ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಮರನಾಥ್ ಜಾರಕಿಹೊಳಿ
ಕನಕಗಿರಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಅಶ್ವಿನಿ ಅಮರನಾಥ್ ಜಾರಕಿಹೊಳಿ ಅವರು ಶನಿವಾರ ಭೇಟಿ ನೀಡಿ ಶ್ರೀ ಕನಕಾಚಲಪತಿ ಲಕ್ಷ್ಮೀನರಸಿಂಹ ಸ್ವಾಮಿ ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ್ ನಾಯಕ ಅವರು ಕನಕಾಚಲಪತಿ ದೇಗುಲದ ಪಂಚಗೋಪುರಗಳ ವೈಶಿಷ್ಟ್ಯಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ದೇಗುಲದ ಐತಿಹಾಸಿಕ ಹಾಗೂ ಶಿಲ್ಪಕಲಾ ವೈಭವವನ್ನು ಅವರು ವಿವರಿಸಿದರು. ಭೇಟಿಯ ವೇಳೆ ಯುವ ಮುಖಂಡರಾದ ನಂದು ನಾಯಕ, ಸಚಿನ್, ಆನಂದ ಹುಲಿಹೈದಾರ, ಪುನೀತ್ ಬೊಂಡಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಾರತೀಯ ರೈಲ್ವೆಯು ಇತಿಹಾಸ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾಲ್ಡಾ ಟೌನ್ನಿಂದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ್ದಾರೆ. ಈ ರೈಲು ಹೌರಾ ಮತ್ತು ಕಾಮಾಖ್ಯ ನಡುವೆ ಸಂಚರಿಸಲಿದೆ. ಇದು ಪ್ರಯಾಣಿಕರಿಗೆ ವಿಮಾನದಂತಹ ಸೌಕರ್ಯಗಳನ್ನು ಒದಗಿಸಲಿದೆ. ಪ್ರಯಾಣದ ಸಮಯ ಮೂರು ಗಂಟೆಗಳಷ್ಟು ಉಳಿತಾಯವಾಗಲಿದೆ. ಈ ರೈಲು ವಾರದಲ್ಲಿ ಆರು ದಿನಗಳ ಕಾಲ ಸಂಚರಿಸಲಿದೆ.
ತವಾಂಗ್ (ಅರುಣಾಚಲ ಪ್ರದೇಶ): ಇಬ್ಬರು ಕೇರಳ ಪ್ರವಾಸಿಗರು ಸೇಲಾ ಸರೋವರಕ್ಕೆ ಜಾರಿ ಬಿದ್ದು, ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವನ ಮೃತದೇಹವನ್ನು ಪತ್ತೆಯಾಗಿದ್ದು, ಮತ್ತೊಬ್ಬ ಪ್ರವಾಸಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ದಿನು (26) ಹಾಗೂ ಮಹಾದೇವ್ (24) ಎಂದು ಗುರುತಿಸಲಾಗಿದ್ದು, ಈ ಪೈಕಿ ಮಹಾದೇವ್ ಈವರೆಗೆ ಪತ್ತೆಯಾಗಿಲ್ಲ. ಗುವಾಹಟಿಯ ಮೂಲಕ ತವಾಂಗ್ ಗೆ ಆಗಮಿಸಿದ್ದ ಏಳು ಸದಸ್ಯರ ಪ್ರವಾಸಿ ಗುಂಪಿನಲ್ಲಿ ಈ ಇಬ್ಬರೂ ಇದ್ದರು. ಪೊಲೀಸರ ಪ್ರಕಾರ, ಗುರುವಾರ ಮಧ್ಯಾಹ್ನ ಪ್ರವಾಸಿ ಗುಂಪಿನ ಓರ್ವ ಸದಸ್ಯ ಹೆಪ್ಪುಗಟ್ಟಿದ್ದ ಸರೋವರಕ್ಕೆ ಜಾರಿ ಬಿದ್ದಾಗ ನಡೆದಿದೆ ಎನ್ನಲಾಗಿದೆ. ಆತನನ್ನು ರಕ್ಷಿಸುವ ಸಲುವಾಗಿ ದಿನು ಹಾಗೂ ಮಹಾದೇವ್ ಸರೋವರಕ್ಕೆ ಇಳಿದಿದ್ದಾರೆ. ಮೊದಲಿಗೆ ಜಾರಿ ಬಿದ್ದಿದ್ದ ಪ್ರವಾಸಿ ಸರೋವರದಿಂದ ಸುರಕ್ಷಿತವಾಗಿ ಹೊರ ಬರುವಲ್ಲಿ ಯಶಸ್ವಿಯಾಗಿದ್ದರೆ, ಆತನನ್ನು ರಕ್ಷಿಸಲು ಸರೋವರಕ್ಕೆ ಇಳಿದಿದ್ದ ದಿನು ಹಾಗೂ ಮಹಾದೇವ್ ಹೆಪ್ಪುಗಟ್ಟಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಜಿಲ್ಲಾ ಪೊಲೀಸರು, ಕೇಂದ್ರೀಯ ಪಡೆಗಳು ಹಾಗೂ ರಾಜ್ಯ ವಿಪತ್ತು ಸ್ಪಂದನ ಪಡೆಗಳೊಂದಿಗೆ ತವಾಂಗ್ ಜಿಲ್ಲಾಡಳಿತ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪ್ರತಿಕೂಲ ಹವಾಮಾನ ಹಾಗೂ ಕಡಿಮೆ ಗೋಚರತೆ ಪ್ರಮಾಣದ ಹೊರತಾಗಿಯೂ ರಕ್ಷಣಾ ತಂಡಗಳು ಓರ್ವ ಪ್ರವಾಸಿಯ ಮೃತದೇಹವನ್ನು ಪತ್ತೆ ಹಚ್ಚಿದೆ. ಕತ್ತಲು ಹಾಗೂ ವಿಷಮ ಪರಿಸ್ಥಿತಿಯ ಕಾರಣಕ್ಕೆ ಮತ್ತೊಬ್ಬ ಪ್ರವಾಸಿಯ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಶನಿವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮತ್ತೆ ಪ್ರಾರಂಭಗೊಂಡಿದೆ. 13,000 ಅಡಿ ಎತ್ತರದಲ್ಲಿರುವ ಸೆಲಾ ಸರೋವರ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ತೀವ್ರ ಚಳಿ ಹಾಗೂ ದುರ್ಬಲ ಮಂಜುಗಡ್ಡೆಯ ಹೊದಿಕೆಯಿಂದಾಗಿ ಈ ಸರೋವರವು ಚಳಿಗಾಲದಲ್ಲಿ ಗಂಭೀರ ಅಪಾಯವನ್ನೂ ಒಡ್ಡುತ್ತದೆ. STORY | Two Kerala tourists drown after slipping into frozen Sela Lake in Arunachal Pradesh Two tourists from Kerala drowned in the Sela Lake in Arunachal Pradesh's Tawang district on Friday, police said. The body of one of them was recovered, while a search was underway to… pic.twitter.com/8jBhxu8NRH — Press Trust of India (@PTI_News) January 16, 2026
ದುಬೈ: ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು ಮುಖ್ಯ ಪೋಷಕರಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ನ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BCCI)ಯ ವಾರ್ಷಿಕ ಮಹಾಸಭೆ ರವಿವಾರ ದುಬೈಯ ಜುಮೈರಾದ ಕ್ರೌನ್ ಪ್ಲಾಝಾ ಹೋಟೆಲ್ನಲ್ಲಿ ನಡೆಯಿತು. ಸಭೆಯಲ್ಲಿ ಯುಎಇ ಬಿಸಿಸಿಐ ಅಧ್ಯಕ್ಷರಾಗಿ 2026–2028ರ ಅವಧಿಗೆ ಹಿದಾಯತ್ ಅಡ್ಡೂರು ಅವರು ಎರಡನೇ ಬಾರಿ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮುಷ್ತಾಕ್ ಕದ್ರಿ, ಖಜಾಂಚಿಯಾಗಿ ಹಂಝಾ ಎ. ಖಾದರ್, ಸಂಚಾಲಕರಾಗಿ ಅಶ್ರಫ್ ಶಾ ಮಾಂತೂರು ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಶೀರ್ ಕಿನ್ನಿಂಗಾರ್ ಹಾಗೂ ಅಬ್ದುಲ್ ರೌಫ್ (ಅಬುಧಾಬಿ), ಕಾರ್ಯದರ್ಶಿಯಾಗಿ ಅನ್ಸಾಫ್, ಮಾಧ್ಯಮ ಮತ್ತು ಸಂವಹನ ವಿಭಾಗದ ಹೊಣೆಗಾರರಾಗಿ ಅಲ್ತಾಫ್ ಎಂ., ಸಲಹೆಗಾರರಾಗಿ ಮುಹಮ್ಮದ್ ಅಲಿ ಉಚ್ಚಿಲ್ ಹಾಗೂ ಅಶ್ರಫ್ ಬಾಳೆಹೊನ್ನೂರು ಅವರು ಆಯ್ಕೆಯಾದರು. ಯುಎಇ ಘಟಕದ ಕಾರ್ಯಕಾರಿಣಿ ಸಮಿತಿಗೆ ಅನ್ವರ್ ಹುಸೈನ್ ಅಡ್ಡೂರು, ಸಲೀಂ ಮೂಡಬಿದ್ರೆ, ಸೂಫಿ ಅನ್ವರ್ ಹಾಗೂ ಶೋಯೆಬ್ ಅವರನ್ನು ಆಯ್ಕೆ ಮಾಡಲಾಯಿತು. ಅಶ್ರಫ್ ಅವರ ಕಿರಾಅತ್ನೊಂದಿಗೆ ಆರಂಭಗೊಂಡ ಸಭೆಯಲ್ಲಿ ಅಶ್ರಫ್ ಶಾ ಮಾಂತೂರು ಸ್ವಾಗತಿಸಿದರು. ಅನ್ವರ್ ಹುಸೈನ್ ಅಡ್ಡೂರು ವಾರ್ಷಿಕ ವರದಿ ವಾಚಿಸಿದರು. ಹಂಝಾ ಎ. ಖಾದರ್ ಲೆಕ್ಕಪತ್ರಗಳನ್ನು ಮಂಡಿಸಿದರು. ಬ್ಯಾರಿ ಉದ್ಯಮಿಗಳ ನೋಂದಾವಣೆಗೆ ಅವಕಾಶ ಯುಎಇಯಲ್ಲಿ ಉದ್ಯಮ ನಡೆಸುತ್ತಿರುವ ಬ್ಯಾರಿ ಸಮುದಾಯದ ಉದ್ಯಮಿಗಳು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BCCI)ಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಸೇರ್ಪಡೆಯಾಗಲು ಆಸಕ್ತ ಉದ್ಯಮಿಗಳು bcciemirates@gmail.com ಈ ಇಮೇಲ್ ಮೂಲಕ ಸಂಪರ್ಕಿಸಬಹುದು. ಹೊಸ ಸದಸ್ಯರಿಗೆ ಉದ್ಯಮ ವೃದ್ಧಿಗೆ ಅಗತ್ಯವಿರುವ ಮಾರ್ಗದರ್ಶನ, ವ್ಯವಹಾರ ಸಬಲೀಕರಣ, ಉದ್ಯಮ ಪ್ರಚಾರ, ಸೆಮಿನಾರ್ಗಳು, ಹೊಸ ಸ್ಟಾರ್ಟ್ಅಪ್ಗಳಿಗೆ ತಂತ್ರಜ್ಞಾನಾಧಾರಿತ ಸಲಹೆಗಳು, ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಹಾರ ಪರಿಹಾರಗಳು ಹಾಗೂ ಪ್ರಸ್ತುತ ಉದ್ಯಮ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಲು ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು BCCI ತಿಳಿಸಿದೆ. ಈ ಹಿನ್ನೆಲೆಯಲ್ಲಿ ಯುಎಇಯಲ್ಲಿರುವ ಬ್ಯಾರಿ ಸಮುದಾಯದ ಎಲ್ಲಾ ಉದ್ಯಮಿಗಳು ಸಹಕಾರ ನೀಡುವಂತೆ BCCI ಮನವಿ ಮಾಡಿದೆ.
ನಮ್ಮ ಮೆಟ್ರೋ ದರ ಏರಿಕೆ; ಬಿಎಂಆರ್ಸಿಎಲ್ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪ್ರಯಾಣಿಕರು
ಬೆಂಗಳೂರು: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರ ಮತ್ತೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಕಳೆದ ಫೆಬ್ರವರಿ 9ರಂದು ಬಿಎಂಆರ್ಸಿಎಲ್ ಅಧಿಕಾರಿಗಳು ಶೇ 105.5 ರಷ್ಟು ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ದರವನ್ನು ಶೇ 71.5 ಕ್ಕೆ ಇಳಿಸಲಾಗಿತ್ತು. ಈ ಎಲ್ಲಾ ಗೊಂದಲದ ನಡುವೆಯೇ
Gold: ನಿಧಿ ಸಿಕ್ಕರೆ ಏನು ಮಾಡಬೇಕು? 1878ರ ಕಾನೂನು ಪಾಲನೆ ಮಾಡದೇ ಇದ್ದರೆ ಚಿನ್ನ ಅಲ್ಲ ಜೈಲು ಗ್ಯಾರಂಟಿ!
ಚಿನ್ನ.. ಚಿನ್ನ.. ಚಿನ್ನ... ಈಗಿನ ಕಾಲದಲ್ಲಿ ಬಂಗಾರಕ್ಕೆ ಭಾರಿ ಬೆಲೆ ಇದ್ದು, ಹೀಗಾಗಿಯೇ ಜನರು ಚಿನ್ನ ಖರೀದಿಗೆ ಪರದಾಡುವಂತೆ ಆಗಿದೆ. ಹೀಗಿದ್ದಾಗ ನಿಮ್ಮ ಮನೆ ಅಥವಾ ನಿಮ್ಮ ಜಾಗದಲ್ಲೇ ಚಿನ್ನ ನಿಧಿಯ ರೂಪದಲ್ಲಿ ಸಿಕ್ಕರೆ ಖುಷಿ ಆಗೇ ಆಗುತ್ತದೆ ಅಲ್ವಾ? ಆದರೆ ನಿಮಗೆ ಈ ನಿಧಿ ಸಿಕ್ಕರೆ ಮೊದಲು ಮಾಡಬೇಕಾದ ಕೆಲಸ ಸಾಕಷ್ಟು ಇದೆ. ಅದರಲ್ಲೂ ನಿಧಿ
ಪರವಾನಗಿ ಇಲ್ಲದ ವಾಕಿ-ಟಾಕಿಗಳನ್ನು ಮಾರಾಟ ಮಾಡುತ್ತಿದ್ದ ಮೆಟಾ, ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಹಲವು ಇ-ಕಾಮರ್ಸ್ ಸಂಸ್ಥೆಗಳಿಗೆ ಗ್ರಾಹಕರ ಹಿತರಕ್ಷಣೆ ಪ್ರಾಧಿಕಾರ (CCPA) ಒಟ್ಟು 44 ಲಕ್ಷ ರೂಪಾಯಿ ದಂಡ ವಿಧಿಸಿದೆ. ಗ್ರಾಹಕರ ರಕ್ಷಣೆ ಕಾಯ್ದೆ ಮತ್ತು ಟೆಲಿಕಾಂ ನಿಯಮಗಳನ್ನು ಉಲ್ಲಂಘಿಸಿ, ಪರವಾನಗಿ ಇಲ್ಲದ ವಾಕಿ-ಟಾಕಿಗಳನ್ನು ಮಾರಾಟ ಮಾಡಿ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಂಪನಿಗಳು ಈಗಾಗಲೇ ದಂಡ ಪಾವತಿಸಿವೆ.
ಕೇಂದ್ರ ಸರಕಾರ ಮುಸ್ಲಿಮರನ್ನು ದ್ವಿತೀಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ: ಕೇರಳ ಸಿಎಂ ಪಿಣರಾಯಿ ವಿಜಯನ್
ಕೇರಳ ಯಾತ್ರೆ ಸಮಾರೋಪ ಕಾರ್ಯಕ್ರಮ
ನಾಯಕತ್ವ ಸಂಬಂಧ ಸ್ಪಷ್ಟತೆ ಪಡೆಯಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿದ್ದ ಅವರು ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ ಬೀದರ್ಗೆ ಬಂದು ಮತ್ತೆ ದೆಹಲಿಗೆ ದೌಡಾಯಿಸಲಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ಪ್ರಮುಖ ನಾಯಕರನ್ನು ಭೇಟಿ ಮಾಡಲು ಡಿಕೆಶಿ ಪ್ರಯತ್ನ ನಡೆಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಇದೀಗ ಶನಿವಾರ ಅಥವಾ ಭಾನುವಾರ ಮತ್ತೊಂದು ಸುತ್ತಿನ ಪ್ರಯತ್ನ ನಡೆಸಲಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಕ್ಕಲ್ಲಿ ನಾಯಕತ್ವ ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಜನವರಿ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 17) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಜಿಬಿಎ ಚುನಾವಣೆಯಿಂದ ದೂರ ಹೋಗಲು ಡಿ ಕೆ ಶಿವಕುಮಾರ್ ಪ್ರಯತ್ನ: ಬಿ ವೈ ವಿಜಯೇಂದ್ರ
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಮಾದರಿ ಫಲಿತಾಂಶ ನಿಶ್ಚಿತವಾಗಿ ಪರಿಣಾಮ ಆಗಲಿದೆ. ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಅವ್ಯವಹಾರ, ಭ್ರಷ್ಟಾಚಾರ, ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಮಹಾನಗರದ ಕೆಲವು ಸಂಘಟನೆಗಳಿಗೆ ಧಮ್ಕಿ ಹಾಕಿರುವುದು- ಇವೆಲ್ಲ ಗಮನಿಸಿದಾಗ ಕಾಂಗ್ರೆಸ್ಸಿನವರು ಆತ್ಮವಿಶ್ವಾಸ ಕಳಕೊಂಡಂತೆ ಕಾಣುತ್ತಿದೆ ಎಂದು ಬಿ ವೈ ವಿಜಯೇಂದ್ರ ಅವರು ಹೇಳಿದರು. ಈ ಕುರಿತು ಮಾಧ್ಯಮಗಳ
ಮತ್ತೆ ಏರುಹಾದಿಯಲ್ಲಿ ಚಿನ್ನ; ಇಂದಿನ ದರವೆಷ್ಟು?
ತಜ್ಞರ ಪ್ರಕಾರ ಮುಂಬರುವ ಮದುವೆ ಸೀಸನ್ನಲ್ಲಿ ಮತ್ತೆ ಚಿನ್ನ ಏರು ಹಾದಿಯಲ್ಲಿ ಸಾಗಲಿದೆ. ಅಗತ್ಯವಿರುವವರು ಬೆಲೆ ಸ್ಥಿರವಾಗಿರುವಾಗಲೇ ಖರೀದಿಸುವುದು ಉತ್ತಮ. ಕಳೆದ ಎರಡು ದಿನಗಳಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಸ್ವಲ್ಪ ಏರಿಕೆ ಕಂಡಿದೆ. ಮದುವೆ ಸೀಸನ್ಗೆ ಖರೀದಿಸುವವರಿಗೆ ಬೆಲೆ ಸ್ಥಿರವಾಗಿರುವಾಗ ಖರೀದಿಸುವುದು ಉತ್ತಮ. ತಜ್ಞರ ಪ್ರಕಾರ ಮುಂಬರುವ ಮದುವೆ ಸೀಸನ್ನಲ್ಲಿ ಮತ್ತೆ ಚಿನ್ನ ಏರು ಹಾದಿಯಲ್ಲಿ ಸಾಗಲಿದೆ. ಜಾಗತಿಕ ಆರ್ಥಿಕ ವ್ಯವಸ್ಥೆ ಅಸ್ಥಿರತೆಯ ಹಂತದಲ್ಲಿರುವ ಈ ಕಾಲಘಟ್ಟದಲ್ಲಿ ಚಿನ್ನ ಮತ್ತೆ ವಿಶ್ವದ ಗಮನ ಸೆಳೆಯುತ್ತಿದೆ. ಯುದ್ಧಗಳು, ಭೌಗೋಳಿಕ ರಾಜಕೀಯ ಉದ್ವಿಘ್ನತೆ, ಹಣದುಬ್ಬರ ಮತ್ತು ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ ಪ್ರಯತ್ನಗಳಲ್ಲಿ ದೇಶಗಳು ಚಿನ್ನದ ಮೇಲೆ ಹೂಡಿಕೆ ಮಾಡುತ್ತದೆ. 2010ರ ನಂತರ ಕೇಂದ್ರೀಯ ಬ್ಯಾಂಕ್ಗಳು ಚಿನ್ನದ ಮೇಲೆ ಹೆಚ್ಚಯ ಹೂಡಿಕೆ ಮಾಡುತ್ತಿರುವುದರಿಂದ ಚಿನ್ನದ ದರ ಏರಿಕೆಯಾಗುತ್ತಲೇ ಬಂದಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಶನಿವಾರ ಜನವರಿ 17ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,378 (+38) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,180 (+35) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,784 (+29) ರೂ. ಬೆಲೆಗೆ ತಲುಪಿದೆ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ? 2026 ಜನವರಿ 17 ಶನಿವಾರ 24 ಕ್ಯಾರೆಟ್ನ ಚಿನ್ನದ ಬೆಲೆಯು 1 ಗ್ರಾಂಗೆ 14,378 ರೂ. ಆಗಿದೆ. ಶುಕ್ರವಾರ ಶುದ್ಧ ಚಿನ್ನದ ದರ 14,340 ರೂ. ಇತ್ತು. ಅಂದರೆ, 38 ರೂ. ಏರಿಕೆ ಕಂಡಿದೆ. ಶುಕ್ರವಾರಕ್ಕೆ ಹೋಲಿಸಿದರೆ 22 ಕ್ಯಾರೆಟ್ನ 1ಗ್ರಾಂ ಚಿನ್ನದ ಬೆಲೆಯು 13,145 ರೂ. ಆಗಿದೆ. ಶುಕ್ರವಾರ 13,180 ರೂ. ಇತ್ತು. ಅಂದರೆ, 35 ರೂ. ಏರಿಕೆ ಕಂಡಿದೆ. 18 ಕ್ಯಾರೆಟ್ನ ಚಿನ್ನದ ಬೆಲೆಯು 1 ಗ್ರಾಂಗೆ 10,784 ರೂ. ಆಗಿದೆ. ಶುಕ್ರವಾರ ಈ ದರ 10,755 ರೂ. ಇತ್ತು. ಅಂದರೆ 29 ರೂ. ಏರಿಕೆ ಕಂಡಿದೆ.
ಒಂದಡಿ ಉದ್ದಗಲದ ಬಣ್ಣದ ಕಾಗದ, ಎರಡು ಬಿದಿರು ಕಡ್ಡಿ, ಮೂರು ಮುಷ್ಠಿ ನೂಲು ಇದ್ದರೆ ಸಾಕು ನಮ್ಮ ನಿಮ್ಮ ಬಣ್ಣದ ಕನಸುಗಳನ್ನು ಆಕಾಶಕ್ಕೆ ಏರಿಸಬಹುದು. ಹೌದು, ಗಾಳಿಪಟವೆಂಬ ಕ್ರೀಡಾ ಹವ್ಯಾಸವು ನಲಿವಿನ ಉತ್ಸಾಹವನ್ನು ನೀಡುತ್ತದೆ ಹಾಗೇನೇ ನಲಿವಿನ ಜೊತೆ ಕಲಿಯುವ ಹುಮ್ಮಸ್ಸನ್ನೂ ನೀಡುತ್ತದೆ. ಎಲ್ಲಾ ಕ್ರೀಡೆಗಳು ನೆಲದಲ್ಲಿ ಆಗುವಂತಿದ್ದರೆ ಗಾಳಿಪಟವು ಆಕಾಶದಲ್ಲಿ ನಲಿಯುವಂತಿದ್ದು ಸುತ್ತಮುತ್ತಲಿನ ಎಲ್ಲರೂ ಒಮ್ಮೆ ಕತ್ತು ಎತ್ತಿ ಆಕಾಶ ನೋಡುವಂತಿದ್ದರೆ ಇದು ಗಾಳಿಪಟ ಹಾರಿಸುವವನ ತಾಕತ್ತು ಎನ್ನಬಹುದು. ಮಕ್ಕಳ ಪಾಲಿಗೆ ಗಾಳಿಪಟ ಹಾರಿಸುವುದೆಂದರೆ ಒಂದು ರೀತಿಯ ಪಾಠ. ಗಾಳಿಪಟ ಹಾರಿಸಬೇಕಾದರೆ ಅದಕ್ಕೆ ಕಟ್ಟುವ ಸೂತ್ರವು ಜ್ಯಾಮಿತಿ ಕೌಶಲ್ಯವನ್ನು ಕಲಿಸುತ್ತದೆ, ಗಾಳಿಯ ದಿಕ್ಕಿಗೆ ಅನುಲೋಮವಾಗಿ ಸೂತ್ರವನ್ನು 45 ಡಿಗ್ರಿಯಿಂದ 55 ಡಿಗ್ರಿಗೆ ಬದಲಾಯಿಸುವುದು ಗಣಿತವನ್ನು ಹೇಳಿಕೊಡುತ್ತದೆ. ಈಗಿನ ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡಲು ಪುರುಸೊತ್ತೇ ಇಲ್ಲ. ಗಾಳಿಪಟವು ಪರಿಸರದ ಪರಿಚಯ ಮಾಡುತ್ತದೆ. ಗಾಳಿಪಟ ಹಾರಿಸುವವನು ಒಮ್ಮೆ ಆಕಾಶ ನೋಡುತ್ತಾನೆ, ಗಾಳಿ ಯಾವ ಮಟ್ಟದಲ್ಲಿ ಇದೆ ಮತ್ತು ತನ್ನ ಗಾಳಿಪಟ ಅಕ್ಕ ಪಕ್ಕದ ಗಿಡ ಮರಗಳಿಗೆ ಸಿಕ್ಕಿ ಹಾಕಿ ಕೊಳ್ಳುತ್ತದೋ ಎಂದು ಒಮ್ಮೆ ಸುತ್ತ ಮುತ್ತ ಇರುವ ಮರ ಗಿಡಗಳನ್ನು ಗಮನಿಸುತ್ತಾನೆ. ಅಲ್ಲಿ ಪಕ್ಕದಲ್ಲಿ ಬಾವಿ, ಕೆರೆ ಇದ್ದರೆ, ಲೈಟ್ (ವಿದ್ಯುತ್) ಕಂಬ ಇದ್ದರೆ ತನ್ನ ಹಾಗೂ ಗಾಳಿಪಟದ ಭದ್ರತೆಗೆ ಜಾಗೃತಿ ವಹಿಸುತ್ತಾನೆ. ಹತ್ತಿರದಲ್ಲಿ ಬೆಟ್ಟ ಇದ್ದರೆ ಗಾಳಿಯ ಹರಿವಿಗೆ ಅಡ್ಡಿಯಾಗುತ್ತದೆ ಎಂದು ಬೆಟ್ಟದ ಕಡೆ ಗಮನ ನೀಡಬೇಕಾಗುತ್ತದೆ. ಗಾಳಿಪಟದ ನೂಲು ಬಿಡುತ್ತಾ ಅದು ಆಕಾಶದಲ್ಲಿ ನಲಿಯುತ್ತಾ ಇರುವಾಗ ಆಕಾಶವನ್ನೇ ನೋಡುತ್ತಿರುತ್ತಾನೆ, ಅದೇ ಸಮಯಕ್ಕೆ ಅಲ್ಲಿ ಹಕ್ಕಿ ಹಾರಾಡುವುದನ್ನು, ವಿಮಾನ ಹಾರಾಡುವುದನ್ನು ನೋಡುವಂತಾಗುತ್ತದೆ. ಎಷ್ಟು ನೂಲು ಬಿಡುತ್ತಾನೋ ಅಷ್ಟು ನಿಖರವಾಗಿ ಕೈಟ್ ಹಾರುವಾಗ ಎತ್ತರ, ವೇಗ, ದೀರ್ಘ, ಲಂಬ ಎಂಬ ವಿಜ್ಞಾನವನ್ನು ಕಲಿಯುವ ಅವಕಾಶ ಲಭಿಸುತ್ತದೆ. ನೋಡಿ ಒಂದು ಗಾಳಿಪಟವು ಗಣಿತ, ಸಮಾಜ, ವಿಜ್ಞಾನ, ಪರಿಸರದ ಪಾಠವನ್ನು ಹೇಳಿಕೊಡುತ್ತದೆ.
Goa| ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಕೊಲೆಗೈದ ರಶ್ಯಾ ಪ್ರಜೆ
ಪಣಜಿ: ಉತ್ತರ ಗೋವಾದಲ್ಲಿ ರಶ್ಯಾದ ಇಬ್ಬರು ಪ್ರಜೆಗಳನ್ನು ಪ್ರತ್ಯೇಕ ಘಟನೆಗಳಲ್ಲಿ ಹತ್ಯೆ ಮಾಡಿದ ಆರೋಪದಲ್ಲಿ ರಶ್ಯಾದ ಪ್ರಜೆಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲೆಕ್ಸಿ ಲಿಯೊನೊವ್ ಬಂಧಿತ ಆರೋಪಿ. ಈತ ಗುರುವಾರ ರಾತ್ರಿ ಅರಾಂಬೋಲ್ನ ಬಾಡಿಗೆ ಮನೆಯಲ್ಲಿ ಗೆಳತಿ ಎಲೆನಾ ಕಸ್ತನೋವಾ (37) ಎಂಬಾಕೆಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಲಿಯೊನೊವ್ ಕಸ್ತನೋವಾಳ ಕೈಕಾಲುಗಳನ್ನು ಕಟ್ಟಿ ಕೊಠಡಿಯಲ್ಲಿ ಕೂಡಿ ಹಾಕಲು ಪ್ರಯತ್ನಿಸಿದನು. ಅವಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅವಳ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಘಟನೆ ಬಗ್ಗೆ ಮನೆ ಮಾಲಕ ಉತ್ತಮ್ ನಾಯಕ್ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸಕ್ಷೆನ್ಗಳಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದಕ್ಕೆ ಒಂದು ದಿನದ ಹಿಂದೆ ಲಿಯೊನೊವ್ ಮತ್ತೊಬ್ಬ ರಷ್ಯಾದ ಮಹಿಳೆ ಎಲೆನಾ ವನೀವಾ (37) ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಮೊರ್ಜಿಮ್ನಲ್ಲಿ ಬಾಡಿಗೆ ಮನೆಯ ಕೊಠಡಿಯಲ್ಲಿ ಚಾಕುವಿನಿಂದ ವನೀವಾ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಮೊದಲ ಹತ್ಯೆಯ ನಂತರ, ಲಿಯೊನೊವ್ ಜನವರಿ 15ರ ಸಂಜೆ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಅರಂಬೋಲ್ಗೆ ತೆರಳಿ ಕಸ್ತನೋವಾಳನ್ನು ಕೊಲೆ ಮಾಡಿದ್ದಾನೆ. ಪೊಲೀಸರು ಎರಡು ಮೃತದೇಹಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಮಾಂಡ್ರೆಮ್ ಪೊಲೀಸರು ಆರೋಪಿ ಲಿಯೊನೊವ್ನನ್ನು ಬಂಧಿಸಿದ್ದು, ಜೋಡಿ ಹತ್ಯೆ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.
ರಾಜ್ಯದ 32 ವಿವಿಗಳಲ್ಲಿ 9292 ಬೋಧಕ, ಬೋಧಕೇತರ ಹುದ್ದೆ ಖಾಲಿ, 5 ಉಪ ಕುಲಪತಿ ಹುದ್ದೆಯೂ ಆಗಿಲ್ಲ ಭರ್ತಿ
ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಗತ್ಯ ಬೋಧಕರ ಅನಿವಾರ್ಯತೆ ಇದೆ. ಆದರೆ ರಾಜ್ಯದ 32 ಸಾರ್ವಜನಿಕ ವಿಶ್ವ ವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸೇರಿದಂತೆ ಒಟ್ಟು 9292 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲು ಸರ್ಕಾರ ಏನೂ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೆ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯ ಒಳಗೊಂಡು ಐದು ವಿವಿಗಳಲ್ಲಿ ಉಪ ಕುಲಪತಿ ಹುದ್ದೆಯೂ ಖಾಲಿ ಇವೆ. ಹಾಗಾದರೆ ಯಾವ ವಿಶ್ವ ವಿದ್ಯಾಲಯಗಳನ್ನು ಎಷ್ಟು ಹುದ್ದೆಗಳು ಖಾಲಿ ಇವೆ? ಈ ಕುರಿತಾದ ಮಾಹಿತಿ ಇಲ್ಲಿದೆ.
