SENSEX
NIFTY
GOLD
USD/INR

Weather

26    C
...

ವಿಟ್ಲ| ಬಸ್ - ಟಪ್ಪರ್ ಲಾರಿ ನಡುವೆ ಅಪಘಾತ: ಚಾಲಕರ ನಡುವೆ ಹೊಡೆದಾಟ

ವಿಟ್ಲ: ಕುದ್ದುಪದ್ದವು ಪೆರುವಾಯಿ ರಸ್ತೆಯ ಮುಳಿಯ ದಂಬೆ ಅಂಗನವಾಡಿ ಕೇಂದ್ರದ ಸಮೀಪ ಕೆಎಸ್‍ಆರ್‍ಟಿಸಿ ಬಸ್ ಮತ್ತು ಟಿಪ್ಪರ್ ನಡುವೆ ಅಪಘಾತ ನಡೆದು, ಎರಡು ಕಡೆಯವರ ಮಾತಿನ ಚಕಮಕಿ ನಡೆದು, ದೂರು ಪ್ರತಿದೂರು ದಾಖಲಾಗಿದೆ. ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಮತ್ತು ಪೆರುವಾಯಿ ಕಡೆ ಹೋಗುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇಳಿಜಾರು ಪ್ರದೇಶ ಹಾಗೂ ತಿರುವಿನಲ್ಲಿ ಎರಡು ವಾಹನಗಳು ಒಟ್ಟಿಗೆ ಮುನ್ನುಗಿದ ಕಾರಣ ಅಪಘಾತವಾಗಿದೆ. ಅಪಘಾತದ ಬಳಿಕ ಬಸ್ ಚಾಲಕ ಮತ್ತು ಟಿಪ್ಪರ್ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ಬಳಿಕ ಟಿಪ್ಪರ್ ಚಾಲಕ, ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ಹೊಡೆದಾಟ ನಡೆದಿದೆ ಎಂದು ಹೇಳಲಾಗಿದೆ. ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿ ದೂರು ಪ್ರತಿದೂರು ನೀಡಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Mar 2026 10:26 pm

ಚಿಂಚೋಳಿ | ಚಿಮ್ಮನಚೋಡದಲ್ಲಿ 77ನೇ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ

ಚಿಂಚೋಳಿ : ಶ್ರೀ ಸಂಗಮೇಶ್ವರ ದೇವರ 77ನೇ ವರ್ಷದ ವೈಭವದ ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಭಕ್ತರ ಜನಸಾಗರದ ನಡುವೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ವೀರಗಾಸೆ, ಡೊಳ್ಳು ಮೇಳಗಳ ಭವ್ಯ ಮೆರವಣಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆ ಶ್ರೀ ವೀರಭದ್ರೇಶ್ವರ ದೇವಾಲಯದಿಂದ ಅಗ್ನಿ ಕುಂಡದವರೆಗೆ ಭವ್ಯ ಮೆರವಣಿಗೆ ನಡೆಯಿತು. ಚಿಕ್ಕಮಗಳೂರು ಜಿಲ್ಲೆಯ ವೀರಗಾಸೆ ತಂಡ, ಮಹಿಳೆಯರ ಡೊಳ್ಳು ತಂಡ, ವೇಷಧಾರಿ ಗೊಂಬೆಗಳ ಕುಣಿತ, ಸ್ಥಳೀಯ ತಮಟೆ ತಂಡ ಸೇರಿದಂತೆ ವಿವಿಧ ವಾದ್ಯ ಮೇಳಗಳು ಮೆರುಗು ನೀಡಿದವು. ಪುರವಂತರ ಒಡುಪು ಹಾಗೂ ಶಸ್ತ್ರ ಹಾಯಿಸುವ ಸಾಹಸ ಪ್ರದರ್ಶನಗಳು ಭಕ್ತರಲ್ಲಿ ರೋಮಾಂಚನ ಮೂಡಿಸಿದವು. ನಂತರ ಭಕ್ತಾದಿಗಳು ಅಗ್ನಿ ತುಳಿಯುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು. ಐದು ದಿನಗಳ ಪಲ್ಲಕ್ಕಿ ಉತ್ಸವ : ಯುಗಾದಿ ಹಬ್ಬದ ದಿನದಂದು ಚಾಲನೆಗೊಂಡ ಶ್ರೀ ಸಂಗಮೇಶ್ವರ ಪಲ್ಲಕ್ಕಿ ಉತ್ಸವವು ಸತತ ಐದು ದಿನಗಳ ಕಾಲ ಗ್ರಾಮದ ವಿವಿಧ ಓಣಿಗಳಲ್ಲಿ ಸಂಚರಿಸಿತು. ಪ್ರತಿದಿನವೂ ಭಕ್ತರು ದೇವರಿಗೆ ವಿಶೇಷ ಪೂಜೆ ಹಾಗೂ ನೈವೇದ್ಯ ಅರ್ಪಿಸಿದರು. ಮಳೆಯ ನಡುವೆಯೂ ಎಳೆದ ಹೂವಿನ ತೇರು : ಸಂಜೆ ಮಳೆಯ ನಡುವೆಯೂ ಭಕ್ತರ ಉತ್ಸಾಹ ಕುಂದಿರಲಿಲ್ಲ. ಕುಂಭದೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಹೂವಿನಿಂದ ಸುಂದರವಾಗಿ ಅಲಂಕೃತಗೊಂಡಿದ್ದ ಮಹಾರಥವನ್ನು ಸಹಸ್ರಾರು ಭಕ್ತರು ಜಯಘೋಷಗಳೊಂದಿಗೆ ಎಳೆದು ಪುನೀತರಾದರು. ಈ ಸಂದರ್ಭದಲ್ಲಿ ಜಾತ್ರೆ ಸಮಿತಿ ಅಧ್ಯಕ್ಷರಾದ ಶಿವಮೂರ್ತಿ ಜಾಡರ, ಮಲ್ಲಯ್ಯ ಸ್ವಾಮಿ ಮಠಪತಿ, ಮಲ್ಲಿಕಾರ್ಜುನ ಪಂಚಾಳ, ಸುಭಾಷ್ ಪಂಚಾಳ, ರಾಮರೆಡ್ಡಿ ಪೊಲೀಸ್ ಪಾಟೀಲ್, ನರಸಪ್ಪ ಗಣಪುರ, ನರಸಪ್ಪ ಕೊಡದೂರು, ರತನಕುಮಾರ ತೆಲಕಪಳ್ಳಿ, ಆನಂದ ಬೆಡಸೂರು, ರಾಜಕುಮಾರ ಕೊಳಕೂರು, ಸೋಮನಾಥ ದುಬಲಗುಂಡಿ, ಶರಣರೆಡ್ಡಿ ಮೊಗಲಪ್ಪನೋರ್, ಅಮರನಾಥ ದುಬಲಗುಂಡಿ, ಶಂಕರ ರೇಕುಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ವಿಶೇಷ ಆಕರ್ಷಣೆ : ನಾಟಕ ಪ್ರದರ್ಶನ ಜಾತ್ರೆಯ ನಿಮಿತ್ತ ಶ್ರೀ ಸಂಗಮೇಶ್ವರ ನವಯುವಕ ನಾಟ್ಯ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಾರ್ತಾ ಭಾರತಿ 24 Mar 2026 10:22 pm

ಮಂಗಳೂರು: ಶೆಫರ್ಡ್ಸ್ ಶಾಹೀನ್ ಪಿಯು ಕಾಲೇಜಿನಲ್ಲಿ 40 ದಿನಗಳ ಉಚಿತ NEET ಮತ್ತು CET ತರಬೇತಿ ಶಿಬಿರ

ಮಂಗಳೂರು: ಅರ್ಕುಳದ ಶೆಫರ್ಡ್ಸ್ ಶಾಹೀನ್ ಪಿಯು ಕಾಲೇಜಿನಲ್ಲಿ 40 ದಿನಗಳ ಉಚಿತ ʼನೀಟ್ ಮತ್ತು ಸಿಇಟಿ ಟೆಸ್ಟ್ ಸೀರಿಸ್ʼ (NEET and CET test series) ತರಬೇತಿ ಶಿಬಿರದ ಉದ್ಘಾಟನೆಯು ಶಿಕ್ಷಣ ತಜ್ಞರು ಮತ್ತು ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಅರಿವು ಮೂಡಿಸಲು ʼನೀಟ್ ಮತ್ತು ಸಿಇಟಿ ಟೆಸ್ಟ್‌ ಸೀರಿಸ್ʼ ಅನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶೆಫರ್ಡ್ಸ್ ಇಂಟರ್‌ ನ್ಯಾಷನಲ್ ಅಕಾಡೆಮಿಯ ಅಧ್ಯಕ್ಷರಾದ ಎಆರ್ ಮುಹಮ್ಮದ್ ನಿಸಾರ್, 40 ದಿನಗಳ ಉಚಿತ ನೀಟ್ ಮತ್ತು ಸಿಇಟಿ ಟೆಸ್ಟ್‌ ಸೀರಿಸ್ ಬಗ್ಗೆ ವಿವರಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತರಬೇತಿಯು ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ವಿವರಿಸಿದ್ದಾರೆ. ಎಮ್ಇಐಎಫ್ ದಕ್ಷಿಣ ಕನ್ನಡ ಕೇಂದ್ರ ಘಟಕದ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಸ್ಪಷ್ಟ ಗುರಿಗಳನ್ನು ಹೊಂದಿರುವುದರ ಮಹತ್ವದ ಬಗ್ಗೆ ಮಾತನಾಡಿದರು. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸುತ್ತದೆ ಎಂದು ಹೇಳಿದರು. ಅಡ್ಡೂರು ಕಮ್ಯೂನಿಟಿ ಸೆಂಟರ್‌ನ ಮುಹಮ್ಮದ್ ಇಬ್ರಾಹಿಂ ಅಳಕೆ ಮಾತನಾಡಿ, ತಿಳುವಳಿಕೆ ಮತ್ತು ನಿಯಮಿತ ಅಭ್ಯಾಸದ ಅಗತ್ಯವನ್ನು ಒತ್ತಿ ಹೇಳಿದರು. ನೀಟ್ ಮತ್ತು ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿ ರುವ ವಿದ್ಯಾರ್ಥಿಗಳಿಗೆ ಇವು ಅತ್ಯಗತ್ಯ ಎಂದು ಹೇಳಿದರು. ಪುತ್ತೂರು ಕಮ್ಯೂನಿಟಿ ಸೆಂಟರ್ ಸಂಸ್ಥಾಪಕ ಹನೀಫ್ ಪುತ್ತೂರು ಮಾತನಾಡಿ, ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಸರಿಯಾದ ಮಾರ್ಗದರ್ಶನ ಹಾಗೂ ಸಿದ್ಧತೆಯ ಮಹತ್ವದ ಬಗ್ಗೆ ಮಾತನಾಡಿದರು. ಹಾಸನದ ಕಮ್ಯುನಿಟಿ ಸೆಂಟರ್ ಸಂಸ್ಥಾಪಕ ಸೈಯದ್ ಇಸ್ರಾರ್ ಅಹ್ಮದ್ ಜುನೇದಿ ಮಾತನಾಡಿ, ಇಂತಹ ತರಬೇತಿಯು ವಿದ್ಯಾರ್ಥಿಗಳಿಗೆ ತಮ್ಮ ಸಿದ್ಧತೆಯ ಬಗ್ಗೆ ಮೌಲ್ಯಮಾಪನ ಮಾಡಲು, ತಪ್ಪುಗಳನ್ನು ಅರ್ಥ ಮಾಡಿಕೊಂಡು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಕಾರ್ಯಕ್ರಮವು ಶೆಫರ್ಡ್ಸ್ ಇಂಟರ್ ನ್ಯಾಷನಲ್ ಅಕಾಡೆಮಿಯ ಟ್ರಸ್ಟಿ ಎಸ್.ಎಂ. ಫಾರೂಕ್ ಅವರ ಭಾಷಣ ದೊಂದಿಗೆ ಮುಕ್ತಾಯಗೊಂಡಿತು. ಅವರು ವಿದ್ಯಾರ್ಥಿಗಳು ನೀಟ್ ಮತ್ತು ಸಿಇಟಿ ಪರೀಕ್ಷೆಯನ್ನು ಆತ್ಮವಿಶ್ವಾಸ, ಮತ್ತು ಸತತ ಪ್ರಯತ್ನದಿಂದ ಎದುರಿಸುವಂತೆ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಬೆಂಬಲ ನೀಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ವ್ಯವಸ್ಥಿತ ವಾತಾವರಣ ಒದಗಿಸುವುದೇ ಶೆಫರ್ಡ್ಸ್ ಸಂಸ್ಥೆಯ ಧ್ಯೇಯ. ಅನುಭವಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ನಂತರ ವಾರ್ತಾಭಾರತಿ ಜೊತೆ ಮಾತನಾಡಿದ ಎಸ್.ಎಂ, ಫಾರೂಕ್, ಈ ತರಬೇತಿಗೆ ಒಟ್ಟು 88 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ತರಬೇತಿಯು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಹಾಯ ಮಾಡಲಿದೆ ಎಂದು ಹೇಳಿದರು. ಈ ವೇಳೆ ಶೆಫರ್ಡ್ಸ್ ಇಂಟರ್ ನ್ಯಾಷನಲ್ ಅಕಾಡೆಮಿಯ ಪ್ರಾಂಶುಪಾಲರಾದ ಲುಬ್ನಾ ಬಾನು, ನಿರ್ದೇಶಕಿ ಡಾ. ನಫೀಸಾ ಶಿರಿನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿಲೋಫರ್ ಸಾಜಿದ್ ಅವರು ನಿರೂಪಿಸಿದರು.

ವಾರ್ತಾ ಭಾರತಿ 24 Mar 2026 10:22 pm

ಸೇಡಂ | ಮಳಖೇಡದಲ್ಲಿ ಮಾ.26ರಿಂದ 28 ರವರೆಗೆ ಉರೂಸ್ ಸಂಭ್ರಮ

ಸೇಡಂ : ತಾಲೂಕಿನ ಮಳಖೇಡದಲ್ಲಿರುವ ಹಝರತ್ ಸೈಯದ್ ಶಾಹ್ ಖಲಿಫತ್ ಊರ್ ರಹಮಾನ್ ಖಾದ್ರಿ ದುರ್ಗಾ ಶರೀಫ್‌ ನಲ್ಲಿ ಮಾ.26ರಿಂದ 28ರವರೆಗೆ ವಾರ್ಷಿಕ ಉರೂಸ್ ಶರೀಫ್ (ಜಾತ್ರೆ) ಜರುಗಲಿದೆ ಎಂದು ಹಝರತ್ ಅಲ್ ಹಜ್ ಸೈಯದ್ ಶಾಹ ಮುಸ್ತಫಾ ಖಾದ್ರಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಮಾ.26ಕ್ಕೆ ರಾತ್ರಿ 8.30ಕ್ಕೆ ಗುರುವಾರ ಹಲಖಾ (ಪ್ರಾರ್ಥನೆ) ಮತ್ತು ಗುಸುಲ್ ಶರೀಫ್, (ಗದ್ದುಗೆಗೆ ಅಭಿಷೇಕ) 27ರಂದು ಸಂದಲ್ ನಡೆಯುವುದು. ಮಳಖೇಡ, ಹೂಡಾ ಬಿ. ಸಂಗಾವಿ. ಮಳಖೇಡ ಸ್ಟೇಷನ್ ಕೂನ್ನೂರ ಹಾಗೂ ದಿಗ್ಗಾಂವ್ ಗ್ರಾಮಗಳಿಂದ ಸಂದಲ್ ಭವ್ಯ ಮೆರವಣಿಗೆ ನಡೆಯುವುದು, ನಂತರ ಹಝರತ್ ಸೈಯದ್ ಶಾಹ್ ಮುಸ್ತಫಾ ಖಾದ್ರಿ ಅವರಿಂದ ಖಂದಲೇಪನ ಜರುಗುವುದು ಎಂದರು. ಮಾ.28ರಂದು ರಾತ್ರಿ 8.30ಕ್ಕೆ ಮಳಖೇಡದಿಂದ ಪಂಜಾ ಮೆರವಣಿಗೆ ನಡೆಯುವುದು, ನಂತರ ದುರ್ಗಾ ಪೀಠಾಧಿಪತಿ ಹಜರತ್ ಸೈಯದ್ ಶಾಹ್ ಮುಸ್ತಫಾ ಖಾದ್ರಿ ಅವರ ಸಾನಿಧ್ಯದಲ್ಲಿ ಅಖಿಲ ಭಾರತ ಮಾನವ ಧರ್ಮ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಾನವ ಧರ್ಮ ಚಿಂತನ ಸಭೆ ನಡೆಯುವುದು. ನಂತರ ಖವ್ವಾಲಿ ಹಾಗೂ ಗೀಗೀ ಪದಗಳ ಗಾಯನ ನಡೆಯುವುದು ಎಂದು ವಿವರಿಸಿದರು. 29ರಂದು ಬೆಳಗ್ಗೆ 7ಕ್ಕೆ ಫಾತೆಹಾ ಖಾನಿ ಪುಷ್ಪಾರ್ಚನೆ ನಡೆಯುವುದು, ಹಝರತ್ ಸಜ್ಜಾದಾ ನಶೀನ ಅವರ ಅಮ್ರತ ಹಸ್ತದಿಂದ ಪ್ರಸಾದ ವಿತರಣೆ, ಮಳಖೇಡ ಹಾಗೂ ಹೂಡಾ (ಬಿ) ಭಕ್ತಿಯಿಂದ ಬೆಳ್ಳಿ ಖಡ್ಗಗಳು ಹಾಗೂ ಬೆಳ್ಳಿ ಗಧೆಯ ಕುಸ್ತಿ ನಡೆಯುವುದು ಎಂದು ಅವರು ಹೇಳಿದರು. ಈ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ಸೇರಿ ಇತರೆ ಶಾಸಕರು ಆಗಮಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜು ಬೀಜನಳ್ಳಿ, ಮಲ್ಲಪ್ಪ ಆರಬೋಳ, ಪೀರಪ್ಪರೆಡ್ಡಿ, ಭಗವಾನ್ ಬೋಚಿನ್, ಸುಭಾಶ್ ಚಂದ್ರ ನರೋಳ ಇದ್ದರು.

ವಾರ್ತಾ ಭಾರತಿ 24 Mar 2026 10:11 pm

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ

ಮೂಡುಬಿದಿರೆ: ಜೀವನದಲ್ಲಿ ನಿಜವಾದ ಯಶಸ್ಸು ಪದವಿ ಅಥವಾ ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಕಂಡ ಕನಸುಗಳನ್ನು ಸಾಧಿಸುವುದರಲ್ಲಿದೆ ಎಂದು ಕೊಚ್ಚಿ ದಕ್ಷಿಣ ನೌಕಾ ಕಮಾಂಡ್‌ ಶಿಕ್ಷಣಾಧಿಕಾರಿ ಕಮೋಡೊರ್ ಬೆನ್ ಹೆಚ್ ಬೆರ್ಸನ್ ನುಡಿದರು. ಅವರು ಮಂಗಳವಾರ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆದ ಆಳ್ವಾಸ್ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಾರ್ಟಿನ್ ಲೂಥರ್ ಕಿಂಗ್ ಜ್ಯೂರವರ ಮಾತುಗಳನ್ನು ಉಲ್ಲೇಖಿಸಿ, ಭವಿಷ್ಯ ರೂಪಿಸುವಲ್ಲಿ ದೂರದೃಷ್ಟಿ ಮತ್ತು ವ್ಯಕ್ತಿತ್ವದ ಮಹತ್ವವನ್ನು ವಿವರಿಸಿದರು. ವಾಲ್ಟ್ ಡಿಸ್ನಿ ಹಾಗೂ ಡಾ ಸಾಸ್‌ರಂತವರು ಅನೇಕ ವಿಫಲತೆಗಳನ್ನು ಮೀರಿ ಸಾಧನೆ ಮಾಡಿದ ಉದಾಹರಣೆಗಳನ್ನು ನೀಡಿದರು. ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡ ಅವರು, ಬಾಲ್ಯದ ಮಾತಿನ ದೋಷ, ಕಾಲೇಜು ದಿನಗಳ ಹೋರಾಟ ಹಾಗೂ ಅಸಭ್ಯ ವರ್ತನೆಯ ಕಾರಣದಿಂದ ಕಾಲೇಜಿ ನಿಂದ ಹೊರಹಾಕುವ ಪರಿಸ್ಥಿತಿಯವರೆಗೆ ತಲುಪಿದ ಸನ್ನಿವೇಶವನ್ನು ವಿವರಿಸಿದರು. ಜೀವನದಲ್ಲಿ ದೊರೆತ ಎರಡನೇ ಅವಕಾಶವೇ ಅವರನ್ನು ಪುನಃ ರೂಪಿಸಿ ಭಾರತೀಯ ನೌಕಾಪಡೆಯಲ್ಲಿ ಗಣನೀಯ ಸೇವೆ ಸಲ್ಲಿಸಲು ನೆರವಾಯಿತು ಎಂದು ಹೇಳಿದರು. ಸಶಸ್ತ್ರ ಪಡೆಗಳನ್ನು ವೃತ್ತಿಯಾಗಿ ಆಯ್ಕೆ ಮಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು. ಆಳ್ವಾಸ್ ಸಂಸ್ಥೆ ನಾಯಕತ್ವ ಮತ್ತು ದೇಶಭಕ್ತಿಯ ಮೂಲಕ ಹಲವು ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ರೂಪಿಸಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಕೋರ್ಸ್ಗಳನ್ನು ಬಲಪಡಿಸುವ ಅಗತ್ಯವಿದೆ. ಜಾಗತಿಕ ವಿಶ್ವವಿದ್ಯಾಲಯಗ ಳೊಂದಿಗೆ ಸ್ಪರ್ಧಿಸಲು ನಾವು ನವೀನತೆ, ಗುಣಮಟ್ಟ ಮತ್ತು ಪ್ರಸ್ತುತತೆಯನ್ನು ಕಾಪಾಡಿಕೊಳ್ಳಬೇಕು. ಕಾಲದ ಬದಲಾವಣೆಗಳಿಗೆ ಹೊಂದಿಕೊಳ್ಳುವ ಶಿಕ್ಷಣವೇ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಪಡಿsಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲದು ಎಂದರು. ಆಳ್ವಾಸ್ ಸಂಸ್ಥೆ ಪ್ರತಿ ವರ್ಷ ಸುಮಾರು 60 ಕೋಟಿ ರೂ. ಯಷ್ಟು ಹಣವನ್ನು ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕೆ ವ್ಯಯಿಸುತ್ತಿದೆ. ಮಂಗಳೂರು ವಿವಿಯ ಅಂತರ್‌ಕಾಲೇಜು ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ದಾಖಲಾದ ಎಲ್ಲಾ 47 ಕೂಟ ದಾಖಲೆಗಳು ಆಳ್ವಾಸ್ ಕಾಲೇಜಿನ ಹೆಸರಿನಲ್ಲಿದೆ ಎಂದರು. ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ನಾರಾಯಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ. ಟಿ.ಕೆ. ರವೀಂದ್ರನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರೆಶಲ್ ಡಿ ಆಲ್ಮೇಡಾ ನಿರೂಪಿಸಿ, ಶಿಖಾ ಸ್ವಾಗತಿಸಿ, ಮಿಯಾ ಕೆನಡಿ ವಂದಿಸಿದರು.  

ವಾರ್ತಾ ಭಾರತಿ 24 Mar 2026 10:09 pm

ಕಲಬುರಗಿ | 893ನೇ ಬಸವ ಜಯಂತಿ ಉತ್ಸವ : ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಮಾಕಾ ಲೇಔಟ್ ಜೇವರ್ಗಿ ಕಾಲೋನಿಯಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ (ರಿ) ವತಿಯಿಂದ 893ನೇ ಬಸವ ಜಯಂತಿ ಉತ್ಸವದ ಅಂಗವಾಗಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮಹಾಂತೇಶ ಕೊಣ್ಣೂರ ಅವರನ್ನು ಹಾಗೂ ಅಧ್ಯಕ್ಷರಾಗಿ ಡಾ.ಬಾಬುರಾವ ಶೇರಿಕಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ರವೀಂದ್ರ ಮಾಲಿ ಪಾಟೀಲ ಮತ್ತು ಕೋಶಾಧ್ಯಕ್ಷರಾಗಿ ಆದಪ್ಪ ಬಗಲಿ ಅವರನ್ನು ಸಹ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಈ ವೇಳೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಜಾಮಗೊಂಡ, ಶಿವಾನಂದ ಮಾಲಾಗತ್ತಿ, ನಾಗಣ್ಣ ಗೌಡ ಪಾಟೀಲ, ಶಿವಾನಂದ ದಾನಮಗುಡಿ, ಅಯ್ಯಣ್ಣ ನಂದಿ, ಹಣಮಂತರಾಯ ಐನಳ್ಳಿ, ಶಿವಕುಮಾರ ಧರ್ಮಗೊಂಡ, ಅಶೋಕ ಗೂಳಿ, ಸಂಗಮೇಶ, ಸಿದ್ದರಾಮ ವಾಲಿ, ನಾಗರಾಜ ಕಾಮಾ, ಸೂರ್ಯಕಾಂತ್ ಡುಮ್ಮ, ರಮೇಶ ಚೌಹಾಣ್, ಪ್ರಸನ್ ವಾಂಜರ ಖೇಡೆ, ಡಾ. ಸಂಜುಕುಮಾರ ಶಟಕಾರ್, ಚಂದ್ರಶೇಖರ ಅಂಕಲಿಗಿ, ರಾಜಶೇಖರ ಸಿನ್ನೂರ, ಬಸವರಾಜ ಮಡಿವಾಳ ಹಾಗೂ ಸತೀಶ ಸಜ್ಜನ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 10:07 pm

ಯಡ್ರಾಮಿ | ವಿಜೃಂಭಣೆಯ ಕುಳಗೇರಿಯ ಶ್ರೀ ಬೆಣ್ಣೆ ಬಸವೇಶ್ವರ ರಥೋತ್ಸವ

ಯಡ್ರಾಮಿ: ಜಾತ್ರೆ, ಹಬ್ಬಗಳ ಆಚರಣೆಯಿಂದ ಸಾಮಾಜಿಕ ಸೌಹಾರ್ದತೆ ಸಾಧ್ಯವಾಗುತ್ತದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತುಂಜಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ತಾಲೂಕಿನ ಕುಳಗೇರಿ ಗ್ರಾಮದಲ್ಲಿ ಸೋಮವಾರ ಸಂಜೆ ಶ್ರೀ ಬೆಣ್ಣೆ ಬಸವೇಶ್ವರ ರಥೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಜಾತ್ರೆಗಳಲ್ಲಿ ಜಾತಿ ತಾರತಮ್ಯ ಕಾಣುವುದಿಲ್ಲ. ತಿಂಡಿ, ತೆಂಗು, ಹೂವು, ಹಣ್ಣು ಹಾಗೂ ಬಳೆ ಮಾರಾಟ ಮಾಡುವ ವ್ಯಕ್ತಿ ಯಾವ ಜಾತಿ, ಧರ್ಮದವರು ಎಂದು ಕೇಳಿ ಭಕ್ತರು ಖರೀದಿಸುವುದಿಲ್ಲ. ಕೇವಲ ಶ್ರದ್ಧೆ, ಭಕ್ತಿಯಿಂದ ಜಾತ್ರೆ ಉತ್ಸವ ಹಬ್ಬಗಳನ್ನು ಆಚರಿಸುತ್ತಾರೆ. ಆದ್ದರಿಂದ ಜಾತ್ರೆ, ಉತ್ಸವ, ಹಬ್ಬಗಳು ನಮ್ಮ ದೇಶದ ಸಾಮಾಜಿಕ ಸೌಹಾರ್ದತೆ ಕಾಪಾಡಲು ಸಹಕಾರಿಯಾಗಿವೆ ಎಂದು ಹೇಳಿದರು. ಘನ ಸಾನಿಧ್ಯವಹಿಸಿದ ಸೊನ್ನ ವಿರಕ್ತಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮಾತನಾಡಿ, ಶ್ರೀ ಬೆಣ್ಣೆ ಬಸವೇಶ್ವರ ಹೊಸ ರಥ ನೋಡುವ ಸೌಭಾಗ್ಯ ನಮ್ಮದಾಗಿದೆ. ಹಬ್ಬಹರಿದಿನಗಳು ಮನುಷ್ಯನ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಕಾಯಕದ ಮೂಲಕ ದೇಹ ದಂಡಿಸುವ ಮೂಲಕ ನಿದ್ದೆ ಮಾಡಬೇಕು. ಪರೋಪಕಾರಿಯಾಗಿ ಬಾಳಬೇಕು ಎಂದರು. ಭವ್ಯ ರಥೋತ್ಸವ : ಕುಳಗೇರಿ ಗ್ರಾಮದಲ್ಲಿ ಸೋಮವಾರ ಸಂಜೆ ಶ್ರೀ ಬೆಣ್ಣೆ ಬಸವೇಶ್ವರ ರಥೋತ್ಸವ ಅಪಾರ ಭಕ್ತ ಸಮೂಹದ ನಡುವೆ ವಿಜಂಭಣೆಯಿಂದ ನಡೆಯಿತು. ರಥದಲ್ಲಿ ದೇವರನ್ನು ಕೂರಿಸಿ ಪೂಜೆ ಸಲ್ಲಿಸಿ, ತೇರಿನ ಗಾಲಿಗೆ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದ ಭಕ್ತರು ಜೈಕಾರ ಹಾಕಿದರು. ಡೊಳ್ಳು, ಜಾಂಜ್ ಮೇಳ, ಭಜನೆ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿದವು. ಭಕ್ತರು ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಭಕ್ತರು ರಥದ ಮೇಲೆ ಬಾಳೆಹಣ್ಣು ಎಸೆದು ಕೈಮುಗಿದು ಭಕ್ತಿ ಸಮರ್ಪಿಸಿದರು. ರಥೋತ್ಸವ ನಡೆಯುವ ದಾರಿಯಲ್ಲಿ ಧೂಳು ಅಡಗಿಸಲು ರಸ್ತೆ ಮೇಲೆ ನೀರು ಚಿಮುಕಿಸಲಾಗಿತ್ತು. ದೇವಾಲಯಕ್ಕೆ ತೆರಳಿದ ಭಕ್ತರು ದೇವರಿಗೆ ಹಣ್ಣುಕಾಯಿ, ಕರ್ಪೂರ, ಊದಬತ್ತಿ ಅರ್ಪಿಸಿ ಭಕ್ತಿ ಸರ್ಪಿಸಿದರು. ಬಿರಾಳ, ಮಳ್ಳಿ, ನಾಗರಹಳ್ಳಿ, ಅಲ್ಲಾಪುರ, ಮಾಗಣಗೇರಿ, ಯಾಳಗಿ, ಕಾಚಾಪುರ, ದುಮ್ಮದ್ರಿ ಮತ್ತಿತರೆ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 24 Mar 2026 10:05 pm

Yedrami | ರಾಸಾಯನಿಕ ಗೊಬ್ಬರದಿಂದ ಮಣ್ಣಿನಲ್ಲಿರುವ ಫಲವತ್ತತೆ ನಾಶ : ಕಣ್ಹೇರಿ ಶ್ರೀ

ಯಡ್ರಾಮಿ: ರೈತರು ಇತ್ತೀಚಿನ ದಿನಗಳಲ್ಲಿ ಅತಿಯಾದ ಆಸೆಯಿಂದ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿರುವ ಫಲವತ್ತತೆ ನಾಶವಾಗಿ ಇಳುವರಿ ಕಡಿಮೆಯಾಗುತ್ತಿದೆ ಎಂದು ಕಣ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು. ಪಟ್ಟಣದ ತಹಶೀಲ್ದಾ‌ರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಸೋಮವಾರ ನಡೆದ ರಾಜ್ಯ ಮಟ್ಟದ ರೈತ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದರ ಬದಲಾಗಿ ರೈತರು ಸ್ವತಃ ಮನೆಗಳಲ್ಲಿರುವ ಎತ್ತು, ಹಸುಗಳಿಂದ ಬರುವ ಸಗಣಿ ಬಳಸಿ ಗೊಬ್ಬರ ತಯಾರಿಸಬೇಕು ಎಂದರು. ಇದನ್ನು ಹೊಲಗಳಿಗೆ ಹಾಕುವುದರಿಂದ ಭೂಮಿ ಫಲವತ್ತತೆ ಹೆಚ್ಚಾಗಿ ಉತ್ತಮ ಇಳುವರಿ ಬರುತ್ತದೆ. ಕಲಬುರಗಿ ಭಾಗದಲ್ಲಿ ಗಿಡಗಳ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿ ಬೆಳೆಗಳು ಸರಿಯಾಗಿ ಬೆಳೆಯುತ್ತಿಲ್ಲ. ಹೀಗಾಗಿ ರೈತರು ಮೊದಲು ಗಿಡ-ಮರಗಳ ಸಂಖ್ಯೆ ಹೆಚ್ಚು ಮಾಡಬೇಕು. ಈ ಭಾಗದಲ್ಲೂ ಕಬ್ಬು ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ಕಬ್ಬು ಬೆಳೆದರೆ ಸಾಲದು. ಅದಕ್ಕೆ ತಕ್ಕ ಪೋಷಕಾಂಶ ಒದಗಿಸಿದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ರೈತರು ಬೆಳವಣಿಗೆಯಾಗಲು ಸರ್ಕಾರಗಳು ಮೊದಲು ಆಹಾರ ಭದ್ರತೆ ಒದಗಿಸಬೇಕು. ಕಳೆದ ಹಲವು ವರ್ಷಗಳಿಂದ ಆಳುತ್ತಿರುವ ರಾಜ್ಯ, ಕೇಂದ್ರ ಸರ್ಕಾರಗಳು ರೈತರಿಗೆ ಕೇವಲ ಆಶ್ವಾಸನೆ ನೀಡುತ್ತಿವೆ. ಆದರೆ ಅವರ ಸಮಸ್ಯೆಗೆ ಪರಿಹಾರ ಮಾತ್ರ ನೀಡುತ್ತಿಲ್ಲ. ಒಬ್ಬರನ್ನೊಬ್ಬರು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರ ಮಂಡಿಸಿರುವ ಬಜೆಟ್ ಗಳು ಸಬ್ಸಿಡಿಗೆ ಬಳಕೆಯಾಗುತ್ತಿದೆ. ರೈತರು ಅಭಿವೃದ್ಧಿ ಹೊಂದಬೇಕಾದರೆ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದರು. ಈ ವೇಳೆ ಮಾಗಣಗೇರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು, ಕಡಕೋಳ ಮಠದ ಡಾ.ರುದ್ರಮುನಿ ಶಿವಾಚಾರ್ಯರು, ಸೊನ್ನ ಮಠದ ಡಾ. ಶಿವಾನಂದ ಮಹಾಸ್ವಾಮೀಜಿ, ಯಡ್ರಾಮಿ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಸುರಪಾಲಿ-ಜಮಖಂಡಿಯ ಗಿರೀಶಾನಂದ ಮಹಾ ಸ್ವಾಮೀಜಿ, ಅರವಿಂದ ಮಹಾರಾಜರು, ಶರಣಾನಂದ ಮಹಾಸ್ವಾಮಿಗಳು, ಹಿರಿಯ ವಿಜ್ಞಾನಿ ಡಾ. ಮಂಜುನಾಥ ಚೌರೆಡ್ಡಿ ಡಾ. ಸುನೀಲಕುಮಾರ ನೂಲಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ, ಈರಣ್ಣ ಭಜಂತ್ರಿ ಇತರರಿದ್ದರು.

ವಾರ್ತಾ ಭಾರತಿ 24 Mar 2026 10:01 pm

ಲೋಕಸಭೆಯಲ್ಲಿ ಸಂಸದರ ಸಂಖ್ಯೆಯನ್ನು 816 ಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ; ರಾಜ್ಯಗಳಲ್ಲಿರುವ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ?

