ತುಂಗಭದ್ರಾ ಜಲಾಶಯ ಭಾಗಶಃ ಭರ್ತಿ: ಕಾಲುವೆಗೆ ನೀರು ಹರಿಸಲು ರೈತರ ಕೂಗು
ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ಗೇಟ್ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ, ಈ ಬಾರಿ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲು ತಜ್ಞರು ಸಲಹೆ ನೀಡಿದ್ದಾರೆ. ಜಲಾಶಯದಲ್ಲಿ ಈಗಾಗಲೇ 50 ಟಿಎಂಸಿ ನೀರು ಸಂಗ್ರಹವಾಗಿದ್ದು, ಎರಡು ಬೆಳೆಗಳಿಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದ್ದಾರೆ. ಈ ತಿಂಗಳ 27ರಂದು ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮಂಡ್ಯ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿಂದ ನೆರೆ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. 67 ಗ್ರಾಮಗಳನ್ನು ನೆರೆ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಆರ್ಎಸ್ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಾಗುವ ಸಾಧ್ಯತೆಯಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.
ಲಿಂಗಾಯತ ಧರ್ಮದ ಕುರಿತ ಹೇಳಿಕೆ: ವೀಣಾ ಬನ್ನಂಜೆಗೆ ಪೊಲೀಸ್ ನೋಟಿಸ್
ಬಾಗಲಕೋಟೆ: ಅನುಭವ ಮಂಟಪದ ಅಸ್ತಿತ್ವವನ್ನು ಪ್ರಶ್ನಿಸಿ ವಿವಾದಕ್ಕೀಡಾದ ವೀಣಾ ಬನ್ನಂಜೆಗೆ ಪೊಲೀಸರು ನೋಟಿಸ್ ನೀಡಿರುವ ಘಟನೆ ವರದಿಯಾಗಿದೆ. ಲಿಂಗಾಯತ ಧರ್ಮದ ಬಗ್ಗೆ ತಮ್ಮ ಯುಟ್ಯೂಬ್ ದಲ್ಲಿ ಮಾತನಾಡಿದ್ದ ಜಿಲ್ಲೆಯ ಕುಲಹಳ್ಳಿ ಗ್ರಾಮದ ಬಳಿರುವ ವೈದಿಕ ಧರ್ಮ ಪ್ರಚಾರಕಿ ವೀಣಾ ಬನ್ನಂಜೆ ವಿರುದ್ಧ ಲಿಂಗಾಯತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ವೀಣಾ ಬನ್ನಂಜೆಯ ವಿರುದ್ಧ ಜಮಖಂಡಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ರವಿ ಯಡಹಳ್ಳಿ ಅವರು ಜೂನ್ 20ರಂದು ಲಿಖಿತ ದೂರು ನೀಡಿದ್ದರು. ಈ ಹಿನ್ನೆಲೆ ವೀಣಾ ಬನ್ನಂಜೆಗೆ ಪೊಲೀಸರು ನೋಟಿಸ್ ನೀಡಿರುವ ಪೊಲೀಸರು ಕ್ಷಮಾಪಣೆ ಕೇಳಿಸಿದ್ದಾರೆ ಎಂದು ತಿಳಿದು ಬಂದಿದೆ. ಜಮಖಂಡಿ ಬಳಿಯ ಕುಲ್ಲಹಳ್ಳಿಯಲ್ಲಿರುವ ಸತ್ಯಕಾಮ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ವೀಣಾ ಬನ್ನಂಜೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ನಡೆಯುವ ಕಾರ್ಯಕ್ರಮ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದನ್ನು ಯುಟ್ಯೂಬ್ ದಲ್ಲಿ ಅಪ್ ಲೋಡ್ ಮಾಡುತ್ತಾರೆ. ಯೂಟ್ಯೂಬ್ ದ ವಿಡಿಯೋದಲ್ಲಿ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದು ವೀಣಾ ಅವರು ಹೇಳಿಕೆ ನೀಡಿರುವುದೇ ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ಮಾಹಿತಿ ನೀಡಿದ್ದರಿಂದ ಯೂಟ್ಯೂಬ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ವೀಣಾ ಬನ್ನಂಜೆ ಪೊಲೀಸರಿಗೆ ತಿಳಿಸಿದ್ದಾರೆ. ಸತ್ಯಕಾಮ ಪ್ರತಿಷ್ಠಾನದ ಹೆಸರಿನಲ್ಲಿ ಪ್ರತಿ ವರ್ಷ ಸರಕಾರದಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವೈದಿಕತೆ ಬಿತ್ತುವ ಕಾರ್ಯಕ್ರಮಗಳನ್ನು ಬನ್ನಂಜೆ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಿ ಸರಕಾರ ವೈಚಾರಿಕತೆ ಬಿತ್ತುವ ಕಾರ್ಯಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇಂತಹ ವಿವಾದಾತ್ಮಕ ಹೇಳಿಕೆಯಿಂದ ಇನ್ನೊಬ್ಬರ ಮನಸ್ಸು ನೋವಾಗುತ್ತದೆ ಎಂದು ನ್ಯಾಯವಾದಿ ರವಿ ಯಡಹಳ್ಳಿ ಅವರು ವಾರ್ತಾ ಭಾರತಿಗೆ ತಿಳಿಸಿದ್ದಾರೆ.
ಅಧಿಕಾರದಲ್ಲಿ ಉಳಿಯಬೇಕೆಂಬುದೇ 1975ರ ತುರ್ತು ಪರಿಸ್ಥಿತಿ ಹಿಂದಿನ ಕಾರಣ: ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು 1975ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ದೇಶದ್ಯಾಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಹೀಗಾಗಿ ಅಧಿಕಾರದಲ್ಲಿ ಉಳಿಯಬೇಕೆಂಬುದೇ ತುರ್ತು ಪರಿಸ್ಥಿತಿ ಹೇರುವಿಕೆಯ ಹಿಂದಿನ ಕಾರಣವಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ನಗರದಲ್ಲಿರುವ ಪುರಭವನದಲ್ಲಿ ‘ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್-ಬೆಂಗಳೂರು’ ವತಿಯಿಂದ ಆಯೋಜಿದ್ದ ‘1975ರ ತುರ್ತು ಪರಿಸ್ಥಿತಿ 50ನೇ ವರ್ಷ-ಕರಾಳ ದಿನಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಪೂರ್ಣ ಅಂಕುಶ ಹಾಕಲಾಗಿತ್ತು ಎಂದರು. 1975ರ ತುರ್ತು ಪರಿಸ್ಥಿತಿ ಸಮಯದಲ್ಲಿ ಕೇವಲ ಅಧಿಕಾರಕ್ಕಾಗಿ ನಮ್ಮ ಪವಿತ್ರ ಸಂವಿಧಾನವನ್ನೇ ಆಗ ಬಲಿ ಕೊಡಲಾಗಿತ್ತು. ಆಗ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ತಮ್ಮ ನಿರಂಕುಶ ಅಧಿಕಾರಕ್ಕಾಗಿ ಸ್ವಾತಂತ್ರ್ಯದ ಧ್ವನಿಗಳ ಕೊರಳನ್ನು ಹಿಸುಕಿ ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾಯತ್ತತೆ, ಸಾರ್ವಜನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ಅವರು ವಿವರಿಸಿದರು. ಆರ್ಥಿಕ ಚಿಂತಕ ಎಸ್.ಗುರುಮೂರ್ತಿ ಮಾತನಾಡಿ, 2024ರಲ್ಲಿ ರಾಹುಲ್ ಗಾಂಧಿಯವರು ಗೆದ್ದ ಬಳಿಕ ಸಂವಿಧಾನದ ಪುಸ್ತಕ ಪ್ರದರ್ಶಿಸಲು ಆರಂಭಿಸಿದರು ಹಾಗೂ ಸಂವಿಧಾನವನ್ನು ತಾವು ರಕ್ಷಿಸಲು ಬಯಸುವುದಾಗಿ ಹೇಳಿದರು. ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೇ ಸಂವಿಧಾನವನ್ನು ಅವರ ಅಜ್ಜಿ ಕಡೆಗಣಿಸಿದ್ದು, ರಾಹುಲ್ ಗಾಂಧಿಯವರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ, ರಾಜ್ಯ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿತ್ತು. ಇದು ನಿಜವಲ್ಲದಿದ್ದರೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನದ ಆಶೋತ್ತರಗಳ ಕತ್ತು ಹಿಸುಕಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಪ್ರಮಾದವನ್ನು ಕಾಂಗ್ರೆಸ್ ಮಾಡುತ್ತಿರಲಿಲ್ಲ. -ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ನೀತಿ ರೂಪಿಸಲು ಆಗ್ರಹ
ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳು ಪ್ರತಿನಿತ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೀದಿಯಲ್ಲಿ ವ್ಯಾಪಾರ ಮಾಡುವುದು ಸಾಂವಿಧಾನಿಕ ಹಕ್ಕು. ರಾಜ್ಯ ಸರಕಾರ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ‘ಶೂನ್ಯ ತೆರವು ಕಾರ್ಯಾಚರಣೆ’ ನೀತಿಯನ್ನು ಅಳವಡಿಸಬೇಕು ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪರಿಗಳ ಸಂಘ ಆಗ್ರಹಿಸಿದೆ. ಮಂಗಳವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಎಐಸಿಸಿಟಿಯು ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆಗಾಗಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ವಕೀಲ ವಿನಯ್ ಶ್ರೀನಿವಾಸ್, ರಾಜ್ಯದ ಆರ್ಥಿಕತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ಹಾಗೂ ರಾಜ್ಯ ಸರಕಾರದ ನಡೆಯು ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯನ್ನುಂಟು ಮಾಡಲು ಹೊರಟಂತಿದೆ ಎಂದು ಹೇಳಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೋಂದಣಿ ಮಾಡಿಕೊಂಡಿರುವ ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ವಾಹನಗಳನ್ನು ನೀಡಲು ಸಿದ್ದರಿದ್ದೇವೆ. ಆದರೆ ವ್ಯಾಪಾರ ಮಾಡಿಕೊಳ್ಳಲು ಕೆಲವು ಜಾಗಗಳನ್ನು ಗುರುತು ಮಾಡಿದ್ದು, ಅಲ್ಲಿ ಮಾತ್ರ ವ್ಯಾಪಾರ ಮಾಡಿಕೊಳ್ಳಬೇಕು ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿರುವುದು ಮತ್ತು ಬೀದಿ ವ್ಯಾಪಾರಿಗಳೆಲ್ಲರೂ ಸಂಚಾರಿ ವ್ಯಾಪರಿಗಳಾಗುವುದೇ ಬಿಬಿಎಂಪಿಯ ಉದ್ದೇಶ ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಹೇಳುತ್ತಿರುವ ಹೇಳಿಕೆಗಳಿಂದಾಗಿ ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಇವರ ಹೇಳಿಕೆಗಳು ಬೀದಿ ವ್ಯಾಪಾರಿಗಳ ಕಾನೂನಿನ ಹಾಗೂ ನ್ಯಾಯಾಲಯದ ತೀರ್ಪುಗಳ ವಿರುದ್ಧವಾಗಿದೆ ಎಂದು ವಿನಯ್ ಶ್ರೀನಿವಾಸ್ ತಿಳಿಸಿದರು. ಎಐಸಿಸಿಟಯು ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಝಾರಿಯೋ ಮಾತನಾಡಿ, ಬೆಂಗಳೂರು ನಗರದಲ್ಲಿ ಎಲ್ಲರಿಗೂ ಬದುಕಲು ಹಕ್ಕಿದೆ. ನಗರವನ್ನು ನಿರ್ಮಾಣ ಮಾಡುವುದೇ ಶ್ರಮಿಕ ವರ್ಗದವರು. ಬೀದಿ ವ್ಯಾಪಾರಿಗಳ ಕಾಯಿದೆಯ ಆಶಯದಂತೆ ಯಾವುದೇ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದೇ 'ಶೂನ್ಯ ತೆರವು ಕಾರ್ಯಾಚರಣೆ'ಯ ನೀತಿ ಅಳವಡಿಸಬೇಕು. ಸಮೀಕ್ಷೆಯಲ್ಲಿ ಒಳಗೊಂಡ ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವ್ಯಾಪಾರದ ಪ್ರಮಾಣ ಪತ್ರ ವಿತರಿಸಬೇಕು. ಸಮೀಕ್ಷೆಯಿಂದ ಬಿಟ್ಟು ಹೋದ ವ್ಯಾಪಾರಿಗಳಿಗೆ ನೋಂದಣಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಎಲ್ಲ ಮಾರುಕಟ್ಟೆಗಳನ್ನು ಬೀದಿ ವ್ಯಾಪಾರಿಗಳ ನೈಸರ್ಗಿಕ ಮಾರುಕಟ್ಟೆ, 'ಪರಂಪರೆ ಮಾರುಕಟ್ಟೆ'ಗಳನ್ನು ಪಟ್ಟಣ ವ್ಯಾಪಾರ ಸಮಿತಿಗಳ ಮೂಲಕ ಗುರುತಿಸಬೇಕು. ಈ ಸಾಲಿನ ಬಿಬಿಎಂಪಿ ಬಡ್ಜೆಟ್ನಲ್ಲಿನಲ್ಲಿ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಹತ್ತು ಕೋಟಿ ರೂ. ಮೀಸಲಿಡಲಾಗಿದೆ. ಇದನ್ನು ಬಳಸುವುದು ಹೇಗೆ ಎಂದು ಬೀದಿ ವ್ಯಾಪಾರಿ ಸಂಘಟನೆಗಳೊಂದಿಗೆ ಚರ್ಚಿಸಬೇಕು. ಬೀದಿ ವ್ಯಾಪಾರಿಗಳಿಗೆ ಕುಡಿಯುವ ನೀರು, ಶೌಚಾಲಯ, ಬೀದಿ ದೀಪ, ಮಳೆ-ಬಿಸಿಲಿನಿಂದ ರಕ್ಷಣೆ ನೀಡಲು ಠಾರ್ಪಾಲ್ ವ್ಯವಸ್ಥೆ ಹಾಗೂ ಗೋದಾಮುಗಳನ್ನು ಒದಗಿಸಬೇಕು. ವ್ಯಾಪಾರಿಗಳ ಸಾಮಾಜಿಕ ಭದ್ರತೆಗಾಗಿ ಪಿಂಚಣಿ ಯೋಜನೆ, ಆರೋಗ್ಯ ವಿಮೆ, ಭವಿಷ್ಯ ನಿಧಿ, ವಿದ್ಯಾರ್ಥಿ ವೇತನ ಸೌಲಭ್ಯತೆಯನ್ನು ಒದಗಿಸಬೇಕು ಎಂದು ಅವರು ಹೇಳಿದರು. ಬೀದಿ ವ್ಯಾಪಾರಿಗಳ ಕಾಯ್ದೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಎಲ್ಲ ಶಾಸಕರಿಗೆ, ಪೊಲೀಸರಿಗೆ, ಬಿಬಿಎಂಪಿ ಅಧಿಕಾರಿಗಳಿಗೆ ಅರಿವು ಮೂಡಿಸಲು ಕಾರ್ಯಗಾರಗಳನ್ನು ಆಯೋಜಿಸಬೇಕು. ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಯನ್ನು ಘೋಷಿಸಬೇಕು. ಪಟ್ಟಣ ವ್ಯಾಪಾರ ಸಮಿತಿಗಳಿಗೆ ಕಚೇರಿ ನೀಡಬೇಕು. ಚರ್ಚ್ ಸ್ಟ್ರೀಟ್, ಸೆಂಟ್ ಜಾನ್ಸ್ ರಸ್ತೆ ಮುಂತಾದ ಕಡೆ ಬೀದಿ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಕಿರುಕುಳ ನೀಡದಂತೆ ಆದೇಶ ನೀಡಬೇಕು. ರಸ್ತೆ ಅಗಲೀಕರಣ, ಮೆಟ್ರೋ ನಿರ್ಮಾಣ ಮುಂತಾದ ಯೋಜನೆಗಳಿಗೆ ಬೀದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಮುನ್ನ ಅದನ್ನು ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕ್ಲಿಫ್ಟನ್ ಆಗ್ರಹಿಸಿದರು. ದಸಂಸ ಮುಖಂಡ ಮಾವಳ್ಳಿ ಶಂಕರ್, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಬಾಬು, ಎಐಸಿಸಿಟಿಯುನ ನಿರ್ಮಲಾ, ಅಶೋಕ್, ಲೇಖಾ, ವಕೀಲೆ ಪೂರ್ಣಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಲಬುರಗಿ | ಬಿ.ಆರ್.ಪಾಟೀಲ್ ಅವರು ಸರಕಾರವನ್ನು ಅಸ್ಥಿರವನ್ನಾಗಿಸಲು ಒಳಸಂಚು ರೂಪಿಸಿದ್ದಾರೆ : ಹರ್ಷಾನಂದ ಗುತ್ತೇದಾರ್
ಕಲಬುರಗಿ: ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ದೊಡ್ಡ ಡೀಲ್ ಕುದರಿಸುವ ಸಲುವಾಗಿ ವಸತಿ ಹಗರಣವನ್ನು ಬಯಲಿಗೆ ತಂದಿದ್ದಾರೆ ಎಂದು ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಆರೋಪಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಳಂದ ತಾಲೂಕಿನಲ್ಲಿ ಕಳೆದ 2024ರ ಅಕ್ಟೋಬರ್- ನವೆಂಬರ್ ನಲ್ಲೇ 950 ಮನೆಗಳು ಮಂಜೂರಾಗಿವೆ. ಇಷ್ಟು ದಿನ ಬಿಟ್ಟು ಈಗ ಶಾಸಕ ಬಿ.ಆರ್. ಪಾಟೀಲ್ ಅವರು ವಸತಿ ನಿಗಮದಲ್ಲಿ ದುಡ್ಡು ಕೊಟ್ಟು ಮನೆ ಮಂಜೂರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಮಂತ್ರಿ ಸ್ಥಾನ ನೀಡುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಸರಕಾರವನ್ನು ಅಸ್ಥಿರವನ್ನಾಗಿ ಮಾಡಲು ಒಳಸಂಚು ರೂಪಿಸಿದ್ದಾರೆ ಎಂದರು. ಶಿರಪುರ ಮಾದರಿಯಲ್ಲಿ ಅಂತರ್ಜಾಲ ಮಟ್ಟ ಹೆಚ್ಚಿಸುವ ಕಾಮಗಾರಿಗಳನ್ನು ಸಣ್ಣ ನೀರಾವರಿ ಇಲಾಖೆಯಿಂದ 20 ಕೋಟಿ ವೆಚ್ಚದಲ್ಲಿ ನಿರ್ಮಿಸುವುದಾಗಿ ರೂಪರೇಷೆ ಹಾಕಿಕೊಂಡಿದ್ದಾರೆ. ಆದರೆ ಈ ಕಾಮಗಾರಿಗಳು ಕೇವಲ 2 ಕೋಟಿಯಲ್ಲೆ ಮುಗಿದು ಹೋಗುವಂಥ ಯೋಜನೆಗಳಾಗಿವೆ. 2 ಕೋಟಿಯಷ್ಟು ಕೆಲಸ ಮಾಡುವುದು ಉಳಿದ ದುಡ್ಡನ್ನು ಕೊಳ್ಳೆ ಹೊಡೆಯುವ ತಂತ್ರ ಶಾಸಕರಿಂದ ನಡೆಯುತ್ತಿದೆ ಎಂದು ಹರ್ಷಾನಂದ ಗುತ್ತೇದಾರ್ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಕಂದಗೂಳೆ, ಶಶಿ ಕುಲಕರ್ಣಿ, ಬಾಬುರಾವ್ ಸರಡಗಿ, ಸಮೀರ್ ಅನ್ಸಾರಿ, ಆನಂದ್ ಪಾಟೀಲ್, ಸಂತೋಷ್ ಹಾದಿಮನಿ, ಗೊರಕನಾಥ್, ಶರಣಗೌಡ ಪಾಟೀಲ ದೇವಂತಗಿ ಇದ್ದರು.
ಶಿವಮೊಗ್ಗ: ತೋಟಗಾರಿಕೆ ವಿವಿ ಸಹ ಸಂಶೋಧನಾ ನಿರ್ದೇಶಕರ ಮನೆಯಲ್ಲಿ 6.34 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ
ಶಿವಮೊಗ್ಗ: ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಾವಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್. ಪ್ರದೀಪ್ ಅವರ ಆರು ಆಸ್ತಿಗಳ ಮೇಲೆ ದಾಳಿ ನಡೆಸಿದ್ದು, ಒಟ್ಟು 6.34 ಕೋಟಿ ರೂ. ಮೌಲ್ಯದ ಚರ, ಸ್ಥಿರಾಸ್ತಿ ಪತ್ತೆ ಹಚ್ಚಲಾಗಿದೆ. ಪ್ರಿಯಾಂಕ ಲೇಔಟ್ನಲ್ಲಿರುವ ಮನೆ, ಶಿಕಾರಿಪುರ ತಾಲೂಕಿನ ಭದ್ರಾಪುರದಲ್ಲಿರುವ ಫಾರ್ಮ್ ಹೌಸ್, ಹೊಸನಗರದಲ್ಲಿ ಸೇರಿ ಆರು ಕಡೆ ದಾಳಿ ನಡೆಸಿದರು. ದಾಳಿಯಲ್ಲಿ 4.45 ಕೋಟಿ ಮೌಲ್ಯದ 5 ನಿವೇಶನ, 1 ಮನೆ, 16.7 ಎಕರೆ ತೋಟ, 10 ಸಾವಿರ ನಗದು, 34.75 ಲಕ್ಷ ಮೌಲ್ಯದ ಚಿನ್ನಾಭರಣ, 30 ಲಕ್ಷ ಮೌಲ್ಯದ ಕಾರು ಹಾಗೂ ಬೈಕ್, 25 ಸಾವಿರ ಮೌಲ್ಯದ ವಿದೇಶಿ ನಗದು, 15.50 ಲಕ್ಷ ಮೌಲ್ಯದ ಕುರಿ ಹಾಗೂ ಹಸು, 50 ಲಕ್ಷ ಮೌಲ್ಯದ ಫಾರ್ಮ್ ಹೌಸ್, 29.75 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್, 28.75 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಪತ್ತೆಯಾಗಿವೆ. ಒಟ್ಟು 6.34 ಕೋಟಿ ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ದಾಳಿಯಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಲೋಕಾಯುಕ್ತ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಾಯಚೂರು : ಇಸ್ರೇಲ್ ಗಾಝಾದ ಸಾವಿರಾರು ಮಕ್ಕಳು, ಮಹಿಳೆಯರ, ನಾಗರಿಕರ ಮಾರಣ ಹೋಮ ನಡೆಸಿದೆ. ನಾವೆಲ್ಲರೂ ಫೆಲೆಸ್ತೀನ್ ಪರ ನಿಲ್ಲಬೇಕು. ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ರಕ್ತದ ದಾಹ ಇನ್ನೂ ನೀಗಿಲ್ಲ ಎಂದು ಅಸದುದ್ದೀನ್ ಉವೈಸಿ ಹೇಳಿದರು. ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಯ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಆಯೋಜಿಸಿದ್ದ ವಕ್ಫ್ ತಿದ್ದುಪಡಿ ಕಾಯ್ದೆಯ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಸ್ಲಿಂ ಧರ್ಮಕ್ಕಾಗಿ ಮಡಿದ ಹುತಾತ್ಮರನ್ನು ನಾವೆಲ್ಲರೂ ನೆನೆಯಬೇಕು. ವಕ್ಫ್ ತಿದ್ದುಪಡಿ ಕಾಯ್ದೆಯಿಂದ ನಮ್ಮ ಮಸೀದಿ, ಮದರಸ, ಖಬರ್ ಸ್ಥಾನವನ್ನು ವಶಕ್ಕೆ ಪಡೆಯುವ ಹುನ್ನಾರ ಯಶಸ್ವಿಯಾಗಲ್ಲ, ಅವರು ಮುಸ್ಲಿಮರನ್ನು ಅಂಜಿಸುವ ಕಾರ್ಯ ಈ ತಿದ್ದುಪಡಿಯಿಂದ ಮಾಡಲು ಆಗಲ್ಲ ಎಂದರು. ವಕ್ಫ್ ಗೆ ಭೂಮಿ ದಾನ ಮಾಡಲು 5 ವರ್ಷ ಇಸ್ಲಾಂ ಧರ್ಮ ಅನುಸರಿಸಬೇಕೆಂದು ಅವೈಜ್ಞಾನಿಕ ನಿಯಮ ರೂಪಿಸಿದ್ದು, ಬೇರೆ ಯಾವುದೇ ಧರ್ಮದಲ್ಲಿ ಇಂತಹ ನಿಯಮಗಳಿಲ್ಲ. ರಾಯಚೂರಿನ ಏಕ್ ಮಿನಾರ್ ಮಸೀದಿಗೆ 500 ವರ್ಷಗಳ ಇತಿಹಾಸವಿದೆ. ಇದಕ್ಕೆ ಕ್ರಿಶ್ಚಿಯನ್ ಧರ್ಮದವರು ದೇಣಿಗೆ ನೀಡಿದ್ದಾರೆ ಇದು ಭ್ರಾತೃತ್ವದ ಸಂಕೇತ ಎಂದರು. ಮುಸ್ಲಿಂ ಮಹಿಳೆಯರಿಗೆ ನ್ಯಾಯ ನೀಡಲು ತ್ರಿವಲ್ ತಲಾಖ್ ಮಾಡಿದ್ದೇವೆ ಎನ್ನುವ ನೀವು ಬಿಲ್ಕಿಸ್ ಬಾನು ಅವರನ್ನು ಕರೆದು ಜೊತೆಯಲ್ಲಿ ಟೀ ಕುಡಿಯಬಹುದೇ ಎಂದು ವಾಗ್ದಾಳಿ ನಡೆಸಿದರು. ಬಜರಂಗದಳ, ಆರೆಸೆಸ್ಸ್ ಕಾರ್ಯಕರ್ತರು, ಬೆಜೆಪಿಯ ಬೆಂಬಲಿಗರು ದಲಿತರ, ಮುಸ್ಲಿಮರ ಮೇಲೆ ಹಲ್ಲೆ, ಅಮಾಯಕರ ಕೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸುವವರು ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ತೋರಿಸಿ ಎಂದಾಗ ಕಾರ್ಯಕ್ರಮದಲ್ಲಿ ಇದ್ದ ನೂರಾರು ಯುವಕರು ಎದ್ದು ನಿಂತು ಟಾರ್ಚ್ ತೋರಿಸಿ ಅಸದುದ್ದೀನ್ ಪರ ಘೋಷಣೆ ಕೂಗಿದರು.
ಅಮೆರಿಕದೊಂದಿಗಿನ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧ: ಇರಾನ್ ಅಧ್ಯಕ್ಷ ಪೆಜೆಶ್ಕಿಯನ್
ಟೆಹರಾನ್: ಅಂತರರಾಷ್ಟ್ರೀಯ ಚೌಕಟ್ಟುಗಳ ಆಧಾರದ ಮೇಲೆ ಅಮೆರಿಕದೊಂದಿಗಿನ ಸಮಸ್ಯೆಗಳನ್ನು ಪರಿಹರಿಸಲು ಇರಾನ್ ಸಿದ್ಧವಾಗಿದೆ ಎಂದು ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಒಪ್ಪಂದವನ್ನು ಘೋಷಿಸಿದ ಒಂದು ದಿನದ ನಂತರ ಈ ಹೇಳಿಕೆ ಹೊರಬಿದ್ದಿದೆ. ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಇರಾನ್ನ ಅಧಿಕೃತ ಸುದ್ದಿ ಸಂಸ್ಥೆ ಐಆರ್ಎನ್ಎ ಉಲ್ಲೇಖಿಸಿ Aljazeera ವರದಿ ಮಾಡಿದೆ.
ಇರಾನ್ ಜೊತೆಗಿನ ಯುದ್ಧದ ನಡುವೆ ಗಾಝಾದಲ್ಲಿ ಇಸ್ರೇಲ್ ನಿಂದ ಕನಿಷ್ಠ 870 ಮಂದಿಯ ಹತ್ಯೆ!
ಪಶ್ಚಿಮದಂಡೆ: ಇಸ್ರೇಲ್ ಮತ್ತು ಇರಾನ್ ನಡುವಿನ ಪರಸ್ಪರ ದಾಳಿಯ ಮೇಲೆ ವಿಶ್ವದ ಗಮನ ಕೇಂದ್ರೀಕರಿಸುತ್ತಿದ್ದಂತೆ, 12 ದಿನಗಳ ಸಂಘರ್ಷದ ಸಮಯದಲ್ಲಿ ಗಾಝಾದಲ್ಲಿ ಇಸ್ರೇಲಿ ದೌರ್ಜನ್ಯ ನಿರಂತರವಾಗಿ ಮುಂದುವರಿಯಿತು. ಫೆಲೆಸ್ತೀನ್ ನ ಆರೋಗ್ಯ ಅಧಿಕಾರಿಗಳ ಪ್ರಕಾರ, ಇರಾನ್ ಜೊತೆಗಿನ ಇಸ್ರೇಲ್ ಸಂಘರ್ಷದ ಸಮಯದಲ್ಲಿ ಇಸ್ರೇಲ್ ಪಡೆಗಳ ದಾಳಿಗೆ ಕನಿಷ್ಠ 870 ಜನರು ಮೃತಪಟ್ಟಿದ್ದಾರೆ ಎಂದು Aljazeera ವರದಿ ಮಾಡಿದೆ. ಇಸ್ರೇಲ್ ದಾಳಿಯಿಂದ ಇದುವರೆಗೂ ಫೆಲೆಸ್ತೀನ್ ನಲ್ಲಿ ಮೃತಪಟ್ಟಿರುವ ಜನರ ಸಂಖ್ಯೆ 56,077 ರಷ್ಟಿದೆ ಎಂದು ತಿಳಿದುಬಂದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಸಾವಿರಾರು ಜನರ ಸಂಖ್ಯೆ ಇದರಲ್ಲಿ ಸೇರಿಲ್ಲ.
ರಾಷ್ಟ್ರಪತಿ ಭೇಟಿ ಮಾಡಿದ ಸಿಎಂ, 7 ಮಸೂದೆಗಳಿಗೆ ಸಹಿ ಹಾಕುವಂತೆ ಮನವಿ, ಯಾವ್ಯಾವ ಬಿಲ್?
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ರಾಜ್ಯದ ಏಳು ಬಾಕಿ ಉಳಿದಿರುವ ವಿಧೇಯಕಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಈ ವಿಧೇಯಕಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ತಿದ್ದುಪಡಿ ವಿಧೇಯಕವೂ ಸೇರಿದೆ. ಶ್ರೀಮಂತ ದೇವಾಲಯಗಳ ಹುಂಡಿ ಹಣವನ್ನು ಇತರ ದೇವಾಲಯಗಳಿಗೆ ವರ್ಗಾಯಿಸುವ ವಿಧೇಯಕದ ಬಗ್ಗೆಯೂ ಚರ್ಚಿಸಲಾಯಿತು. ಈ ವಿಷಯದ ಬಗ್ಗೆ ರಾಷ್ಟ್ರಪತಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಗಲ್ಫ್ ರಾಷ್ಟ್ರಗಳಿಗೆ ತೆರಳುವ 4, ಮಂಗಳೂರಿಗೆ ಆಗಮಿಸುವ 2 ಅಂತರ್ರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು
ಮಂಗಳೂರು, ಜೂ. 24: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಖತರ್ ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ದಾಳಿ ನಡೆದಿದ್ದು, ಈ ಘಟನೆಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಉದ್ವಿಗ್ನತೆಯ ಕಾರಣದಿಂದ ಅಲ್ಲಿನ ವಾಯುಪ್ರದೇಶವನ್ನು ಮುಚ್ಚಲಾಗಿತ್ತು. ಇದರಿಂದಾಗಿ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಮತ್ತು ಅಲ್ಲಿಂದ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಕೆಲವು ವಿಮಾನಗಳ ಹಾರಾಟ ಮಂಗಳವಾರ ರದ್ದುಗೊಂಡಿದೆ. ಮಂಗಳೂರಿಗೆ ಆಗಮಿಸಬೇಕಿದ್ದ ಇಂಡಿಗೋ 6ಇ 1437(ಅಬುಧಾಬಿ-ಮಂಗಳೂರು), ಇಂಡಿಗೋ 6ಇ 1468(ದುಬೈ -ಮಂಗಳೂರು), ಏರ್ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್ 832(ದುಬೈ- ಮಂಗಳೂರು), ಏರ್ ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್ 886(ದಮಾಮ್-ಮಂಗಳೂರು) ಅಂತರ್ರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದೆ. ಮಂಗಳೂರಿನಿಂದ ಹಾರಾಟ ನಡೆಸುವ ಏರ್ ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್ ಮಂಗಳೂರು -ದಮಾಮ್ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್ ಮಂಗಳೂರು -ದುಬೈ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್ 832(ಮಂಗಳೂರು-ದುಬೈ) ವಿಮಾನಗಳ ಹಾರಾಟ ರದ್ದಾಗಿದೆ. ಇಂಡಿಗೋ 6ಇ 653( ಮಂಗಳೂರು-ಮುಂಬೈ ) ದೇಶಿಯ ವಿಮಾನದ ಸಂಚಾರವನ್ನು ನಿರ್ವಹಣೆಯ ಕಾರಣದಿಂದಾಗಿ ರದ್ದುಗೊಳಿಸಲಾಗಿದೆ. ಸೋಮವಾರ ರಾತ್ರಿ ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ದಮಾಮ್ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವನ್ನು ಮಸ್ಕತ್ಗೆ ಕಳುಹಿಸಲಾಗಿತ್ತು. ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮುಂಬೈನಲ್ಲಿ ಇಳಿಸಲಾಗಿತ್ತು.ಈ ಎರಡೂ ವಿಮಾನಗಳು ಇಂದು ಮಂಗಳೂರಿಗೆ ವಾಪಸಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಂಟ್ವಾಳ| ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ: ಮತ್ತೊಂದು ವೆಬ್ಸೈಟ್ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ : ಸಜಿಪನಡು ಗ್ರಾಮದ ದೇರಾಜೆಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಮತ್ತೊಂದು ವೆಬ್ಸೈಟ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. Gadinadadhwani.online ಎಂಬ ವೆಬ್ಸೈಟ್ “ಕರಾವಳಿಯಲ್ಲಿ ಮತ್ತೆ ಮುಂದುವರಿದ ತಲವಾರು ದಾಳಿ, ಸಜೀಪದಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಅಮಾಯಕ ಮುಸ್ಲಿಮರ ಮೇಲೆ ದಾಳಿ” ಎಂಬ ತಲೆಬರಹವಿರುವ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ. ಸದ್ರಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ, ಸಾರ್ವಜನಿಕ ವಲಯದಲ್ಲಿ ಭಯಭೀತಿಯನ್ನುಂಟು ಮಾಡಿದ ವೆಬ್ಸೈಟ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2025, ಕಲಂ 240 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಳ್ಳು ಸುದ್ದಿ ಪ್ರಸಾರ ಮಾಡುವವರ ವಿರುದ್ಧ ಮುಂದಿನ ದಿನಗಳಲ್ಲೂ ಕಾನೂನು ಕ್ರಮ ಮುಂದುವರಿಯ ಲಿದೆ ಎಂದು ದ.ಕ. ಜಿಲ್ಲಾ ವರಿಷ್ಠಾಧಿಕಾರಿ ಕೆ. ಅರುಣ್ ಅವರು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರದ ಆರೋಪದಲ್ಲಿ ಶನಿವಾರ ʼಡಿ ಟಿವಿ ಕನ್ನಡʼ ಎಂಬ ವೆಬ್ಸೈಟ್ ವಿರುದ್ಧವೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇರಾನಿನ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ
ಟೆಹ್ರಾನ್: ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ ಬಳಿಕವೂ ಇಸ್ರೇಲ್ ದಾಳಿ ನಡೆಸಿರುವುದಾಗಿ ಇರಾನಿನ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ. ಉತ್ತರ ಇರಾನಿನ ಬಬೋಲ್ ಮತ್ತು ಬಬೋಲ್ಸರ್ ನಗರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಟೆಹ್ರಾನಿನಲ್ಲೂ ಸ್ಫೋಟದ ಸದ್ದು ಕೇಳಿಸಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, ಸೋಮವಾರ ಇಸ್ರೇಲಿನ ಕ್ಷಿಪಣಿ ದಾಳಿಯಲ್ಲಿ ಇರಾನಿನ ಅರೆ ಸೇನಾಪಡೆಯ ಗುಪ್ತಚರ ವಿಭಾಗದ ಕಮಾಂಡರ್ ಮುಹಮ್ಮದ್ ಯೂಸೆಫ್ವಾಂಡ್ ಸಾವನ್ನಪ್ಪಿರುವುದಾಗಿ ಐಆರ್ಜಿಸಿ ದೃಢಪಡಿಸಿದೆ.
