ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಸುತ್ತ ಬಿರುಸಿನ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟ ಆಯೋಜಿಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಒಟ್ಟು 32 ಮಂದಿ ಸಚಿವರ ಪೈಕಿ ನಾಗೇಂದ್ರ ಹಾಗೂ ಕೆ.ಎನ್.ರಾಜಣ್ಣ ರಾಜೀನಾಮೆ ಹಿನ್ನೆಲೆಯಲ್ಲಿ 30 ಮಂದಿ ಸಚಿವರಿದ್ದಾರೆ. ಸೋಮವಾರ (ಮಾ.16) ನಗರದಲ್ಲಿ ಸಂಪುಟ ಸಚಿವರಿಗೆ ಔತಣಕೂಟ ಆಯೋಜಿಸಿದ್ದು, 16 ಮಂದಿಗೆ ಪ್ರಭಾವಿ ಸಚಿವರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮಾ.27ಕ್ಕೆ ವಿಶೇಷ ಸಂಪುಟ ಸಭೆ ಕರೆದಿದ್ದು, ಅದಕ್ಕೂ ಮೊದಲು ಎಡಗೈ ಮತ್ತು ಬಲಗೈ ಸಮುದಾಯದಲ್ಲಿನ ಗೊಂದಲ ನಿವಾರಣೆ ಉದ್ದೇಶಕ್ಕಾಗಿ ಔತಣಕೂಟ ಕರೆಯಲಾಗಿದೆಯೇ ಹೊರತು, ಸಂಪುಟ ಪುನರ್ ರಚನೆ ಅಥವಾ ರಾಜಕೀಯ ಚರ್ಚೆಗಾಗಿ ಅಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಸಂಪುಟ ಪುನರ್ ರಚನೆ ಮಾಡದಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಗರದಲ್ಲಿ 25ಕ್ಕೂ ಅಧಿಕ ಮಂದಿ ಹಿರಿಯ ಶಾಸಕರು ಔತಣಕೂಟದ ನೆಪದಲ್ಲಿ ಸಭೆ ನಡೆಸಿ ಸಂಪುಟದಲ್ಲಿ ತಮಗೂ ಅವಕಾಶ ನೀಡಬೇಕೆಂದು ಆಗ್ರಹಿಸಿ ದಿಲ್ಲಿಗೆ ತೆರಳಿ ಹೈಕಮಾಂಡ್ ಮುಂದೆ ಬೇಡಿಕೆ ಮಂಡಿಸಲು ನಿರ್ಧರಿಸಿದ್ದರು. ಇದರ ಜೊತೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದ ಶಾಸಕರಿಗೂ ಸಚಿವ ಸ್ಥಾನಕ್ಕೆ ಪರಿಗಣಿಸಬೇಕೆಂಬ ಬೇಡಿಕೆಯೂ ಕೇಳಿಬಂದಿದ್ದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿಗೆ ಆಗಮಿಸಿದ ಅಸ್ಸಾಂ, ಒಡಿಶಾ ಶಾಸಕರು
ಮೈಸೂರು : ರಾಜ್ಯಸಭಾ ಚುನಾವಣೆಗೆ ಸಂಬಂಧಪಟ್ಟಂತೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಒಡಿಶಾ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯದಂತೆ ತಡೆಯಲು ಕಾಂಗ್ರೆಸ್ ತನ್ನ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದು, ಇದೀಗ ಶನಿವಾರ ಎಲ್ಲ ಶಾಸಕರು ಮೈಸೂರಿಗೆ ಆಗಮಿಸಿದ್ದಾರೆ. ಗುರುವಾರ ರಾತ್ರಿ ಒಡಿಶಾ ಶಾಸಕರು ಬೆಂಗಳೂರಿಗೆ ಆಗಮಿಸಿದ ಬಳಿಕ, ಅಸ್ಸಾಂ ರಾಜ್ಯದ 10 ಕಾಂಗ್ರೆಸ್ ಶಾಸಕರು ಕೂಡ ಬಿಡದಿ ಸಮೀಪದ ವಂಡರ್ಲಾ ರೆಸಾರ್ಟ್ಗೆ ಆಗಮಿಸಿದ್ದು, ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಅಸ್ಸಾಂ ಮತ್ತು ಒಡಿಶಾ ಶಾಸಕರು ಮೈಸೂರಿನ ಸರಕಾರಿ ಅತಿಥಿ ಗೃಹಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಎರಡು ಪೊಲೀಸ್ ಬೆಂಗಾವಲು ವಾಹನಗಳೊಂದಿಗೆ ಹವಾನಿಯಂತ್ರಿತ ಖಾಸಗಿ ಬಸ್ನಲ್ಲಿ ಶಾಸಕರು ಮಧ್ಯಾಹ್ನ 3 ಗಂಟೆಗೆ ನಗರದ ಸರಕಾರಿ ಅತಿಥಿ ಗೃಹಕ್ಕೆ ಆಗಮಿಸಿದರು. ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ವಾಪಸ್ ಸರಕಾರಿ ಅತಿಥಿಗೃಹಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಲಕ್ಷಣ್, ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. ಭದ್ರತಾ ದೃಷ್ಟಿಯಿಂದ ಸರಕಾರಿ ಅತಿಥಿ ಗೃಹಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಿಜೆಪಿ ನಡೆಸುವ ‘ಆಪರೇಷನ್ ಕಮಲ’ ಪ್ರಯತ್ನವನ್ನು ತಡೆಯುವ ಉದ್ದೇಶದಿಂದ ಶಾಸಕರನ್ನು ಒಟ್ಟಿಗೆ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ದಸಂಸದೊಂದಿಗೆ ನನ್ನ ಸಂಬಂಧ 50 ವರ್ಷದ್ದು : ಬಾನು ಮುಷ್ತಾಕ್
ಸಂವಿಧಾನದ ಉಳಿವಿಗಾಗಿ ಜನಜಾಗೃತಿ ಸಮಾವೇಶ
Chitradurga | ಚಿತ್ರದುರ್ಗ ಡಿಸಿ, ಎಡಿಸಿ ಹೆಸರಲ್ಲಿ ಹಣ ದುರುಪಯೋಗ ಆರೋಪ; ಐವರ ಬಂಧನ, ಓರ್ವ ಪರಾರಿ
ಚಿತ್ರದುರ್ಗ : ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರ ಡಿಜಿಟಲ್ ಸಹಿಯನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪದಲ್ಲಿ ಐವರು ಹೊರಗುತ್ತಿಗೆ ನೌಕರರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನ ಆಧಾರದ ಮೇಲೆ ಹೊರಗುತ್ತಿಗೆ ನೌಕರರಾದ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ್, ಮೆಹಬೂಬ್ ಬಾಷಾ ಹಾಗೂ ವಿಎಂಎಚ್ ಎಂಟರ್ಪ್ರೈಸಸ್ನ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ಕೋಶ ಸಿಟಿ ಲೆವೆಲ್ ಟೆಕ್ನಿಕಲ್ ಸೆಲ್ ಸಿಬ್ಬಂದಿಯ ವೇತನದ ಹೆಸರಿನಲ್ಲಿ ಆರೋಪಿಗಳು ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್ ಸಲ್ಲಿಸಿರುವುದು ತಿಳಿದು ಬಂದಿದೆ. ಖಜಾನೆ ಇಲಾಖೆಯು ಡಿಜಿಟಲ್ ಸಹಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಈ ಅಕ್ರಮ ಬೆಳಕಿಗೆ ಬಂದಿದೆ. ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಸಹಿ ಸರ್ಟಿಫಿಕೇಟ್ ಕೀ ಕಳವು ಮಾಡಿ ದುರುಪಯೋಗ ಪಡಿಸಿಕೊಂಡಿರುವ ಆರೋಪ ಹೊರ ಬಂದಿದೆ. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. -ಟಿ.ವೆಂಕಟೇಶ್, ಜಿಲ್ಲಾಧಿಕಾರಿ
Bengaluru | ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಣೆ; ಬಾಂಬ್ ಪದ ಬಳಸಿ ಪೇಚಿಗೆ ಸಿಲುಕಿದ ಆರೋಪಿಯ ಬಂಧನ, ಬಿಡುಗಡೆ
ಬೆಂಗಳೂರು : ತಡವಾಗಿ ಆಗಮಿಸಿದ್ದಕ್ಕೆ ಪ್ರವೇಶ ನಿರಾಕರಿಸಿದ್ದರಿಂದ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ವ್ಯಕ್ತಿಯೊಬ್ಬ ಕೋಪದಲ್ಲಿ ಬಾಂಬ್ ಪದ ಬಳಸಿ ಪೇಚಿಗೆ ಸಿಲುಕಿದ ಘಟನೆ ನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರ ಗೇಟ್ ಸಂಖ್ಯೆ 16ರಲ್ಲಿ ವರದಿಯಾಗಿದೆ. ಮಾರ್ಚ್ 11ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ಸಂಬಂಧ ಪಶ್ಚಿಮ ಬಂಗಾಳ ಮೂಲದ ರಾಜತೇಶ್ ಬೇರಾ(40) ಎಂಬ ಡಿಸ್ಕ್ ಜಾಕಿಯನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈತ ಬೆಂಗಳೂರಿನಿಂದ ರಾಯ್ಪುರಕ್ಕೆ ಮಾರ್ಚ್ 11ರಂದು ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು ಎಂದು ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ತಿಳಿಸಿದ್ದಾರೆ. ರಾಜತೇಶ್ ಬೆಂಗಳೂರಲ್ಲಿ ಡಿಸ್ಕ್ ಜಾಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಈತ ತಡವಾಗಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಗೇಟ್ ಸಂಖ್ಯೆ 16ಕ್ಕೆ ಬಂದಿದ್ದರು. ಬೋರ್ಡಿಂಗ್ ಸಮಯ ಮೀರಿದ ನಂತರ ಆಗಮಿಸಿದ್ದರಿಂದ ಗೇಟ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಪರಿಣಾಮ ಸಿಬ್ಬಂದಿ ಜೊತೆ ವಾಗ್ದಾದ ನಡೆಸಿದ್ದರು. ಬಳಿಕ, ಕೋಪದಲ್ಲಿ ವಿಮಾನದೊಳಗೆ ಬಾಂಬ್ ಇದ್ದರೆ ವಿಮಾನ ನಿಲ್ಲುವುದಿಲ್ಲವೇ ಎಂದು ಈತ ಹೇಳಿದ್ದು, ಆತಂಕ ಮೂಡಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಬ್ ಎಂಬ ಪದ ಬಳಸಿದ್ದರಿಂದ ಅಲ್ಲಿನ ಭದ್ರತಾ ಸಿಬ್ಬಂದಿ ಕಳವಳಗೊಂಡು, ತಕ್ಷಣವೇ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಾಂಬ್ ಹೇಳಿಕೆಯ ಗಂಭೀರತೆಯನ್ನು ನಿರ್ಣಯಿಸಲು ಪ್ರೋಟೋಕಾಲ್ ಪ್ರಕಾರ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.ವಿಮಾನಯಾನ ಸಿಬ್ಬಂದಿ ಸಲ್ಲಿಸಿದ ದೂರಿನನ್ವಯ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ರಷ್ಯಾಗೆ ಭರ್ಜರಿ ಲಾಭ, ಇರಾನ್ ಯುದ್ಧ ವಿಚಾರದಲ್ಲಿ ಹೊಸ ಚರ್ಚೆ ಶುರು | Donald Trump
ಅಮೆರಿಕ ಕೊಡುತ್ತಿರುವ ಒಂದೊಂದು ಏಟಿಗೂ ಇರಾನ್ ನಲುಗಿ ಹೋಗುತ್ತಿದ್ದು, ಇಸ್ರೇಲ್ ಕೂಡ ಈ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಾ ಇರಾನ್ ಸೋಲು ಒಪ್ಪಿಕೊಳ್ಳುವಂತೆ ಆತಂಕ ಮೂಡಿಸುತ್ತಿದೆ. ಹೀಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ದಾಳಿ ನಡೆಸುತ್ತಿರುವ ಹಿನ್ನೆಲೆ ಮಧ್ಯಪ್ರಾಚ್ಯ ಪರಿಸ್ಥಿತಿ ಕೂಡ ಅತ್ಯಂತ ಸೂಕ್ಷ್ಮ ಹಂತಕ್ಕೆ ತಲುಪಿಬಿಟ್ಟಿದೆ. ಹೀಗಿದ್ದಾಗ ಯುದ್ಧ ನಿಲ್ಲಿಸಲು ಏನಾದರೂ
Middle East Conflict- ಮೊಜ್ತಬಾ ಖಮೇನಿ ಸೇರಿ ಕೆಲ ಇರಾನ್ ಪ್ರಮುಖರ ತಲೆಗೆ ಬಹುಮಾನ ಘೋಷಿಸಿದ ಟ್ರಂಪ್!
ಟೆಹ್ರಾನ್: ಇರಾನ್ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿದಂತೆ ಇರಾನ್ನಲ್ಲಿನ ಸರ್ವಾಧಿಕಾರಿ ಆಡಳಿತ ಹೊಣೆ ಹೊತ್ತ ಪ್ರಮುಖರ ತಲೆಗೆ ಅಮೆರಿಕ 92 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಮೆರಿಕದ ರಾಜತಾಂತ್ರಿಕ ಭದ್ರತಾ ಸೇವೆಗಳ ಇಲಾಖೆ ಇರಾನ್ ಭಯೋತ್ಪಾದಕ ನಾಯಕರು' ಎಂದು ಉಲ್ಲೇಖಿಸಿ, ಪೋಟೋ ಸಮೇತ ಹೆಸರುಗಳನ್ನು ಪ್ರಕಟಿಸಿದ್ದು, ಸುಳಿವು ನೀಡಿದವರಿಗೆ 10 ದಶಲಕ್ಷ ಡಾಲರ್ (ಭಾರತೀಯ ಕರೆನ್ಸಿಯಲ್ಲಿ92 ಕೋಟಿ ರೂ.) ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.ಮೊಜ್ತಬಾ ಖಮೇನಿ ಜತೆಗೆ ಪರಮೋಚ್ಚ ನಾಯಕರ ಕಚೇರಿಯ (ಎಸ್ಎಲ್ಒ) ಉಪ ಮುಖ್ಯಸ್ಥ ಅಲಿ ಅಸ್ಗರ್ ಹೆಜಾಜಿ, ಎಸ್ಎಲ್ಒ ಮಿಲಿಟರಿ ಸಲಹೆಗಾರ ಮೇಜರ್ ಜನರಲ್ ವೈ.ಆರ್.ಸಫಾವಿ, ಗುಪ್ತಚರ ಇಲಾಖೆ ಸಚಿವ ಇಸ್ಮಾಯಿಲ್ ಖತೀಬ್ ಸೇರಿದಂತೆ 10 ಪ್ರಮುಖರ ಹೆಸರನ್ನು ಅಮೆರಿಕ ಬಿಡುಗಡೆ ಮಾಡಿದೆ. ಮಧ್ಯಪ್ರಾಚ್ಯಕ್ಕೆ ಅಮೆರಿಕದ 'ಟ್ರಿಪೋಲಿ' ಹರ್ಮುಜ್ ಜಲಸಂಧಿ ಮೇಲೆ ಹಿಡಿತ ಹೊಂದಿರುವ ಇರಾನ್ ಹೊರದಬ್ಬಲು ಅಮೆರಿಕ 'ಯುಎಸ್ಎಸ್ ಟ್ರಿಪೋಲಿ' ಯುದ್ಧ ನಾಕೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ನೌಕಾ ಸಿಬ್ಬಂದಿ ರವಾನೆ, ಯುದ್ಧ ಸಾಮಗ್ರಿ ಪೂರೈಕೆ ಜತೆಗೆ ಶತ್ರು ದೇಶಗಳ ಮೇಲೆ ದಾಳಿ ನಡೆಸುವ ಯುದ್ಧ ನೌಕೆಯಾಗಿಯೂ ಕೆಲಸ ಮಾಡಲಿದೆ. ಟ್ರಿಪೋಲಿ ಜತೆಗೆ ತೈಲ ಹಾಗೂ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ಇರಾನಿಯನ್ ಗೌಪ್ಯ ನೌಕಾದಳ ಹತ್ತಿಕ್ಕುವುದು, ಸಾಗರದಲ್ಲಿ ಸುರಿಯಲಾದ ಮೈನ್ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಲು 2,500 ನೌಕೆಗಳನ್ನು ಅಮೆರಿಕ ರವಾನಿಸಿದೆ. ಇರಾನ್ ಪ್ರತೀಕಾರ ಖಾರ್ಗ್ ದ್ವೀಪದ ಮೇಲೆ ಅಮೆರಿಕ ವಾಯುಪಡೆ ದಾಳಿ ನಡೆಸಿದ ಬೆನ್ನಿಗೆ ಅಮೆರಿಕ ಮಿತ್ರಕೂಟದ ಕೊಲ್ಲಿದೇಶಗಳ ಮೇಲೆ ಇರಾನ್ ವೈಮಾನಿಕ ದಾಳಿ ನಡೆಸಿದೆ. ಸೌದಿ ಅರೇಬಿಯಾ, ಬರಹೇನ್, ಯುಇಎ, ಕುವೈತ್, ಕತಾರ್ ತೈಲಾಗಾರಗಳು, ಇಂಧನ ಉತ್ಪಾದನಾ ಕೇಂದ್ರಗಳು, ಸೇನಾ ನೆಲೆಗಳು, ಮಿಲಿಟರಿ ಮೂಲಸೌಲಭ್ಯ ಕೇಂದ್ರಗಳ ಮೇಲೆ ಕ್ಷಿಪಣಿ, ಡ್ರೋನ್ ಮೂಲಕ ದಾಳಿ ನಡೆಸಿದೆ.ಯುಎಇಯ ಆರ್ಥಿಕ ಶಕ್ತಿ ಕೇಂದ್ರ ದುಬೈ ಮೇಲೆ ಕ್ಷಿಪಣಿ, ಡ್ರೋನ್ ಬಳಸಿಕೊಂಡು ಇರಾನ್ ದಾಳಿಗೈದಿದೆ. ಮಧ್ಯ ದುಬೈನ ಪ್ರಮುಖ ಆಡಳಿತ ಹಾಗೂ ವಾಣಿಜ್ಯ ಕೇಂದ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ವಾಯು ರಕ್ಷಣಾ ವ್ಯವಸ್ಥೆ ಡ್ರೋನ್ ದಾಳಿ ನಿಗ್ರಹಿಸಿದೆ. ಆದರೆ, ಡ್ರೋನ್ ಅವಶೇಷಗಳಿಂದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.ಯುಎಇಯ ಫುಜೈರಾ ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಇರಾನಿಯನ್ ಡ್ರೋನ್ ಹೊಡೆದುರಳಿಸಲಾಗಿದೆ, ಆದರೆ, ಅವಶೇಷಗಳು ಬಿದ್ದು ಘಟಕದ ಬಳಿ ಬೆಂಕಿ ಹೊತ್ತಿಕೊಂಡಿದೆ. ತಾತ್ಕಾಲಿಕವಾಗಿ ತೈಲ ಸಂಸ್ಕರಣೆ ಸ್ಥಗಿತಗೊಳಿಸಲಾಗಿದೆ. ಭಾರತದತ್ತ ಮತ್ತೊಂದು ಎಲ್ಪಿಜಿ ನೌಕೆ ಇರಾನ್ ಜತೆಗಿನ ರಾಜತಾಂತ್ರಿಕ ಮಾತುಕತೆ ಫಲಪ್ರದವಾದ ಬಳಿಕ ಭಾರತದ ಮತ್ತೊಂದು ಹಡಗು ಶನಿವಾರ ಹರ್ಮುಜ್ ಜಲಸಂಧಿ ದಾಟಿ ಭಾರತದ ಹೊರಟಿದೆ. ಶುಕ್ರವಾರ ರಾತ್ರಿ 40 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಸಂಗ್ರಹ ಹೊತ್ತ 'ಶಿವಾಲಿಕ್' ಹಡಗು ಭಾರತದ ಪ್ರಯಾಣ ಬೆಳೆಸಿದ ಬೆನ್ನಿಗೆ ಶನಿವಾರ 46 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಸಂಗ್ರಹ ಹೊಂದಿದ 'ನಂದಾದೇವಿ' ಹಡಗು ಹರ್ಮುಜ್ ಜಲಸಂಧಿ ಮೂಲಕ ಭಾರತದತ್ತ ಹೊರಟಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಎಲ್ಪಿಜಿ ಸರಕು ಹೊತ್ತು ಹೊರಟಿರುವ 'ನಂದಾದೇವಿ' ಹಡಗಿಗೆ ಬೆಂಗಾವಲು ನೀಡಿದೆ. ಮುಂದಿನ ಎರಡು ದಿನದಲ್ಲಿಮುಂಬಯಿನ ಕಾಂಡ್ಲಾಬಂದರಿಗೆ ಹಡಗು ತಲುಪಲಿದೆ. ಐವರು ಭಾರತೀಯರ ಸಾವು ಇರಾನ್- ಅಮೆರಿಕ ಸಂಘರ್ಷದಿಂದ ಮಧ್ಯಪ್ರಾಚ್ಯ, ಕೊಲ್ಲಿಪ್ರದೇಶದಲ್ಲಿ ಇದುವರೆಗೂ ಐವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.ಓಮನ್ ಕರಾವಳಿ ತೀರ ದಲ್ಲಿತೈಲ ಸಾಗಣೆ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಒಬ್ಬರು, ಇರಾಕ್ನಲ್ಲಿ ಅಮೆರಿಕ ತೈಲ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು, ಒಮನ್ ಕೈಗಾರಿಕಾ ಪ್ರದೇಶದ ಮೇಲೆ ಶುಕ್ರವಾರ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಕಾಣೆಯಾಗಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ ಎಂದು ಕೊಲ್ಲಿದೇಶಗಳ ಭಾರತದ ವಿದೇಶಾಂಗ ವ್ಯವಹಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಮಹಾಜನ್ ಹೇಳಿದ್ದಾರೆ.
Karan Adani: ನವದೆಹಲಿಯಲ್ಲಿ ಮಾರ್ಚ್ 13ರಂದು ನಡೆದ ಲೀಡರ್ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಕರಣ್ ಅದಾನಿ ಅವರು, ಭಾರತದ ಸಾಮಾಜಿಕ ಮೂಲಸೌಕರ್ಯವನ್ನು ಬಲಪಡಿಸಲು ಅದಾನಿ ಸಮೂಹವು ಮಹತ್ವದ ಹೆಜ್ಜೆ ಇಟ್ಟಿದೆ. ಮುಂದಿನ 10 ವರ್ಷಗಳಲ್ಲಿ ದೇಶಾದ್ಯಂತ 300 ಶಾಲೆಗಳು ಮತ್ತು 30 ಅತ್ಯಾಧುನಿಕ ಆಸ್ಪತ್ರೆಗಳನ್ನು ನಿರ್ಮಿಸಲು ಅದಾನಿ ಸಮೂಹವು ₹60,000 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ಆರ್ಥಿಕ ಬೆಳವಣಿಗೆಯು
Middle East Conflict- ಹರ್ಮುಜ್ ಜಲಸಂಧಿ ನಿರ್ಬಂಧ: 15 ದಿನಗಳಲ್ಲಿ ಕಚ್ಚಾತೈಲ ಬೆಲೆ ಶೇಕಡಾ 40ರಷ್ಟು ಜಂಪ್!
ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕೇವಲ 15 ದಿನಗಳಲ್ಲಿ ಕಚ್ಚಾತೈಲದ ಬೆಲೆ ಶೇಕಡಾ 41.1ರಷ್ಟು ಏರಿಕೆ ಕಂಡಿದೆ. ಅಮೆರಿಕ- ಇಸ್ರೇಲ್ ಜಂಟಿ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇರಾನ್ ತನ್ನ ನಿಯಂತ್ರಣದಲ್ಲಿರುವ ಹರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಇದರಿಂದ ತೈಲ ಹೊತ್ತ ನೂರಾರು ಹಡಗುಗಳು ಮಾರ್ಗಮಧ್ಯದಲ್ಲೇ ಲಂಗರು ಹಾಕಿವೆ. ಇದರಿಂದಾಗಿ ಹಲವು ದೇಶಗಳಲ್ಲಿ ಇಂಧನ ಪೂರೈಕೆ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ.ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಕ್ಷಿಪಣಿಗಳು ಇರಾನ್ನ ಮಿಲಿಟರಿ ನೆಲೆಗಳ ಮೇಲೆ ನೇರ ದಾಳಿ ಮಾಡಿದವು. ಇದಕ್ಕೂ ಮೊದಲು ಅಂದರೆ ಫೆಬ್ರವರಿ 27ರಂದು ಬ್ಯಾರೆಲ್ಗೆ 73 ಡಾಲರ್ ಇತ್ತು. ಶನಿವಾರ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 103 ಡಾಲರ್ ಆಗಿದೆ.ಅಮೆರಿಕ ಮತ್ತು ಇಸ್ರೇಲ್ ಪಡೆಗಳ ದಾಳಿಯಿಂದ ಇರಾನ್ ಪರಮೋಚ್ಚ ನಾಯಕ ಖಮೇನಿ ಮೃತಪಟ್ಟರು. ಇದರಿಂದ ಕದನ ಇನ್ನಷ್ಟು ಉಲ್ಬಣಗೊಂಡಿತು. ಇಂಧನ ಬೆಲೆ ಕೂಡ ದೊಡ್ಡ ಜಿಗಿತ ಕಂಡಿತು. ಪೂರೈಕೆಯಲ್ಲಿ ಬರ ಉಂಟಾಯಿತು. ತೈಲಕ್ಕಾಗಿ ಪಶ್ಚಿಮ ಏಷ್ಯಾ ದೇಶಗಳನ್ನು ಅವಲಂಬಿಸಿದ್ದ ದೇಶಗಳು ತತ್ತರಗೊಂಡವು. ಭಾರತದಲ್ಲಿ ಸಾಕಷ್ಟು ಇಂಧನ ಮತ್ತು ಅನಿಲ ದಾಸ್ತಾನು ಇದ್ದರೂ ಗ್ರಾಹಕರು ಹೆಚ್ಚು ಕಂಗಾಲಾಗಿದ್ದಾರೆ. ಇದರಿಂದ ಇದರಿಂದ ಹಲವು ವಲಯಗಳಲ್ಲಿ ಹಣದುಬ್ಬರವಾಗಿದೆ. ತಜ್ಞರ ಆತಂಕ ಇರಾನ್ ವಿರುದ್ಧ ನಡೆಯುತ್ತಿರುವ ಸಮರ ಒಂದು 'ಹಗುರ ಆಟ', ಬಹುಬೇಗ ಮುಗಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆದರೆ ಈಗಿನ ಸನ್ನಿವೇಶವನ್ನು ಗಮನಿಸಿದರೆ ಇದು ತಕ್ಷಣ ಮುಗಿಯುವಂತೆ ಕಾಣುತ್ತಿಲ್ಲ. ''ಇಂಧನ ಬಿಕ್ಕಟ್ಟಿನಿಂದ ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕತೆ ಇನ್ನಷ್ಟು ಹಿನ್ನಡೆ ಅನುಭವಿಸುತ್ತದೆ. ಈಗಾಗಲೇ ನಮ್ಮಲ್ಲಿ ಚಿಲ್ಲರೆ ಹಣದುಬ್ಬರ ಏರು ಗತಿಯಲ್ಲಿದೆ,'' ಎಂದು ವಿತ್ತ ತಜ್ಞ ಆರ್. ಪೊನ್ಮುಡಿ ಹೇಳಿದ್ದಾರೆ. ಹರ್ಮುಜ್ ಜಲಸಂಧಿ ಭಾರತಕ್ಕೆ ಸುಗಮ ಭಾರತದ ಹಡಗುಗಳು ಹರ್ಮುಜ್ ಜಲಸಂಧಿ ಮೂಲಕ ಸಾಗಲು ನಾವು ಯಾವುದೇ ಅಡ್ಡಿ ಮಾಡುವುದಿಲ್ಲ. ಭಾರತದೊಂದಿಗೆ ನಮ್ಮ ನಂಟು ಚೆನ್ನಾಗಿದೆ. ಹಲವು ಸಂಕಷ್ಟಗಳ ಸಂದರ್ಭದಲ್ಲಿ ನಮಗೆ ನೆರವಾಗಿದೆ. ಹೀಗಾಗಿ ತೈಲ ರವಾನೆ ಸುಸೂತ್ರವಾಗಲಿದೆ ಎಂದು ಘೋಷಿಸಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಿಂದ ಭಾರತಕ್ಕೆ ಕಚ್ಚಾ ತೈಲ ಮತ್ತು ಅನಿಲ ರವಾನೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸಂಘರ್ಷ ಕಡಿಮೆಯಾದರೆ ಇಂಧನ ಬಿಕ್ಕಟ್ಟು ಕೊನೆಗೊಳ್ಳಲಿದೆ. ಭಾರತದಲ್ಲಿ ತೈಲ ದಾಸ್ತಾನು ಹೆಚ್ಚಿರುವುದರಿಂದ ಸದ್ಯಕ್ಕೆ ತೈಲ ಬೆಲೆಯಲ್ಲಿ ಏರಿಕೆಯಾಗಿಲ್ಲ.
ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ; ಹೊಟೇಲ್ ಉದ್ಯಮ ಸಹಿತ ಜನ ಸಾಮಾನ್ಯರಿಗೆ ತೀವ್ರ ಸಂಕಷ್ಟ
ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಆಮದಾಗುವ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್ಪಿಜಿ) ಸರಬರಾಜು ವ್ಯತ್ಯಯಗೊಂಡಿದ್ದು, ದೇಶಾದ್ಯಾಂತ ಎಲ್ಪಿಜಿ ಸಿಲಿಂಡರ್ ಗಳ ಕೊರತೆ ಉಂಟಾಗಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧ ನಗರಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ಕಡಿಮೆಯಾಗುತ್ತಿದ್ದು, ಹೊಟೇಲ್ ಉದ್ಯಮ ಸೇರಿದಂತೆ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಒಂದು ವಾರದಿಂದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳ ಕೊರೆತೆ ಉಂಟಾಗಿದ್ದು, ಎರಡು-ಮೂರು ದಿನಗಳ ಕಾಲ ಹೋಟೆಲ್ಗಳಲ್ಲಿ ಉಳಿಕೆಯಾಗಿದ್ದ ಸಿಲಿಂಡರ್ ಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಇದೀಗ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳಿಲ್ಲದೆ, ಸಣ್ಣ ಹೋಟೆಲ್ಗಳು ಬಂದ್ ಆಗಿವೆ. ಇನ್ನು ಕೆಲವರು ಮೆನು ಕಡಿತ ಮತ್ತು ಆಹಾರದ ಬೆಲೆಯನ್ನು ಏರಿಕೆ ಮಾಡುತ್ತಿದ್ದಾರೆ. ನಗರದ ಕೆಲ ಪಂಚತಾರ ಹೋಟೆಲ್ಗಳು ಸಿಲಿಂಡರ್ ಗಳ ಪೂರೈಕೆ ಇಲ್ಲದ ಕಾರಣ ಕಾರ್ಯಕ್ರಮಗಳ ಬುಕ್ಕಿಂಗ್ ಅನ್ನೂ ಸ್ಥಗಿತ ಮಾಡುತ್ತಿವೆ. ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಗಳ ತೀವ್ರ ಅಭಾವದಿಂದಾಗಿ ವಿವಾಹ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗೆ ಅಡ್ಡಿಯಾಗುತ್ತಿದ್ದು, ಶುಭ ಕಾರ್ಯಗಳಿಗೆ ಕಲ್ಯಾಣ ಮಂಟಪಗಳನ್ನು ಬುಕ್ ಮಾಡುವ ವೇಳೆ ಅಡುಗೆ ತಯಾರಿಗೆ ಸೀಮಿತ ಅನಿಲ ಸಿಲಿಂಡರ್ ನೀಡಲಾಗುವುದು ಎಂದು ಕಲ್ಯಾಣ ಮಂಟಪದವರು ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲ ಮಂಟಪಗಳಲ್ಲಿ ಸಿಲಿಂಡರ್ ಅಭಾವ ಉಂಟಾಗಿರುವುದರಿಂದ ಕಾರ್ಯಕ್ರಮದ ಆಯೋಜಕರೇ ಸಿಲಿಂಡರ್ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ. ಹೋಟೆಲ್ ಉದ್ಯಮ ಮಾತ್ರವಲ್ಲದೆ, ಆಟೋ ಮೊಬೈಲ್ ಕ್ಷೇತ್ರದಲ್ಲಿಯೂ ಬಿಕ್ಕುಟ್ಟು ಶುರುವಾಗಿದೆ. ಫೆಬ್ರವರಿ ಅಂತ್ಯದಲ್ಲಿ ಪ್ರತಿ ಲೀಟರ್ನ ಆಟೋ ಎಲ್ಪಿಜಿ ಸುಮಾರು 59ರೂ. ಇದ್ದದ್ದು, ಇದೀಗ 85 ರೂ. ನಿಂದ 89 ರೂ.ವರೆಗೆ ಏರಿಕೆಯಾಗಿದೆ. ಅಲ್ಲದೆ ಆಟೋ ಎಲ್ಪಿಜಿ ಬಂಕ್ಗಳ ಮುಂದೆ ಸರತಿ ಸಾಲು ನಿರ್ಮಾಣವಾಗುತ್ತಿದೆ. ಓಲಾ, ಉಬರ್, ರಾಪಿಡೋ ಮತ್ತು ನಮ್ಮ ಯಾತ್ರಿ ಅಂತಹ ಆಪ್ ಆಧಾರಿತ ವೇದಿಕೆಗಳಲ್ಲಿ ಕೆಲಸ ಮಾಡುವ ಸಾವಿರಾರು ಚಾಲಕರು ಅತಂತ್ರರಾಗಿದ್ದಾರೆ. ವಾಣಿಜ್ಯ ಸಿಲಿಂಡರ್ ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಬೆನ್ನಲ್ಲೇ, ಗೃಹ ಬಳಕೆಯ ಸಿಲಿಂಡರ್ ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ನಗರದ ಜನರು ಗೃಹ ಬಳಕೆಯ ಸಿಲಿಂಡರ್ ಗಳನ್ನು ಹೆಚ್ಚಾಗಿ ಬುಕ್ ಮಾಡಿಕೊಂಡು ಸಂಗ್ರಹ ಮಾಡುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರೂ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಗಳಿಲ್ಲದೆ ಹೋಟೆಲ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕಾಳಸಂತೆಯಲ್ಲಿ ಸಿಲಿಂಡರ್ ಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಒಂದು ಸಿಲಿಂಡರ್ ಬೆಲೆ 4000 ರೂ.ಗಳಿಗಿಂತ ಅಧಿಕ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ‘ಬೆಂಗಳೂರಿನ ಹೋಟೆಲ್ಗಳಿಗೆ ಸಿಲಿಂಡರ್ ಸಮಸ್ಯೆ ಉದ್ಬವವಾಗಿದೆ. ಎಲ್ಲ ಮಾದರಿಯ ಹೋಟೆಲ್ಗಳು ಸಮಸ್ಯೆ ಎದುರಿಸುತ್ತಿವೆ. ಇದರ ನಡುವೆ ಇಂಧನ ಟ್ಯಾಂಕರ್ಗಳು ಭಾರತಕ್ಕೆ ಬಂದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಹೀಗಾಗಿ, ಇನ್ನು ಒಂದೆರೆಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಸಿಲಿಂಡರ್ ಸಿಗಬಹುದು ಎಂಬ ನಂಬಿಕೆ ಇದೆ’ -ಪಿ.ಸಿ. ರಾವ್, ಬೃಹತ್ ಬೆಂಗಳೂರು ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ‘ಅನಿಲ ಕೊರತೆಯಿಂದಾಗಿ ಜನಸಾಮಾನ್ಯರು ಪರ್ಯಾಯ ಇಂಧನಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಹೀಗಾಗಿ ಕಟ್ಟಿಗೆ, ಪಂಪ್ಸ್ಟೌವ್ ಹಾಗೂ ಎಲೆಕ್ಟ್ರಿಕ್ ಒಲೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಶಿವಾಜಿನಗರದ ಆರ್ಮ್ಸ್ಟ್ರಾಂಗ್ ರಸ್ತೆಯಲ್ಲಿ ಕೆಲವು ದಿನಗಳಿಂದ ಕಟ್ಟಿಗೆ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ರಸ್ತೆ ಬದಿಯ ಆಹಾರ ವ್ಯಾಪಾರಿಗಳು, ಸಣ್ಣ ಹೋಟೆಲ್ಗಳು ಹಾಗೂ ಕ್ಯಾಂಟೀನ್ ಮಾಲಕರು ಸೌದೆ ಖರೀದಿಸುತ್ತಿದ್ದಾರೆ.
