ಸೇವಾ ಕ್ಷೆೇತ್ರ ಉದ್ಯಮ ಕ್ಷೇತ್ರಗಳಾಗಿರುವ ಕಾಲವಿದು : ಪ್ರೊ.ಬರಗೂರು ರಾಮಚಂದ್ರಪ್ಪ
‘ಉನ್ನತ ಶಿಕ್ಷಣ: ಒಳಗೂ ಹೊರಗೂ’ ಕೃತಿ ಲೋಕಾರ್ಪಣೆ
US Israel Iran War: ಯುದ್ಧ ಆರಂಭವಾಗಿ 1 ತಿಂಗಳು! ಇರಾನ್ನ ಪ್ರಜೆಗಳ ಸಾವಿನ ಸಂಖ್ಯೆ ಬಹಿರಂಗ
ಅಮೆರಿಕ ಇಸ್ರೇಲ್ ಇರಾನ್ ನಡುವಿನ ಯುದ್ಧ ಆರಂಭವಾಗಿ ಒಂದು ತಿಂಗಳಾಗಿದೆ. ಸದ್ಯ ಸಾವಿನ ಸಂಖ್ಯೆ ಬಹಿರಂಗಗೊಂಡಿದ್ದು, ಇರಾನ್ನಲ್ಲಿ ಬರೋಬ್ಬರಿ 1900 ಜನ ಜೀವತೆತ್ತಿದ್ದಾರೆ. 20 ಸಾವಿರ ಮಂದಿಗೆ ಗಾಯಗಳಾಗಿವೆ. ಈ ಬಗ್ಗೆ ರೆಡ್ ಕ್ರಾಸ್ ಸೊಸೈಟಿ ಮಾಹಿತಿ ಬಹಿರಂಗಪಡಿಸಿದೆ. ಇನ್ನು ದಾಳಿ ಪ್ರತಿದಾಳಿ ಮುಂದುವರಿಸಿದ ಇಸ್ರೇಲ್, ಇರಾನ್ ನಡೆಯು ಹೆಚ್ಚಿದ ಜಾಗತಿಕ ಬಿಕ್ಕಟ್ಟು ಸೃಷ್ಟಿಸಲಿದೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಭೇಟಿಯಾದ ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಕೇರಳ ಚುನಾವಣೆ ಪ್ರಚಾರದಲ್ಲಿರುವ ಸಚಿವ ಝಮೀರ್ ಅಹ್ಮದ್ ಖಾನ್ ಶುಕ್ರವಾರ ಕ್ಯಾಲಿಕಟ್ನಲ್ಲಿ ಮರ್ಕಝ್ ನಾಲೇಜ್ಡ್ ಸಿಟಿಗೆ ಭೇಟಿ ನೀಡಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರ ಜೊತೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ಉಪಸ್ಥಿತರಿದ್ದರು.
ಧರ್ಮಾಧ್ಯಕ್ಷರನ್ನು ಭಾಷೆಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ: ಡಾ.ಪೀಟರ್ ಮಚಾದೋ
ಬೆಂಗಳೂರು : ಕೆಥೊಲಿಕ್ ಧರ್ಮಸಭೆಯು ಧರ್ಮಾಧ್ಯಕ್ಷರನ್ನು ಭಾಷೆ, ಜಾತಿ ಅಥವಾ ಜನಾಂಗೀಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ ಎಂದು ಬೆಂಗಳೂರಿನ ಆರ್ಚ್ ಬಿಷಪ್ (ಮಹಾಧರ್ಮಗುರು) ಡಾ.ಪೀಟರ್ ಮಚಾದೋ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಪ್ರಕಟಣೆ ಹೋರಾಡಿಸಿರುವ ಅವರು, ಯಾವುದೇ ಒಂದು ಪ್ರಾಂತ್ಯದ ಧರ್ಮಾಧ್ಯಕ್ಷರು ಸೂಕ್ತವಾದ ಅಭ್ಯರ್ಥಿಯನ್ನು ಶಿಫಾರಸು ಮಾಡಬಹುದು. ಆದರೆ, ಅಂತಿಮ ನಿರ್ಧಾರ ಎಂಬುದು ಪೋಪ್ ಅವರ ಕೈಯಲ್ಲಿರುತ್ತದೆ. ಕರ್ನಾಟಕದ ಧರ್ಮಕ್ಷೇತ್ರಗಳ ಪಾಲನಾ ನಾಯಕತ್ವವನ್ನು ವಹಿಸಿಕೊಳ್ಳಲು ಹೆಚ್ಚೆಚ್ಚು ಕನ್ನಡಿಗ ಅಭ್ಯರ್ಥಿಗಳನ್ನು ಶಿಫಾರಸು ಮಾಡಬೇಕು ಎಂದು ವ್ಯಕ್ತಪಡಿಸಿರುವ ಅಭಿಲಾಷೆಯನ್ನು ಗೌರವಿಸುತ್ತೇವೆ. ಆದರೆ, ವ್ಯಾಟಿಕನ್ನ ಪವಿತ್ರ ಪೀಠಕ್ಕೆ ಸಂಭಾವ್ಯ ಧರ್ಮಾಧ್ಯಕ್ಷರ ಎಲ್ಲ ಮಾಹಿತಿಯು ಇರುತ್ತದೆ. ಆದುದರಿಂದ, ಪೋಪ್ ಅವರಿಗೆ ಅತ್ಯಂತ ಸೂಕ್ತ ಎನಿಸುವ ಅಭ್ಯರ್ಥಿಯನ್ನು ಧರ್ಮಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗುತ್ತದೆ ಎಂದಿದ್ದಾರೆ. ‘ಸ್ಥಳೀಯ ಭಾಷೆ’ ಎಂಬುದನ್ನು ಬಹುಸಂಖ್ಯಾತ ಭಕ್ತರ ಭಾಷೆ ಎಂದು ಅರ್ಥಮಾಡಿಕೊಳ್ಳಬೇಕೇ ಹೊರತು ರಾಜ್ಯದ ಅಧಿಕೃತ ಭಾಷೆಯೆಂದಲ್ಲ. ರಾಜ್ಯದ ಅಧಿಕೃತ ಭಾಷೆಯನ್ನು ಗೌರವಿಸಬೇಕು, ಕಲಿಯಬೇಕು, ಉತ್ತೇಜಿಸಬೇಕು ಹಾಗೂ ಬಳಸಬೇಕು. ಆದರೆ, ರಾಜ್ಯದ ಅಧಿಕೃತ ಭಾಷೆ ಎಂಬುದು ಯಾವುದೇ ಧರ್ಮಕ್ಷೇತ್ರ ಅಥವಾ ಧರ್ಮಕೇಂದ್ರದ ಬಹುಸಂಖ್ಯಾತ ಕೆಥೊಲಿಕರ ತಾಯ್ನುಡಿಯಾಗಿರಬೇಕಿಲ್ಲ. ಅದಾಗ್ಯೂ, ಎಲ್ಲೆಲ್ಲಿ ಸಾಧ್ಯವಾಗುತ್ತದೆಯೊ, ಅಲ್ಲೆಲ್ಲಾ, ಯಾವುದೇ ತೊಂದರೆಗಳಿಲ್ಲದೆ, ಕನ್ನಡವನ್ನು ಪೂಜಾವಿಧಿ ಭಾಷೆಯನ್ನಾಗಿ ಬಳಸಿಕೊಳ್ಳಲಾಗುವುದು. ಪೂಜಾವಿಧಿಯಲ್ಲಿ ಭಾಗವಹಿಸುವ ಬಹುಸಂಖ್ಯಾತರು ಕನ್ನಡಿಗರಾಗಿದ್ದಾಗ, ವ್ಯಾಟಿಕನ್ ನ ‘ಸ್ಥಳೀಯ ಭಾಷಾ’ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Sakleshpura | ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ ಗಲಾಟೆ; ಫೋಟೊಗ್ರಾಫರ್ ತಂಡದ ಮೇಲೆ ಹಲ್ಲೆ, ಕೊಲೆ ಯತ್ನ ಆರೋಪ
ಸಕಲೇಶಪುರ : ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿ, ಫೋಟೊಗ್ರಾಫರ್ ತಂಡದವರ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಸನದ ಕುವೆಂಪು ನಗರದ ನಿವಾಸಿ ನವಿನಂದನ್( 21) ದೂರು ನೀಡಿದ್ದು, ಹಾಸನದ ಸ್ಟುಡಿಯೋ ಒಂದರದಲ್ಲಿ ಫೋಟೊಗ್ರಾಫರ್ ಆಗಿರುವ ಅವರು ತಮ್ಮ ಸಂಬಂಧಿ ಚೇತನ್ ಜೊತೆ ಮಾ.27 ರಂದು ದರ್ಶನ ಮತ್ತು ಸ್ನೇಹ ಎಂಬ ಮದುವೆ ಜೋಡಿಗಳ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಲು ಬೆಳಗ್ಗೆ 7.30 ಗಂಟೆಗೆ ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಸಮೀಪ ಶೂಟಿಂಗ್ ಪ್ರಾರಂಭಿಸಿದ್ದರು. ಈ ವೇಳೆ ಬೆಂಗಳೂರಿನಿಂದ ಬಂದಿದ್ದ ಮತ್ತೊಂದು ಜೋಡಿ ಅಭಿಲಾಷ್ ಮತ್ತು ವಿಜಯಲಕ್ಷ್ಮೀ ಅವರೊಂದಿಗೆ ಫೋಟೊಗ್ರಾಫರ್ಗಳಾದ ಅಭಿಷೇಕ್, ಯಶವಂತ, ಸೋಮಶೇಖರ್ ಹಾಗೂ ಮೇಕಪ್ ಆರ್ಟಿಸ್ಟ್ ಶ್ವೇತ ಕೂಡ ಸ್ಥಳದಲ್ಲೇ ಶೂಟಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಮೂಡಿಗೆರೆ ತಾಲೂಕಿನ ಮರಬೈಲು ಗ್ರಾಮದ ಅಭಿ ಎಂಬ ವ್ಯಕ್ತಿ ಸ್ಥಳಕ್ಕೆ ಬಂದು, ದೇವಸ್ಥಾನದ ಗೋಡೆಗೆ ಕಾಲು ಒರಗಿಸಿ ಶೂಟಿಂಗ್ ಮಾಡುತ್ತಿರುವುದನ್ನು ಪ್ರಶ್ನಿಸಿ ಏಕಾಏಕಿ ಫೋಟೋಗ್ರಾಫರ್ ಯಶವಂತನ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆತ ಅಲ್ಲಿಂದ ತೆರಳಿ ಸುಮಾರು 7-8 ಜನರೊಂದಿಗೆ ಕಾರುಗಳಲ್ಲಿ ಮತ್ತೆ ಸ್ಥಳಕ್ಕೆ ಬಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಪ್ರಶಾಂತ, ರಕ್ಷಯ್, ಅರವಿಂದ್, ಉಚಿತ್, ಪ್ರಜ್ವಲ್ ಸೇರಿದಂತೆ ಇತರರು ಸೇರಿ ಸ್ಥಳೀಯರು ಎಂಬ ಹೆಸರಿನಲ್ಲಿ ಫೋಟೊ ಶೂಟಿಂಗ್ ಮಾಡಲು ಹಣ (ಹಫ್ತಾ) ಕೊಡಬೇಕೆಂದು ಒತ್ತಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಫೋಟೋಗ್ರಾಫರ್ ಅಭಿಷೇಕ್ ಮೇಲೆ ದಾಳಿ ನಡೆಸಿದರೆ, ಮಧ್ಯಪ್ರವೇಶಿಸಲು ಬಂದ ಮೇಕಪ್ ಆರ್ಟಿಸ್ಟ್ ಶ್ವೇತಾ ಅವರ ಮೇಲೂ ಹಲ್ಲೆ ನಡೆಸಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಲಾಟೆ ತಡೆಯಲು ಹೋದ ಚೇತನ್ ಮೇಲೆ ಕೂಡ ಗುಂಪು ದಾಳಿ ನಡೆಸಿ ಹೊಟ್ಟೆ, ಎದೆ ಹಾಗೂ ಬೆನ್ನಿಗೆ ಹೊಡೆದು, ಕಾಲಿನಿಂದ ತುಳಿದು ಗಂಭೀರವಾಗಿ ಗಾಯಪಡಿಸಿದ್ದಾರೆ. ಪಿರ್ಯಾದಿದಾರರ ಮೇಲೂ ಹಲ್ಲೆ ನಡೆಸಿ, ಪ್ರಶಾಂತ ಎಂಬಾತ ಕುತ್ತಿಗೆಯನ್ನು ಹಿಸುಕಿ ಕೊಲೆ ಯತ್ನ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯನ್ನು ಚಿತ್ರೀಕರಿಸುತ್ತಿದ್ದ ಇತರರ ಮೇಲೂ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡವರು ಸಕಲೇಶಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹರಪನಹಳ್ಳಿ | ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಲಾರಿಗಳ ಸಂಖ್ಯೆ ಹೆಚ್ಚಿಸಲು ರೈತರ ದಿಢೀರ್ ಪ್ರತಿಭಟನೆ
ಹರಪನಹಳ್ಳಿ : ನಗರದ ಕೃಷಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರದಿಂದ ಗೋದಾಮುಗಳಿಗೆ ತೆರಳುವ ಲಾರಿಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ರೈತರು ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು. ಸರ್ಕಾರವು ರೈತರ ರಾಗಿ ಖರೀದಿಗಾಗಿ ಉತ್ತಮ ಬೆಲೆ ನಿಗದಿಪಡಿಸಿ ವ್ಯವಸ್ಥೆ ಕಲ್ಪಿಸಿದ್ದರೂ, ಇಡೀ ತಾಲೂಕಿಗೆ ಕೇವಲ ಒಂದು ಖರೀದಿ ಕೇಂದ್ರವಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ರೈತರು ಆರೋಪಿಸಿದರು. ಕಳೆದ ಎರಡು-ಮೂರು ದಿನಗಳಿಂದ ನೂರಾರು ರೈತರು ತಮ್ಮ ಟ್ರಾಕ್ಟರ್ಗಳನ್ನು ಕೃಷಿ ಮಾರುಕಟ್ಟೆಯಲ್ಲಿ ನಿಲ್ಲಿಸಿ ರಾತ್ರಿಯಿಡೀ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ತೆಲಿಗಿ ಅಥವಾ ಅರಸೀಕೆರೆ ಹೋಬಳಿ ಭಾಗದಲ್ಲಿ ಹೆಚ್ಚುವರಿ ರಾಗಿ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತರು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಮಾತನಾಡಿ, ರೈತರು ನೀಡಿರುವ ಟೋಕನ್ ಪ್ರಕಾರ ಬಾರದಿರುವುದರಿಂದ ಅನಾವಶ್ಯಕ ಗೊಂದಲ ಉಂಟಾಗುತ್ತಿದೆ. ಈಗಾಗಲೇ ದಿನಕ್ಕೆ 6 ಲಾರಿಗಳನ್ನು ರಾಗಿ ಸಾಗಣೆಗೆ ಮೀಸಲಿರಿಸಲಾಗಿದ್ದು, ರೈತರು ಟೋಕನ್ ಪ್ರಕಾರ ಬಂದರೆ ಹೆಚ್ಚು ದಿನ ಕಾಯಬೇಕಾಗುವುದಿಲ್ಲ ಎಂದು ತಿಳಿಸಿದರು. ಇದಲ್ಲದೆ, ಹೆಚ್ಚುವರಿಯಾಗಿ ಮತ್ತೊಂದು ಲಾರಿಯನ್ನು ನಿಯೋಜಿಸುವುದಾಗಿ ಭರವಸೆ ನೀಡಿದರು. ಅಗತ್ಯವಿರುವ ಹೋಬಳಿ ಪ್ರದೇಶದಲ್ಲಿ ಮತ್ತೊಂದು ರಾಗಿ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿ ಇನ್ಸ್ಪೆಕ್ಟರ್ ಮಹಾಂತೇಶ್ ಸಜ್ಜನ್, ಸಬ್ ಇನ್ಸ್ಪೆಕ್ಟರ್ ಶಂಭುಲಿಂಗ ಎಸ್. ಹಿರೇಮಠ ಸೇರಿದಂತೆ ರೈತರು ಉಪಸ್ಥಿತರಿದ್ದರು.
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ
ಕಾಂಗ್ರೆಸ್ ಪಕ್ಷವೇ ನಮಗೆ ಮುಖ್ಯ. ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು. ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಬೇಕು ಎಂದು ಯುವ ಶಾಸಕರಾದ ರಿಜ್ವಾನ್ ಹರ್ಷದ್
ವಿಜಯನಗರ | ಮರಿಯಮ್ಮನಹಳ್ಳಿಯಲ್ಲಿ ಐತಿಹಾಸಿಕ ಜೋಡಿ ರಥೋತ್ಸವ
ವಿಜಯನಗರ, ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಆಂಜಿನೇಯ ಸ್ವಾಮಿ ಅವರ ಐತಿಹಾಸಿಕ ಜೋಡಿ ರಥೋತ್ಸವವು ಅದ್ಧೂರಿಯಾಗಿ ನಡೆಯಿತು. ವಿಜಯನಗರ ಅರಸರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಈ ಜಾತ್ರೆ ಸ್ಥಳೀಯರಷ್ಟೇ ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಭಕ್ತರಿಗೂ ವಿಶೇಷ ಧಾರ್ಮಿಕ ಮಹತ್ವ ಹೊಂದಿದೆ. ಈ ಜೋಡಿ ರಥೋತ್ಸವವು ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಪರಂಪರೆಯನ್ನು ನೆನಪಿಸುವ ಪ್ರಮುಖ ಆಚರಣೆಯಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಣ್ತುಂಬಿಕೊಂಡರು. ಭದ್ರತೆಯ ದೃಷ್ಟಿಯಿಂದ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ನೇತೃತ್ವದಲ್ಲಿ ಡಿಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ವಿಕಾಸ್ ಲಮಾಣಿ ಹಾಗೂ ಪಿಎಸ್ಐ ತಾರಾಬಾಯಿ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ವ್ಯಾಪಕ ಭದ್ರತೆ ಒದಗಿಸಿದ್ದರು.
ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಕಳ್ಳಭಟ್ಟಿ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಳ್ಳಭಟ್ಟಿ ನಿರ್ಮೂಲನೆ ಕುರಿತ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ರಮ ಮದ್ಯ ತಯಾರಿಕೆ ಮತ್ತು ವಹಿವಾಟಿನ ವಿರುದ್ಧ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಅಕ್ರಮ ಮದ್ಯ ಮಾರಾಟ ಅಥವಾ ಸಾಗಾಟ ಕಂಡುಬಂದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ನೆರೆ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಅಕ್ರಮ ಮದ್ಯ ಸಾಗಾಟವಾಗುವ ಸಾಧ್ಯತೆ ಇರುವುದರಿಂದ ಗಡಿ ಪ್ರದೇಶಗಳ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ತೀವ್ರಗೊಳಿಸಬೇಕು. ಅಬಕಾರಿ ಮತ್ತು ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಂಶಯಾಸ್ಪದ ಸ್ಥಳಗಳ ಮೇಲೆ ನಿರಂತರ ದಾಳಿ ನಡೆಸಬೇಕು ಎಂದರು. ಗ್ರಾಮೀಣ ಪ್ರದೇಶದ ಹೋಟೆಲ್ ಹಾಗೂ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಬೀಟ್ ಪೊಲೀಸರು ಹಾಗೂ ಅಬಕಾರಿ ನಿರೀಕ್ಷಕರು ಹೆಚ್ಚುವರಿ ಕಾರ್ಯಾಚರಣೆ ನಡೆಸಬೇಕು. ಅಕ್ರಮ ಮದ್ಯ ಸಾಗಣೆಯಲ್ಲಿ ತೊಡಗಿರುವ ವಾಹನಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು. ಜಿಲ್ಲೆಯ ಜನರ ಆರೋಗ್ಯ ಮತ್ತು ಶಾಂತಿ ಕಾಪಾಡುವುದು ಮುಖ್ಯ ಆದ್ಯತೆ. ಕಳ್ಳಭಟ್ಟಿ ಸಾರಾಯಿ ತಯಾರಿಕೆ ಅಥವಾ ಅಕ್ರಮ ಮಾರಾಟದ ಬಗ್ಗೆ ಸಾರ್ವಜನಿಕರು ನಿರ್ಭಯವಾಗಿ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು. ಅಬಕಾರಿ ಉಪ ಆಯುಕ್ತ ಡಾ.ಮಾದೇಶ್ ಮಾತನಾಡಿ, ಜಿಲ್ಲೆಯಲ್ಲಿ ಪರವಾನಗಿ ಪಡೆದ 160 ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಮೇಲೆ ನಿರಂತರ ನಿಗಾವಹಿಸಲಾಗಿದೆ ಎಂದರು. ನೆರೆ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಾಟದ 2023 ರಿಂದ 2026ರ ಫೆಬ್ರವರಿ ಅಂತ್ಯವರೆಗೆ 7 ಪ್ರಕರಣಗಳನ್ನು ದಾಖಲಿಸಿ 293.45 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ 2024 ಜುಲೈದಿಂದ 2025 ಜೂನ್ ವರೆಗೆ 892 ದಾಳಿ ಹಾಗೂ 2025 ಜುಲೈದಿಂದ 2026 ಫೆ.16ರವರೆಗೆ 872 ದಾಳಿ ನಡೆಸಿ ಒಟ್ಟು 1,764 ದಾಳಿಗಳಲ್ಲಿ 755 ಲೀಟರ್ ಮದ್ಯ ಹಾಗೂ 152 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಸಹಾಯಕ ಆಯುಕ್ತ ವಿವೇಕಾನಂದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಯಚೂರು | ಚಲವಾದಿ ಸಮುದಾಯದ ಬಗ್ಗೆ ಅವಹೇಳನ ಆರೋಪ : ನರಸಪ್ಪ ದಂಡೋರ ವಿರುದ್ಧ ಕ್ರಮಕ್ಕೆ ಆಗ್ರಹ
ರಾಯಚೂರು : ಚಲವಾದಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನರಸಪ್ಪ ದಂಡೋರ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಲಾಗಿದ್ದು, ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ನೀಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಚಲುವಾದಿ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅರ್ಚನಾ ಸುಂಕಾರಿ ಹೇಳಿದರು. ಈ ಕುರಿತು ಮಾತನಾಡಿದ ಅವರು, ಡಾ. ಜಿ. ಪರಮೇಶ್ವರ್ ಅವರು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸಾಗುವ ನಾಯಕರು. ಎಸ್.ಸಿ. ಮಹದೇವಪ್ಪ ಅವರು ಯಾವುದೇ ಸಮುದಾಯದ ಬಗ್ಗೆ ಹಗುರವಾಗಿ ಅಥವಾ ಕೀಳಾಗಿ ಮಾತನಾಡುವವರಲ್ಲ. ಸಮುದಾಯಗಳ ನಡುವೆ ವೈಮನಸ್ಯ ಉಂಟುಮಾಡುವಂತಹ ಹೇಳಿಕೆಗಳು ಅಥವಾ ಪ್ರಚೋದನಾತ್ಮಕ ಕಾರ್ಯಗಳಲ್ಲಿ ಅವರು ತೊಡಗಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಚಲವಾದಿ ಸಮುದಾಯದವರು ಎಂದಿಗೂ ಮಾಲಾ–ಮಾದಿಗ ಎಂದು ಬೇಧಭಾವ ಮೂಡಿಸುವ ರೀತಿಯ ಹೇಳಿಕೆಗಳನ್ನು ನೀಡಿಲ್ಲ. ಮಾದಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಹೇಳುವುದು ಅಥವಾ ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುವುದು ನಮ್ಮ ಸಮುದಾಯದ ಧೋರಣೆ ಅಲ್ಲ ಎಂದು ಹೇಳಿದರು. ಇತ್ತೀಚೆಗೆ ವಿಡಿಯೋ ಅಥವಾ ಹೇಳಿಕೆಗಳ ಮೂಲಕ ಮಾದಿಗರ ವಿರುದ್ಧ ಮಾತನಾಡಿರುವ ಘಟನೆಗಳು ನಡೆದಿಲ್ಲವೆಂದು ತಿಳಿಸಿದ ಅವರು, ಚಲವಾದಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನರಸಪ್ಪ ದಂಡೋರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡುತ್ತೇವೆ ಎಂದು ಅರ್ಚನಾ ಸುಂಕಾರಿ ತಿಳಿಸಿದರು.
ಹಾರ್ಮುಝ್ ಜಲಸಂಧಿಯ ಮೂಲಕ ಯಾರನ್ನು ಹಾದು ಹೋಗಲು ಬಿಡಬೇಕೆಂದು ಇರಾನ್ ಹೇಗೆ ನಿರ್ಧರಿಸುತ್ತದೆ?
ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಹಾರ್ಮುಝ್ ಜಲಸಂಧಿಯ ಮೇಲೆ ವಾಸ್ತವಿಕವಾಗಿ ದಿಗ್ಬಂಧನ ವಿಧಿಸಿರುವುದು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಇಂಧನ ಬಿಕ್ಕಟ್ಟನ್ನು ಉಂಟುಮಾಡಿದೆ. ತಜ್ಞರು ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಎಚ್ಚರಿಸಿದ್ದಾರೆ. ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಸುಮಾರು 20 ಪ್ರತಿಶತದಷ್ಟು ಹಾದುಹೋಗುವ ಸಮುದ್ರ ಮಾರ್ಗವನ್ನು ಟೆಹ್ರಾನ್ ಮುಚ್ಚಿದ್ದು ತೈಲ ಕೊರತೆಗೆ ಕಾರಣವಾಗಿದೆ. ಉತ್ತರ ಭಾಗದಲ್ಲಿ ಇರಾನ್ ಮತ್ತು ದಕ್ಷಿಣ ಭಾಗದಲ್ಲಿ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಇರುವ ಕಿರಿದಾದ ಜಲಸಂಧಿಯ ಬಳಿ ಸುಮಾರು 2,000 ಹಡಗುಗಳು ಸಿಲುಕಿಕೊಂಡಿವೆ. ಗುರುವಾರ, ಇರಾನಿನ ಮಾಧ್ಯಮಗಳು ದೇಶದ ಸಂಸತ್ತು ವಿಶ್ವದ ಏಕೈಕ ಪ್ರಮುಖ ತೈಲ ಮಾರ್ಗವನ್ನು ಸಾಗಿಸುವ ಹಡಗುಗಳಿಗೆ ಸುಂಕ ಸಂಗ್ರಹಿಸಲು ಶಾಸನವನ್ನು ಅಂಗೀಕರಿಸಲು ಪ್ರಯತ್ನಿಸುತ್ತಿದೆ ಎಂದು ವರದಿ ಮಾಡಿದೆ. ಸಂಸತ್ತಿನ ನಾಗರಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷರನ್ನು ಉಲ್ಲೇಖಿಸಿ ತಸ್ನಿಮ್ ಮತ್ತು ಫಾರ್ಸ್ ಸುದ್ದಿ ಸಂಸ್ಥೆಗಳ ವರದಿಗಳು, ಕರಡು ಕಾನೂನನ್ನು ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಇಸ್ಲಾಮಿಕ್ ಸಮಾಲೋಚನಾ ಸಭೆಯ ಕಾನೂನು ತಂಡವು ಅದನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿವೆ. ಈ ಯೋಜನೆಯ ಪ್ರಕಾರ, ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರಾನ್ ಶುಲ್ಕವನ್ನು ಸಂಗ್ರಹಿಸಬೇಕು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ Aljazeera ವರದಿ ಮಾಡಿದೆ. ಇದು ಸ್ವಾಭಾವಿಕ. ಇತರ ಕಾರಿಡಾರ್ ಗಳಂತೆ, ಸರಕುಗಳು ಒಂದು ದೇಶದ ಮೂಲಕ ಹಾದುಹೋದಾಗ, ಸುಂಕವನ್ನು ಪಾವತಿಸಲಾಗುತ್ತದೆ. ಹಾರ್ಮುಝ್ ಜಲಸಂಧಿಯೂ ಒಂದು ಕಾರಿಡಾರ್ ಆಗಿದೆ. ನಾವು ಅದರ ಭದ್ರತೆಯನ್ನು ಖಚಿತಪಡಿಸುತ್ತೇವೆ. ಹಡಗುಗಳು ಮತ್ತು ಟ್ಯಾಂಕರ್ ಗಳು ನಮಗೆ ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಆದರೆ ಆ ದೇಶೀಯ ಕಾನೂನು ಚೌಕಟ್ಟು ಇಲ್ಲದೆಯೂ ಸಹ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜಲಸಂಧಿಯ ಮೂಲಕ ಹಡಗು ಸಂಚಾರವನ್ನು ನಿಯಂತ್ರಿಸಲು ಈಗಾಗಲೇ ಟೋಲ್ ಬೂತ್ ವ್ಯವಸ್ಥೆಯನ್ನು ವಿಧಿಸಿದೆ ಎಂದು ಶಿಪ್ಪಿಂಗ್ ಜರ್ನಲ್ ಲಾಯ್ಡ್ಸ್ ಲಿಸ್ಟ್ ಬುಧವಾರ ವರದಿ ಮಾಡಿದೆ. ►ಟೋಲ್ ವಿಧಿಸುವ ನಿರ್ಧಾರವನ್ನು ಇರಾನ್ ಏಕೆ ತೆಗೆದುಕೊಂಡಿದೆ? ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಇರಾನ್ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿದೆ. ಇದು ಕೊಲ್ಲಿಯಿಂದ ವಿಶ್ವದ ಇತರ ಭಾಗಗಳಿಗೆ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಿಸುವ ಹಡಗುಗಳ ಸಾಗಣೆಯನ್ನು ನಿರ್ಬಂಧಿಸಿದೆ. ಈ ಕ್ರಮದಿಂದಾಗಿ ಜಾಗತಿಕ ತೈಲ ಬೆಲೆಗಳು ಬ್ಯಾರೆಲ್ಗೆ 100 ಡಾಲರ್ ಗಿಂತ ಹೆಚ್ಚಾಗಿದೆ. ತೈಲ ಬೆಲೆ ಯುದ್ಧಕ್ಕೂ ಮೊದಲು ಇದ್ದ ಬೆಲೆಗಿಂತ ಸರಿಸುಮಾರು ಶೇಕಡಾ 40 ರಷ್ಟು ಜಿಗಿತವನ್ನು ಕಂಡಿದೆ. ಹೀಗಿರುವಾಗ ಏಷ್ಯಾದ ದೇಶಗಳು ಇಂಧನವನ್ನು ಪಡಿತರಗೊಳಿಸಲು ಮತ್ತು ಕೈಗಾರಿಕಾ ಉತ್ಪಾದನೆಯನ್ನು ಕಡಿತಗೊಳಿಸಲು ಒತ್ತಾಯಿಸಲಾಗಿದೆ. ಗಲ್ಫ್ ಉತ್ಪಾದಕರಿಂದ ತೈಲ ಮತ್ತು ಅನಿಲವನ್ನು ರಫ್ತು ಮಾಡುವ ಏಕೈಕ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳಿಗೆ ಹಾದುಹೋಗಲು ಅವಕಾಶ ನೀಡುವಂತೆ ಹಲವು ದೇಶಗಳು ಇರಾನ್ ಅನ್ನು ವಿನಂತಿಸಿವೆ. ಯುದ್ಧವನ್ನು ಕೊನೆಗೊಳಿಸಲು ಇರಾನ್ ತನ್ನ ಐದು ಷರತ್ತುಗಳಲ್ಲಿ ಹಾರ್ಮುಝ್ ಜಲಸಂಧಿಯ ಮೇಲೆ ಅಧಿಕಾರ ಚಲಾಯಿಸುವ ಹಕ್ಕನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕೆಂದು ಒತ್ತಾಯಿಸಿದೆ. ದೇಶವು ಕೆಲವು ಹಡಗುಗಳಿಗೆ ಜಲಸಂಧಿಯ ಮೂಲಕ ಹಾದುಹೋಗಲು 2 ಮಿಲಿಯನ್ ಡಾಲರ್ ಶುಲ್ಕ ವಿಧಿಸುತ್ತಿದೆ ಎಂದು ಇರಾನಿನ ಶಾಸಕ ಅಲಾಯೆದ್ದೀನ್ ಬೊರೊಜೆರ್ಡಿ ಯುನೈಟೆಡ್ ಕಿಂಗ್ಡಮ್ ಮೂಲದ, ಫಾರ್ಸಿ ಭಾಷೆಯ ಉಪಗ್ರಹ ಟಿವಿ ಚಾನೆಲ್ ಇರಾನ್ ಇಂಟರ್ನ್ಯಾಷನಲ್ ಗೆ ತಿಳಿಸಿದ್ದಾರೆ. ಈಗ ಯುದ್ಧಕ್ಕೆ ವೆಚ್ಚಗಳು ಇರುವುದರಿಂದ, ಸ್ವಾಭಾವಿಕವಾಗಿ, ನಾವು ಇದನ್ನು ಮಾಡಬೇಕಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಸಾರಿಗೆ ಶುಲ್ಕವನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ►ಜಲಸಂಧಿಯ ಮೂಲಕ ಹಾದುಹೋಗಲು ಎಷ್ಟು ಹಡಗುಗಳು ಕಾಯುತ್ತಿವೆ? ಅಂತರರಾಷ್ಟ್ರೀಯ ಕಡಲ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್ಸೆನಿಯೊ ಡೊಮಿಂಗ್ಯೂಜ್ ಅಲ್ ಜಜೀರಾಗೆ ನೀಡಿದ ಮಾಹಿತಿಯ ಪ್ರಕಾರ, ಜಲಸಂಧಿಯ ಎರಡೂ ಬದಿಗಳಲ್ಲಿ ಸುಮಾರು 2,000 ಹಡಗುಗಳು ಅದರ ಮೂಲಕ ಸಾಗಲು ಕಾಯುತ್ತಿವೆ. ಅನೇಕ ನಿರ್ವಾಹಕರು ದೀರ್ಘ-ದೂರದ ಮಾರ್ಗ ಬದಲಾವಣೆಗೆ ತಕ್ಷಣ ಬದ್ಧರಾಗುವ ಬದಲು ಹಾರ್ಮುಝ್ ನ ಹೊರಗೆ ಇದ್ದಾರೆ ಎಂದು ಸಮುದ್ರ ಗುಪ್ತಚರ ಸೇವೆ ವಿಂಡ್ವಾರ್ಡ್ ಹೇಳಿದೆ. ಮಾರ್ಚ್ 15 ರಿಂದ ರವಿವಾರದವರೆಗಿನ ವಾರದಲ್ಲಿ ಹಾರ್ಮುಝ್ ಜಲಸಂಧಿಯಲ್ಲಿ ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ಆನ್ ಆಗಿರುವ ಹಡಗುಗಳ ಕೇವಲ 16 ದಾಟುವಿಕೆಗಳನ್ನು ಗಮನಿಸಲಾಗಿದೆ. ಮಾರ್ಚ್ 13 ರಂದು ರಾತ್ರಿಯಿಡೀ ಮತ್ತು ಮುಂಜಾನೆ ನಾಲ್ಕು ಸರಕು ಹಡಗುಗಳು ಜಲಸಂಧಿಯನ್ನು ದಾಟಿವೆ ಅಥವಾ ದಾಟುತ್ತಿವೆ ಎಂದು ವಿಂಡ್ವಾರ್ಡ್ ಪ್ರತ್ಯೇಕವಾಗಿ ದೃಢಪಡಿಸಿದೆ, ಇದರಲ್ಲಿ ಒಂದು ಪಾಕಿಸ್ತಾನಿ ಹಡಗು ಕೂಡ ಸೇರಿದೆ. 