ಪಾಲಿಟೆಕ್ನಿಕ್ ಸಂಸ್ಥೆಗಳ ಗ್ರೂಪ್-ಬಿ ಉಪನ್ಯಾಸಕರ ಹುದ್ದೆಗಳಿಗೆ ಮಾತ್ರ ಎಐಸಿಟಿಇ ವೇತನ ಶ್ರೇಣಿ : ಡಾ.ಸುಧಾಕರ್
ಬೆಂಗಳೂರು : ಪಾಲಿಟೆಕ್ನಿಕ್ ಸಂಸ್ಥೆಗಳ ಬೋಧಕ ವೃಂದದ ಗ್ರೂಪ್-ಬಿ ಉಪನ್ಯಾಸಕರ ಹುದ್ದೆಗಳಿಗೆ ಮಾತ್ರ ಎಐಸಿಟಿಇ ವೇತನ ಶ್ರೇಣಿಯನ್ನು ಮಂಜೂರು ಮಾಡಲು ಅವಕಾಶವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ವಿಧಾನ ಪರಿಷತ್ನ ಕಲಾಪದಲ್ಲಿ ಸದಸ್ಯರಾದ ಎಸ್ .ವಿ.ಸಂಕನೂರು, ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ ಹಾಗೂ ಎಸ್. ಎಲ್.ಭೋಜೇಗೌಡ ಅವರು ನಿಯಮ 72ರಡಿ ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಗ್ರಂಥಪಾಲಕರ ಹುದ್ದೆಯು ಗ್ರಂಥಾಲಯ ನಿರ್ವಹಣೆಗೆ ಮಂಜೂರಾಗಿರುವ 'ಸಿ' ವೃಂದದ ರಾಜ್ಯ ವೇತನ ಶ್ರೇಣಿಯ ಬೋಧಕೇತರ ಹುದ್ದೆಯಾಗಿ ರುವುದರಿಂದ ಅವರಿಗೆ ಎಐಸಿಟಿಇ ವೇತನ ಶ್ರೇಣಿಯನ್ನು ನೀಡಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ ಎಂದರು
ಸಶಸ್ತ್ರ ಸೀಮಾ ಬಲ್ನಲ್ಲಿ ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಕಾನ್ಸ್ಟೇಬಲ್ (ಟ್ರೇಡ್ಸ್ಮನ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದ್ದು, 827 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಗೃಹಸಚಿವಾಲಯದ ಅಡಿಯಲ್ಲಿರ ಬರುವ ಪ್ರಮುಖ ಭಾರತೀಯ ಗಡಿ ಕಾವಲುಪಡೆಯಾದ ಸಶಸ್ತ್ರ ಸೀಮಾ ಬಲ್ನಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಶಸ್ತ್ರ ಸೀಮಾ ಬಲವು 1,751 ಕಿಮೀ ಭಾರತ- ನೇಪಾಳ ಮತ್ತು 699 ಕಿಮೀ ಭಾರತ- ಭೂತಾನ್ ಗಡಿ ಭದ್ರಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಕಾನ್ಸ್ಟೇಬಲ್ (ಟ್ರೇಡ್ಸ್ಮನ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದ್ದು, 827 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 2026 ಮಾರ್ಚ್ 21ರಿಂದ ಎಸ್ಎಸ್ಬಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅಗತ್ಯವಿರುವ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 23 - 27 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://applyssb.com/SSB_CT_25/applicationIndex ಪ್ರಮುಖ ದಿನಾಂಕಗಳು • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 21 ಮಾರ್ಚ್ 2026 • ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 20 ಎಪ್ರಿಲ್ 2026 • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 20 ಏಪ್ರಿಲ್ 2026 • ಪರೀಕ್ಷೆಯ ದಿನಾಂಕ: ಶೀಘ್ರವೇ ಸೂಚಿಸಲಾಗುವುದು • ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು • ಪರೀಕ್ಷೆಯ ಫಲಿತಾಂಶ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು ಅರ್ಜಿ ಶುಲ್ಕ ಎಸ್ಸಿ/ಎಸ್ಟಿ/ ಮಹಿಳೆಯರಿಗೆ: ಶುಲ್ಕವಿಲ್ಲ ಯುಆರ್, ಒಬಿಸಿ ಇಡಬ್ಲ್ಯುಎಸ್: 100/- ಶುಲ್ಕ ಪಾವತಿ ವಿಧಾನ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಮೊಬೈಲ್ ವಾಲೆಟ್ ಮೂಲಕ ಪಾವತಿಸಬಹುದಾಗಿದೆ. ವಯೋಮಿತಿ • ಕನಿಷ್ಠ ವಯಸ್ಸು : 18 ವರ್ಷಗಳು. • ಗರಿಷ್ಠ ವಯಸ್ಸು: 23 - 27 ವರ್ಷಗಳು ಕಾನ್ಸ್ಟೇಬಲ್ (ಟ್ರೇಡ್ಸ್ಮನ್) ಸ್ಥಾನಕ್ಕೆ ಎಸ್ಎಸ್ಬಿ ನಿಯಮಗಳ ಪ್ರಕಾರ ಹುದ್ದೆಗೆ ವಯೋಮಿತಿ ಸಡಿಲಿಕೆ ನೀಡುತ್ತದೆ. ಒಟ್ಟು ಹುದ್ದೆಗಳು 827 ಹುದ್ದೆಗಳು ಹುದ್ದೆಗಳ ವಿವರ ಹುದ್ದೆಯ ಹೆಸರು- ಹುದ್ದೆಯ ಸಂಖ್ಯೆ ಕಾನ್ಸ್ಟೇಬಲ್ (ಪಶು)- 34 ಕಾನ್ಸ್ಟೇಬಲ್ (ಚಾಲಕ) ಪುರುಷ- 553 ಕಾನ್ಸ್ಟೇಬಲ್ (ಉದ್ಯಾನವನ) – 41 ಕಾನ್ಸ್ಟೇಬಲ್ (ವಾಟರ್ ಕ್ಯಾರಿಯರ್)- 05 ಕಾನ್ಸ್ಟೇಬಲ್ (ಕೋಬ್ಲರ್)- 25 ಕಾನ್ಸ್ಟೇಬಲ್ (ಟ್ರೈಲರ್)- 41 ಕಾನ್ಸ್ಟೇಬಲ್ (ವಾಷರ್ಮನ್) – 74 ಕಾನ್ಸ್ಟೇಬಲ್ (ಬಾರ್ಬರ್) – 43 ಕಾನ್ಸ್ಟೇಬಲ್ (ವೈಟರ್)- 03 ಕಾನ್ಸ್ಟೇಬಲ್ (ಕಾರ್ಪೆಂಟರ್)- 07 ಕಾನ್ಸ್ಟೇಬಲ್ (ನರ್ಸಿಂಗ್ ಆರ್ಡರ್ಲಿ) -01 ಶೈಕ್ಷಣಿಕ ಅರ್ಹತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ (ಹೈಸ್ಕೂಲ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ ಅರ್ಜಿದಾರರು ಈ ಕೆಳಗಿನ ಷರತ್ತುಗಳಲ್ಲಿ ಒಂದನ್ನು ಪೂರೈಸಬೇಕು. • ಕನಿಷ್ಠ 1 ವರ್ಷದ ಅನುಭವ • ಮಾನ್ಯ ಎಚ್ಎಂವಿ ಚಾಲನಾ ಪರವಾನಗಿ • 1 ವರ್ಷದ ಅನುಭವದೊಂದಿಗೆ ಪ್ರಥಮ ಚಿಕಿತ್ಸಾ ಪ್ರಮಾಣಪತ್ರ • 2 ವರ್ಷಗಳ ಅನುಭವ ಅಥವಾ 1 ವರ್ಷದ ಅನುಭವದೊಂದಿಗೆ ಸಂಬಂಧಿತ ವ್ಯಾಪಾರದಲ್ಲಿ 1 ವರ್ಷದ ಐಟಿಐ • ಸಂಬಂಧಿತ ವ್ಯಾಪಾರದಲ್ಲಿ 2 ವರ್ಷಗಳ ಐಟಿಐ.
ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ : ದಿನೇಶ್ ಗುಂಡೂರಾವ್
ಮುಂದಿನ ಎರಡು ತಿಂಗಳಲ್ಲಿ ಡಿಪಿಆರ್ ಇಲಾಖೆಗೆ ಸಲ್ಲಿಕೆ
ಬೆಂಗಳೂರು : ಬೆಂಗಳೂರು ಉತ್ತರ ವಿವಿ ಕಾಮಗಾರಿಗಳಲ್ಲಿ ಉಪಕುಲಪತಿ ಕೋಟ್ಯಂತರ ರೂ. ಗಳ ಭ್ರಷ್ಟಾಚಾರ ನಡೆಸಿರುವುದು ಸಾಬೀತಾದರೆ ನ್ಯಾಯಾಲಯದ ತಡೆಯಾಜ್ಞೆ ತೆರವಾದ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೆಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಉತ್ತರ ವಿವಿಯಲ್ಲಿ ನಡೆದ ಕಾಮಗಾರಿಯ ಟೆಂಡರ್ಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು. ಕಾಮಗಾರಿ ಅಕ್ರಮ ನಡೆದ ಸಂಬಂಧ ಕುಲಪತಿಯೊಬ್ಬರು ನೇರವಾಗಿ ರಾಜ್ಯಪಾಲರಿಗೆ ದೂರು ಕೊಡಲಾಗಿತ್ತು. ಇದಕ್ಕೆ ಏಕ ನ್ಯಾಯಮೂರ್ತಿ ಸಮಿತಿಯನ್ನು ಮಾಡಿದ್ದರು. ಅದರ ತನಿಖಾ ವರದಿ ನೇರವಾಗಿ ಅವರಿಗೆ ಸಲ್ಲಿಕೆಯಾಗಿದೆ. ಈ ವರದಿ ಸರಕಾರಕ್ಕೆ ಸಲ್ಲಿಕೆಯಾಗಿಲ್ಲ. ನ್ಯಾಯಾಲಯದಲ್ಲಿ ಇದಕ್ಕೆ ತಡೆ ಹಿಡಿಯಲಾಗಿದೆ. ಪ್ರಕರಣ ನ್ಯಾಯಾಲಯದ ಹಂತದಲ್ಲಿರುವುದರಿಂದ ಹೆಚ್ಚು ಮಾತನಾಡಲಾಗುವುದಿಲ್ಲ ಎಂದು ಎಂ.ಸಿ.ಸುಧಾಕರ್ ಹೇಳಿದರು. ಇನ್ನು, ಬೆಂಗಳೂರು ಉತ್ತರ ವಿವಿಯಲ್ಲಿ ಬೇಕಂತಲೇ ಕುಲಪತಿಗಳನ್ನು ಬದಲಾವಣೆ ಮಾಡಲಾಗಿದೆ. ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ನಡೆದಿದೆ. ಹಳೆಯ ಕಟ್ಟಡ ಕಾಮಗಾರಿ ಬಗ್ಗೆ ಏಕೆ ಮಾತನಾಡಿಲ್ಲ, ಕುಲಪತಿಗಳನ್ನು ವರ್ಗಾವಣೆ ಮಾಡಿ, ಇನ್ನೊಬ್ಬರನ್ನು ತರಲಾಗಿದೆ ಎಂಬ ಭೋಜೆಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಲಪತಿಗಳನ್ನು ನಾವು ಕಳುಹಿಸಿಲ್ಲ. ಅವರ ಸಮಯ 4 ವರ್ಷ ಅವಧಿ ಮುಗಿದಿತ್ತು. ಅದಕ್ಕೆ ಬದಲಾವಣೆಯಾಗಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವಾದರೆ ಕ್ರಮ ವಹಿಸುತ್ತೇವೆ ಎಂದು ವಿವರಿಸಿದರು. ಇದಕ್ಕೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಇದು ಭ್ರಷ್ಟಾಚಾರದ ವಿಚಾರವಾಗಿದೆ. ಇದನ್ನು ಸದನ ಗಂಭೀರವಾಗಿ ತೆಗೆದುಕೊಂಡು ನ್ಯಾಯಾಲಯದ ತಡೆಯಾಜ್ಞೆ ತೆರವಾದ ಬಳಿಕ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಬ್ಸಿಡಿಯನ್ನು ತುಚ್ಛವಾಗಿ ಕಾಣುವುದು ಬಿಡಿ : ಕೃಷ್ಣಭೈರೇಗೌಡ
ಬೆಂಗಳೂರು : ಸಮಾಜದಲ್ಲಿ ಆರ್ಥಿಕವಾಗಿ ತೀರಾ ಕೆಳ ಹಂತದಲ್ಲಿರುವ ಬಡ ಜನರಿಗೆ ನೀಡುವ ಸಬ್ಸಿಡಿಯನ್ನು ಯಾವುದೇ ಕಾರಣಕ್ಕೂ ತುಚ್ಛಗೊಳಿಸುವ, ಅಪರಾಧಿಕರಿಸುವ ಕೃತ್ಯವನ್ನು ಬೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಮಾತಿನ ನಡುವೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಬಡವರಿಗೆ ನೀಡುವ ಸಬ್ಸಿಡಿಯನ್ನು ಭಾರತದಂತೆ ಬೇರೆ ದೇಶದಲ್ಲೂ ತುಚ್ಚವಾಗಿ ಕಾಣಲಾಗುತ್ತದೆ. ಆದರೆ, 150 ವರ್ಷಗಳ ಆರ್ಥಿಕ ಚಿಂತನೆಗಳ ಕಡೆಗೆ ಒಮ್ಮೆ ಗಮನ ಹರಿಸಿದರೆ ದೇಶವೊಂದನ್ನು ಆರ್ಥಿಕ ಹಿಂಜರಿತದಿಂದ ಪ್ರಗತಿಪಥದತ್ತ ಮುನ್ನಡೆಸಲು ಬಡವರಿಗೆ ಸಬ್ಸಿಡಿ ನೀಡುವ ಮೂಲಕ ಬೇಡಿಕೆಯ ವಲಯವನ್ನು ಬಲಪಡಿಸುವುದೊಂದೇ ಪರಿಹಾರವಾಗಿ ಕಂಡುಬಂದಿದೆ ಎಂದು ವ್ಯಾಖ್ಯಾನಿಸಿದರು. ಸ್ವಾಭಾವಿಕವಾಗ ಎರಡು ರೀತಿಯ ಆರ್ಥಿಕ ಚಿಂತನೆಗಳು ಕಾಣಿಸುತ್ತವೆ. ಮೊದಲನೇಯದು ಉತ್ಪಾದಕ ವಲಯದ ಅಭಿವೃದ್ಧಿಗೆ ಸಹಾಯ ಮಾಡುವುದು, ಮತ್ತೊಂದು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಜನಸಾಮಾನ್ಯರ ಆರ್ಥಿಕ ಸ್ಥಿತಿ, ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು. ಉತ್ಪಾದನ ವಲಯಕ್ಕೆ ತೆರಿಗೆ ಕಡಿತ ಮಾಡುವ ಮೂಲಕ ನೇರವಾಗಿ ಸಹಾಯ ಮಾಡಬಹುದು. ಹೀಗೆ ಮಾಡಿದಲ್ಲಿ ಅವರ ಉಳಿತಾಯ ಹೆಚ್ಚಾಗಿ ಆ ಹಣವನ್ನು ಅವರು ಮತ್ತೆ ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡಲು ಅನುಕೂಲವಾಗುತ್ತದೆ. ಅದೇ ರೀತಿ ಜನರಿಗೆ ಕನಿಷ್ಟ ಆದಾಯ ಲಭ್ಯವಾಗುವುದನ್ನು ಖಾತರಿಪಡಿಸಿ, ಅವರೂ ಸಹ ಜೀವನ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಆರ್ಥಿಕತೆಯನ್ನು ವೃದ್ಧಿಸಬಹುದಾಗಿದೆ ಎಂದು ವಿವರಿಸಿದರು. ಒಬ್ಬ ವ್ಯಕ್ತಿ ಕೈಗೆ ಒಂದು ರೂಪಾಯಿ ಕೊಟ್ಟರೆ ಆ ಹಣ ಮಾರುಕಟ್ಟೆಯಲ್ಲಿ ಕನಿಷ್ಠ ಐದು ಬಾರಿ ಮರು ಚಲಾವಣೆಯಾಗುತ್ತದೆ. ಈ ಮೂಲಕ ಐದರಷ್ಟು ಆರ್ಥಿಕತೆಯನ್ನು ಸೃಷ್ಟಿಸುತ್ತದೆ. ಪರಿಣಾಮ ಆರ್ಥಿಕತೆಯೂ ವೃದ್ಧಿಸುತ್ತದೆ. ಬೇಡಿಕೆ ಜಾಸ್ತಿಯಾದಾಗ ಉತ್ಪಾದನಾ ವಲಯಕ್ಕೂ ಅನುಕೂಲವಾಗುತ್ತದೆ. ಉತ್ಪಾದನಾ ವಲಯವನ್ನು ಬಲಪಡಿಸಿ ಬೇಡಿಕೆ ಇಲ್ಲದೆ ಹೋದರೆ ಆರ್ಥಿಕ ಅಭಿವೃದ್ಧಿಯೂ ಕುಂಠಿತಗೊಳ್ಳುತ್ತದೆ. ಅಸಲಿಗೆ ಬೇಡಿಕೆ ಇಲ್ಲದೆ ಹೂಡಿಕೆ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು. ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ಹಾಗೂ ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರಲು ಸಬ್ಸಿಡಿಗಳೇ ಕಾರಣ. ಕೇಂದ್ರ ಸರಕಾರ ಇತ್ತೀಚೆಗೆ ಜಿಎಸ್ಟಿ ತೆರಿಗೆಯನ್ನು ಸರಳೀಕರಣಗೊಳಿಸಿದಾಗ ಇತರೆ ಎಲ್ಲ ರಾಜ್ಯಗಳಿಗೂ ಹೋಲಿಸಿದರೆ ಕರ್ನಾಟಕದಲ್ಲಿ ಜಿಎಸ್ಟಿ ತೆರಿಗೆ ಸಂಗ್ರಹ ಅಷ್ಟೇ ನೂ ಕೊರತೆಯಾಗಿಲ್ಲ. ಗ್ಯಾರಂಟಿ ಯೋಜನೆಗಳು ಅಷ್ಟರ ಮಟ್ಟಿಗೆ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಬಿಸಿಸಿಐಯ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಬುಮ್ರಾ ಸೇರ್ಪಡೆ
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 2026ರ ಆವೃತ್ತಿಯ ಆರಂಭಕ್ಕೆ ಒಂದು ವಾರ ಉಳಿದಿರುವಂತೆಯೇ, ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಸೇರ್ಪಡೆಗೊಂಡಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಗಾಯದಿಂದ ಚೇತರಿಸಿಕೊಳ್ಳಲು ಅವರು ಅಲ್ಲಿಗೆ ಸೇರ್ಪಡೆಗೊಂಡಿದ್ದಾರೆಯೇ ಅಥವಾ ನಿಯಮಿತ ತಪಾಸಣೆಗಾಗಿಯೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಅವರು ಈವರೆಗೆ ಮುಂಬೈ ಇಂಡಿಯನ್ಸ್ ಶಿಬಿರವನ್ನು ಸೇರಿಕೊಂಡಿಲ್ಲ. ಟಿ20 ವಿಶ್ವಕಪ್ ವಿಜೇತ ಭಾರತೀಯ ತಂಡದಲ್ಲಿದ್ದ ನಾಲ್ವರು ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೆಚ್ಚುವರಿ ವಿರಾಮವನ್ನು ನೀಡಲಾಗಿದೆ ಎಂಬುದಾಗಿ ಕಳೆದ ವಾರ ಮುಂಬೈ ಇಂಡಿಯನ್ಸ್ ಪ್ರಧಾನ ಕೋಚ್ ಮಹೇಲ ಜಯವರ್ಧನೆ ಹೇಳಿದ್ದರು. ಭಾರತ ತಂಡವು ಮಾರ್ಚ್ 8ರಂದು ನಡೆದ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಗೆದ್ದಿದೆ. ‘‘ಪ್ರತಿ ವರ್ಷವೂ ನಮ್ಮ ಗುರಿ ಐಪಿಎಲ್ ಟ್ರೋಫಿ ಗೆಲ್ಲುವುದು. ಆದರೆ, ಇದು ಸುದೀರ್ಘ ಋತು ಎನ್ನುವುದು ನನಗೆ ಗೊತ್ತು. ಹಾಗಾಗಿ ಪಂದ್ಯಾವಳಿ ಪೂರ್ವ ಋತು ಹಿಂದಿನಂತೆಯೇ ಆರಂಭಗೊಳ್ಳುತ್ತದೆ. ಈ ಅವಧಿಯಲ್ಲಿ ನಾವು ಕಠಿಣ ಪರಿಶ್ರಮ ಪಡುತ್ತೇವೆ, ತಂಡಕ್ಕೆ ಹೊಸ ಹುಡುಗರನ್ನು ನೇಮಿಸಿಕೊಳ್ಳುತ್ತೇವೆ. ನಮ್ಮ ಟಿ20 ವಿಶ್ವಕಪ್ ವಿಜೇತ ಹುಡುಗರಿಗೆ ನಾವು ಹೆಚ್ಚುವರಿ ವಿರಾಮವನ್ನು ನೀಡಿದ್ದೇವೆ. ಅವರು ಮುಂದಿನ ವಾರಾಂತ್ಯದಲ್ಲಿ ನಮ್ಮನ್ನು ಸೇರಿಕೊಳ್ಳುತ್ತಾರೆ. ವಿದೇಶಿ ಆಟಗಾರರೂ ಮನೆಗೆ ಹೋಗಿದ್ದಾರೆ. ಬಳಿಕ ಅವರು ನಮ್ಮನ್ನು ಸೇರಲಿದ್ದಾರೆ. ಆದರೆ, ಮೊದಲ ಪಂದ್ಯಕ್ಕೆ ಮೊದಲು ಅವರಿಗೆ ಒಂದು ವಾರದ ತರಬೇತಿ ನೀಡಲಾಗುವುದು’’ ಎಂದು ಎಮ್ಐಜಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಜೂನಿಯರ್ ಋತುವಿನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಯವರ್ಧನೆ ಹೇಳಿದ್ದರು. ಮುಂಬೈ ಇಂಡಿಯನ್ಸ್ ಐಪಿಎಲ್ 2026ರ ತನ್ನ ಮೊದಲ ಪಂದ್ಯವನ್ನು ಮಾರ್ಚ್ 29ರಂದು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಆಡಲಿದೆ.
ಐಪಿಎಲ್: ಅಗ್ರ ಆರು ಬೌಂಡರಿ ಹಿಟ್ಟರ್ ಗಳತ್ತ ಒಂದು ಕಿರು ನೋಟ...
ಹೊಸದಿಲ್ಲಿ: ಕಳೆದ ಕೆಲವು ಐಪಿಎಲ್ ಋತುಗಳಲ್ಲಿ ಬೌಂಡರಿಗಳ ಸುರಿಮಳೆಯಾಗಿದೆ. 2024ರಲ್ಲಿ ಮೊದಲ ಬಾರಿ ಪ್ರತಿ ಐದು ಎಸೆತಗಳಲ್ಲಿ ಒಂದು ಬೌಂಡರಿ ಬಾರಿಸಲಾಗಿತ್ತು. ಐಪಿಎಲ್ ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಬಂದ ನಂತರ ಅಗ್ರ ಕ್ರಮಾಂಕದ ಬ್ಯಾಟರ್ಗಳು ಮೊದಲ ಎಸೆತದಿಂದಲೇ ಅಬ್ಬರಿಸತೊಡಗಿದರು. ಅಭಿಷೇಕ್ ಶರ್ಮಾ, ನಿಕೊಲಸ್ ಪೂರನ್, ಟ್ರಾವಿಸ್ ಹೆಡ್ ಹಾಗೂ ಫಿಲ್ ಸಾಲ್ಟ್ರಂತಹ ಬ್ಯಾಟರ್ಗಳು ಬೌಂಡರಿ ಮಳೆ ಸುರಿಸಿದ್ದಾರೆ. 2026ರ ಐಪಿಎಲ್ ನಲ್ಲೂ ಬೌಂಡರಿಗಳ ಸಂಖ್ಯೆ ಹೆಚ್ಚಾಗಬಹುದು. ►ಅಗ್ರ ಆರು ಬೌಂಡರಿ ಹಿಟ್ಟರ್ಗಳತ್ತ ಒಂದು ಕಿರು ನೋಟ ಇಲ್ಲಿದೆ: ಅಭಿಷೇಕ್ ಶರ್ಮಾ: ಅಭಿಷೇಕ್ ತನ್ನ ದೊಡ್ಡ ಹೊಡೆತಕ್ಕೆ ಲೆಗ್ ಸೈಡ್ ಅವಲಂಭಿಸಿದ ಕೆಲವೇ ಆ‘ುನಿಕ ಬ್ಯಾಟರ್ಗಳ ಪೈಕಿ ಒಬ್ಬರಾಗಿದ್ದಾರೆ. ಅವರು ಶೇ.50ರಷ್ಟು ಟಿ-20 ರನ್ಗಳನ್ನು ಆಫ್ ಸೈಡ್ನಲ್ಲಿ ಗಳಿಸಿದ್ದಾರೆ. ಇಶಾನ್ ಕಿಶನ್: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಹಾಗೂ ಕಿವೀಸ್ ವಿರುದ್ಧ ಸರಣಿಯುದ್ದಕ್ಕೂ ಅಬ್ಬರಿಸಿದ್ದ ಕಿಶನ್ ಟಿ-20 ವಿಶ್ವಕಪ್ ನಲ್ಲೂ ಮಿಂಚಿದ್ದರು. ವೈಭವ್ ಸೂರ್ಯವಂಶಿ: ಕಳೆದ 10 ಟಿ-20 ಇನಿಂಗ್ಸ್ಗಳಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ್ದಷ್ಟು ರನ್ ಯಾವ ಬ್ಯಾಟರ್ ಕೂಡ ಗಳಿಸಿಲ್ಲ. ಸೂರ್ಯವಂಶಿ ಹಿಂದಿನ 10 ಟಿ-20 ಇನಿಂಗ್ಸ್ ಗಳಲ್ಲಿ 202.79ರ ಸ್ಟ್ರೈಕ್ ರೇಟ್ ಒಟ್ಟು 436 ರನ್ ಗಳಿಸಿದ್ದಾರೆ. 2025ರ ಐಪಿಎಲ್ ನಂತರ ಇಷ್ಟೊಂದು ರನ್ ಗಳಿಸಿದ್ದಾರೆ. ಫಿನ್ ಅಲೆನ್: ಟಿ-20 ವಿಶ್ವಕಪ್ ನಲ್ಲಿ ವೇಗದ ಶತಕ ಗಳಿಸಿರುವ ಅಲೆನ್ ಸದ್ಯ ಟಾಪ್ ಫಾರ್ಮ್ ನಲ್ಲಿದ್ದಾರೆ. 2025ರ ಜೂನ್ ನಂತರ 30 ಪಂದ್ಯಗಳಲ್ಲಿ 200.17ರ ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 1,177 ರನ್ ಗಳಿಸಿದ್ದಾರೆ. 9 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಮೂರು ಶತಕಗಳನ್ನು ಬಾರಿಸಿದ್ದಾರೆ. ಅಲೆನ್ 2025ರ ಜೂನ್ ನಂತರ ಒಟ್ಟು 99 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಸಂಜು ಸ್ಯಾಮ್ಸನ್: ಟಿ-20 ವಿಶ್ವಕಪ್ನ ಕೊನೆಯ ಮೂರು ಇನಿಂಗ್ಸ್ಗಳಲ್ಲಿ ಆಕರ್ಷಕ ಅರ್ಧಶತಕಗಳನ್ನು ಗಳಿಸಿದ್ದ ಸಂಜು ಸ್ಯಾಮ್ಸನ್ ಈ ವರ್ಷದ ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠ ಬೌಂಡರಿ ಹಿಟ್ಟರ್ ಆಗಿ ಹೊರಹೊಮ್ಮುವ ವಿಶ್ವಾಸ ಮೂಡಿಸಿದ್ದಾರೆ. ಸ್ಯಾಮ್ಸನ್ ಪಿಚ್ ನ ಎರಡೂ ಬದಿಗಳಿಂದ ಬೌಂಡರಿ ಬಾರಿಸಬಲ್ಲರು. ವಿಶ್ವಕಪ್ ಫಾರ್ಮ್ ಅನ್ನು ಐಪಿಎಲ್ ನಲ್ಲಿ ಮುಂದುವರಿಸಿದರೆ ಎದುರಾಳಿ ನಾಯಕರಿಗೆ ಫೀಲ್ಡಿಂಗ್ ನಿಯೋಜಿಸುವುದು ಕಷ್ಟಕರವಾಗಲಿದೆ. ಶಿಮ್ರೊನ್ ಹೆಟ್ಮೆಯರ್: ಸ್ಯಾಮ್ಸನ್ ಸಿಎಸ್ಕೆಗೆ ಸೇರಿದ ಕಾರಣ ರಾಜಸ್ಥಾನ ರಾಯಲ್ಸ್ನ 3ನೇ ಕ್ರಮಾಂಕ ತೆರವಾಗಿದೆ. ಶಿಮ್ರೊನ್ ಹೆಟ್ಮೆಯರ್ ಈ ಬಾರಿ ಇದೇ ಕ್ರಮಾಂಕದಲ್ಲಿ ಆಡಬಹುದು. 2025ರ ಜೂನ್ ನಂತರ 3ನೇ ಕ್ರಮಾಂಕದಲ್ಲಿ 12 ಇನಿಂಗ್ಸ್ಗಳಲ್ಲಿ 40.80ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 2025ರ ಐಪಿಎಲ್ ನಂತರ ಎಲ್ಲ ಟಿ-20 ಪಂದ್ಯಗಳಲ್ಲಿ ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ ಎರಡನೇ ಬ್ಯಾಟರ್ ಆಗಿದ್ದಾರೆ. ಹೆಟ್ಮೆಯರ್ ಕೇವಲ 51 ಇನಿಂಗ್ಸ್ಗಳಲ್ಲಿ 105 ಸಿಕ್ಸರ್ ಸಿಡಿಸಿದ್ದಾರೆ.
ಐಪಿಎಲ್ ನ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಟೀಕಿಸಿದ ಅಕ್ಷರ್ ಪಟೇಲ್
ಹೊಸದಿಲ್ಲಿ: ಸ್ವತಃ ಆಲ್ರೌಂಡರ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಐಪಿಎಲ್ ನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಟೀಕಿಸಿದ್ದು, ‘‘ಇದನ್ನು ನಾನು ಇಷ್ಟಪಡಲಾರೆ’’ ಎಂದಿದ್ದಾರೆ. ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಮಾತನಾಡಿದ್ದರು. ಈ ನಿಯಮವು ಪಂದ್ಯದ ಯಾವುದೇ ಸಂದರ್ಭದಲ್ಲಿ ಐವರು ಬದಲಿ ಆಟಗಾರರ ಪಟ್ಟಿಯಲ್ಲಿರುವ ಒಬ್ಬರನ್ನು ಆಡುವ 11ರ ಬಳಗದಲ್ಲಿ ಆಡಿಸಲು ತಂಡಗಳಿಗೆ ಅವಕಾಶ ನೀಡುತ್ತದೆ. 2023ರಲ್ಲಿ ಜಾರಿಗೆ ತಂದಿರುವ ಈ ನಿಯಮವು 2027ರ ತನಕ ಇರಲಿದೆ. ನಾನು ಈ ನಿಯಮದ ಅಭಿಮಾನಿಯಲ್ಲ. ಇದು ಭಾರತೀಯ ಕ್ರಿಕೆಟ್ ನಲ್ಲಿ ಆಲ್ರೌಂಡರ್ ಗಳ ಬೆಳವಣಿಗೆಯ ಮೇಲೆ ಹಾನಿ ಮಾಡುತ್ತದೆ ಎಂದು 2024ರಲ್ಲಿ ರೋಹಿತ್ ಹೇಳಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮಾನವಾಗಿ ಉತ್ತಮವಾಗಿಲ್ಲದಿದ್ದರೆ ತಂಡದಲ್ಲಿ ಆಲ್ರೌಂಡರ್ ಅನ್ನು ಆಯ್ಕೆ ಮಾಡುವುದು ಕಷ್ಟಕರವಾಗಲಿದೆ ಎಂದು ಹಾರ್ದಿಕ್ ಪಾಂಡ್ಯ ಈ ಹಿಂದೆ ಹೇಳಿದ್ದರು. ಭಾರತ ಕ್ರಿಕೆಟ್ ತಂಡದ ಉಪ ನಾಯಕ ಅಕ್ಷರ್ ಪಟೇಲ್ ಗೆ ಈ ನಿಯಮದ ಕುರಿತು ಪ್ರಶ್ನಿಸಿದಾಗ ತನ್ನ ಸಹ ಆಟಗಾರರ ಅಭಿಪ್ರಾಯಗಳಿಗೆ ಧ್ವನಿಗೂಡಿಸಿದರು. ‘‘ನಾನು ಸ್ವತಃ ಆಲ್ರೌಂಡರ್ ಆಗಿರುವ ಕಾರಣ ನನಗೆ ಈ ನಿಯಮ ಇಷ್ಟವಿಲ್ಲ. ಮೊದಲು ನಾವು ಬ್ಯಾಟಿಂಗ್ ಹಾಗೂ ಬೌಲಿಂಗ್ಗಾಗಿ ಅಲ್ರೌಂಡರ್ ರನ್ನು ಆಯ್ಕೆ ಮಾಡುತ್ತಿದ್ದೆವು. ಈಗ ತಂಡದ ಆಡಳಿತವು ನಿರ್ದಿಷ್ಟ ಬ್ಯಾಟರ್ ಅಥವಾ ಬೌಲರ್ ಅನ್ನು ಆಯ್ಕೆ ಮಾಡುವ ಕಾರಣ ಆಲ್ರೌಂಡರ್ ಮಹತ್ವ ಕಡಿಮೆಯಾಗುತ್ತಿದೆ. ನಿಯಮಗಳನ್ನು ನಾವು ಪಾಲಿಸಬೇಕು. ಆದರೆ ವೈಯಕ್ತಿಕವಾಗಿ ನನಗೆ ಇದು ಇಷ್ಟವಾಗುವುದಿಲ್ಲ’’ ಎಂದು ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟರು. 2024ರಲ್ಲಿ 264 ಎಸೆತಗಳನ್ನು ಬೌಲಿಂಗ್ ಮಾಡಿದ್ದ ಅಕ್ಷರ್ ಪಟೇಲ್ ಕಳೆದ ಋತುವಿನ ಐಪಿಎಲ್ನಲ್ಲಿ ಕೇವಲ 204 ಎಸೆತಗಳನ್ನು ಎಸೆದಿದ್ದರು. ಇಂಪ್ಯಾಕ್ಟ್ ಪ್ಲೇಯರ್ ನಿಯಮವೇ ಇದಕ್ಕೆ ಕಾರಣ ಎಂದು ಅಕ್ಷರ್ ಹೇಳಿದ್ದಾರೆ.