ಕನಕಗಿರಿ: ಇಲ್ಲಿನ ನಾಲ್ಕನೇ ವಾರ್ಡ್ ನಿವಾಸಿ ಮಹೇಕಾ ಅಗರಬತ್ತಿ (22) ಎಂಬ ಮಹಿಳೆ ಹೆರಿಗೆಯಾದ ನಂತರ ಮೃತಪಟ್ಟ ಘಟನೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ. ಹೆರಿಗೆ ನಿಮಿತ್ತ ತವರು ಮನೆಯಾದ ಸಿಂಧನೂರಿಗೆ ಹೋಗಿದ್ದ ಮಹೇಕಾ ಅವರಿಗೆ ಶುಕ್ರವಾರ ರಾತ್ರಿ ಕಾಲುಗಳಿಗೆ ಬಾವು ಬಂದ ಪರಿಣಾಮ ತಪಾಸಣೆಗಾಗಿ ಸಿಂಧನೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ರಕ್ತ ತಪಾಸಣೆ ನಡೆಸಿದಾಗ ಅಧಿಕ ರಕ್ತದೊತ್ತಡ ಹಾಗೂ ಕಾಮಾಲೆ ರೋಗ ಇರುವುದು ಪತ್ತೆಯಾಗಿದೆ. ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ರಕ್ತದೊತ್ತಡ ಏರುಪೇರಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ಬೆಳಿಗ್ಗೆ ಗಂಗಾವತಿಯ ರಸ್ತೆಯ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Karan Adani: ತಂದೆ-ತಾಯಿಯಿಂದ ಕಲಿತ ನಾಯಕತ್ವದ ಪಾಠಗಳನ್ನ ಬಿಚ್ಚಿಟ್ಟ ಕರಣ್ ಅದಾನಿ
Karan Adani: ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅದಾನಿ ಸಿಮೆಂಟ್ನ ನಿರ್ದೇಶಕರಾಗಿರುವ ಕರಣ್ ಅದಾನಿ ಅವರು, ತಮ್ಮ ಯಶಸ್ಸಿನ ಮೂಲವನ್ನು ಸ್ಮರಿಸಿದ್ದಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ ಅವರು, ಮನೆಯಲ್ಲಿ ಕಲಿತ ಪಾಠಗಳು, ನನ್ನ ನಾಯಕತ್ವದ ದೃಷ್ಟಿಕೋನ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶೈಲಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವೆಂದು
Bengaluru | ‘ಅಡುಗೆ ಅನಿಲದ ಬೆಲೆ ಏರಿಕೆ’ ಖಂಡಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
ಬೆಂಗಳೂರು : ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಪ್ರಧಾನಿ ಮೋದಿ ‘ಗಟಾರ್ ಗ್ಯಾಸ್’ ಹೇಳಿಕೆ ವಿರುದ್ಧ ವಿನೂತನ ಅಣಕು ಪ್ರದರ್ಶನ ನಡೆಸಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಹೇಳಿರುವ ‘ಗಟಾರ್ ಗ್ಯಾಸ್’ ಕುರಿತ ಅವೈಜ್ಞಾನಿಕ ಹೇಳಿಕೆಗಳನ್ನು ಖಂಡಿಸಿ, ದೇಶದ ಜನತೆಗೆ ದಾರಿ ತಪ್ಪಿಸುವ ರೀತಿಯ ಹೇಳಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ದೇಶದ ಜನರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಾಗ ಕೇಂದ್ರ ಸರಕಾರದ ಜವಾಬ್ದಾರಿ ಏನು?. ಜನರ ಕಷ್ಟಕ್ಕೆ ಪರಿಹಾರ ನೀಡುವುದು ಸರಕಾರದ ಆದ್ಯ ಕರ್ತವ್ಯ. ಆದರೆ, ಕೇಂದ್ರ ಸರಕಾರ ಪ್ರಚಾರದಲ್ಲೇ ತೊಡಗಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವ ಪ್ರಧಾನಿಯವರು ‘ಗಟಾರ್ ಗ್ಯಾಸ್’ ಎಂಬ ಅವೈಜ್ಞಾನಿಕ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ? ಇದು ದೇಶದ ಯುವಕರಿಗೂ ಮತ್ತು ವಿಜ್ಞಾನ ಮನೋಭಾವಕ್ಕೂ ತಪ್ಪು ಸಂದೇಶ ನೀಡುವಂತಾಗಿದೆ ಎಂದು ಖಂಡಿಸಿದರು. ಜನರು ದುಬಾರಿ ಗ್ಯಾಸ್ ದರದಿಂದ ತೀವ್ರ ಸಂಕಷ್ಟದಲ್ಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಆದ್ಯತೆ ಏನು ಎಂಬುದರ ಬಗ್ಗೆ ಮೋದಿ ಸರಕಾರ ಉತ್ತರ ನೀಡಬೇಕು. ಜನರಿಗೆ ಪರಿಹಾರ ನೀಡುವ ಬದಲು ಪ್ರಚಾರ ಮತ್ತು ರಾಜಕೀಯ ಭಾಷಣಗಳೇ ಹೆಚ್ಚಾಗಿವೆ. ಸಂಸತ್ತಿನಲ್ಲಿ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಉತ್ತರ ನೀಡದೆ ತಪ್ಪಿಸಿಕೊಳ್ಳುವುದು ಏಕೆ? ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದು ಸರಕಾರದ ಕರ್ತವ್ಯ ಎಂಬುದನ್ನು ಪ್ರಧಾನಿ ಮೋದಿ ಅವರು ಮರೆತಿದ್ದಾರೆ ಎಂದು ಎಸ್.ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಜನರ ಸಮಸ್ಯೆಗಳಿಗೆ ಉತ್ತರ ನೀಡುವಲ್ಲಿ ವಿಫಲವಾಗಿರುವ ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರರಾದ ಆನಂದ್ಕುಮಾರ್ ಎಂ.ಎಸ್., ಪ್ರಕಾಶ್, ಒಬಳೇಶ್, ಚಿನ್ನಿಪ್ರಕಾಶ್, ಹೇಮರಾಜ್, ಪುಟ್ಟರಾಜು, ಸುಂಕದಕಟ್ಟೆ ನವೀನ್, ಕುಶಾಲ್ ಹರವೇಗೌಡ, ಸಾಯಿ ನವೀನ್, ಪ್ರವೀಣ್ ರಾವ್, ಬಾಲಾಜಿ ಡಿ. ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಸಹಕರಿಸಿ : ಹೋರಾಟ ಸಮಿತಿ ಮನವಿ
ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮಾ.27 ರಂದು ನಡೆಯುವ ವಿಶೇಷ ಸಚಿವ ಸಂಪುಟದಲ್ಲಿ ಒಳಮೀಸಲಾತಿ ಪರವಾದ ತೀರ್ಮಾನವನ್ನು ತೆಗೆದುಕೊಳ್ಳಲು ಎಲ್ಲ ಸಮುದಾಯದ ಸಚಿವರು, ಹೋರಾಟಗಾರರು ಸಹಕರಿಸಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿ ಮನವಿ ಮಾಡಿದೆ. ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಒಳಮೀಸಲಾತಿ ಹೋರಾಟ ಸಮಿತಿಯ ಮಾರಸಂದ್ರ ಮುನಿಯಪ್ಪ, ಅಂಬಣ್ಣ ಅರೋಲಿಕರ್, ಬಿ.ನರಸಪ್ಪ, ಎಂ.ಗುರುಮೂರ್ತಿ, ಫನಾರ್ಂಡಿಸ್ ಇಪ್ಪಳಗಾಂವ್ ಸೇರಿದಂತೆ ಇತರರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಒಳಮೀಸಲಾತಿ ಹೋರಾಟ ಸಾಮಾಜಿಕ ನ್ಯಾಯದ ಹೋರಾಟವಾದ್ದರಿಂದ ಇದು ಯಾವುದೇ ಸಮುದಾಯದ ವಿರುದ್ಧದ ಹೋರಾಟವಲ್ಲ ಎಂದರು. ಹೋರಾಟದ ನಿಯೋಗವನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಒಂದು ಹುದ್ದೆಯನ್ನು ಒಳಮೀಸಲಾತಿ ಇಲ್ಲದೆಯೇ ಭರ್ತಿ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ. ಒಳಮೀಸಲಾತಿ ಅಲ್ಲದೆಯೇ ಅಸ್ಪೃಶ್ಯ ಸಮುದಾಯಗಳ ಜ್ವಲಂತ ಸಮಸ್ಯೆಗಳಾದ ಭೂಮಿ ಹಕ್ಕು, ದೌರ್ಜನ್ಯ ತಡೆ, ಎಸ್ಸಿಪಿ, ಟಿಎಸ್ಪಿ ಅನುದಾನದಲ್ಲಿ ಅನ್ಯಾಯದ ವಿರುದ್ದ ಸಂಘಟಿತರಾಗಿ ಹೋರಾಟ ನಡೆಸುವ ಅನಿವಾರ್ಯ ಇದೆ. ಹಾಗಾಗಿ ರೋಸ್ಟರ್ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಕೂತು ಬಗೆಹರಿಸಿಕೊಂಡು ಒಳಮೀಸಲಾತಿಯನ್ನು ಜಾರಿಮಾಡಿಕೊಳ್ಳೋಣ ಎಂದು ಹೋರಾಟಗಾರರು ಮನವಿ ಮಾಡಿದರು. ಮಾ.27ರಂದು ಒಳಮೀಸಲಾತಿಯನ್ನು ಎಲ್ಲ ಹಂತಗಳಲ್ಲೂ ಅನ್ವಯಿಸಿ ಆದೇಶ ಹೊರಡಿಸದಿದ್ದರೆ, ನಮ್ಮ ಹೋರಾಟ ಇನ್ನಷ್ಟು ತೀವ್ರವಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಳಮೀಸಲಾತಿ ಹೋರಾಟಗಾರರು ಸರಕಾರಕ್ಕೆ ಎದುರುಗೊಳ್ಳುತ್ತೇವೆ. ಸಮುದಾಯದ ಭಾವನೆಗೆ ಬೆಲೆ ಕೊಟ್ಟು ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಸರಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಹೋರಾಟಗಾರರು ತಿಳಿಸಿದರು.
ಬಳ್ಳಾರಿ | ಮಹಿಳಾ ಸಬಲೀಕರಣ ಮಹೋತ್ಸವ : ಸಾಧಕಿಯರಿಗೆ ಸನ್ಮಾನ,
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ವಿಜಯನಗರ | ರಮಝಾನ್-ಯುಗಾದಿ ಹಬ್ಬ : ಪೊಲೀಸರಿಂದ ಶಾಂತಿ ಸಭೆ
ವಿಜಯನಗರ / ಹೊಸಪೇಟೆ: ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ರಮಝಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಸರ್ವಧರ್ಮದ ಮುಖಂಡರೊಂದಿಗೆ ಪೊಲೀಸ್ ಠಾಣಾಧಿಕಾರಿ ಹುಲುಗಪ್ಪ ರವರ ನೇತೃತ್ವದಲ್ಲಿ ಶಾಂತಿ ಸಭೆ ಆಯೋಜಿಸಲಾಯಿತು. ಶಾಂತಿ ಸಭೆಯಲ್ಲಿ ಪೊಲೀಸ್ ಠಾಣಾಧಿಕಾರಿಗಳು ಹಬ್ಬಗಳನ್ನು ಶಾಂತಿಯುತವಾಗಿ ಮತ್ತು ವಿಜೃಂಭಣೆಯಿಂದ ಆಚರಿಸುವಂತೆ ಸೂಚಿಸಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಾಗೃತಿ ವಹಿಸಲು ಮತ್ತು ಹಬ್ಬವನ್ನು ಶಾಂತಿಪೂರಿತವಾಗಿ ಆಚರಿಸಲು ಎಲ್ಲಾ ಮುಖಂಡರಿಗೆ ವಿನಂತಿಸಲಾಯಿತು. ತೊಂದರೆ ಉಂಟುಮಾಡಬಹುದಾದ ಲೌಡ್ ಸ್ಪೀಕರ್ಗಳು ಅಥವಾ ಪ್ರಚೋದನಕಾರಿ ಬ್ಯಾನರ್ಗಳನ್ನು ಅಳವಡಿಸಬಾರದು ಎಂದು ಸೂಚನೆ ನೀಡಲಾಯಿತು. ಘಟನೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದಲ್ಲಿ ತಕ್ಷಣ 112 ಗೆ ಕರೆಮಾಡಿ ಅಥವಾ ಸ್ಥಳೀಯ ಪೊಲೀಸರನ್ನು ಸಂಪರ್ಕಿಸುವಂತೆ ಸಹ ಶಾಂತಿ ಸಭೆಯಲ್ಲಿ ಸೂಚಿಸಲಾಯಿತು.
ಉತ್ತರ ಕೊರಿಯಾ ಸರ್ವಾಧಿಕಾರಿ ವರ್ತನೆಗೆ ಬೆಚ್ಚಿಬಿದ್ದ ಜಪಾನ್ ಮತ್ತು ದಕ್ಷಿಣ ಕೊರಿಯಾ | Kim Jong Un
ಇರಾನ್ ಹಾಗೂ ಅಮೆರಿಕ ನಡುವೆ ಯುದ್ಧ ನಡೆಯುವಾಗಲೇ ಉತ್ತರ ಕೊರಿಯಾ ಕೂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೊದಲೇ ಹುಚ್ಚುದೊರೆ, ಜಗತ್ತಿಗೆ ಕಂಟಕ ಎಂಬ ಆರೋಪ ಹೊತ್ತಿದ್ದಾನೆ. ಹಾಗೇ ತನ್ನ ಶತ್ರು ದೇಶಗಳ ಮೇಲೆ ಪದೇ, ಪದೇ ದಾಳಿ ಮಾಡುವ ಬೆದರಿಕೆ ಕೂಡ ಹಾಕುತ್ತಾ ಇರುತ್ತಾನೆ ಕಿಮ್ ಜಾಂಗ್ ಉನ್.
ಗಂಗಾವತಿ | ಫ್ಯಾನ್ಸಿ ಅಂಗಡಿಯಲ್ಲಿ ನೋವು ನಿವಾರಕ ಮಾತ್ರೆಗಳ ಅಕ್ರಮ ಮಾರಾಟ : ಪ್ರಕರಣ ದಾಖಲು
ಗಂಗಾವತಿ | ಫ್ಯಾನ್ಸಿ ಅಂಗಡಿಯಲ್ಲಿ ನೋವು ನಿವಾರಕ ಮಾತ್ರೆಗಳ ಅಕ್ರಮ ಮಾರಾಟ : ಪ್ರಕರಣ ದಾಖಲು ಗಂಗಾವತಿ: ವೈದ್ಯರ ಚೀಟಿ ಇಲ್ಲದೆ ನೋವು ನಿವಾರಕ ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಫ್ಯಾನ್ಸಿ ಅಂಗಡಿ ಮಾಲಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ನೀಲಕಂಠೇಶ್ವರ ಕ್ಯಾಂಪ್ ಪ್ರದೇಶದ ಶಾಮಿಯಾನ ಕಾರ್ಮಿಕನೊಬ್ಬ ಮೈಕೈ ನೋವಿಗಾಗಿ ಸ್ನೇಹಿತರ ಸಲಹೆಯಂತೆ ಕೆಲವು ನೋವು ನಿವಾರಕ ಮಾತ್ರೆಗಳನ್ನು ಸೇವಿಸಲು ಆರಂಭಿಸಿದ್ದನು. ಕ್ರಮೇಣ, ಅವನು ಆ ಮಾತ್ರೆಗಳ ಅಮಲಿಗೆ ಒಳಗಾಗಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಪ್ರಮಾಣದ ಅಮಲು ಪಡೆಯಲು, ಅವನು ಮಾತ್ರೆಗಳನ್ನು ಪುಡಿ ಮಾಡಿ ನೀರಿನಲ್ಲಿ ಕಲಸಿ ಇಂಜೆಕ್ಷನ್ ಮೂಲಕ ನರಗಳಿಗೆ ಚುಚ್ಚಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ದುರ್ಗಾದೇವಿ ಗುಡಿ ಸಮೀಪದ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ನ ಕಿಶನ್ ಕುಮಾರ್ ಎಂಬಾತ ವೈದ್ಯರ ಚೀಟಿ ಇಲ್ಲದೆ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದನೆಂಬ ಆರೋಪ ದಾಖಲಾಗಿದ್ದು, ಎರಡು ಮಾತ್ರೆಗಳಿಗೆ 300 ರೂ. ಪಡೆಯುತ್ತಾ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ದೊರಕಿದೆ. ಈ ಚಟಕ್ಕೆ ಒಳಗಾದ ಕೆಲವು ಯುವಕರ ಆರೋಗ್ಯ ಹದಗೆಟ್ಟಿದ್ದು, ಹಣಕ್ಕಾಗಿ ಮನೆಯಲ್ಲಿಯೇ ಕಳ್ಳತನ ಮಾಡುವ ಮಟ್ಟಕ್ಕೂ ಇಳಿದಿದ್ದಾರೆ ಎಂಬ ಮಾಹಿತಿ ಪೊಲೀಸರು ಪಡೆದಿದ್ದಾರೆ. ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ, ನಗರ ಠಾಣೆಯ ಪಿಐ ಪ್ರಕಾಶ ಮಾಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿಲ್, ಸೋಹೇಬ್ ಸೇರಿದಂತೆ ಹಲವರು ಈ ಜಾಲದಲ್ಲಿ ಸಿಲುಕಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಂಚೋಳಿ | ಪೋಲಕಪಳ್ಳಿ ಮ್ಯಾಟ್ರಿಕ್ಸ್ ಆಗ್ರೋ ಕಂಪನಿ ದಿಢೀರ್ ಬಂದ್ : ಕಾರ್ಮಿಕರಿಂದ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ
ಚಿಂಚೋಳಿ: ಪೋಲಕಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮ್ಯಾಟ್ರಿಕ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿ ಕಾರ್ಮಿಕ ಇಲಾಖೆ ನಿಯಮ ಉಲ್ಲಂಘಿಸಿ ದಿಢೀರ್ ಬೀಗ ಜಡಿಸಿದ ಪರಿಣಾಮ ಸುಮಾರು 120 ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಸ್ಥಳೀಯ ಕಾರ್ಮಿಕ ಮೋರ್ಚಾದ ಪದಾಧಿಕಾರಿಗಳು ಶನಿವಾರ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿ ತಕ್ಷಣ ಹಸ್ತಕ್ಷೇಪ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಮೂಲನಿವಾಸಿ ಕಾರ್ಮಿಕರ ಪ್ರಕಾರ, ಕಳೆದ 15–20 ವರ್ಷಗಳಿಂದ ನೂರಾರು ಕಾರ್ಮಿಕರು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಫೆಬ್ರವರಿ 5, 2026ರ ಮಧ್ಯರಾತ್ರಿ ಕಂಪನಿಯ ಆಡಳಿತ ಮಂಡಳಿ ಯಾವುದೇ ಮುನ್ಸೂಚನೆ ನೀಡದೆ ಕಾರ್ಖಾನೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿದ್ದು, ಕಾರ್ಮಿಕರಿಗೆ ತೀವ್ರ ಸಂಕಷ್ಟ ಉಂಟಾಗಿದೆ. ಕನ್ನಡ ಸರ್ಕಾರಿ ಕಾರ್ಖಾನೆ ನಿಯಮಗಳ ಪ್ರಕಾರ, ಯಾವುದೇ ಕಂಪನಿಯನ್ನು ಮುಚ್ಚಲು ಕನಿಷ್ಠ 90 ದಿನಗಳ ಮುಂಚಿತ ಸೂಚನೆ ನೀಡಬೇಕು ಮತ್ತು ಕಾರ್ಮಿಕರಿಗೆ ಬಾಕಿ ವೇತನ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಬೇಕು. ಆದರೆ ಮ್ಯಾಟ್ರಿಕ್ಸ್ ಆಗ್ರೋ ಕಂಪನಿ ಈ ನಿಯಮಗಳನ್ನು ಪಾಲಿಸದೆ ಕಾರ್ಮಿಕರ ಬದುಕಿನೊಂದಿಗೆ ಆಟವಾಡುತ್ತಿದೆ ಎಂದು ಮೋರ್ಚಾದ ಮುಖಂಡರು ಆರೋಪಿಸಿದ್ದಾರೆ. ಮೋರ್ಚಾದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ: ಬಾಕಿ ಸಂಬಳ, ಬೋನಸ್ ಮತ್ತು ಇತರ ಭತ್ಯೆಗಳನ್ನು ತಕ್ಷಣ ಬಿಡುಗಡೆ ಮಾಡಬೇಕು; ಕಂಪನಿ ಆರಂಭದಿಂದಲೇ ನಿಗದಿಪಡಿಸಲಾದ ಕನಿಷ್ಠ ವೇತನ ನೀಡಲಾಗಿಲ್ಲ; ಕಾರ್ಮಿಕರಿಗೆ ಪಾವತಿಸಬೇಕಾದ ಗ್ರಾಚ್ಯುಟಿ, ಕಂಪನ್ಸೇಷನ್, ಪಿಎಫ್ ಮತ್ತು ಓವರ್ಟೈಮ್ ಬಾಕಿ ಹಣವನ್ನು ಕೂಡ ತಕ್ಷಣ ನೀಡಬೇಕು. ಮಾರುತಿ ಗಂಜಗಿರಿ, ವೀರೇಶ ತಾಂಡೂರ, ಹಣಮಂತ ಗೌರಿ ಸೇರಿದಂತೆ ಮುಖಂಡರು, “ಕಾರ್ಮಿಕ ಇಲಾಖೆ ನಿರ್ಲಕ್ಷ್ಯ ವಹಿಸಿರುವುದರಿಂದ ಕಂಪನಿ ಕಾನೂನು ಉಲ್ಲಂಘನೆ ಮಾಡುತ್ತಿದೆ. ರಾಜ್ಯ ಸಚಿವರು ತಕ್ಷಣ ಮಧ್ಯಪ್ರವೇಶಿಸಿ ನೊಂದ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸೈಯದ್ ಶಕೀಲ್, ಆನಂದ ಚಿಂಚೋಳಿಕರ್, ಪ್ರಲ್ಹಾದ್ ಬೊವಿ, ರಾಘವೇಂದ್ರ ಚಾಂಗಲೇರಾ ಸೇರಿದಂತೆ ಕಂಪನಿಯ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.
ಇರಾನ್ ಯುದ್ಧ ನಿರ್ಣಾಯಕ ಹಂತ ಪ್ರವೇಶಿಸಿದೆ : ಇಸ್ರೇಲ್
ಜೆರುಸಲೇಂ, ಮಾ.14: ಇರಾನ್ನೊಂದಿಗಿನ ಯುದ್ಧವು ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಶನಿವಾರ ಹೇಳಿದ್ದು ಇರಾನ್ನ ಪ್ರಮುಖ ರಫ್ತು ಕೇಂದ್ರ ಖಾರ್ಗ್ ದ್ವೀಪದ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ನಡೆಸಿರುವ ದಾಳಿಯನ್ನು ಶ್ಲಾಘಿಸಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಜಾಗತಿಕ ಮತ್ತು ಪ್ರಾದೇಶಿಕ ಸಂಘರ್ಷವು ಉಲ್ಬಣಿಸುತ್ತಿದೆ ಮತ್ತು ನಿರ್ಣಾಯಕ ಹಂತವನ್ನು ತಲುಪಿದೆ. ಇದು ಅಗತ್ಯವಿರುವಷ್ಟು ಸಮಯ ಮುಂದುವರಿಯುತ್ತದೆ' ಎಂದು ಕಾಟ್ಝ್ ಹೇಳಿರುವುದಾಗಿ ವರದಿಯಾಗಿದೆ. ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು: ಶನಿವಾರ ಮಿಲಿಟರಿ ಕಾರ್ಯಾಚರಣೆ ನಡೆಯಲಿರುವುದರಿಂದ ಇರಾನ್ನ ಉತ್ತರದ ನಗರ ತಬ್ರೀಝ್ನ ಪಶ್ಚಿಮದಲ್ಲಿರುವ ಕೈಗಾರಿಕಾ ವಲಯದ ಜನರು ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಮಿಲಿಟರಿ `ಎಕ್ಸ್'ನಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದೆ. ನೆದರ್ಲ್ಯಾಂಡ್ನ ಆಮ್ಸ್ಟರ್ಡಂ ನಗರದ ಯೆಹೂದಿ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಶಾಲೆಗೆ ಹಾನಿಯಾಗಿದೆ. ಇದು ಯೆಹೂದಿ ಸಮುದಾಯವನ್ನು ಗುರಿಯಾಗಿಸಿದ ಉದ್ದೇಶಪೂರ್ವಕ ದಾಳಿ ಎಂದು ನಗರದ ಮೇಯರ್ ಅನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಸುಮಾರು 2,500 ಸಿಬ್ಬಂದಿಗಳ ಸಹಿತ ಯುಎಸ್ಎಸ್ ಟ್ರಿಪೋಲಿ ಸಮರ ನೌಕೆಯನ್ನು ಅಮೆರಿಕ ಮಧ್ಯಪ್ರಾಚ್ಯದತ್ತ ರವಾನಿಸಿರುವುದಾಗಿ ವರದಿಯಾಗಿದೆ. ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಶುಕ್ರವಾರ ತಡರಾತ್ರಿ, ಖತರ್ ರಾಜಧಾನಿ ದೋಹದಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಟೆಹ್ರಾನ್ನಾದ್ಯಂತ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಮತ್ತು ವಾಯು ರಕ್ಷಣಾ ವ್ಯವಸ್ಥೆಗ ಫ್ಯಾಕ್ಟರಿಯನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಮಧ್ಯಪ್ರಾಚ್ಯದಾದ್ಯಂತ ಅಮೆರಿಕ ನೆಲೆಗಳು ಹಾಗೂ ಇಸ್ರೇಲ್ ಮೇಲೆ ಇರಾನ್ನಿಂದ ಕ್ಷಿಪಣಿ ಹಾಗೂ ಡ್ರೋನ್ಗಳ ಸುರಿಮಳೆ.
ಕಲಬುರಗಿ | ಝರತ್ ಖ್ವಾಜಾ ಬಂದೇ ನವಾಝ್ ದರ್ಗಾದಲ್ಲಿ ಭವ್ಯ ದಾವತ್-ಎ-ಇಫ್ತಾರ್ ಆಯೋಜನೆ
ಕಲಬುರಗಿ: ಕಲಬುರಗಿಯ ಐತಿಹಾಸಿಕ ಹಝರತ್ ಖ್ವಾಜಾ ಬಂದೇ ನವಾಝ್ ದರ್ಗಾದ ಸಜ್ಜಾದ ನಶೀನ್ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಝರತ್ ಡಾ.ಹಫೀಝ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಅವರಿಂದ ಶನಿವಾರ ಸಂಜೆ ಭವ್ಯವಾದ ದಾವತ್-ಎ-ಇಫ್ತಾರ್ ಮತ್ತು ಊಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ದೇವಸ್ಥಾನದ ದೊಡ್ಡಪ್ಪ ಅಪ್ಪಾಜಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ತೆಲಂಗಾಣದ ರಾಜ್ಯದ ಸಾರ್ವಜನಿಕ ಉದ್ಯಮಗಳು ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜನಾಬ್ ಮುಹಮ್ಮದ್ ಅಝರುದ್ದೀನ್, ಎಂಎಲ್ಸಿ ಜನಾಬ್ ಸಲೀಂ ಅಹ್ಮದ್, ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ, ಕೆಬಿಎನ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ.ಸೈಯದ್ ಮುಸ್ತಫಾ ಹುಸೈನಿ, ಉಪಕುಲಪತಿ ಪ್ರೊ. ಅಲಿ ರಝಾ ಮೊಸ್ವಿ, ಪ್ರೋ-ವೈಸ್ ಚಾನ್ಸೆಲರ್ ಅಶ್ಫಾಜ್ ಅಹ್ಮದ್, ಹಾಗೂ ರಿಜಿಸ್ಟ್ರಾರ್ ಮಿರ್ ವಿಲಾಯತ್ ಅಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ 56 ಮ್ಯೂಸಿಯಂಗಳು, ಐತಿಹಾಸಿಕ ತಾಣಗಳಿಗೆ ಹಾನಿ : ಇರಾನ್
ಟೆಹ್ರಾನ್, ಮಾ.14: ಮಧ್ಯಪ್ರಾಚ್ಯ ಯುದ್ಧ 15ನೇ ದಿನವನ್ನು ಪ್ರವೇಶಿಸುತ್ತಿರುವಂತೆಯೇ, ದೇಶದಾದ್ಯಂತ ಕನಿಷ್ಠ 56 ವಸ್ತು ಸಂಗ್ರಹಾಲಯಗಳು ಮತ್ತು ಚಾರಿತ್ರಿಕ ತಾಣಗಳು ಹಾನಿಗೊಂಡಿವೆ ಎಂದು ಇರಾನ್ನ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಸಚಿವಾಲಯ ಶನಿವಾರ ಹೇಳಿದೆ. ಟೆಹ್ರಾನ್ನಲ್ಲಿ ಯುನೆಸ್ಕೋ ಪಟ್ಟಿಯಲ್ಲಿರುವ ಗೊಲೆಸ್ತಾನ್ ಅರಮನೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಾನಿಗೊಂಡಿದೆ. ಟೆಹ್ರಾನ್ನಲ್ಲಿ ಕನಿಷ್ಠ 19 ಐತಿಹಾಸಿಕ ತಾಣಗಳು ಹಾನಿಗೊಂಡಿವೆ. ಬುಶೆಹರ್ ಪ್ರಾಂತದ ಸಿರಾಫ್ ಬಂದರಿನಲ್ಲಿ ಅನೇಕ ಶತಮಾನಗಳಷ್ಟು ಹಳೆಯ ಹಲವು ಮನೆಗಳಿಗೆ ಹಾನಿಯಾಗಿದೆ. ಇರಾನ್, ಇಸ್ರೇಲ್ ಮತ್ತು ಲೆಬನಾನಿನಲ್ಲಿ ನೂರಾರು ಐತಿಹಾಸಿಕ ತಾಣಗಳು ಯುದ್ಧದಿಂದ ಹಾನಿಗೊಳಗಾಗಿರುವ ಬಗ್ಗೆ ವಿಶ್ವಸಂಸ್ಥೆಯ ಸಂಸ್ಕೃತಿ ಸಂಸ್ಥೆ ಯುನೆಸ್ಕೋ ಕಳವಳ ವ್ಯಕ್ತಪಡಿಸಿದೆ.