ಮುಂದಿನ ಸಾರ್ವತ್ರಿಕ ಚುನಾವಣೆಯಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರವು ಸಾಂವಿಧಾನಿಕ ತಿದ್ದುಪಡಿ ಸೇರಿದಂತೆ ಕನಿಷ್ಠ ಎರಡು ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಸರ್ಕಾರವು ಲೋಕಸಭೆಯ ಗಾತ್ರವನ್ನು 543 ರಿಂದ 816 ಸ್ಥಾನಗಳಿಗೆ ಗಮನಾರ್ಹವಾಗಿ ವಿಸ್ತರಿಸುವ ಬಗ್ಗೆ ಚಿಂತಿಸುತ್ತಿದ್ದು ಇದು 273 ಹೊಸ ಕ್ಷೇತ್ರಗಳನ್ನು ಸೇರಿಸುತ್ತದೆ. ಇವುಗಳಲ್ಲಿ ಹೆಚ್ಚಿನವು ಮಹಿಳೆಯರಿಗೆ ಮೀಸಲಾಗಿರುತ್ತವೆ. ಇದರಿಂದಾಗಿ ಹಾಲಿ ಸದಸ್ಯರನ್ನು ಸ್ಥಳಾಂತರಿಸದೆ ಪ್ರಾತಿನಿಧ್ಯವನ್ನು ಮರುರೂಪಿಸಲಾಗುತ್ತದೆ. ಈ ಪ್ರಸ್ತಾವನೆಯು ಪ್ರಧಾನಿ ನರೇಂದ್ರ ಮೋದಿಯವರ ಮಹಿಳಾ ಕೇಂದ್ರಿತ ರಾಜಕೀಯ ಸಂದೇಶವನ್ನು ಬಲಪಡಿಸುವ ಮತ್ತು ಚುನಾವಣಾ ಚಲನಶೀಲತೆ, ಕ್ಷೇತ್ರ ಗಡಿಗಳು ಮತ್ತು ಭವಿಷ್ಯದ ಕ್ಷೇತ್ರ ಮರುವಿಂಗಡಣೆ ಹಾದಿಯಲ್ಲಿ ವ್ಯಾಪಕ ಬದಲಾವಣೆಗಳನ್ನು ಉಂಟುಮಾಡುವ ನಿರೀಕ್ಷೆಯಿದೆ ಎಂದು indianexpress.com ವರದಿ ಮಾಡಿದೆ. ಪುನರ್ ರಚಿಸಲಾದ ಲೋಕಸಭೆಯು 2029 ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಜಾರಿಗೆ ಬರಲಿದೆ. ʼಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲವು ವಿರೋಧ ಪಕ್ಷಗಳೊಂದಿಗೆ ನಡೆಸಿದ ಸಭೆಯಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆಯಾದ ಸೀಟುಗಳ ಅಸ್ತಿತ್ವದಲ್ಲಿರುವ ಅನುಪಾತವನ್ನು ಉಳಿಸಿಕೊಂಡು, ಸರ್ಕಾರವು ನಾರಿ ಶಕ್ತಿ ವಂದನ ಅಧಿನಿಯಮವನ್ನು ತಿದ್ದುಪಡಿ ಮಾಡಬಹುದು ಮತ್ತು ಲೋಕಸಭೆಯ ಬಲವನ್ನು ಪ್ರತ್ಯೇಕವಾಗಿ ವಿಸ್ತರಿಸಬಹುದು ಎಂದು ಹೇಳಿದ್ದಾರೆ. ಆದಾಗ್ಯೂ, ಕ್ಷೇತ್ರ ಮರುವಿಂಗಡಣೆ ಒಳಗೊಂಡ ಕ್ಷೇತ್ರ ನಿರ್ಣಯದ ಪ್ರಕ್ರಿಯೆ 2011 ರ ಜನಗಣತಿಯನ್ನು ಆಧರಿಸಿರುವ ನಿರೀಕ್ಷೆಯಿದೆ. ►ಅಮಿತ್ ಶಾ ಹೇಳಿದ್ದು ಏನು? ವಿರೋಧ ಪಕ್ಷದ ನಾಯಕರೊಂದಿಗಿನ ಸಭೆಯಲ್ಲಿ 2029 ರವರೆಗೆ ನಡೆಯುವ ಜನಗಣತಿ ಕಾರ್ಯ ಪೂರ್ಣಗೊಳ್ಳುವವರೆಗೆ ಸರ್ಕಾರ ಕಾಯಲು ಬಯಸುವುದಿಲ್ಲ, ಅದು ಪೂರ್ಣಗೊಳ್ಳಲು ಕಾಯುವುದಾದರೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವುದು ವಿಳಂಬವಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 2023 ರಲ್ಲಿ ನಾರಿ ಶಕ್ತಿ ವಂದನ ಅಧಿನಿಯಮ್ ಅಂಗೀಕಾರದ ಸಮಯದಲ್ಲಿ ಅನೇಕ ವಿರೋಧ ಪಕ್ಷಗಳು ಇದನ್ನೇ ಒತ್ತಾಯಿಸಿದ್ದು ನಡೆಯುತ್ತಿರುವ ಜನಗಣತಿಯ ನಂತರ ಅದನ್ನು ಕ್ಷೇತ್ರ ಮರುವಿಂಗಡಣೆಗೆ ಲಿಂಕ್ ಮಾಡುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದವು. ಸರ್ಕಾರ ಸೋಮವಾರ ಎಲ್ಲಾ ಪಕ್ಷಗಳನ್ನು ಮಾತುಕತೆಗೆ ಆಹ್ವಾನಿಸಿದ್ದರೂ, ಕಾಂಗ್ರೆಸ್, ಎಡ ಪಕ್ಷಗಳು, ಟಿಎಂಸಿ, ಎಎಪಿ ಮತ್ತು ಡಿಎಂಕೆ ಸೇರಿದಂತೆ ಅನೇಕ ಪಕ್ಷಗಳು ಇದರಿಂದ ದೂರ ಉಳಿದಿದ್ದವು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು INDIA ಬ್ಲಾಕ್ ಮಿತ್ರಪಕ್ಷಗಳ ಪ್ರತ್ಯೇಕ ಸಭೆಯನ್ನು ಕರೆದಿದ್ದು ಅಲ್ಲಿ ಪ್ರಸ್ತಾವಿತ ಬದಲಾವಣೆಗಳ ಕುರಿತು ಸರ್ಕಾರದಿಂದ ವಿವರವಾದ ವರದಿಯನ್ನು ಕೋರಲು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬಿಜೆಪಿಯ ಉನ್ನತ ನಾಯಕತ್ವವು ಈ ಪ್ರಸ್ತಾವನೆಯ ಕುರಿತು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚೆ ನಡೆಸಿದೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ. ಪ್ರತಿ ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಿಡಬೇಕಾದ ಸ್ಥಾನಗಳನ್ನು ನಿರ್ಧರಿಸಲು ಲಾಟರಿ ವ್ಯವಸ್ಥೆಯನ್ನು ಹೊಂದುವ ಸಾಧ್ಯತೆಯನ್ನು ಸಹ ಪ್ರಸ್ತಾಪಿಸಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಸಂಸದರೊಬ್ಬರು ಹೇಳಿದರು. ಈ ಸ್ಥಾನಗಳನ್ನು ಮಹಿಳೆಯರಿಗೆ ನಿಗದಿಪಡಿಸಲಾಗುತ್ತದೆಯೇ ಅಥವಾ ಆವರ್ತನ ಆಧಾರದ ಮೇಲೆ ಮೀಸಲಿಡಲಾಗುತ್ತದೆಯೇ ಎಂಬುದರ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ ಅವರು. ಸಭೆಯಲ್ಲಿ ಅಮಿತ್ ಶಾ ಮಾಡಿದ ಮತ್ತೊಂದು ನಿರ್ಣಾಯಕ ಸಲಹೆಯೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಸ್ಥಾನಗಳಲ್ಲಿ ಮಹಿಳೆಯರಿಗೆ ಕೋಟಾ. ಸಮಾಜವಾದಿ ಪಕ್ಷ ಮತ್ತು ಆರ್‌ಜೆಡಿಯಂತಹ ಪಕ್ಷಗಳು ಹಾಗೂ ವಿವಿಧ ಗುಂಪುಗಳ ಹಿಂದುಳಿದ ನಾಯಕರು ಇದನ್ನು ಒತ್ತಾಯಿಸುತ್ತಿದ್ದಾರೆ. ದೇಶದಲ್ಲಿ ಸುಮಾರು 81 ಲಕ್ಷ ಜಾತಿ ಗುಂಪುಗಳಿವೆ. ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಅಸಾಧ್ಯ ಎಂದು ಶಾ ಹೇಳಿರುವುದಾಗಿ ಸೋಮವಾರದ ಸಭೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.   ಈ ಬದಲಾವಣೆಗಳನ್ನು ಜಾರಿಗೆ ತರಲು, ಸರ್ಕಾರವು ಕಾಯ್ದೆಗಳ ತಿದ್ದುಪಡಿಗಳನ್ನು ಅಂಗೀಕರಿಸಬೇಕು. ಮೊದಲನೆಯದಾಗಿ, ಮಹಿಳಾ ಮೀಸಲಾತಿ ಕಾಯ್ದೆ. ಮುಂದಿನ ಜನಗಣತಿ ಮತ್ತು ನಂತರದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಕೋಟಾ ಜಾರಿಗೆ ಬರಬೇಕೆಂದು ಪ್ರಸ್ತುತ ಕಾಯ್ದೆ ಆದೇಶಿಸುತ್ತದೆ . ಎರಡನೆಯದಾಗಿ, ಕ್ಷೇತ್ರ ಮರುವಿಂಗಡಣೆ ಆಯೋಗ ಕಾಯ್ದೆ. 2011 ರ ಜನಗಣತಿಯ ಆಧಾರದ ಮೇಲೆ ಈ ವರ್ಷದ ಜೂನ್ ವೇಳೆಗೆ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ರಚಿಸಬಹುದು.ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಉದ್ದೇಶದಿಂದ ಸರ್ಕಾರವು ಅಧಿವೇಶನವನ್ನು ವಿಸ್ತರಿಸಬಹುದು ಅಥವಾ ವಿಶೇಷ ಅಧಿವೇಶನವನ್ನು ಕರೆಯಬಹುದು ಎಂದು ಮೂಲಗಳು ತಿಳಿಸಿವೆ ►ರಾಜ್ಯಗಳ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? ಪ್ರಸ್ತುತ ಉತ್ತರ ಪ್ರದೇಶವು ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಅಂದರೆ ಸುಮಾರು 15% ಅಥವಾ 543 ರಲ್ಲಿ 80. 816 ಸದಸ್ಯರ ವಿಸ್ತೃತ ಸದನದಲ್ಲಿ ಈ ಅನುಪಾತವನ್ನು ಕಾಯ್ದುಕೊಂಡರೆ, ರಾಜ್ಯದ ಸ್ಥಾನಗಳ ಸಂಖ್ಯೆ ಸುಮಾರು 120 ಕ್ಕೆ ಏರುತ್ತದೆ. ಇದರಲ್ಲಿ ಸರಿಸುಮಾರು 40 ಸ್ಥಾನಗಳು ಪ್ರಸ್ತಾವಿತ ಮೂರನೇ ಒಂದು ಭಾಗದಷ್ಟು ಕೋಟಾದಡಿಯಲ್ಲಿ ಮಹಿಳೆಯರಿಗೆ ಮೀಸಲಾಗಿರುತ್ತವೆ. ಅದೇ ರೀತಿ, ಮಹಾರಾಷ್ಟ್ರವು ತನ್ನ ಲೋಕಸಭಾ ಪ್ರಾತಿನಿಧ್ಯವನ್ನು 48 ರಿಂದ 72 ಸ್ಥಾನಗಳಿಗೆ ಹೆಚ್ಚಿಸಲಿದೆ, ಇದರಲ್ಲಿ 24 ಮಹಿಳೆಯರಿಗೆ ಮೀಸಲಾಗಿವೆ. ಪಶ್ಚಿಮ ಬಂಗಾಳದಲ್ಲಿ ಸೀಟುಗಳ ಸಂಖ್ಯೆ 42 ರಿಂದ 63ಕ್ಕೆ ಏರಲಿದ್ದು ಮಹಿಳೆಯರಿಗೆ 21 ಸೀಟು ಮೀಸಲಾಗಿರುತ್ತದೆ . ಬಿಹಾರದಲ್ಲಿ 40 ಸೀಟುಗಳಿಂದ ರಿಂದ 60ಕ್ಕೆ ಏರಿಕೆಯಾದರೆ ಮಹಿಳೆಯರಿಗೆ 20 ಸೀಟುಗಳಲ್ಲಿ ಪ್ರಾತಿನಿಧ್ಯ ಸಿಗಲಿದೆ. ಕಡಿಮೆ ಪ್ರಾತಿನಿಧ್ಯದ ಬಗ್ಗೆ ಡಿಎಂಕೆ ಕಳವಳ ವ್ಯಕ್ತಪಡಿಸಿರುವ ತಮಿಳುನಾಡಿನಲ್ಲಿ, ಸ್ಥಾನಗಳು 39 ರಿಂದ 59 ಕ್ಕೆ ಹೆಚ್ಚಾಗಲಿವೆ. ಇಲ್ಲಿ 20 ಮಹಿಳೆಯರಿಗೆ ಮೀಸಲಾಗಿವೆ. ಮಧ್ಯಪ್ರದೇಶದಲ್ಲಿ ಸೀಟುಗಳ ಸಂಖ್ಯೆ 29 ರಿಂದ 44 ಸ್ಥಾನಗಳಿಗೆ ಏರಲಿದೆ, ಇದರಲ್ಲಿ 15 ಮಹಿಳೆಯರಿಗೆ ಮೀಸಲಾಗಿವೆ. ಅರುಣಾಚಲ ಪ್ರದೇಶ, ಗೋವಾ, ಮಣಿಪುರ, ಮೇಘಾಲಯ, ತ್ರಿಪುರಾ ಮುಂತಾದ ಸಣ್ಣ ರಾಜ್ಯಗಳಲ್ಲಿ ಇದು 2 ಲೋಕಸಭಾ ಸ್ಥಾನಗಳಿಂದ 3 ಕ್ಕೆ ಏರಬಹುದು. ತಲಾ 1 ಸ್ಥಾನವನ್ನು ಹೊಂದಿರುವ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಹೊಸ ಲೋಕಸಭಾ ವಿಸ್ತರಣೆಯಲ್ಲಿ ತಲಾ 2 ಸ್ಥಾನಗಳನ್ನು ಹೊಂದಬಹುದು. ಪ್ರಮುಖ ಕೇಂದ್ರಾಡಳಿತ ಪ್ರದೇಶಗಳಲ್ಲಿ, ದೆಹಲಿಯ ಲೋಕಸಭಾ ಪ್ರಾತಿನಿಧ್ಯವು 7 ರಿಂದ 11 ಸ್ಥಾನಗಳಿಗೆ ಏರಿಕೆಯಾಗಬಹುದು ,ಇದರಲ್ಲಿ 4 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೀಟುಗಳ ಸಂಖ್ಯೆ 5 ರಿಂದ 8ಕ್ಕೆ ಏರಬಹುದು, ಇದರಲ್ಲಿ 3 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಆದಾಗ್ಯೂ, ಲಡಾಖ್ ಮತ್ತು ಪುದುಚೇರಿಯಂತಹ ಒಂದೇ ಒಂದು ಸ್ಥಾನವಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾನಗಳಲ್ಲಿ ಯಾವುದೇ ಹೆಚ್ಚಳ ಕಂಡುಬರುತ್ತದೆಯೇ ಮತ್ತು ಅಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಹೇಗೆ ಜಾರಿಗೆ ತರಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಾರ್ತಾ ಭಾರತಿ 24 Mar 2026 9:50 pm

ದಿಲ್ಲಿ ಬಜೆಟ್ ಮಂಡನೆ: ಪ್ರತಿ ಕುಟುಂಬಕ್ಕೆ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್

ಹೊಸದಿಲ್ಲಿ: ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಂಗಳವಾರ 2026-27ನೇ ಸಾಲಿನ ದಿಲ್ಲಿ ಮುಂಗಡಪತ್ರವನ್ನು ಮಂಡಿಸಿದ್ದು, ರಾಜಧಾನಿಯ ಪ್ರತಿ ಕುಟುಂಬವು ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲಿದೆ. ಬಜೆಟ್ ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರೀ ಮೊತ್ತದ ವೆಚ್ಚ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದೆ. 1,03,700 ಕೋಟಿ ರೂ.ಗಳೊಂದಿಗೆ ಇದು ದಿಲ್ಲಿಯು ಕಂಡಿರುವ ಅತಿ ದೊಡ್ಡ ಬಜೆಟ್‌ಗಳಲ್ಲಿ ಒಂದಾಗಿದೆ. ರಸ್ತೆಗಳು,ನಗರಾಭಿವೃದ್ಧಿ ಮತ್ತು ನಾಗರಿಕ ವೆಚ್ಚಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರೂ ಸರಕಾರವು ಇದನ್ನು ‘ಹಸಿರು ಬಜೆಟ್’ ಎಂದು ಬಣ್ಣಿಸಿದೆ. ಗುಪ್ತಾ ಕಳೆದ ವರ್ಷ ಒಂದು ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದರು. ಸರಕಾರವು ಬಜೆಟ್‌ನಲ್ಲಿ ಪರಿಸರ ಸಂಬಂಧಿತ ಉಪಕ್ರಮಗಳಿಗಾಗಿ ಒಟ್ಟೂ ಮೊತ್ತದ ಶೇ.21ರಷ್ಟನ್ನು ಮೀಸಲಿರಿಸಿದ್ದು,ಇದು ಮಾಲಿನ್ಯ ನಿಯಂತ್ರಣ ಮತ್ತು ಸುಸ್ಥಿರತೆಗೆ ಪ್ರಾಮುಖ್ಯವನ್ನು ಸೂಚಿಸಿದೆ. ಉಚಿತ ಕೊಡುಗೆಗಳ ಸಂಸ್ಕೃತಿಗಾಗಿ ಹಿಂದಿನ ಆಪ್ ಸರಕಾರವನ್ನು ಗುಪ್ತಾ ಟೀಕಿಸಿದ್ದರೂ, ಹೋಳಿ ಮತ್ತು ದೀಪಾವಳಿಯ ಎರಡು ಸಂದರ್ಭಗಳಲ್ಲಿ ಪ್ರತಿ ಕುಟುಂಬಕ್ಕೆ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲು 260 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದಾರೆ.

ವಾರ್ತಾ ಭಾರತಿ 24 Mar 2026 9:46 pm

ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‍ನ ಪ್ರದೇಶವನ್ನು ವಶಪಡಿಸಿಕೊಳ್ಳಲಿದೆ: ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್

ಟೆಲ್‍ಅವೀವ್: ರಕ್ಷಣಾತ್ಮಕ ವಲಯ(ಬಫರ್ ಝೋನ್)ವನ್ನು ರಚಿಸಲು ಇಸ್ರೇಲ್ ದಕ್ಷಿಣ ಲೆಬನಾನ್‍ನ ಲಿಟಾನಿ ನದಿಯವರೆಗಿನ ಪ್ರದೇಶವನ್ನು ವಶಪಡಿಸಿಕೊಳ್ಳಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ʼಇಸ್ರೇಲಿ ಪಡೆಗಳು ಲಿಟಾನಿವರೆಗಿನ ಸೇತುವೆಗಳು ಮತ್ತು ಭದ್ರತಾ ವಲಯವನ್ನು ನಿಯಂತ್ರಿಸಲಿವೆ' ಎಂದರು. ಲಿಟಾನಿ ನದಿ ಇಸ್ರೇಲ್ ಗಡಿಯಿಂದ ಉತ್ತರಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ ಮೆಡಿಟರೇನಿಯನ್ ಅನ್ನು ಸಂಧಿಸುತ್ತದೆ. ಇಂತಹ ಕ್ರಮಗಳು ಲೆಬನಾನ್ ರಾಷ್ಟ್ರಕ್ಕೆ ಅಸ್ತಿತ್ವದ ಬೆದರಿಕೆಯಾಗಿದೆ ಎಂದು ಲೆಬನಾನ್‍ನ ಸಶಸ್ತ್ರ ಹೋರಾಟಗಾರರ ಗುಂಪು ಹಿಜ್ಬುಲ್ಲಾ ಖಂಡಿಸಿದ್ದು ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್ ಅನ್ನು ಆಕ್ರಮಿಸುವುದನ್ನು ತಡೆಯಲು ಹೋರಾಡುವುದಾಗಿ ಘೋಷಿಸಿದೆ.

ವಾರ್ತಾ ಭಾರತಿ 24 Mar 2026 9:44 pm

ಶಾಸಕರ ವಿರುದ್ಧ ರೌಡಿ ಪದಬಳಕೆ; ರಘುಪತಿ ಭಟ್ ಬೇಷರತ್ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ

ಉಡುಪಿ, ಮಾ.24: ಶಾಸಕ ಯಶಪಾಲ್ ಸುವರ್ಣ ವಿರುದ್ಧ ರಾಜಕೀಯ ಹತಾಶೆಯಿಂದ ಮಾಜಿ ಶಾಸಕ ರಘುಪತಿ ಭಟ್ ಮಾಡಿರುವ ಆಧಾರ ರಹಿತ ಆರೋಪವನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆ ಯಾಚಿಸುವಂತೆ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್ ಆಗ್ರಹಿಸಿದ್ದಾರೆ. ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಾನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಒಡೆತನದ ಖಾಸಗಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ, ಸುಳ್ಳು ಮಾಹಿತಿ ನೀಡಿ ನಗರಾಭಿ ವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ಬಗ್ಗೆ ಸ್ಥಳೀಯ ಕರಾವಳಿ ಯುವಕ ಮಂಡಲ ಹಾಗೂ ಊರಿನ ಜನತೆಯ ದೂರು ಸಲ್ಲಿಸಿದ್ದರು ಎಂದರು. ಓರ್ವ ಜವಾಬ್ದಾರಿಯುತ ಶಾಸಕರಾಗಿ ಕಾನೂನು ಪ್ರಕಾರ ಕ್ರಮವಹಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ರಾಜಕೀಯ ಪ್ರೇರಿತರಾಗಿ ಸುಳ್ಳು ಆರೋಪ ಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ದೂರಿದರು. ರಘುಪತಿ ಭಟ್ಟರಿಗೆ ಹಿಂದುಳಿದ ವರ್ಗದ ಸಾಮಾನ್ಯ ಕಾರ್ಯಕರ್ತನನ್ನು ಶಾಸಕನಾಗಿ ಒಪ್ಪುವ ಮನಸ್ಥಿತಿ ಇಲ್ಲ. ಹಿಂದೂ ಕಾರ್ಯಕರ್ತನಾಗಿ, ರಾಷ್ಟ್ರೀಯವಾದಿ ಚಿಂತನೆಗಳ ಮೂಲಕ ಹಂತ ಹಂತವಾಗಿ ಬೆಳೆದು ಬಂದ ಯಶಪಾಲ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿ ದರೂ ಅವರನ್ನು ಶಾಸಕರಾಗಿ ರಘುಪತಿ ಭಟ್ ಇನ್ನೂ ಒಪ್ಪಿಲ್ಲ ಎಂದರು. ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ತಲೆ ತಗ್ಗಿಸುವ ಕೆಲಸ ಶಾಸಕರು ಎಂದೂ ಮಾಡಿಲ್ಲ ಎಂದ ದಿನೇಶ್ ಅಮೀನ್, ಅಧಿಕಾರ ಅನುಭವಿಸಿ ಪಕ್ಷ ದ್ರೋಹ ಮಾಡಿದ ವ್ಯಕ್ತಿಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ. ಬಿಜೆಪಿ ಪಕ್ಷದಿಂದ 3 ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿ, ಕಳೆದ ಚುನಾವಣೆಯಲ್ಲಿ ಸೀಟು ನೀಡಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಅಧಿಕಾರದ ಲಾಲಸೆಯಿಂದ ತನಗಾಗಿ ದುಡಿದ ಕಾರ್ಯಕರ್ತರನ್ನು ನಡು ನೀರಲ್ಲಿ ಕೈಬಿಟ್ಟು, ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಭಟ್‌ರಿಗೆ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದರು. ಶಾಸಕರ ವಿರುದ್ಧ ನಿರಂತರವಾಗಿ ತೇಜೋವಧೆಗೆ ಮುಂದಾಗುತ್ತಿರುವ ರಘುಪತಿ ಭಟ್, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಒತ್ತಡ ಹಾಕುತ್ತಿದ್ದಾರೆ ಎಂಬ ಬಾಲಿಶ ಅಧಾರ ರಹಿತ ಆರೋಪ ಮಾಡಿ ಸಮಾಜದ ಮುಂದೆ ಶಾಸಕರನ್ನು ರೌಡಿಯ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ರಘುಪತಿ ಭಟ್ಟರಿಗೆ ನೈತಿಕತೆ ಇದ್ದರೆ ಇಂತಹ ಸುಳ್ಳು ಆರೋಪ ಮಾಡುವ ಬದಲು ಶಾಸಕರು ಅಧಿಕಾರಿಗಳಿಗೆ ಬೆದರಿಕೆ ಮಾಡಿದ ಬಗ್ಗೆ ಯಾವುದೇ ಸೂಕ್ತ ದಾಖಲೆಗಳಿದ್ದರೆ ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಮುಖಂಡರಾದ ಜಗದೀಶ್ ಆಚಾರ್ಯ, ಪ್ರದೀಪ್ ಹೊನ್ನಾಳ, ಶ್ರೀವತ್ಸ, ದೇವಾನಂದ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 9:41 pm

ಒಡಿಶಾ: ಮಾವೋವಾದಿ ನಾಯಕ ಸುಕ್ರು ಶರಣಾಗತಿ

ಭುವನೇಶ್ವರ: ಮಾವೋವಾದಿ ನಾಯಕ ಸುಕ್ರು ಆಲಿಯಾಸ್ ಸೋಶಾ ಸೋಧಿ ಕಂಧಮಲ್ ಪೊಲೀಸರ ಮುಂದೆ ಶರಣಾಗತರಾಗಿದ್ದಾನೆ. ಈತನ ತಲೆಗೆ 55 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಸುಕ್ರು ಇತರ ನಾಲ್ವರು ಮಾವೋವಾದಿಗಳ ಜೊತೆಗೆ ಶರಣಾಗತನಾಗಿದ್ದಾನೆ. ಆತ ಎ.ಕೆ. 47 ಅಸಾಲ್ಟ್ ರೈಫಲ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ನಾಲ್ವರು ಮಾವೋವಾದಿಗಳು ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ ಎಂಬುದನ್ನು ಎಡಿಜಿ (ಮಾವೋವಾದಿ ನಿಗ್ರಹ ಕಾರ್ಯಾಚರಣೆ) ಸಂಜೀಬ್ ಪಾಂಡಾ ಅವರು ದೃಢಪಡಿಸಿದ್ದಾರೆ. ಮಾಲ್ಕಂಗಿರಿ ಜಿಲ್ಲೆಯ ನಿವಾಸಿ ಹಾಗೂ ನಿಷೇಧಿತ ಸಿಪಿಐ (ಮಾವೋವಾದಿ)ಯ ರಾಜ್ಯ ಸಮಿತಿ ಸದಸ್ಯ 49 ವರ್ಷದ ಸುಕ್ರು ಒಡಿಶಾದ ಅತ್ಯಂತ ಹಿರಿಯ ಸಕ್ರಿಯ ಮಾವೋವಾದಿ. ಈತ ಸುಮಾರು 13 ಬಂಡುಕೋರರನ್ನು ಹೊಂದಿದ್ದ ಸಣ್ಣ ಗುಂಪಿನ ನೇತೃತ್ವ ವಹಿಸಿದ್ದ. ಈ ಗುಂಪು ಮುಖ್ಯವಾಗಿ ಕಂಧಮಾಲ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ವಾರ್ತಾ ಭಾರತಿ 24 Mar 2026 9:38 pm

ಯುಎಪಿಎ ಪ್ರಕರಣ : ಕಾಶ್ಮೀರಿ ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ

ಶ್ರೀನಗರ: ಯುಎಪಿಎ ಪ್ರಕರಣದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕಿ ಹಾಗೂ ದುಖ್ತರಾನ್ ಎ ಮಿಲ್ಲತ್ ಸಂಘಟನೆ ಮುಖ್ಯಸ್ಥೆ ಆಸಿಯಾ ಅಂದ್ರಾಬಿಗೆ ದಿಲ್ಲಿ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣದ ಕುರಿತ ವಾದ-ಪ್ರತಿವಾದ ಪೂರ್ಣಗೊಂಡ ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಶಿಕ್ಷೆ ಪ್ರಕಟಿಸಿದರು. ಇದೇ ಪ್ರಕರಣದ ದೋಷಿಗಳಾದ ಅಂದ್ರಾಬಿ ಅವರ ಇಬ್ಬರು ನಿಕಟ ಸಹವರ್ತಿಗಳಾದ ಸೋಫಿ ಫೆಹ್ಮೀದಾ ಹಾಗೂ ನಹಿದಾ ನಸ್ರೀನ್ ಅವರಿಗೆ ನ್ಯಾಯಾಧೀಶರು 30 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಜನವರಿ 14ರಂದು ನ್ಯಾಯಾಲಯ ಯುಎಪಿಎಯ ಸೆಕ್ಷನ್ 20, 38 ಹಾಗೂ 39ರ ಅಡಿಯಲ್ಲಿ ಅಂದ್ರಾಬಿ, ಪೆಹ್ಮೀದಾ ಹಾಗೂ ನಸ್ರೀನ್ ಅವರನ್ನು ದೋಷಿಗಳು ಎಂದು ಪರಿಗಣಿಸಿತ್ತು.

ವಾರ್ತಾ ಭಾರತಿ 24 Mar 2026 9:36 pm

ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆ| ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಅಭಿವೃದ್ಧಿ ಕಾಮಗಾರಿ: ಆಕ್ರೋಶ

ಉಳ್ಳಾಲ: ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಪ.ಪಂ. ಆಡಳಿತ ಮಂಡಳಿ ಅಭಿವೃದ್ಧಿ ಕಾಮಗಾರಿ ಮಾಡುತ್ತಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಹರೀಶ್ ರಾವ್, ವಾರ್ಡ್ ಅಭಿವೃದ್ಧಿ ಯೋಜನೆ ಹಾಕುವ ಸಂದರ್ಭ ಅಧ್ಯಕ್ಷರು ಮತ್ತು ಸಮಿತಿ ಸ್ವಯಂ ತೀರ್ಮಾನ ತೆಗೆದುಕೊಳ್ಳುವುದು ಬೇಡ. ಈ ಸಂದರ್ಭ ಆಯಾ ವಾರ್ಡ್ ಸದಸ್ಯರ ಗಮನ ಸೆಳೆದು ಮಾಹಿತಿ ಪಡೆಯ ಬೇಕು ಎಂದು ಆಗ್ರಹಿಸಿದರು. ಇದಕ್ಕೆ ಎಸ್ ಡಿಪಿಐ ಸದಸ್ಯೆ ಸಲೀಮಾ ಬಿ, ಇಸಾಕ್ ದನಿ ಗೂಡಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಂಕರಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಲಭಿಸುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ,ಒಂದು ಕುಟುಂಬದ ಇಬ್ಬರಿಗೆ ಭಾಗ್ಯ ಲಕ್ಷ್ಮಿ ಯೋಜನೆ ಸಿಗುತ್ತಿತ್ತು .ಆದರೆ ಇತ್ತೀಚೆಗೆ ಅಂಬ್ಲಮೊಗರು ಗಾಂಧಿ ನಗರದಲ್ಲಿ ತ್ರಿವಳಿ ಹೆರಿಗೆ ಯಾದ ಮೂರು ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮಿ ಸಿಗ ಬೇಕು ಎಂಬುದು ನಮ್ಮ ಹೋರಾಟ ಆಗಿತ್ತು. ಇದೀಗ ಮೂವರು ಹೆಣ್ಣುಮಕ್ಕಳಿಗೆ ಭಾಗ್ಯ ಲಕ್ಷ್ಮಿ ಲಭಿಸಿದೆ ಎಂದರು. ಕೊರೊನೊ ವ್ಯಾಕ್ಸಿನ್ ನಿಂದ ಹೃದಯಾಘಾತ ಸಂಭವಿಸುತ್ತಿದೆ ಎಂದು ಸದಸ್ಯರೊಬ್ಬರು ಮಾಡಿದ ಆರೋಪಕ್ಕೆ ಉತ್ತರಿಸಿದ ಆರೋಗ್ಯ ಇಲಾಖೆ ಅಧಿಕಾರಿ,ಕೊರೊನೊ ವ್ಯಾಕ್ಸಿನ್ ನಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಮೂರು ವ್ಯಾಕ್ಸಿನ್ ತೆಗೆದು ಕೊಂಡಿದ್ದಾರೆ.ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದರು. ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆದ ನಿರ್ಣಯ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ತಹಶೀಲ್ದಾರ್ ಬಳಿ ಹೋಗುವಾಗ ಮುಖ್ಯಾಧಿಕಾರಿ ಇರಬೇಕು. ಇಲ್ಲಿ ಸರಿಯಾಗಿ ಕೆಲಸ ಆಗದಿದ್ದರೆ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಸುಜಿತ್ ಮಾಡೂರು ಪ್ರಶ್ನಿಸಿದರು. ತಹಶೀಲ್ದಾರ್ ಕಚೇರಿ ಗೆ ಎಂಟು ಸದಸ್ಯರು ಹೋಗಿದ್ದೆವು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಒಂದೂವರೆ ವರ್ಷದಿಂದ ಹೋರಾಟ ಮಾಡಿದ್ದೇವೆ.ಆದರೆ ಈವರೆಗೆ ಸರ್ವೆ ಕೂಡ ಆಗಿಲ್ಲ. ನೀವು ಕಳಿಸಿದ ದಾಖಲೆ ಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಕಾಯ್ದಿರಿಸಬೇಕು ಎಂದು ಎಲ್ಲೂ ಉಲ್ಲೇಖ ಮಾಡಿಲ್ಲ ಎಂದು ಹರೀಶ್ ಆರೋಪಿಸಿದರು. ಸರ್ಕಾರ ದಿಂದ ಬಂದ ಸುತ್ತೋಲೆ ಗಳನ್ನು ಸಭೆಯ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಸದಸ್ಯರಿಗೆ ವಿಷಯ ಗೊತ್ತಾಗು ವುದಿಲ್ಲ ಎಂದು ಅಹ್ಮದ್ ಅಜ್ಜಿನಡ್ಕ ಆಗ್ರಹಿಸಿದರು. ವಾರ್ಡ್ ಧಾರ್ಮಿಕ ಕ್ಷೇತ್ರ ಗಳ ಅಭಿವೃದ್ಧಿ ಕಾಮಗಾರಿ ಮಾಡುವಾಗ ಆಯಾ ವಾರ್ಡ್ ಸದಸ್ಯ ರ ಗಮನ ಸೆಳೆಯು ತ್ತಿಲ್ಲ. ಸದಸ್ಯರ ಗಮನಕ್ಕೆ ತಾರದೇ ನಿರ್ಣಯ ಮಾಡು ವುದು ಯಾಕೆ ಎಂದು ಪ್ರಶ್ನಿಸಿ ಸುಜಿತ್ ಮಾಡೂರು ಸ್ಥಾಯಿ ಸಮಿತಿ ಅಧ್ಯಕ್ಷರನ್ನು ತರಾಟೆಗೈದರು. ಮಾಡೂರು ಕೊರಗಜ್ಜ ಸಾನಿಧ್ಯ ಪವಿತ್ರ ಜಾಗ. ಈ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ವ್ಯಾಪಕ ರಾಜಕೀಯ ಬೇಡ. ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವುದು ಉತ್ತಮ ಎಂದು ಅಹ್ಮದ್ ಅಜ್ಜಿನಡ್ಕ ಸಲಹೆ ನೀಡಿದರು. ಜನರ ಪರವಾಗಿ ಹೋರಾಟ ಮಾಡುವ ಸದಸ್ಯರ ತೇಜೋವಧೆಗೆ ಸಾಮಾಜಿಕ ಜಾಲತಾಣ ಬಳಕೆ ಮಾಡಲಾಗು ತ್ತಿದೆ ಎಂದು ಕೋಟೆಕಾರು ಪ.ಪಂ. ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಆರೋಪಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳಿಗೆ ಪ.ಪಂ. ಆಡಳಿತ ಉತ್ತರಿಸಬೇಕಿಲ್ಲ ಎಂದು ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ ಸಲಹೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ಮುಖ್ಯಾಧಿಕಾರಿ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 9:33 pm

ಚಿಂಚೋಳಿ | ಸಿಡಿಲು ಬಡಿದು ಯುವಕ ಮೃತ್ಯು

ಕಲಬುರಗಿ: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದ ಸಮೀಪದ ಧನಸಿಂಗ್‌ ನಾಯಕ ತಾಂಡಾದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಮಹೇಶ ಕಿಶನ್ ಚವ್ಹಾಣ (22) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕುಂಚಾವರಂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 24 Mar 2026 9:31 pm

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಮ್ಯಾಚ್ ನೋಡಲು ಹೋಗ್ತಿದ್ದೀರಾ? ಹೀಗಿದೆ ನೋಡಿ ಪೊಲೀಸ್ ಮಾರ್ಗಸೂಚಿ

Police Guideline To IPL Match- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ಕೇವಲ ಅಧಿಕೃತ ಮೂಲಗಳಿಂದ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಖರೀದಿಸಲು ಸೂಚಿಸಲಾಗಿದ್ದು, ಪಂದ್ಯಕ್ಕೆ 4 ತಾಸು ಮುಂಚಿತವಾಗಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಸಾರ್ವಜನಿಕರು ಖಾಸಗಿ ವಾಹನಗಳ ಬದಲು ಉಚಿತ ಮೆಟ್ರೋ ಸೌಲಭ್ಯ ಬಳಸಲು ಪ್ರೋತ್ಸಾಹಿಸಲಾಗಿದೆ. ಮುಖ್ಯವಾಗಿ ಪ್ರೇಕ್ಷಕರು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಲಾಗಿದೆ.