Hassan | 7,000 ರೂ.ಗಾಗಿ ಯುವಕನ ಅಪಹರಿಸಿ ಕೊಲೆ: ಐವರು ಆರೋಪಿಗಳ ಬಂಧನ
ಹಾಸನ : ಕೇವಲ 7 ಸಾವಿರ ರೂಪಾಯಿ ಹಣಕಾಸು ವಿವಾದವೇ ಯುವಕನೊಬ್ಬನ ಅಪಹರಣ, ಅಮಾನುಷ ಹಿಂಸೆ ಹಾಗೂ ಕೊನೆಗೆ ದೇಹ ಸುಟ್ಟುಹಾಕುವ ಮಟ್ಟಕ್ಕೆ ತಲುಪಿದ ಕ್ರೂರ ಹತ್ಯೆ ಪ್ರಕರಣ ಹಾಸನ ಜಿಲ್ಲೆಯನ್ನು ನಡುಗಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿದರು. ಕೆ.ಎಂ. ವರುಣ್ ಎಂಬ ಯುವಕನನ್ನು ಅಪಹರಿಸಿ ಎರಡು ದಿನಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಪ್ರಕರಣದಲ್ಲಿ ಸತೀಶ್, ಉಮರ್, ವಿಜಯ ನಾಯಕ್, ದಾಸರಕೊಪ್ಪಲು ಚೇತನ್ ಹಾಗೂ ಮನು ಎಂಬಾತರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಶಶಾಂಕ್ ಸಹಿತ ಇನ್ನಿತರ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಶಶಾಂಕ್, ವರುಣ್ಗೆ 7 ಸಾವಿರ ರೂಪಾಯಿ ನೀಡಿದ್ದನು. ಹಣ ಮರಳಿ ನೀಡದ ಹಿನ್ನೆಲೆಯಲ್ಲಿ ಉಂಟಾದ ವೈಮನಸ್ಸು ದ್ವೇಷಕ್ಕೆ ತಿರುಗಿ ಕೊಲೆಗೆ ಕಾರಣವಾಗಿದೆ. ಮಾರ್ಚ್ 10ರಂದು ‘ಬೈಕ್ ರಿಪೇರಿ’ ಎಂದು ಹೇಳಿ ಮನೆಯಿಂದ ಹೊರಟಿದ್ದ ವರುಣ್, ನಂತರ ಮನೆಗೆ ಮರಳಿರಲಿಲ್ಲ. ಇದೇ ದಿನ ವರುಣ್ ಹಾಗೂ ಆತನ ಸ್ನೇಹಿತ ಲೋಹಿತ್ ಅವರನ್ನು ಆರೋಪಿಗಳು ಕರೆದುಕೊಂಡು ಹೋಗಿ ಹಂಗರಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಬಂಧಿಸಿ ಹಲ್ಲೆ ನಡೆಸಿದ್ದಾರೆ. ಮಾರ್ಚ್ 11ರಂದು ನೀರು ತರಲು ಕಳುಹಿಸಿದ ವೇಳೆ ಲೋಹಿತ್ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ಪಾರಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ಆದರೆ ನಿರಂತರ ಹಲ್ಲೆಯಿಂದಾಗಿ ವರುಣ್ ಮೃತಪಟ್ಟಿದ್ದಾನೆ ಎಂದು ಎಸ್ಪಿ ವಿವರಿಸಿದರು. ಘಟನೆ ಬಳಿಕ ಆರೋಪಿಗಳು ತಮ್ಮ ಕೃತ್ಯ ಮುಚ್ಚಿಹಾಕಲು ಮೃತದೇಹವನ್ನು ಹಂಗರಹಳ್ಳಿಯಿಂದ ಗುಂಡೇಗೌಡನಕೊಪ್ಪಲಿಗೆ ಸಾಗಿಸಿ ಎರಡು ದಿನಗಳ ಕಾಲ ಇಟ್ಟು ನಂತರ ಮಾರ್ಚ್ 13ರಂದು ಸುಟ್ಟುಹಾಕಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎರಡು ಬಿಲಿಯ ಡಾಲರ್ ಗಡಿ ದಾಟಿದ ಭಾರತೀಯ ಕ್ರೀಡಾ ಆರ್ಥಿಕತೆ
ಹೊಸದಿಲ್ಲಿ: ಭಾರತದ ಕ್ರೀಡಾ ಆರ್ಥಿಕತೆ ಮೊದಲ ಬಾರಿಗೆ ಎರಡು ಬಿಲಿಯ ಡಾಲರ್ ದಾಟಿದೆ. ಅದು ಕಳೆದ ವರ್ಷದಿಂದ 13.4 ಶೇಕಡ ಬೆಳವಣಿಗೆ ದಾಖಲಿಸಿ ಹಾಲಿ ಆರ್ಥಿಕ ವರ್ಷದಲ್ಲಿ 2.13 ಬಿಲಿಯ ಡಾಲರ್ (ಸುಮಾರು 18,864 ಕೋಟಿ ರೂಪಾಯಿ) ಮೊತ್ತವನ್ನು ತಲುಪಿದೆ. ಅದು ಸುಮಾರು 19 ಶೇಕಡ ಸಿಎಜಿಆರ್ನೊಂದಿಗೆ ನಾಲ್ಕು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಈ ಪೈಕಿ ಕ್ರಿಕೆಟ್ 89 ಶೇಕಡ ಪಾಲು ಹೊಂದಿದೆ. ಅದು 2024ರಲ್ಲಿ ಇದ್ದ 85 ಶೇಕಡಕ್ಕಿಂತ ಈಗ ಮತ್ತಷ್ಟು ಹೆಚ್ಚಾಗಿದೆ. ಉದಯೋನ್ಮುಖ ಕ್ರೀಡೆಗಳ ಪಾಲು 11 ಶೇಕಡಕ್ಕೆ ಇಳಿದಿದೆ. ಕ್ರಿಕೆಟ್ ಒಂದೇ 16,704 ಕೋಟಿ ರೂ. ವ್ಯವಹಾರವನ್ನು ದಾಖಲಿಸಿದೆ. ಡಬ್ಲ್ಯುಪಿಪಿ ಮೀಡಿಯದ ‘ಸ್ಪೋರ್ಟಿಂಗ್ ನೇಶನ್: ಬಿಲ್ಡಿಂಗ್ ಎ ಲೆಗಸಿ’ ಎಂಬ ಹೆಸರಿನ ವರದಿಯ ಪ್ರಕಾರ, ಆದಾಯದ ಮೂರು ಪ್ರಧಾನ ಮೂಲಗಳನ್ನು ಕ್ರೀಡಾ ಮೌಲ್ಯಮಾಪನದಲ್ಲಿ ಪರಿಗಣಿಸಲಾಗಿದೆ. ಅವುಗಳೆಂದರೆ- ಪ್ರಾಯೋಜಕತ್ವ, ಅತ್ಲೀಟ್ ಜಾಹೀರಾತುಗಳು ಮತ್ತು ಜಾಹೀರಾತು ವೆಚ್ಚಗಳು. ‘‘ಇಂದು ಕ್ರೀಡೆಯು ಸಂಸ್ಕೃತಿ ಮತ್ತು ವಾಣಿಜ್ಯ ಸಂಧಿಸುವ ಸ್ಥಳದಲ್ಲಿ ಕುಳಿತುಕೊಂಡಿದೆ. ಬ್ರಾಂಡ್ಗಳು ಕೇವಲ ಪ್ರಾಯೋಜಕರಾಗದೆ, ದಿನೇ ದಿನೇ ಕ್ರೀಡೆಯ ಭಾಗವಾಗುತ್ತಾ ಸಾಗಿದೆ. ಆಳವಾಗಿ ಮಿಳಿತಗೊಂಡಿರುವ ಭಾಗೀದಾರಿಕೆಗಳು ಅಭಿಮಾನಿಗಳ ಪಾಲ್ಗೊಳ್ಳುವಿಕೆ ಮತ್ತು ವಾಣಿಜ್ಯ ಪರಿಣಾಮ ಎರಡನ್ನೂ ಹೆಚ್ಚಿಸುತ್ತವೆ ಎನ್ನುವುದನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಂತಹ ಲೀಗ್ಗಳ ವಿಕಾಸವು ತೋರಿಸಿಕೊಟ್ಟಿದೆ’’ ಎಂದು ಡಬ್ಲ್ಯುಪಿಪಿ ಮೀಡಿಯ ಸೌತ್ ಏಶ್ಯದ ಕ್ರೀಡೆ ಮತ್ತು ಮನರಂಜನೆ ವಿಭಾಗದ ಕಂಟೆಂಟ್ ಆಡಳಿತ ನಿರ್ದೇಶಕ ವಿನೀತ್ ಕಾರ್ಣಿಕ್ ಹೇಳುತ್ತಾರೆ.
100ಕ್ಕೂ ಅಧಿಕ ಸೈನಿಕರಿದ್ದ ಕೊಲಂಬಿಯಾದ ಮಿಲಿಟರಿ ವಿಮಾನ ಪತನ
ಪೆರು: 100ಕ್ಕೂ ಅಧಿಕ ಸೈನಿಕರಿದ್ದ ಕೊಲಂಬಿಯಾದ ಮಿಲಿಟರಿ ವಿಮಾನವೊಂದು ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ದಕ್ಷಿಣ ಅಮೆಜಾನ್ ಪ್ರದೇಶದಲ್ಲಿ ಸೋಮವಾರ ಪತನಗೊಂಡಿದೆ ಎಂದು ವರದಿಯಾಗಿದೆ. ವಾಯುಪಡೆಯ ಹರ್ಕ್ಯುಲಸ್ ಸಿ -130 ವಿಮಾನದಲ್ಲಿ 100ಕ್ಕೂ ಅಧಿಕ ಸೈನಿಕರು ಪ್ರಯಾಣಿಸುತ್ತಿದ್ದರು. ಪೆರುವಿನ ಗಡಿಗೆ ಸಮೀಪದ ಪೋರ್ಟೊ ಲೆಗುಜಾಮೊ ಪಟ್ಟಣದ ಬಳಿ ವಿಮಾನ ಪತನಗೊಂಡಿದೆ ಎಂದು ಕೊಲಂಬಿಯಾದ ರಕ್ಷಣಾ ಸಚಿವಾಲಯ ಹೇಳಿದೆ. ಈ ಅಪಘಾತದಲ್ಲಿ ಹಲವು ಸೈನಿಕರು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.
Budget Session 2026 | 14,767.89 ಕೋಟಿ ರೂ., ಪೂರಕ ಅಂದಾಜು ಮಂಡನೆ
ಬೆಂಗಳೂರು : ರಾಜ್ಯ ಸರಕಾರವು 2025-26ನೆ ಸಾಲಿನ ಅಂತಿಮ ಕಂತಿನ 14,767.89 ಕೋಟಿ ರೂ. ಮೊತ್ತದ ಪೂರಕ ಅಂದಾಜು ಅನ್ನು ಮಂಡನೆ ಮಾಡಿದೆ. ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ಸಚಿವ ಕೃಷ್ಣ ಭೈರೇಗೌಡ ಪೂರಕ ಅಂದಾಜನ್ನು ಮಂಡಿಸಿದರು. ಮೂರನೇ ಮತ್ತು ಅಂತಿಮ ಕಂತಿನ ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ 14,767.89 ಕೋಟಿ ರೂ.ಗಳಲ್ಲಿ 7.41 ಕೋಟಿ ರೂ.ಗಳು ಪ್ರಭೃತ ವೆಚ್ಚ ಮತ್ತು 14,760.49 ಕೋಟಿ ರೂ.ಗಳು ಪುರಸ್ಕೃತ ವೆಚ್ಚ ಸೇರಿರುತ್ತವೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಮೀಸಲು ನಿಧಿಯಿಂದ ಭರಿಸಲಾಗುವ 911.11 ಕೋಟಿ ರೂ.ಗಳು ಪುರಸ್ಕೃತ ವಾಗಬೇಕಾಗಿದ್ದು, ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 13,856.79 ಕೋಟಿ ರೂ. ಗಳು. ಇದರಲ್ಲಿ 5,735.80 ಕೋಟಿ ರೂ.ಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದ್ದರಿಂದ ಹೊರ ಹೋಗುವ ನಿವ್ವಳ ನಗದು ಮೊತ್ತ 8,120.99 ಕೋಟಿ ರೂ. ಗಳಾಗಿರುತ್ತವೆ. ಈ ಮೊತ್ತವನ್ನು ರಾಜ್ಯದ ರಾಜಸ್ವ ಸ್ವೀಕೃತಿಗಳಿಂದ ಮತ್ತು ಅಗತ್ಯವಿದ್ದಲ್ಲಿ, ಸಂಭವನೀಯ ಉಳಿತಾಯ ಹಾಗೂ ಸಾಲದ ಮೂಲಕ ಭರಿಸಲಾಗುತ್ತದೆ ಎಂದು ತಿಳಿಸಿದೆ. ಇಲಾಖೆಗಳಿಗೆ ಎಷ್ಟು ಪೂರಕ ಅಂದಾಜು : ಸಮಾಜ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 478.12 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 221.65 ಕೋಟಿ ರೂ. ಪೂರಕ ಅಂದಾಜು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕ 106.70 ಕೋಟಿ ರೂ. ಪೂರಕ ಅಂದಾಜು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರಾಜಸ್ವ ಲೆಕ್ಕ 112.16 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 1.50 ಕೋಟಿ ರೂ. ಪೂರಕ ಅಂದಾಜು. ಕಂದಾಯ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 735.97 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 125 ಕೋಟಿ ರೂ. ಪೂರಕ ಅಂದಾಜು. ಶಿಕ್ಷಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 33.55 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 34.74 ಕೋಟಿ ರೂ. ಪೂರಕ ಅಂದಾಜು. ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 663.91 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 311.59 ಕೋಟಿ ರೂ. ಪೂರಕ ಅಂದಾಜು. ಲೋಕೋಪಯೋಗಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 433 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 100 ಕೋಟಿ ರೂ. ಪೂರಕ ಅಂದಾಜು. ನೀರಾವರಿ ಇಲಾಖೆಗೆ ಬಂಡವಾಳ ಲೆಕ್ಕದಲ್ಲಿ 1,226 ಕೋಟಿ ರೂ. ಪೂರಕ ಅಂದಾಜು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 406.53 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 24.74 ಕೋಟಿ ರೂ. ಪೂರಕ ಅಂದಾಜು. ಇಂಧನ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 5,760 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 4.47 ಕೋಟಿ ರೂ. ಪೂರಕ ಅಂದಾಜು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 207.33 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 208.33 ಕೋಟಿ ರೂ. ಪೂರಕ ಅಂದಾಜು ಎಂದು ಉಲ್ಲೇಖಿಸಲಾಗಿದೆ. ಉಪ ಚುನಾವಣೆಗೆಗಳಿಗೆ ಅನುದಾನ: 2019, 2021ರ ಉಪಚುನಾವಣೆಗಳ ಬಾಕಿ ಬಿಲ್ ಹಾಗೂ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆಗಳಿಗೆ ಹೆಚ್ಚುವರಿ ವೆಚ್ಚ, ರಾಜ್ಯಪಾಲರು, ಮುಖ್ಯಮಂತ್ರಿ ಅವರ ಹೆಲಿಕಾಪ್ಟರ್, ಏರ್ ಕ್ರಾಫ್ಟ್ ವೆಚ್ಚ 15 ಕೋಟಿ ರೂ. ಪೂರಕ ಅಂದಾಜು ಎಂದು ತಿಳಿಸಲಾಗಿದೆ. *ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಹೊಸ ವಾಹನ ಖರೀದಿಗೆ 1.25 ಕೋಟಿ ರೂ. ಪೂರಕ ಅಂದಾಜು. *ರಸ್ತೆ ಸಾರಿಗೆ ಸಂಸ್ಥೆಯ ಬಾಕಿ ಮೋಟಾರು ವಾಹನ ತೆರಿಗೆ ಪಾವತಿಗೆ 676 ಕೋಟಿ ರೂ. ಪೂರಕ ಅಂದಾಜು. *ಹಾವೇರಿ, ಹಾಸನ, ವಿಜಯನಗರ ಜಿಲ್ಲೆಗಳಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಗಳಿಗೆ 16.30 ಕೋಟಿ ರೂ. ವೆಚ್ಚ. * ವಯನಾಡು ಭೂಕುಸಿತ ಸಂತ್ರಸ್ತರ ಪುನರ್ವಸತಿಗೆ 10 ಕೋಟಿ ರೂ. ವೆಚ್ಚ. *ರಾಜ್ಯದ ದೇವಸ್ಥಾನ, ಮಠ, ಟ್ರಸ್ಟ್ ಗಳ ಅಭಿವೃದ್ಧಿಗೆ 15 ಕೋಟಿ ರೂ. ಪೂರಕ ಅಂದಾಜು. *ದಾವೋಸ್ ಶೃಂಗಸಭೆಗೆ ರಾಜ್ಯದ ನಿಯೋಗದ ಪ್ರವಾಸ ವೆಚ್ಚ 10 ಕೋಟಿ ರೂ. ಪೂರಕ ಅಂದಾಜು. *ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶಕ್ಕೆ 25 ಕೋಟಿ ರೂ. ಹೆಚ್ಚುವರಿ ಅಂದಾಜು. *ಕೈಗಾರಿಕಾ ಘಟಕಗಳಿಗೆ ಸಹಾಯಧನ 335 ಕೋಟಿ ರೂ. ಪೂರಕ ಅಂದಾಜು. *ಯುವನಿಧಿ ಗ್ಯಾರಂಟಿಗೆ 25 ಕೋಟಿ ರೂ. ಪೂರಕ ಅಂದಾಜು. *ಬೆಳಗಾವಿ ಅಧಿವೇಶನಕ್ಕೆ 5.1 ಕೋಟಿ ರೂ.ಹೆಚ್ಚುವರಿ ವೆಚ್ಚ. *ರಾಜ್ಯದ ವಿವಿಧ ನೀರಾವರಿ ನಿಗಮಗಳ ಬಾಕಿ ಬಿಲ್ಗಳ ಪಾವತಿಗೆ 1,025 ಕೋಟಿ ರೂ. ಪೂರಕ ಅಂದಾಜು. *ಗೃಹಜ್ಯೋತಿ ಗ್ಯಾರಂಟಿ ಬಾಕಿ ಪಾವತಿಗೆ 159 ಕೋಟಿ ರೂ. ಪೂರಕ ಅಂದಾಜು.
ಪಾಕಿಸ್ತಾನದ PSL ಗೆ ಉಗ್ರರ ಬೆದರಿಕೆ: ವಿದೇಶಿ ಆಟಗಾರರಿಗೆ ʼತಕ್ಷಣವೇ ಹಿಂದೆ ಸರಿಯಲು’ ಸೂಚನೆ
ಕರಾಚಿ: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ(ಟಿಟಿಪಿ)ಟಿ-20 ಪಂದ್ಯಾವಳಿಯಲ್ಲಿ ವಿದೇಶೀ ಆಟಗಾರರು ಭಾಗವಹಿಸುವುದರ ವಿರುದ್ಧ ಬೆದರಿಕೆ ಒಡ್ಡಿದ ನಂತರ ಮಾರ್ಚ್ 26ರಿಂದ ಆರಂಭವಾಗಬೇಕಾಗಿದ್ದ 11ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಈ ಉಗ್ರ ಸಂಘಟನೆಯು ಪಂದ್ಯಾವಳಿಯಿಂದ ಹಿಂದೆ ಸರಿಯುವಂತೆ ವಿದೇಶೀ ಆಟಗಾರರಿಗೆ ಎಚ್ಚರಿಕೆ ನೀಡಿದ್ದು, ಹೀಗಾಗಿ ಭದ್ರತೆಯ ಕುರಿತು ಕಳವಳ ವ್ಯಕ್ತವಾಗಿದೆ. ಪಶ್ಚಿಮ ಏಶ್ಯದ ಯುದ್ಧದ ಸನ್ನಿವೇಶ ಹಾಗೂ ಭದ್ರತೆಗೆ ಸಂಬಂಧಿಸಿದ ವಿಚಾರಗಳಿಗೆ ಕೇವಲ ಎರಡು ತಾಣಗಳಾದ ಕರಾಚಿ ಹಾಗೂ ಲಾಹೋರ್ ಗೆ ಸೀಮಿತಗೊಳಿಸಿ ಪ್ರೇಕ್ಷಕರಿಗೆ ಪ್ರವೇಶವನ್ನು ನೀಡದೆ ಪಿಎಸ್ಎಲ್ ಟೂರ್ನಿ ನಡೆಸಲು ಪಿಸಿಬಿ ನಿರ್ಧರಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ. ಈ ವರ್ಷದ ಪಿಎಸ್ಎಲ್ ನಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮೊಯಿನ್ ಅಲಿ, ಡೆವೊನ್ ಕಾನ್ವೆ ಹಾಗೂ ಆ್ಯಡಮ್ ಝಂಪಾ ಸಹಿತ ಹಲವು ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ. ಈ ಎಲ್ಲರ ಭಾಗವಹಿಸುವಿಕೆಯು ಲೀಗ್ ಗೆ ಅಂತರ್ರಾಷ್ಟ್ರೀಯ ಆಟಗಾರರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿದೆ. ಸ್ಟೀವ್ ಸ್ಮಿತ್ ಅವರು ಮುಲ್ತಾನ್ ಸುಲ್ತಾನ್ ಫ್ರಾಂಚೈಸಿಗೆ ಸೇರ್ಪಡೆಯಾಗಲು ಸೋಮವಾರ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ಬಿಗ್ ಬ್ಯಾಶ್ ಲೀಗ್ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ಮಿತ್ ಇದೇ ಮೊದಲ ಬಾರಿ ಪಿಎಸ್ಎಲ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗಿದ್ದರು. ಇಂದನ ಬಿಕ್ಕಟ್ಟನ್ನು ನಿವಾರಿಯಿಸಲು ಪ್ರೇಕ್ಷಕರಿಲ್ಲದೆ ಕೇವಲ ಎರಡು ತಾಣಗಳಲ್ಲಿ ಲೀಗ್ ಆಡಲು ನಿರ್ಧರಿಸಲಾಗಿದೆ ಎಂದು ಪಿಸಿಬಿ ಮುಖ್ಯಸ್ಥ ಮುಹ್ಸಿನ್ ನಖ್ವಿ ರವಿವಾರ ದೃಢಪಡಿಸಿದ್ದಾರೆ. ಪಿಎಸ್ಎಲ್ ಟೂರ್ನಿಯು ಮಾರ್ಚ್ 26ರಿಂದ ಮೇ 3 ರ ತನಕ ನಿಗದಿಯಾಗಿತ್ತು.
ತಲೆಮೊಗರು| ಮಸೀದಿಯ ವಿಚಾರಕ್ಕೆ ಸಂಬಂಧಿಸಿ ಗುಂಪು ಘರ್ಷಣೆ: ಪ್ರಕರಣ ದಾಖಲು
ಬಂಟ್ವಾಳ : ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಗುಂಪು ಘರ್ಷಣೆ ನಡೆದಿದ್ದು, ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ನವಾಝ್ (42) ಎಂಬವರು ನೀಡಿದ ದೂರಿನಂತೆ ಮಾರ್ಚ್ 22 ರಂದು ಬೆಳಿಗ್ಗೆ ಇವರು ಮತ್ತು ಅವರ ಸಂಬಂಧಿ ದಾವೂದ್ ಜೊತೆಯಲ್ಲಿ ತಲೆಮೊಗರು ಮಸೀದಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಕತ್ ಎಂಬಾತನ ಅಂಗಡಿಯ ಬಳಿ ಆರೋಪಿತರಾದ ಶೌಕತ್, ಇಸಾಕ್, ಶಫೀಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಹಾಗೂ ನಿಝಾಲ್ ಎಂಬವರು ಗುಂಪು ಕಟ್ಟಿಕೊಂಡು ನಿಂತಿದ್ದು, ನವಾಝ್ ಹಾಗೂ ದಾವೂದ್ ಸ್ಥಳಕ್ಕೆ ಬಂದಾಗ ಆರೋಪಿಗಳು ಮಸೀದಿಯ ವಿಚಾರದಲ್ಲಿ ತಕರಾರು ತೆಗೆದು, ಅವಾಚ್ಯವಾಗಿ ನಿಂದಿಸಿ, ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ನವಾಝ್ ಹಾಗೂ ದಾವೂದ್ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ನೇ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ಗಫೂರ್ (48) ಎಂಬವರು ನೀಡಿದ ದೂರಿನಂತೆ, ಆರೋಪಿ ಗಳಾದ ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್, ಅಶ್ರಫ್ ಸಾಹೇಬ್ ಎಂಬವರು ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿ ಗಫೂರ್ ಅವರನ್ನು ತಡೆದು ನಿಲ್ಲಿಸಿ ಬೈದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದ್ದು, ಹಲ್ಲೆಯಿಂದ ಗಾಯಗೊಂಡ ಗಫೂರ್ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಘಟನೆಗೆ ಸಂಬಂಧಿಸಿದಂತೆ 3 ನೇ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಶೌಕತ್ ಆಲಿ (40) ಎಂಬವರು ನೀಡಿದ ದೂರಿನಂತೆ ಶೌಕತ್ ಅವರು ಮಾ. 22 ರಂದು ಬೆಳಿಗ್ಗೆ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ ಆರೋಪಿಗಳಾದ ದಾವೂದ್, ಜುಬೈರ್, ಸೈದುದ್ದೀನ್, ನವಾಝ್, ಗಫೂರ್, ಶರೀಫ್, ಆಶಿಕ್ ಎಂಬವರು ಅಂಗಡಿಗೆ ಬಂದು ಮಸೀದಿ ವಿಚಾರದಲ್ಲಿ ತಕರಾರು ತೆಗೆದು ಶೌಕತ್ ಅವರ ಸಂಬಂಧಿ ರಬಿಯತ್ ಅವರಿಗೆ ಹಲ್ಲೆ ನಡೆಸಿರುತ್ತಾರೆ ಎಂದು ದೂರಲಾಗಿದೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಸಫಾನಾ, ನಿಜಾಲ್, ಇಸಾಕ್, ಅಶ್ರಫ್ ಎಂಬವರಿಗೆ ಹಾಗೂ ಶೌಕತ್ ಅವರಿಗೂ ಅವ್ಯಾಚವಾಗಿ ಬೈದು ತಲವಾರಿನಿಂದ ಹಲ್ಲೆಗೆ ಯತ್ನಿಸಿರುತ್ತಾರೆ ಎನ್ನಲಾಗಿದ್ದು, ಈ ವೇಳೆ ಗಲಾಟೆ ಬಿಡಿಸಲು ಬಂದ ಸಂಬಂಧಿ ಆಯಿಷಾ ಎಂಬವರಿಗೆ ಆರೋಪಿಗಳು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇತ್ತಂಡಗಳ ಪೈಕಿ ಗಾಯಾಳುಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯದ ಗಾಯಗಳಾಗಿರುವುದಿಲ್ಲ ಎಂದಿರುವ ಪೊಲೀಸರು ಗಾಯಾಳುಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪಶ್ಚಿಮ ಬಂಗಾಳ: ಚುನಾವಣಾ ವೀಕ್ಷಕರಾಗಿ 294 ಐಎಎಸ್ ಅಧಿಕಾರಿಗಳ ನಿಯೋಜನೆ
ಕೋಲ್ಕತಾ: ಅಭೂತಪೂರ್ವ ಕ್ರಮವೊಂದರಲ್ಲಿ, ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ 294 ಚುನಾವಣಾ ವೀಕ್ಷಕರನ್ನು ನಿಯೋಜಿಸಿದೆ. ಇದು ಈ ವರ್ಷ ಚುನಾವಣೆ ನಡೆಯಲಿರುವ ಯಾವುದೇ ರಾಜ್ಯದಲ್ಲಿ ನಿಯೋಜಿಸಲಾಗಿರುವ ಚುನಾವಣಾ ವೀಕ್ಷಕರ ಅತ್ಯಧಿಕ ಸಂಖ್ಯೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲ್ಪಟ್ಟಿರುವ ಎಲ್ಲಾ ಚುನಾವಣಾ ವೀಕ್ಷಕರು ಹೊರ ರಾಜ್ಯಗಳ ಐಎಎಸ್ ಅಧಿಕಾರಿಗಳಾಗಿದ್ದಾರೆ. ಅವರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ತೀವ್ರ ನಿಗಾ ಇಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಯು ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಲಿತಾಂಶವು ಮೇ 4ರಂದು ಹೊರಬೀಳಲಿದೆ. ರಾಜ್ಯಾದ್ಯಂತ 80,600 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ‘‘ಸಾಮಾನ್ಯವಾಗಿ ಚುನಾವಣಾ ವೀಕ್ಷಕರೊಬ್ಬರು ಒಂದಕ್ಕಿಂತ ಹೆಚ್ಚು ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳ ಮೇಲೆ ನಿಗಾ ಇಡುತ್ತಾರೆ. ಆದರೆ, ಈ ಬಾರಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಹಿನ್ನೆಲೆಯಲ್ಲಿ ಇದು ಭಿನ್ನವಾಗಿದೆ. ಎಸ್ಐಆರ್ ಬಳಿಕ, ರಾಜ್ಯ ಮತದಾರರ ಪಟ್ಟಿಯಿಂದ ಸುಮಾರು 64 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ’’ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು.
ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಳ ಮೇಲಣ ತೆರಿಗೆ ವಿಧೇಯಕ ಅಂಗೀಕಾರ
ಬೆಂಗಳೂರು : 2026ನೆ ಸಾಲಿನ ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ( ತಿದ್ದುಪಡಿ)ವಿಧೇಯಕವನ್ನು ಸೋಮವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಈ ವಿಧೇಯಕವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದರು. ಈ ವಿಧೇಯಕವು ಜನಪರವಾಗಿರುವ ಹಿನ್ನೆಲೆಯಲ್ಲಿ ತಮ್ಮ ಬೆಂಬಲ ಇರುವುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ ಕಾರಣ ಯಾವುದೇ ಚರ್ಚೆ ಇಲ್ಲದೆ ಈ ತಿದ್ದುಪಡಿ ವಿಧೇಯಕವು ಅನುಮೋದನೆಗೊಂಡಿತು. ಈ ವಿಧೇಯಕದ ಕುರಿತು ವಿವರಣೆ ನೀಡಿದ ಕೃಷ್ಣ ಬೈರೇಗೌಡ, ಇದು ಅತ್ಯಂತ ಸರಳ ತಿದ್ದುಪಡಿಯಾಗಿದ್ದು, ವೃತ್ತಿ ತೆರಿಗೆಯನ್ನು ವಿಧಿಸಬೇಕೆಂದು ಸಂವಿಧಾನದಲ್ಲೆ ಅಡಕವಾಗಿದೆ. ಯಾರು ತಿಂಗಳಿಗೆ 25 ಸಾವಿರ ರೂ.ಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವರೋ ಅವರು ವರ್ಷಕ್ಕೆ 2500 ರೂ. ತೆರಿಗೆಯನ್ನು ಕಟ್ಟಬೇಕು. ಅವರು ತೆರಿಗೆ ಕಟ್ಟುವ ಜೊತೆಗೆ ರಿಟನ್ಸ್ ಫೈಲ್ ಮಾಡಬೇಕಾಗಿತ್ತು. ಈ ತಿದ್ದುಪಡಿಯಲ್ಲಿ ರಿಟನ್ಸ್ ಫೈಲ್ ಮಾಡುವುದನ್ನು ತೆಗೆದು ಹಾಕಲಾಗಿದೆ. ಇದರಿಂದ ಸಾರ್ವಜನಿಕರು ರಿಟನ್ಸ್ ಫೈಲ್ ಮಾಡಲು ಸಿ.ಎ.ಅವರ ಹತ್ತಿರ ಹೋಗುವ ಅವಶ್ಯಕತೆ ಇರುವುದಿಲ್ಲ. ಇದರಿಂದ ನಮ್ಮ ಸಿಬ್ಬಂದಿಗಳ ಸಮಯವೂ ಉಳಿಯಲಿದೆ ಎಂದು ಅವರು ಹೇಳಿದರು. ಹಾಗೆಯೇ ಹಿರಿಯ ನಾಗರಿಕರು, ಸೈನ್ಯೆಯಲ್ಲಿರುವವರು ಮತ್ತು ವಿಕಲಚೇತನರಿಗೆ ತೆರಿಗೆಯಿಂದ ವಿನಾಯತಿ ನೀಡಲಾಗಿದ್ದರೂ, ಅವರು ಕೂಡ ‘ನಿಲ್ ರಿಟನ್ಸ್ ಫೈಲ್’ ಮಾಡಬೇಕಿತ್ತು. ಈ ತಿದ್ದುಪಡಿಯಿಂದ ಅವರು ಕೂಡ ರಿಟನ್ಸ್ ಫೈಲ್ ಮಾಡುವಂತಿಲ್ಲ. ಇದರಿಂದ ಸಾರ್ವಜನಿಕರ ಮತ್ತು ನಮ್ಮ ಸಿಬ್ಬಂದಿಯ ಸಮಯ ವ್ಯರ್ಥವಾಗುವುದಿಲ್ಲ. ಈಗಾಗಲೇ ತಂತ್ರಜ್ಞಾನದಲ್ಲಿ ಇದನ್ನು ಅಳವಡಿಸಲಾಗಿದ್ದು, ಕಾನೂನು ಮೂಲಕವು ಅಳವಡಿಸಿಕೊಳ್ಳಬೇಕಾಗಿರುವುದರಿಂದ ಈ ತಿದ್ದುಪಡಿ ವಿಧೇಯಕವನ್ನು ತರಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
‘ಮಂಗಳೂರು’ ಪರವಾನಗಿ ಪಡೆದು ಬಸ್ ಓಡಿಸದಿದ್ದರೆ ರದ್ದು: ರಾಮಲಿಂಗಾರೆಡ್ಡಿ
ಬೆಂಗಳೂರು : ಮಂಗಳೂರಿನಲ್ಲಿ ಖಾಸಗಿ ಬಸ್ಸುಗಳನ್ನು ಓಡಿಸಲು ಪರವಾನಗಿ ಪಡೆದರೂ ಬಸ್ ಓಡಿಸದಿದ್ದರೆ ಅಂತಹವರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರು ನಗರ ವ್ಯಾಪ್ತಿಯಲ್ಲಿ 364 ಖಾಸಗಿ ಬಸ್ಸುಗಳು ಮತ್ತು 45 ಸರಕಾರಿ ಬಸ್ಸುಗಳು ಸಂಚರಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ಖಾಸಗಿ ಬಸ್ಗಳಿಗೆ ಹೊಸದಾಗಿ ಯಾವುದೆ ಪರ್ಮಿಟ್ ನೀಡಿಲ್ಲ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ಖಾಸಗಿಯವರು ಪರ್ಮಿಟ್ ಪಡೆದುಕೊಂಡಿದ್ದರೂ ಬಸ್ಸುಗಳನ್ನು ಓಡಿಸದಿದ್ದರೆ ಅಂತಹವರ ಪರ್ಮಿಟ್ ರದ್ದು ಮಾಡಿ, ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಿ ಎಂದು ಹೇಳಿದರು. ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಸಹಮತ ವ್ಯಕ್ತಪಡಿಸಿದರು. ಮಂಗಳೂರು ನಗರಕ್ಕೆ ಎಲೆಕ್ಟ್ರಿಕ್ ಬಸ್ಸುಗಳು ಬರುತ್ತಿವೆ. ಅಲ್ಲದೆ, ಕಂದಾಯ ಇಲಾಖೆಯವರು ಐದು ಎಕರೆ ಜಾಗ ನೀಡಿದ್ದು ಬಸ್ ಡಿಪೋ ಅನ್ನು ನಿರ್ಮಾಣ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಆರ್ಟಿಐ ಅರ್ಜಿ ತಿರಸ್ಕಾರ ದರ 2024-25ರಲ್ಲಿ ಶೇ. 3.26ಕ್ಕೆ ಇಳಿಕೆ; ರಾಜ್ಯಸಭೆಗೆ ಕೇಂದ್ರ ಸರಕಾರ ಮಾಹಿತಿ
ಹೊಸದಿಲ್ಲಿ: ಮಾಹಿತಿ ಹಕ್ಕು (ಆರ್ಟಿಐ) ಅರ್ಜಿ ತಿರಸ್ಕಾರ ದರವು 2013-14ರಲ್ಲಿ ಶೇ. 7.21 ಇದ್ದುದು, 2024-25ರಲ್ಲಿ ಶೇ. 3.26ಕ್ಕೆ ಇಳಿದಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ಮಾಹಿತಿಯನ್ನು ಕೇಂದ್ರದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ರಾಜ್ಯ ಸಭೆಗೆ ತಿಳಿಸಿದ್ದಾರೆ. ಕೇಂದ್ರ ಸರಕಾರದ ಇಲಾಖೆ/ಸಂಸ್ಥೆಗಳಿಗೆ ಸಂಬಂಧಿಸಿದ ಆರ್ಟಿಐ ಅರ್ಜಿಗಳ ಸ್ವೀಕಾರ, ಪ್ರತಿಕ್ರಿಯೆ, ಕಾರಣದೊಂದಿಗೆ ತಿರಸ್ಕಾರದ ಕುರಿತ ಆಯಾ ವರ್ಷಗಳ ದತ್ತಾಂಶ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ವಾರ್ಷಿಕ ವರದಿಯಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ. ಆರ್ಟಿಐ ವ್ಯವಸ್ಥೆಯ ಪರಿಣಾಮಕಾರಿತ್ವದ ಅಂದಾಜು ಹಾಗೂ ಪುನರ್ ಪರಿಶೀಲನೆ ನಿರಂತರ ನಡೆಯುವ ಪ್ರಕ್ರಿಯೆ ಎಂದು ಸಿಂಗ್ ಹೇಳಿದ್ದಾರೆ. ಸಂಬಂಧಿತ ಸರಕಾರಿ ಇಲಾಖೆ/ಸಂಸ್ಥೆಗಳಿಂದ ನಡೆಯುವ ಪೂರ್ವಭಾವಿ/ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆಗಳ ತೃತೀಯ ಪಕ್ಷದ ಪಾರದರ್ಶಕ ಲೆಕ್ಕ ಪರಿಶೋಧನೆ ನಡೆಸುವ ಕುರಿತು ಸರಕಾರ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿದಾರರಿಗೆ ಅಂತಿಮ ಅವಕಾಶ; ಮತ್ತೂ ಕಟ್ಟದೇ ಹೋದಲ್ಲಿ ಜಿಬಿಎನಿಂದ ಮುಟ್ಟುಗೋಲು ಖಚಿತ
ಆಸ್ತಿ ತೆರಿಗೆ ಬಾಕಿದಾರರಿಗೆ ಬಾಕಿ ಪಾವತಿಸಲುಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಅಂತಿಮವಾಗಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲೂ ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಮಾರಾಟವಾಗದ ಆಸ್ತಿಗಳನ್ನು ಪಾಲಿಕೆಯೇ ಮಾರ್ಗದರ್ಶಕ ಮೌಲ್ಯಕ್ಕೆ ಖರೀದಿಸಲಿದೆ. ಮಾರಾಟದಿಂದ ಬಂದ ಮೊತ್ತದಿಂದ ತೆರಿಗೆ ಮತ್ತು ದಂಡದ ಮೊತ್ತವನ್ನು ಕಡಿದುಕೊಂಡು ಉಳಿದ ಹಣವನ್ನು ಮೂಲ ಮಾಲೀಕರಿಗೆ ನೀಡಲಾಗುವುದು. ತೆರಿಗೆ ವಸೂಲಾತಿಯಲ್ಲಿ ಶಿಸ್ತು ತರಲು ಮತ್ತು ನಗರದ ಅಭಿವೃದ್ಧಿಗೆ ಆದಾಯ ಹೆಚ್ಚಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಬಿಎ ತಿಳಿಸಿದೆ.
ಶಹಾಪುರ | ರಾಜ್ಯ ಕೃಷಿ-ಗ್ರಾಮೀಣ ಕಾರ್ಮಿಕರ 9ನೇ ಸಮ್ಮೇಳನದ ಲಾಂಛನ ಬಿಡುಗಡೆ
ಶಹಾಪುರ: ಎ.26ರಿಂದ 28ರವರೆಗೆ ನಗರದಲ್ಲಿ ನಡೆಯಲಿರುವ ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಮಟ್ಟದ 9ನೇ ಸಮ್ಮೇಳನದ ಲಾಂಛನವನ್ನು ಭಾನುವಾರ ಸ್ವಾಗತ ಸಮಿತಿ ಅಧ್ಯಕ್ಷ ಹಣಮೇಗೌಡ ಬಿರನಕಲ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಕೊರತೆಯಿಂದ ಕೃಷಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆ ಲಭ್ಯವಿಲ್ಲದೆ ರೈತರು ಕಂಗಾಲಾಗುತ್ತಿದ್ದಾರೆ. ರೈತ ಮತ್ತು ಕಾರ್ಮಿಕ ವರ್ಗದ ಹಿತ ಕಾಯುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತುರ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪ್ರೇಮಿ ತಿಮ್ಮಯ್ಯ ಪುರ್ಲೆ ಮಾತನಾಡಿ, ಬಡವರಿಗೆ ನೀಡುವ ಯೋಜನೆಗಳನ್ನು ಟೀಕಿಸುವವರು ಬಡ ಜನತೆಯ ವಿರೋಧಿಗಳೇ ಆಗಿದ್ದಾರೆ ಎಂದು ಟೀಕಿಸಿದರು. ಕಾರ್ಮಿಕರ ಹಿತಕ್ಕಾಗಿ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ತಕ್ಷಣ ರಚಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಹಿರಿಯ ಮುಖಂಡರಾದ ಚೆನ್ನಪ್ಪ ಆನೆಗುಂದಿ, ಆರ್.ಚೆನ್ನಬಸ್ಸು, ವನದುರ್ಗ ಗಿರೆಯಪ್ಪ ಗೌಡ ಹಾಗೂ ದಾವಲಸಾಬ್ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸರಕಾರಿ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಪಂಜಾಬ್ನ ಮಾಜಿ ಸಚಿವ ಲಾಲ್ ಸಿಂಗ್ ಭುಲ್ಲರ್ ಬಂಧನ
ಚಂಡಿಗಢ: ಪಂಜಾಬ್ ರಾಜ್ಯ ಗೋದಾಮು ನಿಗಮ (ಪಿಎಸ್ಡಬ್ಲ್ಯುಸಿ)ದ ಜಿಲ್ಲಾ ಮ್ಯಾನೇಜರ್ ಗಂಗನ್ದೀಪ್ ಸಿಂಗ್ ರಾಂಧವ ಆತ್ಮಹತ್ಯೆ ಆರೋಪದ ಕುರಿತ ಪ್ರಕರಣದಲ್ಲಿ ಪಂಜಾಬ್ನ ಮಾಜಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ನನ್ನು ಪಂಜಾಬ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಬಂಧನವನ್ನು ದೃಢಪಡಿಸಿರುವ ಅಮೃತಸರದ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲರ್, ಮಾಜಿ ಸಚಿವ ಲಾಲ್ ಜಿತ್ ಸಿಂಗ್ ಭುಲ್ಲರ್ ಅವರನ್ನು ಮಂಡಿ ಗೋಬಿಂದಗಢದಿಂದ ಬಂಧಿಸಲಾಗಿದೆ. ಅವರ ಆಪ್ತ ಸಹಾಯಕ ದಿಲ್ಬಾಗ್ ಸಿಂಗ್ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ಬಂಧನಕ್ಕಿಂತ ಮುನ್ನ ಭುಲ್ಲರ್ ಫೇಸ್ಬುಕ್ ಪೋಸ್ಟ್ನಲ್ಲಿ, ತಾನು ಸ್ವಯಂಪ್ರೇರಿತವಾಗಿ ಶರಣಾಗತನಾಗಿದ್ದೇನೆ ಎಂದಿದ್ದಾರೆ. ತಾನು ಪರಾರಿಯಾಗಿದ್ದೇನೆ ಎಂಬ ವದಂತಿಯನ್ನು ಅವರು ನಿರಾಕರಿಸಿದ್ದಾರೆ. ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ‘ಎಕ್ಸ್’ನಲ್ಲಿ, ‘‘ನನಗೆ ಸಂಪೂರ್ಣ ಪಂಜಾಬ್ ಒಂದು ಕುಟುಂಬ. ಪಂಜಾಬ್ನಲ್ಲಿ ಯಾರೇ ಕಾನೂನು ಉಲ್ಲಂಘಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಆತ ಹೊಂದಿರುವ ಹುದ್ದೆ, ಅತ ತನ್ನ ಸಂಬಂಧಿ ಅಥವಾ ಪ್ರಭಾವಿ ಎಂಬುದು ಮುಖ್ಯವಲ್ಲ. ಯಾರೊಬ್ಬರನ್ನೂ ರಕ್ಷಿಸುವುದು ನಮ್ಮ ಪಕ್ಷದ ಕಾರ್ಯಸೂಚಿ ಅಲ್ಲ’’ ಎಂದಿದ್ದಾರೆ.
ವಿಧಾನಸಭೆಯ ಕಾರ್ಯಕಲಾಪಗಳ ಸಂಪೂರ್ಣ ಡಿಜಿಟಲೀಕರಣ : ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು : ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ ಅಳವಡಿಸಿಕೊಳ್ಳುವ ಮೂಲಕ ರಾಜ್ಯ ವಿಧಾನಸಭೆಯ ಕಾರ್ಯ ಕಲಾಪಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು. ಸೋಮವಾರ ಭೋಜನ ವಿರಾಮದ ಬಳಿಕ ಸದನದಲ್ಲಿ ಈ ಸಂಬಂಧ ಮಾಹಿತಿ ಒದಗಿಸಿದ ಅವರು, ಇನ್ನು ಮೂರು ತಿಂಗಳಲ್ಲಿ ವಿಧಾನಸಭೆಯು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ. ಅಲ್ಲದೇ, ಸದನಕ್ಕೆ ಬರುವ ಸದಸ್ಯರ ಹಾಜರಾತಿ ಸಂಗ್ರಹಿಸಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ವಿಜಯನಗರ | ʼಕಿತ್ತೂರು ರಾಣಿ ಚೆನ್ನಮ್ಮʼ ರಾಜ್ಯ ಪ್ರಶಸ್ತಿಗೆ ಅನುರಾಧ ವಾಲ್ಮೀಕಿ ಆಯ್ಕೆ
ವಿಜಯನಗರ: ಕೂಡ್ಲಿಗಿ ತಾಲೂಕಿನ ಪ್ರತಿಭಾವಂತ ಸಂಗೀತ ಹಾಗೂ ರಂಗಭೂಮಿ ಕಲಾವಿದೆ ಶ್ರೀಮತಿ ಅನುರಾಧ ವಾಲ್ಮೀಕಿ ಅವರಿಗೆ ರಾಜ್ಯ ಮಟ್ಟದ ಮಹತ್ವದ ಗೌರವ ಲಭಿಸಿದೆ. ಮಹಿಳಾ ದಿನಾಚರಣೆ ಅಂಗವಾಗಿ ಮಾ.24ರ, 2026ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ “ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಲು ಸರ್ಕಾರ ತೀರ್ಮಾನಿಸಿದೆ. ಕೂಡ್ಲಿಗಿಯ ಹಿರೇಮಠ ವಿದ್ಯಾಪೀಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ನಂತರ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅನುರಾಧ ಅವರು, ಪ್ರಸ್ತುತ ಮಹಿಳಾ ಸಂಗೀತ ಕಲಾವಿದರ ಕುರಿತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ದಿವಂಗತ ವೆಂಕಮ್ಮ ಅವರಿಂದ ಬಂದ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಅವರು, ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ನಾಟಕ ತರಬೇತಿ ನೀಡುವ ಮೂಲಕ ಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಂಪಿ ಉತ್ಸವ, ಮೈಸೂರು ದಸರಾ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಉತ್ಸವಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಅವರು, ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 2013ರಲ್ಲಿ ಸ್ಥಾಪಿಸಿದ ‘ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ’ ಮೂಲಕ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹವಾಗಿದೆ. ಈ ಗೌರವಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅನುರಾಧ ವಾಲ್ಮೀಕಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ಅಮೆರಿಕನ್ ಸಾಮ್ರಾಜ್ಯಶಾಹಿಗಳ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೆರಿಕನ್ ಸಾಮ್ರಾಜ್ಯಶಾಹಿಗಳ ಯುದ್ಧಕೋರ ನೀತಿಗಳನ್ನು ಖಂಡಿಸಿ ಸಿಐಟಿಯು, ಡಿವೈಎಫ್ಐ, ಜೆಎಂಎಸ್, ಡಿಎಚ್ಎಸ್ , ಆದಿವಾಸಿ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಮೆರಿಕನ್ ಸಾಮ್ರಾಜ್ಯಶಾಹಿಗಳ ಯುದ್ಧದಾಹದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಜಗತ್ತಿನೆಲ್ಲೆಡೆ ಶಾಂತಿ ನೆಲೆಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಅಮೆರಿಕನ್ ಸಾಮ್ರಾಜ್ಯಶಾಹಿ ಇಡೀ ಜಗತ್ತನ್ನು ತನ್ನ ನಿಯಂತ್ರಣದಲ್ಲಿಡಲು ಹರಸಾಹಸ ಪಡುತ್ತಿದೆ. ಜಗತ್ತಿನ 80 ದೇಶಗಳಲ್ಲಿ ಸುಮಾರು 750ಕ್ಕೂ ಮಿಕ್ಕಿದ ನೌಕಾನೆಲೆಗಳನ್ನು ಸ್ಥಾಪಿಸಿ ತನಗೆ ವಿರುದ್ಧ ವಾಗಿರುವ ದೇಶಗಳನ್ನು ಬೆದರಿಸುತ್ತಿದೆ. ಈ ಮೂಲಕ ಮೂರನೇ ಜಗತ್ತಿನ ದೇಶಗಳ ಸಾರ್ವಭೌಮತ್ವವನ್ನು ನಾಶಪಡಿಸುವುದೇ ತನ್ನ ಉದ್ದೇಶವನ್ನಾಗಿಸಿದೆ. ಜಗತ್ತಿನೆಲ್ಲೆಡೆ ಯುದ್ಧಗಳು ನಡೆದರೆ ಮಾತ್ರವೇ ಅಮೇರಿಕಾ ದೇಶದ ಆರ್ಥಿಕತೆ ಉಳಿಯುತ್ತದೆ ಎಂದು ಹೇಳಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿಯವರು ಮಾತನಾಡಿ, ಯುದ್ಧ ಹಾಗೂ ಸರ್ವನಾಶ ಎಂಬುವುದು ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿಗಳ ಉಸಿರು. ಅವುಗಳು ಇಲ್ಲದೆ ಹೋದರೆ ಇವೆರಡೂ ಶಕ್ತಿಗಳು ಕ್ಷಣಮಾತ್ರದಲ್ಲೇ ಸಾಯುತ್ತದೆ.ಅದಕ್ಕೆ ತನ್ನ ಅಸ್ತಿತ್ವಕ್ಕಾಗಿ ಜಗತ್ತಿನ ಹಲವೆಡೆ ಯುದ್ದಗಳನ್ನು ಪ್ರಚೋದಿಸಿ ಅಮಾಯಕ ಜನತೆಯ ಪ್ರಾಣಗಳನ್ನು ಬಲಿ ಪಡೆಯುತ್ತಿದೆ ಎಂದು ಹೇಳಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಮಾತನಾಡಿ, ಅಮೆರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿ ಜಗತ್ತಿನಾದ್ಯಂತ ವ್ಯಾಪಕ ಪರಿಣಾಮ ಬಿದ್ದಿದ್ದು, ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು ಜನಸಾಮಾನ್ಯರ ಬದುಕು ತೀರಾ ಸಂಕಷ್ಟಕ್ಕೊಳಗಾಗಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು ಯುದ್ಧದ ಅಪಾಯ ಗಳನ್ನು ವಿವರಿಸುತ್ತಾ, ಅಲಿಪ್ತ ನೀತಿಯನ್ನು ಪ್ರತಿಪಾದಿಸುತ್ತಿದ್ದ ಭಾರತವನ್ನು ಅಮೆರಿಕಾದ ಕಿರಿಯ ಪಾಲುದಾರರ ನ್ನಾಗಿಸಿದ ನರೇಂದ್ರ ಮೋದಿ ಸರಕಾರ ದೇಶದ ಘನತೆ ಗೌರವವನ್ನು ಮಣ್ಣುಪಾಲು ಮಾಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ, ರವಿಚಂದ್ರ ಕೊಂಚಾಡಿ, ಜಯಂತಿ ಶೆಟ್ಟಿ, ಆಶೋಕ್ ಶ್ರೀಯಾನ್, ಜಯಂತ ನಾಯಕ್, ಜಯಲಕ್ಷ್ಮಿ, ಭಾರತಿ ಬೋಳಾರ, ಡಿವೈಎಫ್ಐ ನಾಯಕರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ಮಹಿಳಾ ಸಂಘಟನೆಯ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಆಶಾ ಬೋಳೂರು, ರೋಹಿಣಿ ಜಲ್ಲಿಗುಡ್ಡ,ಮಮತಾ, ಯೋಗಿತಾ ಮುಂತಾದವರು ಉಪಸ್ಥಿತರಿದ್ದರು.
Uttar Pradesh | ʼಕೋಲ್ಡ್ ಸ್ಟೋರೇಜ್ʼ ಘಟಕ ಕುಸಿದು ನಾಲ್ವರು ಮೃತ್ಯು
ಅಮೋನಿಯಾ ಸೋರಿಕೆ ಶಂಕೆ
ಬಳ್ಳಾರಿ | ಅಕ್ರಮ ಜೂಜಾಟದ ಅಡ್ಡೆಗೆ ದಾಳಿ : 60 ಮಂದಿ ವಿರುದ್ಧ ಪ್ರಕರಣ ದಾಖಲು
ಬಳ್ಳಾರಿ ನಗರದಲ್ಲಿ ಅಕ್ರಮ ಜೂಜಾಟದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಗರದ ನಟರಾಜ್ ಸಿನಿಮಾ ಮಂದಿರದ ಹತ್ತಿರ ಇರುವ ಖಾಸಗಿ ರೆಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ಕ್ಲಬ್ನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬ್ರೂಸ್ಪೇಟೆ ಪೊಲೀಸರು ದಾಳಿ ನಡೆಸಿ 60 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾ.22 ರಂದು ಬಂದ ಮಾಹಿತಿಯ ಆಧಾರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ್ ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ದಾಳಿ ವೇಳೆ ಜೂಜಾಟ ನಡೆಯುತ್ತಿರುವುದು ಬಹಿರಂಗವಾಗಿದೆ. ಈ ಸಂಬಂಧ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 44/2026 ದಾಖಲಿಸಿ, ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 79 ಮತ್ತು 80ರಡಿ 60 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ 1,77,820 ರೂ. ನಗದು, 2 ಡಿವಿಆರ್ಗಳು, 810 ಇಸ್ಪೀಟ್ ಕಾರ್ಡ್ಗಳು, 58 ಕ್ಲಬ್ ಐಡಿ ಕಾರ್ಡ್ಗಳು, 1 ಕ್ಯೂಆರ್ ಕೋಡ್ ಬೋರ್ಡ್ ಹಾಗೂ 303 ಟೋಕನ್ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು, “ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ” ಎಂದು ಎಚ್ಚರಿಸಿದ್ದಾರೆ.
Bengaluru Traffic- ಬೆಂಗಳೂರಿನ ಟ್ರಾಫಿಕ್ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯುವತಿಯೊಬ್ಬಳು ಕಚೇರಿಯಿಂದ 2.7 ಕಿಮೀ ದೂರ ಇರುವ ತನ್ನ ಮನೆಗೆ ನಿರಂತರ ಎರಡು ವಾರಗಳ ಕಾಲ ನಡೆದುಕೊಂಡು ಹೋಗಿ ಗಮನ ಸೆಳೆದಿದ್ದಾರೆ. ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಈ ಪ್ರಯೋಗದಿಂದ ತಮ್ಮಲ್ಲಿ ಹೊಸ ಶಕ್ತಿಯ ಸಂಚಾರವಾಗಿದೆ, ವ್ಯಾಯಾಮದ ಜೊತೆಗೆ ಪ್ರಯಾಣದ ಹಣವೂ ಉಳಿದಿದೆ ಎಂದು ಅವರು ವಿವರಿಸಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಪಾರಾಗಲು ಇದು ಉತ್ತಮ ಉಪಾಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆ’ ನಿಷೇಧಿಸುವ ನಿಟ್ಟಿನಲ್ಲಿ ಕರಡು ನೀತಿ ಪ್ರಕಟ
ಬೆಂಗಳೂರು : ಸೋಮವಾರದಂದು ಆರೋಗ್ಯ ಇಲಾಖೆಯು ನಿಮ್ಹಾನ್ಸ್ ಹಾಗೂ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ‘ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಡಿಜಿಟಲ್ ಬಳಕೆ’ ಕರಡು ನೀತಿಯನ್ನು ಪ್ರಕಟಿಸಿದ್ದು, ಪ್ರತಿದಿನ ಶಾಲೆ ಮುಗಿದ ನಂತರವೂ ಶಾಲಾ ಮಕ್ಕಳು ಮನರಂಜನೆಗಾಗಿ ಮೊಬೈಲ್ ಬಳಸುವ ಅವಧಿಯನ್ನು ಒಂದು ಗಂಟೆಗೆ ಸೀಮಿತಗೊಳಿಸಬೇಕು ಎಂದು ಶಾಲೆಗಳಿಗೆ ನಿರ್ದೇಶನ ನೀಡಿದೆ. ಶಾಲೆಗಳು ಡಿಜಿಟಲ್ ಯೋಗಕ್ಷೇಮ ಮತ್ತು ಸಾಮಾಜಿಕ ಮಾಧ್ಯಮ ಸಾಕ್ಷರತೆಯನ್ನು ಅಳವಡಿಸಿಕೊಳ್ಳಬೇಕು. ಜೀವನ ಕೌಶಲ್ಯಗಳು, ಮೌಲ್ಯ ಶಿಕ್ಷಣ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಡಿಜಿಟಲ್ ಪೌರತ್ವ ಎಂದರೆ ತಂತ್ರಜ್ಞಾನ ಮತ್ತು ಇಂಟರ್ನೆಟ್ ಅನ್ನು ಜವಾಬ್ದಾರಿಯುತ, ಸುರಕ್ಷಿತ, ಕಾನೂನುಬದ್ಧ ಮತ್ತು ನೈತಿಕ ರೀತಿಯಲ್ಲಿ ಬಳಸುವ ಕೌಶಲ್ಯವನ್ನು ಪಾಠಗಳಲ್ಲಿ ಅಳವಡಿಕೆ ಮಾಡಿ ಬೋಧನೆ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕ್ರಮ ವಹಿಸಬೇಕು ಎಂದು ಸೂಚಿಸಿದೆ. ಮಕ್ಕಳು ಇಂಟರ್ನೆಟ್ ಅನ್ನು ಅತಿಯಾಗಿ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಲು ಶಾಲೆಗಳು ಸಮಿತಿಯನ್ನು ರಚನೆ ಮಾಡಬೇಕು. ಸೈಬರ್ ಕ್ರೈಮ್ ಪೊಲೀಸ್ ಅಧಿಕಾರಿಯನ್ನು ಒಳಗೊಂಡಂತೆ ಶಾಲೆಯ ಪ್ರಾಂಶುಪಾಲ, ಒಬ್ಬ ಮಾನಸಿಕ ಆರೋಗ್ಯ ತಜ್ಞ, ಶಿಕ್ಷಕ, ಒಬ್ಬ ಪೋಷಕ ಹಾಗೂ ವಿದ್ಯಾರ್ಥಿಯನ್ನು ಸಮಿತಿಯು ಒಳಗೊಂಡಿರಬೇಕು ಎಂದು ನೀತಿಯಲ್ಲಿ ಹೇಳಿದೆ. ಸಂಜೆ 7 ಗಂಟೆಯ ಒಳಗಾಗಿ ಆಡಿಯೋ-ಮಾತ್ರ ಇರುವ ಫೋನ್ಗಳನ್ನು ಬಳಕೆ ಮಾಡುವ ರೀತಿಯಲ್ಲಿ ‘ಮಕ್ಕಳ ಯೋಜನೆ’ ಅನ್ನು ಅಭಿವೃದ್ಧಿಪಡಿಸಬೇಕು. ವಿದ್ಯಾರ್ಥಿಗಳೊಂದಿಗೆ ನೇರ ಸಂವಹನಕ್ಕಾಗಿ ವಾಟ್ಸ್ ಆಪ್ ಸಂಪರ್ಕದ ಬದಲಿಗೆ ‘ದಿನಚರಿ ಪುಸ್ತಕ ಪದ್ಧತಿ’ಯನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಪ್ರತಿ ಶಾಲೆಯು ಡಿಜಿಟಲ್ ಬಳಕೆ ನೀತಿಯ ರೂಪರೇಖೆಯನ್ನು ರೂಪಿಸಿ, ಜಾರಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಬಳ್ಳಾರಿ | ಕೆಐಎಡಿಬಿನಲ್ಲಿ 16 ಕೋಟಿಗೂ ಅಧಿಕ ಹಣ ದುರುಪಯೋಗ ಆರೋಪ
ಬಳ್ಳಾರಿ, ಮಾ.23: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳ್ಳಾರಿ ವಲಯ ಕಚೇರಿಯಲ್ಲಿ ನಡೆದಿರುವ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು 16.17 ಕೋಟಿ ರೂ. ಹಣವನ್ನು ನಕಲಿ ಸಹಿಗಳ ಮೂಲಕ ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ರಫಿ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕೆಐಎಡಿಬಿ ಬಳ್ಳಾರಿ ವಲಯ ಕಚೇರಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಎಂ. ಕೊಳಲಗಿ ಅವರು ನೀಡಿದ ದೂರಿನ ಪ್ರಕಾರ, 2022ರಿಂದ 2026ರ ಅವಧಿಯಲ್ಲಿ ಮೂವರು ಎಕ್ಸಿಕ್ಯೂಟಿವ್ ಇಂಜಿನಿಯರ್ಗಳ ಕಾರ್ಯಕಾಲದಲ್ಲಿ, ಕಚೇರಿಯ ಗುತ್ತಿಗೆ ನೌಕರರು, ಇತರೆ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಯವರ ಸಹಭಾಗಿತ್ವದಲ್ಲಿ ಮಂಡಳಿ ಖಾತೆಯಿಂದ ನಕಲಿ ಸಹಿಗಳನ್ನು ಬಳಸಿ ಹಣವನ್ನು ಅನಧಿಕೃತ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚನೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ವಂಚನೆ ಆಂತರಿಕ ಲೆಕ್ಕಪರಿಶೋಧನೆ ವೇಳೆ ಬೆಳಕಿಗೆ ಬಂದಿದ್ದು, ಪ್ರಕರಣ ಪ್ರಾಥಮಿಕ ತನಿಖೆಯಲ್ಲಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳು ಹೊರಬೀಳುವ ನಿರೀಕ್ಷೆಯಿದೆ. ವಂಚನೆಯ ಮೊತ್ತವು 15 ಕೋಟಿ ರೂ.ಗಳಿಗೂ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಪೊಲೀಸ್ ಪ್ರಧಾನ ಕಚೇರಿಯ ನಿರ್ದೇಶನದಂತೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್, ತನಿಖೆಯನ್ನು ವೇಗವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕ್ಷಯರೋಗ ಚಿಕಿತ್ಸೆ ಸಂಪೂರ್ಣ ಉಚಿತ : ದಿನೇಶ್ ಗುಂಡೂರಾವ್
‘ರೋಗಿಗಳು ಹಿಂಜರಿಕೆ ತೊರೆದು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಿರಿ’
ತಾಲೂಕು ಮಟ್ಟದಲ್ಲಿ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯಲ್ಲ : ಮಧುಬಂಗಾರಪ್ಪ
ಬೆಂಗಳೂರು : ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು. ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಣಮಟ್ಟ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇ ಶದಿಂದ ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯುವ ಚಿಂತನೆ ಇಲ್ಲ ಎಂದರು. ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಮೌಲ್ಯಮಾಪಕರಿಗೆ ತೆರಳಲು ಸಮಸ್ಯೆ ಆಗುತ್ತದೆ. ಸಾರಿಗೆ ಖರ್ಚು ಹೆಚ್ಚಾಗುತ್ತದೆ. ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಮೌಲ್ಯಮಾಪನವನ್ನು ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ. ನಮಗೆ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ಮಧುಬಂಗಾರಪ್ಪ ಸ್ಪಷ್ಟಪಡಿಸಿದರು.