290 ಮೀಟರ್ (950 ಅಡಿ) ಗಿಂತ ಹೆಚ್ಚು ಉದ್ದವಿರುವ ಎಂಟು ಡಾರ್ಕ್ ಹಡಗುಗಳು ಜಲಸಂಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಲಾಗಿದೆ. ಅವುಗಳ AIS ಅನ್ನು ಆಫ್ ಮಾಡಲಾಗಿತ್ತು. ಡಾರ್ಕ್ ಹಡಗುಗಳಲ್ಲಿ ಮಾರ್ಚ್ 16 ರಂದು ತೈಲ ಟ್ಯಾಂಕರ್ ಗಳ ಪ್ರಮುಖ ಕೇಂದ್ರವಾದ ಯುಎಇಯ ಖೋರ್ ಫಕ್ಕನ್ ಬಂದರಿನ ಬಳಿ ಗಮನಿಸಿದ ಯುಎಸ್-ಅನುಮೋದಿತ ಹಡಗು ಸೇರಿತ್ತು, ನಂತರ ಅದರ AIS ಅನ್ನು ಆಫ್ ಮಾಡಲಾಯಿತು ಎಂದು ವಿಂಡ್ವಾರ್ಡ್ ಹೇಳಿದೆ. ►ಸುಂಕಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಏನು? ಇರಾನಿನ ಸಂಸತ್ತು ಟೋಲ್ ಗಳನ್ನು ವಿಧಿಸುವ ಕಾನೂನನ್ನು ಇನ್ನೂ ಅಂಗೀಕರಿಸದಿದ್ದರೂ, ಕಳೆದ ಎರಡು ವಾರಗಳಲ್ಲಿ ಜಲಸಂಧಿಯ ಮೂಲಕ 26 ಹಡಗು ಸಾಗಣೆಗಳು IRGC ಟೋಲ್ ಬೂತ್ ವ್ಯವಸ್ಥೆಯ ಅಡಿಯಲ್ಲಿ ಪೂರ್ವ-ಅನುಮೋದಿತ ಮಾರ್ಗವನ್ನು ಅನುಸರಿಸಿವೆ. ಇದರಲ್ಲಿ ಹಡಗು ನಿರ್ವಾಹಕರು ಪರಿಶೀಲನಾ ಯೋಜನೆಗೆ ಒಳಪಡುವ ಅಗತ್ಯವಿದೆ ಎಂದು ಲಾಯ್ಡ್ಸ್ ಲಿಸ್ಟ್ ಬುಧವಾರ ವರದಿ ಮಾಡಿದೆ. ಈ ಹಡಗುಗಳ AIS ಅನ್ನು ಆನ್ ಮಾಡಲಾಗಿಲ್ಲ. ಜಲಸಂಧಿಯ ಮೂಲಕ ಹಾದುಹೋಗಲು, ಹಡಗು ನಿರ್ವಾಹಕರು ಮೊದಲು IRGCಗೆ ಸಂಪರ್ಕ ಹೊಂದಿದ ಮಧ್ಯವರ್ತಿಗಳನ್ನು ತಲುಪಬೇಕು ಮತ್ತು ಹಡಗಿನ ಎಲ್ಲಾ ವಿವರಗಳನ್ನು ಸಲ್ಲಿಸಬೇಕು. ಇದರಲ್ಲಿ ಅಂತರರಾಷ್ಟ್ರೀಯ ಕಡಲ ಸಂಸ್ಥೆಯ ಸಂಖ್ಯೆ, ಸಾಗಿಸಲಾಗುತ್ತಿರುವ ಸರಕು, ಸಿಬ್ಬಂದಿಯ ಎಲ್ಲಾ ಸದಸ್ಯರ ಹೆಸರುಗಳು ಮತ್ತು ಹಡಗಿನ ಅಂತಿಮ ಗಮ್ಯಸ್ಥಾನ ಸೇರಿವೆ ಎಂದು ಹೊಸ ವ್ಯವಸ್ಥೆಯ ಬಗ್ಗೆ ತಿಳಿದಿರುವ ಮೂಲಗಳು ಲಾಯ್ಡ್ಸ್ ಲಿಸ್ಟ್ಗೆ ತಿಳಿಸಿವೆ. ನಂತರ ಮಧ್ಯವರ್ತಿಗಳು ಮಾಹಿತಿಯನ್ನು IRGCಯ ನೌಕಾ ಕಮಾಂಡ್ ಗೆ ಸಲ್ಲಿಸುತ್ತಾರೆ. ಅವರು ಮಾಹಿತಿಯನ್ನು ಪರಿಶೀಲಿಸುತ್ತಾರೆ. ಹಡಗು ಸ್ಕ್ರೀನಿಂಗ್ ನಲ್ಲಿ ಪಾಸ್ ಆದರೆ, IRGC ಕ್ಲಿಯರೆನ್ಸ್ ಕೋಡ್ ಮತ್ತು ಹಡಗು ಜಲಸಂಧಿಯ ಮೂಲಕ ಹಾದುಹೋಗಲು ತೆಗೆದುಕೊಳ್ಳಬೇಕಾದ ಮಾರ್ಗದ ಸೂಚನೆಗಳನ್ನು ನೀಡುತ್ತದೆ. ಹಡಗು ಜಲಸಂಧಿಯನ್ನು ತಲುಪಿದ ನಂತರ, IRGC ಕಮಾಂಡರ್ ಗಳು VHF ರೇಡಿಯೊದಲ್ಲಿ ಕೂಗಿ ಹಡಗಿನ ಕ್ಲಿಯರೆನ್ಸ್ ಕೋಡ್ ಅನ್ನು ಕೇಳುತ್ತಾರೆ. ಅದಕ್ಕೆ ಹಡಗು ಉತ್ತರಿಸುತ್ತದೆ. ಅನುಮೋದನೆ ಪಡೆದರೆ, ಲಾರಕ್ ದ್ವೀಪದ ಸುತ್ತಲಿನ ದೇಶದ ಪ್ರಾದೇಶಿಕ ನೀರಿನ ಮೂಲಕ ಹಡಗನ್ನು ಕರೆದೊಯ್ಯಲು ಇರಾನ್ ನಿಂದ ದೋಣಿ ಬರುತ್ತದೆ. ಹಡಗುಗಳು IRGC ನೌಕಾಪಡೆಯ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಪಾಸ್ ಆಗದೇ ಇದ್ದರೆ, ಅವುಗಳನ್ನು ಜಲಮಾರ್ಗದ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ. ಮಂಗಳವಾರ, IRGC ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ, ಸೆಲೆನ್ ಎಂಬ ಕಂಟೇನರ್ ಹಡಗನ್ನು ಕಾನೂನು ಶಿಷ್ಟಾಚಾರಗಳನ್ನು ಪಾಲಿಸಲು ವಿಫಲವಾದ ಕಾರಣ ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಯ ಕೊರತೆಯಿಂದಾಗಿ ಹಿಂದಿರುಗಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ಜಲಮಾರ್ಗದ ಮೂಲಕ ಯಾವುದೇ ಹಡಗನ್ನು ಹಾದುಹೋಗಲು ಇರಾನ್ನ ಕಡಲ ಪ್ರಾಧಿಕಾರದೊಂದಿಗೆ ಸಂಪೂರ್ಣ ಸಮನ್ವಯದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಬುಧವಾರ ರಾತ್ರಿ ನಡೆದ ವಾಯುದಾಳಿಯಲ್ಲಿ ತಂಗ್ಸಿರಿ ಮತ್ತು ಇತರ ನೌಕಾ ಕಮಾಂಡ್ ನ ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಗುರುವಾರ ಹೇಳಿದೆ. ಇರಾನ್ ಇನ್ನೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ►ಸುಂಕವನ್ನು ಯಾರು ಪಾವತಿಸುತ್ತಾರೆ? ಹಾರ್ಮುಝ್ ಜಲಸಂಧಿಯು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳನ್ನು ಹೊರತುಪಡಿಸಿ ಎಲ್ಲರಿಗೂ ಮುಕ್ತವಾಗಿದೆ ಎಂದು ಇರಾನ್ ಹೇಳಿದೆ. ಮಂಗಳವಾರ ಅಂತರರಾಷ್ಟ್ರೀಯ ಕಡಲ ಸಂಘಟನೆಯ 176 ಸದಸ್ಯರಿಗೆ ಕಳುಹಿಸಲಾದ ಪತ್ರದಲ್ಲಿ, ಇರಾನ್ ಹೀಗೆ ಹೇಳಿದೆ: “ಇತರ ದೇಶಗಳಿಗೆ ಸೇರಿದ ಅಥವಾ ಅವುಗಳೊಂದಿಗೆ ಸಂಬಂಧ ಹೊಂದಿರುವ ಹಡಗುಗಳು ಸೇರಿದಂತೆ ಪ್ರತಿಕೂಲವಲ್ಲದ ಹಡಗುಗಳು ಇರಾನ್ ವಿರುದ್ಧದ ಆಕ್ರಮಣಕಾರಿ ಕೃತ್ಯಗಳಲ್ಲಿ ಭಾಗವಹಿಸಬಾರದು ಅಥವಾ ಬೆಂಬಲಿಸಬಾರದು, ಘೋಷಿತ ಸುರಕ್ಷತೆ ಮತ್ತು ಭದ್ರತಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಇರಾನಿನ ಅಧಿಕಾರಿಗಳೊಂದಿಗೆ ಸಮನ್ವಯದೊಂದಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗದಿಂದ ಪ್ರಯೋಜನ ಪಡೆಯಬಹುದು.” ಇರಾನ್ ಸ್ನೇಹಪರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿದ ನಂತರ, ಮಲೇಷ್ಯಾ, ಚೀನಾ, ಈಜಿಪ್ಟ್, ದಕ್ಷಿಣ ಕೊರಿಯಾ ಮತ್ತು ಭಾರತದ ಕೆಲವು ಹಡಗುಗಳಿಗೆ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಲಾಗಿದೆ. ಇಲ್ಲಿಯವರೆಗೆ ಜಲಸಂಧಿಯನ್ನು ಸಾಗಿಸಿದ ಕನಿಷ್ಠ ಎರಡು ಹಡಗುಗಳು ಚೀನಾದ ಕರೆನ್ಸಿಯಾದ ಯುವಾನ್ ನಲ್ಲಿ ಶುಲ್ಕವನ್ನು ಪಾವತಿಸಿವೆ. ಸೋಮವಾರ ಒಂದು ಸಾಗಣೆಯನ್ನು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಚೀನೀ ಕಡಲ ಸೇವೆಗಳ ಕಂಪೆನಿಯು ನಡೆಸಿದ್ದು, ಅದು ಇರಾನಿನ ಅಧಿಕಾರಿಗಳಿಗೆ ಪಾವತಿ ಮಾಡಿದೆ. ಆದಾಗ್ಯೂ, ಹಡಗುಗಳು ಎಷ್ಟು ಪಾವತಿಸಿವೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಲಾಯ್ಡ್ಸ್ ಲಿಸ್ಟ್ ವರದಿ ಮಾಡಿದೆ. ಆದರೆ ಭಾರತ ಸರ್ಕಾರದ ಪ್ರಕಾರ, ಜಲಸಂಧಿಯ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಇರಾನ್ ಗೆ ಯಾವುದೇ ಪಾವತಿಗಳನ್ನು ಮಾಡಿಲ್ಲ. ಜಲಸಂಧಿಯ ಮೂಲಕ ನೌಕಾಯಾನ ಮಾಡಲು ಯಾವುದೇ ಅನುಮತಿ ಅಗತ್ಯವಿಲ್ಲ. ಜಲಸಂಧಿಯ ಮೂಲಕ ಸಂಚಾರಕ್ಕೆ ಸ್ವಾತಂತ್ರ್ಯವಿದೆ. ಜಲಸಂಧಿ ಕಿರಿದಾಗಿರುವುದರಿಂದ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಮಾತ್ರ ಗುರುತಿಸಲಾಗಿದೆ, ಇವುಗಳನ್ನು ಹಡಗು ಮಾರ್ಗಗಳು ಅನುಸರಿಸಬೇಕಾಗುತ್ತದೆ. ಯಾವಾಗ ನೌಕಾಯಾನ ಮಾಡಬೇಕು ಅಥವಾ ಯಾವಾಗ ನೌಕಾಯಾನ ಮಾಡಬಾರದು ಎಂಬುದು ಸನ್ನದು ಮತ್ತು ಹಡಗು ಕಂಪೆನಿಯ ನಿರ್ಧಾರವಾಗಿದೆ ಎಂದು ಭಾರತೀಯ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಂಗಳವಾರ ಹೇಳಿದ್ದಾರೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. 92,600 ಟನ್ಗಳಿಗಿಂತ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಹೊತ್ತ ಎರಡು ಹಡಗುಗಳು ಸಾಗಿವೆ. ಇವು ಗುರುವಾರ ಮತ್ತು ಶನಿವಾರದ ನಡುವೆ ಉಪಖಂಡವನ್ನು ತಲುಪಲಿವೆ ಎಂದು ಸಚಿವಾಲಯ ತಿಳಿಸಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಕೆಲವು ಸ್ನೇಹಪರ ರಾಷ್ಟ್ರಗಳಿಗೆ ಸಾಗಣೆಗೆ ಅವಕಾಶ ನೀಡುವುದು ತಾರತಮ್ಯವಾಗುತ್ತದೆ ಎಂದು ಭಾರತೀಯ ಕಾನೂನು ಸಂಸ್ಥೆ ಎಎನ್ಬಿ ಲೀಗಲ್ ನ ಪಾಲುದಾರರಾದ ಅಪೂರ್ವ ಮೆಹ್ತಾ ಹೇಳಿದ್ದಾರೆ ಎಂದು Aljazeera ವರದಿ ಉಲ್ಲೇಖಿಸಿದೆ. ಮುಂದಿನ ದಿನಗಳಲ್ಲಿ ಯಾವ ಹಡಗುಗಳು ಟೋಲ್ ಪಾವತಿಸಬೇಕಾಗುತ್ತದೆ ಮತ್ತು ಅಂತಹ ಪಾವತಿಗಳನ್ನು ಯಾವ ಕರೆನ್ಸಿಯಲ್ಲಿ ಮಾಡಲಾಗುತ್ತದೆ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ. ರಾಷ್ಟ್ರಗಳು 'ಟೋಲ್'ಗಳ ಪಾವತಿಗೆ ಒಳಪಟ್ಟಿದ್ದರೂ ಸಹ, ತಮ್ಮ ಸರಕುಗಳನ್ನು ತೆರವುಗೊಳಿಸಲು ಉತ್ಸುಕರಾಗಿರುತ್ತವೆ ಎಂದು ಮೆಹ್ತಾ ಹೇಳಿದ್ದಾರೆ. ►ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸುಂಕ ವಿಧಿಸುವುದು ಕಾನೂನುಬದ್ಧವೇ? ವಿಶ್ವಸಂಸ್ಥೆಯ ಸಮುದ್ರ ಕಾನೂನು ಸಮಾವೇಶದ (UNCLOS) 38 ನೇ ವಿಧಿಯ ಪ್ರಕಾರ, ಎಲ್ಲಾ ಹಡಗುಗಳು ಮತ್ತು ವಿಮಾನಗಳು ಸಾರಿಗೆ ಮಾರ್ಗದ ಹಕ್ಕನ್ನು ಹೊಂದಿವೆ. ಇದನ್ನು ಯಾವುದೇ ದೇಶವು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಸಮಾವೇಶದ 17 ನೇ ವಿಧಿಯ ಅಡಿಯಲ್ಲಿ, ಪ್ರತಿಯೊಂದು ವಿದೇಶಿ ಹಡಗು ಯಾವುದೇ ರಾಷ್ಟ್ರದ ಪ್ರಾದೇಶಿಕ ನೀರಿನಲ್ಲಿ ಹಾದುಹೋಗುವ ಹಕ್ಕನ್ನು ಹೊಂದಿದೆ. UNCLOSನ 19 ನೇ ವಿಧಿಯ ಅಡಿಯಲ್ಲಿ, ಕರಾವಳಿ ರಾಜ್ಯದ ಶಾಂತಿ, ಉತ್ತಮ ಸುವ್ಯವಸ್ಥೆ ಅಥವಾ ಭದ್ರತೆಗೆ ಹಾನಿಯಾಗದಿರುವವರೆಗೆ ಸಾಗಣೆಗೆ ಅನುಮತಿ ಇರುತ್ತದೆ. ಕರಾವಳಿ ರಾಜ್ಯವು ಈ ಮಾರ್ಗವನ್ನು ಪೂರ್ವಾಗ್ರಹ ಪೀಡಿತ ಎಂದು ಪರಿಗಣಿಸಬಹುದಾದ 13 ವರ್ಗಗಳಿವೆ ಎಂದು ಮೆಹ್ತಾ ಹೇಳಿದ್ದಾರೆ. ಕರಾವಳಿ ರಾಜ್ಯವು ಒಂದು ಮಾರ್ಗವು ಸರಿಯಲ್ಲ ಎಂದು ಭಾವಿಸಿದರೆ, ಅದರ ಭದ್ರತೆಯ ರಕ್ಷಣೆಗೆ ಅಂತಹ ರದ್ದು ಅತ್ಯಗತ್ಯವಾದರೆ, ಅದರ ಪ್ರಾದೇಶಿಕ ಸಮುದ್ರದ ನಿರ್ದಿಷ್ಟ ಪ್ರದೇಶಗಳಲ್ಲಿ ವಿದೇಶಿ ಹಡಗುಗಳ ಮುಗ್ಧ ಮಾರ್ಗವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಅಂತಹ ಮಾರ್ಗವನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇರಾನ್ UNCLOS ಗೆ ಸಹಿ ಹಾಕಿದ್ದರೂ, ಅದರ ಸಂಸತ್ತು ಅದನ್ನು ಅಂಗೀಕರಿಸಿಲ್ಲ. ಆದ್ದರಿಂದ UNCLOS ಅಡಿಯಲ್ಲಿ ಅಂತರರಾಷ್ಟ್ರೀಯ ಆಡಳಿತಕ್ಕೆ ಬದ್ಧವಾಗಿಲ್ಲ ಎಂದು ಇರಾನ್ ವಾದಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಕಡಲ ಕಾನೂನಿನ ಪ್ರಾಧ್ಯಾಪಕ ಜೇಸನ್ ಚುವಾ, ಅತ್ಯಂತ ಕಿರಿದಾದ ಹಂತದಲ್ಲಿ, ಹಾರ್ಮುಝ್ ಜಲಸಂಧಿಯು ಕೇವಲ 21 ನಾಟಿಕಲ್ ಮೈಲುಗಳು (39 ಕಿಮೀ) ಅಗಲವಿದೆ. UNCLOS ಅಡಿಯಲ್ಲಿ, ಕರಾವಳಿ ರಾಜ್ಯಗಳು ತಮ್ಮ ಕರಾವಳಿಯಿಂದ 12 ನಾಟಿಕಲ್ ಮೈಲುಗಳು (22 ಕಿಮೀ) ಸಮುದ್ರವನ್ನು ತಮ್ಮ ಪ್ರಾದೇಶಿಕ ಜಲವೆಂದು ಹೇಳಿಕೊಳ್ಳಬಹುದು ಎಂದು ಹೇಳಿದ್ದಾರೆ. ಜಲಸಂಧಿಯ ಸಂಪೂರ್ಣ ಅಗಲವು ಇರಾನ್ ಮತ್ತು ಒಮಾನ್ ನ ಅತಿಕ್ರಮಿಸುವ ಪ್ರಾದೇಶಿಕ ಸಮುದ್ರಗಳನ್ನು ಒಳಗೊಂಡಿದೆ. ಒಂದು ದೇಶದ ಪ್ರಾದೇಶಿಕ ನೀರಿನ ಆಚೆಗೆ ಯಾವುದೇ ಎತ್ತರದ ಸಮುದ್ರ ಅಥವಾ ಸಮುದ್ರದ ಕೆಲವು ಭಾಗಗಳಿಲ್ಲ. ಹೀಗಾಗಿ ಇರಾನ್ ಈ ಪ್ರದೇಶದ ಮೇಲೆ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತದೆ. ಆದಾಗ್ಯೂ, ಇರಾನ್ ತನ್ನ ಕರಾವಳಿಯಿಂದ 12 ನಾಟಿಕಲ್ ಮೈಲುಗಳನ್ನು ಮೀರಿದ ಯಾವುದರ ಮೇಲೂ ಯಾವುದೇ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ. ಆದ್ದರಿಂದ ನಿಮ್ಮ ಹಡಗು ಒಮಾನಿನ ಕರಾವಳಿಯನ್ನು ಬಳಸಿದರೆ ಅದು ಟೋಲ್ ವಿಧಿಸಲು ಸಾಧ್ಯವಿಲ್ಲ. ಆದರೆ ಒಮಾನಿ ಅಥವಾ ಇರಾನ್ ಕಡೆಯ ಯಾವುದೇ ಹಡಗಿನ ಮೇಲೆ ಕ್ಷಿಪಣಿಗಳು ಅಥವಾ ಡ್ರೋನ್ಗಳ ಮೂಲಕ ದಾಳಿ ಮಾಡುವ ಹಕ್ಕನ್ನು ಅದು ಕಾಯ್ದಿರಿಸಿದೆ. ಆದ್ದರಿಂದ ನಿಮ್ಮ ಹಡಗು ಸುರಕ್ಷಿತವಾಗಿರಬೇಕೆಂದು ನೀವು ಬಯಸಿದರೆ, ನೀವು ಇರಾನಿನ ಬದಿಯಲ್ಲಿ ಪ್ರಯಾಣಿಸಲು ಮತ್ತು ಪಾವತಿಸಲು ಮತ್ತು ಸುರಕ್ಷಿತ ಮಾರ್ಗವನ್ನು ಪಡೆಯಲು ನಿರ್ಧರಿಸಬಹುದು ಎಂದು ಚುವಾ ಹೇಳಿದ್ದಾರೆ. ಸಶಸ್ತ್ರ ಸಂಘರ್ಷದ ಕಾನೂನುಗಳು ಮತ್ತು ಆತ್ಮರಕ್ಷಣೆಯ ತತ್ವದ ಅಡಿಯಲ್ಲಿ, ಇರಾನ್ ನಂತಹ ಯುದ್ಧೋಚಿತ ರಾಷ್ಟ್ರವು ಶತ್ರುಗಳ ಯುದ್ಧ ಪ್ರಯತ್ನಕ್ಕೆ ಹಡಗುಗಳು ಕೊಡುಗೆ ನೀಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹಡಗುಗಳನ್ನು ಪರಿಶೋಧಿಸುವ ಹಕ್ಕನ್ನು ಹೊಂದಿದೆ ಎಂದು ವಾದಿಸಬಹುದು ಎಂದು ಅವರು ಹೇಳಿದ್ದಾರೆ. ಯುದ್ಧೋಚಿತ ಯುದ್ಧನೌಕೆಗಳು ತಮ್ಮ ರಾಷ್ಟ್ರೀಯತೆಯನ್ನು ಪರಿಶೀಲಿಸಲು ಮತ್ತು ಶತ್ರುಗಳಿಗೆ ಉದ್ದೇಶಿಸಲಾದ ನಿಷಿದ್ಧ ವಸ್ತುಗಳನ್ನು ಪರಿಶೀಲಿಸಲು ವ್ಯಾಪಾರಿ ಹಡಗುಗಳನ್ನು ನಿಲ್ಲಿಸಲು ಮತ್ತು ಹತ್ತಲು ಸಾಂಪ್ರದಾಯಿಕ ಹಕ್ಕನ್ನು ಹೊಂದಿವೆ. ಯುದ್ಧದ ಸಮಯದಲ್ಲಿ ಭೇಟಿ ಮತ್ತು ಶೋಧ ಕಾರ್ಯವಿಧಾನಗಳು ಅನ್ವಯಿಸುತ್ತವೆ. UNCLOS ನ 51 ನೇ ವಿಧಿಯ ಅಡಿಯಲ್ಲಿ ಇದು ಕಾನೂನುಬದ್ಧವಾಗಬೇಕಾದರೆ, ದಾಳಿಯನ್ನು ಹಿಮ್ಮೆಟ್ಟಿಸಲು ಮತ್ತು ಪ್ರಮಾಣಾನುಗುಣವಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿರಬೇಕು. ಆದಾಗ್ಯೂ, ಎಲ್ಲಾ ವಾಣಿಜ್ಯ ಸಂಚಾರವನ್ನು ನಿಲ್ಲಿಸುವುದು ಅಥವಾ ಸಾರಿಗೆ ಶುಲ್ಕವನ್ನು ವಿಧಿಸುವುದು ಆತ್ಮರಕ್ಷಣೆಯ ಮಿತಿಗಳನ್ನು ಮೀರುತ್ತದೆ ಮತ್ತು ಕಾನೂನುಬಾಹಿರ ಆರ್ಥಿಕ ಯುದ್ಧವಾಗುತ್ತದೆ ಎಂದು ಚುವಾ ಹೇಳಿದ್ದಾರೆ. ಯುದ್ಧಕಾಲದ ಸುಂಕಗಳು ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಅಕ್ಟೋಬರ್ 2024 ರಲ್ಲಿ, ಯೆಮೆನ್ನ ಹೌತಿಗಳು ತಮ್ಮ ಕರಾವಳಿಯಲ್ಲಿ ಹಾದುಹೋಗುವ ಹಡಗುಗಳಿಗೆ ಶುಲ್ಕ ವಿಧಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯು ಆರೋಪಿಸಿತ್ತು. ಕೆಲವು ಹಡಗು ಏಜೆನ್ಸಿಗಳಿಂದ ಹೌತಿಗಳು ಅಕ್ರಮ ಶುಲ್ಕವನ್ನು ಸಂಗ್ರಹಿಸಿದ್ದಾರೆ. ಇದರಿಂದಾಗಿ ಅವರ ಹಡಗುಗಳು ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯ ಮೂಲಕ ದಾಳಿ ಮಾಡದೆ ಸಾಗಲು ಅವಕಾಶ ದೊರಕುತ್ತದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಈ ಅಕ್ರಮ ಸುರಕ್ಷಿತ ಸಾರಿಗೆ ಶುಲ್ಕಗಳಿಂದ ಹೌತಿಗಳ ಗಳಿಕೆಯು ತಿಂಗಳಿಗೆ ಸುಮಾರು 180 ಮಿಲಿಯನ್ ಡಾಲರ್ ಎಂದು ಮೂಲಗಳು ಅಂದಾಜಿಸುತ್ತವೆ ಎಂದು ವರದಿ ಹೇಳಿದ್ದರೂ, ಹೌತಿಗಳು ಈ ಹಕ್ಕುಗಳನ್ನು ನಿರಾಕರಿಸಿದ್ದಾರೆ. ಆ ಸಮಯದಲ್ಲಿ, ಇರಾನ್ ಬೆಂಬಲಿತ ಹೌತಿಗಳು ಫೆಲೆಸ್ತೀನಿಯನ್ನರ ಒಗ್ಗಟ್ಟಿನಲ್ಲಿ ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ್ದರು. ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧ ಯುದ್ಧವನ್ನು ವಿರೋಧಿಸಿ ಇಸ್ರೇಲ್ಗೆ ಸಂಬಂಧಿಸಿದ ಅಥವಾ ಇಸ್ರೇಲ್ಗೆ ತೆರಳುವ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಹೌತಿಗಳು ಹೇಳಿಕೊಂಡಿದ್ದರು. ಇರಾನ್ ಇನ್ನೂ ತನ್ನ ಟೋಲ್ ಬೂತ್ ವ್ಯವಸ್ಥೆಯನ್ನು ಕಾನೂನುಬದ್ಧವಾಗಿ ಅಂಗೀಕರಿಸಿಲ್ಲವಾದರೂ, ಅಬುಧಾಬಿ ರಾಜ್ಯ ತೈಲ ಕಂಪೆನಿ ADNOC ನ ಸಿಇಒ ಸುಲ್ತಾನ್ ಅಲ್-ಜಾಬರ್, ಇರಾನ್ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಯಾವುದೇ ನಿರ್ಬಂಧವನ್ನು ಆರ್ಥಿಕ ಭಯೋತ್ಪಾದನೆ ಎಂದು ಬಣ್ಣಿಸಿದ್ದಾರೆ. ಇರಾನ್ ಹಾರ್ಮುಝ್ ಅನ್ನು ಒತ್ತೆಯಾಳಾಗಿಟ್ಟುಕೊಂಡಾಗ, ಪ್ರತಿಯೊಂದು ರಾಷ್ಟ್ರವೂ ಗ್ಯಾಸ್ ಪಂಪ್ನಲ್ಲಿ, ದಿನಸಿ ಅಂಗಡಿಯಲ್ಲಿ, ಔಷಧಾಲಯದಲ್ಲಿ ಸುಲಿಗೆ ಪಾವತಿಸುತ್ತದೆ. ಯಾವುದೇ ದೇಶವು ಜಾಗತಿಕ ಆರ್ಥಿಕತೆಯನ್ನು ಈ ರೀತಿ ಅಸ್ಥಿರಗೊಳಿಸಲು ಬಿಡಲಾಗುವುದಿಲ್ಲ — ಈಗ ಮಾತ್ರ ಅಲ್ಲ, ಎಂದೆಂದಿಗೂ ಇಲ್ಲ ಎಂದು ಅಲ್-ಜಾಬರ್ ಅಮೆರಿಕದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
APSEZ Port of Refuge: ಭಾರತದ ಕರಾವಳಿಗೆ ರಕ್ಷಾ ಕವಚ: ದೇಶದ ಮೊದಲ ಆಶ್ರಯ ಬಂದರು ಸ್ಥಾಪಿಸಿದ ಅದಾನಿ ಸಮೂಹ
ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ) ಭಾರತದ ಮೊಟ್ಟಮೊದಲ 'ಪೋರ್ಟ್ ಆಫ್ ರಿಫ್ಯೂಜ್' ಅನ್ನು ಕಾರ್ಯಾಚರಣೆಗೆ ತಂದಿದೆ. ಇದು ದೇಶದ ಸಮುದ್ರಯಾನ ತುರ್ತು ಸ್ಪಂದನಾ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಇಟ್ಟಿರುವ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಭಾರತದ ಕರಾವಳಿಯುದ್ದಕ್ಕೂ ಎದುರಾಗಬಹುದಾದ ಸಮುದ್ರಯಾನ ತುರ್ತು ಪರಿಸ್ಥಿತಿಗಳು ಮತ್ತು ಸಂಕಷ್ಟಕ್ಕೆ ಸಿಲುಕುವ ಹಡಗುಗಳನ್ನು ಸುರಕ್ಷಿತವಾಗಿ ನಿರ್ವಹಿಸುವಲ್ಲಿ ದಶಕಗಳಿಂದ
WTO ಸಮ್ಮೇಳನ ಆರಂಭ: ಜಾಗತಿಕ ಸವಾಲುಗಳು ಮತ್ತು ಭಾರತದ ಪ್ರಮುಖ ಆದ್ಯತೆಗಳು ಏನು?
WTO ಸಮ್ಮೇಳನ ಆರಂಭ: ಜಾಗತಿಕ ಸವಾಲುಗಳು ಮತ್ತು ಭಾರತದ ಪ್ರಮುಖ ಆದ್ಯತೆಗಳು ಏನು? ರಶ್ಮಿ ಕಾಸರಗೋಡು ವಿಶ್ವ ವ್ಯಾಪಾರ ಸಂಸ್ಥೆಯ 14ನೇ ಸಚಿವರ ಸಮ್ಮೇಳನ (MC14) ಗುರುವಾರ (ಮಾರ್ಚ್ 26) ಕ್ಯಾಮರೂನ್ನಲ್ಲಿ ಆರಂಭವಾಗಿದ್ದು, ಮಾರ್ಚ್ 29ರವರೆಗೆ ನಡೆಯಲಿದೆ. ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕದ ಆಡಳಿತದಿಂದ ಅಸ್ತವ್ಯಸ್ತವಾಗಿರುವ ಜಾಗತಿಕ ವ್ಯಾಪಾರ ಕ್ರಮವನ್ನು ಮತ್ತೆ ಹಳಿಗೆ ತರುವ ಗುರಿಯನ್ನು ಹೊಂದಿರುವ ಸುಧಾರಣೆಗಳು ಕಾರ್ಯಸೂಚಿಯಲ್ಲಿವೆ. ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕಿ ನ್ಗೋಜಿ ಒಕೊಂಜೊ-ಇವೆಲಾ ಈ ಸಮ್ಮೇಳನವನ್ನು 'ಮಹತ್ವದ ತಿರುವು' ಎಂದು ಕರೆದಿದ್ದಾರೆ. ವಿಶ್ವ ವ್ಯಾಪಾರ ಸಂಸ್ಥೆಯ ವಿವಾದ ಇತ್ಯರ್ಥ ಸಂಸ್ಥೆಗೆ ನ್ಯಾಯಾಧೀಶರ ನೇಮಕವನ್ನು ಸತತ ಅಮೆರಿಕನ್ ಆಡಳಿತಗಳು ನಿರ್ಬಂಧಿಸುತ್ತಿರುವುದರಿಂದ, ಅದರ ವ್ಯಾಪಾರ ವಿವಾದ ಇತ್ಯರ್ಥ ಅಧಿಕಾರಗಳು ನಿಷ್ಕ್ರಿಯಗೊಂಡಿರುವ ಸಮಯದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. 'ಅತ್ಯಂತ ಅನುಕೂಲಕರ ರಾಷ್ಟ್ರ' ನಿಯಮವನ್ನು ಪುನರ್ವಿಮರ್ಶಿಸುವ ಮೂಲಕ ಮತ್ತು ಬಹುಪಕ್ಷೀಯ ಒಪ್ಪಂದಗಳನ್ನು ಉತ್ತೇಜಿಸುವ ಮೂಲಕ ಅಮೆರಿಕವು ವಿಶ್ವ ವ್ಯಾಪಾರ ಸಂಸ್ಥೆಯನ್ನು ಆಧುನೀಕರಿಸಲು ಒತ್ತಾಯಿಸುತ್ತಿದೆ. ಈ ಪ್ರಸ್ತಾಪಗಳು ದಶಕಗಳಿಂದ ಜಾಗತಿಕ ವ್ಯಾಪಾರವನ್ನು ನಿಯಂತ್ರಿಸುತ್ತಿರುವ ತಾರತಮ್ಯರಹಿತ ಹಾಗೂ ಸರ್ವಾನುಮತದ ಸ್ಥಾಪಿತ ಮಾನದಂಡಗಳಿಂದ ತೀಕ್ಷ್ಣ ಬದಲಾವಣೆಯನ್ನು ಸೂಚಿಸುತ್ತವೆ. ಈ ಮಧ್ಯೆ, ಭಾರತವು ಜಾಗತಿಕ ವ್ಯಾಪಾರದಲ್ಲಿ ತುಲನಾತ್ಮಕವಾಗಿ ಕಡಿಮೆ ಪಾಲನ್ನು ಹೊಂದಿದ್ದರೂ, ಭವಿಷ್ಯದ ಬೆಳವಣಿಗೆಗೆ ಹೆಚ್ಚಿನ ಅವಕಾಶವನ್ನು ಹೊಂದಿರುವುದರಿಂದ ಮುಖ್ಯವಾಗಿ ನೀತಿ ಕ್ಷೇತ್ರವನ್ನು ಅನುಸರಿಸುತ್ತಿದೆ. ಅಂತರರಾಷ್ಟ್ರೀಯ ವ್ಯಾಪಾರ ತಜ್ಞರ ಒಂದು ವರ್ಗವು ಈ ನಿಲುವು ಹಿಂದಿನ ಅನುಭವದಿಂದ ಹುಟ್ಟಿಕೊಂಡಿದೆ ಎಂದು ನಂಬುತ್ತದೆ. ಉದಾಹರಣೆಗೆ, 1996ರಲ್ಲಿ ಮಾಹಿತಿ ತಂತ್ರಜ್ಞಾನ ಒಪ್ಪಂದ–1 (ITA-1) ಗೆ ಒಪ್ಪಿಕೊಂಡದ್ದು. ಆ ಸಮಯದಲ್ಲಿ ಭಾರತ ಸೇರಿದಂತೆ ಭಾಗವಹಿಸಿದವರು ಒಪ್ಪಂದದ ವ್ಯಾಪ್ತಿಗೆ ಬರುವ ಐಟಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಒಪ್ಪಿಕೊಂಡರು. ಭಾರತವು ಐಟಿ ಕ್ಷೇತ್ರದಿಂದ ಪ್ರಯೋಜನ ಪಡೆದಿದ್ದರೂ, ದೇಶದೊಳಗೆ ಐಟಿ ಉತ್ಪನ್ನಗಳ ಉತ್ಪಾದನೆಗೆ ಒತ್ತಾಯಿಸುವುದನ್ನು ತಪ್ಪಿಸಿಕೊಂಡಿತು. ►ಸಭೆಯ ಪ್ರಮುಖ ಆದ್ಯತೆಗಳು ಮತ್ತು ಭಾರತದ ಕಾರ್ಯಸೂಚಿ ►ಇ-ಕಾಮರ್ಸ್ ಮೇಲಿನ ಸುಂಕ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಡುವಿನ ವಿವಾದದ ಕೇಂದ್ರ ಅಂಶವೆಂದರೆ ಇ-ಕಾಮರ್ಸ್ ಮೇಲಿನ ಸುಂಕ ನಿಷೇಧ. ಡಿಜಿಟಲ್ ಸ್ಟ್ರೀಮಿಂಗ್ ನಿಂದ ಇ-ಪುಸ್ತಕಗಳವರೆಗೆ ಎಲ್ಲವನ್ನೂ ಒಳಗೊಂಡಿರುವ ‘ಎಲೆಕ್ಟ್ರಾನಿಕ್ ಪ್ರಸರಣ’ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ನಿಷೇಧಿಸುವ ಈ ಒಪ್ಪಂದವು 1998ರಲ್ಲಿ ಮೊದಲು ಸ್ಥಾಪನೆಯಾದಾಗಿನಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ನಿರಂತರವಾಗಿ ನವೀಕರಿಸಲಾಗುತ್ತಿದೆ. ಭವಿಷ್ಯದಲ್ಲಿ ಡಿಜಿಟಲ್ ರೂಪದಲ್ಲಿ ವಿತರಿಸಲಾದ ಸೇವೆಗಳಿಂದ ಆದಾಯವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹಾಳುಮಾಡುವುದರಿಂದ, ಈ ನಿಷೇಧವನ್ನು ಮುಂದುವರಿಸುವ ವಿಶ್ವ ವ್ಯಾಪಾರ ಸಂಸ್ಥೆಯ ಪ್ರಸ್ತಾಪವನ್ನು ಭಾರತ ವಿರೋಧಿಸುತ್ತಿದೆ. ಮುಂದುವರಿದ ಡಿಜಿಟಲ್ ಕೈಗಾರಿಕೆಗಳ ಕೊರತೆಯಿರುವ ರಾಷ್ಟ್ರಗಳಿಗೆ ಈ ನಿಷೇಧವು ಮೂಲಭೂತವಾಗಿ ಅನಾನುಕೂಲತೆಯನ್ನುಂಟು ಮಾಡುತ್ತದೆ ಎಂದು ಭಾರತ, ಇಂಡೋನೇಷ್ಯಾ ಮತ್ತು ದಕ್ಷಿಣ ಆಫ್ರಿಕಾ ಹೇಳಿವೆ. ಆದಾಯದ ಪರಿಗಣನೆಗಳು ಭಾರತದ ನಿಲುವಿಗೆ ಪ್ರಮುಖ ಆಧಾರವಾಗಿದೆ. ಡಿಜಿಟಲ್ ವ್ಯಾಪಾರವು 1998ರಲ್ಲಿ 1 ಟ್ರಿಲಿಯನ್ ಡಾಲರ್ಗಿಂತ ಕಡಿಮೆಯಿದ್ದರೆ, 2025ರ ವೇಳೆಗೆ ಇದು 16 ಟ್ರಿಲಿಯನ್ ಡಾಲರ್ಗಿಂತ ಹೆಚ್ಚಾಗಿದೆ. ಡಿಜಿಟಲ್ ರೂಪದಲ್ಲಿ ವಿತರಿಸಲಾದ ಸೇವೆಗಳು ಮಾತ್ರ ಜಾಗತಿಕ ಸೇವೆಗಳ ರಫ್ತಿನ 56 ಪ್ರತಿಶತವನ್ನು ಪ್ರತಿನಿಧಿಸುತ್ತವೆ. ಇದೇ ವೇಳೆ ಸ್ವತಂತ್ರ ದೇಶೀಯ ನೀತಿಗಳನ್ನು ಹೊಂದಿಸುವ ಹಕ್ಕನ್ನು ರಕ್ಷಿಸುವುದೂ ಪ್ರಮುಖವಾಗಿದೆ. ವಿಶ್ವ ವ್ಯಾಪಾರ ಸಂಸ್ಥೆಗೆ ಹಿಂದಿನ ಜಂಟಿ ಸಲ್ಲಿಕೆಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ, ಡಿಜಿಟಲ್ ಸುಂಕಗಳ ಕುರಿತ ಚರ್ಚೆ ಹಣಕಾಸಿನ ಕಾಳಜಿಗಳನ್ನು ಮೀರಿದೆ ಎಂದು ಒತ್ತಿ ಹೇಳಿವೆ. ಈ ತಿಂಗಳ ಆರಂಭದಲ್ಲಿ ದೆಹಲಿ ಮೂಲದ ಚಿಂತಕರ ಚಾವಡಿ ರಿಸರ್ಚ್ ಅಂಡ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಡೆವಲಪಿಂಗ್ ಕಂಟ್ರೀಸ್ (RIS) ತನ್ನ ವರದಿಯಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳು ಡಿಜಿಟಲ್ ಯುಗದಲ್ಲಿ ಸ್ಪರ್ಧಾತ್ಮಕವಾಗಿರಲು ತಮ್ಮ ಡಿಜಿಟಲ್ ಕೌಶಲ್ಯ ಮತ್ತು ಮೂಲಸೌಕರ್ಯವನ್ನು ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದೆ. “ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ಇಂಟರ್ನೆಟ್ ಪ್ರವೇಶವನ್ನು ಹೆಚ್ಚಿಸಲು ಇನ್ನೂ ತೊಂದರೆ ಅನುಭವಿಸುತ್ತಿವೆ; ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ದೊಡ್ಡ ದತ್ತಾಂಶ ವಿಶ್ಲೇಷಣೆ ಮತ್ತು 3D ಮುದ್ರಣದಂತಹ ತಂತ್ರಜ್ಞಾನಗಳಲ್ಲಿ ಅಪಾರ ಹೂಡಿಕೆ ಮಾಡುತ್ತಿವೆ” ಎಂದು ಅದು ಹೇಳಿದೆ. ►ಚೀನಾ ಬೆಂಬಲಿತ ಹೂಡಿಕೆ ಒಪ್ಪಂದ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿನ ಮತ್ತೊಂದು ಪ್ರಮುಖ ವಿಷಯವೆಂದರೆ ಚೀನಾ ಬೆಂಬಲಿತ ಅಭಿವೃದ್ಧಿಗಾಗಿ ಹೂಡಿಕೆ ಸೌಲಭ್ಯ (IFD) ಒಪ್ಪಂದ. ಇದು 128 ದೇಶಗಳ ಬೆಂಬಲವನ್ನು ಗಳಿಸಿದೆ. ವಿಶ್ವ ವ್ಯಾಪಾರ ಸಂಸ್ಥೆ ಪ್ರಕಾರ, ಈ ಒಪ್ಪಂದವು ಸದಸ್ಯರ ನಡುವೆ ವಿದೇಶಿ ನೇರ ಹೂಡಿಕೆ ಹರಿವನ್ನು ಸುಧಾರಿಸುವ ಉದ್ದೇಶ ಹೊಂದಿದೆ. ಇದು ಮುಖ್ಯವಾಗಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಅಭಿವೃದ್ಧಿಶೀಲ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳನ್ನು ಗುರಿಯಾಗಿರಿಸಿಕೊಂಡಿದೆ. ಆದರೆ ಭಾರತವು ಈ ಒಪ್ಪಂದವನ್ನು ವಿರೋಧಿಸಿದೆ. ಬಹುಪಕ್ಷೀಯ ಮಾರ್ಗದ ಮೂಲಕ ಐಎಫ್ಡಿಯನ್ನು ಸೇರಿಸುವುದರಿಂದ WTO ಭವಿಷ್ಯದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಎಂದು ಭಾರತ ವಾದಿಸಿದೆ. ಇದು ಸಾಂಪ್ರದಾಯಿಕವಾಗಿ ಸರ್ವಾನುಮತ ಮತ್ತು ಬಹುಪಕ್ಷೀಯತೆಯನ್ನು ಆಧರಿಸಿದೆ. ಒಪ್ಪಂದದ ಪ್ರತಿಪಾದಕರು, ಐಎಫ್ಡಿ ಒಪ್ಪಂದವು ಮಾರುಕಟ್ಟೆ ಪ್ರವೇಶ, ಹೂಡಿಕೆ ರಕ್ಷಣೆ, ಹೂಡಿಕೆದಾರ-ರಾಜ್ಯ ವಿವಾದ ಇತ್ಯರ್ಥ, ಸರ್ಕಾರಿ ಖರೀದಿ ಮತ್ತು ಕೆಲವು ಸಬ್ಸಿಡಿಗಳನ್ನು ಹೊರಗಿಡುತ್ತದೆ ಎಂದು ಹೇಳುತ್ತಾರೆ. ಆದರೆ ತಜ್ಞರ ಪ್ರಕಾರ ಭಾರತಕ್ಕೆ ಇದು ಕಾರ್ಯತಂತ್ರದ ವಿಷಯವಾಗಿದೆ. ‘ವಿಶ್ವ ವ್ಯಾಪಾರ ಮತ್ತು ಅಭಿವೃದ್ಧಿ’ ವರದಿ ಪ್ರಕಾರ, ಐಎಫ್ಡಿ ಒಕ್ಕೂಟದ ಗಮನಾರ್ಹ ಲಕ್ಷಣವೆಂದರೆ ಚೀನಾದ ಜಾಗತಿಕ ಸಂಪರ್ಕ ಮತ್ತು ಮೂಲಸೌಕರ್ಯ ಯೋಜನೆಗಳೊಂದಿಗೆ ಅದರ ಹೊಂದಾಣಿಕೆ. 128 ದೇಶಗಳಲ್ಲಿ 98 ದೇಶಗಳು ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಸದಸ್ಯರಾಗಿವೆ. ಈ ಸಂಬಂಧವು ಔಪಚಾರಿಕ ಸಂಪರ್ಕವಲ್ಲದಿದ್ದರೂ, ಭೌಗೋಳಿಕ-ಆರ್ಥಿಕ ತಂತ್ರಗಳೊಂದಿಗೆ ಹೊಂದಾಣಿಕೆಯನ್ನು ಸೂಚಿಸುತ್ತದೆ. ನಿಯಂತ್ರಕ ವಿಧಾನಗಳನ್ನು ಪ್ರಮಾಣೀಕರಿಸುವ ಮೂಲಕ, ಐಎಫ್ಡಿ ಗಡಿಯಾಚೆಗಿನ ಹೂಡಿಕೆ ವಾತಾವರಣವನ್ನು ಬಲಪಡಿಸಬಹುದು ಎಂದು ಆರ್ಐಎಸ್ ವರದಿ ಹೇಳಿದೆ. ►ಸಾರ್ವಜನಿಕ ದಾಸ್ತಾನು ಆಹಾರ ಭದ್ರತೆಗೆ ಸಾರ್ವಜನಿಕ ದಾಸ್ತಾನುಗಳ ಶಾಶ್ವತ ಪರಿಹಾರವು ಭಾರತದ ಪ್ರಮುಖ ಬೇಡಿಕೆಯಾಗಿದೆ. WTO ನಿಯಮಗಳ ಪ್ರಕಾರ, ಕೃಷಿ ಸಬ್ಸಿಡಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಉತ್ಪಾದನಾ ಮೌಲ್ಯದ 10% ಮೀರಬಾರದು. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ವಿನಾಯಿತಿಗಳಿವೆ. ಭಾರತವು ತನ್ನ ದುರ್ಬಲ ಜನಸಂಖ್ಯೆಯ ಹಿತಾಸಕ್ತಿಗಳನ್ನು ಕಾಪಾಡುವುದು ತನ್ನ ಜವಾಬ್ದಾರಿಯಾಗಿದೆ ಎಂದು ಹೇಳುತ್ತದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮೂಲಕ ಸುಮಾರು 80 ಕೋಟಿ ಜನರಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯ ನೀಡಲಾಗುತ್ತಿದೆ. ಸಣ್ಣ ರೈತರು ಬೆಲೆ ಭರವಸೆಗೆ ಕನಿಷ್ಠ ಬೆಂಬಲ ಬೆಲೆ (MSP) ಮೇಲೆ ಅವಲಂಬಿತರಾಗಿರುವುದರಿಂದ, ಶಾಶ್ವತ ಪರಿಹಾರ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ►ವಿಶ್ವ ವ್ಯಾಪಾರ ಸಂಸ್ಥೆಯ ಸುಧಾರಣೆಗಳು ಅಮೆರಿಕವು ‘ಅತ್ಯಂತ ಅನುಕೂಲಕರ ರಾಷ್ಟ್ರ’ (MFN) ತತ್ವವನ್ನು ಪುನರ್ವಿಮರ್ಶಿಸಲು ಒತ್ತಾಯಿಸಿದೆ. ಇದು ಬಹುಪಕ್ಷೀಯ ವ್ಯವಸ್ಥೆಯ ಮೂಲ ತತ್ವವಾಗಿರಬಾರದು ಎಂದು ವಾಷಿಂಗ್ಟನ್ ಹೇಳಿದೆ. ಐತಿಹಾಸಿಕವಾಗಿ, ರಾಷ್ಟ್ರಗಳು MFN ಬದ್ಧತೆಗಳನ್ನು ಷರತ್ತುಬದ್ಧವಾಗಿ ಬಳಸುತ್ತಿದ್ದವು. GATT ಮತ್ತು WTO ವ್ಯವಸ್ಥೆಯಲ್ಲಿಯೂ ಈ ತತ್ವಕ್ಕೆ ಹಲವಾರು ವಿನಾಯಿತಿಗಳಿವೆ ಎಂದು ಅಮೆರಿಕ ಹೇಳಿದೆ. ಭಾರತದ ವಾಣಿಜ್ಯ ಸಚಿವಾಲಯದ ಪ್ರಕಾರ, MC14ರಲ್ಲಿ ಭಾರತದ ಭಾಗವಹಿಸುವಿಕೆ ರಚನಾತ್ಮಕ ಮತ್ತು ಸಮತೋಲಿತವಾಗಿರುತ್ತದೆ. ಜಾಗತಿಕ ದಕ್ಷಿಣದ ಅಭಿವೃದ್ಧಿ ಅಗತ್ಯಗಳಿಗೆ ಆದ್ಯತೆ ನೀಡುವ ಸುಧಾರಣೆಗಳಿಗೆ ಭಾರತ ಬದ್ಧವಾಗಿದೆ. ಆಹಾರ ಭದ್ರತೆ, ರೈತರ ಮತ್ತು ಮೀನುಗಾರರ ಜೀವನೋಪಾಯ, ಹಾಗೂ ಡಿಜಿಟಲ್ ವ್ಯಾಪಾರದಲ್ಲಿ ನೀತಿ ಸ್ವಾಯತ್ತತೆ—ಇವುಗಳಿಗೆ ಭಾರತ ಪ್ರಾಮುಖ್ಯತೆ ನೀಡುತ್ತಿದೆ. ►ತುರ್ತು ಸುಧಾರಣೆಗಳಿಗೆ ಕರೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, WTO ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಲು ತುರ್ತು ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ಒಮ್ಮತವಿಲ್ಲದೆ ಬಹುಪಕ್ಷೀಯ ಒಪ್ಪಂದಗಳನ್ನು ಸೇರಿಸುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು. ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ದಾಸ್ತಾನುಗಳಿಗೆ ಶಾಶ್ವತ ಪರಿಹಾರ, ವಿಶೇಷ ಸುರಕ್ಷತಾ ವ್ಯವಸ್ಥೆ ಮತ್ತು ಹತ್ತಿ ಸಬ್ಸಿಡಿ ನಿರ್ಣಯಗಳ ಅಗತ್ಯವಿದೆ ಎಂದು ಅವರು ಹೇಳಿದರು. ಮೀನುಗಾರಿಕೆ ಸಬ್ಸಿಡಿಗಳಲ್ಲಿ ಬಡ ಮೀನುಗಾರರ ಹಿತಾಸಕ್ತಿಗಳನ್ನು ಕಾಪಾಡುವ ಸಮತೋಲನ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಎಲೆಕ್ಟ್ರಾನಿಕ್ ಪ್ರಸರಣಗಳ ಮೇಲಿನ ಸುಂಕ ನಿಷೇಧ ಮುಂದುವರಿಸುವ ಬಗ್ಗೆ ಒಮ್ಮತದ ಕೊರತೆಯೂ ಕಳವಳಕಾರಿಯಾಗಿದೆ. ಡಿಜಿಟಲ್ ಸರಕುಗಳಿಗೆ ಸುಂಕ ರಹಿತ ವ್ಯವಸ್ಥೆಯ ಪರಿಣಾಮಗಳನ್ನು ಪುನರ್ಮೌಲ್ಯಮಾಪನ ಮಾಡಬೇಕು ಎಂದು ಅವರು ಹೇಳಿದರು.