ಚೀನಾ ಇರಾನ್ನ ತೈಲ ಖರೀದಿ ಮುಂದುವರಿಸಬಹುದು: ಟ್ರಂಪ್
ವಾಷಿಂಗ್ಟನ್, ಜೂ.24: ಚೀನಾವು ಇರಾನಿನ ತೈಲ ಖರೀದಿಯನ್ನು ಮುಂದುವರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿಕೆ ನೀಡಿದ್ದು ಇರಾನಿನ ವಿರುದ್ಧದ ನಿರ್ಬಂಧಗಳನ್ನು ಸಡಿಲಿಸುವ ಸೂಚನೆ ಇದಾಗಿರಬಹುದು ಎಂದು ಮಾಧ್ಯಮಗಳು ವಿಶ್ಲೇಷಿಸಿವೆ. `ಚೀನಾ ಈಗ ಇರಾನಿನಿಂದ ತೈಲ ಖರೀದಿಸುವುದನ್ನು ಮುಂದುವರಿಸಬಹುದು. ಅವರು(ಚೀನಾ) ಅಮೆರಿಕದಿಂದಲೂ ಸಾಕಷ್ಟು ಖರೀದಿಸುತ್ತಾರೆ ಎಂದು ಆಶಿಸುತ್ತೇನೆ' ಎಂದು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ `ಟ್ರುಥ್ ಸೋಶಿಯಲ್'ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಉಕ್ರೇನ್: ರಶ್ಯದ ದಾಳಿಯಲ್ಲಿ18 ಸಾವು; 100ಕ್ಕೂ ಅಧಿಕ ಮಂದಿಗೆ ಗಾಯ
ಕೀವ್, ಜೂ.24: ಉಕ್ರೇನ್ ಮೇಲೆ ರಶ್ಯ ನಡೆಸಿದ ಡ್ರೋನ್, ಕ್ಷಿಪಣಿ ಹಾಗೂ ಫಿರಂಗಿ ದಾಳಿಗಳಲ್ಲಿ ಕನಿಷ್ಠ 18 ನಾಗರಿಕರು ಸಾವನ್ನಪ್ಪಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಮಧ್ಯ ಉಕ್ರೇನ್ನ ನಿಪ್ರೋ ನಗರದ ಮೇಲೆ ಮಂಗಳವಾರ ಮಧ್ಯಾಹ್ನ ರಶ್ಯ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಮಾರ್ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದು 11 ಮಂದಿ ಗಾಯಗೊಂಡಿದ್ದಾರೆ. ಕ್ಷಿಪಣಿಗಳ ಸುರಿಮಳೆಯಿಂದ 19 ಶಾಲೆಗಳು, 10 ಶಿಶುವಿಹಾರಗಳು, ಒಂದು ವೃತ್ತಿಪರ ತರಬೇತಿ ಶಾಲೆ, 8 ವೈದ್ಯಕೀಯ ವ್ಯವಸ್ಥೆಗಳು, ಸಮಾಜ ಕಲ್ಯಾಣ ಸಂಸ್ಥೆಯ ಕಚೇರಿಗೆ ಹಾನಿಯಾಗಿದೆ. ಖೆರ್ಸಾನ್ ಪ್ರಾಂತದಲ್ಲಿ ರಶ್ಯದ ಫಿರಂಗಿ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿದ್ದು ಕನಿಷ್ಠ 7 ಮಂದಿ ಗಾಯಗೊಂಡಿದ್ದಾರೆ. ಈಶಾನ್ಯ ಉಕ್ರೇನ್ನ ಸುಮಿ ಪ್ರಾಂತದಲ್ಲಿ ಡ್ರೋನ್ ದಾಳಿಯಲ್ಲಿ 5 ವರ್ಷದ ಬಾಲಕನ ಸಹಿತ ಮೂವರು ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಸ್ಲಿಮರ ಮೇಲೆ ದಾಳಿ ಆರಂಭ, ಮುಂದೆ ದಲಿತರ, ಕ್ರೈಸ್ತರ ಸರದಿ: ಶಿವಸುಂದರ್ ಕಳವಳ
ರಾಯಚೂರು : ವಕ್ಫ್ ತಿದ್ದುಪಡಿ ಕಾಯ್ದೆ ಮುಸ್ಲಿಮರ ಧಾರ್ಮಿಕ ಹಕ್ಕು ಹಾಗೂ ಆಸ್ತಿಪಾಸ್ತಿ ಕಸಿದುಕೊಳ್ಳುವ ಹುನ್ನಾರವಾಗಿದೆ. ಇದು ಮುಸ್ಲಿಮರ ಮೇಲಿನ ದಾಳಿಯ ಆರಂಭವಾಗಿದೆ. ಮುಂದೆ ಕ್ರಿಶ್ಚಿಯನ್, ದಲಿತರ, ಅಲ್ಪಸಂಖ್ಯಾತರ ಮೇಲೆಯೂ ದಾಳಿ ಮುಂದುವರಿಯಲಿದೆ ಎಂದು ಚಿಂತಕ ಶಿವಸುಂದರ್ ತಿಳಿಸಿದ್ದಾರೆ. ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಯ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಆಯೋಜಿಸಿದ್ದ ವಕ್ಫ್ ತಿದ್ದುಪಡಿ ಕಾಯ್ದೆಯ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಕ್ಫ್ ಕಾಯ್ದೆ ಅಡಿಯಲ್ಲಿ ಎಲ್ಲರಿಗೂ ವಕ್ಫ್ ಗೆ ದಾನ ಮಾಡುವ ಹಕ್ಕು ನೀಡಲಾಗಿತ್ತು. ನೂತನ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರೇತರರು ವಕ್ಫ್ಗೆ ಜಮೀನು ನೀಡಲು ಬರುವುದಿಲ್ಲ, ವಕ್ಫ್ಗೆ ದಾನ ಮಾಡಬೇಕಾದರೆ, ಯಾರಾದರೂ ಮುಸ್ಲಿಂ ಧರ್ಮದಲ್ಲಿ 5 ವರ್ಷ ಇಸ್ಲಾಂ ಧರ್ಮ ಅನುಸರಿಸಬೇಕು ಎಂಬೆಲ್ಲ ಕಟ್ಟುನಿಟ್ಟಿನ ನಿಯಮ ರೂಪಿಸಿ ದಾನ ಮಾಡದಂತೆ ಕಾಯ್ದೆ ರೂಪಿಸಲಾಗಿದೆ ಎಂದು ಆರೋಪಿಸಿದರು. ನೂತನ ವಕ್ಫ್ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಐಎಎಸ್ ಅಧಿಕಾರಿಗೆ ಸರ್ವಾಧಿಕಾರ ನೀಡಲಾಗಿದ್ದು, ಸರಕಾರದ ಪರವಾಗಿ ವಕಾಲತ್ತು ನಡೆಸಲಾಗುತ್ತದೆ. ಇದರಿಂದ ಮುಸ್ಲಿಮರಿಗೆ ನ್ಯಾಯ ಸಿಗುವುದು ಅಸಾಧ್ಯ ಎಂದರು. ದೇಶದಲ್ಲಿನ ವಕ್ಫ್ ಆಸ್ತಿಯ ಮೇಲೆ ಕೇಂದ್ರ ಸರಕಾರ ಕಣ್ಣು ಹಾಕಿದ್ದು, ಅದನ್ನು ಕಬಳಿಸಲು ವಕ್ಫ್ ಕಾಯ್ದೆಯನ್ನು ತಿದ್ದುಪಡಿ ತರಲು ಹೊರಟಿದೆ. ಸಂಸತ್ತಿನಲ್ಲಿ ಜಾರಿಗೆ ತಂದ ಕಾಯ್ದೆಯನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿ ದಾವೆ ಹೂಡಲಾಗಿದೆ. ಸಂಸತ್ತು ಸರ್ವಶ್ರೇಷ್ಠವಲ್ಲ, ಸುಪ್ರೀಂಕೋರ್ಟ್ ಕೂಡ ಸರ್ವಶ್ರೇಷ್ಠವಲ್ಲ, ಸಂವಿಧಾನವೇ ಸರ್ವಶ್ರೇಷ್ಠ ಎಂದು ಹೇಳಿದರು. ವಕ್ಫ್ ತಿದ್ದುಪಡಿ ಮುಸ್ಲಿಮರ ಮೇಲೆ ದಾಳಿಯ ಆರಂಭವಾಗಿದೆ. ಮುಂದೆ ಕ್ರಿಶ್ಚಿಯನ್, ದಲಿತರ, ಆದಿವಾಸಿಗಳ, ಮಹಿಳೆಯರ ಮೇಲೆ ದಾಳಿ ಮಾಡಲಾಗುತ್ತದೆ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಬೇಕಾಗಿದೆ ಎಂದು ಸಲಹೆ ನೀಡಿದರು. ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹಿಮಾನಿ ಮಾತನಾಡಿ, ದೇಶದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಕಾಯ್ದೆಗಳನ್ನು ಜಾರಿ ಮಾಡಲಾಗುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಮೂಲಕ ಮುಸ್ಲಿಮರ ಧಾರ್ಮಿಕ ಹಕ್ಕು ಉಲ್ಲಂಘನೆ ಮಾಡಲಾಗುತ್ತಿದೆ. ಮದರಸ, ಮಸೀದಿಗಳನ್ನು ತೆರವು ಮಾಡಲಾಗುತ್ತಿದೆ. ನಾವೆಲ್ಲರೂ ನಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿ ದೇಶದಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಕಿವಿಮಾತು ಹೇಳಿದರು. ಹೈದರಾಬಾದ್ನ ಮುಹಮ್ಮದ್ ಖಾನ್ ಹಮೀದ್, ಮೌಲಾನಾ ಜಾಫರ್ ಪಾಷಾ ಸಾಹೇಬ್, ಜಮಾಅತೆ ಇಸ್ಲಾಮೀ ಹಿಂದ್ನ ಮುಖಂಡರು, ಧಾರ್ಮಿಕ ಗುರುಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮಾಧ್ಯಮಗಳ ಮುಂದೆ ಹೇಳಿದಂತೆ ಸಿಎಂಗೂ ಹೇಳುವೆ: ಶಾಸಕ ಬಿ.ಆರ್. ಪಾಟೀಲ್
ಬೆಂಗಳೂರು: ನಾನು ಮಾಧ್ಯಮದವರ ಮುಂದೆ ಏನು ಹೇಳಿಕೆ ಕೊಟ್ಟಿದ್ದೇನೆಯೋ ಅದನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹೇಳುವೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಮಂಗಳವಾರ ವಿಜಯನಗರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಗಳ ಭೇಟಿಗೆ ಹೋಗುತ್ತಿದ್ದೇನೆ. ನನ್ನದು ಏನು ಬೇಡಿಕೆ ಇಲ್ಲ. ನಾನು ಮಾಧ್ಯಮದವರ ಮುಂದೆ ಏನು ಹೇಳಿಕೆ ಕೊಟ್ಟಿದ್ದೇನೆ, ಅದನ್ನೆ ಸಿಎಂಗೆ ಹೇಳುವೆ ಎಂದು ತಿಳಿಸಿದರು. ಆರ್.ವಿ.ದೇಶಪಾಂಡೆ ಮತ್ತು ಬಸವರಾಜ ರಾಯರೆಡ್ಡಿ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಸಂಸಾರ ಎಂದ ಮೇಲೆ ಗಂಡ-ಹೆಂಡತಿ ಜಗಳ ಇದ್ದೇ ಇರುತ್ತದೆ, ಅದೇ ರೀತಿ ಇದು ಕೂಡ ಎಂದು ನುಡಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಸಿಎಂ ಸಿದ್ದರಾಮಯ್ಯ
ಹೊಸದಿಲ್ಲಿ: ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ಅನುಮೋದನೆಗೆ ಬಾಕಿಯಿರುವ ಏಳು ವಿಧೇಯಕಗಳಿಗೆ ಅಂಕಿತ ಹಾಕುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಸಲ್ಲಿಸಿದರು. ವಿಧೇಯಕಗಳು: 2015ನೆ ಸಾಲಿನ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ)ವಿಧೇಯಕ, 2024ನೆ ಸಾಲಿನ ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ)ತೆರಿಗೆ ವಿಧೇಯಕ, 2024ನೆ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ)ವಿಧೇಯಕ, 2025ನೆ ಸಾಲಿನ ನೋಟರಿಗಳು (ಕರ್ನಾಟಕ ತಿದ್ದುಪಡಿ) ವಿಧೇಯಕ, 5. 2025ನೇ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ. 2025ನೆ ಸಾಲಿನ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ ಹಾಗೂ 2024ನೆ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ (ತಿದ್ದುಪಡಿ) ಕಾಯ್ದೆಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಉಪಸ್ಥಿತರಿದ್ದರು. ‘ರಾಜ್ಯದ 7 ವಿಧೇಯಕಗಳಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದುದರಿಂದ, ರಾಷ್ಟ್ರಪತಿಯನ್ನು ಭೇಟಿ ಮಾಡಿ ಆದಷ್ಟು ಬೇಗ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ವಿಧೇಯಕಗಳು ಸದ್ಯ ನನ್ನ ಬಳಿ ಇಲ್ಲ. ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿರುವುದಾಗಿ ರಾಷ್ಟ್ರಪತಿ ಮಾಹಿತಿ ನೀಡಿದರು. ಅವುಗಳನ್ನು ತರಿಸಿಕೊಂಡು ಅನುಮೋದನೆ ಕೊಡಿ ಎಂದು ಕೋರಿದ್ದೇವೆ. ಅಲ್ಲದೇ, ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ 14 ಹಾಗೂ 15ನೆ ಹಣಕಾಸು ಆಯೋಗದಲ್ಲಿ ಸುಮಾರು 80 ಸಾವಿರ ಕೋಟಿ ರೂ.ನಷ್ಟವಾಗಿದೆ. 16ನೆ ಹಣಕಾಸು ಆಯೋಗದಲ್ಲಿ ನಮಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದೇನೆ’ -ಸಿದ್ದರಾಮಯ್ಯ, ಮುಖ್ಯಮಂತ್ರಿ ಮುಖ್ಯಮಂತ್ರಿ @siddaramaiah ಅವರು ಅವರು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಅನುಮೋದನೆಗೆ ಬಾಕಿ ಇರುವ ವಿಧೇಯಕಗಳ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ ಮುಖ್ಯಮಂತ್ರಿಗಳು ರಾಷ್ಟ್ರಪತಿಗಳಿಗೆ ಮೈಸೂರು ಪೇಟ ಹಾಗೂ ಶ್ರೀಗಂಧದ ಸ್ಮರಣಿಕೆ ನೀಡಿ ಗೌರವಿಸಿದರು.… pic.twitter.com/5Lev8PlLrt — CM of Karnataka (@CMofKarnataka) June 24, 2025
ವಂಚನೆ ಪ್ರಕರಣ: ಐಶ್ವರ್ಯ ಗೌಡ ಸಹಿತ 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಈಡ
ಬೆಂಗಳೂರು: ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ ಸಹಿತ ಇತರೆ 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಈಡಿ) ಮಂಗಳವಾರ ತಿಳಿಸಿದೆ. ಬೆಂಗಳೂರಿನ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ನ್ಯಾಯಾಲಯಕ್ಕೆ ಜೂನ್ 21ರಂದು ಪ್ರಾಸಿಕ್ಯೂಷನ್ ದೂರು ದಾಖಲಿಸಲಾಗಿದೆ ಎಂದು ಈಡಿ ತಿಳಿಸಿದೆ. ಐಶ್ವರ್ಯ ಗೌಡ ಮತ್ತು ಇತರೆ ಆರೋಪಿಗಳು ಹಲವು ವ್ಯಕ್ತಿಗಳಿಂದ ಚಿನ್ನಾಭರಣ ಹಾಗೂ ನಗದು ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದು ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿರುವುದಾಗಿ ಈ.ಡಿ. ಪ್ರಕಟನೆಯಲ್ಲಿ ಹೇಳಿದೆ. ಇತ್ತೀಚೆಗೆ ಈ.ಡಿ. ಸಂಸ್ಥೆಯು ಇದೇ ಪ್ರಕರಣದಲ್ಲಿ ಐಶ್ವರ್ಯ ಗೌಡ ದಂಪತಿಗೆ ಸಂಬಂಧಿಸಿದ 2.01 ಕೋಟಿ ರೂ. ಮೌಲ್ಯದ ಫ್ಲ್ಯಾಟ್, ನಿವೇಶನಗಳು ಹಾಗೂ ನಿರ್ಮಾಣವಾಗಿರುವ ಕಟ್ಟಡ ಹಾಗೂ 1.97 ಕೋಟಿ ರೂ. ಮೊತ್ತದ ಹಣ ಹಾಗೂ ವಾಹನಗಳು ಒಳಗೊಂಡಂತೆ ಒಟ್ಟು 3.98 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಬೀದರ್ | ಲೈಂಗಿಕ ಕಿರಕುಳ ತಡೆಗಟ್ಟಲು SHe Box Portal ಬಗ್ಗೆ ಜಾಗೃತಿ ಮೂಡಿಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ಲೈಂಗಿಕ ಕಿರಕುಳ ತಡೆಗಟ್ಟುವಿಕೆಗಾಗಿ SHe Box Portal ಬಗ್ಗೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2013ರ ಕಾಯ್ದೆಯ ನಿಬಂಧನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕೋಸ್ಕರ SHe Box Portal ನ್ನು ಪ್ರಾರಂಭಿಸಲಾಗಿದೆ. ಸದರಿ ಪೋರ್ಟಲ್, ಎಲ್ಲಾ ಸಾರ್ವಜನಿಕ, ಸರಕಾರಿ ಹಾಗೂ ಖಾಸಗಿ, ಸಾರ್ವಜನಿಕ , ಸಂಘಟಿತ ಅಥವಾ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಮಹಿಳಾ ಉದ್ಯೋಗಿಯು ತನ್ನ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಲು ಹಾಗೂ ಅದರ ಸ್ಥಿತಿಯನ್ನು ಪತ್ತೆ ಹಚ್ಚಲು ಮಾರ್ಗವನ್ನು ಒದಗಿಸುತ್ತದೆ. ಈ ಪೋರ್ಟಲ್ನ ( https://shebox.wcd.gov.in ) ಲಿಂಕ್ ಅನ್ನು ಎಲ್ಲಾ ವೆಬ್ಸೈಟ್ಗಳಲ್ಲಿ ಹೈಲೈಟ್ ಮಾಡಲು ಹಾಗೂ ಜಾಗೃತಿ ಮೂಡಿಸಲು ಅವರು ತಿಳಿಸಿದ್ದಾರೆ. ಜಿಲ್ಲೆಯ 10 ಹಾಗೂ 10ಕ್ಕಿಂತ ಹೆಚ್ಚು ಜನ ಕರ್ತವ್ಯ ನಿರ್ವಹಿಸುವ ಎಲ್ಲಾ ಸರಕಾರಿ ಹಾಗೂ ಖಾಸಗಿ, ಸಾರ್ವಜನಿಕ, ಸಂಘಟಿತ ಅಥವಾ ಅಸಂಘಟಿತ ವಲಯಗಳಲ್ಲಿ ರಚಿಸಿರುವ ಆಂತರಿಕ ದೂರು ಸಮಿತಿಯ ವಿವರಗಳನ್ನು SHe Box Portal ನಲ್ಲಿ ಅಪ್ಲೋಡ್ ಮಾಡದಿದ್ದಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಹಾಗೆಯೇ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿರುವ ಮಹಿಳಾ ಉದ್ಯೋಗಿಗಳು ಇದನ್ನು ಬಳಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಎಲ್ಲಾ ಸರಕಾರಿ, ಸಾರ್ವಜನಿಕ, ಖಾಸಗಿ, ಸಂಘಟಿತ, ಅಸಂಘಟಿತ ವಲಯ ಅಧಿಕಾರಿ, ಮುಖ್ಯಸ್ಥರಿಗೆ ಅವರು ಸೂಚನೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಗರದ ಮೈಲೂರನಲ್ಲಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆ : 99807 02545, 83100 32095 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
Tirupati Tirumala: ತಿರುಪತಿಗೆ ಹೋಗುವ ಕರ್ನಾಟಕದ ಭಕ್ತರಿಗೆ ಭರ್ಜರಿ ಸಿಹಿಸುದ್ದಿ
ಪ್ರಸಿದ್ಧ ಧಾರ್ಮಿಕ ಸ್ಥಳ ಆಂಧ್ರಪ್ರದೇಶದ ತಿರುಪತಿ ತಿರುಮಲ ಕ್ಷೇತ್ರಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಭೇಟಿ ನೀಡುತ್ತಾರೆ. ದಿನವಿಡೀ ಕಾದು ವೆಂಕಟೇಶ್ವರನ ದರ್ಶನ ಪಡೆಯಲು ದೇಶದ ವಿವಿಧ ರಾಜ್ಯಗಳಿಂದ ಆಗಮಿಸುತ್ತಾರೆ. ಬೆಂಗಳೂರಿನಿಂದ ಕೆಲವೇ ಗಂಟೆಗಳ ಪ್ರಯಾಣದ ದೂರದಲ್ಲಿರುವುದರಿಂದ ಕರ್ನಾಟಕದಿಂದಲೂ ತಿರುಪತಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚೇ ಇದೆ. ಈ ಹಿನ್ನೆಲೆ ಕರ್ನಾಟಕ ಸರ್ಕಾರವು ತಿರುಪತಿಗೆ ಹೋಗುವ ಕರ್ನಾಟಕದ ಭಕ್ತಾದಿಗಳಿಗೆ
ವಸತಿ ಯೋಜನೆಯಲ್ಲಿ ಮನೆ ಹಂಚಿಕೆಗೆ ಲಂಚ ಪಡೆದ ಆರೋಪ: ಶಾಸಕ ಬಿ.ಆರ್. ಪಾಟೀಲ್ ಆಡಿಯೋ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು
ಬೆಂಗಳೂರು: ‘ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳ ಹಂಚಿಕೆಗೆ ಲಂಚ ಪಡೆಯಲಾಗಿದೆ’ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪದ ಆಡಿಯೋಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನೈಜ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎಚ್.ಎಂ.ವೆಂಕಟೇಶ್ ಮಂಗಳವಾರ ದೂರು ನೀಡಿದ್ದಾರೆ. ಲಂಚ ಕೊಟ್ಟರೇ ನಿವೇಶನ ಕೊಡುವ ವಿಚಾರವಾಗಿ ಶಾಸಕ ಬಿ.ಆರ್.ಪಾಟೀಲ್ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ನಡುವೆ ಮಾತುಕತೆ ನಡೆದಿದ್ದು, ಇದರ ಆಡಿಯೋ ಬಹಿರಂಗಗೊಂಡಿದೆ. ಜನರ ತೆರಿಗೆ ಹಣವನ್ನು ಇವರು ಬಳಸಿಕೊಂಡು ವಂಚನೆ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಇಷ್ಟರಲ್ಲಿ ಸುವೋಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳು ಹಂಚಬೇಕಿತ್ತು. ದುರ್ಬಲರಿಗೆ ಹಂಚಿಕೆಯಾಗಬೇಕಿದ್ದ ಮನೆಗಳಿಗೆ ಹಣ ಪಡೆಯುತ್ತಿದ್ದಾರೆ. ಮನೆಗಳ ಹಂಚಿಕೆಗೆ ಪ್ರತಿ ಮನೆಗೆ 10 ಸಾವಿರ ಹಣ ಪಡೆಯಲಾಗಿದೆ. ಬಿ.ಆರ್.ಪಾಟೀಲ್ ಮತ್ತು ಸರ್ಫರಾಜ್ ಮಾತನಾಡಿರುವುದರಲ್ಲಿ ಸತ್ಯಾಂಶ ಇರಬಹುದು. ಹೀಗಾಗಿ ಆಡಿಯೋ ಇಟ್ಟುಕೊಂಡು ಸೂಕ್ತ ತನಿಖೆ ನಡೆಸಬೇಕು ಎಂದು ಎಚ್.ಎಂ.ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಬೀದರ್ | ಗಡಿರಾಯಪಳ್ಳಿ ಗ್ರಾಮದಲ್ಲಿನ ಅನಧಿಕೃತ ಮೂರ್ತಿಗಳನ್ನು ತೆರವುಗೊಳಿಸಲು ಮನವಿ
ಬೀದರ್ : ಹುಲಸುರ್ ತಾಲ್ಲೂಕಿನ ಗಡಿರಾಯಪಳ್ಳಿ ಗ್ರಾಮದಲ್ಲಿನ ಅನಧಿಕೃತ ಮೂರ್ತಿಗಳು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಗಡಿರಾಯಪಳ್ಳಿ ಗ್ರಾಮದಲ್ಲಿ ಶಿವಾಜಿ, ಸಂಗೊಳ್ಳಿ ರಾಯಣ್ಣ ಹಾಗೂ ಸಿದ್ದಲಿಂಗೇಶ್ವರ್ ಸೇರಿದಂತೆ ಇನ್ನಿತರ ಮಹಾನ್ ಪುರುಷರ ಮೂರ್ತಿಗಳು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ. ತಕ್ಷಣವೇ ಈ ಅನಧಿಕೃತವಾಗಿ ನಿರ್ಮಾಣ ಮಾಡಲಾದ ಮೂರ್ತಿಗಳನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಗೌತಮ್ ಸೇಡೋಳ್, ಲೋಕೇಶ್ ಕಾಂಬಳೆ, ಇಸ್ಮಾಯಿಲ್ ಶಿಂಧೆ, ವಿಶ್ವನಾಥ್ ಗಾಯಕವಾಡ್, ಜ್ಞಾನೇಶ್ವರ್ ಗಾಯಕವಾಡ್, ಭೀಮಶಾ ಮೆಲಕೇರಿ, ವಿದ್ಯಾಸಾಗರ್ ಘಾಟಬೋರಳ್ ಉಪಸ್ಥಿತರಿದ್ದರು.
‘ನಮ್ಮ ಬಳಿ ದುಡ್ಡಿಲ್ಲ’ ಎಂದ ಗೃಹ ಸಚಿವ ಡಾ.ಪರಮೇಶ್ವರ್ ವಿಡಿಯೊ ವೈರಲ್..!
