SENSEX
NIFTY
GOLD
USD/INR

Weather

18    C
...

Ranji Trophy-ಉತ್ತರಾಖಂಡ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಿಗಿ ಹಿಡಿತ; ಡ್ರಾಗೊಂಡರೂ ಫೈನಲ್ ಪ್ರವೇಶ ಖಚಿತ

ಲಖನೌ: ಕೆಎಲ್ ರಾಹುಲ್, ರವಿಚಂದ್ರನ್ ಸ್ಮರಣ್ ಶತಕ ಮತ್ತು ನಾಯಕ ದೇವದತ್ ಪಡಿಕ್ಕಲ್ ಅವರ ದ್ವಿಶತಕಗಳ ನೆರವಿನಿಂದ ಅದ್ಭುತ ಪ್ರದರ್ಶನದ ನೆರವಿನಿಂದ ಉತ್ತರಾಖಂಡದ ವಿರುದ್ಧ ರನ್ ಪರ್ವತವನ್ನೇ ನಿರ್ಮಿಸಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್ ಪ್ರವೇಶಿಸುವ ಹುಮ್ಮಸ್ಸಿನಲ್ಲಿದೆ. ಇಲ್ಲಿನ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ 3ನೇ ದಿನವಾದ ಮಂಗಳವಾರ 6 ವಿಕೆಟ್‌ಗೆ 689 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕ, 194.4 ಓವರ್‌ಗಳಲ್ಲಿ 736 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಇಳಿಸುವ ಅವಕಾಶ ಇಧ್ದರೂ ದೊಡ್ಡ ಮೊತ್ತ ಗಳಿಸಿ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ತಂತ್ರಕ್ಕೆ ಮೊರೆ ಹೊಕ್ಕಿತು. ಮೊದಲ ದಿನವೇವಾಡಿದಾಗ ಉತ್ತರಾಖಂಡ ದಿಕ್ಕು ತಪ್ಪಿತ್ತು. ಈಗಂತೂ ಎದುರಾಳಿ ತಂಡ ಸಂಪೂರ್ಣವಾಗಿ ಕರ್ನಾಟಕ ಬೀಸಿದ ಬಲೆಯಲ್ಲಿ ಸಿಲಕಿಕೊಂಡಿದೆ. ಇದೀಗ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿರವ ಉತ್ತರಾಖಂಡ ಮೂರನೇ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದ್ದು ಫಾಲೋ ಆನ್ ಭೀತಿಯಲ್ಲಿದೆ. ಲಕ್ಷ್ಯ ರಾಜೇಶ್‌(52*) ಮತ್ತು ಸೌರಭ್‌ ರಾವತ್‌(10*) ನಾಲ್ಕನೇ ದಿನದಾಟಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಸದ್ಯಕ್ಕೆ ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು ಇವರಿಬ್ಬರ ಆಟದ ಮೇಲೆ ಉತ್ತರಾಖಂಡದ ಪಂದ್ಯದ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಇನಿಂಗ್ಸ್‌ ಹಿನ್ನಡೆ ತಪ್ಪಿಸಲು ಉಳಿದ 5 ವಿಕೆಟ್‌ಗಳಲ್ಲಿ 587 ರನ್‌ ಗಳಿಸಬೇಕಿದೆ. ಬುಧವಾರ ಮೊದಲಿನ ಅವಧಿಯಲ್ಲೇ ಕರ್ನಾಟಕದ ಬೌಲರ್‌ಗಳು ಉತ್ತರಾಖಂಡವನ್ನು ಆಲೌಟ್ ಮಾಡಿದರೆ, ಫಾಲೋ ಆನ್‌ ವಿಧಿಸಿ ಪಂದ್ಯ ಗೆಲ್ಲುವ ಅವಕಾಶ ದೇವದತ್‌ ಪಡಿಕ್ಕಲ್‌ ಬಳಗದ ಮುಂದಿದೆ. ಒಂದು ವೇಳೆ ಉತ್ತರಾಖಂಡದ ಪ್ರಥಮ ಇನ್ನಿಂಗ್ಸ್ ಕೊಂಚ ದೀರ್ಘವಾಗಿ ಪಂದ್ಯ ಡ್ರಾ ಆದರೂ ಕರ್ನಾಟಕಕ್ಕೆ ಲಾಭವೇ. ಯಾಕೆಂದರೆ ಈ ಮೊತ್ತವನ್ನು ಉತ್ತರಾಖಂಡ ದಾಟುವುದು ಕಷ್ಟಸಾಧ್ಯ. ಪ್ರಥಮ ಇನ್ನಿಂಗ್ಸ್ ಆಧಾರದ ಮೇಲೆ ಕರ್ನಾಟಕಕ್ಕೆ ಫೈನಲ್‌ ಪ್ರವೇಶದ ಅವಕಾಶ ಸಿಗಲಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮಾಡಿ ಗೆದ್ದಿತ್ತು. ಸಂಕ್ಷಿಪ್ತ ಸ್ಕೋರ್ ಕರ್ನಾಟಕ ಪ್ರಥಮ ಇನ್ನಿಂಗ್ಸ್ 194.4 ಓವರ್ ಗಳಲ್ಲಿ 736ಕ್ಕೆ ಆಲೌಟ್, ಕೆಎಲ್ ರಾಹುಲ್ 141(211), ದೇವದತ್ ಪಡಿಕ್ಕಲ್ 232(330), ರವಿಚಂದ್ರನ್ ಸ್ಮರಣ್ 135(218), ಕೃತಿಕ್ ಕೃಷ್ಣ 60(103), ವಿದ್ಯಾಧರ್ ಪಾಟೀಲ್ 54(144), ಆದಿತ್ಯ ರಾವತ್ 154ಕ್ಕೆ 4, ಮಾಯಾಂಕ್ ಮಿಶ್ರಾ 173ಕ್ಕೆ 3. ಉತ್ತರಾಖಂಡ ಪ್ರಥಮ ಇನ್ನಿಂಗ್ಸ್ 69 ಓವರ್ ಗಳಲ್ಲಿ 149/5, ಲಕ್ಷ್ಯ ರಾಯ್ ಚಂದಾನಿ ಅಜೇಯ 52(148), ಸೌರಭ್ ರಾವತ್ ನಾಟೌಟ್ 10(37), ವಿದ್ಯಾಧರ್ ಪಾಟೀಲ್ 26ಕ್ಕೆ 2, ಶ್ರೇಯಸ್ ಗೋಪಾಲ್ 23ಕ್ಕೆ 1.

ವಿಜಯ ಕರ್ನಾಟಕ 18 Feb 2026 12:55 am

ಜೂನಿಯರ್ ಹಾಕಿ ಪ್ರಧಾನ ಕೋಚ್ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಿದ ಶ್ರೀಜೇಶ್

ಹೊಸದಿಲ್ಲಿ, ಫೆ. 17: ಭಾರತೀಯ ಹಾಕಿ ತಂಡದ ಮಾಜಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡದ ಪ್ರಧಾನ ಕೋಚ್ ಹುದ್ದೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಅವರ ಮೊದಲ ಗುತ್ತಿಗೆ ಅವಧಿ ಕಳೆದ ವರ್ಷದ ಡಿಸೆಂಬರ್ನಲ್ಲಿ ಮುಕ್ತಾಯಗೊಂಡಿತ್ತು. ಅವರ ಅರ್ಜಿಯು ಇನ್ನು 15 ದಿನಗಳಲ್ಲಿ ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ. ಎರಡು ಬಾರಿಯ ಒಲಿಂಪಿಕ್ ಕಂಚಿನ ಪದಕ ವಿಜೇತ ಶ್ರೀಜೇಶ್ ಅವರನ್ನು 2024ರ ಆಗಸ್ಟ್ನಲ್ಲಿ ಜೂನಿಯರ್ ಪುರುಷರ ಹಾಕಿ ತಂಡದ ಪ್ರಧಾನ ಕೋಚ್ ಆಗಿ ನೇಮಿಸಲಾಗಿತ್ತು. ಅವರ ಉಸ್ತುವಾರಿಯ ತಂಡವು ಕಳೆದ ವರ್ಷದ ಡಿಸೆಂಬರ್ನಲ್ಲಿ ಚೆನ್ನೈನಲ್ಲಿ ನಡೆದ ಎಫ್ಐಎಚ್ ಪುರುಷರ ಜೂನಿಯರ್ ವಿಶ್ವಕಪ್ನಲ್ಲಿ ಕಂಚಿನ ಪದಕ ಗೆದ್ದಿತ್ತು. ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಭಾರತದ ಒಂಭತ್ತು ವರ್ಷಗಳ ಪದಕ ಬರ ನೀಗಿತ್ತು. ಕಂಚಿನ ಪದಕದ ಪಂದ್ಯದಲ್ಲಿ ಭಾರತ ಆರಂಭಿಕ ಹಿನ್ನಡೆಯನ್ನು ನಿವಾರಿಸಿಕೊಂಡು ಅರ್ಜೆಂಟೀನಾ ತಂಡವನ್ನು 4–2 ಗೋಲುಗಳಿಂದ ಸೋಲಿಸಿತ್ತು.

ವಾರ್ತಾ ಭಾರತಿ 18 Feb 2026 12:47 am

T20 ವಿಶ್ವಕಪ್ | ಫೆ.18ರಂದು ಭಾರತಕ್ಕೆ ಎದುರಾಳಿ ನೆದರ್ಲ್ಯಾಂಡ್ಸ್

ದಕ್ಷಿಣ ಆಫ್ರಿಕದ ಮುನ್ನ ಆತಿಥೇಯರಿಗೆ ಅಭ್ಯಾಸ ಪಂದ್ಯ ಅಹ್ಮದಾಬಾದ್, ಫೆ. 17: ಪಾಕಿಸ್ತಾನ ವಿರುದ್ಧದ 61 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ಈಗಾಗಲೇ T20 ವಿಶ್ವಕಪ್ ನ ಸೂಪರ್ ಎಂಟು ಹಂತ ಪ್ರವೇಶಿಸಿದ್ದು, ಬುಧವಾರ ‘ಎ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಹ್ಮದಾಬಾದ್ ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಲೀಗ್ ಅಭಿಯಾನವನ್ನು ಅಜೇಯವಾಗಿ ಮುಕ್ತಾಯಗೊಳಿಸುವತ್ತ ತಂಡ ಸಾಗಿದೆ. ಈ ಪಂದ್ಯ ಯಾವ ತಂಡಕ್ಕೂ ಮಹತ್ವದ್ದಲ್ಲ. ಆದರೆ ಭಾರತ ಇದನ್ನು ದಕ್ಷಿಣ ಆಫ್ರಿಕ ವಿರುದ್ಧದ ಮುಂದಿನ ಪಂದ್ಯಕ್ಕೆ ಅಭ್ಯಾಸವಾಗಿ ಬಳಸಲಿದೆ. ನೆದರ್ಲ್ಯಾಂಡ್ಸ್ನ ಲೋಗನ್ ಫನ್ ಬೀಕ್ ಮತ್ತು ಬಸ್ ಡಿ ಲೀಡ್ ವೇಗ ಬದಲಾವಣೆಗಳಲ್ಲಿ ನಿಪುಣರು. ಫ್ರೆಡ್ ಕ್ಲಾಸನ್ ಎಡಗೈ ಸ್ಪಿನ್ ಅನುಭವ ನೀಡಲಿದ್ದಾರೆ. ಪವರ್ಪ್ಲೇಯಲ್ಲಿ ಆರ್ಯನ್ ದತ್ ಅವರ ಆಫ್ಸ್ಪಿನ್ ಮತ್ತು ರೋಲೊಫ್ ಫನ್ ಡರ್ ಮರ್ವ್ ಅವರ ಎಡಗೈ ಸ್ಪಿನ್ ದಾಳಿಯನ್ನು ಎದುರಿಸುವ ಅವಕಾಶ ಭಾರತೀಯರಿಗೆ ಸಿಗಲಿದೆ. ಈ ಅನುಭವ ದಕ್ಷಿಣ ಆಫ್ರಿಕ ವಿರುದ್ಧ ಉಪಯುಕ್ತವಾಗಬಹುದು. 2023ರ ಏಕದಿನ ವಿಶ್ವಕಪ್ ನಲ್ಲಿ ಇದೇ ನೆದರ್ಲ್ಯಾಂಡ್ಸ್ ತಂಡ ದಕ್ಷಿಣ ಆಫ್ರಿಕ ಮತ್ತು ಬಾಂಗ್ಲಾದೇಶಕ್ಕೆ ಆಘಾತಕಾರಿ ಸೋಲು ನೀಡಿತ್ತು. ಹೀಗಾಗಿ ತಂಡ ಸಾಮರ್ಥ್ಯ ಮೀರಿದ ಪ್ರದರ್ಶನ ನೀಡುವ ಶಕ್ತಿ ಹೊಂದಿದೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ T20 ವಿಶ್ವಕಪ್ ನಲ್ಲಿ ಈಗಾಗಲೇ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇಶಾನ್ ಕಿಶನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇಲ್ಲಿನ ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದ್ದು, ಭಾರತೀಯ ಮಧ್ಯಮ ಕ್ರಮಾಂಕಕ್ಕೆ ನೆರವಾಗಲಿದೆ. ಭಾರತೀಯ ಬೌಲಿಂಗ್ ಘಟಕ ಬಲಿಷ್ಠವಾಗಿದ್ದು, ಈ ವಿಭಾಗದಲ್ಲಿ ಪ್ರಯೋಗಕ್ಕೆ ಅವಕಾಶವಿದೆ. ತಂಡಗಳು ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಮ್ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ರಿಂಕು ಸಿಂಗ್. ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಕಾಲಿನ್ ಆ್ಯಕರ್ಮನ್, ನೋ ಕ್ರೋಸ್, ಬಸ್ ಡಿ ಲೀಡ್, ಆರ್ಯನ್ ದತ್, ಫ್ರೆಡ್ ಕ್ಲಾಸನ್, ಕೈಲ್ ಕ್ಲೇನ್, ಮೈಕಲ್ ಲೆವಿಟ್, ಝ್ಯಾಕ್ ಲಯನ್–ಕ್ಯಾಶೆ, ಮ್ಯಾಕ್ಸ್ ಒ’ಡೌಡ್, ಲೋಗನ್ ಫನ್ ಬೀಕ್, ಟಿಮ್ ಫನ್ ಡರ್ ಗುಗ್ಟನ್, ರೋಲೊಫ್ ಫನ್ ಡರ್ ಮರ್ವ್, ಪೌಲ್ ಫನ್ ಮೀಕರನ್, ಸಾಕಿಬ್ ಝುಲ್ಫೀಕರ್.

ವಾರ್ತಾ ಭಾರತಿ 18 Feb 2026 12:44 am

ಆಸ್ಟ್ರೇಲಿಯ ಮಹಿಳೆಯರ ವಿರುದ್ಧದ ಏಕದಿನ ಸರಣಿಗೆ ಪ್ರತೀಕಾ ರಾವಲ್ ಸೇರ್ಪಡೆ

ಮುಂಬೈ, ಫೆ. 17: ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಮಹಿಳಾ ತಂಡಕ್ಕೆ ಪ್ರತೀಕಾ ರಾವಲ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಅಕ್ಟೋಬರ್ನಲ್ಲಿ ನಡೆದ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ವೇಳೆ ಪ್ರತೀಕಾ ಪಾದದ ಗಾಯಕ್ಕೆ ಒಳಗಾಗಿದ್ದರು. ಬಳಿಕ ಅವರು ಚೇತರಿಕೆಗಾಗಿ ಬೆಂಗಳೂರಿನಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಂಟರ್ ಆಫ್ ಎಕ್ಸಲೆನ್ಸ್ಗೆ ಸೇರ್ಪಡೆಗೊಂಡಿದ್ದರು. ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆಲ್ರೌಂಡರ್ ಪ್ರತೀಕಾ ಮಹಿಳಾ ಪ್ರೀಮಿಯರ್ ಲೀಗ್ 2026ರಲ್ಲಿ ಯುಪಿ ವಾರಿಯರ್ಸ್ ತಂಡದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲೂ ಆಡಲಿಲ್ಲ. ಈಗ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಟೆಸ್ಟ್ ತಂಡದಲ್ಲೂ ಅವರಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಪರಿಷ್ಕೃತ ಏಕದಿನ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ, ಸ್ನೇಹ್ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ಕೀಪರ್), ಉಮಾ ಛೇತ್ರಿ (ವಿಕೆಟ್ಕೀಪರ್), ಕಶ್ವೀ ಗೌತಮ್, ಅಮನ್ಜೋತ್ ಕೌರ್, ಜೆಮಿಮಾ ರೋಡ್ರಿಗ್ಸ್, ಹರ್ಲೀನ್ ದೇವಲ್, ಪ್ರತೀಕಾ ರಾವಲ್.

ವಾರ್ತಾ ಭಾರತಿ 18 Feb 2026 12:40 am

ಪತ್ರಕರ್ತರ ಜೊತೆ ಮಂತ್ರಿಗಳ ಸಂಬಂಧ ಇತಿಮಿತಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಮತ್ತು ಮಂತ್ರಿಗಳ ನಡುವೆ ಅಷ್ಟೊಂದು ಸಂಬಂಧ ಇಲ್ಲ ಎನ್ನುವುದಾಗಿ ಪತ್ರಕರ್ತ ವಿಠ್ಠಲಮೂರ್ತಿ ಹೇಳಿದ್ದು, ಹಾಗೇನೂ ಇಲ್ಲ. ಎಲ್ಲವೂ ಇತಿಮಿತಿಯಲ್ಲಿದೆ. ನಾವು ಎಲ್ಲೇ ಹೋದರೂ, ಎಚ್ಚರಿಕೆಯಿಂದ ಇದ್ದರೆ ನಾವು ಸುರಕ್ಷಿತವಾಗಿರಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಗಳವಾರ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಮಾಧ್ಯಮ ಅಕಾಡಮಿ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‍ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತ, ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರ ಶ್ರದ್ಧಾಂಜಲಿ, ‘ನಾನು ಹಿಂದೂ ರಾಮಯ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರು ಶೂದ್ರ ಸಾಹಿತಿಗಳಾಗಿ ಏನೆಲ್ಲ ಕಷ್ಟಗಳನ್ನು ಎದುರಿಸಿದ್ದರು. ಅಂತಹ ಮೇರು ಸಾಹಿತಿಗಳೇ ಅಷ್ಟೊಂದು ಕಷ್ಟು ಅನುಭವಿಸಿದ್ದಾರೆಂದರೆ, ಪಿ.ರಾಮಯ್ಯ ಅವರು ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ ಉನ್ನತ ಸ್ಥಾನವನ್ನು ಮುಟ್ಟಬೇಕಾದರೆ ಅವರು ಯಾವ ರೀತಿಯ ಶ್ರಮ, ಶ್ರದ್ಧೆ ವಹಿಸಿದ್ದರು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರು ನನಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ. ಅವರ ಬರವಣೆಗೆ ಬದಲಾವಣೆಗೆ ಪೂರಕವಾಗಿರುತ್ತಿದ್ದವು. ಅವರ ಮಾರ್ಗದರ್ಶನದಿಂದ ನಾನು ಅನೇಕ ವಿಷಯವನ್ನು ಕಲಿತಿದ್ದೇನೆ. ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಪಿ.ರಾಮಯ್ಯ ಅವರನ್ನು ಮಾದರಿಯನ್ನಾಗಿ ಇಟ್ಟುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಪತ್ರಕರ್ತರಾಗುವುದೆಂದರೆ ಒಂದು ರೀತಿಯಲ್ಲಿ ದೀಕ್ಷೆ ಪಡೆದಂತೆ. ಒಮ್ಮೆ ಪತ್ರಕರ್ತರಾದರೆ, ಮುಂದೆ ರಾಜಕಾರಣಿಯಾದರೂ, ಉದ್ಯಮಿಯಾದರೂ ಸರಿಯೇ. ಪತ್ರಕರ್ತರು ಕಾಲವನ್ನು ಒಪ್ಪಿಕೊಳ್ಳುತ್ತಲೇ ಸಮಾಜದಲ್ಲಿರುವ ಹುಳಕನ್ನು ನಯವಾಗಿ ತೋರಿಸಿ ತಿದ್ದಬಲ್ಲವರು ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಹೇಳಿದರು. ಸಾರ್ವಜನಿಕ ಜೀವನ ಕಲುಷಿತ ಹಾಗೂ ಪತ್ರಿಕೋದ್ಯಮ ಕಳಪೆಯಾಗುತ್ತಿರುವ ಹೊತ್ತಿನಲ್ಲಿ ಪಿ.ರಾಮಯ್ಯ ಎಂಬ ಅಪ್ಪಟ ಮಾದರಿ ನಮ್ಮನ್ನು ಅಗಲಿದೆ. ರಾಮಯ್ಯ ಅವರು ಪತ್ರಿಕಾ ವೃತ್ತಿಯ ಘನತೆ, ಮೌಲ್ಯ ಹಾಗೂ ನೈತಿಕ ಶಕ್ತಿ ಹೆಚ್ಚಳವಾಗಲು ಶ್ರಮವಹಿಸಿದ್ದರು ಎಂದು ಅವರು ನೆನಪು ಮಾಡಿಕೊಂಡರು. ವಿದ್ಯುನ್ಮಾನ ಮಾಧ್ಯಮಗಳು ಬಂದ ಮೇಲೆ ಪತ್ರಿಕೋದ್ಯಮದ ಉದ್ದೇಶ ಮತ್ತು ಸ್ವರೂಪ ಬದಲಾಗಿದೆ. ಇವತ್ತು ರಾಜಕಾರಣ ಎಲ್ಲ ಕಡೆ ರಾರಾಜಿಸುತ್ತಿದೆ. ದಿನನಿತ್ಯ ಪತ್ರಿಕೆ, ಟಿವಿ ನೋಡಿದರೆ ರಾಜಕಾರಣವೇ ಬಿಟ್ಟರೆ, ಜನರ ಬದುಕು ಮತ್ತು ಭಾವನೆಗೆ ಸಂಬಂಧಪಟ್ಟ ಯಾವುದೇ ವಿಷಯಗಳಿಗೆ ಆಸ್ಪದವೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚಿಗೆ ಹಾವೇರಿಯಲ್ಲಿ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಆಂಯೋಜಿಸಲಾಗಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ಯಾವುದು ಮುಖ್ಯವಾದ ಸುದ್ದಿಯೋ ಅದನ್ನು ಬಿಟ್ಟು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕೈ ಕುಲಕಲಿಲ್ಲ ಎಂದು ಪತ್ರಕರ್ತರು ಕೇಳಿದ್ದರು. ಹೀಗಾಗಿ ಲಕ್ಷ ಜನರಿಗೆ ಹಕ್ಕು ಪತ್ರ ನೀಡಿರುವ ವಿಚಾರ ಮುನ್ನೆಲೆಗೆ ಬರದೇ, ಬೇರೆ ಬೇರೆ ವಿಚಾರಗಳು ಮುನ್ನೆಲಗೆ ಬಂದಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಶಾ ಖಾನಂ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ, ಡಾ.ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 12:38 am

T20 ವಿಶ್ವಕಪ್ | ಸೂಪರ್ 8ಕ್ಕೇರಿದ ನ್ಯೂಝಿಲ್ಯಾಂಡ್

ಕೆನಡಕ್ಕೆ ಸೋಲುಣಿಸಿದ ಗ್ಲೆನ್ ಫಿಲಿಪ್ಸ್–ರಚಿನ್ ರವೀಂದ್ರ ಜೊತೆಯಾಟ ಚೆನ್ನೈ, ಫೆ. 17: ಐಸಿಸಿ T20 ವಿಶ್ವಕಪ್ ನಲ್ಲಿ ಮಂಗಳವಾರ ಗ್ಲೆನ್ ಫಿಲಿಪ್ಸ್ ಮತ್ತು ರಚಿನ್ ರವೀಂದ್ರ ಅವರ ಅರ್ಧಶತಕಗಳ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಕೆನಡವನ್ನು ಎಂಟು ವಿಕೆಟ್ಗಳ ಭರ್ಜರಿ ಅಂತರದಿಂದ ಸೋಲಿಸಿದೆ. ಇದರೊಂದಿಗೆ ನ್ಯೂಝಿಲ್ಯಾಂಡ್ ‘ಡಿ’ ಗುಂಪಿನಿಂದ ಸೂಪರ್ 8 ಹಂತವನ್ನು ಪ್ರವೇಶಿಸಿದೆ. ಕೆನಡದ ಯುವರಾಜ್ ಸಾಮ್ರಾ 65 ಎಸೆತಗಳಲ್ಲಿ 110 ರನ್ ಗಳನ್ನು ಬಾರಿಸಿದರೂ, ಆ ತಂಡದ ಬೌಲರ್ ಗಳಿಗೆ ಎದುರಾಳಿ ಬ್ಯಾಟರ್ ಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸಾಮ್ರಾ T20 ವಿಶ್ವಕಪ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾದರು. ಗೆಲುವಿಗೆ 20 ಓವರ್ ಗಳಲ್ಲಿ 174 ರನ್ ಗಳ ಗುರಿಯನ್ನು ಪಡೆದ ನ್ಯೂಝಿಲ್ಯಾಂಡ್ ಇನ್ನೂ 29 ಎಸೆತಗಳು ಬಾಕಿಯಿರುವಂತೆಯೇ ಗೆಲುವು ದಾಖಲಿಸಿತು. ಅದು 15.1 ಓವರ್ ಗಳಲ್ಲಿ ಎರಡು ವಿಕೆಟ್ಗಳ ನಷ್ಟಕ್ಕೆ 176 ರನ್ ಗಳಿಸಿತು. ಫಿಲಿಪ್ಸ್ ಮತ್ತು ರಚಿನ್ ಮುರಿಯದ ಮೂರನೇ ವಿಕೆಟ್ಗೆ 146 ರನ್ ಗಳ ಭಾಗೀದಾರಿಕೆಯನ್ನು ನಿಭಾಯಿಸಿ ತಂಡವನ್ನು ಸುಲಭ ವಿಜಯದತ್ತ ಮುನ್ನಡೆಸಿದರು. ಫಿಲಿಪ್ಸ್ 36 ಎಸೆತಗಳಲ್ಲಿ 76 ರನ್ ಗಳನ್ನು ಸಿಡಿಸಿ ಅಜೇಯರಾಗಿದ್ದರು. ಅವರ ಇನಿಂಗ್ಸ್ನಲ್ಲಿ ಆರು ಸಿಕ್ಸರ್ ಗಳು ಮತ್ತು ನಾಲ್ಕು ಬೌಂಡರಿಗಳಿದ್ದವು. ರಚಿನ್ ರವೀಂದ್ರ 39 ಎಸೆತಗಳಲ್ಲಿ 59 ರನ್ ಗಳಿಸಿ ಔಟಾಗದೆ ಉಳಿದರು. ಅವರು ನಾಲ್ಕು ಬೌಂಡರಿಗಳು ಮತ್ತು ಮೂರು ಸಿಕ್ಸರ್ ಗಳನ್ನು ಬಾರಿಸಿದರು. ಉಳಿದಂತೆ, ಆರಂಭಿಕ ಬ್ಯಾಟರ್ ಫಿನ್ ಅಲನ್ 8 ಎಸೆತಗಳಲ್ಲಿ 21 ರನ್ ಗಳ ಕೊಡುಗೆ ನೀಡಿದರು. ಕಿವೀಸ್ ತಂಡವು ತನ್ನ ಲೀಗ್ ಹಂತದಲ್ಲಿ 1.227 ನೆಟ್ ರನ್‌ ರೇಟ್ ನೊಂದಿಗೆ ಆರು ಅಂಕಗಳನ್ನು ಗಳಿಸಿದೆ. ಇದೇ ಗುಂಪಿನಲ್ಲಿ ದಕ್ಷಿಣ ಆಫ್ರಿಕ ಈಗಾಗಲೇ ಸೂಪರ್ 8 ಹಂತ ತಲುಪಿದೆ. ಅದು ನೆಟ್ ರನ್‌ ರೇಟ್ ಆಧಾರದಲ್ಲಿ ಅಗ್ರ ಸ್ಥಾನದಲ್ಲಿದೆ. ಕೆನಡಕ್ಕೆ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಲು ಸಾಧ್ಯವಾಗಿಲ್ಲ. ಅದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದಕ್ಕೂ ಮೊದಲು, ಎರಡೂ ತಂಡಗಳಿಗೆ ಗೆಲುವು ಅತ್ಯಗತ್ಯವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆನಡ, ಯುವರಾಜ್ ಸಾಮ್ರಾ ಅವರ ಶತಕದ ನೆರವಿನಿಂದ ನಾಲ್ಕು ವಿಕೆಟ್ಗಳ ನಷ್ಟಕ್ಕೆ 173 ರನ್ ಗಳಿಸಿತು. ಎಡಗೈ ಬ್ಯಾಟರ್ ಸಾಮ್ರಾ 58 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದರು. ಹತ್ತೊಂಬತ್ತು ವರ್ಷ 141 ದಿನ ವಯಸ್ಸಿನ ಸಾಮ್ರಾ ಐಸಿಸಿ T20 ವಿಶ್ವಕಪ್ ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾದರು. ಅವರ ಇನಿಂಗ್ಸ್ನಲ್ಲಿ ಆರು ಸಿಕ್ಸರ್ ಗಳು ಮತ್ತು 11 ಬೌಂಡರಿಗಳಿದ್ದವು. ಅವರು ಲಾಕಿ ಫರ್ಗ್ಯೂಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ಇಲ್ಲದ ನ್ಯೂಝಿಲ್ಯಾಂಡ್ ಬೌಲಿಂಗ್ ದಾಳಿಯ ಪೂರ್ಣ ಪ್ರಯೋಜನ ಪಡೆದರು. ನಾಯಕ ದಿಲ್ಪ್ರೀತ್ ಬಾಜ್ವಾ 39 ಎಸೆತಗಳಲ್ಲಿ 36 ರನ್ ಗಳಿಸಿದರು.

ವಾರ್ತಾ ಭಾರತಿ 18 Feb 2026 12:37 am

ಅಮೆರಿಕ| ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಭಾರತೀಯನ ಬಂಧನ

ವಾಶಿಂಗ್ಟನ್,ಫೆ.17: ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಅಕ್ರಮ ವಲಸಿಗ ಭಾರತೀಯನೊಬ್ಬನನ್ನು ಬಂಧಿಸಲಾಗಿದೆಯೆಂದು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ (ಐಸಿಇ) ಅಮೆರಿಕದ ಹಿರಿಯ ಮಾನವಹಕ್ಕುಗಳ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ವೊಡೆಲಾ ಯಶಸ್ವಿ ಕೊಟ್ಟಪಲ್ಲಿ ಎಂದು ಗುರುತಿಸಲಾಗಿದೆ. ಈತ ಅಮೆರಿಕದಲ್ಲಿ ದಾಖಲೆರಹಿತ ವಲಸಿಗನಾಗಿದ್ದು, ವಲಸೆ ಕಾನೂನಿನಡಿ ಆತನನ್ನು ಗಡಿಪಾರುಗೊಳಿಸುವ ಕಾನೂನುಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ. ನ್ಯೂಜೆರ್ಸಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಅಂಗಡಿಯಿಂದ ಕಳವು ಹಾಗೂ ಸಾರ್ವಜನಿಕ ಶಾಂತಿಭಂಗದ ಆರೋಪವನ್ನು ಕೂಡಾ ಆತ ಎದುರಿಸುತ್ತಿದ್ದಾನೆ.