ಮಾನ ಕಳೆದುಕೊಂಡ ಶಾಂತಿ ನೊಬೆಲ್ ಬಹುಮಾನ
ಶಾಂತಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಜಗತ್ತಿನ ‘ಶಾಂತಿ ದೂತ’ರೆಲ್ಲ ಅಶಾಂತಿಯಿಂದ ಕನಲುವಂತೆ ಮಾಡಿದ್ದಾರೆ 2025ರ ಶಾಂತಿ ನೊಬೆಲ್ ಪ್ರಶಸ್ತಿ ವಿಜೇತ ಮರಿಯಾ ಮಚಾದೊ. ಶಾಂತಿ ನೊಬೆಲ್ ಪ್ರಶಸ್ತಿಯ ಕುರಿತಂತೆ ಜಗತ್ತಿಗೆ ಇದ್ದ ಎಲ್ಲ ಅನುಮಾನಗಳನ್ನು ನಿಜ ಮಾಡುವಂತೆ ತಮಗೆ ಸಿಕ್ಕಿದ ಗೌರವವನ್ನು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾದತಳಕ್ಕೆ ಅರ್ಪಿಸಿದ್ದಾರೆ. ಈವರೆಗೆ ಈ ಶಾಂತಿ ಪ್ರಶಸ್ತಿ ಗೋಸುಂಬೆಯಂತೆ ಬಣ್ಣ ಬದಲಿಸುತ್ತಿತ್ತು. ಆದರೆ ಈ ಬಾರಿ ಅದು ತನ್ನ ಅಸಲಿ ಬಣ್ಣವನ್ನು ಜಗತ್ತಿಗೆ ಸ್ಪಷ್ಟಪಡಿಸಿದೆ. ನೊಬೆಲ್ ಪ್ರಶಸ್ತಿಗೆ ಇಂತಹದೊಂದು ದಯನೀಯ ಸ್ಥಿತಿ ಎದುರಾಗುತ್ತದೆ ಎಂದಾಗಿದ್ದರೆ ಆಲ್ಫ್ರೆಡ್ ನೊಬೆಲ್ ಖಂಡಿತವಾಗಿಯೂ ತನ್ನ ಸಂಪತ್ತನ್ನು ನೊಬೆಲ್ಗಾಗಿ ಮುಡಿಪಾಗಿಡುತ್ತಿರಲಿಲ್ಲವೇನೋ. ಹಾಗೆ ನೋಡಿದರೆ ಆಲ್ಫ್ರೆಡ್ ತನ್ನ ಜೀವಮಾನದಲ್ಲಿ ಸಂಪತ್ತನ್ನು ಸಂಗ್ರಹಿಸಿದ್ದೇ ಸ್ಫೋಟಕಗಳ ಉತ್ಪಾದನೆಯಿಂದ. ಇಂದು ಜಗತ್ತಿನ ಯುದ್ಧವನ್ನು ಇನ್ನಷ್ಟು ಭಯಾನಕವಾಗಿಸಿದ್ದು ಆಲ್ಫ್ರೆಡ್ ಅವರ ಸಂಶೋಧನೆಗಳು. ಅವರ ‘ಡೈನಾಮೈಟ್’ಗಳು ತಪ್ಪು ಕಾರಣಗಳಿಗಾಗಿಯೇ ಹೆಚ್ಚು ಬಳಕೆಯಾಗುತ್ತಾ ಬಂದಿವೆ. ಸ್ಫೋಟಕ ಮತ್ತು ತೈಲ ಕ್ಷೇತ್ರಗಳಿಂದ ಅವರು ಅಪಾರ ದುಡ್ಡನ್ನು ಬಾಚಿಕೊಂಡರು. ಅವರ ಮರಣದ ಬಳಿಕ ಅದೇ ದುಡ್ಡು ಜಗತ್ತಿನ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಲು ಬಳಕೆಯಾಗುತ್ತಿರುವುದು ಒಂದು ವ್ಯಂಗ್ಯವೇ ಆಗಿದೆ. ಸ್ಫೋಟಕಗಳು ಮತ್ತು ಶಾಂತಿ ಹೇಗೆ ಜೊತೆಯಾಗಿ ಸಾಗಲಾರದೋ ಅದೇ ರೀತಿಯಲ್ಲಿ ಶಾಂತಿ ನೊಬೆಲ್ಗೂ ಜಗತ್ತಿನ ಶಾಂತಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಮರಿಯಾ ಮಚಾದೋ ಅವರು ತನ್ನ ನಿರ್ಧಾರದಿಂದ ಸ್ಪಷ್ಟಪಡಿಸಿದ್ದಾರೆ. ನೊಬೆಲ್ನ ನಿಜ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟದ್ದಕ್ಕಾಗಿ ಮರಿಯಾ ಅಭಿನಂದನಾರ್ಹರು. ನಾಯಿಯನ್ನು ಕೊಂದು ಹಾಕುವ ಉದ್ದೇಶವಿದ್ದರೆ ಮೊದಲು ಅದನ್ನು ‘ಹುಚ್ಚು ನಾಯಿ’ ಎಂದು ಘೋಷಿಸಲಾಗುತ್ತದೆ. ಒಂದು ದೇಶದಲ್ಲಿ ಅಶಾಂತಿಯಿದೆ ಎಂದು ಘೋಷಿಸುವುದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ‘ಶಾಂತಿ ನೊಬೆಲ್’ನ್ನು ದುರುಪಯೋಗ ಪಡಿಸಿಕೊಂಡು ಬರಲಾಗುತ್ತಿದೆ. ಅಮೆರಿಕದಂತಹ ಬಲಿಷ್ಠ ದೇಶಗಳ ಪಿತೂರಿಯಿಂದಾಗಿ ಸಣ್ಣ ದೇಶಗಳಲ್ಲಿ ಮೊದಲು ಅರಾಜಕತೆ ಸೃಷ್ಟಿಯಾಗುತ್ತದೆ ಮತ್ತು ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿರುವ ಸ್ಥಳೀಯರನ್ನು ಗುರುತಿಸಿ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇವೆಲ್ಲವೂ ದುರ್ಬಲ ದೇಶಗಳ ಮೇಲೆ ಬಲಿಷ್ಠ ದೇಶಗಳು ಎರಗುವುದಕ್ಕೆ ಮಾಡಿಕೊಳ್ಳುವ ಸಿದ್ಧತೆಗಳಾಗಿವೆ. ವೆನೆಝುವೆಲಾದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ತೈಲ ಸಂಪತ್ತನ್ನು ತಮ್ಮಲ್ಲೇ ಉಳಿಸಿಕೊಳ್ಳಲು ವೆನೆಝುವೆಲಾ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ಕಾರಣದಿಂದಾಗಿ ಪಶ್ಚಿಮದ ದೇಶಗಳು, ಖಾಸಗಿ ಸಂಸ್ಥೆಗಳಿಗೆ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಅಧಿಕಾರ ಸ್ಥಾಪಿಸಲು ಸಾಧ್ಯವಾಗಿಲ್ಲ. ತೈಲದ ರಕ್ಷಣೆಗಾಗಿ ಹಿಂದಿನ ಅಧ್ಯಕ್ಷ ಹ್ಯೂಗೋ ಚಾವೆಝ್ ಅವರು ಅತ್ಯಂತ ಕಠಿಣ ನೀತಿಗಳನ್ನು ಜಾರಿಗೊಳಿಸಿದ್ದರು. ಇದು ಅಮೆರಿಕವೂ ಸೇರಿದಂತೆ ಪ್ರಬಲ ದೇಶಗಳಿಗೆ ನುಂಗಲಾರದ ತುತ್ತಾಗಿತ್ತು. ಅಮೆರಿಕಕ್ಕೆ ವೆನೆಜುವೆಲಾ ಸೆಡ್ಡು ಹೊಡೆಯುತ್ತಲೇ ಬಂದಿತ್ತು. ಎಲ್ಲಿಯವರೆಗೆ ಎಂದರೆ, 2016ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪರ್ಯಾಯವಾಗಿ ‘ಹ್ಯೂಗೋ ಚಾವೆಝ್’ ಸ್ಮರಣಾರ್ಥ ಶಾಂತಿ ಪ್ರಶಸ್ತಿಯೊಂದನ್ನು ನಿಕೋಲಸ್ ಮಡುರೋ ಅವರು ಘೋಷಿಸಿದ್ದರು. ಕೊಲಂಬಿಯಾದ ಅಧ್ಯಕ್ಷ ಜುಯಾನ್ ಮ್ಯಾನುವೆಲ್ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾಗ, ವೆನೆಝುವೆಲಾ ದೇಶವು ‘ಹ್ಯೂಗೋ ಚಾವೆಜ್ ಪ್ರಶಸ್ತಿ’ಯನ್ನು ವ್ಲಾದಿಮಿರ್ ಪುಟಿನ್ ಅವರಿಗೆ ನೀಡಿತ್ತು. ವಿಪರ್ಯಾಸವೆಂದರೆ ಅದೇ ಪುಟಿನ್ ಅವರು ಉಕ್ರೇನ್ ವಿರುದ್ಧ ಕ್ಷಿಪಣಿಗಳನ್ನು ಸುರಿಸುತ್ತಿದ್ದಾರೆ ಮತ್ತು ತನಗೆ ಶಾಂತಿ ಪ್ರಶಸ್ತಿಯನ್ನು ನೀಡಿದ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಅಕ್ರಮವಾಗಿ ಬಂಧಿಸಿದಾಗಲೂ ಅದರ ವಿರುದ್ಧ ಮಾತನಾಡುವ ನೈತಿಕತೆಯನ್ನು ಪ್ರದರ್ಶಿಸುತ್ತಿಲ್ಲ. ದುರ್ಬಲ ರಾಜ್ಯಗಳ ಮೇಲೆ ದಾಳಿ ಮಾಡುವ ಹಕ್ಕುಗಳನ್ನು ಅಮೆರಿಕ ಮತ್ತು ರಶ್ಯ ಪರಸ್ಪರ ಹಂಚಿಕೊಂಡಿವೆ. ನಿಕೋಲಸ್ ಆಡಳಿತದಲ್ಲಿ ವೆನೆಝುವೆಲಾದಲ್ಲಿ ಆರ್ಥಿಕತೆ ಜರ್ಜರಿತವಾಗಿತ್ತು ನಿಜ. ಆ ದೇಶದ ಮೇಲೆ ಹೇರಲಾಗಿದ್ದ ನಿಷೇಧಗಳೂ ಅದಕ್ಕೆ ಕಾರಣವಾಗಿದ್ದವು. ತೈಲ ನಿಕ್ಷೇಪಗಳನ್ನು ಹೊರ ತೆಗೆಯುವ ಆಧುನಿಕ ಸವಲತ್ತುಗಳ ಕೊರತೆಗಳು ಮತ್ತು ಆರ್ಥಿಕ ಕೊರತೆಗಳು ವೆನೆಝುವೆಲಾವನ್ನು ಇನ್ನಷ್ಟು ದುರ್ಬಲಗೊಳಿಸಿದ್ದವು. ಕಚ್ಚಾ ತೈಲದ ಬೆಲೆ ಇಳಿಕೆ ಗಾಯಗಳ ಮೇಲೆ ಎಳೆದ ಬರೆಯಾಗಿತ್ತು. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ದೇಶದಲ್ಲಿ ಆರ್ಥಿಕತೆಗಾಗಿ ಅಕ್ರಮ ದಾರಿಗಳು ತೆರೆದುಕೊಳ್ಳುತ್ತವೆ. ಡ್ರಗ್ಸ್ ಮಾಫಿಯಾಗಳು ಈ ಸಂದರ್ಭವನ್ನು ಬಳಸಿಕೊಂಡವು. ಸರಕಾರ ಅದರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಹ್ಯೂಗೋ ಚಾವೆಝ್ಗಿದ್ದ ಧೈರ್ಯ, ದೂರದೃಷ್ಟಿ ನಿಕೋಲಸ್ ಅವರಿಗಿರಲಿಲ್ಲ. ನಿಕೋಲಸ್ ಮಡುರೋ ಅವರ ಆಡಳಿತದ ವಿರುದ್ಧ ದೇಶದೊಳಗೆ ಜಾಗೃತಿ ಮೂಡಿಸಿ ಜನಾಂದೋಲನವನ್ನು ಹುಟ್ಟು ಹಾಕುವ ಅವಕಾಶ ವಿರೋಧ ಪಕ್ಷದ ನಾಯಕಿ ಮರಿಯಾ ಮಚಾದೋ ಅವರಿಗಿತ್ತು..ಆದರೆ ಅವರು ಹ್ಯೂಗೋ ಜಾವೆಝ್ ಕಾಲದಿಂದಲೂ, ಅಮೆರಿಕದ ಸೂತ್ರದ ಗೊಂಬೆಯಾಗಿ ಬಳಕೆಯಾದರು. ಖಾಸಗೀಕರಣ, ಉದಾರೀಕರಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ವೆನೆಝುವೆಲಾವನ್ನು ಮೇಲೆತ್ತಲು ಸಾಧ್ಯ ಎಂದು ಅವರು ನಂಬಿಕೊಂಡು ಬಂದಿದ್ದರು. ಅಷ್ಟೇ ಅಲ್ಲ, ಬಹಿರಂಗವಾಗಿ ಅಮೆರಿಕದ ಸೇನೆಯ ನೆರವನ್ನು ಅಪೇಕ್ಷಿಸಿದರು. ಇಡೀ ಜಗತ್ತು ನೋಡು ನೋಡುತ್ತಿದ್ದಂತೆಯೇ ಅಮೆರಿಕ ವೆನೆಝುವೆಲಾದ ಮೇಲೆ ಎರಗಿ, ಅಲ್ಲಿನ ಅಧ್ಯಕ್ಷರನ್ನು ಬಂಧಿಸಿದಾಗಲಾದರೂ ತನ್ನ ನಿಲುವಿನಿಂದ ಮರಿಯಾ ಅವರು ಹಿಂದೆ ಸರಿಯಬಹುದಿತ್ತು. ಆದರೆ ಇದೀಗ ಅಮೆರಿಕದ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸುವ ಭಾಗವಾಗಿ ತನಗೆ ಸಿಕ್ಕಿದ ನೊಬೆಲ್ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್ಗೆ ಒಪ್ಪಿಸಿ ನೊಬೆಲ್ ಪ್ರಶಸ್ತಿಯನ್ನು ನಗೆಪಾಟಲಿಗೀಡು ಮಾಡಿದ್ದಾರೆ. ಇದರ ಜೊತೆ ಜೊತೆಗೇ ಮರಿಯಾ ಮಚಾದೊ ಅವರು ವೆನೆಝುವೆಲಾದಲ್ಲಿ ಪ್ರಜಾಸತ್ತೆಗಾಗಿ ನಡೆಸಿದ ಹೋರಾಟ ಸಂಪೂರ್ಣ ಅರ್ಥಕಳೆದುಕೊಂಡಿದೆ. ಸ್ವತಃ ವೆನೆಜುವೆಲಾ ಜನರ ಪಾಲಿಗೇ ಅವರು ಅನ್ಯರಾಗಿದ್ದಾರೆ. ಬಹುಶಃ ಅವಕಾಶವಿದ್ದಿದ್ದರೆ ಅವರು ಇಸ್ರೇಲ್ ಪ್ರಧಾನಿಯ ಜೊತೆಗೂ ಈ ಶಾಂತಿ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದರೋ ಏನೋ. ಯಾಕೆಂದರೆ, ಇಸ್ರೇಲ್ ಜೊತೆಗೂ ಅವರು ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ನೊಬೆಲ್ ಪ್ರಶಸ್ತಿಯನ್ನು ಅಣಕಿಸುವುದಕ್ಕಾಗಿ, ತಮಾಷೆ ಮಾಡುವುದಕ್ಕಾಗಿ ‘ಇಗ್ನೋಬೆಲ್’ ಎನ್ನುವ ಪ್ರಶಸ್ತಿಯನ್ನು ಜಾಗತಿಕವಾಗಿ ನೀಡುತ್ತಾ ಬರಲಾಗಿದೆ. ಆದರೆ ನೊಬೆಲ್ಗೆ ಒದಗಿರುವ ದುಸ್ಥಿತಿ ನೋಡಿದರೆ ಅದನ್ನು ವ್ಯಂಗ್ಯ ಮಾಡುವುದಕ್ಕೆ ಇನ್ನೊಂದು ಪ್ರಶಸ್ತಿಯ ಅಗತ್ಯವೇ ಇಲ್ಲ. ಶಾಂತಿ ಪ್ರಶಸ್ತಿಯನ್ನು ಟ್ರಂಪ್ಗೆ ನೀಡುವ ಮೂಲಕ ಮರಿಯಾ ಮಚಾದೊ ನೊಬೆಲ್ನ್ನು ಅತ್ಯಂತ ಹೀನಾಯವಾಗಿ ತಮಾಷೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ‘ಶಾಂತಿ ನೊಬೆಲ್’ ನೀಡುವ ಸಮಿತಿಗೇ ‘ಇಗ್ನೋಬೆಲ್’ ನೀಡುವ ಸಾಧ್ಯತೆಗಳಿವೆ.
ಭೀಮಣ್ಣ ಖಂಡ್ರೆ ನಿಧನಕ್ಕೆ ಸುರ್ಜೇವಾಲಾ ಸಂತಾಪ
ಹೊಸದಿಲ್ಲಿ: ಹಿರಿಯ ರಾಜಕಾರಣಿ, ಮುತ್ಸದ್ದಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಬಸವ ಶರಣ ತತ್ತ್ವದ ಆಧಾರದಲ್ಲಿ ತಮ್ಮ ಬದುಕನ್ನು ನಡೆಸಿದ ಭೀಮಣ್ಣ ಖಂಡ್ರೆಯವರು, ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಪ್ರಮುಖ ಕೊಡುಗೆ ನೀಡಿದ್ದರು ಎಂದು ಸುರ್ಜೇವಾಲಾ ಹೇಳಿದ್ದಾರೆ. ಜನರಿಗಾಗಿ ತಮ್ಮ ಜೀವನವನ್ನು ಮೀಸಲಿಟ್ಟ ಈ ಧೀಮಂತ ನಾಯಕನ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಸುರ್ಜೇವಾಲಾ ಅವರು, ಭಗವಂತನು ಮೃತರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
‘ಆನಿ’ ಸವಾರಿಗೆ ಹೊರಟಿರುವ ವೈದ್ಯಕೀಯ ಶಿಕ್ಷಣ
ವೈದ್ಯಕೀಯ ಕಾಲೇಜುಗಳ ನಾಮೀ, ಬೇನಾಮೀ ಮಾಲಕರಾಗಿರುವ ರಾಜಕಾರಣಿಗಳು ಮತ್ತು ವೈದ್ಯಕೀಯ ತರಗತಿಗಳಿಗೆ ಪಾಠ ಮಾಡಿದ ಅನುಭವ ಇರದ ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಒಟ್ಟು ಸೇರಿ, ದೇಶದ ವೈದ್ಯಕೀಯ ಶಿಕ್ಷಣ ಗುಣಮಟ್ಟದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದಾರೆ. ಜನಹಿತವೇ ಸರ್ವೋಪರಿ ಆಗಬೇಕಿದ್ದ ಸಂಸದೀಯ ಪ್ರಜಾಸತ್ತೆಯಲ್ಲಿ ಒಂದು ಸರಕಾರಕ್ಕೆ ‘ಸ್ವಹಿತಾಸಕ್ತಿ’ಗಳಿರುವುದು ಅನೈತಿಕ ಎಂಬ ಅರಿವು ಹುಲ್ಲು ಮೇಯಲು ಹೊರಟಾಗ ಏನಾಗಬೇಕೋ ಅದೆಲ್ಲ ಆಗಿದೆ. ವೈದ್ಯಕೀಯ ಕಾಲೇಜುಗಳ ನಾಮೀ, ಬೇನಾಮೀ ಮಾಲಕರಾಗಿರುವ ರಾಜಕಾರಣಿಗಳು ಮತ್ತು ವೈದ್ಯಕೀಯ ತರಗತಿಗಳಿಗೆ ಪಾಠ ಮಾಡಿದ ಅನುಭವ ಇರದ ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಒಟ್ಟು ಸೇರಿ, ದೇಶದ ವೈದ್ಯಕೀಯ ಶಿಕ್ಷಣ ಗುಣಮಟ್ಟದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದಾರೆ. ಶಿಕ್ಷಣ, ಅದರಲ್ಲೂ ವೈದ್ಯಕೀಯ ಶಿಕ್ಷಣದಂತಹ ಸೇವಾ ವೃತ್ತಿಗಳು ವಾಣಿಜ್ಯ ಹಿತಾಸಕ್ತಿಗಳಿಂದ ದೂರ ಇರಬೇಕೆಂಬ ಮತ್ತು ಶಿಕ್ಷಣದ ಮಟ್ಟಿಗೆ ಎಲ್ಲರಿಗೂ ಸಮಾನ ಅವಕಾಶಗಳಿರಬೇಕೆಂಬ ಆದರ್ಶ ಪರಿಕಲ್ಪನೆಯನ್ನು ಹಂತಹಂತವಾಗಿ ನಾಶ ಮಾಡಲಾಗಿದೆ. ಇದೇ ಜನವರಿ 7ರಂದು ವಿಜಯವಾಡದಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ NMC ಅಧ್ಯಕ್ಷ ಡಾ. ಅಭಿಜಿತ್ ಚಂದ್ರಕಾಂತ್ ಸೇಠ್ ಅವರು, ಲಾಭೋದ್ದೇಶ ಇರುವ ಕಂಪೆನಿಗಳಿಗೂ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಅವಕಾಶ ತೆರೆಯಲಾಗಿದೆ. ಈ ಬಗ್ಗೆ NMC ಆಡಳಿತ ಮಂಡಳಿ ಇತ್ತೀಚೆಗೆ ನಿರ್ಣಯ ಸ್ವೀಕರಿಸಿದೆ ಎಂದು ಹೇಳಿದ್ದರು. NMCಯ ಈ ನಿರ್ಣಯದ ಫಲವಾಗಿ, ಇನ್ನು ಯಾವುದೇ ಖಾಸಗಿ ಕಂಪೆನಿಯು ವೈದ್ಯಕೀಯ ಕಾಲೇಜು ತೆರೆದು, ಅದರ ಮೂಲಕ ವ್ಯವಹಾರ ನಡೆಸಿ, ಮುನಾಫೆ ಮಾಡಿಕೊಳ್ಳಬಹುದು. ಇಲ್ಲಿಯ ತನಕ ಸೆಕ್ಷನ್ 8ರ ಅಡಿ ಬರುವ, ಲಾಭೋದ್ದೇಶ ರಹಿತ ಕಂಪೆನಿಗಳಿಗೆ ಮಾತ್ರ ಈ ಅವಕಾಶ ಇತ್ತು. ದುಡ್ಡು ಗೋರುವುದನ್ನೇ ಆದ್ಯತೆಯಾಗಿರಿಸಿಕೊಂಡ ಮೆಡಿಕಲ್ ಕಾಲೇಜುಗಳ ಒಡೆಯರಿಗೆ ಈಗ ತಮ್ಮ ಲೂಟಿಯನ್ನು ಮುಂದುವರಿಸಲು ಹೆಬ್ಬಾಗಿಲನ್ನೇ ತೆರೆದಿಟ್ಟಂತಾಗಿದೆ. ಇಂಚಿಂಚಾಗಿ ಖಾಸಗಿ ತೆಕ್ಕೆಗೆ ವೈದ್ಯಕೀಯ ಶಿಕ್ಷಣ ಬಹಳ ಬೇಡಿಕೆಯ ಕ್ಷೇತ್ರವಾಗಿ ಬದಲಾದಲ್ಲಿಂದ ಇಲ್ಲಿಯ ತನಕವೂ ಅಪಾರ ಖರ್ಚು ನಿರೀಕ್ಷಿಸುವ ಕ್ಷೇತ್ರವಾಗಿಯೇ ಉಳಿದಿದೆ. ವೈದ್ಯಕೀಯ ಶಿಕ್ಷಣದ ಕುರಿತು ನೀತ್ಯಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳುವವರು, ಭಾರತ ಸರಕಾರದಲ್ಲಿ ಮತ್ತು ಬಹುತೇಕ ರಾಜ್ಯಗಳಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವೈದ್ಯಕೀಯ ಕಾಲೇಜುಗಳ ಮಾಲಕವರ್ಗಕ್ಕೆ ಸೇರಿದವರೇ ಆಗಿರುವುದರಿಂದ, ಅವರ ಲಾಬಿಯ ತೀರ್ಮಾನಗಳೇ ಸರಕಾರಗಳ ತೀರ್ಮಾನ ಆಗುತ್ತಾ ಬಂದಿರುವುದು ಸುಳ್ಳಲ್ಲ. ವಿಕೇಂದ್ರೀಕೃತವಾಗಿದ್ದ ವೈದ್ಯಶಿಕ್ಷಣ ಪ್ರವೇಶ ಪ್ರಕ್ರಿಯೆ 2013ರಲ್ಲಿ NEET ಮೂಲಕ ಏಕತ್ರಗೊಂಡು, 2017ರಲ್ಲಿ ಕಡ್ಡಾಯ ಆದ ಬಳಿಕವಂತೂ, ದೇಶದಲ್ಲಿರುವ ವೈದ್ಯಕೀಯ ಸೀಟುಗಳ ಪ್ರಮಾಣಕ್ಕೂ, ಬೇಡಿಕೆಗೂ ನಡುವೆ ಅಜಗಜಾಂತರ ಇರುವುದರಿಂದ ಸೃಷ್ಟಿ ಆಗಿರುವ ಬಾಟಲ್ನೆಕ್ನ ಲಾಭ ಪಡೆಯುವುದು ವೈದ್ಯಕೀಯ ಶಿಕ್ಷಣ ವ್ಯಾಪಾರಸ್ಥರ ಮೂಲ ಉದ್ದೇಶ. ಸರಕಾರಗಳೂ ಇದಕ್ಕೆ ಪೂರಕವಾಗಿಯೇ ವರ್ತಿಸುತ್ತಾ ಬಂದಿವೆ. ಭಾರತ ಸರಕಾರದ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು, ಡಿಸೆಂಬರ್ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ಮಾತನಾಡುತ್ತಾ, 2014ರಲ್ಲಿ 51,000 ಇದ್ದ MBBS ಸೀಟುಗಳು ಈಗ 1.28 ಲಕ್ಷಕ್ಕೆ ತಲುಪಿವೆ. 2029ರ ಒಳಗೆ ದೇಶಕ್ಕೆ ಇನ್ನೂ ಹೆಚ್ಚುವರಿ 75,000 MBBS ಸೀಟುಗಳನ್ನು ಒದಗಿಸಲಾಗುವುದು ಎಂದು ಪ್ರಕಟಿಸಿದ್ದರು. (PIB Release ID: 2207838). ಸರಕಾರಗಳು ವೈದ್ಯಕೀಯ ಕಾಲೇಜುಗಳನ್ನು, ಸ್ನಾತಕ-ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸುತ್ತಾ ಹೋಗುತ್ತಿವೆಯೇ ಹೊರತು, ದೇಶದಲ್ಲಿ ಹೊರಬರುತ್ತಿರುವ ವೈದ್ಯರ ಗುಣಮಟ್ಟದ ಬಗ್ಗೆ ಗಮನ ಹರಿಸಿವೆಯೇ? ಎಂಬ ಪ್ರಶ್ನೆಗೆ ಯಾರ ಬಳಿಯೂ ಸ್ಪಷ್ಟ ಉತ್ತರ ಇದ್ದಂತಿಲ್ಲ. ಉದಾರೀಕರಣದ ಬಳಿಕ ಹೇಗೆ ವೈದ್ಯಕೀಯ ಶಿಕ್ಷಣವನ್ನು ಇಂಚಿಂಚಾಗಿ ಖಾಸಗಿ ತೆಕ್ಕೆಗೆ ದೂಡಲಾಗಿದೆ ಎಂಬುದನ್ನು ಗಮನಿಸಿದರೆ, ಇಂದು ವೈದ್ಯಕೀಯ ಶಿಕ್ಷಣ ಗಗನಕುಸುಮ ಆಗಿರುವುದರ ಹಿಂದಿನ ಕಾರಣ ತಾನಾಗಿಯೇ ಅರ್ಥ ಆಗತೊಡಗುತ್ತದೆ. ಆರೋಗ್ಯ ವ್ಯವಸ್ಥೆಯ ವ್ಯಾಪಾರೀಕರಣದ ಪ್ರಭಾವವನ್ನು ದೇಶ ಈಗಾಗಲೇ ಅನುಭವಿಸುತ್ತಿದೆ. 2009ರ ತನಕ ವೈದ್ಯಕೀಯ ಶಿಕ್ಷಣ ಲಾಭದಾಯಕ ವ್ಯವಹಾರ ಆಗಿರಲು ಅವಕಾಶ ಇರಲಿಲ್ಲ. ಖಾಸಗಿಯವರು ಕಾಲೇಜು ಆರಂಭಿಸಬೇಕಿದ್ದರೆ, ಚಾರಿಟೇಬಲ್ ಟ್ರಸ್ಟ್, ಸೊಸೈಟಿ ಇತ್ಯಾದಿ ಮುಸುಕುಗಳನ್ನು ಧರಿಸಬೇಕಿತ್ತು. ಕ್ಯಾಪಿಟೇಷನ್ ಶುಲ್ಕ, ದುಬಾರಿ ಫೀಸುಗಳ ಮೂಲಕ ಅವರು ನಡೆಸುತ್ತಿದ್ದ ಲೂಟಿಗಳ ಬಗ್ಗೆ ಆಗಾಗ ಚರ್ಚೆ ಆಗುತ್ತಿತ್ತು. 2003ರಲ್ಲಿ ಸುಪ್ರೀಂ ಕೋರ್ಟು ಈ ದುಬಾರಿ ಫೀಸುಗಳನ್ನು ನಿಯಂತ್ರಿಸಲು ಪ್ರತೀ ರಾಜ್ಯದಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ಶುಲ್ಕ ನಿರ್ಧಾರ ಸಮಿತಿ ಸ್ಥಾಪಿಸಲು ನಿರ್ದೇಶಿಸಿತ್ತು. 2018ರಲ್ಲಿ ಸುಪ್ರೀಂ ಕೋರ್ಟಿನ ಮತ್ತೊಂದು ಪೀಠ ಈ ಹಳೆಯ ತೀರ್ಪನ್ನು ಎತ್ತಿಹಿಡಿದಿತ್ತು. 2010ರ ಫೆಬ್ರವರಿಯಲ್ಲಿ, ಅಂದಿನ ಯುಪಿಎ ಸರಕಾರ, ಕಂಪೆನಿ ಕಾಯ್ದೆಗಳ ಅಡಿಯಲ್ಲಿ ಸೆಕ್ಷನ್ 8ರ ಅಡಿ ಬರುವ ಕಂಪೆನಿಗಳಿಗೆ ವೈದ್ಯಕೀಯ ಕಾಲೇಜು ತೆರೆಯಲು ಅವಕಾಶ ಕಲ್ಪಿಸಿತಾದರೂ, ಲಾಭೋದ್ದೇಶ ಇರುವಂತಿಲ್ಲ ಎಂದು ವಿಧಿಸಿತ್ತು. ಅದರ ಬೆನ್ನಲ್ಲೇ NEET ವ್ಯವಸ್ಥೆ ಬಂದು, ದುಬಾರಿ ಕ್ಯಾಪಿಟೇಷನ್ ಶುಲ್ಕದ ದೂರುಗಳನ್ನು ನಿವಾರಿಸುವ ಪ್ರಯತ್ನ ನಡೆಯಿತು. 2016ರಲ್ಲಿ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದಾಗ, ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ಲಾಭ ಇಲ್ಲ ಎಂದಾದರೆ, ಖಾಸಗಿಯವರು ಮುಂದೆ ಬರುವುದಿಲ್ಲ. ಅವರಿಗೂ ಅವಕಾಶ ನೀಡಿದರೆ ಅವರು ಅಕ್ರಮ ಲಾಭದ ಬದಲು ಸಕ್ರಮ ಲಾಭ ಗಳಿಸಿ, ಸರಕಾರಕ್ಕೆ ತೆರಿಗೆ ಕಟ್ಟುತ್ತಾರೆ ಎಂಬ ಕಾರಣಕ್ಕೆ, ಲಾಭೋದ್ದೇಶ ಇಲ್ಲದ ಸೆಕ್ಷನ್ 8 ಕಂಪೆನಿಗಳು ನಡೆಸುವ ವೈದ್ಯಕೀಯ ಕಾಲೇಜುಗಳಿಗೆ ಲಾಭ ಸಹಿತ ಖಾಸಗಿ ಕಾಲೇಜುಗಳಾಗುವ ಅವಕಾಶ ತೆರೆದರು. 2017ರ ಜನವರಿ 17ರಂದು ಈ ಬಗ್ಗೆ ಪ್ರಕಟಣೆ ಹೊರಬಿತ್ತು. 2019ರಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ನಿಯಮ 1999ಕ್ಕೆ ತಿದ್ದುಪಡಿಗಳನ್ನು ತಂದು, ಸರಕಾರಿ ವೈದ್ಯಕೀಯ ಆಸ್ಪತ್ರೆಗಳ ಜೊತೆ MoU ಮಾಡಿಕೊಂಡು, ಕನ್ಸಾರ್ಟಿಯಂ ವ್ಯವಸ್ಥೆಯ ಮೂಲಕ ಪಬ್ಲಿಕ್-ಪ್ರೈವೇಟ್-ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಅವಕಾಶವನ್ನು ಖಾಸಗಿಯವರಿಗೆ ನೀಡಲಾಯಿತು. ಈಗ 2025ರ ಕೊನೆಯ ಹೊತ್ತಿಗೆ ನಡೆದಿರುವ ಬೆಳವಣಿಗೆಗಳ ಫಲ ಎಂದರೆ, ಎಲ್ಲ ಖಾಸಗಿ ಸ್ವರೂಪದ ಲಾಭೋದ್ದೇಶದ ಕಂಪೆನಿಗಳೂ ನೇರವಾಗಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮಾರುಕಟ್ಟೆಯ ಆಟ 2016-17ರ ಹೊತ್ತಿಗೆ 4 ಲಕ್ಷ ಕೋಟಿ ರೂ.ಗಳದ್ದಾಗಿದ್ದ ಖಾಸಗಿ ಆರೋಗ್ಯ ಸೇವೆಗಳ ಮಾರುಕಟ್ಟೆಯು ಈಗ 11.03 ಲಕ್ಷ ಕೋಟಿ ರೂ.ಗಳದ್ದಾಗಿ ಬೆಳೆದಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ಉದ್ಯಮ ವಾರ್ಷಿಕ 60,000 ಕೋಟಿ ಗಾತ್ರದ್ದಾಗಿದ್ದು, 2028ರ ಹೊತ್ತಿಗೆ 1.34 ಲಕ್ಷ ಕೋಟಿ ರೂ.ಗಳಿಗೆ ತಲುಪಲಿದೆಯಂತೆ. ಹೀಗೆ ಅಪಾರ ದುಡ್ಡು ಹರಿದಾಡುತ್ತಿರುವ ಈ ಕ್ಷೇತ್ರ ಖಾಸಗಿಯವರನ್ನು ಆಕರ್ಷಿಸುತ್ತಿರುವುದು ಸಹಜ. ಬೇಡಿಕೆಯ ಹಿಂದೆ ಬಿದ್ದು ಕಾಸು ಗೋರುತ್ತಿರುವ ವೈದ್ಯಕೀಯ ಶಿಕ್ಷಣ ವ್ಯಾಪಾರಸ್ಥರು, ಖಾಸಗೀಕರಣ ಪ್ರಕ್ರಿಯೆಯ ಬಳಿಕ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ನೀಡುತ್ತಿರುವ ಕೊಡುಗೆ ನಿರಾಶಾದಾಯಕ. ಇಂತಹದೊಂದು ಸ್ಥಿತಿಗೆ ಸರಕಾರದ ಕೊಡುಗೆಯೂ ಕಡಿಮೆ ಏನಿಲ್ಲ. ಹೊಸ ಶಿಕ್ಷಣ ನೀತಿಯ ಹೆಸರಿನಲ್ಲಿ ಪಠ್ಯವಿಧಾನ-ಪರೀಕ್ಷಾವಿಧಾನ-ಅಂಕ ನೀಡಿಕೆ ವಿಧಾನಗಳಲ್ಲಿ ಪದೇಪದೇ ಬದಲಾವಣೆಗಳನ್ನು ಮಾಡುತ್ತಾ, ಸಂಪೂರ್ಣ ವ್ಯವಸ್ಥೆಯನ್ನು ಗೊಂದಲದಲ್ಲಿ ಕೆಡವಲಾಗಿದೆ. ಹೊಸದಾಗಿ ಆರಂಭಗೊಳ್ಳುತ್ತಿರುವ ಹೆಚ್ಚಿನ ಕಾಲೇಜುಗಳಲ್ಲಿ ಮೂಲಸೌಕರ್ಯವಾಗಲೀ, ಪರಿಣತ ವೈದ್ಯಕೀಯ ಶಿಕ್ಷಕರಾಗಲೀ ಇಲ್ಲ; ಈ ಇಲ್ಲಗಳ ಬಗ್ಗೆ ಪರಿಣಾಮಕಾರಿ ನಿಗಾ ವ್ಯವಸ್ಥೆಯೂ ಇಲ್ಲ. ಈ ನಿಗಾ ವ್ಯವಸ್ಥೆಗಳನ್ನು ಖಾಸಗಿ ಶಕ್ತಿಗಳ ಪರವಾಗಿ ಹದಗೆಡಿಸುತ್ತಿರುವುದಕ್ಕೆ ಒಳ್ಳೆಯ ಉದಾಹರಣೆ, ವೈದ್ಯಕೀಯ ಶಿಕ್ಷಕರ ಹಾಜರಾತಿ ನಿಗಾ ವ್ಯವಸ್ಥೆ. ಹಿಂದೆ MCI ಕಾಲದಲ್ಲಿ (ಹಳೆಯ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ವ್ಯವಸ್ಥೆ) ಹಠಾತ್ ತಪಾಸಣೆ ನಡೆಸಿ, ಸೂಚಿಸಿದಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಹಾಜರು ಇಲ್ಲದಿದ್ದಲ್ಲಿ, ಸೀಟು ಕಡಿತ, ರೆಕಾಗ್ನಿಷನ್ ರದ್ದತಿ ಇತ್ಯಾದಿ ಕ್ರಮಗಳೆಲ್ಲ ಇದ್ದವು. ಈಗ NMC ವ್ಯವಸ್ಥೆ ಬಂದ ಬಳಿಕ ಬಯೊಮೆಟ್ರಿಕ್ ಹಾಜರಾತಿಯನ್ನೇ ನೆಚ್ಚಿಕೊಳ್ಳಲಾಗಿದೆ. ಬಯೊಮೆಟ್ರಿಕ್ ಹಾಜರಾತಿಯಲ್ಲಿ ಅಕ್ರಮಗಳು ಸುಲಭ. ಖಾಸಗಿಯವರಿಗೆ ಸಿಬ್ಬಂದಿ ನೇಮಕ, ಸಂಬಳ, ಸವಲತ್ತು ಒದಗಿಸುವ ಬದಲು ಅಕಸ್ಮಾತ್ ಸಿಕ್ಕಿಬಿದ್ದರೂ ದಂಡ ತೆರುವುದು ಹೆಚ್ಚು ಲಾಭದಾಯಕ. ಇಂತಹ ನಿಯಮಗಳಿಂದಾಗಿ ಸೊರಗುತ್ತಿರುವುದು ಶಿಕ್ಷಣ ವ್ಯವಸ್ಥೆ. ಸರಕಾರಿ ಕಾಲೇಜುಗಳಂತೂ ಸಿಬ್ಬಂದಿ, ಸವಲತ್ತು ಇಲ್ಲದೆ ಖಾಸಗಿ ಕಾಲೇಜುಗಳಿಗೆ ರೆಫರಲ್ ವ್ಯವಸ್ಥೆಯನ್ನು ಅವಲಂಬಿಸಿವೆ. ಹೀಗೆ ಸೂಕ್ತ ತರಬೇತಿ, ಕೌಶಲ ಇಲ್ಲದೇ ಹೊರಬಂದ ವೈದ್ಯರಿಂದ ಯಾವ ಮಟ್ಟದ ವೃತ್ತಿಪರತೆ ಮತ್ತು ಗುಣಮಟ್ಟಗಳನ್ನು ನಿರೀಕ್ಷಿಸಬಹುದೆಂಬ ಖಬರೂ ಯಾರಿಗೂ ಇದ್ದಂತಿಲ್ಲ. ವಾಸ್ತವ ಹೀಗಿರುವಾಗಲೂ ಮನಬಂದಂತೆ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ‘ದಾಖಲೆ’ ಸಾಧಿಸಲು ಹೊರಡುವುದು ಅಪಾಯಕಾರಿ. ಇದು ಹೀಗೇ ಮುಂದುವರಿದರೆ, ಇಂತಹ ವ್ಯವಸ್ಥೆಯಿಂದ ಹೊರಬಂದ ವಿದ್ಯಾರ್ಥಿಗಳು, ತಮ್ಮ ವೃತ್ತಿ ಕೌಶಲ ಪಡೆದುಕೊಳ್ಳಲು ಮತ್ತೆ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾದ ಸನ್ನಿವೇಶ ಎದುರಾಗಬಹುದೆಂದು ವೈದ್ಯಕೀಯ ಶಿಕ್ಷಣ ಕ್ಷೇತ್ರದ ಪರಿಣತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲ ಎಲ್ಲಿಗೆ ತಲುಪಲಿದೆ ಎಂಬುದನ್ನು ‘ಆನಿ ಸವಾರಿ’ಗೆ ಮನಸ್ಸು ಮಾಡಿರುವ ಓಒಅಯಂತಹ ನಿಯಂತ್ರಣ ಸಂಸ್ಥೆಗಳು ಮತ್ತು ಸರಕಾರಗಳ ಆಯಕಟ್ಟಿನ ಜಾಗಗಳಲ್ಲಿರುವವರು ಹೇಳಬೇಕು.