ಹುಲಸೂರ್ | ಕ್ರೂಸರ್ ವಾಹನ ಪಲ್ಟಿ : ವ್ಯಕ್ತಿ ಮೃತ್ಯು
ಹುಲಸೂರ್ : ಕ್ರೂಸರ್ ವಾಹನ ಪಲ್ಟಿಯಾದ ಪರಿಣಾಮ ಮಹಾರಾಷ್ಟ್ರ ಮೂಲದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಲಸೂರ ತಾಲೂಕಿನ ಹಣಮಂತವಾಡಿ ಗ್ರಾಮದ ಹತ್ತಿರ ಶುಕ್ರವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಮಹಾರಾಷ್ಟ್ರ ರಾಜ್ಯದ ನಿಲಂಗಾ ಗ್ರಾಮದ ನಿವಾಸಿ ಸಂದೀಪ್ ವಡಕಲೆ (35) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಬುಧವಾರ ಸಂಜೆ ಸುಮಾರು 7 ಗಂಟೆ ಸುಮಾರಿಗೆ ಬಸವಕಲ್ಯಾಣದಿಂದ ಶಾಹಜಾನಿ ಕಡೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಕ್ರೂಸರ್ ವಾಹನ ಹಣಮಂತವಾಡಿ ಗ್ರಾಮ ವ್ಯಾಪ್ತಿಯಲ್ಲಿ ಸಾಗುತ್ತಿದ್ದಾಗ, ವಾಹನದ ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮವಾಗಿ ಸಂದೀಪ್ ವಡಕಲೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂದೀಪ್ ಅವರು ಕಲಬುರಗಿಯಲ್ಲಿ ತಮ್ಮ ಮನೆಯ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿಲಂಗಾ ಕಡೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ವಾಹನದ ಚಾಲಕ ಗಂಭೀರವಾಗಿ ಗಾಯಗೊಂಡು ಮಹಾರಾಷ್ಟ್ರದ ಲಾತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ಪ್ರಯಾಣಿಕರಿಗೆ ಸಣ್ಣಗುಣದ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಕುಂದಾಪುರದ ಲೋಕ ಅದಾಲತ್: ಒಟ್ಟು 891 ಪ್ರಕರಣಗಳು ಇತ್ಯರ್ಥ
ಕುಂದಾಪುರ, ಮಾ.14: ಕುಂದಾಪುರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 891 ಪ್ರಕರಣಗಳು ಇತ್ಯರ್ಥ ಗೊಂಡಿದ್ದು, 5.39ಕೋಟಿ ರೂ. ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸುವಂತೆ ಆದೇಶಿಸಲಾಗಿದೆ. 17,973 ವ್ಯಾಜ್ಯ ಪೂರ್ವ ಪ್ರಕರಣವನ್ನು ಅದಾಲತ್ನಲ್ಲಿ ಇತ್ಯರ್ಥ ಪಡಿಸಿದ್ದು, ಅದರಲ್ಲಿ ಪರಿಹಾರ ರೂಪದಲ್ಲಿ 95.44 ಲಕ್ಷ ರೂ. ನೀಡುವಂತೆ ಸೂಚಿಸಲಾಗಿದೆ. ಇನ್ನು ಕುಂದಾಪುರದ 891 ಪ್ರಕರಣಗಳ ಪೈಕಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 17 ಪ್ರಕರಣ ಇತ್ಯರ್ಥಗೊಂಡು, 89.65ಲಕ್ಷ ರೂ. ಪರಿಹಾರ, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 54 ಇತ್ಯರ್ಥಗೊಂಡು, 2.56ಕೋ.ರೂ. ಪರಿಹಾರ, ಪ್ರಧಾನ ಸಿವಿಲ್ ಮತ್ತು ಜೆಎಎಂಫ್ಸಿ ನ್ಯಾಯಾಲಯದಲ್ಲಿ 100 ಪ್ರಕರಣಗಳು ಇತ್ಯರ್ಥಗೊಂಡು, 89.28ಲಕ್ಷ ರೂ. ಪರಿಹಾರ, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ 208 ಪ್ರಕರಣಗಳು ಇತ್ಯರ್ಥಗೊಂಡು, 58.86 ಲಕ್ಷ ರೂ. ಪರಿಹಾರ ಹಾಗೂ ಒಂದನೇ ಹೆಚ್ಚವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ 512 ಪ್ರಕರಣಗಳು ಇತ್ಯರ್ಥಗೊಂಡಿದ್ದು, 44.73ಲಕ್ಷ ರೂ. ಪರಿಹಾರ ನೀಡು ವಂತೆ ಆದೇಶಿಸಲಾಗಿದೆ. ದೂರಾಗಿದ್ದ ದಂಪತಿ ಒಂದಾದರು! ವಿವಾಹವಾದ ಕೆಲವೇ ತಿಂಗಳಿನಲ್ಲಿ ಮನಸ್ತಾಪದಿಂದ ಒಂದೂವರೆ ವರ್ಷದಿಂದ ದೂರವಿದ್ದು, ವಿಚ್ಛೇದನ ಹಾಗೂ ಜೀವನಾಂಶ ಕೋರಿ ಅರ್ಜಿ ಹಾಕಿ ಬೇರೆಯಾಗಲು ನಿರ್ಧರಿಸಿದ್ದ ಜೋಡಿಯೊಂದು ಲೋಕ ಅದಾಲತ್ನಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ನಡೆದಿದೆ. ಗಂಗೊಳ್ಳಿಯ ವಿದ್ಯಾ ಹಾಗೂ ಬ್ರಹ್ಮಾವರದ ನಂದ ಕಿಶೋರ್ 2024ರಲ್ಲಿ ವಿವಾಹವಾಗಿದ್ದು, ಅದಾದ ಕೆಲ ತಿಂಗಳ ನಂತರ ಪತಿಯೊಂದಿಗೆ ಬಾಳವುದು ಕಷ್ಟ, ತನಗೆ ಜೀವನಾಂಶ ಕೊಡುವಂತೆ ಕೇಸ್ ದಾಖಲಿಸಿ, ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಲೋಕ ಅದಾಲತ್ನಲ್ಲಿ ವಿಚಾರಣೆ ನಡೆಸಿದ ಕುಂದಾಪುರದ ಒಂದನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಎಸ್., ಒಂದಾಗಿ ಬದುಕುವಂತೆ ಕಿವಿಮಾತು ಹೇಳಿದರು. ಇದಕ್ಕೆ ಇಬ್ಬರೂ ಕೂಡ ಸಹಮತ ವ್ಯಕ್ತಪಡಿಸಿದ್ದರಿಂದ ಪ್ರಕರಣ ಸುಖಾಂತ್ಯ ಕಂಡಿತು. ಕಕ್ಷಿದಾರರ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
ಸಾಂದರ್ಭಿಕ ಚಿತ್ರ | Photo Credit : freepik ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಟೆಹ್ರಾನ್ ಮೇಲೆ ದಾಳಿ ಮಾಡುವ ಮೂಲಕ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದ ಎರಡು ವಾರಗಳ ನಂತರ ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ತನ್ನ ಇತಿಹಾಸದಲ್ಲಿಯೇ ಅತಿದೊಡ್ಡ ಸರ್ಕಾರಿ ತೈಲ ನಿಕ್ಷೇಪಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಪ್ರತೀಕಾರದ ದಾಳಿಯಲ್ಲಿ, ಟೆಹ್ರಾನ್ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕ ಮಿಲಿಟರಿ ಸ್ವತ್ತುಗಳು ಮತ್ತು ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಿದೆ. ಈ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆ ಸರಪಳಿಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಅಡಚಣೆಯುಂಟಾಗಿದೆ. ಈ ಅಡಚಣೆಯಿಂದಾಗಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 100 ಡಾಲರ್ಗಿಂತ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯ ಇತಿಹಾಸದಲ್ಲಿ ಅತಿದೊಡ್ಡ ಪೂರೈಕೆ ಅಡಚಣೆಯನ್ನು ಸೃಷ್ಟಿಸುತ್ತಿದೆ ಎಂದು ಐಇಎ ತನ್ನ ಮಾಸಿಕ ಮಾರುಕಟ್ಟೆ ವರದಿಯಲ್ಲಿ ತಿಳಿಸಿದೆ. ಐಇಎಯ 32 ಸದಸ್ಯ ರಾಷ್ಟ್ರಗಳು ವಾರದ ಆರಂಭದಲ್ಲಿ ಕಾರ್ಯತಂತ್ರದ ನಿಕ್ಷೇಪಗಳನ್ನು ಬಳಸಿಕೊಳ್ಳಲು ಹಿಂಜರಿಯುತ್ತಿರುವಂತೆ ಕಂಡುಬಂದರೂ, ಅಂತಿಮವಾಗಿ ಸುಮಾರು 40 ಕೋಟಿ ಬ್ಯಾರೆಲ್ ತುರ್ತು ಕಚ್ಚಾ ತೈಲವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಇದು ಒಟ್ಟು 1.2 ಬಿಲಿಯನ್ ಬ್ಯಾರೆಲ್ ಸರ್ಕಾರಿ ಮೀಸಲು ಹೊಂದಿರುವ ತೈಲದ ಮೂರನೇ ಒಂದು ಭಾಗವಾಗಿದೆ. ಈ ಹಿಂದೆ 1990-1991ರ ಕೊಲ್ಲಿ ಯುದ್ಧದ ಸಮಯದಲ್ಲಿ, 2005ರಲ್ಲಿ ಕತ್ರಿನಾ ಚಂಡಮಾರುತದ ನಂತರ, 2011ರಲ್ಲಿ ಲಿಬಿಯಾದ ಅಂತರ್ಯುದ್ಧದ ಸಮಯದಲ್ಲಿ ಮತ್ತು ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ನಂತರ ಎರಡು ಬಾರಿ ಹೀಗೆ ಒಟ್ಟು ಐದು ಬಾರಿ ಐಇಎ ಸದಸ್ಯ ರಾಷ್ಟ್ರಗಳು ತುರ್ತು ನಿಕ್ಷೇಪಗಳಿಂದ ತೈಲ ಬಿಡುಗಡೆ ಮಾಡಿವೆ. IEA ಏನು ಘೋಷಿಸಿದೆ? ಇರಾನ್ ಸರಕು ಹಡಗುಗಳ ಮೇಲೆ ನಡೆಸಿದ ದಾಳಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಸಂಚಾರ ನಿರ್ಬಂಧದಿಂದಾಗಿ ಉಂಟಾದ ಪೂರೈಕೆ ಅಡಚಣೆಯು ಇಂಧನ ಮಾರುಕಟ್ಟೆಗಳು 1991ರ ಕೊಲ್ಲಿ ಯುದ್ಧ ಮತ್ತು ರಷ್ಯಾ 2022ರ ಉಕ್ರೇನ್ ಆಕ್ರಮಣದ ಸಮಯಕ್ಕಿಂತ ಕೆಟ್ಟ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಐಇಎ ಹೇಳಿದೆ. ಫೆಬ್ರವರಿ 28ರಂದು ಯುಎಸ್ ಮತ್ತು ಇಸ್ರೇಲ್ ಟೆಹ್ರಾನ್ ಮೇಲೆ ದಾಳಿ ಮಾಡಿ ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಾಮಿನೈ ಅವರನ್ನು ಹತ್ಯೆ ಮಾಡುವ ಮೊದಲು ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ ಸುಮಾರು 65 ಡಾಲರ್ನಲ್ಲಿ ವಹಿವಾಟು ನಡೆಸುತ್ತಿತ್ತು. ಈಗ ಅದು 100 ಡಾಲರ್ಗಿಂತ ಹೆಚ್ಚಾಗಿದೆ. ದಾಳಿಗಳು ಮುಂದುವರಿದರೆ ಒಂದು ಲೀಟರ್ ತೈಲವನ್ನೂ ಹಾರ್ಮುಜ್ ಜಲಸಂಧಿಯನ್ನು ಹಾದುಹೋಗಲು ಬಿಡುವುದಿಲ್ಲ. ತೈಲದ ಬೆಲೆ ಬ್ಯಾರೆಲ್ಗೆ 200 ಡಾಲರ್ಗಿಂತ ಹೆಚ್ಚಾಗಬಹುದು ಎಂದು ಇರಾನ್ ನಾಯಕರು ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ. ತೈಲ ಸಾಗಿಸುವ ಟ್ಯಾಂಕರ್ಗಳನ್ನು ಇರಾನ್ ದಾಳಿಯಿಂದ ರಕ್ಷಿಸಲು ಸಾಧ್ಯವಾಗದಿದ್ದರೆ ಈ ರೀತಿ ಆಗಬಹುದು. ತೈಲದ ಬೆಲೆಗಳು ದೀರ್ಘಕಾಲದವರೆಗೆ ಮಾರುಕಟ್ಟೆಯ ಪ್ರಸ್ತುತ ಬೆಲೆಗಳಿಗಿಂತ ಹೆಚ್ಚಾಗಿರುವುದು ಕಷ್ಟದ ಪರಿಸ್ಥಿತಿ ಎಂದು ಮಾಜಿ ಐಎಂಎಫ್ ಅರ್ಥಶಾಸ್ತ್ರಜ್ಞ ಆಲಿವಿಯರ್ ಬ್ಲಾಂಚಾರ್ಡ್ ಹೇಳಿದ್ದಾರೆ ಎಂದು ಬಿಸಿನೆಸ್ ಇನ್ಸೈಡರ್ ಉಲ್ಲೇಖಿಸಿದೆ. ಇಂಧನ ಭದ್ರತೆಯೇ ಐಇಎ ಉದ್ದೇಶವಾಗಿದೆ. ಐಇಎ ಸದಸ್ಯರು ಒಟ್ಟಾಗಿ ನಿರ್ಣಾಯಕ ಕ್ರಮ ಕೈಗೊಳ್ಳುವಲ್ಲಿ ಒಗ್ಗಟ್ಟನ್ನು ತೋರಿಸುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದು ಪ್ಯಾರಿಸ್ ಮೂಲದ ಐಇಎಯ ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್ ಬಿರೋಲ್ ಹೇಳಿದ್ದಾರೆ ಎಂದು ಅಲ್ ಜಜೀರಾ ಉಲ್ಲೇಖಿಸಿದೆ. ಅಮೆರಿಕ ಏನು ಘೋಷಿಸಿದೆ? 1975ರಲ್ಲಿ ಅರಬ್ ತೈಲ ನಿರ್ಬಂಧವು ವಾಷಿಂಗ್ಟನ್ನ ಇಂಧನ ಭದ್ರತಾ ದುರ್ಬಲತೆಗಳನ್ನು ಬಹಿರಂಗಪಡಿಸಿದ ನಂತರ ಅಮೆರಿಕ ತನ್ನದೇ ಆದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಪ್ರದೇಶವನ್ನು ರಚಿಸಿತು. ಇದು ವಿಶ್ವದ ಅತಿದೊಡ್ಡ ಮೀಸಲು ಪ್ರದೇಶವಾಗಿದ್ದು, ಇದರ ಗರಿಷ್ಠ ಸಾಮರ್ಥ್ಯ 720 ಮಿಲಿಯನ್ ಬ್ಯಾರೆಲ್ಗಳು. ಪ್ರಸ್ತುತ, ವಾಷಿಂಗ್ಟನ್ ಕೇವಲ 415 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಹೊಂದಿದೆ. ಇದನ್ನು ಟೆಕ್ಸಾಸ್ ಮತ್ತು ಲೂಸಿಯಾನಾದ ಗಲ್ಫ್ ಕರಾವಳಿಯಲ್ಲಿ ಸಂಗ್ರಹಿಸಲಾಗಿದೆ. ರಷ್ಯಾ ಉಕ್ರೇನ್ ವಿರುದ್ಧದ ಯುದ್ಧದಿಂದ ದಾಸ್ತಾನುಗಳು ಖಾಲಿಯಾಗಿವೆ. ಪ್ರಸ್ತುತ ಚೀನಾ ಮಾತ್ರ ದೊಡ್ಡ ದಾಸ್ತಾನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಆದರೆ ಬೀಜಿಂಗ್ನ ನಿಕ್ಷೇಪವನ್ನು ಬಹಿರಂಗಪಡಿಸಲಾಗಿಲ್ಲ. ಅಮೆರಿಕವು ಪ್ರಸ್ತುತ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ಮತ್ತು ಗ್ರಾಹಕ ರಾಷ್ಟ್ರವಾಗಿದ್ದು, ಐಇಎ ಜೊತೆಗಿನ ಸಂಘಟಿತ ಪ್ರಯತ್ನಗಳಿಗೆ ಕೊಡುಗೆಯಾಗಿ ತನ್ನ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಪ್ರದೇಶದಿಂದ 172 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಇಂಧನ ವಲಯದಲ್ಲಿ ಬೆಲೆಗಳನ್ನು ಸ್ಥಿರಗೊಳಿಸುವ ದಿಟ್ಟ ಪ್ರಯತ್ನದಲ್ಲಿ ಅಮೆರಿಕ ಸರ್ಕಾರವು ಕಾರ್ಯತಂತ್ರದ ಮೀಸಲು ನಿಧಿಯನ್ನು ಬಳಸಿಕೊಳ್ಳಲಿದೆ. ನಂತರ ನಾವು ಅದನ್ನು ಮರುಪೂರಣ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಪೆಟ್ರೋಲ್ ಬೆಲೆಗಳನ್ನು ತಗ್ಗಿಸಲು ಮೀಸಲು ಹಣವನ್ನು ಬಳಸಿಕೊಳ್ಳುವುದಕ್ಕಾಗಿ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಆಡಳಿತವನ್ನು ಟ್ರಂಪ್ ಈ ಹಿಂದೆ ಟೀಕಿಸಿದ್ದರು. ಈ ಬಿಡುಗಡೆ ಮುಂದಿನ ವಾರ ಪ್ರಾರಂಭವಾಗಲಿದ್ದು, ವಿತರಣೆಗೆ ಸರಿಸುಮಾರು 120 ದಿನಗಳು ಬೇಕಾಗುತ್ತದೆ. ನಂತರ ಮುಂದಿನ ವರ್ಷದಲ್ಲಿ ಸುಮಾರು 200 ಮಿಲಿಯನ್ ಬ್ಯಾರೆಲ್ಗಳ ಮರುಪೂರಣಕ್ಕೆ ಸರ್ಕಾರ ಕೆಲಸ ಮಾಡುತ್ತದೆ ಎಂದು ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ತಿಳಿಸಿದ್ದಾರೆ. ಇದು ತೈಲ ಕೊರತೆಯನ್ನು ತಕ್ಷಣವೇ ನೀಗಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರ 'ಇಲ್ಲ' ಎಂಬುದಾಗಿದೆ. ತೈಲದಂತೆಯೇ ಮಾರುಕಟ್ಟೆಗಳೂ ಸಹ ವೇಗವಾಗಿ ಚಲಿಸುತ್ತವೆ. ಬಿಡುಗಡೆಯಾದ ತೈಲವು ಎಷ್ಟು ವೇಗವಾಗಿ ಚಲಿಸುತ್ತದೆ ಎಂಬುದು ಮುಖ್ಯ. ಮೂಲ ಸಮಸ್ಯೆಯನ್ನು ಪರಿಹರಿಸದ ಹೊರತು, ಯಾವುದೇ ಬಿಡುಗಡೆಯು ಮಾರುಕಟ್ಟೆಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಇಂಧನ ಕಾರ್ಯನಿರ್ವಾಹಕ ಮ್ಯಾಕ್ಸಿಮ್ ಸೋನಿನ್ ಅಲ್ ಜಜೀರಾಗೆ ತಿಳಿಸಿದ್ದಾರೆ. ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿ, ಯುಕೆ ಮತ್ತು ಯುಎಸ್ನಿಂದ ಇಲ್ಲಿಯವರೆಗೆ ಘೋಷಿಸಲಾದ ಬದ್ಧತೆಗಳೊಂದಿಗೆ, ಗುಂಪಿನ ಕಾರ್ಯತಂತ್ರದ ತೈಲ ನಿಕ್ಷೇಪಗಳಿಂದ 400 ಮಿಲಿಯನ್ ಬ್ಯಾರೆಲ್ಗಳನ್ನು ಬಿಡುಗಡೆ ಮಾಡಲು ಐಇಎ ನಿರ್ಧರಿಸಿದೆ. ಆದರೆ ಈ ಕ್ರಮದ ಮಾರುಕಟ್ಟೆ ಪರಿಣಾಮ ಸೀಮಿತವಾಗಿರಬಹುದು. ತೈಲವನ್ನು ಮೀಸಲುಗಳಿಂದ ಹೊರತೆಗೆಯಬಹುದಾದ ವೇಗದಿಂದ ಸರಬರಾಜುಗಳನ್ನು ನಿರ್ಬಂಧಿಸಲಾಗುತ್ತದೆ ಎಂದು ಆರ್ಬಿಸಿ ಕ್ಯಾಪಿಟಲ್ ಮಾರ್ಕೆಟ್ಸ್ನ ಜಾಗತಿಕ ಸರಕು ತಂತ್ರದ ಮುಖ್ಯಸ್ಥೆ ಹೆಲಿಮಾ ಕ್ರಾಫ್ಟ್ ತಿಳಿಸಿದ್ದಾರೆ. ಟ್ರಂಪ್ ಮತ್ತು ಅವರ ಅಧಿಕಾರಿಗಳು ಇರಾನ್ ವಿರುದ್ಧದ ಯುದ್ಧದ ಅಂತಿಮ ಹಂತದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದ್ದರೂ, ಅಮೆರಿಕದ ಅಧ್ಯಕ್ಷರು ಸಂಘರ್ಷವು ಒಂದು ಸಣ್ಣ ಘಟನೆಯಾಗಿದೆ, ಮತ್ತೊಂದು ದೀರ್ಘ ಯುದ್ಧವಲ್ಲ ಎಂದು ಹೇಳಿದ್ದಾರೆ. 172 ಮಿಲಿಯನ್ ಬ್ಯಾರೆಲ್ಗಳನ್ನು ಬಿಡುಗಡೆ ಮಾಡಲು ಐಇಎ ಜೊತೆ ಸೇರುವ ನಿರ್ಧಾರವು ಒಂದು ಪ್ರಮುಖ ಕ್ರಮವಾಗಿದೆ. ಆದಾಗ್ಯೂ, ಈ ಕಾರ್ಯತಂತ್ರದ ಮೀಸಲುಗಳು ಪೂರೈಕೆ ಅಂತರವನ್ನು ಸರಿದೂಗಿಸುವ ಹಂತವನ್ನು ಮೀರಿ ಸಂಘರ್ಷ ಮುಂದುವರಿದರೆ ಏನಾಗುತ್ತದೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಲಂಡನ್ನ ಚಾಥಮ್ ಹೌಸ್ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಕಾರ್ಯಕ್ರಮದ ಅಸೋಸಿಯೇಟ್ ಫೆಲೋ ನೀಲ್ ಕ್ವಿಲಿಯಮ್. ತೈಲವನ್ನು ಯಾವಾಗ ಬಿಡುಗಡೆ ಮಾಡಬಹುದು? ದಿನಕ್ಕೆ 4.4 ಮಿಲಿಯನ್ ಬ್ಯಾರೆಲ್ಗಳನ್ನು ಬಿಡುಗಡೆ ಮಾಡಬಹುದು ಎಂದು ಅಮೆರಿಕ ಹೇಳಿದೆ. ಆದರೆ ಅದರ ನಿಜವಾದ ಉತ್ಪಾದನೆ ತುಂಬಾ ಕಡಿಮೆಯಾಗಿದೆ. ಡ್ರಾಡೌನ್ಗೆ ಸಹಿ ಹಾಕಿದ ನಂತರ ವಾರಗಳಲ್ಲಿ ವಿತರಣೆ ಆರಂಭವಾಗಬಹುದು. ಮುಂದಿನ 120 ದಿನಗಳಲ್ಲಿ ಅಮೆರಿಕ ತಾನು ವಾಗ್ದಾನ ಮಾಡಿದ 172 ಮಿಲಿಯನ್ ಬ್ಯಾರೆಲ್ಗಳನ್ನು ಯೋಜಿತ ದರಗಳ ಆಧಾರದ ಮೇಲೆ ತಲುಪಿಸಲು ಬಿಡುಗಡೆ ಮಾಡುತ್ತದೆ ಎಂದು ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ತಿಳಿಸಿದ್ದಾರೆ. ಬಿಡುಗಡೆ ಮತ್ತು ಮಾರಾಟದ 13 ದಿನಗಳ ನಂತರ ಮಾರುಕಟ್ಟೆಗೆ ತೈಲ ವಿತರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಯುಎಸ್ ಇಂಧನ ಇಲಾಖೆ ಹೇಳುತ್ತದೆ. ಇರಾನ್ ಯುದ್ಧದ ಪರಿಣಾಮವಾಗಿ ಕೊರತೆ ಹೆಚ್ಚು ತೀವ್ರವಾಗಿರುವ ಏಷ್ಯಾಕ್ಕೆ ತೈಲವನ್ನು ಸಾಗಿಸಬೇಕಾದರೆ ಅದು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಂದರೆ ಮೇ ಮಧ್ಯದವರೆಗೆ ಸರಬರಾಜುಗಳು ಏಷ್ಯಾದ ಸಂಸ್ಕರಣಾಗಾರಗಳನ್ನು ತಲುಪದಿರಬಹುದು. ಪ್ರಸ್ತುತ ಬಿಡುಗಡೆ ಪ್ರಮಾಣವನ್ನು ನೀಡಿದ್ದರೂ ಸಹ ಯುಎಸ್ ಇನ್ನೂ ಉತ್ತಮ ಸ್ಥಿತಿಯಲ್ಲಿದೆ ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸೋನಿನ್ ಹೇಳಿದ್ದಾರೆ. ಅಂತಹ ಗಮನಾರ್ಹ ಪ್ರಮಾಣಗಳು ಒಂದು ಅಥವಾ ಎರಡು ದಿನಗಳಲ್ಲಿ ಸಂಸ್ಕರಣಾಗಾರಗಳನ್ನು ತಲುಪಲು ಸಾಧ್ಯವಿಲ್ಲ. ಇದು ದೇಶೀಯವಾಗಿ ವೇಗವಾಗಿರುತ್ತದೆ, ಅಲ್ಲಿ ಪೈಪ್ಲೈನ್ ಸಂಪರ್ಕವು ಬಲವಾಗಿರುತ್ತದೆ. ಬ್ಯಾರೆಲ್ಗಳನ್ನು ಸಾಗಿಸಿದಾಗ ಅದು ನಿಧಾನವಾಗಿರುತ್ತದೆ. ನಿಕ್ಷೇಪಗಳಿಂದ ಬಿಡುಗಡೆಯಾದ ತೈಲದ ಪ್ರಮಾಣ ಏನೇ ಇರಲಿ, ಸರ್ಕಾರವು ಮಧ್ಯಪ್ರವೇಶಿಸಲು ಇಚ್ಛಿಸಿರುವುದು ಮಾರುಕಟ್ಟೆಗಳಿಗೆ ಬಲವಾದ ಸಕಾರಾತ್ಮಕ ಸಂಕೇತವಾಗಿದೆ ಎಂದು ಸೋನಿನ್ ತಿಳಿಸಿದ್ದಾರೆ. ಇದು 'ಸರಿಯಾದ' ತೈಲವೇ? ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಸಂಪೂರ್ಣ 400 ಮಿಲಿಯನ್ ಬ್ಯಾರೆಲ್ಗಳ ಸಂಯೋಜನೆ ತಿಳಿದಿಲ್ಲ. ಆದರೆ ಅಮೆರಿಕ 155 ಮಿಲಿಯನ್ ಬ್ಯಾರೆಲ್ಗಳಷ್ಟು ಕಡಿಮೆ ಸಲ್ಫರ್ ಹೊಂದಿರುವ ಸಿಹಿ ಕಚ್ಚಾ ತೈಲವನ್ನು ಮತ್ತು 261 ಮಿಲಿಯನ್ ಬ್ಯಾರೆಲ್ಗಳಷ್ಟು ಹೆಚ್ಚಿನ ಸಲ್ಫರ್ ಹೊಂದಿರುವ ಹುಳಿ ಕಚ್ಚಾ ತೈಲವನ್ನು ಹೊಂದಿದೆ. ಸಿಹಿ ಕಚ್ಚಾ ತೈಲವನ್ನು ಸಂಸ್ಕರಿಸಲು ಸುಲಭ, ಅದು ಅಗ್ಗವೂ ಆಗಿದೆ. ಆದರೆ ಹುಳಿ ಕಚ್ಚಾ ತೈಲಕ್ಕೆ ಹೆಚ್ಚು ಸಂಕೀರ್ಣವಾದ ಸಂಸ್ಕರಣೆಯ ಅಗತ್ಯವಿರುತ್ತದೆ. ಅಮೆರಿಕದ ಸಂಸ್ಕರಣಾಗಾರಗಳು ಹುಳಿ ಕಚ್ಚಾ ತೈಲವನ್ನು ನಿರ್ವಹಿಸಲು ಶತಕೋಟಿ ಹೂಡಿಕೆಗಳನ್ನು ಹೊಂದಿವೆ. ಆದರೆ ಇಂಧನ ಬಿಕ್ಕಟ್ಟು ಸರ್ಕಾರವು ಸಂಗ್ರಹಣೆಯನ್ನು ನಿರುತ್ಸಾಹಗೊಳಿಸಲು ತುರ್ತು ಕ್ರಮಗಳನ್ನು ಜಾರಿಗೆ ತರಲು ಕಾರಣವಾದ ಭಾರತದಂತಹ ಅನೇಕ ತೈಲ ಆಮದುದಾರರು ಅದೇ ರೀತಿಯ ಸಂಸ್ಕರಣಾ ಸಾಮರ್ಥ್ಯಗಳನ್ನು ಹೊಂದಿಲ್ಲ. ಇದು ಬಿಕ್ಕಟ್ಟನ್ನು ತಗ್ಗಿಸುವ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ತೈಲ ಯಾವ ರೀತಿಯಲ್ಲಿರುತ್ತದೆ? ಹೆಚ್ಚುವರಿ-ಭಾರೀ ಕಚ್ಚಾ ತೈಲ: ಅತ್ಯಂತ ದಟ್ಟವಾದ ಮತ್ತು ಸ್ನಿಗ್ಧತೆಯ ತೈಲ, ಡಾಂಬರಿನಂತಿರುತ್ತದೆ. ಇದಕ್ಕೆ ಸಂಕೀರ್ಣ ಮತ್ತು ದುಬಾರಿ ಸಂಸ್ಕರಣೆಯ ಅಗತ್ಯವಿರುತ್ತದೆ. ಭಾರೀ ಕಚ್ಚಾ ತೈಲ: ಕಡಿಮೆ ಸಾಂದ್ರತೆಯೊಂದಿಗೆ ದಪ್ಪ, ಗಟ್ಟಿಯಾದ ತೈಲ, ಇದು ಕಡಿಮೆ ಮೌಲ್ಯದ ಇಂಧನಗಳನ್ನು ಉತ್ಪಾದಿಸುತ್ತದೆ. ಸಂಸ್ಕರಿಸಲು ಹೆಚ್ಚಿನ ಸಂಸ್ಕರಣೆಯ ಅಗತ್ಯವಿರುತ್ತದೆ. ಮಧ್ಯಮ ಕಚ್ಚಾ ತೈಲ: ಮಧ್ಯಮ ಸಾಂದ್ರತೆಯ ತೈಲ, ಇದು ತುಲನಾತ್ಮಕವಾಗಿ ಕಡಿಮೆ ಸಂಸ್ಕರಣಾ ವೆಚ್ಚ ಮತ್ತು ಭಾರೀ ಹಾಗೂ ಹಗುರ ಕಚ್ಚಾ ತೈಲಗಳ ನಡುವೆ ಹೆಚ್ಚಿನ ಉತ್ಪನ್ನವನ್ನು ನೀಡುತ್ತದೆ. ಹಗುರ ಕಚ್ಚಾ ತೈಲ: ತೆಳುವಾದ, ಕಡಿಮೆ ಸಾಂದ್ರತೆಯ ತೈಲವು ಸುಲಭವಾಗಿ ಹರಿಯುತ್ತದೆ. ಸರಳವಾದ ಸಂಸ್ಕರಣೆಯೊಂದಿಗೆ ಪೆಟ್ರೋಲ್ (ಗ್ಯಾಸೋಲಿನ್) ಮತ್ತು ಡೀಸೆಲ್ನಂತಹ ಹೆಚ್ಚು ಮೌಲ್ಯಯುತ ಉತ್ಪನ್ನಗಳನ್ನು ನೀಡುತ್ತದೆ. ದೀರ್ಘಾವಧಿಯಲ್ಲಿ 400 ಮಿಲಿಯನ್ ಬ್ಯಾರೆಲ್ ತೈಲ ಸಾಕಾಗುತ್ತದೆಯೇ? ವಿಶ್ಲೇಷಕರು ಐಇಎ ತೈಲ ನಿಕ್ಷೇಪಗಳನ್ನು ಬಿಡುಗಡೆ ಮಾಡುವುದನ್ನು ಬ್ಯಾಂಡ್-ಏಡ್ ಎಂದು ಬಣ್ಣಿಸಿದ್ದಾರೆ. ಇದರ ಸನ್ನಿವೇಶದಲ್ಲಿ, ಐಇಎ G7 ದೇಶಗಳನ್ನು ಒಳಗೊಂಡಂತೆ ತನ್ನ ಸದಸ್ಯರು ಕನಿಷ್ಠ 90 ದಿನಗಳ ಮೌಲ್ಯದ ಆಮದುಗಳ ತುರ್ತು ತೈಲ ದಾಸ್ತಾನುಗಳನ್ನು ಸಂಗ್ರಹಿಸಲು ಆದೇಶಿಸುತ್ತದೆ. ಹಿಂದಿನ ಪೂರ್ವನಿದರ್ಶನಗಳ ಆಧಾರದ ಮೇಲೆ, ಐಇಎ ಸದಸ್ಯ ರಾಷ್ಟ್ರಗಳು ದಿನಕ್ಕೆ 1.2 ಮಿಲಿಯನ್ ಬ್ಯಾರೆಲ್ಗಳಷ್ಟು ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಡೇಟಾ ಸಂಸ್ಥೆಗಳು ಅಂದಾಜಿಸುತ್ತವೆ. ಆದರೆ ಇದು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ದೈನಂದಿನ ಪ್ರಮಾಣದ ಒಂದು ಭಾಗ ಮಾತ್ರ. ಆದ್ದರಿಂದ, ಬಿಡುಗಡೆಯು ವಿಶ್ವ ಕೊರತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಇರಾನ್ ಯುದ್ಧದಿಂದ ಆರ್ಥಿಕ ಕುಸಿತವನ್ನು ಕಡಿಮೆ ಮಾಡಲು ಅಮೆರಿಕ ಯಾವ ಇತರ ಕ್ರಮಗಳನ್ನು ತೆಗೆದುಕೊಂಡಿದೆ? ಅಮೆರಿಕ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪದಿಂದ ತೈಲವನ್ನು ಬಿಡುಗಡೆ ಮಾಡುವುದರ ಜೊತೆಗೆ, ಟ್ರಂಪ್ ಆಡಳಿತವು ಪೂರೈಕೆ ಒತ್ತಡಗಳನ್ನು ಕಡಿಮೆ ಮಾಡಲು ಮತ್ತು ಏರುತ್ತಿರುವ ತೈಲದ ಬೆಲೆಗಳನ್ನು ನಿಗ್ರಹಿಸಲು ಕೆಲವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಂಡಿದೆ. ಜಾಗತಿಕ ಮಾರುಕಟ್ಟೆಗಳಿಗೆ ತ್ವರಿತವಾಗಿ ಪೂರೈಕೆಯನ್ನು ಸೇರಿಸುವ ಪ್ರಯತ್ನದಲ್ಲಿ, ಈಗಾಗಲೇ ಲೋಡ್ ಮಾಡಲಾದ ಮತ್ತು ಸಮುದ್ರದಲ್ಲಿ ಇರುವ ಸುಮಾರು 100 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಖರೀದಿಸಲು ದೇಶಗಳಿಗೆ 30 ದಿನಗಳ ವಿನಾಯಿತಿಯನ್ನು ಅಮೆರಿಕ ನೀಡಿದೆ. ದೇಶೀಯ ಪೂರೈಕೆ ಅಡಚಣೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ, ದೇಶೀಯ ಬಂದರುಗಳ ನಡುವೆ ಸಾಗಿಸಲಾದ ಸರಕುಗಳನ್ನು ಅಮೆರಿಕ ನಿರ್ಮಿತ ಮತ್ತು ಅಮೆರಿಕ ಸಿಬ್ಬಂದಿಯ ಹಡಗುಗಳಲ್ಲಿ ಸಾಗಿಸಲು ಅಗತ್ಯವಿರುವ ಅಮೆರಿಕ ಕಡಲ ಕಾನೂನಾದ ಜೋನ್ಸ್ ಕಾಯ್ದೆಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡಲು ಆಡಳಿತವು ಪರಿಗಣಿಸುತ್ತಿದೆ. ಆದಾಗ್ಯೂ, ಇದನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.
ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿ: ಚಾಲಕ ಮೃತ್ಯು
ಬ್ರಹ್ಮಾವರ, ಮಾ.14: ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಹೆಗ್ಗುಂಜೆ ಗ್ರಾಮದ ಮೈರ್ಕೋಮೆ ಹಾಲ್ ಡೈರಿ ಬಳಿ ನಡೆದಿದೆ. ಮೃತರನ್ನು ರಿಕ್ಷಾ ಚಾಲಕ ನರಸಿಂಹ ಪೂಜಾರಿ ಎಂದು ಗುರುತಿಸಲಾಗಿದೆ. ಮಾ.13ರಂದು ಮಧ್ಯಾಹ್ನ ವೇಳೆ ಶಿರೂರು ಮೂರು ಕೈ ಕಡೆಯಿಂದ ಕೊಕ್ಕರ್ಣೆ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ನಾಯಿ ಅಡ್ಡ ಬಂದಿದ್ದು, ಅದಕ್ಕೆ ನರಸಿಂಹ ಪೂಜಾರಿ ರಿಕ್ಷಾವನ್ನು ಒಮ್ಮೆಲೆ ಎಡಕ್ಕೆ ಚಲಾಯಿಸಿದ್ದರಿಂದ, ರಿಕ್ಷಾದ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನರಸಿಂಹ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮಾ.14ರಂದು ಬೆಳಗ್ಗೆ 8.30ರ ಸುಮಾರಿಗೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಯಾಂಕ್ ಚಕ್ರವರ್ತಿ ಭಾರತದ 94ನೇ ಗ್ರ್ಯಾಂಡ್ ಮಾಸ್ಟರ್
ಅಸ್ಸಾಂನಿಂದ ಪ್ರಥಮ ಸಾಧನೆ
ಕೋಟ: ಬಾವಿಯೊಳಗೆ ಅಸ್ಥಿಪಂಜರ ಪತ್ತೆ
ಕೋಟ, ಮಾ.14: ಬಾವಿಯೊಳಗೆ ಮಾನವನ ಅಸ್ಥಿಪಂಜರ ಪತ್ತೆಯಾದ ಘಟನೆ ಮಾ.13ರಂದು ಬೆಳಗ್ಗೆ ಗುಂಡ್ಮೀ ಗ್ರಾಮದ ವಿಶ್ವಕರ್ಮ ಸಭಾಭವನದ ಬಳಿ ನಡೆದಿದೆ. ರಕ್ಷೀತ್ ಕಾಮತ್ ಎಂಬವರ ಜಾಗದಲ್ಲಿ ನೀರು ಬತ್ತಿ ಹೋಗಿರುವ ಬಾವಿ ಯೊಳಗೆ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ: ಸರಕಾರಿ ಮೂಲಗಳು
ಹಾರ್ಮುಝ್ ಜಲಸಂಧಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಪಷ್ಟನೆ
ಮಂಗಳೂರು| ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಮಸ್ಯೆ; ಹೊಟೇಲ್ಗಳು ಬಂದ್
ಮಂಗಳೂರು, ಮಾ.14: ಮಧ್ಯಪ್ರಾಚ್ಯದ ಯುದ್ಧೋನ್ಮಾದದಿಂದ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಮಸ್ಯೆಯು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ಮಧ್ಯೆ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಕೊರತೆಯಿಂದ ಬಹುತೇಕ ಸೌದೆ ಒಲೆಗೆ ಮೊರೆ ಹೋಗುತ್ತಿದ್ದರೆ, ಹೋಟೆಲ್, ಕ್ಯಾಂಟೀನ್ ಮತ್ತು ಬೀದಿ ಬದಿ ಆಹಾರ ತಯಾರಿಕಾ ಘಟಕಗಳಿಗೂ ಇದರ ಬಿಸಿ ತಟ್ಟಿದೆ. ಪರಿಣಾಮ ಕೆಲವು ಕಡೆಗಳಲ್ಲಿ ಹೊಟೇಲ್ಗಳು ಬಂದ್ ಆಗುತ್ತಿವೆ. ದ.ಕ. ಜಿಲ್ಲೆಯ ಅಲ್ಲಲ್ಲಿ 2-3 ದಿನಗಳಿಂದ ಹೊಟೇಲ್, ರೆಸ್ಟೋರೆಂಟ್, ಬೀದಿ ಬದಿ ವ್ಯಾಪಾರದ ಅಂಗಡಿಗಳು ಬಂದ್ ಆಗುತ್ತಲೇ ಇವೆ. ಶನಿವಾರವೂ ನಗರ ಸೇರಿದಂತೆ ಹೆಚ್ಚಿನ ಕಡೆಗಳ ಹೊಟೇಲ್ ಮಾಲಕರು ವಾಣಿಜ್ಯ ಬಳಕೆಯ ಗ್ಯಾಸ್ನ ಸಮಸ್ಯೆ ಎದುರಿಸಿದರು. ಕೆಲವರು ಮೊದಲೇ ಸಿಲಿಂಡರ್ ಸಂಗ್ರಹಿಸಿಟ್ಟಿದ್ದರಿಂದ ಕೆಲವು ದಿನಗಳ ಹೊಟೇಲ್ ನಡೆಸಬಹುದಾಗಿದೆ. ಬಳಿಕ ಬಂದ್ ಮಾಡದೇ ವಿಧಿ ಇಲ್ಲ ಎಂದು ಹೇಳತೊಡಗಿದ್ದಾರೆ. ಕೆಲವು ಹೊಟೇಲ್ಗಳ ಮೆನುವಿನಲ್ಲಿ ಹಲವು ಐಟಂಗಳನ್ನು ಕಡಿತ ಮಾಡಿದ್ದರೆ ಕೆಲ ಹೊಟೇಲ್ಗಳು ಮಧ್ಯಾಹ್ನದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಈ ಮಧ್ಯೆ ಬಂದರ್ ದಕ್ಕೆಯಲ್ಲಿ ವೇಳೆ ಮೀನುಗಾರಿಕಾ ಬೋಟುಗಳಿಗೂ ಎಲ್ಪಿಜಿ ಸಮಸ್ಯೆ ಬಾಧಿಸುತ್ತಿವೆ. ಮೀನಿನ ಕೊರತೆಯಿಂದ ಮೀನುಗಾರರು ಚಿಂತೆಗೆ ಒಳಗಾಗಿರುವ ಮಧ್ಯೆಯೇ ಅನಿಲ ಸಿಗದೆ ಕೆಲವೊಂದು ಮೀನುಗಾರಿಕಾ ಬೋಟ್ಗಳೂ ಕಾರ್ಯನಿರ್ವಹಿಸಿಲ್ಲ. ಬೋಟ್ನಲ್ಲಿರುವ ಸಿಬ್ಬಂದಿಗಳು ಅಡುಗೆಗಾಗಿ ಗ್ಯಾಸ್ನ್ನೇ ಅವಲಂಬಿಸಿದ್ದು, ಇದೀಗ ತಾತ್ಕಾಲಿಕವಾಗಿ ಸೀಮೆಎಣ್ಣೆ ಸ್ಟೌವ್ ಬಳಸುತ್ತಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳಿಗೆ ಗ್ಯಾಸ್ ಒಲೆ ಅನಿವಾರ್ಯ. ಆದರೆ ಈಗ ಸೀಮೆಎಣ್ಣೆ ಸ್ಟೌವ್ ಬಳಕೆ ಮಾಡಲು ಕಷ್ಟ. ಅದರ ಬೆಲೆಯೂ ದುಪ್ಪಟ್ಟುಗೊಂಡಿದೆ ಎಂದು ಮೀನುಗಾರರು ಸಮಸ್ಯೆ ತೋಡಿಕೊಂಡಿದ್ದಾರೆ. ಸಿಗಡಿ, ಅಂಜಲ್, ಮಾಂಜಿ, ಬೊಂಡಾಸ್ ಮೀನುಗಳಿಗೆ ವಿದೇಶದಿಂದ ಬೇಡಿಕೆಯಿದೆ. ಅಲ್ಲಿಗೆ ಇದು ಹೆಚ್ಚು ರಫ್ತಾಗುತ್ತಿತ್ತು. ಕಂಟೇನರ್ ಹಡಗುಗಳ ಸಂಚಾರ ನಿರ್ಬಂಧದಿಂದಾಗಿ ಮೀನುಗಾರಿಕಾ ಉದ್ಯಮ ವಲಯಕ್ಕೂ ತೊಂದರೆಯಾಗಿದೆ ಎಂದು ಮೀನುಗಾರರು ಹೇಳಿದ್ದಾರೆ. *ನಮಗೂ ಗ್ಯಾಸ್ ವಿತರಿಸಿ: ಉಭಯ ಜಿಲ್ಲೆಯ ಹೊಟೇಲ್ ಮಾಲಕರ ಸಂಘದ ಮುಖಂಡರು ಎಲ್ಲರಿಗೂ ಸಮಾನ ವಾಗಿ ಗ್ಯಾಸ್ ವಿತರಿಸಿ. ಇಲ್ಲವಾದರೆ ಎಲ್ಲ ಹೊಟೇಲ್ಗಳನ್ನೂ ಮುಚ್ಚುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ಗೃಹ ಬಳಕೆ, ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಹಾಸ್ಟೆಲ್ಗಳು, ವಸತಿ ನಿಲಯಗಳು, ಧಾರ್ಮಿಕ ಸಂಸ್ಥೆ ಸೇರಿದಂತೆ ಇನ್ನಿತರ ತುರ್ತು ವಲಯಗಳಿಗೆ ಆದ್ಯತೆ ನೀಡಿ ಗ್ಯಾಸ್ ಪೂರೈಸಲು ಉಭಯ ಜಿಲ್ಲೆಯ ಜಿಲ್ಲಾಡಳಿತಗಳು ಕ್ರಮ ಕೈಗೊಂಡಿದೆ. ಹಾಗಾಗಿ ನಮಗೂ ಗ್ಯಾಸ್ ವಿತರಿಸಿ ಎಂದು ಹೊಟೇಲ್ ಮಾಲಕರ ಸಂಘದ ಪ್ರಮುಖರು ಬೇಡಿಕೆ ಮುಂದಿಟ್ಟಿದ್ದಾರೆ. *ಈ ಮಧ್ಯೆ ಸೌದೆ ಒಲೆಯನ್ನೇ ಬಳಸಿ ಇಂದಿಗೂ ಅಡುಗೆ ತಯಾರಿಸುವ ಬೆರಳೆಣಿಕೆಯ ಹೊಟೇಲ್ನವರು ನಿರಾತಂಕದಿಂದ ವ್ಯಾಪಾರ ನಡೆಸುತ್ತಿದ್ದಾರೆ. ಗ್ರಾಮೀಣ ಮಾತ್ರವಲ್ಲ, ನಗರದಲ್ಲೂ ಕಟ್ಟಿಗೆ ವ್ಯಾಪಾರ ಬಿರುಸು ಪಡೆದಿದೆ. ನಮಗೂ ಮರದ ಕಟ್ಟಿಗೆಯ ಕೊರತೆ ಇದೆ. ಬೇಡಿಕೆಯಷ್ಟು ಪೂರೈಕೆ ಮಾಡಲಾಗುತ್ತಿಲ್ಲ ಎಂದು ಕಟ್ಟಿಗೆ ವ್ಯಾಪಾರಿಗಳು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ
Robin Uthappa: ಅಂಡರ್ 19 ವಿಶ್ವಕಪ್ 2026 ಗೆಲುವಿನ ಸೂತ್ರದಾರ ಯುವ ಸ್ಟಾರ್ ಬ್ಯಾಟರ್ ವೈಭವರ್ ಸೂರ್ಯವಂಶಿ ಅವರು ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ ಪರ ಕಣಕ್ಕಿಳಿಯಲಿದ್ದು, ಇದೀಗ ಅಭ್ಯಾಸದಲ್ಲಿ ಕಾರ್ಯನಿರತರಾಗಿದ್ದಾರೆ. ಈ ನಡುವೆಯೇ ಐಪಿಎಲ್ ಆರಂಭಕ್ಕೆ ಮುನ್ನ, ವೈಭವ್ಗೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ. ಇದು ಭಾರೀ ವೈರಲ್ ಆಗುತ್ತಿದೆ.
ದುಬೈ, ಮಾ.14: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈನ ಜೆಬೆಲ್ ಅಲಿ ಬಂದರು, ಅಬುಧಾಬಿಯ ಖಲೀಫಾ ಬಂದರು ಹಾಗೂ ಫುಜೈರಾ ಬಂದರಿನ ಸುತ್ತಮುತ್ತಲಿನ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡುವಂತೆ ಇರಾನ್ ತುರ್ತು ಎಚ್ಚರಿಕೆ ನೀಡಿದೆ ಇರಾನ್ ನ ಅರೆ ಸರಕಾರಿ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ. “ನಾಗರಿಕ ವಸತಿ ಪ್ರದೇಶಗಳೊಳಗೆ ಅಮೆರಿಕದ ಮಿಲಿಟರಿ ಪಡೆಗಳ ಉಪಸ್ಥಿತಿ ಹಾಗೂ ಅವುಗಳನ್ನು ಮರೆಮಾಚಲಾಗಿರುವುದರಿಂದ ಆ ಪ್ರದೇಶಗಳು ಸೈನಿಕ ಗುರಿಗಳಾಗಿವೆ. ಮುಂದಿನ ಗುರಿ ಅದೇ ಆಗಿರುವ ಸಾಧ್ಯತೆಯಿದೆ” ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಸಿದೆ ಎಂದು Aljazeera ವರದಿ ಮಾಡಿದೆ. ಈ ಬೆಳವಣಿಗೆ ಯುಎಇಯ ಪ್ರಮುಖ ವಾಣಿಜ್ಯ ಹಾಗೂ ಇಂಧನ ಸಾಗಣೆ ಕೇಂದ್ರಗಳ ಭದ್ರತೆ ಕುರಿತು ಗಂಭೀರ ಆತಂಕ ಹುಟ್ಟಿಸಿದೆ. ಜಾಗತಿಕ ವ್ಯಾಪಾರದಲ್ಲಿ ಮಹತ್ವದ ಪಾತ್ರವಹಿಸುವ ಜೆಬೆಲ್ ಅಲಿ, ಖಲೀಫಾ ಹಾಗೂ ಫುಜೈರಾ ಬಂದರುಗಳ ಮೇಲೆ ಯಾವುದೇ ದಾಳಿ ನಡೆದರೆ, ಅಂತರಾಷ್ಟ್ರೀಯ ಸರಕು ಸಾಗಣೆ ಮತ್ತು ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಸಂಘರ್ಷದ ನಡುವೆ ಅಮೆರಿಕದ ಸೈನಿಕ ಉಪಸ್ಥಿತಿಯ ವಿರುದ್ಧ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಭೀತಿ ವ್ಯಕ್ತವಾಗಿದೆ.
ರಾಮನಗರ : ಮೂರು ವರ್ಷಗಳ ಹಿಂದೆ ನನ್ನ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿದ್ದ ಹಾನಿಯ ಚಿತ್ರಗಳನ್ನು ತೋರಿಸಿ ಮುಖ್ಯಮಂತ್ರಿ ಬಳಿ ಅನುದಾನ ಕೇಳಿದ್ದೆ. ಆದರೂ, ಬಜೆಟ್ನಲ್ಲಿ ನನ್ನ ಮನವಿಗೆ ಸ್ಪಂದಿಸಲಿಲ್ಲ. ನನ್ನ ಹಾಗೂ ನನ್ನ ಕ್ಷೇತ್ರಕ್ಕೆ ಆಗಿರುವ ನೋವನ್ನು ಹೇಳಿಕೊಂಡಿದ್ದೇನೆಯೇ ಹೊರತು, ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೇನೆ. 100 ರೂ. ಅನುದಾನ ಕೇಳಿದರೆ, ಕನಿಷ್ಠ 5 ರೂ.ಗಳಾದರೂ ಕೊಡಬಾರದೇ? ಎಂದು ಹೇಳಿದರು. ನಾನು ನೀಡಿರುವ ಹೇಳಿಕೆ ಒಳ್ಳೆಯದಾಗಿದ್ದರೆ ಅದನ್ನು ಒಪ್ಪಿಕೊಳ್ಳಲಿ, ಇಲ್ಲದಿದ್ದರೆ ತಿರಸ್ಕರಿಸಲಿ. ಆದರೆ, ನನ್ನ ಮನವಿಗೆ ಸೂಕ್ತ ಸ್ಪಂದನೆ ಸಿಗಲಿಲ್ಲ. ಇದರಿಂದ ನನಗೆ ಹಾಗೂ ನನ್ನ ಕ್ಷೇತ್ರಕ್ಕೆ ನೋವಾಗಿದೆ. ಮೈಕ್ರೋ ಫೈನಾನ್ಸ್ ನಿಂದಾಗಿ ನನ್ನ ಕ್ಷೇತ್ರದಲ್ಲಿ ಸುಮಾರು 2,800 ಮನೆಗಳು ಹರಾಜಿಗೆ ಬಂದಿವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು. ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್ಎಂಬಿ) ಪುನರುಜ್ಜಿವನಕ್ಕಾಗಿ 100 ಕೋಟಿ ರೂ. ಕೊಡುವಂತೆ ಕೇಳಿದ್ದೆ. ರಸ್ತೆ ಮತ್ತು ಚರಂಡಿಗಳ ದುರಸ್ತಿಗೂ ಅನುದಾನ ನೀಡಿಲ್ಲ. ನಾನು ನನಗೆ ಆಗಿರುವ ನೋವನ್ನು ವ್ಯಕ್ತಪಡಿಸಿದ್ದೆಯೇ ಹೊರತು, ಬಜೆಟ್ ಅನ್ನು ಟೀಕಿಸಿಲ್ಲ ಎಂದು ಅವರು ಹೇಳಿದರು.
App Exclusive: ಬಂಡೀಪುರ, ನಾಗರಹೊಳೆ ಸಫಾರಿ ಸ್ಥಗಿತದ ಎಫೆಕ್ಟ್: ರಾಜ್ಯ ಸರ್ಕಾರಕ್ಕೆ 6 ಕೋಟಿ ನಷ್ಟ!
ರಾಜ್ಯದಲ್ಲಿ ಸಫಾರಿ ಸ್ಥಗಿತದಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ಈ ನಡುವೆ ಸಫಾರಿಗೆ ಮತ್ತೆ ಅವಕಾಶ ಕೊಡಲಾಗಿದೆ. ಇದು ಮತ್ತೊಮ್ಮೆ ಪರ - ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ರಾಜ್ಯದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಬಂಡೀಪುರದಲ್ಲಿ 1972ರಲ್ಲಿ 12 ಹುಲಿಗಳು ಇದ್ದವು. ಈಗ 175 ಹುಲಿಗಳು ಇವೆ. ಆದರೆ ಅರಣ್ಯ ವಿಸ್ತೀರ್ಣ ಕಡಿಮೆಯಾದರೂ ಪ್ರಾಣಿಗಳು ಹೆಚ್ಚಾಗುತ್ತಿವೆ. ಮುಂದೆ ಯಾವ ರೀತಿ ನಿಭಾಯಿಸಬೇಕು ಎಂಬ ವಿಚಾರವಾಗಿ ತಜ್ಞರ ವರದಿಯನ್ನು ಪಡೆಯುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಕೊಂಕಣ ರೈಲ್ವೆ ಮಾರ್ಗದ ಮುಂಗಾರುಪೂರ್ವ ವಾರ್ಷಿಕ ತಪಾಸಣೆ
ಉಡುಪಿ ಮಾ.14: ಮುಂಬಯಿಯಿಂದ ಮಂಗಳೂರು ಬಳಿಯ ತೋಕೂರುವರೆಗೆ ವ್ಯಾಪಿಸಿರುವ ಕೊಂಕಣ ರೈಲ್ವೆ ಮಾರ್ಗದ ವಾರ್ಷಿಕ ತಪಾಸಣೆ ನಡೆಯುತ್ತಿದೆ. ಕೊಂಕಣ ರೈಲ್ವೆ ಮಾರ್ಗ ಪ್ರಾಕೃತಿಕ ಸೌಂದರ್ಯ ದೊಂದಿಗೆ ಮಳೆಗಾಲದ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಒಡ್ಡುತಿದ್ದು, ಮುಂಗಾರು ಮಳೆ ಪ್ರಾರಂಭಗೊಳ್ಳುವ ಮೊದಲೇ ಮಾರ್ಗದ ತಪಾಸಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಈ ಬಾರಿಯ ಮುಂಗಾರು ಪೂರ್ವ ಪರಿವೀಕ್ಷಣೆಯ ನೇತೃತ್ವವನ್ನು ಕೊಂಕಣ ರೈಲ್ವೆ ನಿಗಮದ ಸಿಎಂಡಿ ಸಂತೋಷ್ ಕುಮಾರ್ ಝಾ ಅವರೇ ವಹಿಸಿದ್ದರು. ನಿಗಮದ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಅವರೊಂದಿಗಿದ್ದರು. ಮಳೆಗಾಲ ಪ್ರಾರಂಭಕ್ಕೆ ಮೊದಲೇ ಮಾರ್ಗದ ಸುರಕ್ಷತೆ, ಮೂಲಭೂತ ಸೌಕರ್ಯಗಳಲ್ಲಿ ಕೊರತೆಯನ್ನು ಗಮನಿಸಿ ಅವುಗಳಿಗೆ ಪರಿಹಾರ ಒದಗಿಸಿ ಮಳೆಗಾಲದಲ್ಲಿ ರೈಲ್ವೆ ಪ್ರಯಾಣಿಕರಿಗೆ ನಿರಂತರ ಸುರಕ್ಷಿತ ಪ್ರಯಾಣವನ್ನು ಖಚಿತ ಪಡಿಸುವುದು ಈ ಪರಿವೀಕ್ಷಣೆಯ ಮುಖ್ಯ ಉದ್ದೇಶವಾಗಿರುತ್ತದೆ. ಮೊದಲು ಮಡಗಾಂವ್ದಿಂದ ತೋಕೂರು ನಡುವಿನ ವಿಭಾಗವನ್ನು ಪರಿಶೀಲಿಸಿದ ಬಳಿಕ ಮರುದಿನ ಮಡಗಾಂವ್ ದಿಂದ ರೋಹಾವರೆಗಿನ ಭಾಗವನ್ನು ಪರಿಶೀಲಿಸಲಾಯಿತು. ಪರೀಕ್ಷೆಯ ವೇಳೆ ರೈಲು ಹಳಿ, ಸೇತುವೆಗಳು, ಸುರಂಗಮಾರ್ಗ, ಇಳಿಜಾರು, ಸಿಗ್ನಲ್ ವ್ಯವಸ್ಥೆ, ಮಳೆಗಾಲದಲ್ಲಿ ನೀರು ನಿಲ್ಲುವ ಪ್ರದೇಶಗಳು, ನಿಲ್ದಾಣಗಳ ಮೂಲಭೂತ ಸೌಲಭ್ಯ ಹಾಗೂ ಸೋಲಾರ್ ಲೈಟನಿಂಗ್ ಅಳವಡಿಕೆಗಳನ್ನು ಸಮಗ್ರವಾಗಿ ತಪಾಸಣೆ ನಡೆಸಲಾಯಿತು.
Vairamuthu Ramaswamy- 90 ದಶಕದ ಜಂಟಲ್ ಮ್ಯಾನ್, ಕಾದಲನ್, ರೋಜಾ, ಕಾದಲನ್, ಎಂದಿರನ್ ಮೊದಲಾದ ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ಭಾರತೀಯ ಚಿತ್ರರಸಿಕರು ಹೇಗೆ ತಾನೇ ಮರೆಯಲು ಸಾಧ್ಯ? ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ ಆ ಚಿತ್ರಗಳ ಹಾಡುಗಳು ಜನರ ನಾಲಗೆ ತುದಿಯಲ್ಲಿ ಕುಣಿಯುತ್ತಿದ್ದವು. ಅಂತಹ ಅನೇಕ ಚಿತ್ರಗಳ ಯಶಸ್ಸಿನಲ್ಲಿ ಸಾಹಿತಿ, ಗೀತರಚನೆಕಾರ ವೈರಮುತ್ತು ರಾಮಸಾಮಿ ಅವರಿಗೂ ಪಾಲಿದೆ. ಇದೀಗ ಅವರ ಸಮಗ್ರ ಸಾಹಿತ್ಯಕ್ಕೆ ಭಾರತದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಒಲಿದಿದೆ. ಇದು ತಮಿಳು ಸಾಹಿತ್ಯಕ್ಕೆ ಒಲಿದಿರುವ ಮೂರನೇ ಜ್ಞಾನಪೀಠ ಪ್ರಶಸ್ತಿಯಾಗಿದೆ.
ಚೆನ್ನೈನ ಎಸ್ಆರ್ಎಂ ಅ.ಭಾ.ವಿ.ವಿ. ಪುರುಷ ಚೆಸ್ ಚಾಂಪಿಯನ್
ಉಡುಪಿ, ಮಾ.14: ಮೂವರು ಗ್ರಾಂಡ್ಮಾಸ್ಟರ್ಗಳು ಹಾಗೂ ಮೂವರು ಐಎಂಗಳನ್ನು ತಂಡದಲ್ಲಿ ಹೊಂದಿದ್ದ ಚೆನ್ನೈನ ಎಸ್ಆರ್ಎಂ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ, ಮಣಿಪಾಲದ ಮಾಹೆಯಲ್ಲಿ ನಡೆದ ಪುರುಷರ ಚೆಸ್ ಚಾಂಪಿಯನ್ಷಿಪ್ನಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮುವ ಮೂಲಕ ಅಖಿಲ ಭಾರತ ಅಂತರ ವಿವಿ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಈ ಚಾಂಪಿಯನ್ ಷಿಪ್ನಲ್ಲಿ ಅಗ್ರಶ್ರೇಯಾಂಕಿತ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಬಲಿಷ್ಠ ಎಸ್ಆರ್ಎಂ ವಿವಿ ನಿರೀಕ್ಷೆಯಂತೆ ಕೊನೆಯ ಸುತ್ತಿನ ಬಳಿಕ ಅತ್ಯಧಿಕ ಅಂಕ ಸಂಗ್ರಹಿಸುವ ಮೂಲಕ ತಂಡ ಪ್ರಶಸ್ತಿಗೆ ಭಾಜನವಾಯಿತು. ಆಂಧ್ರಪ್ರದೇಶದ ಗುಂಟೂರಿನ ಕೊನೇರು ಲಕ್ಷ್ಮಯ್ಯ ಎಜ್ಯುಕೇಶನ್ ಫೌಂಡೇಷನ್ (ಕೆಎಲ್ಇಎಫ್) ತಂಡ ರನ್ನರ್ಅಪ್ ಆಗಿ ಸ್ಪರ್ಧೆಯನ್ನು ಮುಗಿಸಿದೆ. ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹೊಸದಿಲ್ಲಿಯ ಭಾರತೀಯ ವಿಶ್ವವಿದ್ಯಾ ನಿಲಯಗಳ ಸಂಘದ ಪರಿವೀಕ್ಷಕ ಡಾ. ನರೇಂದ್ರ ಗೌರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಹೆ ವಿವಿ ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ. ವಿನೋದ್ ನಾಯಕ್, ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ರಾಜ ಗೋಪಾಲ್ ಶೆಣೈ, ಕೆಎಂಸಿ ಡೀನ್ ಡಾ. ಅನಿಲ್ ಕೆ. ಭಟ್, ಸಂಘಟನಾ ಕಾರ್ಯದರ್ಶಿ ಹಾಗೂ ಕ್ರೀಡಾ ಮಂಡಳಿ ಮುಖ್ಯ ಸಂಯೋಜಕ ಡಾ.ಉಪೇಂದ್ರ ನಾಯಕ್ ಅವರು ಬಹುಮಾನ ವಿತರಣೆಯ ವೇಳೆ ಉಪಸ್ಥಿತರಿದ್ದರು. ಮಾಹೆ ಕ್ರೀಡಾ ಕೌನ್ಸಿಲ್ ಹೆಚ್ಚುವರಿ ಕಾರ್ಯದರ್ಶಿ ಡಾ. ಕುಮಾರ್ ಎಂ.ಆರ್. ಭಟ್ ಸ್ವಾಗತಿಸಿದರೆ, ಕೆಎಂಸಿ ಮಂಗಳೂರು ಕ್ರೀಡಾ ನಿರ್ದೇಶಕ ಡಾ. ರಾಜು ವಂದಿಸಿದರು. ಎಂಐಯ ಪ್ರಾಧ್ಯಾಪಕ ಡಾ.ರಾಘವೇಂದ್ರ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.
ಡಾ.ಜಿ ಪರಮೇಶ್ವರ್ ಬೆನ್ನಿಗೆ ನಿಂತ ದಲಿತ ಸಮುದಾಯದ ನಾಯಕರು! ಗದ್ದುಗೆ ಬದಲಾದ್ರೆ ಪ್ಲ್ಯಾನ್ ಬಿ ಗೆ ಸಿದ್ದತೆ
ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡಬೇಕು ಎಂಬ ಒತ್ತಾಯ ಒಂದು ಕಡೆಯಲ್ಲಿ ಕೇಳಿಬಂದರೆ, ಇದಕ್ಕೆ ಪರ್ಯಾಯವಾಗಿ ಡಾ. ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಶುರುವಾಗಿದೆ. ಇದರ ಬೆನ್ನಲ್ಲೇ ಪರಮೇಶ್ವರ್ ಅವರು ಪರೋಕ್ಷವಾಗಿ ನಾನು ಸಿದ್ದ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ದಲಿತ ಸಮುದಾಯದ ಸಚಿವರು, ಶಾಸಕರು ಪರಮೇಶ್ವರ್ ಬೆನ್ನಿಗೆ ನಿಲ್ಲಲು ತೀರ್ಮಾನ ಮಾಡಿದ್ದಾರೆ. ಹಾಗಾಗಿ ಹೈಕಮಾಂಡ್ ನಾಯಕತ್ವ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪ್ರಶ್ನಿಸುವ ಪ್ರವೃತ್ತಿಯಿಂದ ಗ್ರಾಹಕರಿಗೆ ಪರಿಹಾರ ಲಭ್ಯ: ಅಬೀದ್ ಗದ್ಯಾಳ್
ವಿಶ್ವ ಗ್ರಾಹಕರ ದಿನಾಚರಣೆ
LPG ಹೊತ್ತ ಎರಡು ಹಡಗುಗಳು ಸುರಕ್ಷಿತವಾಗಿ ಹಾರ್ಮುಝ್ ಜಲಸಂಧಿಯನ್ನು ದಾಟಿವೆ: ಕೇಂದ್ರ ಸರಕಾರ
ಹೊಸದಿಲ್ಲಿ: ಶನಿವಾರ ಯುದ್ಧಪೀಡಿತ ಹಾರ್ಮುಝ್ ಜಲಸಂಧಿಯಿಂದ ಕೊಲ್ಲಿ ರಾಷ್ಟ್ರಗಳಿಂದ ಎಲ್ಪಿಜಿಯನ್ನು ಹೊತ್ತು ತರುತ್ತಿರುವ ಭಾರತದ ಧ್ವಜವನ್ನು ಹೊಂದಿರುವ ಎರಡು ಹಡಗುಗಳು ಸುರಕ್ಷಿತವಾಗಿ ದಾಟಿವೆ ಎಂದು ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಪಿಜಿಯನ್ನು ಹೊತ್ತಿರುವ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಹಡಗುಗಳು ಗುಜರಾತ್ ನ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳ ಕಡೆಗೆ ಸಾಗುತ್ತಿವೆ ಎಂದು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಈ ಹಡಗುಗಳು 92,700 ಟನ್ ಎಲ್ಪಿಜಿಯನ್ನು ಹೊತ್ತು ತರುತ್ತಿದ್ದು, ಮಾರ್ಚ್ 16 ಅಥವಾ ಮಾರ್ಚ್ 17ರಂದು ಭಾರತೀಯ ಬಂದರುಗಳಲ್ಲಿ ಲಂಗರು ಹಾಕುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಹಾರ್ಮುಝ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ನಿಂತಿರುವ 24 ಹಡಗುಗಳ ಪೈಕಿ ಈ ಎರಡು ಹಡಗುಗಳೂ ಸೇರಿದ್ದವು.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ : ಕೇಂದ್ರ ಸರಕಾರ ಸ್ಪಷ್ಟನೆ
ಹೊಸದಿಲ್ಲಿ,ಮಾ.14: ಪಶ್ಚಿಮ ಏಶ್ಯಾದಲ್ಲಿ ಉಲ್ಬಣಿಸುತ್ತಿರುವ ಸಂಘರ್ಷದ ನಡುವೆಯೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿವೆ ಎಂದು ಶನಿವಾರ ಜನತೆಗೆ ಭರವಸೆ ನೀಡಿದೆ. ತೆರೆದ ಪಾತ್ರೆಗಳು ಅಥವಾ ಲೂಸ್ ಕಂಟೇನರ್ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಸಂಗ್ರಹಿಸಿಡದಂತೆ ಅದು ಜನರನ್ನು ಆಗ್ರಹಿಸಿದೆ. ದೇಶಾದ್ಯಂತ ಪೆಟ್ರೋಲ್ ಪಂಪ್ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆಯಿದೆ. ತೆರೆದ ಪಾತ್ರೆಗಳಲ್ಲಿ ಅಥವಾ ಲೂಸ್ ಕಂಟೇನರ್ಗಳಲ್ಲಿ ಇಂಧನವನ್ನು ಒಯ್ಯದಂತೆ ಅಥವಾ ಸಂಗ್ರಹಿಸದಂತೆ ಗ್ರಾಹಕರಿಗೆ ಸೂಚಿಸಲಾಗಿದೆ. ಹಾಗೆ ಮಾಡುವುದು ಗಂಭೀರ ಸುರಕ್ಷತಾ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ಸಚಿವಾಲಯವು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. ತಮಿಳುನಾಡಿನ ಪೆಟ್ರೋಲ್ ಪಂಪ್ವೊಂದರಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ತೆರೆದ ಪಾತ್ರೆಗಳಲ್ಲಿ ಅಥವಾ ಲೂಸ್ ಕಂಟೇನರ್ಗಳಲ್ಲಿ ಪೆಟ್ರೋಲ್ ಮಾರಾಟ ಮಾಡುತ್ತಿರುವ ಪ್ರಕರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ ಬಳಿಕ ಸಚಿವಾಲಯದ ಈ ಸಲಹೆಯು ಹೊರಬಿದ್ದಿದೆ. ಈ ಬಗ್ಗೆ ಈಗಾಗಲೇ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದ್ದು, ಸದ್ರಿ ಪೆಟ್ರೋಲ್ ಪಂಪ್ನ್ನು ಮುಚ್ಚಲಾಗಿದೆ ಎಂದೂ ಸಚಿವಾಲಯವು ತಿಳಿಸಿದೆ.