ವಾರ್ತಾ ಭಾರತಿ 18 Feb 2026 12:34 am

ರಶ್ಯದ ಲೆನಿನ್‌ಗಾರ್ಡ್ ಸೇನಾನೆಲೆಯಲ್ಲಿ ಸ್ಫೋಟ: ಕನಿಷ್ಠ ಇಬ್ಬರು ಮೃತ್ಯು

ಮಾಸ್ಕೋ,ಫೆ.17: ರಶ್ಯದ ಲೆನಿನ್‌ಗ್ರಾಡ್ ಪ್ರಾಂತದ ಸೆರ್ಟೊಲೊವೊ ಪಟ್ಟಣದಲ್ಲಿರುವ ಸೇನಾ ನೆಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಮಿಲಿಟರಿ ಪೊಲೀಸ್ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿರುವುದಾಗಿ ಲೆನಿನ್‌ಗ್ರಾಡ್‌ನ ಗವರ್ನರ್ ಅಲೆಕ್ಸಾಂಡರ್ ಡೊಝ್‌ಡೆಂಕೊ ಹೇಳಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಕುಸಿದುಬಿದ್ದಿರುವ ಮಿಲಿಟರಿ ಪೊಲೀಸ್ ಕಾರ್ಯಾಲಯದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಹಾಗೂ ಗಾಯಾಳುಗಳನ್ನು ರಕ್ಷಿಸಲು ಭದ್ರತಾಪಡೆಗಳು ಕಾರ್ಯಾಚರಿಸುತ್ತಿವೆಯೆಂದು ಡ್ರೊಝೆಡೆಂಕೊ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 12:30 am

ಬಿಇಎಲ್‌ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್; ಕ್ಷಿಪಣಿ ಸಂಯೋಜನಾ ಘಟಕದ ಉದ್ಘಾಟನೆ

ಬೆಂಗಳೂರು : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿನ ನವರತ್ನ ಡಿಫೆನ್ಸ್ ಪಿಎಸ್‍ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ಗೆ (ಬಿಇಎಲ್) ಭೇಟಿ ನೀಡಿ ಪುಣೆಯಲ್ಲಿರುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು ಮತ್ತು ಕಂಪನಿಯ ಕೃತಕ ಬುದ್ಧಿಮತ್ತೆ ನೀತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಅಲ್ಲದೇ, ಬಿಇಎಲ್ ಅಭಿವೃದ್ಧಿಪಡಿಸಿದ ಮೌಂಟೇನ್ ಫೈರ್ ಕಂಟ್ರೋಲ್ ರಾಡಾರ್ ಅನ್ನು ಲೋಕಾರ್ಪಣೆ, ಕ್ಷಿಪಣಿ ಸಂಯೋಜನಾ ಘಟಕದ ಉದ್ಘಾಟನೆ, ಆಕಾಶ್ 3ನೇ ಮತ್ತು 4ನೇ ರೆಜಿಮೆಂಟ್ ಕಾಂಬ್ಯಾಟ್ ಸಿಸ್ಟಮ್‍ಗಳಿಗೆ ಇದೇ ಸಂದರ್ಭದಲ್ಲಿ ಅವರು ಚಾಲನೆ ನೀಡಿದರು. ಭಾರತೀಯ ಸ್ಟಾರ್ಟ್‍ಅಪ್‍ಗಳು ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳು ಸೇರಿದಂತೆ ವಿವಿಧ ಸುಧಾರಿತ ದೇಶೀಯ ರಕ್ಷಣಾ ತಂತ್ರಜ್ಞಾನಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಯಿತು. ಇದು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಸ್ವದೇಶೀಕರಣಕ್ಕೆ ನೀಡಲಾಗುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು. ಬಿಇಎಲ್ ಸಹಯೋಗದೊಂದಿಗೆ ಕ್ಷಿಪಣಿ ವ್ಯವಸ್ಥೆಗಳ ತಯಾರಿಕೆಯಲ್ಲಿ ತೊಡಗಿರುವ ಉದ್ಯಮ ಪಾಲುದಾರರಾದ ಬಿಇಎಂಎಲ್, ಬಿಡಿಎಲ್, ಎಲ್ ಅಂಡ್ ಟಿ, ಎಂ.ಎಸ್.ಎಂ.ಇಗಳು ಮತ್ತು ಸ್ಟಾರ್ಟ್ ಅಪ್‍ಗಳೊಂದಿಗೆ ರಾಜನಾಥ್ ಸಿಂಗ್ ಸಂವಾದ ನಡೆಸಿದರು. ಸುಧಾರಿತ ದೇಶೀಯ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಶೈಕ್ಷಣಿಕ ಪಾಲುದಾರರಾದ ಐಐಟಿ-ಎಂ ಮತ್ತು ಐಐಎಸ್‍ಸಿ ಪ್ರತಿನಿಧಿಗಳೊಂದಿಗೂ ಚರ್ಚೆಗಳು ನಡೆದವು. ಮಾಹಿತಿ ವಿನಿಮಯದ ಸಂದರ್ಭದಲ್ಲಿ, ಬಿಇಎಲ್‍ನ ಕೇಂದ್ರ ಸಂಶೋಧನಾ ಪ್ರಯೋಗಾಲಯಗಳು, ಎಲೆಕ್ಟ್ರಾನಿಕ್ಸ್ ವಾರ್‍ಫೇರ್ ಮತ್ತು ಫೋಟೋನಿಕ್ಸ್ ಶ್ರೇಷ್ಠತಾ ಕೇಂದ್ರ, ಕಮ್ಯುನಿಕೇಶನ್ ಶ್ರೇಷ್ಠತಾ ಕೇಂದ್ರ, ರಾಡಾರ್ ಮತ್ತು ವೆಪನ್ ಸಿಸ್ಟಮ್ಸ್ ಹಾಗೂ ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ ಕೈಗೊಂಡಿರುವ ಸ್ವದೇಶೀಕರಣ ಉಪಕ್ರಮಗಳನ್ನು ಪ್ರದರ್ಶಿಸಲಾಯಿತು. ಸ್ಟಾರ್ಟ್‍ಅಪ್‍ಗಳು ಮತ್ತು ಉದ್ಯಮ ಪಾಲುದಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ದೇಶೀಯ ರಕ್ಷಣಾ ಉತ್ಪಾದನೆ ಮತ್ತು ಸಂಶೋಧನಾ ಸಾಮಥ್ರ್ಯಗಳನ್ನು ಬಲಪಡಿಸುವಲ್ಲಿ ಬಿಇಎಲ್ ನೀಡುತ್ತಿರುವ ಮಹತ್ವದ ಕೊಡುಗೆಯನ್ನು ಸಚಿವರ ಗಮನಕ್ಕೆ ತರಲಾಯಿತು. ತ್ವರಿತ ಪ್ರತಿಕ್ರಿಯೆ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳು, ಲಘು ಯುದ್ಧ ವಿಮಾನ ಮಾರ್ಕ್ II , ಸುಧಾರಿತ ಮಧ್ಯಮ ಯುದ್ಧ ವಿಮಾನ, ಪ್ರಾಜೆಕ್ಟ್ ಕುಶಾ, ಡ್ರೋನ್ ನಿರೋಧಕ ವ್ಯವಸ್ಥೆಗಳು ಮತ್ತು ನೌಕಾ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಗಳಂತಹ ಪ್ರಮುಖ ರಾಷ್ಟ್ರೀಯ ರಕ್ಷಣಾ ಕಾರ್ಯಕ್ರಮಗಳಿಗೆ ಪೂರಕವಾಗಿ ಬಿಇಎಲ್‍ನಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆಯೂ ಸಚಿವರಿಗೆ ವಿವರಿಸಲಾಯಿತು. ಕಾರ್ಯತಂತ್ರದ ಸೆಮಿಕಂಡಕ್ಟರ್ ಸಾಧನಗಳಾದ ಸೆಕ್ಯೂರ್ ಸಿಸ್ಟಮ್ ಆನ್ ಚಿಪ್ಸ್, ಮೊನೊಲಿಥಿಕ್ ಮೈಕ್ರೋವೇವ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಮತ್ತು ಅಪ್ಲಿಕೇಶನ್ ಸ್ಪೆಸಿಫಿಕ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಗಳ ಸ್ವದೇಶೀಕರಣದಲ್ಲಿ ಬಿಇಎಲ್ ಪಾತ್ರದ ಮೇಲೆ ವಿಶೇಷ ಗಮನ ಹರಿಸಲಾಯಿತು. ಇದು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್' ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತದ ದೂರದೃಷ್ಟಿಗೆ ಅನುಗುಣವಾಗಿದೆ. ಸ್ವದೇಶಿ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳು ಭೂಮಿ, ವಾಯು, ನೌಕಾ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುತ್ತಿವೆ ಹಾಗೂ ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ ಎಂದು ತಿಳಿಸಲಾಯಿತು. ರಕ್ಷಣಾ ಸಚಿವರು ಬಿಇಎಲ್‍ನ ಸಂಶೋಧನಾ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಎಐ ಮತ್ತು ಸ್ವಾಯತ್ತ ವ್ಯವಸ್ಥೆಗಳಲ್ಲಿನ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪನ್ನಗಳ ತ್ವರಿತ ಅಭಿವೃದ್ಧಿಗಾಗಿ ಸ್ಟಾರ್ಟ್‍ಅಪ್‍ಗಳು, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಹಕರಿಸಲು ಪ್ರೋತ್ಸಾಹಿಸಿದರು. ವಿಕಸಿತ ಭಾರತದ ಕನಸನ್ನು ನನಸಾಗಿಸಲು ಬಿಇಎಲ್ ವಿವಿಧ ವಿಭಾಗಗಳ ನಡುವಿನ ಸಹಯೋಗ, ನಾವೀನ್ಯತೆ ಮತ್ತು ಕ್ಷಿಪ್ರ ಮೂಲಮಾದರಿ ತಯಾರಿಕೆಗೆ ಆದ್ಯತೆ ನೀಡಬೇಕೆಂದು ಒತ್ತಿ ಹೇಳಿದರು.

ವಾರ್ತಾ ಭಾರತಿ 18 Feb 2026 12:30 am

ಪ್ರಧಾನಿ ಮೋದಿ- ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ದ್ವಿಪಕ್ಷೀಯ ಮಾತುಕತೆ| ಉಭಯ ದೇಶಗಳ ಸಂಬಂಧ ವಿಶೇಷ ಜಾಗತಿಕ

ಕಾರ್ಯತಂತ್ರ ಪಾಲುದಾರಿಕೆಗೆ ಹೆಚ್ಚಿಸಲು ನಿರ್ಧಾರ

ವಾರ್ತಾ ಭಾರತಿ 18 Feb 2026 12:28 am

ಇರಾನ್ ಸನಿಹಕ್ಕೆ ಧಾವಿಸುತ್ತಿರುವ ಅಮೆರಿಕದ ಯುದ್ಧ ನೌಕೆ ಯುಎಸ್‌ಎಸ್ ‘ಅಬ್ರಹಾಂ ಲಿಂಕನ್’

ಟೆಹರಾನ್,ಫೆ.17: ಇರಾನ್-ಅಮೆರಿಕ ನಡುವೆ ಸ್ವಿಝರ್‌ಲ್ಯಾಂಡ್‌ನ ಜಿನೇವಾದಲ್ಲಿ ಎರಡನೇ ಹಂತದ ಮಾತುಕತೆಗಳು ಮಂಗಳವಾರ ನಡೆಯುತ್ತಿವಂತೆಯೇ ಇರಾನ್ ಕರಾವಳಿಯ ಸನಿಹಕ್ಕೆ ಅಮೆರಿಕದ ಯುದ್ಧ ನೌಕೆ ಯುಎಸ್‌ಎಸ್ ಅಬ್ರಹಾಂಲಿಂಕನ್ ಧಾವಿಸುತ್ತಿದ್ದು, ಪ್ರದೇಶದಲ್ಲಿ ಮತ್ತೆ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿದೆ. ಇರಾನ್ ಕರಾವಳಿಯಿಂದ 700 ಕಿ.ಮೀ. ದೂರದ ಒಮಾನ್ ಕರಾವಳಿಯಲ್ಲಿ ಅಮೆರಿಕದ ವಿಮಾನಸಾಗಣೆ ನೌಕೆ ಅಬ್ರಹಾಂ ಲಿಂಕನ್ ಲಂಗರು ಹಾಕಿರುವ ದೃಶ್ಯದ ಉಪಗ್ರಹ ಚಿತ್ರಗಳನ್ನು ಬಿಬಿಸಿ ಸುದ್ದಿಸಂಸ್ಥೆ ಹಂಚಿಕೊಂಡಿದೆ. ಈ ಯುದ್ಧ ನೌಕೆಯು ಎಫ್-35 ಯುದ್ಧವಿಮಾನಗಳು ಸೇರಿದಂತೆ 90 ಫೈಟರ್ ಜೆಟ್‌ಗಳು, 5683 ಯೋಧರನ್ನು ಒಳಗೊಂಡಿದೆ. ಐದು ದಿನಗಳ ಹಿಂದೆ ಅಮೆರಿಕದ ಇನ್ನೊಂದು ವಿಮಾನವಾಹಕ ನೌಕೆ ಯುಎಸ್‌ಎಸ್ ಜೆರಾಲ್ಡ್ ಆರ್.ಫೋರ್ಡ್ ಕೂಡಾ ಇರಾನ್‌ನೆಡೆಗೆ ಧಾವಿಸಲು ಆರಂಭಿಸಿದೆ. ಈ ನಡುವೆ ಇರಾನ್‌ನ ರೆವೆಲ್ಯೂಶನರಿ ಗಾರ್ಡ್ ಯೋಧರು ಹೊರ್ಮುಝ್ ಜಲಸಂಧಿಯಲ್ಲಿ ಸಮರಾಭ್ಯಾಸ ಕವಾಯತನ್ನು ಆರಂಭಿಸಿರುವುದು ಯುದ್ಧ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.

ವಾರ್ತಾ ಭಾರತಿ 18 Feb 2026 12:23 am

ಮಹಾರಾಷ್ಟ್ರ| ವಿದ್ಯಾರ್ಥಿಗಳ ನಡುವೆ ಘರ್ಷಣೆ: ಓರ್ವ ಮೃತ್ಯು, ಮೂವರು ಗಂಭೀರ

ಲಾತೂರ್, ಫೆ. 17: ಮಹಾರಾಷ್ಟ್ರದ ಲಾತೂರ್‌ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ಸಂದರ್ಭ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಔಸಾ ರಸ್ತೆಯಲ್ಲಿರುವ ಕಾಲೇಜಿನ ಆವರಣದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಘರ್ಷಣೆಗೆ ಸಂಬಂಧಿಸಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ‘‘ವೈಯುಕ್ತಿಕ ವಿವಾದದ ಹಿನ್ನೆಲೆಯಲ್ಲಿ ಮೂರನೇ ವರ್ಷದ ಡಿಪ್ಲೊಮಾ ಕೋರ್ಸ್‌ನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಈ ಸಂದರ್ಭ ಆ ದಾರಿಯಾಗಿ ಸಾಗುತ್ತಿದ್ದ ನಾರಾಯಣ ಪಂಚಾಲ್ (20)ನನ್ನು ಇರಿದು ಹತ್ಯೆಗೈಯಲಾಗಿದೆ. ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 12:19 am

ಸಚಿವರ ಸಂಖ್ಯೆ ಶೇ.15 ಮೀರುವಂತಿಲ್ಲ : ಹೈಕೋರ್ಟ್

ಬೆಂಗಳೂರು : ಸಂವಿಧಾನದ ವಿಧಿಯ ಪ್ರಕಾರ ಸಚಿವರ ಸಂಖ್ಯೆಯು ಒಟ್ಟು ಶಾಸಕರ ಸಂಖ್ಯೆ ಶೇ.15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಗಿಂತ ಹೆಚ್ಚು ಮಂದಿಗೆ ಸರಕಾರ ವೇತನ ನೀಡಲಾಗದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ 34 ಮಂದಿ ಶಾಸಕರನ್ನು ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಹಾಗೂ ದಿಲ್ಲಿ ವಿಶೇಷ ಪ್ರತಿನಿಧಿ, ಸಿಎಂ ರಾಜಕೀಯ ಕಾರ್ಯದರ್ಶಿ ಸಹಿತ ಹಲವು ಶಾಸಕರಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವುದು ಸಂವಿಧಾನಬಾಹಿರ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಸೂರಿ ಪಾಯಲ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಾಲಿ ಅರ್ಜಿ ಸಲ್ಲಿಸಿದಾಗ 46 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದರು. ಈಗ 129 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದಾರೆ. ನಾವು ಸರಕಾರದ ಆದೇಶವನ್ನು ಮಾತ್ರ ಪ್ರಶ್ನಿಸುತ್ತೇವೆ. ಎಲ್ಲ ಪ್ರತಿವಾದಿಗಳನ್ನು ಡಿಲೀಟ್ ಮಾಡಬಹುದು. ಶಾಸಕರು ಫಲಾನುಭವಿಗಳಾಗಿದ್ದಾರೆ. ಸರಕಾರದ ಆದೇಶ ಕಾರ್ಯಕಾರಿ ಆದೇಶ ರೂಪದಲ್ಲಿದ್ದು, ಅದು ಮತ್ತೆ ಅಂಥ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ರಾಜ್ಯ ಸರಕಾರವು ಹೊಸದಾಗಿ ಆಯೋಗ, ಸಮಿತಿ, ಪ್ರಾಧಿಕಾರ, ಮಿಷನ್, ಕಾರ್ಯಪಡೆಗಳನ್ನು ರೂಪಿಸಿ ಅದಕ್ಕೆ ಶಾಸಕರನ್ನು ನೇಮಿಸಿ ಅಧ್ಯಕ್ಷರನ್ನಾಗಿಸಿದೆ. ನಾವು ವೈಯಕ್ತಿಕವಾಗಿ ಶಾಸಕರು/ಸಚಿವರ ವಿರುದ್ಧವಿಲ್ಲ. ಸರಕಾರದ ಆದೇಶದ ವಿರುದ್ಧ ಮಾತ್ರ ಇದ್ದೇವೆ. ಅಧ್ಯಕ್ಷರು/ಮುಖ್ಯಸ್ಥರಿಗೆ ಕರ್ನಾಟಕ ಸಚಿವರು ವೇತನ, ಭತ್ತೆ ಕಾಯ್ದೆ 1956ರ ವೇತನ ಸಿಗಲಿದೆ. ಈಗ ಶಾಸಕರಿಗೆ ಸಚಿವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದರು. ಆಗ ನ್ಯಾಯಪೀಠ, ಸಂವಿಧಾನದ 164(1ಎ) ವಿಧಿ ಪ್ರಕಾರ ಸಚಿವರ ಸಂಖ್ಯೆಯು ಶೇ. 15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಸಿರುವ ಮಂದಿಗಿಂತ ಹೆಚ್ಚು ಮಂದಿಗೆ ನಿಮಗೆ ವೇತನ ನೀಡಲಾಗುವುದಿಲ್ಲ ಎಂದು ಹೇಳಿತು. ಅಂತಿಮವಾಗಿ, ಪ್ರತಿವಾದಿಗಳನ್ನಾಗಿಸಿರುವ ಶಾಸಕರ ವಿರುದ್ಧ ಯಾವುದೇ ಕೋರಿಕೆ ಇಲ್ಲವಾದ್ದರಿಂದ ಅವರನ್ನು ಪ್ರತಿವಾದಿಗಳ ಸ್ಥಾನದಿಂದ ತೆಗೆಯಬಹುದು. 2020ರ ಅಕ್ಟೋಬರ್ 7ರಂದು ರಾಜ್ಯ ಸರಕಾರ ಹೊರಡಿಸಿರುವ ಸರಕಾರದ ಆದೇಶವನ್ನು ಮಾತ್ರ ಅರ್ಜಿದಾರರು ಪ್ರಶ್ನಿಸಿದ್ದಾರೆ ಎಂದು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿತು.

ವಾರ್ತಾ ಭಾರತಿ 18 Feb 2026 12:14 am

ಗುಜರಾತ್‌ನ 6 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಶೋಧ

ಅಹ್ಮದಾಬಾದ್, ಫೆ. 17: ಗುಜರಾತ್‌ನ 6 ನ್ಯಾಯಾಲಯಗಳು ಮಂಗಳವಾರ ಬಾಂಬ್ ಬೆದರಿಕೆಯ ಇಮೇಲ್‌ಗಳನ್ನು ಸ್ವೀಕರಿಸಿವೆ. ಈ ಹಿನ್ನೆಲೆಯಲ್ಲಿ ಈ ನ್ಯಾಯಾಲಯಗಳಲ್ಲಿ ಕೂಲಂಕಷ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಹ್ಮದಾಬಾದ್, ವಡೋದರಾ, ವಲಸಾಡ್, ರಾಜ್‌ಕೋಟ್, ಗಾಂಧಿನಗರ ಹಾಗೂ ಮಹೇಶಾನ ನ್ಯಾಯಾಲಯಗಳು ಬಾಂಬ್ ಬೆದರಿಕೆಯ ಇಮೇಲ್‌ಗಳನ್ನು ಸ್ವೀಕರಿಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಡೋದರಾ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿದ ಇಮೇಲ್‌ನಲ್ಲಿ ನ್ಯಾಯಾಲಯದ ಆವರಣದಲ್ಲಿ 19 ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಪ್ರತಿಪಾದಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ‘‘ಮಧ್ಯಾಹ್ನದ ಊಟದ ಸಮಯದಲ್ಲಿ ನ್ಯಾಯಾಲಯದ ಮೇಲೆ ಬಾಂಬ್ ಹಾಕಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು. ಇಮೇಲ್ ಕಳುಹಿಸಿದವರು ತಮಿಳುನಾಡು ನ್ಯಾಯಾಲಯದ ತೀರ್ಪನ್ನು ಟೀಕಿಸಿದ್ದಾರೆ. ವಡೋದರಾ ಎಸ್‌ಒಜಿ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ (ಬಿಡಿಡಿಎಸ್), ಶ್ವಾನ ದಳ, ಸ್ಥಳೀಯ ಪೊಲೀಸರು ಹಾಗೂ ಸೈಬರ್ ತಜ್ಞರ ತಂಡ ಪೂರ್ವಾಹ್ನ ಸುಮಾರು 11 ಗಂಟೆಗೆ ಸ್ಥಳಕ್ಕೆ ತಲುಪಿತು. ನ್ಯಾಯಾಲಯದ ಆವರಣವನ್ನು ಸುತ್ತುವರಿಯಿತು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ’’ ಎಂದು ವಲಯ 2 ಡಿಸಿಪಿ ಮಂಜಿತ್ ವಂಝಾರಾ ತಿಳಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಲಾಗಿದೆ. ಅದು ಅಪರಾಹ್ನದ ನಮಾಝ್‌ಗೆ ಮುನ್ನ ಸ್ಫೋಟಗೊಳ್ಳಲಿದೆ ಎಂದು ಇಮೇಲ್ ಬೆದರಿಕೆ ಒಡ್ಡಿತ್ತು. ಈ ಹಿನ್ನೆಲೆಯಲ್ಲಿ ವಲಸಾಡ್‌ನ ಜಿಲ್ಲಾ ನ್ಯಾಯಾಲಯದ 19 ನ್ಯಾಯಾಲಯಗಳನ್ನು ತೆರವುಗೊಳಿಸಲಾಯಿತು ಎಂದು ವಲಸಾಡ್‌ನ ಪೊಲೀಸ್ ವರಿಷ್ಠ ಯುವರಾಜ್ ಸಿಂಗ್ ಜಡೇಜಾ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ಸಂದರ್ಭ ಅನುಮಾನಾಸ್ಪದವಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ರಾಜ್‌ಕೋಟ್, ಗಾಂಧಿನಗರ ಹಾಗೂ ಅಹ್ಮದಾನಗರ್‌ನ ಜಿಲ್ಲಾ ನ್ಯಾಯಾಲಯಗಳನ್ನು ಮಂಗಳವಾರ ಬೆಳಗ್ಗೆ ತೆರೆವುಗೊಳಿಸಲಾಯಿತು. ಆದರೆ ಯಾವುದೇ ರೀತಿಯ ಸಂದೇಹಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ವಾರ್ತಾ ಭಾರತಿ 18 Feb 2026 12:13 am

ನರೇಗಾದ ಮೂಲ ಸ್ವರೂಪ ಹಾಳು ಮಾಡಲಾಗುತ್ತಿದೆ: ಎಂ.ಪಿ.ಲತಾ ಮಲ್ಲಿಕಾರ್ಜುನ ಆರೋಪ

ವಿಜಯನಗರ / ಹರಪನಹಳ್ಳಿ, ಫೆ.17: ದೇಶದ ಬಡ ಕುಟುಂಬಗಳಿಗೆ ಜೀವನಾಧಾರವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ಸ್ವರೂಪವನ್ನು ಕೇಂದ್ರ ಬಿಜೆಪಿ ಸರ್ಕಾರ ಹಾಳು ಮಾಡುತ್ತಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಆರೋಪಿಸಿದರು. ತಾಲೂಕಿನ ಕೆಸರಹಳ್ಳಿ ಗ್ರಾಮದಲ್ಲಿ ಮಂಗಳವಾರ ‘ನರೇಗಾ ಬಚಾವೋ ಸಂಗ್ರಾಮ’ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನರೇಗಾ ಯೋಜನೆ ಗ್ರಾಮೀಣ ಜನತೆಗೆ ಉದ್ಯೋಗದ ಭರವಸೆಯ ಜೊತೆಗೆ “ಕೆಲಸ ಕೇಳುವ ಹಕ್ಕು” ಎಂಬ ಮನೋಭಾವ ನೀಡಿದ ಮಹತ್ವದ ಕಾಯ್ದೆಯಾಗಿದೆ. ಇಂತಹ ಯೋಜನೆಯ ಹೆಸರು ಬದಲಿಸುವ ಮೂಲಕ ಅದರ ಮೂಲ ತತ್ವವನ್ನು ಬದಲಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು. ರೈತರಿಗೆ ನೀರಾವರಿ, ಕೆರೆ-ಕಟ್ಟೆಗಳ ನಿರ್ಮಾಣ, ರಸ್ತೆ ಅಭಿವೃದ್ಧಿ ಸೇರಿದಂತೆ ಗ್ರಾಮಾಭಿವೃದ್ಧಿ ಕಾರ್ಯಗಳನ್ನು ಗ್ರಾಮಗಳೇ ನಿರ್ಧರಿಸುತ್ತಿದ್ದವು. ಆದರೆ ಹೊಸ ರೂಪದಲ್ಲಿ ಯೋಜನೆಯ ತತ್ವ ಹಾಳಾಗುತ್ತಿದೆ ಎಂದು ದೂರಿದರು. ನರೇಗಾ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಆಶಾಕಿರಣವಾಗಿದ್ದು, ಬ್ಯಾಂಕ್ ಖಾತೆ ತೆರೆಯುವ ಅವಕಾಶ ಹಾಗೂ ಕುಟುಂಬ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ಶಕ್ತಿ ನೀಡಿದೆ. ಯೋಜನೆ ದುರ್ಬಲವಾದರೆ ಅದರ ಹೊಡೆತ ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ತಗುಲುತ್ತದೆ ಎಂದು ಹೇಳಿದರು. 100 ದಿನಗಳ ಉದ್ಯೋಗ ಭರವಸೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೂಲಿ ಪಾವತಿಗಳನ್ನು ಸಮಯಕ್ಕೆ ಮಾಡಬೇಕು ಹಾಗೂ ಕಾರ್ಮಿಕರ ಹಕ್ಕುಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು. ಕೆಸರಹಳ್ಳಿ, ಬಸವನಾಳು, ಗೌರಿಪುರ, ಬಳಿಗನೂರು, ಮೈದೂರು ಗ್ರಾಮಗಳವರೆಗೆ ಪಾದಯಾತ್ರೆ ನಡೆಯಿತು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕೂಲಿ ಕಾರ್ಮಿಕರು, ಮಹಿಳೆಯರು ಮತ್ತು ಯುವಕರು ಭಾಗವಹಿಸಿದರು.

ವಾರ್ತಾ ಭಾರತಿ 18 Feb 2026 12:09 am

ವಿಜಯನಗರ | ಮನೆ ನಿರ್ಮಾಣಕ್ಕೆ ಪರವಾನಗಿ ಸಿಗದ ಆರೋಪ : ಗ್ರಾಮ ಪಂಚಾಯತ್ ಕಚೇರಿಯಲ್ಲಿ ರೈತ ಆತ್ಮಹತ್ಯೆಗೆ ಯತ್ನ

ವಿಜಯನಗರ / ಹರಪನಹಳ್ಳಿ : ಮನೆ ನಿರ್ಮಾಣಕ್ಕೆ ಪರವಾನಗಿ ನೀಡದ ಹಿನ್ನೆಲೆಯಲ್ಲಿ ರೈತನೊಬ್ಬ ಗ್ರಾಮ ಪಂಚಾಯತ್ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ನಡೆದಿದೆ. ಕಡಬಗೆರೆ ಗ್ರಾ.ಪಂ. ವ್ಯಾಪ್ತಿಯ ಪಾವನಪುರ ಗ್ರಾಮದ ನಿವಾಸಿ ಕೆ. ಬಸವರಾಜ್ ಅವರು ಗ್ರಾ.ಪಂ. ಕಚೇರಿಯಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೆ ನಿರ್ಮಾಣಕ್ಕಾಗಿ ಇ-ಸೊತ್ತು ಹಾಗೂ ಪರವಾನಗಿ ನೀಡುವಂತೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಅನುಮತಿ ಸಿಗಲಿಲ್ಲ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರವಾನಗಿ ಇಲ್ಲದೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಕಳೆದ ಆರು ತಿಂಗಳಿಂದ ಕಚೇರಿಗೆ ಸುತ್ತಾಡುತ್ತಿದ್ದೇನೆ ಎಂದು ಅವರು ಆರೋಪಿಸಿದ್ದಾರೆ. ಈ ವೇಳೆ ಪಿಡಿಒ ಕೃಷ್ಣಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಚೇರಿಯಲ್ಲೇ ಅರ್ಧ ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ಗಮನಿಸಿದ ಪಿಡಿಒ ಹಾಗೂ ಸ್ಥಳೀಯರು ತಕ್ಷಣ ಮಧ್ಯಪ್ರವೇಶಿಸಿ ರೈತನನ್ನು ರಕ್ಷಿಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 18 Feb 2026 12:03 am

ಸಂಡೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ : ಕಾಮಗಾರಿಗಳಿಗೆ ವೇಗ ನೀಡಲು ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ಸಂಡೂರು : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ವಿದ್ಯಾನಗರ ಟೌನ್‌ಶಿಪ್‌ನಲ್ಲಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ರಸ್ತೆ ಕಾಮಗಾರಿಗಳು, ಕುಡಿಯುವ ನೀರಿನ ಯೋಜನೆಗಳು, ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಸೂಚನೆ ನೀಡಿದರು. ಜನಪರ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಬೇಕು. ಇಲಾಖೆಗಳ ನಡುವೆ ಸಮನ್ವಯತೆ ಹೆಚ್ಚಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಸ್ಥಳೀಯ ಶಾಸಕ ಅನ್ನಪೂರ್ಣಾ ತುಕಾರಾಮ್, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 11:55 pm

Gujarat SIR | ಅಂತಿಮ ಮತಪಟ್ಟಿಯಲ್ಲಿ 4.40 ಕೋಟಿ ಮತದಾರರು

ಗಾಂಧಿನಗರ: ಗುಜರಾತ್ ನಲ್ಲಿ ಭಾರತೀಯ ಚುನಾವಣಾ ಆಯೋಗ ಸುಮಾರು ಮೂರೂವರೆ ತಿಂಗಳ ಕಾಲ ನಡೆಸಿದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಬಳಿಕ ಇಂದು (ಮಂಗಳವಾರ) ಗುಜರಾತ್ ರಾಜ್ಯ ಚುನಾವಣಾ ಆಯೋಗ ಅಂತಿಮ ಮತಪಟ್ಟಿ ಪ್ರಕಟಿಸಿದ್ದು, ಒಟ್ಟಾರೆಯಾಗಿ 4.40 ಕೋಟಿ ಮತದಾರರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ 19ರಂದು ಕರಡು ಮತಪಟ್ಟಿ ಪ್ರಕಟಿಸಿದ ಬಳಿಕ 5.60 ಲಕ್ಷ ಮಂದಿ ಹೆಚ್ಚುವರಿ ಮತದಾರರು ಸೇರ್ಪಡೆಯಾಗಿದ್ದು, ಇದೀಗ ಅಂತಿಮ ಮತಪಟ್ಟಿಯಲ್ಲಿ 4,40,30,725 ಮತದಾರರಿದ್ದಾರೆ ಎಂದು ಗುಜರಾತ್ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹರೀತ್ ಶುಕ್ಲಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಂತಿಮ ಕರಡು ಮತಪಟ್ಟಿಯಿಂದ ಸುಮಾರು 74 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ಹೀಗಾಗಿ 5.08 ಕೋಟಿಯಷ್ಟಿದ್ದ ಒಟ್ಟಾರೆ ಮತದಾರರ ಸಂಖ್ಯೆ 4.34 ಕೋಟಿಗೆ ಇಳಿಕೆಯಾಗಿತ್ತು. ಈ ಸಂಖ್ಯೆಗೆ ಅಂತಿಮ ಮತಪಟ್ಟಿಯಲ್ಲಿ 5.60 ಲಕ್ಷ ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾರದಾದರೂ ಮತದಾರರ ಹೆಸರು ಸೇರ್ಪಡೆ ಮಾಡಲು ಅಥವಾ ಕೈಬಿಡಲು ಹಕ್ಕುದಾರಿಕೆ ಅಥವಾ ಆಕ್ಷೇಪ ವ್ಯಕ್ತಪಡಿಸಲು ಡಿಸೆಂಬರ್ 19, 2025ರಿಂದ ಜನವರಿ 30, 2026ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಆಕ್ಷೇಪಣೆಗಳನ್ನು ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು ಫೆಬ್ರವರಿ 10ರಂದು ಅವುಗಳನ್ನೆಲ್ಲ ವಿಲೇವಾರಿ ಮಾಡಿದ್ದರು. ಈ ಅಭಿಯಾನಕ್ಕೆ ಅಭೂತಪೂರ್ವ ಸಹಕಾರ ನೀಡಿದ ಗುಜರಾತ್ ನಾಗರಿಕರು ಕೃತಜ್ಞತೆ ಮತ್ತು ಅಭಿನಂದನೆಗಳಿಗೆ ಅರ್ಹರಾಗಿದ್ದಾರೆ ಎಂದು ಗುಜರಾತ್ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹರೀತ್ ಶುಕ್ಲಾ ಧನ್ಯವಾದ ಸಲ್ಲಿಸಿದ್ದಾರೆ. ಈ ಅಭಿಯಾನವು 34 ಜಿಲ್ಲಾ ಚುನಾವಣಾಧಿಕಾರಿಗಳು, 182 ಮತದಾರರ ನೋಂದಣಾಧಿಕಾರಿಗಳು, 855 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 50,963 ಮತಗಟ್ಟೆ ಅಧಿಕಾರಿಗಳು ಹಾಗೂ ದೊಡ್ಡ ಸಂಖ್ಯೆಯ ಸ್ವಯಂಸೇವಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ನಿಗದಿತ ಅವಧಿಯೊಳಗೆ ಸಂಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 17 Feb 2026 11:55 pm

ವಿಜಯನಗರ | ಕನ್ನಡ ಜಾತ್ಯತೀತ ಭಾಷೆ: ನಾಡೋಜ ಬರಗೂರು

ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ

ವಾರ್ತಾ ಭಾರತಿ 17 Feb 2026 11:50 pm

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ : ‘ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ’ ಹಿಂಪಡೆಯಲು ರೈತರ ಪಟ್ಟು

ಬೆಂಗಳೂರು : ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ ಅನ್ನು ಹಿಂಪಡೆಯಬೇಕು. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ಕನಿಷ್ಠ 10 ಲಕ್ಷ ರೂ.ಠೇವಣಿ ಇಡಬೇಕು. ಕೃಷಿ ಅಥವಾ ಕೃಷಿ ಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸುವ ಜತೆಗೆ ಭದ್ರತೆ ನೀಡಿ ಬಡ್ಡಿ ರಹಿತ ಸಾಲಕ್ಕೆ ಉತ್ತೇಜನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈ ಬಾರಿಯ ಬಜೆಟ್‍ನಲ್ಲ ಈಡೇರಿಸಬೇಕೆಂದು ರಾಜ್ಯ ಸರಕಾರಕ್ಕೆ ರೈತರು ಮನವಿ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ 2026-27ನೆ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ರೈತ ಸಂಘಟನೆಯ ಮುಖಂಡರು, ಕೃಷಿ ಸಚಿವ ಚಲುವರಾಯಸ್ವಾಮಿ, ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆತ್ಮಹತ್ಯೆ ತಡೆಗಟ್ಟುವ ಕ್ರಮ ಆಗಬೇಕು. ಬೆಳೆವಿಮೆ ಪದ್ದತಿಯಲ್ಲಿ ಬದಲಾವಣೆ ತರಬೇಕು. ಹೀಗೆ ಎಲ್ಲ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಜತೆಗೆ, ರೈತರ ಮುಖಂಡರೊಬ್ಬರು ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಅನ್ನು ವಾಪಸ್ ಪಡೆಯಬೇಕು ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಸಲ್ಲಿಕೆ ಮಾಡಿದ್ದಾರೆ ಎಂದರು. ರೈತ ಮುಖಂಡ ಬಡಗಲಪುರ ನಾಗೇಂದ್ರ, ಈ ವರ್ಷದ ಬಜೆಟ್‍ನಲ್ಲಿ ಸಣ್ಣ ನೀರಾವರಿಗೆ ಒತ್ತು ಕೊಡಬೇಕು. ನೇರವಾಗಿ ರೈತರಿಗೆ ತಲುಪುವಂತೆ ಪಿಡಿಎ ವ್ಯವಸ್ಥೆ ಜಾರಿಗೊಳಿಸಬೇಕು. ಹೀಗೆ, ಸುಮಾರು 20-25 ಅಂಶಗಳನ್ನು ಮುಖ್ಯಮಂತ್ರಿ ಅವರ ಮುಂದೆ ಹೇಳಿದ್ದೇವೆ. ಈ ಸಾಲಿನ ಬಜೆಟ್ ಕೃಷಿಕರ ಪರವಾಗಿರಬೇಕು ಎಂದು ಒತ್ತಾಯ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಬೇಡಿಕೆ ಸಲ್ಲಿಕೆ: ರೈತ ಯುವಕರು ಮದುವೆ ಆಗಲು ವಧು ಸಿಗದೇ ಇರುವುದು ಒಂದು ಸಾಮಾಜಿಕ ಪಿಡುಗಾಗಿರುವುದು ವಿಷಾದನೀಯ. ಈ ಸಮಸ್ಯೆಗೆ ಕಾರಣಗಳನ್ನು ಕಂಡುಹಿಡಿಯಬೇಕು. ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ, ಕೃಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಕಾಯ್ದೆ 2025, ಬೀಜ ಮಸೂದೆ 2025, ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಈ ಅಧಿವೇಶನದಲ್ಲಿ ಘೋಷಿಸಬೇಕು. ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಠ 20 ಸಾವಿರ ಕೋಟಿ ಆವರ್ತ ನಿಧಿಯನ್ನು ಮೀಸಲಿಡಬೇಕು. ಸಮಗ್ರ ಪಡಿತರ ವ್ಯವಸ್ಥೆಯನ್ನು ರೂಪಿಸಿ ಭತ್ತ, ರಾಗಿ, ಜೋಳ, ತೊಗರಿಬೇಳೆ, ಎಣ್ಣೆಕಾಳು, ಸಿರಿದಾನ್ಯ ಮುಂತಾದ ಅವಶ್ಯಕ ಉತ್ಪನ್ನಗಳನ್ನು ಎಂ.ಎಸ್.ಪಿ ದರದಲ್ಲಿ ರೈತರಿಂದಲೇ ನೇರವಾಗಿ ಕೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಬಗರ್ ಹುಕುಂ ಸಾಗುವಳಿದಾರರಿಗೆ ದರಖಾಸ್ತು ಮಂಜೂರು ಮಾಡಲು ತೊಡಕಾಗಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಹಕ್ಕುಪತ್ರ ನೀಡಲು ಘೋಷಿಸಬೇಕು. 2013ರ ಭೂ-ಸ್ವಾಧೀನ ಕಾಯ್ದೆಯನ್ನು ಕೈಗಾರಿಕೆ, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಅನ್ವಯ ಮಾಡಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ವಸತಿ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೂ ಈ ಕಾಯ್ದೆಯನ್ನು ಅನ್ವಯಿಸಬೇಕು. ಕರ್ನಾಟಕದ ಕೃಷಿಯ ಹೆಚ್ಚು ಭೂಮಿ ಮರಳು ಭೂಮಿಯಾಗಿ ಪರಿವರ್ತನೆ ಆಗುತ್ತಿರುವುದು ತುಂಬಾ ಆತಂಕಕಾರಿಯಾಗಿದೆ. ಇದನ್ನು ತಡೆಗಟ್ಟಲು ವಿಶೇಷ ಕಾಳಜಿಯ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 17 Feb 2026 11:50 pm

ಆಹಾರ ಉತ್ಪನ್ನಗಳ ಲೇಬಲ್ ನಲ್ಲಿ ಹೇಳುವ ಪೌಷ್ಟಿಕಾಂಶದ ಮಾಹಿತಿ, ಆರೋಗ್ಯ ಪ್ರಯೋಜನದ ಹಕ್ಕುಗಳು ಎಷ್ಟು ನಿಜ? ಅಧ್ಯಯನ ಏನು ಹೇಳುತ್ತದೆ?