ಬಾಗಲಕೋಟೆ: ‘ಚಾಲುಕ್ಯರ ರಾಜಧಾನಿ ಬಾದಾಮಿ ಅಭಿವೃದ್ಧಿಗೆ 1ಸಾವಿರ ಕೋಟಿ ರೂ.ಗಳ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿಕೊಡಿ. ಆದರೆ, ನಮ್ಮ ಹತ್ತಿರ ದುಡ್ಡಿಲ್ಲ, ಸಿದ್ದರಾಮಣ್ಣನವರ ಹತ್ತಿರವು ದುಡ್ಡಿಲ್ಲ’ ಎಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಮವಾರ ಬಾಗಲಕೋಟೆಯ ಬಾದಾಮಿಯಲ್ಲಿ ಅಗ್ನಿಶಾಮಕ ದಳ ಠಾಣೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿರುವ ಡಾ.ಪರಮೇಶ್ವರ್ ಅವರು, ‘ಬಾದಾಮಿ ಅಭಿವೃದ್ಧಿಗೆ ದೊಡ್ಡದಾದ ಯೋಜನೆ ರೂಪಿಸಬೇಕು’ ಎಂದು ವೇದಿಕೆಯಲ್ಲಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಸಲಹೆ ಮಾಡಿದ್ದಾರೆ. ‘ಒಂದು ಸಾವಿರ ಕೋಟಿ ರೂ.ಅಷ್ಟು ದೊಡ್ಡ ಮೊತ್ತ ಎಂದ ಮೇಲೆ ಗಾಬರಿಯಾಗಬೇಡ. ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡು. ನಮ್ಮ ಹತ್ತಿರ ದುಡ್ಡಿಲ್ಲ, ಸಿದ್ದರಾಮಣ್ಣನ ಹತ್ತಿರ ದುಡ್ಡಿಲ್ಲ’ ಎಂದು ಡಾ.ಪರಮೇಶ್ವರ್ ಅವರು ಎರಡೆರಡು ಬಾರಿ ಉಚ್ಚರಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಪರಮೇಶ್ವರ್ ಅವರು, ‘ನಮ್ಮಲ್ಲಿದ್ದ ದುಡ್ಡೆಲ್ಲ ನಿಮಗೆ ಹಂಚಿದ್ದೇವೆ. ನಿಮಗೆ ಅಕ್ಕಿ, ಬೇಳೆ, ಎಣ್ಣೆ ಕೊಟ್ಟು ದುಡ್ಡು ಖಾಲಿಯಾಗಿದೆ. ಎಣ್ಣೆ ಸಚಿವರೂ ಇಲ್ಲಿಯೇ ಇದ್ದಾರೆ ಎಂದು ಅಬಕಾರಿ ಸಚಿವ ತಿಮ್ಮಾಪೂರ ಅವರ ಕಡೆಗೆ ನೋಡಿ ಡಾ.ಪರಮೇಶ್ವರ್ ಅವರು ನಗೆ ಚಟಾಕಿ ಸಿಡಿಸಿದ್ದಾರೆ. ಈ ವೇಳೆ ಸಭೆ ನಗೆಗಡಲಲ್ಲಿ ತೇಲಿದೆ. ತಮಾಷೆಗೆ ಹೇಳಿದ್ದೆ: ರಾಜ್ಯ ಸರಕಾರದ ಬಳಿ ದುಡ್ಡಿಲ್ಲವೆಂದು ನಾನು ತಮಾಷೆಗೆ ಹೇಳಿದ್ದೇನೆ ಅಷ್ಟೇ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸರಕಾರದ ಬಳಿ ದುಡ್ಡಿಲ್ಲವೆಂದು ಹೇಳಿಲ್ಲ. ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟು ಇಲ್ಲ. ಹಣ ಬಿಡುಗಡೆ ಸ್ವಲ್ಪ ನಿಧಾನ ಅಥವಾ ಡಿಪಿಆರ್ ಮಾಡುವುದರಲ್ಲಿ ತಡ ಆಗಿರಬಹುದು ಎಂದು ತಿಳಿಸಿದರು. ಯುವತಿ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿ, ಇಂತಹ ಘಟನೆಗಳನ್ನು ಲಘುವಾಗಿ ಪರಿಗಣಿಸಲ್ಲ. ಕೂಡಲೇ ಪ್ರಕರಣ ದಾಖಲಿಸಿ ಬಂಧಿಸುತ್ತೇವೆ. ಇಂತಹ ಘಟನೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಕಾಲ್ತುಳಿತ ಪ್ರಕರಣದ ವರದಿ ಕೇಂದ್ರಕ್ಕೆ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪೊಲೀಸ್ ವೈಫಲ್ಯ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ನಾನು ಆ ವರದಿಯನ್ನು ನೋಡಿಲ್ಲ. ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಏನಿದೆ ನೋಡಬೇಕು ಎಂದು ಹೇಳಿದರು. ದುಡ್ಡಿಲ್ಲ ಎಂದು ಪರಮೇಶ್ವರ್ ಮೂಲಕ ಸಿಎಂ ಹೇಳಿಸಿದ್ದಾರೆ: ಬಿಜೆಪಿ ಕಾಂಗ್ರೆಸ್ ಸರಕಾರ, ಶಾಸಕರಿಗೆ ಅನುದಾನ ನೀಡಲು ನಮ್ಮ ಬಳಿ ದುಡ್ಡಿಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಮಾಡಿದೆ. ಖಾಲಿ, ಖಾಲಿ, ಸರಕಾರದ ಖಜಾನೆ ಖಾಲಿ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ರಾಜ್ಯದ ಬೊಕ್ಕಸ ಬರಿದು ಮಾಡಿಕೊಂಡಿದ್ದಾರೆ ಎಂದು ದೂರಿದೆ. ‘ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆರೋಪ ಮಾಡಿದ್ದರೆ, ಒಂದೆಡೆ ಅನುದಾನ ವಿಚಾರವಾಗಿ ಶಾಸಕ ರಾಜು ಕಾಗೆ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಒಂದು ಚರಂಡಿ ನಿರ್ಮಿಸಲು ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದ್ದರು.ಅದರ ಬೆನ್ನೆಲ್ಲೇ ಈಗ ಗೃಹ ಸಚಿವ ಪರಮೇಶ್ವರ್ ಅಭಿವೃದ್ಧಿ ಯೋಜನೆಗಳಿಗೆ ಸರಕಾರದ ಬಳಿ ಹಣ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಅನುದಾನವನ್ನೂ ನೀಡದೆ ಅಭಿವೃದ್ಧಿಯನ್ನೂ ಮಾಡದೆ ರಾಜ್ಯವನ್ನು ಕತ್ತಲೆಕೂಪಕ್ಕೆ ಕಾಂಗ್ರೆಸ್ ದೂಡುತ್ತಿದೆ. ಕಲೆಕ್ಷನ್-ಕಮಿಷನ್-ಕರಪ್ಷನ್ನಿಂದ ‘ಕೈ’ ಪೀಸ್ ಪೀಸ್ ಆಗುವುದು ಖಚಿತ-ನಿಶ್ಚಿತ-ಖಂಡಿತ ಎಂದು ಬಿಜೆಪಿ ಲೇವಡಿ ಮಾಡಿದೆ. ‘ಜನರ ಸಮಸ್ಯೆಗಳನ್ನು ಆಲಿಸದೆ ಕಿವುಡಾಗಿರುವ ಕಾಂಗ್ರೆಸ್ ಸರಕಾರ ಶಾಸಕರ ಅಹವಾಲುಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದೆ. ಕಾಂಗ್ರೆಸ್ ಸರಕಾರ ಅನುದಾನಗಳನ್ನು ಸಮರ್ಪಕವಾಗಿ ನೀಡದೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಸಾಲು ಸಾಲು ಕಾಂಗ್ರೆಸ್ ಶಾಸಕರು ಸರಕಾರದ ವಿರುದ್ಧ ಬಂಡೇಳುತ್ತಿರುವುದು ಸಾಕ್ಷಿಯಾಗಿದೆ. ರಾಜ್ಯದಲ್ಲಿ ಶಾಸಕರ ಸ್ಥಿತಿಯೇ ಹೀಗಿರುವಾಗ ಇನ್ನು ಜನಸಾಮಾನ್ಯರ ಗತಿ ಏನೆಂದು ಚಿಂತಿಸುವಂತಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ನಾಡಿನ ಜನತೆಗೆ ಪೊಳ್ಳು ಭರವಸೆ ನೀಡಿ ಅಧಿಕಾರ ಹಿಡಿದ ಕಾಂಗ್ರೆಸ್ ಇಂದು ತೀವ್ರ ನಿಗಾ ಘಟಕದಲ್ಲಿದೆ. ಕಾಂಗ್ರೆಸ್ನ ಜನವಿರೋಧಿ ಧೋರಣೆ ವಿರುದ್ಧ ಸ್ವಪಕ್ಷದ ಶಾಸಕರೇ ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಸಮರ್ಪಕವಾಗಿ ಗ್ಯಾರಂಟಿ ಯೋಜನೆ ಜಾರಿಗೆ ಬಂದಿಲ್ಲ, ಶಾಸಕರ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ, ಅವ್ಯಾಹತವಾಗಿ ನಡೆಯುತ್ತಿರುವ ಭ್ರಷ್ಟಾಚಾರ, ಕಮಿಷನ್ ವಹಿವಾಟು ಹಾಗೂ ಬೆಲೆ ಏರಿಕೆಯಿಂದ ಕಾಂಗ್ರೆಸ್ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಮತದಾರರಿಗೆ ಮುಖ ತೋರಿಸದಂತಹ ಸ್ಥಿತಿ ಬಂದೊದಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ‘ಸ್ವಪಕ್ಷದ ಶಾಸಕರ ಮಾತಿಗೂ ಬೆಲೆ ಇಲ್ಲದ ಸ್ಥಿತಿ ಸಿದ್ದರಾಮಯ್ಯ ಸರಕಾರದಲ್ಲಿದೆ. ಲಂಚ ನೀಡದೆ ಯಾವುದೇ ಕಾಮಗಾರಿ, ಯೋಜನೆಗೆ ಮಂಜೂರಾತಿ ಆಗುತ್ತಿಲ್ಲ. ಇದರಿಂದ ಬೇಸತ್ತು ಕಾಂಗ್ರೆಸ್ ಶಾಸಕರೇ ರಾಜೀನಾಮೆಗೆ ಮುಂದಾಗಿದ್ದಾರೆ. ಕಮಿಷನ್-ಕಲೆಕ್ಷನ್, ಜನವಿರೋಧಿ ನೀತಿಯ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರವನ್ನು ಸ್ವಪಕ್ಷದ ಶಾಸಕರೇ ಉರುಳಿಸಲಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ. ಖಾಲಿ, ಖಾಲಿ, ಸರ್ಕಾರದ ಖಜಾನೆ ಖಾಲಿ! ಅವೈಜ್ಞಾನಿಕ ಗ್ಯಾರಂಟಿ ಯೋಜನೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ರಾಜ್ಯದ ಬೊಕ್ಕಸ ಬರಿದು ಮಾಡಿಕೊಂಡ @siddaramaiah ಸರ್ಕಾರ, ಶಾಸಕರಿಗೆ ಅನುದಾನ ನೀಡಲು ನಮ್ಮ ಬಳಿ ದುಡ್ಡಿಲ್ಲ ಅಂತ ಗೃಹ ಸಚಿವರ ಮೂಲಕ ಹೇಳಿಸಿದೆ. ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ @INCKarnataka ರಾಜ್ಯವನ್ನು ದಿವಾಳಿ… pic.twitter.com/D0NzOkEcLH — BJP Karnataka (@BJP4Karnataka) June 24, 2025
ಕಲಬುರಗಿ | ಜೂ.26ರಂದು ರಾಜ್ಯ ಮಟ್ಟದ ಯುವಜನ ಆಗ್ರಹ ದಿನ: ಪೋಸ್ಟರ್ ಬಿಡುಗಡೆ
ಕಲಬುರಗಿ: ಎಐಡಿವೈಒ ರಾಜ್ಯ ಸಮಿತಿಯ ನೇತೃತ್ವದಲ್ಲಿ ಖಾಲಿ ಹುದ್ದೆಗಳ ಭರ್ತಿ ಮತ್ತು ಸಾಂಸ್ಕೃತಿಕ ಅಧಿಪತನದ ವಿರುದ್ಧ ಜೂ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಯುವಜನರ ಆಗ್ರಹ ದಿನ ಹಮ್ಮಿಕೊಂಡಿರುವ ನಿಮಿತ್ತ ನಗರದಲ್ಲಿ ಮಂಗಳವಾರ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿತ್ತು. ಅಧಿಕಾರಕ್ಕೆ ಬಂದು ಎರಡು ವರ್ಷ ಗತಿಸಿದರೂ ಸಹ ಯಾವುದೇ ನೇಮಕಾತಿಯನ್ನು ಮಾಡಿಲ್ಲ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಹುಮ್ಮಸ್ಸಿನಲ್ಲಿ ಬೇರೆಲ್ಲವನ್ನು ಬದಿಗೆ ಸರಿಸಿದೆ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯರೂಪಕ್ಕೆ ತರುವುದೆಂದು ಯುವಜನರು ನಂಬಿದ್ದರು. ಆದರೆ ಅವರ ನಂಬಿಕೆ ಹುಸಿಯಾಗಿದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಹೆಚ್. ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಶಾಲೆಗಳಲ್ಲಿ ಮೂಲ ಸೌಲಭ್ಯಗಳು ಇಲ್ಲದಿರುವುದು, ಆ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಅಡಚಣೆಯಾಗಿವೆ. ಇನ್ನು ಆರೋಗ್ಯ ಇಲಾಖೆಯಲ್ಲಿ ಖಾಯಂ ನೇಮಕಾತಿಗಳನ್ನು ಮಾಡದೆ ಗುತ್ತಿಗೆ ನೌಕರರನ್ನು ಅವಲಂಬಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ರಾಜ್ಯದ ಆರೋಗ್ಯ ವ್ಯವಸ್ಥೆಯು ಹದಗೆಟ್ಟಿದೆ. ಗರ್ಭಿಣಿಯರು, ಬಾಣಂತಿಯರು, ಹಸುಗೂಸುಗಳ ಸಾವು ಹೆಚ್ಚಳವಾಗಿದೆ. ಸರಕಾರ ಯಾವುದೇ ನೆಪಗಳನ್ನು ಹೇಳದೆ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಐ.ಪಿ.ಎಲ್ ಬೆಟ್ಟಿಂಗ್ ಆಡಿ ತೆಲಂಗಾಣ ರಾಜ್ಯದಲ್ಲಿ 1,023 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಸಹಾಯಕತೆ ವ್ಯಕ್ತಪಡಿಸಿರುವುದು ವಿಷಾದನೀಯ ಸಂಗತಿಯಾಗಿದೆ. ಅಶ್ಲೀಲ ವೆಬ್ ಸೈಟ್ ಗಳು, ಆನ್ಲೈನ್ ಗೇಮ್, ಬೆಟ್ಟಿಂಗ್ ಮುಂತಾದವುಗಳನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಸ್ ಎಮ್ ಶರ್ಮಾ, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿನಾಥ ಹುಡೆಕಲ, ರಮೇಶ ದೇವಕರ್, ಪ್ರಭಾಕರ ಚಿಂಚೋಳಿ ಒತ್ತಾಯಿಸಿದ್ದಾರೆ.
ಉಜಿರೆ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಮಂಗಳವಾರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಉಜಿರೆ ಪೇಟೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಗ್ರಾಮಪಂಚಾಯತ್ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 45 ರಿಂದ 50 ವರ್ಷ ಪ್ರಯಾದ ವ್ಯಕ್ತಿಯ ಮೃತದೇಹ ಇದಾಗಿದ್ದು ಎಡ ಕೈಯಲ್ಲಿ G MAHESH ಎಂದೂ ಬಲ ಕೈಯಲ್ಲಿ ABGTK ಎಂದೂ ಬರೆಯಲಾಗಿದೆ. ಮೃತರ ವಾರಿಸುದಾರರು ಇದ್ದಲ್ಲಿ ಬೆಳ್ತಂಗಡಿ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಮುಂಬೈ: ಕ್ಯಾನ್ಸರ್ ಪೀಡಿತ ವೃದ್ಧೆಯನ್ನು ಕಸದ ರಾಶಿಯಲ್ಲಿ ಎಸೆದ ಮೊಮ್ಮಗ!
ಮುಂಬೈ: ಚರ್ಮದ ಕ್ಯಾನ್ಸರ್ ನಿಂದ ನರಳುತ್ತಿರುವ 60ರ ಹರೆಯದ ಮಹಿಳೆಯೋರ್ವರನ್ನು ಮುಂಬೈನ ಆರೆ ಕಾಲನಿಯಲ್ಲಿನ ಕಸದ ರಾಶಿಯಲ್ಲಿ ತೊರೆದು ಹೋಗಿರುವ ಅತ್ಯಂತ ಕ್ರೂರ ಘಟನೆಯು ವರದಿಯಾಗಿದೆ. ಮಹಿಳೆಯ ಸ್ವಂತ ಮೊಮ್ಮಗನೇ ಆಕೆಯನ್ನು ಕಸದ ರಾಶಿಯಲ್ಲೆಸೆದು ಹೋಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ 8:30ರ ಸುಮಾರಿಗೆ ಕಸದ ರಾಶಿಯಲ್ಲಿ ಮಹಿಳೆ ಬಿದ್ದಿರುವುದನ್ನು ಕಂಡವರು ಪೋಲಿಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಪೋಲಿಸರು ಸ್ಥಳಕ್ಕೆ ಧಾವಿಸಿದಾಗ ರಾತ್ರಿಯುಡುಪು ಧರಿಸಿದ್ದ ಯಶೋದಾ ಗಾಯಕ್ವಾಡ್ ಎಂಬ ದುರ್ಬಲ ಶರೀರದ ಮಹಿಳೆ ಅಸಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಕಂಡುಬಂದಿತ್ತು. ಚರ್ಮದ ಕ್ಯಾನ್ಸರ್ ನಿಂದ ಆಕೆಯ ಮುಖದಲ್ಲಿ ಗಾಯಗಳಾಗಿದ್ದು,ಅದಕ್ಕೆ ಚಿಕಿತ್ಸೆಯನ್ನೂ ಕೊಡಿಸಿರಲಿಲ್ಲ ಮತ್ತು ಕೆನ್ನೆಗಳು ಹಾಗೂ ಮೂಗಿನ ಮೇಲೆ ಸೋಂಕುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ‘ನಾನು ಮಲಾಡ್ನಲ್ಲಿ ಮೊಮ್ಮಗನೊಂದಿಗೆ ವಾಸವಾಗಿದ್ದು,ಆತ ನನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾನೆ’ ಎಂದು ಯಶೋದಾ ಕ್ಷೀಣ ಧ್ವನಿಯಲ್ಲಿ ಪೋಲಿಸರಿಗೆ ತಿಳಿಸಿದರು. ಪೋಲಿಸರು ತಕ್ಷಣ ಮಹಿಳೆಯನ್ನು ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಸಾಗಿಸಿದ್ದರಾದರೂ ಸೌಲಭ್ಯಗಳ ಕೊರತೆಯ ನೆಪದಲ್ಲಿ ಆಕೆಯನ್ನು ದಾಖಲಿಸಲಿಕೊಳ್ಳಲು ನಿರಾಕರಿಸಲಾಗಿತ್ತು. ಬಳಿಕ ಪೋಲಿಸರು ಮಹಿಳೆಯನ್ನು ಕೂಪರ್ ಆಸ್ಪತ್ರೆಗೆ ಒಯ್ದಿದ್ದು,ಸಂಕ್ಷಿಪ್ತ ತಪಾಸಣೆಯ ಬಳಿಕ ಆಕೆಯನ್ನು ದಾಖಲಿಸಿಕೊಳ್ಳಲು ಅದೂ ನಿರಾಕರಿಸಿತ್ತು. ಎಂಟು ಗಂಟೆಗಳ ಕಾಲ ಪೋಲಿಸರ ಪರದಾಟದ ಬಳಿಕ ಸೀನಿಯರ್ ಇನ್ಸ್ಪೆಕ್ಟರ್ ರವೀಂದ್ರ ಪಾಟೀಲ್ ಖುದ್ದಾಗಿ ಮಧ್ಯಪ್ರವೇಶಿಸಿದ ನಂತರವಷ್ಟೇ ಕೂಪರ್ ಆಸ್ಪತ್ರೆ ಆಕೆಯನ್ನು ದಾಖಲಿಸಿಕೊಂಡಿದೆ. ಪೋಲಿಸರು ಯಶೋದಾರ ಭಾವಚಿತ್ರವನ್ನು ಎಲ್ಲ ಪೋಲಿಸ್ ಠಾಣೆಗಳಿಗೂ ರವಾನಿಸಿದ್ದಾರೆ. ಆಕೆ ತಿಳಿಸಿದ್ದ ಮಲಾಡ್ ಮತ್ತು ಕಾಂದಿವಲಿಯ ಎರಡು ವಿಳಾಸಗಳಿಗೆ ಪೋಲಿಸರು ಭೇಟಿ ನೀಡಿದ್ದರಾದರೂ ಯಾವುದೇ ಸಂಬಂಧಿಗಳು ಆಕೆಯನ್ನು ಗುರುತಿಸಿಲ್ಲ. ಪೋಲಿಸರೀಗ ಮಹಿಳೆಯ ವಾರಸುದಾರರ ಪತ್ತೆಗಾಗಿ ಸಾರ್ವಜನಿಕರ ನೆರವನ್ನು ಕೋರಿದ್ದಾರೆ.
ಸುಡಾನ್ ಆಸ್ಪತ್ರೆಯ ಮೇಲೆ ದಾಳಿ: ಮಕ್ಕಳ ಸಹಿತ 40ಕ್ಕೂ ಅಧಿಕ ಮೃತ್ಯು
ಖಾರ್ಟೂಮ್: ಸುಡಾನ್ ನಲ್ಲಿ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ಮಕ್ಕಳು, ವೈದ್ಯಕೀಯ ಸಿಬ್ಬಂದಿ ಸಹಿತ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಮಂಗಳವಾರ ಹೇಳಿದ್ದಾರೆ. ಸುಡಾನ್ ಸೇನೆ ಮತ್ತು ಅರೆ ಸೇನಾಪಡೆಯ ನಡುವೆ ಭೀಕರ ಸಂಘರ್ಷ ನಡೆಯುತ್ತಿರುವ ಪಶ್ಚಿಮ ಕೊರ್ಡೊಫಾನ್ ಪ್ರಾಂತದ ಅಲ್ ಮುಜ್ಲದ್ ಆಸ್ಪತ್ರೆಯ ಮೇಲೆ ದಾಳಿ ನಡೆದಿದ್ದು 6 ಮಕ್ಕಳು ಹಾಗೂ 5 ವೈದ್ಯಕೀಯ ಸಿಬ್ಬಂದಿ ಸೇರಿದಂತೆ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಆಸ್ಪತ್ರೆಗೆ ತೀವ್ರ ಹಾನಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸುಡಾನ್ ಕಚೇರಿಯ ಮೂಲಗಳು ಹೇಳಿವೆ. ಸೇನಾಪಡೆಯ ಡ್ರೋನ್ ಆಸ್ಪತ್ರೆಗೆ ಅಪ್ಪಳಿಸಿರುವುದಾಗಿ ಮಾನವ ಹಕ್ಕುಗಳ ಗುಂಪು ಆರೋಪಿಸಿದೆ.
ಇಸ್ರೇಲ್ ದಾಳಿಯಲ್ಲಿ ಇರಾನಿನ ಪರಮಾಣು ವಿಜ್ಞಾನಿ ಮೃತ್ಯು: ವರದಿ
ಟೆಹ್ರಾನ್: ಉತ್ತರ ಟೆಹ್ರಾನಿನ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನಿನ ಪರಮಾಣು ವಿಜ್ಞಾನಿ ಮುಹಮ್ಮದ್ ರೆಝಾ ಸೆಡಿಘಿ ಸಬೆರ್ ಸಾವನ್ನಪ್ಪಿರುವುದಾಗಿ ಇರಾನಿನ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ. ಸಬೆರ್ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಉನ್ನತ ಅಧಿಕಾರಿಯೂ ಆಗಿದ್ದರು. ಅವರ ನೇತೃತ್ವದ ತಂಡ ಸ್ಫೋಟಕ ಸಂಶೋಧನೆ ಮತ್ತು ಪರಮಾಣು ಸಂಬಂಧಿತ ಚಟುವಟಿಕೆಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿತ್ತು ಎಂದು ವರದಿಯಾಗಿದ್ದು 2025ರಲ್ಲಿ ಅಮೆರಿಕದ ಹಣಕಾಸು ಇಲಾಖೆ ಅವರ ಮೇಲೆ ನಿರ್ಬಂಧ ಜಾರಿಗೊಳಿಸಿತ್ತು.
ಇರಾನಿನಲ್ಲಿ ಆಡಳಿತ ಬದಲಾವಣೆ ಬಯಸುವುದಿಲ್ಲ: ಟ್ರಂಪ್
ವಾಷಿಂಗ್ಟನ್: ಅವ್ಯವಸ್ಥೆಗೆ ಕಾರಣವಾಗುವುದರಿಂದ ಇರಾನಿನಲ್ಲಿ ಆಡಳಿತದ ಬದಲಾವಣೆಯನ್ನು ತಾನು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ. ಇಸ್ರೇಲ್-ಇರಾನ್ ನಡುವಿನ 12 ದಿನಗಳ ಯುದ್ಧಕ್ಕೆ ಕದನ ವಿರಾಮ ಘೋಷಿಸಿದ ಕೆಲ ಗಂಟೆಗಳ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಟ್ರಂಪ್ `ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ ಮತ್ತು ಇಸ್ರೇಲ್ ದಾಳಿಯಲ್ಲಿ ನಾಶಗೊಂಡ ಪರಮಾಣು ಸೌಲಭ್ಯಗಳನ್ನು ಮರು ನಿರ್ಮಿಸುವುದಿಲ್ಲ' ಎಂದು ಹೇಳಿದ್ದಾರೆ.
ಕೋಡಿ ಸೀವಾಕ್ನಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ
ಕುಂದಾಪುರ, ಜೂ.24: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕೋಡಿಯ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಕೃತಿಯ ಮಧ್ಯದಲ್ಲಿರುವ ಕುಂದಾಪುರದ ಕೋಡಿ ಸೀ ವಾಕ್ನಲ್ಲಿ ಬಿ.ಎಡ್ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾಲೇಜಿನ ಸಹ ಪ್ರಾಧ್ಯಾಪಕರು ಮತ್ತು ಯೋಗ ತರಬೇತದಾರರೂ ಆದ ಡಾ. ವೆಂಕಟೇಶ್ ಎಸ್. ಅವರ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ನಡೆಯಿತು. ಯೋಗ ತರಬೇತಿಯನ್ನು ನೀಡಲಾಯಿತು. ಕಾಲೇಜಿನ ಬಿ.ಎಡ್ ವಿದ್ಯಾರ್ಥಿಗಳು, ಎಲ್ಲಾ ಬೋಧಕ ವರ್ಗದವರು ಸಕ್ರಿಯವಾಗಿ ಇದರಲ್ಲಿ ಪಾಲ್ಗೊಂಡರು.
ಆಟೊ ಸೆಟ್ಲ್ಮೆಂಟ್ ಮೂಲಕ ಪಿಎಫ್ ಹಣ ಹಿಂಪಡೆಯುವಿಕೆ ಮಿತಿ 5 ಲಕ್ಷ ರೂ.ಗೆ ಏರಿಕೆ
ಹೊಸದಿಲ್ಲಿ: ಉದ್ಯೋಗಿಗಳು ತಮ್ಮ ಭವಿಷ್ಯನಿಧಿ ಖಾತೆಗಳಿಂದ ಆಟೊ ಸೆಟ್ಲ್ಮೆಂಟ್ ಅಥವಾ ಸ್ವಯಂ ಇತ್ಯರ್ಥ ರೀತಿಯಲ್ಲಿ ಮುಂಗಡವಾಗಿ ಹಣವನ್ನು ಹಿಂಪಡೆಯುವ ಗರಿಷ್ಠ ಮಿತಿಯನ್ನು ಒಂದು ಲ.ರೂ.ಗಳಿಂದ ಐದು ಲ.ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು ಮಂಗಳವಾರ ಪ್ರಕಟಿಸಿದರು. ಸರಕಾರದ ನಿರ್ಧಾರವು ಪಿಎಫ್ ಸದಸ್ಯರು ಮೂರು ದಿನಗಳಲ್ಲಿ ತಮ್ಮ ಖಾತೆಗಳಿಂದ ಐದು ಲ.ರೂ.ವರೆಗಿನ ಮೊತ್ತವನ್ನು ಹಿಂಪಡೆಯಲು ಅವಕಾಶ ಒದಗಿಸುತ್ತದೆ. ಪ್ರಸ್ತುತ ಮೂರು ದಿನಗಳ ಗಡುವು ಹೊಂದಿರುವ ಆಟೋ ಸೆಟ್ಲ್ಮೆಂಟ್ ವಿಧಾನದ ಮೂಲಕ ಹಿಂಪಡೆಯವಬಹುದಾದ ಗರಿಷ್ಠ ಹಣವು ಒಂದು ಲ.ರೂ.ಗೆ ಸೀಮಿತವಾಗಿದೆ. ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ) ಆಟೊ ಸೆಟ್ಲ್ಮೆಂಟ್ ಮಿತಿಯನ್ನು ಒಂದು ಲ.ರೂ.ಗಳಿಂದ ಐದು ಲ.ರೂ.ಗಳಿಗೆ ಹೆಚ್ಚಿಸಿದ್ದು,ಇದು ಸದಸ್ಯರಿಗೆ ತುರ್ತು ಅಗತ್ಯಗಳ ಸಮಯದಲ್ಲಿ ತ್ವರಿತವಾಗಿ ಹಣವನ್ನು ಹಿಂಪಡೆಯಲು ನೆರವಾಗುತ್ತದೆ. ಇದರಿಂದ ಲಕ್ಷಾಂತರ ಸದಸ್ಯರಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಮಾಂಡವೀಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಏಳು ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿರುವ ಇಪಿಎಫ್ಒ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವವರಿಗೆ ತ್ವರಿತ ನೆರವನ್ನು ಒದಗಿಸಲು ಮೊದಲ ಬಾರಿಗೆ ಆನ್ಲೈನ್ ಸ್ವಯಂ ಇತ್ಯರ್ಥ ಸೌಲಭ್ಯವನ್ನು ಪರಿಚಯಿಸಿತ್ತು. ಆಗಿನಿಂದ ಈ ಸೌಲಭ್ಯವನ್ನು ಅನಾರೋಗ್ಯ,ಶಿಕ್ಷಣ,ಮದುವೆ ಮತ್ತು ವಸತಿ ಉದ್ದೇಶಗಳಿಗಾಗಿ ವಿಸ್ತರಿಸಲಾಗಿದೆ. ಯಾವುದೇ ಕಚೇರಿ ಅಲೆದಾಟವಿಲ್ಲದೆ ಸದಸ್ಯರು ಮುಂಗಡವಾಗಿ ಹಣ ಹಿಂಪಡೆಯಲು ಸಲ್ಲಿಸುವ ಅರ್ಜಿಗಳನ್ನು ಸಿಸ್ಟಮ್ ಸ್ವಯಂಚಾಲಿತವಾಗಿ ಸಂಸ್ಕರಿಸುತ್ತದೆ,ತನ್ಮೂಲಕ ತ್ವರಿತ ಹಣಪಾವತಿ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ವಿತ್ತವರ್ಷ 2025ರಲ್ಲಿ ಇಪಿಎಫ್ಒ ಆಟೋ ಸೆಟ್ಲ್ಮೆಂಟ್ ಮೂಲಕ ದಾಖಲೆಯ 2.34 ಕೋ.ಕ್ಲೈಮ್ಗಳನ್ನು ಇತ್ಯರ್ಥಗೊಳಿಸಿದ್ದು,ಇದು ವಿತ್ತವರ್ಷ 2024ರಲ್ಲಿ ಈ ವಿಧಾನದ ಮೂಲಕ ಇತ್ಯರ್ಥಗೊಳಿಸಿದ್ದ 89.52 ಕ್ಲೈಮ್ಗಳಿಗೆ ಹೋಲಿಸಿದರೆ ಶೇ.161ರಷ್ಟು ಅಧಿಕವಾಗಿದೆ.
ಕಲಬುರಗಿ | ರೈತರು, ತಂತ್ರಜ್ಞರಿಗೆ ವಿಶೇಷ ತರಬೇತಿ : ಹೆಸರು ನೋಂದಣಿಗೆ ಜೂ.26 ಕೊನೆಯ ದಿನ
ಕಲಬುರಗಿ: ಪ್ರಸಕ್ತ 2025-26ನೇ ಸಾಲಿನಲ್ಲಿ ರೈತರು ಮತ್ತು ಕೃಷಿ ಪಂಪ್ ಉಪಕರಣಗಳ ತಂತ್ರಜ್ಞರಿಗೆ ಬಿಇಇ ಸ್ಟಾರ್ ಲೇಬಲ್ವುಳ್ಳ ಇಂಧನ ದಕ್ಷ ಪಂಪ್ಸೆಟ್ ಮತ್ತು ನೀರಿನ ಸಂರಕ್ಷಣೆ ಕುರಿತು ಇದೇ ಜೂ.27 ರಂದು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕೋಟನೂರ (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಕಲಬುರಗಿ ಕೋಟನೂರ (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಸಕ್ತಿಯುಳ್ಳ ರೈತರು, ಸಿ.ಹೆಚ್.ಸಿ. ಟೆಕ್ನಿಶಿಯನ್ಸ್/ ಮ್ಯಾನೇಜರ್ಸ್ (CHC Technicians /Managers) ಹಾಗೂ ಕೃಷಿ ಉಪಕರಣಗಳು/ಕೃಷಿ ಪಂಪಸೆಟ್ ತಂತ್ರಜ್ಞರು 2025ರ ಜೂ.26 ರೊಳಗಾಗಿ ತಮ್ಮ ಹೆಸರನ್ನು ಕೃಷಿ ಅಧಿಕಾರಿಗಳಾದ ಸುಜಾತಾ ಆರ್.ರಾಜನಾಳಕರ- 94486512021 ಹಾಗೂ ಯಾಸ್ಮೀನ್ ಇವರ ಮೊಬೈಲ್ ಸಂಖ್ಯೆ 9901604822 ಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಎಫ್.ಐ.ಡಿ. ಹೊಂದಿರುವ ಆಸಕ್ತಿಯುಳ್ಳ ರೈತರು ನೊಂದಾಯಿಸಿಕೊಳ್ಳಬೇಕು. ಎಫ್.ಐ.ಡಿ. ಆಧಾರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ತರಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೋಟನೂರ (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಸಂಪರ್ಕಿಸಲು ಕೋರಲಾಗಿದೆ.
‘ಹಿರಿಯ ನಾಗರಿಕರು ತಮ್ಮ ಹಕ್ಕುಗಳ ಸದುಪಯೋಗ ಪಡೆಯಿರಿ’
ಉಡುಪಿ, ಜೂ.24: ಹಿರಿಯ ನಾಗರಿಕರು ತಮ್ಮ ಹಕ್ಕುಗಳನ್ನು ಕಾನೂನು ಬದ್ಧವಾಗಿ ಚಲಾಯಿಸಲು ಕಾನೂನು ಸೇವೆಗಳ ಪ್ರಾಧಿಕಾರವು ಅಗತ್ಯ ಸಹಕಾರ ನೀಡುತ್ತಿದೆ. ಇದರ ಸದುಪಯೋಗವನ್ನು ಪ್ರತಿ ಯೊಬ್ಬ ಹಿರಿಯರು ಪಡೆದುಕೊಳ್ಳಬೇಕು ಎಂದು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಯೋಗೇಶ್ ಹೇಳಿದ್ದಾರೆ. ನಗರದ ಅಜ್ಜರಕಾಡು ಯುದ್ಧ ಸ್ಮಾರಕದ ಎದುರಿನ ಹಿರಿಯ ನಾಗರಿಕರ ಕಚೇರಿ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಜಾಗೃತಿ ದಿನದ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿರಿಯ ನಾಗರಿಕರು ಜೀವಿಸಿದ ಬದುಕನ್ನು ಅರಿಯಲು, ಸಂಸ್ಕಾರವನ್ನು ಕಲಿಯಲು, ಅವರ ಅನುಭವ ಗಳನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳಲು ಅವರುಗಳ ಮಾರ್ಗದರ್ಶನ ಅತ್ಯವಶ್ಯವಾಗಿದೆ. ಹಿರಿಯ ನಾಗರಿಕರಿಗೆ ಗೌರವ, ಆಶ್ರಯ, ಸುರಕ್ಷತೆ ನೀಡುವುದರೊಂದಿಗೆ ಆತ್ಮಗೌರವದಿಂದ ಅವರುಗಳನ್ನು ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿರಿಯ ನಾಗರಿಕರ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆಗಳನ್ನು ಜಾರಿ ಗೊಳಿಸಿವೆ. ಅವರುಗಳ ಶ್ರೇಯೋಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ನೀಡಿವೆ. ಇವುಗಳ ಪ್ರಯೋಜನ ಪಡೆದು ಕೊಳ್ಳುವಂತಾಗಬೇಕು ಎಂದ ಅವರು, ಪ್ರತಿ ಜಿಲ್ಲೆಯಲ್ಲಿಯೂ ಹಿರಿಯ ನಾಗರಿಕರ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ, ಹಿರಿಯ ನಾಗರಿಕರಿಗೆ ಇಲಾಖೆಯಿಂದ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಉಪ ಕಾನೂನು ನೆರವು ಅಭಿರಕ್ಷಕ ಶ್ರೀನಿವಾಸ ಉಪಾಧ್ಯ ಬಿ, ಸಹಾಯಕ ಕಾನೂನು ನೆರವು ಅಭಿರಕ್ಷಕಿ ಭಾನುಮತಿ ಎಂ.ಆರ್ ನಾಯರಿ ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕಿ ಶ್ವೀನಿ ಜೆಸಿಮಾ ಡಿ ಸೋಜ ಹಿರಿಯ ನಾಗರಿಕರ ಪಾಲನೆ, ಪೋಷಣೆ ಹಾಗೂ ರಕ್ಷಣಾ ಕಾಯಿದೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಸದಾನಂದ ಹೆಗಡೆ, ಹಿರಿಯ ನಾಗರಿಕರು, ಸಂಘದ ಸದಸ್ಯರುಗಳು ಹಾಗೂ ಇತರರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ನಾಗರಾಜ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಉಪಾಧ್ಯಕ್ಷ ಮುರಳೀಧರ್ ವಂದಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಬೆಂಗಳೂರಿನ ಸುರಂಗ ಮಾರ್ಗ ಜಾಲ, ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ಬೆಂಗಳೂರಿನ ವಾಹನ ದಟ್ಟಣೆ ತಗ್ಗಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಜೊತೆಗೆ, ಶಿರಾಡಿ ಘಾಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಮತ್ತು ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕುಮಾರಸ್ವಾಮಿ ಅವರು ಗಡ್ಕರಿ ಅವರಲ್ಲಿ ವಿನಂತಿಸಿದರು.
ಬೆಂಗಳೂರಿನಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿಗೆ ಮತ್ತೆ ಸಿಗುತ್ತಾ ಅನುಮತಿ? ಹೈಕೋರ್ಟ್ ವಿಚಾರಣೆ ಏನಾಯ್ತು?
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬಗ್ಗೆ ಹೈಕೋರ್ಟ್ನಲ್ಲಿ ವಾದ ನಡೆಯಿತು. ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡುವಂತೆ ಮಾಲೀಕರ ಪರ ವಕೀಲರು ವಾದಿಸಿದರು. ಸಂಚಾರ ಸಮಸ್ಯೆ ಪರಿಗಣಿಸಿ ಅನುಮತಿ ನೀಡಲು ಕೋರಿದರು. ಓಲಾ, ಉಬರ್, ರ್ಯಾಪಿಡೋ ಮೇಲ್ಮನವಿ ಸಲ್ಲಿಸಿವೆ. ನಿಯಮಗಳಲ್ಲಿ ಅವಕಾಶವಿದ್ದರೂ ನೋಂದಣಿ ನಿರಾಕರಿಸಲಾಗುತ್ತಿದೆ ಎಂದು ವಕೀಲರು ವಾದ ಮಂಡಿಸಿದರು. ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.
ತರೀಕೆರೆ: ಸಮವಸ್ತ್ರ ಇಲ್ಲ ಎಂದು ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಚಿಕ್ಕಮಗಳೂರು: ಯೂನಿಫಾರಂ ಇಲ್ಲ ಎಂದು ಮನನೊಂದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ತಾಲೂಕಿನಲ್ಲಿ ಮಂಗಳವಾರ ವರದಿಯಾಗಿದೆ. ನಂದಿತಾ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ತರಿಕೇರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಸಹ್ಯಾದ್ರಿಪುರದಲ್ಲಿ ಘಟನೆ ನಡೆದಿದ್ದು, ಶಾಲೆಯಲ್ಲಿ ಸಮವಸ್ತ್ರ ಧರಿಸದ ಹಿನ್ನಲೆ ಶಿಕ್ಷಕರು ಪ್ರಶ್ನಿಸಿದ್ದರು ಎನ್ನಲಾಗಿದೆ. ಎರಡು ವರ್ಷ ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿ ಬಳಿ ಹಳೆಯ ಸಮವಸ್ತ್ರ ಕೂಡ ಇರಲಿಲ್ಲ ಎನ್ನಲಾಗಿದೆ. ಮನೆಗೆ ಬಂದು ಬಾಲಕಿ ಪೋಷಕರ ಬಳಿ ಸಮವಸ್ತ್ರ ಕೇಳಿದ್ದು, ಎರಡು ದಿನದಲ್ಲಿ ಸಿಗುತ್ತೆ ಎಂದು ತಂದೆ ತಿಳಿಸಿದ್ದರು. ಆದರೆ ಸಮವಸ್ತ್ರ ಇಲ್ಲದ್ದಕ್ಕೆ ಮನನೊಂದಿದ್ದ ವಿದ್ಯಾರ್ಥಿನಿ ವಿಷ ಸೇವಿಸಿದ್ದು, ಅಸ್ವಸ್ಥಗೊಂಡ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ. ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಕಲಬುರಗಿ | ಬೆಂಗಳೂರಿನ ಇಶಾ ಫೌಂಡೇಶನ್ ವತಿಯಿಂದ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಯೋಗಾಭ್ಯಾಸ
ಕಲಬುರಗಿ: 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಿನ ಇಶಾ ಪೌಂಡೇಷನ್ ವತಿಯಿಂದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಪ್ರೋಜೆಕ್ಟರ್ ಸ್ಕ್ರೀನ್ ಮೂಲಕ ಯೋಗದ ಕುರಿತು ಮಾಹಿತಿ ನೀಡುವುದರ ಮೂಲಕ ಎಲ್ಲಾ ಕಾರಾಗೃಹದ ಬಂಧಿಗಳಿಗೆ ಯೋಗಾಭ್ಯಾಸ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಡಾ.ಅನಿತಾ ಆರ್. ಅವರು ಮಾತನಾಡಿ, ಬೆಂಗಳೂರಿನ ಇಶಾ ಪೌಂಡೇಷನ್ನ ಯೋಗ ಶಿಕ್ಷಕರು ಯೋಗಾಸನಗಳ ಕುರಿತು ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ಹಾಗೂ ಬಂಧಿಗಳಿಗೆ ತರಬೇತಿ ನೀಡಿದ್ದು, ಮುಂದಿನ ದಿನಗಳಿಗೆ ನಿರಂತರವಾಗಿ ಇಶಾ ಪೌಂಡೇಷನ್ ವತಿಯಿಂದ ಅಧಿಕಾರಿ/ಸಿಬ್ಬಂದಿಗಳಿಗೆ ಹಾಗೂ ಬಂಧಿಗಳಿಗೆ ಒಂದು ವಾರದ ಕೋರ್ಸ್ನಂತೆ ತರಬೇತಿ ನೀಡಲು ಯೋಜನೆಯನ್ನು ರೂಪಿಸಲಾಗಿದೆ ಎಂದರು. ಸಂಸ್ಥೆಯ ಅಧೀಕ್ಷಕ ಎಂ.ಹೆಚ್. ಆಶೇಖಾನ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರಾಗೃಹದ ಎಲ್ಲಾ ಬಂಧಿಗಳು ಅತೀ ಉತ್ಸಾಹದಿಂದ ಈ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದರು. ಬೆಂಗಳೂರಿನ ಇಶಾ ಪೌಂಡೇಷನ್ ಸಂಸ್ಥೆಯ ಯೋಗ ಗುರುಗಳಾದ ಸತೀಶ್ಕುಮಾರ ಪಾಟೀಲ್ ಮತ್ತು ಯುವರಾತ್ ಮತ್ತು ರವಿತೇಜ್ ಅವರು ಕಾರಾಗೃಹದ ಅಧಿಕಾರಿ/ಸಿಬ್ಬಂದಿ ಹಾಗೂ ಬಂದಿಗಳು ಸೇರಿದಂತೆ ಒಟ್ಟು 150 ಜನರಿಗೆ ಯೋಗವನ್ನು ಮಾಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಅಧೀಕ್ಷಕ ಚನ್ನಪ್ಪ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಜೈಲರ್ಗಳಾದ ಸುನಂದ ವಿ., ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಶಾಮರಾವ ಬಿದ್ರಿ, ಸೇರಿದಂತೆ ಮತ್ತಿತರ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಸಂಸ್ಥೆಯ ಅಧೀಕ್ಷಕ ಎಂ.ಹೆಚ್.ಆಶೇಖಾನ್ ವಂದಿಸಿದರು.
ಮಂಗಳೂರು: ಮುನ್ನೂರು ಗ್ರಾಮದ ಸಂತೋಷ ನಗರ ಯುವಕರ ತಂಡದ ವತಿಯಿಂದ ಸ್ನೇಹ ಸಮ್ಮಿಲನ - 2025 ಕಾರ್ಯಕ್ರಮವು ಶನಿವಾರ ತೊಕ್ಕೊಟ್ಟು ಸಮೀಪದ ಕಲ್ಲಾಪುನಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು. ಊರಿನ ಯುವಕರು ವಿವಿಧ ಆಟೋಟ ಸ್ಪರ್ಧೆಗಳು, ಮನೋರಂಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಸಂಚಾಲಕರಾದ ಸೈಫ್ ಕುತ್ತಾರ್, ಝಮೀರ್ ಅಹ್ಮದ್, ಮುನ್ನೂರು ಗ್ರಾಪಂ ಸದಸ್ಯ ಹಸೈನಾರ್, ಉದ್ಯಮಿಗಳಾದ ಇಕ್ಬಾಲ್, ಶಬೀರ್, ಶಾಫಿ, ಜಬ್ಬಾರ್, ಇಮ್ತಿಯಾಝ್ ಸ್ಟಿಕ್ಕರ್, ರಫೀಕ್, ಹಕೀಮ್, ಸಿದ್ದೀಕ್, ಮುನೀರ್, ಶೆಮೀಮ್, ಅಝೀಝ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಯೋಜಕರಾದ ಸಲಾಂ, ನಿಯಾಝ್, ರಿಜ್ವಾನ್, ಸಂಶುದ್ದೀನ್, ಸುಲ್ತಾನ್, ಇಸ್ಮಾಯಿಲ್, ನಝೀರ್, ಮೊಹಿನುದ್ದಿನ್, ನೌಶಾದ್, ಸಿಯಾಬ್, ರಿಜ್ಜು, ರಝಾಕ್, ಇಮ್ರಾನ್, ಅಫ್ರಿದ್, ಮುನ್ನ ಮತ್ತಿತರರು ಉಪಸ್ಥಿತರಿದ್ದರು.
ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೆ ಸಚಿವ ರೆಡ್ಡಿ ಭೇಟಿ
ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ರಾಜ್ಯ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ್ ಪೂಜಾರಿ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹಾಗೂ ಆಡಳಿತ ಸಮಿತಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಪ್ರಸಾದರಾಜ್ ಕಾಂಚನ್, ಮುನಿಯಾಲು ಉದಯ್ ಕುಮಾರ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ರಾಜು ಪೂಜಾರಿ ಮೊದಲಾದವರಿದ್ದರು. ಪೂರ್ಣಕುಂಭ ಸ್ವಾಗತ: ದೇಗುಲಕ್ಕೆ ಆಗಮಿಸಿದ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಯಿತು. ಹಿರಿಯ ಅರ್ಚಕರಾದ ಡಾ.ನಾರ್ಸಿ ನರಸಿಂಹ ಅಡಿಗ, ಅರ್ಚಕರಾದ ಎನ್. ಸುಬ್ರಮಣ್ಯ ಅಡಿಗ, ಸುರೇಶ್ ಭಟ್, ಸುದರ್ಶನ್ ಜೋಯಿಸ್ ಕೊಲ್ಲೂರು ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿಗಳನ್ನು ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸಚಿವರನ್ನು ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಕೊಲ್ಲೂರು ಅಭಿವೃದ್ಧಿಗೆ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಸಮಸ್ತರ ಸಭೆ: ಸಚಿವ ರಾಮಲಿಂಗ ರೆಡ್ಡಿ
ಕೊಲ್ಲೂರು (ಕುಂದಾಪುರ), ಜೂ.24: ರಾಜ್ಯದಲ್ಲಿ ಎರಡನೇ ಅತಿಹೆಚ್ಚು ಆದಾಯ ಬರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕೆಲಸಗಳಿಗೆ ಕಾಯಕಲ್ಪ ನೀಡಲು ಹಾಗೂ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಕಾರ್ಯಪ್ರವೃತ್ತವಾಗಿದ್ದು, ಈ ಕುರಿತು ಮುಂದಿನ ತಿಂಗಳು ವ್ಯವಸ್ಥಾ ಪನಾ ಸಮಿತಿ, ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳು ಹಾಗೂ ಪ್ರಮುಖರ ಸಭೆಯನ್ನು ಬೆಂಗಳೂರಿ ನಲ್ಲಿ ಕರೆಯಲಾಗಿದೆ ಎಂದು ರಾಜ್ಯ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮಂಗಳವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಇಲಾಖೆ ಅಧಿಕಾರಿಗಳ, ಜನಪ್ರತಿನಿಧಿಗಳು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರ ಸಮಾ ಲೋಚನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಲ್ಲೂರು ದೇಗುಲಕ್ಕೆ ಸಂಬಂಧಪಟ್ಟಿರುವ ಜಾಗಗಳು ಖಾಸಗಿ ವ್ಯಕ್ತಿಗಳಿಂದ ಪರಭಾರೆಯಾಗಿರುವ ಹಾಗೂ ಒತ್ತುವರಿಯಾಗಿರುವ ಕುರಿತು ಮಾಹಿತಿ ಇದ್ದು, ಇದನ್ನು ತೆರವುಗೊಳಿಸುವ ಕುರಿತು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಇಲ್ಲಿನ ಒಳಚರಂಡಿ ಅವ್ಯವಸ್ಥೆ ಸರಿಪಡಿಸುವ ಜೊತೆಗೆ ಪಾರ್ಕಿಂಗ್ ವ್ಯವಸ್ಥೆಗೆ ಶಾಶ್ವತ ಯೋಜನೆ ಕಂಡುಕೊಳ್ಳಲಾಗುತ್ತದೆ. ದೇಗುಲದ ಅಭಿವೃದ್ಧಿಗೆ ಅಗತ್ಯವಾಗಿರುವ ಕಂದಾಯ ಭೂಮಿಗಳನ್ನು ಪಡೆದುಕೊಳ್ಳುವ ಕುರಿತು ಕಂದಾಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು. ಆಗಿರುವ ಒತ್ತುವರಿ ತೆರವು ಹಾಗೂ ಇತರ ಕಾನೂನು ಹೋರಾಟಗಳಿಗೆ ಮಾರ್ಗದರ್ಶನ ಹಾಗೂ ಸಲಹೆ ನೀಡಲು, ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಅವರನ್ನು ಸಂಪರ್ಕಿಸಲಾಗುತ್ತದೆ. ದೇಗುಲದ ಪ್ರವೇಶ ದ್ವಾರದ ಗೇಟ್ಗಳಿಗೆ ಅಳವಡಿಸಿರುವ ಬೀಗದ ಕೀಲಿಕೈ ಖಾಸಗಿ ವ್ಯಕ್ತಿಗಳ ಬಳಿ ಇರುವುದು ಸರಿಯಲ್ಲ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಒಳ ವ್ಯಾಪ್ತಿಯಲ್ಲಿ ಇರುವ ಖಾಸಗಿ ಪಾರ್ಕಿಂಗ್ ವ್ಯವಸ್ಥೆಗೆ ನಿರ್ಬಂಧ ಹಾಕಬೇಕು. ಒತ್ತುವರಿ ಆಗಿರುವ ದೇಗುಲದ ಭೂಮಿಗಳನ್ನು ತೆರವು ಗೊಳಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ದೊರಕಲು ಅನುಕೂಲವಾಗುವಂತೆ ದೇವಸ್ಥಾನದ ವತಿಯಿಂದ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ಅಭಿಪ್ರಾಯ ಹೇಳಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಇಲ್ಲಿನ ಪಾರ್ಕಿಂಗ್ ಅವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ತಿಳಿದುಬಂದಿದ್ದು ಈ ಬಗ್ಗೆ ಶಾಶ್ವತ ಕ್ರಮವಾಗಬೇಕು. ಕೊಲ್ಲೂರಿನಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ನಿರ್ಮಾಣವಾಗಬೇಕು ಎಂದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಮಾತನಾಡಿ, ದೇವಸ್ಥಾನದ ವತಿಯಿಂದ ನಡೆಯುವ ಐದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡಬೇಕು. ಪಾರ್ಕಿಂಗ್ ವ್ಯವಸ್ಥೆಗಾಗಿ ಶುಕ್ಲತೀರ್ಥ ಬಳಿಯಲ್ಲಿ ಗುರುತಿಸಲಾದ 3.5 ಎಕ್ರೆ ಕಂದಾಯ ಭೂಮಿಯನ್ನು ದೇವಸ್ಥಾನಕ್ಕೆ ನೀಡುವ ಕುರಿತು ಕಂದಾಯ ಇಲಾಖೆ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದರು. ಕ್ಷೇತ್ರದ ಸ್ವಚ್ಚತೆ ಹಾಗೂ ಇತರ ಮೂಲಭೂತ ಕಾರ್ಯಗಳ ಅನುಕೂಲ ಕ್ಕಾಗಿ ಹೊರಗುತ್ತಿಗೆ ನೌಕರರ ನೇಮಕಾತಿಗೆ ಅನುಮತಿ ನೀಡಬೇಕು. ಆನೆ ಬಾಗಿಲಿನಲ್ಲಿ ಶಿಲಾಮಯ ಸ್ವಾಗತ ಕಮಾನು ನಿರ್ಮಾಣ ಯೋಜನೆ ಇದೆ. 2 ಕೋಟಿ ರೂ. ವೆಚ್ಚದಲ್ಲಿ ಲಲಿತಾಂಬಿಕಾ ವಸತಿಗೃಹದ ನವೀಕರಣ, ವಿದ್ಯಾರ್ಥಿಗಳ ಹಾಸ್ಟೆಲ್ ಅಭಿವೃದ್ಧಿ ಹಾಗೂ ಸ್ವರ್ಣಮುಖಿ ಮಂಟಪದ ನವೀಕರಣ ಗುರಿಗಳನ್ನು ಇರಿಸಿಕೊಳ್ಳಲಾಗಿದೆ ಎಂದು ಬಾಬು ಶೆಟ್ಟಿ ವಿವರಿಸಿದರು. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್, ಕೆ.ಸುಧಾ ಬೈಂದೂರು, ಮಾಜಿ ಸಚಿವ ಅಭಯಚಂದ್ರ ಜೈನ್, ಮಂಗಳೂರು ಮಹಾನಗರಪಾಲಿಕೆ ಮಾಜಿ ಮೇಯರ್ ಭಾಸ್ಕರ್ ಮೊಯಿಲಿ, ರಾಜ್ಯ ಧಾರ್ಮಿಕ ಪರಿಷತ್ನ ಮಲ್ಲಿಕಾ ಪಕ್ಕಳಾ ಬಂಟ್ವಾಳ, ಉದ್ಯಮಿ ಶಂಕರ ಶೆಟ್ಟಿ ಬೆಂಗಳೂರು, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ ಕುಮಾರ ಶೆಟ್ಟಿ ಮುನಿಯಾಲ್, ಪ್ರಸಾದ್ರಾಜ್ ಕಾಂಚನ್, ರಾಜು ಎಸ್ ಪೂಜಾರಿ ಬೈಂದೂರು, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ ಶೆಟ್ಟಿ ಗುಡಿಬೆಟ್ಟು, ಅರವಿಂದ್ ಪೂಜಾರಿ, ಕಿರಣ್ ಹೆಗ್ಡೆ ಅಂಪಾರು, ಮೋಹನ್ ಪೂಜಾರಿ ಉಪ್ಪುಂದ, ಅಣ್ಣಪ್ಪ ಶೆಟ್ಟಿ ಕಾಲ್ತೋಡು, ಜಗದೀಶ್ ದೇವಾಡಿಗ ಇದ್ದರು. ‘ರಾಜ್ಯದ ಪ್ರಸಿದ್ಧ ದೇವಸ್ಥಾನಗಳಾದ ಮಲೆಮಹದೇಶ್ವರ ಬೆಟ್ಟ, ಮೈಸೂರಿನ ಚಾಮುಂಡೇಶ್ವರಿ, ರೇಣುಕಾ ಎಲ್ಲಮ್ಮ, ಹುಲಿಯಮ್ಮ ದೇವಸ್ಥಾನ, ಘಾಟಿ ಸುಬ್ರಮಣ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಕೊಲ್ಲೂರು ಹಾಗೂ ಕುಕ್ಕೆ ಸುಬ್ರಮಣ್ಯ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವ ಕುರಿತು ಪರಿಶೀಲಿಸಲಾಗುವುದುʼ. -ರಾಮಲಿಂಗಾರೆಡ್ಡಿ, ಮುಜರಾಯಿ ಖಾತೆ ಸಚಿವರು.
ಸುಳ್ಳು ಜಾತಿ ಪ್ರಮಾಣಪತ್ರ: ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ
ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯವು ಸಮಾಜ ಕಲ್ಯಾಣ ಇಲಾಖೆಯ ವರದಿಯನ್ನು ಪರಿಗಣಿಸಿ, ಸೆಪ್ಟೆಂಬರ್ 9ಕ್ಕೆ ವಿಚಾರಣೆಯನ್ನು ಮುಂದೂಡಿದೆ. ತಳವಾರ ಜಾತಿ ಪ್ರಮಾಣಪತ್ರ ವಿತರಣೆಯ ಗೊಂದಲದ ಬಗ್ಗೆಯೂ ನ್ಯಾಯಾಲಯವು ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ಉಪ್ಪಿನಂಗಡಿ| ರಾಷ್ಟ್ರೀಯ ಹೆದ್ದಾರಿಗೆ ಗುಡ್ಡ ಕುಸಿತ: ವಾಹನ ಸಂಚಾರಕ್ಕೆ ಅಡಚಣೆ
ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಇಂದು ಸಂಜೆ ಗುಡ್ಡ ಜರಿದು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮಣ್ಣಗುಂಡಿಯಲ್ಲಿ ರಸ್ತೆ ನಿರ್ಮಾಣ ಸಂದರ್ಭ ಗುಡ್ಡ ಅಗೆಯಲಾಗಿದೆ. ಇಲ್ಲಿ ನೇರವಾಗಿ ಗುಡ್ಡ ಅಗೆದಿರುವುದರಿಂದ ಕೆಲ ದಿನಗಳಿಂದ ಮಣ್ಣು ಜರಿಯುತ್ತಿದ್ದು ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇಂದು ಸುರಿದ ಭಾರೀ ಮಳೆಯಿಂದಾಗಿ ಸಂಜೆ ವೇಳೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಜರಿದಿದ್ದು ಮಣ್ಣು ಮರಗಳ ಸಮೇತ ರಸ್ತೆಗೆ ಬಿದ್ದಿದೆ. ಇದರಿಂದಾಗಿ ರಸ್ತೆ ಸಂಪೂರ್ಣ ಮುಚ್ಚಿಹೋಗಿದೆ ಎಂದು ವರದಿಯಾಗಿದೆ. ಘನವಾಹನಗಳ ಸಂಚಾರ ಸ್ಥಗಿತ: ಮಣ್ಣು ರಸ್ತೆಗೆ ಬಿದ್ದಿರುವುದರಿಂದ ಬಸ್ಸು ಹಾಗೂ ಇನ್ನಿತರ ಘನ ವಾಹನಗಳ ಸಂಚಾರ ಸಂಜೆ ವೇಳೆ ಸ್ಥಗಿತಗೊಂಡಿದೆ. ಕೆಲವು ಸಣ್ಣ ವಾಹನಗಳು ಕಿರಿದಾದ ಜಾಗದಲ್ಲಿ ಸಂಚಾರ ಮಾಡುತ್ತಿವೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಂದ ಮಣ್ಣು ತೆರವು ಕಾರ್ಯ ನಡೆಸಿದ್ದಾರೆ.
‘ಎಂಐಎಸ್ ಅಡಿಯಲ್ಲಿ ಮಾವು ಖರೀದಿ’: ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ತೀವ್ರ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶಿಸಿ ಮಾವನ್ನು ಖರೀದಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರಕಾರ ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಧಾವಿಸಿದೆ. ಮಂಗಳವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರಕಟಣೆ ಹೊರಡಿಸಿದ್ದು, ‘ಕೇಂದ್ರ ಸರಕಾರದ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆಯಡಿಯಲ್ಲಿ 2025-26ನೆ ಸಾಲಿಗೆ ಅನ್ವಯ ಆಗುವಂತೆ 2,50,000 ಮೆಟ್ರಿಕ್ ಟನ್ ಮಾವನ್ನು ಪ್ರತಿ ಕ್ವಿಂಟಾಲ್ಗೆ 1,616 ರೂಪಾಯಿಯಂತೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ’ ಎಂದು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಪ್ರಧಾನಿ ಮೋದಿ ನೇತೃತ್ವದ ಸರಕಾರದ ರೈತಪರ ಬದ್ಧತೆ, ಅಚಲತೆಗೆ ನನ್ನ ಧನ್ಯವಾದಗಳು. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿದ ತಕ್ಷಣವೇ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ ಬೆಂಬಲ ಬೆಲೆ ಘೋಷಿಸಿದ್ದಕ್ಕಾಗಿ ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ರಿಗೆ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ. ‘ಮೋದಿಯವರ ಆಡಳಿತದಲ್ಲಿ ರೈತರ ಉತ್ಪನ್ನಗಳಿಗೆ ಸ್ಥಿರ ಬೆಲೆಯ ಖಾತರಿ ಸದಾ ಇರುತ್ತದೆ ಎಂಬುದನ್ನು ಈ ಉಪಕ್ರಮವು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಬಗ್ಗೆ ತುರ್ತು ಕ್ರಮ ವಹಿಸಿ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಕೋರಿದ್ದೆ. ನನ್ನ ಮನವಿಗೆ ತಕ್ಷಣವೇ ಸ್ಪಂದಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಧನ್ಯವಾದಗಳು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ‘ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದು. ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಹೆಚ್ಚಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು 8ರಿಂದ 10ಲಕ್ಷ ಟನ್ ಮಾವು ಈ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ದುರದೃಷ್ಟದ ಸಂಗತಿ ಎಂದರೆ, ಹವಾಮಾನ ವೈಪರೀತ್ಯದಿಂದ ರೋಗರುಜಿನ ತಗುಲಿ ಪ್ರಸಕ್ತ ವರ್ಷದಲ್ಲಿ ಮಾವಿನ ಇಳುವರಿ ಶೇ.30ರಷ್ಟು ಕಡಿಮೆಯಾಗಿದೆ’ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ, ಕೇಂದ್ರ ಕೃಷಿ ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು. ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರ ಸರಕಾರದ ರೈತಪರ ಬದ್ಧತೆ, ಅಚಲತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿದ ತಕ್ಷಣವೇ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ (Market Intervention… pic.twitter.com/Ox3coq57qr — ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 24, 2025
ಕರಾವಳಿಯಲ್ಲಿ ವಿದ್ಯಾರ್ಥಿ ಚಳವಳಿಯ ನಾಶ ಕೋಮುವಾದ ಬೆಳೆವಣಿಗೆಗೆ ಕಾರಣ: ಡಾ. ಗಣನಾಥ ಶೆಟ್ಟಿ ಎಕ್ಕಾರು
ಮಂಗಳೂರು: ಕರಾವಳಿಯಲ್ಲಿ ವಿದ್ಯಾರ್ಥಿ ಚಳವಳಿಯ ನಾಶ ಕೋಮುವಾದ ಬೆಳೆಯಲು ಕಾರಣವಾ ಯಿತು ಎಂದು ಜನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು ತಿಳಿಸಿದ್ದಾರೆ. ಬಲಪಂಥೀಯ ಸಂಘಟನೆಯ ಗೂಂಡಾಗಳಿಂದ ಹತ್ಯೆಯಾದ ಡಿವೈಎಫ್ಐ ಮುಖಂಡ ಶ್ರೀನಿವಾಸ್ ಬಜಾಲ್ ಹತ್ಯೆಯಾಗಿ 23 ವರ್ಷ ಸಂದಿರುವ ಸಂದರ್ಭ ಅವರ ನೆನಪಲ್ಲಿ ಮಂಗಳವಾರ ನಗರದ ಸಹೋದಯ ಸಭಾಂಗಣದಲ್ಲಿ ‘ತುಳುನಾಡಿನ ಸೌಹಾರ್ದ ಪರಂಪರೆ , ಕೋಮುವಾದ ಒಡ್ಡಿರುವ ಸವಾಲುಗಳು’ ಎಂಬ ವಿಷಯದಲ್ಲಿ ಆಯೋಜಿಸಲಾದ ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿದರು. 1970-80ರ ದಶಕದಲ್ಲಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ಆಗುತ್ತಿತ್ತು. ಆದರೆ ಅದರಲ್ಲಿ ಕೋಮುವಾದ ಇರಲಿಲ್ಲ. ರಾಜಕೀಯ ಮೇಲಾಟ ಇತ್ತು. ಆದರೆ ಈ ಗಲಾಟೆ ವ್ಯಕ್ತಿತ್ವ ನಾಶ ಮಾಡುವಷ್ಟು ಇರಲಿಲ್ಲ ಎಂದು ವಿವರಿಸಿದರು. ವಿದ್ಯಾರ್ಥಿ ಚಳವಳಿಯ ನಾಶ ಕೋಮುವಾದಕ್ಕೆ ಎಡೆ ಮಾಡಿಕೊಟ್ಟಿತು. ದ.ಕ, ಉಡುಪಿ ಜಿಲ್ಲೆಯಲ್ಲಿ ಪ್ರಗತಿಪರ ವಿದ್ಯಾರ್ಥಿಗಳ ಸಂಘಟನೆಗಳು ವೀಕ್ ಆಗಿದೆ ಎಂದರು. ಕೋಮುವಾದಕ್ಕೆ ಹೆಚ್ಚು ಬಲಿಯಾದವರು ವಿದ್ಯಾರ್ಥಿಗಳು ಮತ್ತು ಯುವ ಜನರು. ಹಿಂದೆ ಕರಾವಳಿ ಸೇರಿ ದಂತೆ ಕರ್ನಾಟಕವನ್ನು ಅಬಕಾರಿ ಮಾಫಿಯಾ ಕಂಟ್ರೋಲ್ ಮಾಡುತ್ತಿತ್ತು. ಈಗ ಶಿಕ್ಷಣ ಮಾಫಿಯಾ ಎಲ್ಲವನ್ನು ಕಂಟ್ರೋಲ್ ಮಾಡುತ್ತಿದೆ. ಶಿಕ್ಷಣ ಮಾಫಿಯಾ ಎಲ್ಲ ವಿದ್ಯಾರ್ಥಿ ಚಳವಳಿ ಸೇರಿದಂತೆ ಎಲ್ಲವನ್ನು ನಾಶ ಮಾಡಿದೆ ಎಂದು ಅಭಿಪ್ರಾಯಪಟ್ಟರು. ಧಾರ್ಮಿಕ ಕೇಂದ್ರಗಳನ್ನು ರಾಜಕೀಯ ಕೇಂದ್ರಗಳಾಗಿ ಬಳಕೆ ಮಾಡುವ ಪ್ರಯತ್ನ ಮಾಡಿದ್ದು, ಧಾರ್ಮಿಕ ಕೇಂದ್ರದಲ್ಲಿ ಹಿಂದೆ ಇದ್ದವರು ರಾಜಕೀಯವಾಗಿ ಗುರುತಿಸಿಕೊಂಡವರಲ್ಲ. ಧಾರ್ಮಿಕ-ರಾಜಕೀಯ ನಾಯ ಕರ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಅವರವರ ಕೆಲಸ ಮಾಡುತ್ತಿದ್ದರು. ಬಳಿಕ ಧಾರ್ಮಿಕ ಕೇಂದ್ರದ ನಾಯಕರನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿದ್ದು, ಅವರಿಗೆ ಅಧಿಕಾರ ನೀಡಲು ಆರಂಭ ಮಾಡಿದ್ದು ಪರೋಕ್ಷವಾಗಿ ಕೋಮುವಾದ ಬೆಳೆಯಲು ಪರೋಕ್ಷ ಕಾರಣವಾಯಿತು ಎಂದರು. ಆಡಳಿತಗಾರರನ್ನು ಎಚ್ಚರಿಸಬೇಕಾದ ಮಾಧ್ಯಮಗಳು ತನ್ನ ಜವಾಬ್ದಾರಿಯನ್ನು ಮರೆತು ಏಕಪಕ್ಷೀಯ ವಾಗಿ ನಡೆದುಕೊಂಡ ಕಾರಣದಿಂದಾಗಿ ತುಳುನಾಡಿನಲ್ಲಿ ಕೋಮುವಾದ ಬೆಳೆಯಿತು. ಕರವಳಿಯಲ್ಲಿ ಕೋಮುವಾದ ಬೆಳೆಯಲು ಮಾಧ್ಯಮಗಳ ಕೊಡುಗೆ ಅಪಾರ ಎಂದು ವಿಶ್ಲೇಷಿದರು. ಇವತ್ತು ತುಳುನಾಡಿನಲ್ಲಿ ಕೋಮುವಾದವನ್ನು ನಿಯಂತ್ರಿಸಲು ಸಂಸ್ಕೃತಿಯ ಮೂಲಕ ಸಾಮರಸ್ಯವನ್ನು ಬೆಳೆಸುವ ಪ್ರಯತ್ನ ಅಗತ್ಯ. ತುಳುನಾಡಿನ ಮೂಲಸಂಸ್ಕೃತಿಯ ಅರಿವನ್ನು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ವೈಚಾರಿಕವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಬೇಕು ಮತ್ತು ಯುವಜನರಿಗೆ ಸೈದ್ಧಾಂತಿಕ ತರಬೇತಿ ನೀಡಬೇಕಾಗಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ಕೋಮುವಾದಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಹಾರ ಅಗತ್ಯ. ಇವತ್ತು ದ.ಕ. ಜಿಲ್ಲೆಗೆ ಇಬ್ಬರು ಉತ್ತಮ ಐಪಿಎಸ್ ಅಧಿಕಾರಿಗಳು ಸಿಕ್ಕಿದ್ದಾರೆ. ಅವರ ಮೇಲೆ ಸೃಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಅರೋಪಗಳಿಲ್ಲ. ಹೀಗಾಗಿ ಅವರಲ್ಲಿ ಉತ್ತಮ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಆದರೆ ಅವರು ಕೈಗೊಂಡಿರುವ ರೌಡಿಶೀಟರ್ಗಳನ್ನು ಗಡಿಪಾರು ಮಾಡುವ ನಿರ್ಧಾರದಿಂದ ಈಗಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವೆ ? ಎಂದು ಯೋಚಿಸಬೇಕಾಗಿದೆ. ಕೋಮವಾದಿಗಳನ್ನು ಹತ್ತಿಕ್ಕುವ ಬರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದರು. ಡಿವೈಎಫ್ಐ ಮಾಜಿ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಕೋಮುವಾದ ಸಮಸ್ಯೆ ಮತ್ತು ಬದುಕಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು. ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ಕಾರ್ಯದರ್ಶಿ ದ.ಕ. ಸಂತೋಷ್ ಬಜಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮನೋಜ್ ವಾಮಂಜೂರು ವಿಮೋಚನಾ ಗೀತೆ ಹಾಡಿದರು.