ಹೊಸದಿಲ್ಲಿ,ಮಾ.14: ಪಶ್ಚಿಮ ಏಶ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಭಾರತ ಎದುರಿಸುತ್ತಿರುವ ಇಂಧನ ಬಿಕ್ಕಟ್ಟಿಗೆ ತುಸು ನಿರಾಳತೆಯುಂಟು ಮಾಡುವಂತೆ, ಭಾರತದ ಇನ್ನೊಂದು ಎಲ್ಪಿಜಿ ವಾಹಕ ನೌಕೆ ನಂದಾದೇವಿ ಶನಿವಾರ ಯಶಸ್ವಿಯಾಗಿ ಹಾರ್ಮುಝ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಯುದ್ಧದಿಂದ ಉದ್ವಿಗ್ನವಾಗಿರುವ ಗಲ್ಫ್ ಪ್ರಾಂತದ ಮೂಲಕ ಇಂಧನ ಸಾಗಣೆಯ ಹಡಗುಗಳನ್ನು ಸುರಕ್ಷಿತವಾಗಿ ಸಂಚರಿಸುವಂತೆ ಮಾಡುವ ಭಾರತದ ಪ್ರಯತ್ನದಲ್ಲಿ ಇದೊಂದು ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ. ಇಂದು ಹಾರ್ಮುಜ್ ಜಲಸಂಧಿಯನ್ನು ದಾಟಿದ ನಂದಾದೇವಿ ಹಡಗಿಗೆ ಭಾರತೀಯ ನೌಕಾಪಡೆ ರಕ್ಷಣೆ ಒದಗಿಸಿದೆ. ಮುಂದಿನ ಎರಡು ದಿನಗಳೊಳಗೆ ಈ ಹಡಗು ಭಾರತೀಯ ಬಂದರನ್ನು ತಲುಪು ನಿರೀಕ್ಷೆಯಿದ್ದು, ಮುಂಬೈ ಅಥವಾ ಕಾಂಡ್ಲಾದಲ್ಲಿ ಅದರ ಲಂಗರುಹಾಕುವ ನಿರೀಕ್ಷೆಯಿದೆ.ನಂದಾದೇವಿ 46 ಸಾವಿರ ಮೆಟ್ರಿಕ್ಟನ್ ಎಲ್ಪಿಜಿಯನ್ನು ಭಾರತಕ್ಕೆ ಒಯ್ಯುತ್ತದೆ. ಇದಕ್ಕೂ ಮುನ್ನ, ಶುಕ್ರವಾರದಂದು 40 ಸಾವಿರ ಮೆಟ್ರಿಕ್ ಟನ್ಗಳಿಗೂ ಅಧಿಕ ಎಲ್ಪಿಜಿಯನ್ನು ಹೊತ್ತೊಯ್ಯುತ್ತಿರುವ ಶಿವಾಲಿಕ್ಹಡಗು ಕೂಡಾ ಭಾರತೀಯ ನೌಕಾಪಡೆಯ ಬೆಂಗಾವಲಿನೊಂದಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಿತ್ತು. ಹಾರ್ಮುಝ್ ಜಲಸಂಧಿಯನ್ನು ದಾಟುವ ಇತರ ಭಾರತೀಯ ಹಡಗುಗಳಿಗೂ ಇದೇ ರೀತಿಯ ಕಾರ್ಯನಿರ್ವಹಣಾ ವಿಧಾನವನ್ನು ಅನುಸರಿಸುವ ಮೂಲಕ ಅವು ಯಾವುದೇ ಅಡಚಣೆಯಿಲ್ಲದೆ ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗುವುದೆಂಬ ಆಶಾವಾದವನ್ನು ಭಾರತೀಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಎಲ್ಪಿಜಿಯ ಆಮದಿಗೆ ಭಾರತವು ಗಲ್ಫ್ ಪ್ರಾಂತವನ್ನು ವ್ಯಾಪಕವಾಗಿ ಅವಲಂಭಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಅತ್ಯಂತ ಮಹತ್ವದ್ದಾಗಿದೆ. ಭಾರತದ ಇಂಧನ ಸಾಗಣಿಕೆಗಳನ್ನು, ಅತ್ಯಂತ ಮಹತ್ವದ ಹಾರ್ಮುಝ್ ಜಲಸಂಧಿಯಲ್ಲಿ ಸುರಕ್ಷಿತವಾಗಿ ಸಂಚರಿಸುವಂತೆ ಮಾಡಲು ಕಾರ್ಯಸಾಧ್ಯವಾದ ವಿಧಾನವನ್ನು ಭಾರತವು ರೂಪಿಸಿರುವುದಕ್ಕೆ ಈ ಹಡಗುಗಳ ಸುರಕ್ಷಿತ ಸಂಚಾರವು ಖಾತರಿಪಡಿಸಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪುರ | ಓವರ್ ಸ್ಪೀಡ್ ಗೆ ದಂಡ ವಿಧಿಸಿ, ಕಾನೂನು ಅರಿವು ಮೂಡಿಸಿದ ಸಂಚಾರ ಠಾಣೆ ಪೊಲೀಸರು
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿಪಡಿಸಿದ ವೇಗಕ್ಕಿಂತ ಜಾಸ್ಥಿಯಾದ ವೇಗದಲ್ಲಿ ಸಂಚರಿಸುತ್ತಿದ್ದ ಹಲವು ವಾಹನಗಳಿಗೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಶನಿವಾರ ಸಂಜೆ ಮೋಟಾರು ನಿಯಮ ಕಾಯ್ದೆ ಯಡಿ ದಂಡ ವಿಧಿಸಿ, ಕಾನೂನು ಪಾಲನೆ ಅರಿವು ಮೂಡಿಸಿದರು. ನಗರದ ಹೊರವಲಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ ಕಾರ್ಯಾ ಚರಣೆಗಿಳಿದ ಪೊಲೀಸರು ಈ ಪ್ರದೇಶದಲ್ಲಿ ನಿಗದಿಪಡಿಸಿದ (80ಕಿ.ಮೀ.) ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸಿದ ವಾಹನಗಳನ್ನು ಸ್ಫೀಡ್ ರಾಡರ್ ಗನ್ (ವೇಗ ಪರಿಶೀಲನೆ ಯಂತ್ರ) ಮೂಲಕ ಪತ್ತೆ ಮಾಡಿ ವಾಹನ ತಡೆದು ಸಂಬಂಧ ಪಟ್ಟವರಿಗೆ ವೇಗ ಮಿತಿಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಅತೀ ವೇಗದಲ್ಲಿ ಸಂಚರಿಸಿದ ಒಂದಷ್ಟು ಮಂದಿಗೆ ದಂಡ ವಿಧಿಸಿದರು. ಹೆಚ್ಚುತ್ತಿರುವ ರಸ್ತೆ ಅಪಘಾತಕ್ಕೆ ವಾಹನಗಳ ಅತೀಯಾದ ವೇಗವೂ ಒಂದು ಕಾರಣವಾಗಿದ್ದು ಇಲಾಖಾ ಮೇಲಾಧಿ ಕಾರಿಗಳ ಮಾರ್ಗದರ್ಶನದಲ್ಲಿ ಈಗಾಗಲೇ ಮೂರ್ನಾಲ್ಕು ಬಾರಿ ಅತೀ ವೇಗ ಪರಿಶೀಲನೆ ಕಾರ್ಯಾಚರಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಡಲಾಗಿದೆ. ವರದಿಯಾಗುತ್ತಿರುವ ಅಪಘಾತ ಪ್ರಕರಣಗಳಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಿದ್ದು ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ. ಮುಂಬರುವ ದಿನದಲ್ಲಿ ರಾಜ್ಯ ಹೆದ್ದಾರಿ ಸಹಿತ ಅಗತ್ಯ ಕಡೆಗಳಲ್ಲಿ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಕುಂದಾಪುರ ಸಂಚಾರ ಠಾಣೆ ಎಸ್ಐ ಅನೂಪ್ ನಾಯಕ್ ಮಾಹಿತಿ ನೀಡಿದರು. ಈ ವೇಳೆ ಟ್ರಾಫಿಕ್ ಠಾಣೆ ಪಿಎಸ್ಐ ಸುಧಾ ಪ್ರಭು, ಎಎಸ್ಐಗಳಾದ ಸುರೇಶ್, ನಾಗರಾಜ್ ಕುಲಾಲ್, ನಾಗಪ್ಪ, ಹೆಡ್ ಕಾನ್ಸ್ಟೇಬಲ್ ಕೇಶವ, ವೀರಪ್ಪ, ಶ್ರೀನಿವಾಸ, ಕಾನ್ಸ್ಟೇಬಲ್ ಪ್ರಸಾದ್, ವೆಂಕಟೇಶ್ ಕಾರ್ಯಾಚರಣೆಯಲ್ಲಿದ್ದರು.
ಟಿಪ್ಪರ್ ಲಾರಿ ಢಿಕ್ಕಿ: ಪಾದಚಾರಿ ಮೃತ್ಯು
ಪಡುಬಿದ್ರಿ, ಮಾ.14: ಮಿನಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಾ.13ರಂದು ಸಂಜೆ ವೇಳೆ ನಂದಿಕೂರು ಗ್ರಾಮದ ಪಾಂಡ್ಯರ್ ಕಾಂಪ್ಲೆಕ್ಸ್ ಬಳಿ ನಡೆದಿದೆ. ಮೃತರನ್ನು ಲಿಂಗಪ್ಪ ಕಾಡ್ಯ ಶೆಟ್ಟಿ(77) ಎಂದು ಗುರುತಿಸಲಾಗಿದೆ. ಪಡುಬಿದ್ರಿ ಕಡೆಯಿಂದ ಬರುತ್ತಿದ್ದ ಮಿನಿ ಟಿಪ್ಪರ್ ಲಾರಿಯು ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ಲಿಂಗಪ್ಪ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಹೆಬ್ರಿ ಪರಿಸರದಲ್ಲಿ ಸಾದಾರಣ ಮಳೆ
ಉಡುಪಿ, ಮಾ.14: ಜಿಲ್ಲೆಯ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಇಂದು ಸಂಜೆಯ ವೇಳೆ ಸಾದಾರಣ ಮಳೆಯಾಗಿದ್ದು, ಇದರಿಂದ ಪರಿಸರದಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಕಾರ್ಕಳ ತಾಲೂಕಿನ ಕಾರ್ಕಳ ನಗರ, ಮಾಳ, ಅಜೆಕಾರು, ಶಿರ್ಲಾಲು, ಬೆಳ್ಮಣ್, ಬಜೆಗೋಳಿ, ಹೆಬ್ರಿ ಸಮೀಪದ ಮುನಿಯಾಲು, ಅಂಡಾರು ಮುದ್ರಾಡಿ, ಕಬ್ಬಿನಾಲೆ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಸಾದಾರಣ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲ ತಾಪದಿಂದ ತತ್ತರಿಸಿದ ಜನರಿಗೆ ಈ ಮಳೆ ತಂಪಿನ ವಾತಾವರಣ ಕಲ್ಪಿಸಿದೆ. ಮಳೆಯಿಂದಾಗಿ ಕೆಲವು ಕಡೆ ವಾಹನ ಸವಾರರರು ತೀರಾ ತೊಂದರೆ ಅನುಭವಿಸುವಂತಾಯಿತು.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ರಾಹುಲ್ ದ್ರಾವಿಡ್, ಮಿಥಾಲಿಗೆ ಜೀವಮಾನ ಸಾಧನೆ ಪ್ರಶಸ್ತಿ
ಹೊಸದಿಲ್ಲಿ, ಮಾ. 14: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನಮನ್ ಪ್ರಶಸ್ತಿ ಪ್ರದಾನ ಸಮಾರಂಭ 2026 ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಭಾರತೀಯ ತಂಡದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಪ್ರತಿಷ್ಠಿತ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯ ಮೂಲಕ ಗೌರವಿಸಲಾಗುವುದು. ಭಾರತೀಯ ಕ್ರಿಕೆಟ್ಗೆ ನೀಡಿದ ಮಹತ್ವದ ದೇಣಿಗೆಗಳು, ಸೇವೆ ಮತ್ತು ಪ್ರಾಮಾಣಿಕತೆಯನ್ನು ಒಳಗೊಂಡ ಕ್ರಿಕೆಟ್ ವೃತ್ತಿ ಬದುಕಿಗಾಗಿ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅಂಶವೆಂದರೆ, ಐಸಿಸಿ ಟ್ರೋಫಿಗಳನ್ನು ಗೆದ್ದ ಎಲ್ಲಾ ಐದು ಭಾರತೀಯ ತಂಡಗಳನ್ನು ಇಲ್ಲಿ ಗೌರವಿಸಲಾಗುವುದು. 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 2026ರಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತೀಯ ಪುರುಷರ ತಂಡ, 2025ರಲ್ಲಿ ಐಸಿಸಿ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಗೆದ್ದ ಮಹಿಳಾ ತಂಡ, 2026ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಪುರುಷರ ಅಂಡರ್-19 ತಂಡ ಹಾಗೂ 2025ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಮಹಿಳಾ ಅಂಡರ್-19 ತಂಡಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ‘‘ಈ ವರ್ಷದ ಕಾರ್ಯಕ್ರಮದಲ್ಲಿ, ರೋಜರ್ ಬಿನ್ನಿ ಮತ್ತು ರಾಹುಲ್ ದ್ರಾವಿಡ್ರನ್ನು ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯಿಂದ ಗೌರವಿಸಲಾಗುವುದು. ಇದು ಭಾರತೀಯ ಕ್ರಿಕೆಟ್ಗೆ ಸಲ್ಲಿಸಿರುವ ಮಹೋನ್ನತ ಸೇವೆಗಾಗಿ ನೀಡುವ ಬಿಸಿಸಿಐಯ ಅತ್ಯುನ್ನತ ಗೌರವವಾಗಿದೆ’’ ಎಂದು ಬಿಸಿಸಿಐ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ಭಾರತದಲ್ಲಿ ಮಹಿಳಾ ಕ್ರಿಕೆಟ್ನ ಬೆಳವಣಿಗೆಗೆ ನೀಡಿರುವ ಅಸಾಧಾರಣ ದೇಣಿಗೆಯನ್ನು ಗುರುತಿಸಿ ಮಿಥಾಲಿ ರಾಜ್ರನ್ನು ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಯಿಂದ ಗೌರವಿಸಲಾಗುವುದು’’ ಎಂದು ಹೇಳಿಕೆ ತಿಳಿಸಿದೆ. ರೋಜರ್ ಬಿನ್ನಿ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಅವರು ದಶಕಗಳ ಕಾಲ ಆಟಗಾರ, ಮಾರ್ಗದರ್ಶಿ ಮತ್ತು ಆಡಳಿತಗಾರನಾಗಿ ಭಾರತೀಯ ಕ್ರಿಕೆಟ್ಗೆ ದೇಣಿಗೆ ನೀಡಿದ್ದಾರೆ. ಕ್ರಿಕೆಟ್ ಕಂಡ ಅತ್ಯಂತ ಪ್ರತಿಭಾನ್ವಿತ ಬ್ಯಾಟರ್ಗಳ ಪೈಕಿ ಒಬ್ಬರಾಗಿ ಹಾಗೂ ಭಾರತ ಹೊಸ ಹಾದಿ ಹುಡುಕುವಂತೆ ಮಾಡಿದ ಕೋಚ್ ಆಗಿ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ಗೆ ಅಸಾಧಾರಣ ದೇಣಿಗೆ ನೀಡಿದ್ದಾರೆ. ಅವರು 24,000ಕ್ಕೂ ಅಧಿಕ ಅಂತರ್ರಾಷ್ಟ್ರೀಯ ರನ್ಗಳನ್ನು ಗಳಿಸಿದ್ದಾರೆ. ಮಿಥಾಲಿ ರಾಜ್ ಇಪ್ಪತ್ತು ವರ್ಷಗಳಿಗೂ ಹೆಚ್ಚಿನ ವೃತ್ತಿ ಜೀವನದಲ್ಲಿ ತನ್ನ ವಿಶ್ವಸನೀಯತೆ, ಲಾಲಿತ್ಯ ಮತ್ತು ನಾಯಕತ್ವದ ಮೂಲಕ ಪ್ರಬುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡವೊಂದರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಲಬುರಗಿ | ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 2,42,425 ಪ್ರಕರಣಗಳ ಇತ್ಯರ್ಥ
ಕಲಬುರಗಿ : ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಒಟ್ಟು 2,42,425 ಪ್ರಕರಣಗಳು ಇತ್ಯರ್ಥವಾಗಿದ್ದು, ಅವುಗಳಲ್ಲಿ 9181 ಪೆಂಡಿಂಗ್ ಪ್ರಕರಣಗಳು ಹಾಗೂ 2,33,244 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ ಎಂದು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ರೀತಿ ಈ ಅದಾಲತ್ನಲ್ಲಿ ಜಿಲ್ಲೆಯಲ್ಲಿ 5 ಪ್ರಕರಣಗಳಲ್ಲಿ ಬೇರ್ಪಡೆಯಾಗಿದ್ದ ಪತಿ ಮತ್ತು ಪತ್ನಿಯರನ್ನು ಒಂದುಗೂಡಿಸಲಾಯಿತು. 10 ವರ್ಷಗಳಿಗಿಂತ ಹೆಚ್ಚಿನ ಅವಧಿಯ 1 ಪ್ರಕರಣ, 7 ವರ್ಷಗಳಿಗಿಂತ ಹೆಚ್ಚಿನ ಅವಧಿಯ 7 ಪ್ರಕರಣಗಳನ್ನು ರಾಜಿ ಮಾಡಿಸಿ ಕಲಬುರಗಿ ಜಿಲ್ಲೆಯಲ್ಲಿ ಮೆಗಾ ಲೋಕ್ ಅದಾಲತ್ ಅದ್ಭುತ ಯಶಸ್ಸನ್ನು ಕಂಡಿರುತ್ತದೆ. ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಲ್. ಲಕ್ಷ್ಮೀನಾರಾಯಣ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯವಾದಿಗಳು, ಸಾರ್ವಜನಿಕರು ಹಾಗೂ ಕಕ್ಷಿದಾರರ ಸಹಕಾರದಿಂದ ನ್ಯಾಶನಲ್ ಲೋಕ್ಅದಾಲತ್ ಮೂಲಕ ಸಿವಿಲ್ ದಾವೆಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಪ್ರಕರಣಗಳು, ಭೂಸ್ವಾಧೀನ ಪರಿಹಾರ ವಸೂಲಾತಿ ಪ್ರಕರಣಗಳು, ಬ್ಯಾಂಕ್ಗಳಿಗೆ ಸಂಬoಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಲೋಕ ಅದಾಲತ್ನಲ್ಲಿ ಕಕ್ಷಿದಾರರು, ನ್ಯಾಯಾಧೀಶರು, ಸಂಧಾನಕಾರರು ಹಾಗೂ ಸಂಬoಧಪಟ್ಟ ನ್ಯಾಯವಾದಿಗಳು ರಾಜೀ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ನ್ನು ಹಮ್ಮಿಕೊಳ್ಳಲಾಯಿತು.
ಜೈಲುಗಳಲ್ಲಿ ಮಾದಕ ವಸ್ತುಗಳ ಜಾಲ ತಡೆಗೆ ಕ್ರಮ: ರಾಜ್ಯದ ಎಲ್ಲ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಪರೀಕ್ಷೆ
ಬೆಂಗಳೂರು : ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಸಿಬ್ಬಂದಿಯಿಂದಲೂ ಮಾದಕ ವಸ್ತುಗಳು ಜೈಲಿಗೆ ಸಾಗಣೆಯಾದ ಘಟನೆಗಳ ಹಿನ್ನೆಲೆ, ನಿಮ್ಹಾನ್ಸ್ ಸಹಯೋಗದೊಂದಿಗೆ ಕೈದಿಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಸೂಚನೆಯಂತೆ ರಾಜ್ಯದ ಎಲ್ಲ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಬಂಧಿತರಲ್ಲಿ ಡ್ರಗ್ ಸೇವನೆ ತಡೆಯುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಾರಂಭಿಕ ಹಂತದಲ್ಲಿ ರಾಜ್ಯದ ಎಲ್ಲ ಜೈಲುಗಳಲ್ಲಿ ಶೇ.10ರಷ್ಟು ಕೈದಿಗಳನ್ನು ಆಯ್ಕೆ ಮಾಡಿ ಗಾಂಜಾ, ಹೆರೊಯಿನ್, ಕೊಕೇನ್ ಮುಂತಾದ ಮಾದಕ ವಸ್ತುಗಳಿಗಾಗಿ ವಿಶೇಷ ಕಿಟ್ಗಳ ಸಹಾಯದಿಂದ ಪರೀಕ್ಷೆ ನಡೆಸಲಾಗುತ್ತಿದೆ. ಮಾದಕ ವಸ್ತು ಬಳಕೆ ಕಂಡುಬಂದರೆ, ವ್ಯಸನಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಅಂತಹವರಿಗೆ ಸಮಾಲೋಚನೆ ನೀಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಲಿಂಗಸುಗೂರು | ಲೋಕ ಅದಾಲತ್ನಲ್ಲಿ 712 ಪ್ರಕರಣಗಳು ಇತ್ಯರ್ಥ
ಲಿಂಗಸುಗೂರು : ಶನಿವಾರ ಲಿಂಗಸುಗೂರಿನಲ್ಲಿ ನಡೆದ ರಾಷ್ಟ್ರೀಯ ಲೋಕ ಅಡಾಲತ್ ನಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳಲ್ಲಿ ನಾವಿಗ್ರಹಿತ ಪ್ರಕರಣಗಳ ವಿಲೇವಾರಿ ಶೇಕಡಾ ಪ್ರಮಾಣದಲ್ಲಿ ಯಶಸ್ವಿಯಾಯಿತು. ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು 2,399 ಪ್ರಕರಣಗಳಲ್ಲಿ 712 ಪ್ರಕರಣಗಳು ವಿಲೇವಾರಿ ಕಂಡು, ₹2,73,44,300 ಮೊತ್ತದ ಕ್ಲೈಮ್ ಇತ್ಯರ್ಥವಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 2,306 ಪ್ರಕರಣಗಳಲ್ಲಿ 874 ಪ್ರಕರಣಗಳ ವಿಲೇವಾರಿ ಮೂಲಕ ₹95,82,551 ಮೊತ್ತದ ಕ್ಲೈಮ್ ಇತ್ಯರ್ಥವಾಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 1,077 ಪ್ರಕರಣಗಳಲ್ಲಿ 682 ಪ್ರಕರಣಗಳ ವಿಲೇವಾರಿ ಮೂಲಕ ₹3,22,183 ಮೊತ್ತದ ಕ್ಲೈಮ್ ಇತ್ಯರ್ಥವಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 6,000 ಪ್ರಕರಣಗಳಲ್ಲಿ 4,950 ಪ್ರಕರಣಗಳು ವಿಲೇವಾರಿ ಕಂಡು ₹29,65,159 ಮೊತ್ತದ ಕ್ಲೈಮ್ ಇತ್ಯರ್ಥವಾಗಿದೆ. ಈ ವಿಲೇವಾರಿಯಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಉಂಡಿ ಮಂಜುಳಾ ಶಿವಪ್ಪ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ. ಪ್ರಮುಖ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ ವಕೀಲರಾದ ಭೂಪನಗೌಡ ಪಾಟೀಲ್, ಬಾಲರಾಜ, ಮಹಾಲಿಂಗಪ್ಪ, ಹಾಜಿಬಾಬ್, ನಾಗರಾಜ ಗಸ್ತಿ, ಕಿರಣ ಮಸ್ಕಿ, ಮಂಜುಳಾ, ವೀಣಾದೇಸಾಯಿ, ಅಮರೇಶ ಪಾಟೀಲ್, ಶಿವಕುಮಾರ, ಈಶ್ವರ ಜಾದವ, ನಾಗರತ್ನ, ಶರಣಬಸವ, ರಾಜಶೇಖರ ಹಾಗೂ ಇತರರು ಭಾಗವಹಿಸಿದ್ದರು.
ಅಡುಗೆ ಅನಿಲ ಕೊರತೆ ಎಫೆಕ್ಟ್: ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರು, ಏಜನ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲು
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಒಂದು ಕಡೆಯಾದರೆ ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ ಇಲಾಖೆ ಎಚ್ಚೆತ್ತುಕೊಂಡಿದೆ. ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಏಜನ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ದಂಧೆಕೋರರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿ ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ವಿವರ ಇಲ್ಲಿದೆ.
ಬಂಟ್ವಾಳ : ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟ
ಬಂಟ್ವಾಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟವು ಶನಿವಾರ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ, ರಮಾನಾಥ ರೈ ಮಾತನಾಡಿ, ಸರ್ವ ಧರ್ಮೀಯರು ಪರಸ್ಪರ ಅನ್ಯೋನ್ಯತೆಯಿಂದ ಬಾಳಿ ಬದುಕಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ, ಸೌಹಾರ್ದ ಇಫ್ತಾರ್, ಕ್ರಿಸ್ಮಸ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಹೋದರ ಭಾವನೆಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಐಕ್ಯತೆ, ಭಾವೈಕ್ಯತೆ, ಮಾನವೀಯತೆಯೊಂದಿಗೆ ಜಗತ್ತನ್ನು ಪ್ರೀತಿಸುವ ಜತೆಗೆ ಭಗವಂತನು ಹತ್ತಿರಗೊಳಿಸುವ ಕಾರ್ಯವೇ ಹಬ್ಬಗಳ ಉದ್ದೇಶವಾಗಿದ್ದು, ಎಲ್ಲರಿಗೂ ಸಮಾನಾಗಿ ಅವಕಾಶ ನೀಡಿರುವ ಪ್ರಕೃತಿಯಲ್ಲಿ ಭಗವಂತನು ಸರ್ವ ಜೀವ ಸಂಕುಲಗಳಿಗೂ ಮೌಲ್ಯಗಳನ್ನು ನೀಡಿದ್ದಾನೆ. ಸಮಾಜದಲ್ಲಿ ನೊಂದವರ ಉದ್ಧಾರದ ಕಾರ್ಯದಲ್ಲಿ ರಮಾನಾಥ ರೈಯವರು ಸದಾ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದರು. ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚಿನ ಪ್ರಧಾನ ಧರ್ಮಗುರು ರೆ.ಫಾ.ವಿಕ್ಟರ್ ಡಿಸೋಜಾ ಮಾತನಾಡಿ, ನಮ್ಮ ಜೀವನವೇ ಧರ್ಮಗ್ರಂಥಗಳಾಗಿದ್ದು, ಅದಕ್ಕೆ ಬದ್ಧರಾಗಿ ನಾವು ಬದುಕಿದಾಗ ಸಮಾಜದಲ್ಲಿ ಸೌಹಾರ್ದತೆ ಮೂಡಲು ಸಾಧ್ಯವಿದೆ. ಧರ್ಮದ ನಿಯಮಗಳು, ತಿರುಳನ್ನು ಅರಿತುಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಮಂಗಳೂರು ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ಅಪ ನಂಬಿಕೆಗಳನ್ನು ದೂರ ಮಾಡಿ, ಸಂಬಂಧವನ್ನು ಬಲಪಡಿಸುವುದೇ ಇಫ್ತಾರ್ ಸಂಗಮದ ಉದ್ದೇಶವಾಗಿದ್ದು, ಜಾತಿ, ಧರ್ಮಗಳನ್ನು ಮೀರಿ ನಾವು ಒಟ್ಟು ಸೇರಿದಾಗ ಶಾಂತಿ-ಸಾಮರಸ್ಯದ ಸಮಾಜ ನಿರ್ಮಾಣ ಸಾಧ್ಯ ಎಂದರು. ನೆಹರೂನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರಾದ ಡಾ.ಯು.ಟಿ.ಇಫ್ತಿಕಾರ್, ಪದ್ಮರಾಜ್ ಆರ್.ಪೂಜಾರಿ, ಹರೀಶ್ ಇಂಜಾಡಿ, ಪಿಯೂಸ್ ಎಲ್. ರಾಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಎಂ.ಅಬ್ಬಾಸ್ ಅಲಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಇಬ್ರಾಹಿಂ ನವಾಝ್ ಬಡಕಬೈಲ್, ಸುದೀಪ್ ಕುಮಾರ್ ಶೆಟ್ಟಿ ಬೇಬಿ ಕುಂದರ್, ಪದ್ಮಶೇಖರ್ ಜೈನ್, ಅಶ್ವನಿಕುಮಾರ್ ರೈ, ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಡಾ.ರಾಜಾರಾಮ್ ಕೆ.ಬಿ, ಕಾವು ಹೇಮನಾಥ ಶೆಟ್ಟಿ, ಹನೀಫ್ ಪೆರ್ಲಾಪು, ಮುಸ್ತಫಾ ಸುಳ್ಯ, ಮುಹಮ್ಮದ್ ಅಲಿ ಪುತ್ತೂರು, ವೆಂಕಪ್ಪ ಗೌಡ ಸುಳ್ಯ, ಪ್ರಶಾಂತ್ ಕಾಜವ, ಎಂ.ಶಶಿಧರ್ ಹೆಗ್ಡೆ, ವಕೀಲರಾದ ಎಂ.ಚಂದ್ರಶೇಖರ್ ಪೂಜಾರಿ, ಸುರೇಶ್ ಪೂಜಾರಿ, ಸುರೇಶ್ ನಾವೂರು, ಕೆ.ಪದ್ಮನಾಭ ರೈ, ಹೈಡಾ ಸುರೇಶ್, ಮಮತಾ ಗಟ್ಟಿ, ಎ.ಬಿ.ಅಬ್ದುಲ್ಲಾ, ನಿರಂಜನ್ ರೈ, ಸತೀಶ್ ಪೂಜಾರಿ ಕೊಪ್ಪರಿಗೆ, ಸಚಿನ್ ಬೆಳ್ಳಾರೆ, ಮುಹಮ್ಮದ್ ನಂದಾವರ, ಸಿರಾಜ್ ಮದಕ, ಅಲ್ತಾಫ್ ಕುಲಾಯಿ, ಯೂಸುಫ್ ಕರಂದಾಡಿ, ರಿಯಾಝ್ ನೆಹರು ನಗರ, ಮೊದಲಾದವರು ಭಾಗವಹಿಸಿದ್ದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ತಮಿಳು ಕವಿ ವೈರಮುತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿಗೌರವ
2002ರ ಬಳಿಕ ತಮಿಳು ಭಾಷೆಗೆ ಮನ್ನಣೆ
ಧರ್ಮ ಸೌಹಾರ್ದತೆಯ ಸಂದೇಶ ನಮ್ಮದಾಗಿರಲಿ : ವಾಲಿ
ಭಟ್ಕಳದಲ್ಲಿ ಲೋಕ ಅದಾಲತ್| 1,526 ಪ್ರಕರಣಗಳ ವಿಚಾರಣೆ; 1,402 ಪ್ರಕರಣಗಳಿಗೆ ತೀರ್ಮಾನ
ಭಟ್ಕಳ: ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 1,526 ಪ್ರಕರಣ ಗಳನ್ನು ಪರಿಗಣಿಸಲಾಗಿದ್ದು, ಅವುಗಳಲ್ಲಿ 1,402 ಪ್ರಕರಣಗಳು ಸಮಜಾಯಿಷಿ ಮೂಲಕ ಇತ್ಯರ್ಥಗೊಂಡಿವೆ. ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ದೀಪಾ ಅರಳಗುಂಡಿ ಹಾಗೂ ನ್ಯಾಯಿಕೇತರ ಸಂಧಾನಕಾರರಾಗಿ ಸಹನಾ ಮೊಗೇರ ಕಾರ್ಯನಿರ್ವಹಿಸಿದರು. ಇಲ್ಲಿ ಸಂಧಾನಕ್ಕಾಗಿ ಆಯ್ಕೆ ಮಾಡಲಾದ 598 ಪ್ರಕರಣಗಳಲ್ಲಿ 547 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಪರಿಹಾರ ಮತ್ತು ದಂಡ ರೂಪದಲ್ಲಿ 2,17,98,566 ರೂ. ಮೊತ್ತವನ್ನು ಕಕ್ಷಿದಾರರಿಗೆ ನೀಡಲಾಗಿದ್ದು, ಕೆಲವು ದಂಡ ಮೊತ್ತವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಯಿತು. ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ಧನವತಿ ಹಾಗೂ ನ್ಯಾಯಿಕೇತರ ಸಂಧಾನಕಾರರಾಗಿ ಶಬೀನಾ ಕಾರ್ಯನಿರ್ವಹಿಸಿದರು. ಇಲ್ಲಿ ಸಂಧಾನಕ್ಕೆ ಆಯ್ಕೆಗೊಂಡ 625 ಪ್ರಕರಣಗಳಲ್ಲಿ 575 ಪ್ರಕರಣಗಳು ಇತ್ಯರ್ಥಗೊಂಡಿವೆ. ಪರಿಹಾರ ಮತ್ತು ದಂಡ ರೂಪದಲ್ಲಿ 2,26,60,875 ರೂ. ಮೊತ್ತವನ್ನು ಕಕ್ಷಿದಾರರಿಗೆ ನೀಡಲಾಗಿದ್ದು, ದಂಡ ಮೊತ್ತವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಯಿತು. ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ಕಾಂತ ಕುರಣಿ ಹಾಗೂ ನ್ಯಾಯಿಕೇತರ ಸಂಧಾನಕಾರರಾಗಿ ಶ್ರಾವ್ಯಾ ನಾಯ್ಕ ಕರ್ತವ್ಯ ನಿರ್ವಹಿಸಿದರು. ಇಲ್ಲಿ ಸಂಧಾನಕ್ಕಾಗಿ ಆಯ್ಕೆಗೊಂಡ 303 ಪ್ರಕರಣಗಳಲ್ಲಿ 280 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಪರಿಹಾರ ಮತ್ತು ದಂಡ ರೂಪದಲ್ಲಿ 1,99,86,153 ರೂ. ಮೊತ್ತವನ್ನು ಕಕ್ಷಿದಾರರಿಗೆ ನೀಡಲಾಗಿದ್ದು, ದಂಡ ಮೊತ್ತವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಯಿತು. ಇದಲ್ಲದೆ, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ವೇಳೆ ದಂಪತಿಗಳ ನಡುವಿನ ಕುಟುಂಬ ಕಲಹವೊಂದೂ ರಾಜೀ ಸಂಧಾನದ ಮೂಲಕ ಬಗೆಹರಿಯಿತು. 2020ರಲ್ಲಿ ವಿವಾಹವಾಗಿದ್ದ ದಂಪತಿಗಳಿಗೆ ಒಂದು ಹೆಣ್ಣು ಮಗು ಇದ್ದು, ಕುಟುಂಬದ ಅಸಮಾಧಾನದ ಹಿನ್ನೆಲೆಯಲ್ಲಿ ಪತ್ನಿ 2024ರಲ್ಲಿ ತವರು ಮನೆ ಸೇರಿದ್ದರು. ಬಳಿಕ 2025ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಲೋಕ ಅದಾಲತ್ನಲ್ಲಿ ನಡೆದ ಸಂಧಾನದ ಬಳಿಕ ದಂಪತಿಗಳು ಪರಸ್ಪರ ಒಪ್ಪಿಗೆಯೊಂದಿಗೆ ಒಂದಾಗಿ, ಗುಲಾಬಿ ಹೂ ನೀಡಿಕೊಂಡು ಸಿಹಿ ಹಂಚಿಕೊಳ್ಳುವ ಮೂಲಕ ಸಂಧಾನಕ್ಕೆ ಒಪ್ಪಿದರು. ಲೋಕ ಅದಾಲತ್ ಹಿನ್ನೆಲೆಯಲ್ಲಿ ನ್ಯಾಯಾಲಯ ಆವರಣದಲ್ಲಿ ಸಾರ್ವಜನಿಕರ ಹೆಚ್ಚಿನ ಹಾಜರಾತಿ ಕಂಡುಬಂದಿದ್ದು, ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿದ್ದವು ಎಂದು ತಿಳಿದು ಬಂದಿದೆ. ಹಲವಾರು ಪ್ರಕರಣಗಳು ಸಮಜಾಯಿಷಿ ಮೂಲಕ ಬಗೆಹರಿದಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೌಲಭ್ಯ ಕೊರತೆ, ದಾಖಲೆಗಳ ಬಗ್ಗೆ ಗೊಂದಲ ಲೋಕ ಅದಾಲತ್ ಸಂದರ್ಭದಲ್ಲಿ ನ್ಯಾಯಾಲಯ ಆವರಣದಲ್ಲಿ ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕುಳಿತು ಕೊಳ್ಳಲು ಸಮರ್ಪಕ ವ್ಯವಸ್ಥೆಯ ಕೊರತೆ ಇದ್ದಿತು ಎಂದು ಕೆಲವರು ಮಾಧ್ಯಮ ಪ್ರತಿನಿಧಿಗಳ ಮುಂದೆ ಅಸಮಾ ಧಾನ ವ್ಯಕ್ತಪಡಿಸಿದರು. ಜೊತೆಗೆ ಮೈಕ್ರೋಫೋನ್ ಅಥವಾ ಡಿಸ್ಪ್ಲೇ ವ್ಯವಸ್ಥೆ ಇಲ್ಲದಿರುವುದರಿಂದ ಒಳಗೆ ಕರೆಯುವ ಹೆಸರುಗಳು ಹೊರಗೆ ಕಾಯುತ್ತಿದ್ದವರಿಗೆ ಸ್ಪಷ್ಟವಾಗಿ ಕೇಳಿಸಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇನ್ನೂ ಕೆಲ ಅರ್ಜಿದಾರರು ಅಗತ್ಯ ದಾಖಲೆಗಳ ಕೊರತೆಯ ಕಾರಣದಿಂದ ತಮ್ಮ ಅರ್ಜಿಗಳನ್ನು ಪರಿಗಣಿಸಲಾ ಗಲಿಲ್ಲ ಎಂದು ಆರೋಪಿಸಿದರು. ತಮ್ಮ ಬಳಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಾಸ್ಪೋರ್ಟ್ ಸೇರಿದಂತೆ ಕೆಲವು ದಾಖಲೆಗಳಿದ್ದರೂ ಜನನ ಪ್ರಮಾಣಪತ್ರಕ್ಕೆ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ. ಅರ್ಜಿದಾರರ ಪ್ರಕಾರ, ಕೆಲವು ದಿನಗಳ ಹಿಂದೆ ದಾಖಲೆಗಳ ಪ್ರತಿಗಳನ್ನು ಸಲ್ಲಿಸಿದ ಬಳಿಕ ಮೂಲ ದಾಖಲೆ ಗಳೊಂದಿಗೆ ಲೋಕ ಅದಾಲತ್ಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಲೋಕ ಅದಾಲತ್ ದಿನ ಪೋಷಕರಿಗೆ ಸಂಬಂಧಿಸಿದ ಹೆಚ್ಚುವರಿ ದಾಖಲೆಗಳನ್ನು ಕೇಳಲಾಗಿದೆ ಎಂದು ಅವರು ಮಾಧ್ಯಮದ ಗಮನಕ್ಕೆ ತಂದರು. ಅಗತ್ಯ ದಾಖಲೆಗಳ ಕುರಿತು ಮುಂಚಿತವಾಗಿ ಸ್ಪಷ್ಟ ಮಾಹಿತಿ ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಈ ಕುರಿತು ನ್ಯಾಯಾಲಯದ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ತಕ್ಷಣ ಲಭ್ಯವಾಗಿಲ್ಲ.