ಭೀಮಣ್ಣ ಖಂಡ್ರೆ ನಿಧನ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸಂತಾಪ
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸಚಿವರು, ಕರ್ನಾಟಕದ ಹಿರಿಯ ರಾಜಕಾರಣಿಗಳು ಹಾಗೂ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರಾದ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಮಾಜಸೇವೆಗೆ ಬದುಕನ್ನೇ ಸಮರ್ಪಿಸಿದ ಲೋಕನಾಯಕನ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಶರಣ ಚಿಂತನೆ, ಮಾನವೀಯತೆ ಮತ್ತು ಮೌಲ್ಯಾಧಾರಿತ ರಾಜಕಾರಣದ ಪ್ರತೀಕವಾಗಿದ್ದ ಭೀಮಣ್ಣ ಖಂಡ್ರೆ ಅವರ ಸೇವೆಗಳು ಚಿರಸ್ಮರಣೀಯ ಎಂದು ಅವರು ತಿಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ಕರ್ನಾಟಕ ವಿಮೋಚನೆ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಹೋರಾಡಿದ ನಾಯಕತ್ವವು ಅವರನ್ನು ಜನಮನದ ನಾಯಕರನ್ನಾಗಿಸಿತು ಎಂದು ಸ್ಮರಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗ, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಟಿ.ಎ. ನಾರಾಯಣಗೌಡ ಅವರು ಪ್ರಾರ್ಥಿಸಿದ್ದಾರೆ.
ಭೀಮಣ್ಣ ಖಂಡ್ರೆ ನಿಧನಕ್ಕೆ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸಂತಾಪ
ಬೆಂಗಳೂರು/ಬೀದರ್: ಮಾಜಿ ಸಚಿವರು, ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರಾಗಿದ್ದ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಂತಾಪ ಸಂದೇಶದಲ್ಲಿ, “ಮಾಜಿ ಸಚಿವರು ಹಾಗೂ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರಾಗಿದ್ದ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನ ವಾರ್ತೆ ಕೇಳಿ ನನಗೆ ಬಹಳ ದುಃಖವಾಗಿದೆ. ಸರಳತೆ, ಸಜ್ಜನಿಕೆ ಹಾಗೂ ನೇರ ನಡೆನುಡಿಯ ಮೂಲಕ ಜನಮನ ಗೆದ್ದಿದ್ದ ಅವರು ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಧೀಮಂತ ನಾಯಕರು. ಬೀದರ್ ಜಿಲ್ಲೆ ಕರ್ನಾಟಕದ ಭಾಗವಾಗಿಯೇ ಉಳಿಯಲು ಅವರು ನಡೆಸಿದ ಹೋರಾಟ ಚಿರಸ್ಮರಣೀಯ. ಅವರ ನಿಧನವು ರಾಜ್ಯಕ್ಕೆ ಬಹುದೊಡ್ಡ ನಷ್ಟವಾಗಿದೆ” ಎಂದು ಹೇಳಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಪುತ್ರರಾದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಸೇರಿದಂತೆ ಕುಟುಂಬದ ಸದಸ್ಯರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು, “ಹಿರಿಯ ನಾಯಕರಾಗಿದ್ದ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನದ ಸುದ್ದಿ ತಿಳಿದು ತುಂಬ ದುಃಖವಾಗಿದೆ. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಆದರ್ಶ ಹಾಗೂ ಹೋರಾಟದ ಬದುಕು ನಡೆಸಿದವರು. ವಿಶೇಷವಾಗಿ ರೈತರು, ದೀನದಲಿತರು ಹಾಗೂ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಅವರು ಮಾಡಿದ ಸೇವೆಗಳು ಸದಾ ನೆನಪಿನಲ್ಲಿರುತ್ತವೆ” ಎಂದು ಸ್ಮರಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಗಟ್ಟಿ ಸಂಘಟನೆಯಾಗಿ ಕಟ್ಟಿಬಳೆಸಿದ ಅವರು ಸಮಾಜಕ್ಕೆ ನ್ಯಾಯ ಒದಗಿಸಲು ಕೊನೆಯ ಉಸಿರು ಇರುವವರೆಗೂ ಹೋರಾಟ ನಡೆಸಿದ ಧೈರ್ಯಶಾಲಿ ನಾಯಕರು. ಅವರ ಅಗಲಿಕೆಯಿಂದ ಕರ್ನಾಟಕವೇ ಬಡವಾಗಿದೆ; ವೀರಶೈವ ಮಹಾಸಭೆಯಿಗೂ ಅಪಾರ ನಷ್ಟವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. “ನಮ್ಮ ತಂದೆಯವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ನಾಯಕರು ಅಗಲಿರುವುದು ವೈಯಕ್ತಿಕವಾಗಿ ನನಗೂ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಬಸವರಾಜ ಬೊಮ್ಮಾಯಿ ಪ್ರಾರ್ಥಿಸಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ
ಕೊಲ್ಕತ್ತಾ: ಕಲ್ಲಿದ್ದಲು ಹಗರಣಕ್ಕೆ ಸಂಬಂಧ ಕಲ್ಪಿಸಿ ತಮ್ಮ ವಿರುದ್ಧ ಆರೋಪ ಹೊರಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ಪರಿಹಾರ ಕೋರಿ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮೊದಲು ಮಮತಾ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದೆ, ಆದರೆ ಅವರು ಉತ್ತರ ನೀಡದ ಕಾರಣ ಅಲಿಪುರ್ ನ್ಯಾಯಾಲಯದಲ್ಲಿ ಈ ಕುರಿತು ಮೊಕದ್ದಮೆ ದಾಖಲಿಸಿದ್ದೇನೆ ಎಂದು ಸುವೇಂದು ಅಧಿಕಾರಿ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ನನ್ನ ಪಾತ್ರವಿದೆ ಎಂಬ ನಿಮ್ಮ ಕಾಲ್ಪನಿಕ ಆರೋಪಗಳಿಗೆ ಸಂಬಂಧಿಸಿದ ಮಾನನಷ್ಟ ನೋಟಿಸ್ಗೆ ನೀವು ಉತ್ತರ ನೀಡದೆ ಮೌನವಹಿಸಿರುವುದರಿಂದ ನಿಮಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ನಿಮ್ಮ ದುಸ್ಸಾಹಸಕ್ಕಾಗಿ ನಿಮ್ಮನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುವ ನನ್ನ ಮಾತನ್ನು ನಾನು ಉಳಿಸಿಕೊಂಡಿದ್ದೇನೆ. ಇಂದು ನಿಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದೇನೆ. ನೀವು ನಿಮ್ಮ ವಕೀಲರನ್ನು ಬೇಗ ಸಂಪರ್ಕಿಸಿ. ಇಲ್ಲದಿದ್ದರೆ ನೀವು ಶೀಘ್ರದಲ್ಲೇ ನನಗೆ 100 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕಾಗುತ್ತದೆ. ನಾನು ಅದನ್ನು ದೇಣಿಗೆಯಾಗಿ ನೀಡುತ್ತೇನೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ತಮ್ಮ ಮೇಲೆ ಆರೋಪ ಹೊರಿಸಿದ ಮಮತಾ ಬ್ಯಾನರ್ಜಿಗೆ ತಮ್ಮ ವಕೀಲರ ಮೂಲಕ ಸುವೇಂದು ಅಧಿಕಾರಿ ಈ ಮೊದಲು ನೋಟಿಸ್ ಕಳುಹಿಸಿದ್ದರು.
ಭೀಮಣ್ಣ ಖಂಡ್ರೆ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ
ಬೆಳಗಾವಿ: ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಂಪುಟ ಸಹೋದ್ಯೋಗಿಗಳಾದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರ ತಂದೆಯಾಗಿರುವ ಡಾ. ಭೀಮಣ್ಣ ಖಂಡ್ರೆ ಅವರು ಸಮಾಜದ ಹಿರಿಯ ಮುಖಂಡರಾಗಿದ್ದು, ಹಲವು ಸ್ಥಾನಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ತಿಳಿಸಿದ್ದಾರೆ. ಡಾ. ಭೀಮಣ್ಣ ಖಂಡ್ರೆ ಅವರು ಹೈದ್ರಾಬಾದ್ ಕರ್ನಾಟಕ ವಿಮೋಚನೆ, ಕರ್ನಾಟಕ ಏಕೀಕರಣ ಹಾಗೂ ದೇಶದ ಸ್ವಾತಂತ್ರ್ಯ ಸೇರಿದಂತೆ ಹಲವು ಮಹತ್ವದ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶರಣ ಶ್ರೇಷ್ಠರಾಗಿ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆಗೆ ಮಹತ್ವದ ಕೊಡುಗೆ ನೀಡಿದ ಅವರು, ಶಾಸಕರಾಗಿ ಹಾಗೂ ಸಚಿವರಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಸ್ಮರಿಸಿದರು. ಈ ದುಃಖದ ಸಂದರ್ಭದಲ್ಲಿ ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಖಂಡ್ರೆ ಕುಟುಂಬದ ಸದಸ್ಯರಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.
BMC ಚುನಾವಣೆ: ಬಿಜೆಪಿಯ ಮೂರನೇ ಒಂದರಷ್ಟು ಸ್ಥಾನಗಳಷ್ಟೇ ಗೆದ್ದರೂ ಶಿಂಧೆ ‘ಕಿಂಗ್ಮೇಕರ್’!
ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ನೇತೃತ್ವದ ಮಹಾಯುತಿ ಕೂಟ ಸಜ್ಜಾಗಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆಯ 227 ಸ್ಥಾನಗಳ ಪೈಕಿ ಮಹಾಯುತಿ ಕೂಟ 118 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 89 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದ್ದರೆ, ಮಿತ್ರಪಕ್ಷ ಶಿವಸೇನೆ (ಶಿಂಧೆ ಬಣ) 29 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 2022ರ ವರೆಗೆ 25 ವರ್ಷಗಳ ಕಾಲ ಠಾಕ್ರೆ ಕುಟುಂಬದ ಹಿಡಿತದಲ್ಲಿದ್ದ ಬಿಎಂಸಿ ಇದೀಗ ಉದ್ಧವ್ ಠಾಕ್ರೆ ಅವರ ಕೈತಪ್ಪುವುದು ನಿಶ್ಚಿತವಾಗಿದೆ. ಆದಾಗ್ಯೂ ಬಿಜೆಪಿಯ ಮೂರನೇ ಒಂದರಷ್ಟು ಸ್ಥಾನಗಳನ್ನು ಮಾತ್ರ, ಅಂದರೆ ಕೇವಲ 29 ಸ್ಥಾನಗಳನ್ನು ಗೆದ್ದಿರುವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಬಹುಮತಕ್ಕೆ 114 ಸ್ಥಾನಗಳ ಅಗತ್ಯವಿರುವ ಹಿನ್ನೆಲೆಯಲ್ಲಿ, ಬಿಜೆಪಿ ಶಿಂಧೆ ಅವರ ಒತ್ತಡ ತಂತ್ರಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಕೇವಲ 29 ಸ್ಥಾನಗಳನ್ನು ಗೆದ್ದಿದ್ದರೂ ಶಿಂಧೆ ‘ಕಿಂಗ್ಮೇಕರ್’ ಆಗುವ ಎಲ್ಲ ಸಾಧ್ಯತೆಗಳಿವೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. “ಬಿಎಂಸಿ ಮೇಯರ್ ಹುದ್ದೆ ಶಿವಸೇನೆ (ಶಿಂಧೆ ಬಣ)ಗೆ ಸಿಗಬೇಕು ಎಂಬ ಅಂಶವನ್ನು ಬಿಜೆಪಿಗೆ ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಇದು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯ ಪ್ರಶ್ನೆ” ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ. 2024ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶಿಂಧೆ ಬಣ ಕೇವಲ 57 ಸ್ಥಾನಗಳನ್ನು ಹೊಂದಿದ್ದರೂ, 132 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಶಿಂಧೆಗೆ ಬಿಟ್ಟುಕೊಟ್ಟ ರೀತಿಯಲ್ಲೇ, ಬಿಎಂಸಿಯಲ್ಲೂ ಮೇಯರ್ ಹುದ್ದೆಯನ್ನು ಬಿಟ್ಟುಕೊಡಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. “ನಮ್ಮ ಕಾರ್ಯಸೂಚಿ ಅಭಿವೃದ್ಧಿಯೇ. ನಾವು ಮಹಾಯುತಿಯಾಗಿ ಚುನಾವಣೆ ಎದುರಿಸಿದ್ದೇವೆ. ಇಂದಿಗೂ ಒಟ್ಟಿಗೆ ಕುಳಿತು ಚರ್ಚಿಸಿ, ಮುಂಬೈ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂತಿಮ ಫಲಿತಾಂಶಗಳ ಪ್ರಕಾರ, ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 89, ಶಿವಸೇನೆ (ಯುಬಿಟಿ) 65, ಶಿವಸೇನೆ (ಶಿಂಧೆ ಬಣ) 29, ಕಾಂಗ್ರೆಸ್ 24, ಎಂಎನ್ಎಸ್ 6, ಎನ್ಸಿಪಿ (ಅಜಿತ್ ಪವಾರ್) 3 ಹಾಗೂ ಎನ್ಸಿಪಿ (ಶರದ್ ಪವಾರ್) 1 ಸ್ಥಾನಗಳನ್ನು ಗೆದ್ದಿವೆ. ಉಳಿದ 10 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಿದ್ದಾರೆ.
Chabahar Port: ಭಾರತ ಚಾಬಹಾರ್ ಬಂದರು ಬಿಟ್ಟುಕೊಡಲ್ಲ, ಇಲ್ಲಿದೆ ಹೊಸ ಮಾಸ್ಟರ್ ಪ್ಲಾನ್!
ಭಾರತ ಮತ್ತು ಇರಾನ್ ನಡುವೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ವ್ಯಾಪಾರ &ವ್ಯವಹಾರ ನಡೆಯುತ್ತಾ ಬಂದಿದೆ. ಭಾರತ ಜಗತ್ತಿನ ಬಹುತೇಕ ಎಲ್ಲಾ ದೇಶಗಳ ಜೊತೆಗೆ ಉತ್ತಮ ಸಂಬಂಧ ಕಾಪಾಡಿಕೊಂಡು ಬಂದಿದ್ದು, ಒಂದು ಕಡೆ ಪಾಶ್ಚಿಮಾತ್ಯರು ಹಾಗೂ ಇನ್ನೊಂದು ಕಡೆ ಪಾಶ್ಚಿಮಾತ್ಯರ ಶತ್ರು ದೇಶಗಳ ಜೊತೆಗೂ ಉತ್ತಮ ಸಂಬಂಧ ಹೊಂದಿದೆ. ಅದೇ ರೀತಿ ಇರಾನ್ ಜೊತೆಯಲ್ಲೂ ವ್ಯಾಪಾರ ಸಂಬಂಧ
ಜೆಡಿಎಸ್’ನಿಂದ ಲೀಸ್ ಮೇಲೆ ಕಾಂಗ್ರೆಸ್ಸಿಗೆ : ಕಿರಿಯರಾದ ಕುಮಾರಸ್ವಾಮಿಗೆ ಹಿರಿಯರಾದ HC ಮಹದೇವಪ್ಪ ಕಿವಿಮಾತು
HD Kumaraswamy Vs Dr. HC Mahadevappa : ಜೆಡಿಎಸ್ ಕಚೇರಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತಿಗೆ ಸಚಿವ ಡಾ.ಮಹದೇವಪ್ಪ ಗರಂ ಆಗಿದ್ದಾರೆ. ಸಾಂವಿಧಾನಿಕ ಹುದ್ದೆಗೆ ಗೌರವ ಕೊಡುವುದನ್ನು ಮೊದಲು ಅವರು ಕಲಿಯಲಿ ಎಂದು ಬುದ್ದಿಮಾತನ್ನು ಹೇಳಿದ್ದಾರೆ. ಈ ಅಣ್ಣ ತಮ್ಮಂದಿರದ್ದು ಕಟ್ಟಿಕೊಂಡು ನನಗೇನಾಗಬೇಕು ಮತ್ತು ಜೆಡಿಎಸ್’ನಿಂದ ಕಾಂಗ್ರೆಸ್ ಪಾರ್ಟಿಗೆ ಹೋದ ನಾಯಕರ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದರು.
‘ರಿಪಬ್ಲಿಕ್ ಆಫ್ ಬಳ್ಳಾರಿ ಈಸ್ ಬ್ಯಾಕ್’
14 ವರ್ಷ ಅಜ್ಞಾತವಾಸದ ಬಳಿಕ ಬಳ್ಳಾರಿಯಲ್ಲಿ ಬಂದೂಕುಗಳಿಂದ ಗುಂಡುಗಳು ಮೊರೆತಿವೆ. ಕಲ್ಲುಗಳು ತೂರಾಡಿವೆ. ಮಚ್ಚು ಮತ್ತು ಕತ್ತಿ ಝಳಪಿಸಿವೆ. 2011ರ ಬಳಿಕ ಮೂಲೆ ಸೇರಿ, ತುಕ್ಕು ಹಿಡಿದಿದ್ದ ಶಸ್ತ್ರಗಳನ್ನು ಹೊರತೆಗೆದು ಹೊಸ ವರ್ಷದ ಮೊದಲ ದಿನವೇ ‘ರಕ್ತ ತರ್ಪಣ’ ಬಿಡಲಾಗಿದೆ. ಹಣ ಮತ್ತು ತೋಳ್ಬಲದಿಂದ ಮೆರೆಯುತ್ತಿದ್ದ ಜಟ್ಟಿಯನ್ನು ಇಷ್ಟು ವರ್ಷ ಕೇಳುವವರಿರಲಿಲ್ಲ. ಈಗ ಸೆಡ್ಡು ಹೊಡೆಯುವ ಮತ್ತೊಬ್ಬ ಜಟ್ಟಿ ‘ಅಖಾಡ’ಕ್ಕಿಳಿದಿದ್ದಾರೆ. ಜಟ್ಟಿಗಳ ಕಾಳಗ ಎಲ್ಲಿಗೆ ಹೋಗಿ ಮುಟ್ಟುವುದೋ? ‘ರಿಪಬ್ಲಿಕ್ ಆಫ್ ಬಳ್ಳಾರಿ ಈಸ್ ಬ್ಯಾಕ್’. 14 ವರ್ಷ ಅಜ್ಞಾತವಾಸದ ಬಳಿಕ ಬಳ್ಳಾರಿಯಲ್ಲಿ ಬಂದೂಕುಗಳಿಂದ ಗುಂಡುಗಳು ಮೊರೆತಿವೆ. ಕಲ್ಲುಗಳು ತೂರಾಡಿವೆ. ಮಚ್ಚು ಮತ್ತು ಕತ್ತಿ ಝಳಪಿಸಿವೆ. 2011ರ ಬಳಿಕ ಮೂಲೆ ಸೇರಿ, ತುಕ್ಕು ಹಿಡಿದಿದ್ದ ಶಸ್ತ್ರಗಳನ್ನು ಹೊರತೆಗೆದು ಹೊಸ ವರ್ಷದ ಮೊದಲ ದಿನವೇ ‘ರಕ್ತ ತರ್ಪಣ’ ಬಿಡಲಾಗಿದೆ. ಹಣ ಮತ್ತು ತೋಳ್ಬಲದಿಂದ ಮೆರೆಯುತ್ತಿದ್ದ ಜಟ್ಟಿಯನ್ನು ಇಷ್ಟು ವರ್ಷ ಕೇಳುವವರಿರಲಿಲ್ಲ. ಈಗ ಸೆಡ್ಡು ಹೊಡೆಯುವ ಮತ್ತೊಬ್ಬ ಜಟ್ಟಿ ‘ಅಖಾಡ’ಕ್ಕಿಳಿದಿದ್ದಾರೆ. ಜಟ್ಟಿಗಳ ಕಾಳಗ ಎಲ್ಲಿಗೆ ಹೋಗಿ ಮುಟ್ಟುವುದೋ? ಕಲ್ಯಾಣ- ಕರ್ನಾಟಕ ಭಾಗವಾಗಿರುವ ಬಳ್ಳಾರಿಯಲ್ಲಿ ಕಬ್ಬಿಣ ಅದಿರು, ಮ್ಯಾಂಗನೀಸ್, ಗ್ರ್ಯಾನೈಟ್, ಕಪ್ಪು ಕಲ್ಲು, ಮರಳು ಸೇರಿ ಹೇರಳ ನಿಸರ್ಗ ಸಂಪತ್ತಿದ್ದರೂ ಜಿಲ್ಲೆ ಹಿಂದುಳಿದಿದೆ. ಆರ್ಥಿಕ ಚಟುವಟಿಕೆಯಲ್ಲಿ ಗಣಿಗಾರಿಕೆ ಪ್ರಮುಖ ಪಾತ್ರ ವಹಿಸಿದರೂ ಜನ ಬಡವರಾಗಿಯೇ ಉಳಿದಿದ್ದಾರೆ. ಗಣಿಗಾರಿಕೆ ಫಲವಾಗಿ ಕಾಣಿಸಿಕೊಂಡ ರೋಗಗಳು ಬೆನ್ನಿಗಂಟಿವೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಬೆರಳೆಣಿಕೆ ಸಂಖ್ಯೆಯ ಕುಟುಂಬಗಳು ನೈಸರ್ಗಿಕ ಸಂಪತ್ತು ಲೂಟಿ ಹೊಡೆದಿವೆ. ಬಳ್ಳಾರಿ ಗಣಿಗಾರಿಕೆಗೆ ತಲೆಮಾರುಗಳ ಇತಿಹಾಸವಿದೆ. ಅನೇಕ ಕುಟುಂಬಗಳು ಮೂರ್ನಾಲ್ಕು ತಲೆಮಾರುಗಳಿಂದ ಗಣಿಗಾರಿಕೆ ನಡೆಸುತ್ತಿವೆ. ಸಂಡೂರಿನ ಘೋರ್ಪಡೆ ರಾಜ ಮನೆತನ, ಎಚ್. ಆರ್. ಗವಿಯಪ್ಪ, ಅಲ್ಲಂ ಕರಿಬಸಪ್ಪ, ಟಪಾಲ್ ತಿಮ್ಮಪ್ಪ, ಸತ್ಯನಾರಾಯಣ ಸಿಂಗ್ ಸೇರಿದಂತೆ ಹಲವು ಕುಟುಂಬಗಳು ಗಣಿಗಾರಿಕೆ ಉದ್ಯಮದಲ್ಲಿವೆ. ಉತ್ತರದ ಸಲಗಾಂವಕರ್, ದಾಲ್ಮಿಯಾ, ಡೆಂಪೊ, ಬಲ್ದೋಟ, ಎಸ್.ಕೆ. ಮೋದಿಯಂಥ ಕಂಪೆನಿಗಳೂ ಗಣಿಗಾರಿಕೆ ನಡೆಸುತ್ತಿವೆ. ಕೆಲವು ಕುಟುಂಬಗಳು ಗಣಿಗಾರಿಕೆಯಿಂದ ದೂರ ಸರಿದಿವೆ. ಇವು ಅದಿರು ಲೂಟಿ ಮಾಡಿಲ್ಲ ‘ಗಣಿ ಧಣಿ’ ಎಂದು ಕರೆಸಿಕೊಂಡಿಲ್ಲ. 2004-05ರಿಂದ ಅದಿರಿಗೆ ಚೀನಾದಲ್ಲಿ ವಿಪರೀತ ಬೇಡಿಕೆ ಬಂತು. ಕಂಡರಿಯದ ದರ ಸಿಕ್ಕಿತು. 2000-01ರಿಂದ ಗಣಿಗಾರಿಕೆ ಆರಂಭಿಸಿದ ಹೊಸಬರಿಗೆ ತಲೆ ತಿರುಗಿತು. ‘ರೆಡ್ಡಿ ಬ್ರದರ್ಸ್’ ಅದೇ ವೇಳೆ ಗಣಿಗಾರಿಕೆಗೆ ಕಾಲಿಟ್ಟರು. ಅಕ್ರಮವಾಗಿ ಅದಿರು ದೋಚಿದರು. ಹಣ ಬಾಚಿದರು. ‘ಸಾಮ್ರಾಜ್ಯ’ ಕಟ್ಟಿದರು. ಬಳ್ಳಾರಿಯಲ್ಲಿ ಗಣಿ ಲೂಟಿಕೋರರ ಮನೆಗಳನ್ನು ನೋಡಬೇಕು. ಮನೆಗಳಲ್ಲ. ಅರಮನೆಗಳು. ಎಂ.ವೈ. ಘೋರ್ಪಡೆ ಅರಸು ಕಾಲದಲ್ಲೇ ಸಚಿವರಾಗಿದ್ದರು. ಅದೂ ಅರಣ್ಯ ಇಲಾಖೆ ಹೊಣೆ ಹೊತ್ತಿದ್ದರು. ಕಾಂಗ್ರೆಸ್ನ ಬೇರೆ ಬೇರೆ ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿದ್ದರು. ಅಧಿಕಾರ ದುರ್ಬಳಕೆ ಮಾಡಲಿಲ್ಲ. ಕಾಯ್ದೆ- ಕಾನೂನು ಮುರಿಯಲಿಲ್ಲ. ಗಣಿಗಾರಿಕೆಗೆ ನೋಟಿಫೈ ಆಗಿದ್ದ 2,500 ಹೆಕ್ಟೇರ್ ಭೂಮಿ ಬೇಡವೆಂದು ಸರಕಾರಕ್ಕೆ ಮರಳಿಸಿದರು. ಯಾರಿಂದಲೂ ಅವರು ‘ಗಣಿ ಧಣಿ’ ಎಂದು ಕರೆಸಿಕೊಳ್ಳಲಿಲ್ಲ! ರೆಡ್ಡಿಗಳು ಅವರಿಗೆ ತದ್ವಿರುದ್ಧ. ಐದಾರು ವರ್ಷಗಳಲ್ಲಿ ಅದಿರು ಲೂಟಿ ಮಾಡಿ, ಸಾಮ್ರಾಜ್ಯ ಕಟ್ಟಿದರು. (ಲೋಕಾಯುಕ್ತ ವರದಿ ಗಣಿ ಹೇಗೆ ಲೂಟಿ ಹೊಡೆದಿದ್ದಾರೆ ಎಂದು ಹೇಳಿದೆ) ಸಾಮ್ರಾಜ್ಯ ರಕ್ಷಣೆಗೆ ಕಾಲಾಳು ನೇಮಿಸಿದರು. ಶಸ್ತ್ರಾಸ್ತ್ರ ಇಟ್ಟುಕೊಂಡರು. ಬೆಂಗಾವಲು ಪಡೆ ನಿಯೋಜಿಸಿದರು. ಹಿಂದೆಯೇ ಬಂತು ಹೊಡಿ- ಬಡಿ ಸಂಸ್ಕೃತಿ. ಬಹುಶಃ 2007 ಇರಬೇಕು. ಪಾಲಿಕೆ ಚುನಾವಣೆಯಲ್ಲಿ ಮದ್ದು-ಗುಂಡು ಪ್ರಯೋಗವಾಯಿತು. ಇದು ಮೂಲತಃ ಆಂಧ್ರ ಸಂಸ್ಕೃತಿ. 2010ರಲ್ಲಿ ಗಣಿ ಉದ್ಯಮಿ ಟಪಾಲ್ ಗಣೇಶ್ ಅವರ ಮೇಲೆ ಹಲ್ಲೆಯಾಯಿತು. ಅದೇ ಸಮಯದಲ್ಲಿ ಕಾರ್ಪೊರೇಟರ್ ಪದ್ಮಾವತಿ ಯಾದವ್ ಕೊಲೆ ನಡೆಯಿತು. ಯಾರು ಮಾಡಿದರೆಂಬ ಸುಳಿವಿಲ್ಲ. 1999ರ ಲೋಕಸಭೆ ಚುನಾವಣೆ ರೆಡ್ಡಿ ಬ್ರದರ್ಸ್ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಿತು. ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಅವರೆದುರು ಸುಷ್ಮಾ ಸ್ವರಾಜ್ ಬಿಜೆಪಿ ಅಭ್ಯರ್ಥಿ. ರೆಡ್ಡಿಗಳಿಗೆ ಸುಷ್ಮಾ ಅವರ ಸಂಪರ್ಕ ಸಿಕ್ಕಿತು. ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಸೋತರು. ಅದರ ಜತೆಗೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಿತು. ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತು. 2008ರ ವಿಧಾನಸಭೆ ಚುನಾವಣೆ ಉಲ್ಟಾ ಆಯಿತು. ಅವಧಿಗೆ ಮುನ್ನ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ 110 ಸ್ಥಾನ ಪಡೆಯಿತು. ಬಳ್ಳಾರಿ ಜಿಲ್ಲೆಯ ಒಂಭತ್ತು ಕ್ಷೇತ್ರಗಳಲ್ಲಿ ಎಂಟರಲ್ಲಿ ಗೆದ್ದಿತು. ಮೊದಲ ಸಲ ಕಾಂಗ್ರೆಸ್ ಕೋಟೆ ಅಲುಗಾಡಿತು. ಬಹುಮತಕ್ಕೆ ಕಡಿಮೆ ಬಿದ್ದ ಸ್ಥಾನಗಳನ್ನು ‘ಆಪರೇಷನ್ ಕಮಲ’ ಮಾಡಿ ರೆಡ್ಡಿ ತುಂಬಿದರು. ಕರ್ನಾಟಕ ರಾಜಕಾರಣದಲ್ಲಿ ಅವರ ಪ್ರಭಾವ ಬೆಳೆಯಿತು. ಇಡೀ ದೇಶ ಅವರತ್ತ ನೋಡಿತು. ಕಾಂಗ್ರೆಸ್ ಸಖ್ಯ ತೊರೆದು 2006ರಲ್ಲಿ ಹೊರಬಂದಿದ್ದ ಜೆಡಿಎಸ್, ಬಿಜೆಪಿ ಜತೆ ಸಮ್ಮಿಶ್ರ ಸರಕಾರ ಮಾಡಿತು. ಎಚ್.ಡಿ. ಕುಮಾರಸ್ವಾಮಿ ಸರಕಾರದಲ್ಲಿ ಶ್ರೀರಾಮುಲು ಕ್ಯಾಬಿನೆಟ್ ಸಚಿವರಾದರು. 2008ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಜನಾರ್ದನ ರೆಡ್ಡಿ ಸಚಿವ. ಬಳ್ಳಾರಿ ಜಿಲ್ಲೆ ಉಸ್ತುವಾರಿ ಹೊತ್ತಿದ್ದ ರೆಡ್ಡಿ ಮೆರೆದಿದ್ದು ಅಷ್ಟಿಷ್ಟಲ್ಲ. ಹೇಳಿದ್ದೇ ಮಾತು. ನಡೆದಿದ್ದೇ ಹಾದಿ. ಮಾಡಿದ್ದೇ ಕಾನೂನು. ಲೋಕಾಯುಕ್ತ ತನಿಖೆ ಅದೇ ಅವಧಿಯದ್ದು. ಆಗಲೇ ಬಳ್ಳಾರಿ ‘ರಿಪಬ್ಲಿಕ್’ ಖ್ಯಾತಿಗೆ ಭಾಜನವಾಗಿದ್ದು. ಕರ್ನಾಟಕ-ಆಂಧ್ರ ಗಡಿಯನ್ನೇ ಒತ್ತುವರಿ ಮಾಡಲಾಯಿತು. ಅಕ್ರಮಕ್ಕೆ ಅಡ್ಡಿಯಾಗಿದ್ದ ದೇವಸ್ಥಾನ ಕೆಡವಲಾಯಿತು. ಬೇರೆಯವರ ಗಣಿಗಳಿಗೂ ಲಗ್ಗೆ ಇಡಲಾಯಿತು. ಮೀಸಲು ಅರಣ್ಯದೊಳಕ್ಕೂ ನುಸುಳಲಾಯಿತು. ಆಂಧ್ರದಲ್ಲಿ ಗಣಿ ಗುತ್ತಿಗೆ ಪಡೆದು, ಕರ್ನಾಟಕದ ಅದಿರು ಬಾಚಲಾಯಿತು. ಗಣಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಬಿಐ, ಸಿಇಸಿ, ರಾಜ್ಯದ ಎಸ್ಐಟಿಗೂ ಗಣಿ ಲೂಟಿ ನಿಖರವಾದ ಲೆಕ್ಕ ಸಿಕ್ಕಿಲ್ಲ. ಬಂದರು, ಕಸ್ಟಮ್ಸ್, ಪೊಲೀಸ್, ಗಣಿ-ಭೂ ವಿಜ್ಞಾನ, ಅರಣ್ಯ, ಸಾರಿಗೆ, ಸಿಆರ್ಝಡ್, ತೂಕ ಮತ್ತು ಅಳತೆ ಒಳಗೊಂಡಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೂ ಲೂಟಿಯಲ್ಲಿ ಶಾಮೀಲಾಗಿದ್ದಾರೆ. ಅವರಿಗೆ ಕೊಟ್ಟ ಕೋಟ್ಯಂತರ ರೂಪಾಯಿ ಲಂಚದ ಬಗ್ಗೆಯೂ ಲೋಕಾ ವರದಿಯಲ್ಲಿ ಉಲ್ಲೇಖವಿದೆ. ಕೆಲವು ಶಾಸಕರು, ಸಂಸದರಿಗೂ ‘ಕಪ್ಪ’ ಸಂದಾಯ ಆಗಿದೆ ಎಂಬ ಸಂಗತಿ ದಿಗಿಲು ಹುಟ್ಟಿಸುತ್ತದೆ. ಆದರೂ ಯಾರ ಮೇಲೂ ಕ್ರಮವಿಲ್ಲ. ಇದೆಂಥ ಪ್ರಜಾ ರಾಜ್ಯ? ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅಕ್ರಮ ಗಣಿಗಾರಿಕೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ‘‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’’ ಎಂದು ಸುರೇಶ್ ಬಾಬು ಸವಾಲು ಹಾಕಿದರು. ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹೋಯಿತು. ಮುಖ್ಯಮಂತ್ರಿ ಆದ ಬಳಿಕ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಕಡೆ ಗಮನ ಹರಿಸಲಿಲ್ಲ. ಮನಸ್ಸು ಮಾಡಿದ್ದರೆ ಬಳ್ಳಾರಿ ಹಣೆ ಬರಹ ಬದಲಿಸಬಹುದಿತ್ತು. ಲೋಕಾಯುಕ್ತ ವರದಿ ಮೇಲೆ ಕ್ರಮ ಕೈಗೊಳ್ಳಬಹುದಿತ್ತು. ಎಸ್ಐಟಿ ತನಿಖೆ ಚುರುಕುಗೊಳಿಸಿ, ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಬಹುದಿತ್ತು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬಹುದಿತ್ತು. ವಿಪರ್ಯಾಸವೆಂದರೆ, ಅಕ್ರಮ ಗಣಿಗಾರಿಕೆಗೆ ಸಹಕರಿಸಿ, ಎಂಎಂಎಲ್ಗೆ ಭಾರೀ ನಷ್ಟ ಮಾಡಿದ ಅಧಿಕಾರಿಗಳನ್ನು ಆರೋಪ ಮುಕ್ತಗೊಳಿಸಲಾಯಿತು. ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದಲ್ಲಿ ಒತ್ತುವರಿಯಾಗಿರುವ ನಮ್ಮ ಕಡೆಯ ಗಡಿಯನ್ನು ನಿಖರವಾಗಿ ಗುರುತಿಸಿ ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸಿಇಸಿ ಮುಂದೆ ಮಂಡಿಸುವ ಕೆಲಸ ಸಮರ್ಥವಾಗಿ ಮಾಡಲಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ವಿಷಯವನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂಬ ಆರೋಪಗಳಿವೆ. ‘ಅಕ್ರಮ ಗಣಿಗಾರಿಕೆಯಿಂದ ಆದ ನಷ್ಟವನ್ನು ಸಂಬಂಧಪಟ್ಟವರಿಂದ ತುಂಬಿಕೊಳ್ಳಬೇಕು. ಅವರ ಆಸ್ತಿ ಜಪ್ತಿ ಮಾಡಬೇಕು’ ಎಂಬ ಲೋಕಾಯುಕ್ತ ಶಿಫಾರಸನ್ನು ಕಾಂಗ್ರೆಸ್ ಸರಕಾರ ಅನುಷ್ಠಾನಕ್ಕೆ ತರಲು ತಡ ಮಾಡಿತು. ಸಿಇಸಿಯೂ ಈ ಬಗ್ಗೆ ಸರಕಾರಕ್ಕೆ ತಾಕೀತು ಮಾಡಿತು. ಇಷ್ಟಾದರೂ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿಲ್ಲ. ಸುಪ್ರೀಂ ಕೋರ್ಟ್ ಸರಕಾರದ ಕಾಲೆಳೆದ ಬಳಿಕವಷ್ಟೇ ಸರಕಾರ ಎಚ್ಚೆತ್ತುಕೊಂಡಿದೆ. ವಸೂಲಾತಿ ಪ್ರಕ್ರಿಯೆ ಆರಂಭಿಸಿದೆ. ಕನಿಷ್ಠವೆಂದರೂ ಅಕ್ರಮ ಗಣಿಗಾರಿಕೆಯಿಂದ ಒಂದು ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಲೋಕಾಯುಕ್ತ ಅಂದಾಜಿಸಿದೆ. ಕಾನೂನು- ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲರ ಅಧ್ಯಕ್ಷತೆಯಲ್ಲಿ ನೇಮಿಸಲಾಗಿದ್ದ ಸಚಿವ ಸಂಪುಟದ ಉಪ ಸಮಿತಿಯೂ 76 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದಿದೆ. ಈ ನಷ್ಟ ತುಂಬಿಕೊಳ್ಳಲು ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ.ಕೆ.ರಾವ್ ನೇತೃತ್ವದಲ್ಲಿ ‘ರಿಕವರಿ ಟ್ರಿಬ್ಯುನಲ್’ ರಚನೆ ಮಾಡಲಾಗಿದೆ. ಇನ್ನು ಈ ತಿಂಗಳ ಒಂದರಂದು ನಡೆದ ಘರ್ಷಣೆಗೆ ಮರಳುವುದಾದರೆ, ತಮಗೆ ‘ರಾಜಕೀಯ ಪ್ರಬುದ್ಧತೆ ಇಲ್ಲ’ವೆಂದು ಬಳ್ಳಾರಿ ನಗರ ಶಾಸಕ ನಾ.ರಾ. ಭರತ್ ರೆಡ್ಡಿ ನಿರೂಪಿಸಿದ್ದಾರೆ. ರೆಡ್ಡಿ ಬ್ರದರ್ಸ್ ಆಂಡ್ ಫ್ರೆಂಡ್ಸ್ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಗಂಗಾವತಿಯಲ್ಲಿ ಕೆಆರ್ಪಿಪಿಯಿಂದ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಬಿಟ್ಟರೆ, ಅವರ ಪಕ್ಷದ ಯಾರೊಬ್ಬರೂ ಗೆದ್ದಿಲ್ಲ. ಅಷ್ಟೇ ಅಲ್ಲ, ಬಿಜೆಪಿ ನೆಲೆ ಕಳೆದುಕೊಂಡಿದೆ. ಅವಿಭಜಿತ ಬಳ್ಳಾರಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಅದು ಗೆದ್ದಿರುವುದು ಒಂದರಲ್ಲಿ ಮಾತ್ರ. ವಿಧಾನಸಭೆ ಚುನಾವಣೆ ಬಳಿಕ ರೆಡ್ಡಿಗಳ ಮನೆ ಮೂರು ಭಾಗವಾಗಿತ್ತು. ‘ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ನ ನಾಗೇಂದ್ರ ಗೆಲುವಿಗೆ ಜನಾರ್ದನರೆಡ್ಡಿ ಪರೋಕ್ಷವಾಗಿ ಸಹಕರಿಸಿದರು’ ಎಂದು ಶ್ರೀರಾಮುಲು ಮುನಿಸಿಕೊಂಡಿದ್ದರು. ಈ ಘಟನೆ ಎಲ್ಲರನ್ನೂ ಒಗ್ಗೂಡಿಸಿತು. ಅಕ್ರಮ ಗಣಿಗಾರಿಕೆಯಿಂದ ಜೈಲು ಸೇರಿದ್ದ ರೆಡ್ಡಿ ಅವರನ್ನು ಮುಖ್ಯವಾಹಿನಿಗೆ ತಂದಿತು. ಇದಕ್ಕಿಂತ ವಿವೇಕ ರಹಿತ ಕೆಲಸ ಮತ್ತೊಂದಿಲ್ಲ. ‘ನನ್ನ ಹತ್ಯೆಗೆ ಯತ್ನ ನಡೆಯಿತು’ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಭರತ್ ರೆಡ್ಡಿ ನಡೆ ವಿರೋಧಿಸುವ ಬಳ್ಳಾರಿಯ ಜನ, ‘‘ಜನಾರ್ದನ ರೆಡ್ಡಿ ಅವರೇನು ಸಜ್ಜನ-ಸುಸಂಸ್ಕೃತ ರಾಜಕಾರಣಿಯಲ್ಲ. ಬಳ್ಳಾರಿಗೆ ರಿಪಬ್ಲಿಕ್ ಖ್ಯಾತಿ ತಂದಿದ್ದೇ ರೆಡ್ಡಿ. ಅವರ ದಾರಿಯನ್ನೇ ಭರತ್ ರೆಡ್ಡಿ ತುಳಿದಿದ್ದಾರೆ’’ ಎಂದು ಹೇಳುತ್ತಾರೆ. ಕಿರಿಯ ವಯಸ್ಸಿನಲ್ಲಿ ಶಾಸಕರಾದ ಭರತ್ ರೆಡ್ಡಿ ಅನಗತ್ಯವಾಗಿ ಗದ್ದಲ ಮಾಡಿಕೊಂಡಿದ್ದಾರೆ. ಮುಂದಿನ ಉಜ್ವಲ ರಾಜಕೀಯ ಭವಿಷ್ಯ ಮರೆತಿದ್ದಾರೆ. ಘಟನೆಯಲ್ಲಿ ಪೊಲೀಸ್ ವೈಫಲ್ಯವೂ ಇದೆ. ಗುಪ್ತಚರ ಇಲಾಖೆ ಮುಂಚಿತವಾಗಿ ಗಲಭೆ ಗ್ರಹಿಸಲು ಸೋತಿದೆ. ಮಧ್ಯಾಹ್ನದಿಂದಲೇ ಗಲಾಟೆ ಆರಂಭವಾದರೂ ರಾತ್ರಿವರೆಗೂ ಎಲ್ಲರೂ ಏಕೆ ಸುಮ್ಮನಿದ್ದರು ಎಂಬುದು ಉತ್ತರ ಸಿಗದ ಪ್ರಶ್ನೆ. ಒಟ್ಟಾರೆ 11 ವರ್ಷಗಳಿಂದ ಶಾಂತವಾಗಿದ್ದ ಬಳ್ಳಾರಿಯಲ್ಲಿ ಅಶಾಂತಿ ಹೊಗೆಯಾಡುತ್ತಿದೆ.
