ಗಾಲ್ಗೋಟಿಯಾಸ್ ವಿವಿ ಭಾರತದ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಮಣ್ಣು ಪಾಲಾಗುವಂತೆ ಮಾಡಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇತ್ತೀಚೆಗೆ ನಡೆದ ಎಐ ಶೃಂಗಸಭೆಯಲ್ಲಿ ಚೀನಾ ತಯಾರಿಸಿದ ಎಐ ರೊಬೋಟ್ ನಾಯಿಯನ್ನು ತಾನೆ ಸಿದ್ಧಪಡಿಸಿದ್ದಾಗಿ ಹೇಳಿಕೊಂಡ ಉತ್ತರ ಪ್ರದೇಶದ ಗಾಲ್ಗೋಟಿಯಾಸ್ ವಿಶ್ವ ವಿದ್ಯಾನಿಲಯವು ಭಾರತದ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಮಣ್ಣು ಪಾಲಾಗುವಂತೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಶನಿವಾರ ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನಲ್ಲಿ ನಡೆದ ಕರ್ನಾಟಕ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಮ್ಮೇಳನ-2026ದಲ್ಲಿ ಅವರು ಮಾತನಾಡಿದ ಅವರು, ಶೃಂಗಸಭೆಯಲ್ಲಿ ಚೀನಾ ತಯಾರಿಸಿದ ಎಐ ರೊಬೋಟ್ ನಾಯಿಯ ಪ್ರದರ್ಶನದ ವಿವಾದವು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಘನತೆಯನ್ನು ಹಾಳುಗೆಡವಿದೆ ಎಂದರು. ಸಂವಿಧಾನದ 51ಎ ವಿಧಿಯಲ್ಲಿ ವೈಜ್ಞಾನಿಕ ಮನಸ್ಥಿತಿಯನ್ನು ಬೆಳೆಸಬೇಕೆಂದು ಹೇಳಲಾಗಿದೆ. ಅದಕ್ಕೆ ವಿರುದ್ಧವಾದುದನ್ನು ಕಲಿಸುವವರು ಸಂವಿಧಾನ ವಿರೋಧಿಗಳಾಗುತ್ತಾರೆ. ಸಂವಿಧಾನದ್ರೋಹವು ದೇಶದ್ರೋಹವೂ ಆಗುತ್ತದೆ. ವೈಯಕ್ತಿಕ ನಂಬಿಕೆಗಳು ಖಾಸಗಿಯಾಗಿರಬೇಕೇ ಹೊರತಾಗಿ, ಯಾವುದೋ ರಾಜಕೀಯ ಪಕ್ಷದ ಪ್ರಾಪಗಾಂಡಾಗಳಾಗಿ ಬಳಕೆಯಾಗಬಾರದು ಎಂದು ಅವರು ತಿಳಿಸಿದರು. ಜಗತ್ತಿನ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿವೆ. ಕೌಶಲ್ಯಯುತ ಶಿಕ್ಷಣ ಹಾಗೂ ಸಂಶೋಧನಾಧಾರಿತ ಶಿಕ್ಷಣಗಳು ಮಾತ್ರ ದೇಶವನ್ನು ಬೆಳವಣಿಗೆಯ ಹಾದಿಯ ಕಡೆಗೆ ಕೊಂಡೊಯ್ಯಲು ಸಾಧ್ಯ. ಚೀನಾ ಮತ್ತು ಭಾರತದ ನಡುವೆ 3:1ರಷ್ಟು ವ್ಯತ್ಯಾಸವಿದೆ. ಚೀನಾ 2.5 ಮಿಲಿಯನ್ ವಿಜ್ಞಾನದ ಲೇಖನಗಳನ್ನು ಹೊರ ತರುತ್ತಿದೆ. ಆದರೆ ಭಾರತದಲ್ಲಿ 3ನೇ 1 ಭಾಗದಷ್ಟು ಇಲ್ಲ, ಗುಣಮಟ್ಟವೂ ಬಹಳ ದುರ್ಬಲವಾಗಿದೆ. ಹೀಗಿದ್ದಾಗ ಹೇಗೆ ದೇಶವನ್ನು ಅಭಿವೃದ್ಧಿ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಇಂದು ಉನ್ನತ ಶಿಕ್ಷಣವು ತಾಂತ್ರಿಕ ಬದಲಾವಣೆ ಮತ್ತು ಜಾಗತಿಕ ಸ್ಪರ್ಧೆಯ ಮಟ್ಟದಲ್ಲಿದೆ. ಹೀಗಾಗಿ ನಮ್ಮ ಸಂಸ್ಥೆಗಳಿಗೆ ಕೇವಲ ಪದವಿ ನೀಡುವುದೇ ಗುರಿಯಾಗಬಾರದು. ಕಲಿಕೆಯಲ್ಲಿ ನಾವೀನ್ಯತೆ, ವಿಮರ್ಶಾತ್ಮಕ ಚಿಂತನೆ ಮತ್ತು ಉದ್ಯೋಗಾವಕಾಶವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ನಾವು, ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಬೆಂಬಲದೊಂದಿಗೆ 2,500 ಕೋಟಿ ರೂ. ವೆಚ್ಚದ ‘ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ’ಯನ್ನು ಜಾರಿಗೆ ತರುತ್ತಿದ್ದೇವೆ. ಇದು ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಸಂಶೋಧನೆಗೆ ಉತ್ತೇಜನ ನೀಡುತ್ತದೆ ಎಂದು ಅವರು ತಿಳಿಸಿದರು. ಸ್ಕೌಟ್ಸ್ ಕಾರ್ಯಕ್ರಮದಡಿ ಅಂತರರಾಷ್ಟ್ರೀಯ ಶೈಕ್ಷಣಿಕ ಮಾನ್ಯತೆ ಹಾಗೂ ಪರೀಕ್ಷಾ ಪ್ರಾಧಿಕಾರದಲ್ಲಿ ಎಐ-ಆಧಾರಿತ ತಂತ್ರಜ್ಞಾನಗಳ ಅಳವಡಿಕೆಯಿಂದ ಪಾರದರ್ಶಕತೆ ತರಲಾಗಿದೆ. ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯನ್ನು 14 ಕೋಟಿ ರೂ. ವೆಚ್ಚದಲ್ಲಿ ಮಾದರಿ ತರಬೇತಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು. ಉತ್ತಮ ವಿಶ್ವವಿದ್ಯಾಲಯಗಳು ಉತ್ತಮ ಶಿಕ್ಷಕರನ್ನು ಸೃಷ್ಟಿಸಲು ಸಾಧ್ಯ. ಹಿಂದೆ ಮೈಸೂರು, ಧಾರವಾಡ, ಬೆಂಗಳೂರು, ಗುಲ್ಬರ್ಗಾ ವಿಶ್ವವಿದ್ಯಾಲಯಗಳು ಅಸಂಖ್ಯಾತ ವಿದ್ವಾಂಸರನ್ನು ಸೃಷ್ಟಿಸಿದ್ದವು. ಅತ್ಯಂತ ಕಡಿಮೆ ಸಂಪನ್ಮೂಲಗಳನ್ನು ಹೊಂದಿದ್ದರೂ, ಈ ವಿಶ್ವವಿದ್ಯಾಲಯಗಳು ಹೆಸರಿಗೆ ತಕ್ಕ ಹಾಗೆ ಜಗತ್ತಿನ ನಕ್ಷೆಯಲ್ಲಿ ಹೆಸರಾಗಿದ್ದವು. ಆದರೆ ಈಗ ಏಕೆÉ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ಕಟ್ಟಲಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ವಿಶ್ವವಿದ್ಯಾಲಯಗಳನ್ನು ಸರಿಪಡಿಸಿ ಎಂದರೆ ಸಿಬ್ಬಂದಿಯಿಲ್ಲ ಎನ್ನುತ್ತೀರಿ. ನಿಮ್ಮ ಅತಿಥಿ ಅಧ್ಯಾಪಕರು ಸಿಬ್ಬಂದಿಯಲ್ಲವೇ? ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರ ಸಂಖ್ಯೆ ಎಷ್ಟು? ಅಲ್ಲಿನ ಸಂದರ್ಶಕ ಅಧ್ಯಾಪಕರು ಶೈಕ್ಷಣಿಕ ವಾತಾವರಣವನ್ನು ಉತ್ತಮಗೊಳಿಸುತ್ತಿದ್ದಾರೆ. ಅದು ಇಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಉಪಕುಲಪತಿಗಳಿಗೆ ತರಾಟೆಗೆ ತೆಗೆದುಕೊಂಡರು. ಸರಕಾರ ನೇಮಕಾತಿಗೆ ಅನುಮತಿ ಕೊಡುತ್ತಿಲ್ಲವೆಂದು ಅರ್ಥವಲ್ಲ. ಹಿಂದಿನ ವರ್ಷದ ಬಜೆಟ್ನಲ್ಲೂ 2 ಸಾವಿರ ಹುದ್ದೆಗಳನ್ನು ಪದವಿ ಮತ್ತು ತಾಂತ್ರಿಕ ಪದವಿ ಕಾಲೇಜುಗಳಲ್ಲಿ ಭರ್ತಿ ಮಾಡಲು ಅವಕಾಶ ನೀಡಿದ್ದೇವೆ. ಈ ವರ್ಷ ವಿಶ್ವವಿದ್ಯಾಲಯಗಳಲ್ಲಿ ಭರ್ತಿ ಮಾಡಲು ಅನುಮತಿ ನೀಡುತ್ತೇವೆ ಎಂದು ಅವರು ತಿಳಿಸಿದರು. ಆದರೆ ಈಗ ಜಗತ್ತಿನಾದ್ಯಂತ ಎಐ ಬರುತ್ತಿರುವುದರಿಂದ ಅಗತ್ಯ ಇರುವ ಕೋರ್ಸುಗಳಿಗೆ ಮಾತ್ರ ಭರ್ತಿ ಮಾಡಬೇಕಾದ ಅನಿವಾರ್ಯತೆಯಿದೆ. ಸಮಾಜಕ್ಕೆ ಅನಿವಾರ್ಯತೆಯಿಲ್ಲದ ಕೋರ್ಸುಗಳನ್ನು ನಡೆಸಿ ಅದಕ್ಕೆ ಅಧ್ಯಾಪಕರನ್ನು ಭರ್ತಿ ಮಾಡಿದರೆ ಅದರಿಂದ ಯಾರಿಗೆ ಅನುಕೂಲ ಎಂದು ಅವರು ಹೇಳಿದರು. ಸಮ್ಮೇಳನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ನಿರಂಜನ್, ವಿವಿಗಳ ಉಪಕುಲಪತಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ‘ಇತ್ತೀಚೆಗೆ ವಿಶ್ವ ವಿದ್ಯಾನಿಲಯಗಳಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವಗಳನ್ನು ಬೆಳೆಸುವುದರ ಬದಲು ಸೆಗಣಿ, ಗಂಜಲಗಳ ಹಾಗೂ ಭೂತಕಾಲದ ಊಹಾತ್ಮಕ ಸಂಗತಿಗಳ ಕುರಿತು ಸಂಶೋಧನೆ ಮಾಡುತ್ತೇವೆ ಎಂದು ಹೇಳಿ ಮಕ್ಕಳ ಮನಸ್ಸಿನಲ್ಲಿ ಅಂಧಕಾರ ಬೆಳೆಯುವಂತೆ ಮಾಡಲಾಗುತ್ತಿದೆ. ಇಂತಹ ಮನಸ್ಥಿತಿಯ ಮಕ್ಕಳು ನಿರುಪಯುಕ್ತ ಪದವೀಧರರಾಗುತ್ತಾರೆ. ಹೀಗಾಗಿ ವಿವಿಗಳು ಸಂವಿಧಾನದ ಆಶಯಗಳನ್ನು ಆಧರಿಸಿದ ವೈಜ್ಞಾನಿಕ ಶಿಕ್ಷಣವನ್ನು ಕಲಿಸಬೇಕು’ -ಸಿದ್ದರಾಮಯ್ಯ, ಮುಖ್ಯಮಂತ್ರಿ ವಿದ್ಯಾರ್ಥಿಗಳ ಚುನಾವಣೆಗೆ ಉಪಕುಲಪತಿಗಳ ವಿರೋಧ: ರಾಜ್ಯದ ವಿವಿಗಳಲ್ಲಿ ವಿದ್ಯಾರ್ಥಿಗಳ ಚುನಾವಣೆಗಳನ್ನು ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪ ಮಾಡುತ್ತಿದ್ದಂತೆ ಬಹುತೇಕ ವಿವಿಗಳ ಉಪಕುಲಪತಿಗಳು ‘ವಿದ್ಯಾರ್ಥಿ ಚುನಾವಣೆಗಳು ರಾಜಕೀಯ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ’ ಎಂದು ವಿದ್ಯಾರ್ಥಿಗಳ ಚುನಾವಣೆಗಳಿಗೆ ವಿರೋಧ ವ್ಯಕ್ತಪಡಿಸಿದರು.
ಇರಾನ್ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ಚರ್ಚೆ, ಅಮೆರಿಕ ಬಗ್ಗೆ ಇರಾನ್ ಹೇಳಿದ್ದು ಹೀಗೆ | Donald Trump
ಇರಾನ್ ತಲೆಬಾಗಿ ನಡೆಯಲು ಸಿದ್ಧವಾಗಿಲ್ಲ, ಅಮೆರಿಕ ಕೂಡ ಈ ವಿಚಾರದಲ್ಲಿ ಹಠ ಬಿಡುತ್ತಿಲ್ಲ. ಈ ನಡುವೆ ಅಮೆರಿಕ &ಇರಾನ್ ನಡುವೆ ಕೋಳಿ ಜಗಳ ನಡೆಯುತ್ತಿದೆ ಬಿಡು ಅಂತಾ ಇಷ್ಟುದಿನ ಇಡೀ ಜಗತ್ತು ಭಾವಿಸಿತ್ತು. ಆದರೆ ಅಮೆರಿಕ &ಇರಾನ್ ನಡುವೆ ನಡೆಯುತ್ತಿರುವುದು ಕೋಳಿ ಜಗಳ ಅಲ್ಲ, ಜಗತ್ತನ್ನೇ ವಿನಾಶ ಮಾಡಬಲ್ಲ ತಿಕ್ಕಾಟ ಅನ್ನೋದು ಈಗ ಮನವರಿಕೆ
ಪಾಕಿಸ್ತಾನ ನೆಲದಲ್ಲಿ ಉಗ್ರರ ಅಟ್ಟಹಾಸ, ತಾನು ಮಾಡಿದ್ದನ್ನ ತಾನೇ ಅನುಭವಿಸುತ್ತಿದೆ ಪಾಕ್ | Pakistan Military
ಪಾಕಿಸ್ತಾನ ಉಗ್ರರ ಪೋಷಕ ದೇಶವಾಗಿ ಮಾಡಬಾರದ್ದನ್ನೇಲ್ಲಾ ಮಾಡಿ, ತನ್ನ ಅಕ್ಕಪಕ್ಕದ ದೇಶಗಳಿಗೆ ನೆಮ್ಮದಿ ಕೊಡುತ್ತಿಲ್ಲ. ಅದರಲ್ಲೂ ಭಾರತದ ಕೈಯಲ್ಲಿ ಸರಿಯಾಗಿ ಪೆಟ್ಟು ತಿಂದರೂ ಪಾಕಿಸ್ತಾನ ತನ್ನ ಬುದ್ದಿ ಬದಲಾಯಿಸಿಕೊಂಡಿಲ್ಲ. ಇದರ ಪರಿಣಾಮ ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ಒಂದು ಯುದ್ಧವೇ ನಡೆದು ಹೋಗಿತ್ತು, ಈ ಘಟನೆ ಬಳಿಕ ಕೂಡ ಪಾಕಿಸ್ತಾನ ಬದಲಾಗದೆ ಉಗ್ರರನ್ನ ಬೆಳೆಸುತ್ತಿದೆ
ಬೆಂಗಳೂರು: ಜನಸಂದಣಿ ನಿಯಂತ್ರಣಕ್ಕೆ ಸಂಬಂಸಿದಂತೆ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದ (SOP) ಪ್ರಮುಖ ಅಂಶಗಳನ್ನು ಕರ್ನಾಟಕ ವಿಧೇಯಕದಲ್ಲಿ ಸೇರ್ಪಡೆ ಮಾಡುವ ಸಲಹೆ ಕುರಿತಂತೆ ನಿಮ್ಮ ನಿಲುವು ಏನು ಎಂಬುದನ್ನು ತಿಳಿಸುವಂತೆ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲೆ ಎಸ್.ಸುಶೀಲಾ, ''ಸರಕಾರ 2025ರ ಸೆಪ್ಟೆಂಬರ್ 1ರಂದು ಜನಸಂದಣಿ ನಿಯಂತ್ರಣ ಸಂಬಂಧ ಎಸ್ಒಪಿ ರೂಪಿಸಿದೆ. ಈ ನಿಟ್ಟಿನಲ್ಲಿ ಸಲಹೆ ನೀಡುವಂತೆ ನಮಗೆ ಕೋರಲಾಗಿತ್ತು. ನಾವು ನಮ್ಮ ಸಲಹೆಗಳನ್ನು ನೀಡಿದ್ದೇವೆ. ಅವುಗಳನ್ನು ಅಡಕಗೊಳಿಸಿ ಸರಕಾರ ಕಳೆದ ಜನವರಿ 13ರಂದು ಪರಿಷ್ಕೃತ ಎಸ್ಒಪಿ ರೂಪಿಸಿ ಅಧಿಸೂಚನೆ ಹೊರಡಿಸಿದೆ,'' ಎಂದರು.''ಈ ಮಧ್ಯೆ, 2025ರ ಆಗಸ್ಟ್ 20ರಂದು ಜನಸಂದಣಿ ನಿಯಂತ್ರಣಕ್ಕೆ ರಾಜ್ಯ ಸರಕಾರ ವಿಧೇಯಕವೊಂದನ್ನು ರೂಪಿಸಿದೆ. ಇದು ಸದನ ಸಮಿತಿಯ ಪರಿಗಣನೆಯಲ್ಲಿದೆ. ವಿಧೇಯಕಕ್ಕೆ ಹೋಲಿಕೆ ಮಾಡಿದರೆ ಎಸ್ಒಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಹಾಗಾಗಿ, ಇದರಲ್ಲಿನ ಅಂಶಗಳನ್ನು ಅಲ್ಲಿ ಅಡಕಗೊಳಿಸಿದರೆ ಒಳ್ಳೆಯದು. ಅಂತೆಯೇ, ಆರ್ಸಿಬಿ ತನ್ನ ಮುಂದಿನ ಐಪಿಎಲ್ ಟೂರ್ನಿ ಪಂದ್ಯಗಳನ್ನು ಇದೇ ಕ್ರೀಡಾಂಗಣದಲ್ಲಿ ನಡೆಸಲು ಬಯಸಿದೆ ಎನ್ನಲಾಗಿದೆ. ಅದಕ್ಕೂ ಮುನ್ನ ಎಸ್ಒಪಿ ಜಾರಿಗೊಳಿಸಲು ನಿರ್ದೇಶಿಸಬೇಕು,'' ಎಂದು ಕೋರಿದರು.ನ್ಯಾಯಾಲಯ ಎಸ್ಒಪಿ ಅಂಶಗಳನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡುವ ಕುರಿತು ಸರಕಾರಕ್ಕೆ ತನ್ನ ನಿಲುವು ತಿಳಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಫೆ. 23ಕ್ಕೆ ಮುಂದೂಡಲಾಗಿದೆ. ಇದೇ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ. ಅದನ್ನು ಸರಿಪಡಿಸುವಂತೆ ಕೋರಿ ವಕೀಲ ರಮೇಶ್ ನಾಯ್ಕ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಏನಿದು ಪ್ರಕರಣ? ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್ 3ರಂದು ನಡೆದ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಗಳಿಸುವ ಮೂಲಕ ಮೊದಲ ಬಾರಿಗೆ ಕಪ್ ಜಯಿಸಿತ್ತು. ಜೂನ್ 4ರಂದು ಇದರ ಸಂಭ್ರಮಾಚರಣೆಯನ್ನು ಆರ್ ಸಿಬಿಯ ತವರು ಮೈದಾನವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದು ಜನಸಂದಣಿಯಲ್ಲಿ ಉಂಟಾದ ಕಾಲ್ತುಳಿತಕ್ಕೆ 11 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ ವಿಚಾರಣೆ ನಡೆಸುತ್ತಿದೆ. ವಿಚಾರಣೆಯ ಭಾಗವಾಗಿ ಜನಸಂದಣಿ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದೆ.
Belagavi | ನ್ಯಾಯಾಲಯ ಆವರಣದಲ್ಲೇ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ: ಪತಿಗೆ 10 ವರ್ಷ ಜೈಲು ಶಿಕ್ಷೆ
ಬೆಳಗಾವಿ: ನ್ಯಾಯಾಲಯದ ಆವರಣದಲ್ಲಿಯೇ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪತಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಬೆಳಗಾವಿಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ. ಬೈಲಹೊಂಗಲ ತಾಲ್ಲೂಕಿನ ನನಗೊಂಡಿಕೊಪ್ಪ ಗ್ರಾಮದ ಶಿವಪ್ಪ ನಿಂಗಪ್ಪ ಅಡಕಿ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ. ಇವನು ತನ್ನ ಪತ್ನಿ ಜಯಮಾಲಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಆರೋಪಿ ಶಿವಪ್ಪ ಮತ್ತು ಅವನ ಪತ್ನಿ ಜಯಮಾಲಾ ಅವರ ನಡುವೆ ದಾಂಪತ್ಯ ಕಲಹ ನಡೆದಿತ್ತು. ಈ ಸಂಬಂಧ ಬೈಲಹೊಂಗಲ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣದ ವಿಚಾರಣೆಗಾಗಿ 2021ರ ಅಕ್ಟೋಬರ್ 29ರಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರ ಬರುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲಿಯೇ ಶಿವಪ್ಪ ತನ್ನ ಪತ್ನಿ ಜಯಮಾಲಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದನು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಭಾಷ ಸಂಕದ ಅವರು, ಭಾರತೀಯ ದಂಡ ಸಂಹಿತೆಯ ಕಲಂ 307 (ಕೊಲೆ ಯತ್ನ) ಅಡಿಯಲ್ಲಿ ಆರೋಪಿ ಶಿವಪ್ಪ ನಿಂಗಪ್ಪ ಅಡಕಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡವನ್ನು ಪಾವತಿಸದಿದ್ದಲ್ಲಿ ಆರೋಪಿ ಮತ್ತು ಮೂರು ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೃಷ್ಣಾ ನಾರಾಯಣ ಪಾಟೀಲ ಅವರು ವಾದ ಮಂಡಿಸಿದ್ದರು. ಸಂತ್ರಸ್ತೆ ಜಯಮಾಲಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
ʼವಂದೇ ಮಾತರಂʼ ಗೀತೆಯ ಎಲ್ಲ ಚರಣಗಳ ಗಾಯನ ಕಡ್ಡಾಯ: ಕೇಂದ್ರದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ
ಬೆಂಗಳೂರು: ಶಾಲೆಗಳಲ್ಲಿ ಪ್ರತಿದಿನ 'ವಂದೇ ಮಾತರಂ' ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಬೆಂಗಳೂರಿನ ವಕೀಲ ಸೋಮಶೇಖರ್ ರಾಜವಂಶಿ ಎಂಬುವರು ಈ ಪಿಐಎಲ್ ಸಲ್ಲಿಸಿದ್ದು, ಅರ್ಜಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ರಾಜ್ಯ ಶಿಕ್ಷಣ ಇಲಾಖೆ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮತ್ತಿತರರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿಯು ಇನ್ನಷ್ಟೇ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲೇನಿದೆ? ವಂದೇ ಮಾತರಂ ಗೀತೆಯನ್ನು ಶಾಲೆಗಳ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಹಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಜಾಲಾತಾಣದಲ್ಲಿ ಭಾರತದ ರಾಷ್ಟ್ರ ಗೀತೆಗೆ ಸಂಬಂಧಿಸಿದ ಆದೇಶಗಳು ಎಂಬ ಆದೇಶ ಪ್ರಕಟಿಸಲಾಗಿದೆ. ಈ ಆದೇಶದಂತೆ ವಂದೇ ಮಾತರಂ ಗೀತೆಯಲ್ಲಿರುವ ಆರು ಚರಣಗಳುಳ್ಳ ಅಧಿಕೃತ ಆವೃತ್ತಿಯನ್ನು ಎಲ್ಲ ಶಾಲೆಗಳು ಪ್ರಾರಂಭಕ್ಕೂ ಮುನ್ನ ಪ್ರತಿ ದಿನ ಸಾಮೂಹಿಕವಾಗಿ ಹಾಡಬೇಕು ಎಂದು ಸೂಚಿಸಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಸಂವಿಧಾನದ ರಚನಾ ಸಭೆಯಲ್ಲಿ ವಂದೇ ಮಾತರಂ ಗೀತೆಯಲ್ಲಿನ ಒಟ್ಟು ಆರು ಚರಣಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಎಲ್ಲ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ತಿಳಿಸಲಾಗಿದೆ. ಆದರೆ, ವಂದೇ ಮಾತರಂ ಗೀತೆಯ 3 ರಿಂದ 6ರ ವರೆಗಿನ ಚರಣಗಳಲ್ಲಿ ಹಿಂದು ದೇವತೆಗಳಾದ ದುರ್ಗಾ, ಕಮಲಾ (ಲಕ್ಷ್ಮೀ) ಮತ್ತು ವಾಣಿ (ಸರಸ್ವತಿ)ಯನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ಈ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಗೀತೆಯ ಶ್ಲೋಕಗಳನ್ನು ಪ್ರತಿದಿನ ಹಾಡುವುದಕ್ಕೆ ನಿರ್ದೇಶನ ನೀಡಲಾಗಿದೆ. ಈ ಅಂಶವು ಸಂವಿಧಾನದ ಪರಿಚ್ಚೇದ 25 (ಆತ್ಮಸಾಕ್ಷಿಯ ಹಕ್ಕು), 28 (ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ನಿಷೇಧ) ಮತ್ತು 14ಕ್ಕೆ (ಸಮಾನತೆ) ತದ್ವಿರುದ್ಧವಾಗಿದೆ ಎಂದು ಹೇಳಲಾಗಿದೆ. ಪ್ರಮುಖ ಮನವಿಗಳೇನು? ► ವಂದೇ ಮಾತರಂ ಗೀತೆಯ 3ರಿಂದ 6ನೇ ಚರಣಗಳನ್ನು ಅಧಿಕೃತ ಆವೃತ್ತಿಯ ಭಾಗವನ್ನಾಗಿ ಸೂಚಿಸಿ, ಕಡ್ಡಾಯವಾಗಿ ಹಾಡುವುದಕ್ಕೆ ಸಂಬಂಧಿಸಿದ ಶಿಷ್ಟಾಚಾರ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಶಾಲೆಗಳಲ್ಲಿ ದಿನ ನಿತ್ಯ ವಂದೇ ಮಾತರಂ ಹಾಡುವುದನ್ನು ಕಡ್ಡಾಗೊಳಿಸಿ ಹೊರಡಿಸಲಾಗಿರುವ ಶಿಷ್ಟಾಚಾರ ಮಾರ್ಗಸೂಚಿಗಳ ಆದೇಶವನ್ನು ಪರಿಷ್ಕರಣೆ ಮಾಡುವಂತೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶಿಸಬೇಕು. ► ವಂದೇ ಮಾತರಂ ಗೀತೆಯಲ್ಲಿ ಯಾವುದೇ ಧಾರ್ಮಿಕ ಅಂಶಗಳನ್ನು ಒಳಗೊಳ್ಳದ ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸಲು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೇಂದ್ರೀಯ ವಿದ್ಯಾಲಯಗಳ ಸಂಘಟನೆ ಶಾಲೆಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಬೆಕು. ► ಗೃಹ ಸಚಿವಾಲಯದ ಆದೇಶ ಅಲ್ಪ ಸಂಖ್ಯಾತರ ನಂಬಿಕೆ ಮತ್ತು ದೇವರ ಬಗ್ಗೆ ನಂಬಿಕೆಯಿಲ್ಲದ ಕುಟುಂಬಗಳ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶಿಸಬೇಕು.
ವಿಜಯನಗರ | ಇಂಡಸ್ಟ್ರಿಯಲ್ ಕಾರಿಡಾರ್ಗೆ 1,000 ಎಕರೆ ಗುರುತು: ಶಾಸಕ ಗವಿಯಪ್ಪ
ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ ಈಗಾಗಲೇ 1,000 ಎಕರೆ ಭೂಮಿ ಗುರುತಿಸಲಾಗಿದೆ ಎಂದು ಶಾಸಕ ಹೆಚ್.ಆರ್. ಗವಿಯಪ್ಪ ತಿಳಿಸಿದ್ದಾರೆ. ಇದರಿಂದ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ನಿರುದ್ಯೋಗಿ ಯುವಕ-ಯುವತಿಯರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಶನಿವಾರ ನಗರದ ವಿಜಯನಗರ ಕಾಲೇಜು ಆವರಣದಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮೆಗಾ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರಿಡಾರ್ ಯೋಜನೆಗೆ ಸಮಯ ಬೇಕಾದರೂ, ದೂರದೃಷ್ಟಿಯಿಂದ ಇದು ಬಹುಮುಖ್ಯವಾಗಿದೆ. ಪ್ರತಿಷ್ಠಿತ ಕಂಪನಿಯೊಂದು ಜಿಲ್ಲೆಯಲ್ಲಿ ಉದ್ಯಮ ಸ್ಥಾಪಿಸಲು ಆಸಕ್ತಿ ತೋರಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಕಳೆದ ಉದ್ಯೋಗ ಮೇಳದಲ್ಲಿ 3,000 ಅಭ್ಯರ್ಥಿಗಳು ನೋಂದಾಯಿಸಿಕೊಂಡು, 700 ಮಂದಿಗೆ ಉದ್ಯೋಗ ದೊರಕಿತ್ತು. ಈ ಬಾರಿ 7,500 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಕನಿಷ್ಠ 2,000 ಮಂದಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಸಣ್ಣ, ಮಧ್ಯಮ ಮತ್ತು ಬೃಹತ್ ಸೇರಿ 64 ಸ್ಟೀಲ್ ಕೈಗಾರಿಕೆಗಳಿದ್ದು, ಸ್ಥಳೀಯವಾಗಿ ಸುಮಾರು 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಜಿಂದಾಲ್ ಸ್ಟೀಲ್ ಕೈಗಾರಿಕಾ ಪ್ರದೇಶದಲ್ಲಿ 35–40 ಸಾವಿರ ಉದ್ಯೋಗಗಳು ಲಭ್ಯವಾಗಿದ್ದು, ಕಿರ್ಲೋಸ್ಕರ್ ಗ್ರೂಪ್ ಹಾಗೂ ಕಲ್ಯಾಣಿ ಗ್ರೂಪ್ ಸೇರಿ ಸುಮಾರು 50 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ತಿಳಿಸಿದರು. ಪ್ರವಾಸೋದ್ಯಮ ವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು 150–200 ಎಕರೆ ಸರ್ಕಾರಿ ಜಾಗ ಗುರುತಿಸಿ ಸುಸಜ್ಜಿತ ಗೆಸ್ಟ್ಹೌಸ್ ನಿರ್ಮಿಸಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಯೋಜನೆ ರೂಪಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, 75ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, ಅಭ್ಯರ್ಥಿಗಳು ಶ್ರದ್ಧೆ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಯಶಸ್ಸು ಖಚಿತ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ವಿಜಯನಗರ ಕಾಲೇಜು ಪ್ರಾಂಶುಪಾಲ ಮಹಾಂತೇಶ್ ಆರಾಧ್ಯಮಠ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಿಜೆಪಿಯವರು ಬಹಳ ಪ್ರಾಮಾಣಿಕರಲ್ಲವೇ: ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯ
ಬೆಂಗಳೂರು: “ಬಿಜೆಪಿಯವರು ಈ ದೇಶದಲ್ಲೇ ಅತ್ಯಂತ ಪ್ರಾಮಾಣಿಕರಲ್ಲವೇ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲೇವಡಿ ಮಾಡಿದ್ದಾರೆ. ಜಿಬಿಎ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಬಿಜೆಪಿ ಶಾಸಕ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, “ಬಿಜೆಪಿಯವರು ಭ್ರಷ್ಟಾಚಾರಿಗಳಾಗಿರುವುದಿಲ್ಲವಲ್ಲವೇ. ನಿಮಗೆ ಯಾರೋ ತಪ್ಪು ಮಾಹಿತಿ ನೀಡಿರಬೇಕು. ಲೋಕಾಯುಕ್ತದವರು ಏನು ಹೇಳುತ್ತಾರೆ ಕಾದು ನೋಡೋಣ. ಆನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ” ಎಂದು ಹೇಳಿದರು. ಎಐ ಸಮ್ಮೇಳನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನು ದೇಶ ವಿರೋಧಿ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವು ಏನೆಂದು ತಿಳಿದು, ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.
ನಾಯಿಗೆ ಹೊಡೆದ ವ್ಯಾಜ್ಯ: ಮಾಲೀಕರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ದ್ವಿಚಕ್ರ ವಾಹನದಲ್ಲಿ ಹೋಗುವಾಗ ನಾಯಿ ಅಟ್ಟಿಸಿಕೊಂಡು ಬಂದು ಕಚ್ಚಲು ಯತ್ನಿಸಿತ್ತು. ಅದರಿಂದ ತಪ್ಪಿಸಿಕೊಳ್ಳಲು ಕಲ್ಲಿನಿಂದ ಹೊಡೆದಿದ್ದಕ್ಕಾಗಿ ನಾಯಿಯ ಮಾಲೀಕ ನೆರೆಮನೆಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಹೊಸಪೇಟೆ | ಅನಧಿಕೃತ ಪಡಿತರ ಅಕ್ಕಿ ಸಾಗಣೆ : ವಾಹನ ವಶ, ಪ್ರಕರಣ ದಾಖಲು
ಹೊಸಪೇಟೆ : ಕಮಲಾಪುರ ಸರ್ಕಾರಿ ಆಸ್ಪತ್ರೆ ಸಮೀಪದ ಹಳ್ಳಿ ಕೆರೆ ಹತ್ತಿರ ಫೆ.20ರಂದು ಅನಧಿಕೃತವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕೆಎ–35–ಸಿ–0062 ಸಂಖ್ಯೆಯ ಮಹಿಂದ್ರ ಬೊಲೇರೋ ವಾಹನದಲ್ಲಿ 68.51 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಲೋಡ್ ಮಾಡಿಕೊಂಡು ಸಾಗಣೆ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಅಕ್ಕಿ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ರಿಯಾಜ್ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
Kalaburagi | ಬದುಕು ಬದಲಾಯಿಸುವ ನಾಟಕ: ಅರುಂಧತಿ ನಾಗ್
ಕಲಬುರಗಿ ನಾಟಕೋತ್ಸವಕ್ಕೆ ಚಾಲನೆ
Maharashtra | ಮರ ಕಡಿಯುವುದನ್ನು ಸೈನಿಕರ ತ್ಯಾಗಕ್ಕೆ ಹೋಲಿಸಿದ ಸಚಿವೆ ಪಂಕಜಾ ಮುಂಡೆ!