ವಿಜಯ ಕರ್ನಾಟಕ 24 Mar 2026 9:29 pm

ಲೋಕಸಭೆಯಲ್ಲಿ ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ, ದ.ಕ. ಅಭಿವೃದ್ಧಿ ಪರ ಧ್ವನಿಯೆತ್ತಿದ ಸಂಸದ ಬ್ರಿಜೇಶ್ ಚೌಟ

ಹೊಸದಿಲ್ಲಿ : ಸಂಸದ ಬ್ರಿಜೇಶ್ ಚೌಟ ಅವರು ಮಂಗಳವಾರ ಲೋಕಸಭೆಯಲ್ಲಿ ಹಣಕಾಸು ವಿಧೇಯಕದ ಚರ್ಚೆ ಯಲ್ಲಿ ಭಾಗವಹಿಸಿ, ಹಣಕಾಸು ಶಿಸ್ತು, ತೆರಿಗೆ ಸುಧಾರಣೆ, ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ ತತ್ವ ಹಾಗೂ ಮಾಜಿ ಸೈನಿಕರ ಕಲ್ಯಾಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸದನದ ಗಮನಸೆಳೆದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜಿಎಸ್ಟಿ ಸುಧಾರಣೆಗಳು ದೇಶದ ಆರ್ಥಿಕತೆ ಯನ್ನು ಬಲಪಡಿಸಿರುವುದಲ್ಲದೆ, ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಮೂಲಕ ಸಾಮಾನ್ಯ ಕುಟುಂಬಗಳಿಗೆ ನೆರವಾಗಿದೆ ಎಂದು ಅವರು ಶ್ಲಾಘಿಸಿದರು. ಇದೇ ವೇಳೆ ಸರಳೀಕೃತ ಆದಾಯ ತೆರಿಗೆ ಚೌಕಟ್ಟನ್ನು ಸ್ವಾಗತಿಸಿದ ಅವರು, ಇದು ತೆರಿಗೆದಾರರಿಗೆ ಹೆಚ್ಚಿನ ಸ್ಪಷ್ಟತೆ ಮತ್ತು ವಿಶ್ವಾಸವನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟರು. ಬಜೆಟ್ ಅನ್ನು ಕೇವಲ ಆರ್ಥಿಕ ದಾಖಲೆಯಾಗಿ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದಲೂ ಗಮನಿಸಿದ  ಚೌಟ, ಸುಭದ್ರ ಆರ್ಥಿಕತೆಯು ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಅಡಿಪಾಯ ಎಂದರು. ರಕ್ಷಣಾ ವಲ ಯದ ಹೆಚ್ಚಿನ ಅನುದಾನ ಮತ್ತು ಸ್ವದೇಶಿ ರಕ್ಷಣಾ ಉತ್ಪಾದನೆಗೆ ನೀಡುತ್ತಿರುವ ಉತ್ತೇಜನವನ್ನು ಅವರು ಸ್ವಾಗತಿಸಿ ದರು. ಇದೇ ಸಂದರ್ಭದಲ್ಲಿ, ಸೇವಾವಧಿಯಲ್ಲಿ ಗಂಭೀರವಾಗಿ ಗಾಯಗೊಂಡರೂ ಕರ್ತವ್ಯದ ಮೇಲಿನ ನಿಷ್ಠೆಯಿಂದ ನಿವೃತ್ತಿಯವರೆಗೆ ಸೇವೆ ಸಲ್ಲಿಸುವ ಸೈನಿಕರಿಗೂ ವಿಕಲಚೇತನರ ಪಿಂಚಣಿ ಸೌಲಭ್ಯಗಳನ್ನು ವಿಸ್ತರಿಸಬೇಕು ಅವರು ಇದೇ ವೇಳೆ ಹಣಕಾಸು ಸಚಿವರಲ್ಲಿ ಮನವಿ ಮಾಡಿದರು. ಸಹಕಾರಿ ಒಕ್ಕೂಟ ವ್ಯವಸ್ಥೆಯ ಕುರಿತು ಮಾತನಾಡಿದ ಕ್ಯಾ. ಚೌಟ ಅವರು, ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಜನ ಸಾಮಾನ್ಯರಿಗೆ ತಲುಪಲು ರಾಜ್ಯ ಸರ್ಕಾರಗಳ ಸಮಯೋಚಿತ ಅನುಷ್ಠಾನ ಕೂಡ ಅತಿ ಮುಖ್ಯ. ಆದರೆ, ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಮಹತ್ವದ ಯೋಜನೆ ಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ಅಸಹಕಾರ, ವಿಳಂಬ ನೀತಿಯಿಂದಾಗಿ ಅನುದಾನ ಸರಿಯಾಗಿ ಬಳಕೆಯಾ ಗದೆ ಉಳಿದಿದೆ. ಇದರಿಂದ ಬಡ ಕುಟುಂಬಗಳು ಕುಡಿಯುವ ನೀರು ಮತ್ತು ವಸತಿ ಸೌಲಭ್ಯದಿಂದ ವಂಚಿತರಾಗುತ್ತಿ ದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. *ಕರಾವಳಿ ಕಡಲ್ಕೊರೆತ: ಶಾಶ್ವತ ಪರಿಹಾರಕ್ಕೆ ಆಗ್ರಹ ದ.ಕ. ಜಿಲ್ಲೆಯ ಉಳ್ಳಾಲ ಮತ್ತು ಸೋಮೇಶ್ವರ ಭಾಗದಲ್ಲಿ ತೀವ್ರವಾಗಿರುವ ಕಡಲ್ಕೊರೆತವು ಕೇವಲ ತಾತ್ಕಾಲಿಕ ಸಮಸ್ಯೆಯಲ್ಲ, ಬದಲಾಗಿ ಅಸ್ತಿತ್ವಕ್ಕೆ ಇರುವ ಸವಾಲಾಗಿದೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆ ಯಿಂದ ಮೀನುಗಾರರ ಮನೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾಗುವ ಹಾನಿಯಿಂದ ರಕ್ಷಣೆಗೆ ಕೇಂದ್ರ ಪರಿಸರ ಸಚಿವಾಲಯ ಹಾಗೂ ಭೂವಿಜ್ಞಾನ ಸಚಿವಾಲಯದ ಸಮನ್ವಯದೊಂದಿಗೆ ವೈಜ್ಞಾನಿಕ ಸಮಗ್ರ ಕರಾವಳಿ ರಕ್ಷಣಾ ಯೋಜನೆ ರೂಪಿಸಿ, ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. *ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನಕ್ಕೆ ಒತ್ತಾಯ: ಕೊಂಕಣ ರೈಲ್ವೆಯು ಪ್ರಸ್ತುತ ಇರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅದರ ಪೂರ್ಣ ಪ್ರಮಾಣದ ಅಭಿವೃದ್ಧಿಗಾಗಿ ಅದನ್ನು ತಕ್ಷಣವೇ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಈ ಕುರಿತು ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಾರ್ಜ್ ಫರ್ನಾಂಡಿಸ್ ಅವರ ಕಾಲದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡದ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, 50ನೇ ವರ್ಷದ ಸಂಭ್ರಮದಲ್ಲಿರುವ ನವ ಮಂಗಳೂರು ಬಂದರಿನ ಪೂರ್ಣ ಸಾಮರ್ಥ್ಯದ ಬಳಕೆಗೆ ರಸ್ತೆ ಸಂಪರ್ಕ ಸುಧಾರಿಸುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್ ಹಾಗೂ ಮಂಗಳೂರು ಬೈಪಾಸ್ ಕಾಮಗಾರಿಗಳಿಗೆ ವೇಗ ನೀಡುವಂತೆ ವಿನಂತಿಸಿದ ಅವರು, ಹಾಸನ-ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟ್ ವಿಭಾಗದ ಡಿಪಿಆರ್ ಸಿದ್ಧಪಡಿಸಲು ಅನುಮೋದನೆ ನೀಡಿದ ರೈಲ್ವೆ ಸಚಿವರಿಗೆ ಈ ವೇಳೆ ಧನ್ಯವಾದ ಸಲ್ಲಿಸಿದ ಅವರು ಜತೆಗೆ ಈ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ, ಕೇಂದ್ರ ಸರ್ಕಾರ ಘೋಷಿಸಿರುವ ‘ಸಿಟಿ ಎಕನಾಮಿಕ್ ರೀಜನ್’ ಯೋಜನೆಗೆ ಮಂಗಳೂರು ಅತ್ಯಂತ ಸೂಕ್ತ ನಗರವಾಗಿದ್ದು, ಇದನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 24 Mar 2026 9:29 pm

Bengaluru | ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ: ಐದು ಮಂದಿ ಡ್ರಗ್‍ಪೆಡ್ಲರ್‌ಗಳ ಬಂಧನ, 11.04 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು : ನಗರದ ವಿವಿಧ ಕಡೆಗಳಲ್ಲಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಐದು ಮಂದಿ ಡ್ರಗ್‍ಪೆಡ್ಲರ್‌ ಗಳನ್ನು ಬಂಧಿಸಿ, ಒಟ್ಟು 11.04 ಕೋಟಿ ರೂ. ಮೌಲ್ಯದ ಗಾಂಜಾ, ಎಂಡಿಎಂಎ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ರಸ್ತೆಯ ನಾಯಂಡಹಳ್ಳಿ ಸಿಗ್ನಲ್ ಬಳಿ ಮಾದಕ ವಸ್ತು ಗಾಂಜಾ ಸಾಗಿಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ 3.32 ಕೋಟಿ ಮೌಲ್ಯದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ. ಉಪ್ಪಾರಪೇಟೆ ಠಾಣೆ ಪೊಲೀಸರು ಆರ್.ಕೆ.ಪುರದ ಲಾಡ್ಜ್‍ವೊಂದರ ಮೇಲೆ ದಾಳಿ ಮಾಡಿ 7.60 ಕೋಟಿ ರೂ. ಮೌಲ್ಯದ 3 ಕೆ.ಜಿ. 900 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹಾಗೆಯೇ, ಕಾಡುಗೋಡಿ ಠಾಣೆಯ ಪೊಲೀಸರು ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ 12 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟಾರೆ ಐಎನ್‍ಆರ್ ಮೌಲ್ಯ 5.77 ಕೋಟಿ ರೂ.ಗಳಾದರೆ, ಮಾರುಕಟ್ಟೆ ಮೌಲ್ಯ 11.04 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹೊರರಾಜ್ಯದ ವ್ಯಕ್ತಿ ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶಿ ಮೂಲದ ಅಪರಿಚಿತ ವ್ಯಕ್ತಿಯಿಂದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಎಂಡಿಎಂಎ ಮತ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾರ್ತಾ ಭಾರತಿ 24 Mar 2026 9:26 pm

ಬೆಂದೂರು ಚರ್ಚ್: ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಮಂಗಳೂರು, ಮಾ.24: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ನಗರದ ಬೆಂದೂರಿನ ಸಂತ ಸೆಬಾಸ್ಟಿಯನ್ ಚರ್ಚಿನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.ಸುಮಾರು 500ಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದರು. ಧರ್ಮಗುರು ವಂ.ಫಾ.ವಾಲ್ಟರ್ ಡಿಸೋಜ ಮಾತನಾಡಿ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಲೇಸು ಎಂದರು. ಈ ಸಂದರ್ಭ 51 ಬಾರಿ ರಕ್ತದಾನ ಮಾಡಿದ ಡಾ. ಓಸ್ವಾಲ್ಡ್ ಫುರ್ಟಾಡೋ ಅವರನ್ನು ಗೌರವಿಸಲಾಯಿತು. ಫಾದರ್ ಮುಲ್ಲರ್ ಆಸ್ಪತ್ರೆಯ ಅರ್ಬುದ ರೋಗ ತಜ್ಞ ಡಾ. ಅಭಿರಾಮ್ ಗಟ್ಟಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಟೆರೆನ್ಸ್ ಕಾರ್ಡೋಜ ಸ್ವಾಗತಿಸಿದರು. ಮೆಲ್ವಿನ್ ಪೆರಿಸ್ ವಂದಿಸಿದರು. ಜೋಸ್ವಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 24 Mar 2026 9:25 pm

ತೂಕ ಇಳಿಸಲು ಐದು ಮಾರ್ಗಗಳು; ಪೌಷ್ಠಿಕತಜ್ಞರ ಸಲಹೆ ಇಲ್ಲಿದೆ...

ಪೌಷ್ಠಿಕ ತಜ್ಞೆಯಾಗಿರುವ ಖುಷಿ ಛಾಬ್ರಾ ಅವರು ಸಹಜವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಐದು ಪಾನೀಯಗಳನ್ನು ಹಂಚಿಕೊಂಡಿದ್ದಾರೆ. ತೂಕ ಇಳಿಸುವುದೆಂದರೆ ಸಮತೋಲಿತ ಆಹಾರ ಸೇವನೆ, ನಿಯಮಿತವಾದ ವ್ಯಾಯಾಮ ಮತ್ತು ನಿರಂತರವಾಗಿ ಮಾಡುವ ಅಭ್ಯಾಸದ ಹೊರತಾಗಿ ಇನ್ಯಾವುದೇ ಹಾದಿಯಿಲ್ಲ. ಆದರೆ ಕೆಲವು ದೈನಂದಿನ ಆಹಾರಗಳು ಚಯಾಪಚಯ ಕ್ರಿಯೆಯನ್ನು ವರ್ಧಿಸಲು, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ನೆರವಾಗುವ ಮೂಲಕ ಹೆಚ್ಚುವರಿ ಬೆಂಬಲ ನೀಡಬಹುದು. ಆದರೆ, ಅವುಗಳನ್ನು ದೈನಂದಿನ ಚಟುವಟಿಕೆಯಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ಆರೋಗ್ಯ ಪೌಷ್ಠಿಕ ತಜ್ಞೆಯಾಗಿರುವ ಖುಷಿ ಛಾಬ್ರಾ ಅವರು ಸಹಜವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಐದು ಪಾನೀಯಗಳನ್ನು ಹಂಚಿಕೊಂಡಿದ್ದಾರೆ. “ಹೋಗಲೇ ಕೇಳದಿರುವ ಹೊಟ್ಟೆಯ ಕೊಬ್ಬನ್ನು ಕರಗಿಸಬೇಕೆ? ಈ ಐದು ಪಾನೀಯಗಳು ನಿಮ್ಮ ರಹಸ್ಯ ಶಸ್ತ್ರವಾಗಲಿದೆ. ಚಯಾಪಚಯ ಕ್ರಿಯೆಗೆ ಉತ್ತೇಜಿಸುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸ್ಥಿರಗೊಳಿಸುತ್ತದೆ. ಪ್ರತಿಯೊಂದು ಪಾನೀಯವು ತೂಕ ಇಳಿಸಿಕೊಳ್ಳಲು ಉತ್ತಮ” ಎಂದು ಅವರು ಹೇಳಿದ್ದಾರೆ. ಉತ್ತಮ ಫಲಿತಾಂಶಕ್ಕೆ ಇದನ್ನು ಸಮತೋಲಿತ ಆಹಾರದ ಜೊತೆಗೂಡಿಸಿ ಸೇವಿಸಬೇಕಿದೆ. ಖುಷಿ ನೀಡಿರುವ ಸಲಹೆಗಳು ಹೀಗಿವೆ: ► ಆಪಲ್ ಸಿಡಾರ್ ವಿನೆಗರ್ ಆಪಲ್ ಸಿಡಾರ್ ವಿನೆಗರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ತೂಕ ನಷ್ಟಕ್ಕೆ ಬೆಂಬಲಿಸಬಹುದು. ಊಟಕ್ಕೆ ಮೊದಲು ಅಥವಾ ನಂತರ ಇದನ್ನು ಸ್ವೀಕರಿಸಬಹುದು. ಆಮ್ಲೀಯತೆ ಮತ್ತು ರಿಫ್ಲೆಕ್ಸ್ಗೆ (ಹಿಮ್ಮುಖ ಹರಿವು) ಸಂಬಂಧಿಸಿದ ಹೊಟ್ಟೆಯ ಸಮಸ್ಯೆಗಳನ್ನು ಹೊಂದಿರುವವರು ಸೇವಿಸಬಾರದು. “ಊಟಕ್ಕೆ ಮೊದಲು ಮತ್ತು ನಂತರ ಇದನ್ನು ಸೇವಿಸಬೇಕು. ಆಮ್ಲೀಯತೆ ಅಥವಾ GERD (Gastroesophageal reflux disease) ಇದ್ದರೆ ಸೇವಿಸಬಾರದು” ಎಂದು ಖುಷಿ ಹೇಳಿದ್ದಾರೆ. ► ಗ್ರೀನ್ ಟೀ ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡಂಟ್ಗಳು ಸಮೃದ್ಧವಾಗಿರುತ್ತವೆ. ಹೀಗಾಗಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸುವ ಮೂಲಕ ತೂಕ ನಷ್ಟಕ್ಕೆ ಬೆಂಬಲಿಸುತ್ತದೆ. ಆದರೆ ಗ್ರೀನ್ ಟೀಯನ್ನು ಸಂಜೆ 6 ಗಂಟೆಗೆ ಮೊದಲು ಸೇವಿಸಬೇಕು. ಏಕೆಂದರೆ ಅದರ ಕೆಫೀನ್ ಅಂಶವು ನಿದ್ರೆಗೆ ಅಡ್ಡಿಮಾಡಬಹುದು. ► ಕರಿ ಕಾಫಿ ಕರಿ ಕಾಫಿಯಲ್ಲಿ ಶಕ್ತಿಯುತ ಪಾಲಿಫಿನಾಲ್ಗಳಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸ್ಥಿರಗೊಳಿಸಲು ಮತ್ತು ತೂಕ ನಷ್ಟಕ್ಕೆ ಬೆಂಬಲಿಸುತ್ತದೆ. ಆದರೆ ಅದನ್ನು ಸಕ್ಕರೆ ಬೆರೆಸದೆ ಸೇವಿಸಬೇಕು. ಆಹಾರದ ಜೊತೆಗೆ ಸೇವಿಸಬಾರದು. ಸಂಜೆ ಆರು ಗಂಟೆಯ ನಂತರ ಸೇವಿಸಬಾರದು. ಏಕೆಂದರೆ ಕೆಫೇನ್ ರಾತ್ರಿ ಸಮಯದಲ್ಲಿ ಉತ್ತಮವಲ್ಲ. ► ದಾಲ್ಚಿನ್ನಿ ಬೆರೆಸಿದ ಚಹಾ ನೈಸರ್ಗಿಕ ಮಸಾಲೆಯಾಗಿರುವ ದಾಲ್ಚಿನ್ನಿ ಬೆರೆಸಿದ ಚಹಾ ಸಕ್ಕರೆ ಪ್ರಮಾಣ ಏರುವುದನ್ನು ತಡೆಯುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಹೀಗಾಗಿ ತೂಕ ಇಳಿಸಲು ನೆರವಾಗುತ್ತದೆ. ಇದನ್ನು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ► ಶುಂಠಿ ಚಹಾ ಪೌಷ್ಠಿಕತಜ್ಞೆ ಹೇಳಿರುವ ಪ್ರಕಾರ ಶುಂಠಿ ಚಹಾ ಸಹಜವಾಗಿ ಹಸಿವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ತೂಕ ಇಳಿಸಲು ನೆರವಾಗುತ್ತದೆ. ಎರಡೂ ಶುಂಠಿ ಮತ್ತು ದಾಲ್ಚಿನ್ನಿ ಚಹಾ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಓದುಗರಿಗೆ ಸೂಚನೆ : ಈ ಲೇಖನವನ್ನು ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ನೀಡಲಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಸಾಮಾಜಿಕ ಜಾಲತಾಣದಿಂದ ಬಳಕೆದಾರರು ರಚಿಸಿದ ವಿಷಯವನ್ನು ಆಧರಿಸಿದೆ. ವೈಜ್ಞಾನಿಕವಾಗಿ ನಿಖರವಾದ ಸಲಹೆಗಳಿಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಾರ್ತಾ ಭಾರತಿ 24 Mar 2026 9:24 pm

12 ಗಂಟೆಯೊಳಗೆ ಧರಣಿಗೆ ಮಣಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ: ರಘುಪತಿ ಭಟ್‌ಗೆ ಸಿಂಗಲ್ ಲೇಔಟ್ ಅನುಮತಿ ಪತ್ರ ಹಸ್ತಾಂತರ

ಉಡುಪಿ, ಮಾ.24: ಬಡಾನಿಡಿಯೂರು ಗ್ರಾಮದ 90 ಸೆನ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಜಾಗಕ್ಕೆ ಏಕ ವಿನ್ಯಾಸ ಲೇಔಟ್ ನಕ್ಷೆ ಅನುಮೋದನೆಗೆ ವಿಳಂಬ ನೀತಿ ಅನುಸರಿಸುತಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ವಿರೋಧಿಸಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಸೋಮವಾರದಿಂದ ಪ್ರಾರಂಭಿಸಿದ ಅನಿರ್ದಿಷ್ಟಾವಧಿ ಧರಣಿ 12 ಗಂಟೆಯೊಳಗೆ ಯಶಸ್ಸು ಕಂಡಿದ್ದು, ಪ್ರತಿಭಟನೆಗೆ ಮಣಿದ ನಗರಾಭಿವೃದ್ಧಿ ಪ್ರಾಧಿಕಾರವು ಸಿಂಗಲ್ ಲೇಔಟ್ ಇಂದು ಅಪರಾಹ್ನದ ವೇಳೆ ಅನುಮತಿ ಪತ್ರವನ್ನು ನೀಡಿದೆ. ಈ ಸಂಬಂಧದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಿದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್ ಅವರು ತಾತ್ಕಾಲಿಕ ಅನುಮತಿ ಪತ್ರವನ್ನು ರಘುಪತಿ ಭಟ್ ಅವರಿಗೆ ಹಸ್ತಾಂತರಿಸಿದರು. ಉಡುಪಿಯ ಬಡಾನಿಡಿಯೂರು ಸಮೀಪ ರೆಸಾರ್ಟ್ ನಿರ್ಮಿಸಲು ರಘುಪತಿ ಭಟ್ ಅವರಿಗೆ ಕಳೆದ ಎರಡು ವರ್ಷ ಗಳಿಂದ ಸಿಂಗಲ್ ಲೇಔಟ್‌ಗಾಗಿ ಅನುಮತಿ ಪತ್ರ ನೀಡದೇ ಸತಾಯಿಸುತ್ತಿತ್ತು. ಇದರಿಂದ ಹತಾಶರಾದ ಮೂರು ಸಲದ ಮಾಜಿ ಶಾಸಕರು ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಸೋಮವಾರದಿಂದ ಏಕಾಂಗಿಯಾಗಿ ಧರಣಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಪ್ರವಾಸೋದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡು ರಘುಪತಿ ಭಟ್ ಅವರು ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕಾಗಿ 2024ರ ಮಾ.20ರಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳಲ್ಲಿ ನೀಡಬೇಕಾದ ಅನುಮತಿಯನ್ನು, ವಿವಿಧ ಕಾರಣಗಳ ನೆಪದಲ್ಲಿ 24 ತಿಂಗಳು ಕಳೆದರೂ ನೀಡಿರಲಿಲ್ಲ. ಹಾಲಿ ಶಾಸಕ ಯಶ್ ಪಾಲ್ ಸುವರ್ಣ ಅವರ ಕುಮ್ಮಕ್ಕಿನಿಂದಲೇ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಅನುಮತಿ ಪತ್ರ ನೀಡುತ್ತಿಲ್ಲ ಎಂದು ಭಟ್ ಆರೋಪಿಸಿದ್ದರು. ಇಂದು ಅಪರಾಹ್ನ 1:30ರ ಸುಮಾರಿಗೆ ಅನುಮತಿ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಘುಪತಿ ಭಟ್, 3 ತಿಂಗಳಲ್ಲಿ ಕೊಡಬೇಕಾದ ಅನುಮತಿ ಪತ್ರ 24 ತಿಂಗಳ ಬಳಿಕ ನನ್ನ ಕೈಸೇರಿದೆ. ಇದು ತಾತ್ಕಾಲಿಕ ಅನುಮತಿ ಪತ್ರವಾಗಿದ್ದು, ರಸ್ತೆಗೆ ನಿಗದಿತ ಜಾಗ ಬಿಟ್ಟುಕೊಟ್ಟ ಬಳಿಕ ಶಾಶ್ವತ ಅನುಮತಿ ಪತ್ರ ಸಿಗಲಿದೆ. ಧರಣಿ ಕುಳಿತ ಬಳಿಕವಾದರೂ ನ್ಯಾಯ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳೆಲ್ಲವೂ ನಿವಾರಣೆಯಾಗಬೇಕಿದೆ. ಅಂಬಾಗಿಲು- ಮಣಿಪಾಲ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಟಿಡಿಆರ್ ಕೊಡುವುದಾಗಿ ಹೇಳಿ 3 ವರ್ಷ ಆದರೂ ಭೂಮಿ ಕೊಟ್ಟ ಜನತೆಗೆ ಅದು ಸಿಕ್ಕಿಲ್ಲ. ಇದಕ್ಕೆ ಹೋರಾಟ ಮಾಡಬೇಕು. ಇನ್ನೂ ಅನೇಕ ಸಮಸ್ಯೆಗಳಿದ್ದು, ಜನತೆಯ ಪರವಾಗಿ ಅವುಗಳ ವಿರುದ್ಧ ಹೋರಾಟ ನಡೆಸುವುದಾಗಿ ರಘುಪತಿ ಭಟ್ ತಿಳಿಸಿದರು. ಮುಂದಿನ ಎ.11ರಂದು ಇದೇ ರೀತಿಯ ಕಾರಣಗಳಿಗಾಗಿ ಬಾಕಿ ಉಳಿದ ಕಡತಗಳ ವಿಲೇವಾರಿಯಾಗದಿದ್ದರೆ ಧರಣಿ ನಡೆಸುವುದಾಗಿ ಅವರು ತಿಳಿಸಿದರು. ಇದು ರಾಜಕೀಯ ಕಾರಣಗಳಿಗಾಗಿ ಹೋರಾಟವಲ್ಲ, ನನ್ನ ವೈಯಕ್ತಿಕ ವಿಷಯಕ್ಕಾಗಿ ನಡೆದ ಧರಣಿ. ನನ್ನ ವೈಯಕ್ತಿಕ ಸಮಸ್ಯೆಗಳಿಗೆ ಶಾಸಕರು ಅಡ್ಡಿಪಡಿಸಿದ್ದರಿಂದ ಅವರ ಹೆಸರು ಹೇಳಬೇಕಾಯಿತು ಎಂದರು.

ವಾರ್ತಾ ಭಾರತಿ 24 Mar 2026 9:23 pm

By-election | ಬಂಡಾಯ ಅಭ್ಯರ್ಥಿಗಳು ನಮ್ಮವರೇ, ಮಾತನಾಡಿ ಸರಿ ಮಾಡುತ್ತೇವೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯ ಆಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವವರು ನಮ್ಮವರೇ, ಅವರೊಂದಿಗೆ ಮಾತನಾಡಿ ಸರಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಮಂಗಳವಾರ ದಿಲ್ಲಿ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮ ಸಂಸ್ಥೆಯೊಂದರ ಸಮ್ಮೇಳನಕ್ಕಾಗಿ ದಿಲ್ಲಿಗೆ ಆಗಮಿಸಿದ್ದೇನೆ. ಭಾರತ ಯಾವ ದಿಕ್ಕಿನಲ್ಲಿ ಹೋಗಲಿದೆ ಎಂಬ ವಿಷಯದ ಮೇಲಿನ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ದಿಲ್ಲಿಗೆ ಬಂದಿರುವೆ ಎಂದು ಸ್ಪಷ್ಟಣೆ ನೀಡಿದರು. ನಿನ್ನೆ ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಎರಡೂ ಕಡೆಗಳಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿ ಹಿಂದಿರುಗಿದ್ದೇವೆ. ದಾವಣಗೆರೆಯಲ್ಲಿ ಬಹಳಷ್ಟು ಜನ ನಾಮಪತ್ರ ಸಲ್ಲಿಸಿದ್ದು, ಅವರೆಲ್ಲರೂ ನಮ್ಮವರೇ. ನಮ್ಮ ನಾಯಕರೆಲ್ಲರೂ ಅವರ ಜತೆ ಮಾತನಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ. ಎಲ್ಲ ಪಕ್ಷದಲ್ಲೂ ಇದೆ. ದಾವಣಗೆರೆಯಲ್ಲಿ ಮೊದಲಿನಿಂದಲೂ ಮೂರು ಜನ ರಾಜಕಾರಣದಲ್ಲಿದ್ದರು. ನಾವೇ ಬಲವಂತ ಮಾಡಿ ಪ್ರಭಾ ಮಲ್ಲಿಕಾರ್ಜುನ್‍ರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದೆವು. ಅವರು ಕೇಳದಿದ್ದರೂ ನಾವೇ ಅವರಿಗೆ ಒತ್ತಡ ಹಾಕಿ ಚುನಾವಣೆಗೆ ನಿಲ್ಲುವಂತೆ ಮಾಡಿದ್ದೇವೆ ಎಂದರು. ಐದಾರು ಬಾರಿ ಕಾಂಗ್ರೆಸ್ ಪಕ್ಷವು ಅಲ್ಲಿ ಸೋಲುತ್ತಲೇ ಬಂದಿತ್ತು. ಹೀಗಾಗಿ ನಾವು ಗೆಲ್ಲಬೇಕು ಎಂದು ಅವರನ್ನು ನಿಲ್ಲಿಸಿದೆವು. ಇದೀಗ ಅವರು ಗೆದ್ದು ಸಂಸತ್ತಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಶಿವಕುಮಾರ್ ಭರವಸೆ ವ್ಯಕ್ತಪಡಿಸಿದರು.  

ವಾರ್ತಾ ಭಾರತಿ 24 Mar 2026 9:21 pm

ಅಪರಾಧಿಗಳು, ನಾಪತ್ತೆಯಾಗಿರುವ ಮಕ್ಕಳ ಸುಲಭ ಪತ್ತೆ: ಮುಂಬೈ ರೈಲ್ವೆಯ FRS ವ್ಯವಸ್ಥೆ ರಾಷ್ಟ್ರವ್ಯಾಪಿ ತನಿಖಾ ಸಾಧನವಾಗಿದ್ದೇಗೆ?

ಸುಮಾರು 5000 ಕ್ಯಾಮರಾಗಳನ್ನು ಹೊಂದಿರುವ ಮುಂಬೈ ಪೊಲೀಸ್ ಯುನಿಟ್ ಕೂಡ ತಮ್ಮ ಜಾಲಕ್ಕೆ FRS ಲಿಂಕ್ ಮಾಡಲು ಯೋಜಿಸುತ್ತಿದೆ. ಪೋರ್ಚುಗೀಸ್ ಪ್ರವಾಸಿಗರೊಬ್ಬರಿಗೆ ಕಿರುಕುಳ ನೀಡಿ ಬೆನ್ನಟ್ಟಿದ ಇಬ್ಬರು ವ್ಯಕ್ತಿಗಳನ್ನು ಕಳೆದ ತಿಂಗಳು ಬಂಧಿಸಲಾಗಿದೆ. ಗುರುಗಾಂವ್ನಿಂದ ತಪ್ಪಿಸಿಕೊಂಡಿದ್ದ 14 ವರ್ಷದ ಹುಡುಗನನ್ನು ವಾರದ ಹಿಂದೆ ರಾಜಸ್ಥಾನದಲ್ಲಿ ಪತ್ತೆಹಚ್ಚಲಾಗಿದೆ. ಮುಂಬೈ ಪ್ರೊಫೆಸರ್ ಮೇಲೆ ಹಲ್ಲೆಗೈದ ವ್ಯಕ್ತಿಯನ್ನು ಜನವರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಬಂಧಿಸಲಾಗಿದೆ. ವರ್ಷದ ಹಿಂದೆ ನಟ ಸೈಫ್ ಅಲಿ ಖಾನ್ ಮೇಲೆ ದಾಳಿಗೈದು ಪರಾರಿಯಾಗಿದ್ದ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಈ ಎಲ್ಲಾ ಯಶಸ್ವಿ ಪೊಲೀಸ್ ತನಿಖೆಗಳಿಗೆ ನೆರವಾಗಿರುವ ಸಾಧನ ರೈಲ್ವೇ ರಕ್ಷಣಾ ಪಡೆಯ ಮುಂಬೈ ವಿಭಾಗದ 3,675 CCTV ಕ್ಯಾಮರಾಗಳಿಗೆ ಲಿಂಕ್ ಆಗಿರುವ 463 ಮುಖ ಗುರುತಿಸುವಿಕೆ ವ್ಯವಸ್ಥೆ (Facial Recognition System) ಅಥವಾ FRS! ಉತ್ತರದಲ್ಲಿ ಚರ್ಚ್ಗೇಟ್ನಿಂದ ಸೂರತ್ವರೆಗೆ ಮತ್ತು ಪೂರ್ವದಲ್ಲಿ ಜಲಗಾಂವ್ವರೆಗೆ ರೈಲ್ವೇ ನಿಲ್ದಾಣಗಳಲ್ಲಿ ಈ FRS ಜಾಲ ಹರಡಲಾಗಿದೆ. ಅಧಿಕಾರಿಗಳ ಪ್ರಕಾರ ಪಶ್ಚಿಮ ರೈಲ್ವೆ ದೇಶದ ರೈಲು ಜಾಲಗಳಲ್ಲಿ CCTV ಕ್ಯಾಮರಾಗಳಿಗೆ FRS ವ್ಯವಸ್ಥೆ ಸ್ಥಾಪಿಸಿದ ಮೊದಲ ವಿಭಾಗವಾಗಿದೆ. ರೈಲ್ವೇ ಅಧಿಕಾರಿಗಳ ಪ್ರಕಾರ, “ಕಳೆದ ವರ್ಷಗಳಿಂದ ಅವುಗಳನ್ನು ಇತರ ವಿಭಾಗಗಳಲ್ಲೂ ಸ್ಥಾಪಿಸಲಾಗುತ್ತಿದ್ದು, ಸಂಪೂರ್ಣ ರೈಲ್ವೇ ನೆಟ್ವರ್ಕ್ ಅನ್ನು ಒಳಗೊಳ್ಳಲಾಗುತ್ತದೆ. ಇದೀಗ ದೇಶಾದ್ಯಂತ ಪೊಲೀಸ್ ಪಡೆಗಳು ಮತ್ತು ಕೇಂದ್ರ ತನಿಖಾ ಏಜೆನ್ಸಿಗಳಿಂದಲೂ ಸಹಾಯಕ್ಕೆ ವಿನಂತಿಗಳು ಬರುತ್ತವೆ”. ಸುಮಾರು 5000 ಕ್ಯಾಮರಾಗಳನ್ನು ಹೊಂದಿರುವ ಮುಂಬೈ ಪೊಲೀಸ್ ಯುನಿಟ್ ಕೂಡ ತಮ್ಮ ಜಾಲಕ್ಕೆ FRS ಲಿಂಕ್ ಮಾಡಲು ಯೋಜಿಸುತ್ತಿದೆ. ಪೋರ್ಚುಗೀಸ್ ಪ್ರವಾಸಿ ಮಹಿಳೆ ಫೆಬ್ರವರಿ 23ರಂದು ಮಹಾಲಕ್ಷ್ಮಿ ರೈಲ್ವೇ ನಿಲ್ದಾಣದ ಬಳಿ ಧೋಬಿ ಘಾಟ್ ಬಳಿ ಕಿರುಕುಳದ ವೀಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅದರಿಂದ ಫೋಟೋ ಪಡೆದ ಮುಂಬೈ ಪೊಲೀಸರು ತಮ್ಮ ಕ್ಯಾಮರಾ ನೆಟ್ವರ್ಕ್ನಲ್ಲಿ ಸ್ಕ್ಯಾನ್ ಮಾಡಿದಾಗ ವಿವರ ಸಿಕ್ಕಿರಲಿಲ್ಲ. ವೀಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ರೈಲ್ವೆ ಪೊಲೀಸ್ ಪಡೆಯ FRS ಜಾಲದಲ್ಲಿ ಹುಡುಕಿದಾಗ ತ್ವರಿತವಾಗಿ ವಿವರ ದೊರಕಿದೆ. ಕಿರುಕುಳ ನೀಡಿದವರಲ್ಲಿ ಒಬ್ಬ ಬಿಹಾರಕ್ಕೆ ಪಲಾಯನಗೈದರೆ ಮತ್ತೊಬ್ಬ ಮುಂಬೈನಲ್ಲೇ ಸಿಕ್ಕಿಬಿದ್ದಿದ್ದಾನೆ. FRS ವ್ಯಕ್ತಿಗಳ ಮುಖದ ಲಕ್ಷಣಗಳನ್ನು ಆಧರಿಸಿ ಗುರುತಿಸುತ್ತದೆ. ಕಣ್ಣುಗಳ ನಡುವಿನ ಅಂತರ, ಹಣೆ, ಮೂಗು, ಕಿವಿಗಳು ಮತ್ತು ಕೆನ್ನೆಯ ಮೂಳೆಗಳನ್ನು ಪರೀಕ್ಷಿಸಿ ಅವುಗಳನ್ನು ಡಾಟಾವಾಗಿ ಪರಿವರ್ತಿಸಿ ಫೇಸ್ ಪ್ರಿಂಟ್ ಆಗಿಸುತ್ತದೆ. ಮುಖವನ್ನು ಟ್ರ್ಯಾಕ್ ಮಾಡಲು ರೈಲ್ವೈ ಪೊಲೀಸರು ಸಿಸ್ಟಮ್ಗೆ ಪೋಟೋ ಅಪ್ಲೋಡ್ ಮಾಡುತ್ತಾರೆ. ಸಿಸ್ಟಮ್ ಸಂಗ್ರಹಿಸಿರುವ ಫೇಸ್ ಪ್ರಿಂಟ್ಗಳನ್ನು ಹೋಲಿಸಿ ಅಲರ್ಟ್ ಕೊಡುತ್ತದೆ. ನಂತರ ಇತರ ಸ್ಥಳಗಳಲ್ಲಿ ಪತ್ತೆಯಾಗಿರುವುದು ಮತ್ತು ಆಗಾಗ್ಗೆ ಓಡಾಡಿದ ಸ್ಥಳಗಳ ವಿವರ ಕೊಡುತ್ತದೆ. FRS ಅಳವಡಿಸಿದ CCTV ಕ್ಯಾಮರಾಗಳು ಮುಂಬೈ ಸೆಂಟ್ರಲ್ ಅಥವಾ ರೈಲ್ವೇ ಪೊಲೀಸ್ ಪಡೆಯ ಪೊಲೀಸ್ ಸ್ಟೇಷನ್ಗಳಲ್ಲಿ ಲಭ್ಯವಿರುವ ಸಾಫ್ಟ್ವೇರ್ಗೆ ಸಂಪರ್ಕಿತವಾಗಿರುತ್ತವೆ. ವಾಚ್ಲಿಸ್ಟ್ನಲ್ಲಿರುವ ವ್ಯಕ್ತಿ ಯಾವುದೇ ಕ್ಯಾಮರಾಗಳ ಮೂಲಕ ಸಾಗಿದರೂ ಸಾಫ್ಟ್ವೇರ್ ತಕ್ಷಣವೇ ಅಲರ್ಟ್ ಕೊಡುತ್ತದೆ. 2024ರೊಂದರಲ್ಲೇ 10,000ಕ್ಕೂ ಮೀರಿದ ಫೋಟೋಗ್ರಾಫ್ಗಳನ್ನು ಬಳಸಿ ಎನ್ಐಎ ಮತ್ತು ಸಿಬಿಐ ಸೇರಿದಂತೆ ಏಜೆನ್ಸಿಗಳು ವ್ಯಕ್ತಿಗಳನ್ನು ಪತ್ತೆ ಮಾಡಿದ್ದಾರೆ. ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಕೂಡ ಈ ಸಾಧನ ಅತಿ ಮುಖ್ಯವಾಗಿದೆ. ಜನನಿಬಿಡ ನಿಲ್ದಾಣಗಳಾದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಚರ್ಚ್ ಗೇಟ್ ನಂತಹ ಸ್ಥಳಗಳಲ್ಲಿಯೂ FRS ನಿಂದ ನಾಪತ್ತೆಯಾದ ಮಕ್ಕಳ ಫೋಟೋಗಳನ್ನು ಬಳಸಿ ಪತ್ತೆ ಮಾಡಲಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ ಮಕ್ಕಳನ್ನು ಕೊನೆಯ ಬಾರಿಗೆ ಎಲ್ಲಿ ನೋಡಲಾಗಿದೆ ಎನ್ನುವ ವಿವರ ರೈಲ್ವೆ FRS ಜಾಲದಿಂದ ದೊರೆಯುತ್ತದೆ. 2024ರಲ್ಲಿ 54 ಬ್ಯಾಗ್ ಕಳ್ಳರು ಮತ್ತು ಮೂರು ದರೋಡೆಗಳನ್ನು FRS ಜಾಲದಿಂದ ಪರಿಹರಿಸಲಾಗಿದೆ. 2025ರಲ್ಲಿ 59 ಬ್ಯಾಗ್ ಕಳ್ಳರು ಮತ್ತು ಐದು ಬ್ಯಾಗ್ ಸೆಳೆದುಕೊಂಡು ಹೋಗುವವರನ್ನು ಪತ್ತೆ ಮಾಡಲಾಗಿದೆ. 2026ರಲ್ಲಿ ಫೆಬ್ರವರಿಯವರೆಗೆ 15 ಬ್ಯಾಗ್ ಕಳ್ಳರನ್ನು ಪತ್ತೆ ಮಾಡಲಾಗಿದೆ. ಕೃಪೆ: indianexpress.com

