ಅಂಜುಮನ್ ಕಮಿಟಿಯಿಂದ 100ಕ್ಕೂ ಅಧಿಕ ಬಡ ಮಹಿಳೆಯರಿಗೆ ಬಡ್ಡಿರಹಿತ ಸಾಲ ವಿತರಣೆ
ವಿಜಯನಗರ : ಅಂಜುಮನ್ ಕಮಿಟಿ ವತಿಯಿಂದ ಅಂಜುಮನ್ ಶಾದಿಮಹಲ್ನಲ್ಲಿ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಯಾವುದೇ ಬಡ್ಡಿ ಇಲ್ಲದೆ ತಲಾ 10,000ರೂ. ಮೊತ್ತದ ಆರ್ಥಿಕ ಸಹಕಾರವನ್ನು 100ಕ್ಕೂ ಹೆಚ್ಚು ಮಹಿಳೆಯರಿಗೆ ವಿತರಿಸಲಾಯಿತು. ಸಹಾಯ ಪಡೆದ ಮಹಿಳೆಯರು ದಿನಕ್ಕೆ 100 ರೂಪಾಯಿಯಂತೆ 100 ದಿನಗಳಲ್ಲಿ ಮರುಪಾವತಿ ಮಾಡಬೇಕಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮೊಹಿನುದ್ದಿನ್ ದುರ್ವೆಶ್, ಮಹಿಳೆಯರು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೊಲಿಗೆ, ಸಣ್ಣ ವ್ಯಾಪಾರ, ಗೃಹಾಧಾರಿತ ಉದ್ಯಮಗಳು ಸೇರಿದಂತೆ ಜೀವನೋಪಾಯಕ್ಕೆ ಸಹಕಾರಿಯಾಗುವ ಕಾರ್ಯಗಳಿಗೆ ಈ ಹಣವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಯಾವುದೇ ಬಡ್ಡಿ ಇಲ್ಲದೇ ನೀಡಲಾಗುತ್ತಿರುವ ಈ ಸಹಾಯಧನದಿಂದ ಬಡ ಕುಟುಂಬಗಳ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆಗೆ, ಕುಟುಂಬದ ಆರ್ಥಿಕ ಸ್ಥಿತಿಗತಿಗೂ ಬಲ ಸಿಗಲಿದೆ ಎಂದು ಅಂಜುಮನ್ ಕಮಿಟಿ ಯ ಅಧ್ಯಕ್ಷರಾದ ಎಚ್ ಎನ್ ಮಹಮ್ಮದ್ ಇಮಾಮ್ ನಿಯಾಜಿ ಹೇಳಿದರು. ಕಾರ್ಯಕ್ರಮದಲ್ಲಿ, ಅನ್ಸಾರ್ ಬಾಷ, ಫೈರೋಝ್ ಖಾನ್, ನಗರಸಭಾ ಸದಸ್ಯೆ ಮುನ್ನಿ, ಮಹಬೂಬ್ ಬೈ, ದಾದಾಪೀರ್, ಖದೀರ್ ಬೈ ( ಕಂಚಗಾರ್ ಪೇಟ್ ), ಗಫೂರ್ ಬೈ, ಅತ್ತಾಯೇ ರಸೂಲ್, ಗುಲಾಮ್ ರಸೂಲ್, ಮೆಟ್ರೋ ಮುರ್ಶಿದ್, ಸದ್ದಾಂ, ಮೊಹಿಶಿನ್ ಕೊತ್ವಾಲ್, ಮಹಬು ಸಾಬ್, ನಯೀಂ ಸಾಬ್, ಜಹಾಂಗೀರ್ ಬೈ, ಹಾಗೂ ಅಂಜುಮ್ ಕಮಿಟಿಯ ಎಲ್ಲಾ ಸದಸ್ಯರು, ಗಣ್ಯರು ಹಾಗೂ ಲಾಭ ಪಡೆದ ಮಹಿಳೆಯರು ಉಪಸ್ಥಿತರಿದ್ದರು.
ಕೇರಳವು ಭಾರತದ ಭೂಪಟದಲ್ಲಿ ಇದೆಯೇ ಎಂಬ ಬಗ್ಗೆ ಪ್ರಶ್ನಿಸುವಂತಾಗಿದೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಎಲ್ ಡಿ ಎಫ್ ಜಾಥಾಕ್ಕೆ ಚಾಲನೆ
ಕೇಂದ್ರ ಬಜೆಟ್ 2026 | ಜನ ವಿರೋಧಿ ಬಜೆಟ್: ಮಮತಾ ಬ್ಯಾನರ್ಜಿ
ಹೊಸದಿಲ್ಲಿ, ಫೆ. 1: 2026-27ನೇ ಸಾಲಿನ ಬಜೆಟ್ ಅನ್ನು ದಿಕ್ಕುರಹಿತ ಹಾಗೂ ಮುನ್ನೋಟವಿಲ್ಲದ ಬಜೆಟ್ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ವಿವರಿಸಿದ್ದಾರೆ. ಈ ಬಜೆಟ್ ಸಾಮಾನ್ಯ ಜನರಿಗೆ ಹಾಗೂ ತನ್ನ ರಾಜ್ಯಕ್ಕೆ ಏನನ್ನೂ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ‘‘ಇದು ದಿಕ್ಕುರಹಿತ, ಮುನ್ನೋಟವಿಲ್ಲದ, ಕ್ರಿಯಾಶೀಲವಲ್ಲದ ಹಾಗೂ ಜನ ವಿರೋಧಿ ಬಜೆಟ್. ಇದು ಮಹಿಳಾ ವಿರೋಧಿ, ರೈತ ವಿರೋಧಿ, ಶಿಕ್ಷಣ ವಿರೋಧಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳ ವಿರೋಧಿ ಬಜೆಟ್. ಇದರಲ್ಲಿ ಪಶ್ಚಿಮ ಬಂಗಾಳಕ್ಕೆ ಏನನ್ನೂ ನೀಡಿಲ್ಲ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಬಜೆಟ್ 2026 | ನೀತಿ ಮುನ್ನೋಟದ ಕೊರತೆ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ, ಫೆ. 1: ಮೋದಿ ಸರ್ಕಾರದ ಚಿಂತನೆಗಳು ಖಾಲಿಯಾಗಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರವಿವಾರ ಹೇಳಿದ್ದಾರೆ. 2026-27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಭಾರತದ ಹಲವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸವಾಲಗಳಿಗೆ ಒಂದೇ ಒಂದು ಪರಿಹಾರ ಒದಗಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ‘ಎಕ್ಸ್’ನ ಪೋಸ್ಟ್ನಲ್ಲಿ ಅವರು, ಈ ಬಜೆಟ್ನಲ್ಲಿ ನೀತಿ ಮುನ್ನೋಟ ಅಥವಾ ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲ. ಈ ಬಜೆಟ್ ಯಾವುದೇ ಪರಿಹಾರ ನೀಡುವುದಿಲ್ಲ. ಸಾಮಾಜಿಕ ಸೇವೆಗಳ ಕ್ಷೇತ್ರಗಳಲ್ಲಿ ಹಲವನ್ನು ಕೈಬಿಡಲಾಗಿದೆ. ಈ ವೈಫಲ್ಯವನ್ನು ಮರೆಮಾಚಲು ಅವುಗಳ ಬಗ್ಗೆ ಒಂದು ಪ್ರಸ್ತಾವವನ್ನೂ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿ| ದ.ರಾ.ಬೇಂದ್ರೆ ಬದುಕು ಮತ್ತು ಸಾಹಿತ್ಯ ಕುರಿತ ಸಂವಾದ
ಕಲಬುರಗಿ: ಬ್ರಿಟಿಷರ ಮಾನವ ಹತ್ಯೆ ಖಂಡಿಸಿ ಬರೆದ ನರಬಲಿ ಕವಿತೆ ಬೇಂದ್ರೆ ಅಜ್ಜನ ಬಂಧನಕ್ಕೆ ಕಾರಣವಾಯಿತು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶೈಲಜಾ ಕೊಪ್ಪರ್ ಹೇಳಿದರು. ರವಿವಾರ ನಗರದ ಕನ್ನಡ ಭವನದ ಕಲಾ ಭವನದಲ್ಲಿ ಪ್ರೋಗ್ರೆಸಿವ್ ಕಲ್ಚರ್ ಅಸೋಸಿಯೇಷನ್ ಆಫ್ ಇಂಡಿಯಾ (ಪಿಸಿಎಐ) ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಶಬ್ದ ಗಾರುಡಿಗ ದ.ರಾ.ಬೇಂದ್ರೆ ಬದುಕು ಮತ್ತು ಸಾಹಿತ್ಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯರನ್ನು ತುಳಿದು ಆಡಳಿತ ನಡೆಸುತ್ತಿದ್ದ ಬಿಳಿಯರ ವಿರುದ್ಧ ಕೆಂಡ ಕಾರಿದ್ದ ಈ ಕವಿತೆ ಭಾರತೀಯರನ್ನು ಬಡಿದೆಚ್ಚರಿಸುವ ಸಾಮರ್ಥ್ಯ ಹೊಂದಿತ್ತು. ಜನರು ಹೋರಾಟಕ್ಕೆ ಸಿಡಿದೇಳುವ ಆತಂಕ ಕಾಡಿದ್ದರಿಂದ ಬ್ರಿಟಿಷ್ ಸರಕಾರ ಬೇಂದ್ರೆಯವರನ್ನು ಬಂಧಿಸಿ ಜೈಲಿಗಟ್ಟಿತ್ತು. ಹತ್ತು ವರ್ಷಗಳ ಕಾಲ ಜೈಲಲ್ಲಿಟ್ಟು ಶಿಕ್ಷೆ ನೀಡಿತು. ಮೇಲಾಗಿ ಇವರಿಗೆ ಯಾವುದು ನೌಕರಿಗೆ ಸೇರಿಸಿಕೊಳ್ಳದಂತೆ ಆದೇಶ ಹೊರಡಿಸಿತು. ಇದರಿಂದ ಬೇಂದ್ರೆ ಕುಟುಂಬ ಆರ್ಥಿಕ ಸಂಕಟಕ್ಕೊಳಗಾಗಿ ಕ್ರೂರ ಬಡತನವನ್ನು ಅನುಭವಿಸಬೇಕಾಯಿತು. ನರಬಲಿ ಕವಿತೆಯಿಂದ ವರಕವಿ ದೊಡ್ಡ ಬೆಲೆ ತೆತ್ತಬೇಕಾಯಿತು ಎಂದರು. ಕುರುಡು ಕಾಂಚಾಣ ಕುಣಿಯುತ್ತಿತ್ತು.. ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು.. ಎಂದು ಬರೆಯುವ ಮೂಲಕ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಬೇಂದ್ರೆ ಸಾಹಿತ್ಯ ಕ್ರಾಂತಿ ಮುಂದುವರೆಯಿತು. ಇಬ್ಬನಿಯ ಹನಿಗಳನ್ನು ಅಮೃತದ ಹನಿಗಳಿಗೆ ಹೋಲಿಸಿ, ಗಿಡಗಂಟೆಗಳ ಕೊರಳಿಂದ ಹಕ್ಕಿಗಳ ಹಾಡು ಹೊರಟಿದೆ ನೋಡಿ ಎಂದು ಬರೆದು ಭಾವ ಕವಿ ಎನ್ನಿಸಿದರು. ಆದರೆ ಇಂದಿನ ಯಾಂತ್ರಿಕ ಜೀವನದಲ್ಲಿ ಉನ್ನತಿ ಮರೆಯಾಗುತ್ತಿದೆ. ಭಾವ ಕವಿ ಜೀವಪರ ಕವಿಯಾಗಿ ಜನಮನ ಗೆದ್ದಿದ್ದಾರೆ. ನೀ ಹೀಂಗ ನೋಡಬ್ಯಾಡ ನನ್ನ... ಕವಿತೆ ಎಲ್ಲಿಯವರೆಗೂ ಜನರ ಕೊರಳ ಹಾಡಾಗಿರುತ್ತದೋ ಅಲ್ಲಿವರೆಗೆ ಬೇಂದ್ರೆ ಬದುಕಿರುತ್ತಾರೆ ಎಂದು ವಿವರಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ವೆಂಕಣ್ಣ ಡೊಣ್ಣೆಗೌಡರ್ ಮಾತನಾಡಿ, ಕಾವ್ಯ ಲೋಕದಲ್ಲಿ ತಮ್ಮದೇಯಾದ ಭಾವ ಸಾಹಿತ್ಯ ಕಟ್ಟಿಕೊಟ್ಟ ಬೇಂದ್ರೆ ಅವರು ಬದುಕಿನ ಕಷ್ಟಗಳಿಂದ ಬೆಂದು ಹೋಗಿದ್ದರು. ಜಾತಿಯನ್ನು ಮೀರಿ ಜನರನ್ನು ಪ್ರೀತಿಸುವ ಜನಪರ ಕವಿಯಾಗಿದ್ದರು ಎಂಬುದಕ್ಕೆ ಅವರ ಬದುಕು ಮತ್ತು ಬರಹವೇ ಸಾಕ್ಷಿಯಾಗಿದೆ ಎಂದರು. ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಎ.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಪುಟ್ಟರಾಜ್ ಲಿಂಗಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವಿಶಾಲಾಕ್ಷಿ ದೇಸಾಯಿ, ಮಡಿವಾಳಪ್ಪ ಹೇರೂರ, ಮಹಾದೇವಿ ಬಿ.ಕೆ, ಶೋಬನಾ ಸೇರಿದಂತೆ ನಗರದ ಸಾಹಿತ್ಯಾಸಕ್ತರು, ಸಂಘಟಕರು ಪಾಲ್ಗೊಂಡಿದ್ದರು. ಆವಿಷ್ಕಾರ ವೇದಿಕೆಯ ಶ್ರೀಶರಣ ಹೊಸಮನಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿಶಾಲಾಕ್ಷಿ ದೇಸಾಯಿ ಹಾಗೂ ಶೋಬನಾ ಬೇಂದ್ರೆ ಸಾಹಿತ್ಯದ ಗೀತೆಗಳನ್ನು ಹಾಡಿದರು
ಬಜೆಟ್ ನನಗೆ ಅಚ್ಚರಿ ಉಂಟು ಮಾಡಿದೆ: ಶಶಿ ತರೂರ್
ಹೊಸದಿಲ್ಲಿ, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಕೇರಳದ ಬಗ್ಗೆ ಸಾಕಷ್ಟು ಉಲ್ಲೇಖಿಸದೇ ಇರುವುದು ತನಗೆ ಅಚ್ಚರಿ ಉಂಟು ಮಾಡಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ರವಿವಾರ ಹೇಳಿದ್ದಾರೆ. ‘‘ಬಜೆಟ್ ಭಾಷಣದಲ್ಲಿ ಅಲ್ಲಲ್ಲಿ ಮೀನುಗಾರಿಕೆ, ಗೋಡಂಬಿ ಹಾಗೂ ತೆಂಗಿನಕಾಯಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಕೇರಳಕ್ಕೆ ಪ್ರಯೋಜನ ಸಿಗಬಹುದಾಗಿದೆ. ಆದರೆ, ಕೇರಳದ ಹೆಸರನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿಲ್ಲ. ಕೇರಳದ ಸಂಸದನಾಗಿ, ಈ ಬಜೆಟ್ನಲ್ಲಿ ಸಂತೋಷಪಡಲು ಏನೂ ಇಲ್ಲ ಎಂದು ನಾನು ಹೇಳಲೇಬೇಕು’’ ಎಂದು ತರೂರ್ ಹೇಳಿದ್ದಾರೆ.
20,000 ಪಶುವೈದ್ಯರಿಗೆ ತರಬೇತಿ; ಮೀನುಗಾರಿಕೆಗೆ 500 ಜಲಮೂಲಗಳ ಅಭಿವೃದ್ಧಿ
ಹೊಸದಿಲ್ಲಿ, ಫೆ.1: ಗ್ರಾಮೀಣ ಆದಾಯವನ್ನು ವೈವಿಧ್ಯಗೊಳಿಸುವ ಮತ್ತು ಸಾಂಪ್ರದಾಯಿಕ ಕೃಷಿಯನ್ನು ಮೀರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ರಮವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಾನುವಾರು ಹಾಗೂ ಮೀನುಗಾರಿಕೆ ಕ್ಷೇತ್ರಗಳಿಗೆ ಸರಣಿ ಉಪಕ್ರಮಗಳನ್ನು ಘೋಷಿಸಿದ್ದಾರೆ. ಜಾನುವಾರುಗಳು ಕೃಷಿ ಆದಾಯದ ಶೇಕಡಾ 16ರಷ್ಟು ಕೊಡುಗೆ ನೀಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಪಶುವೈದ್ಯ ವೃತ್ತಿಪರರ ಲಭ್ಯತೆಯನ್ನು 20,000ಕ್ಕಿಂತಲೂ ಹೆಚ್ಚಿಸಲು ಸಾಲ-ಸಂಯೋಜಿತ ಬಂಡವಾಳ ಸಬ್ಸಿಡಿ ಯೋಜನೆಯನ್ನು ಘೋಷಿಸಿದ್ದಾರೆ. ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಕಾಲೇಜುಗಳು, ಪಶುವೈದ್ಯಕೀಯ ಆಸ್ಪತ್ರೆಗಳು, ರೋಗ ನಿರ್ಣಯ ಪ್ರಯೋಗಾಲಯಗಳು ಮತ್ತು ತಳಿ ಸೌಲಭ್ಯಗಳ ಸ್ಥಾಪನೆಗೆ ಈ ಯೋಜನೆ ಬೆಂಬಲ ನೀಡುತ್ತದೆ. ಮೀನುಗಾರಿಕೆಗಾಗಿ ಸರ್ಕಾರವು 500 ಸರೋವರಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಿದೆ. ನವೋದ್ಯಮಗಳು, ಮಹಿಳಾ ನೇತೃತ್ವದ ಗುಂಪುಗಳು ಮತ್ತು ಮೀನು ಕೃಷಿಕರ ಉತ್ಪಾದಕ ಸಂಸ್ಥೆಗಳ ಮೂಲಕ ಮಾರುಕಟ್ಟೆ ಸಂಪರ್ಕವನ್ನು ಸಕ್ರಿಯಗೊಳಿಸಲಾಗುತ್ತದೆ. ಇದರ ಜೊತೆಗೆ, ಪಶುಸಂಗೋಪನಾ ಉದ್ಯಮಶೀಲತೆ ಅಭಿವೃದ್ಧಿಗಾಗಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಕರಾವಳಿಯ ರೈತರಿಗೆ ಮಹತ್ವದ ಕ್ರಮವಾಗಿ, ತೆಂಗು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಹಳೆಯ ಮತ್ತು ಉತ್ಪಾದಕವಲ್ಲದ ಮರಗಳನ್ನು ಹೊಸ ಪ್ರಬೇಧಗಳೊಂದಿಗೆ ಬದಲಿಸುವ ಗುರಿಯನ್ನು ಹೊಂದಿರುವ ತೆಂಗು ಉತ್ತೇಜನಾ ಯೋಜನೆಯನ್ನು ಪ್ರಕಟಿಸಲಾಗಿದೆ. ಭಾರತೀಯ ಗೋಡಂಬಿ ಮತ್ತು ಕೋಕೋಗೆ ಮೀಸಲಾದ ಕಾರ್ಯಕ್ರಮದಲ್ಲಿ ದೇಶವನ್ನು ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಹಾಗೂ 2030ರ ವೇಳೆಗೆ ಅವುಗಳನ್ನು ಪ್ರೀಮಿಯಂ ಜಾಗತಿಕ ಬ್ರಾಂಡ್ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಭಾರತೀಯ ಶ್ರೀಗಂಧದ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸಲು ಶ್ರೀಗಂಧದ ಕೃಷಿ ಮತ್ತು ಕಟಾವಿನ ನಂತರದ ಸಂಸ್ಕರಣೆಯನ್ನು ಉತ್ತೇಜಿಸಲು ಸರ್ಕಾರವು ರಾಜ್ಯಗಳೊಂದಿಗೆ ಸಹಭಾಗಿತ್ವ ಹೊಂದಲಿದೆ. ಗುಡ್ಡಗಾಡು ಪ್ರದೇಶಗಳಿಗೆ ಮೀಸಲಾದ ಯೋಜನೆಯು ಹಳೆಯ ತೋಟಗಳ ಪುನರುಜ್ಜೀವನಕ್ಕೆ ಬೆಂಬಲ ನೀಡುತ್ತದೆ. ವಾಲ್ನಟ್ (ಅಕ್ರೋಟು), ಬಾದಾಮಿ ಮತ್ತು ಪೈನ್ ಮರದ ಬೀಜಗಳ ಕೃಷಿಯನ್ನು ವಿಸ್ತರಿಸುವುದರ ಜೊತೆಗೆ ಯುವಜನತೆಯ ತೊಡಗಿಸಿಕೊಳ್ಳುವ ಮೂಲಕ ಮೌಲ್ಯವರ್ಧನೆಗೆ ಕೇಂದ್ರೀಕರಿಸಿದೆ.
ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಯಿಂದ ಕಾರ್ಮಿಕರ ಭವಿಷ್ಯಕ್ಕೆ ಮಾರಕ: ಕೆ.ಮಹಾಂತೇಶ್
ರಾಯಚೂರು: ಕೇಂದ್ರ ಸರಕಾರ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ್ದು, ಕಾರ್ಮಿಕ ವಿರೋಧಿ, ಉದ್ಯಮಿಗಳ ಪರವಾಗಿರುವ ಕಾನೂನುಗಳಾದ್ದು ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಮಹಾಂತೇಶ್ ಹೇಳಿದರು. ನಗರದ ಸರಕಾರಿ ನೌಕರರ ಭವನದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆ, ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಕಾರ್ಮಿಕರ-ರೈತ-ಕೂಲಿಕಾರರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೆ.ಮಹಾಂತೇಶ್, ಕೇಂದ್ರ ಸರಕಾರ 29 ಕಾರ್ಮಿಕ ಕಾನೂನುಗಳನ್ನು 4 ಕೋಡ್ಗಳಾಗಿ ಮಾಡಿ ಜಾರಿಗೊಳಿಸಿದೆ. 29 ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡದೇ ಅವುಗಳನ್ನು ತಿದ್ದುಪಡಿ ಮಾಡಿ 4 ವಿಂಗಡಣೆಯಾಗಿ ಮಾಡಿದ್ದಾರೆ. ಈ ಹಿಂದೆ 44 ಕಾರ್ಮಿಕ ಕಾನೂನುಗಳಿದ್ದವು ಅವುಗಳನ್ನು 29ಕ್ಕೆ ತರಲಾಯಿತು. ಇದೀಗ ಅವುಗಳನ್ನು 4 ಕೋಡ್ಗಳಾಗಿ ಮಾಡಿದ್ದು ಇವುಗಳು ಯಾರಿಗೂ ಅರ್ಥವಾಗದಂತೆ ಮಾಡಲಾಗಿದೆ. ತಿದ್ದುಪಡಿ ಮಾಡಿ ಮಾಲಕರ ಪರವಾಗಿ ಮಾಡಲಾಗಿದೆ ಎಂದರು. ಕಾರ್ಮಿಕರ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ, ಕಾರ್ಮಿಕರ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ನಮ್ಮ ಬೇಡಿಕೆಯಾಗಿತ್ತು, ಇದ್ಯಾವುದನ್ನು ಮಾಡದೇ ಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೊಳಿಸಿದ್ದಾರೆ ಎಂದು ದೂರಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಕಾನೂನುಗಳನ್ನು ಜಾರಿಗೊಳಿಸಿವೆ. ಕೇಂದ್ರದಲ್ಲಿ ಸಂಸದರು, ರಾಜ್ಯದಲ್ಲಿ ಶಾಸಕರು ಇವುಗಳ ಬಗ್ಗೆ ಚರ್ಚಿಸಬೇಕು. ಆದರೆ ಇದಾವುದನ್ನು ಮಾಡದೇ ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರ್ಮಿಕರ ಪರವಾದ ಕಾನೂನುಗಳು ಬೇಕಾಗಿದೆ, ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಇಎಸ್ಐ, ಪಿಎಫ್, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಕೆಗೆ ನಮ್ಮ ಒತ್ತಾಯವಾಗಿ ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟ ನಿರಂತರವಾಗಿದೆ ಎಂದರು. ಈ ಸಂದರ್ಭದಲ್ಲಿ ಎಐಯುಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮಿ, ಟಿಯುಸಿಐ ರಾಜ್ಯಾಧ್ಯಕ್ಷ ಅಮೀರ್ ಅಲಿ, ಎಸ್.ಕೆಕೆ. ಜಿಲ್ಲಾ ಸಂಚಾಲಕ ಕೆಜಿ ವೀರೇಶ್, ಸಿಐಟಿಯು ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿ, ಕಾಶಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿಎಸ್ ಶರಣಬಸವ, ಎಐಯುಟಿಯುಸಿ ಉಪಾಧ್ಯಕ್ಷ ಎನ್ಎಸ್ ವೀರೇಶ್, ಎಂ.ರವಿ, ಜಿಂದಪ್ಪ, ರೈತ ಸಂಘದ ಅಧ್ಯಕ್ಷ ಪ್ರಭಾಕರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Uttarakhand | “ಇವನು ಇಂದಿನ ಭಾರತದ ಹೀರೋ”; ʼಮುಹಮ್ಮದ್ ದೀಪಕ್ʼಗೆ ರಾಹುಲ್ ಗಾಂಧಿ ಪ್ರಶಂಸೆ
“ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಸಾಹಸಿ”
ಮಂಗಳೂರು| ಆನ್ಲೈನ್ ಗೇಮ್ನಲ್ಲಿ ಸೋಲಿಸಿದ ದ್ವೇಷ: ಕೊಲೆ ಯತ್ನ ನಡೆಸಿದ ಆರೋಪಿಗೆ ಜೈಲುಶಿಕ್ಷೆ, ದಂಡ
ಮಂಗಳೂರು, ಫೆ.1: ಆನ್ಲೈನ್ ಗೇಮ್ನಲ್ಲಿ ಸೋಲಿಸಿದ ವಿಚಾರದಲ್ಲಿ ನಗರದ ನಂದಿಗುಡ್ಡೆ ಬಳಿಯ ನಿವಾಸಿ ಪ್ರತ್ಯೂಶ್ ಸಾಲಿಯಾನ್ ಎಂಬವರಿಗೆ ಬೆದರಿಕೆ ಹಾಕಿ, ಕೊಲೆ ಯತ್ನ ನಡೆಸಿರುವ ಪ್ರಕರಣದಲ್ಲಿ ಸಂಜಯ್ ಪೂಜಾರಿ ಎಂಬಾತನಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ. 2023ರ ಮೇ 17ರಂದು ಸಂಜೆ 3:40ರ ವೇಳೆಗೆ ಪ್ರತ್ಯೂಶ್ ತನ್ನ ಮನೆಯಿಂದ ನಂದಿಗುಡ್ಡೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜಯ್ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಚೂರಿಯಿಂದ ಕೊಲೆಯತ್ನ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪಿಎಸ್ಐ ಶೀತಲ್ ಅಲಗೂರು ಮತ್ತು ಪಿಎಸ್ಐ ಮನೋಹರ್ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್.ಅವರು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಂಜಯ್ ಪೂಜಾರಿಗೆ ಜ.31ರಂದು 4 ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದರು.