ವಿವಾದಕ್ಕೆ ಕಾರಣವಾದ ಬಿಜೆಪಿ ಸಚಿವೆಯ ಹೇಳಿಕೆ
ಬೀದರ್ : ಯುವಕನೊಬ್ಬ ಕಾಣೆಯಾಗಿದ್ದು, ಪತ್ತೆಗೆ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೋರಿದ್ದಾರೆ. ಬಕಚೌಡಿ ಗ್ರಾಮದ ನಿವಾಸಿ ಅಭಿಷೇಕ್ ಮೇತ್ರೆ (20) ಕಾಣೆಯಾದ ಯುವಕ. ಈತ ನಗರದ ಗುರುದ್ವಾರದಲ್ಲಿರುವ ಪೂಜಾ ಪಂಜಾಬಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದು, ಫೆ.2ರಂದು ಕಾಣೆಯಾಗಿದ್ದ. ಯುವಕ 4 ಅಡಿ 9 ಇಂಚು ಎತ್ತರ, ಸಾಧಾರಣ ಮೈಕಟ್ಟು, ನೇರವಾದ ಮೂಗು, ಗೋಧಿ ಮೈಬಣ್ಣ ಹೊಂದಿದ್ದು, ಎಡಗೈ ಮುಂಗೈ ಮೇಲೆ ಇಂಗ್ಲೀಷ್ನಲ್ಲಿ ಎಎಸ್ ಎಂಬ ಹಚ್ಚೆ ಹೊಡೆದಿದ್ದಾನೆ. ಕಾಣೆಯಾದ ವೇಳೆ ಕಪ್ಪು ಬಿಳಿ ಗೆರೆಯುಳ್ಳ ಉದ್ದ ತೋಳಿನ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ. ಈತ ಮೂಗನಾಗಿದ್ದಾನೆ ಎಂದು ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಈ ಯುವಕನ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೊಬೈಲ್ ಸಂಖ್ಯೆ: 94808 03446, ಬೀದರ್ ಕಂಟ್ರೋಲ್ ರೂಮ್ ನಂ: 08482-226704, ನೂತನ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08482-228256ಗೆ ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.
ಯಾದಗಿರಿ | ಇನ್ಸ್ಟಗ್ರಾಮ್ನಲ್ಲಿ ಪ್ರಚೋದನಕಾರಿ ಹೇಳಿಕೆ ಆರೋಪ : ಸ್ವಯಂಪ್ರೇರಿತ ಪ್ರಕರಣ ದಾಖಲು
ಯಾದಗಿರಿ : ಸಾಮಾಜಿಕ ಜಾಲತಾಣದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷಕ್ಕೆ ಪ್ರಚೋದಿಸುವ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಯಾದಗಿರಿ ಜಿಲ್ಲೆಯ ಹುಣಸಗಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಶಿವಾಜಿಯ ಹೆಸರನ್ನು ಬಳಸಿ ಪ್ರಚೋದನಕಾರಿ ಬರಹವನ್ನು ಪೋಸ್ಟ್ ಮಾಡಲಾಗಿದೆ. ಇದನ್ನು ಹುಣಸಗಿ ಭಜರಂಗದಳ ಎಂಬ ನಕಲಿ ಇನ್ಸ್ಟಾಗ್ರಾಮ್ ಐಡಿ ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಜರಂಗದಳದ ಮುಖಂಡರು, ಈ ಪೋಸ್ಟ್ ಮತ್ತು ಸಂಘಟನೆಗೆ ಯಾವುದೇ ರೀತಿಯ ಸಂಬಂಧ ಇಲ್ಲವೆಂದು ಸ್ಪಷ್ಟಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಗೊಂದಲ ಸೃಷ್ಟಿಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹುಣಸಗಿ ಪೊಲೀಸರು, ಯಾವುದೇ ಅಧಿಕೃತ ದೂರು ಇಲ್ಲದಿದ್ದರೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ತನಿಖೆಯನ್ನು ಭಾಗಣ್ಣ ಪಿಎಸ್ಸೈ ಅವರಿಗೆ ವಹಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ಮೂಲಕ ಶಾಂತಿ ಭಂಗಗೊಳಿಸುವ ಯತ್ನಗಳನ್ನು ಸಹಿಸಲಾಗುವುದಿಲ್ಲ. ಇಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿದ್ದಾರೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿಯವರು ಲಂಚದ ಆರೋಪದ ಮೇಲೆ ಲೋಕಾಯುಕ್ತರ ಬಲೆಗೆ ಬಿದ್ದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿಯವರು ಬೇರೆ ಪಕ್ಷದವರ ಮೇಲೆ ಲಂಚದ ಆರೋಪವನ್ನು ಸುಲಭವಾಗಿ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ಶಾಸಕರೇ ಲಂಚದ ಆರೋಪದಲ್ಲಿ ಸಿಲುಕಿದ್ದಾರೆ ಎಂದರು. ಲೋಕಾಯುಕ್ತ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯ ಹೇಳಿದ್ದರು.
Kalaburagi | ಕಮ್ಯುನಿಸ್ಟ್ ತತ್ವದಿಂದ ಶೋಷಣೆ ರಹಿತ ಸಮಾಜ ನಿರ್ಮಾಣ: ಕೆ.ನೀಲಾ
ಕೆಂಪು ಪುಸ್ತಕ ದಿನಾಚರಣೆ
ಕೆಂಪುಕೋಟೆ, ಚಾಂದಿನಿ ಚೌಕ್ನಲ್ಲಿ ಐಇಡಿ ದಾಳಿಗೆ ಲಷ್ಕರ್ ಸಂಚು?; ದಿಲ್ಲಿಯಲ್ಲಿ ಕಟ್ಟೆಚ್ಚರ
ಹೊಸದಿಲ್ಲಿ, ಫೆ.21: ದಿಲ್ಲಿಯ ಕೆಂಪುಕೋಟೆ, ಚಾಂದಿನಿ ಚೌಕ್ ಸಮೀಪ ಸಂಭವನೀಯ ಭಯೋತ್ಪಾದಕ ದಾಳಿಯ ಬೆದರಿಕೆ ಇರುವ ಬಗ್ಗೆ ಬೇಹುಗಾರಿಕಾ ಮೂಲಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ವಿವಿಧೆಡೆ ಕಟ್ಟೆಚ್ಚರ ಘೋಷಿಸಲಾಗಿದೆ. ಕೆಂಪುಕೋಟೆ ಹಾಗೂ ಚಾಂದಿನಿ ಚೌಕ್ನ ಕೆಲವು ಭಾಗಗಳು ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳ ಮೇಲೆ ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳಿಂದ ದಾಳಿ ನಡೆಸಲು ಪಾಕ್ ಮೂಲದ ಭಯೋತ್ಪಾದಕ ಗುಂಪು ಲಷ್ಕರೆ ತಯ್ಯಬಾ (ಎಲ್ಇಟಿ) ಸಂಚು ಹೂಡಿದೆ ಎಂದು ಬೇಹುಗಾರಿಕಾ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಫೆಬ್ರವರಿಯಲ್ಲಿ ಮಸೀದಿಯೊಂದರಲ್ಲಿ ಸಂಭವಿಸಿದ ಸ್ಫೋಟದ ಸೇಡನ್ನು ತೀರಿಸಲು ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂದು ಬೇಹುಗಾರಿಕಾ ಮೂಲಗಳು ತಿಳಿಸಿವೆ. ಸಂಚಿಗೆ ಸಂಬಂಧಿಸಿದ ನಿರ್ದಿಷ್ಟ ವಿವರಗಳನ್ನು ಅಧಿಕಾರಿಗಳು ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಘಟನೆಗೆ ಸಂಬಂಧಿಸಿ ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಸಂವೇದನಾಶೀಲ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ : ಫೆ. 23 ರ ಹಿಂದೂ ಸಮಾವೇಶಕ್ಕೆ ಪ್ರಮೋದ್ ಮುತಾಲಿಕ್, ಪುನೀತ್ ಕೆರೆಹಳ್ಳಿಗೆ ನಿರ್ಬಂಧ
ಬಾಗಲಕೋಟೆ ನಗರದಲ್ಲಿ ಫೆ.23 ರಂದು ಹಿಂದೂ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಸಮಾವೇಶಕ್ಕೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದು ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಂಗಪ್ಪ ಎಂ ಆದೇಶ ಹೊರಡಿಸಿದ್ದಾರೆ.
AI ‘ಇಂಪ್ಯಾಕ್ಟ್’: 1 ಸಾವಿರ ಉದ್ಯೋಗಿಗಳನ್ನು ಕೈಬಿಟ್ಟ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪೆನಿ
ಹೊಸದಿಲ್ಲಿ, ಫೆ.21: ರಾಷ್ಟ್ರರಾಜಧಾನಿ ಹೊಸದಿಲ್ಲಿಯಲ್ಲಿ ‘AI ಇಂಡಿಯಾ ಇಂಪ್ಯಾಕ್ಟ್’ ಶೃಂಗಸಭೆಯ ಸಡಗರದ ನಡುವೆಯೇ ದೇಶದ ಉದ್ಯೋಗ ವಲಯದಲ್ಲಿ ಕೃತಕ ಬುದ್ಧಿಮತ್ತೆ ತಲ್ಲಣವನ್ನು ಸೃಷ್ಟಿಸತೊಡಗಿದೆ. ಬೆಂಗಳೂರು ಮೂಲದ ಗೃಹಾಲಂಕಾರ (ಹೋಮ್ ಡೆಕೋರ್) ಸ್ಟಾರ್ಟ್ಅಪ್ ಸಂಸ್ಥೆಯೊಂದು AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ 1 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಜಾಗತಿಕ ಹೂಡಿಕೆ ಸಂಸ್ಥೆಯಾದ ಕೆಕೆಆರ್ ಪ್ರಾಯೋಜಿತ ಸಂಸ್ಥೆಯಾದ ಲಿವ್ಸ್ಪೇಸ್ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಶೇ.12ಕ್ಕಿಂತಲೂ ಅಧಿಕ ಮಂದಿಯನ್ನು ತೆಗೆದುಹಾಕಿದೆಯೆಂದು ‘ಮನಿಕಂಟ್ರೋಲ್’ ಸುದ್ದಿಸಂಸ್ಥೆ ವರದಿ ಮಾಡಿದೆ. ನಿರ್ವಹಣಾ ವೆಚ್ಚ ಕಡಿಮೆಗೊಳಿಸಲು ಹಾಗೂ AI ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಗಮನ ಕೇಂದ್ರೀಕರಿಸುವ ಪ್ರಯತ್ನವಾಗಿ ಲಿವ್ಸ್ಪೇಸ್ ಸಂಸ್ಥೆಯನ್ನು ಪುನರ್ರಚಿಸುತ್ತಿದೆ ಎಂದು ವರದಿ ತಿಳಿಸಿದೆ. ►ಸಹಸಂಸ್ಥಾಪಕನೂ ಔಟ್? AI ಅಳವಡಿಕೆಯೊಂದಿಗೆ ಕಂಪೆನಿಯ ಪುನರ್ರಚನೆಯ ನಡುವೆ ಲಿವ್ಸ್ಪೇಸ್ನ ಸಹಸಂಸ್ಥಾಪಕರಾದ ಸೌರಬ್ ಜೈನ್ 11 ವರ್ಷಗಳ ಕಾರ್ಯನಿರ್ವಹಣೆಯ ಬಳಿಕ ಸಂಸ್ಥೆಯಿಂದ ಹೊರಬಂದಿದ್ದಾರೆ. 2015ರಲ್ಲಿ ತನ್ನ ಮಾಲಕತ್ವದ ಸ್ಟಾರ್ಟ್ಅಪ್ ಸಂಸ್ಥೆಯಾದ ‘ಡಿಝೈನ್ಅಪ್’ ಅನ್ನು ಲಿವ್ಸ್ಪೇಸ್ ಖರೀದಿಸಿದ ಬಳಿಕ ಜೈನ್ ಅವರು ಈ ಕಂಪೆನಿಗೆ ಸೇರ್ಪಡೆಗೊಂಡಿದ್ದರು ಮತ್ತು 2022ರಲ್ಲಿ ಅವರು ಮುಖ್ಯ ಉದ್ಯಮಾಧಿಕಾರಿಯಾಗಿ ಭಡ್ತಿಗೊಂಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಕೃತಕ ಬುದ್ಧಿಮತ್ತೆ ಉದ್ಯೋಗ ಮಾರುಕಟ್ಟೆಯಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಅಮೆಝಾನ್ ಹಾಗೂ ಮೈಕ್ರೋಸಾಫ್ಟ್ನಿಂದ ಹಿಡಿದು ಟಿಸಿಎಸ್ ಮತ್ತು ಆ್ಯಕ್ಸೆಂಚುರ್ನಂತಹ ಬೃಹತ್ ಕಾರ್ಪೊರೇಟ್ ಕಂಪೆನಿಗಳು 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿವೆ.
Kalaburagi | ರಂಗಭೂಮಿಗೆ ಸರಕಾರದ ಆರ್ಥಿಕ ಬೆಂಬಲ ಅಗತ್ಯ: ಶಾಸಕ ಎಂ.ವೈ.ಪಾಟೀಲ್
ಕಲಬುರಗಿ ನಾಟಕೋತ್ಸವಕ್ಕೆ ಚಾಲನೆ
Kerala | S I R ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟ
ತಿರುವನಂತಪುರ, ಫೆ. 21: ಚುನಾವಣಾ ಆಯೋಗವು ಕೇರಳದಲ್ಲಿ ಎಸ್ಐಆರ್ ಪ್ರಕ್ರಿಯೆಯ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಸುಮಾರು ಒಂಭತ್ತು ಲಕ್ಷ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ರಾಜ್ಯದಲ್ಲಿ ಈಗ 2.69 ಕೋಟಿಗೂ ಹೆಚ್ಚಿನ ಮತದಾರರಿದ್ದಾರೆ. ಸಾರ್ವಜನಿಕರು ಪರಿಷ್ಕೃತ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಚುನಾವಣಾ ಆಯೋಗವು http://electoralsearch.eci.gov.in ಲಿಂಕ್ ಅನ್ನು ಹಂಚಿಕೊಂಡಿದೆ. ಚುನಾವಣಾ ಆಯೋಗವು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡ ಮಾಹಿತಿಗಳ ಪ್ರಕಾರ, ಪರಿಷ್ಕೃತ ಪಟ್ಟಿಯು 2,69,53,644 ಮತದಾರರನ್ನು ಒಳಗೊಂಡಿದೆ. ಎಸ್ಐಆರ್ಗೆ ಮುನ್ನ 2,78,50,855 ಮತದಾರರಿದ್ದು, ಈಗ 8,97,211 ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪರಿಷ್ಕೃತ ಪಟ್ಟಿಯಲ್ಲಿ 1,31,26,048 ಪುರುಷ ಮತದಾರರು, 1,38,27,319 ಮಹಿಳಾ ಮತದಾರರು ಮತ್ತು 277 ತೃತೀಯ ಲಿಂಗಿಗಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಗರೋತ್ತರ ಮತದಾರರ ಸಂಖ್ಯೆ 2,23,558 ಇದ್ದರೆ, ಸೇವಾ ಮತದಾರರ ಸಂಖ್ಯೆ 54,110 ಆಗಿದೆ. ಎಸ್ಐಆರ್ ಪ್ರಕ್ರಿಯೆಯ ಅಂಗವಾಗಿ 36.88 ಲಕ್ಷ ಮತದಾರರಿಗೆ ವಿಚಾರಣೆಗಳಿಗೆ ಹಾಜರಾಗುವಂತೆ ನೋಟಿಸ್ಗಳನ್ನು ನೀಡಲಾಗಿದ್ದು, ಈ ಪೈಕಿ 53,229 ಜನರನ್ನು ಅಂತಿಮ ಪಟ್ಟಿಯಿಂದ ಹೊರಗಿರಿಸಲಾಗಿದೆ. 2025ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ 2,86,07,658 ಮತದಾರರ ಹೆಸರುಗಳಿದ್ದವು. ತಿದ್ದುಪಡಿ, ಸೇರ್ಪಡೆ ಮತ್ತು ಅಳಿಸುವಿಕೆಯನ್ನು ಕೋರಿ ಜ. 31 ಮತ್ತು ಫೆ. 16 ನಡುವೆ ಹೆಚ್ಚುವರಿ 4,01,368 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅಂತಿಮ ಪಟ್ಟಿಯ ಬಿಡುಗಡೆಯ ಬಳಿಕವೂ ಅತೃಪ್ತ ಮತದಾರರು ಸೇರ್ಪಡೆ ಅಥವಾ ಅಳಿಸುವಿಕೆಗಾಗಿ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಅಂತಿಮ ಪಟ್ಟಿಯನ್ನು ಪರಿಶೀಲನೆಗಾಗಿ ರಾಜಕೀಯ ಪಕ್ಷಗಳಿಗೂ ಒದಗಿಸಲಾಗುವುದು. ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ | ರ್ಯಾಂಪ್ ಯೋಜನೆಯಡಿ ಒಂದು ದಿನದ ಇಂಕ್ಯುಬೇಶನ್ ಕಾರ್ಯಾಗಾರ
ಕಲಬುರಗಿ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GT&TC), ಕಲಬುರಗಿಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ವತಿಯಿಂದ ಕೇಂದ್ರ ಪುರಸ್ಕೃತ ವಿಶ್ವ ಬ್ಯಾಂಕ್ ನೆರವಿನ ಮಹತ್ವಾಕಾಂಕ್ಷಿ (RAMP) ಯೋಜನೆಯಡಿ ಶನಿವಾರ ಒಂದು ದಿನದ ಇಂಕ್ಯುಬೇಶನ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರವನ್ನು ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ (ಎಂಎಸ್ಎಂಇ & ಪಿಪಿ) ಅಪರ ನಿರ್ದೇಶಕ ಮಾಣಿಕ ವ್ಹಿ. ರಫೋಜಿ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ವಂತ ನವೋದ್ಯಮ (Start-up) ಸ್ಥಾಪನೆಗೆ ಮುಂದಾಗಬೇಕು. ಉದ್ಯಮಿಗಳಾಗಿ ರೂಪುಗೊಂಡು ಇತರರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂದು ಅವರು ಕರೆ ನೀಡಿದರು. GT&TC ಪ್ರಾಚಾರ್ಯರಾದ ಕು. ಸುಧಾರಾಣಿ ಎಸ್. ಅಟ್ಟೂರ್ ಅವರು ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ಜಂಟಿ ನಿರ್ದೇಶಕರಾದ ಅಬ್ದುಲ್ ಅಜೀಮ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, GTTCಯಲ್ಲಿ ಇಂಕ್ಯುಬೇಶನ್ ಕಾರ್ಯಾಗಾರ ಹಮ್ಮಿಕೊಂಡಿರುವುದು ಈಗಾಗಲೇ ಸ್ಥಾಪಿಸಲಾದ ಉತ್ಕೃಷ್ಠತೆ ಕೇಂದ್ರ (Centre of Excellence)ವನ್ನು ಬಲಪಡಿಸಲು ಹಾಗೂ ಇಂಕ್ಯುಬೇಶನ್ ಸೆಂಟರ್ ಸ್ಥಾಪನೆಗೆ ಅನುಕೂಲಕರವಾಗಲಿದೆ. ಇದರಿಂದ ಈ ಭಾಗದ ನವೋದ್ಯಮ ಸ್ಥಾಪನೆಗೆ ಮುಂದಾಗುವ ಯುವಕರಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ಎರಡು ಪೇಟೆಂಟ್ ಹೊಂದಿರುವ ನವೋದ್ಯಮಿ ಬಸರೆಡ್ಡಿ, ಪ್ರಾದೇಶಿಕ ಕಚೇರಿ, SBI ಕಲಬುರಗಿಯ ಮುಖ್ಯ ವ್ಯವಸ್ಥಾಪಕರಾದ ಗೌರವ ಗುಪ್ತ, ಸಿಡಾಕ್ನ ಹಿರಿಯ ತರಬೇತಿದಾರರಾದ ಸಯ್ಯದ ಅಶ್ಫಾಕ್ ಅಹ್ಮದ್, GT & TC ಉದ್ಯೋಗಾಧಿಕಾರಿಯಾದ ಅಯ್ಯಪ್ಪ ಸೋನಾರ, ಸಹಾಯಕ ನಿರ್ದೇಶಕರಾದ ಕು.ರುಪಾಲಿ ಶೇರಖಾನೆ, ಜಾಫರ್ ಖಾಸಿಮ್ ಅನ್ಸಾರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಸುಮಾರು 150 ವಿದ್ಯಾರ್ಥಿಗಳು ಹಾಜರಿದ್ದು, ನವೋದ್ಯಮ ಸ್ಥಾಪನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದರು.
ಹೊಸದಿಲ್ಲಿ, ಫೆ.21: ತನ್ನ ಆಡಳಿತವು ಭಾರತ ಸಹಿತ ವಿವಿಧ ರಾಷ್ಟ್ರಗಳಿಗೆ ಜಾಗತಿಕ ಸುಂಕ ವಿಧಿಸಿರುವುದನ್ನು ವಿರೋಧಿಸಿ ಅಮೆರಿಕ ಸುಪ್ರೀಂಕೋರ್ಟ್ನಲ್ಲಿ ಯಶಸ್ವಿಯಾಗಿ ವಾದಿಸಿದ ಭಾರತೀಯ ಮೂಲದ ನ್ಯಾಯವಾದಿ ನೀಲ್ ಕತ್ಯಾಲ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೀಲ್ ಕತ್ಯಾಲ್ ವಿದೇಶಿ ಕಾರ್ಯಸೂಚಿಗಳನ್ನು ಪ್ರತಿನಿಧಿಸುತ್ತಿದ್ದಾರೆಂದು ಅವರು ಆಪಾದಿಸಿದ್ದಾರೆ. ಭಾರತದ ವ್ಯಾಪಾರಿ ಹಿತಾಸಕ್ತಿಗಳನ್ನು ರಕ್ಷಿಸುತ್ತಿವೆ ಎನ್ನಲಾದ ಅಮೆರಿಕದ ಕೆಲವು ಕಂಪೆನಿಗಳ ವಿರುದ್ಧವೂ ಟ್ರಂಪ್ ಹರಿಹಾಯ್ದಿದ್ದಾರೆ. ಸುಂಕ ರದ್ದತಿಯ ಕುರಿತು ಸುಪ್ರೀಂಕೋರ್ಟ್ 6–3 ಮತಗಳಿಂದ ನೀಡಿರುವ ತೀರ್ಪು ಅಮೆರಿಕದ ಕಾರ್ಮಿಕರನ್ನು ದುರ್ಬಲರನ್ನಾಗಿಸಿದೆ ಎಂದು ಅವರು ಕಿಡಿಕಾರಿದ್ದಾರೆ. ‘ಅಮೆರಿಕ ಸುಪ್ರೀಂಕೋರ್ಟ್ ವಿದೇಶಿ ಹಣ ಹಾಗೂ ಭಾರತ ಲಾಬಿಯ ನ್ಯಾಯವಾದಿಗಳ ಪ್ರಭಾವಕ್ಕೊಳಗಾಗಿದೆ... ಅವರು ನಮ್ಮನ್ನು ವಿಫಲಗೊಳಿಸಿದ್ದಾರೆ,’ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ʼಸುಂಕಷ್ಟʼ | ಸರ್ಕಾರ ಪರಿಶೀಲಿಸುತ್ತಿದೆ: ವಾಣಿಜ್ಯ ಸಚಿವಾಲಯ
ಹೊಸದಿಲ್ಲಿ, ಫೆ.21: ಭಾರತ ಸಹಿತ ವಿವಿಧ ದೇಶಗಳಿಗೆ ಅಮೆರಿಕ ವಿಧಿಸಿರುವ ಸುಂಕಗಳು ಹಾಗೂ ಅವುಗಳ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ನಡೆಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಡೊನಾಲ್ಡ್ ಟ್ರಂಪ್ ಆಡಳಿತವು ವಿಧಿಸಿರುವ ಪಾರಸ್ಪರಿಕ ಸುಂಕಗಳನ್ನು ಅಮೆರಿಕ ಸುಪ್ರೀಂಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯ ಈ ಹೇಳಿಕೆ ನೀಡಿದೆ. ಗುರುವಾರ 9 ಮಂದಿ ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು 6–3 ಬಹುಮತದ ತೀರ್ಪಿನಲ್ಲಿ, ಅಮೆರಿಕ ಸಂಸತ್ತಿನ ಅನುಮೋದನೆಯಿಲ್ಲದೆ ಟ್ರಂಪ್ ಆಡಳಿತವು ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ (ಐಇಇಪಿಎ)ಯಡಿ ಸುಂಕಗಳನ್ನು ವಿಧಿಸಲು ಸಾಧ್ಯವಿಲ್ಲವೆಂದು ಅಮೆರಿಕದ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ತೀರ್ಪು ನೀಡಿದ್ದಾರೆ. “ಅಮೆರಿಕದ ಸುಪ್ರೀಂಕೋರ್ಟ್ ಶುಕ್ರವಾರ ಸುಂಕಗಳ ಕುರಿತು ನೀಡಿದ ತೀರ್ಪನ್ನು ನಾವು ಗಮನಿಸಿದ್ದೇವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ” ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ►“ನಾನು ದೇಶವನ್ನೇ ನಾಶಪಡಿಸಬಹುದು; ಆದರೆ 1 ಡಾಲರ್ ಸುಂಕವೂ ಹೇರುವಂತಿಲ್ಲ” ಸುಪ್ರೀಂಕೋರ್ಟ್ ತೀರ್ಪನ್ನು ಮೂದಲಿಸಿದ ಟ್ರಂಪ್ ಅವರು, “ನಾನು ವ್ಯಾಪಾರವನ್ನು ನಾಶಪಡಿಸಬಹುದು. ಒಂದು ದೇಶವನ್ನೇ ನಾಶಪಡಿಸಬಹುದು. ವಿದೇಶಿ ರಾಷ್ಟ್ರವೊಂದರ ಮೇಲೆ ದಿಗ್ಭಂಧನ ಹೇರಬಹುದು. ನಾನು ಬಯಸಿದುದನ್ನು ಮಾಡಬಹುದು. ಆದರೆ 1 ಡಾಲರ್ ಸುಂಕವನ್ನೂ ವಿಧಿಸಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ಹೇಳುತ್ತದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ►‘ಕಾನೂನುಬಾಹಿರ’ ಸುಂಕದ ಮೊತ್ತವನ್ನು ಟ್ರಂಪ್ ಆಡಳಿತ ಮರುಪಾವತಿಸಲಿದೆಯೇ? ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ (ಐಇಇಪಿಎ)ಯಡಿ ಟ್ರಂಪ್ ಆಡಳಿತವು ವಿದೇಶಿ ಆಮದು ಉತ್ಪನ್ನಗಳಿಗೆ ವಿಧಿಸಿದ ಸುಂಕದ ಪರಿಣಾಮವಾಗಿ ಅಮೆರಿಕ ಕಳೆದ ವರ್ಷದಿಂದ 175 ಶತಕೋಟಿ ಡಾಲರ್ಗೂ ಅಧಿಕ ಆದಾಯ ಗಳಿಸಿದೆ. ಇದೀಗ ಸುಪ್ರೀಂಕೋರ್ಟ್, ಐಇಇಪಿಎ ಕಾಯ್ದೆಯಡಿ ಹೇರಿರುವ ಸುಂಕವು ಅಸಾಂವಿಧಾನಿಕವೆಂದು ಘೋಷಿಸಿರುವುದರಿಂದ ಟ್ರಂಪ್ ಆಡಳಿತವು ಈ ಹಣವನ್ನು ರಫ್ತು ದೇಶಗಳಿಗೆ ಮರುಪಾವತಿಸುವುದೇ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್ ಅವರು, ಮರುಪಾವತಿ ಪ್ರಕ್ರಿಯೆ ತಕ್ಷಣ ಆರಂಭವಾಗುವುದಿಲ್ಲ. ಅದಕ್ಕೆ ಒಂದೆರಡು ವರ್ಷಗಳು ಬೇಕಾಗಬಹುದು ಎಂದಿದ್ದಾರೆ. ►ಅಮೆರಿಕದ ನ್ಯಾಯಾಲಯ ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತ: ಟ್ರಂಪ್ ಆಕ್ರೋಶ ಐಇಇಪಿಎ ಕಾಯ್ದೆಯಡಿ ತನ್ನ ಆಡಳಿತವು ವಿವಿಧ ದೇಶಗಳಿಗೆ ಸುಂಕ ವಿಧಿಸಿರುವುದನ್ನು ರದ್ದುಪಡಿಸಿದ ಅಮೆರಿಕ ಸುಪ್ರೀಂಕೋರ್ಟ್ ತೀರ್ಪಿಗೆ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದ ನ್ಯಾಯಾಲಯ ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ ಎಂದು ಅವರು ಆಪಾದಿಸಿದ್ದಾರೆ. ನ್ಯಾಯಾಲಯದ ಕೆಲವು ಸದಸ್ಯರಿಗೆ ದೇಶದ ಹಿತಕ್ಕಾಗಿ ನಿರ್ಧಾರ ಕೈಗೊಳ್ಳುವ ಧೈರ್ಯವಿಲ್ಲದಿರುವುದು ಲಜ್ಜೆಗೇಡಿತನವಾಗಿದೆ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. “ನಮ್ಮ ದೇಶವನ್ನು ರಕ್ಷಿಸುವ ಉದ್ದೇಶದಿಂದ, ಈ ಹಿಂದೆ ವಿಧಿಸಿರುವುದಕ್ಕಿಂತ ಹೆಚ್ಚು ಮೊತ್ತದ ಸುಂಕವನ್ನು ಅಧ್ಯಕ್ಷನಾಗಿ ನಾನು ವಿಧಿಸಬಹುದು. ನ್ಯಾಯಾಲಯದ ಈ ತೀರ್ಪು ನನ್ನನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಿದೆ” ಎಂದು ಅವರು ಹೇಳಿದ್ದಾರೆ. ಐಇಇಪಿಎ ಕಾಯ್ದೆಯಡಿ ಸುಂಕ ಹೇರಿಕೆ ಅಸಾಂವಿಧಾನಿಕವೆಂದು ಅಮೆರಿಕ ಸರ್ಕಾರದ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರ ಪೈಕಿ ಇಬ್ಬರನ್ನು ಡೊನಾಲ್ಡ್ ಟ್ರಂಪ್ ಅವರೇ ನೇಮಿಸಿದ್ದರು.
Mandya | ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಯುವತಿಯ ತಂದೆ
ಮಂಡ್ಯ: ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಯುವತಿಯ ತಂದೆ ಬೆಂಕಿಹಚ್ಚಿರುವ ಘಟನೆ ಮದ್ದೂರು ತಾಲೂಕು ಕೆ.ಬೆಳ್ಳೂರು ಗ್ರಾ.ಪಂ. ಚುಂಚನಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಯುವತಿಯ ತಂದೆ ಚನ್ನೇಗೌಡ ಈ ಕೃತ್ಯ ಎಸಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವುನೋವು ಆಗಿಲ್ಲ. ಅಗ್ನಿಶಾಮಕ ದಳದವರು ಬರುವ ವೇಳೆಗೆ ಮನೆ ಸಂಪೂರ್ಣ ಸುಟ್ಟುಹೋಗಿತ್ತು ಎಂದು ತಿಳಿದು ಬಂದಿದೆ. ಚುಂಚನಹಳ್ಳಿ ಗ್ರಾಮದವನೇ ಆದ ವಿನೋದ್ ಎಂಬ ಯುವಕ ತನ್ನ ಮನೆಯ ಪಕ್ಕದ ಚನ್ನೇಗೌಡ ಅವರ ಮಗಳು ಕಾವ್ಯ ಅವರನ್ನು ಪ್ರೀತಿಸುತ್ತಿದ್ದು, ಯುವತಿಯ ಮನೆಯವರ ವಿರೋಧದ ನಡುವೆ ಕಳೆದ ಗುರುವಾರ ಮದುವೆಯಾಗಿದ್ದರು ಎನ್ನಲಾಗಿದೆ. ತನ್ನ ವಿರೋಧದ ನಡುವೆಯೂ ಮದುವೆ ಆಗಿರುವುದರಿಂದ ಕುಪಿತಗೊಂಡಿದ್ದ ಚನ್ನೇಗೌಡ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ಎಫ್ಸಿ vs ನಾರ್ತ್ಈಸ್ಟ್: ಕಂಠೀರವ ಕ್ರೀಡಾಂಗಣದಲ್ಲಿ 'ಹೈ-ವೋಲ್ಟೇಜ್' ಫುಟ್ಬಾಲ್ ಫೈಟ್
Indian Super League Season 12- ಐಎಸ್ಎಲ್ ನ ಹೈವೋಲ್ಟೇಜ್ ಪಂದ್ಯಕ್ಕೆ ಇದೀಗ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸಜ್ಜಾಗಿದೆ. ಆರಂಭಿಕ ಪಂದ್ಯದಲ್ಲಿ ಎಸ್ ಸಿ ಡೆಲ್ಲಿ ವಿರುದ್ಧ ಅಧಿಕಾರಯುತ ಜಯಗಳಿಸಿದ ಬೆಂಗಳೂರು ಎಫ್ಸಿ ಇದೀಗ ಫೆಬ್ರವರಿ 22ರ ಬಾನುವಾರದಂದು ನಾರ್ತ್ ಈಸ್ಟ್ ತಂಂಡವನ್ನು ಎದುರಿಸಲಿದೆ. 2018ರ ಬಳಿಕ ಬಿಎಫ್ಸಿ ತಂಡ ಬೆಂಗಳೂರಿನಲ್ಲಿ ಸೋತಿಲ್ಲ. ಇದೀಗ ಈ ದಾಖಲೆಯನ್ನು ತವರು ತಂಡ ಮುಂದುವರಿಸುವ ಉತ್ಸಾಹದಲ್ಲಿದೆ. ಯಾವುದೇ ಗಾಯದ ಸಮಸ್ಯೆಗಳಿಲ್ಲದಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ.