2026ರ ಆರಂಭದಲ್ಲಿ ಬಿಡುಗಡೆಯಾದ LabelBlind ಅಧ್ಯಯನ ವರದಿ ಭಾರತದ ಪ್ಯಾಕೇಜ್ಡ್ ಆಹಾರ ಉದ್ಯಮದಾದ್ಯಂತ ಆಹಾರ ಲೇಬಲಿಂಗ್ ಅನುಸರಣೆಯಲ್ಲಿ ಗಮನಾರ್ಹ ಅಂತರವನ್ನು ಎತ್ತಿ ತೋರಿಸಿದೆ. 18 ವಿಭಾಗಗಳು ಮತ್ತು 21 ಹಕ್ಕುಗಳ ಪ್ರಕಾರಗಳನ್ನು ಒಳಗೊಂಡ 227 ಬ್ರ್ಯಾಂಡ್ ಗಳ 586 ಉತ್ಪನ್ನಗಳಲ್ಲಿ 5,058 ಹಕ್ಕುಗಳನ್ನು ವಿಶ್ಲೇಷಿಸಿದಾಗ, ಈ ಹಕ್ಕುಗಳಲ್ಲಿ ಶೇ. 33.6 ರಷ್ಟು ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ ಎಂದು ಫಲಿತಾಂಶಗಳು ತೋರಿಸಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸುಮಾರು ಶೇ. 21 ರಷ್ಟು ಉತ್ಪನ್ನಗಳು ಆಹಾರ ಸುರಕ್ಷತಾ ನಿಯಮಗಳನ್ನು ನೇರವಾಗಿ ಉಲ್ಲಂಘಿಸಿವೆ. ಅದೇ ವೇಳೆ ಶೇ. 12 ರಷ್ಟು ಉತ್ಪನ್ನಗಳು ವೈಜ್ಞಾನಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ಸಾಧ್ಯವಾಗದ ಭರವಸೆಗಳನ್ನು ನೀಡಿವೆ. ಸರಳವಾಗಿ ಹೇಳುವುದಾದರೆ, ಪ್ಯಾಕೇಜ್ಡ್ ಆಹಾರಗಳ ಮೇಲಿನ ಸರಿಸುಮಾರು ಮೂರು ಹಕ್ಕುಗಳಲ್ಲಿ ಒಂದು ಹಕ್ಕು ಅಸ್ತಿತ್ವದಲ್ಲಿರುವ ಮಾನದಂಡಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ ಎಂದು ಲೇಬಲ್ಬ್ಲೈಂಡ್ನ ಸ್ಥಾಪಕಿ ಮತ್ತು ಸಿಇಒ ಡಾ. ರಶೀದಾ ವಾಪಿವಾಲಾ ಹೇಳುತ್ತಾರೆ. ಈ ಮಾನದಂಡಗಳು ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ನಿಗದಿಪಡಿಸಿದ ನಿಯಮಗಳು, ಭಾರತೀಯ ಜಾಹೀರಾತು ಮಾನದಂಡಗಳ ಮಂಡಳಿ (ASCI) ಹೊರಡಿಸಿದ ಮಾರ್ಗಸೂಚಿಗಳು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ–2019ರ ಅಡಿಯಲ್ಲಿ ಸಂಬಂಧಿತ ನಿಬಂಧನೆಗಳನ್ನು ಒಳಗೊಂಡಿವೆ. ►ಆಹಾರ ಲೇಬಲ್ ಹೇಗಿರಬೇಕು? ಆಹಾರ ಲೇಬಲ್ ಗಳು FSSAIನ ಜಾಹೀರಾತು ಮತ್ತು ಲೇಬಲಿಂಗ್ ನಿಯಮಗಳು, ASCI ಮಾನದಂಡಗಳು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ಬದ್ಧವಾಗಿರಬೇಕು. ಉದಾಹರಣೆಗೆ, ಒಂದು ಉತ್ಪನ್ನವು “ಹೆಚ್ಚಿನ ಕಬ್ಬಿಣದ ಅಂಶ” ಇದೆ ಎಂದು ಹೇಳಿಕೊಳ್ಳಬಹುದು. ಆದರೆ ಅದರ ಪೌಷ್ಟಿಕಾಂಶ ಟೇಬಲ್ ಅಗತ್ಯವಿರುವ 30 ಪ್ರತಿಶತ ಶಿಫಾರಸು ಮಾಡಿದ ಆಹಾರ ಅನುಮತಿ (RDA) ಪೂರೈಸದೇ ಇದ್ದರೆ ಅದು ದಾರಿತಪ್ಪಿಸುವ ಹಕ್ಕಾಗುತ್ತದೆ. ಲೇಬಲ್ ಬ್ಲೈಂಡ್ ಅಧ್ಯಯನದ ಪ್ರಕಾರ, ವಿಶ್ಲೇಷಿಸಲಾದ 5,058 ಹಕ್ಕುಗಳಲ್ಲಿ 21.3 ಪ್ರತಿಶತ ಸಂಪೂರ್ಣವಾಗಿ ನಿಯಮಗಳಿಗೆ ಬದ್ಧವಾಗಿಲ್ಲ. ಅಂದರೆ ಅವು ಕಡ್ಡಾಯ ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸಲು ವಿಫಲವಾಗಿವೆ ಮತ್ತು ಗ್ರಾಹಕರನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ. 12.3 ಪ್ರತಿಶತ “ಬ್ರ್ಯಾಂಡ್ ಟು ವೆರಿಫೈ” ವರ್ಗದ ಅಡಿಯಲ್ಲಿ ಬಂದಿದೆ. ಅಲ್ಲಿ ಪ್ಯಾಕೇಜಿಂಗ್ನಲ್ಲಿ ಅಥವಾ ಬ್ರ್ಯಾಂಡ್ ಪ್ಲಾಟ್ಫಾರ್ಮ್ಗಳಲ್ಲಿ ಹಕ್ಕುಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಕಷ್ಟು ಆಧಾರಗಳು ಲಭ್ಯವಿರಲಿಲ್ಲ. “ಬ್ರ್ಯಾಂಡ್ ಗಳು ತಮ್ಮ ಉತ್ಪನ್ನವು ಮಧುಮೇಹ ಸ್ನೇಹಿ ಅಥವಾ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದಾಗ, ಅವರು ಆ ಹಕ್ಕುಗಳನ್ನು ಬೆಂಬಲಿಸುವ ಸ್ಪಷ್ಟ ಪುರಾವೆಗಳನ್ನು ಒದಗಿಸಬೇಕು. ಉದಾಹರಣೆಗೆ, ಜೇನುತುಪ್ಪವು ಮೂಲತಃ ಸಕ್ಕರೆಯೇ ಆಗಿರುವುದರಿಂದ ಅಂತಹ ಹಕ್ಕುಗಳನ್ನು ಪುರಾವೆಗಳಿಲ್ಲದೆ ಹೇಗೆ ಸಮರ್ಥಿಸಬಹುದು?” ಎಂದು ಡಾ. ರಶೀದಾ ವಾಪಿವಾಲಾ ಹೇಳಿದ್ದಾರೆ. ಇತ್ತೀಚಿನ ಹೊಸ ವರ್ಗಗಳ ಉತ್ಪನ್ನಗಳಲ್ಲಿ ಲೇಬಲ್ ಗಳಲ್ಲಿ ಹೇಳಿರುವ ಹಕ್ಕುಗಳಿಗೆ ಬದ್ಧತೆ ಕಡಿಮೆ ಇದೆ ಎಂದು ವಿಶ್ಲೇಷಣೆಯು ಕಂಡುಹಿಡಿದಿದೆ. ಸಸ್ಯ ಆಧಾರಿತ ಪಾನೀಯಗಳ ಮೇಲಿನ ಹಕ್ಕುಗಳಲ್ಲಿ 29 ಪ್ರತಿಶತ, ರೆಡಿ ಟು ಈಟ್ ಆಹಾರಗಳ ಹಕ್ಕುಗಳಲ್ಲಿ 28.6 ಪ್ರತಿಶತ ಮತ್ತು ಪ್ಯಾಕೇಜ್ ಮಾಡಿದ ತಿಂಡಿಗಳ ಮೇಲಿನ ಹಕ್ಕುಗಳಲ್ಲಿ 27.3 ಪ್ರತಿಶತ ಹಕ್ಕುಗಳಿಗೆ ಬದ್ಧವಾಗಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ►ಗ್ರಾಹಕರನ್ನು ದಾರಿ ತಪ್ಪಿಸುವ ಆಹಾರ ಬ್ರಾಂಡ್ ಗಳು ಈ ಅಧ್ಯಯನವು ಆರೋಗ್ಯ, ಪೋಷಕಾಂಶದ ಅಂಶ ಮತ್ತು “no added sugar”, “no preservatives”, “no maida” ಮುಂತಾದ ಸೇರ್ಪಡೆಗಳಿಲ್ಲದ ಹಕ್ಕುಗಳನ್ನು ಒಳಗೊಂಡಂತೆ 21 ಪ್ರಕಾರಗಳ ಹಕ್ಕುಗಳನ್ನು ವರ್ಗೀಕರಿಸಿದೆ. ಎಲ್ಲಾ ಹಕ್ಕುಗಳಲ್ಲಿ ಸುಮಾರು 40 ಪ್ರತಿಶತ ಉತ್ಪನ್ನಗಳು ಆರೋಗ್ಯ ಅಥವಾ ಪೌಷ್ಟಿಕಾಂಶ ವರ್ಗಗಳ ಅಡಿಯಲ್ಲಿ ಬರುತ್ತವೆ. ಆಹಾರ ಪ್ಯಾಕೇಜಿಂಗ್ ಮೇಲಿನ ಆರೋಗ್ಯ ಹಕ್ಕುಗಳ ಕುರಿತು ಅಧ್ಯಯನವು ಪ್ರಮುಖ ಕಳವಳವನ್ನು ವ್ಯಕ್ತಪಡಿಸಿದೆ. ಈ ಹಕ್ಕುಗಳಲ್ಲಿ ಅರ್ಧಕ್ಕಿಂತ ಹೆಚ್ಚು (52.5%) ದಾರಿತಪ್ಪಿಸುವ ಅಥವಾ ಸಾಬೀತಾಗದವು. ದಿನನಿತ್ಯದ ಅಡುಗೆಮನೆಯಲ್ಲಿ ಬಳಸುವ ಪ್ರಧಾನ ವಸ್ತುಗಳಲ್ಲಿಯೂ ಈ ರೀತಿಯ ದಾರಿತಪ್ಪಿಸುವ ಹಕ್ಕುಗಳಿವೆ. 80% ಜೇನುತುಪ್ಪದ ಬ್ರ್ಯಾಂಡ್ ಗಳು ಕಾನೂನುಬಾಹಿರ ಆರೋಗ್ಯ ಹಕ್ಕುಗಳನ್ನು ನೀಡಿವೆ. ಸರಿಸುಮಾರು 65% ತುಪ್ಪ ಉತ್ಪನ್ನಗಳು ಮತ್ತು ಅರ್ಧಕ್ಕಿಂತ ಹೆಚ್ಚು ಚಹಾ, ಅಡುಗೆ ಎಣ್ಣೆಗಳಲ್ಲಿ ಇದೇ ರೀತಿಯ ದಾರಿತಪ್ಪಿಸುವ ಹಕ್ಕುಗಳು ಕಂಡುಬಂದಿವೆ. ಆರೋಗ್ಯ ಹಕ್ಕುಗಳು ಅತ್ಯುನ್ನತ ಮಟ್ಟದ ಕಾಳಜಿಯನ್ನು ತೋರಿಸಿದವು. ಇವುಗಳಲ್ಲಿ ಸುಮಾರು 52.5 ಪ್ರತಿಶತ ಉತ್ಪನ್ನಗಳು ಅನುಸರಣೆಯಿಲ್ಲದ ಅಥವಾ ಬ್ರ್ಯಾಂಡ್ ಪರಿಶೀಲನೆ ಅಗತ್ಯವಿರುವವು ಎಂದು ವರ್ಗೀಕರಿಸಲಾಗಿದೆ. ಉದಾಹರಣೆಗೆ, ಹೃದಯ ಆರೋಗ್ಯ ಪ್ರಯೋಜನಗಳನ್ನು ಹೇಳುವ ಜೇನುತುಪ್ಪದ ಉತ್ಪನ್ನಗಳು, ತುಪ್ಪವನ್ನು ಆಧಾರವಿಲ್ಲದೆ “ಪೌಷ್ಠಿಕಾಂಶದ ಪವರ್ ಹೌಸ್” ಎಂದು ಮಾರಾಟ ಮಾಡುವುದು, ಮಧುಮೇಹ ಸ್ನೇಹಿಯಾಗಿ ಇರಿಸಲಾಗಿರುವ ರೆಡಿ ಟು ಈಟ್ ಆಹಾರಗಳು ಇದರಲ್ಲಿ ಸೇರಿವೆ. ದೈನಂದಿನ ಆಹಾರ ವರ್ಗದಲ್ಲೇ ಆರೋಗ್ಯ ಹಕ್ಕುಗಳಲ್ಲಿ ಅತ್ಯಧಿಕ ಲೇಬಲ್ ಅನುಸರಣೆಯಿಲ್ಲದಿರುವುದು ಕಂಡುಬಂದಿದೆ. ಈ ಪೈಕಿ ಜೇನುತುಪ್ಪ 80 ಪ್ರತಿಶತ, ತುಪ್ಪ 65.5 ಪ್ರತಿಶತ, ಚಹಾ/ಹರ್ಬಲ್ ಇನ್ಫ್ಯೂಷನ್ಗಳು 54.3 ಪ್ರತಿಶತ ಮತ್ತು ಖಾದ್ಯ ಎಣ್ಣೆಗಳಲ್ಲಿ 52.9 ಪ್ರತಿಶತ ಲೇಬಲ್ ಅನುಸರಣೆಯಿಲ್ಲದಿವೆ. ಪೌಷ್ಟಿಕಾಂಶದ ವಿಷಯದ ಬಗ್ಗೆ ಶೇ. 27.1 ರಷ್ಟು ಅನುಸರಣೆಯ ಕೊರತೆ ಕಂಡುಬಂದಿದೆ. ಇದಕ್ಕೆ ಪ್ರಮುಖ ಕಾರಣ ಪೌಷ್ಟಿಕಾಂಶ ಮಾಹಿತಿ (NI) ಟೇಬಲ್ ನಲ್ಲಿನ ಪೋಷಕಾಂಶಗಳ ಘೋಷಣೆಗಳ ವ್ಯತ್ಯಾಸಗಳು. “ಪ್ರೋಟೀನ್ನ ಮೂಲ”, “ಕಬ್ಬಿಣದಿಂದ ಸಮೃದ್ಧ” ಅಥವಾ “ಹೆಚ್ಚಿನ ಫೈಬರ್” ಮುಂತಾದ ಹಕ್ಕುಗಳು ಅಗತ್ಯವಿರುವ ಪರಿಮಾಣಾತ್ಮಕ ಮಿತಿಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ►ನಾವು ಸೇವಿಸುವ ಆಹಾರಗಳು ಎಷ್ಟು ಸುರಕ್ಷಿತ? ಇತ್ತೀಚಿನ ಅಧ್ಯಯನದ ಪ್ರಕಾರ, ನಾವು ಪ್ರತಿದಿನ ಸೇವಿಸುವ ಆಹಾರಗಳಾದ ಹಿಟ್ಟು, ಎಣ್ಣೆ ಮತ್ತು ತಿಂಡಿಗಳು ದಾರಿತಪ್ಪಿಸುವ ಲೇಬಲ್ ಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು. ಗೋಧಿಹಿಟ್ಟು (25%), ತುಪ್ಪ (23%) ಮತ್ತು ಅಡುಗೆ ಎಣ್ಣೆ (22%) ನಂತಹ ದೈನಂದಿನ ವಸ್ತುಗಳ ಸುಮಾರು ನಾಲ್ಕನೇ ಒಂದು ಭಾಗವು ಸರಿಯಾದ ಲೇಬಲಿಂಗ್ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ. “ಆರೋಗ್ಯಕರ” ಪರ್ಯಾಯಗಳೂ ಸಹ ಸುರಕ್ಷಿತವಾಗಿಲ್ಲ; ಸುಮಾರು 29% ಸಸ್ಯ ಆಧಾರಿತ ಹಾಲುಗಳು (ಸೋಯಾ ಅಥವಾ ಬಾದಾಮಿ ಹಾಲಿನಂತೆ) ಗಮನಾರ್ಹ ಸಮಸ್ಯೆಗಳನ್ನು ತೋರಿಸುತ್ತವೆ. “ಮಾಹಿತಿ ಓವರ್ಲೋಡ್” ಬಗ್ಗೆ ಅಧ್ಯಯನವು ಎಚ್ಚರಿಸಿದೆ. ಅಲ್ಲಿ ಬ್ರ್ಯಾಂಡ್ ಗಳು ಒಂದು ಪ್ಯಾಕೇಜ್ಗೆ ಹಲವಾರು ಭರವಸೆಗಳನ್ನು ತುಂಬುತ್ತವೆ. ಉದಾಹರಣೆಗೆ, ಪ್ರೋಟೀನ್ ಪೌಡರ್ಗಳು ಈಗ ಪ್ರತಿ ಲೇಬಲ್ಗೆ ಸರಾಸರಿ 17 ವಿಭಿನ್ನ ಹಕ್ಕುಗಳನ್ನು ಹೊಂದಿದ್ದರೆ, ಎನರ್ಜಿ ಬಾರ್ಗಳು ಸುಮಾರು 12 ಹಕ್ಕುಗಳನ್ನು ಹೊಂದಿವೆ. ಉತ್ತಮ ಆಯ್ಕೆಗಳನ್ನು ಮಾಡಲು ಸಹಾಯ ಮಾಡುವ ಬದಲು, ಈ ಹಕ್ಕುಗಳು ಗ್ರಾಹಕರನ್ನು ಗೊಂದಲಗೊಳಿಸುತ್ತವೆ. ನಿಜವಾಗಿಯೂ ಆರೋಗ್ಯಕರ ಉತ್ಪನ್ನ ಮತ್ತು ಬುದ್ಧಿವಂತ ಮಾರ್ಕೆಟಿಂಗ್ ಯಾವುದು ಎಂದು ತಿಳಿಯುವುದು ಕಷ್ಟಕರವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮಕ್ಕಳಿಗಾಗಿ ತಯಾರಿಸಿದ ಆಹಾರಗಳು ನಿಜವಾಗಿಯೂ ಸುರಕ್ಷಿತ ಮತ್ತು ಆರೋಗ್ಯಕರವೇ ಎಂಬುದನ್ನೂ ಈ ಅಧ್ಯಯನ ವಿಶ್ಲೇಷಿಸಿದೆ. ದುರದೃಷ್ಟವಶಾತ್, ಅನೇಕ ಜನಪ್ರಿಯ ಮಕ್ಕಳ ತಿಂಡಿಗಳು ಮತ್ತು ಪಾನೀಯಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಸುಮಾರು 27% ತಿಂಡಿಗಳು ಮತ್ತು ಸುವಾಸನೆಯ ಪಾನೀಯಗಳು (ಹಣ್ಣಿನ ಪಾನೀಯಗಳಂತೆ) ಲೇಬಲಿಂಗ್ ನಿಯಮಗಳನ್ನು ಪಾಲಿಸುತ್ತಿಲ್ಲ. ಸಕಾರಾತ್ಮಕವಾಗಿ, ಉಪಾಹಾರ ಧಾನ್ಯಗಳು (breakfast cereals) ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಿದವು. ಇವುಗಳಲ್ಲಿ ಸುಮಾರು 89% ಉತ್ಪನ್ನಗಳು ನಿಯಮಗಳನ್ನು ಸರಿಯಾಗಿ ಅನುಸರಿಸಿದವು. ಕೇಕ್ ಮತ್ತು ಪ್ಯಾನ್ಕೇಕ್ ಮಿಶ್ರಣಗಳಂತಹ ಆಹಾರಗಳು ಇತರ ಉತ್ಪನ್ನಗಳಷ್ಟು ಹೆಚ್ಚಿನ ಆರೋಗ್ಯ ಭರವಸೆಗಳನ್ನು ನೀಡದಿದ್ದರೂ, ಅವುಗಳ ಲೇಬಲಿಂಗ್ನಲ್ಲಿ ಕೆಲವೇ ಸಮಸ್ಯೆಗಳು ಕಂಡುಬಂದಿವೆ. ಕೆಲವು ವರ್ಗಗಳು ಸುಧಾರಿಸುತ್ತಿದ್ದರೂ, ಪೋಷಕರು ತಮ್ಮ ಮಕ್ಕಳಿಗೆ ತಿಂಡಿಗಳು ಮತ್ತು ಪಾನೀಯಗಳನ್ನು ಆಯ್ಕೆಮಾಡುವಾಗ ಇನ್ನೂ ಜಾಗರೂಕರಾಗಿರಬೇಕು ಎಂಬುದನ್ನು ಇದು ಸೂಚಿಸುತ್ತದೆ.

ವಾರ್ತಾ ಭಾರತಿ 17 Feb 2026 11:46 pm

ಲಿಂಗಸುಗೂರು | ಮುದಗಲ್ ತಾಲೂಕು ಘೋಷಣೆಗೆ ಆಗ್ರಹ: ಫೆ.18ರಂದು ಪಟ್ಟಣ ಬಂದ್‌ಗೆ ಕರೆ

ಲಿಂಗಸುಗೂರು: ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಫೆ.18ರಂದು ಮುದಗಲ್ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಪದಾಧಿಕಾರಿ ಶರಣಪ್ಪ ಕಟ್ಟಿಮನಿ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಮುದಗಲ್ ತಾಲೂಕು ಘೋಷಣೆ, ಕೋಟೆ ಉತ್ಸವ ಹಾಗೂ ಕುಡಿಯುವ ನೀರಿನ ಯೋಜನೆಗಳ ಭರವಸೆ ನೀಡಿದ್ದರೂ ಅವು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಂದ್‌ಗೆ ಪ್ರಗತಿಪರ, ಕನ್ನಡಪರ, ರೈತಪರ ಹಾಗೂ ದಲಿತಪರ ಸೇರಿ 19ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ಅಂಗಡಿ-ಮುಂಗಟ್ಟು ಮಾಲೀಕರು ಸ್ವಯಂ ಪ್ರೇರಿತರಾಗಿ ಸಹಕಾರ ನೀಡುತ್ತಿದ್ದಾರೆ. ಬಂದ್‌ನ್ನು ಶಾಂತಿಯುತವಾಗಿ ನಡೆಸಲಾಗುವುದು ಎಂದು ಹೇಳಿದರು. ಪಕ್ಷಾತೀತ ಹೋರಾಟಕ್ಕೆ ಹಾಲಿ ಶಾಸಕ ಮಾನಪ್ಪ ವಜ್ಜಲ್ ಹಾಗೂ ಮಾಜಿ ಶಾಸಕ ಡಿ.ಎಸ್. ಹುಲಗೇರಿ ಸೇರಿದಂತೆ ಹಿರಿಯರನ್ನು ಆಹ್ವಾನಿಸಲಾಗಿದೆ. ಕೆಲವು ಮಠಾಧೀಶರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕರವೇ ಘಟಕಾಧ್ಯಕ್ಷ ಎಸ್.ಎ. ನಯೀಮ್ ಮಾತನಾಡಿ, ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು. ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ, ಶಾಲೆ-ಕಾಲೇಜುಗಳು, ಎಪಿಎಂಸಿ ಮಾರುಕಟ್ಟೆ, ಕಿರಾಣಿ ಮತ್ತು ಬಟ್ಟೆ ಅಂಗಡಿಗಳು ಮುಚ್ಚಲಿದ್ದು, ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 11:45 pm

Raichur | ತೀವ್ರಗೊಂಡ ನಾಯಕತ್ವ ಬದಲಾವಣೆ ಚರ್ಚೆ : ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಿದ ಎ.ವಸಂತ ಕುಮಾರ, ಹಂಪನಗೌಡ ಬಾದರ್ಲಿ, ಶರಣಗೌಡ ಬಯ್ಯಾಪುರ

ರಾಯಚೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ರಾಯಚೂರಿನ ಕೆಲ ಜನಪ್ರತಿನಿಧಿಗಳು ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಯಚೂರಿನ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಲಿಂಗಸಗೂರಿನ ಶಾಸಕ ಶರಣೇಗೌಡ ಬಯ್ಯಾಪುರ ಅವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಬುಧವಾರ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ರಾಜ್ಯದ ಸುಮಾರು 27 ಮಂದಿ ಶಾಸಕರು ಈ ಪ್ರವಾಸದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆ, ರಾಯಚೂರಿನ ಜನಪ್ರತಿನಿಧಿಗಳೂ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಈ ಶಾಸಕರು ಒಟ್ಟಾಗಿ ಪ್ರವಾಸ ಕೈಗೊಂಡಿರುವುದು ನಾಯಕತ್ವ ಬದಲಾವಣೆಯ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಬಣದಲ್ಲಿ ಗುರುತಿಸಿಕೊಂಡವರಲ್ಲಿ ಕೆಲವರು ಪ್ರವಾಸದಲ್ಲಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಆಸ್ಟ್ರೇಲಿಯಾ ನಂತರ ನ್ಯೂಝಿಲೆಂಡ್ ಪ್ರವಾಸ ಮುಂದುವರಿಯಲಿದ್ದು, ಮಾ.5ರ ನಂತರ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೃಷಿ ಅಧ್ಯಯನ ಉದ್ದೇಶದಿಂದ ಈ ಪ್ರವಾಸ ಕೈಗೊಳ್ಳಲಾಗಿದೆ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಪ್ರವಾಸದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ, ಇದು ಖಾಸಗಿ ಪ್ರವಾಸ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ ವಿದೇಶ ಪ್ರವಾಸ ಕೈಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳಿಗೆ ಹೊಸ ತಿರುವು ನೀಡಿದೆ.

ವಾರ್ತಾ ಭಾರತಿ 17 Feb 2026 11:41 pm

ಕೋಲಾರದ ವೇಮಗಲ್‌ನಲ್ಲಿ ಲಘು ಹೆಲಿಕಾಪ್ಟರ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಚಾಲನೆ

ಕೋಲಾರ : ತಾಲೂಕಿನ ವೇಮಗಲ್‌ನ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಮತ್ತು ಫ್ರಾನ್ಸ್ ಮೂಲದ ಏರ್‌ಬಸ್ ನಿರ್ಮಿಸಿರುವ ಏರ್‌ಬಸ್ ಎಚ್‌125 ಲಘು ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಅವರು ಮಹಾರಾಷ್ಟ್ರದ ಲೋಕಭವನದಿಂದ ವರ್ಚುವಲ್ ಮೂಲಕ ಉದ್ಘಾಟಿಸಿದ್ದಾರೆ. ವೇಮಗಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು, ಫ್ರೆಂಚ್ ರಕ್ಷಣಾ ಸಚಿವೆ ಕ್ಯಾಥರಿನ್ ವೌಟ್ರಿನ್, ಟಾಟಾ ಸನ್ಸ್ ಗ್ರೂಪ್ ಅಧ್ಯಕ್ಷ ಎನ್.ಚಂದ್ರಶೇಖರನ್, ಏರ್‌ಬಸ್ ಹೆಲಿಕಾಪ್ಟರ್ಸ್ ಸಿಇಒ, ಬ್ರೂನೋ ಈವನ್ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಇಲ್ಲಿ ಉತ್ಪಾದನೆಯಾಗಲಿರುವ ‘ಏರ್‌ಬಸ್ ಎಚ್‌125’ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ ಹಾಗೂ ಸರಕಾರದ ‘ಉಡಾನ್’ ಯೋಜನೆಯಡಿ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಪ್ರಮುಖ ಸಾಧನವಾಗಲಿದೆ. ಮೌಂಟ್ ಎವರೆಸ್ಟ್ ಶಿಖರದ ಮೇಲೆ ಇಳಿದ ಇತಿಹಾಸವಿರುವ ಎಚ್‌125 ಹೆಲಿಕಾಪ್ಟರ್ ಭಾರತದ ಸವಾಲಿನ ಹವಾಮಾನ ಮತ್ತು ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅತ್ಯಂತ ಸಮರ್ಥವಾಗಿದೆ. ಈ ಘಟಕದಲ್ಲಿ ನಾಗರಿಕ ಆವೃತ್ತಿಯ ಜೊತೆಗೆ ಅದರ ಮಿಲಿಟರಿ ಆವೃತ್ತಿಯಾದ ಎಚ್‌125ಎಂ ಅನ್ನು ಸಹ ತಯಾರಿಸುವ ಸಾಧ್ಯತೆಯಿದೆ. ಇದು ಟಾಟಾ ಮತ್ತು ಏರ್‌ಬಸ್ ನಡುವಿನ ಎರಡನೇ ಅತಿದೊಡ್ಡ ಸಹಭಾಗಿತ್ವವಾಗಿದ್ದು, ಈ ಹಿಂದೆ ಸಿ295 (ಸಿ295) ಮಿಲಿಟರಿ ವಿಮಾನ ಉತ್ಪಾದನಾ ಘಟಕಕ್ಕಾಗಿ ಇವು ಕೈಜೋಡಿಸಿದ್ದವು. ಭಾರತದ ವಾಯುಯಾನ ಮತ್ತು  ರಕ್ಷಣಾ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಈ ಉತ್ಪಾದನಾ ಘಟಕವು ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ದೊಡ್ಡ ಬಲ ನೀಡಲಿದ್ದು, ಭಾರತದ ಖಾಸಗಿ ವಲಯವು ಮೊದಲ ಬಾರಿಗೆ ಅತ್ಯಾಧುನಿಕ ಹೆಲಿಕಾಪ್ಟರ್‌ಗಳ ತಯಾರಿಕೆ, ಪರೀಕ್ಷೆ ಮತ್ತು ನಿರ್ವಹಣೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿ ಉತ್ಪಾದನೆಯಾಗಲಿರುವ ‘ಏರ್‌ಬಸ್ ಎಚ್‌125’ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ ಹಾಗೂ ಸರಕಾರದ ‘ಉಡಾನ್’ ಯೋಜನೆಯಡಿ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಪ್ರಮುಖ ಸಾಧನವಾಗಲಿದೆ. ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ

ವಾರ್ತಾ ಭಾರತಿ 17 Feb 2026 11:40 pm

ಬೆರಳ ತುದಿಯಲ್ಲೇ ಕೃಷಿ ಮಾಹಿತಿ, ಫೋನ್ ಕರೆ ಮೂಲಕವೂ ಪಡೆಯಬಹುದು ಸಲಹೆ; ರೈತರಿಗಾಗಿರುವ ಬಹುಭಾಷಾ AI ಟೂಲ್ ಭಾರತ್-ವಿಸ್ತಾರ್ ಬಳಕೆ ಹೇಗೆ?

ರೈತರಿಗೆ ಸಂಬಂಧಿತ ಮಾಹಿತಿಯನ್ನು ಒದಗಿಸಲು ವಿನ್ಯಾಸಗೊಳಿಸಲಾದ AI-ಚಾಲಿತ ಬಹುಭಾಷಾ ಟೂಲ್ ಭಾರತ್-ವಿಸ್ತಾರ್ (Virtually Integrated System to Access Agricultural Resources) ಅನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026-27ರಲ್ಲಿ ಈ ಹೊಸ AI ಟೂಲ್ ಅನ್ನು ಘೋಷಿಸಿದ್ದರು. ಭಾರತ್-ವಿಸ್ತಾರ್ ಬಹುಭಾಷಾ AI ಟೂಲ್ ಆಗಿದ್ದು, ಇದು ಅಗ್ರಿಸ್ಟ್ಯಾಕ್ ಪೋರ್ಟಲ್ಗಳು ಮತ್ತು ಕೃಷಿ ಪದ್ಧತಿಗಳ ಕುರಿತು ICAR ಪ್ಯಾಕೇಜ್ ಅನ್ನು AI ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ರೈತರಿಗೆ ಉತ್ತಮ ನಿರ್ಧಾರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಕಸ್ಟಮೈಸ್ ಮಾಡಿದ ಸಲಹಾ ಬೆಂಬಲವನ್ನು ಒದಗಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷಕ್ಕೆ (2026-27) ಭಾರತ್-ವಿಸ್ತಾರ್ಗಾಗಿ ₹150 ಕೋಟಿ ಅನುದಾನ ನೀಡಲಾಗಿದೆ. ಭಾರತ್-ವಿಸ್ತಾರ್ ಎಂದರೇನು? ಭಾರತ್-ವಿಸ್ತಾರ್ ಎಂಬುದು AI-ಚಾಲಿತ ಬಹುಭಾಷಾ ಟೂಲ್ ಆಗಿದ್ದು, ಇದು ಭಾರತೀಯ ರೈತರಿಗೆ ಮೊಬೈಲ್ ಅಥವಾ ಫೋನ್ ಕರೆಗಳ ಮೂಲಕ ಅವರ ಮಾತೃಭಾಷೆಯಲ್ಲಿ ಕೃಷಿ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತದೆ. ಈ ಸಾಧನವು ಬೆಳೆ ಯೋಜನೆ, ಕೃಷಿ ಪದ್ಧತಿಗಳು, ಕೀಟಗಳು, ಹವಾಮಾನ ಮುನ್ಸೂಚನೆಗಳು, ಮಾರುಕಟ್ಟೆ ದರಗಳು, ಯೋಜನೆಗಳ ಮಾಹಿತಿ, ಅರ್ಹತೆ, ಅನ್ವಯಿಕೆಗಳು ಮತ್ತು ಕುಂದುಕೊರತೆಗಳ ಕುರಿತು ಮಾರ್ಗದರ್ಶನ ನೀಡುತ್ತದೆ. ಇದು ರೈತರಿಗೆ ಅಗತ್ಯವಿರುವ ಮಾಹಿತಿಯನ್ನು ಪ್ರವೇಶಿಸಲು “ಡಿಜಿಟಲ್ ದ್ವಾರ”ವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೃಷಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಉಪಕ್ರಮವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಹಕಾರಿ ವ್ಯವಸ್ಥೆಗಳಾದ್ಯಂತ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿಯನ್ನು ಸಂಯೋಜಿಸುವ ಮೂಲಕ ಸಲಹೆಯನ್ನು ವೈಯಕ್ತೀಕರಿಸಲು ಕೃತಕ ಬುದ್ಧಿಮತ್ತೆ (AI) ಅನ್ನು ಬಳಸುತ್ತದೆ. ಇದರ ಅಗತ್ಯವೇನು? ರೈತರು ಯೋಜನೆಗಳಿಗೆ ತಮ್ಮ ಅರ್ಹತೆಯನ್ನು ನಿರ್ಧರಿಸಲು, ಅವುಗಳಿಗೆ ಅರ್ಜಿ ಸಲ್ಲಿಸಲು, ಪ್ರಯೋಜನಗಳ ಸ್ಥಿತಿಯನ್ನು ಪರಿಶೀಲಿಸಲು ಮತ್ತು ತಮ್ಮ ಕುಂದುಕೊರತೆಗಳನ್ನು ಸಮಯಕ್ಕೆ ಪರಿಹರಿಸಲು ಹೆಣಗಾಡುತ್ತಾರೆ. ಹವಾಮಾನ, ಮಂಡಿ ದರಗಳು, ವಿಮೆ ಮತ್ತು ಮಣ್ಣಿನ ಆರೋಗ್ಯದ ಬಗ್ಗೆ ಮಾಹಿತಿಯು ಒಂದೇ ಸ್ಥಳದಲ್ಲಿ ಲಭ್ಯವಿರುವುದಿಲ್ಲ. ಈ ಎಲ್ಲಾ ವಿವರಗಳನ್ನು ಸಂಗ್ರಹಿಸಲು ರೈತರು ಹಲವಾರು ಕಚೇರಿಗಳು ಹಾಗೂ ವೆಬ್ಸೈಟ್ಗಳಿಗೆ ಭೇಟಿ ನೀಡಬೇಕಾಗುತ್ತದೆ. ಆದ್ದರಿಂದ ರೈತರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪ್ರವೇಶಿಸಬಹುದಾದ ವ್ಯವಸ್ಥೆಯನ್ನು ಈ ಮೂಲಕ ಕಲ್ಪಿಸಲಾಗಿದೆ. ಭಾರತ್-ವಿಸ್ತಾರ್ ಬಳಸುವುದರಿಂದ ರೈತರು ಇಂತಹ ಮಾಹಿತಿಗಾಗಿ ವಿಭಿನ್ನ ಕಚೇರಿಗಳು, ವೆಬ್ಸೈಟ್ಗಳು, ಅಪ್ಲಿಕೇಶನ್ಗಳು ಅಥವಾ ಮಧ್ಯವರ್ತಿಗಳನ್ನು ಅವಲಂಬಿಸಬೇಕಾಗಿಲ್ಲ. ಏಕೆಂದರೆ ಇದು ರೈತರಿಗೆ ಅವರ ಸ್ವಂತ ಭಾಷೆಯಲ್ಲಿ ಪಠ್ಯ ಮತ್ತು ಧ್ವನಿ ಆಧಾರಿತ ಸಂಭಾಷಣೆಯ ಮೂಲಕ ಎಲ್ಲಾ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ರೈತರು ಯಾವುದಕ್ಕೆ ಬಳಸಬಹುದು? ಬೆಳೆ ಋತುವಿನಲ್ಲಿ ರೈತರು ಎದುರಿಸುವ ದೈನಂದಿನ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ್-ವಿಸ್ತಾರ್ ಬಳಸಬಹುದು. ಉದಾಹರಣೆಗೆ: – ತಮ್ಮ ಪ್ರದೇಶದಲ್ಲಿ ಮಳೆ ನಿರೀಕ್ಷೆ ಯಾವಾಗ ಎಂಬ ಮಾಹಿತಿ – ಕೀಟಗಳು ಅಥವಾ ಬೆಳೆ ರೋಗಗಳ ಬಗ್ಗೆ ಮುಂಚಿತ ಎಚ್ಚರಿಕೆಗಳು – ಮಣ್ಣು ಮತ್ತು ಹವಾಮಾನದ ಆಧಾರದ ಮೇಲೆ ಬೆಳೆ-ನಿರ್ದಿಷ್ಟ ಶಿಫಾರಸುಗಳು – ಉತ್ಪನ್ನ ಮಾರಾಟಕ್ಕೂ ಮೊದಲು ಮಂಡಿ ಬೆಲೆಗಳ ನವೀಕರಣಗಳು – ಜಾನುವಾರು ಹಾಗೂ ಸಂಬಂಧಿತ ಕೃಷಿ ಮಾರ್ಗದರ್ಶನ ಟೂಲ್ ಬಳಸುವುದು ಹೇಗೆ? ರೈತರು ಯಾವುದೇ ದೂರವಾಣಿ ಅಥವಾ ಮೊಬೈಲ್ನಿಂದ ಮೀಸಲಾದ ಸಂಖ್ಯೆ 155261 ಅನ್ನು ಡಯಲ್ ಮಾಡಿ ‘ಭಾರತಿ’ ಎಂಬ AI ಸಹಾಯಕರೊಂದಿಗೆ ಮಾತನಾಡುವ ಮೂಲಕ ಭಾರತ್-ವಿಸ್ತಾರ್ ಬಳಸಬಹುದು. ಗೂಗಲ್ ಪ್ಲೇ ಸ್ಟೋರ್ನಲ್ಲಿ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬಹುದು. ಇಲ್ಲವೇ ಅಪ್ಲಿಕೇಶನ್ನಂತೆಯೇ ಕಾರ್ಯನಿರ್ವಹಿಸುವ ವೆಬ್ ಇಂಟರ್ಫೇಸ್ ಲಿಂಕ್ (vistaar.da.gov.in) ಮೂಲಕ ಪ್ರವೇಶಿಸಬಹುದು. ಈ ಲಿಂಕ್ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವೆಬ್ಸೈಟ್ಗಳಲ್ಲಿ ಹಾಗೂ PM-ಕಿಸಾನ್ ಮತ್ತು PMFBY ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಲಭ್ಯವಿರುತ್ತದೆ. ದೂರವಾಣಿ ಕರೆಗಳ ಜೊತೆಗೆ ಚಾಟ್ ಮೂಲಕವೂ ಸಂವಾದ ನಡೆಸಬಹುದು. ಭಾರತ್-ವಿಸ್ತಾರ್ ದಿನದ 24 ಗಂಟೆಗಳ ಕಾಲ ‘ಡಿಜಿಟಲ್ ಕೃಷಿ ತಜ್ಞ’ರಾಗಿ ಲಭ್ಯವಿರುತ್ತದೆ. ಯಾವ ಮಾಹಿತಿ ಲಭ್ಯವಿರುತ್ತದೆ? ಅಧಿಕಾರಿಗಳ ಪ್ರಕಾರ, ರೈತರು ಪ್ರಾರಂಭದಲ್ಲಿ 10 ಪ್ರಮುಖ ಕೇಂದ್ರ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು — PM-KISAN, PM Fasal Bima Yojana (PMFBY), ಮಣ್ಣಿನ ಆರೋಗ್ಯ ಕಾರ್ಡ್ (SHC), ಮೋಡಿಫೈಡ್ ಇಂಟರೆಸ್ಟ್ ಸಬ್ವೆನ್ಷನ್ ಯೋಜನೆ, ಕೃಷಿ ಯಾಂತ್ರೀಕರಣದ ಉಪ-ಮಿಷನ್, ಪರ್ ಡ್ರಾಪ್ ಮೋರ್ ಕ್ರಾಪ್, ಪಿಎಂ ಕೃಷಿ ಸಿಂಚಾಯಿ ಯೋಜನೆ, ಪಿಎಂ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ, ಕೃಷಿ ಮೂಲಸೌಕರ್ಯ ನಿಧಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್. ಇದಲ್ಲದೆ, ರೈತರು ಈ ಯೋಜನೆಗಳಿಗೆ ಸಂಬಂಧಿಸಿದ ತಮ್ಮ ಪ್ರಯೋಜನ ಸ್ಥಿತಿಯನ್ನು ಪರಿಶೀಲಿಸಬಹುದು. PM-KISAN ಕುಂದುಕೊರತೆಗಳನ್ನು ನೋಂದಾಯಿಸಿ ಟ್ರ್ಯಾಕ್ ಮಾಡಬಹುದು. ಹೆಚ್ಚುವರಿಯಾಗಿ, ICAR ನಿಂದ ವೈಜ್ಞಾನಿಕ ಅರಿವು, ಕೀಟ-ರೋಗ ಎಚ್ಚರಿಕೆಗಳು, ನೈಜ-ಸಮಯದ ಹವಾಮಾನ ಮಾಹಿತಿ, ಮಂಡಿ ಬೆಲೆಗಳು ಹಾಗೂ ಹವಾಮಾನ ಆಧಾರಿತ ಕೃಷಿ ವಿಜ್ಞಾನ ಸಲಹೆಯ ಆಧಾರದ ಮೇಲೆ ಬೆಳೆ ಮತ್ತು ಜಾನುವಾರು ಸಲಹೆಗಳನ್ನು ಪಡೆಯಬಹುದು. ಎಲ್ಲಾ ಕೇಂದ್ರ ಯೋಜನೆಗಳನ್ನು ಮೇ 2026ರೊಳಗೆ ಅರ್ಹತೆ, ಅರ್ಜಿಗಳು, ಪ್ರಯೋಜನ ಸ್ಥಿತಿ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಸಂಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ್-ವಿಸ್ತಾರ್ ಯಾವ ಭಾಷೆಗಳನ್ನು ಬೆಂಬಲಿಸುತ್ತದೆ? ಪ್ರಾರಂಭದಲ್ಲಿ ಭಾರತ್-ವಿಸ್ತಾರ್ ಚಾಟ್ಬಾಟ್ (ಪಠ್ಯ ಆಧಾರಿತ ಸಂಭಾಷಣೆ) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿರುತ್ತದೆ. ಧ್ವನಿ ಆಧಾರಿತ AI ಸಹಾಯಕ ‘ಭಾರತಿ’ ಕೂಡ ಆರಂಭದಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ ಮಹಾರಾಷ್ಟ್ರದ ರೈತರು ‘ವಸುಧಾ’ (ಮರಾಠಿ) ಮೂಲಕ, ಗುಜರಾತ್ನ ರೈತರು ‘ಅಮುಲ್ಎಐ’ಯ ‘ಸರ್ಲಾಬೆನ್’ (ಗುಜರಾತಿ) ಮೂಲಕ ಮತ್ತು ಬಿಹಾರದ ರೈತರು ಬಿಹಾರ ಕೃಷಿ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು. ಮುಂದಿನ ಮೂರು ತಿಂಗಳಲ್ಲಿ ತಮಿಳು, ಬಂಗಾಳಿ, ಅಸ್ಸಾಮಿ ಮತ್ತು ಕನ್ನಡದಲ್ಲಿ ರಾಜ್ಯ ಸರ್ಕಾರಗಳ ಯೋಜನೆಗಳೊಂದಿಗೆ ಲಭ್ಯವಾಗಲಿದೆ. ಮುಂದಿನ ಆರು ತಿಂಗಳಲ್ಲಿ ಒಟ್ಟು 11 ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ ಮತ್ತು 9 ಪ್ರಾದೇಶಿಕ ಭಾಷೆಗಳು) ಲಭ್ಯವಾಗುವ ನಿರೀಕ್ಷೆಯಿದೆ.

ವಾರ್ತಾ ಭಾರತಿ 17 Feb 2026 11:38 pm

US And Iran: ಹೋರ್ಮುಜ್ ಜಲಸಂಧಿ ಟಾರ್ಗೆಟ್ ಮಾಡಿ ಮಿಸೈಲ್ ಹಾರಿಸಿದ ಇರಾನ್ ಸೇನೆ

ಅಮೆರಿಕ ಮತ್ತು ಇರಾನ್ ನಡುವೆ ಒಂದು ಕಡೆ ಜಿನೇವಾದಲ್ಲಿ ಮಾತುಕತೆ ಆರಂಭ ಆಗಿದೆ. ಇದೀಗ ಪರಮಾಣು ಕಾರ್ಯಕ್ರಮಗಳ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಸಂಧಾನ ಮಾತುಕತೆ ಆಗಲಿ ಎಂಬುದೇ ಜಗತ್ತಿನ ಬಯಕೆ ಆಗಿತ್ತು. ಆದರೆ ಇಂತಹ ಸಮಯದಲ್ಲೇ ಇರಾನ್ ಘೋರ ತಪ್ಪು ಮಾಡಿದ ರೀತಿ ಕಾಣುತ್ತಿದೆ. ಏಕೆಂದರೆ ಒಂದು ಕಡೆ ಸಂಧಾನ ಮಾತುಕತೆ ನಡೆಯುತ್ತಿದ್ದರೆ ಇದೇ ಸಮಯದಲ್ಲಿ

ಒನ್ ಇ೦ಡಿಯ 17 Feb 2026 11:35 pm

DP World ನೂತನ ಸಿಇಒ ಆಗಿ ಭಾರತ ಮೂಲದ ಯುವರಾಜ್ ನಾರಾಯಣ್ ನೇಮಕ

ಡಿಪಿ ವರ್ಲ್ಡ್ ಏಷ್ಯಾದ ಪೂರೈಕೆ ಸರಪಳಿಯನ್ನು ಹೇಗೆ ಮರುವಿನ್ಯಾಸಗೊಳಿಸುತ್ತಿದೆ?

ವಾರ್ತಾ ಭಾರತಿ 17 Feb 2026 11:30 pm

ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಸ್ಥಿತಿ ಮತ್ತಷ್ಟು ಗಂಭೀರ, ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ | Imran Khan

ಪಾಕಿಸ್ತಾನ ತನ್ನ ಯೋಗ್ಯತೆಯನ್ನ ಪದೇ ಪದೇ ಜಗತ್ತಿನ ಎದುರು ಬಿಚ್ಚಿಡುತ್ತಾ, ತನ್ನ ಬಂಡವಾಳವನ್ನ ಬಯಲು ಮಾಡಿಕೊಳ್ಳುತ್ತಿದೆ. ಭ್ರಷ್ಟ ರಾಜಕೀಯ ನಾಯಕರು ಹಾಗೂ ಭ್ರಷ್ಟ ಸೇನೆಯ ಹಿಡಿತದಲ್ಲಿ, ಇದೇ ಪಾಕಿಸ್ತಾನ ನಲುಗಿ ಹೋಗಿದೆ. ಪಾಕಿಸ್ತಾನದ ಪ್ರಜೆಗಳು ಕೂಡ ಅಲ್ಲಿನ ವ್ಯವಸ್ಥೆಯ ವಿರುದ್ಧ ಭಾರಿ ಆಕ್ರೋಶ ಹೊರಹಾಕಿ, ಈಗಾಗಲೇ ದೊಡ್ಡ ದೊಡ್ಡ ಪ್ರತಿಭಟನೆಗಳನ್ನೂ ಮಾಡಿದ್ದಾರೆ. ಇಷ್ಟಾದರೂ ಅದೆಲ್ಲಾ ಉಪಯೋಗಕ್ಕೆ ಬಂದಿಲ್ಲ.

ಒನ್ ಇ೦ಡಿಯ 17 Feb 2026 11:27 pm

Yadgiri | ಫೆ.22ರಂದು ಶ್ರೀ ವಿಶ್ವಾರಾಧ್ಯರ ಜಾತ್ರೆಗೆ ಅಬ್ಬೆತುಮಕೂರು ಸಜ್ಜು : ಡಾ. ಗಂಗಾಧರ ಶ್ರೀ

ಯಾದಗಿರಿ: ಅಣಿಮಾದಿ ಅಷ್ಟಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವಕ್ಕೆ ಅಬ್ಬೆತುಮಕೂರು ಸಜ್ಜಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ತಿಳಿಸಿದರು. ಅಬ್ಬೆತುಮಕೂರಿನ ಅನುಗ್ರಹ ಕ್ಷೇತ್ರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ–ಮತ ಭೇದ ಮೀರಿ ಬದುಕಿದ ಮಹಾನ್ ಸಂತ ಶ್ರೀ ವಿಶ್ವಾರಾಧ್ಯರ ಜಾತ್ರೆ ಫೆಬ್ರವರಿ 22ರಂದು ಜರುಗಲಿದೆ. ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅನೇಕ ಸೇವಾಧಾರಿಗಳು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಈಗಾಗಲೇ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನ ಆರಂಭವಾಗಿದ್ದು, ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ ಅವರ ಸಾಹಿತ್ಯ–ಸಂಗೀತ ಸಹಿತ 11 ದಿನಗಳ ಕಾಲ ನಡೆಯಲಿದೆ. ಫೆ.21ರಂದು ಮಹಾಮಂಗಳವಾಗಲಿದ್ದು, ಅಂದು ಬೆಳಿಗ್ಗೆ ರಥೋತ್ಸವ ಮಹಾಪೂಜೆ ಹಾಗೂ ರಥಾಂಗ ಹೋಮವನ್ನು ದುಧನಿಯ ಮೇತ್ರೆ ಕುಟುಂಬ ನೆರವೇರಿಸಲಿದೆ. ಫೆ.21ರಂದು ಸಂಜೆ ಕೈಲಾಸ ಕಟ್ಟೆ ಸಮೀಪ ದುನಿ ಪೂಜೆ ಜರುಗಲಿದ್ದು, ಆಗಮಿಸುವ ಸಾಧು–ಸಂತರಿಗೆ ಕಾವಿ ಕಪನಿಗಳನ್ನು ನೀಡಿ ಗೌರವಿಸಲಾಗುತ್ತದೆ. ಫೆ.22ರಂದು ಬೆಳಿಗ್ಗೆ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನೆರವೇರಿಸಿ, ಬಳಿಕ ರಥಕ್ಕೆ ಕಳಸಾರೋಹಣ ಮಾಡಲಾಗುತ್ತದೆ. ನಂತರ ಪಲ್ಲಕ್ಕಿ ಉತ್ಸವ ಗ್ರಾಮ ಬೀದಿಗಳಲ್ಲಿ ಮಂಗಲವಾದ್ಯಗಳೊಂದಿಗೆ ಸಾಗಲಿದೆ. ಸಂಜೆ 6.15ಕ್ಕೆ ವೈಭವದ ರಥೋತ್ಸವ ನಡೆಯಲಿದ್ದು, ರಾತ್ರಿ 8ಕ್ಕೆ ಮಾನವ ಧರ್ಮ ಸಮಾವೇಶ ಜರುಗಲಿದೆ. ಸಮಾವೇಶವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟಿಸಲಿದ್ದಾರೆ. ಸಚಿವರಾದ ಈಶ್ವರ್‌ ಖಂಡ್ರೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ಪಾರಂಪರಿಕ ದಾಸೋಹ, ಶರಣ ಸಂಸ್ಕೃತಿ ಶಿಬಿರ, ಗುರು–ಶಿಷ್ಯ ಸಮಾಗಮ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಐದು ದಿನಗಳ ಕಾಲ ನಡೆಯಲಿವೆ. ಫೆ.26ರಂದು ಕಳಸ ಅವರೋಹಣದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಮಾಧ್ಯಮಗೋಷ್ಠಿಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 11:24 pm

ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಮುಲಾಜಿಲ್ಲದೆ ಕೇಸ್‌; ವ್ಹೀಲಿಂಗ್ ಮಾಡಿದ್ರೂ ಅಷ್ಟೇ!

Bengaluru City Police-ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಇದೀಗ ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ತಪಾಸಣೆ ವೇಳೆ ಸಿಕ್ಕಿಬಿದ್ದಲ್ಲಿ ವಾಹನವನ್ನು ಜಪ್ತಿ ಮಾಡಿ ಪೋಷಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿ ವ್ಹೀಲಿಂಗ್ ಮಾಡಿದ 349 ಅಪ್ರಾಪ್ತರು ಹಾಗೂ ಅವರ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದಾರೆ.

ವಿಜಯ ಕರ್ನಾಟಕ 17 Feb 2026 11:22 pm

Yadgiri | ಸರಕಾರಿ ಜಾಗದಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಡಿಎಸ್ಎಸ್ ಒತ್ತಾಯ

ಯಾದಗಿರಿ: ಜಿಲ್ಲೆಯ ವಡಿಗೇರಾ ತಾಲೂಕಿನ ಮಾಲಹಳ್ಳಿ ಗ್ರಾಮದ ಸರ್ವೇ ನಂ. 3/4ರಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ಬೌದ್ಧ ವಿಹಾರ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಜಿಲ್ಲಾ ಘಟಕವು ವಡಿಗೇರಾ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿತು. ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಹತ್ತಿಗೂಡೂರು ಶರಣರೆಡ್ಡಿ, ಗ್ರಾಮದಲ್ಲಿ ಸುಮಾರು ನಾಲ್ಕು ಗುಂಟೆ ಸರ್ಕಾರಿ ಜಮೀನು ಲಭ್ಯವಿದ್ದು, ಇದೇ ಸ್ಥಳದಲ್ಲಿ ಬೌದ್ಧ ವಿಹಾರ ನಿರ್ಮಾಣದ ಉದ್ದೇಶದಿಂದ ಈಗಾಗಲೇ ನಾಮಫಲಕ ಅಳವಡಿಸಲಾಗಿದೆ. ಈ ಜಾಗ ವಿಹಾರ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ತಿಳಿಸಿದರು. ಗ್ರಾಮದಲ್ಲಿ ಬೇರೆ ಯಾವುದೇ ಸರ್ಕಾರಿ ಜಾಗ ಲಭ್ಯವಿಲ್ಲದ ಕಾರಣ, ದಲಿತ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಬೌದ್ಧ ವಿಹಾರ ಅತ್ಯಗತ್ಯವಾಗಿದೆ. ಬೌದ್ಧ ಭಿಕ್ಷುಗಳ ಕಾರ್ಯಕ್ರಮಗಳು ಹಾಗೂ ಸಮುದಾಯ ಚಟುವಟಿಕೆಗಳಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಜಮೀನನ್ನು ಬೌದ್ಧ ವಿಹಾರ ನಿರ್ಮಾಣಕ್ಕೆ ಮಂಜೂರು ಮಾಡಬೇಕು ಎಂದು ಡಿಎಸ್ಎಸ್ ಮನವಿ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಹನುಮಂತ, ಮರ್ಲಿಂಗಪ್ಪ ಶಾಖ, ಹೊನ್ನಯ್ಯ ಶಾಖ, ಮಲ್ಲಿಕಾರ್ಜುನ ಶಾಖ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 11:17 pm

ಬಾರಾಮತಿ ವಿಮಾನ ದುರಂತ| ದತ್ತಾಂಶ ಮರು ಪಡೆಯಲು ಅಮೆರಿಕದ ನೆರವು ಕೋರಿದ ಎಎಐಬಿ

ಹೊಸದಿಲ್ಲಿ, ಫೆ. 17: ಕಳೆದ ತಿಂಗಳು ಬಾರಾಮತಿ ಸಮೀಪ ಅಪಘಾತಕ್ಕೀಡಾದ ಲಿಯರ್ ಜೆಟ್ 45 ವಿಮಾನದ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್)ನಿಂದ ದತ್ತಾಂಶ ಮರಳಿ ಪಡೆಯಲು ಅಮೆರಿಕದ ವಿಶೇಷ ನೆರವು ಕೋರಲಾಗಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಮಂಗಳವಾರ ಹೇಳಿದೆ. ವಿಎಸ್‌ಆರ್ ವೆಂಚರ್ಸ್‌ ಮಾಲಕತ್ವದ ವಿಮಾನ ಜನವರಿ 28ರಂದು ದುರಂತಕ್ಕೀಡಾಗಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಮೃತಪಟ್ಟಿದ್ದರು. ಅಪಘಾತಕ್ಕೀಡಾದ ವಿಮಾನದಲ್ಲಿ ಎರಡು ಪ್ರತ್ಯೇಕ ಪ್ಲೈಟ್ ರೆಕಾರ್ಡ್‌ರ್‌ಗಳು ಇದ್ದವು. ಅಪಘಾತದ ಸಂದರ್ಭ ಎರಡೂ ರೆಕಾರ್ಡ್‌ಗಳು ಬೆಂಕಿಯಿಂದಾಗಿ ತೀವ್ರ ಹಾನಿಗೀಡಾಗಿವೆ ಎಂದು ಎಐಐಬಿ ತಿಳಿಸಿದೆ. ಎಲ್-3 ಕಮ್ಯೂನಿಕೇಷನ್ಸ್ ತಯಾರಿಸಿದ ಡಿಡಿಟಲ್ ಪ್ಲೈಟ್ ಡಾಟಾ ರೆಕಾರ್ಡರ್ (ಪಿಎಫ್‌ಡಿಆರ್) ಅನ್ನು ಫ್ಲೈಟ್ ರೆಕಾರ್ಡರ್ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಡೌನ್‌ಲೋಡ್ ಮಾಡಲಾಗಿದೆ ಎಂದು ಎಎಐಬಿ ತಿಳಿಸಿದೆ. ‘‘ಹನಿವೆಲ್ ತಯಾರಿಸಿದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಅನ್ನು ವಿವರವಾದ ತಾಂತ್ರಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದತ್ತಾಂಶ ಮರು ಪಡೆಯಲು ವಿಮಾನ ತಯಾರಿಸಲಾದ ದೇಶದ ಮಾನ್ಯತೆ ಪಡೆದ ಪ್ರತಿನಿಧಿಯ ನೆರವು ಕೋರಲಾಗಿದೆ’’ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ವಾರ್ತಾ ಭಾರತಿ 17 Feb 2026 11:14 pm

ಕೇರಳ| ತೆರೆದ ಚರಂಡಿಗೆ ಬಿದ್ದು ಯುವಕ ಮೃತ್ಯು

ಇಡುಕ್ಕಿ, ಫೆ. 17: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಚರಂಡಿ ಯೋಜನೆಗೆ ತೋಡಿದ ಆಳದ ಗುಂಡಿಗೆ ಬೈಕ್‌ನೊಂದಿಗೆ ಬಿದ್ದ 27 ವರ್ಷದ ಯುವಕ ಮೃತಪಟ್ಟಿದ್ದಾನೆ. ತೊಡುಪುಝ ಸಮೀಪ ಮುತ್ತಲಕೋಡಂನಲ್ಲಿ ರಸ್ತೆಯುದ್ದಕ್ಕೂ ಚರಂಡಿ ನಿರ್ಮಿಸಲು ತೋಡಲಾದ ತೆರೆದ ಗುಂಡಿಗೆ ಯುವಕ ಸೋಮವಾರ ರಾತ್ರಿ 11 ಗಂಟೆಗೆ ಬಿದ್ದಿದ್ದಾನೆ. ಮೃತಪಟ್ಟ ಯುವಕನನ್ನು ಜೈಸ್ ಬೆನ್ನಿ ಎಂದು ಗುರುತಿಸಲಾಗಿದೆ. ಈತ ಮುತ್ತಲಕೋಡಂನ ನಿವಾಸಿ. ಒಂದು ತಿಂಗಳಿಗೂ ಹೆಚ್ಚು ಕಾಲ ಗುಂಡಿ ತೆರೆದೇ ಇತ್ತು ಎಂದು ನಿವಾಸಿಗಳು ಆರೋಪಿಸಿದ್ದಾರೆ. ಗುಂಡಿ ಮುಚ್ಚವಂತೆ ಅಧಿಕಾರಿಗಳಿಗೆ ಮತ್ತೆ ಮತ್ತೆ ದೂರು ನೀಡಿದರೂ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಎಚ್ಚರಿಕೆಯ ಬೋರ್ಡ್ ಅಥವಾ ಪ್ರತಿಫಲಕ, ಬ್ಯಾರಿಕೇಡ್ ಸೇರಿದಂತೆ ಮೂಲಭೂತ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನಿವಾಸಿಗಳು ಪ್ರತಿಪಾದಿಸಿದ್ದಾರೆ. ‘‘ಸುರಕ್ಷತಾ ವ್ಯವಸ್ಥೆಗಳು ಹಾಗೂ ಎಚ್ಚರಿಕೆ ಫಲಕಗಳು ಇಲ್ಲದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರತಿಬಂಬಿಸುತ್ತದೆ. ಇದು ಯುವಕನ ಸಾವಿಗೆ ಕಾರಣವಾಗಿದೆ’’ ಎಂದು ಸ್ಥಳೀಯ ವ್ಯಾಪಾರಿ ಸುಜೀಶ್ ಕುಮಾರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 11:08 pm

ಕೊಪ್ಪಳ | ರಾಜ್ಯ ಕಾಂಗ್ರೆಸ್ ಸರಕಾರ ಹಗರಣದಲ್ಲಿಯೇ ಮುಳುಗಿದೆ : ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಆರೋಪ

ಕೊಪ್ಪಳ: ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಆಡಳಿತದ ಸಾವಿರ ದಿನಗಳ ಅವಧಿಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ ಕಂಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿರುವ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು. ವಿಪ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಚಿವ ಹಾಲಪ್ಪ ಆಚಾರ, ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಸರಕಾರದ ಕಾರ್ಯ ವೈಖರಿ ಖಂಡಿಸಿದರು. ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಮತ್ತು ವರ್ಗಾವಣೆಗಳಿಗೆ ಲಂಚ ಬೇಡಿಕೆ ಆರೋಪದ ಕುರಿತು ಸಾಕ್ಷ್ಯಾಧ್ಯರವಿದ್ದರೂ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಸಮರ್ಥಿಸಿಕೊಂಡ ಸರಕಾರವಿದು ಎಂದು ಟೀಕಿಸಿದರು. ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಭಾರೀ ಪ್ರಮಾಣದ ಹಣ ವ್ಯಯವಾಗಿದ್ದು, ಅದರ ಅನುಷ್ಠಾನದಲ್ಲಿ ಪಾರದರ್ಶಕತೆ ಕೊರತೆ ಇದೆ. ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡುವ ಕ್ರಮವೂ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿಯೂ ಸಂಪೂರ್ಣ ವಿಫಲವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬ್ಯಾಂಕ್ ದರೋಡೆ, ಸೈಬರ್ ವಂಚನೆ, ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಿದರು. ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಕೂಡ ಆಡಳಿತದ ನಿರ್ಲಕ್ಷ್ಯಕ್ಕೆ ಉದಾಹರಣೆ. ಆದರೆ, ಆಡಳಿತ ಪಕ್ಷ ನಾಯಕರು ಈ ಆರೋಪಗಳಲ್ಲಿ ಹಲವನ್ನು ರಾಜಕೀಯ ಪ್ರೇರಿತ ಎಂದು ತಳ್ಳಿ ಹಾಕಿರುವುದು ದುರದೃಷ್ಟಕರ ಎಂದು ಅವರು ಆರೋಪಿಸಿದ್ದಾರೆ.