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು
Gold: ವಿಶ್ವದ ಅತಿದೊಡ್ಡ ಚಿನ್ನದ ವಹಿವಾಟು ಕೇಂದ್ರಗಳಲ್ಲಿ ಒಂದಾದ ದುಬೈ, ಭಾರತಕ್ಕೆ ಚಿನ್ನದ ಪ್ರಮುಖ ಪೂರೈಕೆ ಮಾರ್ಗವಾಗಿದೆ. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಭಾರತದ ಚಿನ್ನದ ಮಾರುಕಟ್ಟೆ ತೀವ್ರ ಆತಂಕದಲ್ಲಿದೆ. ಚಿನ್ನವು ಅತ್ಯಂತ ಮೌಲ್ಯಯುತ ಲೋಹವಾಗಿರುವುದರಿಂದ, ಭದ್ರತೆ ಮತ್ತು ವಿಮೆಯ ದೃಷ್ಟಿಯಿಂದ ಇದನ್ನು ಬಹುತೇಕವಾಗಿ ವಾಯುಮಾರ್ಗದ ಮೂಲಕವೇ ರವಾನಿಸಲಾಗುತ್ತದೆ. ಪಶ್ಚಿಮ ಏಷ್ಯಾದಲ್ಲಿ
ಬಜ್ಪೆ: ಇಂದಿರಾ ಕ್ಯಾಂಟೀನ್ಗೆ ಚಾಲನೆ
ಮಂಗಳೂರು, ಮಾ.14: ಬಜಪೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಾರ್ವಜನಿಕರ ದೀರ್ಘಕಾಲದ ನಿರೀಕ್ಷೆಯಂತೆ ಇಲ್ಲಿ ನೂತನವಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಂಡಿದೆ. ಬಡವರು ಮತ್ತು ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಅಚ್ಚುಕಟ್ಟಾದ ಪರಿಸರದಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. ಬಜಪೆಯ ಈ ಹೊಸ ಕ್ಯಾಂಟೀನ್ ಇಂದಿನಿಂದ ಸಾರ್ವಜನಿಕ ಸೇವೆಗೆ ಲಭ್ಯವಿದ್ದು, ಹಸಿವು ಮುಕ್ತ ಸಮಾಜದತ್ತ ನಮ್ಮ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಈ ಸಂದರ್ಭ ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು, ಮಾ.14: ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಸಮಿತಿಯ ವತಿಯಿಂದ ಶನಿವಾರ ನಗರದ ಕ್ಲಾಕ್ಟವರ್ ಬಳಿಯ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು. ರಸ್ತೆ ಬದಿಯಲ್ಲೇ ಕಟ್ಟಿಗೆ ಒಲೆಯ ಮೂಲಕ ಚಹಾ ತಯಾರಿಸಿದ ಪ್ರತಿಭಟನಾಕಾರರು ಸಾರ್ವಜನಿಕರ ಗಮನ ಸೆಳೆದರು. ಖಾಲಿ ಗ್ಯಾಸ್ ಸಿಲಿಂಡರ್ಗಳನ್ನು ಒಲೆಯ ಅಕ್ಕಪಕ್ಕ ಇರಿಸಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಚಹಾ-ಅಂಬಡೆಯನ್ನು ತಾವೂ ಸೇವಿಸಿ, ಸಾರ್ವಜನಿಕರಿಗೂ ಹಂಚಿ ಆಕ್ರೋಶ ವ್ಯಕ್ತಪಡಿಸಿದರು. ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ (ನಗರ) ಅಧ್ಯಕ್ಷೆ ಅಪ್ಪಿಸಿಲಿಂಡರ್ನ್ನು ತಲೆಮೇಲೆ ಹೊತ್ತುಕೊಂಡು ಪ್ರತಿಭಟಿಸಿದರು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ 2014ರಲ್ಲೇ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಪ್ರತಿ ಸಿಲಿಂಡರ್ ದರ 414 ರೂ. ಇತ್ತು. ಬಳಿಕ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಸತತವಾಗಿ ಗ್ಯಾಸ್ ಸಿಲಿಂಡರ್ ಏರಿಕೆ ಮಾಡಿ 900 ರೂ. ಏರಿಸಿದೆ. ಮಹಿಳೆಯರ ಪರ ಎನ್ನುವ ಮೋದಿ ಸರಕಾರ ಮಹಿಳಾ ದಿನಾಚರಣೆಯಂದೇ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಕಟ್ಟಿಗೆ ಮುಕ್ತ ದೇಶ ಆಗಬೇಕು ಎಂದಿದ್ದ ಬಿಜೆಪಿ ಸರಕಾರ ಮತ್ತೆ ದೇಶವನ್ನು ಹಳೆ ಯುಗಕ್ಕೆ ಕೊಂಡೊಯ್ಯುತ್ತಿದೆ ಎಂದು ವ್ಯಂಗ್ಯವಾಡಿದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ಶಶಿಕಲಾ ಪದ್ಮನಾಭ, ವೀಣಾ, ಸ್ವರೂಪ ಶೆಟ್ಟಿ, ಗೀತಾ ಅತ್ತಾವರ, ನಮಿತಾ ಡಿ. ರಾವ್, ಚಂದ್ರಕಲಾ ಜೋಗಿ, ಶಾಂತಳಾ ಗಟ್ಟಿ, ರೂಪ ಚೇತನ್, ಜಯಲಕ್ಷ್ಮಿ ಗುರುಪುರ ಮತ್ತಿತರರಿದ್ದರು.
ಕೊಚ್ಚಿಯಲ್ಲಿ ತಂಗಿರುವ ಇರಾನ್ ಯುದ್ಧನೌಕೆಯ ಸಿಬ್ಬಂದಿಯನ್ನು ಸ್ವದೇಶಕ್ಕೆ ಕಳುಹಿಸಿದ ಭಾರತ : ವರದಿ
ಹೊಸದಿಲ್ಲಿ,ಮಾ.14: ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಈ ತಿಂಗಳ ಆರಂಭದಲ್ಲಿ ಕೊಚ್ಚಿಯಲ್ಲಿ ಲಂಗರು ಹಾಕಿರುವ ಇರಾನ್ ಯುದ್ಧನೌಕೆಯ ಅನಗತ್ಯ ಸಿಬ್ಬಂದಿಯನ್ನು ಭಾರತವು ಸ್ವದೇಶಕ್ಕೆ ಮರಳಿ ಕಳುಹಿಸಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ಶನಿವಾರ ವರದಿ ಮಾಡಿದೆ. ಐರಿಸ್ ಲವನ್ನ 183 ಸಿಬ್ಬಂದಿಗಳ ಪೈಕಿ 50ಕ್ಕೂ ಹೆಚ್ಚು ಸಿಬ್ಬಂದಿಗಳು ಈಗ ನೌಕೆಯಲ್ಲಿ ಉಳಿದುಕೊಂಡಿದ್ದಾರೆ. ವರದಿಯ ಪ್ರಕಾರ ಅನಗತ್ಯ ಸಿಬ್ಬಂದಿಗಳು ಟರ್ಕಿಷ್ ಏರ್ಲೈನ್ ವಿಮಾನದಲ್ಲಿ ಭಾರತದಿಂದ ನಿರ್ಗಮಿಸಿದ್ದಾರೆ. ಕೊಲಂಬೋದಲ್ಲಿ ಇರಾನಿನ 80ಕ್ಕೂ ಅಧಿಕ ಇರಾನಿ ನಾವಿಕರ ಮೃತದೇಹಗಳನ್ನು ತುಂಬಿಕೊಂಡ ಬಳಿಕ ವಿಮಾನವು ಶುಕ್ರವಾರ ರಾತ್ರಿ ಕೊಚ್ಚಿಯಲ್ಲಿ ಇಳಿದಿತ್ತು. ಮೃತ ನಾವಿಕರು ಮಾ.4ರಂದು ಶ್ರೀಲಂಕಾ ಕರಾವಳಿಯಾಚೆ ಅಮೆರಿಕದ ಜಲಾಂತರ್ಗಾಮಿ ಮುಳುಗಿಸಿದ ಇನ್ನೊಂದು ಇರಾನ್ ಯುದ್ಧನೌಕೆಯ ಸಿಬ್ಬಂದಿಗಳಾಗಿದ್ದರು. ಐರಿಸ್ ಲವನ್ ತುರ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಮಾ.4ರಿಂದಲೂ ಕೊಚ್ಚಿಯಲ್ಲಿ ಲಂಗರು ಹಾಕಿದೆ. ಇರಾನ್ ಮನವಿಯ ಮೇರೆಗೆ ಯುದ್ಧನೌಕೆಯು ಕೊಚ್ಚಿಯಲ್ಲಿ ತಂಗಲು ಮಾ.1ರಂದು ತುರ್ತು ಅನುಮತಿಯನ್ನು ನೀಡಲಾಗಿತ್ತು. ಉಳಿದಿರುವ ಇರಾನಿ ನಾವಿಕರು ಆರ್ಮೇನಿಯಾದ ಮೂಲಕ,ಅದರ ರಾಜಧಾನಿ ಯೆರೆವಾನ್ನಿಂದ ರಸ್ತೆ ಮಾರ್ಗವಾಗಿ ಸ್ವದೇಶಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ಪಶ್ಚಿಮ ಏಶ್ಯಾ ಯುದ್ಧದ ಕುರಿತು ಭೀತಿ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ : ಪ್ರಧಾನಿ ಮೋದಿ
ಗುವಾಹಟಿ,ಮಾ.14: ಪಶ್ಚಿಮ ಏಶ್ಯಾದಲ್ಲಿಯ ಯುದ್ಧ ಪರಿಸ್ಥಿತಿ ಕುರಿತು ಶನಿವಾರ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯ,ಅದು ಭಾರತದಲ್ಲಿ ಭೀತಿಯನ್ನು ಮೂಡಿಸಲು ಶ್ರಮಿಸುತ್ತಿದೆ ಎಂದು ಆರೋಪಿಸಿದರು. ಚುನಾವಣೆ ಸನ್ನಿಹಿತವಾಗಿರುವ ಅಸ್ಸಾಮಿನ ಬರಾಕ್ ಕಣಿವೆಯ ಸಿಲ್ಚಾರ್ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ, ದೇಶದ ನಾಗರಿಕರ ಮೇಲೆ ಯುದ್ಧದ ಪರಿಣಾಮವನ್ನು ಕನಿಷ್ಠಗೊಳಿಸಲು ಕೇಂದ್ರ ಸರಕಾರವು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತಿದೆ ಎಂದರು. ಕಾಂಗ್ರೆಸ್ ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದೇಶದ ಹಿತದೃಷ್ಟಿಯಿಂದ ಈ ಪ್ರಮುಖ ಕರ್ತವ್ಯವನ್ನು ನಿರ್ವಹಿಸುವಲ್ಲಿ ಅದು ಮತ್ತೊಮ್ಮೆ ವಿಫಲಗೊಂಡಿದೆ. ದೇಶದಲ್ಲಿ ಭೀತಿಯನ್ನು ಸೃಷ್ಟಿಸಲು ಮತ್ತು ತಾನು ಮೋದಿಯನ್ನು ಬೆನ್ನಟ್ಟುವಂತಾಗಲು ದೇಶವು ಕಠಿಣ ಪರಿಸ್ಥಿತಿಯಲ್ಲಿ ಸಿಕ್ಕಿಕೊಳ್ಳುವಂತೆ ಮಾಡಲು ಕಾಂಗ್ರೆಸ್ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ಮೋದಿ ಹೇಳಿದರು. ಕಾಂಗ್ರೆಸ್ಗೆ ದೇಶದ ಬಗ್ಗೆ ಯಾವುದೇ ದೂರದೃಷ್ಟಿಯಿಲ್ಲ ಮತ್ತು ಅಸ್ಸಾಮಿನ ನಾಗರಿಕರು ಅದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದ ಪ್ರಧಾನಿ,ನೀವು ನಿಮ್ಮ ರಾಜ್ಯದಿಂದ ಕಾಂಗ್ರೆಸ್ ಪಕ್ಷವನ್ನು ಹೊರದಬ್ಬಿದ್ದೀರಿ. ಇಂದು ದೇಶದ ಪ್ರತಿಯೊಂದೂ ರಾಜ್ಯವು ಕಾಂಗ್ರೆಸ್ಗೆ ಪಾಠ ಕಲಿಸುತ್ತಿದೆ. ಕಾಂಗ್ರೆಸ್ ಒಂದರ ನಂತರ ಒಂದರಂತೆ ಚುನಾವಣೆಗಳಲ್ಲಿ ಸೋಲುತ್ತಿದೆ ಎಂದರು. 24,000 ಕೋ.ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಿಲ್ಲಾಂಗ್-ಸಿಲ್ಚಾರ್ ಹೈಸ್ಪೀಡ್ ಕಾರಿಡಾರ್ಗೆ ಶಿಲಾನ್ಯಾಸವನ್ನು ನೆರವೇರಿಸಿದ ಮೋದಿ,ಈ ಪ್ರವೇಶ ನಿಯಂತ್ರಿತ ಕಾರಿಡಾರ್ ಈಶಾನ್ಯ ಭಾರತದಲ್ಲಿ ಇಂತಹ ಮೊದಲ ಮಾರ್ಗವಾಗಿದ್ದು, ಸಿಲ್ಚಾರ್ನ್ನು ಮಿರೆರಮ್, ಮಣಿಪುರ, ತ್ರಿಪುರಾದೊಂದಿಗೆ ಮತ್ತು ಅಂತಿಮವಾಗಿ ಆಗ್ನೇಯ ಏಶ್ಯಾದ ವಿಶಾಲ ಮಾರುಕಟ್ಟೆಗಳಿಗೆ ಸಂಪರ್ಕಿಸುತ್ತದೆ ಎಂದು ತಿಳಿಸಿದರು. ಈ ಸಂಪರ್ಕವು ಸ್ಥಳೀಯ ಕೈಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ವ್ಯಾಪಕ ಉತ್ತೇಜನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬರಾಕ್ ಕಣಿವೆಯು ಅತ್ಯಂತ ಉಜ್ವಲ ಭವಿಷ್ಯದತ್ತ ಸಾಗಲಿದೆ ಎಂದರು. ಅಭಿವೃದ್ಧಿಯ ಓಟದಲ್ಲಿ ಹಿಂದುಳಿದವರಿಗೆ ಆದ್ಯತೆ ನೀಡುವ ಮಂತ್ರವನ್ನು ಬಿಜೆಪಿ ಅನುಸರಿಸಿದೆ ಎಂದ ಅವರು, ಒಂದು ಕಾಲದಲ್ಲಿ ಗಡಿ ಗ್ರಾಮಗಳನ್ನು ಕೊನೆಯ ಹಳ್ಳಿಗಳೆಂದು ಪರಿಗಣಿಸಲಾಗಿತ್ತು. ಆದರೆ ತನ್ನ ಸರಕಾರವು ಅವುಗಳನ್ನು ದೇಶದ ಮೊದಲ ಗ್ರಾಮಗಳನ್ನಾಗಿ ನೋಡಿದೆ ಎಂದು ಹೇಳಿದರು. ಶಾಂತಿ ಮತ್ತು ಪ್ರಗತಿಯ ಪ್ರಸಕ್ತ ಯುಗವನ್ನು ಅಪಾರ ತ್ಯಾಗಗಳ ಮೂಲಕ ಸಾಧಿಸಲಾಗಿದೆ ಮತ್ತು ಅದನ್ನು ಪ್ರತಿಗಾಮಿ ಶಕ್ತಿಗಳಿಂದ ರಕ್ಷಿಸಬೇಕು ಎಂದು ಹೇಳಿದ ಮೋದಿ,ಅಸ್ಸಾಮಿನ ಯುವಜನರು ಈಗ ಸೆಮಿಕಂಡಕ್ಟರ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳನ್ನು ಹೊಂದಿದ್ದಾರೆ. ಅಸ್ಸಾಂ ಭಾರತದ ಸೆಮಿಕಂಡಕ್ಟರ್ ವಲಯದ ಪ್ರಮುಖ ಭಾಗವಾಗುತ್ತಿದೆ. ಮುಂದಿನ ಪೀಳಿಗೆಯ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪರಿಸರ ವ್ಯವಸ್ಥೆ ಮತ್ತು ಪ್ರತಿಭೆಗಳು ಇಲ್ಲಿ ಸಿದ್ಧಗೊಳ್ಳುತ್ತಿವೆ ಎಂದರು.
ಕುಂದಾಪುರ ಪೇ ಪಾರ್ಕಿಂಗ್ ಟೆಂಡರ್ ಹಿಂದೆ ಬಿಜೆಪಿ ಹುನ್ನಾರ: ಕಾಂಗ್ರೆಸ್ ಆರೋಪ
ಕುಂದಾಪುರ, ಮಾ.14: ಕುಂದಾಪುರ ಪುರಸಭೆಯ ಅವೈಜ್ಞಾನಿಕ ಪೇ ಪಾರ್ಕಿಂಗ್ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಇತರ ಸಮಾನ ಮನಸ್ಕ ಪಕ್ಷಗಳು ಮತ್ತು ಸಂಘಟನೆಗಳ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಿರುವುದು ಕೇವಲ ತಾತ್ಕಾಲಿಕ ಕ್ರಮ ಮಾತ್ರವಾಗಿದೆ. ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿ ರುವ ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಆಗ್ರಹಿಸಿದ್ದಾರೆ. ಕುಂದಾಪುರ ಪುರಸಭೆಯ ಬಿಜೆಪಿ ಆಡಳಿತವು ತನ್ನ ಆಡಳಿತ ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ತಮ್ಮ ವ್ಯಾಪ್ತಿಗೆ ಬಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯಡಿ ಬರುವ ಪ್ಲೈಓರ್ವ ನ ಕೆಳಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮತಿ ಪಡೆದು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ನಗರದಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹಾಗೂ ಪುರಸಭೆಗೆ ಹೆಚ್ಚುವರಿ ಆದಾಯವೂ ಬರುತ್ತದೆ ಎಂಬ ಕಾರಣ ಕೊಟ್ಟು ಈ ನಿರ್ಣಯ ಕೈಗೊಂಡಿತ್ತು ಎಂದವರು ಹೇಳಿದರು. ಹಾಗೆಯೇ ಈ ಕ್ರಮವನ್ನು ’ಜನಪರ ನಿರ್ಧಾರವೆಂದು ಬಿಂಬಿಸಿ, ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂಬ ವಾತಾವರಣವನ್ನು ಜನಸಾಮಾನ್ಯರ ನಡುವೆ ಸೃಷ್ಟಿಸಲು ಪ್ರಯತ್ನಿಸಲಾಯಿತು. ಆ ನಂತರದಲ್ಲಿ ಪ್ಲೈಓವರ್ ಕೆಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಏಲಂ ಪ್ರಕಟಣೆ ಹೊರಡಿಸದೇ, ತಮ್ಮ ಅಧಿಕಾರದ ವ್ಯಾಪ್ತಿಗೆ ಸೇರದ ಮತ್ತೊಂದು ಇಲಾಖೆ ಪಿಡಬ್ಲ್ಯೂಡಿ ಇಲಾಖೆಯ ಅಧೀನದಲ್ಲಿರುವ ಕುಂದಾಪುರದ ಜನನಿಬಿಡ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ, ಸಂಬಂಧಿಸಿದ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಪಾರ್ಕಿಂಗ್ ಶುಲ್ಕ ವಸೂಲಿಗೆ ಮುಂದಾಗಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಮಟ್ಟದ ರಾಜಕೀಯ ಕುತಂತ್ರ ಅಡಗಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜನರಲ್ಲಿ ಅಸಮಾಧಾನ ವ್ಯಕ್ತವಾದ ಬಳಿಕ ಅದನ್ನು ಪುರಸಭೆಯ ಬಿಜೆಪಿ ನೇತೃತ್ವದ ಆಡಳಿತದ ಅವಧಿ ಮುಗಿದ ನಂತರ ಜಾರಿಯಾದ ಸರಕಾರದ ಕ್ರಮ ಎಂಬಂತೆ ಬಿಂಬಿಸಿ, ಇದು ರಾಜ್ಯದ ಕಾಂಗ್ರೆಸ್ ಸರಕಾರದ ನಿರ್ಧಾರ ಎಂದು ತಪ್ಪು ಕಲ್ಪನೆ ಮೂಡಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕೆಟ್ಟ ಅಭಿಪ್ರಾಯ ಸೃಷ್ಟಿಸಿ ಮುಂದಿನ ಪುರಸಭೆ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ಇದರಲ್ಲಿ ಅಡಗಿರಬಹುದು ಎಂದು ಅವರು ಆರೋಪಿದ್ದಾರೆ. ಸಾರ್ವಜನಿಕರ ಮೇಲೆ ಅನಗತ್ಯ ಹೊರೆ ಹಾಕುವ ಯಾವುದೇ ಕ್ರಮವನ್ನು ಕುಂದಾಪುರದ ನಾಗರಿಕರು ಒಪ್ಪುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದು ಈ ಪೇ ಪಾರ್ಕಿಂಗ್ ನಿರ್ಣಯವನ್ನು ಸಂಪೂರ್ಣವಾಗಿ ಹಿಂಪಡೆಯುವ ತನಕ ಈ ವಿಷಯದಲ್ಲಿ ಸಾರ್ವಜನಿಕ ಹೋರಾಟ ಮುಂದುವರಿಯುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
LPG ಪೂರೈಕೆ ಈಗಲೂ ಕಳವಳಕಾರಿ ವಿಷಯ, ಆದರೆ ಬರವಿಲ್ಲ: ಕೇಂದ್ರ ಸರಕಾರ
ಹೊಸದಿಲ್ಲಿ,ಮಾ.14: ಈ ಸಮಯದಲ್ಲಿ ಎಲ್ಪಿಜಿ ಪೂರೈಕೆಯು ಕಳವಳಕಾರಿ ವಿಷಯವಾಗಿದೆಯಾದರೂ ಯಾವುದೇ ವಿತರಣಾ ಕೇಂದ್ರದಲ್ಲಿ ದಾಸ್ತಾನು ಖಾಲಿಯಾಗಿರುವುದು ವರದಿಯಾಗಿಲ್ಲ ಎಂದು ಕೇಂದ್ರ ಸರಕಾರ ಶನಿವಾರ ಸ್ಪಷ್ಟಪಡಿಸಿದೆ. ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ಆತಂಕದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬುಕಿಂಗ್ನಲ್ಲಿ ತೀವ್ರ ಏರಿಕೆಯಾಗಿದೆ ಎಂದು ಅದು ತಿಳಿಸಿದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಎಲ್ಪಿಜಿ ಆಮದು ದೇಶವಾಗಿದ್ದು,ಈ ಪೈಕಿ ಶೇ.90ರಷ್ಟು ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗಣೆಯಾಗುತ್ತದೆ. ಪ್ರಸ್ತುತ ಈ ಪ್ರಮುಖ ಜಲಮಾರ್ಗದಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ಕಚ್ಚಾ ತೈಲ ಸಾಕಷ್ಟು ಪೂರೈಕೆಯಾಗುತ್ತಿದ್ದು, ಡೀಸಿಲ್ ಮತ್ತು ಪೆಟ್ರೋಲ್ಗೆ ಯಾವುದೇ ಕೊರತೆಯಿಲ್ಲ ಎಂದು ಕೇಂದ್ರವು ಒತ್ತಿ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು, ಆತಂಕದಿಂದಾಗಿ ಜನರು ಎಲ್ಪಿಜಿ ಬುಕಿಂಗ್ಗೆ ಮುಗಿಬೀಳುತ್ತಿದ್ದಾರೆ, ಜನರು ನಿಜಕ್ಕೂ ತಮಗೆ ಅಗತ್ಯವಿದ್ದಾಗ ಮಾತ್ರ ಸಿಲಿಂಡರ್ಗಳನ್ನು ಬುಕ್ ಮಾಡಬೇಕು ಎಂದು ಹೇಳಿದರು. ಕೊರತೆಯ ಭೀತಿಯಿಂದ 88 ಲಕ್ಷ ಬುಕಿಂಗ್ಗಳನ್ನು ಮಾಡಲಾಗಿದೆ ಎಂದು ಅವರು ಬೆಟ್ಟು ಮಾಡಿದರು. ವಾಣಿಜ್ಯ ಬಳಕೆಗಾಗಿ ಸಿಲಿಂಡರ್ಗಳ ಪೂರೈಕೆ ಕುರಿತು ಆಯಾ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ ಅಧಿಕಾರಿ,ಎಲ್ಲ ರಾಜ್ಯಗಳಲ್ಲಿ ವಾಣಿಜ್ಯ ಸಿಲಿಂಡರ್ಗಳಿಗಾಗಿ ಬುಕಿಂಗ್ ಆರಂಭಗೊಂಡಿದೆ ಎಂದು ತಿಳಿಸಿದರು. ಸಿಲಿಂಡರ್ಗಳ ಕಾಳಸಂತೆಯನ್ನು ತಡೆಯಲು ನಿರಂತರವಾಗಿ ದಾಳಿಗಳನ್ನು ನಡೆಸಲಾಗುತ್ತಿದೆ. ಹಲವಾರು ರಾಜ್ಯಗಳಲ್ಲಿ ತೈಲ ಕಂಪೆನಿಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ತಂಡಗಳನ್ನು ರಚಿಸಲಾಗಿದೆ. ಮಾ.13ರಂದು ತೈಲ ಮಾರಾಟ ಕಂಪನಿಗಳು 1,300ಕ್ಕೂ ಅಧಿಕ ದಿಢೀರ್ ತಪಾಸಣೆಗಳನ್ನು ನಡೆಸಿವೆ. ಉತ್ತರ ಪ್ರದೇಶದಲ್ಲಿ ಈಗಾಗಲೇ 1,400 ಸ್ಥಳಗಳಲ್ಲಿ ದಿಢೀರ್ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಕೊಲ್ಲಿ ದೇಶಗಳಿಂದ ಎಲ್ಪಿಜಿ ಸಾಗಿಸುತ್ತಿರುವ ಭಾರತೀಯ ಧ್ವಜವನ್ನು ಹೊತ್ತಿರುವ ಶಿವಾಲಿಕ್ ಮತ್ತು ನಂದಾದೇವಿ ಹಡಗುಗಳು ಶನಿವಾರ ನಸುಕಿನಲ್ಲಿ ಯುದ್ಧಗ್ರಸ್ತ ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು,ಈಗ ಗುಜರಾತಿನ ಮುಂದ್ರಾಮತ್ತು ಕಾಂಡ್ಲಾ ಬಂದರುಗಳತ್ತ ಚಲಿಸುತ್ತಿವೆ. ಈ ಹಡಗುಗಳು 92,700 ಟನ್ ಎಲ್ಪಿಜಿಯನ್ನು ಹೊತ್ತಿದ್ದು, ಮಾ.16/17ರಂದು ಭಾರತೀಯ ಬಂದರುಗಳಿಗೆ ಆಗಮಿಸುವ ಸಾಧ್ಯತೆಯಿದೆ ಎಂದು ನೌಕಾ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶಕುಮಾರ ಸಿನ್ಹಾ ಅವರು ಸುದ್ದಿಗಾರರಿಗೆ ತಿಳಿಸಿದರು. ಪ್ರದೇಶದಲ್ಲಿ ಯುದ್ಧ ಆರಂಭಗೊಂಡ ಬಳಿಕ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದ 24 ಹಡಗುಗಳಲ್ಲಿ ಈ ಎರಡು ನೌಕೆಗಳು ಸೇರಿದ್ದವು. ದೇಶಾದ್ಯಂತ ಮನೆಗಳಿಗೆ ಎಲ್ಪಿಜಿ ಪೂರೈಕೆ ಅಬಾಧಿತವಾಗಿದೆ ಮತ್ತು ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿತರಣೆ ಸ್ಥಿರವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಶುಕ್ರವಾರ ತಿಳಿಸಿತ್ತು.
