ಯುಗಾದಿ ವೇಳೆ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅವಾಂತರ; ಇನ್ನೂ 4 ದಿನ ವರುಣನ ಆರ್ಭಟ; 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Karnataka Rain- ರಾಜ್ಯಾದ್ಯಂತ ಯುಗಾದಿ ಸಂಭ್ರಮದ ನಡುವೆಯೇ ಬೇಸಿಗೆ ಮಳೆ ಅಬ್ಬರಿಸಿದ್ದು, ಬಿಸಿಲ ಬೇಗೆಯಿಂದ ಕಾದಿದ್ದ ಭೂಮಿ ತಂಪಾಗಿದೆ. ಶಿವಮೊಗ್ಗ, ಧಾರವಾಡ, ಬಳ್ಳಾರಿ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಿಂದಾಗಿ ಭತ್ತ, ಮಾವು, ದ್ರಾಕ್ಷಿ ಮತ್ತು ತರಕಾರಿ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಿಡಿಲಿಗೆ ಕುರಿಗಳು ಹಾಗೂ ಮಳೆಗೆ ಕರುಗಳು ಬಲಿಯಾಗಿವೆ. ಮಲೆನಾಡಿನಲ್ಲಿ ಕಾಫಿ ಬೆಳೆಗೆ ಮಳೆ ಪೂರಕವಾಗಿದ್ದರೂ, ಬಯಲು ಸೀಮೆಯಲ್ಲಿ ಬಿರುಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧೆಡೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.
ʼಉಪಚುನಾವಣೆ’ ಆಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ನಲ್ಲಿ ಕಸರತ್ತು
ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕಸರತ್ತು ಆರಂಭಿಸಲಾಗಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ರವಾನಿಸುವ ಸಾಧ್ಯತೆಗಳಿವೆ. ಎರಡೂ ಕ್ಷೇತ್ರಗಳಲ್ಲಿಯೂ ಕ್ರಮವಾಗಿ ಎಚ್.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು, ಹೆಸರುಗಳನ್ನು ಅಂತಿಮಗೊಳಿಸಬೇಕಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ ಎರಡೂ ಕ್ಷೇತ್ರಗಳಲ್ಲಿಯೂ ಬಂಡಾಯದ ಬಿಸಿ ಕಾಡುತ್ತಿದ್ದು, ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳ ಮಧ್ಯೆ ಟಿಕೆಟ್ಗಾಗಿ ಪೈಪೋಟಿಗೆ ಇಳಿದಿರುವ ಮಾಜಿ ಸಚಿವ ಎಚ್.ವೈ.ಮೇಟಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಮಹಾದೇವಿ ಮೇಟಿ, ಬಾಯಕ್ಕ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ, ‘ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದ್ದಾರೆ. ‘ಮೇಟಿ ಕುಟುಂಬದ ನಾಲ್ವರ ಪೈಕಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಉಳಿದವರು ಪಕ್ಷಕ್ಕೆ ಕೆಲಸ ಮಾಡಬೇಕು’ ಎಂದು ಸಿದ್ದರಾಮಯ್ಯ, ಮೇಟಿ ಕುಟುಂಬದ ಸದಸ್ಯರಿಗೆ ತಾಕೀತು ಮಾಡಿದ್ದಾರೆ. ಇದಕ್ಕೆ ಮೇಟಿ ಕುಟುಂಬದ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆ ಮೂಲಕ ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಕ್ಕೆ ಎನ್ನುವುದು ಸ್ಪಷ್ಟವಾದಂತೆ ಆಗಿದೆ. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ಮಲ್ಲಿಕಾರ್ಜುನ, ಉಮೇಶ್, ಮಹಾದೇವಿ ಟಿಕೆಟ್ ಕೇಳುತ್ತಿದ್ದು, ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದು, ಎಲ್ಲರೂ ಸಮ್ಮತಿಸಿದ್ದಾರೆ’ ಎಂದರು. ‘ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣಾ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಾನು ಸೇರಿ ಚರ್ಚಿಸಿ ಅಂತಿಮ ಪಟ್ಟಿಯನ್ನು ವರಿಷ್ಠರಿಗೆ ರವಾನಿಸಲಾಗುವುದು. ಹೈಕಮಾಂಡ್ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ’ -ಸಿದ್ದರಾಮಯ್ಯ ಮುಖ್ಯಮಂತ್ರಿ ‘ಈಗಾಗಲೇ ಚುನಾವಣಾ(ಮಾ.16) ಅಧಿಸೂಚನೆ ಪ್ರಕಟಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮಾ.23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.24ಕ್ಕೆ ನಾಮಪತ್ರ ಪರಿಶೀಲನೆ, ಮಾ.26ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಕಡೆಯ ದಿನ. ಎಪ್ರಿಲ್ 9ಕ್ಕೆ ಉಪಚುನಾವಣೆ ಮತದಾನ ನಡೆಯಲಿದೆ’
ಇಂಧನ ಮೂಲಸೌಕರ್ಯದ ಮೇಲೆ ದಾಳಿ ‘ಅನಿಯಂತ್ರಿತ ಪರಿಣಾಮಗಳಿಗೆ’ ಕಾರಣ: ಇರಾನ್ ಅಧ್ಯಕ್ಷರಿಂದ ಎಚ್ಚರಿಕೆ
ಟೆಹ್ರಾನ್: ಬುಧವಾರ ಮುಂಜಾನೆ ಇರಾನ್ ನ ಸೌತ್ ಪಾರ್ಸ್ ಅನಿಲಕ್ಷೇತ್ರವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಹಿನ್ನೆಲೆಯಲ್ಲಿ, ದೇಶದ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಅವರು, “ಇಂತಹ ಆಕ್ರಮಣಕಾರಿ ಕ್ರಮಗಳು ಅಮೆರಿಕನ್ ಝಿಯೋನಿಸ್ಟ್ ಶತ್ರು ಮತ್ತು ಅವರ ಬೆಂಬಲಿಗರಿಗೆ ಯಾವುದೇ ಗರಿಮೆ ತಂದುಕೊಡುವುದಿಲ್ಲ. ಬದಲಿಗೆ, ಇವು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿ, ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುವ ಅನಿಯಂತ್ರಿತ ಪರಿಣಾಮಗಳಿಗೆ ಕಾರಣವಾಗಬಹುದು” ಎಂದು ಎಚ್ಚರಿಸಿದ್ದಾರೆ.
Chikkamagaluru | ಶಾಂತಿಭಂಗಕ್ಕೆ ಕಾರಣಕರ್ತರಾದ ಆರೋಪ; ಆರು ಮಂದಿಯ ಗಡಿಪಾರಿಗೆ ನೋಟಿಸ್ ಜಾರಿ
ಚಿಕ್ಕಮಗಳೂರು : ಕೋಮು ಘರ್ಷಣೆ, ಶಾಂತಿಭಂಗಕ್ಕೆ ಕಾರಣಕರ್ತರಾಗಿದ್ದಾರೆಂಬ ಪೊಲೀಸ್ ಇಲಾಖೆ ವರದಿ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಗಡಿಪಾರು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಬಜರಂಗದಳ ಹಾಸನ ವಿಭಾಗದ ಸಂಯೋಜಕ ಶ್ಯಾಮ್ ವಿ ಗೌಡ, ಜೋಹರ್, ಚಾಂದ್, ಇಬ್ರಾಹಿಂ ಹಾಗೂ ಇಮ್ರಾನ್ ಎಂಬುವರಿಗೆ ಈ ಸಂಬಂಧ ಜಿಲ್ಲಾಡಳಿತ ನೋಟಿಸ್ ನೀಡಿದೆ. ಇವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಉಲ್ಲೇಖಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 14 ಪ್ರಕರಣಗಳು ಇದ್ದು, ಗಡಿಪಾರಿಗೆ ನೋಟಿಸ್ ನೀಡಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಶಿಫಾರಸನ್ನು ಪರಿಶೀಲಿಸಿರುವ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳು ಆರು ಜನರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಅಂತಿಮ ಆದೇಶ ಹೊರಡಿಸಲಿದ್ದಾರೆ. ಹಿಂದುತ್ವ ಸಂಘಟನೆಯ ಯುವಕರನ್ನು ಹಬ್ಬದ ಸಂದರ್ಭದಲ್ಲಿ ಗಡಿಪಾರು ಮಾಡಲು ಪೊಲೀಸ್ ಇಲಾಖೆ ಮುಂದಾಗಿರುವುದಕ್ಕೆ ಹಿಂದುತ್ವ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಿಲ ಘಟಕದ ಮೇಲೆ ದಾಳಿಗೆ ಯತ್ನಿಸಿದ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ
ರಿಯಾದ್: ದೇಶದ ಪೂರ್ವ ಪ್ರಾಂತ್ಯದಲ್ಲಿರುವ ಅನಿಲ ಸೌಲಭ್ಯದ ಮೇಲೆ ದಾಳಿ ಮಾಡಲು ಬರುತ್ತಿದ್ದ ಡ್ರೋನ್ ಅನ್ನು ಸೌದಿ ಅರೇಬಿಯಾ ತಡೆದು ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಸಚಿವಾಲಯದ ವಕ್ತಾರರು ಹೇಳುವಂತೆ, ಡ್ರೋನ್ ಗುರಿ ತಲುಪುವ ಮುನ್ನವೇ ಅದನ್ನು ಪತ್ತೆಹಚ್ಚಿ ನಾಶಪಡಿಸಲಾಗಿದೆ.ಈ ಘಟನೆದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
Chikkamagaluru | ಕಂದಕಕ್ಕೆ ಉರುಳಿದ ಕಾರು: ಚಾಲಕ ನಾಪತ್ತೆ
ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಘಟನೆ ಬುಧವಾರ ಬೆಳಗ್ಗೆ ತಾಲೂಕಿನ ಮತ್ತೋಡಿ ಅರಣ್ಯ ವಲಯದ ಹೊನ್ನಾಳ ಗ್ರಾಮದ ಬಳಿ ನಡೆದಿದೆ. ಮುತ್ತೋಡಿ ಅರಣ್ಯದ ಕಡೆಯಿಂದ ಬಂದ ಹೊನ್ನಾಳ ಗ್ರಾಮದ ಬಳಿ ಇರುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿಕಂದಕಕ್ಕೆ ಉರುಳಿ ಬಿದ್ದಿದೆ. ಕಾರು ತಲೆ ಕೆಳಕಾಗಿ ಬಿದ್ದಿದ್ದು, ಕಾರಿನಲ್ಲಿದ್ದವರು ಯಾರೆಂದು ತಿಳಿದು ಬಂದಿಲ್ಲ. ಸ್ಥಳೀಯರು ಕಾರಿನ ಬಳಿ ಹೋದ ಸಂದರ್ಭದಲ್ಲಿ ಕಾರಿನಲ್ಲಿ ಯಾರೂ ಇಲ್ಲದಿರುವುದು ಕಂಡು ಬಂದಿದೆ. ಅಲ್ಲದೇ ಈ ಅಪಘಾತದ ಘಟನೆ ಸ್ಥಳೀಯ ಪೊಲೀಸರಿಗೂ ತಡವಾಗಿ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದ್ದು, ಅಪಘಾತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿದೆ. ಕಾರು ಅಪಘಾತವಾದಾಗ ಕಾರು ಚಲಾಯಿಸುತ್ತಿದ್ದವರು ಯಾರು?, ಕಾರಿನಲ್ಲಿದ್ದವರು ಎಲ್ಲಿ ಹೋದರು?, ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾದರೇ? ಎಂಬ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ. ಕಾರಿನಲ್ಲಿ ಬಂದವರು ಪ್ರಾಣಿಗಳ ಬೇಟೆಗೆ ಬಂದಿದ್ದರೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಘಟನೆ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ
Somwarpet | ಅರಣ್ಯ ಜಮೀನು ತೆರವು ಕಾರ್ಯಾಚರಣೆ; ಅರಣ್ಯಾಧಿಕಾರಿಗಳು, ರೈತರ ನಡುವೆ ಮಾತಿನ ಚಕಮಕಿ
ಸೋಮವಾರಪೇಟೆ : ಅರಣ್ಯ ಜಮೀನು ತೆರವು ಕಾರ್ಯಾಚರಣೆ ಸಂದರ್ಭ ಅರಣ್ಯಾಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಸಗೋಡು ಗ್ರಾಮದಲ್ಲಿ ಬುಧವಾರ ನಡೆದಿದೆ. ಮಸಗೋಡು ಗ್ರಾಮದ ಸರ್ವೇ ನಂ. 24/1ರಲ್ಲಿ 2.50 ಎಕರೆ ಜಾಗವನ್ನು ಜೆಸಿಬಿಯಿಂದ ತೆರವುಗೊಳಿಸಲು ಅರಣ್ಯ ಇಲಾಖೆ ಪೊಲೀಸ್ ಸಿಬ್ಬಂದಿ ರಕ್ಷಣೆಯಲ್ಲಿ ತೆರಳಿತ್ತು. ಈ ಸಂದರ್ಭ ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಬಿ.ಸುರೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ನೇತೃತ್ವದಲ್ಲಿ ರೈತರು ಜಾಗ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ರೈತರ ಕೃಷಿ ಭೂಮಿಯನ್ನು ಕಸಿದುಕೊಳ್ಳುವ ಯತ್ನವನ್ನು ಮಾಡಬಾರದು. ಕಳೆದ ಒಂದು ವರ್ಷದ ಹಿಂದಿನಿಂದಲೂ ರೈತ ಹೇಮಂತ್ ಅವರಿಗೆ ಅರಣ್ಯ ಇಲಾಖೆಯಿಂದ ಕಿರುಕುಳವಾಗುತ್ತಿದೆ. ಸ್ಥಳಕ್ಕೆ ಎಸಿಎಫ್ ಮತ್ತು ಡಿಎಫ್ಒ ಬಂದು ಸಮಾಜಾಯಿಸಿ ನೀಡಬೇಕೆಂದು ರೈತರು ಒತ್ತಾಯಿಸಿದರು. ರೈತ ಮುಖಂಡ ಸುರೇಶ್ ಮಾತನಾಡಿ, ರೈತರ ಮೇಲಿನ ಕಿರುಕುಳವನ್ನು ಅರಣ್ಯ ಇಲಾಖೆ ನಿಲ್ಲಿಸಬೇಕು. ಇಂದು ಅರಣ್ಯ ಇಲಾಖೆಯವರು ಕಾಫಿ ತೋಟಕ್ಕೆ ನುಗ್ಗಿ ಜೆಸಿಬಿಯ ಮುಖಾಂತರ ತೋಟವನ್ನು ನಾಶಪಡಿಸಲು ಹೊರಟಿದ್ದಾರೆ. ಆನೆ ಮಾನವ ಸಂಘಷರ್ವನ್ನು ತಡೆಯಲು ವಿಫಲವಾಗಿರುವ ಇಲಾಖೆ, ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ, ಹೀಗೆ ದಬ್ಬಾಳಿಕೆ ಮುಂದುವರಿದರೆ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾತನಾಡಿ, ಸಿ ಆಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲು ಸರಕಾರ ವಿಶೇಷ ಸಮಿತಿ ರಚಿಸಿದೆ. ಅನುಪಾಲನ ವರದಿ ಸರಕಾರಕ್ಕೆ ಸೇರುವ ಮೊದಲೇ ಅರಣ್ಯ ಇಲಾಖೆ ಸಣ್ಣಪುಟ್ಟ ರೈತರ ಜಮೀನನ್ನು ಕಸಿದುಕೊಳ್ಳುತ್ತಿರುವುದು ಅನ್ಯಾಯವಾಗಿದೆ. ಇದನ್ನು ರೈತ ಸಂಘ ವಿರೋಧಿಸುತ್ತದೆ ಎಂದು ಹೇಳಿದರು. ಬಳಿಕಅರಣ್ಯ ಇಲಾಖೆಯ ಸಿಬ್ಬಂದಿ ವಾಪಸ್ ತೆರಳಿದರು. ಈ ವೇಳೆ ರೈತ ಮುಖಂಡರಾದ ಲಕ್ಷ್ಮ್ಮಣ, ಬಿ.ಪಿ.ಮೊಗಪ್ಪ, ಎಸ್.ಎಂ.ಡಿಸಿಲ್ವಾ, ಮಚ್ಚಂಡ ಅಶೋಕ್,ವಿಜಯ, ರಮೇಶ್, ಕುಶಾಲಪ್ಪ, ದೇಶ್ರಾಜ್ ಹಾಗೂ ಡಿಆರ್ಎಫ್ ಪ್ರಶಾಂತ್, ಲೋಹಿತ್,ಕಿರಣ್, ರೇಣುಕುಮಾರ್, ಸಿಬ್ಬಂದಿ ಉಪಸ್ಥಿತರಿದ್ದರು.
ಇರಾನ್ ನ ಬುಶೆಹರ್ ಅಣು ಸ್ಥಾವರ ಸಮೀಪದ ರಚನೆ ದಾಳಿಯಲ್ಲಿ ಧ್ವಂಸ: ದೃಢಪಡಿಸಿದ IAEA
ಟೆಹ್ರಾನ್: ಇರಾನ್ ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ರಿಯಾಕ್ಟರ್ ನಿಂದ ಸುಮಾರು 350 ಮೀಟರ್ (1,150 ಅಡಿ) ದೂರದಲ್ಲಿದ್ದ ಒಂದು ರಚನೆ “ಪ್ರೊಜೆಕ್ಟೈಲ್” ದಾಳಿಯಿಂದ ನಾಶವಾಗಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ದೃಢಪಡಿಸಿದೆ ಎಂದು Aljazeera ವರದಿ ಮಾಡಿದೆ. IAEA ಮಹಾನಿರ್ದೇಶಕ ರಾಫೆಲ್ ಗ್ರೋಸಿ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ರಿಯಾಕ್ಟರ್ ಗೆ ಯಾವುದೇ ಹಾನಿಯಾಗಿಲ್ಲ. ಸಿಬ್ಬಂದಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಅಣು ಸ್ಥಾವರಗಳ ಮೇಲೆ ಅಥವಾ ಅದರ ಸಮೀಪ ದಾಳಿ ನಡೆಯುವುದು ಸಶಸ್ತ್ರ ಸಂಘರ್ಷದ ಸಂದರ್ಭದಲ್ಲಿ ಅಣು ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವ ಏಳು ಪ್ರಮುಖ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇಂತಹ ಘಟನೆಗಳು ಎಂದಿಗೂ ನಡೆಯಬಾರದು” ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಗ್ರೋಸಿ, ಸೈಟ್ ಗೆ ಉಂಟಾದ ಹಾನಿ “ಗಂಭೀರ ಸ್ವರೂಪದ್ದಾಗಿಲ್ಲ” ಎಂದು ಹೇಳಿದ್ದರು. ಆದರೆ ದಾಳಿಯ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
Kolar | ಲೋಕಾಯುಕ್ತ ಬಲೆಗೆ ಬಿದ್ದ ಔಷಧ ನಿಯಂತ್ರಣಾಧಿಕಾರಿ
ಕೋಲಾರ : ಮೆಡಿಕಲ್ ಸ್ಟೋರ್ ಪರವಾನಿಗೆ ನವೀಕರಣ ಸಂಬಂಧ ಅರ್ಜಿದಾರನಿಂದ ನೇರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಶ್ಯಾಮಲಾ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ದಲಿತ ಸಿಂಹ ಸೇನೆ ಅಧ್ಯಕ್ಷ ಹೂಹಳ್ಳಿ ಪ್ರಕಾಶ್, ಕೃಷ್ಣಯ್ಯ ದೂರಿನ ಮೇರೆಗೆ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ಸಂಬಂಧ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ನೌಕರ ಶ್ರೀನಿವಾಸ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆ ವೇಳೆ ಅಧಿಕಾರಿಗಳನ್ನು ಕಂಡು ಶ್ಯಾಮಲಾ ಹಾಗೂ ಮತ್ತಿಬ್ಬರು ತಲೆ ಮರಿಸಿಕೊಳ್ಳಲು ಯತ್ನಿಸಿದ್ದಾರೆ ಮೂಲಗಳು ತಿಳಿಸಿವೆ. ಮೆಡಿಕಲ್ ಸ್ಟೋರ್ ಪರವಾನಿಗೆ ನವೀಕರಣಕ್ಕಾಗಿ 38,000 ರೂ ಲಂಚಕ್ಕೆ ಜಿಲ್ಲಾ ಡ್ರಗ್ಕಂಟ್ರೋಲರ್ ಬೇಡಿಕೆ ಇಟ್ಟಿದ್ದ ಬಗ್ಗೆ ದೂರು ಬಂದಿತ್ತು, ಆ ಹಿನ್ನೆಲೆ ದಾಳಿ ನಡೆಸಲಾಗಿದೆ. ಇನ್ನೂ ಅನುಮತಿಯಿಲ್ಲದ ಔಷಧ ಮಾರಾಟ ಹೆಗ್ಗಿಲ್ಲದೆ ನಡೆಯುತ್ತಿರುವುದು, ಮಾದಕ ವಸ್ತುಗಳ ಅಕ್ರಮ ಮಾರಾಟವನ್ನು ಜಿಲ್ಲಾ ಔಷಧ ನಿಯಂತ್ರಣ ಇಲಾಖೆಯಿಂದ ಯಾವುದೇ ಕ್ರಮ ಆಗುತ್ತಿಲ್ಲ ಎಂಬ ಅರೋಪಗಳು ಕೇಳಿ ಬಂದಿತ್ತು.
ʼತುಳವರ ಭವನ ನಿರ್ಮಾಣದ ಕುರಿತು ತೀರ್ಮಾನಿಸಿʼ : ಸಿಎಂಗೆ ಬಿ.ಆರ್.ಪಾಟೀಲ್ ಪತ್ರ
ಬೆಂಗಳೂರು : ‘ತುಳವರ ಭವನ ನಿರ್ಮಾಣ ಮಾಡಲು ಸರಕಾರದ ವತಿಯಿಂದ ಟ್ರಸ್ಟ್ ರಚಿಸಿ ರಾಷ್ಟ್ರ ಮಟ್ಟದ ಪ್ರಮುಖ ಸಂಸ್ಥೆಯಾಗಿ ರೂಪಿಸುವ ಉದ್ದೇಶವನ್ನು ತಾವು ಅಧಿವೇಶನದಲ್ಲಿ ಉತ್ತರ ನೀಡುವ ವೇಳೆಯಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ. ಬುಧವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ರಾಜ್ಯದಲ್ಲಿ ತುಳುವ ಸಮುದಾಯದ ಸಾಮಾಜಿಕ, ಸಾಂಸ್ಕೃತಿ ಕ, ಶೈಕ್ಷಣಿಕ ಹಾಗೂ ಆರ್ಥಿಕ ಆಶಯಗಳನ್ನು ಉತ್ತೇಜಿಸುವ ಉದ್ದೇಶದಿಂದ ‘ತುಳುವರ ಭವನ’ ಸ್ಥಾಪನೆ ಕುರಿತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್.ಮೋಹನ್ ದಾಸ್ ಹೆಗ್ಡೆ ಅವರು ಪ್ರಸ್ತಾವ ಸಲ್ಲಿಸಿದ್ದು, ತುಳುವ ಸಮುದಾಯವು ಮುಖ್ಯವಾಗಿ ಮಂಗಳೂರು, ಉಡುಪಿ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಈ ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಜೊತೆಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯಲ್ಲಿ ಮುಂದುವರಿಯಲು ಏಕೀಕೃತ ವೇದಿಕೆಯ ಅಗತ್ಯತೆಯನ್ನು ದೀರ್ಘಕಾಲದಿಂದ ಅನುಭವಿಸುತ್ತಿದೆ ಎಂದು ತಿಳಿಸಿದ್ದಾರೆ. ಈ ಪ್ರಸ್ತಾವ ಒಂದು ಆಧುನಿಕ ಹಾಗೂ ಬಹುಮುಖ ‘ಭವನ’ವನ್ನು ರೂಪಿಸುವುದನ್ನು ಉದ್ದೇಶಿಸಿಕೊಂಡಿದ್ದು ಇದು ತುಳು ಸಂಸ್ಕೃತಿ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ಕೇಂದ್ರ ಬಿಂದುವಾಗುವಂತಿದೆ. ಇದು ಕರ್ನಾಟಕದ ಸಮಾವೇಶಾತ್ಮಕತೆ, ಪ್ರಾದೇಶಿಕ ವೈವಿಧ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.
ವಾಡಿ | ಎಸ್ಸೆಸೆಲ್ಸಿ ಪರೀಕ್ಷೆ ಬರೆದ 748 ವಿದ್ಯಾರ್ಥಿಗಳು, 13 ಮಂದಿ ಗೈರು
ವಾಡಿ: ಪಟ್ಟಣದಲ್ಲಿ 3 ಪರೀಕ್ಷಾ ಕೇಂದ್ರಗಳಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ. ಬಿ .ಆರ್. ಅಂಬೇಡ್ಕರ್ ವಸತಿ ಶಾಲೆ ಹಾಗೂ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯಲ್ಲಿ ಒಟ್ಟು 748 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 13 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 18 ಕೊಠಡಿಗಳು ಗುರುತಿಸಿ 410 ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಯಿತು. 229 ವಿದ್ಯಾರ್ಥಿಗಳು, 181 ವಿದ್ಯಾರ್ಥಿನಿಯರಲ್ಲಿ 404 ಪರೀಕ್ಷೆಗೆ ಹಾಜರಾದರೆ, 6 ಜನ ವಿದ್ಯಾರ್ಥಿಗಳು ಗೈರು ಹಾಜರಾದರು. ಸೈಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯಲ್ಲಿ 15 ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು, ಒಟ್ಟು 35 ವಿದ್ಯಾರ್ಥಿಗಳಲ್ಲಿ 344 ಹಾಜರಾದರೆ, 7 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಆಳಂದದಲ್ಲಿ ಶೇ 93.89 ಮಕ್ಕಳು ಹಾಜರು: ಆಳಂದ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣ ಸೇರಿ ಸ್ಥಾಪಿತ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ನಡೆದ ಪ್ರಥಮ ಭಾಷೆ 10ನೇ ತರಗತಿಯ ವಾರ್ಷಿಕ ಬೋರ್ಡ್ ಪರೀಕ್ಷೆ ಕಟ್ಟುನಿಟ್ಟಾಗಿ ಬಂದೋಬಸ್ತ್ ನಡುವೆ ಮೊದಲು ದಿನ ಸುಸೂತ್ರವಾಗಿ ಸಾಗಿದೆ. ವೆಬ್ಕಾಸ್ಟಿಂಗ್ ಕ್ಯಾಮಿರಾ ನಿಗಾದೊಳಗೆ ನಡೆದ ಪರೀಕ್ಷೆ ಕೊರಳ್ಳಿ, ಪಡಸಾವಳಿ, ಆಳಂದ ಸಿಪಿಎಸ್ ಶಾಲೆ ಕೇಂದ್ರದಲ್ಲಿ ಕೆಲ ನಿಮಿಷ ಕೈಕೊಟ್ಟು ಇಕ್ಕಟ್ಟು ಸೃಷ್ಟಿ ಬಿಟ್ಟರೆ, ಸಕಾಲಕ್ಕೆ ಪ್ರಶ್ನೆ ಪತ್ರಿಕೆ ಪೂರೈಕೆ, ಜಾಗೃತದಳ ತಪಾಸಣೆ ಸುಸೂತ್ರವಾಗಿ ಸಾಗಿದೆ. ಒಟ್ಟು ಪರೀಕ್ಷೆಗೆ ನೋಂದಾಯಿತ 5410 ವಿದ್ಯಾರ್ಥಿಗಳಲ್ಲಿ 5079 ಪರೀಕ್ಷೆಗೆ ಹಾಜರಾದರೆ, 331 ವಿದ್ಯಾರ್ಥಿಗಳು ಗೈರಾಗಿದ್ದ ಒಟ್ಟು ಶೇ 93.89 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಜಿಲ್ಲಾ ಪಂಚಾಯತ್ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಈಶ್ವರ ನಿರಡಗಿ ಮತ್ತು ಹಣಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ಸೇರಿ ಇನ್ನೂಳಿದ ಮೇಲ್ವಿಚಾರಣೆ ಅಧಿಕಾರಿಗಳು ಕೆಲವು ಕೇಂದ್ರಗಳಿಗೆ ಭೇಟಿ ಪರಿಶೀಲಿಸಿದರು.
ಇರಾನಿನ ನೆಲೆಗಳ ಮೇಲಿನ ದಾಳಿಯ ಬೆನ್ನಲ್ಲೇ ಖತರ್ ನ ರಾಸ್ ಲಫಾನ್ ನಲ್ಲಿ ಬೆಂಕಿ ಅವಘಡ
ದೋಹಾ: ಇರಾನಿನ ನೆಲೆಗಳ ಮೇಲಿನ ದಾಳಿಯ ನಂತರ ಖತರ್ ನ ರಾಸ್ ಲಫಾನ್ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಖತರ್ ಆಂತರಿಕ ಸಚಿವಾಲಯ ತಿಳಿಸಿದೆ. ವಿಶ್ವದ ಅತಿದೊಡ್ಡ LNG (ದ್ರವೀಕೃತ ನೈಸರ್ಗಿಕ ಅನಿಲ) ಉತ್ಪಾದನಾ ಘಟಕವಿರುವ ರಾಸ್ ಲಫಾನ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದ್ದು, ಪರಿಸ್ಥಿತಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆಂತರಿಕ ಸಚಿವಾಲಯದ ಪ್ರಕಾರ, ಇರಾನಿನ ನೆಲೆಗಳ ಮೇಲಿನ ದಾಳಿಯ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳವು ತಕ್ಷಣವೇ ಸ್ಥಳಕ್ಕೆ ತೆರಳಿ ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಖತರ್ ನ ಪ್ರಮುಖ ಇಂಧನ ಮೂಲಸೌಕರ್ಯ ಕೇಂದ್ರವಾಗಿರುವ ರಾಸ್ ಲಫಾನ್ ಪ್ರದೇಶವು ಜಾಗತಿಕ LNG ಸರಬರಾಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿ ಸಂಭವಿಸಿದ ಬೆಂಕಿ ಅವಘಡವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಸನ್ ನಯೀಮ್ ಸುರಕೋಡರಿಗೆ ‘ಲೋಹಿಯಾ ಪ್ರಶಸ್ತಿ’
ಬೆಂಗಳೂರು : ಭಾರತ ಯಾತ್ರಾ ಕೇಂದ್ರವು ಪ್ರತಿವರ್ಷ ನೀಡುವ ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಮಾಜವಾದಿ ಚಿಂತಕ ಹಸನ್ ನಯೀಮ್ ಸುರಕೋಡ ಅವರಿಗೆ ನೀಡಲಾಗುತ್ತಿದೆ ಎಂದು ನಾಟಕ ಅಕಾಡಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ. ಬುಧವಾರ ಈ ಕುರಿತು ಪ್ರಕಟನೆ ನೀಡಿದ ಅವರು, ಡಾ.ರಾಮಮನೋಹರ ಲೋಹಿಯಾ ಅವರ ಜನ್ಮದಿನಾಚರಣೆ ಅಂಗವಾಗಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಾ.22ರಂದು ಸಂಜೆ 4ಗಂಟೆಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ತಾಮ್ರದ ಫಲಕವನ್ನು ಹೊಂದಿರುತ್ತದೆ. ಸಾಹಿತಿ ಡಾ.ಕಾಳೇಗೌಡ ನಾಗವಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಡಾ.ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷೆ ಸುಮಾ ವಿಜಯ್, ಕರ್ನಾಟಕ ನಾಟಕ ಅಕಾಡಮಿಯ ಸದಸ್ಯೆ ಗಾಯಿತ್ರಿ ಹಡಪದ್ ಅವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಆರಂಭ: 97% ಹಾಜರಾತಿ
ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಾಂತ ಸ್ಥಾಪಿಸಲಾದ 61 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಆರಂಭಗೊಂಡ ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ಜರುಗಿತು. ಇಂದಿನ ಪರೀಕ್ಷೆಗೆ ಒಟ್ಟು 16,306 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 15,821 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 485 ವಿದ್ಯಾರ್ಥಿಗಳು ಗೈರಾಗಿದ್ದು, ಶೇ.97.03 ಹಾಜರಾತಿ ಹಾಗೂ ಶೇ.2.97 ಗೈರು ದಾಖಲಾಗಿದೆ. ಮೊದಲ ದಿನದ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಾಕಲೆಟ್ ಮತ್ತು ಗುಲಾಬಿ ಹೂ ನೀಡಿ ಸ್ವಾಗತಿಸಿ, ಧೈರ್ಯ ತುಂಬಿ ಪರೀಕ್ಷಾ ಕೋಣೆಗೆ ಕಳುಹಿಸುವ ಮೂಲಕ ಹುರಿದುಂಬಿಸಿದರು. ಜಿಲ್ಲೆಯ ಆರು ತಾಲೂಕು ಕೇಂದ್ರಗಳು ಹಾಗೂ ವಿವಿಧ ಹೋಬಳಿಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾದ ಅಧಿಕಾರಿಗಳು ಭೇಟಿ ನೀಡಿ, ಪರೀಕ್ಷೆ ಶಾಂತಿಯುತವಾಗಿ ನಡೆಯುವಂತೆ ಮೇಲ್ವಿಚಾರಣೆ ನಡೆಸಿದರು. ಬೆಳಿಗ್ಗೆ ಜಿಪಂ ಸಿಇಒ ಲವೀಶ್ ಒರ್ಡಿಯಾ, ಡಿಸಿ ಹರ್ಷಲ್ ಬೋಯರ್, ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಡಿಡಿಪಿಐ ಸಿ.ಎಸ್. ಮುದೋಳ್ ಅವರು ಪ್ರತ್ಯೇಕವಾಗಿ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ನಗರದ ಒಂದು ಕೇಂದ್ರದಲ್ಲಿ ಡಿಡಿಪಿಐ ಮುದೋಳ್ ಅವರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಇಂದು ಕನ್ನಡ, ಆಂಗ್ಲ, ಉರ್ದು ಮತ್ತು ಹಿಂದಿ ಭಾಷೆಗಳ ಪರೀಕ್ಷೆಗಳು ನಡೆದವು. ವೈದ್ಯಕೀಯ ತಂಡ, ಪೊಲೀಸ್ ಬಂದೋಬಸ್ತ್ ಜಿಲ್ಲೆಯ ಎಲ್ಲಾ 61 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಪ್ರತಿ ಕೇಂದ್ರದಲ್ಲೂ ವೈದ್ಯಕೀಯ ತಂಡ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಸ್ಥಳದಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ತಾಲೂಕುವಾರು ಹಾಜರಾತಿ ವಿವರ ಪರೀಕ್ಷೆ ಬರೆದ 15,821 ವಿದ್ಯಾರ್ಥಿಗಳಲ್ಲಿ ಯಾದಗಿರಿ ತಾಲೂಕಿನಲ್ಲಿ 5,810 (133 ಗೈರು), ಶಹಾಪುರ ತಾಲೂಕಿನಲ್ಲಿ 5,068 (142 ಗೈರು) ಹಾಗೂ ಸುರಪುರ ತಾಲೂಕಿನಲ್ಲಿ 4,943 (210 ಗೈರು) ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಬಸ್ಗಾಗಿ ವಿದ್ಯಾರ್ಥಿಗಳ ಪರದಾಟ ದೋರನಹಳ್ಳಿ: ಪರೀಕ್ಷೆ ಬರೆದ ಬಳಿಕ ಊರಿಗೆ ಮರಳಲು ದೋರನಹಳ್ಳಿ ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು ಬಸ್ಗಾಗಿ ಭಾರಿ ಪರದಾಡಿದರು. ಮುಖ್ಯ ರಸ್ತೆಯಲ್ಲಿ ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸದೇ ಕೆಲವು ಬಸ್ಗಳು ಸಾಗಿದ ಪರಿಣಾಮ ಮಕ್ಕಳು ಸಾಕಷ್ಟು ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿದ್ದು, ತಕ್ಷಣ ಬಸ್ ವ್ಯವಸ್ಥೆ ಮಾಡಲಾಯಿತು. ಗುರುಮಠಕಲ್, ಸುರಪುರ, ಕೆಂಭಾವಿ, ಕಕ್ಕೆರಾ, ಕೊಡೆಕಲ್, ಹುಣಸಗಿ, ನಾರಾಯಣಪುರ, ವಡಗೇರಾ, ಸೈದಾಪುರ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಪರೀಕ್ಷಾ ಕೋಣೆಗೆ ಕಳುಹಿಸಿರುವುದು ಕಂಡುಬಂತು.