KCET 2026 ನೋಂದಣಿ ಅಪ್ಡೇಟ್ಸ್: ಇಲ್ಲಿದೆ ಅರ್ಜಿ ಪ್ರಕ್ರಿಯೆ, ಅರ್ಹತೆ, ಪರೀಕ್ಷಾ ದಿನಾಂಕ ಮತ್ತು ಸಂಪೂರ್ಣ ವೇಳಾಪಟ್ಟಿ
KCET 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು KCET 2026 ನೋಂದಣಿ ಪ್ರಕ್ರಿಯೆಯನ್ನು ಶುಕ್ರವಾರ (ಜನವರಿ 16, 2026)ರಿಂದ ಆರಂಭಿಸಿದೆ. ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಹಾಗೂ ಪಶುವೈದ್ಯಕೀಯ ವಿಜ್ಞಾನ ಸೇರಿದಂತೆ ವಿವಿಧ ಪದವಿ ಪೂರ್ವ (UG) ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು cetonline.karnataka.gov.in/kea ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಕೆಸಿಇಟಿ 2026 ಪರೀಕ್ಷೆಯ ನೋಂದಣಿ ಲಿಂಕ್
ಕಲ್ಯಾಣ ಕರ್ನಾಟಕ: ಜನಪ್ರತಿನಿಧಿಗಳ ಜವಾಬ್ದಾರಿ
ಡಾ. ನಂಜುಂಡಪ್ಪನವರ ವರದಿ ಅತ್ಯಂತ ವೈಜ್ಞಾನಿಕವಾಗಿತ್ತು. ಹಿಂದುಳಿದ, ಅತಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಆದ್ಯತೆಯ ಮೇರೆಗೆ ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕೆಂಬುದು ವರದಿಯ ಆಶಯವಾಗಿತ್ತು. ನಂಜುಂಡಪ್ಪ ವರದಿಯನ್ನು ಯಥಾವತ್ತಾಗಿ ಮತ್ತು ಸಮರ್ಪಕವಾಗಿ ಅಭಿವೃದ್ಧಿಪಡಿಸಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಮತ್ತೆ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಬೆಂಗಳೂರು-ಮೈಸೂರು ಭಾಗದಂತೆ ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸುವ ಪ್ರಮೆಯವೇ ಬರುತ್ತಿರಲಿಲ್ಲ. ಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆಯವರು ‘‘ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಸಿಂಗಾಪುರ ಮಾಡುವುದು ಬೇಡ. ಮೈಸೂರು-ಬೆಂಗಳೂರು ಮಟ್ಟದಲ್ಲಿ ಅಭಿವೃದ್ಧಿಪಡಿಸಿ’’ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಬಗೆಗೆ ಇರುವ ಕಾಳಜಿ ನೈಜವಾದುದು. ಅವರು ಅಧಿಕಾರದಲ್ಲಿ ಇದ್ದಾಗಲೆಲ್ಲ ಅಭಿವೃದ್ಧಿ ರಾಜಕಾರಣ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಸಚಿವರಾಗಿದ್ದಾಗ ಸಂವಿಧಾನದ 371ಕಲಂಗೆ ತಿದ್ದುಪಡಿ ಮಾಡಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟಿದ್ದಾರೆ. ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರೂ ಕೈ ಜೋಡಿಸಿದ್ದರು. ವೈಜನಾಥ ಪಾಟೀಲ್ ಮುಂತಾದವರ ಅವಿರತ ಹೋರಾಟವೂ ಒತ್ತಾಸೆಯಾಗಿ ನಿಂತಿತ್ತು. 2013ರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳು ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ಸೇರಿಕೊಂಡಿವೆ. ಏಳೂ ಜಿಲ್ಲೆಗಳಲ್ಲಿನ ಸರಕಾರಿ ನೌಕರಿಗಳಲ್ಲಿ ಪ್ರತಿಶತ ಎಂಭತ್ತರಷ್ಟು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಇಂಜಿನಿಯರಿಂಗ್, ಮೆಡಿಕಲ್ ಮತ್ತು ಇತರ ವೃತ್ತಿಪರ ಕೋರ್ಸ್ಗಳ ಒಟ್ಟು ಸೀಟುಗಳಲ್ಲಿ ಎಂಭತ್ತರಷ್ಟು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಹೊರತು ಪಡಿಸಿದ ಜಿಲ್ಲೆಗಳಲ್ಲಿನ ಸರಕಾರಿ ಉದ್ಯೋಗಗಳು ಮತ್ತು ಇಂಜಿನಿಯರಿಂಗ್-ಮೆಡಿಕಲ್ ಸೀಟುಗಳಲ್ಲಿ ಪ್ರತಿಶತ ಎಂಟು ಸ್ಥಾನಗಳು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ತಕ್ಕ ಮಟ್ಟಿಗೆ ಅನುಕೂಲವಾಗಿದೆ. ಹಾಗೆ ನೋಡಿದರೆ, ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದ್ದಾಗ ವಿಶೇಷ ಸ್ಥಾನಮಾನದ ಬೇಡಿಕೆ ಸಲ್ಲಿಸಲಾಗಿತ್ತು. ಆಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿಯವರು ರಾಜ್ಯ ಸರಕಾರದ ಬೇಡಿಕೆಯನ್ನು ತಿರಸ್ಕರಿಸಿದ್ದರು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರಕಿ ದಶಕಗಳೇ ಕಳೆದಿವೆ. ಹತ್ತಾರು ಸಾವಿರ ಕೋಟಿ ಅನುದಾನ ಹರಿದು ಬಂದಿದೆ. ಹೀಗಿದ್ದಾಗ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಯಾರೋ ಬಂದು ಅಭಿವೃದ್ಧಿಪಡಿಸಬೇಕು ಎಂದು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಕಲ್ಯಾಣ ಕರ್ನಾಟಕದ ಶಾಸಕರಿಗೆ ಪ್ರಮುಖ ಖಾತೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಯಾದವರು ಇದಕ್ಕಿಂತ ಹೆಚ್ಚು ಮಾಡಲಾರರು. ಆದರೆ ಸರಕಾರ ನೀಡಿದ ಅಧಿಕಾರ ಮತ್ತು ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳು ಸಮರ್ಪಕವಾಗಿ ಬಳಸಿಕೊಂಡಿದ್ದಾರೆಯೇ? ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹಿಂದುಳಿದಿರುವಿಕೆಯ ಅಧ್ಯಯನ ಕೈಗೊಳ್ಳಲು ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ನಂಜುಂಡಪ್ಪ ನೇತೃತ್ವದ ಸಮಿತಿ ವ್ಯಾಪಕ ಅಧ್ಯಯನ ನಡೆಸಿ ಕರ್ನಾಟಕ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ನಂಜುಂಡಪ್ಪ ವರದಿ ಕೆಲವು ಶಿಫಾರಸುಗಳನ್ನು ಮಾಡಿತ್ತು. ಕಾಲ ಮಿತಿಯೊಳಗೆ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಸೂಚಿಸಿತ್ತು. ಪ್ರತೀ ವರ್ಷ ಎರಡು ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಎಂಟು ವರ್ಷಗಳ ಅವಧಿಯಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿತ್ತು. ಅಂದರೆ, ವರ್ಷಕ್ಕೆ ಎರಡು ಸಾವಿರದಂತೆ ಎಂಟು ವರ್ಷಗಳ ಕಾಲ ಮಿತಿಯೊಳಗೆ ಒಟ್ಟು ಹದಿನಾರು ಸಾವಿರ ಕೋಟಿ ಹಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ನಂಜುಂಡಪ್ಪನವರ ಖಚಿತ ಅಭಿಪ್ರಾಯವಾಗಿತ್ತು. ಡಾ. ನಂಜುಂಡಪ್ಪನವರ ವರದಿ ಅತ್ಯಂತ ವೈಜ್ಞಾನಿಕವಾಗಿತ್ತು. ಹಿಂದುಳಿದ, ಅತಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಆದ್ಯತೆಯ ಮೇರೆಗೆ ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕೆಂಬುದು ವರದಿಯ ಆಶಯವಾಗಿತ್ತು. ನಂಜುಂಡಪ್ಪ ವರದಿಯನ್ನು ಯಥಾವತ್ತಾಗಿ ಮತ್ತು ಸಮರ್ಪಕವಾಗಿ ಅಭಿವೃದ್ಧಿಪಡಿಸಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಮತ್ತೆ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಬೆಂಗಳೂರು-ಮೈಸೂರು ಭಾಗದಂತೆ ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸುವ ಪ್ರಮೆಯವೇ ಬರುತ್ತಿರಲಿಲ್ಲ. ಕರ್ನಾಟಕ ಸರಕಾರ 2013-14ರಿಂದ 24-25ರ ಅವಧಿಯಲ್ಲಿ ಒಟ್ಟು ರೂ. 19,778.33 ಕೋಟಿ ಅನುದಾನ ಹಂಚಿಕೆ ಮಾಡಿದೆ. ರೂ. 16,228.80 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು ಈ ಹತ್ತು ವರ್ಷಗಳ ಅವಧಿಯಲ್ಲಿ ರೂ. 13,893.32 ಕೋಟಿ ಖರ್ಚು ಮಾಡಿದೆ. ರಾಜ್ಯ ಸರಕಾರ ಬಿಡುಗಡೆ ಮಾಡಿದ ಅನುದಾನದಲ್ಲಿ ಇಲ್ಲಿಯವರೆಗೆ 41,103 ಕಾಮಗಾರಿಗಳನ್ನು ಕೈಗೊಂಡಿದ್ದು ಅವುಗಳಲ್ಲಿ 32,985 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 6,507 ಕಾಮಗಾರಿಗಳು ಪ್ರಗತಿಯಲ್ಲಿವೆ. 2025-26ನೇ ಸಾಲಿಗೆ ಕರ್ನಾಟಕ ಸರಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಮತ್ತೆ 5,000 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಪ್ರಾದೇಶಿಕ ಅಸಮಾನತೆ ಅಧ್ಯಯನಕ್ಕೆ ಡಾ. ಗೋವಿಂದರಾವ್ ಸಮಿತಿ ರಚಿಸಿ ವರದಿ ತರಿಸಿಕೊಂಡಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರೆತ ಮೇಲೆ ನಿರಂತರ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರ ಸರಕಾರ ಆಡಳಿತ ನಡೆಸಿತ್ತು. ಆಗ ಡಾ. ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಖಮರುಲ್ ಇಸ್ಲಾಂ, ಶಿವರಾಜ್ ತಂಗಡಗಿ, ಬಾಬುರಾವ್ ಚಿಂಚನಸೂರ್, ಡಾ. ಎ.ಬಿ. ಮಾಲಕರೆಡ್ಡಿ ಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಸರಕಾರದ ಉತ್ತರಾರ್ಧದಲ್ಲಿ ಈಶ್ವರ್ ಖಂಡ್ರೆ, ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ ಮಂತ್ರಿಗಳಾಗಿದ್ದರು. ಪ್ರಿಯಾಂಕ್ ಖರ್ಗೆಯವರು ಎಚ್.ಡಿ. ಕುಮಾರ ಸ್ವಾಮಿಯವರ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲೂ ಮಂತ್ರಿಯಾಗಿದ್ದರು. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬಿಜೆಪಿ ಸರಕಾರ ಏನೇನೂ ಮಾಡಲಿಲ್ಲ ಒಪ್ಪಿಕೊಳ್ಳೋಣ. ಎಲ್.ಕೆ. ಅಡ್ವಾಣಿ ವಿಶೇಷ ಸ್ಥಾನಮಾನದ ಬೇಡಿಕೆ ತಿರಸ್ಕರಿಸಿದರು. ಬಿಜೆಪಿ ನಾಯಕರು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದೇ ಷರಾ ಬರೆಯೋಣ. ಆದರೆ ಕಾಂಗ್ರೆಸ್ ನಾಯಕರು ಇಷ್ಟೆಲ್ಲ ಅಧಿಕಾರ ಹೊಂದಿಯೂ ಕಲ್ಯಾಣ ಕರ್ನಾಟಕವನ್ನು ಯಾಕೆ ಬೆಂಗಳೂರು-ಮೈಸೂರು ಮಟ್ಟದಲ್ಲಿ ಅಭಿವೃದ್ಧಿಪಡಿಸಲಿಲ್ಲ? ಡಾ. ಶರಣಪ್ರಕಾಶ್ ಪಾಟೀಲ್ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ನಿರಂತರ ಐದು ವರ್ಷಗಳ ಕಾಲ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಆ ಅವಧಿಯಲ್ಲಿ ಅವರು ಹಣ ಖರ್ಚು ಮಾಡಿದ್ದಾರೆ. ಕಟ್ಟಡ ಕಟ್ಟಿಸಿದ್ದಾರೆ. ಆದರೆ ಕಲ್ಯಾಣ ಕರ್ನಾಟಕ ಪ್ರದೇಶದ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಉತ್ತಮ ಪಡಿಸಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲೂ ಡಾ. ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾರೆ. ಜಯದೇವ ಆಸ್ಪತ್ರೆ ಸೇರಿದಂತೆ ಹಲವು ವೈದ್ಯಕೀಯ ಸಂಸ್ಥೆಗಳ ಕಟ್ಟಡ ಕಟ್ಟಿಸಿದ್ದಾರೆ. ಆದರೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸರಿಸಮನಾಗಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಯಾಕೆ ಮಾಡಲಾಗಿಲ್ಲ? ಈ ಹೊತ್ತು ಕಲಬುರಗಿ ಜನತೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಅರಸಿ ಸೊಲ್ಲಾಪುರ, ಹೈದರಾಬಾದ್ಗೆ ಹೋಗುತ್ತಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರವಾದ ಕಲಬುರಗಿಯ ಹಣೆಬರಹ ಹೀಗಿರುವಾಗ ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿನ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟ ಹೇಗಿರಬಹುದು? ದೊರೆತ ಅಧಿಕಾರವನ್ನು ಜನತೆಯ ಒಳಿತಿಗಾಗಿ ಬಳಸಿಕೊಂಡಿದ್ದರೆ ಕಲ್ಯಾಣ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಿದ್ದವು. ಬೆಂಗಳೂರು ಮತ್ತು ಮೈಸೂರು ಮೆಡಿಕಲ್ ಕಾಲೇಜುಗಳು ಈ ಹೊತ್ತಿಗೂ ಗುಣಮಟ್ಟ ಕಾಯ್ದುಕೊಂಡು ಬೇಡಿಕೆ ಉಳಿಸಿಕೊಂಡಿವೆ. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ಇಡೀ ಭಾರತದಲ್ಲೇ ಗುಣಮಟ್ಟದ ಚಿಕಿತ್ಸೆಗೆ ಹೆಸರು ಮಾಡಿದೆ. ಡಾ. ಶರಣಪ್ರಕಾಶ್ ಪಾಟೀಲ್ ಮಂತ್ರಿಯಾಗುವ ಮುಂಚೆಯೂ ಹೆಸರು ಮಾಡಿತ್ತು. ಈಗಲೂ ಗುಣಮಟ್ಟ ಕಾಯ್ದುಕೊಂಡಿದೆ. ಕಲಬುರಗಿಯ ಜಯದೇವ ಹೃದ್ರೋಗ ಸಂಸ್ಥೆ ಯಾಕೆ ಜನರ ವಿಶ್ವಾಸಕ್ಕೆ ಪಾತ್ರವಾಗುತ್ತಿಲ್ಲ? ಕಲಬುರಗಿ ಜನತೆ ಈಗಲೂ ಸೊಲ್ಲಾಪುರ, ಹೈದರಾಬಾದ್ ನಗರಗಳಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಹುಡುಕಿ ಹೋಗುತ್ತಿದ್ದಾರೆ? ಪ್ರಿಯಾಂಕ್ ಖರ್ಗೆಯವರು ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈಗ ಗ್ರಾಮೀಣಾಭಿವೃದ್ಧಿ, ಐಟಿ, ಬಿಟಿ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲಬುರಗಿ ಉಸ್ತುವಾರಿ ಸಚಿವರಾಗಿದ್ದಾರೆ. ಕೆಡಿಪಿ ಸಭೆ ನಡೆದು ಎಷ್ಟು ತಿಂಗಳಾದವು? ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಎರುಡೂವರೆ ವರ್ಷಗಳನ್ನು ಕಳೆದಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಎಷ್ಟು ಹಳ್ಳಿಗಳನ್ನು ಬಯಲು ಶೌಚಾಲಯ ಮುಕ್ತ ಮಾಡಿದ್ದಾರೆ? ಮಹಾತ್ಮಾ ಗಾಂಧೀಜಿಯವರ ಕನಸಿನ ಗ್ರಾಮಗಳನ್ನು ರೂಪಿಸಲು ಯತ್ನಿಸಿದ್ದಾರೆಯೇ? ಕಲ್ಯಾಣ ಕರ್ನಾಟಕದ ಗ್ರಾಮಗಳು ಯಾಕೆ ಹಳೆ ಮೈಸೂರು ಭಾಗದ ಹಳ್ಳಿಗಳಂತೆ ಅಭಿವೃದ್ಧಿ ಹೊಂದಿಲ್ಲ? ಡಾ. ಶರಣ ಪ್ರಕಾಶ ಪಾಟೀಲ್ ಕೌಶಲ್ಯ ಅಭಿವೃದ್ಧಿ ಮಂತ್ರಿಯೂ ಆಗಿದ್ದಾರೆ. ಈಶ್ವರ್ ಖಂಡ್ರೆಯವರು ಅರಣ್ಯ ಖಾತೆಗೆ ಮಂತ್ರಿಯಾಗಿದ್ದಾರೆ. ಎನ್.ಎಸ್. ಭೋಸರಾಜು ಅವರು ವಿಜ್ಞಾನ ಮಂತ್ರಿ. ಶಿವರಾಜ್ ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಮಂತ್ರಿ. ಕಲ್ಯಾಣ ಕರ್ನಾಟಕದ ಎಲ್ಲ ಮಂತ್ರಿಗಳು ಒಟ್ಟಿಗೆ ಸೇರಿ ಶೃದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಈ ಪ್ರದೇಶವನ್ನು ಸಿಂಗಾಪುರ ಮಾಡಬಹುದಾಗಿದೆ. ಮಾಡುವ ಮನಸ್ಸು ಇರಬೇಕಷ್ಟೆ. ಕರ್ನಾಟಕ ಸರಕಾರ ಇಂತಹ ದುರಿತ ಕಾಲದಲ್ಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತೀ ವರ್ಷ ಐದು ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಅನುದಾನದ ಸದ್ಬಳಕೆಯಾದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸಿಂಗಾಪುರ ಮೀರಿಸುವ ಹಂತಕ್ಕೆ ಅಭಿವೃದ್ಧಿಪಡಿಸಬಹುದು. ಮಲ್ಲಿಕಾರ್ಜುನ ಖರ್ಗೆಯವರು ತಮಗೆ ದೊರೆತ ಖಾತೆಯಲ್ಲಿ ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಅವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೆಡಿಪಿ ಸಭೆಯನ್ನು ನಿಯಮಿತವಾಗಿ ನಡೆಸುತ್ತಿದ್ದರು. ನಾನೇ ಕಂಡಂತೆ ಸತತ ಹತ್ತು ಗಂಟೆಗಳ ಕಾಲ ಕೆಡಿಪಿ ಸಭೆ ನಡೆಸುತ್ತಿದ್ದರು. ಕಾಲ ಮಿತಿಯೊಳಗೆ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳ್ಳುವಂತೆ ಮಾಡುತ್ತಿದ್ದರು. ಕಲಬುರಗಿಯ ಪೊಲೀಸ್ ಅಕಾಡಮಿ ಕಾಲಮಿತಿಯೊಳಗೆ ನಿರ್ಮಾಣ ಮಾಡಿಸಿದ್ದರು. ಮಲ್ಲಿಕಾರ್ಜುನ ಖರ್ಗೆಯವರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾಗಿದ್ದರು. ಅವರು ಮಾಡಿದ ಅತ್ಯುತ್ತಮ ಕೆಲಸಗಳ ದಾಖಲೆ ಮೇಲೆ ಕಣ್ಣಾಡಿಸಿದರೆ ಕಾಳಜಿ ಸ್ಪಷ್ಟವಾಗುತ್ತದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವುದಿಲ್ಲ. ಬಡತನ, ನಿರುದ್ಯೋಗ ಹೆಚ್ಚಾಗಿರುವುದರಿಂದ ವಲಸೆ ಪ್ರಮಾಣ ಜಾಸ್ತಿ ಇದೆ. ವಿಶೇಷವಾಗಿ ದಲಿತ ಹಿಂದುಳಿದ ಸಮುದಾಯಕ್ಕೆ ಸೇರಿದ ಬಡವರು ಬೆಂಗಳೂರು, ಮುಂಬೈ, ಗೋವಾಗಳಿಗೆ ಬದುಕು ಅರಸಿ ಗುಳೆ ಹೋಗುತ್ತಾರೆ. ಬೆಂಗಳೂರು ಕಟ್ಟಡ ಕಾರ್ಮಿಕರಲ್ಲಿ ಕಲ್ಯಾಣ ಕರ್ನಾಟಕದವರೇ ಹೆಚ್ಚು ಜನ ಇರುವುದು ಅಲ್ಲಿನ ಎಲ್ಲ ಜನಪ್ರತಿನಿಧಿಗಳಿಗೆ ಗೊತ್ತಿರುವ ಸಂಗತಿಯೇ. ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ತಲಾ ಆದಾಯ ಕಡಿಮೆಯಿದೆ. ಎಸೆಸೆಲ್ಸಿ, ಪಿಯುಸಿ ಫಲಿತಾಂಶ ನೋಡಿದರೆ ತಲೆ ತಗ್ಗಿಸುವಂತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಈಗಲೂ ನೈಜ ಅಭಿವೃದ್ಧಿ ಕುರಿತು ಒಲವು ಹೊಂದಿಲ್ಲ. ಅವರ ದೃಷ್ಟಿಯಲ್ಲಿ ಅಭಿವೃದ್ಧಿಯೆಂದರೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು, ಕಾಮಗಾರಿಗಳನ್ನು ಕೈಗೆ ಎತ್ತಿಕೊಳ್ಳುವುದು ಅಂತಿಮವಾಗಿ ಕಮಿಷನ್ ಪಡೆದುಕೊಂಡು ಕೃತಾರ್ಥನಾಗುವುದು. ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ ಅಭಿವೃದ್ಧಿ ಎಂದರೆ ಇಷ್ಟೇ ಎಂದು ಭಾವಿಸಿ ಕಾರ್ಯ ನಿರ್ವಹಿಸಿದರೆ ಇನ್ನು ಉಳಿದ ಜನಪ್ರತಿನಿಧಿಗಳು ಅಭಿವೃದ್ಧಿಯನ್ನು ಹರಾಜಿಗಿಟ್ಟು ದುಡ್ಡು ಮಾಡುತ್ತಾರೆ. ಸನ್ಮಾನ್ಯ ಈಶ್ವರ್ ಖಂಡ್ರೆಯವರು ಅರಣ್ಯ ಮಂತ್ರಿಯಾಗಿ ಎರಡೂವರೆ ವರ್ಷಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದಿತ್ತು. ಆರಗ ಜ್ಞಾನೇಂದ್ರ ಟೀಕೆಗೆ ಉತ್ತರವಾಗಿ ಈಶ್ವರ್ ಖಂಡ್ರೆ ಕಾಲಮಿತಿ ಯೋಜನೆ ರೂಪಿಸಿ ಬಿಜೆಪಿಯವರು ಬೆರಗುಗಣ್ಣಿನಿಂದ ನೋಡುವಂತೆ ಮಾಡಬಹುದಿತ್ತು. ಬೆಂಗಳೂರಿನಲ್ಲಿ ಬಸವೋದ್ಯಾನ ಮಾಡುವುದು ಈಶ್ವರ್ ಖಂಡ್ರೆಯವರ ಮಹಾನ್ ಸಾಧನೆ. ಬಸವಕಲ್ಯಾಣದಲ್ಲಿ ಕದಳಿ ವನ, ಬಸವೋದ್ಯಾನ ನಿರ್ಮಾಣ ಮಾಡಿದರೆ ಅದು ಮಹಾನ್ ಸಾಧನೆ ಎನಿಸಿಕೊಳ್ಳುತ್ತದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಲ್ಲಿ ಕಲ್ಯಾಣ ಕರ್ನಾಟಕದ ಮಂತ್ರಿಗಳಿಗೆ ನಂಬಿಕೆಯಿಲ್ಲ. ಕನ್ನಡ ಮತ್ತು ಸಂಸ್ಕೃತಿ ಖಾತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಶಿವರಾಜ್ ತಂಗಡಗಿಯವರು ಮಂತ್ರಿ. ಮೊರಾರ್ಜಿ, ಕಿತ್ತೂರು ಚೆನ್ನಮ್ಮ ಹೆಸರಿನ ವಸತಿ ಶಾಲೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ರಾಹುಲ್ ಗಾಂಧಿಯವರ ಕನಸಿನ ನವೋದಯ ಶಾಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಶಿವರಾಜ್ ತಂಗಡಗಿಯವರು ಒಮ್ಮೆ ಅಲ್ಲಿಗೆ ಭೇಟಿ ನೀಡಿ ಮೊರಾರ್ಜಿ ವಸತಿ ಶಾಲೆಗಳ ಸ್ಥಿತಿಗತಿ ಅವಲೋಕಿಸಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಶಿವರಾಜ್ ತಂಗಡಗಿಯವರು ಕೊಪ್ಪಳ ಭಾಗದವರು. ಆದರೆ ಅವರಿಗೆ ಕಲ್ಯಾಣ ಕರ್ನಾಟಕದ ಒಬ್ಬ ಸಾಹಿತಿಯೂ ಅಕಾಡಮಿ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಎಂದು ಅನಿಸಲೇ ಇಲ್ಲ. ಎನ್.ಎಸ್. ಭೋಸರಾಜು, ರಹೀಮ್ ಖಾನ್ ಅವರಿಗೂ ಉತ್ತಮ ಖಾತೆಗಳೇ ದೊರೆತಿವೆ. ಆದರೆ ಅವುಗಳ ಮಹತ್ವ ಅವರಿಗೆ ತಿಳಿದಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಗೆ ಆಯಾ ಇಲಾಖೆಗಳ ಮೂಲಕ ಹೇಗೆ ಒಳಿತು ಮಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಇನ್ನೂ ಕಲ್ಯಾಣ ಕರ್ನಾಟಕದ ಬಹುಪಾಲು ಜನಪ್ರತಿನಿಧಿಗಳು ಅನುದಾನ ಹಂಚಿಕೆಯಾಗುವುದನ್ನೇ ಕಾಯುತ್ತಿರುತ್ತಾರೆ. ಕಾಮಗಾರಿಗಳು ಪೂರ್ಣಗೊಳ್ಳುತ್ತವೆಯೇ ಹೊರತು ಗುಣಮಟ್ಟವನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಕಲ್ಯಾಣ ಕರ್ನಾಟಕದ ಜನತೆಯ ತಲಾ ಆದಾಯ ದಿನೇ ದಿನೇ ಕುಸಿಯುತ್ತಿದೆ. ಒಂದು ಪ್ರಾಮಾಣಿಕ ಸಂಸ್ಥೆ ಸಮೀಕ್ಷೆ ನಡೆಸಲು ಮುಂದಾಗಬೇಕು. ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಪಾಲುದಾರರಾದ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ತಲಾ ಆದಾಯ ಕಳೆದ ಹತ್ತು ವರ್ಷಗಳಲ್ಲಿ ಯಾವ ಪ್ರಮಾಣದಲ್ಲಿ ಹೆಚ್ಚಿದೆ ಎಂಬುದರ ಸಮೀಕ್ಷೆ ಮಾಡಬೇಕು. ಆಗ ಕಲ್ಯಾಣ ಕರ್ನಾಟಕದ ಒಟ್ಟು ಅಭಿವೃದ್ಧಿಯ ಸ್ವರೂಪ ಅರ್ಥವಾಗುತ್ತದೆ. ಕೆಲವೊಮ್ಮೆ ಆಡಿಟ್ ವರದಿಗಳು ಸುಳ್ಳು ಹೇಳಬಹುದು. ಕಲ್ಯಾಣ ಕರ್ನಾಟಕದ ಎಲ್ಲ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ವಾಸಿಸುವ ಸ್ವಂತ ಮನೆಗಳ ಗುಣಮಟ್ಟ, ಅವುಗಳ ವೈಭೋಗದ ಸಮೀಕ್ಷೆ ಮಾಡಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಿರ್ಮಾಣವಾದ ಪ್ರಾಥಮಿಕ, ಪ್ರೌಢ ಶಾಲಾ ಕಟ್ಟಡಗಳ ಗುಣಮಟ್ಟವನ್ನು ಪರಿಶೀಲನೆಗೆ ಒಳಪಡಿಸಬೇಕು. ಬಹುತೇಕ ಕಟ್ಟಡ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಆಸ್ಪತ್ರೆ, ಪದವಿ ಕಾಲೇಜುಗಳು ಮತ್ತು ಇನ್ನಿತರ ಕಟ್ಟಡಗಳನ್ನು ಯಾರೊಬ್ಬರ ಮನೆಯೊಂದಿಗೂ ಹೋಲಿಸಲಾಗದು. ಅಭಿವೃದ್ಧಿ ಯೋಜನೆಗಳು ಮತ್ತು ಕಾಮಗಾರಿಗಳನ್ನು ಹಿಂಡುವ ಎಮ್ಮೆ ಎಂದು ಎಲ್ಲ ಜನಪ್ರತಿನಿಧಿಗಳು ಭಾವಿಸಿದ್ದರಿಂದಲೇ ಅಭಿವೃದ್ಧಿ ಎಂಬುದು ತೋರುಂಬ ಲಾಭವಾಗಿ ಪರಿಣಮಿಸುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುನ್ನೂರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಅದರ ಶಂಕು ಸ್ಥಾಪನೆಯ ಕಾರ್ಯವೂ ನಡೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳು ಹೊಣೆಯರಿತು ಕಾರ್ಯ ನಿರ್ವಹಿಸದೆ ಹೋದರೆ ಆ ಭಾಗದ ಹಿಂದುಳಿದಿರುವಿಕೆಗೆ ಯಾರೂ ಪರಿಹಾರ ಹುಡುಕಲಾರರು. ಕಲ್ಯಾಣ ಕರ್ನಾಟಕದ ಅಷ್ಟೂ ಜನ ಮಂತ್ರಿಗಳು ಕೊಟ್ಟ ಕುದುರೆಯನೇರಲರಿಯದವರಾಗಿದ್ದಾರೆ. ಹಳೆ ಮೈಸೂರು ಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಆ ಭಾಗದ ಜನಪ್ರತಿನಿದಿಗಳು ವಿಶೇಷ ಮುತುವರ್ಜಿ ವಹಿಸಿ ಅದನ್ನು ಉಳಿಸಿ ಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಂಡು ಮುಂದುವರಿದರೆ ಅಭಿವೃದ್ಧಿ ಖಂಡಿತ ಸಾಧ್ಯವಾಗುತ್ತದೆ. ಪ್ರಬಲ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೇ.