ವಾರ್ತಾ ಭಾರತಿ 17 Feb 2026 11:08 pm

ಕೊಪ್ಪಳ | ಪ್ರವಾಸಿಗರ ಅತ್ಯಾಚಾರಿಗಳಿಗೆ ಮರಣ ದಂಡನೆ ತೀರ್ಪು ಐತಿಹಾಸಿಕ : ಐಜಿಪಿ ಡಾ.ಹರ್ಷ

ಕೊಪ್ಪಳ : ಕಳೆದ ವರ್ಷ ಹಂಪಿಯ ಸಣಾಪುರ ಕಾಲುವೆ ದಂಡೆ ಬಳಿ ನಡೆದಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಗಂಗಾವತಿ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದ್ದು, ಇದೊಂದು ಐತಿಹಾಸಿಕ ತೀರ್ಪಾಗಿದೆ ಎಂದು ಬಳ್ಳಾರಿ ವಲಯದ ಐಜಿಪಿ ಡಾ.ಹರ್ಷ ಪಿ.ಎಸ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಐವರು ಪ್ರವಾಸಿಗರ ತಂಡ ಸಣಾಪುರ ಕೆರೆಗೆ ಭೇಟಿ ನೀಡಿದಾಗ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಮೇರಿಕಾದ ಡೇನಿಯಲ್ ಸೇರಿದಂತೆ ಮೂವರು ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಲಾಗಿತ್ತು. ಓರ್ವ ಪ್ರವಾಸಿಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಆಗ ಇಸ್ರೇಲ್ ಮೂಲದ ಮಹಿಳೆ ಹಾಗೂ ಸ್ಥಳೀಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ಅವರು ವಿವರಿಸಿದರು. ಆರೋಪಿಗಳ ಪತ್ತೆಗಾಗಿ ಆರು ವಿಶೇಷ ತಂಡಗಳನ್ನು ರಚಿಸಿಲಾಗಿತ್ತು. ಪ್ರಕರಣ ದಾಖಲಾದ 24 ಗಂಟೆಯೊಳಗೆ ಮೂವರು ಆಪಾದಿತರನ್ನು ವಶಕ್ಕೆ ಪಡೆಯಲಾಗಿತ್ತು. 84 ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದೇವು. ಪೊಲೀಸರ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 6 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂವರು ಆರೋಪಿತರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಮಾಹಿತಿ ನೀಡಿದರು. ಎಸ್ಪಿ ಡಾ.ರಾಮ್ ಆರಸಿದ್ಧಿ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ ಹೇಮಂತ್ ಕುಮಾರ, ಆಗಿನ ಗಂಗಾವತಿ ಡಿಎಸ್‌ಪಿ ಸಿದ್ದಲಿಂಗಪುಗೌಡ ಪಾಟೀಲ್, ಸದ್ಯದ ಡಿಎಸ್‌ಪಿ ಬಿ.ಎಸ್. ನ್ಯಾಮಗೌಡ ತಂಡ ಈ ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದೆ ಎಂದು ಐಜಿಪಿ ಶ್ಲಾಘಿಸಿದರು.

ವಾರ್ತಾ ಭಾರತಿ 17 Feb 2026 11:02 pm

ರಾಜಸ್ಥಾನ| 900 ಕೋಟಿ ರೂ. ಜಲ ಜೀವನ್ ಮಿಷನ್ ಹಗರಣ: ದೇಶಾದ್ಯಂತ 15 ಸ್ಥಳಗಳಲ್ಲಿ ಎಸಿಬಿ ದಾಳಿ

ಜೈಪುರ, ಫೆ. 17: ಜಲಜೀವನ್ ಮಿಷನ್‌ನಲ್ಲಿ ನಡೆದಿದೆ ಎನ್ನಲಾದ 900 ಕೋ. ರೂ. ಅವ್ಯವಹಾರವು ರಾಜಸ್ಥಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕ್ಕೆ ಕಾರಣವಾಗಿದೆ. ಈ ಹಗರಣದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದೇಶಾದ್ಯಂತ ಮಂಗಳವಾರ ಏಕ ಕಾಲದಲ್ಲಿ 15 ಸ್ಥಳಗಳಲ್ಲಿ ದಾಳಿ ನಡೆಸಿದೆ. ಎಸಿಬಿ ತಂಡಗಳು ರಾಜಸ್ಥಾನದ ಜೈಪುರ, ಬಾಡ್ಮೆರ್, ಸಿಕಾರ್ ಹಾಗೂ ಜಾಲೋರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಜಲಜೀವನ್ ಮಿಷನ್ ಹಗರಣಕ್ಕೆ ಸಂಬಂಧಿಸಿದ ಸಂಸ್ಥೆಗಳ ಪರಿಶೀಲನೆ ನಡೆಸಲು ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಕೂಡ ದಾಳಿ ನಡೆಸಲಾಗಿದೆ. ಈ ಯೋಜನೆ ಅಡಿಯಲ್ಲಿ ಮುಂಜೂರು ಮಾಡಲಾದ ಟೆಂಡರ್‌ಗಳಿಗೆ ಸಂಬಂಧಿಸಿದ ಹಣಕಾಸುವ ವಹಿವಾಟು, ದಾಖಲೆ ಹಾಗೂ ಎಲೆಕ್ಟ್ರಾನಿಕ್ಸ್ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಸುಬೋಧ್ ಅಗರ್ವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಸಿಬಿ ಅಧಿಕಾರಿಗಳು ಅವರ ನಿವಾಸದಲ್ಲಿ ತಪಾಸಣೆ ನಡೆಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಗುತ್ತಿಗೆಗೆ ಅನುಮೋದನೆಗೆ ನೀಡಿರುವುದಕ್ಕೆ ಸಂಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅವರು ನಕಲಿ ಅನುಭವದ ಪ್ರಮಾಣ ಪತ್ರಗಳ ಆಧಾರದಲ್ಲಿ ಆಯ್ದ ಕಂಪೆನಿಗಳಿಗೆ ಕೋಟ್ಯಂತರ ರೂ. ಮೌಲ್ಯದ ಟೆಂಡರ್‌ಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅಗರ್ವಾಲ್ ಅವರಲ್ಲದೆ, ವಿಚಾರಣೆಗಾಗಿ 6ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಎಸಿಬಿಯ ಪ್ರಧಾನ ನಿರ್ದೇಶಕ ಗೋವಿಂದ ಗುಪ್ತಾ ಹಾಗೂ ಹೆಚ್ಚುವರಿ ಪ್ರಧಾನ ನಿರ್ದೇಶಕ ಸ್ಮಿತಾ ಶ್ರೀವಾಸ್ತವ ಅವರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 17 Feb 2026 10:58 pm

Kalaburagi | ಸಾಹಿತ್ಯದಿಂದ ಸಾಮರಸ್ಯದ ಜೀವನ ಸಾಧ್ಯ : ಡಾ.ದಾಕ್ಷಾಯಣಿ ಎಸ್.ಅಪ್ಪಾ

ಎರಡು ದಿನದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ವಾರ್ತಾ ಭಾರತಿ 17 Feb 2026 10:54 pm

ಬಂಟ್ವಾಳ: ಮರಳು ಕಳ್ಳತನ ಪ್ರಕರಣ; ಮೂವರ ಬಂಧನ

ಬಂಟ್ವಾಳ : ತೋಡಿನಿಂದ ಮರಳು ಕಳ್ಳತನ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ಮಚ್ಚಿನ ಗ್ರಾಮದ ಪುಂಚಪಾದೆ ಬಳಿಯ ಪೆರೂರು ಎಂಬಲ್ಲಿ ಫೆ 16 ರಂದು ನಡೆದಿದೆ. ಬಂಧಿತ ಆರೋಪಿಗಳನ್ನು ಪ್ರವೀಣ್ (38), ವಸಂತ (42) ಹಾಗೂ ದಿನೇಶ (48) ಎಂದು ಹೆಸರಿಸಲಾಗಿದೆ. ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ರಾಜೇಶ್ ಕೆ ವಿ ನೇತೃತ್ವದ ಪೊಲೀಸರು ಕಾರಿಂಜೇಶ್ವರ ದೇವಸ್ಥಾನದ ಮಹತೋಭಾರ ಜಾತ್ರಾ ಬಂದೋಬಸ್ತು ಕರ್ತವ್ಯದ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಪುಂಚಪಾದೆ ಬಳಿಯ ಪೆರೂರು ಎಂಬಲ್ಲಿ ಪೆರೂರು ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಹರಿಯುವ ನೀರಿನ ತೋಡಿನಿಂದ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕಳ್ಳತನ ಮಾಡಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಪಿಕಪ್ ವಾಹನ, ಸುಮಾರು 6 ಸಾವಿರ ರೂಪಾಯಿ ಮೌಲ್ಯದ 50 ಬುಟ್ಟಿಯಷ್ಟು ಮರಳು ಹಾಗೂ ಸುಮಾರು 1 ಸಾವಿರ ರೂಪಾಯಿ ಮೌಲ್ಯದ ಇತರ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 17 Feb 2026 10:54 pm

ಕಲಬುರಗಿಯಲ್ಲಿ ಕಣ್ಮನ ಸೆಳೆದ ‘ಕಲ್ಯಾಣ ಕರ್ನಾಟಕ ಚಿತ್ರಸಂತೆ’

ಕಲಬುರಗಿ ಕಲಾವಿದರ ಕೃತಿಗಳು ವಿಶ್ವದೆಲ್ಲೆಡೆ ತಲುಪಲಿ: ಡಾ.ದಾಕ್ಷಾಯಣಿ ಅಪ್ಪಾ

ವಾರ್ತಾ ಭಾರತಿ 17 Feb 2026 10:49 pm

ಜೆಪ್ಪಿನ ಮೊಗರಿನಲ್ಲಿ ರಮಝಾನ್ ಇಫ್ತಾರ್ ವ್ಯವಸ್ಥೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಜೆಪ್ಪಿನ ಮೊಗರಿನಲ್ಲಿ ಇರುವ ಮಾಸೂನ್ ಟೈಲ್ಸ್ & ಗ್ರಾನೈಟ್ಸ್ (Masun Tiles and Granites, Jeppina Mogaru)ನಲ್ಲಿ ರಮಝಾನ್ ಉಪವಾಸದ ಅವಧಿಯಲ್ಲಿ ಪ್ರಯಾಣಿಕರಿಗೆ ಇಫ್ತಾರ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯೂ ಲಭ್ಯವಿದ್ದು, ಇಫ್ತಾರ್ ಸಮಯದಲ್ಲಿ ಆ ಭಾಗದಿಂದ ಪ್ರಯಾಣಿಸುವ ಯಾತ್ರಿಕರು ಇದರ ಸದುಪಯೋಗ ಪಡೆಯುವಂತೆ ಮಾಸೂನ್ ಟೈಲ್ಸ್ ನ ಮಾಲಕರು ವಿನಂತಿಸಿರುತ್ತಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9738802666

ವಾರ್ತಾ ಭಾರತಿ 17 Feb 2026 10:48 pm

Kalaburagi | ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕು: ಡಾ.ಸಿ.ಸೋಮಶೇಖರ

ಕಲಬುರಗಿ: ಓದು ನಿರಂತರವಾದರೆ ಜ್ಞಾನ ಮತ್ತು ಪರೀಕ್ಷೆ ಫಲಿತಾಂಶ ಉತ್ತಮವಾಗುತ್ತದೆ. ಸಾಧನೆಗೆ ಬಡತನ ಅಡ್ಡಿ ಬರಬಾರದು, ಜ್ಞಾನದ ಹಸಿವು ಮಕ್ಕಳಲ್ಲಿ ಇದ್ದಾಗ ಜೀವನ ಯಶಸ್ವಿಯಾಗುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಹೇಳಿದರು. ಸೋಮವಾರ ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಓದಿನ ಕಡೆ ಗಮನ ಕೊಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಹಾಗೂ ಯಶಸ್ವಿಯಾಗಲು ಶಿಕ್ಷಕರ ಶ್ರಮ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬಿ.ಎಚ್. ನಿರಗುಡಿ, ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಗುರಿ ಮುಟ್ಟುವ ಕಡೆ ಪ್ರಯತ್ನ ಮಾಡಬೇಕು, ಮೊಬೈಲ್ ನಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗುರೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಲ್ಯಾಣರಾವ ಶೀಲವಂತ ಅವರು ಮಾತನಾಡುತ್ತಾ, ಮಕ್ಕಳು ತರಗತಿಯಲ್ಲಿ ಉಪನ್ಯಾಸಕರು ಹೇಳಿದ ವಿಷಯಗಳನ್ನು ಸರಿಯಾಗಿ ಮನನ ಮಾಡಿಕೊಂಡು ಓದಿದಾಗ ನಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು. ದಿಶಾ ಪಿಯು ಕಾಲೇಜಿನ ಅಧ್ಯಕ್ಷರಾದ ಶಿವಾನಂದ ಖಜೂರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಮಹೇಶ್ ಗಡಗಿ, ಸಂತೋಷ ಪಿಳ್ಳೆ , ಕಾಶೀನಾಥ್ ಪಂಚಾಳ, ಸಚ್ಚಿದಾನಂದ ಪಾಟೀಲ್, ರೂಪಾ ಕುಲಕರ್ಣಿ, ರಾಜೇಶ್ವರಿ ಸಾಲಿಮಠ, ನಿರ್ಮಲಾ ಕಣ್ಮುಸೆ, ವಿಶ್ವಜೋತಿ ಮಠ, ಡಾ.ಸುಲೋಚನಾ ಅಂಕಲಗಿ ಇದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್, ಫೈಲ್, ಪೆನ್ನು ನೀಡಲಾಯಿತು.

ವಾರ್ತಾ ಭಾರತಿ 17 Feb 2026 10:45 pm

ಮಾನ್ಯತೆ ನವೀಕರಣ ಆಗದ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಸ್ಯೆ ಇಲ್ಲ : ಮಧು ಬಂಗಾರಪ್ಪ

ಬೆಂಗಳೂರು : ಈ ವರ್ಷ ರಾಜ್ಯದಲ್ಲಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಮಾನ್ಯತೆ ನವೀಕರಣ ಆಗದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತಾ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಮಾ.31ರವರೆಗೆ ವಿಸ್ತರಣೆ ಆಗಿರುವುದರಿಂದ ಈ ಅವಧಿಯಲ್ಲಿ ಶಾಲೆಗೆ ಮಾನ್ಯತೆಯಿದೆ ಎಂದೇ ಭಾವಿಸಲಾಗುತ್ತದೆ ಎಂದರು. ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದ ಸದನ ಸಮಿತಿ ಅಧ್ಯಯನ ನಡೆಸುತ್ತಿದ್ದು, ಈ ಸಮಿತಿಯಿಂದ ಅಂತಿಮವಾಗಿ ಕೊಡುವ ವರದಿಯನ್ನು ನಾವು ಸ್ವೀಕರಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯದಲ್ಲಿ 12 ಸಾವಿರಕ್ಕೂ ಅಧಿಕ ಖಾಸಗಿ ಶಾಲೆಗಳಿದ್ದರೂ, ಸುಮಾರು 7 ಸಾವಿರ ಶಾಲೆಗಳು ಮಾತ್ರ ಅರ್ಜಿ ಸಲ್ಲಿಸಿವೆ. ಉಳಿದಂತೆ ಶಾಲೆಗಳು ಪುಟ್ಟಣ್ಣ ಸಮಿತಿಯ ವರದಿ ಸಲ್ಲಿಕೆಯಾದ ಬಳಿಕವೇ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 17 Feb 2026 10:42 pm

Kalaburagi | ಕಳ್ಳತನ ಆರೋಪಿಗಳ ಬಂಧನ ; 26 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ : ಡಾ.ಶರಣಪ್ಪ ಎಸ್.ಡಿ.

ಕಲಬುರಗಿ: ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಮತ್ತು ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೇರಿದಂತೆ ಇತರೆ ಕಡೆಗಳಲ್ಲಿ ದಾಖಲಾಗಿದ್ದ ಸುಲಿಗೆ ಹಾಗೂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಿ ಅವರಿಂದ ಚಿನ್ನಾಭರಣ, ವಾಹನಗಳು ಸೇರಿದಂತೆ ಒಟ್ಟಾರೆ 26.11 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ವಿಶ್ವವಿದ್ಯಾಲಯ ಠಾಣಾ ವ್ಯಾಪ್ತಿಯ ಮೊದಲ ಕಾರ್ಯಾಚರಣೆಯಲ್ಲಿ ಎಂ.ಎಸ್.ಕೆ ಮಿಲ್ ಜಿಲನಾಬಾದ್ ನಿವಾಸಿಗಳಾದ ಇಮ್ರಾನ್ ಶೇಖ್, ಮುಹಮ್ಮದ್ ಸಮೀರ್, ಮುಹಮ್ಮದ್ ಇಮ್ತಿಯಾಜ್ ಹಾಗೂ ರುಕ್ಮೋದ್ಧಿನ ಬಾಬಾ ಎಂಬಾತರನ್ನು ವಶಕ್ಕೆ ಪಡೆದು ಅವರಿಂದ 12.25 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನ, ಒಂದು ಪಲ್ಸರ್ ಬೈಕ್ ಹಾಗೂ ಕ್ರಿಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅದೇ ಠಾಣೆಯ ಮತ್ತೊಂದು ಮನೆಗಳ್ಳತನ ಪ್ರಕರಣದಲ್ಲಿ ಚುನ್ನಾಭಟ್ಟಿಯ ನಿವಾಸಿ ಮುಹಮ್ಮದ್ ಝಮೀರ್ ಬಸೀರಮಿಯಾ ಎಂಬಾತನನ್ನು ವಶಕ್ಕೆ ಪಡೆದು ಆತನಿಂದ 40 ಗ್ರಾಂ ಬಂಗಾರ, 40 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 66 ಸಾವಿರ ರೂ. ನಗದು ಹೀಗೆ ಒಟ್ಟು 6.66 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದಲ್ಲಿ ಕೆಸರಟಗಿ ನಿವಾಸಿಗಳಾದ ಆಕಾಶ ಬಾಳಿ ಹಾಗೂ ನಾಗರಾಜ್ ಪಾಟೀಲ್ ಎಂಬಾತರನ್ನು ವಶಕ್ಕೆ ಪಡೆದು ಅವರಿಂದ 7.20 ಲಕ್ಷ ರೂ. ಮೌಲ್ಯದ ಚಿನ್ನದ ಸರ ಮತ್ತು ಪಲ್ಸರ್ ಎನ್.ಎಸ್ ಬೈಕ್ ಸೇರಿ ಒಟ್ಟು 26,11,000 ರೂ. ಮೌಲ್ಯದ ಮಾಲು ಅನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು. ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ : ಅಶೋಕ ನಗರದ ದತ್ತ ನಗರದ ನಿವಾಸಿ ಕೀರ್ತಮ್ಮ ಎಂಬ ವೃದ್ಧೆ ತರಕಾರಿ ತರಲು ಹೋದಾಗ, ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಡಾಕ್ಟರ್ ಶ್ರೀನಿವಾಸ ಅವರ ಮನೆ ಎಲ್ಲಿದೆ? ಎಂದು ವಿಳಾಸ ಕೇಳುವ ನೆಪ ಮಾಡಿದ್ದರು. ಮೊಬೈಲ್‌ನಲ್ಲಿ ಫೋಟೋ ತೋರಿಸುವ ಸೋಗಿನಲ್ಲಿ ವೃದ್ಧೆಯ ಕೊರಳಲ್ಲಿದ್ದ 38 ಗ್ರಾಂ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು. ಈ ಸಂಬಂಧ ತನಿಖೆ ನಡೆಸಿದ ಅಶೋಕ ನಗರ ಪೊಲೀಸರು ಕೆಸರಟಗಿ ನಿವಾಸಿಗಳಾದ ಆಕಾಶ ಮತ್ತು ನಾಗರಾಜ ಎಂಬ ಇಬ್ಬರು ಯುವಕರನ್ನು ಬಂಧಿಸಿ, ಅವರಿಂದ 7.20 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದರು. ಅಂತರರಾಜ್ಯ ಸುಲಿಗೆಕೋರರ ಮೇಲೆ 'ಕೋಕಾ' ಪ್ರಯೋಗ: ಬಂಧಿತ ಆರೋಪಿಗಳಾದ ಇಮ್ರಾನ್ ಶೇಖ್ (12 ಪ್ರಕರಣ), ಇಮ್ಮಿಯಾಜ್ (13), ಸಮೀರ್ (11) ಹಾಗೂ ರುಕ್ಕೋದ್ದಿನ್ ಮೇಲೆ ಕರ್ನಾಟಕ ಹಾಗೂ ತೆಲಂಗಾಣದ ಜಹೀರಾಬಾದ್ ಸೇರಿದಂತೆ ವಿವಿಧೆಡೆ ಹತ್ತಾರು ದರೋಡೆ ಪ್ರಕರಣಗಳಿವೆ. ಈ ಗ್ಯಾಂಗ್ ಸಿಸಿಟಿವಿ ಇಲ್ಲದ ಕಡೆಗಳಲ್ಲೇ ಕೃತ್ಯವೆಸಗುತ್ತಿತ್ತು. ಅಂತರರಾಜ್ಯ ಗ್ಯಾಂಗ್‌ನ ಸರಣಿ ಅಪರಾಧಗಳನ್ನು ಪರಿಗಣಿಸಿ, ಇವರ ಮೇಲೆ ಕಠಿಣ 'ಕೋಕಾ' ಕಾಯ್ದೆ ಅಳವಡಿಸಲು ಕಲಬುರಗಿ ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸ್ ತಂಡಕ್ಕೆ ಶ್ಲಾಘನೆ : ಕಲಬುರಗಿ ನಗರದ ವಿಶ್ವವಿದ್ಯಾಲಯ ಮತ್ತು ಅಶೋಕ ನಗರ ಠಾಣೆಯ ಜಂಟಿ ಕಾರ್ಯಾಚರಣೆಯಲ್ಲಿ ಕುಖ್ಯಾತ ಸುಲಿಗೆಕೋರರನ್ನು ಬಂಧಿಸಿದ ಡಿಸಿಪಿ ಪ್ರವೀಣ ನಾಯಕ್, ಎಸಿಪಿಗಳಾದ ಬಸವೇಶ್ವರ ಹೀರಾ, ಶರಣಬಸಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಪಿ.ಐ ಚಂದ್ರಶೇಖರ ತಿಗಡಿ ಹಾಗೂ ಸತೀಶ್ ಕಣಿಮೇಶ್ವರ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಎಎಸ್ಐ ಸೈಯದ್ ಗೌಸ್ ಸೇರಿದಂತೆ ಇತರೆ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಪ್ರಶಂಸನಾ ಪತ್ರ ವಿತರಿಸಿದರು.

ವಾರ್ತಾ ಭಾರತಿ 17 Feb 2026 10:42 pm

ಆಟೋದಲ್ಲಿ ಬೆಂಗಳೂರು ಸುತ್ತಿ ಮಸಾಲೆ ದೋಸೆ ತಿಂದ ಅಮೆರಿಕ ರಾಯಭಾರಿ! ಗವಿಗಂಗಾಧರೇಶ್ವರ ದೇವಸ್ಥಾನಕ್ಕೂ ಭೇಟಿ

Indo American Relations- ಅಮೆರಿಕದ ರಾಯಭಾಯಿ ಸರ್ಜಿಯೊ ಗೋರ್ ಮತ್ತು ಸಂಸದ ತೇಜಸ್ವಿ ಬೆಂಗಳೂರಿನಲ್ಲಿ ಜನ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣಿಸಿ ಮಸಾಲೆ ದೋಸೆ ತಿಂದ ಘಟನೆ ನಡೆದಿದೆ. ಸೋಮವಾರ ನಗರಕ್ಕೆ ಆಗಮಿಸಿದ್ದ ಗೋರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ತೇಜಸ್ವಿ ಸೂರ್ಯ ಅವರೊಂದಿಗೆ ನಗರ ಸುತ್ತಾಟ ನಡೆಸಿದರು. ಮಂಗಳವಾರ ಐಸಿಹಾಸಿಕ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಪೋಟೋಗಳನ್ನು ಇಬ್ಬರೂ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 17 Feb 2026 10:41 pm

Bengaluru | 21.50 ಕೋಟಿ ಮೌಲ್ಯದ ಗಾಂಜಾ ಜಪ್ತಿ : ಸೀಮಂತ್ ಕುಮಾರ್ ಸಿಂಗ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 15 ಜನರನ್ನು ಬಂಧಿಸಿ 21.50 ಕೋಟಿ ಮೌಲ್ಯದ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರು ಹಾಗೂ ಅಮೃತಹಳ್ಳಿ, ಹೆಬ್ಬಗೋಡಿ, ಜೆ.ಬಿ.ನಗರ, ಶೇಷಾದ್ರಿಪುರಂ, ಮಹಾಲಕ್ಷ್ಮೀಲೇಔಟ್ ಮತ್ತು ಗೋವಿಂದಪುರ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಮಾದಕ ವಸ್ತುಗಳಾದ ಹೈಡ್ರೋ ಗಾಂಜಾ, ಗಾಂಜಾ, ಎಂಡಿಎಂಎ, ಕೊಕೇನ್ ಸೇರಿ ವಿವಿಧ ಬಗೆಯ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಗಳನ್ನಾಧಾರಿಸಿ ಠಾಣೆಗಳಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಸ್ಥಳಗಳ ಮೇಲೆ ದಾಳಿ ಮಾಡಿ, ಮೂವರು ವಿದೇಶಿ ಪ್ರಜೆಗಳು ಹಾಗೂ 12 ಮಂದಿ ಹೊರರಾಜ್ಯದ ಮಾದಕ ವಸ್ತು ಮಾರಾಟಗಾರರು ಒಳಗೊಂಡಂತೆ ಒಟ್ಟು 15 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮಾದಕ ವಸ್ತುಗಳಾದ 9 ಕೆಜಿ 460 ಗ್ರಾಂ ಹೈಡ್ರೋ ಗಾಂಜಾ, 30 ಕೆಜಿ ಗಾಂಜಾ, 5 ಕೆಜಿ 677 ಗ್ರಾಂ ಎಂಡಿಎಂಎ, 131 ಗ್ರಾಂ ಕೊಕೇನ್, 462 ಮಿಲಿ ಹ್ಯಾಶಿಷ್‌ ಆಯಿಲ್, 1 ಕಾರು, 1 ದ್ವಿಚಕ್ರ ವಾಹನ, 4 ಮೊಬೈಲ್ ಫೋನ್‍ಗಳು ಮತ್ತು 24,500 ರೂ. ನಗದನ್ನು ವಶಪಡಿಸಿಕೊಂಡಿದ್ದು, ಎನ್‍ಸಿಬಿ ಪ್ರಕಾರ, ಇವುಗಳ ಒಟ್ಟು ಮೌಲ್ಯ 10.59 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆ ಮೌಲ್ಯ 21.50 ಕೋಟಿ ರೂ.ಗಳಾಗಿವೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವಿದೇಶಿ ಮತ್ತು ಹೊರರಾಜ್ಯದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ವಾರ್ತಾ ಭಾರತಿ 17 Feb 2026 10:40 pm

Bengaluru | ಆಸ್ತಿ ವಿಚಾರವಾಗಿ ತಂದೆಯ ಹತ್ಯೆ

ಬೆಂಗಳೂರು : ಆಸ್ತಿ ವಿಚಾರವಾಗಿ ಪುತ್ರನೇ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂಪನಹಳ್ಳಿಯ ಮುತ್ತಿಯಾಲಮ ದೇವಾಲಯ ಸಮೀಪದ ನಿವಾಸಿ ಮುನಿಕೃಷ್ಣ(66) ಎಂಬುವರು ಕೊಲೆಯಾಗಿರುವ ತಂದೆ ಎಂದು ಗುರುತಿಸಲಾಗಿದ್ದು, ಪುತ್ರ ಮೋಹನ್ ಕುಮಾರ್ ಈ ಕೃತ್ಯವೆಸಗಿರುವುದಾಗಿ ಗೊತ್ತಾಗಿದೆ. ಮುನಿಕೃಷ್ಣ ಅವರು ಸ್ವಂತ ದುಡಿಮೆಯಿಂದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಮಾಡಿದ್ದು, ಬಾಡಿಗೆ ಬರುತ್ತಿದೆ. ಕೆಲವು ಆಸ್ತಿಯ ವಿಲ್ ಅನ್ನು ಮೊಮಕ್ಕಳ ಹೆಸರಿಗೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಪುತ್ರ ಮೋಹನ್ ಕುಮಾರ್ ಕಳೆದ ಕೆಲವು ದಿನಗಳಿಂದ ತಂದೆ ಜೊತೆ ಜಗಳವಾಡುತ್ತಿದ್ದನು. ಆಸ್ತಿ ಹಂಚಿಕೆ ವಿಚಾರವಾಗಿ ಶನಿವಾರ ಮತ್ತೆ ತಂದೆ ಜೊತೆ ಮೋಹನ್‍ಕುಮಾರ್ ಜಗಳವಾಡಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದಾಗ ರಾಡ್‍ನಿಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ತಲೆಗೆ ಗಂಭೀರ ಪೆಟ್ಟಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮುನಿಕಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಂಗಳವಾರ ಬೆಳಗ್ಗೆ ಮುನಿಕೃಷ್ಣಪ್ಪ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಮಗ ತಲೆಮರೆಸಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಠಾಣೆ ಪೊಲೀಸರು ಕೊಲೆ ಪ್ರಕರಣದಾಖಲಿಸಿಕೊಂಡು ಆರೋಪಿ ಮೋಹನ್‍ಕುಮಾರ್‍ಗಾಗಿ ಶೋಧ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 17 Feb 2026 10:37 pm

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ : ಭದ್ರತಾ ಸಿಬ್ಬಂದಿ ಸಹಿತ 14 ಮಂದಿ ಮೃತ್ಯು

ಪೇಶಾವರ,ಫೆ.19: ವಾಯವ್ಯ ಪಾಕಿಸ್ತಾನದಲ್ಲಿ ಆತ್ಮಹತ್ಯಾ ದಾಳಿ ಹಾಗೂ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 11 ಮಂದಿ ಭದ್ರತಾ ಸಿಬ್ಬಂದಿ ಹಾಗೂ ಒಂದು ಮಗು ಸೇರಿದಂತೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಖೈಬರ್ ಪಖ್ತೂನ್‌ಕ್ವಾ ಪ್ರಾಂತ್ಯದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಗಡಿಗೆ ತಾಗಿಕೊಂಡಿರುವ ದಕ್ಷಿಣ ಹಾಗೂ ಉತ್ತರ ಪ್ರಾಂತ್ಯಗಳಲ್ಲಿ ಬಂಡುಕೋರ ಚಟುವಟಿಕೆಗಳನ್ನು ನಿಗ್ರಹಿಸಲು ಪಾಕ್ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿರುವ ಸಮಯದಲ್ಲೇ ಈ ಘರ್ಷಣೆ ನಡೆದಿದೆ. ಖೈಬರ್ ಪಖ್ತೂನ್‌ಖ್ವಾದ ಬುಡಕಟ್ಟು ಜಿಲ್ಲೆಯಾದ ಬಜೌರ್‌ನಲ್ಲಿ ನಡೆದ ಆತ್ಮಹತ್ಯಾ ದಾಳಿಯ ಘಟನೆಯೊಂದರಲ್ಲಿ, ಸ್ಫೋಟಕಗಳಿಂದ ತುಂಬಿದ ವಾಹನವೊಂದು ಧಾರ್ಮಿಕ ಶಿಕ್ಷ ಣಸಂಸ್ಥೆಯ ಗೋಡೆಗೆ ಢಿಕ್ಕಿ ಹೊಡೆದು ಸ್ಫೋಟ ನಡೆಸಲಾಗಿದೆ. ಈ ಘಟನೆಯಲ್ಲಿ ಕಟ್ಟಡದೊಳಗಿದ್ದ ಎಂಟು ಮಂದಿ ಗಡಿಮುಂಚೂಣಿ ದಳದ ಪೊಲೀಸರು ಮೃತಪಟ್ಟಿದ್ದಾರೆ ಹಾಗೂ ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಸ್ಫೋಟದಿಂದಾಗಿ ಆಸುಪಾಸಿನ ಹಲವಾರು ಮನೆಗಳು ಕುಸಿದುಬಿದ್ದಿವೆ ಒಂದು ಮಗು ಮೃತಪಟ್ಟಿದೆ ಎಂದು ಅವರು ಹೇಳಿದ್ದಾರೆ. ಬನ್ನೂ ಪಟ್ಟಣದಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ರಿಕ್ಷಾವೊಂದರಲ್ಲಿ ಇರಿಸಿದ್ದ ಬಾಂಬ್ ಸ್ಫೋಟಿಸಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಹಾಗೂ ಇತರ 17 ಮಂದಿ ಗಾಯಗೊಂಡಿದ್ದಾರೆ.

