿದ್ದಾರೆ.
ಆಳಂದ | ನವಕಲ್ಯಾಣ ಜಿಡಗಾ ಮಠದಲ್ಲಿ ಫೆ.7ರಂದು ರಥೋತ್ಸವ
ಶಿವಯೋಗಿ ಸಿದ್ದರಾಮೇಶ್ವರರ 22ನೇ ಪುಣ್ಯಸ್ಮರಣೋತ್ಸವ
ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಕಾಯ್ದೆಯ ಸ್ಪಷ್ಟ ಅರಿವು ಅಗತ್ಯ: ನ್ಯಾ.ಮನು ಪಟೇಲ್
ಉಡುಪಿ, ಫೆ.6: ಮಕ್ಕಳ ಹಕ್ಕುಗಳ ರಕ್ಷಣಾ ಕಾನೂನುಗಳಿಗೆ ಸಂಬಂಧ ಪಟ್ಟಂತೆ ಮೊದಲನೇ ಹಂತದಲ್ಲಿ ತಳಮಟ್ಟದ ಕಾರ್ಯಕರ್ತರು ಮಕ್ಕಳ ಜೊತೆ ವ್ಯವಹರಿಸಿದರೆ, ಎರಡನೇ ಹಂತದಲ್ಲಿ ಪೊಲೀಸರು ಮಕ್ಕಳ ಜೊತೆ ವ್ಯವಹರಿಸ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಬಾಲನ್ಯಾಯ ಕಾಯ್ದೆಯ ಸ್ಪಷ್ಟ ಅರಿವು ಇರಬೇಕಾಗುತ್ತದೆ. ಮಕ್ಕಳ ಜೊತೆ ಸಂವೇದನೆಯಿಂದ ವ್ಯವಹರಿಸಬೇಕಾಗುವುದರಿಂದ ಪೊಲೀಸರಿಗೆ ಇಂಥ ತರಬೇತಿ ಕಾರ್ಯಾಗಾರ ಗಳನ್ನು ಆಯೋಜಿಸಲಾಗುತ್ತಿದೆ ಎಂದು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಠಾಣೆಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಅಪಾಯದಲ್ಲಿ ಸಿಲುಕಿದ ಮಕ್ಕಳನ್ನು ರಕ್ಷಣೆ ಮಾಡುವಾಗ ಅಥವಾ ಅಪರಾಧಿ ಚಟುವಟಿಕೆಗಳಲ್ಲಿ ನಿರತರಾದ ಮಕ್ಕಳನ್ನು ಕಾನೂನಿನ ಸುಪರ್ದಿಗೆ ತೆಗೆದುಕೊಳ್ಳುವ ಸಮಯದಲ್ಲಿ ಬಾಲನ್ಯಾಯ ಕಾಯ್ದೆಯ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾ ಗುತ್ತದೆ ಎಂದವರು ಹೇಳಿದರು. ಸಮವಸ್ತ್ರದಲ್ಲಿರುವ ಪೊಲೀಸರನ್ನು ಕಂಡು ಮಕ್ಕಳು ಬೆದರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮಕ್ಕಳಿಗೆ ಸಂಬಂಧಪಟ್ಟ ಪ್ರಕರಣಗಳನ್ನು ದೊಡ್ಡವರ ಪ್ರಕರಣ ಗಳಂತೆ ನೋಡಲಾಗುವುದಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಕ್ರಿಯೆಗಳನ್ನು ನಿಭಾಯಿಸಲು ತರಬೇತಿ ಹೊಂದಿದ ಸಿಬ್ಬಂದಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಸಹಕಾರಿಯಾಗಿವೆ. ಕಾರ್ಯಾಗಾರದಲ್ಲಿ ಪಡೆದ ಜ್ಞಾನವನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದವರು ನುಡಿದರು. ಬಾಲನ್ಯಾಯ ಮಂಡಳಿಯ ಅಧ್ಯಕ್ಷ, ಎಸಿಜೆಎಂ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವತ್ಸ ಮಾತನಾಡಿ, ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆಗಳು ಕಾನೂನಿನ ರಕ್ಷಕರು. ಇಲಾಖೆಯಲ್ಲಿ ಮಕ್ಕಳ ಜೊತೆ ನೇರವಾಗಿ ವ್ಯವಹರಿಸುವ ಸಿಬ್ಬಂದಿಗಳಿಗೆ ಬಾಲ ನ್ಯಾಯ ಕಾನೂನಿನ ಮಾಹಿತಿ ಇರುವುದು ಅತಿ ಮುಖ್ಯ. ಮಕ್ಕಳಿಗೆ ಸಂಬಂಧಿಸಿದ ದೂರುಗಳು ಬಂದಾಗ ಅದನ್ನು ನಿರ್ಲಕ್ಷ್ಯ ಮಾಡದೆ ತ್ವರಿತವಾಗಿ ಸ್ಪಂದಿಸಿದಾಗ ಹಲವಾರು ಮುಗ್ದ ಜೀವಗಳನ್ನು ಸಮಯೋಚಿತವಾಗಿ ರಕ್ಷಿಸಬಹುದು ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಮಾತನಾಡಿ. ಮಕ್ಕಳ ಹಕ್ಕುಗಳ ರಕ್ಷಣೆ ಸಂದರ್ಭದಲ್ಲಿ ಮಾಹಿತಿ ಕೊರತೆಯಿಂದ ಸಣ್ಣಪುಟ್ಟ ತಪ್ಪುಗಳಾಗುತ್ತವೆ. ಕಾರ್ಯಾಗಾರಗಳಿಂದ ಕಾನೂನಿನ ಬಗ್ಗೆ ತಿಳುವಳಿಕೆ ಹೆಚ್ಚಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಸಮರ್ಪಕ ಸೇವೆ ನೀಡಲು ಅನುಕೂಲವಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯುನಿಸೆಫ್ ಪ್ರಾದೇಶಿಕ ಸಂಯೋಜಕ ಡಾ. ಕೊಣಿಲ ರಾಘವೇಂದ್ರ ಭಟ್ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜೂಹಿ ದಾಮೋದರ್ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿ, ಮಹೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Ranji Trophy- ಕರ್ನಾಟಕದ ಬಿಗುದಾಳಿಗೆ ಮುಂಬೈ ತತ್ತರ; ನಿರಾಸೆಗೊಳಿಸಿದ ಕೆಎಲ್ ರಾಹುಲ್, ಮಿಂಚಿದ ಮಾಯಾಂಕ್ ಆಗರ್ವಾಲ್
Karnataka Vs Mumbai- ಬೌಲರ್ ಗಳ ಬಿಗು ದಾಳಿ ಮತ್ತು ಬ್ಯಾಟರ್ ಗಳ ಎಚ್ಚರಿಕೆಯ ಆಟದ ಪರಿಣಾಮ ಕರ್ನಾಟಕ ತಂಡ ರಣಜಿ ಕ್ನಾರ್ಟರ್ ಫೈನಲ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಪಂದ್ಯದ ಮೊದಲ ದಿನ ಪ್ರಸಿದ್ಧ ಕೃಷ್ಣ, ಶ್ರೀಯಸ್ ಗೋಪಾಲ್ ಮತ್ತು ವಿದ್ವತ್ ಕಾವೇರಪ್ಪ ದಾಳಿಗೆ ನಲುಗಿದ ಮುಂಬೈ 120 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಕರ್ನಾಟಕ ತಂಡ ಮಾಯಾಂಕ್ ಆಗರ್ವಾಲ್ ಅರ್ಧಶತಕದ ನೆರವಿನಿಂದ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ.
ಚಿಂಚೋಳಿ | ನಾಗರಿಕರು ವಿಮೆಯ ಮಹತ್ವ ಅರಿತುಕೊಳ್ಳಬೇಕು : ಭಂವರ್ ಸಿಂಗ್ ಮೀನಾ
ಚಿಂಚೋಳಿ: ಪ್ರತಿಯೊಬ್ಬ ನಾಗರಿಕರು ವಿಮೆಯ ಮಹತ್ವವನ್ನು ಅರಿತುಕೊಳ್ಳಬೇಕು ಮತ್ತು ಸಂಕಷ್ಟದ ಸಮಯದಲ್ಲಿ ಆರ್ಥಿಕ ಭದ್ರತೆ ನೀಡುವಂತಹ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಜಿ.ಪಂ ಸಿ.ಇ.ಓ ಭಂವರ್ ಸಿಂಗ್ ಮೀನಾ ಹೇಳಿದರು. ಪಟ್ಟಣದ ತಾ.ಪಂ ಆವರಣದಲ್ಲಿ ಜಿ.ಪಂ, ತಾ ಪಂ ಹಾಗೂ ಲೀಡ್ ಬ್ಯಾಂಕ್ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಪಿಎಂಜೆಜೆವೈ ಹಾಗೂ ಪಿಎಂಎಸ್ ಬಿವೈ ವಿಮೆಯ ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಿಎಂಜೆಜೆಬಿವೈ, ಪಿಎಂಎಸ್ ಬಿವೈ, ಎಪಿವೈ ವಿಮೆಯ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸರ್ಕಾರದ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳು ನೌಕರರು ತಮ್ಮ ಜೀವನದ ಅನಿಶ್ಚಿತತೆಗಳನ್ನು ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸಲು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಗಳಾದ “ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆಯು ಅವಧಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಪಘಾತ ವಿಮೆ ಯೋಜನೆಯಾಗಿದ್ದು, ಅತೀ ಕಡಿಮೆ ಪ್ರೀಮಿಯಂನಲ್ಲಿ 1 ಲಕ್ಷ ರೂ. ವಿಮಾ ಸೌಲಭ್ಯ ಸಿಗುತ್ತದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಮುಖ್ಯ ಹಣಕಾಸು ಅಧಿಕಾರಿ ವಿಕ್ರಮ ಸಜ್ಜನ, ಎಸ್ ಬಿ ಐ ವ್ಯವಸ್ಥಾಪಕ ನಾಗೇಂದ್ರಪ್ಪ ಬಾಪುಗೌಡ, ಪವನಕುಮಾರ, ತಾ.ಪಂ. ಇಒ ಸಂತೋಷ ಚವ್ಹಾಣ, ಎಡಿ ನಾಗೇಂದ್ರಪ್ಪ ಬೇಡಗಪಳ್ಳಿ, ಇತರರು ಇದ್ದರು.
Kalaburagi | ಮದೀನಾ ಕಾಲೋನಿಯ ಪಿಎಂ ಶ್ರೀ ಸರಕಾರಿ ಶಾಲೆಯಲ್ಲಿ ‘ಸ್ಪೆಲ್–ಬಿ’ ಸ್ಪರ್ಧೆ
ಕಲಬುರಗಿ : ನಗರದ ಮದೀನಾ ಕಾಲೋನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿ.ಎಂ. ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದ್ವಿಭಾಷಾ ಹಾಗೂ ಉರ್ದು ವಿಭಾಗದ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಇಂಗ್ಲಿಷ್ ಭಾಷೆಯ ‘ಸ್ಪೆಲ್–ಬಿ’ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಶಾಲೆಯ ಅನೇಕ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಆಂಗ್ಲ ಭಾಷಾ ಜ್ಞಾನ ಹಾಗೂ ಶಬ್ದರಚನಾ ಕೌಶಲ್ಯವನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಗಝಾಲ ಅಂಜುಮ್ ಪ್ರಥಮ ಸ್ಥಾನ, ಇಕ್ರಾ ತಬಸ್ಸುಮ್ ದ್ವಿತೀಯ ಸ್ಥಾನ ಪಡೆದರು. ಫಿಜಾ ಮೆಹವೀಶ್, ಜೀನತ್ ಫರೀನ್ ಹಾಗೂ ಅಬ್ದುಲ್ ನುಮಾನ್ ಅವರು ತೃತೀಯ ಸ್ಥಾನವನ್ನು ಹಂಚಿಕೊಂಡರು. ಓಮರ್ ಫೈಜ್, ಸುಮಯ್ಯ ಹಾಗೂ ಬಿಬಿ ಫಾತಿಮಾ ಅವರು ಸಮಾಧಾನಕರ ಬಹುಮಾನಗಳನ್ನು ಪಡೆದರು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಇಂಗ್ಲಿಷ್ ಭಾಷೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಆಂಗ್ಲ ಭಾಷಾ ಶಿಕ್ಷಕರಾದ ಪ್ರಭಾಕರ್ ಶೀಲವಂತ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಅಮ್ಜದ್ ಹುಸೇನ್ ಹಾಗೂ ಎಸ್ಡಿಎಂಸಿ ಉಪಾಧ್ಯಕ್ಷೆ ಸಮ್ರಿನ್ ಮಾತನಾಡಿ, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಬೆಳೆಸಲು ಇಂತಹ ಸ್ಪರ್ಧೆಗಳು ಸಹಾಯಕವಾಗಿದ್ದು, ಬಹುಮಾನಗಳ ಮೂಲಕ ಮಕ್ಕಳನ್ನು ನಿರಂತರವಾಗಿ ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಮಹೇಶ್ ಕುಮಾರ್, ಮಕ್ಕಳ ಪಾಲಕ-ಪೋಷಕರು ಹಾಗೂ ಶಾಲೆಯ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.
ಮುಗಿಯುತ್ತಲೇ ಇಲ್ಲ ಚಳಿಗಾಲ ; ಮುಂದಿನ ನಾಲ್ಕು ದಿನ ಕನಿಷ್ಠ ತಾಪಮಾನ 14, 15 ಡಿಗ್ರಿ
ಶಿವರಾತ್ರಿ ಸಮೀಪಿಸುತ್ತಿದ್ದರೂ ಚಳಿಗಾಲ ಮುಗಿಯುತ್ತಿಲ್ಲ. ರಾತ್ರಿಯಾಗುತ್ತಿದ್ದಂತೆ ಚಳಿ ಕೊರೆಯುತ್ತಿದೆ. ತಾಪಮಾನದಲ್ಲಿ ತೀರಾ ಬದಲಾವಣೆ ಆಗಿಲ್ಲ. ಮುಂದಿನ ನಾಲ್ಕು ದಿನ ಕೂಡ ಜಿಲ್ಲೆಯಲ್ಲಿ ಹೀಗೆ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕು ದಿನ 14 ಮತ್ತು 15 ಡಿಗ್ರಿ ಕನಿಷ್ಠ ತಾಪಮಾನವಿರಲಿದೆ.