ಇರಾನ್ ದೇಶದ ಸಾಲು ಸಾಲು ನಾಯಕರ ಕಥೆ ಮುಗಿಯಿತು, ಯುದ್ಧ ಮತ್ತಷ್ಟು ಜೋರಾಯ್ತು | Iran Conflict
ಇರಾನ್ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿರುವ ಅಮೆರಿಕ &ಇಸ್ರೇಲ್ ಸೇನೆಗಳು ಯಾರೂ ಊಹೆ ಮಾಡಲು ಆಗದ ಹಂತಕ್ಕೆ ತಲುಪಿವೆ. ಒಂದು ಕಡೆ ಇರಾನ್ ತನ್ನ ದೊಡ್ಡ ದೊಡ್ಡ ನಾಯಕರನ್ನ ಕಳೆದುಕೊಂಡು ರೊಚ್ಚಿಗೆದ್ದಿದೆ, ಅದರಲ್ಲೂ ಇರಾನ್ ಸರ್ವಾಧಿಕಾರಿ ಆಗಿದ್ದ ಖಮೇನಿ ಸಾವಿನ ನಂತರ ಇಡೀ ಮಧ್ಯಪ್ರಾಚ್ಯ ಕೊತಕೊತ ಕುದಿಯುತ್ತಿದೆ. ಇಂತಹ ಸಮಯದಲ್ಲೇ ಇಸ್ರೇಲ್ &
ಮರುದಿನ ಖಾತರಿ ವಿತರಣೆಗೆ 24 ಸ್ಪೀಡ್ ಪೋಸ್ಟ್ ಸೇವೆ ಕಾರ್ಯಾರಂಭ
ಬೆಂಗಳೂರು : ಭಾರತೀಯ ಅಂಚೆ ಇಲಾಖೆ ತನ್ನ ಗ್ರಾಹಕರಿಗೆ ಹೊಸ ಸೇವೆಗಳನ್ನು ಪರಿಚಯಿಸಿದ್ದು, ಹೆಚ್ಚು ವೇಗವಾದ ಮತ್ತು ವಿಶ್ವಾಸಾರ್ಹ ಡೆಲಿವರಿಗೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ 24 ಮತ್ತು 48 ಸ್ಪೀಡ್ ಪೋಸ್ಟ್ ಎಂಬ ಪ್ರೀಮಿಯಂ ಸೇವೆಗಳನ್ನು ಮಾ.17 ದಿಂದ ಪರಿಚಯಿಸಿದೆ. ಒಂದೇ ದಿನದಲ್ಲಿ ಅಂದರೆ 24 ಗಂಟೆಗಳಲ್ಲಿ ತಲುಪಿಸುವ ಸೇವೆ ಇದಾಗಿದೆ. ಮಂಗಳವಾರ ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಲ್ನ ಚೀಫ್ ಪೋಸ್ಟ್ ಮಾ ಸ್ರ್ ಜನರಲ್ ಕೆ.ಪ್ರಕಾಶ್ ಸೇವೆಗಳನ್ನ ಪರಿಚಯಿಸಿ ಮಾತನಾಡಿದ ಅವರು, ಖಾಸಗಿ ಕೋರಿಯರ್ ಮತ್ತು ಲಾಜಿಸ್ಟಿಕ್ಸ್ ಕಂಪೆನಿಗಳೊಂದಿಗೆ ಸ್ಪರ್ಧಿಸಲು ಅಂಚೆ ಇಲಾಖೆ ಈ ಸೇವೆಗಳನ್ನು ಆರಂಭಿಸಿದೆ. ಕೇಂದ್ರ ಸರಕಾರ ಚೌಕಟ್ಟಿಗೆ ತಿದ್ದುಪಡಿ ತಂದು 24 ಸ್ಪೀಡ್ ಪೋಸ್ಟ್, 48 ಸ್ಪೀಡ್ ಪೋಸ್ಟ್ ಹಾಗೂ 24 ಸ್ಪೀಡ್ ಪೋಸ್ಟ್ ಪಾರ್ಸೆಲ್ ಸೌಲಭ್ಯಗಳನ್ನು ಜಾರಿಗೆ ತರಲು ಅನುಮೋದನೆ ನೀಡಿದೆ ಎಂದರು. ಇದು ವೇಗದ ವಿತರಣೆ ಸಹಕಾರಿಯಾಗಲಿದೆ. ಈ ಮೂಲಕ ಅಗತ್ಯ ದಾಖಲೆಗಳನ್ನು ಮತ್ತು ಪಾರ್ಸೆಲ್ಗಳನ್ನು ವೇಗವಾಗಿ ತಲುಪಿಸಲಾಗುತ್ತದೆ. ಕೈಗೆಟುಕುವ ದರದಲ್ಲಿ ಸೇವೆ ಇರಲಿದೆ. ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಸದ್ಯ ದೇಶದ ಮೆಟ್ರೋ ನಗರಗಳಾದ ದಿಲ್ಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಮಾತ್ರ ಸೇವೆಯನ್ನಾರಂಭಿಸಿದೆ. ಮುಂದಿನ ಒಂದು ವರ್ಷದೊಳಗೆ ದೇಶಾದ್ಯಂತ ಸೇವೆ ಲಭ್ಯವಾಗಲಿದೆ. 24 ಸ್ಪೀಡ್ ಪೋಸ್ಟ್ ಸೇವೆಯು ಓಟಿಪಿ ಆಧಾರಿತ ಸುರಕ್ಷಿತ ಡೆಲಿವರಿಯಾಗಿದ್ದು ಎಂಡ್ ಟು ಎಂಡ್ ಟ್ರಾಕಿಂಗ್ ವ್ಯವಸ್ಥೆ ಎಸ್ಎಂಎಸ್ ಮೂಲಕ ಪಾರ್ಸೆಲ್ ಬಗ್ಗೆ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸುತ್ತದೆ ಎಂದು ಪ್ರಕಾಶ್ ಮಾಹಿತಿ ನೀಡಿದರು.
ಕೇರಳ ವಿಧಾನಸಭೆ ಚುನಾವಣೆಗೆ 55 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್ | Kerala Assembly Elections 2026
ದೇಶದಲ್ಲಿ ಮತ್ತೊಮ್ಮೆ ಚುನಾವಣೆಯ ಕಾವು ರಂಗೇರಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ಕೂಡ ನಡೆಯಲಿದೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಪುದುಚೇರಿಯ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ದಕ್ಷಿಣ ಭಾರತದಲ್ಲಿ ತಮಿಳುನಾಡು ಹಾಗೂ ಕೇರಳದ ಚುನಾವಣೆ ಭಾರಿ ಗಮನ ಸೆಳೆದಿದ್ದು, ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ಇಲ್ಲಿ ನೇರವಾಗಿಯೇ ಪೈಪೋಟಿ ಶುರುವಾಗಿದೆ.
ಇಂಧನ ನೆಲೆಗಳ ಮೇಲೆ ದಾಳಿ: ಪ್ರತೀಕಾರದ ಎಚ್ಚರಿಕೆ ನೀಡಿದ IRGC
ಗಲ್ಫ್ ರಾಷ್ಟ್ರಗಳಲ್ಲಿ ಕಟ್ಟೆಚ್ಚರ
ಮೂಡುಬಿದಿರೆ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ; 6 ಮಂದಿ ಸೆರೆ
ಮೂಡುಬಿದರೆ: ಇಲ್ಲಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ಅಕ್ರಮ ಕೋಳಿ ಅಂಕಕ್ಕೆ ದಾಳಿ ಮಾಡಿರುವ ಮೂಡುಬಿದಿರೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಪಣಕ್ಕಿಟ್ಟಿದ್ದ 1,480 ರೂ., 17 ಜೀವಂತ ಹುಂಜಗಳು ಮತ್ತು ಕೋಳಿ ಅಂಕಕ್ಕೆ ಬಳಸುವ ಎರಡು ಬಾಲುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾ.18ರಂದು ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯು ಮುಗಿದ ಬಳಿಕ ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ಎಂಬವರ ನೇತೃತ್ವದಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಸೇರಿಕೂಂಡು ಕೋಳಿಗಳಿಗೆ ಹರಿತವಾದ ಬಾಳ್ ಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಟ್ಟು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ದಾಳಿ ಮಾಡಿದ ಪೊಲೀಸರು ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ದೈವಸ್ದಾನದ ವ್ಯವಸ್ದಾಪನಾ ಸಮಿತಿ ಸಹಿತ ಆರೋಪಿಗಳ ವಿರುದ್ಧ ಅ ಕ್ರ 30/2026 ಕಲಂ 189(2), 193 ಜೊತೆಗೆ 190 ಬಿ ಎನ್ ಎಸ್ ಮತ್ತು 87, 93 ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 11(1)(ಟಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960 ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
ಕನಕಗಿರಿ | ಅಪ್ರಾಪ್ತೆಯ ಅತ್ಯಾಚಾರ ಆರೋಪ; ಯುವಕನ ಬಂಧನ
ಕನಕಗಿರಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸಮೀಪದ ಬಸರಿಹಾಳ ಗ್ರಾಮದ ಯುವಕ ಕುಮಾರಸ್ವಾಮಿ(22) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಸರಿಹಾಳ ಗ್ರಾಮದ ಬಾಲಕಿಯನ್ನು ಆರೋಪಿ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡಿ ಪರಿಸರಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪಿಐ ವಿ.ನಾರಾಯಣ ತಿಳಿಸಿದ್ದಾರೆ.
‘ನೋರಾ ಫತೇಹಿ ಹಾಗೆ ಮಾತಾಡಿದ್ದು ತಪ್ಪು, ಹಾಡನ್ನ ರೀ-ರೈಟ್ ಮಾಡಿ ಅಪ್ಲೋಡ್ ಮಾಡ್ತೀನಿ’ - ಪ್ರೇಮ್ ಸ್ಪಷ್ಟನೆ
‘’ಒಂದು ಎಣ್ಣೆ ಬಾಟಲ್ ಮತ್ತು ಉಪ್ಪಿನಕಾಯಿ ಇಟ್ಟುಕೊಂಡು ನಾನು ‘ಸರ್ಸೆ ಸೆರ್ಗ ಸರ್ಸೆ’ ಹಾಡನ್ನ ಬರೆದಿದ್ದು. ಅದರಲ್ಲಿ ಅಶ್ಲೀಲತೆಯ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ’’ ಎಂದು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ ನಿರ್ದೇಶಕ ಪ್ರೇಮ್.
Yadgiri | ಅಕಾಲಿಕ ಆಲಿಕಲ್ಲು ಮಳೆಗೆ ಅಪಾರ ಭತ್ತ, ಜೋಳ ಬೆಳೆ ನಾಶ
ಯಾದಗಿರಿ: ಮಂಗಳವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಜಿಲ್ಲೆಯ ವಡಿಗೇರ ತಾಲೂಕಿನ ಚನ್ನೂರು ಜೆ ಗ್ರಾಮದಲ್ಲಿ 150ಕ್ಕೂ ಹೆಚ್ಚು ಎಕರೆ ಬತ್ತ ಹಾಗೂ ಜೋಳ ಬೆಳೆಗಳು ಸಂಪೂರ್ಣ ನಾಶವಾಗಿದೆ. ಈಗಾಗಲೇ ಮುಂಗಾರು ಬೆಳೆ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಗೆ ಭೀಮ ಹಾಗೂ ಕೃಷ್ಣಾ ನದಿಗಳ ಪ್ರಭಾವಗಳಿಂದ ಅಪಾರ ಬೆಳೆ ನಷ್ಟವಾಗಿತ್ತು. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಕೂಡ ನೀಡುವಲ್ಲಿ ವಿಫಲವಾಗಿತ್ತು ಆದರೂ ರೈತರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಸಿಂಗಾರು ಬೆಳೆಗಳನ್ನಾಗಿ ಭಟ್ಟ ಹಾಗೂ ಚೋಳ ಬೆಳೆಗಳನ್ನು ಬಿತ್ತನೆ ಮಾಡಿದರು. ಇನ್ನೊಂದು ತಿಂಗಳಲ್ಲಿ ಬೆಳೆಗಳು ಬರುವುದಿತ್ತು ಇಂತಹ ಸಮಯದಲ್ಲಿ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದ ಅಪಾರ ನಷ್ಟವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕೆಂದು ಜಿಪಂ ಮಾಜಿ ಸದಸ್ಯ ಶ್ರೀನಿವಾಸ ರೆಡ್ಡಿ ಪಾಟೀಲ್ ಚನ್ನೂರ್ ಆಗ್ರಹಿಸಿದ್ದಾರೆ.
IPL 2026- ಬೆಂಗಳೂರು ತಲುಪಿದ ವಿರಾಟ್ ಕೊಹ್ಲಿ; ತಾಲೀಮೂ ಶುರು! ಚಿನ್ನಸ್ವಾಮಿಯಲ್ಲಿನ್ನು ಆರ್ಸಿಬಿಯದ್ದೇ ಕಲರವ
RCB Team Practice Session- ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19ನೇ ಆವೃತ್ತಿಯ ಐಪಿಎಲ್ಗಾಗಿ ಸಿದ್ಧತೆ ಆರಂಭಿಸಿದೆ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಸೇರಿದಂತೆ ಬಹುತೇಕ ಪ್ರಮುಖ ಆಟಗಾರರು ಬೆಂಗಳೂರು ತಲುಪಿದ್ದು ಬುಧವಾರದಿಂದಲೇ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಮಾರ್ಚ್ 28ರಂದು ಇಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಉದ್ಘಾಟನಾ ಪಂದ್ಯ ನಡೆಯಲಿದೆ. ಮತ್ತೊಂದೆಡೆ ಆರ್ಸಿಬಿ ಮಾಲೀಕತ್ವ ಬದಲಾಗುವ ಸಾಧ್ಯತೆಯಿದ್ದು, ಈ ಮಾಸಾಂತ್ಯಕ್ಕೆ ಅಂತಿಮ ನಿರ್ಧಾರವಾಗಲಿದೆ.
ರೈಲ್ವೆ ಪರೀಕ್ಷೆ ಕನ್ನಡದಲ್ಲೇ ನಡೆಸಲು ರೈಲ್ವೆ ಇಲಾಖೆಗೆ ಎ.15ರ ವರೆಗೆ ಗಡುವು : ಟಿ.ಎ.ನಾರಾಯಣಗೌಡ
ಬೆಂಗಳೂರು : ರೈಲ್ವೆ ಇಲಾಖೆಯ ಎಲ್ಲ ಹಂತದ ಹುದ್ದೆಗಳ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲೂ ನಡೆಸುವ ಕುರಿತು ಎ.15ರ ವರೆಗೆ ಗಡುವು ನೀಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಭಾರತ ರೈಲ್ವೆ ಇಲಾಖೆ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ಇದಕ್ಕೆ ಅನೇಕ ಸಾಕ್ಷಿಗಳು ಇವೆ. ರೈಲ್ವೆ ಪದೋನ್ನತಿ ಹುದ್ದೆಗಳ ಪರೀಕ್ಷೆ ಸಂದರ್ಭದಲ್ಲಿ ಕನ್ನಡವನ್ನು ಕೈಬಿಟ್ಟು ರೈಲ್ವೆ ಅಧಿಕಾರಿಗಳು ಕರ್ನಾಟಕದಲ್ಲಿ ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇವೆ ಎಂಬಂತೆ ವರ್ತಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟವನ್ನು ಸಂಘಟಿಸಿ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡಿದೆ ಎಂದು ಹೇಳಿದ್ದಾರೆ. ರೈಲ್ವೆ ಇಲಾಖೆಯಿಂದ ಆಗುತ್ತಿರುವ ಎಲ್ಲ ಅನ್ಯಾಯಗಳ ಕುರಿತು ನಾವು ಧ್ವನಿ ಎತ್ತಬೇಕಿದೆ. ಕನ್ನಡಿಗರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಎಂದು ಕೇಳಬೇಕಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತೀಯ ರೈಲ್ವೆಯಿಂದ ಕನ್ನಡಿಗರಿಗೆ ಆಗಿರುವ ವಂಚನೆಗಳ ಸರಮಾಲೆಯನ್ನು ಸಾರ್ವಜನಿಕರ ಮುಂದೆ ತೆರೆದು ಇಡಬೇಕಿದೆ. ಈ ದ್ರೋಹ ಈಗಲಾದರೂ ಕೊನೆಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಇಲಾಖೆಯ ಕರ್ನಾಟಕ ಭಾಗದ ಎಲ್ಲ ಹಂತದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು. ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ರೈಲು ಯೋಜನೆಗಳು ಆದಷ್ಟು ಬೇಗ ಜಾರಿಯಾಗಬೇಕು. ಕರ್ನಾಟಕದ ಎಲ್ಲ ರೈಲು ನಿಲ್ದಾಣಗಳಲ್ಲಿ, ರೈಲ್ವೆ ಕಚೇರಿಗಳಲ್ಲಿ ಕನ್ನಡೀಕರಣ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ನಾಮಫಲಕಗಳು, ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿರಬೇಕು. ಕನ್ನಡ ಭಾಷೆಯಲ್ಲಿ ಸಂವಹನಗಳು ನಡೆಯಬೇಕು. ಕರ್ನಾಟಕದ ಎಲ್ಲ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕು. ಈ ಬೇಡಿಕೆಗಳನ್ನು ಈಡೇರಿಸುವ ಬದ್ಧತೆಯನ್ನು ಕೇಂದ್ರ ಸರಕಾರ ಹಾಗೂ ರೈಲ್ವೆ ಇಲಾಖೆ ಪ್ರದರ್ಶಿಸಬೇಕು ಎಂದು ತಿಳಿಸಿದ್ದಾರೆ. ಕರ್ನಾಟಕದ ಜನತೆಗೆ ತನ್ನ ಭರವಸೆ ನೀಡಬೇಕು. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ರೈಲ್ವೆ ಇಲಾಖೆಗೆ ಎ.15ರವರೆಗೆ ಗಡುವು ನೀಡುತ್ತಿದೆ. ಒಂದು ವೇಳೆ ನಮ್ಮ ಬೇಡಿಕೆಗಳ ಕುರಿತು ಅವರು ತಾತ್ಸಾರ ತೋರಿದರೆ, ಪ್ರತಿಕ್ರಿಯೆ ನೀಡದಿದ್ದರೆ ಇಡೀ ಕರ್ನಾಟಕದ ಎಲ್ಲ ಸ್ವರೂಪದ ರೈಲುಗಳನ್ನು, ರೈಲು ನಿಲ್ದಾಣಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಕರ್ನಾಟಕದ ಇಡೀ ರೈಲು ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಳಮೀಸಲಾತಿ ವಿರೋಧಿಸಿ 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಬಾಬುರಾವ್ ಪಾಸ್ವಾನ್
ಬೀದರ್ : ಒಳಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಹಾಗೂ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟವು ಮಾ.25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಾಬುರಾವ್ ಪಾಸ್ವಾನ್ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಾಗಮೋಹನದಾಸ್ ವರದಿ ತಿರಸ್ಕರಿಸಿ, ಇನ್ನೊಂದು ಸಾರಿ ಜಾತಿ ಜನಗಣತಿ ಸಮಿಕ್ಷೆ ಮಾಡಬೇಕು. ರೋಷ್ಟರ್ ಪದ್ದತಿಯ ಒಳ ಮೀಸಲಾತಿ ಯಾವುದೇ ಕಾರಣಕ್ಕೂ ಬೇಡ. 56 ಹುದ್ದೆಗಳನ್ನು ಹಳೆ ಮೀಸಲಾತಿ ಆಧಾರದಂತೆ ಭರ್ತಿ ಮಾಡಿ, ಎಲ್ಲ ಪರಿಶಿಷ್ಟರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಸರ್ಕಾರ ಶತ ಪ್ರತಿಶತದಷ್ಟು ಪರಿಶಿಷ್ಟ ಜಾತಿಯ ಬಲಗೈ ಪಂಗಡದವರ ಮತ ಪಡೆದು ಅಧಿಕಾರಕ್ಕೆ ಬಂದಿದ್ದು, ಅಧಿಕಾರಕ್ಕೇರಿದ ಕ್ಷಣ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿ ಎರಡು ವರೆ ವರ್ಷ ಕಳೆದರೂ ಕುಂಟು ನೆಪವೊಡ್ಡಿ ಬಲಗೈ ಹಾಗೂ ಎಡಗೈ ಜಾತಿಗಳ ನಡುವೆ ಜಗಳ ಹಚ್ಚುವ ಕಾರ್ಯ ಮಾಡುತ್ತಿದೆ. ನಮ್ಮ ಹಕ್ಕು ಎತ್ತಿ ಹಿಡಿಯುವ ಸರ್ಕಾರವೇ ನಮ್ಮನ್ನು ಚೆನ್ನಾಗಿ ತುಳಿಯುವ ಕಾರ್ಯಕ್ಕೆ ಮುಂದಾಗಿದೆ ಎಂದು ಹರಿಹಾಯ್ದರು. ರಮೇಶ್ ಡಾಕುಳಗಿ ಅವರು ಮಾತನಾಡಿ, 2023ರಲ್ಲಿ ಕಾಂಗ್ರೆಸ್ ಸರ್ಕಾರವು ಚಿತ್ರದುರ್ಗ ಸಮಾವೇಶದಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿತ್ತು. ಆದರೆ ಮಾತು ತಪ್ಪಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗ ಒಳ ಮೀಸಲಾತಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯ ಸರ್ಕಾರ ಅದನ್ನು ಕಡೆಗಣಿಸಿತ್ತು. ನಂತರ ಸರ್ವೋಚ್ಛ ನ್ಯಾಯಾಲಯವು ತನ್ನ ಆದೇಶದಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಿದೆ. ಆದರೂ ಕೇಂದ್ರ ಸರ್ಕಾರ ಕೂಡಲೇ ಸಂವಿಧಾನದ 9ನೇ ಪರಿಸ್ಛೇದ ಸೇರಿಸಿ ಎಲ್ಲ ರಾಜ್ಯಗಳಿಗೆ ಅನ್ವಯವಾಗುವ ರೀತಿಯಲ್ಲಿ ಅನುಷ್ಠಾನಗೋಳಿಸಬೇಕು ಎಂದರು. ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಶ್ರೀಪತರಾವ ದೀನೆ, ಶಿವಕುಮಾರ್ ನೀಲಿಕಟ್ಟಿ, ಪ್ರದೀಪ್ ನಾಟೇಕರ್, ಸಂದೀಪ್ ಕಾಂಟೆ, ಅಶೋಕ್ ಮಾಳಗೆ, ಅಂಬಾದಾಸ್ ಗಾಯಕವಾಡ್, ಸಾಯಿ ಶಿಂಧೆ, ರಘುನಾಥ್ ಗಾಯಕವಾಡ್, ಅವಿನಾಶ್ ದೀನೆ, ರಾಜಕುಮಾರ್ ಶೇರಿಕಾರ್, ಮೌಲಪ್ಪ ಮಾಳಗೆ ಹಾಗೂ ಜನಾರ್ಧನ್ ದೀನೆ ಇತರರು ಇದ್ದರು.
ಎಸೆಸೆಲ್ಸಿ ಪರೀಕ್ಷೆ: ಪ್ರಥಮ ಭಾಷೆ ಪರೀಕ್ಷೆಯಲ್ಲಿ 12,175 ವಿದ್ಯಾರ್ಥಿಗಳು ಗೈರು
ಬೆಂಗಳೂರು : ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ನಡೆದ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆಯಲ್ಲಿ 12,175 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೇ.98.53ರಷ್ಟು ಹಾಜರಾತಿ ದಾಖಲಾಗಿದೆ. ಪರೀಕ್ಷೆಗೆ 8,28,477 ಮಂದಿ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 8,16,302 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಕಲಬುರಗಿ ಜಿಲ್ಲಯಲ್ಲಿ 1591, ಬೆಂಗಳೂರು ಜಿಲ್ಲೆಯಲ್ಲಿ 1,310, ಬೀದರ್ 956, ಚಿತ್ರದುರ್ಗ 480, ಮೈಸೂರಿನಲ್ಲಿ 399, ಬೆಳಗಾವಿ 654 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಮೂಲಕ ಕ್ಯಾಡನ್ಸ್ ಆರ್ಕಿಟೆಕ್ಚರ್ ಸಂಸ್ಥೆ ಜೊತೆ ಒಪ್ಪಂದ
ಕಲಬುರಗಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ರೂಪಿಸಿರುವ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಹಾಗೂ ಕ್ಯಾಡೆನ್ಸ್ ಆರ್ಕಿಟೆಕ್ಚರ್ ಇಂಟರ್ ಡಿಸೈನ್ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಬೆಂಗಳೂರಿನಲ್ಲಿಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಕಂಪನಿಯ ಪ್ರಧಾನ ಆರ್ಕಿಟೆಕ್ಟ್ ಆರ್.ನರೇಂದ್ರ ಪಿಗಲ್ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ರೂಪಿಸಿರುವ ಕಲಬುರಗಿ ನೆಕ್ಸ್ಟ್ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಲಬುರಗಿ ನಗರದ ಸೌಂದರ್ಯೀಕರಣ ಹಾಗೂ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ಒಪ್ಪಂದಕ್ಕೆ ಸಹಿಹಾಕಲಾಗಿದೆ ಎಂದು ಸಚಿವರು ತಿಳಿಸಿದರು. ಕಲಬುರಗಿಯಲ್ಲಿ ಲಭ್ಯವಿರುವ ಸುಮಾರು 30 ಎಕರೆ ಪ್ರದೇಶದಲ್ಲಿ ಬಹುಸೌಲಭ್ಯಗಳನ್ನು ಒಳಗೊಂಡ ಉದ್ಯಾನವನ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಕಲಬುರಗಿ ಅಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷರಾದ ಮೊಹಮದ್ ಮಝರ್ಖಾನ್ ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು. ಉದ್ದೇಶಿತ ಉದ್ಯಾನವನದಲ್ಲಿ ಅತ್ಯಾಧುನಿಕ ಶೈಲಿಯ ವಾಯುವಿಹಾರ ಪಥಗಳು, ಅಪರೂಪದ ವೃಕ್ಷಗಳು ಹಾಗೂ ಹೂವಿನ ಗಿಡಗಳು ಇರಲಿದ್ದು, ಸುಂದರ ಹುಲ್ಲುಗಾವಲು, ಸಾರ್ವಜನಿಕರ ಆಸನಗಳು ಇರಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರಲ್ಲದೆ, ಈ ಉದ್ಯಾನವನದಲ್ಲಿನ ಕೊಳವನ್ನು ಸುಂದರ ಸರೋವರವಾಗಿ ರೂಪಿಸಲಾಗುವುದು ಎಂದು ಸಚಿವರು ಹೇಳಿದರು. ಉದ್ಯಾನವನವು ಸುಸಜ್ಜಿತವಾದ ಕ್ರೀಡಾ ಸಂಕೀರ್ಣವನ್ನು ಹೊಂದಲಿದ್ದು, ಕ್ರೀಡಾಪಟುಗಳಿಗೆ ಉತ್ತಮ ತಾಣವಾಗಲಿದೆ ಎಂಬ ಮಾಹಿತಿ ನೀಡಿದ ಸಚಿವರು ಈ ಉದ್ಯಾನವನವು ಮುಕ್ತ ಮಾಹಿತಿ ಕೇಂದ್ರವನ್ನು ಹೊಂದಲಿದೆ ಎಂದೂ ತಿಳಿಸಿದರು. ಇಲ್ಲಿ ವ್ಯಾಖ್ಯಾನ ಕೇಂದ್ರ, ಕಲಾವಿದರಿಗೆ ಮುಕ್ತ ವಾಯು ಗ್ಯಾಲರಿ ಹೊಂದಲಿದೆ ಎಂದು ಪುರಾತತ್ತ್ವಶಾಸ್ತ್ರ ಇಲಾಖೆಯ ಸಂರಕ್ಷಣಾ ವಾಸ್ತುಶಿಲ್ಪಿ ಶರತ್ ಚಂದ್ರ ಹೇಳಿದರು.
ರಾಷ್ಟ್ರ ಮಟ್ಟಕ್ಕೆ ಮುಟ್ಟಿದ ‘ಕೆಡಿ’ ಹಾಡು ವಿವಾದ; ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ
“ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು” ಗೀತೆ ಬರೆದವರು ಇವರೇನಾ ಎಂದ ಜನರು!
(ವಿಡಂಬನೆ) ಎಲ್ಲಿ ಸರಿಯಿತೋ ಸೆರಗು, ಎಲ್ಲೆ ಮೀರಿತೋ! ಸಮಯ ಅಂತೂ ಹಾಳಾಯಿತು!
ಸಾಮಾಜಿಕ ಜಾಲತಾಣಗಳಲ್ಲಿ ಸಂಗತಿಗಳು ಬೇಗನೇ ವೈರಲ್ ಆಗುತ್ತವೆ. ಜನರು ಅಷ್ಟೇ ಬೇಗ ಅದನ್ನು ಮರೆತು ಬಿಡುತ್ತಾರೆ. ಇತ್ತೀಚೆಗೆ ಸಿನಿಮಾ ಹಾಡೊಂದರ ಸಾಹಿತ್ಯವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಿನಿಮಾ ಹಾಡಿನ ಬಗ್ಗೆ ನವಿರಾದ ವಿಡಂಬನೆಯನ್ನು ಬರೆದಿದ್ದಾರೆ ಲೇಖಕಿ- ಸಾಹಿತಿ ಸಹನಾ ಪ್ರಸಾದ್ . ಈ ವಿಡಂಬನೆಯಲ್ಲಿ ಬರುವ ಮಾಧವ ವೈರಲ್ ಆದ ಹಾಡಿನ ಸಾಹಿತ್ಯದ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡಿರುತ್ತಾನೆ. ಆಗ ಆತನ ಪತ್ನಿ ಮಾಧವಿ ಹೇಳುವ ಮಾತುಗಳು ಇಂದಿನ ಪರಿಸ್ಥಿತಿಗೆ ಮತ್ತು ಮನಸ್ಥಿಗೆ ಕನ್ನಡಿ ಹಿಡಿದಂತಿದೆ.
ಮೊಸ್ಸಾದ್ಗಾಗಿ ಗೂಢಚರ್ಯೆ ಆರೋಪ: ಇರಾನ್ನಲ್ಲಿ ಸ್ವೀಡನ್ ಪ್ರಜೆಗೆ ಗಲ್ಲು
ಟೆಹರಾನ್,ಮಾ.18: ಇಸ್ರೇಲ್ನ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್ಗಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪ ಎದುರಿಸುತ್ತಿದ್ದ ಸ್ವೀಡನ್ ಪ್ರಜೆ ಕುರೋಶ್ ಕೆವ್ಯಾನಿಯನ್ನು ಇರಾನ್ ಗಲ್ಲಿಗೇರಿಸಿದೆ. ಇರಾನ್ನ ಸೂಕ್ಷ್ಮ ಸಂವೇದಿ ಪ್ರದೇಶಗಳ ಛಾಯಾಚಿತ್ರಗಳನ್ನು ಮೊಸ್ಸಾದ್ ಜೊತೆ ಹಂಚಿಕೊಂಡ ಆರೋಪದಲ್ಲಿ ಕುರೋಶ್ನನ್ನು ದೋಷಿಯೆಂದು ಪರಿಗಣಿಸಲಾಗಿತ್ತು ಎಂದು ಇರಾನ್ನ ನ್ಯಾಯಾಂಗ ಇಲಾಖೆಯ ಆನ್ಲೈನ್ ಜಾಲತಾಣ ಮಿಝಾನ್ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ. 2025ರಲ್ಲಿ ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ ನಡೆಸಿದ ಬಳಿಕ ಇರಾನ್ನಲ್ಲಿ ಮರಣದಂಡನೆಗಳು ಅಧಿಕಗೊಂಡಿವೆಯೆಂದು ಮಾನವಹಕ್ಕುಗಳ ಸಂಘಟನೆ ಎಚ್ಆರ್ಎಎನ್ಎ ವರದಿ ಮಾಡಿದೆ.