ಕಾಸರಗೋಡು: ಒಂಟಿ ವೃದ್ಧೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿ ಬಂಧನ
ಕಾಸರಗೋಡು: ಬದಿಯಡ್ಕ ಠಾಣಾ ವ್ಯಾಪ್ತಿಯ ಕುಂಬ್ಡಾಜೆ ಮವ್ವಾರ್ನಲ್ಲಿ ಬುಧವಾರ ನಡೆದ ಒಂಟಿ ವೃದ್ಧೆಯ ಸಾವಿನ ಪ್ರರಕರಣವು, ಕೊಲೆ ಎಂಬುವುದಾಗಿ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದ್ದು, ಈ ಸಂಬಂಧ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬದಿಯಡ್ಕ ಪೆರಡಾಲದ ರಮೇಶ್ ನಾಯ್ಕ್ (47) ಎಂದು ಗುರುತಿಸಲಾಗಿದೆ. ಕೊಲೆಗೀಡಾದವರು ಮವ್ವಾರ್ ಅಜಿಲ ನಿವಾಸಿ ಪುಷ್ಪಲತಾ ಶೆಟ್ಟಿ (70). ಬುಧವಾರ ಬೆಳಿಗ್ಗೆ ಅವರು ತಮ್ಮ ಮನೆಯೊಳಗೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಂಬಂಧಿಕರ ಮನವಿಯ ಮೇರೆಗೆ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂಬುದು ಸಾಬೀತಾಗಿದೆ. ಆರೋಪಿಯು ವೃದ್ಧೆಯ ಕತ್ತು ಹಿಸುಕಿ ಕೊಲೆಗೈದು, ಅವರ ಕುತ್ತಿಗೆಯಲ್ಲಿದ್ದ ನಾಲ್ಕು ಪವನ್ ಚಿನ್ನಾಭರಣವನ್ನು ದರೋಡೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಬಗ್ಗೆ ಲಭಿಸಿದ ಸುಳಿವಿನ ಆಧಾರದ ಮೇಲೆ ಶುಕ್ರವಾರ ಮಧ್ಯಾಹ್ನ ಬದಿಯಡ್ಕ ಠಾಣಾ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೀಡಾದ ಮಹಿಳೆ ಪ್ರತಿರೋಧಿಸುವ ವೇಳೆ ಆರೋಪಿಯ ಕೈಗೆ ಕಚ್ಚಿದ ಗಾಯಗಳಿದ್ದು, ಇದು ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ. ಅಲ್ಲದೆ ಮಹಿಳೆಯ ಕುತ್ತಿಗೆ, ಮುಖ ಹಾಗೂ ಎದೆಯ ಭಾಗದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ತನಿಖೆಗೆ ಸಹಕಾರಿಯಾಗಿದೆ. ಆರೋಪಿ ಬಚ್ಚಿಟ್ಟಿದ್ದ ಚಿನ್ನದ ಸರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ರಮೇಶ್ ನಾಯ್ಕ್ ಕೂಲಿ ಕಾರ್ಮಿಕನಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೀನ್ ಲ್ಯಾಂಡ್ ಅನ್ನು ಪಡೆದೇ ತಿರುವೆ ಎಂಬ ಧೃಢನಿಶ್ಚಯದಿಂದ ಪಟ್ಟುಬಿಡದ ವಿಕ್ರಮನಂತೆ ದಿನಕ್ಕೊಂದು ತಂತ್ರಗಳನ್ನು ಹಣೆಯುತ್ತಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರಯತ್ನಕ್ಕೆ ಡೆನ್ಮಾರ್ಕ್ ಮತ್ತು ಯುರೋಪಿಯನ್ ರಾಷ್ಟ್ರಗಳು ಕಿಮ್ಮತ್ತು ನೀಡುತ್ತಿಲ್ಲ. ಇದರಿಂದ ಕೆರಳಿರುವ ಟ್ರಂಪ್ ದಂಡಾಸ್ತ್ರದ ಮೊರೆ ಹೋಗಿದ್ದು, ಗ್ರೀನ್ ಲ್ಯಾಂಡ್ ವಿಚಾರದಲ್ಲಿ ಯುಎಸ್ ಅನ್ನು ಬೆಂಬಲಿಸದ ದೇಶಗಳ ಮೇಲೆ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು, ಇದಕ್ಕೂ ಮೊದಲು ಅದೇ ದಿನ ಡೆನ್ಮಾರ್ಕ್ ರಾಜಧಾನಿ ಕೋಪನೆ ಹೇಗನ್ಗೆ ಅಮೆರಿಕಾದ ಸೆನೆಟರ್ ಗಳ ನಿಯೋಗ ಮಾತುಕತೆ ನಡೆಸುಲು ಭೇಟಿ ನೀಡತ್ತು. ಆದರೆ ಈ ಬೆನ್ನಲ್ಲೇ, ಟ್ರಂಪ್ ಈ ಈ ಬೆದರಿಕೆಗಳು ಮಾತುಕತೆ ವಿಫಲವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದು, ಇದರಿಂದ ಡೆನ್ಮಾರ್ಕ್ ಬೆಂಬಲಕ್ಕೆ ನಿಂತಿರುವ ಯುರೋಪಿಯನ್ ದೇಶಗಳ ಮೇಲೆ ಒತ್ತಡ ಹೇರುವ ಕ್ರಮಕ್ಕೆ ಟ್ರಂಪ್ ಮುಂದಾಗಿದ್ದಾರೆ.
Namma Metro: ಪ್ರಯಾಣಿಕರ ವಿರೋಧ: ಮೆಟ್ರೋ ಪ್ರಯಾಣದರ ಬೆಲೆ ಏರಿಕೆಯಿಂದ ಹಿಂದೆ ಸರಿದ BMRCL
ಬೆಂಗಳೂರು: ನಮ್ಮ ಮೆಟ್ರೋ ದೇಶದಲ್ಲೇ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊಂದಿದೆ. ಪದೇ ಪದೇ ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಮತ್ತಷ್ಟು ಹೊರೆ ಆಗಲಿದೆ. ನಮ್ಮ ಮೆಟ್ರೋ ಟಿಕೆಟ್ ದರ ಫೆಬ್ರವರಿಯಿಂದ ಮತ್ತಷ್ಟು ಏರಿಕೆಯಾಗುವ ಕುರಿತು ಚರ್ಚೆ ನಡೆಯುತ್ತಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಟಿಕೆಟ್ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು
ವಲಸೆ ಕಾರ್ಮಿಕರಿಗೆ ಬೆದರಿಕೆ ಆರೋಪ: ಪುನೀತ್ ಕೆರೆಹಳ್ಳಿ ಬಂಧನ
ಬೆಂಗಳೂರು: ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ನುಗ್ಗಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿ ಬೆದರಿಕೆ ಹಾಗೂ ಭೀತಿಯನ್ನುಂಟುಮಾಡುತ್ತಿದ್ದಾನೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣವೊಂದರ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸ್ ಠಾಣಾ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬಂಧನ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಪುನೀತ್ ಕೆರೆಹಳ್ಳಿಯ ಬಂಧನ ಸುದ್ದಿ ತಿಳಿದ ಬಳಿಕ, ಆತನ ಬೆಂಬಲಿಗರು ಠಾಣೆಯ ಬಳಿ ಜಮಾಯಿಸಲು ಯತ್ನಿಸಿದರೂ, ಪೊಲೀಸರು ಅವರನ್ನು ಒಳಗೆ ಬಿಡದೆ ನಿಯಂತ್ರಿಸಿದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
Gold: ಲಕ್ಕುಂಡಿಯಲ್ಲಿ ಉತ್ಖನನ ಶುರು, ಗ್ರಾಮವೇ ಸ್ಥಳಾಂತರ ಸಾಧ್ಯತೆ: ಜಿಲ್ಲಾಧಿಕಾರಿ ಹೇಳಿದ್ದೇನು
ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಗದಗಳ್ಳುತ್ತಿದೆ. ಇದೀಗ ನಿಧಿ / ಚಿನ್ನಾಭರಣ ಪತ್ತೆಯಾದ ಒಂದು ಕುಟುಂಬವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇದೀಗ ಇಡೀ ನಿಧಿ ಪತ್ತೆಯಾದ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರದಿಂದ ಉತ್ಖನನ ಕಾರ್ಯ ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿನ
ರಂಗನತಿಟ್ಟಿನಲ್ಲಿ ಸಾವಿರಾರು ಪಕ್ಷಿಗಳ ಕಲರವ; ಬಾನಾಡಿಗಳನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಶುಲ್ಕವೆಷ್ಟು?
ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ದೇಶ-ವಿದೇಶಗಳಿಂದ ಸಾವಿರಾರು ಪಕ್ಷಿಗಳು ಆಗಮಿಸಿವೆ. ಡಿಸೆಂಬರ್ನಿಂದ ಆರಂಭವಾದ ಪಕ್ಷಿಗಳ ಆಗಮನ, ಜನವರಿಯಿಂದ ಮಾರ್ಚ್ವರೆಗೆ ಮೊಟ್ಟೆ ಇಡುವ ಹಂತ ತಲುಪಿದೆ. ಏಪ್ರಿಲ್ನಲ್ಲಿ ಮರಿಗಳು ಹೊರಬಂದು, ಜುಲೈ ನಂತರ ತಮ್ಮ ಸ್ವಸ್ಥಾನಕ್ಕೆ ಮರಳಲಿವೆ. ಪ್ರಸ್ತುತ 8400ಕ್ಕೂ ಹೆಚ್ಚು ಪಕ್ಷಿಗಳು ಇಲ್ಲಿವೆ.
Karnataka Weather: ಶೀತಗಾಳಿ ನಡುವೆ ರಾಜ್ಯದ 9 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
Karnataka Weather: ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿ ಪ್ರಮಾಣ ಹೆಚ್ಚಾಗುತ್ತಿದ್ದು, ಕೆಲವೆಡೆ ಮಾತ್ರ ಕಡಿಮೆ ಆಗಿದೆ. ಈ ನಡುವೆಯೇ ತಮಿಳುನಾಡಿನ ಕರಾವಳಿಯಲ್ಲಿ ಚಂಡಮಾರುತ ಪರಿಣಾಮ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ
ವಿಜಯಪುರದಲ್ಲಿ ನಕಲಿ ಇ-ಸ್ವತ್ತು ಖಾತೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವಲ್ಲಿ ಜನತೆ ಪರದಾಡುತ್ತಿದ್ದಾರೆ. ಪುರಸಭೆಯಿಂದ ಅಧಿಕೃತ ಖಾತೆ ಸಿಗಲು ವಿಳಂಬವಾಗುತ್ತಿರುವುದೇ ಇದಕ್ಕೆ ಕಾರಣ. ಕೆಲ ಸೈಬರ್ ಕೇಂದ್ರಗಳು ನಕಲಿ ಖಾತೆಗಳನ್ನು ಸೃಷ್ಟಿಸಿ, ಜನರನ್ನು ವಂಚಿಸುತ್ತಿವೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಖಾತೆಗಳ ಅಸಲಿಯೋ ನಕಲಿಯೋ ಎಂದು ತಿಳಿಯದೆ ಗೊಂದಲಕ್ಕೀಡಾಗಿದ್ದಾರೆ.
ಇರಾನ್ನಲ್ಲಿ 800 ಮರಣದಂಡನೆ ತಡೆದಿದ್ದೇನೆ: ಟ್ರಂಪ್
ವಾಷಿಂಗ್ಟನ್: ಇರಾನ್ನಲ್ಲಿ ಇತ್ತೀಚೆಗೆ ನಡೆದ ಆಡಳಿತ ವಿರೋಧಿ ಪ್ರತಿಭಟನೆ ವೇಳೆ ಬಂಧಿತರಾಗಿದ್ದ ನೂರಾರು ಮಂದಿಯನ್ನು ಗಲ್ಲಿಗೇರಿಸದಂತೆ ತಾನು ತಡೆದಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಈ ನಡೆಗಾಗಿ ಇರಾನ್ ಆಡಳಿತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಒಂದು ದಿನ ಹಿಂದೆ ನಡೆಯಬೇಕಿದ್ದ ಗಲ್ಲುಶಿಕ್ಷೆಗಳನ್ನು ತಡೆದಿದ್ದೇನೆ ಎಂದು ತಮ್ಮ ಟ್ರುಥ್ ಸೋಶಿಯಲ್ ಪ್ಲಾಟ್ಫಾರಂ ಪೋಸ್ಟ್ ನಲ್ಲಿ ಹೇಳಿದ್ದಾರೆ. ನಿನ್ನೆ ನಿಗದಿಯಾಗಿದ್ದ ಎಲ್ಲ 800 ಪ್ರತಿಭಟನಾಕಾರರ ಗಲ್ಲಿಗೇರಿಸುವಿಕೆಯನ್ನು ರದ್ದುಪಡಿಸಲಾಗಿದೆ ಎಂಬ ಅಂಶವನ್ನು ನಾನು ಗೌರವಿಸುತ್ತೇನೆ ಹಾಗೂ ಇದಕ್ಕಾಗಿ ಇರಾನ್ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ವಿವರಿಸಿದ್ದಾರೆ. ಇರಾನ್ನಲ್ಲಿ ಪ್ರತಿಭಟನಾಕಾರರ ಬಂಧನ ಹಾಗೂ ಅವರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕಗಳು ವ್ಯಕ್ತವಾಗಿರುವ ನಡುವೆಯೇ ಟ್ರಂಪ್ ಅವರ ಹೇಳಿಕೆ ಹೊರಬಿದ್ದಿದೆ. ಏತನ್ಮಧ್ಯೆ ಪ್ರತಿಭಟನಾಕಾರರನ್ನು ನೇಣುಗಂಬಕ್ಕೇರಿಸುವುದನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿವೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮಡಿದ 9 ಬ್ರಿಟಿಷ್ ಸಂತ್ರಸ್ತರ ಕುಟುಂಬಗಳಿಂದ ಏರ್ ಇಂಡಿಯಾ ವಿರುದ್ಧ ದಾವೆ
ಲಂಡನ್: ಕಳೆದ ವರ್ಷ ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಒಂಬತ್ತು ಮಂದಿ ಬ್ರಿಟಿಷ್ ಸಂತ್ರಸ್ತರ ಕುಟುಂಬಗಳು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ವಿರುದ್ಧ ಲಂಡನ್ ಹೈಕೋರ್ಟ್ ನಲ್ಲಿ ದಾವೆ ಹೂಡಿವೆ. ವೈಯಕ್ತಿಕ ಘಾಸಿ ಮತ್ತು ಹಾನಿಗಳಿಗೆ ಈ ಕುಟುಂಬಗಳು ಕಿಂಗ್ಸ್ ಬೆಂಚ್ ವಿಭಾಗದಲ್ಲಿ ತಮ್ಮ ಕಾನೂನು ಸಂಸ್ಥೆಗಳ ಮಲಕ ಜಂಟಿ ಕಾನೂನಾತ್ಮಕ ಕ್ಲೇಮ್ ಸಲ್ಲಿಸಿವೆ. ಏರ್ ಇಂಡಿಯಾ ವಿರುದ್ಧ ಹೈಕೋರ್ಟ್ ವಿಚಾರಣೆಯ ನೋಟಿಸ್ ಬಿಡುಗಡೆಯಾಗಿದ್ದರೂ, ಅಧಿಕೃತವಾಗಿ ಅದನ್ನು ವಿತರಿಸಿಲ್ಲ. ಲಂಡನ್ ನಲ್ಲಿ ರಹಸ್ಯ ಸಂಧಾನ ಮಾತುಕತೆಗಳು ನಡೆಯುವ ಹಿನ್ನೆಲೆಯಲ್ಲಿ ಇನ್ನೂ ಅಧಿಕೃತವಾಗಿ ನೋಟಿಸ್ ನೀಡಿಲ್ಲ. ಬಹುಶಃ ಸಂತ್ರಸ್ತರು ವಿಚಾರಣೆ ಇಲ್ಲದೇ ಪರಸ್ಪರ ಸಂಧಾನ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಕೀಸ್ಟೋನ್ ಲಾ ವಿಮಾನಯಾನ ಪಾಲುದಾರರಾಗಿರುವ ನೇಂಸ್ ಹೀಲಿಪ್ರಾಟ್ ಹೇಳಿದ್ದಾರೆ. ದಾವೆ ಬಗ್ಗೆ ಪ್ರತಿಕ್ರಿಯಿಸಲು ಏರ್ ಇಂಡಿಯಾ ನಿರಾಕರಿಸಿದೆ. ಏರ್ ಇಂಡಿಯಾಗೆ ಸೇರಿದ ಬೋಯಿಂಗ್ 787 ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಅಹ್ಮದಾಬಾದ್ ನಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದರು. ಇವರಲ್ಲಿ ಒಂಬತ್ತು ಮಂದಿ ಬ್ರಿಟಿಷ್ ಪ್ರಜೆಗಳು ಸೇರಿದ್ದರು.
ಪೂರ್ವ ಸಿದ್ದತಾ ಪರರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ನಡೆದ ಎಡವಟ್ಟಿನಿಂದ ಎಚ್ಚೆತ್ತಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಶಿಕ್ಷಣ ಇಲಾಖೆ ಸದ್ಯ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲುಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಜ.19 ರಿಂದ ಫೆ.2ರವರೆಗೆ ನಡೆಯಲಿರುವ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದರೆ ಅನುದಾನಿತ ಕಾಲೇಜುಗಳ ಮಾನ್ಯತೆ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ. ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲೇ ತೆರೆಯಬೇಕು. ನಿಯಮ ಉಲ್ಲಂಘಿಸಿದರೆ ಕಾಲೇಜುಗಳೇ ಹೊಣೆ ಎಂದಿದ್ದು, ಇಂತಹ ಕೃತ್ಯಗಳನ್ನು ಮಾಡುವ ವಿದ್ಯಾರ್ಥಿಗಳಿಗೂ ಎಚ್ಚರಿಕೆ ನೀಡಿದೆ.
ಬದುಕು ಮುಗಿಸಿದ ಕರ್ನಾಟಕ ಏಕೀಕರಣದ ರೂವಾರಿ ಭೀಮಣ್ಣ ಖಂಡ್ರೆ
ಶತಾಯುಷಿ, ಲೋಕನಾಯಕ, ಮಾಜಿ ಸಚಿವ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ ಅವರು ಬೀದರ್ ಜಿಲ್ಲೆ ಭಾಲ್ಕಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
Bheemanna Khandre Passes Away: ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ನಿಧನ
Bheemanna Khandre Passes Away: ಮಾಜಿ ಸಚಿವ, ವೀರಶೈವ ಮಹಾಸಭಾ ಗೌರವ ಅಧ್ಯಕ್ಷರಾಗಿದ್ದ ಶತಾಯುಷಿ ಡಾ.ಭೀಮಣ್ಣ ಖಂಡ್ರೆ (102) ನಿಧನರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದ ಭಾಲ್ಕಿ ಕ್ಷೇತ್ರದ ಹಿರಿಯರಾದ ಅವರು ವಯೋಸಹಜ ಅನಾರೋಗ್ಯದ ಕಾರಣ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋಸಹಜ ಅನಾರೋಗ್ಯ ಕಾರಣ ಅವರು
Gold Price Today: ಬಂಗಾರ ಬೆಲೆ ಎಷ್ಟಾಯ್ತು ಗೊತ್ತಾ? ಇಲ್ಲಿದೆ ಜನವರಿ 17ರ ದರಪಟ್ಟಿ
Gold Price on January 17: ಬಂಗಾರ, ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಲಿದೆ. ಹಾಗಾದ್ರೆ, ಇಂದು (ಜನವರಿ 17) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22, 24 ಕ್ಯಾರಟ್ ಬಂಗಾರ ಹಾಗೂ 1 ಕೆ.ಜಿ ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ
ವೇತನ, ಹಿಂಬಾಕಿಗಾಗಿ 1,15 ಲಕ್ಷ ಸಾರಿಗೆ ಸಿಬ್ಬಂದಿ ಹೆಣಗಾಟ; ಗಮನಹರಿಸದಿದ್ದರೆ ಸಿಡಿದೇಳಲು ನೌಕರರು ಸಜ್ಜು
ರಾಜ್ಯ ಸಾರಿಗೆ ನಿಗಮಗಳ 1.15 ಲಕ್ಷ ನೌಕರರು 38 ತಿಂಗಳ ವೇತನ ಪರಿಷ್ಕರಣೆ ಬಾಕಿ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ ದುಡಿಯುತ್ತಿರುವ ಇವರಿಗೆ ವೇತನ ದೊರಕುತ್ತಿಲ್ಲ. 2020ರ ಜನವರಿಯಿಂದ 2023ರ ಮಾರ್ಚ್ವರೆಗೆ 1800 ಕೋಟಿ ರೂ. ವೇತನ ಬಾಕಿ ಇದ್ದು, ಸರ್ಕಾರ ಕ್ರಮ ಕೈಗೊಂಡಿಲ್ಲ.
ಪುರುಷರ ವೇಷಧಾರಿಗಳಾಗಿ ಮನೆಗಳಿಗೆ ಕನ್ನ; ಸಂಪಿಗೆಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳಿಯರು
ಸಂಪಿಗೆಹಳ್ಳಿ ಪೊಲೀಸರು ಪುರುಷರಂತೆ ವೇಷ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ರೇಷ್ಮಾ ಮತ್ತು ಇಬ್ಬರು ಬಾಲಕಿಯರನ್ನು ಬಂಧಿಸಿದ್ದಾರೆ. ಇವರು ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಸಂಬಂಧಿಕರಂತೆ ನಟಿಸಿ ಕಳವು ಮಾಡುತ್ತಿದ್ದರು. ಯಲಹಂಕದ ಸಂಗಮೇಶ್ ಎಂಬುವರ ಮನೆಯಲ್ಲಿ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣ ಕಳವು ಮಾಡಿದ್ದರು. ಸಿಸಿಟಿವಿ ಕ್ಯಾಮೆರಾ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ʻಲಾನಿನೋ ಎಫೆಕ್ಟ್ʼ ಭಾರತದ ಜನರಿಗೆ ಚಳಿ ಏಟು; ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ, ತಜ್ಞರು ಏನ್ ಹೇಳ್ತಾರೆ?
ಈ ಥರ ಚಳಿ ಯಾವತ್ತೂ ನೋಡಿಲ್ಲಎನ್ನುವ ಸಂಭಾಷಣೆ ನಮ್ಮ ಸುತ್ತಮುತ್ತಲೂ ಮೊಳಗುತ್ತಲೇ ಇದೆ. ಅದಕ್ಕೇ ಗಡ ಗಡ ನಡುಗಿದ ನಮಗೆ, ತಾಪಮಾನ ಇನ್ನಷ್ಟು ಇಳಿಕೆ ಕಾಣಲಿದೆ ಎನ್ನುವ ಪರಿಣತರ ಮುನ್ಸೂಚನೆ ಆತಂಕಕ್ಕೆ ದೂಡಿದೆ. ಇದಕ್ಕೆ ಕಾರಣಗಳೇನು? ಪಾರಾಗುವ ಮಾರ್ಗೋಪಾಯಗಳೇನು?
ಬೆಂಗಳೂರು ಹಬ್ಬ–2026; ಜ.25ರವರೆಗೆ ಆಯೋಜಿಸಿರುವ ಉತ್ಸವದಲ್ಲಿ ಏನೆಲ್ಲ ಕಾರ್ಯಕ್ರಮವಿರಲಿದೆ?
ಜನವರಿ 25ರವರೆಗೆ ನಡೆಯಲಿರುವ ಬೆಂಗಳೂರಿನ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದರು. ಬೆಂಗಳೂರಿಗೆ ಬರುವವರು ಕನ್ನಡ ಕಲಿಯಬೇಕು, ಕನ್ನಡಿಗರಾಗಿ ಬಾಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 'ಬೆಂಗಳೂರು ಹಬ್ಬ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಎಲ್ಲರಿಗೂ ತಲುಪಿಸುವುದು ಹಬ್ಬದ ಉದ್ದೇಶ ಎಂದರು. ನಾಡಿನ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಟ್ರಿಪ್ ಹೋಗೋವವರಿಗೆ ಕಠಿಣ ನಿಯಮಗಳು ಜಾರಿ
ಅರ್ಕಾವತಿ ನದಿಯಲ್ಲಿ ವಿಷಕಾರಿ ನೊರೆ ಕಾಣಿಸಿಕೊಂಡ ಸುಮಾರು ಒಂದೂವರೆ ವರ್ಷದ ಬಳಿಕ, ತಿಪ್ಪಗೊಂಡನಹಳ್ಳಿ ಜಲಾಶಯ (TGR) ಜಲಾನಯನ ಪ್ರದೇಶವನ್ನು ರಕ್ಷಿಸಲು ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಗಣಿಗಾರಿಕೆ, ಕಲ್ಲು ಒಡೆಯುವಿಕೆ ನಿಷೇಧ, ಕೃಷಿಯೇತರ ಚಟುವಟಿಕೆಗಳ ನಿರ್ಬಂಧ ಮತ್ತು ಮಳೆನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಜಲಾನಯನ ಪ್ರದೇಶವನ್ನು ನಾಲ್ಕು ವಲಯಗಳಾಗಿ ವಿಂಗಡಿಸಿ, ವಿಭಿನ್ನ ನಿರ್ಬಂಧಗಳನ್ನು ವಿಧಿಸಲಾಗಿದೆ.