ಕೇಂದ್ರ ಬಜೆಟ್ 2026: ಮಹತ್ವದ ಯೋಜನೆಗಳೇನು? ಯಾವ ರಾಜ್ಯಕ್ಕೆ ಏನೇನು ಸಿಕ್ಕಿದೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ. 01) 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಸುಮಾರು 1 ಗಂಟೆ 25 ನಿಮಿಷಗಳ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ► ಬಜೆಟ್ ಭಾಷಣದ ಮುಖ್ಯಾಂಶಗಳು ► ಆದಾಯ ತೆರಿಗೆ 2026–27ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆಗಳನ್ನು ಹಣಕಾಸು ಸಚಿವೆ ಘೋಷಿಸಲಿಲ್ಲ. ಆದಾಯ ತೆರಿಗೆ ಪಾವತಿದಾರರ ಪರಿಷ್ಕೃತ ತೆರಿಗೆ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 31ರಿಂದ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಐಟಿಆರ್–1 ಸಲ್ಲಿಸುವ 50 ಲಕ್ಷ ರೂ.ವರೆಗೆ ಆದಾಯ ಗಳಿಸುವ ಸಂಬಳದಾರರು ಮತ್ತು ಪಿಂಚಣಿದಾರರಿಗೆ, ಹಾಗೂ ಐಟಿಆರ್–2 ಸಲ್ಲಿಸುವ (ಐಟಿಆರ್–1 ವರ್ಗಕ್ಕೆ ಸೇರದ) ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ ಜುಲೈ 31ರವರೆಗೆ ಗಡುವು ಇರುತ್ತದೆ. 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸುವ 2025ರ ಆದಾಯ ತೆರಿಗೆ ಕಾಯ್ದೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಕಾನೂನನ್ನು ಆಗಸ್ಟ್ನಲ್ಲಿ ಸಂಸತ್ತು ಅಂಗೀಕರಿಸಿತು. ► ವಿತ್ತೀಯ ಕೊರತೆ 2026–27ರ ಹಣಕಾಸು ವರ್ಷದಲ್ಲಿ ಭಾರತದ ವಿತ್ತೀಯ ಕೊರತೆ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 4.3% ಎಂದು ಅಂದಾಜಿಸಲಾಗಿದೆ. ಇದು 2025–26ರ ಬಜೆಟ್ ಅಂದಾಜಿನ 4.4%ಗಿಂತ ಸ್ವಲ್ಪ ಕಡಿಮೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಸರ್ಕಾರದ ಖರ್ಚು ಅದು ಉತ್ಪಾದಿಸುವ ಆದಾಯಕ್ಕಿಂತ ಹೆಚ್ಚಾದಾಗ ವಿತ್ತೀಯ ಕೊರತೆ ಉಂಟಾಗುತ್ತದೆ. ► ರಾಷ್ಟ್ರೀಯ ಸಾಲ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಸಾಲ–ಜಿಡಿಪಿ ಅನುಪಾತ 55.6% ಎಂದು ಅಂದಾಜಿಸಲಾಗಿದೆ. ಇದು 2025–26ರ ಪರಿಷ್ಕೃತ ಅಂದಾಜಿನ 56.1%ಗಿಂತ ಸ್ವಲ್ಪ ಕಡಿಮೆ. ► ವೆಚ್ಚ 2026–27ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚ 53.5 ಲಕ್ಷ ಕೋಟಿ ರೂ. ಆಗುವ ನಿರೀಕ್ಷೆಯಿದೆ. ಈ ಹಣಕಾಸು ವರ್ಷದಲ್ಲಿ ಸರ್ಕಾರದ ನಿವ್ವಳ ತೆರಿಗೆ ಸ್ವೀಕೃತಿಗಳು 28.7 ಲಕ್ಷ ಕೋಟಿ ರೂ. ಆಗುವ ನಿರೀಕ್ಷೆಯಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. ► ಬಂಡವಾಳ ವೆಚ್ಚ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚವನ್ನು 11.2 ಲಕ್ಷ ಕೋಟಿ ರೂ.ಗಳಿಂದ 12.2 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ರಸ್ತೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಮೂಲಸೌಕರ್ಯಗಳನ್ನು ನಿರ್ಮಿಸಲು ಸರ್ಕಾರ ಖರ್ಚು ಮಾಡುವ ಹಣವೇ ಬಂಡವಾಳ ವೆಚ್ಚ. ಪಶ್ಚಿಮ ಬಂಗಾಳದ ಡಂಕುನಿ ಮತ್ತು ಗುಜರಾತ್ ನ ಸೂರತ್ ಅನ್ನು ಸಂಪರ್ಕಿಸುವ ಹೊಸ ಮೀಸಲಾದ ಸರಕು ಸಾಗಣೆ ಕಾರಿಡಾರ್, 20 ಹೊಸ ರಾಷ್ಟ್ರೀಯ ಜಲಮಾರ್ಗಗಳು ಹಾಗೂ ಪ್ರಮುಖ ನಗರಗಳ ನಡುವೆ ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಸ್ಥಾಪಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ► ರೈಲ್ವೆ 2026–27ರ ಹಣಕಾಸು ವರ್ಷಕ್ಕೆ ರೈಲ್ವೆ ಸಚಿವಾಲಯಕ್ಕೆ 2.9 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. 2025–26ರ ಪರಿಷ್ಕೃತ ಅಂದಾಜು 2.6 ಲಕ್ಷ ಕೋಟಿ ರೂ. ಆಗಿತ್ತು. ► ವಿಬಿ–ಜಿ ರಾಮ್ ಜಿ ಯೋಜನೆ ಕೇಂದ್ರ ಸರ್ಕಾರವು ವಿಕಸಿತ ಭಾರತ–ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ–ಜಿ ರಾಮ್ ಜಿ) ಯೋಜನೆಗಾಗಿ 95,691 ಕೋಟಿ ರೂ. ಅನುದಾನ ನೀಡಿದೆ. ಡಿಸೆಂಬರ್ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ವಿಬಿ–ಜಿ ರಾಮ್ ಜಿ ಕಾಯ್ದೆ ಬದಲಾಯಿಸಲಾಗಿತ್ತು. ► ಗ್ರಾಮ ಸ್ವರಾಜ್ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಬಲಪಡಿಸಲು ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್’ ಉಪಕ್ರಮವನ್ನು ಪ್ರಾರಂಭಿಸಲು ಹಣಕಾಸು ಸಚಿವೆ ಪ್ರಸ್ತಾಪಿಸಿದ್ದಾರೆ. ಇದು ಜಾಗತಿಕ ಮಾರುಕಟ್ಟೆ ಸಂಪರ್ಕ ಮತ್ತು ಬ್ರ್ಯಾಂಡಿಂಗ್ಗೆ ಸಹಾಯ ಮಾಡಲಿದೆ. ತರಬೇತಿ, ಕೌಶಲ್ಯ, ಗುಣಮಟ್ಟ ಹಾಗೂ ಉತ್ಪಾದನೆಯನ್ನು ಸುಗಮಗೊಳಿಸಲು ಸಹಕಾರಿ ಎಂದು ತಿಳಿಸಿದ್ದಾರೆ. ► ಮೂಲಸೌಕರ್ಯ ನಿರ್ಮಾಣ ಮೂಲಸೌಕರ್ಯ ಅಭಿವೃದ್ಧಿಯ ಹಂತದಲ್ಲಿ ಖಾಸಗಿ ಡೆವಲಪರ್ಗಳ ವಿಶ್ವಾಸವನ್ನು ಹೆಚ್ಚಿಸಲು ಮೂಲಸೌಕರ್ಯ ಅಪಾಯ ಖಾತರಿ ನಿಧಿ ಸ್ಥಾಪಿಸಲಾಗುವುದು. ವಿಶೇಷವಾಗಿ ಶ್ರೇಣಿ–II ಮತ್ತು ಶ್ರೇಣಿ–III ನಗರಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಹೆಚ್ಚಿಸಲು ಕ್ರಮಗಳನ್ನು ಘೋಷಿಸಲಾಗಿದೆ. ► ಶಿಕ್ಷಣ ಉದಾರೀಕೃತ ಹಣ ರವಾನೆ ಯೋಜನೆ (LRS) ಅಡಿಯಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗೆ ಮೂಲದಲ್ಲೇ ತೆರಿಗೆ ಸಂಗ್ರಹ (TCS) ದರವನ್ನು ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಸಲಾಗಿದೆ. ಇದರಿಂದ ವಿದೇಶಿ ಶಿಕ್ಷಣದ ವೆಚ್ಚ ಕಡಿಮೆಯಾಗುವ ನಿರೀಕ್ಷೆ ಇದೆ. LRS ಯೋಜನೆಯಡಿ ಪ್ರತಿ ಹಣಕಾಸು ವರ್ಷಕ್ಕೆ 2,50,000 ಅಮೆರಿಕನ್ ಡಾಲರ್ ವರೆಗೆ ರವಾನೆ ಮಾಡಲು ಅನುಮತಿ ಇದೆ. ಶಿಕ್ಷಣ ಮತ್ತು ವೈದ್ಯಕೀಯ ಹೊರತುಪಡಿಸಿ ಇತರ ಉದ್ದೇಶಗಳಿಗೆ TCS ದರ ಶೇಕಡಾ 20ರಲ್ಲೇ ಮುಂದುವರಿಯುತ್ತದೆ. ► ತೆರಿಗೆ ರಜೆ ಭಾರತೀಯ ಡೇಟಾ ಸೆಂಟರ್ ಗಳನ್ನು ಬಳಸುವ ವಿದೇಶಿ ಕಂಪೆನಿಗಳಿಗೆ 2047ರವರೆಗೆ ತೆರಿಗೆ ರಜೆ ನೀಡಲಾಗುವುದು. ಕಂಪೆನಿಗಳು ಭಾರತೀಯ ಮರುಮಾರಾಟಗಾರರ ಮೂಲಕ ಭಾರತೀಯ ಗ್ರಾಹಕರಿಗೆ ಸೇವೆ ನೀಡಬೇಕಾಗುತ್ತದೆ. ► ಹೈಸ್ಪೀಡ್ ರೈಲು ಕಾರಿಡಾರ್ ಮುಂಬೈ–ಪುಣೆ, ಹೈದರಾಬಾದ್–ಪುಣೆ, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಬೆಂಗಳೂರು–ಚೆನ್ನೈ, ದೆಹಲಿ–ವಾರಣಾಸಿ ಹಾಗೂ ವಾರಣಾಸಿ–ಸಿಲಿಗುರಿ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಹಮದಾಬಾದ್–ಮುಂಬೈ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದೆ. ► ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬೌದ್ಧ ಸರ್ಕ್ಯೂಟ್ ಅಭಿವೃದ್ಧಿ. ಲೋಥಾಲ್, ಧೋಲವಿರ, ರಾಖಿಗಢಿ, ಸಾರನಾಥ, ಹಸ್ತಿನಾಪುರ ಮತ್ತು ಲೇಹ್ ಅರಮನೆ ಸೇರಿ 15 ಪುರಾತತ್ವ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು–ಕಾಶ್ಮೀರದಲ್ಲಿ ಪರಿಸರ ಸ್ನೇಹಿ ಚಾರಣ ಹಾದಿಗಳ ಅಭಿವೃದ್ಧಿ. ► ಔಷಧ ಮತ್ತು ಬಯೋಫಾರ್ಮಾ ಮುಂದಿನ ಐದು ವರ್ಷಗಳಲ್ಲಿ ಬಯೋಫಾರ್ಮಾ ಶಕ್ತಿ ಕಾರ್ಯಕ್ರಮಕ್ಕೆ 10,000 ಕೋಟಿ ರೂ. ಮೀಸಲು. ಮೂರು ಹೊಸ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (NIPER) ಹಾಗೂ 1,000 ಕ್ಲಿನಿಕಲ್ ಪ್ರಯೋಗ ತಾಣಗಳ ರಾಷ್ಟ್ರೀಯ ಜಾಲ ಸ್ಥಾಪನೆ. ► ಅನಿವಾಸಿ ಭಾರತೀಯರಿಗೆ ಪೋರ್ಟ್ಫೋಲಿಯೋ ಹೂಡಿಕೆ ಯೋಜನೆಯ ಮೂಲಕ ಈಕ್ವಿಟಿ ಹೂಡಿಕೆ ಅವಕಾಶ. ಕನಿಷ್ಠ ಪರ್ಯಾಯ ತೆರಿಗೆ (MAT) ವಿನಾಯಿತಿ ಹಾಗೂ ಆರು ತಿಂಗಳ ವಿದೇಶಿ ಆಸ್ತಿ ಬಹಿರಂಗಪಡಿಸುವ ಯೋಜನೆ. ► ಐದು ಯುನಿವರ್ಸಿಟಿ ಟೌನ್ ಕೈಗಾರಿಕಾ ಲಾಜಿಸ್ಟಿಕ್ ಕೇಂದ್ರಗಳ ಸಮೀಪ ಐದು ಯುನಿವರ್ಸಿಟಿ ಟೌನ್ಗಳ ಸ್ಥಾಪನೆ. ► ಆರೆಂಜ್ ಎಕಾನಮಿ 15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಲ್ಯಾಬ್ಗಳ ಸ್ಥಾಪನೆ. ► ಕ್ರೀಡೆ ಖೇಲೋ ಇಂಡಿಯಾ ಮಿಷನ್ ಪ್ರಾರಂಭ. ► ದೀರ್ಘಾವಧಿಯ ಇಂಧನ ಭದ್ರತೆ ಕಾರ್ಬನ್ ಕ್ಯಾಪ್ಚರ್ ಯುಟಿಲೈಸೇಶನ್ ಅಂಡ್ ಸ್ಟೋರೇಜ್ (CCUS) ತಂತ್ರಜ್ಞಾನಗಳಿಗೆ ಮುಂದಿನ ಐದು ವರ್ಷಗಳಲ್ಲಿ 20,000 ಕೋಟಿ ರೂ. ವೆಚ್ಚ. ► ಪಶುಸಂಗೋಪನೆ ಪಶುವೈದ್ಯಕೀಯ ವೃತ್ತಿಪರರ ಸಂಖ್ಯೆ 20,000ಕ್ಕೂ ಹೆಚ್ಚು ಹೆಚ್ಚಳ; ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ಸಾಲ–ಆಧಾರಿತ ಬಂಡವಾಳ ಸಬ್ಸಿಡಿ ಯೋಜನೆ. ► ಯಾವ ರಾಜ್ಯಕ್ಕೆ ಏನೇನು ಸಿಕ್ಕಿದೆ? ಕೈಗಾರಿಕಾ ಮತ್ತು ಆರ್ಥಿಕ ಪ್ರಗತಿಗಳು • ಒಡಿಶಾ, ಕೇರಳ, ಆಂಧ್ರಪ್ರದೇಶ, ತಮಿಳುನಾಡು: ಅಪರೂಪದ ಭೂ ಕಾರಿಡಾರ್ಗಳ ಸ್ಥಾಪನೆ • ಪಶ್ಚಿಮ ಬಂಗಾಳ: ದುರ್ಗಾಪುರವನ್ನು ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ನೊಳಗೆ ಸಂಯೋಜಿತ ನೋಡ್ ಆಗಿ ಅಭಿವೃದ್ಧಿಪಡಿಸುವುದು • ಗುಜರಾತ್: ಜಾಮ್ನಗರದಲ್ಲಿರುವ WHO ಗ್ಲೋಬಲ್ ಟ್ರೆಡಿಷನಲ್ ಮೆಡಿಕಲ್ ಸೆಂಟರ್ ಆಧುನೀಕರಣ • ಪೂರ್ವ ಪ್ರದೇಶ: ಹೊಸ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಸ್ಥಾಪನೆ ಮೂಲಸೌಕರ್ಯ ಮತ್ತು ಸಂಪರ್ಕ • ಹೈಸ್ಪೀಡ್ ರೈಲು ಕಾರಿಡಾರ್ಗಳು ವಿವಿಧ ರಾಜ್ಯಗಳಲ್ಲಿ • ಒಡಿಶಾ: 20 ರಾಷ್ಟ್ರೀಯ ಜಲಮಾರ್ಗಗಳ ಕಾರ್ಯಾಚರಣೆ • ಉತ್ತರ ಪ್ರದೇಶ ಮತ್ತು ಬಿಹಾರ: ಒಳನಾಡು ಹಡಗು ದುರಸ್ತಿ ಕೇಂದ್ರಗಳು ಪರಿಸರ ಪ್ರವಾಸೋದ್ಯಮ • ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು–ಕಾಶ್ಮೀರ: ಪರ್ವತ ಹಾದಿಗಳ ಅಭಿವೃದ್ಧಿ • ಆಂಧ್ರಪ್ರದೇಶ ಮತ್ತು ತಮಿಳುನಾಡು: ಪಕ್ಷಿ ವೀಕ್ಷಣಾ ಹಾದಿಗಳ ಅಭಿವೃದ್ಧಿ • ಒಡಿಶಾ, ಕರ್ನಾಟಕ, ಕೇರಳ: ಆಮೆ ಹಾದಿಗಳ ಅಭಿವೃದ್ಧಿ • ಈಶಾನ್ಯ ರಾಜ್ಯಗಳು: ಬೌದ್ಧ ಸರ್ಕ್ಯೂಟ್ ಅಭಿವೃದ್ಧಿ
ಬ್ಯಾರಿಗಳು ಎಲ್ಲೇ ಇದ್ದರೂ ತಮ್ಮ ಅಸ್ಮಿತೆ ಬಿಟ್ಟು ಕೊಡುವುದಿಲ್ಲ: ಸಿಎಂ ಸಿದ್ದರಾಮಯ್ಯ
ಬ್ಯಾರಿ ಕೂಟದ ಸಮಾರೋಪ ಸಮಾರಂಭ
ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಜೀವಾಳ: ಶರಣಪ್ಪ ಡಿ ಮಾನೇಗಾರ ಯರಗೋಳ
ಸೈದಾಪೂರ: ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿಯೊಬ್ಬರ ಹಿತ ಕಾಯುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೆಪಿಸಿಸಿ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಡಿ ಮಾನೇಗಾರ ಅವರು ಅಭಿಪ್ರಾಯ ಪಟ್ಟರು. ಗುರುಮಠಕಲ್ ಮತಕ್ಷೇತ್ರದ ಸೈದಾಪೂರ ಬ್ಲಾಕ್ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮಾತನಾಡಿದ ಶರಣಪ್ಪ ಡಿ ಮಾನೇಗಾರ, ನಿಷ್ಠಾವಂತ ಕಾರ್ಯಕರ್ತರ ದುಃಖದಲ್ಲಿ ಭಾಗಿಯಾಗಿ ಅವರಿಗೆ ಮಾನಸಿಕ ಬೆಂಬಲ ನೀಡಿ ಧೈರ್ಯ ತುಂಬುವುದು ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದರು. ನೀಲಹಳ್ಳಿ ಗ್ರಾಮದ ಸಿದ್ರಾಮಪ್ಪ ಬಾಗ್ಲಿ, ಮಲ್ಲೇಶ ಪಾಪಣ್ಣೋರ್ , ಬೆಳಗುಂದಿ ಗ್ರಾಮದ ಮಾಜಿ ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಪಣ್ಣಗೌಡ ಪೊಲೀಸ್ ಪಾಟೀಲ್, ತೋರಣತಿಪ್ಪ ಗ್ರಾಮದ ಶ್ರೀನಿವಾಸ್ ಗೂಡೆಬಳ್ಳೂರು, ಬದ್ದೆಪಲ್ಲಿ ಗ್ರಾಮದ ಸೌರಪ್ಪ , ಅಜಲಾಪುರ ಗ್ರಾಮದ ಹುಸೇನಪ್ಪ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ನೀಲಹಳ್ಳಿ ಗ್ರಾಮದ ಮಲ್ಲಯ್ಯನ ದೇವಸ್ಥಾನ, ನರಸಪ್ಪನ ಗುಡಿ, ದೊಡ್ಡಸಂಭ್ರ ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನ, ಅಜಲಾಪೂರ ಗ್ರಾಮದ ಭೀಮರಾಯ ದೇವಸ್ಥಾನ, ಬದ್ದೆಪಲ್ಲಿ ಗ್ರಾಮದ ಮಹಿಬೂಬ್ ಸುಭಾನಿ ದರ್ಗಾಕ್ಕೆ ಭೇಟಿ ನೀಡಿ ಅವರು ದರ್ಶನ ಪಡೆದರು. ಈ ಸಂದರ್ಭದಲ್ಲಿ ಯಾದಗಿರಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರೆಡ್ಡಿ ಬೆನಕನಹಳ್ಳಿ, ಮಾಜಿ ಪಿಎಲ್ಡಿ ಬ್ಯಾಂಕ್ ಅದ್ಯಕ್ಷ ಸುದರ್ಶನ ಪಾಟೀಲ್ ಜೈಗ್ರಾಮ, ಹಣಮಂತ ದೊಡ್ಡಮನಿ, ಜಗದೀಶ್ ಸಜ್ಜನ್, ದೇವಪ್ಪ ಗೌಡ ರಾಚನಳ್ಳಿ, ಬನ್ನಪ್ಪ ಹುಲಿಬೆಟ್ಟ, ಸಾಹೇಬ್ ಹುಸೇನಿ ನೀಲಹಳ್ಳಿ, ಡಾ. ಮೈಮುದ್ ಬಡಿಗೇರ್ ಬದ್ದೇಪಲ್ಲಿ, ರಘುಪತಿ ಗೌಡಗೇರಿ, ಮಲ್ಲು ಮಾಳಿಕೇರಿ, ಮಲ್ಲಯ್ಯ ಮೈಲಾಪುರ,ಬಸಲಿಂಗಪ್ಪ ನಾಯಕ ನೀಲಹಳ್ಳಿ, ಬಸವಂತ ಬೆಳಗುಂದಿ, ಶಿವಶಂಕರ ಬಾಗ್ಲಿ ನೀಲಹಳ್ಳಿ , ಸೈದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷ ಅಂಜನೇಯ ಕಟ್ಟಿಮನಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ವಿಜಯ ಕಂದಳ್ಳಿ, ವೀರೇಶ್ ಸಜ್ಜನ ಕಡೇಚೂರ, ಮಣಿ ಕ್ಯಾತನಾಳ, ಸಚಿನ್ ಸೈದಾಪುರ, ವೆಂಕಟೇಶ್ ನಾಯಕ್ ಕೂಡ್ಲೂರ, ಪುಂಡಲಿಕ ಗೊಂದೆಡಗಿ, ತಿಮ್ಮಣ್ಣರೆಡ್ಡಿ ಬೆಳಗುಂದಿ, ಭೀಮರಾಯ ಉಜ್ಜೆಲಿ, ಮಂಜುನಾಥ ಮೇತ್ರಿ ಮಲ್ಹಾರ, ಸಾಬು ಪೂಜಾರಿ ರಾಂಪುರ, ಸಿದ್ದು ನಾಯಕ, ಸತೀಶ್ ಕಣೇಕಲ್ ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶರಣಪ್ಪ ಮಾನೇಗಾರ ಅಭಿಮಾನಿಗಳು ಉಪಸ್ಥಿತರಿದ್ದರು.
Union Budget 2026: ಕೇಂದ್ರ ಬಜೆಟ್ನಲ್ಲಿ ರಾಜ್ಯದ ನ್ಯಾಯಸಮ್ಮತ ಬೇಡಿಕೆಗೆ ಅನ್ಯಾಯ: ಸಿದ್ದರಾಮಯ್ಯ ಅಸಮಾಧಾನ
ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ವಿಕಸಿತ ಭಾರತ', ‘ಕರ್ತವ್ಯ' ಎಂಬ ಘೋಷವಾಕ್ಯಗಳಿಗೆ ಈ ಬಜೆಟ್ ಹೆಚ್ಚಿನ ಒತ್ತು ನೀಡಿದ್ದರೂ, ಜಾರಿಗೆ ಸಂಬಂಧಿಸಿದ ಸ್ಪಷ್ಟ ಯೋಜನೆ ಹಾಗೂ ಹೊಣೆಗಾರಿಕೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ. ಈ ಬಜೆಟ್ ಉದ್ದೇಶಗಳಲ್ಲಿ ಶ್ರೀಮಂತವಾಗಿದ್ದರೂ, ಹಣಕಾಸಿನ ಬದ್ಧತೆಯಲ್ಲಿ ದುರ್ಬಲವಾಗಿದೆ. ದೃಷ್ಟಿಕೋನವನ್ನು
ಸುರಪುರ| ಜಮೀನಿನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ: ಹಲವರಿಗೆ ಗಾಯ
ಸುರಪುರ: ರಸ್ತೆಯ ಮೇಲೆ ಕಟ್ಟಡ ಕಟ್ಟುತ್ತಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಹಲವರು ಗಾಯಗೊಂಡಿರುವ ಘಟನೆ ನಗರದ ದಖನಿ ಮೊಹಲ್ಲಾದ ಟಿಪ್ಪು ಸುಲ್ತಾನ್ ವೃತ್ತದ ಬಳಿ ನಡೆದಿದೆ. ಸರಕಾರಿ ರಸ್ತೆಯ ಮೇಲೆ ಕಟ್ಟಡ ಕಟ್ಟಲು ಬುನಾದಿ ಅಗೆಯುತ್ತಿದ್ದು ಇದನ್ನು ಪ್ರಶ್ನಿಸಿದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ಇದು ಸರಕಾರಿ ಜಮೀನಾಗಿದ್ದು, ಈ ಕುರಿತು ಈಗಾಗಲೇ ನಗರ ಸಭೆಗೆ ಮತ್ತು ಪೊಲೀಸ್ ಠಾಣೆಗೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದರಿಂದ ಈಗ ಕಟ್ಟಡಕ್ಕೆ ಅಡಿಪಾಯ ಹಾಕಲು ಮುಂದಾಗಿದ್ದಾರೆ ಎಂದು ಘಟನೆಯಲ್ಲಿ ಗಾಯಗೊಂಡಿರುವ ಇಬ್ರಾಹಿಂ ಆರೋಪಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಚಿವರ ವೇತನಗಳು, ಸರಕಾರಿ ಅತಿಥಿಗಳ ಆದರಾತಿಥ್ಯಕ್ಕೆ ಬಜೆಟ್ ನಲ್ಲಿ 1,102 ಕೋಟಿ ರೂ. ಮೀಸಲು
ಹೊಸದಿಲ್ಲಿ, ಫೆ. 1: ಕೇಂದ್ರ ಮುಂಗಡಪತ್ರದಲ್ಲಿ ಸಚಿವ ಸಂಪುಟ, ಸಂಪುಟ ಸಚಿವಾಲಯ, ಪ್ರಧಾನಿ ಕಚೇರಿ ವೆಚ್ಚಗಳು ಮತ್ತು ಸರಕಾರಿ ಅತಿಥಿಗಳ ಆದರಾತಿಥ್ಯಕ್ಕಾಗಿ 1,102 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಮೊತ್ತವು 2025–26ರಲ್ಲಿ ಹಂಚಿಕೆ ಮಾಡಲಾಗಿದ್ದ 978.20 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗಿಂತ ಹೆಚ್ಚಾಗಿದೆ. ಮುಂಬರುವ ವಿತ್ತವರ್ಷದಲ್ಲಿ ಸಚಿವ ಸಂಪುಟದ ವೆಚ್ಚಗಳಿಗಾಗಿ 620 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ (ಕಳೆದ ವರ್ಷ 483.54 ಕೋಟಿ ರೂ.). ಇದು ಸಂಪುಟ ಸಚಿವರು, ಸಹಾಯಕ ಸಚಿವರು ಮತ್ತು ಮಾಜಿ ಪ್ರಧಾನಿಗಳ ವೇತನಗಳು, ಇತರ ಭತ್ಯೆಗಳು ಹಾಗೂ ಪ್ರಯಾಣ ವೆಚ್ಚಗಳನ್ನು ಒಳಗೊಂಡಿದೆ. ಇತರ ಹಂಚಿಕೆಗಳು: • ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಕ್ಕೆ 256.19 ಕೋಟಿ ರೂ. • ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗೆ 65 ಕೋಟಿ ರೂ.ವರೆಗೆ • ಸಂಪುಟ ಸಚಿವಾಲಯಕ್ಕೆ 80 ಕೋಟಿ ರೂ. • ಪ್ರಧಾನಿ ಕಚೇರಿಗೆ 73.52 ಕೋಟಿ ರೂ. • ಆದರಾತಿಥ್ಯ ಮತ್ತು ಮನೋರಂಜನೆ ವೆಚ್ಚಗಳಿಗಾಗಿ 5.76 ಕೋಟಿ ರೂ.
ಟಿ20 ವಿಶ್ವಕಪ್: ಭಾರತದ ವಿರುದ್ಧದ ಪಂದ್ಯ ಬಾಯ್ಕಾಟ್ ಮಾಡಿದ ಪಾಕಿಸ್ತಾನ! ಆಟವಾಡಲ್ಲ ಎಂದಿದ್ದೇಕೆ? ಟೂರ್ನಿ ಕತೆ ಏನು?
2026ರ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡುವುದಿಲ್ಲ. ಪಾಕಿಸ್ತಾನ ಸರ್ಕಾರ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಗೆ ತಂಡ ಕಳುಹಿಸಲು ಅನುಮತಿ ನೀಡಿದ್ದರೂ, ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ. ಈ ನಿರ್ಧಾರಕ್ಕೆ ಕಾರಣವನ್ನು ಸರ್ಕಾರ ನೀಡಿಲ್ಲ. ಪಾಕಿಸ್ತಾನ ಈ ಪಂದ್ಯವನ್ನು ಬಹಿಷ್ಕರಿಸಿದರೆ ಎರಡು ಅಂಕಗಳನ್ನು ಕಳೆದುಕೊಳ್ಳಲಿದೆ.
2026ರಲ್ಲಿ ಭಾರತದಲ್ಲಿ ಮೊದಲ Global Big Cat Summit: ವಿತ್ತ ಸಚಿವೆ ನಿರ್ಮಲಾ ಘೋಷಣೆ
ಹೊಸದಿಲ್ಲಿ, ಫೆ. 1: ಹುಲಿ, ಸಿಂಹ, ಚಿರತೆ ಮುಂತಾದ ಬೆಕ್ಕು ಜಾತಿಗೆ ಸೇರಿದ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಚರ್ಚಿಸಲು ಈ ವರ್ಷ ಭಾರತವು ಮೊದಲ Global Big Cat Summit ಅನ್ನು ಏರ್ಪಡಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಅದೇ ವೇಳೆ, ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿ ಕಡಲಾಮೆಗಳು ಸುರಕ್ಷಿತವಾಗಿ ಮೊಟ್ಟೆ ಇಡಲು ಸಾಧ್ಯವಾಗುವಂತೆ ‘ಆಮೆ ವಲಯ’ವನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಶೃಂಗ ಸಮ್ಮೇಳನದಲ್ಲಿ 95 ದೇಶಗಳು ಭಾಗವಹಿಸಲಿವೆ. ಹಕ್ಕಿಗಳ ವೀಕ್ಷಣೆ ಮತ್ತು ಸಂರಕ್ಷಣೆಗಾಗಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪುಲಿಕಟ್ ಸರೋವರದುದ್ದಕ್ಕೂ ವಲಯವನ್ನು ಸ್ಥಾಪಿಸಲಾಗುವುದು ಎಂದರು. ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (ಐಬಿಸಿಎ) ಪ್ರಧಾನ ಕಚೇರಿ ಮತ್ತು ಕಾರ್ಯಾಲಯವನ್ನು ಸ್ಥಾಪಿಸುವುದಕ್ಕಾಗಿ ಭಾರತ ಕಳೆದ ವರ್ಷ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಅಳಿವಿನಂಚಿನಲ್ಲಿರುವ ಪ್ರಭೇದಗಳ ರಕ್ಷಣೆಯ ಉದ್ದೇಶದ ‘ಪ್ರಾಜೆಕ್ಟ್ ಟೈಗರ್’ ಯೋಜನೆಯು 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ 2023ರ ಏಪ್ರಿಲ್ನಲ್ಲಿ ಏರ್ಪಡಿಸಲಾದ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಬಿಸಿಎಗೆ ಚಾಲನೆ ನೀಡಿದ್ದರು. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪ್ಯೂಮಾ ಪ್ರಾಣಿಗಳ ಸಂರಕ್ಷಣೆಗಾಗಿ ಐಬಿಸಿಎಯನ್ನು ಸ್ಥಾಪಿಸಲಾಗಿದೆ.
ಯಾದಗಿರಿ| ಹಾಲಗೇರಾ ಯಲ್ಲಮ್ಮದೇವಿ ಅದ್ದೂರಿ ರಥೋತ್ಸವ
ಯಾದಗಿರಿ: ವಡಗೇರಾ ತಾಲೂಕಿನ ಸುಕ್ಷೇತ್ರ ಹಾಲಗೇರಾ ಗ್ರಾಮದಲ್ಲಿ ಶ್ರೀ ಯಲ್ಲಮ್ಮದೇವಿಯ ಭವ್ಯ ರಥೋತ್ಸವವು ಸಹಸ್ರಾರು ಭಕ್ತರ ಜಯಘೋಷದ ನಡುವೆ ಭಕ್ತಿ ಸಂಭ್ರಮದಿಂದ ರವಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆಯಿಂದಲೇ ಅಸಂಖ್ಯಾತ ಭಕ್ತರು ಹಾಲಗೇರಾ ಗ್ರಾಮಕ್ಕೆ ಆಗಮಿಸಿ ಶ್ರೀ ಯಲ್ಲಮ್ಮದೇವಿಯ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಹಲಗೆ, ಡೊಳ್ಳು, ಬಾಜಾಭಜಂತ್ರಿ ಸೇರಿದಂತೆ ಮಂಗಲವಾದ್ಯಗಳನಾದದೊಂದಿಗೆ ಇಡೀ ಹಾಲಗೇರಾ ಗ್ರಾಮ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು. ಸುಡು ಬಿಸಿಲಿನ ನಡುವೆಯೂ ಭಕ್ತರು ಬಸ್, ಕಾರು, ಜೀಪು ಹಾಗೂ ಆಟೋಗಳಲ್ಲಿ ತಂಡೋಪತಂಡವಾಗಿ ಗ್ರಾಮಕ್ಕೆ ಧಾವಿಸಿ ಬಂದರು. ಸೂರ್ಯ ಮುಳುಗುವ ವೇಳೆಗೆ ದೇವಸ್ಥಾನದ ಆವರಣದಲ್ಲಿ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡು ಕಾದು ನಿಂತಿತ್ತು. ಹಾಲಗೇರಾ ಯಲ್ಲಮ್ಮದೇವಿಯ ರಥೋತ್ಸವ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಕೇಂದ್ರ ಬಜೆಟ್ ನಿರಾಶದಾಯಕವಾಗಿದೆ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಕೇಂದ್ರ ಬಜೆಟ್ ನಿರಾಶದಾಯಕವಾಗಿದೆ. ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿಲ್ಲ. ವೇದ್ಯಕೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಠಿಯಿಂದ ದೇಶದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಹಬ್ ಮತ್ತು ಆಯುರ್ವೇದ ಕೇತ್ರದ ಅಭಿವೃದ್ಧಿಗೆ ಮೂರು ಆಯುರ್ವೇದ ವಿಶ್ವವಿದ್ಯಾನಿಲಯಗಳನ್ನು ಪ್ರಾರಂಭಿಸಲಾಗುವುದು ಘೋಷಿಸಿದೆ. ಆದರೆ ಅದು ಎಲ್ಲಿ ಎಂದು ಸ್ಪಷ್ಟಪಡಿಸಿಲ್ಲ. ಈ ಪೈಕಿ ಒಂದು ವೈದ್ಯಕೀಯ ಹಬ್ ಮತ್ತು ಒಂದು ಆಯುರ್ವೇದ ವಿವಿಯನ್ನು ಕೇಂದ್ರ ಸರಕಾರವು ಕರ್ನಾಟಕಕ್ಕೆ ನೀಡಲಿ ಎಂದು ಆಗ್ರಹಿಸುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೇಂದ್ರ ಸರಕಾರ ಕೇವಲ ಗುಜರಾತ್ನ ಅಭಿವೃದ್ಧಿ ಕಡೆಗೆ ಗಮನ ನೀಡಿದರೆ ಸಾಲದು. ಬೇರೆ ರಾಜ್ಯಗಳ ಕಡೆಗೂ ಗಮನ ಹರಿಸಿದರೆ ಉತ್ತಮ. ಬೆಂಗಳೂರು-ಮಂಗಳೂರು ನಡುವೆ ಮೂರು ವಂದೇ ಭಾರತ್ ರೈಲು ಪ್ರಾರಂಭಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಒಂದು ರೈಲನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿಲ್ಲ. ರಬ್ಬರ್ ಬೆಳೆಯನ್ನು ಕೃಷಿ ಉತ್ಪನ್ನವಾಗಿ ಪರಿಗಣಿಸುವಂತೆ ಕೇಂದ್ರಕ್ಕೆ ಆಗ್ರಹಿಸಲಾಗಿತ್ತು. ಆದರೆ ಅದನ್ನು ಪರಿಗಣಿಸಲಾಗಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ನೀಡಿಲ್ಲ: ಐವನ್ ಡಿಸೋಜ
ಮಂಗಳೂರು : ಕೇಂದ್ರ ಸರಕಾರ ಮಂಡಿಸಿದ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಯನ್ನು ನೀಡಿಲ್ಲ. ಹಿಂದೆ ಘೋಷಿಸಿದ ಯೋಜನೆಗಳಿಗೆ ಅನುದಾನ ಒದಗಿಸಿಲ್ಲ. ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆ ನೀಡುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ್ಕೆ ದೊಡ್ಡ ಮೋಸ ಮಾಡಿದೆ. ಕರ್ನಾಟಕ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ರೀತಿಯಲ್ಲಿ ಮಲತಾಯಿ ಧೋರಣೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ, ಎನ್ಐಟಿಕೆಯನ್ನು ಐಐಟಿ ಮಾಡುವ ಬೇಡಿಕೆಗೆ ಸ್ಪಂದಿಸಿಲ್ಲ. ಕರ್ನಾಟಕ್ಕೆ ಒಂದು ದೊಡ್ಡ ಚೊಂಬು ಕೊಟ್ಟಿದ್ದಾರೆ. ಆದರೆ ಚೊಂಬಿನಲ್ಲಿ ನೀರಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ಗಾರ್ಡಿಯನ್ ಏಂಜಲ್ ಚರ್ಚ್ನಲ್ಲಿ ಪೊಲೀಸ್ ಜನಸಂಪರ್ಕ ಸಭೆ
ಮಂಗಳೂರು, ಫೆ.1: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಆಂಜೆಲೊರ್ ಘಟಕ, ಗಾರ್ಡಿಯನ್ ಏಂಜಲ್ ಚರ್ಚ್ ನಾಗೋರಿ, ಸಾಮಾಜಿಕ ಅಭಿವೃದ್ಧಿ ಆಯೋಗ ಮತ್ತು ನೀತಿ ಹಾಗೂ ಶಾಂತಿ ಆಯೋಗದ ಸಹಯೋಗದೊಂದಿಗೆ ರವಿವಾರ ಗಾರ್ಡಿಯನ್ ಏಂಜಲ್ ಚರ್ಚ್ ಸಭಾಭವನದಲ್ಲಿ ಪೊಲೀಸ್ ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ದಕ್ಷಿಣ ವಲಯದ ಸಹಾಯಕ ಪೊಲೀಸ್ ಆಯುಕ್ತೆ ವಿಜಯಕ್ರಾಂತಿ ಅವರು ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ವಿವರಿಸಿದರು. ಮಂಗಳೂರು ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಶಿವಕುಮಾರ್, ವೆನ್ಲಾಕ್ ಜಿಲ್ಲಾಸ್ಪತ್ರೆಯ ಆಯುಷ್ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಎ. ಜೆ., ಮೆಸ್ಕಾಂ ಮರೋಳಿ ವಿಭಾಗದ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ಶಿವಪ್ರಕಾಶ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಶನ್ ಪತ್ರಾವೊ ಮತ್ತು ಕಥೊಲಿಕ್ ಸಭಾದ ಅಧ್ಯಕ್ಷ ಆಲ್ಬರ್ಟ್ ಲಸ್ರಾದೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಡೀನ್ ಡಾ. ರೋಜ್ ವೀರಾ ಡಿ ಸೋಜ, ಸಾಮಾಜಿಕ ಕಾರ್ಯಕರ್ತ ಜಿ. ಕೆ. ಭಟ್ ಉಪಸ್ಥಿತರಿದ್ದರು. ಸಭೆಯಲ್ಲಿ ಸುಮಾರು 250 ಮಂದಿ ಭಾಗವಹಿಸಿದ್ದರು. ಕಥೊಲಿಕ್ ಸಭೆಯ ಅಧ್ಯಕ್ಷ ಆಲ್ಬರ್ಟ್ ಲಸ್ರಾದೊ ಸ್ವಾಗತಿಸಿದರು. ಆಂಜೆಲೊರ್ ಧರ್ಮಕ್ಷೇತ್ರದ ಪ್ರಧಾನ ಧರ್ಮಗುರು ಫೆಡ್ರಿಕ್ ಮೊಂತೇರೊ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀತಿ ಹಾಗೂ ಶಾಂತಿ ಆಯೋಗದ ಕಾರ್ಯದರ್ಶಿ ಮನೋಹರ್ ಸಲ್ಡಾನಾ ವಂದಿಸಿದರು. ಲೊಲಿನಾ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.
