SENSEX
NIFTY
GOLD
USD/INR

Weather

21    C
... ...View News by News Source

ಕೈಕಂಬ: ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಲು ಸಾರ್ವಜನಿಕರಿಂದ ಒತ್ತಾಯ

ಬಜ್ಪೆ: ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಕೈಕಂಬದಲ್ಲಿ ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಅಗ್ರಹಿಸಿ ಗುರುಪುರ-ಕೈಕಂಬದ ಸಾರ್ವಜನಿಕರು ಶನಿವಾರ ಹೆದ್ದಾರಿ ಕಾಮಗಾರಿ ತಡೆದು ಆಗ್ರಹಿಸಿದರು. ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದ ನ್ಯಾಯವಾದಿ ವಿಜಯ ಗೌಡ ಅವರು, ಗುರುಪುರ-ಕೈಕಂಬ ಪೇಟೆಯನ್ನು ವಿಭಾಗ ಮಾಡುವ ರೀತಿಯಲ್ಲಿ ಪೇಟೆಯ ನಡುವೆ ಗೋಡೆ ನಿರ್ಮಿಸಿ ಮಣ್ಣು ತುಂಬಿಸಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ರೂ. ಬಂಡವಾಳ ಹೂಡಿ ಪೇಟೆಯಲ್ಲಿ ವ್ಯಾಪಾರ ಮಾಡುತ್ತಿ ರುವ ವರ್ತಕರಿಗೆ ತೊಂದರೆಗಳಾಗಲಿವೆ. ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡದೇ ಹೆದ್ದಾರಿ ನಿರ್ಮಾಣ ಮಾಡುವುದರಿಂದ ಕಂದಾವರ, ಆದ್ಯಪಾಡಿಗೆ ಹೋಗುವವರು ಕಿಲೋಮೀಟರ್ ದೂರ ಸುತ್ತಿಬಳಸಿ ಸಂಚರಿಸುವ ಅನಿವಾರ್ಯತೆ ಬರಲಿದೆ. ವಾಮಂಜೂರಿನಲ್ಲಿ ಮಾಡಿದಂತೆ ಇಲ್ಲಿಯೂ ತೆರೆದ ಹೆದ್ದಾರಿ ಮಾಡಬೇಕು ಅಥವಾ ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಕಂದಾವರ ಪಂಚಾಯತ್ ಮಾಜಿ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಅವರು ಮಾತನಾಡಿ, ಕೈಕಂಬ ಪೇಟೆ ಯನ್ನು ಎರಡು ಭಾಗಗಳಾಗಿ ವಿಂಗಡಿಸಿ, ದ್ವೀಪದಂತೆ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ. ಪೇಟೆಯ ನಡುವೆ ಕಾಂಕ್ರೀಟ್ ಗೋಡೆ ನಿರ್ಮಿಸಿ ಮಣ್ಣು ತುಂಬಿಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ಪೇಟೆಗೆ ದಿಗ್ಬಂಧನ ಹಾಕುವ ಹುನ್ನಾರ ನಡೆಯುತ್ತಿದೆ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಈ ಹೊರಾಟ ಯಾವುದೇ ಪಕ್ಷ, ಧರ್ಮ, ಸಂಘ ಸಸ್ಥೆಗಳ ವಿರುದ್ಧವಲ್ಲ. ಎಲ್ಲಾ ಪಕ್ಷ, ಧರ್ಮ, ಸಂಘಟನೆಗಳು ಒಟ್ಟಾಗಿ ಈ ಹೋರಾಟ ಮುನ್ನಡೆಸುತ್ತಿವೆ ಎಂದು ನುಡಿದರು. ಕಂದಾವರ ಪಂಚಾಯತ್ ಅಧ್ಯಕ್ಷೆ ಶಾಲಿನಿ, ರವಿ ಕೈಕಂಬ, ಕಂದಾವರ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಓಸ್ವಾಲ್ಡ್, ಪ್ಯಾರಿಸ್, ಸುರೇಶ್ ಕೈಕಂಬ, ಕ್ರಿಷ್ಟೊಪರ್ ಡಿ'ಕುನ್ಹ, ಗಣೇಶ್ ಶೆಟ್ಟಿಗಾರ್ ಮೊದಲಾದವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ವಿವಿಧ ಪಕ್ಷಗಳ ಮುಖಂಡರು, ಸ್ಥಳೀಯ ಸಂಘಟನೆಗಳ ನೇತಾರರು, ಪೇಟೆಯ ಉದ್ಯಮಿಗಳು, ರಿಕ್ಷಾ ಚಾಲಕರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಜಪೆ ಪೊಲೀಸರು ಭದ್ರತೆ ಒದಗಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗುರುಪುರ ನಾಡಕಚೇರಿ ಉಪ ತಹಶೀಲ್ದಾರ್ ಸ್ಟೀಪನ್‌ ಅವರು ಪ್ರತಿಭಟನಾ ನಿರತರಿಂದ ಮನವಿಯನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮನವಿಯನ್ನು ಮೇಲಾಧಿಕಾರಿಗಳಿಗೆ ತಲುಪಿಸಿ ಸಾರ್ವಜನಿಕರ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಪೇಟೆಯ ಜನರ ತಾಳ್ಮೆಯನ್ನು ಹೆದ್ದಾರಿ ಇಲಾಖೆ ಪರೀಕ್ಷೆಗೆ ಒಡ್ದುವುದು ಬೇಡ. ಅಧಿಕಾರಿಗಳು ಸ್ಥಳಕ್ಕೆ ಬರುವ ರೀತಿಯಲ್ಲಿ ಹೋರಾಟ ನಡೆಸುತ್ತೇವೆ. ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸದಿದ್ದರೆ, ಕಂದಾವರ, ನಾಡ ಕಚೇರಿ, ಈಗರ್ಜಿಗೆ ತೆರಳುವವರಿಗೆ ಸಮಸ್ಯೆಯಾಗಲಿದೆ. ಒಂದು ವೇಳೆ ನಮ್ಮ ಬೇಡಿಕೆಯನ್ನು ತಿರಸ್ಕರಿಸಿ ಈಗಿನ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಿದ್ದಲ್ಲಿ ಜೆಸಿಬಿ ಮೂಲಕ ರಸ್ತೆಯನ್ನು ಅಡೆದು ಹಾಕುವುದಕ್ಕೂ ನಾವು ಹಿಂಜರಿಯುವುದಿಲ್ಲ. -‌ ಹರೀಶ್ ಮಟ್ಟಿ, ಸ್ಥಳೀಯರು ಅಂಡರ್ ಪಾಸ್ ನಿರ್ಮಾಣಕ್ಕೆ ಹಣಕಾಸಿನ ಸಮಸ್ಯೆ ಇದ್ದಲ್ಲಿ ನಾವು ರಸ್ತೆ ಬದಿ ಭಿಕ್ಷೆ ಬೇಡಿಯಾದರೂ ಕೊಡುತ್ತೇವೆ. ಇಲ್ಲವಾದಲ್ಲಿ ನಮ್ಮಲ್ಲಿರುವ ಬಂಗಾರದ ಒಡವೆ ಮಾರಿ ದುಡ್ಡು ಕೊಡುತ್ತೇವೆ ಅಂಡರ್ ಪಾಸ್ ನಿರ್ಮಾಣ ಆಗಲೇ ಬೇಕು. - ದಿನೇಶ್‌ ಸ್ಥಳೀಯ ನಿವಾಸಿ  

ವಾರ್ತಾ ಭಾರತಿ 7 Feb 2026 11:18 pm

ಮೂಡುಬಿದಿರೆ: ʼರೋಸ್ಟ್ರಮ್ ಸ್ಪೀರ್ಸ್‌ ಕ್ಲಬ್‌ʼ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಮೂಡುಬಿದಿರೆ: ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪ ಸಾಕಾರಗೊಳಿಸಲು ಯುವಜನತೆ ಕೇವಲ ಫಲಾನುಭವಿಗಳಾದರೆ ಸಾಲದು, ರಾಷ್ಟ್ರದ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ನುಡಿದರು. ಅವರು ಡಾ ವಿ.ಎಸ್ ಆಚಾರ‍್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀರ‍್ಸ್ ಕ್ಲಬ್‌ನ 2026-27 ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. “ವಂದೇ ಮಾತರಂ’’ ಘೋಷಣೆಯೊಂದಿಗೆ ಭಾಷಣ ಪ್ರಾರಂಭಿಸಿದ ಅವರು, ವಂದೇ ಮಾತರಂ ಕೇವಲ ದೇಶಭಕ್ತಿಯ ಘೋಷಣೆಯಲ್ಲ, ಅದು ಭಾರತದ ಆತ್ಮಸ್ವರವಾಗಿ ಪ್ರತಿಧ್ವನಿಸಬೇಕು. ಸ್ವಾತಂತ್ರ‍್ಯ ಸಮರದಲ್ಲಿ ಯುವಶಕ್ತಿಗೆ ಸ್ಪೂರ್ತಿ ತುಂಬಿದ ಈ ಘೋಷಣೆ, ಇಂದಿನ ವಿಕಸಿತ ಭಾರತದ ಪಥದಲ್ಲಿ ಪ್ರೇರಣೆಯ ಮಾರ್ಗಸೂಚಿಯಾಗಬೇಕು ಎಂದು ಅಭಿಪ್ರಾಯಪಟ್ಟರು. 2047ರೊಳಗೆ ವಿಕಸಿತ ಭಾರತ ನಿರ್ಮಾಣವು ಕೇವಲ ಕನಸಲ್ಲ, ಅದು ಸಂಕಲ್ಪ. ಇಂದಿನ ಪೀಳಿಗೆ ಅನುಭವಿಸುತ್ತಿರುವ ಸ್ವಾತಂತ್ರ‍್ಯ ಹಾಗೂ ಅವಕಾಶಗಳು ಹಿಂದಿನ ತಲೆಮಾರಿನ ತ್ಯಾಗಗಳ ಫಲ. ಅದಕ್ಕೆ ಪ್ರತಿಯಾಗಿ ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ಕೊಟ್ಟರು. ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮೂಲಕ ಯುವಶಕ್ತಿಯನ್ನು ಆರ್ಥಿಕ ಪ್ರಗತಿಯ ಚಾಲಕಶಕ್ತಿಯನ್ನಾಗಿ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಪದವಿ ಮಾತ್ರ ಸಾಲದು ಎಂದು ತಿಳಿಸಿದ ಹೇಳಿದ ಅವರು, ಯುವಜನತೆ ನಿರಂತರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು ಎಂದರು. ಈ ಪೀಳಿಗೆ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗಬೇಕು. ಉದ್ಯಮಶೀಲತೆ ಮತ್ತು ನವೀನತೆ ಆರ್ಥಿಕ ಬೆಳವಣಿಗೆಯ ಮುಖ್ಯ ಚಾಲಕ ಶಕ್ತಿಗಳು ಎಂದು ವಿವರಿಸಿದರು. ಡಿಜಿಟಲ್ ಸಾಕ್ಷರತೆಯಿಂದ ಆರ್ಥಿಕ ಸಾಕ್ಷರತೆಯತ್ತ ಹೆಜ್ಜೆ ಇಡಬೇಕು ಎಂದ ಅವರು, ಯುವಜನತೆ ಹಣಕಾಸು ಯೋಜನೆ ಹಾಗೂ ಉಳಿತಾಯದ ಮಹತ್ವ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ, ಭಾರತವು ಜಾಗತಿಕವಾಗಿ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್‌ಗೆ ಪೂರಕ ಪರಿಸರ ಒದಗಿಸುವ ದೇಶವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮೂಲಕ ತಳಮಟ್ಟದ ಉದ್ಯಮಶೀಲತೆಗೆ ಉತ್ತೇಜನ ಸಿಕ್ಕಿದ್ದು, ತಂತ್ರಜ್ಞಾನ ಸ್ಟಾರ್ಟ್ಅಪ್‌ಗಳಷ್ಟೇ ಅಲ್ಲದೆ ಸಣ್ಣ ಉದ್ಯಮಗಳಿಗೂ ನೆರವಾಗಿದೆ ಎಂದರು. ಮುದ್ರಾ ಸಾಲಗಳ ಮೂಲಕ ಮಹಿಳೆಯರೂ ಆರ್ಥಿಕ ಸಬಲೀಕರಣದ ಹಾದಿಹಿಡಿದಿದ್ದಾರೆ ಎಂದರು. ಹಳೆಯ ಭಾರತೀಯ ದಂಡ ಸಂಹಿತೆಯನ್ನು ಬದಲಿಸಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷಿ ಅಧಿನಿಯಮ ಜಾರಿಗೆ ತಂದಿರುವುದು ಕಾಲದ ಅಗತ್ಯ ಎಂದ ಅವರು, ಅನೇಕ ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. ನ್ಯಾಯಾಂಗದ ಪಾತ್ರ ಕುರಿತು ಮಾತನಾಡಿದ ಅವರು, ವಿಶಾಖಾ ಮಾರ್ಗಸೂಚಿಗಳನ್ನು ಉದಾಹರಣೆಯಾಗಿ ನೀಡಿ, ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಂಗದ ಮಹತ್ವವನ್ನು ಒತ್ತಿಹೇಳಿದರು. ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ; ಬದಲಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. 1980ರ ದಶಕದ ಕಂಪ್ಯೂಟರ್ ಕ್ರಾಂತಿಯAತೆ, ಕೃತಕ ಬುದ್ದಿಮತ್ತೆಯ ಯುಗದಲ್ಲಿಯೂ ಕೌಶಲ್ಯವರ್ಧನೆ ಅಗತ್ಯವಿದೆ ಎಂದರು. ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಸಂಬAಧಿಸಿದ ಕೇಂದ್ರ ಬಜೆಟ್ ಕ್ರಮಗಳನ್ನೂ ಅವರು ಉಲ್ಲೇಖಿಸಿದರು. ಯುವಜನತೆ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಸಾರ್ವಜನಿಕ ಜೀವನದಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಭವಿಷ್ಯದ ಸಂಸತ್ತು ಮತ್ತು ವಿಧಾನಸಭೆಗಳು ಯುವಜನರ ಪ್ರತಿಬಿಂಬವಾಗಬೇಕಾಗಿದೆ. ದೇಶದ ಜನಸಂಖ್ಯೆಯಲ್ಲಿ ಯುವಕರ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಶಾಸನ ಸಭೆಗಳಲ್ಲಿ ಅವರ ಪ್ರತಿನಿಧಿತ್ವವೂ ಹೆಚ್ಚಾಗಬೇಕು. ಭಾರತದಲ್ಲಿ ಮಹಿಳೆಯರ ರಾಜಕೀಯ ಪ್ರತಿನಿಧಿತ್ವವನ್ನು ವಿಸ್ತರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸಂವಿಧಾನದ 106ನೇ ತಿದ್ದುಪಡಿ ಅಧಿನಿಯಮ, 2023 (ನಾರಿ ಶಕ್ತಿ ವಂದನ ಅಧಿನಿಯಮ) ಮಹತ್ವದ ಮೈಲಿ ಗಲ್ಲಾಗಿದ್ದು, 2029ರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಜಾರಿಗೆ ಬರಲಿದೆ. ಈ ಅಧಿನಿಯಮದ ಪ್ರಕಾರ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಒಟ್ಟು ಸ್ಥಾನಗಳಲ್ಲಿ 33 ಶೇಕಡಾ (ಒಂದು ಮೂರನೇ ಭಾಗ) ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಇದರ ಮೂಲಕ ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ ಹೆಚ್ಚಿಸಿ, ಶಾಸಸ ಸಭೆಗಳಲ್ಲಿ ಸಮಾನ ಪ್ರತಿನಿಧಿತ್ವವನ್ನು ಖಚಿತಪಡಿಸುವುದಾಗಿದೆ. ಸ್ವಾತಂತ್ರ‍್ಯಾನAತರ ದಶಕಗಳ ಕಾಲ ಮಹಿಳಾ ಮೀಸಲಾತಿ ಕುರಿತು ಚರ್ಚೆಗಳು ನಡೆದಿದ್ದರೂ, 2023ರಲ್ಲಿ ಸಂಸತ್ತಿನಲ್ಲಿ ಅಂಗೀಕೃತವಾದ ಈ ತಿದ್ದುಪಡಿ ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ ಎಂದರು. ಆಳ್ವಾಸ್: ರಾಷ್ಟ್ರ ನಿರ್ಮಾಣದ ಮಹಾನ್‌ಶಿಲ್ಪಿಗಳನ್ನು ರೂಪಿಸುವ ಕಾರ್ಖಾನೆ ಆಳ್ವಾಸ್ ಶಿಕ್ಷಣ ಸಂಸ್ಥೆ ಕೇವಲ ಶಿಕ್ಷಣ ನೀಡುವ ಕೇಂದ್ರವಲ್ಲ; ಅದು ರಾಷ್ಟ್ರ ನಿರ್ಮಾಣದ ಮಹಾನ್‌ಶಿಲ್ಪಿಗಳನ್ನು ರೂಪಿಸುವ ಕಾರ್ಖಾನೆ ಎಂದು ಬಣ್ಣಿಸಿದರು. ವಿದ್ಯಾಗಿರಿ, ಮಿಜಾರಿನ ವಿಶಾಲ ಹಸಿರುಗಾವಲು, ಸಮಗ್ರ ಮೂಲ ಸೌಕರ್ಯ ಹಾಗೂ ಶಿಸ್ತುಬದ್ಧ ಶೈಕ್ಷಣಿಕ ವಾತಾವರಣಕ್ಕೆ ಮನಸೋತರು. ಆಳ್ವಾಸ್‌ನ ಶೋಭಾವನ ಕಾಟೇಜ್‌ನಲ್ಲಿ ಶುಕ್ರವಾರವೇ ಬಂದು ವಾಸ್ತವ್ಯವಿದ್ದ ಅವರು, ಅಲ್ಲಿ ಸಂಜೆ ಹಾಗೂ ಮುಂಜಾನೆ ಶೋಭಾವನದ ಗೆಸ್ಟ್‌ ಹೌಸ್‌ನಲ್ಲಿ ನೀಡಲಾದ ಆತಿಥ್ಯವನ್ನು ಮೆಚ್ಚಿಕೊಂಡರು. ಅನ್ನ–ಸಾಂಬಾರ್, ಜೈನ್ ಉಪ್ಪಿನಕಾಯಿ, ಇಡ್ಲಿ, ಹೊಳಿಗೆ, ತೆಂಗಿನ ಚಟ್ನಿ, ನೀರ್ ದೋಸೆ, ಶೀರಾ, ಅವಲಕ್ಕಿ–ಕಡಲೆ, ಶಾವಿಗೆ ಪಾಯಸ, ವಡೆ ಮೊದಲಾದ ಸ್ಥಳೀಯ ಕರಾವಳಿಯ ಖಾದ್ಯಗಳನ್ನು ಆಸ್ವಾದಿಸಿದರು. ಕಾರ್ಯಕ್ರಮದಲ್ಲಿ ಬನ್ಸುರಿ ಸ್ವರಾಜ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಕರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‌ನ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಆಳ್ವಾ ಫಾರ್ಮಸಿ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಬಾನ್ಸುರಿ ಸ್ವರಾಜ್ ಸಂಬAದಿ ನೀತು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ರೋಸ್ಟ್ರಮ್ ಸ್ಪೀರ‍್ಸ್ ಕ್ಲಬ್‌ನ ಸದಸ್ಯೆ ನಿಯತಿ ಅಮೀನ್ ನಿರೂಪಿಸಿ, ಶ್ರೀಶ್ ಕೊಟೇಗಾರ್ ವಂದಿಸಿದರು.    

ವಾರ್ತಾ ಭಾರತಿ 7 Feb 2026 11:12 pm

ಸೌಜನ್ಯಾ ಕೊಲೆ ಪ್ರಕರಣ; ವಿಶೇಷ ಕೋರ್ಟ್ ನಿರ್ದೇಶನ ಅನುಷ್ಠಾನಕ್ಕೆ ಕೋರಿದ್ದ ಅರ್ಜಿ ಸಂಬಂಧ ಸಿಬಿಐಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ದೋಷಪೂರಿತ ತನಿಖೆ ನಡೆಸಿ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿನ ನಿರ್ದೇಶನ ಅನುಷ್ಠಾನಗೊಳಿಸಲು ಕೋರಿದ್ದ ಅರ್ಜಿಯ ಸಂಬಂಧ ಸಿಬಿಐ ಮತ್ತಿತರರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸಿಬಿಐ ವಿಶೇಷ ನ್ಯಾಯಾಲಯ 2023ರ ಜೂನ್ 16ರಂದು ಹೊರಡಿಸಿದ್ದ ತೀರ್ಪಿನಲ್ಲಿನ ನಿರ್ದೇಶನ ಜಾರಿಗೊಳಿಸಲು ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಎಂ.ಆರ್‌. ಬಾಲಕೃಷ್ಣ ಅವರು, ಸಿಬಿಐ ಅಡಿ ಖುಲಾಸೆ ಸಮಿತಿ ಇದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಎಂದರು. ಇದನ್ನು ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಗೃಹ ಇಲಾಖೆ, ಪೊಲೀಸ್‌ ಮಹಾನಿರ್ದೇಶಕರು, ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಪಶ್ಚಿಮ ವಿಭಾಗದ ಪೊಲೀಸ್‌ ಮಹಾನಿರ್ದೇಶಕರು, ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ, ಸಿಬಿಐ ದೆಹಲಿ ಮತ್ತು ಚೆನ್ನೈ ವಿಭಾಗದ ವಿಶೇಷ ತನಿಖಾ ದಳಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿದೆ. ಪ್ರಕರಣವೇನು? ಧರ್ಮಸ್ಥಳದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ 2012ರ ಅಕ್ಟೋಬರ್‌ 9ರಂದು ನಾಪತ್ತೆಯಾಗಿದ್ದರು. ಮರುದಿನ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಮೊದಲಿಗೆ ಬೆಳ್ತಂಗಡಿ ಠಾಣೆಯಲ್ಲಿ ಆಕೆಯ ತಂದೆ ಚಂದಪ್ಪ ಗೌಡ ಪುತ್ರಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಆನಂತರ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿತ್ತು. ಪ್ರಕರಣ 2013ರಲ್ಲಿ ಸಿಬಿಐಗೆ ವರ್ಗಾವಣೆಗೊಂಡಿದ್ದು, 2015ರಲ್ಲಿ ಮಂಗಳೂರಿನಿಂದ ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಬಿ. ಸಂತೋಷ್‌ ಅವರು ಪ್ರಕರಣದಲ್ಲಿನ ಆರೋಪಿ ಸಂತೋಷ ರಾವ್‌ ಅವರನ್ನು ಅತ್ಯಾಚಾರ (ಐಪಿಸಿ ಸೆಕ್ಷನ್‌ 376) ಮತ್ತು ಕೊಲೆ (ಐಪಿಸಿ ಸೆಕ್ಷನ್‌ 302) ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿತ್ತು. ಅಲ್ಲದೇ, 11 ವರ್ಷಗಳಿಂದ ಜೈಲಿನಲ್ಲಿದ್ದ ಸಂತೋಷ್‌ ರಾವ್‌ನನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿತ್ತು. ಇದೇ ವೇಳೆ, ಕಳಪೆ ಮತ್ತು ದೋಷಪೂರಿತ ತನಿಖೆ ನಡೆಸಿರುವ ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ನಿರ್ದೇಶಿಸಿದ್ದ ನ್ಯಾಯಪೀಠ, ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷಿಯು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ವಾರ್ತಾ ಭಾರತಿ 7 Feb 2026 11:00 pm