ಟ್ರಂಪ್ ಹೊಸ ಸುಂಕಾಸ್ತ್ರ; ವಿವಿಧ ದೇಶಗಳಿಗೆ ಶೇ.10 ಸುಂಕ ಘೋಷಣೆ
► ಅಮೆರಿಕ ಸುಪ್ರೀಂಕೋರ್ಟ್ ಆದೇಶದಂತೆ ಇಇಪಿಎ ಕಾಯ್ದೆಯಡಿ ವಿಧಿಸಲಾಗಿದ್ದ ಸುಂಕ ರದ್ದತಿಯ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಅಂಕಿತ► ನೂತನ ಆದೇಶದಿಂದಾಗಿ ಶೇ.18ರ ಬದಲಿಗೆ ಶೇ.10 ಸುಂಕ ಪಾವತಿಸಲಿರುವ ಭಾರತ
ಮೂಡುಬಿದಿರೆ ಸಾಹಿತ್ಯ ಸಮ್ಮೇಳನ ಸಮಾರೋಪ: ಸಾಧಕರಿಗೆ ಸನ್ಮಾನ, ಪುರಸ್ಕಾರ
ಮೂಡುಬಿದಿರೆ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮೂಡುಬಿದಿರೆ ತಾಲೂಕು ಘಟಕದ ವತಿಯಂದ ಪಾಲಡ್ಕ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ನಡೆದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಶಾಲು ಫಲವಸ್ತು ಸನ್ಮಾನಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಸುದರ್ಶನ ಶೆಟ್ಟಿ ಕಡಂದಲೆ(ಕನ್ನಡಸೇವೆ), ಪ್ರಸನ್ನ ಹೆಗ್ಡೆ (ಪತ್ರಿಕೋದ್ಯಮ), ದಾಮೋದರ ಸಫಲಿಗ (ಯಕ್ಷಗಾನ), ವೆಂಕಟೇಶ ಬಂಗೇರ, (ಕಲೆ), ಡಾ ಕಿರಣ್ ಭಟ್ ಕಡಂದಲೆ (ವೈದ್ಯಕೀಯ), ಎಡ್ವರ್ಡ್ ರೆಬೆಲ್ಲೊ ತಾಕೋಡೆ (ಕೃಷಿ)ಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು ಹಾಗೂ ಎಸ್. ಎಸ್. ಎಲ್. ಸಿ. ಯಲ್ಲಿ ಮೂಡುಬಿದಿರೆ ತಾಲೂಕಿಗೆ ಗರಿಷ್ಟ ಅಂಕಗಳನ್ನು ಪಡೆದಿರುವ 12 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದ ಅಬ್ದುಲ್ ಹಮೀದ್ ಪಕ್ಕಲಡ್ಕ ಮಾತನಾಡಿ ಸಾಹಿತ್ಯವು ಸಮಾಜದ ಕನ್ನಡಿ. ಅನುಭವ, ಸದ್ವೀಚಾರಗಳು ಮತ್ತು ದಪ೯ಣಗಳು ಕೃತಿಯಾಗಿ ಮೂಡಿ ಬಂದಾಗ ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳುತ್ತದೆ. ಈ ಸಮ್ಮೇಳನವು ಮುಂದಿನ ನನ್ನ ಬರಹವು ಇನ್ನಷ್ಟು ಸ್ಪೂತಿ೯ದಾಯಕವಾಗಿ ಹೊರ ಬರಲು ಸಹಕಾರಿಯಾಗಿದೆ ಮತ್ತು ಬದುಕಲ್ಲಿ ಬೆಲೆ ಕಟ್ಟಲಾಗದಂತ ನೆನಪಾಗಿ ಉಳಿಯುತ್ತದೆ ಎಂದರು. ಸಮ್ಮೇಳನವು ಅಚ್ಚುಕಟ್ಟಾಗಿ ಮೂಡಿಬರಲು ಕಾರಣೀಕತ೯ರಾಗಿರುವ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿ ಅವರನ್ನು ತಾಲೂಕು ಸಮಿತಿಯ ವತಿಯಿಂದ ಗೌರವಿಸಲಾಯಿತು. ಜಿ ಸಚಿವ ಕೆ. ಅಭಯಚಂದ್ರ, ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಂ ಪಿ ಶ್ರೀನಾಥ, ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರಗತಿ ಪರ ಕೃಷಿಕ ರಾಜವರ್ಮ ಬೈಲಂಗಡಿ, ವೈಬ್ರಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ನಾಯಕ್, ಉದ್ಯಮಿ ಜಗಜ್ಜೀವನ್ ಶೆಟ್ಟಿ, ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ವೇದಿಕೆಯಲ್ಲಿದ್ದರು. ಕಸಾಪ ಕೋಶಾಧಿಕಾರಿ ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿದರು. ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು ಕಾಯ೯ಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸದಾನಂದ ನಾರಾವಿ ವಂದಿಸಿದರು.
ಪ್ರಮೋದ್ ಮುತಾಲಿಕ್, ಪುನೀತ್ ಕೆರೆಹಳ್ಳಿಗೆ ಬಾಗಲಕೋಟೆ ಜಿಲ್ಲೆಗೆ ಪ್ರವೇಶ ನಿರ್ಬಂಧ
ಬಾಗಲಕೋಟೆ: ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯದ ಕಾರ್ಯಕಾರಣಿ ಸದಸ್ಯ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರೆಹಳ್ಳಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ಶುಕ್ರವಾರದಿಂದ ಒಂದು ತಿಂಗಳ ಕಾಲ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆ.21ರಿಂದ ಮಾ. 21ರ ವರೆಗೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರೆಹಳ್ಳಿಗೆ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಇಬ್ಬರ ವಿರುದ್ಧ ಪ್ರಕರಣ ದಾಖಲು ಗುರುವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಗರದ ಮಾರುಕಟ್ಟೆಯ ಹತ್ತಿರ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಇಬ್ಬರ ವಿರುದ್ಧ ಬಾಗಲಕೋಟೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಸ್ಪಿ ಸಿದ್ದಾರ್ಥ ಗೋಯಲ್, ಬಾಗಲಕೋಟೆಯ ಅಶೋಕ ಬಾರಕೇರ ಹಾಗೂ ಸಿದ್ಧಪ್ಪ ಘೇರಡೆ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಶೋಕ ಕಲ್ಲು ತೂರಿ ಓಡಿ ಹೋಗುವಾಗ ಬಿದ್ದು ಗಾಯಮಾಡಿಕೊಂಡಿದ್ದು, ನಮ್ಮ ಸಿಬ್ಬಂದಿ ಅವರಿಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ಶೀಘ್ರ ಅಧ್ಯಕ್ಷೀಯ ಚುನಾವಣೆಗೆ ರಶ್ಯ ಒತ್ತಡ: ಝೆಲೆನ್ಸ್ಕಿ
ಕೀವ್, ಫೆ.21: ರಶ್ಯವು ತನ್ನನ್ನು ಅಧಿಕಾರದಿಂದ ತೆಗೆದುಹಾಕಲು ಬಯಸಿದ್ದು ಉಕ್ರೇನ್ನಲ್ಲಿ ಶೀಘ್ರ ಅಧ್ಯಕ್ಷೀಯ ಚುನಾವಣೆ ನಡೆಸಲು ಒತ್ತಡ ಹೇರುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶುಕ್ರವಾರ ಆರೋಪಿಸಿದ್ದಾರೆ. `ಪ್ರಾಮಾಣಿಕವಾಗಿ ಹೇಳುತ್ತೇನೆ, ರಶ್ಯನ್ನರು ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಬಯಸುತ್ತಿದ್ದಾರೆ. ಆದರೆ ಯುದ್ಧದ ಸಂದರ್ಭ ಚುನಾವಣೆ ನಡೆಸುವುದನ್ನು ಯಾರೂ ಬಯಸುವುದಿಲ್ಲ. ಪ್ರತಿಯೊಬ್ಬರೂ ಯುದ್ಧದ ವಿನಾಶಕಾರಿ ಪರಿಣಾಮಕ್ಕೆ ಹೆದರುತ್ತಾರೆ' ಎಂದ ಅವರು, ಭವಿಷ್ಯದಲ್ಲಿ ಉಕ್ರೇನ್ನಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದಾಗಿ ಎಎಫ್ಪಿ ವರದಿ ಮಾಡಿದೆ. 2024ರಲ್ಲಿ ನಡೆಯಬೇಕಿದ್ದ ಉಕ್ರೇನ್ ನ ಅಧ್ಯಕ್ಷೀಯ ಚುನಾವಣೆಯನ್ನು 2022ರ ಫೆಬ್ರವರಿಯಲ್ಲಿ ರಶ್ಯ ಆಕ್ರಮಣ ಆರಂಭಗೊಂಡ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಇರಾನ್ ನ ಪರಮೋಚ್ಛ ನಾಯಕ ಖಾಮಿನೈ, ಪುತ್ರನನ್ನು ಕೊಲ್ಲುವ ಯೋಜನೆ ಟ್ರಂಪ್ ಗೆ ಸಲ್ಲಿಕೆ: ವರದಿ
ವಾಷಿಂಗ್ಟನ್, ಫೆ.21: ಇರಾನ್ನ ಸರ್ವೋಚ್ಛ ನಾಯಕ ಆಲಿ ಖಾಮಿನೈ ಮತ್ತು ಅವರ ಪುತ್ರ ಮೊಜ್ತಬಾ ಖಾಮಿನೈ ಅವರ ‘ಉದ್ದೇಶಿತ ಹತ್ಯೆ’ಯನ್ನು ಒಳಗೊಂಡಿರುವ ಮಿಲಿಟರಿ ಆಯ್ಕೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪ್ರಸ್ತುತಪಡಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ಆಕ್ಸಿಯೋಸ್’ ವರದಿ ಮಾಡಿದೆ. ರಕ್ಷಣಾ ಇಲಾಖೆಯು ವಿವಿಧ ಆಯ್ಕೆಗಳನ್ನು ಮುಂದಿರಿಸಿದೆ. ಅಧ್ಯಕ್ಷರು ಯಾವ ಆಯ್ಕೆಯನ್ನು ಆರಿಸಿಕೊಳ್ಳುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಖಾಮಿನೈ ಮತ್ತು ಅವರ ಪುತ್ರನನ್ನು ಹತ್ಯೆ ಮಾಡುವ ಬಗ್ಗೆ ಚರ್ಚೆ ನಡೆದಿದೆ, ಆದರೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಅಧ್ಯಕ್ಷರು ದಾಳಿಯನ್ನು ಇನ್ನೂ ನಿರ್ಧರಿಸಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ದಾಳಿಗೆ ಆದೇಶಿಸಬಹುದು. ನಾವದಕ್ಕೆ ಸಿದ್ಧವಾಗಿದ್ದೇವೆ’ ಎಂದು ಟ್ರಂಪ್ ಅವರ ಉನ್ನತ ಸಲಹೆಗಾರರು ಹೇಳಿರುವುದಾಗಿ ವರದಿಯಾಗಿದೆ.
ಇರಾನ್–ಅಮೆರಿಕ ಉದ್ವಿಗ್ನತೆ ಹೆಚ್ಚಳ: ವಿಶ್ವಸಂಸ್ಥೆ ಮುಖ್ಯಸ್ಥರ ಕಳವಳ
ವಿಶ್ವಸಂಸ್ಥೆ, ಫೆ.21: ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಿರುವ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಉಪಕ್ರಮಗಳ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಪ್ರದೇಶದ ಸುತ್ತಲೂ ಹೆಚ್ಚಿರುವ ಮಿಲಿಟರಿ ಚಟುವಟಿಕೆಗಳು ಹಾಗೂ ಸಮರ ನೌಕೆಗಳ ಉಪಸ್ಥಿತಿಯ ಬಗ್ಗೆ ಗುಟೆರಸ್ ತೀವ್ರ ಕಳವಳಗೊಂಡಿದ್ದು, ರಾಜತಾಂತ್ರಿಕ ಉಪಕ್ರಮಗಳ ಮೂಲಕ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಗೊಳಿಸುವಂತೆ ಇರಾನ್ ಮತ್ತು ಅಮೆರಿಕಕ್ಕೆ ಕರೆ ನೀಡಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೀಫನ್ ಡ್ಯುಜಾರಿಕ್ ತಿಳಿಸಿದ್ದಾರೆ. ಈ ಮಧ್ಯೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಭದ್ರತಾ ಮಂಡಳಿಯ ಅಧ್ಯಕ್ಷರನ್ನು ಉದ್ದೇಶಿಸಿ ಬರೆದಿರುವ ಔಪಚಾರಿಕ ಪತ್ರವನ್ನು ವಿಶ್ವಸಂಸ್ಥೆಗೆ ಇರಾನ್ನ ಖಾಯಂ ಪ್ರತಿನಿಧಿ ಅಮೀರ್ ಸಯೀದ್ ಇರಾವಾನಿ ಹಸ್ತಾಂತರಿಸಿದ್ದಾರೆ. ವಿಶ್ವಸಂಸ್ಥೆ ಚಾರ್ಟರ್ನ ಆರ್ಟಿಕಲ್ 51ರ ಅಡಿಯಲ್ಲಿ ಸ್ವಯಂ ರಕ್ಷಣೆಗಾಗಿ ತನ್ನ ಅಂತರ್ಗತ ಹಕ್ಕನ್ನು ಚಲಾಯಿಸಲು ಇರಾನ್ ಸಿದ್ಧವಾಗಿದೆ. ಯಾವುದೇ ನಿರ್ಣಾಯಕ ಆಕ್ರಮಣಕ್ಕೆ ನಿರ್ಣಾಯಕ ಮತ್ತು ಪ್ರಮಾಣಾನುಸಾರ ಪ್ರತಿಕ್ರಿಯೆಯನ್ನು ನೀಡುತ್ತದೆ. ಅಂತಹ ಸನ್ನಿವೇಶದಲ್ಲಿ, ಮಧ್ಯಪ್ರಾಚ್ಯದಲ್ಲಿ ಪ್ರತಿಕೂಲ ಪಡೆಗಳಿಗೆ ಸೇರಿದ ಎಲ್ಲಾ ನೆಲೆಗಳು, ಸೌಲಭ್ಯಗಳು ಮತ್ತು ಸ್ವತ್ತುಗಳು ಇರಾನ್ನ ರಕ್ಷಣಾತ್ಮಕ ಕ್ರಮಗಳಿಗೆ ಕಾನೂನುಬದ್ಧ ಗುರಿಗಳಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.
ಸುಂಕದ ಒತ್ತಡ ಮುಂದುವರಿಸಲು ಪರ್ಯಾಯ ಕಾರ್ಯವಿಧಾನ: ಅಮೆರಿಕ ಅಧ್ಯಕ್ಷ ಟ್ರಂಪ್ ಸುಳಿವು
ವಾಷಿಂಗ್ಟನ್, ಫೆ.21: ಕಾನೂನು ಹಿನ್ನಡೆಯ ಹೊರತಾಗಿಯೂ ಸುಂಕದ ಒತ್ತಡವನ್ನು ಮುಂದುವರಿಸಲು ಪರ್ಯಾಯ ಕಾರ್ಯವಿಧಾನಗಳನ್ನು ಅನುಸರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಿಂದಿನ ಕ್ರಮಗಳು ನೂರಾರು ಶತಕೋಟಿ ಡಾಲರ್ ಆದಾಯವನ್ನು ತಂದಿವೆ ಮತ್ತು ಬದಲಿ ಆಯ್ಕೆಗಳು ಇನ್ನೂ ಹೆಚ್ಚಿನ ಆದಾಯವನ್ನು ಉಂಟು ಮಾಡಬಹುದು. ತನ್ನ ಆಡಳಿತವು ಚೀನಾದ ಮೇಲೆ ಉಕ್ಕು ಮತ್ತು ಅಲ್ಯುಮೀನಿಯಂ ಆಮದುಗಳ ಮೇಲೆ ಸುಂಕವನ್ನು ವಿಧಿಸಲು ಈ ಹಿಂದೆ ಬಳಸಿದ ಇತರ ವ್ಯಾಪಾರ ನಿಯಮಗಳನ್ನು ಅವಲಂಬಿಸಲಿದೆ ಎಂದು ಅವರು ತಿಳಿಸಿದ್ದಾರೆ. ತಕ್ಷಣದಿಂದ ಅನ್ವಯಿಸುವಂತೆ ಸೆಕ್ಷನ್ 232ರಡಿ ಎಲ್ಲಾ ರಾಷ್ಟ್ರೀಯ ಭದ್ರತಾ ಸುಂಕಗಳು ಮತ್ತು ಅಸ್ತಿತ್ವದಲ್ಲಿರುವ ಸೆಕ್ಷನ್ 232ರಡಿ ಸುಂಕಗಳು ಜಾರಿಯಲ್ಲಿರುತ್ತವೆ ಎಂದು ಟ್ರಂಪ್ ಹೇಳಿದ್ದಾರೆ. ಈ ಮಧ್ಯೆ, ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸ 10% ಜಾಗತಿಕ ಸುಂಕಕ್ಕೆ ಸಹಿ ಹಾಕಿದ್ದು, ಇದು ಫೆಬ್ರವರಿ 24ರಿಂದ ಜಾರಿಗೆ ಬರಲಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ತಮ್ಮ ಹಿಂದಿನ ಸುಂಕಾಸ್ತ್ರದ ವಿರುದ್ಧ ತೀರ್ಪು ನೀಡಿರುವ ಸುಪ್ರೀಂಕೋರ್ಟ್ನ ನ್ಯಾಯಾಧೀಶರ ವಿರುದ್ಧ ತೀವ್ರ ಟೀಕೆ ಮಾಡಿರುವ ಟ್ರಂಪ್, “ನಮ್ಮ ಅತ್ಯಂತ ಸ್ವೀಕಾರಾರ್ಹ ಮತ್ತು ಸರಿಯಾದ ಸುಂಕ ವಿಧಾನದ ವಿರುದ್ಧ ಮತ ಚಲಾಯಿಸಿದ ಸುಪ್ರೀಂಕೋರ್ಟ್ ನ ಸದಸ್ಯರು ತಮ್ಮ ಬಗ್ಗೆ ನಾಚಿಕೆಪಡಬೇಕು. ಅವರ ನಿರ್ಧಾರ ಹಾಸ್ಯಾಸ್ಪದವಾಗಿತ್ತು. ಆದರೆ ಈಗ ಹೊಂದಾಣಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಮತ್ತು ನಾವು ಮೊದಲು ಪಡೆಯುತ್ತಿದ್ದಕ್ಕಿಂತ ಹೆಚ್ಚಿನ ಹಣವನ್ನು ಪಡೆಯಲು ಸಾಧ್ಯವಿರುವುದೆಲ್ಲವನ್ನೂ ಮಾಡುತ್ತೇವೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆಡಳಿತವು ಅಸ್ತಿತ್ವದಲ್ಲಿರುವ ಅನೇಕ ಸುಂಕಗಳನ್ನು ನಿರ್ವಹಿಸುತ್ತದೆ ಮತ್ತು ಅಮೆರಿಕ ವ್ಯಾಪಾರ ಕಾನೂನಿನ ಸೆಕ್ಷನ್ 122 ಸೇರಿದಂತೆ ವಿಭಿನ್ನ ಕಾನೂನಿನ ಅಡಿಯಲ್ಲಿ ಹೊಸ ಜಾಗತಿಕ ತೆರಿಗೆಯನ್ನು ವಿಧಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಸೆಕ್ಷನ್ 122 ನಿಬಂಧನೆಯು 150 ದಿನಗಳವರೆಗೆ ವಿಶಾಲವಾದ ಸುಂಕ ವಿಧಿಸಲು ಅನುಮತಿಸುತ್ತದೆ, ಆದರೆ ಸಂಸತ್ತಿನ ಅನುಮೋದನೆ ಅಗತ್ಯವಿದೆ. ಹೊಸ ಉಪಕ್ರಮವು ನ್ಯಾಯಾಲಯ ರದ್ದುಗೊಳಿಸಿದ ಕೆಲವು ಹಂತದ ಸುಂಕಗಳನ್ನು ತಾತ್ಕಾಲಿಕವಾಗಿ ಮರುಸ್ಥಾಪಿಸಲು ಟ್ರಂಪ್ ಗೆ ಅವಕಾಶ ನೀಡುತ್ತದೆ. ಆದರೆ ಈ ಹಿಂದೆ ಟ್ರಂಪ್ ಮಾಡಿದಂತೆ ತಮಗಿಷ್ಟ ಬಂದಂತೆ ಕೆಲವು ವ್ಯಾಪಾರ ಪಾಲುದಾರರಿಗೆ ಸುಂಕದಲ್ಲಿ ವಿನಾಯಿತಿ ನೀಡಲು ಈ ಶಾಸನ ಅವಕಾಶ ನೀಡುವುದಿಲ್ಲ. ರಾಷ್ಟ್ರೀಯ ತುರ್ತು ಕಾನೂನಿನ ಅಡಿಯಲ್ಲಿ ವಿಧಿಸಲಾದ ಅಧ್ಯಕ್ಷ ಟ್ರಂಪ್ ಅವರ ವ್ಯಾಪಕ ಜಾಗತಿಕ ಸುಂಕವನ್ನು ಅಮೆರಿಕದ ಸುಪ್ರೀಂಕೋರ್ಟ್ ಅಮಾನ್ಯಗೊಳಿಸಿದ್ದು, ಇದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. 1967ರ ‘ಇಂಟರ್ನ್ಯಾಷನಲ್ ಎಮರ್ಜೆನ್ಸಿ ಇಕನಾಮಿಕ್ ಪವರ್ ಆ್ಯಕ್ಟ್’ (ಐಇಇಪಿಎ) ಅಧ್ಯಕ್ಷರಿಗೆ ತೆರಿಗೆ ವಿಧಿಸಲು ಅಧಿಕಾರ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ 6-3ರ ಬಹುಮತದ ತೀರ್ಪಿನಲ್ಲಿ ತಿಳಿಸಿದ್ದು, ಈ ಮೂಲಕ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಆದಾಯದಲ್ಲಿ ಸ್ವಲ್ಪ ಬದಲಾವಣೆಯನ್ನು ಆಡಳಿತ ನಿರೀಕ್ಷಿಸಿದೆ. ಖಜಾನೆಯ ಅಂದಾಜಿನ ಪ್ರಕಾರ, ಸೆಕ್ಷನ್ 232 ಮತ್ತು ಸೆಕ್ಷನ್ 301ರ ಜೊತೆಗೆ ಸೆಕ್ಷನ್ 122ರ ಅಧಿಕಾರದ ಬಳಕೆಯಿಂದ 2026ರಲ್ಲಿ ಸುಂಕದ ಆದಾಯದಲ್ಲಿ ವಾಸ್ತವಿಕವಾಗಿ ಯಾವುದೇ ಬದಲಾವಣೆ ಆಗದು ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
ಇಶಾನ್ ಕಿಶನ್ ನಿಂದ ಯುವರಾಜ್ ಸಾಮ್ರಾ ತನಕ...
T20 ವಿಶ್ವಕಪ್ ಗ್ರೂಪ್ ಹಂತದ ಹೀರೋಗಳತ್ತ ಒಂದು ಕಿರು ನೋಟ
ದಲಿತ ಬಾಲಕಿ ಆತ್ಮಹತ್ಯೆ: ಜಾಮೀನಿನ ಬಳಿಕ ಆರೋಪಿಯಿಂದ ಬೆದರಿಕೆ, ಕುಟುಂಬದ ಆರೋಪ
ಮೀರಟ್ (ಉತ್ತರ ಪ್ರದೇಶ): 14 ವರ್ಷದ ದಲಿತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೀರಟ್ ಸಮೀಪದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ವರದಿಯಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಯು ಬೆದರಿಕೆ ಹಾಕಿದ್ದರಿಂದ ಬಾಲಕಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬುಧವಾರ ಬಾಲಕಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನೆ ವೇಳೆ ತಂದೆ ಕೃಷಿ ಕೆಲಸಕ್ಕೆ ತೆರಳಿದ್ದು, ತಾಯಿ ಸೌದೆಗಾಗಿ ಹೊರಗಿದ್ದರು. ಮನೆಗೆ ಮರಳಿದಾಗ ಪುತ್ರಿಯ ಮೃತದೇಹ ಕಂಡುಬಂದಿದೆ. ಈ ಹಿಂದೆ ನಡೆದ ದೌರ್ಜನ್ಯ ಕುರಿತು ಬಾಲಕಿ ಕುಟುಂಬಕ್ಕೆ ತಿಳಿಸಿದ್ದರಿಂದ, ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಒಂದು ವಾರದ ಹಿಂದೆ ಆರೋಪಿಗೆ ಜಾಮೀನು ದೊರಕಿದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ ಎಂದು ತಿಳಿದುಬಂದಿದೆ. “ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ನನ್ನ ಮಗಳು ಮನೆಯ ಬಳಿಯ ಅಂಗಡಿಗೆ ಹೋಗಿದ್ದಾಗ ಪ್ರಕರಣ ಹಿಂಪಡೆಯದಿದ್ದರೆ ಕೊಲೆ ಮಾಡುವುದಾಗಿ ಆರೋಪಿಯು ಬೆದರಿಕೆ ಹಾಕಿದ್ದನು,” ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಕುಟುಂಬದವರ ಹೊಸ ದೂರಿನ ಮೇರೆಗೆ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ವಲಯಾಧಿಕಾರಿ ಶಿವಂ ಕುಮಾರ್ ಅವರ ಮಾಹಿತಿಯಂತೆ, ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆಯ ಸೆಕ್ಷನ್ 3(2)(v) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಶುಕ್ರವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಬ್ರಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಬೆಂಕಿ ಬಗ್ಗೆ ಅನುಮಾನ: ಸಮಗ್ರ ತನಿಖೆಗೆ ಗ್ರಾಮಸ್ಥರ ಆಗ್ರಹ
ಉಡುಪಿ, ಫೆ.21: ಹೆಬ್ರಿಯಲ್ಲಿರುವ, ಆಸುಪಾಸಿನ 16 ಗ್ರಾಪಂಗಳ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕಳೆದ ಜ.14ರಂದು ಕಂಡುಬಂದ ಬೆಂಕಿ ಅಕಸ್ಮಿಕದ ಕುರಿತಂತೆ ಹೆಬ್ರಿಯ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಜ.14ರಂದು ಹೆಬ್ರಿ ತಾಲೂಕು ಪಂಚಾಯತ್ ಅಧೀನದಲ್ಲಿರುವ ಹೆಬ್ರಿಯ ಎಂಆರ್ಎಫ್ ಘಟಕಕ್ಕೆ ಅಕಸ್ಮಿಕವಾಗಿ ಬೆಂಕಿ ಬಿದ್ದು ಕೋಟ್ಯಾಂತರ ರೂ. ಮೌಲ್ಯದ ಸೊತ್ತುಗಳು, ಯಂತ್ರೋಪಕರಣಗಳು ನಾಶವಾಗಿರುವ ಬಗ್ಗೆ ಹೆಬ್ರಿ ತಾಪಂ ಕಾರ್ಯನಿರ್ವಹಣಾಧಿಕಾರಿಯವರು ಮಾಹಿತಿ ನೀಡಿದ್ದರು. ಬೆಂಕಿ ಅಕಸ್ಮಿಕಕ್ಕೆ ವಿದ್ಯುತ್ ಶಾರ್ಟ್ಸರ್ಕ್ಯೂಟ್ ಕಾರಣ ಎಂಬ ಸಂಶಯವಿದೆ ಎಂದವರು ತಿಳಿಸಿದ್ದರು. ಆದರೆ ಕಳೆದ ಆರೇಳು ತಿಂಗಳುಗಳಿಂದ ಈ ಘಟಕ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇಲ್ಲಿ ಯಾವುದೇ ಕಸಗಳ ವಿಲೇವಾರಿ ನಡೆಯುತ್ತಿ ರಲಿಲ್ಲ. ಇದರ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು ಎಂದು ಹೆಬ್ರಯ ಪ್ರಗತಿಪರ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಹಾಗೂ ಶ್ರೀಕಾಂತ್ ಹೆಬ್ರಿ ಹೇಳುತ್ತಾರೆ. ಒಂದು ವಾರದಲ್ಲಿ ಮೂರನೇ ಘಟಕಕ್ಕೆ ಹೀಗೆ ಬೆಂಕಿ ಬೀಳುತ್ತಿದೆ. ಇದು ಖಂಡಿತ ಅಕಸ್ಮಿಕವಲ್ಲ. ಉದ್ದೇಶಪೂರ್ವಕ. ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಾಕಿರಬಹುದು. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯ ಬಹಿರಂಗ ಪಡಿಸುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದೇವೆ ಎಂದವರು ತಿಳಿಸಿದರು. ಆಸುಪಾಸಿನಹೆಬ್ರಿ, ಚಾರ, ಬೆಳಂಜೆ, ಮಡಾಮಕ್ಕಿ ಸೇರಿದಂತೆ 16 ಗ್ರಾಪಂ ಗಳ ತ್ಯಾಜ್ಯಗಳ ನಿರ್ವಹಣೆಗಾಗಿ ಸುಮಾರು 3ರಿಂದ 4 ಕೋಟಿ ರೂ.ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ. ಕೆಲವು ದಿನಗಳ ಹಿಂದೆ ಬೆಳ್ವೆಯ ಎಂಆರ್ಎಫ್ ಘಟಕಕ್ಕೆ ಬೆಂಕಿ ಬಿದ್ದಿತ್ತು ಎಂದು ಶ್ರೀಕಾಂತ್ ಹೆಬ್ರಿ ತಿಳಿಸಿದರು. ಕೆಲವು ತಿಂಗಳ ಹಿಂದೆಯೇ ಘಟಕಕ್ಕೆ ಬೀಗ ಹಾಕಲಾಗಿದ್ದು, ಕೀಯನ್ನು ತಾಲೂಕು ಪಂಚಾಯತ್ಗೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಅಲ್ಲಿನ ವಿದ್ಯುತ್ ಸಂಪರ್ಕವೂ ಕಡಿತಗೊಂಡಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಬೆಂಕಿ ಬಿದ್ದಿರುವ ಘಟನೆ ಅನುಮಾನಕ್ಕೆ ಕಾರಣವಾಗಿದೆ ಎಂದು ಹಿರಿಯ ಹೋರಾಟಗಾರರಾದ ಸಂಜೀವ ಶೆಟ್ಟಿ ತಿಳಿಸಿದರು. ದುಬಾರಿ ಯಂತ್ರೋಪಕರಣಗಳು, ತಾಂತ್ರಿಕ ಸೌಲಭ್ಯಗಳು ಮತ್ತು ಮೂಲ ಸೌಕರ್ಯಗಳು ಬೆಂಕಿಗೆ ಆಹುತಿಯಾಗಿ ರುವುದರಿಂದ ಸಾರ್ವಜನಿಕ ಹಣದ ದುರುಪಯೋಗವಾಗುತ್ತಿದೆ ಎಂಬ ಗಂಭೀರ ಆರೋವನ್ನು ಅವರು ಮಾಡಿದ್ದಾರೆ. ಇದೀಗ ಗುತ್ತಿಗೆದಾರರು ಇನ್ಸೂರೆನ್ಸ್ ಹಣ ಪಡೆಯಲು ಪ್ರಯತ್ನ ನಡೆಸುತ್ತಿರುವ ಬಗ್ಗೆಯೂ ನಮಗೆ ಮಾಹಿತಿ ಇದೆ ಎಂದು ಶ್ರೀಕಾಂತ್ ಹೆಬ್ರಿ ತಿಳಿಸಿದರು. ಆದ್ದರಿಂದ ಬೆಂಕಿ ಅಕಸ್ಮಿಕದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಎಲ್ಲವನ್ನೂ ಬಹಿರಂಗ ಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.