ಬ್ಯಾರಿ ಸಮುದಾಯದ ಅಭಿವೃದ್ಧಿಗೆ ಅಗತ್ಯ ಸಹಕಾರ : ಸಚಿವ ದಿನೇಶ್ ಗುಂಡೂರಾವ್
ಬ್ಯಾರೀಸ್ ಸೆಂಟ್ರಲ್ ಕಮಿಟಿ ವತಿಯಿಂದ ʼಬ್ಯಾರಿ ಕೂಟ-2026ʼ
ಕನಕಗುರುಪೀಠ ಜಾತ್ಯಾತೀತ, ಬೇಡಿಕೆಗಳಿಗೆ ಹೆಚ್ಚಿನ ಅನುದಾನ: ಸಿಎಂ ಸಿದ್ದರಾಮಯ್ಯ ಭರವಸೆ
ರಾಯಚೂರು: ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಆಧ್ಯಾತ್ಮ ಹಾಗೂ ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ಸಮಾಜದಲ್ಲಿ ಬೇರೂರಿಸುವ ಮಹತ್ವದ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ಗುರುಪೀಠದ ವಿವಿಧ ಬೇಡಿಕೆಗಳಿಗೆ ಸರ್ಕಾರದಿಂದ ಅಗತ್ಯ ಅನುದಾನ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ದೇವದುರ್ಗದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ
ವಿಟ್ಲ: ಆಟೋ ಚಾಲಕನಿಗೆ ತಂಡದಿಂದ ಹಲ್ಲೆ; ಪ್ರಕರಣ ದಾಖಲು
ವಿಟ್ಲ: ವಿಟ್ಲ ಕಸಬಾ ಗ್ರಾಮದ ಮಾರ್ನೆಮಿಗುಡ್ಡೆ ಎಂಬಲ್ಲಿ ಆಟೋ ಚಾಲಕರೊಬ್ಬರು ಹೋಗುತ್ತಿದ್ದ ವೇಳೆ ಮೂವರು ಮುಸುಕುದಾರಿಗಳು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಪಡ್ನೂರು ಗ್ರಾಮದ ನಿವಾಸಿ, ಆಟೋ ಚಾಲಕ ಇಸುಬು ಎಂಬವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಹಲ್ಲೆ ನಡೆಸಿದ್ದಾರೆ ಎಂದು ಇಸುಬು ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿ ವಿಟ್ಲ ಕಸಬಾ ಗ್ರಾಮದ ಕೆ ರವೀಶ್ ಕುಲಾಲ್(40), ಅಶೋಕ(42) ಎಂಬವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಚಾಲಕ ಇಸುಬು ಅವರು ಶನಿವಾರ ಮಹಿಳೆಯೊಬ್ಬರನ್ನು ಮನೆಗೆ ತಲುಪಿಸಿ ಹಿಂತಿರುಗುತ್ತಿದ್ದರು. ವಿಟ್ಲ ಕಸಬಾ ಗ್ರಾಮದ ಮಾರ್ನಮಿಗುಡ್ಡೆ ಬಳಿ ಆಟೋ ಬರುತ್ತಿದ್ದಂತೆ ಬಟ್ಟೆಯಿಂದ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಆಟೋ ಚಾಲಕನ ತಡೆದು ವಿಚಾರಿಸಿದ್ದಾರೆ. ನಾನು ಬಾಡಿಗೆ ಹೋಗಿ ಬರುತ್ತಿದ್ದೇನೆಂದು ಹೇಳಿದರೂ ಕೇಳಿಸಿಕೊಳ್ಳದ ಮುಸುಕುಧಾರಿಗಳು ಚಾಲಕನ ಮೇಲೆ ಅವಾಚ್ಯ ಶಬ್ದಗಳಿಂದ ಬೈದು, ಥಳಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಗಾಯಾಳು ಆರೋಪಿಸಿದ್ದಾರೆ.
ಮಜೂರು: ಮಸೀದಿಯ ವಿವಿಧ ಕಾಮಗಾರಿಗಳ ಉದ್ಘಾಟನೆ
ʼನೋಡ ಬನ್ನಿ ನಮ್ಮ ಮಸೀದಿʼ ಕಾರ್ಯಕ್ರಮ
ಪುತ್ತಿಗೆ: ಅಹ್ದಲ್ ಉರೂಸ್, ಸನದುದಾನ ಸಮಾವೇಶ
ಪುತ್ತಿಗೆ: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ನ ಸಾರಥಿ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ ಇಪ್ಪತ್ತನೇ ಉರೂಸ್ ಮುಬಾರಕ್ ಮತ್ತು ಸನದುದಾನ ಸಮಾವೇಶವು ಸಾವಿರಾರು ಜನರಿಗೆ ಅನ್ನದಾನದೊಂದಿಗೆ ಸಮಾಪ್ತಿಗೊಂಡಿತು. ಸಂಜೆ ಐದು ಗಂಟೆಗೆ ಆರಂಭವಾದ ಅಹ್ದಲಿಯ್ಯ ಆಧ್ಯಾತ್ಮಿಕ ಸಮಾವೇಶದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಪ್ರಮುಖರು ಭಾಗವಹಿಸಿದ್ದರು. ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಅಬ್ದುಲ್ಲಾ ಕುಂಞಿ ಫೈಜಿ ಅವರ ಅಧ್ಯಕ್ಷತೆಯಲ್ಲಿ ಮರ್ಕಸ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಜಿ ಉದ್ಘಾಟಿಸಿದರು. ಸಮಸ್ತ ಅಧ್ಯಕ್ಷ ರೈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಸನದುದಾನ ಪ್ರಭಾಷಣ ಮಾಡಿದರು. ಸಯ್ಯಿದ್ ಅಲಿ ಬಾಫಖಿ ತಂಙಳ್, ವಿ. ಪಿ. ಎಂ. ಫೈಜಿ ವಿಲ್ಯಪ್ಪಳ್ಳಿ, ಕೆ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಪಟ್ಟುವಂ, ಸಯ್ಯಿದ್ ಹಸನ್ ಅಹ್ದಲ್ ತಂಙಳ್, ಸಯ್ಯಿದ್ ಸೈನುಲ್ ಆಬಿದೀನ್ ತಂಙಳ್ ಎಣ್ಮೂರು, ಮುಹಮ್ಮದ್ ಫಾಜಿಲ್ ರಜ್ವಿ ಕಾವಲ್ ಕಟ್ಟೆ, ಸಯ್ಯಿದ್ ಇಬ್ರಾಹಿಂ ಹಾದಿ ತಂಙಳ್ ಚೂರಿ, ಸಯ್ಯಿದ್ ಅಬ್ದುಲ್ ಅಸೀಸ್ ತಂಙಳ್ ಹೈದ್ರೂಸಿ, ಹಾಜಿ ಅಮೀರಲಿ ಚೂರಿ, ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಹುಸೈನ್ ಸಅದಿ ಕೆ. ಸಿ. ರೋಡ್, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಸಯ್ಯಿದ್ ಹಬೀಬ್ ಅಹ್ದಲ್ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಸಯ್ಯಿದ್ ಹುಸೈನ್ ಅಮೀನ್ ತಂಙಳ್, ಸಿ. ಕೆ. ರಾಶಿದ್ ಬುಖಾರಿ, ಸಯ್ಯಿದ್ ಖಾಸಿಂ ತಂಙಳ್ ಪಾಜೂರು, ಸಯ್ಯಿದ್ ಜುನೈದ್ ತಂಙಳ್ ಮಟ್ಟೂಲ್, ಸಯ್ಯಿದ್ ಯು. ಪಿ. ಎಸ್. ತಂಙಳ್ ಅರ್ಲಡ್ಕ, ಮೊಯ್ತು ಸಅದಿ ಚೇರೂರು, ಕಾಸಿಂ ಮದನಿ ಕರಾಯ, ಎ. ಕೆ. ಎಂ. ಅಶ್ರಫ್ ಎಂ. ಎಲ್. ಎ, ಹಂಸ ಸಖಾಫಿ ಬಂಟ್ವಾಳ, ಅಬ್ದುಸ್ಸಲಾಂ ದಾರಿಮಿ ಕುಬಣೂರು, ಇಸ್ಮಾಯಿಲ್ ಸಅದಿ ಮಳ್ಳೂರು, ಶೇಖ್ ಬಾವ ಮಂಗಳೂರು, ಕರೀಮ್ ಹಾಜಿ ಚಾಲಿಯಂ, ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ, ಮೂಸಾ ಸಖಾಫಿ, ಅಬೂಬಕ್ಕರ್ ಕಾಮಿಲ್ ಸಖಾಫಿ, ಉಮರ್ ಸಖಾಫಿ, ಲತೀಫ್ ಸಅದಿ ಉರುಮಿ, ಸಿದ್ದೀಕ್ ಮೊಂಡುಗೋಳಿ, ರಫೀಕ್ ಸಅದಿ ದೇಲಂಪಾಡಿ, ಬಶೀರ್ ಪುಳಿಕೂರು, ಸುಲೈಮಾನ್ ಕರಿವೆಳ್ಳೂರು, ಅಬ್ದುರ್ರಜಾಕ್ ಸಖಾಫಿ ಕೊಟ್ಟಕುನ್ನು, ಅಬ್ದುಲ್ ಖಾದರ್ ಸಅದಿ ಚುಳ್ಳಿಕಾನಂ, ಸಿ. ಎನ್. ಅಬ್ದುಲ್ ಖಾದರ್ ಮಾಸ್ಟರ್, ಅಸೀಸ್ ಕಳತ್ತೂರು ಮೊದಲಾದವರು ಭಾಗವಹಿಸಿದ್ದರು. ಈ ವರ್ಷ ಮುಹಿಮ್ಮಾತ್ನಿಂದ ಧಾರ್ಮಿಕ ಶಿಕ್ಷಣ ಪೂರೈಸಿದ 68 ಹಿಮಮಿಗಳು ಮತ್ತು 8 ಹಾಫಿಳ್ಗಳು ಸನದು ಸ್ವೀಕರಿಸಿದರು.
ಕೇಂದ್ರ ಬಜೆಟ್ 2026 | ಆಯುಷ್ ಸಚಿವಾಲಯಕ್ಕೆ ಶೇ.20ರಷ್ಟು ಹೆಚ್ಚಿನ ಹಂಚಿಕೆ
ಹೊಸದಿಲ್ಲಿ, ಫೆ. 1: 2026–27ರ ಮುಂಗಡಪತ್ರದಲ್ಲಿ ಆಯುಷ್ ಸಚಿವಾಲಯಕ್ಕೆ 4,408.93 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಹಿಂದಿನ ವರ್ಷದ 3,671.82 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.20ರಷ್ಟು ಏರಿಕೆಯಾಗಿದೆ. ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆಯನ್ನೂ ಸರ್ಕಾರ ಪ್ರಕಟಿಸಿದೆ. ರವಿವಾರ ಕೇಂದ್ರ ಮುಂಗಡಪತ್ರವನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈಗಾಗಲೇ ವಿಶ್ವದ ಹಲವು ಭಾಗಗಳಲ್ಲಿ ಗೌರವಕ್ಕೆ ಪಾತ್ರವಾಗಿರುವ ಪ್ರಾಚೀನ ಭಾರತೀಯ ಯೋಗ ಪದ್ಧತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಮಟ್ಟಕ್ಕೆ ತೆಗೆದುಕೊಂಡು ಹೋದಾಗ ಅದು ಸಾಮೂಹಿಕ ಜಾಗತಿಕ ಮನ್ನಣೆಯನ್ನು ಪಡೆದಿತು. ಕೋವಿಡ್ ನಂತರ ಅದು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಜನಪ್ರಿಯತೆಯನ್ನು ಪಡೆದಿದೆ ಎಂದು ಹೇಳಿದರು. ಗುಣಮಟ್ಟದ ಆಯುರ್ವೇದ ಉತ್ಪನ್ನಗಳನ್ನು ರಫ್ತು ಮಾಡುವುದು ಮೂಲಿಕೆಗಳನ್ನು ಬೆಳೆಯುವ ರೈತರಿಗೆ ಮತ್ತು ಅವುಗಳನ್ನು ಸಂಸ್ಕರಿಸುವ ಯುವಜನತೆಗೆ ನೆರವಾಗುತ್ತದೆ ಎಂದರು. ಜಾಗತಿಕ ಬೇಡಿಕೆಯನ್ನು ಪೂರೈಸಲು ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ, ಆಯುಷ್ ಫಾರ್ಮಸಿಗಳು ಮತ್ತು ಔಷಧಿ ಪರೀಕ್ಷಾ ಪ್ರಯೋಗಾಲಯಗಳ ಉನ್ನತೀಕರಣ, ಹೆಚ್ಚು ನುರಿತ ಸಿಬ್ಬಂದಿಯನ್ನು ಲಭ್ಯವಾಗಿಸುವುದು ಮತ್ತು ಜಾಮನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದನ್ನು ಅವರು ಪ್ರಸ್ತಾಪಿಸಿದರು. ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ರಾಷ್ಟ್ರೀಯ ಆಯುಷ್ ಮಿಷನ್ಗೆ 1,300 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಹಿಂದಿನ ವರ್ಷದ 780.96 ಕೋಟಿ ರೂ.ಗಳಿಗೆ ಹೋಲಿಸಿದರೆ ಇದು ಶೇ.66.5ರಷ್ಟು ಏರಿಕೆಯಾಗಿದೆ. ಇದೇ ವೇಳೆ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಹಂಚಿಕೆಯನ್ನು ಶೇ.12ರಷ್ಟು ಹೆಚ್ಚಿಸಲಾಗಿದ್ದು, ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಸಂಸ್ಥೆಗೆ ಹಂಚಿಕೆಯನ್ನು 279.24 ಕೋಟಿ ರೂ.ಗಳಿಂದ 219.05 ಕೋಟಿ ರೂ.ಗಳಿಗೆ ತಗ್ಗಿಸಲಾಗಿದೆ.
ಸುರತ್ಕಲ್: ಮುಮ್ತಾಝ್ ಅಲಿ ಸ್ಮರಣಾರ್ಥ ಬಸ್ ತಂಗುದಾಣ, ಕುಡಿಯುವ ನೀರಿನ ಘಟಕ ಉದ್ಘಾಟನೆ
ಸುರತ್ಕಲ್: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್.ವೈ.ಎಸ್. ಎಸ್ಸೆಸ್ಸೆಫ್ 7ನೇ ಬ್ಲಾಕ್ ಯುನಿಟ್ ಹಾಗೂ ಬದ್ರಿಯಾ ದಫ್ ಕಮೀಟಿ ಕೃಷ್ಣಾಪುರ ಇದರ ವತಿಯಿಂದ ಮರ್ಹೂಂ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಅವರ ಸ್ಮರಣಾರ್ಥ ಕೃಷ್ಣಾಪುರ ಕುಕ್ಕಾಡಿಯ ಬದ್ರಿಯಾ ಬಸ್ ತಂಗುದಾಣದಲ್ಲಿ ನಿರ್ಮಾಣಗಿಗೊಂಡ ನೂತನ ಶುದ್ಧ ಕುಡಿಯುವ ನೀರಿನ ಘಟಕವು ರವಿವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಕೇಂದ್ರ ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಕಮಿ ಉದ್ಘಾಟಿಸಿದರು. ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ಶಾಸಕ ಬಿ.ಎ ಮೊಯ್ದೀನ್ ಬಾವಾ ಅವರು ಉದ್ಘಾಟಿಸಿದರು. ಬದ್ರಿಯಾ ದಫ್ ಕಮೀಟಿಯ ಗೌರವಾಧ್ಯಕ್ಷ ಬಿ. ಮುಹಮ್ಮದ್ ಅಲಿ, ಕೇಂದ್ರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಝಾಕೀರ್ ಹುಸೈನ್, ಮಾಜಿ ಪ್ರ.ಕಾರ್ಯದರ್ಶಿ ಎಂ.ಎಸ್. ಶರೀಫ್, ಎಸ್.ವೈ.ಎಸ್ ದ.ಕ ಜಿಲ್ಲಾ ಸದಸ್ಯ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್ ಅಧ್ಯಕ್ಷ ಅನೀಸ್ ಮರ್ಝೂಕಿ, ಎಸ್ ವೈಎಸ್ ಕೃಷ್ಣಾಪುರ ಸರ್ಕಲ್ ಅಧ್ಯಕ್ಷ ಇರ್ಫಾನ್ ನೂರಾನಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೃಷ್ಣಾಪುರ ಸರ್ಕಲ್ ಅಧ್ಯಕ್ಷ ಮನ್ಸೂರ್ ರೈಹಾನ್, ಲುಕ್ಮಾನಿಯ ಉಸ್ತಾದ್ ಉಪಸ್ಥಿತರಿದ್ದರು.
T20 ವಿಶ್ವಕಪ್–2026 | ಭಾರತದ ವಿರುದ್ಧದ ಪಂದ್ಯ ಬಹಿಷ್ಕಾರಕ್ಕೆ ಪಾಕಿಸ್ತಾನ ನಿರ್ಧಾರ
ಹೊಸದಿಲ್ಲಿ: ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಸರ್ಕಾರ ತನ್ನ ಪುರುಷರ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಿದ್ದರೂ, ಫೆಬ್ರವರಿ 15ರಂದು ನಡೆಯಬೇಕಿದ್ದ ಭಾರತದ ವಿರುದ್ಧದ ಲೀಗ್ ಹಂತದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಶ್ರೀಲಂಕಾದ ಕೊಲಂಬೊದಲ್ಲಿ ಗ್ರೂಪ್ ‘ಎ’ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಬೇಕಿತ್ತು. ವೇಳಾಪಟ್ಟಿಯಲ್ಲಿ ಅದು ನಿಗದಿಯಾಗಿತ್ತು. ಆದರೆ ರಾಜಕೀಯ ವೈಮನಸ್ಸಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಪಂದ್ಯಗಳನ್ನು ಆಡಲು ಪಾಕಿಸ್ತಾನ ನಿರಾಕರಿಸಿದ್ದರಿಂದ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ ಸ್ಥಳವಾದ ಶ್ರೀಲಂಕಾಕ್ಕೆ ಸ್ಥಳಾಂತರಿಸಿತ್ತು. ಭದ್ರತಾ ಆತಂಕಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶವೂ ತನ್ನ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು ಮನವಿ ಮಾಡಿದ್ದರೂ, ICC ಆ ವಿನಂತಿಯನ್ನು ತಿರಸ್ಕರಿಸಿತು. ನಂತರ ಬಾಂಗ್ಲಾದೇಶ ತಂಡ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದು, ಅದರ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಲಾಯಿತು. ಬಾಂಗ್ಲಾದೇಶದ ನಿಲುವಿಗೆ ಬೆಂಬಲ ಸೂಚಿಸಿದ್ದ ಪಾಕಿಸ್ತಾನ, ಪಂದ್ಯ ಬಹಿಷ್ಕರಿಸುವ ಸಾಧ್ಯತೆಯನ್ನು ಮುಂಚೆಯೇ ಸೂಚಿಸಿತ್ತು. ಕಳೆದ ವಾರ ನಡೆದ ICC ಮಂಡಳಿಯ ವರ್ಚುವಲ್ ಸಭೆಯಲ್ಲೂ ಇದೇ ನಿಲುವನ್ನು ಪುನರುಚ್ಚರಿಸಿದೆ. ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿ ವೇಳೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತದ ಪಂದ್ಯಗಳನ್ನು ಪಾಕಿಸ್ತಾನದಿಂದ ದುಬೈಗೆ ಸ್ಥಳಾಂತರಿಸಿದ್ದ ಘಟನೆಯನ್ನೂ ಪಾಕಿಸ್ತಾನ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ. 2008ರಿಂದ ಭಾರತ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2025ರ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲೂ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಕಳೆದ ವರ್ಷ ಕೈಗೊಳ್ಳಲಾದ ಒಪ್ಪಂದದ ಪ್ರಕಾರ, ಭಾರತ ಅಥವಾ ಪಾಕಿಸ್ತಾನ ಆತಿಥ್ಯ ವಹಿಸಿದ ICC ಪಂದ್ಯಾವಳಿಗಳಲ್ಲಿ ಎರಡೂ ತಂಡಗಳು ತಟಸ್ಥ ಸ್ಥಳಗಳಲ್ಲಿ ಆಡಲು ಅವಕಾಶ ನೀಡಬೇಕು ಎಂದು ತೀರ್ಮಾನಿಸಲಾಗಿದೆ. ಇದಕ್ಕೂ ಮುಂದೆ, ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(IPL) ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶದ ಆಟಗಾರ ಮುಸ್ತಾಫಿಝುರ್ ರಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಸೂಚಿಸಿದ್ದ ಬೆಳವಣಿಗೆಯೂ ನಡೆದಿತ್ತು.
Uttar Pradesh | ಮರ್ಯಾದೆಗೇಡು ಹತ್ಯೆ; ವಿದ್ಯುತ್ ಶಾಕ್ ನೀಡಿ ಯುವತಿಯ ಹತ್ಯೆಗೈದ ಆರೋಪ!
ಗೋಂಡಾ, ಫೆ. 1: ದೂರದ ಸಂಬಂಧಿಯೋರ್ವರನ್ನು ವಿವಾಹವಾಗಲು ಬಯಸಿದ್ದ 19 ವರ್ಷದ ಯುವತಿಯನ್ನು ಆಕೆಯ ತಂದೆ ಹಾಗೂ ಸಹೋದರ ಹತ್ಯೆಗೈದ ಘಟನೆ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಥೊರ್ಹಾನ್ಸ್ ಗ್ರಾಮದ ಮನೆಯೊಂದರಲ್ಲಿ ಯುವತಿಯೊಬ್ಬಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಬಗ್ಗೆ ಶುಕ್ರವಾರ ಮಾಹಿತಿ ಸ್ವೀಕರಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ. 112ಕ್ಕೆ ಮಾಡಲಾದ ಕರೆಯಲ್ಲಿ ಆಕೆಯನ್ನು ಹತ್ಯೆಗೈಯಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಮಾಹಿತಿ ಸ್ವೀಕರಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹದ ಪ್ರಾಥಮಿಕ ಪರೀಕ್ಷೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣದ ಕುರಿತು ತನಿಖೆ ಆರಂಭಿಸಿದರು. ಪೊಲೀಸ್ ತಂಡ ಹಾಗೂ ಶ್ವಾನ ದಳದ ನೆರವಿನಿಂದ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಹಾಗೂ ಇತರ ಪುರಾವೆಗಳ ಆಧಾರದಲ್ಲಿ ಯುವತಿಯ ತಂದೆ ಚಂದ್ರ ಪ್ರಕಾಶ್ ಮತ್ತು ಸಹೋದರ ರಾಹುಲ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಭಾವಿ ಪತಿ ಪರಮೇಶ್ವರ್ ಪಾಠಕ್ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಚಂದ್ರ ಪ್ರಕಾಶ್ ಹಾಗೂ ರಾಹುಲ್ನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆಕೆ ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಲು ಬಯಸಿದ್ದಳು. ಆದ್ದರಿಂದ ಆಕೆಯನ್ನು ಹತ್ಯೆಗೈದಿರುವುದಾಗಿ ಚಂದ್ರ ಪ್ರಕಾಶ್ ಹಾಗೂ ರಾಹುಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜನವರಿ 30ರಂದು ಆಕೆ ಮನೆಯಿಂದ ತೆರಳಲು ತಯಾರಿ ನಡೆಸುತ್ತಿದ್ದಳು. ಇದನ್ನು ತಿಳಿದ ತಂದೆ ಹಾಗೂ ಸಹೋದರ ಆಕೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ಆಕೆಯ ಕೈಕಾಲುಗಳನ್ನು ಕಟ್ಟಿದರು, ಬಾಯಿಯನ್ನು ಬಿಗಿದರು; ನಂತರ ವಿದ್ಯುತ್ ತಂತಿಯಿಂದ ಆಘಾತ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್ ನಲ್ಲಿ ಯಾವುದೇ ಹೊಸ ಹೊಸ ಯೋಜನೆಗಳಿಲ್ಲ: ಹರೀಶ್ ಕುಮಾರ್
‘‘ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಬಜೆಟ್ ನಲ್ಲಿ ಯಾವುದೇ ಹೊಸ ಹೊಸ ಯೋಜನೆಗಳಿಲ್ಲ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಹಾಗೆ ಒಟ್ಟು ಬಜೆಟ್ನಲ್ಲಿ 16.9 ಲಕ್ಷ ಕೋಟಿ ಸಾಲ ಮಾಡುತ್ತಿರುವ ಮೋದಿ-ನಿರ್ಮಲಾ ಸೀತಾರಾಮನ್ ಅವರ ಸಾಲದ ಸರಕಾರ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ -ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ. ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯಗಳಿಗೆ ಬಂಪರ್ ಕೊಡುಗೆ ನೀಡಲಾಗಿದೆ. ರೈತರ ಕೃಷಿ ಸಾಲ ಮನ್ನಾ ಬಗ್ಗೆ ಬಜೆಟ್ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಕೆಳ, ಮಧ್ಯಮ ಕುಟುಂಬಗಳಿಗೆ ಹೊರೆಯಾಗಿದೆ. ಕೇಂದ್ರ ಸರಕಾರ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ತಾರತಮ್ಯ ನೀತಿಯನ್ನು ಮತ್ತೆ ಮುಂದುವರಿಸುತ್ತಿದ್ದು, ಮತ್ತೊಮ್ಮೆ ಕರ್ನಾಟಕಕ್ಕೆ ನಿರ್ಮಲಮ್ಮನ ಉಂಡೆನಾಮ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Jharkhand | ವ್ಯಕ್ತಿಯ ಥಳಿಸಿ ಹತ್ಯೆ
ರಾಂಚಿ, ಫೆ. 1: ವಿವಾದವೊಂದರ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರನ್ನು ಅವರ ನೆರೆಯವರು ಥಳಿಸಿ ಹತ್ಯೆಗೈದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಲಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ದಮಾನ್ ಕಂಪೌಂಡ್ ಪ್ರದೇಶದ ದೋಬಿ ಘಾಟ್ ಸಮೀಪ ಶನಿವಾರ ನಡೆದಿದೆ. ಮೃತಪಟ್ಟವರನ್ನು ಮಾಧೇಶ್ವರ ಸಿಂಗ್ (55–60) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. “ಇಬ್ಬರು ನೆರೆಹೊರೆಯವರ ನಡುವೆ ವಿವಾದ ಇತ್ತು. ಮಾಧೇಶ್ವರ ಸಿಂಗ್ ಅವರ ಪುತ್ರ ಅಂಕಿತ್ ಸಿಂಗ್ ಹಾಗೂ ಅವರ ಸಹೋದರರಾದ ಅಮಾನ್, ಅನಿಕೇತ್ ಒರಾನ್ ನಡುವೆ ಕೆಲವು ವಿಷಯಕ್ಕೆ ಸಂಬಂಧಿಸಿ ಜಗಳ ನಡೆಯಿತು. ನಂತರ ಅದು ಹಿಂಸಾಚಾರಕ್ಕೆ ತಿರುಗಿತು. ಅವರ ಜಗಳವನ್ನು ತಡೆಯಲು ಮಾಧೇಶ್ವರ ಸಿಂಗ್ ಮಧ್ಯೆ ಪ್ರವೇಶಿಸಿದಾಗ ಅಮಾನ್ ಹಾಗೂ ಅನಿಕೇತ್ ಒರಾನ್ ಅವರು ಅವರನ್ನು ತೀವ್ರವಾಗಿ ಥಳಿಸಿದರು. ಇದರಿಂದ ಅವರು ಗಂಭೀರವಾಗಿ ಗಾಯಗೊಂಡರು” ಎಂದು ಡಿಎಸ್ಪಿ (ನಗರ) ಕೆ.ವಿ. ರಾಮನ್ ತಿಳಿಸಿದ್ದಾರೆ. ಮಾಧೇಶ್ವರ ಸಿಂಗ್ ಅವರನ್ನು ಕೂಡಲೇ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್ಐಎಂಎಸ್) ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಯ ವೇಳೆ ಮೃತಪಟ್ಟರು ಎಂದು ಅವರು ಹೇಳಿದ್ದಾರೆ. ಲಾಲ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರೂಪೇಶ್ ಕುಮಾರ್ ಸಿಂಗ್ ಅವರು, ಅಮಾನ್ ಹಾಗೂ ಅನಿಕೇತ್ ಒರಾನ್ನನ್ನು ಬಂಧಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ MGNREGAಗೆ 30,000 ಕೋಟಿ ರೂ.!