Kalaburagi | ಭೀಕರ ರಸ್ತೆ ಅಪಘಾತ: ತಾಯಿ, ಮಗು ಮೃತ್ಯು
ಕಲಬುರಗಿ: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗು ಮೃತಪಟ್ಟು, ಕುಟುಂಬದ ಇನ್ನಿಬ್ಬರು ಗಾಯಗೊಂಡಿರುವ ದುರ್ಘಟನೆ ನದಿಸಿನ್ನೂರ ಗ್ರಾಮದ ಬಳಿ ಸೋಮವಾರ ನಡೆದಿದೆ. ಬೀದರ್ ಮೂಲದ ಬಟ್ಟೆ ವ್ಯಾಪಾರಿ ಪಿರೋಝ್ ಖಾನ್ (34) ಅವರು ವ್ಯಾಪಾರದ ನಿಮಿತ್ತ ಜೇವರ್ಗಿಗೆ ಬಂದಿದ್ದರು. ಬಳಿಕ ತಮ್ಮ ಗರ್ಭಿಣಿ ಪತ್ನಿ ಪ್ರವೀದ್ ಶೇಖ್ (32) ಅವರನ್ನು ತಪಾಸಣೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಕೂಟರ್ನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಾದ ಅಭಿಷಾನ್ (2) ಮತ್ತು ನಾಝಿಯಾ (5) ಜೊತೆಗೆ ಪ್ರಯಾಣಿಸುತ್ತಿದ್ದಾಗ, ನದಿಸಿನ್ನೂರ ಗ್ರಾಮದ ಬಳಿ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪ್ರವೀದ್ ಶೇಖ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮಗು ಅಭಿಷಾನ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯ ಮಧ್ಯೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಪಿರೋಝ್ ಖಾನ್ ಹಾಗೂ ಹಿರಿಯ ಮಗಳು ನಾಝಿಯಾ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಟ್ರಾಫಿಕ್-2 ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು ಜಪ್ತಿ ಮಾಡಿದ್ದಾರೆ. ಪರಾರಿಯಾಗಿರುವ ಕಾರು ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಸನ್ ನಯೀಮ್ ಸುರಕೋಡಗೆ ʼಲೋಹಿಯಾ ಪ್ರಶಸ್ತಿʼ ಪ್ರದಾನ
ಧಾರವಾಡ : ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ಡಾ.ರಾಮಮನೋಹರ ಲೋಹಿಯಾ ಜನ್ಮದಿನಾಚರಣೆ ಅಂಗವಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಹಸನ್ ನಯೀಮ್ ಸುರಕೋಡ ಅವರಿಗೆ ರಾಮಮನೋಹರ ಲೋಹಿಯಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ರಾಮಮನೋಹರ ಲೋಹಿಯಾ ಪ್ರಭಾವದಿಂದಾಗಿಯೇ ನಮ್ಮ ರಾಜ್ಯದಲ್ಲಿ ಸಮಾಜವಾದಿ ಚಳವಳಿ ಬೆಳೆಯಿತು. ಕಾಂಗ್ರೆಸ್ ಪಕ್ಷದಲ್ಲಿ ಸಮಾಜವಾದಿ ಚಿಂತನೆ ಬೆಳೆಸುವಲ್ಲಿ ರಾಮಮನೋಹರ ಲೋಹಿಯಾ ಪ್ರಮುಖ ಪಾತ್ರ ವಹಿಸಿದ್ದರು. ಅವರ ಚಿಂತನೆಗಳು ಇಂದಿಗೂ ಪ್ರಸಕ್ತವಾಗಿವೆ. ಯುದ್ಧಗಳನ್ನು ವಿರೋಧಿಸಿದ ಲೋಹಿಯಾ ಪ್ರತಿಯೊಂದು ದೇಶವೂ ನಿಗದಿತ ಪ್ರಮಾಣದಲ್ಲಿ ಮಾತ್ರ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಆಗ್ರಹಿಸಿದ ಮೊದಲ ರಾಜಕಾರಣಿ. ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸಿದ ಅವರು ಸಮಾಜದ ಪ್ರಗತಿಗೆ ಪರಿಹಾರಗಳನ್ನು ಸೂಚಿಸಿದ್ದರು ಎಂದು ನಾಗರಾಜಮೂರ್ತಿ ನುಡಿದರು. ಸಾಹಿತಿ ಡಾ.ಕಾಳೇಗೌಡ ನಾಗವಾರ ಮಾತನಾಡಿ, ಲೋಹಿಯಾ ಮಹಾನ್ ಚೇತನ. ಬಸವಣ್ಣ ಹಾಗೂ ಅಕ್ಕಮಹಾದೇವಿ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ದೇಶಾದ್ಯಂತ ತಿಳಿಸುವ ಮಹತ್ಕಾರ್ಯ ಮಾಡಿದರು ಎಂದರು. ಸಮಾಜಮುಖಿ ಟ್ರಸ್ಟ್ನ ಅಧ್ಯಕ್ಷೆ ಸುಮಾ ವಿಜಯ್ ಮಾತನಾಡಿ, ಕಳೆದ 10-15 ವರ್ಷಗಳಿಂದ ಜನರಲ್ಲಿ ಹೋರಾಟದ ಮನೋಭಾವವೇ ಕಾಣದಂತಾಗಿದೆ. ಆದರೆ, ಇತ್ತೀಚಿಗೆ ಯುವ ಸಮುದಾಯ (ಜೆನ್ಝಿ) ಬೇಡಿಕೆಗಳ ಈಡೇರಿಕೆಗಾಗಿ ಧ್ವನಿ ಎತ್ತುತ್ತಿರುವುದು ಸಮಾಧಾನದ ಸಂಗತಿ. ಅನ್ಯಾಯದ ವಿರುದ್ಧ ಧ್ವನಿ ಹೊರಹೊಮ್ಮಬೇಕೆಂದು ಕರೆ ನೀಡಿದರು. ಹಸನ್ ನಯೀಮ್ ಸುರಕೋಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕರ್ನಾಟಕ ನಾಟಕ ಅಕಾಡಮಿ ಸದಸ್ಯೆ ಗಾಯತ್ರಿ ಹಡಪದ, ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಇದ್ದರು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕರಾವಳಿ ನಿರ್ದಿಗಂತ ತಂಡ ಗಣೇಶ ಮಂದಾರ್ತಿ ನಿರ್ದೇಶನದ ‘ರಾಮ ಕೃಷ್ಣ ಶಿವ’ ನಾಟಕ ಪ್ರದರ್ಶನಗೊಂಡಿತು. ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದ ನಿವಾಸಿಯಾದ ಹಸನ್ ನಯೀಮ್ ಸುರಕೋಡ ಅವರು ಬಹುಭಾಷಾ ಬರಹಗಾರ ಮತ್ತು ಅನುವಾದಕರಾಗಿದ್ದಾರೆ. ಹಿಂದಿ, ಉರ್ದು ಮತ್ತು ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸುರಕೋಡ ಅವರು ರಾಮ್ ಮನೋಹರ್ ಲೋಹಿಯಾ, ಕರ್ಪೂರಿ ಠಾಕೂರ್ ಮತ್ತು ಮಧು ಲಿಮಾಯೆ ಅವರಂತಹ ಸಮಾಜವಾದಿ ಚಿಂತಕರು ಮತ್ತು ಕಾರ್ಯಕರ್ತರ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಈ ಹಿಂದೆ ರಸೀದಿ ಟಿಕೆಟ್ನ ಅವರ ಕನ್ನಡ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಒಲಿದು ಬಂದಿದೆ. ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗಳು ಲಭಿಸಿವೆ.
ಯಾದಗಿರಿ | ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ಆತ್ಮಹತ್ಯೆ : ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಯಾದಗಿರಿ: ಗುರುಮಠಕಲ್ ತಾಲೂಕಿನ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ನಿಲಯದಲ್ಲಿ ಸ್ವಾತಿ (21) ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗಣ್ಣ ಎಂ. ಗೋನಾಲ ಗಂಭೀರ ಆರೋಪ ವ್ಯಕ್ತಪಡಿಸಿ, ಹಾಸ್ಟೆಲ್ನ ಅವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಗಂಭೀರ ಅವ್ಯವಸ್ಥೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಶಹಾಪುರ ಹಾಗೂ ಗುರುಮಿಠಕಲ್ ಭಾಗಗಳಲ್ಲಿ ಇಂತಹ ಘಟನೆಗಳು ಈ ಹಿಂದೆ ಕೂಡ ನಡೆದಿವೆ. ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸದಿರುವುದು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಕೆಲ ಹಾಸ್ಟೆಲ್ಗಳಲ್ಲಿ ಸಿಬ್ಬಂದಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಕಾಳಜಿ ತೋರಿಸುತ್ತಿಲ್ಲ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳ ಕಡೆ ಗಮನ ಹರಿಸಲಾಗುತ್ತಿಲ್ಲ ಎಂದು ದೂರಿದರು. ಹಾಸ್ಟೆಲ್ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಬಯೋಮೆಟ್ರಿಕ್ ಹಾಜರಾತಿ ನಿಯಮಗಳ ಉಲ್ಲಂಘನೆ ಹಾಗೂ ಆಹಾರ ಧಾನ್ಯ ಪೂರೈಕೆಯಲ್ಲಿ ಅಕ್ರಮ ಸೇರಿದಂತೆ ಹಲವು ಸಮಸ್ಯೆಗಳು ಇರುವುದಾಗಿ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ತನಿಖಾ ತಂಡ ರಚಿಸಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಒಂದು ವಾರದೊಳಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರಾಮಪ್ಪ ಕೋರೆ, ನಾಗು ಗೋಗಿಕರ್, ಭೀಮಣ್ಣ ಅಡೊಡಗಿ ಇದ್ದರು.
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಮಳೆ ಮತ್ತು ಗಾಳಿ ಸಹಿತ ಗುಡುಗು ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಜೊತೆಗೆ ಗುಡುಗು, ಮಿಂಚು ಮತ್ತು ವೇಗವಾಗಿ ಬೀಸುವ ಗಾಳಿಯ ಅಬ್ಬರ ಇರಲಿದೆ ಎಂದು ಎಚ್ಚರಿಸಿದೆ. ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ಬೆಳಗಾವಿ, ಧಾರವಾಡ
ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದ 1,400ಕ್ಕೂ ಅಧಿಕ ಗೃಹ ಬಳಕೆ ಸಿಲಿಂಡರ್ ವಶ: 25 ಎಫ್ಐಆರ್ ದಾಖಲು
ಬೆಂಗಳೂರು : ರಾಜ್ಯದಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, 10 ದಿನಗಳಿಂದ ರಾಜ್ಯಾದ್ಯಂತ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದ 1,448 ಗೃಹ ಬಳಕೆ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಹಾಗೆಯೇ 25 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಸೋಮವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ಬಾಗಲಕೋಟೆ 64, ಬೆಂಗಳೂರು ನಗರ 507, ರಾಯಚೂರು 4, ಶಿವಮೊಗ್ಗ 7, ತುಮಕೂರು 37, ವಿಜಯಪುರ 16, ಯಾದಗಿರಿ 100, ಬಳ್ಳಾರಿ 1, ಕಲಬುರಗಿ 7, ಮೈಸೂರು 52, ಬೆಂಗಳೂರು ದಕ್ಷಿಣ 39, ಉತ್ತರ ಕನ್ನಡ 30 ಮತ್ತು ವಿಜಯಪುರ 16 ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದ್ದು, 25 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ. ರಾಜ್ಯದಲ್ಲಿ 10 ದಿನಗಳಿಂದ ಇಲ್ಲಿಯವರೆಗೂ ಗೃಹ ಬಳಕೆಯ 30,51,045 ಸಿಲಿಂಡರ್ ಗಳನ್ನು ವಿತರಿಸಲಾಗಿದೆ. ಅಲ್ಲದೇ ವಾಣಿಜ್ಯ ಬಳಕೆಯ 67,641 ಸಿಲಿಂಡರ್ ಗಳನ್ನು ವಿತರಿಸಲಾಗಿದೆ. ಸುಮಾರು 40,083 ಆಟೋ ಎಲ್ಪಿಜಿ ಸಿಲಿಂಡರ್ ಗಳನ್ನು ಅಂದರೆ 761.655 ಮೆ.ಟನ್.ಗಳಷ್ಟು ಅನಿಲವನ್ನು ವಿತರಣೆಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಗೃಹ ಬಳಕೆ ಸಿಲಿಂಡರ್ ಸರಬರಾಜು ಸಹಜವಾಗಿ ನಿರ್ವಹಣೆಯಾಗುತ್ತಿದ್ದು, ವಾಣಿಜ್ಯ ಸಿಲಿಂಡರ್ ಗಳ ಮತ್ತು ಆಟೋ ಎಲ್ಪಿಜಿಗಳ ವಿತರಣೆಯಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದೆ.
ರಾಯಚೂರು | ಒಳಮೀಸಲಾತಿ ಜಾರಿಗೆ ಬಿಜೆಪಿ, ಕಾಂಗ್ರೆಸ್ ಸರಕಾರದಿಂದ ವಿಳಂಬ : ಮಹೇಂದ್ರ ಕುಮಾರ ಮಿತ್ರ ಆರೋಪ
ರಾಯಚೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ನಿರ್ಲಕ್ಷ್ಯ ವಹಿಸಿ ಕಾಲಹರಣ ಮಾಡಿವೆ. ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡುವ ಉದ್ದೇಶವಿಲ್ಲ ಎಂದು ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಆರೋಪಿಸಿದರು. ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಯಿಲ್ಲದೆ ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಸುವುದಾಗಿ ಸರ್ಕಾರ ಹೈಕೋರ್ಟ್ಗೆ ಮೆಮೋ ಸಲ್ಲಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಮಾ.27ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಗೆ ಮುನ್ನ ಈ ಮೆಮೋ ಹಿಂಪಡೆಯದಿದ್ದರೆ, ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು. ದೇವಿಂದರ್ ಸಿಂಗ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆದರೆ ಆಯೋಗದ ವರದಿಯನ್ನು ಪರಿಗಣಿಸದೇ ಸರ್ಕಾರವೇ ಪರಿಶಿಷ್ಟ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಭಜಿಸಿ (ಎ-6%, ಬಿ-6%, ಸಿ-5%) ಮೀಸಲಾತಿ ನಿಗದಿ ಮಾಡಿದೆ ಎಂದು ಟೀಕಿಸಿದರು. ಮಾದಿಗ ಸಮುದಾಯದ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಆರ್.ಬಿ. ತಿಮ್ಮಾಪುರ ಸಮುದಾಯದ ಹಿತಾಸಕ್ತಿಗೆ ಬದ್ಧರಾಗಿದ್ದರೆ, ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿರುವ ಮೆಮೋ ಹಿಂಪಡೆಯುವಂತೆ ಒತ್ತಾಯಿಸಿ ನಂತರವೇ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಬೇಕು ಎಂದು ಆಗ್ರಹಿಸಿದರು. ಒಳ ಮೀಸಲಾತಿಯಿಲ್ಲದೆ ನೇಮಕಾತಿ ನಡೆದರೆ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಶೇ.15 ಮೀಸಲಾತಿಯೊಳಗೆ ಹಾಗೂ ಸಾಮಾನ್ಯ ವರ್ಗದಲ್ಲೂ ಸ್ಪರ್ಧಿಸಿ ಅವಕಾಶ ಪಡೆಯಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು. ಆರೆಸ್ಸೆಸ್ ಹಿನ್ನೆಲೆಯುಳ್ಳ ವಾದಿರಾಜ್ ಎಂಬುವವರು ಹೊಲೆಯ ಹಾಗೂ ಮಾದಿಗ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ಪಕ್ಷದಲ್ಲಿರುವ ಮಾದಿಗ ಸಮುದಾಯದವರು ಎಚ್ಚರಿಕೆಯಿಂದಿರಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಆಂಜನೇಯ, ಹುಸೇನಬಾಷಾ ಪಲಕನಮರಡಿ, ಕಮಲ್ ಆಂಜನೇಯ ಇದ್ದರು.
Kerala | ಇಬ್ಬರು NDA ಅಭ್ಯರ್ಥಿಗಳ ಹೆಸರು ಮತಪಟ್ಟಿಯಿಂದಲೇ ನಾಪತ್ತೆ; ಸ್ಪರ್ಧೆಗೆ ಅನರ್ಹ!
ತಿರುವನಂತಪುರಂ: NDA ಮೈತ್ರಿಕೂಟದ ಭಾಗವಾಗಿರುವ ಟ್ವೆಂಟಿ20 (Twenty20) ಪಕ್ಷದ ಇಬ್ಬರು ಸಂಭವನೀಯ ಅಭ್ಯರ್ಥಿಗಳ ಹೆಸರು ಮತಪಟ್ಟಿಯಿಂದಲೇ ನಾಪತ್ತೆಯಾಗಿದ್ದು, ಹೀಗಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹವಾಗಿರುವ ವಿಚಿತ್ರ ಘಟನೆ ವರದಿಯಾಗಿದೆ. ಕ್ರಮವಾಗಿ ಪೆರುಂಬವೂರ್ ಹಾಗೂ ಎಟ್ಟುಮನೂರ್ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಬಯಸಿದ್ದ ಚಲನಚಿತ್ರ ನಟಿಯರಾದ ಲಕ್ಷ್ಮಿಪ್ರಿಯಾ ಹಾಗೂ ವೀನಾ ನಾಯರ್ ಅವರ ಹೆಸರುಗಳು ಮತಪಟ್ಟಿಯಲ್ಲಿ ನಾಪತ್ತೆಯಾಗಿವೆ ಎಂದು thenewsminute.com ವರದಿ ಮಾಡಿದೆ. 1951ರ ಜನಪ್ರತಿನಿಧಿ ಕಾಯ್ದೆಯನ್ವಯ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಯಾವುದೇ ಅಭ್ಯರ್ಥಿಯ ಹೆಸರು ರಾಜ್ಯದ ಯಾವುದಾದರೊಂದು ಕ್ಷೇತ್ರದ ಮತಪಟ್ಟಿಯಲ್ಲಿ ಇರಬೇಕಾಗಿದೆ. ಮಾರ್ಚ್ 18ರಂದು ಟ್ವೆಂಟಿ20 ಪಕ್ಷದ ಅಧ್ಯಕ್ಷ ಸಾಬು ಎಂ.ಜಾಕೋಬ್ ಅವರಿಬ್ಬರ ಸ್ಪರ್ಧೆಯನ್ನು ಪ್ರಕಟಿಸಿದ್ದರು. ಆದರೆ, ಮಾರ್ಚ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ವಿಳಾಸ ಬದಲಾವಣೆಯಿಂದ ನನ್ನ ಹೆಸರು ಕೈಬಿಟ್ಟು ಹೋಗಿದೆ ಎಂದು ವೀಣಾ ನಾಯರ್ ಹೇಳಿದ್ದರೆ, ಇತ್ತೀಚೆಗೆ ನಡೆದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವೇಳೆ ನನ್ನ ಹೆಸರು ಕೈಬಿಟ್ಟು ಹೋಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಲಕ್ಷ್ಮಿ ಪ್ರಿಯಾ ಆರೋಪಿಸಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ನಾವು ನಮ್ಮ ಮತವನ್ನು ಚಲಾಯಿಸಿದ್ದೆವು ಎಂದು ಅವರಿಬ್ಬರೂ ಪ್ರತಿಪಾದಿಸಿದ್ದಾರೆ. ನನ್ನ ಹೆಸರು ಚಂಗನಚೇರಿ ಮತಪಟ್ಟಿಯಲ್ಲಿತ್ತು ಎಂದು ವೀಣಾ ನಾಯರ್ ಹೇಳಿಕೊಂಡಿದ್ದರೆ, ಈ ಹಿಂದೆ ನನ್ನ ಮತವು ತ್ರಿಶೂರ್ ವಿಧಾನಸಭಾ ಮತಪಟ್ಟಿಯಲ್ಲಿತ್ತು. ಆದರೆ, ವಿಳಾಸ ಬದಲಾವಣೆಯಾಗಿರುವುದರಿಂದ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವೇಳೆ ನನ್ನ ಹೆಸರು ಕೈಬಿಟ್ಟು ಹೋಗಿದೆ ಎಂದು ಲಕ್ಷ್ಮಿ ಪ್ರಿಯಾ ಆರೋಪಿಸಿದ್ದಾರೆ. ಇಬ್ಬರೂ ಕೊನೆಯ ಕ್ಷಣದಲ್ಲಿ ತಮ್ಮ ಹೆಸರುಗಳನ್ನು ಮತಪಟ್ಟಿಗೆ ಸೇರ್ಪಡೆ ಮಾಡಲು ಪ್ರಯತ್ನಿಸಿದರಾದರೂ, ಮಾರ್ಚ್ 22ರ ಮುನ್ನ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯರವಿಲ್ಲ ಎಂದು ಚುನಾವಣಾಧಿಕಾರಿಗಳು ಅವರ ಕೋರಿಕೆಯನ್ನು ತಳ್ಳಿ ಹಾಕಿದ್ದಾರೆ. ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದುದರಿಂದ, ಟ್ವೆಂಟಿ20 ಪಕ್ಷವು ಅಭ್ಯರ್ಥಿಗಳನ್ನು ಬದಲಿಸುವ ನಿರ್ಣಯ ಕೈಗೊಂಡಿತು. ಇದರ ಬೆನ್ನಿಗೇ, ಎಟ್ಟುಮನೂರ್ ವಿಧಾನಸಭಾ ಕ್ಷೇತ್ರದಿಂದ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಅತಿರಾ ಡಿ ನಾಯರ್ ಹಾಗೂ ಪೆರುಂಬವೂರ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಕಾಂಗ್ರೆಸ್ ನಾಯಕ ಜಿಬಿ ವರ್ಗೀಸ್ ಪತ್ತಿಕ್ಕಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಲಾಯಿತು. ಈ ಇಬ್ಬರ ಪೈಕಿ, ಜಿಬಿ ವರ್ಗೀಸ್ ಪತ್ತಿಕ್ಕಲ್ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದರು.
ಹಾರ್ಮುಝ್ ಜಲಸಂಧಿಯನ್ನು ಅಮೆರಿಕ, ಇರಾನ್ ಜಂಟಿಯಾಗಿ ನಿಯಂತ್ರಿಸಬಹುದು: ಟ್ರಂಪ್
ವಾಶಿಂಗ್ಟನ್: ಹಾರ್ಮುಝ್ ಜಲಸಂಧಿಯನ್ನು ಅಮೆರಿಕ ಮತ್ತು ಇರಾನ್ ಜಂಟಿಯಾಗಿ ನಿಯಂತ್ರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಇರಾನ್ನೊಂದಿಗೆ ಒಪ್ಪಂದ ಏರ್ಪಟ್ಟರೆ ಹಾರ್ಮುಝ್ ಜಲಸಂಧಿಯನ್ನು ಯಾರು ನಿಯಂತ್ರಿಸಬಹುದು ಎಂಬ ಪ್ರಶ್ನೆಗೆ ಟ್ರಂಪ್ ʼಬಹುಷಃ ನಾನು ಮತ್ತು ಹೊಸ ಆಯತೊಲ್ಲಾ, ಆಯತೊಲ್ಲಾ ಯಾರೇ ಆಗಿರಲಿ. ಜಲಸಂಧಿ ಶೀಘ್ರವೇ ತೆರೆಯಲಿದೆ ಮತ್ತು ಒಪ್ಪಂದಕ್ಕೆ ಸಹಿ ಬಿದ್ದೊಡನೆ ತೈಲ ಬೆಲೆ ಇಳಿಯಲಿದೆ' ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ. ಅಮೆರಿಕ ಮತ್ತು ಇರಾನ್ ಇತ್ತೀಚಿನ ಮಾತುಕತೆಗಳಲ್ಲಿ ಒಪ್ಪಂದದ ಪ್ರಮುಖ ಅಂಶಗಳನ್ನು ತಲುಪಿವೆ. ದಾಳಿಗಳಿಗೆ ಐದು ದಿನಗಳ ವಿರಾಮವು ಫಲಪ್ರದವಾದರೆ ಮಧ್ಯಪ್ರಾಚ್ಯ ಸಂಘರ್ಷದ ಪರಿಹಾರಕ್ಕೆ ಕಾರಣವಾಗಬಹುದು ಎಂದು ಫ್ಲೋರಿಡಾದಲ್ಲಿ ವರದಿಗಾರರ ಜೊತೆ ಮಾತನಾಡಿದ ಟ್ರಂಪ್ ಹೇಳಿದ್ದಾರೆ. ಮಾತುಕತೆಯು ಇರಾನ್ನ ಅತ್ಯಂತ ಗೌರವಾನ್ವಿತ ಅಧಿಕಾರಿಯೊಂದಿಗೆ ನಡೆದಿದೆ. ಇರಾನ್ ತನ್ನ ಪರಮಾಣು ಮಹಾತ್ವಾಕಾಂಕ್ಷೆಗಳನ್ನು ಮತ್ತು ಯುರೇನಿಯಂ ದಾಸ್ತಾನನ್ನು ಬಿಟ್ಟುಕೊಡುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಮಾತುಕತೆ ಕೇಂದ್ರೀಕರಿಸಿದೆ. ನಾವು ಅವರ ನಾಯಕತ್ವದ ಒಂದನೇ ಹಂತ, ಎರಡನೆಯ ಹಂತ ಮತ್ತು ಬಹುತೇಕ ಮೂರನೆ ಹಂತವನ್ನು ಅಳಿಸಿ ಹಾಕಿದ್ದೇವೆ. ಆದರೆ ನಾವು ಅತ್ಯಂತ ಗೌರವಾನ್ವಿತ ನಾಯಕ ಎಂದು ನಂಬುವ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿದ್ದೇವೆ. ಮಧ್ಯಪ್ರಾಚ್ಯದ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜರೆಡ್ ಕ್ರುಷ್ನರ್ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ರವಿವಾರ ಪ್ರಾರಂಭಗೊಂಡಿರುವ ಮಾತುಕತೆಯು ಸೋಮವಾರ ಮುಂದುವರಿಯುತ್ತದೆ ಮತ್ತು ಉತ್ಪಾದಕವಾಗಿ ಮುಂದುವರಿದರೆ ಶೀಘ್ರದಲ್ಲೇ ಒಪ್ಪಂದವನ್ನು ತಲುಪಬಹುದು. ಆದರೆ ಮಾತುಕತೆ ವಿಫಲವಾದರೆ ಬಾಂಬ್ ದಾಳಿ ಮುಂದುವರಿಯುತ್ತದೆ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
Bengaluru | ಕೆಲಸ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಗೆ ವಂಚನೆ : ದಂಪತಿ ಬಂಧನ
ಬೆಂಗಳೂರು : ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ನಿರುದ್ಯೋಗಿಗಳಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಪ್ರಕರಣದಡಿ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೈಸನ್ ಡಿಸೋಜಾ(36) ಮತ್ತು ಲವೀನಾ(31) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ನಿರುದ್ಯೋಗಿಗಳು, ಖಾಸಗಿ ಕಂಪೆನಿಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದವರನ್ನು ಗುರಿಯಾಗಿಸಿಕೊಂಡು ವಂಚನೆಗಿಳಿಯುತ್ತಿದ್ದ ಆರೋಪಿಗಳು, ಅವರಿಗೆ ನ್ಯಾಯಾಲಯದಲ್ಲಿ ಡಿ-ಗ್ರೂಪ್ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸುತ್ತಿದ್ದರು. ಇದೇ ರೀತಿ ಒಬ್ಬೊಬ್ಬರಿಂದ 10 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಹಣ ಸಂಗ್ರಹಿಸಲು ಮತ್ತು ಉದ್ಯೋಗಾಸಕ್ತರನ್ನು ಹುಡುಕಲು ಏಜೆಂಟ್ಗಳನ್ನು ನೇಮಿಸಿಕೊಂಡಿದ್ದ ಆರೋಪಿಗಳು, ವಂಚಿಸಿದ ಹಣದಲ್ಲಿ ಆ ಏಜೆಂಟ್ಗಳಿಗೆ ಕಮಿಷನ್ ನೀಡುತ್ತಿದ್ದರು. ಖಾಸಗಿ ಹೋಟೆಲ್ಗಳಲ್ಲಿ ದಾಖಲೆ ಪರಿಶೀಲನೆಯ ನಾಟಕವಾಡಿ, ನಕಲಿ ಆಫರ್ ಲೆಟರ್ಗಳನ್ನು ತೋರಿಸಿ ನಂಬಿಸುತ್ತಿದ್ದರು. ಹಣ ನೀಡಿದವರು ಕೆಲಸದ ಬಗ್ಗೆ ವಿಚಾರಿಸಿದಾಗ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದರು. ಕೊನೆಗೆ ಸಂತ್ರಸ್ತರ ಫೋನ್ ಕರೆಗಳನ್ನು ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು. ಆರೋಪಿಗಳ ವಿರುದ್ಧ ಬಸವೇಶ್ವರ ನಗರ ಸೇರಿದಂತೆ ಕೆಲವೆಡೆ ಪ್ರಕರಣಗಳು ದಾಖಲಾಗಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ, 500ಕ್ಕೂ ಹೆಚ್ಚು ಜನರಿಂದ 25 ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. 2024ರಲ್ಲೂ ಸರಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿ ಜೈಲು ಸೇರಿದ್ದ ದಂಪತಿ, ನಂತರ ಜೈಲಿನಿಂದ ಬಿಡುಗಡೆಯಾದ ಬಳಿಕವೂ ಬುದ್ಧಿ ಕಲಿಯದೇ ಮತ್ತದೇ ಕೃತ್ಯ ಎಸಗಿರುವುದು ಕಂಡುಬಂದಿದೆ. ವಿಚಾರಣೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೆರಡು ವರ್ಷ ಸಿದ್ದರಾಮಯ್ಯರೇ ಬಜೆಟ್ ಮಂಡಿಸುತ್ತಾರೆ : ಝಮೀರ್ ಅಹ್ಮದ್
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸತ್ತ ನಡೆಯುತ್ತಿರುವ ಚರ್ಚೆಯ ನಡುವೆಯೇ ‘ಮುಂದಿನ ಎರಡು ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಜೆಟ್ ಮಂಡನೆ ಮಾಡಲಿದ್ದಾರೆ’ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಸಿದ್ದರಾಮಯ್ಯರನ್ನು ಆರ್ಥಿಕ ತಜ್ಞರು ಎಂದು ಕರೆಯಲಾಗುತ್ತದೆ. ಆದರೆ ಆರ್ಥಿಕ ತಜ್ಞರ ಜೊತೆ ವ್ಯಾಖ್ಯಾನ ತಜ್ಞ ಎಂದೂ ಕರೆಯಬಹುದು. ಮುಂದಿನ ಬಾರಿ ಬಜೆಟ್ನಲ್ಲಿ ನಮಗೆ ಒಂದು ‘ನಿಘಂಟು’ ಕೊಟ್ಟುಬಿಡಿ ಎಂದು ಕಾಲೆಳೆದರು. ಆಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹೊಸ ಪದಗಳಿಗೆ ಸಚಿವ ಝಮೀರ್ ಅವರಿಂದ ಅರ್ಥ ಹೇಳಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ತಕ್ಷಣವೇ ಖಡಕ್ ಆಗಿ ಉತ್ತರಿಸಿದ ಸಚಿವ ಝಮೀರ್ ಅಹ್ಮದ್ ಖಾನ್, ಮುಂದಿನ ಬಜೆಟ್ ಮಾತ್ರ ಅಲ್ಲ, ಬದಲಾಗಿ ಎರಡು ಬಜೆಟ್ಗಳನ್ನು ಸಿದ್ದರಾಮಯ್ಯ ಅವರೇ ಮಂಡಿಸುತ್ತಾರೆ ಎಂದು ಹೇಳಿದರು.