'ಶಾಂತಿ ಮಂಡಳಿ’ಯ ಮೊದಲ ಸಭೆಯಲ್ಲಿ ಭಾರತ ‘ವೀಕ್ಷಕ’ ರಾಷ್ಟ್ರವಾಗಿ ಭಾಗಿಯಾಗಿದ್ದೇಕೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ Board of Peace (ಶಾಂತಿ ಮಂಡಳಿ) ಗುರುವಾರ ವಾಷಿಂಗ್ಟನ್ನಲ್ಲಿ ಗಾಝಾ ಪುನರ್ನಿರ್ಮಾಣದ ಕುರಿತು ಚರ್ಚಿಸಲು ತನ್ನ ಮೊದಲ ಸಭೆಯನ್ನು ನಡೆಸಿದ್ದು, ಇದರಲ್ಲಿ ಭಾರತ ವೀಕ್ಷಕರಾಗಿ ಭಾಗವಹಿಸಿದೆ. ಗಾಝಾದಲ್ಲಿ ಶಾಂತಿ ಸ್ಥಾಪಿಸುವ ಟ್ರಂಪ್ ಅವರ ಹೊಸ ಯೋಜನೆಯನ್ನು ಭಾರತ ಬೆಂಬಲಿಸುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಪ್ರದೇಶವನ್ನು ಪುನರ್ನಿರ್ಮಾಣ ಪ್ರಾರಂಭಿಸಲು ಅಂಗೀಕರಿಸಲಾದ UNSC ನಿರ್ಣಯ 2803ರ ಅಡಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಕಾರ್ಯಚಟುವಟಿಕೆಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು 2025ರ ಸೆಪ್ಟೆಂಬರ್ನಲ್ಲಿ ಗಾಝಾ ಯುದ್ಧವನ್ನು ಕೊನೆಗೊಳಿಸುವ ಯೋಜನೆಯಾಗಿ ಮೊದಲು ಶಾಂತಿ ಮಂಡಳಿಯನ್ನು ಪರಿಚಯಿಸಿದರು. ವಿಶ್ವಸಂಸ್ಥೆ (UN) ಆರಂಭದಲ್ಲಿ ಅದನ್ನು ಬೆಂಬಲಿಸಿತು. ಆದರೆ, ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಟ್ರಂಪ್ ಮಂಡಳಿಯ ಧ್ಯೇಯವನ್ನು ‘ಜಾಗತಿಕ ಸಂಘರ್ಷಗಳನ್ನು ಪರಿಹರಿಸಲು’ ಎಂದು ಬದಲಾಯಿಸಿದರು. ಇದು ಟ್ರಂಪ್ ಅಂತರರಾಷ್ಟ್ರೀಯ ಶಾಂತಿ ಸ್ಥಾಪನೆಯ ಮೇಲೆ ವೈಯಕ್ತಿಕ ನಿಯಂತ್ರಣ ಪಡೆಯಲು ವಿಶ್ವಸಂಸ್ಥೆಗೆ ‘ಪ್ರತಿಸ್ಪರ್ಧಿ’ಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಟೀಕೆಗೆ ಕಾರಣವಾಯಿತು. ಪಶ್ಚಿಮ ಏಷ್ಯಾದ 27 ದೇಶಗಳು ಮಂಡಳಿಗೆ ಸೇರಲು ಟ್ರಂಪ್ ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದರೆ, ಭಾರತ ಹಾಗೂ ಪಶ್ಚಿಮ ಮತ್ತು ಜಾಗತಿಕ ದಕ್ಷಿಣದ ಹಲವಾರು ದೇಶಗಳು ಸದಸ್ಯತ್ವಕ್ಕೆ ಒಪ್ಪಿಕೊಂಡಿಲ್ಲ. ಆದ್ದರಿಂದ, ವೀಕ್ಷಕರಾಗಿ ಸಭೆಯಲ್ಲಿ ಭಾಗವಹಿಸುವ ಭಾರತದ ನಿರ್ಧಾರವು ವಿವಾದಾತ್ಮಕ ಸಂಸ್ಥೆಯೊಂದಿಗೆ ಎಚ್ಚರಿಕೆಯ ಮಟ್ಟದ ಸಂಬಂಧವನ್ನು ಕಾಯ್ದುಕೊಳ್ಳುವ ಪ್ರಯತ್ನವಾಗಿದೆ. ►ಮಂಡಳಿಯಲ್ಲಿ ಯಾವ ದೇಶಗಳು ಸದಸ್ಯರಾಗಿವೆ? ಮಂಡಳಿಯ 27 ಸದಸ್ಯರಲ್ಲಿ ಇಸ್ರೇಲ್, ಈಜಿಪ್ಟ್, ಜೋರ್ಡಾನ್, ಸೌದಿ ಅರೇಬಿಯಾ, ಯುಎಇ, ಖತರ್, ಟರ್ಕಿ ಮತ್ತು ಬಹ್ರೇನ್ನಂತಹ ಪ್ರಮುಖ ಪಶ್ಚಿಮ ಏಷ್ಯಾದ ದೇಶಗಳು ಸೇರಿವೆ. ಟ್ರಂಪ್ನ ಬಲಪಂಥೀಯ ಮಿತ್ರರಾಷ್ಟ್ರಗಳಾದ ಅರ್ಜೆಂಟೀನಾ ಮತ್ತು ಹಂಗೇರಿ ಸದಸ್ಯರಾಗಿವೆ. ವಿಯೆಟ್ನಾಂ, ಕಾಂಬೋಡಿಯಾ ಹಾಗೂ ಪಾಕಿಸ್ತಾನ ಕೂಡ ಮಂಡಳಿಯಲ್ಲಿ ಸೇರಿವೆ. ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಗುರುವಾರ ವಾಷಿಂಗ್ಟನ್ ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಮಂಡಳಿಯ ಸದಸ್ಯರಲ್ಲದೆ, 22 ದೇಶಗಳು ವೀಕ್ಷಕರಾಗಿ ಸಭೆಯಲ್ಲಿ ಭಾಗವಹಿಸಿದ್ದವು. ಇವುಗಳಲ್ಲಿ ಯುಕೆ, ಜರ್ಮನಿ, ಇಟಲಿ, ನಾರ್ವೆ, ಸ್ವಿಟ್ಜರ್ಲ್ಯಾಂಡ್, ಪೋಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಸೇರಿವೆ. ಜಪಾನ್ ಹಾಗೂ ಓಮಾನ್ನಂತಹ ಪ್ರಮುಖ ದೇಶಗಳು ಸಹ ಭಾಗವಹಿಸಿದ್ದವು. ಭಾರತವನ್ನು ಅಮೆರಿಕದಲ್ಲಿರುವ ಭಾರತ ರಾಯಭಾರ ಕಚೇರಿಯ ಅಧಿಕಾರಿ ನಮಗ್ಯ ಸಿ. ಖಂಪಾ ಪ್ರತಿನಿಧಿಸಿದರು. ವೀಕ್ಷಕರಾಗಿ ಭಾಗವಹಿಸುವ ಮೊದಲು ಸರ್ಕಾರವು ಹಲವಾರು ಸಾಧಕ-ಬಾಧಕಗಳನ್ನು ಪರಿಶೀಲಿಸಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಮಂಡಳಿಯ ಒಂಭತ್ತು ಸದಸ್ಯರು ಯುದ್ಧಪೀಡಿತ ಪ್ರದೇಶದ ಪರಿಹಾರಕ್ಕಾಗಿ ಒಟ್ಟು 7 ಬಿಲಿಯನ್ ಡಾಲರ್ ನೆರವು ವಾಗ್ದಾನ ಮಾಡಿದ್ದಾರೆ ಎಂದು ಟ್ರಂಪ್ ಘೋಷಿಸಿದರು. ಶಾಂತಿ ಮಂಡಳಿಗೆ ಅಮೆರಿಕ 10 ಬಿಲಿಯನ್ ಡಾಲರ್ ನೀಡುವುದಾಗಿ ಅವರು ತಿಳಿಸಿದರು. ಆದರೆ ಈ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಖರ್ಚು ಮಾಡುವ ಪ್ರತಿಯೊಂದು ಡಾಲರ್ ಸ್ಥಿರತೆ ಮತ್ತು ಹೊಸ ಸಾಮರಸ್ಯದ ಭರವಸೆಯಲ್ಲಿ ಹೂಡಿಕೆಯಾಗಿದೆ, ಎಂದು ಟ್ರಂಪ್ ಹೇಳಿದ್ದಾರೆ. ►ಭಾರತದ ನಿಲುವು ಜನವರಿ 24ರಂದು ಟ್ರಂಪ್ ತಮ್ಮ ಶಾಂತಿ ಮಂಡಳಿಯನ್ನು ದಾವೋಸ್ ನಲ್ಲಿ ಉದ್ಘಾಟಿಸಿದಾಗ ಭಾರತ ಅಂತರ ಕಾಯ್ದುಕೊಂಡಿತ್ತು. ಯಾವ ದೇಶಗಳು ಸೇರುತ್ತವೆ ಮತ್ತು ಯಾವ ದೇಶಗಳು ಸೇರುವುದಿಲ್ಲ ಎಂಬುದನ್ನು ಗಮನಿಸಿ ನಂತರ ನಿರ್ಧಾರ ಕೈಗೊಳ್ಳುವ ನಿಲುವು ಭಾರತದ್ದಾಗಿತ್ತು. ಶಾಂತಿ ಮಂಡಳಿಯ ಮೊದಲ ಸಭೆಯಲ್ಲಿ ಹೆಚ್ಚಾಗಿ ಮಧ್ಯಪ್ರಾಚ್ಯ ದೇಶಗಳು, ಟ್ರಂಪ್ ಅವರ ರಾಜಕೀಯ ಮಿತ್ರರು ಹಾಗೂ ಅವರ ಪರವಾಗಿ ನಿಲ್ಲುವ ದೇಶಗಳು ಭಾಗವಹಿಸಿವೆ. ಆದರೆ ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಯುಕೆಯಂತಹ ಪ್ರಮುಖ ವಿಶ್ವಶಕ್ತಿಗಳು ಇಲ್ಲ. ಈ ದೇಶಗಳು ಭಾಗಿಯಾಗದ ಹಿನ್ನೆಲೆಯಲ್ಲಿ ಮಂಡಳಿ ನಿಜವಾದ ಜಾಗತಿಕ ನಾಯಕತ್ವದ ಮಾನ್ಯತೆ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ತಜ್ಞರಲ್ಲಿ ಮೂಡಿದೆ. ಇದು ಟ್ರಂಪ್ ಅವರ ವೈಯಕ್ತಿಕ ಯೋಜನೆಯಾಗಿರುವುದರಿಂದ, ಅವರು ಅಧಿಕಾರ ತೊರೆದ ಬಳಿಕ ಮಂಡಳಿಯ ಭವಿಷ್ಯ ಏನು ಎಂಬ ಅನುಮಾನವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ, ಮಾತುಕತೆಯಲ್ಲಿ ತಮ್ಮ ನಿರೀಕ್ಷೆಗಳು ಈಡೇರದಿದ್ದರೆ ಟ್ರಂಪ್ ಏಕಾಏಕಿ ಗುಂಪನ್ನು ತೊರೆಯುವ ಸಾಧ್ಯತೆ ಇದೆ ಎಂಬ ಚಿಂತೆ ಕೂಡ ವ್ಯಕ್ತವಾಗಿದೆ. ಪೂರ್ಣ ಸದಸ್ಯರಾಗುವುದಕ್ಕಿಂತ ‘ವೀಕ್ಷಕ’ರಾಗಿ ಉಳಿಯುವ ಮೂಲಕ ಭಾರತ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಅಗತ್ಯವಿದ್ದರೆ ಹೊರನಡೆಯುವುದೂ ಸುಲಭ. ಮಂಡಳಿ ವಿಶ್ವಸಂಸ್ಥೆಯ ಚೌಕಟ್ಟನ್ನು ದುರ್ಬಲಗೊಳಿಸಿ ಸಮಾನಾಂತರ ಸಂಸ್ಥೆಯಾಗಿ ಬೆಳೆಯಲು ಪ್ರಯತ್ನಿಸಿದರೆ, ಬಹುಪಕ್ಷೀಯತೆಗೆ ಭಾರತದ ಬದ್ಧತೆ ಪರೀಕ್ಷೆಗೆ ಒಳಗಾಗಬಹುದು. ಟ್ರಂಪ್ ತಮ್ಮ ಹೊಸ ಯೋಜನೆಯಲ್ಲಿ ವಿಶ್ವಸಂಸ್ಥೆಯನ್ನು ಒಳಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮಂಡಳಿ ಸಂಪೂರ್ಣವಾಗಿ ಸ್ಥಾಪನೆಯಾದ ಬಳಿಕ UN ಜೊತೆಗೆ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಗಾಝಾ ಪುನರ್ನಿರ್ಮಾಣವೇ ಮುಖ್ಯ ಗುರಿಯಾಗಿದ್ದರೂ, ಮಂಡಳಿಯ ಅಧಿಕೃತ ಚಾರ್ಟರ್ನಲ್ಲಿ ಗಾಝಾ ಉಲ್ಲೇಖವಿಲ್ಲ. ಬಳಿಕ ಈ ಗುಂಪು ‘ಜಗತ್ತಿಗಾಗಿ’ ಎಂದು ಘೋಷಿಸಲಾಗಿದೆ. ►ಭಾರತ–ಪಾಕಿಸ್ತಾನ ಆಯಾಮ ಭಾರತ–ಪಾಕಿಸ್ತಾನ ಸಂಘರ್ಷದಲ್ಲಿ ಟ್ರಂಪ್ ಭಾಗವಹಿಸುವ ಸಾಧ್ಯತೆ ಭಾರತಕ್ಕೆ ಕಳವಳಕಾರಿ ವಿಷಯವಾಗಿದೆ. ಗುರುವಾರ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಉಪಸ್ಥಿತರಿದ್ದಾಗ, ಟ್ರಂಪ್ ಪರಮಾಣು ಸಾಮರ್ಥ್ಯದ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನು ನಿಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿದರು. ಇದನ್ನು ಭಾರತ ಪದೇಪದೇ ನಿರಾಕರಿಸಿದೆ. ಯುದ್ಧ ನಿಲ್ಲಿಸದಿದ್ದರೆ ಶೇಕಡಾ 200ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನ ಸದಸ್ಯತ್ವ ಪಡೆದಿರುವಾಗ ಭಾರತ ಸಂಪೂರ್ಣವಾಗಿ ಹೊರಗುಳಿಯುವುದು ಕಷ್ಟಕರ ಎನ್ನುವ ಅಭಿಪ್ರಾಯ ಸರ್ಕಾರದೊಳಗೆ ವ್ಯಕ್ತವಾಗಿದೆ. ವೀಕ್ಷಕರಾಗಿ ಭಾಗವಹಿಸುವುದು ಭಾರತ–ಪಾಕಿಸ್ತಾನ ವಿಷಯವನ್ನು ಏಕಪಕ್ಷೀಯವಾಗಿ ಪ್ರಸ್ತಾಪಿಸುವ ಪ್ರಯತ್ನಗಳನ್ನು ಗಮನಿಸಲು ಮತ್ತು ಪ್ರತಿಕ್ರಿಯಿಸಲು ಅವಕಾಶ ಒದಗಿಸುತ್ತದೆ. ►ಇಸ್ರೇಲ್ಗೆ ಪ್ರಧಾನಿಯವರ ಭೇಟಿ ವೀಕ್ಷಕರಾಗಿ ಭಾಗವಹಿಸುವ ನಿರ್ಧಾರ ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿಗೂ ಮುನ್ನ ಬಂದಿದೆ. ದುರ್ಬಲ ಕದನ ವಿರಾಮದ ಮುಂದಿನ ಹಂತಗಳ ರಾಜತಾಂತ್ರಿಕ ಚರ್ಚೆಗಳ ಬಗ್ಗೆ ಭಾರತ ಮಾಹಿತಿ ಹೊಂದಿದೆ. ಪ್ಯಾಲೆಸ್ತೀನ್ ಸಮಸ್ಯೆಗೆ ‘ದ್ವಿರಾಷ್ಟ್ರ ಪರಿಹಾರ’ವನ್ನು ಭಾರತ ನಿರಂತರವಾಗಿ ಬೆಂಬಲಿಸಿದೆ. ಶಾಂತಿ ಮಂಡಳಿಯಲ್ಲಿ ವೀಕ್ಷಕರಾಗಿರುವುದರಿಂದ ಇತರ ದೇಶಗಳು ಪ್ರದೇಶದಲ್ಲಿ ಸ್ಥಿರತೆ ತರಲು ಮಾಡುವ ಪ್ರಯತ್ನಗಳನ್ನು ಗಮನಿಸಲು ಭಾರತಕ್ಕೆ ಅವಕಾಶ ದೊರೆಯುತ್ತದೆ. ಮಾತುಕತೆಯಲ್ಲಿ ನೇರವಾಗಿ ಭಾಗವಹಿಸದೆ ಮಾಹಿತಿ ಹೊಂದಿರುವ ಸ್ಥಿತಿ ಭಾರತಕ್ಕೆ ಲಾಭದಾಯಕ. ಭಾರತ–ಅಮೆರಿಕ ಸಂಬಂಧಗಳ ಹಿನ್ನೆಲೆಯಲ್ಲಿಯೂ ಭಾರತ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದೆ. ಎರಡೂ ದೇಶಗಳು ಅಲ್ಪಾವಧಿಯ ವ್ಯಾಪಾರ ಒಪ್ಪಂದ ಹಾಗೂ ‘ಪ್ಯಾಕ್ಸ್ ಸಿಲಿಕಾ’ ತಾಂತ್ರಿಕ ಮೈತ್ರಿಕೂಟದ ದಿಕ್ಕಿನಲ್ಲಿ ಮುಂದುವರಿಯುತ್ತಿರುವಾಗ, ಶಾಂತಿ ಮಂಡಳಿಯಲ್ಲಿ ಕೇವಲ ವೀಕ್ಷಕರಾಗಿ ಉಳಿಯುವ ಮೂಲಕ ಭಾರತ ಸಮತೋಲನ ಸಾಧಿಸಿದೆ.
ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ಭಾರತದ ಪ್ರತಿನಿಧಿ, ಹೊಸ ತಂತ್ರ ಪ್ರಯೋಗಿಸಿದ ಕೇಂದ್ರ ಸರ್ಕಾರ | Donald Trump
ಭಾರತ ಜಾಗತಿಕ ಮಟ್ಟದಲ್ಲಿ ತುಂಬಾ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ, ಏಕೆಂದರೆ ಒಂದು ಕಡೆ ಅತ್ತ ಇರಾನ್ &ಅಮೆರಿಕ ಬಡಿದಾಡಲು ಸಜ್ಜಾಗಿವೆ. ಇನ್ನೊಂದು ಕಡೆ ರಷ್ಯಾ ಹಾಗೂ ಉಕ್ರೇನ್ ತಿಕ್ಕಾಟ ಕೂಡ ಜಾಗತಿಕ ಮಟ್ಟದಲ್ಲಿ ದೇಶ ದೇಶಗಳನ್ನು ವಿಭಜನೆ ಮಾಡುತ್ತಿದೆ. ಹೀಗಿದ್ದಾಗಲೇ ಗಾಜಾ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ
ಭಟ್ಕಳ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
ಭಟ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಭಟ್ಕಳ ಶಾಖೆಯು 2025–26ನೇ ಸಾಲಿನ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 90% ಅಂಕ ಗಳಿಸಿದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಒಂದು ದಿನದ ಪ್ರೇರಣಾ ತರಬೇತಿ ಕಾರ್ಯಕ್ರಮವನ್ನು ಫೆ. 19ರಂದು ಆಯೋಜಿಸಿತ್ತು. ಸಂಪನ್ಮೂಲ ವ್ಯಕ್ತಿ ಡಯಟ್ ನ ಪ್ರಾಂಶುಪಾಲ ಡಾ. ಅಶೋಕ ಕಾಮತ್, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗ ದರ್ಶನ ನೀಡಿ. “ನೀವು ಈಗಾಗಲೇ 90% ಅಂಕಗಳನ್ನು ಪಡೆದು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೀರಿ. ಇದು ಅಂತಿಮ ಗುರಿಯಲ್ಲ, ಇನ್ನಷ್ಟು ಸಾಧನೆಗೆ ಮೊದಲ ಹೆಜ್ಜೆ,” ಎಂದು ಹೇಳಿದರು. ಪರೀಕ್ಷೆ ಭಯಪಡುವ ವಿಷಯವಲ್ಲ; ಅದು ನಿಮ್ಮ ಜ್ಞಾನವನ್ನು ತೋರಿಸುವ ಅವಕಾಶ. ಆತ್ಮವಿಶ್ವಾಸವೇ ನಿಮ್ಮ ದೊಡ್ಡ ಶಕ್ತಿ. ಓದಿದ್ದನ್ನು ನಂಬಿ, ಎಂದು ಅವರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ವೆಂಕಟೇಶ್ ನಾಯ್ಕ, ಯು.ಎ. ಲೋಹನಿ, ನಾಗರಾಜ ಗೌಡ (ಹಿರಿಯ ಉಪನ್ಯಾಸಕರು, ಕುಮಟ), ಪೂರ್ಣಿಮಾ ಮೊಗೇರ, ರಾಘವೇಂದ್ರ ನಾಯ್ಕ (ನಿರ್ದೇಶಕರು, ಅಕ್ಷರ ದಾಸೋಹ), ಅಶೋಕ ಆಚಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುರೇಶ್ ಮುರ್ಡೇಶ್ವರ ನಿರೂಪಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಭಟ್ಕಳ ವಹಿಸಿಕೊಂಡಿತ್ತು.
ಸಾರಕ್ಕಿ ಕೆರೆ ಒತ್ತುವರಿ: ಸಮಿತಿ ರಚನೆಗೆ ಕರ್ನಾಟಕ ಹೈಕೋರ್ಟ್ ಆದೇಶ
ಸಾರಕ್ಕಿ ಕೆರೆ ಬಫರ್ ವಲಯದ ಒತ್ತುವರಿ ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ರಚನೆ ಮಾಡುವಂತೆ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ನನ್ನಿಂದ ತಪ್ಪಾಗಿದೆ: ಶಾಲಿನಿ ರಜನೀಶ್ಗೆ ಕ್ಷಮೆ ಕೋರಿದ ಸ್ನೇಹಮಯಿ ಕೃಷ್ಣ
ಬೆಂಗಳೂರು: ನಕಲಿ ಆಡಿಯೋ ಹಾಗೂ ದಾಖಲಾತಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಆರೋಪ ಪ್ರಕರಣದಡಿ ಸಿಸಿಬಿ ವಶದಲ್ಲಿದ್ದ ಮೈಸೂರು ಮೂಲದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಿಡುಗಡೆಗೊಂಡಿದ್ದು, ಈ ವೇಳೆ ನನ್ನಿಂದ ತಪ್ಪಾಗಿದೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ವಿಚಾರಣೆ ಮುಗಿಸಿ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಕೆಎಎಸ್ ಅಧಿಕಾರಿ ನಟೇಶ್ ಅವರು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರು ನನ್ನನ್ನು ವಿಚಾರಣೆ ನಡೆಸಿದರು. ಆದರೆ, ಆಡಿಯೊದಲ್ಲಿ ನಟೇಶ್ ಧ್ವನಿ ಇದೆ. ಆದರೆ ಮುಂಭಡ್ತಿ ವಿಚಾರ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಲಂಚ ಪಡೆದಿದ್ದಾರೆ ಎಂದು ಮೈಸೂರು ಮೂಲದ ವಿನೋದ್ ನನಗೆ ಸುಳ್ಳು ಮಾಹಿತಿ ನೀಡಿದ್ದ. ಹೀಗಾಗಿ ಮುಖ್ಯ ಕಾರ್ಯದರ್ಶಿ ಅವರಿಗೆ ಕ್ಷಮೆ ಕೇಳುವೆ ಎಂದರು. ಅಧಿಕಾರಿ ನಟೇಶ್ ಹಾಗೂ ವಿನೋದ್ ಮಧ್ಯೆ ಹಣಕಾಸಿನ ವಿಚಾರಕ್ಕೆ ಮನಸ್ತಾಪವಿತ್ತು. ನನ್ನನ್ನು ಸಂಪರ್ಕಿಸಿ ಶಾಲಿನಿ ರಜನೀಶ್ ಬಗ್ಗೆ ವಿನೋದ್ ಸುಳ್ಳು ಮಾಹಿತಿ ನೀಡಿದ್ದ. ಈ ಮೂಲಕ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿಯೇ ಬಂಧನದಲ್ಲಿರುವ ವಿನೋದ್ ನೀಡಿದ ದಾಖಲಾತಿ ಆಧರಿಸಿ ಶಾಲಿನಿ ರಜನೀಶ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದೆ ಎಂದು ಅವರು ಮಾಹಿತಿ ನೀಡಿದರು. ಏನಿದು ಪ್ರಕರಣ?: ಮುಡಾ ಮಾಜಿ ಆಯುಕ್ತ ಹಾಗೂ ಹಾಲಿ ಕರ್ನಾಟಕ ಖಾದಿ ಗ್ರಾಮದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಿ.ಬಿ.ನಟೇಶ್ ಅವರು ನಕಲಿ ದಾಖಲೆ ಹಾಗೂ ಆಡಿಯೊ ಬಳಸಿ ತಮ್ಮ ವಿರುದ್ಧ ಅಪಪ್ರಚಾರ ಮಾಡಿರುವುದಾಗಿ ಆರೋಪಿಸಿ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ಫೆ.18ರಂದು ದೂರು ನೀಡಿದ್ದರು. ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಬಳಿಕ ಈ ಪ್ರಕರಣದಲ್ಲಿ ಮೈಸೂರು ಮೂಲದ ವಿನೋದ್ ಎಂಬವನನ್ನು ಬಂಧಿಸಿದ್ದಾರೆ. ನಟೇಶ್ ಹಾಗೂ ಮೈಸೂರು ಮೂಲದ ವಿನೋದ್ ಎಂಬಾತನ ಹಣಕಾಸು ವ್ಯವಹಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ನಟೇಶ್ ಅವರೊಂದಿಗಿನ ವೈಷ್ಯಮದ ಲಾಭ ಪಡೆಯಲು ಸ್ನೇಹಮಯಿ ಕೃಷ್ಣರನ್ನು ವಿನೋದ್ ಬಳಸಿಕೊಂಡಿದ್ದ. ಮುಂಭಡ್ತಿಗಾಗಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಲಂಚ ನೀಡಿರುವುದಾಗಿ ತಪ್ಪು ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಸ್ನೇಹಮಯಿ ಕೃಷ್ಣ, ಶಾಲಿನಿ ರಜನೀಶ್ ಮೇಲೆ ಲಂಚದ ಆರೋಪ ಹೊರಿಸಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಪ್ರಕರಣ ಸಂಬಂಧ ವಶದಲ್ಲಿದ್ದ ಸ್ನೇಹಮಯಿ ಕೃಷ್ಣರನ್ನು ಶನಿವಾರ ಬಿಟ್ಟು ಕಳುಹಿಸಲಾಗಿದ್ದು, ಫೆ.24ರಂದು ವಿಚಾರಣೆ ಬರುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಉಪ್ಪಿನಂಗಡಿ| ರೈಲು ಢಿಕ್ಕಿಯಾಗಿ ಯುವಕ ಮೃತ್ಯು; ಆತ್ಮಹತ್ಯೆ ಶಂಕೆ
ಉಪ್ಪಿನಂಗಡಿ: ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಹಾರಾಡಿ ಸೇತುವೆಯ ಸಮೀಪ ರೈಲು ಢಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಘಟನೆ ಫೆ.20ರಂದು ನಡೆದಿದ್ದು, ಈತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ಬಳಿಯ ಗೌಂಡತ್ತಿಗೆ ನಿವಾಸಿ ಸುಮತಿ ಎಂಬವರ ಪುತ್ರ ಪವನ್ ಕುಮಾರ್ (26) ಮೃತ ಯುವಕ. ವ್ಯಾಪಾರಿ ಹಡಗೊಂದರಲ್ಲಿ ಉದ್ಯೋಗಿಯಾಗಿದ್ದ ಇವರು ಕೆಲವು ತಿಂಗಳಿನಿಂದ ಕೆಲಸಕ್ಕೆ ತೆರಳದೇ ಮನೆಯಲ್ಲೇ ಇದ್ದರು. ನಿನ್ನೆ ಮಧ್ಯಾಹ ಮನೆ ಬಿಟ್ಟು ಹೋಗಿದ್ದ ಇವರು ತಾಯಿಯಲ್ಲಿ ನಾನು ಸಾಯುತ್ತೇನೆ ಎಂದು ಹೇಳಿದ್ದರಂತೆ. ಅಲ್ಲದೇ ತನ್ನ ಇನ್ಸ್ಟಾಗ್ರಾಂ ಅಕೌಂಟ್ನ ಡಿಪಿಯಲ್ಲೂ ` ಐ ಆ್ಯಮ್ ಡೆಡ್' ಅನ್ನೋ ಡಿಪಿ ಹಾಕಿಕೊಂಡಿದ್ದರು. ರೈಲು ಹಳಿಯಲ್ಲಿ ಮೃತದೇಹ ಪತ್ತೆ: ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಸಮೀಪ ಫೆ.20ರಂದು ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಕಪ್ಪು ಪ್ಯಾಂಟ್, ಫುಲ್ ಕೈ ಶರ್ಟ್ ಧರಿಸಿ, ಕೈಯಲ್ಲಿ ವಾಚ್, ಪಕ್ಕದಲ್ಲೇ ಕಪ್ಪು ಬಣ್ಣದ ಬ್ಯಾಗ್ ಪತ್ತೆಯಾಗಿತ್ತು. ರೈಲ್ವೇ ಹಳಿಯಲ್ಲಿ ಆಂಡ್ರಾಯ್ಡ್ ಮೊಬೈಲ್ ಪುಡಿಯಾಗಿ ಬಿದ್ದಿದ್ದು, ಘಟನೆ ಕುರಿತು ರೈಲಿನ ಪೈಲಟ್ ಸ್ಟೇಷನ್ಗೆ ಮಾಹಿತಿ ನೀಡಿದ್ದರು. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಂಗಳೂರಿಗೆ ಕೊಂಡೊಯ್ಯಲಾಗಿತ್ತು. ಮಗ ಮನೆಯಿಂದ ಹೋದವ ವಾಪಸ್ ಬರಲಿಲ್ಲವೆಂದು ಈತನ ತಾಯಿ ಸುಮತಿಯವರು ರಾತ್ರಿ ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ಸುರೇಶ್ ಅತ್ರಮಜಲು ಅವರ ಗಮನಕ್ಕೆ ತಂದಿದ್ದು, ಈತನ ಬಗ್ಗೆ ಇವರು ಮಾಹಿತಿ ಕಲೆ ಹಾಕುತ್ತಿದ್ದಾಗ ರೈಲ್ವೇ ಹಳಿಯಲ್ಲಿ ಮೃತದೇಹ ಪತ್ತೆಯಾದ ಸುದ್ದಿ ತಿಳಿದುಬಂತು. ಪರಿಶೀಲನೆ ನಡೆಸಿದಾಗ ಇದು ಈತನದ್ದೇ ಮೃತದೇಹ ಎಂದು ತಿಳಿದುಬಂತು. ಆಪತ್ಭಾಂಧವನಾದ ಗ್ರಾ.ಪಂ. ಮಾಜಿ ಸದಸ್ಯ: ಮೃತನ ಕುಟುಂಬವು ತೀರಾ ಬಡಕುಟುಂಬವಾಗಿದ್ದು, ತಂದೆಯಿಲ್ಲದ ಈತನನ್ನು ತಾಯಿ ಕೂಲಿ ಕೆಲಸ ಮಾಡಿ ಓದಿಸಿ ಬೆಳೆಸಿದ್ದರು. ಈತನ ಸಹೋದರಿಯೂ ಕೂಡಾ ಅರ್ಧದಲ್ಲೇ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಳು. ಈತನ ಸಾವಿನ ಸುದ್ದಿ ತಿಳಿದ ಕೂಡಲೇ ಗ್ರಾ.ಪಂ. ಮಾಜಿ ಸದಸ್ಯ ಸುರೇಶ್ ಅತ್ರಮಜಲು ಅವರು ಈ ಮನೆಯವರ ನೆರವಿಗೆ ಬಂದಿದ್ದು, ಮನೆಯವರನ್ನು ಕರೆದುಕೊಂಡು ಮಂಗಳೂರಿಗೆ ತೆರಳಿ ಅಲ್ಲಿ ನಡೆಯಬೇಕಾಗಿದ್ದ ಇಲಾಖಾತ್ಮಕ ಪ್ರಕ್ರಿಯೆಯನ್ನೆಲ್ಲಾ ಮುಗಿಸಿ, ಮೃತದೇಹವನ್ನು ಮನೆಗೆ ತಂದು ದುರ್ಗಾಗಿರಿಯ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಮುಗಿಯುವ ತನಕ ಮನೆಯವರ ಜೊತೆಗಿದ್ದರು. ಅಲ್ಲದೇ ಅವರಿಗೆ ಆರ್ಥಿಕ ನೆರವನ್ನೂ ನೀಡಿದರು. ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಮೃತ ಪವನ್ ಕುಮಾರ್ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಶಿಖರ್ ಧವನ್ ಬದುಕಿನ ಹೊಸ ಇನ್ನಿಂಗ್ಸ್: ಐರಿಷ್ ಚೆಲುವೆ ಸೋಫಿ ಶೈನ್ ಜೊತೆ `ಗಬ್ಬರ್' ಎರಡನೇ ಮದುವೆ
Shikhar Dhawan Marries Sophie Shine- ದುಬೈ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಐರಿಷ್ ಚೆಲುವೆ ಸೋಪಿ ಶೈನ್ ಜೊತೆ ಶಿಖರ್ ಧವನ್ ಅವರು ಇದೀಗ ವಿವಾಹವಾಗಿದ್ದಾರೆ. ದಿಲ್ಲಿಯಲ್ಲಿ ನಡೆದ ನಡೆದ ಖಾಸಗಿ ಸಮಾರಂಭದಲ್ಲಿ ಅವರ ಕೆಲ ಆಪ್ತೇಷ್ಟರಿಗೆ ಮಾತ್ರ ಆಮಂತ್ರಣವಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುಜುವೇಂದ್ರ ಚಹಲ್ ಅವರು ವಿವಾಹದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. 2023ರಲ್ಲಿ ತಮ್ಮ ಮಾಜಿ ಪತ್ನಿ ಆಯೇಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದಿದ್ದ ಶಿಖರ್ ಗೆ ಇದು ಎರಡನೇ ವಿವಾಹವಾಗಿದೆ.