‘ಎಸ್ಐಆರ್’ ದೇಶವ್ಯಾಪಿ 10 ಕೋಟಿಗೂ ಅಧಿಕ ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆಯುವ ಸಾಧ್ಯತೆ : ಪ್ರೊ.ಯೋಗೇಂದ್ರ ಯಾದವ್
ಬೆಂಗಳೂರು : ಕೇಂದ್ರ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ(ಎಸ್ಐಆಆರ್) ವಲಸೆ ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು, ದೇಶವ್ಯಾಪಿ ಸುಮಾರು 10 ಕೋಟಿಗೂ ಅಧಿಕ ಮಂದಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದಲೇ ತೆಗೆಯುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕ ಪ್ರೊ.ಯೋಗೇಂದ್ರ ಯಾದವ್ ಕಳವಳ ವ್ಯಕ್ತಪಡಿಸಿದ್ದಾರೆ. ಶನಿವಾರ ಇಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ‘ಜಾಗೃತ ಕರ್ನಾಟಕ’ ಸಂಘಟನೆಯು ಆಯೋಜಿಸಿದ್ದ ‘ಎಸ್ಐಆರ್: 13 ರಾಜ್ಯಗಳಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಏನು ಮಾಡಬೇಕಿದೆ?’ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಸ್ಐಆರ್ ನಿಂದ ಅತ್ಯಂತ ಬಡವರು, ವಲಸೆ ಕಾರ್ಮಿಕರು ಹಾನಿಗೊಳಗಾಗುತ್ತಿದ್ದಾರೆ. ಅವರು ದುಡಿಯಲು ವಲಸೆ ಬಂದಾಗ, ವಲಸೆ ಬಂದ ಸ್ಥಳದ ಮತದಾರರ ಪಟ್ಟಿಯಲ್ಲಿ ಅವರ ಹೆಸರಿರುವುದಿಲ್ಲ, ಅವರ ಹುಟ್ಟೂರಿನಿಂದಲೂ ಅವರನ್ನು ತೆಗೆಯಲಾಗಿದೆ. ಮುಂದೊಂದು ದಿನ ಅವರನ್ನು ಈ ದೇಶದ ನಾಗರೀಕರೇ ಅಲ್ಲ ಎಂದು ಹೇಳಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈಗಾಗಲೇ ಎರಡು ಕೋಟಿಗಿಂತ ಹೆಚ್ಚು ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಐಆರ್ ನ ಅಂತಿಮ ಪಟ್ಟಿ ಹೊರಬರಬೇಕಾಗಿದೆ. ಈಗ ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ಎಸ್ಐಆರ್ ನಡೆಯುತ್ತಿದೆ. ದೇಶವ್ಯಾಪಿ ಎಸ್ಐಆರ್ ಮುಗಿಯುವಾಗ ವೇಳೆಗೆ ಸುಮಾರು ಹತ್ತು ಕೋಟಿಯಷ್ಟು ಮತದಾರರನ್ನು ಹೊರಹಾಕಲಾಗಿರುತ್ತದೆ ಎಂದು ಅವರು ಹೇಳಿದರು. ಈ ಎಲ್ಲ ಹತ್ತು ಕೋಟಿ ಜನರೂ ಬಿಜೆಪಿ ವಿರೋಧಿಗಳಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ ದೇಶದ ತಳಮಟ್ಟದ ಹತ್ತು ಕೋಟಿ ಜನರನ್ನು ತೆಗೆದುಹಾಕಿದರೆ, ಅದರಲ್ಲಿ ಬಹುತೇಕ ಮಂದಿ ಬಿಜೆಪಿ ವಿರೋಧಿಗಳೇ ಆಗಿರುತ್ತಾರೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿಗೂ ಒಂದು ಸಣ್ಣ ಪ್ರಮಾಣದ ಮತ ನಷ್ಟವಾದರೂ, ಉಳಿದವರ ಪೂರ್ತಿ ಬುನಾದಿಯೇ ಕುಸಿದು ಹೋಗುತ್ತದೆ. ಹೀಗೆ ಬಿಜೆಪಿ ಎಸ್ಐಆರ್ ನ ಲಾಭ ಗಳಿಸುತ್ತದೆ ಎಂದು ಅವರು ವಿಶ್ಲೇಷಿಸಿದರು. ಪರದೇಶದವರನ್ನು ಚುನಾವಣಾ ಪಟ್ಟಿಯಿಂದ ತೆಗೆಯುವ ಕೆಲಸ ಮಾಡುತ್ತೇವೆಂದು ಆಯೋಗ ಹೇಳಿಕೊಂಡಿತು. ಆದರೆ ಅಳಿಸಲ್ಪಟ್ಟವರಲ್ಲಿ ಎಷ್ಟು ಜನ ಹೊರದೇಶದವರು ಎಂದು ಚುನಾವಣಾ ಆಯೋಗ ಇದುವರೆಗೂ ಉತ್ತರಿಸಿಲ್ಲ. ಹೀಗಾಗಿ ಎಸ್ಐಆರ್ ಎಂಬುದು ಬೆಟ್ಟ ಅಗೆದು, ಸತ್ತ ಇಲಿಯನ್ನು ಹಿಡಿದಂತಿದೆ ಎಂದು ಅವರು ವ್ಯಂಗ್ಯವಾಡಿದರು. ಭಾರತದಲ್ಲಿ ಪ್ರಜಾತಂತ್ರದ ಕಗ್ಗೊಲೆ ನಡೆಯುತ್ತಿದೆ. ಇಲ್ಲಿ ಸಂವಿಧಾನ ಇದೆ, ಜಾರಿಯಾಗುವುದಿಲ್ಲ. ನ್ಯಾಯಾಂಗ ಇದೆ, ಆಳುವವರ ವಿರುದ್ಧ ತೀರ್ಪು ಬರುವುದಿಲ್ಲ. ಚುನಾವಣೆ ನಡೆಯುತ್ತದೆ, ಫಲಿತಾಂಶ ಆಳುವವರ ಪರವಾಗಿಯೇ ಇರುತ್ತದೆ. ಆದರೆ 2023-24ರ ಲೋಕಸಭಾ ಚುಣಾವಣೆಯಲ್ಲಿ ‘ಚಾರ್ ಸೋ ಪಾರ್’ ಆಗಲಿಲ್ಲ. ‘ನ್ಯಾಯಾಂಗ, ಕಾರ್ಯಾಂಗ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಜನರನ್ನಲ್ಲ’ ಎಂಬ ಸಂದೇಶ ಅವರಿಗೆ(ಬಿಜೆಪಿಯವರಿಗೆ) ಹೋಗಿದೆ. ಹೀಗಾಗಿ ಕ್ಷೇತ್ರಗಳ ಪುನರ್ ವಿಂಗಡೆನೆ, ಒಂದು ದೇಶ-ಒಂದು ಚುನಾವಣೆ ಮತ್ತು ಎಸ್ಐಆರ್ ನಂತಹ ಪ್ರಯತ್ನಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಲೋಕಸಭಾ ಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿದರೆ, ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಲೋಕಸಭಾ ಸೀಟುಗಳ ಸಂಖ್ಯೆ ಕಡಿಮೆ ಆಗಲಿದೆ. ಕೇರಳದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 12ಕ್ಕೆ ಇಳಿಯುತ್ತದೆ. ತಮಿಳುನಾಡು 39ರಿಂದ 31, ಆಂಧ್ರ, ತೆಲಂಗಾಣಗಳು ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳುತ್ತವೆ. ಕರ್ನಾಟಕವೂ ಎರಡು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಆದರೆ ಉತ್ತರ ಭಾರತದಲ್ಲಿ ಹಿಂದಿ ಮಾತನಾಡುವ ರಾಜ್ಯಗಳು ಸೇರಿ ಗುಜರಾತ್ನ ಕ್ಷೇತ್ರಗಳು ಹೆಚ್ಚುತ್ತವೆ ಎಂದು ಪ್ರೊ. ಯೋಗೇಂದ್ರ ಯಾದವ್ ವಿವರಿಸಿದರು. ಕರ್ನಾಟಕವು ಭಾರತದ ಎಚ್ಚೆತ್ತ ರಾಜ್ಯಗಳಲ್ಲಿ ಒಂದಾಗಿದ್ದು, ಕೆಲ ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಯೋಚನೆ ಮಾಡಿದರೆ, ನಾವು ಹಾವನೂರು ವರದಿಯನ್ನು ಓದುತ್ತೇವೆ. ರೈತ ಚಳವಳಿ ಬಗ್ಗೆ ಮಾತಾಡಿದರೆ ಪ್ರೊ. ಎಂ.ಡಿ ನಂಜುಂಡಸ್ವಾಮಿ ಮತ್ತು ರೈತ ಸಂಘದ ಬಗ್ಗೆ ಯೋಚಿಸಿ ಸ್ಫೂರ್ತಿ ಪಡೆಯುತ್ತೇವೆ. ದಲಿತ ಚಳವಳಿ ಮತ್ತು ಸಾಹಿತ್ಯದ ಬಗ್ಗೆ ಮಾತಾಡಿದಾಗ ಡಿ.ಆರ್. ನಾಗರಾಜ್, ದೇವನೂರ ಮಹಾದೇವರನ್ನು ನಾನು ನೋಡುತ್ತೇನೆ. ಇಡೀ ದೇಶ ಕರ್ನಾಟಕದ ಕಡೆ ನೋಡುತ್ತದೆ. ಮತಗಳ್ಳತನ ವಿರುದ್ಧದ ಕೆಲಸವೂ ಕರ್ನಾಟಕದಿಂದ ಆರಂಭವಾಗಿದೆ. ಎಸ್ಐಆರ್ ವಿರುದ್ಧದ ಹೋರಾಟದಲ್ಲೂ ದಿಕ್ಕುತೋರಿಸುತ್ತದೆ ಎಂದು ನಂಬಿದ್ದೇನೆ ಎಂದು ಅವರು ಹೇಳಿದರು. ಜಾಗೃತ ಕರ್ನಾಟಕದ ಮುಖಂಡ ಬಿ.ಸಿ.ಬಸವರಾಜ್ ಮಾತನಾಡಿ, ಚುನಾವಣಾ ಆಯೋಗವು ತೀವ್ರ ಪರಿಶೀಲನೆ ಮಾಡಲಿ, ಸಂಕ್ಷಿಪ್ತ ಪರಿಶೀಲನೆ ಮಾಡಲಿ. ಆದರೆ ಯಾವುದೇ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು. ಮತಪಟ್ಟಿಯಿಂದ ಹೊರಗಿರುವವರನ್ನು ಗುರುತಿಸಿ, ಮತದಾರ ಪಟ್ಟಿಗೆ ಸೇರಿಸಿ, ಮತದಾನದ ಹಕ್ಕನ್ನು ಕೊಡುವ ಕೆಲಸವನ್ನು ಆಯೋಗ ಮಾಡಬೇಕು. ಆದರೆ, ಈಗ ಎಸ್ಐಆರ್ ನಲ್ಲಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವುದಕ್ಕೆ ಮುಂದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಭಾರತ್ ಜೋಡೋ ಅಭಿಯಾನದ ಮುಖಂಡ ಡಾ.ರಾಹುಲ್ ಶಾಸ್ತ್ರಿ, ಜೈ ಕಿಸಾನ್ ಆಂದೋಲನದ ಅವಿಕ್ ಸಹಾ, ಜನಜಾಗರಣ್ ಶಕ್ತಿ ಸಂಘಟನೆಯ ಆಶಿಶ್ ರಂಜನ್ ಸೇರಿದಂತೆ ಮತ್ತಿತರರು ಇದ್ದರು. ‘ನೀವು ಈಗಾಗಲೇ 15 ಚುನಾವಣೆಗಳಲ್ಲಿ ಮತ ಹಾಕಿದ್ದರೂ, ಎಸ್ಐಆರ್ ಪ್ರಕ್ರಿಯೆಯಲ್ಲಿ ನೀವು ಪಾಲ್ಗೊಳ್ಳದಿದ್ದರೆ ನಿಮ್ಮ ಹೆಸರನ್ನು ಪಟ್ಟಿಯಿಂದ ತೆಗೆಯಲಾಗುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ‘ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ’ ಎಂದು ಅರ್ಜಿ ಕೊಡದಿದ್ದರೆ, ಅವರು ಮುಖ್ಯಮಂತ್ರಿಯಾಗಿದ್ದರೂ, ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಗುತ್ತದೆ’ -ಪ್ರೊ.ಯೋಗೇಂದ್ರ ಯಾದವ್, ರಾಜಕೀಯ ವಿಶ್ಲೇಷಕ
Kalaburagi | ಗುಲ್ಬರ್ಗಾ ವಿವಿಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅಡಿಗಲ್ಲು
ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಧಾನಮಂತ್ರಿ ಉಚ್ಚತ್ತರ್ ಶಿಕ್ಷಾ ಅಭಿಯಾನ (PM-USHA) ಯೋಜನೆಯಡಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲ್ಪಡುವ ಕೌಶಲ್ಯಾಭಿವೃದ್ಧಿ ಕೇಂದ್ರ ಮತ್ತು ಸಂಯೋಜಿತ ಉಪನ್ಯಾಸ ಮಂದಿರ ಕಟ್ಟಡಗಳಿಗೆ ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಡಿಗಲ್ಲು ನೆರವೇರಿಸಿದರು. ಈ ಕಟ್ಟಡವು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಕಾರ್ಯಾಗಾರಗಳು, ಸಮ್ಮೇಳನಗಳು ಮತ್ತು ಆಧುನಿಕ ಅಧ್ಯಯನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಜೀ+2 ವಿನ್ಯಾಸದ ಕಟ್ಟಡದಲ್ಲಿ ಸುಸಜ್ಜಿತ ಕೊಠಡಿಗಳು, ಪೀಠೋಪಕರಣಗಳು, ಉಪನ್ಯಾಸ ಭವನಗಳು ಹಾಗೂ ಸಹಾಯಕ ಸೌಲಭ್ಯಗಳನ್ನು ಒಳಗೊಂಡಿದ್ದು, ಸ್ನಾತಕ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಗ್ರಂಥಾಲಯದಲ್ಲಿ K.A.S., I.A.S ಸ್ಪರ್ಧಾತ್ಮಕ ಪುಸ್ತಕಗಳ ಲಭ್ಯತೆ, ಕ್ಯಾಂಪಸ್ ಮೂಲಸೌಕರ್ಯ ಅಭಿವೃದ್ಧಿ, ಹಾಸ್ಟೆಲ್ ಸಮಸ್ಯೆ ಪರಿಹಾರ ಸೇರಿದಂತೆ ಅವರ ಮನವಿಗಳನ್ನು ಆಲಿಸಿದರು. ವಿದ್ಯಾರ್ಥಿಗಳಿಗೆ ಅರ್ಧ ದಿನವಿರುವ ಸಮಯದಲ್ಲಿ ಅವರು ಸಮಸ್ಯೆಗಳನ್ನು ಕಡೆಯವರೆಗೆ ಕೇಳಿ ಪರಿಹಾರ ಕಂಡು ಕೊಡಲು ಭರವಸೆ ನೀಡಿದರು. ಪ್ರಿಯಾಂಕ್ ಖರ್ಗೆ ಅವರು ಹೇಳಿದರು, “ವಿದ್ಯಾರ್ಥಿಗಳಿಗೆ ಕೇವಲ ಪದವಿ ಪಡೆಯುವುದು ಮುಖ್ಯವಲ್ಲ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತಿ ಅವಶ್ಯಕ. ಈ ಕೌಶಲ್ಯಾಭಿವೃದ್ಧಿ ಕೇಂದ್ರವು ಕಲ್ಯಾಣ ಕರ್ನಾಟಕ ಭಾಗದ ಯುವಜನತೆಗೆ ಸಬಲೀಕರಣ ನೀಡಲಿದೆ.” ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಸಿಂಧೆ, ಗುಲ್ಬರ್ಗಾ ವಿ.ವಿ. ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು ಸೇರಿದಂತೆ ವಿ.ವಿ. ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪಾಕ್ ತಂಡದ ಟಿ20 ವಿಶ್ವಕಪ್ ಸೋಲಿಗೆ ತಲಾ 50 ಲಕ್ಷ ರೂ ದಂಡ ಹಾಕಿದ್ದು ಹೌದಾ?: ಈಗ ನಿಜ ಸಂಗತಿ ತಿಳಿಸಿದ ಪಿಸಿಬಿ
PCB Clarification- 2026ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕಾಗಿ ಪಿಸಿಬಿ ನಿಜಕ್ಕೂ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ದಂಡ ವಿಧಿಸಿತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಈ ಬಗ್ಗೆ ವರದಿಗಳು ಬಂದಾಗ ಯಾವ ಹೇಳಿಕೆಯನ್ನೂ ನೀಡದೆ ಸುಮ್ಮನಿದ್ದ ಪಿಸಿಬಿ ಇದೀಗ ಹೀಗೊಂದು ಘಟನೆ ನಡೆದೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದ ಸುಳ್ಳು ಸುದ್ದಿ ಎಂದು ಪಿಸಿಬಿ ವಕ್ತಾರ ಅಮೀರ್ ಮಿರ್ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರಕಾರ ಬದ್ಧ : ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಶಂಕುಸ್ಥಾಪನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣ ವಿಫಲ: ಸಚಿವ ಪ್ರಿಯಾಂಕ್ ಖರ್ಗೆ ಆರೋಪ
ಬೀದರ್ : ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಉಲ್ಲೇಖಿಸಿ ಮೋದಿ ಅವರ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದರು. ಯುದ್ಧ ಆರಂಭವಾಗುವ ಎರಡು ದಿನಗಳ ಮುಂಚೆ ಮೋದಿ ಅವರು ಇಸ್ರೇಲ್ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಹೋಗುವಷ್ಟು ಮಹತ್ವದ ಕೆಲಸ ಏನಿತ್ತು ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ ಎಂದು ಪ್ರಶ್ನಿಸಿದರು. ಇದೇ ವೇಳೆ ಇರಾನ್ ಮುಖ್ಯಸ್ಥರ ಹತ್ಯೆಯಾದ ನಂತರವೂ ಮೋದಿ ಅವರು ಆರು ದಿನಗಳ ಬಳಿಕ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರು ಫೆ.9ರಂದು ದೇಶದಲ್ಲಿ 75 ದಿನಗಳವರೆಗೆ ಇಂಧನ ಸಂಗ್ರಹವಿದೆ ಎಂದು ಹೇಳಿದ್ದರು. ಆದರೆ ಈಗ ಹೋಟೆಲ್ಗಳು ಮುಚ್ಚುವ ಪರಿಸ್ಥಿತಿ ಉಂಟಾಗಿದ್ದು, ಹಾಸ್ಟೆಲ್ಗಳು ಹಾಗೂ ಕಂಪನಿಗಳಿಗೂ ಸಮಸ್ಯೆಗಳು ಎದುರಾಗುತ್ತಿವೆ. ಇದಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು. ಹಾರ್ಮುಝ್ ಜಲಸಂಧಿಯಲ್ಲಿ ಚೀನಾ ಮತ್ತು ರಷ್ಯಾ ದೇಶಗಳ ಹಡಗುಗಳಿಗೆ ಸುರಕ್ಷಿತ ಮಾರ್ಗ ಸಿಕ್ಕಿದ್ದರೂ, ಭಾರತದ ಹಡಗುಗಳಿಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು. ಮೋದಿಯವರು ಇರಾನ್, ಇಸ್ರೇಲ್ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ಸ್ನೇಹಿತರು ಎಂದು ಹೇಳಿಕೊಂಡರೂ ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.
ವಾಮನ ನಂದಾವರ ಚಾವಡಿ ನಾಮಫಲಕ ಅನಾವರಣ; ಆದಿಮ, ತಾಳಮೇಳ ಕೃತಿ ಬಿಡುಗಡೆ
ಮಂಗಳೂರು, ಮಾ.14: ಜಾನಪದ ಸಂಶೋಧಕ ಮತ್ತು ತುಳು ಅಕಾಡಮಿಯ ಮಾಜಿ ಅಧ್ಯಕ್ಷರಾಗಿದ್ದ ಡಾ. ವಾಮನ ನಂದಾವರ ವೈಯಕ್ತಿಕ ನೆಲೆಯಲ್ಲಿ ನಡೆಸಿದ ಅಧ್ಯಯನವು ಕೇವಲ ಕರಾವಳಿಯ ಜನಪದೀಯ ಹಾಗೂ ಜನಾಂಗೀಯ ಅಧ್ಯಯನಕ್ಕೆ ಸೀಮಿತವಾಗಿರಲಿಲ್ಲ. ಕರ್ನಾಟಕದೊಳಗೆ ಜನಪದೀಯವಾಗಿ ಜನಾಂಗೀಯ ಅಧ್ಯಯನ ವನ್ನು ಹೇಗೆ ಮಾಡಬೇಕೆಂಬ ಮಾದರಿಯನ್ನು ಅವರು ತೋರಿಸಿಕೊಟ್ಟಿದ್ದರು ಎಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸಂಶೋಧಕ ಆರ್.ಚಲಪತಿ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ ಶನಿವಾರ ನಗರ ತುಳುಭವನದಲ್ಲಿ ಏರ್ಪಡಿಸಿದ್ದ ವಾಮನ ನಂದಾವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಚಂದ್ರಕಲಾ ನಂದಾವರ ಸಂಪಾದಿಸಿದ ವಾಮನ ನಂದಾವರರ ಬರಹಗಳ ಸಂಕಲನ ಱಆದಿಮೞ ಕೃತಿಯ ಕುರಿತು ಅವರು ಮಾತನಾಡಿದರು. ರಾಜ್ಯದ ಅಕಾಡಮಿಗಳು ಮತ್ತು ಅಧ್ಯಯನ ಸಂಸ್ಥೆಗಳಲ್ಲಿ ಅಜೆಂಡಾಗಳು ಕೆಲಸ ಮಾಡುತ್ತವೆ. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಗಳು ಸಾಕ್ಷಿಯಾಗಿದೆ ಎಂದ ಡಾ.ಚಲಪತಿ, ಜಾತಿ ಮತ್ತು ಧಾರ್ಮಿಕ ಕಟ್ಟುಪಾಡುಗಳಿಗೆ ಸಿಲುಕಿ ನರಳುತ್ತಿರುವ ಸಮಾಜದಲ್ಲಿ ಸಂಶೋಧನೆಗಳಿಗೆ ಅಜೆಂಡಾಗಳ ಬಿಕ್ಕಟ್ಟು ಸುತ್ತಿಕೊಳ್ಳಬಾರದು ಎಂದರು. ಪುರುಷ ಮತ್ತು ಮಹಿಳೆ ಎಂಬ ಅಸ್ಮಿತೆಗಳಲ್ಲೂ ಪೂರ್ವಗ್ರಹಗಳು ಇವೆ. ಪ್ರತಿಯೊಂದು ಜನಾಂಗವೂ ಹೆಣ್ಣನ್ನು ನಡೆಸಿ ಕೊಳ್ಳುತ್ತಿರುವ ರೀತಿ ಒಪ್ಪಿಕೊಳ್ಳುವಂತಿಲ್ಲ. ಹೆಣ್ಣು ಮತ್ತು ಗಂಡು ಲಿಂಗಬೇಧಕ್ಕಿಂತ ಎರಡು ಜೀವಗಳು ಎಂದು ಪರಿಗಣಿಸಿದರೆ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು. ಱಆದಿಮ ಪುಸ್ತಕದಲ್ಲಿ ಜಾನಪದ ಅಧ್ಯಯನವು ಕಲೆಯ ರೂಪ ಪಡೆದಿರುವುದು ಕಂಡು ಬಂದಿದೆ. 80ರ ದಶಕದಲ್ಲಿ ಬರೆದ 12 ಲೇಖನಗಳ ಪೈಕಿ ಒಂದರಲ್ಲಿ ಅವಿಭಜಿತ ದ.ಕ. ಮತ್ತು ಕಾಸರಗೋಡಿನ ತಳ ಸಮುದಾಯದ ಬಗ್ಗೆ ಅಪೂರ್ವ ಮಾಹಿತಿ ಇದೆ ಎಂದು ಚಲಪತಿ ಹೇಳಿದರು. ತಳ ಸಮುದಾಯದ ಜನರು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲೇ ಪ್ರಾಧ್ಯಾಪಕ, ಸಿಬ್ಬಂದಿಯ ಕೊರತೆ ಕಾಣುತ್ತಿದೆ. ಹಿಂದುಳಿದ ಸಮಾಜದ ಪ್ರತಿಭಾವಂತರು ವಿಶ್ವವಿದ್ಯಾಲಯದೊಳಗೆ ಪ್ರವೇಶಿಸುವ ಕಾಲಘಟ್ಟದಲ್ಲೆ ಇಂತಹ ಬಿಕ್ಕಟ್ಟು ನಿರ್ಮಾಣವಾಗಿರುವುದು ವಿಷಾದನೀಯ ಎಂದರು. ಕವಿತೆಗಳ ಸಂಕಲನ ಱತಾಳ ಮೇಳದ ಬಗ್ಗೆ ಮಾತನಾಡಿದ ಕವಯಿತ್ರಿ ಜ್ಯೋತಿ ಮಹಾದೇವ ವಾಮನ ನಂದಾವರ 50 ವರ್ಷಗಳ ಹಿಂದೆ ಬರೆದಿರುವ ಕಾವ್ಯ ಭಾವ ಇಂದಿನ ಕಾಲಕ್ಕೂ ಅನ್ವಯವಾಗುತ್ತದೆ. ಅವರ ಕವಿತೆಗಳಲ್ಲಿ ಆಶಾಭಾವವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳು ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕೃತಿಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಉಚ್ಚಿಲ ಕಲಾಗಂಗೋತ್ರಿಯ ನಿರ್ದೇಶಕ, ನಿವೃತ್ತ ಪ್ರಾಂಶುಪಾಲ ಕೆ.ಸದಾಶಿವ ಅಕಾಡಮಿಯಲ್ಲಿ ವಾಮನ ನಂದಾವರ ಚಾವಡಿ ನಾಮಫಲಕ ಅನಾವರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದೆ ರತ್ನಾವತಿ ಬೈಕಾಡಿ ಅವರನ್ನು ಸನ್ಮಾನಿಸಲಾಯಿತು. ಅಕಾಡಮಿಯ ಸದಸ್ಯ ಬಾಬು ಕೊರಗ ಪಾಂಗಾಳ ಉಪಸ್ಥಿತರಿದ್ದರು. ತುಳು ಅಕಾಡಮಿಯ ಮಾಜಿ ಸದಸ್ಯ ಬೆನೆಟ್ ಅಮ್ಮಣ್ಣ ಕಾರ್ಯಕ್ರಮ ನಿರೂಪಿಸಿದರು. ಆಕೃತಿ ಆಶಯ ಪ್ರಕಾಶಕ ಕಲ್ಲೂರು ನಾಗೇಶ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲೆ, ಲೇಖಕಿ ಚಂದ್ರಕಲಾ ನಂದಾವರ ವಂದಿಸಿದರು.
ಭಾಷೆಗಳ ಬೆಳವಣಿಗೆಗಾಗಿ ಅಕಾಡೆಮಿಗಳಿಗೆ ಮನ್ನಣೆ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ವಾದ್ಯ ಪರಿಕರ ವಿತರಣೆ- ಪ್ರಶಸ್ತಿ ಪ್ರದಾನ
ಕಲಬುರಗಿ | ಮಾ.31ರಂದು ಡಿಸಿ ಕಚೇರಿ ಎದುರು ಪ್ರತಿಭಟನೆ : ಅವ್ವಣ್ಣ ಮ್ಯಾಕೇರಿ
ಕಲಬುರಗಿ: ವಿವಿಧ ಸಮಸ್ಯೆಗಳ ವಿರುದ್ಧ ಬಿಜೆಪಿ ವತಿಯಿಂದ ನಡೆಸಲು ಉದ್ದೇಶಿಸಿದ್ದ ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಠಾವೋ–ಕಲಬುರಗಿ ಬಚಾವೋ’ ಹೋರಾಟವನ್ನು ತಾಂತ್ರಿಕ ಕಾರಣಗಳಿಂದ ಮಾ.31ಕ್ಕೆ ಮುಂದೂಡಲಾಗಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಹೇಳಿದ್ದಾರೆ. ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳು ಹೆಚ್ಚಾಗಿದ್ದರೂ, ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ರೈತರ ಬೆಳೆವಿಮೆ, ಭೂಸ್ವಾಧೀನ ಪರಿಹಾರ ಸೇರಿದಂತೆ ಅನೇಕ ವಿಷಯಗಳಲ್ಲಿ ಜಿಲ್ಲಾಡಳಿತ ವತಿಯಿಂದ ಭಾರೀ ವಿಳಂಬವಾಗಿದ್ದು, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಉಸ್ತುವಾರಿ ಸೇರಿದಂತೆ ಜನಪ್ರತಿನಿಧಿಗಳು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು. ರೈತರ ಪರಿಹಾರ ಹಣದ ಕೊರತೆಯಿಂದ ಕೆಲವು ಸರ್ಕಾರಿ ಕಚೇರಿಗಳ ಆಸ್ತಿಪಾಸ್ತಿಗಳು ಜಪ್ತಿಯಾಗಿರುವ ಘಟನೆಗಳು ನಡೆದಿರುವುದು ಆಡಳಿತದ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಜಿಲ್ಲೆಯಲ್ಲಿ ನಿಗಮಗಳಿಗೆ ಅಗತ್ಯ ಅನುದಾನ ದೊರೆಯದೇ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ನೆರವು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಗಾಗಿ ಮಾ.16 ರಂದು ಉದ್ದೇಶಿಸಲಾಗಿದ್ದ ಪ್ರತಿಭಟನೆಯು ಮಾ.31ರಂದು ಸಾವಿರಾರು ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಚಂದ್ರಶೇಖರ ರೆಡ್ಡಿ, ಆನಂದ ಪಾಟೀಲ್, ಸುರೇಶ ರಾಠೋಡ, ಗಿರೀಶ ಭಜಂತ್ರಿ, ಬಸವರಾಜ ಗುಂಡಲಗೇರಿ, ಶರಣಗೌಡ ಪಾಟೀಲ್ ಉಪಸ್ಥಿತರಿದ್ದರು.
ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ರಮಝಾನ್ ಕಿಟ್ ವಿತರಣೆ
ಮಂಗಳೂರು, ಮಾ.14: ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ವತಿಯಿಂದ ಗುರುವಾರ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಅರ್ಹ 150 ಮಂದಿಗೆ ರಮಝಾನ್ ಕಿಟ್ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಹಾಜಿ ಬಿ.ಇಬ್ರಾಹೀಂ, ಉಪಾಧ್ಯಕ್ಷ ಅಬ್ದುಲ್ ಅಝೀಝ್ ಎಂ., ನಿರ್ದೇಶಕರಾದ ನಿಸಾರ್ ಫಕೀರ್ ಮೊಹಮ್ಮದ್, ಅಬ್ದುಲ್ ರಝಾಕ್, ಕೆ. ಸುದರ್ಶನ್ ಶೆಟ್ಟಿ, ಮುನೀರ್ ಅಹ್ಮದ್, ಹಾಜಿ ಅಬ್ದುಲ್ ಸಲಾಮ್, ನೂರ್ ಅಮೀನ, ಶಾಹಿದ, ರತ್ನಾಕರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಸಿಂಧನೂರು | ಮಡಿವಾಳ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರಿಸಲು ಆಗ್ರಹ: ಮಾ.16ರಿಂದ ಅಹೋರಾತ್ರಿ ಪ್ರತಿಭಟನೆ
ಸಿಂಧನೂರು : ಡಾ.ಅನ್ನಪೂರ್ಣಮ್ಮ ವರದಿಯನ್ನು ಜಾರಿಗೆ ತಂದು ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ (ಎಸ್ಸಿ) ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಮಾ.16ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಮಡಿವಾಳ ಸಮಾಜದ ಮುಖಂಡ ಬಸವರಾಜ ವಕೀಲ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಸಮಾಜದ ಶ್ರೀಗಳಾದ ಬಸವ ಮಾಚಿದೇವ ಶ್ರೀಗಳು ಹಾಗೂ ಮುಕ್ತಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಜೊತೆಗೆ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಪ್ರತಿ ವರ್ಷ 100 ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ‘ಮೈಕ್ರೋ ಯೋಜನೆ’ ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಯುವ ಘಟಕದ ಅಧ್ಯಕ್ಷ ಮುದಿಯಪ್ಪ ಡೈಮೆಂಡ್, ಮುಖಂಡರಾದ ಮಾಬುಸುಭಾನ್ ಮಡಿವಾಳ, ರಾಮಣ್ಣ ಹಂಚಿನಾಳ, ಮೂಕಪ್ಪ ಮಾಡಶಿರವಾರ, ಮುದುಕಪ್ಪ ಗೋಮರ್ಸಿ ಇತರರು ಇದ್ದರು.
ಕಂದಾಯ, ಅರಣ್ಯ ಭೂಮಿ ಕುರಿತು ಜಿಲ್ಲಾ ಮಟ್ಟದಲ್ಲಿ ಎಸ್ಐಟಿ ರಚನೆ: ಸಚಿವ ಕೃಷ್ಣ ಬೈರೇಗೌಡ
ಮುಲ್ಕಿ ತಾಲೂಕು ಪ್ರಜಾಸೌಧ ಉದ್ಘಾಟನೆ
ಯಶವಂತಪುರ - ಮಡಗಾಂವ್ ಜಂಕ್ಷನ್ - ಬೆಂಗಳೂರು ಕಂಟೋನ್ಮೆಂಟ್ ನಡುವೆ ಯುಗಾದಿ ವಿಶೇಷ ರೈಲು ಸಂಚಾರ
ಉಡುಪಿ, ಮಾ.14: ಯುಗಾದಿ ಹಾಗೂ ರಮಜಾನ್ ಹಬ್ಬದ ಸಂದರ್ಭ ದಲ್ಲಿ ಅಧಿಕ ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು ಕೊಂಕಣ ರೈಲ್ವೆಯು ನೈರುತ್ಯ ರೈಲ್ವೆಯ ಸಹಯೋಗದೊಂದಿಗೆ ಯಶವಂತಪುರ- ಮಡಗಾಂವ್ ಜಂಕ್ಷನ್ ಹಾಗೂ ಮಡಗಾಂವ್ ಜಂಕ್ಷನ್- ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲು ಓಡಿಸಲಿದೆ ಎಂದು ಕೊಂಕಣ ರೈಲ್ವೆ ನಿಗಮದ ಪ್ರಕಟಣೆ ತಿಳಿಸಿದೆ. ರೈಲು ನಂ.06267 ಯಶವಂತಪುರ- ಮಡಗಾಂವ್ ಜಂಕ್ಷನ್ ಎಕ್ಸ್ಪ್ರೆಸ್ ವಿಶೇಷ ರೈಲು ಮಾ.18 ಬುಧವಾರ ಅಪರಾಹ್ನ 12:00ಗಂಟೆಗೆ ಯಶವಂತಪುರದಿಂದ ಪ್ರಯಾಣ ಪ್ರಾರಂಭಿಸಲಿದ್ದು, ಮರುದಿನ ಮುಂಜಾನೆ 6:45ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ. ರೈಲು ನಂ.06268 ಮಡಗಾಂವ್ ಜಂಕ್ಷನ್- ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ಪ್ರೆಸ್ ವಿಶೇಷ ರೈಲು ಮಾ.19ರ ಗುರುವಾರ ಪೂರ್ವಾಹ್ನ 11:00 ಗಂಟೆಗೆ ಮಡಗಾಂವ್ನಿಂದ ಹೊರಡಲಿದ್ದು, ಅದು ಮರುದಿನ ಬೆಳಗಿನ ಜಾವ 5:20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ. ಯಶವಂತಪುರ- ಮಡಗಾಂವ್ ಜಂಕ್ಷನ್ ಎಕ್ಸ್ಪ್ರೆಸ್ ರೈಲಿಗೆ ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕಣ ರೋಡ್, ಅಂಕೋಲ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಮಡಗಾಂವ್ ಜಂಕ್ಷನ್- ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ಪ್ರೆಸ್ ರೈಲಿಗೆ ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾರಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ಬಂಟ್ವಾಲ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚೆನ್ನರಾಯಪಟ್ಟಣ, ಕುಣಿಗಲ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲು ಒಟ್ಟು 24 ಬೋಗಿಗಳೊಂದಿಗೆ ಸಂಚರಿಸಲಿದೆ. ಇವುಗಳಲ್ಲಿ ಸ್ಲೀಪರ್ ಕೋಚ್-20, ಜನರಲ್-2 ಹಾಗೂ ಎಸ್ಎಲ್ಆರ್-2 ಕೋಚ್ಗಳಿರುತ್ತವೆ. ಈ ರೈಲಿಗೆ ಮಾ.14ರಿಂದ ಟಿಕೇಟ್ ಬುಕ್ಕಿಂಗ್ ಪ್ರಾರಂಭ ಗೊಂಡಿದೆ. ಎಲ್ಲಾ ಪಿಆರ್ಎಸ್, ಇಂಟರ್ನೆಟ್ ಹಾಗೂ ಐಆರ್ಸಿಟಿಸಿ ವೆಬ್ಸೈಟ್ಗಳಲ್ಲಿ ಟಿಕೇಟ್ ಕಾದಿರಿಸಲು ಅವಕಾಶವಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಬಜೆಟ್ನಲ್ಲಿ ನಿರ್ಲಕ್ಷ್ಯ ಆರೋಪ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಉಡುಪಿ, ಮಾ.14: ಈ ಬಾರಿಯ ಬಜೆಟ್ನಲ್ಲಿ ಉಡುಪಿ ಜಿಲ್ಲೆಗೆ ಅನುದಾನ ಒದಗಿಸದೇ ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಉಡುಪಿ ನಗರದ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸ ಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತ ನಾಡಿ, ರಾಜ್ಯ ಸರಕಾರ 1.32ಲಕ್ಷ ಕೋಟಿ ಸಾಲ ಮಾಡಿ, ಗ್ಯಾರಂಟಿಯೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿ ಕಾಲ ಕಳೆಯುತ್ತಿದೆ. ಜಿಲ್ಲೆಯ ಐದು ಮಂದಿ ಶಾಸಕರು, ಇಲ್ಲಿನ ಬೇಡಿಕೆಗಳು, ಸಮಸ್ಯೆಗಳನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಗಮನಕ್ಕೆ ತಂದರೂ ಬಜೆಟ್ನಲ್ಲಿ ಯಾವುದೇ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಜಿಲ್ಲೆಯ ಮರಳಿನ ಸಮಸ್ಯೆ, ವಸತಿ ಸಮಸ್ಯೆ, 9/11 ಸಮಸ್ಯೆ ಪ್ರಾಧಿಕಾರದ ಸಮಸ್ಯೆ ಹಾಗೂ ಕನರ್ವಶನ್ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳಿಗೂ ಸರಕಾರ ಈ ಬಾರಿಯ ಬಜೆಟ್ನಲ್ಲಿ ಸ್ಪಂದನೆ ಮಾಡಿಲ್ಲ. ಈ ಸರಕಾರಕ್ಕೆ ಇವುಗಳಿಗೆ ಪರಿಹಾರ ಒದಗಿಸಬೇಕು ಎಂಬುದು ಕೂಡ ಅನಿಸುತ್ತಿಲ್ಲ. ಇಂತಹ ಸರಕಾರವನ್ನು ನಾವು ಇತಿಹಾಸ ದಲ್ಲಿಯೇ ಕಂಡಿಲ್ಲ ಎಂದು ಅವರು ಟೀಕಿಸಿದರು. ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಕೆ.ಉದಯ ಕುಮಾರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ದಿನೇಶ್ ಅಮೀನ್, ಪೃಥ್ವಿರಾಜ್ ಶೆಟ್ಟಿ, ದಿನಕರ ಬಾಬು, ಗಿರೀಶ್ ಅಂಚನ್, ಶಿಲ್ಪಾ ಜಿ.ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ಪ್ರತಿಭಟನಾ ಮೆರವಣಿಗೆಯು ಜೋಡುಕಟ್ಟೆಯಿಂದ ನಗರ ಪ್ರಮುಖ ಮಾರ್ಗದಲ್ಲಿ ಸಾಗಿ, ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.