ರೈತರ ಸಾಲ ಮನ್ನಾ ಪ್ರಸ್ತಾವ ಕೇಂದ್ರ ಸರಕಾರದ ಮುಂದಿಲ್ಲ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವವು ಕೇಂದ್ರ ಸರಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದರು. ಆದರೆ, ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಕೇಂದ್ರ ಸರಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ನುಡಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಮಯಕ್ಕೆ ಸರಿಯಾಗಿ ಮತ್ತು ಬೇಕಾದಷ್ಟು ಸಾಲವನ್ನು ನೀಡುವುದು ಇದರಲ್ಲಿ ಸೇರಿದೆ ಎಂದು ಅವರು ಹೇಳಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿವರೆಗಿನ ಬೆಳೆ ಸಾಲವನ್ನು ನೀಡಲಾಗುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದವರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತದೆ. ಅದೂ ಅಲ್ಲದೆ, ಭದ್ರತೆ ರಹಿತ ಕಿರು ಅವಧಿಯ ಕೃಷಿ ಸಾಲಗಳ ಮೊತ್ತವನ್ನು 1.60 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಸರಕಾರವು ಏರಿಸಿದೆ ಹಾಗೂ ಸಾಕಷ್ಟು ಪ್ರಮಾಣದ ಸಾಲ ಬ್ಯಾಂಕಿಂಗ್ ವ್ಯವಸ್ಥೆಯಿಂದ ಕೃಷಿ ಸೇರಿದಂತೆ ಆದ್ಯತಾ ವಲಯಗಳಿಗೆ ಹರಿಯುವಂತೆ ನೋಡಿಕೊಳ್ಳುತ್ತಿದೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ನಿರ್ಮಲಾ ಹೇಳಿದರು. ಜೊತೆಗೆ, ಜಮೀನು ಹೊಂದಿರುವ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮೂಲಕ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ ಹಾಗೂ ಬೆಳೆ ವಿಮೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ವಿಡಿಯೋ ಶೇರ್ ಮಾಡಿದ ಪ್ರಕರಣ: ಆರೋಪಿ ಸೆರೆ
ಮಂಗಳೂರು, ಮಾ.23: ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ 2025ರ ಅಕ್ಟೋಬರ್ ನಲ್ಲಿ ‘ನಝೀರ ಮಂಗಳೂರು’ ಎಂಬ ಫೇಸ್ ಬುಕ್ ಖಾತೆಯಿಂದ ಎಐ ತಂತ್ರಾಶದಲ್ಲಿ ತಿರುಚಿದ ವಿಡಿಯೋವನ್ನು ಶೇರ್ ಮಾಡಿ ಸಮಾಜದಲ್ಲಿ ಕೋಮುದ್ವೇಷವನ್ನು ಹುಟ್ಟುಹಾಕಲು ಪ್ರಚೋದಿಸಿರುವ ಪ್ರಕರಣದ ಆರೋಪಿ ಬಡಗಬೆಳ್ಳೂರು ಗ್ರಾಮದ ಕೊಳ್ತಮಜಲ ನಿವಾಸಿ ರಫೀಕ್ ( 38 ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‘‘ನಝೀರ ಮಂಗಳೂರು’’ ಎಂಬ ಫೇಸ್ ಬುಕ್ ಖಾತೆಯಿಂದ ಆರೋಪಿಯು ವಿಡಿಯೋ ಶೇರ್ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು. ಮಾ. 22ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ದಾವಣಗೆರೆಯಲ್ಲಿ ಮುಸ್ಲಿಮರ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ : ಬಿಜೆಪಿ ಮುಖಂಡ ಭಾಸ್ಕರರಾವ್ ಟೀಕೆ
ಕಲಬುರಗಿ : ದಾವಣಗೆರೆ ದಕ್ಷಿಣ ಮತಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಸ್ಲಿಂ ನಾಯಕರಿಗೆ ಟಿಕೆಟ್ ಕೊಡದೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಿಗೆ ಟಿಕೆಟ್ ಕೊಡುವ ಮೂಲಕ ಮುಸ್ಲಿಮರ ಬೆನ್ನಿಗೆ ಕಾಂಗ್ರೆಸ್ ಚೂರಿ ಹಾಕಿದೆ ಎಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಹೇಳಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಮತಕ್ಷೇತ್ರದಲ್ಲಿ ಮುಸ್ಲಿಂ ಬಾಹುಳ್ಯವಿದ್ದರೂ ಅವರಿಗೆ ಟಿಕೆಟ್ ಕೊಡಲಿಲ್ಲ. ಹಲವು ವರ್ಷಗಳ ಕಾಲ ಬೆಂಬಲಿಸುತ್ತಾ ಬಂದಿರುವ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ತೀರಾ ಅನ್ಯಾಯ ಮಾಡಿದೆ ಎಂದು ಹೇಳಿದರು. ಮುಸ್ಲಿಮರ ಬಗ್ಗೆ ಅನುಕಂಪ ತೋರುವ ಕಾಂಗ್ರೆಸ್ ಪಕ್ಷ ಅಧಿಕಾರ ಅಥವಾ ಚುನಾವಣಾ ಟಿಕೆಟ್ ನೀಡುವ ವಿಷಯ ಬಂದಾಗ ಕುಟುಂಬ ರಾಜಕಾರಣಕ್ಕೆ ಹೆಚ್ಚು ಗಮನ ಕೊಡುತ್ತೆ ಹೊರತು, ಮುಸ್ಲಿಂ ಸಮುದಾಯಕ್ಕೆ ಪ್ರಾಶ್ಯಸ್ತವೇ ಕೊಡಲ್ಲ ಎಂದು ಟೀಕಿಸಿದರು. ನಿರಂತರವಾಗಿ ಕಡೆಗಣನೆಗೆ ಒಳಗಾಗುತ್ತಿರುವ ಮುಸ್ಲಿಂ ಸಮುದಾಯದವರು ಈಗಲಾದರೂ ಎಚ್ಚೆತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಬದಲು ಬಿಜೆಪಿ, ಜೆಡಿಎಸ್ ಪಕ್ಷಗಳನ್ನೂ ಬೆಂಬಲಿಸಬೇಕು. ಈ ಪಕ್ಷಗಳಲ್ಲಿಯೂ ಗುರುತಿಸಿಕೊಂಡರೆ ತಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಬಹುದು ಎಂದು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅಲ್ಲಿನ ಸರ್ಕಾರಗಳು ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ ನಮ್ಮ ಪಕ್ಷ ಮುಸ್ಲಿಂ ಸಮುದಾಯದ ಮುಖಂಡರಿಗೆ ಉತ್ತಮ ಸ್ಥಾನಮಾನ ನೀಡಿದೆ ಎಂದರು. ರಾಜ್ಯದಲ್ಲಿ ಡ್ರಗ್ಸ್, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯದಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಗೃಹಸಚಿವರು ಅಸಮರ್ಥರಾಗಿದ್ದರಿಂದ ಗೃಹ ಇಲಾಖೆಯ ಬಗ್ಗೆ ಪ್ರಿಯಾಂಕ್ ಖರ್ಗೆ, ಮಹಾದೇವಪ್ಪ ಅವರು ಹೇಳಿಕೆ ಕೊಡುವಂತಾಗಿದೆ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಧ್ಯಕ್ಷ ಅಶೋಕ ಬಗಲಿ, ಕಾಡಾದ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಮುಖಂಡೆ ಶೋಭಾ ಬಾಣಿ, ಅವ್ವಣ್ಣ ಮ್ಯಾಕೇರಿ, ಬಾಬುರಾವ ಹಾಗರಗುಂಡಗಿ, ಆನಂದ್ ಪಾಟೀಲ್ ಮತ್ತಿತ್ತರರು ಇದ್ದರು.
ಮಂಗಳೂರು| ಮಾ.25ರಂದು ಇನ್ಲ್ಯಾಂಡ್ ಎಲೋರಾ ಉದ್ಘಾಟನೆ
ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿ ತಲೆ ಎತ್ತಿ ನಿಂತಿರುವ ಅತ್ಯಾಧುನಿಕ ಸವಲತ್ತು, ಸೌಕರ್ಯಗಳನ್ನು ಒಳಗೊಂಡಿರುವ ಇನ್ಲ್ಯಾಂಡ್ ಎಲೋರಾ ವಸತಿ ಸಮುಚ್ಚಯದ ಉದ್ಘಾಟನೆ ಮಾ.25 ರಂದು ನಡೆಯಲಿದೆ. ಬಹುಮಹಡಿ ಕಟ್ಟಡದಲ್ಲಿ 20 ಮನೆಗಳಿದ್ದು, ಪ್ರತಿಯೊಂದು ಮನೆಯ ಎಲ್ಲ ಆಧುನಿಕ ಸವಲತ್ತು ಮತ್ತು ಸೌಕರ್ಯಗಳಿಂದ ಕೂಡಿದ್ದು, ಇನ್ಲ್ಯಾಂಡ್ ಎಲೋರಾ ಈಗ ತನ್ನ ನಿವಾಸಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ಮಣ್ಣಗುಡ್ಡದ ಹೃದಯಭಾಗದಲ್ಲಿರುವ ಇನ್ಲ್ಯಾಂಡ್ ಎಲೋರಾವು ಶಾಂತಿಯುತ ಜೀವನ ಮತ್ತು ನಗರ ಅನುಕೂಲತೆಯ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ. ಈ ಯೋಜನೆಯು 1165 ಚದರ ಅಡಿ , 1510 ಚದರ ಅಡಿ , 1630 ಚದರ ಅಡಿ ವಿಶಾಲವಾದ 2 ಮತ್ತು 3 ಬಿಎಚ್ಕೆ ಮನೆಗಳನ್ನು ಹೊಂದಿದೆ. ನಾಲ್ಕು ಮಹಡಿಗಳ ಕಟ್ಟಡ ಇನ್ಲ್ಯಾಂಡ್ ಎಲೋರಾದ ಪ್ರತಿಯೊಂದು ಪ್ಲಾಟ್ ಕೂಡಾ ವಿಶಿಷ್ಟ ವಿನ್ಯಾಸ ಹಾಗೂ ಉನ್ನತ ಗುಣಮಟ್ಟದ ನಿರ್ಮಾಣದಿಂದ ಕೂಡಿದೆ. ಇದು ಇನ್ಲ್ಯಾಂಡ್ನ ಹೆಗ್ಗಳಿಕೆಯಾಗಿರುತ್ತದೆ. ಇನ್ಲ್ಯಾಂಡ್ ಎಲೋರಾ ನಿವಾಸಿಗಳಿಗೆ ಪ್ರಮುಖ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಶಾಪಿಂಗ್ ತಾಣ ಗಳು ಮತ್ತು ಪೂಜಾ ಸ್ಥಳಗಳಿಗೆ ತೆರಳಲು ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಶಾಲಾ ಬಸ್ಗಳು ಮತ್ತು ಆಟೋ ರಿಕ್ಷಾಗಳು ಸೇರಿದಂತೆ ಬಹು-ಮಾರ್ಗದ ಸಾರಿಗೆ ಆಯ್ಕೆಗಳು ಸುಲಭವಾಗಿ ಲಭ್ಯವಿದ್ದು, ಇದು ಪ್ರತಿದಿನದ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಇನ್ಲ್ಯಾಂಡ್ ಎಲೋರಾದಲ್ಲಿ ದಿನ ನಿತ್ಯದ ಜೀವನಶೈಲಿಗೆ ಅಗತ್ಯದ ಸೌಲಭ್ಯಗಳು ಇವೆ. ವಿವರ ಇಂತಿವೆ:- * ಸುಸಜ್ಜಿತ ಜಿಮ್ನಾಶಿಯಂ * ಮಕ್ಕಳ ಆಟದ ಪ್ರದೇಶ * ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ ಹಾಗೂ ಸಿಸಿಟಿವಿ ಸಹಿತ 24 ಗಂಟೆಗಳ ಭದ್ರತಾ ವ್ಯವಸ್ಥೆ ಇರುತ್ತದೆ. ಈ ಎಲ್ಲಾ ಸೌಲಭ್ಯಗಳು ನಿಮ್ಮ ಕುಟುಂಬದ ಎಲ್ಲಾ ವಯಸ್ಸಿನ ಸದಸ್ಯರಿಗೆ ಸ್ವತಂತ್ರ ಹಾಗೂ ಆರಾಮದಾಯಕ ವಾತಾವರಣ ಒದಗಿಸಲು ಸಿದ್ಧವಾಗಿದೆ. ಇನ್ಲ್ಯಾಂಡ್ ಎಲೋರಾದಲ್ಲಿ ಮನೆ ಖರೀದಿದಾರರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈಗ ಕೆಲವೇ ಫ್ಲಾಟ್ ಗಳು ಮಾತ್ರ ಲಭ್ಯವಿದ್ದು ವಿವರಗಳಿಗೆ ಇಲ್ಲಿ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಸ್ಥಳಕ್ಕೆ ಭೇಟಿ ನೀಡಿ ಫ್ಲಾಟ್ ಗಳನ್ನು ಆಯ್ಕೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಇನ್ಲ್ಯಾಂಡ್ ಬಿಲ್ಡರ್ಸ್, 3ನೇ ಮಹಡಿ, ಇನ್ಲ್ಯಾಂಡ್ ಓರ್ನಟ್, ನವಭಾರತ ಸರ್ಕಲ್, ಮಂಗಳೂರು -575003. ಸಂಪರ್ಕ -9972089099, www.inlandbunilders.net
West Bengal | ಉವೈಸಿ-ಹುಮಾಯೂನ್ ಕಬೀರ್ ಮೈತ್ರಿಯನ್ನು ಟೀಕಿಸಿದ ಪ್ರತಿಪಕ್ಷಗಳು
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಅಖಿಲ ಭಾರತ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಮ್ಐಎಮ್) ಮತ್ತು ತೃಣಮೂಲ ಕಾಂಗ್ರೆಸ್ನಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ನಡುವಿನ ಮೈತ್ರಿಯನ್ನು ಪ್ರತಪಕ್ಷ ನಾಯಕರು ಸೋಮವಾರ ಟೀಕಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ, ಇಂಥ ಕ್ರಮಗಳು ಮತಗಳನ್ನು ವಿಭಜಿಸಬಹುದು ಮತ್ತು ‘ಜಾತ್ಯತೀತ ಪಕ್ಷಗಳನ್ನುʼ ದುರ್ಬಲಗೊಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗಾಗಿ, ಅಸದುದ್ದೀನ್ ಉವೈಸಿಯವರ ಎಐಎಮ್ಐಎಮ್ ಪಕ್ಷವು ಹುಮಾಯೂನ್ ಕಬೀರ್ರ ಆಮ್ ಜನತಾ ಉನ್ನಯನ್ ಪಕ್ಷ (ಎಜೆಯುಪಿ)ದೊಂದಿಗೆ ಮೈತ್ರಿ ಮಾಡಿಕೊಂಡಿದೆ. 294 ಸದಸ್ಯ ಬಲದ ಪಶ್ಚಿಮಬಂಗಾಳ ವಿಧಾನಸಭೆಗೆ ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 4ಂದು ಫಲಿತಾಂಶ ಹೊರಬೀಳಲಿದೆ. ಇದು ‘‘ಕೆಟ್ಟ ಬೆಳವಣಿಗೆ’’ ಎಂಬುದಾಗಿ ಬಣ್ಣಿಸಿರುವ ಟಿಎಮ್ಸಿ ಸಂಸದ ಸೌಗತ ರಾಯ್, ಇದು ಮುಸ್ಲಿಮ್ ಮತದಾರರನ್ನು ಪ್ರತ್ಯೇಕಿಸಬಹುದು ಎಂದು ಹೇಳಿದ್ದಾರೆ. ‘‘ಉವೈಸಿಯ ಪಕ್ಷವು ಬಿಜೆಪಿಗೆ ಸಹಾಯ ಮಾಡುತ್ತಿದೆ. ಆದರೆ ಅದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅವರಿಗೆ ಇಲ್ಲಿ ಶಕ್ತಿಯಿಲ್ಲ ಹಾಗೂ ಅವರು ಮತಗಳನ್ನು ಪಡೆಯುವುದಿಲ್ಲ’’ ಎಂದು ಸಂಸತ್ ಭವನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್ ಹೇಳಿದರು. ‘‘ಕೆಲವು ವ್ಯಕ್ತಿಗಳು ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಗುತ್ತಿಗೆಯನ್ನು ಪಡೆದುಕೊಂಡಿದ್ದಾರೆ’’ ಎಂದು ಕಾಂಗ್ರೆಸ್ ಸಂಸದ ಮಣಿಕ್ಕಮ್ ಟಾಗೋರ್ ಆರೋಪಿಸಿದರು.
Kalaburagi | ಮಾ.24, 25 ರಂದು ಅಬಕಾರಿ ಇಲಾಖೆಯಿಂದ ಜಪ್ತಿಯಾದ 20 ವಾಹನಗಳ ಬಹಿರಂಗ ಹರಾಜು
ಕಲಬುರಗಿ : ಜಿಲ್ಲೆಯ ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿರುವ ಒಟ್ಟು 20 ವಿವಿಧ ಮಾದರಿಯ ವಾಹನಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. ಕಲಬುರಗಿ ಅಬಕಾರಿ ನಿರೀಕ್ಷಕರ ವಲಯ ಕಚೇರಿ ನಂ.1, ವಲಯ ಕಚೇರಿ ನಂ.2 ಹಾಗೂ ಚಿಂಚೋಳಿ ಅಬಕಾರಿ ನಿರೀಕ್ಷಕರ ವಲಯ ಕಚೇರಿಗಳಲ್ಲಿ ಇರುವ ಈ ವಾಹನಗಳ ಹರಾಜು ಮಾರ್ಚ್ 24 ಮತ್ತು 25ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಮಾರ್ಚ್ 24ರಂದು ಕಲಬುರಗಿ ವಲಯ ನಂ.1 ಕಚೇರಿಯಲ್ಲಿ 2 ವಾಹನಗಳು ಹರಾಜಿಗೆ ಇಡಲಾಗುತ್ತದೆ. ಮಾರ್ಚ್ 25ರಂದು ವಲಯ ನಂ.2 ಕಚೇರಿಯಲ್ಲಿ 6 ವಾಹನಗಳು ಹಾಗೂ ಚಿಂಚೋಳಿ ಕಚೇರಿಯಲ್ಲಿ 12 ವಾಹನಗಳನ್ನು ಹರಾಜು ಮಾಡಲಾಗುತ್ತದೆ. ಹರಾಜಿನ ಷರತ್ತುಗಳು, ವಾಹನಗಳ ವಿವರಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಎಲ್ಪಿಜಿ ಹೊತ್ತ 2 ಭಾರತೀಯ ಹಡಗುಗಳು ಹೋರ್ಮುಝ್ ದಾಟಲು ಸಜ್ಜು
ಹೊಸದಿಲ್ಲಿ: ಭಾರತೀಯ ಧ್ವಜಗಳನ್ನು ಹೊತ್ತ ಎರಡು ಎಲ್ಪಿಜಿ ಟ್ಯಾಂಕರ್ಗಳು ಪರ್ಸಿಯನ್ ಕೊಲ್ಲಿಯಿಂದ ತಮ್ಮ ಯಾನವನ್ನು ಆರಂಭಿಸಿದ್ದು, ಸಂಘರ್ಷಪೀಡಿತ ಹೋರ್ಮುಝ್ ಜಲಸಂಧಿಯನ್ನು ಶೀಘ್ರದಲ್ಲೇ ದಾಟುವ ನಿರೀಕ್ಷೆಯಿದೆ. ‘ಪೈನ್ ಗ್ಯಾಸ್’ ಮತ್ತು ‘ಜಗ್ ವಸಂತ್’ ಎಂಬ ಹೆಸರಿನ ಎಲ್ಪಿಜಿ ಟ್ಯಾಂಕರ್ಗಳು ಪರಸ್ಪರ ಸಮೀಪದಲ್ಲೇ ಚಲಿಸುತ್ತಿದ್ದು, ಸೋಮವಾರ ಅಪರಾಹ್ನ ಇರಾನ್ನ ಲರಕ್ ಮತ್ತು ಕೇಶ್ಮ್ ದ್ವೀಪಗಳ ನಡುವಿನ ಜಲಪ್ರದೇಶದ ಸಮೀಪವಿದ್ದವು. ಹೋರ್ಮುಝ್ ಜಲಸಂಧಿಯನ್ನು ದಾಟುವುದಕ್ಕಾಗಿ ತಮ್ಮ ಗುರುತನ್ನು ಇರಾನ್ ಅಧಿಕಾರಿಗಳಿಗೆ ಸ್ಪಷ್ಟಪಡಿಸುವುದಕ್ಕಾಗಿ ಅವುಗಳು ಅಲ್ಲಿಗೆ ಹೋಗಿರಬೇಕೆಂದು ಭಾವಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಆಕ್ರಮಣ ಆರಂಭಿಸಿದಂದಿನಿಂದ ಪರ್ಸಿಯನ್ ಕೊಲ್ಲಿಯಲ್ಲಿ 22 ಭಾರತೀಯ ಧ್ವಜಗಳನ್ನು ಹೊತ್ತ ಹಡಗುಗಳು ಬಾಕಿಯಾಗಿವೆ. ಈ ಪೈಕಿ ಈ ಎರಡು ಎಲ್ಪಿಜಿ ಟ್ಯಾಂಕರ್ಗಳೂ ಸೇರಿವೆ. ಈ ಎರಡು ಎಲ್ಪಿಜಿ ಟ್ಯಾಂಕರ್ಗಳು ಸೋಮವಾರ ಹೋರ್ಮುಝ್ ಜಲಸಂಧಿಯನ್ನು ದಾಟಿ ಭಾರತೀಯ ಬಂದರುಗಳತ್ತ ಸಾಗಬಹುದು ಎನ್ನುವ ಸೂಚನೆಯನ್ನು ಹಡಗು ನಿಗಾ ದತ್ತಾಂಶಗಳು ನೀಡಿವೆ. ಇದಕ್ಕೂ ಮುಂಚೆ, 92,712 ಟನ್ ಅಡುಗೆ ಅನಿಲವನ್ನು ಹೊತ್ತ ಹಡಗುಗಳಾದ ಎಮ್ಟಿ ಶಿವಲಿಕ್ ಮತ್ತು ಎಮ್ಟಿ ನಂದಾ ದೇವಿ ಟ್ಯಾಂಕರ್ಗಳು ಹೋರ್ಮುಝ್ ಜಲಸಂಧಿಯನ್ನು ದಾಟಿ ಸುರಕ್ಷಿತವಾಗಿ ಭಾರತೀಯ ತೀರವನ್ನು ತಲುಪಿದ್ದವು. ಹೋರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ದಾಟಲು 14 ಗಂಟೆಗಳವರೆಗಿನ ಸಮಯ ಬೇಕಾಗುತ್ತದೆ. ಪರ್ಸಿಯನ್ ಕೊಲ್ಲಿಯಲ್ಲಿರುವ ಅನಿಲ ಉತ್ಪಾದಕರನ್ನು ಬಾಹ್ಯ ಜಗತ್ತಿಗೆ ಸಂಪರ್ಕಿಸುವ ಹೋರ್ಮುಝ್ ಜಲಸಂಧಿಯು, ಫೆಬ್ರವರಿ ಅಂತ್ಯದಲ್ಲಿ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಆರಂಭಿಸಿದಂದಿನಿಂದ ಬಹುತೇಕ ಮುಚ್ಚಿದೆ.
ಮಂಗಳೂರು| ಮಾದಕ ವಸ್ತು ಮಾರಾಟಕ್ಕೆ ಯತ್ನ ಪ್ರಕರಣ: ಮೂವರ ಬಂಧನ
ಮಂಗಳೂರು, ಮಾ.23: ಮಂಗಳೂರು ನಗರದ ಎಕ್ಕೂರು ಪರಿಸರದಲ್ಲಿ ಆಟೋ ರಿಕ್ಷಾದಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸೈ ಶರಣಪ್ಪ ಭಂಡಾರಿ ಮತ್ತು ಸಿಬ್ಬಂದಿ ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ. ಒಟ್ಟು 26.06 ಗ್ರಾಂ ತೂಕದ ಮಾದಕ ವಸ್ತು ವಶಪಡಿಸಕೊಳ್ಳಲಾಗಿದ್ದು, ಇದರ ಮೌಲ್ಯ ಒಟ್ಟು ಸುಮಾರು 2,50,000 ರೂ ಹಾಗೂ ಸ್ವಾಧೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 4,37,500 ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಎಕ್ಕೂರು ಫಿಶರಿಸ್ ಕಾಲೇಜ್ ಎದುರು ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪೂರ್ವ ಬದಿಯಲ್ಲಿ ನಿಟ್ಟೆ ಗೆಸ್ಟ್ ಹೌಸ್ ಬಳಿ ಆಟೋ ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳಾದ ಹೈದರ್ ಯಾನೆ ಹೈದರ್ ಆಲಿ, ಸಜಾದ್ , ಜೈಸನ್ ಮೆನೆಜಸ್ ಓಡಿ ತಪ್ಪಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸಿದರು. ಆರೋಪಿಗಳನ್ನು ಪೊಲೀಸರು ಹಿಡಿದು ತಪಾಸಣೆ ನಡೆಸಿದಾಗ ಆರೋಪಿ ಹೈದರ್ ಆಲಿಯು ರಿಕ್ಷಾದ ಹ್ಯಾಂಡಲ್ನ ಬ್ಯಾಗ್ ನಲ್ಲಿಟ್ಟಿದ್ದ 15.40 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ತೂಕ ಮಾಪನ, ಮೊಬೈಲ್ ಫೋನ್-1 ಮತ್ತು ನಗದು ಹಣ 30,000 ರೂ. ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kalaburagi | ಭಗತ್ ಸಿಂಗ್, ರಾಜಗುರು, ಸುಖದೇವ್ ಹುತಾತ್ಮ ದಿನ ಆಚರಣೆ
ಕಲಬುರಗಿ: ದೇಶದ ಮಹಾನ್ ಕ್ರಾಂತಿಕಾರರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಹುತಾತ್ಮ ದಿನವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾಗೂ ಶಾರದಾ ವಿವೇಕ ಮಹಿಳಾ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಚರಿಸಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಈ ಮೂವರು ಯುವ ಕ್ರಾಂತಿಕಾರರ ತ್ಯಾಗವನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಮೀನಾ ಮಾತನಾಡಿ, ಬ್ರಿಟಿಷರ ಸಾಮ್ರಾಜ್ಯಶಾಹಿಯನ್ನು ಎದುರಿಸಲು ಯುವಜನರಲ್ಲಿ ದೇಶಭಕ್ತಿ ಮೂಡಿಸಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗ ಸದಾ ಸ್ಫೂರ್ತಿದಾಯಕವಾಗಿದೆ ಎಂದರು. ಕೇವಲ 23ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇವರ ಜೀವನ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು. ಯುವಕರು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗದೆ, ಇತಿಹಾಸದ ಮಹನೀಯರ ವಿಚಾರಗಳನ್ನು ಅರಿತು ತಮ್ಮ ಶಕ್ತಿ ಹಾಗೂ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಕರೆ ನೀಡಿದರು. ಡಿವೈಎಫ್ಐ ರಾಜ್ಯಾಧ್ಯಕ್ಷ ಲವಿತ್ರ ವಸ್ತ್ರದ ಅವರು ಮಾತನಾಡಿ, ಇಂದಿನ ಯುವಜನತೆ ತಂತ್ರಜ್ಞಾನ ಮತ್ತು ಶಿಕ್ಷಣದೊಂದಿಗೆ ಬೆಳೆದಿದ್ದರೂ ನಿರುದ್ಯೋಗ, ಅಸಮಾನತೆ ಹಾಗೂ ಸಾಮಾಜಿಕ ಅನ್ಯಾಯದಂತಹ ಸವಾಲುಗಳನ್ನು ಎದುರಿಸುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಈ ಕ್ರಾಂತಿಕಾರರ ಆದರ್ಶಗಳು ಇನ್ನಷ್ಟು ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸಹೋದರತ್ವ ಸ್ಥಾಪನೆಗಾಗಿ ಯುವಜನತೆ ಹೋರಾಡಬೇಕು. ನವಸಾಮ್ರಾಜ್ಯಶಾಹಿಯ ವಿರುದ್ಧ ಐಕ್ಯತೆಯಿಂದ ಮುಂದುವರಿಯಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಭಾಗೀರತಿ ಮಾತನಾಡಿ, ಭಗತ್ ಸಿಂಗ್ ಯುವಕರಲ್ಲಿ ಚಿಂತನೆ, ಧೈರ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿದಂತೆ, ಇಂದಿನ ಯುವಜನತೆ ಶಿಕ್ಷಣ, ವಿಜ್ಞಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸಬೇಕು ಎಂದು ಕರೆ ನೀಡಿದರು. ಅನ್ಯಾಯ ಎಲ್ಲೇ ನಡೆದರೂ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೋಧನಾ ಸಿಬ್ಬಂದಿಗಳಾದ ವನಜಾಕ್ಷಿ ಪಾಟೀಲ್, ಮಹಾದೇವಿ ಕಲ್ಲಾ ಹಾಗೂ ಭವಾನಿ ಬಡದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉಡುಪಿಗೆ ಪ್ರತ್ಯೇಕ ಕಂದಾಯ ಉಪವಿಭಾಗಕ್ಕೆ ಐವನ್ ಡಿಸೋಜ ಒತ್ತಾಯ
ಉಡುಪಿ, ಮಾ.23: ಉಡುಪಿಗೆ ತುರ್ತಾಗಿ ಪ್ರತ್ಯೇಕ ಉಡುಪಿ ಕಂದಾಯ ಉಪವಿಭಾಗ (ಎಸಿ) ಕಚೇರಿಯನ್ನು ಮಂಜೂರುಗೊಳಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಇಂದು ರಾಜ್ಯ ವಿಧಾನಪರಿಷತ್ನಲ್ಲಿ ಸರಕಾರದ ಗಮನ ಸೆಳೆದರು. ಉಡುಪಿಗೆ ತುರ್ತಾಗಿ ಪ್ರತ್ಯೇಕ ಉಡುಪಿ ಕಂದಾಯ ಉಪವಿಭಾಗ ಕಛೇರಿ ಜನತೆಯ ಬಹುದಿನಗಳ ಬೇಡಿಕೆ. ಈ ಬಗ್ಗೆ ಇಂದು ಐವನ್ ಡಿ’ಸೋಜಾ ಶೂನ್ಯ ವೇಳೆಯಲ್ಲಿ ಸದನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಸರಕಾರದ ಗಮನಸೆಳೆದರು. ವಿಷಯ ಮಂಡಿಸಿ ಮಾತನಾಡಿದ ಅವರು, 1862ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ನಂತರ 1927ರಲ್ಲಿ ಆಡಳಿತಾತ್ಮಕ ಸೌಲಭ್ಯಕ್ಕಾಗಿ ಪುತ್ತೂರು, ಮಂಗಳೂರು ಮತ್ತು ಕುಂದಾಪುರ ಉಪವಿಭಾಗ ಗಳನ್ನು ರಚಿಸಲಾಯಿತು. ಆ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಕ್ಕೆ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳನ್ನು ಸೇರಿಸಲಾಗಿತ್ತು. 1997ರ ಜುಲೈ 25ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕವಾಗಿ ಉಡುಪಿ ಜಿಲ್ಲೆ ರಚನೆಯಾದ ನಂತರ, ಜಿಲ್ಲೆಯ ಕೇಂದ್ರಭಾಗದಲ್ಲಿ ಪ್ರತ್ಯೇಕ ಕಂದಾಯ ಉಪವಿಭಾಗ ಕಚೇರಿ ಅಗತ್ಯತೆ ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ 2019ರಲ್ಲಿ ಜಿಲ್ಲಾಡಳಿತವು ಹೊಸ ಉಪವಿಭಾಗ ರಚನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದರು. ಪ್ರಸ್ತುತ, ಕುಂದಾಪುರ ಉಪವಿಭಾಗದ ವ್ಯಾಪ್ತಿಗೆ ಜಿಲ್ಲೆಯ ಏಳು ತಾಲೂಕುಗಳ ಅರ್ಜಿಗಳು ಸೇರಿರುವುದರಿಂದ, ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ. ಪಹಣಿ ತಿದ್ದುಪಡಿ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳಿಗೆ ಜನರು ಕುಂದಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗು ತ್ತಿದೆ ಎಂಬ ಅಸಮಾಧಾನ ಜನರಿಂದ ವ್ಯಕ್ತವಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಸುಗಮತೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಉಡುಪಿಯಲ್ಲಿ ಪ್ರತ್ಯೇಕ ಕಂದಾಯ ಉಪವಿಭಾಗ ಪ್ರಾರಂಭಿ ಸುವುದು ಅನಿವಾರ್ಯವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ, 2024ರ ಜುಲೈ 19ರಂದು ಜಿಲ್ಲಾಡಳಿತ ಮತ್ತೊಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದ್ದರಿಂದ ಕಂದಾಯ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಉಪವಿಭಾಗ ಕಚೇರಿ ಸ್ಥಾಪನೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ಐವನ್ ಡಿಸೋಜ ಮನವಿ ಮಾಡಿದರು.