ಹೊಸದಿಲ್ಲಿ, ಫೆ.1: ವಿಬಿ–ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಲು ಸಜ್ಜಾಗಿರುವ ಕೇಂದ್ರ ಸರ್ಕಾರವು ಅದಕ್ಕಾಗಿ ಮುಂಗಡಪತ್ರದಲ್ಲಿ 95,692.31 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇದೇ ವೇಳೆ MGNREGAಕ್ಕೆ 30,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ವಿಬಿ–ಜಿ ರಾಮ್ ಜಿ ಜಾರಿಗೊಳ್ಳುವವರೆಗೆ MGNREGA ಯೋಜನೆ ಮುಂದುವರಿಯಲಿದ್ದು, ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬಜೆಟ್ ದಾಖಲೆಗಳಂತೆ ಸಚಿವಾಲಯದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಟ್ಟು 1,94,368.81 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ (ಕಳೆದ ವರ್ಷ 1,86,995.61 ಕೋಟಿ ರೂ.). • ಭೂ ಸಂಪನ್ಮೂಲಗಳ ಇಲಾಖೆಗೆ 2,654.33 ಕೋಟಿ ರೂ. • ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ (ಪಿಎಂಜಿಎಸ್ವೈ) 19,000 ಕೋಟಿ ರೂ. • ದೀನದಯಾಳ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ಗೆ 19,200 ಕೋಟಿ ರೂ. • ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ (ಪಿಎಂಎವೈ–ಜಿ)ಗೆ 54,916.70 ಕೋಟಿ ರೂ.
ಕೇಂದ್ರ ಬಜೆಟ್ | ಪ್ರಕೃತಿ ವಿಕೋಪಗಳು ಹೆಚ್ಚುತ್ತಿದ್ದರೂ ಭಾರತದ ಹವಾಮಾನ ಹೋರಾಟಕ್ಕೆ ಕನಿಷ್ಠ ಪ್ರೋತ್ಸಾಹ
ಹೊಸದಿಲ್ಲಿ, ಫೆ.1: ಹೆಚ್ಚುತ್ತಿರುವ ಉಷ್ಣ ಅಲೆಗಳು, ಪ್ರವಾಹಗಳು, ಚಂಡಮಾರುತಗಳು ಮತ್ತು ವಾಯು ಮಾಲಿನ್ಯ ತುರ್ತು ಪರಿಸ್ಥಿತಿಗಳಿಂದಾಗಿ ಭಾರತವು ತತ್ತರಿಸುತ್ತಿದ್ದರೂ 2026ರ ಕೇಂದ್ರ ಮುಂಗಡಪತ್ರದಲ್ಲಿ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಅನುದಾನವನ್ನು ಸೀಮಿತ ಮಟ್ಟದಲ್ಲಿ ಹೆಚ್ಚಿಸಲಾಗಿದೆ. ಇದು ಹವಾಮಾನ ಬದಲಾವಣೆ ವಿರುದ್ಧದ ಹೋರಾಟ ಅಗತ್ಯವಿರುವ ಗಮನವನ್ನು ಪಡೆದಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2026–27ರಲ್ಲಿ ಪರಿಸರ ಸಚಿವಾಲಯಕ್ಕೆ 3,759.46 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದ್ದು, ಇದು ಹಿಂದಿನ ವರ್ಷದ ಬಜೆಟ್ ಅಂದಾಜು (3,481.61 ಕೋಟಿ ರೂ.)ಗೆ ಹೋಲಿಸಿದರೆ ಸುಮಾರು ಶೇ.8ರಷ್ಟು (278 ಕೋಟಿ ರೂ.) ಹೆಚ್ಚಾಗಿದೆ. ಕಾಗದದ ಮೇಲೆ ಈ ಹೆಚ್ಚಳ ಗಮನಾರ್ಹವೆಂಬಂತೆ ಕಂಡುಬರುತ್ತಿದ್ದರೂ ಭಾರತದ ಹವಾಮಾನ ಮತ್ತು ಪರಿಸರ ಸಮಸ್ಯೆಗಳ ವ್ಯಾಪ್ತಿಯನ್ನು ಪರಿಗಣಿಸಿದರೆ ಒಟ್ಟಾರೆ ಅನುದಾನದ ಮೊತ್ತ ಕಡಿಮೆಯೇ ಇದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೊಡ್ಡ ಬದಲಾವಣೆಗಿಂತ ನಿರಂತರತೆಯೇ ಹೆಚ್ಚಾಗಿ ಕಂಡುಬರುತ್ತದೆ. ಬಂಡವಾಳ ವೆಚ್ಚವು 174.39 ಕೋಟಿ ರೂ.ಗಳಿಂದ 222.80 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಇದು ಸಂಶೋಧನಾ ಮೂಲಸೌಕರ್ಯ ಮತ್ತು ಮೇಲ್ವಿಚಾರಣಾ ಸೌಲಭ್ಯಗಳಂತಹ ದೀರ್ಘಕಾಲೀನ ಆಸ್ತಿಗಳಲ್ಲಿ ಕೆಲವು ಹೆಚ್ಚುವರಿ ಹೂಡಿಕೆಗಳನ್ನು ಸೂಚಿಸುತ್ತದೆ. ಆದಾಯ ವೆಚ್ಚವೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದು ಹೆಚ್ಚಾಗಿ ಅಸ್ತಿತ್ವದಲ್ಲಿರುವ ಸಂಸ್ಥೆಗಳು ಮತ್ತು ಯೋಜನೆಗಳಿಗೆ ಬಳಕೆಯಾಗಲಿದೆ. ಬಜೆಟ್ ನ ಬಹುಭಾಗ ನಿಯಂತ್ರಣ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ಬಲಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಬಟಾನಿಕಲ್ ಸರ್ವೆ ಆಫ್ ಇಂಡಿಯಾ, ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಂತಹ (ಎನ್ಜಿಟಿ) ಸಂಯೋಜಿತ ಮತ್ತು ಅಧೀನ ಕಚೇರಿಗಳಿಗೆ ಅನುದಾನವನ್ನು ಹೆಚ್ಚಿಸಲಾಗಿದ್ದು, ಇದು ಪರಿಸರ ಮೇಲ್ವಿಚಾರಣೆ ಮತ್ತು ವಿವಾದ ಪರಿಹಾರಕ್ಕೆ ಸಂಬಂಧಿಸಿದ ಕೆಲಸದ ಹೊರೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ದೇಶಾದ್ಯಂತ ಪರಿಸರ ಸಂಬಂಧಿತ ವ್ಯಾಜ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಎನ್ಜಿಟಿಗೆ ಅನುದಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಾರ್ಯಕ್ರಮ ವೆಚ್ಚದಲ್ಲಿ ಮಾಲಿನ್ಯ ನಿಯಂತ್ರಣದ ಪ್ರಾಬಲ್ಯ ಮುಂದುವರಿದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಬೆಂಬಲಕ್ಕಾಗಿ 2026–27ರಲ್ಲಿ 1,091 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಹಿಂದಿನ ಸಾಲಿನ ಪರಿಷ್ಕೃತ ಅಂದಾಜುಗಳಲ್ಲಿ ಒದಗಿಸಲಾಗಿದ್ದ 1,300 ಕೋಟಿ ರೂ.ಗಿಂತ ಕಡಿಮೆಯಾಗಿರುವುದು ಹಲವು ಭಾರತೀಯ ನಗರಗಳಲ್ಲಿ ವಾಯು ಗುಣಮಟ್ಟ ಇನ್ನೂ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿರುವಾಗ ವೆಚ್ಚದ ಮೇಲೆ ಬಿಗಿಹಿಡಿತವನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಮುಂಗಡಪತ್ರವು ಭಾರತದ ಹವಾಮಾನ ಹೋರಾಟವನ್ನು ಮುಂದುವರಿಸುತ್ತದೆ, ಆದರೆ ಅದಕ್ಕೆ ವೇಗ ನೀಡುವುದಿಲ್ಲ. ಇಂದು ಹವಾಮಾನ ಅಪಾಯಗಳು ಭವಿಷ್ಯದ ಮುನ್ಸೂಚನೆಗಳಾಗಿರದೆ ಜೀವಂತ ವಾಸ್ತವಗಳಾಗಿರುವಾಗ ಇದು ಗಂಭೀರ ಚಿಂತೆಯ ವಿಷಯವಾಗಿದೆ.
ಬಜೆಟ್ 2026: ವಿಕಸಿತ ಭಾರತದ ಕನಸಿಗೆ ಪೂರಕವಾದ ಆಯವ್ಯಯ - ಇದಕ್ಕೆ 5 ಕಾರಣ ಕೊಟ್ಟ ಜೋಶಿ
Union Budget 2026 : ಫೆಬ್ರವರಿ ಒಂದು ಭಾನುವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್, ವಿಕಸಿತ ಭಾರತದ ಕನಸು ನನಸು ಮಾಡುವ ಆಯವ್ಯಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ. ಸೆಮಿಕಂಡಕ್ಟರ್ ಮಿಷನ್, ಭಾರತವನ್ನು ಟೆಕ್ನಾಲಜಿ ಹಬ್’ನನ್ನಾಗಿ ಮಾಡಲಿದೆ ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಬಜೆಟ್ 2026 | ಗೃಹ ಸಚಿವಾಲಯಕ್ಕೆ 2.55 ಕೋಟಿ ರೂ. ಹಂಚಿಕೆ
ಹೊಸದಿಲ್ಲಿ, ಫೆ.1: ರವಿವಾರ ಲೋಕಸಭೆಯಲ್ಲಿ ಮಂಡಿಸಲಾದ 2026–27ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ 2,55,233.53 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ 1,73,802.53 ಕೋಟಿ ರೂ.ಗಳಷ್ಟು ಹೆಚ್ಚಿನ ಮೊತ್ತವನ್ನು ಆಂತರಿಕ ಭದ್ರತೆ, ಗಡಿ ಕಾವಲು ಮತ್ತು ಪ್ರಮುಖ ಸ್ಥಾವರಗಳ ರಕ್ಷಣೆಯ ಹೊಣೆಗಾರಿಕೆಯನ್ನು ಹೊಂದಿರುವ CRPF, BSP ಮತ್ತು CISF ನಂತಹ ಕೇಂದ್ರೀಯ ಪೊಲೀಸ್ ಪಡೆಗಳು ಪಡೆಯಲಿವೆ. 2025–26ರ ಬಜೆಟ್ ನಲ್ಲಿ ಗೃಹ ಸಚಿವಾಲಯಕ್ಕೆ 2,33,210.68 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ರ ಬಜೆಟ್ ನಲ್ಲಿ ಗೃಹ ಸಚಿವಾಲಯದಡಿ ಮಾಡಿರುವ ಹಂಚಿಕೆಗಳು: • ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳಿಗೆ 1,73,802.53 ಕೋಟಿ ರೂ. • ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ ಮತ್ತು ದಿಲ್ಲಿಗೆ ಅನುಕ್ರಮವಾಗಿ 43,290.29 ಕೋಟಿ ರೂ. ಮತ್ತು 1,348 ಕೋಟಿ ರೂ., ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಕ್ಕೆ 6,680.94 ಕೋಟಿ ರೂ., ಚಂಡಿಗಡಕ್ಕೆ 5,720.17 ಕೋಟಿ ರೂ., ದಾದ್ರಾ ಮತ್ತು ನಗರ ಹವೇಲಿ ಹಾಗೂ ದಾಮನ್ ಮತ್ತು ದಿಯುಗೆ 2,832.70 ಕೋಟಿ ರೂ., ಲಡಾಖ್ಗೆ 4,869.31 ಕೋಟಿ ರೂ., ಲಕ್ಷದ್ವೀಪಕ್ಕೆ 1,682.35 ಕೋಟಿ ರೂ. ಮತ್ತು ಪುದುಚೇರಿಗೆ 3,517.88 ಕೋಟಿ ರೂ. • ಎ.1ರಿಂದ ಮೊದಲ ಹಂತ ಆರಂಭವಾಗಲಿರುವ ಜನಗಣತಿ ಸಂಬಂಧಿತ ಕೆಲಸಗಳಿಗೆ 6,000 ಕೋಟಿ ರೂ. • ಗುಪ್ತಚರ ಸಂಸ್ಥೆಗೆ (ಐಬಿ) 6,782.43 ಕೋಟಿ ರೂ., ದಿಲ್ಲಿ ಪೊಲೀಸ್ ಪಡೆಗೆ 12,503.65 ಕೋಟಿ ರೂ., ಪ್ರಧಾನಿಗೆ ರಕ್ಷಣೆಯನ್ನು ಒದಗಿಸುವ ಎಸ್ಪಿಜಿಗೆ 499.99 ಕೋಟಿ ರೂ., ಜಮ್ಮು–ಕಾಶ್ಮೀರ ಪೊಲೀಸ್ ಪಡೆಗೆ 9,925.50 ಕೋಟಿ ರೂ. • ರಾಜ್ಯ ಪೊಲೀಸ್ ಪಡೆಗಳು ಮತ್ತು ಅಪರಾಧ ಹಾಗೂ ಅಪರಾಧ ಪತ್ತೆ ನೆಟ್ವರ್ಕ್ ಗಳು ಮತ್ತು ಸಿಸ್ಟಮ್ ಗಳ (ಸಿಸಿಟಿಎನ್ಎಸ್) ಆಧುನೀಕರಣಕ್ಕೆ 450.54 ಕೋಟಿ ರೂ. • ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸುರಕ್ಷತಾ ಸಂಬಂಧಿತ ವೆಚ್ಚ ಮತ್ತು ವಿಶೇಷ ಮೂಲಸೌಕರ್ಯ ಯೋಜನೆಗೆ 3,610.80 ಕೋಟಿ ರೂ. • ಕೇಂದ್ರೀಯ ಸಶಸ್ತ್ರ ಪಡೆಗಳ ಆಧುನೀಕರಣ ಯೋಜನೆಗೆ 343.66 ಕೋಟಿ ರೂ. • ಗಡಿ ಮೂಲಸೌಕರ್ಯ ಮತ್ತು ನಿರ್ವಹಣೆಗೆ 5,576.51 ಕೋಟಿ ರೂ. • ಪೊಲೀಸ್ ಮೂಲಸೌಕರ್ಯಕ್ಕಾಗಿ 5,393.37 ಕೋಟಿ ರೂ. • ಮಹಿಳಾ ಸುರಕ್ಷತೆ ಯೋಜನೆಗೆ 889.05 ಕೋಟಿ ರೂ. • ಜೈಲುಗಳ ಆಧುನೀಕರಣಕ್ಕೆ 300 ಕೋಟಿ ರೂ. • ವೈಬ್ರಂಟ್ ವಿಲೇಜಸ್ ಕಾರ್ಯಕ್ರಮಕ್ಕೆ 350 ಕೋಟಿ ರೂ. ಮತ್ತು ಅದರ ಎರಡನೇ ಹಂತಕ್ಕೆ 300 ಕೋಟಿ ರೂ. • ಲ್ಯಾಂಡ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ನ್ಯಾಷನಲ್ ಫಾರೆನ್ಸಿಕ್ ಸೈನ್ಸ್ ಯುನಿವರ್ಸಿಟಿ ಮತ್ತು ರಾಷ್ಟ್ರೀಯ ರಕ್ಷಾ ವಿವಿ ಸೇರಿದಂತೆ ಸ್ವಾಯತ್ತ ಸಂಸ್ಥೆಗಳಿಗೆ 665.40 ಕೋಟಿ ರೂ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ತಮ್ಮ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಕರೆದಿದ್ದಾರೆ. ಬೆಂಗಳೂರು ಮೆಟ್ರೋ, ಸಬ್ಅರ್ಬನ್ ರೈಲು ಯೋಜನೆಗಳ ಉಲ್ಲೇಖವಿಲ್ಲ. ರೈತರು, ಪರಿಶಿಷ್ಟರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ದೊರಕಿಲ್ಲ. ದೇಶದ ಅಭಿವೃದ್ಧಿಗೆ ಈ ಬಜೆಟ್ ಕೊಡುಗೆ ನೀಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕಕ್ಕೆ ಮತ್ತೆ ಚೊಂಬು: ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಟೀಕೆ
ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದ್ದು, ಕರ್ನಾಟಕಕ್ಕೆ ಮತ್ತೆ ಚೊಂಬು ನೀಡುವ ಮೂಲಕ ಮಲತಾಯಿ ಧೋರಣೆ ಮುಂದುವರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ತೆರಿಗೆ, ಜಿಎಸ್ಟಿ ಸಂಗ್ರಹ, ವಿದೇಶ ಹೋಡಿಕೆಯಲ್ಲಿ ಮೊದಲ ಸ್ಥಾನ ಮತ್ತು ಸೆಸ್ ಸಂಗ್ರಹ ಮಾಡುವ 2ನೇ ರಾಜ್ಯವಾಗಿದೆ. ನಮಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. 1 ರೂ. ಪಡೆದು 14 ಪೈಸೆ ಮಾತ್ರ ನಮಗೆ ವಾಪಸ್ ನೀಡುವ ಮೂಲಕ ಕೇಂದ್ರ ಸರಕಾರ ನಮಗೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು. ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರಕಾರದ 13ನೇ ಬಜೆಟ್ ಮೋದಿ ಸರಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತವಾಗಿದೆ. 2025-26 ಸಾಲಿನ ಬಜೆಟ್ ಗಾತ್ರ 50,65,345 ಕೋಟಿ ರೂ.ಗಳಷ್ಟಿತ್ತು. ಆದರೆ ಪರಿಷ್ಕೃತ ಅಂದಾಜು 49,64,842 ಕೋಟಿ ರೂ. ಆಗಿದೆ. ಸುಮಾರು 1 ಲಕ್ಷ ಕೋಟಿಗೂ ಕಡಿಮೆ ಗಾತ್ರಕ್ಕೆ ಪರಿಷ್ಕರಿಸಿದ್ದಾರೆ. ಯಾವುದೇ ದೂರದೃಷ್ಟಿ ಇಲ್ಲದ ಬರಿ ಹೇಳಿಕೆಗಳ ಬಜೆಟ್ ಆಗಿದೆ ಎಂದು ಟೀಕಿಸಿದರು. ವಿಕಸಿತ ಭಾರತದ ಸಂಕಲ್ಪ ಎನ್ನುವುದು ನಾಲಿಗೆ ಮೇಲಿನ ಮಾತಾಗಿದೆಯೇ ಹೊರತು ಕೃತಿಗಿಳಿಸಲು ಬೇಕಾದ ಯಾವುದೇ ಯೋಜನೆಗಳು ಬಜೆಟ್ ನಲ್ಲಿ ಇಲ್ಲ. ಕರ್ನಾಟಕ್ಕೆ ನೀರಾವರಿ ಯೋಜನೆ, ಮೆಟ್ರೋ ರೈಲು, ಮಹಾದಾಯಿ ಸಮಸ್ಯೆ, ಕೃಷ್ಣಮೇಲ್ದಂಡೆ ಯೋಜನೆ, ಕಬ್ಬು, ತೊಗರಿ ಬೆಳೆಗಳಿಗೆ ಸಹಾಯ ಸಿಗುವ ನಿರೀಕ್ಷೆ ಇತ್ತು. ಅದು ಸಿಕ್ಕಿಲ್ಲ. ಕೇವಲ ನಮಗೆ ಮತ್ತೆ ಚೊಂಬು ಸಿಕ್ಕಿದೆ ಎಂದು ಹೇಳಿದರು. ಬೆಂಗಳೂರು- ಮುಂಬೈ, ಬೆಂಗಳೂರು- ಮಂಗಳೂರು, ಬೆಂಗಳೂರು ಪುಣೆ ಹೈ ಸ್ಪೀಡ್ ರೈಲುಗಳನ್ನು ಘೋಷಣೆ ಮಾಡಿದರೆ ಅನುಕೂಲ ಆಗುತ್ತಿತ್ತು. ಆದರೆ ಬೆಂಗಳೂರು- ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಎರಡು ಹೈ ಸ್ಪೀಡ್ ರೈಲುಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ. ಆ ಎರಡರಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಿಲ್ಲ. ಅತಿ ಹೆಚ್ಚಿನ ಕಿ.ಮೀ ನಮಗೆ ಸಂಚರಿಸುವುದು ಕರ್ನಾಟಕದಲ್ಲಲ್ಲ. ಕೇಂದ್ರದ ಬಜೆಟ್ ದೊಡ್ಡ ನಗರಗಳ ಕಾರ್ಪೊರೇಷನ್ ಬಜೆಟ್ಗಳಿಗಿಂತ ಮೇಲೆ ಹೋಗಲಿಲ್ಲ. ಕರ್ನಾಟಕಕ್ಕೆ ಏನೂ ಸಿಗಲಿಲ್ಲ. ಯಥಾ ಪ್ರಕಾರ ಚೊಂಬು ಕೊಟ್ಟರು. ಕರ್ನಾಟಕ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತಕ್ಕೂ ಏನೂ ಸಿಗಲಿಲ್ಲ. ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್ ಎಂದರು. 14 ನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯಕ್ಕೆ ಶೇ. 4.71 ರಷ್ಟು ತೆರಿಗೆ ಪಾಲು ಸಿಕ್ಕಿತ್ತು. ಆದರೆ 14ನೇ ಹಣಕಾಸು ಆಯೋಗದಲ್ಲಿ ಅದು ಶೇ. 3.64 ಕ್ಕೆ ಇಳಿದ ಕಾರಣ ನಮಗೆ ಶೇ.23 ರಷ್ಟು ನಷ್ಟವಾಗಿತ್ತು. ಈ ಕಾರಣದಿಂದ ರಾಜ್ಯಕ್ಕೆ ಕನಿಷ್ಟ 14ನೇ ಹಣಕಾಸು ಆಯೋಗ ಕೊಟ್ಟ ತೆರಿಗೆ ಪಾಲಿಗಿಂತ ಹೆಚ್ಚಿನ ಪಾಲು ಕೊಟ್ಟರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ಹೇಳಿದ್ದೆವು. ಹಲವು ಬಾರಿ ಮನವಿ ಸಲ್ಲಿಸಿದರೂ ಕ್ಯಾರೆ ಎಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಾರಾಷ್ಟ್ರಕ್ಕೆ 31,597 ಕೋಟಿ ರೂ., ಮಧ್ಯಪ್ರದೇಶಕ್ಕೆ 12,847 ಕೋಟಿ ರೂ., ಉತ್ತರ ಪ್ರದೇಶಕ್ಕೆ 16,342 ಕೋಟಿ ರೂ. ಕೊಟ್ಟಿದ್ದಾರೆ. SDMF ನಿಧಿಯಲ್ಲಿ ಕರ್ನಾಟಕಕ್ಕೆ 5 ವರ್ಷಗಳಲ್ಲಿ 1,712 ಕೋಟಿ ರೂ., ಮಹಾರಾಷ್ಟ್ರಕ್ಕೆ 7,895 ಕೋಟಿ ರೂ. ಕೊಟ್ಟಿದ್ದಾರೆ. ಮಹಾರಾಷ್ಟ್ರಕ್ಕೆ 23,697 ಕೋಟಿ ರೂ., ಗುಜರಾತ್ಗೆ 6766 ಕೋಟಿ ರೂ., ಮಧ್ಯ ಪ್ರದೇಶಕ್ಕೆ 9,357 ಕೋಟಿ ರೂ., ಹಾಗೂ ಉತ್ತರ ಪ್ರದೇಶಕ್ಕೆ 12,256 ಕೋಟಿ ರೂ. ಕೊಟ್ಟಿದ್ದಾರೆ. ಹಣಕಾಸು ಆಯೋಗದ ವರದಿಯ ಶಿಫಾರಸ್ಸಿನ ಆಧಾರದ ಮೇಲೆ 2025-26 ರಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ SDRF ನಲ್ಲಿ 24,257 ಕೋಟಿ ಕೊಟ್ಟಿದ್ದರು. 2026-27ರ ಬಜೆಟ್ನಲ್ಲಿ 22,574 ಕೋಟಿ ರೂ. ಮೀಸಲಿರಿಸಿದ್ದಾರೆ. SDMF ನಲ್ಲಿ 9,250 ಕೋಟಿ ರೂ. ಕಳೆದ ವರ್ಷ ಇಟ್ಟಿದ್ದರೆ, ಈ ವರ್ಷ 5,641 ಕೋಟಿ ರೂ.ಗೆ ಇಳಿಸಿದ್ದಾರೆ ಎಂದು ವಿವರಿಸಿದರು. ನಾವು ನೀರಾವರಿ ಯೋಜನೆಗಳಿಗೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ, ಬೆಂಗಳೂರು ಅಭಿವೃದ್ಧಿಗೆ, ಮಲೆನಾಡು-ಕರಾವಳಿ ಅಭಿವೃದ್ಧಿಗೆ ವಿಶೇಷ ನೆರವು ಕೋರಿದ್ದೆವು. ಬೆಂಗಳೂರು ಮೆಟ್ರೋ, ಸಬ್ ಅರ್ಬನ್ ರೈಲುಗಳ ಕುರಿತು ಯಾವುದೇ ಉಲ್ಲೇಖಗಳಿಲ್ಲ. ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.41 ರಿಂದ ಶೇ.50 ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದೆವು. ಬೆಂಗಳೂರಿಗೆ ರೂ. 27093 ಕೋಟಿ ಹಾಗೂ ಉಳಿದ ಭಾಗಗಳಿಗೆ ಅನುದಾನ ಘೋಷಿಸುವಂತೆ ಕೇಳಿದ್ದೆವು. ಸೆಸ್ ಅನ್ನು ಶೇ.5ಕ್ಕೆ ಮಿತಿಗೊಳಿಸುವಂತೆ ಕೇಳಿದ್ದೆವು. ಈ ಒತ್ತಾಯಗಳನ್ನು ಹಣಕಾಸು ಆಯೋಗವು ಪರಿಗಣಿಸದಿರುವುದು ದುರದೃಷ್ಟಕರ ಎಂದರು. ಸುದ್ದಿಗೋಷ್ಠಿಯಲ್ಲಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಶಿವರಾಜ್ ತಂಗಡಗಿ, ಬೋಸರಾಜು, ಶಾಸಕಿ ಕನೀಜ್ ಫಾತೀಮಾ, ಶಾಸಕ ಎಂ.ವೈ.ಪಾಟೀಲ್, ಎಂಎಲ್ಸಿ ಜಗದೇವ ಗುತ್ತೇದಾರ್, ಪಾಲಿಕೆ ಮಹಾಪೌರ ವರ್ಷಾ ಜಾನೆ, ಮತ್ತಿತ್ತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2026 | VB-G RAM G ಯೋಜನೆಗೆ 95,692.31 ಕೋಟಿ ರೂ. ಮೀಸಲು
ಮೊತ್ತ ತೀರಾ ಕಡಿಮೆಯಾಗಲಿದೆ ಎಂದು ತಜ್ಞರ ಎಚ್ಚರಿಕೆ
ಬಜೆಟ್| ವಿಕಸಿತ ಭಾರತಕ್ಕೆ ಭದ್ರ ತಳಹದಿ: ನಳಿನ್ ಕುಮಾರ್ ಕಟೀಲ್
ಮಂಗಳೂರು : ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸಲು ಈ ಬಜೆಟ್ ಭದ್ರ ತಳಹದಿಯಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸಹಿತ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ, ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ತೆಂಗಿನಕಾಯಿ, ಕೊಕ್ಕೊ ಬೆಳೆಗಳಿಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಕೃಷಿ ಅಭಿವೃದ್ಧಿಗೆ ಉತ್ತೇಜಿಸಿರುವುದು ಕರಾವಳಿ ಭಾಗದ ಕೃಷಿಕರಿಗೆ ವರದಾನವಾಗಲಿದೆ. ಮೀನುಗಾರಿಕಾ ಕ್ಷೇತ್ರವನ್ನು ಬಲಪಡಿಸಲು ಸುಂಕ ವಿನಾಯಿತಿ, ಸಮುದ್ರ ಉತ್ಪನ್ನಗಳ ರಫ್ತು ಹೆಚ್ಚಳ ಘೋಷಿಸಿರುವುದು ಸ್ವಾಗತಾರ್ಹ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಆಮೆ ಹಾದಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಘೋಷಿಸಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. ಬಡವರ, ಮಧ್ಯಮ ವರ್ಗದವರ, ಮಹಿಳೆಯರ , ಯುವಕರ ಹಿತ ಕಾಯುವ ಸರ್ವ ಸ್ಪರ್ಶಿ ಬಜೆಟ್ ಇದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಡಿವಾಳ ಮಾಚಿದೇವ ಅಸ್ಪಶ್ಯರ ಬದುಕಿಗೆ ಆಶಾ ಕಿರಣ: ಯಶ್ಪಾಲ್ ಸುವರ್ಣ
ಉಡುಪಿ, ಫೆ.1: ಹನ್ನೆರಡನೇ ಶತಮಾನದಲ್ಲಿ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆ ಸೇರಿದಂತೆ ಅನೇಕ ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದ ಜನರ ಬದುಕಿಗೆ ಆಶಾ ಕಿರಣವಾಗಿ ಸಮಾಜದ ಏಳಿಗೆಗೆ, ಸಮಾಜದ ಒಗ್ಗಟ್ಟಿಗೆ ಹಾಗೂ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಾಚಿದೇವ ಅವರ ಆದರ್ಶ ಗಳನ್ನು ದೈನಂದಿನ ಜೀವನದಲ್ಲಿ ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಎ.ಸುವರ್ಣ ಹೇಳಿದ್ದಾರೆ. ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀರಜಕ ಯಾನೆ ಮಡಿವಾಳ ಸಂಘ ಉಡುಪಿ ಇವರ ಸಹಯೋಗದಲ್ಲಿ ರವಿವಾರ ಉಡುಪಿಯ ಅಂಬಾಗಿಲು ಶ್ರೀಗುರು ಮಾಚೀದೇವ ಸಭಾಭವನದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಶರಣರು ವಚನ ಸಾಹಿತ್ಯದಲ್ಲಿ ತಮ್ಮ ಅನುಭವಗಳನ್ನು ಮನ ಮುಟ್ಟುವ ಹಾಗೆ ತಮ್ಮದೇ ಶೈಲಿಯಲ್ಲಿ ಸರಳ ರೂಪದಲ್ಲಿ ನೀಡಿದ್ದಾರೆ. 12ನೇ ಶತಮಾನ ದಲ್ಲಿ ಬಸವಣ್ಣ, ಮಾಚಿದೇವ ಸೇರಿದಂತೆ ಹಲವಾರು ದಾರ್ಶನಿಕರು ಸನ್ಮಾಗದಲ್ಲಿ ನಡೆಯಲು ಹಾದಿ ತೋರಿದ್ದಾರೆ ಎಂದರು. ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಉಪನ್ಯಾಸ ನೀಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಹೋರಾಡಿದ ಶರಣರು ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ್ದಾರೆ. ಸುಮಾರು 850 ವರ್ಷಗಳ ಹಿಂದೆ ಶರಣರು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ತಮ್ಮ ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು. ಶ್ರಮ ಜೀವಿಯಾದ ಇವರು ಕಾಯಕ ನಿಷ್ಠೆಗೆ ಹೆಸರುವಾಸಿಯಾಗಿದ್ದರು. ಕಲ್ಯಾಣದಲ್ಲಿ ಮಡಿ ಮಾಡುವ ಕಾಯಕದಲ್ಲಿ ತೊಡಗಿದ್ದ ಇವರ ಕಾಯಕ ಭಕ್ತಿಗೆ ಬಸವಣ್ಣ ನವರು ಸಹ ಶರಣಾಗಿದ್ದರು ಎಂದ ಅವರು, ಹನ್ನೆರಡನೇ ಶತಮಾನ ದಲ್ಲಿ ಶಿವ-ಶರಣರು ಸಾವಿರಾರು ವಚನಗಳನ್ನು ರಚಿಸಿದ್ದಾರೆ ಅವುಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳಲ್ಲಿ ರುವ ತತ್ವಗಳನ್ನು ಪಾಲಿಸಿದ್ದಲ್ಲಿ ಅವು ನಮ್ಮಲ್ಲಿ ಬದುಕಿನಲ್ಲಿ ಮನುಷ್ಯತ್ವ ರೂಪಿಸಲು ಸಹಕರಿ ಯಾಗಲಿದೆ ಎಂದರು ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ವಹಿಸಿದ್ದರು. ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಸಮುದಾಯದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ವರ್ಷ ಬಿ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಜಕ ಯಾನೆ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ವಂದಿಸಿದರು.
ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ಕೊಡುವ ಬಜೆಟ್: ಸಂಸದ ಕೋಟ
ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಅತ್ಯಂತ ಪರಿಷ್ಕೃತವಾದ, ಸಮಾಜ ಸರ್ವರು ಒಪ್ಪಿಕೊಳ್ಳುವ ಹಾಗೂ ಎಲ್ಲ ವರ್ಗದ ಜನವರಿಗೆ ಅನುಕೂಲವಾಗುವ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ಕೊಡುವ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಹಲವು ಯೋಜನೆ ಹಾಗೂ ಯೋಚನೆಗಳನ್ನು ಪರಿಚಯಿಸಲಾಗಿದೆ. ಬಡವರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್, ಮಾರಕ ಕಾಯಿಲೆಗಳ ಔಷಧಿಗಳಿಗೆ ರಿಯಾಯಿತಿ, ದೇಶದ ಅನೇಕ ಕಡೆಗಳಲ್ಲಿ ಹೊಸ ಮೆಡಿಕಲ್ ಕಾಲೇಜು, ಹಬ್ ಸ್ಥಾಪನೆ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹೈ ಸ್ರೀಡ್ ರೈಲು ಪರಿಚಯ, ರಾಷ್ಟ್ರೀಯ ಹೆದ್ದಾರಿ ಒತ್ತು ಕೊಡುವ ಕಾರ್ಯ ಮಾಡಲಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಹೆಚ್ಚಿನ ಅನುದಾನ ಮೀಸಲಿರಿಸಿ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಜೆಟ್| ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ: ಪ್ರಸಾದ್ರಾಜ್ ಕಾಂಚನ್
ಉಡುಪಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ರಾಜ್ಯ ಹಾಗೂ ಕರಾವಳಿ ಜಿಲ್ಲೆಗಳ ಪಾಲಿಗೆ ನಿರಾಶದಾಯಕ ಬಜೆಟ್ ಆಗಿದ್ದು ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂತೆ. ಇದೊಂದು ನಿರಾಶದಾ ಯಕ ಮತ್ತು ಶ್ರೀಮಂತರ ಬಜೆಟ್ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ಟೀಕಿಸಿದ್ದಾರೆ. ಮುಂದೆ ಬರಲಿರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ಹಲವು ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿದೆ ಹೊರತು ಕರಾವಳಿ ಭಾಗಕ್ಕೆ ಯಾವುದೇ ಅಭಿವೃದ್ದಿ ಯೋಜನೆಗಳನ್ನು ನೀಡಿಲ್ಲ. ಕರಾವಳಿ ಭಾಗದಲ್ಲಿ ರೈಲ್ವೇ ಯೋಜನೆಗಳಿಗೆ ವಿಶೇಷ ಒತ್ತು ನೀಡಬೇಕಾಗಿತ್ತು. ಹೆಚ್ಚುವರಿ ರೈಲುಗಳು ಹಾಗೂ ದ್ವಿಪಥ ಯೋಜನೆಗಳನ್ನು ವಿಸ್ತರಿಸಬೇಕಾಗಿತ್ತು. ಈ ವಿಚಾರದಲ್ಲಿ ಕರಾವಳಿಗೆ ವಿತ್ತ ಸಚಿವೆ ಯಾವುದೇ ಯೋಜನೆಯನ್ನು ನೀಡಿರುವುದು ನಿಜಕ್ಕೂ ನೋವುಂಟು ಮಾಡಿದೆ. ಮೀನುಗಾರಿಕೆ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡ ಲಾಗಿದ್ದು ಕರಾವಳಿಯ ಬಂದರುಗಳನ್ನು ಅಭಿವೃದ್ದಿ ಪಡಿಸಲು ಒತ್ತು ನೀಡದಿರುವುದು ಕಂಡು ಬಂದಿದೆ. ಬಹುಶಃ ಕರಾವಳಿ ಭಾಗದ ಸಂಸದರು ಗಳು ಕರಾವಳಿ ಭಾಗಕ್ಕೆ ಅಗತ್ಯ ಇರುವ ಬೇಡಿಕೆಗಳನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ವಿಫಲವಾಗಿರುವ ಕಾರಣದಿಂದ ಕರಾವಳಿಗೆ ಅನ್ಯಾಯವಾಗಿರ ಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಳಕೇರಾ ಗ್ರಾಮದಲ್ಲಿ ಆಕಸ್ಮಿಕ ಸ್ಪೋಟ: ಸ್ಥಳಕ್ಕೆ ಸಚಿವ ಈಶ್ವರ ಬಿ.ಖಂಡ್ರೆ ಭೇಟಿ ನೀಡಿ ಪರಿಶೀಲನೆ
ಹುಮನಾಬಾದ್: ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ ಘಟನಾ ಸ್ಥಳಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಘಟನೆ ಕುರಿತು ವಿವರವಾದ ಮಾಹಿತಿ ಪಡೆದು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಮೇಲ್ನೋಟಕ್ಕೆ ಮನೆಯ ಮುಂಭಾಗದಲ್ಲಿ ರಾಸಾಯನಿಕ ಮಿಶ್ರಿತ ವಸ್ತುಗಳನ್ನು ಶೇಖರಣೆ ಮಾಡಿರುವುದರಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಸಂಪೂರ್ಣ ತನಿಖಾ ವರದಿ ಬಂದ ತಕ್ಷಣ ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಯಾರೇ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಲೋಪ ಕಂಡು ಬಂದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಸಚಿವರು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಕೆಮಿಕಲ್ ತ್ಯಾಜ್ಯದಿಂದ ಗ್ರಾಮದ ಸುತ್ತಲಿನ ವಾತಾರಣ, ಹವಾಮಾನ ಕಲುಷಿತಗೊಳ್ಳುತ್ತಿದೆ ಎಂದು ಸಚಿವರಿಗೆ ಗ್ರಾಮಸ್ಥರು ದೂರು ಸಲ್ಲಿಸಿದರು. ರಾಜ್ಯ ಪರಿಸರ ಇಲಾಖೆಯಿಂದ ಒಂದು ತಂಡವನ್ನು ಕರೆಸಿ ತನಿಖೆ ನಡೆಸಿ ತಪಿಸ್ಥರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಸಚಿವರು ಭರವಸೆ ನೀಡಿದರು. ಇಂತಹ ದುರ್ಘಟನೆಗಳು ಮರುಕಳಿಸದಂತೆ ಸಂಬಂಧಿತ ಇಲಾಖೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಘಟನೆಯಿಂದ ಯಾರೂ ಭಯಪಡುವ ಅಗತ್ಯವಿಲ್ಲ. ಈಗಾಗಲೇ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ಈ ಘಟನೆಯಲ್ಲಿ ಯಾರೇ ಶಾಮಿಲಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಹುಮನಾಬಾದ್ ಶಾಸಕ ಡಾ.ಸಿದ್ಧಲಿಂಗ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಬಿ.ಪಾಟೀಲ್, ಮಾಜಿ ಶಾಸಕ ರಾಜಶೇಖರ್ ಬಿ.ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಹುಮನಾಬಾದ್ ತಹಸೀಲ್ದಾರ್ ಅಜುಂ ತಬಸುಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಜೆಟ್ ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ: ಸಂಸದ ಜಿ ಕುಮಾರ್ ನಾಯಕ್
ರಾಯಚೂರು: ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಬಡವರು, ಮಧ್ಯಮ ವರ್ಗದವರು, ರೈತರು, ಕಾರ್ಮಿಕರು ಹಾಗೂ ಯುವಜನತೆಗೆ ನೇರವಾಗಿ ಲಾಭವಾಗುವ ಯೋಜನೆಗಳಿಗೆ ಅಗತ್ಯ ಆದ್ಯತೆ ನೀಡಲಾಗಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಆದಾಯ ಅಸಮಾನತೆ ಎಂಬ ಮೂಲಭೂತ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರಗಳಿಲ್ಲ ಎಂದು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ್ ನಾಯಕ್ರವರು ಅಸಮಾಧಾನವನ್ನು ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯದಲ್ಲಿ ಅದರಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಮಹತ್ವಕಾಂಕ್ಷೆ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಜನರು ಈ ಬಾರಿ ಕೂಡ ಕೇಂದ್ರದ ಬಜೆಟ್ ನಿಂದ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಜಿಲ್ಲೆಗೆ ಮಂಜೂರು ಮಾಡಬೇಕಾದಂತಹ ಏಮ್ಸ್ ಆಸ್ಪತ್ರೆಯನ್ನು ಈ ಬಾರಿಯೂ ಕೂಡ ಬಜೆಟ್ನಿಂದ ಕೈಬಿಟ್ಟಿದ್ದು, ಈ ಭಾಗಗಳಲ್ಲಿ ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯಗಳ ಕುರಿತು ಹಾಗೂ ಕೈಗಾರಿಕೆಗಳ ಸ್ಥಾಪಿಸುವ ಕುರಿತು ಯಾವುದೇ ರೀತಿಯ ವಿಶೇಷ ಘೋಷಣೆಗಳಿಲ್ಲ. ಇದು ಕೇವಲ ಹೆಸರಿಗಷ್ಟೇ ಮಹತ್ವಾಕಾಂಕ್ಷೆ ಜಿಲ್ಲೆ ಎಂಬುದು ಈಗ ದೃಢವಾಗಿದೆ ಎಂದು ಹೇಳಿದರು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕುರಿತು ಸ್ಪಷ್ಟತೆ ಇಲ್ಲ. ಯುವಕರ ಉದ್ಯೋಗ ಸೃಷ್ಟಿಗೆ ಯಾವುದೇ ದೃಢ ಯೋಜನೆ ಇಲ್ಲ. ದೇಶದ ಜನರ ಹಿತಾಸಕ್ತಿಯನ್ನು ಕಾಪಾಡುವ ಬಜೆಟ್ನ್ನು ತರುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದು ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತಮ್ಮ ಸಂಸದ ಜಿ ಕುಮಾರ್ ನಾಯಕ್ ಹೇಳಿದರು.
ಬಡವರ ಆಹಾರ ಭದ್ರತೆಗೆ ಇಂದಿರಾ ಕ್ಯಾಂಟೀನ್ ಮಹತ್ವದ ಯೋಜನೆ: ಸಚಿವ ಮಂಕಾಳ್ ವೈದ್ಯ
ಭಟ್ಕಳ: ಹಳ್ಳಿಗಳು ಮತ್ತು ವಿವಿಧ ಊರುಗಳಿಂದ ಕೆಲಸಕ್ಕಾಗಿ ನಗರಗಳು ಹಾಗೂ ಪಟ್ಟಣಗಳಿಗೆ ಬರುವ ಬಡವರು ದಿನನಿತ್ಯದ ಆಹಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಪೌಷ್ಟಿಕ ಆಹಾರ ಒದಗಿ ಸುವ ಉದ್ದೇಶದಿಂದ ‘ಇಂದಿರಾ ಕ್ಯಾಂಟೀನ್’ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಹೇಳಿದರು. ಅವರು ಭಾನುವಾರ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಝಾದ್ ನಗರದಲ್ಲಿ ನೂತನವಾಗಿ ನಿರ್ಮಿಸಲ್ಪ ಟ್ಟಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು. ಐದು ರೂಪಾಯಿಗೆ ತಿಂಡಿ ಹಾಗೂ ಹತ್ತು ರೂಪಾಯಿಗೆ ಊಟ ನೀಡುವ ಮೂಲಕ ಬಡವರಿಗೆ ಆರೋಗ್ಯಕರ ಆಹಾರ ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಉಳಿದ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಇದರಿಂದ ಕಾರ್ಮಿಕರು ಹಾಗೂ ಸಾಮಾನ್ಯ ಜನರು ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದು ಸಚಿವರು ತಿಳಿಸಿದರು. ಮೊದಲ ಹಂತದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದ್ದು, ನಂತರ ಈ ಯೋಜನೆಯನ್ನು ರಾಜ್ಯದಾದ್ಯಂತ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಗಳಿಗೆ ವಿಸ್ತರಿಸಲಾ ಗಿದೆ. ಭಟ್ಕಳ, ಜಾಲಿ, ಹೊನ್ನಾವರ, ಮಂಕಿ ಹಾಗೂ ಮುರುಡೇಶ್ವರ ಸೇರಿದಂತೆ ಹಲವೆಡೆ ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಈ ಯೋಜನೆ ಸ್ಥಳೀಯರಿಗೆ ಮಾತ್ರ ಸೀಮಿತವಲ್ಲದೆ, ರಾಜ್ಯದ ಯಾವುದೇ ಭಾಗದಿಂದ ಬರುವವರು ಕಡಿಮೆ ದರದಲ್ಲಿ ಆಹಾರ ಪಡೆಯಬಹುದಾಗಿದೆ. ಹಣವಿರುವವರು ಹೋಟೆಲ್ಗಳನ್ನು ಹುಡುಕುವರು, ಆದರೆ ಬಡವರಿಗೆ ಇಂದಿರಾ ಕ್ಯಾಂಟೀನ್ ಆಶ್ರಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಪ್ರಸ್ತುತ ಸುಮಾರು 600 ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಕೇಂದ್ರ ದಲ್ಲಿ ಹಲವರಿಗೆ ಉದ್ಯೋಗ ಸೃಷ್ಟಿಯಾಗಿದೆ. ಇದರಿಂದ ಒಂದೆಡೆ ನಿರುದ್ಯೋಗಿಗಳಿಗೆ ಕೆಲಸ, ಮತ್ತೊಂದೆಡೆ ಬಡವರಿಗೆ ಆಹಾರ ಭದ್ರತೆ ಒದಗಿದೆ ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಜಾಲಿ ಪ.ಪಂ ಅಧ್ಯಕ್ಷೆ ಅಫ್ಸಾ ಹುಝೈಫಾ ಕಾಜಿಯಾ, ಉಪಾಧ್ಯಕ್ಷ ಸೈಯ್ಯದ್ ಇಮ್ರಾನ್ ಲಂಕಾ, ಸದಸ್ಯರಾದ ಈಶ್ವರ್ ಮೊಗೇರ್, ಎನ್. ಮಂಜಪ್ಪ ಮುಅ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು ನಾಯ್ಕ, ನಾಮನಿರ್ದೇಶಿತ ಸದಸ್ಯ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಕಾರ್ಯಪಾಲ ಅಭಿಯಂತರರು ಜಿಲ್ಲಾ ನಗರಾ ಭಿವೃದ್ಧಿಕೋಶ ಕಾರವಾರ ಕೆ.ಎಸ್. ಕುಮಾರ್, ಮತ್ತಿತರರು ಇದ್ದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು.
ರಾಯಚೂರು ಉತ್ಸವ| ಕೃತಕ ಅರಣ್ಯ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಚಾಲನೆ
ರಾಯಚೂರು: ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಅರಣ್ಯ ಇಲಾಖೆಯು ಕೃತಕ ಅರಣ್ಯ ಪರಿಕಲ್ಪನೆ ಜನಾಕರ್ಷಣೀಯ ವಿನೂತನ ಯೋಜನೆ ರೂಪಿಸಿದೆ. ಬಸವೇಶ್ವರ ವೃತ್ತದ ಹತ್ತಿರ ಇರುವ ವಾಲ್ಕಟ್ ಮೈದಾನದಲ್ಲಿ ಕೃತಕ ಅರಣ್ಯ ನಿರ್ಮಿಸಿದ್ದು ಜನರನ್ನು ಕೈ ಬೀಸಿ ಕರೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ ಅವರು ಚಾಲನೆ ನೀಡಿದರು. ಕಾಡಿನಲ್ಲಿನ ನೀರು ಜಾಡು, ತೊರೆ, ತಗ್ಗು, ಗಿಡ ಮರ, ಬಳ್ಳಿ, ಆನೆ, ನೀರುಗೋಳಿ, ಕೊಕ್ಕರೆ, ಬೆಳ್ಳಕ್ಕಿ ಸೇರಿದಂತೆ ಬಗೆಬಗೆಯ ಕಾಡು ಪ್ರಾಣಿಗಳ ಚಿತ್ರಗಳು ಇಲ್ಲಿ ಗಮನ ಸೆಳೆಯುತ್ತವೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಅರಣ್ಯ ಇಲಾಖೆಯ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕ್ಕ್ಕರಣೆಯ (ಎಸ್ಐಆರ್) ಭಾಗವಾಗಿ ಬೂತ್ ಲೆವೆಲ್ ಬಿಎಲ್ಎ ಏಜೆಂಟ್ಗಳ ಸಮಾವೇಶ ಕಾರ್ಯಕ್ರಮವು ಎಸ್ಡಿಪಿಐ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆಯಿತು. ಎಸ್ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಧ್ಯಕ್ಷ ಇಕ್ಬಾಲ್ ಕಣ್ಣೂರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಎಸ್ಡಿಪಿಐ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಬಶೀರ್ ಬಜಾಲ್ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಸವಿಸ್ತಾರ ಮಾಹಿತಿ ನೀಡಿ, ಬೂತ್ ಲೆವೆಲ್ ಏಜೆಂಟ್ಗಳ ಜವಾಬ್ದಾರಿ, ಮನೆಮನೆಗೆ ಭೇಟಿ, ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತಿತರ ಪ್ರಕ್ರಿಯೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಕೋಶಾಧಿಕಾರಿ ಯಾಸಿನ್ ಅರ್ಕುಳ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಕ್ಬರ್ ಅಲಿ ಮಿಲಾಯತ್ ಸ್ವಾಗತಿಸಿ, ವಂದಿಸಿದರು.
ಯುವ ಭಾರತ ನಿರ್ಮಾಣಕ್ಕೆ ಮುನ್ನಡಿ ಬರೆದ ಬಜೆಟ್: ಯಶ್ಪಾಲ್ ಸುವರ್ಣ
ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಮಂಡಿಸಿರುವ ಬಜೆಟ್, ದೇಶದ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ಮೂಲಕ ವಿಕಸಿತ ಭಾರತಕ್ಕೆ ಪೂರಕವಾಗಿ ಯುವ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆಯಲಿದೆ. ವಿಶ್ವದ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತವನ್ನು ತೃತೀಯ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯ ಪಟ್ಟಿದ್ದಾರೆ. ದೇಶಾದ್ಯಂತ ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳ ಅಭಿವೃದ್ಧಿ, ರಕ್ಷಣಾ ವಲಯಕ್ಕೆ ವಿಶೇಷ ಆದ್ಯತೆ, ಯುವ ಜನತೆಗೆ ಉದ್ಯೋಗ ಸೃಷ್ಟಿಗಾಗಿ ಐಟಿ ಸಂಸ್ಥೆಗಳಿಗೆ ಪ್ರೋತ್ಸಾಹ, 16ನೇ ಹಣಕಾಸು ಆಯೋಗದ ಮೂಲಕ ರಾಜ್ಯ ಗಳಿಗೆ ಗರಿಷ್ಠ ಅನುದಾನ, ಮಹಿಳಾ ಉದ್ಯಮಿಗಳಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಶಿ ಮಾರ್ಟ್ ಯೋಜನೆ, ಎಲ್ಲಾ ರಾಜ್ಯಗಳಿಗೆ ಯೂನಿ ವರ್ಸಿಟಿ ಟೌನ್ಶಿಪ್ ಜೊತೆಗೆ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಆದ್ಯತೆ, ಕೃಷಿ, ಮೀನುಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡುವ ಕಾರ್ಯಕ್ರಮಗಳನ್ನು ಬಜೆಟ್ ಒಳಗೊಂಡಿರು ವುದು ದೇಶದ ಜನತೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಬಜೆಟ್ ಬಡವರ ಪರವಾಗಿದೆ: ಶ್ರೀಕಾಂತ್ ಸುಂಗಲಕರ್
ಯಾದಗಿರಿ: ಕೇಂದ್ರ ಸರಕಾರ 2026–27ನೇ ಸಾಲಿಗೆ ಮಂಡಿಸಿರುವ 53.5 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಐತಿಹಾಸಿಕವಾಗಿದ್ದು, ಇದು ಬಡವರ ಪರ ಹಾಗೂ ಆರೋಗ್ಯ ಕೇಂದ್ರಿತ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ಶ್ರೀಕಾಂತ್ ಸುಂಗಲಕರ್ ಹೇಳಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಶ್ರೀಕಾಂತ್ ಸುಂಗಲಕರ್, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 17 ಔಷಧಿಗಳ ಬೆಲೆಯನ್ನು ಮತ್ತಷ್ಟು ಇಳಿಕೆ ಮಾಡಿರುವುದು ಸಾಮಾನ್ಯ ಜನರಿಗೆ ದೊಡ್ಡ ವರದಾನವಾಗಿದೆ. ಇದರಿಂದ ದುಬಾರಿ ಚಿಕಿತ್ಸೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಸಾವಿರಾರು ರೋಗಿಗಳಿಗೆ ಅನುಕೂಲವಾಗಲಿದೆ ಎಂದರು. ಅದೇ ರೀತಿ ಧೂಮಪಾನ, ಮದ್ಯಪಾನ, ಗುಟ್ಕಾ ಸೇರಿದಂತೆ ವ್ಯಸನಕಾರಿ ಉತ್ಪನ್ನಗಳ ದರ ಹೆಚ್ಚಿಸಿರುವುದು ವ್ಯಸನ ಮುಕ್ತ ಭಾರತ ನಿರ್ಮಾಣದತ್ತ ಕೇಂದ್ರ ಸರಕಾರದ ದೃಢ ನಿರ್ಧಾರವನ್ನು ತೋರಿಸುತ್ತದೆ ಎಂದು ಹೇಳಿದರು. ಬಜೆಟ್ನಲ್ಲಿ ಆರೋಗ್ಯ, ಬಡವರ ಕಲ್ಯಾಣ ಹಾಗೂ ಸಾಮಾಜಿಕ ಹೊಣೆಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಈ ಬಜೆಟ್ ದಿಕ್ಕು ತೋರಿಸುವಂತಿದೆ ಎಂದು ಶ್ರೀಕಾಂತ್ ಸುಂಗಲಕರ್ ಹೇಳಿದರು.
ಸರ್ವಸ್ಪರ್ಶಿ ಸರ್ವವ್ಯಾಪಿ ವಿಕಸಿತ ಬಜೆಟ್: ಕುತ್ಯಾರು ನವೀನ್ ಶೆಟ್ಟಿ
ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಎಲ್ಲಾ ಆಯಾಮಗಳ ಅಭಿವೃದ್ಧಿಯ ಕರ್ತವ್ಯ ಕೇಂದ್ರಿತ, ದೂರದರ್ಶಿತ್ವದ ಚಿಂತನೆಯುಳ್ಳ ಸರ್ವ ಸ್ಪರ್ಶಿ ಸರ್ವ ವ್ಯಾಪಿ ವಿಕಸಿತ ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ. ಸಮರ್ಥನೀಯ ಆರ್ಥಿಕ ಪ್ರಗತಿಯೊಂದಿಗೆ ಜನರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದಡಿ ರೂಪಿಸಿರುವ ಜನಸ್ನೇಹಿ ಕೇಂದ್ರ ಬಜೆಟ್ ನಲ್ಲಿ ಜವಳಿ ಉದ್ಯಮ, ಔಷಧ ಉದ್ಯಮ, ಸಣ್ಣ ಉದ್ದಿಮೆದಾರರ ರಫ್ತುಗಳಿಗೆ ಹೆಚ್ಚಿನ ಪ್ರೋತ್ಸಾಹ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು, ಆದಾಯ ತೆರಿಗೆ ಸರಳೀಕೃತ ಪದ್ಧತಿ ಅಳವಡಿಕೆ, ಉದ್ಯೋಗ ಸೃಷ್ಟಿಯ ಜೊತೆಗೆ ಮೂಲ ಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟಾರೆಯಾಗಿ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ’ವಿಕಸಿತ ಭಾರತ ಬಜೆಟ್’ ಇದಾಗಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Bengaluru | ಹತ್ಯೆಯಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ; ಮನೆಗೆಲಸಗಾರನೂ ಆತ್ಮಹತ್ಯೆ
ಬೆಂಗಳೂರು : ಹತ್ಯೆಗೊಳಗಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮನೆ ಕೆಲಸದ ವ್ಯಕ್ತಿಯೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿಲ್ಕ್ ಬೋರ್ಡ್ ಸಮೀಪದ ಕೆಎಎಸ್ ಕಾಲೋನಿಯಲ್ಲಿ ಜ.31ರ ತಡರಾತ್ರಿ ವರದಿಯಾಗಿದೆ. ಸುಮಾರು 65 ವರ್ಷದ ಮಹಿಳೆ ಮನೆಯ ಕೊಠಡಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಅದೇ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ದೇವರಾಜು(50) ಎಂಬಾತ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದೇಶಕ್ಕೆ ತೆರಳಿದ್ದ ಮಹಿಳೆಯ ಪತಿ ಫೆ.1ರ ಮುಂಜಾನೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಬೆಂಗಳೂರು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿ, ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದ ಮೃತಳ ಪತಿ ಮುಂಜಾನೆ ಫೆ.1ರ ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ಮಹಡಿಯಲ್ಲಿ ಇದ್ದ 27 ವರ್ಷದ ಮಗಳು ಬಂದು ಬಾಗಿಲು ತೆರೆದು ತನ್ನ ಕೋಣೆಗೆ ತೆರಳಿದ್ದಳು. ಬಳಿಕ ಪತಿ ಕೆಳ ಮಹಡಿಯಲ್ಲಿದ್ದ ಕೊಠಡಿಗೆ ತೆರಳಿದಾಗ ಪತ್ನಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಕೆಲಸಗಾರ ದೇವರಾಜ್ ಸಹ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಘಟನೆ ನಡೆದ ಸಮಯದಲ್ಲಿ ಮನೆಯ ಮೊದಲ ಮಹಡಿಯಲ್ಲಿ ಮಗಳಿದ್ದರೂ ಆಕೆಗೆ ಗಮನಕ್ಕೆ ಬಾರದೇ ಕೃತ್ಯ ನಡೆದಿದೆ. ಹತ್ಯೆ ಹೇಗೆ ನಡೆದಿದೆ? ಆತ್ಮಹತ್ಯೆಗೆ ಮಾಡಿಕೊಂಡ ಕೆಲಸಗಾರನೇ ಕೃತ್ಯ ಎಸಗಿದ್ದಾನಾ? ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ 1 ದಿನದ KSTDC ಬಸ್ ಟೂರ್ ಪ್ಯಾಕೇಜ್ ಆರಂಭ; ದರ ಎಷ್ಟು? ಬುಕ್ಕಿಂಗ್ ಹೇಗೆ?
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಒಂದು ದಿನದ ಪ್ರವಾಸ ಪ್ಯಾಕೇಜ್ ಆರಂಭಿಸಿದೆ. ಗುರುವಾರದಿಂದ ಭಾನುವಾರದವರೆಗೆ ಈ ಪ್ಯಾಕೇಜ್ ಲಭ್ಯವಿರುತ್ತದೆ. ಐತಿಹಾಸಿಕ ಕೋಟೆ, ಚಂದ್ರವಳ್ಳಿ, ಎಸ್.ನಿಜಲಿಂಗಪ್ಪ ಸ್ಮಾರಕಕ್ಕೆ ಭೇಟಿ ನೀಡಲಾಗುತ್ತದೆ. ಪ್ರತಿ ಸೀಟಿಗೆ 1073 ರೂ. ದರ ನಿಗದಿಪಡಿಸಲಾಗಿದೆ. ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು.
ಯುವಜನರು, ಮಹಿಳೆಯರ ಅಭಿವೃದ್ಧಿ ಪರ ಬಜೆಟ್: ಶಿವ್ ಅಷ್ಠಗಿ
ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಯುವ, ಮಹಿಳಾ ಅಭಿವೃದ್ಧಿ ಪರವಾಗಿದೆ ಎಂದು ಬಿಜೆಪಿ ಯುವ ಮುಖಂಡ. ಶಿವ ಅಷ್ಟಗಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಐತಿಹಾಸಿಕ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್' ಉಪಕ್ರಮವನ್ನು ಘೋಷಿಸಿದ್ದಾರೆ. ಈ ಯೋಜನೆಯು ಖಾದಿ, ಕೈಮಗ್ಗ ಮತ್ತು ಕರಕುಶಲ ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಮೂಲಕ ನಮ್ಮ ನೇಕಾರರು ಮತ್ತು ಗ್ರಾಮೀಣ ಕುಶಲಕರ್ಮಿಗಳಿಗೆ ಹೊಸ ಶಕ್ತಿ ನೀಡಲಿದೆ. ಇದರಿಂದ ಗ್ರಾಮೀಣ ಭಾರತದ ಯುವ ಜನತೆ ಮತ್ತು ಮಹಿಳಾ ಯುವ ಉದ್ಯಮಕ್ಕೆ ನವ ಉತ್ತೇಜನ ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹೊಸ ಆಯಾಮ ನೀಡಲಿದೆ ಎಂದು ತಿಳಿಸಿದ್ದಾರೆ.