ಎಫ್ಬಿಐ ಮುಖ್ಯಸ್ಥ ಪಟೇಲ್ ಇ-ಮೇಲ್ಗೆ ಕನ್ನ ಹಾಕಿದ ಇರಾನ್ ಮೂಲದ ಹ್ಯಾಕರ್ಗಳು
ವಾಶಿಂಗ್ಟನ್, ಮಾ.27: ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ) ನಿರ್ದೇಶಕ ಕಾಶ್ ಪಟೇಲ್ ಅವರ ವೈಯಕ್ತಿಕ ಇ-ಮೇಲ್ ಹ್ಯಾಕ್ ಮಾಡಿರುವುದಾಗಿ ಇರಾನ್ಗೆ ಸಂಬಂಧಿಸಿದ ಹ್ಯಾಕರ್ಗಳು ಪ್ರತಿಪಾದಿಸಿದ್ದು ಅವರ ಫೋಟೋಗಳು ಮತ್ತು ವೈಯಕ್ತಿಕ ವಿವರಗಳನ್ನು ಇಂಟರ್ನೆಟ್ನಲ್ಲಿ ಪ್ರಕಟಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ. `ಹಂದಾಲಾ ಹ್ಯಾಕ್ ಟೀಂ' ಎಂದು ಗುರುತಿಸಲಾಗುವ ಗುಂಪು ತಮ್ಮ ವೆಬ್ಸೈಟ್ನಲ್ಲಿ `ಪಟೇಲ್ ಈಗ ಯಶಸ್ವಿಯಾಗಿ ಹ್ಯಾಕ್ ಮಾಡಲಾದ ಬಲಿಪಶುಗಳ ಪಟ್ಟಿಯಲ್ಲಿ ಅವರ ಹೆಸರನ್ನು ಕಂಡುಕೊಳ್ಳುತ್ತಾರೆ' ಎಂದು ಬರೆದುಕೊಂಡಿದೆ.
ಉಳ್ಳಾಲ: ಕೆಎಮ್ ಜೆ, ಎಸ್ ವೈ ಎಸ್ ವತಿಯಿಂದ ಚೆಕ್ ವಿತರಣೆ
ಉಳ್ಳಾಲ, ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ಮುಅಲ್ಲಿಮ್ ಅವರ ಮಗಳ ಮದುವೆಗೆ 30 ಸಾವಿರ ರೂಪಾಯಿಯ ಚೆಕ್ ವಿತರಣೆ ಕಾರ್ಯಕ್ರಮ ಶುಕ್ರವಾರ ಅಝಾದ್ ನಗರ ಫಾರೂಕ್ ಮಸ್ಜಿದ್ ವಠಾರದಲ್ಲಿ ಬಷೀರ್ ಗುಜರಾತ್ ಅವರ ಅಧ್ಯಕ್ಷತೆ ಯಲ್ಲಿ ಜರುಗಿತು. ಅಬ್ದುಲ್ ಸಮದ್ ಅಹ್ಶನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ಲತೀಫಿ ಪಿಲಾರ್ ಚಕ್ ವಿತರಿಸಿದರು. ಅಬ್ದುಲ್ ಖಾದರ್ , ಸಮೀರ್ ಪಿಲಾರ್ ಮುಹಮ್ಮದ್ ಆಝದ್ ನಗರ ಅಲ್ತಾಫ್ ಕುಂಪಲ ಉಪಸ್ಥಿತರಿದ್ದರು.
ಎಸ್-400, ಮಧ್ಯಮ ಸಾರಿಗೆ ವಿಮಾನ, ಡ್ರೋನ್ ಸಹಿತ ಪ್ರಮುಖ ಖರೀದಿಗಳಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ
ಹೊಸದಿಲ್ಲಿ,ಮಾ.27: ರಕ್ಷಣಾ ಸಚಿವಾಲಯವು 2.38 ಲಕ್ಷ ಕೋಟಿ ರೂ.ಗಳ ಬೃಹತ್ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಇವುಗಳಲ್ಲಿ ಭಾರತೀಯ ವಾಯುಪಡೆಗಾಗಿ 60 ಮಧ್ಯಮ ಸಾರಿಗೆ ವಿಮಾನಗಳು, ಐದು ಎಸ್-400 ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ ಸ್ಕ್ವಾಡ್ರನ್ಗಳು ಮತ್ತು ದೂರ ನಿಯಂತ್ರಿತ ದಾಳಿ ಡ್ರೋನ್ಗಳ (ಆರ್ಪಿಎಸ್ಎ) ನಾಲ್ಕು ಸ್ಕ್ವಾಡ್ರನ್ಗಳು ಹಾಗೂ ಸೇನೆಗಾಗಿ ಫಿರಂಗಿಗಳು,ಮದ್ದುಗುಂಡುಗಳು ಮತ್ತು ನೆಟ್ವರ್ಕ್ ವ್ಯವಸ್ಥೆಗಳು ಸೇರಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಕ್ಷಣಾ ಖರೀದಿ ಮಂಡಳಿಯ ಸಭೆಯಲ್ಲಿ ಈ ಅನುಮೋದನೆಗಳನ್ನು ನೀಡಲಾಗಿದೆ. ರಕ್ಷಣಾ ಖರೀದಿಗಳಲ್ಲಿ ಮಧ್ಯಮ ಸಾರಿಗೆ ವಿಮಾನಗಳು ಸಿಂಹಪಾಲು (ಒಂದು ಲ.ಕೋ.ರೂ.) ಹೊಂದಿದ್ದು,ಹಳೆಯ ಸೋವಿಯತ್ ಮೂಲದ ಎನ್-32 ವಿಮಾನಗಳನ್ನು ಬದಲಿಸುವ ದೀರ್ಘ ವಿಳಂಬಿತ ಪ್ರಯತ್ನಗಳಿಗೆ ಚಾಲನೆ ನೀಡಲಿವೆ. ‘ಬಯ್ ಆ್ಯಂಡ್ ಮೇಕ್’ ಆಧಾರದಲ್ಲಿ ಈ ವಿಮಾನಗಳನ್ನು ಖರೀದಿಸಲಾಗುತ್ತಿದ್ದು,12 ವಿಮಾನಗಳು ಸಿದ್ಧ ಸ್ಥಿತಿಯಲ್ಲಿ ಪೂರೈಕೆಯಾದರೆ ಉಳಿದ 48 ವಿಮಾನಗಳನ್ನು ದೇಶೀಯ ಉದ್ಯಮದ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಬಲ್ಲ ಮೂಲಗಳು ತಿಳಿಸಿದವು. 50,000 ಕೋ.ರೂ.ಗಳ ವೆಚ್ಚದಲ್ಲಿ ರಶ್ಯಾಮೂಲದ ಇನ್ನೂ ಐದು ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲಾಗುತ್ತಿದೆ. ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಇವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದವು. ಭಾರತೀಯ ವಾಯುಪಡೆಯು 45,000 ಕೋ.ರೂ.ಗಳ ವೆಚ್ಚದಲ್ಲಿ ಸ್ಥಳೀಯ ನಿರ್ಮಾಣದ ದಾಳಿ ಡ್ರೋನ್ಗಳ ನಾಲ್ಕು ಸ್ಕ್ವಾಡ್ರನ್ಗಳನ್ನೂ ಪಡೆಯಲಿದ್ದು, ಪ್ರತಿ ಸ್ಕ್ವಾಡ್ರನ್ 8ರಿಂದ 10 ಶಸ್ತ್ರಸಜ್ಜಿತ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು ಹೊಂದಿರಲಿವೆ. ಇದರ ಜೊತೆಗೆ ಎಸ್ಯು-30 ಎಂಕೆ-1 ಯುದ್ಧವಿಮಾನಗಳ ಜೀವಿತಾವಧಿಯನ್ನು ಹೆಚ್ಚಿಸಲು ಮತ್ತು ಕಾರ್ಯಾಚರಣಾ ಲಭ್ಯತೆಯನ್ನು ಕಾಯ್ದುಕೊಳ್ಳಲು ಅವುಗಳ ಇಂಜಿನ್ಗಳ ಸಂಪೂರ್ಣ ದುರಸ್ತಿಗೂ ಸಚಿವಾಲಯವು ಅನುಮೋದನೆ ನೀಡಿದೆ. ಸೇನೆಗಾಗಿ ಸುಮಾರು 2,500 ಕೋ.ರೂ.ಗಳ ವೆಚ್ಚದಲ್ಲಿ 300 ಧನುಷ್ ಫಿರಂಗಿಗಳ ಖರೀದಿಗೆ ಒಪ್ಪಿಗೆಯನ್ನು ನೀಡಲಾಗಿದ್ದು, ಇದರೊಂದಿಗೆ ಸೇನೆಯ ಬಳಿಯಿರುವ ಈ ಫಿರಂಗಿಗಳ ಸಂಖ್ಯೆ 444ಕ್ಕೆ ಹೆಚ್ಚಲಿದೆ. ಬೋಫೋರ್ಸ್ ವಿನ್ಯಾಸವನ್ನು ಆಧರಿಸಿ ಸ್ಥಳೀಯವಾಗಿ ಅಭಿವೃಧ್ಧಿಗೊಳಿಸಲಾದ ಈ ಫಿರಂಗಿಗಳು 38 ಕಿ.ಮೀ.ವರೆಗೆ ದಾಳಿ ವ್ಯಾಪ್ತಿಯನ್ನು ಹೊಂದಿವೆ. ಕಳೆದ ವರ್ಷ ಪಾಕಿಸ್ತಾನದೊಂದಿಗೆ ಯುದ್ಧದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದ ಆಕಾಶ ತೀರ್ ಜೊತೆ ಸಂಯೋಜಿತ ಏರ್ ಡಿಫೆನ್ಸ್ ಟ್ರ್ಯಾಕ್ಡ್ ಸಿಸ್ಟಮ್ಗಳೊಂದಿಗೆ ಟ್ಯಾಂಕ್ಗಳಲ್ಲಿ ಬಳಸುವ ಕವಚ ಭೇದಕ ಮದ್ದುಗುಂಡುಗಳು, ಹೆಚ್ಚಿನ ಸಾಮರ್ಥ್ಯದ ರೇಡಿಯೊ ರಿಲೇ ವ್ಯವಸ್ಥೆಗಳು ಮತ್ತು ರನ್ವೇ ಅಗತ್ಯವಿಲ್ಲದ ಡ್ರೋನ್ಗಳ ಖರೀದಿಗೂ ಸಭೆಯು ಒಪ್ಪಿಗೆ ನೀಡಿದೆ.
Bengaluru | ಕಾಲೇಜು, ಆರ್ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರು : ಸಿದ್ದಾರ್ಥ ವೈದ್ಯಕೀಯ ಕಾಲೇಜು ಸೇರಿ ಕೋಲಾರ ಮತ್ತು ಬೆಂಗಳೂರಿನ ವಿವಿಧ ಆರ್ಟಿಒ ಕಚೇರಿಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯಿರುವ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಈ ಸಂಬಂಧ ಬಾಂಬ್ ನಿಷ್ಕ್ರಿಯ ದಳ, ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇತ್ತ ಬೆಂಗಳೂರಿನ ಯಶವಂತಪುರ, ರಾಜಾಜಿನಗರ, ಕೋರಮಂಗಲ ಸೇರಿ ನಗರದ ಹಲವು ಆರ್ಟಿಒ ಕಚೇರಿಗಳನ್ನು ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟಿಸುವುದಾಗಿ ಇ-ಮೇಲ್ ಕಳುಹಿಸಲಾಗಿದೆ. ಈ ಸಂಬಂಧ ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ಎಚ್ಎಸ್ಆರ್ ಲೇಔಟ್ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಅಂಬಾತನಯ ಮುದ್ರಾಡಿ ಸಂಸ್ಕರಣೆ: ನಾಟಕ ವಿಮರ್ಶಾ ಕೃತಿಗಳ ಆಹ್ವಾನ
ಉಡುಪಿ, ಮಾ.27: ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಅಂಬಾತನಯ ಮುದ್ರಾಡಿ (ಎಂ.ಕೇಶವ ಶೆಟ್ಟಿಗಾರ್) ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು, ಅಂಬಾತನಯ ಮುದ್ರಾಡಿ ಅವರ ಹೆಸರಿನ ಪುಸ್ತಕ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ನೀಡುತ್ತಾ ಬಂದಿದೆ. ಅಂಬಾತನಯ ಮುದ್ರಾಡಿ ಸಂಸ್ಕರಣೆಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ಪುಸ್ತಕ ಪ್ರಶಸ್ತಿಯು 15,000ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಸ್ತುತ ಮೂರನೆಯ ವರ್ಷದ (2026ರ) ಪುಸ್ತಕ ಪುರಸ್ಕಾರಕ್ಕೆ ಹಿಂದಿನ ಎರಡು ವರ್ಷಗಳಲ್ಲಿ (2024, 2025ರಲ್ಲಿ ) ಪ್ರಥಮ ಆವೃತ್ತಿಯಲ್ಲಿ ಪ್ರಕಟವಾದ, ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ. 2024 ಮತ್ತು 2025ನೇ ಸಾಲಿನಲ್ಲಿ ಪ್ರಕಟವಾದ ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳ ಮೂರು ಪ್ರತಿಗಳನ್ನು ಲೇಖಕ/ ಪ್ರಕಾಶಕರು/ ರಂಗಕರ್ಮಿಗಳು/ ಅಥವಾ ರಂಗಾಸಕ್ತರು ಸ್ಪರ್ಧೆಯ ಸಂಚಾಲಕರಾದ ಬೆಳಗೋಡು ರಮೇಶ ಭಟ್, ‘ದಕ್ಷಿಣ ಕಾಶಿ’ (ಡಿ-1), ಎರಡನೆಯ ಮುಖ್ಯರಸ್ತೆ, ವಾಣಿ ವಿಲಾಸ್ ಮೊಹಲ್ಲಾ, ಮೈಸೂರು - 570 002 (ಮೊಬೈಲ್ 9341091821) ಈ ವಿಳಾಸಕ್ಕೆ ಎಪ್ರಿಲ್ 30ರೊಳಗೆ ತಲುಪುವಂತೆ ಕಳುಹಿಸಿ ಕೊಡಬಹುದು.
ಮಧ್ಯಪ್ರದೇಶ| 2.5 ಕೋಟಿ.ರೂ. ಪ್ರವಾಹ ಪರಿಹಾರ ಹಣ ದುರುಪಯೋಗ: ಕೆಬಿಸಿಯಲ್ಲಿ 50 ಲಕ್ಷ ರೂ.ಗೆದ್ದ ಅಧಿಕಾರಿಯ ಬಂಧನ
ಗ್ವಾಲಿಯರ್, ಮಾ. 27: 2011ರಲ್ಲಿ ಕೌನ್ ಬನೇಗಾ ಕರೋಡ್ ಪತಿ ದೂರದರ್ಶನ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ದೇಶಾದ್ಯಂತ ಖ್ಯಾತಿ ಗಳಿಸಿದ್ದ ಮಹಿಳಾ ತಹಶೀಲ್ದಾರರೊಬ್ಬರನ್ನು ಪ್ರವಾಹ ಪರಿಹಾರಕ್ಕೆ ಮೀಸಲಿರಿಸಲಾಗಿದ್ದ 2.57 ಕೋ.ರೂ.ವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನಿಂದ ಗುರುವಾರ ಬಂಧಿಸಲಾಗಿದೆ. 2021ರಲ್ಲಿ ಇಲ್ಲಿನ ಬರೋಡಾ ತಹಶೀಲ್ನಲ್ಲಿ ನಡೆದ ಅಕ್ರಮಗಳ ಆರೋಪದಲ್ಲಿ ಅಮಿತಾ ಸಿಂಗ್ ತೋಮರ್ ಅವರನ್ನು ಗುರುವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನೆರೆಯ ಶಿವಪುರಿಯಲ್ಲಿರುವ ಜೈಲಿನಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ‘‘ಬರೋಡಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಒಪಿ) ಅವನೀತ್ ಶರ್ಮಾ ನೇತೃತ್ವದ ತಂಡ ತೋಮರ್ ಅವರನ್ನು ಗ್ವಾಲಿಯರ್ನ ಚಂದ್ರವದ್ನಿ ನಾಕಾದಲ್ಲಿರುವ ಅವರ ನಿವಾಸದಿಂದ ಬಂಧಿಸಿತು. ತೋಮರ್ ವಿಜಯಪುರದ ತಹಶೀಲ್ದಾರ್ ಆಗಿದ್ದರು. ಆದರೆ, ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಅವರು ತೋಮರ್ ಅವರನ್ನು ಬುಧವಾರ ತಹಶೀಲ್ದಾರ್ ಹುದ್ದೆಯಿಂದ ತೆಗೆದು ಹಾಕಿದರು’’ ಎಂದು ಅಧಿಕಾರಿ ತಿಳಿಸಿದ್ದಾರೆ. ತೋಮರ್ ಅವರು ಇದಕ್ಕಿಂತ ಮೊದಲೇ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ಎರಡೂ ನ್ಯಾಯಾಲಯಗಳು ತಿರಸ್ಕರಿಸಿದ್ದವು.
ತುಳುವಿನಲ್ಲಿ ಕಾರ್ಯಕ್ರಮವಲ್ಲ; ಅಧ್ಯಯನ ನಡೆಯಬೇಕು: ಡಾ.ಕುಂಬ್ಳೆ
ಉಡುಪಿ, ಮಾ.27: ತುಳುವಿನಲ್ಲಿ ಕಾರ್ಯಕ್ರಮ ಮಾಡಿ ಸಂಭ್ರಮಿದರೆ ಸಾಲದು, ತುಳುವಿನ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಹೇಳಿದ್ದಾರೆ. ತುಳುಕೂಟ ಉಡುಪಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ಅಜ್ಜರಕಾಡು ಡಾ.ಜಿ.ಶಂಕರ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಕಾಲೇಜಿನಲ್ಲಿ ನಡೆದ ತುಳುಮಿನದನ -2026ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು. ನಮ್ಮ ಕರಾವಳಿಯಲ್ಲಿ ಹಲವು ಭಾಷೆಗಳಿವೆ. ಕನ್ನಡ ನಮ್ಮ ಆಡಳಿತ ಭಾಷೆ ಆದರೂ ಕೂಡಾ ತುಳು ಬಾಸೆಗೇ ತನ್ನದೇ ಆದ ಪ್ರಾಧಾನ್ಯತೆ ಇದೆ. ತುಳುನಾಡಿನ ಚರಿತ್ರೆಯ ಪ್ರಕಾರ ನಮ್ಮ ನಾಡನ್ನು ಹಿಂದಿನ ಕಾಲದಲ್ಲಿ ಆಳಿದ ವರು ಕನ್ನಡದವರು. ಹೀಗಾಗಿ ತುಳು ಬಾಸೆಗೆ ಆಡಳಿತದ ಘನತೆ ಸಿಗಲಿಲ್ಲ. ತುಳು ಬಾಸೆಗೆ ಬಹಳ ದೊಡ್ಡ ಜನಪದ ಸಂಸ್ಕೃತಿ ಇದೆ. ತುಳುನಾಡಿನ ಪಾಡ್ದನ, ಒಗಟುಗಳು, ಗಾದೆಗಳು, ಕಥೆಗಳು ಇಂತಹ ಜನಪದ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಅಗತ್ಯ ಇದೆ. ಆ ನಿಟ್ಟಿನಲ್ಲಿ ತುಳುವಿಗೆ ಸಂಶೋಧನ ಕೇಂದ್ರದ ಅಗತ್ಯತೆ ಇದೆ. ಸರಕಾರ ಇದನ್ನು ಆದಷ್ಟು ಬೇಗ ನೀಡಬೇಕು ಎಂದವರು ಹೇಳಿದರು. ತುಳುಕೂಟ ಉಡುಪಿಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅತ್ಲೆಟಿಕ್ ಅಸೋಸಿಯೇಶನ್ಸ್ನ ಅಧ್ಯಕ್ಷ ಹರಿಪ್ರಸಾದ್ ರೈ ತುಳುಮಿನದನ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಮಾಜ ಸೇವಕಿ ವಿದ್ಯಾ ಲತಾ ಶೆಟ್ಟಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ, ಕಾಲೇಜಿನ ಪ್ರಾಚಾರ್ಯ ಸೋಜನ್ ಕೆ.ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಳು ಪೀಠದ ಸಹಾಯಕ ಪ್ರಸಾದ್ ಅಂಚನ್ ವಂದಿಸಿದರೆ, ಪೂರ್ವಿಕಕಾಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ತುಳು ಮಿನದನದ ವಿವಿಧ ಸ್ಪರ್ಧೆಗಳು ನಡೆದವು. ಸಮಾರೋಪ: ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ತುಳುಮಿನದ ಸಂಚಾಲಕ ದಯಾನಂದ ಡಿ., ವಿ.ಕೆ.ಯಾದವ್, ಪ್ರಭಾಕರ ಭಂಡಾರಿ, ಸರೋಜ ಯಶ್ವಂತ್, ಪ್ರಭಾವತಿ, ಕೋಶಾಧಿಕಾರಿ ಚೈತನ್ಯ ಎಮ್.ಜಿ. ಉಪಸ್ಥಿತರಿದ್ದರು.
ಹೊಸದಿಲ್ಲಿ,ಮಾ.27: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸವಾಲುಗಳನ್ನು ನಿಭಾಯಿಸಲು ಕೇಂದ್ರ ಸರಕಾರವು ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಅಂತರ್ ಸಚಿವಾಲಯ ಸಮಿತಿ (ಐಎಂಜಿ)ಯನ್ನು ರಚಿಸಿದೆ. ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಇಂಧನ ಪೂರೈಕೆ ಹಾಗೂ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಕೇಂದ್ರ ಸರಕಾರವು ಪ್ರಯತ್ನಗಳನ್ನು ಚುರುಕುಗೊಳಿಸಿರುವ ನಡುವೆಯೇ ಈ ಸಮಿತಿಯ ರಚನೆಯಾಗಿದೆೆ. ಇಂಧನ, ಜಾಗತಿಕ ವ್ಯಾಪಾರ ಸೇರಿದಂತೆ ವಿವಿಧ ವಲಯಗಳಲ್ಲಿ ಭಾರತದ ಹಿತಾಸಕ್ತಿಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಈ ಸಮಿತಿಗೆ ನೀಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಸೇರಿದಂತೆ ಹಿರಿಯ ಸಚಿವರನ್ನು ಸಮಿತಿಯು ಒಳಗೊಂಡಿದೆ. ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ವ್ಯಾಪಾರ ಹಾಗೂ ಇಂಧನ ಪೂರೈಕೆಗೆ ಸಂಬಂಧಿಸಿದ ಬಿಕ್ಕಟ್ಟು ಮುಂದುವರಿದಿದ್ದು, ಇದರಿಂದ ದೇಶದ ವಿವಿಧ ವಲಯಗಳ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಅಂದಾಜಿಸಲಿದೆ ಹಾಗೂ ಅವುಗಳನ್ನು ಸೂಕ್ತವಾಗಿ ಪ್ರತಿಕ್ರಿಯಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಭದ್ರತಾ ಸಮಿತಿ (ಸಿಸಿಎಸ್) ನಡೆಸಿದ ಉನ್ನತ ಮಟ್ಟದ ಪರಾಮರ್ಶನಾ ಸಭೆಯ ಬಳಿಕ ಐಎಂಜಿಯ ರಚನೆಯಾಗಿದೆ. ಮಧ್ಯಪ್ರಾಚ್ಯ ಸಂಘರ್ಷದ ದಿಂದಾಗಿ ಕೃಷಿ, ರಸಗೊಬ್ಬರ, ಪೆಟ್ರೋಲಿಯಂ, ವಿದ್ಯುತ್, ಹಡಗುಗಾರಿಕೆ ಹಾಗೂ ಪೂರೈಕೆ ಸರಪಣಿ ಮೇಲೆ ಪರಿಣಾಮವನ್ನು ಈ ಸಮಿತಿಯು ಅಂದಾಜಿಸಲಿದೆ.
ಕೇರಳದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಜಾರಿ : ಝಮೀರ್ ಅಹ್ಮದ್ ಖಾನ್
ಕ್ಯಾಲಿಕಟ್ : ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಿದೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಕೇರಳ ಚುನಾವಣೆ ಪ್ರಚಾರದಲ್ಲಿರುವ ಅವರು, ಶುಕ್ರವಾರ ಕ್ಯಾಲಿಕಟ್ ನ ಬೇಪೂರ್ ವಿಧಾನ ಸಭೆ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಪಿ.ವಿ.ಅನ್ವರ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹೆಣ್ಣು ಮಕ್ಕಳಿಗೆ ಮಾಸಿಕ ಒಂದು ಸಾವಿರ ರೂ., ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ವಿಮೆ, ಹಿರಿಯ ನಾಗರಿಕರಿಗೆ 2 ಸಾವಿರ ರೂ. ಮಾಸಿಕ ಪಿಂಚಣಿ, ಐದು ಲಕ್ಷ ರೂ.ವರೆಗೆ ಬಡ್ಡಿ ರಹಿತ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಗಳನ್ನು ರಾಹುಲ್ ಗಾಂಧಿ ಇಲ್ಲಿಯೂ ಘೋಷಣೆ ಮಾಡಿದ್ದು, ನಮ್ಮ ಪಕ್ಷದ ಸರಕಾರಕ್ಕೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು. ಎಲ್ಡಿಎಫ್ ನವರು ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಕರ್ನಾಟಕದಲ್ಲೂ ಪ್ರತಿಪಕ್ಷದವರು ಹಾಗೆಯೆ ಹೇಳಿದ್ದರು. ನಾವು ಜಾರಿ ಮಾಡಲಿಲ್ಲವೆ? ಇಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ ಅವರ ಸಾಧನೆ ಶೂನ್ಯ ಎಂದು ಝಮೀರ್ ಅಹ್ಮದ್ ಟೀಕಿಸಿದರು. ಕಾರ್ಯಕ್ರಮದ ನಂತರ ಝಮೀರ್ ಅಹ್ಮದ್ ಖಾನ್, ಯಳತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಬಾಲಕೃಷನ್ ಪರ ರೋಡ್ ಶೋ ನಡೆಸಿದರು.
ಇಂಧನ ಆಮದು ಮೇಲಿನ ಹೆಚ್ಚುತ್ತಿರುವ ಅವಲಂಬನೆ: ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ಹೊಸದಿಲ್ಲಿ, ಮಾ. 27: ಕಚ್ಚಾ ತೈಲ, ಎಲ್ಪಿಜಿ ಮತ್ತು ನೈಸರ್ಗಿಕ ಅನಿಲದ ಆಮದಿನ ಮೇಲೆ ಭಾರತ ಹೆಚ್ಚೆಚ್ಚು ಅವಲಂಬಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದೆ. ಸ್ವಾವಲಂಬನೆಗೆ ಸರಕಾರ ನೀಡುತ್ತಿದ್ದ ಒತ್ತು ಏನಾಯಿತು ಎಂದು ಪ್ರಶ್ನಿಸಿದೆ. ‘‘ಅಡುಗೆ ಅನಿಲ ಪೂರೈಕೆ ಬಗ್ಗೆ ಮೋದಿಯವರು ಅಬ್ಬರದ ಭರವಸೆಗಳನ್ನು ನೀಡಿದ್ದರು. ಅದು ಭರವಸೆಯಾಗಿಯೇ ಉಳಿದಿದೆ’’ ಎಂದು ಕಾಂಗ್ರೆಸ್ನ ಸಂಪರ್ಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಭಾರತ ನೈಸರ್ಗಿಕ ಅನಿಲ ಆಮದನ್ನೇ ಅವಲಂಬಿಸುತ್ತಿದೆ ಎಂದು ಅವರು ಹೇಳಿದ್ದಾರೆ. ‘‘2014-15 ಮತ್ತು 2024-25ರ ನಡುವಿನ ಅವಧಿಯಲ್ಲಿ, ಕಚ್ಚಾ ತೈಲ ಆಮದಿನ ಮೇಲಿನ ಭಾರತದ ಅವಲಂಬನೆ 84 ಶೇ.ದಿಂದ 90 ಶೇ.ಕ್ಕೆ ಹೆಚ್ಚಿದೆ’’ ಎಂದು ಅವರು ಹೇಳಿದರು.
ಅಡುಗೆ ಅನಿಲ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಮೋಸ : ಡಿ.ಕೆ.ಶಿವಕುಮಾರ್
ಬೆಂಗಳೂರು : ಹಾರ್ಮುಝ್ ಜಲಸಂಧಿ ದಾಟಿ ಎರಡು ಹಡಗುಗಳು ದೇಶಕ್ಕೆ ಬಂದಿವೆ. ಅದರಲ್ಲಿ ಒಂದನ್ನು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿಗೆ ಕಳುಹಿಸಬಹುದಿತ್ತಲ್ಲವೇ? ಗುಜರಾತಿಗೆ ಏಕೆ ಹೋದವು. ಈಗ ಕೇರಳ, ತಮಿಳುನಾಡಿನಲ್ಲಿ ಚುನಾವಣೆಗಳಿವೆ. ದಕ್ಷಿಣದ ರಾಜ್ಯಗಳಲ್ಲಿ ಅವರ ಪ್ರಭಾವ ಇಲ್ಲ ಎನ್ನುವ ಕಾರಣಕ್ಕೆ ದಕ್ಷಿಣ ಭಾರತವನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಗಾರಿದರು. ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಎಲ್ಲ ಪೆಟ್ರೋಲ್ ಬಂಕ್ ಗಳಲ್ಲಿ ಮುಸಲ್ಮಾನ ಹೆಣ್ಣುಮಗಳು ಗ್ಯಾಸ್ ನೀಡಿದ್ದಕ್ಕೆ ಧನ್ಯವಾದ ಹೇಳುತ್ತಿರುವ ಹೋರ್ಡಿಂಗ್ ಇರುತ್ತಿತ್ತು. ಈಗ ಏಕೆ ಅದನ್ನೆಲ್ಲಾ ತೆಗೆದು ಹಾಕಿದ್ದಾರೆ. ಕೇಂದ್ರ ಸರಕಾರ ಪ್ರತಿದಿನ ಗ್ರಾಹಕರ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ದೂರಿದರು. 2014ರ ಮೇ 26 ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಾ ಹೋಯಿತು. ಪೆಟ್ರೋಲ್ 71 ರೂ., ಡೀಸೆಲ್ ಅನ್ನು 56 ರೂಪಾಯಿಗೆ ನೀಡಲಾಗುತ್ತಿತ್ತು. ಈಗ 103 ರೂಪಾಯಿ ಆಗಿದೆ. ಕಚ್ಚಾ ತೈಲಬೆಲೆ ಕಡಿಮೆ ಇದ್ದರೂ ನಮ್ಮಲ್ಲಿ ಬೆಲೆ ಹೆಚ್ಚಳಕ್ಕೆ ಏನು ಕಾರಣ ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸರಕಾರ ಇಂಧನ ತೈಲದ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಭಾರತ ಸರಕಾರ ನಮ್ಮನ್ನು ಕೊಲೆ ಮಾಡುತ್ತಿದೆ. ಚುನಾವಣೆಗಾಗಿ ತೈಲ ಬೆಲೆ ಕಡಿಮೆ ಮಾಡಿದ್ದಾರೆ. ನಯಾರ ಕಂಪನಿಯವರು ಇಂಧನ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ ಎಂದು ಹರಿಹಾಯ್ದರು. ಚುನಾವಣೆ ಮುಗಿದ ತಕ್ಷಣ ಮತ್ತೆ ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಲಿದೆ. ಈ ರೀತಿ ಹಿಂದೆಯೂ ಮಾಡಿದ್ದಾರೆ. ಇದೆಲ್ಲವೂ ಚುನಾವಣೆ ಗಿಮಿಕ್. ಕೇಂದ್ರ ಸರಕಾರ ದಿನಕ್ಕೆ 1 ಸಾವಿರ ಕೋಟಿ ರೂ.ಹೆಚ್ಚುವರಿ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಇದು ಯಾರಿಗೆ ತಲುಪುತ್ತಿದೆ. ಈ ಹಿಂದೆ ಇಂಧನಗಳ ಬೆಲೆ ಹೆಚ್ಚಿಸಿದಾಗ 100 ನಾಟ್ ಔಟ್ ಎಂದು ಹೋರಾಟ ಮಾಡಿದ್ದೆವು. ಈಗ ಅವರಿಗೆ ಬೇಕಾದಂತಹ ಕಂಪೆನಿಗಳಿಗೆ ಅನುಕೂಲವಾಗಲು ಟ್ರಯಲ್ ರನ್ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ದೂರಿದರು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ನಮ್ಮ ರಾಜ್ಯದ ಗ್ರಾಹಕರಿಗೆ ಅನಿಲ ಸಿಲಿಂಡರ್ ಅನ್ನು ಸರಿಯಾದ ರೀತಿಯಲ್ಲಿ ನೀಡಲು ಕೇಂದ್ರಕ್ಕೆ ಆಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಭಾರತ ತಲುಪಿದ 42 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಜಗವಸಂತ್ ಕಾರ್ಗೊ ಹಡಗು
ಅಹ್ಮದಾಬಾದ್,ಮಾ.27: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಹಾರ್ಮುಝ್ ಜಲಸಂಧಿಯ ಮುಚ್ಚುಗಡೆ ವಿದ್ಯಮಾನಗಳ ನಡುವೆ ಇನ್ನೊಂದು ಎಲ್ಪಿಜಿ ಕಾರ್ಗೊ ಹಡಗು ‘ಜಗವಸಂತ್’ ಶುಕ್ರವಾರ ಗುಜರಾತ್ನ ಕಾಂಡ್ಲಾ ಬಂದರಿನಲ್ಲಿ ಲಂಗರುಹಾಕಿದೆ. ಈ ಹಡಗು 42 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಇಂಧನವನ್ನು ಹೊತ್ತು ತಂದಿದೆ. ಜಗವಸಂತ್ ಹಾಗೂ ಇನ್ನೊಂದು ಎಲ್ಪಿಜಿ ಟ್ಯಾಂಕರ್ ನೌಕೆ ಪೈನ್ ಗ್ಯಾಸ್, ಸೋಮವಾರದಂದು ಭಾರತದೆಡೆಗೆ ಪ್ರಯಾಣವನ್ನು ಆರಂಭಿಸಿತ್ತು. ಆರಬ್ಬಿ ಸಮುದ್ರವನ್ನು ತಲುಪಲು ಅಲ್ಪದೂರದ ಹಾಗೂ ನೇರವಾದ ಸಮುದ್ರಮಾರ್ಗವಾದ ಹಾರ್ಮುಝ್ ಜಲಸಂಧಿಯ ಬದಲು ಅಸಾಮಾನ್ಯ ಸಮುದ್ರ ಮಾರ್ಗವಾದ ಖ್ವೆಶಮ್-ಲಾರಕ್ ಸಮುದ್ರ ಕಾಲುವೆ ಮಾರ್ಗವನ್ನು ಬಳಸಿಕೊಂಡಿದ್ದವು. ಈ ಎರಡೂ ಹಡಗುಗಳು ಜೊತೆಯಾಗಿ ಭಾರತಕ್ಕೆ ಪ್ರಯಾಣವನ್ನು ಆರಂಭಿಸಿದ್ದು, ಪರಸ್ಪರ ನಿಕಟವಾಗಿ ಸಂಚರಿಸಿದ್ದವು. ಹಡಗಿನ ಮೇಲೆ ಭಾರತೀಯ ಹಡಗು ಹಾಗೂ ನಾವಿಕರು ಹಾಗೂ ಅಖಿಲ ಭಾರತ ನಾವಿಕರು’ ಎಂಬ ಸಂದೇಶಗಳಿಂದ ಮೊದಲ್ಗೊಂಡು ‘ಪೈನ್ ಗ್ಯಾಸ್ ಇಂಡಿಯನ್ ಶಿಪ್ ಹಾಗೂ ಜೆಜಿ ವಸಂತ್ ಇಂಡ್ ಶಿಪ್ ಆ್ಯಂಡ್ ಕ್ರ್ಯೂ ’ ಮತ್ತಿತರ ಸಂದೇಶಗಳನ್ನು ಒಳಗೊಂಡ ಸಂದೇಶಗಳನ್ನು ಹಡಗಿನ ಮೇಲೆ ಲಗತ್ತಿಸಲಾಗಿತ್ತು. ಈ ಎರಡೂ ಹಡಗುಗಳು ಇರಾನ್ನ ಅಧಿಕಾರಿಗಳಿಂದ ಪೂರ್ವಭಾವಿ ಅನುಮತಿಯನ್ನು ಪಡೆದುಕೊಂಡೇ ಪ್ರಯಾಣವನ್ನು ಆರಂಭಿಸಿದ್ದವು. ‘ಜಗವಸಂತ್’, ಹಾರ್ಮುಝ್ ಜಲಸಂಧಿ ಮುಚ್ಚುಗಡೆಗೊಂಡ ಬಳಿಕ ಭಾರತಕ್ಕೆ ಆಗಮಿಸಿದ ಮೂರನೇ ತೈಲ ಟ್ಯಾಂಕರ್ ಹಡಗು ಆಗಿದೆ. ಇದಕ್ಕೂ ಮುನ್ನ ಇನ್ನೆರಡು ಎಲ್ಪಿಜಿ ಟ್ಯಾಂಕರ್ಗಳಾದ ನಂದಾದೇವಿ ಹಾಗೂ ಶಿವಾಲಿಕ್, ಗುಜರಾತ್ನ ಬಂದರಿಗೆ ಆಗಮಿಸಿದ್ದವು.
ಇರಾನ್ ಶಾಲಾ ಮೇಲಿನ ದಾಳಿ ಘಟನೆಗೆ ನ್ಯಾಯ ಸಿಗಬೇಕಾಗಿದೆ: ವಿಶ್ವಸಂಸ್ಥೆ ಆಗ್ರಹ
ಮಿನಾಬ್ ಶಾಲಾ ಮೇಲಿನ ದಾಳಿ ಯುದ್ಧಾಪರಾಧ, ಉದ್ದೇಶಪೂರ್ವಕ ಕೃತ್ಯ: ಇರಾನ್
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಗೊರವಯ್ಯ ನೀಲಪ್ಪ ಮಾಕಪ್ಪ ಕಾರ್ಣಿಕ ನುಡಿದಿದ್ದಾರೆ. ಮುತ್ತು ಉತ್ಪತ್ತಿ ಆಯಿತು; ಶಿಶುವಿಗೆ ಹಾಲೇರಿಯಿತಲೇ ಪರಾಕ್ ಎಂದು ಹೇಳಿದ್ದಾರೆ. ಇದರ ಅರ್ಥ ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿದೆ. ಎಲ್ಲರೂ ಸಂತೋಷದಿಂದ ಇರಲಿದ್ದಾರೆ ಎಂದಾಗಿದೆ.