ಪ್ರಗ್ಯಾನ್ 22ನೇ ಆವೃತ್ತಿ| ಫೆ.20ರಿಂದ ’ಅನಾಕ್ರೋನಿಯಾ’ ಥೀಮ್ನಡಿ ಸಂಭ್ರಮಾಚರಣೆ
ಮಂಗಳೂರು: ತಮಿಳ್ನಾಡಿನ ತಿರುಚಿನಾಪಳ್ಳಿಯ ಎನ್ಐಟಿಕೆ ವತಿಯಿಂದ ’ಅನಾಕ್ರೋನಿಯಾ’ ಥೀಮ್ನಡಿ ಫೆ.20ರಿಂದ 23ರವರೆಗೆ ಪ್ರಗ್ಯಾನ್ 22ನೇ ಆವೃತ್ತಿ ನಡೆಯಲಿದೆ. NIT Trichy- ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ, ಮಿತಿಗಳನ್ನು ಸವಾಲು ಮಾಡುವ ಮತ್ತು ನಾವೀNIT Trichyಯನ್ನು ಆಚರಿಸುವ ಹಬ್ಬವಾಗಿದೆ. ಪ್ರಗ್ಯಾನ್ ಯ ವಾರ್ಷಿಕ ಅಂತರಾಷ್ಟ್ರೀಯ ತಾಂತ್ರಿಕ-ನಿರ್ವಹಣಾ ಮಹೋತ್ಸವವಾಗಿISO (Anachronia). ಇದು 9001 ಮತ್ತು 20121 ಪ್ರಮಾಣೀಕೃತವಾಗಿದೆ. ಇದೀಗ ಅನಾಕ್ರೋನಿಯಾ ಎಂಬ ಶೀರ್ಷಿಕೆಯೊಂದಿಗೆ 22ನೇ ಆವೃತ್ತಿಯ ವೇದಿಕೆ ಸಿದ್ಧವಾಗಿದೆ. *ಪ್ರದರ್ಶನಗಳು: ಸಂಗಮ್ ಮತ್ತು ಇಂಜಿನಿಯಮ್ ವಿದ್ಯಾರ್ಥಿಗಳ ನಾವೀನ್ಯತೆಯನ್ನು ಗುರುತಿಸಲು ಪ್ರಗ್ಯಾನ್ ಪ್ರತಿ ವರ್ಷ ’ಓಪನ್ ಹೌಸ್’ ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ವಿವಿಧ ವಿಭಾಗಗಳು ಮತ್ತು ತಾಂತ್ರಿಕ ಕ್ಲಬ್ಗಳ ಯೋಜನೆಗಳನ್ನು ಒಟ್ಟುಗೂಡಿಸಿ, ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಹೂಡಿಕೆದಾರರಿಗೆ ತಮ್ಮ ಪರಿಹಾರಗಳನ್ನು ವಿವರಿಸಲು ವೇದಿಕೆ ನೀಡುತ್ತದೆ. *(Ingenium): ಇಂಜಿನಿಯಮ್ ಇದು ರಾಷ್ಟ್ರಮಟ್ಟದ ತಾಂತ್ರಿಕ ಸ್ಪರ್ಧೆಯಾಗಿದ್ದು, ದೇಶದಾದ್ಯಂತ ಇರುವ ಪ್ರತಿಭಾವಂತ ಯುವ ಮನಸ್ಸುಗಳನ್ನು ಆಕರ್ಷಿಸುತ್ತದೆ. (Sangam)NIT Trichy ಸಂಗಮ್ : ಇದು ಪ್ರಗ್ಯಾನ್ನ ಪ್ರಮುಖ ಹಾರ್ಡ್ವೇರ್ ಹ್ಯಾಕಥಾನ್ ಆಗಿದ್ದು, ವಿದ್ಯಾರ್ಥಿಗಳಿಗೆ ನೈಜ ಪ್ರಪಂಚದ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ರೂಪಿಸಲು ಅವಕಾಶ ನೀಡುತ್ತದೆ. ಪ್ರಗ್ಯಾನ್ ಏಳು ವಿಭಾಗಗಳಡಿ ಮ್ಯಾನೇಜ್ಮೆಂಟ್, ಕೋಡಿಂಗ್, ಹಾರ್ಡ್ವೇರ್, ರೋಬೋಟಿಕ್ಸ್ ಸಹಿತ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. (Linux)(Samsung), (Mercedes) ಲಿನಕ್ಸ್ , ಸ್ಯಾಮ್ಸಂಗ್ ಮರ್ಸಿಡಿಸ್ ನಂತಹ ಪ್ರಸಿದ್ಧ ಕಂಪನಿಗಳ ಸಹಯೋಗದೊಂದಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ ಗಳನ್ನು ಕಲಿಯಲು ಸಹಾಯ ಮಾಡುತ್ತದೆ. (Crossfire)ಕ್ರಾಸ್ಫೈರ್ : ಇದು ಪ್ರಗ್ಯಾನ್ನ ಪ್ರಮುಖ ಚರ್ಚಾಕೂಟವಾಗಿದ್ದು, ಭಾರತದಾದ್ಯಂತದ ರಾಜಕೀಯ ಗಣ್ಯರು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸಲು ಇಲ್ಲಿ ಒಂದಾಗುತ್ತಾರೆ. (PSR) (Techids) ಪ್ರಗ್ಯಾನ್ ಬ್ಲಾಗ್ ಮತ್ತು ಪಾಡ್ಕಾಸ್ಟ್ ಮೂಲಕ ವಿದ್ಯಾರ್ಥಿ ಸಮುದಾಯದೊಂದಿಗೆ ಸಂವಹನ ನಡೆಸುತ್ತದೆ. ಪ್ರಗ್ಯಾನ್ ಸಾಮಾಜಿಕ ಜವಾಬ್ದಾರಿ ತಂಡವು ವರ್ಷವಿಡೀ ಪ್ರಭಾವಶಾಲಿ ಉಪಕ್ರಮಗಳನ್ನು ನಡೆಸು ತ್ತದೆ. ಇದರಲ್ಲಿ ’ಟೆಕಿಡ್ಸ್’ ಪ್ರಮುಖವಾಗಿದ್ದು, ಇದು ಶಾಲಾ ಮಕ್ಕಳಿಗೆ ತಾಂತ್ರಿಕ ಜಗತ್ತಿನ ಪ್ರಾಥಮಿಕ ಅರಿವು ಮೂಡಿಸುತ್ತದೆ. ಇನ್ಫೋಟೈನ್ಮೆಂಟ್ (Infotainment): ಇದು ವಿದ್ಯಾರ್ಥಿಗಳ ಮನರಂಜನೆಗಾಗಿ ಮೀಸಲಾದ ವಿಭಾಗವಾಗಿದೆ. ಬೆಂಕಿಯ ಪ್ರದರ್ಶನಗಳು, ಬೆಳಕಿನ ಆಟಗಳು ಮತ್ತು ವೈಮಾನಿಕ ಸಾಹಸಗಳಿಂದ ಹಿಡಿದು ಅದ್ಧೂರಿ ’(Pro shows) ಪ್ರೊ ಶೋ’ ವರೆಗೆ, ಇನ್ಫೋಟೈನ್ಮೆಂಟ್ ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ. ಪ್ರಗ್ಯಾನ್ ಕೇವಲ ಒಂದು ಹಬ್ಬವಲ್ಲ. NIT Trichy ಇದು ವಿದ್ಯಾರ್ಥಿ ಸಮುದಾಯದ ಶಕ್ತಿ ಮತ್ತು ಸಂಸ್ಥೆಯ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಯಡ್ರಾಮಿ ಬಸ್ ನಿಲ್ದಾಣದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ
ಯಡ್ರಾಮಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಅಪರಾಧಗಳನ್ನು ತಡೆಗಟ್ಟಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ಪದಾಧಿಕಾರಿಗಳು ತಾಲೂಕು ದಂಡಾಧಿಕಾರಿ ಹಾಗೂ ಬಸ್ ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಬಸ್ ಹತ್ತುವಾಗ ಹಾಗೂ ಇಳಿಯುವಾಗ ಕಳ್ಳರು ಮಹಿಳೆಯರ ಆಭರಣಗಳನ್ನು ದೋಚಿಕೊಂಡು ಹೋದ ಉದಾಹರಣೆಗಳಿವೆ. ಇದರಿಂದ ಜನರಿಗೆ ಸುರಕ್ಷತೆ ಇಲ್ಲದಂತಾಗಿದೆ. ಬಸ್ ನಿಲ್ದಾಣದಲ್ಲಿ ಗುಣಮಟ್ಟದ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಈ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಅವರು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಡ್ರಾಮಿ ತಾಲೂಕು ಗೌರವ ಅಧ್ಯಕ್ಷರು ಹಾಗೂ ಜೇವರ್ಗಿ ತಾಲೂಕಿನ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷರಾದ ಸಾಂಭಶಿವ ಎಂ. ಹಿರೇಮಠ, ಮುಖಂಡರಾದ ಗುರಣ್ಣ ದೊಡ್ಡಮನಿ, ಸಾಹೇಬಗೌಡ ಬಿ. ದೇಸಾಯಿ, ಕರವೇ ಯಡ್ರಾಮಿ ತಾಲೂಕು ಉಸ್ತುವಾರಿ ಅಧ್ಯಕ್ಷರಾದ ದೇವೇಂದ್ರ ನಾಯ್ಕೋಡಿ, ಮಲ್ಲಿಕಾರ್ಜುನ ಬಿರಾದಾರ, ಹನುಮಂತ ಕೂಡ್ಲಿ, ರಾಚೋಟಯ್ಯ ಹಿರೇಮಠ, ಯಲ್ಲಾಲಿಂಗ ಡಿ. ಹರನಾಳ, ನವ ಕರ್ನಾಟಕ ನಿರ್ಮಾಣ ಸೇನೆ ತಾಲೂಕು ಅಧ್ಯಕ್ಷರಾದ ರೇವಣಸಿದ್ದ ಮಕಾಶಿ, ಬಸಯ್ಯ ಹಿರೇಮಠ ಮಾಣಶುಣಗಿ ಸೇರಿದಂತೆ ಇತರಿದ್ದರು.
ಅಧಿವೇಶನದಲ್ಲಿ ಕಾಂಗ್ರೆಸ್ನ ನುಂಗಣ್ಣಗಳ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ : ಆರ್.ಅಶೋಕ್
ಬೆಂಗಳೂರು : ‘ವಿಬಿ-ಜಿ ರಾಮ್ ಜಿ’ ಕಾಯ್ದೆಗೆ ಸಂಬಂಧಿಸಿದಂತೆ ಬಿಜೆಪಿ ವತಿಯಿಂದ ಜಾಹೀರಾತು ನೀಡಿದ್ದೇವೆ. ಕಾಂಗ್ರೆಸ್ನಂತೆ ಸರಕಾರದ ಹಣದಲ್ಲಿ ಜಾಹೀರಾತು ನೀಡಿಲ್ಲ. ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ಮದ್ಯದಂಗಡಿಗಳನ್ನು ನಿರ್ಮಿಸಿ, ಅದರಲ್ಲಿ ಲೂಟಿ ಮಾಡಿದ್ದಾರೆ. ಕಾಂಗ್ರೆಸ್ನವರ ಲೂಟಿಯನ್ನು ನೋಡಿ ಗಾಂಧೀಜಿ ತಮ್ಮ ಕೈಗೆ ಕೋಲು ತೆಗೆದುಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ರಘುಪತಿ ರಾಘವ ರಾಜಾರಂ ಎಂದಿದ್ದ ಗಾಂಧೀಜಿ ಹೆಸರನ್ನು ಯೋಜನೆಗಳಿಗೆ ಇರಿಸುವ ಬದಲು, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರನ್ನೇ ಇರಿಸಿದ್ದಾರೆ. ಕೇವಲ ಇವರ ಕುಟುಂಬದ ಹೆಸರನ್ನೇ ಎಲ್ಲಕ್ಕೂ ಇಟ್ಟಿದ್ದಾರೆ. 470ಯೋಜನೆಗಳಲ್ಲಿ ಗಾಂಧೀಜಿ ಅಥವಾ ಅಂಬೇಡ್ಕರ್ ಹೆಸರಿಲ್ಲ. ಇವರೆಲ್ಲರೂ ನಕಲಿ ಗಾಂಧಿಗಳು ಎಂದು ಟೀಕಿಸಿದರು. ಅಧಿವೇಶನದಲ್ಲಿ ಕಾಂಗ್ರೆಸ್ನ ನುಂಗಣ್ಣಗಳ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ. ಇದರ ವಿರುದ್ಧ ಇನ್ನಷ್ಟು ಹೋರಾಟ ಮಾಡುತ್ತೇವೆ. ಅಬಕಾರಿ ಇಲಾಖೆಯಲ್ಲಿ ನಡೆದ 6ಸಾವಿರ ಕೋಟಿ ರೂ.ಹಗರಣ ಸಂಬಂಧ ಐದು ದಾಖಲೆಗಳನ್ನು ಹಾಗೂ ಆಡಿಯೋ ದಾಖಲೆಗಳನ್ನು ನೀಡಿದ್ದೇನೆ. ಇಷ್ಟಾದರೂ ಸರಕಾರ ಇನ್ನೂ ಸಾಕ್ಷಿ ಕೇಳುತ್ತಿದೆ ಎಂದು ಅವರು ದೂರಿದರು. ಜಿಬಿಎ ಚುನಾವಣೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಚುನಾವಣೆಗೆ ಸಂಬಂಧಿಸಿದಂತೆ ನಾಳೆ (ಫೆ.7) ಪಕ್ಷದ ಸಭೆ ನಡೆಯಲಿದೆ. ಎಲ್ಲ ಶಾಸಕರು ಹಾಗೂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಬಿಜೆಪಿ ಗೆದ್ದಿತ್ತು. ಇದೀಗ ನಿರಂತರವಾಗಿ ತೆರಿಗೆಗಳನ್ನು ಹಾಕಿರುವುದರಿಂದ ಕಾಂಗ್ರೆಸ್ಗೆ ಜನರು ಕಪಾಳ ಮೋಕ್ಷ ಮಾಡಲಿದ್ದಾರೆ ಎಂದರು.