ಕರಾವಳಿಗೆ ಭ್ರಷ್ಟಾಚಾರವನ್ನು ಪರಿಚಯಿಸಿದವರೇ ಶಾಸಕ ಸುನಿಲ್ ಕುಮಾರ್: ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ
ಉಡುಪಿ: ಎರಡು ದಶಕಗಳ ಹಿಂದೆ ಕರಾವಳಿಗೆ ಭ್ರಷ್ಟಾಚಾರವನ್ನು ಪರಿಚಯಿಸಿದವರೇ ಕಾರ್ಕಳದ ಶಾಸಕರಾದ ಸುನಿಲ್ ಕುಮಾರ್. ಶಾಸಕರ ಹಾಗೂ ಅವರ ಪಟಾಲಂನ ಕಮಿಷನ್ ಉಪಟಳದಿಂದ ಜವುಳಿ ಪಾರ್ಕ್ ಕ್ಷೇತ್ರದಲ್ಲಿ ಇನ್ನೂ ತಲೆ ಎತ್ತಿಲ್ಲ ಎಂದು ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. ಉಡುಪಿ ಪ್ರೆಸ್ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮುಂಡ್ಕೂರಿನ ಧಾರ್ಮಿಕ ಕ್ಷೇತ್ರದಲ್ಲಿ ನಡೆದ ಹಲ್ಲೆ ಹಾಗೂ ಕಾರ್ಕಳಕ್ಕೆ ನೀರುಣಿಸುವ ಮುಂಡ್ಲಿ ಅಣೆಕಟ್ಟಿ ಮೂರು ಗೇಟ್ಗಳ ಕಳವು ಪ್ರಕರಣ ಇವರ ಪಟಾಲಂನ ದುಷ್ಕೃತ್ಯಗಳಿಗೆ ಸಾಕ್ಷಿಯಾಗಿವೆ ಎಂದವರು ದೂರಿದರು. ಮುಂಡ್ಕೂರು ಧಾರ್ಮಿಕ ಕ್ಷೇತ್ರದ ದುರ್ಘಟನೆ ಶಾಸಕನ ಬೆಂಬಲಿಗ ರಿಂದ ನಡೆದರೆ, ಮುಂಡ್ಲಿ ಅಣೆಕಟ್ಟಿನ ಮೂರು ಗೇಟ್ಗಳನ್ನು ಅವರ ಬೆಂಬಲಿಗ ಕೆಲಸಗಾರರೇ ಕದ್ದಿದ್ದಾರೆ. ಅಜೆಕಾರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾ ದರೂ ಎಲ್ಲೂ ಬಹಿರಂಗಗೊಳ್ಳದಂತೆ ಅವರು ನೋಡಿಕೊಂಡಿದ್ದಾರೆ ಎಂದು ಮುನಿಯಾಲು ಆರೋಪಿಸಿದರು. ಈ ಬಗ್ಗೆ ಕೂಡಲೇ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಜಿಪಂ, ತಾಪಂ ಸೇರಿದಂತೆ ವಿವಿಧ ಚುನಾವಣೆಗಳು ಶೀಘ್ರವೇ ನಡೆಯಲಿರುವುದರಿಂದ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸುವ ಕೆಲಸವನ್ನು ಶಾಸಕರ ಬೆಂಬಲಿಗರು ನಡೆಸುತಿದ್ದಾರೆ. ಅಲ್ಲದೇ ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ಅಪಪ್ರಚಾರ ಕಾರ್ಕಳ ಕ್ಷೇತ್ರದಲ್ಲಿ ಶಾಸಕರಿಂದ ನಡೆಯುತ್ತಿದೆ ಎಂದರು. ಐದು ಗ್ಯಾರಂಟಿ ಯೋಜನೆಗಳ ಮೂಲಕ ಒಟ್ಟು 425 ಕೋಟಿ ರೂ. ತಾಲೂಕಿನ ಮನೆಮಗಳಿಗೆ ತಲುಪಿವೆ ಎಂದು ಹೇಳಿದ ಉದಯ ಶೆಟ್ಟಿ, ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ 60 ಕೋಟಿ ರೂ.ಸೇರಿದಂತೆ ಒಟ್ಟು 110 ಕೋಟಿ ರೂ.ಗಳ ಅನುದಾನ ಬಂದಿವೆ. ಆದರೆ ಶಾಸಕರು ಮಾತ್ರ ಯಾವುದೇ ಅನುದಾನ ಬಂದಿಲ್ಲ ಎಂದು ಹೇಳಿ ಅಪಪ್ರಚಾರ ಮಾಡುತಿದ್ದಾರೆ ಎಂದು ಹೇಳಿದರು. ಕುಕ್ಕಂದೂರು ಗ್ರಾಮದ ಪರಪು ಸೇತುವೆ, ರೆಂಜಾಳ ಗ್ರಾಪಂನ ಬಳಿಯ ಸೇತುವೆ, ಬೋಳಗ್ರಾಮದ ರುದ್ರ ಸೋಮನಾಥೇಶ್ವರ ದೇವಸ್ಥಾನ ಬಳಿಯ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ತಲಾ 1.5 ಕೋಟಿ ರೂ. ಬಿಡುಗಡೆ ಯಾಗಿದೆ. ಅಲ್ಲದೇ ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳ ಹಲವು ಗ್ರಾಮಗಳ ಒಟ್ಟು 29 ಕಾಮಗಾರಿಗಳಿಗೆ ರಾಜ್ಯ ಸರಕಾರ ಮುಖ್ಯಮಂತ್ರಿಗಳ ಮೂಲಕ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸುಮಾರು 25 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದು ಮುನಿಯಾಲು ತಿಳಿಸಿದರು. ಸುನಿಲ್ ಕುಮಾರ್ ಅವರು, ಧರ್ಮ ಹಾಗು ದೇವರ ಹೆಸರಿನಲ್ಲಿ ವೋಟ್ ಕೇಳುತ್ತಿದ್ದಾರೆ ಹೊರತು ಅಭಿವೃದ್ದಿ ಮಾಡುತ್ತಿಲ್ಲ. ಕೇವಲ ರಾಜ್ಯಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರ ಬೆಂಬಲಿಗನೇ ಮುಂಡ್ಲಿ ಅಣೆಕಟ್ಟಿನ ಗೇಟ್ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಮುಂಡ್ಲಿ ಅಣೆಕಟ್ಟಿನ ಗೇಟ್ ಹಾಗೂ ಉಪಕರಣ ಕಳ್ಳತನವಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಪರಶುರಾಮ ಥೀಮ್ ಪಾರ್ಕ್ನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುನಿಯಾಲು ಉದಯ ಶೆಟ್ಟಿ, ಈ ಕುರಿತು ನಾವು ಹಾಕಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ನಾಳೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ನಾಳೆಯಾದರೂ ಕೋರ್ಟ್ನಿಂದ ಸೂಕ್ತ ನಿರ್ದೇಶನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಈ ನಡುವೆ ಬೈಲೂರಿನ ಬೆಟ್ಟದ ಮೇಲೆ ನಿಂತಿರುವ ಪರಶುರಾಮದ ಮೂರ್ತಿಯನ್ನು ತೆಗೆಯಲು ಪ್ರಯತ್ನ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು. ಮುಂದಿನ ವರ್ಷ ನಡೆಯುವ ಕಾರ್ಕಳ ಗೋಮ್ಮಟನ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಎಂ.ಎನ್.ರಾಜೇಂದ್ರಕುಮಾರ್ ಪ್ರಯತ್ನದಿಂದ ರಾಜ್ಯ ಸರಕಾರ 75 ಕೋಟಿ ರೂ.ಬರುವ ನಿರೀಕ್ಷೆ ಇದೆ. ಇದಕ್ಕೆ ಅಡ್ಡಗಾಲು ಹಾಕದಂತೆ ಸುನಿಲ್ಗೆ ಆ ದೇವರೇ ಸದ್ಭುದ್ಧಿ ನೀಡಬೇಕು ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಬಾಸ್ಕರ್, ಹೆಬ್ರಿ ಬ್ಲಾಕ್ನ ಪ್ರಸನ್ನ ಶೆಟ್ಟಿ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕಲಬುರಗಿ | ಜಿಲ್ಲಾಡಳಿತದಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ
ಕಲಬುರಗಿ: ದೇವರ ದಾಸಿಮಯ್ಯನವರ ಪವಾಡ ಇಂದಿಗೂ ಜೀವಂತ ಸಾಕ್ಷಿಯಾಗಿದೆ. ಮುದನೂರಿನಲ್ಲಿ ಏಳು ತೀರ್ಥಗಳಿಂದ ನೀರು ಇಂದಿಗೂ ಹರಿಯುತ್ತಿದ್ದು, ಬರಗಾಲದಲ್ಲೂ ಬತ್ತುವುದಿಲ್ಲ ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಮಪ್ರಭು ಪಾಟೀಲ ಹೇಳಿದರು. ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ದೇವರ ದಾಸಿಮಯ್ಯ ಅಪ್ಪಟ ಶಿವಭಕ್ತರಾಗಿದ್ದು, ಭೀಕರ ಬರಗಾಲದ ಸಂದರ್ಭದಲ್ಲೂ ದಾಸೋಹ ನಡೆಸಿದ ಘಟನೆಗಳು ಅವರ ಜೀವನ ಚರಿತ್ರೆಯಲ್ಲಿ ಕಾಣಿಸುತ್ತವೆ. ಸರಳ ಕನ್ನಡದಲ್ಲಿ ಗಹನ ತತ್ವಗಳನ್ನು ವಚನಗಳ ಮೂಲಕ ಜನರಿಗೆ ತಲುಪಿಸಿದರು ಎಂದು ಹೇಳಿದರು. ಈ ವೇಳೆ ಅವರು ದಾಸಿಮಯ್ಯನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದರು – “ಮೊಲೆ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ”. ನೇಕಾರ ಸಮುದಾಯದ ಅಭಿವೃದ್ಧಿಗಾಗಿ ನೇಕಾರ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಜಾಗ ಒದಗಿಸಲಾಗುವುದು ಎಂದು ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಶಾಸಕನಾಗಿ ತನ್ನ ಅನುದಾನದಿಂದ ಸಹ ಸಹಕಾರ ನೀಡುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಮಾತನಾಡಿ, ಹಿಂದಿನ ಕಾಲದಲ್ಲಿ ನೂಲಿನ ವೃತ್ತಿ ಗ್ರಾಮಗಳಲ್ಲಿ ವ್ಯಾಪಕವಾಗಿದ್ದರೂ ಯಂತ್ರೋಪಕರಣಗಳ ಬಳಕೆಯಿಂದ ಅದು ಕುಂಠಿತವಾಗಿದೆ ಎಂದು ಹೇಳಿದರು. ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ನೇಕಾರರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಸಿದ್ಧಾಶ್ರಮ ವಿರಕ್ತ ಮಠದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿದರು. ಕಲಬುರಗಿ ಅನನ್ಯ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ. ಕರುಣಾ ಜಮದಾರಖಾನಿ, ಅವರು ವಿಶೇಷ ಉಪನ್ಯಾಸದ ಮೂಲಕ ದೇವರ ದಾಸಿಮಯ್ಯನವರ ಜೀವನ ಸಾರ, ವಚನಗಳ ಸಾರ, ಮುಂತಾದ ವಿಷಯಗಳ ಸಂಕ್ಷಿಪ್ತ ಮಾಹಿತಿ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಎ. ನಾಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಡಬರಾಬಾದ ಅಭಿನವ ರೇವಣಸಿದ್ಧ ಪಟ್ಟದೇವರು, ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಶಿವಪ್ರಭು ಹಿರೇಮಠ, ಕರ್ನಾಟಕ ಜಿಲ್ಲಾ ನೇಕಾರ ಸಂಘದ ಒಕ್ಕೂಟದ ಅಧ್ಯಕ್ಷ ಪ್ರದೀಪ ಗಣೇಶ ಸಂಗಾ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಮಿತಿ ಅಧ್ಯಕ್ಷರಾದ ಶಾಂತಕುಮಾರ್ ಆರ್. ಯಳಸಂಗಿ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಇತರರಿದ್ದರು.
ಇರಾನ್ ನ ಪರಮೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಜೀವಂತವಾಗಿರುವುದೇ ಅನುಮಾನ: ಟ್ರಂಪ್
ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸಿದೆ ಎಂದ ಅಮೆರಿಕ ಅಧ್ಯಕ್ಷ
Middle East Conflict- `ಮಾತುಕತೆ ನಡೆಸಲು ಅನೇಕ ಇರಾನ್ ನಾಯಕರಿಂದ ದುಂಬಾಲು': ಡೊನಾಲ್ಡ್ ಟ್ರಂಪ್ ಈಗ ಹೇಳಿದ್ದೇನು?
ಇರಾನ್ ವಿರುದ್ಧ ಡೊನಾಲ್ಡ್ ಟ್ರಂಪ್ ಅವರು 5 ದಿನಗಳ ಯುದ್ಧವಿರಾಮ ಘೋಷಿಸಿದ ಬಳಿಕ ಇರಾನ್ ನ ಮಧ್ಯಮಗಳು ಅಮೆರಿಕ ಯಾವ ಇರಾನ್ ಜೊತೆ ಮಾತುಕತೆಯನ್ನೇ ನಡೆಸಿಲ್ಲ ಎಂದು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಿರುವ ಡೊನಾಲ್ಡ್ ಟ್ರಂಪ್ ಅವರು ನಾನು ಇರಾನಿನ ಯಾವುದೇ ಒಬ್ಬ ಸರ್ವೋಚ್ಚ ನಾಯಕನೊಂದಿಗೆ ಮಾತುಕತೆ ಮಾಡಿದ್ದಲ್ಲ, ಅನೇಕ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ. ನಾನು ಅವರಿಗೆ ಕರೆ ಮಾಡಲಿಲ್ಲ. ಅವರು ಕರೆ ಮಾಡಿದರು. ಅವರು ಒಪ್ಪಂದ ಮಾಡಿಕೊಳ್ಳಲು ಬಯಸಿದ್ದರು, ಮತ್ತು ನಾವು ಒಪ್ಪಂದ ಮಾಡಿಕೊಳ್ಳಲು ಸಹ ಸಿದ್ಧರಿದ್ದೇವೆ ಎಂದಿದ್ದಾರೆ.
ಬ್ರಿಟನ್: ಯಹೂದಿ ಆಂಬ್ಯುಲೆನ್ಸ್ ಸೇವೆಯ ವಾಹನಗಳಿಗೆ ಬೆಂಕಿ
ಲಂಡನ್: ಲಂಡನ್ನಲ್ಲಿ ಯಹೂದಿಗಳ ಪ್ರಾರ್ಥನಾ ಮಂದಿರದ ಹೊರಗೆ ನಿಲ್ಲಿಸಲಾಗಿದ್ದ ನಾಲ್ಕು ಆಂಬ್ಯುಲೆನ್ಸ್ ವಾಹನಗಳಿಗೆ ಸೋಮವಾರ ಬೆಳಿಗ್ಗೆ ಬೆಂಕಿ ಹಚ್ಚಲಾಗಿದ್ದು ಶಂಕಿತ ಯಹೂದಿ ದ್ವೇಷಾಪರಾಧ ಪ್ರಕರಣದಡಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಯಹೂದಿ ಜನಸಂಖ್ಯೆ ಹೆಚ್ಚಿರುವ ಲಂಡನ್ನ ನೆರೆಹೊರೆಯ ಗೋಲ್ಡರ್ಸ್ ಗ್ರೀನ್ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿರುವುದಾಗಿ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದಾಗ ನಾಲ್ಕು ಆಂಬ್ಯುಲೆನ್ಸ್ ಗಳು ಬೆಂಕಿಯಲ್ಲಿ ಉರಿಯುತ್ತಿದ್ದವು. ಆಂಬ್ಯುಲೆನ್ಸ್ ನಲ್ಲಿದ್ದ ಹಲವು ಸಿಲಿಂಡರ್ ಗಳು ಸ್ಫೋಟಿಸಿದ್ದು ಸಮೀಪದ ಕಟ್ಟಡಗಳ ಕಿಟಕಿಗಳಿಗೆ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹತ್ತಿರದ ಮನೆಗಳ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಲಂಡನ್ನ ಅಗ್ನಿಶಾಮಕ ಸೇವೆಯ ಮೂಲಗಳು ಹೇಳಿವೆ. ದುರಂತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನೆಯು ಯಹೂದಿ ಸಮುದಾಯದವರಲ್ಲಿ ಕಳವಳ ಉಂಟು ಮಾಡಿದೆ. ಮೂವರು ಶಂಕಿತರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಾರಾ ಜಾಕ್ಸನ್ ಹೇಳಿದ್ದಾರೆ. Several ambulances belonging to Jewish volunteer organisation, Hatzola Northwest, have been set on fire in Golders Green, north London. CCTV video shows three men igniting a blaze before fleeing the scene. pic.twitter.com/kRZr1BIBbS — Al Jazeera Breaking News (@AJENews) March 23, 2026
ವಿಧಾನಸಭೆಯಲ್ಲಿ ‘ಇವ ನಮ್ಮವ ಇವ ನಮ್ಮವ’ ವಿಧೇಯಕ ಅಂಗೀಕಾರ
‘ಮಾರ್ಯಾದೆಗೇಡು ಹತ್ಯೆ ತಡೆ’ಗಟ್ಟಲು ಮಹತ್ವದ ವಿಧೇಯಕ
ಕುಂದಾಪುರ | ವಿದ್ಯುತ್ ಶಾಕ್ ತಗುಲಿ ಗಾರೆ ಕಾರ್ಮಿಕ ಮೃತ್ಯು
ಕುಂದಾಪುರ: ನಿರ್ಮಾಣ ಹಂತದ ಮನೆಯೊಂದರ ಗಾರೆ ಕೆಲಸದ ಮಾಡುತ್ತಿದ್ದ ವೇಳೆ ಕಬ್ಬಿಣದ ಏಣಿಯನ್ನು ಮತ್ತೊಂದೆಡೆ ಸ್ಥಳಾಂತರಿಸುವಾಗ ಮನೆ ಹಿಂಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಏಣಿ ಸ್ಪರ್ಶವಾದ ಪರಿಣಾಮ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಕುಂದಾಪುರದ ಕಡ್ಗಿಮನೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಸಮೀಪದ ಕಂದಾವರ ಸಾಂತಾವರ ನಿವಾಸಿ ಶಿವರಾಜ್ (35) ಮೃತರು ಎಂದು ಗುರುತಿಸಲಾಗಿದೆ. ಇವರು ಕಳೆದ 15 ವರ್ಷಗಳಿಂದ ಗಾರೆ ವೃತ್ತಿಮಾಡಿಕೊಂಡಿದ್ದರು. ಘಟನೆ ವಿವರ: ಕುಂದಾಪುರ ಹೊರವಲಯದ ಕಡ್ಗಿಮನೆ ರಸ್ತೆಯ ಕೊನೆಯಲ್ಲಿ ಪ್ರವೀಣ್ ಖಾರ್ವಿ ಎನ್ನುವರ ನಿರ್ಮಾಣ ಹಂತದಲ್ಲಿರುವ ಮನೆಯ ಗಾರೆ ಕೆಲಸಕ್ಕೆ ಸೋಮವಾರ ಶಿವರಾಜ್ ಹಾಗೂ ಇತರರು ಬಂದಿದ್ದು ತನ್ನ ಜೊತೆ ಕೆಲಸ ಮಾಡುವ ಇನ್ನಿಬ್ಬರು ಕೆಲಸಗಾರರೊಂದಿಗೆ ಕಬ್ಬಿಣದ ಏಣಿಯನ್ನು ಎತ್ತಿ ಬೇರೆ ಕಡೆಗೆ ಹೊತ್ತೊಯ್ಯು ವಾಗ ಆಕಸ್ಮಿಕವಾಗಿ ಏಣಿಯು ಆಯತಪ್ಪಿ ಅಲ್ಲಿಯೇ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಶಾಕ್ ತಗುಲಿದ್ದರಿಂದ ಶಿವರಾಜ್ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿ ತಾದರೂ ಅಷ್ಟರಲ್ಲಾಗಲೇ ಶಿವರಾಜ್ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಮೃತ ಶಿವರಾಜ್ ಅವಿವಾಹಿತರಾಗಿದ್ದರು. ಕುಂದಾಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಮೃತರ ಸಹೋದರ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಪಕ್ಷಗಳ ಸಭಾತ್ಯಾಗ
ಯುದ್ಧ, ಮತೀಯ ರಾಜಕಾರಣದ ವಿಜೃಂಭಣೆಯ ಕಾಲಘಟ್ಟದಲ್ಲಿ ಗೋವಿಂದ ಪೈ ಕೃತಿಗಳು ಸಕಾಲಿಕ: ಪ್ರೊ.ಶಿವರಾಮ ಶೆಟ್ಟಿ
ಮಂಗಳೂರು: ಜಗತ್ತು ಯುದ್ಧದ ತಲ್ಲಣ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಎರಡು ಜಾಗತಿಕ ಮಹಾ ಯುದ್ಧದ ಕಾಲಘ ಟ್ಟದಲ್ಲಿ ಬದುಕಿದ ಗೋವಿಂದ ಪೈಯವರು ತಮ್ಮ ಕೃತಿಗಳಲ್ಲಿ ಅದರ ಪ್ರಭಾವ ವ್ಯಕ್ತವಾಗಿದೆ. ಯುದ್ಧ, ಮತೀಯ ರಾಜಕಾರಣ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ವಿಶ್ವ ಜನರನ್ನು ಒಂದುಗೂಡಿಸುವ ಪ್ರಜ್ಞೆಯ ರಾಷ್ಟ್ರಕವಿ ಗೋವಿಂದ ಪೈಗಳ ಕೃತಿಗಳು ಮುಖ್ಯ ವಾಗುತ್ತದೆ ಎಂದು ಪ್ರೊ.ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಅವರು ಸೋಮವಾರ ಕೊಡಿಯಾಲ ಗುತ್ತು ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಅಧ್ಯಯನ ಕೇಂದ್ರ, ಇನ್ ಟ್ಯಾಕ್ ಗಿಳಿವಿಂಡು ಮಂಗಳೂರು, ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರ ಕವಿ ಗೋವಿಂದ ಪೈ ನೆನಪು ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜಾಗತೀಕರಣ ಸ್ಥಳೀಯತೆಯನ್ನು ನಿರ್ನಾಮ ಮಾಡಿ ಮುಂದುವರಿಯುತ್ತಿರುವ ಈ ಸಂದರ್ಭ ದಲ್ಲಿ ಕುವೆಂಪುರವರ, ಗೋವಿಂದ ಪೈಯವರ ವಿಶ್ವಾತ್ಮಕತೆ ಮುಖ್ಯವಾಗುತ್ತದೆ ಎಂದು ಪ್ರೊ.ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹೊಸ ತನವನ್ನು ಮೂಡಿಸಲು ಯತ್ನಿಸಿದವರು. ಪ್ರಾಸ ತ್ಯಾಗ ಮಾಡಿದ ಕವಿತೆಗಳು ಗೋವಿಂದ ಪೈಗಳ ಕಾಲದಲ್ಲಿ ನಡೆದಾಗ ಸಾಕಷ್ಟು ವಿವಾದ ನಡೆಯಿತು.ಹೊಸ ಕವಿತೆಗಳ ಪರಂಪರೆಯ ನ್ನು ಸೃಷ್ಟಿಸಿದರು.ಏಸು,ಬುದ್ಧ,ಕೃಷ್ಣ ನ ಕುರಿತಂತೆ ಖಂಡ ಕಾವ್ಯ ಬರೆಯುತ್ತಾರೆ. ಸಾವು ಬದುಕಿನ ಕೊನೆಯಲ್ಲ ಎಂದು ಗೋವಿಂದ ಪೈ ಯ ಕೃತಿಗಳಲ್ಲಿ ತಿಳಿಸುತ್ತಾರೆ.ಸಂಶೋಧನೆ ಯ ನೆಲೆಯಲ್ಲಿ ಗೋವಿಂದ ಪೈ ಮುಖ್ಯ ವಾಗುತ್ತಾರೆ. ಸಾಹಿತ್ಯದ ಸಂದರ್ಭದಲ್ಲಿ ನಾಡು ನುಡಿ ಮಾನವೀಕರಣದ ನೆಲೆಯನ್ನು ಗುರುತಿಸಬಹುದು.ಬಹು ಭಾಷೆ, ಸಂಸ್ಕೃತಿಯಲ್ಲಿ ಪರಸ್ಪರ ಬಂಧುತ್ವದ ಸಂಬಂಧ ವಿದೆ ಎಂದರು. ಸುಭಾಸ್ ಬಸು ಕಾರ್ಯಕ್ರಮ ನಿರೂಪಿಸಿದರು.ಪ್ರೊ.ಕೃಷ್ಣ ಮೂರ್ತಿ ಸ್ವಾಗತಿಸಿದರು.ನೇಮಿಚಂದ್ರ ಕಾರ್ಯಕ್ರಮ ಸಂಯೋಜಿಸಿದರು.ರಾಜೇಂದ್ರ ಕೇದಿಗೆ ವಂದಿಸಿದರು.
ಡಾಲರ್ ಎದುರು ದಾಖಲೆಯ 93.98ಕ್ಕೆ ಕುಸಿದ ರೂಪಾಯಿ ಮೌಲ್ಯ
ಕುಸಿತ ಕಂಡ ಭಾರತೀಯ ಷೇರುಗಳು
ಕೊಲ್ಲೂರು, ಮಾ.23: ಜಡ್ಕಲ್ ಗ್ರಾಮದ ಗೋವಿಂದ ತೀರ್ಥ ಹೊಳೆಯ ಕಿಳಿನಗುಂಡಿ ಎಂಬಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.22ರಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಸಂದೀಪ (28) ಎಂದು ಗುರುತಿಸಲಾಗಿದೆ. ಇವರುತನ್ನ ಸ್ನೇಹಿತರೊಂದಿಗೆ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದು, ಈ ವೇಳೆ ಕಾಲು ಜಾರಿ ಆಳವಾದ ಜಾಗದಲ್ಲಿ ಈಜಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನ ಲಾಗಿದೆ. ನಂತರ ಸ್ಥಳೀಯರ ಸಹಕಾರದಿಂದ ನದಿಯಲ್ಲಿ ಹುಡುಕಾಟ ನಡೆಸಿದಾಗ ಅಲ್ಲೇ ಸಮೀಪ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶತ್ರುಗಳ ಬೆಂಬಲಿಗರ ವಿರುದ್ಧ ಕಠಿಣ ಕ್ರಮ: ಇರಾನ್ ಎಚ್ಚರಿಕೆ
ಟೆಹ್ರಾನ್: ಶತ್ರುಗಳನ್ನು ಬೆಂಬಲಿಸುವವರ ವಿರುದ್ಧ ಕಠಿಣ, ಉಗ್ರ ಕ್ರಮ ಕೈಗೊಳ್ಳುವುದಾಗಿ ಇರಾನ್ ಎಚ್ಚರಿಸಿದ್ದು, ʼಶಂಕಿತರನ್ನು' ಗುರುತಿಸುವಂತೆ ನಾಗರಿಕರಿಗೆ ಕರೆ ನೀಡಿದೆ. ʼಶತ್ರುಗಳ ಜೊತೆ ಸೇರದಂತೆ ಇರಾನಿಯರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇಂತವರ ವಿರುದ್ಧ ಅಧಿಕಾರಿಗಳು ಕಠಿಣ ಮತ್ತು ತೀವ್ರ ಕ್ರಮ ಕೈಗೊಳ್ಳುತ್ತಾರೆ' ಎಂದು ಇರಾನ್ನ ನ್ಯಾಯಾಂಗ ಇಲಾಖೆ ಎಚ್ಚರಿಸಿದ್ದು ಶಂಕಿತರನ್ನು ಗುರುತಿಸಲು ಮತ್ತು ನ್ಯಾಯಾಂಗದೊಂದಿಗೆ ಸಹಕರಿಸಲು ಆಡಳಿತದೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳಿಗೆ ಕರೆ ನೀಡಿದೆ. ಈ ಮಧ್ಯೆ, ಇರಾನ್ನ ದಕ್ಷಿಣ ಕರಾವಳಿ ಮತ್ತು ದ್ವೀಪಗಳ ಮೇಲೆ ದಾಳಿ ನಡೆದರೆ ಪರ್ಷಿಯನ್ ಕೊಲ್ಲಿಯಾದ್ಯಂತ ಸಮುದ್ರ ಬಾಂಬ್ಗಳನ್ನು ಇರಿಸಲಾಗುವುದು ಎಂದು ಇರಾನ್ನ ರಕ್ಷಣಾ ಸಮಿತಿ ಸೋಮವಾರ ಹೇಳಿರುವುದಾಗಿ ವರದಿಯಾಗಿದೆ. ಇದೇ ವೇಳೆ, ತನ್ನ ಯಾವುದೇ ವಿದ್ಯುತ್ ಸ್ಥಾವರದ ಮೇಲೆ ದಾಳಿಯಾದರೂ ಇದಕ್ಕೆ ಪ್ರತಿಯಾಗಿ ಶತ್ರುಗಳ ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸುವುದಾಗಿ ಇರಾನ್ನ ಇಸ್ಲಾಮಿಕ್ ರೆವೊಲ್ಯುನಷರಿ ಗಾರ್ಡ್ ಕಾಪ್ರ್ಸ್(IRGC) ಎಚ್ಚರಿಕೆ ನೀಡಿದೆ.
ಕೊಲ್ಹಾಪುರದ ಜ್ಯೋತಿಬಾ ದೇವಾಲಯದ ಹೊರಗೆ ಅರ್ಚಕರು-ಭಕ್ತರ ನಡುವೆ ಘರ್ಷಣೆ
25 ಮಂದಿ ವಿರುದ್ಧ ಪ್ರಕರಣ ದಾಖಲು
ಪಡುಬಿದ್ರೆ| ನಕಲಿ ಚಿನ್ನ ನೀಡಿ ವಂಚನೆ ಪ್ರಕರಣ: ಸೊತ್ತು ಸಹಿತ ಇಬ್ಬರ ಬಂಧನ
ಉಡುಪಿ, ಮಾ.23: ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಚಿನ್ನ ನೀಡಿ ಮಹಿಳೆಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಮಾ.23ರಂದು ವಶಕ್ಕೆ ಪಡೆದುಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿ ಬಲ್ಲಾಪುರ ಬುಡುಗನಹಳ್ಳಿ ನಿವಾಸಿ ಕಾವ್ಯ(32) ಹಾಗೂ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್(42) ಎಂಬವರನ್ನು ವಶಕ್ಕೆ ಪಡೆದ ಆರೋಪಿಗಳು. ಇವರಿಂದ 7.610 ಗ್ರಾಂ ಚಿನ್ನಾಭರಣ ಮತ್ತು 6000ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಜ.13ರಂದು ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿ ಮತ್ತು ಮಹಿಳೆ ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದಂತೆ ತೋರುವ ನಕಲಿ ಸರವನ್ನು ತೋರಿಸಿದರು. ಈ ಚಿನ್ನದ ಸರದಲ್ಲಿ 6 ಪವನ್ ಇದ್ದು, ಹಣದ ತುರ್ತು ಅವಶ್ಯಕತೆ ಇದೆ ಎಂದು ನಂಬಿಸಿ ಬಸ್ಸಮ್ಮ ಅವರಿಗೆ ನೀಡಿದರು. ಬಸ್ಸಮ್ಮ ಅವರಲ್ಲಿದ್ದ ಸುಮಾರು 2 ಪವನು ತೂಕದ 1.50ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳನ್ನು ಹಾಗೂ ನಗದು 6000ರೂ.ವನ್ನು ನೀಡಿದರು. ಬಳಿಕ ಬಸ್ಸಮ್ಮ ಆರೋಪಿಗಳಿಂದ ಪಡೆದ ಸರವನ್ನು ಪರಿಶೀಲಿಸಲು ಹತ್ತಿರದ ಚಿನ್ನದ ಅಂಗಡಿಗೆ ಹೋದಾಗ ಅದು ನಕಲಿ ಎಂದು ತಿಳಿಯಿತು. ನಂತರ ವಾಪಾಸ್ಸು ಬಂದು ನೋಡಿದಾಗ ಅವರಿಬ್ಬರು ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಎಸ್ಪಿ ಹರಿರಾಮ್ ಶಂಕರ್ ಆದೇಶದಂತೆ ಹೆಚ್ಚುವರಿ ಎಸ್ಪಿ ಸುಧಾಕರ ಎಸ್.ನಾಯ್ಕ್, ಕಾರ್ಕಳ ಡಿವೈಎಸ್ಪಿ ವಿಜಯಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಮಾರ್ಗದರ್ಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಎಸ್ಸೈಗಳಾದ ಸಕ್ತಿವೇಲು ಮತ್ತು ಅನಿಲ್ ಕುಮಾರ್ ನಾಯಕ್, ಎಎಸ್ಸೈಗಳಾದ ರಾಜೇಶ್ ಪಿ., ಗಿರೀಶ್ ಯು.ಆರ್. ಸಿಬಂದಿ ಕೃಷ್ಣಪ್ರಸಾದ್, ಸಂದೇಶ್ ಭಂಡಾರಿ, ರುಕ್ಮಿಣಿ ಮತ್ತು ಶಿರ್ವ ಮಹಿಳಾ ಸಿಬ್ಬಂದಿ ಜ್ಯೋತಿ ಕಾರ್ಯಾಚರಣೆ ನಡೆಸಿದ್ದಾರೆ.
2011ರ ಜನಗಣತಿ ಆಧಾರದಲ್ಲಿ ಕೇಂದ್ರದಿಂದ ಮಹಿಳಾ ಮೀಸಲಾತಿ ಕಾಯ್ದೆ ಶೀಘ್ರ ಅನುಷ್ಠಾನ
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. 2011ರ ಜನಗಣತಿ ಆಧಾರದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಅದು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಸ್ತಾವಿತ ಕಾಯ್ದೆ ಅಡಿಯಲ್ಲಿ ಲೋಕಸಭೆಯ ಸ್ಥಾನಗಳ ಒಟ್ಟು ಸಂಖ್ಯೆ 543ರಿಂದ 816ಕ್ಕೆ ಏರಿಕೆಯಾಗಲಿದೆ. ಇದರಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರಲಿದೆ. ಹೊಸ ಜನಗಣತಿ ಹಾಗೂ ಕ್ಷೇತ್ರ ಪುನರ್ ವಿಂಗಡನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಈ ಮೀಸಲಾತಿ ಜಾರಿಗೆ ಬರಲಿದೆ ಎಂದು ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ಆದರೆ, ಸರಕಾರ ಕಾಯ್ದೆನ್ನು ಶೀಘ್ರ ಜಾರಿಗೆ ತರಲು ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ. ಕಾನೂನಿಗೆ ತಿದ್ದುಪಡಿ ತರಲು ಹಾಗೂ ಸಂಸತ್ತಿನ ಕೆಳ ಮನೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ವಿಸ್ತರಿಸಲು ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ಗುರಿಯನ್ನು ಅದು ಹೊಂದಿದೆ ಎಂದು ಮೂಲಗಳು ಹೇಳಿವೆ. ಈ ಸಾಂವಿಧಾನಿಕ ತಿದ್ದುಪಡಿಯ ಸುಗಮವಾಗಿ ಅಂಗೀಕಾರಕ್ಕೆ ವ್ಯಾಪಕ ಬೆಂಬಲ ಪಡೆಯಲು ಸರಕಾರ ವಿರೋಧ ಪಕ್ಷಗಳೊಂದಿಗೆ ಅದು ಮಾತುಕತೆಗಳನ್ನು ಆರಂಭಿಸಿದೆ. ಸಂಪುಟ ಸಭೆಯ ಅನುಮೋದನೆ ಪಡೆದ ಬಳಿಕ ಅದು ಈ ಮಸೂದೆಯನ್ನು ಮೊದಲು ರಾಜ್ಯ ಸಭೆಯಲ್ಲಿ ಬಹುಶಃ ಮುಂದಿನ ವಾರ ಮಂಡಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2023ರಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಕಾಯ್ದೆಯು ಲೋಕಸಭೆ ಹಾಗೂ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿಯನ್ನು ಒದಗಿಸುತ್ತದೆ. ಆದರೆ, ಕ್ಷೇತ್ರ ಪುನರ್ವಿಗಡಣೆ ಪ್ರಕ್ರಿಯೆ ಬಾಕಿ ಇರುವುದರಿಂದ ಅದು ಇನ್ನೂ ಜಾರಿಗೆ ಬಂದಿಲ್ಲ. ಸರಕಾರವು ಕ್ಷೇತ್ರ ಪುನರ್ ವಿಂಗಡಣೆಗೆ ಮುನ್ನ ಮೀಸಲಾತಿಯನ್ನು ಜಾರಿಗೊಳಿಸಲು ಮುಂದುವರಿದರೆ, ಸಾಂವಿಧಾನಿಕ ತಿದ್ದುಪಡಿಯ ಅಗತ್ಯವಿರುತ್ತದೆ.