ಇರಾನ್ ಎಂದೂ ಶರಣಾಗದ ದೇಶವೆಂಬುದು ಇತಿಹಾಸ ಬಲ್ಲವರಿಗೆ ತಿಳಿದಿದೆ: ಖಾಮಿನೈ
ಟೆಹರಾನ್: ಇರಾನ್ ಹಾಗೂ ಇಸ್ರೇಲ್ ದೇಶಗಳು ಕದನವಿರಾಮಕ್ಕೆ ಸಮ್ಮತಿಸಿವೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವು ತಾಸುಗಳ ಬಳಿಕ ಇರಾನ್ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಅವರು ಹೇಳಿಕೆಯೊಂದನ್ನು ನೀಡಿ, ಇರಾನ್ ಎಂದೂ ಶರಣಾಗದ ರಾಷ್ಟ್ರವೆಂದು ಹೇಳಿದ್ದಾರೆ. ‘‘ ಇರಾನ್ ಎಂದೂ ಶರಣಾಗತವಾದ ರಾಷ್ಟ್ರವೆಂದು, ಇರಾನ್ನ ಜನತೆ ಹಾಗೂ ಅವರ ಇತಿಹಾಸವನ್ನು ಅರಿತವರಿಗೆ ತಿಳಿದಿದೆ.ನಾವು ಯಾರಿಗೂ ಹಾನಿ ಮಾಡಿಲ್ಲ. ಆದರೆ ಯಾವುದೇ ಸನ್ನಿವೇಶದಲ್ಲಿಯೂ ಯಾರಿಂದಲೂ ಕಿರುಕುಳಕ್ಕೊಳಗಾಗುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ’’ಎಂದವರು ಹೇಳಿದ್ದಾರೆ.
‘ಇರಾನ್ ಬಳಿ ಅಣ್ವಸ್ತ್ರ ತಯಾರಿಕೆಗೆ ಸಾಕಾಗುವಷ್ಟು ಯುರೇನಿಯಂ ದಾಸ್ತಾನು ಇನ್ನೂ ಇದೆ': ವರದಿ
ಟೆಹರಾನ್: ಇರಾನ್ ನ ಭೂಗತ ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ದಾಳಿಯ ಹೊರತಾಗಿಯೂ ಆ ದೇಶದ ಬಳಿ ಅಣ್ವಸ್ತ್ರಗಳನ್ನು ತಯಾರಿಸಲು ಬೇಕಾದ ಸಂವರ್ಧಿತ ಯುರೇನಿಯಂನ ದಾಸ್ತಾನು ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಉಳಿದುಕೊಂಡಿದೆ. ‘ಆಟ ಇನ್ನೂ ಮುಗಿದಿಲ್ಲ’ ಎಂದು ಇರಾನಿನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಅವರ ನಿಕಟವರ್ತಿಯೊಬ್ಬರು ಹೇಳಿಕೊಂಡಿರುವುದಾಗಿ ವರದಿಯಾಗಿದೆ. ತನ್ನ ಅಣುಸ್ಥಾವರ ನೆಲೆಗಳ ಮೇಲೆ ಇಸ್ರೇಲ್ ಹಾಗೂ ಇರಾನ್ ದಾಳಿಗಳನ್ನು ನಡೆಸಿದ ಆನಂತರವೂ ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿರುವುದಾಗಿ ಇರಾನ್ ಸರಕಾರ ತಿಳಿಸಿದೆ. ಅಣುಸ್ಥಾವರಗಳನ್ನು ಪುನಾರಂಭಿಸುವ ಯೋಜನೆಯನ್ನು ಮುಂಚಿತವಾಗಿಯೇ ಇರಾನ್ ರೂಪಿಸಿದೆ. ಅಣ್ವಸ್ತ್ರ ತಯಾರಿಗೆ ಬಳಸಲಾಗುವಂತಹ 400 ಕೆ.ಜಿ. ಸಂವರ್ಧಿತ ಯುರೇನಿಯಂ ಇನ್ನೂ ಇರಾನ್ ಬಳಿ ಇದೆಯೆಂಬ ವರದಿಗಳ ಬಳಿಕ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರು ಈಬಗ್ಗೆ ಇರಾನಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ತ್ರಿಭಾಷಾ ಸೂತ್ರದ ಬಗ್ಗೆ ಮಹಾರಾಷ್ಟ್ರ ಸರಕಾರದ ಸಭೆ; ಮರಾಠಿ ಭಾಷೆಗೆ ಅವಮಾನ: ಸಂಜಯ್ ರಾವತ್
ಮುಂಬೈ: ತ್ರಿಭಾಷಾ ಸೂತ್ರದ ವಿವಾದದ ನಡುವೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್, ಈ ವಿಷಯದ ಕುರಿತು ಸರಣಿ ಸಭೆಗಳನ್ನು ನಡೆಸಲು ಮಹಾರಾಷ್ಟ್ರ ಸರಕಾರ ಕೈಗೊಂಡ ಕ್ರಮ ಮರಾಠಿ ಭಾಷೆಗೆ ಮಾಡುತ್ತಿರುವ ಅವಮಾನ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಮರಾಠಿಯ ಪ್ರಮುಖ ಸಾಹಿತಿಗಳು ಹಾಗೂ ಗಣ್ಯರ ಮೌನದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸರಕಾರದೊಂದಿಗಿನ ತಮ್ಮ ನಂಟಿನ ಕಾರಣಕ್ಕೆ ಹೆಚ್ಚಿನವರು ಈ ವಿಷಯದ ಕುರಿತು ಧ್ವನಿ ಎತ್ತಲಿಲ್ಲ ಎಂದು ಅವರು ಹೇಳಿದ್ದಾರೆ. ಹಲವು ಸಂಪುಟ ಸಚಿವರು ಹಾಗೂ ಸಾಹಿತಿಗಳ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿದ್ದಾರೆ. ಆದುದರಿಂದ ಮರಾಠಿ ಭಾಷೆಯನ್ನು ಸಂರಕ್ಷಿಸುವ ಕುರಿತು ಮಾತನಾಡುವ ನೈತಿಕ ಹಕ್ಕು ಅವರಿಗೆ ಇಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯ ಸರಕಾರ ಕಳೆದ ವಾರ ತಿದ್ದುಪಡಿ ಮಾಡಿದ ಆದೇಶವೊಂದನ್ನು ಹೊರಡಿಸಿದ್ದು, 1ರಿಂದ 5ನೇ ತರಗತಿ ವರಗೆ ಮರಾಠಿ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸಲಾಗುವುದು ಎಂದು ಹೇಳಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಅನಂತರ ಸರಕಾರ ಹಿಂದಿ ಕಲಿಕೆ ಕಡ್ಡಾಯವಲ್ಲ. ಆದರೆ, ಹಿಂದಿ ಹೊರತುಪಡಿಸಿ ಇತರ ಭಾಷೆ ಕಲಿಯಲು ಬಯಸಿದರೆ, ಶಾಲೆಯ ಪ್ರತಿ ತರಗತಿಯ ಕನಿಷ್ಠ 20 ವಿದ್ಯಾರ್ಥಿಗಳ ಒಪ್ಪಿಗೆ ಕಡ್ಡಾಯ ಎಂದು ಹೇಳಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಸೋಮವಾರ ರಾತ್ರಿ ಸಭೆ ನಡೆಸಿದ್ದಾರೆ ಹಾಗೂ ಬರಹಗಾರರು, ಭಾಷಾ ತಜ್ಞರು ಹಾಗೂ ರಾಜಕೀಯ ನಾಯಕರು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತ್ರಿಭಾಷೆಗಳ ಸೂತ್ರದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.
ಬೊಳ್ಳಾಯಿ : ಎಸ್ಬಿಎಸ್ ವಿದ್ಯಾರ್ಥಿ ಒಕ್ಕೂಟದ ಚುನಾವಣೆ
ಮಂಗಳೂರು: ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸದ ವಿದ್ಯಾರ್ಥಿಗಳ ಸುನ್ನೀ ಬಾಲ ಸಂಘ (ಎಸ್ಬಿಎಸ್)ದ ನೂತನ ಸಮಿತಿಗೆ ಚುನಾವಣೆ ಪ್ರಕ್ರಿಯೆಯು ಉತ್ತಮ ಸಮಾಜದ ಉದಾತ್ತ ಪ್ರಜೆಗಳಾಗೋಣ ಎಂಬ ಸಂದೇಶದೊಂದಿಗೆ ನಡೆಯಿತು. ಮದ್ರಸದ ಪ್ರಾಂಶುಪಾಲ ಅಕ್ಬರ್ ಹಿಮಮಿ ಸಖಾಫಿ ಕುಪ್ಪೆಟ್ಟಿಯ ನೇತೃತ್ವದಲ್ಲಿ ಗ್ರ್ಯಾಂಡ್ ಅಸೆಂಬ್ಲಿ ನಡೆಸಿದ ನಂತರ ಚುನಾವಣಾ ಅಧಿಕಾರಿ ಹಾಫಿಲ್ ಇಸ್ಮಾಯಿಲ್ ಹನೀಫಿ ಕಂಚಿಲರ ನೇತೃತ್ವದಲ್ಲಿ ಸ್ಟಾಫ್ ಕೌನ್ಸಿಲ್ನ ಸಹಕಾರದೊಂದಿಗೆ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಿತು. ಮಾದ್ಯಮ, ಮಿಲಿಟರಿ ಝಡ್, ಹೆಲ್ಪ್ಡೆಸ್ಕ್, ವಿಶೇಷ ಮೆರುಗು ನೀಡಿತ್ತು. ಇಂತಹ ಚುನಾವಣೆಯು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಂವಿಧಾನದ ಹಕ್ಕು ಚಲಾವಣೆಗೆ ಸ್ಫೂರ್ತಿಯಾಗಲಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದು ಸ್ಥಳೀಯ ಖತೀಬ್, ಎಸ್ಜೆಎಂ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆಎಚ್ಯು ಶಾಫಿ ಮದನಿ ಅಲ್ ಅಝ್ಹರಿ ಹೇಳಿದರು.
ಚಿಕ್ಕಮಗಳೂರು | ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳೂ ಧರೆಗುರುಳಿವೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಫಿನಾಡಿನಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಭಾರೀ ಮಳೆಯಾಗಿದ್ದರೆ, ಚಿಕ್ಕಮಗಳೂರು ಸೇರಿದಂತೆ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣ ಹಾಗೂ ಆಗಾಗ್ಗೆ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್,ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಹಾಗೂ ಸಂಜೆ ಭಾರೀ ಮಳೆಯಾಗಿದೆ. ಕಳಸ ತಾಲೂಕಿನಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದಾಗಿ ತಾಲೂಕಿನ ಬಸ್ರಿಕಲ್ ಗ್ರಾಮದಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕೆಲ ಗಂಟೆಗಳ ಕಾಲ ಕಳಸ-ಕುದರೆಮುಖ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮರ ಬಿದ್ದ ಹಿನ್ನಲೆಯಲ್ಲಿ ಕಳಸ-ಕಾರ್ಕಳ ರಸ್ತೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಡಿತಗೊಂಡಿತ್ತು. ಕಿ.ಮೀ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಹಾಗೂ ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿದರು.
ಉಪ್ಪಿನಂಗಡಿ: ಶ್ರೀ ಕ್ಷೇತ್ರ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರೂ, ಪ್ರಗತಿಪರ ಕೃಷಿಕರೂ, ಆಲಂತಾಯ ಗ್ರಾಮದ ಪಾಲೇರಿ ನಿವಾಸಿ ಜಿನೇಂದ್ರ ಕುಮಾರ್ ಜೈನ್ (ಚಿನ್ನೆರ್) ರವರು ಮೆದುಳಿನ ರಕ್ತಸ್ರಾವದಿಂದಾಗಿ ಜೂ.24ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಜೂ.23 ಸಂಜೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಜಿನೇಂದ್ರ ಕುಮಾರ್ ಅವರಿಗೆ ಸುಸ್ತು ಕಾಣಿಸಿ ಕೊಂಡಿದ್ದು ಮನೆಗೆ ಬಂದ ಅವರನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊ ಯ್ಯಲಾಗಿತ್ತು. ಆದರೆ ಆ ವೇಳೆಗಾಗಲೇ ರಕ್ತದೊತ್ತಡ ಹೆಚ್ಚಾಗಿ ಮೆದುಳಿನ ರಕ್ತಸ್ರಾವಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರನ್ನು ಮತ್ತೆ ರಾತ್ರಿಯೇ ಮನೆಗೆ ಕರೆತರಲಾಗಿದ್ದು ಮುಂಜಾನೆ ವೇಳೆ ನಿಧನರಾದರು ಎಂದು ವರದಿಯಾಗಿದೆ. ಜಿನೇಂದ್ರ ಕುಮಾರ್ ಜೈನ್ ಅವರು ಕಳೆದ ಹಲವು ವರ್ಷಗಳಿಂದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾಗಿದ್ದು ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ಇನ್ನಿತರ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. 10ಕ್ಕೂ ಹೆಚ್ಚು ವರ್ಷ ನೆಲ್ಯಾಡಿಯಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಇವರು ಊರಿನಲ್ಲಿ 'ಚಿನ್ನೆರ್' ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಉತ್ತರ ಪ್ರದೇಶ | ಯಾದವರೆಂದು ತಿಳಿದ ಬಳಿಕ ಧಾರ್ಮಿಕ ಪ್ರವಾಚಕ, ಸಹಾಯಕನ ತಲೆ ಬೋಳಿಸಿದ ಪ್ರಬಲ ಜಾತಿ ಜನರು
ಇಟಾವ: ಧಾರ್ಮಿಕ ಪ್ರವಾಚಕ ಹಾಗೂ ಅವರ ಸಹಾಯಕ ಯಾದವ ಸಮುದಾಯಕ್ಕೆ ಸೇರಿದವರು ಎಂದು ತಿಳಿದ ಬಳಿಕ ಪ್ರಬಲ ಜಾತಿಯ ಗುಂಪೊಂದು ಅವರ ತಲೆ ಬೋಳಿಸಿದ ಘಟನೆ ಉತ್ತರಪ್ರದೇಶದ ಇಟಾವ ಜಿಲ್ಲೆಯ ದಂಡರಪುರ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಧಾರ್ಮಿಕ ಪ್ರವಾಚಕ ಹಾಗೂ ಅವರ ಸಹಾಯಕನ ತಲೆ ಬೋಳಿಸಿದ ಘಟನೆ ರವಿವಾರ ತಡ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಂತ್ರಸ್ತರು ಕಥೆ ಹೇಳುವವರಾಗಿದ್ದು (ಪವಿತ್ರ ಪಠ್ಯಗಳ ನಿರೂಪಕರು), ‘ಭಗವದ್ ಕಥೆ’ ಹೇಳಲು ಗ್ರಾಮಗಳಿಗೆ ತೆರಳುತ್ತಿದ್ದರು. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಭಗವತ್ ಕಥೆಯ ಬಳಿಕ ಗ್ರಾಮಸ್ಥರು ಈ ಇಬ್ಬರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಹಾಗೂ ಅವರ ತಲೆಯನ್ನು ಬೋಳಿಸುತ್ತಿರುವುದನ್ನು ಕಾಣಬಹುದು ಎಂದು ಹಿರಿಯ ಪೊಲೀಸ್ ವರಿಷ್ಠ ಬ್ರಿಜೇಶ್ ಕುಮಾರ್ ಶ್ರೀವಾತ್ಸವ ತಿಳಿಸಿದ್ದಾರೆ. ಸಂತ್ರಸ್ತರು ದಾಖಲಿಸಿದ ದೂರಿನ ಆಧಾರದಲ್ಲಿ ಇಟವಾ ಜಿಲ್ಲೆಯ ಬೇಕೆವಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಧಾನ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಆಶಿಷ್ ತಿವಾರಿ, ಉತ್ತಮ್ ಕುಮಾರ್ ಅವಸ್ಥಿ, ನಿಕ್ಕಿ ಅವಸ್ಥಿ, ಮನು ದುಬೆ ಎಂದು ಗುರುತಿಸಲಾಗಿದೆ. ಎಲ್ಲರೂ ದಂಡರಪುರದ ನಿವಾಸಿಗಳು ಎಂದು ಅವರು ಹೇಳಿದ್ದಾರೆ.
ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಿದ ಕೇಂದ್ರ ಸರಕಾರ, ಕ್ವಿಂಟಾಲ್ಗೆ ಎಷ್ಟು ದರ? ಎಷ್ಟು ಟನ್ ಖರೀದಿ?
ಕೇಂದ್ರ ಸರ್ಕಾರವು ರಾಜ್ಯದ ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಧಾವಿಸಿದ್ದು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ. ಪ್ರತಿ ಕ್ವಿಂಟಾಲ್ಗೆ 1,616 ರೂ.ನಂತೆ ಗರಿಷ್ಠ 2.50 ಲಕ್ಷ ಮೆಟ್ರಿಕ್ ಟನ್ ಮಾವಿಗೆ ಪರಿಹಾರ ನೀಡಲು ಅನುಮೋದನೆ ನೀಡಲಾಗಿದೆ. ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಕ್ರಮ ಕೈಗೊಂಡಿದ್ದಾರೆ.
ವಿಟ್ಲ: ವಾಹನ ದಟ್ಟನೆಗೆ ಕಾರಣವಾಗುತ್ತಿದ್ದ ಫ್ಲೆಕ್ಸ್, ತಳ್ಳುಗಾಡಿಗಳ ತೆರವು
ವಿಟ್ಲ: ವಿಟ್ಲದಲ್ಲಿ ಸಂಭವಿಸುತ್ತಿರುವ ವಾಹನ ದಟ್ಟನೆ ನಿಯಂತ್ರಿಸಲು ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ವಾಹನ ದಟ್ಟನೆಗೆ ಕಾರಣವಾಗುತ್ತಿದ್ದ ಫ್ಲೆಕ್ಸ್ ಮತ್ತು ತಳ್ಳುಗಾಡಿಗಳನ್ನು ತೆರವುಗೊಳಿಸಿದರು. ವಿಟ್ಲ ಪೇಟೆಯಲ್ಲಿ ಸಂಭವಿಸುತ್ತಿರುವ ವಾಹನ ದಟ್ಟನೆಯನ್ನು ನಿಯಂತ್ರಿಸುವ ಉದ್ದೇಶದಿಂದ ಶನಿವಾರ ಪಟ್ಟಣ ಪಂಚಾಯತ್ ವತಿಯಿಂದ ಪೊಲೀಸ್, ಇಲಾಖೆ ಮತ್ತು ವಾಹನ ಚಾಲಕ ಸಭೆ ಕರೆದ ಈ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಅಳವಡಿಸಲಾಗಿದ್ದ ಪ್ರಚಾರದ ಫ್ಲೆಕ್ಸ್ ಹಾಗೂ ವಿಟ್ಲ-ಪುತ್ತೂರು ರಸ್ತೆಯ ಬದಿಯಲ್ಲಿದ್ದ ತಳ್ಳುಗಾಡಿಗಳನ್ನು ತೆರವುಗೊಳಿಸಿದರು. ಅದೇ ರೀತಿ ವಿಟ್ಲ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸುತ್ತಿದ್ದ ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳು ನಿಲ್ಲಿಸದಂತೆ ಸೂಚಿಸಲಾಯಿತು. ಅವರಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ ನಿಗದಿಪಡಿಸಲಾಗಿದ್ದು, ಅಲ್ಲೇ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಬುಧವಾರದಿಂದ ವಿಮಾನ ಹಾರಾಟ ಸಾಮಾನ್ಯ ಸ್ಥಿತಿಗೆ: ಏರ್ ಇಂಡಿಯಾ
ಹೊಸದಿಲ್ಲಿ: ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ವಾಯುಪ್ರದೇಶಗಳು ನಿಧಾನವಾಗಿ ಮರುತೆರೆದುಕೊಳ್ಳುತ್ತಿದ್ದು, ಮಂಗಳವಾರದಿಂದ ಆ ವಲಯಕ್ಕೆ ಹಂತಗಳಲ್ಲಿ ವಿಮಾನ ಯಾನವನ್ನು ಪುನರಾರಂಭಿಸುವುದಾಗಿ ಏರ್ ಇಂಡಿಯಾ ಹೇಳಿದೆ. ಮಧ್ಯಪ್ರಾಚ್ಯಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ಹಾರಾಟ ಬುಧವಾರದ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂಬ ನಿರೀಕ್ಷೆಯನ್ನು ಅದು ವ್ಯಕ್ತಪಡಿಸಿದೆ. ಯುರೋಪ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ಯಾನವನ್ನೂ ಮಂಗಳವಾರದಿಂದ ಹಂತಗಳಲ್ಲಿ ಪುನರಾರಂಭಿಸಲಾಗಿದೆ. ಅದೇ ವೇಳೆ, ಅಮೆರಿಕದ ಪೂರ್ವ ಕರಾವಳಿ ಮತ್ತು ಕೆನಡಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ಹಾರಾಟವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಪುನರಾರಂಭಿಸಲಾಗುವುದು ಎಂದು ಏರ್ ಇಂಡಿಯಾ ತಿಳಿಸಿದೆ.
ಉಪ್ಪಿನಂಗಡಿ| ಕೆಸರು ಗದ್ದೆಯಂತಾದ ರಸ್ತೆ; ವಾಹನ ಸವಾರರಿಗೆ ಸಂಕಷ್ಟ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿಯ ಭಾಗವಾಗಿ ಇಲ್ಲಿನ ಹಳೆಗೇಟು ಎಂಬಲ್ಲಿ ಸರ್ವೀಸ್ ರಸ್ತೆಯ ಬದಿ ನಿರ್ಮಿಸಲಾದ ಚರಂಡಿಯ ಬದಿಗೆ ಮಣ್ಣು ತುಂಬಿಸುವ ಕಾರ್ಯಕ್ಕೆ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿಗಳು ಹೊರಟಿದ್ದು, ಇದರಿಂದಾಗಿ ಈ ಜಡಿ ಮಳೆಗೆ ಮಣ್ಣೆಲ್ಲಾ ಕರಗಿ ರಸ್ತೆಯಿಡೀ ಕೆಸರು ಗದ್ದೆಯುಂಟಾಗಿ ವಾಹನ ಸವಾರರು ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರ ಸಂಸ್ಥೆಯ ಬೇಜಾವಬ್ದಾರಿ ಕಾಮಗಾರಿಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉಪ್ಪಿನಂಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿ ಆರಂಭವಾಗಿ ವರ್ಷಗಳು ಹಲವು ಉರುಳಿದರೂ ಕಾಮಗಾರಿ ಮಾತ್ರ ಇನ್ನೂ ಅಪೂರ್ಣ ಸ್ಥಿತಿಯಲ್ಲಿಯೇ ಇದೆ. ಕೂಟೇಲು ಬಳಿಯಿಂದ ಮಠದವರೆಗಿನ ಎತ್ತರಿಸಲ್ಪಟ್ಟ ಹೆದ್ದಾರಿಯಲ್ಲಿ ಈಗ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾ ಗಿದ್ದು, ಹಳೆಗೇಟುವಿನಲ್ಲಿ ತಿರುವು ಪಡೆದು ಮರ್ಧಾಳ ಕಡೆಗೆ ಸಂಚರಿಸಬೇಕಾದರೆ ವಾಹನಗಳು ಎತ್ತರಿಸಲ್ಪಟ್ಟ ರಸ್ತೆಯ ಎರಡೂ ಬದಿಯಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಸಾಗಬೇಕು. ಇಲ್ಲಿ ಒಂದು ಬದಿಯ ಸರ್ವೀಸ್ ರಸ್ತೆಯ ಕಾಮಗಾರಿ ಶೇ.75 ಮುಗಿದಿದ್ದು, ಉಳಿದ ಕಡೆ ರಸ್ತೆ ನಿರ್ಮಾಣವಾಗಬೇಕಿದೆ. ಇನ್ನೊಂದು ಬದಿಯ ಸರ್ವೀಸ್ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳಿಂದ ಕೂಡಿದೆ. ಇಲ್ಲಿ ಇನ್ನಷ್ಟೇ ಹೊಸ ರಸ್ತೆ ನಿರ್ಮಾಣವಾಗಬೇಕಿದೆ. ಮೊದಲೇ ಹೊಂಡ ಗುಂಡಿಗಳಿಂದ ಕೂಡಿರುವ ಈ ರಸ್ತೆಯ ಬದಿಯಲ್ಲಿ ನಿರ್ಮಿಸಿರುವ ಚರಂಡಿಗೆ ಬದಿ ಮಣ್ಣು ತುಂಬಿಸುವ ಕೆಲಸವನ್ನು ಎರಡು ಮೂರು ದಿನಗಳಿಂದ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಮಾಡುತ್ತಿದೆ. ಮಣ್ಣನ್ನು ರಸ್ತೆಯಲ್ಲೇ ತಂದು ರಾಶಿ ಹಾಕಿ ಮತ್ತೆ ಅದನ್ನು ಹಿಟಾಚಿ ಮೂಲಕ ಚರಂಡಿ ಬದಿಗೆ ತುಂಬಿಸಲಾಗುತ್ತಿದೆ. ಈಗ ಮಳೆಗಾಲದ ಸಮಯ ವಾಗಿದ್ದರಿಂದ ಮಣ್ಣೆಲ್ಲಾ ಕರಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಗದ್ದೆಯಂತಾಗಿದೆ. ಇನ್ನೊಂದು ಕಡೆಯಿಂದ ಹೊಂಡ- ಗುಂಡಿಗಳಿಂದಾಗಿಯೂ ಇಲ್ಲಿ ಸಂಚರಿಸುವ ವಾಹನ ಸವಾರರು ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಸಂಚಾರಕ್ಕೆ ತೊಂದರೆಯಾಗುತ್ತಿರುವ ಈ ರಸ್ತೆಯಲ್ಲಿ ಮಳೆಯ ಸಂದರ್ಭ ಈ ಕಾಮಗಾರಿಯ ಅಗತ್ಯವಿತ್ತೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದು ರಸ್ತೆ ಬಂದ್ : ಒಂದು ಸರ್ವೀಸ್ ರಸ್ತೆಯಲ್ಲಿ ಕೆಸರು, ಹೊಂಡ- ಗುಂಡಿಗಳಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿರುವ ಸಂದರ್ಭದಲ್ಲೇ ಕಾಮಗಾರಿಯ ನೆಪದಲ್ಲಿ ಶೇ.75ರಷ್ಟು ರಸ್ತೆಯ ಕಾಮಗಾರಿ ಆಗಿರುವ ಮತ್ತೊಂದು ಸರ್ವೀಸ್ ರಸ್ತೆಯನ್ನು ಜೂ.24ರಂದು ಮುಚ್ಚಲಾಗಿತ್ತು. ಇದರಿಂದಾಗಿ ಮರ್ಧಾಳ ಕಡೆಗೆ ತೆರಳುವ ವಾಹನಗಳೆಲ್ಲಾ ಅನಿವಾರ್ಯವಾಗಿ ಕೆಸರುಗದ್ದೆಯಂತಾಗಿರುವ ಈ ರಸ್ತೆಯಲ್ಲೇ ಸಂಚರಿ ಸುವ ಪ್ರಸಂಗ ಬಂದೊದಗಿತ್ತು. ಇದರಿಂದಾಗಿ ವಾಹನಗಳು ಹೊಂಡ- ಗುಂಡಿಯಲ್ಲಿ ಬೀಳುತ್ತಾ, ಏಳುತ್ತಾ ಸಾಗುತ್ತಿರುವ ನಡುವೆಯೇ ಈಗ ಕೆಸರಿನಲ್ಲಿ ಜಾರಿಕೊಂಡು ಹೋಗಬೇಕಾದ ಸಂದರ್ಭವೂ ಬಂದೊದ ಗಿದೆ. ಅಲ್ಲದೇ, ಕೂಟೇಲು ಬಳಿ ಬಂದ್ ಮಾಡಲಾದ ರಸ್ತೆಯ ಬಗ್ಗೆ ಯಾವುದೇ ಸೂಚನೆ ನೀಡದ್ದರಿಂದ ಕೆಲವು ವಾಹನಗಳು ಈ ರಸ್ತೆಯಲ್ಲಿ ಹಳೆಗೇಟು ತನಕ ಬಂದು ವಾಪಸ್ ತಿರುಗಿಸಿ ಹೋಗುವ ಪರಿಸ್ಥಿ ತಿಯೂ ನಿರ್ಮಾಣವಾಗಿತ್ತು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಗುತ್ತಿಗೆದಾರ ಸಂಸ್ಥೆಯವರು ಕೆಲವು ಕಡೆ ಸ್ವಲ್ಪ ಕಾಮಗಾರಿ ನಡೆಸಿ, ಮತ್ತೆ ಅದನ್ನು ಬಿಟ್ಟು ಬೇರೆ ಕಡೆ ಹೋಗುವುದ ರಿಂದ ಈ ಭಾಗದಲ್ಲಿ ಕಾಮಗಾರಿಯು ಅರ್ಧಂಬರ್ಧ ಆಗಿದ್ದು, ಅಪೂರ್ಣ ಸ್ಥಿತಿಯಲ್ಲೇ ಇದೆ. ಇನ್ನಾದರೂ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರು ಅರ್ಧಂಬರ್ಧ ಕಾಮಗಾರಿ ಮಾಡದೇ ಒಂದು ಕಡೆಯ ಕಾಮಗಾ ರಿಯನ್ನು ಸಂಪೂರ್ಣವಾಗಿ ಮುಗಿಸಿಯೇ ಮತ್ತೊಂದು ಕಡೆಗೆ ಹೋಗಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.
ಇರಾನ್ ದಾಳಿಗೆ ಅಮೆರಿಕ ವಿಮಾನಗಳು ಭಾರತೀಯ ವಾಯುಪ್ರದೇಶ ಬಳಸಿಲ್ಲ: ಭಾರತ
ಹೊಸದಿಲ್ಲಿ: ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕದ ಯುದ್ಧ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸಿವೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ಸುದ್ದಿಯನ್ನು ಭಾರತ ನಿರಾಕರಿಸಿದೆ. ಇರಾನ್ ನ ಮೂರು ಪರಮಾಣು ಸ್ಥಳಗಳ ಮೇಲೆ ಅಮೆರಿಕದ ಯುದ್ಧ ವಿಮಾನಗಳು ರವಿವಾರ ಮುಂಜಾನೆ ದಾಳಿ ನಡೆಸಿವೆ ಹಾಗೂ ಇರಾನ್ ಇದಕ್ಕೆ ಪ್ರತೀಕಾರ ಸಾಧಿಸಿದರೆ ಮತ್ತಷ್ಟು ದಾಳಿ ನಡೆಸುವ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿದ್ದಾರೆ. ‘‘‘ಆಪರೇಶನ್ ಮಿಡ್ನೈಟ್ ಹ್ಯಾಮರ್’ ವೇಳೆ ಇರಾನ್ ವಿರುದ್ಧ ಬಾಂಬ್ ದಾಳಿ ನಡೆಸಲು ಅಮೆರಿಕದ ಯುದ್ಧ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸಿವೆ ಎಂಬುದಾಗಿ ಹಲವು ಸಾಮಾಜಿಕ ಮಾಧ್ಯಮ ಖಾತೆಗಳು ಹೇಳಿಕೊಂಡಿವೆ. ಈ ಹೇಳಿಕೆ ಸುಳ್ಳು’’ ಎಂಬುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಪತ್ರಿಕಾ ಮಾಹಿತಿ ಸಂಸ್ಥೆಯ ವಾಸ್ತವಾಂಶ ಪತ್ತೆ ಘಟಕ (ಪಿಐಬಿ ಫ್ಯಾಕ್ಟ್ ಚೆಕ್) ಹೇಳಿದೆ. ‘‘‘ಆಪರೇಶನ್ ಮಿಡ್ನೈಟ್ ಹ್ಯಾಮರ್’ ಕಾರ್ಯಾಚರಣೆಯ ವೇಳೆ ಅಮೆರಿಕವು ಭಾರತೀಯ ವಾಯುಪ್ರದೇಶವನ್ನು ಬಳಸಿಲ್ಲ’’ ಎಂದು ಅದು ತಿಳಿಸಿದೆ. ಅಮೆರಿಕದ ಯುದ್ಧವಿಮಾನಗಳು ಬಳಸಿದ ಮಾರ್ಗದ ಬಗ್ಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಅಮೆರಿಕದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಡ್ಯಾನ್ ಕೇನ್ ವಿವರಗಳನ್ನು ನೀಡಿದ್ದಾರೆ ಎಂದು ಅದು ಹೇಳಿದೆ.
ವಿಜಯನಗರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು
ವಿಜಯನಗರ(ಹೊಸಪೇಟೆ) : ಹೊಸಪೇಟೆ ಬೈಪಾಸ್ ರಸ್ತೆಯ ಸುಂಕ್ಲಮ್ಮ ಗುಡಿ ಹತ್ತಿರವಿರುವ ಸ್ಟೀಲ್ ಬ್ರೀಡ್ಜ್ ಮೇಲೆ ಜೂ.4 ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಚಹರೆ ವಿವರ : 5.6 ಅಡಿ ಎತ್ತರ, ಸಾಧರಣ ಮೈಕಟ್ಟು, ಸಾಧಾ ಬಿಳುಪು ಮೈ ಬಣ್ಣ, ಗಡ್ಡ, ಮೀಸೆ ಬಿಟ್ಟಿರುತ್ತಾನೆ. ತಲೆಯಲ್ಲಿ ಸುಮಾರು 2 ಇಂಚು ಕಪ್ಪು ಕೂದಲುಗಳಿವೆ ಮತ್ತು ಹಣೆಯ ಮೇಲೆ ಹಳೆಗಾಯದ ಗುರುತು ಇರುತ್ತದೆ. ಮೃತನು ಬಿಳಿಯ ಬಣ್ಣದ ಆಫ್ ಬನಿಯನ್, ಅಂಡರವೇರ್ ಧರಿಸಿರುತ್ತಾನೆ. ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ವಿಜಯನಗರ ಕಂಟ್ರೋಲ್ ರೂಂ. 9480805700, 08394-224933. ಗ್ರಾಮೀಣ ಪೊಲೀಸ್ ಠಾಣೆ ನಂ.9480805746, 08394-228233. ಹೊಸಪೇಟೆ ಡಿಎಸ್ಪಿ ಕಚೇರಿ ನಂ.9480805720, 08394-224204 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಡ್ಯ: ಸರಕಾರಿ ಭೂಮಿಯನ್ನು ಸಾಬರ(ಮುಸ್ಲಿಮರ) ಹೆಸರಿಗೆ ಮಾಡಿದ್ರೆ, ಅಂತಹ ಅಧಿಕಾರಿಯನ್ನು ನೇಣಿಗೆ ಹಾಕುವುದು ಗ್ಯಾರೆಂಟಿ ಎಂಬ ಹೇಳಿಕೆಗೆ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಯಾವುದೇ ಸಮುದಾಯದ, ಜಾತಿ ವಿಚಾರವನ್ನು ಇಟ್ಟುಕೊಂಡು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ. ಕಾಮಗಾರಿ ಚಾಲನೆ ವೇಳೆ ತರೀಪುರ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವಾಗ ಆಡು ಭಾಷೆಯಲ್ಲಿ ಮಾತಾಡಿರುವೆ. ಅಧಿಕಾರಿಗೆ ಬೆದರಿಕೆಯನ್ನೂ ಹಾಕಿಲ್ಲ. ಇನ್ನೊಂದು ಧರ್ಮ ಮತ್ತು ಜಾತಿಯ ಬಗ್ಗೆ ಎಂದೂ ಮಾತಾಡಿಲ್ಲ ಎಂದು ಅವರು ಹೇಳಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಮೊದಲಿಂದಲೂ ಮುಸ್ಲಿಮರೊಂದಿಗೆ ಚೆನ್ನಾಗಿದ್ದೇವೆ. ಅವರ ಎಲ್ಲ ಅಭಿವೃದ್ಧಿ ಕೆಲಸಗಳಿಗೂ ಒತ್ತಾಸೆಯಾಗಿದ್ದೇನೆ. ನನ್ನ 40 ವರ್ಷದ ರಾಜಕಾರಣದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಒಂದೇ ಒಂದು ಕೋಮುಗಲಭೆ ಅಥವಾ ಜಾತಿ ಸಂಘರ್ಷ ಆಗಿಲ್ಲ. ಜನರ ವಿಶ್ವಾಸ ಗಳಿಸಿಕೊಂಡು ಕೆಲಸ ಮಾಡುತ್ತಾ ಬಂದಿದ್ದೇವೆ. ಸಂವಿಧಾನ ಬದ್ಧವಾಗಿ ನಮ್ಮ ಕೆಲಸ ಮುಂದುವರಿಯಲಿದೆ. ಯಾರಿಗೂ ನೋವುಂಟು ಮಾಡುವುದು ನಮ್ಮ ಉದ್ದೇಶ ಇಲ್ಲ ಎಂದು ಎಂದು ಅವರು ತಿಳಿಸಿದ್ದಾರೆ. ಶ್ರೀರಂಗಪಟ್ಟಣ ಕಸಬಾ ಭಾಗದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರೂ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದಾರೆ. ಫಾರಂ 53ರಡಿ ಅರ್ಜಿ ಹಾಕಿರುವ ಹಲವರಿಗೆ ಶಾಸಕರಾಗಿದ್ದ ನನ್ನ ತಾಯಿ ಜಾತಿಬೇಧವಿಲ್ಲದೆ ಜಮೀನು ಹಕ್ಕು ನೀಡಿರುವ ದಾಖಲೆಗಳಿವೆ. ಯಾವುದೇ ತಾರತಮ್ಯ ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಹೊರಗಿನ ಕೆಲವು ಪ್ರಭಾವಿ ಮುಸ್ಲಿಮರು ಸದರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಗ್ರಾಮೀಣ ಭಾಗದ ರೈತರ ಈ ಭೂಮಿ ಪ್ರಭಾವಿಗಳ ವಶವಾಗಬಾರದು. ಯಾರಿಗೆ ಹಕ್ಕಿದೆ ಅವರದಾಗಬೇಕೆಂಬುದು ನನ್ನ ಆತ್ಮಸಾಕ್ಷಿಯ ತೀರ್ಮಾನ. ಸಹಜವಾಗಿ ಬಂದ ಮಾತಾಗಿದೆ. ದಯಮಾಡಿ ಎಲ್ಲ ಸಮುದಾಯದವರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ವಿಜಯನಗರ | ಜೂ.30 ರವರೆಗೆ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಅವಧಿ ವಿಸ್ತರಣೆ : ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್
ವಿಜಯನಗರ(ಹೊಸಪೇಟೆ) : 2025-26 ನೇ ಸಾಲಿನ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯಲ್ಲಿ ಇದುವರೆಗೂ ಭಾಗವಹಿಸದಿರುವ ಪರಿಶಿಷ್ಟ ಜಾತಿ ಕುಟುಂಬದವರಿಗೆ ಜೂ.9 ರಿಂದ ಜೂ.30 ರವರೆಗೆ ಕಾಲಾವಧಿಯನ್ನು ವಿಸ್ತರಿಸಿ ಆನ್ಲೈನ್ ಮೂಲಕ ನೋಂದಾಯಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ. ನಾಗರೀಕ ಸೇವಾ ಕೇಂದ್ರಗಳಾದ ಕರ್ನಾಟಕ ಒನ್, ಬೆಂಗಳೂರು ಒನ್, ಮತ್ತು ಗ್ರಾಮ ಒನ್ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಹ ಸಮೀಕ್ಷೆಗೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಇದಲ್ಲದೇ ಅನ್ಲೈನ್ ಮೂಲಕ https://schedulecastesurvey.karnataka.gov.in/selfdeclaration ಲಿಂಕ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳುವ ವಿಧಾನವನ್ನು ಜೂ.30 ರವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈಗಾಗಲೇ ಜಿಲ್ಲಾಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕರ ಕಚೇರಿ ವಿಜಯನಗರ ಹಾಗೂ ವಿಧಾನಸಭಾ ಕ್ಷೇತ್ರವಾರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಂಟ್ರೋಲ್ ರೂಂ ಗಳನ್ನು ಸ್ಥಾಪಿಸಲಾಗಿದೆ. ವಿಜಯನಗರ ಜಿಲ್ಲೆಯ ರಮೇಶ್ ಮೊ.8095002829, ಹೊಸಪೇಟೆ ನಜೀಮಾ ಭಾನು ಮೊ. 9108777499, ಹಗರಿಬೊಮ್ಮನಹಳ್ಳಿ ಆನಂದ.ವೈ.ಡೊಳ್ಳಿನ ಮೊ.9901980762, ಕೂಡ್ಲಿಗಿ ಶಾಹೇಖಾ ಅಹ್ಮದಿ ಮೊ.8105909630, ಹಡಗಲಿ ಜ್ಯೋತಿ ಮೊ.9482608061, ಹರಪನಹಳ್ಳಿ ಎಸ್, ಆರ್,ಗಂಗಪ್ಪ ಮೊ.9739094433 ಸಮೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ಕಂಟ್ರೋಲ್ ರೂಂ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯನಗರ | ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ ʼಜಿಲ್ಲಾ ಸಾಥಿ ಸಮಿತಿʼ ರಚನೆ : ಎನ್.ರಾಜೇಶ್
ವಿಜಯನಗರ(ಹೊಸಪೇಟೆ) : ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಸರಕಾರದಿಂದ ಬರುವ ಯೋಜನೆಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ‘ಜಿಲ್ಲಾ ಸಾಥಿ ಸಮಿತಿ’ಯನ್ನು ರಚಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಎನ್.ರಾಜೇಶ್ ಹೊಸಮನೆ ತಿಳಿಸಿದ್ದಾರೆ. ಸರಕಾರಿ ಸಂಸ್ಥೆಗಳಲ್ಲಿ ಆಶ್ರಯ ಪಡೆಯುತ್ತಿರುವ 18 ವರ್ಷದೊಳಗಿನ ನಿರ್ಗತಿಕ ಮಕ್ಕಳು ಹಾಗೂ ಬೀದಿ, ಕೊಳಗೇರಿ, ರೈಲ್ವೆ ನಿಲ್ದಾಣ, ಆರೈಕೆ ಕೇಂದ್ರ ವಾಸಿಸುತ್ತಿರುವ ಮಕ್ಕಳು, ಅನಾಥರು, ಏಕಪೋಷಕ ಮಕ್ಕಳು, ಕಳ್ಳ ಸಾಗಾಣಿಕೆಯಲ್ಲಿ ಸಿಲುಕಿದ ಮತ್ತು ಬಾಲ ಕಾರ್ಮಿಕರು, ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳು, ಮಾದಕ ವ್ಯಸನಿ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಜೀತ ಪದ್ಧತಿಯಿಂದ ರಕ್ಷಿಸಲ್ಪಟ್ಟಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಆಧಾರ್ ದಾಖಲಾತಿಯನ್ನು ಮಾಡಿಸಿ ಅವರಿಗೆ ಕಾನೂನಿನ ನೆರವು, ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ನಿರ್ಗತಿಕ ಮಕ್ಕಳ ಗುರುತಿಸಿ ಅವರ ಪೋಷಕರು, ಕುಟುಂಬಕ್ಕೆ ಸೇರಿಸುವುದು ಜಿಲ್ಲಾ ಸಾಥಿ ಸಮಿತಿಯ ಉದ್ದೇಶವಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ನಿರ್ಗತಿಕ ಮಕ್ಕಳನ್ನು ನೋಡಿದಲ್ಲಿ ಕೂಡಲೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದೂ.08392 278077, 9141193929, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಉಚಿತ ಕಾನೂನು ಸೇವೆ ಸಂಖ್ಯೆ 15100 ಕರೆ ಮಾಡಿ ತಿಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಿಡಗಳ ಸಂರಕ್ಷಣೆಗೆ ಸಾಮೂಹಿಕ ಜಾಗೃತಿ ಅಗತ್ಯ: ರಾಜೇಶ್
ಮಂಗಳೂರು : ಗಿಡಗಳ ಸಂರಕ್ಷಣೆಯ ಬಗ್ಗೆ ಸಾಮೂಹಿಕ ಜಾಗೃತಿಯ ಅಗತ್ಯವಿದೆ ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ರಾಜೇಶ್ ತಿಳಿಸಿದ್ದಾರೆ. ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ಅರಣ್ಯ ಇಲಾಖೆ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಸುರತ್ಕಲ್ ಕೋಡಿಕೆರೆ (ಎಸ್ಟಿಪಿ)ಯಲ್ಲಿ 50 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಗರದಲ್ಲಿ 25 ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಮತ್ತು ಈ ಗಿಡಗಳನ್ನು ನೆಟ್ಟು ಸಂರಕ್ಷಣೆಯ ನಿಗಾವಹಿಸುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.ಈಗಾಗಲೇ ಸುಮಾರು 9 ಸಾವಿರ ಗಿಡಗಳನ್ನು ಅರಣ್ಯ ಇಲಾಖೆ ಯವತಿಯಿಂದ ನೆಡಲಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಸಹಭಾಗಿತ್ವ ದ ಅಗತ್ಯವಿದೆ ಎಂದು ರಾಜೇಶ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಸುರತ್ಕಲ್ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಶ್ರವಣ್ ಕುಮಾರ್, ಸುರತ್ಕಲ್ ಬೀಟ್ ಅರಣ್ಯ ಅಧಿಕಾರಿ ಗಂಗಾಧರ್, ದ.ಕ.ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟಾ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಕೋಡಿಕೆರೆ ಎಸ್ಟಿಪಿ ಗುತ್ತಿಗೆದಾರ ಶಾಂತರಾಜು ಉಪಸ್ಥಿತರಿದ್ದರು.
ಕಲಬುರಗಿ | ವಿಧವೆಯರ ಬಗ್ಗೆ ಉತ್ತಮ ಮನೋಭಾವನೆ ಅಗತ್ಯ: ಎಚ್.ಬಿ.ಪಾಟೀಲ್
ಕಲಬುರಗಿ: ಇಂದಿನ ಸಮಾಜದಲ್ಲಿ ವಿಧವೆಯರ ಬಗ್ಗೆ ಉತ್ತಮ ಮನೋಭಾವನೆ ಇಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರಗತಿಪರ ಚಿಂತಕ ಎಚ್.ಬಿ.ಪಾಟೀಲ್ ಹೇಳಿದ್ದಾರೆ. ನಗರದ ಹೊರವಲಯದ ರಾಣೇಸ್ಪಿರ್ ದರ್ಗಾ ರಸ್ತೆಯಲ್ಲಿರುವ ‘ನೆಮ್ಮದಿ ಹಿರಿಯರ ಮನೆ(ವೃದ್ಧಾಶ್ರಮ)’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಮಂಗಳವಾರ ಸಂಜೆ ಜರುಗಿದ ‘ಅಂತರರಾಷ್ಟ್ರೀಯ ವಿಧವೆಯರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು. ಯಾವುದೇ ಮಹಿಳೆಯು ತನ್ನ ಪತಿ ಕಳೆದುಕೊಂಡು ವಿಧವೆಯಾಗಬೇಕು ಎಂದು ಎಂದಿಗೂ ಕೂಡಾ ಬಯಸುವುದಿಲ್ಲ. ಕಾರಣಾಂತರಗಳಿಂದ ಇದು ಜರುಗುತ್ತದೆ ಎಂಬ ನೈಜತೆಯನ್ನು ಗಮನದಲ್ಲಿಟ್ಟುಕೊಂಡು, ಸಮಾಜವು ಸಂಪ್ರದಾಯದ ನೆಪದಲ್ಲಿ ಆ ಮಹಿಳೆಯನ್ನು ಕೀಳಾಗಿ ಕಾಣುವುದು ಬೇಡ. ಇದರಿಂದ ವಿಧವಾ ತಾಯಿಯು ಮನೋಸ್ಥೈರ್ಯ ಕಳೆದುಕೊಂಡು ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಗುತ್ತದೆ. ಅವರನ್ನು ಉತ್ತಮ ಮನೋಭಾವನೆಯಿಂದ ಗೌರವಿಸಿ, ನೆಮ್ಮದಿಯಿಂದ ಬದುಕಲು ಅನವು ಮಾಡಿಕೊಡುವುದು ಜವಾಬ್ದಾರಿಯುತ ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ವೈದ್ಯರಾದ ಡಾ.ರಾಜಶೇಖರ ಪಾಟೀಲ್, ವೃದ್ಧಾಶ್ರಮದ ಮೇಲ್ವಿಚಾರಕಿ ಬಸಮ್ಮ ಕೆ.ಸ್ಥಾವರಮಠ, ಸಮಾಜ ಸೇವಕಿ ಪುತಾಳಾಬಾಯಿ ಮಾತಾ, ಪ್ರಮುಖರಾದ ಚನ್ನಮ್ಮ, ಶಾಂತಾಬಾಯಿ, ಭಾಗಿರತಿ, ಇಂದುಬಾಯಿ, ಲಕ್ಷ್ಮೀಬಾಯಿ, ಶಶಿಕಲಾ, ಕಮಲಾಬಾಯಿ, ಮಾಲತಿಬಾಯಿ ಸರುಬಾಯಿ, ರೇವಮ್ಮ, ನಿಂಗಮ್ಮ ವೃದ್ಧಾಶ್ರಮದ ಹಿರಿಯರು, ಬಡಾವಣೆಯ ನಾಗರಿಕರು ಇದ್ದರು.
ರೈಲು ಪ್ರಯಾಣದರಗಳಲ್ಲಿ ಏರಿಕೆ: ಜು.1ರಿಂದ ಜಾರಿ ಸಾಧ್ಯತೆ
ಹೊಸದಿಲ್ಲಿ: ಭಾರತೀಯ ರೈಲ್ವೆಯು ಜು.1ರಿಂದ ಜಾರಿಗೆ ಬರುವಂತೆ ಎಸಿ ಮತ್ತು ನಾನ್-ಎಸಿ ಮೇಲ್,ಎಕ್ಸ್ಪ್ರೆಸ್ ಮತ್ತು ದ್ವಿತೀಯ ದರ್ಜೆ ಟಿಕೆಟ್ ಗಳ ಬೆಲೆಗಳಲ್ಲಿ ಅಲ್ಪ ಏರಿಕೆಯನ್ನು ಮಾಡುವ ಸಾಧ್ಯತೆಯಿದೆ. ದರ ಪರಿಷ್ಕರಣೆಯು ಪ್ರಯಾಣಿಕರಿಗೆ ಹೆಚ್ಚಿನ ಹೊರೆಯನ್ನುಂಟು ಮಾಡುವುದಿಲ್ಲ ಎಂದು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದ ಹಿರಿಯ ರೈಲ್ವೆ ಅಧಿಕಾರಿಯೋರ್ವರು,ಉಪನಗರ ರೈಲು ಪ್ರಯಾಣ ದರ ಮತ್ತು ಮಾಸಿಕ ಪಾಸ್ ದರಗಳಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆಯಿಲ್ಲ ಎಂದು ಹೇಳಿದರು. 500 ಕಿ.ಮೀ.ವರೆಗಿನ ಪ್ರಯಾಣಕ್ಕೆ ಸಾಮಾನ್ಯ ದ್ವಿತೀಯ ದರ್ಜೆ ಟಿಕೆಟ್ ದರಗಳಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ,ಆದರೆ ಸಾಮಾನ್ಯ ದ್ವೀತಿಯ ದರ್ಜೆ ಪ್ರಯಾಣ ದರವನ್ನು 500 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿ.ಮೀ.ಗೆ ಕೇವಲ ಅರ್ಧ ಪೈಸೆಯಷ್ಟು ಹೆಚ್ಚಿಸಲು ರೈಲ್ವೆಯು ಉದ್ದೇಶಿಸಿದೆ ಎಂದು ಅವರು ತಿಳಿಸಿದರು. ದೇಶಾದ್ಯಂತ ಪ್ರತಿ ದಿನ 13,000ಕ್ಕೂ ಅಧಿಕ ಟ್ರಿಪ್ಗಳನ್ನು ನಡೆಸುತ್ತಿರುವ ನಾನ್-ಎಸಿ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಟಿಕೆಟ್ ದರಗಳಲ್ಲಿ ಪ್ರತಿ ಕಿ.ಮೀ.ಗೆ ಕನಿಷ್ಠ ಒಂದು ಪೈಸೆ ಹೆಚ್ಚಳವಾಗುವ ಸಾಧ್ಯತೆಯಿದೆ ಮತ್ತು ಎಸಿ ದರ್ಜೆಯ ಟಿಕೆಟ್ ದರಗಳನ್ನು ಪ್ರತಿ ಕಿ.ಮೀ.ಗೆ ಎರಡು ಪೈಸೆ ಹೆಚ್ಚಿಸುವ ಪ್ರಸ್ತಾವವಿದೆ ಎಂದು ಅವರು ವಿವರಿಸಿದರು. ದರ ಪರಿಷ್ಕರಣೆಯು ಪ್ರಯಾಣಿಕರಿಗೆ,ವಿಶೇಷವಾಗಿ ನಿಯಮಿತವಾಗಿ ಮತ್ತು ಕಡಿಮೆ ದೂರ ಪ್ರಯಾಣಿಸುವವರಿಗೆ ಹೊರೆಯಾಗದಂತೆ ಕಾರ್ಯಾಚರಣೆ ವೆಚ್ಚಗಳನ್ನು ನಿರ್ವಹಿಸಲು ರೈಲ್ವೆಯ ನಿರಂತರ ಪ್ರಯತ್ನಗಳ ಭಾಗವಾಗಿದೆ ಎಂದರು.
ಕದನ ವಿರಾಮಕ್ಕೆ ರಶ್ಯ, ಚೀನಾ ಸ್ವಾಗತ
ಮಾಸ್ಕೋ: ಇರಾನ್-ಇಸ್ರೇಲ್ ನಡುವೆ ಘೋಷಣೆಯಾಗಿರುವ ಕದನ ವಿರಾಮವನ್ನು ಸ್ವಾಗತಿಸುವುದಾಗಿ ರಶ್ಯ ಮತ್ತು ಚೀನಾ ಹೇಳಿವೆ. `ನಿಜವಾಗಿಯೂ ಕದನ ವಿರಾಮವನ್ನು ಸಾಧಿಸಿದ್ದರೆ ನಾವದನ್ನು ಸ್ವಾಗತಿಸುತ್ತೇವೆ ಮತ್ತು ಇದು ಸುಸ್ಥಿರ ಕದನ ವಿರಾಮವಾಗಿರುತ್ತದೆ ಎಂದು ಆಶಿಸುವುದಾಗಿ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅಂತರಾಷ್ಟ್ರೀಯ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಲು ಚೀನಾ ಬಯಸಿದೆ. ಉದ್ವಿಗ್ನತೆ ಉಲ್ಬಣಗೊಳ್ಳುವುದನ್ನು ಚೀನಾ ಬಯಸುತ್ತಿಲ್ಲ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಬಿಕ್ಕಟ್ಟು ಇತ್ಯರ್ಥಗೊಳ್ಳಬೇಕೆಂದು ಆಗ್ರಹಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.
ದಾಳಿ ಮರುಕಳಿಸಿದರೆ ಐತಿಹಾಸಿಕ ಪಾಠ ಕಲಿಸುತ್ತೇವೆ: ಅಮೆರಿಕಕ್ಕೆ IRGC ಎಚ್ಚರಿಕೆ
ಟೆಹ್ರಾನ್: ಇರಾನಿನ ವಿರುದ್ಧದ ದಾಳಿ ಮರುಕಳಿಸಿದರೆ ಅಮೆರಿಕಕ್ಕೆ ಐತಿಹಾಸಿಕ ಪಾಠ ಕಲಿಸುವುದಾಗಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್ಜಿಸಿ)ಯ ಮುಖ್ಯ ಕಮಾಂಡರ್ ಮೇ| ಜ| ಮುಹಮ್ಮದ್ ಪಕ್ಪೋರ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. ಖತರ್ ಮತ್ತು ಇರಾಕ್ ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಸೋಮವಾರ ರಾತ್ರಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. `ಅಮೆರಿಕಕ್ಕೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ಸರ್ವಶಕ್ತನಾದ ದೇವರನ್ನು ಅವಲಂಬಿಸಿ ಮತ್ತು ಇರಾನಿನ ಜನರ ಬೆಂಬಲದಿಂದ ಇರಾನ್ ರಾಷ್ಟ್ರವು ಯಾವುದೇ ಸಂದರ್ಭದಲ್ಲೂ ತನ್ನ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಗೆ ಸೂಕ್ತ ಉತ್ತರ ನೀಡದೆ ಬಿಡುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಹೊರಗುತ್ತಿಗೆ ನೌಕರರಿಗೆ 5 ಲಕ್ಷ ರೂ.ಗಳ ನಗದು ರಹಿತ ಆರೋಗ್ಯ ಯೋಜನೆಗೆ ಅನುಮೋದನೆ
ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ 5ಲಕ್ಷ ರೂ.ಗಳ ನಗದು ರಹಿತ ಆರೋಗ್ಯ ಭರವಸೆ ಯೋಜನೆಯನ್ನು ಜಾರಿ ಮಾಡಿದ್ದು, ಇದಕ್ಕಾಗಿ ಸಿಬ್ಬಂದಿಯಿಂದ ಮಾಸಿಕ 100 ರೂ. ವಂತಿಗೆ ಪಡೆಯಲಾಗುತ್ತದೆ. ಮಂಗಳವಾರದಂದು ಸರಕಾರ ಆದೇಶ ಹೊರಡಿಸಿದ್ದು, ವಾರ್ಷಿಕ ಆದಾಯ ರೂ.2.52 ಲಕ್ಷ ರೂ.ಗಿಂತ ಕಡಿಮೆ ಅಥವಾ ಮಾಸಿಕ ಆದಾಯ 21 ಸಾವಿರ ರೂ.ಗಿಂತ ಕಡಿಮೆ ಇರುವ ವರ್ಗದ ಉದ್ಯೋಗಿಗಳು ಯೋಜನೆಯನ್ನು ಪಡೆಯಲಿದ್ದಾರೆ. ಸರಕಾರವು ಸಹ ತಿಂಗಳಿಗೆ 100ರೂ.ಗಳ ಹೊಂದಾಣಿಕೆಯ ಪಾಲನ್ನು ಪಾವತಿಸುತ್ತದೆ. ಅದರಂತೆ ಉದ್ಯೋಗಿಗಳಿಗೆ ಸರಕಾರದ ಕೊಡುಗೆ ಪ್ರತಿ ಕುಟುಂಬಕ್ಕೆ ಸರಾಸರಿ ವಾರ್ಷಿಕ ವೆಚ್ಚದ ಶೇ.50ರಷ್ಟು ಆಗಿರುತ್ತದೆ ಎಂದು ತಿಳಿಸಿದೆ. ಆದ್ಯತೇತ್ತರ(ಪಿಎಚ್ಎಚ್ ಅಲ್ಲದ) ಕುಟುಂಬಗಳಿಗೆ ಸರಾಸರಿ ವೆಚ್ಚದ ಶೇ.30ರಷ್ಟು ಸರಕಾರವು ಪಾವತಿಸಲಿದೆ. ಉಳಿಕೆ ಮೊತ್ತ ಸಿಬ್ಬಂದಿಯ ವಂತಿಕೆಯಾಗಿರುತ್ತದೆ. ಇಂತಹ ಪ್ರಕರಣಗಳಿಗೆ ಸರಕಾರದ ಕೊಡುಗೆ 60ರೂ. ಆಗಿರುತ್ತದೆ ಮತ್ತು ಗುತ್ತಿಗೆ ಉದ್ಯೋಗಿ 140ರೂ. ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಈ ಆದೇಶ ಹೊರಡಿಸಿದ ದಿನಾಂಕದಿಂದ 2 ತಿಂಗಳೊಳಗೆ ಅಂದರೆ ಆ.31ರೊಳಗಾಗಿ ಸರಕಾರಿ ಇಲಾಖೆಗಳು/ನಿಗಮಗಳು/ಸ್ಥಳೀಯ ಸಂಸ್ಥೆಗಳು/ಮಂಡಳಿಗಳು(ಪಾಲುದಾರಿಕೆ ಸಂಸ್ಥೆ) ಎಸ್ಎಎಸ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡು, ಪಟ್ಟಿಯನ್ನು ಆರೋಗ್ಯ ಇಲಾಖೆಗೆ ಒದಗಿಸಬೇಕು. ನಂತರದ ವರ್ಷಗಳಲ್ಲಿ, ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಅಂದರೆ ಮಾ.31ರೊಳಗಾಗಿ ಪಟ್ಟಿಯನ್ನು ಒದಗಿಸಬೇಕು ಎಂದು ಹೇಳಿದೆ. ಅನುಮತಿಸಲಾದ ಪಟ್ಟಿಯನ್ನು ಹೊರತುಪಡಿಸಿ ಯಾವುದೇ ಹೊಸ ಸೇರ್ಪಡೆಗಳನ್ನು ಪರಿಗಣಿಸುವುದಿಲ್ಲ. ಪಾಲುದಾರಿಕೆ ಸಂಸ್ಥೆಯು ಸಿಬ್ಬಂದಿಗಳಿಂದ ಕೊಡುಗೆಯನ್ನು ಸಂಗ್ರಹಿಸಿ ಮಾಸಿಕವಾಗಿ ಎಸ್ಎಎಸ್ಟಿಗೆ ವರ್ಗಾಯಿಸಬೇಕು. ಹಾಗೆಯೇ ಪಾಲುದಾರಿಕೆ ಸಂಸ್ಥೆಗಳು ಶೇ.2ರಷ್ಟು ನಿರ್ವಹಣಾ ವೆಚ್ಚವನ್ನು ಎಸ್ಎಎಸ್ಟಿಗೆ ಪಾವತಿಸಬೇಕು ಎಂದು ಉಲ್ಲೇಖಿಸಿದೆ. ►ಯೋಜನೆಯಡಿ ಪ್ರತಿ ನೌಕರರು ತಿಂಗಳಿಗೆ 100 ರೂಪಾಯಿ ಪಾವತಿಸಬೇಕು. ►ರಾಜ್ಯ ಸರಕಾರವು ಪ್ರತಿ ಕುಟುಂಬಕ್ಕೆ ತಿಂಗಳಿಗೆ 100 ರೂಪಾಯಿ ಹಣವನ್ನು ನೀಡುತ್ತದೆ. ಯೋಜನೆಯ ಫಲಾನುಭವಿಗಳು ►ಮಾಸಿಕ 21 ಸಾವಿರ ರೂ.ಗಿಂತ ಕಡಿಮೆ ಸಂಪಾದನೆ ಮಾಡುವ ಗುತ್ತಿಗೆ ನೌಕರರು ►ಹೊರಗುತ್ತಿಗೆ ಸಿಬ್ಬಂದಿ ►ಗೌರವಧನದ ಆಧಾರದ ಮೇಲೆ ಕೆಲಸ ಮಾಡುವವರು ►ಇಎಸ್ಐಎಸ್, ಆಯುಷ್ಮಾನ್ ಭಾರತ್ ಅಥವಾ ಇತರ ಯಾವುದೇ ಸರಕಾರಿ ಆರೋಗ್ಯ ಯೋಜನೆಗಳಿಂದ ಹೊರಗೆ ಉಳಿದವರು
ರಾಹುಲ್ ಗಾಂಧಿ ಆರೋಪಕ್ಕೆ ಫುಲ್ ಸ್ಟಾಪ್ ಇಡಲು ಇಸಿ ನಿರ್ಧಾರ : ಸ್ಥಳ ಸಮಯ ನಿಮ್ಮದು, ಚರ್ಚೆಗೆ ಆಹ್ವಾನ
EC Invites Rahul Gandhi : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿಕೊಂಡು ಬರುತ್ತಿರುವ ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿಯನ್ನು, ಕೇಂದ್ರ ಚುನಾವಣಾ ಆಯೋಗ ಚರ್ಚೆಗೆ ಆಹ್ವಾನಿಸಿದೆ. ಜೂನ್ 12ರಂದು ಇಮೇಲ್ ಮೂಲಕ, ಇಸಿ ರಾಹುಲ್ ಗಾಂಧಿಯವರನ್ನು ಆಹ್ವಾನಿಸಿದೆ.
ಕಲಬುರಗಿ | ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಲೋಕಾರ್ಪಣೆ
ಕಲಬುರಗಿ: ಸೇಡಂ ತಾಲೂಕಿನ ಕುರಕುಂಟಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ್, ತಾಲೂಕು ಆರೋಗ್ಯ ಅಧಿಕಾರಿ ಸಂಜೀವ ಪಾಟೀಲ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ, ಡಾ.ರೇಖಾ, ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಹಲವರು ಹಾಜರಿದ್ದರು.