ಬಜೆಟ್ನಲ್ಲಿ ಎಐಗೆ ಆದ್ಯತೆ, ನಿರುದ್ಯೋಗ ಸಮಸ್ಯೆ ಹೆಚ್ಚಳ ಆತಂಕ: ಪ್ರೊ.ಸುರೇಂದ್ರನಾಥ ಶೆಟ್ಟಿ
ಉಡುಪಿ, ಫೆ.1: ಕಳೆದ ಆರ್ಥಿಕ ವರ್ಷದಲ್ಲಿ ಮಂಡಿಸಿದ ಬಜೆಟ್ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದು ಈ ಬಾರಿಯ ಬಜೆಟ್ನಲ್ಲಿ ಎಲ್ಲಿಯೂ ಉಲ್ಲೇಖಿಸದೇ ಇರುವುದು ವಿಷಾದನೀಯ. ಜನಸಾಮಾನ್ಯರಿಗೆ ಯಾವುದೇ ಬಜೆಟ್ ಮೇಲೆ ವಿಶ್ವಾಸಾರ್ಹತೆ ಮೂಡಿಬರಬೇಕಾದರೆ ಹಿಂದಿನ ಬಜೆಟ್ ಮೇಲಿನ ಪ್ರಗತಿಯ ಕುರಿತಾಗಿ ಸದನಕ್ಕೆ ಮಾಹಿತಿ ನೀಡುವ ಕಾರ್ಯ ನಡೆಯಲೇಬೇಕು ಎಂದು ಉಡುಪಿಯ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ. ಕೃತಕ ಬುದ್ಧಿ ಮತ್ತೆಗೆ ಎಲ್ಲಾ ವಲಯದಲ್ಲಿ ವಿಶೇಷ ಮಹತ್ವ ಕೊಟ್ಟಿರುವುದು ಉತ್ತಮ ನಿರ್ಧಾರ ಆದರೆ ಮಾನವ ಸಂಪತ್ತು ಬಳಕೆಗೆ ಕಡಿವಾಣ ಬೀಳುತ್ತದೆ ಅನ್ನುವ ಅಭಿಪ್ರಾಯ ನಡುವೆ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಾಡಬಹುದು ಅನ್ನಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಸ್ವಾಗತಾರ್ಹ. ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಬೆಂಗಳೂರಿಗೂ ವಿಸ್ತರಣೆ ಮಾಡಿರುವುದು ಶ್ಲಾಘನೀಯ. ಟ್ಯೂರಿಸಂ ಬೆಳವಣಿಗೆಗೆ ಪೂರಕವಾಗಿ ಮೆಡಿಕಲ್ ಟ್ಯುರಿಸಂ ಹೆಸರಿನಲ್ಲಿ ಐದು ಪ್ರದೇಶದಲ್ಲಿ ಮೆಡಿಕಲ್ ಹಬ್ ಸ್ಥಾಪನೆಗೆ ಮುಂದಾಗಿರುವುದು ಉದ್ಯೋಗ ಸೃಷ್ಟಿಕೆ ಸಹಾಯಕವಾಗ ಬಹುದು ಎಂಬುದು ಸರಕಾರದ ನಿರೀಕ್ಷೆಯಾಗಿದೆಂದು ಅವರು ತಿಳಿಸಿದ್ದಾರೆ. ಪಶುವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಹೆಚ್ಚಿನ ಅನುದಾನದ ಭರವಸೆ ಆಶಾದಾಯಕ. ಸಣ್ಣ ಕೈಗಾರಿಕೆ ಮತ್ತು ಖಾದಿ ಗುಡಿಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ಕ್ರಮ ಸ್ವಾಗತಾರ್ಹ. ಕರಾವಳಿಯ ಪ್ರದೇಶದ ಮೀನು ಗಾರರ ಸಹಕಾರಿ ಸಂಸ್ಥೆ ಸ್ಥಾಪನೆ ಬಗ್ಗೆ ಬಜೆಟ್ನಲ್ಲಿ ಒತ್ತು ನೀಡಿರುವುದು ಬಜೆಟ್ನಲ್ಲಿ ಕಾಣುವ ಉತ್ತಮ ಅಂಶ. ಜಿಎಸ್ಟಿ ಸರಳೀಕೃತ ನಿರ್ಧಾರ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಮಾಧಾನಕರ ತರುತ್ತದೆ. ಕ್ಯಾನ್ಸರ್ನಂತಹ ಪ್ರಮುಖ ಖಾಯಿಲೆಗಳ ಔಷಧಿಗಳಿಗೆ ತೆರಿಗೆ ವಿನಾಯಿತಿ ತೋರಿರುವುದು ಬಜೆಟ್ನಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ. 2047 ತನಕ ಭಾರತದಲ್ಲಿ ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡ ಬಹುದು. ಒಟ್ಟಿನಲ್ಲಿ ವಿತ್ತ ಸಚಿವರು ಮಂಡಿಸಿದ ಬಜೆಟ್ ಅಭಿವೃದ್ಧಿ ಜನಪರ ಯೋಗ ಕ್ಷೇಮದ ದೃಷ್ಟಿಯಿಂದ ಹೊಸದೊಂದು ಕನಸು ಮೂಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಡಗಬೆಟ್ಟು ಸೊಸೈಟಿಯಿಂದ ಗ್ರಾಹಕರ ಸಮಾವೇಶ
ಉಡುಪಿ, ಫೆ.1: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಗ್ರಾಹಕರ ಸಮಾವೇಶವನ್ನು ಉಡುಪಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಇಡೀ ದೇಶಕ್ಕೆ ಮಾದರಿಯಾಗುವಂತೆ ಬೆಳೆದುನಿಂತಿದೆ. ಇಲ್ಲಿನ ಹಿರಿಯ ಸಹಕಾರಿಗಳ ಚಿಂತನೆ, ಕಲ್ಪನೆಯಿಂದ ಇಡೀ ದೇಶದ ಸಹಕಾರಿ ಕ್ಷೇತ್ರಕ್ಕೆ ಅನುಕೂಲವಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ, ನೌಕರರು ಹಾಗೂ ಗ್ರಾಹಕರು ಒಂದಾಗಿ ಕೆಲಸ ಮಾಡಿದರೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು. ಮಣಿಪಾಲ ಮಾಹೆ ನೀಡುವ ಹೊಸವರ್ಷದ ಪ್ರಶಸ್ತಿ ಪುರಸ್ಕೃತ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಇಚ್ಛಾಶಕ್ತಿ ಅತೀ ಅಗತ್ಯ. ಜಿಲ್ಲೆಯ ಬ್ಯಾಂಕ್ಗಳನ್ನು ವಿಲೀನ ಮಾಡಿ ಇಲ್ಲವಾಗಿಸಲಾಗಿದೆ. ಆ ಸ್ಥಾನವನ್ನು ಸಹಕಾರಿ ಸಂಸ್ಥೆಗಳು ತುಂಬಬೇಕು. ಗ್ರಾಹಕರಿಗೆ ಕಡಿಮೆ ಬಡ್ಡಿದರ ದಲ್ಲಿ ಸಾಲ ನೀಡುವಂತಹ ಆಗಬೇಕು ಎಂದು ತಿಳಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಜಾರ್ಜ್ ಸಾಮ್ಯುವಲ್, ನಿರ್ದೇಶಕರಾದ ಸಂಜೀವ ಕಾಂಚನ್, ಎಲ್.ಉಮಾನಾಥ, ಪುರುಷೋತ್ತಮ ಪಿ.ಶೆಟ್ಟಿ, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರಿ ಎಸ್.ಭಟ್, ಮನೋಹರ್ ಎಸ್.ಶೆಟ್ಟಿ, ವಿನಯ ಕುಮಾರ್ ಟಿ.ಎ., ಪದ್ಮನಾಭ ನಾಯಕ್, ಸದಾಶಿವ ನಾಕ್ ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ವಂದಿಸಿದರು. ದಯಾನಂದ ಕರ್ಕೇರ ಹಾಗೂ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬಂದಿಯಿಂದ ಸ್ಯಾಕ್ಸೋಫೋನ್ ವಾದನ, ಯಕ್ಷಗಾನ ನಾಟ್ಯ ವೈಭವ, ಸಂಗೀತ ಕಾರ್ಯಕ್ರಮ, ಬೈಲೂರು ನೃತ್ಯ ನೂಪುರ ಡ್ಯಾನ್ಸ್ ಅಕಾಡೆಮಿಯ ನೃತ್ಯ ಕಾರ್ಯಕ್ರಮ, ಬಡಗುತಿಟ್ಟಿನ ಕಲಾವಿದರಿಂದ ರಾಜಾ ರುದ್ರಕೋಪ ಯಕ್ಷಗಾನ ಪ್ರದರ್ಶನ ನಡೆಯಿತು.
ಕಲಬುರಗಿ| ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕೃಷಿ ಪರಿಕರ, ಕಬ್ಬು ಬೆಂಕಿಗಾಹುತಿ
ಕಲಬುರಗಿ: ತಾಲೂಕಿನ ಹೇರೂರ(ಕೆ) ಗ್ರಾಮದ ರೈತ ರೇವಣಸಿದ್ದಪ್ಪ ಸಿದ್ದಣ್ಣ ಕುಂಬಾರ ಅವರಿಗೆ ಸೇರಿದ ಐದು ಎಕರೆ ಕಬ್ಬಿನ ತೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ 10 ಟನ್ ಕಬ್ಬು ಸೇರಿದಂತೆ ಕೃಷಿ ಪರಿಕರಗಳು ಶನಿವಾರ ಮಧ್ಯರಾತ್ರಿ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಒಂದು ಎಕರೆಯಲ್ಲಿನ 10 ಟನ್ ಕಬ್ಬು ನಾಶವಾಗಿದೆ. ಐದು ಎಕರೆಯಲ್ಲಿರುವ ಕೃಷಿ ಡ್ರಿಪ್, ಲ್ಯಾಟ್ರಲ್, ಸ್ಪಿಂಕ್ಲರ್ ಪೈಪ್ ಗಳು ಮತ್ತು ಸೋಲಾರ್ ಬೇಲಿ ಹೊತ್ತಿ ಉರಿದು ಕರಕಲಾದ ಪರಿಣಾಮ ಅಂದಾಜು 6 ಲಕ್ಷ ರೂ.ಗಳ ಕೃಷಿ ಪರಿಕರಗಳು ನಾಶವಾಗಿವೆ ಎಂದು ರೈತ ರೇವಣಸಿದ್ದಪ್ಪ ಕುಂಬಾರ ಅಳಲನ್ನು ತೋಡಿಕೊಂಡರು. ಹೊಲದಲ್ಲಿರುವ ವಿದ್ಯುತ್ ಕಂಬಗಳು, ಜೋತುಬಿದ್ದ ವೈರ್ಗಳು ಸರಿಪಡಿಸುವಂತೆ ಹೆಬ್ಬಾಳ ಕೆಇಬಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ರೈತ ರೇವಣಸಿದ್ದಪ್ಪ ಕುಂಬಾರ ಆರೋಪಿಸಿದ್ದಾರೆ.
ಕಾರ್ಮಿಕ ಸಂಹಿತೆಗಳಿಂದ ಮಹಿಳಾ ಕಾರ್ಮಿಕ ವರ್ಗ ದುರ್ಬಲ: ಎಂ.ಕಾಮೇಶ್ವರಿ
21ನೇ ಉಡುಪಿ ವಿಭಾಗೀಯ ಮಹಿಳಾ ಸಮಾವೇಶ ಉದ್ಘಾಟನೆ
ಬಜೆಟ್ ಹೊಡೆತಕ್ಕೆ ಕರಗಿದ ಚಿನ್ನ, ಕುಸಿದ ಬೆಳ್ಳಿ
ಚಿನ್ನದ ದರದಲ್ಲಿ ಶೇ. 3, ಬೆಳ್ಳಿ ದರದಲ್ಲಿ ಶೇ. 9ರಷ್ಟು ಇಳಿಕೆ!
ಚೋರ್ಲಾ ಘಾಟ್ 400 ಕೋಟಿ ರೂ. ದರೋಡೆ ಪ್ರಕರಣ : ಪ್ರಮುಖ ಆರೋಪಿ ಕಿಶೋರ್ ಸಾಳವೆ ಶರಣು; ಬಂಧಿತರ ಸಂಖ್ಯೆ 8ಕ್ಕೆ ಏರಿಕೆ
ಬೆಳಗಾವಿ : ಜಿಲ್ಲೆಯ ಚೋರ್ಲಾ ಘಾಟ್ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣ ಹಾಗೂ ಈ ಕುರಿತು ಬಹಿರಂಗಪಡಿಸಿದ್ದ ಸಂದೀಪ ಪಾಟೀಲ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳವೆ ಶನಿವಾರ ರಾತ್ರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ರವಿವಾರ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಚೋರ್ಲಾ ಘಾಟ್ನಲ್ಲಿ 400 ಕೋಟಿ ರೂ. ನಗದು ಹೊಂದಿದ್ದ ಎರಡು ಕಂಟೇನರ್ಗಳನ್ನು ದರೋಡೆ ಮಾಡಲಾಗಿದೆ. ಈ ದರೋಡೆಯ ಹಿಂದೆ ಕಿಶೋರ್ ಸಾಳವೆ ಹಾಗೂ ಅವರ ತಂಡವೇ ಇದೆ ಎಂದು ನಾನು ಬಹಿರಂಗಪಡಿಸಿದ್ದಕ್ಕೆ ನನ್ನನ್ನು ಅಪಹರಣ ಮಾಡಲಾಗಿದೆ ಎಂದು ಸಂದೀಪ ಪಾಟೀಲ್ ದೂರು ದಾಖಲಿಸಿದ್ದರು. ಆದರೆ ಈವರೆಗೆ ಹಣದ ದರೋಡೆ ಅಥವಾ ವಾಹನ ದರೋಡೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಪ್ರಕರಣ ದಾಖಲಾಗಿಲ್ಲ. ಅಪಹರಣದಲ್ಲಿ ಬಳಸಲಾಗಿದೆ ಎನ್ನಲಾದ ವಾಹನದ ಚಾಲಕನೂ ಸೇರಿ ಏಳು ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಪ್ರಕರಣದ ಮುಖ್ಯ ಆರೋಪಿ ಕಿಶೋರ್ ಸಾಳವೆ ತಲೆಮರೆಸಿಕೊಂಡಿದ್ದು, ಬಳಿಕ ಮಹಾರಾಷ್ಟ್ರದ ನಾಸಿಕ್ ತಾಲ್ಲೂಕಿನ ಘೋಟಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಸದ್ಯ ಅವರನ್ನು ಅಪಹರಣ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್: ಚಾಂಪಿಯನ್ಗಳಿಗಾಗಿ 10 ಸಾವಿರ ಕೋಟಿ ರೂ.ಘೋಷಣೆ: ಬೊಮ್ಮಾಯಿ
ಬೆಂಗಳೂರು: ಭಾರತ ದೇಶವನ್ನು ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಬಜೆಟ್ ಇದಾಗಿದೆ. ವಿಕಸಿತ ಭಾರತ ಕಟ್ಟುವಂತಹ ಅಭಿವೃದ್ದಿ ಶೀಲವಾಗಿರುವ ಮಾದರಿ ಮುಂಗಡ ಪತ್ರವನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಕೇಂದ್ರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ ಅವರು, ವಿಶ್ವದ ಎಲ್ಲ
ಕೇಂದ್ರ ಬಜೆಟ್ ಕಾರ್ಮಿಕರ, ರೈತರ ನಿರೀಕ್ಷೆ ಹುಸಿಗೊಳಿಸಿದೆ: ರಮೇಶ್ ವೀರಾಪುರ
ಲಿಂಗಸುಗುರು: ಕೇಂದ್ರ ಸರಕಾರದ ಇತ್ತೀಚಿನ ಬಜೆಟ್ ದೇಶದ ಸಾಮಾನ್ಯ ಜನರು, ರೈತರು ಮತ್ತು ಕಾರ್ಮಿಕರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಸಿಪಿಎಂ ತಾಲೂಕು ಸಮಿತಿಯ ಕಾರ್ಯದರ್ಶಿ ರಮೇಶ್ ವೀರಾಪೂರ ತಿಳಿಸಿದ್ದಾರೆ. 2025–26ರ ಅವಧಿಯಲ್ಲಿ ಬೆಳೆ ವಿಮೆ, ಕೃಷಿ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್ ಅಂದಾಜಿಗಿಂತ ಕಡಿಮೆ ವೆಚ್ಚ ಮಾಡಿರುವುದು ಆತಂಕಕಾರಿ ವಿಷಯ. ಎಸ್ಸಿ–ಎಸ್ಟಿ ಸಮುದಾಯಗಳ ಕಲ್ಯಾಣ ಹಾಗೂ ಉತ್ತರ ಪೂರ್ವ ಪ್ರದೇಶಗಳ ಅಭಿವೃದ್ಧಿಗೆ ನೀಡಬೇಕಾದ ಆದ್ಯತೆ ಕೂಡ ಕಡಿಮೆಯಾಗಿದೆ. ಇದು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ. ಇದೇ ವೇಳೆ ಬಜೆಟ್ ಧನಿಕರು ಮತ್ತು ದೊಡ್ಡ ಕಂಪನಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿದ್ದು, ದುಡಿಯುವ ವರ್ಗದ ಜನರಿಗೆ ಭಾರವಾಗುತ್ತಿದೆ. ತೆರಿಗೆ ಆದಾಯ ಸಂಗ್ರಹಣೆಯಲ್ಲಿ ಕುಂಠಿತ ಸ್ಥಿತಿ ಇದ್ದರೂ ಅದರ ಬಗ್ಗೆ ಸ್ಪಷ್ಟ ಉತ್ತರ ನೀಡಲಾಗಿಲ್ಲ. ರಾಜ್ಯಗಳಿಗೆ ನೀಡುವ ಹಣಕಾಸು ವರ್ಗಾವಣೆಗಳಲ್ಲಿ ಕಡಿತ ಮಾಡಿರುವುದು ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಹೊಡೆತ ನೀಡುತ್ತದೆ ಎಂದು ತಿಳಿಸಿದರು. ರೈತರು, ಕಾರ್ಮಿಕರು, ಮಧ್ಯಮ ವರ್ಗ ಹಾಗೂ ಬಡವರ ಬದುಕನ್ನು ಸುಧಾರಿಸುವತ್ತ ಗಮನ ಹರಿಸಬೇಕಿದ್ದ ಈ ಬಜೆಟ್ ನಿರಾಶದಾಯಕವಾಗಿದೆ ಎಂದು ರಮೇಶ್ ವೀರಾಪೂರ ಅಭಿಪ್ರಾಯ ವ್ಯಕ್ತಪಡಿಸಿದರು.
Union Budget 2026: ಚಾಬಹಾರ್ ಬಂದರಿಗೆ ಹಣ ಕೊಡದ ಕೇಂದ್ರ; ಇರಾನ್-ಯುಎಸ್ ಉದ್ವಿಗ್ನತೆ ಕಾರಣ?
ಇರಾನ್ನ ಚಾಬಹಾರ್ ಬಂದರು ಅಭಿವೃದ್ಧಿ ಭಾರತದ ವ್ಯಾಪಾರ ಕಾರ್ಯತಂತ್ರದ ಹಿತದೃಷ್ಟಿಯಿಂದ ಅತಿಮುಖ್ಯವಾದುದು. ಭಾರತ ಈ ಬಂದರು ಅಭಿವೃದ್ಧಿಯಲ್ಲಿ ಪಾಲುದಾರಿಗೆ ಹೊಂದಿದೆ. ಆದರೆ ಈ ಬಾರಿಯ ಇರಾನ್-ಅಮೆರಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪ್ರಸಕ್ತ ಬಜೆಟ್ನಲ್ಲಿ ಚಾಬಹಾರ್ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ಮೀಸಲಿಟ್ಟಿಲ್ಲ. ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕುಕನೂರು: ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಅಗತ್ಯವಾದ ಪ್ರಾಮುಖ್ಯತೆ ನೀಡಲಾಗಿಲ್ಲ. ರಾಜ್ಯದ ಮೇಲಿನ ಮಲತಾಯಿ ಧೋರಣೆ ಈ ಬಾರಿಯೂ ಮುಂದುವರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು. ಪಟ್ಟಣದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಸ್ಪಷ್ಟವಾದ ಅನ್ಯಾಯವಾಗಿದೆ ಎಂದು ಹೇಳಿದರು. ಕೇಂದ್ರ ಬಜೆಟ್ನಲ್ಲಿ ರಾಜ್ಯ ಸರಕಾರಕ್ಕೆ ನೀಡಬೇಕಾಗಿದ್ದ ತೆರಿಗೆ ಪಾಲಿನ ಹಣವನ್ನು ಸರಿಯಾಗಿ ನೀಡಿಲ್ಲ. ಬಜೆಟ್ನಲ್ಲಿ ನೀರಾವರಿ ಯೋಜನೆಗಳಿಗೆ ಕೇಂದ್ರ ಸರಕಾರ ನೀಡಬೇಕಾಗಿದ್ದ ಪಾಲನ್ನೂ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದನ್ನು ರೈತಪರ ಬಜೆಟ್ ಎಂದು ವಿರೋಧ ಪಕ್ಷದವರು ಹೇಳುತ್ತಿರುವುದೇ ಆಶ್ಚರ್ಯಕರ ಎಂದು ಹೆಬ್ಬಾಳ್ಕರ್ ವ್ಯಂಗ್ಯವಾಡಿದರು. ರಾಜ್ಯದ ಬಿಜೆಪಿಯ ಹಿರಿಯ ನಾಯಕರು ಕೇಂದ್ರ ಸಚಿವ ಸಂಪುಟದಲ್ಲಿದ್ದರೂ ಸಹ ಈ ರೀತಿಯ ಅನ್ಯಾಯವಾಗಿರುವುದು ವಿಪರ್ಯಾಸಕರ ಸಂಗತಿ. ಒಟ್ಟಾರೆ ಇದು ರಾಜ್ಯದ ನಿರೀಕ್ಷೆಗಳನ್ನು ಮರೆಸಿದ, ಆಶಾದಾಯಕವಲ್ಲದ ಕೇಂದ್ರ ಬಜೆಟ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಯಲಬುರ್ಗಾ: ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿ 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಿಂದ ಸಂಜೆ ಮನೆಗೆ ಬಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇದನ್ನು ಗಮನಿಸಿದ ಪಾಲಕರು ಮಕ್ಕಳನ್ನು ವಿಚಾರಿಸಿದಾಗ ಮಧ್ಯಾಹ್ನದ ಊಟದಲ್ಲಿ ಹಲ್ಲಿ ಬಿದ್ದಿರುವ ಬಗ್ಗೆ ತಿಳಿಸಿದ್ದಾರೆ. ಘಟನೆ ಬಳಿಕ ಸಮೀಪದ ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡ ವಿದ್ಯಾರ್ಥಿಗಳ ಆರೋಗ್ಯ ಪರಿಶೀಲಿಸಿದೆ. ಘಟನೆಯಲ್ಲಿ 14 ಮಕ್ಕಳಿಗೆ ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದ್ದು ಅವರನ್ನು ಯಲಬುರ್ಗಾದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಷಯವನ್ನು ಪಾಲಕರಿಗೆ ಹೇಳಬಾರದೆಂದು ಶಿಕ್ಷಕರು ಹೆದರಿಸಿದ್ದಾರೆ. ಇದಲ್ಲದೆ ರಾತ್ರಿ 10 ಗಂಟೆಯಾದರೂ ಶಾಲೆಯ ಮುಖ್ಯಶಿಕ್ಷಕರು ಗ್ರಾಮಕ್ಕೆ ಬಂದು ಮಕ್ಕಳ ಬಗ್ಗೆ ವಿಚಾರಿಸಲಿಲ್ಲ. ಕರೆಗಳನ್ನು ಸ್ವೀಕರಿಸಲಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಕ್ಷರ ದಾಸೋಹ ಅಧಿಕಾರಿ ಹಾಗೂ ಬಿಆರ್ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯದಿಂದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಯಲಬುರ್ಗಾ ಬಿಇಒ ಅಶೋಕ್ ಗೌಡರ್, ಊಟದಲ್ಲಿ ಹಲ್ಲಿ ಕಾಣಿಸಿಕೊಂಡ ನಂತರ ಅನ್ನವನ್ನು ಬಿಸಾಕಿ ಬೇರೆ ಅಹಾರವನ್ನು ಸಿದ್ದಪಡಿಸಿ ಮಕ್ಕಳಿಗೆ ನೀಡಲಾಗಿದೆ. ಕೆಲವೊಂದು ಮಕ್ಕಳಿಗೆ ವಾಂತಿ-ಬೇದಿ ಕಾಣಿಸಿಕೊಂಡ ಕೂಡಲೆ ಎಲ್ಲಾ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ಮಾಡಿಸಿದ್ದೇವೆ. ಈಗ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಮತ್ತು ಅಡುಗೆ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ಕುರುಬ ಸಮಾಜ ಪರಿಶಿಷ್ಟ ಪಂಗಡ (ST) ಸೇರಿಸಲು ರಾಜ್ಯದಿಂದ ಶಿಫಾರಸು: ಸಿಎಂ ಸಿದ್ದರಾಮಯ್ಯ
ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜಾತಿಗಣತಿ ವರದಿ ಸಲ್ಲಿಕೆಯಾಗಿದ್ದು, ಸೂಕ್ತ ಚರ್ಚೆಯ ಬಳಿಕ ಜಾರಿಗೊಳಿಸಲಾಗುವುದು. ಕನಕಗುರುಪೀಠವು ಜಾತ್ಯಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವು ಬೇಡಿಕೆಗಳಿಗೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಮತ್ತಷ್ಟು ಏರಿಕೆಯಾಗುತ್ತಾ ಕೋಳಿ ಮಾಂಸ ದರ? ಕರ್ನಾಟಕದಲ್ಲೂ ಬಂದ್ ಎಚ್ಚರಿಕೆ ನೀಡಿದ ಸಾಕಣೆದಾರರು
ತಮಿಳುನಾಡಿನಲ್ಲಿ ಜನವರಿ ಆರಂಭದಿಂದಲೇ ಅಲ್ಲಿನ ರೈತರು ಕಂಪನಿಗಳು ಕೊಡುತ್ತಿರುವ ಸಾಕಣೆ ದರ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೋಳಿ ಸಾಕಣೆ ಬಂದ್ ಮಾಡಿ ಮುಷ್ಕರ ನಡೆಸಿದ್ದರು. ಹೀಗಾಗಿ ರಾಜ್ಯದಲ್ಲಿ ಕೋಳಿ ಮಾಂಸಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿ, ದರ ಗಗನಕ್ಕೇರಿದೆ. ಇದೀಗ ತಮಿಳುನಾಡಲ್ಲಿ ಸಮಸ್ಯೆ ಬಗೆಹರಿದಿದ್ದು, ಈಗ ರಾಜ್ಯದಲ್ಲೂ ಕೋಳಿ ಸಾಕಣೆದಾರರು ಬಂದ್ ಎಚ್ಚರಿಕೆ ನೀಡಿದ್ದಾರೆ.
West Bengal S I R | ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
ಹೊಸದಿಲ್ಲಿ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸದ್ಯ ಪ್ರಗತಿಯಲ್ಲಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿರುವ ಮಮತಾ ಬ್ಯಾನರ್ಜಿ, ತಮ್ಮ ಪ್ರಕರಣದಲ್ಲಿ ಭಾರತೀಯ ಚುನಾವಣಾ ಆಯೋಗ ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ. ಅವರು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಜನವರಿ 28ರಂದು ಈ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ನಡೆಸಲು ಅಳವಡಿಸಿಕೊಳ್ಳಲಾಗಿರುವ ವಿಧಾನಗಳು ಹಾಗೂ ಧೋರಣೆಯನ್ನು ಆಕ್ಷೇಪಿಸಿ, ಮಮತಾ ಬ್ಯಾನರ್ಜಿ ಅವರು ಶನಿವಾರ ಸಂಜೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ S I R ಅಭಿಯಾನದಿಂದ ಜನರು ಅಪಾರ ಅನನುಕೂಲ ಹಾಗೂ ಸಂಕಟಕ್ಕೊಳಗಾಗಿದ್ದಾರೆ ಎಂದು ಈ ಹಿಂದಿನ ತಮ್ಮ ಪತ್ರದಲ್ಲಿ ಹೇಳಿದ್ದ ಮಾತನ್ನು ಪುನರುಚ್ಚರಿಸಿದ್ದಾರೆ. ಹೀಗಾಗಿ, ಈ ಪ್ರಕ್ರಿಯೆಯಲ್ಲಿ ಈವರೆಗೆ ಸುಮಾರು 140 ಸಾವುಗಳು ಸಂಭವಿಸಿವೆ ಎಂದು ಹೇಳಿದ್ದಾರೆ. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಜಾರಿಯಲ್ಲಿರುವ ಕಾಯ್ದೆ ಮತ್ತು ನಿಯಮಗಳನ್ನು ನಿರ್ಲಜ್ಜವಾಗಿ ಉಲ್ಲಂಘಿಸಿ ಹೇರಲಾಗಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, “ಈ ಪ್ರಕ್ರಿಯೆಯು ಸಂಪೂರ್ಣವಾಗಿ ಮಾನವ ಹಕ್ಕುಗಳು ಹಾಗೂ ಮೂಲಭೂತ ಮಾನವೀಯ ಪರಿಗಣನೆಗಳ ಉಪೇಕ್ಷೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಸ್ಐಟಿ ಅಂದ್ರೆ ‘ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಂ’: ರಾಜ್ಯ ಸರಕಾರದ ವಿರುದ್ಧ ವಿಜಯೇಂದ್ರ ಕಿಡಿ
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ಎಸ್ಐಟಿ ಅಂದ್ರೆ, ‘ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ’ ಅಲ್ಲ, ‘ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಂ’. ರಾಯ್ ಆತ್ಮಹತ್ಯೆ ಬೆನ್ನಲ್ಲೇ, ಕುಟುಂಬ ಇನ್ನೂ ಅಂತ್ಯಸಂಸ್ಕಾರ ನೆರವೇರಿಸುವ ಮುನ್ನವೇ ಆತುರಾತುರವಾಗಿ ಎಸ್ಐಟಿ ರಚಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿರುವ ಅವರು, ಕಾಂಗ್ರೆಸ್ ಸರಕಾರ ಒಂದೋ ತಮ್ಮವರನ್ನು ಕಾಪಾಡಿಕೊಳ್ಳಲು, ಇಲ್ಲ ಪ್ರತಿಪಕ್ಷದವರನ್ನು ಬಗ್ಗುಬಡಿಯಲು ಎಸ್ಐಟಿ ರಚಿಸುತ್ತದೆ ಎಂದರು.
ಆಳಂದ: ಮಡಿವಾಳ ಮಾಚಿದೇವರ 926ನೇ ಜಯಂತಿ ಆಚರಣೆ
ಆಳಂದ: ಆಳಂದ ತಾಲೂಕು ಆಡಳಿತ ಸೌಧದಲ್ಲಿ ಶರಣ ವೀರಘಂಟೆ ಮಡಿವಾಳ ಮಾಚಿದೇವರ 926ನೇ ಜಯಂತಿಯನ್ನು ಭಕ್ತಿಭಾವ, ಸಾಮಾಜಿಕ ಜಾಗೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್–2 ತಹಸೀಲ್ದಾರ್ ಬಿ.ಜಿ. ಕುದರಿ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶರಣರ ಜೀವನ ಆದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಾಸಂಗಿಕವಾಗಿವೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಮಡಿವಾಳ ಸಮಾಜದ ಮುಖಂಡ ಶಾಂತಕುಮಾರ ಪಿ. ಮಡಿವಾಳ, 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದ ಚಳುವಳಿಯ ಭಾಗವಾಗಿ ಕಾಯಕ–ದಾಸೋಹದ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆ, ಶ್ರಮದ ಗೌರವ ಹಾಗೂ ಮಾನವೀಯತೆಯ ಸಂದೇಶ ಸಾರಿದ ಶರಣ ಮಡಿವಾಳ ಮಾಚಿದೇವರು ಜಾತ್ಯಾತೀತ ಸಮಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಮಡಿವಾಳ ಸಮಾಜದ ಅಧ್ಯಕ್ಷ ಬಸವರಾಜ ಕೊರಳಿ, ರುಕ್ಕಪ್ಪ ಮಡಿವಾಳ, ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಶರಣು ಕುಲಕರ್ಣಿ, ಹಿರಿಯ ನಾಗೇಂದ್ರಪ್ಪ ರೆಡ್ಡಿ, ಮಹಾನಿಂಗಪ್ಪ ಕೌಂಟೆ, ಕಾಶಿನಾಥ ಎನ್. ಮಡಿವಾಳ, ಹಿರಿಯ ಪರಮೇಶ್ವರ ಮಡಿವಾಳ ಸೇರಿದಂತೆ ಸಮಾಜದ ದತ್ತು, ಶ್ರೀಶೈಲ, ಶಿವಶಂಕರ, ರಾಜು ಡಿ. ಪರಿಟ್, ಶಾಂತಪ್ಪ, ಶಿವಪ್ಪ ಆರ್., ಹಣಮಂತ ನಿಜಲಿಂಗಪ್ಪ ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ನಲ್ಲಿ ರೈತರ ನಿರೀಕ್ಷೆಗಳಿಗೆ ನಿರಾಸೆ: ಮಹಾಂತೇಶ್ ಜಮಾದಾರ್
ಅಫಜಲಪೂರ: ಕೇಂದ್ರ ಸರಕಾರ ಮಂಡಿಸಿದ ಬಜೆಟ್ನಲ್ಲಿ ರೈತ ವಿರೋಧಿ ಧೋರಣೆ ಸ್ಪಷ್ಟವಾಗಿ ಕಾಣಿಸಿದೆ, ರೈತರ ಎಲ್ಲ ನಿರೀಕ್ಷೆಗಳಿಗೆ ನಿರಾಶೆಯಾಗಿದೆ ಎಂದು ರೈತ ಸಂಘದ ತಾಲೂಕ ಅಧ್ಯಕ್ಷ ಮಹಾಂತೇಶ ಜಮಾದಾರ ಹೇಳಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಾದ ತೊಗರಿ, ಕಬ್ಬು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳಿಗೆ ರೈತರು ಬಹುದಿನಗಳಿಂದ ಆಗ್ರಹಿಸುತ್ತಿದ್ದ ಕನಿಷ್ಠ ಬೆಂಬಲ ಬೆಲೆ (MSP)ಗೆ ಕಾನೂನು ಬದ್ಧತೆ ನೀಡುವ ಕುರಿತು ಯಾವುದೇ ಘೋಷಣೆ ಇಲ್ಲ. ಇದರಿಂದ ರೈತರ ನಿರೀಕ್ಷೆಗಳು ಸಂಪೂರ್ಣವಾಗಿ ಭಂಗಗೊಂಡಿವೆ ಎಂದು ಹೇಳಿದರು. ಬಜೆಟ್ನಲ್ಲಿ ತೆಂಗಿನ ಬೆಳೆಗೆ ಉತ್ತೇಜನ ಘೋಷಿಸಿರುವುದಾದರೂ, ದಕ್ಷಿಣ ಭಾರತದ ಬಹುಮುಖ್ಯ ಆರ್ಥಿಕ ಬೆಳೆಗಳಾದ ಮಾವು ಸೇರಿದಂತೆ ಇತರ ತೋಟಗಾರಿಕೆ ಬೆಳೆಗಳಿಗೆ ಯಾವುದೇ ಆದ್ಯತೆ ನೀಡಿಲ್ಲ. ಇದು ತೋಟಗಾರಿಕಾ ಕ್ಷೇತ್ರದ ಮೇಲಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇನ್ನೂ ರೈತರಿಗೆ ನೆರವಾಗಬೇಕಾದ ಶೂನ್ಯ ಬಡ್ಡಿದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸುವ ಕುರಿತು ಸಹ ಯಾವುದೇ ಘೋಷಣೆ ಮಾಡಿಲ್ಲ ಎಂದು ದೂರಿದರು.