ಮಾ.28: ಉದ್ಯಮಿ ವೈಟ್ಸ್ಟೋನ್ ಶರೀಫ್ರಿಂದ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು,ಮಾ.27: ವೈಟ್ಸ್ಟೋನ್ ಚಾರಿಟೇಬಲ್ ಟ್ರಸ್ಟ್, ಬೀ ಹ್ಯೂಮನ್ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ನ ಸಹಯೋಗದಲ್ಲಿ ಉದ್ಯಮಿ ಬಿ.ಎಂ.ಶರೀಫ್ ಬೋಳಾರ ಅವರಿಂದ 272 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಮಾ. 28ರಂದು ಬೆಳಗ್ಗೆ 9ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ. ದ.ಕ. ಜಿಲ್ಲೆಯ ಉದ್ಯಮಿಯೊಬ್ಬರು ವೈಯುಕ್ತಿಕವಾಗಿ ಇಷ್ಟೊಂದು ಮೊತ್ತದ ವಿದ್ಯಾರ್ಥಿ ವೇತನ ನೀಡುವುದು ಇದು ಮೊದಲ ಬಾರಿಯಾಗಿದೆ. 2025-26ನೆ ವಾರ್ಷಿಕ ಅವಧಿಯಲ್ಲಿ ಶರೀಫ್ ವೈಟ್ಸ್ಟೋನ್ 41 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ಪುತ್ತೂರು ಸೆಂಟರ್ನ ವಿದ್ಯಾರ್ಥಿಗಳಿಗೆ ನೀಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
ಮಧ್ಯರಾತ್ರಿ 1:42ರ ವರೆಗೆ ಅಧಿವೇಶನ ಕಲಾಪ; ಸಂಸದೀಯ ಇತಿಹಾಸದಲ್ಲೇ ಹೊಸ ದಾಖಲೆ: ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು : ಬಜೆಟ್ ಅಧಿವೇಶನವು ಮಾ.6 ರಿಂದ 26ರ ವರೆಗೆ ಒಟ್ಟು 13 ದಿನಗಳ ಅವಧಿಯಲ್ಲಿ ಸುಮಾರು 80 ಗಂಟೆ 12 ನಿಮಿಷಗಳ ಅವಧಿ ಕಾರ್ಯಕಲಾಪ ನಡೆಸಲಾಗಿದೆ. ಮಾ.24ರಂದು ಬೆಳಗ್ಗೆ 11.35ರಿಂದ ಆರಂಭವಾಗಿ ಮಧ್ಯರಾತ್ರಿಯನ್ನು ಮೀರಿ 1.42ರ ವರೆಗೆ ಸತತವಾಗಿ ನಡೆಸಿರುವುದು ಸಂಸದೀಯ ಇತಿಹಾಸದಲ್ಲಿ ಹೊಸ ದಾಖಲೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಬಣ್ಣಿಸಿದ್ದಾರೆ. ಗುರುವಾರ ವಿಧಾನಸಭೆ ಅಧಿವೇಶನ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿಧಾನಸಭೆಯ ಇತಿಹಾಸದಲ್ಲಿಯೇ ದಾಖಲಾದ ಸುದೀರ್ಘ ಅವಧಿಯ ಕಲಾಪಗಳಲ್ಲಿ ಇದು ಒಂದು. ಜನಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚಿಸಲು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ತೋರಿಸಿದ ಆಸಕ್ತಿ ಮತ್ತು ಬದ್ಧತೆ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಜೆಟ್ ಮಂಡನೆ, ಆಯವ್ಯಯದ ಮೇಲೆ ಸುದೀರ್ಘ ಚರ್ಚೆ ನಡೆಸುವ ಮೂಲಕ, ಹೊಸ ದಾಖಲೆಗಳನ್ನು ನಿರ್ಮಿಸಿದೆ. ಒಟ್ಟು 12 ವಿಧೇಯಕಗಳನ್ನು ಮಂಡಿಸಿದ್ದು, ಆಪೈಕಿ, ಧನ ವಿನಿಯೋಗ ಮಸೂದೆಗಳು ಸೇರಿದಂತೆ 11 ಮಸೂದೆಗಳನ್ನು ಸದಸ್ಯರುಗಳ ಚರ್ಚೆಯ ನಂತರ ಅಂಗೀಕರಿಸಲಾಯಿತು ಎಂದು ಅವರು ಮಾಹಿತಿ ನೀಡಿದರು. ಹದಿನಾರನೇ ಅಧಿವೇಶನ ಕಲಾಪದಲ್ಲಿ ಒಟ್ಟು 2,791 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 195 ಚುಕ್ಕೆ ಗುರುತಿನ ಪ್ರಶ್ನೆಗಳಲ್ಲಿ 180ಕ್ಕೆ ಉತ್ತರ ನೀಡಲಾಗಿದೆ. 2,503 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಪೈಕಿ 2,254ಕ್ಕೆ ಉತ್ತರ ಒದಗಿಸಲಾಗಿದೆ. 323 ಗಮನ ಸೆಳೆಯುವ ಸೂಚನೆಗಳಲ್ಲಿ 158ಕ್ಕೆ ಉತ್ತರ ನೀಡಲಾಗಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಚರ್ಚೆಗೆ ಪೂರಕವಾಗಿರುವ ಸಿಎಜಿಯ ಹಲವು ಪ್ರಮುಖ ವರದಿಗಳನ್ನು ಮಂಡಿಸಲಾಗಿದೆ. ಮುಂದಿನ 4ವರ್ಷಗಳ ಕಾಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಹಂಚಿಕೆಗೆ ದಿಕ್ಕೂಚಿ ಆಗಲಿರುವ 5ನೆ ರಾಜ್ಯ ಹಣಕಾಸು ಆಯೋಗದ ವರದಿಯನ್ನೂ ಮಂಡಿಸಲಾಯಿತು. ಸುಗಮ ಕಲಾಪ ನಡೆಸಲು ಸಹಕರಿಸಿದ ಮುಖ್ಯಮಂತ್ರಿ, ವಿಪಕ್ಷ ನಾಯಕರು, ಸಚಿವರು ಹಾಗೂ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ' ಎಂದು ಯು.ಟಿ.ಖಾದರ್ ತಿಳಿಸಿದರು.
ಯುಎಇಯಲ್ಲಿ ಮುಂದುವರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತ; ಹಲವೆಡೆ ಕೃತಕ ನೆರೆ
ದುಬೈ: ಯುಎಇಯಾದ್ಯಂತ ಗುರುವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಇದರಿಂದ ಹಲವು ಕಡೆ ಕೃತಕ ನೆರೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಗುರುವಾರ ತಡ ರಾತ್ರಿ ಯುಎಇಯ ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಃ ಸೇರಿದಂತೆ ಹಲವಡೆ ಭಾರಿ ಗುಡುಗು, ಮಿಂಚು ಸಹಿತ ಮಳೆ ಆಗಿದೆ. ಇದರಿಂದ ರಾತ್ರಿಯಿಂದಲೇ ಹಲವು ಕಡೆಗಳ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಶುಕ್ರವಾರ ರಸ್ತೆಗಳು ಸಂಪೂರ್ಣ ಬಂದಾಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜನ ಮನೆಯಿಂದ ಹೊರಬರಲು ಪರದಾಟ ನಡೆಸುವಂತಾಯಿತು. ಗುರುವಾರ ರಾತ್ರಿ ಸುರಿದ ಮಳೆಯಿಂದ ಶುಕ್ರವಾರವೂ ರಸ್ತೆಗಳು ಜಲಾವೃತಗೊಂಡಿದ್ದು, ನೀರು ಹೆಚ್ಚಿನ ಪ್ರಮಾಣ ದಲ್ಲಿ ತುಂಬಿದ್ದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಭಾರಿ ಮಳೆ ಸುರಿದ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ವಾಹನಗಳನ್ನು ಹೊರತೆಗೆಯದೇ ತಮ್ಮ ಕಚೇರಿಯ ಕೆಲಸ, ಕಾರ್ಯಗಳನ್ನು ಮನೆಯಲ್ಲಿಯೇ ಮಾಡುವ ಪರಿಸ್ಥಿತಿ ಉಂಟಾಗಿತ್ತು. ಶಾರ್ಜಾದ ನಾನಾ ಭಾಗಗಳು ಮಳೆಯಿಂದಾಗಿ ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳು ಕೂಡ ನೀರಿನಿಂದ ಸಂಪೂರ್ಣ ಜಲಾವೃತವಾಗಿವೆ. ನ್ಯಾಷನಲ್ ಸೆಂಟರ್ ಆಫ್ ಮೆಟರೋಲಾಜಿ(NCM) ವರದಿ ಪ್ರಕಾರ ರಾಸ್ ಅಲ್ ಖೈಮಃದ ಶೌಕದಲ್ಲಿ ಅತೀ ಹೆಚ್ಚು 77.5 ಮಿಮೀ ಮಳೆಯಾಗಿದೆ. ಮಳೆ ಶನಿವಾರದಿಂದ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆ ಶುಕ್ರವಾರ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದ್ದರಿಂದ ಇಂದು ಹಲವು ಕಡೆಗಳಲ್ಲಿ ಹೋಟೆಲ್, ಅಂಗಡಿ, ಬಾರ್ಬರ್ ಶಾಪ್ಗಳು, ಲಾಂಡ್ರಿಗಳು ಸೇರಿದಂತೆ ಹಲವಾರು ಸಣ್ಣಪುಟ್ಟ ಅಂಗಡಿಗಳು ಮುಚ್ಚಿದ್ದವು. ಹೆಚ್ಚಿನ ಜನರು ಮನೆಯಿಂದ ಹೊರಬಾರದೇ ಮನೆಯಲ್ಲಿಯೇ ಉಳಿಯುವಂತಾಯಿತು. ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ತುಂಬಿರುವ ನೀರನ್ನು ಟ್ಯಾಂಕರ್ ಗಳ ಮೂಲಕ ನಗರಪಾಲಿಕೆ ಖಾಲಿ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ಕಲ್ಲಿದ್ದಲು ಹಗರಣ| ಮಾಜಿ ಸಂಸದ ವಿಜಯ್ ದರ್ದಾ ಸಹಿತ ಮೂವರನ್ನು ಖುಲಾಸೆಗೊಳಿಸಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ, ಮಾ. 27: ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಸಂಸದ ವಿಜಯ್ ದರ್ದಾ, ಅವರ ಪುತ್ರ ದೇವೇಂದ್ರ ದರ್ದಾ ಹಾಗೂ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಅವರನ್ನು ದಿಲ್ಲಿಯ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ಒಂದು ದಶಕಗಳ ಕಾಲ ನಡೆದ ಉನ್ನತ ಮಟ್ಟದ ಕಾನೂನು ಹೋರಾಟಕ್ಕೆ ಅಂತ್ಯ ತಂದಿರುವ ವಿಶೇಷ ಸಿಬಿಐ ನ್ಯಾಯಾಧೀಶರಾದ ಸುನೇಹಾ ಶರ್ಮಾ ಅವರು, ಮನೋಜ್ ಕುಮಾರ್ ಜೈಸ್ವಾಲ್ ಹಾಗೂ ಮೆಸರ್ಸ್ ಎಎಂಆರ್ ಐರನ್ ಆ್ಯಂಡ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಅನ್ನು ಕೂಡ ಖುಲಾಸೆಗೊಳಿಸಿದ್ದಾರೆ. ಕಲ್ಲಿದ್ದಲು ಹಗರಣದ ಆರೋಪಕ್ಕೆ ಸಂಬಂಧಿಸಿ ಸಿಬಿಐ 50ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿತ್ತು. ಈ ಪ್ರಕರಣ ಮಹಾರಾಷ್ಟ್ರದ ಬಾಂದ್ರಾದಲ್ಲಿ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿ ಸಿಬಿಐ ದಾಖಲಿಸಿದ ಮೊದಲ ಆರೋಪ ಪಟ್ಟಿಗೆ ಸಂಬಂಧಿಸಿದೆ. ಪ್ರಾಸಿಕ್ಯೂಷನ್ ಪ್ರಕಾರ ಗುಪ್ತಾ ಅವರೊಂದಿಗೆ ಸೇರಿ ಎಎಂಆರ್ ಐರನ್ ಆ್ಯಂಡ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪಡೆಯಲು ಕೇಂದ್ರ ಕಲ್ಲಿದ್ದಲು ಸಚಿವಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಸುಳ್ಳು ಮಾಹಿತಿಯನ್ನು ನೀಡಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 10ರೂ. ಕಡಿತ| ತೈಲೋತ್ಪನ್ನಗಳಿಗೆ ರಫ್ತು ಸುಂಕ ಹೇರಿದ ಕೇಂದ್ರ ಸರಕಾರ
ಹೊಸದಿಲ್ಲಿ, ಮಾ. 27: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಲೀಟರ್ಗೆ 10 ರೂ. ಕಡಿತ ಮಾಡಿರುವುದಾಗಿ ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ. ಜೊತೆಗೆ, ಭಾರತದಿಂದ ತೈಲ ಹೊರಹೋಗದಂತೆ ಖಾತರಿಪಡಿಸುವುದಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೊಸದಾಗಿ ರಫ್ತು ಸುಂಕವನ್ನು ಹೇರಿದೆ. ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ, ಜಾಗತಿಕದ ಕಚ್ಚಾ ತೈಲ ಬೆಲೆಯಲ್ಲಿ ಆಗಿರುವ ತೀವ್ರ ಹೆಚ್ಚಳದಿಂದ ಭಾರತೀಯ ಬಳಕೆದಾರರನ್ನು ರಕ್ಷಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಈ ನಿರ್ಧಾರವನ್ನು ಘೋಷಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಾಗತಿಕ ಪೂರೈಕೆ ಸರಣಿಯ ವ್ಯತ್ಯಯಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಾಗರಿಕರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ. ಸರಕಾರದ ಈ ಘೋಷಣೆಯೊಂದಿಗೆ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 3 ಶೇಕಡಕ್ಕೆ ಇಳಿದಿದೆ ಹಾಗೂ ಡೀಸೆಲ್ ಮೇಲೆ ಯಾವುದೇ ಅಬಕಾರಿ ಸುಂಕ ಇರುವುದಿಲ್ಲ. ಅಬಕಾರಿ ಸುಂಕ ಕಡಿತದ ಜೊತೆಗೆ, ಕೇಂದ್ರ ಸರಕಾರವು ಡೀಸೆಲ್ಗೆ ಲೀಟರ್ಗೆ 21.5 ರೂ. ಮತ್ತು ವೈಮಾನಿಕ ಪೆಟ್ರೋಲ್ಗೆ ಲೀಟರ್ಗೆ 29.5 ರೂ. ರಫ್ತು ಸುಂಕವನ್ನೂ ವಿಧಿಸಿದೆ. ಅಂತರ್ರಾಷ್ಟ್ರೀಯ ತೈಲ ಬೆಲೆಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೈಲ ಲಭ್ಯವಿರುವಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ. ಬೆಲೆ ಕಡಿಮೆಯಾಗುವುದಿಲ್ಲ, ಚುನಾವಣೆಯ ಮೇಲೆ ಕಣ್ಣಿಟ್ಟ ಕ್ರಮ: ಕಾಂಗ್ರೆಸ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದ ಘೋಷಣೆಯನ್ನು ಕೇಂದ್ರ ಸರಕಾರ ಮಾಡಿದೆಯಾದರೂ, ಅದರ ಲಾಭ ತಕ್ಷಣಕ್ಕೆ ಗ್ರಾಹಕರಿಗಾಗಲಿ, ಮಾರಾಟಗಾರರಿಗಾಗಲಿ ಸಿಗುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಅಬಕಾರಿ ಸುಂಕ ಕಡಿತವು ಇಂಧನದ ಚಿಲ್ಲರೆ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ‘‘ಕಳೆದ 12 ವರ್ಷಗಳಲ್ಲಿ, ಏಳು ವಿವಿಧ ಸಂದರ್ಭಗಳಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಇಳಿದಾಗ, ಭಾರತದಲ್ಲಿ ಗ್ರಾಹಕರು ಪಾವತಿಸುವ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ‘‘ಇಂದಿನ ಅಬಕಾರಿ ಸುಂಕ ಕಡಿತ ಘೋಷಣೆಯನ್ನು ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ’’ ಎಂದು ಅವರು ಹೇಳಿದರು. ಅಸ್ಸಾಮ್, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣೆ ಎಪ್ರಿಲ್ 9ರಂದು ನಡೆದರೆ, ತಮಿಳುನಾಡು ವಿಧಾನಸಭಾ ಚುನಾವಣೆ ಎಪ್ರಿಲ್ 23ರಂದು ನಡೆಯಲಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಫಲಿತಾಂಶವು ಮೇ 4ರಂದು ಹೊರಬೀಳಲಿದೆ. ‘‘ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮಯಾಗುತ್ತಿವೆ ಎಂಬ ಸುದ್ದಿಯನ್ನು ದೊಡ್ಡ ಅಕ್ಷರಗಳಲ್ಲಿ ಜನರು ನೋಡುತ್ತಿದ್ದಾರೆ. ತಮ್ಮ ಕಿಸೆಗಳಿಗೆ ಸರಕಾರವು ನೆಮ್ಮದಿ ನೀಡಿದೆ ಎಂಬುದಾಗಿ ಜನರು ಭಾವಿಸಿದರೆ ‘ಅವರು ತಪ್ಪು ತಿಳಿದುಕೊಂಡಿದ್ದಾರೆ’’’ ಎಂದು ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದರು. ಸದ್ಯಕ್ಕೆ ಮಾರಾಟಗಾರರಿಗಾಗಲಿ, ಗ್ರಾಹಕರಿಗಾಗಲಿ ತೈಲ ಬೆಲೆ ಕಡಿಮೆಯಾಗುವುದಿಲ್ಲ ಎಂದು ಅವರು ನುಡಿದರು.
ಒಂದನೇ ತರಗತಿ ಸೇರಲು ವಯೋಮಿತಿಯಲ್ಲಿ ಸಡಿಲಿಕೆ | ನಿಯಮ ಸಿಬಿಎಸ್ಇ, ಐಸಿಎಸ್ಇ ಶಾಲೆಗಳಿಗೂ ಅನ್ವಯ : ಮಧುಬಂಗಾರಪ್ಪ
ಬೆಂಗಳೂರು : 2026-27ರ ಶೈಕ್ಷಣಿಕ ಸಾಲಿನಲ್ಲಿ 1ನೆ ತರಗತಿಯ ಪ್ರವೇಶ ವಯೋಮಿತಿಯಲ್ಲಿ ನೀಡಲಾಗಿರುವ 60 ದಿನಗಳ ವಿನಾಯಿತಿಯು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪಠ್ಯಕ್ರಮ (ಸಿಬಿಎಸ್ಇ, ಐಸಿಎಸ್ಇ ಒಳಗೊಂಡಂತೆ) ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಎಸ್ಇ ಮತ್ತು ಇತರೆ ರಾಜ್ಯಗಳ ಪಾಲಿಸಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗಿದೆ. ಇತರ ರಾಜ್ಯಗಳಲ್ಲಿನ ಶಿಕ್ಷಣ ಪದ್ಧತಿಯ ಮಾಹಿತಿಯನ್ನು ಕೋರಲಾಗಿದೆ ಎಂದರು. ಇಲಾಖೆಯಿಂದ ಸ್ಪಷ್ಟನೆ ದೊರೆತ ತಕ್ಷಣ ಈ ಕುರಿತಾದ ಗೊಂದಲಗಳು ಬಗೆಹರಿಯಲಿವೆ. ರಾಜ್ಯ ಶಿಕ್ಷಣ ನೀತಿಯ (ಎಸ್ಇಪಿ) ಶಿಫಾರಸುಗಳನ್ನು ಇನ್ನೂ ಸಚಿವ ಸಂಪುಟದ ಮುಂದೆ ಮಂಡಿಸಬೇಕಿದ್ದು, ಒಮ್ಮೆ ಅದನ್ನು ಮಂಡಿಸಿ ಅನುಮೋದನೆ ಪಡೆದ ನಂತರ ಅನ್ವಯವಾಗುವ ಮಾರ್ಗಸೂಚಿಗಳು ಮತ್ತು ಆದೇಶವನ್ನು ಹೊರಡಿಸುತ್ತೇವೆ. ಜತೆಗೆ ಕಿಂಡರ್ ಗಾರ್ಡನ್ ಪ್ರವೇಶದ ವಯೋಮಿತಿಗೆ ಸಂಬಂಧಿಸಿದಂತೆ ಸರಿಯಾದ ಮಾರ್ಗಸೂಚಿಗಳಿಲ್ಲದ ಕಾರಣ, ಪೋಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಾವು ಸ್ಪಷ್ಟತೆ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಡಾಲರ್ ಎದುರು 94.28ಕ್ಕೆ ಕುಸಿದ ರೂಪಾಯಿ ಮೌಲ್ಯ
ಮುಂಬೈ, ಮಾ. 27: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ವೇಗವಾಗಿ ಕುಸಿಯುತ್ತಾ ಸಾಗುತ್ತಿದೆ. ಶುಕ್ರವಾರ ಹಿಂದಿನ ದಿನದ ಬೆಲೆಗಿಂತ 30 ಪೈಸೆ ಕುಸಿದು 94.28ರಲ್ಲಿ ನೆಲೆಗೊಂಡಿದೆ. ಯುದ್ಧವಿರಾಮದ ಬಗ್ಗೆ ಇರಾನ್ನೊಂದಿಗೆ ಅಮೆರಿಕ ನಡೆಸುತ್ತಿದೆ ಎನ್ನಲಾದ ಮಾತುಕತೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಮೂಡದಿರುವ ಹಿನ್ನೆಲೆಯಲ್ಲಿ ಆಮದುದಾರರು ಯಾವುದೇ ಅಪಾಯವನ್ನು ತಂದುಕೊಳ್ಳಲು ಬಯಸದೆ ಡಾಲರನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು ರೂಪಾಯಿ ಪಾತಾಳಕ್ಕಿಳಿಯಲು ಮುಖ್ಯ ಕಾರಣವಾಗಿದೆ. ಮಾತುಕತೆಗಳ ಪ್ರಸ್ತಾಪವು ಕಚ್ಚಾತೈಲ ಬೆಲೆಯ ಹೆಚ್ಚಳವನ್ನು ತಡೆಹಿಡಿದಿದೆಯಾದರೂ, ಅದು ಈಗಲೂ ಬ್ಯಾರಲ್ಗೆ 100 ಡಾಲರ್ಗಿಂತಲೂ ಮೇಲೆಯೇ ಇದೆ. ಇರಾನ್ ಯುದ್ಧ ಆರಂಭಗೊಂಡಂದಿನಿಂದ ರೂಪಾಯಿ ಮೌಲ್ಯ 4 ಶೇಕಡಕ್ಕೂ ಹೆಚ್ಚು ಕುಸಿದಿದೆ. ಯುದ್ಧ ನಿಲ್ಲುವ ಸೂಚನೆ ಇನ್ನೂ ಕಾಣುತ್ತಿಲ್ಲ.
ಐಷಾರಾಮಿ ಕಾರು - ನಕಲಿ ನಂಬರ್ಪ್ಲೇಟ್! ಸಿಕ್ಕಿಬಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ - ಕ್ರಿಮಿನಲ್ ಕೇಸ್ ದಾಖಲು
ಅನಿಲ್ ಕುಂಬ್ಳೆ ಸರ್ಕಲ್ನಲ್ಲಿ ಲ್ಯಾಂಬೋರ್ಗಿನಿ ಕಾರಿನೊಂದಿಗೆ ಪುಂಡಾಟ ನಡೆಸಿದ್ದ ರಿಕ್ಕಿ ರೈ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ ಅವರು ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಮತ್ತು ಪೊಲೀಸರಿಗೆ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಸದ್ಯ ರಿಕ್ಕಿ ರೈ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದು, ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ 70%ಕ್ಕೆ ಏರಿಕೆ ಮಾಡಿದ ಕೇಂದ್ರ ಸರಕಾರ
ಹೊಸದಿಲ್ಲಿ, ಮಾ. 27: ಕೇಂದ್ರ ಸರಕಾರ ಶುಕ್ರವಾರ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ವಿತರಣೆಯನ್ನು ಈಗಿನ 50 ಶೇಕಡದಿಂದ 70 ಶೇಕಡಕ್ಕೆ ಹೆಚ್ಚಿಸಿದೆ. ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ ಎಲ್ಪಿಜಿ ಕೊರತೆಯಿಂದ ಕಂಗೆಟ್ಟಿರುವ ಕೈಗಾರಿಕೆಗಳಿಗೆ ಕೊಂಚ ನೆಮ್ಮದಿ ನೀಡುವ ನಿರೀಕ್ಷೆಯನ್ನು ಇದು ಹುಟ್ಟಿಸಿದೆ. ಹೆಚ್ಚುವರಿ ವಿತರಣೆಯನ್ನು ಕೈಗಾರಿಕೆಗಳಿಗೆ, ಅದರಲ್ಲೂ ಮುಖ್ಯವಾಗಿ ಉಕ್ಕು, ವಾಹನ ನಿರ್ಮಾಣ, ಜವಳಿ, ಬಣ್ಣ ತಯಾರಿಕೆ, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಕ್ಷೇತ್ರಗಳಿಗೆ ಒದಗಿಸಲಾಗುತ್ತದೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದ ಆದೇಶದಲ್ಲಿ ಕೇಂದ್ರ ಸರಕಾರ ತಿಳಿಸಿದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಹಾಗೂ ಅವುಗಳು ಇತರ ಮಹತ್ವದ ಕ್ಷೇತ್ರಗಳಿಗೆ ಆಧಾರವಾಗಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಹಂಚಿಕೆಯಲ್ಲಿ ಸಂಸ್ಕರಣೆ ಉದ್ಯಮಗಳಿಗೆ ಆದ್ಯತೆ ನೀಡಲಾಗಿದೆ. ವಿಶಿಷ್ಟ ರೀತಿಯಲ್ಲಿ ಬಿಸಿ ಮಾಡುವುದಕ್ಕಾಗಿ ಎಲ್ಪಿಜಿ ಅಗತ್ಯವಿರುವ ಹಾಗೂ ಎಲ್ಪಿಜಿ ಸ್ಥಾನದಲ್ಲಿ ನೈಸರ್ಗಿಕ ಅನಿಲವನ್ನು ಬಳಸಲು ಸಾಧ್ಯವಿಲ್ಲದ ಉದ್ದೇಶಗಳಿಗೆ ಹೆಚ್ಚುವರಿ ವಾಣಿಜ್ಯ ಎಲ್ಪಿಜಿಯನ್ನು ಪೂರೈಸಲಾಗುವುದು. ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ, ಎಲ್ಪಿಜಿ ಮತ್ತು ಎಲ್ಎನ್ಜಿ (ನೈಸರ್ಗಿಕ ಅನಿಲ) ಪೂರೈಕೆಯಲ್ಲಿ ಅಡಚಣೆ ತಲೆದೋರಿದ ಬಳಿಕ, 33 ಕೋಟಿ ಎಲ್ಪಿಜಿ ಗೃಹ ಬಳಕೆದಾರರಿಗೆ ಪೂರೈಕೆಯನ್ನು ಖಾತರಿ ಪಡಿಸುವುದಕ್ಕಾಗಿ ವಾಣಿಜ್ಯ ಬಳಕೆಯ ಎಲ್ಪಿಜಿಯ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ಆರಂಭದಲ್ಲಿ, ವಾಣಿಜ್ಯ ಬಳಕೆದಾರರ ಸರಾಸರಿ ಮಾಸಿಕ ಅಗತ್ಯದ ಕೇವಲ 20 ಶೇಕಡದಷ್ಟು ಎಲ್ಪಿಜಿಯನ್ನು ಸರಕಾರ ಪೂರೈಸಿತ್ತು. ಜೊತೆಗೆ, ಎಲ್ಪಿಜಿಯಿಂದ ಕೊಳವೆ ಮೂಲಕ ಪೂರೈಸುವ ನೈಸರ್ಗಿಕ ಅನಿಲ (ಪಿಎನ್ಜಿ)ಕ್ಕೆ ಬದಲಾವಣೆಗೊಳ್ಳುವುದನ್ನು ಉತ್ತೇಜಿಸುವ ರಾಜ್ಯಗಳಿಗೆ ಹೆಚ್ಚುವರಿ 10 ಶೇಕಡ ಎಲ್ಪಿಜಿಯನ್ನು ಅದು ನೀಡಿತ್ತು. ಬಳಿಕ, ಪೆಟ್ರೋಲಿಯಂ ಸಚಿವಾಲಯವು ವಾಣಿಜ್ಯ ಎಲ್ಪಿಜಿ ವಿತರಣೆಯನ್ನು ಇನ್ನು 20 ಶೇಕಡದಷ್ಟು ಹೆಚ್ಚಿಸಿತು. ಅದರೊಂದಿಗೆ ವಿತರಣೆಯ 50 ಶೇ.ಕ್ಕೆ ಏರಿತು.
ಎಡರಂಗದ ಭದ್ರಕೋಟೆಯಲ್ಲಿ ಯುಡಿಎಫ್ ಗೆದ್ದರೆ ಗಲ್ಫ್ ಗೆ ಉಚಿತ ಪ್ರವಾಸ: ಕಾರ್ಯಕರ್ತರಿಗೆ ನಾಯಕನ ಭರವಸೆ
ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತವಣೂರು ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ ಪಕ್ಷದ ಕಾರ್ಯಕರ್ತರಿಗೆ ಉಚಿತ ಗಲ್ಫ್ ಪ್ರವಾಸ ಆಯೋಜಿಸಲಾಗುವುದು ಎಂದು ಐಯುಎಂಎಲ್(ಮುಸ್ಲಿಂ ಲೀ ನಾಯಕ ನೀಡಿದ ಭರವಸೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಂಗಳವಾರ ತವಣೂರಿನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಐಯುಎಂಎಲ್ ರಾಜ್ಯ ಉಪಾಧ್ಯಕ್ಷ ಸಿ.ಪಿ. ಬಾವಾ ಹಾಜಿ ಈ ಭರವಸೆ ನೀಡಿದ್ದಾರೆ. ಐಯುಎಂಎಲ್ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಪ್ರಮುಖ ಅಂಗಪಕ್ಷವಾಗಿದೆ. ಯುಡಿಎಫ್ ಅಭ್ಯರ್ಥಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಜೆ. ಜಾಯ್ ಅವರು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ, ಐಯುಎಂಎಲ್ ಮಂಡಲ್ ಹಾಗೂ ಪಂಚಾಯತಿ ಸಮಿತಿ ಸದಸ್ಯರಿಗೆ 15 ದಿನಗಳ ಉಚಿತ ಗಲ್ಫ್ ಪ್ರವಾಸ ಒದಗಿಸಲಾಗುವುದು ಎಂದು ಸಿ.ಪಿ. ಬಾವಾ ಹಾಜಿ ತಿಳಿಸಿದ್ದಾರೆ. ಈ ಕುರಿತು ಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಈ ಪ್ಯಾಕೇಜ್ನಲ್ಲಿ ಪ್ರಯಾಣದ ಟಿಕೆಟ್ಗಳು, ವಾಸ್ತವ್ಯ ಮತ್ತು ಇತರ ವೆಚ್ಚಗಳು ಒಳಗೊಂಡಿವೆ ಎಂದು ಅವರು ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಗಮನ ಕೇಂದ್ರೀಕರಿಸಿ ಯುಡಿಎಫ್ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮಲಪ್ಪುರಂ ಜಿಲ್ಲಾಧಿಕಾರಿ ವಿನಯ್ ಗೋಯಲ್, “ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. “ಜಿಲ್ಲಾ ಪೊಲೀಸ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇನೆ. ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಹೇಳಿದ್ದಾರೆ. ಮುಂದಿನ ಕ್ರಮಗಳ ಕುರಿತು ನಿರ್ಧರಿಸುವ ಮೊದಲು ಚುನಾವಣಾ ನಿಯಮಗಳನ್ವಯ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಉಡುಗೊರೆಯ ಆಫರ್ ಮತದಾರರಿಗೆ ನೀಡಲಾಗಿಲ್ಲ; ಬದಲಿಗೆ ಕಾರ್ಯಕರ್ತರಿಗೆ ಮಾತ್ರ ನೀಡಲಾಗಿದೆ ಎಂದು ಯುಡಿಎಫ್ ಮೂಲಗಳು ಸಮರ್ಥಿಸಿಕೊಂಡಿವೆ. ಎಪ್ರಿಲ್ 9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಡಿಎಫ್ ಬೆಂಬಲಿತ ಸ್ವತಂತ್ರ ಶಾಸಕ ಕೆ.ಟಿ. ಜಲೀಲ್ ವಿರುದ್ಧ ತವಣೂರು ಕ್ಷೇತ್ರದಲ್ಲಿ ವಿ.ಜೆ. ಜಾಯ್ ಸ್ಪರ್ಧಿಸುತ್ತಿದ್ದಾರೆ.
ಐಪಿಎಲ್ ಪಂದ್ಯ ಹಿನ್ನೆಲೆ: ಬಿಎಂಟಿಸಿ, ಮೆಟ್ರೋ ಬಳಸಲು ಸಂಚಾರ ಪೊಲೀಸರ ಮನವಿ
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ(ಮಾ.28) ಐಪಿಎಲ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಪ್ರೇಕ್ಷಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಸೇವೆಯನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಮಾ.28, ಎ.5ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯಲಿರುವ ಹಿನ್ನೆಲೆ ಇಲ್ಲಿನ ಕ್ವೀನ್ಸ್ ರಸ್ತೆಯ ಎರಡು ಬದಿಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ಮತ್ತು ಕ್ವೀನ್ಸ್ ರಸ್ತೆಯಿಂದ ಅನಿಲ್ ಕುಂಬ್ಳೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ. ಲಿಂಕ್ ರಸ್ತೆ-ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ, ಕಬ್ಬನ್ ರಸ್ತೆ ಸೇರಿದಂತೆ ಚಿನ್ನಸ್ವಾಮಿ ಕ್ರೀಡಾಂಗಣ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಆದರೆ, ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೆಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆ, ಫ್ರೀಡಂ ಪಾರ್ಕ ಎಂಎಲ್ಸಿಪಿ ಪಾರ್ಕಿಗ್ ಸ್ಥಳ, ಗರುಡಾ ಮಾಲ್ ಪಾರ್ಕಿಗ್ ಸ್ಥಳ, ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿ, ಯುಬಿಸಿಟಿ ನಿಲುಗಡೆ ಸ್ಥಳ, ಕಂಠೀರವ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಪಚುನಾವಣೆ : ಕಾಂಗ್ರೆಸ್ ಸ್ಟಾರ್ ಪ್ರಚಾರ ಪಟ್ಟಿ ಪ್ರಕಟ
ಬೆಂಗಳೂರು : ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ಎಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಡಾ.ಸೈಯದ್ ನಾಸೀರ್ ಹುಸೇನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಶಾಸಕ ತನ್ವೀರ್ ಸೇಠ್ ಹಾಗೂ ಸಚಿವರು, ಶಾಸಕರು, ಪಕ್ಷದ ಪ್ರಮುಖ ಮುಖಂಡರು ಸೇರಿದಂತೆ 40 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಭಾರತದ ವಿದೇಶಿ ವಿನಿಮಯ ಮೀಸಲು 698.346 ಶತಕೋಟಿ ಡಾಲರ್ ನಿಂದ 11.41 ಶತಕೋಟಿ ಡಾಲರ್ ಗೆ ಕುಸಿತ: RBI ದತ್ತಾಂಶ
ಮುಂಬೈ: ಚಿನ್ನದ ಮೀಸಲು ನಿಧಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಭಾರತದ ವಿದೇಶಿ ವಿನಿಮಯ ಮೀಸಲು ಮಾರ್ಚ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ 698.436 ಶತಕೋಟಿ ಡಾಲರ್ ನಿಂದ 11.413 ಶತಕೋಟಿ ಡಾಲರ್ ಗೆ ಕುಸಿದಿದೆ ಎಂದು ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಇದಕ್ಕೂ ಮುನ್ನದ ವಾರದಲ್ಲಿ ಒಟ್ಟಾರೆ ವಿದೇಶಿ ವಿನಿಮಯ ಮೀಸಲು 709.759 ಶತಕೋಟಿ ಡಾಲರ್ ನಿಂದ 7.052 ಶತಕೋಟಿ ಡಾಲರ್ ಗೆ ಕುಸಿದಿತ್ತು. ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೂ ಮುನ್ನ, ಈ ವರ್ಷದ ಫೆಬ್ರವರಿ 27ರಂದು ವಿದೇಶಿ ವಿನಿಮಯ ಮೀಸಲು ಪ್ರಮಾಣ ಸಾರ್ವಕಾಲಿಕ 728.759 ಶತಕೋಟಿ ಡಾಲರ್ ಗೆ ಏರಿಕೆಯಾಗಿತ್ತು. ಮಾರ್ಚ್ 20ಕ್ಕೆ ಅಂತ್ಯಗೊಂಡಂತೆ ವಿದೇಶಿ ವಿನಿಮಯ ಮೀಸಲಿನ ಪ್ರಮುಖ ಭಾಗವಾದ ವಿದೇಶಿ ನಗದು ಸ್ವತ್ತಿನ ಪ್ರಮಾಣವು 557.695 ಶತಕೋಟಿ ಡಾಲರ್ ಗೆ ಹೋಲಿಸಿದರೆ 2.127 ಶತಕೋಟಿ ಡಾಲರ್ನಷ್ಟು ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶ ತಿಳಿಸಿದೆ. ಆದರೆ, ಈ ವಾರದಲ್ಲಿ ಚಿನ್ನದ ಮೀಸಲು ನಿಧಿ 117.186 ಶತಕೋಟಿ ಡಾಲರ್ ನಿಂದ 13.495 ಶತಕೋಟಿ ಡಾಲರ್ ಗೆ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ವಿಶೇಷ ಹಿಂಪಡೆಯುವ ಹಕ್ಕುಗಳು 18.632 ಶತಕೋಟಿ ಡಾಲರ್ ನಿಂದ 65 ದಶಲಕ್ಷ ಡಾಲರ್ ಗೆ ಇಳಿಕೆಯಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶದ ಪ್ರಕಾರ, ಈ ವಾರದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ಯಲ್ಲಿ ಭಾರತದ ಮೀಸಲು ಪ್ರಮಾಣವು 4.833 ಶತಕೋಟಿ ಡಾಲರ್ ಗೆ ಹೋಲಿಸಿದರೆ 19 ದಶಲಕ್ಷ ಡಾಲರ್ನಷ್ಟು ಏರಿಕೆಯಾಗಿದೆ.
ಕಲುಷಿತ ಆಹಾರ ಸೇವನೆಯಿಂದ ಪ್ರತಿವರ್ಷ 1.20 ಲಕ್ಷ ಮಂದಿ ಸಾವು: ಡಾ. ಶರತ್ ಕೆ. ರಾವ್
ಮಣಿಪಾಲ, ಮಾ.27: ದೇಶದಲ್ಲಿ ಕಲುಷಿತ ಆಹಾರ ಸೇವನೆಯಿಂದ ಪ್ರತಿ ವರ್ಷ ಸರಾಸರಿ 1,20,000 ಮಂದಿ ಸಾವನ್ನಪ್ಪುತ್ತಿದ್ದು, ಆ ಕಾರಣದಿಂದ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಜಾಗ್ರತೆ ಹಾಗೂ ಅಗತ್ಯ ಕ್ರಮ ಗಳನ್ನು ಕೈಗೊಳ್ಳಬೇಕಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್(ಮಾಹೆ)ಯ ಪ್ರೊ ವೈಸ್ ಚಾನ್ಸಲರ್ (ಆರೋಗ್ಯ ವಿಜ್ಞಾನ) ಡಾ.ಶರತ್ ಕೆ.ರಾವ್ ಹೇಳಿದ್ದಾರೆ. ಮಾಹೆಯ ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿ ಹಾಗೂ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ಆಹಾರ ಸುರಕ್ಷತಾ ಕ್ರಮಗಳ ಬಿಗು ಗೊಳಿಸುವ ಕುರಿತು ಸಂಬಂಧಪಟ್ಟ ವಿಭಾಗಗಳ ಪ್ರತಿನಿಧಿಗಳಿಗೆ ಎರಡು ದಿನಗಳ ತರಬೇತಿ ಕಾರ್ಯಗಾರವನ್ನು ಕೆಎಂಸಿಯ ಇಂಟರ್ಯಾಕ್ಟ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಆಹಾರ ತಯಾರಿಕಾ ಘಟಕಗಳಲ್ಲಿ ಆಹಾರ ಶುಚಿತ್ವ ಕಾಪಾಡಲು ಯಾಂತ್ರಿಕರಣ ಗೊಳಿಸಬೇಕಾದ, ಆಹಾರದ ಪರಿಶುದ್ಧತೆಯನ್ನು ಉತ್ಕ್ರಷ್ಟ ಮಟ್ಟದಲ್ಲಿ ಕಾಯ್ದುಕೊಳ್ಳಬೇಕಾದ ಅಗತ್ಯತೆಗಳ ಬಗ್ಗೆ ಅವರು ವಿಶೇಷ ಒತ್ತು ನೀಡಿದರು. ಕೆಎಂಸಿಯ ಸಹ ಡೀನ್ ಡಾ.ವಿನೋದ್ ಸಿ. ನಾಯಕ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಾಗಿ ತಿಳಿದು ಕೊಳ್ಳಬೇಕಾದ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಾಷ್ಟ್ರೀಯ ಆಹಾರ ಸುರಕ್ಷತೆಗಳ ಸಲಹೆಗಾರ ಡಾ. ಪಶುಪತಿ ಮಾತನಾಡಿ, ಸಮುದಾಯ ದಲ್ಲಿ ಆಹಾರ ಸೇವನೆಗೆ ಸಂಬಂಧಿಸಿದ ಅನಾರೋಗ್ಯ ಅಥವಾ ಸಾವು ಸಂಭವಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಪ್ರತೀ ಆಹಾರ ತಯಾರಿಕಾ, ಸಂಗ್ರಹಣಾ, ವಿತರಣಾ ಘಟಕಗಳ ಜವಾಬ್ದಾರಿಯಾಗಿದೆ ಎಂದರು. ಮಣಿಪಾಲ ಮಾಹೆ ಕ್ಯಾಂಪಸ್ನ ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥರಾದ ಡಾ. ಅಶ್ವಿನಿಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕ ಕಾರ್ಯದರ್ಶಿ ಡಾ. ದಿವ್ಯಾ ಅರವಿಂದ್ ಪ್ರಭು ವಂದಿಸಿದರು. ಡಾ. ರತ್ನಾ ಜಯ್ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಆಹಾರ ಸುರಕ್ಷತೆಗಳ ಸಲಹೆ ಗಾರರಾದ ಡಾ.ವಿ.ಪಶುಪತಿ, ಆಹಾರ ತಯಾರಿಕಾ ಉಪಕರಣಗಳ ಯಾಂತ್ರೀಕರಣ ತಂತ್ರಜ್ಞ ಪರಿಣಿತ ಅಲೆಕ್ಸ್ ಜಾನ್ ಜೆ., ಮಾಹೆ ಮಣಿಪಾಲ ಕ್ಯಾಂಪಸ್ನ ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್, ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಮುರಳೀಧರ್ ವರ್ಮ, ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ದಿವ್ಯಾ ಅರವಿಂದ್ ಪ್ರಭು, ಎನ್ಐಟಿಕೆ ಸುರತ್ಕಲ್ನ ರಸಾಯನಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜಗನ್ನಾಥ್ ಟಿ. ಕಲಾಥಿ, ವಾಗ್ಶಾದ ಸಹಾಯಕ ಪ್ರಾಧ್ಯಾಪಕ ಅಜಿತ್ ನಾಯಕ್ ಹಾಗೂ ಆಹಾರ ತಜ್ಞರಾದ ಸುವರ್ಣ ಹೆಬ್ಬಾರ್ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ 143 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಹಾರ್ಮುಝ್ ಜಲಸಂಧಿಯಲ್ಲಿ ಪಾಕಿಸ್ತಾನದ ಕಪಟ ನಾಟಕ ?