ಭಾರತ ಸರ್ಕಾರವು ತನ್ನ ಆನ್ಲೈನ್ ವಿಷಯ ನಿರ್ಬಂಧಿಸುವ ಚೌಕಟ್ಟನ್ನು ವಿಕೇಂದ್ರೀಕರಿಸಲು ಸಜ್ಜಾಗಿದ್ದು, ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿರ್ಬಂಧಿಸುವ ಆದೇಶಗಳನ್ನು ಕಳುಹಿಸಲು ಹಲವಾರು ಸಚಿವಾಲಯಗಳು ಮತ್ತು ನಿಯಂತ್ರಕರಿಗೆ ಅಧಿಕಾರ ನೀಡಲು ಯೋಜಿಸುತ್ತಿದೆ. ಇದು ವಿಸ್ತರಿಸುತ್ತಿರುವ ಸೆನ್ಸಾರ್ ಶಿಪ್ ಆಡಳಿತದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಇದು Instagram, Facebook ಮತ್ತು YouTube ನಂತಹ ತಂತ್ರಜ್ಞಾನ ಕಂಪನಿಗಳ ಮೇಲೆ ಪರಿಣಾಮ ಬೀರುತ್ತದೆ. ಇದು ವ್ಯಾಪಕ ಶ್ರೇಣಿಯ ಸರ್ಕಾರಿ ಸಂಸ್ಥೆಗಳಿಂದ ನಿರ್ಬಂಧಿಸುವ ಆದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು. ಆದರೆ ಈ ವೇದಿಕೆಗಳಲ್ಲಿ ವಿಷಯವನ್ನು ಪೋಸ್ಟ್ ಮಾಡುವ ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೂ ಪರಿಣಾಮ ಬೀರುತ್ತದೆ. ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, 2000 ರ ಸೆಕ್ಷನ್ 69 (ಎ) ಅಡಿಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ವಿಷಯ ನಿರ್ಬಂಧಿಸುವ ಆದೇಶಗಳನ್ನು ಹೊರಡಿಸಲು ಕೇಂದ್ರವು ಶೀಘ್ರದಲ್ಲೇ ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ರಕ್ಷಣಾ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳಿಗೆ ಅವಕಾಶ ನೀಡಬಹುದು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಪ್ರಸ್ತುತ ಈ ಅಧಿಕಾರವು ಐಟಿ ಸಚಿವಾಲಯಕ್ಕೆ ಮಾತ್ರ ಲಭ್ಯವಿದೆ. ಈ ಬದಲಾವಣೆಯು ಡಿಜಿಟಲ್ ವಿಷಯದ ಮೇಲಿನ ಹಿಡಿತವನ್ನು ಬಿಗಿಗೊಳಿಸುವ ವಿಶಾಲ ಕಾರ್ಯತಂತ್ರದ ಒಂದು ಭಾಗ ಮಾತ್ರ. ನಿರ್ಬಂಧಿಸುವ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸುವುದರ ಹೊರತಾಗಿ, ರಾಜ್ಯವು ಬಹುಮುಖಿ ವಿಧಾನವನ್ನು ಜಾರಿಗೆ ತರುತ್ತಿದೆ. ಅವುಗಳೆಂದರೆ ಕಂಟೆಂಟ್ ತೆಗೆದುಹಾಕುವ ಸಮಯಾವಧಿಯನ್ನು ತೀವ್ರವಾಗಿ ಕಡಿತಗೊಳಿಸುವುದು, ಸಭ್ಯತೆಗಾಗಿ ಕಠಿಣ ಹೊಸ ಮಾನದಂಡಗಳನ್ನು ಪರಿಚಯಿಸುವುದು ಮತ್ತು ಗೃಹ ಸಚಿವಾಲಯದ ಸಹಯೋಗ್ ಪೋರ್ಟಲ್ ಮೂಲಕ ನಿರ್ವಹಿಸಲ್ಪಡುವ ಐಟಿ ಕಾಯ್ದೆಯ ಸೆಕ್ಷನ್ 79 (3)(ಬಿ) ಅಡಿಯಲ್ಲಿ ಸಮಾನಾಂತರ ವಿಷಯ ನಿರ್ಬಂಧಿಸುವ ಕಾರ್ಯವಿಧಾನವನ್ನು ವಿಸ್ತರಿಸುವುದು ಸೇರಿವೆ. ಕಾನೂನನ್ನು ಉಲ್ಲಂಘಿಸದ ವಿಡಂಬನಾತ್ಮಕ ಅಥವಾ ವಿಮರ್ಶಾತ್ಮಕ ಪೋಸ್ಟ್ಗಳನ್ನು ತೆಗೆದುಹಾಕುವ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಹೆಚ್ಚಾಗಿ ವರದಿ ಮಾಡುತ್ತಿದ್ದಾರೆ. ಈ ಮೃದು ಸೆನ್ಸಾರ್ ಶಿಪ್ ಪ್ರವೃತ್ತಿಗಳು ಹೊಸ ನಿಯಂತ್ರಕ ಚೌಕಟ್ಟಿನಿಂದ ಕಡ್ಡಾಯಗೊಳಿಸಲಾದ ಕಠಿಣ ದಂಡಗಳನ್ನು ತಪ್ಪಿಸಲು ವೇದಿಕೆಗಳು ಪೂರ್ವಭಾವಿಯಾಗಿ ತಮ್ಮ ಸ್ವಯಂಚಾಲಿತ ಅನುಸರಣೆ ವ್ಯವಸ್ಥೆಗಳನ್ನು ಹೆಚ್ಚಿಸುತ್ತಿರುವುದರ ನೇರ ಪರಿಣಾಮವಾಗಿದೆ. ►ಹೊಸ ವಿಕೇಂದ್ರೀಕೃತ ಸೆನ್ಸಾರ್ ಶಿಪ್ ಕಾರ್ಯವಿಧಾನ ಪ್ರಸ್ತುತ, ಭಾರತದಲ್ಲಿ ಎರಡು ವಿಷಯ ನಿರ್ಬಂಧಿಸುವ ಕಾರ್ಯವಿಧಾನಗಳಿವೆ. ಒಂದು ಐಟಿ ಕಾಯ್ದೆಯ ಸೆಕ್ಷನ್ 69 (ಎ) ಅಡಿಯಲ್ಲಿದೆ. ಇದರ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸುವ ಅಥವಾ ಭಾರತದ ವಿದೇಶಾಂಗ ನೀತಿಗೆ ಬೆದರಿಕೆ ಹಾಕುವ ವಿಷಯವನ್ನು ತೆಗೆದುಹಾಕಲಾಗುತ್ತದೆ. ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ನೋಡಲ್ ಅಧಿಕಾರಿಗಳನ್ನು ಹೊಂದಿದ್ದು, ಅವರು ಅಂತಹ ವಿಷಯವನ್ನು ಸಂಗ್ರಹಿಸಿ ಐಟಿ ಸಚಿವಾಲಯದ ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಇದು ನಿರ್ಬಂಧಿಸುವ ಆದೇಶವನ್ನು ನೀಡುವ ಜವಾಬ್ದಾರಿಯುತ ಅಂತಿಮ ಸಂಸ್ಥೆಯಾಗಿದೆ. ಇನ್ನೊಂದು ಕಾರ್ಯವಿಧಾನವು ಐಟಿ ಕಾಯ್ದೆಯ ಸೆಕ್ಷನ್ 79 (3)(ಬಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಅಡಿಯಲ್ಲಿ ವಿವಿಧ ಸಚಿವಾಲಯಗಳು ಆನ್ಲೈನ್ ಪ್ಲಾಟ್ಫಾರ್ಮ್ಗಳಿಗೆ ನಿರ್ಬಂಧಿಸುವ ಆದೇಶಗಳನ್ನು ನೀಡಲು ಸಾಮಾನ್ಯವಾಗಿ ಸಹಯೋಗ್ ಪೋರ್ಟಲ್ ಮೂಲಕ ನೇರವಾಗಿ ಅಧಿಕಾರ ಪಡೆದಿವೆ. ನಾವು ಎರಡೂ ಆಡಳಿತಗಳಲ್ಲಿ ಸಮಾನತೆಯನ್ನು ತರಲು ಬಯಸುತ್ತೇವೆ. ಸಹಯೋಗ್ ಪೋರ್ಟಲ್ ಅನ್ನು ಬಳಸಿಕೊಂಡು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಸಂಸ್ಥೆಗಳು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿರ್ಬಂಧಿಸುವ ಆದೇಶಗಳನ್ನು ಹೇಗೆ ಕಳುಹಿಸಬಹುದು ಎಂಬುದರಂತೆಯೇ, ಸೆಕ್ಷನ್ 69 (ಎ) ನಿರ್ಬಂಧಿಸುವ ಪ್ರಕ್ರಿಯೆಯನ್ನು ಸಹ ಇದೇ ರೀತಿ ವಿಕೇಂದ್ರೀಕರಿಸಬೇಕು ಎಂಬ ಭಾವನೆ ಹೆಚ್ಚುತ್ತಿದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಬದಲಾವಣೆಯನ್ನು ಸಾಧ್ಯವಾಗಿಸಲು ತಿದ್ದುಪಡಿಯನ್ನು ತರಲು ಸರ್ಕಾರವು ವಿವಿಧ ಪಾಲುದಾರರೊಂದಿಗೆ ಅಂತರ-ಸಚಿವಾಲಯದ ಚರ್ಚೆಗಳನ್ನು ನಡೆಸುತ್ತಿದೆ. ಇಂಟರ್ನೆಟ್ನಲ್ಲಿ AI-ರಚಿತವಾದ ದಾರಿತಪ್ಪಿಸುವ ವಿಷಯದ ಪ್ರಸರಣದಿಂದಾಗಿ ಇದು ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಐಟಿ ಕಾಯ್ದೆಯ ಸೆಕ್ಷನ್ 69 (ಎ) ಕೇಂದ್ರ ಸರ್ಕಾರಕ್ಕೆ ಸಾರ್ವಭೌಮತ್ವ, ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಅಪರಾಧಗಳಿಗೆ ಪ್ರಚೋದನೆಯನ್ನು ತಡೆಗಟ್ಟುವ ಹಿತಾಸಕ್ತಿಗಾಗಿ ಸಾರ್ವಜನಿಕ ಮಾಹಿತಿ ಪ್ರವೇಶವನ್ನು ನಿರ್ಬಂಧಿಸಲು ಅಧಿಕಾರ ನೀಡುತ್ತದೆ. ಈ ಪ್ರಕ್ರಿಯೆಯು ಮಾಹಿತಿ ತಂತ್ರಜ್ಞಾನ (ಸಾರ್ವಜನಿಕರಿಂದ ಮಾಹಿತಿ ಪ್ರವೇಶವನ್ನು ನಿರ್ಬಂಧಿಸುವ ಕಾರ್ಯವಿಧಾನ ಮತ್ತು ಸುರಕ್ಷತೆಗಳು) ನಿಯಮಗಳು, 2009ರಿಂದ ನಿಯಂತ್ರಿಸಲ್ಪಡುತ್ತದೆ. ಇದರಲ್ಲಿ ಸರ್ಕಾರಿ ಸಂಸ್ಥೆಯು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ವಿನಂತಿಯನ್ನು ಕಳುಹಿಸುತ್ತದೆ; ಸಾಮಾಜಿಕ ಮಾಧ್ಯಮ ವೇದಿಕೆಗಳಂತಹ ಮಧ್ಯವರ್ತಿಗಳಿಗೆ ನಿರ್ದಿಷ್ಟ ವಿಷಯವನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡುವ ಮೊದಲು ಅದನ್ನು ಸಮಿತಿಯು ಪರಿಶೀಲಿಸುತ್ತದೆ. ತುರ್ತು ಸಂದರ್ಭಗಳಲ್ಲಿ, ಪರಿಶೀಲನೆಯ ಮೊದಲು ಮಧ್ಯಂತರ ನಿರ್ಬಂಧವನ್ನು ಆದೇಶಿಸಬಹುದು. ಆದರೆ ಈ ಎರಡೂ ಸಂದರ್ಭಗಳಲ್ಲಿ, ಐಟಿ ಸಚಿವಾಲಯವು ಪ್ರಸ್ತುತ ಸಾಮಾಜಿಕ ಮಾಧ್ಯಮ ಕಂಪನಿಗಳಂತಹ ಮಧ್ಯವರ್ತಿಗಳಿಗೆ ಅಂತಿಮ ನಿರ್ಬಂಧ ಆದೇಶವನ್ನು ಕಳುಹಿಸುತ್ತದೆ. ►ಸಮಾನಾಂತರ ನಿರ್ಬಂಧ ವ್ಯವಸ್ಥೆ ಕಳೆದ ವರ್ಷ ಮಾಹಿತಿ ಹಕ್ಕು ವಿನಂತಿಯ ಮೂಲಕ ಪಡೆದ ಮಾಹಿತಿಯ ಪ್ರಕಾರ, ಅಕ್ಟೋಬರ್ 2024ರಿಂದ ಅಕ್ಟೋಬರ್ 2025ರವರೆಗೆ ಕೇಂದ್ರ ಗೃಹ ಸಚಿವಾಲಯದ ಸಹಯೋಗ್ ಪೋರ್ಟಲ್ ಮೂಲಕ ವಾಟ್ಸಾಪ್, ಫೇಸ್ಬುಕ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ 19 ಆನ್ಲೈನ್ ಪ್ಲಾಟ್ಫಾರ್ಮ್ಗಳಿಗೆ 2,300ಕ್ಕಿಂತ ಹೆಚ್ಚು ನಿರ್ಬಂಧ ಆದೇಶಗಳನ್ನು ಕಳುಹಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈ ವಿಕೇಂದ್ರೀಕೃತ ತೆಗೆದುಹಾಕುವ ಆದೇಶಗಳನ್ನು ವ್ಯಾಪಕ ಶ್ರೇಣಿಯ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಿಂದ ಪ್ರಾರಂಭಿಸಬಹುದು. ಇದು ದೇಶಾದ್ಯಂತ ಸಮಾನಾಂತರ ಮತ್ತು ಹೆಚ್ಚು ಸಕ್ರಿಯವಾಗಿರುವ ವಿಷಯಗಳನ್ನು ಬ್ಲಾಕ್ ಮಾಡುವ ಆಡಳಿತವನ್ನು ರೂಪಿಸುತ್ತದೆ. ಈ ದತ್ತಾಂಶವು ಸಹಯೋಗ್ ಪೋರ್ಟಲ್ನ ಕಾರ್ಯಾಚರಣೆಯ ಮೊದಲ ಪೂರ್ಣ ವರ್ಷವನ್ನು ಸೆರೆಹಿಡಿಯುತ್ತದೆ. ಭಾರತದ ವಿಸ್ತರಿಸುತ್ತಿರುವ ಆನ್ಲೈನ್ ಸೆನ್ಸಾರ್ ಶಿಪ್ ಚೌಕಟ್ಟಿನಲ್ಲಿ ವಿವಾದಾತ್ಮಕ ಪೋರ್ಟಲ್ ಹೇಗೆ ತ್ವರಿತವಾಗಿ ಕೇಂದ್ರ ಸಾಧನವಾಗಿದೆ ಎಂಬುದನ್ನು ಮೊದಲ ಬಾರಿಗೆ ಆದೇಶಗಳ ಸಂಖ್ಯೆ ಬಹಿರಂಗಪಡಿಸಿದೆ. ಈ ಆದೇಶಗಳು ಆನ್ಲೈನ್ನಲ್ಲಿ ಆಕ್ರಮಣಕಾರಿ ಅಥವಾ ಕಾನೂನುಬಾಹಿರ ಪೋಸ್ಟ್ಗಳು ಅಥವಾ ಸಂಪೂರ್ಣ ಖಾತೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಆನ್ಲೈನ್ ಲಿಂಕ್ಗಳನ್ನು ಒಳಗೊಂಡಿವೆ. ಆರ್ಟಿಐ ವಿನಂತಿಯ ವ್ಯಾಪ್ತಿಗೆ ಬರುವ ಅವಧಿಯು ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ ಸಮಯದಲ್ಲಿ ನಡೆದ ಹಲವಾರು ವಿಷಯ ತೆಗೆದುಹಾಕುವಿಕೆಗಳನ್ನು ಸಹ ಒಳಗೊಂಡಿದೆ. ಆ ಸಮಯದಲ್ಲಿ ಸರ್ಕಾರವು ಆನ್ಲೈನ್ ಪ್ರಚಾರವನ್ನು ತಟಸ್ಥಗೊಳಿಸಲು ಪಾಕಿಸ್ತಾನ ಮೂಲದ್ದು ಎಂದು ನಂಬಲಾದ ಕಂಟೆಂಟ್ ಮತ್ತು ಖಾತೆಗಳ ಮೇಲೆ ಕ್ರಮ ಕೈಗೊಂಡಿತು. ಉದಾಹರಣೆಗೆ, ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್, ಆ ಸಮಯದಲ್ಲಿ, ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಮತ್ತು ಪ್ರಮುಖ ಎಕ್ಸ್ ಬಳಕೆದಾರರಿಗೆ ಸೇರಿದ ಖಾತೆಗಳನ್ನು ಒಳಗೊಂಡಂತೆ ಸರ್ಕಾರದಿಂದ 8,000ಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ಬಂಧಿಸಲು ಆದೇಶಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ►ತೆಗೆದುಹಾಕುವ ಸಮಯ ಮಿತಿಗಳು ಫೆಬ್ರವರಿಯಲ್ಲಿ, ಐಟಿ ಸಚಿವಾಲಯವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ಕ್ಕೆ ತಿದ್ದುಪಡಿಗಳನ್ನು ಸೂಚಿಸಿತು. ಇದು ಜಾರಿಗೆ ತಂದಿರುವ ಅತ್ಯಂತ ವಿವಾದಾತ್ಮಕ ಬದಲಾವಣೆಗಳಲ್ಲಿ ಒಂದೆಂದರೆ, ಸಾಮಾಜಿಕ ಮಾಧ್ಯಮ ವೇದಿಕೆಗಳು ಈಗ 24–36 ಗಂಟೆಗಳೊಳಗೆ ವಿಷಯವನ್ನು ತೆಗೆದುಹಾಕಬೇಕು ಎಂಬುದು. ಹೊಸ ಸಮಯ ಮಿತಿಯು ವಿಶ್ವದ ಯಾವುದೇ ಸರ್ಕಾರವು ಸೂಚಿಸಿದ ಅತ್ಯಂತ ಕಡಿಮೆ ತೆಗೆದುಹಾಕುವ ಸಮಯವಾಗಿದೆ ಎಂದು ಉದ್ಯಮದ ಕಾರ್ಯನಿರ್ವಾಹಕರು ಹೇಳುತ್ತಾರೆ. ವಿಷಯವನ್ನು ತ್ವರಿತವಾಗಿ ತೆಗೆದುಹಾಕುವ ಅವಶ್ಯಕತೆಯು AI-ರಚಿತವಾದ ವಿಷಯಕ್ಕೆ ಮಾತ್ರ ಅನ್ವಯಿಸುವುದಿಲ್ಲ; ಬದಲಾಗಿ ಕಾನೂನುಬಾಹಿರವೆಂದು ಪರಿಗಣಿಸುವ ವ್ಯಾಪಕ ಶ್ರೇಣಿಯ ವಿಷಯಗಳಿಗೆ ಅನ್ವಯಿಸುತ್ತದೆ. ಪ್ಲಾಟ್ಫಾರ್ಮ್ಗಳು ಈಗ ಎರಡು ಗಂಟೆಗಳೊಳಗೆ (24 ಗಂಟೆಗಳಿಂದ ಕಡಿಮೆ) ಕಂಟೆಂಟ್ ತೆಗೆದುಹಾಕುವ ಅಗತ್ಯವಿದೆ; ಆದರೆ ಇತರ ರೀತಿಯ ಕಾನೂನುಬಾಹಿರ ವಿಷಯವನ್ನು ಅಳಿಸುವ ಅವಧಿ ಹಿಂದಿನ 36-ಗಂಟೆಗಳ ಮಿತಿಯಿಂದ ಕೇವಲ ಮೂರು ಗಂಟೆಗಳವರೆಗೆ ಕುಗ್ಗಿದೆ. ಈ ನಿಯಮಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನಂತಹ ಪ್ಲಾಟ್ಫಾರ್ಮ್ಗಳನ್ನು ನಿರ್ವಹಿಸುವ ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ, ಕಾರ್ಯಾಚರಣೆಯ ದೃಷ್ಟಿಕೋನದಿಂದ ಈ ನಿಯಮಗಳನ್ನು ಅನುಸರಿಸುವುದು ಸವಾಲಾಗಿರಬಹುದು ಎಂದು ಹೇಳಿತ್ತು. ಮೆಟಾ ಉಪಾಧ್ಯಕ್ಷ (ನೀತಿ) ಹಾಗೂ ಉಪ ಮುಖ್ಯ ಗೌಪ್ಯತಾ ಅಧಿಕಾರಿ ರಾಬ್ ಶೆರ್ಮನ್ ಅವರ ಪ್ರಕಾರ, ನಿಯಮಗಳನ್ನು ತಿಳಿಸುವ ಮೊದಲು ಸರ್ಕಾರವು ಉದ್ಯಮದೊಂದಿಗೆ ಸಮಾಲೋಚನೆ ನಡೆಸಿರಲಿಲ್ಲ. ಡಿಜಿಟಲ್ ಸುದ್ದಿ ಮಾಧ್ಯಮಗಳು ಮತ್ತು ಬೇಡಿಕೆಯ ಮೇರೆಗೆ ವಿಡಿಯೊ ಆನ್ ಡಿಮಾಂಡ್ ಪ್ಲಾಟ್ಫಾರ್ಮ್ಗಳಲ್ಲಿ ಅಶ್ಲೀಲ ವಿಷಯದ ಪ್ರಸರಣವನ್ನು ನಿಷೇಧಿಸಲು ಕೇಂದ್ರವು ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು, 2021ಕ್ಕೆ ತಿದ್ದುಪಡಿಗಳನ್ನು ಪರಿಗಣಿಸುತ್ತಿದೆ. ಈ ಪದವು ವಿಶಾಲ ವ್ಯಾಪ್ತಿಯನ್ನು ಹೊಂದಿರಬಹುದು ಎಂದು ಇಂಡಿಯನ್ ಎಕ್ಸ್ಪ್ರೆಸ್ ಈ ಹಿಂದೆ ವರದಿ ಮಾಡಿತ್ತು. ಇದು ಮಾನನಷ್ಟ ಹೇಳಿಕೆಗಳು, ಅರ್ಧ-ಸತ್ಯಗಳು ಅಥವಾ ರಾಷ್ಟ್ರವಿರೋಧಿ ವರ್ತನೆಗಳು ಒಳಗೊಂಡಿರುವ ವಿಷಯವನ್ನು ನಿಷೇಧಿಸುವ ಸಾಧ್ಯತೆಯಿದ್ದು, ಭಾರತದ ಸಾಮಾಜಿಕ, ಸಾರ್ವಜನಿಕ ಮತ್ತು ನೈತಿಕ ಜೀವನದ ಅಂಶಗಳನ್ನು ಟೀಕಿಸುವ ಯಾವುದೇ ವಿಷಯವನ್ನು ನಿರ್ಬಂಧಿಸಬಹುದು.
Heavy Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ: ಐಎಂಡಿ
Heavy Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಮೂರರಿಂದ ಐದು ದಿನಗಳ ವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ. ಇನ್ನು ಮಾರ್ಚ್ 18ರ ಬುಧವಾರ ಸಂಜೆ, ರಾತ್ರಿ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಕೆಲವು
ಅಧ್ಯಾಪಕರಿಗಾಗಿ ‘ಪ್ರಭಾವಶಾಲಿಯಾಗಿ ಮಾತನಾಡುವ ಕಲೆ’ ಕಾರ್ಯಾಗಾರ
ಮಂಗಳೂರು, ಮಾ.18: ಜೆಸಿಐ ಮಂಗಳೂರು ಸಾಮ್ರಾಟ್, ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಮಂಗಳೂರು ಹಾಗೂ ರೋಸಾ ಮಿಸ್ಟಿಕಾ ಪಿಯು ಕಾಲೇಜು ಕಿನ್ನಿಕಂಬಳ ಇವರ ಸಂಯುಕ್ತ ಆಶ್ರಯದಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವಾಗಿ ‘ಪ್ರಭಾವಶಾಲಿಯಾಗಿ ಮಾತನಾಡುವ ಕಲೆ’ ವಿಷಯದ ಕುರಿತು ತರಬೇತಿ ಕಾರ್ಯಾಗಾರವು ಸೋಮವಾರ ಮಂಗಳೂರಿನ ಸ್ವಸ್ತಿಕಾ ವಾಟರ್ಫ್ರಂಟ್ನಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಲಕ್ಷ್ಮೀ ಮೆಮೋರಿಯಲ್ ಶಿಕ್ಷಣ ಟ್ರಸ್ಟ್ (ಎಜೆ ಗುಂಪು) ಮಾನವ ಸಂಪನ್ಮೂಲ ವ್ಯವಸ್ಥಾಪಕ ಮಹಾಬಲ ಆಳ್ವ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕರು ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು, ಉತ್ತಮ ಸಂವಹನದ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ಅಮೆಜಾನ್ ಅಭಿವೃದ್ಧಿ ಕೇಂದ್ರದ ಅಪಾಯ ತನಿಖಾ ವಿಭಾಗದ ವ್ಯವಸ್ಥಾಪಕ ಹಾಗೂ ಜೆಸಿಐ ಭಾರತದ ರಾಷ್ಟ್ರೀಯ ತರಬೇತುದಾರ ದೀಪಕ್ ರಾಜ್ ಅವರು, ಅಧ್ಯಾಪಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜೆಸಿಐ ಸೆನೆಟರ್ ಡಾ. ರಾಘವೇಂದ್ರ ಹೊಳ್ಳ ಅವರು ಪರಿಣಾಮಕಾರಿ ಸಂವಹನ, ಆತ್ಮವಿಶ್ವಾಸದಿಂದ ಮಾತನಾಡುವ ಕೌಶಲ್ಯ ಹಾಗೂ ಬೋಧನೆಯಲ್ಲಿ ಪ್ರಭಾವಶಾಲಿ ಅಭಿವ್ಯಕ್ತಿಯ ಮಹತ್ವದ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು. ವಿವಿಧ ಶಾಲೆಗಳು ಹಾಗೂ ಕಾಲೇಜುಗಳಿಂದ ಆಗಮಿಸಿದ ಅನೇಕ ಅಧ್ಯಾಪಕರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು. ಸಂವಾದಾತ್ಮಕ ರೀತಿಯಲ್ಲಿ ನಡೆದ ತರಬೇತಿ ಅಧ್ಯಾಪಕರ ಬೋಧನಾ ಹಾಗೂ ಸಂವಹನ ಕೌಶಲ್ಯಗಳನ್ನು ಇನ್ನಷ್ಟು ವೃದ್ಧಿಸಲು ಸಹಕಾರಿಯಾಯಿತು. ಜೆಸಿಐ ಮಂಗಳೂರು ಸಾಮ್ರಾಟ್ ಅಧ್ಯಕ್ಷೆ ಪ್ರೀತಿ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಪ್ರಾಂಶುಪಾಲೆ ಡಾ. ಮಾಲಿನಿ ಎನ್. ಹೆಬ್ಬಾರ್, ರೋಸಾ ಮಿಸ್ಟಿಕಾ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಲಿಡಿಯಾ ಉಪಸ್ಥಿತರಿದ್ದರು.
Afzalpur | ಬೆಂಕಿ ತಗುಲಿ ಗುಡಿಸಲು ಭಸ್ಮ; 2 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿ
ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮದ ಶೇಷಗಿರಿ ರಸ್ತೆಯಲ್ಲಿರುವ ಅಬ್ದುಲಕರೀಂ ಜಮೀರಸಾಬ ಅಣ್ಣಾ (ಗೌರ) ಅವರ ಜಮೀನೊಂದರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು (ಪತ್ರಾ ಶೆಡ್) ಸಂಪೂರ್ಣ ಭಸ್ಮವಾಗಿದ್ದು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಪತ್ರಾ ಶೆಡ್ (ಗುಡಿಸಲು) ನಲ್ಲಿದ್ದ ರಾಸಾಯಿನಿಕ ಗೊಬ್ಬರ ಸ್ಪ್ರಿಂಕ್ಲರ್ ಪೈಪ್ ಗಳು, ಡೀಸೆಲ್ ಇಂಜಿನ್ ಸೇರಿದಂತೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಕೂಡಲೇ ಅಕ್ಕ ಪಕ್ಕದ ಜಮೀನಿನವರು ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬರುವುದರೊಳಗೆ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಗುಡಿಸಲು ಸುಟ್ಟು ಕರಕಲಾಗಿದೆ ಎನ್ನಲಾಗಿದೆ. ನಂತರ ಸ್ಥಳಕ್ಕೆ ಅಫಜಲ್ಪುರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ದ.ಕ. ಜಿಲ್ಲೆ: ಎಸೆಸೆಲ್ಸಿ ಭಾಷಾ ಪರೀಕ್ಷೆಗೆ 28,334 ವಿದ್ಯಾರ್ಥಿಗಳು ಹಾಜರು, 213 ಗೈರು
ಮಂಗಳೂರು, ಮಾ.18: ದ.ಕ. ಜಿಲ್ಲೆಯಲ್ಲಿ ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ಬುಧವಾರ ಪ್ರಾರಂಭಗೊಂಡಿದೆ. 91 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪ್ರಥಮ ಭಾಷಾ ಪರೀಕ್ಷೆಗೆ 28,334 ವಿದ್ಯಾರ್ಥಿಗಳು ಹಾಜರಾಗಿದ್ದಾರೆ, ಒಟ್ಟು ನೋಂದಾಯಿತ 28,547 ವಿದ್ಯಾರ್ಥಿಗಳ ಪೈಕಿ 213 ಮಂದಿ ಗೈರು ಹಾಜರಾಗಿದ್ದಾರೆ. ಯಾವುದೇ ಕೇಂದ್ರದಲ್ಲೂ ನಕಲು ಮಾಡಲು ಯತ್ನಿಸಿ ಡಿಬಾರ್ ಆಗಿರುವ ಪ್ರಕರಣ ವರದಿಯಾಗಿಲ್ಲ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 27,633 ರೆಗ್ಯುಲರ್, ಖಾಸಗಿ 979, ರೆಗ್ಯುಲರ್ ರಿಪೀಟರ್ 632 ಹಾಗೂ ಖಾಸಗಿಯಾಗಿ 153 ಮಂದಿ ನೋಂದಾಯಿಸಿಕೊಂಡಿದ್ದರು. ಹಾಜರಾದ ವಿದ್ಯಾರ್ಥಿಗಳ ಬ್ಲಾಕ್ವಾರು ವಿವರ ಇಂತಿವೆ. ಬಂಟ್ವಾಳ 5732, ಬೆಳ್ತಂಗಡಿ 3886, ಮಂಗಳೂರು ಉತ್ತರ 5302, ಮಂಗಳೂರು ದಕ್ಷಿಣ 4960, ಮೂಡಬಿದ್ರೆ1962, ಪುತ್ತೂರು 4656 ಮತ್ತು ಸುಳ್ಯ 1836. ಬಂಟ್ವಾಳದಲ್ಲಿ ನೋಂದಾಯಿತ 5785 ಮಂದಿ ವಿದ್ಯಾರ್ಥಿಗಳ ಪೈಕಿ 5732 ಮಂದಿ ಹಾಜರಾಗಿದ್ದಾರೆ ಮತ್ತು 53 ಗೈರು ಹಾಜರಾಗಿದ್ದಾರೆ. ಉಳಿದಡೆ ಗೈರು ಹಾಜರಾದ ವಿದ್ಯಾರ್ಥಿಗಳ ವಿವರ ಇಂತಿವೆ.ಬೆಳ್ತಂಗಡಿ 21, ಮಂಗಳೂರು ಉತ್ತರ 34, ಮಂಗಳೂರು ದಕ್ಷಿಣ 30, ಮೂಡಬಿದ್ರೆ 7, ಪುತ್ತೂರು 40 ಮತ್ತು ಸುಳ್ಯದಲ್ಲಿ 28 ಮಂದಿ ಗೈರು ಹಾಜರಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ 74 ಅಸಹಜ ಸಾವು: ಪ್ರಕರಣದ ತನಿಖಾ ವರದಿ ಸಲ್ಲಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
1990 ರಿಂದ 2021 ರ ನಡುವೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ 74 ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ಸಲ್ಲಿಕೆ ಮಾಡಲು ಕರ್ನಾಟಕ ಹೈಕೋರ್ಟ್ನಿಂದ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಸೌಜನ್ಯಾ ತಾಯಿ ಕುಸುಮಾವತಿಯವರು ಸಲ್ಲಿಸಿದ್ದ ಅರ್ಜಿಯನ್ನು ಸಿಜೆ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಶಾಸಕರ ಭವನದಲ್ಲೂ ಗ್ಯಾಸ್ ಸಿಲಿಂಡರ್ ಸಮಸ್ಯೆ: ಊಟ-ತಿಂಡಿ ಕೊರತೆ-ಮೇಲ್ಮನೆಯಲ್ಲಿ ಚರ್ಚೆ
ಬೆಂಗಳೂರು : ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಶಾಸಕರ ಭವನ ಮತ್ತು ಸುತ್ತಮುತ್ತಲಿನ ಹೋಟೆಲ್ಗಳಲ್ಲಿ ಸಕಾಲಕ್ಕೆ ಸರಿಯಾಗಿ ಊಟ, ತಿಂಡಿ ಸಿಗುತ್ತಿಲ್ಲ ಎಂದು ಮೇಲ್ಮನೆಯ ಸದಸ್ಯರು ಕಲಾಪದಲ್ಲಿ ಅಳಲು ತೋಡಿಕೊಂಡ ಪ್ರಸಂಗ ಬುಧವಾರ ನಡೆಯಿತು. ಬುಧವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ್ ಹೊರಟ್ಟಿ ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಲು ಮುಂದಾದರು. ಈ ವೇಳೆ ಎದ್ದುನಿಂತ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಈ ವಿಷಯ ಪ್ರಸ್ತಾಪಿಸಿ, ಶಾಸಕರಿಗೆ ಶಾಸಕರ ಭವನ ಮತ್ತು ಸುತ್ತಲಿನ ಹೋಟೆಲ್ಗಳಲ್ಲಿ ಸರಿಯಾದ ಊಟ-ತಿಂಡಿ ಸಿಗುತ್ತಿಲ್ಲ. ಒಂದು ವಾರದಿಂದ ನಾವೆಲ್ಲಾ ಪರದಾಡುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಕೊನೆಗೆ ಇಂದಿರಾ ಕ್ಯಾಂಟೀನ್ನಲ್ಲಿ ತಿನ್ನೋಣವೆಂದರೆ ಅಲ್ಲಿಯೂ ಗ್ಯಾಸ್ ಸಮಸ್ಯೆಯಿಂದ ಊಟ-ತಿಂಡಿ ಸಿಗುತ್ತಿಲ್ಲ. ಇದು ಕೇವಲ ಶಾಸಕರು, ಅಧಿಕಾರಿಗಳಷ್ಟೇ ಸಮಸ್ಯೆಯಲ್ಲ. ಗ್ಯಾಸ್ ತೊಂದರೆಯಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ದಯಮಾಡಿ ಸಮಸ್ಯೆಯನ್ನು ಪರಿಹರಿಸಿ ಎಂದು ಸರಕಾರಕ್ಕೆ ಮನವಿ ಮಾಡಿದರು. ಈ ವೇಳೆ ಸಭಾಪತಿ ಹೊರಟ್ಟಿ ಮಾತನಾಡಿ, ಇದಕ್ಕೆಲ್ಲ ಸರಕಾರವೇ ಉತ್ತರ ಕೊಡಬೇಕು. ನಿನಗೆ 10 ನಿಮಿಷ ಅನುಮತಿ ಕೊಡುತ್ತೇನೆ, ಹೋಗಿ ತಿಂಡಿ ತಿಂದು ಬಾ ಎಂದು ಐವಾನ್ ಡಿಸೋಜಾಗೆ ಹೇಳಿದರು. ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ಡಿಸೋಜಾ ಅವರು ಹಸಿವಿನಿಂದ ಸದನಕ್ಕೆ ಬಂದಿದ್ದಾರೆ, ದಯವಿಟ್ಟು ಇಡ್ಲಿ-ವಡಾ ಕೊಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆಗ ಪ್ರತಿಕ್ರಿಯಿಸಿದ ಸಚಿವ ಝಮೀರ್ ಅಹ್ಮದ್ ಮಾತನಾಡಿ, ಇಡ್ಲಿ-ವಡೆ ಸಿಗುತ್ತಿಲ್ಲ, ಏಕೆಂದರೆ ಗ್ಯಾಸ್ ಸಿಗುತ್ತಿಲ್ಲ ಪ್ರತಿಕ್ರಿಯಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಎದ್ದು, ಇದು ಕೇಂದ್ರದ ಗ್ಯಾಸ್ ಟ್ರಬಲ್ ಕತೆ ಎಂದು ಪರೋಕ್ಷವಾಗಿ ಪ್ರತಿಪಕ್ಷದ ಸದಸ್ಯರನ್ನು ಕಿಚಾಯಿಸಿದರು.