Bengaluru | ಇಎಸ್ಐ, ಪಿಎಫ್ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರಿಂದ ಧರಣಿ
ಬೆಂಗಳೂರು : ಅಂಗನವಾಡಿ ನೌಕರರನ್ನು ಕನಿಷ್ಠ ಕೂಲಿ ವ್ಯಾಪ್ತಿಗೆ ತಂದು ಇಎಸ್ಐ, ಪಿಎಫ್ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಂಗನವಾಡಿ ಕಾರ್ಯಕರ್ತೆಯರು, 2025ರ ನ.14ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕು. ಬಜೆಟ್ನಲ್ಲಿ ಘೀಷಿಸಿರುವಂತೆ 800 ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸುವಾಗ ಗ್ರಾಮಗಳಲ್ಲಿನ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ‘ಕನಿಷ್ಠ ಕೂಲಿಯ ಕಾಯ್ದೆ’ಯ ವ್ಯಾಪ್ತಿಗೆ ತಂದು ಇಎಸ್ಐ ಹಾಗೂ ಪಿಎಫ್ ಸೌಲಭ್ಯ ಕಲ್ಪಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಪೂರೈಸುವ ಆಹಾರ ಪದಾರ್ಥಗಳ ಗುಣಮಟ್ಟ ಸರಿಯಿಲ್ಲದ ಕಾರಣ ಬಿಐಎಸ್ ಪರವಾನಿಗೆಯನ್ನು ರದ್ದು ಮಾಡಬೇಕು. ಆಯಾ ಪ್ರದೇಶಗಳಿಗೆ ಅನುಗುಣವಾಗಿ ಆಹಾರ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳನ್ನು ಸರಕಾರ ಕೂಡಲೇ ಭರ್ತಿ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ಮೇಲ್ವಿಚಾರಕಿ, ಸಿಡಿಪಿಒ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಂಗನವಾಡಿ ನೌಕರರಿಗೆ ಚುನಾವಣೆ ಕೆಲಸಗಳನ್ನು ವಹಿಸಬಾರದು ಎಂದು ಒತ್ತಾಯಿಸಿದರು. ನಗರ ಪ್ರದೇಶಗಳಲ್ಲಿ ಸಹಾಯಕಿಯರ ಆಯ್ಕೆಗೆ ಇರುವ ಮಾನದಂಡಗಳನ್ನು ಬದಲಾವಣೆ ಮಾಡಬೇಕು. ಜೊತೆಗೆ ಸಾಮೂಹಿಕ ಆರೋಗ್ಯ ವಿಮೆ ಜಾರಿಗೆ ತರಬೇಕು. ಮುಟ್ಟಿನ ರಜೆಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಆರೋಗ್ಯ ಸಂಜೀವಿನಿ ಯೋಜನೆಯನ್ನೂ ಅನ್ವಯ ಮಾಡಬೇಕು. ನಿವೃತ್ತರಿಗೆ ನೀಡುವ ಇಡುಗಂಟು ಹೆಚ್ಚಳ ಮಾಡಬೇಕು. ತಿಂಗಳಿಗೆ 10 ಸಾವಿರ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ಜಾರಿಗೊಳಿಸಬೇಕು. ಐಸಿಡಿಎಸ್ ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕು. ಮೊಟ್ಟೆ ನೀಡುವ ಬದಲಿಗೆ ನೇರ ನಗದು ಜಮಾವಣೆ ಡಿಬಿಟಿ ತರುತ್ತಿರುವುದನ್ನು ಕೈಬಿಡಬೇಕು. ಬಜೆಟ್ನಲ್ಲಿ ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಳ ಮಾಡಿಲ್ಲ. ಚುನಾವಣಾ ಸಂದರ್ಭದಲ್ಲಿಯ ಭರವಸೆ ನೀಡದಂತೆ ತಕ್ಷಣ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಪ್ರದಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಸೇರಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆರು ಭಾಗವಹಿಸಿದ್ದರು. ಅಹೋರಾತ್ರಿ ಧರಣಿ ಮುಂದುವರಿಕೆ: ರಾಜ್ಯ ಸರಕಾರದ ಪ್ರತಿನಿಧಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಮತ್ತು ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು ಧರಣಿ ಸ್ಥಳಕ್ಕೆ ಬಂದು ಹೋರಾಟವನ್ನು ಹಿಂಪಡೆಯಲು ವಿನಂತಿಸಿದ್ದಾರೆ. ಆದರೆ ಸರಕಾರದಿಂದ ಖಚಿತವಾದ ಭರವಸೆ ಸಿಗುವ ತನಕ ಹೋರಾಟ ಹಿಂಪಡೆಯುವುದಿಲ್ಲ. ಆದ್ದರಿಂದ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾಹಿತಿ ನೀಡಿದ್ದಾರೆ.
ದಾವಣಗೆರೆ ದಕ್ಷಿಣ: 38 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; 23 ಮುಸ್ಲಿಮರು ಸ್ಪರ್ಧೆ! ಶಾಮನೂರು ಕುಟುಂಬಕ್ಕೆ ಸವಾಲ್
ಕರ್ನಾಟಕ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯಗೊಂಡಿದೆ. 38 ಅಭ್ಯರ್ಥಿಗಳು ದಾವಣಗೆರೆ ದಕ್ಷಿಣದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರದಲ್ಲಿರುವ ಅಲ್ಪಸಂಖ್ಯಾತ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 38ರ ಪೈಕಿ 23 ಮಂದಿ ಮುಸ್ಲಿಮರು. ಬಿಜೆಪಿ ಕಾಂಗ್ರೆಸ್ ಹೊರತುಪಡಿಸಿದರೆ ಯಾವ ಪಕ್ಷದಿಂದ ಯಾರೆಲ್ಲಾ ಸ್ಪರ್ಧೆ ಮಾಡಿದ್ದಾರೆ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಆಕೃತಿ ಸಾಂಸ್ಕೃತಿಕ ಉತ್ಸವದಲ್ಲಿ ನಿಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ
ನಿಟ್ಟೆ, ಮಾ.23: ಕೆನರಾ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಕಳೆದ ವಾರ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ‘ಆಕೃತಿ-2026’ರಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯದ ರಚನಾ ಮತ್ತು ಕಲಾಂಜಲಿ ಕ್ಲಬ್ಗಳ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳನ್ನು ಪಡೆದರು. ರಚನಾ ಕ್ಲಬ್ನ ಎಂ.ಸಿಂಚನ ಸುಭಾಸ್ ಅವರು ಲೈವ್ ಆರ್ಟ್ ಸ್ಪರ್ಧೆ ಮತ್ತು ಫೇಸ್ ಪೇಂಟಿಂಗ್ ಎರಡರಲ್ಲೂ ಪ್ರಥಮ ಸ್ಥಾನ ಪಡೆದರು. ರಂಗ್ ರಿಲೇ ತಂಡ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ ರಚನಾ ಕ್ಲಬ್ ತಂಡವು ಸಂಸ್ಥೆಯ ಸಾಧನೆಗೆ ಮತ್ತಷ್ಟು ಕೊಡುಗೆ ನೀಡಿದೆ. ವಿಜೇತ ತಂಡವು ಎಂ.ಸಿಂಚನಾ ಸುಭಾಸ್, ಸೃಜನ್ ಮೂಲ್ಯ ಮತ್ತು ಆಯುಷ್ ಕುಲಾಲ್ ಅವರನ್ನು ಒಳಗೊಂಡಿತ್ತು. ಪರ್ಫಾಮಿಂಗ್ ಆರ್ಟ್ಸ್ ವಿಭಾಗದಲ್ಲಿ, ಕಲಾಂಜಲಿ ಕ್ಲಬ್ನ ಟೀಮ್ ಟಿಪ್ಪೋ ‘ನೃತ್ಯ ನಿರ್ವಾಣ’ ತಂಡ ನೃತ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗೆದ್ದುಕೊಂಡಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಸಂಘರ್ಷ ಪೀಡಿತ ಇರಾನ್ಗೆ ಕಾಶ್ಮೀರಿ ಜನರಿಂದ ದೇಣಿಗೆ
► ಚಿನ್ನ, ಬೆಳ್ಳಿಯ ಆಭರಣ, ಜಾನುವಾರು ಸಹಿತ ಸಾಂಪ್ರದಾಯಿಕ ತಾಮ್ರದ ವಸ್ತುಗಳನ್ನೂ ದೇಣಿಗೆಯಾಗಿ ನೀಡಿದ ಜನರು ► ಭಾರತೀಯರ ದಯೆಯನ್ನು ಎಂದಿಗೂ ಮರೆಯುವುದಿಲ್ಲ ಎಂದ ಟೆಹ್ರಾನ್
ತುಳುವನ್ನು ರಾಜ್ಯದ ಅಧಿಕೃತ ಭಾಷೆಯ್ನನಾಗಿ ಘೋಷಣೆ ಮಾಡಿ : ಉಮಾನಾಥ್ ಕೋಟ್ಯಾನ್
ಬೆಂಗಳೂರು : ‘ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯ್ನನಾಗಿ ಘೋಷಣೆ ಮಾಡಬೇಕು. ಅಲ್ಲದೆ, ತಲಪಾಡಿಯಿಂದ ಕಾರವಾರದ ವರೆಗಿನ ಕಡಲ ಕಿನಾರೆಯಲ್ಲಿ ರಿಂಗ್ ರಸ್ತೆಯನ್ನು ನಿರ್ಮಿಸಲು ಕನಿಷ್ಟ 1500 ಕೋಟಿ ರೂ.ಗಳನ್ನು ಅನುದಾನವನ್ನು ಒದಗಿಸಬೇಕು’ ಎಂದು ಬಿಜೆಪಿ ಸದಸ್ಯ ಉಮಾನಾಥ್ ಎ. ಕೋಟ್ಯಾನ್ ಆಗ್ರಹಿಸಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರಾವಳಿಯ ಕಡಲ ಕಿನಾರೆಯ ಬದಿಯಲ್ಲಿ ರಸ್ತೆ ನಿರ್ಮಿಸುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಮಾತ್ರವಲ್ಲ, ಕಡಲ ಕೊರೆತ ತಡೆಗಟ್ಟಲು ಸಹಾಯವಾಗಲಿದೆ. ಹೀಗಾಗಿ ಸರಕಾರ ಈ ವಿಷಯದ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಕೋರಿದರು. ಹಣಕಾಸಿನ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಲ ಮಾಡಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ, ಶಾಸಕರಾಗಿ ಎರಡೂವರೆ ವರ್ಷ ಕಳೆದರೂ 2ಕೋಟಿ ರೂ.ಅನುದಾನ ನೀಡಿದ್ದನ್ನು ಬಿಟ್ಟರೆ ಮೂಲಸೌಕರ್ಯಕ್ಕೆ ಒಂದು ನಯಾಪೈಸೆ ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಶಾಸಕರು 5ಲಕ್ಷ ರೂ.ಚರಂಡಿ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು. ಕರಾವಳಿ ಪ್ರದೇಶದಲ್ಲಿನ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಬೇಕು. ಅಲ್ಲದೆ, ಕರಾವಳಿ ಪ್ರದೇಶದಲ್ಲಿನ ಪ್ರೇಕ್ಷಣಿಯ ಸ್ಥಳಗಳಿಗೆ ಮೂಲಸೌಲಭ್ಯ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ ಅವರು, ಕಂದಾಯ ಇಲಾಖೆಯಲ್ಲಿ ನಕ್ಷೆ ಪಡೆದುಕೊಳ್ಳಲು ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಉಡುಪಿ| ಎಸೆಸೆಲ್ಸಿ ವಿಜ್ಞಾನ ಪರೀಕ್ಷೆಗೆ 59 ಮಂದಿ ಗೈರು
ಉಡುಪಿ, ಮಾ.23: ರಾಜ್ಯಾದ್ಯಂತ ನಡೆದಿರುವ ಈ ಬಾರಿಯ ಎಸೆಸೆಲ್ಸಿಯ ವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 59 ಮಂದಿ ಗೈರುಹಾಜರಾಗಿದ್ದಾರೆ. ಪರೀಕ್ಷೆಗಾಗಿ ನೊಂದಾಯಿಸಿಕೊಂಡ ಒಟ್ಟು 13,825 ವಿದ್ಯಾರ್ಥಿಗಳಲ್ಲಿ 13,766 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ 59 ಮಂದಿ ಪರೀಕ್ಷಾರ್ಥಿಗಳು ಗೈರುಹಾಜರಾಗಿದ್ದಾರೆ. ಉಡುಪಿ ವಲಯದಲ್ಲಿ 19 ಮಂದಿ, ಬ್ರಹ್ಮಾವರ ವಲಯದಲ್ಲಿ 13, ಕುಂದಾಪುರದಲ್ಲಿ 4, ಬೈಂದೂರಿನಲ್ಲಿ 10 ಹಾಗೂ ಕಾರ್ಕಳ ವಲಯದಲ್ಲಿ 13 ಮಂದಿ ಗೈರುಹಾಜರಾದವರಲ್ಲಿ ಸೇರಿದ್ದಾರೆ. ಗೈರುಹಾಜರಾದವರಲ್ಲಿ ಅತೀ ಹೆಚ್ಚು ಮಂದಿ ಅಂದರೆ ಒಟ್ಟು 31 ಮಂದಿ ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ. ಉಳಿ ದಂತೆ ಹೊಸದಾಗಿ ಪರೀಕ್ಷೆಗೆ ಹೆಸರು ನೊಂದಾಯಿಸಿದ 13,384 ಮಂದಿಯಲ್ಲಿ 11 ಮಂದಿ ವಿವಿಧ ಕಾರಣಗಳಿಂದ ಗೈರುಹಾಜರಾಗಿದ್ದಾರೆ. ಅಲ್ಲದೇ 11 ಮಂದಿ ಪುನರಾವರ್ತಿತ ಅಭ್ಯರ್ಥಿಗಳು ಸಹ ಗೈರುಹಾಜರಾಗಿದ್ದಾರೆ. ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಇಂದಿನ ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಅಕ್ರಮ, ನಕಲು ಇಲ್ಲದೇ ಪರೀಕ್ಷೆ ಸಾಂಗವಾಗಿ, ಶಾಂತಿಯುತವಾಗಿ ನಡೆದಿದೆ ಎಂದು ಡಿಡಿಪಿಐ ಲೋಕೇಶ್ ತಿಳಿಸಿದ್ದಾರೆ.
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್
LPG Gas: ದೇಶಾದ್ಯಂತ ಅಡುಗೆ ಅನಿಲದ ತೀವ್ರ ಅಭಾವ ಎದುರಾದ ಬೆನ್ನಲ್ಲೇ, ಪರಿಸ್ಥಿತಿಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಹತ್ವದ ಬದಲಾವಣೆಗೆ ಮುಂದಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ 14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್ಗಳ ಬದಲಿಗೆ, ಕೇವಲ 10 ಕೆಜಿ ಅನಿಲ ತುಂಬಿದ ಸಿಲಿಂಡರ್ಗಳನ್ನು ವಿತರಿಸುವ ಬಗ್ಗೆ ಗಂಭೀರ
ಯುವಜನತೆ ಮಹಾನ್ ವ್ಯಕ್ತಿಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ: ಮಮತಾ ಗಟ್ಟಿ
ದೇವರ ದಾಸಿಮಯ್ಯ ಜಯಂತಿ ಆಚರಣೆ
ಮಂಗಳೂರು, ಮಾ.23 : ಅಬ್ದುಲ್ ರಝಾಕ್ (48) ಎಂಬವರು ಫೆಬ್ರವರಿ 24 ರಂದು ಬೋಳಾರದಲ್ಲಿರುವ ಅಕ್ಕನ ಮನೆಗೆ ಹೋಗಿದ್ದು, ನಂತರ ಅಲ್ಲಿಂದ ದಿನಸಿ ಸಾಮಗ್ರಿಗಳನ್ನು ತರಲು ಕಿರಾಣಿ ಅಂಗಡಿ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ದಕ್ಷಿಣ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Mandya | ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಮೃತ್ಯು
ಮಂಡ್ಯ : ಸ್ನೇಹಿತರ ಜತೆ ಈಜಲು ತೆರಳಿದ್ದ ಬಾಲಕ ಕೃಷಿಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕು ನಂದಿಪುರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಮಳವಳ್ಳಿ ತಾಲೂಕು ದಳವಾಯಿ ಕೋಡಿಹಳ್ಳಿ ಗ್ರಾಮದ ಶಿವು ಅವರ ಪುತ್ರ ಪೃಥ್ವಿಕ್(15) ಸಾವನ್ನಪ್ಪಿದ ಬಾಲಕ. ಈತ ದಳವಾಯಿ ಕೋಡಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಈತ ನಾಲ್ವರು ಗೆಳೆಯರೊಂದಿಗೆ ರವಿವಾರ ಪಕ್ಕದ ನಂದಿಪುರ ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದನೆನ್ನಲಾಗಿದ್ದು, ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಸೋಮವಾರ ಬೆಳಗ್ಗೆ ಕೃಷಿ ಹೊಂಡದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಎಂಸಿಸಿ ಬ್ಯಾಂಕ್ - ಫುಡಾರ್ ಪ್ರತಿಷ್ಠಾನ್ನಿಂದ 65 ವಿಶೇಷ ಸಾಧಕರಿಗೆ ಸನ್ಮಾನ
ಮಂಗಳೂರು: ಮಂಗಳೂರಿನ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಮತ್ತು ಫುಡಾರ್ ಪ್ರತಿಷ್ಠಾನ್ (ರಿ.) ನೇತೃತ್ವ್ವದಲ್ಲಿ ಕ್ರೀಡೆ, ಕಲೆ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದ 65 ವಿಶೇಷ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಳೆದ 2 ವರ್ಷಗಳಲ್ಲಿ ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕೆಥೋಲಿಕ್ ಕ್ರೈಸ್ತ ಸಮುದಾಯಕ್ಕೆ ಸೇರಿದ ಮಂಗಳೂರು ಹಾಗೂ ಉಡುಪಿ ಧರ್ಮಪ್ರಾಂತ್ಯದ 3,000 ಕ್ಕೂ ಹೆಚ್ಚು ಶೈಕ್ಷಣಿಕ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ ಎಂದರು. ಫುಡಾರ್ ಪ್ರತಿಷ್ಠಾನ್ ಸಂಸ್ಥೆಯ ಅಧ್ಯಕ್ಷ ನೈಜಿಲ್ ಪಿರೇರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಸರಕಾರಿ ಪ್ಲೀಡರ್ , ನ್ಯಾಯವಾದಿ ಎಮ್.ಪಿ ನೊರೊನ್ಹಾ ರವರು ಮುಖ್ಯ ಅತಿಥಿಗಳಾಗಿದ್ದರು. ಕೆಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಸಂತೋಷ್ ಡಿಸೋಜ ಹಾಗೂ ಉಡುಪಿ ಪ್ರದೇಶದ ಅಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಫುಡಾರ್ ಪ್ರತಿಷ್ಠಾನ್ ಕಾರ್ಯದರ್ಶಿ ವಿವಿಡ್ ಡಿ ಸೋಜ, ನಿರ್ದೇಶಕರು ಗಳಾದ ರೋಬರ್ಟ್ ಮಿನೇಜಸ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಎಚ್. ಎಂ ಪೆರ್ನಾಲ್ ಹಾಗೂ ಖ್ಯಾತ ಕೊಂಕಣಿ ಗಾಯಕ ವಿನ್ಸೆಂಟ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ರೂಬೆನ್ ಮಚಾದೊ. ರೋಶ್ವಿತ ಡಿ ಸೋಜ ಹಾಗೂ ವಿನಿತಾ ಡೆಸ್ಸಾ ಮಾತನಾಡಿದರು. ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೋರ್ಬರ್ಟ್ ಮಿಸ್ಕಿತ್ ಹಾಗೂ ಐಡಾ ಫುರ್ಟಾಡೊ ಕಾರ್ಯಕ್ರಮ ನಿರೂಪಿಸಿದರು.
ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ; ಹೋಟೆಲ್ಗಳ ಸಂಘದ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
ಬೆಂಗಳೂರು : ವಾಣಿಜ್ಯ ಬಳಕೆ ಅಡುಗೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಸರಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿರುವ ಹೈಕೋರ್ಟ್, ಬೇರೆ ದೇಶಗಳಿಗೆ ಹೋಲಿಸಿದರೆ ಸರಕಾರ ಶಕ್ತಿಮೀರಿ ಕೆಲಸ ಮಾಡುತ್ತಿದೆ. ಇದನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗದು. ಯುದ್ಧದ ಸಂದರ್ಭದಲ್ಲಿ ನ್ಯಾಯಾಲಯಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ. ಬೆಂಗಳೂರು ಹೋಟೆಲ್ಗಳ ಸಂಘ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಹಾಲಿ ವಿಚಾರವನ್ನು ಸರಕಾರಕ್ಕೆ ಬಿಡುವುದು ಒಳಿತು ಎಂಬ ಕೇಂದ್ರ ಸರಕಾರದ ಪರ ವಕೀಲರ ವಾದವನ್ನು ಪುರಸ್ಕರಿಸಿ, ಅರ್ಜಿ ವಿಲೇವಾರಿ ಮಾಡಿತು. ಕೇಂದ್ರದ ವಾದವೇನು? ಇದಕ್ಕೂ ಮುನ್ನ ಕೇಂದ್ರ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ಪರಿಸ್ಥಿತಿ ಬದಲಾಗುತ್ತಿದ್ದು, ಭಾರತದಲ್ಲಿ ಎಲ್ಪಿಜಿ ಪೂರೈಕೆ ವ್ಯತ್ಯಯ ಕಡಿಮೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ನಿಯಂತ್ರಣದಲ್ಲಿ ಇರದ ಕೆಲ ಬೆಳವಣಿಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗದ್ದು, ಎಲ್ಪಿಜಿ ಪೂರೈಕೆಯಲ್ಲಿ ಕೊರತೆಯಾಗುವುದನ್ನು ತಪ್ಪಿಸಲು ಭಾರತ ಸರಕಾರ ಕೆಲಸ ಮಾಡುತ್ತಿದೆ. ಈ ವಿಚಾರವನ್ನು ಕಾರ್ಯಾಂಗಕ್ಕೆ ಬಿಡಬೇಕು ಎಂದರು. ಮುಂದುವರಿದು, ಪ್ರತಿದಿನ ಪರಿಸ್ಥಿತಿ ಬದಲಾಗುತ್ತಿದ್ದು, ಆದ್ಯತೆ ಬದಲಾಗಬೇಕಿದೆ. ಹೋಟೆಲ್ಗಳಿಗೆ ಎಲ್ಪಿಜಿ ಪೂರೈಸಬೇಕೋ ಅಥವಾ ಮನೆಗಳಿಗೆ ಸರಬರಾಜು ಮಾಡಬೇಕೋ ಎಂಬುದು ನಮಗೆ ತಿಳಿಯದಾಗಿದೆ. ಹಲವು ವಿಚಾರಗಳು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ರಾಜ್ಯದಾದ್ಯಂತ ಎಲ್ಪಿಜಿ ಸಿಲಿಂಡರ್ ಹಂಚಿಕೆಯ ಕುರಿತು ಕಳವಳ ವ್ಯಕ್ತವಾಗಿರುವುದರ ಕುರಿತು ನ್ಯಾಯಪೀಠ ಪ್ರಸ್ತಾಪಿಸಿದಾಗ ಉತ್ತರಿಸಿದ ಮೆಹ್ತಾ, ಇಂಥ ವಿಚಾರಗಳಲ್ಲಿ ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಜತೆ ಸಮಾಲೋಚನೆ ನಡೆಸುತ್ತದೆ. ಎರಡೂ ಕಡೆಯ ಸರಕಾರಗಳು ಒಂದೇ ನಿಲುವು ತಳೆಯಬೇಕಾಗುತ್ತದೆ. ಹಂಚಿಕೆದಾರರಿಂದ ಎಲ್ಪಿಜಿ ಪೂರೈಕೆಯಲ್ಲಿ ವಂಚನೆ ಕಂಡುಬಂದರೆ ರಾಜ್ಯ ಸರಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ಅರ್ಜಿದಾರರ ಪರ ವಕೀಲರು, ಎಲ್ಪಿಜಿ ವ್ಯತ್ಯಯ ಕುರಿತು ಇಂದು ಸಭೆ ನಡೆಯಲಿದ್ದು, ಅಲ್ಲಿನ ಬೆಳವಣಿಗೆಯ ಬಗ್ಗೆ ತಿಳಿಯಲು ಅರ್ಜಿಯನ್ನು ಬಾಕಿ ಉಳಿಸಬೇಕು. ಎಲ್ಪಿಜಿ ಪೂರೈಕೆಯಲ್ಲಿ ಕೇರಳ ಮತ್ತು ತಮಿಳುನಾಡಿನ ಪರಿಸ್ಥಿತಿ ಚೆನ್ನಾಗಿದೆ. ಕೆಲ ಮಾರ್ಗಸೂಚಿಗಳನ್ನು ಅನುಸರಿಸಿದರೆ ಕರ್ನಾಟಕದಲ್ಲೂ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದರು. ಇದಕ್ಕೆ ಪ್ರತಕ್ರಿಯಿಸಿದ ಮೆಹ್ತಾ, ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೇ ನಿಲುವು ತಳೆಯಬೇಕು. ಕೇರಳ ಮತ್ತು ತಮಿಳುನಾಡಿನ ವಿಚಾರ ಪ್ರಸ್ತಾಪಿಸಿ, ರಾಜಕೀಯ ಪಕ್ಷಪಾತ ಎಂದು ಅರ್ಜಿದಾರರ ಪರ ವಕೀಲರು ಹೇಳಲಾಗದು. ಇದಕ್ಕೆ ಸೂಕ್ತ ಮತ್ತು ಸರಿಯಾದ ಕಾರಣಗಳನ್ನು ನೀಡಬೇಕು ಎಂದರಲ್ಲದೆ, ಎಲ್ಪಿಜಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸಹ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ವಿಚಾರವು ಸರಕಾರದ ನೀತಿಯ ಭಾಗವಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ನೇತೃತ್ವದಲ್ಲಿ ಇಂದು ನಡೆಯುವ ಸಭೆಯಲ್ಲಿ ಪರಿಸ್ಥಿತಿಯ ಕುರಿತು ಅರ್ಜಿದಾರರು ಮನವರಿಕೆ ಮಾಡಿಕೊಡಬಹುದು ಎಂದು ತಿಳಿಸಿ, ಅರ್ಜಿ ಇತ್ಯರ್ಥಪಡಿಸಿತು.