ವಾರ್ತಾ ಭಾರತಿ 24 Mar 2026 9:20 pm

ಭಾರತದ ವಿದೇಶ ನೀತಿ ‘ಮೋದಿಯ ವೈಯಕ್ತಿಕ ವಿದೇಶ ನೀತಿ’ಯಾಗಿದೆ: ರಾಹುಲ್ ಗಾಂಧಿ ಟೀಕೆ

ಹೊಸದಿಲ್ಲಿ: ಪಶ್ಚಿಮ ಏಶ್ಯ ಬಿಕ್ಕಟ್ಟಿಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ. ಭಾರತದ ವಿದೇಶ ನೀತಿ ಎನ್ನುವುದು ‘‘ಮೋದಿಯ ವೈಯಕ್ತಿಕ ವಿದೇಶ ನೀತಿ’’ಯಾಗಿದೆ ಹಾಗೂ ಅದು ‘‘ಸಾರ್ವತ್ರಿಕ ಹಾಸ್ಯ’’ದ ವಿಷಯವಾಗಿದೆ ಎಂದು ಅವರು ನುಡಿದರು. ‘‘ನಮ್ಮ ದೇಶದ ವಿದೇಶ ನೀತಿಯು ಪ್ರಧಾನಿ ಮೋದಿಯ ವೈಯಕ್ತಿಕ ವಿದೇಶ ನೀತಿಯಾಗಿದೆ. ಅದರ ಫಲಿತಾಂಶವನ್ನು ನೀವು ನೋಡಬಹುದಾಗಿದೆ. ಅದೊಂದು ಸಾರ್ವತ್ರಿಕ ತಮಾಷೆಯಾಗಿದೆ. ಪ್ರತಿಯೊಬ್ಬರೂ ಅದನ್ನು ಸಾರ್ವತ್ರಿಕ ತಮಾಷೆ ಎಂಬುದಾಗಿ ಭಾವಿಸುತ್ತಾರೆ. ಮೋದಿ ಏನು ಮಾಡಬಹುದು ಮತ್ತು ಏನು ಮಾಡಲಾರರು ಎನ್ನುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನಿಖರವಾಗಿ ಗೊತ್ತಿದೆ. ಹಾಗಾಗಿ, ಪ್ರಧಾನಿ ರಾಜಿ ಮಾಡಿಕೊಂಡರೆ ನಮ್ಮ ವಿದೇಶ ನೀತಿಯೂ ರಾಜಿಗೆ ಒಳಗಾಗುತ್ತದೆ’’ ಎಂದು ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ಪ್ರತಿಪಕ್ಷದ ನಾಯಕನೂ ಆಗಿರುವ ರಾಹುಲ್ ಗಾಂಧಿ ಹೇಳಿದರು. ಪ್ರಧಾನಿ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ಅವರು, ಪ್ರಧಾನಿ ತನ್ನ ಭಾಷಣದಲ್ಲಿ ಕೋವಿಡ್‌ನಂಥ ಬಿಕ್ಕಟ್ಟು ಉಂಟಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದರು. ಕೋವಿಡ್ ಕಾಲದಲ್ಲಿ ಎಷ್ಟು ಜನರು ಮೃತಪಟ್ಟಿದ್ದಾರೆ ಎನ್ನುವುದನ್ನು ಹಾಗೂ ಆ ಅವಧಿಯಲ್ಲಿ ಸಂಭವಿಸಿದ ದುರಂತಗಳ ಪ್ರಮಾಣವನ್ನು ಅವರು ಮರೆತಿದ್ದಾರೆ ಎಂದು ರಾಹುಲ್ ಹೇಳಿದರು. ‘‘ಅವರು ನಿನ್ನೆ ಲೋಕಸಭೆಯಲ್ಲಿ ಅಪ್ರಸ್ತುತ ಭಾಷಣವನ್ನು ಮಾಡಿದರು. ಅವರು ಭಾರತದ ಪ್ರಧಾನಿ. ಅವರು ಭಾರತದ ಪ್ರಧಾನಿ ಎನ್ನುವುದು ಕಾಣಿಸಬೇಕು. ಆದರೆ ಭಾಷಣದಲ್ಲಿ ಹಾಗೆ ಎಲ್ಲಿಯೂ ಅನಿಸಲಿಲ್ಲ. ಜನರು ಸಂಕಷ್ಟಕ್ಕೆ ಒಳಗಾಗುವುದು ಬೇಸರದ ಸಂಗತಿ. ಸಂಕಷ್ಟ ಈಗಷ್ಟೇ ಆರಂಭವಾಗಿದೆ. ನಾವು ಎಲ್‌ಪಿಜಿ, ಪೆಟ್ರೋಲ್, ರಸಗೊಬ್ಬರ ಮುಂತಾದ ಪ್ರತಿ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ’’ ಎಂದು ರಾಹುಲ್ ಹೇಳಿದರು.

ವಾರ್ತಾ ಭಾರತಿ 24 Mar 2026 9:19 pm

ವಿದೇಶದಿಂದ ಬಂದ ವ್ಯಕ್ತಿ ನಾಪತ್ತೆ

ಶಿರ್ವ, ಮಾ.24: ವಿದೇಶದಿಂದ ಊರಿಗೆ ಬಂದಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಪಿಲಾರು ಗ್ರಾಮದ ಹಲಸಿನಕಟ್ಟೆ ಎಂಬಲ್ಲಿ ನಡೆದಿದೆ. ಮಾ.4ರಂದು ವಿದೇಶದಿಂದ ಊರಿಗೆ ಬಂದಿದ್ದ ಗಿರೀಶ್ ಆಚಾರ್ಯ, ಮಾ.7ರಂದು ಸಂಜೆ ವಿದೇಶದಲ್ಲಿದ್ದ ತನ್ನ ಕಂಪೆನಿ ಗುಜರಾತಲ್ಲಿದ್ದು, ಅಲ್ಲಿಗೆ ಹೋಗವುದಾಗಿ ತಿಳಿಸಿ ಪತ್ನಿಯ ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದರು. ಬಳಿಕ ರಾತ್ರಿ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸದೆ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Mar 2026 9:17 pm

ಟಿಪ್ಪರ್- ಸ್ಕೂಟರ್ ಢಿಕ್ಕಿ: ಸವಾರ ಸ್ಥಳದಲ್ಲಿಯೇ ಮೃತ್ಯು

ಕಾರ್ಕಳ, ಮಾ.24: ಮಾಳ ಘಾಟ್‌ನಲ್ಲಿ ಮಾ.24ರಂದು ಬೆಳಗ್ಗೆ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಸವಾರ ಬಜಗೋಳಿಯ ನವೀನ್ ಜಯ ಕುಮಾರ್(45) ಎಂದು ಗುರುತಿಸಲಾಗಿದೆ. ಸಹಸವಾರ ಬಜಗೋಳಿ ಪಾಜಿನಡ್ಕ ನಿವಾಸಿ ರಜತ್ ಎಸ್.(18) ಗಾಯಗೊಂಡಿದ್ದಾರೆ. ಇವರಿಬ್ಬರು ಸ್ಕೂಟರ್‌ನಲ್ಲಿ ಬಜಗೋಳಿ ಕಡೆಯಿಂದ ಮಾಳ ಘಾಟ್‌ಗೆ ಹೋಗುತ್ತಿದ್ದು, ಈ ವೇಳೆ ಎದುರಿನಿಂದ ಅಂದರೆ ಎಸ್‌ಕೆ ಬಾರ್ಡರ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ನೋಡಿ ನವೀನ್ ಒಮ್ಮೆಲೇ ಸ್ಕೂಟರ್‌ಗೆ ಬ್ರೇಕ್ ಹಾಕಿದರೆನ್ನಲಾಗಿದೆ. ಇದರ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಎರಡೂ ವಾಹನಗಳು ಢಿಕ್ಕಿ ಹೊಡೆಯಿತು. ಇದರಿಂದ ನವೀನ್ ಹಾಗೂ ರಜತ್ ಸ್ಕೂಟರ್‌ನೊಂದಿಗೆ ರಸ್ತೆಗೆ ಬಿದ್ದರು. ಈ ವೇಳೆ ಟಿಪ್ಪರ್‌ನ ಟಯರ್ ನವೀನ್ ಮೇಲೆ ಹರಿದು ಹೋಯಿ ತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನವೀನ್ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದು ಬಂದಿದೆ. ನವೀನ್ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದು, ಹಾವು ಹಿಡಿಯುವ ಹವ್ಯಾಸ ಹೊಂದಿದ್ದರು. ಇಂದು ಬೆಳಿಗ್ಗೆ ಎಲ್ಲಿಯೋ ಹಾವು ಹಿಡಿದು ಕಾಡಿಗೆ ಬಿಡಲೆಂದು ಇವರು ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Mar 2026 9:16 pm

Budget Session 2026 | ಮೇಲ್ಮನೆಯಲ್ಲಿ ‘ಇವ ನಮ್ಮವ ಇವ ನಮ್ಮವ ವಿಧೇಯಕ’ ಅಂಗೀಕಾರ

ಬೆಂಗಳೂರು : ಮರ್ಯಾದೆಗೇಡು ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಿದ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕವನ್ನು ಮೇಲ್ಮನೆಯಲ್ಲಿ ಅಂಗೀಕಾರ ಮಾಡಲಾಯಿತು. ಸೋಮವಾರ ಪರಿಷತ್ತಿನ ಕಲಾಪದ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಧೇಯಕವನ್ನು ಮಂಡಿಸಿದರು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ವಿಧೇಯಕದ ಬಗ್ಗೆ ಚರ್ಚೆ ನಡೆಯಿತು. ನಂತರ ಸಭಾಪತಿ ಬಸವರಾಜ ಎಸ್ ಹೊರಟ್ಟಿ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿದರು.  

ವಾರ್ತಾ ಭಾರತಿ 24 Mar 2026 9:15 pm

ಅಂದರ್ ಬಾಹರ್ ಪ್ರಕರಣ : ನಾಲ್ವರ ಬಂಧನ

ಶಂಕರನಾರಾಯಣ, ಮಾ.24: ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿ ಮಾ.23ರಂದು ರಾತ್ರಿ ವೇಳೆ ಅಂದರ್-ಬಾಹರ್ ಇಸ್ಟೀಟ್ ಜುಗಾರಿ ಆಡುತಿದ್ದ ನಾಲ್ಕು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಗ್ರಾಮದ ಮೇಲ್ಜೆಡ್ಡು ನಿವಾಸಿ ಸುಧಾಕರ ಶೆಟ್ಟಿ(52), ವಾರಾಹಿ ರಸ್ತೆಯ ರಮೇಶ್(46), ಜನ್ಸಾಲೆಯ ಮನೋಹರ (46), ಕುಂದಾಪುರದ ಮಹೇಶ್(43) ಬಂಧಿತ ಆರೋಪಿಗಳು. ಹರ್ಷ, ಕೃಷ್ಣ ಪೂಜಾರಿ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ 6,700ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Mar 2026 9:14 pm

ಜಿಲ್ಲೆಯಲ್ಲಿ ಪ್ರತಿವರ್ಷ 1,500 ಕ್ಷಯರೋಗ ಪ್ರಕರಣಗಳು ಪತ್ತೆ’

ಉಡುಪಿಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ

ವಾರ್ತಾ ಭಾರತಿ 24 Mar 2026 9:13 pm

ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಕರ್ನಾಟಕದಲ್ಲಿ 28 ರಿಂದ 42ಕ್ಕೆ ಹೆಚ್ಚಿಸಲು ಪ್ಲಾನ್‌; ಇತರೆ ರಾಜ್ಯಗಳಲ್ಲಿ ಎಷ್ಟು?

ಲೋಕಸಭಾ ಸೀಟುಗಳ ಸಂಖ್ಯೆ 816ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಕರ್ನಾಟಕದಲ್ಲಿಯೂ ಹೆಚ್ಚಳವಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಯಾವ ರಾಜ್ಯಕ್ಕೆ ಎಷ್ಟು? ಕರ್ನಾಟಕಕ್ಕೆ ಎಷ್ಟು ಸೀಟು? ಈ ಡಿಲಿಮಿಟೇಶನ್ ಪ್ರಕ್ರಿಯೆ ಹೇಗಿರಲಿದೆ? ಯಾವ ರಾಜ್ಯಕ್ಕೆ ಎಷ್ಟು ಸೀಟು ಹೆಚ್ಚಾಗಲಿದೆ? ದಕ್ಷಿಣ ಭಾರತದ ರಾಜ್ಯಗಳ ಆತಂಕವೇನು? ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 24 Mar 2026 9:11 pm

ಐಪಿಎಲ್-2026 | ಆರ್‌ಸಿಬಿ ತಂಡದ ಸಹಭಾಗಿತ್ವ ಪಡೆದ ‘ನಂದಿನಿ’

ಬೆಂಗಳೂರು : ಐಪಿಎಲ್-2026ರ ಟಿ20 ಲೀಗ್ ಟೂರ್ನಮೆಂಟ್‍ಗೆ ಆರ್‌ಸಿಬಿ ತಂಡಕ್ಕೆ ಕರ್ನಾಟಕ ಹಾಲು ಮಹಾ ಮಂಡಳ-ನಂದಿನಿ ಸಹಭಾಗಿತ್ವ ಪಡೆದಿದೆ ಎಂದು ಕರ್ನಾಟಕ ಹಾಲು ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ. ಮಂಗಳವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, 2026ರ ಐಪಿಎಲ್ ಟಿ20 ಲೀಗ್ ಟೂರ್ನಮೆಂಟ್ ಮಾ.28ರಿಂದ ಪ್ರಾರಂಭವಾಗಲಿದೆ. ಆರ್‌ಸಿಬಿ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವುದರ ಜೊತೆಗೆ ಐಪಿಎಲ್-2025ರ ಚಾಂಪಿಯನ್ ಸಹ ಆಗಿದೆ. ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಮತ್ತು ಗ್ರಾಹಕರ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ನಂದಿನಿ ನಮ್ಮ ರಾಜ್ಯದ ಹೆಮ್ಮೆಯ ಕ್ರಿಕೆಟ್ ತಂಡ ಆರ್‌ಸಿಬಿ ಜೊತೆಗೆ ಕೈ ಜೋಡಿಸುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದ್ದಾರೆ. ನಂದಿನಿ ಬ್ರ್ಯಾಂಡ್ ಸದಾ ಕ್ರೀಡೆ ಮತ್ತು ಯುವಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯವನ್ನು ಹೊಂದಿದೆ. ನಂದಿನಿ ಬ್ರ್ಯಾಂಡ್ ಆರ್‌ಸಿಬಿ ತಂಡದ ಅಧಿಕೃತ ಡೈರಿ ಸಹಭಾಗಿತ್ವ ಹೊಂದುವ ಮೂಲಕ ಎರಡು ಐಕಾನಿಕ್ ಬ್ರ್ಯಾಂಡ್‍ಗಳ ಒಕ್ಕೂಟವಾಗಿದೆ. ಕ್ರೀಡೆಯನ್ನು ಬೆಂಬಲಿಸುವ ನಂದಿನಿ ಪರಂಪರೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಸಹಭಾಗಿತ್ವದ ಭಾಗವಾಗಿ ನಂದಿನಿ ವಿವಿಧ ಜಾಹೀರಾತು ಚಟುವಟಿಕೆಗಳು ಮತ್ತು ಕಾರ್ಯಕ್ರಮ, ಅಭಿಯಾನಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.    

ವಾರ್ತಾ ಭಾರತಿ 24 Mar 2026 9:09 pm

ದಯಾಮರಣಕ್ಕೆ ಒಳಗಾದ ದೇಶದ ಮೊದಲ ವ್ಯಕ್ತಿ ಹರೀಶ್ ರಾಣಾ ನಿಧನ : 13 ವರ್ಷಗಳ ಕೋಮಾಗೆ ಮುಕ್ತಿ

Harish Rana Dies : ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಅಧಿಕೃತವಾಗಿ ನಿಷ್ಕ್ರಯ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ, ಮಂಗಳವಾರ (ಮಾರ್ಚ್ 24) ನಿಧನರಾಗಿದ್ದಾರೆ. ಹದಿಮೂರು ವರ್ಷಗಳ ಕೋಮಾದ ನರಕಯಾತನೆಯನ್ನು ಅನುಭವಿಸಿದ್ದ ಹರೀಶ್ ರಾಣಾ, ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿಜಯ ಕರ್ನಾಟಕ 24 Mar 2026 8:34 pm

ಮಕ್ಕಳು ದೇಶದ ಭವಿಷ್ಯದ ಸಂಪತ್ತು : ಡಾ. ಲವೀನಾ ಲೋಬೊ

ಮಂಗಳೂರು, ಮಾ.24: ಮಕ್ಕಳು ದೇಶದ ಭವಿಷ್ಯದ ಸಂಪತ್ತು . ಆದ ಕಾರಣ ಮಕ್ಕಳ ಶಿಕ್ಷಣ , ಆರೋಗ್ಯ ಮೇಲೆ ಹೂಡಿಕೆ ಅತ್ಯಂತ ಅವಶ್ಯಕ ಎಂದು ಸಂತ ಅಲೋಸಿಯೆಸ್ ಪರಿಗಣಿತ ವಿವಿ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಲವೀನಾ ಲೋಬೊ ಹೇಳಿದ್ದಾರೆ. ನಗರದ ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಸಾನಿಧ್ಯ ಸಭಾಂಗಣದಲ್ಲಿ ಮಂಗಳವಾರ ‘ ಮಕ್ಕ ಸಮಸ್ಯೆಗಳು-ಹದಿಹರೆಯದವರ ಆರೋಗ್ಯ ಮತ್ತು ಪೋಷಣೆ: ಸಾಂಕ್ರಾಮಿಕವಲ್ಲದ ರೋಗಗಳು, ಆರೋಗ್ಯಕರ ಆಹಾರಕ್ರಮಗಳು ಮತ್ತು ರಸ್ತೆ ಸುರಕ್ಷತೆ’ ಬಗ್ಗೆ ಕರ್ನಾಟಕ ರಾಜ್ಯ ಪತ್ರಕರ್ತರಿಗೆ ಆಯೋಜಿಸಲಾದ ಎರಡು ದಿನಗಳ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಚಿಕ್ಕಂದಿನಲ್ಲಿ ಪಡೆದ ಅನುಭವಗಳು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಗು ತನ್ನ ಬಾಲ್ಯದಲ್ಲಿ ಏನನ್ನು ಕಲಿಯುತ್ತದೆಯೋ, ಏನನ್ನು ಅನುಭವಿಸುತ್ತದೆಯೋ ಅದು ಆ ಮಗುವಿನ ವಯಸ್ಕ ಮನಸ್ಥಿತಿಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಮಗು ಬೆಳೆದಂತೆ ಸಂದರ್ಭಗಳಿಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಬಾಲ್ಯದ ಮೇಲೆ ನಿರ್ಧರಿತವಾಗಿರುತ್ತದೆ.ನಿರ್ಧಾರ ತೆಗೆದುಕೊಳ್ಳುವ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯು ಬಾಲ್ಯದ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಈ ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳು ಅಪಾರವಾಗಿವೆ. ಆದ್ದರಿಂದ, ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಸುರಕ್ಷಿತ ವಾತಾವರಣ ವನ್ನು ನಿರ್ಮಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪತ್ರಕರ್ತರಿಗೆ ಇಂತಹ ಕಾರ್ಯಾಗಾರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಯುನಿಸೆಫ್ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯದ ಸಂವಹನ ತಜ್ಞ ಪ್ರಸೂನ್ ಸೇನ್ ಮುಖ್ಯ ಅತಿಥಿಯಾಗಿ ಮಾತನಾಡಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬರೆಯುವ ಪತ್ರಕರ್ತರು ಮಕ್ಕಳ ಹಕ್ಕು ಗಳು ಮತ್ತು ಕಾನೂನುಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕಾಗಿದೆ. ಮಕ್ಕಳ ಕುರಿತಾದ ವರದಿಗಳ ಗುಣಮಟ್ಟ ವನ್ನು ಸುಧಾರಿಸುವ ಅಗತ್ಯವಿರುವುದರಿಂದ ಈ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ನುಡಿದರು. ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕುಗಳ ಚೌಕಟ್ಟುಗಳು ಮತ್ತು ಕಾನೂನುಗಳು ಬಗ್ಗೆ ಮೊದಲ ಅಧಿವೇಶನದಲ್ಲಿ ಬೆಂಗಳೂರಿನ ಕರ್ನಾಟಕ ಮಕ್ಕಳ ಹಕ್ಕುಗಳ ವೀಕ್ಷಣಾಲಯ(ಕೆಸಿಆರ್‌ಒ)ದ ರಾಜ್ಯ ಸಂಚಾಲಕ ಡಾ. ವಾಸುದೇವ ಶರ್ಮಾ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳು ಬಗ್ಗೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಯುನಿಸೆಫ್ ಕಚೇರಿಯ ಆರೋಗ್ಯ ತಜ್ಞ ಡಾ. ಶ್ರೀಧರ್ ಪ್ರಹ್ಲಾದ್ ರ್ಯಾವಂಕಿ ಸಮಗ್ರ ಮಾಹಿತಿ ಒದಗಿಸಿದರು. ಯುನಿಸೆಫ್ ಹೈದರಾಬಾದ್, ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮತ್ತು ಸಂತ ಅಲೋಶಿಯೆಸ್ ಪರಿಗಣಿತ ವಿವಿ ಮಾಧ್ಯಮ ಅಧ್ಯಯನ ವಿಭಾಗದ ಆಶ್ರಯದಲ್ಲಿ ಆಯೋಜಿಸ ಲಾದ ಕಾರ್ಯಾಗಾರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಡಾ. ಸಪ್ನಾ ಎಂ. ಎಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಮಾಧ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥೆ ಭವ್ಯಾ ಶೆಟ್ಟಿ ವಂದಿಸಿದರು. ಕಾರ್ಯಾಗಾರದ ಸಹ ಸಂಯೋಜಕರಾದ ಡಾ. ರಾಕೇಶ್ ಉಪಸ್ಥಿತರಿದ್ದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. 

ವಾರ್ತಾ ಭಾರತಿ 24 Mar 2026 8:28 pm

ಪಶ್ಚಿಮ ಏಶ್ಯ ಸಂಘರ್ಷದ ಬಗ್ಗೆ ಚರ್ಚೆ ನಡೆಸಲು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರಕಾರ

ಹೊಸದಿಲ್ಲಿ: ಪಶ್ಚಿಮ ಏಶ್ಯ ಸಂಘರ್ಷದ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರಕಾರವು ಬುಧವಾರದಂದು ಸರ್ವಪಕ್ಷ ಸಭೆಯೊಂದನ್ನು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಸತ್‌ನಲ್ಲಿ ಭಾಷಣ ಮಾಡಿದ ಬಳಿಕ ಸರ್ವಪಕ್ಷ ಸಭೆಯನ್ನು ಕರೆಯಲಾಗಿದೆ. ಮಂಗಳವಾರ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ರಕ್ಷಣಾ ಅಧಿಕಾರಿಗಳ ಸಭೆಯೊಂದರ ಅಧ್ಯಕ್ಷತೆ ವಹಿಸಿ ಭಾರತದ ರಕ್ಷಣಾ ಸನ್ನದ್ಧತೆಯನ್ನು ಪರಿಶೀಲಿಸಿದರು. ಇತ್ತೀಚಿನ ಜಾಗತಿಕ ಮತ್ತು ಪ್ರಾದೇಶಿಕ ಭದ್ರತಾ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಈ ಸಭೆಯನ್ನು ಏರ್ಪಡಿಸಲಾಗಿತ್ತು. ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಅಮರ್ ಪ್ರೀತ್ ಸಿಂಗ್, ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷ ಸಮೀರ್ ಕಾಮತ್ ಮುಂತಾದವರು ಈ ಸಭೆಯಲ್ಲಿ ಭಾಗವಹಿಸಿದರು. ಪಶ್ಚಿಮ ಏಶ್ಯ ಸಂಘರ್ಷವು ನಾಲ್ಕನೇ ವಾರವನ್ನು ತಲುಪಿದ್ದು, ಹಾರ್ಮುಝ್ ಜಲಸಂಧಿಯ ವಾಣಿಜ್ಯ ಮಾರ್ಗಗಳು ಬಂದ್ ಆಗಿವೆ.

ವಾರ್ತಾ ಭಾರತಿ 24 Mar 2026 8:27 pm

ಮಹಾಡ್ ಸತ್ಯಗ್ರಾಹದ ಅರಿವು ಇಲ್ಲದಿದ್ದರೆ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ: ಪ್ರೊ.ಫಣಿರಾಜ್

ಉಡುಪಿ, ಮಾ.24: ಬಿ.ಆರ್.ಅಂಬೇಡ್ಕರ್ ನೇತೃತ್ವದದಲ್ಲಿ 100ವರ್ಷಗಳ ಹಿಂದೆ ನಾಗರಿಕರ ಹಕ್ಕಿಗಾಗಿ ನಡೆದ ದೊಡ್ಡ ಚಳವಳಿ ಮಹಾಡ್ ಸತ್ಯಗ್ರಾಹದ ಬಗ್ಗೆ ನಮಗೆ ಅರಿವು ಇಲ್ಲದಿದ್ದರೆ ನಾವು ನಿರಂತರವಾಗಿ ನಾಗರಿಕರ ಹಕ್ಕನ್ನು ಕಳೆದುಕೊಳ್ಳುತ್ತ ಹೋಗುತ್ತೇವೆ. ಹಾಗಾಗಿ ಇಂತಹ ಚಳವಳಿಯ ನೆನಪು ಇಟ್ಟುಕೊಳ್ಳುವ ಮೂಲಕ ಮತ್ತೆ ನಾಗರಿಕರ ಚಳವಳಿಯ ಹೊಸ ಜಾಗೃತಿಯನ್ನು ಮೂಡಿಸಬೇಕು ಎಂದು ಹಿರಿಯ ಚಿಂತಕ, ಉಡುಪಿ ಸಹಬಾಳ್ವೆ ಸಂಚಾಲಕ ಪ್ರೊ.ಫಣಿರಾಜ್ ಹೇಳಿದ್ದಾರೆ. ಉಡುಪಿ ಸಹಬಾಳ್ವೆ, ದಸಂಸ ಅಂಬೇಡ್ಕರ್ ವಾದ, ಸಿಐಟಿಯು, ರಥಬೀದಿ ಗೆಳೆಯರು ಹಾಗೂ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ವತಿಯಿಂದ ಅಜ್ಜರಕಾಡು ವಿಮಾ ನೌಕರರ ಸಂಘದ ಸಭಾಭವನದಲ್ಲಿ ಆಯೋಜಿಸಲಾದ ಭಾರತ ಮೊದಲ ನಾಗರಿಕ ಹಕ್ಕು ಚಳವಳಿ ಮಹಾಡ್ ಸತ್ಯಾಗ್ರಹದ ಚಾರಿತ್ರಿಕ ಮಹತ್ವದ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಭಾರತದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಇದ್ದರೂ ಇಂದು ಕೂಡ ನಮಗೆ ಸಮಾನತೆ, ನ್ಯಾಯ ಸಿಗುತ್ತಿಲ್ಲ ಎಂಬು ದನ್ನು ದೇಶಾದ್ಯಂತ ನಡೆಯುತ್ತಿರುವ ಘಟನೆಗಳಿಂದ ನೋಡುತ್ತಿದ್ದೇವೆ. ಇಂದು ಮಹಿಳೆಯರು, ಕಾರ್ಮಿಕರು ಹಾಗೂ ದಲಿತರು ದಿನನಿತ್ಯ ತಮ್ಮ ನಾಗರಿಕರ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸಂವಿಧಾನ ನೀಡಿರುವ ಪ್ರಜೆಗಳ ಹಕ್ಕುಗಳನ್ನು ಕೂಡ ಕಳೆದುಕೊಳ್ಳುವ ಸ್ಥಿತಿಗೆ ನಾವು ಬಂದಿದ್ದೇವೆ ಎಂದರು. ಭಾರತದ ಸಂವಿಧಾನದ ವಿಧಿ 15 ಮತ್ತು 17 ಇವುಗಳ ರಚನೆಗಳಿಗೆ ಅಡಿಪಾಯ ಹಾಕಿದ ಚಾರಿತ್ರಿಕ ಮಹತ್ವದ ಮಹಾಡ್ ಚಳವಳಿ ನಮ್ಮ ಎಲ್ಲ ಚಳವಳಿಗಿಂತ ಬಹಳ ಮುಖ್ಯವಾಗಿದೆ. ಎಲ್ಲ ಚಳವಳಿಗಿಂತ ಈ ಚಳವಳಿ ಜನರ ನಡುವೆ ಹೆಚ್ಚು ಪ್ರಚಾರ ಪಡೆಯಬೇಕಾಗಿತ್ತು. ಆದರೆ ಈ ಮಹಾಡ್ ಚಳವಳಿ ಮಹತ್ವ ಹಾಗೂ ಮೊದಲ ನಾಗರಿಕ ಹಕ್ಕಿನ ಚಳವಳಿ ಬಗ್ಗೆ ಜನರಿಗೆ ಅರಿವೇ ಇಲ್ಲ ಎಂದು ಅವರು ಖೇಧ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ನಮಗೆ ಹಕ್ಕುಗಳನ್ನು ಹಕ್ಕು ನೀಡಿದರೂ ಅಧಿಕಾರಸ್ಥರು ಅದನ್ನು ಅನುಭವಿಸಲು ನಮಗೆ ಬಿಡುವು ದಿಲ್ಲ. ಅದನ್ನು ನಾವು ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಪಡೆದುಕೊಳ್ಳಬೇಕಾಗಿದೆ ಎಂಬುದನ್ನು ಈ ಮಹಾಡ್ ಚಳವಳಿ ನಿರೂಪಿಸಿದೆ ಎಂದು ಅವರು ತಿಳಿಸಿದರು. ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಉಪಸ್ಥಿತರಿದ್ದರು. ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 24 Mar 2026 8:26 pm

Yadgiri | ರೈತರ ಉತ್ಪನ್ನ ಖರೀದಿಗೆ 10,000 ಕೋಟಿ ರೂ. ಆವರ್ತ ನಿಧಿ ಅಗತ್ಯ: ಕೋಡಿಹಳ್ಳಿ ಚಂದ್ರಶೇಖರ

ಯಾದಗಿರಿ: ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ ರೈತರಿಂದ ಖರೀದಿಸಲು ರಾಜ್ಯ ಸರ್ಕಾರವು 10,000 ಕೋಟಿ ರೂ. ಆವರ್ತ ನಿಧಿಯನ್ನು ಮೀಸಲಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿಗಳಲ್ಲಿ ಶಾಶ್ವತ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಆವರ್ತ ನಿಧಿಯ ಮೂಲಕ ರೈತರ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಕ್ಕೆ ರೈತರ ವಿಷಯದಲ್ಲಿ ನೈಜ ಕಾಳಜಿ ಇದ್ದರೆ ಮಾತ್ರ ಇದು ಸಾಧ್ಯ. ಕೇವಲ ಕಾರಣಗಳನ್ನು ನೀಡುವುದರಿಂದ ಪ್ರಯೋಜನವಾಗುವುದಿಲ್ಲ. ಈ ವಿಷಯದಲ್ಲಿ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಬೇಕು ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ರೈತರ ಹೆಸರಿನಲ್ಲಿ ಮೀಸಲಾಗುವ ಅನುದಾನ ಕೈಗಾರಿಕೆಗಳಿಗೆ ಅನುಕೂಲವಾಗುತ್ತಿದೆ. ಸಬ್ಸಿಡಿ ರೂಪದಲ್ಲಿ ನೀಡುವ ಹಣದಿಂದ ರೈತರಿಗೆ ನೇರ ಲಾಭವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗವು 26 ವರ್ಷಗಳ ಹಿಂದೆ ಕನಿಷ್ಠ ಬೆಂಬಲ ಬೆಲೆ ಕುರಿತು ಶಿಫಾರಸು ಮಾಡಿದರೂ, ಯಾವುದೇ ಸರ್ಕಾರವು ಅದನ್ನು ಸಂಪೂರ್ಣವಾಗಿ ಜಾರಿಗೆ ತರಿಲ್ಲ. ಆಯೋಗದ C2+50% ಸೂತ್ರದ ಪ್ರಕಾರ ಬೆಂಬಲ ಬೆಲೆ ನಿಗದಿ ಮಾಡಿದರೆ ರೈತರಿಗೆ ಸಬ್ಸಿಡಿಯ ಅಗತ್ಯವಿಲ್ಲ ಎಂದು ಹೇಳಿದರು. ಪ್ರದೇಶದ ರೈತರಿಗೆ ನೀರಿನ ಸಮಸ್ಯೆ ಕುರಿತು ಮಾತನಾಡಿದ ಅವರು, ನಾರಾಯಣಪುರ ಬಸವಸಾಗರ ಜಲಾಶಯದಿಂದ ಏಪ್ರಿಲ್ 3ರವರೆಗೆ ಕಾಲುವೆಗಳಿಗೆ ನೀರು ಹರಿಸುವ ಬದಲು ಎ.15ರವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ರೈತರ ಹೋರಾಟದಿಂದ ರದ್ದಾಗಿದ್ದರೂ, ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಟೀಕಿಸಿದರು. ರೈತರ ಭೂಮಿ ನೋಂದಣಿಯನ್ನು ಆನ್‌ಲೈನ್ ಮೂಲಕ ವೇಗಗೊಳಿಸುವ ಪ್ರಕ್ರಿಯೆ ರೈತರನ್ನು ಭೂಹೀನರನ್ನಾಗಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಕೃಷಿಭೂಮಿ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರ ಬೇಡಿಕೆಗಳ ಕುರಿತು ಚರ್ಚಿಸಲು ಮಾ.30ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಅಲ್ಲಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು. ಕೆಕೆಆರ್‌ಟಿಸಿ ನೌಕರರ ಪ್ರತಿಭಟನೆಗೆ ಬೆಂಬಲ ನೀಡಿದ ನಂತರ ಹೋರಾಟ ಮುಂದುವರಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಆರೋಪಗಳಿಂದ ಮನಸ್ಸಿಗೆ ನೋವಾಗಿದೆ. ಮತ್ತೆ ಆಹ್ವಾನಿಸಿದರೆ ಭಾಗವಹಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ್, ಬಸವರಾಜ ಗೋಡಿಹಾಳ, ಚಂದ್ರಶೇಖರ್, ಬಸನಗೌಡ ಚಿಂಚೋಳಿ, ಬಸವಗೌಡ ಗಂವ್ಹಾರ, ಬಿ.ವಿ.ಗೌಡ, ಮಹಾಂತೇಶ ಜಮಾದಾರ, ಹಾಗೂ ವಿಠಲ್ ಸೇರಿದಂತೆ ಇತರರು ಇದ್ದರು.