ಟೆಹ್ರಾನ್, ಮಾ.27: ಹಾರ್ಮುಝ್ ಜಲಸಂಧಿಯ ಮೂಲಕ ಸಾಗಲು ಭಾರತ , ಪಾಕಿಸ್ತಾನ ಸೇರಿದಂತೆ ಐದು ರಾಷ್ಟ್ರಗಳ ಹಡಗುಗಳಿಗೆ ಅವಕಾಶ ನೀಡುವುದಾಗಿ ಇರಾನ್ ಘೋಷಿಸಿತ್ತು. ಆದರೆ ಈ ಅವಕಾಶವನ್ನು ಬಳಸಿಕೊಂಡು ಪಾಕಿಸ್ತಾನವು ಅಮೆರಿಕದ ಹಿತಾಸಕ್ತಿಗೆ ಸಂಬಂಧಿಸಿದ ಹಡಗುಗಳನ್ನು ಕರೆತಂದಿದೆ ಎಂದು ಉನ್ನತ ಗುಪ್ತಚರ ಮೂಲಗಳು ಹೇಳಿವೆ. ಪಾಕಿಸ್ತಾನದ ಈ ಕ್ರಮವು ಸಂಘರ್ಷದ ನಿರ್ಣಾಯಕ ಹಂತದಲ್ಲಿ ಲೆಕ್ಕಾಚಾರದ `ಡಬಲ್ ಗೇಮ್' ಎಂದು ಇರಾನ್ ಪರಿಗಣಿಸಿದ್ದು ತೀವ್ರ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ. ತೈಲ ಸಾಗಿಸುವ ಸುಮಾರು 10 ಪಾಕಿಸ್ತಾನಿ ಧ್ವಜ ಹೊಂದಿದ್ದ ಹಡಗುಗಳಿಗೆ ಹಾರ್ಮುಝ್ ಜಲಸಂಧಿ ದಾಟಲು ಅವಕಾಶ ನೀಡಲಾಗಿತ್ತು. ಆದರೆ ಅನುಮತಿಸಲಾದ ಹಡಗುಗಳನ್ನು ಅಮೆರಿಕಕ್ಕೆ ಲಾಭದಾಯಕವಾದ ರೀತಿಯಲ್ಲಿ ಬಳಸಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಅಮೆರಿಕದ 10 ಹಡಗುಗಳಿಗೆ ಹಾರ್ಮುಝ್ನಲ್ಲಿ ಇರಾನ್ ಅವಕಾಶ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ನೀಡಿರುವುದು ಈ ವರದಿಗೆ ಪುಷ್ಟಿ ನೀಡಿದೆ. ಪಾಕಿಸ್ತಾನದ ಹಾರ್ಮುಝ್ ನಡವಳಿಕೆ ಉದ್ದೇಶಪೂರ್ವಕ `ಡಬಲ್ ಗೇಮ್'ನ ಭಾಗವಾಗಿದೆ ಎಂದು ಇರಾನ್ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ರೈಲ್ವೆ ಲೆವೆಲ್ ಕ್ರಾಸಿಂಗ್ನ ಸುರಕ್ಷತೆ ಹೆಚ್ಚಿಸಲು ವಿಚಾರಗೋಷ್ಠಿ
ಉಡುಪಿ: ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ಗಳ ಸುರಕ್ಷತೆಯನ್ನು ಹೆಚ್ಚಿಸುವ ಮೂಲಕ ರೈಲು ಪ್ರಯಾಣವನ್ನು ಇನ್ನಷ್ಟು ಆಹ್ಲಾದಕರಗೊಳಿಸುವ ನಿಟ್ಟಿಗೆ ಉನ್ನತ ಮಟ್ಟದ ವಿಚಾರಗೋಷ್ಠಿಯೊಂದನ್ನು ಕೊಂಕಣ ರೈಲ್ವೆಯ ವತಿ ಯಿಂದ ಬೇಲಾಪುರದಲ್ಲಿರುವ ಸಂಸ್ಥೆಯ ಕಾರ್ಪೋರೇಟ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು. ಈ ವಿಚಾರಗೋಷ್ಠಿಯಲ್ಲಿ ಕೊಂಕಣ ರೈಲ್ವೆಯಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ಗಳನ್ನು ನಿರ್ವಹಣೆ ನಡೆಸುವ ಗೇಟ್ಮೆನ್ಗಳು, ಮೇಲ್ವಿಚಾರಕರು, ಸ್ಟೇಶನ್ ಮಾಸ್ಟರ್ಗಳು ಹಾಗೂ ಲೋಕೊ ಪೈಲೆಟ್ಗಳು ಪಾಲ್ಗೊಂಡಿದ್ದರು. ಕೊಂಕಣ ರೈಲ್ವೆಯ (ಕೆಆರ್ಸಿಎಲ್) ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಸಿಎಂಡಿ) ಸಂತೋಷ್ ಕುಮಾರ್ ಝಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಚಾರಗೋಷ್ಠಿಯಲ್ಲಿ ಸಂಸ್ಥೆಯ ಆರ್ಥಿಕ ವಿಭಾಗದ ನಿರ್ದೇಶಕ ರಾಜೇಶ್ ಎಂ.ಭಾದಂಗ್ ಹಾಗೂ ದಾರಿ ಮತ್ತು ನಿರ್ವಹಣೆ ನಿರ್ದೇಶಕ ರಾಜೀವ್ ಕುಮಾರ್ ಮಿಶ್ರಾ ಅವರು ಸಂಸ್ಥೆ ಪ್ರಯಾಣಿ ಕರ ಹಾಗೂ ರೈಲ್ವೆಯ ಸುರಕ್ಷತೆಯ ಕುರಿತಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಸಂವಾದದ ಸಂದರ್ಭದಲ್ಲಿ ಗೇಟ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳುವ ಕುರಿತು ಒತ್ತು ನೀಡಲಾಯಿತು. ಗೇಟ್ಮನ್ಗಳು, ಲೋಕೊ ಪೈಲೆಟ್ಗಳು ಹಾಗೂ ಸ್ಟೇಶನ್ ಮಾಸ್ಟರ್ಗಳು ಲೆವೆಲ್ ಕ್ರಾಸಿಂಗ್ ಗೇಟ್ಗಳ ಸುರಕ್ಷತೆಗೆ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಲೆವೆಲ್ ಕ್ರಾಸಿಂಗ್ ಗೇಟ್ಗಳಲ್ಲಿ ಯಾವುದೇ ಅನಿರೀಕ್ಷಿತ ಬೆಳವಣಿಗೆ ಗಳಾದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು ಕುರಿತು, ರೈಲುಗಳ ಸುಗಮ ಸಂಚಾರಕ್ಕಾಗಿ ಗೇಟ್ಗಳಲ್ಲಿ ಪ್ರತಿದಿನ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತೂ ತಿಳುವಳಿಕೆ ನೀಡಲಾಯಿತು. ಅಲ್ಲದೇ ಲೆವೆಲ್ ಕ್ರಾಸಿಂಗ್ ಗೇಟ್ಗಳ ಅಕ್ಕಪಕ್ಕದ ರಸ್ತೆಗಳಲ್ಲಿ ಇರಬೇಕಾದ ಸೂಚನಾ ಫಲಕಗಳು, ಸ್ಪಷ್ಟವಾದ ಮಾರ್ಕಿಂಗ್ಗಳ ಬಗ್ಗೆಯೂ ಗೇಟ್ಮೆನ್ಗಳು ಹಾಗೂ ಸ್ಟೇಷನ್ ಮಾಸ್ಟರ್ಗಳಿಗೆ ಸೂಚನೆಗಳನ್ನು ನೀಡಲಾಯಿತು. ಸಿಎಂಡಿ ಸಂತೋಷ್ಕುಮಾರ್ ಝಾ ಅವರು ಮಾತನಾಡಿ, ಲೆವೆಲ್ ಕ್ರಾಸಿಂಗ್ ಗೇಟ್ಗಳ ಪ್ಯಾನೆಲ್ಗಳಿಗೆ ಸುದೀರ್ಘ ಬಾಳಿಕೆಯ ರಬ್ಬರ್ಗಳನ್ನು ಅಳವಡಿಸುವಂತೆ ಸೂಚಿಸಿದರಲ್ಲದೇ ಇದರಿಂದ ರಸ್ತೆ ಬಳಕೆದಾರರಿಗೆ ಇಲ್ಲಿ ಸಾಗುವುದು ಸುರಕ್ಷಿತ ಹಾಗೂ ಆರಾಮದಾಯಕವಾಗಿರುತ್ತದೆ ಎಂದರು.
Ballari | ಗೋಶಾಲೆಗೆ ಒಂದು ಟ್ರ್ಯಾಕ್ಟರ್ ಕಲ್ಲಂಗಡಿ ದೇಣಿಗೆಯಾಗಿ ನೀಡಿದ ರೈತ
ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಸಮುದ್ರ ಕ್ರಾಸ್ ಸಮೀಪದಲ್ಲಿರುವ ಶ್ರೀ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಯ ಗೋವುಗಳಿಗೆ ಕೊಟ್ಟಾಲ್ ಗ್ರಾಮದ ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರು ಸುಮಾರು ಒಂದು ಟ್ರ್ಯಾಕ್ಟರ್ ನಷ್ಟು ಕಲ್ಲಂಗಡಿ ಹಣ್ಣುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಮೂರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದ ರೈತ ನಾಗರಾಜ ಅವರು, ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆ ಕುಸಿದಿರುವುದರಿಂದ ಹಾಗೂ ಕೊಯ್ಯುವ ಕೂಲಿಯೂ ಸಿಗದ ಪರಿಸ್ಥಿತಿಯಿಂದ ಹಣ್ಣುಗಳನ್ನು ಹೊಲದಲ್ಲೇ ಹಾಳು ಮಾಡುವ ಬದಲು ಗೋಶಾಲೆಗೆ ನೀಡಲು ಮುಂದಾಗಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿರುವ ಹಾಗೂ ಗೋವುಗಳಿಗೆ ಆಶ್ರಯ ನೀಡುತ್ತಿರುವ ಗೋಶಾಲೆಗೆ ಇದು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ. ಕಲ್ಯಾಣ ಚೌಕಿಮಠ ಕಾಮಧೇನು ಗೋಶಾಲೆಯ ಮುಖ್ಯಸ್ಥ ಕೆ.ಎಂ. ಬಸವರಾಜ ಶಾಸ್ತ್ರಿಗಳು ಮಾತನಾಡಿ, ಗೋಶಾಲೆಯಲ್ಲಿ ನೂರಾರು ಗೋವುಗಳನ್ನು ಸಾಕಲಾಗುತ್ತಿದೆ. ಈ ಭಾಗದಲ್ಲಿ ಎರಡನೇ ಬೆಳೆ ಇಲ್ಲದ ಕಾರಣ ಮೇವಿನ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರೈತ ನಾಗರಾಜ ನೀಡಿದ ಕಲ್ಲಂಗಡಿ ಹಣ್ಣುಗಳು ಗೋವುಗಳಿಗೆ ಬಹಳ ಉಪಯೋಗವಾಗಿವೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಗೋಶಾಲೆ ಗುಡ್ಡ ಪ್ರದೇಶದಲ್ಲಿದ್ದು, ಮಳೆ ಅಭಾವದಿಂದ ಬೆಳೆಯಿಲ್ಲದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ತಾಲೂಕಿನ ಹಾಗೂ ಸುತ್ತಮುತ್ತಲಿನ ರೈತರು ಗೋಶಾಲೆಗೆ ಮೇವು ಒದಗಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆ.ಎಂ. ಪ್ರದೀಪ, ಮಾದಿನೇನಿ ನಾಗರಾಜ, ಗೋಶಾಲೆಯ ಸಿಬ್ಬಂದಿಗಳು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಮಂಗಳೂರು ಜಂಕ್ಷನ್ - ಸೂರತ್ ರೈಲು ಸಂಚಾರದ ಅವಧಿ ವಿಸ್ತರಣೆ
ಉಡುಪಿ: ಸೂರತ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುವ ಎಕ್ಸ್ಪ್ರೆಸ್ ವಿಶೇಷ ರೈಲು ಹಾಗೂ ಅಹಮದಾಬಾದ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ಸಾಪ್ತಾಹಿಕ ರೈಲಿನ ಸಂಚಾರ ಅವಧಿಯನ್ನು ಮೇ ತಿಂಗಳ ಕೊನೆಯವರೆಗೆ ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ರೈಲು ನಂ.09057 ಸೂರತ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಪ್ರತಿ ಬುಧವಾರ ಹಾಗೂ ರವಿವಾರ ಸಂಚರಿ ಸುವ ರೈಲಿನ ಅವಧಿಯನ್ನು ಮೇ 31ರವರೆಗೆ, ರೈಲು ನಂ.09058 ಮಂಗಳೂರು ಜಂಕ್ಷನ್ ಹಾಗೂ ಸೂರತ್ ನಡುವೆ ಪ್ರತಿ ಗುರುವಾರ ಮತ್ತು ಸೋಮವಾರ ಸಂಚರಿಸುವ ರೈಲಿನ ಸಂಚಾರ ಅವಧಿಯನ್ನು ಜೂ.1ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ರೈಲು ನಂ.09424 ಅಹಮದಾಬಾದ್-ಮಂಗಳೂರು ಜಂಕ್ಷನ್ ನಡುವೆ ಪ್ರತಿ ಶುಕ್ರವಾರ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲಿನ ಸಂಚಾರವನ್ನು ಮೇ 29 ಹಾಗೂ ರೈಲು ನಂ.09423 ಮಂಗಳೂರು ಜಂಕ್ಷನ್ ಹಾಗೂ ಅಹಮದಾಬಾದ್ ನಡುವೆ ಪ್ರತಿ ಶನಿವಾರ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲಿನ ಸಂಚಾರವನ್ನು ಮೇ 30ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಸ್ರೇಲ್-ಅಮೆರಿಕದ ಮಿತ್ರರಿಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ: IRGC ಘೋಷಣೆ
ಟೆಹ್ರಾನ್, ಮಾ.27: ಇಸ್ರೇಲ್ ಮತ್ತು ಅಮೆರಿಕದ ಮಿತ್ರರಾಷ್ಟ್ರಗಳಿಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ ಮತ್ತು ಇದರ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಕಠಿಣ ಎಚ್ಚರಿಕೆ ರವಾನಿಸಿದೆ. ಈ ಹೇಳಿಕೆಯು ಗಲ್ಫ್ನಲ್ಲಿ ಉದ್ವಿಗ್ನತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ವಿಶ್ವದ ಅತ್ಯಂತ ನಿರ್ಣಾಯಕ ಜಲಸಂಧಿಯ ಸುರಕ್ಷತೆಯ ಬಗ್ಗೆ ಹೊಸ ಭೀತಿಯನ್ನು ಹುಟ್ಟುಹಾಕಿದೆ. ಈ ಮಧ್ಯೆ, ಇಸ್ರೇಲ್ ಮತ್ತು ಅಮೆರಿಕವನ್ನು ಬೆಂಬಲಿಸುವ ದೇಶಗಳೊಂದಿಗೆ ಸಂಪರ್ಕ ಹೊಂದಿರುವ ಹಡಗುಗಳಿಗೆ ನಿರ್ಬಂಧವನ್ನು ವಿಸ್ತರಿಸುವುದಾಗಿ ಇರಾನ್ನ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮತ್ತು ಬೆಂಬಲಿಸುವ ದೇಶಗಳ ಬಂದರುಗಳಿಗೆ ಯಾವುದೇ ಹಡಗುಗಳು ಯಾವುದೇ ಮಾರ್ಗದ ಮೂಲಕ ಹಾದುಹೋಗುವುದನ್ನು ನಾವು ತಡೆಯುತ್ತೇವೆ ಎಂದು ಹೇಳಿಕೆ ತಿಳಿಸಿದೆ. ಇರಾನ್ ಈಗ ಸಾರ್ವಜನಿಕವಾಗಿ ಘೋಷಿಸಿದಂತೆ ಜಲಸಂಧಿಯನ್ನು ಮುಚ್ಚಿದರೆ, ಅದು ಪ್ರಮುಖ ಪ್ರಾದೇಶಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪ್ರಚೋದಿಸಬಹುದು .
ಕಲಬುರಗಿ | ಜಿಲ್ಲಾ ಬಾಸ್ಕೆಟ್ಬಾಲ್ ತಂಡಕ್ಕೆ ಕ್ರೀಡಾ ಉಡುಪುಗಳ ವಿತರಣೆ
ಕಲಬುರಗಿ: ಕಲಬುರಗಿ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ ವತಿಯಿಂದ 18 ವರ್ಷದೊಳಗಿನ ಬಾಲಕರ ತಂಡಕ್ಕೆ ಕ್ರೀಡಾ ಉಡುಪುಗಳನ್ನು ದೇಣಿಗೆ ರೂಪದಲ್ಲಿ ವಿತರಿಸಲಾಯಿತು. ಅರುಜೀವ ಆಯುರ್ವೇದ ಸೆಂಟರ್ನ ನಿರ್ದೇಶಕರಾದ ಸಿದ್ದು ಪಾಟೀಲ ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ಸಿದ್ದುರಾಜ ಗರೂರ ಅವರು ಕ್ರೀಡಾಪಟುಗಳಿಗೆ ಉಡುಪುಗಳನ್ನು ವಿತರಿಸಿ, ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ ಜಿಲ್ಲೆಯ ಹೆಮ್ಮೆ ಹೆಚ್ಚಿಸಲಿ ಎಂದು ಅವರು ಆಶಿಸಿದರು. ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಉದನೂರ್, ಕಾರ್ಯದರ್ಶಿಗಳಾದ ಡಾ. ಚಂದ್ರಕಾಂತ್ ಶಿರೋಳಿ ಹಾಗೂ ಜಿಲ್ಲಾ ಬಾಸ್ಕೆಟ್ಬಾಲ್ ತರಬೇತುದಾರ ಪ್ರವೀಣ್ ಪುಣೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ತಂಡಕ್ಕೆ ಶುಭಾಶಯ ಕೋರಿದ್ದಾರೆ. ಈ ಕಾರ್ಯಕ್ರಮವು ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕಲುಷಿತಗೊಂಡ ಫಲ್ಗುಣಿ ನದಿ| ನಾಗರಿಕರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಚಲೋ, ಪ್ರತಿಭಟನೆ
ಮಂಗಳೂರು: ಜೀವನದಿ ಫಲ್ಗುಣಿಗೆ ಮಾಲಿನ್ಯ ಹರಿಸುತ್ತಿರುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು ಮತ್ತು ನದಿಯಲ್ಲಿ ಮಾಲಿನ್ಯ ತಡೆಯಲು ನದಿದಂಡೆಯ ಗ್ರಾಮಸ್ಥರನ್ನು ಮಾರಕ ರೋಗಗಳು ಮತ್ತು ಮಾಲಿನ್ಯಗಳಿಂದ ರಕ್ಷಿಸಬೇಕೆಂದು ಆಗ್ರಹಿಸಿ ಡಿವೈಎಫೈ ಮಂಗಳೂರು ನಗರ ಸಮಿತಿ ಮತ್ತು ಫಲ್ಗುಣಿ ನದಿ ಉಳಿಸಿ ಹೋರಾಟ ಸಮಿತಿ ಕೂಳೂರು ನೇತೃತ್ವದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಚಲೋ ಪ್ರತಿಭಟನೆಯ ಮೂಲಕ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೂಳೂರು ಫಲ್ಗುಣಿ ನದಿಯನ್ನು ಕೈಗಾರಿಕೆಗಳು ಕಲುಷಿತಗೊಳಿಸುತ್ತಿದ್ದು, ನೀರು ಕಪ್ಪು ಬಣ್ಣಕ್ಕೆ ತಿರುಗಿ ಜಲಚರಗಳೆಲ್ಲ ಸತ್ತು ತೇಲುತ್ತಿವೆ. ನೀರಿನಲ್ಲಿ ಆಮ್ಲಜನಕ ಮಟ್ಟ ಸೊನ್ನೆಗಿಳಿದಿದೆ. ಕೂಳೂರು ಚರ್ಚ್ ಸುತ್ತಮುತ್ತ, ರಾಯಿಕಟ್ಟೆ, ಪಂಜಿಮೊಗರು, ತೋಕೂರು, ಮೇಲ್ ಪ್ಪಳ, ಅತ್ರೆಬೈಲ್, ಬಂಗಕೂಳೂರು, ದಂಬೇಲ್ ಮುಂತಾದ ನದಿ ಪಾತ್ರದ ವ್ಯಾಪ್ತಿಯಲ್ಲಿ ಬಾವಿ ನೀರು ಕಲುಷಿತಗೊಂಡು ಕುಡಿಯಲು ಅಯೋಗ್ಯವಾಗಿದೆ. ನದಿ ನೀರಿನಿಂದ ವಿಪರೀತ ವಾಸನೆ ಬರುತ್ತಿದ್ದು, ಜನರಿಗೆ ವಾಸಿಸಲು ಕಷ್ಟವಾಗುತ್ತಿದೆ. ಇಲ್ಲಿನ ಜಲಮಾಲಿನ್ಯದಿಂದಾಗಿ ಮಾರಕ ಖಾಯಿಲೆಗಳು ಈ ಭಾಗದ ಜನರನ್ನು ಭಾದಿಸುವ ಸಾಧ್ಯತೆ ಇದೆ. ಬಹುಮುಖ್ಯವಾಗಿ ಬೈಕಂಪಾಡಿ ಕೈಗಾರಿಕಾ ವಲಯದಿಂದ ಶುದ್ದೀಕರಿ ಸದ ಕೈಗಾರಿಕಾ ಮಾಲಿನ್ಯ ನೀರು ನದಿ ಸೇರುತ್ತಿದೆ. ಹಲವು ಮಧ್ಯಮ ಕೈಗಾರಿಕೆಗಳು, ಮೀನು ಸಂಸ್ಕರಣೆ, ಮದ್ಯ ತಯಾರಿಕಾ, ಪಾಮ್ ಆಯಿಲ್ ಘಟಕಗಳು ತ್ಯಾಜ್ಯ ನೀರನ್ನು ನೇರವಾಗಿ ಕುಡುಂಬೂರು, ತೋಕೂರು ಹಳ್ಳಗಳಿಗೆ ಹರಿಸಿರುವುದು ಈ ಹಿಂದೆಯೂ ಸಾಕ್ಷಿ ಸಮೇತ ವರದಿಯಾಗಿದೆ. ಕೈಗಾರಿಕಾ ವಲಯಕ್ಕೆ ಅನ್ವಯ ಆಗುವಂತೆ ಕೇಂದ್ರೀಕೃತ ತ್ಯಾಜ್ಯ ಶುದ್ದೀಕರಣ ಘಟಕವನ್ನು ಮಾಲಿನ್ಯ ನಿಯಂತ್ರಣಾ ಮಂಡಳಿ ಹೊಂದಿಲ್ಲ. ಅದಕ್ಕಾಗಿ ಜಾಗ ಮೀಸಲಿಟ್ಟಿದ್ದರೂ ಕಾರ್ಯಯೋಜನೆ ನಡೆದಿಲ್ಲ. ಮರವೂರು ಡ್ಯಾಮ್ ಬಳಿ ಪಡುಶೆಡ್ಡೆ ಬಳಿ ಪಚ್ಚನಾಡಿಯಿಂದ ಎನ್ನಲಾಗುತ್ತಿರುವ ಬೃಹತ್ ಕೊಳವೆ ಮುಖಾಂತರ ಕೊಳಕು ನೀರನ್ನು ನದಿಗೆ ಬಿಡಲಾಗುತ್ತಿದೆ. ಕೂಳೂರು ಪ್ರದೇಶ ದಲ್ಲಿ ಕಲ್ಲಿದ್ದಲು, ಅದಿರು ಹುಡಿಯಂತಹ ಕಪ್ಪು ಧೂಳು ಹಾರಿ ಬರುತ್ತಿದ್ದು, ಇದರಿಂದಾಗಿ ವಸತಿ ಪ್ರದೇಶಗಳಲ್ಲಿ ಧೂಳು ಬೀಳುತ್ತಿರುವುದರಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ವಾಹನಗಳ ಮೇಲೆ, ಬಟ್ಟೆಗಳ ಮೇಲೆ ಧೂಳು ಬೀಳುತ್ತಿರುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದರು. ಮಂಗಳೂರು ಮಹಾನಗರ ಪಾಲಿಕೆಯ ತೆರೆದ ಚರಂಡಿಗಳಿಂದಲೂ ಕಲುಷಿತ ನೀರು ಅಲ್ಲಲ್ಲಿ ನದಿ ಸೇರುತ್ತಿದೆ. ಮುಂದಿನ ದಿನಗಳಲ್ಲಿ ಜಲಮಾಲಿನ್ಯ ಮತ್ತು ವಾಯುಮಾಲಿನ್ಯದಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆದುದರಿಂದ ಮಾಲಿನ್ಯ ನಿಯಂತ್ರಣಾ ಮಂಡಳಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಕ್ರಮಕೈಗೊಳ್ಳಬೇಕು. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ ಎಂದು ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೈಗಾರಿಕಾ ಅಭಿವೃದ್ದಿ ಮಂಡಳಿ ಅಧಿಕಾರಿಗಳಿಗೆ ಪ್ರತಿಭಟನಾ ನಿರತರು ಮನವಿ ಸಲ್ಲಿಸಿ ಆಗ್ರಹಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಂದನೀಯ ರೆವರೆಂಡ್ ಫಾದರ್ ವಿಕ್ಟರ್ ವಿಜಯ್ ಲೋಬೋ ಕೂಳೂರು ಪರಿಸರದಲ್ಲಿ ನದಿಯ ಮಾಲಿನ್ಯ ಮತ್ತು ಹಾರುತ್ತಿರುವ ಕೋಕ್ ಪೌಡರ್ ಸಮಸ್ಯೆಗಳಿಂದಾಗಿ ಸ್ಥಳೀಯ ಜನರಿಗೆ ಅನಾರೋಗ್ಯಗಳು ಕಾಡುತ್ತಿದೆ. ಸ್ಥಳೀಯ ಬಾವಿ ನೀರು ಕೂಡ ಕಲುಷಿತಗೊಂಡಿದೆ. ಈ ಬಗ್ಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಎಚ್ಚೆತ್ತುಕೊಳ್ಳ ಬೇಕೆಂದು ಆಗ್ರಹಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ, ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ, ಶುದ್ದೀಕರಣ ಘಟಕಗಳು ಇಲ್ಲದ ಸಣ್ಣ ಕೈಗಾರಿಕೆಗಳಿಗಾಗಿ ಸಿದ್ದಪಡಿಸುತ್ತಿರುವ ಕೇಂದ್ರೀಕೃತ ತ್ಯಾಜ್ಯ ಶುದ್ದೀಕರಣ ಘಟಕದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು, ಶುದ್ದೀಕರಿಸದ ಕೈಗಾರಿಕಾ ತ್ಯಾಜ್ಯ ನೀರನ್ನು ಕಳ್ಳ ದಾರಿಯಲ್ಲಿ ಪಲ್ಗುಣಿಗೆ ಹರಿಸುತ್ತಿರುವ ಕೈಗಾರಿಕಾ ಘಟಕಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸಭೆಗೂ ಮುನ್ನ ನೂರಾರು ಸಾರ್ವಜನಿಕರು ರಾಷಷ್ಟ್ರೀಯ ಹೆದ್ದಾರಿ66ರ ಜೋಕಟ್ಟೆ ಕ್ರಾಸ್ ನಿಂದ ಬೈಕಂಪಾಡಿ ಮಾಲಿನ್ಯ ನಿಯಂತ್ರಣಾ ಮಂಡಳಿ ಕಚೇರಿ ವರೆಗೆ ಕಾಲ್ನಿಡಿಗೆ ಜಾತಾ ನಡೆಸಿ ಕಚೇರಿಗೆ ಮುತ್ತಿಗೆ ಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ಮಹೇಶ್ವರಿ, ಕೈಗಾರಿಕಾ ಅಭಿವೃದ್ದಿ ಮಂಡಳಿಯ ಉಪ ಅಭಿಯಂತರರಾದ ಗಣಪತಿ ಅವರು ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು. ಕೈಗಾರಿಕಾ ವಲಯ, ಹಾರ್ಬರ್, ಎಮ್ ಸಿ ಎಫ್ ಮುಂತಾದ ಬೃಹತ್ ಉದ್ಯಮಗಳ ಬೇಜವಾಬ್ದಾರಿ ನಡೆಗಳಿಂದ ಸ್ಥಳೀಯರು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತದ ಮೌನ ಮುಂದುವರಿದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು. ಅಲ್ಲದೇ ನಗರ ಪಾಲಿಕೆಯ ವಿವಿಧೆಡೆಗಳಿಂದ ತೆರೆದ ಚರಂಡಿ ನೀರನ್ನು ನೇರವಾಗಿ ನದಿಗೆ ಬಿಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು. ಹೋರಾಟದ ನೇತೃತ್ವವನ್ನು ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಮುಖಂಡರಾದ ನವೀನ್ ಕೊಂಚಾಡಿ, ತಯ್ಯೂಬ್ ಬೆಂಗ್ರೆ, ಕೂಳೂರು ಮಸೀದಿ ಅದ್ಯಕ್ಷರಾದ ಅಬ್ಬಾಸ್ ಪಂಜಿಮೊಗರು, ಪ್ರಮೀಳಾ ಕೆ, ಪಲ್ಗುಣಿ ನದಿ ಉಳಿಸಿ ಹೋರಾಟ ಸಮಿತಿಯ ಕನಕದಾಸ್ ಕೂಳೂರು, ಡೆಲ್ಸನ್, ಅನಿಲ್ ಅತ್ರೆಬೈಲ್, ಅನಿಲ್ ರಾಯಿಕಟ್ಟೆ ಲತಾ, ರೇಷ್ಮ, ರೀಮಾ, ಖಲೀಲ್ ಪಂಜಿಮೊಗರು, ಜಾನ್ ಮೇಲುಕೊಪ್ಪಲು, ಜುನೈದ್, ಮುಸ್ತಾಫ ಪಂಜಿಮೊಗರು, ಅನಿಲ್ ಡಿ ಸೋಜ, ಬಶೀರ್, ನೌಷಾದ್ ಬಾವು, ಶ್ರೀನಾಥ್ ಕುಲಾಲ್ ಮತ್ತಿತರರು ವಹಿಸಿದ್ದರು ಚರಣ್ ಶೆಟ್ಟಿ ಸ್ವಾಗತಿಸಿ ಸಂತೋಷ್ ಡಿಸೋಜ ವಂದಿಸಿದರು.
ಉಪ ಚುನಾವಣೆಯಲ್ಲಿ ದಾವಣಗೆರೆ ಕಾಂಗ್ರೆಸ್ ಬಂಡಾಯ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಹಿಂದೆ ಸರಿದಿದ್ದಾರೆ. ಆದರೆ, ಚುನಾವಣಾ ಆಯೋಗದ ನಿಯಮದ ಪ್ರಕಾರ ಅವರ ಹೆಸರು ಮತಯಂತ್ರದಲ್ಲಿ ಇರಲಿದೆ. ಆಯೋಗವು ಅವರಿಗೆ ಮೈಕ್ ಚಿಹ್ನೆ ಸಹ ನೀಡಿದೆ. ಇದರಿಂದ ಕಾಂಗ್ರೆಸ್ಗೆ ಒಂದಿಷ್ಟು ಮತಗಳು ಕೈತಪ್ಪುವ ಸಾಧ್ಯತೆ ಇದೆ. ಮತ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ನಡೆ ಏನು?
Koppal | ಹೋಳಿ ಸಂಭ್ರಮದ ವೇಳೆ ಮಾರಕಾಸ್ತ್ರ ಹಿಡಿದು ನೃತ್ಯ : ಐವರ ವಿರುದ್ಧ ಪ್ರಕರಣ ದಾಖಲು
ಕನಕಗಿರಿ : ಯುಗಾದಿ ಹಬ್ಬದ ಮರುದಿನ ಹೋಳಿ (ಬಣ್ಣದಾಟ) ಆಚರಣೆಯ ವೇಳೆ ಸಮೀಪದ ನವಲಿ ತಾಂಡದ ಯುವಕರು ಕಬ್ಬಿಣದ ಮಚ್ಚು ಹಿಡಿದು ನೃತ್ಯ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ನೃತ್ಯ ಮಾಡುತ್ತಿದ್ದ ಶಿವಕುಮಾರ ಅಡವಿಬಾವಿ, ವೆಂಕಟೇಶ ಹಿರೇಮನಿ, ಬಾಲಾಜಿ ದಾರಾಮೀಂಡ್ ಹಾಗೂ ಖಾಲಿ ಕೈಗಳಿಂದ ನೃತ್ಯ ಮಾಡುತ್ತಿದ್ದ ವೆಂಕಟೇಶ ಮತ್ತು ರಮೇಶ ಪೂಜಾರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಆರೋಪದಡಿ ಕಾನ್ಸ್ಟೇಬಲ್ ಷರೀಫ್ ಅವರು ದೂರು ನೀಡಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ವಿಧಾನಸಭಾ ಚುನಾವಣೆ| ಎಐಸಿಸಿ ವೀಕ್ಷಕರಾಗಿ ಐವನ್ ಡಿಸೋಜ ನೇಮಕ
ಮಂಗಳೂರು, ಮಾ.27: ಕೇರಳ ವಿಧಾನಸಭಾ ಚುನಾವಣೆಗೆ ಎಐಸಿಸಿ ವೀಕ್ಷಕರಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರನ್ನು ನೇಮಿಸಲಾಗಿದೆ. ಕೇರಳದ ಏರ್ನಾಕುಲಂ ಮತ್ತು ಕೊಚ್ಚಿಯಲ್ಲಿ ನಡೆಯುವ ಚುನಾವಣೆಗೆ ವೀಕ್ಷಕರಾಗಿ ಐವನ್ ಡಿಸೋಜ ಎ.7ರವರೆಗೆ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಎಐಸಿಸಿ ಕಾರ್ಯದರ್ಶಿಯಾಗಿ ಕೇರಳದಲ್ಲಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು ಎಂದು ಪ್ರಕಟನೆ ತಿಳಿಸಿದೆ.
ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಅಗತ್ಯ: ಪಲ್ಲವಿ
*ಪೋಶ್ ಕಾಯ್ದೆ 2013ರ ಕುರಿತು ವಿಚಾರ ಸಂಕಿರಣ
ಪ್ರತಿ ತಾಲೂಕಿನಲ್ಲಿ ಬೀದಿನಾಯಿಗಳ ಆಶ್ರಯ ಕೇಂದ್ರ: ದ.ಕ. ಡಿಸಿ ದರ್ಶನ್
ಮಂಗಳೂರು: ಬೀದಿ ನಾಯಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೀದಿನಾಯಿಗಳ ಆಶ್ರಯ ತಾಣವನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಮಂಗಳೂರು ತಾಲೂಕಿನಲ್ಲಿ ಇಂತಹ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅವುಗಳ ಜನನ ನಿಯಂತ್ರಣ ಸೇರಿ ದಂತೆ ಸೂಕ್ತ ಕ್ರಮ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಾಯಿ ಕಡಿತ, ಹಾವು ಕಡಿತ ಮತ್ತಿತರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನೀಡಬೇಕಾದ ಚುಚ್ಚುಮದ್ದು ಹಾಗೂ ಇತರೆ ಅಗತ್ಯ ಔಷಧಿಗಳನ್ನು ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಸಂಗ್ರಹಿಸಿಡಬೇಕು. ಸಾರ್ವಜನಿಕರು ಇಂತಹ ಪ್ರಕರಣ ಗಳಲ್ಲಿ ವಿಳಂಭಿಸದೆ, ಆದಷ್ಟು ಬೇಗನೇ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು ಎಂದು ಡಿಸಿ ತಿಳಿಸಿದರು. ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ಚಂದ್ರ ಮಾತನಾಡಿ, ಜಿಲ್ಲೆಯಲ್ಲಿ 2023ರಲ್ಲಿ 20,487, 2024ರಲ್ಲಿ 20,071, 2025ರಲ್ಲಿ 27,481 ಸಾರ್ವಜನಿಕರಿಗೆ ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಬೀದಿ ಮತ್ತು ಸಾಕು ನಾಯಿಗಳೆರಡೂ ಇವೆ. 2025ರಲ್ಲಿ ವರದಿಯಾದ ಪ್ರಕರಣಗಳಲ್ಲಿ 21,673 ಪ್ರಕರಣಗಳು ಸಾಕು ನಾಯಿಗಳಿಂದ ಹಾಗೂ 5,808 ಪ್ರಕರಣಗಳು ಬೀದಿ ನಾಯಿಗಳಿಂದ ಸಂಭವಿಸಿದೆ. ಅಲ್ಲದೆ ಕಳೆದ 3 ವರ್ಷಗಳಲ್ಲಿ ನಾಯಿ ಕಡಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದರು. ಇಲಿ ಜ್ವರ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ 203, 2024ರಲ್ಲಿ 283, 2025ರಲ್ಲಿ 265 ಪ್ರಕರಣಗಳು ವರದಿಯಾಗಿವೆ. ಅಲ್ಲದೆ 2023 ಮತ್ತು 24ರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದರು. ಹಾವು ಕಡಿತದಿಂದ 2023ರಲ್ಲಿ 365, 2024ರಲ್ಲಿ 627, 2025ರಲ್ಲಿ 752 ಪ್ರಕರಣಗಳು ವರದಿಯಾಗಿವೆ. ಕಳೆದ 3 ವರ್ಷಗಳಲ್ಲಿ ಜಿಲ್ಲೆಯಲ್ಲಿ 10 ಮಂದಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದರು. ಸಭೆಯಲ್ಲಿ ಪಶುಸಂಗೋಪನೆ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ
ರಾಜಧಾನಿ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ಸಂಚರಿಸುವ ಸಾವಿರಾರು ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಭಾರತೀಯ ರೈಲ್ವೆ ಕೊನೆಗೂ ಈಡೇರಿಸಿದೆ. ಈ ಮಾರ್ಗದಲ್ಲಿ ನೂತನ ಮೆಮು ರೈಲು ಸೇವೆಯನ್ನು ಆರಂಭಿಸಲಾಗಿದ್ದು, ಈ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ನೂತನ ಮೆಮು ರೈಲು ಯಲಹಂಕದಿಂದ ಹೊರಟು, ಯಶವಂತಪುರ ಮತ್ತು
ಬಾಲಕಾರ್ಮಿಕರ ನಿರ್ಮೂಲನೆಗೆ ಟಾಸ್ಕ್ ಫೋರ್ಸ್ ಸಭೆ : ಕೊಪ್ಪಳದಲ್ಲಿ ದಾಳಿ, ಕಿಶೋರ ಕಾರ್ಮಿಕರ ರಕ್ಷಣೆ
ಕೊಪ್ಪಳ : ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಹಾಗೂ ದಾಳಿ/ತಪಾಸಣೆ ಕಾರ್ಯಾಚರಣೆಗಳನ್ನು ಗುರುವಾರ ಕೊಪ್ಪಳ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನವದೆಹಲಿ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ “PAN-INDIA Rescue & Rehabilitation Campaign of Child and Adolescent Labour” ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಯಿತು. ಆರಂಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದುಂಡಪ್ಪ ತುರಾದಿ ಅವರು, ತಾಲೂಕಿನಾದ್ಯಂತ ಬಾಲಕಾರ್ಮಿಕರನ್ನು ಪತ್ತೆ ಮಾಡುವುದು ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ಅಧಿಕಾರಿಯೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಸೂಚಿಸಿದರು. ಬೇಸಿಗೆ ವೇಳೆಯಲ್ಲಿ ಮಕ್ಕಳು ಹಳ್ಳ-ಕೊಳ್ಳಗಳಲ್ಲಿ ಈಜಲು ಹೋಗುವುದು ಹಾಗೂ ದನ-ಕುರಿ ಕಾಯುವ ಸಂದರ್ಭಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಸ್ಥಳೀಯ ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪೋಷಕರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಿಳಿಸಿದರು. ಬಾಲಕಾರ್ಮಿಕರನ್ನು ಗುರುತಿಸಲು ನಿರಂತರ ತಪಾಸಣೆ ನಡೆಸಬೇಕಿದ್ದು, ಕಾರ್ಮಿಕ ಇಲಾಖೆಯ ಜೊತೆಗೆ ಇತರೆ 11 ಇಲಾಖೆಗಳ ಅಧಿಕಾರಿಗಳಿಗೆ ಕಾಯಿದೆ ಕಲಂ-17ರಡಿ ನಿರೀಕ್ಷಕರಾಗಿ ಅಧಿಕಾರ ನೀಡಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 1098 ಮಕ್ಕಳ ಸಹಾಯವಾಣಿ ಸಂಖ್ಯೆಯ ಮಾಹಿತಿಯನ್ನು ಗೋಡೆ ಬರಹಗಳ ಮೂಲಕ ಪ್ರಸಾರ ಮಾಡಲು ಸೂಚಿಸಲಾಗಿದೆ. ಸಭೆಯ ನಂತರ ಕೊಪ್ಪಳ ನಗರದಲ್ಲಿ ದಾಳಿ ಹಾಗೂ ತಪಾಸಣೆ ಕಾರ್ಯಾಚರಣೆ ನಡೆಸಿ, ಹೋಟೆಲ್, ಗ್ಯಾರೇಜ್, ಬೇಕರಿ ಹಾಗೂ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಯಿತು. ಮಾಲೀಕರಿಗೆ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ಎಚ್ಚರಿಕೆ ನೀಡಲಾಯಿತು. ಈ ವೇಳೆ ನಗರದ “ಮಾಜಿಸಾ ಕಲೇಕ್ಷನ್” ಬಟ್ಟೆ ಅಂಗಡಿಯಲ್ಲಿ ಒಬ್ಬ ಕಿಶೋರ ಕಾರ್ಮಿಕ ಪತ್ತೆಯಾಗಿದ್ದು, ಆತನನ್ನು ರಕ್ಷಿಸಿ ಮುಂದಿನ ಪೋಷಣೆ ಹಾಗೂ ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ 1098 ಸಿಬ್ಬಂದಿ, ಮಹಿಳಾ ಸಾಂತ್ವನ ಕೇಂದ್ರ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
Kalaburagi | ರಂಗಭೂಮಿ ಸಮಾಜ ರೂಪಿಸುವ ಶಕ್ತಿಶಾಲಿ ಮಾಧ್ಯಮ : ಪ್ರೊ.ಬಸವರಾಜ ಡೋಣೂರ
ಕಲಬುರಗಿ : ರಂಗಭೂಮಿ ಕೇವಲ ಮನರಂಜನೆಯ ಸಾಧನವಲ್ಲ, ಅದು ಮನುಷ್ಯನಿಗೆ ಸಭ್ಯತೆ, ನಾಗರಿಕತೆ ಮತ್ತು ಸಂಸ್ಕಾರವನ್ನು ಕಲಿಸುವ ಶಕ್ತಿಯುಳ್ಳ ಅದ್ಭುತ ಮಾಧ್ಯಮವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಡೋಣೂರ ಹೇಳಿದರು. ನಗರದ ರಂಗಾಯಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ “ವಿಶ್ವ ರಂಗಭೂಮಿ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರದರ್ಶನ ಕಲೆಗಳಿಗೆ, ವಿಶೇಷವಾಗಿ ನಾಟಕಕ್ಕೆ ಜನರನ್ನು ನೇರವಾಗಿ ತಟ್ಟುವ ಮತ್ತು ಪ್ರಭಾವಿಸುವ ಸಾಮರ್ಥ್ಯವಿದೆ. ಸಮಾಜವು ಇಂದಿಗೂ ಕಲಾವಿದರನ್ನು ಮಾದರಿಗಳಾಗಿ ಕಾಣುತ್ತದೆ. ಪ್ರೇಕ್ಷಕರು ಕಲಾವಿದರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಎಂದು ಹೇಳಿದರು. ರಂಗಭೂಮಿಯ ಇತಿಹಾಸವನ್ನು ಸ್ಮರಿಸಿದ ಅವರು, ಏಣಗಿ ಬಾಳಪ್ಪ ಮತ್ತು ಗುಬ್ಬಿ ವೀರಣ್ಣ ಅವರಂತಹ ದಿಗ್ಗಜರ ಕೊಡುಗೆಯನ್ನು ನೆನಪಿಸಿದರು. “ಗುಬ್ಬಿ ವೀರಣ್ಣ ಒಬ್ಬ ಮಾಸ್ಟರ್ ಫಿಲಾಸಫರ್ ಆಗಿದ್ದರು. ಅಂತಹ ಹಿರಿಯರ ಹಾದಿಯಲ್ಲಿ ಇಂದಿನ ಕಲಾವಿದರು ಸಾಗುತ್ತಿರುವುದು ಸಂತೋಷದ ವಿಷಯ” ಎಂದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಎಚ್.ಎಸ್. ಬಸವಪ್ರಭು ಮಾತನಾಡಿ, ದೂರದರ್ಶನವು ಕೇವಲ ಪ್ರಖ್ಯಾತಿ ಮತ್ತು ಹಣ ನೀಡಬಹುದು, ಆದರೆ ರಂಗಭೂಮಿ ಮಾತ್ರ ವ್ಯಕ್ತಿಯನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುತ್ತದೆ ಎಂದು ಹೇಳಿದರು. ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅವರು ವಿಶ್ವ ರಂಗಭೂಮಿ ದಿನದ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿ, 1949ರಲ್ಲಿ ಸ್ಥಾಪನೆಯಾದ ಅಂತರಾಷ್ಟ್ರೀಯ ರಂಗ ಸಂಸ್ಥೆ ಹಾಗೂ 1962ರಿಂದ ಆಚರಣೆಯಾಗಿ ಬಂದಿರುವ ಈ ದಿನಾಚರಣೆ ಇಂದು ಜಗತ್ತಿನಾದ್ಯಂತ ರಂಗಭೂಮಿಯ ಪ್ರಚಾರಕ್ಕೆ ಕಾರಣವಾಗಿದೆ ಎಂದರು. ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ರಾಯಚೂರು ಜಿಲ್ಲೆಯ ಹಿರಿಯ ಕಲಾವಿದ ಶಿವಣ್ಣ ಮೂರ್ತಿ ಹಾಗೂ ಬೆಂಗಳೂರಿನ ಶೃತಿ ಶಿಲ್ಪಿ ರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು. ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶೃತಿ ಶಿಲ್ಪಿ ರಾಮಯ್ಯ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಏಕತಾರಿಯ ನಾದ ಮಾನಸಿಕ ನೆಮ್ಮದಿ ನೀಡಬಲ್ಲದು ಎಂದು ಹೇಳಿದರು. ಮನೆಗಳಲ್ಲಿ ಏಕತಾರಿಯ ನಾದ ಕೇಳಿಬಂದರೆ ಮಕ್ಕಳು ಮೊಬೈಲ್ ವ್ಯಾಮೋಹದಿಂದ ದೂರ ಉಳಿದು ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರು ರಂಗಗೀತೆಗಳನ್ನು ಹಾಡಿ ಜನರ ಮನಸೆಳೆದರು. ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದರು.