ಭಾಲ್ಕಿ | ಒಳ ಮೀಸಲಾತಿ ವರ್ಗಿಕರಣ ತಡೆದು, ಹಳೆಯ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಧರಣಿ
ಭಾಲ್ಕಿ: ಒಳ ಮೀಸಲಾತಿ ವರ್ಗಿಕರಣ ತಡೆದು, ಹಳೆಯ ಪದ್ಧತಿಯ ಮೀಸಲಾತಿಯೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪಾಪವ್ವಾ ಚೌಕ್ ಮೂಲಕ ಪಾಪವ್ವ ದೇವಿಯ ಪ್ರತಿಮೆಗೆ ಪೂಜೆ ಸಲ್ಲಿಸಿ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಮಹಾತ್ಮಾ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಯಲ್ಲಿ ಸಮಾವೇಶ ಗೊಂಡಿತು. ಪ್ರತಿಭಟನೆಯುದ್ಧಕ್ಕೂ ಒಳಮೀಸಲಾತಿ ವಿರುದ್ಧ ಘೋಷಣೆಗಳು ಕೂಗಲಾಯಿತು. ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕರ್ನಾಟಕದಲ್ಲಿಯ ಬಂಜಾರ, ಭೋವಿ, ಲಮಾಣಿ, ಕೊರಮ, ಕೊಂಚ, ಜಾಂಬವ, ವಡ್ಡರ, ಹೊಲೆಯ, ಛಲವಾದಿ, ಚರ್ಮಕಾರ ಸೇರಿದಂತೆ 101 ಸೂಕ್ಷ್ಮ ಜಾತಿಗಳು ಪರಿಶಿಷ್ಠ ಜಾತಿಗಳ ಪಟ್ಟಿಯಲಿವೆ. ಆದರೆ ಕರ್ನಾಟಕ ರಾಜ್ಯದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ಇತ್ತೀಚೆಗೆ ನಡೆದ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗುಂಪಿಗೆ ಶೂನ್ಯ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಛಲವಾದಿ, ಬಂಜಾರ, ಭೋವಿ, ಕೊರಮ, ಕೊರಚ, ವಡ್ಡರ, ಕೊಂಚ, ಬುರುಬುರ ಪೋಚಮ್ಮ ಸೇರಿದಂತೆ 70ಕ್ಕೂ ಹೆಚ್ಚು ಜಾತಿಗಳಿಗೆ ಘೋರ ಅನ್ಯಾಯವಾಗಿದೆ. ಕಾರಣ ಸರ್ಕಾರ ಹಳೇ ಮೀಸಲಾತಿಯ ನಿಯಮದಂತೆ ಶೇ.50ರ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯಯನ್ನು ಮುಂದುವರಿಸಬೇಕು. ಇದಕ್ಕೆ ತ್ವರಿತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಈ ಹಿಂದೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವ ಆದೇಶವನ್ನು ಸಂವಿಧಾನದ 9ನೇ ಷೆಡ್ಯೂಲ್ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಿಕೊಡಲು ಪ್ರಧಾನಮಂತ್ರಿಗಳ ಹತ್ತಿರ ನಿಯೋಗ ಹೋಗಿ, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಲಾಗಿದೆ. ಏಕಪಕ್ಷೀಯವಾಗಿ ಒಳಮೀಸಲಾತಿ ವರ್ಗೀಕರಣ ನಿರ್ಧಾರ ಮಾಡಬಾರದು. ಪರಿಶಿಷ್ಟ ಜಾತಿ ಪ್ರವರ್ಗ ಎ, ಬಿ ಮತ್ತು ಸಿ ಎಂದು ನಮೂದಿಸಿದ ಜಾತಿ ಪ್ರಮಾಣಪತ್ರಗಳು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಅದ್ಯಕ್ಷ ವಿಲಾಸ್ ರಾಠೋಡ್, ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ಚವ್ಹಾಣ, ಸುಭಾಷ್ ಆಡೆ, ಭೊವಿ ವಡ್ಡರ ಸಮಾಜದ ಸಂಜೀವ್ ಸಿಂಧೆ, ರಾಜಕುಮಾರ್ ಸಿಂಧೆ, ವೆಂಕಟ್ ಸಿಂಧೆ, ದತ್ತು ಪವಾರ್, ಪ್ರಕಾಶ್ ಸಂಪಂಗೆ, ಸುರೇಶ್ ಚವ್ಹಾಣ, ಚಂದು ಸಂಪಂಗೆ, ಸಂಜು ಸಿಂದೆ, ಪ್ರಮುಖರಾದ ಸಿದ್ದಪ್ಪ ಪೋಚಮ್ಮ, ಸಂತೋಷ ಮಾನೆ, ಪ್ರಕಾಶ್ ಯದವಾ, ಜಗನ್ನಾಥ್ ಸಂಪಂಗೆ, ಲಾಲು ರಾಮಲೆ, ರಂಗಲಾಲ್ ಜಾಧವ್, ವಿಶ್ವನಾಥ್ ಸಂಪಂಗೆ, ನಾಗನಾಥ್ ಸಂಪಂಗೆ, ಸುನೀಲ್ ಬುಡ್ಡಣ್ಣ, ವಿಲಾಸ್ ರಾಠೋಡ್, ಸುಭಾಷ್ ರಾಠೋಡ್, ಮಾನಾಜಿ ಚವ್ಹಾಣ, ವಿಜಯಕುಮಾರ್ ಜಾಧವ್, ಸಂತೋಷ್ ಮಾನೆ, ಮುಕೇಶ್ ಚವ್ಹಾಣ ಹಾಗೂ ಬಸವರಾಜ್ ಸಂಪಂಗೆ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ತಮಿಳುನಾಡು ವಿಧಾನಸಭಾ ಚುನಾವಣೆ| ಸಿಪಿಐಗೆ 5 ಸ್ಥಾನಗಳನ್ನು ನೀಡಿದ ಡಿಎಂಕೆ
ಚೆನ್ನೈ, ಮಾ. 18: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಡಳಿತಾರೂಢ ಡಿಎಂಕೆ ಸಿಪಿಐಗೆ ಐದು ಸ್ಥಾನಗಳನ್ನು ನೀಡಿದೆ. ಇದು 2021ರ ಚುನಾವಣೆಯಲ್ಲಿ ಸಿಪಿಐ ಸ್ಪರ್ಧಿಸಿದ ಸ್ಥಾನಗಳಿಗಿಂತ ಒಂದು ಕಡಿಮೆಯಾಗಿದೆ. ಸ್ಥಾನ ಹಂಚಿಕೆ ಒಪ್ಪಂದಕ್ಕೆ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಉಭಯ ಪಕ್ಷಗಳ ಹಿರಿಯ ನಾಯಕರ ಸಮ್ಮುಖದಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡಿಯನ್ ಸಹಿ ಹಾಕಿದರು. ಎರಡೂ ಪಕ್ಷಗಳ ಸುದೀರ್ಘ ಚೌಕಾಸಿಯ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ತನಗೆ ಎರಡಂಕಿಯ ಸ್ಥಾನಗಳು ಬೇಕೆಂದು ಸಿಪಿಐ ಕೋರಿತ್ತು. ಆದರೆ, ನಾಲ್ಕು ಸ್ಥಾನಗಳೊಂದಿಗೆ ಡಿಎಂಕೆ ತನ್ನ ಮಾತುಕತೆಯನ್ನು ಆರಂಭಿಸಿತು. ಮೈತ್ರಿಕೂಟಕ್ಕೆ ಹೊಸದಾಗಿ ಡಿಎಂಡಿಕೆ ಮತ್ತು ಎಮ್ಎನ್ಎಮ್ ಪಕ್ಷಗಳನ್ನು ಸೇರಿಸಿಕೊಂಡಿರುವುದರಿಂದ ಹೆಚ್ಚು ಸ್ಥಾನಗಳನ್ನು ಕೊಡಲು ಸಾಧ್ಯವಾಗುವುದಿಲ್ಲ ಎಂದು ಡಿಎಂಕೆ ಸಿಪಿಐಗೆ ತಿಳಿಸಿತು. ಹಾಲಿ ವಿಧಾನಸಭೆಯಲ್ಲಿ ಸಿಪಿಐ ಎರಡು ಸ್ಥಾನಗಳನ್ನು ಹೊಂದಿದೆ.
ಹೊಸದಿಲ್ಲಿ, ಮಾ. 18: ಬೆಂಗಳೂರಿನಲ್ಲಿರುವ ಎಚ್ಎಎಲ್, ಜಕ್ಕೂರು, ವಾಯುನೆಲೆ, ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಕಟ್ಟಡಗಳ ಎತ್ತರದ ಮಿತಿಯಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದು, ಈ ಮಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು. ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿವರೊಂದಿಗೆ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಎಚ್ಎಎಲ್ನಿಂದ ಎತ್ತರದ ಮಿತಿ ಬಗ್ಗೆ ಚರ್ಚೆ ಮಾಡಿದೆವು. ಹೈದರಾಬಾದ್, ಮುಂಬೈ ಸೇರಿದಂತೆ ಬೇರೆ ಕಡೆಗಳಲ್ಲಿ ಮಿತಿ ಕಡಿಮೆ ಇದೆ. ಬೇರೆ ನಗರಗಳಲ್ಲಿ ಇರುವಂತೆ ಬೆಂಗಳೂರಿನಲ್ಲೂ ಎತ್ತರದ ಮಿತಿ ಇರಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಈ ಕಟ್ಟಡ ಎತ್ತರದ ಮಿತಿಯಿಂದಾಗಿ ಬೆಂಗಳೂರಿನಲ್ಲಿ ನಾಗರಿಕರು ಪ್ರೀಮಿಯಂ ಎಫ್ಎಆರ್ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದ ಸರಕಾರಕ್ಕೂ ಹಣ ಬರುತ್ತಿಲ್ಲ. ಕೇಂದ್ರ ಸರಕಾರವೇ ಎಫ್ಎಆರ್ ಕಡಿಮೆ ಮಾಡಿ ಪ್ರೀಮಿಯಂ ಎಫ್ಎಆರ್ ಹೆಚ್ಚಿಸಿ ಎಂದು ಹೇಳುತ್ತದೆ. ಹೀಗಾಗಿ ನಾವು ಅನೇಕ ತೀರ್ಮಾನ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿರುವೆ. ಅವರು ರಕ್ಷಣಾ ಮಂತ್ರಿ ಜತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು. ನಮ್ಮ ಅಧಿಕಾರಿಗಳು ಎಚ್ಎಎಲ್ ಜತೆ ಚರ್ಚೆ ಮಾಡಿದ್ದಾರೆ. ನಾನು ಕೂಡ ರಕ್ಷಣಾ ಸಚಿವರ ಭೇಟಿಗೆ ಸಮಯ ತೆಗೆದುಕೊಂಡು ನಮ್ಮ ಈ ಸಮಸ್ಯೆಗಳನ್ನು ಅವರಿಗೆ ವಿವರಿಸುತ್ತೇನೆ. ಬೆಂಗಳೂರಿನ ಅಭಿವೃದ್ಧಿಗಾಗಿ ನಾವು ಒಂದು ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು. ಬೆಂಗಳೂರು ಬೆಳವಣಿಗೆ ಹಾಗೂ ಸಂಚಾರ ದಟ್ಟಣೆ ನಿವಾರಣೆ ಮಾಡಬೇಕಿದೆ. ಹೊರವಲಯದಲ್ಲಿ ಬಡಾವಣೆಗಳು ಹೆಚ್ಚುತ್ತಿವೆ. ಅಲ್ಲೆಲ್ಲ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಎಚ್ಎಎಲ್, ಜಕ್ಕೂರು, ಯಲಹಂಕದ ವಾಯುನೆಲೆ ಹಾಗೂ ದೇವನಹಳ್ಳಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣವಿದೆ. ಈ ಸುತ್ತಮುತ್ತಲ ಪ್ರದೇಶದಲ್ಲಿ ಎತ್ತರದ ಕಟ್ಟಡ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಸರಕಾರಕ್ಕೆ ಸಹಕಾರ ನೀಡದ ನೈಸ್ ಸಂಸ್ಥೆಗೆ ತಕ್ಕ ಉತ್ತರ : ನಾನು ಸ್ಕೈಡೆಕ್ ಮಾಡಲು ಎರಡೂವರೆ ವರ್ಷಗಳಿಂದ ಪ್ರಯತ್ನಪಟ್ಟ ಬಳಿಕ ಈಗ ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಿಸಲು ಮುಂದಾಗಿದ್ದೇವೆ. ವಿಮಾನ ನಿಲ್ದಾಣ ಸುತ್ತಮುತ್ತ 20 ಕಿ.ಮೀ ದೂರದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಎನ್ಜಿಇಎಫ್ ಬಳಿ ಸ್ಕೈಡೆಕ್ ಮಾಡಲು ಜಾಗ ಉತ್ತಮವಾಗಿತ್ತುಮ ಮೆಟ್ರೋ ಸೌಲಭ್ಯವಿತ್ತು ಎಂದು ಅವರು ತಿಳಿಸಿದರು. ಜತೆಗೆ ನೈಸ್ ರಸ್ತೆ ಬಳಿಯ ಸೋಂಪುರ ವೃತ್ತದ ಬಳಿ ನಿರ್ಮಾಣಕ್ಕೆ ಸಲಹೆ ನೀಡಿದ್ದರು. ಆದರೆ ನೈಸ್ ಸಂಸ್ಥೆಯವರು ಸಹಕಾರ ನೀಡಲಿಲ್ಲ. ನೈಸ್ ಸಂಸ್ಥೆ ವಿಚಾರವಾಗಿ ಏನು ಮಾಡಬೇಕು ಎಂದು ಮುಂದೆ ತೀರ್ಮಾನ ಮಾಡುತ್ತೇವೆ. ಅವರು ನಿರಾಕ್ಷೇಪಣ ಪತ್ರವನ್ನು ನೀಡಲಿಲ್ಲ. ಸರಕಾರಕ್ಕೆ ಸಹಕಾರ ನೀಡದವರಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಶಿವಕುಮಾರ್ ಹೇಳಿದರು. ಅಂತರ್ರಾಷ್ಟ್ರೀಯ ಮಟ್ಟದಲ್ಲಿರುವ ಮಾರ್ಗಸೂಚಿ ಹಾಗೂ ದೇಶದ ಇತರೆ ನಗರಗಳಲ್ಲಿ ಇರುವ ಮಾರ್ಗಸೂಚಿ ಬಗ್ಗೆ ಅಧ್ಯಯನ ಮಾಡುತ್ತಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಮುಂದಿನ ಒಂದು ವಾರದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ನಮ್ಮ ಅಧಿಕಾರಿಗಳಿಗೂ ಭಾಗವಹಿಸಲು ಹೇಳಿದ್ದಾರೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಬರುತ್ತಿದ್ದು, ಭೂ ಸಂತ್ರಸ್ತರು ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಮುಂದಾಗುತ್ತಾರೆ. ಅವರಿಗೆ ಎತ್ತರದ ಮಿತಿ ಇದ್ದರೆ ಕಷ್ಟವಾಗುತ್ತದೆ ಎಂದು ಅವರು ತಿಳಿಸಿದರು. ಎರಡನೇ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ: ಬೆಂಗಳೂರಿನಲ್ಲಿ ಎರಡನೇ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ವಿಚಾರವಾಗಿ ಕೇಂದ್ರ ಸರಕಾರ ತಮ್ಮ ಅಭಿಪ್ರಾಯ ಕಳುಸಿದ್ದು, ನೀವೇ ಜಾಗ ನಿಗದಿ ಮಾಡಿ ಎಂದು ಹೇಳಿದೆ. ನಮ್ಮ ಬಳಿ ಎರಡು ಮೂರು ಆಯ್ಕೆಗಳಿದ್ದು, ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಸರಕಾರ ತೀರ್ಮಾನ ಮಾಡಲಿದೆ. ಈ ವಿಮಾನ ನಿಲ್ದಾಣ ನಿರ್ಮಾಣದ ಜವಾಬ್ದಾರಿ ಸಚಿವ ಎಂ.ಬಿ. ಪಾಟೀಲ್ ನೋಡಿಕೊಳ್ಳುತ್ತಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. 25 ವರ್ಷಗಳು ಪೂರ್ಣಗೊಳ್ಳುವವರೆಗೆ ಹೊಸ ವಿಮಾನ ನಿಲ್ದಾಣ ಹಾಗೂ ಅಭಿವೃದ್ಧಿಕರಣ ಮಾಡುವಂತಿಲ್ಲ ಎಂಬ ವಿಚಾರ ಚರ್ಚೆಯಾಯಿತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2033ಕ್ಕೆ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 25 ವರ್ಷ ಪೂರ್ಣಗೊಳ್ಳಲಿದೆ. ಅಷ್ಟು ಹೊತ್ತಿಗೆ ನಾವು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಭೂಸ್ವಾಧೀನ ಸೇರಿದಂತೆ ಎಲ್ಲ ಕೆಲಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಫೆ.28ರಿಂದ 2.6 ಲಕ್ಷ ಜನರು ಪಶ್ಚಿಮ ಏಷ್ಯಾದಿಂದ ಭಾರತಕ್ಕೆ ವಾಪಸ್: ಕೇಂದ್ರ ಸರಕಾರ ಮಾಹಿತಿ
ಹೊಸದಿಲ್ಲಿ, ಮಾ. 18: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಬುಧವಾರ ಕೇಂದ್ರ ಸರಕಾರ, ಫೆ.28ರಿಂದ ಈ ವಲಯದಿಂದ ಸುಮಾರು 2.6 ಲಕ್ಷ ಜನರು ಭಾರತಕ್ಕೆ ಹಿಂದಿರುಗಿದ್ದಾರೆ ಎಂದು ಹೇಳಿದೆ. ಇಲ್ಲಿ ಪಶ್ಚಿಮ ಏಷ್ಯಾದ ಪರಿಸ್ಥಿತಿ ಕುರಿತು ಸಚಿವಾಲಯಗಳ ಮಟ್ಟದಲ್ಲಿ ಸಮಾಲೋಚನೆ ನಡೆಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್. ಮಹಾಜನ್, ಯುಎಇಯ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ಸುಮಾರು 70 ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ನಡುವಿನ ದೂರವಾಣಿ ಸಂಭಾಷಣೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ ಎಂದು ಹೇಳಿದರು. ‘‘ಇಬ್ಬರು ನಾಯಕರು ಪಶ್ಚಿಮ ಏಷ್ಯಾದ ಪ್ರಸಕ್ತ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಮಾಯಕ ಜನರ ಸಾವಿಗೆ ಹಾಗೂ ಮೂಲಭೂತ ಸೌಲಭ್ಯಗಳಿಗೆ ಹಾನಿ ಉಂಟಾಗಲು ಕಾರಣವಾದ ಯುಎಇ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುವುದಾಗಿ ಪ್ರಧಾನಿ ಪುನರುಚ್ಛರಿಸಿರುವುದಾಗಿ ಅವರು ಹೇಳಿದ್ದಾರೆೆ’’ ಎಂದು ಅವರು ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಹಾಗೂ ಮುಕ್ತ ಸಂಚಾರದ ಖಾತರಿಯ ಪ್ರಾಮುಖ್ಯತೆಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ಈ ವಲಯದಲ್ಲಿ ಶಾಂತಿ, ಸುರಕ್ಷತೆ ಹಾಗೂ ಸ್ಥಿರತೆಯನ್ನು ಶೀಘ್ರದಲ್ಲಿ ಮರು ಸ್ಥಾಪಿಸಲು ಇಬ್ಬರೂ ನಾಯಕರು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಜೈಸ್ವಾಲ್ ತಿಳಿಸಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷರೊಂದಿಗೆ ಮಾತನಾಡುತ್ತಿರುವುದು ಇದು ಎರಡನೇ ಬಾರಿ.
‘ಉನ್ನತ ಅಧಿಕಾರಿಗಳ ಯೋಜಿತ ಹತ್ಯೆಗಳಿಂದ ಇರಾನ್ ಸರಕಾರಕ್ಕೆ ಹಿನ್ನಡೆಯಾಗದು’: ಸಚಿವ ಅಬ್ಬಾಸ್ ಅರಾಘ್ಚಿ
ಟೆಹರಾನ್,ಮಾ.18: ಭದ್ರತಾ ವರಿಷ್ಠ ಅಲಿ ಲಾರಿಜಾನಿ ಸೇರಿದಂತೆ ಉನ್ನತ ಅಧಿಕಾರಿಗಳ ಹತ್ಯೆಗಳಿಂದ ಇರಾನ್ ಸರಕಾರಕ್ಕೆ ಹಿನ್ನಡೆಯಾಗಲಾರದು ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಇರಾನ್ನ ಆಡಳಿತವು ಸಂಸ್ಥೆಗಳನ್ನು ಆಧರಿಸಿದೆಯೇ ಹೊರತು ಯಾವುದೇ ವ್ಯಕ್ತಿಗಳನ್ನಲ್ಲ. ಅಮೆರಿಕ ಹಾಗೂ ಇಸ್ರೇಲ್ನ ದಾಳಿಗಳು, ಇರಾನ್ ನ ಆಡಳಿತ ವ್ಯವಸ್ಥೆಯನ್ನು ಅಲುಗಾಡಿಸಲಾರದು. ದೇಶದ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ಹೊರತಾಗಿಯೂ ಇರಾನ್ ಆಡಳಿತದ ಕಾರ್ಯನಿರ್ವಹಣೆ ಯಥಾಪ್ರಕಾರ ಮುಂದುವರಿದಿದೆಯೆಂದು ಅವರು ಹೇಳಿದ್ದಾರೆ. ಇರಾನ್ನ ಹಿರಿಯ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹಾಗೂ ಬಸ್ಜಿ ಸ್ವಯಂಸೇವಕಪಡೆಯ ವರಿಷ್ಠ ಗುಲಾಮ್ರೆಝಾ ಸೊಲೈಮನಿ ಅವರು ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಬೆನ್ನಲ್ಲೇ ಅಬ್ಬಾಸ್ ಅರಾಘ್ಚಿ ಈ ಹೇಳಿಕೆ ನೀಡಿದ್ದಾರೆ. ‘‘ ಇಸ್ಲಾಮಿಕ್ ಗಣರಾಜ್ಯವು ಸ್ಥಾಪಿತವಾದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಂಸ್ಥಾಪನೆಗಳನ್ನೊಳಗೊಂಡ ಬಲವಾದ ರಾಜಕೀಯ ಸಂರಚನೆ ಹೊಂದಿದೆ ಯಾವುದೇ ವ್ಯಕ್ತಿಯ ಅನುಪಸ್ಥಿತಿಯು ಈ ಸಂರಚನೆಯ ಮೇಲೆ ಪ್ರಭಾವ ಬೀರುವುದಿಲ್ಲವೆಂದು ಅವರು ಹೇಳಿದ್ದಾರೆ. ನಮಗೆ ಸರ್ವೋಚ್ಚ ನಾಯಕನಿಗಿಂತ ಬಹುಮುಖ್ಯವಾದ ವ್ಯಕ್ತಿ ಮತ್ತೊಬ್ಬರಿಲ್ಲ. ಒಂದು ವೇಳೆ ಸರ್ವೋಚ್ಚ ನಾಯಕ ಹುತಾತ್ಮನಾದರೂ ವ್ಯವಸ್ಥೆಯು ಅದರ ಕೆಲಸವನ್ನು ಮುಂದುವರಿಸುತ್ತದೆ ಹಾಗೂ ಮಂದಿನ ನಾಯಕನ ಆಯ್ಕೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಅರಾಘ್ಚಿ ತಿಳಿಸಿದರು.
Basavakalyan| ಬೈಕ್- ಟಿಪ್ಪರ್ ನಡುವೆ ಢಿಕ್ಕಿ: ಸ್ಥಳದಲ್ಲೇ ದಂಪತಿ ಮೃತ್ಯು
ಬಸವಕಲ್ಯಾಣ: ನಗರದಲ್ಲಿ ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ದಂಪತಿ ಸಾವನ್ನಪ್ಪಿದ್ದ ಘಟನೆ ಬುಧವಾರ ನಗರದ ಜಿಜಾಮಾತಾ ಶಾಲೆ ಬಳಿ ನಡೆದಿದೆ. ದಸ್ತಗಿರ (35) ಹಾಗು ಯಾಸ್ಮಿನ್ (33) ಮೃತಪಟ್ಟ ದಂಪತಿ ಎಂದು ಗುರುತಿಸಲಾಗಿದೆ. ಬಸವಕಲ್ಯಾಣದ ತ್ರಿಪುರಾಂತ್ ನಿಂದ ಖಡಿ ಝಂಡಾ ಬಳಿ ದ್ವಿಚಕ್ರ ವಾಹನದ ಮೆಲೆ ತೆರಳುತ್ತಿದ್ದ ದಂಪತಿಗೆ ಹಿಂದಿನಿಂದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಸವಕಲ್ಯಾಣ ನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಾರ್ಮುಝ್ ಜಲಸಂಧಿ ಮುಕ್ತಗೊಳಿಸಲು NATO ಸಹಾಯದ ಅಗತ್ಯವಿಲ್ಲ : ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್,ಮಾ.18: ಇರಾನ್ ವಿಚಾರವಾಗಿ ನೇಟೊ ಸೇನಾ ಮೈತ್ರಿಕೂಟವು ಮೂರ್ಖತನವನ್ನು ಪ್ರದರ್ಶಿಸುತ್ತಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್ನ ದಿಗ್ಬಂಧನದಲ್ಲಿರುವ ಹಾರ್ಮುಝ್ ಜಲಸಂಧಿಯನ್ನು ಮರಳಿ ತೆರೆಯುವ ಪ್ರಯತ್ನಕ್ಕೆ ಕೈಜೋಡಿಸಬೇಕೆಂಬ ತನ್ನ ಮನವಿಗೆ ಸ್ಪಂದಿಸಿದ ನೇಟೋ ಸದಸ್ಯ ರಾಷ್ಟ್ರಗಳ ವಿರುದ್ಧ ತೀವ್ರ ಕಿಡಿಕಾರಿರುವ ಅವರು, ಅಮೆರಿಕಕ್ಕೆ ಇತರರ ನೆರವಿನ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿರುವ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಬೆಂಗಾವಲು ಒದಗಿಸುವಂತೆ ತನ್ನ ಮನವಿಯನ್ನು ಅಮೆರಿಕದ ಬಹುತೇಕ ಜೊತೆಗಾರ ರಾಷ್ಟ್ರಗಳು ತಿರಸ್ಕರಿಸಿವೆ ಎಂದು ಟ್ರಂಪ್ ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಕೂಡಾ ಪರಿಸ್ಥಿತಿ ಶಾಂತವಾಗುವವರೆಗೆ ತನ್ನ ದೇಶವು ಹಾಗೆ ಮಾಡಲಾರದು ಎಂದು ಹೇಳಿದ್ದರು. ಐಯರ್ಲ್ಯಾಂಡ್ನ ಪ್ರಧಾನಿ ಮೈಕೆಲ್ ಮಾರ್ಟಿನ್ ಅವರ ಓವಲ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ ನೇಟೋ ಅತ್ಯಂತ ಮೂರ್ಖತನದ ನಿರ್ಧಾರವನ್ನು ಕೈಗೊಂಡಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನೇಟೋ ಯಾವತ್ತಾದರೂ ನಮಗೆ ಜೊತೆಗೂಡಿತ್ತೇ ಎಂದು ನಾನು ಅಚ್ಚರಿಪಟ್ಟಿದ್ದೆ. ಹೀಗಾಗಿ ಈ ಸಂದರ್ಭವು ಒಂದು ದೊಡ್ಡ ಪರೀಕ್ಷೆಯಾಗಿದೆ ಎಂದು ನಾನು ದೀರ್ಘಸಮಯದಿಂದಲೂ ಹೇಳುತ್ತಾ ಬಂದಿದ್ದೇನೆ ಎಂದರು . ಇರಾನ್ ವಿರುದ್ಧ ಏಕಾಂಗಿಯಾಗಿ ಹೋರಾಡಲು ಅಮೆರಿಕ ಸಿದ್ಧವಿದೆ ಎಂದು ಹೇಳಿದ ಅವರು, ಇಸ್ಲಾಮಿಕ್ ರಿಪಬ್ಲಿಕ್ ಆಡಳಿತದ ಅಣುಶಕ್ತಿ ಕಾರ್ಯಕ್ರಮವನ್ನು ಎದುರಿಸಬೇಕಾದ ಅಗತ್ಯವಿದೆಯೆಂಬುದನ್ನು ನೇಟೋ ಮಿತ್ರ ರಾಷ್ಟ್ರಗಳು ಒಪ್ಪಿಕೊಂಡಿದ್ದವು ಎಂದು ಹೇಳಿದರು. ಐಯರ್ಲ್ಯಾಂಡ್ ಪ್ರಧಾನಿ ಜೊತೆ ಮಾತುಕತೆಗೆ ಮುನ್ನ ಟ್ರಂಪ್ ಅವರು ತನ್ನ ‘ಟ್ರೂಥ್ ಸೋಶಿಯಲ್’ ಸಾಮಾಜಿಕ ಜಾಲತಾಣವೊಂದರಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ಇರಾನ್ ಯುದ್ಧದಲ್ಲಿ ಅಮೆರಿಕ ಪಡೆಗಳಿಗೆ, ಸೇನಾ ನೆರವಿನ ಅಗತ್ಯವಿರುವುದಿಲ್ಲವೆಂದು ಹೇಳಿದ್ದರು. ಇರಾನ್ ಯುದ್ಧದಲ್ಲಿ ಭಾಗಿಯಾಗಲು ಜಪಾನ್, ಆಸ್ಟ್ರೇಲಿಯ ಹಾಗೂ ದಕ್ಷಿಣ ಕೊರಿಯ ಮಾತ್ರವಲ್ಲದೆ ಬಹುತೇಕ ನೇಟೊ ಮಿತ್ರ ರಾಷ್ಟ್ರಗಳು ಬಯಸುತ್ತಿಲ್ಲ ಎಂದು ಹೇಳಿದ್ದರು. ದಶಕಗಳ ಇತಿಹಾಸವಿರುವ ನೇಟೊ, ಏಕಮುಖವಾದ ಸೇನಾ ಮೈತ್ರಿಕೂಟವಾಗಿದೆ ಎಂದವರು ಹೇಳಿದ್ದರು.
ಕೆಪಿಎಸ್ಸಿ ಸುಧಾರಣೆಗೆ ಸರ್ವ ಪಕ್ಷದ ಸದನ ಸಮಿತಿ ರಚನೆ : ಸಚಿವ ಕೃಷ್ಣಭೈರೇಗೌಡ
ಬೆಂಗಳೂರು : ಕೆಪಿಎಸ್ಸಿ ಮೂಲಕ ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿಗಳು ಯಾವುದೇ ವಂಚನೆಗಳಿಲ್ಲದೆ ನಡೆಯುವಂತೆ ಮಾಡುವ ಸಲುವಾಗಿ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಿ, ಸಮಿತಿಯ ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಕೆಪಿಎಸ್ಸಿಗೆ ಸುಧಾರಣೆ ತರಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಬುಧವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ಪ್ರಸ್ತಾಪಿಸಿ ಇತ್ತೀಚೆಗೆ ನಡೆದ ಗೆಜೆಟೆಡ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ ಬಹಳಷ್ಟು ಅಭ್ಯರ್ಥಿಗಳು ಆಯ್ಕೆಯಾಗಿರುವುದರಿಂದ ಅಕ್ರಮ ನಡೆದಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗಲಿದೆ. ಮೊದಲಿನಿಂದಲೂ ಇಂತಹ ಘಟನೆಗಳು ಜರುಗುತ್ತಲೇ ಇರುವುದರಿಂದ ಕೆಪಿಎಸ್ಸಿಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಂತೆ ಬದಲಾವಣೆ ತರಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಸಚಿವರು, ಈ ವಿಚಾರವಾಗಿ ಪಕ್ಷಾತೀತವಾಗಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಉತ್ತಮ ಗುಣಮಟ್ಟದ ಚರ್ಚೆಯಾಗಿರುವುದರಿಂದ ಕೆಪಿಎಸ್ಸಿ ಸಂಸ್ಥೆಯಲ್ಲಿ ಸುಧಾರಣೆ ತರುವ ಸಲುವಾಗಿ ಎಲ್ಲರೂ ತಮ್ಮ ಸಲಹೆಗಳನ್ನು ನೀಡುವ ಸಲುವಾಗಿ ಕೂಡಲೇ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಲಾಗುವುದು. ಸದನ ಸಮಿತಿಯ ಸಭೆಯಲ್ಲಿ ನೀವು ನೀಡಿದ ಸಲಹೆಗಳನ್ನು ಅಳವಡಿಸಿಕೊಂಡು ಕೆಪಿಎಸ್ಸಿಯ ಕಾರ್ಯವೈಖರಿಯಲ್ಲಿ ಸುಧಾರಣೆ ತರಲಾಗುವುದು. ಸಮಿತಿಯಿಂದ ಮುಂದಿನ ಅಧಿವೇಶನದ ಒಳಗೆ ವರದಿಯನ್ನು ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು. ಹಿಂದೆ ತಾವು ಕೃಷಿ ಸಚಿವರಾಗಿದ್ದಾಗ 120 ಮಂದಿ ಕೃಷಿ ಅಧಿಕಾರಿಗಳ ನೇಮಕಾತಿಯನ್ನು ಕೆಪಿಎಸ್ಸಿ ಮೂಲಕ ಹಿಂಪಡೆದು ಕೆಇಎ ಮೂಲಕ ಒಂದೂ ದೂರು ಬಾರದ ರೀತಿಯಲ್ಲಿ ಪಾರದರ್ಶಕವಾಗಿ ನೇಮಕಾತಿಯನ್ನು ಮಾಡಲಾಗಿತ್ತು. ಈಗ ಕಂದಾಯ ಸಚಿವರಾಗಿದ್ದು, ಕಳೆದ ವರ್ಷದಲ್ಲಿಯೇ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಕೆಇಎ ಮೂಲಕವೇ ಒಂದೂ ವಿವಾದಗಳಿಲ್ಲದಂತೆ ನೇಮಕಾತಿಯನ್ನು ಮಾಡಿದ್ದೇವೆ. ಹಾಗಾಗಿ ನಾನೇ ಕೆಪಿಎಸ್ಸಿ ಬಿಟ್ಟು ಕೆಇಎ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿರುವುದು ನನಗೂ ಕೆಪಿಎಸ್ಸಿಯ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುತ್ತದೆ. ಈಗ ಕೆಪಿಎಸ್ಸಿ ಬಗ್ಗೆ ನಾನೇ ಉತ್ತರ ನೀಡುವಾಗ ನನಗೆ ಜಿಜ್ಞಾಸೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಕ್ರಮ ನಡೆದಿದೆ ಎಂದು ಹೇಳದ ಪರೀಕ್ಷಾ ಕೊಠಡಿಯಲ್ಲಿರುವ ಸಿಸಿ ಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಅಕ್ರಮ ನಡೆದಿರುವುದು ಕಂಡುಬಂದಿಲ್ಲ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಲ್ಲಿ ಯಾರೂ ಒಂದೇ ಕುಟುಂಬದವರು ಇಲ್ಲ. ಆದರೂ ಕೆಪಿಎಸ್ಸಿ ಕಾರ್ಯವೈಖರಿ ಮೇಲೆ ದೂರುಗಳು ಬರುತ್ತಲೇ ಇರುವುದರಿಂದ ಅದರ ಸುಧಾರಣೆಗೆ ಸರಕಾರ ಖಂಡಿತವಾಗಿ ಕ್ರಮವಹಿಸಲಿದೆ ಎಂದು ಸಚಿವರು ಹೇಳಿದರು.
ಉಡುಪಿ| ಗ್ಯಾಸ್ ಬಿಲ್ ಬಾಕಿ ಹೆಸರಿನಲ್ಲಿ 9.78 ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ: ಗ್ಯಾಸ್ ಬಿಲ್ ಬಾಕಿ ಎಂದು ಹೇಳಿ ಸಂದೇಶ ಕಳುಹಿಸಿ ಲಕ್ಷಾಂತರ ರೂ. ಹಣ ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಿಯಾಳಿಯ ರವಿದಾಸ್ ರಾಘವೇಂದ್ರ ನಾಯಕ್ ಎಂಬವರಿಗೆ ಮಾ.17ರಂದು ಮೊಬೈಲ್ನಿಂದ ಅಪರಿಚತ ವ್ಯಕ್ತಿ ಕರೆ ಮಾಡಿ ನಿಮ್ಮ ಗ್ಯಾಸ್ ಬಿಲ್ 20ರೂ. ಬಾಕಿಯಾಗಿದೆ ಎಂದು ಹೇಳಿ ಗ್ಯಾಸ್ ಬಿಲ್ ಕಟ್ಟುವಂತೆ ತಿಳಿಸಿದರು. ಬಳಿಕ ವಾಟ್ಸಾಪ್ನಲ್ಲಿ ಗ್ಯಾಸ್ ಬಿಲ್ ಬಾಕಿ ಬಗ್ಗೆ ಮೆಸೇಜ್ ಮಾಡಿದ್ದು, ಎಪಿಕೆ ಪೈಲ್ ಕಳುಹಿಸಿದ್ದರು. ಇದನ್ನು ರವಿದಾಸ್ ಕ್ಲಿಕ್ ಮಾಡಿದಾಗ ಅವರ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 9,78,036ರೂ. ಹಣವವನ್ನು ಬೇರೆ ಖಾತೆಗೆ ವರ್ಗಾಯಿಸಿ ಮೋಸ ಮಾಡಲಾಗಿದೆ ಎಂದು ದೂರಲಾಗಿದೆ.
ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಮಲ್ಪೆ, ಮಾ.18: ವಯೋಸಹಜ ಖಾಯಿಲೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಬಡಾನಿಡಿಯೂರು ಗ್ರಾಮದ ಶಿವರುದ್ರಮ್ಮ(88) ಎಂಬವರು ಮಾನಸಿಕವಾಗಿ ನೊಂದು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಂಕರನಾರಾಯಣ: ಅನಾರೋಗ್ಯದಿಂದ ಬಳಲುತ್ತಿದ್ದ ಆಜ್ರಿ ಗ್ರಾಮದ ಹೊಳೆಕೋಣು ನಿವಾಸಿ ರಾಮ ಪೂಜಾರಿ(78) ಎಂಬವರು ಮಾ.17ರಂದು ರಾತ್ರಿ ಮನೆಯ ಶೆಡ್ ನ ಕಟ್ಟಿಗೆಯ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Budget Session 2026 | ಜಯಂತಿಗಳಲ್ಲಿ ಡಿಜೆ ನಿಷೇಧಕ್ಕೆ ಸಚಿವ ಪಟ್ಟು: ವಿಧಾನಸಭೆಯಲ್ಲಿ ಮಾತಿನ ಚಕಮಕಿ
ಬೆಂಗಳೂರು : ರಾಜ್ಯದಲ್ಲಿ ಆಚರಿಸುತ್ತಿರುವ ಎಲ್ಲ ಜಯಂತಿಗಳಲ್ಲಿ ಡಿಜೆ, ಅಶ್ಲೀಲ ನೃತ್ಯ(ಐಟಂ ಸಾಂಗ್) ಕಡ್ಡಾಯವಾಗಿ ನಿಷೇಧಿಸಿ ಎಂದು ಸಚಿವ ಸಂತೋಷ್ ಲಾಡ್ ಆಗ್ರಹ ವಿಚಾರವು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸುವ ಉತ್ಸವಗಳಿಗೆ ಅನುದಾನ ವಿಚಾರವಾಗಿ ಕೇಳಿದ ಪ್ರಶ್ನೆಯ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಸಚಿವ ಸಂತೋಷ್ ಲಾಡ್, ʼಎಲ್ಲ ಜಯಂತಿಗಳಲ್ಲಿ ಡಿಜೆ ಬಹಳ ದೊಡ್ಡ ಸಮಸ್ಯೆ ಆಗಿದೆ. ರಾಜಕೀಯವಾಗಿ ಈ ಬಗ್ಗೆ ವಿಚಾರ ಮಾಡಬೇಕು. ಯಾವುದೇ ಜಯಂತಿಗಳಲ್ಲಿ ಡಿಜೆಗಳಲ್ಲಿ, ಅಶ್ಲೀಲ ನೃತ್ಯ ಇಲ್ಲದೆ ದೇವರ ಮುಂದೆ ಹೋಗಲ್ಲ. ಇದು ಯಾವುದೇ ಸಂಸ್ಕೃತಿಗೆ ಒಳ್ಳೆಯದಲ್ಲʼ ಎಂದು ಸದನದ ಗಮನ ಸೆಳೆದರು. ಇದನ್ನು ಬೆಂಬಲಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಇದೊಂದು ಉತ್ತಮವಾದ ಸಲಹೆಯಾಗಿದೆ. ಬಿಜೆಪಿ ನಾಯಕರು ಇದಕ್ಕೆ ಸ್ವಲ್ಪ ಸಹಕಾರ ಮಾಡಬೇಕು. ಎಲ್ಲರೂ ಒಪ್ಪಿಗೆ ನೀಡಿದರೆ ನಾವು ಆದೇಶ ಹೊರಡಿಸುತ್ತೇವೆ ಎಂದರು. ಸಚಿವ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶ ಮಾಡಿ, ನಮ್ಮಲ್ಲಿ ಡಿಜೆ ಸಂಸ್ಕೃತಿ ಇರಲಿಲ್ಲ. ಡಿಜೆ ಸಂಸ್ಕೃತಿ ಈಗ ಹುಟ್ಟಿದ್ದು. ಡಿಜೆಗಳಲ್ಲಿ ಹಾಕುವ ಹಾಡುಗಳ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಹೊರತು ಭಜನೆ ಪದ್ಯಕ್ಕೆ ಯಾರೂ ಬೇಡ ಎನ್ನುತ್ತಿಲ್ಲ ಎಂದು ಉಲ್ಲೇಖಿಸಿದರು. ಈ ವೇಳೆ ಬಿಜೆಪಿ ಸದಸ್ಯ ಚನ್ನಬಸಪ್ಪ (ಚೆನ್ನಿ) ಆಕ್ಷೇಪ ವ್ಯಕ್ತಪಡಿಸಿ, ಡಿಜೆ ಮಾತ್ರ ಏಕೆ? ಸುಪ್ರೀಂ ಕೋರ್ಟ್ ಆದೇಶದಲ್ಲಿ ಆಝಾನ್ ಧ್ವನಿವರ್ಧಕ ನಿಷೇಧ ಮಾಡಿ ಎಂದಿದೆ. ಇದನ್ನು ಮಾಡುವಿರಾ ಎಂದು ಸವಾಲು ಹಾಕಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸ್ಪೀಕರ್ ಖಾದರ್, ಸುಪ್ರೀಂ ಕೋರ್ಟ್ ಆದೇಶ ಶಬ್ಧದ ಪ್ರಮಾಣಕ್ಕೆ ಸಂಬಂಧಿಸಿದಂತದ್ದು. ಸರಕಾರ ಆದೇಶ ಮಾಡಿದರೆ ಅದನ್ನು ಪಾಲನೆ ಮಾಡಬೇಕು ಎಂದರು. ಡಿಜೆ ಶಬ್ಧದಿಂದಲೇ ಹೃದ್ರೋಗ.: ಡಿಜೆ ಶಬ್ಧ ಹೃದ್ರೋಗ ಸಮಸ್ಯೆ ಇರುವವರಿಗೆ ಹಾಗೂ ಫೇಸ್ ಮೇಕರ್ ಹಾಕಿದವರಿಗೆ ತುಂಬಾ ತೊಂದರೆ ಆಗುತ್ತಿದೆ. ಎಳೆಯ ಮಕ್ಕಳು ಕಿವಿ ಮುಚ್ಚಿಕೊಳ್ಳುತ್ತಾರೆ. ಪೊಲೀಸರು ನಿಸ್ಸಾಹಕರಾಗಿದ್ದಾರೆ. ಡಿಜೆ ಶಬ್ಧ ಮಾಲಿನ್ಯ ಹಾಗೂ ದುಷ್ಪರಿಣಾಮದ ಬಗ್ಗೆ ಗಂಭೀರ ಚರ್ಚೆ ಆಗಬೇಕು ಎಂದು ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಆಗ್ರಹಿಸಿದರು. ಆಗ ಸ್ಪೀಕರ್ ಯು.ಟಿ.ಖಾದರ್, ಈ ಕುರಿತ ಚರ್ಚೆಗೆ ಸಮಯ ನೀಡಲಾಗುವುದು ಎಂದು ಪ್ರಕಟಿಸಿದರು.
Tripura | ಎರಡು ಬಾರಿಯ ಶಾಸಕ ರಾಮ್ ಪಾದ ಜಮಾತಿಯಾ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆ
ಅಗರ್ತಲಾ: ಬಾಗ್ಮಾ (ಪರಿಶಿಷ್ಟ ಪಂಗಡ) ಕ್ಷೇತ್ರದ ಎರಡು ಬಾರಿಯ ಶಾಸಕ ರಾಮ್ ಪಾದ ಜಮಾತಿಯಾ ತ್ರಿಪುರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. 1978ರಲ್ಲಿ ಎಡರಂಗದ ಹಿರಿಯ ನಾಯಕ ಸುಧನ್ಯ ದೆಬ್ಬರ್ಮ ಅವರು ತ್ರಿಪುರ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ, ರಾಮ್ ಪಾದ ಜಮಾತಿಯಾ ಆ ಹುದ್ದೆಗೆ ಆಯ್ಕೆಯಾಗಿರುವ ಎರಡನೇ ಮೂಲನಿವಾಸಿ ನಾಯಕರಾಗಿದ್ದಾರೆ. ಮಾರ್ಚ್ 13ರಂದು ವಿಧಾನಸಭಾ ಅಧಿವೇಶನದ ಮೊದಲ ದಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಾಮ್ ಪಾದ ಜಮಾತಿಯಾ ಅವರ ಹೆಸರನ್ನು ವಿಧಾನಸಭಾ ಸ್ಪೀಕರ್ ಹುದ್ದೆಗೆ ಶಿಫಾರಸು ಮಾಡಿತ್ತು. ಬೇರಾರೂ ಈ ಹುದ್ದೆಗೆ ನಾಮಪತ್ರ ಸಲ್ಲಿಸದಿದ್ದುದರಿಂದ, ಹಂಗಾಮಿ ಸ್ಪೀಕರ್ ರಾಮ್ ಪ್ರಸಾದ್ ಪಾಲ್ ಅವರು ರಾಮ್ ಪಾದ ಜಮಾತಿಯಾ ಅವಿರೋಧವಾಗಿ ಸ್ಪೀಕರ್ ಹುದ್ದೆಗೆ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದ್ದಾರೆ. ನೂತನ ಸ್ಪೀಕರ್ ರಾಮ್ ಪಾದ ಜಮಾತಿಯಾರನ್ನು ಅಭಿನಂದಿಸಿರುವ ಮುಖ್ಯಮಂತ್ರಿ ಮಾಣಿಕ್ ಸಹಾ, “ಅವರ ವ್ಯಾಪಕ ರಾಜಕೀಯ ಅನುಭವ, ವಿವೇಕ ಹಾಗೂ ಬದ್ಧತೆಯು ಸದನದ ಘನತೆಯನ್ನು ಎತ್ತಿ ಹಿಡಿಯಲಿದೆ ಹಾಗೂ ಕಲಾಪಗಳನ್ನು ಸಬಲಗೊಳಿಸಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದ್ದಾರೆ. 2018ರಲ್ಲಿ ಸಿಪಿಎಂ ನಾಯಕ ಹಾಗೂ ಮಾಜಿ ಅರಣ್ಯ ಸಚಿವ ನರೇಶ್ ಜಮಾತಿಯಾರನ್ನು ಬಾಗ್ಮಾ ವಿಧಾನಸಭಾ ಕ್ಷೇತ್ರದಿಂದ ರಾಮ್ ಪಾದ ಜಮಾತಿಯಾ ಪರಾಭವಗೊಳಿಸಿದ್ದರು. 2022ರಿಂದ 2023ರವರೆಗೆ ಅವರು ಮಾಣಿಕ್ ಸಹಾ ಅವರ ಸಂಪುಟದಲ್ಲಿ ಬುಡಕಟ್ಟು ಕಲ್ಯಾಣ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2023ರಲ್ಲಿ ಅವರು ಬಾಗ್ಮಾ ವಿಧಾನಸಭಾ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರು. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ವಿಧಾನಸಭಾ ಸ್ಪೀಕರ್ ಬಿಸ್ವಬಂಧು ಸೇನ್ ಅವರು ಬೆಂಗಳೂರಿನಲ್ಲಿ ಮಿದುಳು ರಕ್ತಸ್ರಾವದಿಂದ ಮೃತಪಟ್ಟ ಬಳಿಕ, ಸ್ಪೀಕರ್ ಹುದ್ದೆ ಖಾಲಿಯಾಗಿತ್ತು. ನಾಲ್ಕು ಬಾರಿಯ ಶಾಸಕರಾಗಿದ್ದ ಬಿಸ್ವಬಂಧು ಸೇನ್ ಅವರು 2018ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2023ರಲ್ಲಿ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದರು.
ಭಯ, ಆತಂಕ ಬೇಡ”: ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ ಕವಿತಾ ಮಣ್ಣಿಕೇರಿ
ವಿಜಯನಗರ: ಜಿಲ್ಲೆಯಾದ್ಯಂತ ಇಂದಿನಿಂದ ಆರಂಭವಾದ ಎಸ್ಸೆಸೆಲ್ಸಿ ಪರೀಕ್ಷೆಗಳ ಹಿನ್ನೆಲೆ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮಣ್ಣಿಕೇರಿ ಅವರು ಪ್ರೇರಣಾದಾಯಕ ಸಂದೇಶ ನೀಡಿದ್ದಾರೆ. “ಪರೀಕ್ಷೆ ಬಗ್ಗೆ ಯಾವುದೇ ಆತಂಕ ಅಥವಾ ಭಯ ಪಡಬೇಡಿ. ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ, ಉತ್ತಮ ಫಲಿತಾಂಶ ಪಡೆದು ಇಡೀ ಜಿಲ್ಲೆಗೆ ಕೀರ್ತಿ ತಂದುಕೊಡಿ. ಜಿಲ್ಲಾಡಳಿತ ಹಾಗೂ ನಾನು ನಿಮ್ಮ ಜೊತೆಗಿದ್ದೇವೆ,” ಎಂದು ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಪರೀಕ್ಷೆಗಳು ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಿಸಿಟಿವಿ ವ್ಯವಸ್ಥೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜೊತೆಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆ. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಈದ್ ಹಾಗೂ ಯುಗಾದಿ ಹಬ್ಬದ ಅಂಗವಾಗಿ ಜಿಲ್ಲೆಯ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ಒಟ್ಟಾರೆ, ಜಿಲ್ಲಾಡಳಿತದ ಸಮಗ್ರ ಸಿದ್ಧತೆ ಮತ್ತು ಪ್ರೋತ್ಸಾಹದ ನಡುವೆ ವಿಜಯನಗರ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ಆರಂಭಗೊಂಡಿವೆ.
ಟೆಹರಾನ್: ಇರಾನ್ನ ದಕ್ಷಿಣ ಪಾರ್ಸ್ ತೈಲ ಬಾವಿಯನ್ನು ಗುರಿಯಾಗಿಸಿಕೊಂಡು ನೈಸರ್ಗಿಕ ಅನಿಲ ಸೌಕರ್ಯಗಳ ಮೇಲೆ ಇಸ್ರೇಲ್ ದಾಳಿ ನಡೆಸಿರುವುದನ್ನು ಖತರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಜೇದ್ ಅಲ್-ಅನ್ಸಾರಿ ಖಂಡಿಸಿದ್ದಾರೆ. “ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಉಲ್ಬಣಗೊಂಡಿರುವ ಸೇನಾ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇರಾನ್ನ ದಕ್ಷಿಣ ಪಾರ್ಸ್ ತೈಲ ಬಾವಿಗೆ ಸಂಬಂಧಿಸಿದ ನೈಸರ್ಗಿಕ ಅನಿಲ ಸೌಕರ್ಯಗಳ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು ಅಪಾಯಕಾರಿ ಹಾಗೂ ಹೊಣೆಗೇಡಿ ನಡೆಯಾಗಿದೆ” ಎಂದು ಅವರು ಹೇಳಿದ್ದಾರೆ. “ಶತ್ರುವಿನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದು ಜಾಗತಿಕ ಇಂಧನ ಭದ್ರತೆಯಲ್ಲದೆ, ಈ ಪ್ರಾಂತ್ಯದ ಜನರು ಹಾಗೂ ಪರಿಸರಕ್ಕೆ ಬೆದರಿಕೆಯಾಗಲಿದೆ” ಎಂದು ಅವರು ಎಚ್ಚರಿಸಿದ್ದಾರೆ. “ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಳ್ಳುವುದನ್ನು ತಡೆಯುವುದು ಅತ್ಯಗತ್ಯವಾಗಿದೆ ಎಂದು ನಾವು ಪುನರುಚ್ಚರಿಸಿದ್ದೇವೆ ಹಾಗೂ ಪದೇಪದೇ ಹೇಳಿದ್ದೇವೆ. ಇಂತಹ ದಾಳಿಗಳಿಂದ ದೂರ ಉಳಿಯಬೇಕು ಎಂದು ನಾವು ಎಲ್ಲ ಪಕ್ಷಗಳನ್ನೂ ಕೇಳಿಕೊಳ್ಳುತ್ತೇವೆ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರುವಂತೆ ಆಗ್ರಹಿಸುತ್ತೇವೆ. ಈ ಪ್ರಾಂತ್ಯದ ಭದ್ರತೆ ಹಾಗೂ ಸ್ಥಿರತೆಯನ್ನು ಸಂರಕ್ಷಿಸುವ ರೀತಿಯಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸಲು ಕೆಲಸ ಮಾಡುವಂತೆ ನಾವು ಮನವಿ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಯುದ್ಧ ವಿಮಾನಗಳು ಇರಾನ್ನ ಪಾರ್ಸ್ ತೈಲ ಭೂಮಿಗೆ ಸಂಬಂಧಿಸಿದ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿವೆ ಎಂದು ವರದಿಯಾಗಿತ್ತು. ಇದೀಗ, ಇಸ್ರೇಲ್ ಯುದ್ಧ ವಿಮಾನಗಳು ದಕ್ಷಿಣ ಇರಾನ್ನ ಬುಶೆಹರ್ ಪ್ರಾಂತ್ಯದಲ್ಲಿನ ಅನಿಲ ಮೂಲಸೌಕರ್ಯದ ಮೇಲೆ ದಾಳಿ ನಡೆಸಿವೆ ಎಂದು ಇರಾನ್ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಉಡುಪಿ ಜಿಲ್ಲೆಯ ಹೊಟೇಲ್ಗಳ ಸಾಮೂಹಿಕ ಬಂದ್ಗೆ ಹೆಚ್ಚಿದ ಒತ್ತಡ: ತಲ್ಲೂರು ಶಿವರಾಮ ಶೆಟ್ಟಿ
► ಹೊಟೇಲ್ಗಳಿಗೆ ಹೊಡೆತ ನೀಡಿದ ವಾಣಿಜ್ಯ ಅನಿಲ ಸಿಲಿಂಡರ್ ಅಭಾವ► ಹೊಟೇಲ್ ಮಾಲಕರ ಮುಂದೆ ಹತ್ತಾರು ಸಮಸ್ಯೆ, ಆರ್ಥಿಕತೆ ಮೇಲೂ ಪ್ರಭಾವ
ಸೌದಿ ಅರೇಬಿಯಾದಲ್ಲಿ ಮಾ.20ಕ್ಕೆ ಈದ್ ಉಲ್ ಫಿತ್ರ್
ರಿಯಾದ್, ಮಾ.18: ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ 2026ರ ಈದ್ ಉಲ್ ಫಿತ್ರ್ ಹಬ್ಬವನ್ನು ಮಾ.20ರಂದು ಶುಕ್ರವಾರ ಆಚರಿಸಲಾಗುತ್ತದೆ ಎಂದು ಬುಧವಾರ ಅಧಿಕೃತವಾಗಿ ಘೋಷಿಸಿದೆ. ಚಂದ್ರ ವೀಕ್ಷಣೆ ಸಮಿತಿಯು ಮಾ.18ರಂದು ಸಭೆ ಸೇರಿ ಚಂದ್ರ ದರ್ಶನದ ಬಗ್ಗೆ ಪರಿಶೀಲನೆ ನಡೆಸಿತು. ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಮಝಾನ್ ತಿಂಗಳು 30 ದಿನಗಳನ್ನು ಪೂರ್ಣಗೊಳಿಸಲಿದ್ದು, ಅದರ ಬಳಿಕದ ದಿನವಾದ ಮಾ.20ರಂದು ಶುಕ್ರವಾರ ಈದ್ ಉಲ್ ಫಿತ್ರ್ ಹಬ್ಬದ ಆಚರಣೆ ನಡೆಯಲಿದೆ.
ಅಜಿತ್ ಪವಾರ್ ವಿಮಾನ ಅಪಘಾತದ ಕುರಿತು ರೋಹಿತ್ ಪವಾರ್ ಪ್ರಶ್ನೆ: ಅಮಿತ್ ಶಾಗೆ ಪತ್ರ ಬರೆದ ಫಡ್ನವಿಸ್
ಮುಂಬೈ: ಜನವರಿ 28ರಂದು ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರರು ಮೃತಪಟ್ಟ ಘಟನೆಯ ಕುರಿತು ಎನ್ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಪ್ರಶ್ನೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮನವಿ ಮಾಡಿದ್ದಾರೆ. ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಹಾಗೂ ಇನ್ನಿತರ ನಾಲ್ವರು ಸೇರಿದಂತೆ ಐವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೆಲವು ಕಳವಳಗಳನ್ನು ವ್ಯಕ್ತಪಡಿಸಿ ರೋಹಿತ್ ಪವಾರ್ ಮನವಿ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ದೇವೇಂದ್ರ ಫಡ್ನವಿಸ್, “ಘಟನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಲವು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದ್ದಾರೆ. “ರೋಹಿತ್ ಪವಾರ್ ಸಲ್ಲಿಸಿರುವ ಮನವಿ ಪತ್ರದಲ್ಲಿ ಹಲವಾರು ಕಳವಳಗಳ ಕುರಿತು ಬೆಳಕು ಚೆಲ್ಲಲಾಗಿದ್ದು, ತನಿಖೆಯ ಸಂದರ್ಭದಲ್ಲಿ ಈ ಕುರಿತು ಜಾಗರೂಕವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ” ಎಂದೂ ಅವರು ಮನವಿ ಮಾಡಿದ್ದಾರೆ. ಹಲವು ವಲಯಗಳ ಕುರಿತು ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಈ ಪತ್ರದಲ್ಲಿ ಪಟ್ಟಿ ಮಾಡಲಾಗಿದೆ. ವಿಮಾನಯಾನ ಸಂಸ್ಥೆಯ ಸುರಕ್ಷತಾ ದಾಖಲೆ ಹಾಗೂ 2023ರಲ್ಲಿ ಇದೇ ವಿಆರ್ಎಸ್ ವೆಂಚರ್ಸ್ ಸಂಸ್ಥೆಯ ವಿಮಾನ ಭಾಗಿಯಾಗಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗಿದ್ದ ಶಾಸನಾತ್ಮಕ ಪಾಲನೆಯ ಕುರಿತ ಅಭಿಪ್ರಾಯಗಳ ಬಗ್ಗೆ ಈ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಹೊಸ ಸುಂಕ ರಚನೆಗೆ ಮುಂದಾದ ಅಮೆರಿಕ; ಭಾರತಕ್ಕೆ ಹೊಸ ʼಸುಂಕಷ್ಟʼ?
ಕಳೆದ ತಿಂಗಳು ಯುಎಸ್ ಸುಪ್ರೀಂ ಕೋರ್ಟ್ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಸುಂಕಗಳನ್ನು ರದ್ದುಗೊಳಿಸುವುದರೊಂದಿಗೆ, ಟ್ರಂಪ್ ಆಡಳಿತವು ಐದು ತಿಂಗಳ ಕಾಲ ಸೆಕ್ಷನ್ 122 ರ ಅಡಿಯಲ್ಲಿ 10% ಜಾಗತಿಕ ಸುಂಕಗಳನ್ನು ವಿಧಿಸಿದೆ. ಆದರೆ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ನಡುವೆ, ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ (USTR), ಭವಿಷ್ಯದ ಎಲ್ಲಾ ಅಮೆರಿಕ ವ್ಯಾಪಾರ ಒಪ್ಪಂದಗಳಿಗೆ ಕಾನೂನು ಅಡಿಪಾಯವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಹೆಚ್ಚು ಶಾಶ್ವತ ಸುಂಕ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಈ ಹೊಸ ಸುಂಕದ ಚೌಕಟ್ಟನ್ನು ಕಳೆದ ವಾರ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ ಪ್ರಾರಂಭಿಸಿದ ಸೆಕ್ಷನ್ 301 ತನಿಖೆಗಳಲ್ಲಿ ಆಧಾರವಾಗಿರಿಸಲಾಗುತ್ತದೆ. ಈ ತನಿಖೆಗಳಿಂದ ಉಂಟಾಗುವ ಸುಂಕಗಳು ಭಾರತ-ಯುಎಸ್ ಒಪ್ಪಂದ ಸೇರಿದಂತೆ ಅಮೆರಿಕದ ವ್ಯಾಪಾರ ಒಪ್ಪಂದಗಳಿಗೆ ಆಧಾರವಾಗಬಹುದು, ಇದನ್ನು ಒಪ್ಪಿಕೊಂಡರೂ ಔಪಚಾರಿಕವಾಗಿ ಸಹಿ ಮಾಡಲಾಗಿಲ್ಲ. ಐಇಇಪಿಎ ತೀರ್ಪಿನ ನಂತರ ಯುಎಸ್ ವ್ಯಾಪಾರ ಒಪ್ಪಂದಗಳು ತಮ್ಮ ಆರ್ಥಿಕ ಮೌಲ್ಯವನ್ನು ಕಳೆದುಕೊಂಡಿವೆ ಎಂದು ಅಂತರರಾಷ್ಟ್ರೀಯ ವ್ಯಾಪಾರ ತಜ್ಞರು ಹೇಳಿದ್ದಾರೆ. ಏಕೆಂದರೆ ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ಇಂಡೋನೇಷ್ಯಾ, ಬಾಂಗ್ಲಾದೇಶ, ಭಾರತ ಮತ್ತು ಯುರೋಪಿಯನ್ ಒಕ್ಕೂಟದಂತಹ ದೇಶಗಳು 15–20% ಸುಂಕಗಳನ್ನು ಒಪ್ಪಿಕೊಂಡಿದ್ದು, ಮಾರುಕಟ್ಟೆ ಪ್ರವೇಶ, ಸಂಗ್ರಹಣೆ ಮತ್ತು ನಿಯಮಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ನೀಡಿವೆ. ನ್ಯಾಯಾಲಯವು ಪರಸ್ಪರ ಸುಂಕ ನೀತಿಯನ್ನು ರದ್ದುಗೊಳಿಸಿದ ನಂತರ, ಅಮೆರಿಕ ಎಲ್ಲಾ ವ್ಯಾಪಾರ ಪಾಲುದಾರರ ಮೇಲೆ ಏಕರೂಪದ 10% ಸುಂಕವನ್ನು ವಿಧಿಸಿತು. ►ತುಲನಾತ್ಮಕ ಪ್ರಯೋಜನ 2026 ಮಾರ್ಚ್ 16ರಂದು, ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ಯುಎಸ್ಟಿಆರ್ನ ಹೊಸ ಜಾಗತಿಕ ಸುಂಕವನ್ನು ಅಂತಿಮಗೊಳಿಸಿದ ನಂತರವೇ ಭಾರತವು ಅಮೆರಿಕ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುತ್ತದೆ ಎಂದು ಸ್ಪಷ್ಟಪಡಿಸಿದರು. ಭಾರತವು ತನ್ನ ಜಾಗತಿಕ ಪ್ರತಿಸ್ಪರ್ಧಿಗಳಿಗಿಂತ ನಿಜವಾದ ತುಲನಾತ್ಮಕ ಪ್ರಯೋಜನವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಒಪ್ಪಂದವನ್ನು ಮೌಲ್ಯಮಾಪನ ಮಾಡಬೇಕು ಎಂದು ಅಧಿಕಾರಿ ಒತ್ತಿ ಹೇಳಿದರು. ಐಇಇಪಿಎ ತೀರ್ಪಿನ ನಂತರ ಹಲವಾರು ಯುಎಸ್ ವ್ಯಾಪಾರ ಪಾಲುದಾರರು ತಮ್ಮ ವ್ಯಾಪಾರ ಒಪ್ಪಂದಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಮಾರ್ಚ್ 16ರಂದು ಮಲೇಷ್ಯಾ ಅಧಿಕೃತವಾಗಿ ಅಮೆರಿಕದೊಂದಿಗಿನ ತನ್ನ ವ್ಯಾಪಾರ ಒಪ್ಪಂದವನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಿತು. ಇದು ಸುಪ್ರೀಂ ಕೋರ್ಟ್ನ ತೀರ್ಪು ಒಪ್ಪಂದಕ್ಕೆ ಆಧಾರವಾಗಿರುವ ಪ್ರತಿ ಸುಂಕಗಳಿಗೆ ಕಾನೂನು ಅಡಿಪಾಯವನ್ನು ನಾಶಪಡಿಸಿದೆ ಎಂದು ಮಲೇಷ್ಯಾ ವಾದಿಸಿತು. ಅದೇ ರೀತಿ, ಯುರೋಪಿಯನ್ ಒಕ್ಕೂಟವು ವಾಷಿಂಗ್ಟನ್ ನ ಮುಂದಿನ ನಡೆಗಳ ಕುರಿತು ಸ್ಪಷ್ಟತೆಗಾಗಿ ಕಾಯುತ್ತಿರುವುದರಿಂದ ಅಮೆರಿಕದೊಂದಿಗಿನ ತನ್ನ ವ್ಯಾಪಾರ ಒಪ್ಪಂದವನ್ನು ತಡೆಹಿಡಿದಿದೆ. ಅಮೆರಿಕ ಕಳೆದ ವಾರ ಭಾರತ ಸೇರಿದಂತೆ ಹಲವಾರು ದೇಶಗಳ ವಿರುದ್ಧ ಎರಡು ಸೆಕ್ಷನ್ 301 ತನಿಖೆಗಳನ್ನು ಪ್ರಾರಂಭಿಸಿತು. ಒಂದು ಕೆಲವು ಉತ್ಪಾದನಾ ವಲಯಗಳಲ್ಲಿ ರಚನಾತ್ಮಕ ಹೆಚ್ಚುವರಿ ಸಾಮರ್ಥ್ಯ ಮತ್ತು ಅಧಿಕ ಉತ್ಪಾದನೆಯನ್ನು ಉಲ್ಲೇಖಿಸಿದರೆ, ಇನ್ನೊಂದು ಬಲವಂತದ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದಿಸುವ ಸರಕುಗಳ ಆಮದನ್ನು ನಿಷೇಧಿಸುವಲ್ಲಿ ವಿಫಲತೆಯನ್ನು ಉಲ್ಲೇಖಿಸುತ್ತದೆ. ಆದರೆ ಉದ್ದೇಶವು ಪ್ರತಿ ಸುಂಕದಂತಹ ರಚನೆಯನ್ನು ರಚಿಸುವುದಾಗಿರಬಹುದು. ಸೆಕ್ಷನ್ 301 ತನಿಖೆಗಳ ಪ್ರಾರಂಭವು ಸಕ್ರಿಯ ವ್ಯಾಪಾರ ಒಪ್ಪಂದಗಳನ್ನು ಹೊಂದಿರುವ ರಾಷ್ಟ್ರಗಳು ಸಹ ಹೊಸ ಯುಎಸ್ ತನಿಖೆಗಳು ಅಥವಾ ಹಠಾತ್ ಸುಂಕಗಳಿಂದ ಸುರಕ್ಷಿತವಾಗಿಲ್ಲ ಎಂದು ಸೂಚಿಸುತ್ತದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ಮುಖ್ಯಸ್ಥ ಅಜಯ್ ಶ್ರೀವಾಸ್ತವ ಹೇಳಿದ್ದಾರೆ. ಇದು ವಿಶ್ವ ನಾಯಕರಿಗೆ ಒಂದು ಪ್ರಮುಖ ಸಂದಿಗ್ಧತೆಯನ್ನು ಸೃಷ್ಟಿಸುತ್ತದೆ ಎಂದು ವಾದಿಸಿದ ಅವರು, ಒಪ್ಪಂದ ಅಸ್ತಿತ್ವದಲ್ಲಿದೆಯೇ ಎಂಬುದನ್ನು ಲೆಕ್ಕಿಸದೆ ಯುಎಸ್ ಅದೇ ವ್ಯಾಪಾರ ಒತ್ತಡಗಳು ಮತ್ತು ಸುಂಕಗಳನ್ನು ವಿಧಿಸಿದರೆ, ರಾಜಕೀಯವಾಗಿ ಕಷ್ಟಕರವಾದ ರಿಯಾಯಿತಿಗಳನ್ನು ನೀಡುವುದನ್ನು ಏಕೆ ಮುಂದುವರಿಸಬೇಕು? ಎಂದು ಕೇಳಿದ್ದಾರೆ. ತನಿಖೆಯ ತ್ವರಿತ ಸ್ವರೂಪವು ಯುಎಸ್ಟಿಆರ್ ಮೇ ತಿಂಗಳೊಳಗೆ ದೇಶಗಳ ಮೇಲೆ ವಿಭಿನ್ನ ಸುಂಕಗಳನ್ನು ವಿಧಿಸಲು ಹೊಸ ಕಾನೂನು ಅಧಿಕಾರಗಳನ್ನು ಹೊಂದಿರುತ್ತದೆ. ಸಿಂಗಾಪುರ ಮೂಲದ ಹಿನ್ರಿಚ್ ಫೌಂಡೇಶನ್ನ ವ್ಯಾಪಾರ ನೀತಿ ಮುಖ್ಯಸ್ಥೆ ಡೆಬೊರಾ ಎಲ್ಮ್ಸ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಇದು ಅತ್ಯಂತ ವೇಗದ ತನಿಖೆಯಾಗಿದ್ದು, ಸಣ್ಣ ಕಾಮೆಂಟ್ ವಿಂಡೋ ಮತ್ತು ಮೇ ಆರಂಭದಲ್ಲಿ ಕಡ್ಡಾಯ ವಿಚಾರಣೆಯನ್ನು ಹೊಂದಿದೆ ಎಂದಿದ್ದಾರೆ. ಈ ಅಸಾಮಾನ್ಯವಾಗಿ ತ್ವರಿತ ವಿಚಾರಣೆಗೆ ಕಾರಣವೆಂದರೆ, ಟ್ರಂಪ್ ಆಡಳಿತವು ಪ್ರಸ್ತುತ ಜಾಗತಿಕವಾಗಿ 10% ರಷ್ಟು ವಿಭಿನ್ನ ಕಾನೂನು ಅಧಿಕಾರದ ಅಡಿಯಲ್ಲಿ, 1974 ರ ವ್ಯಾಪಾರ ಕಾಯಿದೆಯ ಸೆಕ್ಷನ್ 122 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಯುಎಸ್ ಸುಂಕಗಳಿಗೆ ಶಾಸನಬದ್ಧ ಅಧಿಕಾರವು ಜುಲೈ 27ರಂದು ಮುಕ್ತಾಯಗೊಳ್ಳುತ್ತದೆ. ಯುಎಸ್ಟಿಆರ್ನ ಗುರಿಯು ಜುಲೈ ವೇಳೆಗೆ ಈ ಸೆಕ್ಷನ್ 122 ಸುಂಕಗಳನ್ನು ಹೊಸ ಕ್ರಮಗಳೊಂದಿಗೆ ಬದಲಾಯಿಸುವುದು ಎಂದು ಎಲ್ಮ್ಸ್ ಹೇಳಿದರು. ಈ ತ್ವರಿತ ವಿಚಾರಣೆಯು ಮುಂಬರುವ ಕಾನೂನು ಗಡುವಿಗೆ ನೇರ ಪ್ರತಿಕ್ರಿಯೆಯಾಗಿದೆ. ಟ್ರಂಪ್ ಆಡಳಿತದ ಪ್ರಸ್ತುತ 10% ಜಾಗತಿಕ ಸುಂಕಗಳು, ಸೆಕ್ಷನ್ 122 ರ ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಕಾನೂನುಬದ್ಧವಾಗಿ ಜುಲೈ 27ರಂದು ಮುಕ್ತಾಯಗೊಳ್ಳಲಿವೆ. ಆ ಅಧಿಕಾರವು ಮುಗಿಯುವ ಮೊದಲು ತಾತ್ಕಾಲಿಕ ಸೆಕ್ಷನ್ 122 ಕ್ರಮಗಳನ್ನು ಹೆಚ್ಚು ಶಾಶ್ವತ ಕ್ರಮಗಳೊಂದಿಗೆ ಬದಲಾಯಿಸಲು ಯುಎಸ್ಟಿಆರ್ ಹೊಸ ತನಿಖೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ ಎಲ್ಮ್ಸ್. ►ಬಲವಾದ ಕಾನೂನು ಆಧಾರ ಸೆಕ್ಷನ್ 301 ಅನ್ನು ಯುಎಸ್ ನ್ಯಾಯಾಲಯಗಳು ರದ್ದುಗೊಳಿಸುವ ಅಥವಾ ಕಾಂಗ್ರೆಸ್ ಒಳಗೊಳ್ಳುವ ಸಾಧ್ಯತೆಯಿಲ್ಲ. ತನಿಖೆಗಳಿಂದ ಉಂಟಾಗುವ ಯಾವುದೇ ದಂಡಗಳು ಶಾಶ್ವತವಾಗಿರುತ್ತವೆ. ಏಕೆಂದರೆ ವಿಶೇಷವಾಗಿ ಸೆಕ್ಷನ್ 301 ಕಾರ್ಯನಿರ್ವಾಹಕ ಶಾಖೆಗೆ ಭವಿಷ್ಯದಲ್ಲಿ ಬಯಸಿದಂತೆ ಮಾರ್ಪಡಿಸಲು, ಸರಿಹೊಂದಿಸಲು ಅಥವಾ ಪುನಃ ತೆರೆಯಲು ಅಧಿಕಾರ ನೀಡುತ್ತದೆ ಎಂದು ಎಲ್ಮ್ಸ್ ಹೇಳಿದ್ದಾರೆ. ಅಂತಿಮ ವ್ಯಾಪಾರ ಒಪ್ಪಂದವು ಸೆಕ್ಷನ್ 301 ಸುಂಕಗಳನ್ನು ನೋಡಿಕೊಳ್ಳುತ್ತದೆ ಎಂದು ಭಾರತೀಯ ಸರ್ಕಾರಿ ಅಧಿಕಾರಿಗಳು ಹೇಳಿದ್ದರೂ, ಯುಎಸ್ಟಿಆರ್ ತನ್ನ ತನಿಖೆಯಲ್ಲಿ ಭಾರತವು ರಚನಾತ್ಮಕ ಹೆಚ್ಚುವರಿ ಸಾಮರ್ಥ್ಯ ಮತ್ತು ಉತ್ಪಾದನೆಯನ್ನು ಹೊಂದಿದೆ ಎಂದು ಹೇಳಿದೆ. ಯುಎಸ್ಟಿಆರ್ ಸೌರ ಮಾಡ್ಯೂಲ್ ವಲಯವನ್ನು ಅಧಿಕ ಸಾಮರ್ಥ್ಯದ ಪ್ರಮುಖ ಉದಾಹರಣೆ ಎಂದು ತೋರಿಸಿದೆ. ಇದರಲ್ಲಿ ಭಾರತದ ಉತ್ಪಾದನಾ ಸಾಮರ್ಥ್ಯವು ತನ್ನದೇ ದೇಶೀಯ ಬೇಡಿಕೆಯನ್ನು ಸುಮಾರು ಮೂರು ಪಟ್ಟು ಹೆಚ್ಚಿಸಿದೆ ಎಂದು ಹೇಳಿಕೊಂಡಿದೆ. ಭಾರತವು ಪೆಟ್ರೋಕೆಮಿಕಲ್ಸ್, ಉಕ್ಕು ಮತ್ತು ಇತರ ಕೈಗಾರಿಕೆಗಳಲ್ಲಿ ಗಮನಾರ್ಹ ಹೆಚ್ಚುವರಿ ಸಾಮರ್ಥ್ಯವನ್ನು ಸೃಷ್ಟಿಸಿದೆ ಎಂದು ಯುಎಸ್ಟಿಆರ್ ಹೇಳಿದೆ. ►ಜಾಗತಿಕ ಪ್ರತಿಕ್ರಿಯೆ ಯುಎಸ್ ಸುಪ್ರೀಂ ಕೋರ್ಟ್ ಆದೇಶದ ನಂತರ, ಯುರೋಪಿಯನ್ ಕಮಿಷನ್ ಐಇಇಪಿಎ ಕುರಿತು ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಯುನೈಟೆಡ್ ಸ್ಟೇಟ್ಸ್ ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆ ಬಯಸುತ್ತಿದೆ. ಪ್ರಸ್ತುತ ಪರಿಸ್ಥಿತಿಯು ನ್ಯಾಯಯುತ, ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಮತ್ತು ಹೂಡಿಕೆಗಳನ್ನು ಒದಗಿಸಲು ಅನುಕೂಲಕರವಾಗಿಲ್ಲ ಎಂದು ಹೇಳಿದೆ. ಮಲೇಷ್ಯಾದ ಹೂಡಿಕೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಜೋಹರಿ ಅಬ್ದುಲ್ ಘನಿ, ಮಲೇಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪರಸ್ಪರ ವ್ಯಾಪಾರ ಒಪ್ಪಂದ (ART) ಈಗ ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಿದರು. ರಾಯಿಟರ್ಸ್ ವರದಿಯ ಪ್ರಕಾರ, ಫೆಬ್ರವರಿಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ಟ್ರಂಪ್ ಆಡಳಿತದ ಸುಂಕಗಳಲ್ಲಿ ಗಮನಾರ್ಹ ಭಾಗವನ್ನು ರದ್ದುಗೊಳಿಸಿದ ನಂತರವೂ, ಅಮೆರಿಕದೊಂದಿಗಿನ ತಮ್ಮ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಕಾನೂನುಬದ್ಧವಾಗಿ ಮಾನ್ಯವಾಗಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ಒಪ್ಪಂದದ ಅಡಿಯಲ್ಲಿ ಭರವಸೆ ನೀಡಲಾದ ಅಮೆರಿಕದ 350 ಬಿಲಿಯನ್ ಡಾಲರ್ ಹೂಡಿಕೆಗಳ ಬಗ್ಗೆ ಸಿಯೋಲ್ ಹೆಚ್ಚು ಹೆಚ್ಚು ಕಾಳಜಿ ವಹಿಸುತ್ತಿದೆ. ಈ ಬೃಹತ್ ಬಂಡವಾಳ ಹರಿವುಗಳು ಈಗಾಗಲೇ ಸಂಕಷ್ಟದಲ್ಲಿರುವ ದಕ್ಷಿಣ ಕೊರಿಯಾದ ವೊನ್ ಕರೆನ್ಸಿಯನ್ನು ಮತ್ತಷ್ಟು ದುರ್ಬಲಗೊಳಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಯೋಜನೆಗಳು ವಾಣಿಜ್ಯ ಕಾರ್ಯಸಾಧ್ಯತೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆ ಪರಿಸ್ಥಿತಿಗಳ ಪರಿಗಣನೆಯನ್ನು ಆಧರಿಸಿರುತ್ತವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
IPL | SRH ಗೆ ಇಶಾನ್ ಕಿಶನ್ ಹಂಗಾಮಿ ನಾಯಕ
ಕಮಿನ್ಸ್ ಗೈರು ಹಾಜರಿ; ಅಭಿಷೇಕ್ ಶರ್ಮಾ ಉಪನಾಯಕ
Belagavi | ಆಲಿಕಲ್ಲು ಮಳೆ ಅಬ್ಬರ; 39 ಕುರಿಗಳ ಸಾವು
ಬೆಳಗಾವಿ : ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ ಭಾರೀ ಆಲಿಕಲ್ಲು ಮಳೆಯ ರಭಸಕ್ಕೆ 39 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಸಂಕೇಶ್ವರದ ಕುರಿಗಾಹಿ ಶಂಕರ ಕರಜಗಿ ಅವರಿಗೆ ಸೇರಿದ ಕುರಿಗಳನ್ನು ಹೊಲದಲ್ಲಿ ನಿರ್ಮಿಸಿದ್ದ ದಡ್ಡಿಯಲ್ಲಿ ನಿಲ್ಲಿಸಲಾಗಿತ್ತು. ತಡರಾತ್ರಿ ಧಾರಾಕಾರ ಮಳೆಯೊಂದಿಗೆ ಬಿರುಗಾಳಿ ಹಾಗೂ ದೊಡ್ಡ ಗಾತ್ರದ ಆಲಿಕಲ್ಲುಗಳು ಸುರಿದ ಪರಿಣಾಮ ಕುರಿಗಳ ಮೇಲೆ ಹೊಡೆತ ಬಿದ್ದು ಅವು ಸ್ಥಳದಲ್ಲೇ ಮೃತಪಟ್ಟಿವೆ ಎಂದು ತಿಳಿದು ಬಂದಿದೆ, ಘಟನೆಗೆ ಸಂಬಂಧಿಸಿದಂತೆ ಪಿಡಿಒ ಎನ್.ಆರ್.ಪಾಟೀಲ್, ಗ್ರಾಮ ಸಹಾಯಕ ರಶೀದ್ ನನ್ನುಭಾಯಿ ಹಾಗೂ ಪಶು ಆಸ್ಪತ್ರೆಯ ವೈದ್ಯರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಿಲಿಕುಳ| ಏಳು ಮರಿಗಳಿಗೆ ಜನ್ಮ ನೀಡಿದ ತೋಳ 'ಗೀತಾ'
ಮಂಗಳೂರು; ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ (Indian wolf) - ಗೀತಾ ಒಟ್ಟು ಏಳು ಮರಿಗಳಿಗೆ (ನಾಲ್ಕು ಗಂಡು ಮತ್ತು ಮೂರು ಹೆಣ್ಣು) ಜನ್ಮ ನೀಡಿತು. 3 ವರ್ಷಗಳಿಂದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳಗಳನ್ನು ಇರಿಸಲಾಗಿದ್ದು,ಭಾರತೀಯ ತೋಳಗಳ ಮೊದಲ ಯಶಸ್ವಿ ಸಂತಾನೋತ್ಪತ್ತಿ ಇದಾಗಿದ್ದು, ಉದ್ಯಾನವನದ ಸಂರಕ್ಷಣೆ ಮತ್ತು ಸೆರೆಹಿಡಿಯಲಾದ ಸಂತಾನೋತ್ಪತ್ತಿ ಪ್ರಯತ್ನಗಳಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲಾಗಿದೆ. ತಾಯಿ ತೋಳ ಮತ್ತು ಎಲ್ಲಾ ಏಳು ಮರಿಗಳು ಆರೋಗ್ಯವಾಗಿವೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪಶುವೈದ್ಯರು ಮತ್ತು ಪ್ರಾಣಿ ಪಾಲಕರು ಅವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮರಿಗಳು ಈಗ ಅರೋಗ್ಯ ವಾಗಿ ಓಡಾಡುತ್ತಿದ್ದು, ಅವುಗಳನ್ನು ಸಂದರ್ಶಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಪಶ್ಚಿಮ ಬಂಗಾಳ| ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಂದುವರಿದ ಉನ್ನತ ಅಧಿಕಾರಿಗಳ ವರ್ಗಾವಣೆ
ಕೋಲ್ಕತಾ, ಮಾ. 18: ಪಶ್ಚಿಮ ಬಂಗಾಳದ ಉಪ ಪೊಲೀಸ್ ಮಹಾ ನಿರೀಕ್ಷಕ (ಡಿಐಜಿ) ದರ್ಜೆಯ ಐವರು ಉನ್ನತ ಐಪಿಎಸ್ ಅಧಿಕಾರಿಗಳು ಮತ್ತು 11 ಜಿಲ್ಲಾಧಿಕಾರಿಗಳನ್ನು ಚುನಾವಣಾ ಆಯೋಗವು ಬುಧವಾರ ವರ್ಗಾವಣೆಗೊಳಿಸಿದೆ. ವಿಧಾನಸಭಾ ಚುನಾವಣೆಯ ವೇಳೆ, ಜಿಲ್ಲಾಧಿಕಾರಿಗಳು ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿಯೂ ಕರ್ತವ್ಯ ನಿರ್ವಹಿಸುತ್ತಾರೆ. ಇಂಥ ಏಕಪಕ್ಷೀಯ ಕ್ರಮಗಳನ್ನು ತೆಗೆದುಕೊಳ್ಳದಂತೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ಗೆ ಪತ್ರ ಬರೆದಿರುವ ಹೊರತಾಗಿಯೂ, ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮೇಲೆ ತನ್ನ ನಿಯಂತ್ರಣ ಸಾಧಿಸುವ ಕಾರ್ಯಗಳನ್ನು ಮುಂದುವರಿಸಿದೆ. ರಾಜ್ಗಂಜ್, ಮುರ್ಷಿದಾಬಾದ್, ಬರ್ದಮಾನ್, ಪ್ರೆಸಿಡೆನ್ಸಿ ಮತ್ತು ಜಲ್ಪಾಯ್ಗುರಿ ವಲಯಗಳಲ್ಲಿ ಕ್ರಮವಾಗಿ ರಾಥೋಡ್ ಅಮಿತ್ಕುಮಾರ್ ಭರತ್, ಅಜೀತ್ ಸಿಂಗ್ ಯಾದವ್, ಶ್ರೀಹರಿ ಪಾಂಡೆ, ಕನ್ಕರ್ ಪ್ರಸಾದ್ ಬರುಯಿ ಮತ್ತು ಅಂಜಲಿ ಸಿಂಗ್ರನ್ನು ನೇಮಿಸುವಂತೆ ಭಾರತೀಯ ಚುನಾವಣಾ ಆಯೋಗದ ಕಾರ್ಯದರ್ಶಿ ಸುಜೀತ್ ಕುಮಾರ್ ಮಿಶ್ರಾ ಬಂಗಾಳ ಮುಖ್ಯ ಕಾರ್ಯದರ್ಶಿ ದುಶ್ಯಂತ್ ನರಿಯಾಲಗೆ ಪತ್ರವೊಂದನ್ನು ಬರೆದಿದ್ದಾರೆ. ಅವರನ್ನು ಮಾರ್ಚ್ 19ರೊಳಗೆ ನೇಮಕ ಮಾಡಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ. ಅದೇ ವೇಳೆ, ದಾರ್ಜೀಲಿಂಗ್, ಅಲಿಪುರ್ದುವರ್, ಕೂಚ್ಬೆಹಾರ್, ಜಲ್ಪಾಯ್ಗುರಿ, ಉತ್ತರ ದೀನಜ್ಪುರ, ಮಾಲ್ಡಾ, ಮುರ್ಷಿದಾಬಾದ್, ನಾದಿಯ, ಪೂರ್ವ ಬರ್ದಮಾನ್, ಉತ್ತರ 24 ಪರಗಣ, ದಕ್ಷಿಣ 24 ಪರಗಣ ಜಿಲ್ಲೆಗಳ ಜಿಲ್ಲಾದಿಕಾರಿಗಳನ್ನಾಗಿ ಕ್ರಮವಾಗಿ ಹರಿಶಂಕರ್ ಪಣಿಕ್ಕರ್, ಟಿ. ಬಾಲಸುಬ್ರಮಣ್ಯನ್, ಜಿತಿನ್ ಯಾದವ್, ಸಂದೀಪ್ ಘೋಷ್, ವಿವೇಕ್ ಕುಮಾರ್, ರಜನ್ವೀರ್ ಸಿಂಗ್ ಕಪೂರ್, ಆರ್. ಅರ್ಜುನ್, ಶ್ರೀಕಾಂತ್ ಪಲ್ಲಿ, ಶ್ವೇತಾ ಅಗರ್ವಾಲ್, ಶಿಲ್ಪಾ ಗೌರಿಸರಿಯ, ಅಭಿಶೇಕ್ ಕುಮಾರ್ ತಿವಾರಿ, ಸ್ಮಿತಾ ಪಾಂಡೆ ಮತ್ತು ರಣಧೀರ್ ಕುಮಾರ್ರನ್ನು ನೇಮಿಸಲಾಗಿದೆ. ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆ ಪೂರ್ಣಗೊಳ್ಳುವವರೆಗೆ ಯಾವುದೇ ಚುನಾವಣೆ ಸಂಬಂಧಿ ಜವಾಬ್ದಾರಿಗಳನ್ನು ಕೊಡಬಾರದು ಎಂಬುದಾಗಿಯೂ ಚುನಾವಣಾ ಆಯೋಗ ನಿರ್ದೇಶಿಸಿದೆ.
ಪುತ್ತೂರು, ಮಾ.18:ಕಸಬಾ ಗ್ರಾಮದ ಕರ್ಕುಂಜ ನಿವಾಸಿ ರಾಕೇಶ್ ನಾಯ್ಕ ಕೆ.ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರದಾನವಾಗಿದೆ. ಸೋಶಿಯೋ-ಇಕೊನೋಮಿಕ್ ಎಂಪವರ್ಮೆಂಟ್ ಆಫ್ ಶೆಡ್ಯೂಲ್ಡ್ ಟ್ರೈಬ್ಸ್: ಎ ಕಂಪಾರೇಟಿವ್ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಎಂಬ ಶೀರ್ಷಿಕೆಯ ಮೇಲೆ ಸಂಶೋಧನೆ ನಡೆಸಿ ಮಹಾ ಪ್ರಬಂಧ ಮಂಡಿಸಿದ ಇವರು ಮಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವಜೀದಾ ಬಾನು ಅವರ ಮಾರ್ಗದರ್ಶನ ಪಡೆದಿದ್ದರು. ಕರ್ಕುಂಜ ನಿವಾಸಿಗಳಾದ ಈಶ್ವರ ನಾಯ್ಕ ಕರ್ಕುಂಜ ಮತ್ತು ಅನಸೂಯ ದಂಪತಿಯ ಪುತ್ರನಾಗಿರುವ ರಾಕೇಶ್ ನಾಯ್ಕ ಭಾರತ ಸರಕಾರದ ಮಿನಿಸ್ಟ್ರಿ ಆಫ್ ಟ್ರೈಬಲ್ ಅಫೇರ್ಸ್ ನೀಡಲಾಗುವ ನ್ಯಾಷನಲ್ ಫೆಲೋಶಿಪ್ ಫೋರ್ ಟ್ರೈಬಲ್ ಸ್ಟೂಡೆಂಟ್ಸ್ ಶಿಷ್ಯವೇತನದ ಮೂಲಕ ಸಂಶೋಧನೆಗೈದಿದ್ದರು.
ಉಚಿತ ಯೋಜನೆಗಳ ಬಗ್ಗೆ ರಾಷ್ಟ್ರೀಯ ನೀತಿ ಜಾರಿಯಾಗಲಿ: ವಿ.ಆರ್.ಸುದರ್ಶನ್
ಕುಂದಾಪುರ, ಮಾ.18: ಕರ್ನಾಟಕದ ಗ್ಯಾರೆಂಟಿ ಯೋಜನೆಗಳನ್ನು ಕೇವಲವಾಗಿ ಮಾತನಾಡುವ ಬಿಜೆಪಿ ಮುಖಂಡರು ಬೇರೆ ರಾಜ್ಯಗಳಲ್ಲಿ ಉಚಿತ ಯೋಜನೆಯ ಅಮೀಷಕ್ಕೆ ಮುಂದಾಗಿರುವುದು ಯಾವ ಸಾಮಾಜಿಕ ನ್ಯಾಯ. ಉಚಿತ ಯೋಜನೆಗಳ ಕುರಿತು ರಾಷ್ಟ್ರೀಯ ನೀತಿ ಜಾರಿಯಾಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದ್ದಾರೆ. ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಯಾವಾಗಲೂ ಪಕ್ಷಾತೀತವಾಗಿರಬೇಕು. ಬಿಹಾರ ಚುನಾವಣೆಯಲ್ಲಿ ಮತದಾರರ ಮೇಲೆ ನೇರ ಪ್ರಭಾವ ಬೀರುವ ನಗದು ವರ್ಗಾ ವಣೆ ನಡೆದರೂ, ಕ್ರಮಕ್ಕೆ ಮುಂದಾಗದ ಆಯೋಗ ಬೇರೆ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿಯೂ ಇದೇ ನಿರ್ಲಿಪ್ತತೆ ತೋರು ತ್ತದೆಯೇ ಎಂದು ಅವರು ಪ್ರಶ್ನಿಸಿದರು ಸಂವಿಧಾನದ ಆಶಯಗಳನ್ನು ಗೌರವಿಸುವ ಜೊತೆಯಲ್ಲಿ ಲೋಕಸಭೆಯ ಪ್ರತಿ ಸದಸ್ಯರ ಹಕ್ಕುಗಳನ್ನು ರಕ್ಷಿಸುವ ಹೊಣೆ ಸ್ಪೀಕರ್ ಅವರದ್ದಾಗಿದೆ. ಪ್ರಜಾಪ್ರಭುತ್ವತೆಯ ಮೌಲ್ಯಗಳನ್ನು ಸಂರಕ್ಷಣೆ ಮಾಡುವ ಹೊಣೆಯನ್ನು ಹೊತ್ತ ವರೇ, ಹೊಣೆಗಾರಿಕೆಯಿಂದ ಜಾರಿಕೊಳ್ಳಬಾರದು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಕೆಯಾಗುವಾಗ ಸದಸ್ಯರಿಗೆ ವ್ಯಾಪ್ತಿಯ ನಿರ್ಬಂಧ ಇರೋದಿಲ್ಲ. ಪ್ರತಿಪಕ್ಷಗಳಿಂದ ಸರ್ಕಾರದ ವಿರುದ್ಧ ಆಕ್ಷೇಪಗಳು ಬಂದಾಗಲೂ, ಉಭಯ ಸದನಗಳ ನಿರ್ವಹಣೆ ಮಾಡುವವರು ಹಾಗೂ ಸಭಾ ನಾಯಕರಲ್ಲಿ ಸಮಚಿತ್ತದ ಭಾವನೆ ಇರಬೇಕು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಪ್ರಾಮುಖ್ಯ ಜವಾಬ್ದಾರಿಯನ್ನು ಸಭಾ ನಾಯಕರಾದ ಪ್ರಧಾನ ಮಂತ್ರಿಗಳು ಬೇರೆಯವರಿಗೆ ನೀಡಿರುವುದು ಸರಿಯಲ್ಲ. ಸ್ಪೀರ್ಕ ಯಾರಿಂದಲೂ ಪ್ರಭಾವಿತರಾಗಿರಬಾರದು ಎಂದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶಂಕರ್ ಕುಂದರ್, ಹರಿಪ್ರಸಾದ್ ಕಾನ್ಮಕ್ಕಿ, ವಿನೋದ್ ಕ್ರಾಸ್ಟೋ ಉಪಸ್ಥಿತರಿದ್ದರು. ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಬದಲಾವಣೆ ವಿಚಾರದ ಕುರಿತು ಜನರಲ್ಲಿ ಯಾವುದೇ ನಕಾರಾತ್ಮಕ ಭಾವನೆಗಳು ಇಲ್ಲ. ಒಂದು ವೇಳೆ ಬದಲಾವಣೆ ಬೇಕು ಎಂದು ಪಕ್ಷ ಬಯಸಿದಲ್ಲಿ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳಲಿದೆ. ಆಡಳಿತದ ಸುದೀರ್ಘ ಅನುಭವ ಹೊಂದಿರುವ ಮುಖ್ಯಮಂತ್ರಿಗಳು ಆಡಳಿತ ಚುಕ್ಕಾಣಿ ಹಿಡಿದು ಸರಿಯಾದ ನಿರ್ವಹಣೆ ಮಾಡುತ್ತಿದ್ದಾರೆ. -ಎಂ.ನಾರಾಯಣ ಸ್ವಾಮಿ, ವಿಧಾನಪರಿಷತ್ ಸದಸ್ಯರು
ಗುಜರಾತ್ ವಿಧಾನಸಭೆ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ | ಪೊಲೀಸರಿಂದ ಪರಿಶೀಲನೆ
ಗಾಂಧಿನಗರ, ಮಾ. 18: ಗುಜರಾತ್ ವಿಧಾನ ಸಭೆ ಸಂಕೀರ್ಣ ಬುಧವಾರ ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸ್ವೀಕರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ವಿಧಾನ ಸಭೆ ಸಂಕೀರ್ಣದ ಆವರಣದಲ್ಲಿ ಕೂಲಂಕಷ ತನಿಖೆ ನಡೆಸಿದ ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಎಂದು ಪರಿಗಣಿಸಲಾಯಿತು ಎಂದು ಅವರು ಹೇಳಿದ್ದಾರೆ. ಬಜೆಟ್ ಅಧಿವೇಶನ ಆರಂಭವಾಗುವ ಕೆಲವೇ ನಿಮಿಷಗಳ ಮುನ್ನ ವಿಧಾನ ಸಭೆಯ ಅಧಿಕೃತ ಈಮೇಲ್ ಐಡಿಗೆ ಈ ಬೆದರಿಕೆ ಸಂದೇಶ ಬಂದಿತ್ತು. ವಿಧಾನ ಸಭೆಯ ಸಂಕೀರ್ಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಇಮೇಲ್ ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಆವರಣದಿಂದ ತೆರವುಗೊಳ್ಳುವಂತೆ ಎಲ್ಲಾ ಸಿಬ್ಬಂದಿ ಹಾಗೂ ಶಾಸಕರಿಗೆ ಸೂಚಿಸಲಾಯಿತು ಎಂದು ಡಿಎಸ್ಪಿ ಪಿಯೂಷ್ ವಂಡಾ ತಿಳಿಸಿದ್ದಾರೆ. ಬಜೆಟ್ ಅಧಿವೇಶನದ ಭಾಗವಾಗಿ ಸದನ ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿತ್ತು. ಆದರೆ, ಬೆಳಗ್ಗೆ 8.45ಕ್ಕೆ ಅಧಿಕಾರಿಗಳಿಗೆ ಬಾಂಬ್ ಬೆದರಿಕೆಯ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಅವರು ತಿಳಿಸಿದ್ದಾರೆ.
ಭೋಪಾಲ, ಮಾ. 18: ವ್ಯಕ್ತಿಯೋರ್ವ ಭ್ರೂಣ ಇರಿಸಿ ತನ್ನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ ಘಟನೆ ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ನಡೆದಿದೆ. ಈ ಆಘಾತಕಾರಿ ಕೃತ್ಯ ನ್ಯಾಯಾಧೀಶರ ಅನುಕಂಪೆ ಪಡೆಯುವ ಉದ್ದೇಶವನ್ನು ಹೊಂದಿತ್ತು. ಆದರೆ, ನ್ಯಾಯಮೂರ್ತಿ ಹಿಮಾಂಶು ಜೋಷಿ ಅವರನ್ನು ಒಳಗೊಂಡ ಪೀಠ ಈ ಕ್ರಮ ಅತ್ಯಂತ ಆಕ್ಷೇಪಾರ್ಹ ಎಂದು ಖಂಡಿಸಿತು ಹಾಗೂ ಅರ್ಜಿಯನ್ನು ವಜಾಗೊಳಿಸಿತು. ಮಾರುತಿ ಸುಝುಕಿ ಲಿಮಿಟೆಡ್ನಲ್ಲಿ 200 ಕೋ.ರೂ.ಗೂ ಅಧಿಕ ಹಣ ದುರುಪಯೋಗ ಹಾಗೂ ಕಳ್ಳತನದ ಆರೋಪ ಮಾಡಿರುವುದಕ್ಕಾಗಿ ಕಳೆದ ಒಂದು ವರ್ಷದಿಂದ ತನ್ನ ಕುಟುಂಬ ಕಿರುಕುಳ ಅನುಭವಿಸುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ದೂರುಗಳನ್ನು ದಾಖಲಿಸಿದರೂ, ರಾಷ್ಟ್ರಪತಿ ಹಾಗೂ ವಿವಿಧ ಸರಕಾರಗಳ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅವರು ಹೇಳಿದ್ದಾರೆ. ತನಗೆ ಹಾಗೂ ತನ್ನ ಪತ್ನಿಗೆ ಕಾರಿನಿಂದ ಢಿಕ್ಕಿ ಹೊಡೆಸಲಾಯಿತು. ಇದರಿಂದ ತನ್ನ ಪತ್ನಿಗೆ ಗರ್ಭಪಾತವಾಯಿತು ಎಂದು ಅರ್ಜಿದಾರರು ಪ್ರತಿಪಾದಿಸಿದರು. ನ್ಯಾಯಾಲಯದ ಅನುಕಂಪ ಪಡೆಯುವ ಹತಾಶ ಪ್ರಯತ್ನವಾಗಿ ಅವರು ಭ್ರೂಣವನ್ನು ನ್ಯಾಯಾಲಯಕ್ಕೆ ತಂದರು. ಆರಂಭದಲ್ಲಿ ಅವರು ದಯಾ ಮರಣ ವಿಧಿಸುವಂತೆ ಕೋರಿದರು. ಅನಂತರ ತಮ್ಮ ಮನವಿಯನ್ನು ಬದಲಾಯಿಸಿದರು. ಕುಟುಂಬ ಅನುಭವಿಸಿದ ದೈಹಿಕ, ಭಾವನಾತ್ಮಕ ನೋವಿಗೆ ಹಾಗೂ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ನೀಡುವಂತೆ ಕೋರಿದರು ಎಂದು ‘ಲೈವ್ ಲಾ’ ವರದಿ ಮಾಡಿದೆ. ಅರ್ಜಿಯಲ್ಲಿ ಗಂಭೀರ ಆರೋಪಗಳಿವೆ. ಆದರೆ, ಅದಕ್ಕೆ ಪೂರಕವಾದ ಯಾವುದೇ ಪುರಾವೆಗಳಿಲ್ಲ. ಅರ್ಜಿದಾರರು ಈ ಘಟನೆಯ ಕುರಿತು ಈ ಹಿಂದೆ ಎರಡು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸಿದ ಬಳಿಕ ಅವರು ತಮ್ಮ ಅರ್ಜಿಗಳನ್ನು ಹಿಂದೆಗೆದುಕೊಂಡಿದ್ದರು ಎಂದು ನ್ಯಾಯಮೂರ್ತಿ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಅಧಿಕಾರಿಗಳ ನೇಮಕಕ್ಕೆ ಸದನದಲ್ಲಿ ಕುಂದಾಪುರ ಶಾಸಕರ ಆಗ್ರಹ
ಕುಂದಾಪುರ, ಮಾ.18: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷಿ ಅಧಿಕಾರಿಗಳ ಕೊರತೆಯಿಂದ ರೈತರಿಗೆ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಹಳಷ್ಟು ಅನಾನುಕೂಲವಾಗುತ್ತಿರುವ ಬಗ್ಗೆ ಬೆಂಗಳೂರಿನ ಅಧಿವೇಶನದಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಮಂಜೂರಾದ 25 ಕೃಷಿ ಅಧಿಕಾರಿ ಹುದ್ದೆಗೆ ಕೇವಲ 9 ಹುದ್ದೆ ಭರ್ತಿ ಮಾಡಲಾಗಿದೆ. ಸಹಾಯಕ ಕೃಷಿ ಅಧಿಕಾರಿ ಒಟ್ಟು 45 ಹುದ್ದೆ ಮಂಜೂರಾಗಿದ್ದು, ಕೇವಲ ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ. ಕುಂದಾಪುರದಲ್ಲಿ ಅತಿ ಅಗತ್ಯ ಇರುವ ಸಹಾಯಕ ಕೃಷಿ ನಿರ್ದೇಶಕರ ಹುದ್ದೆ ಖಾಲಿ ಇದೆ ಎಂದರು. ಜಿಲ್ಲೆಯಲ್ಲಿ ಒಟ್ಟು 143 ಹುದ್ದೆ ಮಂಜುರಾಗಿದ್ದು, ಅದರಲ್ಲಿ 30 ಹುದ್ದೆ ಮಾತ್ರ ಭರ್ತಿಯಾಗಿದ್ದು 113 ಹುದ್ದೆ ಖಾಲಿಯಿದೆ. ಇಷ್ಟು ಹುದ್ದೆಗಳನ್ನು ಖಾಲಿ ಬಿಟ್ಟು ರೈತರಿಗೆ ಯಾವ ರೀತಿ ಸೇವೆ ನೀಡುತ್ತೀರಾ ಎಂದು ಸಚಿವರು ತಿಳಿಸಬೇಕೆಂದು ಅವರು ಹೇಳಿದರು. ಕುಂದಾಪುರದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯನ್ನು ಭರ್ತಿಗೊಳಿಸುವುದರೊಂದಿಗೆ ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಯನ್ನು ಶೀಘ್ರ ಭರ್ತಿ ಮಾಡುವಂತೆ ಶಾಸಕರು ಅಧಿವೇಶನದ ಪ್ರಶ್ನೋತ್ತರ ಸಂದರ್ಭದಲ್ಲಿ ಆಗ್ರಹಿಸಿದರು.
ಮಧ್ಯಪ್ರಾಚ್ಯ ಸಂಘರ್ಷ| ಇರಾನ್-ಅಝರ್ಬೈಜಾನ್ ಗಡಿಯಲ್ಲಿ ಸಿಲುಕಿದ 200ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು
ಶ್ರೀನಗರ, ಮಾ. 18: 200ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಇರಾನ್ನ ಅಸ್ತಾರಾ ಗಡಿ ಸಮೀಪ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಜಮ್ಮು ಹಾಗೂ ಕಾಶ್ಮೀರದ ವಿದ್ಯಾರ್ಥಿಗಳು ಎಂದು ವರದಿಯಾಗಿದೆ. ಅಧಿಕಾರಿಗಳ ದುರ್ಬಲ ಸಮನ್ವಯ ಹಾಗೂ ಸಂವಹನದ ಕೊರತೆ ಇದಕ್ಕೆ ಕಾರಣ ಎಂದು ವಿದ್ಯಾರ್ಥಿಗಳ ಕುಟುಂಬಗಳು ಆರೋಪಿಸಿವೆ. ಇರಾನ್ನಿಂದ ಸುಮಾರು 70ರಿಂದ 80 ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ದ ನಂತರ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಎಂದು ಇರಾನ್ನಲ್ಲಿ ಸಿಲುಕಿಗೊಂಡ ವಿದ್ಯಾರ್ಥಿಗಳಲ್ಲಿ ಓರ್ವನ ತಂದೆ ಸುಹೈಲ್ ಮುಝಾಮಿಲ್ ಖಾದ್ರಿ ತಿಳಿಸಿದ್ದಾರೆ. ‘‘ಮಾರ್ಚ್ 14 ಟಿಕೆಟ್ ಹೊಂದಿದ್ದವರು, ಅಲ್ಲದೆ ಮಾರ್ಚ್ 18, 19 ಹಾಗೂ 20ರ ಟಿಕೆಟ್ ಹೊಂದಿದ್ದ ಕೆಲವರನ್ನು ಹೊರಗೆ ಕರೆದೊಯ್ಯಲಾಗಿದೆ. ಆದರೆ, ಮಾರ್ಚ್ 15, 16 ಹಾಗೂ 17ರಂದು ಪ್ರಯಾಣಿಸಬೇಕಾಗಿದ್ದ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಅಝರ್ಬೈಜಾನ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಾರಿಗೆ ಅನುಮತಿ ನೀಡಲು ನಿರಾಕರಿಸುತ್ತಿರುವುದರಿಂದ ಸುಮಾರು 200 ರಿಂದ 250 ವಿದ್ಯಾರ್ಥಿಗಳು ಅಸ್ತಾರಾ ಬಳಿಯ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಜಮ್ಮು ಹಾಗೂ ಕಾಶ್ಮೀರದ ವಿದ್ಯಾರ್ಥಿಗಳು ಎಂದು ಅವರು ಹೇಳಿದ್ದಾರೆ. ‘‘ನಾವು ಈ ಸಮಸ್ಯೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತಂದಿದ್ದೇವೆ’’ ಎಂದು ಜಮ್ಮು ಹಾಗೂ ಕಾಶ್ಮೀರ ವಿದ್ಯಾರ್ಥಿಗಳ ಸಂಘಟನೆಯ ರಾಷ್ಟ್ರೀಯ ಸಂಚಾಲಕ ನಾಸಿರ್ ಖ್ವುಹಾನಿ ಅವರು ತಿಳಿಸಿದ್ದಾರೆ. ಅಝರ್ಬೈಜಾನ್ನಿಂದ ಕೇವಲ 24 ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ಯಲಾಗಿದೆ. ಆದರೆ, 140ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಇರಾನ್ ಗಡಿಯಿಂದ ಅರ್ಮೇನಿಯಾ ಹಾಗೂ ಅಲ್ಲಿಂದ ದಿಲ್ಲಿ, ಮುಂಬೈಗೆ ಕರೆದೊಯ್ಯಲಾಗಿದೆ ಎಂದು ಖಾದ್ರಿ ತಿಳಿಸಿದ್ದಾರೆ.