ವಾರ್ತಾ ಭಾರತಿ 24 Mar 2026 8:23 pm

ಪ್ರಸಕ್ತ ವರ್ಷ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರಿಕರಿಗೆ ಪ್ರತ್ಯೇಕ ಟರ್ಮಿನಲ್ : ಸಚಿವ ರಹೀಂ ಖಾನ್

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಪ್ರಸಕ್ತ ವರ್ಷ ಪ್ರತ್ಯೇಕ ಟರ್ಮಿನಲ್ ಆರಂಭಿಸುವ ನಿರೀಕ್ಷೆಯಿದೆ ಎಂದು ಹಜ್ ಸಚಿವ ರಹೀಂ ಖಾನ್ ತಿಳಿಸಿದರು. ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಹಜ್ ಯಾತ್ರಿಕರಿಗೆ ಬಿಐಎಲ್‍ನಿಂದ ಪ್ರತಿ ವರ್ಷ ಪ್ರತ್ಯೇಕ ತಾತ್ಕಾಲಿಕ ಟರ್ಮಿನಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದೇ ರೀತಿ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರತ್ಯೇಕ ಟರ್ಮಿನಲ್‍ಗೆ ಎರಡು ವರ್ಷಗಳಿಂದ ಕೇಂದ್ರ ಸರಕಾರ ಅನುಮತಿ ನೀಡಿರಲಿಲ್ಲ. ಮತ್ತೆ ಅನುಮತಿ ನೀಡುವ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದ್ದು, ಈ ವರ್ಷ ಆರಂಭಿಸುವ ವಿಶ್ವಾಸವಿದೆ ಎಂದರು. ರಾಜ್ಯದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಹಜ್ ಯಾತ್ರೆಗೆ ತೆರಳುತ್ತಾರೆ. 2025ರಲ್ಲಿ 8 ಸಾವಿರ ಹಾಗೂ ಈ ಬಾರಿ 11 ಸಾವಿರ ಮಂದಿ ಹಜ್ ಯಾತ್ರೆ ತೆರಳಲಿದ್ದಾರೆ. ಸೌದಿ ಅರೇಬಿಯಾ, ಹಜ್ ಯಾತ್ರಿಕರು ಆರೋಗ್ಯ ತಪಾಸಣೆಯಲ್ಲಿ ದೃಢವಾಗಿರಬೇಕು ಎಂದು ತಿಳಿಸಿದೆ. ಅದರಂತೆ ರಾಜ್ಯ ಸರಕಾರ ಆರೋಗ್ಯ ತಪಾಸಣೆ ನಡೆಸುತ್ತಿದೆ ಎಂದು ರಹೀಂ ಖಾನ್ ತಿಳಿಸಿದರು. ರಾಜ್ಯದಲ್ಲಿ ಪ್ರತಿ ವರ್ಷ ಹಜ್ ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಜಿಲ್ಲಾವಾರು ಮತ್ತು ವಲಯವಾರು ತಲಾ ತರಬೇತಿ ಶಿಬಿರವನ್ನು ನಡೆಸಲಾಗುವುದು ಎಂದು ರಹೀಂ ಖಾನ್ ತಿಳಿಸಿದರು.  

ವಾರ್ತಾ ಭಾರತಿ 24 Mar 2026 8:19 pm

Ballari | ಮೌಲಾನಾ ಆಝಾದ್ ಶಾಲೆಗೆ ವಿರೋಧಿಸಿ ಮಕ್ಕಳೊಂದಿಗೆ ಪ್ರತಿಭಟನೆಗೆ ಇಳಿದ ಪೋಷಕರು

ಬಳ್ಳಾರಿ/ಕಂಪ್ಲಿ: ಸರ್ಕಾರಿ ಶಾಲಾ ಆವರಣದಲ್ಲಿ ಮೌಲಾನಾ ಆಝಾದ್ ಮಾದರಿ ಶಾಲೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಪೋಷಕರು ತಮ್ಮ ಮಕ್ಕಳೊಂದಿಗೆ ಪಟ್ಟಣದ ಸಕ್ಕರೆ ಕಾರ್ಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಿದರು. ಹಲವಾರು ವರ್ಷಗಳ ಹಳೆಯದಾದ ಈ ಸರ್ಕಾರಿ ಶಾಲೆಯಲ್ಲಿ ಈಗಲೂ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಹೆಚ್ಚುವರಿ ತರಗತಿ ಕೊಠಡಿಗಳ ಅಗತ್ಯವೂ ಇದೆ. ಶಾಲೆಯ ಮುಂಭಾಗದಲ್ಲಿ ಮಕ್ಕಳ ಆಟದ ಮೈದಾನ ಹಾಗೂ ಭವಿಷ್ಯದ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಉಳಿಸಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ. ಆದರೆ ಸ್ಥಳೀಯ ನಿವಾಸಿಗಳು ಮತ್ತು ಶಿಕ್ಷಣ ಪ್ರೇಮಿಗಳ ಗಮನಕ್ಕೆ ತರದೆ ಏಕಾಏಕಿ ಮೌಲಾನ ಆಜಾದ್ ಮಾದರಿ ಶಾಲೆ ಮಂಜೂರು ಮಾಡಿ, ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. “ಇಲ್ಲಿ ಮಾದರಿ ಶಾಲೆ ನಿರ್ಮಾಣವಾದರೆ ಈಗಿರುವ ಸರ್ಕಾರಿ ಶಾಲೆಗೆ ಹಾನಿಯಾಗುತ್ತದೆ. ಆದ್ದರಿಂದ ಆಝಾದ್ ಮಾದರಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸುತ್ತೇವೆ ಹಾಗೂ ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ” ಎಂದು ಪೋಷಕರಾದ ನಾಯಕರ ಪಾರ್ವತಿ, ಲಕ್ಷ್ಮೀ, ಶಾಂತಮ್ಮ, ಸಾವಿತ್ರಮ್ಮ, ಗಾಳಮ್ಮ ಅವರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಮಕ್ಕಳು ಸಹ ಪಾಲ್ಗೊಂಡು, “ಇಲ್ಲಿ ಆಝಾದ್ ಶಾಲೆ ಬೇಡ” ಎಂದು ಘೋಷಣೆ ಕೂಗಿದರು. ಕೆಲ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ಈ ವೇಳೆ ತಹಶೀಲ್ದಾರ್ ಜೂಗಲ್ ಮಂಜುನಾಯಕ ಹಾಗೂ ಪಿಐ ವಾಸುಕುಮಾರ ಅವರು ವಿದ್ಯಾರ್ಥಿಗಳಿಗೆ ಮನವಿ ಮಾಡಿ, ಪರೀಕ್ಷೆಗೆ ಹಾಜರಾಗುವಂತೆ ಮನವರಿಕೆ ಮಾಡಿದರು. ನಂತರವೂ ಪೋಷಕರು ಪ್ರತಿಭಟನೆ ಮುಂದುವರೆಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ವಾರ್ತಾ ಭಾರತಿ 24 Mar 2026 8:18 pm

ಗಾಜಿಯಾಬಾದ್ ನ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರವೆಂಬ ಅಪಖ್ಯಾತಿ; ದೇಶಗಳ ಪಟ್ಚಿಯಲ್ಲಿ 6ನೇ ಸ್ಥಾನದಲ್ಲಿ ಭಾರತ!

World Pollution Report- ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಇದೀಗ ಉತ್ತರ ಪ್ರದೇಶದ ಲೋನಿ ಒಳಗಾಗಿದೆ. 'IQAir' ನ ಹೊಸ ವರದಿಯಂತೆ ಇಲ್ಲಿನ ಮಾಲಿನ್ಯ ಮಟ್ಟ WHO ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ಈ ಪಟ್ಟಿಯಲ್ಲಿ ಮೇಘಾಲಯದ ಬೈರ್ನಿಹಾಟ್ ಮೂರನೇ ಹಾಗೂ ರಾಷ್ಟ್ರರಾಜಧಾನಿ ನಾಲ್ಕನೇ ಸ್ಥಾನದಲ್ಲಿವೆ. ಜಾಗತಿಕವಾಗಿ ಅತ್ಯಂತ ಕಲುಷಿತ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಭಾರತ 6ನೇ ಸ್ಥಾನದಲ್ಲಿದೆ ಎಂಬುದನ್ನು ಈ ವರದಿ ಬಹಿರಂಗಪಡಿಸಿದೆ.

ವಿಜಯ ಕರ್ನಾಟಕ 24 Mar 2026 8:18 pm

Bengaluru | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ: ಧರಣಿ ಹಿಂಪಡೆದ ಅಂಗನವಾಡಿ ನೌಕರರು

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿಯನ್ನು ಹಿಂಪಡೆದಿದ್ದಾರೆ. ನಗರದ ಫ್ರೀಡಂ ಪಾರ್ಕ್‍ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.23ರಿಂದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಧರಣಿ ನಡೆಸಲಾಗುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೌರವಧನ ಹೆಚ್ಚಳ, ಎಲ್‍ಕೆಜಿ, ಯುಕೆಜಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ಸಚಿವರು ಪದಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಅಂಗನವಾಡಿ ಕೇಂದ್ರಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಬಗ್ಗೆ ಸರಕಾರ ಸಾಕಷ್ಟು ಕಾಳಜಿ ವಹಿಸಿದೆ. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ನಾನು ಎಲ್ಲರ ಹಿತರಕ್ಷಣೆಗೆ ಬದ್ಧರಾಗಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಈ ಸಂದರ್ಭದಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ನಿರ್ದೇಶಕ ಮಹೇಶ್ ಬಾಬು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಕಾರ್ಯಾಧ್ಯಕ್ಷೆ ಶಾಂತಾ ಎಚ್.ಘಂಟಿ, ಪ್ರದಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಮತ್ತಿತರರು ಉಪಸ್ಥಿತರಿದ್ದರು.   ಪ್ರಮುಖ ಬೇಡಿಕೆಗಳು: ಆರು ವರ್ಷದೊಳಗಿನ ಮಕ್ಕಳು ಐಸಿಡಿಎಸ್ ಅಡಿಯಲ್ಲಿರುವುದನ್ನು ಖಾತ್ರಿ ಪಡಿಸಬೇಕು. ಅಂಗನವಾಡಿ ನೌಕರರನ್ನು ಕನಿಷ್ಠಕೂಲಿಯ ಕಾಯ್ದೆಯ ವ್ಯಾಪ್ತಿಗೆ ತಂದು ಇಎಸ್‍ಐ, ಪಿಎಫ್ ಕೊಡಬೇಕು. ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಗುಣಮಟ್ಟ ಸರಿ ಇಲ್ಲದ ಕಾರಣ ಬಿಐಎಸ್ ಪರವಾನಿಗೆ ರದ್ದು ಮಾಡಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ಆಹಾರ ಸರಬರಾಜು ಮಾಡಬೇಕು. 2011ರಿಂದ 2023 ಮಾರ್ಚ್ ತನಕ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೂ ಕೂಡಲೇ ಗ್ರಾಚ್ಯುಟಿ ಹಣ 183 ಕೋಟಿ ರೂ. ಕೂಡಲೇ ಬಿಡುಗಡೆ ಮಾಡಬೇಕು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ, ಮೇಲ್ವಿಚಾರಕಿ, ಸಿಡಿಪಿಒ ಹುದ್ದೆ ಭರ್ತಿ ಮಾಡಬೇಕು.

ವಾರ್ತಾ ಭಾರತಿ 24 Mar 2026 8:14 pm

ಬಳ್ಳಾರಿ | ವಚನಗಳು ಮನ ಪರಿವರ್ತನೆಗೆ ದಾರಿ : ತಹಶೀಲ್ದಾರ್ ಜೂಗಲ್ ಮಂಜುನಾಯಕ

ದೇವರದಾಸಿಮಯ್ಯ ಜಯಂತ್ಯೋತ್ಸವ ಕಾರ್ಯಕ್ರಮ

ವಾರ್ತಾ ಭಾರತಿ 24 Mar 2026 8:11 pm

ಮಂಗಳೂರು| ಮಹಿಳೆ ಮೃತ್ಯು ಪ್ರಕರಣ: ಆರೋಪಿ ಬಸ್ ಚಾಲಕನಿಗೆ ಜೈಲುಶಿಕ್ಷೆ

ಮಂಗಳೂರು: ನಗರದ ಕೊಟ್ಟಾರ ಚೌಕಿ ಸಮೀಪ ಬಸ್ಸೊಂದು ಢಿಕ್ಕಿಯಾಗಿ ಮಹಿಳೆ ಮೃತಪಟ್ಟ ಪ್ರಕರಣವು ಜೆಎಂಎಫ್‌ಸಿ 8ನೇ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿ ಖಾಸಗಿ ಬಸ್ ಚಾಲಕ ಶರಣ್ ಕುಮಾರ್ ಎಂಬಾತನಿಗೆ ಒಂದುವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. *ಪ್ರಕರಣ ವಿವರ: 2022ರ ಡಿ.3ರಂದು ಸಂಜೆ 6:35ಕ್ಕೆ ಮೇಘಾ ರಂಜಿತ್ ಪೈ ಕೊಟ್ಟಾರ ಚೌಕಿಯಲ್ಲಿರುವ ಕಲ್ಲುರ್ಟಿ ದೈವಸ್ಥಾನ ಕಡೆಯಿಂದ ರಸ್ತೆ ದಾಟುತ್ತಿರುವ ವೇಳೆ ಕೊಟ್ಟಾರ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಶರಣ್ ಕುಮಾರ್ ಚಲಾಯಿಸುತ್ತಿದ್ದ ಬಸ್ ಮೇಘಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಡಿ.6ರಂದು ಮೃತಪಟ್ಟಿದ್ದರು. ಈ ಬಗ್ಗೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎ. ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಯಾನಂದ ಹಾಗೂ ಕೃಷ್ಣಾನಂದ ಜಿ. ನಾಯಕ್ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಾರ್ತಾ ಭಾರತಿ 24 Mar 2026 8:09 pm

ಬಳ್ಳಾರಿ | ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

ಬಳ್ಳಾರಿ/ಕಂಪ್ಲಿ: ತಾಲೂಕಿನಲ್ಲಿ ಸೋಮವಾರ ನಡೆದ ವಿಜ್ಞಾನ ವಿಷಯದ ಎಸೆಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಗಳೂರು ಪಠ್ಯಪುಸ್ತಕ ನಿರ್ದೇಶನಾಲಯದ ಸಹ ನಿರ್ದೇಶಕ (ಜೆಡಿ) ಜಗದೀಶ ಹಾಗೂ ಬಳ್ಳಾರಿ ಶಿಕ್ಷಕರ ತರಬೇತಿ ಕೇಂದ್ರದ ಉಪ ನಿರ್ದೇಶಕ ತಿಪ್ಪೇಸ್ವಾಮಿ ಅವರು ಇಲ್ಲಿನ ಕೊಟ್ಟಾಲ್ ರಸ್ತೆಯಲ್ಲಿರುವ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲಾ ಪರೀಕ್ಷಾ ಕೇಂದ್ರ ಸೇರಿದಂತೆ ಬಹುತೇಕ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಪರಿಶೀಲನೆಯ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ನಿರಾಕರಿಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕ ರಾಮಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 8:09 pm

ವಿಜಯನಗರ | ಗ್ರಾಹಕರು ಜಾಗೃತರಾಗಬೇಕು : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

ವಿಜಯನಗರ (ಹೊಸಪೇಟೆ) : ಗ್ರಾಹಕರು ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಪ್ರಮಾಣ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಂಡು ಖರೀದಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಹೇಳಿದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತಾ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಗ್ರಾಹಕನು ತಾನು ಖರೀದಿಸುವ ವಸ್ತುಗಳ ಗುಣಮಟ್ಟ, ತೂಕ ಮತ್ತು ಅಳತೆ ಬಗ್ಗೆ ತಿಳಿದಿರಬೇಕು. “ಗ್ರಾಹಕನೇ ಮಾರುಕಟ್ಟೆಯ ರಾಜ” ಎನ್ನುವ ಮಾತು ಸಾರ್ಥಕವಾಗಬೇಕಾದರೆ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು. ಆಕರ್ಷಕ ಜಾಹೀರಾತುಗಳಿಗೆ ಮಾರು ಹೋಗದೆ, ಉತ್ಪನ್ನದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರಿಶೀಲಿಸಿ ಖರೀದಿಸಬೇಕು. ಯಾವುದೇ ವಸ್ತು ಖರೀದಿಸಿದಾಗ ಕಡ್ಡಾಯವಾಗಿ ಅಧಿಕೃತ ಬಿಲ್ ಅಥವಾ ರಶೀದಿ ಪಡೆಯಬೇಕು. ಇದರಿಂದ ಉತ್ಪನ್ನದಲ್ಲಿ ದೋಷ ಕಂಡುಬಂದಲ್ಲಿ ದೂರು ನೀಡಲು ಹಾಗೂ ಗ್ರಾಹಕ ಹಕ್ಕುಗಳನ್ನು ಪ್ರತಿಪಾದಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ವ್ಯಾಪಾರಸ್ಥರು ಕಡ್ಡಾಯವಾಗಿ ಮುದ್ರೆ ಹಾಕಿಸಿದ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಬಳಸಬೇಕು. ಗ್ರಾಹಕರಿಗೆ ಅನುಮಾನವಿದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬಹುದು. ವಸ್ತು ಅಥವಾ ಸೇವೆಯಲ್ಲಿ ನ್ಯೂನತೆ ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಕಾನೂನಾತ್ಮಕವಾಗಿ ನ್ಯಾಯ ಪಡೆಯಬಹುದು ಎಂದು ತಿಳಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಕರುಣಾನಿಧಿ ಗ್ರಾಹಕ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಗ್ರಾಹಕರ ದಿನಾಚರಣೆ ಅಂಗವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ತಾತ್ಕಾಲಿಕ ಸ್ಟಾಲ್ ಸ್ಥಾಪಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರಿಯಾಜ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಮನೋಜ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ್, ಕಾರ್ಯದರ್ಶಿ ಕೃಷ್ಣದೇವರಾಯಲು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 8:02 pm

ದೈವಪಾತ್ರದ ಅಪಹಾಸ್ಯ; ರಣವೀರ್ ಸಿಂಗ್‌ ಕ್ಷಮೆಯಾಚಿಸಿ, ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ : ಹೈಕೋರ್ಟ್‌ಗೆ ವಕೀಲರ ಹೇಳಿಕೆ

ಬೆಂಗಳೂರು : ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ‌ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿ ಪ್ರಮಾಣಪತ್ರ ಸಲ್ಲಿಸುವ ಜತೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ ಎಂದು ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೈಕೋರ್ಟ್‌ಗೆ ತಿಳಿಸಿದರು. ಪ್ರಕರಣ ಸಂಬಂಧ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಖಾಸಗಿ ದೂರುದಾರರಾದ ಪ್ರಶಾಂತ್‌ ಮೆಥಲ್‌ ಪರ ವಕೀಲ ಸಿಜಿ ಮಲಯಾಳಿ ಅವರು, ರಣವೀರ್‌ ಸಿಂಗ್‌ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ಆದರೆ, ಅದರಲ್ಲಿ ಪ್ರಾಮಾಣಿಕತೆ ಕಾಣುವುದಿಲ್ಲ. ಹೃದಯಪೂರ್ವಕವಾಗಿ ಅವರು ಕ್ಷಮೆಯಾಚಿಸಿಲ್ಲ. ಅವರ ಮ್ಯಾನೇಜರ್‌ಗಳು ಟ್ವೀಟ್‌ ಮಾಡಿದ್ದಾರೆ. ಚಾವುಂಡಿ ದೈವವನ್ನು 'ಹೆಣ್ಣು ದೆವ್ವ' ಎಂದು ಕರೆದಿದ್ದಾರೆ. ಮೌಖಿಕವಾಗಿ ದೈವಕ್ಕೆ ಅಪಮಾನ ಮಾಡಿರುವುದರಿಂದ ಅವರು ಮೌಖಿಕವಾಗಿ ಕ್ಷಮೆ ಕೋರಬೇಕು. ಚಾಮುಂಡಿ ಬೆಟ್ಟಕ್ಕೆ ಸಜನ್‌ ಪೂವಯ್ಯ ಅವರ ಜತೆ ಹೋಗಿ ರಣವೀರ್‌ ಅಲ್ಲಿಯೇ ಕ್ಷಮೆ ಕೋರಲಿ ಎಂದರು. ಆಗ ನ್ಯಾಯಪೀಠ, ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸುವುದಾಗಿ ಅರ್ಜಿದಾರರು ಹೇಳುತ್ತಿದ್ದಾರೆ. ಇನ್ನೇನು ಬೇಕು? ಅರ್ಜಿದಾರರು ಮಾಡಿರುವುದು ಸರಿಯಲ್ಲ. ಅದನ್ನು ಬೆಂಬಲಿಸುವುದಿಲ್ಲ. ನ್ಯಾಯಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ನೀವು (ದೂರುದಾರರು) ಬಯಸುತ್ತಿದ್ದೀರಾ? ಪ್ರಮಾದವಾಗಿದೆ. ರಣವೀರ್‌ ದೇವಾಲಯಕ್ಕೆ ಭೇಟಿ ನೀಡಬೇಕು. ಪಶ್ಚಾತಾಪ ವ್ಯಕ್ತಪಡಿಸುವ ಮನಸ್ಸಿರಬೇಕು. ನಟರು ಪ್ರಭಾವ ಬೀರುವ ಹೆಚ್ಚು ಶಕ್ತಿಯನ್ನು ಹೊಂದಿರುತ್ತಾರೆ ಎಂದು ನುಡಿಯಿತು. ರಣವೀರ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು, ಕ್ಷಮೆ ಕೋರಿ ರಣವೀರ್‌ ಪ್ರಮಾಣಪತ್ರ ಸಲ್ಲಿಸಲಿದ್ದಾರೆ. ಹಾಗೆಯೇ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಆಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ಮುಂದೂಡಿತು.

ವಾರ್ತಾ ಭಾರತಿ 24 Mar 2026 8:02 pm

ಮಂಗಳೂರು| ಮಾದಕ ವಸ್ತು ಸೇವನೆ ಪ್ರಕರಣ: 6 ಮಂದಿ ಸೆರೆ

ಮಂಗಳೂರು, ಮಾ.24: ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆರು ಮಂದಿಯನ್ನು ಉರ್ವ ಮತ್ತು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. *ಚಿಲಿಂಬಿ ಮಲರಾಯ ದೈವಸ್ಥಾನ ಬಳಿಯ ಲೇಔಟ್‌ನಲ್ಲಿ ಸಿಗರೇಟಿಗೆ ಮಾದಕ ವಸ್ತು ಬೆರೆಸಿ ಸೇವಿಸುತ್ತಿದ್ದ ಆರೋಪದಡಿ ಕಾಸರಗೋಡು ಜಿಲ್ಲೆಯ ಪಡಮಾರುತ್ತು ನಿವಾಸಿ ಅಜಿಲ್ ಸಾಜಿ (21), ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಸಾಜಿಲ್ ಅಬ್ದುಲ್ ಸಮದ್ (21), ವಾರಪಳ್ಳಿ ಚಂಗನಸ್ಸೇರಿ ನಿವಾಸಿ ಅಬು ಥೋಮಸ್ (23), ಕೊಟ್ಟಾಯಂ ಜಿಲ್ಲೆ ಕಂಜ್ರಿಪಳ್ಳಿ ನಿವಾಸಿ ಅಶ್ವಿನ್ ಸಾಜಿ (20), ಮೂಡುಬಿದಿರೆ ವಾಲ್ಪಾಡಿಯ ಮೆಲ್ಸನ್ ಟೆಲ್ಲಿಸ್ (19) ಎಂಬವರನ್ನು ಉರ್ವ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. *ಪಡೀಲ್ ಬಸ್ ನಿಲ್ದಾಣದ ಬಳಿಯ ರಸ್ತೆಯ ಬದಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಡಿ ತೊಕ್ಕೊಟ್ಟು ಪೆರ್ಮನ್ನೂರು ಚೆಂಬುಗುಡ್ಡೆ ನಿವಾಸಿ ಶೇಖ್ ಲುಕ್ಮಾನುಲ್ ಹಕೀಮ್ (29) ಎಂಬಾತನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನಗರದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಐವರು ಬಾಡಿಗೆ ಮನೆಯೊಂದನ್ನು ಪಡೆದು ವಾಸವಾಗಿದ್ದರು ಎನ್ನಲಾಗಿದೆ. ಸಾರ್ವಜನಿಕರು ಮನೆ ಬಾಡಿಗೆ ನೀಡಿದ ಬಳಿಕ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಿ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.

ವಾರ್ತಾ ಭಾರತಿ 24 Mar 2026 8:02 pm

ವಿಜಯನಗರದಲ್ಲಿ ಮಾ.26ರಂದು ʼಕರ್ನಾಟಕ ಸ್ವಾಭಿಮಾನ ನಡಿಗೆ–2026ʼ

ಹೊಸಪೇಟೆ : ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ “ಕರ್ನಾಟಕ ಸ್ವಾಭಿಮಾನ ನಡಿಗೆ–2026” ಅನ್ನು ವಿಜಯನಗರದಲ್ಲಿ ಮಾ.26ರಂದು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವಡಕರಾಯನ ಗುಡಿಯಿಂದ ನಡಿಗೆ ಆರಂಭವಾಗಿ, ಮಧ್ಯಾಹ್ನ 12:30ಕ್ಕೆ ಕೆ.ಆರ್.ಕೆ ಹಾಲ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. 1969ರ ಜೂನ್ 29ರಂದು ಅಮೆರಿಕದ ನ್ಯೂಯಾರ್ಕ್ ನಗರದ ಸ್ಟೋನ್ವಾಲ್ ಘಟನೆ ಆಧುನಿಕ LGBTQIA+ ಚಳುವಳಿಗೆ ಪ್ರೇರಣೆಯಾಗಿದ್ದು, ಅದರ ನೆನಪಿನಲ್ಲಿ ಪ್ರತಿವರ್ಷ ಸ್ವಾಭಿಮಾನ ನಡಿಗೆಗಳನ್ನು ಆಯೋಜಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಎರಡನೇ ಬಾರಿ ಈ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ದಶಕದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದಂತೆ ಹಲವು ಕಾನೂನು ಮತ್ತು ನೀತಿ ಬದಲಾವಣೆಗಳು ಜಾರಿಯಾಗಿದ್ದರೂ, 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಮುದಾಯದ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸದಿರುವುದನ್ನು ಆಯೋಜಕರು ಖಂಡಿಸಿದ್ದಾರೆ. ಜೊತೆಗೆ, ಲೋಕಸಭೆಯಲ್ಲಿ ಪರಿಚಯಿಸಲಾದ “ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ಹಕ್ಕುಗಳ ರಕ್ಷಣೆಯ) ತಿದ್ದುಪಡಿ ಮಸೂದೆ–2026” ಸಮುದಾಯದ ಹಕ್ಕುಗಳಿಗೆ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯ ಬೇಡಿಕೆಗಳು : ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪನೆ,  ಕನಿಷ್ಠ 250 ಕೋಟಿ ರೂ. ಪ್ರತ್ಯೇಕ ಬಜೆಟ್ ಮೀಸಲು, ತಿದ್ದುಪಡಿ ಮಸೂದೆ ಹಿಂತೆಗೆದುಕೊಳ್ಳುವುದು, ವಸತಿ, ಉದ್ಯೋಗ, ಪಿಂಚಣಿ ಹಾಗೂ ಆರೋಗ್ಯ ಸೇವೆಗಳ ವಿಸ್ತರಣೆ. ಈ ನಡಿಗೆಯ ಮೂಲಕ ಸಮುದಾಯದ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 24 Mar 2026 8:00 pm

ಪ್ರಭಾ ಮಲ್ಲಿಕಾರ್ಜುನ್‌ಗೆ MP ಟಿಕೆಟ್‌: 'ನಾವೇ ಹಿಂಸೆ ಮಾಡಿಕೊಟ್ಟಿದ್ದು' ಅಂದಿನ ಸತ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್!

ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಸೊಸೆ ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಟಿಕೆಟ್‌ ಕೊಟ್ಟ ಸಂದರ್ಭವನ್ನು ಡಿಕೆ ಶಿವಕುಮಾರ್ ವಿವರಿಸಿದ್ದಾರೆ. ಆ ದಿನ ನಾವೇ ಒತ್ತಾಯ ಮಾಡಿ, ಒತ್ತಡ ಹಾಕಿ ಪ್ರಭಾ ಅವರಿಗೆ ಚುನಾವಣೆಗೆ ನಿಲ್ಲಿಸಿದ್ದೆವು ಎಂದು ಡಿಸಿಎಂ ಸತ್ಯಬಿಚ್ಚಿಟ್ಟಿದ್ದಾರೆ. ಇನ್ನು ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳ ಜತೆ ಸಮುದಾಯದ ನಾಯಕರು ಮಾತನಾಡಲಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ.

ವಿಜಯ ಕರ್ನಾಟಕ 24 Mar 2026 7:58 pm

Kalaburagi | ಜಿಲ್ಲಾಧಿಕಾರಿಗಳಿಂದ ಲೋಕೋಪಯೋಗಿ ಇಲಾಖೆಗಳ ಕಾಮಗಾರಿ ಪರಿಶೀಲನೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮಂಗಳವಾರ ಕಲಬುರಗಿ ಮತ್ತು ಜೇವರ್ಗಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ‌ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು. ಕಲಬುರಗಿ ನಗರದಲ್ಲಿ ನಿರ್ಮಾಣಗೊಂಡಿರುವ ಸ್ವಾತಂತ್ರ್ಯ ಹೋರಾಟಗಾರರ‌ ಭವನ, ಅಂಬೇಡ್ಕರ್‌ ಭವನ, ಗುಲ್ಬರ್ಗಾ ವಿ.ವಿ.ಯಲ್ಲಿನ ದೀನ್ ದಯಾಳ ಬಾಖ ಮತ್ತು ಬಾಲಕೀಯರ ವಸತಿ ನಿಲಯ, ಕುಸನೂರ ರಸ್ತೆ ಕಾಮಗಾರಿ ಪರಿಶೀಲಿಸಿದರು. ತದನಂತರ ಜೇವರ್ಗಿ ಪ್ರವಾಸ ಕೈಗೊಂಡು ಅಲ್ಲಿಯೂ ಲೋಕೋಪಯೋಗಿ ಇಲಾಖೆಯಡಿ ನಡೆಯುತ್ತಿರುವ ಕಾಮಗಾರಿಗಳು ವೀಕ್ಷಿಸಿದರು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ರಾಹುಲ‌ ಕಾಂಬ್ಳೆ, ಕಲಬುರಗಿ ತಹಶೀಲ್ದಾರ್‌ ಕೆ.ಆನಂದಶೀಲ, ಜೇವರ್ಗಿ ತಹಶೀಲ್ದಾರ್‌ ಮಲ್ಲಣ್ಣ ಯಲಗೊಂಡ ಈ ಸಂದರ್ಭದಲ್ಲಿ ಜೊತೆಯಲ್ಲಿದ್ದರು.

ವಾರ್ತಾ ಭಾರತಿ 24 Mar 2026 7:52 pm

Nandini: ಆರ್‌ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ

ಬೆಂಗಳೂರು: ಈ ಬಾರಿಯ ಐಪಿಎಲ್ (IPL 2026) ಆರಂಭಕ್ಕೂ ಮುನ್ನವೇ ಕನ್ನಡಿಗರಿಗೆ ಮತ್ತು ಆರ್‌ಸಿಬಿ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ 'ನಂದಿನಿ' (KMF) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಈ ಬಾರಿ ಅಧಿಕೃತ ಡೈರಿ ಪಾಲುದಾರನಾಗಿ (Official Dairy Partner) ಸಾಥ್ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು

ಒನ್ ಇ೦ಡಿಯ 24 Mar 2026 7:50 pm

ಸುರಪುರ | ದಲಿತರ ಮೇಲೆ ಹಲ್ಲೆ ಖಂಡಿಸಿ ಡಿಎಸ್ಎಸ್‌ನಿಂದ ಪ್ರತಿಭಟನೆ

ಸುರಪುರ: ಶಹಾಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಖಂಡಿಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ವತಿಯಿಂದ ಪಟ್ಟಣದ ಡಿವೈಎಸ್ಪಿ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಬೆನಕನಹಳ್ಳಿ ಗ್ರಾಮದ ದೇವಪ್ಪ ಕಟ್ಟಿಮನಿ ಹಾಗೂ ಅವರ ಕುಟುಂಬದವರ ಮೇಲೆ ಮೇಲ್ವರ್ಗದವರು ಹಲ್ಲೆ ನಡೆಸಿರುವುದಾಗಿ ಆರೋಪಿಸಿದರು. ಅವರ ಮನೆಗೆ ನಳ ಜೋಡಣೆ ಇದ್ದರೂ ಕುಡಿಯುವ ನೀರು ಮತ್ತು ದಿನಬಳಕೆಯ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು. ಜನವರಿ 21ರಂದು ಮೂವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಲಾಗಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದರು. ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಹಲ್ಲೆಗೊಳಗಾದ ದೇವಪ್ಪ ಕಟ್ಟಿಮನಿ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸಬೇಕು ಹಾಗೂ ಕುಡಿಯುವ ನೀರು ಸರಬರಾಜು ಪುನಃ ಆರಂಭಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ, ಇತ್ತಿಚೆಗೆ ನೀರು ಸರಬರಾಜು ಮಾಡದೆ ತೊಂದರೆ ನೀಡಿರುವ ಸಂಬಂಧಪಟ್ಟ ಸಿಬ್ಬಂದಿಯನ್ನು ಕೆಲಸದಿಂದ ತೆರವುಗೊಳಿಸಿ, ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದಲ್ಲಿ ಏಪ್ರಿಲ್ 1ರಿಂದ ಶಹಾಪುರ ತಾಲೂಕ ಪಂಚಾಯತ್ ಕಚೇರಿ ಮುಂದೆ ಬೀಗ ಹಾಕಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಡಿವೈಎಸ್ಪಿ ಜಾವೀದ್ ಇನಾಂದಾರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಮಾನ ಗುರಿಕಾರ, ಜಿಲ್ಲಾ ಸಂಚಾಲಕಿ ಸರಿತಾ ಬಿ ಶರ್ಮಾ, ಮಲ್ಲಿಕಾರ್ಜುನ ತಳ್ಳಳ್ಳಿ, ಮಾನಪ್ಪ ಬಿಜಾಸಪುರ, ರವಿಚಂದ್ರ ಬೊಮ್ಮನಹಳ್ಳಿ, ಶಿವಶಂಕರ ಬೊಮ್ಮನಹಳ್ಳಿ, ನಿಂಗಣ್ಣ ಶೆಳ್ಳಗಿ, ರೇವಣಸಿದ್ದಪ್ಪ ಮಾಲಗತ್ತಿ, ಮೂರ್ತಿ ಬೊಮ್ಮನಹಳ್ಳಿ, ರಾಮಣ್ಣ ಶೆಳ್ಳಗಿ, ಜಟ್ಟೆಪ್ಪ ನಾಗರಾಳ, ಮಹೇಶ ಯಾದಗಿರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಾರ್ತಾ ಭಾರತಿ 24 Mar 2026 7:50 pm

ಹುಚ್ಚುನಾಯಿ ದಾಳಿ : ಲಿಂಗಸುಗೂರಿನಲ್ಲಿ ಮೂವರು ಮಕ್ಕಳಿಗೆ ಗಾಯ

ಲಿಂಗಸುಗೂರು : ಪಟ್ಟಣದಲ್ಲಿ ಹುಚ್ಚುನಾಯಿ ದಾಳಿ ನಡೆಸಿ ಹಲವು ಮಕ್ಕಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಪಟ್ಟಣದ ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ದಾಳಿ ಮಾಡಿದ ಹುಚ್ಚುನಾಯಿ, ಮೂವರು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಮಕ್ಕಳನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆದಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹುಚ್ಚುನಾಯಿ ಇನ್ನೂ ಸುತ್ತಮುತ್ತಲಿನ ಪ್ರದೇಶದಲ್ಲಿ ತಿರುಗಾಡುತ್ತಿರುವ ಶಂಕೆಯಿಂದ ಪೋಷಕರು ಮಕ್ಕಳನ್ನು ಹೊರಗೆ ಬಿಡಲು ಹೆದರುತ್ತಿದ್ದಾರೆ. ಪಟ್ಟಣದ ನಿವಾಸಿಗಳು ತಕ್ಷಣ ಪಶುವೈದ್ಯಕೀಯ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹುಚ್ಚುನಾಯಿಯನ್ನು ಹಿಡಿಯಲು ತುರ್ತು ಕ್ರಮ ಕೈಗೊಳ್ಳಬೇಕು, ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು ಹಾಗೂ ನಾಯಿಗಳಿಗೆ ಲಸಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 24 Mar 2026 7:44 pm

ಭಟ್ಕಳ| ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಆಕ್ರೋಶ; ತಹಸೀಲ್ದಾರ್‌ಗೆ ಸಿಟಿಜನ್ ಫೋರಂ ಮನವಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ–66 ವಿಸ್ತರಣೆ ಕಾಮಗಾರಿ ನಿರಂತರ ವಿಳಂಬವಾಗುತ್ತಿರುವುದು ಹಾಗೂ ಮೂಲಭೂತ ಸೌಲಭ್ಯಗಳನ್ನು ಕಡೆಗಣಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಭಟ್ಕಳ ಸಿಟಿಜನ್ ಫೋರಂ (ಭಟ್ಕಳ ತಾಲೂಕು ನಾಗರಿಕ ಹಿತರಕ್ಷಣ ವೇದಿಕೆ) ಪದಾಧಿಕಾರಿಗಳು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರನ್ನು ಭೇಟಿ ಮಾಡಿ ತಕ್ಷಣದ ಹಸ್ತಕ್ಷೇಪವನ್ನು ಕೋರಿದ್ದಾರೆ. ಹೆದ್ದಾರಿ ನಿರ್ಮಾಣ ಸಂಸ್ಥೆಯ ಅಧಿಕಾರಿಗಳನ್ನು ತುರ್ತಾಗಿ ಕರೆಯಿಸಿ ಸಭೆ ನಡೆಸಿ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂದು ಫೋರಂ ಒತ್ತಾಯಿಸಿದೆ. ಈ ವೇಳೆ ಮಾತನಾಡಿದ ಫೋರಂ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ, ಕೆಲವು ತಿಂಗಳುಗಳ ಹಿಂದೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗುತ್ತಿಗೆದಾರ ಸಂಸ್ಥೆ IRB ಮೇಲೆ ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದರಂತೆ ಮುಖ್ಯ ಹೆದ್ದಾರಿ ಕಾಮಗಾರಿ ಆರಂಭಿಸುವ ಮೊದಲು ಅಥವಾ ಪೂರ್ಣಗೊಳಿಸುವ ಮೊದಲು ಸೇವಾ ರಸ್ತೆ ನಿರ್ಮಾಣ ಹಾಗೂ ಮಳೆ ನೀರಿನ ಸರಿಯಾದ ಹರಿವಿಗಾಗಿ ಡ್ರೆನೆಜ್ ವ್ಯವಸ್ಥೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ಸಂಬಂಧಿತ ಸಂಸ್ಥೆ ಈ ಎರಡೂ ಪ್ರಮುಖ ಕಾರ್ಯಗಳಿಗೆ ತಕ್ಕ ಆದ್ಯತೆ ನೀಡದೆ, ಮುಖ್ಯ ಕಾಮಗಾರಿಯನ್ನೇ ಮುಂದುವರಿಸುತ್ತಿರುವುದು ಸ್ಥಳೀಯರಿಗೆ ಅನ್ಯಾಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಂಪನಿ ಉದ್ದೇಶಪೂರ್ವಕವಾಗಿ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿದೆ ಎಂಬ ಆರೋಪವನ್ನು ಮುಂದಿಟ್ಟ ಅವರು, ಮಳೆಯ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಮ್ಸುದ್ದೀನ್ ಸರ್ಕಲ್‌ನಿಂದ ನೂರು ಮಸೀದಿ ವರೆಗೆ ನೀರು ನಿಲ್ಲುವ ಸಾಧ್ಯತೆ ಇದ್ದು, ಅಂಗಡಿಗಳಿಗೆ ನೀರು ನುಗ್ಗುವ ಅಪಾಯವಿದೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಅವರು ತಕ್ಷಣ ಸಭೆ ಕರೆಯಿಸಿ, ಸೇವಾ ರಸ್ತೆ ಮತ್ತು ಡ್ರೆನೆಜ್ ಕಾಮಗಾರಿಗಳನ್ನು ಆದ್ಯತೆಯಿಂದ ವೇಗವಾಗಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಮನವಿ ಮಾಡಿದರು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಫೋರಂ ಎಚ್ಚರಿಕೆ ನೀಡಿದೆ. ಈ ಸಂದರ್ಭ ಫೋರಂನ ಪದಾಧಿಕಾರಿಗಳಾದ ಅಬ್ದುಲ್ ರಕೀಬ್ ಎಂ.ಜೆ. ನದ್ವಿ, ಎಂ.ಎಂ. ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂಬಂಧ ವಿವರವಾದ ಲಿಖಿತ ಮನವಿಯನ್ನು ತಹಸೀಲ್ದಾರರಿಗೆ ಸಲ್ಲಿಸಲಾಗಿದೆ. 