ವಾರ್ತಾ ಭಾರತಿ 17 Feb 2026 10:35 pm

Bengaluru | ಕಸದ ರಾಶಿಯಲ್ಲಿ ನವಜಾತು ಶಿಶುವಿನ ಮೃತದೇಹ ಪತ್ತೆ

ಬೆಂಗಳೂರು : ಇಲ್ಲಿನ ಸುಬ್ರಹಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಸದ ಗುಡ್ಡೆಯಲ್ಲಿ ನವಜಾತು ಶಿಶು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿನ್ನೆ ಸಂಜೆ 7.50 ರ ಸುಮಾರಿನಲ್ಲಿ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್ ಅಪಾರ್ಟ್‍ಮೆಂಟ್ ಹಿಂಭಾಗದ ಖಾಲಿ ಜಾಗದ ಮೈದಾನದಲ್ಲಿ ಹುಡುಗರು ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಮೈದಾನಲ್ಲಿದ್ದ ಕಸದ ಗುಡ್ಡೆ ಬಳಿ ಮಗು ಮೃತಪಟ್ಟಿರುವ ಸ್ಥಿತಿಯನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ನವಜಾತ ಶಿಶು ಮೃತಪಟ್ಟಿರುವುದು ಕಂಡು ಬಂದಿದೆ. ನವಜಾತ ಶಿಶುವನ್ನು ಬಿಸಾಡಿ ಹೋಗಿರುವ ಪೋಷಕರನ್ನು ಪತ್ತೆ ಮಾಡಿ ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವಕನೋರ್ವ ಸುಬ್ರಹಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವಜಾತ ಶಿಶುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 17 Feb 2026 10:34 pm

Kalaburagi | ಕೇಂದ್ರ ಕಾರಾಗೃಹದಲ್ಲಿ ಯೋಗ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಆರ್ಟ್ ಆಫ್ ಲಿವಿಂಗ್ ಶಾಖೆ ಕಲಬುರಗಿ ಇವರುಗಳ ಸಹಯೋಗದೊಂದಿಗೆ “ಪ್ರಿಸನ್ ಸ್ಮಾರ್ಟಕೋರ್ಸ್ ಅಡಿ” ಒಂದು ವಾರದವರೆಗೆ ಬ್ಯಾರಕ್ ಸಂಖ್ಯೆ 5 ರಿಂದ 7ರ ವರೆಗಿನ ಒಟ್ಟು 116 ಬಂದಿಗಳಿಗೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ 3ನೇ ತಂಡದ ಯೋಗ ತರಬೇತಿ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧೀಕ್ಷಕರಾದ ರಾಕೇಶ್ ಕಾಂಬಳೆ ಅವರು ಸೋಮವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಲಬುರಗಿ ಆರ್ಟ ಆಫ್ ಲಿವಿಂಗ್ ವ್ಯವಸ್ಥಾಪಕ ಆಡಳಿತಾಧಿಕಾರಿ ದತ್ತಾತ್ರೇಯ ಚಿಂಚೂರ ಹಾಗೂ ಸಹಾಯಕ ಅಧೀಕ್ಷಕ ಚನ್ನಪ್ಪ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಜೈಲರ್ ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಪುಂಡಲೀಕ ಟಿ.ಕೆ., ಶ್ಯಾಮ ಬಿದ್ರಿ ಹಾಗೂ ಕಾರಾಗೃಹದ ಅಧಿಕಾರಿ/ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 17 Feb 2026 10:32 pm

Kalaburagi | ಢೋಹರ ಕಕ್ಕಯ್ಯನವರ ಜಾತ್ರಾ ಮಹೋತ್ಸವ : ಸನ್ಮಾನ ಸಮಾರಂಭ

ಕಲಬುರಗಿ: ನಗರದ ಜಗತ್ ಬಡಾವಣೆಯ ಶರಣ ಢೋಹರ ಕಕ್ಕಯ್ಯನವರ 34ನೇ ಜಾತ್ರಾ ಮಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ, ಭವ್ಯ ಮೆರವಣಿಗೆ, ಸರಕಾರಿ ಹಾಗೂ ಅರೆ ಸರಕಾರಿ, ನಿವೃತ್ತ ನೌಕರರಿಗೆ, ಹಿರಿಯ ನಾಗರಿಕರಿಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಭಿಷೇಕ್ ಅಲ್ಲಂಪ್ರಭು ಪಾಟೀಲ್, ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಹೊಳ್ಕರ್, ಸುನೀತಾ ರಮೇಶ್ ಕಟಕೆ, ಶಂಕರ್ ಕೊಡ್ಲಾ, ಕಾಶಿರಾಯ ನಂದೂರಕರ್, ರುದ್ರಪ್ಪ ಹೋಳಕುಂದಾ, ರಮೇಶ ಹೋಸಮನಿ, ಶಿವಶರಣಪ್ಪ ಅಮೃತಪ್ಪ ಕೋಳಾರ್, ಸತೀಶ ಇಂಗಳೆ, ಗಣಪತಿ ಧರ್ಮಣ್ಣ ಜೋಗದ ನಾಕರ್, ಪ್ರೊ. ಭೀಮಣ್ಣ ಬೋನಾಳ, ಅನಿಲಕುಮಾರ ಸಾವಳಕರ್, ಲಿಂಗೋಜಿ ಗಾಜರೆ, ಮೋತಿಲಾಲ್ ಕಟಕೆ, ಡಾ. ಅಮೃತಾ ಕಟಕೆ, ರಮೇಶ ಗಾಯಧನಕರ್, ಮಾರುತಿ ಶೇರಖಾನೆ, ಧೋಂಡಿಬಾ ಜೋಗದ ನಾಕರ್, ಅಮೃತ ಹೋಟ್ಕರ್, ನಾರಾಯಣ ಗಾಯದನಕರ್, ವಿಜಯಕುಮಾರ್ ಗಾಜರೆ, ರಮೇಶ ಗಾಯದನಕರ್, ಶ್ರೀಮಂತ ಇಂಗಳೆ, ರಾಜಕುಮಾರ ಜೋಗಧನಕರ್, ಬಾಬುರಾವ ಕಟಕೆ, ಸುಭಾಷ ಗಾಯದನಕರ್, ಸಾಯಬಣ್ಣ ಗಾಜರೆ, ಕೃಷ್ಣ ಮಸಾಜಿ ಹೋಳಕರ್, ಸುಭಾಶಚಂದ್ರ ತ್ರಿಮುಖೆ, ಅನಿಲಕುಮಾರ ಸಾವಳಕರ, ಗಣಪತಿ ಕಾವಳೆ, ದೇವಿಂದ್ರ ಧಡಕೆ, ರಾಘವೇಂದ್ರ ಹೋಳಕರ್, ಮಲ್ಲಿಕಾರ್ಜುನ್ ಖರಟಮಲ್, ಅಮೃತ ಜಗದೆ, ಅರ್ಜುನ್ ಸೋನಕವಡೆ, ಸಂತೋಷ ಸೋನಾವಣೆ, ಡಾ.ಸಂತೋಷ ಕಟಕೆ, ನಾಗರಾಜ ಶೇರಖಾನೆ, ಸೂರ್ಯಕಾಂತ ಸಾವಳಕರ್, ಶಿವಾಜಿ ಜೋಗಧನಕರ್, ಕಮಲಾಬಾಯಿ ಹೋಳಕರ್, ಶೇಷಾಬಾಯಿ ಗಾಯದನಕರ್, ಸೀಮಾ ಗಾಜರೆ, ಸುಮಿತ್ರಾಬಾಯಿ ಹೊಟ್ಕರ್, ಪದ್ಮನಿ ಕಟಕೆ ಸೇರಿದಂತೆ ಟ್ರಸ್ಟ್ ನ ಸದಸ್ಯರು, ಪದಾಧಿಕಾರಿಗಳು, ಬಡಾವಣೆಯ ಮುಖoಡರು, ಮಹಿಳೆಯರು ಇದ್ದರು.

ವಾರ್ತಾ ಭಾರತಿ 17 Feb 2026 10:30 pm

ಬಾಂಗ್ಲಾದೇಶ| ವಿದಾಯ ಭಾಷಣದಲ್ಲಿ ‘ಈಶಾನ್ಯ ಭಾರತ’ದ ವಿವಾದ ಕೆದಕಿದ ಯೂನುಸ್

ಢಾಕಾ,ಫೆ.17: ತನ್ನ ನೇತೃತ್ವದ ಮಧ್ಯಂತರ ಸರಕಾರವು ದೇಶದ ಸಾರ್ವಭೌಮತೆಯನ್ನು ರಾಷ್ಟ್ರೀಯ ಹಿತಾಸಕ್ತಿಗಳನ್ನು ಹಾಗೂ ವಿದೇಶಾಂಗ ನೀತಿಯ ಘನತೆಯನ್ನು ಕೊನೆಗೂ ಮರುಸ್ಥಾಪಿಸುವಲ್ಲಿ ಸಫಲವಾಗಿದೆ ಎಂದು ಹೇಳಿದ್ದಾರೆ. ಬಾಂಗ್ಲಾದ ಮುಖ್ಯ ಸಲಹೆಗಾರರಾಗಿ ತನ್ನ ಅಧಿಕಾರಾವಧಿಯ ಕೊನೆಯ ದಿನವಾದ ಸೋಮವಾರ ಮೊಹಮ್ಮದ್ ಯೂನುಸ್ ಅವರು ಟಿವಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ತನ್ನ 25 ನಿಮಿಷಗಳ ಭಾಷಣದಲ್ಲಿ ಯೂನಸ್ ಅವರು ಈಶಾನ್ಯ ಭಾರತವನ್ನು ಪ್ರಸ್ತಾಪಿಸುವ ಮೂಲಕ ವಿವಾದಕ್ಕೆ ಗ್ರಾಸವಾಗಿದ್ದಾರೆ. ಭಾರತದ ಏಳು ರಾಜ್ಯಗಳು. ನೇಪಾಳ ಹಾಗೂ ಭೂತಾನ್ ಸೇರಿದಂತೆ ಈಶಾನ್ಯ ಪ್ರಾಂತ್ಯಗಳಿಗೆ ಅಪಾರವಾದ ಆರ್ಥಿಕ ಸಮೃದ್ಧಿಯನ್ನು ಒದಗಿಸುವ ಅಗಾಧ ಸಾಮರ್ಥ್ಯವನ್ನು ಬಾಂಗ್ಲಾ ಹೊಂದಿದೆ ಎಂದರು. ‘‘ಆರ್ಥಿಕ ವಲಯಗಳು, ವ್ಯಾಪಾರ ಒಪ್ಪಂದಗಳು ಹಾಗೂ ಸುಂಕರಹಿತ ಮಾರುಕಟ್ಟೆಗಳ ಲಭ್ಯತೆಯ ಮೂಲಕ ಈ ಪ್ರಾಂತ್ಯವು ಜಾಗತಿಕ ಉತ್ಪಾದನಾ ಕೇಂದ್ರವಾಗುವ ನಿಟ್ಟಿನಲ್ಲಿ ಭದ್ರವಾದ ತಳಹದಿಯನ್ನು ಹಾಕಲಾಗುವುದು ಎಂದರು. ನಮ್ಮ ಮುಕ್ತ ಸಮುದ್ರವು ಕೇವಲ ಭೌಗೋಳಿಕ ಸೀಮಾ ರೇಖೆ ಮಾತ್ರವಲ್ಲ, ಜಾಗತಿಕ ಆರ್ಥಿಕತೆಯೊಂದಿಗೆ ಸಂಪರ್ಕಿಸಲು ಬಾಂಗ್ಲಾದೇಶವು ಮುಕ್ತದ್ವಾರವಾಗಿದೆ ಎಂದರು. ಭಾರತದೊಂದಿಗೆ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಹೊಂದಿರುವ ನಿಕಟ ಬಾಂಧವ್ಯವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ಇಂದಿನ ಬಾಂಗ್ಲಾವು ಆತ್ಮವಿಶ್ವಾಸದಿಂದ ಕೂಡಿದೆ, ಸಕ್ರಿಯವಾಗಿದೆ ಮತ್ತು ಸ್ವಾತಂತ್ರ್ಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಜವಾಬ್ದಾರಿಯಿಂದ ವರ್ತಿಸಿದೆ ಎಂದರು. ಭಾಷಣಕ್ಕೆ ಮುನ್ನ ಯೂನಸ್ ಅವರು ತನ್ನ ಕಾರ್ಯಾಲಯದಲ್ಲಿ ಆಯೋಜಿಸಲಾದ ಸಂಕ್ಷಿಪ್ತ ವಿದಾಯಕೂಟದಲ್ಲಿ ಪಾಲ್ಗೊಂಡರು. ತನ್ನೊಂದಿಗೆ ಕೆಲಸ ಮಾಡಿದ ಅಧಿಕಾರಿಗಳ ಬಗ್ಗೆ ಹೆಚ್ಚೇನೂ ಪ್ರಸ್ತಾಪಿಸದ ಅವರು, ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಬೆಂಲ ನೀಡಿದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು.

ವಾರ್ತಾ ಭಾರತಿ 17 Feb 2026 10:30 pm

ವಾಡಿ | ಸಂತ ಸೇವಾಲಾಲ್‌ ಮಹಾರಾಜರ ಆದರ್ಶಗಳನ್ನು ಅಳವಡಿಸಿಕೊಳ್ಳಿ: ವಿಠ್ಠಲ ಮಹಾರಾಜ

ಸಂತ ಸೇವಾಲಾಲ್‌ ಮಹಾರಾಜರ 287ನೇ ಜಯಂತಿ ಕಾರ್ಯಕ್ರಮ

ವಾರ್ತಾ ಭಾರತಿ 17 Feb 2026 10:28 pm

T20 World Cup 2026: ಟಿ20 ವಿಶ್ವಕಪ್‌ ಟೂರ್ನಿಯಿಂದ ಆಸ್ಟ್ರೇಲಿಯಾ ತಂಡ ಔಟ್

T20 World Cup 2026: ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಕಾರಣ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯ ನಿರಂತರ ಮಳೆ ಹಿನ್ನೆಲೆ ರದ್ದುಗೊಂಡಿದ್ದು, ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಯಿತು.

ಒನ್ ಇ೦ಡಿಯ 17 Feb 2026 10:28 pm

ಇಂದೋರ್‌ ದುರಂತ| ಮಧ್ಯಪ್ರದೇಶ ವಿಧಾನಸಭೆ ಹೊರಗೆ ‘ಕಲುಷಿತ’ ನೀರಿನ ಬಾಟ್ಲಿಗಳೊಂದಿಗೆ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ

ಭೋಪಾಲ್‌,ಫೆ.17: ಕಾಂಗ್ರೆಸ್ ಶಾಸಕರು ಇಂದೋರಿನಲ್ಲಿ ಇತ್ತೀಚಿಗೆ ಕಲುಷಿತ ನೀರಿನ ಸೇವನೆಯಿಂದ ಸಂಭವಿಸಿದ್ದ ಸಾವುಗಳ ಕುರಿತು ಮಂಗಳವಾರ ಮಧ್ಯಪ್ರದೇಶ ವಿಧಾನಸಭಾ ಆವರಣದಲ್ಲಿ ‘ಕಲುಷಿತ’ ನೀರಿನ ಬಾಟ್ಲಿಗಳೊಂದಿಗೆ ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕ ಉಮಂಗ್ ಸಿಂಘಾರ್ ಅವರ ನೇತೃತ್ವದಲ್ಲಿ ಕಲುಷಿತ ನೀರಿನ ಬಾಟ್ಲಿಗಳು ಮತ್ತು ಫಲಕಗಳನ್ನು ಹಿಡಿದುಕೊಂಡು ಮಹಾತ್ಮ ಗಾಂಧಿಯವರ ಪ್ರತಿಮೆಯ ಮುಂದೆ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ ಕಾಂಗ್ರೆಸ್ ಶಾಸಕರು ಘೋಷಣೆಗಳನ್ನು ಕೂಗಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಕ್ಕಾಗಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಘಾರ್, ಇಂದೋರಿನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರಿನ ಸೇವನೆಯಿಂದ 35 ಜನರು ಮೃತಪಟ್ಟಿದ್ದಾರೆ. ಸರಕಾರವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಭಗೀರಥಪುರ ಪ್ರದೇಶವನ್ನು ಒಳಗೊಂಡಿರುವ ಇಂದೋರ್‌-1 ವಿಧಾನಸಭಾ ಕೇತ್ರದ ಶಾಸಕರಾಗಿರುವ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಷ ವಿಜಯವರ್ಗೀಯ ಅವರು ನೈತಿಕ ಕಾರಣಗಳಿಂದ ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯಾದ್ಯಂತ ಸಾರ್ವಜನಿಕರಿಗೆ ಕಲುಷಿತ ನೀರಿನ ಪೂರೈಕೆಯು ಗಂಭೀರ ಕಳವಳದ ವಿಷಯವಾಗಿದೆ ಎಂದ ಅವರು, ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ದೃಢವಾದ, ಪರಿಣಾಮಕಾರಿ ಕ್ರಮಗಳಿಗಾಗಿ ಆಗ್ರಹಿಸಿದರು.

ವಾರ್ತಾ ಭಾರತಿ 17 Feb 2026 10:25 pm

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ವಿರುದ್ಧದ ಪ್ರಕರಣದ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ,ಫೆ.17: ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ವಿರುದ್ಧ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ 2016ರ ಪ್ರಕರಣವನ್ನು ರದ್ದುಗೊಳಿಸಿದ್ದ ತೆಲಂಗಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ. ರಾಜೋಲ್ ಕ್ಷೇತ್ರದಲ್ಲಿಯ ಎಸ್‌ಸಿ ಪರಸ್ಪರ ನೆರವಿನ ಸಹಕಾರಿ ವಸತಿ ಸಂಘಕ್ಕೆ ನುಗ್ಗಿ ಬಲ್ಡೋಝರ್‌ನಿಂದ ಆವರಣವನ್ನು ಧ್ವಂಸಗೊಳಿಸಿ, ತಮ್ಮನ್ನು ತಡೆಯಲು ಪ್ರಯತ್ನಿಸಿದ್ದ ದೂರುದಾರರ ವಿರುದ್ಧ ಜಾತಿವಾದಿ ನಿಂದನೆಗಳನ್ನು ಕೂಗಿದ್ದ ದುಷ್ಕರ್ಮಿಗಳನ್ನು ರೆಡ್ಡಿ ಪ್ರಚೋದಿಸಿದ್ದರು ಎಂಬ ಆರೋಪಗಳಿಗೆ ಪ್ರಕರಣವು ಸಂಬಂಧಿಸಿದೆ. ರೆಡ್ಡಿ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣ ಕಂಡು ಬಂದಿರಲಿಲ್ಲವಾದ್ದರಿಂದ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದ್ದು ಸರಿಯಾಗಿಯೇ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿಪುಲ ಪಂಚೋಲಿ ಅವರ ಪೀಠವು ಹೇಳಿತು. ಇದು ರಾಜಕೀಯ ಹೋರಾಟಗಳಿಗೆ ನ್ಯಾಯಾಲಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣದಂತೆ ಕಂಡುಬರುತ್ತಿದೆ ಎಂದು ಪೀಠವು ಅಭಿಪ್ರಾಯಿಸಿತು. ಅಪರಾಧಗಳಿಗೆ ಕುಮ್ಮಕ್ಕು ನೀಡುವುದನ್ನು ದಂಡಿಸುವ ಎಸ್‌ಸಿ/ಎಸ್‌ಟಿ ಕಾಯ್ದೆಯ ಕಲಂ 6ನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದಾಗ, ಕೇವಲ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಎತ್ತಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಪ್ರತಿಕ್ರಿಯಿಸಿದರು. 2016ರಲ್ಲಿ ರೆಡ್ಡಿ ಟಿಡಿಪಿ ಸದಸ್ಯರಾಗಿದ್ದರು. ಕೇವಲ ಗಾಳಿಸುದ್ದಿಗಳನ್ನು ಬಿಟ್ಟರೆ ಘಟನೆಗೂ ರೆಡ್ಡಿಯವರಿಗೂ ಸಂಬಂಧ ಕಲ್ಪಿಸುವ ಯಾವುದೇ ಪುರಾವೆಯಿಲ್ಲ ಎಂದು ನ್ಯಾ.ಬಾಗ್ಚಿ ಹೇಳಿದರು.

ವಾರ್ತಾ ಭಾರತಿ 17 Feb 2026 10:22 pm

ಅವಧಿ ಮೀರಿ ಧ್ವನಿವರ್ಧಕ ಬಳಕೆ: ಪ್ರಕರಣ ದಾಖಲು

ಬ್ರಹ್ಮಾವರ, ಫೆ.17: ಹಂದಾಡಿ ಗ್ರಾಮದ ಗಾಂಧಿ ಮೈದಾನದಲ್ಲಿ ಜನಸೇವಾ ಟ್ರಸ್ಟ್ ವತಿಯಿಂದ ಫೆ.14ರಂದು ನಡೆದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಅವಧಿ ಮೀರಿ ಧ್ವನಿವರ್ಧಕವನ್ನು ಬಳಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಜೆ 6ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕವನ್ನು ಬಳಸುವಂತೆ ಷರತ್ತನ್ನು ವಿಧಿಸಲಾಗಿತ್ತು. ಆದರೂ ಕೂಡ ಕಾರ್ಯಕ್ರಮದಲ್ಲಿ ಅವಧಿ ಮೀರಿ ಧ್ವನಿವರ್ಧಕವನ್ನು ಬಳಸಿ ಪರವಾನಗಿ ಯಲ್ಲಿ ವಿಧಿಸಿದ ಷರತ್ತನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ವ್ಯತಿರಿಕ್ತವಾಗಿ ನಡೆದುಕೊಂಡು, ಕಾನೂನು ಉಲ್ಲಂಘಿಸಿರುವ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ನೀಡಿದ ವರದಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 17 Feb 2026 10:17 pm

ಪ್ರವಾಸಕ್ಕೆ ತೆರಳಿದ್ದ ಯುವಕ ಮೃತ್ಯು

ಉಡುಪಿ, ಫೆ.17: ಅಸ್ಸಾಂ ರಾಜ್ಯದ ಗುವಾಹಟಿಗೆ ಪ್ರವಾಸಕ್ಕೆ ತೆರಳಿದ್ದ ಉಡುಪಿಯ ತಂಡದಲ್ಲಿದ್ದ ಓರ್ವ ಯುವಕ ಅನಾರೋಗ್ಯದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಕಾಪು ತಾಲೂಕು ಕಟಪಾಡಿ ಸಮೀಪದ ಸರಕಾರಿಗುಡ್ಡೆ ನಿವಾಸಿ ಅಶೋಕ್ ಆಚಾರ್ಯ(33) ಎಂದು ಗುರುತಿಸಲಾಗಿದೆ. ಪ್ರವಾಸದ ವೇಳೆ ಅಶೋಕ್ ಆಚಾರ್ಯ ಅವರಿಗೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅಸ್ವಸ್ಥತೆ ಉಂಟಾಗಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 17 Feb 2026 10:16 pm

ಹರ್ಯಾಣ| ವ್ಯಾಲೆಂಟೈನ್ ಡೇ ಭೋಜನದ ಬಳಿಕ ಪತ್ನಿಯ ಕತ್ತು ಸೀಳಿ ಹತ್ಯೆಗೈದ ಚಾರ್ಟರ್ಡ್ ಅಕೌಂಟಂಟ್

ಚಂಡಿಗಡ,ಫೆ.17: ಹರ್ಯಾಣದ ಜಝ್ಝರ್ ಜಿಲ್ಲೆಯ ಬಹದೂರ್‌ಗಡದಲ್ಲಿ ಯುವದಂಪತಿಯ ವ್ಯಾಲೆಂಟೈನ್ ದಿನದ ಸಂಜೆಯು ಆಘಾತಕಾರಿ ಮತ್ತು ಕ್ರೂರ ಹತ್ಯೆಯಲ್ಲಿ ಪರ್ಯವಸಾನಗೊಂಡಿದೆ. ಆ ಸಂಜೆ ಪತ್ನಿಯೊಂದಿಗೆ ಹಿಸಾರ್‌ನಲ್ಲಿ ವ್ಯಾಲೆಂಟೈನ್ ದಿನವನ್ನು ಆಚರಿಸಿದ್ದ ಅಂಶುಲ್ ಧವನ್ ನಂತರ ತಾವು ವಾಸವಾಗಿದ್ದ ಗುರುಗ್ರಾಮಕ್ಕೆ ಮರಳುತ್ತಿರುವಾಗ ದಾರಿ ಮಧ್ಯೆ ಜಝ್ಝರ್‌ನಲ್ಲಿ ಆಕೆಯನ್ನು ಕೊಲೆ ಮಾಡಿದ್ದು, ಪೋಲಿಸರನ್ನು ದಾರಿ ತಪ್ಪಿಸಲು ಢಕಾಯಿತಿಯ ಸುಳ್ಳು ಕಥೆಯನ್ನು ಹೆಣೆದಿದ್ದ. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಮೆಹಕ್ (27) ಕೊಲೆಯ ಹಿಂದಿನ ನಿಗೂಢತೆಯನ್ನು ಪೊಲೀಸರು ಕೇವಲ 18 ಗಂಟೆಗಳಲ್ಲಿ ಭೇದಿಸಿದ್ದಾರೆ. ಆರಂಭದಲ್ಲಿ ಢಕಾಯಿತಿ ಎಂಬಂತೆ ಕಂಡು ಬಂದಿದ್ದ ಪ್ರಕರಣ ಶೀಘ್ರವೇ ಚಾರ್ಟರ್ಡ್ ಅಕೌಂಟಂಟ್ ಆಗಿರುವ ಧವನ್ ನಡೆಸಿದ ಕ್ರೂರ ಹತ್ಯೆ ಎನ್ನುವುದು ಬೆಳಕಿಗೆ ಬಂದಿದ್ದು,ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಹಂಸಿ ನಿವಾಸಿ ಮೆಹಕ್ ಮತ್ತು ಹಿಸಾರ್ ನಿವಾಸಿ ಧವನ್ ಮದುವೆ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದಿದ್ದು, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು. ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಧವನ್ ರವಿವಾರ ರಾತ್ರಿ 11 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ಅಪರಿಚಿತ ದುಷ್ಕರ್ಮಿಗಳು ತಮ್ಮನ್ನು ದೋಚಲು ಪ್ರಯತ್ನಿಸಿದ್ದರು ಮತ್ತು ತನ್ನ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದ. ತನಿಖೆಯನ್ನು ಆರಂಭಿಸಿದ ಅಧಿಕಾರಿಗಳು ಆತನ ಹೇಳಿಕೆಗಳು ಪರಸ್ಪರ ತಾಳೆಯಾಗುತ್ತಿಲ್ಲ ಎನ್ನುವುದನ್ನು ಗಮನಿಸಿದ್ದರು. ತನ್ನ ಕಥೆಯನ್ನು ಪದೇ ಪದೇ ಬದಲಿಸುತ್ತಿದ್ದ ಧವನ್ ದುಷ್ಕರ್ಮಿಗಳ ಬಗ್ಗೆ ವಿವರಿಸಲೂ ಸಾಧ್ಯವಾಗಿರಲಿಲ್ಲ. ಇದು ಪೊಲೀಸರ ಶಂಕೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ತೀವ್ರ ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಂದಿದ್ದು ತಾನೇ ಎಂದು ಧವನ್ ಒಪ್ಪಿಕೊಂಡಿದ್ದ. ಗುರುಗ್ರಾಮದ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಮೆಹಕ್‌ಳ ನೈತಿಕತೆಯನ್ನು ಧವನ್ ಶಂಕಿಸುತ್ತಿದ್ದು, ಇದು ಆಗಾಗ್ಗೆ ಅವರ ನಡುವೆ ಜಗಳಕ್ಕ ಕಾರಣವಾಗಿತ್ತು. ಮೆಹಕ್ ತಂದೆ ಕೃಷ್ಣ ಕಥುರಿಯಾ ಆರಂಭದಿಂದಲೇ ಅಳಿಯನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಧವನ್ ಬೆರಳಚ್ಚುಗಳು ಮೂಡುವುದನ್ನು ತಪ್ಪಿಸಲು ಹತ್ಯೆಯ ಸಮಯದಲ್ಲಿ ಕೈಗವುಸುಗಳನ್ನು ಧರಿಸಿದ್ದ. ಮೊದಲು ಮೆಹಕ್‌ಳನ್ನು ಉಸಿರುಗಟ್ಟಿಸಿದ್ದ ಬಳಿಕ ಆತ ನಂತರ ಕತ್ತರಿಯಿಂದ ಆಕೆಯ ಕತ್ತನ್ನು ಸೀಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 10:14 pm

ಉಳ್ಳಾಲ: ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿಟ್ ವಿತರಣೆ

ಉಳ್ಳಾಲ: ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಳೇಕಲ ಉಳ್ಳಾಲ ಇದರ ಆಶ್ರಯದಲ್ಲಿ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಅಳೇಕಲದಲ್ಲಿರುವ ಟ್ರಸ್ಟ್ ನ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ತ್ವಾಹಾ ಹಾಜಿ ಅವರು ಕಿಟ್ ವಿತರಣೆ ಅಗತ್ಯತೆ ಮತ್ತು ಟ್ರಸ್ಟ್ ನ ಕಾರ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಅಳೇಕಲ ಮದ್ರಸ ಮುಅಲ್ಲಿಂ ಅಶ್ರಫ್ ಅಹ್ಸನಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಳ್ಳಾಲ ನಗರ ವ್ಯಾಪ್ತಿಯ 468 ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಕೆ ಎನ್ ಮೊಹಮ್ಮದ್, ಜೊತೆ ಕಾರ್ಯದರ್ಶಿ ಹಮೀದ್, ಸದಸ್ಯ ಅಶ್ರಫ್, ಅಝೀಝ್, ಮಾಜಿ ಕೌನ್ಸಿಲರ್ ಯು .ಎ.ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 10:14 pm

ಬೆಂಗಳೂರಿನ ಯಲಹಂಕದಲ್ಲಿ ದೇಶದಲ್ಲಿಅತಿ ದೊಡ್ಡ ರೈಲ್ವೆ ಮೆಗಾ ಕೋಚಿಂಗ್‌ ಟರ್ಮಿನಲ್‌ ಸ್ಥಾಪನೆ: ವಿ ಸೋಮಣ್ಣ

ಬೆಂಗಳೂರು ಯಲಹಂಕದಲ್ಲಿ ರೈಲ್ವೆ ಮೆಗಾ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣ ಮಾಡುತ್ತಿದ್ದು, ಇದು ದೇಶದ ಅತಿ ದೊಡ್ಡದಾದ ಕೋಚಿಂಗ್‌ ಸೆಂಟರ್‌ ಆಗಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಜತೆಗೆ ಬೆಂಗಳೂರು ತುಮಕೂರು ನಡುವೆ 4 ಪಥದ ರೈಲು ಮಾರ್ಗಕ್ಕೆ ಡಿಪಿಆರ್ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಿಜಯ ಕರ್ನಾಟಕ 17 Feb 2026 10:11 pm

ಸರಕಾರಿ ಶಾಲೆಗಳ ಸೊತ್ತಿಗೆ ಕಿಡಿಗೇಡಿಗಳಿಂದ ಹಾನಿ: ಪ್ರಕರಣ ದಾಖಲು

ಕೋಟ, ಫೆ.17: ಕೆದೂರು ಸರಕಾರಿ ಫ್ರೌಡಶಾಲೆಗೆ ಫೆ.14ರಂದು ರಾತ್ರಿ ವೇಳೆ ನುಗ್ಗಿದ ಕಿಡಿಗೇಡಿಗಳು, ಶಾಲೆಗಳ ಸೊತ್ತುಗಳನ್ನು ಹಾನಿ ಎಸಗಿರುವ ಬಗ್ಗೆ ವರದಿಯಾಗಿದೆ. ಶಾಲಾ ಆವರಣಕ್ಕೆ ನುಗ್ಗಿದ ಕಿಡಿಗೇಡಿಗಳು ಶಾಲೆಯ ನೋಟೀಸ್ ಬೋರ್ಡ್‌ನ ಗಾಜು ಒಡೆದಿದ್ದು, ಒಂದು ತರಗತಿ ಕೋಣೆಗೆ ನುಗ್ಗಿ ಅಲ್ಲಿ ಗೋಡೆಗೆ ಅಳವಡಿಸಿರುವ ಬ್ಯಾನರ್‌ಗಳನ್ನು ಕೆಳಗೆ ಹಾಕಿದ್ದಾರೆನ್ನಲಾಗಿದೆ. ಅಲ್ಲದೆ ಆ ಕೋಣೆ ಯಲ್ಲಿ ಬೆಂಕಿ ಪೆಟ್ಟಿಗೆ ಹಾಗೂ ಟಿಶ್ಯೂ ಪೇಪರ್‌ಗಳು ಕೂಡ ಕಂಡುಬಂದಿದ್ದು, ಹುಡುಗರ ಶೌಚಾಲಯದಲ್ಲಿರುವ ನಳ್ಳಿಗಳನ್ನು ಕಿತ್ತು ಹಾಕಲಾಗಿದೆ. ಕೈ ತೊಳೆಯುವ ಸ್ಟೀಲ್ ಸಿಂಕನ್ನು ಕಿತ್ತು ಶಾಲೆಯ ಮಧ್ಯದ ಗ್ರೌಂಡ್ನಲ್ಲಿ ಬಿಸಾಡಿರುವುದಾಗಿ ಮುಖ್ಯೋಪಾಧ್ಯಾಯಿನಿ ಗೀತಾ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 17 Feb 2026 10:07 pm

ಒಮಾನ್‌ ಹೊರತುಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ಬುಧವಾರ(ಫೆ.18)ದಿಂದ ರಮಝಾನ್ ಉಪವಾಸ ಆರಂಭ

ಜಿದ್ದಾ,ಫೆ.17: ರಮಝಾನ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಒಮಾನ್ ಹೊರತುಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ಬುಧವಾರ(ಫೆ.18)ದಿಂದ ರಮಝಾನ್ ಉಪವಾಸ ಆರಂಭವಾಗಲಿದೆ. ಸೌದಿ ಅರೇಬಿಯ, ಯುಎಇ, ಕುವೈತ್, ಬಹರೈನ್, ಖತರ್ ನಲ್ಲಿ ಚಂದ್ರದರ್ಶನವಾಗಿದ್ದು, ಅಲ್ಲಿ ಬುಧವಾರದಿಂದ ರಮಝಾನ್ ಉಪವಾಸ ಆರಂಭಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಮಾನ್ ನಲ್ಲಿ ಮಾತ್ರ ಗುರುವಾರ(ಫೆ.19)ದಿಂದ ರಮಝಾನ್ ಉಪವಾಸ ಆರಂಭವಾಗಲಿದೆ.