Hassan | ಮಹಿಳೆ ಸಾವಿಗೆ ಕಾರಣವಾಗಿದ್ದ ಕಾಡಾನೆ ಸೆರೆ
ಹಾಸನ : ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಮಹಿಳೆ ಶೋಭಾ ಅವರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಬೆಳಗ್ಗೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ, ಡ್ರೋನ್ ಸಹಾಯದಿಂದ ಕಾಡಾನೆಯ ಚಲನವಲನ ಪತ್ತೆಹಚ್ಚಿ ಸೆರೆಹಿಡಿಯಲು ಮುಂದಾದರು. ಇಟಿಎಫ್ ಸಿಬ್ಬಂದಿಯೊಂದಿಗೆ ಮಾವುತರು ಹಾಗೂ ಕಾವಾಡಿಗರ ಸಹಕಾರದಿಂದ ಶೋಧ ಕಾರ್ಯ ನಡೆಸಲಾಗಿತ್ತು. ಈ ವೇಳೆ ಕಾಡಾನೆ ಬೇಲೂರು ತಾಲೂಕಿನ ಚಂದಾಪುರ-ಬೆಳ್ಳಾವರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಕಾಡಾನೆಯನ್ನು ಸೆರೆ ಹಿಡಿಯುವ ಸಲುವಾಗಿ ಲಾರಿಯಲ್ಲಿ ಕುಮ್ಮಿ ಸಾಕಾನೆಗಳನ್ನು ಕರೆತರಲಾಗಿದ್ದು, ಧನಂಜಯ, ಸುಗ್ರೀವ, ಶ್ರೀರಾಮ, ಲಕ್ಷ್ಮ್ಮಣ ಹಾಗೂ ಅಯ್ಯಪ್ಪ ಎಂಬ ಐದು ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಬಂಧನ ಕಾರ್ಯಾಚರಣೆ ವೇಳೆ ಪಶುವೈದ್ಯರಾದ ಡಾ. ರಮೇಶ್ ಅವರು ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಅರಿವಳಿಕೆ ನೀಡಿದ ನಂತರವೂ ಕಾಡಾನೆ ಸುಮಾರು ಎರಡು ಗಂಟೆಗಳ ಕಾಲ ನಿತ್ರಾಣಗೊಳ್ಳದೆ ಓಡಾಡಿದ್ದು, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ನೀರು ಹಾಕಿ ಆರೈಕೆ ಮಾಡಿದ್ದಾರೆ. ನಂತರ ತಜ್ಞರು ಕಾಡಾನೆಗೆ ಹಗ್ಗ ಕಟ್ಟಿ ರಿವರ್ಸಲ್ ಇಂಜೆಕ್ಷನ್ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಐದು ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಿದ್ಧರಾಗಿದ್ದಾರೆ. ಘಟನಾ ಸ್ಥಳದಲ್ಲೇ ಅರಣ್ಯ ಇಲಾಖೆಯ ಡಿಎಫ್ಒ ಸೌರಭ್ ಕುಮಾರ್ ಸಹಿತ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ | ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ: ಝಮೀರ್ ಅಹ್ಮದ್ ಖಾನ್
ಧಾರವಾಡ : ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಊಹಾಪೋಹ ಚರ್ಚೆಗಳು ನಡೆಯುತ್ತಿದ್ದು, ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ನಲ್ಲಿ ಕ್ರಾಂತಿ ಆಗುತ್ತದೆ ಎಂದು ಬಿಜೆಪಿಯವರು ಹೇಳಿದ್ದರು. ನವೆಂಬರ್ ಆದ ಮೇಲೆ ಬಿಜೆಪಿಯವರಿಗೆ ವಾಂತಿ, ಬೇಧಿ ಆರಂಭ ಆಗುತ್ತದೆ ಎಂದು ನಾನು ಹೇಳಿದ್ದೆ. ಈಗ ಅದೇ ರೀತಿ ಆಗಿದೆ ಎಂದು ವ್ಯಂಗ್ಯವಾಡಿದರು. ನವೆಂಬರ್ ಮುಗಿದಿದೆ. ಸಂಕ್ರಾಂತಿಯೂ ಮುಗಿದಿದೆ. ಮುಂದೆ ಯುಗಾದಿ ಆರಂಭ ಆಗಿ ಮುಗಿದು ಹೋಗುತ್ತದೆ. ನಮ್ಮಲ್ಲಿ ಸಿಎಂ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಅವರ ಬದಲಾವಣೆ ನಮ್ಮಿಂದ ಸಾಧ್ಯ ಇಲ್ಲ. ಬದಲಾವಣೆ ಮಾಡುವುದು ಪಕ್ಷದ ಹೈಕಮಾಂಡ್ನಿಂದ ಮಾತ್ರ ಸಾಧ್ಯ. ನಮ್ಮ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧ ಎಂದರು. ರನ್ ವೇನಲ್ಲಿ ರಾಹುಲ್ ಗಾಂಧಿ ಜೊತೆ ಸಿಎಂ, ಡಿಸಿಎಂ ಮಾತನಾಡಿದ್ದು ಸಹಜ. ಮುಖಂಡರು ಬಂದಾಗ ಅವರನ್ನು ಬರ ಮಾಡಿ ವಾಪಸ್ ಕಳುಹಿಸಿಕೊಡುವುದು ನಮ್ಮ ಪದ್ಧತಿ. ಅಲ್ಲಿ ಸಿಎಂ ಅಷ್ಟೇ ಅಲ್ಲದೆ ಡಿಕೆಶಿ, ಜಾರ್ಜ್, ಮಹದೇವಪ್ಪ ಸೇರಿದಂತೆ ಹಲವರು ಇದ್ದರು ಎಂದರು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡುವ ಪದ್ಧತಿ ಇದೆ. 2008ರಿಂದ 2013ರವರೆಗೆ ಮೂರು ಜನ ಸಿಎಂಗಳನ್ನು ಅವರು ಬದಲಾವಣೆ ಮಾಡಿದ್ದರು. ಬಿಜೆಪಿಗೆ ಇಲ್ಲಿಯವರೆಗೂ ಬಹುಮತ ಬಂದಿಲ್ಲ. ಅವರು ಆಪರೇಶನ್ ಕಮಲ ಮಾಡಿಯೇ ಅಧಿಕಾರಕ್ಕೆ ಬಂದಿದ್ದಾರೆ. ಅವರಲ್ಲಿಯೇ ಸಿಎಂ ಬದಲಾವಣೆ ಮಾಡುವ ಪದ್ಧತಿ ಇದೆ ಎಂದು ತಿರುಗೇಟು ನೀಡಿದರು. ಡಿಕೆಶಿ ದಿಲ್ಲಿಗೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಝಮೀರ್ ಅಹ್ಮದ್, ಡಿಸಿಎಂಗೆ ಕೊಟ್ಟಿರುವುದು ದೊಡ್ಡ ಇಲಾಖೆ. ಇದಕ್ಕೆ ಸಂಬಂಧಿಸಿದ ಸಭೆಗಳನ್ನು ಮಾಡಲು ಅವರು ಹೋಗಿರುತ್ತಾರೆ. ರಾಜ್ಯದಿಂದ ದಿಲ್ಲಿಗೆ ಹೋದಾಗ ನಮ್ಮ ನಾಯಕರನ್ನು ನಾವು ಭೇಟಿ ಮಾಡುವ ಪದ್ಧತಿ ಇದೆ. ನಾನೂ ಹೋದಾಗ ನಮ್ಮ ನಾಯಕರ ಭೇಟಿಗೆ ಸಮಯಾವಕಾಶ ಕೇಳುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ನುಡಿದರು.
ರಾಯಚೂರು ಉತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿಗಳ ಸೂಚನೆ : ಜ.31ರಿಂದ 2 ದಿನಗಳ ಕಾಲ 'ಮಕ್ಕಳ ಉತ್ಸವ'
ಪರಿಷ್ಕೃತ ದಿನಾಂಕದಂತೆ ಜಿಲ್ಲಾ ಉತ್ಸವ ಯಶಸ್ವಿಗೊಳಿಸಿ : ಡಿಸಿ ನಿತೀಶ್ ಕೆ.
ಠಾಕ್ರೆ ಕುಟುಂಬದ ಸೊಸೆ ಸ್ಮಿತಾ ಠಾಕ್ರೆ ಡಿವೋರ್ಸ್ ಆದ್ರೂ ಗಂಡನ ಮನೆಯಲ್ಲೇ ವಾಸ, ಇದರ ಹಿಂದಿದೆ ನೋವಿನ ಕಥೆ
BMC Election 2026 Results: ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣಾ ಫಲಿತಾಂಶಗಳು ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿರುವ ಈ ಸಮಯದಲ್ಲಿ, ಠಾಕ್ರೆ ಕುಟುಂಬಕ್ಕೆ ಸಂಬಂಧಿಸಿದ ಒಂದು ಅಪರೂಪದ ಹಾಗೂ ಭಾವುಕ ಸಂಗತಿ ಮತ್ತೆ ಬೆಳಕಿಗೆ ಬಂದಿದೆ. ವಿಚ್ಛೇದನವಾದರೂ ‘ಮಾತೋಶ್ರೀ'ಯಲ್ಲೇ ವಾಸಿಸುತ್ತಿರುವ ಠಾಕ್ರೆ ಕುಟುಂಬದ ಸೊಸೆ ಸ್ಮಿತಾ ಠಾಕ್ರೆ (Smita Thackeray) ಅವರ ಜೀವನ ಕಥೆಯು
ಭಾರತೀಯ ರೈಲ್ವೆ ಮುಂಬೈ ಮತ್ತು ಬೆಂಗಳೂರು ನಡುವೆ 18 ಗಂಟೆಗಳಲ್ಲಿ ಸಂಚರಿಸುವ ಹೊಸ 'ದುರಂತ ಎಕ್ಸ್ಪ್ರೆಸ್' ರೈಲನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಈ ಹೊಸ ರೈಲು ಪ್ರಸ್ತುತ 24 ಗಂಟೆ ತೆಗೆದುಕೊಳ್ಳುವ ಸೂಪರ್ಫಾಸ್ಟ್ ರೈಲಿಗಿಂತ ವೇಗವಾಗಿ ಸಂಚರಿಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವೇಗದ ರೈಲಿನ ಅವಶ್ಯಕತೆ ಹೆಚ್ಚಾಗಿದೆ. ಈ ರೈಲು ಕಡಿಮೆ ನಿಲುಗಡೆಗಳನ್ನು ಹೊಂದಿರುತ್ತದೆ ಮತ್ತು ಪ್ರಯಾಣದ ಟಿಕೆಟ್ ದರದಲ್ಲಿ ಊಟವೂ ಸೇರಿರುತ್ತದೆ.
ಚಳಿಯಲ್ಲಿ ನಡುಗುತ್ತಿರುವ ಉಕ್ರೇನ್ ಜನರು, ರಷ್ಯಾ ದಾಳಿಯಿಂದ ಕೈಕೊಟ್ಟಿರುವ ವಿದ್ಯುತ್ ಹಾಗೂ ಮೂಲಸೌಕರ್ಯ ವ್ಯವಸ್ಥೆ
ಉಕ್ರೇನ್ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಯುದ್ಧ ಅನ್ನೋ ಮಾತನ್ನು ಹೇಳಿರಬಾರದು, ಅದೇ ರೀತಿ ದೊಡ್ಡದಾಗಿ ದಾಳಿ ಮಾಡುತ್ತಿದೆ ರಷ್ಯಾ. ಇಷ್ಟಾದರೂ ಉಕ್ರೇನ್ ಮಾತ್ರ ರಷ್ಯಾ ಎದುರು ಮಾತುಕತೆಗೆ ಸಿದ್ಧವಾಗುತ್ತಿಲ್ಲ, ಶಾಂತಿ ಮಾತುಕತೆಗೆ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನವನ್ನು ಪಡುತ್ತಿದ್ದರೂ ಅದು ಯಶಸ್ಸು ಕಾಣುತ್ತಿಲ್ಲ. ಇದರ ಪರಿಣಾಮ ರಷ್ಯಾ ಸೇನೆಯಿಂದ ಘೋರ ದಾಳಿ, ಹಿಂಸಾತ್ಮಕ ಕ್ರಮಗಳು
ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ನಿಧನ
ಬೀದರ್ : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಡಾ.ಭೀಮಣ್ಣ ಖಂಡ್ರೆ ಅವರು ಸುಮಾರು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಒಂದು ವಾರದಿಂದ ಉಸಿರಾಟದ ತೊಂದರೆ ಹಾಗೂ ರಕ್ತದೋತ್ತಡದಲ್ಲಿ ಏರುಪೇರಾಗುತ್ತಿದ್ದ ಕಾರಣದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಅವರು, ಕೆಲ ದಿನಗಳ ಹಿಂದೆ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದ ಅವರು 1992 ರಿಂದ 1994ರ ವರೆಗೆ ಕರ್ನಾಟಕ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಡಾ.ಭೀಮಣ್ಣ ಖಂಡ್ರೆ ಅವರ ಮಗನಾದ ಈಶ್ವರ್ ಖಂಡ್ರೆ ಅವರು ಪ್ರಸ್ತುತ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಅವರ ಮೊಮ್ಮಗ ಸಾಗರ್ ಖಂಡ್ರೆ ಅವರು ಬೀದರ್ ಜಿಲ್ಲೆಯ ಸಂಸದರಾಗಿದ್ದಾರೆ.
ಯಾದಗಿರಿ | ಹಾಡಹಗಲೇ ಕಾರಿನಲ್ಲಿಟ್ಟಿದ್ದ ಹಣ-ಚಿನ್ನಾಭರಣ ಕಳವು : ಪ್ರಕರಣ ದಾಖಲು
ಯಾದಗಿರಿ: ನಗರದ ರೈಲ್ವೆ ಸ್ಟೇಷನ್ ಸಮೀಪ ಹಾಡಹಗಲೇ ಕಾರಿನಲ್ಲಿ ಇಟ್ಟಿದ್ದ 15.5 ಲಕ್ಷ ರೂ. ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಗುರುವಾರ ನಡೆದಿದೆ. ಯಾದಗಿರಿ: ನಗರದ ರೈಲ್ವೆ ನಿಲ್ದಾಣದ ಸಮೀಪದ ಮುಖ್ಯರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಹಾಡಹಗಲೇ ದುಷ್ಕರ್ಮಿಗಳು ಕಾರಿನಲ್ಲಿದ್ದ 15.5 ಲಕ್ಷ ರೂ. ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ನಿವಾಸಿ ಶರಣಪ್ಪ ಎಂಬುವವರಿಗೆ ಸೇರಿದ ನಗದು ಮತ್ತು ಆಭರಣ ಇದಾಗಿದ್ದು, ಆಸ್ತಿ ನೋಂದಣಿ ಕಾರ್ಯಕ್ಕಾಗಿ ಹಣದೊಂದಿಗೆ ಅವರು ಕುಟುಂಬಸ್ಥರೊಡನೆ ನಗರಕ್ಕೆ ಆಗಮಿಸಿದ್ದರು. ಶರಣಪ್ಪ ಅವರು ರೈಲ್ವೆ ನಿಲ್ದಾಣದ ಸಮೀಪವಿರುವ ಜ್ಯೂಸ್ ಅಂಗಡಿಯೊಂದರ ಬಳಿ ತಮ್ಮ ಕಾರನ್ನು ನಿಲ್ಲಿಸಿ ಹೊರಬಂದಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕುಟುಂಬಸ್ಥರ ಗಮನವನ್ನು ಬೇರೆಡೆ ಸೆಳೆದು ಕಾರಿನಲ್ಲಿದ್ದ ಹಣದ ಬ್ಯಾಗ್ ಹಾಗೂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆಸ್ತಿ ಖರೀದಿಗಾಗಿ ತಂದಿದ್ದ ಹಣ ಹಾಗೂ ಬಂಗಾರ ಕಳೆದುಕೊಂಡ ಶರಣಪ್ಪ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಾಹಿತಿ ಪಡೆದ ಯಾದಗಿರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೂಡುಬಿದಿರೆ: ಅಲಂಗಾರು ನಿವಾಸಿ, ವರ್ಮಾ ಸ್ಟೋರ್ ಮಾಲಕ ನಾಗವರ್ಮ ಶೆಟ್ಟಿ (90) ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಶನಿವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಜ್ಯದ ಎಲ್ಲ ಶಾಲೆಗಳಲ್ಲಿ ‘ವಾಟರ್ ಬೆಲ್’ ವ್ಯವಸ್ಥೆ ಕಡ್ಡಾಯ, ಹೊಸ ಸುತ್ತೋಲೆಯ ಪ್ರಮುಖ ಅಂಶಗಳು
ಮಕ್ಕಳಲ್ಲಿ ನೀರು ಕುಡಿಯುವ ಮಹತ್ವದ ಬಗ್ಗೆ ಅಗತ್ಯ ಜಾಗೃತಿಯ ಕೊರತೆ ಇರುವ ಹಿನ್ನೆಲೆ, ವಿದ್ಯಾರ್ಥಿಗಳಲ್ಲಿ ನಿಯಮಿತವಾಗಿ ನೀರು ಕುಡಿಯುವ ಅಭ್ಯಾಸ ಬೆಳೆಸುವ ಉದ್ದೇಶದೊಂದಿಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ ‘ವಾಟರ್ ಬೆಲ್' (ನೀರಿನ ಗಂಟೆ) ವ್ಯವಸ್ಥೆ ಜಾರಿಗೆ ತರಲು ಪಿಎಂ-ಪೋಷಣ್ ಯೋಜನೆಯ ನಿರ್ದೇಶಕರು ಸೂಚಿಸಿದ್ದಾರೆ. ಈ ಸಂಬಂಧ ಜನವರಿ 14ರಂದು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದಲ್ಲಿ ಎಲ್ಕೆಜಿಯಿಂದ 10ನೇ ತರಗತಿವರೆಗಿನ
ಕಲಬುರಗಿ | ವಿವೇಕಾನಂದರ ಆದರ್ಶಗಳು ಜನಾಂಗಕ್ಕೆ ಮಾದರಿ : ಡಾ.ಬಸವರಾಜ ಪಾಟೀಲ
ಕಲಬುರಗಿ : ಸ್ವಾಮಿ ವಿವೇಕಾನಂದರ ಆದರ್ಶ ಬೋಧನೆಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಅವರ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮವಾಗಿರುವ ಸಮಾಜ ನಿರ್ಮಾಣ ಮಾಡಬೇಕೆಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ ಸೇಡಂ ಕರೆ ನೀಡಿದರು. ನಗರದ ಮಹಾಂತ ಜ್ಯೋತಿ ಪ್ರತಿಷ್ಠಾನ ಟ್ರಸ್ಟ್ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಹಸಿವು ಮುಕ್ತ ಕಲಬುರಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ವಿಚಾರಗಳು, ಬೋಧನೆಗಳು ಮತ್ತು ಅವರ ಭಾಷಣಗಳು ಇಂದಿನ ಯುವಜನರಿಗೆ ಸಮೃದ್ಧ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಹಸಿವು ಮುಕ್ತ ಕಾರ್ಯಕ್ರಮ ಆಯೋಜನೆ ಪುಣ್ಯದ ಕೆಲಸ ಎಂದರು. ಅಪ್ಪಾರಾವ ಅಕ್ಕೋಣಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುರೇಶ್ ಕಲಶೆಟ್ಟಿ ಜಿಲ್ಲಾ, ವಿಜಯಕುಮಾರ್ ಬಿರಾದಾರ, ಬಸವರಾಜ ಎಸ್ ಎಂ, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ, ಪಾಂಡುರಂಗ ಕುಲಕರ್ಣಿ, ಎಎಸ್ ಐ, ಜಗದೀಪ, ಶಾಮರಾವ್ ಪಾಟೀಲ್, ಪ್ರಶಾಂತ್ ತಡಕಲೆ , ಶಾಂತಾ ವಾಲಿ, ಮಂಜುಳಾ ಡೊಳ್ಳೆ ಮತ್ತು ಪ್ರೀತಿ ಅಕ್ಕೋಣಿ ಯವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಎ.ಎಸ್ ಭದ್ರಶೆಟ್ಟಿ, ಡಾ.ಸಿದ್ದರಾಮಪ್ಪ ಮಾಲಿ ಪಾಟೀಲ್ ಧಂಗಾಪುರ, ಡಾ. ಸುಭಾಷ್ ಕಮಲಾಪುರೆ, ರಾಜು ಕಾಕಡೆ, ಮಹಾದೇವಿ ಪಾಟೀಲ್ ಆಲಗೂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ್ ಪಾಟೀಲ್ ಅವರು ನಿರೂಪಿಸಿದರು. ಪ್ರೀತಿ ಅಕ್ಕೋಣಿ ವಂದಿಸಿದರು. ಆಶ್ರಯ ಕಾಲೋನಿಯ 40ಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
Kalaburagi | ಜೇವರ್ಗಿ ತಹಶೀಲ್ದಾರ್ ವಿರುದ್ಧ ಹಣದ ಬೇಡಿಕೆ ಆರೋಪ: ಸಿಬ್ಬಂದಿಯಿಂದ ದೂರು
ಕಲಬುರಗಿ : ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಅವರು ತಮ್ಮ ಸಿಬ್ಬಂದಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತಾದ ತಹಶೀಲ್ದಾರ್ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನನ್ನ ಹೆಸರಿನಲ್ಲಿ ನೀವು ಹಣ ಸಂಪಾದಿಸುತ್ತಿದ್ದೀರಿ, ಹಾಗಾಗಿ ನನಗೂ ಹಣ ನೀಡಬೇಕು ಎಂದು ತಹಶೀಲ್ದಾರ್ ಮಲ್ಲಣ್ಣ ಅವರು ಕಂದಾಯ ನಿರೀಕ್ಷಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ತಹಶೀಲ್ದಾರ್ ಅವರ ನಿರಂತರ ಕಿರುಕುಳಕ್ಕೆ ಬೇಸತ್ತ ಸಿಬ್ಬಂದಿ, ನನಗೆ ಹಣ ನೀಡಲು ಸಾಧ್ಯವಿಲ್ಲ, ನನಗೆ ಕಂದಾಯ ನಿರೀಕ್ಷಕ ಜವಾಬ್ದಾರಿಯೇ ಬೇಡ, ನನ್ನನ್ನು ಕಚೇರಿ ಕೆಲಸಕ್ಕೆ ನಿಯೋಜಿಸಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಸಂತ್ರಸ್ತ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ತಹಶೀಲ್ದಾರ್ ಸ್ಪಷ್ಟನೆ : ಈ ಆರೋಪವನ್ನು ತಳ್ಳಿಹಾಕಿರುವ ತಹಶೀಲ್ದಾರ್ ಮಲ್ಲಣ್ಣ, ತಿಂಗಳ ಹಿಂದೆ ಕನ್ನಡ ಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತಗೊಂಡಿತ್ತು. ಆ ವಿಷಯವಾಗಿ ನಾನು ಸಿಬ್ಬಂದಿಯೊಂದಿಗೆ ಸಭೆಯಲ್ಲಿ ಚರ್ಚಿಸಿದ್ದೇನೆಯೇ ಹೊರತು, ಯಾರಿಗೂ ಹಣಕ್ಕಾಗಿ ಡಿಮ್ಯಾಂಡ್ ಮಾಡಿಲ್ಲ. ಈ ಹಿಂದೆ ಕೆಲಸ ಮಾಡಿದ್ದ ತಹಶೀಲ್ದಾರ್ ಅವರಿಗೂ ದೂರುದಾರ ಸಿಬ್ಬಂದಿ ಬ್ಲ್ಯಾಕ್ಮೇಲ್ ಮಾಡಿದ್ದನು. ಈಗ ಅದೇ ರೀತಿ ನನ್ನನ್ನೂ ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
WPL 2026- ಶ್ರೇಯಾಂಕಾ ಪಾಟೀಲ್ ಮೊದಲ ಫೈಫರ್! ಹ್ಯಾಟ್ರಿಕ್ ಗೆಲುವಿನೊಂದಿಗೆ ಇತಿಹಾಸ ಬರೆದ RCB!
ರಾಧಾ ಯಾದವ್ ಅವರ ಸಮಯೋಚಿತ ಬ್ಯಾಟಿಂಗ್ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು 32 ರನ್ ಗಳಿಂದ ಸೋಲಿಸಿದೆ. ಈ ಮೂಲಕ ನಲ್ಲಿ ಹ್ಯಾಟ್ರಿಕ್ ಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಟೀೂರ್ನಿಯ ಇತಿಹಾಸದಲ್ಲೇ ಮೊದಲ 3 ಪಂದ್ಯಗಳನ್ನು ನಿರಂತರವಾಗಿ ಗೆದ್ದ ಮತ್ತೊಂದು ತಂಡವಿಲ್ಲ. ಜನವರಿ 9ರಂದು ನಡೆದ ದಲ್ಲಿ ಆರ್ ಸಿಬಿಯು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿತ್ತು. ಆ ಬಳಿಕ 12ರಂದು ನಡೆದ 2ನೇ ಪಂದ್ಯದಲ್ಲಿ ಯುಪಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತ್ತು. ಇದೀಗ 3ನೇ ಪಂದ್ಯವನ್ನೂ ಗೆಲ್ಲುವ ಮೂಲಕ 6 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಶುಕ್ರವಾರ ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ಜೈಂಟ್ಸ್ ತಂಡ 18.5 ಓವರ್ ಗಳಲ್ಲಿ 150 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಯಿತು. ಕರ್ನಾಟಕದ ಸ್ಪಿನ್ನರ್ ಅವರು 3.5 ಓವರ್ ಗಳಲ್ಲಿ 23 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಅರುಣಾಚಲ ಪ್ರದೇಶದ ಸೇಲಾ ಸರೋವರದಲ್ಲಿ ಸಿಲುಕಿದ ಪ್ರವಾಸಿಗ - ಬಚಾವ್ ಮಾಡಲು ಹೋದ ಸಹಚರ ಸಾವು
ಅರುಣಾಚಲ ಪ್ರದೇಶದ ಸೇಲಾ ಸರೋವರದಲ್ಲಿ ದುರಂತ ಸಂಭವಿಸಿದೆ. ಕೇರಳದ ಪ್ರವಾಸಿಗನೊಬ್ಬ ಹೆಪ್ಪುಗಟ್ಟಿದ ಮಂಜಿನ ಮೇಲೆ ಕಾಲಿಟ್ಟು ಕೆಳಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋದ ಇಬ್ಬರು ಪ್ರವಾಸಿಗರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಇನ್ನೊಬ್ಬ ಪ್ರವಾಸಿಗ ನಾಪತ್ತೆಯಾಗಿದ್ದಾನೆ. ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತದೇಹ ಹೊರತೆಗೆಯಲಾಗಿದೆ. ನಾಪತ್ತೆಯಾದವರ ಹುಡುಕಾಟ ಮುಂದುವರಿದಿದೆ.
Bengaluru | ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಯ ಬಂಧನ
ಬೆಂಗಳೂರು : ಪತಿ ಮಾರಾಟ ಮಾಡಿದ್ದ ಶಾಲೆಯನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 16 ಲಕ್ಷ ರೂ. ಹಣ ಪಡೆದು, ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಮಾಡಿದ ಆರೋಪದಡಿ ಎನ್ಜಿಒಯೊಂದರ ಸಿಇಒನನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್ಇ)ದ ಪೊಲೀಸರು ಬಂಧಿಸಿದ್ದಾರೆ. 43 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರನ್ನು ಆಧರಿಸಿ ಮೊಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಿಟಿಎಂ ಲೇಔಟ್ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆಯು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ದಂಪತಿ ಅನೋನ್ಯವಾಗಿದ್ದಾಗ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದರು. ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಪತ್ನಿಗೆ ತಿಳಿಯದೆ ಪತಿ ಶಾಲೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಈ ವಿಷಯ ತಿಳಿದು ಆತಂಕಕ್ಕೊಳಗಾಗಿದ್ದ ಮಹಿಳೆಗೆ ಪರಿಚಯಸ್ಥರ ಮೂಲಕ ಮೊಹಮ್ಮದ್ ಹನೀಫ್ ಎಂಬಾತನ ಸಂಪರ್ಕವಾಗಿತ್ತು. ತಾನು ಎನ್ಜಿಒ ಸಿಇಒ ಹಾಗೂ ಖಾಸಗಿ ಮಾಧ್ಯಮವೊಂದರ ಎಂ.ಡಿ. ಎಂದು ಆತ ಮಹಿಳೆಯನ್ನು ನಂಬಿಸಿದ್ದ. ಪೊಲೀಸ್ ಅಧಿಕಾರಿಗಳ ಮೂಲಕ ಮಾತನಾಡಿ ಶಾಲೆಯನ್ನು ಮರಳಿ ಕೊಡಿಸುವುದಾಗಿ ಭರವಸೆ ನೀಡಿದ್ದ ಹನೀಫ್, ಈ ಕೆಲಸಕ್ಕಾಗಿ ಹಂತ ಹಂತವಾಗಿ ಒಟ್ಟು 16 ಲಕ್ಷ ರೂ. ಹಣ ಪಡೆದಿದ್ದ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಶಾಲೆ ವಾಪಸ್ ಕೊಡಿಸುವ ಬಗ್ಗೆ ಪ್ರಸ್ತಾಪಿಸಿದಾಗ ಆರೋಪಿಯು ನನಗೆ ಗೊತ್ತಿರುವ ಕೇರಳ ಮೂಲದ ಜ್ಯೋತಿಷಿಯೊಬ್ಬರ ಪರಿಚಯವಿದೆ. ಅವರಿಂದ ಕೆಲ ಪೂಜೆಗಳನ್ನು ಮಾಡಿಸಿದರೆ ಒಳ್ಳೆಯದಾಗಲಿದೆ ಎಂದು ಹೇಳಿದ್ದ. ಅದರಂತೆ ನನ್ನನ್ನು ಜ್ಯೋತಿಷಿಯ ಮನೆಗೆ ಕರೆದೊಯ್ಯುತ್ತಿದ್ದ. ಪ್ರತಿ ಬಾರಿ ಅಲ್ಲಿಗೆ ಹೋದಾಗ ಟೀಯಲ್ಲಿ ಮದ್ದು ಬೆರೆಸಿ ಕೊಡುತ್ತಿದ್ದ. ನಾನು ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಲೈಂಗಿಕವಾಗಿ ಮಾತನಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಇದಾದ ಎರಡು ವರ್ಷಗಳ ಬಳಿಕ ಆರೋಪಿಯು ತನ್ನ ಕಚೇರಿಯನ್ನು ನಾಯಂಡಹಳ್ಳಿಗೆ ವರ್ಗಾಯಿಸಿದ್ದ. ಅಲ್ಲಿಗೆ ಹೋದಾಗ ಆರೋಪಿ ನನ್ನ ಇಚ್ಚೆಗೆ ವಿರುದ್ಧವಾಗಿ ಮೈ ಮುಟ್ಟಿ ಕಿರುಕುಳ ನೀಡಿದ್ದ. ಇದನ್ನ ಪ್ರಶ್ನಿಸಿದಾಗ ನನ್ನನ್ನ ಮದುವೆಯಾಗು ಎಲ್ಲವೂ ಸರಿಯಾಗಲಿದೆ ಎಂದು ಒತ್ತಾಯಿಸಿದ್ದ. ಈತನ ದೈಹಿಕ ಹಾಗೂ ಮಾನಸಿಕ ಕಿರುಕುಳ ದಿನೇ ದಿನೇ ಹೆಚ್ಚಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿದ್ದ ಎಂದು ಸಂತ್ರಸ್ತ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಸಂತ್ರಸ್ತ ಮಹಿಳೆ ಮೊದಲು ಬ್ಯಾಟರಾಯಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಜಾತಿ ನಿಂದನೆಯ ಅಂಶಗಳಿದ್ದ ಕಾರಣ ತನಿಖೆಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಅಧಿಕಾರಿಗಳು ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಜ.17-18: ತಣ್ಣೀರುಬಾವಿ ಬ್ಲೂ ಪ್ಲ್ಯಾಗ್ ಬೀಚ್ ಕಾರ್ಯಕ್ರಮ; ಮಂಗಳೂರು ನಗರ ಪೊಲೀಸ್ನಿಂದ ಸಂಚಾರಿ ಸೂಚನೆ
ಮಂಗಳೂರು, ಜ.17: ಕರಾವಳಿ ಉತ್ಸವದ ಪ್ರಯುಕ್ತ ತಣ್ಣೀರುಬಾವಿ ಬ್ಲೂಪ್ಲ್ಯಾಗ್ ಬೀಚ್ನಲ್ಲಿ ಜ.17, 18ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ಅಪರಾಹ್ನ 3ರ ಬಳಿಕ ಕೊಟ್ಟಾರ ಚೌಕಿ-ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇದೆ. ಈ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಕೆಲವು ಸೂಚನೆಗಳನ್ನು ಹೊರಡಿಸಿದೆ. ಕಾರ್ಯಕ್ರಮ ನಡೆಯುವ ವೇಳೆ ಕುದುರೆಮುಖ ಜಂಕ್ಷನ್ನಿಂದ ತಣ್ಣೀರುಬಾವಿ ಬೀಚ್ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡಬಾರದು. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕೆ ಸುಲ್ತಾನ್ ಬತ್ತೇರಿಯಿಂದ ಫೇರಿಯನ್ನು ಅಥವಾ ಕೆಐಒಸಿಎಲ್ನಿಂದ ತಣ್ಣೀರುಬಾವಿಗೆ ಉಚಿತ ಸರಕಾರಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳು 1. ದೋಸ್ತ್ ಗ್ರೌಂಡ್ 2. ಕಟ್ಟೆ ಗ್ರೌಂಡ್ ಪಾರ್ಕಿಂಗ್ ಸ್ಥಳ 3. ತಣ್ಣೀರುಬಾವಿ ಮಸೀದಿ ಎದುರು ಪಾರ್ಕಿಂಗ್ ಸ್ಥಳ 4. ರಫ್ತಾರ್ ಪಾರ್ಕಿಂಗ್ 5. ತಣ್ಣೀರುಬಾವಿ ಬೀಚ್ ಪಾರ್ಕಿಂಗ್ 6. ಡೆಲ್ಟಾ ಮೈದಾನ ಪಾರ್ಕಿಂಗ್ 7. ಫಿಝಾ ಕ್ರಿಕೆಟ್ ಗ್ರೌಂಡ್ (ಹೊಟೇಲ್ ನಿತ್ಯಾಧರ ಮುಂಭಾಗದ ಪಾರ್ಕಿಂಗ್ ಮೈದಾನ) 8. ಎ.ಜೆ. ಶೆಟ್ಟಿ ಗ್ರೌಂಡ್ *ಪಣಂಬೂರು ಬೀಚ್ ಕಾರ್ಯಕ್ರಮ ಜ.17, 18ರಂದು ಪಣಂಬೂರು ಬೀಚ್ನಲ್ಲಿ ಮ್ಯೂಸಿಕ್ ಫೆಸ್ಟಿವಲ್, ತಾಯ್ಕಡಂ ಬ್ರಿಡ್ಜ್ ಕಾನ್ಸ್ರ್ಟ್, ಜಾವೇದ್ ಅಲಿ ನೈಟ್, ಮರಳು ಶಿಲ್ಪಕಲೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಎರಡೂ ದಿನ ಅಪರಾಹ್ನ 3 ಗಂಟೆಯ ನಂತರ ಕೂಳೂರು-ಪಣಂಬೂರು ಬೈಕಂಪಾಡಿ ರಾ.ಹೆ. ಮತ್ತು ಪಣಂಬೂರು ಬೀಚ್ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇದೆ. ಹಾಗಾಗಿ ಕುದುರೆಮುಖ ಜಂಕ್ಷನ್ನಿಂದ ಪಣಂಬೂರು ಜಂಕ್ಷನ್ವರೆಗೆ ಮತ್ತು ಡಿಕ್ಸಿ ಕ್ರಾಸ್ನಿಂದ ಪಣಂಬೂರು ಬೀಚ್ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು: 1. ಕೆ.ಕೆ ಗೇಟ್ ಟ್ರಕ್ ಯಾರ್ಡ್ ಪಾರ್ಕಿಂಗ್ 2. ಪಣಂಬೂರು ಬೀಚ್ ಪಾರ್ಕಿಂಗ್ *ವಿಶೇಷ ಸೂಚನೆ ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್ಗಳನ್ನು ಅಳವಡಿಸಿದ್ದು, ಮಾರ್ಗ ಸೂಚಿಯನ್ನು ಅನುಸರಿಸಬೇಕು ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗಾಯಾಳು ತಿಲಕ್ ನಾಯ್ಡು-ವಾಶಿಂಗ್ಟನ್ ಸುಂದರ್ ಗೆ ಬದಲಿ ಆಟಗಾರರ ಘೋಷಣೆ: ಭಾರತ ಟಿ20 ತಂಡಕ್ಕೆ 2 ಅಚ್ಚರಿಯ ಸೇರ್ಪಡೆ!