Kalaburagi | ವಿಟಿಯು ʼಯುಕ್ತಿ-2026ʼ ಉತ್ಸವಕ್ಕೆ ಚಾಲನೆ
ಕಲಬುರಗಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕಲಬುರಗಿ ಸ್ನಾತಕೋತ್ತರ ಕೇಂದ್ರ ಹಾಗೂ ಪ್ರಾದೇಶಿಕ ಕಚೇರಿಯಲ್ಲಿ ಪ್ರಾದೇಶಿಕ ಮಟ್ಟದ ತಾಂತ್ರಿಕ, ನಿರ್ವಹಣಾ ಮತ್ತು ಸಾಂಸ್ಕೃತಿಕ ಉತ್ಸವ “ಯುಕ್ತಿ-2026”ಕ್ಕೆ ಚಾಲನೆ ನೀಡಲಾಯಿತು. ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಡೊಳ್ಳು ಕುಣಿತ ಹಾಗೂ ಜನಪದ ನೃತ್ಯದ ಮೂಲಕ ಅತಿಥಿಗಳನ್ನು ಸಡಗರದಿಂದ ಸ್ವಾಗತಿಸಲಾಯಿತು. ಕಾರ್ಯಕ್ರಮವು ಕುಲಪತಿಗಳಾದ ಡಾ. ವಿದ್ಯಾಶಂಕರ ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಗುರುದ್ವಾರ ಗುರುನಾನಕ್ ಜೀರಾ ಸಾಹೇಬ್ ಸಂಸ್ಥೆಯ ಅಧ್ಯಕ್ಷ ಡಾ. ಸರ್ದಾರ್ ಬಲ್ಬೀರ್ ಸಿಂಗ್ ಹಾಗೂ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು. ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಿ, ಶಿಕ್ಷಣದ ಮಹತ್ವವನ್ನು ವಿವರಿಸಿದರು. ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಅವರು ಪಠ್ಯಕ್ರಮದ ಜೊತೆಗೆ ಕೌಶಲ್ಯಾಧಾರಿತ ಜ್ಞಾನವೂ ಅಗತ್ಯವಿದೆ ಎಂದು ಹೇಳಿದರು. ಕುಲಪತಿ ಡಾ. ವಿದ್ಯಾಶಂಕರ ಎಸ್. ಅವರು ವಿಶ್ವವಿದ್ಯಾಲಯದ ಗುಣಮಟ್ಟದ ತಾಂತ್ರಿಕ ಶಿಕ್ಷಣ, ಇಂಟರ್ನ್ಶಿಪ್ ಹಾಗೂ ಸೆಂಟ್ರಲ್ ಪ್ಲೇಸ್ಮೆಂಟ್ ಪೋರ್ಟಲ್ ಮೂಲಕ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಪ್ರಾದೇಶಿಕ ನಿರ್ದೇಶಕಿ ಡಾ. ಶುಭಾಂಗಿ ಡಿ.ಸಿ. ಅವರು ಸ್ವಾಗತ ಭಾಷಣದಲ್ಲಿ ಇಂತಹ ಉತ್ಸವಗಳು ವಿದ್ಯಾರ್ಥಿಗಳ ನಾವೀನ್ಯತೆ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಉತ್ತೇಜಿಸುವಲ್ಲಿ ಮಹತ್ವದ್ದಾಗಿವೆ ಎಂದು ಹೇಳಿದರು. ಮುಖ್ಯ ಸಂಯೋಜಕ ಡಾ. ಬಸವರಾಜ ಗಾದಗೆ ಅವರು “ಯುಕ್ತಿ-2026” ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಿಸಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರನ್ನು ಸನ್ಮಾನಿಸಿ, ಸ್ಕಿಲ್ ಅಸೆಸ್ಮೆಂಟ್ ಟೆಸ್ಟ್ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Koppal | ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ವರಿತ ಕಾರ್ಯಾಚರಣೆ: ಬಾಲ್ಯವಿವಾಹದಿಂದ ಐವರು ಬಾಲಕಿಯರ ರಕ್ಷಣೆ
ಕೊಪ್ಪಳ : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುವ ಉಚಿತ ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಕರೆ ಆಧರಿಸಿ ತಕ್ಷಣ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಬಾಲ್ಯವಿವಾಹಕ್ಕೆ ಒಳಗಾಗಬೇಕಿದ್ದ ಐವರು ಬಾಲಕಿಯರನ್ನು ರಕ್ಷಿಸಿದ್ದಾರೆ. ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಮಾಹಿತಿ ಪ್ರಕಾರ, ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಬಾಲಕಿಯರು, ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಒಬ್ಬ ಬಾಲಕಿ ಹಾಗೂ ಕಾರಟಗಿ ತಾಲೂಕಿನ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಬಾಲಕಿಯರ ವಿವಾಹ ಸಿದ್ಧತೆ ನಡೆಯುತ್ತಿತ್ತು. ಈ ಮಾಹಿತಿಯ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಅಕ್ಕಪಡೆ ಹಾಗೂ 112 ಪೊಲೀಸ್ ಸಿಬ್ಬಂದಿ, ವಲಯ ಮೇಲ್ವಿಚಾರಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಪುರಸಭೆ ಸಿಬ್ಬಂದಿಗಳ ಸಹಯೋಗದೊಂದಿಗೆ ಐವರು ಅಪ್ರಾಪ್ತರನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಬಸವರಾಜ ಗುಳೇದ್, ಅಮರಮ್ಮ ಹಿರೇಮಠ, ಬಸಮ್ಮ ಎಸ್., ಮೇಲ್ವಿಚಾರಕಿ ಶ್ರೀದೇವಿ, ಸವಿತಾ, ಅಕ್ಕಪಡೆಯ ಸಾವಿತ್ರಿ, ಪಿ.ಸಿ.ಯಲಮ್ಮ, ಭಾಗ್ಯ ಹಾಗೂ ಚಾಲಕ ಶರಣಪ್ಪ ಭಾಗವಹಿಸಿದ್ದರು. ಇತ್ತೀಚೆಗೆ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿವಾಹ ಮುಹೂರ್ತಗಳು ಆರಂಭವಾಗಿರುವ ಹಿನ್ನೆಲೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಅಧಿಕಾರಿಗಳು ವಧು-ವರರ ವಯಸ್ಸಿನ ದೃಢೀಕರಣವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ಪೂರ್ತಿಯಾಗಿರುವುದನ್ನು ಖಚಿತಪಡಿಸಿಕೊಂಡ ನಂತರವೇ ವಿವಾಹಕ್ಕೆ ಅನುಮತಿ ನೀಡಬೇಕು. ನಿಯಮ ಉಲ್ಲಂಘಿಸಿದರೆ ಆಯೋಜಕರು ಹಾಗೂ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ತಿಳಿಸಿದ್ದಾರೆ.
ಬ್ರಹ್ಮಾವರ: ಹೆಗ್ಗುಂಜೆ ಗ್ರಾಮದ, ಕೆಪಿಟಿಸಿಎಲ್ನ 220 ಕೆವಿ ಸ್ವೀಕರಣ ಕೇಂದ್ರಕ್ಕೆ ಮಾ.25ರಂದು ನಸುಕಿನ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಕೇಂದ್ರಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ತುಂಡರಿಸಿ ಒಳಗೆ ನುಗ್ಗಿದ ಕಳ್ಳರು, ಕೇಂದ್ರದ ಆವರಣದಲ್ಲಿರುವ 110ಕೆವಿ ಹಿರಿಯಡ್ಕ ಬೇನಲ್ಲಿನ 3, 110ಕೆವಿ ಹಾಲಾಡಿ ಬೇನಲ್ಲಿನ 2, 110ಕೆವಿ ಕುಂದಾಪುರ ಬೇ ನಲ್ಲಿನ 1, 220ಕೆವಿ ಕಾರವಾರ 1 ಬೇನಲ್ಲಿನ 3, 220ಕೆವಿ ಕಾರವಾರ 2 ಬೇ ನಲ್ಲಿನ 3 ಒಟ್ಟು 12 ತಾಮ್ರದ ಐಸೋಲೇಟರ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಮೌಲ್ಯ 2.50ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ.ಅಮ್ಮುಂಜೆ ಅರವಿಂದ ನಾಯಕ್ಗೆ ವಿಶ್ವ ರಂಗಭೂಮಿ ಸನ್ಮಾನ
ಉಡುಪಿ, ಮಾ.27: ರಂಗಭೂಮಿ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ-ಬೆಂಗಳೂರು ಹಾಗೂ ಎಂ.ಜಿ.ಎಂ. ಕಾಲೇಜು, ಉಡುಪಿ ಇವುಗಳ ಸಹಕಾರದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ವಹಿಸಿದ್ದ ಮಣಿಪಾಲ ಮಾಹೆಯ ಸಹಕಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ನಮ್ಮ ಹಿರಿಯರಿಂದ ಇಂದು ರಂಗಭೂಮಿ ಈ ಮಟ್ಟಕ್ಕೆ ಬೆಳೆದು ನಿಂತಿದೆ. ರಂಗಭೂಮಿಯಲ್ಲಿ ಯುವ ಜನತೆಯಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕಾರ್ಯ ಮಾಡಬೇಕು. ಆ ಬಗ್ಗೆ ನಾವೆಲ್ಲ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ನಮ್ಮ ಕಲೆ, ಸಂಸ್ಕೃತಿ, ನಾಟಕವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಕವಿ, ಕಥೆಗಾರ, ವಿಮರ್ಶಕ ಬೆಳಗೋಡು ರಮೇಶ್ ಭಟ್ ವಿಶ್ವ ರಂಗಭೂಮಿ ದಿನ ಆಶಯ ನುಡಿಗಳನ್ನಾಡಿದರು. ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವೈದ್ಯ, ಉದ್ಯಮಿ, ರಂಗಭೂಮಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ಅಮ್ಮುಂಜೆ ಅರವಿಂದ ನಾಯಕ್ ಅವರಿಗೆ ವಿಶ್ವ ರಂಗಭೂಮಿ ಸನ್ಮಾನ ನೆರವೇರಿಸಲಾಯಿತು. ಉಡುಪಿ ರಂಗಭೂಮಿ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ಆರ್.ಬಲ್ಲಾಳ್ ಉಪಸ್ಥಿತರಿದ್ದರು. ವಿಶ್ವ ರಂಗಭೂಮಿ ದಿನದ ಸಂದೇಶನ್ನು ಅಮಿತಾಂಜಲಿ ಕಿರಣ್ ವಾಚಿಸಿದರು. ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ ಚಂದ್ರ ಕುತ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಎನ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಟಿ.ಎ. ಪೈ. ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉಡುಪಿ ತಂಡದಿಂದ ರಂಗಭೂಮಿ ರಂಗಶಿಕ್ಷಣ ಅಭಿಯಾನದ ನಾಟಕ ತಾರೆ ಪ್ರದರ್ಶನಗೊಂಡಿತು.
‘ಸಾಮಾಜಿಕ ಪ್ರತಿರೊಧದ ಭಾಗವಾಗಬೇಕಿದ್ದ ಬೀದಿ ನಾಟಕಗಳು ಸರಕಾರಿ ಅನುದಾನದಲ್ಲಿ ಪ್ರದರ್ಶನ’
ಕುಂದಾಪುರ: ಸಾಮಾಜಿಕ ವ್ಯವಸ್ಥೆ ವಿರುದ್ಧ ಬಂಡೆದ್ದು ಮಾಡುವ ಬೀದಿ ನಾಟಕಗಳು ಅಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಬಹಳಷ್ಟು ಭಿನ್ನವಾಗಿದೆ. ಸಾಮಾಜಿಕ ಪ್ರತಿರೊಧದ ಭಾಗವಾಗಬೇಕಿದ್ದ ಬೀದಿ ನಾಟಕಗಳು ಇಂದು ಸರಕಾರ ವ್ಯವಸ್ಥೆ ನೀಡುವ ಅನುದಾನ ಪಡೆದು ನಾಟಕ ಮಾಡಬೇಕಾಗಿದೆ ಎಂದು ಸುರತ್ಕಲ್ ಗೋವಿಂದದಾಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಚಿತ್ರಾಪುರ ಹೇಳಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ಸಮುದಾಯ ಕುಂದಾಪುರ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಕುಂದಾಪುರದ ಎಲ್.ಐ.ಸಿ ರಸ್ತೆಯ ಹಂಚು ಕಾರ್ಮಿಕರ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾದ ವಿಚಾರ ಗೋಷ್ಠಿಯಲ್ಲಿ ’ಕನ್ನಡ ರಂಗಭೂಮಿ ಮತ್ತು ವರ್ತಮಾನದ ತಲ್ಲಣಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು. ರಂಗಭೂಮಿ ಚಟುವಟಿಕೆಗಳು ಪ್ರಾರಂಭವಾಗುವ ಕಾಲಘಟ್ಟದಿಂದ ಹಿಡಿದು ಈ ತನಕ ವಿವಿಧ ಮಜಲುಗಳನ್ನು ನೋಡಿದ್ದೇವೆ. 80 ದಶಕದ ಬಳಿಕ ನಿನಾಸಂ ನಾಟಕ ಶಾಲೆಯು ನಾಟಕ ತರಬೇತಿಗೆ ವಿಶೇಷ ಮಹತ್ವ ನೀಡಿದ್ದಲ್ಲದೆ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಅವಿಭಜಿತ ಉಡುಪಿ, ದ.ಕ ಜಿಲ್ಲೆಗಳ ನಾಟಕ ತಂಡದ ತಿರುಗಾಟಗಳ ಮೇಲೆ ನಿನಾಸಂ ಬೀರಿದ ಪರಿಣಾಮ ಉಲ್ಲೇಖನೀಯ ಎಂದರು. ಕರಾವಳಿ ಜಿಲ್ಲೆ ರಂಗ ನಾಟಕದಲ್ಲಿ ಬೆಳೆದಿದ್ದು ಇದಕ್ಕಾಗಿ ಬೇಡಿಕೆಯುಳ್ಳ ಪ್ರೇಕ್ಷಕ ವರ್ಗವನ್ನು ಹಿಡಿದಿಟ್ಟುಕೊಳ್ಳುವು ದಲ್ಲದೆ ತನ್ನ ಬದ್ಧತೆಯ ಮೂಲಕ ನಿರಂತರವಾಗಿ ನಾಟಕ ಪ್ರದರ್ಶನ ನೀಡುತ್ತಿದೆ. ಅದಲ್ಲದೆ ಈಗ ಕಾರ್ಮಿಕ, ಕೈಗಾರಿಕಾ ರಂಗಭೂಮಿ ಬೆಳೆಯುತ್ತಿಲ್ಲ. ಜಾಗತೀಕರಣದಿಂದಾಗಿ ಸ್ವಾಭಿಮಾನ ಹಾಗೂ ಸ್ವಂತಿಕೆ ಕಳೆದುಕೊಳ್ಳುವ ಸ್ಥಿತಿ ತಲುಪಬಾರದು. ಹಳೆಯದು ಶ್ರೇಷ್ಟ ಆಧುನಿಕತೆ ನಿಕೃಷ್ಟ ಎಂಬ ಮಾನಸಿಕತೆಯಿಂದ ಹೊರಬರಬೇಕಾದ ಅನಿವಾರ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ನಾಟಕ ಅಕಾಡೆಮಿಯ ಉಡುಪಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಅಧ್ಯಕ್ಷತೆ ವಹಿಸಿದ್ದರು. ರಂಗಕಲಾವಿದರು ಮತ್ತು ಬ್ರಹ್ಮಾವರ ಎಸ್ಎಂಎಸ್ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷಾ ಎಸ್., ರಂಗ ನಿರ್ದೇಶಕ ಸತ್ಯನಾ ಕೊಡೇರಿ ಸಂವಾದದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಮುದಾಯ ಕುಂದಾಪುರದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯ ದರ್ಶಿ ರವಿ ವಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಚಿನ್ನಾ ವಿ.ಗಂಗೇರ ವಿಶ್ವ ರಂಗಭೂಮಿ ದಿನದ ಸಂದೇಶ ವಾಚಿಸಿದರು. ಸಮುದಾಯ ಕುಂದಾಪುರದ ಗಣೇಶ್ ಶೆಟ್ಟಿ ವಂದಿಸಿದರು. ವಿಚಾರಗೋಷ್ಠಿಯ ಬಳಿಕ ಸಮುದಾಯ ಕುಂದಾಪುರದ ಕಲಾವಿದರಿಂದ ಸದಾನಂದ ಬೈಂದೂರು ನಿರ್ದೇಶನದಲ್ಲಿ ’ಇದೊಂದು ಯುದ್ಧ ಮುಗಿದ ಮೇಲೆ’ ಎಂಬ ನಾಟಕ ಹಾಗೂ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಪ್ರಸ್ತುತಿಯಲ್ಲಿ ಸಂತೋಷ್ ನಾಯಕ್ ಪಟ್ಲ ನಿರ್ದೇಶನದಲ್ಲಿ ’ದಿ ಫೈಯರ್’ ನಾಟಕ ಪ್ರದರ್ಶನ ನಡೆಯಿತು.
Raichur | ಈಜಲು ತೆರಳಿದ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತ್ಯು
ಮಾನ್ವಿ : ಆಂಧ್ರಪ್ರದೇಶದ ಕೋಸಗಿ ಮಂಡಲ ವ್ಯಾಪ್ತಿಯ ಕಂದಕೂರ ಗ್ರಾಮದ ಬಳಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತರನ್ನು ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದವರಾದ ಉಮಾವತಿ ಗೋವಿಂದ (35), ರತ್ನ ಮಹಾಂತೇಶ ಸುಂಕೇಶ್ವರ (28), ಶಿವಾನಂದ ಹನುಮಂತರಾಯ ಕುರ್ಡಿ (24) ಹಾಗೂ ಮಹಾಂತೇಶ್ ಪೀತಾಂಬರ ಕುರ್ಡಿ (24) ಎಂದು ಗುರುತಿಸಲಾಗಿದೆ. ಮಾನ್ವಿ ತಾಲೂಕಿನ ರಾಜಲಬಂಡಾ ಅಣೆಕಟ್ಟಿಗೆ ಹೊಂದಿಕೊಂಡಿರುವ ಕಂದಕೂರ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಕೋಸಗಿ ಪಟ್ಟಣಕ್ಕೆ ತೆರಳಿದ್ದ ಕುಟುಂಬಸ್ಥರು ವಾಪಸ್ ಬರುವಾಗ ಈಜಲು ನದಿಗೆ ಇಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ: 3,427 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮೊದಲ ಬಜೆಟ್ನ್ನು ಹಣಕಾಸು ಉಪನಿಯಂತ್ರಕಿ ವಿಜಯಲಕ್ಷ್ಮಿ ಕೆ.ಟಿ ಅವರು ಮಂಡಿಸಿದ್ದು, ಒಟ್ಟು 3,427 ರೂ.ಬಜೆಟ್ ಗಾತ್ರವಾಗಿದೆ. ಎಲ್ಲ ಮೂಲಗಳಿಂದ ಒಟ್ಟಾರೆ ಆದಾಯ 3,427.34ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಒಟ್ಟು 3,426.60ಕೋಟಿ ರೂ. ಅಂದಾಜು ವೆಚ್ಚದ ನಂತರವೂ 78.65 ಲಕ್ಷ ರೂ. ಉಳಿತಾಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು 884.50ಕೋಟಿ ರೂ. ಅನುದಾನ ಒದಗಿಸಿದ್ದು, ಮುನಿಸಿಪಲ್ ಬಾಂಡ್ ವಿತರಣೆ ಮೂಲಕ 200 ಕೋಟಿ ರೂ.ಗಳನ್ನು ಸಂಗ್ರಹಿಸಲು ಯೋಜಿಸಲಾಗಿದೆ. 2025-26ರಲ್ಲಿ 900 ಕೋಟಿ ರೂ. ತೆರಿಗೆ ಸಂಗ್ರಹಿಸಿ ಗಮನಾರ್ಹ ಸಾಧನೆ ಮಾಡಲಾಗಿದ್ದು, 2026-27ನೇ ಸಾಲಿಗೆ 1,150 ಕೋಟಿ ಆದಾಯ ಗುರಿ ಹೊಂದಲಾಗಿದೆ. ಇ-ಖಾತಾ ಯಶಸ್ಸು, ಹೊಸ ತೆರಿಗೆ ಕ್ರಮ: ಈವರೆಗೆ 84,629 ಅರ್ಜಿಗಳ ಪೈಕಿ 84,173 ಅಂತಿಮ ಇ-ಖಾತಾಗಳನ್ನು ಪಾರದರ್ಶಕವಾಗಿ ವಿತರಿಸಲಾಗಿದೆ. ವ್ಯವಸ್ಥಿತ ಡಿಜಿಟಲೀಕರಣದ ಮೂಲಕ ಅರ್ಹ ಆಸ್ತಿಗಳ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ. ಆದಾಯ ಹೆಚ್ಚಿಸಲು ಮಾರ್ಗದರ್ಶಕ ಮೌಲ್ಯದ ಮೇಲೆ ಶೇ.5ರಷ್ಟು ಹಾಗೂ ಹೊಸ ಖಾತೆಗಳನ್ನು ನೀಡಲು ಮುದ್ರಾಂಕ ಶುಲ್ಕದ ಮೇಲೆ ಶೇ.2ರಷ್ಟು ಕರ ವಸೂಲಿ ಮಾಡಲಾಗುತ್ತದೆ. ಮಾರುಕಟ್ಟೆಗಳ ಅಭಿವೃದ್ಧಿಗೆ 90ಕೋಟಿ ರೂ.: ನಗರದ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 90 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದರಲ್ಲಿ ಶಿವಾಜಿನಗರದ ಶತಮಾನದ ಇತಿಹಾಸವಿರುವ ರಸೆಲ್ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ 70 ಕೋಟಿ ರೂ. ವೆಚ್ಚಮಾಡಲಾಗುವುದು. ಇತರೆ ಮಾರುಕಟ್ಟೆ ಪ್ರದೇಶಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ. ನಗರ ಯೋಜನೆ-ಜಾಹೀರಾತು : ನಗರ ಯೋಜನೆ ವಿಭಾಗದಿಂದ ಒಟ್ಟಾರೆ 209.75 ಕೋಟಿ ರೂ. ಆದಾಯ ನಿರೀಕ್ಷೆ. ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಹಾಗೂ ಪ್ರೀಮಿಯಂ ಎಫ್ಎಆರ್ ನೀತಿಯಿಂದ 358 ಕೋಟಿ ರೂ. ಹೆಚ್ಚುವರಿ ಆದಾಯ ಗುರಿ. ಆಯ್ದ ರಸ್ತೆಗಳನ್ನು ಜಾಗತಿಕ ಮಟ್ಟದ ‘ಬಿಸಿನೆಸ್ ಕಾರಿಡಾರ್’ಗಳಾಗಿ ಅಭಿವೃದ್ಧಿ. ಒಟ್ಟಾರೆಯಾಗಿ 2026-27ನೇ ಸಾಲಿನಲ್ಲಿ ಜಾಹೀರಾತು ವಿಭಾಗದಿಂದ 192 ಕೋಟಿ ರೂ.ಗಳ ಆದಾಯವನ್ನು ಪಾಲಿಕೆಯ ಬೊಕ್ಕಸಕ್ಕೆ ಸೇರಿಸುವ ಗುರಿ ಹೊಂದಲಾಗಿದೆ. ಸಾರ್ವಜನಿಕ ಕಾಮಗಾರಿಗಳಿಗೆ 1,760 ಕೋಟಿ ರೂ.: 217.50 ಕೋಟಿ ರೂ. ವೆಚ್ಚದಲ್ಲಿ 145 ಕಿ.ಮೀ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಡಾಂಬರೀಕರಣ. 200 ಕೋಟಿ ರೂ. ವೆಚ್ಚದಲ್ಲಿ 115 ಕಿ.ಮೀ ವಾರ್ಡ್ ರಸ್ತೆಗಳ ಅಭಿವೃದ್ಧಿ (ರಸ್ತೆಗುಂಡಿ ಮುಕ್ತ ಗುರಿ). ಪ್ರತಿ ವಾರ್ಡ್ ಸರ್ವತೋಮುಖ ಅಭಿವೃದ್ಧಿಗೆ ತಲಾ 2.25 ಕೋಟಿ ರೂ.ನಂತೆ ಒಟ್ಟು 141.75 ಕೋಟಿ ರೂ. ನಿಗದಿ. 10 ಹೊಸ ಸಮುದಾಯ ಕಟ್ಟಡ ನಿರ್ಮಾಣ, ವಿಶ್ವಬ್ಯಾಂಕ್ ನೆರವಿನಡಿ ರಾಜಕಾಲುವೆ ಮೇಲ್ದರ್ಜೆಗೆ. ಪ್ರಮುಖ ರಸ್ತೆಗಳ ಅಲಂಕಾರಿಕ ವಿದ್ಯುದೀಕರಣಕ್ಕೆ 15 ಕೋಟಿ ರೂ., ಮೇತುವೆ ಕೆಳಗೆ ಮೈಕ್ರೋ ಪಾರ್ಕ್ ಮತ್ತು ಕಲಾತ್ಮಕ ತಾಣಗಳ ನಿರ್ಮಾಣ. ಬ್ರ್ಯಾಂಡ್ ಬೆಂಗಳೂರು-ವೈಬ್ರೆಂಟ್ ಬೆಂಗಳೂರು ಅಡಿಯಲ್ಲಿ ರಸೆಲ್ ಮಾರುಕಟ್ಟೆಯನ್ನು ಪುನಶ್ಚೇತನಗೊಳಿಸಲು 70ಕೋಟಿ ರೂ. ಹಾಗೂ ಪಾಲಿಕೆ ಪ್ರಮುಖ ರಸ್ತೆಗಳಲ್ಲಿ ವಿದ್ಯುದೀಕರಣಕ್ಕಾಗಿ 15ಕೋಟಿ ರೂ. ಮೀಸಲಿರಿಸಲಾಗಿದೆ. ಭೂ ಸ್ವಾಧೀನ ಪರಿಹಾರಕ್ಕೆ 50ಕೋಟಿ ರೂ.: ಸಿ.ವಿ.ರಾಮನ್ ನಗರ ಕ್ಷೇತ್ರದ ವ್ಯಾಪ್ತಿಗೆ ಬರುವ ಕದಿರಯ್ಯನಪಾಳ್ಯ ಹಾಗೂ ಪಾಲಿಕೆ ವ್ಯಾಪ್ತಿಯ ಇತರೆ ಬಾಕಿ ಉಳಿದಿರುವ ಭೂಸ್ವಾಧೀನ ಸ್ವತ್ತುಗಳ ಮಾಲೀಕರಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಸಕ್ತಸಾಲಿನಲ್ಲಿ ಒಟ್ಟು 50 ಕೋಟಿ ರೂ. ಅನುದಾನ ಮೀಸಲು. *ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಂತೆ ಹೊಸ ‘ಮಹಾಯೋಜನೆ’ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ರೂಪಿಸುತ್ತಿದೆ. ಅದಕ್ಕಾಗಿ ಪಾಲಿಕೆಯಿಂದ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಯೋಜನೆಯ ಭಾಗವಾಗಿ ಚಾಮರಾಜಪೇಟೆ ವ್ಯಾಪ್ತಿಯ ಪಾದರಾಯನಪುರ ಮುಖ್ಯರಸ್ತೆಯನ್ನು 9 ಮೀಟರ್ನಿಂದ 24 ಮೀಟರ್ಗೆ ಅಗಲೀಕರಣಗೊಳಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸುಸ್ಥಿರ ಪರಿಸರ : ಎಲ್.ಇ.ಡಿ ದೀಪಗಳ ಅಳವಡಿಕೆಯಿಂದ ಶೇ.60ರಷ್ಟು ವಿದ್ಯುತ್ ಉಳಿತಾಯ. ಪಾಲಿಕೆ ಕಟ್ಟಡಗಳ ಎನರ್ಜಿ ಆಡಿಟ್ ಮತ್ತು ಸೋಲಾರ್ ಅಳವಡಿಕೆ. ಪರಿಸರ ಸಮತೋಲನಕ್ಕಾಗಿ ‘ಬ್ಲೂ-ಗ್ರೀನ್ ಕಾರಿಡಾರ್’ ನಿರ್ಮಾಣಕ್ಕೆ 10ಕೋಟಿ ರೂ. ಮೀಸಲಿಡಲಾಗಿದೆ. ಕೆರೆಗಳು: 82 ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಸಮಗ್ರ ಅಭಿವೃದ್ಧಿ. ಕೆರೆಗಳನ್ನು ಆಮ್ಲಜನಕ ಕೇಂದ್ರಗಳು ಮತ್ತು ಮನರಂಜನಾ ತಾಣಗಳಾಗಿ ಪರಿವರ್ತನೆ ಮಾಡಲಾಗುವುದು. ಹಾಗೂ ಹಲಸೂರು ಕೆರೆಯನ್ನು ಸುಸಜ್ಜಿತ ಪ್ರವಾಸಿ ತಾಣವಾಗಿ ರೂಪಿಸಲು ಈ ಸಾಲಿನಲ್ಲಿ 20 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಉದ್ಯಾನವನಗಳು : 2026-27ನೇ ಸಾಲಿನಲ್ಲಿ ಉದ್ಯಾನವನಗಳ ನಿರ್ವಹಣೆಗಾಗಿ 19ಕೋಟಿ ರೂ. ಹಾಗೂ ಸಮಗ್ರ ಅಭಿವೃದ್ಧಿ, ಮೇಲ್ದರ್ಜೆಗೇರಿಸುವಿಕೆಗಾಗಿ 15 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಸಿಎಸ್ಆರ್ ಸಹಯೋಗದೊಂದಿಗೆ ಮಕ್ಕಳಿಗಾಗಿ ‘ಪುಟಾಣಿ ಪಾರ್ಕ್’ಗಳನ್ನು ನಿರ್ಮಾಣಮಾಡಲಾಗುತ್ತದೆ. ಆರೋಗ್ಯ : ಏಳು ಹೆರಿಗೆ ಆಸ್ಪತ್ರೆಗಳನ್ನು 30 ಹಾಸಿಗೆಯ ಸುಸಜ್ಜಿತ ಎಫ್ಆರ್ಯು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಹಾಗೂ ಒಂದು ಆಸ್ಪತ್ರೆಯನ್ನು 50 ಹಾಸಿಗೆಯ ಎಫ್ಆರ್ಯು ಯುಸಿಎಚ್ಸಿ ಕೇಂದ್ರವನ್ನಾಗಿ ಐಪಿಎಸ್ಎಸ್ ಮಾನದಂಡಗಳ ಅನ್ವಯ ಮೇಲ್ದರ್ಜೆಗೇರಿಸಲು 40 ಕೋಟಿಗಳನ್ನು ರೂ. ಬ್ರಾಂಡ್ ಬೆಂಗಳೂರು, ಹೆಲ್ತಿ ಬೆಂಗಳೂರು ಯೋಜನೆಯಡಿ ಮೀಸಲಿರಿಸಲಾಗಿದೆ. ಅರಣ್ಯೀಕರಣಕ್ಕಾಗಿ 19.38 ಕೋಟಿ ರೂ.ಮೀಸಲು: * 2026-27ನೇ ಸಾಲಿನಲ್ಲಿ ‘ಟ್ರೀ ಕೆನೊಪಿ’ ಸಲುವಾಗಿ 11.50 ಕೋಟಿ ರೂ.ಅನುದಾನವನ್ನು ಹಾಗೂ ರಸ್ತೆಬದಿ 50,000 ಗಿಡಗಳನ್ನು ನೆಡುವುದಕ್ಕೆ 3.5 ಕೋಟಿ ರೂ. ಮೀಸಲಿಡಲಾಗಿದೆ. ಸಾರ್ವಜನಿಕರಿಗೆ ಮತ್ತು ಪರಿಸರಾಸಕ್ತರಿಗೆ ವಿತರಿಸಲು ಸಸ್ಯಕ್ಷೇತ್ರದಲ್ಲಿ 25,000 ಸಸಿಗಳನ್ನು ಬೆಳೆಸಲು ಉದ್ದೇಶಿಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಬೆಳೆಸಿದ ಗಿಡಗಳ ಸುಸ್ಥಿತಿಯ ನಿರ್ವಹಣೆ ಹಾಗೂ ಬೃಹತ್ ಮರಗಳ ವೈಜ್ಞಾನಿಕ ಆರೈಕೆಗೆ ಪಾಲಿಕೆಯು ಕ್ರಮಕೈಗೊಳ್ಳಲಿದೆ. ಈ ಎಲ್ಲಾ ಯೋಜನೆಗಳ ಸಲುವಾಗಿ 19.38 ಕೋಟಿ ರೂ.ಮೀಸಲಿಡಲಾಗಿದೆ. ಇತರೆ ಅಂಶಗಳು * ಇಂದಿರಾ ಕ್ಯಾಂಟೀನ್ಗಳಿಗೆ 5 ಕೋಟಿ ರೂ. * ಬೆಂಗಳೂರಿನ ಸಂಚಾರ ದಟ್ಟಣೆಯ ನಡುವೆಯೂ ತುರ್ತು ವೈದ್ಯಕೀಯ ನೆರವು ನೀಡಲು ಸಿಎಸ್ಆರ್ ಅನುದಾನದಲ್ಲಿ ಬೈಕ್ ಆಂಬ್ಯುಲೆನ್ಸ್-ಪ್ರಥಮ ಸ್ಪಂದನಾ ಘಟಕ' ಯೋಜನೆ. * ಆರೋಗ್ಯ ಮಿತ್ರ ಯೋಜನೆಯಡಿ 22 ಸ್ಥಳಗಳಲ್ಲಿ ಸ್ಮಾರ್ಟ್ ವರ್ಚುವಲ್ ಕ್ಲೀನಿಕ್ ಸ್ಥಾಪನೆಯ ಉದ್ದೇಶದಿಂದ ಒಟ್ಟು 19 ಕೋಟಿ ರೂ. ಮೀಸಲು. * 25 ಲಕ್ಷ ರೂ.ಗಳಲ್ಲಿ ಆಹಾರ ಪ್ರೇಮಿಗಳ ಆರೋಗ್ಯ ರಕ್ಷಣೆಗಾಗಿ ಕಿರುಮಳಿಗೆ-ಶುದ್ಧ ಆಹಾರ ಎಂಬ ಪೈಲಟ್ ಯೋಜನೆ. * ಬೀದಿ ನಾಯಿಗಳ ಪುನರ್ವಸತಿಗಾಗಿ 2 ಕೋಟಿ ರೂ. ವೆಚ್ಚದಲ್ಲಿ ವೈಜ್ಞಾನಿಕ ಆಶ್ರಯ ತಾಣ, ವಿಶೇಷ ಸಂರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. * ಬಡ ಕುಟುಂಬಗಳ ಸಾಕು ಪ್ರಾಣಿಗಳು, ಸಮುದಾಯದ ನಾಯಿಗಳಿಗೆ ಉಚಿತ ಚಿಕಿತ್ಸೆ ನೀಡಲು 50ಲಕ್ಷ ರೂ. ವೆಚ್ಚದಲ್ಲಿ ಹೊಸ ಪಶು ಚಿಕಿತ್ಸಾಲಯ ಆರಂಭ. * ಪ್ರಾಣಿಗಳ ಗೌರವಯುತ ಅಂತ್ಯ ಸಂಸ್ಕಾರಕ್ಕಾಗಿ 1ಕೋಟಿ ರೂ. ವೆಚ್ಚದಲ್ಲಿ ಪಾಲಿಕೆಯ ಸ್ವಂತ ಜಾಗದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ. * ಬೀದಿನಾಯಿಗಳ ಸಂಖ್ಯೆ ನಿಯಂತ್ರಿಸಲು 1.44ಕೋಟಿ ರೂ. ವೆಚ್ಚದಲ್ಲಿ ನಿರಂತರ ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ರೋಗ ನಿಯಂತ್ರಣಕ್ಕಾಗಿ 80.90ಲಕ್ಷ ರು. ವೆಚ್ಚದಲ್ಲಿ ಸಾಮೂಹಿಕ ಲಸಿಕೆ ನೀಡಲಾಗುವುದು. ದಂಡು ಪ್ರದೇಶದ ಎಬಿಸಿ ಕೇಂದ್ರದ ದುರಸ್ತಿಗೆ 60ಲಕ್ಷ ರೂ. ಮೀಸಲಿಡಲಾಗಿದೆ. * ಆಸರೆ ಇಲ್ಲದ ಹಿರಿಯನಾಗರೀಕರಿಗೆ ಸ್ವಯಂ ಸೇವಾಸಂಸ್ಥೆಗಳು ಹಾಗೂ ಸಿಎಸ್ಆರ್ ಸಹಯೋಗದೊಂದಿಗೆ ಉಚಿತ ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಹಿರಿಯರ ವಾಡಿ ಎಂಬ ಹೊಸಯೋಜನೆಯನ್ನು ರೂಪಿಸಲಾಗಿದೆ. ಅದಕ್ಕಾಗಿ ಪಾಲಿಕೆ ಉಚಿತವಾಗಿ ಸ್ಥಳ ನೀಡಲಿದೆ. * ಮಹಿಳೆಯರ ಅನುಕೂಲಕ್ಕಾಗಿ 20 ‘ಶಿ ಟಾಯ್ಲೇಟ್’ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ 60 ಶೌಚಾಲಯಗಳ ನಿರ್ಮಾಣ. ಶಿಥಿಲಾವಸ್ಥೆಯಲ್ಲಿರುವ ಶೌಚಾಲಯಗಳ ದುರಸ್ಥಿಗೆ ಕ್ರಮ. * ಕಸ ಸಂಗ್ರಹಣೆ, ವಿಂಗಡಣೆ, ಭೂ ಭರ್ತಿ ಪ್ರದೇಶ ಅಭಿವೃದ್ಧಿ ಘನತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣೆಗಾಗಿ 215 ಕೋಟಿ ರೂ. ಅನುದಾನ ಮೀಸಲು. * ಪೌರ ಕಾರ್ಮಿಕರಿಗಾಗಿ ಪ್ರತಿ ವಾರ್ಡ್ನಲ್ಲೂ ‘ಮಸ್ಟರಿಂಗ್ ಕೇಂದ್ರ’ ಹಾಗೂ ವಿಶ್ರಾಂತಿಗಾಗಿ ಅಗತ್ಯ ಮೂಲಸೌಲಭ್ಯವಿರುವ ಸುವಿಧಾ ಕೇಂದ್ರಗಳು ಇರುವಂತೆ ಕ್ರಮ. ಒಂಟಿ ಮನೆಗಳ ನಿರ್ಮಾಣಕ್ಕೆ 35.70 ಕೋಟಿ ರೂ.: ಪೌರ ಕಾರ್ಮಿಕರಿಗೆ 10.00 ಕೋಟಿ ರೂ. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದವರಿಗೆ 17.00ಕೋಟಿ ರೂ., ಹಿಂದುಳಿದ ವರ್ಗದವರಿಗೆ 5.50 ಕೋಟಿ ರೂ., ವಿಶೇಷಚೇತನರಿಗೆ 3.20 ಕೋಟಿ ರೂ. ಒಟ್ಟಾರೆ 35.70 ಕೋಟಿ ರೂ.ಗಳ ವೆಚ್ಚದಲ್ಲಿ 500 ಅರ್ಹ ಫಲಾನುಭವಿಗಳಿಗೆ ಒಂಟಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಸಮಾಜ ಕಲ್ಯಾಣ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋ ತ್ಸಾಹಕ್ಕಾಗಿ 4.50ಕೋಟಿ ರೂ.ಗಳ ಶಾಲಾ ಶುಲ್ಕ ಮರುಪಾವತಿ ಹಾಗೂ ಪೌರಕಾರ್ಮಿಕರು, ಗ್ಯಾಂಗ್ಮನ್, ತೋಟಗಾರಿಕೆ ಮಾಲಿಗಳ ಮಕ್ಕಳಿಗೆ ವಿದ್ಯಾಭ್ಯಾಸ ಉತ್ತೇಜನಕ್ಕಾಗಿ 3 ಕೋಟಿ ರೂ.ಗಳ ವಿದ್ಯಾರ್ಥಿವೇತನ, ಹಾಗೂ ಪದವಿ ವಿದ್ಯಾರ್ಥಿಗಳಿಗೆ 4 ಕೋಟಿ ರೂ. ಗಳವೆಚ್ಚದಲ್ಲಿ ಉಚಿತ ಲ್ಯಾಪ್ಟಾಪ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳ ಕಲ್ಯಾಣಕ್ಕಾಗಿ 1.50 ಕೋಟಿ ರೂ., ಹಿರಿಯ ನಾಗರೀಕರ ಕಲ್ಯಾಣಕಾರ್ಯಕ್ರಮಕ್ಕಾಗಿ 90.00ಲಕ್ಷ ರೂ.ಗಳನ್ನುಮೀಸಲಿಡಲಾಗಿದೆ. ಪಾಲಿಕೆ ವ್ಯಾಪ್ತಿಯ 16 ನಿರಾಶ್ರಿತ ಕೇಂದ್ರಗಳ ಉನ್ನತೀಕರಣಕ್ಕಾಗಿ 1.80 ಕೋಟಿ ರೂ. ವಿನಿಯೋಗಿಸಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವೃತ್ತಿ ನಿರತ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ಇಲೆಕ್ಟ್ರಿಕಲ್ ದ್ವಿಚಕ್ರವಾಹನ ಹಾಗೂ ಬೀದಿ ಬದಿವ್ಯಾಪಾರಿಗಳಿಗೆ 4ಕೋಟಿ ರೂ. ವೆಚ್ಚದಲ್ಲಿ ಇ-ವೆಂಡಿಂಗ್ ವಾಹನಗಳನ್ನು ಒದಗಿಸಲಾಗುವುದು. ನಿರುದ್ಯೋಗಿಗಳಿಗೆ ವಾಹನ: 4.50ಕೋಟಿ ರೂ. ಮೀಸಲು: ‘ಸಾರಥಿ’ ಯೋಜನೆಯಡಿ 450 ನಿರುದ್ಯೋಗಿ ಯುವಜನರಿಗೆ ಆಟೋ ಮತ್ತು ಕಾರು ಖರೀದಿಸಲು 4.50 ಕೋಟಿ ರೂ. ಸಹಾಯ ಧನ ನೀಡಲಾಗುವುದು. ವಿಶೇಷ ಚೇತನರಿಗೆ 3.50 ರೂ. ಕೋಟಿಗಳ ವೆಚ್ಚದಲ್ಲಿ ತ್ರಿಚಕ್ರವಾಹನ ಮತ್ತು ಇಲೆಕ್ಟ್ರಿಕಲ್ ವ್ಹೀಲ್ಚೇರ್ಗಳನ್ನು ವಿತರಿಸಲಾಗುವುದು. ಮಹಿಳಾ ಸಬಲೀಕರಣಕ್ಕಾಗಿ ಹೊಲಿಗೆ ಯಂತ್ರ ಒದಗಿಸಲು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಆಯೋಜಿಸಲು 1.80 ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ. ಪೌರಕಾರ್ಮಿಕರ ಮಕ್ಕಳ ಕಲಾಪ್ರತಿಭೆ ಗುರುತಿಸಲು 1.00 ಕೋಟಿ ರೂ. ವೆಚ್ಚದಲ್ಲಿ ಸಂಗೀತ ಸಾಮಗ್ರಿಗಳ ವಿತರಣೆ. ಸಾರ್ವಜನಿಕ ಶಿಕ್ಷಣ: ಪ್ರಸ್ತುತ ಪಾಲಿಕೆಯ ಅಡಿಯಲ್ಲಿ ಒಟ್ಟು 92 ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 50 ಶಿಶುವಿಹಾರಗಳು, 11 ಪ್ರಾಥಮಿಕ ಶಾಲೆಗಳು, 19 ಪ್ರೌಢಶಾಲೆಗಳು, 9 ಪದವಿ ಪೂರ್ವ ಕಾಲೇಜುಗಳು ಹಾಗೂ 3 ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಸೇರಿವೆ. ಈ ಎಲ್ಲಾ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದು, ಅವರಿಗೆ ಗುಣಮಟ್ಟದ ಮೂಲಸೌಕರ್ಯ ಮತ್ತು ಉತ್ತಮ ಕಲಿಕಾ ವಾತಾವರಣವನ್ನು ಒದಗಿಸಲು 6.85 ಕೋಟಿ ರೂ. ಮೀಸಲಿರಿದೆ. 2026-27ನೇ ಸಾಲಿನಲ್ಲಿ ಶಾಲಾ, ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ನೋಟ್ ಬುಕ್, ಸಮವಸ್ತ್ರ, ಬ್ಯಾಗ್, ಶ್ಯೂ-ಸಾಕ್ಸ್, ಸ್ವೆಟರ್ಗಳನ್ನು ವಿತರಿಸಲು 4.50ಕೋಟಿ ರೂ. ಕಾಯ್ದಿರಿಸಲಾಗಿದೆ.