ವಾರ್ತಾ ಭಾರತಿ 24 Mar 2026 7:39 pm

Budget Session 2026 | ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ

ಬೆಂಗಳೂರು : ಕರ್ನಾಟಕ ಪಬ್ಲಿಕ್ ಸ್ಕೂಲ್, ಆದರ್ಶ ವಿದ್ಯಾಲಯ ಹಾಗೂ ಪಿಎಂಶ್ರೀ ಶಾಲೆಗಳ ಬೋಧಕರ ವರ್ಗಾವಣೆ ಹಾಗೂ ಕನಿಷ್ಠ 12 ವರ್ಷ ಒಂದೇ ಕಡೆ ಕರ್ತವ್ಯ ನಿರ್ವಹಿಸಿರುವ ಶಿಕ್ಷಕರ ವರ್ಗಾವಣೆ ಸಂಬಂಧ ತಿದ್ದುಪಡಿ ತಂದಿರುವ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಮಂಗಳವಾರ ವಿಧಾನಸಭೆ ಶಾಸನ ರಚನೆ ಕಲಾಪದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧೇಯಕ ಪರ್ಯಾಲೋಚಿಸಿ ವಿವರಣೆ ನೀಡಿದರು. 250 ಮಕ್ಕಳು ಇರುವ ಕಡೆಗಳಲ್ಲಿ ವರ್ಗಾವಣೆ ನಿಲ್ಲಿಸಿದ್ದೆವು. ಅನೇಕ ಶಿಕ್ಷಕರು ‘ಡಯಟ್’ಗೆ ಹೋಗಿ ಕೂರುತ್ತಿದ್ದರು. ಅವರು ಅಲ್ಲಿ 3 ವರ್ಷಗಳ ಮೇಲೆ ಇರುವಂತಿಲ್ಲ. ಅವರನ್ನೂ ನಿಯಂತ್ರಣ ಮಾಡಲು ಈ ವಿಧೇಯಕ ತರಲಾಗಿದೆ ಎಂದು ತಿಳಿಸಿದರು. 5 ವರ್ಷಗಳಿಗೆ ಆದ್ಯತೆ ಮೇಲೆ ವರ್ಗಾವಣೆ ಮಾಡುತ್ತೇವೆ. ಶಿಕ್ಷಕರ ಕೊರತೆ ನೀಗಿಸಲು ಕ್ರಮ ಆಗಲಿದೆ. ಈಗಾಗಲೇ ಅನೇಕ ಕಡೆ ಶಿಕ್ಷಕರ ಕೊರತೆ ಇದೆ. ಒಮ್ಮೆ ನೇಮಕಾತಿಯಾದರೆ ಶಿಕ್ಷಕರ ಸಮಸ್ಯೆ ಬಗೆಹರಿಯಲಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ವಿಧೇಯಕದಿಂದ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು. ಶೌಚಾಲಯ ಸ್ವಚ್ಚಗೊಳಿಸಲಿ: ವಿಧೇಯಕ ಬೆಂಬಲಿಸಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ವರ್ಗಾವಣೆ ವಿಧೇಯಕದಲ್ಲಿ ‘ಡಿ’ ಗ್ರೂಪ್ ನೌಕರರನ್ನೂ ಸೇರಿಸಬೇಕು. ಮಕ್ಕಳಿಂದ ಗುಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ‘ಅದರಲ್ಲಿ ತಪ್ಪೇನಿಲ್ಲ. ನಾವು ವಿದ್ಯಾರ್ಥಿಯಾಗಿದ್ದಾಗ ನಾವೇ ಸ್ವಚ್ಛ ಮಾಡುತ್ತಿದ್ದೆವು. ಮಾಡಲಿ ಮಕ್ಕಳಿಗೆ ಗೊತ್ತಾಗುತ್ತದೆ’ ಎಂದು ಸಮರ್ಥಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕು. ಅದಕ್ಕೆ ಅನುಗುಣವಾಗಿ ನಾವು ನಿಯಮಗಳನ್ನು ರೂಪಿಸಬೇಕು. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಆ ಬಳಿಕ ಸ್ಪೀಕರ್ ಖಾದರ್ ಅವರು ವಿಧೇಯಕವನ್ನು ಮತಕ್ಕೆ ಹಾಕಿದರು, ಈ ವೇಳೆ ಧ್ವನಿಮತದ ಅಂಗೀಕಾರ ದೊರೆಯಿತು.  

ವಾರ್ತಾ ಭಾರತಿ 24 Mar 2026 7:38 pm

ಮಾನ್ವಿ | ಮಾ.28ರಂದು ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ‘ಸೌಹಾರ್ದ ಕೂಟ’ ಆಯೋಜನೆ : ಅಕ್ಬರ್ ಪಾಷಾ

ಮಾನ್ವಿ : ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಪರಸ್ಪರ ಸಹಬಾಳ್ವೆಯನ್ನು ವೃದ್ಧಿಸುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮಾ.28ರಂದು ‘ಸೌಹಾರ್ದ ಕೂಟ’ವನ್ನು ಆಯೋಜಿಸಲಾಗಿದೆ ಎಂದು ಸೈಯದ್ ಅಕ್ಬರ್ ಪಾಷಾ ತಿಳಿಸಿದ್ದಾರೆ. ಪಟ್ಟಣದ ಚಿರಾಗ್ ಅಲಿ ಕಾಲೋನಿ ಖುಬಾ ಮಸೀದಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು, ಚಿಂತಕರು ಹಾಗೂ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಮನುಷ್ಯರ ನಡುವಿನ ಅಂತರವನ್ನು ಕಡಿಮೆ ಮಾಡಿ, ಪ್ರೀತಿ ಮತ್ತು ವಿಶ್ವಾಸದ ಸೇತುವೆ ನಿರ್ಮಿಸುವುದು ಈ ಕೂಟದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ​ಸೌಹಾರ್ದ ಕೂಟದ ಮೂಲ ಉದ್ದೇಶಗಳು : ವಿವಿಧ ಸಮುದಾಯಗಳ ನಡುವೆ ಪರಸ್ಪರ ನಂಬಿಕೆ ಮತ್ತು ಗೌರವ ಬೆಳೆಸುವುದು. ಧರ್ಮ ಮತ್ತು ಸಂಸ್ಕೃತಿ ಕುರಿತ ತಪ್ಪು ಕಲ್ಪನೆಗಳನ್ನು ಸಂವಾದದ ಮೂಲಕ ನಿವಾರಿಸುವುದು. ವೈವಿಧ್ಯತೆಯಲ್ಲಿ ಏಕತೆಯನ್ನು ಉತ್ತೇಜಿಸುವುದು. ಮಾನವೀಯ ಮೌಲ್ಯಗಳನ್ನು ಬಲಪಡಿಸುವುದು. ಈ ಸೌಹಾರ್ದ ಕೂಟವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಸಮಾಜದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ ಅರ್ಥಪೂರ್ಣ ವೇದಿಕೆಯಾಗಲಿದೆ ಎಂದು ಹೇಳಿದರು. ಇದೇ ವೇಳೆ ಸೌಹಾರ್ದ ಕೂಟ ಕಾರ್ಯಕ್ರಮದ ಆಯೋಜನೆ ಕುರಿತು ಪತ್ರಕರ್ತರಾದ ಬಸವರಾಜ್ ಬೋಗಾವತಿ, ಪಿ.ಪರಮೇಶ್, ಶರ್ಪುದ್ದಿನ್ ಪೋತ್ನಾಳ್, ಪಿ. ರವಿ ಕುಮಾರ್, ಜೆ. ಹೆಚ್ ದೇವರಾಜ್, ಶರಣು ಕುಮಾರ್ ಮುದ್ದಾಂಗುಡಿ, ಶೇಕ್ ಫರಿದ್ ಉಮ್ರಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರೌಡೂರು ಸ್ವಾಮಿ, ಶೇಕ್ ಸತ್ತಾರ್ ಬಂಗ್ಲೆವಾಲೆ, ಜಮಾಅತೆ ಇಸ್ಲಾಂ ನ ರೆಹಮಾನ್ ಸಾಬ್, ಸೈಯದ್ ಮುಖಿಮ್, ಲಕ್ಷ್ಮಣ್ ಜಾನೇಕಲ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 7:36 pm

ಮಂಗಳೂರು: ಅಡುಗೆ ಅನಿಲ ಕೊರತೆ ಖಂಡಿಸಿ ಸಿಪಿಐ ಪ್ರತಿಭಟನೆ

ಮಂಗಳೂರು: ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ತನ್ನ ಏಕಾಧಿಪತ್ಯದ ಸ್ವಾರ್ಥಕ್ಕಾಗಿ ಇರಾನ್ ಮೇಲೆ ಸಾರಿದ ಯುದ್ಧದ ಪರಿಣಾಮ ಭಾರತದ ಮೇಲಾಗಿವೆ. ಅಂದರೆ ದೇಶಾದ್ಯಂತ ಅಡುಗೆ ಅನಿಲ ಕೊರತೆ ಉಂಟಾಗಿದೆ. ಹಾಗಾಗಿ ದೇವ ಮಾನವ ಮತ್ತು ವಿಶ್ವಗುರು ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ತಕ್ಷಣ ಮಧ್ಯ ಪ್ರವೇಶಿಸಿ ಯುದ್ಧ ವನ್ನು ನಿಲ್ಲಿಸಬೇಕು ಎಂದು ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಮಂಡಳಿ ಕಾರ್ಯದರ್ಶಿ ಬಿ.ಶೇಖರ್ ಆಗ್ರಹಿಸಿದರು. ನಗರದ ಮಿನಿ ವಿಧಾನಸೌಧದ ಮುಂದೆ ಸಿಪಿಐ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಯಾವುದೇ ರೀತಿಯ ಯುದ್ಧವು ಮಾನವ ವಿನಾಶಕ್ಕೆ ಕಾರಣವಾಗುತ್ತಿದೆಯೇ ವಿನಃ ಒಳಿತಿಗಲ್ಲ. ಆದರೆ ಪ್ರಸಕ್ತ ನಡೆಯುತ್ತಿರುವ ಯುದ್ಧವು ಅಮೇರಿಕಾದ ಸಾಮ್ರಾಜ್ಯಶಾಹಿತ್ವದ ವಿಸ್ತರಣೆಗಾಗಿದೆಯೇ ಹೊರತು ಇತರ ದೇಶಗಳ ಉದ್ದಾರಕ್ಕಲ್ಲ. ಈ ಯುದ್ಧದ ದುಷ್ಪರಿಣಾಮವನ್ನು ಭಾರತವೂ ಅನುಭವಿಸಬೇಕಾಗಿದೆ. ಈಗಾಗಲೇ ಅನಿಲ ಪೂರೈಕೆ ಯಲ್ಲಿ ಕೊರತೆ ಉಂಟಾಗಿದೆ. ನಿತ್ಯೋಪಯೋಗಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಯುದ್ದ ನಿಲ್ಲದಿದ್ದರೆ ಇನ್ನೂ ಹೆಚ್ಚಿನ ಸಮಸ್ಯೆಗಳು ಉಂಟಾಗುವುದರಲ್ಲಿ ಸಂಶಯವಿಲ್ಲ ಎಂದು ಬಿ. ಶೇಖರ್ ಹೇಳದರು. ಸಿಪಿಐ ಜಿಲ್ಲಾ ಮಾಜಿ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ ಯುದ್ಧದ ಪರಿಣಾಮ ನಮ್ಮ ಅಡುಗೆ ಮನೆಗೆ ತಟ್ಟಿದೆ. ಅಡುಗೆ ಅನಿಲದ ಕೊರತೆಯಿಂದಾಗಿ ದೈನಂದಿನ ಆಹಾರ ತಯಾರಿಕೆಯಲ್ಲಿ ಸಮಸ್ಯೆಯಾಗಿದೆ. ಹೆಚ್ಚಿನ ಹೊಟೇಲ್, ತಿಂಡಿ ಮನೆಗಳು ಬಂದ್ ಆಗಿವೆ. ಅನಿಲಚಾಲಿತ ವಾಹನಗಳು, ರೋಗಿಗಳ ಶುಶ್ರೂಶ ಘಟಕಗಳು, ಕೈಗಾರಿಕೆಗಳು ಸಮಸ್ಯೆಗೀಡಾಗಿವೆ. ಈ ವ್ಯವಸ್ಥೆಗಳನ್ನು ಅವಲಂಬಿಸಿರುವ ಅದೆಷ್ಟೋ ಕಾರ್ಮಿಕರಿಗೆ ಕೆಲಸವಿಲ್ಲದಾಗಿದೆ. ಶಾಂತಿ ನೊಬೆಲ್ ಪ್ರಶಸ್ತಿ ಪಡೆದಿರುವ ಮೇಧಾವಿಗಳು ಮೌನವಾಗಿರದೆ ಯುದ್ಧ ನಿಲ್ಲಿಸುವ ಬಗ್ಗೆ ಕಾರ್ಯಪ್ರವರ್ತರಾಗಬೇಕು. ಜಾಗಟೆ-ತಟ್ಟೆ ಬಾರಿಸಿ, ಚಪ್ಪಾಳೆ ಹೊಡೆಯುವ ಬದಲು ದೇಶದ ಆಡಳಿತ-ವಿರೋಧ ಪಕ್ಷಗಳ, ಸಂಘಟನೆಗಳ, ಕಾನೂನು ತಜ್ಞರ ಸಭೆ ಕರೆದು ಭಾರತ ದೇಶ ಈ ಯುದ್ಧದ ಪರಿಣಾಮಗಳನ್ನು ಹೇಗೆ ಎದುರಿಸಬೇಕೆನ್ನುವುದರ ಬಗ್ಗೆ ತೀರ್ಮಾನಿಸಬೇಕು ಎಂದು ಕರೆ ನೀಡಿದರು. ಎಐವೈಎಫ್ ಮಂಗಳೂರು ತಾಲೂಕು ಅಧ್ಯಕ್ಷ ಪುಷ್ಪರಾಜ್ ಬೋಳೂರು, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಬೇರಿಂಜ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ ಕರುಣಾಕರ್ ಮಾರಿಪಲ್ಲ, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ವಿ.ರಾವ್, ಸಿಪಿಐ ನಾಯಕರಾದ ಪ್ರಭಾಕರ್ ರಾವ್, ಗೀತಾ ಬಜಾಲ್, ತಿಮ್ಮಪ್ಪ ಕಾವೂರು, ಸಂಜೀವಿ, ರೂಪಾ, ಬಾಬು ಭಂಡಾರಿ, ಶಿವಾನಂದ, ಶಶಿಕಲಾ, ಸುಚಿತ್ರಾ ಉಡುಪಿ, ಹರ್ಷಿತ್, ಮೋಹನ ಅರಳ, ರಾಮ ಅರಳ, ಸದಾನಂದ ಬಳ್ಕುಂಜೆ, ಎನ್‌ಎಫ್‌ಐಡಬ್ಲ್ಯು ನಾಯಕಿ ಭಾರತಿ ಪ್ರಶಾಂತ್, ಶಮಿತಾ, ಮಮತಾ ಬಿ.ಸಿ. ರೋಡ್, ಎಐವೈಎಫ್ ನಾಯಕರಾದ ಜಗತ್ಪಾಲ್ ಕೋಡಿಕಲ್, ಶ್ರೀನಿವಾಸ ಭಂಡಾರಿ, ಕೃಷ್ಣಪ್ಪ ಪಿಲಿಕುಲ, ದಿನೇಶ್ ಕಾಯರ್ಮಾರ್, ಸುಧಾಕರ್ ಕಲ್ಲೂರು, ಪ್ರವೀಣ್ ಕುಮಾರ್ ಬಂಟ್ವಾಳ ವಹಿಸಿದ್ದರು. ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.

ವಾರ್ತಾ ಭಾರತಿ 24 Mar 2026 7:35 pm

ಸಂಶೋಧನೆಗಳು ಏಕಮುಖವಾಗದಿರಲಿ: ಡಾ. ಧನಂಜಯ ಕುಂಬ್ಳೆ

ʼಬ್ಯಾರಿ ಜನಪದ ಮತ್ತು ವಚನ ಸಾಹಿತ್ಯʼ ಪ್ರಚಾರೋಪನ್ಯಾಸ ಕಾರ್ಯಕ್ರಮ

ವಾರ್ತಾ ಭಾರತಿ 24 Mar 2026 7:33 pm

ಯಾದಗಿರಿ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡಿ : ಶಾಸಕ ತುನ್ನೂರು ಮನವಿ

ಯಾದಗಿರಿ: ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ತಮ್ಮ ಮತಕ್ಷೇತ್ರದ ವಿವಿಧ ಅಭಿವೃದ್ಧಿ ವಿಚಾರಗಳನ್ನು ಸದನದ ಗಮನಕ್ಕೆ ತಂದರು. ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ನೀಡಿದ ಸಭಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಜಿಲ್ಲೆಯ ರೈತರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ವಡಗೇರಾ ತಾಲೂಕಿನಲ್ಲಿ ಕಳೆದ ಮಂಗಳವಾರ ರಾತ್ರಿ ಹಾಗೂ ಬುಧವಾರ ಹಗಲು ಸುರಿದ ಮಳೆ ಮತ್ತು ಗಾಳಿಯಿಂದ ಚನ್ನೂರು, ಗೊಂದೇನೂರು, ಐಕೂರು, ಕೊಂಕಲ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಭತ್ತ, ಜೋಳ, ಸಜ್ಜೆ ಹಾಗೂ ಹತ್ತಿ ಬೆಳೆಗಳು ಹಾನಿಗೊಳಗಾಗಿವೆ. ಜಿಲ್ಲಾಧಿಕಾರಿಗಳಿಂದ ತುರ್ತು ವರದಿ ಪಡೆದು ರೈತರಿಗೆ ಪರಿಹಾರ ನೀಡುವಂತೆ ಕಂದಾಯ ಸಚಿವರು ಹಾಗೂ ಸರ್ಕಾರಕ್ಕೆ ಮನವಿ ಮಾಡಿದರು. ಈ ಹಿಂದೆ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಇನ್ನೂ ಪರಿಹಾರ ಸಿಗದಿರುವುದನ್ನು ಅವರು ಗಮನಕ್ಕೆ ತಂದರು. ಬಜೆಟ್ ಕುರಿತು ಮಾತನಾಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳಿಗೆ ಆದ್ಯತೆ ನೀಡಿರುವುದನ್ನು ಸ್ವಾಗತಿಸಿದರು. ಐದು ಗ್ಯಾರೆಂಟಿ ಯೋಜನೆಗಳಿಗೆ ಸುಮಾರು 51,000 ಕೋಟಿ ರೂ. ಮೀಸಲು ಮಾಡಿರುವುದು ಸರ್ಕಾರದ ಸಾಮಾಜಿಕ ನ್ಯಾಯದ ಬದ್ಧತೆಯನ್ನು ತೋರಿಸುತ್ತದೆ ಎಂದರು. ಮಹಿಳೆಯರಿಗೆ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಮೂಲಕ ಆರ್ಥಿಕ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು. ಯಾದಗಿರಿ ನಗರದ ಯಿಮ್ಸ್‌ನಲ್ಲಿ 200 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 100 ಕೋಟಿ ರೂ. ಅನುದಾನ ಹಾಗೂ ಯುಜಿಡಿ (ಅಂಡರ್‌ಗ್ರೌಂಡ್ ಡ್ರೈನೇಜ್) ಯೋಜನೆಗೆ 287 ಕೋಟಿ ರೂ. ಅನುದಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರಿಗೆ ಧನ್ಯವಾದ ಸಲ್ಲಿಸಿದರು. ದೋರನಹಳ್ಳಿ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರಾಗಿರುವುದನ್ನು ಸ್ವಾಗತಿಸಿದ ಅವರು, ಹೊಸ ತಾಲೂಕಾಗಿರುವ ವಡಗೇರಾಕ್ಕೂ ಕೂಡ ಪದವಿಪೂರ್ವ ಕಾಲೇಜು ಮಂಜೂರು ಮಾಡುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳು ದೂರದೂರಿಗೆ ತೆರಳಬೇಕಾದ ಪರಿಸ್ಥಿತಿ ಇರುವುದರಿಂದ ತುರ್ತಾಗಿ ಕಾಲೇಜು ಅಗತ್ಯವಿದೆ ಎಂದು ಹೇಳಿದರು. ವನಮಾರಪಳ್ಳಿ–ರಾಯಚೂರು ರಾಜ್ಯ ಹೆದ್ದಾರಿಯ ಸುಮಾರು 100 ವರ್ಷ ಹಳೆಯ ಸೇತುವೆ ಜೀರ್ಣಾವಸ್ಥೆಯಲ್ಲಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ 75 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲು ಮನವಿ ಮಾಡಿದರು. ನಗರದಲ್ಲಿ ಪ್ರವಾಸಿಗರಿಗಾಗಿ ವಸತಿ ಸಂಕೀರ್ಣ ಹಾಗೂ ಸರ್ಕಾರಿ ಕಟ್ಟಡಗಳ ಪುನರ್‌ನಿರ್ಮಾಣಕ್ಕೂ ಅನುದಾನ ನೀಡುವಂತೆ ಕೋರಿದರು. ಹಿರೇಹಾನೂರು ಗ್ರಾಮದ ಬಳಿ ಭೀಮಾ ನದಿಗೆ ನಿರ್ಮಿಸಿರುವ ಬ್ರಿಡ್ಜ್-ಕಂ-ಬ್ಯಾರೇಜ್ ಗೇಟ್‌ಗಳು ಹಾಳಾಗಿದ್ದು, ನೀರಿನ ಸೋರಿಕೆ ಉಂಟಾಗುತ್ತಿದೆ. 75 ಕೋಟಿ ರೂ. ವೆಚ್ಚದಲ್ಲಿ ಹೊಸ ಮೆಕಾನಿಕಲ್ ವರ್ಟಿಕಲ್ ಗೇಟ್ ಅಳವಡಿಸುವ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಸಣ್ಣ ನೀರಾವರಿ ಸಚಿವರನ್ನು ಒತ್ತಾಯಿಸಿದರು. ನಗರದಲ್ಲಿ ಪ್ರತ್ಯೇಕ ಜೆಸ್ಕಾಂ ಉಪವಿಭಾಗ ಕಚೇರಿ ಸ್ಥಾಪನೆ, ವಡಗೇರಾದಲ್ಲಿ ಜೆಸ್ಕಾಂ ಉಪವಿಭಾಗ ಮಂಜೂರು ಹಾಗೂ ಯಾದಗಿರಿ ಜಿಲ್ಲೆಗೆ ಹೊಸ ಜೆಸ್ಕಾಂ ವೃತ್ತ ಕಚೇರಿ ರಚಿಸುವಂತೆ ಮನವಿ ಮಾಡಿದರು. ಅರಕಲ್ ಬಂಡ ಹಾಗೂ ಗಡ್ಡೆಸೂಗುರು ಗ್ರಾಮಗಳಲ್ಲಿ ಮಂಜೂರಾದ 110 ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿಯನ್ನು ಆರಂಭಿಸುವಂತೆ ಒತ್ತಾಯಿಸಿದರು. ತಮ್ಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿನದಾಗಿದ್ದರೂ ಕಳೆದ ಮೂರು ವರ್ಷಗಳಲ್ಲಿ ವಸತಿ ನಿಲಯ ಮಂಜೂರಾಗದಿರುವುದನ್ನು ವಿಷಾದಿಸಿದರು. ಜೊತೆಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದರು. ಯಾದಗಿರಿ ಕ್ಷೇತ್ರದಲ್ಲಿರುವ ಪ್ರಾಚೀನ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಜರಾಯಿ ಸಚಿವರನ್ನು ಮನವಿ ಮಾಡಿದರು. ವಡಗೇರಾಪಟ್ಟಣದಲ್ಲಿ 50 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 20.58 ಕೋಟಿ ರೂ. ಮಂಜೂರು ಮಾಡುವಂತೆ ಹಾಗೂ ಯಾದಗಿರಿ ನಗರದಲ್ಲಿ ಸರ್ಕಾರಿ ಜಿಟಿಟಿಸಿ ಕಾಲೇಜು ಸ್ಥಾಪನೆಗೆ 73 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಸದನದಲ್ಲಿ ಮನವಿ ಮಾಡಿದರು.

ವಾರ್ತಾ ಭಾರತಿ 24 Mar 2026 7:31 pm

ಬೆಂಗಳೂರು ಹೊರತುಪಡಿಸಿ 325 ಸ್ಥಳೀಯ ಸಂಸ್ಥೆಗಳಿಂದ ಪ್ರತಿದಿನ 6,083 ಟನ್ ತ್ಯಾಜ್ಯ ಸಂಸ್ಕರಣೆ : ರಹೀಂ ಖಾನ್

ಬೆಂಗಳೂರು : ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ 325 ನಗರ ಸ್ಥಳೀಯ ಸಂಸ್ಥೆಗಳಿಂದ ಪ್ರತಿದಿನ 7,304 ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, 6,083 ಟನ್‍ಗಳಷ್ಟು ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದ್ದಾರೆ. ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವ ಲಾಬಿಗೂ ಮಣಿಯದಂತೆ ವೈಜ್ಞಾ ನಿಕವಾಗಿ ಕಸ ವಿಲೇವಾರಿ ಕಾಮಗಾರಿ ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನವುಳ್ಳ ಸುತ್ತೋಲೆ ಶೀಘ್ರದಲ್ಲಿ ಹೊರಡಿಸಲಾಗುವುದು ಎಂದರು. ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಹಾಗೂ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗುತ್ತಿರುವುದು ಸತ್ಯ. ಇದನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚನೆ ನೀಡಲಾಗುವುದು ಎಂದು ರಹೀಂ ಖಾನ್ ತಿಳಿಸಿದರು.  

ವಾರ್ತಾ ಭಾರತಿ 24 Mar 2026 7:30 pm

ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ಕೊನೆಯುಸಿರು; 13 ವರ್ಷದ ಕೋಮಾ ಜೀವನ ಅಂತ್ಯ

ಹೊಸದಿಲ್ಲಿ: 13 ವರ್ಷಗಳಿಂದ ಕೋಮಾಗೆ ಜಾರಿದ್ದ ಪಂಜಾಬ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹರೀಶ್ ರಾಣಾಗೆ ಜೀವ ರಕ್ಷಕ ನೆರವನ್ನು ಹಿಂತೆಗೆದ ಹಿನ್ನೆಲೆ ಏಮ್ಸ್‌ನಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಸುಪ್ರೀಂ ಕೋರ್ಟ್ ದಯಾಮರಣ ನೀಡಿದ ಹಿನ್ನೆಲೆ ಹರೀಶ್ ರಾಣಾಗೆ ಜೀವ ರಕ್ಷಕ ನೆರವನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದು ದೇಶದ ಕಾನೂನು ಮತ್ತು ವೈದ್ಯಕೀಯ ಇತಿಹಾಸದಲ್ಲಿ ಮಹತ್ವದ ಪ್ರಕರಣವಾಗಿತ್ತು. ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ 2013ರಲ್ಲಿ ನಾಲ್ಕನೆ ಮಹಡಿಯಿಂದ ಕೆಳಗೆ ಬಿದ್ದ ಬಳಿಕ ಅವರ ಮೆದುಳಿಗೆ ಗಂಭೀರವಾಗಿ ಗಾಯವಾಗಿತ್ತು. ಅಲ್ಲಿಂದ ಆತ ಜೀವರಕ್ಷಕ ನೆರವಿನಲ್ಲಿ ಜೀವಿಸಿದ್ದ. ವರ್ಷಗಳು ಕಳೆದಂತೆ ಆತ ಬದುಕುಳಿಯುವ ಆಸೆ ಕಮರಿ ಹೋಗಿತ್ತು. ಹೀಗಾಗಿ, ಆತನ ಕುಟುಂಬದ ಸದಸ್ಯರು ದಯಾಮರಣ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿತ್ತು.

ವಾರ್ತಾ ಭಾರತಿ 24 Mar 2026 7:27 pm

Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್‌

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್ ಹಾಗೂ ಇಂಧನದ ಯಾವುದೇ ಕೊರತೆಯಿಲ್ಲ.‌ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಾರ್ಚ್ 24ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಬೆಳಗಾವಿ ಜಿಲ್ಲೆ ಹಾಗೂ ನಗರದಲ್ಲಿ ಯಾವುದೇ ರೀತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇಲ್ಲ. ಬಂಕ್‌ಗಳಲ್ಲಿ

ಒನ್ ಇ೦ಡಿಯ 24 Mar 2026 7:27 pm

ದ.ಕ.ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಆಗಿ ಶಾಂತಾರಾಮ ಶೆಟ್ಟಿ ಪುನರಾಯ್ಕೆ

ಮಂಗಳೂರು, ಮಾ.24 : ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-29ನೇ ಸಾಲಿನ ಚೇರ್ಮನ್ ಆಗಿ ಸಿಎ ಶಾಂತಾರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಶಾಂತಾರಾಮ ಶೆಟ್ಟಿ ಸತತ 4ನೇ ಅವಧಿಗೆ ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಆಗಿ ಆಯ್ಕೆಯಾಗಿದ್ದು, ಪ್ರಸ್ತುತ ಅವರು ಹೊಸದಿಲ್ಲಿಯ ರೆಡ್‌ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ನಿರ್ವಹಣಾ ಮಂಡಳಿ ಸದಸ್ಯರಾಗಿದ್ದಾರೆ. ವೈಸ್ ಚೇರ್ಮನ್ ಆಗಿ ಡಾ. ಬಿ.ಸಚ್ಚಿದಾನಂದ ರೈ, ಖಜಾಂಚಿಯಾಗಿ ಗುರುದತ್ ನಾಯಕ್ ಆಯ್ಕೆಯಾಗಿದ್ದಾರೆ. ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು. ನೂತನವಾಗಿ ಚುನಾಯಿತರಾದ ಸಿಎ ಶಾಂತಾರಾಮ ಶೆಟ್ಟಿ, ಡಾ. ಬಿ.ಸಚ್ಚಿದಾನಂದ ರೈ, ಗುರುದತ್ ನಾಯಕ್, ಡಾ.ಸತೀಶ್ ರಾವ್, ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಡಾ.ಸುಮನ.ಬಿ., ಪಿ.ಬಿ.ಹರೀಶ್ ರೈ, ಸಚೇತ್ ಸುವರ್ಣ, ರಾಘವೇಂದ್ರ ರಾವ್ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಚೇರ್ಮನ್ ಹಾಗೂ ವಿವಿಧ ಉಪ ಸಮಿತಿಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

ವಾರ್ತಾ ಭಾರತಿ 24 Mar 2026 7:24 pm

Koppal | ಹ್ಯಾಂಡ್ ಲಾಕ್ ಆಗಿ ಕಾರು ಪಲ್ಟಿ : ಪ್ರಾಣಾಪಾಯದಿಂದ ಚಾಲಕ ಪಾರು

ಕೊಪ್ಪಳ: ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲಗೇರಿ ಸಮೀಪ ಮಂಗಳವಾರ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಕಾರು ಅಪಘಾತ ಸಂಭವಿಸಿದೆ. ಕೆಎ-01-ಎನ್‌ಸಿ-6310 ಸಂಖ್ಯೆಯ ಪಂಚ್ ಕಾರು ಆಕಸ್ಮಿಕವಾಗಿ ಆಟೋಮೆಟಿಕ್ ಹ್ಯಾಂಡ್ ಲಾಕ್ ಆದ ಪರಿಣಾಮ, ಕೊಪ್ಪಳದ ಹೊಸಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿ ರಸ್ತೆ ಬದಿಯಲ್ಲಿ ಬಿದ್ದಿದೆ. ಅದೃಷ್ಟವಶಾತ್ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. 