ಮಂಗಳೂರು| ಗಾಂಜಾ ಮಾರಾಟ ಯತ್ನ ಪ್ರಕರಣ; ನಾಲ್ಕು ಮಂದಿ ಆರೋಪಿಗಳ ಬಂಧನ
ಪಣಂಬೂರು: ಮಹಾರಾಷ್ಟ್ರದಿಂದ ಗಾಂಜಾ ತಂದು ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಮಾರಾಟ ಮಾಡಲು ಯತ್ನಿಸುತ್ತಿದ್ದ 4 ಮಂದಿಯನ್ನು ಪಣಂಬೂರು ಪೊಲೀಸರು ಬಂಧಿಸಿ 22 ಕೆ.ಜಿ.ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಜಲಗಾಂ ಜಿಲ್ಲೆ ಚೊಪ್ಪಡ ತಾಲೂಕು ನಿವಾಸಿ ಕರಣ್ ಬಾಬು ರಾಂ ಜಾದವ್(27), ಮಧ್ಯಪ್ರದೇಶ ದೇವಾಸ್ ಜಿಲ್ಲೆಯ ತಾಶಿಲ್ ಬಳಿಯ ನಿವಾಸಿ ಸಮೀರ್ ಶಾ(19), ಉಡುಪಿ ಜಿಲ್ಲೆ ಹೆಜಮಾಡಿ ಕೋಡಿ ನಿವಾಸಿ ಎಂ.ಎಚ್. ಮಯ್ಯದಿ ( 48), ಮಂಗಳೂರು ಕುದ್ರೋಳಿ ನಿವಾಸಿ ಪ್ರಸ್ತುತ ಕಾವೂರಿನಲ್ಲಿ ವಾಸವಿರುವ ಇಬ್ರಾಹಿಂ ಕಲೀಲ್( 47) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ 11.12 ಲಕ್ಷ ರೂ. ಮೌಲ್ಯದ 22.250 ಕೆ.ಜಿ ಗಾಂಜಾ, 18 ಸಾವಿರ ಬೆಲಬಾಳುವ 6 ಮೊಬೈಲ್ ಪೋನ್ ಗಳು, ಗಾಂಜಾ ಸಾಗಿಸಲು ಬಳಸಿದ್ದ 1ಲಕ್ಷ ರೂ. ಮೌಲ್ಯದ ಎರಡು ಸ್ಕೂಟರ್ ಗಳು ಸೇರಿ ಒಟ್ಟು 12,30,500 ರೂ.ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಮಾರಾಟ ಮಾಡಲು ಹೊರ ರಾಜ್ಯ ದಿಂದ ತಂದಿರುವ ಬಗ್ಗೆ ಮಾಹಿತಿ ಪಡೆದ ಉತ್ತರ ಉಪ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಮತ್ತು ಅವರ ತಂಡದ ಅಧಿಕಾರಿ, ಸಿಬ್ಬಂದಿ ಹಾಗೂ ಪಣಂಬೂರು ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪೈಕಿ ಕರಣ್ ಬಾಬು ರಾಂ ಜಾದವ್ ಮತ್ತು ಸಮೀರ್ ಶಾ ಎಂಬವರು ಮಹಾರಾಷ್ಟ್ರದಿಂದ ಮಯ್ಯದ್ದಿ ಹಾಗೂ ಮಧ್ಯ ಪ್ರದೇಶ ಶಾರೂಕ್ ಎಂಬವರಿಂದ ಪಡೆದು ಉಡುಪಿ ಹೆಜಮಾಡಿ ಕೋಡಿಯ ಎಂ.ಎಚ್. ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ಅವರಿಗೆ ನೀಡುತ್ತಿದ್ದರು. ಇವರು ಗಾಂಜಾವನ್ನು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು, ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.21/2026 ಕಲಂ:8(C), 20(b),(ii)(C) ಎನ್ ಡಿಪಿಎಸ್ ಆ್ಯಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರೀತಿಸುವುದು ಅಪರಾಧವೆನಿಸಿದ ದೇಶದ ಪ್ರಜೆಗಳು ನಾವು! : ವಿನಯ ಒಕ್ಕುಂದ
5ನೇ ರಾಜ್ಯ ಎಲ್ಲೈಸಿ ದುಡಿಯುವ ಮಹಿಳೆಯರ ಸಮಾವೇಶ
Shikhar Dhawan Marriage: ಭಾರತೀಯ ಕ್ರಿಕೆಟರ್ ಶಿಖರ್ ಧವನ್ ಅವರು ಐರ್ಲೆಂಡ್ ಮೂಲದ ಸೋಫಿ ಶೈನ್ ಅವರೊಂದಿಗೆ ಇಂದು (ಫೆಬ್ರವರಿ 21) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಧವನ್ ಅವರ ಎರಡನೇ ವಿವಾಹವಾಗಿದೆ. ಇಬ್ಬರು ಸುಮಾರು ಒಂದು ವರ್ಷದಿಂದ ಪರಸ್ಪರ ಸಂಪರ್ಕದಲ್ಲಿದ್ದು, ಜನವರಿ 12ರಂದು ಇನ್ಸ್ಟಾಗ್ರಾಂ ಮೂಲಕ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು. ದೆಹಲಿ-ಎನ್ಸಿಆರ್ನಲ್ಲಿ ನಡೆದ ಈ
ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾದ ಮಗಳು: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ
ಮಂಡ್ಯ: ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಕುಟುಂಬದಲ್ಲೇ ಉಂಟಾದ ಕಲಹ ಮನೆಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೋಷಕರ ವಿರೋಧದ ನಡುವೆಯೂ ಮಗಳು ಪ್ರೀತಿಸಿದ ಯುವಕನನ್ನು ವಿವಾಹವಾದ ಹಿನ್ನೆಲೆ ಆಕೆಯ ತಂದೆ ಕೋಪಗೊಂಡು ಅಳಿಯನ ಮನೆಗೆ ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಚುಂಚಗಹಳ್ಳಿ ಗ್ರಾಮದ ನಿವಾಸಿ ಕಾವ್ಯ
ಯಾದಗಿರಿ | ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ರಾಚನಗೌಡ ಮುದ್ನಾಳ್
ಯಾದಗಿರಿ : ಬೇಸಿಗೆ ದಿನಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹಿರಿಯ ನಾಯಕ ರಾಚನಗೌಡ ಮುದ್ನಾಳ್ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಕೃಷ್ಣ ನದಿ ಹಾಗೂ ಭೀಮಾ ನದಿ ಹರಿಯುತ್ತಿದ್ದರೂ, ಕಳೆದ ಹಲವು ವರ್ಷಗಳಿಂದ ಬೇಸಿಗೆ ಸಂದರ್ಭದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿದೆ. ಇದರಿಂದ ಜನರು ಮತ್ತು ಜಾನುವಾರುಗಳು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ವಿಳಂಬವಿಲ್ಲದೆ ಸಮಗ್ರ ಯೋಜನೆ ರೂಪಿಸಬೇಕು. ಕೂಡಲೇ ಟಾಸ್ಕ್ಫೋರ್ಸ್ ಸಭೆ ಕರೆದು ಪ್ರತಿ ತಾಲ್ಲೂಕಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅಗತ್ಯವಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವಂತೆ ಅವರು ಸಲಹೆ ನೀಡಿದ್ದಾರೆ. ಬೇಸಿಗೆಯ ಆರಂಭದಲ್ಲೇ ಸಮರ್ಪಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಮುದ್ನಾಳ್ ಅಭಿಪ್ರಾಯಪಟ್ಟಿದ್ದಾರೆ.
Haryana | ಸ್ವಯಂ ಘೋಷಿತ ಗೋರಕ್ಷಕ 'ಬಿಟ್ಟು ಬಜರಂಗಿ'ಗೆ ಮದುವೆ ಆಮೀಷವೊಡ್ಡಿ 30 ಸಾವಿರ ರೂ. ಪಂಗನಾಮ
‘ದಿಬ್ಬಣ’ದೊಂದಿಗೆ ಉತ್ತರ ಪ್ರದೇಶಕ್ಕೆ ತೆರಳಿ ಮೋಸಹೋದ ಬಿಟ್ಟು
ಯಾದಗಿರಿ | ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು : ಶಾಸಕ ಕಂದಕೂರ ಸಲಹೆ
21 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ
Yadgiri | ಕ್ರೀಡೆಗಳು ಮಾನಸಿಕ ದೃಢತೆಗೂ ದಾರಿ: ಶಾಸಕ ಶರಣಗೌಡ ಕಂದಕೂರ
ಕಲ್ಯಾಣ ಕರ್ನಾಟಕ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ಗೆ ಚಾಲನೆ
ಮಂಗಳೂರು| ಜಾತಿ ನಿಂದನೆ : ಎರಡು ಪ್ರಕರಣಗಳಲ್ಲಿ ಆರೋಪಿಗಳಿಗೆ ಜೈಲುಶಿಕ್ಷೆ, ದಂಡ
ಮಂಗಳೂರು, ಫೆ.21: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಎರಡೂ ಪ್ರಕರಣದಲ್ಲಿ ಸರಕಾರದ ಪರವಾಗಿ ಅಭಿಯೋಜಕಿ ಜ್ಯೋತಿ ನಾಯ್ಕ ವಾದಿಸಿದ್ದರು. *ಪ್ರಕರಣ 1: 2019ರ ಮೇ 6ರಂದು ಪರಿಶಿಷ್ಠ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾತಿನಿಂದನೆ ಮಾಡಿ, ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿದಂತೆ ಆರೋಪಿ ನಾರಾಯಣ ಗೌಡ ಎಂಬಾತನಿಗೆ ಕಲಂ 447, 324 ಮತ್ತು 504 ಅನ್ವಯ ಶಿಕ್ಷೆ ಪ್ರಕಟಿಸಿ 500, 10,000 ಮತ್ತು 10,000 ರೂ.ದಂಡ ಪಾವತಿಸಲು ಆದೇಶಿಸಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದಲ್ಲಿ ಕ್ರಮವಾಗಿ 3 ತಿಂಗಳು, 6 ತಿಂಗಳು ಮತ್ತು 6 ತಿಂಗಳ ಶಿಕ್ಷೆ ವಿಧಿಸಿದೆ. *ಪ್ರಕರಣ 2: 2022ರ ಅಕ್ಟೋಬರ್ 7ರಂದು ಪರಿಶಿಷ್ಟ ಜಾತಿಗೆ ಸೇರಿದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಸ್ಮಾನ್ ಎಂಬಾತನಿಗೆ ನ್ಯಾಯಾಲಯವು ಐಪಿಸಿ ಕಲಂ 354, 506 ಮತ್ತು ಎಸ್ಸಿ-ಎಸ್ಟಿ 3(1)ಡಬ್ಲ್ಯು, 3(2)(ವಿಎ), ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ವಿಫಲವಾದರೆ ಹೆಚ್ಚುವರಿಯಾಗಿ 6 ತಿಂಗಳು ಶಿಕ್ಷೆ ವಿಧಿಸಿದೆ. ಐಪಿಸಿ 506ರ ಅನ್ವಯ 6 ತಿಂಗಳು ಜೈಲು ಶಿಕ್ಷೆ 5 ಸಾವಿರ ರೂ.ದ.ಡ ವಿಧಿಸಿದೆ. ಈ ದಂಡ ತೆರಲು ವಿಫಲವಾದರೆ ಹೆಚ್ಚುವರಿಯಾಗಿ 15 ದಿನಗಳ ಜೈಲು ಶಿಕ್ಷೆ ಅನುಭವಿಸಲು ಆದೇಶಿಸಿದೆ.
ಎಸ್ಐಆರ್ ನಂತರ ಅಂತಿಮ ಮತದಾರರ ಪಟ್ಟಿ ಪ್ರಕಟ ; ಕಾಸರಗೋಡು ಜಿಲ್ಲೆಯಲ್ಲೀಗ 10,96,241ಮತದಾರರು
ಕಾಸರಗೋಡು ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಪ್ರಸ್ತುತ ಒಟ್ಟು 10,96,241 ಮತದಾರರಿದ್ದಾರೆ. ಹಿಂದಿನ ಕರಡು ಪಟ್ಟಿಗೆ ಹೋಲಿಸಿದರೆ ಇದೀಗ 74,896 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಕ್ಷೇತ್ರವಾರು ಮತದಾರರ ಸಂಖ್ಯಾ ವಿವರ ಇಲ್ಲಿದೆ.
ಶಹಾಪುರ |ರಾಜ್ಯ ಬಜೆಟ್ನಲ್ಲಿ ಶಿಕ್ಷಣಕ್ಕೆ ಶೇ.30ರಷ್ಟು ಅನುದಾನ ಮೀಸಲಿಡಲು ಎಸ್ಎಫ್ಐ ಆಗ್ರಹ
ಶಹಾಪುರ : 2026–27ನೇ ರಾಜ್ಯ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ.30ರಷ್ಟು ಅನುದಾನ ಮೀಸಲಿಟ್ಟು ಗುಣಮಟ್ಟದ ಸಾರ್ವಜನಿಕ ಶಿಕ್ಷಣ ಒದಗಿಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಶಹಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಹೊಸಪೇಟೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖ್ಯಮಂತ್ರಿಗಳಿಗೆ ಉದ್ದೇಶಿಸಿದ ಮನವಿ ಪತ್ರವನ್ನು ಹೋತ್ಪೇಟೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಂಚಾಲಕ ಇಮಾಮಸಾಬ್ ನದಾಫ್, 2010ರಲ್ಲಿ ರಾಜ್ಯದಲ್ಲಿ 72,875 ಸರ್ಕಾರಿ ಶಾಲೆಗಳಿದ್ದು, 2,45,337 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಆದರೆ 2021–22ರ ವೇಳೆಗೆ ಶಾಲೆಗಳ ಸಂಖ್ಯೆ 47,386ಕ್ಕೆ ಹಾಗೂ ಶಿಕ್ಷಕರ ಸಂಖ್ಯೆ 1,45,326ಕ್ಕೆ ಇಳಿಕೆಯಾಗಿದೆ. ಕಳೆದ 11 ವರ್ಷಗಳಲ್ಲಿ 25,489 ಶಾಲೆಗಳು ಮುಚ್ಚಲ್ಪಟ್ಟಿದ್ದು, 1 ಲಕ್ಷಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಕಡಿತಗೊಂಡಿವೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಿಗೆ ಸಮರ್ಪಕ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡದ ಪರಿಣಾಮ ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2022–23ರಲ್ಲಿ 45.46 ಲಕ್ಷ ವಿದ್ಯಾರ್ಥಿಗಳಿದ್ದರೆ, 2024–25ರಲ್ಲಿ ಅದು 40.74 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮ ಕೈಬಿಡಬೇಕು ಹಾಗೂ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡ ದೇವಿಂದ್ರ ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪ್ರದಾನ
ಮಂಗಳೂರು, ಫೆ.21: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಸಮಾರಂಭ ಶನಿವಾರ ಕಾಲೇಜಿನ ಕಲಾಂ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 2025ನೇ ಸಾಲಿನ 110 ಎಂಬಿಎ, 119 ಎಂಸಿಎ. ಹಾಗೂ 5 ಎಂಬಿಎ. (ಐಇವಿ) ವಿದ್ಯಾರ್ಥಿ ಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಕಿಷ್ಕಿಂದಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಟಿ. ಎನ್. ನಾಗಭೂಷಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ದ್ದರು. ನೈತಿಕ ನಾಯಕತ್ವ, ನವೀನತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ವಿವರಿಸಿದರು. 2007-2009ರ ಎಂಬಿಎ ಹಳೆಯ ವಿದ್ಯಾರ್ಥಿ ಗ್ಲೋಬಲ್ ಇ-ಸಾಫ್ಟ್ಸಿಸ್ ಪ್ರೈವೇಟ್ ಲಿಮಿಟೆಡ್ ಕ್ಲೈಂಟ್ ಸರ್ವೀಸ್ ಮ್ಯಾನೇಜರ್ ಜಾನ್ ರೋಹನ್ ಗೌರವ ಅತಿಥಿಯಾಗಿ ತಮ್ಮ ಭಾಷಣದಲ್ಲಿ ಸ್ನಾತಕೋತ್ತರ ಪದವಿ ಎಂದರೆ ಹೊಣೆಗಾರಿಕೆ, ನಾಯಕತ್ವ ಮತ್ತು ನಿರಂತರ ಅಧ್ಯಯನದ ಸಂಕೇತವೆಂದು ಹೇಳಿದರು. ತಾಂತ್ರಿಕ ಪ್ರಗತಿಗೆ ಹೊಂದಿಕೊಂಡು ಸದಾಚಾರ ಮತ್ತು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಎಸ್ಜೆಇಸಿ ಅಧ್ಯಕ್ಷ ಅತೀ ವಂ. ಡಾ. ಪೀಟರ್ ಪೌಲ್ ಸಲ್ಡಾನ ಸಮಾರಂಭ ಅಧ್ಯಕ್ಷತೆ ವಹಿಸಿ ‘ವಿದ್ಯಾರ್ಥಿಗಳಿಗೆ ಮಾನವೀಯತೆ ಮತ್ತು ಮೌಲ್ಯಾಧಾರಿತ ಜೀವನದೊಂದಿಗೆ ಸಾಧನೆ ಮಾಡುವಂತೆ ಪ್ರೇರೇಪಿಸಿದರು. ಗೌರವ ಅತಿಥಿ ಜಾನ್ ರೋಹನ್ ತಮ್ಮ ಭಾಷಣದಲ್ಲಿ ಸ್ನಾತಕೋತ್ತರ ಪದವಿ ಎಂದರೆ ಹೊಣೆಗಾರಿಕೆ, ನಾಯಕತ್ವ ಮತ್ತು ನಿರಂತರ ಅಧ್ಯಯನದ ಸಂಕೇತವೆಂದು ಹೇಳಿದರು. ತಾಂತ್ರಿಕ ಪ್ರಗತಿಗೆ ಹೊಂದಿಕೊಂಡು ಸದಾಚಾರ ಮತ್ತು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ಮುಖ್ಯ ಅತಿಥಿ ಡಾ. ಟಿ. ಎನ್. ನಾಗಭೂಷಣ ಅವರು ಭಾಷಣದಲ್ಲಿ ನೈತಿಕ ನಾಯಕತ್ವ, ನವೀನತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಒತ್ತಿಹೇಳಿದರು. ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ವಿದ್ಯಾಭ್ಯಾಸದ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆಯ ನಿರ್ದೇಶಕ ವಂ.ಫಾ. ವಿಲ್ಫ್ರೆಡ್ ಪ್ರಕಾಶ್ ಡಿ ಸೋಜ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ರಿಯೋ ಡಿಸೋಜ ಅತಿಥಿಗಳನ್ನು ಪರಿಚಯಿಸಿದರು.
ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
ಕಾರ್ಕಳ, ಫೆ.21: ಕುಕ್ಕುಂದೂರು ಗ್ರಾಮದ ನಾಗ ಎಂಟರ್ಪ್ರೈಸಸ್ ಕಟ್ಟಡದ 3ನೇ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ನಿತ್ಯಾನಂದ ಶೆಟ್ಟಿ ಎಂಬವರ ಮಗ ಸಚಿನ್ ಶೆಟ್ಟಿ(25) ಎಂಬವರು ವೈಯ ಕ್ತಿಕ ಕಾರಣದಿಂದ ಮನನೊಂದು ಫೆ.20ರಂದು ಬೆಳಗ್ಗೆ ಮನೆಯ ಮೇಲ್ಛಾವಣಿಯ ಕಬ್ಬಿಣದ ಕೊಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯಡ್ಕ: ಅನಾರೋಗ್ಯದಿಂದ ಬಳಲುತ್ತಿದ್ದ ಪೆರ್ಡೂರು ಗ್ರಾಮದ ಗಿರಿಜಾ(60) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಫೆ.20ರಂದು ಮಧ್ಯಾಹ್ನ ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಅತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೆರಿಕಾದ ಸಾಮ್ರಾಜ್ಯಶಾಹಿ ಕ್ರೂರಮುಖಗಳ ಅನಾವರಣ: ಪ್ರೊ.ಫಣಿರಾಜ್
ಉಡುಪಿ, ಫೆ.21: ಅಮೆರಿಕಾ ಸಾಮ್ರಾಜ್ಯಶಾಹಿಯು ಸಮಾಜವಾದಿ ದೇಶಗಳ ಮೇಲೆ ಅಲ್ಲಿನ ಸಂಪತ್ತನ್ನು ಲೂಟಿ ಮಾಡಲು ನಿರಂತರವಾಗಿ ಮಿಲಿಟರಿ ದಾಳಿ ನಡೆಸಿ ಬೆದರಿಕೆ ಹಾಕುತ್ತಿದೆ. ಭಾರತದ ಮೇಲೆ ಮಿಲಿಟರಿ ದಾಳಿಯ ಬದಲಿಗೆ ಇಲ್ಲಿನ ರೈತರ, ಕಾರ್ಮಿಕರ ಪರ ಕಾನೂನುಗಳನ್ನು ಬದಲಾಯಿಸಿ ಸರಕಾರದ ನೀತಿಗಳನ್ನೇ ಅಮೆರಿಕಾ ಪರ ಮಾಡಿಕೊಂಡಿ ರುವುದು ಸಾಮ್ರಾಜ್ಯಶಾಹಿ ಕ್ರೂರ ಮುಖಗಳನ್ನು ಅನಾವರಣಗೊಳಿಸಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ. ಸಿಪಿಎಂ ಉಡುಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಶನಿವಾರ ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ‘ಯು.ಎಸ್. ಸಾಮ್ರಾಜ್ಯಶಾಹಿ ಭಾರತ ಜನತೆಯ ಶತ್ರು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು. ಅಮೆರಿಕಾ ಕಡಿಮೆ ಬೆಲೆಗೆ ರಷ್ಯಾದಿಂದ ಪಡೆಯುತ್ತಿದ್ದ ತೈಲವನ್ನು ಪಡೆಯಬಾರದು ಎಂದು ಬೆದರಿಕೆ ಹಾಕಿ ದುಬಾರಿ ಬೆಲೆಯ ತೈಲವನ್ನು ಪಡೆಯಬೇಕೆಂಬ ಷರತ್ತು ಜನತೆಯ ಮೇಲೆ ಹೊರೆ ಹಾಕಲು ಮುಂದಾಗಿದೆ. ಹಾಗಾಗಿ ಇದು ಭಾರತ ಜನತೆಯ ಶತ್ರು ಎಂದು ನಾವು ತಿಳಿಯಬೇಕು. ಸಾಮ್ರಾಜ್ಯಶಾಹಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿ ಸದೇ ಇದ್ದರೆ ಭಾರತ ದೇಶಕ್ಕೆ ಮುಂದೆ ಅಪಾಯವಿದೆ ಎಂದು ಎಚ್ಚರಿಸಿದರು ಇದರ ವಿರುದ್ಧ ಆಂದೋಲನ ನಡೆಯಬೇಕು ಎಂದು ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಸುಂದರ್ ಮಾಸ್ತರ್, ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್. ನರಸಿಂಹ ಮಾತನಾಡಿದರು. ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿನ ಬದಲಾವಣೆ ಗಾಗಿ ತೊಡಗಿಸಿ ಕೊಂಡಿರುವ ಎಡಪಂಥೀಯರು ಚಳುವಳಿಗಾರರು, ಬರಹಗಾರರು ಇಂದು ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನ ಆಚರಿಸುತ್ತಿದ್ದಾರೆ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ಮತ್ತಷ್ಟು ಬಲಪಡಿಸಲು ನಾವೆಲ್ಲರೂ ಮುಂದಾಗಿ ಜನತೆಯ ಹಕ್ಕುಗಳನ್ನು ರಕ್ಷಿಸುವುದು ಅನಿವಾರ್ಯ ಮತ್ತು ಅಗತ್ಯವಿದೆ ಎಂದು ಹೇಳಿದರು. ಸಿಪಿಎಂ ಮುಖಂಡರಾದ ಕವಿರಾಜ್ ಎಸ್.ಕಾಂಚನ್, ವೆಂಕಟೇಶ್ ಕೋಣಿ, ಉಮೇಶ್ ಕುಂದರ್, ಸುಭಾಶ್ಚಂದ್ರ ನಾಯಕ್, ಶೀಲಾವತಿ, ಸಹಬಾಳ್ವೆ ಸಂಘಟನೆಯ ಇದ್ರಿಸ್ ಹೂಡೆ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಉಪಸ್ಥಿತರಿದ್ದರು. ಸಂವಾದದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯವವರು ಭಾಗವಹಿಸಿದ್ದರು.
Uttar Pradesh | ಅಂತರ್ಧರ್ಮೀಯ ಪ್ರೇಮ ವಿರೋಧಿಸಿ ಸಹೋದರಿಯ ಹತ್ಯೆ: ಪೊಲೀಸರಿಗೆ ಸ್ವತಃ ಮಾಹಿತಿ ನೀಡಿದ ಆರೋಪಿ
ಸಂಭಲ್, ಫೆ.21: 25ರ ಹರೆಯದ ವ್ಯಕ್ತಿಯೋರ್ವ ತನ್ನ ಸಹೋದರಿಯನ್ನು ಕೊಲೆ ಮಾಡಿದ ಘಟನೆ ಇಲ್ಲಿನ ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮಟಾವಲಿ ಪತ್ತಿ ಪ್ರದೇಶದಲ್ಲಿ ನಡೆದಿದ್ದು, ಇದು ಬೇರೆ ಧರ್ಮದ ವ್ಯಕ್ತಿಯೊಂದಿಗೆ ಆಕೆಯ ಪ್ರೇಮಕ್ಕೆ ಸಂಬಂಧಿಸಿದ ಮರ್ಯಾದೆಗೇಡು ಹತ್ಯೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ರೂಪ್ ಜಹಾನ್ (21) ಕೊಲೆಯಾಗಿರುವ ಯುವತಿಯಾಗಿದ್ದು, ತನ್ನದೇ ಗ್ರಾಮದ ಶಿವಂ ಸೈನಿ (22) ಅವರನ್ನು ಪ್ರೇಮಿಸುತ್ತಿದ್ದಳು. ತನ್ನ ಪುತ್ರನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಆರೋಪಿಯ ತಂದೆ ನೌಶೇರ್, ತನ್ನ ಕುಟುಂಬಕ್ಕೆ ಅವಮಾನವನ್ನುಂಟು ಮಾಡುವ ಹುಡುಗಿಯನ್ನು ಕೊಲ್ಲುವುದೇ ಸರಿ ಎಂದು ಹೇಳಿದ್ದಾರೆ. ‘ರೂಪ್ ಅನುಚಿತವಾಗಿ ನಡೆದುಕೊಂಡಿದ್ದಳು. ಆಕೆ ಸೈನಿಯನ್ನು ಪ್ರೇಮಿಸಿದ್ದು, ಆತನನ್ನು ಮದುವೆಯಾಗಲು ಬಯಸಿದ್ದಳು. ಗ್ರಾಮಸ್ಥರು ನನ್ನನ್ನು ಗೇಲಿ ಮಾಡುತ್ತಿದ್ದರು. ತನ್ನ ಕೃತ್ಯದ ಬಗ್ಗೆ ನನ್ನ ಮಗನಿಗೆ ಪಶ್ಚಾತ್ತಾಪವಿಲ್ಲ. ನಮಗೆ ಅವಮಾನವನ್ನುಂಟು ಮಾಡಿದ ಹುಡುಗಿಯನ್ನು ಕೊಲ್ಲುವುದೇ ಸರಿ. ಮಗ ಕೋಪದ ಭರದಲ್ಲಿ ಆಕೆಯನ್ನು ಕೊಂದಿದ್ದಾನೆ’ ಎಂದು ನೌಶೇರ್ ಹೇಳಿದ್ದನ್ನು ಸುದ್ದಿಸಂಸ್ಥೆ ಉಲ್ಲೇಖಿಸಿದೆ. ‘ನಾವು ಮುಸ್ಲಿಮರು, ಆತ ಸೈನಿ. ನಾವು ಈ ಮದುವೆಯನ್ನು ಮಾಡಿಸಲು ಹೇಗೆ ಸಾಧ್ಯ? ಹುಡುಗ ನಮ್ಮ ಸಮುದಾಯದವನೇ ಆಗಿದ್ದರೆ ವಿಷಯ ಬೇರೆಯಾಗಿರುತ್ತಿತ್ತು’ ಎಂದರು. ಪೊಲೀಸ್ ಅಧಿಕಾರಿಗಳ ಪ್ರಕಾರ, ಗುರುವಾರ ತಡರಾತ್ರಿ ಮನೆಯವರು ಎಲ್ಲರೂ ಹೊರಗೆ ಹೋಗಿದ್ದಾಗ ಜೇನ್ ಆಲಂ ತನ್ನ ಸಹೋದರಿಯನ್ನು ಉಸಿರುಗಟ್ಟಿಸಿ ಕೊಂದ ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಯ 112 ಸಂಖ್ಯೆಗೆ ಕರೆ ಮಾಡಿ ಕೊಲೆಯ ಮಾಹಿತಿಯನ್ನು ನೀಡಿದ್ದ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ರೂಪ್ ಹಿಂದೆ ಮನೆಯನ್ನು ತೊರೆದು ಅಮ್ರೋಹಾ ಜಿಲ್ಲೆಯಲ್ಲಿರುವ ತನ್ನ ಪ್ರೇಮಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಳು. ಗ್ರಾಮಸ್ಥರ ಮಧ್ಯಪ್ರವೇಶದ ಬಳಿಕ ಕುಟುಂಬವು ಆಕೆಯನ್ನು ಮರಳಿ ಕರೆತಂದಿತ್ತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಯೋಧ್ಯೆ ಶ್ರೀರಾಮಮಂದಿರ ಉದ್ಘಾಟನಾ ವಿಚಾರದಲ್ಲಿ ಈ ಹಿಂದೆ ಆಕ್ಷೇಪ ವ್ಯಕ್ಪಡಿಸಿದ್ದ ಅವರಿಗೆ ಇದೀಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಜ್ಯೋತಿಷ್ ಪೀಠದ ಶಂಕರಾಚಾರ್ಯರಾಗಿರುವ ಅವಿಮುಕ್ತೇಶ್ವರಾನಂದ ಮತ್ತು ಅವರ ಶಿಷ್ಯ ಸ್ವಾಮಿ ಮುಕುಂದಾನಂದ ಗಿರಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ ನೀಡಿದೆ. ಅವರು ತಮ್ಮ ಆಶ್ರಮದಲ್ಲಿ 20 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿ ವಿವರವಾದ ತನಿಖೆ ನಡೆಸಲು ಎಡಿಜೆ (ಪೋಕ್ಸೋ ಕಾಯ್ದೆ) ವಿನೋದ್ ಕುಮಾರ್ ಚೌರಾಸಿಯಾ ಅವರು ಆದೇಶಿಸಿದ್ದಾರೆ. ನ್ಯಾಯಾಲಯದ ಆದೇಶದನ್ವಯ ಇದೀಗ ಝುನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಏನಿದು ಪ್ರಕರಣ? ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಶಾಕುಂಭರಿ ಪೀಠಾಧೀಶ್ವರ ಅಶುತೋಷ್ ಬ್ರಹ್ಮಾಚಾರಿ ಮಹಾರಾಜ್ ಅವರು ಫೆಬ್ರವರಿ 8ರಂದು ಸೆಕ್ಷನ್ 173(4) ಅಡಿ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ದೂರು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಈ ಅರ್ಜಿಯನ್ನು ಪೋಸ್ಕೋ ನ್ಯಾಯಾಲಯ ಮಾನ್ಯ ಮಾಡಿರುವ ನ್ಯಾಯಾಲಯ ಫೆಬ್ರವರಿ 13ರಂದು ಪ್ರಕರಣದ ವಿಚಾರಣೆ ನಡೆಸಿದ್ದು, ಇಬ್ಬರ ಅಪ್ರಾಪ್ತ ವಯಸ್ಸಿನ ಮಕ್ಕಳ ಹೇಳಿಕೆಗಳನ್ನು ದಾಖಲಿಸಿದೆ. ಬಳಿಕ ಇದೀಗ ಎಫ್ಐಆರ್ ದಾಖಲಿಸವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.ಜ್ಯೋತಿಷ್ ಪೀಠದ ಸ್ವಾಮೀಜಿಯ ಆಶ್ರಮದೊಳಗಿನ ಲೈಂಗಿಕ ದೌರ್ಜನ್ಯದ ಪುರಾವೆಯಾಗಿ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅವರು ಸಿಡಿಯನ್ನು ಸಲ್ಲಿಸಿದ್ದಾರೆ. ಜೊತೆಗೆ ಕನಿಷ್ಠ 20 ಸಂತ್ರಸ್ತ ಮಕ್ಕಳು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ನಿರಾಕರಿಸಿದ ಸ್ವಾಮೀಜಿ ಇದೇವೇಳೆ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನೂ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ನಿರಾಕರಿಸಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಮತ್ತು ಗೋವುಗಳ ರಕ್ಷಣೆಗಾಗಿ ಧ್ವನಿ ಎತ್ತಿದ್ದಕ್ಕಾಗಿ ತಮ್ಮನ್ನು ಕೆಲವರು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ನ್ಯಾಯಾಲಯದಲ್ಲಿ ಅಗತ್ಯ ಪುರಾವೆಗಳನ್ನು ಸಲ್ಲಿಸಲಾಗಿದ್ದು ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದಾರೆ. ಏತನ್ಮಧ್ಯೆ ಪೋಸ್ಕೋ ನ್ಯಾಯಾಲಯವು ಎಫ್ಐಆರ್ ದಾಖಲಿಸಲು ವಿರ್ದೇಶನ ನೀಡಿರುವುದನ್ನು ಸ್ವಾಗತಿಸಿರುವ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅವರು ಇದು ದೈವಿಕ ನ್ಯಾಯವೆಂದು ಬಣ್ಣಿಸಿದ್ದಾರೆ. ಜನರಿಗೆ ಸತ್ಯವನ್ನು ಬಹಿರಂಗಪಡಿಸಲು ಪ್ರಯಾಗರಾಜ್ನಿಂದ ವಿದ್ಯಾಮಠ ವಾರಣಾಸಿಗೆ ಪಾದಯಾತ್ರೆಯನ್ನು ಸಹ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಖರ್ಗೆ ಭರವಸೆ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ | ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು?
ಬೆಂಗಳೂರು: ‘ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸುತ್ತೇವೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭರವಸೆ ನೀಡಿದ್ದಾರೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬಹಳ ಸಂತೋಷ’ ಎಂದು ಹೇಳಿದ್ದಾರೆ. ಶನಿವಾರ ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪತ್ರಿಕೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೇಖನ ಮತ್ತು ಟ್ವೀಟ್ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು. ಅಸ್ಸಾಂನಿಂದ ನಿನ್ನೆ ತಡರಾತ್ರಿ ನಾನು ಬೆಂಗಳೂರಿಗೆ ಮರಳಿದ್ದೇನೆ. ಬಹಳ ಆಯಾಸವಾಗಿದೆ. ಬಾಗಲಕೋಟೆ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದ ಅವರು, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಘನತ್ಯಾಜ್ಯ ನಿರ್ವಹಣೆ ವಿಚಾರಕ್ಕೆ ಅನುದಾನ ಕೇಳಿರುವ ಬಗ್ಗೆ ಮುಂದೆ ನೋಡೋಣ ಎಂದರು.