Koppal | ಬಾಧಿತ ಗ್ರಾಮಗಳಿಗೆ ಬಿಜೆಪಿ ನಿಯೋಗ ಭೇಟಿ
ಕೊಪ್ಪಳ : ಕಾರ್ಖಾನೆಗಳ ಮಾಲಿನ್ಯದಿಂದ ತೀವ್ರವಾಗಿ ಬಾಧಿತವಾಗಿರುವ ತಾಲೂಕಿನ ಅಲ್ಲಾನಗರ, ಹಿರೇಬಗನಾಳ, ಕುಣಿಕೇರಿ ಹಾಗೂ ಕುಣಿಕೇರಾ ತಾಂಡಾ ಗ್ರಾಮಗಳಿಗೆ ಶನಿವಾರ ಬಿಜೆಪಿ ನಿಯೋಗ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಪರಿಶೀಲಿಸಿತು. ನಿಯೋಗ ಗ್ರಾಮಗಳಿಗೆ ಆಗಮಿಸುತ್ತಿದ್ದಂತೆಯೇ ಗ್ರಾಮಸ್ಥರು ತಮ್ಮ ಹೊಲಗಳು ಹಾಗೂ ಮನೆಗಳಿಗೆ ಕರೆದುಕೊಂಡು ಹೋಗಿ ಕಾರ್ಖಾನೆಗಳ ಮಾಲಿನ್ಯದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಧೂಳು ಮತ್ತು ಮಾಲಿನ್ಯದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಅವರು ತಿಳಿಸಿದರು. ಈ ವೇಳೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಇಲ್ಲಿನ ಜನರ ಪರಿಸ್ಥಿತಿ ನೋಡಿದರೆ ತುಂಬಾ ಸಂಕಟವಾಗುತ್ತದೆ. ಧೂಳಿನ ಪರಿಣಾಮದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದು ಅಂಗವಿಕಲ ಮಕ್ಕಳು ಹುಟ್ಟುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು. ಈ ವಿಷಯವನ್ನು ಪಕ್ಷದ ಹಿರಿಯ ನಾಯಕರ ಗಮನಕ್ಕೆ ತರುವುದರ ಜೊತೆಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಮಾತನಾಡಿ, ಈ ಭಾಗದ ಜನರು ಅನುಭವಿಸುತ್ತಿರುವ ಸಂಕಟ ನೋಡಲು ನೋವಾಗುತ್ತದೆ. ಮುಂದಿನ ದಿನಗಳಲ್ಲಿ ಜನರ ಪರವಾಗಿ ಧ್ವನಿಯಾಗುತ್ತೇವೆ ಹಾಗೂ ನೆಲ–ಜಲ–ವಾಯುವಿಗೆ ಹಾನಿ ಮಾಡುವವರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಮಾತನಾಡಿ, ಕೊಪ್ಪಳ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾರ್ಖಾನೆಗಳ ಮಾಲಿನ್ಯದಿಂದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆರೋಗ್ಯ ಸಮಸ್ಯೆಗಳು ಗಂಭೀರವಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಜನರು ಇನ್ನಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಆಗ್ರಹಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮುಖಂಡರಾದ ಮಹಾಂತೇಶ ಪಾಟೀಲ್, ಗಣೇಶ ಹೊರತಟ್ನಾಳ್, ವೀರೇಶ ಸಜ್ಜನ, ಪ್ರಭುಗೌಡ, ಪ್ರದೀಪ್ ಹಿಟ್ನಾಳ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ಯಾಸ್ ಬೆಲೆ ಏರಿಕೆ: ರಿಕ್ಷಾ ಚಾಲಕರಿಂದ ಬಂಕ್ ವಿರುದ್ಧ ಆಕ್ರೋಶ
ಉಡುಪಿ, ಮಾ.14: ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಎಲ್ಪಿಜಿ ಹಾಗೂ ಸಿಎನ್ಜಿ ಗ್ಯಾಸ್ ಬಂಕ್ಗಳಲ್ಲಿ ಏಕಾಏಕಿ ಗ್ಯಾಸ್ ದರ ಏರಿಕೆ ಮಾಡಿರುವುದಾಗಿ ಆರೋಪಿಸಿ ಅಟೋ ರಿಕ್ಷಾ ಚಾಲಕರು ಶನಿವಾರ ಉದ್ಯಾವರ ಗ್ಯಾಸ್ ಬಂಕ್ ಎದುರು ಪ್ರತಿಭಟನೆ ನಡೆಸಿದರು. ಕಟಪಾಡಿ ಅಟೋ ಚಾಲಕ ಮತ್ತು ಮಾಲಕರ ಸಂಘ, ಉಡುಪಿ ಆಶ್ರಯ ದಾತ ಅಟೋ ಯೂನಿಯನ್ ಹಾಗೂ ಮಲ್ಪೆ ಅಟೋ ಚಾಲಕ ಮತ್ತು ಮಾಲಕರ ಸಂಘದ ನೇತೃತ್ವದಲ್ಲಿ ನೂರಾರು ರಿಕ್ಷಾ ಚಾಲಕರು ತಮ್ಮ ರಿಕ್ಷಾವನ್ನು ನಿಲ್ಲಿಸಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಟಪಾಡಿ ಅಟೋ ಯೂನಿಯನ್ ಅಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿ, ಉದ್ಯಾವರ ಖಾಸಗಿ ಗ್ಯಾಸ್ ಬಂಕ್ನಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಲೀಟರ್ಗೆ 60ರೂ.ವನ್ನು 72.30ರೂ.ಗೆ ಏರಿಕೆ ಮಾಡಿದ್ದರು. ಇದೀಗ ಏಕಾಏಕಿ 90ರೂ.ಗೆ ಏರಿಕೆ ಮಾಡುವ ಮೂಲಕ ನಮ್ಮಿಂದ ಹಣ ವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಿಕ್ಷಾ ಚಾಲಕರು ಪ್ರತಿಭಟನೆಗೆ ಪೂರ್ವ ಅನುಮತಿ ಪಡೆಯದ ಹಿನ್ನೆಲೆ ಯಲ್ಲಿ ಪೊಲೀಸರು ಬಂಕ್ ಎದುರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಚಾಲಕರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ರಿಕ್ಷಾ ಚಾಲಕರು ಮತ್ತು ಮಾಲಕರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಟಪಾಡಿ ಅಟೋ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಹನೀಫ್ ಮಣಿಪುರ, ಮಲ್ಪೆ ಅಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಶಂಭು ಕರ್ಕೇರ, ಆಶ್ರಯದಾತ ಅಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಕೊಂಕಣ ರೈಲ್ವೆ: ಟಿಕೆಟ್ ರಹಿತ ಪ್ರಯಾಣಿಕರಿಂದ 2.41 ಕೋಟಿ ರೂ. ದಂಡ ಸಂಗ್ರಹ
ಉಡುಪಿ, ಮಾ.14: ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ಕೊಂಕಣ ರೈಲು ಮಾರ್ಗದಲ್ಲಿ ಕೈಗೊಂಡಿರುವ ವಿಶೇಷ ಅಭಿಯಾನದಲ್ಲಿ ಕೊಂಕಣ ರೈಲ್ವೆ ನಿಗಮ ಕಳೆದ ಫೆಬ್ರವರಿ ತಿಂಗಳಿನಲ್ಲಿ 2.41 ಕೋಟಿ ರೂ.ಗಳನ್ನು ದಂಡ ಹಾಗೂ ಟಿಕೆಟ್ ಹಣದ ರೂಪದಲ್ಲಿ ಸಂಗ್ರಹಿಸಿದೆ. ಜನವರಿ ತಿಂಗಳಲ್ಲಿ ಈ ಮೊತ್ತ 2.53 ಕೋಟಿ ರೂ.ಗಳಾಗಿತ್ತು ಎಂದು ಕೊಂಕಣ ರೈಲ್ವೆ ನಿಗಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಫೆಬ್ರವರಿ ತಿಂಗಳೊಂದರಲ್ಲೇ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆಸಿದ 873 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾ ಚರಣೆಯಲ್ಲಿ ಒಟ್ಟು 41,522 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿರುವ ಸಿಬ್ಬಂದಿಗಳು ಅವರಿಂದ 2.41 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಮೂಲಕ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಫೆಬ್ರವರಿ ತಿಂಗಳ ಕೊನೆಯವರೆಗೆ ಒಟ್ಟು 10,368 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಒಟ್ಟು 4,54,849 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿ ಅವರಿಂದ ದಂಡದ ರೂಪದಲ್ಲಿ ಒಟ್ಟು 25.21 ಕೋಟಿ ರೂ. ಹಣವನ್ನು ರೈಲ್ವೆ ಖಜಾನೆಗೆ ಸಂಗ್ರಹಿಸಲಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಈ ವಿಶೇಷ ಕಾರ್ಯಾಚರಣೆಯನ್ನು ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ನೆರವಿನಿಂದ ರೈಲುಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ಈ ರೈಲುಗಳಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಅಧಿಕೃತವಾದ ಟಿಕೆಟ್ ಖರೀದಿಸಿ ಪ್ರಯಾಣಿಸುವಂತೆ ಕೆಆರ್ಸಿಎಲ್ ಅಧಿಕಾರಿಗಳು ವಿನಂತಿಸಿದ್ದಾರೆ. ಟಿಕೆಟ್ ಖರೀದಿಸಿ ಪ್ರಯಾಣಿಸುವ ಮೂಲಕ ಕೆಆರ್ಸಿಎಲ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗುವ ಯಾವುದೇ ರೀತಿಯ ತೊಂದರೆಯನ್ನು ತಪ್ಪಿಸುವಂತೆ ರೈಲ್ವೆ ಅಧಿಕಾರಿಗಳು ವಿನಂತಿಸಿದ್ದಾರೆ. ಇನ್ನು ಮುಂದೆಯೂ ಕೊಂಕಣ ರೈಲ್ವೆಯ ಎಲ್ಲಾ ಮಾರ್ಗಗಳಲ್ಲೂ ಟಿಕೆಟ್ ತಪಾಸಣಾ ಪ್ರಕ್ರಿಯೆ ಯನ್ನು ಇನ್ನಷ್ಟು ತೀವ್ರವಾಗಿ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಗಾಯಗೊಂಡಿರೋ ಮೊಜ್ತಬಾ ಖಮೇನಿ ಸುತ್ತ ಇದೆ NOPO ಎಂಬ ರಹಸ್ಯ ಕವಚ: ಇರಾನ್ನ IRGCಗಿಂತ ಮಾರಕ ʼಬ್ಲ್ಯಾಕ್ ಫೋರ್ಸ್ʼ ಇದು!
ಇರಾನ್ ಸುಪ್ರೀಂ ಲೀಡರ್ ಆಗಿದ್ದ ಖಮೇನಿ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ದೇಶದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆದರೆ ವರದಿಗಳ ಪ್ರಕಾರ, ಫೆ.28ರ ದಾಳಿ ಬಳಿಕ ಅವರು ಕೋಮಾದಲ್ಲಿದ್ದಾರೆಂದು ಎಂದು ಕೇಳಿಬರುತ್ತಿದ್ದು, ಇಸ್ರೇಲ್ -ಅಮೆರಿಕಾ ಬೆದರಿಕೆಗಳ ನಡುವೆ ಇವರನ್ನು ರಕ್ಷಿಸಲು ಇರಾನ್ನಲ್ಲಿ IRGCಗಿಂತ ಹೆಚ್ಚು ಮಾರಕ ಹಾಗೂ ರಹಸ್ಯ ಪಡೆ NOPO ಕಾರ್ಯನಿರ್ವಹಸುತ್ತಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಏನಿದು ಇರಾನ್ ಮಾರಕ ಹಾಗೂ ನಿರ್ದಯ ರಹಸ್ಯ ಪಡೆ NOPO ಎಂಬ ಮಾಹಿತಿ ಇಲ್ಲಿದೆ..
ಮಹಿಳೆಯರಿಗೆ ಸಮಾನತೆ ಇನ್ನೂ ಮರೀಚಿಕೆ: ಗೀತಾ ಸುರತ್ಕಲ್
► ಮಹಿಳಾ ದಿನಾಚರಣೆ ಸಪ್ತಾಹ ಸಮಾರೋಪ► ಪಾರ್ವತಿ ಐತಾಳ್ ಸೇರಿ ಐವರು ಮಹಿಳೆಯರಿಗೆ ಸಾಧಕ ಪ್ರಶಸ್ತಿ ಪ್ರದಾನ
ದೇವದುರ್ಗ | ಶಿಕ್ಷಕರ ಪ್ರಬಲ ಇಚ್ಚಾಶಕ್ತಿಯೇ ಶಾಲೆಯ ಬದಲಾವಣೆಗೆ ಕಾರಣ : ಮಲ್ಲಿಕಾರ್ಜುನ
ದೇವದುರ್ಗ : ಒಂದು ಸರ್ಕಾರಿ ಶಾಲೆಯ ಸರ್ವತೋಮುಖ ಕಲಿಕೆ ಹಾಗೂ ಸಮಗ್ರ ಬದಲಾವಣೆಗೆ ಶಿಕ್ಷಕರ ಪ್ರಬಲ ಇಚ್ಚಾಶಕ್ತಿ ಮತ್ತು ವೃತ್ತಿಯ ಪ್ರಾಮಾಣಿಕತೆ ಅತ್ಯಂತ ಮುಖ್ಯವಾಗುತ್ತದೆ ಎಂದು ದೇವದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಹೇಳಿದರು. ತಾಲೂಕಿನ ಪಿ.ಎಂ. ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಶಿಕ್ಷಕರು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಈ ಕಾರ್ಯದಲ್ಲಿ ಶಿಕ್ಷಕರೊಂದಿಗೆ ಪಾಲಕರ ಸಹಕಾರವೂ ಅಗತ್ಯ ಎಂದು ಹೇಳಿದರು. ಈ ವೇಳೆ ಪಿ.ಎಂ. ಶ್ರೀ ಪಟೇಲ್ ಓಣಿ ಶಾಲೆಯ ಯುಕೆಜಿ ಮಕ್ಕಳ ಘಟಿಕೋತ್ಸವದಲ್ಲಿ ಕಾನ್ವೊಕೇಶನ್ ಉಡುಪಿನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ನೋಡಿ ಅವರು ಸಂತಸ ವ್ಯಕ್ತಪಡಿಸಿ ಪ್ರಮಾಣಪತ್ರಗಳನ್ನು ವಿತರಿಸಿದರು. ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದಷ್ಟು ಖುಷಿಯಾಯಿತು ಎಂದು ಹೇಳಿ ಮುಖ್ಯಗುರುಗಳು ಹಾಗೂ ಶಿಕ್ಷಕರ ಪರಿಶ್ರಮವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಶಾಲೆಯ ಕಲಿಕಾ ಪ್ರಗತಿ ಹಾಗೂ ಕಾರ್ಯಕ್ರಮದ ಆಯೋಜನೆ ನೋಡಿದರೆ ಖಾಸಗಿ ಶಾಲೆಗಳಿಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ನಡೆಸಲಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಪವಿತ್ರ ಯಾಟಗಲ್, ಎಸ್ ಡಿ ಎಂ ಸಿ ಅಧ್ಯಕ್ಷ ಸಾಬಣ್ಣ, ಪುರಸಭೆ ಸದಸ್ಯ ಪಂಪಣ್ಣ, ಶಿಕ್ಷಣ ಸಂಯೋಜಕರಾದ ಮಹದೇವಪ್ಪ, ಬಿ ಆರ್ ಪಿ ಸುರೇಶ, ದಾನಮ್ಮ ಬಾಬು, ಶಿವಾಜಿ, ವಲಯ ಸಿ ಆರ್ ಪಿ ಬಾಬು ಹಡಗಲಿ, ಎಸ್ ಡಿ ಎಂ ಸಿ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಫ್ಲೈಬ್ರರಿ’ ; ಪುಸ್ತಕ ಪ್ರಿಯರಿಗೊಂದು ಮಿನಿ ಪುಸ್ತಕಾಲಯ
ಮಂಗಳೂರು: ಪುಸ್ತಕ ಪ್ರೇಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿನಿ ಪುಸ್ತಕಾಲಯವನ್ನು ಆರಂಭಿಸಲಾಗಿದೆ. ನಾಗರಿಕ ವಿಮಾನ ಯಾನ ಸಚಿವಾಲಯದ ಪ್ರಸ್ತಾವ ಮೇರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರಂಭಿಸಲಾಗಿರುವ ‘ಫ್ಲೈಬ್ರೆರಿ’ಯಲ್ಲಿ ಸದ್ಯ 40 ಪುಸ್ತಕಗಳನ್ನು ಇರಿಸಲಾಗಿದೆ. ವಿಮಾನ ನಿಲ್ದಾಣದ ಪ್ರಥಮ ಮಹಡಿಯಲ್ಲಿ ದೇಶೀಯ ವಿಮಾನ ನಿರ್ಗಮನದ ಗೇಟ್ ನಂ.4ರಲ್ಲಿ ಪುಸ್ತಕಾಲಯವನ್ನು ತೆರೆಯಲಾಗಿದ್ದು, ಪ್ರಮುಖ ಲೇಖಕರಿಂದ ಕೊಡುಗೆಯಾಗಿ ನೀಡಿರುವ ಪುಸ್ತಕಗಳನ್ನಿಡಲಾಗಿದೆ. ಪುಸ್ತಕ ಪ್ರಿಯರು ಆರಾಮವಾಗಿ ಕುಳಿತು ಓದಲು ಅನುಕೂಲವಾಗುವಂತೆ ನಾಲ್ಕು ಸೋಫಾಗಳನ್ನು ಈ ಪುಸ್ತಕಾಲಯದ ಎದುರು ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ವಿಮಾನಗಳ ನಿರ್ಗಮನದ ಬಳಿಯೂ ಮಾಡಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.
ವೀರೇಂದ್ರ ಪಾಟೀಲ್ ಇಡೀ ರಾಜ್ಯಕ್ಕೆ ಮಾರ್ಗದರ್ಶಕ ನಾಯಕ : ಸಚಿವ ಪ್ರಿಯಾಂಕ್ ಖರ್ಗೆ
ಮಾಜಿ ಸಿಎಂ ವೀರೇಂದ್ರ ಪಾಟೀಲ್ ಅವರ 29ನೇ ಪುಣ್ಯಸ್ಮರಣೆ
ಅಮೆರಿಕಕ್ಕೆ ಸಂಬಂಧಿಸಿದ ತೈಲ ಮೂಲಸೌಕರ್ಯಗಳು ಬೂದಿಯಾಗಲಿವೆ: ಇರಾನ್ ಎಚ್ಚರಿಕೆ
ಟೆಹ್ರಾನ್, ಮಾ.14: ಇರಾನ್ನ ಖಾರ್ಗ್ ದ್ವೀಪದ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ, ಈ ದಾಳಿಗೆ ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. ಇರಾನ್ನ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿದರೆ `ಅಮೆರಿಕದ ಷೇರುಗಳನ್ನು ಹೊಂದಿರುವ ಅಥವಾ ಅಮೆರಿಕದೊಂದಿಗೆ ಸಹಕರಿಸುವ ಪ್ರದೇಶದಾದ್ಯಂತ ತೈಲ ಕಂಪೆನಿಗಳಿಗೆ ಸೇರಿದ ಎಲ್ಲಾ ತೈಲ ಮತ್ತು ಇಂಧನ ಮೂಲಸೌಕರ್ಯಗಳು ನಾಶವಾಗುತ್ತವೆ ಮತ್ತು ಬೂದಿಯ ರಾಶಿಯಾಗಿ ಮಾರ್ಪಡುತ್ತವೆ' ಎಂದು ಇರಾನ್ ಮಿಲಿಟರಿಯ ವಕ್ತಾರರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಂಘರ್ಷವು ತೀವ್ರಗೊಳ್ಳುತ್ತಿದ್ದಂತೆ ಇರಾನ್ ಹಲವಾರು ಸುಧಾರಿತ ಕ್ಷಿಪಣಿ ವ್ಯವಸ್ಥೆಗಳನ್ನು ಬಳಸಲು ಯೋಜಿಸಿದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಇತರ ರೀತಿಯ ಕ್ಷಿಪಣಿಗಳನ್ನು ಹೆಚ್ಚಿನ ವಿನಾಶಕಾರಿ ಶಕ್ತಿ ಮತ್ತು ನಿಖರತೆಯೊಂದಿಗೆ ನಿಯೋಜಿಸುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಅಮೆರಿಕದ ಪಡೆಗಳು ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಿದ ಬಳಿಕ ಬಂದರುಗಳು, ಹಡಗುಕಟ್ಟೆ ಮತ್ತು ಮಿಲಿಟರಿ ಸ್ಥಳಗಳನ್ನು ಒಳಗೊಂಡಂತೆ ಯುಎಇಯಲ್ಲಿರುವ ಅಮೆರಿಕದ ಆಸಕ್ತಿಗಳು ಕಾನೂನುಬದ್ಧ ಗುರಿಗಳಾಗಿವೆ ಎಂದು ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಶನಿವಾರ ಹೇಳಿದೆ ಮತ್ತು ಯುಎಇಯ ನಿವಾಸಿಗಳು ಬಂದರುಗಳ ಸುತ್ತಲಿನ ಪ್ರದೇಶಗಳಿಂದ ದೂರ ಸರಿಯುವಂತೆ ಆಗ್ರಹಿಸಿದೆ ಎಂದು `ರಾಯ್ಟರ್ಸ್' ಶನಿವಾರ ವರದಿ ಮಾಡಿದೆ.
ನೆರೆಯ ದೇಶಗಳ ಮೇಲಿನ ದಾಳಿ ನಿಲ್ಲಿಸುವಂತೆ ಇರಾನ್ಗೆ ಹಮಾಸ್ ಒತ್ತಾಯ
ಗಾಝಾ ನಗರ, ಮಾ.14: ನೆರೆಯ ದೇಶಗಳನ್ನು ಗುರಿಯಾಗಿಸಿಕೊಳ್ಳುವುದನ್ನು ಇರಾನ್ ನಿಲ್ಲಿಸುವಂತೆ ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಗುಂಪು ಹಮಾಸ್ ಶನಿವಾರ ಒತ್ತಾಯಿಸಿದೆ. ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಇರಾನ್ ಹೊಂದಿದೆ ಎಂದು ಹೇಳಿರುವ ಹಮಾಸ್, ಪಶ್ಚಿಮ ಏಶ್ಯಾದಲ್ಲಿ ಆತಂಕದ ಅಲೆ ಸೃಷ್ಟಿಸಿರುವ ಯುದ್ಧವನ್ನು ಕೊನೆಗೊಳಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದೆ. ಇರಾನ್ ಮತ್ತು ಅದರ ಅರಬ್ ಮತ್ತು ಇಸ್ಲಾಮಿಕ್ ನೆರೆಹೊರೆಯವರ ನಡುವೆ ಅಪಶ್ರುತಿಯನ್ನು ಬಿತ್ತಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಹಮಾಸ್, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ನ ಆಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಖತರ್, ಟರ್ಕಿ ಮತ್ತು ಇರಾಕ್ ಸೇರಿದಂತೆ ಹಲವು ದೇಶಗಳ ನಾಯಕರನ್ನು ಸಂಪರ್ಕಿಸಿ ಒತ್ತಾಯಿಸಿರುವುದಾಗಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
Bengaluru | ಮದುವೆಯಾಗುವುದಾಗಿ ನಂಬಿಸಿ ಗೆಳತಿಯ ಹತ್ಯೆ: ವಿವಾಹಿತ ಆರೋಪಿಯ ಬಂಧನ
ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ, ಸಹಜೀವನ ನಡೆಸುತ್ತಿದ್ದ ಗೆಳತಿಯನ್ನು ಹತ್ಯೆಗೈದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಗು ಮೂಲದ ರಂಜಿತಾ(23) ಹತ್ಯೆಗೀಡಾದ ಯುವತಿ ಎಂದು ಗುರುತಿಸಲಾಗಿದೆ. ಆಕೆಯ ತಾಯಿ ನೀಡಿದ ದೂರಿನ ಮೇರೆಗೆ ಅಯ್ಯಪ್ಪ(29) ಎಂಬಾತನನ್ನು ವರ್ತೂರು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ವರ್ತೂರಿನ ಕೊಡತಿ ಬಳಿಯ ಬಾಡಿಗೆ ಮನೆಯೊಂದರಲ್ಲಿ ಯುವತಿ ಮತ್ತು ಆರೋಪಿ ಇಬ್ಬರು ವಾಸವಾಗಿದ್ದರು. ಮಾ.12ರಂದು ಯುವತಿಯ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಡಗಿನ ಪೊನ್ನಂಪೇಟೆ ಮೂಲದ ಅಯ್ಯಪ್ಪನಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ವೈಯಕ್ತಿಕ ಕಾರಣಕ್ಕಾಗಿ ಪತ್ನಿಯನ್ನು ತೊರೆದಿದ್ದ. ಈ ವೇಳೆ ಪಕ್ಕದ ಊರಿನ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಮನೆಯಲ್ಲಿ ಪ್ರೀತಿ ವಿಚಾರವನ್ನು ಯುವತಿ ಪೋಷಕರಿಗೆ ಹೇಳಿ ಒಪ್ಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯಾಗಿರುವ ವಿಚಾರ ತಿಳಿಸಿ, ಪತ್ನಿಗೆ ವಿಚ್ಛೇದನ ನೀಡಿದ್ದು, ನಿಮ್ಮ ಮಗಳನ್ನು ವಿವಾಹವಾಗುವುದಾಗಿ ಆರೋಪಿಯು ಯುವತಿ ಪೋಷಕರಿಗೆ ಭರವಸೆ ನೀಡಿದ್ದ. ಪೋಷಕರ ವಿರೋಧದ ನಡುವೆ ಯುವತಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ. ಎರಡು ತಿಂಗಳ ಹಿಂದೆ ವರ್ತೂರು ಬಳಿ ಬಾಡಿಗೆ ಮನೆ ಮಾಡಿ ಆಕೆ ಜೊತೆ ಸಹಜೀವನ ನಡೆಸುತ್ತಿದ್ದ. ಯುವಕ ಡ್ರೈಫ್ರೂಟ್ಸ್ ಶಾಪ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರೆ, ಯುವತಿ ಸೂಪರ್ ಮಾರ್ಕೆಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. 15 ದಿನಗಳ ಹಿಂದೆ ಕರೆ ಮಾಡಿದ್ದ ಯುವತಿ, ಅಯ್ಯಪ್ಪ ಪ್ರತಿನಿತ್ಯ ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದಳು ಎಂದು ಯುವತಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಂದು ವಾರದಿಂದ ಇಬ್ಬರ ನಡುವೆ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆಯಾಗುತ್ತಿತ್ತು. ಎರಡು ದಿನಗಳ ಹಿಂದೆ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಕೇಬಲ್ ವೈರ್ನಿಂದ ಯುವತಿಯ ಕುತ್ತಿಗೆ ಬಿಗಿದು ಆರೋಪಿ ಹತ್ಯೆ ಮಾಡಿದ್ದ. ಬಳಿಕ ಯುವತಿ ಕುಟುಂಬಸ್ಥರಿಗೆ ಕರೆ ಮಾಡಿ ನಿಮ್ಮ ಮಗಳು ನೇಣು ಬಿಗಿದುಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದ. ಮಗಳ ಸಾವಿಗೆ ಅಯ್ಯಪ್ಪ ಕಾರಣ ಎಂದು ಅನುಮಾನಿಸಿ ಯುವತಿಯ ತಾಯಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಹತ್ಯೆ ಮಾಡಿರುವುದು ಕಂಡುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರಾವಳಿಯಲ್ಲಿ ರಂಗಾಯಣ ಅತೀ ಅಗತ್ಯ: ಸತೀಶ್ ತಿಪಟೂರು
ಮುರಾರಿ - ಕೆದ್ಲಾಯ ರಂಗೋತ್ಸವ ಉದ್ಘಾಟನೆ
ಕಾಳಗಿ ಜನರ ಪ್ರಜಾಸೌಧದ ಕನಸು ನನಸು : ಸಚಿವ ಪ್ರಿಯಾಂಕ್ ಖರ್ಗೆ
56.36 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ; ಉದ್ಘಾಟನೆ
ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ : ಸಿದ್ದರಾಮಯ್ಯ
ಬಾಗಲಕೋಟೆ : ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶನಿವಾರ ನವನಗರ ಹೆಲಿಪ್ಯಾಡ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದಿಂದ ಎಚ್.ವೈ.ಮೇಟಿ ಅವರ ಕುಟುಂಬ ಸದಸ್ಯರು ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಿದರು. ಎರಡು ಕ್ಷೇತ್ರಗಳಿಗೆ ಒಂದು ವಾರದೊಳಗೆ ಉಪ ಚುನಾವಣೆ ಘೋಷಣೆಯಾಗಬಹುದು. ಯಾರಾದರೂ ಆಕಾಂಕ್ಷಿಯಾಗಬಹುದು. ಒಂದೇ ಕುಟುಂಬದಿಂದ ಎಷ್ಟು ಜನ ಕೇಳಿದರೂ ಒಬ್ಬರಿಗೆ ಮಾತ್ರ ಹೈ ಕಮಾಂಡ್ ಟಿಕೆಟ್ ನೀಡುವುದು. ಉಪಚುನಾವಣೆಗೆ ಎಲ್ಲ ತಯಾರಿ ನಡೆದಿದ್ದು, ನಾವು ಅದಕ್ಕೆ ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ನುಡಿದರು.
ಬಾಗಲಕೋಟೆಯಲ್ಲಿ ಬಿಜೆಪಿ ವೈದ್ಯಕೀಯ ಕಾಲೇಜು ಯಾಕೆ ಸ್ಥಾಪಿಸಲಿಲ್ಲ?: ಮುಖ್ಯಮಂತ್ರಿ
ಬಾಗಲಕಟೆ, ಮಾ.14: ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಯಾಕೆ ಸ್ಥಾಪನೆ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಉಪಚುನಾವಣೆ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಸಮಾರಂಭ ಹಾಗೂ ಛತ್ರಪತಿ ಶಿವಾಜಿ ಹಾಗೂ ಬಸವಣ್ಣ ಅವರ ಮೂರ್ತಿಗೆ ತಲಾ 40 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸೂಚಿಸಿರುವುದು ಚುನಾವಣಾ ಗಿಮಿಕ್ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ನವನಗರ ಹೆಲಿಪ್ಯಾಡ್ನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು. ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಟೆಂಡರ್ ಕರೆದು ಏಜೆನ್ಸಿ ನಿಗದಿ ಮಾಡಲಾಗಿದೆ. ಕೆಲಸ ಪ್ರಾರಂಭವಾಗಬೇಕಿರುವುದರಿಂದ ಅಡಿಗಲ್ಲು ಹಾಕಲಾಗುತ್ತಿದೆ. ಇದು ಚುನಾವಣಾ ಗಿಮಿಕ್ ಹೇಗಾಗುತ್ತದೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ದಿವಂಗತ ಶಾಸಕ ಎಚ್.ವೈ.ಮೇಟಿಯವರ ಪ್ರಯತ್ನ ಮತ್ತು ಆಶಯದಂತೆ ಸರಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸುವ ಮೂಲಕ ಅವರ ಕನಸನ್ನು ನನಸು ಮಾಡಲಾಗುವುದು ಸಿದ್ದರಾಮಯ್ಯನವರು ನುಡಿದರು. ಕೃಷ್ಣಾ ಮೇಲ್ದಂಡೆ ಯೋಜನೆ-ಸಂತ್ರಸ್ತರಿಗೆ ಪರಿಹಾರ ಚೆಕ್: ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂದು ವಿಪಕ್ಷ ನಾಯಕರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಲಾಗುತ್ತಿದ್ದು, ಸಂತ್ರಸ್ತರೆಲ್ಲರಿಗೂ ಮೂರು ನಾಲ್ಕು ವರ್ಷಗಳ ಅವಧಿಯಲ್ಲಿ ಪರಿಹಾರ ವಿತರಣೆ ಮಾಡಲಾಗುವುದು ಎಂದರು. ಸಿಲಿಂಡರ್ ಪೂರೈಕೆ-ಕೇಂದ್ರ ಸರಕಾರದ ಜವಾಬ್ದಾರಿ: ಸಿಲಿಂಡರ್ ಸರಬರಾಜು ಸುಗಮಗೊಳಿಸುವುದು ಕೇಂದ್ರ ಸರಕಾರದ ಜವಾಬ್ದಾರಿ. ರಾಜ್ಯ ಸರಕಾರವು ಕೇಂದ್ರ ಸರಕಾರ ಕೊಟ್ಟರೆ ವಿತರಣೆ ಮಾಡುತ್ತದೆ. ಆಹಾರ ಸಚಿವರು ಎರಡು ಸಭೆಗಳನ್ನು ಈಗಾಗಲೇ ನಡೆಸಿದ್ದು, ಕೇಂದ್ರ ಸಚಿವರಿಗೆ ಪತ್ರವನ್ನೂ ಬರೆಯಲಾಗಿದೆ. ಸಿಲಿಂಡರ್ ಅಭಾವವಾಗದಂತೆ ಎಚ್ಚರಿಕೆ ವಹಿಸಲು ಕೋರಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಒಳಮೀಸಲಾತಿ: ಮಾ.27ಕ್ಕೆ ಸಭೆ: ‘ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಚರ್ಚಿಸಲು ಮಾ.27ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಅದರಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೂಲಂಕಷವಾಗಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು’ -ಸಿದ್ದರಾಮಯ್ಯ, ಮುಖ್ಯಮಂತ್ರಿ
ಕರ್ನಾಟಕದ ನೀರಾವರಿ ಯೋಜನೆಗೆ ಆಂಧ್ರ ಅಡ್ಡಗಾಲು: ಸಿಡಿದೆದ್ದ ಡಿಸಿಎಂ ಡಿ.ಕೆ.ಶಿವಕುಮಾರ್
ಬಾಗಲಕೋಟೆ, ಮಾರ್ಚ್ 14: ರಾಜ್ಯದ ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ತುಂಗಭದ್ರಾ ನೀರಾವರಿ ಯೋಜನೆಗೆ ಆಂಧ್ರ ಪ್ರದೇಶ ಸರ್ಕಾರ ಒಡ್ಡುತ್ತಿರುವ ಅಡ್ಡಿಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೆರೆಯ ರಾಜ್ಯದ ತಗಾದೆಗೆ ತಿರುಗೇಟು ನೀಡಲು ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಈ ವಿಷಯವಾಗಿ ರಾಜ್ಯದ ಸಂಸದರೊಂದಿಗೆ ದೆಹಲಿಯಲ್ಲಿ

23 C