Union Budget: ರಸಗೊಬ್ಬರ ಮೇಲಿನ ಸಬ್ಸಿಡಿ ಕಡಿತ, ಶೇಕಡಾ 4.47ರಷ್ಟು ವೆಚ್ಚ ಇಳಿಕೆ
ಕೇಂದ್ರ ಸರ್ಕಾರ ಇಂದು ಬಜೆಟ್ ಮಂಡನೆ ಮಾಡಿದ್ದು, 2026-27ನೇ ಸಾಲಿನ ಬಜೆಟ್ ಮಂಡನೆ ಆಗಿದೆ. ಸತತ 9ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಅವರೇ ಬಜೆಟ್ ಮಂಡನೆ ಮಾಡಿದ್ದಾರೆ ಎಂಬುದು ವಿಶೇಷ. ಹೀಗಿದ್ದಾಗ ಹಲವು ವಿಚಾರಗಳಲ್ಲಿ ದೊಡ್ಡ ದೊಡ್ಡ ಬದಲಾವಣೆ ತಂದಿದೆ ಕೇಂದ್ರ ಸರ್ಕಾರ, ಪ್ರಮುಖವಾಗಿ ರಸಗೊಬ್ಬರ ಮೇಲಿನ ಸಬ್ಸಿಡಿ ಕಡಿತಕ್ಕೆ ಕೂಡ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹಾಗಾದರೆ ಯಾವೆಲ್ಲಾ
ಕರ್ನಾಟಕಕ್ಕೆ ಏಮ್ಸ್ ಇಲ್ಲ, ಹೈ ಸ್ಪೀಡ್ ರೈಲಿನಿಂದ ಲಾಭವಿಲ್ಲ: ಸಂಸದ ತೇಜಸ್ವಿ ಸೂರ್ಯ ಟ್ವೀಟ್ಗೆ ಕನ್ನಡಿಗರು ಗರಂ
ಕರ್ನಾಟಕಕ್ಕೆ ಈ ಬಾರಿಯೂ ಈ ಬಾರಿಯೂ ಏಮ್ಸ್ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕದ ರಾಯಚೂರಿನಲ್ಲಿ ಏಮ್ಸ್ ನಿರ್ಮಾಣ ಮಾಡಬೇಕು. ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಏಮ್ಸ್ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ರಾಯಚೂರು ಅತ್ಯಂತ ಹಿಂದುಳಿದಿದೆ. ಈ ಭಾಗದಲ್ಲಿ ಏಮ್ಸ್
ಕೇಂದ್ರ ಬಜೆಟ್ 2026 | ರಾಜ್ಯ ಕಾಂಗ್ರೆಸ್, ಬಿಜೆಪಿ ನಾಯಕರು ಹೇಳಿದ್ದೇನು?
ಬೆಂಗಳೂರು : ಕೇಂದ್ರ ಸರಕಾರದ ಬಜೆಟ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದು, ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಬಜೆಟ್ ಕುರಿತು ರಾಜ್ಯ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಜನಹಿತದ ಬಜೆಟ್ ಎಂದು ಶ್ಲಾಘಿಸಿದ್ದಾರೆ. ಕರ್ನಾಟಕ ಪಾಲಿಗೆ ನಿರಾಸೆ: ‘ಕರ್ನಾಟಕಕ್ಕೆ ಪದೆ ಪದೇ ಅನ್ಯಾಯ ಆಗುತ್ತಿದೆ. ಈ ಬಜೆಟ್ನಲ್ಲೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ನಿರ್ಲಕ್ಷಿಸಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಬರಬೇಕಿದ್ದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದ ಜನತೆ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅತಿಹೆಚ್ಚು ಮಂದಿ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ, ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ, ವಿ. ಸೋಮಣ್ಣ, ಪ್ರಹ್ಲಾದ್ ಜೋಶಿಯವರಂತಹ ನಾಯಕರು ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ’ -ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಳೆಯ ಬಾಟಲಿಯಲ್ಲಿ ಹೊಸ ದ್ರಾಕ್ಷಾರಸ: ‘ರವಿವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಸಂಪೂರ್ಣ ನಿರಾಶಾದಾಯಕ. ರಾಜ್ಯಕ್ಕಂತೂ ಹೇಳಿಕೊಳ್ಳುವಂತಹ ಪ್ರಯೋಜನ ಈ ಬಜೆಟ್ನಲ್ಲಿ ಆಗಿಲ್ಲ. ಶ್ರೀಗಂಧ ಬೆಳೆಗೆ ಉತ್ತೇಜನದ ಮಾತುಗಳನ್ನಾಡಿದೆ. ಆದರೆ ಅದು ಹೇಗೆ ಕಾರ್ಯಗತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಸ್ವಾಭಾವಿಕವಾಗಿ ಬೆಳೆಯುವ ಶ್ರೀಗಂಧದಲ್ಲಿ ತೈಲದ ಅಂಶ ಇರುತ್ತದೆ. ಆದರೆ, ರೈತರು ಜಮೀನಿನಲ್ಲಿ ಗೊಬ್ಬರ ಹಾಕಿ ಬೆಳೆಯುವ ಶ್ರೀಗಂಧಕ್ಕೆ ಹೆಚ್ಚಿನ ಬೆಲೆ ದೊರಕುವುದಿಲ್ಲ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಾರೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ವರ್ಷಕ್ಕೆ 2ಕೋಟಿ ಉದ್ಯೋಗದ ಭರವಸೆ ನೀಡಿದ್ದ ಕೇಂದ್ರ ನುಡಿದಂತೆ ನಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಳೆಯ ಬಾಟಲಿಯಲ್ಲಿ ಹೊಸ ದ್ರಾಕ್ಷಾರಸ ತುಂಬಿದಂತಿದೆ’ -ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ ಜವಳಿ, ಕೃಷಿ ಕ್ಷೇತ್ರದ ನಿರೀಕ್ಷೆಗಳು ಹುಸಿ: ಬಾಂಗ್ಲಾದ ಪರಿಸ್ಥಿತಿಯ ಲಾಭ ಪಡೆದು ದೇಶದ ಜವಳಿ ಉದ್ಯಮ ಪುನಶ್ಚೇತನ ಹಾಗೂ ಕೃಷಿ ಆದಾಯ ದುಪ್ಟಟ್ಟುಗೊಳಿಸಿ ರೈತರ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ ನಮ್ಮ ನಿರೀಕ್ಷೆಗಳು ಹುಸಿಯಾಗಿವೆ. ಜವಳಿ ಉದ್ಯಮ ಪುನಶ್ಚೇತನ, ಬಂಡವಾಳ ಹೂಡಲು ಉದ್ಯಮಿಗಳ ಆಕರ್ಷಣೆ ಹಾಗೂ ಸಿದ್ದ ಉಡುಪು ರಫ್ತು ಬಗ್ಗೆ ಎಷ್ಟರ ಮಟ್ಟಿಗೆ ಆದ್ಯತೆ ನೀಡಬಹುದು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ. ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಸಮಸ್ಯೆ ಇದೆ. ಈ ಬಗ್ಗೆ ರಾಜ್ಯದವರೇ ಆಗಿರುವ ಸಚಿವ ಜೋಶಿಯವರು ಕೇಂದ್ರದ ಮೇಲೆ ಒತ್ತಡ ತರಬೇಕು’ -ಶಿವಾನಂದ ಪಾಟೀಲ್ ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ನಿರುದ್ಯೋಗ, ಕೃಷಿ, ಶಿಕ್ಷಣ, ನೀರಾವರಿ ಕ್ಷೇತ್ರಕ್ಕೆ ಮಹತ್ವ ನೀಡಿಲ್ಲ : ‘ಕೇಂದ್ರದ ಬಜೆಟ್ನಲ್ಲಿ ದೇಶದ ಮುಂದಿನ ಭವಿಷ್ಯದ ಬಗ್ಗೆ ಯೋಜನೆಗಳಿಲ್ಲ, ಯಾವುದೇ ಸ್ಪಷ್ಟ ಯೋಜನೆಗಳನ್ನು ದೇಶಕ್ಕೆ ನೀಡಿಲ್ಲ. ನಿರುದ್ಯೋಗ, ಕೃಷಿ, ಶಿಕ್ಷಣ, ನೀರಾವರಿ ಕ್ಷೇತ್ರಕ್ಕೆ ಮಹತ್ವ ನೀಡಿಲ್ಲ. ಮೂರು ಏಮ್ಸ್ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿದ್ದು, ಮೂರು ಉತ್ತರ ಭಾರತದಲ್ಲಿ ಸ್ಥಾಪನೆ ಆಗುತ್ತಿದೆ. ಕರ್ನಾಟಕದ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿರುವುದಿಲ್ಲ. ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡಿಲ್ಲ, ಅನ್ಯಾಯ ಮಾಡಿದ್ದಾರೆ. ಹೈಸ್ಪೀಡ್ ರೈಲ್ವೆ ಕಾರಿಡಾರ್ಅನ್ನು ಬೆಂಗಳೂರು- ಮುಂಬೈಗೆ ಮಾಡಬೇಕಾಗಿತ್ತು’ -ಬಸವರಾಜ ರಾಯರೆಡ್ಡಿ ಸಿಎಂ ಆರ್ಥಿಕ ಸಲಹೆಗಾರ ರಾಜ್ಯಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ : ಕೇಂದ್ರದ ಬಜೆಟ್ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೂ ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ. ಇದರ ಬದಲು ಬೆಂಗಳೂರು-ಪುಣೆ ನಡುವೆ ಇಂತಹ ಕಾರಿಡಾರ್ ಬರಬೇಕು. ಇದಕ್ಕಾಗಿ ರಾಜ್ಯದ ಮತ್ತು ಮಹಾರಾಷ್ಟ್ರದ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ ಎಲ್ಲರನ್ನು ಮುಟ್ಟುವಂತಹ ಬಜೆಟ್: ‘ಭಾರತವನ್ನು ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡಲು ವಿಕಸಿತ ಭಾರತ ಕಟ್ಟುವಂತ ಅಭಿವೃದ್ದಿ ಶೀಲ ಮಾದರಿ ಬಜೆಟ್ನ್ನು ಮಂಡಿಸಲಾಗಿದೆ. ಎಲ್ಲ ರಾಷ್ಟ್ರಗಳು ಜಾಗತಿಕ ಆರ್ಥಿಕ ಸಂಕಷ್ಟದಲ್ಲಿರುವಾಗ ಭಾರತ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವಂತಹ ಅಭಿವೃದ್ಧಿ ಪರವಾದ ಬಜೆಟನ್ನು ಮಂಡಿಸಿದ್ದು, ನಾಗರಿಕರ ಸಾಮಥ್ರ್ಯವನ್ನು ದೇಶದ ಆರ್ಥಿಕ ಚಟುವಟಿಕೆಯಲ್ಲಿ ಅಳವಡಿಸಲು ಯೋಜನೆಗಳನ್ನು ಹಲವಾರು ನೀತಿಗಳನ್ನು ಈ ಬಜೆಟ್ನಲ್ಲಿ ಘೋಷಿಸಲಾಗಿದೆ. ಎಲ್ಲರ ವಿಕಾಸ ತತ್ವದ ಎಲ್ಲರನ್ನು ಒಳಗೊಂಡಿರುವ ಬಜೆಟ್ ಇದಾಗಿದೆ’ -ಬಸವರಾಜ ಬೊಮ್ಮಾಯಿ, ಸಂಸದ ದೇಶದ ಸಮಗ್ರ ಬೆಳವಣಿಗೆಗೆ ಪೂರಕ ಬಜೆಟ್: ಕೇಂದ್ರ ಬಜೆಟ್ ಕರ್ನಾಟಕವೂ ಸೇರಿದಂತೆ ದೇಶದ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಐಟಿ ನವೀನತೆ, ಪ್ರವಾಸೋದ್ಯಮ ವಿಸ್ತರಣೆ, ಒಳನಾಡು ಜಲ ಸಂಪರ್ಕ, ಹೈಸ್ಪೀಡ್ ರೈಲು, ಎಂಎಸ್ಎಂಇಗಳು ಹಾಗೂ ಸೇವಾ ಕ್ಷೇತ್ರಗಳಿಗೆ ಒತ್ತು ನೀಡುವ ಮೂಲಕ, ಭವಿಷ್ಯಕ್ಕೆ ಸಿದ್ಧವಾದ ಕರ್ನಾಟಕದ ನಿರ್ಮಾಣಕ್ಕೆ ಈ ಬಜೆಟ್ ದೃಢವಾದ ನೆಲೆಯನ್ನು ಹಾಕಿದೆ. ಅರ್ಥ ವ್ಯವಸ್ಥೆಯ ಸೂಕ್ಷ್ಮ ಸಂಗತಿಗಳಿಗೂ ಆದ್ಯತೆ ನೀಡುವ ಮೂಲಕ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ, ಎಂಎಸ್ ಎಂಇ, ಮೂಲಸೌಕರ್ಯ, ಆರ್ಥಿಕ ಕಾರಿಡಾರ್ಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ. ಪರಿಸರ ಸಮತೋಲನಕ್ಕಾಗಿ ವಿಶೇಷ ಆದ್ಯತೆ ನೀಡಿರುವುದು ಈ ಬಜೆಟ್ ಇನ್ನೊಂದು ವಿಶೇಷ. -ವಿ.ಸುನಿಲ್ ಕುಮಾರ್ ಬಿಜೆಪಿ ಶಾಸಕ ಜನಪರ, ಅಭಿವೃದ್ಧಿ ಪರ: ‘ಕೇಂದ್ರದ ಬಜೆಟ್ ದೇಶದ ಆರ್ಥಿಕ ಸ್ಥಿರತೆ ಹಾಗೂ ಸಮಗ್ರ ಅಭಿವೃದ್ಧಿಗೆ ದಿಕ್ಕು ನೀಡುವಂತಿದ್ದು. ಸಾಮಾನ್ಯ ಜನ, ರೈತರು, ಯುವಕರು ಮತ್ತು ಮಹಿಳೆಯರ ಆಶಯಗಳನ್ನು ಒಳಗೊಂಡ ಜನಪರ ಬಜೆಟ್ ಆಗಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಮಂಡಿಸಲಾದ ಈ ಬಜೆಟ್ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಬಲ ನೀಡಲಿದೆ. ಕೃಷಿ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಇದು ದೇಶವನ್ನು ವಿಶ್ವದ ಆರ್ಥಿಕ ಶಕ್ತಿಯಾಗಿ ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ’ -ಕೆ.ಗೋಪಾಲಯ್ಯ, ಬಿಜೆಪಿಯ ಶಾಸಕ ಕಾಂಗ್ರೆಸ್ ಟೀಕೆಗೆ ಉತ್ತರ: ‘ಕೇಂದ್ರದ ಬಜೆಟ್ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ.4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ.3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ 63,049ಕೋಟಿ ರೂ.ತೆರಿಗೆ ಪಾಲು ದೊರೆಯಲಿದೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು. ಪ್ರತಿ ರಾಜ್ಯ, ಪ್ರತಿ ಜಿಲ್ಲೆ, ಪ್ರತಿ ತಾಲೂಕು, ಪ್ರತಿ ಪಂಚಾಯಿತಿ, ಪ್ರತಿ ಹಳ್ಳಿ ಮುಂಗಡಪತ್ರದಲ್ಲಿ ಒಳಗೊಂಡಿದೆ. ವಿಶಾಲ, ವಿಸ್ತೃತ, ವಿಕಾಸ, ಇದು ಮೋದಿ ಲೋಕದೃಷ್ಟಿ. ಅದಕ್ಕೆ ತಕ್ಕಂತೆ ಮುಂಗಡಪತ್ರ ಮೂಡಿ ಬಂದಿದೆ’ -ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ ಒಂದು ಉತ್ತಮ ಬಜೆಟ್ : ʼಕೈಗಾರಿಕೆ, ಪ್ರವಾಸೋದ್ಯಮ, ಐಟಿ, ಬಿಟಿ, ವಿಶೇಷವಾಗಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ. ಎಲ್ಲ ಕ್ಷೇತ್ರಗಳಿಗೆ ಅವರು ಆದ್ಯತೆ ನೀಡಿದ್ದಾರೆ. ಯುವ ಶಕ್ತಿಗೂ ಪೂರಕ ಬಜೆಟ್ ಮಂಡಿಸಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ನಾರಿ ಶಕ್ತಿಗೆ ಆದ್ಯತೆ ಕೊಟ್ಟಿದ್ದು, ಎಲ್ಲಕ್ಕಿಂತ ಪ್ರಮುಖವಾಗಿ ಹೊಸ ತೆರಿಗೆಗೆ ಅವಕಾಶ ನೀಡದೇ, ಹೊಸ ತೆರಿಗೆ ಹೇರದೇ ಸರ್ವಸ್ಪರ್ಶಿ, ಸರ್ವವ್ಯಾಪ್ತಿಯಡಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ, ಮುಂದಿನ ದಿನಗಳಲ್ಲಿ ಭಾರತವು ಆರ್ಥಿಕವಾಗಿ ಇನ್ನಷ್ಟು ಸದೃಢವಾಗುವ ನಿಟ್ಟಿನಲ್ಲಿ, ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಒಂದು ಉತ್ತಮ ಬಜೆಟ್ ಅನ್ನು ಮಂಡಿಸಿದ್ದಾರೆʼ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ
ಕಲಬುರಗಿ| ವಲಸೆ ಹಕ್ಕಿಯ ಹಾಡು ಆತ್ಮಕಥೆ ಬಿಡುಗಡೆ
ಕಲಬುರಗಿ: ನಗರದ ಖಾಸಗಿ ಹೋಟೆಲ್ ನಲ್ಲಿ ವಿಶ್ವ ಪ್ರಕಾಶನ ಸಂಸ್ಥೆ ಆಯೋಜಿಸಿದ್ದ ಪ್ರೊ. ಕೃಷ್ಣ ನಾಯಕ ಅವರ ವಲಸೆ ಹಕ್ಕಿಯ ಹಾಡು ಆತ್ಮಕಥೆಯ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಡಿ. ಬಿ. ನಾಯಕ ಅವರು, ಒಂದು ಕಾಲಘಟ್ಟದ ಸಾಮಾಜಿಕ ಬದುಕು, ಜನಜೀವನ, ಆರ್ಥಿಕ ಸ್ಥಿತಿ- ಗತಿ, ಗ್ರಾಮ ಪರಿಸರ, ಕೌಟುಂಬಿಕ ಸಂಬಂಧಗಳು, ಸಾಹಿತ್ಯ , ಶಿಕ್ಷಣ, ಮಾನವೀಯ ಮೌಲ್ಯಗಳು ಇನ್ನೂ ಅನೇಕ ವಸ್ತು ವಿಷಯಗಳು ವಿಭಿನ್ನ ಮತ್ತು ವಿಶಿಷ್ಟವಾಗಿ ಅನಾವರಣಗೊಂಡಿರುವ ಕೃಷ್ಣ ನಾಯಕ ಅವರ ಆತ್ಮಕಥೆ ಇಡೀ ಬಂಜಾರ ಜನಾಂಗದ ಸಂಸ್ಕೃತಿ ಕಥನವಾಗಿದೆ ಎಂದು ಅಭಿಪ್ರಾಯಪಟ್ಟರು. ಈವರೆಗೆ ಐದು ಕಥಾ ಸಂಕಲನ, ಒಂದು ಸಮಗ್ರ ಕಥಾ ಸಂಕಲನ ನೀಡಿದ ಪ್ರೊ. ಕೃಷ್ಣ ನಾಯಕ ಕನ್ನಡ ಕಥಾ ಸಾಹಿತ್ಯ ಕ್ಷೇತ್ರ ಕಡೆಗಣಿಸಲು ಸಾಧ್ಯವಿಲ್ಲದ ಸಮರ್ಥ ಕಥೆಗಾರರಲ್ಲಿ ಒಬ್ಬರು. ವಲಸೆ ಹಕ್ಕಿಯ ಹಾಡು ಆತ್ಮಕಥೆ 2024ನೇ ಸಾಲಿನ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ (ಬೆಂಗಳೂರು) ಪ್ರಶಸ್ತಿ ಪುರಸ್ಕೃತ ಕೃತಿ ಆಗಿದ್ದು, ಅದು ಅತೀ ಕಡಿಮೆ ಅವಧಿಯಲ್ಲಿ ಮರು ಮುದ್ರಣ ಕಂಡು ಹೊರಬಂದಿರುವುದು ಕೃತಿಯ ವಿಶೇಷತೆಗೆ ಕನ್ನಡಿ ಹಿಡಿಯುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸೂರ್ಯಕಾಂತ್ ಸೊನ್ನದ, ಆತ್ಮಕಥನ ಬರೆಯುವುದು ತುಂಬ ಕಷ್ಟದ ಕೆಲಸ. ಅದರಲ್ಲಿ ವ್ಯಕ್ತಿ ತನ್ನ ಬದುಕಿನ ಜೊತೆಗೆ ಸುತ್ತಲಿನ ಪರಿಸರದ ಕುರಿತು ಸತ್ಯಾಸತ್ಯತೆಗಳನ್ನು ಬಿಚ್ಚಿಡಬೇಕಾಗುತ್ತದೆ. ಹಾಗೆಂದೇ ಆತ್ಮಕಥನವು ಸಿಹಿ ಕಹಿ ನೆನಪುಗಳ ಬುತ್ತಿಯಾಗಿರುತ್ತದೆ. ಪ್ರೊ. ಕೃಷ್ಣ ನಾಯಕ ತಮ್ಮ ಆತ್ಮಕಥನದಲ್ಲಿ ವೈಯಕ್ತಿಕ ಬದುಕಿನ ಅನುಭವಗಳನ್ನು ತುಂಬ ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ ಎಂದರು. ಕೃತಿಯ ಲೇಖಕರಾದ ಪ್ರೊ. ಕೃಷ್ಣ ನಾಯಕ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶಕರಾದ ಉಷಾ ನಾಯಕ, ಗೀತಾರಾಣಿ ನಾಯಕ, ಪಲ್ಲವಿ ಚವ್ಹಾಣ, ಡಾ. ಆನಂದ್ ನಾಯಕ್, ಸಂಜೀವ್ ಕುಮಾರ್ ಚವ್ಹಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಂದು ತಿಂಗಳಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ, ಬಳಿಕ ಅಂಗೀಕರಿಸಿ ಜಾರಿ: ಸಿಎಂ ಸಿದ್ದರಾಮಯ್ಯ
ರಾಯಚೂರು :ಜಾತಿಗಣತಿ ವರದಿ ಇನ್ನೊಂದು ತಿಂಗಳ ಅವಧಿಯಲ್ಲಿ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆಯ ನಂತರ ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಲೀನರಾದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದ್ದು, ಗುರುಪೀಠದಲ್ಲಿ ಪೂಜ್ಯಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯಾತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದು ಹೇಳಿದ್ದಾರೆ. ಕುರುಬ ಸಮುದಾಯಕ್ಕೆ ಮೊದಲ ಬಾರಿಗೆ ಕಾಗಿನೆಲೆ ಗುರುಪೀಠ 1992ರಲ್ಲಿ ಸ್ಥಾಪಿತವಾಗಿ, ಶ್ರೀ ತಾರಕಾನಂದ ಸ್ವಾಮೀಜಿಯವರು ಅದರ ಮೊದಲ ಗುರುಗಳಾಗಿದ್ದರು. ಕಲ್ಯಾಣ ಕರ್ನಾಟಕ, ಬೆಂಗಳೂರು , ಮೈಸೂರು ಮುಂಬೈ ಕರ್ನಾಟಕ ವಿಭಾಗಗಳಿದ್ದು, ಈ ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಗುರುಗಳಿದ್ದು, ಈ ವಿಭಾಗಕ್ಕೆ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಗುರುಗಳಾಗಿದ್ದರು. ಗುರುಪೀಠದಲ್ಲಿ ಶಿಕ್ಷಣ, ಆಧ್ಯಾತ್ಮ, ಜಾತ್ಯಾತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದರು. ಕಾಗಿನೆಲೆ ಗುರುಪೀಠ ಸ್ಥಾಪನೆಯ ಉದ್ದೇಶವೇ ಸಮಸಮಾಜ ನಿರ್ಮಾಣವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗ ಹಾಗೂ ಇಡೀ ಸಮಾಜಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದರು. ಕನಕದಾಸರು ‘ಕುಲಕುಲವೆಂದು ಹೊಡೆದಾಡದಿರಿ’ ಎಂದಂತೆ ಬುದ್ಧ ಬಸವಾದಿಶರಣರು ಜಾತಿವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ನಮ್ಮ ಸಮಾಜ ವಿವಿಧ ಜಾತಿ ಧರ್ಮ ವರ್ಗ ಭಾಷೆಗಳಿಂದ ಕೂಡಿದೆ. ಮನುಜರೆಲ್ಲರೂ ಒಂದೇ ಕುಟುಂಬ ಎಂದು ಭಾವಿಸಬೇಕು. ಸಾಮಾಜಿಕ ಚಿಂತಕರಾದ ಲೋಹಿಯಾ ಅವರು ಮುಂದುವರಿದ ಜಾತಿಯವರು ಸಮಾಜವನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಾರೆ ಎಂದಿದ್ದರು. ಸಮಾನ ಅವಕಾಶವಿರುವ ಸಮಸಮಾಜವನ್ನು ನಿರ್ಮಿಸುವುದು ಅವಶ್ಯಕ. ಶಿಕ್ಷಣವಿಲ್ಲದೇ ಪ್ರಗತಿ ಸಾಧ್ಯವಿಲ್ಲ. ಕಾಗಿನೆಲೆ ಗುರುಪೀಠ ಸ್ಥಾಪನೆಯ ಉದ್ದೇಶವೇ ಸಮಸಮಾಜ ನಿರ್ಮಾಣವಾಗಿದೆ. ಯಾವುದೇ ಧರ್ಮವೂ ಪ್ರೀತಿಯನ್ನು ಬೋಧಿಸುತ್ತದೆಯೇ ಹೊರತು ದ್ವೇಷಿಸುವುದನ್ನು ಬೋಧಿಸುವುದಿಲ್ಲ ಎಂದರು. ಕೆಲವರು ಶಿಕ್ಷಣ ದೊರೆತರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದಿಲ್ಲ. ಸ್ವಾಭಿಮಾನಿಗಳಾಗಿ ಬದುಕುವುದು ಮುಖ್ಯ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಯುವ ಪೀಳಿಗೆ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ. 15 ರಷ್ಟಿದ್ದ ಶಿಕ್ಷಣ ಈಗ ಶೇ.76 ಆಗಿದ್ದರೂ, ನಮ್ಮಲ್ಲಿ ಜಾತಿವ್ಯವಸ್ಥೆ ನಶಿಸಿಲ್ಲ. ಜಡತ್ವದಿಂದ ಕೂಡಿದ ಸಮಾಜಕ್ಕೆ ಚಲನೆ ಬರಲು ಆರ್ಥಿಕ , ಸಾಮಾಜಿಕ ಸಮಾನತೆ ಬೇಕು. ಸಮಾಜದ ಮೌಢ್ಯಗಳನ್ನು ಅಳಿಸುವ ಕಾರ್ಯದಲ್ಲಿ ಸ್ವಾಮೀಜಿಯವರು ತೊಡಗಿದ್ದರು ಎಂದರು. ಜನರ ಆರ್ಶೀವಾದದಿಂದ 8 ಬಾರಿ ಗೆದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾಡಿನ ಎಲ್ಲ ಜನರ ಪ್ರೀತಿಯಿಂದಲೇ ರಾಜಕೀಯದಲ್ಲಿಯೂ ಇಂದಿಗೂ ಬದುಕಿದ್ದೇನೆ. ಈ ಸಮಾಜದ ಪ್ರೀತಿಗೆ ಬೆಲೆಕಟ್ಟಲಾಗದು. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದೇ ನನ್ನ ಕೆಲಸ ಎಂದು ತಿಳಿಸಿದರು. ಇಡೀ ರಾಜ್ಯಕ್ಕೆ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ವಸತಿ ನಿಲಯ, ಯಾತ್ರಿ ನಿವಾಸ ಸೇರಿದಂತೆ ಹಲವು ಬೇಡಿಕೆಗಳಿಗೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಎಲ್ಲ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಬೆಂಗಳೂರಿಗೆ ಸುಮಾರು 50 ಎಕರೆ ಪ್ರದೇಶವನ್ನು ನೀಡಲು ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕುರುಬ ಸಮುದಾಯಕ್ಕೆ ಎಸ್ ಟಿ ಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಳ್ಳಲಿದ್ದು, ರಾಜ್ಯ ಸರಕಾರ ಈಗಾಗಲೇ ತನ್ನ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸಿದೆ. ಜಾತಿಗಣತಿ ವರದಿ ಇನ್ನೊಂದು ತಿಂಗಳ ಅವಧಿಯಲ್ಲಿ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆಯ ನಂತರ ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದರು.
ರವಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026–27ರ ಕೇಂದ್ರ ಬಜೆಟ್ ಮೇಲೆ ಕರ್ನಾಟಕದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಮೂಲಸೌಕರ್ಯ, ನಗರಾಭಿವೃದ್ಧಿಗೆ ಒತ್ತು, ರಾಜ್ಯದ ರೈತರಿಗಾಗಿ ವಿಶೇಷ ಯೋಜನೆಗಳು ಹೀಗೆ ನಿರೀಕ್ಷೆಗಳ ಪಟ್ಟಿ ಉದ್ದವಾಗಿತ್ತು. ಆದರೆ ಈ ಬಜೆಟ್ ನಲ್ಲಿ ಘೋಷಿಸಿದ ಒಂದಿಷ್ಟು ಯೋಜನೆಗಳಿಂದ ಕರ್ನಾಟಕಕ್ಕೆ ಪ್ರಯೋಜನವಾಗಬಹುದು ಎಂಬುದನ್ನು ಬಿಟ್ಟರೆ, ಜನರ ನಿರೀಕ್ಷೆಗಳೇನೂ ಈಡೇರಿಲ್ಲ. ►ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು? ►ಹೈ-ಸ್ಪೀಡ್ ರೈಲು ಕಾರಿಡಾರ್ ಗಳು ಕೇಂದ್ರ ಬಜೆಟ್ 7 ಹೈ-ಸ್ಪೀಡ್ ರೈಲು ಕಾರಿಡಾರ್ ಗಳನ್ನು ‘ಬೆಳವಣಿಗೆಯ ಕನೆಕ್ಟರ್’ಗಳಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ. ಇದರಲ್ಲಿ ಕರ್ನಾಟಕಕ್ಕೆ ನೇರವಾಗಿ ಪ್ರಯೋಜನವಾಗುವ ಎರಡು ಪ್ರಮುಖ ಮಾರ್ಗಗಳೆಂದರೆ ಹೈದರಾಬಾದ್–ಬೆಂಗಳೂರು ಮತ್ತು ಚೆನ್ನೈ–ಬೆಂಗಳೂರು. ►ಆಮೆ ವೀಕ್ಷಣಾ ಪ್ರವಾಸೋದ್ಯಮ ಭಾರತವು ವಿಶ್ವದರ್ಜೆಯ ಚಾರಣ ಮತ್ತು ಹೈಕಿಂಗ್ ಅನುಭವವನ್ನು ನೀಡುವ ಸಾಮರ್ಥ್ಯ ಹಾಗೂ ಅವಕಾಶವನ್ನು ಹೊಂದಿದೆ. ಪರಿಸರ ವಿಜ್ಞಾನಕ್ಕೆ ಸುಸ್ಥಿರವಾಗಿರುವ (i) ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು–ಕಾಶ್ಮೀರದಲ್ಲಿ ಪರ್ವತ ಹಾದಿಗಳು, ಪೂರ್ವ ಘಟ್ಟಗಳಲ್ಲಿ ಅರಕು ಕಣಿವೆ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಪೊಧಿಗೈ ಮಲೈ; (ii) ಒಡಿಶಾ, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಆಮೆ ಹಾದಿಗಳು; ಮತ್ತು (iii) ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಪುಲಿಕಾಟ್ ಸರೋವರದ ಉದ್ದಕ್ಕೂ ಪಕ್ಷಿ ವೀಕ್ಷಣಾ ಹಾದಿಗಳನ್ನು ಅಭಿವೃದ್ಧಿಪಡಿಸುವುದಾಗಿ ಕೇಂದ್ರ ಬಜೆಟ್ ನಲ್ಲಿ ಹೇಳಲಾಗಿದೆ. ಈ ಮೂಲಕ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿರುವ ಆಮೆಗಳ ಸಂತಾನೋತ್ಪತ್ತಿ ತಾಣಗಳಲ್ಲಿ ಆಮೆ ವೀಕ್ಷಣಾ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ►ತೆಂಗು, ಗೇರು ಬೆಳೆಗೆ ಉತ್ತೇಜನ ಕೃಷಿ ಉತ್ಪನ್ನಗಳನ್ನು ವೈವಿಧ್ಯಗೊಳಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು, ರೈತರ ಆದಾಯವನ್ನು ವೃದ್ಧಿಸಲು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕರಾವಳಿ ಪ್ರದೇಶಗಳಲ್ಲಿ ತೆಂಗಿನಕಾಯಿ, ಶ್ರೀಗಂಧ, ಕೋಕೋ ಮತ್ತು ಗೋಡಂಬಿಯಂತಹ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಬೆಂಬಲ ಸಿಗಲಿದೆ. ಭಾರತವು ವಿಶ್ವದ ಅತಿದೊಡ್ಡ ತೆಂಗು ಉತ್ಪಾದಕ ರಾಷ್ಟ್ರವಾಗಿದೆ. ಸುಮಾರು 10 ಮಿಲಿಯನ್ ರೈತರು ಸೇರಿದಂತೆ 30 ಮಿಲಿಯನ್ ಜನರು ತಮ್ಮ ಜೀವನೋಪಾಯಕ್ಕಾಗಿ ತೆಂಗಿನಕಾಯಿಯನ್ನು ಅವಲಂಬಿಸಿದ್ದಾರೆ. ತೆಂಗಿನ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಪ್ರಮುಖ ತೆಂಗಿನಕಾಯಿ ಬೆಳೆಯುವ ರಾಜ್ಯಗಳಲ್ಲಿ ಹಳೆಯ ಹಾಗೂ ಉತ್ಪಾದಕವಲ್ಲದ ಮರಗಳನ್ನು ಹೊಸ ಸಸಿಗಳು/ಸಸ್ಯಗಳು/ಪ್ರಭೇದಗಳೊಂದಿಗೆ ಬದಲಾಯಿಸಲಾಗುವುದು. ಉತ್ಪಾದನೆಯನ್ನು ಹೆಚ್ಚಿಸಲು ತೆಂಗಿನಕಾಯಿ ಉತ್ತೇಜನ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. 2030ರ ವೇಳೆಗೆ ಭಾರತವನ್ನು ಕಚ್ಚಾ ಗೋಡಂಬಿ ಮತ್ತು ಕೋಕೋ ಉತ್ಪಾದನೆ ಹಾಗೂ ಸಂಸ್ಕರಣೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಭಾರತದ ಗೋಡಂಬಿ ಹಾಗೂ ಕೋಕೋವನ್ನು ಪ್ರೀಮಿಯಂ ಜಾಗತಿಕ ಬ್ರ್ಯಾಂಡ್ ಗಳಾಗಿ ಪರಿವರ್ತಿಸಲು ಯೋಜನೆ ಪ್ರಸ್ತಾಪಿಸಲಾಗಿದೆ. ಭಾರತೀಯ ಶ್ರೀಗಂಧದ ಪರಿಸರ ವ್ಯವಸ್ಥೆಯ ವೈಭವವನ್ನು ಪುನಃಸ್ಥಾಪಿಸಲು ಕೇಂದ್ರೀಕೃತ ಕೃಷಿ ಮತ್ತು ಕೊಯ್ಲಿನ ನಂತರದ ಸಂಸ್ಕರಣೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಿದೆ ಎಂದು ಬಜೆಟ್ ನಲ್ಲಿ ಹೇಳಲಾಗಿದೆ. ಶ್ರೀಗಂಧ ಹೆಚ್ಚಾಗಿ ಬೆಳೆಯುವ ಕರ್ನಾಟಕಕ್ಕೆ ಇದರಿಂದ ಲಾಭವಾಗಲಿದೆ. ಅದೇ ರೀತಿ ತೆಂಗು ಪ್ರಚಾರ ಯೋಜನೆ ಹಾಗೂ ಗೇರು ಬೆಳೆಗೆ ಉತ್ತೇಜನ ಕೂಡ ಕರ್ನಾಟಕದ ರೈತರಿಗೆ ಅನುಕೂಲವಾಗಲಿದೆ. ►ನಗರ ಆರ್ಥಿಕ ಪ್ರದೇಶಗಳು (CER) ಸರ್ಕಾರವು ನಗರ ಆರ್ಥಿಕ ಪ್ರದೇಶಗಳನ್ನು ಅವುಗಳ ನಿರ್ದಿಷ್ಟ ಬೆಳವಣಿಗೆಯ ಆಧಾರದ ಮೇಲೆ ಗುರುತಿಸುವ ಮೂಲಕ ಶ್ರೇಣಿ II ಮತ್ತು ಶ್ರೇಣಿ III ನಗರಗಳ ಮೇಲೆ ಕೇಂದ್ರೀಕರಿಸಲಿದೆ. ಮೂಲಸೌಕರ್ಯಗಳಿಗಾಗಿ ಐದು ವರ್ಷಗಳಲ್ಲಿ ಪ್ರತಿ CERಗೆ 5,000 ಕೋಟಿ ರೂ. ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಈ ಉಪಕ್ರಮವು ಬೆಂಗಳೂರಿನಂತಹ ಮೆಗಾ ನಗರಗಳಿಂದ ಮಂಗಳೂರು, ಹುಬ್ಬಳ್ಳಿ–ಧಾರವಾಡ ಮತ್ತು ಮೈಸೂರಿನಂತಹ ಶ್ರೇಣಿ II ಮತ್ತು ಶ್ರೇಣಿ III ನಗರಗಳ ಸಾಮರ್ಥ್ಯದತ್ತ ಗಮನ ಹರಿಸುತ್ತದೆ. ►ಐಟಿ ವಲಯಕ್ಕೆ ಬೆಂಬಲ ಸಾಫ್ಟ್ವೇರ್ ಅಭಿವೃದ್ಧಿ ಸೇವೆಗಳು, ಐಟಿ ಸೇವೆಗಳು, KPO ಸೇವೆಗಳು ಮತ್ತು ಸಾಫ್ಟ್ವೇರ್ ಅಭಿವೃದ್ಧಿಗೆ ಸಂಬಂಧಿಸಿದ ಗುತ್ತಿಗೆ ಆರ್ & ಡಿ ಸೇವೆಗಳಲ್ಲಿ ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಈ ವ್ಯವಹಾರ ವಿಭಾಗಗಳು ಪರಸ್ಪರ ಸಂಬಂಧ ಹೊಂದಿವೆ. ಈ ಎಲ್ಲಾ ಸೇವೆಗಳನ್ನು ಮಾಹಿತಿ ತಂತ್ರಜ್ಞಾನ ಸೇವೆಗಳ ಒಂದೇ ವರ್ಗದ ಅಡಿಯಲ್ಲಿ ಸಂಯೋಜಿಸಲು ಪ್ರಸ್ತಾಪಿಸಲಾಗಿದೆ. ಕೇಂದ್ರ ಬಜೆಟ್ ನಲ್ಲಿ ಐಟಿ ಸೇವೆಗಳಿಗೆ ‘ಸೇಫ್ ಹಾರ್ಬರ್’ ಮಿತಿಯನ್ನು 300 ಕೋಟಿ ರೂ.ವಿನಿಂದ 2,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಬೆಂಗಳೂರಿನ ಟೆಕ್ ಕಂಪೆನಿಗಳಿಗೆ ಇದರಿಂದ ದೊಡ್ಡ ಲಾಭವಾಗಲಿದೆ. ►ಕರಾವಳಿಗೇನು ಸಿಕ್ಕಿತು? ► ಕರಾವಳಿ ಸರಕು ಸಾಗಣೆ ಉತ್ತೇಜನ ರೈಲು ಮತ್ತು ರಸ್ತೆಯಿಂದ ಕರಾವಳಿ ಸಾಗಣೆ ಹಾಗೂ ಒಳನಾಡಿನ ಜಲಮಾರ್ಗಗಳಿಗೆ ಸರಕು ಸಾಗಣೆಯ ಮಾದರಿ ಬದಲಾವಣೆಯನ್ನು ಉತ್ತೇಜಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. 2047ರ ವೇಳೆಗೆ ಕರಾವಳಿ ಸಾಗಣೆಯ ಪಾಲನ್ನು 6 ಶೇ.ದಿಂದ 12 ಶೇ.ಕ್ಕೆಹೆಚ್ಚಿಸುವುದು ಗುರಿಯಾಗಿದೆ ಎಂದು ಬಜೆಟ್ ನಲ್ಲಿ ಹೇಳಲಾಗಿದೆ. ಅದೇ ವೇಳೆ ಮೀನುಗಾರರು ವಿಶೇಷ ಆರ್ಥಿಕ ವಲಯ (EEZ) ಮತ್ತು ಆಳ ಸಮುದ್ರಗಳಲ್ಲಿ ಸಮುದ್ರ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಹಾಯ ಮಾಡಲು ಹಲವಾರು ಕ್ರಮಗಳನ್ನು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಭಾರತೀಯ ಹಡಗುಗಳು ಹಿಡಿಯುವ ಮೀನುಗಳು ಸುಂಕ ರಹಿತವಾಗಿರುತ್ತವೆ. ವಿದೇಶಿ ಬಂದರುಗಳಲ್ಲಿ ಅಂತಹ ಮೀನುಗಳನ್ನು ಇಳಿಸುವುದನ್ನು ರಫ್ತು ಎಂದು ಪರಿಗಣಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ. ►ಸಮುದ್ರಾಹಾರ ಉದ್ಯಮ ಸಮುದ್ರ ಆಹಾರ ಉತ್ಪನ್ನಗಳ ಸಂಸ್ಕರಣಾ ವಲಯಕ್ಕೆ ನಿರ್ದಿಷ್ಟ ಸರಕುಗಳ ಸುಂಕ ರಹಿತ ಆಮದುಗಳ ಮೌಲ್ಯ ಮಿತಿಯನ್ನು ಹಿಂದಿನ ವರ್ಷದ ರಫ್ತು ವಹಿವಾಟಿನ FOB ಮೌಲ್ಯದ ಪ್ರಸ್ತುತ ಶೇ. 1ರಿಂದ ಶೇ. 3ಕ್ಕೆ ಹೆಚ್ಚಿಸಲಾಗಿದೆ.
ಸಂಪಾದಕೀಯ: ಷೇರುಪೇಟೆಯಲ್ಲಿ ಊಹಾಪೋಹದ ವಹಿವಾಟಿಗೆ ತೆರಿಗೆ ಕಡಿವಾಣ, ಯಥಾಸ್ಥಿತಿ ಕಾಯ್ದುಕೊಂಡ ಸಮತೋಲಿತ ಬಜೆಟ್
ಸಂಪಾದಕೀಯ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಕ್ತಾಯವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಷೇರುಪೇಟೆ ಕುಸಿತದ ಬಗ್ಗೆಯೇ ಹಲವರು ಚರ್ಚಿಸುತ್ತಿದ್ದಾರೆ. ಬಗೆಬಗೆಯಾಗಿ ಟ್ರೋಲ್ ಮಾಡಲಾಗುತ್ತಿದೆ. ಷೇರುಪೇಟೆ ಕುಸಿತ ಬದಿಗಿಟ್ಟು ಬಜೆಟ್ನಲ್ಲಿ ಏನಿದೆ, ಏನಿಲ್ಲ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಹಲವು ಆಶೋತ್ತರಗಳ ನಡುವೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಜಾಣತನ ಅರಿವಿಗೆ ಬರುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಮೂರನೇ
ಫೆಲೆಸ್ತೀನ್ ಜನತೆಗೆ ಭಾರತದ ಬೆಂಬಲ ನಿರಂತರ: ಪ್ರಧಾನಿ ನರೇಂದ್ರ ಮೋದಿ
ಹೊಸದಿಲ್ಲಿ: ಫೆಲೆಸ್ತೀನ್ ಜನರಿಗೆ ಭಾರತದ ನಿರಂತರ ಬೆಂಬಲ ಮುಂದುವರಿಯಲಿದೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡುವತ್ತ ನಡೆಯುತ್ತಿರುವ ಪ್ರಯತ್ನಗಳಿಗೆ ಭಾರತ ಸದಾ ಕೈಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಭಾರತ–ಅರಬ್ ವಿದೇಶಾಂಗ ಸಚಿವರ ಎರಡನೇ ಸಭೆಯ ನಿಮಿತ್ತ ಶನಿವಾರ ಹೊಸದಿಲ್ಲಿಗೆ ಆಗಮಿಸಿದ್ದ ಅರಬ್ ರಾಷ್ಟ್ರಗಳ ವಿದೇಶಾಂಗ ಸಚಿವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಪ್ರಧಾನಿ ಮೋದಿ ವಹಿಸಿರುವ ಪಾತ್ರವನ್ನು ಸಚಿವರು ಶ್ಲಾಘಿಸಿದರು. ಭಾರತ ಮತ್ತು ಅರಬ್ ಪ್ರಪಂಚದ ನಡುವಿನ ಆಳವಾದ ಐತಿಹಾಸಿಕ ಹಾಗೂ ಜನರಿಂದ ಜನರ ಬಾಂಧವ್ಯವನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಈ ಬಾಂಧವ್ಯವೇ ಎರಡೂ ಕಡೆಯ ನಡುವಿನ ಸಂಬಂಧಗಳನ್ನು ವರ್ಷಗಳಿಂದ ಬಲಪಡಿಸುತ್ತಿದೆ ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ಮುಂಬರುವ ವರ್ಷಗಳಲ್ಲಿ ಭಾರತ–ಅರಬ್ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರಧಾನಿ ವಿವರಿಸಿದರು. ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಆರೋಗ್ಯ ಸೇರಿದಂತೆ ವಿವಿಧ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢಗೊಳಿಸುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಗಾಝಾ ಶಾಂತಿ ಯೋಜನೆ ಸೇರಿದಂತೆ, ಈಗ ನಡೆಯುತ್ತಿರುವ ಶಾಂತಿ ಪ್ರಯತ್ನಗಳನ್ನು ಸ್ವಾಗತಿಸಿದ ಪ್ರಧಾನಿ, ಫೆಲೆಸ್ತೀನ್ ಜನತೆಗೆ ಭಾರತದ ಬೆಂಬಲ ನಿರಂತರವಾಗಿರಲಿದೆ ಎಂದು ಸ್ಪಷ್ಟಪಡಿಸಿದರು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯತ್ತ ಅರಬ್ ಲೀಗ್ ವಹಿಸಿರುವ ಪಾತ್ರಕ್ಕೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
Jharkhand | ವಾಮಾಚಾರ ಶಂಕೆ: ದಂಪತಿ ಹಾಗೂ ಪುತ್ರನನ್ನು ಕೊಚ್ಚಿ ಕೊಲೆ
ಮೇದಿನಿನಗರ್ (ಜಾರ್ಖಂಡ್): ವಾಮಾಚಾರದ ಶಂಕೆಯಲ್ಲಿ ದಂಪತಿ ಹಾಗೂ ಅವರ 18 ವರ್ಷದ ಪುತ್ರನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ನ ಪಲಮುನಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ವಿಜಯ್ ಭುಯಾನ್ (45), ಪತ್ನಿ ಕಾಲಿಯಾ ದೇವಿ (40) ಹಾಗೂ ಅವರ ಪುತ್ರ ಛೋಟು ಭುಯಾನ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೇದಿನಿರಾಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದೆ. ಶನಿವಾರ ತಡರಾತ್ರಿ ನಡೆದ ಈ ದಾಳಿಯಲ್ಲಿ ದಂಪತಿಗಳ ಅಪ್ರಾಪ್ತ ಪುತ್ರಿಗೂ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮೃತ ದಂಪತಿಗಳು ಹಾಗೂ ಅವರ ಪುತ್ರನ ಮೃತದೇಹಗಳನ್ನು ಅವರ ನಿವಾಸದಿಂದ ರವಿವಾರ ಬೆಳಗ್ಗೆ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಲೆಸ್ಲಿಗಂಜ್ ನ ಉಪವಿಭಾಗೀಯ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಝಾ, “ಈ ಘಟನೆಯು ವಾಮಾಚಾರದ ಶಂಕೆಯ ಕಾರಣಕ್ಕೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಸಂಶಯಿಸಲಾಗಿದೆ” ಎಂದು ತಿಳಿಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ.
Bagalkote | ಮೂವರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಬಾಗಲಕೋಟೆ : ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ನೇಣು ಹಾಕಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾದಾಮಿ ತಾಲೂಕಿನ ಹಿರೇಮುಚಳಗುಡ್ಡ ಗ್ರಾಮದಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ. ರೂಪಾ ಹನಮಂತ ಗೌಡರ (27) ಎಂಬಾಕೆ ಕೌಟುಂಬಿಕ ಕಲಹದಿಂದ ತನ್ನ ಮೂವರು ಮಕ್ಕಳನ್ನು ನೇಣು ಹಾಕಿ ಹತ್ಯೆಗೈದಿದ್ದಾಳೆ ಎನ್ನಲಾಗಿದೆ. ರೂಪಾ ಗೌಡರ ತಮ್ಮ ಮನೆಯಲ್ಲಿ ಮಕ್ಕಳಾದ ಸಮೃದ್ಧಿ ಹನುಮಂತ ಗೌಡರ(5), ಪ್ರೀತಮ್ ಹನುಮಂತ ಗೌಡರ(4), ಸುಶಿಕತ್ ಹನುಮಂತ ಗೌಡರ(2) ರನ್ನು ಹತ್ಯೆಗೈದಿದ್ದು, ಬಳಿಕ ತಾಯಿಯೂ ವಿಷ ಸೇವಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಕ್ಕಪಕ್ಕದವರು ಗಮನಿಸಿ, ತಾಯಿಯನ್ನು ರಕ್ಷಿಸಿದ್ದಾರೆ. ತೀವ್ರ ಅವಸ್ಥಗೊಂಡಿದ್ದ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
40,000 ಕೋಟಿ ರೂಪಾಯಿ ಬಂಪರ್, ಸೆಮಿಕಂಡಕ್ಟರ್ ವಲಯಕ್ಕೆ ಅಬ್ಬಬ್ಬಾ ಲಾಟರಿ... Union Budget
ಭಾರತ ಈಗಾಗಲೇ ಜಗತ್ತಿನ ಐಟಿ &ಬಿಟಿ ತವರು ಎಂಬ ಕೀರ್ತಿ ಪಡೆದಿದೆ, ಅದರಲ್ಲೂ ಕನ್ನಡ ನಾಡಿನ ರಾಜಧಾನಿ ಬೆಂಗಳೂರು ಐಟಿ &ಬಿಟಿ ವಿಚಾರದಲ್ಲಿ ಇಡೀ ಜಗತ್ತಿಗೇ ಸವಾಲು ಹಾಕುವ ಹಂತಕ್ಕೆ ಬೆಳೆದು ನಿಂತಿದೆ. ಹೀಗಿದ್ದಾಗ ಸೆಮಿಕಂಡಕ್ಟರ್ ವಲಯ ಕೂಡ ಭಾರತದಲ್ಲಿ ಬೃಹತ್ &ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಏಷ್ಯಾದಲ್ಲಿ ಭಾರತವೇ ಸೆಮಿಕಂಡಕ್ಟರ್ ವಲಯದಲ್ಲಿ ಹೊಸ
ಭಾರತದ ಎರಡನೇ - ಮೂರನೇ ಹಂತದ ನಗರಗಳ ಅಭಿವೃದ್ಧಿಗೆ 1000 ಕೋಟಿ ರೂ.: ನಿರ್ಮಲಾ ಸೀತಾರಾಮನ್
ನವದೆಹಲಿ: 2026ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಕೆಲವೊಂದು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. ದೇಶದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಹಾದಿಯನ್ನು ಸೃಷ್ಟಿಸುತ್ತಿದ್ದೇವೆ. ಅಲ್ಲದೇ ಇದನ್ನು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಪ್ರಾಥಮಿಕವಾಗಿ ರಚನಾತ್ಮಕ ಸುಧಾರಣೆಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ
Karnataka Beat Punjab- ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಧೀರೋದ್ಧಾತ್ತ ಪ್ರದರ್ಶನ ನೀಡಿದ ನಾಯಕ ದೇವದತ್ ಪಡಿಕ್ಕಲ್ ಅವರು ಅಜೇಯ ಶತಕ ಹೊಡೆದು ಕರ್ವಾಟಕವನ್ನು ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿಸಿದ್ದಾರೆ. ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಗೆಲ್ಲಲು 32 ಓವರ್ ಗಳಲ್ಲಿ 250 ರನ್ ಗಳ ಕಠಿಣ ಗುರಿ ಪಡೆದಿದ್ದ ಕರ್ವಾಟಕ ತಂಡ ಕೇವಲ 27.5 ಓವರ್ ಗಳಲ್ಲೇ ಗುರಿ ಮುಟ್ಟಿತು. ಮಾಜಿ ನಾಯಕ ಮಾಯಾಂಕ್ ಅಗರ್ವಾಲ್ ಅವರು ವೇಗದ ಶತಕ ಹೊಡೆದು ಮಿಂಚಿದರು.
ಈ ವರ್ಷದ ಕೇಂದ್ರ ಬಜೆಟ್ನಲ್ಲಿ ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ 7.85 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿರಿಸಿದೆ. ಇದು ಕಳೆದ ವರ್ಷಕ್ಕಿಂತ ಗಮನಾರ್ಹ ಹೆಚ್ಚಳವಾಗಿದೆ. ನಮ್ಮ ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು 2.19 ಲಕ್ಷ ಕೋಟಿ ರೂ. ನಿಗದಿಪಡಿಸಲಾಗಿದೆ. ವಿಶೇಷವಾಗಿ ವಾಯುಪಡೆ ಮತ್ತು ನೌಕಾಪಡೆಗೆ ಹೆಚ್ಚಿನ ಅನುದಾನ ದೊರೆತಿದ್ದು, ಇದು 'ಆತ್ಮನಿರ್ಭರ ಭಾರತ'ದ ಕನಸಿಗೆ ಮತ್ತಷ್ಟು ಬಲ ತುಂಬಲಿದೆ.
ನಿರ್ಮಲಾ ಸೀತಾರಾಮನ್ ನೀಡಿದ ಶಾಕ್ಗೆ ಬಿಎಸ್ಇ, ಏಂಜೆಲ್ ಒನ್, ಗ್ರೋ ಷೇರು 9%ವರೆಗೆ ಕುಸಿತ; ಕಾರಣ ಏನು?
ನಿರ್ಮಾಲಾ ಸೀತಾರಾಮನ್ ಬಜೆಟ್ನಲ್ಲಿ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ತೆರಿಗೆಯನ್ನು ಏರಿಕೆ ಮಾಡಿದ್ದಾರೆ. ಫ್ಯೂಚರ್ಸ್ ಆಂಡ್ ಆಪ್ಶನ್ಸ್ ಟ್ರೇಡಿಂಗ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಬಿಎಸ್ಇ, ಏಂಜೆಲ್ ಒನ್ ಹಾಗೂ ಗ್ರೋ ಷೇರುಗಳು ಶೇಕಡಾ 10ರವರೆಗೆ ಕುಸಿತ ಕಂಡಿವೆ. ನಿಫ್ಟಿ ಕ್ಯಾಪಿಟಲ್ ಮಾರ್ಕೆಟ್ಸ್ ಸೂಚ್ಯಂಕ ಶೇಕಡಾ 6ರಷ್ಟು ಇಳಿಕೆ ಕಂಡಿದೆ.
ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳಿಗೆ ಅರ್ಜಿ ಆಹ್ವಾನ
ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ತಾಣಗಳಲ್ಲಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯನ್ನು 22,000 + ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಹೇಳಲಾಗಿದೆ. ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ತಾಣಗಳಲ್ಲಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯನ್ನು 22,000 + ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಹೇಳಲಾಗಿದೆ. ಆರ್ಆರ್ಬಿ ಘೋಷಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ 2026 ಜನವರಿ 31ರಿಂದ ಆರಂಭವಾಗುತ್ತದೆ. ಅಭ್ಯರ್ಥಿಗಳು 20226 ಮಾರ್ಚ್ 02ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 36 ವರ್ಷಗಳು. ಈ ಸಂಬಂಧಿತ ವಿವರಗಳು ಈ ಕೆಳಗಿನಂತಿವೆ. ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://www.rrbapply.gov.in/#/auth/landing ಪ್ರಮುಖ ದಿನಾಂಕಗಳು • ಅಧಿಸೂಚನೆ ದಿನಾಂಕ: 30 ಜನವರಿ 2026 • ಆನ್ಲೈನ್ ಅರ್ಜಿ ಆರಂಭ: 31 ಜನವರಿ 2026 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2 ಮಾರ್ಚ್ 2026 • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 2 ಮಾರ್ಚ್ 2026 • ಪರೀಕ್ಷೆ ದಿನಾಂಕ: ಶೀಘ್ರವೇ ತಿಳಿಸಲಾಗುವುದು • ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು • ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು. • ವಿವರಗಳಿಗೆ ಅಭ್ಯರ್ಥಿಗಳು ಆರ್ಆರ್ಬಿ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ಅರ್ಜಿ ಶುಲ್ಕ ಜನರಲ್/ಒಬಿಸಿ/ಇಡಬ್ಲ್ಯುಎಸ್: 500 ರೂ. (+ ಜಿಎಸ್ಟಿ ಶೇ 18) ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಇಎಕ್ಸ್ಎಸ್: 250 ರೂ. (+ ಜಿಎಸ್ಟಿ ಶೇ 18) ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ಒಟ್ಟು ಹುದ್ದೆಗಳು 22,000 ಕ್ಕೂ ಅಧಿಕ ಹುದ್ದೆಗಳು ಜನರಲ್ – 9235 ಹುದ್ದೆಗಳು ಇಡಬ್ಲ್ಯುಸಿ- 2237 ಹುದ್ದೆಗಳು ಒಬಿಸಿ- 5217 ಹುದ್ದೆಗಳು ಎಸ್ಸಿ- 3231 ಹುದ್ದೆಗಳು ಎಸ್ಟಿ- 1726 ಹುದ್ದೆಗಳು ಹುದ್ದೆಯ ಹೆಸರು ಪಾಯಿಂಟ್ಸ್ಮ್ಯಾನ್-ಬಿ, ಸಹಾಯಕ (ಟ್ರ್ಯಾಕ್ ಮಿಷಿನ್), ಸಹಾಯಕ (ಬ್ರಿಡ್ಜ್), ಟ್ರ್ಯಾಕ್ ಮೈಂಟೇನೆನ್ಸ್ ಜ್ಯೂನಿಯರ್, ಸಹಾಯಕ ಪಿ-ವೇ, ಸಹಾಯಕ (ಸಿ&ಡಬ್ಲ್ಯು). ಸಹಾಯಕ ಟಿಆರ್ಡಿ, ಸಹಾಯಕ (ಎಸ್ &ಟಿ), ಸಹಾಯಕ ಲೋಕೋ ಶೆಡ್ (ಡೀಸೆಲ್), ಸಹಾಯಕ ಲೋಕೋಶೆಡ್ (ಎಲೆಕ್ಟ್ರಿಕಲ್), ಸಹಾಯಕ ಆಪರೇಶನ್ಸ್ (ಎಲೆಕ್ಟ್ರಿಕಲ್), ಸಹಾಯಕ ಟಿಎಲ್ &ಎಸಿ, ಸಹಾಯಕ ಟಿಎಲ್ &ಎಸಿ (ವರ್ಕ್ಶಾಪ್), ಸಹಾಐಕ ಟಿಎಲ್ & ಎಸಿ (ವರ್ಕ್ಶಾಪ್), ಸಹಾಯಕ (ವರ್ಕ್ಶಾಪ್) ಮೆಕಾನಿಕಲ್. ವಿದ್ಯಾರ್ಹತೆ • NCVT/SCVT ಯಿಂದ ಮಾನ್ಯತೆ ಪಡೆದ ಶಾಲೆಯಿಂದ 10 ನೇ ತರಗತಿ (ಪ್ರೌಢಶಾಲೆ) ಪೂರ್ಣಗೊಳಿಸಿದ ಅಥವಾ NCVT ಯಿಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (NAC) ಹೊಂದಿರುವ ಅಭ್ಯರ್ಥಿಗಳು RRB ಗ್ರೂಪ್ D ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆ ಪ್ರಕ್ರಿಯೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ-1) ದೈಹಿಕ ಸಾಮರ್ಥ್ಯ ಪರೀಕ್ಷೆ ದಾಖಲೆ ಪರಿಶೀಲನೆ ವೈದ್ಯಕೀಯ ಪರೀಕ್ಷೆ ಈ ಕೆಳಗಿನ ಲಿಂಕ್ಗಳಲ್ಲಿ ವಿವರಗಳನ್ನು ಪಡೆಯಬಹುದು- https://sarkariresult.com.cm/railway-rrb-group-d-level-1-recruitment-2026-online/
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ.1-ಭಾನುವಾರ) ಲೋಕಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಸುಮಾರು 85 ನಿಮಿಷಗಳ ನಿರ್ಮಲಾ ಸೀತಾರಾಮನ್ ಅವರ ಭಾಷಣ, ವಲಯವಾರು ಅಭಿವೃದ್ಧಿ ಕುರಿತು ಕೇಂದ್ರೀಕೃತವಾಗಿತ್ತು. ಪ್ರತಿಪಕ್ಷ ಕಾಂಗ್ರೆಸ್ ಈ ಬಜೆಟ್ನ್ನು ಖಂಡಿಸಿದ್ದು, ಜನವಿರೋಧಿ ಎಂದು ಟೀಕಿಸಿದೆ. ಈ ಮಧ್ಯೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಬಜೆಟ್ ಕುರಿತು ನಾಳಿನ (ಫೆ.2-ಸೋಮವಾರ) ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಬಜೆಟ್ 2026 | ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಬೆಸೆಯುವ ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ
ಹೊಸದಿಲ್ಲಿ: ಪ್ರಮುಖ ನಗರಗಳು ಹಾಗೂ ಆರ್ಥಿಕ ಕೇಂದ್ರಗಳಲ್ಲಿ ಏಳು ಹೈಸ್ಪೀಡ್ ರೈಲು ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಪ್ರಯಾಣಿಕ ಹಾಗೂ ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡಲು ಈ ಕಾರಿಡಾರ್ ಅನ್ನು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದಿಲ್ಲಿ-ವಾರಣಾಸಿ ಹಾಗೂ ವಾರಣಾಸಿ-ಸಿಲಿಗುರಿ ಪ್ರಸ್ತಾವಿತ ಹೈಸ್ಪೀಡ್ ರೈಲು ಮಾರ್ಗಗಳು. ಈ ಮಾರ್ಗಗಳು ಭಾರತದ ಹಣಕಾಸು ತಾಣ, ತಂತ್ರಜ್ಞಾನ ಕೇಂದ್ರ ಹಾಗೂ ಉತ್ಪಾದನಾ ಕ್ಲಸ್ಟರ್ ಗಳನ್ನು ಬೆಸೆಯಲಿದೆ ಎಂದು ಹೇಳಲಾಗಿದೆ.

20 C