ಜೇವರ್ಗಿ | ಜನರ ಆರೋಗ್ಯ ಕಾಪಾಡುವುದು ಆದ್ಯ ಕರ್ತವ್ಯ: ಶಾಸಕ ಡಾ.ಅಜಯಸಿಂಗ್
ಜೇವರ್ಗಿ: ಜೇವರ್ಗಿ ಮತಕ್ಷೇತ್ರದ ಜನರ ಆರೋಗ್ಯ ಕಾಪಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಹೇಳಿದರು. ತಾಲೂಕಿನ ಮಂದೇವಾಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಧರ್ಮಸಿಂಗ್ ಫೌಂಡೇಶನ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಹಣ, ಆಸ್ತಿಗಿಂತಲೂ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು. ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗಾಗಿ 2007ರಲ್ಲಿ ಮೊದಲ ಬಾರಿಗೆ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಆಂಬ್ಯುಲೆನ್ಸ್ ಪ್ರಾರಂಭ ಮಾಡಲಾಗಿದೆ. ಇದರಿಂದ ಬಡವರಿಗೆ ಆರೋಗ್ಯ ಸೇವೆ ನೀಡಲು ಬಹಳ ಅನುಕೂಲವಾಗಿದೆ, ಮುಂದೆ ಕೂಡ ಮಂದೇವಾಲ ಗ್ರಾಮದಲ್ಲಿಯೂ ಸಹ ಕೆಕೆಆರ್ಡಿಬಿಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಅಲ್ಲದೆ ತಿಂಗಳಿಗೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಉಮೇಶ ಶರ್ಮಾ, ಡಾ.ಕಾಮೇಶ್ವರಿ, ಡಾ.ಶ್ವೇತಾ, ರಾಜಶೇಖರ ಸಿರಿ, ಭಸವಂತ್ರಾಯಗೌಡ ಗಾಣಗೇರ, ಶಿವಪುತ್ರಪ್ಪ ಸಾಹು ಕೋರಿ, ಮಂದೇವಾಲ ಗ್ರಾಪಂ ಅಧ್ಯಕ್ಷೆ ಶೀರಾಬಾಯಿ ಪವಾರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪ್ರತಾಪಕಟ್ಟಿ, ಸೋಮಲಿಂಗಪ್ಪಗೌಡ ಗುಜಗುಂಡ, ರಜಾಕ ಮನಿಯಾರ ಯಡ್ರಾಮಿ, ರವಿಗೌಡ ಉಮ್ಮರಗಿ, ಭೀಮರಾಯ ಕನ್ನೋಳ್ಳಿ, ಗುರುಶಾಂತಗೌಡ ಕುರನಳ್ಳಿ, ಬಹದ್ದೂರ ರಾಠೋಡ, ಅಂಜನಾ ರಾಠೋಡ, ಸಂಗಮೇಶ ಕೊಂಬಿನ್, ಕಾಶಿನಾಥ ಮಂದೇವಾಲ, ಮರೆಪ್ಪ ಸರಡಗಿ ಸೇರಿದಂತೆ ಇತರರು ಇದ್ದರು. ಶ್ರೀಶೈಲ ಬುಟ್ನಾಳ ನಿರೂಪಿಸಿದರು. ಕ್ಯಾನ್ಸರ್ ರೋಗದಿಂದ ದೇಶದಲ್ಲಿ ಬಹಳಷ್ಟು ಜನ ಮಹಿಳೆಯರ ಸಾವು ಹೆಚ್ಚಾಗುತ್ತಿದೆ. ಅದನ್ನು ತಡೆಯಬೇಕು ಅಂದರೆ ಮೊದಲು ಮಹಿಳೆಯರು ಕ್ಯಾನ್ಸರ್ ತಪಾಸಣೆ ಮಾಡಿಸುವುದು ಬಹಳ ಮುಖ್ಯವಾಗಿದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದರೆ ತಂಬಾಕು, ಗುಟ್ಕಾ, ಧೂಮಪಾನ ಸೇವನೆ ಮಾಡುವುದು ಬಿಡಬೇಕು. -ಡಾ. ಅಜಯ್ ಸಿಂಗ್ (ಶಾಸಕ)
ಬೆಂಗಳೂರಿನ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ
ಬೆಂಗಳೂರು : ನಗರದಲ್ಲಿರುವ ವಿದೇಶಿ ರಾಯಭಾರಿ ಕಚೇರಿಗಳಿಗೆ ಬೆದರಿಕೆ ಸಂದೇಶಗಳು ಬರುತ್ತಿದ್ದು, ಇದೀಗ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ನಗರದಲ್ಲಿರುವ ಇಟಲಿ ಹಾಗೂ ಜಪಾನ್ ಕಾನ್ಸುಲೇಟ್ಗಳಿಗೆ ಕೊಲೆ ಬೆದರಿಕೆ ಸಂದೇಶಗಳು ಬಂದಿದ್ದವು. ಈಗ ಆರ್.ಟಿ.ನಗರದ ಗಂಗಾನಗರದಲ್ಲಿರುವ ನೆದರ್ ಲ್ಯಾಂಡ್ ರಾಯಭಾರಿ ಕಚೇರಿಗೆ ಜನವರಿ 29ರಂದು ಕಿಡಿಗೇಡಿಗಳು ಇ-ಮೇಲ್ ಕಳುಹಿಸಿದ್ದು, “ಕಚೇರಿಯನ್ನು ಸ್ಫೋಟ ಮಾಡಲಾಗುತ್ತದೆ” ಎಂದು ಬಾಂಬ್ ಬೆದರಿಕೆ ಹಾಕಿದ್ದಾರೆ. ಈ ಕುರಿತು ರಾಯಭಾರಿ ಕಚೇರಿಯ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಅವರು ಆರ್.ಟಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kalaburagi | ಗೃಹಲಕ್ಷ್ಮೀ ಡಿಜಿಟಲ್ ಆ್ಯಪ್ನಲ್ಲಿ ನೋಂದಣಿ ಪ್ರಾರಂಭ: ಉದ್ಯಮಿದಾರರಿಂದ ಅರ್ಜಿ ಆಹ್ವಾನ
ಕಲಬುರಗಿ : ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಡಿಜಿಟಲ್ ಆ್ಯಪ್ನ್ನು ಪ್ರಾರಂಭಿಸಿದ್ದು, ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯಮಿದಾರ ನೋಂದಣಿಯು ಪ್ರಾರಂಭವಾಗಿರುತ್ತದೆ. ತಮ್ಮ ಉತ್ಪನ್ನ ವಸ್ತುಗಳು ಹಾಗೂ ಸೇವೆಗಳನ್ನು ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ನಲ್ಲಿ ನೋಂದಣಿ ಮಾಡಿಕೊಂಡು ತಮ್ಮ ವಸ್ತುಗಳು/ಸೇವೆಗಳಿಗೆ ಪ್ರಚಾರ ಹಾಗೂ ಮಾರುಕಟ್ಟೆ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ಮಹಿಳಾ ಉದ್ಯಮಿದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಈ ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ನಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಎನ್.ಆರ್.ಎಲ್.ಎಂ ಆಂಡ್ ಎನ್.ಯು.ಎಲ್.ಎಂ ಸಂಘದ ಉದ್ಯಮಿಗಳು, ಅಕ್ಕ ಕೆಫೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು, ಕಾಸಾ(ಕೆ.ಎಸ್.ಎಸ್.ಇ ಅಸೋಸಿಯೇಷನ್) ಘಟಕಗಳ ಮಹಿಳಾ ಉದ್ಯಮಿದಾರರು, ಆರ್ಸೆಟಿ / ರೂಡಸೆಟಿ (ಧರ್ಮಸ್ಥಳ) ಮೂಲಕ ತರಬೇತಿ ಪಡೆದು ಸ್ವ-ಉದ್ಯೋಗ ನಡೆಸುತ್ತಿರುವ ಮಹಿಳೆಯರು, ತಾಲೂಕು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಯಶಸ್ವಿ ಮಹಿಳೆಯರು ನಿಗಮಗಳ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಮಹಿಳಾ ಫಲಾನುಭವಿಗಳು ನೋಂದಣಿಗೆ ಅವಕಾಶವಿರುತ್ತದೆ. ನೋಂದಣಿಗೆ ಆಸಕ್ತ ಮಹಿಳಾ ಉದ್ಯಮಿದಾರರು ತಮ್ಮ ಉತ್ಪನ್ನ ವಸ್ತುಗಳು ಹಾಗೂ ನೀಡುತ್ತಿರುವ ಸೇವೆಗಳ ಭಾವಚಿತ್ರಗಳು ಹಾಗೂ ತಮ್ಮ ಪೂರ್ಣ ವಿಳಾಸ ಹಾಗೂ ತಮ್ಮ ಇ-ಮೇಲ್ ಮಾಹಿತಿಯೊಂದಿಗೆ ತಮ್ಮ ನೋಂದಣಿ ಅರ್ಜಿಗಳನ್ನು ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೇರಾಫ್ ಧಡೇದ ಮೇಟರ್ನಿಟಿ ಆಂಡ್ ಸರ್ಜೀಕಲ್ ಆಸ್ಪತ್ರೆ ಕಾಂಪೌಂಡ, ರೇಲ್ವೆ ಸ್ಟೇಷನ ರೋಡ ಕಲಬುರಗಿ ಇಲ್ಲಿ ಕಛೇರಿ ಸಮಯದಲ್ಲಿ ಸಂಪರ್ಕಿಸಲು ಕೋರಿದೆ.
Gold Investment: ಚಿನ್ನ ಖರೀದಿಸಿ ನಷ್ಟಕ್ಕೆ ತುತ್ತಾಗದಿರಿ: ಭಾರತೀಯರಿಗೆ ಮುಕೇಶ್ ಅಂಬಾನಿ ಕಿವಿಮಾತು
ಚಿನ್ನ ಮತ್ತು ಬೆಳ್ಳಿ ಭಾರತೀಯರ ಪರಂಪರೆಯ ಉಳಿತಾಯ ಸಾಧನಗಳಾಗಿದ್ದರೂ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಅವುಗಳು ಸಂಪತ್ತು ಸೃಷ್ಟಿಸುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ. ಜಿಯೋ-ಬ್ಲ್ಯಾಕ್ರಾಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಾಸರಿ ಭಾರತೀಯ ಉಳಿತಾಯದಾರರು ತಮ್ಮ ಹಣವನ್ನು ಬಂಡವಾಳ ಮಾರುಕಟ್ಟೆಗಳತ್ತ ತಿರುಗಿಸಿದರೆ ದೀರ್ಘಕಾಲದಲ್ಲಿ ಬಹುಪಟ್ಟು ಲಾಭ ಪಡೆಯಬಹುದು ಎಂದು ಸಲಹೆ ನೀಡಿದ್ದಾರೆ. ಇತ್ತೀಚಿನ
ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಸಂಪುಟ ಅಸ್ತು: ಕೃಷ್ಣ ಬೈರೇಗೌಡ
ಬೆಂಗಳೂರು : ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡೂ ಯೋಜನೆಗಳು ನೀರಾವರಿ ವ್ಯಾಪ್ತಿಯಲ್ಲಿದ್ದು, ಸ್ಥಳೀಯರಿಂದ ಬಹಳ ದಿನಗಳ ಕಾಲ ಬಾಕಿ ಉಳಿದಿದ್ದ ಬೇಡಿಕೆಗಳಾಗಿದ್ದವು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಸ್ಥಳೀಯ ಜನರು ಗಂಡಸಿ ಹೋಬಳಿ ಕೆಂಕೆರೆ ಮತ್ತು ಇತರ 20 ಕೆರೆಗಳಿಗೆ ಹೇಮಾವತಿಯಿಂದ ನೀರನ್ನು ಎತ್ತುವ ಮೂಲಕ ನೀರು ಹರಿಸುವಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಸಲ್ಲಿಸುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ. ಈ ಒಣ ಪ್ರದೇಶದಲ್ಲಿ ನೀರಿನ ಅವಶ್ಯಕತೆಗಳನ್ನು ಪೂರೈಸಲು, 32 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅದೇ ಸಮಯದಲ್ಲಿ ಅರಕಲಗೋಡು ತಾಲೂಕಿನ ಅಲ್ಲಾಪಟ್ಟಣ ಏತ ನೀರಾವರಿ ಯೋಜನೆಯನ್ನು ಪುನರುಜ್ಜೀವನಗೊಳಿಸಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಅಸ್ತಿತ್ವದಲ್ಲಿರುವ ಯೋಜನೆಯು ಪುನರಾವರ್ತಿತ ದುರಸ್ತಿ, ಪಂಪ್ಗಳ ವೈಫಲ್ಯ, ಕಾಲುವೆಗಳನ್ನು ಎತ್ತರಿಸುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಪಂಪ್ಗಳು, ಮೋಟಾರ್ಗಳು, ಪೈಪ್ಲೈನ್ ಗಳನ್ನು ಬದಲಾಯಿಸಲು ಸಂಪುಟದಲ್ಲಿ ಪ್ರಸ್ತಾಪಿಸಲಾಗಿದ್ದು, 11.50 ಕೋಟಿ ರೂ. ವೆಚ್ಚದಲ್ಲಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. 43.50 ಕೋಟಿ ರೂ. ಒಟ್ಟು ವೆಚ್ಚದಲ್ಲಿ ಹಾಸನ ಜಿಲ್ಲೆಯ ಎರಡು ಯೋಜನೆಗಳಿಗೆ ಸರಕಾರ ಅನುಮೋದನೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲೆಯ ಅಗತ್ಯಗಳಿಗೆ ಸ್ಪಂದಿಸಿದ್ದಕ್ಕಾಗಿ ಮತ್ತು ಈ ಯೋಜನೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದಕ್ಕಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಹಾಸನ ಜಿಲ್ಲೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕೃಷ್ಣ ಬೈರೇಗೌಡ ನುಡಿದಿದ್ದಾರೆ.
ಅಫಜಲಪುರ | ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ : ಅರುಣಕುಮಾರ ಎಂ.ವೈ.ಪಾಟೀಲ್
ಅಫಜಲಪುರ : ಶಾಲಾ ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಪ್ರತಿಭೆ, ಶೈಕ್ಷಣಿಕ ಸಾಧನೆ ಮತ್ತು ಸಾಂಸ್ಕೃತಿಕ ಕೌಶಲ್ಯಗಳನ್ನು ಪ್ರದರ್ಶಿಸುವ ಒಂದು ಸಂಭ್ರಮದ ಹಬ್ಬವಾಗಿದೆ. ಇದು ನಾಟಕ, ನೃತ್ಯ, ಗಾಯನ ಮತ್ತು ಕ್ರೀಡಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತಂಡದ ಕೆಲಸ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ ಎಂದು ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ತಿಳಿಸಿದರು. ತಾಲೂಕಿನ ಕರಜಗಿ ಗ್ರಾಮದ ಶ್ರೀ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿವೇಕ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 16 ವರ್ಷಗಳ ಹಿಂದೆ ಹುಟ್ಟಿಕೊಂಡ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯಲ್ಲಿ ಓದಿದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಕೀರ್ತಿ ಹೆಚ್ಚಿಸಿದ್ದಾರೆ ಎಂದರು. ಹಿರಿಯ ಪತ್ರಕರ್ತರಾದ ಸಾ.ಸಿ.ಬೆನಕನಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಬಲವು ತೋರಿದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ವಿದ್ಯಾರ್ಥಿಗಳು ಕೇವಲ ಮೊಬೈಲ್ ಮತ್ತು ಟಿವಿ ನೋಡುತ್ತಾ ಕಾಲ ಕಳೆಯುತ್ತಿರುವುದು ಸರಿಯಲ್ಲ, ಅಲ್ಲದೇ ಮಕ್ಕಳ ಸುಧಾರಣೆಯಲ್ಲಿ ಕೇವಲ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯ ಅಲ್ಲ, ಜತೆಗೆ ಪಾಲಕರ ಜವಾಬ್ದಾರಿ ಬಹಳಷ್ಟಿದೆ ಎಂದರು. ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಮಹೇಶ್ ಉಪ್ಪಿನ, ಬಸವರಾಜ ಬಾಗೇವಾಡಿ, ಪ್ರಭು ಉಕ್ಕಲಿ, ಬಸವರಾಜ ಮೋಟೆ, ಉದಯಭಟ್ಟ್ ಪೂಜಾರಿ, ಬಿ.ರಾಜು ಬೇನಕನಹಳ್ಳಿ, ಮಾರುತಿ ಮೂರನೆತ್ತಿ, ಶರಣು ಕುಂಬಾರ, ನಾಗಣ್ಣ ಬಿರಾದಾರ, ಸಂಗಣ್ಣ ಅಂದೇವಾಡಿ, ಶಂಕರಲಿಂಗ ಉಡಚಾಣ, ಸುನೀಲ್ ಮಲಘಾಣ, ಶರಣಗೌಡ ಪಾಟೀಲ್, ಹುಸೇನ್ ಮುಲ್ಲಾ, ಸಂಸ್ಥೆಯ ಉಪಾಧ್ಯಕ್ಷ ವಿಮಲಾಬಾಯಿ ಅಳ್ಳಗಿ, ಕಾರ್ಯದರ್ಶಿ ಶ್ರೀಶೈಲ ಅಳ್ಳಗಿ, ಶೈಲಾ ನಿರೂಪಿಸಿದರು.ಬಿ.ಎಮ್.ಸಜ್ಜನ್ ವಂದನಾರ್ಪಣೆ ಮಾಡಿದರು.