ಫೆ.8: ಸಮಸ್ತ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ

ಕರ್ನಾಟಕ, ಕೇರಳ, ತಮಿಳುನಾಡು ಮುಖ್ಯಮಂತ್ರಿಗಳ ಉಪಸ್ಥಿತಿ

ವಾರ್ತಾ ಭಾರತಿ 7 Feb 2026 10:59 pm

ಮಂಗಳೂರು| ಶಾಸಕ ವೇದವ್ಯಾಸ ಕಾಮತ್‌ರ ಪತ್ನಿಯ ಅವಹೇಳನ ಪ್ರಕರಣ: ಆರೋಪಿ ಸೆರೆ

ಮಂಗಳೂರು, ಫೆ.7: ಶಾಸಕ ವೇದವ್ಯಾಸ ಕಾಮತ್ ಮತ್ತವರ ಪತ್ನಿಯ ವಿರುದ್ಧ ಅಧಿವೇಶನದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಹೇಳಿದ್ದಾರೆ ಎನ್ನಲಾದ ಮಾತನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದ ವ್ಯಕ್ತಿಯನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ನಿವಾಸಿ ಶರಣ್ ರೈ (29) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಹೇಳಿಕೆಯಿಂದ ಶಾಸಕರ ಪತ್ನಿಯ ಬಗ್ಗೆ ಸಮಾಜದಲ್ಲಿ ಅಗೌರವ ಉಂಟಾಗಿದೆ. ಮಹಿಳೆಯರ ಬಗ್ಗೆ ಕೀಳು ಅಭಿರುಚಿಯಿಂದ ಪೋಸ್ಟ್ ಮಾಡಿದ್ದಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ವಾರ್ತಾ ಭಾರತಿ 7 Feb 2026 10:56 pm

ಉಕ್ರೇನ್ ನೆಲದಲ್ಲಿ ಶಾಂತಿ ನೆಲೆಸಲು ಗಡುವು ನೀಡಿದ ಅಮೆರಿಕ, ಶೀಘ್ರದಲ್ಲೇ ಕಿತ್ತಾಟ ನಿಲ್ಲುವ ಸಾಧ್ಯತೆ | Ukraine And Russia

ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ 4 ವರ್ಷ ಪೂರ್ಣವಾಗುತ್ತಿದ್ದು, ಇದೇ ಸಮಯದಲ್ಲಿ ಅಮರಿಕದ ನಾಯಕರು ಕೂಡ ಅಳೆದು ತೂಗಿ ಯುದ್ಧ ನಿಲ್ಲಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಉಕ್ರೇನ್ ಈ ಸಮಯದಲ್ಲಿ ಅಮೆರಿಕ ಹೇಳಿದ ಅಷ್ಟೂ ಮಾತನ್ನು ಕೇಳುತ್ತಾ, ಡೊನಾಲ್ಡ್ ಟ್ರಂಪ್ ಅವರ ಅಜ್ಞೆಗೆ ಜೈ ಎನ್ನುತ್ತಿದೆ. ಹೀಗಾಗಿಯೇ ಆದಷ್ಟು ಬೇಗ ಯುದ್ಧ ನಿಲ್ಲುವ ನಿರೀಕ್ಷೆ ಕೂಡ ಮೂಡಿತ್ತು,

ಒನ್ ಇ೦ಡಿಯ 7 Feb 2026 10:37 pm

Gruhalakshmi Scheme: ಗೃಹಲಕ್ಷ್ಮಿ ಯೋಜನೆ ಹಣ ದುರುಪಯೋಗಕ್ಕೆ ಕಡಿವಾಣ ಹಾಕಲು ಹೊಸ ನಿಯಮ

Gruhalakshmi Scheme: ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಖಾತೆಗೆ 2,000 ರೂಪಾಯಿ ಹಣ ಹಾಕಲಾಗುತ್ತದೆ. ಆದರೆ, ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆದ್ದರಿಂದ ಸರ್ಕಾರ ಇದೀಗ ಹೊಸ ನಿಯಮ ಜಾರಿಗೆ ಮುಂದಾಗಿದೆ. ರಾಜ್ಯ ಸರ್ಕಾರದ ಪ್ರಮುಖ

ಒನ್ ಇ೦ಡಿಯ 7 Feb 2026 10:29 pm

ಫೆ.8: ಹರೇಕಳ ಹಾಜಬ್ಬರ ಪಿಯು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ಭಾಗ್ಯ

ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ತನ್ನೂರಿನಲ್ಲಿ ಆರಂಭಿಸಿದ ಪಿಯು ಕಾಲೇಜು ಕಟ್ಟಡಕ್ಕೆ ಫೆ.8ರಂದು ಶಿಲಾನ್ಯಾಸ ಭಾಗ್ಯ ಲಭಿಸಲಿದೆ. ಮಂಗಳೂರು ಕ್ಷೇತ್ರದ ಶಾಸಕರೂ ಆಗಿರುವ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಫೆ.8ರಂದು ಬೆಳಗ್ಗೆ 9:30ಕ್ಕೆ ಹರೇಕಳ ನ್ಯೂಪಡ್ಪುವಿನ ಸರಕಾರಿ ಪದವಿಪೂರ್ವ ಕಾಲೇಜು (ಹಾಜಬ್ಬ) ಕಟ್ಟಡದ ಎರಡು ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಂದಹಾಗೆ, ಮಂಗಳೂರಿನ ಎಂಆರ್‌ಪಿಎಲ್ ಕಂಪೆನಿಯು ಈ ಎರಡು ಕೊಠಡಿಗಳ ನಿರ್ಮಾಣಕ್ಕೆ 45 ಲಕ್ಷ ರೂ. ಅನುದಾನ ಒದಗಿಸಿದೆ. ಈಗಾಗಲೆ ಪಿಯು ತರಗತಿ ಆರಂಭಿಸಿದ್ದರೂ ಕೂಡ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿತ್ತು. ಮುಂದಿನ ಶೈಕ್ಷಣಿಕ ವರ್ಷದೊಳಗೆ ಹೊಸ ಕಟ್ಟಡ ತಲೆ ಎತ್ತದಿದ್ದರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾದೀತು ಎಂದು ಆತಂಕಗೊಂಡಿರುವ ಹರೇಕಳ ಹಾಜಬ್ಬ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ಸರಕಾರಿ ಹಂತದ ಪ್ರಯತ್ನವಲ್ಲದೆ ಖಾಸಗಿ ಸಂಸ್ಥೆ, ಕಂಪೆನಿ, ವ್ಯಕ್ತಿಗಳನ್ನು ಸಂಪರ್ಕಿಸಿ ಸಹಕಾರ ಕೋರಿದ್ದರು. ಅದರಂತೆ ಎಂಆರ್‌ಪಿಎಲ್ 45 ಲಕ್ಷ ರೂ. ಅನುದಾನ ಒದಗಿಸಿದೆ. ಕಾಲೇಜು ಕಟ್ಟಡಕ್ಕಾಗಿ ದಾನಿಗಳ ನೆರವು ಕೋರುವುದರ ಜೊತೆಗೆ ಆಸುಪಾಸಿನ ಗ್ರಾಮಗಳಲ್ಲಿರುವ ಸರಕಾರಿ ಪ್ರೌಢಶಾಲೆಗಳಿಗೆ ತೆರಳಿ 2026-27ನೆ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ವಿದ್ಯಾರ್ಥಿಗಳ ಮತ್ತು ಪೋಷಕರ ಮನ ಒಲಿಕೆಗೂ ಹರೇಕಳ ಹಾಜಬ್ಬ ಮುಂದಾಗಿದ್ದಾರೆ. 15 ವರ್ಷದ ಪ್ರಯತ್ನದ ಫಲವಾಗಿ ಮಂಜೂರಾದ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಬಾರದು ಎಂಬ ಕಳಕಳಿಯೊಂದಿಗೆ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಸಾಗಿಸಿದ್ದಾರೆ. 2022ರ ನವಂಬರ್ 21ರಂದು ಹರೇಕಳ ಗ್ರಾಮದ ನ್ಯೂಪಡ್ಪು-ಗ್ರಾಮಚಾವಡಿಯ ಮಧ್ಯೆ ಮುಖ್ಯರಸ್ತೆಗೆ ತಾಗಿ 1.30 ಎಕರೆ ಜಮೀನನ್ನು ಸರಕಾರ ಮಂಜೂರುಗೊಳಿಸಿತ್ತು. 2024ರ ಜ. 9ರಂದು ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ)ಯ ಅಧೀನ ಕಾರ್ಯದರ್ಶಿಯಾಗಿದ್ದ ಪದ್ಮಿನಿ ಎಸ್.ಎನ್. ಸರಕಾರಿ ಪ್ರೌಢಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಸರಕಾರಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಅನುಮತಿ ನೀಡಿದ್ದರು. ಅದರಂತೆ 2024-25ನೆ ಶೈಕ್ಷಣಿಕ ವರ್ಷದಿಂದ ಹಾಜಬ್ಬರು ಸರಕಾರಿ ಪ್ರೌಢಶಾಲೆಯ ಕಟ್ಟಡದಲ್ಲೇ ಪಿಯು ತರಗತಿ ಆರಂಭಿಸಿದ್ದರು. 2025ರ ಜೂನ್ 17ರಂದು ಲೋಕೋಪಯೋಗಿ ಇಲಾಖೆಯು ಹೊಸ ಕಟ್ಟಡದ ನೀಲನಕ್ಷೆಯೊಂದಿಗೆ 5.30 ಕೋ.ರೂ. ಅಂದಾಜು ಪಟ್ಟಿ ತಯಾರಿಸಿತ್ತು. ಆ ನೀಲನಕ್ಷೆಯನ್ನು ಇದೀಗ ಬದಲಾಯಿಸಲಾಗಿದೆ. ಅಂದಾಜು ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ. ಸ್ಪೀಕರ್ ಯು.ಟಿ.ಖಾದರ್‌ರ ವಿಶೇಷ ಸಹಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರು, ಹರೇಕಳ ಗ್ರಾಮದ ಹಾಗೂ ಸಾರ್ವಜನಿಕರ ನೆರವಿನಿಂದ ಪಿಯು ಕಾಲೇಜಿಗೆ ಎರಡು ಕೊಠಡಿಗೆ ಶಿಲಾನ್ಯಾಸ ನಡೆಯಲಿದೆ. ಈಗಾಗಲೆ ಜಮೀನನ್ನು ಸಮತಟ್ಟು ಮಾಡಲಾಗಿದೆ. ಬೋರ್‌ವೆಲ್ ಕೊರೆಯಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕರು 5 ಲಕ್ಷ ರೂ. ನೀಡಿದ್ದಾರೆ. ಪಿ.ಎ. ಶಿಕ್ಷಣ ಸಂಸ್ಥೆಯವರು ಸುಮಾರು 6:50 ಲಕ್ಷ ರೂ.ವೆಚ್ಚದ ಪೀಠೋಪಕರಣ ಒದಗಿಸಿದ್ದಾರೆ. ಪೂರ್ಣ ಕಟ್ಟಡ ನಿರ್ಮಿಸಲು ಇನ್ನೂ ಸಾಕಷ್ಟು ಅನುದಾನ ಬೇಕಾಗಿದೆ. ಹಾಗಾಗಿ ಸರಕಾರದ ಅನುದಾನದೊಂದಿಗೆ ಖಾಸಗಿ ಉದ್ಯಮ ಕಂಪೆನಿಗಳು, ಸಂಸ್ಥೆಗಳು, ಖಾಸಗಿ ವ್ಯಕ್ತಿಗಳ ನೆರವಿನ ನಿರೀಕ್ಷೆಯಲ್ಲಿರುವೆ.  -ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕೃತರು

ವಾರ್ತಾ ಭಾರತಿ 7 Feb 2026 10:23 pm

ರೀಲ್‌ಗಾಗಿ ನೇಣಿಗೆ ಕೊರಳೊಡ್ಡಿ ಜೀವ ಕಳೆದುಕೊಂಡ ಮಹಿಳೆ!

ಲಕ್ನೋ: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ‌ʼರೀಲ್ʼ ಚಿತ್ರೀಕರಿಸುವ ಪ್ರಯತ್ನದಲ್ಲಿ ಮಹಿಳೆಯೋರ್ವಳು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಮೋಹಿನಿ (27) ಮೃತ ಮಹಿಳೆಯಾಗಿದ್ದು,ತನ್ನ ಮನೆಯಲ್ಲಿ ರೀಲ್ ಚಿತ್ರೀಕರಿಸಲು ಪ್ರಯತ್ನಿಸುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ಕುಟುಂಬ ಸದಸ್ಯರ ಪ್ರಕಾರ ಮೋಹಿನಿ ನೇಣು ಬಿಗಿದುಕೊಳ್ಳುವ ದೃಶ್ಯವನ್ನು ಪುನರ್ ಸೃಷ್ಟಿಸುತ್ತಿದ್ದಳು. ಸ್ಟೂಲ್ ಮೇಲೆ ನಿಂತುಕೊಂಡು ತನ್ನ ಕುತ್ತಿಗೆಯ ಸುತ್ತ ನೇಣಿನ ಕುಣಿಕೆಯನ್ನು ಹಾಕಿಕೊಂಡಿದ್ದ ಆಕೆ ತನ್ನ ಮೊಬೈಲ್ ಫೋನ್‌ನಲ್ಲಿ ಆ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಳು. ಸದಸ್ಯರ ಪ್ರಕಾರ, ಮೃತ ಮೋಹಿನಿಯು ನೇಣು ಬಿಗಿದುಕೊಳ್ಳುವ ದೃಶ್ಯವನ್ನು ಮರುಸೃಷ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ತನ್ನ ಕುತ್ತಿಗೆಯ ಸುತ್ತ ಹಗ್ಗ ಬಿಗಿದುಕೊಂಡಿರುವ ಮಹಿಳೆಯು, ಸ್ಟೂಲ್ ಮೇಲೆ ನಿಂತುಕೊಂಡು ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ದುರಂತಕ್ಕೆ ತಿರುಗಿದೆ. ಆಕೆ ಸ್ಟೂಲ್ ಮೇಲಿಂದ ಜಾರಿದಳೊ ಅಥವಾ ನಿಯಂತ್ರಣ ಕಳೆದುಕೊಂಡಳೊ ಎಂಬುದು ಇನ್ನೂ ಅಸ್ಪಷ್ಟವಾಗಿದ್ದರೂ, ಆಕೆಯ ಸುತ್ತ ಹಗ್ಗ ಬಿಗಿದುಕೊಂಡು ಕೆಲವೇ ಕ್ಷಣಗಳಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೋಹಿನಿಯ ನಾಲ್ಕು ವರ್ಷದ ಮಗಳು ಕೋಣೆಯನ್ನು ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 7 Feb 2026 10:15 pm

ಕರಾವಳಿ ಸ್ಟಾರ್ಟ್‌ಅಪ್ ಫೆಸ್ಟ್‌ಗೆ ಚಾಲನೆ

ಮಂಗಳೂರು: ಮಂಗಳೂರು-ಉಡುಪಿ ಕಾರಿಡಾರ್ ಅನ್ನು ಭಾರತದ ಪ್ರಮುಖ ಟಿಯರ್-2 ನಾವೀನ್ಯತಾ ಹಬ್ ಆಗಿ ರೂಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಕರಾವಳಿ ಸ್ಟಾರ್ಟ್‌ಅಪ್ ಫೆಸ್ಟ್ 2026’ಕ್ಕೆ ನಗರದ ದಿ ಓಷನ್ ಪರ್ಲ್ ಹೋಟೆಲ್‌ನಲ್ಲಿ ಚಾಲನೆ ನೀಡಲಾಯಿತು. ಎಐಸಿ ನಿಟ್ಟೆ ಇನ್ಕ್ಯೂಬೇಶನ್ ಸೆಂಟರ್, ಕೆ-ಟೆಕ್ ಇನ್ನೋವೇಶನ್ ಹಬ್ ಮತ್ತು ನಿಟ್ಟೆ-ಕರ್ನಾಟಕ ಸರಕಾರದ ಅಕ್ವಾಮರೀನ್ ಇನ್ನೋವೇಶನ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಆಶ್ರಯದಲ್ಲಿ ಆಯೋಜಿಸಲಾದ ಈ ಮಹತ್ವಾ ಕಾಂಕ್ಷೆಯದಲ್ಲಿ ಎಂಆರ್‌ಪಿಎಲ್ ಕಾರ್ಪೊರೇಟ್ ಸ್ಟ್ರಾಟಜಿ ಜನರಲ್ ಮ್ಯಾನೇಜರ್ ಆದ ಅಮೀತ್ ಗಣು ಎಸ್. ಅವರು ಕಾರ್ಯಕ್ರಮದ ಬ್ರೋಷರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆರ್ಥಿಕ ಪರಿವರ್ತನೆ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಸ್ಟಾರ್ಟ್‌ಅಪ್‌ಗಳು ಅಪಾರ ಸಾಮರ್ಥ್ಯವನ್ನು ಹೊಂದಿವೆ ಎಂದರು. ಕೆನರಾ ಬ್ಯಾಂಕ್ ಎಜಿಎಂ ಪೂರ್ಣಚಂದ್ರ ಅವರು ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟ್‌ಅಪ್ ಇಂಡಿಯಾ’ ಯೋಜನೆಗಳ ಮಹತ್ವವನ್ನು ತಿಳಿಸಿದರು. ಕೆಸಿಸಿಐ ಉಪಾಧ್ಯಕ್ಷ ದಿವಾಕರ್ ಕೊಚಿಕರ್ ಪೈ ಅವರು ಕೇವಲ ಐಟಿ ಕ್ಷೇತ್ರಕ್ಕೆ ಸೀಮಿತವಾಗದೆ ಅಗ್ರಿಟೆಕ್, ಫಿನ್ಟೆಕ್ ಮತ್ತು ಹೆಲ್ತ್‌ಟೆಕ್‌ನ ಅವಕಾಶಗಳನ್ನು ಬಳಸಿಕೊಳ್ಳಲು ಯುವಕರಿಗೆ ಕರೆ ನೀಡಿದರು. ಉಡುಪಿ ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಡಾ. ವಿಜಯೇಂದ್ರ ವಸಂತ್ ಎಂಎಸ್‌ಎಂಇ ಮೆಂಟರ್ ಸಿಎ ಎಸ್.ಎಸ್. ನಾಯಕ್, ಸಿಐಐ ಮಂಗಳೂರಿನ ಆತ್ಮಿಕಾ ಅಮಿನ್, ಟ್ಯಾಗ್‌ಸ್ಕಿಲ್ಸ್ ಎಡ್ಟೆಕ್ಟ್‌ನ ಪ್ರಶುನ್ ಶೆಟ್ಟಿ ಸೇರಿದಂತೆ ಹೂಡಿಕೆದಾರರು, ಉದ್ಯಮಿಗಳು ಮತ್ತು ಶೈಕ್ಷಣಿಕ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.ಎಐಸಿ-ನಿಟ್ಟೆ ಸಿಇಒ ಡಾ. ಎ. ಪಿ. ಆಚಾರ್ ಅವರು ಎಲ್ಲರನ್ನು ಸ್ವಾಗತಿಸಿದರು. ದೀಕ್ಷಿತ್ ಶೆಟ್ಟಿ ವಂದಿಸಿದರು. ಮಾರ್ಚ್ 28 , 29ರಂದು ಸಮಾವೇಶ: 2026ರ ಮಾರ್ಚ್ 28 ಮತ್ತು 29 ರಂದು ಮಂಗಳೂರಿನ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಪೂರಕವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಪಾರ್ಕ್ 2026 -ವಿದ್ಯಾರ್ಥಿ ಉದ್ಯಮ ಕಲ್ಪನೆಗಳ ಸ್ಪರ್ಧೆ, ಸ್ಟಾರ್ಟ್‌ಅಪ್ ಎಕ್ಸ್‌ಪೊ , ಹೂಡಿಕೆದಾರರ ಸಮಾವೇಶ , ಸ್ಟಾರ್ಟ್‌ಅಪ್ ಎಕ್ಸಲೆನ್ಸ್ ಪ್ರಶಸ್ತಿಗಳು ಈ ಸಮಾವೇಶದಲ್ಲಿ ಆಯೋಜಿಸಲಾಗುವುದು. 60,000ಕ್ಕೂ ಹೆಚ್ಚು ಸಂದರ್ಶಕರು ಮತ್ತು 50ಕ್ಕೂ ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸುವ ಗುರಿಯಾಗಿಸಿಕೊಂಡಿದೆ.