ವಾರ್ತಾ ಭಾರತಿ 17 Feb 2026 10:06 pm

ಹನೆಹಳ್ಳಿ ಕೃಷ್ಣ ಗುಂಡಿಕ್ಕಿ ಕೊಲೆ ಪ್ರಕರಣ: ಸಿಐಡಿ ತನಿಖೆಗೆ ಆಗ್ರಹಿಸಿ ಫೆ.19ರಂದು ಪ್ರತಿಭಟನೆ

ಉಡುಪಿ, ಫೆ.17: ಬ್ರಹ್ಮಾವರ ತಾಲೂಕು ಹನೆಹಳ್ಳಿ ಗ್ರಾಮದಲ್ಲಿ ದಿನಕೂಲಿ ಕಾರ್ಮಿಕ, ಪರಿಶಿಷ್ಟ ಜನಾಂಗದ ಕೃಷ್ಣ ಎಂಬವರನ್ನು ಗುಂಡಿಕ್ಕಿ ಬರ್ಬರ ಹತ್ಯೆ ಮಾಡಿ ಎರಡು ವರ್ಷ ಸಂದರೂ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಹಾಗೂ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಸಮತಾ ಸೈನಿಕ ದಳದ ಉಡುಪಿ ಜಿಲ್ಲಾ ಸಮಿತಿ ಫೆ.19ರಂದು ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಉಡುಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಸಿಐಡಿ ತನಿಖೆಗೆ ಆಗ್ರಹವೂ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸಮತಾ ಸೈನಿಕ ದಳದ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಹೇಳಿದರು. ಅಂಬೇಡ್ಕರ್ ಆವಾಜ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ನೀಡುವ ಹಣವನ್ನು 9 ಲಕ್ಷ ರೂ.ಗಳಿಗೆ ಏರಿಸಬೇಕು, ಓಬಿಸಿ ಬಸವ ಇಂದಿರಾ ಆವಾಜ್ ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷ ರೂ.ಸಹಾಯಧನವನ್ನು ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂಬುದು ತಮ್ಮ ಇತರ ಬೇಡಿಕೆಗಳು ಎಂದು ವಿಶ್ವನಾಥ್ ಪೇತ್ರಿ ತಿಳಿಸಿದರು.

ವಾರ್ತಾ ಭಾರತಿ 17 Feb 2026 10:01 pm

ದಿಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ, ಬಹಿರಂಗ ಸಭೆಗಳಿಗೆ ಒಂದು ತಿಂಗಳು ನಿಷೇಧ

ಹೊಸದಿಲ್ಲಿ,ಫೆ.17: ದಿಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಬಹಿರಂಗ ಸಭೆಗಳು, ಮೆರವಣಿಗೆಗಳು ಮತ್ತು ಯಾವುದೇ ರೀತಿಯ ಪ್ರತಿಭಟನೆಗಳನ್ನು ನಡೆಸುವುದನ್ನು ಫೆ.17ರಿಂದ ಒಂದು ತಿಂಗಳು ಕಾಲ ನಿಷೇಧಿಸಲಾಗಿದೆ. ವಿವಿಯ ಶಿಸ್ತುಪಾಲನಾ ಅಧಿಕಾರಿ ಪ್ರೊ.ಮನೋಜಕುಮಾರ್ ಅವರು ಮಂಗಳವಾರ ಹೊರಡಿಸಿರುವ ಆದೇಶವು ವಿದ್ಯಾರ್ಥಿಗಳು,ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುತ್ತದೆ. ಕ್ಯಾಂಪಸ್‌ನಲ್ಲಿ ಅನಿರ್ಬಂಧಿತ ಬಹಿರಂಗ ಸಮಾವೇಶಗಳು ಸಂಚಾರಕ್ಕೆ ಅಡ್ಡಿ,ಮಾನವ ಜೀವಕ್ಕೆ ಬೆದರಿಕೆ ಮತ್ತು ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗಬಹುದು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕುಮಾರ್ ತನ್ನ ಆದೇಶದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರತಿಭಟನೆಗಳನ್ನು ನಿಯಂತ್ರಿಸಲು ಸಂಘಟಕರು ವಿಫಲಗೊಂಡಿದ್ದರು,ಪರಿಣಾಮವಾಗಿ ವಿವಿ ಕ್ಯಾಂಪಸ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯು ಹದಗೆಟ್ಟಿತ್ತು ಎಂದು ಆದೇಶವು ಬೆಟ್ಟು ಮಾಡಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯ ಆಧಾರದಲ್ಲಿ ಸಹಾಯಕ ಪೋಲಿಸ್ ಆಯುಕ್ತರು ಡಿ.26,2025ರಂದು ಹೊರಡಿಸಿದ್ದ ಆದೇಶವನ್ನೂ ಕುಮಾರ್ ಉಲ್ಲೇಖಿಸಿದ್ದಾರೆ. ಈ ಆದೇಶದ ಪ್ರಕಾರ ಸಾರ್ವಜನಿಕ ಶಾಂತಿಯನ್ನು ಕದಡುವ ಅಥವಾ ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವ ಯಾವುದೇ ಬಹಿರಂಗ ಸಭೆ,ರ್ಯಾಲಿ, ಧರಣಿ,ಪ್ರತಿಭಟನೆ ಅಥವಾ ಇತರ ಯಾವುದೇ ಚಟುವಟಿಕೆಯನ್ನು ವಿವಿ ಕ್ಯಾಂಪಸ್‌ನೊಳಗೆ ನಿಷೇಧಿಸಲಾಗಿದೆ. ಇದೀಗ ಶಿಸ್ತುಪಾಲನಾ ಅಧಿಕಾರಿಗಳು ಹೊರಡಿಸಿರುವ ಆದೇಶವು ಈ ನಿರ್ಬಂಧಗಳನ್ನು ಪುನರುಚ್ಚರಿಸಿದ್ದು,ಒಂದು ತಿಂಗಳು ಕಾಲ ಜಾರಿಯಲ್ಲಿರುತ್ತದೆ. ಫೆ.13ರಂದು ವಿವಿಯ ಉತ್ತರ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಮಹಿಳಾ ಪತ್ರಕರ್ತೆ ಮತ್ತು ಕಂಟೆಂಟ್ ಕ್ರಿಯೇಟರ್ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಉತ್ತರ ದಿಲ್ಲಿ ಡಿಸಿಪಿ ಮತ್ತು ದಿಲ್ಲಿ ವಿವಿ ಕುಲಪತಿಗಳಿಗೆ ನೋಟಿಸ್‌ಗಳನ್ನು ಹೊರಡಿಸಿತ್ತು. ಅದರ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಎನ್‌ಎಚ್‌ಆರ್‌ಸಿ ಪ್ರಕಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗವನ್ನು ಬೆಂಬಲಿಸಿ ನಡೆದಿದ್ದ ಮತ ಪ್ರದರ್ಶನದ ವರದಿಗಾರಿಕೆಯನ್ನು ಮಾಡುತ್ತಿದ್ದಾಗ ಗುಂಪೊಂದು ಪತ್ರಕರ್ತೆಯ ಮೇಲೆ ಹಲ್ಲೆ ನಡೆಸಿತ್ತು. ಪತ್ರಕರ್ತೆಯ ಜಾತಿಯಿಂದಾಗಿ ಗುಂಪು ಆಕೆಯನ್ನು ಗುರಿಯಾಗಿಸಿಕೊಂಡಿತ್ತು, ನಿಂದಿಸಿತ್ತು ಮತ್ತು ದೈಹಿಕ ಹಲ್ಲೆಯನ್ನು ನಡೆಸಿತ್ತು. ಜೊತೆಗೆ ಇನ್ನಷ್ಟು ಹಾನಿಯನ್ನುಂಟು ಮಾಡುವ ಬೆದರಿಕೆಯನ್ನು ಒಡ್ಡಿತ್ತು. ಪತ್ರಕರ್ತೆಯ ಘನತೆಗೆ ಕುಂದನ್ನುಂಟು ಮಾಡುವ ಪ್ರಯತ್ನವೂ ನಡೆದಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಇದು ಜಾತಿ ಆಧಾರಿತ ಹಿಂಸಾಚಾರದ ಪ್ರಕರಣವಾಗಿದೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ಆದಾಗ್ಯೂ ಬೋಧಕ ವೃಂದದ ಕೆಲವರು ನಿಷೇಧ ಆದೇಶವನ್ನು ತೀವ್ರವಾಗಿ ಟೀಕಿಸಿದ್ದು, ಅದನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 17 Feb 2026 9:55 pm

ಉತ್ತರ ಕರ್ನಾಟಕದ ಎರಡು ಜಿಲ್ಲೆಗಳು ಸೇರಿದಂತೆ ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳ ಜವಾಬ್ದಾರಿ ಎನ್‌ಎಚ್‌ಎಐ ಹೆಗಲಿಗೆ

NHAI: ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳನ್ನು ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಿಂದ ಹೊರತೆಗೆದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮತಿ ನೀಡಿದೆ. ಈ ಕ್ರಮದಿಂದ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಥವಾಗಿ ನಡೆಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು, ಕೇರಳ

ಒನ್ ಇ೦ಡಿಯ 17 Feb 2026 9:42 pm

ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಜೇಶ್ ಅಚ್ಲಾಡಿ ಪುನರಾಯ್ಕೆ

ಬ್ರಹ್ಮಾವರ, ಫೆ.17: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬ್ರಹ್ಮಾವರ ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯವಾಣಿಯ ರಾಜೇಶ್ ಗಾಣಿಗ ಅಚ್ಲಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ವಿಜಯ ಕರ್ನಾಟಕದ ಚಂದ್ರಶೇಖರ್ ಬೀಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬ್ರಹ್ಮಾವರ ಗಜಾನನ ಭವನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರಜಾವಾಣಿಯ ಶೇಷಗಿರಿ ಭಟ್, ಕೋಶಾಧಿಕಾರಿಯಾಗಿ ವಿಜಯವಾಣಿಯ ರವೀಂದ್ರ ಕೆ., ಕಾರ್ಯ ದರ್ಶಿಯಾಗಿ ಹರೀಶ್ ಕಿರಣ್ ತುಂಗ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಬಂಡಿಮಠ ಶಿವರಾಮ ಆಚಾರ್ಯ, ಉದಯ ಆಚಾರ್ಯ, ಅಲ್ತಾರು ನಾಗರಾಜ್, ಪ್ರವೀಣ್ ವಿ., ಅನಂತ ನಾಯಕ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಹಾಗೂ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್ ಸಹಕರಿಸಿದರು.

ವಾರ್ತಾ ಭಾರತಿ 17 Feb 2026 9:37 pm

ಸೂರತ್ - ಮಂಗಳೂರು ಜಂಕ್ಷನ್ ರೈಲಿನ ಸಂಚಾರ ಅವಧಿ ವಿಸ್ತರಣೆ

ಉಡುಪಿ, ಫೆ.17: ವಾರದಲ್ಲಿ ಎರಡು ಬಾರಿ ಸಂಚರಿಸುವ ರೈಲು ನಂ. 09057/09058 ಸೂರತ್- ಮಂಗಳೂರು ಜಂಕ್ಷನ್- ಸೂರತ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸಂಚಾರವನ್ನು ಸಮಯದ ಬದಲಾವಣೆಯೊಂಗಿಗೆ ಮಾರ್ಚ್ ಕೊನೆಯವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಸೂರತ್-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಫೆ.25-26ರವರೆಗೆ ಮಾತ್ರ ನಿಗದಿ ಯಾಗಿತ್ತು. ಇದೀಗ ಇದನ್ನು ಮಾ29-30ಕ್ಕೆ ವಿಸ್ತರಿಸಿದೆ. ಇದರೊಂದಿಗೆ ಮಾ.1ರಿಂದ (ಸೂರತ್‌ನಿಂದ) ಹಾಗೂ ಮಾ.2 (ಮಂಗಳೂರು ಜಂಕ್ಷನ್‌ನಿಂದ ) ಈ ರೈಲಿನ ಸಂಚಾರ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಈಗಿನ ಸಂಚಾರ ಸಮಯದಂತೆ ರೈಲು ನಂ.09057 ಸೂರತ್‌ನಿಂದ ಪ್ರತಿ ಬುಧವಾರ ಹಾಗೂ ರವಿವಾರದಂದು (ಮಾ.1, 4, 8, 11, 15, 18, 22, 25, 29) ರಾತ್ರಿ 7:35ಕ್ಕೆ ಹೊರಡಲಿದೆ. ಈ ರೈಲು ಮರುದಿಂ ಸಂಜೆ 7:45ಕ್ಕೆ ಮಂಗಳೂರು ಜಂಕ್ಷನ್ ನಿಲ್ದಾಣ ತಲುಪಲಿದೆ. ಅದೇ ರೀತಿ ರೈಲು ನಂ. 09058 ಮಂಗಳೂರು ಜಂಕ್ಷನ್‌ನಿಂದ ಪ್ರತಿ ಗುರುವಾರ ಮತ್ತು ಸೋಮವಾರದಂದು (ಮಾ.2, 5, 9, 12, 16, 19, 23, 26, 30) ರಾತ್ರಿ 10:30ಕ್ಕೆ ಹೊರಡಲಿದ್ದು, ಮರುದಿನ ರಾತ್ರಿ 11:45ಕ್ಕೆ ಸೂರತ್ ನಿಲ್ದಾಣ ತಲುಪಲಿದೆ. ಈ ರೈಲಿಗೆ ಉಡ್ನಾ ಜಂಕ್ಷನ್, ವಲ್ಸಾಡ್, ವಾಪಿ, ಪಲ್ಗಾರ್, ವಾಸೈ ರೋಡ್, ಭಿವಂಡಿ ರೋಡ್, ಪನ್ವೇಲ್, ಪೆನ್, ರೋಹಾ, ಖೇಡ್, ಚಿಪ್ಳುಣ್, ಸರ್ವಾಡ, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ ರೋಡ್, ವೈಭವವಾಡಿ ರೋಡ್, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾಣಕೋನಾ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 17 Feb 2026 9:31 pm

ಮಾ.15ವರೆಗೆ ಅಸಂಘಟಿತ ವಲಯ ಕಾರ್ಮಿಕರ ನೊಂದಣಿ ಅಭಿಯಾನ

ಉಡುಪಿ : ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸಲು ಜಿಲ್ಲೆಯಲ್ಲಿ ಈಗಾಗಲೇ ಪ್ರಾರಂಭಿಸಲಾ ಗಿರುವ ವಿಶೇಷ ನೋಂದಣಿ ಅಭಿಯಾನ ಮಾರ್ಚ್ 15ರವರೆಗೆ ನಡೆಯಲಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ಪ್ರಗತಿ ಪರಿಶೀಲನೆಗೆ ಇಲಾಖಾ ಅಧಿಕಾರಿ ಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ ಹಾಗೂ ಮೊದಲನೇ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗಿ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಅವರು ತಿಳಿಸಿದರು. ಆದರೆ ಆದಾಯ ತೆರಿಗೆ ಪಾವತಿದಾರರು, ಸಂಘಟಿತ ವಲಯದ ಕಾರ್ಮಿಕರು, ಇ.ಎಸ್.ಐ/ಪಿ.ಎಫ್ ಯೋಜನೆಗೆ ಒಳಪಟ್ಟವರು ಈ ಯೋಜನೆಗೆ ಅರ್ಹರಿರುವುದಿಲ್ಲ. ಹೆಚ್ಚಿನ ಸಂಖ್ಯೆಯ ಅಸಂಘಟಿತ ಕಾರ್ಮಿಕ ರನ್ನು ನೋಂದಣಿ ಮಾಡಿಸುವುದರೊಂದಿಗೆ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳಿಗೆ ಸಂಸದ ಕೋಟ ಸೂಚನೆ ನೀಡಿದರು. ಅಸಂಘಟಿತ ಕಾರ್ಮಿಕರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ಕಾರ್ಮಿಕರಿಗೆ ಅವರ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರಕಾರ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಎಂಬ ಮಹತ್ವಾಕಾಂಕ್ಷಿ ವಂತಿಕೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಅಸಂಘಟಿತ ಕಾರ್ಮಿಕರು ಹೆಚ್ಚೆಚ್ಚು ನೋಂದಾವಣೆ ಗೊಳ್ಳುವುದ ರೊಂದಿಗೆ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು. ಅಸಂಘಟಿತ ಕಾರ್ಮಿಕರು ಹೆಚ್ಚು ವಾಸಿಸುವ ಪ್ರದೇಶಗಳು, ಕಾರ್ಮಿಕರು ಸೇರುವಂತಹ ವಿವಿಧ ಇಲಾಖೆಗಳ ಸಭೆಗಳಲ್ಲಿ ಈ ಯೋಜನೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ನೋಂದಣಿ ಅಭಿಯಾನ ಯಶಸ್ವಿಗೊಳಿಸುವಂತೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ರ್ಕಾುಕ ಅಧಿಕಾರಿ ಜಿಲ್ಲಾ ರ್ಕಾುಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಧ ಜಿಲ್ಲಾ ಮಟ್ಟದ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ 7225 ಮಂದಿ ನೊಂದಣಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ವಿಶೇಷ ನೋಂದಣಿ ಅಭಿಯಾನದಡಿ ಜಿಲ್ಲೆಯಲ್ಲಿ 7275 ಕಾರ್ಮಿಕರನ್ನು ನೋಂದಾಯಿಸಲು ಗುರಿ ನಿಗದಿ ಪಡಿಸಿದ್ದು, ಯೋಜನೆ ಪ್ರಾರಂಭದಿಂದ ಈವರೆಗೆ 7225 ಮಂದಿ ಅಸಂಘಟಿತ ಕಾರ್ಮಿಕರು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ ಎಂದರು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ವಿಶೇಷ ನೋಂದಣಿ ಅಭಿಯಾನ ದಲ್ಲಿ ನೋಂದಣಿ ಮಾಡಿಕೊಳ್ಳುವು ದರೊಂದಿಗೆ ನಿಗದಿ ಪಡಿಸಿದ ಗುರಿ ಸಾಧನೆಗೆ ಮುಂದಾಗಬೇಕು ಎಂದ ಅವರು, ಮನೆಗೆಲಸ ನಿರ್ವಹಿಸುವ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.

ವಾರ್ತಾ ಭಾರತಿ 17 Feb 2026 9:29 pm

ಮಲ್ಪೆ| ಪಾಕಿಸ್ತಾನಕ್ಕೆ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ ಪ್ರಕರಣ: ಮತ್ತೋರ್ವ ಆರೋಪಿ ಸೆರೆ

ಮಲ್ಪೆ, ಫೆ.17: ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನ ನೌಕರರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಪಶ್ಚಿಮ ಬಂಗಾಲ ಮೂಲದ ಪ್ರಸ್ತುತ ಕೇರಳ ರಾಜ್ಯದ ಇಡುಕಿ ಜಿಲ್ಲೆಯ ಮರಾಯು ಗ್ರಾಮದ ಆಲಿಫ್ ಇಸ್ಲಾಮ್(21) ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಈ ಹಿಂದೆ 2025ರ ಡಿ.21ರಂದು ಗುಜರಾತ್ ರಾಜ್ಯದ ಹೀರೇಂದ್ರ ಕುಮಾರ್ (34) ಹಾಗೂ 2025ರ ನ.21ರಂದು ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಬಂಧಿಸಲಾಗಿತ್ತು. ಇವರೆಲ್ಲ ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿ ಯನ್ನು ವಾಟ್ಸಾಪ್ ಹಾಗೂ ಫೇಸ್ ಬುಕ್ ಮೂಲಕ ಪಾಕಿಸ್ತಾನಕ್ಕೆ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದ ತನಿಖೆ ಮಂದುವರಿ ಸಿದ ಪೊಲೀಸರು, ಐದನೇ ಆರೋಪಿ ಆಲಿಫ್ ಇಸ್ಲಾಮ್‌ನನ್ನು ಫೆ.16ರಂದು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಫೆ.2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತ ಈ ಪ್ರಕರಣದ ಐದನೇ ಆರೋಪಿಯಾಗಿದ್ದು, ಆರೋಪಿಗಳು ಗೌಪ್ಯ ಮಾಹಿತಿ ರವಾನಿಸಲು ಬಳಸಿಕೊಂಡಿರುವ ಫೇಸ್ ಬುಕ್ ಪೇಜ್‌ನ ಮಾಲಕನ ಬಂಧನ ಬಾಕಿ ಇದೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆಂದು ತಿಳಿದುಬಂದಿದೆ.

ವಾರ್ತಾ ಭಾರತಿ 17 Feb 2026 9:22 pm

ಕಾಂಗ್ರೆಸ್ ಸರ್ಕಾರದ್ದು 1000 ದಿನಗಳ ದುರಾಡಳಿತ: ಕನ್ನಡಿಗರಿಗೆ ಸಿಕ್ಕಿದ್ದು 'ಚಿಪ್ಪು', 16 ಅಂಶಗಳ ಪಟ್ಟಿ ಕೊಟ್ಟ ವಿ.ಸೋಮಣ್ಣ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1000 ದಿನಗಳಾಗಿವೆ. ಈ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯನವರು ನಡೆಸಿರುವುದು ಕೇವಲ 'ದುರಾಡಳಿತ, ಭ್ರಷ್ಟ ಆಡಳಿತ, ಅಭಿವೃದ್ಧಿಹೀನ ಆಡಳಿತ'ವಷ್ಟೇ. ನುಡಿದಂತೆ ನಡೆಯುತ್ತೇವೆ ಎಂದು ಅಧಿಕಾರಕ್ಕೇರಿದ ಸಿದ್ದರಾಮಯ್ಯನವರು ಮಾಡಿದ್ದು, 'ಆತ್ಮರತಿ'ಯ ಆಡಳಿತ. ಕರುನಾಡು ಈ ಅವಧಿಯಲ್ಲಿ ಒಂದು ಸಮೃದ್ಧ ರಸ್ತೆ ಕಾಣಲಿಲ್ಲ, ಉತ್ತಮ ಮೂಲ ಸೌಕರ್ಯಗಳನ್ನೂ ಕಾಣಲಿಲ್ಲ ಎಂದು ರೈಲ್ವೆ ಖಾತೆ

ಒನ್ ಇ೦ಡಿಯ 17 Feb 2026 9:14 pm

ಸೇವಾ ಮನೋಭಾವ ಬೆಳೆಸಿ ಸಮಾಜಕ್ಕೆ ಕೊಡುಗೆ ನೀಡಿ: ಡಾ.ಎಂ. ಮಲ್ಲಿಕಾರ್ಜುನ ಗೌಡ

ಪಿ.ಎ. ಕಾಲೇಜ್ ಆಫ್ ಫಾರ್ಮಸಿ ವಾರ್ಷಿಕೋತ್ಸವ “ಎಪಿಸ್ಟೀಮ್ 2K26”

ವಾರ್ತಾ ಭಾರತಿ 17 Feb 2026 9:06 pm

Yadgiri | ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಬಾಲಕ ಮೃತ್ಯು

ಯಾದಗಿರಿ:  ಖಾಸಗಿ ಶಾಲಾ ಬಸ್ ಹರಿದು ನಾಲ್ಕು ವರ್ಷದ ಬಾಲಕ ಮೃತಪಟ್ಟ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಪುನೀತ್ (4) ಎಂದು ಗುರುತಿಸಲಾಗಿದೆ. ಗಾಜರಕೋಟ್ ಗ್ರಾಮದ ನಿವಾಸಿಯಾಗಿದ್ದ ಪುನೀತ್, ಸ್ಥಳೀಯ ವಿಸ್ಡಮ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಪ್ರತಿದಿನದಂತೆ ಶಾಲಾ ಬಸ್ ವಿದ್ಯಾರ್ಥಿಗಳನ್ನು ಮನೆಗೆ ಬಿಡಲು ಬಂದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳನ್ನು ಕೆಳಗಿಳಿಸಿದ ನಂತರ ಚಾಲಕ ಮುನ್ನೆಚ್ಚರಿಕೆ ವಹಿಸದೆ ಬಸ್ ಅನ್ನು ರಿವರ್ಸ್ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಈ ವೇಳೆ ಬಸ್ ಹಿಂಭಾಗದಲ್ಲಿ ನಿಂತಿದ್ದ ಪುನೀತ್ ಹಿಂಬದಿ ಚಕ್ರದಡಿ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 17 Feb 2026 9:04 pm

ಫೆ.28ರಂದು ಯೆನೆಪೋಯ ಪರಿಗಣಿತ ವಿ.ವಿ.ಯಲ್ಲಿ ರಾಷ್ಟ್ರೀಯ ಸಮ್ಮೇಳನ

ಮಂಗಳೂರು , ಫೆ.17: ದೇರಳಕಟ್ಟೆಯ ಯೆನೆಪೋಯ ಪರಿಗಣಿತ ವಿ.ವಿ.ಯ ಯೆನೆಪೋಯ ನರ್ಸಿಂಗ್ ಕಾಲೇಜಿನ ನರ್ಸಿಂಗ್ ಶಿಕ್ಷಣ ವಿಭಾಗ ಮತ್ತು ಪ್ರಥಮ ವರ್ಷದ ಎಂ.ಎಸ್ಸಿ ವಿಭಾಗದ ವತಿಯಿಂದ ಡಿಜಿಟಲ್ ಬೋಧನ ಕಲೆ ವಿಷಯದ ಬಗ್ಗೆ ಫೆ.28ರಂದು ಬೆಳಗ್ಗೆ 10ರಿಂದ ಸಂಸ್ಥೆಯ ಯೆಂಡೋರೆನ್ಸ್ ಸಭಾಂಗಣದಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಲಕ್ಷ್ಮೀ ಮೆಮೋರಿಯಲ್ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಲರಿಸ್ಸಾ ಮಾರ್ಥಾ ಸ್ಯಾಮ್ಸ್ ಮತ್ತು ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಶ್ವಿನಿ ದತ್ ಮುಖ್ಯ ಅತಿಥಿಗಳಾಗಿ ಆಗಮಿಸಲಿ ದ್ದಾರೆ. ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಲೀನಾ ಕೆ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡು ಮಾದರಿಗಳಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಅಧ್ಯಕ್ಷೆ ಡಾ. ಪ್ರಿಯಾ ರೇಷ್ಮಾ ಅರಾನ್ಹಾ ಮತ್ತು ಕಾರ್ಯದರ್ಶಿ ನಿತ್ಯಶ್ರೀ ಬಿ.ವಿ.ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 9:02 pm

ಮೇಘಾಲಯ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ಜೆ. ಆರ್. ಲೋಬೊ

ಮಂಗಳೂರು, ಫೆ.17: ದೇಶದ ಈಶಾನ್ಯ ರಾಜ್ಯಗಳಲ್ಲಿ ಒಂದಾಗಿರುವ ಮೇಘಾಲಯ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ಅವರನ್ನು ನಿಯೋಜಿಸಿದೆ. ಪಕ್ಷದ ಸಂಘಟನೆಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಸಂಘಟನ್ ಸೃಜನ್ ಅಭಿಯಾನ್ ಕಾರ್ಯಕ್ರಮದ ಅನುಷ್ಠಾನ ಪ್ರಕ್ರಿಯೆ, ಸಮಿತಿಗಳ ಪುನರ್ ರಚನೆ ಕುರಿತು ಸಮಗ್ರ ವರದಿ ಯನ್ನು ಪಕ್ಷದ ವರಿಷ್ಠರಿಗೆ ತಲುಪಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಫೆ.18ರಿಂದ 25ರ ವರೆಗೆ ಅವರು ಮೇಘಾಲಯದ ರೀ ಭೋಯ್ ಜಿಲ್ಲೆಯ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಸಭೆಗಳಲ್ಲಿ ಹಾಜರಾಗಲಿ ದ್ದಾರೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 17 Feb 2026 8:58 pm

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈಶ್ವರ್ ಖಂಡ್ರೆ ಅವರ ಕೊಡುಗೆ ಅಪಾರ : ಡಾ. ಬಸವಲಿಂಗ ಪಟ್ಟದೇವರು

ಭಾಲ್ಕಿ: ಸಚಿವ ಈಶ್ವರ್ ಖಂಡ್ರೆ ಅವರು ಕಲ್ಯಾಣ ಕರ್ನಾಟಕ ಭಾಗದ ಜನರ ಕಷ್ಟಗಳನ್ನು ನಿಭಾಯಿಸುತ್ತಿದ್ದು, ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಅಭಿಪ್ರಾಯಪಟ್ಟರು. ಪಟ್ಟಣದ ಚನ್ನಬಸವ ಆಶ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಈಶ್ವರ್ ಖಂಡ್ರೆ ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಖಂಡ್ರೆ ಅವರು ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಯಾಗಿ ಸೇವೆ ಸಲ್ಲಿಸಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅನುಭವ ಮಂಟಪ ನಿರ್ಮಾಣಕ್ಕೂ ಅವರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ರಾಜಕೀಯ ಎಂದರೆ ಸಮಾಜ ಸೇವೆ ಎಂಬ ಸಂದೇಶವನ್ನು ತಮ್ಮ ತಂದೆಯಿಂದ ಪಡೆದಿದ್ದಾಗಿ ಹೇಳಿದರು. ಕ್ಷೇತ್ರದ ಜನರ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಪ್ರಸ್ತುತ ಅರಣ್ಯ ಸಚಿವನಾಗಿ ಪರಿಸರ ಮತ್ತು ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡುತ್ತಿದ್ದೇನೆ ಎಂದರು. ಭಾಲ್ಕಿ ಕ್ಷೇತ್ರದ ಗೌರವವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಮನುಷ್ಯ ಮಾಡಿದ ಸೇವೆ ಶಾಶ್ವತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ನೂತನ ಅನುಭವ ಮಂಟಪವನ್ನು 2027ರ ಮಾರ್ಚ್ ಒಳಗಾಗಿ ಲೋಕಾರ್ಪಣೆ ಮಾಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ಗೀತಾ ಈಶ್ವರ್ ಖಂಡ್ರೆ, ಅಭಿನಂದನಾ ಸಮಾರಂಭದ ಅಧ್ಯಕ್ಷ ರಾಜಶೇಖರ್ ಅಷ್ಟೂರೆ, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ, ದೀಪಕ್ ಸೇರಿದಂತೆ ಅನೇಕರು ಇದ್ದರು.  