ಮಧ್ಯಪ್ರಾಚ್ಯ ಸಂಘರ್ಷ| ಕೋವಿಡ್ ಸಮಯದಂತೆ ಸವಾಲುಗಳನ್ನು ಎದುರಿಸಲು ಭಾರತ ಸಿದ್ಧವಾಗಿರಬೇಕು: ಪ್ರಧಾನಿ ಮೋದಿ
ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದಿರುವ ಹಿನ್ನೆಲೆ ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂಘರ್ಷದ ದೀರ್ಘಾವಧಿಯ ಪರಿಣಾಮಗಳಿಗೆ ನಾವು ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ. ಈ ಯುದ್ಧದಿಂದ ಜಗತ್ತಿನಲ್ಲಿ ಸೃಷ್ಟಿಯಾದ ಕಠಿಣ ಪರಿಸ್ಥಿತಿಗಳು ದೀರ್ಘಕಾಲದವರೆಗೆ ಶಾಶ್ವತ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ. ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿಯೂ ನಾವು ಇಂತಹ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಈಗ ನಾವು ಅವುಗಳನ್ನು ಮತ್ತೆ ಎದುರಿಸಲು ಸಿದ್ಧರಾಗಿರಬೇಕು. ನಾವು ಪ್ರತಿಯೊಂದು ಸವಾಲನ್ನು ತಾಳ್ಮೆ, ಸಂಯಮ ಮತ್ತು ಶಾಂತಿಯಿಂದ ಎದುರಿಸಬೇಕಾಗಿದೆ, ಇದು ನಮ್ಮ ಗುರುತು, ಇದು ನಮ್ಮ ಶಕ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆಮದು ಮತ್ತು ರಫ್ತು ಕ್ಷೇತ್ರಗಳಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಪ್ರತಿದಿನ ಮೌಲ್ಯಮಾಪನ ಮಾಡಲು ಮತ್ತು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಭಾರತ ಸರಕಾರವು ಸಮಿತಿಯನ್ನು ರಚಿಸಿದೆ. ಈ ಸಮಿತಿ ಪ್ರತಿದಿನ ಸಭೆ ನಡೆಸಲಿದೆ. ದೇಶದ ರೈತರು ನಮ್ಮ ಆಹಾರ ದಾಸ್ತಾನು ಉತ್ತಮವಾಗಿದೆ ಎಂದು ಖಚಿತಪಡಿಸಿದ್ದಾರೆ. ಭಾರತದಲ್ಲಿ ಸಾಕಷ್ಟು ಆಹಾರ ಧಾನ್ಯಗಳು ಲಭ್ಯವಿವೆ. ಈ ಹಂಗಾಮಿನಲ್ಲಿ ಸರಿಯಾದ ಬಿತ್ತನೆ ನಡೆಯುವಂತೆ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕಳೆದ ಕೆಲವು ವರ್ಷಗಳಲ್ಲಿ ರಸಗೊಬ್ಬರಗಳ ಸಮರ್ಪಕ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಸರಕಾರವು ಸೂಕ್ಷ್ಮ, ಜಾಗರೂಕ ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯವನ್ನು ಒದಗಿಸಲು ಸಿದ್ಧವಾಗಿದೆ. ಭಾರತದ ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರ ಪೂರೈಕೆಯ ಗಮನಾರ್ಹ ಭಾಗವು ಹಾರ್ಮುಝ್ ಜಲಸಂಧಿಯ ಮೂಲಕ ಬರುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಜಲಸಂಧಿಯ ಮೂಲಕ ಹಡಗುಗಳ ಚಲನೆ ಬಹಳ ಸವಾಲಿನದ್ದಾಗಿದೆ. ಇದರ ಹೊರತಾಗಿಯೂ, ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆಯ ಮೇಲೆ ಗಮನಾರ್ಹ ಪರಿಣಾಮ ಬೀರದಂತೆ ನೋಡಿಕೊಳ್ಳಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗ್ರಾ.ಪಂ. ಚುನಾವಣೆ; ಸದಸ್ಯರ ಸಂಖ್ಯೆ ಗುರುತಿಸಲು 4 ವಾರ ಕಾಲಾವಕಾಶ ಕೇಳಿದ ಸರಕಾರ
ಬೆಂಗಳೂರು : ರಾಜ್ಯದಲ್ಲಿ 5,950 ಗ್ರಾಮ ಪಂಚಾಯಿತಿಗಳಿದ್ದು, ಪ್ರಸ್ತುತ 96 ಸಾವಿರಕ್ಕೂ ಅಧಿಕ ಸದಸ್ಯರ ಸಂಖ್ಯೆ ಇದೆ. ಹೊಸದಾಗಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸದಸ್ಯರ ಸಂಖ್ಯೆ ಗುರುತಿಸಲು 4 ವಾರಗಳ ಅಗತ್ಯವಿದೆ ಎಂದು ಲಿಖಿತವಾಗಿ ಕಾಲಾವಕಾಶ ಕೇಳಿರುವ ರಾಜ್ಯ ಸರಕಾರ, ಆನಂತರ ಮೀಸಲಾತಿ ಪ್ರಕ್ರಿಯೆ ಅಂತಿಮಗೊಳಿಸಿ, ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಕನಿಷ್ಟ 3 ತಿಂಗಳು ಕಾಲಾವಕಾಶ ಬೇಕು ಎಂದು ಮೌಖಿಕವಾಗಿ ಹೇಳಿದೆ. ಅವಧಿ ಮುಗಿದ ರಾಜ್ಯದ 5,950 ಗ್ರಾಮ ಪಂಚಾಯಿತಿಗಳಿಗೆ ಹಾಗೂ 187 ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಅನುಕೂಲವಾಗುವಂತೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಗ್ರಾ.ಪಂ. ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸರಕಾರ ಈವರೆಗೆ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಸರಕಾರದ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿತು. ಸರ್ಕಾರ ಹೇಳಿದ್ದೇನು? ಈ ವರ್ಷದ ಜನವರಿಯಲ್ಲಿ ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಪತ್ರ ಆಧರಿಸಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ 2026ರ ಜನವರಿ 28ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸದ್ಯ ಚಾಲ್ತಿಯಲ್ಲಿರುವ ಹಿಂದಿನ ಜನಗಣತಿ ಅಧರಿಸಿ ಪ್ರತಿ ಗ್ರಾ.ಪಂ.ಗೆ ಎಷ್ಟು ಸದಸ್ಯರು ಆಯ್ಕೆಯಾಗಬೇಕು ಎಂಬುದನ್ನು ಕರ್ನಾಟಕ ರಾಜ್ಯ ಕ್ಷೇತ್ರ ಮರುವಿಂಗಡಣಾ ಆಯೋಗ ನಿರ್ಧರಿಸಿ ಸರಕಾರಕ್ಕೆ ಶಿಫಾರಸು ಮಾಡಬೇಕು. ಅದರಂತೆ, ಅಗತ್ಯ ಅಂಕಿ-ಸಂಖ್ಯೆಗಳ ಮಾಹಿತಿಯನ್ನು 15 ದಿನಗಳಲ್ಲಿ ಆಯೋಗಕ್ಕೆ ಒಗದಿಸುವಂತೆ ಮಾರ್ಚ್ 18ರಂದು ಕ್ಷೇತ್ರ ಮರುವಿಂಗಡಣಾ ಆಯೋಗ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ಸರಕಾರ ತಿಳಿಸಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಂದ ಆಯೋಗಕ್ಕೆ ಮಾಹಿತಿ ಬರಲು 2 ವಾರಗಳು ಬೇಕು. ಆ ಮಾಹಿತಿ ಪರಿಶೀಲಿಸಿ, ಸರಕಾರಕ್ಕೆ ಶಿಫಾರಸು ಮಾಡಲು ಆಯೋಗಕ್ಕೆ 1 ವಾರ ಕಾಲಾವಕಾಶ ಬೇಕು. ಆಯೋಗದ ಶಿಫಾರಸು ಪರಿಶೀಲಿಸಿ, ಒಟ್ಟು ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರಕಾರಕ್ಕೆ 1 ವಾರ ಕಾಲಾವಕಾಶಬೇಕು. ಚುನಾಯಿತರಾಗಬೇಕಾದ ಒಟ್ಟು ಸದಸ್ಯರ ಅಂತಿಮ ಸಂಖ್ಯೆ ನಿಗದಿಯಾದ ಬಳಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಾತಿ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಸರಕಾರ ಲಿಖಿತವಾಗಿ ಹೇಳಿದೆ. ಇದೇ ವೇಳೆ, ಲಭ್ಯ ಮಾಹಿತಿಯ ಪ್ರಕಾರ ಸದಸ್ಯರ ಸಂಖ್ಯೆ ಅಂತಿಮಗೊಂಡ ಬಳಿಕ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕಾಗಬಹುದು ಎಂದು ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ನ್ಯಾಯಾಲಯಕ್ಕೆ ಮೌಖಿಕವಾಗಿ ತಿಳಿಸಿದರು. 167 ಸ್ಥಳೀಯ ಸಂಸ್ಥೆಗಳ ವಾರ್ಡ್ ಮರುವಿಂಗಡಣೆ ಪೂರ್ಣ: ರಾಜ್ಯದ 47 ನಗರಸಭೆ, 91 ಪುರಸಭೆ, 49 ಪಟ್ಟಣ ಪಂಚಾಯಿತಿಗಳು ಸೇರಿ ಅವಧಿ ಮುಗಿದು ಚುನಾವಣೆ ನಡೆಯಬೇಕಿರುವ ಒಟ್ಟು 187 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 167 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮರುವಿಂಗಡಣೆ ಕಾರ್ಯ ಮುಗಿದಿದ್ದು, 21 ಮಾತ್ರ ಬಾಕಿ ಇದೆ. ಅದೇ ರೀತಿ 23 ನಗರ ಸ್ಥಳೀಯ ಸಂಸ್ಥೆಗಳ ಕರಡು ಮೀಸಲಾತಿ ಅಧಿಸೂಚನೆ ಹೊರಡಿಸಿದ್ದು, ಅಂತಿಮ ಅಧಿಸೂಚನೆ ಪರಿಶೀಲನೆಯಲ್ಲಿದೆ. 143 ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್ವಾರು ಕರಡು ಮೀಸಲಾತಿ ಪ್ರಕಟಣೆ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ವಾಮಂಜೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಕ್ಕೊತ್ತಾಯ ಪಾದಯಾತ್ರೆ
ಮಂಗಳೂರು, ಮಾ.23: ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವಾಮಂಜೂರು ಇದರ ನೇತೃತ್ವದಲ್ಲಿ ಆರೋಗ್ಯ ಸಂಬಂಧಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಕ್ಕೊತ್ತಾಯ ಪಾದಯಾತ್ರೆ ನಡೆಯಿತು. ತಾರಿಗುಡ್ಡೆ ಪರಿಸರದಲ್ಲಿ ಆರಂಭಗೊಂಡ ಈ ಪಾದಯಾತ್ರೆಯಲ್ಲಿ ನೂರಾರು ಮಂದಿ ವಾಮಂಜೂರು ಜಂಕ್ಷನ್ ವರೆಗೂ ನಡೆದು ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು. ವಾಮಂಜೂರು ಜಂಕ್ಷನ್ ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಮಾತನಾಡಿ ಆರೋಗ್ಯವನ್ನು ರಕ್ಷಿಸುವುದು ಸರಕಾರದ ಕರ್ತವ್ಯವಾಗಿದೆ. ಆರೋಗ್ಯವಂತ ಬದುಕು ಜನರ ಹಕ್ಕಾಗಿರುತ್ತದೆ. ಆದರೆ ಇಂದಿನ ಕರ್ನಾಟಕದ ಆರೋಗ್ಯ ಸ್ಥಿತಿಯು ತೀರಾ ಶೋಚನೀಯವಾಗಿದೆ. ಬಡವ ಮಧ್ಯಮ ವರ್ಗದ ಜನರಿಗೂ ಎಟಕದಷ್ಟು ಆರೋಗ್ಯ ವ್ಯವಸ್ಥೆಯು ದುಬಾರಿಯಾಗಿರುವುದು ಇಂದಿನ ಪ್ರಮುಖ ಸಮಸ್ಯೆಯಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿ ಜನತೆಗೆ ಸಹಕಾರಿಯಾಗಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗಿ ಹೋಗಿವೆ. ಆದರೆ ಇಲ್ಲಿನ ಶಾಸಕರು ಸಂಸದರಾಗಲಿ ರಾಜ್ಯ ಸರ್ಕಾರ ವಾಗಲಿ ಜನತೆಯ ಆರೋಗ್ಯದ ಕುರಿತು ಮಾತನಾಡುತ್ತಿಲ್ಲ. ಜಿಲ್ಲೆಯ ಕಂಬಳ, ಬಂಗಾರದ ಅಂಗಡಿಗಳ ಉದ್ಘಾಟನೆಯಲ್ಲಿ ಇರುವಂತಹ ಕನಿಷ್ಠ ಆಸಕ್ತಿಯು ಜನರ ಆರೋಗ್ಯದ ಕುರಿತಾಗಿ ಇಲ್ಲ ಎಂದು ಆರೋಪಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಸಮಾಜವಾದಿ ಎಂದುಕೊಳ್ಳುತ್ತಲೇ ಈ ರಾಜ್ಯದ ಆರೋಗ್ಯ ಕ್ಷೇತ್ರದ ಖಾಸಗಿಕರಣದ ವೇಗವನ್ನು ಹೆಚ್ಚಿಸುತ್ತಿದ್ದಾರೆ. ಖಾಸಗಿ ಕ್ಷೇತ್ರದ ಆನಿಯಂತ್ರಿತ ದುಬಾರಿ ವೆಚ್ಚಗಳು ಒಂದೆಡೆ ಯಾದರೆ ಇರುವಂತಹ ಸರಕಾರಿ ಆರೋಗ್ಯ ಸಂಸ್ಥೆಗಳನ್ನು ಆಸ್ಪತ್ರೆಗಳನ್ನು ಖಾಸಗಿಯವರಿಗೆ ಒತ್ತೆ ಇಡುತ್ತಿರುವುದು ಇಂದಿನ ಸರಕಾರಗಳ ಸಾಧನೆ ಎಂದರು. ಕಾರ್ಮಿಕ ಮುಖಂಡ ಸದಾಶಿವ ದಾಸ್ ಮಾತನಾಡುತ್ತ ಕೇರಳದ ಚುನಾವಣಾ ಪ್ರಚಾರದ ವೇಳೆ ಕಾಸರಗೋಡಿನಲ್ಲಿ ಸರಕಾರಿ ಆಸ್ಪತ್ರೆಗಳನ್ನು ಹುಡುಕಾಡುವ ಮಂಗಳೂರಿನ ಜನಪ್ರತಿನಿಧಿಗಳು ಮಂಗಳೂರಿನಲ್ಲಿ ಎಷ್ಟು ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವಾಮಂಜೂರು ಇದರ ಮುಖಂಡರಾದ ಮನೋಜ್ ವಾಮಂಜೂರು ಮಾತನಾಡುತ್ತಾ ನಮ್ಮ ತಕ್ಷಣದ ಬೇಡಿಕೆಯಾಗಿ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಬಿದ್ದಿರುವ ಎಂಟು ಹುದ್ದೆಗಳನ್ನು ಭರ್ತಿಗೊಳಿಸಬೇಕು. ಔಷಧಿಗಳ ಕೊರತೆಯನ್ನು ನೀಗಿಸಬೇಕು. ಈಗಾಗಲೇ ಪ್ರಸ್ತಾಪದಲ್ಲಿರುವ ಜಯದೇವ ಆಸ್ಪತ್ರೆಯ ಘಟಕವನ್ನು ರಚಿಸಲು ಗಮನಹರಿಸಬೇಕು. ಗುರುಪುರ ಹೋಬಳಿಗೊಂದು ಸಮುದಾಯ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಬೇಡಿಕೆ ನಮ್ಮ ಹೋರಾಟ ಸಮಿತಿಯದ್ದಾಗಿದ್ದು ಈ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದರು. ಈ ಹಕ್ಕತ್ತಾಯ ಪಾದಯಾತ್ರೆಯ ಸಮಾರಂಭ ಸಮಾರಂಭಕ್ಕೆ ಆಗಮಿಸಿ ಕುಡುಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿರಾಗ್ ಮನವಿಯನ್ನು ಸ್ವೀಕರಿಸಿದರು. ಈ ಪ್ರತಿಭಟನ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಅಶೋಕ್ ರೈ, ಜೈ ಶಂಕರ್ ಮಿತ್ರ ಮಂಡಳಿಯ ಮುಖಂಡ ರಾದ ರಾಜೀವ ಸಾಲಿಯನ್, ರೈತ ಮುಖಂಡರಾದ ಬಾಬು ಸಾಲಿಯಾನ್, ಲಿಂಗಪ್ಪ ಸಾಲಿಯಾನ್, ಶೇಖರ ಗಂಪ, ಭೋಜ ದೇವಸ, ಕಾರ್ಮಿಕ ಮುಖಂಡರಾದ ಹೊನ್ನಯ ಅಂಚನ್, ಹೊನ್ನಯ ಅಮೀನ್,ಭವಾನಿ ಜಿ ಅಮೀನ್, ಭಾರತಿ ದೇವಸ, ವಸಂತಿ ಕುಪ್ಪೆಪದವು, ನೋಡಯ್ಯ ಗೌಡ, ಅಶೋಕ್ ಬಂಗೇರ, ಜಯಶೀಲ ಕರ್ಕೇರ ಸಾಮಾಜಿಕ ಹೋರಾಟಗಾರರಾದ ಸುಭಾಷ್ ಬಾಲಕಟ್ಟ ಮೊದಲಾದವರು ಉಪಸ್ಥಿತರಿದ್ದರು.
`ಹಾಗಿದ್ರೆ ದೇವಸ್ಥಾನಕ್ಕೆ ಹೋಗುವುದು ಕೆಟ್ಟದ್ದೇ?': ಕೀರ್ತಿ ಆಜಾದ್ ಟೀಕೆಗೆ ಅಕ್ಷರ್ ಪಟೇಲ್ ತಿರುಗೇಟು
Axar Patel Vs Kirti Azad- 2026ರ ಟಿ20 ವಿಶ್ವಕಪ್ ಟ್ರೋಫಿಯನ್ನು ಅಹಮದಾಬಾದ್ನ ಆಂಜನೇಯ ಮಂದಿರಕ್ಕೆ ಕೊಂಡೊಯ್ದಿದ್ದನ್ನು ಟೀಕಿಸಿದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರಿಗೆ ಇದೀಗ ದಿಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ತಿರುಗೇಟು ನೀಡಿದ್ದಾರೆ. ದೇವಸ್ಥಾನಕ್ಕೆ ಹೋಗುವುದು ಕೆಟ್ಟದ್ದೇ? ಭೇಟಿ ನೀಡದ ದೇಗುಲಗಳಿಗೆ ಹೋಗುವುದರಿಂದ ನಮಗೆ ಧೈರ್ಯ ಬರುತ್ತದೆ ಎಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಅವರ ನಡೆಯನ್ನು ಸಮರ್ಥಿಸಿಕೊಂಡರು.
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಅಭ್ಯರ್ಥಿ ಪರವಾಗಿ ಮತಯಾಚಿಸಿ ವಿರೋಧ ಪಕ್ಷಗಳಿಗೆ ಖಡಕ್ ಸಂದೇಶ ರವಾನಿಸಿದರು. ಬೃಹತ್
ವಾರದೊಳಗೆ ಕಡ್ಡಾಯವಾಗಿ ‘ಗೇಲ್’ನಲ್ಲಿ ನೋಂದಣಿ ಮಾಡಿಸಿ; ವಾಣಿಜ್ಯ ಅಡುಗೆ ಅನಿಲ ಬಳಕೆದಾರರಿಗೆ ಸೂಚನೆ ನೀಡಿದ ಸರಕಾರ
ಬೆಂಗಳೂರು : ಒಂದು ವಾರದೊಳಗಾಗಿ ರಾಜ್ಯದ ಎಲ್ಲ ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರು ಗೇಲ್ನಲ್ಲಿ (ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್) ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಸೋಮವಾರ ಇಲ್ಲಿನ ವಸಂತನಗರದ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ಸಮಸ್ಯೆ ಕುರಿತು ನಡೆದ ಐಒಸಿ, ಎಚ್ಪಿಸಿ, ಬಿಪಿಸಿ, ಗೇಲ್ನ ಅಧಿಕಾರಿಗಳು ಹಾಗೂ ಹೋಟೆಲ್ ಸಂಘದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರು, ವಿಶೇಷವಾಗಿ ವಾಣಿಜ್ಯ ಅನಿಲ ಸಿಲಿಂಡರ್ ಬಳಸುವ ಹೋಟೆಲ್ ಮಾಲಕರು ಗೇಲ್ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ದಾಖಲೆ ಆಧಾರಿತ ವಿತರಣೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಈ ಉಪಕ್ರಮವನ್ನು ಅಳವಡಿಸಲಾಗುತ್ತಿದ್ದು, ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ನಿಯಂತ್ರಣ ಹಾಗೂ ಸಿಲಿಂಡರ್ ಪೂರೈಕೆಯಲ್ಲಿ ಪಾರದರ್ಶಕತೆಯನ್ನು ಸಾಧಿಸಲು ನೆರವಾಗುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಪೈಪ್ಲೈನ್ ಆಧಾರಿತ ಗ್ಯಾಸ್ ಪೂರೈಕೆಯನ್ನು ವಿಸ್ತರಿಸಲು ಸಹಾಯಕವಾಗುತ್ತದೆ. ಹೀಗಾಗಿ ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು. ರಾಜ್ಯದಲ್ಲಿ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ತೊಂದರೆ ಕುರಿತು ಈಗಾಗಲೇ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಶೇ.20ರಷ್ಟು ಪೂರೈಕೆ ಮಾಡಲು ಒಪ್ಪಿಕೊಂಡಿದೆ. ಇದರ ಜೊತೆಗೆ, ಹೋಟೆಲ್ ಹಾಗೂ ಸಂಬಂಧಿತ ಉದ್ಯಮಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕನಿಷ್ಠ ಶೇ.50 ವಾಣಿಜ್ಯ ಅನಿಲದ ಪೂರೈಕೆ ಅಗತ್ಯವಿದ್ದು, ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಒಟ್ಟಾರೆ ತ್ವರಿತ ಕ್ರಮ ಮತ್ತು ಸಮನ್ವಯದ ಮೂಲಕ ರಾಜ್ಯದಲ್ಲಿ ಎಲ್ಪಿಜಿ ಸಮಸ್ಯೆ ಹಂತ ಹಂತವಾಗಿ ಪರಿಹಾರವಾಗುವ ನಿರೀಕ್ಷೆ ಇದೆ. ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಿ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ಗಳ ಪೂರೈಕೆಯ ಸ್ಥಿತಿ ಹಾಗೂ ಸುಧಾರಣೆ ಕುರಿತು ಚರ್ಚೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್. ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್, ಸುಬ್ರತ್ ಚಟರ್ಜಿ, ರಾಜೇಶ್ ಸಿಂಗ್, ಸಂಜಯ್ ಕುಮಾರ್ ಸಿಂಗ್, ಪ್ರಣಯ ದೇವನಾಗನ್, ರವಿಕುಮಾರ್ ತಂಡಲ್, ಪ್ರಸೂನ್ ಉಪಸ್ಥಿತರಿದ್ದರು. ಪತ್ರಿದಿನ 16 ಸಾವಿರ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಪೂರೈಸಲು ನಿರ್ಧಾರ ರಾಜ್ಯದಲ್ಲಿ ಪ್ರತಿದಿನ 16,105 ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ಗಳನ್ನು ವಿತರಣೆ ಮಾಡಲು ನಿರ್ದರಿಸಲಾಗಿದೆ. ಇದರಲ್ಲಿ ಗೇಲ್ನಲ್ಲಿ ನೋಂದಣಿಯಾದ ಹೋಟೆಲ್, ರೆಸ್ಟೋರೆಂಟ್, ಡಾಬಾ, ಕ್ಯಾಂಟೀನ್, ಫುಡ್ ಪ್ರೊ ಸೆಸಿಂಗ್ ಘಟಕಗಳು, ಇಂದಿರಾ ಕ್ಯಾಂಟೀನ್ಗಳಿಗೆ ಮಾತ್ರ 10 ಸಾವಿರ ಸಿಲಿಂಡರ್, ಶಿಕ್ಷಣ ಕ್ಷೇತ್ರಕ್ಕೆ 4 ಸಾವಿರಕ್ಕೂ ಅಧಿಕ ಸಿಲಿಂಡರ್ ನೀಡಲಾಗುತ್ತದೆ. ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಫಾರ್ಮಾಸಿಟಿಕಲ್, ಮೀನುಗಾರಿಕೆ, ರೇಷ್ಮೆ ಕೃಷಿ ಹಾಗೂ ಇತರೆ ಅಗತ್ಯ ವಲಯಗಳಿಗೆ ಪ್ರತ್ಯೇಕ ಆದ್ಯತೆ ನೀಡಿ ಸುಮಾರು 500 ಅಧಿಕ ಸಿಲಿಂಡರ್ಗಳನ್ನು ಮೀಸಲಿಡಲಾಗುವುದು. ಉಳಿದ ಸಿಲಿಂಡರ್ಗಳನ್ನು ಆಟೋ ಗ್ಯಾಸ್ ವಲಯಕ್ಕೆ ಬಳಕೆ ಮಾಡಲಾಗುತ್ತದೆ. -ಕೆ.ಎಚ್. ಮುನಿಯಪ್ಪ, ಆಹಾರ ಸಚಿವ
Gold Rate March 23: ಕಳೆದ ಕೆಲವು ದಿನಗಳಿಂದ ಭಾರೀ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು ಮಾರ್ಚ್ 23ರ ಸೋಮವಾರ ಭರ್ಜರಿ ಇಳಿಕೆ ಕಂಡಿದೆ. ಮಧ್ಯಪ್ರಾಚ್ಯದ ಸಂರ್ಘದ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ಭಾರೀ ಹೆಚ್ಚಳ ಕಂಡಿತ್ತು. ಇದೀಗ ಚಿನ್ನದ ಬೆಲೆಯು ಶೇ4.39% ರಷ್ಟು ಇಳಿಕೆ ಕಂಡಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲೂ ಸಹ ಭರ್ಜರಿ
ಕುಂದಾಪುರ| ನಮ್ಮ ಭೂಮಿಯಲ್ಲಿ ಈದ್ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಕುಂದಾಪುರ, ಮಾ.23: ಖಿದ್ಮಾ ಫೌಂಡೇಶನ್ ವತಿಯಿಂದ ಸದ್ಭಾವನಾ ವೇದಿಕೆ ಸಹಯೋಗದೊಂದಿಗೆ ಕನ್ಯಾನ ಗ್ರಾಮದ ಹಟ್ಟಿಯಂಗಡಿಯ ರಾಜ್ಯ ಸಂಪನ್ಮೂಲ ಕೇಂದ್ರ ನಮ್ಮ ಭೂಮಿಯಲ್ಲಿ ಈದ್ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಝಮೀರ್ ಅಹ್ಮದ್ ರಶಾದಿ, ಪವಿತ್ರ ರಮಝಾನ್ ತಿಂಗಳು ತ್ಯಾಗ, ಬಲಿದಾನ, ಕ್ಷಮೆ ಮತ್ತು ಸಹಾನುಭೂತಿ ಮೌಲ್ಯಗಳನ್ನು ಬೆಳೆಸುವುದರೊಂದಿಗೆ, ಸಮಾಜದ ಬಡ ಹಾಗೂ ಸಂಕಷ್ಟ ದಲ್ಲಿರುವ ಜನರ ನೆರವಿಗೆ ಮುಂದಾಗುವ ಪ್ರೇರಣೆಯನ್ನು ನೀಡುತ್ತದೆ ಎಂದು ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಸೌಹಾರ್ದ ಸಂದೇಶ ನೀಡಿ, ಪರಸ್ಪರ ಪ್ರೀತಿ, ಗೌರವ ಮತ್ತು ಸಹಕಾರದಿಂದ ಒಟ್ಟಾಗಿ ಬದುಕುವುದೇ ಸೌಹಾರ್ದತೆಯ ಮೂಲವಾಗಿದ್ದು, ಭಿನ್ನ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳ ನಡುವೆಯೂ ಪರಸ್ಪರ ಅರ್ಥಮಾಡಿಕೊಂಡು ಸಹಾನುಭೂತಿಯಿಂದ ನಡೆದು ಕೊಳ್ಳುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು. ವಕೀಲ ಟಿ.ಬಿ.ಶೆಟ್ಟಿ ಮಾತನಾಡಿ, ಸತ್ಯ ಮತ್ತು ನ್ಯಾಯದ ಪರ ಸದಾ ದೃಢವಾಗಿ ನಿಲ್ಲಬೇಕು. ಟೀಕೆ ಮತ್ತು ವಿರೋಧಗಳ ನಡುವೆಯೂ ಸತ್ಯದ ದಾರಿ ತೊರೆಯಬಾರದು. ಸತ್ಯದ ಮೇಲೆ ನಿಂತಿರುವ ವ್ಯಕ್ತಿಯ ಧೈರ್ಯ ಇತರರಿಗೆ ಪ್ರೇರಣೆಯಾಗಿದ್ದು, ಅದು ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆಯನ್ನು ಸ್ಥಾಪಿಸುವ ಶಕ್ತಿಯಾಗುತ್ತದೆ ಎಂದು ಹೇಳಿದರು. ಜೊತೆಗೆ, ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸುವುದು ಹಾಗೂ ಸಂಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡುವುದು ಸೌಹಾರ್ದತೆಯ ಮುಖ್ಯ ಲಕ್ಷಣಗಳಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜುಡಿತ್ ಮೆಂಡೊನ್ಸಾ, ಉದಯ ಗಾಂವ್ಕರ್ ಹಾಗೂ ವಾಸುದೇವ ಗಂಗೇರ ಮಾತನಾಡಿದರು. ವಿದ್ಯಾರ್ಥಿಗಳ ಸದ್ಭಾವನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಮ್ಮ ಭೂಮಿ ನಿರ್ದೇಶಕ ಶ್ರೀನಿವಾಸ ಗಾಣಿಗ ಸ್ವಾಗತಿಸಿದರು. ಖಿದ್ಮಾ ಫೌಂಡೇಶನ್ ಅಧ್ಯಕ್ಷ ಶೇಖ್ ಅಬು ಮುಹಮ್ಮದ್ ಅಧ್ಯಕ್ಷತೆ ವಹಿಸಿದರು. ಕೃಪಾ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರೂಪಿಸಿದರು.
ಹೂಡೆ ದಾರುಸ್ಸಲಾಮ್ ಅಧ್ಯಕ್ಷರಾಗಿ ಖಾಝಿ ರಫೀಕ್ ಆಯ್ಕೆ
ಉಡುಪಿ, ಮಾ.23: ಹೂಡೆಯ ದಾರುಸ್ಸಲಾಮ್ ಎಜುಕೇಶನ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಖಾಝಿ ರಫೀಕ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸೊಸೈಟಿಯ ಮಹಾಸಭೆಯಲ್ಲಿ ಈ ಆಯ್ಕೆ ಮಾಡ ಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಜುನೈದ್, ಕೋಶಾಧಿಕಾರಿಯಾಗಿ ಬಿ.ಅಫ್ಜಲ್, ಗೌರವಾಧ್ಯಕ್ಷರಾಗಿ ಅಶ್ರಫ್ ಜಿ., ಉಪಾಧ್ಯಕ್ಷರಾಗಿ ಟಿ.ಎಂ.ಜಫ್ರುಲ್ಲಾಹ್ ಮತ್ತು ಹಾಜಿ ಘನಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಯ್ಯೂಮ್ ಇಮ್ತಿಯಾಝ್ ಅವರನ್ನು ಆಯ್ಕೆ ಮಾಡಲಾಯಿತು.
Bengaluru | ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್: 4.91 ಕೋಟಿ ರೂ. ಕಳೆದುಕೊಂಡ ವ್ಯಕ್ತಿ
ಬೆಂಗಳೂರು : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಸಂಶೋಧಕರೊಬ್ಬರಿಗೆ ಕರೆ ಮಾಡಿ ಹೆದರಿಸಿ ಡಿಜಿಟಲ್ ಅರೆಸ್ಟ್ ಮೂಲಕ 4.91 ಕೋಟಿ ರೂ.ಗಳನ್ನು ಸೈಬರ್ ವಂಚಕರು ದೋಚಿರುವ ಪ್ರಕರಣ ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡಿರುವ 94 ವರ್ಷದ ನಿವೃತ್ತ ಸಂಶೋಧಕ ಮಾರ್ಚ್ 8ರಂದು ದೂರು ನೀಡಿದ್ದು, ಈ ಸಂಬಂಧ ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶೋಕ ನಗರ ಠಾಣಾ ವ್ಯಾಪ್ತಿಯ ವಿಕ್ಟೋರಿಯಾ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಪತ್ನಿಯೊಂದಿಗೆ ದೂರುದಾರರು ನೆಲೆಸಿದ್ದರು. 2025ರ ಡಿಸೆಂಬರ್ 2ರಂದು ದೂರುದಾರರ ಮನೆಯ ಲ್ಯಾಂಡ್ಲೈನ್ ಫೋನ್ಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ವಿರುದ್ಧ ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳ ಸಾಗಣೆ ಸಂಬಂಧ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಕರೆ ಮಾಡುತ್ತಾರೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ನಂತರ, ಸಂದೀಪ್ ರಾವ್ ಹೆಸರಿನ ಮತ್ತೋರ್ವ ವ್ಯಕ್ತಿ, ದೂರುದಾರರಿಗೆ ಕರೆ ಮಾಡಿ, ‘ನಾನು ಸಿಬಿಐ ಅಧಿಕಾರಿ’ ಎಂದು ಪರಿಚಯಿಸಿಕೊಂಡು ಆಧಾರ್ ಕಾರ್ಡ್ ಪ್ರತಿಯನ್ನು ವಾಟ್ಸಪ್ನಲ್ಲಿ ಕಳುಹಿಸುವಂತೆ ಸೂಚಿಸಿದ್ದ. ಇದಾದ ಬಳಿಕ ಪ್ರಕರಣ ದಾಖಲಾಗಿರುವಂತೆ ನಕಲಿ ಎಫ್ಐಆರ್ ಪ್ರತಿ ಕಳುಹಿಸಿದ್ದ ಆರೋಪಿಗಳು, ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ವಿಡಿಯೋ ಕರೆ ಮಾಡಿದ್ದಾರೆ. ಬಳಿಕ 2025ರ ಡಿಸೆಂಬರ್ 17ರಿಂದ 2026ರ ಫೆಬ್ರವರಿ 23ರ ನಡುವೆ ವಿಚಾರಣೆ ಸೋಗಿನಲ್ಲಿ ಹಂತ ಹಂತವಾಗಿ 4.91 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅದಾದ ಮೇಲೂ ಆರೋಪಿಗಳು ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಡಲಾರಂಭಿಸಿದಾಗ ಅನುಮಾನಗೊಂಡ ದೂರುದಾರರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೂರುದಾರರು ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಹಣ ವರ್ಗಾವಣೆ ಆಗಿರುವ ಖಾತೆಗಳು ನಕಲಿ (ಮ್ಯೂಲ್ ಅಕೌಂಟ್) ಎಂಬುದು ಪತ್ತೆಯಾಗಿದೆ. ಖಾತೆಗಳ ವಾರಸುದಾರರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಹಿಂದಿನ ಎರಡು ತಿಂಗಳಲ್ಲಿ ಈ ರೀತಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚಿಸಿರುವ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಮತ್ತೊಮ್ಮೆ ಮಕ್ಕಳಾಗಬೇಕು: ಜೀವನರಾಂ ಸುಳ್ಯ
ಉಡುಪಿ, ಮಾ.23: ಬದುಕಿನ ಸಾರ್ಥಕತೆಯನ್ನು ಗಳಿಸಲು ನಾವೆಲ್ಲ ಮತ್ತೊಮ್ಮೆ ಮಕ್ಕಳಾಗಬೇಕು ಎಂದು ರಂಗ ನಿರ್ದೇಶಕ ಜೀವನರಾಂ ಸುಳ್ಯ ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಅವಿನಾಶ್ ಕಾಮತ್ ನೇತೃತ್ವದಲ್ಲಿ ಉಡುಪಿಯ ಶಾರದಾ ಮಂಟಪ ರಸ್ತೆಯ ರಂಗವಲ್ಲಿ ಮನೆಯ ಆವರಣದಲ್ಲಿ ರವಿವಾರ ನಡೆದ ಕೂತು ಮಾತಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ನಾವು ನಮ್ಮ ಋಣಾತ್ಮಕ ಅಂಶಗಳನ್ನು ಮತ್ತೊಬ್ಬರಿಗೆ ತಿಳಿಸದೆ, ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಪರಿಪಾಠ ಬೆಳೆಯಬೇಕು ಎಂದು ಅವರು ತಿಳಿಸಿದರು. ಬದುಕಿನಲ್ಲಿ ನಡೆದ ಹಲವು ಘಟನೆಗಳು, ಕಷ್ಟದಿಂದ ಮೇಲೆದ್ದು ಬಂದ ರೋಚಕ ಕಥೆಗಳು ಸಭಿಕರಿಗೆ ಭಾವನಾತ್ಮಕವಾಗಿ ಕಥೆಗಳ ಮೂಲಕ ಅವರು ವಿವರಿಸಿದರು. ಇದೇ ಸಂದರ್ಭದಲ್ಲಿ ಜೀವನ್ ರಾಮ್ ಅವರನ್ನು ಗೌರವಿಸಲಾಯಿತು. ಅವಿನಾಶ್ ಕಾಮತ್ ಕಾರ್ಯಕ್ರಮ ನಡೆಸಿಕೊಟ್ಟರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್ ಪಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕಸಾಪ ಉಡುಪಿ ತಾಲೂಕಿನ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಂಧ್ಯಾ ಶೆಣೈ, ಶಿಲ್ಪಾ ಜೋಶಿ, ರಾಘವೇಂದ್ರ ಪ್ರಭು ಕರ್ವಾಲು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು : ಅನಧಿಕೃತವಾಗಿ ಕೃಷಿ ಪಂಪ್ಸೆಟ್ಗಳಲ್ಲಿ ವಿದ್ಯುತ್ ಸಂಪರ್ಕ ಪಡೆದವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲು ಮೂರು ತಿಂಗಳ ಅವಕಾಶ ನೀಡಲಾಗಿದ್ದು, ನಿಗದಿತ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಪರಿಷತ್ತಿನ ಕಲಾಪದ ಗಮನ ಸೆಳೆಯುವ ಸೂಚನೆ ವೇಳೆ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಅನಧಿಕೃತ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಒಂದು ಕೃಷಿ ಪಂಪ್ಸೆಟ್ಗೆ ಸುಮಾರು 4.5 ಲಕ್ಷ ವೆಚ್ಚವಾಗಲಿದೆ. ಸರಕಾರವೇ 3 ಲಕ್ಷ ರೂಪಾಯಿ ಭರಿಸುತ್ತಿದೆ. ಬಾಕಿ 1.5 ಲಕ್ಷ ರೂ.ಗಳನ್ನು ಬಳಕೆದಾರರು ಪಾವತಿಸಬೇಕು. ಕೆಲವರು ಈ ಶುಲ್ಕ ಪಾವತಿಸಿಲ್ಲ. ಅವರಿಗೆ ಮೂರು ತಿಂಗಳು ಅವಕಾಶ ನೀಡಲಾಗಿದ್ದು, ಹಣ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು. ಈ ವೇಳೆ ಮಾತನಾಡಿದ ಸದಸ್ಯ ಗೋವಿಂದರಾಜು, ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದದ ವೆಚ್ಚಕ್ಕೂ ರಾಜ್ಯ ಸರಕಾರ ಭರಿಸುತ್ತಿರುವ ಮೊತ್ತದ ನಡುವೆ ಭಾರಿ ವ್ಯತ್ಯಾಸವಿದೆ. ತೀವ್ರ ಸಂಕಷ್ಟದಿಂದ ಎಸ್ಕಾಂಗಳು ಸಾಲದ ಮೊರೆ ಹೋಗಿದ್ದು 45 ಸಾವಿರ ಕೋಟಿ ರೂಪಾಯಿ ದಾಟಿದೆ. ಇದರಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ ಬರಬೇಕಾದ ಬಾಕಿ 19 ಸಾವಿರ ಕೋಟಿಯಿದೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ಅನುಮತಿ ಪಡೆದು ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದ್ಯುತ್ ಖರೀದಿಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸಲು ಸಾಲದ ಮೊರೆ ಅನಿವಾರ್ಯವಾಗಿದೆ. ಬಜೆಟ್ನಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನವಿಲ್ಲ. ಪ್ರತಿವರ್ಷ ವಿದ್ಯುತ್ ಬೇಡಿಕೆ ಹೆಚ್ಚಾದಂತೆ ಬಂಡವಾಳ ವೆಚ್ಚ ಸರಿದೂಗಿಸಿ ನಿರ್ವಹಣೆಗಾಗಿ ಎಸ್ಕಾಂಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಾಗಿದೆ ಎಂದು ವಿವರಿಸಿದರು. ಪಡೆದ ಸಾಲವನ್ನು ಸಕಾಲಕ್ಕೆ ಸರಕಾರ ತೀರಿಸುತ್ತಿದೆ. ಗೃಹಜ್ಯೋತಿ, ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಸಬ್ಸಿಡಿ ಯೋಜನೆಗಳ ಸಂಬಂಧ ಸರಕಾರವು ನಿಗದಿತ ಸಮಯದಲ್ಲಿ ಎಸ್ಕಾಂಗಳಿಗೆ ಹಣ ಪಾವತಿಸಲಾಗುತ್ತಿದೆ. ವಿದ್ಯುತ್ ನಿರ್ವಹಣೆ ಹಾಗೂ ದುರಸ್ತಿಗಾಗಿ ಮೀಸಲಿಟ್ಟಿರುವ ಹಣವನ್ನು ಅನ್ಯ ಕಾರ್ಯಕ್ಕೆ ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

22 C