ಫೆ.23-26: ಯುನಿವೆಫ್ನಿಂದ ರಮಝಾನ್ ಕಾರ್ಯಕ್ರಮ
ಮಂಗಳೂರು, ಫೆ.21: ಯುನಿವೆಫ್ ಕರ್ನಾಟಕದ ವತಿಯಿಂದ ಫೆ.23ರಿಂದ 26ರವರೆಗೆ ನಗರದ ಫಳ್ನೀರ್ ರಸ್ತೆಯ ಲುಲು ಸೆಂಟರ್ನ ಒಂದನೇ ಮಹಡಿಯಲ್ಲಿರುವ ದಾರುಲ್ ಇಲ್ಮ್ನ ಸಭಾಂಗಣದಲ್ಲಿ ಲುಹರ್ ನಮಾಝ್ ಬಳಿಕ ಯುನಿವೆಫ್ ಅಧ್ಯಕ್ಷ ಮತ್ತು ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿಯವರಿಂದ ರಮಝಾನ್ ಪ್ರವಚನವಿದೆ. ಫೆ.23ರಂದು ಅಲ್ಲಾಹನ ಶಾಪಗ್ರಸ್ತ ಜನರು, ಫೆ.24ರಂದು ಕುಲ್ಲು ನಫ್ಸಿನ್ ಝಾಇಖತುಲ್ ಮೌತ್, ಫೆ.25ರಂದು ಇಸ್ಲಾಮ್ ಮತ್ತು ಗೌರವದ ಬದುಕು, ಫೆ.26ರಂದು ಅವನು ನಮ್ಮವನಲ್ಲ ಎಂಬ ವಿಷಯಗಳಲ್ಲಿ ರಮಝಾನ್ ಪ್ರವಚನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
T20 World Cup| ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್-8 ಪಂದ್ಯ: ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿ ಭಾರತ
ಅಹ್ಮದಾಬಾದ್, ಫೆ.21: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿರುದ್ಧ ರವಿವಾರ ಸೆಣಸಾಡುವ ಮೂಲಕ ಟೀಮ್ ಇಂಡಿಯಾವು ಐಸಿಸಿ ಟಿ-20 ವಿಶ್ವಕಪ್ನಲ್ಲಿ ತನ್ನ ಸೂಪರ್-8 ಅಭಿಯಾನವನ್ನು ಆರಂಭಿಸಲಿದೆ. ಭಾರತೀಯ ಬ್ಯಾಟರ್ಗಳು ಸ್ಪಿನ್ನರ್ಗಳ ವಿರುದ್ಧ ಪರದಾಡುತ್ತಿದ್ದಾರೆ ಎಂದು ಒಪ್ಪಿಕೊಂಡಿರುವ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್, ಈ ನಿಟ್ಟಿನಲ್ಲಿ ನಾವು ಸುಧಾರಣೆ ಕಾಣಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ‘‘ಪಂದ್ಯಾವಳಿಯಲ್ಲಿನ ಪಿಚ್ಗಳು ಬ್ಯಾಟರ್ಗಳಿಗೆ ಸವಾಲಾಗಿದೆ. ಅದರಲ್ಲೂ ಮುಖ್ಯವಾಗಿ ಸ್ಪಿನ್ ಬೌಲರ್ಗಳನ್ನು ಎದುರಿಸುವುದು ಕಷ್ಟಕರ. ನಾವು ಈ ತನಕ ಆಡಿರುವ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ಮುಂಬೈನಲ್ಲಿ ನಾವು ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಸಮಸ್ಯೆಗೆ ಸಿಲುಕಿದ್ದೆವು’’ ಎಂದು ಮೊರ್ಕೆಲ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ನಲ್ಲಿ ನಡೆದಿದ್ದ ಟಿ-20 ಸರಣಿಯಲ್ಲಿ ಭಾರತ ತಂಡವು 3-1 ಅಂತರದಿಂದ ಜಯಶಾಲಿಯಾಗಿತ್ತು. ಅಹ್ಮದಾಬಾದ್ನಲ್ಲಿ ವಿಶ್ವಕಪ್ನ ‘ಡಿ’ ಗುಂಪಿನಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ದಕ್ಷಿಣ ಆಫ್ರಿಕಾ ತಂಡ ಪಿಚ್ನ ಸ್ವಭಾವವನ್ನು ಚೆನ್ನಾಗಿ ಅರಿತುಕೊಂಡಿದೆ. ಸಹಜವಾಗಿ ಆತಿಥೇಯ ತಂಡವಾಗಿ ಭಾರತಕ್ಕೆ ಹೆಚ್ಚು ಲಾಭವಾಗಬಹುದು. ಭಾರತ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ ಇಲ್ಲಿ ಕೊನೆಯ ವಿಶ್ವಕಪ್ ಪಂದ್ಯ ಆಡಿತ್ತು. ದಕ್ಷಿಣ ಆಫ್ರಿಕಾ ತಂಡವು ಬ್ರಿಡ್ಜ್ಟೌನ್ನಲ್ಲಿ ನಡೆದಿದ್ದ 2024ರ ಐಸಿಸಿ ಟಿ-20 ವಿಶ್ವಕಪ್ ಫೈನಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡದ ವಿರುದ್ಧ ಏಳು ರನ್ಗಳಿಂದ ಸೋಲನುಭವಿಸಿ ಚೊಚ್ಚಲ ಪ್ರಶಸ್ತಿ ವಂಚಿತವಾಗಿತ್ತು. ಹಾಲಿ ಚಾಂಪಿಯನ್ ಭಾರತದ ಸಾಮರ್ಥ್ಯದ ಬಗ್ಗೆ ಇದೀಗ ಹರಿಣ ಪಡೆಗೆ ಚೆನ್ನಾಗಿ ಗೊತ್ತಿದೆ. ಭಾರತ ತಂಡವು ಗ್ರೂಪ್ ಹಂತದಲ್ಲಿ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿದ್ದು ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಅಜೇಯ ದಾಖಲೆ ಉಳಿಸಿಕೊಂಡಿದ್ದರೂ ಕೆಲವು ವಿಭಾಗದಲ್ಲಿ ಸುಧಾರಣೆಯಾಗಬೇಕಾಗಿದೆ. ಅಗ್ರ ಸರದಿಯಲ್ಲಿ ಅಭಿಷೇಕ್ ಶರ್ಮಾ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿರುವುದು ಕಳವಳಕಾರಿಯಾಗಿದೆ. ಸಂಜು ಸ್ಯಾಮ್ಸನ್ ಬದಲಿ ಆಟಗಾರನಾಗಿದ್ದರೂ, ಅಪರೂಪದ ಪ್ರತಿಭೆ ಅಭಿಷೇಕ್ಗೆ ಮತ್ತೆ ಅವಕಾಶ ಸಿಗಬಹುದು. ಆತಿಥೇಯ ತಂಡವು ಪ್ರತೀ ಪಂದ್ಯದಲ್ಲೂ ಹೀರೊವನ್ನು ಕಂಡುಕೊಂಡಿದೆ. ಶಿವಂ ದುಬೆ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಸಿಡಿದೆದ್ದಿದ್ದರು. ದುಬೆಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದರು. ಭಾರತದ ಆಡುವ 11ರ ಬಳಗಕ್ಕೆ ದುಬೆ ಆಲ್ರೌಂಡ್ ಮೌಲ್ಯ ತುಂಬುತ್ತಿದ್ದಾರೆ. ಜಸ್ಪ್ರಿತ್ ಬುಮ್ರಾ ನೇತೃತ್ವದ ಭಾರತದ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ಸವಾಲಾಗಬಹುದು. ಐಪಿಎಲ್ನಲ್ಲಿ ಆಡಿರುವ ಸಾಕಷ್ಟು ಅನುಭವ ಹೊಂದಿರುವ ಅಗ್ರ ಕ್ರಮಾಂಕದ ಬ್ಯಾಟರ್ ಕ್ವಿಂಟನ್ ಡಿಕಾಕ್, ವೇಗಿಗಳಾದ ಮಾರ್ಕೊ ಜಾನ್ಸನ್ ಹಾಗೂ ಲುಂಗಿ ಗಿಡಿ ಭಾರತ ತಂಡಕ್ಕೆ ಸವಾಲಾಗಬಲ್ಲರು. ಹರಿಣ ಪಡೆ ಗ್ರೂಪ್ ಹಂತದಲ್ಲಿ ಅಫ್ಘಾನಿಸ್ತಾನದ ವಿರುದ್ಧ್ದ ಎರಡು ಸೂಪರ್ ಓವರ್ ಪಂದ್ಯಗಳ ನಂತರ ಗೆಲುವು ಸಾಧಿಸಿದ್ದನ್ನು ಬಿಟ್ಟರೆ ಉತ್ತಮ ಪ್ರದರ್ಶನ ನೀಡಿದೆ.
ಮಾನನಷ್ಟ ಪ್ರಕರಣ: ಭಿವಂಡಿ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ
ಭಿವಂಡಿ (ಮಹಾರಾಷ್ಟ್ರ),ಫೆ.21: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಕ್ರಿಮಿನಲ್ ಮಾನನಷ್ಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶನಿವಾರ ಇಲ್ಲಿಯ ನ್ಯಾಯಾಲಯದ ಮುಂದೆ ಹಾಜರಾದರು. 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ರಾಹುಲ್ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ರಾಹುಲ್ಗೆ ಜಾಮೀನುದಾರರಾಗಿದ್ದ ಶಿವರಾಜ್ ಪಾಟೀಲ್ ಚಾಕುರ್ಕರ್ ಇತ್ತೀಚಿಗೆ ನಿಧನರಾಗಿದ್ದರಿಂದ ಅವರು ನ್ಯಾಯಾಲಯದಲ್ಲಿ ಹಾಜರಾಗುವುದು ಅಗತ್ಯವಾಗಿತ್ತು ಮತ್ತು ಹೊಸದಾಗಿ ಜಾಮೀನು ಔಪಚಾರಿಕತೆಗಳನ್ನು ಪೂರೈಸಬೇಕಿತ್ತು ಎಂದು ಬಲ್ಲ ಮೂಲಗಳು ತಿಳಿಸಿದವು. ಪ್ರಕರಣವು 2014ರಷ್ಟು ಹಳೆಯದಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಿವಂಡಿ ತಾಲೂಕಿನ ಸೋನಲೆ ಗ್ರಾಮದಲ್ಲಿ ಪ್ರಚಾರ ಭಾಷಣ ಮಾಡಿದ್ದ ರಾಹುಲ್ ಮಹಾತ್ಮಾ ಗಾಂಧಿಯವರ ಹತ್ಯೆಗೆ ಆರೆಸ್ಸೆಸ್ ಹೊಣೆ ಎಂದು ಹೇಳಿದ್ದರೆನ್ನಲಾಗಿದೆ. ಭಾಷಣದ ಬಳಿಕ ಆರೆಸ್ಸೆಸ್ ಪದಾಧಿಕಾರಿ ರಾಜೇಶ ಕುಂಟೆ ರಾಹುಲ್ ಸಂಘಟನೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಐಪಿಸಿಯ ಕಲಂ 500ರಡಿ ಖಾಸಗಿ ದೂರನ್ನು ದಾಖಲಿಸಿದ್ದರು. ಹೊಸ ಜಾಮೀನುದಾರರಾಗಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ ಸಪ್ಕಾಲ್ ನ್ಯಾಯಾಲಯದಲ್ಲಿ ಹಾಜರಾಗಿದ್ದು,ನ್ಯಾಯಾಲಯವು ಅದನ್ನು ಅಂಗೀಕರಿಸಿದ ಬಳಿಕ ರಾಹುಲ್ ಬಾಂಡ್ಗೆ ಸಹಿ ಮಾಡಿದರು ಎಂದು ಅವರ ಪರ ವಕೀಲ ನಾರಾಯಣ ಅಯ್ಯರ್ ಸುದ್ದಿಸಂಸ್ಥೆಗೆ ತಿಳಿಸಿದರು.
ಖತರ್ ಓಪನ್ ಟೆನಿಸ್ ಟೂರ್ನಿ : ಕಾರ್ಲೊಸ್ ಅಲ್ಕರಾಝ್ ಫೈನಲ್ಗೆ ಲಗ್ಗೆ
ದೋಹಾ, ಫೆ.21: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ 2026ರಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದ್ದು, ಹಾಲಿ ಚಾಂಪಿಯನ್ ಆಂಡ್ರೆ ರುಬ್ಲೇವ್ರನ್ನು ಮಣಿಸಿ ಖತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ನ ಸೆಮಿ ಫೈನಲ್ ಪಂದ್ಯದಲ್ಲಿ ಅಲ್ಕರಾಝ್ ಅವರು ರಶ್ಯದ ಆಟಗಾರ ರುಬ್ಲೇವ್ರನ್ನು 7-6(3), 6-4 ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ತಾನಾಡಿದ ಹಿಂದಿನ 13 ಪಂದ್ಯಗಳಲ್ಲಿ 12ನೇ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು. ರುಬ್ಲೇವ್ ಎರಡನೇ ಸೆಟ್ನಲ್ಲಿ 0-3 ಅಂತರದ ಹಿನ್ನಡೆಯಿಂದ ಚೇತರಿಸಿಕೊಂಡಿದ್ದು, ಐದು ಮ್ಯಾಚ್ ಪಾಯಿಂಟ್ಸ್ ಉಳಿಸಿದ್ದರು. ಆದರೆ ಸ್ಪೇನ್ ಆಟಗಾರ ಅಲ್ಕರಾಝ್ ಅಂತಿಮವಾಗಿ ಈ ವರ್ಷ ಸತತ 11ನೇ ಪಂದ್ಯವನ್ನು ಗೆದ್ದುಕೊಂಡರು. ‘‘ಟೆನಿಸ್ ಅಂಗಣಕ್ಕೆ ಕಾಲಿಟ್ಟ ನಂತರ ಪ್ರತೀ ಬಾರಿಯೂ ನಾನೇನು ಮಾಡಬಹುದು ಎಂದು ನನಗೆ ಗೊತ್ತಿದೆ. ನನ್ನ ಪಾಲಿಗೆ ಇದು ಉತ್ತಮ ಗೆಲುವು. ಇದರಿಂದ ನನಗೆ ಹೆಮ್ಮೆಯಾಗುತ್ತಿದೆ’’ ಎಂದು ಹಿಂದಿನ ನಾಲ್ಕು ಗ್ರ್ಯಾನ್ಸ್ಲಾಮ್ಗಳ ಪೈಕಿ ಮೂರರಲ್ಲಿ ಫೈನಲ್ಗೆ ತಲುಪಿದ್ದ ಅಲ್ಕರಾಝ್ ಅಭಿಪ್ರಾಯಪಟ್ಟರು. ಏಳು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಅಲ್ಕರಾಝ್ ಫೈನಲ್ನಲ್ಲಿ ಜೇಕಬ್ ಮೆನ್ಸಿಕ್ ಅಥವಾ ಅರ್ಥರ್ ಫಿಲ್ಸ್ರನ್ನು ಎದುರಿಸಲಿದ್ದಾರೆ. ಈ ಇಬ್ಬರು ಆಟಗಾರರು ಎರಡನೇ ಸೆಮಿ ಫೈನಲ್ನಲ್ಲಿ ಸೆಣಸಾಡಲಿದ್ದಾರೆ.
ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ರಿಗೆ ಬೊಂಡಾಲ ಪ್ರಶಸ್ತಿ ಪ್ರದಾನ
ಬಂಟ್ವಾಳ, ಫೆ.21: ಹಳೆ ತಲೆಮಾರಿನ ಯಕ್ಷಗಾನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ಕೊಡಮಾಡುವ ಬೊಂಡಾಲ ಪ್ರಶಸ್ತಿಯನ್ನು ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ಗೆ ನೀಡಿ ಗೌರವಿಸಲಾಯಿತು. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಬೊಂಡಾಲದಲ್ಲಿ ಏರ್ಪಡಿ ಸಿದ್ದ ಕಟೀಲು ಮೇಳದ ಯಕ್ಷಗಾನ ಬಯಲಾಟದ ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ.ಮೂ. ಲಕ್ಷ್ಮಿನಾರಾಯಣ ಆಸ್ರಣ್ಣ ಮತ್ತು ವೇ.ಮೂ.ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ ಮತ್ತು ಧಾರ್ಮಿಕ ಪರಿಷತ್ ನಾಮನಿರ್ದೇಶಿತ ಸದಸ್ಯ ಬಡಾಜೆ ಗುತ್ತು ರವಿಶಂಕರ ಶೆಟ್ಟಿ ಭಾಗವಹಿಸಿದ್ದರು. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸುನಾದ್ ರಾಜ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟ್ ಅದ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು.
Raichur | ಎಐ ಶೃಂಗಸಭೆ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ರಾಯಚೂರು : ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅಶ್ಲೀಲವಾಗಿ ವರ್ತಿಸಿ ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ನಗರ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಹಾಗೂ ಯುವಮೋರ್ಚಾದ ಜಿಲ್ಲಾಧ್ಯಕ್ಷರಾದ ವಿನಾಯಕ ರಾವ್ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಗಂಜ್ ವೃತ್ತದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಯತ್ನ ನಡೆಸಲಾಯಿತು. ನಗರದ ಗಂಜ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ನಾಯಕ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಪ್ರತಿಭಟನೆ ವೇಳೆ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಪ್ರತಿಕೃತಿ ದಹಿಸಿ, ಎಐ ಶೃಂಗಸಭೆಯಲ್ಲಿ ದೇಶಕ್ಕೆ ಅವಮಾನವಾಗುವಂತೆ ವರ್ತಿಸಿರುವುದನ್ನು ಖಂಡಿಸಿದರು. ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ದೇಶದ ಹೆಸರನ್ನು ಕುಗ್ಗಿಸುವಂತದ್ದು ಶಾಸಕ ಡಾ.ಶಿವರಾಜ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಳಾದ ಸಂತೋಷ್ ರಾಜಗುರು , ರವೀಂದ್ರ ಜಲ್ದಾರ್, ಪಕ್ಷದ ವಕ್ತಾರರಾದ ಸಿದ್ದನಗೌಡ ನೆಲಹಾಳ ರಾಘವೇಂದ್ರ ಉಟ್ಕೂರು ಬಿಜೆಪಿ ನಗರ ಅಧ್ಯಕ್ಷರು ಎಸ್.ಸಿ ಮೊರ್ಚಾ ಜಿಲ್ಲಾದ್ಯಕ್ಷರಾದ ಪಿ.ಯಲ್ಲಪ್ಪ, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷರಾದ ಜಿ.ವಿಜಯರಾಜೆಶ್ವರಿ ಶರಣಮ್ಮ ಕಾಮರೆಡ್ಡಿ, ಸುಲೊಚನಾ ನಾಗವೇಣಿ ನಗರ ಅಧ್ಯಕ್ಷರು ಮಹಿಳಾ ಮೊರ್ಚಾ. ಮಾಜಿ ಆರ್.ಡಿ.ಎ ಅಧ್ಯಕ್ಷರಾದ ಅಂಜಿನೇಯ ಕಡಗೋಲ, ನಾಗರಾಜ, ನರಸರೆಡ್ಡಿ, ಯಲ್ಲಪ್ಪ ಪಿರಂಗಿ ಕಾರ್ಯಕರ್ತರು ಭಾಗವಹಿಸಿದ್ದರು.
ದೇಶಾದಾದ್ಯಂತ 32 ನಕಲಿ ವಿಶ್ವವಿದ್ಯಾಲಯಗಳಿವೆ: ಯುಜಿಸಿ ಘೋಷಣೆ
ದಿಲ್ಲಿಯಲ್ಲಿ 12, ಕರ್ನಾಟಕದಲ್ಲಿವೆ 2 ನಕಲಿ ವಿವಿಗಳು!
ವಿಟ್ಲದ ಅನಧಿಕೃತ ಕ್ಲಿನಿಕ್ಗೆ ಆರೋಗ್ಯ ಇಲಾಖೆ ದಾಳಿ
ಮಂಗಳೂರು,ಫೆ.21: ನಗರದ ಅನಧಿಕೃತ ರಕ್ತ ಪರೀಕ್ಷೆ ಕೇಂದ್ರದ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಲ್ಯಾಬ್ಗೆ ಬೀಗ ಜಡಿದಿದ್ದಾರೆ. ತಾನು ವಿಟ್ಲದ ಬದನಾಜೆಯಲ್ಲಿರುವ ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿಯಲ್ಲಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದೆ. ಲ್ಯಾಬ್ನಿಂದ ಬಂದ ವರದಿಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಬೇರೆಡೆ ರಕ್ತ ಪರೀಕ್ಷೆ ಮಾಡಿಸಿಕೊಂಡಿದ್ದೆ. ಅದಲ್ಲದೆ ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿಯವರು ಸಹಿ ಮಾಡದೆ ವರದಿ ನೀಡಿದ್ದು, ಆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಶರತ್ ಶೆಟ್ಟಿ ಎಂಬವರು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಲು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ/ ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿಗೆ ಆದೇಶಿಸಲಾಗಿತ್ತು. ಅದರಂತೆ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ್ದರು. ಈ ವರದಿಯ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ಆದೇಶದಂತೆ ಶನಿವಾರ ಜಿಲ್ಲಾ ಎನ್ಫೋರ್ಸ್ಮೆಂಟ್ ಅಧಿಕಾರಿ ಡಾ.ದೀಪಾ ಪ್ರಭು ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಮತ್ತು ಸಿಬ್ಬಂದಿಗಳು ಕ್ಲಿನಿಕ್ಗೆ ಭೇಟಿ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಕೆ.ಪಿ.ಎಂ.ಇ.ಎ ನೋಂದಣಿ ಇಲ್ಲದೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವುದು ಕಂಡುಬಂದಿತ್ತು. ತಕ್ಷಣ ರಕ್ಷಾ ಕ್ಲಿನಿಕ್ಗೆ ಬೀಗಮುದ್ರೆ ಹಾಕಿ ಮುಚ್ಚಲಾಗಿದೆ. ಕಾರ್ಯಾಚರಣೆಯಲ್ಲಿ ವಿಟ್ಲ ಪೊಲೀಸರು ಪಾಲ್ಗೊಂಡಿದ್ದರು.
Kalaburagi | ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ : ಸರಿಪಡಿಸುವಂತೆ ಆಗ್ರಹ
ಕಲಬುರಗಿ: ಒಳ ಮೀಸಲಾತಿಯಲ್ಲಿ ರೋಸ್ಟರ್ ಬಿಂದುವಿನ ಆಧಾರದಲ್ಲಿ ಬಲಗೈ ಸಮುದಾಯದ ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ‘ಒಳ ಮೀಸಲಾತಿ ಬಲಗೈ ಹೋರಾಟ ಸಮಿತಿ’ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರು, ರಾಜ್ಯ ಸರ್ಕಾರ ರಾಜ್ಯಪಾಲರ ಅನುಮೋದನೆಗಾಗಿ ಸಲ್ಲಿಸಿರುವ ಅನುಸೂಚಿತ ಜಾತಿಗಳ ವಿಧೇಯಕ–2025ನ್ನು ರಾಜ್ಯಪಾಲರು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು. ಒಳ ಮೀಸಲಾತಿ ಕುರಿತ ವರದಿಯಲ್ಲಿರುವ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿಯುವ ತನಕ ಸದ್ಯ ಅನ್ವಯಿಸುತ್ತಿರುವ ಮೀಸಲಾತಿ ಕ್ರಮಗಳಿಗೆ ತಾತ್ಕಾಲಿಕ ತಡೆ ನೀಡಬೇಕು ಎಂದು ಒತ್ತಾಯಿಸಿದರು. ಹಾಗೆಯೇ ಹೊಸ ಜಾತಿ ಪ್ರಮಾಣಪತ್ರ ವಿತರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಹಳೆಯ ಜಾತಿ ಪ್ರಮಾಣಪತ್ರಗಳನ್ನೇ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಒಳ ಮೀಸಲಾತಿಗೆ ಅನ್ವಯಿಸಿರುವ ರೋಸ್ಟರ್ ಬಿಂದುವನ್ನು ಮರುಪರಿಶೀಲಿಸಿ ಪರಿಷ್ಕರಿಸಬೇಕು. ಸಮಿತಿಯಲ್ಲಿರುವ ಗೊಂದಲಗಳು ಪರಿಹಾರವಾಗುವ ತನಕ ಹಳೆಯ ಮೀಸಲಾತಿ ನಿಯಮಗಳ ಆಧಾರದಲ್ಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮುಖಂಡರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ಎಬಿ ಹೊಸಮನಿ, ಮಹಾದೇವ ಮೋಘಾ, ದೇವೇಂದ್ರ ಸಿನ್ನೂರ್, ಅಮೃತ ಸಾಗರ್, ಹಣಮಂತ ಬೋಧನಕರ್, ಸಿದ್ದರಾಮ ಪ್ಯಾಟೆ, ಮಲ್ಲಪ್ಪ ಹೊಸಮನಿ, ಸಂಪತಕುಮಾರ ವಳಕೇರಿ, ವಿಶಾಲ ದರ್ಗಿ, ಎಸ್.ಎಸ್. ತಾವಡೆ, ದಿಗಂಬರ ಬೆಳಮಗಿ, ಜೈಭೀಮ್, ಮಲ್ಲಿಕಾರ್ಜುನ್ ಮದಾನಿ, ಸಂತೋಷ್ ಮೇಲಿನಮನಿ, ದೇವಪ್ಪ, ಅರ್ಜುನ್ ಎನ್.ಕೆ, ಧರ್ಮಣ್ಣ ಕೋಣೆಕರ, ಹಣಮಂತರಾವ್ ದೊಡ್ಡಮನಿ, ಸೇರಿದಂತೆ ಹಲವು ಮುಖಂಡರು ಇದ್ದರು.
ಅಮೆರಿಕದ ಟ್ರಂಪ್ ಸರ್ಕಾರ ಘೋಷಿಸಿರುವ ಹೊಸ 10% ಸುಂಕದ ಲೆಕ್ಕಾಚಾರ ಹೇಗೆ?
ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂ ಕೋರ್ಟ್ 6:3 ಬಹುಮತದ ತೀರ್ಪು ನೀಡಿತು. ಹೆಚ್ಚುವರಿ ಪ್ರತಿಸುಂಕವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಅಮೆರಿಕಕ್ಕೆ ಆಮದು ಆಗುವ ಎಲ್ಲ ವಸ್ತುಗಳ ಮೇಲೆ ಮುಂದಿನ ಐದು ತಿಂಗಳವರೆಗೆ ಜಾಗತಿಕವಾಗಿ ಶೇ.10ರಷ್ಟು ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಘೋಷಿಸಿದರು. “ತಕ್ಷಣದಿಂದ ಜಾರಿಗೆ ಬರುವಂತೆ, ಸೆಕ್ಷನ್ 232 ಮತ್ತು ಅಸ್ತಿತ್ವದಲ್ಲಿರುವ ಸೆಕ್ಷನ್ 301 ಅಡಿಯಲ್ಲಿ ಎಲ್ಲಾ ರಾಷ್ಟ್ರೀಯ ಭದ್ರತಾ ಸುಂಕಗಳು ಜಾರಿಯಲ್ಲಿವೆ. ಇಂದು 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ 10% ಜಾಗತಿಕ ಸುಂಕವನ್ನು ವಿಧಿಸುವ ಆದೇಶಕ್ಕೆ ನಾನು ಸಹಿ ಹಾಕುತ್ತೇನೆ” ಎಂದು ಟ್ರಂಪ್ ಶುಕ್ರವಾರ ತಿಳಿಸಿದ್ದಾರೆ. ►ಸೆಕ್ಷನ್ 122 ಎಂದರೇನು? ಸುಪ್ರೀಂ ಕೋರ್ಟ್ ತೀರ್ಪಿನ ಕೆಲವು ಗಂಟೆಗಳ ನಂತರ, ಟ್ರಂಪ್ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ಎಂದು ಕರೆಯಲ್ಪಡುವ ಅಪರೂಪವಾಗಿ ಬಳಸಲಾಗುವ ನಿಬಂಧನೆಯ ಅಡಿಯಲ್ಲಿ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಬಹುತೇಕ ಎಲ್ಲಾ ವಸ್ತುಗಳ ಮೇಲೆ 10% ಜಾಗತಿಕ ಸುಂಕ ವಿಧಿಸುವ ಘೋಷಣೆ ಹೊರಡಿಸಿದರು. ಮೂಲಭೂತ ಅಂತರರಾಷ್ಟ್ರೀಯ ಪಾವತಿ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ 150 ದಿನಗಳವರೆಗೆ 15% ಸುಂಕಗಳನ್ನು ತಾತ್ಕಾಲಿಕವಾಗಿ ವಿಧಿಸಲು ಈ ಸೆಕ್ಷನ್ ಅನುಮತಿಸುತ್ತದೆ. ಈ ಸೆಕ್ಷನ್ ಜೊತೆಗೆ, ಈಗಾಗಲೇ ಬಳಕೆಯಲ್ಲಿರುವ ದೃಢವಾದ ಕಾನೂನು ಆಧಾರಗಳನ್ನು ಹೊಂದಿರುವ 1962ರ ವ್ಯಾಪಾರ ವಿಸ್ತರಣಾ ಕಾಯ್ದೆಯ ಸೆಕ್ಷನ್ 232 ಮತ್ತು 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301 ಜಾರಿಯಲ್ಲಿವೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. 1962ರ ವ್ಯಾಪಾರ ವಿಸ್ತರಣಾ ಕಾಯ್ದೆಯ ಸೆಕ್ಷನ್ 232 ರಾಷ್ಟ್ರೀಯ ಭದ್ರತಾ ಆಧಾರದ ಮೇಲೆ ಸುಂಕ ಕ್ರಮಗಳನ್ನು ಅನುಮತಿಸುತ್ತದೆ. ಸರ್ಕಾರ ಈಗಾಗಲೇ ಇದನ್ನು ಬಳಸಿಕೊಂಡು ಉಕ್ಕು, ಅಲ್ಯೂಮಿನಿಯಂ, ಸೆಮಿಕಂಡಕ್ಟರ್ ಮತ್ತು ಇತರ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಿದೆ. ಇದೀಗ ಟ್ರಂಪ್ ಆಡಳಿತವು ಈ ಪಟ್ಟಿಗೆ ಹೆಚ್ಚಿನ ಉತ್ಪನ್ನಗಳನ್ನು ಸೇರಿಸಬಹುದೇ ಎಂಬುದನ್ನು ಪರಿಶೀಲಿಸುತ್ತಿದೆ. ►ಮೂರು ಪ್ರಮುಖ ಪರಿಣಾಮಗಳು 1. ಹೊಸ 10% ಜಾಗತಿಕ ಸುಂಕವು ಬಹುತೇಕ ಎಲ್ಲಾ ದೇಶಗಳಿಗೆ ಒಂದೇ ದರವನ್ನು ಅನ್ವಯಿಸುವುದರಿಂದ ಸಮಾನ ಅವಕಾಶವನ್ನು ಸೃಷ್ಟಿಸುತ್ತದೆ. ಟ್ರಂಪ್ ವಿವಿಧ ದೇಶಗಳನ್ನು ವಿಭಿನ್ನ, ಹೆಚ್ಚಾಗಿ ಹೆಚ್ಚಿನ ತೆರಿಗೆಗಳೊಂದಿಗೆ ಗುರಿಯಾಗಿಸಲು ಬಳಸಿದ 1977ರ IEEPA ಕಾನೂನನ್ನು ಇದು ಬದಲಾಯಿಸುತ್ತದೆ. ಈ ಹೊಸ ತೆರಿಗೆಗಳು ಯುಕೆ, ಜಪಾನ್, ಯುರೋಪಿಯನ್ ಒಕ್ಕೂಟ, ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಭಾರತದಂತಹ ದೇಶಗಳೊಂದಿಗೆ ಅಮೆರಿಕ ಮಾಡಿಕೊಂಡ ಇತ್ತೀಚಿನ ವ್ಯಾಪಾರ ಒಪ್ಪಂದಗಳನ್ನು ಬಾಧಿಸಬಹುದು. ಈಗ ಪ್ರತಿಯೊಂದು ದೇಶಕ್ಕೂ ಶೇ.10ರಷ್ಟು ತೆರಿಗೆ ವಿಧಿಸಲಾಗುವುದು. 