ವಾರ್ತಾ ಭಾರತಿ 7 Feb 2026 10:15 pm

ಸಾಲ ವಸೂಲಾತಿ ಹೆಸರಿನಲ್ಲಿ ನಿಂದನೆ: ಪ್ರಕರಣ ದಾಖಲು

ಮಣಿಪಾಲ, ಫೆ.7: ಬ್ಯಾಂಕಿನ ವಸೂಲಾತಿ ಅಧಿಕಾರಿಗಳೆಂದು ಹೇಳಿ ಕೊಂಡು ಮನೆಗೆ ಪ್ರವೇಶಿಸಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಕುಂಜಿಬೆಟ್ಟುವಿನ ಈಶ್ವರ ಎಂಬವರ ಮನೆಗೆ ಬ್ಯಾಂಕಿನ ವಸೂಲಾತಿ ಅಧಿಕಾರಿಗಳೆಂದು ಹೇಳಿಕೊಂಡು ಸುಲೋಚನಾ, ಕೃಷ್ಣ ಮತ್ತು ಹರಿಣಾಕ್ಷಿ ಎಂಬವರು ಬಂದು ಈಶ್ವರ ತಾಯಿಯನ್ನು ಉದ್ದೇಶೀಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 7 Feb 2026 10:12 pm

ಮನೆಯ ದಾರಂದ ಬಿದ್ದು ಕಾರ್ಮಿಕ ಮೃತ್ಯು

ಉಡುಪಿ, ಫೆ.7: ನಿರ್ಮಾಣ ಹಂತದಲ್ಲಿದ್ದ ಮನೆಯ ಮರದ ದಾರಂದ ಮೈಮೇಲೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕೊರಂಗ್ರಪಾಡಿ ಗ್ರಾಮದ ನಂದಗೋಕುಲ ಎಂಬಲ್ಲಿ ಫೆ.6ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಬಸಪ್ಪ ಮಾದರ(38) ಎಂದು ಗುರುತಿಸಲಾಗಿದೆ. ಇವರು ನಂದಗೋಕುಲದ ರಾಘವೇಂದ್ರ ತಂತ್ರಿ ಎಂಬವರ ಹೊಸಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮೇಸ್ತ್ರಿ ಜೊತೆ ಮನೆಯ ಮುಖ್ಯದ್ವಾರದ ಮರದ ದಾರಂದವನ್ನು ನಿಲ್ಲಿಸಿದ್ದರು. ಬಳಿಕ ಊಟ ಮಾಡಿ ಬಂದ ಬಸಪ್ಪ ದಾರಂದ ನಿಲ್ಲಿಸಿದ ಸೀಟ್‌ಔಟ್‌ನಲ್ಲಿ ಮಲಗಿದ್ದರು. ಈ ವೇಳೆ ದಾರಂದ ಆಕಸ್ಮಿಕ ವಾಗಿ ಬಸಪ್ಪ ಮಾದರ ಅವರ ತಲೆಯ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 7 Feb 2026 10:11 pm

ಹಂಪಿ ಉತ್ಸವ ವೇದಿಕೆಯಲ್ಲಿ ಬುದ್ಧನ ಭಾವಚಿತ್ರ ಬಿಡುಗಡೆಗೆ ಮನವಿ

ವಿಜಯನಗರ/ಹಂಪಿ (ಕಮಲಾಪುರ): ಹಂಪಿ ಉತ್ಸವವು ನಾಡಹಬ್ಬ ಹಾಗೂ ಶಾಂತಿಯ ಪ್ರತೀಕವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ಹಂಪಿ ಭಾಗದ ಪತ್ರಕರ್ತ ಚಿದಾನಂದ ಅವರು ಬುದ್ಧನ ಭಾವಚಿತ್ರವನ್ನು ಸ್ವತಃ ಚಿತ್ರಿಸಿ, ಅದನ್ನು ಹಂಪಿ ಉತ್ಸವದ ಪ್ರಮುಖ ವೇದಿಕೆಯಲ್ಲಿ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಂಕೇತವಾಗಿರುವ ಬುದ್ಧನ ಭಾವಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡುಗೆಯಾಗಿ ನೀಡುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಈ ಕಾರ್ಯಕ್ಕೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಬೇಕು ಎಂದು ಪತ್ರಕರ್ತ ಚಿದಾನಂದ ಅವರು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 7 Feb 2026 10:10 pm

ಬೈಕ್ ಢಿಕ್ಕಿ: ಎಲೆಕ್ಟ್ರಿಕಲ್ ವೀಲ್ ಚೇಯರ್ ವಾಹನ ಸವಾರ ಮೃತ್ಯು

ಉಡುಪಿ, ಫೆ.7: ಬೈಕೊಂದು ಎಲೆಕ್ಟ್ರಿಕಲ್ ವೀಲ್ ಚೇಯರ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ಗ್ರಾಮದ ಶ್ರೀಓಂಕಾರೇಶ್ವರ ಭಜನಾ ದೇಗುಲದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫೆ.6ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಮಧ್ವಮೂರ್ತಿ(61) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಹರಿರಾವ್ ಎಂಬವರು ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ಬೈಕ್, ಅದೇ ರಸ್ತೆಯಲ್ಲಿ ಎದುರಿನಲ್ಲಿ ನಿಟ್ಟೂರು ಕಡೆಯಿಂದ ಅಂಬಾಗಿಲು ಕಡೆಗೆ ಮಧ್ವಮೂರ್ತಿ ಚಲಾಯಿಸಿಕೊಂಡು ಹೋಗುತ್ತಿದ್ದ ಎಲೆಕ್ಟ್ರಿಕಲ್ ವೀಲ್ ಚೇಯರ್ ವಾಹನಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಧ್ವಮೂರ್ತಿ, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 7 Feb 2026 10:10 pm

ರಾಯಚೂರು | ಕೃಷಿ ವಿವಿಯಲ್ಲಿ ವಿಶೇಷ ಸಂವಾದ ಗೋಷ್ಠಿ

ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಅಂಗವಾಗಿ ಶನಿವಾರ ವಿಶ್ವವಿದ್ಯಾಲಯ ಆವರಣದ ಎರಡನೇ ಮುಖ್ಯ ವೇದಿಕೆಯಲ್ಲಿ ಸಂವಾದಗೋಷ್ಠಿ ನಡೆಯಿತು. ‘ಕಲ್ಯಾಣ ಕರ್ನಾಟಕ ಮತ್ತು ಪ್ರಾದೇಶಿಕ ಅಸಮಾನತೆ: ಸಾಧ್ಯತೆ ಮತ್ತು ಸವಾಲುಗಳು’ ವಿಷಯದ ಕುರಿತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ರಝಾಕ್ ಉಸ್ತಾದ್ ವಿಶೇಷ ಉಪನ್ಯಾಸ ನೀಡಿದರು. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಸಮಗ್ರ ಯೋಜನೆ ಹಾಗೂ ಸಮನ್ವಯದ ಅಗತ್ಯತೆಯನ್ನು ಅವರು ಒತ್ತಿಹೇಳಿದರು. ಕರ್ನಾಟಕ ಮಾಹಿತಿ ಆಯೋಗ, ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಮಾಜಿಕ ಚಿಂತಕ ಡಾ. ಬಸವರಾಜ ಕಳಸ ಆಶಯ ನುಡಿಗಳ ಮೂಲಕ ವಿಚಾರ ಪ್ರಸ್ತುತಪಡಿಸಿದರು. ಹಿರಿಯ ಸಾಹಿತಿ ರಾಘವೇಂದ್ರ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಜಿಲ್ಲೆಯ ಕೃಷಿ ಮತ್ತು ನೀರಾವರಿ ಕುರಿತು ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಮಾತನಾಡಿದರು. ಮಾನವ ಅಭಿವೃದ್ಧಿ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ಹೆಚ್.ಡಿ. ಪ್ರಶಾಂತ ಉಪನ್ಯಾಸ ನೀಡಿದರು. ಜಿಲ್ಲಾ ಅಭಿವೃದ್ಧಿಯಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪಾತ್ರದ ಕುರಿತು ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ ಅಧ್ಯಕ್ಷ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಿರಿಗೆರೆ ಪನ್ನರಾಜ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಂವಾದಗೋಷ್ಠಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದರು.

ವಾರ್ತಾ ಭಾರತಿ 7 Feb 2026 10:06 pm

ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ: ಉಡುಪಿ ಡಿಸಿ ಸ್ವರೂಪಾ ಟಿ.ಕೆ.

ಉಡುಪಿ, ಫೆ.7: ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತಂತೆ ಆಸಕ್ತಿ ಮೂಡಿಸು ವುದರೊಂದಿಗೆ ಅವರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಯಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಹೇಳಿದ್ದಾರೆ. ಶನಿವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ಉಡುಪಿ ಜಿಲ್ಲಾ ಮುಖ್ಯ ಶಿಕ್ಷಕರಗಳ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ವೃದ್ಧಿಗಾಗಿ ನಡೆದ ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬರುತ್ತಿರುವ ಉಡುಪಿ ಜಿಲ್ಲೆ, ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದು ತಮ್ಮ ಸಾಧನೆಯನ್ನು ಮುಂದುವರಿಸಬೇಕು ಹಾಗೂ ಆ ಮೂಲಕ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದು ಆಶಿಸಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಗುಣಾತ್ಮಕ ಫಲಿತಾಂಶ ತರುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾ ಗಿದೆ. ಫಲಿತಾಂಶ ವೃದ್ಧಿಗೊಳಿಸುವ ಶಿಕ್ಷಣ ಇಲಾಖೆಯ ನೂತನ ಕಾರ್ಯಕ್ರಮಗಳಿಗೆ ಮಕ್ಕಳು ಸಕಾರಾತ್ಮಕವಾಗಿ ಸ್ಪಂದಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ಕಲಿಕೆಗೆ ಕಷ್ಟ ಎನಿಸಿದ ವಿಷಯದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಒಲವು ಮೂಡುವಂತೆ ಮಾಡಬೇಕು. ವ್ಯವಸ್ಥಿತ ವಾಗಿ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು, ಕಲಿಕಾ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ತಿಳಿಹೇಳಬೇಕು ಎಂದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಬೇಕು. ಇಂತಹ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅವರ ಬಗ್ಗೆ ವಿಶೇಷ ಗಮನ ನೀಡಬೇಕು. ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ವಿವರಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಸುಲಭವಾಗಿ ವಿಷಯ ಮನದಟ್ಟಾಗುವಂತೆ ಮಾಡಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ನಾಗರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಿಂದ ಪ್ರತಿಶತಃ ನೂರು ಫಲಿತಾಂಶ ಪಡೆಯಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದ್ದಾರೆ ಎಂಬುದು ಮುಖ್ಯವಲ್ಲ, ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾಗುವುದು ಮುಖ್ಯವಾಗಿರುತ್ತದೆ ಎಂದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ ಪ್ರಾಸ್ತಾವಿಕ ವಾಗಿ ಮಾತನಾಡಿ, ರಾಜ್ಯದ ಗುಣಾತ್ಮಕ ಶಿಕ್ಷಣ ವ್ಯವಸ್ಥೆಯ ಟಾಪ್ ಐದು ಎ ಗ್ರೇಡ್‌ನಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಇದನ್ನು ಮುಂದುವರೆಸಿಕೊಂಡು ಹೋಗುವಂತೆ ಮಾಡುವುದು ಶಿಕ್ಷಕರ ಹೊಣೆಗಾರಿಕೆ ಎಂದರು. ಯಾವುದೇ ವಿದ್ಯಾರ್ಥಿ ಶಾಲೆಯಿಂದ ದೂರ ವಿರದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಅವರೊಂದಿಗೆ ಇದ್ದು, ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್ ಲಮಾಣಿ, ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಐದು ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಸೆಸೆಲ್ಸಿ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ, ಅಕ್ಷರ ದಾಸೋಹ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಾ ನಾಯಕ್ ವಂದಿಸಿದರು. ಎಸೆಸೆಲ್ಸಿ ಪರೀಕ್ಷೆಗೆ 13,480 ವಿದ್ಯಾರ್ಥಿಗಳು ನೊಂದಣಿ ಜಿಲ್ಲೆಯಲ್ಲಿ 115 ಸರಕಾರಿ, 68 ಅನುದಾನಿತ ಹಾಗೂ 91 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 274 ಪ್ರೌಢಶಾಲೆಗಳು ಜಿಲ್ಲಾ ವಲಯದಲ್ಲಿ ಇವೆ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗೆ 6,880 ಬಾಲಕರು, 6,600 ಬಾಲಕಿಯರು ಸೇರಿದಂತೆ ಒಟ್ಟು 13,480 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ಪೂರ್ವ ಪರೀಕ್ಷೆಗಳನ್ನು ಎರಡು ಬಾರಿ ಮಾಡಲಾಗಿದ್ದು, ಶೇ. 77.77ರಷ್ಟು ಫಲಿತಾಂಶ ಬಂದಿದೆ. ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಗೆ ಇನ್ನು 13 ದಿನಗಳು ಬಾಕಿ ಇದ್ದು, ವಿದ್ಯಾರ್ಥಿಗಳಲ್ಲಿ ಶಾಲಾ ಮಟ್ಟದಲ್ಲಿಯೇ ನಿಯಮಿತ ಪರೀಕ್ಷೆಗಳು, ಮರುಪಠಣ ತರಗತಿಗಳು ಹಾಗೂ ಪೋಷಕ ರೊಂದಿಗೆ ತರಗತಿಗಳು ಸೇರಿದಂತೆ ಸಮನ್ವಯ ಸಭೆಗಳನ್ನು ನಡೆಸುವ ಮೂಲಕ ಈ ಬಾರಿಯ ಸಾಧನೆಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸಲಹೆ ನೀಡಿದರು.

ವಾರ್ತಾ ಭಾರತಿ 7 Feb 2026 10:05 pm

ಒಳ ಚರಂಡಿ ಕಾಮಗಾರಿ: ರಸ್ತೆ ಬಂದ್ ಮಾಡಿ ಬದಲಿ ವ್ಯವಸ್ಥೆ

ಉಡುಪಿ, ಫೆ.7: ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ವಾರ್ಡಿನ ಶಾರದಾ ದೇವಸ್ಥಾನ ಮುಂಭಾಗದಿಂದ ಪಿ.ಪಿ.ಸಿ ಲೇನ್‌ವರೆಗೆ ಒಳ ಚರಂಡಿ ಕಾಮಗಾರಿಯನ್ನು ಪ್ರಾರಂಭಿಸಿರುವುದರಿಂದ ಸದರಿ ರಸ್ತೆಯನ್ನು ಬಂದ್ ಮಾಡಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 7 Feb 2026 10:03 pm

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ! ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಸೂಚನೆ

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ತಮ್ಮ ಪಿಂಚಣಿ ಮೊತ್ತವನ್ನು ಪಡೆಯುವ ಸಂದರ್ಭದಲ್ಲಿ ಪ್ರತಿ ವರ್ಷ ಸಂಬಂಧಪಟ್ಟ ಬ್ಯಾಂಕ್‌ ಗೆ ತಮ್ಮ ಜೀವಿತ ಪ್ರಮಾಣವನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಅದೇ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯ ಅರ್ಹ ಫಲಾನುಭವಿಗಳು ಕೂಡಾ ಪ್ರತಿ ವರ್ಷ ಸಂಬಂಧಪಟ್ಟ ಬ್ಯಾಂಕ್‌ ಗಳಿಗೆ ತಮ್ಮ ಜೀವಿತ ಪ್ರಮಾಣ ಸಲ್ಲಿಸುವುದನ್ನು ಕಡ್ಡಾಯಗೊಳಿಸುವಂತೆ ಆದೇಶ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ವಿಜಯ ಕರ್ನಾಟಕ 7 Feb 2026 10:03 pm

ಜನೋತ್ಸವವಾಗಿ ಕಂಗೊಳಿಸಿದ ರಾಯಚೂರು ಜಿಲ್ಲಾ ಉತ್ಸವ

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಫೆ.5ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆದ ರಾಯಚೂರು ಜಿಲ್ಲಾ ಉತ್ಸವ ಜನೋತ್ಸವವಾಗಿ ಕಂಗೊಳಿಸಿತು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಉತ್ಸವ ಹಾಗೂ ಕೃಷಿ ಮೇಳದಲ್ಲಿ ಲಕ್ಷಾಂತರ ಜನರು ಭಾಗವಹಿಸಿದರು. ಉತ್ಸವದ ನಿಮಿತ್ತ ವಿವಿ ಆವರಣವನ್ನು ಹಬ್ಬದಂತೆ ಅಲಂಕರಿಸಲಾಗಿತ್ತು. ಭತ್ತದ ಒಣಮೇವಿನಿಂದ ನಿರ್ಮಿಸಿದ ಕೃಷಿ ಮೇಳದ ಕಮಾನು ವಿಶೇಷ ಆಕರ್ಷಣೆಯಾಗಿದ್ದು, ಅದರ ಮುಂದೆ ಸೆಲ್ಫಿ ತೆಗೆಯಲು ಜನರು ಮುಗಿಬಿದ್ದರು. ಜರ್ಮನ್ ಟೆಂಟ್‌ನಲ್ಲಿ ಸಿದ್ಧಪಡಿಸಿದ ಆಹಾರ ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ಗಮನ ಸೆಳೆದವು. ಚಿಕ್ಕಮಗಳೂರು, ಮೈಸೂರು, ಗದಗ, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಸೇರಿದಂತೆ 12 ಜಿಲ್ಲೆಗಳ ತಯಾರಕರು ವಿವಿಧ ಬಗೆಯ ತಿಂಡಿ–ತಿನಿಸುಗಳನ್ನು ಪರಿಚಯಿಸಿದರು. ಮಕ್ಕಳು, ಯುವಕರು, ಕುಟುಂಬ ಸಮೇತರಾಗಿ ಆಗಮಿಸಿದ ಜನರು ಖಾದ್ಯಗಳನ್ನು ಸವಿದು ಸಂಭ್ರಮಿಸಿದರು. ವಿಭಿನ್ನ ಇಲಾಖೆಗಳ ಮಳಿಗೆಗಳ ಮುಂದೆ ಜನದಟ್ಟಣೆ ಕಂಡುಬಂತು. ಪಂಚ ಗ್ಯಾರಂಟಿ ಯೋಜನೆಗಳು—ಯುವನಿಧಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಕುರಿತು ಜಾಗೃತಿ ಮೂಡಿಸಲಾಯಿತು. ಆಯುಷ್ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ನಡೆದವು. ಅಂಚೆ ಇಲಾಖೆ, ಸೆಲ್ಕೋ ಫೌಂಡೇಶನ್, ರಾಷ್ಟ್ರೀಯ ಬೀಜ ನಿಗಮ, ಸಾವಯವ ಪ್ರಮಾಣ ಸಂಸ್ಥೆ, ಖಾದಿ ಮತ್ತು ಜವಳಿ ಇಲಾಖೆ, ಹಾಲು ಉತ್ಪಾದಕರ ಸಂಘಗಳು ಸೇರಿದಂತೆ ಅನೇಕ ಸಂಸ್ಥೆಗಳು ತಮ್ಮ ಯೋಜನೆಗಳು ಮತ್ತು ಉತ್ಪನ್ನಗಳನ್ನು ಪರಿಚಯಿಸಿದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾದರಿ ಅಂಗನವಾಡಿ ಮತ್ತು ಪೌಷ್ಟಿಕ ಆಹಾರ ಪ್ರದರ್ಶನ ಹಮ್ಮಿಕೊಂಡಿತು. ಸಣ್ಣ ನೀರಾವರಿ ಇಲಾಖೆ ಜಲ ಸಂರಕ್ಷಣೆ ಕುರಿತು ಮಾಹಿತಿ ನೀಡಿದರೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವತಿಯಿಂದ ಸಂಜೆ ಆಕಾಶ ವೀಕ್ಷಣೆ ಕಾರ್ಯಕ್ರಮ ಜನರ ಮೆಚ್ಚುಗೆ ಗಳಿಸಿತು. ಬ್ಯಾಂಕುಗಳ ಮಳಿಗೆಗಳಲ್ಲಿ ವಿವಿಧ ಹಣಕಾಸು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಮೂರು ದಿನಗಳ ಕಾಲ ನಡೆದ ಉತ್ಸವ ಮತ್ತು ಕೃಷಿ ಮೇಳ ಜನರ ಅಪಾರ ಸ್ಪಂದನೆಗೆ ಪಾತ್ರವಾಗಿ ರಾಯಚೂರಿನಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.    

ವಾರ್ತಾ ಭಾರತಿ 7 Feb 2026 10:02 pm

ಶಹಾಬಾದ್‌ | ನಾಲ್ಕು ಕಾರ್ಮಿಕ ಸಂಹಿತೆ ರದ್ದುಪಡಿಸಲು ಫೆ.12ರಂದು ಮುಷ್ಕರ

ಶಹಾಬಾದ್‌ : ಕೇಂದ್ರದ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಫೆ.12ರಂದು ಹಮ್ಮಿಕೊಂಡಿರುವ ಮುಷ್ಕರದ ಕರಪತ್ರಗಳನ್ನು ಕಟ್ಟಡ-ಕಾರ್ಮಿಕ ಸಂಘಟನೆಯ ಮುಖಂಡರು ನಗರದ ರೇಲ್ವೆ ನಿಲ್ದಾಣದಲ್ಲಿ ಬಿಡುಗಡೆಗೊಳಿಸಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಮುಷ್ಕರ ಸಂಬಂಧ ಕರಪತ್ರಗಳನ್ನು ಬಿಡುಗಡೆಗೊಳಿಸಿ ಸಂಘಟನೆಯ ಮುಖಂಡ ನಾಗಪ್ಪ ರಾಯಚೂರಕರ್ ಮಾತನಾಡಿದರು. 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವುದರಿಂದ ಶೇ.90ರಷ್ಟು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ ಹಾಗೂ ಬೋನಸ್ ಹಕ್ಕುಗಳಿಂದ ವಂಚಿತರಾಗುವ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು. ವ್ಯಾಪಾರ ಸುಗಮಗೊಳಿಸುವ ಹೆಸರಿನಲ್ಲಿ ಯೂನಿಯನ್‌ಗಳ ಹಕ್ಕುಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ವೇತನ ಹೆಚ್ಚಳಕ್ಕೆ ಸ್ಪಷ್ಟವಾದ ಆಧಾರವಿಲ್ಲದಂತೆ ಮಾಡಲಾಗಿದೆ. ಕಾರ್ಮಿಕರಿಗೆ ಸಂಘಟನೆ ರಚಿಸುವ ಹಕ್ಕಿಗೂ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು. ಮನರೇಗಾ ಕಾಯ್ದೆಯಡಿ ಖಾತರಿ ನೀಡಲಾದ ಕೆಲಸದ ಹಕ್ಕು ದುರ್ಬಲಗೊಳಿಸಲಾಗುತ್ತಿದೆ. ಗ್ರಾಮೀಣ ಶ್ರಮಜೀವಿಗಳ ಖರೀದಿ ಸಾಮರ್ಥ್ಯ ಕುಸಿಯುತ್ತಿದೆ. ರೈತರಿಗೆ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ, ಕಂಪನಿ ಕೃಷಿಗೆ ಉತ್ತೇಜನ ನೀಡಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಫೆ.1ರಂದು ಮಂಡಿಸಲಾದ 53.5 ಲಕ್ಷ ಕೋಟಿ ರೂ.ಗಳ ಕೇಂದ್ರ ಬಜೆಟ್‌ನಲ್ಲಿ ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರವಿಲ್ಲ. ಬಂಡವಾಳಗಾರರಿಗೆ ಮಾತ್ರ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಟೀಕಿಸಿದರು. ರಾಜ್ಯ ಸರ್ಕಾರವೂ ಕೇಂದ್ರದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಮುಂದುವರಿಸುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ವಾರ್ತಾ ಭಾರತಿ 7 Feb 2026 9:59 pm

ಕಲಬುರಗಿ | 'ಕಲ್ಯಾಣ ಕರ್ನಾಟಕ ಉತ್ಸವ' ಮಾಡುವಂತೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಮಾಡಬೇಕೆಂದು ಒತ್ತಾಯಿಸಿ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ.ಅಜಯಸಿಂಗ್ ಅವರಿಗೆ ಜೈ ಕನ್ನಡಿಗರ ಸೇನೆಯಿಂದ ಮನವಿ ಸಲ್ಲಿಸಲಾಯಿತು. ಸೇನೆಯ ಅಧ್ಯಕ್ಷ ಡಾ. ದತ್ತು ಭಾಸಗಿ ಅವರ ನೇತೃತ್ವದಲ್ಲಿ ಡಾ.ಅಜಯಸಿಂಗ್ ಅವರನ್ನು ಭೇಟಿಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ 2023ರಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈಗ ತಮ್ಮ ಅವಧಿಯಲ್ಲಿ ಉತ್ಸವ ಹಮ್ಮಿಕೊಂಡು ಈ ಭಾಗದ ಜಾನಪದ ಕಲಾವಿದರು, ಸಾಹಿತಿಗಳು, ಚಿಂತಕರು, ಬುದ್ದಿಜೀವಿಗಳು ಗುರುತಿಸುವ ಕಾರ್ಯ ಕೈಕೊಂಡು ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕದ ಕಲಾವಿದರ ಕಲೆಗಳನ್ನು ದೇಶಮಟ್ಟದಲ್ಲಿ ಕೊಂಡೊಯ್ಯುವುದು ಒಂದು ಇತಿಹಾಸ ಸೃಷ್ಟಿದಂತಾಗುತ್ತದೆ. ಆದ್ದರಿಂದ ತಾವುಗಳು ಈ ಭಾಗದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಮ್ಮಿಕೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಸಂದರ್ಭದಲ್ಲಿ ಸಂಜು ಮಾಳಗೆ, ಸಿದ್ದು ಕಡಬೂರ ಸೇರಿದಂತೆ ಕಾರ್ಯಕರ್ತರು ಇದ್ದರು.