ವಾರ್ತಾ ಭಾರತಿ 17 Feb 2026 8:57 pm

ಹುಮನಾಬಾದ್ | ಮದನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಹುಮನಾಬಾದ್ : ತಾಲೂಕಿನ ದುಬಲಗುಂಡಿ ಗ್ರಾಮದ ಮದನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಮದನಿ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಹೆಚ್ ಕೆ ಡಿ ಇ ಟಿ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಿತು. ಶಿಬಿರದಲ್ಲಿ 80ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ತಮ್ಮ ಹಲ್ಲಿನ ಪರೀಕ್ಷೆ ಮಾಡಿಸಿಕೊಂಡರು. ವಿದ್ಯಾರ್ಥಿಗಳಿಗೆ ಹಲ್ಲು ಸ್ವಚ್ಛತೆ ಹಾಗೂ ಆರೋಗ್ಯವಾಗಿಡುವ ವಿಧಾನದ ಕುರಿತು ದಂತ ವೈದ್ಯಕೀಯ ವಿದ್ಯಾರ್ಥಿಗಳು ತಿಳಿಸಿದರು. ಗ್ರಾಮದ ಸುಮಾರು 30ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಪಾಲ್ಗೊಂಡು ಹಲ್ಲಿನ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಮದನಿ ಇಂಟರ್ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷೆ ಮುಫ್ತಿ ತೌಸಿಫ್ ಖಾನ್, ಡಾ.ಸಂದೀಪ್, ಸ್ಥಳೀಯ ನಿವಾಸಿಗಳಾದ ಇರ್ಫಾನ್, ಸೈಯದ್ ಆಸೀಫ್ ಹಾಗೂ ಜಾವೀದ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 8:53 pm

‘ಆನ್‍ಲೈನ್ ಸುರಕ್ಷತೆ ಹಾಗೂ ಚಿಣ್ಣರ ರಕ್ಷಣೆ: ಕರ್ನಾಟಕ, ಫ್ರಾನ್ಸ್ ಚರ್ಚೆ’ | ನಾವೀನ್ಯತೆ, ಕೌಶಲ ಮತ್ತು ವೈಮಾಂತರಿಕ್ಷ ವಲಯಗಳಲ್ಲಿ ಸಹಯೋಗ ಹೆಚ್ಚಿಸಲು ಒಲವು

ಬೆಂಗಳೂರು : ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಫ್ರಾನ್ಸ್ ಜೊತೆಗಿನ ಸಹಕಾರ ಬಲಪಡಿಸಲು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಮಂಗಳವಾರ ಬೆಂಗಳೂರಿನಲ್ಲಿ ಫ್ರಾನ್ಸ್‌ ನ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ವ್ಯವಹಾರ ಸಚಿವೆ ಆ್ಯನ್ ಲಿ ಹೆನಾಫ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ನಾವೀನ್ಯತೆ, ಕೌಶಲ, ಕೃತಕ ಬುದ್ಧಿಮತ್ತೆ (ಎಐ), ವೈಮಾಂತರಿಕ್ಷ ಮತ್ತು ರಕ್ಷಣಾ ಉತ್ಪಾದನೆ, ನವೋದ್ಯಮ ಮತ್ತು ಡಿಜಿಟಲ್ ಆಡಳಿತದಲ್ಲಿ ಪರಸ್ಪರ ಸಹಯೋಗ ವಿಸ್ತರಿಸುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಫ್ರಾನ್ಸ್‌ ನಲ್ಲಿ ಕುಶಲ ಎಂಜಿನಿಯರ್‍ಗಳು ಮತ್ತು ತಂತ್ರಜ್ಞಾನ ವೃತ್ತಿಪರರ ಹೆಚ್ಚುತ್ತಿರುವ ಅಗತ್ಯದ ವಿವರಗಳನ್ನು ಹಂಚಿಕೊಂಡ ಫ್ರಾನ್ಸ್ ನಿಯೋಗವು, ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಲ್ಲಿ ಕರ್ನಾಟಕದ ಜೊತೆಗೆ ಕೆಲಸ ಮಾಡಲು ತೀವ್ರ ಆಸಕ್ತಿ ವ್ಯಕ್ತಪಡಿಸಿತು. ಭಾರತದಲ್ಲಿ ಸೇವೆ ಹಾಗೂ ವಹಿವಾಟು ವಿಸ್ತರಿಸಲು ಉದ್ದೇಶಿಸಿರುವ ಫ್ರಾನ್ಸ್ ಕಂಪನಿಗಳಿಗೆ ಬೆಂಗಳೂರು ಮಹಾದ್ವಾರ ಆಗಲಿದೆ. ಪ್ಯಾರಿಸ್ ನಮ್ಮ ನವೋದ್ಯಮಗಳ ಪಾಲಿಗೆ ಫ್ರಾನ್ಸ್ ಮತ್ತು ಯುರೋಪ್ ಒಕ್ಕೂಟದ ಮಾರುಕಟ್ಟೆ ಪ್ರವೇಶಿಸಲು ಮಹಾದ್ವಾರ ಆಗಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಫ್ರಾನ್ಸ್ ಸರಕಾರದ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ವ್ಯವಹಾರಗಳ ಸಚಿವೆ ಆ್ಯನ್ ಲಿ ಹೆನಾಫ್ ಮಾತನಾಡಿ, ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡುವುದು ಹಾಗೂ ಸುರಕ್ಷತೆ ಬಲಪಡಿಸುವುದು ಸದ್ಯದ ತುರ್ತು ಅಗತ್ಯವಾಗಿದೆ. ತಂತ್ರಜ್ಞಾನವು ಸಮಾಜಕ್ಕೆ ಪ್ರಯೋಜನ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವೀನ್ಯತೆ, ನಿಯಂತ್ರಣ ಮತ್ತು ಸಾರ್ವಜನಿಕ ನೀತಿ ಸಂಯೋಜಿಸುವ ಮೂಲಕ ಜವಾಬ್ದಾರಿಯುತ, ವಿಶ್ವಾಸಾರ್ಹ ಮತ್ತು ಕೃತಕ ಜಾಣ್ಮೆ ಕ್ಷೇತ್ರಗಳಲ್ಲಿ ನಾವು ಕರ್ನಾಟಕದ ಜೊತೆ ಸಹಯೋಗದಿಂದ ಕೆಲಸ ಮಾಡುವ ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್. ಮತ್ತು ಇಲಾಖೆಯ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 8:52 pm

ಎಲ್ಲರ ಕಾಲೆಳೆಯುತ್ತೆ ಕಾಲ; ಮಿಚೆಲ್ ಮಾರ್ಷ್ 2023ರ ವಿಶ್ವಕಪ್ ಮೇಲೆ ಕಾಲಿಟ್ಟದ್ದಕ್ಕೇ ಸೋಲುತ್ತಿದೆಯೇ ಆಸ್ಟ್ರೇಲಿಯಾ?

Australia Team Downfall After 2023 World Cup-ಗೆಲುವಿನೊಂದಿಗೆ ವಿನಯತೆ ಬರಬೇಕು, ದುರಂಹಕಾರವಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ವರ್ತನೆಯನ್ನು ಹಿಂದಿನಿಂದಿಲೂ ಗಮನಿಸುತ್ತಾ ಬಂದವರಿಗೆ ಅವರೆಂತಹಾ ದುರಂಹಂಕಾರಿಗಳು ಎಂಬುದು ಚೆನ್ನಾಗಿ ಗೊತ್ತು. 2023ರ ವಿಶ್ವಕಪ್ ನ ಮೇಲೆ ಮಿಚೆಲ್ ಮಾರ್ಷ್ ಕಾಲಿಟ್ಟಾಗಲೇ ಇವರ ವರ್ತನೆ ಜಗತ್ತಿನ ಕಣ್ಣು ಕೆಂಪಗಾಗಿಸಿತ್ತು. ಅಂದೇ ಈ ವಿಶ್ವಶ್ರೇಷ್ಠ ತಂಡದ ಪತನ ಶುರುವಾಯಿತಾ? ಇದೀಗ ಐಸಿಸಿ ಟಿ20 ವಿಶ್ವಕಪ್ ನ ಗುಂಪು ಹಂತದಿಂದಲೇ ಆಸ್ಟ್ರೇಲಿಯಾ ತಂಡ ಹೊರಬಿದ್ದಿರುವಾಗ ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಮಾತು ಕೇಳಿ ಬರುತ್ತಿದೆ.

ವಿಜಯ ಕರ್ನಾಟಕ 17 Feb 2026 8:52 pm

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಗೆ 17,181 ಪರೀಕ್ಷಾರ್ಥಿಗಳು: ಡಿಸಿ ಸ್ವರೂಪಾ ಟಿ.ಕೆ.

ಉಡುಪಿ, ಫೆ.17: ಈ ಬಾರಿಯ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ಇದೇ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ಉಡುಪಿ ಜಿಲ್ಲೆಯ 29 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಪ್ರಸ್ತುತ ವರ್ಷ ಒಟ್ಟಾರೆಯಾಗಿ 17,181 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವಿಡಿಯೋ ಕಾನ್ಫ್‌ರೆನ್ಸ್ ಸಭಾಂಗಣದಲ್ಲಿ ಇಂದು ನಡೆದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-01ನ್ನು ಸುವ್ಯವಸ್ಥಿತವಾಗಿ ನಡೆಸುವ ಕುರಿತು ಆಯೋಜಿ ಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈ ಸಲ ಪರೀಕ್ಷೆ ಬರೆಯುವ 17,181 ವಿದ್ಯಾರ್ಥಿಗಳಲ್ಲಿ ಹೊಸದಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 16,657. ಉಳಿದಂತೆ 383 ಖಾಸಗಿ ಅಭ್ಯರ್ಥಿಗಳು, 135 ಪುನರಾವರ್ತಿತ ಅಭ್ಯರ್ಥಿಗಳು, 6 ಮಂದಿ ತಮ್ಮ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿದ್ದು, ಪರೀಕ್ಷೆಯು ಬೆಳಗ್ಗೆ 10 ರಿಂದ ಅಪರಾಹ್ನ 1:00 ಗಂಟೆಯವರೆಗೆ ನಿಗದಿತ ದಿನಾಂಕಗಳಲ್ಲಿ ನಡೆಯಲಿವೆ ಎಂದರು. ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡುವ ಜೊತೆಗೆ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ ಸುಗಮವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ದ್ವಿತೀಯ ಪಿಯುಸಿ ಪರೀಕ್ಷೆ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರ ಭವಿಷ್ಯದ ವಿದ್ಯಾಭ್ಯಾಸಕ್ಕೆ ಅತಿ ಮುಖ್ಯ ಹಾಗೂ ಮಹತ್ವದ ಘಟ್ಟವಾಗಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಪರೀಕ್ಷೆಯನ್ನು ವ್ಯವಸ್ಥಿತ ಹಾಗೂ ದೋಷರಹಿತವಾಗಿ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯುವ ವಾತಾವರಣ ಕಲ್ಪಿಸಬೇಕು ಎಂದರು. ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರುಪಡಿಸಿದ ನಂತರವೇ ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುಮತಿ ನೀಡಲಾಗುವುದು. ವಿದ್ಯಾರ್ಥಿಗಳು ಪರೀಕ್ಷಾ ದಿನಗಳಂದು ಮೊಬೈಲ್, ಸ್ಮಾರ್ಟ್‌ವಾಚ್ ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ಮಾಹಿತಿ ಯನ್ನು ಹಬ್ಬಿಸುವುದು ಅಥವಾ ನಕಲಿ ಪ್ರಶ್ನೆ ಪತ್ರಿಕೆ ಮೂಲಕ ಆರ್ಥಿಕ ಲಾಭಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಪರೀಕ್ಷಾ ದಿನಗಳಂದು ಪರೀಕ್ಷಾ ಸಮಯದಲ್ಲಿ ಕೇಂದ್ರ ಸುತ್ತಮುತ್ತ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಈ ಪ್ರದೇಶದಲ್ಲಿ ಜೆರಾಕ್ಸ್, ಸೈಬರ್, ಕಂಪ್ಯೂಟರ್ ಸೆಂಟರ್ ಗಳನ್ನು ಮುಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಅಪರಿಚಿತ ವ್ಯಕ್ತಿಗಳು ಕೇಂದ್ರದ ಸುತ್ತಮುತ್ತ ಓಡಾಡದಂತೆ ಎಚ್ಚರ ವಹಿಸಲಾಗುವುದು ಎಂದರು. ಪ್ರತೀ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ಸಾಗಾಟ ಮಾಡಲು ಮೂರು ಜನ ಸದಸ್ಯರ ಸಮಿತಿಯನ್ನು ನೇಮಿಸ ಲಾಗಿದೆ. ಇವರ ವಾಹನಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ರಶ್ನೆಪತ್ರಿಕೆ ಸಾಗಾಣಿಕೆ ಮಾಡುವ ವಾಹನಕ್ಕೆ ಜಿಪಿಆರ್‌ಎಸ್ ಅಳವಡಿಸಿ ಮಾನಿಟರ್ ಮಾಡಲು ವ್ಯವಸ್ಥೆ ಮಾಡಲಾಗಿದೆ. 24*7 ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿಯೇ ಖಜಾನೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಠೇವಣೀಕರಿಸಿರುವ ಮತ್ತು ವಿತರಿಸುವ ಬಗ್ಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರ ಗಳಿಗೆ ಅವಶ್ಯಕತೆಗನುಗುಣವಾಗಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸ್ವರೂಪಾ ಟಿ.ಕೆ. ತಿಳಿಸಿದರು. ಪರೀಕ್ಷಾ ಕೇಂದ್ರದ ಅಧೀಕ್ಷಕರಿಗೆ ತರಬೇತಿ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ತಮ್ಮ ಕೇಂದ್ರ ದಲ್ಲಿ ಕರ್ತವ್ಯ ನಿರ್ವಹಿಸುವ ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಇಲಾಖೆಯಿಂದ ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಹಾಗೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಜಾಗೃತದಳದ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಸಹಾಯಕ ಕಮಿಷನರ್ ರಶ್ಮಿ,, ಡಿಡಿಪಿಯು ಮಾರುತಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಶೀಲ್ದಾರರುಗಳು, ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರುಗಳು ಹಾಗೂ ಇತರರು ಉಪಸ್ಥಿತರಿದ್ದರು. ‘ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಹಾಗೂ ಅಳವಡಿಸಿರುವುದನ್ನು ಅಧಿಕಾರಿಗಳು ಖಚಿತ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸೂಕ್ತ ಆಸನ, ಬೆಳಕು, ಫ್ಯಾನ್, ಕುಡಿಯುವ ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಬೇಕು. ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಇರುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಪರೀಕ್ಷಾ ಕೇಂದ್ರದಲ್ಲಿ ವೈದ್ಯರನ್ನೊಳಗೊಂಡ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ.’ -ಸ್ವರೂಪಾ ಟಿ.ಕೆ., ಜಿಲ್ಲಾಧಿಕಾರಿ. ಶಿಕ್ಷಣ ಸಚಿವರಿಂದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಸೂಚನೆ ಸಭೆಗೆ ಮುನ್ನ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಪಿಯುಸಿ ಪರೀಕ್ಷೆ ಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಗೊಂದಲ ಹಾಗೂ ಧೈರ್ಯಗೆಡದೆ ನಿರಾತಂಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆಗಳನ್ನು ಮಾಡಿಕೊಡ ಬೇಕು. ಪರೀಕ್ಷೆ ಕುರಿತು ಯಾವುದೇ ರೀತಿಯ ವದಂತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ನಕಲಿ ಸುದ್ದಿಗಳಿಗೆ ಕಿವಿಗೊಡದೆ ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಸಿಸಿಟಿವಿ, ವೆಬ್‌ಕಾಸ್ಟಿಂಗ್ ಮತ್ತು ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಶಿಕ್ಷಣ ಸಚಿವರು ತಿಳಿಸಿದರು.

ವಾರ್ತಾ ಭಾರತಿ 17 Feb 2026 8:49 pm

ಬಾಂಗ್ಲಾದೇಶ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ, ಭಾರತದ ಸ್ಪೀಕರ್ ಭಾಗಿ | Bangladesh Election

ಭಾರತದ ನೆರೆಯ ದೇಶ ಹಾಗೂ ಭಾರತವೇ ಮುಂದೆ ನಿಂತು ಪಾಕಿಸ್ತಾನಕ್ಕೆ ಸರಿಯಾಗಿ ಪೆಟ್ಟು ಕೊಟ್ಟು ಸ್ವಾತಂತ್ರ್ಯ ಕೊಡಿಸಿದ ದೇಶ ಬಾಂಗ್ಲಾದೇಶಕ್ಕೆ ಇಂದು ಹೊಸ ಪ್ರಧಾನಿಯ ಆಗಮನ ಆಗಿದೆ. ಕಳೆದ ಕೆಲ ವರ್ಷಗಳಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ದೊಡ್ಡ ಕಿಚ್ಚು ಹೊತ್ತಿಕೊಂಡು, ಸಂಬಂಧವೇ ಹಾಳಾಗಿ ಹೋಗಿತ್ತು. ಅದರಲ್ಲೂ ಇನ್ನೇನು ಬಾಂಗ್ಲಾ ಹಂಗಾಮಿ ಸರ್ಕಾರ ಭಾರತವನ್ನ ದೂರ ಮಾಡಿ

ಒನ್ ಇ೦ಡಿಯ 17 Feb 2026 8:46 pm

ಮಾನ್ವಿ | ಫೆ.28ರಂದು 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ನಾಡು ನುಡಿ ಜಾತ್ರೆಗೆ ಸರ್ವರಿಗೂ ಸ್ವಾಗತ : ಶರಣಬಸವ ನೀರಮಾನ್ವಿ

ವಾರ್ತಾ ಭಾರತಿ 17 Feb 2026 8:46 pm

ಜಮೀನಿಗೆ ಪ್ರಸ್ತುತ ಮಾರುಕಟ್ಟೆ ಮೌಲ್ಯ ನಿಗದಿ ಪಡಿಸಿ: ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ

ರಾಷ್ಟ್ರೀಯ ಹೆದ್ದಾರಿ 169 ಭೂಸ್ವಾಧೀನ ಪ್ರಕ್ರಿಯೆ

ವಾರ್ತಾ ಭಾರತಿ 17 Feb 2026 8:44 pm

ಮಾನ್ವಿ | 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಬಸವಪ್ರಭು ಪಾಟೀಲ್ ಆಯ್ಕೆ

ಮಾನ್ವಿ : ಮಾನ್ವಿ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಡಾ.ಬಸವಪ್ರಭು ಪಾಟೀಲ್ ಇವರನ್ನು ತಾಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿ ತಿಳಿಸಿದ್ದಾರೆ. ಫೆ.28 ರಂದು ನೀರಮಾನ್ವಿ ಗ್ರಾಮದ ಶ್ರೀಸಿದ್ದಾರೂಢ ಮಠದ ಮೈದಾನದಲ್ಲಿ ನಡೆಯುವ 11ನೇ ಮಾನ್ವಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಡಾ.ಬಸವಪ್ರಭು ಪಾಟೀಲ್ ಇವರನ್ನು ಆಯ್ಕೆ ಮಾಡಿರುವುದು ಸಾಹಿತ್ಯಿಕ ಬಳಗದಲ್ಲಿ ತುಂಬಾ ಹರ್ಷವನ್ನುಂಟು ಮಾಡಿದೆ ಎಂದರು. ಫೆ.28 ರಂದು ನಡೆಯುವ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು ನುಡಿಯ ಜಾತ್ರೆಯಾಗಿದ್ದು, ಕನ್ನಡ ಪ್ರೇಮಿಗಳು ಕನ್ನಡ ಅಭಿಮಾನಿಗಳು ಎಲ್ಲಾರು ಒಗ್ಗೂಡಿ ಸಮ್ಮೇಳನ ಯಶಸ್ಸಿಗೆ ಶ್ರಮಿಸಬೇಕಿದೆ ಎಂದು ಶರಣಬಸವ ನೀರಮಾನ್ವಿ ಮನವಿ ಮಾಡಿದ್ದಾರೆ. ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳು ಲಕ್ಷ್ಮಣ ಜಾನೇಕಲ್, ಜಿ.ಎಸ್. ಬಾಲಾಜಿಸಿಂಗ್ ಮಾನ್ವಿ, ಗೌರವಕೋಶ್ಯಾಧ್ಯಕ್ಷ ಮನೋಜ್ ಕುಮಾರ ಮಿಶ್ರಾ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಮತರ, ಸಬ್ಬಲಿ ಶಿಕ್ಷಕರು ಮಾನ್ವಿ, ಮಹಾಂತೇಶ ಗುಜ್ಜಲ್ ಪೋತ್ನಾಳ, ಶಿವಕುಮಾರ ಜಗ್ಗಿ ಮಾನ್ವಿ, ರವಿಶರ್ಮ ಮಾನ್ವಿ, ಮಹಿಳಾ ಪ್ರತಿನಿಧಿಗಳಾದ ಗಿರಿಜಾ ವಸ್ತ್ರದ್ ಶಿಕ್ಷಕಿ ಮಾನ್ವಿ, ಅಂಬಮ್ಮ ಪ್ರತಾಪ್‌ಸಿಂಗ್ ಸಾಹಿತಿ ಮಾನ್ವಿ, ರಾಮು ಹೊಳೆಯಪ್ಪನವರ್ ಮಾನ್ವಿ, ಪ್ರೀತಮ್ ಕೊಡ್ಲಿ ಮಾನ್ವಿ, ಜೆ. ಆಂಜನೇಯ್ಯನಾಯಕ ನೀರಮಾನ್ವಿ, ಜೆ.ಪಿ. ಅಮರೇಶ ಮಾನ್ವಿ ನಿವೃತ್ತ ಶಿಕ್ಷಕರು,  ಸೈಯ್ಯದ್ ಮಿನಾಜ್ ಉಲ್ ಹಸನ್ ಮಾನ್ವಿ, ಶ್ರೀಕಾಂತ ಪಾಟೀಲ್ ಗೂಳಿ ಮಾನ್ವಿ, ಸುಜಾತ ಶ್ರೀನಿವಾಸ, ಸಿದ್ಧಾರ್ಥ ಪಿಯು ಕಾಲೇಜ್, ಈರಣ್ಣ ಮರ್ಲಟ್ಟಿ, ಗಾಂಧೀ ಪದವಿ ಕಾಲೇಜ್, ಸುರೇಶ ಕುರ್ಡಿ ಮಾನ್ವಿ, ಹಿರೇಕೊಟ್ನೆಕಲ್ ಹೋಬಳಿ ಘಟಕ ಅಧ್ಯಕ್ಷರು ಹನುಮಂತಪ್ಪ ಕೊಟ್ನೆಕಲ್ ಇದ್ದರು.

ವಾರ್ತಾ ಭಾರತಿ 17 Feb 2026 8:43 pm

Raichur | ಬೊಮ್ಮನಾಳದಲ್ಲಿ ಚರ್ಚ್ ಹೆಬ್ಬಾಗಿಲು ಅನಾವರಣ

ಶಿಕ್ಷಣದಲ್ಲಿ ಕ್ರೈಸ್ತ ಸಮುದಾಯದ ಕೊಡುಗೆ ಶ್ಲಾಘನೀಯ : ಆಯುಕ್ತ ಬಿ. ವೆಂಕಟಸಿಂಗ್

ವಾರ್ತಾ ಭಾರತಿ 17 Feb 2026 8:39 pm

ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಪೋಷಕರ ವಿರುದ್ಧ ಕ್ರಮ : ಸೀಮಂತ್ ಕುಮಾರ್ ಸಿಂಗ್

ಬೆಂಗಳೂರು : ಅಪ್ರಾಪ್ತ ಮಕ್ಕಳ ಕೈಗೆ ವಾಹನಗಳನ್ನು ನೀಡಿ ಚಾಲನೆ ಮಾಡಲು ಅವಕಾಶ ಕಲ್ಪಿಸಿದರೆ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಹೊಸಕೋಟೆ ಹಾಗೂ ನೆಲಮಂಗಲದ ಬಳಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳು ನಡೆದಿವೆ. ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಬಹುತೇಕ ಅಪ್ರಾಪ್ತರು. ಹೀಗಾಗಿ, ಪೋಷಕರು ತಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ ಎಂಬುವುದರ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು. ಅಪ್ರಾಪ್ತರು ವಾಹನ ಚಾಲನೆ ಮಾಡುವುದು ನಿಯಮ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ನಮ್ಮ ಪೊಲೀಸರು ಈಗಾಗಲೇ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸುತ್ತಿದ್ದರೂ ಸಹ ಅಪ್ರಾಪ್ತರು ವಾಹನಗಳನ್ನು ಚಲಾಯಿಸುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇದೀಗ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದೇವೆ. ಯಾರೇ ಅಪ್ರಾಪ್ತರು ಸಿಕ್ಕಿಬಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ವಾರ್ತಾ ಭಾರತಿ 17 Feb 2026 8:39 pm

ರಾಜ್ಯ ಬಜೆಟ್ | ಅಲ್ಪಸಂಖ್ಯಾತ ಸಮುದಾಯದ ಸಚಿವರು, ಶಾಸಕರೊಂದಿಗೆ ಸಿಎಂ ಸಭೆ

ಬೆಂಗಳೂರು: 2026-27ನೆ ಸಾಲಿನ ರಾಜ್ಯ ಬಜೆಟ್ ಸಂಬಂಧ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆಗಳ ಕುರಿತು ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಝಮೀರ್ ಅಹ್ಮದ್ ಖಾನ್, ರಹೀಂ ಖಾನ್, ಡಿ.ಸುಧಾಕರ್, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಶಾಸಕರಾದ ತನ್ವೀರ್ ಸೇಠ್, ಕನೀಝ್ ಫಾತಿಮಾ, ಯಾಸೀರ್ ಅಹ್ಮದ್ ಖಾನ್ ಪಠಾಣ್, ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಬಲ್ಕೀಸ್ ಬಾನು, ಐವನ್ ಡಿ’ಸೋಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 8:35 pm

ದೇವದುರ್ಗ | ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಡೆಗಟ್ಟಲು ಪಿಡಿಒಗಳಿಗೆ ಶಾಸಕಿ ಕರೆಮ್ಮ ಕಟ್ಟುನಿಟ್ಟಿನ ಸೂಚನೆ

ದೇವದುರ್ಗ: ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕು. ಪದೇಪದೇ ಸೂಚನೆ ನೀಡಿದರೂ ಕಾರ್ಯನಿರ್ವಹಿಸದ ಪಿಡಿಒಗಳು ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಶಾಸಕಿ ಕರೆಮ್ಮ ಎಚ್ಚರಿಕೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ದೇವದುರ್ಗ ಹಾಗೂ ಅರಕೇರಾ ತಾಲೂಕುಗಳ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪಲಕನಮರಡಿ ಗ್ರಾಪಂ ವ್ಯಾಪ್ತಿಯ 11 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯಡಿ ಕೆಲವೇ ಗ್ರಾಮಗಳಿಗೆ ಮಾತ್ರ ನೀರು ಸರಬರಾಜಾಗುತ್ತಿರುವುದನ್ನು ಪ್ರಶ್ನಿಸಿ ಪಿಡಿಒಗೆ ತರಾಟೆಗೆ ತೆಗೆದುಕೊಂಡರು. ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಂತ ಹಣದಲ್ಲಿ ಬೋರವೆಲ್‌ ತೋಡಿಸಿದ್ದರೂ ಮೋಟರ್ ಅಳವಡಿಸಿ ನೀರು ಪೂರೈಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಪಂ ಸಿಇಒಗೆ ಪತ್ರ ಬರೆಯುವಂತೆ ತಾಪಂ ಇಒಗೆ ಸೂಚಿಸಿದರು. ಗ್ರಾಮಸಭೆಗಳಲ್ಲಿ ಜನರ ಸಮಸ್ಯೆಗಳು ಕೇಳಿಬರುತ್ತಿರುವುದರಿಂದ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಮುಲ್ಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಗ್ರಾಮೀಣ ಭಾಗದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಅನುದಾನ ತರುವುದಾಗಿ ತಿಳಿಸಿ, ಸರ್ಕಾರಿ ಜಾಗಗಳನ್ನು ಕಾಯ್ದಿರಿಸುವಂತೆ ಸೂಚಿಸಿದರು. ತಾಂಡಾ, ದೊಡ್ಡಿ, ಗುಡ್ಡಗಾಡು ಪ್ರದೇಶಗಳ ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಸುವ ಕ್ರಮ ಕೈಗೊಳ್ಳಬೇಕು. ಗಲಗ ಗ್ರಾಮದಲ್ಲಿ ರಸ್ತೆ ಮೇಲೆ ಗಲೀಜು ನೀರು ಹರಿಯುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸೂಚನೆ ನೀಡಿದರು. ಆಕಳಕುಂಪಿ ಹಾಗೂ ಸಿಗೇರದೊಡ್ಡಿಯಲ್ಲಿ ವಾರದೊಳಗೆ ನೀರಿನ ಸಮಸ್ಯೆ ನಿವಾರಣೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಕಲುಷಿತ ನೀರು ಪೂರೈಕೆಯಿಂದ ಹಿಂದೆ ಸಂಭವಿಸಿದ ದುರಂತಗಳನ್ನು ಉಲ್ಲೇಖಿಸಿ, ಟ್ಯಾಂಕ್‌ಗಳ ಸ್ವಚ್ಛತೆ ಹಾಗೂ ಗ್ರಾಮೀಣ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ರಸ್ತೆ ಪಕ್ಕ ತಿಪ್ಪಿಗುಂಡಿಗಳಿಂದ ಅಪಘಾತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲು ಸೂಚಿಸಿದರು. ಜಲ ನಿರ್ಮಲ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಅಪೂರ್ಣವಾಗಿರುವುದನ್ನು ಸರಿಪಡಿಸಿ, ಬೇಸಿಗೆ ವೇಳೆ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಸಭೆಯಲ್ಲಿ ಜಿಪಂ ಯೋಜನೆ ನಿರ್ದೇಶಕ ಶರಣ ಬಸವ ಕೆಸರರಹಟ್ಟಿ, ತಹಶೀಲ್ದಾರ ನಾಗಮ್ಮ ಕಟ್ಟಿಮನಿ, ತಾಪಂ ಇಒ ಬಸವರಾಜ ಹಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 8:33 pm

ಸೌದಿ ಅರೇಬಿಯಾದಲ್ಲಿ ಚಂದ್ರದರ್ಶನ: ಬುಧವಾರದಿಂದ ರಮಝಾನ್‌ ಉಪವಾಸ ಆರಂಭ

ಜಿದ್ದಾ: ರಮಝಾನ್‌ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಬುಧವಾರದಿಂದ(ಫೆ.18) ರಮಝಾನ್ ಉಪವಾಸ ಆರಂಭವಾಗಲಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ @Inside the Haramain ಪೋಸ್ಟ್‌ ಮಾಡಿದೆ.    

ವಾರ್ತಾ ಭಾರತಿ 17 Feb 2026 8:31 pm

ಎಸ್‍ಐಆರ್ ಲೋಪದೋಷಗಳನ್ನು ಸರಿಪಡಿಸಲು ರಾಜ್ಯ ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್ ಮನವಿ

ಬೆಂಗಳೂರು : ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್)ಯಲ್ಲಿನ ಲೋಪ-ದೋಷಗಳನ್ನು ಸರಿಪಡಿಸಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗವು ಮನವಿ ಮಾಡಿದೆ. ಮಂಗಳವಾರ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಅವರಿಗೆ ಮನವಿ ಪತ್ರ ಸಲ್ಲಿಸಿದ ನಿಯೋಗವು, ‘ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು. ಅರ್ಹ ಮತದಾರರನ್ನು ತಪ್ಪಾಗಿ ಪಟ್ಟಿಯಿಂದ ಅಳಿಸಿದ್ದರೆ ಅವರನ್ನು ಮರು ಸೇರ್ಪಡೆ ಮಾಡಬೇಕು. ಒಂದೇ ಮನೆಯಲ್ಲಿನ ಸದಸ್ಯರು ವಿವಿಧ ಮತಗಟ್ಟೆಗಳಲ್ಲಿದ್ದರೆ ಅವರ ಹೆಸರುಗಳನ್ನು ಸರಿಪಡಿಸಬೇಕು. ಈ ಕುರಿತು ಪರಿಶೀಲನೆಗೆ ಚುನಾವಣಾಧಿಕಾರಿಗಳ ಜತೆಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೂ ಅವಕಾಶ ಕಲ್ಪಿಸಬೇಕು ಎಂದು ಕೋರಿದೆ. ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಈ ಹಿಂದೆ ಚುನಾವಣಾ ಆಯೋಗ ಸಿದ್ಧಪಡಿಸಿದ ಮತದಾರರ ಪಟ್ಟಿಯ ಆಧಾರದಲ್ಲಿ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡಲು ಮುಂದಾಗಿದ್ದು, ಆ ಮತದಾರರ ಪಟ್ಟಿಯಲ್ಲಿ ಲೋಪದೋಷಗಳಾಗಿವೆ. ಒಂದೇ ಮನೆಯ ಮತದಾರರನ್ನು ಬೇರೆ-ಬೇರೆ ಬೂತ್‍ಗಳಿಗೆ ಹಾಕಲಾಗಿದೆ. ಮತದಾರರ ಮ್ಯಾಪಿಂಗ್ ಸರಿಯಾಗಿ ಮಾಡಿಲ್ಲ’ ಎಂದು ಆಕ್ಷೇಪಿಸಿದರು. ಈ ಕುರಿತು ಪರಿಶೀಲನೆಗೆ ಬಿಎಲ್‍ಎಗಳನ್ನು ಕರೆದುಕೊಂಡು ಹೋಗಿ, ಮನೆ, ರಸ್ತೆ ಹಾಗೂ ಮತದಾರರನ್ನೂ ಸರಿಯಾದ ರೀತಿಯಲ್ಲಿ ಮ್ಯಾಪಿಂಗ್ ಮಾಡಿಸಬೇಕು. ಆ ಮೂಲಕ ಈ ಹಿಂದಿನ ಮತದಾರರ ಪಟ್ಟಿಯಲ್ಲಾಗಿರುವ ಲೋಪದೋಷವನ್ನು ಸರಿಪಡಿಸಬೇಕು ಎಂದು ಶಿವಕುಮಾರ್ ಮನವಿ ಮಾಡಿದರು. ಶುದ್ದ ಮತದಾರರ ಪಟ್ಟಿ ಅಗತ್ಯ: ಎಲ್ಲ ರಾಜಕೀಯ ಪಕ್ಷಗಳನ್ನು ಸೇರಿಸಿ ನ್ಯಾಯಬದ್ಧವಾಗಿ ಮತದಾರರ ಪಟ್ಟಿ ಪರಿಷ್ಕರಿಣೆ ಮಾಡಬೇಕು. ಈ ಹಿಂದೆ ಎಸ್‍ಐಆರ್ ಮಾಡುವ ವೇಳೆ ದುರುಪಯೋಗ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಫಾರಂ ನಂ-7 ಕೊಟ್ಟು ಹೆಸರುಗಳನ್ನು ಅಳಿಸಲಾಗಿದೆ. ಇಂತಹ ಎಲ್ಲ ಲೋಪಗಳನ್ನು ಸರಿಪಡಿಸಬೇಕು. ಜಿಬಿಎ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಪರಿಶುದ್ಧ ಮತದಾರರ ಪಟ್ಟಿ ಮಾಡಬೇಕು ಎಂದು ಅವರು ಕೋರಿದರು. ಕೆಲವು ಕಡೆಗಳಲ್ಲಿ ಬಿಎಲ್‍ಎಗಳು ಒಂದೇ ಮನೆಯ ಮತಗಳನ್ನು ಎರಡು ಬೂತ್‍ಗಳಿಗೆ ವಿಭಾಗ ಮಾಡಿಸಿದ್ದಾರೆ. ಇನ್ನು ಕೆಲವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ಎರಡು-ಮೂರು ಕಡೆಗಳಲ್ಲಿ ಮತದಾರ ಮಾಡಿದ ಪ್ರಕರಣಗಳಿದ್ದು, ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅವಕಾಶವಿದೆ. ಕೇಂದ್ರ ಚುನಾವಣಾ ಆಯೋಗದ ಎಸ್‍ಐಆರ್‍ಗೂ ರಾಜ್ಯ ಚುನಾವಣಾ ಆಯೋಗದ ಎಸ್‍ಐಆರ್ ನಡುವೆ ತಿಕ್ಕಾಟ ಆಗುವ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರವಿದೆ ಎಂದು ಅವರು ನುಡಿದರು. ನಿಯೋಗದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ರಿಝ್ವಾನ್ ಅರ್ಶದ್, ಎ.ಸಿ.ಶ್ರೀನಿವಾಸ್, ಪರಿಷತ್ ಸದಸ್ಯರಾದ ಪುಟ್ಟಣ್ಣ, ಶ್ರೀನಿವಾಸ್ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 17 Feb 2026 8:29 pm

Raichur | ಮಾನವ ಕಳ್ಳಸಾಗಣೆ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ: ನ್ಯಾ.ಎಚ್.ಎ.ಸಾತ್ವಿಕ್

ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ

ವಾರ್ತಾ ಭಾರತಿ 17 Feb 2026 8:28 pm