India Vs New Zealand T20i Series-ಗಾಯಾಳುಗಳ ಸಮಸ್ಯೆಯಿಂದಾಗಿ ಇದೀಗ ಬಿಸಿಸಿಐ ಯು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಪರಿಷ್ಕೃತ ತಂಡವನ್ನು ಘೋಷಿಸಿದೆ. ವಾಶಿಂಗ್ಟನ್ ಸುಂದರ್ ಮತ್ತು ತಿಲಕ್ ವರ್ಮಾ ಅವರ ಬದಲಿಗೆ ಕ್ರಮವಾಗಿ ರವಿ ಬಿಷ್ಣೋಯಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಇವರಲ್ಲಿ ಶ್ರೇಯಸ್ ಅಯ್ಯರ್ ಅವರು ಮೊದಲ ಮೂರು ಟಿ20 ಪಂದ್ಯಗಳಿಗೆ ಆಯ್ಕೆ ಆಗಿದ್ದು ತಿಲಕ್ ವರ್ಮಾ ಅವರ ಚೇತರಿಕೆಯನ್ನು ಪರಿಗಣಿಸಿ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
Bengaluru | ಹುಡುಗರಂತೆ ವೇಷ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರ ಬಂಧನ
ಬೆಂಗಳೂರು : ಹುಡುಗರಂತೆ ವೇಷ ಧರಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ಇಲ್ಲಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಟ್ಯಾನರಿ ರಸ್ತೆಯ ನಿವಾಸಿಗಳಾದ ಶಾಲು(27) ಮತ್ತು ನೀಲು(29) ಬಂಧಿತ ಯುವತಿಯರು ಎಂದು ಗುರುತಿಸಲಾಗಿದೆ. ಈ ಇಬ್ಬರು ಹುಡುಗರ ರೀತಿ ಪ್ಯಾಂಟ್, ಶರ್ಟ್, ಟೋಪಿ ಹಾಕಿಕೊಂಡು ಹಗಲು ವೇಳೆಯಲ್ಲೆ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಾ ನಿರ್ಜನ ಪ್ರದೇಶದ ಸುತ್ತಮುತ್ತ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಜ.13 ರಂದು ಸಂಪಿಗೆಹಳ್ಳಿಯ ನಿವಾಸಿ ಸಂಗಮೇಶ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇಬ್ಬರು ಹುಡುಗರು ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದಾಗಲೇ ಅವರು ಹುಡುಗರಲ್ಲ, ಹುಡುಗಿಯರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಹುಡುಗರ ವೇಷ ಧರಿಸಿಕೊಂಡು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದ್ದು, ಇಬ್ಬರು ಯುವತಿಯರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಮದ್ರಾಸ್ಗೆ ಸಮಗ್ರ, ಮಂಗಳೂರು ರನ್ನರ್ ಅಪ್
5 ನೂತನ ಕೂಟ ದಾಖಲೆ
ಶಿಕ್ಷಣ ಸಂಸ್ಥೆಗಳಲ್ಲಿ ಹಾಸುಹೊಕ್ಕಾಗಿರುವ ಜಾತಿ ತಾರತಮ್ಯ: ಸಾಂಸ್ಥಿಕ ಕೊಲೆಗೆ ಕಾರಣವಾಗುವುದು ಏನೇನು?
ರೋಹಿತ್ ವೇಮುಲ ಸಾಂಸ್ಥಿಕ ಹತ್ಯೆಯಾಗಿ 10 ವರ್ಷಗಳು!
ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ʼರಸಮಲೈʼ ಹಂಚುವ ಮೂಲಕ ರಾಜ್ ಠಾಕ್ರೆಗೆ ತಿರುಗೇಟು ನೀಡಿದ ಬಿಜೆಪಿ
ಮುಂಬೈ: ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈರನ್ನು ‘ರಸಮಲೈ’ ಎಂದು ವ್ಯಂಗ್ಯವಾಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಗೆ ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿನ ಜಯಭೇರಿಯ ಬಳಿಕ ರಸಮಲೈ ಸಿಹಿ ತಿನಿಸಿನ ಫೋಟೊ ಹಂಚಿಕೊಳ್ಳುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಈ ಕುರಿತು ಎಕ್ಸ್ನಲ್ಲಿ ರಸಮಲೈ ಫೋಟೊ ಹಂಚಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, “ಒಂದಿಷ್ಟು ರಸಮಲೈಗೆ ಆರ್ಡರ್ ಮಾಡಿದೆ. #BMCResults” ಎಂದು ಅವರು ಈ ಫೋಟೊಗೆ ಶೀರ್ಷಿಕೆ ನೀಡಿದ್ದಾರೆ. ಆ ಮೂಲಕ ರಾಜ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಮುಂಬೈನಲ್ಲಿ ಆಯೋಜನೆಗೊಂಡಿದ್ದ ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ಮುಂಬೈ ಅನ್ನು ಅಂತಾರಾಷ್ಟ್ರೀಯ ನಗರ ಎಂದು ಬಣ್ಣಿಸಿದ್ದರು. ಈ ಹೇಳಿಕೆಯನ್ನು ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷಗಳು ಚುನಾವಣಾ ಆಯುಧವನ್ನಾಗಿ ಬಳಸಿಕೊಂಡಿದ್ದವು. ಶಿವಸೇನೆ (ಉದ್ಧವ್ ಬಣ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಜಂಟಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಜ್ ಠಾಕ್ರೆ, ಮುಂಬೈ ಕುರಿತು ಹೇಳಿಕೆ ನೀಡುವ ಅಣ್ಣಾಮಲೈ ಅಧಿಕಾರವನ್ನು ಪ್ರಶ್ನಿಸಿದ್ದರು ಹಾಗೂ ಅವರನ್ನು ‘ರಸಮಲೈ’ ಎಂದು ವ್ಯಂಗ್ಯವಾಡಿದ್ದರು. “ಲುಂಗಿಯನ್ನು ಕಿತ್ತೆಸೆದು, ಪುಂಗಿಯನ್ನು ಊದಿರಿ” ಎಂಬ ವಿವಾದಾತ್ಮಕ ಹೇಳಿಕೆಯನ್ನೂ ರಾಜ್ ಠಾಕ್ರೆ ನೀಡಿದ್ದರು. ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಳಿಕ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೆ.ಅಣ್ಣಾಮಲೈ, “ಮುಂಬೈನ ಜನರು ಸ್ಫಟಿಕದಂತೆ ಸ್ಪಷ್ಟವಾಗಿ ಮಾತನಾಡಿದ್ದಾರೆ. ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿನ ಮಹಾಯುತಿ ಮೈತ್ರಿಕೂಟದ ಗೆಲುವು ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವ ಆಡಳಿತಕ್ಕೆ ದೊರೆತಿರುವ ಧ್ವನಿಪೂರ್ಣ ಅನುಮೋದನೆಯಾಗಿದೆ” ಎಂದು ಹೇಳಿದ್ದಾರೆ.
ಕಣಚೂರು ವೈದ್ಯಕೀಯ ಕಾಲೇಜು: ಪ್ರಶಸ್ತಿ ಪ್ರದಾನ ಸಮಾರಂಭ, ಪ್ಲೆಕ್ಸಸ್ - 2006 ಕಾರ್ಯಕ್ರಮ
ಕೊಣಾಜೆ: ವೈದ್ಯರು ಕೇವಲ ಬಿಳಿ ಕೋಟ್ ಧರಿಸಿದ ವೃತ್ತಿಪರರು ಮಾತ್ರವಲ್ಲ. ಅವರು ನಿಜ ಜೀವನದ ಹೀರೋ ಗಳು. ಜೀವ ರಕ್ಷಿಸುವ ಅವರ ಸೇವೆ ಅತ್ಯಂತ ಸಮರ್ಪಣೆಯ ಫಲವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮೊಹಮ್ಮದ್ ಮೊಹ್ಸಿನ್ ಐಎಎಸ್ ಅಭಿಪ್ರಾಯಪಟ್ಟರು. ಅವರು ಕಣಚೂರು ವೈದ್ಯಕೀಯ ಕಾಲೇಜು ಕ್ಯಾಂಪಸ್ ನ ಕಾನ್ಫರೆನ್ಸ್ ಡ್ರೋಮ್ ನಲ್ಲಿ ನಡೆದ ದಶಕದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಾರ್ಷಿಕ ದಿನಾಚರಣೆಯ ಪ್ಲೆಕ್ಸಸ್ -2006 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇವಲ ಪದವಿ ಅಂಕಗಳು ಮಾತ್ರ ಉತ್ತಮ ವೈದ್ಯರನ್ನು ನಿರ್ಧರಿಸುವುದಿಲ್ಲ. ಚಿಕಿತ್ಸಾ ಕೌಶಲ್ಯ, ಪ್ರಾಯೋಗಿಕ ಅನುಭವ ಮತ್ತು ಸಂವಹನ ಕೌಶಲ್ಯಗಳು ಅತ್ಯಂತ ಮುಖ್ಯ. ರೋಗಿಗಳೊಂದಿಗೆ ಸರಿಯಾದ ಸಂವಹನ ನಡೆಯು ವುದೇ ಉತ್ತಮ ಚಿಕಿತ್ಸೆಗೆ ನೆಲೆ. ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ ಬಹುಮುಖ್ಯ ಎಂದರು. ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ನ ಅಧ್ಯಕ್ಷ ಪ್ರೊ. ಯು.ಟಿ.ಇಫ್ತಿಕಾರ್ ಆಲಿ ಫರೀದ್ ಮಾತನಾಡಿ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ದೇಹಭಾಷೆ ಮತ್ತು ವೃತ್ತಿಪರ ಮನೋಭಾವ ಅತ್ಯಂತ ಮುಖ್ಯ. ಮಾತು ಮಾತ್ರವಲ್ಲ, ನಮ್ಮ ನಡೆ-ನುಡಿ, ರೋಗಿಯೊಂದಿಗೆ ನಡೆಸುವ ವರ್ತನೆ ಅವರ ವಿಶ್ವಾಸವನ್ನು ಗೆಲ್ಲುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ಗೌರವವು ಪದವಿ ಅಥವಾ ಹುದ್ದೆಯಿಂದ ಅಲ್ಲ, ನಮ್ಮ ಕಾರ್ಯಕ್ಷಮತೆ ಮತ್ತು ಸೇವೆಯಿಂದಲೇ ದೊರೆಯುತ್ತದೆ ಎಂದರು. ಈ ಸಂದರ್ಭ ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ನ ಚೇರ್ ಮೆನ್ ಯು.ಕಣಚೂರು ಮೋನು ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಸಂಸ್ಥೆಯ ಗೌರವ ಸಲಹೆಗಾರರಾದ ಡಾ.ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಡಾ.ಎಂ. ವೆಂಕಟ್ರಾಯ ಪ್ರಭು, ವೈದ್ಯಕೀಯ ಅಧೀಕ್ಷಕ ಡಾ.ಅಂಜನ್, ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ವೈದ್ಯಕೀಯ ಕಾಲೇಜು ಡೀನ್ ಡಾ. ಶಹನವಾಝ್ ಮಾಣಿಪ್ಪಾಡಿ ವಾರ್ಷಿಕ ವರದಿ ವಾಚಿಸಿದರು. ಡಾ ದೀಪಿಕಾ ಕಾಮತ್ ವಂದಿಸಿದರು.
ಸ್ಕೂಟರ್ ಸವಾರೆ ಮೃತ್ಯು: ಆರೋಪಿ ಲಾರಿ ಚಾಲಕನಿಗೆ ಶಿಕ್ಷೆ
ಮಂಗಳೂರು, ಜ.16: ಅಪಘಾತದಲ್ಲಿ ಸ್ಕೂಟರ್ ಸವಾರೆಯ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಾರಿ ಚಾಲಕ ಎಂ.ಡಿ. ಸತೀಶ್ ಎಂಬಾತನಿಗೆ ಜೆಎಂಎಫ್ಸಿ 8ನೇ ನ್ಯಾಯಾಲಯ 1 ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ 21 ಸಾವಿರ ರೂ. ದಂಡ ವಿಧಿಸಿದೆ. 2019ರ ನ.27ರಂದು ಮಧ್ಯಾಹ್ನ 11:50ರ ವೇಳೆಗೆ ಪ್ರಿಯಾ ವೈ. ಸುವರ್ಣ ಎಂಬಾಕೆ ಕೆಪಿಟಿಯಿಂದ ಕೊಟ್ಟಾರ ಚೌಕಿ ಕಡೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕುಂಟಿಕಾನ ಬಳಿ ಲಾರಿ ಢಿಕ್ಕಿ ಹೊಡೆದಿತ್ತು. ಇದರಿಂದ ಸ್ಕೂಟರ್ ಸವಾರೆ ಮೃತಪಟ್ಟಿದ್ದರು. ಈ ಬಗ್ಗೆ ಅಂದಿನ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಫವಾಝ್ ಪಿ.ಎ. ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಗೀತಾ ರೈ ಮತ್ತು ಆರೋನ್ ಡಿಸೋಜ ವಿಟ್ಲ ವಾದಿಸಿದ್ದರು.
ಉಡುಪಿ: ಜ.17ರಂದು ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗದಿಂದ ವೈವಿಧ್ಯಮಯ ಕಾರ್ಯಕ್ರಮ
ಉಡುಪಿ, ಜ.16: ಶೀರೂರು ಪರ್ಯಾಯ ಪ್ರಯುಕ್ತ ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗ ನಾಳೆ ಜ.17ರಂದು ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದ ಎದುರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬಳಗದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಯತೀಶ್ ಕರ್ಕೇರ ತಿಳಿಸಿದ್ದಾರೆ. ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 3ರವರೆಗೆ ಜಿಲ್ಲೆಯ ವಿವಿದೆಡೆಗಳಿಂದ ಬರುವ ತಂಡದಿಂದ ಕುಣಿತ ಭಜನೆ ನಡೆಯಲಿದೆ. ಮೂರು ಗಂಟೆಗೆ ರಾಜ್ಯಮಟ್ಟದ ಭಕ್ತಿ ಪ್ರಧಾನ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೆ ಬೆಳಗ್ಗೆ 9ಗಂಟೆಗೆ ಕಾಂಗ್ರೆಸ್ ನಾಯಕರೂ ಉದ್ಯಮಿಗಳೂ ಆದ ಪ್ರಸಾದ್ರಾಜ್ ಕಾಂಚನ್ ಹಾಗೂ ಸೂರ್ಯಪ್ರಕಾಶ್ ಅವರು ಚಾಲನೆ ನೀಡಲಿದ್ದಾರೆ ಎಂದ ಅವರು ಅಪರಾಹ್ನ 3:00ಗಂಟೆಗೆ ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸುವರು. ಸಂಜೆ 7ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು. ಬಳಿಕ 7:30ರಿಂದ ಜಿಲ್ಲೆಯ ಪ್ರಸಿದ್ಧ ಮೆಕ್ಕೆಕಟ್ಟೆ ಮೇಳದಿಂದ ಯಕ್ಷಗಾನ ‘ದೇವಿ ಮಹಾತ್ಮೆ’ ಪ್ರದರ್ಶನ ನಡೆಯಲಿದೆ ಎಂದೂ ಯತೀಶ್ ಕರ್ಕೆರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮುರಳಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕೃಷ್ಣ ಶೆಟ್ಟಿ ಬಜಗೋಳಿ, ಅಕ್ಷತ ಪೈ, ಸುಧಾಕರ್, ಸೂರಜ್ ಕಲ್ಮಾಡಿ ಉಪಸ್ಥಿತರಿದ್ದರು.
ಶೀರೂರು ಪರ್ಯಾಯಕ್ಕೆ ಸಜ್ಜುಗೊಂಡಿದೆ ಕೃಷ್ಣ ನಗರಿ ಉಡುಪಿ
ಉಡುಪಿ, ಜ.16: ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಉಡುಪಿ ಜನತೆಯ ಸಹಕಾರದಿಂದ ಅತ್ಯಂತ ವ್ಯವಸ್ಥಿತ ಹಾಗೂ ವೈಭವಯುತವಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಬರುವ ಪರ್ಯಾಯವನ್ನು ನಡೆಸಲು ಶ್ರೀಕೃಷ್ಣನ ನಗರಿ ಉಡುಪಿ ಸಜ್ಜು ಗೊಂಡಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ. ಸುಮಾರು 2 ಲಕ್ಷ್ಮಕ್ಕೂ ಅಧಿಕ ಭಕ್ತರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಇದಕ್ಕಾಗಿ ಶನಿವಾರ ರಾತ್ರಿ ಕೂಡಾ ಮೂರು ಕಡೆಗಳಲ್ಲಿ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 5 ಮಂದಿ ಸಾಧಕರಿಗೆ ಪ್ರಶಸ್ತಿ: ಜ.18ರ ಮುಂಜಾನೆ 6 ಗಂಟೆ ಅಲಂಕೃತಗೊಂಡ ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರಿಗೆ ಶೀರೂರು ಶ್ರೀಪಾದರು ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಶನಿವಾರ ಸಂಜೆ 4:30ಕ್ಕೆ ನಿರ್ಗಮನ ಶ್ರೀಗಳಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಶೀರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ತಮ್ಮ ಚತುರ್ಥ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪರ್ಯಾಯ ಶ್ರೀಗಳಿಗೆ ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥರಿಗೆ ರಥಬೀದಿಯ ಪೂರ್ಣ ಪ್ರಜ್ಞಾ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಯಶಪಾಲ್ ತಿಳಿಸಿದ್ದಾರೆ. ಶೀರೂರು ಪರ್ಯಾಯದ ಕಾರ್ಯಕ್ರಮಗಳ ವಿವರ: ಜ.18ರ ಪ್ರಾತಃ ಕಾಲ 1:15ಕ್ಕೆ ಕಾಪು ಸಮೀಪದ ದಂಡ ತೀರ್ಥದಲ್ಲಿ ಶೀರೂರು ಶ್ರೀಗಳಿಂದ ಪವಿತ್ರ ಸ್ನಾನ. 2:00 ಗಂಟೆಗೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭ. ಬೆಳಗ್ಗೆ 5:15ಕ್ಕೆ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ. ಬೆಳಗ್ಗೆ 5:45ಕ್ಕೆ ಶೀರೂರು ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ, 5:55ಕ್ಕೆ ಬಡಗುಮಳಿಗೆಯ ಅರಳು ಗದ್ದುಗೆಯಲ್ಲಿ ‘ಸಾಂಪ್ರದಾಯಿಕ ದರ್ಬಾರ್ ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ. ಬೆಳಗ್ಗೆ 6:15ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಕಾರ್ಯಕ್ರಮ ಆಮಂತ್ರಿತ ಅಷ್ಟಮಠಾಧೀಶರಿಂದ ಹಾಗೂ ಪರ್ಯಾಯ ಪೀಠಾಧೀಶರಿಂದ ಅನುಗ್ರಹ ಸಂದೇಶ. 10:30ಕ್ಕೆ ಶೀರೂರು ಶ್ರೀಗಳಿಂದ ಮಹಾಪೂಜೆ. ಪರ್ಯಾಯ ಮೆರವಣಿಗೆ: ಮುಂಜಾನೆ 2:00 ಗಂಟೆಗೆ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಉಡುಪಿ ಜೋಡುಕಟ್ಟೆ ಯಿಂದ ಶ್ರೀಕೃಷ್ಣಮಠದವರೆಗೆ ಸುಮಾರು 85 ಕ್ಕೂ ಅಧಿಕ ವಿವಿಧ ರಾಜ್ಯಗಳ ಕಲಾ ತಂಡಗಳು, ವೈವಿಧ್ಯಮಯ ಆಕರ್ಷಕ ಸ್ತಬ್ಧ ಚಿತ್ರಗಳನ್ನೊಳಗೊಂಡ ವೈಭವದ ಪರ್ಯಾಯ ಮೆರವಣಿಗೆ ಸಾಗಿ ಬರಲಿದೆ. ಜ.17ರ ರಾತ್ರಿ 40 ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7:30ರಿಂದ ವಿಶೇಷ ಅನ್ನ ಸಂತರ್ಪಣೆಯು ನಗರಸಭಾ ಕಚೇರಿ ಬಳಿಯ ಶ್ರೀನಿತ್ಯಾನಂದ ಸ್ವಾಮಿ ಮಂದಿರ, ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ. ಭಾಗವಹಿಸುವ ಗಣ್ಯರು: ಪರ್ಯಾಯ ಮೆರವಣಿಗೆ ಹಾಗೂ ಪರ್ಯಾಯ ದರ್ಬಾರ್ಗಳಲ್ಲಿ ಉಡುಪಿ ಶ್ರೀಕೃಷ್ಣ ಮಠದ ಅಷ್ಟ ಮಠಗಳಸ ಮಠಾಧೀಶರೊಂದಿಗೆ ನಾಡಿನ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮೈಸೂರಿನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಳರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಜಿಲ್ಲಾದಿಕಾರಿ ಹಾಗೂ ಇತರರು ಭಾಗವಹಿಸಲಿದ್ದಾರೆ.
ಸಾಮಾಜಿಕ ಜಾಲತಾಣ X ಮತ್ತೆ ಡೌನ್: ಭಾರತ ಸೇರಿ ಹಲವು ದೇಶಗಳಲ್ಲಿ ಬಳಕೆದಾರರಿಗೆ ಅಡಚಣೆ
ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಬಳಕೆದಾರರು ಶುಕ್ರವಾರ ಸಂಜೆ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಪ್ರವೇಶಿಸಲು ತೀವ್ರ ತೊಂದರೆ ಅನುಭವಿಸಿರುವುದು ವರದಿಯಾಗಿದೆ. ಟೈಮ್ಲೈನ್ ಲೋಡ್ ಆಗದಿರುವುದು, ಪೋಸ್ಟ್ ಮಾಡುವಲ್ಲಿ ಸಮಸ್ಯೆ ಹಾಗೂ ವೆಬ್ಸೈಟ್ ಸಂಪೂರ್ಣವಾಗಿ ತೆರೆಯದಿರುವುದು ಸೇರಿದಂತೆ ಹಲವು ದೋಷಗಳು ಕಂಡುಬಂದಿವೆ. ಇದು ಈ ವಾರದಲ್ಲೇ ಎಕ್ಸ್ ಎದುರಿಸುತ್ತಿರುವ ಎರಡನೇ ಜಾಗತಿಕ ವ್ಯತ್ಯಯವಾಗಿದ್ದು (ಔಟೇಜ್) ಬಳಕೆದಾರರಲ್ಲಿ
ರಾಮನಗರ ವೈದ್ಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಿ: ಡಾ. ಸಿಎನ್ ಮಂಜುನಾಥ್ ಪಟ್ಟು; ಕಾರಣವೇನು?
ರಾಮನಗರದಲ್ಲಿ ನಿರ್ಮಾಣ ಹಂತದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಒತ್ತಾಯಿಸಿದ್ದಾರೆ. ಆಸ್ಪತ್ರೆ ಇಲ್ಲದಿದ್ದರೆ ವೈದ್ಯಕೀಯ ಕಾಲೇಜಿನ ಉದ್ದೇಶ ಈಡೇರುವುದಿಲ್ಲ ಎಂದು ಅವರು ಸಚಿವರು ಹಾಗೂ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಭೋಪಾಲ್ ಸಾಹಿತ್ಯ ಹಾಗೂ ಕಲಾ ಉತ್ಸವಕ್ಕೆ ಸಂಘ ಪರಿವಾರದ ವಿರೋಧ; ಬಾಬರ್ ಕುರಿತ ಪುಸ್ತಕದ ಚರ್ಚೆ ರದ್ದು
ಭೋಪಾಲ, ಜ. 16: ಭೋಪಾಲ್ ಸಾಹಿತ್ಯ ಹಾಗೂ ಕಲಾ ಉತ್ಸವದಲ್ಲಿ ನಡೆಯಲಿದ್ದ ‘ಬಾಬರ್: ದಿ ಕ್ವೆಸ್ಟ್ ಫಾರ್ ಹಿಂದೂಸ್ತಾನ್’ ಪುಸ್ತಕದ ಕುರಿತ ಚರ್ಚೆಯನ್ನು ಪ್ರತಿಭಟನೆಯ ಭೀತಿಯಿಂದ ರದ್ದುಗೊಳಿಸಲಾಯಿತು. ಚರ್ಚೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಟೀಕಿಸಿ ಪುಸ್ತಕದ ಲೇಖಕ ಆಭಾಸ ಮಾಲದಹಿಯಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘‘ಜನವರಿ 10ರಂದು ನನ್ನ ಇತ್ತೀಚಿನ ಪುಸ್ತಕ ಬಾಬರ್: ದಿ ಕ್ವೆಸ್ಟ್ ಫಾರ್ ಹಿಂದೂಸ್ತಾನ್ ಕುರಿತು ಮಾತನಾಡಲು ಆಹ್ವಾನಿಸಲಾಗಿತ್ತು. ಇದು ಬಾಬರ್ ಕುರಿತ ಜೀವನ ಚರಿತ್ರೆಯ ಎರಡನೇ ಸಂಪುಟವಾಗಿದೆ. ಮೊದಲ ಸಂಪುಟ ಬಾಬರ್’’ ಎಂದು ಅವರು ಹೇಳಿದ್ದಾರೆ. ‘‘ಮೋದಿ ಎಗೈನ್: (ವೈ ಮೋದಿ ಈಸ್ ರೈಟ್ ಫಾರ್ ಇಂಡಿಯಾ) ಆ್ಯನ್ ಎಕ್ಸ್ ಕಮ್ಯೂನಿಸ್ಟ್ಸ್ ಮೆನಿಫೆಸ್ಟೊ’’ (2019) ಪುಸ್ತಕವನ್ನು ಕೂಡ ಬರೆದ, ಮೋದಿಯ ಬೆಂಬಲಿಗನಾಗಿ ಬದಲಾದ ಮಾರ್ಕ್ಸಿಸ್ಟ್ ಆಭಾಸ ಮಾಲದಹಿಯಾರ್, ನನ್ನ ನಿಗದಿತ ಅಧಿವೇಶನ ಮುಂದುವರಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಂಘಟಕರು ತಿಳಿಸಿದರು ಎಂದು ಹೇಳಿದ್ದಾರೆ. ಪತ್ರಿಕೆಯೊಂದರಲ್ಲಿ ಪ್ರಕಟವಾದ ದಾರಿ ತಪ್ಪಿಸುವ ಹಾಗೂ ಮಾನಹಾನಿಕರ ವರದಿಯಿಂದ ಪ್ರಚೋದನೆಗೊಂಡು ಸಂಘ ಪರಿವಾರದ ಆಕ್ಷೇಪಣೆ ಹಾಗೂ ಪ್ರಸ್ತಾವಿತ ಪ್ರತಿಭಟನೆ ಇದಕ್ಕೆ ಕಾರಣ. ಸಾಹಿತ್ಯ ಉತ್ಸವದಲ್ಲಿ ಬಾಬರ್ ಕುರಿತ ಅಧಿವೇಶನದಲ್ಲಿ ಬಾಬರ್ನನ್ನು ವೈಭವೀಕರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಪತ್ರಿಕೆಯ ವರದಿ ತಪ್ಪಾಗಿ ಪ್ರತಿಪಾದಿಸಿತ್ತು ಎಂದು ಸಂಘಟಕರು ತನಗೆ ಮಾಹಿತಿ ನೀಡಿದರು ಎಂದು ಅವರು ಹೇಳಿದ್ದಾರೆ. ವಿಪರ್ಯಾಸವೆಂದರೆ, ಬಾಬರ್ ಅವರ ಚಿತ್ರಣದ ಕುರಿತ ಮಾರ್ಕ್ಸ್ವಾದಿ ವಿರೂಪಗಳನ್ನು ಪ್ರಶ್ನಿಸುವ ಉದ್ದೇಶದಿಂದ ಈ ಅಧಿವೇಶನ ಏರ್ಪಡಿಸಲಾಗಿತ್ತು. ಆದರೆ, ಬಾಬರ್ನನ್ನು ವೈಭವಿಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸತ್ಯ ಇದಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆ ಕುರಿತಂತೆ ಆಭಾಸ ಮಾಲದಹಿಯಾರ್ ಮಧ್ಯಪ್ರದೇಶದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಸಿಂಗ್ ಲೋಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ| ವಲಸೆ ಕಾರ್ಮಿಕರ ಮೇಲೆ ದಾಳಿ: ಮುರ್ಷಿದಾಬಾದ್ನಲ್ಲಿ ಸ್ಥಳೀಯರಿಂದ ಪ್ರತಿಭಟನೆ
ಕೋಲ್ಕತಾ, ಜ. 16: ಇತರ ರಾಜ್ಯಗಳಲ್ಲಿ ಮುರ್ಷಿದಾಬಾದ್ ಜಿಲ್ಲೆಯ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಪಶ್ಚಿಮಬಂಗಾಳದ ಮುರ್ಶಿದಾಬಾದ್ನಲ್ಲಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೆಲಡಾಂಗಾ 1 ಪ್ರದೇಶದ ಮಹೇಶಪುರದಲ್ಲಿ ಬೆಳಗ್ಗೆ 9 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಕಾರರು ವಾಹನ ಸಂಚಾರಕ್ಕೆ ತಡೆ ಒಡ್ಡಿದರು. ಇದರಿಂದ ಉತ್ತರ ಪಶ್ಚಿಮಬಂಗಾಳವನ್ನು ದಕ್ಷಿಣದ ನಗರಗಳೊಂದಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಇದಲ್ಲದೆ ಪ್ರತಿಭಟನಕಾರರು ಟಯರ್ಗಳಿಗೆ ಬೆಂಕಿ ಹಚ್ಚಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಿಂದ ಕೆಲಸಕ್ಕಾಗಿ ವಲಸೆ ಹೋದ ಕಾರ್ಮಿಕರು ಇತರ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವುದಕ್ಕೆ ಮತ್ತೆ ಮತ್ತೆ ದಾಳಿ ಹಾಗೂ ಅಸುರಕ್ಷಿತ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ‘‘ಮುರ್ಶಿದಾಬಾದ್ನ ವಲಸಿಗರನ್ನು ಪಶ್ಚಿಮಬಂಗಾಳದ ಹೊರಗೆ ಬಾಂಗ್ಲಾದೇಶಿಗಳು ಎಂದು ಹಣೆ ಪಟ್ಟಿ ಹಚ್ಚಲಾಗುತ್ತಿದೆ. ಬಂಗಾಳಿ ಮಾತನಾಡುತ್ತಿರುವುದಕ್ಕೆ ಅವರು ದೌರ್ಜನ್ಯ ಎದುರಿಸುತ್ತಿದ್ದಾರೆ. ಇಂತಹ ದಾಳಿಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡುವಂತೆ ನಾವು ಆಗ್ರಹಿಸುತ್ತೇವೆ’’ ಎಂದು ಪ್ರತಿಭಟನಕಾರರು ಹೇಳಿದ್ದಾರೆ. ಕೆಲಸಕ್ಕಾಗಿ ಜಾರ್ಖಂಡ್ಗೆ ವಲಸೆ ಹೋದ ಮುರ್ಶಿದಾಬಾದ್ ನಿವಾಸಿ ಹತ್ಯೆ ಕುರಿತು ಸುದ್ದಿ ಹರಡಿದ ಬಳಿಕ ಈ ಪ್ರತಿಭಟನೆ ಭುಗಿಲೆದ್ದಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ| ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಈಡಿ ದಾಳಿ
ಹೊಸದಿಲ್ಲಿ,ಜ.16: ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶುಕ್ರವಾರ ಮಧ್ಯಪ್ರದೇಶದ ಭೋಪಾಲ್, ಹೋಶಂಗಾಬಾದ್ ಮತ್ತು ಬೇತುಲ್ ಹಾಗೂ ಮಹಾರಾಷ್ಟ್ರದ ನಾಗ್ಪುರ ಮತ್ತು ಭಂಡಾರಾ ಜಿಲ್ಲೆಗಳಲ್ಲಿಯ 16 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ದಾಳಿಗಳನ್ನು ನಡೆಸಲಾಗಿದೆ. ನಾಗ್ಪುರದ ಸದರ್ ಮತ್ತು ಅಂಬಾಝರಿ ಪೋಲಿಸ್ ಠಾಣೆಗಳಲ್ಲಿ ನರೇಂದ್ರ ಪಿಂಪ್ಲೆ, ಅಮೋಲ್ ಅಲಿಯಾಸ್ ಗುಡ್ಡು ಖೋರ್ಗಡೆ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಆಧಾರದಲ್ಲಿ ಈಡಿ ತನಿಖೆಯನ್ನು ಕೈಗೊಂಡಿದೆ. ಈಡಿ ಪ್ರಕಾರ ಆರೋಪಿಗಳು ಅಕ್ರಮ ಮರಳು ದಂಧೆಗೆ ನಕಲಿ ವಿದ್ಯುನ್ಮಾನ ಸಾಗಾಟ ಪರವಾನಿಗೆಗಳನ್ನು (ಇಟಿಪಿಗಳು) ಬಳಸುತ್ತಿದ್ದರು. ನಾಗಪುರ ಸುತ್ತುಮುತ್ತಲಿನ ಮರಳು ಪ್ರದೇಶಗಳನ್ನು ಮುಚ್ಚಲಾಗಿದ್ದರೂ ಮರಳು ಮಾಫಿಯಾವು ಸಾಗಾಣಿಕೆದಾರರು ಮತ್ತು ಇತರೊಂದಿಗೆ ಶಾಮೀಲಾಗಿ ಅಕ್ರಮ ಗಣಿಗಾರಿಕೆಯನ್ನು ಮುಂದುವರಿಸಿತ್ತು ಎನ್ನುವುದನ್ನು ಈಡಿ ತನಿಖೆಯು ಬಯಲಿಗೆಳೆದಿದೆ. ದಂಧೆಕೋರರು ಮಧ್ಯಪ್ರದೇಶದಿಂದ ನಕಲಿ ರಾಯಲ್ಟಿ ಪಾವತಿ ದಾಖಲೆಗಳನ್ನು ಪಡೆದುಕೊಂಡು ಅಕ್ರಮ ಮರಳನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲು ಅವುಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ತನಿಖೆಯು ಮಧ್ಯಪ್ರದೇಶದಲ್ಲಿ ಕಾನೂನುಬದ್ಧವಾಗಿ ಗುತ್ತಿಗೆಗೆ ಪಡೆದುಕೊಂಡಿರುವ ಮರಳು ದಿಬ್ಬಗಳ ಹೆಸರಿನಲ್ಲಿ ನಕಲಿ ಇಟಿಪಿಗಳನ್ನು ತಯಾರಿಸುತ್ತಿದ್ದ ರಾಹುಲ್ ಖನ್ನಾ ಮತ್ತು ಬಾಬು ಅಗರವಾಲ್ ನೇತೃತ್ವದ ಮಾಫಿಯಾವನ್ನು ಭೇದಿಸಿದೆ ಎಂದು ಈಡಿ ತಿಳಿಸಿದೆ. ಈ ನಕಲಿ ಇಟಿಪಿಗಳನ್ನು ನಾಗಪುರದಲ್ಲಿಯ ಮರಳು ಮಾಫಿಯಾ ದಂಧೆಕೋರರಿಗೆ ಪ್ರತಿ ಪರವಾನಿಗೆಗೆ 6,000 ರೂ.ಗಳಿಂದ 10,000 ರೂ.ವರೆಗಿನ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖಾ ಸಂಸ್ಥೆಯು ಹೇಳಿದೆ.