ವಾರ್ತಾ ಭಾರತಿ 7 Feb 2026 9:53 pm

Thane: ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಹಾರಿ 12 ವರ್ಷದ ಬಾಲಕ ಆತ್ಮಹತ್ಯೆ

ಮುಂಬೈ: ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ಮೂವರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದ ದಿನಗಳ ಬಳಿಕ ಇದೇ ರೀತಿಯ ಘಟನೆ ಮಹಾರಾಷ್ಟ್ರದಲ್ಲಿ ಕೂಡ ನಡೆದಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಶನಿವಾರ 12 ವರ್ಷದ ಬಾಲಕನೋರ್ವ 6ನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಥಾಣೆ ನಗರದ ವಾಗ್ಲೆ ಎಸ್ಟೇಟ್ ಪ್ರದೇಶದಲ್ಲಿರುವ ಗಗನಚುಂಬಿ ಕಟ್ಟಡದ ಆರನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ 12 ವರ್ಷದ ಬಾಲಕ ಕೆಳಗೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡಲೇ ಬಾಲಕನ್ನು ಸಮೀಪದ ಆಸ್ಪತ್ರೆ ಕರೆದೊಯ್ದರು, ಆದರೆ, ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದರು ಎಂದು ಅವರು ಹೇಳಿದ್ದಾರೆ. ‘‘ನಾವು ಆಕಸ್ಮಿಕ ಸಾವು (ಎಡಿಆರ್) ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸುಸೈಡ್ ನೋಟ್ ಪತ್ತೆಯಾಗಿಲ್ಲ. ಆತ್ಮಹತ್ಯೆಯ ಹಿಂದಿನ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ’’ ಎಂದು ವಾಗ್ಲೆ ಎಸ್ಟೇಟ್ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

ವಾರ್ತಾ ಭಾರತಿ 7 Feb 2026 9:52 pm

ಆಳಂದ | ಸಿದ್ಧರಾಮೇಶ್ವರರ 22ನೇ ಪುಣ್ಯಸ್ಮರಣೋತ್ಸವ

ಆಳಂದ: ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳ 22ನೇ ಪುಣ್ಯಸ್ಮರಣೋತ್ಸವವು ಶನಿವಾರ ಧಾರ್ಮಿಕ ಭಕ್ತಿ, ಶ್ರದ್ಧೆ ಮತ್ತು ಸಾಮಾಜಿಕ ಸೇವೆಯ ಸಂಭ್ರಮದಲ್ಲಿ ಅದ್ದೂರಿಯಾಗಿ ನೆರವೇರಿತು. ದಿನಪೂರ್ತಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭವ್ಯ ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ನಡೆದ ಮಹಾರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ಮಠದ ಆವರಣ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಪರಮಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಜಿಡಗಾ–ಮುಗಳಖೋಡ ಮಠದ ಅಭಿವೃದ್ಧಿ ಕಾರ್ಯಗಳು ಮಹತ್ವದ ಹಂತ ತಲುಪಿವೆ. ಆದರೆ ಇದು ಕೇವಲ ಆರಂಭ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಮಠವನ್ನು ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮಹಾಕೇಂದ್ರವನ್ನಾಗಿ ರೂಪಿಸುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು. ಜಿಡಗಾ ಮಠದಲ್ಲಿ ನಿರ್ಮಾಣಗೊಂಡಿರುವ ಶಿವಯೋಗಿ ಸಿದ್ಧರಾಮೇಶ್ವರ ಕರ್ತೃಗದ್ದುಗೆ ಗೋಪುರ ಪೂರ್ಣಗೊಂಡಿದ್ದು, ಅದನ್ನು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾನ್ನಿಧ್ಯದಲ್ಲಿ 2027ರ ಜನ್ಮಶತಮಾನೋತ್ಸವದ ಅಂಗವಾಗಿ ಲೋಕಾರ್ಪಣೆ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಮುಗಳಖೋಡ ಮಠದಲ್ಲಿ ಅನುಭವ ಮಂಟಪ ನಿರ್ಮಾಣ, ಜಿಡಗಾ ಮಠದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ವಿವಿಧ ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಮಠದ ಜಾಗದಲ್ಲಿ ಕೆರೆ ನಿರ್ಮಾಣಕ್ಕೆ ಶಾಸಕ ಬಿ.ಆರ್. ಪಾಟೀಲ ಅವರ ಪ್ರಯತ್ನದಿಂದ ಮೊದಲ ಹಂತವಾಗಿ 25 ಕೋಟಿ ರೂ. ಮಂಜೂರಾಗಿದ್ದು, ಜಿಡಗಾ ಮಠಕ್ಕೆ 10 ಕೋಟಿ ರೂ. ವೆಚ್ಚದ ಭವ್ಯ ದ್ವಾರಭಾಗಿಲು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಡಾ. ಮುರುಘರಾಜೇಂದ್ರ ಶ್ರೀಗಳಿಗೆ ಬಾಗಲಕೋಟ್ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ಸಂಕಲ್ಪ ಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಬಲಾದ ಹಾಗೂ ಯಳಸಂಗಿ ಮಠದ ಶ್ರೀ ಗುರುಪಾದಲಿಂಗ ಶಿವಾಚಾರ್ಯರಿಗೆ ಗೌರವ ಡಾಕ್ಟರೇಟ್ ಪಡೆದ ನಿಮಿತ್ತ ಶ್ರೀಮಠದಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜೆಮಸಿಂಗ್ ಮಹಾರಾಜ್ ಸೇರಿದಂತೆ ವಿವಿಧ ಮಠಾಧೀಶರು, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ವೀರಣ್ಣ ಮಂಗಾಣೆ, ರಾಜಶೇಖರ ಪಾಟೀಲ, ಜಾನ್ಸನ್ ಗೋಡೆ, ಗೀತಾ ಚಿದ್ರಿ, ಸೂರ್ಯಕಾಂತ ಜುಲ್ಪೆ, ಡಾ. ವಿಕ್ರಂ ಇದ್ದಾರೆಡ್ಡಿ, ಯೋಗಿರಾಜ್ ಶಾಸ್ತ್ರಿ, ರೇವಣಸಿದ್ಧ ನಾಗೂರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀಮಠದ ವತಿಯಿಂದ ಎರಡು ಜೋಡಿ ಉಚಿತ ವಿವಾಹಗಳು ಸಂಪ್ರದಾಯಬದ್ಧವಾಗಿ ನೆರವೇರಿಸಲಾಯಿತು. ಸಂಗಮೇಶ ಲಾವಣಿ ಹಾಗೂ ಜನಪದ ಕಲಾವಿದ ತಾತ್ಯರಾವ್ ಪಾಟೀಲ ಅವರ ತಂಡಗಳಿಂದ ಭಕ್ತಿಗೀತೆ, ಜನಪದ ಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ನಡೆದ ಭವ್ಯ ಮಹಾರಥೋತ್ಸವ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದು, ಸಹಸ್ರಾರು ಭಕ್ತರು ಶಿವಯೋಗಿ ಸಿದ್ಧರಾಮೇಶ್ವರರ ದಿವ್ಯ ಸ್ಮರಣೆಗೆ ಸಾಕ್ಷಿಯಾದರು.

ವಾರ್ತಾ ಭಾರತಿ 7 Feb 2026 9:51 pm

Meghalaya | ಗಣಿಯಲ್ಲಿ ಸ್ಫೋಟ ಪ್ರಕರಣ: ಮತ್ತೆರಡು ಮೃತದೇಹಗಳು ಪತ್ತೆ

ಶಿಲ್ಲಾಂಗ್: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ಗಣಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಉಮ್ಸನಗಟ್ ಗ್ರಾಮದ ತಂಗ್‌ಸ್ಕು ಪ್ರದೇಶದಲ್ಲಿ ವಿವಿಧ ಸಂಸ್ಥೆಗಳ ಶೋಧ ಕಾರ್ಯಾಚರಣೆ ಸಂದರ್ಭ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ. ಈ ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ. ಮೃತಪಟ್ಟವರ ಗುರುತು ಪರಿಶೀಲಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠ ವಿಕಾಸ್ ಕುಮಾರ್ ಹೇಳಿದ್ದಾರೆ.

ವಾರ್ತಾ ಭಾರತಿ 7 Feb 2026 9:50 pm

Haryana | ಸೂರಜ್‌ಕುಂಡ್ ಜಾತ್ರೆಯಲ್ಲಿ ʼಜಾಯ್‌ರೈಡ್ʼ ಕುಸಿತ: ಪೊಲೀಸ್ ಇನ್ಸ್‌ಪೆಕ್ಟರ್ ಮೃತ್ಯು, 13 ಮಂದಿಗೆ ಗಾಯ

ಫರಿದಾಬಾದ್: ಇಲ್ಲಿನ ಸೂರಜ್‌ಕುಂಡ್ ಜಾತ್ರೆಯಲ್ಲಿ ಶನಿವಾರ ಸಂಜೆ ‘ಸುನಾಮಿ’ ಎಂಬ ಜಾಯ್‌ರೈಡ್ ಉಯ್ಯಾಲೆ ಕುಸಿದು ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಜಾತ್ರೆಗೆ ಬಂದಿದ್ದ ಜನರು ಉಯ್ಯಾಲೆಯಲ್ಲಿ ಸವಾರಿ ಮಾಡುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಉಯ್ಯಾಲೆ ಏಕಾಏಕಿ ಮುರಿದು ಬಿದ್ದಿದೆ. ಈ ಸಂದರ್ಭ ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಕ್ಷಿಸಲು ಧಾವಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಯುವ ವೇಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಘಟನೆ ಬಳಿಕ ಉಪ ಆಯುಕ್ತರು, ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಅನಾಹುತಗಳನ್ನು ತಡೆಯುವ ಉದ್ದೇಶದಿಂದ ಅಪಘಾತ ನಡೆದ ಪ್ರದೇಶದ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಲಾಯಿತು. ಘಟನೆ ಕುರಿತು ಫರಿದಾಬಾದ್ ಉಪ ಆಯುಕ್ತ ಆಯುಷ್ ಸಿನ್ಹಾ ಹೇಳಿಕೆ ನೀಡಿದ್ದು, “ಸಂಜೆ ಸುಮಾರು 6.15ರ ಸುಮಾರಿಗೆ ದುರಂತ ಸಂಭವಿಸಿದೆ. ಸೂರಜ್‌ಕುಂಡ್‌ ನಲ್ಲಿ ಜಾಯ್‌ರೈಡ್ ಓರೆಯಾಗಲು ಆರಂಭಿಸಿ ಬಳಿಕ ಕುಸಿದಿದೆ. ಈ ಘಟನೆಯಲ್ಲಿ ಸುಮಾರು 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಮೃತಪಟ್ಟಿರುವುದು ದೃಢಪಟ್ಟಿದೆ. ಜಾಯ್‌ರೈಡ್ ಓರೆಯಾಗುತ್ತಿದ್ದಾಗ ಜನರನ್ನು ರಕ್ಷಿಸಲು ಅವರು ಪ್ರಯತ್ನಿಸಿದ್ದರು. ಆದರೆ ಜಾಯ್‌ರೈಡ್‌ನ ಒಂದು ಭಾಗ ಅವರ ಮುಖ ಹಾಗೂ ತಲೆಗೆ ತಗುಲಿತು. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಯ್‌ರೈಡ್ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ. A policeman was killed and 12 others were injured after a swing collapsed at the Surajkund International Crafts Mela in Faridabad on Saturday evening. Tap to read story: https://t.co/xzJIkgxJjY pic.twitter.com/KxxMRfRcZ3 — The Indian Express (@IndianExpress) February 7, 2026 ಇದಕ್ಕೂ ಮೊದಲು ಜಾತ್ರಾ ಪ್ರದೇಶದಲ್ಲಿ ತೀವ್ರ ಗಾಳಿಯಿಂದ ಫುಡ್ ಕೋರ್ಟ್‌ನ ಪ್ರವೇಶ ದ್ವಾರ ಕುಸಿದಿರುವುದಾಗಿ ವರದಿಯಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 7 Feb 2026 9:47 pm

ಶಹಾಬಾದ್‌ | ವೈದ್ಯರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ: ಶಾಸಕ ಬಸವರಾಜ ಮತ್ತಿಮಡು

ಡಯಾಲಿಸಿಸ್, ರಕ್ತನಿಧಿ ಘಟಕ ಉದ್ಘಾಟನೆ

ವಾರ್ತಾ ಭಾರತಿ 7 Feb 2026 9:47 pm

ಮಂಗಳೂರಿನಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್

ಬೆಂಗಳೂರು : ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆಗೈದ ಪ್ರಕರಣದಲ್ಲಿ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಕಾಯಂಗೊಳಿಸಿರುವ ಹೈಕೋರ್ಟ್, ಇಂಥ ಪ್ರಕರಣಗಳಲ್ಲಿ ಅಪರಾಧಿಗಳ ಶಿಕ್ಷೆ ಕಡಿಮೆ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ತೀಕ್ಷ್ಣವಾಗಿ ನುಡಿದಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು ಕೋರಿ ಅಪರಾಧಿಗಳಾದ ಮಧ್ಯಪ್ರದೇಶದ ಜಯಬನ್ ಆದಿವಾಸಿ, ಮುಖೇಶ್ ಸಿಂಗ್ ಹಾಗೂ ಜಾರ್ಖಂಡ್‌ನ ಮನೀಶ್ ತಿರ್ಕಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಹಾಗೂ ಶಿಕ್ಷೆ ದೃಢೀಕರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಪಿ.ಸಂದೇಶ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ಟಿ‌. ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ ಅಪರಾಧಿಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದಲ್ಲಿ ಅಂತಹ ದುಷ್ಕೃತ್ಯಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಅಪರಾಧಿಗಳು 7 ವರ್ಷ 7 ತಿಂಗಳ ಬಾಲಕಿಗೆ ತಿಂಡಿ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ. ಒಬ್ಬರ ನಂತರ ಮತ್ತೊಬ್ಬರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಬಳಿಕ ಮೃತದೇಹವನ್ನು ಚರಂಡಿಗೆ ಎಸೆದಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ. ಈ ಆಘಾತಕಾರಿ ಘಟನೆ ಕೇವಲ ನ್ಯಾಯಾಂಗ ಮಾತ್ರವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದೆ ಎಂದಿರುವ ನ್ಯಾಯಪೀಠ, ಶಿಕ್ಷೆ ರದ್ದು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೃಢೀಕರಿಸಿದೆ. ಪ್ರಕರಣವೇನು? ಮಂಗಳೂರಿನ ವಾಮಂಜೂರು ಬಳಿಯ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ಅಪರಾಧಿಗಳು, ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪುತ್ರಿಯನ್ನು 2021ರ ನವೆಂಬರ್ 21ರಂದು, ಚಿಕ್ಕಿ ಕೊಡಿಸುವುದಾಗಿ ನಂಬಿಸಿ ತಮ್ಮ ಕೊಠಡಿಗೆ ಕರೆದೊಯ್ದಿದ್ದರು. ಒಬ್ಬ ಅರೋಪಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರೆ, ಇನ್ನಿಬ್ಬರು ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ ಕುತ್ತಿಗೆ ಹಿಸುಕಿ ಕೊಂದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಚರಂಡಿಗೆ ಎಸೆದಿದ್ದರು. ಮೃತದೇಹ ಪತ್ತೆಯಾದ ಬಳಿಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳಿಗೆ ಗಲ್ಲು ಶಿಕ್ಷೆ ಜತೆಗೆ ತಲಾ 40 ಸಾವಿರ ರೂ. ದಂಡ ವಿಧಿಸಿತ್ತು.

ವಾರ್ತಾ ಭಾರತಿ 7 Feb 2026 9:45 pm

ಅಫಜಲಪುರ | ಶಿಸ್ತಿನಿಂದ ಶಿಕ್ಷಣ ಕಲಿತು ಬದುಕು ರೂಪಿಸಿಕೊಳ್ಳಿ: ಇಸ್ರಾರ್ ಪಟೇಲ್

ಅಫಜಲಪುರ : ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಅಳವಡಿಸಿಕೊಂಡಿರಬೇಕು. ಶಿಸ್ತಿನಿಂದ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಜ್ಞಾನ ಶಿಕ್ಷಕ ಇಸ್ರಾರ್ ಪಟೇಲ್ ಸಲಹೆ ನೀಡಿದರು. ಪಟ್ಟಣದ ರಾಯಲ್ ವಿಜ್ಞಾನ ಮತ್ತು ಕಲಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿ, ಜಗತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಿನ್ನೆ ಇದ್ದ ತಂತ್ರಜ್ಞಾನ ಇಂದು ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ತಾವು ಪರಿವರ್ತನೆಯಾಗಬೇಕು ಎಂದು ತಿಳಿಸಿದರು. ಕನ್ನಡ ಉಪನ್ಯಾಸಕ ಡಾ. ಸಂಗಣ್ಣ ಎಂ.ಸಿ. ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಕಲಿಯುವ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ನೀಡುವ ಶಿಕ್ಷಕರಿಗೆ ಸದಾ ಗೌರವ ಮತ್ತು ವಿಧೇಯತೆ ಇರಬೇಕು. ಅದರಿಂದ ವಿದ್ಯಾರ್ಥಿಗಳ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಬಿಲಾಲ್ ಚೌಧರಿ ಮಾತನಾಡಿದರು. ಕಾರ್ಯಕ್ರಮಕ್ಕೆ ಖಾಜಾ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವರ್ಷದ ಉತ್ತಮ ವಿದ್ಯಾರ್ಥಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರು ಹಾಗೂ 2024-25ನೇ ಸಾಲಿನಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯಗುರು ನಬಿ ಪಟೇಲ್, ಆಡಳಿತ ಮಂಡಳಿ ಸದಸ್ಯ ಹುಸೇನ್ ಭಾಷಾ ಹಾಗೂ ಸಿಬ್ಬಂದಿಗಳಾದ ಸ್ನೇಹಾ, ಅಂಜಲಿ, ಮೇಘಾ, ಅನಿಷಿಧಾ, ಕಾರ್ತಿಕಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಕೀರ್ತಿ ಕಣ್ಣಿ ಮತ್ತು ಪ್ರತಿಕ್ಷಾ ಪ್ರಾರ್ಥಿಸಿದರು. ಸಮರ್ಥ ಸ್ವಾಗತಿಸಿದರು. ಪ್ರಿಯಾ ಜಿ. ನವಲೇಕರ್ ಮತ್ತು ಭಾಗ್ಯಶ್ರೀ ಹಾವಳಗಿ ನಿರೂಪಿಸಿದರು. ಶ್ರೀಶೈಲ್ ವಂದಿಸಿದರು.

ವಾರ್ತಾ ಭಾರತಿ 7 Feb 2026 9:41 pm

ವ್ಯಕ್ತಿಗಿಂತ ಸಮುದಾಯ ಮುಖ್ಯ: ರಫೀಕ್ ಮಾಸ್ಟರ್

ಬ್ಯಾರಿ ಅಧ್ಯಯನ ಪೀಠದ ವೆಬಿನಾರ್ ಸರಣಿ -2

ವಾರ್ತಾ ಭಾರತಿ 7 Feb 2026 9:40 pm

ಕಲಬುರಗಿ | ಸಿ.ಟಿ.ಇ.ಟಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಕಲಬುರಗಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನವದೆಹಲಿ ಇವರ ವತಿಯಿಂದ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯು (ಸಿ.ಟಿ.ಇ.ಟಿ.) (CENTRAL TEACHERS ELIGIBILITY TEST) ಫೆ.7 ಹಾಗೂ 8 ರಂದು ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಕಲಬುರಗಿ ಜಿಲ್ಲೆಯ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಈ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಶಾಂತಿಯುತ, ಸುಸೂತ್ರವಾಗಿ ನಡೆಸಲು ಹಾಗೂ ನಕಲನ್ನು ತಡೆಯುವ ಹಿತದೃಷ್ಟಿಯಿಂದ ಪರೀಕ್ಷೆ ಸಂದರ್ಭದಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು 2023 ಬಿ.ಎನ್.ಎಸ್.ಎಸ್. ಕಲಂ 163ರಡಿ ಪದತ್ತವಾದ ಅಧಿಕಾರ ಚಲಾಯಿಸಿ ಅವರು ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ-35(ಸಿ)ರ ಅನ್ವಯ ಪರೀಕ್ಷಾ ಸಮಯದಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಿಬ್ಬಂದಿ ವರ್ಗದವರನ್ನು ಹೊರತುಪಡಿಸಿ, ಯಾವುದೇ ಬೇರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್ ಹಾಗೂ ವೈರಲೆಸ್ ಸೆಟ್‍ಗಳು ಹಾಗೂ ಮತ್ತಿತರ ಎಲೆಕ್ಟ್ರಾನಿಕ್ಸ್ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಈ ಪರೀಕ್ಷಾ ಕೇಂದ್ರದ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜೆರಾಕ್ಸ್ ಮತ್ತು ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆಯೂ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ವಾರ್ತಾ ಭಾರತಿ 7 Feb 2026 9:36 pm