2. ಸೆಕ್ಷನ್ 122 ಅಡಿಯಲ್ಲಿ 10% ಸುಂಕ ವಿಧಿಸುವುದರಿಂದ ಟ್ರಂಪ್ ಸರ್ಕಾರಕ್ಕೆ ಸ್ವಲ್ಪ ಸಮಯ ಲಭ್ಯವಾಗುತ್ತದೆ. ಸಮಸ್ಯೆಯೆಂದರೆ, ಈ ನಿಬಂಧನೆಯನ್ನು ಬಹುತೇಕ ಬಳಸಲಾಗಿಲ್ಲ. IEEPAನಂತೆ ಇದಕ್ಕೂ ಕಾನೂನು ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಅಲ್ಲದೆ, 150 ದಿನಗಳ ನಂತರ ಏನಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅದರ ನಂತರವೂ ಟ್ರಂಪ್ ಅವುಗಳನ್ನು ಮುಂದುವರಿಸಲು ಬಯಸಿದರೆ, ಅವರು ಕಾಂಗ್ರೆಸ್ (ಸಂಸತ್) ಅನುಮತಿ ಪಡೆಯಬೇಕಾಗುತ್ತದೆ. ಮಧ್ಯಂತರ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಅದು ಸುಲಭವಲ್ಲ. 3. ಸುಪ್ರೀಂ ಕೋರ್ಟ್ ಮೂಲಭೂತವಾಗಿ ಅಧ್ಯಕ್ಷ ಟ್ರಂಪ್ ಅವರ ‘ಸುಂಕದ ಗೋಡೆ’ಯನ್ನು ಕೆಡವಿದೆ. ಈಗ ಅವರು ಅದನ್ನು ಒಂದೊಂದಾಗಿ ಪುನರ್ನಿರ್ಮಿಸಬೇಕಾಗಿದೆ. ದೇಶಗಳ ಮೇಲೆ ಬೃಹತ್ ತೆರಿಗೆಗಳನ್ನು ಹೇರಲು ಅವರು ಇನ್ನು ಮುಂದೆ ತಮ್ಮ ನೆಚ್ಚಿನ ಶಾರ್ಟ್ಕಟ್ IEEPA ತುರ್ತು ಕಾನೂನನ್ನು ಬಳಸಲು ಸಾಧ್ಯವಿಲ್ಲ. ಹೊಸ 10% ತೆರಿಗೆ (ಸೆಕ್ಷನ್ 122) ತ್ವರಿತ ಪರಿಹಾರವಾಗಿದ್ದರೂ, ಅದು ಕೇವಲ 150 ದಿನಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಹೆಚ್ಚು ಶಾಶ್ವತ ಕ್ರಮ ಕೈಗೊಳ್ಳಲು ಅವರು ಸೆಕ್ಷನ್ 232 ಅಥವಾ ಸೆಕ್ಷನ್ 301ನಂತಹ ನಿಧಾನಗತಿಯ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಯಾವುದೇ ತೆರಿಗೆ ವಿಧಿಸುವ ಮೊದಲು ಈ ಕಾನೂನುಗಳಿಗೆ ತಿಂಗಳುಗಳ ಔಪಚಾರಿಕ ತನಿಖೆಗಳು ಮತ್ತು ದಾಖಲೆಗಳ ಅಗತ್ಯವಿರುತ್ತದೆ. ಈ ‘ನಿಧಾನ’ ಪ್ರಕ್ರಿಯೆಯಿಂದಾಗಿ ಸುಂಕ ವಿಧಿಸುವ ಮೂಲಕ ವ್ಯಾಪಾರ ಪಾಲುದಾರರನ್ನು ಬೆದರಿಸುವುದು ಟ್ರಂಪ್ ಅವರಿಗೆ ಸುಲಭವಲ್ಲ. ಯೇಲ್ ವಿಶ್ವವಿದ್ಯಾಲಯದ ಬಜೆಟ್ ಲ್ಯಾಬ್ ಲೆಕ್ಕಾಚಾರಗಳ ಪ್ರಕಾರ, IEEPA ಸುಂಕಗಳನ್ನು ತೆಗೆದುಹಾಕುವುದರಿಂದ ಅಮೆರಿಕದ ಒಟ್ಟು ಸುಂಕ ದರವು ಸುಮಾರು ಅರ್ಧದಷ್ಟು ಕಡಿಮೆಯಾಗುತ್ತದೆ. ಇದಾದ ಬಳಿಕವೂ, “ಸುಪ್ರೀಂ ಕೋರ್ಟ್ ಸುಂಕ ರದ್ದುಗೊಳಿಸಿದರೂ ಸರ್ಕಾರವು ವಾಸ್ತವವಾಗಿ ಯಾವುದೇ ಹಣ ಕಳೆದುಕೊಳ್ಳುವುದಿಲ್ಲ. ಸೆಕ್ಷನ್ 232 ಮತ್ತು ಸೆಕ್ಷನ್ 301ನ ಕಠಿಣ ನಿಯಮಗಳ ಜೊತೆಗೆ ಸೆಕ್ಷನ್ 122 (ಹೊಸ 10% ಜಾಗತಿಕ ತೆರಿಗೆ) ಬಳಸುವ ಮೂಲಕ, 2026ರಲ್ಲಿ ಮೂಲತಃ ಯೋಜಿಸಿದಂತೆ ಅದೇ ಪ್ರಮಾಣದ ತೆರಿಗೆ ಆದಾಯವನ್ನು ಯುಎಸ್ ಸಂಗ್ರಹಿಸುತ್ತದೆ” ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ಉಕ್ಕು, ಅಲ್ಯೂಮಿನಿಯಂ, ಸೆಮಿಕಂಡಕ್ಟರ್ ಮತ್ತು ಇತರ ಉತ್ಪನ್ನಗಳ ವಿಷಯದಲ್ಲಿ ಸೆಕ್ಷನ್ 232 ಈಗಾಗಲೇ ಜಾರಿಯಲ್ಲಿದ್ದರೂ ಆಡಳಿತವು ಇದನ್ನು ಇನ್ನಷ್ಟು ವಿಸ್ತರಿಸಬಹುದು ಎಂದಿದ್ದಾರೆ. ►ಯಾವ ಉತ್ಪನ್ನಗಳಿಗೆ ಸುಂಕ ವಿನಾಯಿತಿ? ಶ್ವೇತಭವನದ ಫ್ಯಾಕ್ಟ್ ಶೀಟ್ ಪ್ರಕಾರ ಕೆಲವು ಉತ್ಪನ್ನಗಳು ಹೊಸ 10% ಸುಂಕದಿಂದ ವಿನಾಯಿತಿ ಪಡೆಯಲಿವೆ. ಅಮೆರಿಕದ ವ್ಯವಹಾರಗಳು ಮತ್ತು ಕುಟುಂಬಗಳಿಗೆ ಅವು ಅಗತ್ಯವಾಗಿರುವುದರಿಂದ (ಔಷಧಿ ಅಥವಾ ಅಮೆರಿಕದಲ್ಲಿ ತಯಾರಿಸದ ಕಚ್ಚಾ ವಸ್ತುಗಳು) ಅಥವಾ ಆ ಸರಕುಗಳಿಗೆ ತೆರಿಗೆ ವಿಧಿಸುವುದರಿಂದ ದೇಶದ ಒಟ್ಟಾರೆ ಸಾಲ ಮತ್ತು ಇತರ ರಾಷ್ಟ್ರಗಳೊಂದಿಗೆ ಇರುವ ಹಣಕಾಸು ಸಮಸ್ಯೆಗಳನ್ನು ಪರಿಹರಿಸಲು ನೆರವಾಗುವುದಿಲ್ಲ ಎಂದು ಸರ್ಕಾರ ಭಾವಿಸಿರುವುದರಿಂದ ಈ ವಸ್ತುಗಳನ್ನು ಕೈಬಿಡಲಾಗಿದೆ. ಈ ಸರಕುಗಳಲ್ಲಿ ಕೆಲವು ನಿರ್ಣಾಯಕ ಖನಿಜಗಳು, ಕರೆನ್ಸಿ ಹಾಗೂ ಬೆಳ್ಳಿ ತಯಾರಿಕೆಯಲ್ಲಿ ಬಳಸುವ ಲೋಹಗಳು ಮತ್ತು ಇಂಧನ ಉತ್ಪನ್ನಗಳು ಸೇರಿವೆ. ಇದಲ್ಲದೆ, ಅಮೆರಿಕದಲ್ಲಿ ಬೆಳೆಯಲು, ಗಣಿಗಾರಿಕೆ ಮಾಡಲು ಅಥವಾ ಉತ್ಪಾದಿಸಲು ಸಾಧ್ಯವಾಗದ ಅಥವಾ ದೇಶೀಯ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದ ನೈಸರ್ಗಿಕ ಸಂಪನ್ಮೂಲಗಳು ಮತ್ತು ರಸಗೊಬ್ಬರಗಳಿಗೂ ವಿನಾಯಿತಿ ನೀಡಲಾಗಿದೆ. ಗೋಮಾಂಸ, ಟೊಮೆಟೊ, ಕಿತ್ತಳೆ, ಔಷಧಗಳು, ಔಷಧೀಯ ಪದಾರ್ಥಗಳು ಹಾಗೂ ಕೆಲವು ಎಲೆಕ್ಟ್ರಾನಿಕ್ಸ್ ಸೇರಿದಂತೆ ಕೆಲವು ಕೃಷಿ ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿದೆ. ಇದಲ್ಲದೆ, ಪ್ರಯಾಣಿಕ ವಾಹನಗಳು, ಕೆಲವು ಲಘು ಟ್ರಕ್ಗಳು, ಕೆಲವು ಮಧ್ಯಮ ಮತ್ತು ಭಾರೀ ವಾಹನಗಳು, ಬಸ್ಗಳು, ಪ್ರಯಾಣಿಕ ವಾಹನಗಳ ಕೆಲವು ಭಾಗಗಳು, ಕೆಲವು ಏರೋಸ್ಪೇಸ್ ಉತ್ಪನ್ನಗಳು, ಪುಸ್ತಕಗಳು, ದೇಣಿಗೆಗಳು ಮತ್ತು ಬ್ಯಾಗೇಜ್ಗಳಿಗೆ ಯಾವುದೇ ಸುಂಕ ವಿಧಿಸಲಾಗುವುದಿಲ್ಲ. ►ಭಾರತೀಯ ಉತ್ಪನ್ನಗಳ ಮೇಲಿನ ಸುಂಕ ಭಾರತೀಯ ಉತ್ಪನ್ನಗಳ ಮೇಲೆ ಈಗ ಶೇ.10ರಷ್ಟು ತೆರಿಗೆ ವಿಧಿಸಲಾಗುತ್ತಿದ್ದರೂ, ಉಕ್ಕು, ಅಲ್ಯೂಮಿನಿಯಂ, ತಾಮ್ರದಂತಹ ಕೆಲವು ಉತ್ಪನ್ನಗಳಿಗೆ ಶೇ.50ರಷ್ಟು ಸುಂಕ ಮುಂದುವರಿಯುತ್ತದೆ. ಕೆಲವು ಆಟೋ ಘಟಕಗಳಿಗೆ ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ►ಭಾರತದ ಮೇಲೆ ಟ್ರಂಪ್ ಸರ್ಕಾರ ಯಾವಾಗೆಲ್ಲ ಸುಂಕ ವಿಧಿಸಿತು? ಫೆಬ್ರವರಿ 13, 2025: ವ್ಯಾಪಾರ ವಿಸ್ತರಣೆ ಗುರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2030ರೊಳಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಿ $500 ಬಿಲಿಯನ್ ಗುರಿ ಸಾಧಿಸುವುದಾಗಿ ಘೋಷಿಸಿದರು. ಮಾರ್ಚ್ 4–6, 2025: ಆರಂಭಿಕ ಮಾತುಕತೆಗಳು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಹಾಗೂ ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಏಪ್ರಿಲ್ 2, 2025: 26% ಸುಂಕ ಘೋಷಣೆ ಭಾರತೀಯ ಸರಕುಗಳ ಮೇಲೆ ಅಮೆರಿಕ ಒಟ್ಟು 26% ಸುಂಕ ಘೋಷಿಸಿತು. ಇದರಲ್ಲಿ 10% ಮೂಲ ಸುಂಕ ಮತ್ತು ಹೆಚ್ಚುವರಿ 16% ಪ್ರತಿಸುಂಕ ಸೇರಿತ್ತು. ಏಪ್ರಿಲ್ 9, 2025: ಪ್ರತಿಸುಂಕ ಸ್ಥಗಿತ ಅಮೆರಿಕ 16% ಪ್ರತಿಸುಂಕವನ್ನು 90 ದಿನಗಳವರೆಗೆ ಸ್ಥಗಿತಗೊಳಿಸಿತು. ಇದರೊಂದಿಗೆ ಭಾರತದ ಮೇಲಿನ ಒಟ್ಟು ಸುಂಕದ ಹೊರೆಯನ್ನು 10%ಕ್ಕೆ ಇಳಿಸಲಾಯಿತು. ಜೂನ್ 26, 2025: ಮಾತುಕತೆ ಮುಂದುವರಿಕೆ ಜುಲೈ ಗಡುವಿನ ಮೊದಲು ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಭಾರತೀಯ ನಿಯೋಗ ವಾಷಿಂಗ್ಟನ್ಗೆ ಭೇಟಿ ನೀಡಿತು. ಜುಲೈ 31, 2025: 25% ಸುಂಕ ಘೋಷಣೆ ಆಗಸ್ಟ್ 7ರಿಂದ ಜಾರಿಗೆ ಬರುವಂತೆ ಭಾರತೀಯ ಸರಕುಗಳ ಮೇಲೆ 25% ಸುಂಕ ಘೋಷಿಸಲಾಯಿತು. ಆಗಸ್ಟ್ 6, 2025: 50% ಸುಂಕ ಭಾರತದ ರಷ್ಯಾ ತೈಲ ಖರೀದಿಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ 25% ಸುಂಕ ವಿಧಿಸಲಾಯಿತು. ಇದರಿಂದ ಭಾರತೀಯ ರಫ್ತಿನ ಮೇಲಿನ ಒಟ್ಟು ಸುಂಕದ ಹೊರೆಯನ್ನು 50%ಕ್ಕೆ ಏರಿಸಲಾಯಿತು. ಅಕ್ಟೋಬರ್ 15–17, 2025: ಆರು ಹಂತದ ಮಾತುಕತೆ ಸುಂಕ ವಿವಾದ ಪರಿಹಾರಕ್ಕಾಗಿ ಆರು ಔಪಚಾರಿಕ ಮಾತುಕತೆಗಳು ನಡೆದವು. ಜನವರಿ 31, 2026: ಒಪ್ಪಂದ ಅಂತಿಮ ಹಂತ ಭಾರತ ವ್ಯಾಪಾರ ಒಪ್ಪಂದವನ್ನು ತ್ವರಿತವಾಗಿ ಅಂತಿಮಗೊಳಿಸುವ ಹಂತ ತಲುಪಿದೆ ಎಂದು ತಿಳಿಸಿತು. ಫೆಬ್ರವರಿ 2, 2026: ಸುಂಕ 18%ಕ್ಕೆ ಇಳಿಕೆ ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡವು. ಇದರಡಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು 25%ರಿಂದ 18%ಕ್ಕೆ ಇಳಿಸಲಾಯಿತು. ಭಾರತವೂ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಿತು. ಫೆಬ್ರವರಿ 20, 2026: 10% ಜಾಗತಿಕ ಸುಂಕ ಅಮೆರಿಕದ ಸುಪ್ರೀಂ ಕೋರ್ಟ್ ವಿವಿಧ ದೇಶಗಳ ಉತ್ಪನ್ನಗಳ ಮೇಲೆ ವಿಧಿಸಿದ್ದ ಸುಂಕಗಳನ್ನು ಕಾನೂನುಬಾಹಿರ ಎಂದು ತೀರ್ಮಾನಿಸಿದ ನಂತರ, ಟ್ರಂಪ್ ಎಲ್ಲಾ ದೇಶಗಳ ಮೇಲೂ ಅನ್ವಯಿಸುವ 10% ಜಾಗತಿಕ ಸುಂಕಗಳನ್ನು ಘೋಷಿಸಿದರು.
Kalaburagi | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಜನ ಜಾಗೃತಿ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಕಲಬುರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಜನ ಜಾಗೃತಿ ಸಂಘರ್ಷ ಸಮಿತಿ ವತಿಯಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.54ರ ತಾರಪೈಲ್ ಬಡಾವಣೆಯಲ್ಲಿ 2019ರಿಂದ 2026ರವರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮೊದಲ ಹಂತದಲ್ಲಿ 350 ಹಾಗೂ ಎರಡನೇ ಹಂತದಲ್ಲಿ 418 ಮನೆಗಳು ಮಂಜೂರಾಗಿವೆ. ಫಲಾನುಭವಿಗಳು ಡಿಡಿ ಮೂಲಕ ಹಣವನ್ನು ಮಂಡಳಿಗೆ ಪಾವತಿಸಿದ್ದರೂ, ಅಧಿಕಾರಿಗಳು ಡಿಡಿಗಳನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ತುಂಡು ಗುತ್ತಿಗೆದಾರರು ಫಲಾನುಭವಿಗಳೊಂದಿಗೆ ಕರಾರು ಮಾಡಿಕೊಂಡು ಹಳೆಯ ಮನೆಗಳನ್ನು ತೆರವುಗೊಳಿಸಿ, ಹೊಸ ಮನೆಗಳನ್ನು ಪೂರ್ಣಗೊಳಿಸದೇ ಅರ್ಧ ನಿರ್ಮಾಣದಲ್ಲೇ ಬಿಟ್ಟಿದ್ದಾರೆ. ಇದರಿಂದಾಗಿ ಬಡ ಹಾಗೂ ಕೂಲಿ ಕಾರ್ಮಿಕರು ಕಳೆದ 5-6 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವಂತಾಗಿದೆ ಎಂದು ಸಮಿತಿ ಆರೋಪಿಸಿದೆ. ಅಪೂರ್ಣ ಹಂತದಲ್ಲಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸುವವರೆಗೆ ಸಹಾಯಧನವನ್ನು ತಡೆಹಿಡಿಯಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆ ನಡೆಸಿದ ಬಳಿಕ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಧರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ರುಕ್ಕಪ್ಪ ಟಿ. ಕಾಂಬಳೆ, ಜಿಲ್ಲಾಧ್ಯಕ್ಷ ಶಾಂತಕುಮಾರ ಎಸ್., ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಟ್ಟಿಮನಿ, ಜಯರಾಜ ಕಿಣಗಿಕರ್, ಅಮೀರಸಾಬ ನದಾಫ್, ಸುರೇಶ್ ವಾಡೆಕರ್, ಶಿವಶರಣ ಎಂ. ನಿಂಗದಳ್ಳಿ, ವಿಜಯಕುಮಾರ ಎಂ. ಸಾವಳಗಿ, ಸಿದ್ದು ಮಾಚುನೂರು, ರಾಜು ಭಂಡಾರಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಗಳೂರು,ಫೆ.21:ಅನಾರೋಗ್ಯದಿಂದ ಬಳಲುತ್ತಿರುವ ಶಿವನಗೌಡ ಎಂಬ 15 ವಷರ್ ಪ್ರಾಯದ ಬಾಲಕ ಕಾಣೆಯಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.19ರಂದು ಕೆಲಸಕ್ಕೆ ಹೋಗಿದ್ದ ಈತ ಬಳಿಕ ನಾಪತ್ತೆಯಾಗಿದ್ದಾನೆ ಎಂದು ಈತನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗೋಧಿ ಮೈಬಣ್ಣದ, ಸಪೂರ ಶರೀರದ ಈತ ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ದಿನ ನೀಲಿ ಬಣ್ಣದ ಟಿ ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದ. ಈತನ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು,ಫೆ.21: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಾಂತರಕ್ಕೆ ಪೋಷಣ ಅಭಿಯಾನದಡಿ ಹೊರಗುತ್ತಿಗೆ ಆಧಾರದ ಮೇರೆಗೆ ತಾಲೂಕು ಸಂಯೋಜ ಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರರಾಗಿರುವ ಅರ್ಹ ಅಭ್ಯರ್ಥಿಗಳು ಕನ್ನಡ ಹಾಗೂ ಆಂಗ್ಲ ಭಾಷೆ (ಮಾತು ಹಾಗೂ ಬರವಣಿಗೆ)ಯಲ್ಲಿ ಪ್ರಾವಿಣ್ಯತೆ ಹೊಂದಿರಬೇಕು. ಟೆಕ್ನಾಲಜಿ ಹಾಗೂ ಸಾಫ್ಟ್ವೇರ್ ಅಪ್ಲಿಕೇಷನ್ನಲ್ಲಿ ಕನಿಷ್ಟ 2ವಷರ್ಗಳ ಸೇವಾ ಅನುಭವವನ್ನು ಹೊಂದಿರಬೇಕು. ವಯೋಮಿತಿ 21 ವಷರ್ದಿಂದ 35 ವಷರ್ದೊಳಗಿನವರಾಗಿರಬೇಕು. ಮಾಸಿಕ 20 ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಆಸಕ್ತರು ಮಾ.2ರೊಳಗೆ ಸೂಕ್ತ ದಾಖಲೆಗಳೊಂದಿಗೆ ನಗರದ ಉರ್ವ ಮಾರ್ಕೆಟ್ ಕಟ್ಟಡದ 3ನೇ ಮಹಡಿಯಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಮಂಗಳೂರು (ಗ್ರಾಮಾಂತರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಯಡ್ರಾಮಿ | ಕನ್ನಡ ಭಾಷೆ ರಕ್ಷಣೆಗೆ ಪ್ರತಿಯೊಬ್ಬರೂ ಶ್ರಮಿಸಿ : ದೊಡ್ಡಪ್ಪಗೌಡ
ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ
ಕಯ್ಯಾರ ಚರ್ಚ್ನ ಹಳೆಯ ಕಟ್ಟಡ ತೆರವು: ಸ್ಥಳೀಯರಿಂದ ವಿರೋಧ
ಮಂಗಳೂರು, ಫೆ. 21: ಕಾಸರಗೋಡು ಜಿಲ್ಲೆಯ ಕಯ್ಯಾರದಲ್ಲಿದ್ದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಕ್ರಿಸ್ತರಾಜ ದೇವಾಲಯ ಕಟ್ಟಡವನ್ನು ಕೆಡಹುವ ಮೂಲಕ ಭಕ್ತರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಲಾಗಿದೆ ಎಂದು ಚರ್ಚ್ನ ಮಾಜಿ ಉಪಾಧ್ಯಕ್ಷ ಜಾನ್ ಡಿ ಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1953ರಲ್ಲಿ ಫಾ.ಲಾರೆನ್ಸ್ ಎಸ್. ಪಾಯ್ಸ್ ಅವರ ನೇತೃತ್ವದಲ್ಲಿ ರೋಮನ್ ಗೋಥಿಕ್ ಶೈಲಿಯಲ್ಲಿ ಅತ್ಯಂತ ಕಲಾತ್ಮಕವಾಗಿ ಚರ್ಚ್ ಕಟ್ಟಡ ರಚನೆಗೊಂಡಿತ್ತು. ಇದನ್ನು ಕೆಡಹುವ ಬದಲು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು. ಶಿಲುಬೆ ಇರುವಾಗಲೇ ದೇವಾಲಯವನ್ನು ನೆಲಸಮ ಮಾಡಿರುವುದು ಭಕ್ತರಿಗೆ ನೋವನ್ನುಂಟು ಮಾಡಿದೆ ಎಂದರು. ಪ್ರಸ್ತುತದ ಪಾದ್ರಿ ವಿಶಾಲ್ ಮೊನಿಸ್ ಅವರ ನೇತೃತ್ವದಲ್ಲಿ ಈಗಾಗಲೇ ಹೊಸ ದೇವಾಲಯದ ಕಟ್ಟಡ ನಿರ್ಮಾಣ ಕಾರ್ಯ ಬೇರೆ ಸ್ಥಳದಲ್ಲಿ ನಡೆಯುತ್ತಿದೆ. ಹೊಸ ಕಟ್ಟಡಕ್ಕೆ ಹಳೆಯ ಭವ್ಯ ಕಟ್ಟಡದಿಂದ ಯಾವುದೇ ತೊಡಕು ಇರಲಿಲ್ಲ. ಆದರೆ ಸಮಿತಿಯ ಸ್ವಾರ್ಥದಿಂದಾಗಿ ಭವ್ಯವಾದ ಅತ್ಯಂತ ಪುರಾತನ ದೇವಾಲಯವನ್ನು ನೆಲಸಮ ಮಾಡಲಾಗಿದೆ. ಇದರೊಂದಿಗೆ ಅದ್ಭುತ ವಾಸ್ತುಶೈಲಿಯ, ಕಲಾತ್ಮಕ ಮಂದಿರ ಧರೆಗುರುಳಿದೆ ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು. ಚರ್ಚ್ ಕಟ್ಟಡವು ಉರುಳಿಸಿದ ರೀತಿಯೂ ಆಘಾತಕಾರಿಯಾದುದು. ಶಿಲುಬೆ ಕ್ರೈಸ್ತರ ಬಹುಮುಖ್ಯ ಪವಿತ್ರ ಧಾರ್ಮಿಕ ಗುರುತಾಗಿದ್ದು, ಅದಕ್ಕೆ ಕನಿಷ್ಟ ಗೌರವವನ್ನೂ ಕೊಡದೆ ಉರಿಳಿಸಿದ ರೀತಿ ನೋವನ್ನುಂಟು ಮಾಡಿದೆ. ಇದಕ್ಕೆ ಚರ್ಚ್ ಸಮಿತಿ ಹಾಗೂ ಮಂಗಳೂರು ಬಿಷಪರು ಉತ್ತರ ನೀಡಬೇಕು. ಇಲ್ಲವಾದಲ್ಲಿ ಬಿಷಪ್ ನಿವಾಸದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿಲ್ಸನ್ ಜೆ.ಪಿ ಡಿಸೋಜ, ಅನೀಶ್ ಸುವಾರಿಸ್, ಆನ್ಸ್ಟನ್ ಸುವಾರಿಸ್, ಆಸ್ವಾಲ್ಡ್ ಡಿ ಸೋಜ, ಪ್ರಕಾಶ್ ನೊರೊನ್ಹಾ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸ್ಪಷ್ಟನೆ ಕಯ್ಯಾರ ಕ್ರಿಸ್ತ ದೇವಾಲಯವನ್ನು ಸರಕಾರಿ ಆದೇಶದಂತೆಯೇ ಕೆಡವಲಾಗಿದೆ. ಪೈವಳಿಕೆ ಪಂಚಾಯತ್ಗೆ ಚರ್ಚಿನ ಹಳೆ ಕಟ್ಟಡವನ್ನು ಪರಿಶೀಲಿಸಿ ಫಿಟ್ನೆಸ್ ರಿಪೋರ್ಟ್ ಕೇಳಿದ್ದೆವು. ಆದರೆ ಕಟ್ಟಡಕ್ಕೆ ಯಾವುದೇ ರೀತಿಯ ಸಕಾರಾ ತ್ಮಕ ವರದಿ ನೀಡಲು ಸಾಧ್ಯವಿಲ್ಲ್ಲ; ಕಟ್ಟಡ ಶಿಥಿಲಗೊಂಡಿದ್ದು, ತೆರವುಗೊಳಿಸಲು ನಿರಪೇಕ್ಷಣಾ ಪ್ರಮಾಣ ಪತ್ರ ನೀಡಿದ್ದರು. ಕಟ್ಟಡ ತೀವ್ರ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಶಿಲುಬೆ ತೆಗೆಯಲು ಸರ್ವ ಪ್ರಯತ್ನ ಮಾಡಿದ್ದರೂ ಸಾಧ್ಯವಾ ಗಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಶಿಲುಬೆ ಕೆಳಗೆ ಬೀಳುವುದರ ಬಗ್ಗೆ ವೀಡಿಯೋ ಹರಿದಾಡುತ್ತಿರುವುದು ವಿಷಾದನೀಯ. ಧರ್ಮಗುರುಗಳನ್ನು ತಪ್ಪಿತಸ್ಥರನ್ನಾಗಿ ಬಿಂಬಿಸುವ ಪ್ರಯತ್ನ ನಡೆದಿರುವುದು ಸರಿಅಲ್ಲ ಎಂದು ಚರ್ಚ್ ಆರ್ಥಿಕ ಸಮಿತಿ ಮತ್ತು ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಶನ್ ಡಿಸೋಜ ಹಾಗೂ ಕಾರ್ಯದರ್ಶಿ ಜೋಸ್ವಿರ್ ಡಿ ಸೋಜ ಸ್ಪಷ್ಟೀಕರಣ ನೀಡಿದ್ದಾರೆ.
ಬಡವರ ಬದುಕಿಗೆ ಪಂಚಗ್ಯಾರಂಟಿ ಯೋಜನೆಗಳು ಬೆಳಕು: ಶಾಸಕ ಬಿ.ಆರ್.ಪಾಟೀಲ್
ಆಳಂದ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರೆಂಟಿ ಯೋಜನೆಗಳ ಪಾರದರ್ಶಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿರಂತರ ಪ್ರಗತಿ ಪರಿಶೀಲನೆ ಅಗತ್ಯ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚಗ್ಯಾರೆಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ಬಡವರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಯುವಜನತೆಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುತ್ತಿವೆ ಎಂದರು. ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯಾವುದೇ ಅಡಚಣೆ ಇಲ್ಲದೆ ಸೌಲಭ್ಯ ತಲುಪಬೇಕು ಎಂದು ಸೂಚಿಸಿದರು. ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪಾ ಪಾಟೀಲ ಮುನ್ನೊಳ್ಳಿ ಅಧ್ಯಕ್ಷತೆ ವಹಿಸಿ, ಇಲಾಖೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಯೋಜನೆಗಳ ಪರಿಣಾಮಕಾರಿತ್ವ ಹೆಚ್ಚಿಸಬೇಕು ಎಂದು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಸಮಗ್ರ ಪ್ರಗತಿ ವರದಿ ಮಂಡಿಸಿದರು. ಗೃಹಲಕ್ಷ್ಮಿ ಯೋಜನೆ : ಫೆಬ್ರುವರಿ ತಿಂಗಳಲ್ಲಿ ಒಟ್ಟು 68,443 ಫಲಾನುಭವಿಗಳಿಗೆ ಧನಸಹಾಯ ಪಾವತಿಯಾಗಿದ್ದು, ಪರಿಶಿಷ್ಟ ಜಾತಿ – 15,494, ಪರಿಶಿಷ್ಟ ಪಂಗಡ – 1,122, ಅಲ್ಪಸಂಖ್ಯಾತರು – 9,085, ಒಬಿಸಿ – 21,717 ಹಾಗೂ ಇತರೆ ವರ್ಗ – 21,025 ಮಂದಿ ಸೇರಿದ್ದಾರೆ. ವಿವಿಧ ತಾಂತ್ರಿಕ ಹಾಗೂ ದಾಖಲೆ ದೋಷಗಳಿಂದ 847 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಸಿಡಿಪಿಒ ಶಂಭುಲಿಂಗ ಹಿರೇಮಠ ತಿಳಿಸಿದರು. ಅನ್ನಭಾಗ್ಯ ಯೋಜನೆ : ಆಹಾರ ಇಲಾಖೆಯ ವರದಿ ಪ್ರಕಾರ, ತಾಲೂಕಿನಲ್ಲಿ ಒಟ್ಟು 69,881 ಪಡಿತರ ಕಾರ್ಡ್ಗಳಿದ್ದು (ಅನ್ನಕಾರ್ಡ್ – 9,409, ಅಂತ್ಯೋದಯ – 34,789, ಪಿಪಿಎಲ್ – 60,472), 2,18,395 ಸದಸ್ಯರು ನೋಂದಾಯಿತರಾಗಿದ್ದಾರೆ ಎಂದು ಪ್ರಭಾರಿ ಅಧಿಕಾರಿ ಶ್ರೀದೇವಿ ಸ್ವಾಮಿ ಮಾಹಿತಿ ನೀಡಿದರು. ಯುವನಿಧಿ ಯೋಜನೆ : ಡಿಸೆಂಬರ್ 2023ರಿಂದ ನವೆಂಬರ್ 2025ರವರೆಗೆ 2,950 ಯುವಕರಿಗೆ ಒಟ್ಟು 7 ಕೋಟಿ 10 ಲಕ್ಷ 77 ಸಾವಿರ 500 ರೂ. ವಿತರಿಸಲಾಗಿದೆ ಎಂದು ಅಧಿಕಾರಿಗಳು ಲಿಖಿತ ವರದಿ ಸಲ್ಲಿಸಿದರು. ಶಕ್ತಿ ಯೋಜನೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸ್ಥಳೀಯ ಘಟಕ ವ್ಯವಸ್ಥಾಪಕ ಯೋಗಿರಾಜ ಸರಸಂಬಿ ಮಾಹಿತಿ ನೀಡಿ, 2023ರ ಜೂನ್ನಿಂದ 2026ರ ಫೆಬ್ರುವರಿ ವರೆಗೆ 164.62 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆದಿದ್ದು, 6,683.41 ಲಕ್ಷ ರೂ. ಆದಾಯ ಗಳಿಕೆಯಾಗಿದೆ. ತಾಲೂಕಿನಲ್ಲಿ ಪ್ರತಿದಿನ ಸರಾಸರಿ 0.17 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದು, ದಿನಕ್ಕೆ ಸರಾಸರಿ 6.76 ಲಕ್ಷ ರೂ. ಆದಾಯ ಬರುತ್ತಿದೆ ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ, ಮಾಹಿತಿ ಹಂಚಿಕೆ, ಅರ್ಜಿ ತಿರಸ್ಕಾರ ಕಡಿಮೆ ಮಾಡುವ ಕ್ರಮಗಳು, ಸಾರ್ವಜನಿಕ ಜಾಗೃತಿ ಹಾಗೂ ವಿಶೇಷ ಶಿಬಿರಗಳ ಆಯೋಜನೆ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಅನುಷ್ಠಾನ ಸಮಿತಿ ಸದಸ್ಯ ಮಹೇಶ ಹಿರೋಳಿ, ರಾಜು ಮೂಲಗೆ, ಸಿಡಿಪಿಒ ಶಂಭುಲಿಂಗ ಹಿರೇಮಠ, ಎಫ್ಡಿಸಿ ಶ್ರೀದೇವಿ ಸ್ವಾಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ: ಮಹಿಳಾ ಕಾಲೇಜಿನಲ್ಲಿ ಕುಷ್ಠರೋಗ ಜಾಗೃತಿ ಕಾರ್ಯಕ್ರಮ
ಉಡುಪಿ, ಫೆ.21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ವಿಭಾಗ ಉಡುಪಿ ಜಿಲ್ಲೆ ಮತ್ತು ಅಜ್ಜರಕಾಡು ಡಾ.ಜಿ ಶಂಕರ್ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣ ದಲ್ಲಿ ಕುಷ್ಠರೋಗ ಕುರಿತಾದ ಜಾಗೃತಿ ಆಂದೋಲನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವನ್ನು ತಾರತಮ್ಯವನ್ನು ಕೊನೆಗೊಳಿಸುವುದು, ಘನತೆಯನ್ನು ಕಾಪಾಡುವುದು ಎಂಬ ಘೋ? ವಾಕ್ಯದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಶಂಕರ್ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲೆ ಡಾ.ನಿಕೇತನ ಮಾತನಾಡಿ, ಯುವ ಜನತೆ ಕುಷ್ಠರೋಗದ ಕುರಿತು ಸಮಗ್ರ ಮಾಹಿತಿಯನ್ನು ತಿಳಿದು ಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸಿ ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಆರೋಗ್ಯ ರಾಯಭಾರಿಗಳಾಗಿ ಕೆಲಸ ನಿರ್ವಹಿಸುವಂತೆ ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್, ಕುಷ್ಠರೋಗದ ಕುರಿತು ಸಮಗ್ರ ಮಾಹಿತಿ ನೀಡಿ, ಸಮುದಾಯದಲ್ಲಿ ಕಂಡುಬರುವ ಕುಷ್ಠರೋಗ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚಿ ಗುಣಪಡಿಸಿದಾಗ ಕುಷ್ಠಮುಕ್ತ ಸಮಾಜ ನಿರ್ಮಾಣಸಾಧ್ಯ ಎಂದರು. ಆರೋಗ್ಯ ನಿರೀಕ್ಷಣಾಧಿಕಾರಿ ಭರತ್ ಕುಷ್ಠರೋಗ ಕುರಿತಾದ ಪ್ರತಿಜ್ಞಾವಿಧಿ ಭೋದಿಸಿದರು. ಕಾಲೇಜಿನ ಎನ್ನೆಸ್ಸೆಸ್ ಸಂಯೋಜಕ ಡಾ.ರವೀಶ್ ಬಿ ಕಾರ್ಯಕ್ರಮ ನಿರೂಪಿಸಿದರೆ, ಪ್ಯಾರಾ ಮೆಡಿಕಲ್ ಸಿಬ್ಬಂದಿ ರಾಜು ವಂದಿಸಿದರು.
ಮತ್ಸ್ಯ ಸಂಪದ ಯೋಜನೆಯಡಿ 6 ಮಂದಿಗೆ 2 ಕೋಟಿ ರೂ. ಸಹಾಯಧನ: ಉಡುಪಿ ಡಿಸಿ ಸ್ವರೂಪಾ ಟಿ.ಕೆ.