ನರೇಗಾ ಹಿಂದಿನಂತೆ ಮರುಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ: ಐವನ್ ಡಿಸೋಜ
ಮಂಗಳೂರು: ರಾಜ್ಯ ಸರಕಾರದ ಜೊತೆ ಯಾವುದೇ ಸಮಾಲೋಚನೆ ನಡೆಸದೆ ನರೇಗಾ ಯೋಜನೆಯನ್ನು ಬದಲಾಯಿಸಿ ನೂತನ ಹೆಸರಿನ ಯೋಜನೆ ಮಾಡಲು ಹೊರಟಿರುವುದು ಸರಿಯಲ್ಲ, ರಾಜ್ಯದಲ್ಲಿ ನರೇಗಾ ಯಾಥ ಸ್ಥಿತಿ ಯಲ್ಲಿ ಉಳಿಸಲು ಒತ್ತಾಯಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾ ಗುವುದು.ಜ.21ರಂದು ನಗರದ ಪುರಭವನದ ಮುಂಭಾಗದ ಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆಯ ಜೊತೆ ರಾಜ್ಯ ಸರಕಾರ ಯೋಜನೆಯ ಶೇ40ರಷ್ಟು ಅನುದಾನ ನೀಡಬೇಕೆಂದು ನೀತಿ ಜಾರಿ ಮಾಡಲಾಗಿದೆ.ಈ ಬಗ್ಗೆ ರಾಜ್ಯ ಸರಕಾರದ ಬಳಿ ಯಾವುದೇ ಸಮಾಲೋಚನೆ ನಡೆಸದೆ ಏಕ ಪಕ್ಷೀಯವಾಗಿ ತೀರ್ಮಾನಿ ಸಲಾಗಿದೆ.ಇದುವರೆಗೆ ಸುಮಾರು ಆರು ರಾಜ್ಯಗಳು ಬದಲಾಯಿಸಲಾದ ಉದ್ಯೋಗ ಖಾತ್ರಿ ಯೋಜನೆಗೆ ರಾಜ್ಯದ ಪಾಲು ಶೇ 40ಭಾಗ ನೀಡಲು ವಿರೋಧಿಸಿದೆ.ಈ ಹಿಂದೆ ಪ್ರತಿ ಗ್ರಾಮ ಪಂಚಾಯತ್ ಈ ಯೋಜನೆ ಯಿಂದ ಒಂದರಿಂದ ಒಂದೂವರೆ ಕೋಟಿ ವಾಋಷಿಕ ಅನುದಾನ ಪಡೆಯುತ್ತಿತ್ತು. 36 ಕೋಟಿ ಮಾನವ ದಿನಗಳ ಉದ್ಯೋಗ ನೀಡಲಾಗು ತ್ತಿರುವ ಈ ಯೋಜನೆಯ ಮೂಲಕ 26ಪರಿಶಿಷ್ಟ ಜಾತಿ,10ಲಕ್ಷ ಪರಿಶಿಷ್ಟ ಪಂಗಡದ ಕುಟುಂಬ ಗಳಿಗೆ ಉದ್ಯೋಗ ದೊರೆಯುತ್ತಿತ್ತು, 16ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಸೃಷ್ಟಿ ಮಾಡಲಾಗು ತ್ತಿರುವ ಯೋಜನೆ. ಇದೀಗ ಕೇಂದ್ರ ಸರಕಾರ ಜನರ ಉದ್ಯೋಗದ ಹಕ್ಕನ್ನು ಕಸಿದು ಕೊಳ್ಳಲು ಹೊರಟಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ. ಕೇಂದ್ರ ಸರಕಾರ ಈ ಹಿಂದೆ ಬಜೆಟ್ ನಲ್ಲಿ ಈ ಯೋಜನೆಗೆ ಅನುದಾನ ಕಡಿತಗೊಳಿಸಿತ್ತು. ಇದೀಗ ಯೋಜನೆಯನ್ನು ಸಂಪೂರ್ಣ ವಾಗಿ ಬದಲಾಯಿಸಿ ಬಡವರ ಮೇಲೆ ಬರೆ ಎಳೆದಿದೆ.ರಾಜ್ಯ ಸರಕಾರ ಈ ಬಗ್ಗೆ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚೆ ನಡೆಸಲಿದೆ.ಸುಳ್ಯದಿಂದ ಮೂಲ್ಕಿಯವರೆಗೆ ಕೇಂದ್ರ ಸರಕಾರದ ಈ ಕ್ರಮದ ವಿರುದ್ಧ ಕಾಂಗ್ರೆಸ್ ಫೆ.9ರಿಂದ 12ರವರೆಗೆ ಪಾದಯಾತ್ರೆ ನಡೆಸಿ ಮನರೇಗಾ ಹಿಂದಿನಂತೆ ಯಥಾ ಸ್ಥಿತಿ ಜಾರಿಗೆ ಆಗ್ರಹಿಸಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ. ಇದು ಬಡವರ ಅನ್ನ ಕಸಿಯುವ ಮತ್ತು ಜನರ ಉದ್ಯೋಗ ದ ಹಕ್ಕನ್ನು ಕಸಿದುಕೊಳ್ಳು ವ ಮತ್ತು ನರೇಗಾ ಯೋಜನೆಯನ್ನು ದುರ್ಬಲಗೊಳಿಸಿ ಸ್ಥಗಿತಗೊಳಿಸುವ ಹುನ್ನಾರವಾಗಿದೆ ಎಂದು ಐವನ್ ಟೀಕಿಸಿದರು. ಮಹಾತ್ಮಾ ಗಾಂಧಿ ಯವರ ಹೆಸರನ್ನು ಬಿಟ್ಟು ನರೇಗಾ ಯೋಜನೆಯನ್ನು ಮಾಡಿರುವುದಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ.ಆದರೆ ಯೋಜನೆಯ ಸ್ವರೂಪ ಬದಲು ಮಾಡಿ ಅನುದಾನವನ್ನು ಕಡಿತಗೊಳಿಸಿರುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ.ರಾಜ್ಯ ಸರಕಾರ ಶೇ 40 ಅನುದಾನದ ನೀಡಲು ಏಕಪಕ್ಷೀಯ ನಿರ್ಧಾರ ಮಾಡಿರುವ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿ ಸುತ್ತದೆ ಎಂದು ಐವನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಅನಾರೋಗ್ಯ ದಿಂದ ಬಳಲುತ್ತಿರುವ ನಾರಾಯಣ ಕುಲಶೇಖರ, ನಿಶ್ಚಲ್ ಮಂಗಳೂರು, ಅಬ್ದುಲ್ ಖಾದರ್,ಇಬ್ರಾಹಿಂ ಸಜಿಪನಡು,ಉಸ್ಮಾನ್ ಮೂಡುಬಿದಿರೆ, ಅಬೂಬಕ್ಕರ್ ಅಬ್ದುಲ್ ರಜಾಕ್ ಕದ್ರೊಳಿ,ಲಾರೆನ್ಸ ಲೊಬೋ, ಅಹಮದ್ ಬಾವ ಅಡ್ಡೂರು ಇವರಿಗೆ 4.44ಲಕ್ಷ ರೂಪಾಯಿ ಪರಿಹಾರದ ಆದೇಶ ವಿತರಣೆ ಮಾಡಲಾಯಿತು. ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮನಪಾ ಮಾಜಿ ಮೇಯರ್ ಶಶಿಧರ ಹೆಗ್ಡೆ,ಅಶ್ರಫ್ ಕೆ, ಮಾಜಿ ಮನಪಾ ಸದಸ್ಯ ನಾಗೇಂದ್ರ, ಅಪ್ಪಿ ,ಭಾಸ್ಕರ್, ಕಾಂಗ್ರೆಸ್ ಪದಾಧಿಕಾರಿಗಳಾದ ಸತೀಶ್ ಪೆಂಗಲ್ , ಜೇನ್ಸ್, ವಿಧ್ಯಾ,ಸತೀಶ್ ಪೆಂಗಲ್ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ,ಜ.16: ಕಡೇಶಿವಾಲಯ ಗ್ರಾಮದ ಪಟೀಲ ಉಮರಬ್ಬ ಹಾಜಿ (96) ಶುಕ್ರವಾರ ಮುಂಜಾನೆ ತನ್ನ ಮನೆಯಲ್ಲಿ ನಿಧನರಾದರು. ಮೃತರು 5 ಹೆಣ್ಣು, 3 ಗಂಡು ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶುಕ್ರವಾರ ಸಂಜೆ ಸ್ಥಳೀಯ ಬದ್ರಿಯಾ ಮಸ್ಜಿದ್ನ ಕಬರಸ್ಥಾನದಲ್ಲಿ ದಫನ ಕಾರ್ಯನೆರವೇರಿಸಲಾಯಿತು ಎಂದು ಕುಟಂಬದ ಮೂಲಗಳು ತಿಳಿಸಿದೆ.
ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ಗೆ 5 ವರ್ಷ ಜೈಲುಶಿಕ್ಷೆ
ಸಿಯೋಲ್, ಜ.16: ದೇಶದಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದಕ್ಷಿಣ ಕೊರಿಯಾದ ನ್ಯಾಯಾಲಯ ಶುಕ್ರವಾರ ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ. 2024ರ ಡಿಸೆಂಬರ್ನಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸುವ ಆದೇಶ ಸೇರಿದಂತೆ ಯೂನ್ ವಿರುದ್ದ ದಾಖಲಾಗಿರುವ 8 ಪ್ರಕರಣಗಳಲ್ಲಿ ಮೊದಲ ತೀರ್ಪು ಇದಾಗಿದೆ. ಮಿಲಿಟರಿ ಕಾನೂನು ಜಾರಿಗೊಳಿಸುವ ಆದೇಶದ ಮೂಲಕ ದಂಗೆಯ ನೇತೃತ್ವ ವಹಿಸಿದ್ದಾರೆ ಎಂಬ ಪ್ರಮುಖ ಆರೋಪವನ್ನೂ ಯೂನ್ ಎದುರಿಸುತ್ತಿದ್ದು ಆರೋಪ ಸಾಬೀತಾದರೆ ಮರಣದಂಡನೆ ವಿಧಿಸಲು ಅವಕಾಶವಿರುತ್ತದೆ.
ಪೆಟ್ರೋಲಿಯಂ ಸಂಸ್ಥೆಗಳ ಮಾಲಕರಿಗೆ ಸುಳ್ಳು ಕರೆ : ಜಾಗೃತರಾಗಿರಲು ಸೂಚನೆ
ಮಂಗಳೂರು,ಜ.16: ಪೆಟ್ರೋಲಿಯಂ ಸಂಸ್ಥೆಗಳ ನೋಂದಣಿ/ನವೀಕರಣ(ಲೈಸೆನ್ಸ್)ಗೆ ಸಂಬಂಧಿಸಿದಂತೆ ಶಿವರಾಜ್ ಎಂಬ ಹೆಸರಿನ ವ್ಯಕ್ತಿ (ದೂ.ಸಂ :8150816922) ನಾನು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು 11,700 ರೂ.ಫೋನ್ ಪೇ ಮಾಡಿ ಎಂದು ಕರೆ ಮಾಡಿದ್ದಲ್ಲದೆ ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗು ವುದೆಂದು ಪೆಟ್ರೋಲಿಯಂ ಸಂಸ್ಥೆಗಳ ಮಾಲಕರಿಗೆ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ದ.ಕ.ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಹಾಗೂ ಪ್ರಮುಖವಾಗಿ ಪೆಟ್ರೋಲಿಯಂ ಸಂಸ್ಥೆಗಳ ಮಾಲಕರು ಇಂತಹ ಕರೆಗಳು ಬಂದರೆ ಪ್ರತಿಕ್ರಿಯೆ ನೀಡಬಾರದು ಮತ್ತು ಸುಳ್ಳು ಕರೆಗಳಿಗೆ ಮೋಸ ಹೋಗಬಾರದು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಕರೆಯನ್ನು ನಂಬಿ ಯಾವುದೇ ಆರ್ಥಿಕ ನಷ್ಟ ಉಂಟಾದರೆ ಇಲಾಖೆಯನ್ನು ದೂಷಿಸಬಾರದು. ಇಂತಹ ಕರೆ ಬಂದಲ್ಲಿ ಸೂಕ್ತ ದಾಖಲೆಯೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ.
ಹೊಸದಿಲ್ಲಿ| ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ, ವಿತರಣೆ ಜಾಲ ಪತ್ತೆ: ಐವರ ಬಂಧನ
ಹೊಸದಿಲ್ಲಿ, ಜ.16: ದಿಲ್ಲಿ-ರಾಷ್ಟ್ರ ರಾಜಧಾನಿ ವಲಯ, ಉತ್ತರಪ್ರದೇಶ ಮತ್ತು ಹರ್ಯಾಣದಲ್ಲಿ ಸಕ್ರಿಯರಾಗಿರುವ ಗ್ಯಾಂಗ್ಸ್ಟರ್ಗಳು ಮತ್ತು ಭಯಾನಕ ಕ್ರಿಮಿನಲ್ಗಳಿಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿತ್ತು ಎನ್ನಲಾದ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಮತ್ತು ಪೂರೈಕೆ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಪರಾಧಗಳನ್ನು ಎಸಗಿರುವ ಆರೋಪ ಎದುರಿಸುತ್ತಿರುವ ಐವರು ಕ್ರಿಮಿನಲ್ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು. ಗಣರಾಜ್ಯೋತ್ಸವ ದಿನಾಚರಣೆಗೆ ಮುನ್ನ, ಅಕ್ರಮ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಹತ್ತಿಕ್ಕುವುದಕ್ಕಾಗಿ ನಡೆಸಲಾದ ವಿಶೇಷ ಅಭಿಯಾನದ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರಿಂದ 20 ಆಧುನಿಕ ಪಿಸ್ತೂಲ್ಗಳು, 12 ಸಜೀವ ಕಾರ್ಟ್ರಿಜ್ಗಳು ಹಾಗೂ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬಳಸಲಾಗುವ ಭಾರೀ ಪ್ರಮಾಣದ ಯಂತ್ರಗಳು ಮತ್ತು ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಜನವರಿ 4ರಂದು ಪೊಲೀಸರು ಕಪಶೇರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ದಿಲ್ಲಿಯ ಪಾಲಮ್ ನಿವಾಸಿ ಭರತ್ ಯಾನೆ ಭರು ಎಂಬಾತನನ್ನು ವಶಕ್ಕೆ ಪಡೆದರು. ಅವನಿಂದ ಒಂದು ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದರು.
ಬಿಬಿಎಲ್ ನಲ್ಲಿ ಪಾಕ್ ಆಟಗಾರರಿಗೆ ನಿರಂತರ ಮುಜುಗರ; ಮೊಹಮ್ಮದ್ ರಿಝ್ವಾನ್ ಬಳಿಕ ಈಗ ಬಾಬರ್ ಆಝಂ ಸರದಿ!
Babar Azam Embarrassing Moment- ಬಿಗ್ ಬ್ಯಾಷ್ ಲೀಗ್ನಲ್ಲಿ ಪಾಕಿಸ್ತಾನದ ಆಟಗಾರರಿಗೆ ನಿರಂತರ ಮುಜುಗರದ ಪ್ರಸಂಗಗಳು ಎದುರಾಗುತ್ತಿವೆ. ಮೊಹಮ್ಮದ್ ರಿಝ್ವಾನ್ ಅವರು ರಿಟೈರ್ಡ್ ಔಟ್ ಆಗಿ ಸುದ್ದಿಯಾಗಿದ್ದರೆ, ಬಾಬರ್ ಆಝಂ ಅವರು ಒಂದೇ ಪಂದ್ಯದಲ್ಲಿ 3 ಭಿನ್ನ ತಮಾಷೆಯ ಘಟನೆಗಳಿಂದಾಗಿ ನಗೆಪಾಟಲಿಗೀಡಾಗಿದ್ದಾರೆ. ಶುಕ್ರವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸಿಡ್ನಿ ಸಿಕ್ಸರ್ ಮತ್ತು ಸಿಡ್ನಿ ಥಂಡರ್ ನಡುವಿನ ಪಂದ್ಯದ ಈ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಟೀಕೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಎರಡು ಸರಕಾರಿ ಆಸ್ಪತ್ರೆಗಳ ನಿರ್ಮಾಣಕ್ಕೆ 150 ಕೋಟಿ ರೂ.ಗಳಿಗೆ ಅನುಮೋದನೆ
ಬೆಂಗಳೂರು : ನಗರದಲ್ಲಿ ಹೊಸದಾಗಿ ಎರಡು ಸರಕಾರಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು 150 ಕೋಟಿ ರೂ.ಗಳಿಗೆ ಅನುಮೋದನೆ ನೀಡಿ, ರಾಜ್ಯ ಸರಕಾರವು ಶುಕ್ರವಾರದಂದು ಆದೇಶ ಹೊರಡಿಸಿದೆ. ಬೆಂಗಳೂರಿನ ಯಲಹಂಕ ತಾಲ್ಲೂಕಿನ ಬೆಳ್ಳಹಳ್ಳಿ ಗ್ರಾಮದ 5 ಎಕರೆ ಸರಕಾರಿ ಜಮೀನಿನಲ್ಲಿ 125 ಹಾಸಿಗೆಗಳ ಆಸ್ಪತ್ರೆಯನ್ನು ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಆವರಣದ ಭೂಪಸಂದ್ರ ಮುಖರಸ್ತೆಗೆ ಹೊಂದಿಕೊಂಡ 4 ಎಕರೆ ಜಾಗದಲ್ಲಿ 125 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ವ್ಯಾಪ್ತಿಯಲ್ಲಿ 200 ಹಾಸಿಗೆಯ ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಯನ್ನು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಬದಲಿಗೆ ಈ ಎರಡು ಆಸ್ಪತ್ರೆಗಳನ್ನು ನಿರ್ಮಿಸಲು ರಾಜ್ಯ ಸರಕಾರ ಉದ್ದೇಶಿಸಿದೆ. ತಲಾ 75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪ್ರತ್ಯೇಕವಾಗಿ ಎರಡು ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಗಳ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದೆ. ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ತಾಂತ್ರಿಕ ಅನುಮೋದನೆಯನ್ನು ಪಡೆಯಬೇಕು. ಕಾಮಗಾರಿಗಳನ್ನು ಕೆಟಿಪಿಸಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸಬೇಕು. ಕಾಮಗಾರಿಗಳ ವಿವರವಾದ ಅಂದಾಜು ಪಟ್ಟಿಗಳಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಪ್ರತ್ಯೇಕ ಪ್ರಸ್ತಾವಗಳನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರಕಾರ ಆದೇಶದಲ್ಲಿ ತಿಳಿಸಿದೆ.
ಜಾರ್ಖಂಡ್| ಈಡಿ ಕಚೇರಿ ಮೇಲೆ ಪೊಲೀಸ್ ದಾಳಿ ಪ್ರಕರಣ: ತನಿಖೆಗೆ ಹೈಕೋರ್ಟ್ ತಡೆ
ರಾಂಚಿ, ಜ. 16: ಗುರುವಾರ ಜಾರ್ಖಂಡ್ ಪೊಲೀಸರು ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯ (ಈಡಿ)ದ ವಲಯ ಕಚೇರಿಗೆ ದಾಳಿ ನಡೆಸಿ ದಾಳಿಯ ಬಿಸಿಯನ್ನು ಅದಕ್ಕೂ ಮುಟ್ಟಿಸಿದರು. ಹಲ್ಲೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರ ತನಿಖೆಗಾಗಿ ಪೊಲೀಸರು ಈಡಿ ಕಚೇರಿಯಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದರು ಎಂದು ಪಿಟಿಐ ವರದಿ ಮಾಡಿದೆ. ಜಾರ್ಖಂಡ್ ಪೊಲೀಸರ ದಾಳಿಯನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್ ಈ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿತು. ಜಾರ್ಖಂಡ್ ಸರಕಾರದ ಉದ್ಯೋಗಿ ಸಂತೋಷ್ ಕುಮಾರ್ ಎಂಬವರು ಜನವರಿ 12ರಂದು ಸಲ್ಲಿಸಿದ ದೂರಿನ ಆಧಾರದಲ್ಲಿ ಈಡಿ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ನೀರು ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ನಡೆಸಲಾದ ತನಿಖೆಯ ವೇಳೆ ಈಡಿ ಅಧಿಕಾರಿಗಳು ತನಗೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಅವರು ತನ್ನ ದೂರಿನಲ್ಲಿ ಆರೋಪಿಸಿದ್ದರು. ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜ್ಯ ಪೊಲೀಸ್ ಅಧಿಕಾರಿಗಳು ಈಡಿ ಕಚೇರಿಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು ಎಂದು ರಾಂಚಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಇತ್ತೀಚೆಗೆ ಈಡಿ ಅಧಿಕಾರಿಗಳು ಮತ್ತು ಪಶ್ಚಿಮ ಬಂಗಾಳ ಪೊಲೀಸರ ನಡುವಿನ ಘರ್ಷಣೆಯ ಬಳಿಕ ಈ ಬೆಳವಣಿಗೆ ನಡೆದಿರುವುದು ಗಮನಾರ್ಹವಾಗಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಮ್ಸಿ)ನ ಚುನಾವಣಾ ತಂತ್ರಗಾರಿಕೆ ಸಂಸ್ಥೆ ಐ-ಪ್ಯಾಕ್ನ ಪ್ರಧಾನ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ರ ನಿವಾಸದಲ್ಲಿ ಈಡಿ ದಾಳಿ ನಡೆಸಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಲವಂತವಾಗಿ ನಿವಾಸವನ್ನು ಪ್ರವೇಶಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಕದ್ದಿದ್ದಾರೆ ಎಂಬುದಾಗಿ ಪಶ್ಚಿಮ ಬಂಗಾಳ ಸರಕಾರ ಆರೋಪಿಸಿತ್ತು. ಜಾರ್ಖಂಡ್ ಹೈಕೋರ್ಟ್ ಶುಕ್ರವಾರ, ಹಲ್ಲೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧದ ಪೊಲೀಸ್ ತನಿಖೆಗೆ ತಡೆಯಾಜ್ಞೆ ನೀಡಿತು ಹಾಗೂ ಯಾವುದೇ ಭದ್ರತಾ ಲೋಪವಾದರೆ ರಾಂಚಿಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ರಾಕೇಶ್ ರಂಜನ್ರನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಹೇಳಿದೆ. ಈಡಿ ಕಚೇರಿ ಮತ್ತು ಅದರ ಅಧಿಕಾರಿಗಳಿಗೆ ಭದ್ರತೆ ನೀಡಲು ಸಿಆರ್ಪಿಎಫ್, ಬಿಎಸ್ಎಫ್ ಅಥವಾ ಯಾವುದಾದರೂ ಕೆಂದ್ರೀಯ ಅರೆಸೈನಿಕ ಪಡೆಗಳನ್ನು ನಿಯೋಜಿಸುವಂತೆ ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿಡೆ ಅವರ ಪೀಠವು ಕೇಂದ್ರ ಗೃಹ ಕಾರ್ಯದರ್ಶಿಗೆ ಆದೇಶ ನೀಡಿತು. ಸಂತೋಷ್ ನಡೆಸಿದ್ದಾರೆನ್ನಲಾದ 23 ಕೋಟಿ ರೂಪಾಯಿ ಹಗರಣದ ಬಗ್ಗೆ ಈಡಿ ತನಿಖೆ ನಡೆಸುತ್ತಿತ್ತು ಎಂದು ಅದರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ವಿಷಯದಲ್ಲಿ ಈಡಿ ಈಗಾಗಲೇ 9 ಕೋಟಿ ರೂ. ವಶಪಡಿಸಿಕೊಂಡಿದೆ ಎಂದು ಹೇಳಿತು.
ಬೆಂಗಳೂರಿನಲ್ಲಿ ಆರು ಪಿ.ಜಿ.ಗಳಿಗೆ ಬೀಗ ಹಾಕಿದ ಅಧಿಕಾರಿಗಳು
ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶುಚಿತ್ವ ಇಲ್ಲದ ಆರು ಪಿ.ಜಿ.ಗಳಿಗೆ (ಪೇಯಿಂಗ್ ಗೆಸ್ಟ್) ಬೀಗ ಮುದ್ರೆ ಹಾಕಲಾಗಿದ್ದು, ನ್ಯೂನ್ಯತೆಗಳಿರುವ ಪಿ.ಜಿ.ಗಳಿಂದ 1.96 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ತಿಳಿಸಿದ್ದಾರೆ. ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, 204 ಪೇಯಿಂಗ್ ಗೆಸ್ಟ್ ವಸತಿಗೃಹ ಉದ್ದಿಮೆಗಳನ್ನು ಆರೋಗ್ಯಾಧಿಕಾರಿಯಾದ ಡಾ. ಶಿವಕುಮಾರ್ ರವರ ನೇತೃತ್ವದಲ್ಲಿ ಚಿಕ್ಕಪೇಟೆ ಮತ್ತು ಶಿವಾಜಿನಗರ ಆರೋಗ್ಯ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ತಪಾಸಣೆ ನಡೆಸಲಾಗಿದೆ. ಪಿ.ಜಿ.ಗಳಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ತಪಾಸಣೆ ನಡೆಸಲಾಗಿದೆ ಎಂದಿದ್ದಾರೆ. ನ್ಯೂನ್ಯತೆಗಳಿರುವ ಪಿ.ಜಿ ಮಾಲಕರಿಗೆ ತಿಳುವಳಿಕೆ ಪತ್ರಗಳನ್ನು ಜಾರಿ ಮಾಡಲಾಗಿದ್ದು, ಉದ್ದಿಮೆದಾರರು ಏಳು ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ಕಾರ್ಯನಿರ್ವಹಣೆ ಮಾಡಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಯೆಮನ್ ಪ್ರಧಾನಿ ಸಾಲಿಂ ಸಾಲಿಹ್ ಬಿನ್ ಬ್ರೈಕ್ ರಾಜೀನಾಮೆ
ಸನಾ, ಜ.16: ಯೆಮನ್ ಪ್ರಧಾನಿ ಸಾಲಿಂ ಸಾಲಿಹ್ ಬಿನ್ ಬ್ರೈಕ್ ತನ್ನ ಸರಕಾರದ ರಾಜೀನಾಮೆಯನ್ನು ಸಲ್ಲಿಸಿದ್ದು ವಿದೇಶಾಂಗ ಸಚಿವರನ್ನು ನೂತನ ಪ್ರಧಾನಿಯಾಗಿ ನೇಮಿಸಿರುವುದಾಗಿ ವರದಿಯಾಗಿದೆ. ಸೌದಿ ಅರೆಬಿಯಾ ಬೆಂಬಲಿತ ` ಅಧ್ಯಕ್ಷೀಯ ನಾಯಕತ್ವ ಮಂಡಳಿ'ಯ ಮುಖ್ಯಸ್ಥರನ್ನು ಭೇಟಿಮಾಡಿದ ಸಾಲಿಂ ಸಾಲಿಹ್ ಬಿನ್ ಬ್ರೈಕ್ ಸರಕಾರದ ರಾಜೀನಾಮೆ ಸಲ್ಲಿಸಿದ್ದು ಹೊಸ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದೇಶಾಂಗ ಸಚಿವ ಡಾ. ಶಾಯ ಮುಹ್ಸಿನ್ ಝಿಂದಾನಿ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಲಾಗಿದ್ದು ಸರಕಾರ ರಚಿಸುವ ಕಾರ್ಯವನ್ನು ವಹಿಸಲಾಗಿದೆ' ಎಂದು ವರದಿ ತಿಳಿಸಿದೆ.
ಮಂಗಳೂರು: ಬೀಜ ಮಸೂದೆ, ವಿದ್ಯುತ್ ಮಸೂದೆ ವಿರೋಧಿಸಿ ಪ್ರತಿಭಟನೆ
ಮಂಗಳೂರು : ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ದೇಶಾದ್ಯಂತ ರೈತ ಕಾರ್ಮಿಕರ ಸಖ್ಯತೆಯಲ್ಲಿ ಪ್ರತಿರೋಧ ದಿನಾಚರಣೆ ನಡೆಸಬೇಕೆಂದು ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ನಾಯಕ ಕೆ. ಯಾದವ ಶೆಟ್ಟಿ ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟ ಮಸೂದೆಗಳು ಮತ್ತು ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗಳು ಯೋಜನೆಯ ಉದ್ದೇಶಗಳನ್ನೇ ಬುಡಮೇಲುಗೊಳಿಸಿದೆ. ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳನ್ನೇ ಮುಖ್ಯವಾಗಿಟ್ಟುಕೊಂಡು ದೇಶ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿ ಕೊಟ್ಟಿದೆ. ಇವುಗಳ ವಿರುದ್ಧ ದೇಶದ ಜನರು ಹೋರಾಡದಿದ್ದರೆ ಅಪಾಯ ಕಾದಿದೆ ಎಂದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ ಈಗಾಗಲೇ ಹಲವು ಬೀಜ ಕಂಪೆನಿಗಳು ನೀಡಿದ ಕಳಪೆ ಗುಣಮಟ್ಟದ ಬೀಜದಿಂದ ನಷ್ಟ ಅನುಭವಿಸಿದ್ದ ರೈತರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಬೆಳೆನಷ್ಟ ಪರಿಹಾರಗಳು ಸಿಕ್ಕಿಲ್ಲ. ಬೀಜ ಮಸೂದೆಯಲ್ಲಿ ಮುಂದೆಯೂ ಅದಕ್ಕೆ ಅವಕಾಶವಿಲ್ಲವಾಗಿದೆ. ಒಟ್ಟಿನಲ್ಲಿ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎಂ. ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಬಿ. ಶೇಖರ್ ಬಂಟ್ವಾಳ, ವಿ.ಕುಕ್ಯಾನ್, ಎಚ್.ವಿ. ರಾವ್, ಸುರೇಶ್ ಕುಮಾರ್ ಬಂಟ್ವಾಳ, ಗೀತಾ ಸುವರ್ಣ ಬಜಾಲ್, ಸಂಜೀವಿ ಹಳೆಯಂಗಡಿ, ಮೀನಾಕ್ಷಿ ಬಜಪೆ, ಕೃಷ್ಣಪ್ಪವಾಮಂಜೂರು, ಸುಧಾಕರ ಕಲ್ಲೂರು, ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರವಿಚಂದ್ರ ಕೊಂಚಾಡಿ, ಬಿ.ಕೆ. ಇಮ್ತಿಯಾಝ್, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ, ಈಶ್ವರಿ ಬೆಳ್ತಂಗಡಿ, ಜಯಂತಿ ಶೆಟ್ಟಿ, ಜಯಲಕ್ಷ್ಮಿ ಪ್ರಮೋದಿನಿ, ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್, ಬಿ.ಎನ್. ದೇವಾಡಿಗ, ರಮೇಶ್ ಉಳ್ಳಾಲ ಮತ್ತಿತರರು ಪಾಲ್ಗೊಂಡಿದ್ದರು.
ಸುಳ್ಳು ಪ್ರಕರಣ ದಾಖಲು: 54 ದಿನಗಳನ್ನು ಜೈಲಲ್ಲಿ ಕಳೆದ ಯುವಕ
►ಪೊಲೀಸ್ ಜೀಪ್ ತಳ್ಳಲು ನಿರಾಕರಿಸಿದ್ದೇ ಅಪರಾಧವಾಯಿತು! ► ಪೊಲೀಸರ ದ್ವೇಷಕ್ಕೆ ಬಲಿಯಾದ ಅಮಾಯಕನ ಬದುಕು ► ತಾಜುದ್ದೀನ್ಗೆ ಕೊನೆಗೂ ನ್ಯಾಯಾಲಯದಲ್ಲಿ ಗೆಲುವು
ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಇತಿಹಾಸ ಸೃಷ್ಟಿಸಿದೆ. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಠಾಕ್ರೆ ಸಹೋದರರು, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳಿಗೆ ತೀವ್ರ ಹಿನ್ನೆಡೆಯುಂಟಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಎಂಸಿ ಚುನಾವಣಾ ಗೆಲುವಿಗೆ ಸಂತಸ ವ್ಯಕ್ತಪಡಿಸಿ, ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಎನ್ಡಿಎ ಕಾರ್ಯಕರ್ತರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಇಲ್ಲಿದೆ ಮಾಹಿತಿ.

25 C