ಉಡುಪಿ ಜಿಲ್ಲೆಯಲ್ಲಿ ಡೆಸ್ಟಿನೇಷನ್ ಡೆವಲಪ್‌ಮೆಂಟ್ ಸ್ಕೀಮ್‌ನಡಿ 4 ಪ್ರವಾಸಿ ತಾಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ದೇಶದಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆ, ಜಾಗತಿಕ ಮಟ್ಟದಲ್ಲಿ 50ಕ್ಕೂ ಅಧಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಇವುಗಳಲ್ಲಿ ಉಡುಪಿ ಜಿಲ್ಲೆಯ ನಾಲ್ಕು ತಾಣಗಳು ಸ್ಥಾನ ಪಡೆದಿವೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕೇಂದ್ರ ಸರಕಾರದ ಜಾಗತಿಕ ಪ್ರವಾಸೋದ್ಯಮ ತಾಣ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಈ ಯೋಜನೆಗೆ ಕೋಡಿ- ಕನ್ಯಾನ, ಕೋಡಿ ಕುಂದಾಪುರ, ಬಾರ್ಕೂರು ಪೋರ್ಟ್ ಪ್ರದೇಶ ಹಾಗೂ ತ್ರಾಸಿ-ಮರವಂತೆ ಬೀಚ್‌ಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುಸ್ಥಿರತೆಯನ್ನು ಮುನ್ನೆಲೆಗೆ ತರುವುದು ಮತ್ತು ನೈಸರ್ಗಿಕ, ಸಾಂಸ್ಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವುದರೊಂದಿಗೆ ಪರಿಸರ ಸ್ನೇಹಿ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿಗರನ್ನು ಆರ್ಕಷಿಸುವುದು ಇದರ ಮುಖ್ಯ ಉದ್ದೇಶ. ಇದರೊಂದಿಗೆ ಈ ತಾಣಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವ ಗುರಿಯೊಂದಿಗೆ ‘ಡೆಸ್ಟಿನೇಷನ್ ಡೆವಲಪ್‌ಮೆಂಟ್ ಸ್ಕೀಮ್’ ಅನ್ನು ಜಾರಿಗೆ ತಂದಿದೆ ಎಂದರು. ಈ ಯೋಜನೆಗಳಲ್ಲಿ ನವೀಕರಿಸಬಹುದಾದದ ಇಂಧನಗಳ ಬಳಕೆ, ಮೂಲ ಸೌಕರ್ಯ ಹಾಗೂ ಪ್ರವಾಸಿಗರಿಗೆ ಜಾಗತಿಕ ಅಭಿಯಾನಗಳು ಸೇರಿ, ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಜಿಲ್ಲೆಯ ಒಂದು ಪ್ರವಾಸಿ ತಾಣವನ್ನು ಆಯ್ಕೆಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದರು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು 300 ಕೋಟಿ ರೂ. ಅನುದಾನ ನೀಡಲಿದೆ ಎಂದ ಅವರು, ಈ ಪ್ರವಾಸಿ ತಾಣದ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಗು ವುದು. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಒದಗಿಸುವ ಅಗತ್ಯವಿದೆ ಎಂದರು. ಐಪಿಇ ಗ್ಲೋಬಲ್‌ನ ಹೇಮಲತಾ ಅವರು ಜಿಲ್ಲೆಯಲ್ಲಿ ‘ನೇಷನಲ್ ಮಿಷನ್ ಫಾರ್ ಡೆವಲಪಿಂಗ್ ಗ್ಲೋಬಲಿ ಕಾಂಪಿಟೇಟಿವ್ ಟೂರಿಸಂ ಡೆಸ್ಟಿನೇಷನ್ಸ್’ ಅನ್ನು ಅಭಿವೃದ್ಧಿ ಪಡಿಸಲು ಗುರುತಿಸಿರುವ ಸ್ಥಳಗಳನ್ನು ಪಿಪಿಟಿ ಮೂಲಕ ಪ್ರದರ್ಶಿಸಿ, ಅವುಗಳ ಕುರಿತು ವಿವರಿಸಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಉಡುಪಿ ಜಿಲ್ಲೆಯು 98 ಕಿ.ಮೀ ಉದ್ದದ ಕರಾವಳಿ ತೀರ, ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯ, ಹಳ್ಳ, ಕೊಳ್ಳ, ಹೊಳೆಗಳನ್ನು ಹೊಂದಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ ಎಂದರು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಂ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 9:34 pm

ಯತೀಂದ್ರ ಹೇಳಿಕೆಗೆ ಕಾಲವೇ ಉತ್ತರಿಸುತ್ತೆ: ಡಿ.ಕೆ.ಶಿವಕುಮಾರ್‌

ರಾಯಚೂರು : ಸಿದ್ದರಾಮಯ್ಯನವರೇ ಹೈಕಮಾಂಡ್ ಎಂದು ನಾನು ಹೇಳಿದ್ದೆ, ಯತೀಂದ್ರ ಸಿದ್ದರಾಮಯ್ಯ ಹೈಕಮಾಂಡ್‌ಗಿಂತ ಮೇಲೆ ಹೇಳುತ್ತಿದ್ದಾರೆ. ಅದಕ್ಕೆ ಏನು ಹೇಳಲ್ಲ ಕಾಲವೇ ಉತ್ತರಿಸುತ್ತೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸಿದ್ಧರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಗಳಾಗಿ ಅವಧಿ ಪೂರೈಸುತ್ತಾರೆ ಎಂಬ ಎಂಎಲ್‌ಸಿ ಯತೀಂದ್ರ ಅವರ ಹೇಳಿಕೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರೇ ನಮ್ಮ ಹೈಕಮಾಂಡ್ ಎಂದು ಪುನರುಚ್ಚರಿಸಿದರು. ಮೆಟ್ರೊ ಪ್ರಯಾಣ ದರ ಏರಿಕೆ ಕುರಿತಾಗಿ ಸಂಸದ ತೇಜಸ್ವಿ ಸೂರ್ಯ ಅವರು “ಸೋಮವಾರದಿಂದ ದರ ಏರಿಕೆಯಾಗಲ್ಲ” ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಖಾಲಿ ಮಾತಾಡುವುದು ಬೇಡ. ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. ದರ ಏರಿಕೆ ಬೇಡ ಎಂದು ಎಲ್ಲ ಸಂಸದರೂ ಪ್ರಧಾನಿಗೆ ಮತ್ತು ಸಂಬಂಧಿತ ಕೇಂದ್ರ ಸಚಿವರಿಗೆ ಪತ್ರ ಬರೆಯಲಿ ಎಂದು ಸವಾಲು ಹಾಕಿದರು.

ವಾರ್ತಾ ಭಾರತಿ 7 Feb 2026 9:32 pm

Madurai | ಕೌಟುಂಬಿಕ ವಿವಾದ: ಎಐಎಡಿಎಂಕೆ ಪದಾಧಿಕಾರಿಯ ಶಿರಚ್ಛೇದನ

ಮಧುರೈ: ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ 6 ಮಂದಿಯ ತಂಡವೊಂದು ಎಐಎಡಿಎಂಕೆ ಪದಾಧಿಕಾರಿಯೊಬ್ಬರ ಶಿರಚ್ಛೇದನ ಮಾಡಿದೆ ಘಟನೆ ಸಾಮನಾಥಮ್‌ನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಎಂ. ಧನಸೇಕರಪಾಂಡಿಯನ್ ಆಲಿಯಾಸ್ ಸೆಂಥಿಲ್ (38) ಅವರು ಸಾಮನಾಥಮ್‌ನಲ್ಲಿ ಎಐಎಡಿಎಂಕೆಯ ಯುವಜನ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿದ್ದರು. ಸಾಮನಾಥಮ್ ನೆಡುಂಗಲಂ ಮುಖ್ಯ ರಸ್ತೆಯಲ್ಲಿ ಅವರ ಚಹಾ ಅಂಗಡಿ ನಡೆಸುತ್ತಿದ್ದರು. ಅಲ್ಲಿ ತಂಡ ಅವರ ಶಿರಚ್ಛೇದನ ಮಾಡಿದೆ. ಆರಂಭದಲ್ಲಿ ಮಧ್ಯ ಸೇವಿಸಿ ಗಲಾಟೆ ಮಾಡುವುದನ್ನು ಪ್ರಶ್ನಿಸಿರುವುದಕ್ಕೆ ಸೆಂಥಿಲ್ ಅವರನ್ನು ತಂಡ ಹತ್ಯೆಗೈದಿದೆ ಎಂಬ ವಂದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿತ್ತು. ಅನಂತರ ಪೊಲೀಸ್ ವರಿಷ್ಠ ಬಿ.ಕೆ. ಅರವಿಂದ, ವಾಗ್ವಾದದ ಕಾರಣಕ್ಕೆ ಸೆಂಥಿಲ್ ಹತ್ಯೆಯಾಗಿಲ್ಲ ಎಂದು ತಿಳಿಸಿದ್ದಾರೆ. ಸೆಂಥಿಲ್ ಅವರ ಪತ್ನಿಯ ಅನೈತಿಕ ಸಂಬಂಧದ ಕುರಿತ ವಿವಾದ ಈ ಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ. ಮೂವರನ್ನು ಬಂಧಿಸಲಾಗಿದೆ. ಇತರನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಂಧಿತರಾದ ಮೂವರಲ್ಲಿ ಇಬ್ಬರು ಅಪ್ರಾಪ್ತರು. ಪರಾರಿಯಾಗಿರುವ ಪ್ರಮುಖ ಆರೋಪಿ ಕುಟ್ಟಿ ಕಾರ್ತಿಕ್‌ಗೆ ಸೆಂಥಿಲ್‌ ಪತ್ನಿ ಕವಿಯಳೊಂದಿಗೆ ಅನೈತಿಕ ಸಂಬಂಧ ಇತ್ತು ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 7 Feb 2026 9:26 pm

ಇರಾನ್ ತೈಲ ರಫ್ತಿನ ಮೇಲೆ ಹೊಸ ನಿರ್ಬಂಧ: ಅಮೆರಿಕ ಘೋಷಣೆ

ಭಾರತದ ಪ್ರಜೆಯ ವಿರುದ್ದವೂ ನಿರ್ಬಂಧ

ವಾರ್ತಾ ಭಾರತಿ 7 Feb 2026 9:22 pm

T20 World Cup : ಟೀಂ ಇಂಡಿಯಾ ವಿರುದ್ದ ಮೈದಾನಕ್ಕಿಳಿದ USA ತಂಡದಲ್ಲಿ ಭಾರತ - ಪಾಕ್ ಜುಗಲ್‌ಬಂದಿ

Indian Origin Players : ಮುಂಬೈನ ವಾಂಖೇಡೆ ಮೈದಾನದಲ್ಲಿ ಟೀಂ ಇಂಡಿಯಾ ಮತ್ತು ಅಮೆರಿಕಾ ತಂಡಗಳು ವಿಶ್ವಕಪ್ ಟಿ20 ಪಂದ್ಯ ಆರಂಭಿಸಿದೆ. ಅಮೆರಿಕಾ ತಂಡದಲ್ಲಿ ಭಾರತ ಮತ್ತು ಪಾಕಿಸ್ತಾನದ ಎಂಟು ಆಟಗಾರರು ಮೈದಾನಕ್ಕಿಳಿದಿದ್ದಾರೆ. ಒಂದು ರೀತಿಯಲ್ಲಿ ಅಮೆರಿಕಾದ ತಂಡವು, ಏಷ್ಯಾ ಖಂಡದ ತಂಡಂದಂತಿದೆ. ಭಾರತದ ಆರಂಭ ಇತ್ತೀಚಿನ ವರದಿಯ ಪ್ರಕಾರ ಉತ್ತಮವಾಗಿಲ್ಲ.

ವಿಜಯ ಕರ್ನಾಟಕ 7 Feb 2026 9:21 pm

ನಮ್ಮ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ಆರ್.ಅಶೋಕ್

ಬೆಂಗಳೂರು : ‘ಸೋಮವಾರದಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ರೈಲ್ವೆ ಪ್ರಯಾಣ ಪ್ರಸ್ತಾವಿತ ದರ ಏರಿಕೆಯನ್ನು ಸದ್ಯಕ್ಕೆ ತಡೆಹಿಡಿಯಲು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಶನಿವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಅಸಮರ್ಥನೀಯವಾಗಿ ಏರಿಕೆ ಮಾಡಲು ಹೊರಟಿರುವ ಕಾಂಗ್ರೆಸ್ ಸರಕಾರದ ನಿರ್ಧಾರಕ್ಕೆ ಸಂಬಂಧಪಟ್ಟಂತೆ ನಾನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದೆ ಎಂದು ಉಲ್ಲೇಖಿಸಿದ್ದಾರೆ. ಈಗಾಗಲೇ ಭಾರತದಲ್ಲೇ ಅತ್ಯಂತ ದುಬಾರಿ ಮೆಟ್ರೋ ದರವನ್ನು ಹೊಂದಿರುವ ಬೆಂಗಳೂರಿನಲ್ಲಿ, ಮತ್ತೊಂದು ದರ ಏರಿಕೆಯು ಲಕ್ಷಾಂತರ ನಾಗರಿಕರಿಗೆ ಹಾಗೂ ಸಾರ್ವಜನಿಕ ಸಾರಿಗೆಯನ್ನೇ ನಂಬಿಕೊಂಡಿರುವ ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇದರ ಜೊತೆಗೆ ದರ ನಿಗದಿ ಸಮಿತಿಯಲ್ಲಿನ ಲೋಪಗಳ ಬಗ್ಗೆ ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿರುವ ಅವರು, ರಾಜ್ಯ ಸರಕಾರ ವಿನಂತಿಸಿದರೆ ದರಗಳ ವೈಜ್ಞಾನಿಕ ಪರಿಷ್ಕರಣೆಗಾಗಿ ಹೊಸ ಸಮಿತಿಯನ್ನು ರಚಿಸುವ ಬಗ್ಗೆಯೂ ಮಾತನಾಡಿದರು. ಪ್ರಯಾಣಿಕರ ಹಿತದೃಷ್ಟಿಯಿಂದ ಕೂಡಲೇ ಕಾರ್ಯಪ್ರವೃತ್ತರಾದ ಕೇಂದ್ರ ಸಚಿವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 7 Feb 2026 9:20 pm

ಪಾಕ್ ರಾಜಧಾನಿ ಇಸ್ಲಾಮಾಬಾದ್ ದುರ್ಘಟನೆ ಹಿನ್ನೆಲೆ, ಮೂವರು ಶಂಕಿತರು ಪೊಲೀಸರ ವಶಕ್ಕೆ | Islamabad Incident

ಪಾಕಿಸ್ತಾನ ಅನ್ನೋ ದೇಶ ಭೂಮಿ ಮೇಲೆ ಇರುವುದೇ ಮನುಷ್ಯರಿಗೆ ತೊಂದರೆ ಕೊಡಲು ಅಂತಾನೇ ಕಾಣುತ್ತದೆ. ಯಾಕಂದ್ರೆ ಜಗತ್ತಿನಲ್ಲಿ ಇರುವ ಸಮಸ್ಯೆಗಳೆಲ್ಲಾ ಇದೇ ಪಾಕಿಸ್ತಾನದಲ್ಲಿ ಬಂದು ಸೇರಿದಂತೆ ತೋರುತ್ತದೆ. ಅದರಲ್ಲೂ ಉಗ್ರರ ಕಾರ್ಖಾನೆ ಆಗಿರುವ ಪಾಕಿಸ್ತಾನ ತಾನು ಕೂಡ ಉದ್ದಾರ ಆಗಲ್ಲ &ತನ್ನ ಅಕ್ಕಪಕ್ಕದ ದೇಶಗಳು ಉದ್ಧಾರ ಆಗುತ್ತಿದ್ದರೆ ಅದನ್ನು ಸಹಿಸಿಕೊಳ್ಳದೆ ಕೆಡಿಸುವ ಕೆಲಸ ಮಾಡುತ್ತದೆ. ಆದರೆ

ಒನ್ ಇ೦ಡಿಯ 7 Feb 2026 9:20 pm

ಮಹಾರಾಷ್ಟ್ರ: ಗುಂಡಿನ ಕಾಳಗದಲ್ಲಿ 7 ಮಂದಿ ಶಂಕಿತ ಮಾವೋವಾದಿಗಳು ಸಾವು

ನಿಝಾಮಾಬಾದ್: ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯ ಅಂಬುಜ್‌ಮಾಡ್ ಪ್ರದೇಶದಲ್ಲಿ ನಡೆದ ಗುಂಡಿ ಕಾಳಗದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಯ ಹಿರಿಯ ನಾಯಕ ಸೇರಿದಂತೆ 7 ಮಂದಿ ಶಂಕಿತ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮಾವೋವಾದಿ ನಿಗ್ರಹ ಕಾರ್ಯಾಚರಣೆಯ ಸಂದರ್ಭ ಓರ್ವ ಭದ್ರತಾ ಅಧಿಕಾರಿ ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ. ಮೃತಪಟ್ಟ ಮಾವೋವಾದಿ ನಾಯಕನನ್ನು ಪ್ರಭಾಕರ್ ಅಲಿಯಾಸ್ ಲೋಯಟ್ಟಿ ಚಂದರ್ ರಾವ್ ಎಂದು ಗುರುತಿಸಲಾಗಿದೆ. ಈತ ಮಾವೋವಾದಿಗಳ ಗಡ್ಜಿರೋಳಿ ವಿಭಾಗೀಯ ಸಮಿತಿಯ ಉಸ್ತುವಾರಿ ವಹಿಸಿದ್ದ. ಈತನ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಮಾವೋವಾದಿಗಳ ಗುಂಪಿನ ಚಲನವಲನದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಗಡ್ಚಿರೋಳಿ ಪೊಲೀಸರು ಹೇಳಿದ್ದಾರೆ. ನಾರಾಯಣಪುರ-ಗಡ್ಚಿರೋಳಿ ಜಿಲ್ಲೆಯ ಗಡಿಯ ಫೋಡೆವಾಡಾ ಗ್ರಾಮದ ಸಮೀಪ ಸಿ-60 ಪಡೆಯ 14 ಘಟಕಗಳು, ಜಿಲ್ಲಾ ಪೊಲೀಸ್‌ನ ವಿಶೇಷ ಮಾವಾವೋದಿ ನಿಗ್ರಹ ಘಟಕವನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ‘‘ಕಾರ್ಯಾಚರಣೆಯಲ್ಲಿ ಸಿ-60 ಅಧಿಕಾರಿ ದೀಪಕ್ ಚಿನನಾ ಮಾಡವಿ (38) ಸಾವನ್ನಪ್ಪಿದ್ದಾರೆ. ಅವರು ಅಹೆರಿ ತೆಹ್ಸಿಲ್‌ನ ಮಂದ್ರಾ ಗ್ರಾಮದ ನಿವಾಸಿ. ಗುರುವಾರ ಸಂಜೆ ನಡೆದ ಗುಂಡಿನ ಕಾಳಗದಲ್ಲಿ ಅವರು ಗಂಬೀರ ಗಾಯಗೊಂಡಿದ್ದರು. ಅವರನ್ನು ಏರ್‌ಲಿಫ್ಟ್ ಮಾಡಿ ಭಮ್ರಗಡದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರು ಅನಂತರ ಮೃತಪಟ್ಟರು’’ ಇನ್ನೊಬ್ಬರು ಅಧಿಕಾರಿ ಜೋಗಾ ಮಾಡವಿ ಅವರು ಗಾಯಗೊಂಡಿದ್ದಾರೆ. ಅವರು ಕಿಶ್ಟ್ಯಪಲ್ಲಿ ಗ್ರಾಮದ ನಿವಾಸಿ. ಅವರನ್ನು ಗಡ್ಚಿರೋಳಿಗೆ ಏರ್‌ಲಿಫ್ಟ್ ಮಾಡಲಾಯಿತು. ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 7 Feb 2026 9:18 pm

ಇಂದೋರ್| ಕಲುಷಿತ ನೀರು ಸೇವನೆಯಿಂದ ವೃದ್ಧ ಸಾವು: ಆರೋಪ

ಭೋಪಾಲ್: ಇಂದೋರ್‌ನ ಭಗೀರಥಿಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರದಿಂದ ಮತ್ತೊಂದು ಸಾವು ವರದಿಯಾಗಿದೆ. ಅತಿಸಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧರೊಬ್ಬರು ಗುರುವಾರ ಸಾವನ್ನಪ್ಪಿದ್ದಾರೆ. ಮೃತಪಟ್ಟ ವೃದ್ಧರನ್ನು ಅಲ್ಗು ಚೌಧರಿ ಎಂದು ಗುರುತಿಸಲಾಗಿದೆ. ಅತಿಸಾರ ಹಾಗೂ ವಾಂತಿಯ ಹಿನ್ನೆಲೆಯಲ್ಲಿ ಅವರನ್ನು ಶ್ರೀ ಅರಬಿಂದೋ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಎಸ್‌ಎಐಎಂಎಸ್-ಇಂದೋರ್) ಆಸ್ಪತ್ರೆಗೆ ಜನವರಿ 9ರಂದು ದಾಖಲಿಸಲಾಗಿತ್ತು. ಅವರಿಗೆ ಶ್ವಾಸೋಚ್ಛಾಸದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರು ಚಿಕಿತ್ಸೆಯಲ್ಲಿರುವಾಗ ಗುರುವಾರ ತಡ ರಾತ್ರಿ ಮೃತಪಟ್ಟರು. ‘‘ನನ್ನ ತಂದೆ ಕಲುಷಿತ ನೀರು ಕುಡಿದ ಬಳಿಕ ಅತಿಸಾರ ಹಾಗೂ ವಾಂತಿ ಕಂಡು ಬಂತು. ಇದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು’’ ಎಂದು ಅಲ್ಗು ಚೌಧರಿ ಅವರ ಪುತ್ರ ಸಂಜಯ್ ತಿಳಿಸಿದ್ದಾರೆ. ಆದರೆ, ಇಂದೋರ್‌ನ ಜಿಲ್ಲಾ ಮುಖ್ಯ ಆರೋಗ್ಯ ಹಾಗೂ ವೈದ್ಯಾಧಿಕಾರಿ ಡಾ. ಮಾಧವ್ ಹಸ್ಸನಿ, ‘‘ಅಲ್ಗು ಚೌಧರಿ ಅವರು ಅತಿಸಾರದಿಂದ ಸಾವನ್ನಪ್ಪಿಲ್ಲ. ಅವರು ನಿರ್ಜಲೀಕರಣಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಅವರ ಮೆದುಳಿನಲ್ಲಿ ರಕ್ತ ಸ್ರಾವವಾಗಿದೆ’’ ಎಂದು ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 7 Feb 2026 9:18 pm

ಜಿಬಿಎ ಚುನಾವಣೆಗೆ ಕಮಲ ಪಡೆ ಭರ್ಜರಿ ಸಿದ್ದತೆ: ಜೆಡಿಎಸ್‌ ಜೊತೆ ಚರ್ಚಿಸಿ ಶೀಘ್ರದಲ್ಲೇ ಅಭ್ಯರ್ಥಿಗಳ ಆಯ್ಕೆ

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಬೆಂಗಳೂರಿಗೆ ನೀಡಿದ ಆದ್ಯತೆ, ಅನುದಾನ ನೀಡಿದ್ದು, ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಅವಧಿಯ ಅಭಿವೃದ್ಧಿ ಕಾರ್ಯಗಳು- ಇವೆಲ್ಲವನ್ನೂ ಜನರ ಮುಂದೆ ತೆಗೆದುಕೊಂಡು ಹೋಗಲಿದ್ದೇವೆ. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನೂ ಜನರ ಮುಂದಿಟ್ಟು ಮುಂದಿನ ದಿನಗಳಲ್ಲಿ ಎಲ್ಲ 5 ಜಿಬಿಎಗಳಲ್ಲೂ ನಾವು ಅಧಿಕಾರಕ್ಕೆ ಬರಬೇಕೆಂಬ ಸಂಕಲ್ಪದೊಂದಿಗೆ ಹೆಜ್ಜೆ ಮುಂದಿಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. ಈ ಕುರಿತಾಗಿ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.