ಕಮಲಾಪುರ | ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
ಕಲಬುರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಎನ್. ಮೂರ್ತಿ ಸ್ಥಾಪಿತ) ರಾಜ್ಯಾಧ್ಯಕ್ಷರು ಹಾಗೂ ವಿಭಾಗೀಯ ಅಧ್ಯಕ್ಷರ ಆದೇಶದ ಮೇರೆಗೆ, ನಗರದ ಜಗತ್ ಸರ್ಕಲ್ನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರತಿಮೆ ಆವರಣದಲ್ಲಿ ಜಿಲ್ಲಾ ಅಧ್ಯಕ್ಷ ನಾಗರಾಜ ಹೊಸಮನಿ ಅವರ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಭೆ ನಡೆಸಿ ಕಮಲಾಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕು ಅಧ್ಯಕ್ಷರಾಗಿ ದೇವರಾಜ್ ಡಗ್ಗಿ, ಉಪಾಧ್ಯಕ್ಷರಾಗಿ ಅಂಬರಾಯ ಸೊನ್ನೆ, ಪ್ರಧಾನ ಕಾರ್ಯದರ್ಶಿಯಾಗಿ ಜಯವಂತ ಡಗ್ಗಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ ಮಾಂತಿ, ಖಜಾಂಚಿಯಾಗಿ ರೇವಣ್ಣ ಸಿದ್ದಪ್ಪ ಮೋಕೆ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಕುಮಾರ ಸಾರಿಜೋಳಗಿ, ಉಪಾಧ್ಯಕ್ಷ ಗುರುನಾಥ ಸಿಂಗೆ, ಖಜಾಂಚಿ ಶಿವರಾಜ್ ಬೆಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸೇಡಂ | ಕರವೇ ಅಧ್ಯಕ್ಷರಾಗಿ ಬೀರಪ್ಪ ಪೂಜಾರಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ನೇಮಕ
ಸೇಡಂ: ತಾಲೂಕಿನ ವ್ಯಾಪ್ತಿಯ ಕೋಡ್ಲಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೋಡ್ಲಾ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಬೀರಪ್ಪ ಪೂಜಾರಿ ಮತ್ತು ಉಪಾಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ದೇವಂಟಗಿ ಅವರನ್ನು ನೇಮಕ ಮಾಡಲಾಯಿತು. ಸಂಘಟನೆಯ ತಾಲೂಕು ಅಧ್ಯಕ್ಷ ಮೌನೇಶ್ ಬೆನಕನಹಳ್ಳಿ ಅವರು ನೇಮಕಾತಿ ಪತ್ರ ನೀಡಿ, ಶಾಲು ಹಾಕುವುದರ ಮೂಲಕ ಸಂಘಕ್ಕೆ ಬರಮಾಡಿಕೊಂಡರು. ತಾಲೂಕಿನಲ್ಲಿ ಬರುವ ಪ್ರತಿ ಗ್ರಾಮಿಣ ಭಾಗದ ಜನರ ಸಮಸ್ಯೆ ಆಲಿಸಲು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ) ಬಣ ಬಲಪಡಿಸಲು ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದೆ ಎಂದು ಹೇಳಿದರು. ಪ್ರತಿ ಗ್ರಾಮಿಣ ಭಾಗದಲ್ಲಿ ಸರ್ಕಾರ ಸೌಲಭ್ಯ ಪಡೆಯದೇ ವಂಚಿತರಾಗಿರುವ ಜನರ ಹತ್ತಿರ ತೆರಳಿ ಸಮಸ್ಯೆಗಳು ಆಲಿಸಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಮುಂದಾಗಬೇಕಾಗಿದೆ ಎಂದು ತಿಳಿಸಿದರು. ಈ ವೇಳೆಯಲ್ಲಿ ಅನಂತಕುಮಾರ್ ಹುಳಗೋಳ, ಶಿವರಾಜ್ ಅಳೋಳ್ಳಿ, ಸಂತೋಷ ನಾಮವಾರ, ಸಾಗರ, ಶರಣು, ಮಹೇಶ್, ಮೌನೇಶ್ ಇದ್ದರು.
ಚಿತ್ತಾಪುರದಲ್ಲಿ ಅತೀ ಶೀಘ್ರದಲ್ಲಿ ಬಸವ ನಿರ್ಮಾಣಕ್ಕೆ ಅಡಿಗಲ್ಲು : ನಾಗರೆಡ್ಡಿ ಪಾಟೀಲ್
ಚಿತ್ತಾಪುರ : ತಾಲೂಕಿನ ಬಸವ ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿದ್ದ ಬಸವ ಭವನ ನಿರ್ಮಾಣಕ್ಕೆ ಶೀಘ್ರದಲ್ಲೇ ಅಡಿಗಲ್ಲು ನೆರವೇರಿಸಲಾಗುವುದು ಎಂದು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸಿದ್ದಾರೆ. ಪಟ್ಟಣದ ಅಣ್ಣಾರಾವ ಪಾಟೀಲ ಅಡತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಭವನ ನಿರ್ಮಾಣಕ್ಕಾಗಿ ಈಗಾಗಲೇ 2 ಎಕರೆ ಜಮೀನು ಖರೀದಿಸಲಾಗಿದ್ದು, ಕಂಪೌಂಡ್ ಗೋಡೆಯನ್ನೂ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಸರ್ಕಾರದಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ದಾನಿಗಳ ಸಹಾಯದಿಂದ ಭವನ ಹಾಗೂ ವಸತಿ ನಿಲಯ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಬಸವ ಭವನದ ಜೊತೆಗೆ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ 50 ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತದೆ. ಭವನದಿಂದ ಲಭಿಸುವ ಆದಾಯದ ಮೂಲಕ ವಸತಿ ನಿಲಯವನ್ನು ನಿರ್ವಹಿಸಲಾಗುವುದು ಎಂದು ವಿವರಿಸಿದರು. ಈ ಹಿನ್ನೆಲೆಯಲ್ಲಿ ಮಾ.29 ರಂದು ಬೆಳಗ್ಗೆ 10 ಗಂಟೆಗೆ ಬಸವ ಭವನ ನಿರ್ಮಾಣಕ್ಕೆ ನಿಗದಿಪಡಿಸಿದ ಸ್ಥಳದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಸಮಾಜದ ಹಿತೈಷಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು. ಎಲ್ಲರ ಸಹಕಾರದಿಂದ ಬಸವ ಜಯಂತಿಯೊಳಗಾಗಿ ಭವನ ನಿರ್ಮಾಣ ಪೂರ್ಣಗೊಳಿಸುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಡಾ.ಪ್ರಭುರಾಜ ಕಾಂತಾ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಅಣ್ಣಾರಾವ ಪಾಟೀಲ ಮುಡಬೂಳ, ಅಶೋಕ ನಿಪ್ಪಾಣಿ, ಅನಿಲ್ ವಡ್ಡಡಗಿ ಇದ್ದರು.
SSLC: ಕರ್ನಾಟಕದ ಎಸ್ಎಸ್ಎಲ್ಸಿ (SSLC) ಫಲಿತಾಂಶದಲ್ಲಿ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಅಂಕಗಳ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡ.ಟಿ.ಎ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ) ಅಂಕಗಳನ್ನು ಒಟ್ಟು
ಇದು ಬಂಗಾಳ, ಉತ್ತರ ಪ್ರದೇಶವಲ್ಲ: ಟಿಎಂಸಿ ತಿರುಗೇಟು
ಶಹಾಬಾದ್ | ಜೆಡಿಎಸ್ ತಾಲೂಕಾಧ್ಯಕ್ಷರಾಗಿ ಅಬ್ದುಲ್ ಘನಿ ಸಾಬೀರ ನೇಮಕ
ಶಹಾಬಾದ್ : ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೆದಾರ ನೇತೃತ್ವದಲ್ಲಿ ಶಹಾಬಾದ್ ತಾಲೂಕಿನ ಜೆ.ಡಿ.ಎಸ ಪಕ್ಷದ ಅಧ್ಯಕ್ಷರನ್ನಾಗಿ ಅಬ್ದುಲ್ ಘನಿ ಸಾಬೀರ ಅವರನ್ನು ಮರು ನೇಮಕ ಮಾಡಿ ಆದೇಶ ಪತ್ರ ನೀಡಿ ಗೌರವಿಸಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಮಾತನಾಡಿ, ಅಬ್ದುಲ್ ಘನಿ ಸಾಬೀರ ಅವರಿಗೆ ನೀಡಿದ ಗುರುತರವಾದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದಾರೆ. ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ, ತಮ್ಮ ವ್ಯಾಪ್ತಿಯ ಎಲ್ಲಾ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಹಾಬಾದ್ ತಾಲ್ಲಕಿನಲ್ಲಿ ಜನತಾದಳ (ಜಾತ್ಯಾತೀತ) ಪಕ್ಷದಿಂದ ಜನಪರವಾದ ಹೋರಾಟಗಳನ್ನು ಮಾಡುವ ಮೂಲಕ ಜನರಿಂದ ಸೈ ಎನಿಸಿಕೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಸೈಯದ್ ಜಾಫರ್ ಹುಸೇನ್, ಶಾಮರಾವ ಸೂರನ, ಬಸವರಾಜ ಬೀರಬಿಟ್ಟಿ, ಹನುಮಯ್ಯ ಗುತ್ತೇದಾರ, ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಪ್ರವೀಣ ಜಾಧವ್, ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಮುಹಮ್ಮದ್ ರಿಝ್ವಾನ್, ಹಿರಾಲಾಲ ಪವಾರ, ಹನುಮಾನ್ ಕಾಂಬಳೆ, ಶೇಖ ಮೆಹಬೂಬ ಗೋಗಿ, ಮಲ್ಲಿಕಾರ್ಜುನ ಹಳ್ಳಿ, ಮೊಮ್ಮದ್ ಇಮ್ರಾನ, ಸಿದ್ದಲಿಂಗ ಮೂಡಬೂಳ, ಶ್ರೀಧರ ಕೊಲ್ಲೂರ, ಸೈಯದ್ ಅರ್ಷದ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Lockdown: ಭಾರತದಲ್ಲಿ ಲಾಕ್ಡೌನ್ ಇಲ್ಲ: ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ
ನವದೆಹಲಿ: ಜಾಗತಿಕವಾಗಿ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತು ಪೂರೈಕೆ ಸರಪಳಿಯಲ್ಲಿನ ಏರುಪೇರುಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಕೋವಿಡ್ ಸಮಯದಂತೆ ಲಾಕ್ಡೌನ್ ಜಾರಿಯಾಗಲಿದೆ ಎಂಬ ವದಂತಿಗಳು ಹರಡಿದ್ದವು. ಇದಕ್ಕೆ ಕೇಂದ್ರ ಸರ್ಕಾರ ಕೊನೆಗೂ ತೆರೆ ಎಳೆದಿದೆ. ಯಾವುದೇ ರೀತಿಯ ಲಾಕ್ಡೌನ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ, ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಮತ್ತು ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು
ದ.ಕ.ಜಿಲ್ಲಾ ಮಟ್ಟದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಬಂಟ್ವಾಳ: ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದ ಪಂಜೆ ಮಂಗೇಶರಾಯ ಸಭಾಂಗಣ, ರಾಣಿ ಅಬ್ಬಕ್ಕ ವೇದಿಕೆಯಲ್ಲಿ ದ.ಕ.ಜಿಲ್ಲಾ ಮಟ್ಟದ 28 ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ ಉದ್ಘಾಟನೆಗೊಂಡಿತು. ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಕೈ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಬಂಟ್ವಾಳ ತಹಶೀಲ್ದಾರ್ ಜಿ.ಮಂಜುನಾಥ್ ರಾಷ್ಟ ಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಶ್ರೀನಾಥ ಪರಿಷತ್ತಿನ ಧ್ವಜಾರೋಹಣ, ಕಸಾಪ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು. ಕರಾವಳಿ ವಾಚಕಿಯರ -ಲೇಖಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ.ಶೆಟ್ಟಿ ವಸ್ತು ಪ್ರದರ್ಶನ ಹಾಗೂ ಜ್ಯೋತಿಷ್ಯ ಚೈತನ್ಯ ಕಲ್ಯಾಣತ್ತಾಯ ಪುಸ್ತಕ ಮಳಿಗೆ ಉದ್ಘಾಟಿಸಿದರು. ಹಿರಿಯ ಸಾಹಿತಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಪ್ರಭಾಕರ ಶಿಶಿಲ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಎರಕಳ, ಕಸಾಪ ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪಿಯೂಷ್ ಎಲ್ ರೋಡ್ರಿಗಸ್, ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ, ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ಜಿಲ್ಲಾ ವಾರ್ತಾಧಿ ಕಾರಿ ಖಾದರ್ ಷಾ, ವಿವಿಧ ತಾಲೂಕು ಕಸಾಪ ಅಧ್ಯಕ್ಷರುಗಳಾದ ಚಂದ್ರಶೇಖರ್ ಪೇರಾಲು ಸುಳ್ಯ, ಡಿ.ಯದುಪತಿ ಗೌಡ ಬೆಳ್ತಂಗಡಿ , ಮಂಜುನಾಥ ಎಸ್. ರೇವಣ್ಕರ್ ಮಂಗಳೂರು, ಕೆ.ಸೇಸಪ್ಪ ರೈ ಕಡಬ, ಉಮೇಶ್ ನಾಯಕ್ ಪುತ್ತೂರು, ಮಿಥುನ್ ಉಡುಪಿ ಮೂಲ್ಕಿ ಮೊದಲಾದವರು ಉಪಸ್ಥಿತರಿದ್ದರು. ಕಸಾಪ ಜಿಲ್ಲಾಧ್ಯಕ್ಷ ಎಂ ಪಿ ಶ್ರೀನಾಥ್ ಸ್ವಾಗತಿಸಿ, ಕಸಾಪ ಗೌರವ ಕಾರ್ಯದರ್ಶಿ ಎಚ್.ವಿನಯ ಆಚಾರ್ಯ ವಂದಿಸಿದರು. ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಸಮ್ಮೇಳನ ರಾಜೇಶ್ ಪೊಳಲಿ ಮತ್ತು ಬಳಗದವರಿಂದ ವಾದ್ಯ ಸಂಗೀತ, ದಕ್ಷಿಣ ಕನ್ನಡ ಜಿಲ್ಲೆಯ ಭಾಷಾ ಸಾಮರಸ್ಯದ ಬಗ್ಗೆ ಗೋಷ್ಠಿ, ಬೆಂಜನಪದವಿನ ಕೆನರಾ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ನೂತನ ಕೃತಿಗಳ ಲೋಕಾರ್ಪಣೆ, ಡಿವಿಜಿ ಯಾವುದೇ ಕಗ್ಗ ರಸಧಾರೆ ವಿಶೇಷ ಉಪನ್ಯಾಸ, ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಯ ಬಗ್ಗೆ ಗೋಷ್ಠಿ, ವಾಚನ-ಗಾಯನ-ಕುಂಚ ಕವಿಗೋಷ್ಠಿ, ಅಗಲಿದ ಗಣ್ಯರಿಗೆ ನುಡಿ ನಮನ, ದಕ ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಷನ್ ತಂಡದಿಂದ ಮುಸ್ಲಿಂ ಸಾಂಪ್ರದಾಯಿಕ ದಫ್ ಕಾರ್ಯಕ್ರಮ, ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿಯಿಂದ ನಾಟ್ಯರಂಜನಿ ಹಾಗೂ ಸ್ಥಳೀಯ ಗಾಯಕರಿಂದ ರಸಮಂಜರಿ ಕಾರ್ಯಕ್ರಮಗಳು ನಡೆದವು.
ದಾರ್ಶನಿಕರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪ: ಎಂ.ಎ.ಗಫೂರ್
ಉಡುಪಿ, ಮಾ.27: ತಿಗಳ ಸಮುದಾಯದ ಆರಾಧ್ಯದೈವರೆನಿಸಿದ ಶ್ರೀಅಗ್ನಿಬನ್ನಿರಾಯರಂತಹ ಮಹಾನ್ ದಾರ್ಶನಿ ಕರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪವಾಗಿದೆ ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಪೂರ್ ಹೇಳಿದ್ದಾರೆ. ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶ್ರಮದ ಬದುಕಿಗೆ ಹೆಸರಾದ ತಿಗಳ ಸಮುದಾಯದವರು ಅಗ್ನಿಬನ್ನಿರಾಯ ಅವರನ್ನು ಸಮಾಜ ಸುಧಾರಕರೆಂದು ಆರಾಧಿಸುತ್ತಿದ್ದಾರೆ. ಸುಮಾರು 10, 11 ಹಾಗೂ 12ನೇ ಶತಮಾನದಲ್ಲಿ ಹಲವಾರು ವಚನಕಾರರು, ಸಮಾಜ ಸುಧಾರಕರು, ದಾರ್ಶನಿಕರು ಜನಿಸಿ ಸಮಾಜದಲ್ಲಿನ ಲೋಪದೋಷಗಳನ್ನು ಸರಿಪಡಿಸುವುದರೊಂದಿಗೆ ಸಮ ಸಮಾಜ ನಿರ್ಮಾಣಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದು ಗಫೂರ್ ಅಭಿಪ್ರಾಯಪಟ್ಟರು. ಸಾಂಸ್ಕೃತಿಕ ಚಿಂತಕ ಡಾ.ಶ್ರೀಕಾಂತ್ ಸಿದ್ಧಾಪುರ ಅಗ್ನಿ ಬನ್ನಿರಾಯರ ಕುರಿತಂತೆ ವಿಶೇಷ ಉಪನ್ಯಾಸ ನೀಡಿ, ಜನಪದ ಹಾಗೂ ಪೌರಾಣಿಕ ಮೂಲದಿಂದ ಅಗ್ನಿ ಬನ್ನಿರಾಯ ಬಗ್ಗೆ ಕಥೆಗಳು ನಮಗೆ ದೊರಕುತ್ತವೆ. ಭಾಷಾವಾರು ಪ್ರಾಂತ್ಯ ರಚನೆ ಆಗುವ ಮೊದಲು ತಿಗಳರು ತಮ್ಮ ರಾಜ್ಯ ರಕ್ಷಣೆ ಹಾಗೂ ಸ್ವಾಮಿ ನಿಷ್ಠೆಗಾಗಿ ಸೈನ್ಯ ಸೇರಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ಶಾಸನದಲ್ಲಿ ತಿಳಿದು ಬರುತ್ತದೆ ಎಂದರು. ತಿಗಳ ಸಮುದಾಯದವರನ್ನು ಹೆಚ್ಚಾಗಿ ಬೆಂಗಳೂರು, ಮೈಸೂರು, ಮಂಡ್ಯ ಭಾಗದಲ್ಲಿ ಕಾಣಬಹುದಾಗಿದೆ. ಲಕ್ಷಾಂತರ ಜನರನ್ನು ಹೊಂದಿದ ಈ ಸಮುದಾಯದ ಅಭಿವೃದ್ಧಿಗಾಗಿ ಸರಕಾರವು ತಿಗಳ ಸಮುದಾಯ ಅಭಿವೃದ್ಧಿ ನಿಗಮವನ್ನು ಸಹ ಸ್ಥಾಪಿಸಿದೆ ಎಂದ ಡಾ.ಸಿದ್ಧಾಪುರ, ತೋಟಗಾರಿಕೆಯಲ್ಲಿ ಕೌಶಲ ಹೊಂದಿದ ತಿಗಳರು ಬೆಂಗಳೂರಿನ ಲಾಲ್ಬಾಗ್ ಉದ್ಯಾನವನ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದು, ಅಲ್ಲಿನ ಕೈತೋಟಗಳ ರಚನೆಗಳು ಇಂದು ಇಡೀ ವಿಶ್ವದ ಗಮನ ಸೆಳೆಯುತ್ತಿದೆ ಎಂದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಮಾತನಾಡಿ, ವಿವಿಧ ಸಮುದಾಯಗಳಲ್ಲಿ ಸೇವೆ ಸಲ್ಲಿಸಿದ ಸಂತರ, ಚಿಂತಕರ ಜಯಂತಿ ಗಳನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ. ಅವರು ನಾಡಿಗೆ ನೀಡಿದ ಉದಾತ್ತ ಕೊಡುಗೆಗಳನ್ನು ಸ್ಮರಿಸುತ್ತಾ, ಅದನ್ನು ಸ್ಪೂರ್ತಿಯಾಗಿ ಯುವಜನತೆ ತೆಗೆದುಕೊಳ್ಳಬೇಕು. ಅವರ ಉದಾತ್ತ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ನವನೀತ್ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ವರ್ಷಾ ಬಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ರಾಮಾಂಜಿ ವಂದಿಸಿದರು.
ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಕಲ್ಕತ್ತಾ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಶಾಹಿದುಲ್ಲಾ ಮುನ್ಶಿ ಹೆಸರೇ ಮಾಯ!
ಕೋಲ್ಕತಾ,ಮಾ.27: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಪರಿಶೀಲನೆ ಪ್ರಕ್ರಿಯೆಯ ಬಳಿಕ ಕಲ್ಕತ್ತಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಶಾಹಿದುಲ್ಲಾ ಮುನ್ಶಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ತನ್ನ ಪತ್ನಿ ಮತ್ತು ಹಿರಿಯ ಪುತ್ರನ ಹೆಸರುಗಳು ಈಗಲೂ ಪರಿಶೀಲನೆಯ ಹಂತದಲ್ಲಿವೆ. ತನ್ನ ಕಿರಿಯ ಮಗ ಹೊಸ ಮತದಾರನಾಗಿ ಅರ್ಜಿ ಸಲ್ಲಿಸಿದ್ದಾನೆ ಎಂದು ಪ್ರಸ್ತುತ ಪಶ್ಚಿಮ ಬಂಗಾಳ ವಕ್ಫ್ ಮಂಡಳಿಯ ಅಧ್ಯಕ್ಷರಾಗಿರುವ ಮುನ್ಶಿ ಸುದ್ದಿಸಂಸ್ಥೆಗೆ ತಿಳಿಸಿದರು. ‘ಇಲ್ಲಿಯವರೆಗೆ ನನ್ನ ಹೆಸರನ್ನು ಮಾತ್ರ ಅಳಿಸಲಾಗಿದೆ ’ ಎಂದ ಅವರು, ಇದು ತುಂಬ ಅವಮಾನಕಾರಿ ಮತ್ತು ನೋವಿನಿಂದ ಕೂಡಿದೆ. ಬಹಳಷ್ಟು ಕಿರುಕುಳವಾಗಿದೆ. ದುರದೃಷ್ಟಕರ ವಿಷಯವೆಂದರೆ ಅವರು ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದರು ಮತ್ತು ಅವುಗಳನ್ನು ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದರು. ಆದರೆ ಯಾವುದೇ ರಸೀದಿಯನ್ನು ನೀಡಲಾಗಿಲ್ಲ ಎಂದು ಹೇಳಿದರು. ಮುನ್ಶಿ ಈಗ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಲು ಕಾಯುತ್ತಿದ್ದಾರೆ. ತನ್ನ ಹೆಸರನ್ನು ರದ್ದುಗೊಳಿಸಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಅವರು, ‘ಅಗತ್ಯವಿರುವ ಎಲ್ಲ ದಾಖಲೆಗಳನ್ನು ನಾನು ಸಲ್ಲಿಸಿದ್ದೇನೆ. ಅವರು ಹೇಗೆ ತೀರ್ಮಾನ ಕೈಗೊಂಡರು ಮತ್ತು ನನ್ನ ಹೆಸರನ್ನು ಹೇಗೆ ಅಳಿಸಿದರು ಎನ್ನುವುದು ನನಗೆ ತಿಳಿದಿಲ್ಲ. ನಮ್ಮನ್ನು ಕತ್ತಲೆಯಲ್ಲಿಡಲಾಗಿತ್ತು. ಹೆಚ್ಚಿನ ದಾಖಲೆಗಳು ಬೇಕಾಗಿವೆ ಎಂದು ಅವರು ನಮಗೆ ತಿಳಿಸಿದ್ದರೆ ಅವುಗಳನ್ನು ನಾವು ಸಲ್ಲಿಸಬಹುದಿತ್ತು. ದಾಖಲೆಗಳ ಪಟ್ಟಿಯಿತ್ತು ಮತ್ತು ಅವುಗಳಲ್ಲಿ ಯಾವುದೇ ಒಂದು ಸಾಕಾಗುತ್ತಿತ್ತು ’ ಎಂದು ಹೇಳಿದರು. ಆದಾಗ್ಯೂ,ತನ್ನ ಹೆಸರನ್ನು ಅಳಿಸಿದ್ದಕ್ಕಾಗಿ ತಾನು ಯಾರನ್ನೂ ದೂರುವುದಿಲ್ಲ ಎಂದ ಅವರು, ‘ಎಲ್ಲವನ್ನೂ ತರಾತುರಿಯಲ್ಲಿ ಮಾಡಿದ್ದರಿಂದ ಅವರು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿರಲಿಕ್ಕಿಲ್ಲ ಎಂದು ನಾನು ಭಾವಿಸಿದ್ದೇನೆ. ಯಾವುದೇ ವಿವಾದವಾಗದಂತೆ ನನ್ನ ಪಾಸ್ಪೋರ್ಟ್ನ್ನೂ ಸಲ್ಲಿಸಿದ್ದೆ’ ಎಂದು ಹೇಳಿದರು. ಮೇಲ್ಮನವಿಯನ್ನು ಸಲ್ಲಿಸುವ ಮುನ್ನ ತನ್ನ ಹೆಸರನ್ನು ತೆಗೆದುಹಾಕಲು ಅಧಿಕೃತ ಕಾರಣಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಮಾಜಿ ನ್ಯಾಯಾಧೀಶರು ತಿಳಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಇದೀಗ ಕಣದಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಮಾತನಾಡಿ ಈ ಬೆಳವಣಿಗೆ ಸಂತೋಷ ತಂದಿದೆ. ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್ಸಿಗೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಇರುತ್ತಾರೆ ಎಂದರು. ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಅಭಿನಂದನೆ ಸಲ್ಲಿಸಿದರು. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
ರಸ್ತೆ ಕಾಂಕ್ರೀಟೀಕರಣ ಕಾಮಗಾರಿ: ವಾಹನ ಸಂಚಾರ ನಿರ್ಬಂಧ
ಉಡುಪಿ, ಮಾ.27:ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ ವಾರ್ಡಿನ ಇಂಡಸ್ಟ್ರಿಯಲ್ ಏರಿಯಾ ಕಲ್ಯಾಣಿ ಆರ್.ಎಂ.ಸಿಯಿಂದ ಕೆ.ಇ.ಬಿ ಕಚೇರಿವರೆಗಿನರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಹಾಗೂ ಕಾಮಗಾರಿ ಪೂರ್ಣ ಗೊಳ್ಳುವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾಲಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಕಲಬುರಗಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
56,432 ಹುದ್ದೆಗಳ ಭರ್ತಿಗೆ ಸಹಸ್ರಾರು ಆಕಾಂಕ್ಷಿಗಳ ಪಟ್ಟು
ಮಾ.28, 29ರಂದು ಉಪ ನೋಂದಣಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಣೆ
ಉಡುಪಿ, ಮಾ.27: ರಾಜ್ಯದ ಎಲ್ಲಾ ಉಪ ನೊಂದಣಿ ಕಚೇರಿಗಳು ಮಾರ್ಚ್ 28 ಮತ್ತು 29ರಂದು (ಶನಿವಾರ ಮತ್ತು ರವಿವಾರ) ಕರ್ತವ್ಯ ನಿರ್ವಹಿಸುವ ಬಗ್ಗೆ ರಾಜ್ಯ ಸರಕಾರದಿಂದ ಆದೇಶ ಹೊರಡಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಗಳು ಶನಿವಾರ ಮತ್ತು ರವಿವಾರದಂದು ಕಾರ್ಯನಿರ್ವಹಿಸಲಿವೆ ಎಂದು ಉಡುಪಿ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ವರ್ಷಗಳಲ್ಲಿ ಮೋದಿ ಸರಕಾರದಿಂದ 43 ಲಕ್ಷ ಕೋಟಿ ರೂ. ಲೂಟಿ : ರಣದೀಪ್ ಸಿಂಗ್ ಸುರ್ಜೇವಾಲ ಆರೋಪ
‘ಪ್ರತಿನಿತ್ಯ ಪೆಟ್ರೋಲ್-ಡೀಸೆಲ್ ತೆರಿಗೆ ಮೂಲಕ 1 ಸಾವಿರ ಕೋಟಿ ರೂ.ದರೋಡೆ’
ಬೆಂಗಳೂರು : ಬೆಂಗಳೂರು ಉತ್ತರ ತಾಲೂಕು ಜಾರಕಬಂಡೆ ಶ್ರೀಗಂಧದ ಕಾವಲ್ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿಯ ಮರು ವಶಕ್ಕೆ ಕೂಡಲೇ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 ‘ಎ’ ಅಡಿ ಪ್ರಕ್ರಿಯೆ ಆರಂಭಿಸಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಶುಕ್ರವಾರ ಈ ಸಂಬಂಧ ಅಪರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಎರಡು ಪ್ರತ್ಯೇಕ ಸೂಚನೆ ನೀಡಿರುವ ಅವರು, ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ವಾಯುಪಡೆಗೆ ನೀಡಲಾಗಿದ್ದ 452 ಎಕರೆ ಭೂ ಮಂಜೂರಾತಿಯನ್ನು ರಾಜ್ಯ ಸರಕಾರ 2017ರ ಅಕ್ಟೋಬರ್ 9ರಂದು ರದ್ದುಗೊಳಿಸಿದ್ದು, ಇದನ್ನು ಅತ್ಯಗತ್ಯವಾದ ಶ್ವಾಸ ತಾಣವಾಗಿ ಉಳಿಸಲು ತೀರ್ಮಾನಿಸಲಾಗಿದ್ದು, ಕೂಡಲೇ ತೆರವಿಗೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ರಾಷ್ಟ್ರೀಯ ಹಿತದ ದೃಷ್ಟಿಯಿಂದ ಭೂಮಂಜೂರಾತಿ ರದ್ದು ಪಡಿಸಿದ ಬಳಿಕವೂ ಭಾರತೀಯ ವಾಯುಪಡೆ ಸದರಿ ಭೂಮಿಯನ್ನು ಬಳಸಲು, ಅರಣ್ಯ(ಸಂರಕ್ಷಣಾ) ಕಾಯ್ದೆ-1980 ರಡಿಯಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಪರ್ಯಾಯ ಭೂಮಿ ನೀಡುವಂತೆ ತಿಳಿಸಿದ್ದರೂ ವಾಯುಪಡೆ ನಿಯಮ ಉಲ್ಲಂಘಿಸಿದೆ. ಈ ನಿಟ್ಟಿನಲ್ಲಿ 64 ‘ಎ’ ನೋಟಿಸ್ ನೀಡಿ ಒತ್ತುವರಿ ತೆರವು ಮಾಡಿಸಬೇಕು ಎಂದು ಅವರು ಸೂಚಿಸಿದ್ದಾರೆ. ಈ ಜಮೀನಿಗೂ ವಾಯುಪಡೆಗೂ ಯಾವುದೇ ಸಂಬಂಧ ಇರುವುದಿಲ್ಲ. ಇನ್ನು ಮುಂದೆ ಸದರಿ ಪ್ರದೇಶದಲ್ಲಿ ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ನಿಯಮಾನುಸಾರ ಅರಣ್ಯ ಇಲಾಖೆಯಿಂದ (ಪರಿವೇಶ್ ಪೊರ್ಟಲ್ನಲ್ಲಿ ಅರ್ಜಿ ಸಲ್ಲಿಸಿ) ಅನುಮತಿ ಪಡೆಯುವಂತೆ ಸುತ್ತೋಲೆ ಹೊರಡಿಸಲು ಮತ್ತು ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಲು ಕ್ರಮ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಇಸ್ರೇಲ್-ಅಮೆರಿಕ ಮೇಲೆ ದಾಳಿಗೆ ಬಳಸಿದ ಕ್ಷಿಪಣಿಗಳ ಮೇಲೆ \ಭಾರತೀಯರಿಗೆ ಧನ್ಯವಾದ\ ಎಂದು ಬರೆದ ಇರಾನ್
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಉಲ್ಬಣಗೊಂಡಿದ್ದು, ಅಮೆರಿಕ ಮತ್ತು ಇಸ್ರೇಲ್ನ ಆಯಕಟ್ಟಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಬೃಹತ್ ಕ್ಷಿಪಣಿ ದಾಳಿ ನಡೆಸಿದೆ. 'ಆಪರೇಷನ್ ಟ್ರೂ ಪ್ರಾಮಿಸ್ 4' ಅಡಿಯಲ್ಲಿ ಶುಕ್ರವಾರ ಮುಂಜಾನೆ 83ನೇ ಹಂತದ ಸರಣಿ ದಾಳಿಯನ್ನು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯಶಸ್ವಿಯಾಗಿ ಪೂರೈಸಿದೆ. ಈ ದಾಳಿಯ ಬೆನ್ನಲ್ಲೇ ಮುಂಬೈನಲ್ಲಿರುವ
ತನ್ನ ಪ್ರಮುಖ ಉದ್ಯೋಗಿಗಳು OpenAIಗೆ ಹೋಗುವುದನ್ನು ತಡೆಯಲು ಬೋನಸ್ ಪ್ರಕಟಿಸಿದ ಆ್ಯಪಲ್ ಕಂಪನಿ!