‘ಮತಪತ್ರಕ್ಕೆ ಮಣೆ’ ತಂತ್ರಜ್ಞಾನ ವಿರುದ್ಧದ ನಡೆ: ಪ್ರಹ್ಲಾದ್ ಜೋಶಿ
ಹೊಸದಿಲ್ಲಿ : ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರಕ್ಕೆ ಮಣೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಆಧುನಿಕತೆ, ತಂತ್ರಜ್ಞಾನ ವಿರುದ್ಧದ ನಡೆ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ. ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿಯೂ ಮತಪತ್ರಗಳ ಬಳಕೆಗೆ ನಿರ್ಧರಿಸಿರುವುದು ಪ್ರಗತಿ ವಿರುದ್ಧದ ನಿಲುವಾಗಿದೆ ಎಂದು ಖಂಡಿಸಿದ್ದಾರೆ. ಇಡೀ ದೇಶವೇ ಆಧುನಿಕ ತಂತ್ರಜ್ಞಾನ ಮತ್ತು ಪ್ರಗತಿಯತ್ತ ಸಾಗುತ್ತಿದೆ. ಆದರೆ, ರಾಜ್ಯ ಸರಕಾರ ಚುನಾವಣೆಯಲ್ಲಿ ಮತಪತ್ರ ಬಳಕೆ ಮೂಲಕ ಆಧುನಿಕತೆಯ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವದು ವಿಷಾದನೀಯ. ಇವಿಎಂ ಪರಿಚಯದ ಬಳಿಕ ಚುನಾವಣಾ ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
Smriti Mandhana: ತೀವ್ರ ಜ್ವರ ಇದ್ದರೂ ಆರ್ಸಿಬಿ ಟ್ರೋಫಿಗಾಗಿ ಡಬ್ಲ್ಯೂಪಿಎಲ್ ಫೈನಲ್ ಪಂದ್ಯ ಆಡಿದ ಸ್ಮೃತಿ ಮಂಧಾನ
Smriti Mandhana: ವಡೋದರಾದಲ್ಲಿ ನಡೆದ ಡಬ್ಲ್ಯೂಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದ ಆರ್ಸಿಬಿ ಎರಡನೇ ಬಾರಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನಲ್ಲಿ ನಾಯಕಿ ಸ್ಮೃತಿ ಮಂಧಾನ ಅವರ ಪಾತ್ರ ಮಹತ್ವದವಾಗಿದೆ. ಜ್ವರದಿಂದ ಬಳಲುತ್ತಿದ್ದರೂ ಸಹ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಮಹತ್ವದ ಕೊಡುಗೆ ನೀಡಿ ಗಮನ
ಮಂಗಳೂರು: ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ Trailer ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ
ಮುಲ್ಕಿ: ರಸ್ತೆ ಬದಿ ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ Trailer ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿರುವ ಘಟನೆ ಪಾವಂಜೆ ದೆವಸ್ಥಾನದ ಮುಂಭಾಗ ಶುಕ್ರವಾರ ಸಂಜೆ ನಡೆಸಿದೆ. ಗಾಯಗೊಂಡವರನ್ನು ಶಿಕ್ಷಕಿ ಕುಸುಮಾ ಮತ್ತು ಅವರ ಮಗಳು ಸುಮಲತಾ (14) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವರು ಪಾವಂಜೆಯಲ್ಲಿ ನಿಂತು ಬಸ್ ಕಾಯುತ್ತಿದ್ದ ವೇಳೆ ಮಂಗಳೂರು- ಉಡುಪಿ ಕಡೆ ಸಂಚರಿಸುತ್ತಿದ Trailer ಢಿಕ್ಕಿ ಹೊಡೆದಿದೆ. ಘಟನೆಯಿಂದ ಕುಸುಮಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಸಮತಲಾ ಅವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, Trailerರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಫಜಲಪುರ–ಉಜ್ಜಯಿನಿ ನೇರ ಎಕ್ಸ್ಪ್ರೆಸ್ ಬಸ್ ಸೇವೆಗೆ ಶಾಸಕ ಎಂ.ವೈ.ಪಾಟೀಲ್ ಚಾಲನೆ
ಅಫಜಲಪುರ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ಅಫಜಲಪುರ–ಉಜ್ಜಯಿನಿ ನೇರ ಎಕ್ಸ್ಪ್ರೆಸ್ ಬಸ್ ಸೇವೆಗೆ ಶುಕ್ರವಾರ ಅಫಜಲಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಶಾಸಕರಾದ ಎಂ.ವೈ.ಪಾಟೀಲ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ವೈ.ಪಾಟೀಲ್ ಅವರು, ಉಜ್ಜಯಿನಿ ಮಹಾಕ್ಷೇತ್ರಕ್ಕೆ ತೆರಳುವ ಭಕ್ತರ ಬಹುದಿನದ ಬೇಡಿಕೆ ಹಾಗೂ ಭಾವನೆಗಳಿಗೆ ಸ್ಪಂದಿಸಿ ಕೆಕೆಆರ್ಟಿಸಿ ಈ ನೇರ ಬಸ್ ಸೇವೆಯನ್ನು ಆರಂಭಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು. ಜನಸಾಮಾನ್ಯರ ಪ್ರಯಾಣವನ್ನು ಸುಲಭ, ಸುರಕ್ಷಿತ ಮತ್ತು ಸಮರ್ಪಕವಾಗಿ ಒದಗಿಸುವ ಉದ್ದೇಶದಿಂದ ಈ ಮಹತ್ವದ ಸಾರಿಗೆ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದರು. ನೂತನ ಅಫಜಲಪುರ–ಉಜ್ಜಯಿನಿ ನೇರ ಬಸ್ ಸೇವೆ ಪ್ರತಿದಿನ ಬೆಳಗ್ಗೆ 7.30 ಗಂಟೆಗೆ ಅಫಜಲಪುರ ಬಸ್ ನಿಲ್ದಾಣದಿಂದ ಹೊರಡಲಿದೆ. ಈ ಸೇವೆಯಿಂದ ಅಫಜಲಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಭಕ್ತರು ಮತ್ತು ಸಾರ್ವಜನಿಕರಿಗೆ ಉಜ್ಜಯಿನಿ ಮಹಾಕ್ಷೇತ್ರದ ದರ್ಶನಕ್ಕೆ ನೇರ ಹಾಗೂ ಅನುಕೂಲಕರ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಮಳೇಂದ್ರ ಸಂಸ್ಥಾನ ಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಮುಖಂಡರಾದ ಪ್ರಕಾಶ ಜಮಾದಾರ, ಶರಣು ಕುಂಬಾರ, ಶಿವಾನಂದ ಗಾಡಿಸಾಹುಕಾರ, ಅಂಬರೀಶ ಬುರಲಿ ಸೇರಿದಂತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಾಡಿ | ಫೆ.7ರಂದು ಸ್ವಾಭಿಮಾನ ಸಮಾವೇಶ : ನಾಗಮ್ಮ ಪ್ರಭಾಕರ
ವಾಡಿ : ಮಾತೋಶ್ರೀ ರಮಾಬಾಯಿ ಮಹಿಳಾ ಸಂಘದ ವತಿಯಿಂದ ಮಹಾಮಾತೆ ರಮಾಬಾಯಿ ಅಂಬೇಡ್ಕರ್ ಅವರ 132ನೇ ಜಯಂತಿ ಅಂಗವಾಗಿ ನಾಳೆ ಫೆ.7ರಂದು ಇಲ್ಲಿನ ಅಂಬೇಡ್ಕರ್ ಸಮುದಾಯ ಭವನದ ಹತ್ತಿರ “ಮಹಾನಾಯಕನ ಬೆನ್ನ ಹಿಂದಿನ ಬೆಳಕು –ರಮಾತಾಯಿ ನೆನೆಯುತ್ತ” ಎಂಬ ಶೀರ್ಷಿಕೆಯಡಿ ಸ್ವಾಭಿಮಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷೆ ನಾಗಮ್ಮ ಪ್ರಭಾಕರ ತಿಳಿಸಿದ್ದಾರೆ. ಸಮಾವೇಶವನ್ನು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ಜಾನೆ ಅವರು ಉದ್ಘಾಟಿಸಲಿದ್ದಾರೆ. ಕಲಬುರಗಿ ಗೋದುತಾಯಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಚಿಂತಕಿ ಡಾ.ಪುಟ್ಟಮಣಿ ದೇವಿದಾಸ ಮತ್ತು ಸ್ತ್ರೀವಾದಿ ಚಿಂತಕಿ ಡಾ. ಭುವನೇಶ್ವರಿ ಕಾಂಬಳೆ ಅವರು ಉಪನ್ಯಾಸ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಬೌದ್ಧ ಸಮಾಜದ ಅಧ್ಯಕ್ಷ ಟೊಪಣ್ಣ ಕೋಮಟೆ ವಹಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶ್ರಾವಣಕುಮಾರ ಮೋಸಲಗಿ, ಪ್ರಾಸ್ತಾವಿಕ ನುಡಿ ಮನೋರಮ್ಮ ಧನ್ನೆಕರ, ನಿರೂಪಣೆಯನ್ನು ವಿಕ್ರಮ್ ತೇಜಸ್, ನಾಗಮ್ಮ ಪ್ರಭಾಕರ ಸ್ವಾಗತಿಸುವರು, ತುಳಜಾ ಗಾಯಕವಾಡ ವಂದಿಸುವರು ಎಂದು ಮಾತೋಶ್ರೀ ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ನಾಗಮ್ಮ ಪ್ರಭಾಕರ ತಿಳಿಸಿದರು.
ಫೆ.20ರಿಂದ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ವಸ್ತು ಪ್ರದರ್ಶನ
ಮಂಗಳೂರು : ಕೌಶಲಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ನಗರದಲ್ಲಿ ಫೆ.20ರಿಂದ 28ರವರೆಗೆ ಕರಾವಳಿ ಮೈದಾನದಲ್ಲಿ ರಾಷ್ಟ್ರ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ- ನಮ್ಮ ಸರಸ್ ಮೇಳ-2026ನ್ನು ಆಯೋಜಿಸಲಾಗಿದೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಪ್ರತಿ ದಿನ ಬೆಳಗ್ಗೆ 10:30ರಿಂದ ರಾತ್ರಿ 9:30ರವರೆಗೆ ಮೇಳದ ಪ್ರದರ್ಶನಕ್ಕೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿ ರುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಮೊಳ ಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ಆಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್ಗಳು, ಮಸಾಲಾ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹ ಅಲಂಕಾರಿಕ ವಸ್ತುಗಳು, ಆಯುರ್ವೇದ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣ ಗಳು, ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಅಕ್ಕ ಆಹಾರ ಮಳಿಗೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾದ ಗಿರುಟ್/ಚುರುಮರಿ ಮಂಡಕ್ಕಿ, ಜೋಳದ ಖಡಕ್ ಬಿಸಿ ರೊಟ್ಟಿ, ಹೋಳಿಗೆ ಸೇರಿದಂತೆ ಬೆಳಗಾವಿ ಕುಂದಾ, ಧಾರವಾಡ ಪೇಡ, ಮೈಸೂರ್ ಪಾಕ್, ಮಂಗಳೂರು ನೀರ್ದೋಸೆ, ಖಾರಬಾತ್, ಕಡಬು ಮತ್ತು ಮಾಂಸಹಾರಿ ಆಹಾರಗಳಾದ ಫ್ರಾನ್ಸ್ ಪ್ರೈ, ರೋಟಿ-ಚಿಕನ್ಸುಕ್ಕ, ರಾಗಿಮುದ್ದೆ-ಚಿಕನ್ಕರಿ ಬಿರಿಯಾನಿ, ಫ್ರೆಶ್ ಜ್ಯೂಸ್ ಜೊತೆಗೆ ಹೊರರಾಜ್ಯದ ತಿನಿಸುಗಳನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುತ್ತದೆ. ಪ್ರತಿ ದಿನ ಸಂಜೆ 6:30ರಿಂದ 9 ಗಂಟೆಯವರೆಗೆ ಮೇಳದ ಆವರಣದಲ್ಲಿ ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಯೋಗದಲ್ಲಿ ಸಂಗೀತ, ನೃತ್ಯ ರೂಪಕಗಳು, ರಾಜ್ಯದ ಪ್ರಖ್ಯಾತ ಗಾಯಕರಿಂದ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿದೆ. ತರಬೇತಿ ಪ್ರತಿ ದಿನ ಪೂ.11:30ರಿಂದ 1:30ರವರೆಗೆ ಮಹಿಳೆಯರು ಉದ್ಯಮ ಚಟುವಟಿಕೆ ಕೈಗೊಳ್ಳಲು ಬೆಂಬಲಿಸುವ ವಿವಿಧ ತರಬೇತಿ ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಮೊದಲನೇ ಬಾರಿಗೆ ಆಯೋಜಿಸಲಾಗುತ್ತಿರುವ ಈ ಮೇಳದಲ್ಲಿ ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳು ಮಾರಾಟ ಮಾಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
Kalaburagi | 9.98 ಲಕ್ಷ ಮಕ್ಕಳಿಗೆ ಅಲ್ಬೆಂಡಾಝೋಲ್ ಮಾತ್ರೆ ವಿತರಣೆ ಗುರಿ: ಡಿಸಿ ಬಿ.ಫೌಝಿಯಾ ತರನ್ನುಮ್
ಫೆ.10ರಂದು ರಾಷ್ಟ್ರೀಯ ಜಂತು ಹುಳುಗಳ ನಿವಾರಣಾ ದಿನ
Gonikoppa | ಖಾಸಗಿ ಬಸ್-ಬೈಕ್ ನಡುವೆ ಢಿಕ್ಕಿ; ಇಬ್ಬರು ಮೃತ್ಯು
ಮಡಿಕೇರಿ : ಖಾಸಗಿ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಗೋಣಿಕೊಪ್ಪಲಿನ ಮುಖ್ಯ ರಸ್ತೆಯ ಶ್ರೀ ಉಮಾಮಹೇಶ್ವರಿ ದೇವಾಲಯದ ಬಳಿ ನಡೆದಿದೆ. ಗೋಣಿಕೊಪ್ಪಲಿನ ನಿವಾಸಿ ಸುಲೈಮಾನ್ (32) ಹಾಗೂ ಚೆನ್ನಂಗೊಲ್ಲಿ ನಿವಾಸಿ ಪೌಲೋಸ್ (28) ಮೃತರು. ಸುಲೈಮಾನ್ ಸ್ಥಳದಲ್ಲೇ ಮೃತಪಟ್ಟರೆ, ಪೌಲೋಸ್ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿಗೆ ಕರೆದೊಯ್ಯುವ ಸಂದರ್ಭ ದಾರಿ ಮದ್ಯೆ ಕೊನೆಯುಸಿರೆಳೆದಿದ್ದಾರೆ. ಗುರುವಾರ ರಾತ್ರಿ ಖಾಸಗಿ ಬಸ್ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ.