ಹರೇಕಳ: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಆರಂಭ
ಕೊಣಾಜೆ: ವ್ಯಕ್ತಿ ಶಿಕ್ಷಣ ಪಡೆದರೆ ಆರೋಗ್ಯವೂ ಚೆನ್ನಾಗಿರುತ್ತದೆ, ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಮಾಜಕ್ಕೆ ಆಧಾರಸ್ತಂಭ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು ಸ್ವಸಮೀಕ್ಷೆ ವಿಭಾಗಗಳ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು. ಹರೇಕಳ ಅನುದಾನಿತ ಶ್ರೀ ರಾಮಕೃಷ್ಣ ಪ್ರೌಡಶಾಲೆಗೆ ನಿಟ್ಟೆ ಎಜುಕೇಶನ್ ಟ್ರಸ್ಟ್ ವತಿಯಿಂದ ನೀಡಲ್ಪಟ್ಟ ಉಚಿತ ಬಸ್ ಸೇವೆಗೆ ಸೋಮವಾರ ನಡೆದ ಚಾಲನೆ ನೀಡಿ ಮಾತನಾಡಿದರು. ನಿಟ್ಟೆ ವಿಶ್ವವಿದ್ಯಾಲಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದೆ. 22 ಗ್ರಾಮೀಣ ಆರೋಗ್ಯ ಕೇಂದ್ರಗಳು, 22 ಆರೋಗ್ಯ ಕೇಂದ್ರಗಳಲ್ಲಿ ಪ್ರತಿವರ್ಷ ಎರಡು ಲಕ್ಷ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದೆ. 20ರಿಂದ 25 ಸಾವಿರ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ನೀಡಿ ಸಮಾಜಕ್ಕೆ ಸಮರ್ಪಿಸುತ್ತಿದೆ. ಏಳು ಬಸ್ಸುಗಳನ್ನು ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಮೀಸಲಿಡ ಲಾಗಿದೆ ಎಂದು ತಿಳಿಸಿದರು. ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ ಮಾತನಾಡಿ, ಶಿಕ್ಷಣದ ವಿಚಾರ ಬಂದಾಗ ವಿನಯ್ ಹೆಗ್ಡೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿದ್ದು ದೇಶದ ಭವಿಷ್ಯ ರೂಪಿಸುವ ಬಗ್ಗೆ ಇಂದೇ ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು. ಪಾವೂರು ಹರೇಕಳ ತ್ರಿ ಶಕ್ತಿ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕರಾದ ರವೀಂದ್ರ ರೈ ಕಳ್ಳಿಮಾರ್ ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಕೊಣಾಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಧಾಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ರವಿಶಂಕರ್,ಕುಮುದ, ಕೃಷ್ಣಶಾಸ್ತ್ರೀ, ಶಿವಣ್ಣ, ಸ್ಮಿತಾ ಸಹಕರಿಸಿದರು . ಅನುದಾನಿತ ಶಾಲೆಗಳು ಶಿಕ್ಷಕರ ಕೊರತೆಗಳಿಂದ ಬಳಲುತಿದೆ. ಶಿಕ್ಷಕರ ಕೊರತೆಗಳಿಂದಾಗಿ ಹಲವಾರು ಅನುದಾನಿತ ಸಂಸ್ಥೆಗಳು ಮುಚ್ಚುತ್ತಿವೆ. ಆದರೆ ಶತಮಾನಗಳನ್ನು ಕಂಡುಕೊಂಡಿರುವ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಿಟ್ಟೆ ಎಜುಕೇಶನ್ ಟ್ರಸ್ಟ್ ನವರು ಶಾಲೆಗೆ ಉಚಿತ ವಾಗಿ ಬಸ್ಸಿನ ವ್ಯವಸ್ಥೆ ಯನ್ನು ಕಲ್ಪಿಸಿ ಕೊಟ್ಟದ್ದಕ್ಕೆ ಊರಿನವರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. -ಕೆ ಎನ್ ಆಳ್ವ, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರು
ಯುವ ಸಂಘಗಳಿಗೆ ಕ್ರೀಡಾ ಕಿಟ್: ಅರ್ಜಿ ಆಹ್ವಾನ
ಮಂಗಳೂರು: ಗ್ರಾಮೀಣ ಯುವಜನತೆಯು ಆರೋಗ್ಯಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಾಯಕ ವಾಗುವ ವಾತಾವರಣವನ್ನು ಸೃಷ್ಟಿಸಲು 2025-26ನೇ ಸಾಲಿನ ಯುವ ಚೈತನ್ಯ ಯೋಜನೆಯಡಿ ರಾಜ್ಯದ ಆಯ್ದ ಯುವ ಸಂಘಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಲು ಯುವ ನೀತಿ ಅನುಷ್ಠಾನದಡಿ ಅನುದಾನ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಕ್ರಿಯವಾಗಿರುವ 4 ಯುವ ಸಂಘ (ಗ್ರಾಮೀಣ ಪ್ರದೇಶದ ಶೇ.70ರಷ್ಟು ಹಾಗೂ ನಗರ ಪ್ರದೇಶದ ಶೇ.30ರಷ್ಟು) ಗಳನ್ನು ನಿಯಮಾನುಸಾರ ಆಯ್ಕೆ ಮಾಡಿ ಪಟ್ಟಿಯನ್ನು ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಿಗೆ ಕಳುಹಿಸಲಾಗುತ್ತದೆ. ದ.ಕ.ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಹಾಗೂ ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ಕಾಯ್ದೆ 1960ರಡಿ ನೋಂದಣಿಗೊಂಡಿರುವ ಯುವಕ/ಯುವತಿ ಸಂಘಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾನ್ಯತೆ ಪಡೆದಲ್ಲಿ ಅಂತಹ ಯುವಕ/ಯುವತಿ ಸಂಘಗಳನ್ನು ಯುವ ಚೈತನ್ಯ ಯೋಜನೆಗೆ ಪರಿಗಣಿಸಲಾಗುತ್ತದೆ. ಹಾಗಾಗಿ ಆಸಕ್ತ ಯುವಕ/ಯುವತಿ ಸಂಘಗಳು ಆನ್ ಲೈನ್ ಮೂಲಕ ಜು.25ರೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾನ್ಯತೆ ಪಡೆಯು ವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು, ಮಂಗಳಾ ಕ್ರೀಡಾಂಗಣ, ಮಂಗಳೂರು ಕಚೇರಿ ದೂ.ಸಂ:0824-2451264ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಶೈಖುನಾ ಶಂಸುಲ್ ಉಲಮಾರ ಸ್ಮರಣಾರ್ಥ ಆ್ಯಂಬುಲೆನ್ಸ್ ಕೊಡುಗೆ
ಮಂಗಳೂರು, ಜೂ.24: ಮೂಡಬಿದಿರೆ ಲಿಟ್ಲ್ ಸ್ಟಾರ್ಸ್ ಆಂಗ್ಲ ಮಾಧ್ಯಮ ಶಾಲೆಯ ಅಂಗ ಸಂಸ್ಥೆಯಾದ ಶೈಖುನಾ ಶಂಸುಲ್ ಉಲಮಾರ ಸ್ಮರಣಾರ್ಥ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಝ್ರತ್ ಸಯ್ಯಿದ್ ಸುಲೈಮಾನ್ ಬಾದುಶಾ ಖಾದ್ರಿ ಜಿಸ್ತಿಯಾ ಬಗ್ದಾದಿ ದೂದ್ನಾನಾ ದರ್ಗಾದ ದೂದ್ನಾನಾ ಮುಹಿಬ್ಬೀನ್ ಚಾರಿಟೇಬಲ್ ಟ್ರಸ್ಟಿಗೆ ಸಾರ್ವಜನಿಕರ ಸೇವೆಗಾಗಿ ಕೊಡುಗೆಯಾಗಿ ನೀಡಿದ ಎರಡು ಆ್ಯಂಬುಲೆನ್ಸ್ಗಳನ್ನು ಮೂಡುಬಿದಿರೆ ಮಾರುತಿ ಶೋರೂಂನಿಂದ ಸಯ್ಯಿದ್ ಜಲಾಲುದ್ದೀನ್ ತಂಳ್ ಅಲ್ ಬುಖಾರಿ ಅನಾವರಣಗೊಳಿಸಿದರು. ಈ ಸಂದರ್ಭ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಮುಹಮ್ಮದ್ ಶರೀಫ್ ದಾರಿಮಿ ಮೂಡುಬಿದಿರೆ, ಝಮೀರ್ ಮುಸ್ಲಿಯಾರ್ ಬಳಂಜ, ಸಾರಾ ಇಸ್ಮಾಯಿಲ್, ಹಮೀದ್ ಮಿಲನ್, ಲಿಟ್ಲ್ ಸ್ಟಾರ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎರಡು ಆ್ಯಂಬುಲೆನ್ಸ್ಗಳಲ್ಲಿ ಒಂದನ್ನು ದೂದ್ನಾನಾ ಮುಹಿಬ್ಬೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ಹಝ್ರತ್ ಅನ್ವರ್ ಮಸ್ತಾನ್ ದರ್ಗಾಕ್ಕೆ ನೀಡಲಾಗುತ್ತಿದೆ. ಇದನ್ನು ಜು.2ರಂದು ಲಕ್ಷ್ಮೇಶ್ವರ ದೂದ್ನಾನಾ ದರ್ಗಾದಲ್ಲಿ ನಡೆಯುವ ಮಜ್ಲಿಸುನ್ನೂರು ವಾರ್ಷಿಕ ಹಾಗೂ ಮಾದಕ ಮುಕ್ತ ಸಮಾಜ ಅಭಿಯಾನ ಕಾರ್ಯಕ್ರಮದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ತಂಳ್ ದುಗ್ಗಲಡ್ಕ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಟ್ರಸ್ಟಿನ ಚೇರ್ಮನ್ ಝೈನುಲ್ ಆಬಿದೀನ್ ಲಕ್ಷ್ಮೇಶ್ವರ ತಿಳಿಸಿದ್ದಾರೆ.
ಕಲಬುರಗಿ | ಅಕ್ರಮ ಮಧ್ಯ ಮಾರಾಟ ಕಡಿವಾಣಕ್ಕೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಪಟ್ಟಣ ಸೇರಿದಂತೆ ಪ್ರತಿಯೊಂದು ಹಳ್ಳಿಗಳಲ್ಲೂ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಸರಕಾರ ಹಾಗೂ ಅಧಿಕಾರಿಗಳು ಗಮನಹರಿಸಿ ಅಕ್ರಮ ಮಧ್ಯ ಮಾರಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು, ಅಲ್ಲದೆ ಇತ್ತೀಚೆಗೆ ದಾಖಲಿಸಿದ್ದ ಸುಳ್ಳು ಪ್ರಕರಣವನ್ನು ಕೂಡಲೇ ಕೈಬೀಡಬೇಕೆಂದು ಆಗ್ರಹಿಸಿ, ಜೇವರ್ಗಿಯ ವಿವಿಧ ಸಂಘಟನೆಗಳಿಂದ ಒತ್ತಾಯಿಸಲಾಯಿತು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾಮಾಜಿಕ ನ್ಯಾಯ ಮತ್ತು ಜನಪರ ಹೋರಾಟಗಾರರ ವೇದಿಕೆ ಹಾಗೂ ತಾಲೂಕಿನ ವಿವಿ ಸಂಘಟನೆಗಳ ಮುಖಾಂತರ ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ ರವಿಚಂದ್ರ ಗುತ್ತೆದಾರ ಅವರು, ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಗ್ರಾಮಗಳಲ್ಲಿ ಕಿರಾಣಾ ಅಂಗಡಿ, ಹೊಟೆಲ್, ಪಾನ್ ಶಾಪ್, ಢಾಭಾಗಳಲ್ಲಿ ಹಾಗೂ ಕೆಲವು ಮನೆಗಳಲ್ಲು ಕೂಡ ಅಕ್ರಮ ಮದ್ಯ ಮಾರಾಟವನ್ನು ನಡೆಸಲಾಗುತ್ತಿದೆ. ತಾಲೂಕಿನ ಕೋಣಸಿರಸಗಿ, ಮಂದೆವಾಲ, ರೇವನೂರ, ಕೋಳಕೂರ, ಆಲೂರ, ಚಿಗರಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟವು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಕೂಡಲೇ ಸರಕಾರ ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಜೇವರ್ಗಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಹೋರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸುವುದು ಸರಿಯಲ್ಲ. ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕು. ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಿವರಾಜ ಪಾಟೀಲ್ ರದ್ದೆವಾಡಗಿ, ಬಸವರಾಜ ಪಡಕೋಟಿ, ಚಂದ್ರಶೆಖರ ಹರನಾಳ, ಭಿಮರಾಯ ನಗನೂರ, ಶ್ರವಣಕುಮಾರ ನಾಯಕ, ಬಸವರಾಜ ಬಾಗೇವಾಡಿ, ಸತೀಶ ಜಾಹಗಿರದಾರ, ಪರಮೇಶ್ವರ ಬಿರಾಳ, ಭಿಮಾಶಂಕರ್ ಬಿಲ್ಲಾಡ, ಚಂದ್ರಶೇಖರ ಮಲ್ಲಾಬಾದ, ಗೀರಿಶ ತುಂಬಗಿ, ಸಿದ್ರಾಮ ಕಟ್ಟಿ, ರವಿ ಕುಳಗೇರಿ, ಬಸವರಾಜ ಇಂಗಳಗಿ, ಮಲ್ಲಣಗೌಡ ನಂದಿಹಳ್ಳಿ, ಮಾಹಾಂತೇಶ ಆದಿಮನಿ, ಮಾಹಂತಗೌಡ ನಂದಿಹಳ್ಳಿ, ಸಿದ್ದು ಕೇರೂರ, ಶ್ರೀಹರಿ ಕರಕಳ್ಳಿ, ಸೈಬಗೌಡ ಯಡ್ರಾಮಿ, ಶರಣಗೌಡ ಹಾಲಗಡ್ಲಾ, ವಿಶ್ವರಾಧ್ಯ ಗಂವ್ಹಾರ, ಮಾಪಣ್ಣ ಕಟ್ಟಿ, ಇಬ್ರಾಹಿಂ ಪಟೇಲ್, ಮಲ್ಲಿಕಾರ್ಜುನ ಬಿರಾದಾರ, ಪರಮಾನಂದ ಯಲಗೋಡ, ದೇವಕ್ಕಿ ಯಾಳವಾರ, ಬಾಗೇಶ ಸರನಾಳ, ಭೀಮು ಖಾದ್ಯಾಪೂರ, ಪ್ರಕಾಶ ಮಾರಡಗಿ, ಸೇರಿದಂತೆ ಅನೇಕ ಹೋರಾಟಗಾರರು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಯುವ ಸಬಲೀಕರಣಕ್ಕಾಗಿ ಕಾಂಗ್ರೆಸ್ ಕಾರ್ಯಕ್ರಮ; ಮಂಜುನಾಥ ಗೌಡ
ಮಂಗಳೂರು, ಜೂ.24: ಯುವ ಜನರ ಉದ್ಯೋಗ, ಶಿಕ್ಷಣ ಹಾಗೂ ಬದುಕು ಕಟ್ಟಿಕೊಳ್ಳಲು ಕಾಂಗ್ರೆಸ್ ರಾಜ್ಯಾದ್ಯಂತ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಪಕ್ಷ ಸಂಘಟನೆಯೊಂದಿಗೆ ಯುವ ಸಬಲೀಕರಣದ ಯೋಜನೆಯ ನೀಲಿ ನಕ್ಷೆಯನ್ನು ಯುವ ಕಾಂಗ್ರೆಸ್ ಹೊಂದಿದೆ. ಅದನ್ನು ಸಾಕಾರ ಗೊಳಿಸಲಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಹೇಳಿದರು. ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ನಿಗಮ್ ಭಂಡಾರಿ ಉದ್ಘಾಟಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಮುಖಂಡ ಪದ್ಮರಾಜ್ ಪೂಜಾರಿ, ರಾಜ್ಯ ಉಪಾಧ್ಯಕ್ಷ ಮಂಜುನಾಥ ಮಣಿಚೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ತೇಜಸ್, ರಾಜ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿದರು. ರಾಜ್ಯ ಪದಾಧಿಕಾರಿಗಳಾದ ಸೋನಿಯ, ಸುರಯ್ಯ ಅಂಜುಮ್, ಅಭಿನಂದನ್ ಹರೀಶ್, ಶ್ರೀ ಪ್ರಸಾದ್, ಅಬ್ದುಲ್ ರವೂಫ್, ಪವನ್ ಸಾಲ್ಯಾನ್, ಕಾನೂನು ವಿಭಾಗ ಮುಖ್ಯಸ್ಥ ಶ್ರೀಧರ್, ಸಾಮಾಜಿಕ ಜಾಲತಾಣ ಸಂಚಾಲಕ ದೀಪಕ್ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಕಿರಣ್ ಬುಡ್ಲೆಗುತ್ತು, ಸುಹೈಲ್ ಕಂದಕ್, ಜಿಲ್ಲಾ ಉಪಾಧ್ಯಕ್ಷರಾದ ಮುಹಮ್ಮದ್ ಬಶೀರ್, ದೀಕ್ಷಿತ್ ಅತ್ತಾವರ, ಸುನಿತ್ ಡೇಸಾ, ವಿನೋಲ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.
ಪೆಟ್ ಶಾಪ್ಗಳ ನೋಂದಣಿ ಕಡ್ಡಾಯ: ದಕ ಡಿಸಿ ದರ್ಶನ್ ಎಚ್
ಮಂಗಳೂರು, ಜೂ.24: ದ.ಕ.ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯು ಜಿಲ್ಲಾಧಿಕಾರಿ ದರ್ಶನ್ ಎಚ್. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಡಿಸಿ ಪ್ರಾಣಿ ಹಿಂಸೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಮುದ್ದು ಪ್ರಾಣಿಗಳ ಮಾರಾಟ ಮಳಿಗೆ ಕಡ್ಡಾಯವಾಗಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಸೊಸೈಟಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಎಸ್ಪಿಸಿಎ ನೋಂದಣಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಪೆಟ್ ಶಾಪ್ಗಳ ಮಾಲಕರಿಗೆ ಕಾಲಮಿತಿ ನಿಗದಿಪಡಿಸಿ, ನಿಗದಿತ ಕಾಲಮಿತಿ ಯೊಳಗೆ ನೋಂದಣಿ ಪಡೆಯದ ಮಾಲಕರ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಪ್ರಾಣಿಗಳ ರಕ್ಷಣೆಯು ಮಹತ್ವದ ಕಾರ್ಯವಾಗಿದೆ. ಜಿಲ್ಲೆಯಲ್ಲಿ ಪ್ರಾಣಿಗಳ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಿ ಅವುಗಳನ್ನು ರಕ್ಷಿಸಬೇಕು. ಪ್ರಾಣಿಗಳ ಮೇಲೆ ಕ್ರೌರ್ಯ ನಡೆಸುವುದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ವ್ಯಾಪ್ತಿಯಲ್ಲಿರುವ ನಿರಾಶ್ರಿತ ಪ್ರಾಣಿಗಳಿಗೆ ಅಗತ್ಯ ಶುಶ್ರೂಷೆ ಕೊಡುವ ನಿಟ್ಟಿನಲ್ಲಿ ಮಂಗಳೂರು ತಾಲೂಕಿನ ಬೊಂಡಂತಿಲ ಗ್ರಾಮದಲ್ಲಿ ಪ್ರಾಣಿ ಮಿತ್ರ ಆಸ್ಪತ್ರೆ ತೆರೆಯುವ ಯೋಜನೆ ಅನುಷ್ಠಾನದ ಕುರಿತು ಹಾಗೂ ರಸ್ತೆ ಅಪಘಾತ ಮತ್ತಿತರ ಕಾರಣಗಳಿಂದ ಸತ್ತ ಪ್ರಾಣಿಗಳನ್ನು ಯಾರೂ ಸಹ ಮುಟ್ಟುವು ದಿಲ್ಲ. ಅವುಗಳ ಮೃತದೇಹ ಅಲ್ಲಿಯೇ ಕೊಳೆಯುತ್ತಿರುತ್ತವೆ. ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಸೌಲಭ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮೂಕಪ್ರಾಣಿಗಳ ಬಗ್ಗೆ ಅನುಕಂಪ ಮತ್ತು ಮಾನವೀಯತೆಯ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದ ಮೂಲಕ ಮಾಹಿತಿ ನೀಡಲಾ ಗುತ್ತಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಂಬಂಧಪಟ್ಟ ಇಲಾಖೆಗಳೊಂದಿಗೆ ಕೈಜೋಡಿಸಿ ಪ್ರಾಣಿ ಕಲ್ಯಾಣ ಮಂಡಳಿಯಿಂದ ಸ್ಥಾಪಿಸಲ್ಪಟ್ಟ ಪ್ರಾಣಿ ಕಲ್ಯಾಣ ಕಾನೂನು ಜಾರಿಯ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಎಸಿಪಿ ಗೀತಾ ಕುಲಕರ್ಣಿ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಸಮಿತಿಯ ಸದಸ್ಯೆ ಸುಮಾ ಆರ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ಶಾಸನೋಕ್ತ ಕಲಾತ್ಮಕ ದೀಪ ಪತ್ತೆ
ಉಡುಪಿ: ತಾಲೂಕಿನ ಪೆರ್ಡೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಅನಂತಪದ್ಮನಾಭ ದೇವಾಲಯದಲ್ಲಿ ಪುರಾಣೋಕ್ತ ಕಥಾನಕದ ನಿರೂಪಣಾ ಶಿಲ್ಪಗಳಿರುವ ಅಪರೂಪದ ದೀಪ ಒಂದು ಕಂಡು ಬಂದಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಮತ್ತು ಆದಿಮ ಕಲಾ ಟ್ರಸ್ಟ್ ಉಡುಪಿ ಇದರ ಸ್ಥಾಪಕ ಸದಸ್ಯ ಪ್ರೊ. ಮುರುಗೇಶಿ ಟಿ ತಿಳಿಸಿದ್ದಾರೆ. ದುಂಡನೆಯ ತಳವನ್ನು ಹೊಂದಿರುವ ದೀಪದ ಮೇಲ್ಭಾಗದಲ್ಲಿ ಕಮಾನಿನ ಆಕಾರದ ಅತ್ಯಂತ ಕಲಾತ್ಮಕ ವಾದ ಫಲಕವಿದೆ. ಈ ಫಲಕದ ಎರಡೂ ಬದಿಗಳಲ್ಲಿ ಶೈವ ಮತ್ತು ವೈಷ್ಣವ ಪಂಥದ ಶಿಲ್ಪಗಳಿದ್ದು, ದೇವಾಲಯದ ಶೈವ ಮತ್ತು ವೈಷ್ಣವ ಪರಂಪರೆಯ ಅಪರೂಪದ ಪ್ರತೀಕವಾಗಿದೆ ಎಂದು ಪ್ರೊ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೀಪದ ಮೊದಲ ಮುಖದ ಮಧ್ಯದಲ್ಲಿ ಕಾಲಪುರುಷನ ಮೇಲೆ ನಿಂತಿರುವ ನಟರಾಜನ ಶಿಲ್ಪವಿದೆ. ಎಡ-ಬಲದಲ್ಲಿ ನಗಾರಿಯನ್ನು ಬಾರಿಸುವ ಗಣಧಾರಿ ಹಾಗೂ ತಾಳವನ್ನು ನುಡಿಸುತ್ತಿರುವ ಭೃಂಗಿಯ ಶಿಲ್ಪ ಗಳಿವೆ. ಭೃಂಗಿಯ ಬಲಭಾಗದಲ್ಲಿ ಖಡ್ಗರಾವಣ ಮತ್ತು ಕುಮಾರ ಶಿಲ್ಪಗಳಿವೆ. ಖಡ್ಗ ರಾವಣ ಅರೆ ಬೆತ್ತಲೆ ಯಾಗಿ ವಿಸ್ಮಯಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನನಾಗಿದ್ದಾನೆ. ಕುಮಾರ ಮಯೂರವಾಹನನಾಗಿದ್ದಾನೆ. ನಗಾರಿ ಬಾರಿಸುವ ಗಣಧಾರಿಯ ಎಡಕ್ಕೆ ನಂದಿವಾಹನೆ ಪಾರ್ವತಿ ಮತ್ತು ಮೂಷಕ ವಾಹನ ಗಣಪತಿಯ ಶಿಲ್ಪಗಳಿವೆ. ಈ ಶಿಲ್ಪಗಳು ಅತ್ಯಂತ ಸ್ಪಷ್ಟವಾಗಿ ಶಿವನ ಪ್ರಳಯ ತಾಂಡವ ಸನ್ನಿವೇಶವನ್ನು ಚಿತ್ರಿಸುತ್ತವೆ. ಇದರಿಂದ ಮೂರು ಲೋಕಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ. ಎರಡನೇ ಮುಖದ ಮಧ್ಯದಲ್ಲಿ ಅನಂತಪದ್ಮನಾಭ ಸಮುಭಂಗಿಯಲ್ಲಿ ನಿಂತಿದ್ದಾನೆ. ಆತನ ಬಲಭಾಗದಲ್ಲಿ ಇಂದ್ರ ಮತ್ತು ಬ್ರಹ್ಮ ಹಾಗೂ ಎಡಭಾಗದಲ್ಲಿ ಅಗ್ನಿ ಮತ್ತು ವರುಣನ ಶಿಲ್ಪಗಳಿವೆ. ಶಿವನ ಪ್ರಳಯ ತಾಂಡವ ನೃತ್ಯದಿಂದ ಭೀತಿಗೊಂಡ ದೇವತೆಗಳು ಬ್ರಹ್ಮನ ಜೊತೆಗೂಡಿ ವೈಕುಂಠಕ್ಕೆ ತೆರಳಿ ನಾರಾಯಣನಲ್ಲಿ ಪ್ರಾರ್ಥನೆ ಮಾಡಿದಾಗ ಮೂರು ಲೋಕಗಳ ಪಾಲಕನಾದ ಅನಂತಪದ್ಮನಾಭ ದೇವತೆಗಳಿಗೆ ಅಭಯ ನೀಡಿ ಶಿವನ ಕೋಪವನ್ನು ಶಮನಗೊಳಿಸುತ್ತಾನೆ. ಅನಂತಪದ್ಮನಾಭ ತನ್ನ ಎರಡೂ ಕೈಗಳಲ್ಲಿ ಉದ್ದರಣೆಯನ್ನು ಹಿಡಿದು ನಿಂತಂತೆ ಶಿಲ್ಪವನ್ನು ಚಿತ್ರಿಸಲಾ ಗಿದೆ. ಈ ಶಿಲ್ಪದ ಕೆಳಭಾಗದಲ್ಲಿ ನಿಂತಿರುವ ಗರುಡನ ಶಿಲ್ಪವಿದೆ. ಇದರ ಹಿಂಭಾಗದಲ್ಲಿ ಅಂಜಲೀ ಮುದ್ರೆ ಯಲ್ಲಿ ಕುಳಿತು ಶಾಂತವಾಗಿ ಅನಂತಪದ್ಮನಾಭನನ್ನು ಪ್ರಾರ್ಥಿಸುತ್ತಿರುವ ಶಿವನ ಶಿಲ್ಪವಿದೆ. ದೀಪದ ಎರಡೂ ಬದಿಗಳಲ್ಲಿ ತಲಾ ಎರಡು ಆಕರ್ಷಕವಾದ ಸಿಂಹಗಳ ಶಿಲ್ಪಗಳಿವೆ. ದೇವಾಲಯದ ಒಳಪ್ರಾಕಾರದಲ್ಲಿ ಬಸವಣ್ಣರಸ ಬಂಗನ ಕ್ರಿ.ಶ.1456 ಶಾಸನವಿದೆ. ಆ ಶಾಸನದಲ್ಲಿ, ಬಸವಣ್ಣರಸ ಬಂಗನು ದೇವಾಲಯಕ್ಕೆ ನೀಡಿದ ಎರಡು ಕಂಚಿನ ದೀಪದ ಉಲ್ಲೇಖವಿದೆ. ದೀಪದಲ್ಲಿರುವ ಶಿಲ್ಪದ ಲಕ್ಷಣಗಳು ಮತ್ತು ಶಾಸನದ ಉಲ್ಲೇಖದ ಆಧಾರದ ಮೇಲೆ ಈ ದೀಪದ ಕಾಲವನ್ನು 15ನೇ ಶತಮಾನದ ದೀಪವೆಂದು ನಿರ್ಣಯಿಸಲಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ. ದೀಪದಲ್ಲಿರುವ ಖಡ್ಗ ರಾವಣನ ಶಿಲ್ಪ ಅತ್ಯಂತ ಕುತೂಹಲಕರವಾಗಿದೆ. ಅರೆಬೆತ್ತಲೆಯಾಗಿ ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನವಾಗಿರುವ ಖಡ್ಗ ರಾವಣ ತನ್ನ ಬಲಮುಂದಿನ ಕೈಯಲ್ಲಿ ಖಡ್ಗ ಹಾಗೂ ಹಿಂದಿನ ಕೈಯಲ್ಲಿ ನೇಗಿಲನ್ನು ಹಿಡಿದಿದ್ದಾನೆ. ಎಡಮುಂದಿನ ಕೈಯಲ್ಲಿ ಕಪಾಲ ಅಥವಾ ಪಾನಪಾತ್ರೆಯಿದೆ ಹಾಗೂ ಎಡಹಿಂದಿನ ಕೈಯಲ್ಲಿ ರುಂಡವಿದೆ. ಈ ಶಿಲ್ಪ ಲಕ್ಷಣಗಳು ಖಡ್ಗ ರಾವಣ ಪಾಲಕ ಮತ್ತು ವಿನಾಶಕ ಶಕ್ತಿಯ ದ್ಯೋತಕವಾಗಿದೆ. ದೇವಾಲಯದ ಹೊರ ಆವರಣದಲ್ಲಿ ಖಡ್ಗ ರಾವಣನನ್ನು ದೇವಾಲಯದ ಪ್ರಬಲ ರಕ್ಷಕ ದೈವವಾಗಿ ಆರಾಧಿಸಲಾಗುತ್ತಿ ರುವುದು ವಿಶೇಷವಾಗಿದೆ. ಈ ಅಧ್ಯಯನಕ್ಕೆ ನೆರವಾದ ದೇವಾಲಯದ ಆಡಳಿತ ಮಂಡಳಿಯ ಅನುವಂಶಿಕ ಮೊಕ್ತೇಸರರಾದ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್, ದೇವಾಲಯದ ಪ್ರಧಾನ ಅರ್ಚಕರಿಗೆ ಹಾಗೂ ಈ ಅಪರೂಪದ ಶೋಧನೆಗೆ ನೆರವಾದ ಉಡುಪಿ ಆದಿಮ ಕಲಾ ಟ್ರಸ್ಟ್ನ ಸಂಶೋಧನಾ ತಂಡದ ಸದಸ್ಯರಿಗೆ ಆಭಾರಿಯಾಗಿರುವುದಾಗಿ ಪ್ರೊ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ | ಕಣ್ವ ಮಠದ ಮಠಾಧಿಕಾರಿಯಾಗಿ ರಾಘವೇಂದ್ರಾಚಾರ್ಯ ನೇಮಕ
ಸುರಪುರ: ತಾಲ್ಲೂಕಿನ ಹುಣಸಿಹೊಳೆ ಕಣ್ವಮಠದ ಮಠಾಧಿಕಾರಿಯನ್ನಾಗಿ ಕಣ್ವಮಠಾಧೀಶ ವಿದ್ಯಾಕಣ್ವ ವಿರಾಜ ತೀರ್ಥರು ನಗರದ ರಾಘವೇಂದ್ರಾಚಾರ್ಯ ಜಹಗೀರದಾರ್ ಶಾಂತಪುರ ಅವರನ್ನು ನೇಮಕ ಮಾಡಿದ್ದಾರೆ. ತಾಲ್ಲೂಕಿನ ಹುಣಸಿಹೊಳೆ ಕಣ್ವಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದೇಶ ಪತ್ರ ನೀಡಿ ಮಾತನಾಡಿದ ಮಠಾಧೀಶರು, ಕಣ್ವಮಠದ ಎಲ್ಲ ಕಾರ್ಯಕ್ರಮಗಳನ್ನು ತಾಲ್ಲೂಕಿನ ಅನುಯಾಯಿಗಳಿಗೆ ತಿಳಿಸುವ ಮತ್ತು ಭಾಗವಹಿಸುವಂತೆ ಮಾಡುವ ಜವಾಬ್ದಾರಿ ಮಠಾಧಿಕಾರಿಗೆ ಇದೆ ಎಂದರು. ಸುರಪುರ ಸಂಸ್ಥಾನಿಕ ರಾಜಾ ಲಕ್ಷ್ಮಿನಾರಾಯಣ ನಾಯಕ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ರಾಘವೇಂದ್ರರಾವ ಆಲಗೂರ, ಪ್ರಕಾಶ ಕುಲಕರ್ಣಿ ಬಳ್ಳಾರಿ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಗಂಗಾಧರ ಜೋಷಿ ಕೊಡೇಕಲ್, ರಂಗನಾಥಾಚಾರ್ಯ ಸಾಲಗುಂದಿ, ಚಂದ್ರಕಾಂತ ನಾಡಗೌಡ, ಗಣೇಶ ಜಹಗೀರದಾರ, ಪ್ರಸನ್ನ ಆಲಂಪಲ್ಲಿ, ರಾಜೇಂದ್ರಾಚಾರ್ಯ ಬುದ್ದಿನ್ನಿ ಇತರರು ಭಾಗವಹಿಸಿದ್ದರು.
ಡಾ.ಗಣನಾಥ ಎಕ್ಕಾರಿಗೆ ಜೀಶಂಪ ರಾಜ್ಯ ಪ್ರಶಸ್ತಿ
ಉಡುಪಿ: ನಾಡಿನ ಹಿರಿಯ ಜಾನಪದ ವಿದ್ವಾಂಸ, ನಿವೃತ್ತ ಪ್ರಾಂಶುಪಾಲ, ಜಿಲ್ಲಾ ರೆಡ್ ಕ್ರಾಸ್ ಕಾರ್ಯ ದರ್ಶಿ ಹಾಗೂ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಅವರಿಗೆ ಕನ್ನಡ ಜಾನಪದ ಪರಿಷತ್ತು ಬೆಂಗಳೂರು ದಶಮನೋತ್ಸವದ ಅಂಗವಾಗಿ ಜೀಶಂಪ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಿದೆ. ಜೂನ್ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ರಾಜ್ಯ ಪ್ರಥಮ ಜಾನಪದ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಜಾನಪದ ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನ್ನು ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಅರಳಿ ನಾಗರಾಜ್, ಹಿರಿಯ ಜಾನಪದ ವಿದ್ವಾಂಸರಾದ ಡಾ.ಮೀರಾ ಸಾಬಿಹಳ್ಳಿ ಶಿವಣ್ಣ, ಡಾ.ಅಪ್ಪಗೆರೆ ತಿಮ್ಮರಾಜು, ಡಾ.ಬಾನಂದೂರು ಕೆಂಪಯ್ಯ ಅವರಿಗೂ ಜೀಶಂಸ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕನ್ನಡ ಜಾನಪದ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ. ನಾಡಿನ ಶ್ರೇಷ್ಠ ರಂಗವಲ್ಲಿ ಕಲಾವಿದೆ ಕುಂದಾಪುರದ ಡಾ.ಭಾರತಿ ಮರವಂತೆ ಅವರಿಗೆ ಕವಿ ಮಧುರ ಚೆನ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.