ವಾರ್ತಾ ಭಾರತಿ 24 Mar 2026 7:22 pm

ಮೇಲ್ಮನೆಯಲ್ಲಿ ಸದಸ್ಯರ ಪ್ರಶ್ನೆಗಳಿಗಿಲ್ಲ ಉತ್ತರ..! | ಉತ್ತರ ಒದಗಿಸದ ಅಧಿಕಾರಿಗಳನ್ನು ಸದನಕ್ಕೆ ತಂದು ನಿಲ್ಲಿಸಿ : ಸಭಾಪತಿ ಹೊರಟ್ಟಿ

ಬೆಂಗಳೂರು : ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲವೆಂದರೆ ಏನರ್ಥ? ಇಂದು(ಮಾ.25) ಸದನಕ್ಕೆ ಉತ್ತರ ಒದಗಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ, ಇಲ್ಲವೇ ಅವರನ್ನು ಕರೆತಂದು ಸದನದಲ್ಲಿ ನಿಲ್ಲಿಸಿ ಎಂದು ವಿಧಾನ ಪರಿಷತ್‍ನ ಸಭಾಪತಿ ಬಸವರಾಜ್ ಹೊರಟ್ಟಿ, ಸಭಾನಾಯಕ ಎನ್.ಎಸ್.ಬೋಸರಾಜುಗೆ ತಾಕೀತು ಮಾಡಿದರು. ಮಂಗಳವಾರ ವಿಧಾನಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯ ಅಂತ್ಯದಲ್ಲಿ ಈ ಬಗ್ಗೆ ಮಾತನಾಡಿದ ಸಭಾಪತಿಗಳು, ಮಾ.24ರಂದು ಸದನದಲ್ಲಿ ಕೇಳಿದ 105 ಪ್ರಶ್ನೆಗಳ ಪೈಕಿ ಕೇವಲ 57ಕ್ಕೆ ಮಾತ್ರ ಉತ್ತರಗಳು ಬಂದಿವೆ. ಹೀಗಾದರೆ ಸದನ ನಡೆಸುವುದೇಗೆ? ಸಭಾನಾಯಕರು ಅಧಿಕಾರಿಗಳಿಂದ ಉತ್ತರ ಪಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಸದನಕ್ಕೆ ಅಂತಹ ಅಧಿಕಾರಿಗಳ ಕರೆತಂದು ನಿಲ್ಲಿಸಿ, ಆಗ ನನ್ನ ಅಧಿಕಾರವನ್ನು ಚಲಾಯಿಸುತ್ತೇನೆ ಎಂದು ಸಿಡಿಮಿಡಿಗೊಂಡರು. ಈ ವೇಳೆ ಅದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಸದಸ್ಯ ಸಿ.ಟಿ.ರವಿ, ಈ ಬಾರಿಯಷ್ಟೇ ಅಲ್ಲ. ಹಿಂದಿನ ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗಳಿಗೂ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ದೂರಿದರು. ಸದನಕ್ಕೆ ಉತ್ತರ ಒದಗಿಸದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಈಗಾಗಲೇ ಪೀಠ ಸರಕಾರಕ್ಕೆ ಆದೇಶಿಸಿದೆ. ಅದರಂತೆ ಕ್ರಮ ವಹಿಸಲಿ. ವಿಧಾನ ಪರಿಷತ್ ಸದಸ್ಯರು ಕೇಳಿದ ಪ್ರಶ್ನೆಗಳಿಗೂ ಅಧಿಕಾರಿಗಳು ಉತ್ತರ ಹೇಳುತ್ತಿಲ್ಲ ಎಂದರೆ ಜನರು ಏನು ಮಾತನಾಡಿಕೊಳ್ಳಬಹುದು. ತಕ್ಷ ಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಮನವಿ ಮಾಡಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸಭಾಪತಿ ಹೊರಟ್ಟಿ, ಸದಸ್ಯರ ಪ್ರಶ್ನೆಗಳಿಗೆ ಉತ್ತರ ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲವೇ ಸದನಕ್ಕೆ ತಂದು ನಿಲ್ಲಿಸಿ ಎಂದು ಆದೇಶಿಸಿದ ಅವರು, ವಿವಾಹದಲ್ಲಿ ಆಯ್ಕೆ ಸ್ವಾತಂತ್ರ್ಯ ಹಾಗೂ ಮರ್ಯಾದಾ ಹತ್ಯೆ ವಿಧೇಯಕ-2026 ಮಂಡನೆ ವೇಳೆಗೆ ಸದಸ್ಯರ ಹಾಜರಾತಿ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು. ಆಡಳಿತ ಪಕ್ಷದ 37 ಜನ ಸದಸ್ಯರ ಪೈಕಿ ಕೇವಲ 16 ಜನರಿದ್ದಾ ರೆ. ಇನ್ನುಳಿದವರು ಎಲ್ಲಿ ಎಂದು ಸಭಾಪತಿ ಹೊರಟ್ಟಿ ಗರಂ ಆದರು. ಸದಸ್ಯರು ಹಾಜರಿರುವ ಬಗ್ಗೆ ಆಡಳಿತ ಮತ್ತು ವಿಪಕ್ಷ ದ ನಾಯಕರು ಮತ್ತು ಮುಖ್ಯಸಚೇತಕರು ಗಮನ ಹರಿಸಬೇಕು ಎಂದು ಸಭಾಪತಿ ಹೊರಟ್ಟಿ ತಿಳಿಸಿದರು.  

ವಾರ್ತಾ ಭಾರತಿ 24 Mar 2026 7:20 pm

ಪ್ಯಾನಿಕ್ ಬಟನ್ ಸರಿಪಡಿಸದಿದ್ದರೆ ಹೋರಾಟ: ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್ ಎಚ್ಚರಿಕೆ

ಮಂಗಳೂರು, ಮಾ.24: ಪ್ರವಾಸಿ ವಾಹನಗಳಲ್ಲಿ ’ಪ್ಯಾನಿಕ್ ಬಟನ್’ ಅಳವಡಿಕೆಯನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರಕಾರದ ಆದೇಶದ ಹಿಂದೆ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ದ.ಕ.ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್, ಈ ಅವೈಜ್ಞಾನಿಕತೆಯನ್ನು ನಿಲ್ಲಿಸದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆನಂದ ಕೆ., ಇದು ತಾಂತ್ರಿಕವಾಗಿ ವಿಫಲವಾಗಿದೆ. ಕೇವಲ ಹಣ ಮಾಡುವ ದಂಧೆಯಾಗಿ ಇದು ಮಾರ್ಪಟ್ಟಿದೆ. ಕೇರಳದಲ್ಲಿ ಜಿಎಸ್‌ಟಿ ಸಹಿತ ಸುಮಾರು 4,000 ರೂ.ಗೆ ಸಿಗುವ ಪ್ಯಾನಿಕ್ ಬಟನ್ ಸಾಧನಕ್ಕೆ ಕರ್ನಾಟಕದಲ್ಲಿ ಅಕ್ರಮವಾಗಿ 13,500 ರಿಂದ 16,000 ರೂ.ವರೆಗೆ ವಸೂಲಿ ಮಾಡಲಾಗುತ್ತಿದೆ. ಸಾರಿಗೆ ಇಲಾಖೆಯು ಹೈಕೋರ್ಟ್‌ಗೆ ಈ ಸಾಧನದ ಬೆಲೆ 8,250 ರೂಪಾಯಿ ಎಂದು ಮಾಹಿತಿ ನೀಡಿದೆ.ಆದರೂ ಖಾಸಗಿ ಕಂಪನಿಗಳು ದುಪ್ಪಟ್ಟು ಹಣ ಪಡೆಯುತ್ತಿವೆ. ಇಷ್ಟು ದೊಡ್ಡ ಮೊತ್ತ ಪಡೆದರೂ ಕಂಪನಿಗಳು ಚಾಲಕರಿಗೆ ಯಾವುದೇ ಅಧಿಕೃತ ಬಿಲ್ ನೀಡಲು ನಿರಾಕರಿಸುತ್ತಿವೆ ಎಂದು ಆರೋಪಿಸಿದರು. ಪ್ರಯಾಣಿಕರ ಸುರಕ್ಷತೆಗಾಗಿ ಈ ಬಟನ್ ಒತ್ತಿದರೆ ಅದು ಕಂಟ್ರೋಲ್ ರೂಮ್‌ಗೆ ಸಂದೇಶ ರವಾನಿಸಬೇಕು. ಆದರೆ ಪ್ರಸಕ್ತ ಅಳವಡಿಸಲಾಗಿರುವ ಸಾಧನಗಳು ಡಮ್ಮಿಯಾಗಿದ್ದು, ಬಟನ್ ಒತ್ತಿದರೂ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ತುರ್ತು ಸಂದರ್ಭ ನೆರವು ನೀಡಬೇಕಾದ ಇಆರ್‌ಎಸ್ (ಉ್ಕಖ) ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಇದರಿಂದ ಯಾವುದೇ ಲಾಭವಿಲ್ಲ. ಬಟನ್ ಒತ್ತಿದ ಒಂದು ವಾರದ ನಂತರವೂ ಚಾಲಕರಿಗೆ ಯಾವುದೇ ಕರೆಗಳು ಬರುತ್ತಿಲ್ಲ, ಬಂದರೂ ಅದು ಪ್ರಯಾಣಿಕರಿಗೆ ತಲುಪುತ್ತಿಲ್ಲ. ಪ್ರಯಾಣಿಕರಿಗೂ ಇಂತಹ ಬಟನ್ ಇದೆ ಎಂಬ ಮಾಹಿತಿಯೂ ಇಲ್ಲ ಎಂದು ಆನಂದ್ ಹೇಳಿದರು. ಈಗಾಗಲೇ ಸಾಲ ಮಾಡಿ ಪ್ಯಾನಿಕ್ ಬಟನ್ ಅಳವಡಿಸಿಕೊಂಡಿರುವ ಚಾಲಕರಿಗೆ ಈಗ ವಾರ್ಷಿಕ ರಿಚಾರ್ಜ್ ಹೆಸರಿನಲ್ಲಿ ಕಂಪನಿಗಳು ಕಿರುಕುಳ ನೀಡುತ್ತಿವೆ. ಸರಕಾರ ನಿಗದಿಪಡಿಸಿದ 1,800 ರೂ. ಬದಲಿಗೆ 3,800 ರೂ.ನೀಡುವಂತೆ ಒತ್ತಾಯಿಸಲಾಗುತ್ತಿದೆ. ರಿಚಾರ್ಜ್ ಮಾಡದ ವಾಹನಗಳ ಎಫ್‌ಸಿ (ಊಇ)ಯನ್ನು ಆರ್‌ಟಿಒ ಅಧಿಕಾರಿಗಳು ತಡೆಹಿಡಿಯುತ್ತಿರುವುದು ಚಾಲಕರನ್ನು ಸಂಕಷ್ಟಕ್ಕೆ ದೂಡಿದೆ. ನಿರ್ಭಯಾ ಪ್ರಕರಣ ನಡೆದಿದ್ದು ಬಸ್ಸಿನಲ್ಲಾಗಿದ್ದರೂ ಅದನ್ನು ಕೇವಲ ಟ್ಯಾಕ್ಸಿ ಮತ್ತು ಕ್ಯಾಬ್‌ಗಳಿಗೆ ಸೀಮಿತಗೊಳಿಸಿರುವುದು ವಿರೋಧಾಭಾಸ ಎಂದು ಆನಂದ್ ಹೇಳಿದರು. ಶಾಸಕರಾದ ಸುನಿಲ್ ಕುಮಾರ್ ಹಾಗೂ ಐವನ್ ಡಿಸೋಜ ಅಧಿವೇಶನದಲ್ಲಿ ಧ್ವನಿ ಎತ್ತಿದ್ದರೂ ಸರಕಾರದಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಅವೈಜ್ಞಾನಿಕ ಪದ್ಧತಿಯನ್ನು ತಕ್ಷಣ ನಿಲ್ಲಿಸದಿದ್ದರೆ ಮಂಗಳೂರು ಮತ್ತು ಉಡುಪಿಯ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹರೀಶ್ ಶೆಟ್ಟಿ ಕುತ್ತಾರ್, ಕಾರ್ಯದರ್ಶಿ ರಾಜೇಶ್, ನಾಗೇಶ್ ಮಿತ್ತಡ್ಕ, ಖಜಾಂಜಿ ಸುರೇಶ್ ಸಲ್ಯಾನ್ ಮಾಜಿ ಪದಾಧಿಕಾರಿ ಶುಭಕರ ಶೆಟ್ಟಿ ಹಾಗೂ ಉದಯ ಕುಮಾರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 7:19 pm

Mutton: ಕುಕ್ಕರ್‌ 20 ಬಾರಿ ಕೂಗಿದರೂ ಬೇಯದ ತಲೆ ಮಟನ್‌: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ

ಸಾಮಾನ್ಯವಾಗಿ ಜನರು ಕಳ್ಳತನ, ಜಗಳ ಅಥವಾ ಆಸ್ತಿ ವಿವಾದಗಳ ದೂರು ಹಿಡಿದು ಪೊಲೀಸ್ ಠಾಣೆಗೆ ಹೋಗುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಿಪತ್ರಿ ಪಟ್ಟಣದಲ್ಲಿ ನಡೆದ ಘಟನೆ ಮಾತ್ರ ಪೊಲೀಸರನ್ನೇ ಒಂದು ಕ್ಷಣ ದಂಗಾಗಿಸಿದೆ. ತಾನು ತಂದ ಮಟನ್ ಎಷ್ಟೇ ಬೇಯಿಸಿದರೂ ಮೆತ್ತಗಾಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಬೇಯದ ಮಾಂಸದ ಪಾತ್ರೆಯನ್ನೇ ಹಿಡಿದು ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಒನ್ ಇ೦ಡಿಯ 24 Mar 2026 7:18 pm

ಸದನ ಸ್ವಾರಸ್ಯ: ಕನ್ನಡ v/s ಇಂಗ್ಲಿಷ್, ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ ಶಿವಲಿಂಗೇಗೌಡರ ಆಂಗ್ಲ ಭಾಷಾ ಮೋಹ!

ನಮ್ಮ‌ಮಕ್ಕಳು ಇಂಗ್ಲೀಷ್ ಕಲಿಯಬೇಕು.ಅವರು ಅಮೆರಿಕಾಗೆ ಹೋಗಬೇಕು. ಅಲ್ಲಿಯೂ ಅವರು ತಿರುಗಿ ಬರಬೇಕು. ನಮ್ಮ ಮಕ್ಕಳು ಇಲ್ಲಿಯೇ ಇರಬೇಕಾ? ಅವರು ದೇಶ ಸುತ್ತಿ ಬರಲಿ. ಕನ್ನಡ ಮಾಧ್ಯಮ ಬೇಡ ಅಂತ ಹೇಳಲ್ಲ. ಆದರೆ ಆಂಗ್ಲ ಮಾಧ್ಯಮ ಬೇಕು ಎಂದು ಶಾಸಕ ಶಿವಲಿಂಗೇಗೌಡ ಒತ್ತಾಯ ಮಾಡಿದರು. ಆದರೆ ಈ ವೇಳೆ ಬಸವರಾಜ ರಾಯರೆಡ್ಡಿ ಮಧ್ಯಪ್ರವೇಶ ಮಾಡಿ, ಮಕ್ಕಳು ಕನ್ನಡದಲ್ಲಿಯೇ ಓದಲಿ. ಕನ್ನಡದಲ್ಲಿಯೂ ಒಳ್ಳೆಯ ಅವಕಾಶಗಳಿವೆ. ಕನ್ನಡದ ಜೊತೆ ಇಂಗ್ಲೀಷ್ ಕಲಿಯಲಿ. ಇದಕ್ಕೆ ಯಾರ ಅಭ್ಯಂತರವೂ ಇಲ್ಲ. ನಾವು ಬೇರೆಯವರಿಗೆ ಗುಲಾಮರಾಗಬೇಕಿಲ್ಲ ಎಂದು ವಾದಿಸಿದರು.

ವಿಜಯ ಕರ್ನಾಟಕ 24 Mar 2026 7:17 pm

Kalaburagi | ಹಾಯಿಕು ಕಾವ್ಯದಲ್ಲಿ ಧನಾತ್ಮಕ ಚಿಂತನೆ ಅಗತ್ಯ: ಪ್ರೊ.ವಿಕ್ರಮ ವಿಸಾಜಿ

'ಕೆಂಪು ಗುಲಾಬಿ ಹಾಯಿಕುಗಳು' ಸಂಕಲನ ಲೋಕಾರ್ಪಣೆ

ವಾರ್ತಾ ಭಾರತಿ 24 Mar 2026 7:16 pm

ವೃತ್ತಿ ಮಾರ್ಗದರ್ಶನ -ವ್ಯಕ್ತಿತ್ವ ಕಸನ ಮಾತಿ ಶಿಬಿರ

ಬ್ರಹ್ಮಾವರ, ಮಾ.24: ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ ಇದರ 16ನೇ ವಾರ್ಷಿಕೋತ್ಸವದ ಅಂಗವಾಗಿ ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ಮಾಹಿತಿ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿದ ರೋಟರಿ ಕ್ಲಬ್ ಕುಂದಾಪುರ ಮಾಜಿ ಅಧ್ಯಕ್ಷ ಕೆ.ಆರ್.ನಾಕ್ ಮಾತನಾಡಿ, ವೃತ್ತಿ ಕೌಶಲ್ಯವು ಪಾರಂಪರಿಕ ವೃತ್ತಿಗಳಾದ ಕಮ್ಮಾರಿಕೆ, ಚಮ್ಮಾರಿಕೆ ನೇಕಾರಿಕಾ ಕುಂಬಾರಿಕೆ ಹಾಗೂ ಕ್ಷೌರಿಕ ಎಂಬ ಐದು ಪ್ರಧಾನ ಪ್ರಭೇದಗಳಿದ್ದು, ಅತ್ಯಂತ ಪ್ರಾಚೀನ ಕಸುಬುದಾರರು ಎಂದು ಗುರುತಿಸಲಾಗಿದೆ. ಅವರು ಅತ್ಯಂತ ನೈಪುಣ್ಯ ಪಡೆದವರಾಗಿದ್ದು, ತುಂಬಾ ಜನಪ್ರಿಯರಾಗಿದ್ದರು. ಆದರೆ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಈ ಹಸ್ತ ಕುಶಲಗಾರರು ನಿರ್ಮಿಸಿದ ಅನೇಕ ಕಲಾಕೃತಿಗಳು ನಿರ್ಲಕ್ಷ್ಯಕ್ಕೊಳಪಟ್ಟು ಅವಸಾನದ ಅಂಚಿನಲ್ಲಿದ್ದು, ಅದನ್ನು ಪ್ರಜಾ ಸತ್ತಾತ್ಮಕ ನೆಲೆಯಾದ ಈ ಎಲ್ಲಾ ವೃತ್ತಿ ಹಾಗೂ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ತುಂಬಾ ಅಗತ್ಯವಾಗಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಪರ್ಕಳ ಶ್ರೀದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಮುಖ್ಯಕಾರ್ಯನಿರ್ವಹ ಣಾಧಿಕಾರಿ ನಿತ್ಯಾನಂದ ನಾಯಕ್ ನರಸಿಂಗೆ ಮಾತನಾಡಿ, ನಮ್ಮ ನಡೆ-ನುಡಿ ಆಚಾರ ವಿಚಾರ ಮಾತು ನಡವಳಿಕೆಯೇ ವ್ಯಕ್ತಿತ್ವ ಎಂದರು. ಮುಖ್ಯ ಅತಿಥಿಯಾಗಿ ಹವ್ಯಾಸಿ ಯಕ್ಷಗಾನ ಕಲಾವಿದ ಮಾರಾಳಿ ಪ್ರಭಾಕರ ಶೆಟ್ಟಿ ಮಾತನಾಡಿ ನಮ್ಮ ಭವಿಷ್ಯದ ನಿರ್ಮಾತ್ರರು ನಾವೇ ಆಗಿದ್ದು, ಅದನ್ನು ಬೇರೆಯವರ ತಲೆಗೆ ಹೊರಿಸಬಾರದು. ನಾವು ಮಾಡುವ ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ ದಕ್ಷತೆ ಮತ್ತು ಜವಾಬ್ದಾರಿತನವೇ ನಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿದಾರರು ಹಾಗೂ ಕುಂದಾಪುರ ಸ್ಪರ್ಧಾ ಸಾರಥಿ ಕೆ.ಎ.ಎಸ್. ಅಕಾಡೆಮಿ ಸಂಸ್ಥಾಪಕ ಆದರ್ಶ ಕೆಲ ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ನಮಗೆ ಸ್ಪಷ್ಟ ಗುರಿಯೊಂದಿರಬೇಕು. ಅದನ್ನು ನಾವು ಹಂತ ಹಂತವಾಗಿ ಗಳಿಸುತ್ತಾ ಉದ್ಯೋಗದಲ್ಲಿ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಶೆಟ್ಟಿ ಶಿರೂರು ಮೂರ್ಕೈ ಅವರಿಗೆ ಕಲಾಕುಸುಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಬುಕಳ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಅಧ್ಯಕ್ಷ ತಾರಾನಾಥ್ ಶೆಟ್ಟಿ, ಕೋಟ ಆಶ್ರಿತಾ ಕಾಲೇಜ್ ಆಫ್ ನರ್ಸಿಂಗ್‌ನ ಹಿರಿಯ ಉಪನ್ಯಾಸಕಿ ವಿದ್ಯಾ, ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ರವಿ ಕುಮಾರ್ ಉಪಸ್ಥಿತರಿದ್ದರು. ದಿವ್ಯಾ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಸುಧಾ ಭಟ್ ಅಮಾಸೆಬೈಲು ಸ್ವಾಗತಿಸಿದರು. ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೀಶಾ ಬಾಯರಿ ಪೇತ್ರಿ ವಂದಿಸಿದರು. ಸುಮಾರು 285 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.

ವಾರ್ತಾ ಭಾರತಿ 24 Mar 2026 7:11 pm

‘ಸ್ಕಿಲ್ ಡೆವಲಪ್ಮೆಂಟ್-ಎಂಪ್ಲಾಯಬಿಲಿಟಿ’ ತರಬೇತಿ ಕಾರ್ಯಕ್ರಮ

ಕುಂದಾಪುರ : ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಹಾಗೂ ಐಬಿಎಂ ಸ್ಕಿಲ್ಸ್ ಬಿಲ್ಡ್ ಡಿಜಿಟಲ್ ಸ್ಕಿಲ್ಲಿಂಗ್ ಇದರ ಸಹಯೋಗದೊಂದಿಗೆ ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಬೀ ಹೈವ್’ ಸಭಾಂಗಣದಲ್ಲಿ ಹಮ್ಮಿಕೊಳ್ಳ ಲಾದ ಸ್ಕಿಲ್ ಡೆವಲಪ್ಮೆಂಟ್ ಮತ್ತು ಎಂಪ್ಲಾಯಬಿಲಿಟಿ’ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಜೇಡನ್ ಡಿಸೋಜ ಮಾತನಾಡಿ, ಕೃತಕ ಬುದ್ಧಿಮತ್ತೆಯು ಬಹುಮುಖ ಕ್ಷೇತ್ರದಲ್ಲಿ ಅನ್ವಯಿಸಬಹು ದಾಗಿದ್ದು, ಇಂದಿನ ಆಧುನಿಕ ಜೀವನದಲ್ಲಿ ಈ ತಂತ್ರಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು. ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್‌ನ ಕಾರ್ಯಕ್ರಮ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮಾತನಾಡಿ, ಪ್ರಸ್ತುತ ಕಾರ್ಯಕ್ರಮವು 18 ವರ್ಷ ಮೇಲ್ಪಟ್ಟ ಯುವಜನತೆಗೆ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ರೂಡಿಸುವ ಸದುದ್ದೇಶವನ್ನು ಹೊಂದಿರುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯತ್ತಿನ ವೃತ್ತಿ ಜೀವನದಲ್ಲಿ ನೆರವಾಗಲಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ. ಅಬ್ದುಲ್ ರೆಹಮಾನ್ ಬ್ಯಾರಿ ಮಾತ ನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪದವಿ ಗಳಿಸಿದರೆ ಸಾಲದು. ಉದ್ಯೋಗ ಮಾರು ಕಟ್ಟೆಗೆ ಪೂರಕವಾದ ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು. ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿಗಳಾದ ದೀಪಕ್ ಬಡಿಗೇರಿ, ವೀಣಾ, ಕಾಲೇಜಿನ ಉಪ ಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ., ಪ್ರಾಧ್ಯಾಪಕ ವೃಂದದವರು ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್ ಪ್ರಾಸ್ತಾವಿಕ ನುಡಿಗಳನ್ನಾಡಿ ದರು. ಸಹಾಯಕ ಪ್ರಾಧ್ಯಾಪಕಿ ಶ್ರುತಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಶಂಶಾದ್ ವಂದಿಸಿದರು. ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಅಕ್ಷತಾ ಮತ್ತು ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 24 Mar 2026 7:07 pm

ಮಧ್ಯಪ್ರಾಚ್ಯದ ಉದ್ವಿಗ್ನತೆ: ಪ್ರಧಾನಿ ಮೋದಿ - ಡೊನಾಲ್ಡ್ ಟ್ರಂಪ್ ಮಹತ್ವದ ಮಾತುಕತೆ!

ಮಧ್ಯಪ್ರಾಚ್ಯದ ಉದ್ವಿಗ್ನತೆ ಬೆನ್ನಲ್ಲೆ ಪ್ರಧಾನಿ ಮೋದಿ-ಟ್ರಂಪ್ ಮಹತ್ವದ ಮಾತುಕತೆ ನಡೆಸಿದ್ದಾರೆ. ತೈಲ ಪೂರೈಕೆ ಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನು ಮುಕ್ತವಾಗಿಡಲು ಒತ್ತುನೀಡಲು ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಭಾರತಕ್ಕೆ ಅಮೆರಿಕದ ರಾಯಭಾರಿ ಮಾಹಿತಿ ನೀಡಿದ್ದಾರೆ.

ವಿಜಯ ಕರ್ನಾಟಕ 24 Mar 2026 7:06 pm

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಸಿಸ್ಟಂಟ್ ಕೋರ್ಟ್ ಸೆಕ್ರಟರಿ ಹುದ್ದೆಗಳಿಗೆ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ಅಗತ್ಯ ದಾಖಲೆಗಳಾದ ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಭಾವ ಚಿತ್ರವನ್ನು ಅಪ್ಲೋಡ್ ಮಾಡುವ ಮೂಲಕ ಫಾರ್ಮ್ ಭರ್ತಿ ಮಾಡಬೇಕು. ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯ 11 ಅಸಿಸ್ಟಂಟ್ ಕೋರ್ಟ್ ಸೆಕ್ರಟರಿ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಅಡಿಯಲ್ಲಿ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಖಾಲಿ ಇರುವ 11 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ (Assistant Court Secretary) ಹುದ್ದೆಗಳಲ್ಲಿ 7 ಉಳಿಕೆ (ಬ್ಯಾಕ್ಲಾಗ್) ಹುದ್ದೆಗಳು ಸೇರಿವೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು https://judiciary.karnataka.gov.in/recsubnotify.php?p=1149&stateNM= ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇಮಕಾತಿಯ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯ ನಿರ್ಧಾರವೇ ಅಂತಿಮವಾಗಿರುತ್ತದೆ ಪ್ರಮುಖ ದಿನಾಂಕಗಳು ಅಧಿಸೂಚನೆ ನೀಡಿದ ದಿನಾಂಕ: 2026 ಮಾರ್ಚ್ 16 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 2026 ಎಪ್ರಿಲ್ 15 ಅರ್ಜಿ ಶುಲ್ಕದ ವಿವರ ನೇಮಕಾತಿಗೆ ಸಂಬಂಧಿಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ಪೂರ್ವಭಾವಿ ಪರೀಕ್ಷೆಗೆ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಎಸ್ಸಿ/ಎಸ್ಟಿ/ಪ್ರವರ್ಗ-1/ ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ. ಮುಖ್ಯ ಪರೀಕ್ಷೆ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 1500 ರೂ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 750 ರೂ. ಆನ್ಲೈನ್ ಮೂಲಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶೈಕ್ಷಣಿಕ ಅರ್ಹತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದ ಕಾನೂನು ಪದವಿ, ವಿಜ್ಞಾನ, ಕಲೆ, ವಾಣಿಜ್ಯ, ಬಿಬಿಎ, ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಎಂಬಿಎ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷದವರಾಗಿರಬೇಕು ಮತ್ತು ಗರಿಷ್ಟ ವಯಸ್ಸು 40 ವರ್ಷ ಮೀರಿರಬಾರದು. ಸರ್ಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ/ಪ್ರವರ್ಗ-I ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಮತ್ತು ಒಬಿಸಿ (2ಎ/2ಬಿ/3ಎ/ಬಿ) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ವೇತನ ಶ್ರೇಣಿ ನೇಮಕಾತಿಯಡಿ ಒಟ್ಟು 70 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅದರಲ್ಲಿ ಆರ್ಪಿಸಿ ವಿಭಾಗಕ್ಕೆ 59 ಹುದ್ದೆಗಳು ಕೆಕೆಆರ್ ವಿಭಾಗಕ್ಎಕ 11 ಹುದ್ದೆಗಳನ್ನು ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಅವಕಾಶವಿದ್ದು, ಮಾಸಿಕ 44,900 ರೂ. ರಿಂದ 1,42,400/- ರೂ. ವರೆಗಿನ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳನ್ನು ಫೂರ್ವಭಾವಿ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ, ಸ್ಟನೊಗ್ರಫಿ ಪರೀಕ್ಷೆ ಮತ್ತು ಅಂತಿಮವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಹೈಕೋರ್ಟ್ನ ಅಧಿಕೃತ ವೆಬ್ಸೈಟ್ https://judiciary.karnataka.gov.in/ ಭೇಟಿ ನೀಡಿ, ಅಧಿಸೂಚನೆಯನ್ನು ಪೂರ್ಣವಾಗಿ ಓದಬಹುದು. ಅಗತ್ಯ ದಾಖಲೆಗಳಾದ ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಭಾವಚಿತ್ರವನ್ನು ಅಪ್ಲೋಡ್ ಮಾಡುವ ಮೂಲಕ ಫಾರ್ಮ್ ಭರ್ತಿ ಮಾಡಬೇಕು.

ವಾರ್ತಾ ಭಾರತಿ 24 Mar 2026 7:06 pm

ಆರೋಗ್ಯ ಕೇಂದ್ರದ ಕಂಪೌಂಡ್‌ನಲ್ಲಿ ತೆರಿಗೆ ಪಾವತಿ ಕೇಂದ್ರಕ್ಕೆ ವಿರೋಧ

ಉಡುಪಿ, ಮಾ.24: ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ್ ಕೆಡವಿ ಒಳಾಂಗಣದಲ್ಲಿ ನಗರಸಭೆಯ ತೆರಿಗೆ ಪಾವತಿ ಕೇಂದ್ರ ಸ್ಥಾಪನೆಯ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ. ಜಿಲ್ಲಾಡಳಿತವು ತಕ್ಷಣ ತೆರಿಗೆ ಪಾವತಿ ಕೇಂದ್ರದ, ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ನಗರಾಡಳಿತ ಕಛೇರಿಯ ಆಯಾ ಕಟ್ಟಿನ ಸ್ಥಳದಲ್ಲಿಯೇ ತೆರಿಗೆ ಪಾವತಿ ಕೇಂದ್ರವನ್ನು ನಿರ್ಮಾಣ ಮಾಡಬೇಕು ಎಂದು ಸಮಾಜ ಸೇವಕ ಹಾಗೂ ಮಾಜಿ ನಗರಸಭಾ ಸದಸ್ಯ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹಾಗೂ ಚಿಕಿತ್ಸಕರಿಗೂ ಸ್ಥಳದಲ್ಲಿ ಗುಂಪಾಗಿ ಸೇರುವ ತೆರಿಗೆ ಪಾವತಿದಾರರ ವ್ಯವಹಾರ ಮಾತುಕತೆಗಳ ಗದ್ದಲದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಸನಿಹದಲ್ಲಿ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಾಹನ ನಿಲುಗಡೆಯಿಂದ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗೆಯೇ ಆರೋಗ್ಯ ಇಲಾಖೆಯ ಸ್ಥಳವನ್ನು ಬೇರೊಂದು ಕೆಲಸಕ್ಕೆ ಬಳಸಿಕೊಂಡಿರುವುದು ಅಪರಾಧವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 24 Mar 2026 7:05 pm

ಪೌಷ್ಟಿಕ ಆಹಾರ ವಿತರಣೆಗೆ ಮುಖ ಗುರುತಿಸುವಿಕೆ ಕಡ್ಡಾಯ ಪ್ರಶ್ನಿಸಿ ಅರ್ಜಿ; ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಪೋಷಣ್ 2 ಅಭಿಯಾನದಡಿ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ವಿತರಿಸುವಾಗ ಮುಖ ಗುರುತಿಸುವಿಕೆ ತಂತ್ರಜ್ಞಾನದ (ಎಫ್‌ಆರ್‌ಎಸ್) ಮೂಲಕ ಕಡ್ಡಾಯವಾಗಿ ಮುಖ ಗುರುತು ಸೆರೆಹಿಡಿಯಬೇಕೆಂಬ ಷರತ್ತನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಎಫ್‌ಆರ್‌ಎಸ್ ಕಡ್ಡಾಯಗೊಳಿಸಿ 2025ರ ಮೇ 3ರಂದು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ರದ್ದುಕೋರಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ‌ ನ್ಯಾಯಪೀಠ ಪ್ರತಿವಾದಿಗಳಾದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ, ರಾಜ್ಯ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು. ಅರ್ಜಿದಾರರ ಆಕ್ಷೇಪವೇನು? ​ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪೌಷ್ಟಿಕ ಆಹಾರ ಪಡೆಯುವುದು ಶಾಸನಬದ್ಧ ಹಕ್ಕಾಗಿದೆ. ಪೌಷ್ಟಿಕ ಆಹಾರ ವಿತರಿಸುವ ಸಂದರ್ಭದಲ್ಲಿ ಎಫ್‌ಆರ್‌ಎಸ್‌ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ, ಕಳಪೆ ನೆಟ್‌ವರ್ಕ್, ಮಕ್ಕಳ ಮುಖಚರ್ಯೆಯಲ್ಲಿನ ಬದಲಾವಣೆ, ಆರೋಗ್ಯ ಕಾರಣಗಳು, ವಯಸ್ಸಿಗೆ ಸಂಬಂಧಿಸಿದ ಮುಖಚರ್ಯೆ ಬದಲಾವಣೆ ಇನ್ನಿತರ ಕಾರಣಗಳಿಂದಾಗಿ ಎಫ್‌ಆರ್‌ಎಸ್ ವ್ಯವಸ್ಥೆಯು ಪದೇಪದೆ ವಿಫಲವಾಗುತ್ತಿದೆ. ಇದರಿಂದ ಹಸುಗೂಸುಗಳಿಗೆ, ಮಕ್ಕಳಿಗೆ ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದರಿಗೆ ಹಾಗೂ ಪ್ರೌಢಾವಸ್ಥೆ ತಲುಪಿದ ಹೆಣ್ಣುಮಕ್ಕಳಿಗೆ ಈ ಸೌಲಭ್ಯ ಸಿಗದಂತಾಗುತ್ತಿದೆ. ಈ ವೈಫಲ್ಯಗಳು ಪೌಷ್ಟಿಕ ಆಹಾರ ವಿತರಣೆಯಲ್ಲಿ ಗಮನಾರ್ಹ ವಿಳಂಬ ಹಾಗೂ ನಿರಾಕರಣೆಗೆ ಕಾರಣವಾಗುತ್ತಿದ್ದು, ಇದು ಸಂವಿಧಾನದ ವಿಧಿ 14 ಹಾಗೂ 21ರ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಸರಕಾರದಿಂದ ಅಗತ್ಯ ಪ್ರಮಾಣದ ಉಪಕರಣಗಳು, ಸಿಬ್ಬಂದಿ ಹಾಗೂ ತರಬೇತಿ ದೊರೆಯದ ಕಾರಣ ಎಫ್‌ಆರ್‌ಎಸ್‌ಗಾಗಿ ಅಂಗನವಾಡಿ ಕಾರ್ಯಕರ್ತರು ತಮ್ಮ ಸ್ವಂತ ಮೊಬೈಲ್ ಮತ್ತು ಡೇಟಾವನ್ನು ಬಳಸುವಂತಾಗಿದೆ. ತಾಂತ್ರಿಕ ದೋಷಗಳಿಂದ ಉಂಟಾಗುವ ಸಮಸ್ಯೆಗಳಿಗೆ ಕಾರ್ಯಕರ್ತರನ್ನೇ ಹೊಣೆಗಾರರನ್ನಾಗಿಸಿ ದಂಡ ವಿಧಿಸಲಾಗುತ್ತಿದೆ. ಜತೆಗೆ, ಯಾವುದೇ ಕಾನೂನು ಚೌಕಟ್ಟಿಲ್ಲದೆ ಮಹಿಳೆಯರು ಮತ್ತು ಮಕ್ಕಳ ಬಯೋಮೆಟ್ರಿಕ್ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಇದು ಕೆ.ಎಸ್. ಪುಟ್ಟಸ್ವಾಮಿ ಮತ್ತು ಇತರರು ಹಾಗೂ ಕೇಂದ್ರ ಸರ್ಕಾರ ಮತ್ತು ಇತರರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 2018ರಲ್ಲಿ ನೀಡಿರುವ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಎಫ್‌ಆರ್‌ಎಸ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ 2025ರ ಮೇ 3ರಂದು ಹೊರಡಿಸಿರುವ ಮಾರ್ಗಸೂಚಿ ರದ್ದುಪಡಿಸಬೇಕು ಹಾಗೂ ಪೌಷ್ಟಿಕ ಆಹಾರ ವಿತರಣೆಗೆ ಎಫ್‌ಆರ್‌ಎಸ್ ಬಳಕೆಯ ಷರತ್ತನ್ನು ತಕ್ಷಣವೇ ತಡೆ ಹಿಡಿಯುವಂತೆ ಹಾಗೂ ಬಯೋಮೆಟ್ರಿಕ್ ಅಲ್ಲದ ಪರ್ಯಾಯ ವಿಧಾನಗಳ ಮೂಲಕ ವಿತರಣೆಗೆ ಅನುಮತಿ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ವಾರ್ತಾ ಭಾರತಿ 24 Mar 2026 7:04 pm

ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗಾಗಿ ಉಡುಪಿ ಜಿಲ್ಲೆಯ ಶಾಸಕರುಗಳಿಗೆ ಮನವಿ

ಉಡುಪಿ, ಮಾ.24: ಗುತ್ತಿಗೆದಾರರ ಬಾಕಿ ಬಿಲ್ ಪಾವತಿಯನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಡುಪಿ ಜಿಲ್ಲೆಯ ಗುತ್ತಿಗೆದಾರರ ಸಂಘದ ನಿಯೋಗವು ಉಡುಪಿ ಜಿಲ್ಲೆಯ ಐವರು ಶಾಸಕರುಗಳನ್ನು ಮಂಗಳವಾರ ಬೆಂಗಳೂರು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು. ಕಾರ್ಕಳ ಶಾಸಕ ಸುನೀಲ್ ಕುಮಾರ್, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿದ ನಿಯೋಗವು, ಗುತ್ತಿಗೆದಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ನಡೆಯುತ್ತಿರುವ ಕಾಮಗಾರಿಗಳಿಗೆ ಉಂಟಾಗಿರುವ ಅಡಚಣೆಗಳು ಹಾಗೂ ಬಾಕಿ ಬಿಲ್‌ಗಳ ವಿಳಂಬದಿಂದ ನಿರ್ಮಾಣ ಕ್ಷೇತ್ರದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿದರು. ಮನವಿ ಪತ್ರವನ್ನು ಸ್ವೀಕರಿಸಿದ ಶಾಸಕರು ಗುತ್ತಿಗೆದಾರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ವಿಷಯವನ್ನು ಗಂಭೀರವಾಗಿ ಮುಂದಿಟ್ಟು ಬಾಕಿ ಬಿಲ್ ಬಿಡುಗಡೆಗೆ ತ್ವರಿತ ಕ್ರಮ ಕೈಗೊಳ್ಳಲು ಸದನದಲ್ಲಿಯೂ ಧ್ವನಿ ಎತ್ತಿ ಸಂಪೂರ್ಣವಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಗೋಕುಲ್ ಶೆಟ್ಟಿ, ಸಂಘದ ಉಪಾಧ್ಯಕ್ಷ ರಾದ ಎ.ಬಿ.ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ, ಸಲಹೆಗಾರರಾದ ಪವನ್ ಎಸ್.ಡಿ. ಹಾಗೂ ಹಿರಿಯ ಗುತ್ತಿಗೆದಾರರಾದ ಫಿಲಿಪ್ ಡಿ’ಕೋಸ್ಟಾ, ಗಣೇಶ್ ಪುತ್ರನ್, ಸುನಿಲ್ ಶೆಟ್ಟಿ ಹೇರಿಕುದ್ರು, ಗ್ರೇಸನ್ ಪಾಯಸ್, ಸುಮಿತ್ ಹೆಗ್ಡೆ, ಅಜಿತ್ ಶೆಟ್ಟಿ, ದೀಪಕ್ ಶೆಟ್ಟಿ ಹಾಲಾಡಿ, ಗಣೇಶ್ ಶೆಟ್ಟಿ ಬಿದ್ಕಲ್ಕಟ್ಟೆ, ಸಂತೋಷ್ ಶೆಟ್ಟಿ ಗೋಳಿಯಂಗಡಿ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 7:04 pm

‘ಬೇಸಿಗೆ’ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಿ : ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು : ಬೇಸಿಗೆಯಲ್ಲಿ ರಾಜ್ಯದ 207 ತಾಲೂಕುಗಳ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಆ ಪೈಕಿ 60 ತಾಲೂಕುಗಳು ಈಗಾಗಲೇ ನೀರಿನ ಕೊರತೆ ಎದುರಿಸುತ್ತಿವೆ. ಇಂತಹ ಪ್ರದೇಶಗಳಿಗೆ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕುಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ದೇಶನ ನೀಡಿದ ಅವರು, ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ರಾಜ್ಯದ ಜಲಾಶಯಗಳಲ್ಲಿನ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಆದ್ಯತೆಯ ಮೇರೆಗೆ ಕಾಯ್ದಿರಿಸಬೇಕು ಎಂದು ಸೂಚಿಸಿದರು. ಉದ್ಯೋಗ ಖಾತರಿ ಯೋಜನೆಯಡಿ ಜಲ ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಅಲ್ಲದೆ, ಜಾನುವಾರುಗಳಿಗೆ ಮೇವಿನ ಲಭ್ಯತೆ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಮೇವಿನ ಕೊರತೆ ಆಗದಂತೆ ಕ್ರಮ ವಹಿಸಬೇಕು. ಪೂರ್ವ ಮುಂಗಾರಿನಲ್ಲಿ 17 ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ, 5 ಜಿಲ್ಲೆಗಳಲ್ಲಿ ಅಧಿಕ ಮಳೆ, ಆರು ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ದರೆ, 3 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆ ಕೊರತೆಯಾಗಲಿದ್ದು, ಈ ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಾಗಲಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ತೀವ್ರತೆ ಇರಲಿದೆ. ಇತ್ತೀಚೆಗೆ ಬಿದ್ದ ಮಳೆ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಹಾನಿಯಾಗಿದೆ. ಈ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಅವರು ಸೂಚನೆ ನೀಡಿದರು.  