ವಿಜಯ ಕರ್ನಾಟಕ 7 Feb 2026 9:16 pm

ಸರಕಾರದ 6ನೇ ಗ್ಯಾರಂಟಿಯಾಗಿ ಉಚಿತ ಭೂಮಿ ನೀಡುವ ಯೋಜನೆಯನ್ನು ರೂಪಿಸಲಾಗುವುದು : ಡಿ.ಕೆ.ಶಿವಕುಮಾರ್

ರಾಯಚೂರು ಜಿಲ್ಲಾ ಉತ್ಸವದ ಸಮಾರೋಪ ಕಾರ್ಯಕ್ರಮ

ವಾರ್ತಾ ಭಾರತಿ 7 Feb 2026 9:15 pm

ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಕಾಯಿಲೆ ಗುಣಮುಖ: ಡಾ. ಎಚ್.ಆರ್.ತಿಮ್ಮಯ್ಯ

ಮಂಗಳೂರು, ಫೆ.7: ಕ್ಯಾನ್ಸರ್ ಕಾಯಿಲೆಯನ್ನು ಪ್ರಥಮ ಅಥವಾ ದ್ವಿತೀಯ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು. ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಜಿಲ್ಲಾ ಎನ್‌ಪಿಸಿಡಿಸಿ ವಿಭಾಗ, ಯುನಿಟಿ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಯಾನ್ಸರ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ಯಾನ್ಸರ್‌ನ ಲಕ್ಷಣಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕು. ನರ್ಸಿಂಗ್ ವಿದ್ಯಾರ್ಥಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಡಾ. ಎಚ್.ಆರ್.ತಿಮ್ಮಯ್ಯ ಕರೆ ನೀಡಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಅಂಬೇಡ್ಕರ್ ವೃತ್ತದಿಂದ ವೆನ್ಲಾಕ್ ಆಸ್ಪತ್ರೆಯವರೆಗೆ ಜಾಗೃತಿ ರ್ಯಾಲಿ ನಡೆಯಿತು. ಡಿಎಸ್‌ಒ ಡಾ.ನವೀನ್‌ಚಂದ್ರ ಮಾತನಾಡಿ ರೋಗಿಗಳು ಆಸ್ಪತ್ರೆಯತ್ತ ಬರುವಾಗ ಮೂರನೇ ಹಂತ ತಲುಪಿರು ತ್ತಾರೆ. ನಿಯಮಿತವಾಗಿ ಸೂಕ್ತ ತಪಾಸಣೆಗೆ ಒಳಪಡುವ ಮೂಲಕ, ಕ್ಯಾನ್ಸರ್ ಮುಕ್ತ ಜೀವನವನ್ನು ನಡೆಸಬಹುದು ಎಂದರು. ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಸುಧಾಕರ್ ಮಾತನಾಡಿ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ನಾವು ಸೇವಿಸುವ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಆಹಾರ ಸೇವನೆಯಲ್ಲೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಕೆ.ಎಂ.ಸಿ. ಆಸ್ಪತ್ರೆ ವಿಕಿರಣ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಅತಿಯಮಾನ್ ಎಂ.ಎಸ್. ಕ್ಯಾನ್ಸರ್ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುದರ್ಶನ್,ಮಂಗಳೂರು ತಾಲೂಕು ಆರೋಗ್ಯಾಧಿ ಕಾರಿ ಡಾ. ಸುಜಯ್, ವೆನ್ಲಾಕ್ ಪ್ಯಾರ ಮೆಡಿಕಲ್ ವಿಭಾಗದ ಪ್ರಾಂಶುಪಾಲೆ ಗ್ರೇಸಿ, ವೆನ್ಲಾಕ್ ಆಸ್ಪತ್ರೆಯ ಉಪಶಮನ ಆರೈಕೆ ವಿಭಾಗದ ವೈದ್ಯಾಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಣಣಾಧಿಕಾರಿ ಜ್ಯೋತಿ ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು.      

ವಾರ್ತಾ ಭಾರತಿ 7 Feb 2026 9:13 pm

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ‘ಮೇಕ್ ಇನ್ ಇಂಡಿಯಾ’ವನ್ನು ಬಲಗೊಳಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ: ಪ್ರಧಾನಿ ಮೋದಿ

ಹೊಸದಿಲ್ಲಿ: ಅಮೆರಿಕದೊಂದಿಗೆ ಮಧ್ಯಂತರ ವ್ಯಾಪಾರ ಒಪ್ಪಂದವು ರೈತರು ಮತ್ತು ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಬಲಗೊಳಿಸಲಿದೆ ಹಾಗೂ ಮಹಿಳೆಯರು ಮತ್ತು ಯುವಜನರಿಗಾಗಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ಸದೃಢ ಸಂಬಂಧಗಳಿಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ಬದ್ಧತೆಗಾಗಿ ಎಕ್ಸ್ ಪೋಸ್ಟ್‌ನಲ್ಲಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಮೋದಿ,‘ಭಾರತ ಮತ್ತು ಅಮೆರಿಕ ಎರಡಕ್ಕೂ ಒಳ್ಳೆಯ ಸುದ್ದಿ. ಎರಡು ಮಹಾನ್ ದೇಶಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕಾಗಿ ಚೌಕಟ್ಟನ್ನು ನಾವು ಒಪ್ಪಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ. ಒಪ್ಪಂದವು ಭಾರತದ ಶ್ರಮಿಕ ರೈತರು,ಉದ್ಯಮಿಗಳು, ಎಂಎಸ್‌ಎಂಇಗಳು,ಸ್ಟಾರ್ಟ್‌ಅಪ್‌ಗಳು,ಮೀನುಗಾರರು,ಇತರರಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ‘ಮೇಕ್ ಇನ್ ಇಂಡಿಯಾ’ವನ್ನು ಬಲಗೊಳಿಸಲಿದೆ. ಅದು ಭಾರೀ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಮೋದಿ ಹೇಳಿದ್ದಾರೆ. ನವೀನತೆಯನ್ನು ಉತ್ತೇಜಿಸಲು ಭಾರತ ಮತ್ತು ಅಮೆರಿಕ ಬದ್ಧವಾಗಿವೆ ಮತ್ತು ಈ ಚೌಕಟ್ಟು ಉಭಯ ದೇಶಗಳ ನಡುವೆ ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಗಳನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಅದು ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನೂ ಬಲಗೊಳಿಸಲಿದೆ ಮತ್ತು ಜಾಗತಿಕ ಬೆಳವಣಿಗೆಗೆ ಕೊಡುಗೆಯನ್ನು ಸಲ್ಲಿಸಲಿದೆ ಎಂದು ಹೇಳಿರುವ ಪ್ರಧಾನಿ,‘ವಿಕಸಿತ ಭಾರತ ನಿರ್ಮಾಣದತ್ತ ದೇಶವು ಮುನ್ನಡೆಯುತ್ತಿರುವಾಗ ಭವಿಷ್ಯವನ್ನು ಕೇಂದ್ರೀಕರಿಸಿರುವ, ನಮ್ಮ ಜನರನ್ನು ಸಬಲರನ್ನಾಗಿಸುವ ಜಾಗತಿಕ ಪಾಲುದಾರಿಕೆಗಳನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ’ ಎಂದಿದ್ದಾರೆ.

ವಾರ್ತಾ ಭಾರತಿ 7 Feb 2026 9:10 pm

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ | ‘ಹೌಡಿ ಮೋದಿ’ಯ ವಿರುದ್ಧ ಗೆದ್ದ ‘ನಮಸ್ತೆ ಟ್ರಂಪ್’: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಅವರ ‘ಆಲಿಂಗನಗಳು ಮತ್ತು ಫೋಟೊ ಅವಕಾಶಗಳು’ ಹೆಚ್ಚಿನ ಫಲವನ್ನು ನೀಡಿಲ್ಲ ಎಂದು ವ್ಯಂಗ್ಯವಾಡಿದೆ. ವ್ಯಾಪಾರ ಒಪ್ಪಂದ ಕುರಿತು ಭಾರತ-ಅಮೆರಿಕ ಜಂಟಿ ಹೇಳಿಕೆಯಲ್ಲಿ ವಿವರಗಳ ಕೊರತೆಯಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇ‌ಶ್ ಅವರು,‌ ಅಮೆರಿಕದ ಅಧ್ಯಕ್ಷರ ಒತ್ತಾಯಕ್ಕೆ ಮಣಿದು ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವ ಸುಳಿವನ್ನು ಜಂಟಿ ಹೇಳಿಕೆಯು ನೀಡಿದೆ ಎಂದಿದ್ದಾರೆ. ಭಾರತವು ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎನ್ನುವುದು ಬಹಿರಂಗಗೊಂಡಿರುವ ಮಾಹಿತಿಯಿಂದ ಸ್ಪಷ್ಟವಾಗಿದೆ. ಪ್ರತ್ಯೇಕವಾಗಿ ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲವನ್ನು ಖರೀದಿಸಿದರೆ ಶೇ.25ರಷ್ಟು ದಂಡಸುಂಕವನ್ನು ಮರುವಿಧಿಸಬಹುದು ಎಂದು ಅಮೆರಿಕ ಪ್ರಕಟಿಸಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ರಮೇಶ್,‌ ಜಂಟಿ ಹೇಳಿಕೆಯ ಪ್ರಕಾರ ಭಾರತವು ತನ್ನ ರೈತರ ಹಿತಾಸಕ್ತಿಗಳನ್ನು ಬಲಿಗೊಟ್ಟು ಅಮೆರಿಕದ ರೈತರಿಗೆ ನೆರವಾಗಲು ಆಮದು ಸುಂಕಗಳನ್ನು ಕಡಿತಗೊಳಿಸಲಿದೆ ಎಂದಿದ್ದಾರೆ. ‘ಅಮೆರಿಕದಿಂದ ಭಾರತದ ವಾರ್ಷಿಕ ಆಮದುಗಳು ಮೂರು ಪಟ್ಟು ಹೆಚ್ಚಾಗಲಿದ್ದು, ದೀರ್ಘಕಾಲದಿಂದ ನಾವು ಸರಕುಗಳ ರಫ್ತುಗಳಲ್ಲಿ ಹೊಂದಿದ್ದ ಮೇಲುಗೈಯನ್ನು ಕಳೆದುಕೊಳ್ಳಲಿದ್ದೇವೆ. ಅಮೆರಿಕಕ್ಕೆ ಐಟಿ ಮತ್ತು ಇತರ ಸೇವೆಗಳ ರಫ್ತುಗಳ ಕುರಿತ ಅನಿಶ್ಚಿತತೆ ಮುಂದುವರಿಯಲಿದೆ. ಭಾರತದ ಸರಕು ರಫ್ತುಗಳು ಅಮೆರಿಕದಲ್ಲಿ ಹಿಂದಿಗಿಂತಲೂ ಹೆಚ್ಚಿನ ಸುಂಕವನ್ನು ಎದುರಿಸಲಿವೆ’ ಎಂದು ಅವರು ಹೇಳಿದ್ದಾರೆ. ಮೋದಿಯವರನ್ನು ವ್ಯಂಗ್ಯವಾಡಿರುವ ಜೈರಾಮ್ ರಮೇಶ್‌ ಅವರು 1964ರ ಬಾಲಿವುಡ್ ಚಿತ್ರ ‘ಸಂಗಮ್’ನ ‘ದೋಸ್ತ್ ದೋಸ್ತ್ ನಾ ರಹಾ’ ಗೀತೆಯ ಸಾಲೊಂದನ್ನು ಉಲ್ಲೇಖಿಸಿದ್ದಾರೆ. ‘‘ಎಲ್ಲ ಆಲಿಂಗನಗಳು ಮತ್ತು ಫೋಟೊ ಅವಕಾಶಗಳು ಹೆಚ್ಚಿನ ಫಲವನ್ನು ನೀಡಿಲ್ಲ. ‘ಹೌಡಿ ಮೋದಿ’ ವಿರುದ್ಧ ‘ನಮಸ್ತೆ ಟ್ರಂಪ್’ಗೆದ್ದಿದೆ. ದೋಸ್ತ್ ದೋಸ್ತ್ ನಾ ರಹಾ’’ ಎಂದು ಅವರು ಬರೆದಿದ್ದಾರೆ.

ವಾರ್ತಾ ಭಾರತಿ 7 Feb 2026 9:10 pm

ಎರಡು ದಿನಗಳಿಂದ ಬಾರದ ಕುಡಿಯುವ ನೀರು: ಗ್ರಾಮಸ್ಥರಿಂದ ಐರೋಡಿ ಗ್ರಾಪಂಗೆ ಮುತ್ತಿಗೆ, ಪ್ರತಿಭಟನೆ

ಸಾಸ್ತಾನ, ಫೆ.7: ಕಳೆದ ಎರಡು ದಿನಗಳಿಂದ ನೀರು ಬಾರದ ಹಿನ್ನೆಲೆಯಲ್ಲಿ ಐರೋಡಿ ಗ್ರಾಪಂನ ಐರೋಡಿ ಎರಡನೇ ವಾರ್ಡ್‌ನ ಹೊಳೆಬದಿ ಗ್ರಾಮಸ್ಥರು ಶನಿವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪಂಚಾಯತ್‌ನ ಪಂಪ್ ಆಪರೇಟರ್ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದೆ ಇರುವುದರಿಂದ ಈ ಸಮಸ್ಯೆಗೆ ಉದ್ಭವಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಸದಸ್ಯ ಶಿವರಾಮ್ ಶ್ರೀಯಾನ್ ಮತ್ತು ನಟರಾಜ್ ಗಾಣಿಗ, ಪಂಪ್ ಅಪರೇಟರ್ ಸರಿಯಾಗಿ ಕೆಲಸ ಮಾಡದಿದ್ದರೂ ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ. ಆದರೂ ಸುಧಾರಿ ಸಿಲ್ಲ. ಈ ಕಾರಣಕ್ಕೆ ಸಾಮಾನ್ಯ ಸಭೆಯಲ್ಲಿ ಅವರನ್ನು ತೆಗೆದು ಹಾಕಿ ಬೇರೆ ಪಂಪ್ ಆಪರೇಟರ್ ನೇಮಿಸುವ ಬಗ್ಗೆ ನಿರ್ಣಯ ಕೈಗೊಳ್ಳ ಲಾಗಿದೆ. ಆದರೆ ಪಿಡಿಓ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಜಿಪಂ ಸಿಇಓ ಅವರಿಗೆ ದೂರು ನೀಡಲಾಗುವುದು ಎಂದರು. ‘ನಮ್ಮಲ್ಲಿ ಕುಡಿಯುವುದಕ್ಕೂ ನೀರಿಲ್ಲ. ಬಾವಿ ಇದ್ದರೆ ನಾವು ಪಂಚಾಯತ್ ನೀರಿಗೆ ಅವಲಂಭಿತರಾಗಬೇಕಾಗಿಲ್ಲ. ನಮ್ಮಲ್ಲಿ ಉಪ್ಪು ನೀರು ಬರುವುದರಿಂದ ಕುಡಿಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಪಂಚಾಯತ್ ನೀರನ್ನೇ ಅವಲಂಬಿ ಸಬೇಕಾಗಿದೆ. ಮಕ್ಕಳಿಗೆ ಕುಡಿಯುವುದಕ್ಕೆ ಒಂದು ತೊಟ್ಟು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ತಿಂಗಳೂ ಸರಿಯಾದ ಸಮಯಕ್ಕೆ ಬಂದು ಬಿಲ್ಲು ಸಂಗ್ರಹಿಸಲಾಗುತ್ತದೆ. ಆದರೆ ನೀರು ಸರಿಯಾಗಿ ಬರುತ್ತಿಲ್ಲ ಎಂದು ಸಂತ್ರಸ್ಥ ಮಹಿಳೆ ದೂರಿದರು. ಪಂಚಾಯತ್ ಕಾರ್ಯದರ್ಶಿ ವಿಜಯಕುಮಾರಿ ಮಾತನಾಡಿ, ಪಂಪ್ ಅಪರೇಟರ್‌ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಈಗ ಮತ್ತೆ 15 ದಿನ ಕೆಲಸಕ್ಕೆ ಬಂದು, ಮತ್ತೆ ಹದಿನೈದು ಗೈರು ಹಾಜಾರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿ ಮುಂದಿನ ಕ್ರಮ ಕೈಗೊಳ್ಳುವುದು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಬೇರೆ ಪಂಪ್ ಆಪರೇಟರ್ ಅವರನ್ನು ನೇಮಿಸಿಕೊಂಡು ಜನರಿಗೆ ಸರಿಯಾಗಿ ನೀರು ಸರಬರಾಜು ಮಾಡಲಾಗು ವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟು ವಾಪಾಸ್ಸು ತೆರಳಿದರು.

ವಾರ್ತಾ ಭಾರತಿ 7 Feb 2026 9:08 pm

ಭಾರತೀಯ ಜೈಲುಗಳಲ್ಲಿಯ ಶೇ.75.54 ಕೈದಿಗಳು ವಿಚಾರಣಾಧೀನರು: ವರದಿ

ಹೊಸದಿಲ್ಲಿ: ವಿಚಾರಣಾಧೀನ ಕೈದಿಗಳ ಪರಿಶೀಲನಾ ಸಮಿತಿಗಳ ಕಾರ್ಯ ನಿರ್ವಹಣೆ ಕುರಿತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ವರದಿಯು ಭಾರತೀಯ ಜೈಲುಗಳಲ್ಲಿಯ ಶೇ.75.54ರಷ್ಟು ಕೈದಿಗಳು ವಿಚಾರಣಾಧೀನರಾಗಿದ್ದಾರೆ ಎಂದು ಎತ್ತಿ ತೋರಿಸಿದೆ. ಬಿಹಾರ(ಶೇ.87),ನಾಗಾಲ್ಯಾಂಡ್(ಶೇ.86)ನಂತಹ ರಾಜ್ಯಗಳು ಹಾಗೂ ದಾದ್ರಾ ಮತ್ತು ನಗರ ಹವೇಲಿ (ಶೇ.100),ದಿಯು ಮತ್ತು ದಮನ್ (ಶೇ.100) ಹಾಗೂ ಜಮ್ಮುಕಾಶ್ಮೀರ (ಶೇ.96.7)ದಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳಿದ್ದು, ತಮಿಳುನಾಡು ಜೈಲುಗಳಲ್ಲಿ ಇಂತಹವರ ಸಂಖ್ಯೆ ಶೇ.68.69ರಷ್ಟಿದೆ ಎಂದು ವರದಿಯು ತಿಳಿಸಿದೆ. ಜೈಲು ಸುಧಾರಣೆಗಳ ಕುರಿತ ನ್ಯಾ.ಅಮಿತಾವ್ ರಾಯ್ ಸಮಿತಿಯು ತನ್ನ 2022ರ ವರದಿಯಲ್ಲಿ ಹೆಚ್ಚಿನ ಜೈಲುಗಳು ವಿಚಾರಣಾಧೀನ ಕೈದಿಗಳಿಂದ ತುಂಬಿವೆ ಮತ್ತು ಶಿಕ್ಷೆಗೊಳಗಾದವರಿಗೆ ಹೋಲಿಸಿದರೆ ಅವರ ಸಂಖ್ಯೆಯು ಅತ್ಯಂತ ಹೆಚ್ಚಾಗಿದೆ ಎಂದು ಎತ್ತಿ ತೋರಿಸಿತ್ತು. ಸಮಿತಿಯು ತನ್ನ ವರದಿಯಲ್ಲಿ ಜುಜುಬಿ ಅಪರಾಧಗಳು ಮತ್ತು ಐದು ವರ್ಷ ಅಥವಾ ಹೆಚ್ಚಿನ ಅವಧಿಯಿಂದ ಬಾಕಿಯುಳಿದಿರುವ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಒತ್ತು ನೀಡಿತ್ತು. ಉಚ್ಚ ನ್ಯಾಯಾಲಯಗಳು ಬಾಕಿಯುಳಿದಿರುವ ಪ್ರಕರಣಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ನಡೆಸುವಂತೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳ ನ್ಯಾಯಾಧೀಶರಿಗೆ ನಿರ್ದೇಶನ ನೀಡಬೇಕು ಎಂದೂ ಅದು ಶಿಫಾರಸು ಮಾಡಿತ್ತು.