ಕಲಬುರಗಿ | ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಮಹಾನಗರ ಪಾಲಿಕೆ ವಿರುದ್ಧ ಜೆಪಿ ಸಂಘಟನೆಯಿಂದ ಪ್ರತಿಭಟನೆ
ಕಲಬುರಗಿ: ನಗರದಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದೆ ಕಾಲ ಹರಣ ಮಾಡುತ್ತಿರುವ ಕಲಬುರಗಿಯ ಪಾಲಿಕೆ ಆಯುಕ್ತರು, ಮೇಯರ್ ಮತ್ತು ಶಾಸಕರ ನೀತಿ ಖಂಡಿಸಿ, ಪಾಲಿಕೆಯ ಕಚೇರಿಯ ಎದುರುಗಡೆ ಜನತಾ ಪರಿವಾರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಕಲಿ ಕಟ್ಟಡ ಪರವಾನಗಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ, ಪಾಲಿಕೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಇ ಖಾತಾ (ಎ ಮತ್ತು ಬಿ) ಖಾತಾ ನಡುವಿನ ವ್ಯತ್ಯಾಸದ ಸಮಸ್ಯೆ ಬಗ್ಗೆ ಕ್ರಮ, ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯ ಕುರಿತು ಕ್ರಮ, ಸರ್ವೀಸ್ ರಸ್ತೆಗಳ ಸಮಸ್ಯೆಗಳು, ಕಾರ್ಪೊರೇಷನ್ ಸಂಕೀರ್ಣದ ಸಮಸ್ಯೆಗಳು, ಅನೈರ್ಮಲ್ಯ ಕುಡಿಯುವ ನೀರಿನ ಸಮಸ್ಯೆ, ಸೇರಿದಂತೆ ಕಸ ವಿಲೇವಾರಿ, ವಿದ್ಯುತ್ ಕಂಬಗಳು, ಒಳಚರಂಡಿ ಮತ್ತು 24/7 ನೀರು ಸರಬರಾಜು ಮಾಡಬೇಕೆಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜನತಾ ಪರಿವಾರ ಸಂಘಟನೆ ಅಧ್ಯಕ್ಷ ಸಿರಾಜ್ ಶಾಬ್ಧಿ, ಪಾಲಿಕೆಯ ಕೆಲವು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹಣ ಪಡೆದುಕೊಂಡು ಅಕ್ರಮ ಕಟ್ಟಡಗಳಿಗೆ ಪರವಾನಗಿ ಕೊಡುತ್ತಿದ್ದಾರೆ. ಕೂಡಲೇ ಇವುಗಳ ಬಗ್ಗೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಖಾಲೀದ್ ಅಬ್ರಾರ್, ಶೇಖ್ ಸೈಫನ್, ಆಕಾಶ್ ರಿಡ್ಲಾನ್, ಅಝರ್ ಮುಬಾರಕ್, ಅಝಮತ್ ಉಲ್ ಖಾದ್ರಿ, ಮುಬೀನ್ ಪೆಹಾಲ್ವನ್, ಅಬ್ದುಲ್ ಖದಿರ್, ಬಷೀದ್ ಶೇಖ್, ಶೇಖ್ ಜಾವೀದ್, ಶರಣು, ಸೇರಿದಂತೆ ಹಲವರು ಇದ್ದರು.
ಅಹಮದಾಬಾದ್: ತನ್ನ ಪ್ರೀತಿಯನ್ನು ಯುವಕನೊಬ್ಬ ನಿರಾಕರಿಸಿದ್ದರಿಂದ ಕುಪಿತಗೊಂಡ ಚೆನ್ನೈನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯುವತಿಯೊಬ್ಬಳು, ಆತನನ್ನು ಬಾಂಬ್ ಬೆದರಿಕೆ ಪ್ರಕರಣಲ್ಲಿ ಸಿಲುಕಿಸಲು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಹಾಗೂ ಗುಜರಾತ್ ನ 12 ವಿವಿಧ ಸ್ಥಳಗಳಿಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಇದರ ಬೆನ್ನಿಗೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವತಿಯನ್ನು ರೆನೆ ಜೋಶಿಲ್ಡಾ ಎಂದು ಗುರುತಿಸಲಾಗಿದ್ದು, ತನ್ನ ಬಾಳ ಸಂಗಾತಿಯನ್ನಾಗಿಸಿಕೊಳ್ಳಬೇಕೆಂದು ಆಕೆ ಕನಸು ಕಾಣುತ್ತಿದ್ದ ಯುವಕನು, ತನ್ನ ಪ್ರೀತಿಯನ್ನು ನಿರಾಕರಿಸಿ, ಬೇರೊಬ್ಬ ಯುವತಿಯನ್ನು ವರಿಸಿದ್ದರಿಂದ, ಸೇಡು ತೀರಿಸಿಕೊಳ್ಳಲು ಆರೋಪಿ ಯುವತಿ ಮುಂದಾಗಿದ್ದಳು ಎನ್ನಲಾಗಿದೆ. ಹೀಗಾಗಿ, ಆತನ ಜೀವನದಲ್ಲಿ ಬಿರುಗಾಳಿಯೆಬ್ಬಿಸಲು ಆತನ ಸೋಗಿನಲ್ಲಿ ಬಾಂಬ್ ಬೆದರಿಕೆ ಕರೆ ಮಾಡಿದ್ದಳು ಎಂದು ಆರೋಪಿಸಲಾಗಿದೆ. ಆಕೆ ತನ್ನ ಗುರುತು ಹಾಗೂ ಸ್ಥಳವನ್ನು ಮರೆ ಮಾಚಲು ನಕಲಿ ಇಮೇಲ್ ವಿಳಾಸಗಳು, ವರ್ಚುಯಲ್ ಪ್ರೈವೇಟ್ ನೆಟ್ ವರ್ಕ್ಸ್ ಹಾಗೂ ಡಾರ್ಕ್ ವೆಬ್ ಅನ್ನು ಬಳಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಡಿಜಿಟಲ್ ಜಾಡು ಸೇರಿದಂತೆ ವ್ಯಾಪಕ ಪ್ರಮಾಣದ ತಾಂತ್ರಿಕ ನಿಗಾವಣೆ ಇರಿಸಿದ ನಂತರ, ಶನಿವಾರ ಆಕೆಯನ್ನು ಚೆನ್ನೈನಲ್ಲಿನ ಆಕೆಯ ನಿವಾಸದಿಂದ ಅಹಮದಾಬಾದ್ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಶರದ್ ಸಿಂಘಾಲ್, ಜೊಶಿಲ್ಡಾ, ನಕಲಿ ಇಮೇಲ್ ಖಾತೆಗಳನ್ನು ಸೃಷ್ಟಿಸಿದ್ದಳು. ಈ ಪೈಕಿ ಆಕೆ ವಿವಾಹವಾಗಲು ಬಯಸಿದ್ದ ದಿವಿಜ್ ಪ್ರಭಾಕರ್ ಎಂಬ ಯುವಕನ ಹೆಸರಿನಲ್ಲಿ ಸೃಷ್ಟಿಸಲಾಗಿದ್ದ ಖಾತೆಯೂ ಸೇರಿತ್ತು ಎಂದು ಹೇಳಿದ್ದಾರೆ. ರೊಬೊಟಿಕ್ಸ್ ಇಂಜಿನಿಯರಿಂಗ್ ನಲ್ಲಿ ತರಬೇತಿ ಪಡೆದಿರುವ ಜೊಶಿಲ್ಡಾ, 2022ರಿಂದ ಚೆನ್ನೈನಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಸಮಾಲೋಚಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಉಡುಪಿ: ಮುಂದುವರಿದ ಮಳೆ; 20ಕ್ಕೂ ಅಧಿಕ ಮನೆಗಳಿಗೆ ಹಾನಿ
ಉಡುಪಿ, ಜೂ.24: ಜಿಲ್ಲೆಯಾದ್ಯಂತ ಗಾಳಿ-ಮಳೆಯ ಪ್ರತಾಪ ಮುಂದುವರಿದಿದ್ದು, ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಬೀಸಿದ ಭಾರೀ ಗಾಳಿಗೆ ಜಿಲ್ಲೆಯ ಕುಂದಾಪುರ, ಕಾರ್ಕಳ, ಹೆಬ್ರಿ ತಾಲೂಕುಗಳು 20ಕ್ಕೂ ಅಧಿಕ ಮನೆ ಹಾಗೂ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಇದರಿಂದ ಒಟ್ಟಾರೆಯಾಗಿ ಸುಮಾರು ಐದು ಲಕ್ಷ ರೂ.ಗಳ ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ. ಸೋಮವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ದೇವಲ್ಕುಂದ ಗ್ರಾಮದ ಜಾಡಿ ಎಂಬಲ್ಲಿ ಪದ್ದು ಬಿನ್ ಕುಷ್ಟ ಪೂಜಾರಿ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಸಂಪೂರ್ಣ ಹಾನಿಯಾಗಿದೆ. ಇದರಿಂದ ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಇಂದು ಬೆಳಗ್ಗೆ ಬೀಸಿದ ಗಾಳಿ-ಮಳೆಗೆ ಸಿದ್ಧಾಪುರ ಗ್ರಾಮದ ಕಡ್ರಿ ಎಂಬಲ್ಲಿ ಶಾಂತರಾಮ್ ಶೆಟ್ಟಿ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಮನೆ ಭಾಗಶ: ಹಾನಿಯಾಗಿದೆ. ಇದರಿಂದ 25,000ರೂ. ಗಳಿಗೂ ಅಧಿಕ ಹಾನಿಯಾಗಿರುವ ಅಂದಾಜು ಮಾಡಲಾಗಿದೆ. ಉಪ್ಪಿನಕುದ್ರು ಗ್ರಾಮದ ನಾಗಪ್ಪ ಎಂಬವರ ಮನೆಗೆ ತಾಗಿಕೊಂಡಿರುವ ಜಾನುವಾರು ಕೊಟ್ಟಿಗೆ ಗೋಡೆ ಕುಸಿದು ಅಪಾರ ಹಾನಿಯಾಗಿದೆ. ಗುಲ್ವಾಡಿ ಗ್ರಾಮದ ಸೋಮ ಪೂಜಾರಿಯವರ ಮನೆ ಮೇಲೆ ಅಕೆಷಿಯಾ ಮರ ಬಿದ್ದು ಮನೆಯ ಸಿಮೆಂಟ್ ಶೀಟ್ ಹಾಗೂ ಹೆಂಚುಗಳು ಹಾನಿಗೊಂಡಿವೆ. ನೂಜಾಡಿ ಗ್ರಾಮದ ಬಗ್ವಾಡಿಯ ಬಚ್ಚಿ ಮೊಗೇರ್ತಿಯವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು 15,000ರೂ.ನಷ್ಟವಾಗಿರುವುದಾಗಿ ಹೇಳಲಾಗಿದೆ. ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ನಾಯಕವಾಡಿಯ ನಂದಿ ಎಂಬವರ ಮನೆ ಮಳೆಯಿಂದ ಸಂಪೂರ್ಣ ಹಾನಿಗೊಂಡಿದೆ. ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಲಕ್ಷ್ಮಣ, ನೂಜಾಡಿಯ ಶಂಕರ ಮೊಗವೀರ, ಗಣಪು ಮೊಗವೀರ, ಗುಜ್ಜಾಡಿ ಗ್ರಾಮದ ನಾಗು ಎಂಬವರ ಮನೆಗಳಿಗೂ ಗಾಳಿ-ಮಳೆಯಿಂದ ಹಾನಿಯಾಗಿರುವ ಮಾಹಿತಿ ಬಂದಿದೆ. ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಮಹಾಬಲ ನಾಯ್ಕ ಹಾಗೂ ಸಂಜೀವ ನಾಯ್ಕ ಎಂಬವರ ಮನೆಗಳಿಗೆ ಬೀಸಿದ ಗಾಳಿಗೆ ತಲಾ 50,000ಕ್ಕೂ ಅಧಿಕ ಹಾನಿಯಾಗಿದೆ. ಗುಲ್ವಾಡಿ ಗ್ರಾಮದ ಸಾಧು, ಕುಂದಾಪುರದ ರಾಮಜಿ ಮೆಂಡನ್ ಅವರ ಮನೆಗೂ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕು ನೂಜಾಡಿ ಗ್ರಾಮದ ಗಂಗಾ ಮೊಗೇರ್ತಿ ಅವರ ಜಾನುವಾರು ಕೊಟ್ಟಿಗೆಗೆ ಹಾನಿ ಯಾಗಿದ್ದರೆ, ಕಾರ್ಕಳ ತಾಲೂಕು ಹಿರ್ಗಾನದ ಸಂತೋಷ ಆಚಾರ್ಯರ ಮನೆ ಮೇಲೆ ಮರ ಬಿದ್ದು, ಹೆಬ್ರಿ ಗ್ರಾಮದ ಚಾರದ ಸತೀಶ್ ಶೆಟ್ಟಿ, ರಾಮದಾಸ ಶೆಟ್ಟಿ ಹಾಗೂ ಬಾಸ್ಕರ ಶೆಟ್ಟಿ ಎಂಬವರ ಮನೆಗಳಿಗೂ ಗಾಳಿ-ಮಳೆಯಿಂದ ಹಾನಿ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 50.8ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ 68.8, ಬೈಂದೂರಿನಲ್ಲಿ 59.1, ಕುಂದಾಪುರದಲ್ಲಿ 52 ಮಿ.ಮೀ. ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಬುಧವಾರವೂ ಯೆಲ್ಲೋ ಅಲರ್ಟ್ ಇದ್ದು, ರಾಜ್ಯ ಕರಾವಳಿಯ ಎಲ್ಲಾ ಪ್ರಮುಖ ಬಂದರುಗಳಲ್ಲಿ ಸ್ಥಳೀಯ ಎಚ್ಚರಿಕೆಯ ಸೂಚನೆ 3ನ್ನು ಹಾರಿಸಲು ಹವಾಮಾನ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕುರಿತಾದ ಆರೋಪಗಳ ಕುರಿತು ಚರ್ಚಿಸಲು ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಆಹ್ವಾನ
ಹೊಸದಿಲ್ಲಿ: 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಗಳ ಕುರಿತು ಚರ್ಚಿಸಲು ಚುನಾವಣಾ ಆಯೋಗ ಮಂಗಳವಾರ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದೆ. ಮಹಾರಾಷ್ಟ್ರದ ಚುನಾವಣೆಗಳನ್ನು ಸಂಸತ್ತು ಅಂಗೀಕರಿಸಿದ ಚುನಾವಣಾ ಕಾನೂನುಗಳ ಪ್ರಕಾರವೇ ನಡೆಸಲಾಗಿದೆ ಎಂದು ಹೇಳಿದೆ. ಜೂನ್ 12 ರಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿವಾಸಕ್ಕೆ ಇಮೇಲ್ ಮೂಲಕ ಪತ್ರವನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಚುನಾವಣೆಗಳನ್ನು ಭಾರತದ ಚುನಾವಣಾ ಆಯೋಗವು ಸಂಸತ್ತು ಅಂಗೀಕರಿಸಿದ ಚುನಾವಣಾ ಕಾನೂನುಗಳು, ನಿಯಮಗಳು ಮತ್ತು ಕಾಲಕಾಲಕ್ಕೆ ಚುನಾವಣಾ ಆಯೋಗ ಹೊರಡಿಸಿದ ಸೂಚನೆಗಳ ಪ್ರಕಾರ ಕಟ್ಟುನಿಟ್ಟಾಗಿ ನಡೆಸುತ್ತದೆ ಎಂದು ಚುನಾವಣಾ ಆಯೋಗ ತನ್ನ ಪತ್ರದಲ್ಲಿ ತಿಳಿಸಿದೆ. ನಿಮಗೆ ಇನ್ನೂ ಯಾವುದೇ ಸಮಸ್ಯೆಗಳಿದ್ದರೆ, ನೀವು ನಮಗೆ ಪತ್ರ ಬರೆಯಬಹುದು. ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಆಯೋಗವು ಪರಸ್ಪರ ಅನುಕೂಲಕರ ದಿನಾಂಕ ಮತ್ತು ಸಮಯದಲ್ಲಿ ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಿದ್ಧವಾಗಿದೆ, ಎಂದು ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದೆ. 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐದು ಹಂತದ ಅಕ್ರಮವೆಸಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಕುರಿತು ಚುನಾವಣೆ ನಡೆದಾಗಿನ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಬೇಕು ಎಂದು ರಾಹುಲ್ ಗಾಂಧಿ ವಿನಂತಿಸಿದ್ದರು. ಜೂನ್ 21 ರಂದು, ಚುನಾವಣಾ ಆಯೋಗವು ರಾಹುಲ್ ಗಾಂಧಿಯವರ ವಿನಂತಿಯನ್ನು ತಿರಸ್ಕರಿಸಿತು ಮತ್ತು ಅಂತಹ ಕ್ರಮವು ಮತದಾರರ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಕ್ರಿಯೆ ನೀಡಿತ್ತು.
ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ ಸಿಎಂ ಬಳಿ ಚರ್ಚಿಸಲಿ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಆಳಂದ ಶಾಸಕರಾದ ಬಿ.ಆರ್.ಪಾಟೀಲ್ ಅವರು ಹಿರಿಯರು, ಅವರ ಹೋರಾಟ ಮನೋಭಾವ ಹಾಗೂ ಸಿದ್ದಾಂತಗಳ ಬಗ್ಗೆ ಗೌರವವಿದೆ. ಏನಾದರೂ ಸಮಸ್ಯೆಗಳಿದ್ದರೆ ಸಿಎಂ, ಡಿಸಿಎಂ ಹಾಗೂ ಎಐಸಿಸಿ ಅಧ್ಯಕ್ಷರ ಬಳಿ ಚರ್ಚಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್.ಪಾಟೀಲ್ ಅವರು ಹಿರಿಯರು. ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಸೂಕ್ತವಾದ ವೇದಿಕೆಯಲ್ಲಿ ಹಿರಿಯರೊಂದಿಗೆ ಚರ್ಚಿಸಬೇಕಿತ್ತು. ಹೀಗೆ ಬಹಿರಂಗವಾಗಿ ಹೇಳುವುದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗುತ್ತದೆ ಎಂದು ಹೇಳಿದರು. ಫೋನ್ ನಲ್ಲಿ ನಡೆದ ಸಂಭಾಷಣೆಯಲ್ಲಿ ಅಧಿಕಾರಿ ಸ್ಪಷ್ಟವಾಗಿ ಪಾಟೀಲ್ ಅವರ ಆರೋಪಗಳನ್ನು ಅಲ್ಲಗಳೆದು ಅಂತಹ ಯಾವುದಾದರೂ ಲೋಪ ಆಗಿದ್ದಕ್ಕೆ ಆಧಾರ ಕೊಟ್ಟರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಅದನ್ನು ಹಿರಿಯರಾದ ಪಾಟೀಲರು ಸಿಎಂ ಅವರ ಬಳಿ ಚರ್ಚಿಸಬೇಕಿತ್ತು. ಈಗ ಸಿಎಂ ಅವರು ಬಿ.ಆರ್.ಪಾಟೀಲ್ ಅವರನ್ನು ಕರೆದಿದ್ದಾರೆ ಅಲ್ಲಿ ಏನು ಚರ್ಚೆ ನಡೆಯುತ್ತದೆಯೋ ಕಾದು ನೋಡೋಣ ಎಂದರು. ರಾಜ್ಯದಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ ಎನ್ನುವ ಮಾತನ್ನು ಅಲ್ಲಗಳೆದ ಸಚಿವರು, ಗ್ಯಾರಂಟಿ ಯೋಜನೆಗಳಿಗೆ 50,000 ಕೋಟಿ ರೂ. ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಸಮಸ್ಯೆ ಎದುರಿಸುತ್ತಿದ್ದ ಜನರಿಗೆ ಇದರಿಂದ ಅನುಕೂಲವಾಗಿದೆ. ಆದರೆ, ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತೋರಿಸುತ್ತಿರುವ ಅಸಡ್ಡೆಯಿಂದಾಗಿ ಸಮಸ್ಯೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಸಚಿವರು, 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಪಾಲಿನಲ್ಲಿ 50,000 ಕೋಟಿ ರೂ. ಬಂದಿಲ್ಲ. ಇದು ಹಣಕಾಸಿನ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ನಾಯಕರು ಸಚಿವ ಝಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ಪ್ರಶ್ನಿಸಿದಾಗ ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆಗೆ ಅವರದೇ ಪಕ್ಷದ ಕೆಲವರು ಒತ್ತಾಯಿಸುತ್ತಿದ್ದಾರಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಇದ್ದರು. ರಾಜಕೀಯ ಕಾರಣಕ್ಕೆ ಕೇಂದ್ರ ಸರಕಾರದಿಂದ ಪ್ರವಾಸ ನಿರಾಕರಣೆ: ಅಮೇರಿಕ ಪ್ರವಾಸಕ್ಕೆ ಕೇಂದ್ರ ಅನುಮತಿ ನಿರಾಕರಿಸಿದ್ದು, ರಾಜಕೀಯ ಕಾರಣವಲ್ಲದೇ, ಮತ್ತೇನು.? ಕೇಂದ್ರ ಸರಕಾರದ ಅನುಮತಿ ನಿರಾಕರಣೆಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ನಿರೀಕ್ಷಿತ 15,000 ಕೋಟಿ ರೂ. ಬಂಡವಾಳ ನಿಂತುಹೋಗಿದ್ದು, ಕನಿಷ್ಠ ಮೂರು ಸಾವಿರ ಜನರಿಗೆ ಉದ್ಯೋಗ ಕೈ ತಪ್ಪಿದೆ. ಕೇಂದ್ರ ವಿದೇಶಾಂಗ ಸಚಿವರಿಗೆ ಅನುಮತಿ ನಿರಾಕರಣೆಗೆ ವಿವರಣೆ ನೀಡುವಂತೆ ಪತ್ರ ಬರೆಯಲಾಗಿದೆ, ಅವರಿಂದ ಇನ್ನೂ ಉತ್ತರ ಬಂದಿಲ್ಲ. ಅವರು ನಮ್ಮ ಯಾವ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ? ಕೇಂದ್ರದಲ್ಲಿರುವುದು ಎನ್ಡಿಎ ಸರಕಾರವಲ್ಲ ನೋ ಡಾಟಾ ಅವಲೇಬಲ್ ಸರಕಾರ ಎಂದು ಟೀಕಿಸಿದರು. ಈಗ ಅಮೇರಿಕಾ ಹೋಗಬಹುದೇ ಎಂದು ಕೇಳಲಾದ ಪ್ರಶ್ನೆಗೆ 'ರೈಲ್ ಹೋದ ಮೇಲೆ ಟಿಕೆಟ್ ತಗೊಂಡು ಪ್ರಯೋಜನವೇನು?' ಎಂದು ಹೇಳಿದ ಅವರು, ಶರತ್ ಬಚ್ಚೇಗೌಡ ಅವರು ಅಮೇರಿಕಾದಿಂದ ವಾಪಸ್ ಬಂದ ಮೇಲೆ ಚರ್ಚಿಸಲಾಗುವುದು ಎಂದರು.
ಅಶ್ರಫ್, ರಹ್ಮಾನ್ ಕೊಲೆ ಪ್ರಕರಣಗಳು| ವಿಶೇಷ ಸರಕಾರಿ ಅಭಿಯೋಜಕರಾಗಿ ಹಿರಿಯ ನ್ಯಾಯವಾದಿ ಬಾಲನ್ ನೇಮಕ?
ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪದ ಸಾಮ್ರಾಟ್ ಮೈದಾನದಲ್ಲಿ ಎ. 27ರಂದು ಗುಂಪು ಥಳಿತದಿಂದ ಹತ್ಯೆಗೀಡಾದ ಕೇರಳದ ವಯನಾಡಿನ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಮತ್ತು ಬಂಟ್ವಾಳ ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ದುಷ್ಕರ್ಮಿಗಳಿಂದ ಮೇ 27ರ ಸಂಜೆ ಹತ್ಯೆಯಾದ ಬಡಗ ಬೆಳ್ಳೂರು ಗ್ರಾಮದ ಕೊಳತ್ತಮಜಲಿನ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯವಾದಿ ಎಸ್.ಬಾಲನ್ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸುವ ಬಗ್ಗೆ ತಿಳಿದು ಬಂದಿದೆ. ಹತ್ಯೆಯಾದ ಇಬ್ಬರ ಕುಟುಂಬದ ಸದಸ್ಯರು ಪ್ರಕರಣದ ಸಮಗ್ರ ತನಿಖೆ ನಡೆದು ಎಲ್ಲ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದರು. ಅದಕ್ಕಾಗಿ ಎರಡೂ ಕೊಲೆಗಳ ವಿಚಾರಣೆಯಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಎಸ್.ಬಾಲನ್ರನ್ನು ಅವರನ್ನು ನೇಮಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಗೃಹ ಮತ್ತು ಕಾನೂನು ಸಚಿವರಲ್ಲಿ ಚರ್ಚಿಸಿ, ಮನವಿ ಮಾಡಿದ್ದರು. ಆ ಹಿನ್ನಲೆಯಲ್ಲಿ ಸರಕಾರವು ಎಸ್. ಬಾಲನ್ರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸುವ ಬಗ್ಗೆ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಸಹಿತ 21 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಕೆಲವರು ಜಾಮೀನು ಪಡೆದರೆ ಇನ್ನು ಕೆಲವರು ಜೈಲಲ್ಲಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿದೆ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಸಾಮಾಜಿಕ, ಆರ್ಥಿಕ ಹಾಗೂ ಸಮಾಜಿಕ ನ್ಯಾಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದ ಪೂಜ್ಯ ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನದಲ್ಲಿ ನಡೆದ 935 ಪಾಲಿಕೆಯ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಪಾಲಿಕೆಯಿಂದ ನೇರ ವೇತನ ಪಾವತಿ ಆದೇಶ ಪತ್ರ ವಿತರಣೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಪತ್ರ ಹಾಗೂ ಕ್ರೋಮ್ ಬುಕ್ ವಿತರಣೆ, ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವರು ಸಾಂಕೇತಿಕವಾಗಿ ನೇಮಕಾತಿ ಪತ್ರ ವಿತರಿಸಿದರು. ಜೊತೆಗೆ ಹೊಲಿಗೆ ಯಂತ್ರ ಹಾಗೂ ತ್ರಿಚಕ್ರ ವಾಹನಗಳ ವಿತರಣೆ ಮಾಡಿದರು. ʼಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ಸರಕಾರದ ಬದ್ಧತೆಯಿಂದಾಗಿ ನಾವು ಇಂದು ನಿಮಗೆಲ್ಲ ನೇಮಕಾತಿ ಆದೇಶ ವಿತರಿಸಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇಲ್ಲಿಂದ ನೀವೆಲ್ಲ ಮಹಾನಗರ ಪಾಲಿಕೆಯ ನೌಕರರಾಗಿರುತ್ತೀರಿ. ಇದು ಅತ್ಯಂತ ಸಂತೋಷದ ಕ್ಷಣವಾಗಿದೆʼ ಎಂದು ಸಚಿವರು ಹೇಳಿದರು. ಪೌರಕಾರ್ಮಿಕರು ಇದ್ದರೆ ನಗರವೆಲ್ಲ ಸ್ವಚ್ಛತೆಯಿಂದ ಇರಲು ಸಾಧ್ಯವಾಗುತ್ತದೆ. ನಿಮ್ಮೆಲ್ಲ ಕಷ್ಟಗಳ ನಡುವೆ ನಗರವನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತಿದ್ದೀರಿ ನಿಮಗೆಲ್ಲ ಧನ್ಯವಾದಗಳು ಎಂದ ಸಚಿವರು, 64 ಗ್ರಾಮಸೇವಕರ ನೇಮಕಾತಿ ಮಾಡಿ ಗ್ರಾಮ ಸೇವಕರಿಗೆ ತಂತ್ರಾಂಶ ದಾಖಲಿಸಲು ಅನುಕೂಲವಾಗಲೆಂದು 154 ಕ್ರೊಮ್ ಬುಕ್ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದೇ ಮೊದಲಬಾರಿಗೆ ಇಂತಹ ಸೌಲಭ್ಯ ಒದಗಿಸಲಾಗಿದೆ ಎಂದರು. ಕೇಂದ್ರ ಸರಕಾರ ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಾಡಲು ನಿರಾಕರಿಸಿತು. ಆದರೆ ರಾಜ್ಯ ಸರಕಾರ ಕಲಬುರಗಿಯನ್ನು ಮುಂದಿನ 25 ವರ್ಷಕ್ಕೆ ಹೇಗಿರಬೇಕೋ ಹಾಗೆ ಸುಂದರ ನಗರವನ್ನಾಗಿ ಮಾಡಲು IIHS ( Indian Institute for Human Settlements) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಈಗಾಗಲೇ ನೀಲನಕ್ಷೆ ತಯಾರಿಸಲಾಗಿದ್ದು, ಮುಂದಿನ ಮೂರು ವರ್ಷದಲ್ಲಿ ನವ ಕಲಬುರಗಿ ನಿರ್ಮಾಣ ಮಾಡಲಾಗುವುದು ಎಂದರು. ಇದರ ಜೊತೆಗೆ 23 ಸರ್ಕಲ್ ಗಳ ಮರುನಿರ್ಮಾಣ, 31 ಉದ್ಯಾನವನ ಅಭಿವೃದ್ದಿ ಹಾಗೂ 4 ಕೆರೆಗಳನ್ನು ಅಭಿವೃದ್ದಿಪಡಿಸಲಾಗುವುದು. ನಗರದ ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕಲಬುರಗಿಯಲ್ಲಿ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು. ನಗರದ ವಾಜಪೇಯಿ ಬಡಾವಣೆಯಲ್ಲಿ ನೈಸ್ ( NICE- Nagavi Institute of Competitive Exams) ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಮುಂದಿನ ಜುಲೈ ಕೊನೆಯ ವಾರದಲ್ಲಿ ಉದ್ಘಾಟನೆ ಮಾಡಲಾಗುವುದು. ಮೊದಲಿಗೆ 500 ಜನ ಐಎಎಸ್, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಮುಂದೆ 2,000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು. ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿದರು. ವೇದಿಕೆಯ ಮೇಲೆ ಮಹಾಪೌರ ಯಲ್ಲಪ್ಪ ನಾಯಕೋಡಿ, ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರು, ಬಾಬುರಾವ್ ಚಿಂಚನಸೂರು, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮಿಷನರ್ ಅವಿನಾಶ್ ಶಿಂಧೆ, ಸಚಿನ್ ಶಿರವಾಳ ಸೇರಿದಂತೆ ಅನೇಕರಿದ್ದರು.
ವಿಧಾನಸೌಧ ಠಾಣೆಯ ಎದುರು ಪ್ರತಿಭಟಿಸಿದ್ದ 11 ಮಂದಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸುವ ಬದಲು ಸೂಕ್ತ ನಿಯಮಗಳನ್ನು ರೂಪಿಸಬೇಕೆಂದು ಒತ್ತಾಯಿಸಿ ವಿಧಾನಸೌಧದ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ 11 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾನೂನುಬಾಹಿರವಾಗಿ ಗುಂಪುಗೂಡಿ ಪ್ರತಿಭಟಿಸಿದ ಆರೋಪದಡಿ ವಿಧಾನಸೌಧ ಠಾಣಾ ಪೊಲೀಸರು, ಸ್ವಯಂಪ್ರೇರಿತವಾಗಿ 11 ಮಂದಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಜೂ.21ರಂದು ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಶಿವಮೊಗ್ಗ, ಮೈಸೂರು ಹಾಗೂ ಹಾಸನ ಸೇರಿದಂತೆ ವಿವಿಧ ಕಡೆಗಳಿಂದ ಬೈಕ್ ಟ್ಯಾಕ್ಸಿ ಸವಾರರು ಬಂದು ಗುಂಪುಗೂಡಿ ವಿಧಾನಸೌಧದ ಮುಂದೆ ಸರಕಾರದ ವಿರುದ್ಧ ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಲೆನಾಡಿನಲ್ಲಿ ವರುಣನ ಆರ್ಭಟ; ಕತ್ತಲೆಯಲ್ಲಿ ಮುಳುಗಿವೆ ಗ್ರಾಮಗಳು!
ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಮಲೆನಾಡಿನ ಗ್ರಾಮೀಣ ಭಾಗದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಉಳಿದಂತೆ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಹಾಸನ ಜಿಲ್ಲೆಯು ಬಯಲು ಸೀಮೆ, ಅರೆ ಮಲೆನಾಡು ಮತ್ತು ಮಲೆನಾಡಿನ ಬೆಟ್ಟಗುಡ್ಡಗಳ ಸಮ್ಮಿಲನವಾಗಿದ್ದು ಮಳೆಗಾಲದಲ್ಲಿ ಹಸಿರು ಸಿರಿಯಿಂದ ಪಶ್ಚಿಮ ಘಟ್ಟಗಳ ಸೌಂದರ್ಯ ಮನಸೆಳೆಯುತ್ತಿದೆ. ಶಿರಾಡಿ ರಸ್ತೆ ಮತ್ತು ಬಿಸ್ಲೆ, ವನಗೂರು ಹಾಗೂ ಹೆತ್ತೂರು ಸಮೀಪದ ಬೆಟ್ಟಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರಕೃತಿಯ ರಮಣೀಯ ದೃಶ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಮಂಗಳೂರು, ಜೂ.24: ನಗರದ ನೆಹರೂ ಮೈದಾನದ ಕ್ರಿಕೆಟ್ ಫೆವಿಲಿಯನ್ ಪಕ್ಕದ ಮೆಸ್ಕಾಂ ಕಚೇರಿಯ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹವು ಜೂ.17ರಂದು ಪತ್ತೆಯಾಗಿದೆ. ಅಂದು ಬೆಳಗ್ಗೆ 8ಕ್ಕೆ ಸುಮಾರು 40-45 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿ ಬಿದ್ದುಕೊಂಡಿದ್ದು, ಆತನನ್ನು ಆ್ಯಂಬುಲೆನ್ಸ್ ಮೂಲಕ ವೆನ್ಲಾಕ್ಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದನ್ನು ದೃಢೀಕರಿಸಿದ್ದಾರೆ. ಜೂ.16ರ ರಾತ್ರಿ ಈ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿ ಹೋಗಿರಬಹುದು ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರು ಇದ್ದಲ್ಲಿ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.
ಬೆಳಗಾವಿಯಲ್ಲಿ ಭಾರೀ ಮಳೆ, 2 ತಾಲೂಕುಗಳ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಜೂನ್ 25ರಂದು ರಜೆ ಘೋಷಣೆ
ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯ ಎರಡು ತಾಲೂಕುಗಳ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ರಜೆ ನೀಡಲಾಗಿದೆ. ಜೂನ್ 25 ರಂದು ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು, ಅಂದು ರಜೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಈ ರಜೆ ಘೋಷಿಸಿದ್ದಾರೆ.