ದಿಶಾ ಡಿ.ಎನ್.ರಿಗೆ ಪಿಎಚ್ಡಿ ಪದವಿ
ಉಡುಪಿ, ಫೆ.6: ನಿಟ್ಟೆಯ ಎನ್ಎಂಎಎಂ ಅಡ್ಯಂತಾಯ ಪರಿಗಣಿತ ವಿಶ್ವವಿದ್ಯಾನಿಲಯದ ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿಶಾ ಡಿ.ಎನ್. ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ. ಇವರು ಪ್ರಿಡಿಕ್ಟಿವ್ ಅನಾಲಿಸಿಸ್ ಆಫ್ ಇನ್ಹೆರಿಟೆಡ್ ಡಿಸೀಸಸ್ ಯೂಸಿಂಗ್ ಮೆಷಿನ್ ಲರ್ನಿಂಗ್ ಟೆಕ್ನಿಕ್ಸ್ ಎಂಬ ವಿಷಯದಲ್ಲಿ ಪ್ರಸ್ತುತ ಪಡಿಸಿರುವ ಮಹಾಪ್ರಬಂಧವನ್ನು ಬೆಂಗಳೂರು ಎಂ.ಎಸ್.ರಾಮಯ್ಯ ತಾಂತ್ರಿಕ (ಸ್ವಾಯತ್ತ) ಮಹಾ ವಿದ್ಯಾಲಯದ ಡಾ.ಸೀಮಾ ಎಸ್. ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದ್ದಾರೆ. ಫೆ.2ರಂದು ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ಘಟಿಕೋತ್ಸವದಲ್ಲಿ ದಿಶಾ ಅವರಿಗೆ ಪಿ.ಎಚ್.ಡಿ. ಪದವಿಯನ್ನು ಪ್ರದಾನ ಮಾಡಲಾಗಿದೆ.
‘ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ’: ಸುಪ್ರೀಂ ಕೋರ್ಟ್ ನಲ್ಲಿ ಜನ್ ಸುರಾಜ್ ಪಕ್ಷದ ಅರ್ಜಿ ವಜಾ
ಹೊಸದಿಲ್ಲಿ: ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಚುನಾವಣಾ ತಂತ್ರಜ್ಞ ಹಾಗೂ ರಾಜಕಾರಣಿ ಪ್ರಶಾಂತ್ ಕಿಶೋರ್ ನೇತೃತ್ವದ ರಾಜಕೀಯ ಪಕ್ಷ ‘ಜನ್ ಸುರಾಜ್’ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಪಕ್ಷದ ಚುನಾವಣಾ ಸೋಲಿನ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿತು. ‘ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ; ಈಗ ಪ್ರಚಾರ ಪಡೆಯಲು ನ್ಯಾಯಾಂಗ ವೇದಿಕೆಯನ್ನು ಬಳಸುತ್ತಿದ್ದೀರಾ?’ ಎಂದು ಪೀಠವು ಪ್ರಶ್ನಿಸಿತು. ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರೂ ಅರ್ಜಿಯ ಸಮರ್ಥನೀಯತೆಯನ್ನು ಪ್ರಶ್ನಿಸಿ, ಇಂತಹ ಹಕ್ಕುಗಳನ್ನು ನೇರವಾಗಿ ಸುಪ್ರೀಂ ಕೋರ್ಟ್ ಮುಂದೆ ಹೇಗೆ ಎತ್ತಬಹುದು ಎಂದು ಜನ್ ಸುರಾಜ್ ಪಕ್ಷದ ವಕೀಲರನ್ನು ಕೇಳಿದರು. ಆರ್ಟಿಕಲ್ 32 ಅಡಿಯಲ್ಲಿ ಈ ವಿಚಾರವನ್ನು ಪರಿಗಣಿಸಲು ಪೀಠವು ನಿರಾಕರಿಸಿದ್ದು, ಅರ್ಜಿದಾರರು ಬಿಹಾರ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಿದೆ. ಆಡಳಿತಾರೂಢ ಜನತಾದಳ (ಯುನೈಟೆಡ್)–ಭಾರತೀಯ ಜನತಾ ಪಕ್ಷದ ಮೈತ್ರಿಕೂಟವು ಮಾದರಿ ನೀತಿ ಸಂಹಿತೆಯನ್ನು ದೊಡ್ಡ ಪ್ರಮಾಣದಲ್ಲಿ ಉಲ್ಲಂಘಿಸಿದೆ ಎಂದು ಆರೋಪಿಸಿದ ಜನ್ ಸುರಾಜ್ ಪಕ್ಷವು, ಚುನಾವಣಾ ಫಲಿತಾಂಶಗಳನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಘೋಷಿಸಲು ಮನವಿ ಮಾಡಿತ್ತು. ಚುನಾವಣಾ ಅವಧಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ₹10,000 ವಿತರಿಸುವ ರಾಜ್ಯ ಸರ್ಕಾರದ ನಿರ್ಧಾರವು ಚುನಾವಣೆಯ ನ್ಯಾಯಸಮ್ಮತತೆಗೆ ಧಕ್ಕೆಯಾಗಿದೆ ಎಂದು ಪಕ್ಷ ವಾದಿಸಿತು. ಮಾದರಿ ಸಂಹಿತೆ ಜಾರಿಯಲ್ಲಿದ್ದ ಸಮಯದಲ್ಲಿ ಅಂದಾಜು 25–35 ಲಕ್ಷ ಮಹಿಳಾ ಮತದಾರರಿಗೆ ಈ ಪ್ರಯೋಜನ ಪಡೆದಿದ್ದಾರೆ. ಇದು ಆಡಳಿತ ವ್ಯವಸ್ಥೆಯ ‘ಭ್ರಷ್ಟ ಪದ್ಧತಿ’ಗೆ ಸಮಾನವೆಂದು ಆರೋಪಿಸಲಾಯಿತು. ಜೆಡಿ(ಯು) ಪ್ರತಿ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿಗಳನ್ನು ವಿತರಿಸಿದೆ ಹಾಗೂ ಸಾಮಾನ್ಯ ಪರಿಸ್ಥಿತಿಯಲ್ಲಿಯೂ ಪಕ್ಷವು 25 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಚುನಾವಣಾ ಫಲಿತಾಂಶದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) 85 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇದು 2015ರ ಸಾಧನೆಗಿಂತಲೂ ಹೆಚ್ಚಾಗಿದ್ದು, ಕಿಶೋರ್ ಅವರ ಸ್ವಂತ ಭವಿಷ್ಯವಾಣಿಗಳನ್ನೂ ಮೀರಿಸಿತ್ತು. ಚುನಾವಣಾ ಉಚಿತ ಕೊಡುಗೆಗಳ ವಿಷಯ ಈಗಾಗಲೇ ಪ್ರತ್ಯೇಕ ಪ್ರಕರಣದಲ್ಲಿ ನ್ಯಾಯಾಲಯದ ಪರಿಗಣನೆಯಲ್ಲಿ ಇದೆ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಹಿಂದಿನ ವಿಚಾರಣೆಗಳಲ್ಲಿ ಹಣಕಾಸು ಪ್ರಯೋಜನಗಳ ಭರವಸೆಗಳು ರಾಜ್ಯಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಹುದು ಎಂದು ಎಚ್ಚರಿಸಿದ್ದ ನ್ಯಾಯಾಲಯ, ಈ ವಿಚಾರವನ್ನು ಮೂವರು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಿದೆ. ಶುಕ್ರವಾರದ ವಿಚಾರಣೆಯಲ್ಲಿ ಈ ವಿಷಯ ಗಂಭೀರವಾದದ್ದು ಎಂದು ನ್ಯಾಯಾಲಯ ಹೇಳಿದರೂ, ಚುನಾವಣೆಯಲ್ಲಿ ಸೋತ ಪಕ್ಷಗಳಿಗಿಂತ ‘ಸಾರ್ವಜನಿಕ ಮನೋಭಾವದ’ ವ್ಯಕ್ತಿಗಳಿಂದ ಸಲ್ಲಿಸಲಾದ ಅರ್ಜಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾದ ಜನ್ ಸುರಾಜ್ ಪಕ್ಷಕ್ಕೆ ಇದು ನಿರಾಶಾದಾಯಕ ಚುನಾವಣಾ ಚೊಚ್ಚಲ ಪ್ರವೇಶವಾಗಿದ್ದು, ಪಕ್ಷವು ಶೇಕಡಾ ನಾಲ್ಕಕ್ಕಿಂತ ಕಡಿಮೆ ಮತಗಳೊಂದಿಗೆ ತನ್ನ ಪಯಣ ಮುಗಿಸಿದೆ. ಹಿಂದೆ ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳಿಗೆ ಯಶಸ್ವಿ ಪ್ರಚಾರ ತಂತ್ರಗಳನ್ನು ರೂಪಿಸಿದ್ದ ಪ್ರಶಾಂತ್ ಕಿಶೋರ್, ತಮ್ಮ ಪಕ್ಷದ ಫಲಿತಾಂಶದ ಕುರಿತು ನಿರ್ಣಾಯಕ ಜಯ, ಗಮನಾರ್ಹ ಪ್ರಗತಿ ಅಥವಾ ಸಂಪೂರ್ಣ ವೈಫಲ್ಯ—ಈ ಮೂರರಲ್ಲಿ ಒಂದಾಗಬಹುದು ಎಂದು ಹೇಳಿದ್ದರು.
‘ನಿಡಂಬೂರು ಶ್ರೀ’ - ‘ನಿಡಂಬೂರು ಬೀಡು ಬಲ್ಲಾಳ’ ಪ್ರಶಸ್ತಿ ಪ್ರದಾನ
ಉಡುಪಿ, ಫೆ.6: ಅಂಬಲಪಾಡಿಯ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ 68ನೇ ವಾರ್ಷಿಕೋತ್ಸವ ಇತ್ತೀಚೆಗೆ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಜರಗಿತು. ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ವಹಿಸಿದ್ದರು. ಈ ಸಂದರ್ಭದಲ್ಲಿ ನಿಡಂಬೂರು ಮಾಗಣೆಯ ಸಾಧಕ, ನ್ಯಾಯವಾದಿ ಕಡೆಕಾರು ಶ್ರೀನಿವಾಸ ಹೆಗ್ಡೆ ಅವರಿಗೆ ನಿಡಂಬೂರು ಬೀಡು ಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಯಕ್ಷಗಾನ ಮಂಡಳಿಗೆ ನೀಡಲ್ಪಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಶ್ರೀಬ್ರಹ್ಮಬೈದರ್ಕಳ ಯಕ್ಷಗಾನ ಕಲಾ ಮಂಡಳಿ ಬೊಳ್ಜೆ, ಉದ್ಯಾವರ ಅವರಿಗೆ ಪ್ರದಾನ ಮಾಡಲಾಯಿತು. ಹಿರಿಯ ಕಲಾವಿದ ಬೇಳಂಜೆ ಜಯಂತ ನಾಯ್ಕ ಅವರಿಗೆ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು, ಹಿರಿಯ ಯಕ್ಷಗಾನ ಕಲಾವಿದ ಶಿವಪಾಲನ್ ಅವರಿಗೆ ಕಪ್ಪೆಟ್ಟು ಬಾಬು ಶೆಟ್ಟಿಗಾರ ಪ್ರಶಸ್ತಿಯನ್ನು, ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಹಿರಿಯ ಸ್ತ್ರೀ ವೇಷ ಧಾರಿ ಹಾರಾಡಿ ರಮೇಶ ಗಾಣಿಗ ಅವರಿಗೆ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಯು.ರಾಜಗೋಪಾಲ ಆಚಾರ್ಯ, ಕಾಂಚನ್ ಹುಂಡೈ ಸಮೂಹ ಸಂಸ್ಥೆಗಳ ಪ್ರವರ್ತಕ ಪ್ರಸಾದ್ರಾಜ್ ಕಾಂಚನ್ ಮತ್ತು ಹವ್ಯಾಸಿ ಯಕ್ಷಗಾನ ಕಲಾವಿದ ಸುಬ್ರಾಯ ಖಾಡಿಲ್ಕರ್ ಶುಭಾ ಶಂಸನೆಗೈದರು. ಮಂಡಳಿಯ ಅಧ್ಯಕ್ಷ ಅಜಿತ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಎ. ಪ್ರವೀಣ ಉಪಾಧ್ಯ ವಂದಿಸಿದರು. ಬಳಿಕ ಮಂಡಳಿಯ ಬಾಲ ಕಲಾವಿದರಿಂದ ’ದ್ರೌಪದಿ ಪ್ರತಾಪ’ ಮತ್ತು ಮಂಡಳಿಯ ಸದಸ್ಯರಿಂದ ’ಭಸ್ಮಾಸುರ ಮೊಹೀನಿ’ ಯಕ್ಷಗಾನ ಪ್ರದರ್ಶನಗೊಂಡಿತು.