ಉಡುಪಿ, ಫೆ.21: ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳ ಸ್ಥಾಪನೆಗೆ ಜಿಲ್ಲೆಯ 6 ಮಂದಿ ಫಲಾನುಭವಿಗಳಿಗೆ ಎರಡು ಕೋಟ ರೂ. ಸಹಾಯಧನ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ ಸಾಲಿನಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕಾ ಯಾಂತ್ರೀಕೃತ ದೋಣಿ ನಿರ್ಮಿಸಲು ಸಹಾಯ ಯೋಜನೆ ಯಡಿ ಜಿಲ್ಲೆಗೆ ಸಾಮಾನ್ಯ ವರ್ಗದಡಿ 8 ಗುರಿ ನಿಗದಿಪಡಿಸಿದ್ದು, ಒಟ್ಟು 9 ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದರು. ಜಿಲ್ಲೆಯಲ್ಲಿ 5,598 ಮೋಟಾರೀಕೃತ ನಾಡದೋಣಿಗಳು, 2017 ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು ಹಾಗೂ 447 ಸಾಂಪ್ರದಾಯಿಕ ನಾಡದೋಣಿಗಳು ಕಾರ್ಯಾಚರಿಸುತ್ತಿವೆ ಎಂದ ಅವರು, ಕಳೆದ ಸಾಲಿನಲ್ಲಿ ಪಿಎಂಎಂಎಸ್ವೈ ಯೋಜನೆಯಡಿ ಪಚ್ಚಿಲೆ ಕೃಷಿ, ಮಸೆಲ್ಸ್, ಕಲ್ಲ, ಕ್ಲಾಮ್ಸ್, ಮುತ್ತು ಕೃಷಿ ಇತ್ಯಾದಿ ಕಾರ್ಯಕ್ರಮ ಗಳಲ್ಲಿ ಪ್ರತಿಶತಃ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದವರು ತಿಳಿಸಿದರು. ಮಲ್ಪೆಯು ಸರ್ವಋತು ಬಂದರಾಗಿದ್ದು, ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮೀನುಗಾರರು ಮೀನುಗಾರಿಕೆ ಹಾಗೂ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಸರಕಾರದಿಂದ ವಿವಿಧ ಯೋಜನೆಯಡಿ ನೀಡಲಾಗುವ ಆರ್ಥಿಕ ಸೌಲಭ್ಯ, ಸಹಾಯಧನಗಳ ಕುರಿತ ಮಾಹಿತಿಯನ್ನು ತಲುಪಿಸುವ ಮೂಲಕ ಅವರನ್ನು ಯೋಜನೆಯ ಫಲಾನುಭಗಳನ್ನಾಗಿಸಬೇಕು ಎಂದರು. ಸರಕಾರ ಮೀನುಗಾರರ ಅಭಿವೃದ್ಧಿಗೆ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಹೆಚ್ಚು ಫಲಾನುಭವಿಗಳು ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೀನುಗಾರರು ಸ್ವಾವಲಂಬಿ ಜೀವನ ನಡೆಸಲು ಬೇಕಾದ ಸಹಾಯವನ್ನು ಅಧಿಕಾರಿಗಳು ಮಾಡಬೇಕು. ಪ್ರಸ್ತುತ ನಿಗದಿಪಡಿಸಿರುವ ಸೌಲಭ್ಯಗಳು ಹೆಚ್ಚಿನ ಜನರಿಗೆ ತಲುಪಿಸಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಹೆಚ್ಚುವರಿ ಅನುದಾನ ಹಾಗೂ ಗುರಿ ನೀಡಲು ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಅವರು ಸೂಚಿಸಿದರು. ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ಬಿ., ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಹಾಗೂ ಆಯ್ಕೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಫೆ. 22ರಂದು ಅಂಕೋಲ–ಕಾರವಾರ ಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ
ಭಟ್ಕಳ: ಫೆ. 22ರಂದು ಅಂಕೋಲ–ಕಾರವಾರ ಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅರಣ್ಯವಾಸಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ. “ಜಿಲ್ಲೆಯಲ್ಲಿ ಲಕ್ಷಕ್ಕೂ ಮಿಕ್ಕಿ ಅರಣ್ಯವಾಸಿಗಳು ಸಾಗುವಳಿ ಹಕ್ಕಿನಿಂದ ವಂಚಿತರಾಗುವ ಭೀತಿಯಲ್ಲಿದ್ದಾರೆ. ಮುಖ್ಯಮಂತ್ರಿಗಳ ಈ ಭೇಟಿ ನಿರ್ಣಾಯಕ ಹಂತವಾಗ ಬೇಕು,” ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಸಾವಿರಾರು ಅರ್ಜಿಗಳಲ್ಲಿ ಬಹುತೇಕವು ತಿರಸ್ಕೃತವಾಗಿರುವುದು ಅರಣ್ಯವಾಸಿಗಳಲ್ಲಿ ಆತಂಕ ಉಂಟುಮಾಡಿದೆ. “ಸುಮಾರು 72 ಸಾವಿರ ಅರ್ಜಿಗಳು ತಿರಸ್ಕಾರವಾಗಿವೆ. ಇನ್ನೊಂದೆಡೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕ್ರಮ ಕೈಗೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ,” ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ. 1978ರ ಪೂರ್ವದಿಂದ ಸಾಗುವಳಿ ಮಾಡುತ್ತಿರುವ 2,513 ಕುಟುಂಬಗಳ 3,235 ಎಕರೆ ಭೂಮಿಗೆ ಕೇಂದ್ರ ಸರ್ಕಾರದ ಅಂತಿಮ ಅಧಿಸೂಚನೆ ಬಾಕಿಯಿದೆ. ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗಿಂತ ಮೊದಲು ಹಂಗಾಮಿ ಲಾಗಣಿಯಾಗಿ ನೀಡಿದ ಭೂಮಿಯನ್ನು ಖಾಯಂ ಮಾಡುವ ವಿಚಾರವೂ ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪ ಟ್ಟಿದೆ. “ದಾಖಲೆಗಳ ಸಮಸ್ಯೆ ಹೇಳಿ ಜನರನ್ನು ಹಕ್ಕಿನಿಂದ ವಂಚಿಸುವುದು ಸರಿಯಲ್ಲ,” ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಸುಮಾರು 80 ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿ ಕುಟುಂಬಗಳಿವೆ. ಜಿಲ್ಲೆಯ ಒಟ್ಟು ಜನಸಂಖ್ಯೆಯೊಂದ ಮೂರರಷ್ಟು ಜನರು ಅರಣ್ಯಾಧಾರಿತ ಬದುಕು ನಡೆಸುತ್ತಿರುವುದು ಗಮನಾರ್ಹ. “ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನಕ್ಕೆ ನಮ್ಮ ಸಮಸ್ಯೆ ತರುತ್ತಾರೆ ಎಂಬ ವಿಶ್ವಾಸ ಇದೆ,” ಎಂದು ನಾಯ್ಕ ಅಭಿಪ್ರಾಯಪಟ್ಟರು. ಸ್ವಾತಂತ್ರ್ಯಾನಂತರ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ 64 ಸಾವಿರ ಹೆಕ್ಟೇರ್ಗೂ ಅಧಿಕ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗೆ ನೀಡಲಾಗಿದೆ. “ದೇಶದ ಅಭಿವೃದ್ಧಿಗೆ ಭೂಮಿ ನೀಡಲಾಗಿದೆ. ಆದರೆ ಬದುಕಿಗಾಗಿ 53 ಸಾವಿರ ಎಕರೆ ಭೂಮಿ ಬಿಡುಗಡೆ ಮಾಡಲು ಸರ್ಕಾರ ಯಾಕೆ ಹಿಂಜರಿಯಬೇಕು?” ಎಂದು ಅವರು ಪ್ರಶ್ನಿಸಿದರು. ಜಿಪಿಎಸ್ ಅಳತೆ, ಅರಣ್ಯ ಸಿಬ್ಬಂದಿಗಳ ಕಿರಿಕಿರಿ ಹಾಗೂ ಮಾರ್ಚ್ ಅಂತ್ಯದೊಳಗೆ 1,450 ಎಕರೆ ಪ್ರದೇಶದಲ್ಲಿ ಒಕ್ಕಲೆಬ್ಬಿಸುವ ಮಾನದಂಡದ ಚರ್ಚೆ ಅರಣ್ಯವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. “ನಾವು ಯಾರ ಭೂಮಿಯನ್ನೂ ಕಬಳಿಸಿಲ್ಲ. ನಮ್ಮ ಪೂರ್ವಜರು ಬದುಕಿದ ನೆಲದಲ್ಲೇ ಬದುಕುತ್ತಿದ್ದೇವೆ. ಕಾನೂನುಬದ್ಧವಾಗಿ ಹಕ್ಕು ನೀಡಬೇಕು,” ಎಂಬುದು ಅರಣ್ಯವಾಸಿಗಳ ಒತ್ತಾಯವಾಗಿದೆ. ಮುಖ್ಯಮಂತ್ರಿಗಳ ಈ ಭೇಟಿ ಅರಣ್ಯವಾಸಿಗಳ ದೀರ್ಘಕಾಲದ ನಿರೀಕ್ಷೆಗೆ ಸ್ಪಷ್ಟ ಉತ್ತರ ನೀಡಬಹುದೇ ಎಂಬುದನ್ನು ಜಿಲ್ಲೆಯ ಜನರು ಕಾದುನೋಡುತ್ತಿದ್ದಾರೆ. • ಎಂ.ಆರ್.ಮಾನ್ವಿ
ಚಿಂಚೋಳಿ | ಸಿಡಿಪಿಒ ವಿರುದ್ಧ ಭ್ರಷ್ಟಾಚಾರ ಆರೋಪ: ಧರಣಿ ಸತ್ಯಾಗ್ರಹ
ಚಿಂಚೋಳಿ: ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಸವಿತಾ ಅವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿದ್ದು, ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ (AIAWU) ವತಿಯಿಂದ ಶನಿವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಅಂಗನವಾಡಿ ಕೇಂದ್ರಗಳಿಗೆ ವಿತರಿಸಬೇಕಾದ ತತ್ತಿಗಳನ್ನು (ಮೊಟ್ಟೆ) ಸರಿಯಾಗಿ ವಿತರಿಸದೆ, ಪ್ರತಿ ಕೇಂದ್ರಗಳಿಂದ 5 ರಿಂದ 6 ಸಾವಿರ ರೂಪಾಯಿ ಲಂಚ ಪಡೆಯುವ ಮೂಲಕ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಈ ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷೆ ಜಗದೇವಿ ಚಂದನಕೇರ, ಜಿಲ್ಲಾ ಕಾರ್ಯದರ್ಶಿ ಮಲ್ಲಮ್ಮ ಕೂಡ್ಲಿ, ಮುಖಂಡರಾದ ಭೀಮಶಾ ಕೊಂಡಂಪಳ್ಳಿ, ತುಳುಜಪ್ಪರ್ ರುಸತಪೂರ, ಮಾರುತಿ ಐನೋಳ್ಳಿ, ಸಿದ್ದಪ್ಪ ದೇಗಲಮಡಿ ಸೇರಿದಂತೆ ಅನೇಕ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.
Kalaburagi | ನಿವೃತ್ತ ನೌಕರರಿಗೆ ಪಿಂಚಣಿ ನೀಡುವಂತೆ ಆಗ್ರಹ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಸಿಬ್ಬಂದಿಗೆ ಪಿಂಚಣಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಪಿಂಚಣಿಯನ್ನು ಸರ್ಕಾರದ ನೌಕರರಂತೆ ನೇರವಾಗಿ HRMS/ಎಜಿ (AG) ಕಚೇರಿಯಿಂದ ಪಾವತಿಸುವಂತೆ ಒತ್ತಾಯಿಸಿ ನಿವೃತ್ತ ನೌಕರರು ವಿವಿ ಕುಲಪತಿಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸದ್ಯ ವಿಶ್ವವಿದ್ಯಾಲಯದಲ್ಲಿ ಸುಮಾರು 650 ಮಂದಿ ಪಿಂಚಣಿದಾರರು ಇದ್ದು, ಅವರಿಗೆ ಮಾಸಿಕವಾಗಿ ಸುಮಾರು 4 ಕೋಟಿ ರೂಪಾಯಿ ಹಾಗೂ ವಾರ್ಷಿಕವಾಗಿ ಸುಮಾರು 50 ಕೋಟಿ ರೂಪಾಯಿಗಳ ಪಿಂಚಣಿ ಅಗತ್ಯವಿದೆ. ಆದರೆ ಅಗತ್ಯ ಅನುದಾನ ಸಮಯಕ್ಕೆ ಸರಿಯಾಗಿ ಲಭ್ಯವಾಗದ ಕಾರಣ ನಿವೃತ್ತ ನೌಕರರಿಗೆ ಪಿಂಚಣಿ ಮತ್ತು ಸಂಬಂಧಿತ ಸೌಲಭ್ಯಗಳು ವಿಳಂಬವಾಗುತ್ತಿವೆ. ಇದರಿಂದ ವಯೋಸಹಜ ಸಮಸ್ಯೆಗಳನ್ನು ಎದುರಿಸುತ್ತಿರುವ ಪಿಂಚಣಿದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಹಿಂದೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಇದ್ದ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು, ಸ್ನಾತಕೋತ್ತರ ಕೇಂದ್ರಗಳು ಮತ್ತು ಅನೇಕ ಮಹಾವಿದ್ಯಾಲಯಗಳು ಸ್ವತಂತ್ರ ಸಂಸ್ಥೆಗಳಾಗಿ ರೂಪಾಂತರಗೊಂಡಿರುವುದರಿಂದ ವಿಶ್ವವಿದ್ಯಾಲಯದ ಆಂತರಿಕ ಆದಾಯ ಸಂಪನ್ಮೂಲಗಳು ಗಣನೀಯವಾಗಿ ಕುಂಠಿತಗೊಂಡಿವೆ. ಇದರಿಂದ ಪಿಂಚಣಿ ಪಾವತಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ನಿವೃತ್ತ ನೌಕರರು ತಿಳಿಸಿದ್ದಾರೆ. ಇದಲ್ಲದೆ, ಖಾಸಗಿ ಅನುದಾನಿತ ವಿದ್ಯಾಸಂಸ್ಥೆಗಳ ನಿವೃತ್ತ ನೌಕರರಿಗೆ ಎಜಿ ಕಚೇರಿಯಿಂದ ನೇರವಾಗಿ ಪಿಂಚಣಿ ಪಾವತಿಯಾಗುತ್ತಿರುವಾಗ, ಸರ್ಕಾರಿ ವಿಶ್ವವಿದ್ಯಾಲಯದ ನಿವೃತ್ತ ನೌಕರರಿಗೆ ಅದೇ ಸೌಲಭ್ಯ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಪ್ರೊ.ರವೀಂದ್ರಪಾಲ, ಪ್ರೊ.ಕೆ.ಎಸ್.ವಾಲಿ, ಎಸ್.ಆರ್.ಮಲ್ಲೂರು, ಬಿವಿ ಧಂಡ್ರ, ಪ್ರದೀಪ್ ಹಡಲಗಿ, ವಿಜಿ ಪೂಜಾರ, ಲಿಂಗಪ್ಪ ಕೆ, ಬಸವರಾಜ ಸಿ.ಎಸ್ ಸೇರಿದಂತೆ ಹಲವರು ಇದ್ದರು.
ಬಂಡೀಪುರ ಸಫಾರಿ ಪುನರಾರಂಭಕ್ಕೆ ಹೆಚ್ಚಾಯ್ತು ವಿರೋಧ
ಬಂಡೀಪುರದಲ್ಲಿ ಸಫಾರಿ ಪುನಾರಂಭಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಸಫಾರಿಗೆ ಅನುಮತಿ ಕೊಡಬೇಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸ್ಥಳೀಯ ಪದಾಧಿಕಾರಿಗಳು ತಾಲೂಕಿನ 25 ಕ್ಕೂ ಹೆಚ್ಚು ಗಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಾರಾಯಣಗುರು ಆಧುನಿಕ ಭಾರತದ ವಿಶ್ವಗುರು: ಸಚ್ಚಿದಾನಂದ ಸ್ವಾಮೀಜಿ
ಮಂಗಳೂರು, ಫೆ.21: ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ್ದು ಕೇರಳದಲ್ಲಾದರೂ ಪ್ರಪಂಚದ ಎಲ್ಲ ಕಡೆಯೂ ಅವರ ಚಳವಳಿ ಖ್ಯಾತಿ ಗಳಿಸಿದೆ. ಅವರು ಆಧುನಿಕ ಭಾರತದ ವಿಶ್ವಗುರು ನಾರಾಯಗಳ ಗುರುಗಳು ಎಂದು ಕೇರಳ ಶಿವಗಿರಿ ಮಠದ ಅಧ್ಯಕ್ಷ ಸಚ್ಚಿದಾನಂದ ಸ್ವಾಮೀಜಿ ಹೇಳಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ ದಿನದ ನೆನಪಿನಲ್ಲಿ ನಗರದಲ್ಲಿ ‘ನಮ್ಮ ನಡಿಗೆ -ಶ್ರೀ ಗುರುವಿನೆಡೆಗೆ’ ಎಂಬ ಸಂಕಲ್ಪದೊಂದಿಗೆ ಶನಿವಾರ ನಡೆದ ಶ್ರೀ ಕುದ್ರೋಳಿ ಕ್ಷೇತ್ರ ತೀರ್ಥಾಟನೆ ಬಳಿಕ ಕುದ್ರೋಳಿ ಕ್ಷೇತ್ರದಲ್ಲಿ ಅವರು ಧಾರ್ಮಿಕ ಪ್ರವಚನ ನೀಡಿದರು. ನಾರಾಯಣಗುರು ಶಿವಲಿಂಗ ಪ್ರತಿಷ್ಠಾಪಿಸಿದ ಕುದ್ರೋಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪುಣ್ಯ ದಿನ. ಶಬರಿಮಲೆಯಲ್ಲಿ ಪ್ರತಿ ವರ್ಷ ತೀರ್ಥಾಟನೆ ಆಗುತ್ತಿದೆ. ಅದು ಬಿಟ್ಟರೆ ಶಿವಗಿರಿಯಲ್ಲಿ ತೀರ್ಥಾಟನೆ ನಡೆಯುತ್ತದೆ. ಮುಂಬೈ, ಬಹರೇನ್, ದುಬೈ, ಕುವೈಟ್ನಲ್ಲೂ ಶಿವಗಿರಿ ತೀರ್ಥಾಟನೆ ನಡೆಯುತ್ತಿದೆ. ಇದೀಗ ಮಂಗಳೂರಿನಲ್ಲಿ ತೀರ್ಥಾಟನೆ ಆರಂಭಿಸಿರು ವುದು ಸಂತಸ ತಂದಿದೆ. ನಾರಾಯಣ ಗುರು ಜನಿಸಿದ್ದು ಕೇರಳದಲ್ಲಾದರೂ ಭಾರತದಲ್ಲೂ ಪ್ರಪಂಚದ ಎಲ್ಲ ಕಡೆಯೂ ಅವರ ಚಳವಳಿ ಖ್ಯಾತಿ ಗಳಿಸಿದೆ ಎಂದರು. ಆಸ್ಟ್ರೇಲಿಯಾ ಪಾರ್ಲಿಮೆಂಟಿನಲ್ಲಿ ನಾರಾಯಾಣ ಗುರು ಸಮ್ಮೇಳನ ಆಗಿದೆ. ಶಿವಗಿರಿ ಮಠಕ್ಕೆ ಆಸ್ಟ್ರೇಲಿಯಾ ಜಾಗತಿಕ ಶಾಂತಿ ಪ್ರಶಸ್ತಿ ನೀಡಿದೆ. ಅಮೆರಿಕದ 10 ರಾಜ್ಯದಲ್ಲಿ, ಲಂಡನ್, ಫಿಜಿಯಲ್ಲಿಯೂ ನಾರಾಯಣ ಗುರು ಮಂದಿರ ಇದೆ. ಕೇರಳದ ಎಲ್ಲ ಗ್ರಾಮಗಳಲ್ಲಿ ನಾರಾಯಣ ಗುರು ಕ್ಷೇತ್ರ ಇದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ನಾರಾಯಣ ಗುರುಗಳ ಕೋಟಿಗಟ್ಟಲೆ ಅನುಯಾಯಿಗಳು ಇದ್ದಾರೆ ಎಂದವರು ಹೇಳಿದರು. ಕನ್ಯಾಡಿ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೇದವ್ಯಾಸರು ವೇದಗಳನ್ನು ಎತ್ತಿ ಹಿಡಿದರೆ, ವೇದದ ಸಾರವನ್ನು ಜನಸಾಮಾನ್ಯರಿಗೆ ಪಸರಿಸಿದವರು ನಾರಾಯಣಗುರುಗಳು. ಅವರ ಮೂಲಕ ಕುದ್ರೋಳಿಯಲ್ಲಿ ಸಾಮಾಜಿಕ ಕ್ರಾಂತಿ ಮೂಡಿಬಂತು. ಜನಾರ್ದನ ಪೂಜಾರಿ ಅವರು ಅದನ್ನು ಅದ್ವಿತೀಯವಾಗಿ ಮುಂದುವರಿಸಿದರು ಎಂದರು. ಕೇಮಾರು ಕ್ಷೇತ್ರದ ಈಶವಿಠಲದಾಸ ಸ್ವಾಮೀಜಿ ಮಾತನಾಡಿ, ನಾರಾಯಣ ಗುರುಗಳು ವಿಶ್ವಗುರುಗಳು. ಗುರು ಗಳು ಸಮಾಜದ ಆಸ್ತಿ ಆಗಿರುವ ಕಾರಣದಿಂದ ಜಾತಿ ಹಾಗೂ ಬಣ್ಣದಿಂದ ಅವರನ್ನು ಬಂಧಮುಕ್ತಗೊಳಿಸಬೇಕು ಎಂದರು. ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ, ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ, ವಿವಿಧ ಕ್ಷೇತ್ರಗಳ ಬ್ರಹ್ಮಾನಂದ ಸ್ವಾಮೀಜಿ, ಸತ್ಯಾನಂದ ತೀರ್ಥ ಸ್ವಾಮೀಜಿ, ದೇವಾತ್ಮಾನಂದ ಸ್ವಾಮೀಜಿ, ವೀರಜನಂದ ಸ್ವಾಮೀಜಿ, ವಿಠಲಗಿರಿ ತಪೋನಿಧಿ ಮಹಾರಾಜ್, ಶಂಕರಾನಂದ ಸ್ವಾಮೀಜಿ, ಸೂರ್ಯೇಶ್ವರ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಜೈರಾಜ್ ಹಾಗೂ ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್ ಕುಮಾರ್ ಸ್ವಾಮೀಜಿಯವರನ್ನು ಗೌರವಿಸಿದರು. ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಥಾಟನೆ ಪಾದಯಾತ್ರೆಯಲ್ಲಿ ಬಿಲ್ಲವ ಮುಂದಾಳು ಬಿ.ಕೆ. ಹರಿಪ್ರಸಾದ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ನವೀನ್ಚಂದ್ರ ಡಿ. ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕುದ್ರೋಳಿ ದೇವಸ್ಥಾನದ ಅಧ್ಯಕ್ಷರಾದ ಜೈರಾಜ್ ಸೋಮಸುಂದರ್, ಉಪಾಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಸಂತೋಷ್ ಕುಮಾರ್, ಕೃತಿನ್ ಡಿ. ಅಮೀನ್, ಕುದ್ರೋಳಿ ದೇವಳ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಬಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಸೂರ್ಯಕಾಂತ್ ಜೆ. ಸುವರ್ಣ, ಹರೀಶ್ ಕುಮಾರ್, ಗೌರವಿ ರಾಜಶೇಖರ್, ಲೀಲಾಕ್ಷ ಕರ್ಕೇರಾ, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಪೂಜಾರಿ, ಮುಖಂಡರಾದ ಶಶಿಧರ್ ಹೆಗ್ಡೆ, ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರುಗಳ ಸಂದೇಶ ಸಾರಿದ ‘ಕುದ್ರೋಳಿ ತೀರ್ಥಾಟನೆ’ ಬ್ರಹ್ಮಶ್ರೀ ನಾರಾಯಣ ಗುರುಗಳು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಪವಿತ್ರ ಸ್ಮರಣೆಗಾಗಿ ಶನಿವಾರ ಮಂಗಳೂರಿನಲ್ಲಿ ಆಯೋಜಿಸಲಾದ ‘ಕುದ್ರೋಳಿ ತೀರ್ಥಾಟನೆ’ ನಾರಾಯಣ ಗುರುಗಳ ಏಕತೆಯ ಸಂದೇಶ ಸಾರಿತು. ನಾರಾಯಣ ಗುರುಗಳ ಜ್ಞಾನದ ಸಂಕೇತವಾದ ಹಳದಿ ವಸ್ತ್ರಗಳನ್ನು ಧರಿಸಿದ್ದ ಅನುಯಾಯಿಗಳು ಮಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿದ ಪಾದಯಾತ್ರೆ ಹಳದಿ ನದಿ ಹರಿದಂತೆ ಭಾಸವಾಯಿತು. ಗುರು ತತ್ತ್ವ ಸಂದೇಶ ಪ್ಲೇ ಕಾರ್ಡ್ಗಳು, ಹಳದಿ ತೋರಣದ ಜತೆಗೆ ಜಾತಿ-ಮತ-ಧರ್ಮ ಭೇದವಿಲ್ಲದೆ, ರಾಜಕೀಯ ಪಕ್ಷಗಳ ಮಧ್ಯ ಪ್ರವೇಶವಿಲ್ಲದೆ ನಡೆದ ತೀರ್ಥಾಟನೆ ಮಾನವ ಹೃದಯಗಳನ್ನು ಬೆಸೆಯುವ ಕಾರ್ಯಕ್ರಮವಾಗಿ ಮೂಡಿಬಂತು. ಬೆಳಗ್ಗೆ 9 ಗಂಟೆಗೆ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಶಿವಗಿರಿ ಪೀಠದ ಪೀಠಾಧಿಪತಿಯವರನ್ನು ಬರಮಾಡಿಕೊಳ್ಳುವ ಮೂಲಕ ತೀರ್ಥಾಟನೆ ಆರಂಭಗೊಂಡಿತು. ಬಳಿಕ ಕುದ್ಮುಲ್ ರಂಗರಾವ್ ಪುರಭವನಕ್ಕೆ ಬಂದು, ಅಲ್ಲಿಂದ ಹೊರಟ ಮೆರವಣಿಗೆ ಕ್ಲಾಕ್ಟವರ್ ರಸ್ತೆ, ಕೆ.ಎಸ್. ರಾವ್ ರಸ್ತೆ, ಮಂಜೇಶ್ವರ ಗೋವಿಂದ ಪೈ ಸರ್ಕಲ್, ಪಿವಿಎಸ್ ವೃತ್ತ, ನಾರಾಯಣಗುರು ಸರ್ಕಲ್ ದಾಟಿ ಸುಮಾರು 7 ಕಿ.ಮೀ. ಯಾತ್ರೆ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿತು. ಮೆರವಣಿಗೆ ಯಲ್ಲಿ ಆಗಮಿಸಿದ ಗುರುಗಳ ಅನುಯಾಯಿಗಳಿಗೆ ಉಪಹಾರ ವ್ಯವಸ್ಥೆ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.
Kalaburagi | ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ
ಕಲಬುರಗಿ : ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಕನ್ನಡ, ಹಿಂದಿ, ಇಂಗ್ಲೀಷ್ ಮತ್ತು ಉರ್ದು ವಿಭಾಗಗಳ ಸಹಯೋಗದಲ್ಲಿ ಶನಿವಾರ ವಿಶ್ವ ಮಾತೃ ಭಾಷಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಭಾಷೆಯ ಮಹತ್ವ ವೈಶಿಷ್ಟತೆಗಳು, ಭಾಷೆಯ ಅಳಿವು ಉಳಿವು ವಿವಿಧ ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಅವರು, ಕನ್ನಡ ಭಾಷೆಯ ಮಹತ್ವವನ್ನು ಮತ್ತು ವಿವಿಧ ಭಾಷೆಗಳ ಅಳವಡಿಕೆಯ ಮೂಲಕ ಭಾಷೆಯ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಬಸಮ್ಮ ಗೊಬ್ಬುರ ನಿರೂಪಿಸಿದರು. ತಸ್ಮಿಯಾ ರೂಬಾ ಪ್ರಾರ್ಥಿಸಿದರು. ಡಾ.ಮೌಶಿನಾ ಫಾತಿಮಾ ಅವರು ಸ್ವಾಗತಿಸಿದರು. ಡಾ ಮಮತಾ ಬಿ ನಾಟಿಕಾರ್ ಅತಿಥಿಗಳನ್ನು ಪರಿಚಯಿಸಿದರು. ಕವಿತಾ ಠಾಕೂರ್ ವಂದಿಸಿದರು. ಕಾರ್ಯಕ್ರಮದಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಜ್ಯೋತಿಪ್ರಕಾಶ ದೇಶಮುಖ, ಕವಿತಾ ಎ.ಎಮ್, ಡಾ ಶ್ರೀದೇವಿ ಸಿದ್ದಣ್ಣ, ಅಶ್ವಿನಿ ಮಠ್, ಮತ್ತಿತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾಳಗಿ | ಧರ್ಮದ ಹಾದಿಯಲ್ಲಿ ನಡೆದಾಗ ಜೀವನ ಸಾರ್ಥಕ : ಚಿಕ್ಕಗುರುನಂಜೇಶ್ವರ ಮಹಾಸ್ವಾಮೀಜಿ
ಜಗಧೀಶ್ವರ ದೇವಸ್ಥಾನ ಲೋಕಾರ್ಪಣೆ, ಕಳಸಾರೋಹಣ
ಐತಿಹಾಸಿಕ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ: ಶಾಸಕ ರಾಜಣ್ಣ ಮನವಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ
ನವದೆಹಲಿ: ತುಮಕೂರು ಜಿಲ್ಲೆಯ ಐತಿಹಾಸಿಕ ಮಧುಗಿರಿ ಬೆಟ್ಟವನ್ನು ವಿಶ್ವ ಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಅವರು ನವದೆಹಲಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಮಧುಗಿರಿ ಬೆಟ್ಟಕ್ಕೆ ರೋಪ್ವೇ ಯೋಜನೆಗೆ ತ್ವರಿತ ಅನುಮೋದನೆ ಮತ್ತು ಅನುದಾನ ಮಂಜೂರು ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಐತಿಹಾಸಿಕ ಮಧುಗಿರಿ
Kalaburagi | ಮಾನಸಿಕ ಅಸ್ಪೃಶ್ಯತೆ ಮೊದಲು ತೊಲಗಿಸಬೇಕು: ಸುಖಾನಂದ ಸಿಂಗೆ
ಕಲಬುರಗಿ: ಸಮಾಜದಲ್ಲಿ ಬೇರೂರಿದ ಅಸ್ಪೃಶ್ಯತೆ ತೊಲಗಿಸಬೇಕಾದರೆ, ನಮ್ಮ ಮಾನಸಿಕ ಅಸ್ಪೃಶ್ಯತೆ ಮೊದಲು ಅಳಿಸಬೇಕಾಗಿದೆ ಎಂದು ಪಿಎಸ್ಐ ಸುಖಾನಂದ ಸಿಂಗೆ ಕರೆ ನೀಡಿದರು. ತಾಲೂಕಿನ ಕಮಲಾಪೂರ ಗ್ರಾಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜ್ಞಾನ ಸಾಗರ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಅಸ್ಪೃಶ್ಯತಾ ನಿವಾರಣೆಯ ಜಾಗೃತಿ ಕಾರ್ಯಕ್ರಮ ವಿಚಾರ ಸಂಕಿರಣ, ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣ ಕೊಡಿಸಬೇಕು.ಆ ಮೂಲಕ ಅಸ್ಪೃಶ್ಯತೆ ಹಾಗೂ ಜಾತಿಯ ಅಸಮಾನತೆಯ ಅರಿವು ಮೂಡಿಸಬೇಕು. ಆಗ ಮಾತ್ರ ಅಸ್ಪೃಶ್ಯತೆ ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ ಅವರು ಮಾತನಾಡಿ, ವರ್ಗರಹಿತ ಮತ್ತು ಜಾತಿ ರಹಿತ ಸಮಾಜ ನಿರ್ಮಿಸಲು ಬುದ್ಧ, ಬಸವ ಡಾ.ಅಂಬೇಡ್ಕರವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇವರು ಮಹಿಳಾ ಸಮಾನತೆಗಾಗಿ ಅಧಿಕಾರ ತ್ಯಾಗ ಮಾಡಿದ ಜಗತ್ತಿನ ಮಹಾ ಮಾನವತಾವಾದಿಗಳು ಎಂದು ತಿಳಿಸಿದರು. ಪತ್ರಕರ್ತ ವಿಠ್ಠಲ ಚಿಕಣಿ, ಸಂಸ್ಥೆಯ ಅಧ್ಯಕ್ಷ ಪೀರಪ್ಪ ಹಾದಿಮನಿ ಮಾತನಾಡಿದರು. ಕಮಲಾಪೂರ ಉಪ ತಹಶೀಲ್ದಾರ್ ದೀಪಕ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡರಾದ ತಿಪ್ಪಾರೆಡ್ಡಿ,ಅಶೋಕ ಗೌರ, ಅಮೃತ ಗೌರೆ, ವೀರಣ್ಣ ಬೆಣ್ಣೆಶಿರೂರ,ಗುರುರಾಜ ಮಾಟೂರ,ಸಂತೋಷ ರಾಂಪೂರೆ, ರಮೇಶ ಬೆಳಕೋಟ, ಶರಣು ಗೌರ, ಮೈಲಾರಿ ಗೊಬ್ಬುರ ಮತ್ತಿತರ ಗಣ್ಯರು ಪಾಲ್ಗೊಂಡಿದರು. ರವೀಂದ್ರ ಬಿ.ಕೆ ನಿರೂಪಿಸಿದರು. ನಂತರ ಅಷ್ಟಗಾ ಗ್ರಾಮದ ಲೋಹಿಯಾ ಕಲಾ ತಂಡದವರಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.
Raichur | ಬಹುಸಂಖ್ಯಾತರ ಹೆಸರಿನಲ್ಲಿ ನಾಗರಿಕರ ಮೇಲೆ ಸರ್ವಾಧಿಕಾರ ಹೇರಿಕೆ : ಬಂಜಗೆರೆ ಜಯಪ್ರಕಾಶ
ʼಮನುಷ್ಯತ್ವದೆಡೆ ಸಮುದಾಯ-50ʼ ಜಾಥಾ ಕಾರ್ಯಕ್ರಮ
ದೆಹಲಿಗೆ ಕಾಂಗ್ರೆಸ್ ದಲಿತ ನಾಯಕರ ಪರೇಡ್: ನಾಯಕತ್ವ ಬದಲಾವಣೆ ಗೊಂದಲಕ್ಕೆ ಅಂತ್ಯ ಹಾಡಲು ಹೈಕಮಾಂಡ್ಗೆ ಒತ್ತಾಯ
ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಗರಿಗೆದರುತ್ತಿವೆ. ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೆ ಎನ್ ರಾಜಣ್ಣ ಹಾಗೂ ಇತರ ಶಾಸಕರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಭವಿಷ್ಯದ ದೃಷ್ಟಿಯಿಂದ ಅಹಿಂದ ನಾಯಕತ್ವದ ಬಗ್ಗೆಯೂ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
ರಾಯಚೂರಿನಲ್ಲಿ ಯುವ ಕಾಂಗ್ರೆಸ್ನಿಂದ ಪ್ರತಿಭಟನೆ
ರಾಯಚೂರು : ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಭಾರತ–ಯುಎಸ್ ವ್ಯಾಪಾರ ಒಪ್ಪಂದ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಟಿಪ್ಪು ಸುಲ್ತಾನ್ ಉದ್ಯಾನ ಮುಂದೆ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ ಗಟ್ಟು, ಬಿಚ್ಚಾಲಿ ರಾಯಚೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಶೈಬಾಜ್, ರಾಜ್ಯ ಕಾರ್ಯದರ್ಶಿ ಪೈಸಲ್ ಖಾನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನಿರ್ಮಲ ಬೆನ್ನೆ, ಪ್ರತಿಭಾ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಿ. ಮಧುಕುಮಾರ್ ರಶೀದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಇಸ್ಮಾಯಿಲ್ ಮಡಗಿರಿ, ಅಜ್ಜು, ಸೋಶಿಯಲ್ ಮೀಡಿಯಾ ರಘು, ನಗರಾಧ್ಯಕ್ಷ ಕಿಶೋರ್ ದೇಸೂರು, ಬ್ಲಾಕ್ ಅಧ್ಯಕ್ಷ ಅಬ್ದುಲ್ ಗೌಸ್, ಸಿರವಾರ್ ಬ್ಲಾಕ್ ಅಧ್ಯಕ್ಷ ರಫಿ, ಪರಶು ಭಂಡಾರಿ, ಶಿವು, ಸೂರಿ, ಸಾಗರ್ ಪ್ರತಾಪ್ ರೆಡ್ಡಿ, ಅಪ್ಪು ಸೇರಿದಂತೆ ಹಲವು ಯುವ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

23 C