ಗ್ಯಾಸ್ ಬೆಲೆ ಏರಿಕೆ ನೆಪದಲ್ಲಿ ಆನ್ಲೈನ್ ವಂಚನೆ ಹೆಚ್ಚಳ: ಉಡುಪಿ ಎಸ್ಪಿ ಹರಿರಾಂ ಶಂಕರ್
ಉಡುಪಿ, ಮಾ.18: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವುದನ್ನೇ ನೆಪವಾಗಿಟ್ಟುಕೊಂಡು ಸೈಬರ್ ಅಪರಾಧಿಗಳು ಆನ್ಲೈನ್ ವಂಚನೆ ಎಸಗುತ್ತಿರುವುದು ವರದಿಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಮಾ.11ರಂದು ಸಂತೆಕಟ್ಟೆ ಮೂಲದ ಹಿರಿಯ ನಾಗರಿಕರಾದ ಲೀಲಿ ಪ್ರೋರಿನ್ ಡಿಸಿಲ್ವಾ ಎಂಬವರಿಗೆ ಮುಂಬೈ ಯಿಂದ ಮಹಾನಗರ ಗ್ಯಾಸ್ ಹೇಳಿಕೊಂಡು ಕರೆ ಮಾಡಿ, ವಾಟ್ಸಾಪ್ನಲ್ಲಿ ಎಪಿಕೆ ಆ್ಯಪ್ ಕಳುಹಿಸಿ 1,45,022ರೂ. ಹಣ ಆನ್ಲೈನ್ ವಂಚನೆ ಎಸಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಂಚಿಸಲಾದ ಹಣದಲ್ಲಿ 50ಸಾವಿರ ರೂ. ಹಣವನ್ನು ಫ್ರೀಝ್ ಮಾಡಿ ಉಳಿಸಿಕೊಳ್ಳಲಾಗಿದೆಂದು ಅವರು ಮಾಹಿತಿ ನೀಡಿದರು. ಇಂತಹ ಮತ್ತೊಂದು ಪ್ರಕರಣ ಉಡುಪಿಯಲ್ಲಿ ದಾಖಲಾಗಿದ್ದು, ಇದರಲ್ಲಿಯೂ ಎಪಿಕೆ ಆ್ಯಪ್ ಕಳುಹಿಸಿ 6.5ಲಕ್ಷ ರೂ. ಹಣವನ್ನು ಆನ್ಲೈನ್ ನಲ್ಲಿ ವಂಚಿಸಲಾಗಿದೆ. ಡಾಟ್ ಎಪಿಕೆ ಫೈಲ್ ವಾಟ್ಸಾಪ್ನಲ್ಲಿ ಕಳುಹಿಸಿ ಡೌನ್ ಲೋಡ್ ಮಾಡಲು ಹೇಳುವುದು ಸೈಬರ್ ಅಪರಾಧಕ್ಕಾಗಿ ಮಾತ್ರ. ಬೇರೆ ಯಾರು ಕೂಡ ಇಂತಹ ಫೈಲ್ ಕಳುಹಿಸಿ ಡೌನ್ಲೌಡ್ ಮಾಡಲು ಹೇಳುವುದಿಲ್ಲ. ಹಾಗಾಗಿ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅವರು ತಿಳಿಸಿದರು. ಕೆಲವು ಆನ್ಲೈನ್ ವಂಚಕರು ಕರೆ ಮಾಡಿ ನಮ್ಮ ಆ್ಯಪ್ನಲ್ಲಿ ಗ್ಯಾಸ್ ಬುಕ್ ಮಾಡಿದರೆ ಕೂಡಲೇ ಗ್ಯಾಸ್ ಡಿಲಿವರಿಯಾಗುತ್ತದೆ, ಹಳೆಯ ಸ್ಟಾಕ್ ಗ್ಯಾಸ್ ಸಿಲಿಂಡರ್ನ್ನು ಹಳೆಯ ದರದಲ್ಲಿಯೇ ನೀಡುತ್ತೇವೆ, ಈಗಾಲೇ ಬುಕ್ ಮಾಡಿ ಗ್ಯಾಸ್ ಪಡೆದುಕೊಳ್ಳಿ ಎಂದು ಹೇಳಿಕೊಂಡು ಲಿಂಕ್, ವೆಬ್ಸೈಟ್, ಆ್ಯಪ್ಗಳನ್ನು ಕಳುಹಿಸಿ ವಂಚನೆ ಮಾಡುತ್ತಿದ್ದಾರೆ. ಇದನ್ನು ನಂಬಿ ಯಾರು ಕೂಡ ಮೋಸ ಹೋಗಬಾರದು. ಈ ಹಿಂದೆ ಹೇಗೆ ಗ್ಯಾಸ್ ಬುಕ್ ಮಾಡಿ ಪಡೆಯುತ್ತಿದ್ದಿರೋ ಅದೇ ರೀತಿ ಗ್ಯಾಸ್ ಪಡೆದುಕೊಳ್ಳಿ ಎಂದರು. ಗೃಹ ಬಳಕೆ ಅನಿಲದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಈಗಾಗಲೇ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಆದುದರಿಂದ ಫಾಸ್ಟ್ ಗ್ಯಾಸ್ ಬುಕಿಂಗ್, ಕಡಿಮೆ ದರದಲ್ಲಿ ಗ್ಯಾಸ್, ಕೆವೈಎಸಿ ಅಪ್ಡೇಟ್ ಮಾಡಲು ಹೇಳಿ ಯಾರಾದರೂ ಕರೆ ಮಾಡಿದರೆ ಯಾವುದೇ ಕಾರಣಕ್ಕೂ ನಂಬಬಾರದು. ಅದರಲ್ಲಿ ಯಾವುದೇ ಸಂಶಯ ಇದ್ದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ. ಒಂದು ವೇಳೆ ವಂಚನೆಗೆ ಒಳಗಾದರೆ ಕೂಡಲೇ ಠಾಣೆಗೆ ಬಂದು ದೂರು ಕೊಡಿ. ಇದರಿಂದ ಕಳೆದುಕೊಂಡ ಹಣದಲ್ಲಿ ಬಹುತೇಕ ಹಣ ವಾಪಾಸ್ಸು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ತೈಲ ಆಮದು ದ್ವಿಗುಣ| ಸಮುದ್ರದ ಮಧ್ಯೆ ಯೂ-ಟರ್ನ್ ಮಾಡಿ ಭಾರತದತ್ತ ಆಗಮಿಸುತ್ತಿರುವ ರಶ್ಯಾದ ತೈಲ ಟ್ಯಾಂಕರ್
ಹೊಸದಿಲ್ಲಿ,ಮಾ.18: ಭಾರತವು ರಶ್ಯಾದಿಂದ ಆಮದುಗಳನ್ನು ದ್ವಿಗುಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾಕ್ಕೆ ತೆರಳುತ್ತಿದ್ದ ರಶ್ಯಾದ ತೈಲ ಟ್ಯಾಂಕರ್ ‘ಅಕ್ವಾ ಟೈಟನ್’ ದಕ್ಷಿಣ ಚೀನಾ ಸಮುದ್ರದಲ್ಲಿ ಯೂ-ಟರ್ನ್ ಮಾಡಿದ್ದು,ಈಗ ಭಾರತದತ್ತ ಧಾವಿಸುತ್ತಿದೆ. ಶಿಪ್-ಟ್ರ್ಯಾಕಿಂಗ್ ಡೇಟಾ ಪ್ರಕಾರ ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರ ಬಂದರಿನಿಂದ ಯೂರಲ್ಸ್ (ರಶ್ಯಾದ ಪ್ರದೇಶ) ತೈಲವನ್ನು ತುಂಬಿಕೊಂಡಿದ್ದ ಅಕ್ವಾ ಟೈಟನ್ ಮಾ.21ರಂದು ನವಮಂಗಳೂರು ಬಂದರಿಗೆ ಆಗಮಿಸಲಿದೆ. ಈ ಮಧ್ಯಮ ಗಾತ್ರದ ತೈಲ ಟ್ಯಾಂಕರ್ ಮಾರ್ಚ್ ಮಧ್ಯದಲ್ಲಿ ದಿಕ್ಕನ್ನು ಬದಲಿಸುವ ಮುನ್ನ ಚೀನಾದ ರಿಝಾಹೊ ಬಂದರನ್ನು ತನ್ನ ಗಮ್ಯತಾಣವನ್ನಾಗಿಸಿಕೊಂಡಿತ್ತು. ಇದಕ್ಕೆ ಕೆಲವೇ ದಿನಗಳ ಹಿಂದೆ ಅಮೆರಿಕವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಭಾರತಕ್ಕೆ ಅನುಮತಿ ನೀಡಿತ್ತು. ಇರಾನ್ ಯುದ್ಧದಿಂದಾಗಿ ಮಧ್ಯಪ್ರಾಚ್ಯದಿಂದ ಪೂರೈಕೆಯಲ್ಲಾದ ನಷ್ಟವನ್ನು ಸರಿದೂಗಿಸುವ ಪ್ರಯತ್ನದಲ್ಲಿ ದೇಶಕ್ಕೆ ನೆರವಾಗಲು ಭಾರತೀಯ ಸಂಸ್ಕರಣಾಗಾರಗಳು ಅಮೆರಿಕದ ಅನುಮತಿ ನಂತರದ ವಾರದಲ್ಲಿ ರಶ್ಯಾದಿಂದ 30 ಮಿಲಿಯನ್ ಬ್ಯಾರೆಲ್ಗಳಷ್ಟು ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸಿವೆ. ವೊರ್ಟೆಕ್ಸಾ ಲಿ.ಪ್ರಕಾರ ರಶ್ಯಾದ ತೈಲವನ್ನು ಹೊತ್ತಿರುವ ಕನಿಷ್ಠ ಏಳು ಟ್ಯಾಂಕರ್ಗಳು ಯಾನದ ನಡುವೆಯೇ ತಮ್ಮ ಗಮ್ಯಸ್ಥಾನಗಳನ್ನು ಚೀನಾದಿಂದ ಭಾರತಕ್ಕೆ ಬದಲಿಸಿವೆ. ಭಾರತದ ಪ್ರಮುಖ ಸಂಸ್ಕರಣಾಗಾರಗಳು ಈಗ ರಶ್ಯಾದ ಕಚ್ಚಾ ತೈಲ ಮಾರುಕಟ್ಟೆಗೆ ಮುಗಿಬಿದ್ದಿವೆ. ಪ್ರತ್ಯೇಕವಾಗಿ ಸುಯೆಜ್ಮ್ಯಾಕ್ಸ್ ಝೌಝೌ ತೈಲ ಟ್ಯಾಂಕರ್ ಭಾರತದ ಸಿಕ್ಕಾವನ್ನು ತನ್ನ ಮುಂದಿನ ಗಮ್ಯಸ್ಥಾನವಾಗಿಸಿಕೊಂಡಿದ್ದು, ಮಾ.25ರ ವೇಳೆಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಟ್ಯಾಂಕರ್ ಕಝಕ್ ಸಿಪಿಸಿ ಬ್ಲೆಂಡ್ ಕಚ್ಚಾ ತೈಲವನ್ನು ಹೊತ್ತಿದೆ. ಅದು ರಶ್ಯಾದ ಕಪ್ಪು ಸಮುದ್ರದ ನೊವೊರೊಸ್ಸಿಯಸ್ಕ್ನಿಂದ ಚೀನಾದ ರಿಝಾಹೊ ಬಂದರಿಗೆ ಯಾನವನ್ನು ಆರಂಭಿಸಿತ್ತಾದರೂ, ಮಾರ್ಚ್ ಪೂರ್ವಾರ್ಧದಲ್ಲಿ ತನ್ನ ಮಾರ್ಗವನ್ನು ಬದಲಿಸಿ ಭಾರತಕ್ಕೆ ಬರುತ್ತಿದೆ.
ಡಿಜಿಟಲ್ ಅರೆಸ್ಟ್ | ನಿವೃತ್ತ ಬ್ಯಾಂಕ್ ಅಧಿಕಾರಿಗೆ 1.29 ಕೋಟಿ.ರೂ. ವಂಚನೆ
ನೊಯ್ಡಾ (ಉ.ಪ್ರ),ಮಾ.18: ‘ಡಿಜಿಟಲ್ ಬಂಧನ’ಗಳ ಕುರಿತು ಎಚ್ಚರಿಕೆಗಳ ಹೊರತಾಗಿಯೂ ಜನರು ಈ ವಂಚನೆಗೆ ಬಲಿಯಾಗುತ್ತಲೇ ಇದ್ದಾರೆ. ಇಂತಹ ಇತ್ತೀಚಿನ ಘಟನೆಯೊಂದರಲ್ಲಿ ಟ್ರಾಯ್ ಅಧಿಕಾರಿಗಳ ಸೋಗಿನಲ್ಲಿ ಗ್ರೇಟರ್ ನೊಯ್ಡಾದ ನಿವಾಸಿಯಾಗಿರುವ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಓರ್ವರನ್ನು ಎರಡು ದಿನಗಳ ಕಾಲ ‘ಡಿಜಿಟಲ್ ಬಂಧನ’ದಲ್ಲಿರಿಸಿದ್ದ ವಂಚಕರು ಅವರಿಂದ 1.29 ಕೋ.ರೂ.ಗಳನ್ನು ದೋಚಿದ್ದಾರೆ. ಪೊಲೀಸರು ವಂಚಕರನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ನಿವೃತ್ತ ಬ್ಯಾಂಕ್ ಅಧಿಕಾರಿಯ ಹೆಸರಿನಲ್ಲಿ ನೀಡಲಾಗಿದ್ದ ಸಿಮ್ ಕಾರ್ಡ್ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂದು ತಿಳಿಸಿದ್ದ ವಂಚಕರು, ತನಿಖೆಗೆ ಸಹಕರಿಸದಿದ್ದರೆ ಅವರನ್ನು ಬಂಧಿಸುವುದಾಗಿ ಬೆದರಿಕೆಯೊಡ್ಡಿದ್ದರು. ಸಂತ್ರಸ್ತ ವ್ಯಕ್ತಿಯನ್ನು ನಂಬಿಸಲು ವಂಚಕರು ವೀಡಿಯೊ ಕರೆಯಲ್ಲಿ ನಕಲಿ ನ್ಯಾಯಾಲಯದ ಕೊಠಡಿಯನ್ನೂ ತೋರಿಸಿದ್ದರು. ಸಂತ್ರಸ್ತ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಪರಿಶೀಲಿಸುವ ನೆಪದಲ್ಲಿ ಅವರಿಂದ 1.29 ಕೋ.ರೂ.ಗಳನ್ನು ಹಂತ ಹಂತವಾಗಿ ತಾವು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. 48 ಗಂಟೆಗಳ ‘ಡಿಜಿಟಲ್ ಬಂಧನ’ಕ್ಕೆ ಒಳಗಾಗಿದ್ದು ಗೊತ್ತಾದ ಬಳಿಕ ಸಂತ್ರಸ್ತ ವ್ಯಕ್ತಿ ಗ್ರೇಟರ್ ನೊಯ್ಡಾದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಸರಕಾರಿ ಅಥವಾ ಕಾನೂನು ಜಾರಿ ಸಂಸ್ಥೆ ವಿಡಿಯೋ ಕರೆಯ ಮೂಲಕ ಬಂಧಿಸುವುದಿಲ್ಲ ಅಥವಾ ಹಣಕ್ಕಾಗಿ ಬೇಡಿಕೆಯಿಡುವುದಿಲ್ಲ. ಇಂತಹ ಕರೆಗಳಿಗೆ ಭಯಪಡಬೇಡಿ, ಹಣವನ್ನು ವರ್ಗಾಯಿಸುವ ಮುನ್ನ ಅಧಿಕೃತ ಏಜೆನ್ಸಿಗಳು ಅಥವಾ ಪೊಲೀಸರನ್ನು ಸಂಪರ್ಕಿಸಿ ಎಂದು ಅಧಿಕಾರಿಗಳು ಪದೇ ಪದೇ ನಾಗರಿಕರನ್ನು ಎಚ್ಚರಿಸಿದ್ದಾರೆ. ಆದರೂ ಜನರು ಡಿಜಿಟಲ್ ಅರೆಸ್ಟ್ ವಂಚನೆಗಳಿಗೆ ಬಲಿಯಾಗುವುದು ನಿಂತಿಲ್ಲ. 2026ರಲ್ಲಿ ಈವರೆಗೆ ಇಂತಹ ಎರಡು ಭಾರೀ ಪ್ರಕರಣಗಳು ಬೆಳಕಿಗೆ ಬಂದಿವೆ. ಉತ್ತರಾಖಂಡದ ಡೆಹ್ರಾಡೂನ್ನ 70ರ ಹರೆಯದ ಮಹಿಳೆಯೋರ್ವಳನ್ನು ಹಲವಾರು ವಾರಗಳ ಕಾಲ ‘ಡಿಜಿಟಲ್ ಬಂಧನ’ದಲ್ಲಿರಿಸಿದ್ದ ವಂಚಕರು 3.09 ಕೋ.ರೂ.ಗಳನ್ನು ದೋಚಿದ್ದರು. ದಿಲ್ಲಿಯಲ್ಲಿ ವೃದ್ಧ ಎನ್ನಾರೈ ವೈದ್ಯ ದಂಪತಿಯನ್ನು ಎರಡು ವಾರಗಳ ಕಾಲ ‘ಡಿಜಿಟಲ್ ಬಂಧನ’ಕ್ಕೊಳಪಡಿಸಿದ ಸೈಬರ್ ಖದೀಮರು 14.85 ಕೋ.ರೂ.ಗಳನ್ನು ವಂಚಿಸಿದ್ದರು.
ಪ್ರೀತಿಸಿದ್ದು ನಮ್ಮನ್ನು, ಮದುವೆಯಾಗಿದ್ದು ಮೋದಿಯನ್ನು: ರಾಜ್ಯಸಭೆಯಲ್ಲಿ ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತನ್ನ ವಿದಾಯ ಭಾಷಣದಲ್ಲಿ ತಾನು ಸಂಸತ್ತಿನಲ್ಲಿ ಕಳೆದ ಸಮಯವು ತನ್ನನ್ನು ಸಮೃದ್ಧಗೊಳಿಸಿದೆ ಎಂದು ಮೆಲುಕು ಹಾಕಿದರು. ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲೆಳೆಯಲು ಅವರು ಮರೆಯಲಿಲ್ಲ. ‘ದೇವೇಗೌಡರನ್ನು ನಾನು ಕಳೆದ 54 ವರ್ಷಗಳಿಂದಲೂ ಬಲ್ಲೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಏನಾಯಿತೋ ನನಗೆ ಗೊತ್ತಿಲ್ಲ. ಅವರು ನಮ್ಮೊಂದಿಗೆ ಡೇಟಿಂಗ್ ಮಾಡಿದ್ದರು, ನಮ್ಮನ್ನು ಪ್ರೀತಿಸಿದ್ದರು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮದುವೆಯಾದರು’ ಎಂದು ಖರ್ಗೆ ಹೇಳಿದಾಗ ಸದನವು ನಗೆಗಡಲಲ್ಲಿ ತೇಲಿತು. ರಾಜ್ಯಸಭೆಯಲ್ಲಿ ಉಪಸ್ಥಿತರಿದ್ದ ಮೋದಿಯವರಿಗೂ ನಗುವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. 1996 ಲೋಕಸಭಾ ಚುನಾವಣೆಗಳ ಬಳಿಕ ದೇವೇಗೌಡರು ಪ್ರಧಾನಿಯಾದಾಗ ಕಾಂಗ್ರೆಸ್ ಅವರ ಸಂಯುಕ್ತ ರಂಗ ಸರಕಾರವನ್ನು ಬೆಂಬಲಿಸಿತ್ತು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೌಡರ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಮೈತ್ರಿಕೂಟವು ಗೆದ್ದ ಬಳಿಕ ಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ ಹಲವಾರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಂಡೆದ್ದ ಬಳಿಕ 2019ರಲ್ಲಿ ಸರಕಾರವು ಪತನಗೊಂಡಿತ್ತು. ನಂತರ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಇದನ್ನೇ ಖರ್ಗೆ ತನ್ನ ಹಾಸ್ಯಚಟಾಕಿಯಲ್ಲಿ ಸೂಕ್ಷ್ಮವಾಗಿ ಸೂಚಿಸಿದ್ದರು.
5.70 ಲಕ್ಷ ಪೋಡಿ ಅರ್ಜಿಗಳು ಪರಿಶೀಲನೆಯಲ್ಲಿವೆ : ಸಚಿವ ಕೃಷ್ಣಬೈರೇಗೌಡ
ಬೆಂಗಳೂರು : ಸರಕಾರದಿಂದ ಮಂಜೂರಾಗಿರುವ ಜಮೀನುಗಳಿಗೆ ಸರಕಾರದಿಂದಲೇ ಪೋಡಿ ಮಾಡಿಸುವ ಅಭಿಯಾನ ಕೈಗೊಂಡಿದ್ದೇವೆ. 5.70 ಲಕ್ಷ ಪೋಡಿ ಅರ್ಜಿಗಳು ಬಂದಿದ್ದು, ವಿವಿಧ ಹಂತದಲ್ಲಿ ಪರಿಶೀಲನೆಯಲ್ಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬುಧವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಪ್ರತಾಪಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ಮೋಜಿಣಿ ತಂತ್ರಾಂಶದ ಮೂಲಕ ಈವರೆಗೂ ಸ್ವೀಕೃತವಾದ 5.70 ಲಕ್ಷ ಅರ್ಜಿಗಳಲ್ಲಿ 1.60 ಲಕ್ಷ ಅರ್ಜಿಗಳು ಪಹಣಿ ತಿದ್ದುಪಡಿಯಾಗಿ ತಾಲೂಕು ಕಚೇರಿಗಳಲ್ಲಿ ಪರಿಶೀಲನೆ ಹಂತದಲ್ಲಿವೆ ಎಂದರು. 4.09 ಲಕ್ಷ ಅರ್ಜಿಗಳು ಅಳತೆ ಮತ್ತು ವಿವಿಧ ಹಂತದಲ್ಲಿ ಭೂ ಮಾಪನ ಇಲಾಖೆಯಲ್ಲಿ ಬಾಕಿಯಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ 60,943 ಅರ್ಜಿಗಳ ಪೋಡಿ ಮಾಡಲು ಆದೇಶಿಸಲಾಗಿದೆ. ಈ ಪೈಕಿ 23,621 ಅರ್ಜಿಗಳು ಪೋಡಿ ಆಗಿವೆ. ಉಳಿದ ಬಾಕಿ ಪೋಡಿ ಅರ್ಜಿಗಳು ಡಿಸೆಂಬರ್ನೊಳಗೆ ಮುಗಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು. ದಕ್ಷಿಣಕನ್ನಡದಲ್ಲಿ 2018ರಿಂದ 2023ರ ನಡುವೆ 1,948 ರೈತರ ಪೋಡಿ ಆಗಿತ್ತು. ನಮ್ಮ ಸರಕಾರ ಬಂದ ಬಳಿಕ 23 ಸಾವಿರ ಪೋಡಿ ಕಾರ್ಯ ಮಾಡಲಾಗಿದೆ. ರಾಜ್ಯದಲ್ಲಿ 5 ವರ್ಷಗಳ ಹಿಂದೆ ರಾಜ್ಯದಲ್ಲಿ 8.5 ಲಕ್ಷ ಪೋಡಿಯಾಗಿದ್ದರೆ, ಹಿಂದಿನ ಎರಡೂವರೆ ವರ್ಷಗಳಲ್ಲಿ 2.16 ಲಕ್ಷ ಪೋಡಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಭೂ ಅಳತೆ ಕಾರ್ಯ ತ್ವರಿತಗೊಳಿಸಲು ಭೂ ಮಾಪಕರಿಗೆ ಆಧುನಿಕ ಉಪಕರಣ ಹಂತ-ಹಂತವಾಗಿ ಖರೀದಿಸಿ ನೀಡಲಾಗುತ್ತಿದೆ. ಈಗಾಗಲೇ 590 ರೋವರ್ಸ್ಗಳನ್ನು ಭೂ ಮಾಪಕರಿಗೆ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ರಾಜಕೀಯದಲ್ಲಿ ಪೂರ್ಣ ವಿರಾಮವಿಲ್ಲ: ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರನ್ನು ಶ್ಲಾಘಿಸಿದ ಪ್ರಧಾನಿ ಮೋದಿ
59 ರಾಜ್ಯಸಭಾ ಸದಸ್ಯರಿಗೆ ಬೀಳ್ಕೊಡುಗೆ
ಶಾಸಕರನ್ನು ನಿಯಂತ್ರಿಸುವ ಜವಾಬ್ದಾರಿ ಮುಖ್ಯಮಂತ್ರಿಯದ್ದು: ಡಿ.ಕೆ.ಶಿವಕುಮಾರ್
ʼಉಪಚುನಾವಣೆʼ ಎರಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮ
Glenn Philips Pilot Skills- ನ್ಯೂಜಿಲೆಂಡ್ನ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಅಪ್ಪಟ ಬಹುಮುಖ ಪ್ರತಿಭೆ. ಮೈದಾನದಲ್ಲಿ ಜಿಂಕೆಯಂತೆ ಹಾರಿ ಚೆಂಡನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವರು ವಿಮಾನವನ್ನೂ ಹಾರಿಸಬಲ್ಲರು. ಅವರು ಇತ್ತೀಚೆಗೆ ಆಕ್ಲೆಂಡ್ನಲ್ಲಿ ಲಘು ವಿಮಾನವೊಂದನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡುವ ಮೂಲಕ ತಮ್ಮ ಪೈಲಟ್ ಕೌಶಲ್ಯ ಪ್ರದರ್ಶಿಸಿದ್ದಾರೆ. ಇದರ ವಿಡಿಯೋ, ಫೋಟೋಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಕ್ರಿಕೆಟ್ ನಿವೃತ್ತಿ ಬಳಿಕ ಒಂದು ವೇಳೆ ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಎದುರಾದರೆ ಆಗ ಪೈಲಟ್ ಆಗುವೆ ಎಂದಿದ್ದಾರೆ.
ಹೆಬ್ರಿ, ಬೈಂದೂರು ತಾಲೂಕುಗಳಲ್ಲಿ ಬ್ಯಾಂಕಿಂಗ್ ಸೇವೆ ವಿಸ್ತರಿಸಿ: ನಿಶಾ ಠಾಕೂರ್
ಉಡುಪಿ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಭೆ
ಧರ್ಮಸ್ಥಳದ 74 ಅಸಹಜ ಸಾವುಗಳ ತನಿಖೆಗೆ ಕೋರಿದ ಪಿಐಎಲ್; ಸರಕಾರದಿಂದ ವರದಿ ಕೇಳಿದ ಹೈಕೋರ್ಟ್
ಬೆಂಗಳೂರು : ಧರ್ಮಸ್ಥಳದಲ್ಲಿ ಮೂರು ದಶಕಗಳ ಅವಧಿಯಲ್ಲಿ ಸಂಭವಿಸಿವೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅಸಹಜ ಸಾವುಗಳ ಸಂಬಂಧ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಎಸ್ಐಟಿಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಅರ್ಜಿದಾರರು ಪ್ರಸ್ತಾಪಿಸಿರುವ ಪ್ರಕರಣಗಳು 2002ರಲ್ಲಿ ಸಂಭವಿಸಿದೆ. 74 ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದ್ದು, ಯುಡಿಆರ್ ದಾಖಲಿಸಲಾಗಿದೆ. ಸದ್ಯ ರಚಿಸಲಾಗಿರುವ ವಿಶೇಷ ತನಿಖಾ ದಳಕ್ಕೆ ಪ್ರಕರಣಗಳನ್ನು ವರ್ಗಾಯಿಸುವಂಥದ್ದು ಏನೂ ಇಲ್ಲ. ಯುಡಿಆರ್ಗಳಿಗೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆ ಸಲ್ಲಿಸಿದರೆ ಅಥವಾ ದೂರು ದಾಖಲಿಸಿದರೆ, ಅದನ್ನು ತನಿಖೆಗೆ ಒಳಪಡಿಸಲಾಗುವುದು. ಇದೊಂದು ಸಾಮಾನ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದೆ ಎಂದರು. ಮುಂದುವರಿದು, ಅರ್ಜಿದಾರೆಯ ಸಹೋದರನನ್ನು ಧರ್ಮಸ್ಥಳ ಸಾಮೂಹಿಕ ದಹನ ಪ್ರಕರಣದಲ್ಲಿ ತನಿಖೆಗೆ ಒಳಪಡಿಸಲಾಗಿತ್ತು. ಇದರ ಸಂಬಂಧಿತ ಎಲ್ಲ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗುವುದು ಎಂದರಲ್ಲದೆ, 2002ರ ಮೇ 6ರಂದು ಸಿಕ್ಕಿದ್ದ ಬಾಲಕಿಯ ಶವಕ್ಕೆ ಸಂಬಂಧಿಸಿದಂತೆ ಯುಡಿಆರ್ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವ ಸಂಸ್ಕಾರ ನಡೆಸಿರುವುದು, ಲುಕ್ಔಟ್ ನೋಟಿಸ್ ಜಾರಿ ಮಾಡಿರುವುದು, ಅಂತಿಮ ವರದಿ, ವೈದ್ಯರ ಅಭಿಪ್ರಾಯ ಎಲ್ಲವೂ ಇದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಪಂಚನಾಮೆ, ಮರಣೋತ್ತರ ಪರೀಕ್ಷೆ ನಡೆಸಿಲ್ಲ: ಅರ್ಜಿದಾರರ ಪರ ವಕೀಲ ಎಸ್. ಬಾಲನ್ ವಾದ ಮಂಡಿಸಿ, ಅಸಹಜವಾಗಿ ಮೃತಪಟ್ಟವರ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಪ್ರಕ್ರಿಯೆ ಪಾಲಿಸದೆ ಮೃತದೇಹಗಳ ಸಂಸ್ಕಾರ ಮಾಡಲಾಗಿದೆ. 74 ಅಸಹಜ ಸಾವು ಪ್ರಕರಣಗಳಲ್ಲಿ ಪಂಚನಾಮೆ ಪ್ರಕ್ರಿಯೆ ನಡೆಸಲಾಗಿಲ್ಲ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಪೊಲೀಸರು ಮೃತದೇಹಗಳ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಪಂಚಾಯಿತಿಗೆ ಶಿಫಾರಸು ಮಾಡಿದ್ದಾರೆ. ಶವ ಸಂಸ್ಕಾರ ಮಾಡಿದ್ದಾರೆಯೇ, ಸುಟ್ಟಿದ್ದಾರೆಯೇ ಎಂಬುದರ ಮಾಹಿತಿ ಇಲ್ಲ. ಈ ಸಂಬಂಧ ಎಲ್ಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಹಲವು ಪ್ರಕರಣಗಳಲ್ಲಿ ಮಹಿಳೆಯರು ಲಾಡ್ಜ್ನಲ್ಲಿ ಉಳಿದುಕೊಂಡು, ನಾಪತ್ತೆಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ತನಿಖೆ ನಡೆಸಲಾಗಿಲ್ಲ. ಮೃತದೇಹಗಳನ್ನು ಸಂಸ್ಕಾರ ಮಾಡಲಾಗಿದೆ. ಆದರೆ, ಯಾವುದೇ ಎಫ್ಐಆರ್ ದಾಖಲಿಸಿ, ತನಿಖೆ ನಡೆದಿಲ್ಲ. 74 ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ ಎಂದು ತಿಳಿಸಿದರು. ಅಪರಿಚಿತ ಬಾಲಕಿಯ ಶವವೊಂದು 2002ರ ಮೇ 6ರಂದು ಧರ್ಮಸ್ಥಳ ಸಮೀಪದ ಬೈಲೂರು ಸೇತುವೆ ಬಳಿ ಸಿಕ್ಕಿತ್ತು. ಇದು ಅಸಹಜವಾಗಿದ್ದು, ಸಿಆರ್ಪಿಸಿ ಸೆಕ್ಷನ್ 174ರ ಅಡಿ ಮಹಜರು ಪ್ರಕ್ರಿಯೆ ನಡೆಸಬೇಕು. ಆದರೆ, ಮಹಜರು ಪ್ರಕ್ರಿಯೆ ನಡೆಸಿಲ್ಲ. ಮರಣೋತ್ತರ ಪರೀಕ್ಷೆಯಾಗಿಲ್ಲ. ಎಲ್ಲಿ ಶವ ಸಂಸ್ಕಾರ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ. ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಕೆಲವರು ನಾಪತ್ತೆಯಾಗಿದ್ದಾರೆ ಎಂದರು. ಆಗ ನ್ಯಾಯಪೀಠ, ತನಿಖಾ ವರದಿ ಎಲ್ಲಿದೆ? ಹಲವು ಅಸಹಜ ಸಾವಿನ ಪ್ರಕರಣದಲ್ಲಿ ತನಿಖೆಯೇ ನಡೆಯುವುದಿಲ್ಲ. ಸಾವಿಗೆ ಕಾರಣ ಏನು ಎಂಬ ಮಾಹಿತಿ ಇರಬೇಕಲ್ಲವೇ? ಎಂದು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್, ಮಹಜರು, ಮರಣೋತ್ತರ ಪರೀಕ್ಷೆ, ವೈದ್ಯರ ಹೇಳಿಕೆ ಎಲ್ಲವೂ ಇದೆ. ಇಡೀ ದಾಖಲೆಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ತನಿಖೆಯ ವಿವರ, ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ವಿಸ್ತೃತವಾದ ಆಕ್ಷೇಪಣೆಯಲ್ಲಿ ಸಲ್ಲಿಸಲಾಗುವುದು. ಸರ್ಕಾರದ ಸುತ್ತೋಲೆಯ ಪ್ರಕಾರ 2010ರವರೆಗಿನ ದಾಖಲೆಗಳನ್ನು ನಾಶಪಡಿಸಲಾಗಿದೆ. 20 ವರ್ಷಗಳ ಬಳಿಕ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪಿಐಎಲ್ ಸಲ್ಲಿಸಲಾಗಿದೆ. 2002ರ ದಾಖಲೆಗಳು ಇಲ್ಲ. 2023ರ ನವೆಂಬರ್ 23ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಹಳೆಯ ದಾಖಲೆಗಳನ್ನು ನಾಶಪಡಿಸಲಾಗಿದೆ. ಅರ್ಜಿದಾರರು ಎತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿ ಏನೆಲ್ಲ ಮಾಡಬಹುದು ಅದನ್ನು ಮಾಡಲಾಗಿದೆ ಎಂದರು. ಆಗ ನ್ಯಾಯಪೀಠ, ಈ ಹಂತದಲ್ಲಿ ಯಾವುದೇ ದಾಖಲೆ ಇಲ್ಲದೇ ಸರಕಾರ ಹೇಗೆ ತನಿಖೆ ಮಾಡುತ್ತದೆ? ಕೆಲವು ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಸರಕಾರ ಹೇಳುತ್ತಿದೆ. ಅದನ್ನು ಹೇಗೆ ಹಾಜರುಪಡಿಸಲಾಗುತ್ತದೆ? ಎಂದು ಕೇಳಿತು. ಈ ವೇಳೆ ಬಾಲನ್ ಅವರು, ಎಲ್ಲ ದಾಖಲೆಗಳನ್ನೂ ಸರಕಾರ ನಾಶಪಡಿಸಿದೆ. ಯುಡಿಆರ್ ದಾಖಲಿಸಿದ್ದು, ಸಿಆರ್ಪಿಸಿ ಸೆಕ್ಷನ್ 174ರ ಅಡಿ ಪ್ರಕ್ರಿಯೆ ಪಾಲಿಸಲಾಗಿಲ್ಲ. ಎಸ್ಐಟಿ ರಚಿಸಲಾಗಿದೆ. ನಾವು ಪ್ರಸ್ತಾಪಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಕಾರ ಏನು ತನಿಖೆ ಮಾಡಿದೆ ಎಂಬುದನ್ನು ತಿಳಿಸಲಿ. ಲಾಡ್ಜ್ನಲ್ಲಿ ಇದ್ದ ಬಾಲಕಿ ನಾಪತ್ತೆಯಾಗಿದ್ದಳು. ಆನಂತರ, ಮೃತದೇಹ ಪತ್ತೆಯಾಗಿದೆ. ಇದೆಲ್ಲಕ್ಕೂ ಸಂಬಂಧಿಸಿದ ದಾಖಲೆ ಸಲ್ಲಿಸಬೇಕು ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, 74 ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು.
ಉಡುಪಿ| ಎಸೆಸೆಲ್ಸಿ ಪರೀಕ್ಷೆ ಪ್ರಾರಂಭ; ಪ್ರಥಮ ಭಾಷೆಗೆ 52 ಮಂದಿ ಗೈರು
ಉಡುಪಿ: 2025-26ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಗಳು ಇಂದು ಉಡುಪಿ ಜಿಲ್ಲೆಯ ಒಟ್ಟು 51 ಕೇಂದ್ರಗಳಲ್ಲಿ ಪ್ರಾರಂಭಗೊಂಡಿದ್ದು, ಮೊದಲ ದಿನ ನಡೆದ ಪ್ರಥಮ ಭಾಷಾ ಪರೀಕ್ಷೆ ಯಾವುದೇ ಗೊಂದಲ, ಅಕ್ರಮ, ಅಹಿತಕರ ಘಟನೆಗಳಿಲ್ಲದೇ ಸುಲಲಿತವಾಗಿ ನಡೆದಿದೆ ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ. ಅವರು ತಿಳಿಸಿದ್ದಾರೆ. ಮೊದಲ ದಿನದ ಪರೀಕ್ಷೆಗೆ ಒಟ್ಟು 13,788 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 13,736 ಮಂದಿ ಪರೀಕ್ಷೆ ಬರೆಯುವ ಮೂಲಕ 52 ಮಂದಿ ಗೈರುಹಾಜರಾಗಿದ್ದಾರೆ. ಬೈಂದೂರು ವಲಯದ 8 ಕೇಂದ್ರಗಳಲ್ಲಿ 10 ಮಂದಿ, ಕುಂದಾಪುರದ 8 ಕೇಂದ್ರಗಳಲ್ಲಿ 7 ಮಂದಿ, ಕಾರ್ಕಳದ 9 ಕೇಂದ್ರಗಳಲ್ಲಿ 8 ಮಂದಿ, ಬ್ರಹ್ಮಾವರದ 11 ಕೇಂದ್ರಗಳಲ್ಲಿ 10 ಮಂದಿ ಹಾಗೂ ಉಡುಪಿಯ 15 ಕೇಂದ್ರಗಳಲ್ಲಿ 17 ಮಂದಿ ಇಂದು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ. ‘ಇಂದಿನ ಪರೀಕ್ಷೆಗಳು ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ಎಲ್ಲಿಯೂ ಯಾವುದೇ ವಿಧದ ಆತಂಕ, ಗೊಂದಲ ಉಂಟಾದ ವರದಿ ಬಂದಿಲ್ಲ. ಎಲ್ಲಾ ಕೇಂದ್ರಗಳಲ್ಲೂ ಎಲ್ಲಾ ಆಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾ ಗಿತ್ತು. ಮಕ್ಕಳಿಗೆ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ರೀತಿಯ ಪೂರಕ ವಾತಾವರಣ ಇತ್ತು.’ ಎಂದು ಡಿಡಿಪಿಐ ಲೋಕೇಶ್ ತಿಳಿಸಿದರು. ತಾನು ಇಂದು ಹೆಜಮಾಡಿಯಿಂದ ಪ್ರಾರಂಭಿಸಿ ಕಟಪಾಡಿಯವರೆಗೆ ಒಟ್ಟು ಆರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಎಲ್ಲಾ ಕಡೆಗಳಲ್ಲೂ ವಿದ್ಯಾರ್ಥಿಗಳು ಖುಷಿಖುಷಿಯಾಗಿ, ನಿರಾತಂಕವಾಗಿ ಪರೀಕ್ಷೆ ಬರೆಯಲು ಸನ್ನದ್ಧರಾಗಿರುವುದು ಕಂಡುಬಂತು ಎಂದರು. ಹೆಜಮಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಇಂದು ಮುಂಜಾನೆ 9:30 ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿ ಗಳನ್ನು ಭೇಟಿಯಾಗಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದೇನೆ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯುವಂತೆ ಕಿವಿಮಾತು ಹೇಳಿದ್ದೇನೆ ಎಂದು ಲೋಕೇಶ್ ತಿಳಿಸಿದರು.