ಇತ್ತೀಚಿನ ದಿನಗಳಲ್ಲಿ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 1,500 ಕಾಗೆಗಳು ಹಠಾತ್ ಸಾವಿಗೀಡಾಗಿವೆ. ಪ್ರಯೋಗಾಲಯ ಪರೀಕ್ಷೆಗಳು H5N1 ವೈರಸ್ ಇರುವಿಕೆಯನ್ನು ದೃಢಪಡಿಸಿದ್ದು ಈ ಪ್ರದೇಶದಲ್ಲಿ ಹಕ್ಕಿ ಜ್ವರ ಹರಡುವುದನ್ನು ಸೂಚಿಸಿವೆ. ಹಕ್ಕಿ ಜ್ವರ ಭೀತಿಯ ಹಿನ್ನೆಲೆಯಲ್ಲಿ ಕಣ್ಗಾವಲು ಮತ್ತು ರೋಗ ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ತಮಿಳುನಾಡಿಗೆ ನಿರ್ದೇಶನ ನೀಡಿದೆ. IANS ವರದಿಯ ಪ್ರಕಾರ, ಅಡ್ಯಾರ್, ಗಾಂಧಿ ನಗರ, ಪಲ್ಲಿಕರಣೈ, ವೇಲಾಚೇರಿ, ತಿರುವನ್ಮಿಯೂರ್, ಈಸ್ಟ್ ಕೋಸ್ಟ್ ರೋಡ್ ಮತ್ತು ಓಲ್ಡ್ ಮಹಾಬಲಿಪುರಂ ರಸ್ತೆ (OMR) ಗಳಲ್ಲಿ ಕಾಗೆಗಳ ಹಠಾತ್ ಸಾವು ವರದಿಯಾಗಿದೆ. ಇತ್ತೀಚೆಗೆ ಬಿಹಾರದ ನೌಗಾಚಿಯಾದಲ್ಲಿ ಕಾಗೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿರುವುದರಿಂದ ತಮಿಳುನಾಡಿನಲ್ಲಿಯೂ ಹಕ್ಕಿ ಜ್ವರ ಆತಂಕ ಹುಟ್ಟಿಸಿದೆ. ಏನಿದು ಹಕ್ಕಿ ಜ್ವರ? ಹಕ್ಕಿ ಜ್ವರ ವೈರಸ್ಗಳು, ವಿಶೇಷವಾಗಿ H5N1, ನೈಸರ್ಗಿಕವಾಗಿ ಕಾಡಿನಲ್ಲಿರುವ ಹಕ್ಕಿಗಳಲ್ಲಿ ಕಂಡುಬರುತ್ತವೆ. ಈ ವೈರಸ್ ಸಾಕು ಕೋಳಿಗಳಿಗೆ ಮತ್ತು ಅಪರೂಪದ ಸಂದರ್ಭಗಳಲ್ಲಿ, ಮಾನವರು ಮತ್ತು ಇತರ ಸಸ್ತನಿಗಳಿಗೆ ಹರಡಬಹುದು. H5N1 ಒಂದು ರೀತಿಯ ಇನ್ಫ್ಲುಯೆನ್ಸ A ವೈರಸ್ ಆಗಿದ್ದು ಇದನ್ನು ಸಾಮಾನ್ಯವಾಗಿ ಹಕ್ಕಿ ಜ್ವರ ಅಥವಾ ಏವಿಯನ್ ಇನ್ಫ್ಲುಯೆನ್ಸ ಎಂದು ಕರೆಯಲಾಗುತ್ತದೆ. ಇದು ಪಕ್ಷಿಗಳಿಗೆ, ವಿಶೇಷವಾಗಿ ಕೋಳಿಗಳಿಗೆ ಸೋಂಕು ತರುತ್ತದೆ. ಕಾಗೆಗಳಿಗೆ ಹಕ್ಕಿ ಜ್ವರದ H5N1 ಬೇಗನೆ ಹರಡುತ್ತದೆ. ಇವುಗಳು ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟು ಸೇರಿ ಮಲಗುವುದರಿಂದ ಇನ್ನೊಂದು ಕಾಗೆಗೆ ಬೇಗನೆ ರೋಗಾಣು ಹರಡುತ್ತದೆ H5N1 ಮುಖ್ಯವಾಗಿ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆಯಾದರೂ, ಇದು ಮನುಷ್ಯರಿಗೂ ಸೋಂಕು ತರಬಲ್ಲದು. ಸಾಮಾನ್ಯವಾಗಿ ಸೋಂಕಿತ ಪಕ್ಷಿಗಳ ನಿಕಟ ಸಂಪರ್ಕ, ಅವುಗಳ ಹಿಕ್ಕೆ, ಲಾಲಾರಸ ಅಥವಾ ಕಲುಷಿತ ಮೇಲ್ಮೈಗಳ ಮೂಲಕ ಇದು ಹರಡುವ ಸಾಧ್ಯತೆ ಇದೆ. ಮಾನವನಿಂದ ಮಾನವರಿಗೆ ಸೋಂಕು ಅಪರೂಪ, ಆದರೆ ಸೋಂಕು ಸಂಭವಿಸಿದಾಗ, ಅದು ತೀವ್ರವಾಗಿರಬಹುದು. ಇದು ನ್ಯುಮೋನಿಯಾ ಅಥವಾ ಉಸಿರಾಟದ ವೈಫಲ್ಯಕ್ಕೆ ಕಾರಣವಾಗಬಹುದು. H5N1 ರೋಗ ಲಕ್ಷಣಗಳು CDC ಪ್ರಕಾರ, ಮಾನವರಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಬೇರೆ ಬೇರೆ ರೀತಿ ಇರುತ್ತವೆ. -ಉಸಿರಾಟದಲ್ಲಿ ತೊಂದರೆ ಮತ್ತು ಜ್ವರವೂ ರೋಗ ಲಕ್ಷಣವಾಗಿದೆ. -ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ (ಕಾಂಜಂಕ್ಟಿವಿಟಿಸ್) -ಸೌಮ್ಯ ಜ್ವರ (100ºF ಅಥವಾ ಹೆಚ್ಚಿನ ಉಷ್ಣತೆ) ಅಥವಾ ಜ್ವರ ಬಂದಂತಾಗುವುದು -ಕೆಮ್ಮು -ಗಂಟಲು ನೋವು -ಸ್ನಾಯು ಅಥವಾ ದೇಹದ ನೋವು -ತಲೆನೋವು -ಆಯಾಸ ಇತ್ತೀಚಿಗೆ ಅಮೆರಿಕದಲ್ಲಿ ವರದಿಯಾದ ಪ್ರಕರಣಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ A(H5) ವೈರಸ್ ಸೋಂಕಿನಲ್ಲಿ ಕಣ್ಣು ಕೆಂಪಾಗುವುದು ಪ್ರಮುಖ ಲಕ್ಷಣವಾಗಿದೆ. ಅತಿಸಾರ, ವಾಕರಿಕೆ ಅಥವಾ ವಾಂತಿ ಕಡಿಮೆ ಸಾಮಾನ್ಯ ರೋಗ ಲಕ್ಷಣಗಳಾಗಿವೆ. ಜ್ವರ ಯಾವಾಗಲೂ ಇಲ್ಲದಿರಬಹುದು ► ಜನರಲ್ಲಿ ಹಕ್ಕಿ ಜ್ವರದಿಂದ ಉಂಟಾಗುವ ಮಧ್ಯಮ ಮತ್ತು ತೀವ್ರತರವಾದ ಕಾಯಿಲೆಯ ಲಕ್ಷಣಗಳು ಅಧಿಕ ಜ್ವರ ಅಥವಾ ಮೇಲೆ ಪಟ್ಟಿ ಮಾಡಲಾದಂತಹ ರೋಗಲಕ್ಷಣಗಳು - ಉಸಿರಾಟದ ತೊಂದರೆ ಒಬ್ಬ ವ್ಯಕ್ತಿಯು ಏವಿಯನ್ ಇನ್ಫ್ಲುಯೆನ್ಸ A(H5) ವೈರಸ್ಗಳಿಗೆ ಒಡ್ಡಿಕೊಂಡಾಗ ಮತ್ತು ಸೋಂಕಿಗೆ ಒಳಗಾದ ಸಮಯದಿಂದ ಉಸಿರಾಟದ ತೊಂದರೆ ಸುಮಾರು ಮೂರು ದಿನಗಳು ಆದರೆ ಸುಮಾರು 2 ರಿಂದ 7 ದಿನಗಳಲ್ಲಿ ಕಾಣಿಸುತ್ತದೆ. ಆದಾಗ್ಯೂ, ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿಯಂತಹ ಲಕ್ಷಣಗಳು ಏವಿಯನ್ ಇನ್ಫ್ಲುಯೆನ್ಸ A(H5) ವೈರಸ್ನಿಂದ ಸೋಂಕಿಗೆ ಒಳಗಾದ ಒಂದರಿಂದ ಎರಡು ದಿನಗಳ ನಂತರ ಕಾಣಿಸಿಕೊಳ್ಳಬಹುದು ► ಹಕ್ಕಿ ಜ್ವರ ತಡೆಗಟ್ಟಲು ಸಲಹೆಗಳು ಪ್ರಾಣಿಗಳೊಂದಿಗೆ, ವಿಶೇಷವಾಗಿ ಪಕ್ಷಿಗಳು ಅಥವಾ ಸಾಕುವ ಪ್ರಾಣಿಗಳ ಸಂಪರ್ಕದ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ಸೋಪಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಸೋಪ್ ಮತ್ತು ನೀರು ಲಭ್ಯವಿಲ್ಲದಿದ್ದರೆ ಸ್ಯಾನಿಟೈಸರ್ ಬಳಸಿ. ನಿಮ್ಮ ಮುಖ, ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಿ. ಕೋಳಿ, ಮೊಟ್ಟೆ ಮತ್ತು ಮಾಂಸವನ್ನು 74°C ನ ಆಂತರಿಕ ತಾಪಮಾನಕ್ಕೆ ಬೇಯಿಸಿ ಹಸಿ ಹಾಲು ಅಥವಾ ಅರ್ಧ ಬೇಯಿಸಿದ ಮೊಟ್ಟೆಗಳು ಸೇರಿದಂತೆ ಸರಿಯಾಗಿ ಬೇಯಿಸದ ಆಹಾರವನ್ನು ಸೇವಿಸಬೇಡಿ. ವಾಯುವಿನಿಂದ ಬರುವ ಪ್ರಸರಣವನ್ನು ಕಡಿಮೆ ಮಾಡಲು ಮನೆಯಲ್ಲಿ ಮತ್ತು ತೋಟಗಳಲ್ಲಿ ಉತ್ತಮ ಗಾಳಿಯನ್ನು ಖಚಿತಪಡಿಸಿಕೊಳ್ಳಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಜಾಗರೂಕರಾಗಿರಿ ಸಂಭವನೀಯ ಸೋಂಕುಗಳ ತೀವ್ರತೆಯನ್ನು ಕಡಿಮೆ ಮಾಡಲು ವಾರ್ಷಿಕ ಜ್ವರ ಲಸಿಕೆಯನ್ನು ಪಡೆಯಿರಿ. ವಿಟಮಿನ್ ಸಿ-ಭರಿತ ಹಣ್ಣುಗಳು, ಬೀಜಗಳನ್ನು ಸೇವಿಸಿ ಮತ್ತು ಚೆನ್ನಾಗಿ ನೀರು ಕುಡೀರಿ ಸೋಂಕು ಬಗ್ಗೆ ಎಚ್ಚರಿಕೆಗಳನ್ನು ಪತ್ತೆಹಚ್ಚಲು ICMR ಸೇವೆಗಳು ಮತ್ತು ರಾಜ್ಯ ಆರೋಗ್ಯ ಅಪ್ಲಿಕೇಶನ್ಗಳನ್ನು ಬಳಸಿ. ಸಾಕಣೆ ಕೇಂದ್ರಗಳ ಬಳಿ ವಾಸಿಸುವ ಜನರು N95 ಮಾಸ್ಕ್ ಬಳಸಿ ಸೋಂಕಿತ ಪ್ರಾಣಿಗಳನ್ನು ಕೊಲ್ಲುವ ಕಾರ್ಯಾಚರಣೆಯ ಸಮಯದಲ್ಲಿ ಮಕ್ಕಳನ್ನು ಮನೆಯೊಳಗೆ ಇರಿಸಿ. ಕೋಳಿ ಮಾರುಕಟ್ಟೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ; ಪರಿಶೀಲಿಸಿದ ಅಂಗಡಿಗಳಿಂದ ಮೊಹರು ಮಾಡಿದ, ಲೇಬಲ್ ಮಾಡಿದ ಉತ್ಪನ್ನಗಳನ್ನು ಖರೀದಿಸಿ. ► ಹಕ್ಕಿ ಜರ ಶಂಕಿತರಾಗಿದ್ದರೆ ಏನು ಮಾಡಬೇಕು? - ಮನೆಯಲ್ಲಿಯೇ ಇರಿ. ಮಾಸ್ಕ್ ಧರಿಸಿ - ತಕ್ಷಣ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ. - ಮೂಗಿನ/ಮೌಖಿಕ ಸ್ವ್ಯಾಬ್ಗಳ RT-PCR ಪರೀಕ್ಷೆಯ ಮೂಲಕ ರೋಗನಿರ್ಣಯವನ್ನು ದೃಢೀಕರಿಸಲಾಗುತ್ತದೆ. - ಸೌಮ್ಯ ಪ್ರಕರಣಗಳಾಗಿದ್ದರೆ ಬೆಡ್ ರೆಸ್ಟ್ ತೆಗೆದುಕೊಳ್ಳಿ, ಜ್ವರ/ನೋವಿಗೆ ಪ್ಯಾರಸಿಟಮಾಲ್ ಬಳಸಿ. ಸಾಕಷ್ಟು ನೀರು ಕುಡಿಯಿರಿ ಮತ್ತು ಪಲ್ಸ್ ಆಕ್ಸಿಮೀಟರ್ನೊಂದಿಗೆ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಿ. H5N1 ಹಕ್ಕಿ ಜ್ವರ ಹರಡುವಿಕೆ ದೃಢಪಟ್ಟ ನಂತರ, ರಾಜ್ಯದ ಸಾರ್ವಜನಿಕ ಆರೋಗ್ಯ ಮತ್ತು ತಡೆಗಟ್ಟುವಿಕೆ ಔಷಧ ನಿರ್ದೇಶನಾಲಯವು ಗುರುವಾರ ಸಾರ್ವಜನಿಕ ಆರೋಗ್ಯ ಸಲಹೆಯನ್ನು ನೀಡಿದೆ. ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅತ್ಯಂತ ಅಪರೂಪ, ಜನರು ಜೀವಂತ ವೈರಸ್ ಇರುವ ಮೃತದೇಹಗಳನ್ನು ಸ್ಪರ್ಶಿಸಿ ನಂತರ ಬಾಯಿ ಅಥವಾ ಕಣ್ಣುಗಳಂತಹ ದೇಹದ ಭಾಗಗಳನ್ನು ಸ್ಪರ್ಶಿಸಬೇಡಿ. ಭಯಪಡುವ ಅಗತ್ಯವಿಲ್ಲ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ. ಎ. ಸೋಮಸುಂದರಂ ಹೇಳಿದ್ದಾರೆ. ನಿವಾಸಿಗಳು ತಮ್ಮ ಪ್ರದೇಶದಲ್ಲಿ ಯಾವುದೇ ಹಕ್ಕಿಗಳ ಹಠಾತ್ ಸಾವಿನ ಬಗ್ಗೆ ಅಧಿಕಾರಿಗಳಿಗೆ ತಕ್ಷಣ ತಿಳಿಸಲು ಕೇಳಲಾಗಿದೆ. ಸತ್ತ ಪಕ್ಷಿಗಳು ಅಥವಾ ಪ್ರಾಣಿಗಳನ್ನು ಬರಿ ಕೈಗಳಿಂದ ಮುಟ್ಟದಂತೆ ಜನರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ, ಏಕೆಂದರೆ ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಮಾಲಿನ್ಯವನ್ನು ತಡೆಗಟ್ಟಲು ಕಾಗೆಗಳು ಸೇರಿದಂತೆ ಸೋಂಕಿತ ಪಕ್ಷಿಗಳ ಶವಗಳನ್ನು ಕನಿಷ್ಠ ಎಂಟು ಅಡಿ ಆಳದ ಹೊಂಡಗಳಲ್ಲಿ ಸುರಕ್ಷಿತವಾಗಿ ಹೂಳಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ► H5N1 ವೈರಸ್ಗಳಿಂದ ಮಾನವ ಸೋಂಕನ್ನು ತಡೆಗಟ್ಟಲು ಲಸಿಕೆಗಳು ಲಭ್ಯವಿದೆಯೇ? WHO ಪ್ರಕಾರ, ಇನ್ಫ್ಲುಯೆನ್ಸ ಸಾಂಕ್ರಾಮಿಕ ಸಿದ್ಧತೆಯ ಭಾಗವಾಗಿ, ಕೆಲವು ದೇಶಗಳು H5N1 ಸೇರಿದಂತೆ ಏವಿಯನ್ ಇನ್ಫ್ಲುಯೆನ್ಸ ವೈರಸ್ಗಳಿಗೆ ಬಳಸಬಹುದಾದ ಲಸಿಕೆಗಳನ್ನು ಅಭಿವೃದ್ಧಿಪಡಿಸಿವೆ ಮತ್ತು ಪರವಾನಗಿ ಪಡೆದಿವೆ. ಪ್ರಸ್ತುತ, H5N1 ನ ಮಾನವ ಸೋಂಕುಗಳು ಸೀಮಿತವಾಗಿದ್ದು ಲಸಿಕೆಗಳನ್ನು ಶಿಫಾರಸು ಮಾಡುವುದಿಲ್ಲ. ► ಕೇರಳ, ಬಿಹಾರದಲ್ಲೂ ಹಕ್ಕಿ ಜ್ವರ ಕೇರಳದ ಕಣ್ಣೂರು ಜಿಲ್ಲೆಯ ಮಾಲೂರು ಪಂಚಾಯತ್ನಲ್ಲಿ ಸತ್ತ ಕಾಗೆಯ ಮಾದರಿಗಳಲ್ಲಿ H5N1 ಏವಿಯನ್ ಇನ್ಫ್ಲುಯೆನ್ಸ ವೈರಸ್ ಇರುವುದನ್ನು ಜಿಲ್ಲಾಡಳಿತ ಮಂಗಳವಾರ ದೃಢಪಡಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಸತ್ತ ಕಾಗೆಯ ಮಾದರಿಯಲ್ಲಿ ಹಕ್ಕಿ ಜ್ವರ ಇರುವುದನ್ನು ಜಿಲ್ಲಾ ಪಶುಸಂಗೋಪನಾ ಅಧಿಕಾರಿ ದೃಢಪಡಿಸಿದ್ದಾರೆ. ಪಂಚಾಯತ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ನಿರ್ದೇಶನಗಳನ್ನು ನೀಡಲಾಗಿದೆ. ಇದಕ್ಕೂ ಮೊದಲು, ಜನವರಿ 17 ರಂದು ಇರಿಟ್ಟಿಯ ಎಡಕ್ಕನಂ ಪ್ರದೇಶದಲ್ಲಿ ಸತ್ತ ಕಾಗೆಯಲ್ಲಿ ಹಕ್ಕಿ ಜ್ವರ ದೃಢಪಟ್ಟಿತ್ತು. ಡಿಸೆಂಬರ್ ತಿಂಗಳಲ್ಲಿ ಕೇರಳದ ಆಲಪ್ಪುಳ ಮತ್ತು ಕೋಟ್ಟಯಂ ಜಿಲ್ಲೆಗಳಲ್ಲಿಯೂ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ವಾರಗಳ ಹಿಂದೆ ಬಿಹಾರದ ಭಾಗಲ್ಪುರ ಜಿಲ್ಲೆಯ ನೌಗಾಚಿಯಾ ಉಪವಿಭಾಗದಲ್ಲಿ 150 ಕ್ಕೂ ಹೆಚ್ಚು ಕಾಗೆಗಳು ಸತ್ತಿದ್ದು ಅಲ್ಲಿಯೂ ಹಕ್ಕಿ ಜ್ವರ ದೃಢಪಟ್ಟಿದೆ.
ಕಾಂಗ್ರೆಸ್ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಆರ್.ಅಶೋಕ್ ವಾಗ್ದಾಳಿ
ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ಅಧಿವೇಶನದಲ್ಲೇ ಸರಿಯಾಗಿ ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ವಿರುದ್ಧ ಮಾತನಾಡುವವರನ್ನು ಪತ್ತೆ ಮಾಡಲು 67 ಕೋಟಿ ರೂ. ದುಂದುವೆಚ್ಚ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ತಿರುಪತಿ ಭಾರತೀಯರ ಶ್ರದ್ಧಾಕೇಂದ್ರ. ತಿರುಪತಿಯಲ್ಲಿ ಕಳಪೆ ತುಪ್ಪ ಬಳಸಿದ್ದಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲಾಗಿದೆ. ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡಲು ಸಿಎಂ ಸಿದ್ದರಾಮಯ್ಯನವರೇ ತಂತ್ರ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಕೊಪ್ಪಳ | ವಿದೇಶಿ ಮಹಿಳೆಯ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣ: ಮೂವರು ಅರೋಪಿಗಳು ದೋಷಿಗಳು ಎಂದು ಘೋಷಿಸಿದ ನ್ಯಾಯಾಲಯ
ಕೊಪ್ಪಳ : ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಬಳಿ ನಡೆದಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ದೋಷಿಗಳು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣ ದಾಖಲಾದ 9 ತಿಂಗಳ ಒಳಗೆ ತೀರ್ಪು ನೀಡಿರುವ ನ್ಯಾಯಾಲಯ, ಶಿಕ್ಷೆಯ ಪ್ರಮಾಣವನ್ನು ಫೆ.16ರಂದು ಪ್ರಕಟಿಸುವುದಾಗಿ ತಿಳಿಸಿದೆ. ಈ ಪ್ರಕರಣದಲ್ಲಿ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯ ಸಾಯಿ) ಹಾಗೂ ಶರಣಪ್ಪ (ಶರಣು ಬಸವರಾಜ್) ಎಂಬ ಮೂವರು ಆರೋಪಿಗಳು ದೋಷಿಗಳು ಎಂದು ನ್ಯಾಯಾಲಯ ಘೋಷಿಸಿದೆ. ಘಟನೆಯ ಹಿನ್ನೆಲೆ : ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ, ಐವರು ಪ್ರವಾಸಿಗರ ತಂಡ ಸಣಾಪುರ ಕೆರೆ ಬಳಿ ತೆರಳಿದ್ದ ವೇಳೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಮೇರಿಕಾದ ಡೇನಿಯಲ್ ಸೇರಿದಂತೆ ಮೂವರು ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಲಾಗಿತ್ತು. ಹಲ್ಲೆಯ ಪರಿಣಾಮ ಒಡಿಶಾ ಮೂಲದ ಬಿಬಾಶ್ ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೇ ವೇಳೆ ಇಸ್ರೇಲ್ ಮೂಲದ ಮಹಿಳೆ ಹಾಗೂ ಸ್ಥಳೀಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿತ್ತು.
ಪೂರ್ಣ ಕುರಾನ್ ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಗೌರವ
ಕುಂದಾಪುರ, ಫೆ.6: ಕುರಾನ್ ಕಂಠಪಾಠದಿಂದ ಮನಸ್ಸಿಗೆ ಶಾಂತಿ ಮತ್ತು ಆತ್ಮಿಕ ಬಲ ದೊರೆಯುತ್ತದೆ. ಇಸ್ಲಾಂ ನಲ್ಲಿ ಕುರಾನ್ ಹಾಫಿಝ್ರ ಸ್ಥಾನ ಅತ್ಯಂತ ಉನ್ನತವಾಗಿದೆ. ಕುರಾನ್ ಅನ್ನು ಹೃದಯದಲ್ಲಿ ಸಂಗ್ರಹಿಸುವವರು ದೇವರಿಗೆ ಅತ್ಯಂತ ಪ್ರಿಯರಾಗುತ್ತಾರೆ ಎಂದು ಕಂಡ್ಲೂರಿನ ಜಾಮಿಯಾ ಝಿಯಾ ಉಲ್ ಉಲೂಮ್ನ ಅಧ್ಯಾಪಕ ಹಾಗೂ ಕಂಡ್ಲೂರು ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಮುಹಮ್ಮದ್ ಇಲ್ಯಾಸ್ ನದ್ವೀ ಹೇಳಿದ್ದಾರೆ. ಮಿಲ್ಲತ್ ಫೌಂಡೇಶನ್ ವತಿಯಿಂದ ಕುಂದಾಪುರದ ಜಾಮಿಯಾ ಮಸೀದಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನ ವಿವಿಧ ಮದ್ರಸಗಳಿಂದ ಈ ವರ್ಷ ಪವಿತ್ರ ಕುರಾನ್ನ ಸಂಪೂರ್ಣ ಹಿಫ್ಜ್ ಪೂರ್ಣಗೊಳಿಸಿದ 21 ಹುಫ್ಫಾಝ್-ಎ- ಕುರಾನ್ನ್ನು ಗೌರವಿಸಿ ಅವರು ಮಾತನಾಡುತಿದ್ದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ಮಾತನಾಡಿ, ಕುರಾನ್ ಸಂರಕ್ಷಿಸುವ ಮಹತ್ತರ ಸೇವೆಗೆ ತಮ್ಮ ಜೀವನವನ್ನು ಅರ್ಪಿಸಿರುವ ಈ ಪುಣ್ಯಾತ್ಮರಿಗೆ ಗೌರವ ಸಲ್ಲಿಸುವ ಅವಕಾಶ ಲಭಿಸಿರು ವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್ಪಿಜಿ ಜ್ಯುವೆಲ್ಲರ್ಸ್ನ ಮಾಲಕ ಎಸ್.ಎಂ. ಇರ್ಷಾದ್, ಉದ್ಯಮಿ ಶೇಖ್ ಹನೀಫ್ ಬಸ್ರೂರು, ಪುರಸಭೆ ಸದಸ್ಯರು ಹಾಗೂ ಜಮೀಯ್ಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಮುಜಾವರ ಅಬು ಮೊಹಮ್ಮದ್, ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಝಫ್ರುಲ್ಲಾ ಹೊಡೆ ಮೊದಲಾದವರು ಉಪಸ್ಥಿತರಿದ್ದರು. ಹಾಫಿಝ್ ಎಸ್.ಎಂ. ಅಫ್ಫಾನ್ ಕುರಾನ್ ಪಠಿಸಿದರು. ಅಹ್ಮದ್ ಸವೂದ್ ಖಲೀಫಾ ನಬೀ ಸ್ತುತಿ ಗೀತೆ(ನಾತ್ ಶರೀಫ್) ಹಾಡಿದರು. ಮಿಲ್ಲತ್ ಫೌಂಡೇಶನ್ ಅಧ್ಯಕ್ಷರಾದ ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಕಿರಿಮಂಜೇಶ್ವರದ ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ರಹ್ಮಾನ್ ನದ್ವೀ ಕಾರ್ಯಕ್ರಮ ನಿರೂಪಿಸಿದರು.