ವಾರ್ತಾ ಭಾರತಿ 7 Feb 2026 9:08 pm

ಅಸಂಘಟಿತ ಕಾರ್ಮಿಕರ ಶೋಷಣೆ ತಡೆಯಲು ಕಾನೂನು: ನ್ಯಾ.ಎಂ.ಐ.ಅರುಣ್

ಉಡುಪಿ, ಫೆ.7: ದೇಶ ಅಭಿವೃದ್ಧಿಗೆ ಉದ್ಯಮಿಗಳು ಮಾತ್ರವಲ್ಲ ಕಾರ್ಮಿಕರು ಅದಕ್ಕಿಂತ ಹೆಚ್ಚಿನ ಕೊಡುಗೆ ನೀಡು ತ್ತಾರೆ. ಆದುದರಿಂದ ಅವರಿಗೆ ಪ್ರಾಮುಖ್ಯತೆ ನೀಡಬೇಕಾಗಿದೆ. ಹೆಚ್ಚು ಶೋಷಣೆ ಒಳಗಾಗುತ್ತಿರುವ ಅಸಂಘಟಿತ ಕಾರ್ಮಿಕರ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಕಾನೂನುಗಳನ್ನು ರೂಪಿಸಿದೆ ಎಂದು ಕರ್ನಾಟಕ ಹೈಕೋರ್ಟ್ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ.ಅರುಣ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಹಾಗೂ ಉಡುಪಿ ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಸ್ವದೇಶ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಅಸಂಘಟಿತ ಕಾರ್ಮಿಕರಾದ ಚಿನ್ನ-ಬೆಳ್ಳಿ ಆಭರಣ ತಯಾರಿಕಾ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಮತ್ತು ಯೋಜನೆಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಕಾನೂನುಗಳನ್ನು ರೂಪಿಸಿವೆ. ಸಮಾಜವು ಸಮಾತೋಲನದ ಬೆಳವಣಿಗೆ ಹೊಂದಬೇಕು ಮತ್ತು ಯಾರು ಕೂಡ ಶೋಷಿತರಾಗಬಾರದು ಹಾಗೂ ಪ್ರತಿಯೊಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವ ವಿಕನಸಗೊಳಿಸಬೇಕೆಂಬ ದೃಷ್ಟಿಯಿಂದ ಈ ಎಲ್ಲ ಕಾನೂನು ರಚನೆ ಮಾಡಲಾಗಿದೆ ಎಂದರು. ಕನಿಷ್ಠ ವೇತನ, ಬಾಲ ಕಾರ್ಮಿಕರ ಪದ್ಧತಿ, ಪಿಂಚಣಿ ಯೋಜನೆ, ಮೆಡಿಕಲ್ ವಿಮೆಗಳು ಸಂಬಂಧ ಇರುವ ಕಾನೂನು ಗಳನ್ನು ಅರಿತುಕೊಳ್ಳಬೇಕು ಮತ್ತು ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಟ ಮಾಡಬೇಕು. ರಾಜ್ಯದಲ್ಲಿ ಕರಾವಳಿ ಜನತೆ ಹೆಚ್ಚಿನ ಕಾನೂನು ಅರಿವು ಹೊಂದಿದ್ದಾರೆ ಎಂಬುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು. ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮ್ಮದ್ ಕಾನೂನು ಹಾಗೂ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಲ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಪ್ರಧಾನ ಕಾರ್ಯದರ್ಶಿ ರಘುನಾಥ ಆಚಾರ್ಯ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ. ಸ್ವಾಗತಿಸಿದರು. ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಕಾನೂನು ಸಲಹೆಗಾರ ಗಂಗಾಧರ ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ‘ಕಾನೂನು ಮೂಲಕ ಮಾತ್ರ ಸಾಮಾಜಿಕ ಸುಧಾರಣೆ ಮಾಡಲು ಸಾಧ್ಯ. ಕಾನೂನು ಪ್ರಕಾರ ಹಕ್ಕು ಬಾಧ್ಯತೆಗಳನ್ನು ಅರಿತುಕೊಂಡು ಜೀವನ ನಡೆಸುವುದು ಬಹಳ ಅವಶ್ಯಕ. ಕಾನೂನು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ’ -ನ್ಯಾ.ಎಂ.ಐ.ಅರುಣ್, ಕರ್ನಾಟಕ ಹೈಕೋರ್ಟ್

ವಾರ್ತಾ ಭಾರತಿ 7 Feb 2026 9:06 pm

ಕಲಬುರಗಿ | ಫೆ.10ರಂದು ಕಾಯಕ ಶರಣರ ಜಯಂತಿ ಆಚರಣೆ

ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಫೆಬ್ರವರಿ 10ರಂದು ಮಂಗಳವಾರ ಬೆಳಿಗ್ಗೆ 11.30 ಗಂಟೆಗೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಆಳಂದ ಶಾಸಕ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ, ಉತ್ತರ ಶಾಸಕಿಯೂ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆಯೂ ಆಗಿರುವ ಕನೀಜ್ ಫಾತೀಮಾ, ಜೇವರ್ಗಿ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ, ಸಾಗರ್ ಖಂಡ್ರೆ ಸೇರಿದಂತೆ ವಿವಿಧ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಡಿಐಜಿ ಶಾಂತನು ಸಿನ್ಹಾ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕಲಬುರಗಿ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಶ್ರೀ ಪ್ರಭುಶ್ರೀ ತಾಯಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 7 Feb 2026 9:04 pm

ಭಾರತದ ಆತ್ಮವಿಶ್ವಾಸಕ್ಕೆ ಅಮೆರಿಕ ಪೆಟ್ಟು; ಅಭಿಷೇಕ್, ಶಿವಂ ದುಬೆ ಗೋಲ್ಡನ್ ಡಕ್! ಮರ್ಯಾದೆ ಉಳಿಸಿದ SKY ಅರ್ಧಶತಕ

ಎರಡನೇ ಓವರ್ ನಲ್ಲೇ ಅಭಿಷೇಕ್ ಶರ್ಮಾ ಗೋಲ್ಡನ್ ಡಕ್! 6ನೇ ಓವರ್ ನಲ್ಲಿ ! 77 ರನ್ ಆಗುವಷ್ಟರಲ್ಲಿಯೇ 7 ವಿಕೆಟ್! - ಇದು ಅಮೆರಿಕದ ವಿರುದ್ಧ ನ ಮೊದಲ ಪಂದ್ಯವನ್ನಾಡುತ್ತಿರುವ ಭಾರತ ತಂಡದ ಪರಿಸ್ಥಿತಿ! ಚುಟುಕು ಕ್ರಿಕೆಟ್ ನಲ್ಲಿ ವಿಶ್ವದ ನಂಬರ್ 1 ತಂಡವಾಗಿರುವ ಹಾಲಿ ಚಾಂಪಿಯನ್ ಭಾರತಕ್ಕೆ ಅಮೆರಿಕ ಸುಲಭದ ತುತ್ತು ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಅಮೆರಿಕದ ಬೌಲರ್ ಗಳು ಭಾರತದ ಬ್ಯಾಟರ್ ಗಳನ್ನು ಗೋಳು ಹೊಯ್ದುಕೊಂಡ ಪರಿಗೆ ಇಡೀ ಜಗತ್ತೇ ನಿಬ್ಬೆರಗಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್ ಫೀಲ್ಡಿಂಗ್ ಆಯ್ದುಕೊಂಡಾಗ ಭಾರತ ರನ್ ಹೊಳೆ ಹರಿಸುವ ನಿರೀಕ್ಷೆ ಇತ್ತು. ಆದರೆ ನಡೆದದ್ದೇ ಬೇರೆ. ಒಬ್ಬರ ಹಿಂದೊಬ್ಬರು ಪೆವಿಲಿಯನ್ ಪೆರೇಡ್ ನಡೆಸುತ್ತಿದ್ದ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲಾ ನಿಬ್ಬೆರಗಾಗಿದ್ದರು. ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಔಟ್! ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ತಾನೆದುರಿಸಿದ ಮೊದಲ ಎಸೆತದಲ್ಲೇ ಔಟ್! ಮಧ್ಯಮ ವೇಗಿ ಅಲಿ ಖಾನ್ ಅವರೆಸೆದ 2ನೇ ಓವರ್ ನ ಮೊದಲ ಎಸೆತವನ್ನು ಸಿಕ್ಸರ್ ಗಟ್ಟುವ ಪ್ರಯತ್ನದಲ್ಲಿ ಅವರು ಬೌಂಡರಿ ರೇಖೆ ಬಳಿ ಕೃಷ್ಣ ಮೂರ್ತಿಗೆ ಕ್ಯಾಚಿತ್ತು ಔಟಾದರು. ಇದಾದ ಬಳಿಕ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್(20 ರನ್) , ತಿಲಕ್ ವರ್ಮಾ(25 ರನ್) ಮತ್ತು ಶಿವಂ ದುಬೆ(0) ಅವರನ್ನು ಶಾಡ್ಲಿ ವ್ಯಾನ್ ಶಾಲ್ಕ್ ವಿಕ್ ಅವರನ್ನು ಒಂದೇ ಓವರ್ ನಲ್ಲಿ ಪೆವಿಲಿಯನ್ ಗಟ್ಟುವಲ್ಲಿ ಯಶಸ್ವಿಯಾದರು. ಅಭಿಷೇಕ್ ಶರ್ಮಾ ಅವರ ಬಳಿಕ ಶಿವಂ ದುಬೆ ಅವರು ಪಂದ್ಯದ ಎರಡನೇ ಗೋಲ್ಡನ್ ಡಕ್ ಗೆ ಸಾಕ್ಷಿಯಾದರು. ನಂತರ ಬ್ಯಾಟಿಂಗ್ ಗೆ ಇಳಿದ ರಿಂಕು ಸಿಂಗ್(6 ರನ್), ಹಾರ್ದಿಕ್ ಪಾಂಡ್ಯ(5 ರನ್) ಸಹ ಎರಡಂಕಿಯ ಮೊತ್ತವನ್ನು ಗಳಿಸಲಾಗದೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಸೂರ್ಯಕುಮಾರ್ ಯಾದವ್ ಅವರು ಅಕ್ಷರ್ ಪಟೇಲ್(14 ರನ್) ಮತ್ತು ಉಳಿದ ಬಾಲಂಗೋಚಿಗಳೊಂದಿಗೆ ಸೇರಿ ನಾಯಕನ ಆಟ ಪ್ರದರ್ಶಿಸಿದರು. ಹೀಗಾಗಿ 20 ಓವರ್ ಗಳು ಮುಗಿದಾಗ 9 ವಿಕೆಟ್ ನಷ್ಟಕ್ಕೆ 161 ರನ್ ಗಳ ಗೌರವಯುತ ಮೊತ್ತವನ್ನು ಪೇರಿಸಿತು. ಸೂರ್ಯಕುಮಾರ್ ಯಾದವ್ ಅವರು 49 ಎಸತೆಗಳಿಂದ 10 ಬೌಂಡರಿ ಮತ್ತು 4 ಸಿಕ್ಸರ್ ಗಳಿದ್ದ 84 ರನ್ ಗಳಿಸಿ ಅಜೇಯರಾಗಿ ಉಳಿದರು. ಸಂಕ್ಷಿಪ್ತ ಸ್ಕೋರ್ ಭಾರತ 20 ಓವರ್ ಗಳಲ್ಲಿ 161/9, ಸೂರ್ಯಕುಮಾರ್ ಯಾದವ್ ಅಜೇಯ 84(49), ತಿಲಕ್ ವರ್ಮಾ 25(16), ಇಶಾನ್ ಕಿಶನ್ 20(16), ಶಾಡ್ಲಿ ವ್ಯಾನ್ ಶಾಲ್ಕ್ ವಿಕ್ 25ಕ್ಕೆ 4, ಹರ್ಮಿತ್ ಸಿಂಗ್ 26ಕ್ಕೆ 2, ಅಲಿ ಖಾನ್ 13ಕ್ಕೆ 1, ಮೊಹಮ್ಮದ್ ಮೊಹ್ಸಿನ್ 16ಕ್ಕೆ 1

ವಿಜಯ ಕರ್ನಾಟಕ 7 Feb 2026 9:01 pm

ದೇಶ ನಂಬರ್–1 ಆಗಲು ವಿದ್ಯಾರ್ಥಿಗಳ ಪಾತ್ರ ಪ್ರಮುಖ: ಸ್ಪೀಕರ್ ಯು.ಟಿ. ಖಾದರ್

ಹಿಲ್‌ಫೋರ್ಡ್ ಸ್ಕೂಲ್‌ ಉದ್ಘಾಟನಾ ಸಮಾರಂಭ

ವಾರ್ತಾ ಭಾರತಿ 7 Feb 2026 9:00 pm

ಚಿತ್ತಾಪುರ |ಮೊಬೈಲ್‌ಗೆ ಮಾರು ಹೋಗಬೇಡಿ, ಓದಿಗೆ ಪ್ರಾಮುಖ್ಯತೆ ನೀಡಿ: ಶಶಿಧರ ಬಿರಾದಾರ

ಚಿತ್ತಾಪುರ: ಓದುವ ಸಮಯದಲ್ಲಿ ಓದಿಗೆ ಗಮನಹರಿಸಿ, ಮೊಬೈಲ್‌ಗಳಿಗೆ ಮಾರು ಹೋಗಬೇಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಟ್ಟಣದ ಬಜಾಜ್ ಕಾಂಪ್ಲೇಕ್ಸ್‌ನ ಕೆಳಮಹಡಿಯ ಮಿನಿ ಕಲ್ಯಾಣ ಮಂಟಪದಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಚಿತ್ತಾಪುರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಭಯ ನಿವಾರಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂದೆ-ತಾಯಿಗಳು ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎಂಬ ಆಶಯದಿಂದ ಕಷ್ಟಪಟ್ಟು ಶಾಲೆಗೆ ಕಳುಹಿಸುತ್ತಾರೆ. ಅವರ ಕನಸುಗಳನ್ನು ನನಸು ಮಾಡುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಹೇಳಿದರು. ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧರಾಗಿ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕು. ಪರೀಕ್ಷೆ ಎಂದರೆ ಭಯಪಡಬಾರದು. ಕಳೆದ ಬಾರಿ ತಾಲೂಕಿನಲ್ಲಿ ಎಸೆಸೆಲ್ಸಿ ಫಲಿತಾಂಶ ಕಡಿಮೆ ಬಂದಿರುವುದರಿಂದ ಈ ಬಾರಿ ಜಿಲ್ಲೆಯಲ್ಲಿಯೇ ತಾಲೂಕಿಗೆ ಪ್ರಥಮ ಸ್ಥಾನ ತರುವ ಸಂಕಲ್ಪ ಮಾಡಬೇಕು ಎಂದು ಪ್ರೇರೇಪಿಸಿದರು. ಪಿಎಸ್‌ಐ ಮಂಜುನಾಥ ರೆಡ್ಡಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಓದುವ ಹವ್ಯಾಸ ಅತ್ಯಗತ್ಯ. ಈಗಿನ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಅಂಕ ಗಳಿಸಬೇಕು ಎಂದರು. ಕಾರ್ಯಾಗಾರದಲ್ಲಿ ಕಲಬುರಗಿಯ ಕ್ಷಣ ತಜ್ಞ ಕೆ.ಎಂ. ವಿಶ್ವನಾಥ ಮರತೂರ, ಇಂಗಳಗಿಯ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಬಸಪ್ಪ ಮುಗಳಖೋಡ, ರಾವೂರಿನ ಕೆ.ಪಿ.ಎಸ್ ಶಾಲೆಯ ಸಹ ಶಿಕ್ಷಕ ಉದಯಕುಮಾರ್ ಇಂಗಳೆ, ಔರಾದ ಬಿ.ಕೆ.ಪಿ.ಎಸ್ ಶಾಲೆಯ ಸಹ ಶಿಕ್ಷಕ ರಾಜೇಶ ನಾಗೂರೆ ಉಪನ್ಯಾಸ ನೀಡಿದರು. ಪರಿಷತ್ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ಕಾಶಿರಾಯ ಕಲಾಲ್, ಮಲ್ಲಪ್ಪ ಚನ್ನಮಲ್ಲಪ್ಪ, ಪ್ರಕಾಶ ಪಾಟೀಲ್, ರಮೇಶ ಬಟಗೇರಿ, ಹಾಸ್ಯ ಕಲಾವಿದ ರಾಚಯ್ಯಸ್ವಾಮಿ ಖಾನಾಪೂರ, ನಿವೃತ್ತ ಶಿಕ್ಷಕ ದೇವಪ್ಪ ನಂದೂರಕರ್, ಶಾಂತಕುಮಾರ ಮಳಖೇಡ, ರವಿಶಂಕರ್ ಬುರ್ಲಿ, ಎಂ.ಡಿ. ಮಶಾಖ ಸೇರಿದಂತೆ ಅನೇಕ ಮುಖಂಡರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು. ನರಸಪ್ಪ ಚಿನಕಟ್ಟಿ ನಿರೂಪಿಸಿ ವಂದಿಸಿದರು.

ವಾರ್ತಾ ಭಾರತಿ 7 Feb 2026 8:59 pm

ಕಲಬುರಗಿ | ಕಾರಾಗೃಹದ ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ: ಹೊರವಲಯದ ಹೊನ್ನಕಿರಣಗಿ ಆಸ್ಪತ್ರೆ ವತಿಯಿಂದ ಕಲಬುರಗಿ ಕೇಂದ್ರ ಕಾರಾಗೃಹದ ಬಂದಿ ನಿವಾಸಿಗಳಿಗೆ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಶಿಬಿರದಲ್ಲಿ ಕಾರಾಗೃಹದ ಬಂದಿಗಳಿಗೆ ಚರ್ಮ ರೋಗ, ಬಿ.ಪಿ, ಶುಗರ್ ಹಾಗೂ ಮತ್ತಿತರ ಸಾಮಾನ್ಯ ರೋಗಗಳಿಗೆ ಸೇರಿದಂತೆ ಸುಮಾರು 80 ಜನ ಬಂದಿಗಳಿಗೆ ಹೊನ್ನಕಿರಣಿಗಿ ಆಸ್ಪತ್ರೆಯಿಂದ ಡಾ.ಗೀತಾ ಹಾಗೂ ಅವರ ತಂಡದ ಸಿಬ್ಬಂದಿಗಳಿಂದ ಚಿಕಿತ್ಸೆಯನ್ನು ಕೊಡಿಸಿ, ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ಈ ಶಿಬಿರದಲ್ಲಿ ಅಧೀಕ್ಷಕ ರಾಕೇಶ್ ಕಾಂಬಳೆ, ಸಹಾಯಕ ಅಧೀಕ್ಷಕ ಬಿ. ಸುರೇಶ್ ಮತ್ತು ಚನ್ನಪ್ಪ ಯಟಗಲ್, ಕಾರಾಗೃಹದ ವೈದ್ಯಾಧಿಕಾರಿ ಡಾ.ಆನಂದ ಅಡಕಿ, ಡಾ.ರವಿಂದ್ರ ಬನ್ನೇರ, ಸಂಸ್ಥೆಯ ಜೈಲರ್‍ಗಳಾದ ಸುನಂದ, ಸಾಗರ ಪಾಟೀಲ, ಪುಂಡಲಿಕ ಟಿ.ಕೆ, ಶಾಮ ಬಿದ್ರಿ, ಸಹಾಯಕ ಜೈಲರ್ ರಾಮು ಎಲ್. ರಾಠೋಡ್, ಶಿಕ್ಷಕ ನಾಗರಾಜ ಮುಲಗೆ ಸೇರಿದಂತೆ ಕಾರಾಗೃಹದ ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 8:56 pm

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿ ಮಾಡಿದ ಎಂ.ಬಿ.ಪಾಟೀಲ್‌; ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ

ಬೆಂಗಳೂರು : ರಾಜ್ಯ ರಾಜಧಾನಿಯಿಂದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಮತ್ತು ಬೆಂಗಳೂರು-ವಿಜಯಪುರ ನಡುವೆ ದಿನವಹಿ ವಿಶೇಷ ರೈಲುಗಳನ್ನು ಮಂಜೂರು ಮಾಡಬೇಕೆಂದು ಕೋರಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಶನಿವಾರ ಇಲ್ಲಿ ಖುದ್ದಾಗಿ ಮನವಿ ಸಲ್ಲಿಸಿದ್ದಾರೆ. ಬಾಗಲೂರಿನ ಹೈಟೆಕ್ ಹಾರ್ಡ್ ವೇರ್ ಪಾರ್ಕ್ ನಲ್ಲಿ ಜೆಟ್ ವೆರ್ಕ್ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನೆಗೆ ಚಾಲನೆ ನೀಡಿದ ಬಳಿಕ ಅಲ್ಲೇ ಕೆಲಹೊತ್ತು ವೈಷ್ಣವ್ ಅವರನ್ನು ಸಚಿವರು ಭೇಟಿ ಮಾಡಿ, ಮನವಿ ಪತ್ರಗಳನ್ನು ಕೊಟ್ಟರು. ಈ ಮನವಿಗಳನ್ನು ತಾವು ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ. ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾಗಿದ್ದು, ಮುಂಬಯಿ ಆರ್ಥಿಕ ರಾಜಧಾನಿ ಆಗಿದೆ. ಇವೆರಡೂ ನಗರಗಳನ್ನು ಅತ್ಯುತ್ತಮ ಸಂಪರ್ಕ ವ್ಯವಸ್ಥೆಯಿಂದ ಬೆಸೆಯುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಈಗ ಮುಂಬೈ-ಪುಣೆ ನಡುವೆ ಘೋಷಿಸಿರುವ ಹೈಸ್ಪೀಡ್ ರೈಲು ಕಾರಿಡಾರನ್ನು ಬೆಂಗಳೂರಿನ ತನಕ ವಿಸ್ತರಿಸಬೇಕು ಎಂದು ಅವರು ಈ‌ ಸಂದರ್ಭದಲ್ಲಿ ಮನವಿ ಮಾಡಿದರು.  ಬೆಂಗಳೂರು-ವಿಜಯಪುರ ನಡುವೆ 530 ಕಿ.ಮೀ. ದೂರವಿದ್ದು, ರೈಲು ಪ್ರಯಾಣಕ್ಕೆ 15-16 ಗಂಟೆ ಹಿಡಿಯುತ್ತಿದೆ. ಇದನ್ನು 10 ಗಂಟೆಗೆ ಇಳಿಸಬೇಕು. ಇದಕ್ಕಾಗಿ ಬೆಂಗಳೂರು-ಹುಬ್ಬಳ್ಳಿ ನಡುವೆ ನಿಯಮಿತ ನಿಲುಗಡೆಗಳನ್ನು ಮಾತ್ರ ಕೊಟ್ಟು, ರೈಲುಗಳನ್ನು ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಓಡಿಸಬೇಕು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎಂದೂ ಸಚಿವರು ಮನವಿ ಸಲ್ಲಿಸಿದರು. ಇದೇ ರೀತಿಯಲ್ಲಿ ದಿನವಹಿ ಆಧಾರದ ಮೇಲೆ ಇದೇ ಮಾರ್ಗದಲ್ಲಿ ವಿಶೇಷ ರೈಲನ್ನು ಓಡಿಸಬೇಕು. ಈ ಮೂರೂ ಬಗೆಯ ಸೇವೆಗಳಿಂದ ಮಧ್ಯ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಾಮಾಜಿಕ, ಕೈಗಾರಿಕಾ ಮತ್ತು ಆರ್ಥಿಕ ಲಾಭವಾಗಲಿದೆ ಎಂದು ಅವರು ಮನವಿ ಪತ್ರದಲ್ಲಿ ಹೇಳಿದ್ದಾರೆ. ಮೂರೂ ಮನವಿಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪಾಟೀಲ್‌ ತಿಳಿಸಿದರು. ಈ ಭೇಟಿ ಸಂದರ್ಭದಲ್ಲಿ ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಸೇರಿದಂತೆ ಇತರ ಹಿರಿಯ ರೈಲ್ವೆ ಅಧಿಕಾರಿಗಳು ಇದ್ದರು.

ವಾರ್ತಾ ಭಾರತಿ 7 Feb 2026 8:54 pm

T20 ವಿಶ್ವಕಪ್ | ಬಿಗಿ ಬೌಲಿಂಗ್‌ ದಾಳಿ: ಭಾರತವನ್ನು 161 ರನ್‌ ಗೆ ಕಟ್ಟಿ ಹಾಕಿದ USA

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ T20 ವಿಶ್ವ ಕಪ್ ನ ಭಾರತದ ವಿರುದ್ಧದ ಪಂದ್ಯದಲ್ಲಿ USA ತಂಡವು, ಭಾರತ ತಂಡವನ್ನು 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಗೆ ಕಟ್ಟಿ ಹಾಕಿತು. ನಾಯಕ ಸೂರ್ಯ ಕುಮಾರ್‌ ಯಾದವ್‌ (84) ಅವರ ಏಕಾಂಗಿ ಹೋರಾಟದಿಂದ 160 ರ ಗಡಿ ದಾಟಿತು.