ವಾರ್ತಾ ಭಾರತಿ 24 Mar 2026 6:56 pm

RCB Yash Dayal: ಐಪಿಎಲ್ 2026ರ ಸೀಸನ್‌ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ

RCB Yash Dayal: ಕಳೆದ ಬಾರಿ 2025ರಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎಡಗೈ ವೇಗಿ ಯಶ್ ದಯಾಳ್, 19ನೇ ಸೀಸನ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಈ ಸುದ್ದಿಯನ್ನು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು ಸ್ಪಷ್ಟಪಡಿಸಿದ್ದಾರೆ. ಮಾರ್ಚ್ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಸ್‌ಆರ್‌ಎಚ್‌ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ

ಒನ್ ಇ೦ಡಿಯ 24 Mar 2026 6:55 pm

‘ಭಾಷಾ ಪ್ರಯೋಗಾಲಯ’ ಸ್ಥಾಪಿಸಲು ಚಿಂತಿಸಿ : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ಬೆಳೆಯುವ ಮಕ್ಕಳು ವಿವಿಧ ಭಾಷೆಗಳನ್ನು ಕಲಿಯಲು ನೆರವು ನೀಡುವ ದೃಷ್ಟಿಯಿಂದ ರಾಜ್ಯದಲ್ಲಿ ‘ಭಾಷಾ ಪ್ರಯೋಗಾಲಯ’ (ಲ್ಯಾಂಗ್ವೇಜ್ ಲ್ಯಾಬ್) ಸ್ಥಾಪಿಸಲು ಸರಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಶಾಸಕ ರಚನಾ ಕಲಾಪದಲ್ಲಿ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ ಪರ್ಯಾಲೋಚನೆ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿವರಣೆ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯ ತೆರೆಯಿರಿ. ಮಕ್ಕಳು ಕನ್ನಡ ಭಾಷೆಯ ಜೊತೆಗೆ ಆಂಗ್ಲ ಭಾಷೆಯೂ ಸೇರಿದಂತೆ ಎಲ್ಲ ಭಾಷೆಗಳನ್ನು ಕಲಿಯುವಂತಾಗಬೇಕು ಎಂದರು. ಮಕ್ಕಳು ಬೇರೆ ಬೇರೆ ಭಾಷೆಗಳನ್ನು ಕಲಿಯುವುದರಿಂದ ಭವಿಷ್ಯದಲ್ಲಿ ಅವರಿಗೆ ಅನುಕೂಲ ಆಗಲಿದೆ. ನಮ್ಮ ಮಕ್ಕಳು ಯಾವುದೇ ಒಂದು ಭಾಷೆಯನ್ನಷ್ಟೇ ಕಲಿಯುವುದಕ್ಕೆ ಸೀಮಿತ ಆಗಬಾರದು. ದೇಶದ ಎಲ್ಲ ಭಾಷೆಗಳನ್ನು ಮಕ್ಕಳು ಕಲಿಯುವುದರಿಂದ ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಖಾದರ್ ತಿಳಿಸಿದರು. ಬಳಿಕ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದಲ್ಲಿ ಭಾಷಾ ಪ್ರಯೋಗಾಲಯ ಸ್ಥಾಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ಜಟಾಪಟಿ: ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರಾದ ಶಿವಲಿಂಗೇಗೌಡ ಮತ್ತು ಬಸವರಾಜ ರಾಯರೆಡ್ಡಿ ಅವರು ಕಲಿಕೆಯ ಭಾಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಜಟಾಪಟಿ ನಡೆಸಿದ ಪ್ರಸಂಗವೂ ನಡೆಯಿತು. ‘ನಮ್ಮ ಮಕ್ಕಳು ಆಂಗ್ಲ ಭಾಷೆಯನ್ನು ಕಲಿತರೆ ಮಾತ್ರವೇ ಭವಿಷ್ಯ’ ಎಂದು ಶಿವಲಿಂಗೇಗೌಡ ಪ್ರತಿಪಾದಿಸಿದರೆ, ಇದಕ್ಕೇ ಆಕ್ಷೇಪಿಸಿದ ರಾಯರೆಡ್ಡಿ, ‘ನಾವು ಯಾವುದೇ ಕಾರಣಕ್ಕೂ ಆಂಗ್ಲಭಾಷೆ ಗುಲಾಮರು ಆಗುವ ಅವಶ್ಯಕತೆ ಇಲ್ಲ’ ಎಂದರು. ‘ನಮ್ಮ ಮಕ್ಕಳು ಇಂಗ್ಲಿಷ್‌ ಭಾಷೆಯನ್ನು ಕಲಿಯಬೇಕು. ಅವರು ಅಮೆರಿಕಾಗೆ ಹೋಗಬೇಕು. ನಮ್ಮ ಮಕ್ಕಳು ನಮ್ಮ ದೇಶದಲ್ಲೇ ಏಕೆ ಇರಬೇಕು?. ಅವರು ದೇಶ ಸುತ್ತಿ ಬರಲಿ. ಕನ್ನಡ ಮಾಧ್ಯಮ ಬೇಡ ಎಂದು ಹೇಳುವುದಿಲ್ಲ. ಆದರೆ, ಆಂಗ್ಲ ಮಾಧ್ಯಮ ಬೇಕು. ಹಳ್ಳಿ ಮಕ್ಕಳು, ಆರ್ಥಿಕ ಶಕ್ತಿ ಇಲ್ಲದ ಬಡ ಮಕ್ಕಳಿಗೆ ಇಂಗ್ಲಿಷ್‌ ಕಲಿಸಬೇಕು’ ಎಂದು ಶಿವಲಿಂಗೇಗೌಡ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಸವರಾಜ ರಾಯರೆಡ್ಡಿ, ನಮ್ಮ ಮಕ್ಕಳು ಕನ್ನಡದಲ್ಲಿಯೇ ಓದಲಿ. ಕನ್ನಡದಲ್ಲಿಯೂ ಅವಕಾಶಗಳಿವೆ. ಕನ್ನಡದ ಜೊತೆ ಇಂಗ್ಲಿಷ್‌  ಭಾಷೆಯನ್ನು ಕಲಿಯಲಿ. ಇದಕ್ಕೆ ಅಭ್ಯಂತರವೂ ಇಲ್ಲ. ನಾವು ಇಂಗ್ಲಿಷ್‌ ಗುಲಾಮರಾಗಬೇಕಿಲ್ಲ. ನಮ್ಮ ಮುಖ್ಯಮಂತ್ರಿ ಕನ್ನಡದಲ್ಲೇ ಓದಿದವರು ಎಂದು ನುಡಿದರು. ಈ ವೇಳೆ ರಾಯರೆಡ್ಡಿ ಮತ್ತು ಶಿವಲಿಂಗೇಗೌಡ ನಡುವೆ ವಾಗ್ವಾದ ನಡೆಯಿತು. ಇಂಗ್ಲಿಷ್ ಕಲಿತರೇ ಮಾತ್ರ ಮೇಧಾವಿಗಳಲ್ಲ. ನಾವೆಲ್ಲಾ ಪಿಯುಸಿ ವರೆಗೆ ಕನ್ನಡ ಓದಿದ್ದೇವೆ. ಬೇರೆ ಬೇರೆ ದೇಶಗಳಲ್ಲಿ ಸ್ಥಳೀಯ ಭಾಷೆಯನ್ನೇ ಕಲಿಯುತ್ತಾರೆ. ಆಂಗ್ಲ ಮಾಧ್ಯಮಕ್ಕೆ ಆದ್ಯತೆ ನೀಡುವುದಿಲ್ಲ ಎಂದದರು. ಈ ವೇಳೆ ಇಬ್ಬರು ಹಠಕ್ಕೆ ಬಿದ್ದವರಂತೆ ಒಬ್ಬರಿಗೊಬ್ಬರು ಪರಸ್ಪರ ಏರುಧ್ವನಿಯಲ್ಲೇ ವಾಗ್ವಾದ ನಡೆಸಿದರು. ಈ ವೇಳೆ ಎದ್ದುನಿಂತ ಬಿಜೆಪಿಯ ಸುನಿಲ್ ಕುಮಾರ್, ‘ನಮಗೆ ಶಿವಲಿಂಗೇಗೌಡರ ಆಂಗ್ಲಭಾಷೆಯೂ ಬೇಕು. ಅದೇ ರೀತಿ ರಾಯರೆಡ್ಡಿಯವರ ಕನ್ನಡವೂ ಇರಲಿ’ ಎಂದರು. ಆಡಳಿತದ ಪಕ್ಷದ ಸದಸ್ಯರಿಬ್ಬರೂ ವಿಧೇಯಕ ಪರ್ಯಾಲೋಚನೆ ಸಂದರ್ಭದಲ್ಲಿ ಭಾಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಜಟಾಪಟಿಗೆ ಇಳಿದ ಪ್ರಸಂಗವು ಪ್ರತಿಪಕ್ಷಗಳ ಸದಸ್ಯರ ಹಾಸ್ಯಕ್ಕೆ ಕಾರಣವಾಯಿತು.  

ವಾರ್ತಾ ಭಾರತಿ 24 Mar 2026 6:53 pm

ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಸ್ಥಳಾಂತರ ಇಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರವನ್ನು ಸ್ಥಳಾಂತರಿಸುವ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಬೆಂಗಳೂರಿನ ಸಮಸ್ಯೆಗಳು ಮತ್ತು ಅಭಿವೃದ್ಧಿಯ ಕುರಿತು ನಿಯಮ 69 ಆಡಿ ಸಾರ್ವಜನಿಕ ಮಹತ್ವದ ವಿಚಾರ ಕುರಿತ ಚರ್ಚೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಬಡವರ ಮಕ್ಕಳು ವೈಮಾನಿಕ ತರಬೇತಿ ಪಡೆಯಲಿಕ್ಕಾಗಿ ಹಿಂದೆ ಮೈಸೂರು ಮಹಾರಾಜರು 1940ರಲ್ಲಿ ಅರಣ್ಯ ಇಲಾಖೆಗೆ ಸೇರಿದ 377 ಎಕರೆ ಜಮೀನನ್ನು ಡಿ ನೋಟಿಸಿಕೇಶನ್ ಮಾಡಿ ವೈಮಾನಿಕ ತರಬೇತಿ ಕೇಂದ್ರಕ್ಕಾಗಿ ನೀಡಿದ್ದರು. ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ವೈಮಾನಿಕ ತರಬೇತಿ ಕೇಂದ್ರಕ್ಕೆ ಅಡಿಗಲ್ಲು ಹಾಕಿದರು. ಆದರೆ ಈಗ ಡಿ.ಕೆ.ಶಿವಕುಮಾರ್ ಅವರು ಆ ಕಲ್ಲನ್ನು ಕಿತ್ತು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಈ ಕೇಂದ್ರಕ್ಕೆ ಈಗ 217 ಎಕರೆ ಭೂಮಿ ಇದೆ. ಅದರ ಮೇಲೆ ಡಿ.ಕೆ.ಶಿವಕುಮಾರ್ ಅವರ ಕಣ್ಣು ಬಿದ್ದಿದೆ ಎಂದು ವರದಿಯಾಗಿದೆ. ಇದು ನಿಜವೇ ಎಂದು ಪ್ರಶ್ನಿಸಿದರು. ಇದೇ ವೇಳೆ ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ ಅವರು, ಡಿ.ಕೆ.ಶಿವಕುಮಾರ್ ಅವರು ಜಕ್ಕೂರಿನ ವೈಮಾನಿಕ ತರಬೇತಿ ಕೇಂದ್ರದ ಜಾಗದ ಮೇಲೆ ಕಣ್ಣು ಹಾಕಿಲ್ಲ. ಅದನ್ನು ಉಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ತಾವು ತರಬೇತಿ ಕೇಂದ್ರದ ಕ್ಲಬ್‍ಗೆ ಸಲಹಾ ಸಮಿತಿಯ ಸದಸ್ಯನಾಗಿದ್ದು ವಾಸ್ತವ ಅಂಶದ ಅರಿವಿದೆ. ಜಕ್ಕೂರು ಏರೋ ಡ್ರಮ್‍ನ ಸಮೀಪ ರಾಷ್ಟ್ರೀಯ ಹೆದ್ದಾರಿ ರಸ್ತೆ ಮತ್ತು ಮೆಟ್ರೋ ರೈಲು ಮಾರ್ಗದ ಮೇಲು ಸೇತುವೆಗಳು ಹಾದುಹೋಗಿವೆ. ಹೀಗಾಗಿ ಅಲ್ಲಿ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಅನುಮತಿ ನೀಡುತ್ತಿಲ್ಲ. ಈ  ಹಿನ್ನೆಲೆಯಲ್ಲಿ ವೈಮಾನಿಕ ತರಬೇತಿ ಕೇಂದ್ರವನ್ನು ಶಿವಮೊಗ್ಗ, ಹಾಸನ, ಮೈಸೂರು ಸೇರಿದಂತೆ ಬೇರೆ ಕಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ತಾವು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಸುರೇಶ್ ಕುಮಾರ್, ಕುಂಬಳಕಾಯಿ ಎಂದು ಮಾತ್ರವೇ ನಾವು ಹೇಳುತ್ತಿದ್ದೇವೆ. ಸಚಿವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಚರ್ಚೆ ಮುಂದುವರಿಸಿದ ಆರ್.ಅಶೋಕ್ ಸರಕಾರಕ್ಕೆ ತರಬೇತಿ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂಬ ಉದ್ದೇಶ ಇದ್ದರೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಮೈಸೂರಿಗೆ ಕೇಂದ್ರ ಸ್ಥಳಾಂತರಿಸುವ ಬಗ್ಗೆ ಸಭೆ ನಡೆಸಿದ್ದೇಕೆ ಎಂದು ಪ್ರಶ್ನಿಸಿದರು. ಕೇಂದ್ರದ ವಿಮಾನ ಹಾರಾಟದ ಪಥದಲ್ಲಿ ಒಂದು ಕಿಲೋಮೀಟರ್‍ಗಳಷ್ಟು ದೂರ ಅತಿ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ. ಅದನ್ನು ಹೊರತುಪಡಿಸಿದರೆ ಸುತ್ತಮುತ್ತ ಅತಿ ಎತ್ತರದ ನಿರ್ಮಾಣಗಳಿಗೆ ಯಾವುದೇ ಅಡಚಣೆ ಇಲ್ಲ. ಆದರೂ ರಿಯಲ್ ಎಸ್ಟೇಟ್ ಮಾಫಿಯಾ ಈ ಕೇಂದ್ರವನ್ನು ಸ್ಥಳಾಂತರ ಮಾಡಿಸುವ ಹುನ್ನಾರ ನಡೆಸಿದೆ ಎಂದು ಅಶೋಕ್ ಆರೋಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯ ಪ್ರವೇಶಿ, ಜಕ್ಕೂರು ವೈಮಾನಿಕ ತರಬೇತಿ ಕೇಂದ್ರವನ್ನು ಸ್ಥಳಾಂತರಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಪಿಪಿಪಿ ಮಾದರಿಯಲ್ಲಿ ಕೇಂದ್ರವನ್ನು ಮುಂದುವರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸ್ಥಳೀಯ ಶಾಸಕರು ಆಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಅಭಿಪ್ರಾಯಗಳಿಗೆ ತಮ್ಮ ಸಹಮತ ಇದೆ ಎಂದು ಹೇಳಿದರು.  

ವಾರ್ತಾ ಭಾರತಿ 24 Mar 2026 6:47 pm

Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್

Viral Video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ವೊಂದು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ದಂಪತಿಗಳು ತೆಂಗಿನ ಚಿಪ್ಪಿನ್ನು ಮಗುವಿಗಾಗಿ ಶೌಚಾಲಯವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಖುದ್ದು ದಂಪತಿಯೇ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಸಹ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನವನ್ನು ಸೃಷ್ಟಿ ಮಾಡಿದೆ. ದಂಪತಿಯ ಸಿವಿಕ್ ಸೆನ್ಸ್‌ನ ಬಗ್ಗೆ ವ್ಯಾಪಕ ಟೀಕೆ

ಒನ್ ಇ೦ಡಿಯ 24 Mar 2026 6:42 pm

ರಾಜ್ಯದಲ್ಲಿ ಎರಡುವರೆ ವರ್ಷಗಳಲ್ಲಿ 95 ಅಧಿಕಾರಿಗಳ ವಿದೇಶ ಪ್ರವಾಸ: ಕೋಟ್ಯಂತರ ರೂಪಾಯಿ ಖರ್ಚು ವೆಚ್ಚ

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಶ್ರೇಣಿಯ 95 ಸರ್ಕಾರಿ ಅಧಿಕಾರಿಗಳು ವಿದೇಶ ಪ್ರವಾಸ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ವೆಚ್ಚವಾಗಿದೆ. ಅಮೆರಿಕಾ, ಯುನೈಟೆಡ್ ಕಿಂಗ್ ಡಮ್, ದಾವೋಸ್, ಸಿಂಗಾಪೂರ್ ಸೇರಿದಂತೆ ಹಲವು ದೇಶಗಳಿಗೆ ಪ್ರವಾಸ ಹೋಗಿದ್ದಾರೆ. ಆದರೆ ಈ ಅಧ್ಯಯನ ಪ್ರವಾಸದ ಬಳಿಕ ಸಲ್ಲಿಸದೆ ಇರುವುದು ಕೂಡಾ ಕೆಲವು ಪ್ರಕರಣಗಳು ಕಂಡುಬಂದಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 24 Mar 2026 6:41 pm

ಇ-ಖಾತಾ ಆಂದೋಲನದಲ್ಲಿ ಲಂಚ ವಹಿವಾಟು ಆರೋಪ: ಸದನದಲ್ಲಿ ದಾಖಲೆ ಪ್ರದರ್ಶಿಸಿದ ವಿಪಕ್ಷ ನಾಯಕ ಆರ್.ಅಶೋಕ್

ಬೆಂಗಳೂರು  : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇ-ಖಾತಾ ಆಂದೋಲನದಲ್ಲಿ ಲಂಚದ ವಹಿವಾಟು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸದನದಲ್ಲಿ ದಾಖಲೆ ಪ್ರದರ್ಶನ ಮಾಡುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ. ಮಂಗಳವಾರ ಬೆಂಗಳೂರು ಅಭಿವೃದ್ಧಿ ಕುರಿತಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅವರು, ಇ-ಖಾತಾ ಆಂದೋಲನದಲ್ಲಿ ಯಾರಾದರೂ ಲಂಚ ಪಡೆದಿರುವುದನ್ನು ತೋರಿಸಿದರೆ. ತಕ್ಷಣವೇ ಅಮಾನತುಗೊಳಿಸುವುದಾಗಿ ಇದೇ ಅಧಿವೇಶನದಲ್ಲಿ ಡಿ.ಕೆ.ಶಿವಕುಮಾರ್ ಅವರು ನನಗೆ ಸವಾಲು ಹಾಕಿದ್ದರು. ನಾನು ಕೇವಲ ಬಾಯಿ ಮಾತಿನ ಆರೋಪ ಮಾಡುತ್ತಿಲ್ಲ. ದಾಖಲೆಗಳ ಸಹಿತ ಸಾಬೀತು ಮಾಡುತ್ತಿದ್ದೇನೆ. ಈಗ ಯಾವ ರೀತಿಯ ಕ್ರಮ ಕೈಗೊಳ್ಳುತ್ತೀರಿ ಎಂದು ಕೇಳಿದರು. ಹೆಚ್ ಬಿ ಆರ್ ಲೇಔಟ್ ಅನ್ನು ಬಿಡಿಎ ನಿರ್ಮಾಣ ಮಾಡಿದೆ. ಅಲ್ಲಿ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ನಿವೇಶನ ಖರೀದಿಸಿ ಎಲ್ಲ ರೀತಿಯ ಕಂದಾಯ ಪಾವತಿಸಿ ಕ್ರಮಬದ್ಧವಾದ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಖಾಲಿ ನಿವೇಶನ ಎಂದು ಹೇಳಿ ಬಿ-ಖಾತಾ ಪಟ್ಟಿಯಲ್ಲಿದ್ದು, ಇದನ್ನು ಇ-ಖಾತಾ ಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿ ಜಿಬಿಎ ಕಂದಾಯ ಅಧಿಕಾರಿ ರಮೇಶ್ ಬಾಬು ಎಂಬವರು 30 ಸಾವಿರ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ನಂತರ ಚರ್ಚೆ, ಒಪ್ಪಂದವಾದ ಮೇಲೆ ಆನ್‍ಲೈನ್ ಮೂಲಕ ಲಂಚ ಪಡೆಯಲಾಗಿದೆ. ಆದರೆ ಉಪ ಆಯುಕ್ತರು ಮೂರು ಬಾರಿ ಇ-ಖಾತಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಬಳಿಕ ನಿವೇಶನದ ಮಾಲಕರು ತಾವು ನೀಡಿದ ಲಂಚವನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದಾಗ 20 ಸಾವಿರಗಳನ್ನು ಮಾತ್ರ ವಾಪಸ್ ಕೊಟ್ಟು ಉಳಿದ 10 ಸಾವಿರ ರೂಪಾಯಿಗಳನ್ನು ಕೆಳಹಂತದ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಖರ್ಚು ಮಾಡಿರುವುದಾಗಿ ಉತ್ತರಿಸಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಅವರು ಏನು ಹೇಳುತ್ತಾರೆ. ಲಂಚ ಇರುವುದನ್ನು ನಾನು ದಾಖಲೆ ಸಮೇತ ತೋರಿಸುತ್ತೇನೆ ಎಂದು ಅಶೋಕ್ ಉಲ್ಲೇಖಿಸಿದರು. ಇದೇ ವೇಳೆ ಆಡಳಿತ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿ, ಖಾತೆ ಬದಲಾವಣೆಯ ವೇಳೆ ಲಂಚ ಪಡೆಯುವುದು ಹಳೆಯ ವಿಷಯ. ಹೊಸದೇನು ಇಲ್ಲ ಎಂದು ತಿರುಗೇಟು ನೀಡಿದರು. ಈ ರೀತಿ ಮಾತನಾಡಿದರೆ ನಾನು ಇನ್ನೇನೆಂದು ಹೇಳಲು ಸಾಧ್ಯ ಕುಳಿತುಕೊಂಡು ಬಿಡುತ್ತೇನೆ ಎಂದು ಅಶೋಕ್ ಅಸಹಾಯಕತೆ ವ್ಯಕ್ತಪಡಿಸಿದರು.  

ವಾರ್ತಾ ಭಾರತಿ 24 Mar 2026 6:32 pm

ಆಳಂದ | ಕನ್ನಡ ಶಿಲಾಶಾಸನಗಳ ಡಿಜಿಟಲ್ ಸಂರಕ್ಷಣೆಗೂ ಹೊಸ ದಾರಿ

ಸಿಯುಕೆ ವಿದ್ಯಾರ್ಥಿನಿ ಭಾಗ್ಯಶ್ರೀ ಸಂಶೋಧನೆಗೆ ಮೆಚ್ಚುಗೆ

ವಾರ್ತಾ ಭಾರತಿ 24 Mar 2026 6:31 pm

Kalaburagi | ಅಗ್ನಿಪಥ ನೇಮಕಾತಿ: ಆನ್‌ಲೈನ್ ನೋಂದಣಿ ಆರಂಭ

ಕಲಬುರಗಿ: ಆರ್ಮಿ ರಿಕ್ರೂಟಿಂಗ್ ಆಫೀಸ್ ಬೆಳಗಾವಿ ಹಾಗೂ ಬೆಂಗಳೂರು ಹೆಡ್‌ಕ್ವಾರ‍್ಸ್ ರಿಕ್ರೂಟಿಂಗ್ ಜೋನ್ ಬೆಂಗಳೂರು ಇವರ ಸಹಯೋಗದಲ್ಲಿ “ಅಗ್ನಿಪಥ” ನೇಮಕಾತಿಗಾಗಿ 2026ರ ಫೆಬ್ರವರಿ 13 ರಿಂದ ಏಪ್ರಿಲ್ 01 ರವರೆಗೆ ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿಯ ಡೈರೆಕ್ಟರ್ ರಿಕ್ರೂಟಿಂಗ್ ಕರ್ನಲ್ ಎ.ಕೆ. ಉಪಾಧ್ಯಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಪುರುಷ ಅಭ್ಯರ್ಥಿಗಳು ಭಾರತೀಯ ಸೇನೆಯ www.joinindianarmy.nic.in ವೆಬ್‌ಸೈಟ್‌ನಲ್ಲಿ 2026ರ ಏಪ್ರಿಲ್ 1 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಸೇನೆಯಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮೆನ್ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಅಗ್ನಿವೀರ್ ಟ್ರೇಡ್ಸ್ಮೆನ್ ಹುದ್ದೆಗೆ 8ನೇ ತರಗತಿ ಪಾಸ್ ಆಗಿರಬೇಕು. ಅಗ್ನಿವೀರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗಳ ವಿಭಾಗಗಳಿಗೆ ನೇಮಕಾತಿ ನಡೆಯಲಿದೆ. ವಯೋಮಿತಿ, ಶೈಕ್ಷಣಿಕ ಅರ್ಹತೆ ಮತ್ತು ಇತರ ಮಾನದಂಡಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ 2026ರ ಫೆಬ್ರವರಿ 13ರಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಆಫೀಸ್‌ದಿಂದ ಹೊರಡಿಸಿದ ಅಧಿಸೂಚನೆಯನ್ನು ವೀಕ್ಷಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 24 Mar 2026 6:22 pm

ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜತೆ ಒಪ್ಪಂದ; ಉಚಿತವಲ್ಲ - 4 ಕೋಟಿ ರೂ. ಕೊಟ್ಟಿರುವ ಕೆಎಂಎಫ್‌!

ಮುಂಬರುವ ಐಪಿಎಲ್ - 2026 ಕ್ರಿಕೆಟ್ ಹಬ್ಬದಲ್ಲಿ ಕರ್ನಾಟಕದ ಹೆಮ್ಮೆಯ ಎರಡು ಬ್ರ್ಯಾಂಡ್‌ಗಳು ಕೈಜೋಡಿಸಿವೆ. ರಾಜ್ಯದ ಮನೆಮಾತಾಗಿರುವ ‘ನಂದಿನಿ’ ಬ್ರ್ಯಾಂಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಈ ಸೀಸನ್‌ನ ‘ಅಧಿಕೃತ ಡೇರಿ ಪಾರ್ಟ್ನರ್’ ಆಗಿ ಅಧಿಕೃತವಾಗಿ ಘೋಷಣೆಯಾಗಿದೆ. ಇದಕ್ಕಾಗಿ ಕೆಎಂಎಫ್‌ 4 ಕೋಟಿ ರೂ. ವೆಚ್ಚ ಮಾಡುತ್ತಿದೆ.

ವಿಜಯ ಕರ್ನಾಟಕ 24 Mar 2026 6:21 pm

ʼತಪ್ಪಿದ ಫಿರಂಗಿ ದಾಳಿʼ| ತನ್ನದೇ ದೇಶದ ನಾಗರಿಕನನ್ನು ಹತ್ಯೆ ಮಾಡಿದ ಇಸ್ರೇಲ್ ಮಿಲಿಟರಿ; ವರದಿ

ಟೆಲ್ ಅವೀವ್: ಲೆಬನಾನ್ ಗಡಿಯ ಬಳಿ ಇಸ್ರೇಲ್ ನಡೆಸಿದ ಫಿರಂಗಿ ದಾಳಿಯಲ್ಲಿ ಇಸ್ರೇಲ್‌ನ ರೈತರೊಬ್ಬರು ಮೃತಪಟ್ಟಿದ್ದಾರೆ. ತಮ್ಮದೇ ತಪ್ಪಿನಿಂದ ಈ ಘಟನೆ ಸಂಭವಿಸಿದೆ ಎಂದು ಇಸ್ರೇಲ್ ಪಡೆಗಳು ಒಪ್ಪಿಕೊಂಡಿವೆ ಎಂದು independent.co.uk ವರದಿ ಮಾಡಿದೆ. ಮಿಸ್ಗಾವ್ ಆಮ್‌ನ ರೈತ ಓಫರ್ ಮೊಸ್ಕೊವಿಟ್ಝ್(60) ಲೆಬನಾನ್ ಗಡಿ ಸಂಘರ್ಷದಲ್ಲಿ ಮೃತ ಮೊದಲ ಇಸ್ರೇಲ್ ನಾಗರಿಕ. ಕಳೆದ ವಾರವಷ್ಟೇ ಸಂಘರ್ಷದ ಬಗ್ಗೆ ಮೊಸ್ಕೊವಿಟ್ಝ್ ಕಳವಳ ವ್ಯಕ್ತಪಡಿಸಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ. ಮಿಲಿಟರಿಯ ಉತ್ತರ ಕಮಾಂಡ್‌ನ ಮುಖ್ಯಸ್ಥರಾಗಿರುವ ಮೇಜರ್ ಜನರಲ್ ರಫಿ ಮಿಲೋ ಈ ಕುರಿತು ಪ್ರತಿಕ್ರಿಯಿಸಿ, ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಮೊಸ್ಕೊವಿಟ್ಝ್ ಅವರು ಫಿರಂಗಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 24 Mar 2026 6:20 pm

Kalaburagi | ಖಾಲಿ ಹುದ್ದೆಗಳ ಭರ್ತಿ ಆಗ್ರಹ: ಪ್ರತಿಭಟನೆಗೆ ಅನುಮತಿ ನಿರಾಕರಣೆ ವಿರುದ್ಧ ವಿದ್ಯಾರ್ಥಿ ಸಂಘಟನೆ ಆಕ್ರೋಶ

ಕಲಬುರಗಿ: ಸರಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕೆಂದು ಆಗ್ರಹಿಸಿ ನಡೆಸಲು ಉದ್ದೇಶಿಸಿದ್ದ ಶಾಂತಿಯುತ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿರುವುದನ್ನು ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕಾಂತಕುಮಾರ (ಶ್ರೀಕಾಂತ) ಅವರು, ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಲು ಮಾರ್ಚ್ 17ರಂದು ಅನುಮತಿ ಕೋರಿ ಮನವಿ ಸಲ್ಲಿಸಿದ್ದೇವೆ. ಮಾ.22ರವರೆಗೆ ಅನುಮತಿ ನೀಡುವುದಾಗಿ ತಿಳಿಸಿದ್ದ ಪೊಲೀಸರು ಏಕಾಏಕಿ ಅನುಮತಿ ನಿರಾಕರಿಸಿ, 10 ಲಕ್ಷ ರೂ. ಬಾಂಡ್ ನೀಡುವಂತೆ ಕೇಳಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಇಲಾಖೆಗಳಲ್ಲಿನ ಸುಮಾರು 2.84 ಲಕ್ಷ ಖಾಲಿ ಹುದ್ದೆಗಳು ಹಲವು ವರ್ಷಗಳಿಂದ ಭರ್ತಿಯಾಗದೆ ಉಳಿದಿದ್ದು, ಇದರ ಪರಿಣಾಮ ಯುವಕರು ನಿರುದ್ಯೋಗ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಸಮರ್ಪಕ ನೇಮಕಾತಿ ಪ್ರಕ್ರಿಯೆಗಳು ನಡೆಯದಿರುವುದು ಯುವಕರ ಭವಿಷ್ಯವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಆರೋಪಿಸಿದರು. ಇದೇ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಸರಕಾರ ಭರವಸೆ ನೀಡಿದ್ದರೂ, ಮತ್ತೆ ವಿಳಂಬ ಮಾಡುತ್ತಿರುವುದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನೀಡಿದ ಭರವಸೆಯಂತೆ 30 ದಿನಗಳೊಳಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಅವರು ಆಗ್ರಹಿಸಿದರು. ಪೊಲೀಸರ ನಡೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದ ಅವರು, 10 ಲಕ್ಷ ರೂ. ಬಾಂಡ್ ಬೇಡಿಕೆ ಅನ್ಯಾಯಕರವಾಗಿದೆ. “ಯುವಕರ ಬಳಿ ಅಷ್ಟು ಹಣ ಇದ್ದರೆ ಅವರು ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿರಲಿಲ್ಲ” ಎಂದು ವ್ಯಂಗ್ಯವಾಡಿದರು. ಮಾ.27ರಂದು ಪ್ರತಿಭಟನೆ ನಡೆಸಲು ನ್ಯಾಯಾಲಯದ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ ಅವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ ಎಂದರು. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಸಿಐಡಿ ತನಿಖೆ ನಡೆದರೆ ಅನೇಕ ಪ್ರಭಾವಿ ವ್ಯಕ್ತಿಗಳ ಹೆಸರು ಬಹಿರಂಗವಾಗುವ ಸಾಧ್ಯತೆ ಇರುವುದರಿಂದ ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಸರಕಾರವು ಒಂದು ವರ್ಷದೊಳಗೆ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದರೂ, ಕನಿಷ್ಠ 50 ಸಾವಿರ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ. ಯುವಕರಿಗೆ ನೀಡಿದ ಭರವಸೆಯನ್ನು ಸರಕಾರ ಮರೆತಿದೆ ಎಂದು ಅವರು ಟೀಕಿಸಿದರು. ಖಾಲಿ ಹುದ್ದೆಗಳ ಭರ್ತಿ ತಕ್ಷಣ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಯುವಕರು ಬೃಹತ್ ಹೋರಾಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಶಾಂತಪ್ಪ, ಚಂದ್ರಶೇಖರ, ಎಸ್.ಎಂ. ಸಂದೀಪ್, ಅರ್ಜುನ, ಈರಣ್ಣ, ಸಂತೋಷ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 6:20 pm