ದಾವಣಗೆರೆ ದಕ್ಷಿಣ ಟಿಕೆಟ್ ಗೊಂದಲ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪ್ರಮುಖ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣಕ್ಕೆ ಟಿಕೆಟ್ ಆಕಾಂಕ್ಷಿಗಳಾದ ಎಂಟು ಮಂದಿಯ ಬಗ್ಗೆ ಚರ್ಚೆ ನಡೆದಿದೆ. ಆದರೆ ಅಭ್ಯರ್ಥಿ ಆಯ್ಕೆ ನಿರ್ಧಾರ ಸಿಎಂ, ಡಿಸಿಎಂ ಹೆಗಲಿಗೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕೈಗೊಳ್ಳಬೇಕಾದ ತಂತ್ರಗಾರಿಕೆಯ ಬಗ್ಗೆಯೂ ಚರ್ಚೆ ನಡೆದಿದೆ. ಸಭೆಯ ಬಳಿಕ ಸಚಿವರು ಏನು ಮಾಹಿತಿ ನೀಡಿದ್ದಾರೆ ಎಂಬ ವಿವರ ಇಲ್ಲಿದೆ.
ಮಂಗಳೂರು ಮಹಾನಗರಪಾಲಿಕೆಯಲ್ಲಿ ಜನವಿರೋಧಿ ನೀತಿ ಆರೋಪ: ಬಿಜೆಪಿ ಪ್ರತಿಭಟನೆ
ಮಂಗಳೂರು, ಮಾ.18: ಮಂಗಳೂರು ಮಹಾನಗರ ಪಾಲಿಕೆ ದುರಾಡಳಿತದಿಂದ ಕೂಡಿದ್ದು, ಭ್ರಷ್ಟಾಚಾರ ಮಿತಿ ಮೀರಿದ್ದು, ಜನವಿರೋಧಿ ನೀತಿ ಜಾರಿಯಲ್ಲಿದೆ. ಆಡಳಿತ ಸಂಪೂರ್ಣ ವೈಫಲ್ಯ ಅನುಭವಿಸಿದ್ದು , ಮಂಗಳೂರು ಮಹಾನಗರಪಾಲಿಕೆಯ ದುರಾಡಳಿತ ಕೊನೆಯಾಗಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಮಂಡಲದ ನೇತೃತ್ವದಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಮನಪಾ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಒಂದು ವರ್ಷದಿಂದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರ ಆಡಳಿತಾಕಾರಿಯವರ ಕೈಯಲ್ಲಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಜನರ ಯಾವುದೇ ಸಮಸ್ಯೆಗಳಿಗೆ ಪಾಲಿಕೆಯಿಂದ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎಂದು ಜನತೆ ಆರೋಪಿಸಿದರು. ಸರಕಾರ ತಕ್ಷಣ ಪಾಲಿಕೆ ಚುನಾವಣೆಗೆ ಆದ್ಯತೆ ನೀಡುವ ಮೂಲಕ ಪಾಲಿಕೆಯಲ್ಲಿ ಆಡಳಿತ ಸುಗಮವಾಗಿ ಸಾಗಲು ಒತ್ತು ನೀಡಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇ-ಖಾತಾ ಸಮಸ್ಯೆಯಿಂದ ಜನತೆ ತತ್ತರಿಸುತ್ತಿದ್ದಾರೆ. ಅವೈಜ್ಞಾನಿಕ ತೆರಿಗೆ ಪದ್ಧತಿಯಿಂದಾಗಿ ಜನತೆಯ ಮೇಲೆ ಹೊರೆ ಹೆಚ್ಚಾಗಿದೆ. ಪಾಲಿಕೆಯ ಅವ್ಯವಸ್ಥೆಯಿಂದಾಗಿ ಜನ ಬೀದಿಗಿಳಿಯುವ ಸ್ಥಿತಿ ಎದುರಾಗಿದೆ. ಪಾಲಿಕೆ ಚುನಾವಣೆ ನಡೆಸಿದರೆ ತಮಗೆ ಹಿನ್ನಡೆಯಾಗಬಹುದೆಂದು ಸರಕಾರ ಚುನಾವಣೆಯಿಂದ ಹಿಂದೆ ಸರಿಯುತ್ತಿದೆ ಎಂದರು. ಮಾಜಿ ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ಜನನ ಮರಣ ಪ್ರಮಾಣ ಪ್ರತಿಗೆ 30 ರೂಪಾಯಿ ಇದ್ದದ್ದು, 300 ರೂಪಾಯಿಗೆ ತಲುಪಿದೆ. ಅಧಿಕಾರಿಗಳ ಆಡಳಿತದಿಂದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ರಾಜೇಶ್ ಕೊಟ್ಟಾರಿ , ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಮತ್ತಿತರರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್, ರವಿಶಂಕರ ಮಿಜಾರು, ತಿಲಕ್ ರಾಜ್ ಕೃಷ್ಣಾಪುರ, ರಮೇಶ್ ಕಂಡೆಟ್ಟು, ನಂದನ್ ಮಲ್ಯ, ಸಂದೀಪ್ ಪಚ್ಚನಾಡಿ, ಶಕಿಲಾ ಕಾವಾ, ಪೂರ್ಣಿಮಾ ರಾವ್, ಅರುಣ್ ಜಿ ಶೇಟ್, ಜಗದೀಶ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Chikkamagaluru | ಮಲೆನಾಡು ಭಾಗದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ
ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದ ಅಲ್ಲಲ್ಲಿ ಬುಧವಾರ ಸಂಜೆ ವೇಳೆ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದ್ದು, ಗುಡುಗು, ಮಿಂಚು ಸಹಿತ ಸುರಿದ ಭಾರೀ ಮಳೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಸಂತಸಕ್ಕೆ ಕಾರಣವಾಯಿತು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು, ಮಾಗುಂಡಿ, ಕಡಬಗೆರೆ, ಕಣತಿ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದರೆ, ಕಳಸ, ಶೃಂಗೇರಿ, ಕೊಪ್ಪ ತಾಲೂಕಿನ ಅಲ್ಲಲ್ಲಿ ಬುಧವಾರ ಸಂಜೆ ಧಾರಾಕಾರವಾಗಿ ಮಳೆ ಆರ್ಭಟಿಸಿದೆ. ಬುಧವಾರ ಯುಗಾದಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದ ಜನರು ನಗರ ಪಟ್ಟಣ ಪ್ರದೇಶಗಳಲ್ಲಿ ಹಬ್ಬಕ್ಕೆ ಬೇಕಾದ ಆಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಸಂಜೆ ವೇಳೆ ದಿಢೀರ್ ಸುರಿದ ಮಳೆಯಿಂದಾಗಿ ವ್ಯಾಪಾರಸ್ಥರು, ಗ್ರಾಹಕರು ತೊಂದರೆ ಅನುಭವಿಸಿದರು. ಮಲೆನಾಡು ಭಾಗದ ಕೊಟ್ಟಿಗೆಹಾರದಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದ್ದರೆ, ಎನ್.ಆರ್.ಪುರ ತಾಲೂಕಿನ ಅಲ್ಲಲ್ಲಿ ಆಲಿಕಲ್ಲು ಸಹಿತ ಭಾರೀ ಸುರಿಯಿತು. ಭಾರೀ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಮೇಲೆ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ದೃಶ್ಯ ಕಂಡು ಬಂತು. ಚಿಕ್ಕಮಗಳೂರು ತಾಲೂಕಿನಾದ್ಯಂತ ಬುಧವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಸಾರ್ವಜನಿಕರು ಭಾರೀ ಮಳೆಯಾಗುವ ನಿರೀಕ್ಷೆ ಹೊಂದಿದ್ದರು. ಆದರೆ ಮಧ್ಯಾಹ್ನದಿಂದ ಸಂಜೆವರೆಗೂ ತಾಲೂಕಿನಾದ್ಯಂತ ತುಂತುರು ಮಳೆ ಸುರಿಯಿತಾದರೂ ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನತೆ ಈ ಮಳೆ ತಂಪಿನ ಅನುಭವ ನೀಡಿದೆ. ಮಧ್ಯಾಹ್ನದ ಬಳಿಕ ಚಿಕ್ಕಮಗಳೂರು ನಗರದಲ್ಲೂ ನಿರಂತರವಾಗಿ ತುಂತುರು ಮಳೆ ಸುರಿದ ಪರಿಣಾಮ ನಗರದ ರಸ್ತೆ ಬದಿಗಳಲ್ಲಿ ಯುಗಾದಿ ಹಬ್ಬದ ವ್ಯಾಪಾರದಲ್ಲಿ ತೊಡಗಿದ್ದ ವ್ಯಾಪಾರಿಗಳು ಭಾರೀ ತೊಂದರೆ ಅನುಭವಿಸಿದರು, ಹೂವು, ಹಣ್ಣು, ಮಾವಿನ ಎಲೆ, ಬೇವಿನ ಸೊಪ್ಪು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಮಳೆಯಿಂದಾಗಿ ನಷ್ಟ ಅನುಭವಿಸುವಂತಾಯಿತು. ಜಿಲ್ಲೆಯ ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ಬುಧವಾರ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.
ಮಂಗಳೂರು| ಗ್ಯಾಸ್ ಅಕ್ರಮ ಮರುಪೂರಣ; ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ನಗರದ ಕುದ್ರೋಳಿ ಕಂಡತ್ಪಳ್ಳಿ ಎಂಬಲ್ಲಿ ಗ್ಯಾಸ್ ಹಂಡೆಯಿಂದ ಇನ್ನೊಂದು ಗ್ಯಾಸ್ ಹಂಡೆಗೆ ಅಕ್ರಮವಾಗಿ ಗ್ಯಾಸ್ ಮರುಪೂರಣ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ದಿನೇಶ್ ಸಾಲಿಯಾನ್ ಮತ್ತು ಸುನೀಲ್ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಾ.17ರಂದು ಮಧ್ಯಾಹ್ನ 1:30ಕ್ಕೆ ನಗರದ ನ್ಯೂಚಿತ್ರಾ ಜಂಕ್ಷನ್ ಬಸವನಗುಡಿ ಲಕ್ಷ್ಮೀನಾರಾಯಣ ಟೆಂಪಲ್ ಕಡೆಯಿಂದ ಕಂಡತ್ಪಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿರುವ ನಿಹಾ ಗ್ಯಾಸ್ ಪಾಯಿಂಟ್ ಹೆಸರಿನ ಅಂಗಡಿಯ ಪಕ್ಕದಲ್ಲಿರುವ ಗೋದಾಮಿನಲ್ಲಿ ಈ ಇಬ್ಬರು ಆರೋಪಿಗಳು ಅಕ್ರಮವಾಗಿ ಗ್ಯಾಸ್ ಸಿಲೆಂಡರ್ಗಳನ್ನು ಸಂಗ್ರಹಿಸಿ ದೊಡ್ಡ ಹಂಡೆಯಿಂದ ಸಣ್ಣ ಹಂಡೆಗೆ ಮರುಪೂರಣ ಮಾಡುತ್ತಿದ್ದರು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಲಾಗಿದೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದಲ್ಲಿ ಹೋಟೆಲ್, ರೆಸ್ಟೋರೆಂಟ್ಗಳಿಗೆ ಸಿಲಿಂಡರ್ ಪೂರೈಕೆ : ಸಚಿವ ಕೆ.ಎಚ್.ಮುನಿಯಪ್ಪ
ಬೆಂಗಳೂರು : ರೆಸ್ಟೋರೆಂಟ್ ಮತ್ತು ಹೋಟೆಲ್ಗಳಿಗೆ ಒಂದು ವಾರದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ಕಾರ್ಯ ಸುಗಮವಾಗಲಿದೆ, ಅಲ್ಲಿಯವರೆಗೆ ಸಹಕಾರ ನೀಡಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಬುಧವಾರ ಪರಿಷತ್ತಿನ ಕಲಾಪದಲ್ಲಿ ಸಿಲಿಂಡರ್ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಗೃಹ ಬಳಕೆ ಸಿಲಿಂಡರ್ ಗಳ ಸಮಸ್ಯೆ ಇಲ್ಲ. 3 ಲಕ್ಷಕ್ಕೂ ಹೆಚ್ಚು ಗೃಹ ಬಳಕೆ ಸಿಲಿಂಡರ್ ಬಳಕೆ ಆಗುತ್ತಿದೆ. ಅದನ್ನು ಒದಗಿಸುತ್ತಿದ್ದೇವೆ. ಆದರೆ, ವಾಣಿಜ್ಯ ಸಿಲಿಂಡರ್ ಸಮಸ್ಯೆಯಾಗಿದೆ. ಶೇ.20ರಷ್ಟು ಮಾತ್ರ ಕೊಡಲು ಕೇಂದ್ರ ಸರಕಾರ ತಿಳಿಸಿದ್ದು, ಅದರಂತೆ 9 ಸಾವಿರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊಡುತ್ತಿದ್ದೇವೆ. ಇದರಲ್ಲಿ ಆಸ್ಪತ್ರೆ, ವಸತಿ ಶಾಲೆ, ವಸತಿ ನಿಲಯ, ಇಂದಿರಾ ಕ್ಯಾಂಟೀನ್ಗೆ ಸಿಲಿಂಡರ್ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ಗಳಿಗೆ 1 ಸಾವಿರ ವಾಣಿಜ್ಯ ಸಿಲಿಂಡರ್ ಮಾತ್ರ ಕೊಡಲು ಅವಕಾಶವಿದ್ದು, ಅದರಲ್ಲಿ ಯಾರಿಗೆ ಕೊಡಬೇಕೆಂಬುದೇ ನಮಗೆ ಪ್ರಶ್ನೆಯಾಗಿದೆ. ಹೀಗಾಗಿ ಒಂದು ವಾರ ಸಹಿಸಿಕೊಂಡು ಸಹಕಾರ ನೀಡಬೇಕು. ಕೇಂದ್ರ ಸರಕಾರ ಇರಾನ್ ಜೊತೆ ಮಾತುಕತೆ ನಡೆಸುತ್ತಿದೆ. 16 ಹಡಗುಗಳು ಬರಬೇಕಿದೆ. ಅದು ಬಂದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು. ಹೋಟೆಲ್ ಅಸೋಸಿಯೇಷನ್ ನಿಯೋಗದ ಜೊತೆ ಮಾತನಾಡಿದ್ದೇನೆ. ಒಂದು ವಾರದಲ್ಲಿ 15 ಸಾವಿರ ವಾಣಿಜ್ಯ ಸಿಲಿಂಡರ್ ಸಂಗ್ರಹವಾಗಲಿದ್ದು, ಅದನ್ನು ಹೇಗೆ ಹಂಚಿಕೆ ಮಾಡಬೇಕೆಂದು ಅಸೋಸಿಯೇಷನ್ ಅವರನ್ನು ಮತ್ತೊಮ್ಮೆ ಕರೆದು ಮಾತನಾಡುತ್ತೇನೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ದೇವೇಗೌಡರು ಕಾಂಗ್ರೆಸ್ ಜತೆ ಪ್ರೀತಿ ಮಾಡಿ ಮೋದಿ ಮದುವೆಯಾದರು ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸ್ವತಃ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಜತೆ ಬಲವಂತ ಸಂಬಂಧ, ಹಿಂಸೆ ಕಿರುಕುಳವಿತ್ತು. ಇದೇ ದೂರ ಉಳಿಯಲು ಕಾರಣ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ. ಸದ್ಯ ದೇವೇಗೌಡರು ಬರೆದ ಪತ್ರವು ವೈರಲ್ ಆಗಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವಿಧೇಯಕದಲ್ಲೇನಿದೆ ?
ರಕ್ಷಿತಾ ನಟನೆಯ ಹಾಡುಗಳಲ್ಲೂ ಅಶ್ಲೀಲತೆ: ರಾತ್ರೋ ರಾತ್ರಿ ಬದಲಾಗಿತ್ತು ‘ಕೆಟ್ಟೋದೇ.. ಕೆಟ್ಟೋದೇ..’ ಹಾಡು!
‘ಅಯ್ಯ’ ಸಿನಿಮಾದಲ್ಲಿ ‘ರಕ್ಷಿತಾ ರಕ್ಷಿತಾ ನನ್ ಕಿಸ್ಸು ಸಿಕ್ಕಿತಾ.. ದರ್ಶನ್ನು ದರ್ಶನ್ನು ನಿನ್ ಮಾತೇ ಚಿಕನ್ನು..’ ಎಂಬ ಹಾಡಿದೆ. ಅಸಲಿಗೆ, ಈ ಹಾಡು ಬರೆದಿದ್ದು ಕಡೇ ಕ್ಷಣದಲ್ಲಿ. ಅದೂ ‘ಕೆಟ್ಟೋದೇ ಕೆಟ್ಟೋದೇ..’ ಹಾಡಿನ ಬದಲಾಗಿ. ರಾತ್ರೋ ರಾತ್ರಿ ಈ ಹಾಡನ್ನ ಬದಲಾಯಿಸಿದ್ದು ಯಾಕೆ? ಇಲ್ಲಿದೆ ನೋಡಿ ಮಾಹಿತಿ…
ಅಫಜಲಪುರ: ದೇವಲ ಗಾಣಗಾಪುರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಅಫಜಲಪುರ: ತಾಲೂಕಿನ ದೇವಲ ಗಾಣಗಾಪುರ ಗ್ರಾಮದಲ್ಲಿ ದಿವಂಗತ ಅಣ್ಣಾರಾವ ಹರಿದಾಸ ಅವರ ಸ್ಮರಣಾರ್ಥವಾಗಿ ಹರಿದಾಸ ಹಾರ್ಟ್ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಅರುಣ್ ಕುಮಾರ್ ಎಂ. ವೈ. ಪಾಟೀಲ ಉದ್ಘಾಟಿಸಿ ಮಾತನಾಡಿದ ಅವರು , ಗ್ರಾಮೀಣ ಭಾಗದ ಜನರಿಗೆ ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಉಪಯುಕ್ತವಾಗಿದ್ದು, ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಲಬುರಗಿಯ ಖ್ಯಾತ ಹೃದಯ ತಜ್ಞರಾದ ಡಾ. ಅರುಣಕುಮಾರ ಹರಿದಾಸ, ವಿಜಯಕುಮಾರ್ ಹರಿದಾಸ, ಡಾ. ಅರವಿಂದ್ ಹರಿದಾಸ, ನಾಗೇಶ್ ಭಟ್ಟ ಪೂಜಾರಿ, ಮಾರುತಿ ಮೂರನೆತ್ತಿ, ಗುಂಡಪ್ಪ ಹೊಸಮನಿ, ಉದಯಕುಮಾರ್ ಭಟ್ಟ, ಮಂಜುನಾಥ್ ಹೊಸಮನಿ, ದತ್ತು ಪವಾರ್, ಡಾ. ಕಿರಣ ಹರಿದಾಸ, ಡಾ. ರೋಹಿತ್ ಪಾಟೀಲ, ಡಾ. ಹರ್ಷ ಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವೈದ್ಯರು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಸಲಹೆ ನೀಡಿದರು ಮತ್ತು ಆರೋಗ್ಯ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸಿದರು.
ಅಫಜಲಪುರ: ನಿಶಾಂತ ಶಾಲೆಯ 19ನೇ ವಾರ್ಷಿಕೋತ್ಸವ
ಅಫಜಲಪುರ: ಪಟ್ಟಣದ ನಿಶಾಂತ ಹಿರಿಯ ಪ್ರಾಥಮಿಕ ಶಾಲೆಯ 19ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಲಿ ಸಮಾಜದ ಮಾಜಿ ಅಧ್ಯಕ್ಷರಾದ ಶಂಕರ ಮ್ಯಾಕೇರಿ ಅವರು ಮಾತನಾಡಿ, “ಒಂದು ಶಾಲೆಯನ್ನು ಸ್ಥಾಪಿಸುವುದು ಸುಲಭವಾದ ಕೆಲಸವಲ್ಲ. ಆದರೆ ಅದನ್ನು ವರ್ಷಗಳ ಕಾಲ ಶ್ರದ್ಧೆಯಿಂದ, ನಿಷ್ಠೆಯಿಂದ ಹಾಗೂ ಗುಣಮಟ್ಟದ ಶಿಕ್ಷಣದೊಂದಿಗೆ ಮುಂದುವರಿಸುವುದು ನಿಜಕ್ಕೂ ಸವಾಲಿನ ಕೆಲಸ. ನಿಶಾಂತ ಶಾಲೆ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಸಂತೋಷಕರ ವಿಷಯ ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕೇವಲ ಪಾಠಪುಸ್ತಕದ ಜ್ಞಾನ ಸಾಕಾಗುವುದಿಲ್ಲ. ಅವರಲ್ಲಿ ಉತ್ತಮ ಸಂಸ್ಕಾರ, ನಡತೆ, ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅತ್ಯಂತ ಅಗತ್ಯ. ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ದೇವಸ್ಥಾನಗಳಂತೆ ಕೆಲಸ ಮಾಡಬೇಕು. ಈ ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದಲ್ಲಿ ಒಳ್ಳೆಯ ನಾಗರಿಕನಾಗಿ ಬೆಳೆದು ಸಮಾಜಕ್ಕೆ ಹೆಮ್ಮೆ ತರಲಿ” ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಅಳ್ಳಗಿ ಹಿರೇಮಠ (ಬಿ) ಶ್ರೀ ಶಾಂತಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. “ಮಕ್ಕಳಲ್ಲಿ ವಿದ್ಯೆಯ ಜೊತೆಗೆ ವಿನಯ ಹಾಗೂ ಸಂಸ್ಕಾರ ಬೆಳೆಸಿದಾಗ ಮಾತ್ರ ಅವರ ವ್ಯಕ್ತಿತ್ವ ಸರ್ವಾಂಗೀಣವಾಗಿ ವಿಕಸಿಸುತ್ತದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ” ಎಂದರು. ಪತ್ರಕರ್ತರು ಹಾಗೂ ನೆರವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಸಿದ್ದರಾಮ ಶಿವಣಗಿ ಅವರು ಮಾತನಾಡಿ, “ಪ್ರತಿಯೊಂದು ಮಗುವಿನಲ್ಲೂ ದೇವರು ಕೊಟ್ಟಿರುವ ಒಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಹೊರತೆಗೆದು ಬೆಳಸುವುದು ಶಿಕ್ಷಕರ ದೊಡ್ಡ ಜವಾಬ್ದಾರಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕರಾದ ಸಾಯಿಬಣ್ಣ ಬೋರೆಗಾಂವ್ ವಹಿಸಿದ್ದರು. ಉದ್ಯಮಿ ಸಂತೋಷ ದಾಮಾ, ನಿವೃತ್ತ ಶಿಕ್ಷಕ ಯಶವಂತ ಬಡದಾಳ, ಮುಖ್ಯಗುರು ಭರತ ಚಿಕ್ಕಳಗಿ, ಸಂಚಾಲಕರಾದ ಹಣಮಂತ ಸೂರಗೊಂಡ ಮುಖಂಡರಾದ ರಾಜಶೇಖರ ಹಿರೇಮಠ, ರಮೇಶ ಹೇರೂರ, ಕಲ್ಯಾಣಿ ಚಿಕ್ಕಳಗಿ, ಯಲ್ಲಾಲಿಂಗ ಬಸರಿಗಿಡ, ಕುಮಾರಗೌಡ ಬಿರಾದಾರ, ಶಿವಶರಣ ಕಣ್ಣಿ, ಮಳೆಪ್ಪ ಆರ್.ಡಾಂಗೆ, ಈರಣ್ಣ ಯಂಕಂಚಿ, ಡಿ.ಕೆ.ಶಿವು ಜಮಾದಾರ, ಸೇರಿದಂತೆ ಶಿಕ್ಷಕರು ,ಪಾಲಕರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದವು. ಕಾರ್ಯಕ್ರಮವನ್ನು ರಮೇಶ ಹೊಸಮನಿ ಹಾಗೂ ಸುಭಾಷ ಪ್ಯಾಟಿ ನಿರೂಪಿಸಿ ವಂದಿಸಿದರು.
Bengaluru | ಕೋಗಿಲು ಬಡಾವಣೆಯ 12 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಬೆಂಗಳೂರು : ಕೋಗಿಲು ಬಡಾವಣೆಯಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ಸಂತ್ರಸ್ತರ ಪೈಕಿ ಅರ್ಹ 12 ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಹಕ್ಕುಪತ್ರಗಳನ್ನು ವಿತರಿಸಿದರು. ಬುಧವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋಗಿಲು ಬಡಾವಣೆಯ 12 ಸಂತ್ರಸ್ತ ಕುಟುಂಬಗಳು ಸೇರಿದಂತೆ ಒಟ್ಟು 30 ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಝಮೀರ್ ಅಹ್ಮದ್ ಖಾನ್, ಕೋಗಿಲು ಬಡಾವಣೆಯಲ್ಲಿ ವಸತಿ ಇಲಾಖೆ ಹಾಗೂ ಜಿಬಿಎ ಸರ್ವೆ ನಡೆಸಿ 165 ನಿರಾಶ್ರಿತರ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು ಎಂದು ತಿಳಿಸಿದರು. ಆದರೆ, ದಾಖಲಾತಿಗಳನ್ನು ಪರಿಶೀಲಿಸಿದ ನಂತರ 61 ಕುಟುಂಬಗಳು ಅರ್ಹತೆ ಪಡೆದಿದ್ದು, ಅವರಲ್ಲಿ ಪೂರ್ಣ ಪ್ರಮಾಣದ ದಾಖಲಾತಿಗಳನ್ನು ಸಲ್ಲಿಸಿ, ಮುಂಗಡ ಹಣ 50 ಸಾವಿರ ರೂ.ಗಳನ್ನು ಪಾವತಿಸಿರುವ 12 ಕುಟುಂಬಗಳಿಗೆ ‘ಒಂದು ಲಕ್ಷ ಬಹುಮಹಡಿ ಮನೆಗಳ ಯೋಜನೆ’ಯಡಿ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ಮನೆಗಳ ಹಕ್ಕುಪತ್ರ ನೀಡಲಾಗಿದೆ ಎಂದು ಅವರು ಹೇಳಿದರು. ಐದು ವರ್ಷಕ್ಕಿಂತ ಕಡಿಮೆ ಅವಧಿಯಿಂದ ಬೆಂಗಳೂರಿನಲ್ಲಿ ವಾಸವಿರುವ 30 ಕುಟುಂಬಗಳು, ಒಂದೇ ಕುಟುಂಬದಿಂದ ಎರಡೆರಡು ಅರ್ಜಿಗಳನ್ನು ಸಲ್ಲಿಸಿರುವ 8 ಕುಟುಂಬಗಳು, ಬೇರೆ ಜಿಲ್ಲೆಗಳ 9 ಕುಟುಂಬಗಳು, ಬೆಂಗಳೂರಿನ ಹೊರ ವಲಯದಲ್ಲಿರುವ 8 ಕುಟುಂಬಗಳು, ಸಮರ್ಪಕವಾದ ದಾಖಲೆಗಳನ್ನು ನೀಡದ 16 ಕುಟುಂಬಗಳು ಹಾಗೂ ಹೊರ ರಾಜ್ಯದ 20 ಕುಟುಂಬಗಳನ್ನು ಆಶ್ರಯ ಸಮಿತಿ ಪರಿಗಣಿಸಿಲ್ಲ ಎಂದು ಝಮೀರ್ ಅಹ್ಮದ್ ಮಾಹಿತಿ ನೀಡಿದರು. ಸ್ಥಳೀಯರಿಗೆ ಮಾತ್ರ ಮನೆ ಹಂಚಿಕೆ: ರಾಜ್ಯ ಸರಕಾರ ಬಾಂಗ್ಲಾದೇಶದಿಂದ ಬಂದವರಿಗೆ ಮನೆಗಳನ್ನು ನೀಡುತ್ತಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿದ ಝಮೀರ್ ಅಹ್ಮದ್ ಖಾನ್, ಯಾರು ಬೆಂಗಳೂರಿನ ನಿವಾಸಿಯಾಗಿದ್ದಾರೋ ಅವರಿಗೆ ಮಾತ್ರ ಮನೆಗಳನ್ನು ನೀಡುತ್ತಿದ್ದೇವೆ. ರಾಯಚೂರು, ಗುಲ್ಬರ್ಗ ಸೇರಿದಂತೆ ಬೇರೆ ಜಿಲ್ಲೆ, ಬೇರೆ ರಾಜ್ಯದವರಿಗೆ ನಾವು ಮಣೆ ಹಾಕಿಲ್ಲ. ಇನ್ನೂ ಬೇರೆ ದೇಶದವರಿಗೆ ಮನೆ ಕೊಡಲು ಸಾಧ್ಯವೆ? ಎಂದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಆಶ್ರಯ ಸಮಿತಿಯಲ್ಲಿ ಅರ್ಹ ಎಂದು 61 ಕುಟುಂಬಗಳನ್ನು ಪರಿಗಣಿಸಿದ್ದೇವೆ. ಈ ಪೈಕಿ ಕೋಗಿಲು ಬಡಾವಣೆಯ 12 ಸಂತ್ರಸ್ತ ಕುಟುಂಬಗಳು ಹಾಗೂ ಆನ್ಲೈನ್ ಮೂಲಕ ಮನೆಗಾಗಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲಾತಿಗಳನ್ನು ಸಲ್ಲಿಕೆ ಮಾಡಿರುವಂತಹ 18 ಕುಟುಂಬಗಳು ಸೇರಿ ಒಟ್ಟು 30 ಕುಟುಂಬಗಳಿಗೆ ಹಕ್ಕುಪತ್ರ ನೀಡುತ್ತಿದ್ದೇವೆ ಎಂದು ಹೇಳಿದರು. ಇನ್ನುಳಿದ 30 ಕುಟುಂಬಗಳು ಮನೆಗಾಗಿ ದಾಖಲೆಗಳನ್ನು ಸಲ್ಲಿಸಲು ಮುಂದೆ ಬರುತ್ತಿಲ್ಲ. ನಮಗೆ ಮನೆ ಸಿಗುತ್ತದೆಯೋ, ಇಲ್ಲವೋ ಎಂಬ ವಿಶ್ವಾಸದ ಕೊರತೆ ಅವರಲ್ಲಿ ಇರಬಹುದು. ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದರೆ ಪ್ರತಿಯೊಬ್ಬ ಅರ್ಹರಿಗೂ ಮನೆಗಳನ್ನು ವಸತಿ ಇಲಾಖೆ ನೀಡುತ್ತದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ಮೋಹನ್ ರಾಜ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಶಿನ್ನಾಳ್ಕರ್, ಪ್ರಧಾನ ವ್ಯವಸ್ಥಾಪಕ ಎಸ್.ಎನ್. ಪರಶುರಾಮೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಾಮಾನ್ಯ ವರ್ಗದ 10, ಪರಿಶಿಷ್ಟ ಜಾತಿಯ 7, ಪರಿಶಿಷ್ಟ ಪಂಗಡದ 2 ಹಾಗೂ 11 ಅಲ್ಪಸಂಖ್ಯಾತ ಕುಟುಂಬಗಳಿಗೆ ಇಂದಿನ ಕಾರ್ಯಕ್ರಮದಲ್ಲಿ ಹಕ್ಕುಪತ್ರ ನೀಡಲಾಯಿತು.
ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು, ಹಲಸು, ಕಲ್ಲಂಗಡಿ; ಕೈಗೆ ಬಂದ ತುತ್ತು ಬಾಯಿಗಿಲ್ಲ
ಬೆಂಗಳೂರು: ಯುಗಾದಿಗೂ ಮುನ್ನ ಪೂರ್ವ ಮುಂಗಾರು ಮಳೆ ಸುರಿದು ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಜನರಲ್ಲಿ ಸಂಭ್ರಮ ಮೂಡಿಸಿದೆ. ಹಾಸನ, ಧಾರವಾಡ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ ದಾಖಲಾಗಿದೆ. ರಸ್ತೆ ತುಂಬೆಲ್ಲ ಆಲಿಕಲ್ಲು ಕಂಡು ಜನರ ಬೇಸಿಗೆಗೆ ತಂಪಾಯಿತು ಎಂದು ಖುಷಿಪಟ್ಟಿದ್ದಾರೆ. ಆದರೆ ಮಾವು, ಹಲಸು, ಕಲ್ಲಂಗಡಿ, ಜೋಳ ಸೇರಿ ಇನ್ನಿತರ ಕೈಗೆ ಬಂದ ಬೆಳೆಗಳಿಗೆ ಮಳೆ ಹಾನಿ ಉಂಟು
Kalaburagi | ಟೆಂಗಳಿ ಗ್ರಾಮದ ಮಹಾದ್ವಾರ ದುರಸ್ತಿಗೆ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ
ಕಲಬುರಗಿ: ಕಾಳಗಿ ತಾಲ್ಲೂಕಿನ ಟೆಂಗಳಿ ಗ್ರಾಮದ ಐತಿಹಾಸಿಕ ಮಹಾದ್ವಾರ (ಅಗಸಿ) ಅವನತಿ ಹಂತದಲ್ಲಿರುವ ಹಿನ್ನೆಲೆ, ಅದನ್ನು ಶೀಘ್ರ ರಿಪೇರಿ ಮಾಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಸಪಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಮನವಿ ಮಾಡಿದ್ದಾರೆ. ಗ್ರಾಮಕ್ಕೆ ಪ್ರಮುಖ ಪ್ರವೇಶದ್ವಾರವಾಗಿರುವ ಅಗಸಿ ಬಿರುಕು ಬಿಟ್ಟಿದ್ದು, ಗಿಡಗಂಟಿಗಳು ಬೆಳೆಯುತ್ತಿದ್ದು, ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿದೆ. ಟೆಂಗಳಿ ಗ್ರಾಮವು ರಾಷ್ಟ್ರಕೂಟರ ಕಾಲದಿಂದ ಇತಿಹಾಸ ಪ್ರಸಿದ್ಧವಾಗಿದ್ದು, ಹಿಂದೆ ಕೋಟೆ ಮತ್ತು ಮಹಾದ್ವಾರವನ್ನು ಹೊಂದಿದ್ದ ಪ್ರಮುಖ ಕೇಂದ್ರವಾಗಿತ್ತು. ಪ್ರಸ್ತುತ ಮಹಾದ್ವಾರ ಹಾಳಾಗುತ್ತಿರುವುದು ಗ್ರಾಮದ ಇತಿಹಾಸಕ್ಕೆ ಧಕ್ಕೆ ಉಂಟುಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಕಳೆದ ಜನವರಿ 19ರಂದು ಸುಮಾರು 16 ಲಕ್ಷ ರೂ. ವೆಚ್ಚದ ಅಂದಾಜು ತಯಾರಾಗಿದ್ದರೂ, ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ವಿವಿಧ ಯೋಜನೆಗಳಡಿ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಅಂಡಗಿ ಅವರು ಸಚಿವರಿಗೆ ಒತ್ತಾಯಿಸಿದರು.
ಆಗಮಿಸಲಿ ಸಂತೋಷದ ಯುಗಾದಿ, ಹೊಸ ವರುಷ ನಾಡಿಗೆ ತರಲಿ ಹೊಸ ಹರುಷ
ಎಲ್ಲೆಡೆ ಇದೀಗ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಯುಗಾದಿ ಹಬ್ಬದ ಸಂಭ್ರಮ ಹಿಂದಿನಂತೆಯೇ ಇದೀಗ ಉಳಿದಿಲ್ಲ. ಇಂದು ಪ್ರಕೃತಿ ಮಾತೆಯ ಮೇಲೆ ನಿರಂತರವಾಗಿ ಮನುಷ್ಯ ದಾಳಿ ಮಾಡುತ್ತಿದ್ದಾರೆ. ಹಸಿರಿನ ಬದಲಾಗಿ ಸುತ್ತ ಮುತ್ತ ದೊಡ್ಡ ದೊಡ್ಡ ಕಟ್ಟಡಗಳು, ಪ್ಲಾಸ್ಟಿಕ್ ಗಳು ಗೋಚರಿಸಲಾರಂಭಿಸಿದೆ. ಹೊಗೆಗಳಿಂದ ಉಸಿರಾಡಲು ಕೂಡ ಕಷ್ಟವಾಗುವಂತಹ ಪರಿಸ್ಥಿತಿ ಇದೆ. ಯುಗಾದಿ ಸಂಭ್ರಮದ ಸಂದರ್ಭದಲ್ಲಿ ಗ್ರೀಷ್ಮಾ ಮಂಗಳೂರು ಅವರು ಈ ಕುರಿತಾಗಿ ಬರೆದ ಲೇಖಕ ಇಲ್ಲಿದೆ. ಪೂರ್ತಿ ಓದಿ.

19 C