ಆ್ಯಪಲ್ ಕಂಪನಿ ಸಿಬ್ಬಂದಿ ಸದಸ್ಯರಿಗೆ ಬೃಹತ್ ಅಕಾಲಿಕ ಬೋನಸ್ಗಳನ್ನು ನೀಡುತ್ತಿದೆ. ಆ್ಯಪಲ್ ಕಂಪನಿ ತನ್ನ ವಿನ್ಯಾಸ ತಂಡಕ್ಕೆ 400,000 ಡಾಲರ್ (ಸುಮಾರು 3.76 ಕೋಟಿ ರೂ.) ಮೌಲ್ಯದ ಷೇರು ಆಯ್ಕೆಗಳನ್ನು ನೀಡುತ್ತಿದೆ. Bloomberg ವರದಿ ಮಾಡಿರುವ ಪ್ರಕಾರ ಈಗಿನ ಬೋನಸ್ ಸಾಮಾನ್ಯವಾಗಿ ಆ್ಯಪಲ್ ಉದ್ಯೋಗಿಗಳು ಪಡೆಯುವ ಬೋನಸ್ಗಳ ಭಾಗವಲ್ಲ. ಈ ಬೋನಸ್ಗಳನ್ನು 200,000 ಡಾಲರ್ ನಿಂದ (ಸುಮಾರು ರೂ. 1.88 ಕೋಟಿ) 400,000 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನದನ್ನು ನಿರ್ಬಂಧಿತ ಷೇರು ಯುನಿಟ್ಗಳಾಗಿ (RSU) ಒದಗಿಸಲಾಗುತ್ತಿದೆ. ನಾಲ್ಕು ವರ್ಷಗಳ ಅವಧಿಗೆ ಇದನ್ನು ನೀಡಲಾಗುತ್ತದೆ. ಆ್ಯಪಲ್ ಕಂಪನಿ ಏಕೆ ಬೋನಸ್ ನೀಡುತ್ತಿದೆ? ಕಂಪನಿಯು ತನ್ನ ಶತ್ರು ಕಂಪನಿಗಳಿಂದ ಬೆದರಿಕೆ ಎದುರಿಸುತ್ತಿದೆ. OpenAI ನಂತಹ ಕಂಪನಿಗಳು ಆ್ಯಪಲ್ ವಿನ್ಯಾಸಕರಿಗೆ ಬಲೆ ಬೀಸುತ್ತಿರುವ ಕಾರಣದಿಂದ ಪ್ರಮುಖ ವಿನ್ಯಾಸಕರು ಕಂಪನಿ ತೊರೆಯುವ ಕಳವಳದಿಂದಾಗಿ ಈ ಬೋನಸ್ ನೀಡಲಾಗುತ್ತಿದೆ ಎಂದು ವರದಿ ಹೇಳಿದೆ. ಈ ಹಿಂದಿನ ವರದಿಗಳ ಪ್ರಕಾರ OpenAI ಕಂಪನಿ ಈಗಾಗಲೇ 40 ಮಾಜಿ ಆ್ಯಪಲ್ ಉದ್ಯೋಗಿಗಳನ್ನು ತನ್ನ ಹಾರ್ಡ್ವೇರ್ ವಿಭಾಗದಲ್ಲಿ ನೇಮಿಸಿಕೊಂಡಿದೆ. ಈ ಹಾರ್ಡ್ ವೇರ್ ವಿಭಾಗವನ್ನು ಮಾಜಿ ಆ್ಯಪಲ್ ವಿನ್ಯಾಸಕ ಮುಖ್ಯಸ್ಥ ಜಾನಿ ಐವ್ ಅವರ ನೇತೃತ್ವದಲ್ಲಿದೆ. ಆದರೆ ಆ್ಯಪಲ್ ವಿನ್ಯಾಸಕರಿಗೆ OpenAI ಮತ್ತು ಇತರ ಸ್ಟಾರ್ಟಪ್ ಗಳು ನೀಡುವ ವೇತನ ಮತ್ತು ಭತ್ಯೆಗಳಿಗೆ ಹೋಲಿಸಿದರೆ ಈಗಿನ ಬೋನಸ್ ಹೆಚ್ಚೇನೂ ಉತ್ತಮ ಭತ್ಯೆಯಲ್ಲ. OpenAI ನ ಹಾರ್ಡ್ವೇರ್ ತಂಡದಲ್ಲಿ ಮಾಜಿ ಆ್ಯಪಲ್ ನಾಯಕರಾದ ಟ್ಯಾಂಗ್ ಟ್ಯಾನ್ ಮೊದಲಾದವರಿದ್ದಾರೆ. ಟ್ಯಾಂಗ್ ಟ್ಯಾನ್ 2023ರಲ್ಲಿ OpenAI ನ ಹಾರ್ಡ್ವೇರ್ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು. OpenAI ತನ್ನ ಮೊದಲ ಹಾರ್ಡ್ವೇರ್ ಉತ್ಪನ್ನವನ್ನು 2026ರಲ್ಲಿ ಹೊರ ತರುವ ಸಾಧ್ಯತೆ ಇರುವುದರಿಂದ ಮಾಜಿ ಆ್ಯಪಲ್ ಸಿಬ್ಬಂದಿಗಳಿಂದ ಅತ್ಯುತ್ತಮ ಲಾಭ ಮಾಡಿಕೊಂಡಿರುವುದು ಖಚಿತವಾಗಿದೆ. ಈ ಹಿಂದೆಯೂ ಪ್ರತಿಭೆಗಳು ಪಲಾಯನಗೈಯುವುದನ್ನು ತಪ್ಪಿಸಲು ಆ್ಯಪಲ್ ಕಂಪನಿ ಇಂತಹ ಕ್ರಮ ಕೈಗೊಂಡಿತ್ತು. 2021 ಮತ್ತು 2022ರಲ್ಲೂ ಕಂಪನಿ ವಿನ್ಯಾಸ, ಹಾರ್ಡ್ವೇರ್, ಸಾಫ್ಟ್ವೇರ್ ಮತ್ತು ಆಪರೇಶನ್ಸ್ ವಿಭಾಗದಲ್ಲಿ ಪ್ರತಿಭೆಗಳಿಗೆ ಇತರ ಕಂಪನಿಗಳು ಬಲೆ ಬೀಸುವ ಸಾಧ್ಯತೆಯಿಂದ ಬೋನಸ್ ಯೋಜನೆಗಳನ್ನು ತಂದಿತ್ತು. ಆ್ಯಪಲ್ ಕಂಪನಿ ತನ್ನದೇ AI-ಚಾಲಿತ ಹಾರ್ಡ್ವೇರ್ ಯೋಜನೆಗಳನ್ನು ಸಿದ್ಧಪಡಿಸಲು ಯೋಜಿಸುತ್ತಿರುವಾಗ ಪ್ರತಿಭೆಗಳ ನಿರ್ಗಮನಗಳು ಸವಾಲೊಡ್ಡಿವೆ. ಸ್ಮಾರ್ಟ್ ಹೋಮ್ ಸಾಧನಗಳು, ರೋಬೊಟಿಕ್ಸ್, ಕ್ಯಾಮರಾಗಳೊಂದಿಗೆ AI-ಚಾಲಿತ ಏರ್ಪಾಡ್ಗಳು ಮತ್ತು ಜಾನ್ ಟೆರ್ನಸ್ ನೇತೃತ್ವದ ಸ್ಮಾರ್ಟ್ ಗ್ಲಾಸ್ಗಳು ಸೇರಿವೆ. ಅನುಭವಿ ಎಂಜಿನಿಯರ್ಗಳು ಕಂಪನಿ ತೊರೆಯುವುದರಿಂದ ಆ್ಯಪಲ್ ಕಂಪನಿಯ ಪ್ರಗತಿಯ ಮೇಲೆ ಬರೆ ಎಳೆಯಬಹುದು. ಆ್ಯಪಲ್ ಕಂಪನಿ ತನ್ನದೇ AI-ಸ್ಪರ್ಧೆಯಲ್ಲಿದೆ. ಈಗಾಗಲೇ ಸಿರಿಗೆ ಶಕ್ತಿ ನೀಡಲು ಗೂಗಲ್ನ ಜೆಮಿನಿ ಮಾಡೆಲ್ಗಳೊಂದಿಗೆ ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿದೆ. ವರದಿಗಳ ಪ್ರಕಾರ ಸಿರಿಯನ್ನು ChatGPT ಗೆ ಸಮನಾದ AI ಚಾಟ್ಬಾಟ್ ಆಗಿ ಪರಿವರ್ತಿಸುವ ಉದ್ದೇಶವಿದೆ. ಈ ವರ್ಷದ ಅಂತ್ಯದಲ್ಲಿ ಆಯೋಜಿಸಲಾಗುವ ಆ್ಯಪಲ್ ಕಂಪನಿಯ ವಿಶ್ವವ್ಯಾಪಿ ಡೆವಲಪರ್ಸ್ ಸಮ್ಮೇಳನದಲ್ಲಿ ಜೆಮಿನಿ-ಶಕ್ತಿಯ ಸಿರಿಯನ್ನು ಪ್ರದರ್ಶಿಸುವ ಸಾಧ್ಯತೆಯಿದೆ.
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್
ಬೆಂಗಳೂರಿನಲ್ಲಿ ಶುರುವಾಗುತ್ತಿರುವ ಐಪಿಎಲ್ ಪಂದ್ಯಗಳ ಉಚಿತ ಟಿಕೆಟ್ಗಾಗಿ ಶಾಸಕರು ಪಟ್ಟು ಹಿಡಿದಿರುವ ಬೆನ್ನಲ್ಲೇ ಉಂಟಾಗಿದ್ದ ಗೊಂದಲಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೆರೆ ಎಳೆದಿದ್ದಾರೆ. ಶಾಸಕರ ಬೇಡಿಕೆಯಂತೆ ತಲಾ ನಾಲ್ಕು ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸದ್ಯದ ಮಟ್ಟಿಗೆ ಎಲ್ಲ ಶಾಸಕರು, ಸಚಿವರು ಹಾಗೂ ಸಂಸದರಿಗೆ ತಲಾ ಎರಡು ಟಿಕೆಟ್ ಸಿಗಲಿದೆ ಎಂದು ಸಿಹಿಸುದ್ದಿ ಕೊಟ್ಟಿದ್ದಾರೆ.
Bengaluru | ಲಾರಿ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ಚಾಲಕ ಸಜೀವ ದಹನ
ಬೆಂಗಳೂರು : ಕಬ್ಬಿಣ ತುಂಬಿದ್ದ ಲಾರಿ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಕ್ಯಾಬ್ಗೆ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕ ಕ್ಯಾಬ್ನಲ್ಲಿಯೇ ಸಜೀವ ದಹನವಾಗಿರುವ ದಾರುಣ ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು, ಕಲಬುರ್ಗಿ ಮೂಲದ ಅಂಬದಾಸ್ (23) ಸಜೀವ ದಹನವಾಗಿರುವ ಕ್ಯಾಬ್ ಚಾಲಕ ಎಂದು ಗುರುತಿಸಲಾಗಿದೆ. ವಿಮಾನ ನಿಲ್ದಾಣ ರಸ್ತೆ ಕಡೆ ಶುಕ್ರವಾರ ಮುಂಜಾನೆ ಹೋಗಿದ್ದ ಕಾರಣ ಕುರುಬರಹಳ್ಳಿ ಪೈಪ್ಲೈನ್ನಲ್ಲಿ ಕ್ಯಾಬ್ ನಿಲ್ಲಿಸಿಕೊಂಡು ಅಂಬದಾಸ್ ನಿದ್ರೆಗೆ ಜಾರಿದ್ದಾರೆ. ಇದೇ ವೇಳೆ ಹಿಂಬದಿಯಿಂದ ಬಂದ ಕಬ್ಬಿಣ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಕ್ಯಾಬ್ಗೆ ಗುದ್ದಿಕೊಂಡು ಸುಮಾರು 100 ಮೀಟರ್ ಎಳೆದೊಯ್ದು ರಸ್ತೆ ಬದಿಯ ಗುಜುರಿ ಗೋದಾಮಿಗೆ ಅಪ್ಪಳಿಸಿತು. ಆನಂತರ, ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಹಾಗೂ ಲಾರಿ ಹೊತ್ತಿ ಉರಿದಿದೆ. ಲಾರಿ ಚಾಲಕ ಏನು ಮಾಡಬೇಕೆಂದು ತಿಳಿಯದೆ ಲಾರಿಯಿಂದ ರಾಜಕಾಲುವೆಗೆ ಹಾರಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಈ ಎರಡು ವಾಹನಗಳು ಹಾಗೂ ಗೋದಾಮಿಗೂ ಸಹ ಹೊತ್ತಿ ಉರಿಯುತ್ತಿರುವು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ನಾಲ್ಕು ಅಗ್ನಿ ಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಹರಸಾಹಸಪಟ್ಟು ಕೆಲ ಗಂಟೆಗಳ ಕಾಲ ಬೆಂಕಿಯನ್ನು ನಂದಿಸಿ ತಹಬದಿಗೆ ತಂದಿದ್ದಾರೆ. ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೈರಲ್ ವೀಡಿಯೋ ಅಪ್ಲಿಕೇಶನ್ ʼಸೋರಾʼವನ್ನು ಶಾಶ್ವತವಾಗಿ ಮುಚ್ಚಿದ OpenAI; ಕಾರಣವೇನು?
ʼಸೋರಾʼ ಅಪ್ಲಿಕೇಶನ್ಗೆ ಸಂಬಂಧಿಸಿ ಡಿಸ್ನಿ ಜೊತೆಗೆ OpenAI ಮಾಡಿಕೊಂಡ ಒಪ್ಪಂದವನ್ನೂ ಮುರಿಯಲಾಗಿದೆ. ಆದರೆ ಸೋರಾ ಮುಚ್ಚಿರುವ ಬಗ್ಗೆ ಕಂಪನಿ ನಿಜವಾದ ಕಾರಣವನ್ನು ನೀಡಿಲ್ಲ. ವೈರಲ್ ಆಗಿದ್ದ ತನ್ನ AI ವೀಡಿಯೋ ಜನರೇಟರ್ ಸೋರಾವನ್ನು OpenAI ಶಾಶ್ವತವಾಗಿ ಮುಚ್ಚುತ್ತಿದೆ. ವೇಗವಾಗಿ ವಿಕಸನಗೊಳ್ಳುತ್ತಿರುವ ಮಾರುಕಟ್ಟೆಯಲ್ಲಿ ಕಂಪನಿ ಆದಾಯ ಬರುವ ಉದ್ಯಮದ ಕಡೆಗೆ ಗಮನ ಕೊಡುತ್ತಿದ್ದು, ಸ್ವತಂತ್ರ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ ಆರು ತಿಂಗಳ ಒಳಗೆ ಈ ದಿಢೀರ್ ಕ್ರಮ ಕೈಗೊಳ್ಳುತ್ತಿದೆ. ಸ್ವತಂತ್ರ ಅಪ್ಲಿಕೇಶನ್ ಸೋರಾ ಮೂಲಕ ಬಳಕೆದಾರರು ಅಲ್ಗಾರಿದಮಿಕ್ ಸಾಮಾಜಿಕ ಫೀಡ್ನಲ್ಲಿ ಹೈಪರ್- ರಿಯಲಿಸ್ಟಿಕ್ AI ವೀಡಿಯೋಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುಮತಿಸಲಾಗಿತ್ತು. ಗ್ರಾಹಕ ಅಪ್ಲಿಕೇಶನ್ ಜೊತೆಗೆ OpenAI ತನ್ನ API-ಆಧಾರಿತ ಡೆವಲಪರ್ ಆ್ಯಕ್ಸೆಸ್ ಅನ್ನೂ ಮುಚ್ಚುತ್ತಿದೆ. ChatGPT ನಲ್ಲಿ AI ವೀಡಿಯೋ ಉತ್ಪಾದನೆ ಕಾರ್ಯವನ್ನು ಸಂಯೋಜಿಸುವ ಯೋಜನೆಗಳನ್ನು ಕೈಬಿಟ್ಟಿದೆ. OpenAI ಸೋರಾ ತಂಡವು ವರ್ಲ್ಡ್ ಸಿಮ್ಯುಲೇಶನ್ ಮತ್ತು ರೊಬಾಟಿಕ್ಸ್ ಅನ್ನು ಒಳಗೊಂಡ ಸಂಶೋಧನೆಗೆ ತಿರುಗುವ ನಿರೀಕ್ಷೆಯಿದೆ. ಕಂಪನಿಯು ಸೋರಾ ಅಪ್ಲಿಕೇಶನ್ ಮತ್ತು ಅದರ API ಯಾವಾಗ ಆಫ್ಲೈನ್ಗೆ ಹೋಗುತ್ತದೆ ಎಂದು ಸ್ಪಷ್ಟವಾಗಿ ಘೋಷಿಸಿಲ್ಲ. “ಅಪ್ಲಿಕೇಶನ್ ಮತ್ತು API ಟೈಮ್ಲೈನ್ಗಳು ಮತ್ತು ನಿಮ್ಮ ಕೆಲಸ ಸಂರಕ್ಷಿಸುವ ವಿವರಗಳನ್ನು ಒಳಗೊಂಡಂತೆ ಶೀಘ್ರದಲ್ಲೇ ಹೆಚ್ಚಿನ ವಿವರ ಹಂಚಿಕೊಳ್ಳುತ್ತೇವೆ” ಎಂದು ಮಾರ್ಚ್ 24ರಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ನಲ್ಲಿ ಬರೆದಿದೆ. OpenAI ವೇದಿಕೆಯ ಕಂಟೆಂಟ್ ನೀತಿಗಳನ್ನು ನವೀಕರಿಸಿದ ಒಂದು ದಿನದ ನಂತರ ಪ್ರಕಟಣೆ ಬಂದಿದೆ. ಇದು ಕಂಪನಿಯಲ್ಲಿ ನಡೆಯುತ್ತಿರುವ ಪ್ರಮುಖ ಮರು ಹೊಂದಿಸುವಿಕೆಯ ಭಾಗವಾಗಿದೆ. ವೀಡಿಯೋ, ಆಡಿಯೋ, ಶಾಪಿಂಗ್, ಹುಡುಕಾಟ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಗ್ರಾಹಕ ಆಧಾರಿತ ಉತ್ಪನ್ನಗಳನ್ನು ತರುವುದಾಗಿ ಕಂಪನಿ ಘೋಷಿಸಿದೆ. ಕ್ಲೌಡ್ ಕೋಡ್ ಮತ್ತು ಕೋವರ್ಕ್ ಮೊದಲಾದ ಉತ್ಪನ್ನಗಳೊಂದಿಗೆ ಸ್ಪರ್ಧೆಯಲ್ಲಿ ಮುಂದೆ ಹೋಗಿರುವ ಆಂಥ್ರೋಪಿಕ್ನೊಂದಿಗೆ ಇರುವ ಅಂತರವನ್ನು ಕಡಿಮೆ ಮಾಡಲು OpenAI ಪ್ರಯತ್ನಿಸುತ್ತಿದೆ. ತನ್ನ ಕಂಪ್ಯೂಟಿಂಗ್ ಸಂಪನ್ಮೂಲ ಮತ್ತು ಪ್ರತಿಭೆಗಳನ್ನು ಈ ನಿಟ್ಟಿನಲ್ಲಿ ಪ್ಯಾಕೇಜಿಂಗ್ ಮಾಡಲು ತೀರ್ಮಾನಿಸಿದೆ. ವೈರಲ್ ಆಗಿದ್ದ ಸೋರಾ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ OpenAI ತನ್ನ AI ಆಡಿಯೋ ಮತ್ತು ವೀಡಿಯೋ ರಚಿಸುವ ಮಾದರಿ ಸೋರಾ 2 ಬಿಡುಗಡೆ ಮಾಡಿತ್ತು. ಅದನ್ನು ಸ್ವತಂತ್ರ ಸೋರಾ ಅಪ್ಲಿಕೇಶನ್ ಆಗಿ ನೀಡಿತ್ತು. ಸೋರಾ ಹೆಚ್ಚು ನೈಜವೆನಿಸುವ ವೀಡಿಯೋಗಳನ್ನು ಬಿಡುಗಡೆ ಮಾಡಲು ನೆರವಾಗುತ್ತಿತ್ತು. ಇನ್ಸ್ಟಾಗ್ರಾಂ ರೀಲ್ಸ್, ಯುಟ್ಯೂಬ್ ಶಾರ್ಟ್ಸ್ ಮತ್ತು ಇತರ ಅಲ್ಪಕಾಲೀನ ವೀಡಿಯೋ-ಫೀಡ್ಗಳಿಗೆ ವೀಡಿಯೋಗಳನ್ನು ರಚಿಸಿ ಹಂಚಲು ಸರಳವಾಗಿತ್ತು. ಆದರೆ ಬಳಕೆದಾರರು ಡೀಪ್ಫೇಕ್ ವೀಡಿಯೋಗಳನ್ನು ತಯಾರಿಸಲು ಇದನ್ನು ಬಳಸಿಕೊಂಡರು. OpenAI ನ ಸಿಇಒ ಸ್ಯಾಮ್ ಆಲ್ಟ್ಮನ್ ಅವರ ಡೀಪ್ ಫೇಕ್ ವೀಡಿಯೋ ರಚನೆ ಮಾಡಲಾಗಿತ್ತು. ಆದರೆ ತಜ್ಞರು ಕಾಪಿರೈಟ್ ಕಳವಳ ಮತ್ತು ಸುಳ್ಳು ಮಾಹಿತಿಯ ಅಪಾಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. OpenAI ನಂತರ ಅನೇಕ ಬದಲಾವಣೆಗಳನ್ನು ತಂದಿದೆ. ಭಾರತಕ್ಕೆ ಬಂದಿರದೆ ಇದ್ದ ಈ ಸೋರಾ ಆ್ಯಪ್ ಐಒಎಸ್ನಲ್ಲಿ ಮತ್ತು ಗೂಗಲ್ ಪ್ಲೇ ಸ್ಟೋರ್ನಲ್ಲಿ ಕಳೆದ ವರ್ಷ 33,32,200 ಡೌನ್ಲೋಡ್ಗಳನ್ನು ಕಂಡಿತ್ತು. ಹಾಗಿದ್ದರೂ ಆ್ಯಪ್ ಅನಾಲಿಟಿಕ್ಸ್ ಕಂಪನಿ ಆಪ್ಫಿಗರ್ಗಳ ಪ್ರಕಾರ 2026ರಲ್ಲಿ ಡೌನ್ಲೋಡ್ಗಳ ಸಂಖ್ಯೆ 11,28,700 ಕ್ಕೆ ಇಳಿದಿದೆ. AI ಸ್ಲಾಪ್ಗಳು ವೇದಿಕೆಯನ್ನು ತುಂಬಿಕೊಂಡ ನಂತರ ಬಹಳ ಟೀಕೆಗಳೂ ವ್ಯಕ್ತವಾದವು. ಸೋರಾ ಅಪ್ಲಿಕೇಶನ್ಗೆ ಸಂಬಂಧಿಸಿ ಡಿಸ್ನಿ ಜೊತೆಗೆ OpenAI ಮಾಡಿಕೊಂಡ ಒಪ್ಪಂದವನ್ನೂ ಮುರಿಯಲಾಗಿದೆ. ಆದರೆ ಸೋರಾ ಮುಚ್ಚಿರುವ ಬಗ್ಗೆ ನಿಜವಾದ ಕಾರಣವನ್ನು OpenAI ನೀಡಿಲ್ಲ. ಆದರೆ ಅಂತಿಮವಾಗಿ ಕಂಪನಿ AI ಉತ್ಪನ್ನ ಬಿಡುಗಡೆಗಳು ಮತ್ತು ಸಂಶೋಧನಾ ಯೋಜನೆಗಳಲ್ಲಿ ಜಿಪಿಯುಗಳಲ್ಲಿ (Graphics Processing Units) ಹೇಗೆ ಹಂಚುತ್ತದೆ ಎಂಬ ಹೊಂದಾಣಿಕೆಗಳನ್ನು ಪ್ರತಿಬಿಂಬಿಸುತ್ತದೆ. ವೀಡಿಯೋ ರಚಿಸುವುದರಿಂದ ಅತಿಯಾದ ಕಂಪ್ಯೂಟ್ ಬಳಕೆಯಾಗುತ್ತದೆ ಮತ್ತು OpenAI ತನ್ನ ಚಿಪ್ಗಳನ್ನು ಹೆಚ್ಚಾಗಿ AI ಕೋಡಿಂಗ್ ಅಸಿಸ್ಟಂಟ್ ಕೋಡೆಕ್ಸ್ನಲ್ಲಿ ಬಳಸಲು ಉದ್ದೇಶಿಸಿದೆ. OpenAI ನ ಹಾರ್ಡ್ ಪಿವಟ್ ಅನ್ನು ಆಂಥ್ರೋಪಿಕ್ಗೆ ಪ್ರತಿಕ್ರಿಯೆಯಾಗಿ ವ್ಯಾಪಕವಾಗಿ ನೋಡಲಾಗುತ್ತದೆ. ಎರಡೂ ಸ್ಟಾರ್ಟಪ್ಗಳು ಕೋಡರ್ಗಳು ಮತ್ತು ಎಂಟರ್ಪ್ರೈಸಸ್ ಬಳಕೆದಾರರ ನಡುವೆ ತಮ್ಮ AI ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಸ್ಪರ್ಧಿಸುತ್ತಿವೆ. ಆದಾಯ ಏರಿಸಲು ಇವು ನಿರ್ಣಾಯಕ ವಿಭಾಗಗಳಾಗಿರಬಹುದು.
North Karnataka: ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಎಂ.ಬಿ ಪಾಟೀಲ್ - ಅರವಿಂದ ಬೆಲ್ಲದ ಟ್ವೀಟ್ ಚರ್ಚೆ
North Karnataka: ವಿಪಕ್ಷ ಉಪನಾಯಕ ಹಾಗೂ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿದ್ದು, ಕರ್ನಾಟಕದಲ್ಲಿ 59 ಅತ್ಯಂತ ಹಿಂದುಳಿದ ತಾಲ್ಲೂಕುಗಳಿವೆ. ಆ ಎಲ್ಲ 59 ತಾಲ್ಲೂಕುಗಳು ಸಹ ಉತ್ತರ ಕರ್ನಾಟಕದಲ್ಲಿವೆ. ಕಲ್ಯಾಣ ಕರ್ನಾಟಕದಲ್ಲಿ 39. ಕಿತ್ತೂರು ಕರ್ನಾಟಕದಲ್ಲಿ 20 ತಾಲ್ಲೂಕುಗಳಿವೆ. ಇದು ಕಾಕತಾಳೀಯವಲ್ಲ.
ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಐದು ಆಹಾರಗಳಿಗೆ ವೈದ್ಯರು ನೀಡಿದ ರ್ಯಾಂಕ್ ಎಷ್ಟು!
ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ತಿನಿಸುಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವುದು ಅಗತ್ಯ. ಆದರೆ ನಿಯಮಿತವಾಗಿ ಸೇವಿಸುವ ಎಲ್ಲಾ ಆಹಾರಗಳು ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ. ನಮ್ಮ ಕರುಳಿನ ಆರೋಗ್ಯ ನಿಯಮಿತವಾಗಿ ನಾವು ಏನು ತಿನ್ನುತ್ತೇವೆ ಎನ್ನುವುದನ್ನು ಅವಲಂಬಿಸಿದೆ. ಹೀಗಾಗಿ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ತಿನಿಸುಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವುದು ಅಗತ್ಯ. ಆದರೆ ನಿಯಮಿತವಾಗಿ ಸೇವಿಸುವ ಎಲ್ಲಾ ಆಹಾರಗಳು ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ. ದೆಹಲಿಯ ವಸಂತ್ ಕುಂಜ್ನಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಮತ್ತು ಹೆಟಾಲಜಿಸ್ಟ್ ಆಗಿರುವ ಶುಭಂ ವತ್ಸ್ಯ ನಾವು ನಿಯಮಿತವಾಗಿ ಸೇವಿಸುವ ಆಹಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾರ್ಚ್ 24ರಂದು ಇನ್ಸ್ಟಾಗ್ರಾಮ್ನಲ್ಲಿ ಫೋಸ್ಟ್ ಮಾಡಿರುವ ಅವರು ನಿಯಮಿತ ಶಿಸ್ತಿನ ಆಹಾರದಲ್ಲಿ (ಡಯಟ್) ಸೇವಿಸುವ 5 ತಿನಿಸುಗಳ ಬಗ್ಗೆ ವಿವರ ನೀಡಿ 10 ರಲ್ಲಿ ಅಂಕಗಳನ್ನು ನೀಡಿದ್ದಾರೆ. “ಎಲ್ಲವೂ ನಿಮ್ಮ ಕರುಳಿಗೆ ಉತ್ತಮ ಆಹಾರವಲ್ಲ. ಕರುಳು ನಿತ್ಯದ ಆಹಾರದಿಂದ ಸಿದ್ಧವಾಗುತ್ತದೆ. ಅದಕ್ಕೆ ಬೆಂಬಲವಾಗುವ ಆಹಾರವನ್ನೇ ಸೇವಿಸಬೇಕು. ಅದಕ್ಕೆ ಒತ್ತಡ ಹಾಕಬಾರದು” ಎಂದು ಶುಭಂ ವತ್ಸ್ಯ ಹೇಳಿದ್ದಾರೆ. ಡಯಟ್ ಕೋಕ್ ಅಂಕ 10/4 ಕೋಕ-ಕೋಲದ ಎದುರು ಡಯಟ್ ಎನ್ನುವ ಪದ ಇದೆ ಎಂದ ಮಾತ್ರಕ್ಕೆ ಅದು ಆರೋಗ್ಯಕರವಾಗುವುದಿಲ್ಲ. ಕೃತಕ ಸಿಹಿಯನ್ನು ಬಳಸಿದ ಕಾರ್ಬೋನೇಟೆಡ್ ಪಾನೀಯವಾಗಿಯೇ ಉಳಿಯುತ್ತದೆ. ಡಯಟ್ ಕೋಕ್ ಕರುಳಿನ ಮೈಕ್ರೋಬಯಾಮ್ನ ಸಂಯೋಜನೆಗೆ ಧಕ್ಕೆತರುತ್ತದೆ. ಪರೋಕ್ಷವಾಗಿ ಇನ್ಸುಲಿನ್ ಪ್ರತಿಸ್ಪಂದನೆ ಮೇಲೆ ಪರಿಣಾಮ ಬೀರುತ್ತದೆ. ಬಾಳೆಹಣ್ಣು ಅಂಕ 8/10 ಬಾಳೆ ಹಣ್ಣು ನಿತ್ಯ ಸೇವನೆಗೆ ಅತ್ಯುತ್ತಮ. ಅಗ್ಗದ ಮತ್ತು ಸರಳವಾಗಿ ತಿನ್ನಬಹುದಾದ ಹಣ್ಣು. ಪೆಕ್ಟಿನ್ ಫೈಬರ್ ಹೆಚ್ಚಿರುತ್ತದೆ ಮತ್ತು ಆಮ್ಲೀಯತೆ ಕಡಿಮೆಯಾಗಿ ಜೀರ್ಣಕ್ರಿಯೆಗೆ ಬೆಂಬಲಿಸುತ್ತದೆ. ಆದರೆ ಅತಿಯಾಗಿ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಬರಬಹುದು. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ನಿಯಂತ್ರಿತವಾಗಿ ಸೇವಿಸಬೇಕು. ನಿತ್ಯ ಒಂದು ಬಾಳೆ ಹಣ್ಣು ಸೇವಿಸಿದರೆ ಸಾಕಾಗುತ್ತದೆ. ಸಂಸ್ಕರಿತ ಚೀಸ್ ಅಂಕ 3/10 ಸಂಸ್ಕರಿಸದೆ ಇರುವ ಚೀಸ್ ಸೇವನೆ ಉತ್ತಮ. ಸಂಸ್ಕರಿಸಿದ ಚೀಸ್ನ ಸಮಸ್ಯೆಯೆಂದರೆ ಅದು ಪಿಜ್ಜಾದಲ್ಲಿನ ಚೀಸ್ ಅನ್ನು ಸಹ ಒಳಗೊಂಡಿರಬಹುದು. ಅಂತಹ ಸಂಸ್ಕರಿಸಿದ ಚೀಸ್ ಕರುಳಿಗೆ ಅನುಕೂಲಕರವಲ್ಲ. ಕಾಂಜಿ 10/10 ಕಾಂಜಿ ನೈಸರ್ಗಿಕ ಪಾನೀಯವಾಗಿದೆ. ಉತ್ತರ ಭಾರತ ಮೂಲದ ಹುದುಗಿಸಿದ ಪ್ರೊಬಯಾಟಿಕ್ ಪಾನೀಯವಾಗಿದ್ದು, ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ಪದಾರ್ಥಗಳನ್ನು ಬಳಸಿ ಕಾಂಜಿಯನ್ನು ತಯಾರಿಸಲಾಗುತ್ತದೆ. ಪಂಜಾಬ್ನಲ್ಲಿ ಕಪ್ಪು ಕ್ಯಾರೆಟ್, ಉತ್ತರ ಪ್ರದೇಶದಲ್ಲಿ ಸಾಸಿವೆ, ಮತ್ತು ಕೆಲವೆಡೆ ಬೀಟ್ರೂಟ್, ಮತ್ತು ಮಸಾಲೆಗಳಿಂದ ತಯಾರಿಸಲಾಗುತ್ತದೆ. ಹುದುಗುವಿಕೆ ಪ್ರಕ್ರಿಯೆಯು ಪೋಷಕಾಂಶಗಳು ಜೈವಿಕವಾಗಿ ಲಭ್ಯವಿರುವಂತೆ ಮಾಡುತ್ತದೆ. ದೇಹವು ಆ್ಯಂಟಿ ಆಕ್ಸಿಡಂಟ್ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ವೈದ್ಯರ ಪ್ರಕಾರ ಕಾಂಜಿ ಪ್ರಕೃತಿದತ್ತವಾದ ಪ್ರೊಬಯಾಟಿಕ್ ಮತ್ತು ಎನ್ಜೈಮ್ಗಳನ್ನು ಹೊಂದಿದ್ದು, ಉತ್ತಮ ಬ್ಯಾಕ್ಟೀರಿಯ ಬೆಳೆಯಲು ನೆರವಾಗುತ್ತದೆ. ಹಾನಿಕರ ಮೈಕ್ರೋಬ್ಗಳನ್ನು ನಿಗ್ರಹಿಸುತ್ತದೆ ಮತ್ತು ಉರಿಯೂತಕಾರಿಗಳನ್ನು ಕಡಿಮೆಗೊಳಿಸುತ್ತದೆ. ವೈಟ್ ಬ್ರೆಡ್ ಅಂಕ 3/10 ವೈದ್ಯರ ಪ್ರಕಾರ ವೈಟ್ ಬ್ರೆಡ್ (ಸಾಮಾನ್ಯ ಬ್ರೆಡ್) ಅನ್ನು ಮೈದಾದ ಸಂಸ್ಕರಿಸಿದ ಹಿಟ್ಟು ಅಥವಾ ಮೈದಾದಿಂದ ತಯಾರಿಸಲಾಗುತ್ತದೆ ಅದರಲ್ಲಿ ಫೈಬರ್ ಇರುವುದಿಲ್ಲ. ಅಧಿಕ ಗ್ಲಿಸೆಮಿಕ್ ಸೂಚಿ ಹೊಂದಿದ್ದು, ಸೇವನೆಯ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಏರುತ್ತದೆ ಮತ್ತು ತಕ್ಷಣವೇ ಕುಸಿಯುತ್ತದೆ. ಹಸಿವೆಯನ್ನು ತಗ್ಗಿಸುವುದಿಲ್ಲ ಮತ್ತು ಚಯಾಪಚಯ ಅಪಾಯವನ್ನು ಹೆಚ್ಚಿಸುತ್ತದೆ. ಸೂಚನೆ: ಈ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿರುವ ಮಾಹಿತಿಯಿಂದ ರಚಿಸಲಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆಗಳಿಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಯ ಕುರಿತ ಯಾವುದೇ ಅನುಮಾನ ಪರಿಹರಿಸಿಕೊಳ್ಳಲು ವಿಶ್ವಾಸಾರ್ಹ ವೈದ್ಯರ ಸಲಹೆ ಪಡೆಯಿರಿ.
ಪೆಟ್ರೋಲ್-ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತ; ಜನರಿಗೆ ಅನುಕೂಲ ಕಲ್ಪಿಸಲು ಕೇಂದ್ರದ ದೃಢ ನಿರ್ಧಾರ : ವಿಜಯೇಂದ್ರ
ಬೆಂಗಳೂರು : ಪೆಟ್ರೋಲ್-ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂ.ಗಳನ್ನು ಪ್ರಧಾನಿ ಮೋದಿ ಕಡಿಮೆ ಮಾಡಿದ್ದು, ಜನರ ಮೇಲೆ ಬೀಳುವ ಹೊರೆಯನ್ನು ಕೇಂದ್ರವೇ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಸಾಮಾನ್ಯ ಜನರ ಪರವಾಗಿ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯುದ್ಧದ ಈ ಸಂದರ್ಭದಲ್ಲಿ ರಾಜ್ಯ- ದೇಶದ ಜನತೆ ಪರವಾಗಿ ಹೆಮ್ಮೆಯ ಮೋದಿಗೆ ಹಾಗೂ ಪೆಟ್ರೋಲಿಯಂ ಸಚಿವರಿಗೆ ಅಭಿನಂದನೆ. ರಾಜ್ಯದಲ್ಲಿ ಕಾಂಗ್ರೆಸ್ಸಿನವರು, ಈ ಸರಕಾರವು ಕೇಂದ್ರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ ಮಾಡಿದ್ದಾರೆ ಎಂದು ಟೀಕಿಸಿದರು. ಅಮೆರಿಕ, ಆಸ್ಟ್ರೇಲಿಯ ಮೊದಲಾದ ಕಡೆ ಶೇ.25, ಶೇ.30ರಷ್ಟು ಜನರ ಮೇಲೆ ಹೊರೆ ಬೀಳುವಂತಾಗಿದೆ. ಆದರೆ, ಅಬಕಾರಿ ಸುಂಕ ಕಡಿಮೆ ಮಾಡುವ ಕೇಂದ್ರದ ದೃಢ ನಿರ್ಧಾರದಿಂದ ಜನರಿಗೆ ಅನುಕೂಲ ಆಗುತ್ತಿದೆ. ಇದು ಸ್ವಾಗತಾರ್ಹ. ಆದರೆ, ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಬೇರೆಯವರ ಮೇಲೆ ಗೂಬೆ ಕೂರಿಸುವ ಚಾಳಿ ಕಾಂಗ್ರೆಸ್ಸಿನವರಿಗೆ ಮುಂಚಿನಿಂದಲೂ ಬಂದಿದೆ ಎಂದು ದೂರಿದರು. ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ. ನಾನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಎಪ್ರಿಲ್ ಒಂದರನ್ನು ಚುನಾವಣೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಿವಶಂಕರಪ್ಪಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲ್ಲಲಿದ್ದಾರೆ : ಡಿ.ಕೆ.ಶಿವಕುಮಾರ್
ಸದನದಲ್ಲಿ ಐಪಿಎಲ್ ಟಿಕೆಟ್ ಬೇಡಿಕೆ ವಿಚಾರ : ಡಿಸಿಎಂ ಹೇಳಿದ್ದೇನು?
ಸುಂಕ ಕಡಿತವು ಗ್ರಾಹಕರ ತೈಲ ಬೆಲೆಯನ್ನು ಬದಲಿಸುವುದಿಲ್ಲ, ಈ ಪರಿಹಾರ ಕೇವಲ ಪ್ರಚಾರಕ್ಕಾಗಿ ಮಾತ್ರ: ಕಾಂಗ್ರೆಸ್ ಟೀಕೆ
ಹೊಸದಿಲ್ಲಿ: ಅಬಕಾರಿ ಸುಂಕ ಕಡಿತದಿಂದ ಡೀಲರ್ ಗಳು ಹಾಗೂ ಗ್ರಾಹಕರಿಗೆ ಪೂರೈಕೆಯಾಗುವ ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಪರಿಹಾರವು ಕೇವಲ ಪ್ರಚಾರದಲ್ಲಿ ಅಸ್ತಿತ್ವ ಹೊಂದಿರಲಿದೆಯೇ ಹೊರತು, ವಾಸ್ತವದಲ್ಲಲ್ಲ ಎಂದು ಶುಕ್ರವಾರ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕೇಂದ್ರ ಸರಕಾರವು ಪೆಟ್ರೋಲ್ ಮೇಲೆ ವಿಧಿಸಲಾಗಿದ್ದ ಅಬಕಾರಿ ಸುಂಕವನ್ನು ಕ್ರಮವಾಗಿ 3 ರೂ. ಇಳಿಕೆ ಮಾಡಿತ್ತು ಹಾಗೂ ಡೀಸೆಲ್ ಗೆ ಅಬಕಾರಿ ಸುಂಕದಿಂದ ವಿನಾಯಿತಿ ನೀಡಿತ್ತು. ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಗಳನ್ನು ಹುಟ್ಟುಹಾಕುವ ಬದಲು ಹಾಗೂ ಜನರನ್ನು ಮೂರ್ಖರನ್ನಾಗಿಸುವ ಬದಲು ಸರಕಾರ ಗ್ರಾಹಕರಿಗೆ ನೈಜ ಪರಿಹಾರವನ್ನು ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, “ಒಂದು ವೇಳೆ ನೀವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗಲಿವೆ ಎಂದು ಮುಖಪುಟದ ಸುದ್ದಿಗಳನ್ನು ನೋಡಿ, ಸರಕಾರ ನಿಮ್ಮ ಜೇಬಿಗೆ ಪರಿಹಾರ ನೀಡಿದೆ ಎಂದು ನೀವು ಭಾವಿಸಿದರೆ, ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ. ಸದ್ಯದವರೆಗೆ ಇಂಧನದ ದರ ಡೀಲರ್ ಗಳು ಹಾಗೂ ಗ್ರಾಹಕರಿಗೆ ಮಾಮೂಲಿಯಂತೆಯೇ ಉಳಿದುಕೊಂಡಿದೆ” ಎಂದು ಹೇಳಿದ್ದಾರೆ. “ವಾಸ್ತವವಾಗಿ ಇಳಿಕೆ ಮಾಡಿರುವುದೇನೆಂದರೆ, ತೈಲ ಮಾರುಕಟ್ಟೆ ಕಂಪನಿಗಳೂ ಸರಕಾರಕ್ಕೆ ನೀಡುತ್ತಿದ್ದ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು. ‘ವಿಶೇಷ’ ಹಾಗೂ ‘ಹೆಚ್ಚುವರಿ’ ಎಂಬ ಪದಗಳು ಈ ತೆರಿಗೆ ಎಷ್ಟು ಅನಗತ್ಯ ಎಂಬುದನ್ನು ಸೂಚಿಸುತ್ತವೆ” ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ. ಪಶ್ಚಿಮ ಏಶ್ಯ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ತೈಲ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ ಎಂಬುದರತ್ತಲೂ ಅವರು ಬೊಟ್ಟು ಮಾಡಿದ್ದಾರೆ. “ಸರಕಾರ ಆ ಹೊರೆಯ ಸ್ವಲ್ಪ ಭಾಗವನ್ನು ಹಂಚಿಕೊಳ್ಳಲು ಸರಕಾರ ಒಪ್ಪಿಕೊಂಡಿದೆ, ನಿಜ. ಆದರೆ, ವಿಶೇಷ ಸುಂಕವನ್ನು ಬಹುತೇಕ ಒಂದು ತಿಂಗಳ ಬಳಿಕ ಇಳಿಕೆ ಮಾಡಲಾಗಿದೆ” ಎಂದು ಅವರು ಟೀಕಿಸಿದ್ದಾರೆ.
ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ವಿ ಸೋಮಣ್ಣ; 3 ಜಿಲ್ಲೆಗಳ ನಡುವೆ ಸಂಚಾರ - ವೇಳಾಪಟ್ಟಿ ಬಿಡುಗಡೆ
ಬೆಂಗಳೂರು ತುಮಕೂರು ಭಾಗದ ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ. ಅರಸೀಕೆರೆ - ತುಮಕೂರು - ಬೆಂಗಳೂರು ನಡುವೆ ಹೊಸ ಮೆಮು ರೈಲು ಆರಂಭಿಸಿದೆ. ಈ ರೈಲು ವಾರದ ಆರು ದಿನ ಸಂಚಾರ ನಡೆಸಲಿದ್ದು, ಹಾಸನ, ತುಮಕೂರು, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

25 C