ಸಿನಿಮಾಗಳು ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ : ಕೆ.ವಿ.ಪ್ರಭಾಕರ್
ಬೆಂಗಳೂರು : ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಕನ್ನಡ ಸಿನಿ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ’ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆಲ್ಲಾ ಸಿನಿಮಾಗಳು, ಸಿನಿಮಾದ ಪಾತ್ರಗಳು ನಮ್ಮ ಬದುಕಿನ ಭಾಗ ಆಗಿರುತ್ತಿದ್ದವು. ಹೀಗಾಗಿ ಜನರು ಕನ್ನಡ ಸಿನಿಮಾಗಳಿಗೆ ಮುಗಿ ಬೀಳುತ್ತಿದ್ದರು. ಆಗ ಯಾವ ಹೀರೋಗಳೂ ಇವತ್ತಿನ ಹೀರೋಗಳಂತೆ ನಮ್ಮ ಸಿನಿಮಾ ನೋಡಿ ಎಂದು ಗೋಗರೆಯುತ್ತಿರಲಿಲ್ಲ. ಹಿಂದಣ ಹೆಜ್ಜೆಯನ್ನರಿಯದವನು ಮುಂದನ ಹೆಜ್ಜೆಯನ್ನಿಡಲಾರನು ಎಂದರು. ಈಗ ಒಂದು ಸಿನಿಮಾ ತೆರೆ ಕಾಣುತ್ತಿದ್ದಂತೆ ನಾಯಕ ನಟರು ಅವರವರೇ ಸ್ವಘೋಷಿತ ಸ್ಟಾರ್ಗಳಾಗಿ ಬಿಡುತ್ತಾರೆ. ಇವೆಲ್ಲವೂ ನಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೇರುಗಳಿಂದ ಬೇರ್ಪಟ್ಟಿದ್ದರ ದುಷ್ಪರಿಣಾಮ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಸಿನಿ ಪಯಣದ ಸುವರ್ಣ ಸಂಭ್ರಮ’ಕ್ಕಾಗಿ ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಅರ್ಥಪೂರ್ಣ ಸಂಗತಿ. 50 ವರ್ಷಗಳ ಕನ್ನಡ ಸಿನಿಮಾ ಪಯಣವನ್ನು ಮೆಲುಕು ಹಾಕುತ್ತಲೇ, ಈ 50 ವರ್ಷಗಳಲ್ಲಿ ಕನ್ನಡ ಸಿನಿಮಾ ಪರಂಪರೆಯನ್ನು ಗಟ್ಟಿಗೊಳಿಸಿದ ಐದು ಮಂದಿ ಹಿರಿಯರನ್ನು ಗುರುತಿಸಿದ್ದೇವೆ ಎಂದರು. ಪಾರ್ವತಮ್ಮ ರಾಜ್ಕುಮಾರ್, ಎಸ್.ರಾಮಚಂದ್ರ, ಗಿರೀಶ್ ಕಾಸರವಳ್ಳಿ, ಎಸ್.ವಿ.ರಾಜೇಂದ್ರಸಿಂಗ್ ಬಾಬು, ಡಾ.ಜಯಮಾಲ ಅವರ ಕೊಡುಗೆಗಳನ್ನು ನಾವು ಗುರುತಿಸುತ್ತಿದ್ದೇವೆ. ಈ ಐದು ಮಂದಿಯ ಸಾಧನೆಗಳನ್ನು ಮೆಲುಕು ಹಾಕುವುದೆಂದರೆ ಇಡೀ ಕನ್ನಡ ಸಿನಿಮಾ ಪರಂಪರೆಯ ಅರ್ಧ ಶತಮಾನವನ್ನು ಹಿಂದಿರುಗಿ ನೋಡಿದಂತೆ ಎಂದರು. ಗಿರೀಶ್ ಕಾಸರವಳ್ಳಿ ಅವರು ಕನ್ನಡಕ್ಕೆ ನಾಲ್ಕು ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟಿದ್ದು ಮಾತ್ರವಲ್ಲದೆ, ಕನ್ನಡ ಸಿನಿಮಾಗಳ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ಎಸ್.ರಾಮಚಂದ್ರ ಅವರು ಕನ್ನಡದ ಪರ್ಯಾಯ ಚಿತ್ರಗಳ ಪರಂಪರೆಯ ನೆರಳು- ಬೆಳಕು ಇದ್ದ ಹಾಗೆ. ಅರ್ಧ ಶತಮಾನದ ಪರ್ಯಾಯ ಸಿನಿಮಾಗಳಿಗಾಗಿ ಕನ್ನಡಕ್ಕೆ ಸಿಕ್ಕಿರುವ ಮಾನ್ಯತೆಗಳ ಹಿಂದೆ ಎಸ್.ರಾಮಚಂದ್ರರ ಕ್ಯಾಮರಾ ಕಣ್ಣುಗಳು ಇವೆ ಎಂದರು. ಪಾರ್ವತಮ್ಮ ರಾಜ್ ಕುಮಾರ್ ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ 80 ಕ್ಕೂ ಹೆಚ್ಚು ಸದಭಿರುಚಿಯ ಜೊತೆಗೆ ಜನಪ್ರಿಯ ಸಿನಿಮಾಗಳನ್ನು ಕನ್ನಡ ಜಗತ್ತಿಗೆ ಮತ್ತು ಸಿನಿಮಾ ಜಗತ್ತಿಗೆ ನೀಡಿದವರು. ಏಕಕಾಲಕ್ಕೆ ಯಶಸ್ವಿ ಮತ್ತು ಸಮಾಜಮುಖಿಯಾದ ಸದಭಿರುಚಿಯ ಸಿನಿಮಾಗಳನ್ನು ನೀಡಿ ಗೆಲ್ಲುವುದು ಸುಲಭದ ಮಾತಲ್ಲ. ಈ ಸಾಹಸದಲ್ಲಿ ಪಾರ್ವತಮ್ಮ ಅವರು ಎಲ್ಲ ಸವಾಲುಗಳನ್ನು ಎದುರಿಸಿ ಗೆದ್ದಿದ್ದಾರೆ. ಕನ್ನಡ ಬೆಳ್ಳಿ ಪರದೆಯನ್ನು ಗೆಲ್ಲಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಜಯಮಾಲ ಅವರು ತುಳು ಸಿನಿಮಾಗಳ ಮೂಲಕ ಸಿನಿಮಾ ಪ್ರಪಂಚಕ್ಕೆ ಬಂದರು. ಭೂತಯ್ಯನ ಮಗ ಅಯ್ಯು ಸಿನಿಮಾದ ಹಾಡೊಂದರ ಮೂಲಕ ಕನ್ನಡಕ್ಕೆ ಬಂದು ಕನ್ನಡ ಸಿನಿಮಾ ಜಗತ್ತನ್ನು ಬೆಳಗಿಸಿದರು. ತಾವೂ ಬೆಳಗಿದರು. ಜಯಮಾಲ ಅವರು ಕೇವಲ ನಟಿ ಮಾತ್ರವಲ್ಲ. ನಿರ್ಮಾಪಕಿ ಆಗಿಯೂ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಒದಗಿಸಿದ್ದಾರೆ. ‘ತಾಯಿ ಸಾಹೇಬ’ ಸಿನಿಮಾದ ನಿರ್ಮಾಪಕಿಯಾಗಿ, ನಟಿಯೂ ಆಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ತಂದು ಕೊಟ್ಟಿದ್ದಾರೆ. ಜೊತೆಗೆ ಮಹಿಳಾ ಸಂವೇದನೆ ವಿಷಯದಲ್ಲಿ ಪಿಎಚ್ಡಿ ಮಾಡಿ ಡಾ.ಜಯಮಾಲ ಆಗಿದ್ದಾರೆ ಎಂದರು. ಶಂಕರ್ ಸಿಂಗ್ ಅವರ ಪುತ್ರ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಇಡೀ ಕುಟುಂಬ ಸಿನಿಮಾ ಕುಟುಂಬ. ಹಿಂದಿ, ತೆಲುಗು, ಕನ್ನಡ ಮತ್ತು ತುಳು ಭಾಷೆಯ ಸಿನಿಮಾಗಳನ್ನು ನಿರ್ದೇಶಿಸಿ ಉತ್ತರ-ದಕ್ಷಿಣ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಹೀಗಾಗಿ ಈ ಐದೂ ಮಂದಿಯ ಅರ್ಧ ಶತಮಾನದ ಕೊಡುಗೆಗಳು ಕನ್ನಡ ಸಿನಿಮಾದ ಮುಂದಿನ ಒಂದು ಶತಮಾನಕ್ಕೆ ಮಾರ್ಗದರ್ಶಿ ಆಗಲಿ ಎಂದು ಆಶಿಸುತ್ತೇನೆ ಎಂದರು. ಸಬ್ಸಿಡಿಗೆ ನಿಲ್ಲಲ್ಲ: ‘ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಲಾ ಮುಂದಿಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಪ್ರಭಾಕರ್, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇರುವವರೆಗೆ ಚಲನಚಿತ್ರಗಳಿಗೆ ಸಬ್ಸಿಡಿ ನಿಲ್ಲುವುದಿಲ್ಲ. ವಾಣಿಜ್ಯ ಮಂಡಳಿ ಮುಂದಿಟ್ಟಿರುವ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸಿಂಗ್ ಬಾಬು, ಪೂರ್ಣಿಮಾ ವಿನಯ್ ರಾಜ್ಕುಮಾರ್, ಜಯಮಾಲಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಉಪಸ್ಥಿತರಿದ್ದರು.
ಚಿತ್ತಾಪುರ | ಆಟೋ ನಿಲ್ದಾಣಗಳಲ್ಲಿ ಕುಡಿಯುವ ನೀರು, ನಾಮಫಲಕ ಅಳವಡಿಕೆಗೆ ಆಗ್ರಹ
ಚಿತ್ತಾಪುರ : ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪಟ್ಟಣದ ವಿವಿಧ ಭಾಗಗಳಲ್ಲಿ ಹೊಸ ಆಟೋ ನಿಲ್ದಾಣಗಳನ್ನು ಸ್ಥಾಪಿಸಿ ನಾಮಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಟ್ಟಣದ ನಾಗಾವಿ ವೃತ್ತ, ಭುವನೇಶ್ವರಿ ವೃತ್ತ, ನಾಗಾವಿ ಯಲ್ಲಮ್ಮ ದೇವಸ್ಥಾನ ಹತ್ತಿರ, ಅಂಬೇಡ್ಕರ್ ವೃತ್ತ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಮೀಪ, ಸ್ಟೇಷನ್ ರಸ್ತೆಯ ತಿರುಮಲ ಮನೆ ಎದುರು, ಇಟಗಾ ಗ್ರಾಮಕ್ಕೆ ಹೋಗುವ ಸ್ಥಳ ಹಾಗೂ ದಿಗ್ಗಾಂವ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಆಟೋ ನಿಲ್ದಾಣಗಳನ್ನು ಸ್ಥಾಪಿಸಿ ನಾಮಫಲಕಗಳನ್ನು ಅಳವಡಿಸಬೇಕೆಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಆಗ್ರಹಿಸಿದರು. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ, ಆಟೋ ಚಾಲಕರಿಗೂ ತಮ್ಮ ಸೇವೆಯನ್ನು ಸುವ್ಯವಸ್ಥಿತವಾಗಿ ಒದಗಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಯ್ಯ ಸಾಬಣ್ಣ ಭೋವಿ, ಕಾರ್ಯದರ್ಶಿ ಸುಭಾಷ್ ಕಾಶಿ, ಖಜಾಂಚಿ ಮುನಿಯಪ್ಪ ಭಾಗೋಡಿಕರ್, ಸದಸ್ಯರಾದ ಮಹೇಶ್ ಬುರ್ಲಿ, ಅಯಾಜ್, ನಾಗರಾಜ್ ಪೂಜಾರಿ, ಮಹೇಶ್ ಕಾಶಿ, ಶರಬಣ್ಣ ಮಡಿವಾಳ, ಗುರುರಾಜ್ ಚೌದರಿ, ಚಿತ್ತಣ್ಣ ಗುತ್ತೇದಾರ್, ಭೀಮು ಜಮಾದಾರ್, ಸಿದ್ದಪ್ಪ ರಾಂಪುರಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದ
Channagiri | ಕಾರುಗಳ ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು, ನಾಲ್ವರಿಗೆ ಗಂಭೀರ ಗಾಯ
ಚನ್ನಗಿರಿ : ತಾಲೂಕಿನ ಹೊನ್ನೆಬಾಗಿ ಗ್ರಾಮದ ಬಳಿ ಕಾರುಗಳು ಮುಖಾಮುಖಿಯಾಗಿ ಢಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿರುವುದು ವರದಿಯಾಗಿದೆ. ಮೃತರನ್ನು ಕಾರು ಚಾಲಕ ನಯಾಝ್ ಎಂದು ಗುರುತಿಸಲಾಗಿದೆ. ನಾಲ್ಕು ಜನರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಫತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
Yedrami | ಗ್ರಾಪಂ ಸದಸ್ಯರ ಅಧಿಕಾರಾವಧಿ ಮುಕ್ತಾಯ : ಆಡಳಿತಾಧಿಕಾರಿಗಳ ನೇಮಕ
ಅಧಿಕಾರಿಗಳ ಆಡಳಿತ ಆರಂಭ
ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: ಮೂವರು ದೋಷಿಗಳೆಂದು ಕೋರ್ಟ್ ತೀರ್ಪು, ಫೆ. 16 ಕ್ಕೆ ಅಂತಿಮ ತೀರ್ಪು
ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ಮತ್ತು ಯುವಕನ ಕೊಲೆ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಗಂಗಾವತಿ ನ್ಯಾಯಾಲಯ ಮೂವರು ಆರೋಪಿಗಳನ್ನು ಶುಕ್ರವಾರ ದೋಷಿಗಳೆಂದು ತೀರ್ಪು ನೀಡಿದೆ. ಫೆಬ್ರವರಿ 16 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಮೆಕ್ಕೆ ಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆ.ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್ ವೊಂದಕ್ಕೆ 2400 ರೂ. ನಿಗದಿಪಡಿಸಿದ್ದು, ಮೆಕ್ಕೆಜೋಳ ಬಳಸುವ ಕಾರ್ಖಾನೆಗಳು, ಎಥನಾಲ್ ತಯಾರಕರೊಂದಿಗೆ ಚರ್ಚೆ ನಡೆಸಿ, 40 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಅನುವು ಮಾಡಿಕೊಡಲಾಯಿತು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಏನು ಮಾತನಾಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ನಿರುದ್ಯೋಗ ನಿವಾರಣೆಗೆ ಉದ್ಯೋಗ ಮೇಳಗಳು ಸಹಕಾರಿ: ಸಚಿವ ಎನ್.ಎಸ್. ಭೋಸರಾಜು
ರಾಯಚೂರು ಜಿಲ್ಲಾ ಉತ್ಸವದಲ್ಲಿ ಉದ್ಯೋಗ ಮೇಳ
Chikkaballapura | ಕಾಂಗ್ರೆಸ್ ಮುಖಂಡನಿಂದ ಸರಕಾರಿ ಅಧಿಕಾರಿಗೆ ಧಮ್ಕಿ; ಆರೋಪ
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಪೌರಾಯುಕ್ತರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರದಲ್ಲೂ ಸರಕಾರಿ ಅಧಿಕಾರಿಗೆ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಶಾಸಕರಾದ ಪ್ರದೀಪ್ ಈಶ್ವರ್ ಅವರ ಬೆಂಬಲಿಗನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಾಸಕ ಪ್ರದೀಪ್ ಈಶ್ವರ್ ಅವರ ಆಪ್ತ ಬೆಂಬಲಿಗರ ವಲಯದಲ್ಲಿ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಮುಖಂಡ ನಾಗೇಶ್ ರೆಡ್ಡಿ ಎಂಬವರು ಸರಕಾರಿ ಅಧಿಕಾರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಗೆ ಬೆಂಬಲ ನೀಡುತ್ತಿದ್ದೀಯಾ ಎಂಬ ಆರೋಪದೊಂದಿಗೆ ಕೆಟ್ಟ ಪದಗಳನ್ನು ಬಳಸಿದ್ದಾರೆ ಎನ್ನುವ ಆಡಿಯೋ ಈಗ ವ್ಯಾಪಕವಾಗಿ ವೈರಲ್ ಆಗಿದೆ. ವೈರಲ್ ಆಗಿರುವ ಆಡಿಯೋದಲ್ಲಿ ನಾಗೇಶ್ ರೆಡ್ಡಿ ಅವರು ಬಿಎಲ್ಓ ಅಧಿಕಾರಿಯಾಗಿರುವ ಹಾಗೂ ಶಿಕ್ಷಕರಾದ ಶಿವಶಂಕರ್ ಅವರೊಂದಿಗೆ ಮಾತನಾಡಿರುವುದು ದಾಖಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಕರ್ತವ್ಯ ನಿರ್ವಹಣೆಯ ವಿಚಾರದಲ್ಲಿ,ಬಿಜೆಪಿಗೆ ಬೆಂಬಲ ನೀಡುತ್ತಿದ್ದೀಯಾ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬೆಳ್ತಂಗಡಿ: ಗಡಾಯಿಕಲ್ಲು ಚಾರಣ ಪ್ರವೇಶ ತಾತ್ಕಾಲಿಕ ನಿಷೇಧ
ಬೆಳ್ತಂಗಡಿ : ಗಡಾಯಿಕಲ್ಲು ಚಾರಣ ಪ್ರವೇಶ ತಾತ್ಕಾಲಿಕ ನಿಷೇಧಿಸಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಆದೇಶ ಹೊರಡಿಸಲಾಗಿದೆ. ಬೇಸಿಗೆಯಿಂದ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಇರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲು (ಜಮಲಾಬಾದ್ ಗಡ) ಚಾರಣವನ್ನು ಸಾರ್ವಜನಿಕರಿಗೆ ಪ್ರವೇಶವನ್ನು ಫೆ.7ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿಷೇಧ ಮಾಡಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.

22 C