ವಾರ್ತಾ ಭಾರತಿ 7 Feb 2026 8:52 pm

ಸಂಶೋಧನೆಯ ಜ್ಞಾನ ಸೃಜನಶೀಲೆಯತ್ತ ಮುನ್ನಡೆಸಬೇಕು: ಡಾ.ಸುನಿಲ್

ನಿಟ್ಟೆಯಲ್ಲಿ ಉದ್ಘಾಟನೆಗೊಂಡ ಐಸಿಇಟಿಇ -2026

ವಾರ್ತಾ ಭಾರತಿ 7 Feb 2026 8:44 pm

ಚಿತ್ತಾಪುರ | ರಮಾಬಾಯಿ ಅಂಬೇಡ್ಕರ್ ಜಯಂತಿ ಆಚರಣೆ

ಚಿತ್ತಾಪುರ: ಪಟ್ಟಣದ ಬುದ್ಧ ವಿಹಾರದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ 126ನೇ ಹುಟ್ಟುಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಕಾಂತ ಶಿಂಧೆ ಅವರು ರಮಾಬಾಯಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುಡಬೂಳಕರ್, ಸಾಬಣ್ಣ ಹಲಗಿ, ರಾಜು ಬೊಳಕರ್, ಬಸವರಾಜ ಮುಡಬೂಳಕರ್, ಕುಶಾಲ್ ನಾಟಿಕಾರ್, ಶಿವಕುಮಾರ ಆರಬೊಳ, ಶಿವಕುಮಾರ್ ಯಾದಗೀರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 8:43 pm

ಭರತ್‌ರಾಜ್ ಎಸ್. ನೇಜಾರ್‌ಗೆ ಪಿಎಚ್‌ಡಿ ಪದವಿ

ಉಡುಪಿ, ಫೆ.7: ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜಿನಲ್ಲಿ ಪ್ರಸ್ತುತ ವಿಭಾಗದ ಮುಖ್ಯಸ್ಥರಾಗಿ ಮತ್ತು ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಭರತ್‌ರಾಜ್ ಎಸ್. ನೇಜಾರ್ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪಡೆದಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ರಾಗಿರುವ ಡಾ.ಬಿ.ಜಯರಾಮ ಭಟ್ ಅವರ ಮಾರ್ಗದರ್ಶನದಲ್ಲಿ ‘ಗ್ರಾಮೀಣ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ - ಉಡುಪಿ ಜಿಲ್ಲೆಯಲ್ಲಿ ಒಂದು ಅಧ್ಯಯನ’ ಎಂಬ ವಿಷಯದ ಮೇಲಿನ ಮಹಾಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ. ಉಡುಪಿ ಜಿಲ್ಲೆಯ ವಿಶೇಷ ಉಲ್ಲೇಖದೊಂದಿಗೆ ಗ್ರಾಮೀಣ ರಸ್ತೆಯಂಥ ಮೂಲ ಸೌಕರ್ಯವು ಗ್ರಾಮೀಣ ಪ್ರದೇಶ ಗಳಲ್ಲಿ ಆರ್ಥಿಕ ಬೆಳವಣಿಗೆ, ಉದ್ಯೋಗಸೃಷ್ಟಿ, ಮಾರುಕಟ್ಟೆ ಪ್ರವೇಶ ಮತ್ತು ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡುತ್ತದೆ ಎಂಬುದರ ಕುರಿತು ಆಳವಾದ ವಿಶ್ಲೇಷಣೆಯನ್ನು ಸಂಶೋಧನೆಯು ಒದಗಿಸುತ್ತದೆ. ಡಾ. ಭರತ್‌ರಾಜ್ ಎಸ್. ನೇಜಾರ್ ಅವರು ಬ್ರಹ್ಮಾವರ ಹಾರಾಡಿ ಗ್ರಾಮದ ದಿ.ಸದಾನಂದ ಹಾಗೂ ಉಷಾ ದಂಪತಿ ಪುತ್ರರಾಗಿದ್ದಾರೆ. ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳ ಜೊತೆಗೆ, ಅವರು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ವಾರ್ತಾ ಭಾರತಿ 7 Feb 2026 8:43 pm

ಪುತ್ತೂರು ಮಧ್ವಮೂರ್ತಿ

ಉಡುಪಿ: ಉಡುಪಿ ಪುತ್ತೂರಿನ ಉದ್ಯಮಿ ಮಧ್ವಮೂರ್ತಿ ಆಚಾರ್ಯ(62) ಶುಕ್ರವಾರ ರಸ್ತೆ ಅವಘಡದಲ್ಲಿ ನಿಧನ ರಾದರು.ಅವಿವಾಹಿತ ರಾಗಿದ್ದ ಇವರು ತಾಯಿ, ಸಹೋದರ, ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ನಿಟ್ಟೂರು ಪ್ರೌಢಶಾಲೆಯ ಹಳೆವಿದ್ಯಾರ್ಥಿಯಾಗಿ ಮಧ್ವಮೂರ್ತಿ ಆಚಾರ್ಯರು ಎಳವೆಯಲ್ಲೇ ಮರದಿಂದ ಬಿದ್ದು ಬೆನ್ನುಹುರಿಯ ವೈಕಲ್ಯದಿಂದ ನಡೆಯಲಾಗದಿದ್ದರೂ, ತಂದೆ ಪಿ.ಎಂ.ರಾಮಕೃಷ್ಣ್ಣ ಆಚಾರ್ಯ ಸ್ಥಾಪಿಸಿದ ಅಕ್ಕಿಗಿರಣಿ ಯನ್ನು ತಮ್ಮ ರಾಘವೇಂದ್ರ ಆಚಾರ್ಯ ರೊಂದಿಗೆ ಸೇರಿ ಮುನ್ನಡೆಸಿ ಪ್ರತಿಷ್ಠಿತ ಉದ್ಯಮಿಯಾಗಿ ಸಾಧನೆ ಮಾಡಿದ್ದರು. ಕಲಾಪ್ರೇಮಿಯಾಗಿದ್ದ ಇವರು ಯಕ್ಷಗಾನ ಕಲಾರಂಗದ ಪೋಷಕ ಸದಸ್ಯ ರಾಗಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.

ವಾರ್ತಾ ಭಾರತಿ 7 Feb 2026 8:41 pm

ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಲ್ಮಾನ್ ಖಾನ್

ಮುಂಬೈ: ಮುಂಬೈನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಭಾಗವಾಗಿ ಆಯೋಜನೆಗೊಂಡಿರುವ 'ಸಂಘದ 100 ವರ್ಷಗಳ ಪಯಣ: ಹೊಸ ದಿಕ್ಕುಗಳು' ಎಂಬ ವಿಷಯದ ಕುರಿತು ಹಮ್ಮಿಕೊಂಡಿರುವ ಸರಣಿ ಉಪನ್ಯಾಸ ಕಾರ್ಯಕ್ರಮವಾದ ಮುಂಬೈ ವ್ಯಾಖ್ಯಾನಮಾಲಾದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ಸಂಘಟನೆಯ ಪಯಣ, ಸಮಾಜದಲ್ಲಿ ಅದರ ಪಾತ್ರ ಅದರ ಭವಿಷ್ಯವನ್ನು ರೂಪಿಸಿದ ಯೋಜನೆಗಳು ಹಾಗೂ ಮುನ್ನೋಟಗಳನ್ನು ಪ್ರತಿಫಲಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೆಸ್ಸೆಸ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದೆ. ಫೆಬ್ರವರಿ 7 ಹಾಗೂ 8ರಂದು ನೆಹರೂ ಸೆಂಟರ್ ಆಡಿಟೋರಿಯಂನಲ್ಲಿ ಮುಂಬೈ ವ್ಯಾಖ್ಯಾನಮಾಲಾ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಾರ್ತಾ ಭಾರತಿ 7 Feb 2026 8:39 pm

ಹಂಪಿ ಉತ್ಸವ 2026: ವೈಭವದ ಸಂಭ್ರಮಕ್ಕೆ ಸಕಲ ಸಿದ್ಧತೆ

ವಿಜಯನಗರ / ಹಂಪಿ : ವಿಶ್ವಪ್ರಸಿದ್ಧ ಹಂಪಿ ಉತ್ಸವ–2026ರ ಅಂಗವಾಗಿ ಫೆ.7ರಿಂದ 15ರವರೆಗೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ ಹಾಗೂ ಪ್ರದರ್ಶನ ಕಾರ್ಯಕ್ರಮಗಳು ಹಂಪಿ ಹಾಗೂ ಹೊಸಪೇಟೆ ಭಾಗಗಳಲ್ಲಿ ನಡೆಯಲಿವೆ. ಫೆ.7ರಿಂದ 9ರವರೆಗೆ ಬೆಳಗ್ಗೆ 10 ಗಂಟೆಯಿಂದ ಶಿಲ್ಪಕಲಾ ಶಿಬಿರ ಮತ್ತು ಫೆ.9ರಂದು ಸಂಜೆ 5 ಗಂಟೆಗೆ ಚಿತ್ರಕಲಾ ಶಿಬಿರ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ನಡೆಯಲಿದೆ. ಫೆ.10ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಹೊಸಪೇಟೆಯಿಂದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ಫೆ.11ರಂದು ಸಂಜೆ 6 ಗಂಟೆಗೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಹತ್ತಿರ ತುಂಗಾ ನದಿ ತಟದಲ್ಲಿ ತುಂಗಾ ಆರತಿ ಮಹೋತ್ಸವ ಜರುಗಲಿದೆ. ಫೆ.12ರಂದು ಬೆಳಗ್ಗೆ 10 ಗಂಟೆಗೆ ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ “ಹಂಪಿ ಬೈ ಸ್ಕೈ” ಕಾರ್ಯಕ್ರಮ ನಡೆಯಲಿದೆ.  ಫೆ.13ರಂದು ಬೆಳಗ್ಗೆ 10 ಗಂಟೆಯಿಂದ ಎತ್ತುಗಳ ಪ್ರದರ್ಶನ (ಹಂಪಿ ಪ್ರಾಧಿಕಾರ ಕಚೇರಿ ಹಿಂಭಾಗ, ಕಮಲಾಪುರ), ರಂಗೋಲಿ ಸ್ಪರ್ಧೆ (ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗ), ಫಲ–ಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಕೃಷಿ–ಕರಕುಶಲ–ಕೈಗಾರಿಕೆ ಹಾಗೂ ಪುಸ್ತಕ ಪ್ರದರ್ಶನ (ಮಾತಂಗ ಪರ್ವತ ಮೈದಾನ) ನಡೆಯಲಿವೆ. ಬೆಳಗ್ಗೆ 10.30ಕ್ಕೆ ಹಂಪಿ ಇತಿಹಾಸ ಕುರಿತ ವಿಚಾರ ಸಂಕೀರ್ಣ ಹಾಗೂ 11.30ಕ್ಕೆ ಆಹಾರ ಮೇಳ ಆಯೋಜಿಸಲಾಗಿದೆ. ಅದೇ ದಿನ ಸಂಜೆ 6 ಗಂಟೆಗೆ ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಮುಖ್ಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಘನ ಉಪಸ್ಥಿತಿ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಸಚಿವರಾದ ಝಮೀರ್ ಅಹ್ಮದ್ ಖಾನ್,  ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ತಂಗಡಗಿ ಶಿವರಾಜ್ ಸಂಗಪ್ಪ ಹಾಗೂ ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ಸವದ ಅಂಗವಾಗಿ ಫೆ.13ರಿಂದ 15ರವರೆಗೆ ಎಂ.ಪಿ. ಪ್ರಕಾಶ್ ವೇದಿಕೆ, ಶ್ರೀ ಕೃಷ್ಣದೇವರಾಯ ವೇದಿಕೆ ಹಾಗೂ ಶ್ರೀ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಖ್ಯಾತ ಸಿನಿ ತಾರೆಯರು ಹಾಗೂ ಗಾಯಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಚಿತಾ ರಾಮ್, ಧ್ರುವಸರ್ಜಾ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. ವಿಜಯ್ ಪ್ರಕಾಶ್, ಹರಿಹರನ್, ನವೀನ್ ಸಜ್ಜು, ಅರ್ಜುನ್ ಜನ್ಯ, ರಘು ದೀಕ್ಷಿತ್ ಸೇರಿದಂತೆ ಗಣ್ಯ ಗಾಯಕರು ತಮ್ಮ ತಂಡಗಳೊಂದಿಗೆ ರಂಗೇರಿಸಲಿದ್ದಾರೆ. ಇದೇ ವೇಳೆ, ದಾವಣಗೆರೆ ಜಿಲ್ಲೆಯ ಎಲ್‌ಐಸಿ ಸಂಸ್ಥೆಯ ಉದ್ಯಮಿಗಳು ಹಂಪಿ ಪ್ರವಾಸದ ವೇಳೆ ಉತ್ಸವಕ್ಕೆ ನಡೆಯುತ್ತಿರುವ ಸಕಲ ಸಿದ್ಧತೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 7 Feb 2026 8:38 pm

ಔರಾದ್ | ಮಕ್ಕಳಲ್ಲಿ ಮಾನವೀಯ ಮೌಲ್ಯ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ: ಗುರುಬಸವ ಪಟ್ಟದೇವರು

ಔರಾದ್ : ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಹೇಳಿದರು. ತಾಲೂಕಿನ ಸಂತಪೂರ ಗ್ರಾಮದ ಅನುಭವ ಮಂಟಪ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ಅನುಭವ ಮಂಟಪ ಶಾಲೆ ಪ್ರತಿ ವರ್ಷ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ, ಶಿಕ್ಷಣಕ್ಕೆ ಅಪಾರ ಶಕ್ತಿ ಇದೆ. ಶ್ರೀಗಳ ಆಶ್ರಯದಲ್ಲಿ ಸುಮಾರು 25 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಡಾ. ಬಸವಲಿಂಗ ಪಟ್ಟದೇವರು ಶಿಕ್ಷಣ ಪ್ರಜ್ಞೆಯಿಂದ ಬಡ ಹಾಗೂ ಅನಾಥ ಮಕ್ಕಳು ಉನ್ನತ ಹುದ್ದೆಗಳಿಗೆ ತಲುಪುತ್ತಿದ್ದಾರೆ ಎಂದು ತಿಳಿಸಿದರು. ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧ‌ರ್ ಕೋಸಂಬೆ, ತಹಸೀಲ್ದಾರ್ ಮಹೇಶ್ ಪಾಟೀಲ್, ತಾಪಂ ಇಒ ಕಿರಣ್ ಪಾಟೀಲ್, ಆಡಳಿತಾಧಿಕಾರಿ ಮೋಹನ್ ರೆಡ್ಡಿ, ತಾಪಂ ಎಡಿ ಶಿವಕುಮಾರ್ ಘಾಟೆ, ರಾಮಶೆಟ್ಟಿ ಪನ್ನಾಳೆ, ಶಶಿಕಾಂತ್ ಬಿಡುವೆ, ಡಾ. ಸಂಜೀವಕುಮಾರ್ ಜುಮ್ಮಾ, ಸೂರ್ಯಕಾಂತ್ ಅಲ್ಮಾಜೆ, ಜ್ಯೋತಿ ಅಲ್ಮಾಜೆ, ಶಿವಾನಂದ್ ಮೊಕ್ತೆದಾರ್, ಗುಂಡಪ್ಪ ಬೆಲ್ಲೆ ಹಾಗೂ ಗುರುಪ್ರೀತ್ ಕೌರ್ ಇದ್ದರು.

ವಾರ್ತಾ ಭಾರತಿ 7 Feb 2026 8:29 pm

Epstein files | ಅನಿಲ್ ಅಂಬಾನಿಗೆ ಸ್ವೀಡಿಷ್ ಯುವತಿಯ ಆಫರ್ ನೀಡಿದ್ದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್

ಇಬ್ಬರ ನಡುವಿನ ಸಂಭಾಷಣೆಯಲ್ಲಿ ಏನಿತ್ತು?

ವಾರ್ತಾ ಭಾರತಿ 7 Feb 2026 8:26 pm

ಮಾಸ್ಟರ್ ಪ್ಲಾನ್ ಪ್ರದೇಶದಲ್ಲಿ ಪ್ರತ್ಯೇಕ ಭೂ ಪರಿವರ್ತನೆಯ ಅಗತ್ಯ ಇಲ್ಲ : ಕೃಷ್ಣ ಬೈರೇಗೌಡ

ಬೆಂಗಳೂರು : ಮಾಸ್ಟರ್ ಪ್ಲಾನ್ (CDP) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವನ್ನು ಸರಕಾರ ಇದೀಗ ತೆಗೆದುಹಾಕಿದೆ. ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನೆ ಅನುಮೋದನೆ ಪಡೆಯಬಹುದು. ಯೋಜನಾ ಅನುಮೋದನೆಯ ಭಾಗವಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಶನಿವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಬಿಎ ವ್ಯಾಪ್ತಿಯ ಭೂಮಿ ಸ್ವಯಂ ಪರಿವರ್ತನೆ(Land auto conversion) ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾಸ್ಟರ್ ಪ್ಲಾನ್ ಪ್ರಕಾರ, ಲಕ್ಷಾಂತರ ಜಿಬಿಎ ‘ಬಿ ಖಾತಾ’ ನಿವೇಶನ ಮಾಲಕರಿಗೆ ಪ್ರಯೋಜನವಾಗುವಂತೆ ‘ಬಿ ಖಾತಾ’ದಿಂದ ‘ಎ ಖಾತಾ’ಗೆ ಪರಿವರ್ತನೆ ಸಕ್ರಿಯಗೊಳಿಸಲಾಗಿದೆ ಎಂದು ಹೇಳಿದರು. ಜಿಬಿಎ ವ್ಯಾಪ್ತಿಯ ಭೂಮಿ ಸ್ವಯಂ ಪರಿವರ್ತನೆ ‘ಈವರೆಗೆ, ಮಾಸ್ಟರ್ ಪ್ಲಾನ್ ಒಳಗೆ ಬರುವ ಪ್ರದೇಶಗಳಲ್ಲಿಯೂ ಸಹ ಭೂಮಿಯನ್ನು ಪರಿವರ್ತಿಸುವುದು ಅಗತ್ಯವಾಗಿತ್ತು. 'ಡೀಮ್ಡ್ ಕನ್ವರ್ಷನ್' ಹೊರತಾಗಿಯೂ, ಈ ಪ್ರಕ್ರಿಯೆ ಕನಿಷ್ಟ 4-6 ತಿಂಗಳು ಸಮಯ ತೆಗೆದುಕೊಳ್ಳುತ್ತಿತ್ತು. ಅಲ್ಲದೆ, ಮಧ್ಯವರ್ತಿಗಳು ಡೆವಲಪರ್ಗಳನ್ನು ಶೋಷಿಸಲು ಅವಕಾಶ ನೀಡುತ್ತಿತ್ತು ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ವಿಳಂಬ, ಕಿರುಕುಳ, ಭ್ರಷ್ಟಾಚಾರ ಮತ್ತು ವೆಚ್ಚ ಹೆಚ್ಚಳವು ಅಂತಿಮವಾಗಿ ನಿವೇಶನ-ಖರೀದಿದಾರರಾದ ಸಾಮಾನ್ಯ ಜನರ ಮೇಲೆ ಹೊರೆಯಾಗುತ್ತಿತ್ತು. ಇಂತಹ ಬೆಳವಣಿಗೆಗಳು ಸರಕಾರ ಮತ್ತು ಕಂದಾಯ ಇಲಾಖೆಯ ಅಪಖ್ಯಾತಿಗೆ ಕಾರಣವಾಗಿತ್ತು ಎಂದು ಅವರು ವಿಷಾದಿಸಿದರು. ಪ್ರಸಕ್ತ ಜಿಬಿಎ ವ್ಯಾಪ್ತಿಯಲ್ಲಿ ಸ್ವಯಂ ಪರಿವರ್ತನೆಯನ್ನು ಜಾರಿಗೆ ತರುವುದರೊಂದಿಗೆ, ಕಂದಾಯ ಇಲಾಖೆಯು ಕಿರುಕುಳ, ಭ್ರಷ್ಟಾಚಾರ, ವಿಳಂಬ ನೀತಿ ಹಾಗೂ ಸಾಮಾನ್ಯ ಜನರ ಮೇಲಿನ ಹೊರೆ ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದೇ ಸಮಯದಲ್ಲಿ ಆಡಳಿತದಲ್ಲಿ ಸುಧಾರಣೆಗಳನ್ನು ತರಲು ಮಹತ್ವದ ನಿರ್ಧಾರವಾಗಿದೆ ಎಂದು ಅವರು ಹೇಳಿದರು. ಕಾನೂನುಬದ್ಧ ಭೂ ಅಭಿವೃದ್ಧಿಯನ್ನು ಸರಳ, ಸುಳಲಿತ ಮತ್ತು ಶೀಘ್ರವಾಗಿ ಮಾಡುವುದು ಉದ್ದೇಶವಾಗಿದೆ. ಹೀಗಾಗಿ, ಸಾಮಾನ್ಯ ಜನರಿಗೆ ಕೈಗೆಟುಕುವ ನಿವೇಶನಗಳನ್ನು ಖರೀದಿಸಲು ಇದು ಸಹಾಯ ಮಾಡುತ್ತದೆ ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು. ಅಲ್ಲದೆ, ಈ ಸುಧಾರಣೆಯು ಆಡಳಿತ ಪಾಲನೆ ಮತ್ತು ಭೂ ಅಭಿವೃದ್ಧಿಯ ವೆಚ್ಚ ಸಮಯ ಕಡಿಮೆ ಮಾಡುತ್ತದೆ. ಈ ಸುಧಾರಣೆಗಳು ವಸತಿ ಅಭಿವೃದ್ಧಿಗೆ ಮಾತ್ರವಲ್ಲದೆ ಮಾಸ್ಟರ್ ಪ್ಲಾನ್ ನಲ್ಲಿ ಅನುಮತಿಸಲಾದ ಕೈಗಾರಿಕಾ ಮತ್ತು ಇತರ ಬಳಕೆಗಳಿಗೂ ಲಭ್ಯವಿರಲಿದೆ. ಈ ಸುಧಾರಣೆಯೊಂದಿಗೆ, ಕಂದಾಯ ಇಲಾಖೆಯು ಶೋಷಣೆ ಮತ್ತು ಭ್ರಷ್ಟಾಚಾರವನ್ನು ಮೂಲದಲ್ಲೆ ತಡೆಯಲು ಮುಂದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು. ಸ್ವಯಂ ಪರಿವರ್ತನೆಯಿಂದ ಹಾಲಿ ಬಿ-ಖಾತಾ ನಿವೇಶನಗಳೂ ಅನುಕೂಲ ಪಡೆಯಲಿವೆ. ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಗಿ ಪರಿವರ್ತಿಸಲು ಜಿಬಿಎ ಈಗ ಕಾನೂನು ಚೌಕಟ್ಟನ್ನು ಸರಳೀಕರಿಸಲಾಗಿದೆ. ಈ ಹಿಂದೆ ಅನಧಿಕೃತ ನಿವೇಶನಗಳನ್ನು ಖರೀದಿಸಿದ ಲಕ್ಷಾಂತರ ಆಸ್ತಿ ಮಾಲಕರಿಗೆ ಇದು ಸಹಾಯವಾಗಲಿದೆ. ಎ-ಖಾತಾ ಪಡೆಯುವುದು ಇಂತಹ ನಿವೇಶನಗಳಿಗೆ ಕಾನೂನು ಬಲವನ್ನು ನೀಡುತ್ತದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು. ಸಾಲಗಳನ್ನು ಪಡೆಯಲು, ಅವರ ಆಸ್ತಿಯ ಮೌಲ್ಯವನ್ನು ಹೆಚ್ಚಿಸುವುದು ಸೇರಿದಂತೆ ಎಲ್ಲಾ ವಹಿವಾಟುಗಳೂ ಇದೀಗ ಸುಲಭಗೊಳಿಸಲಾಗಿದೆ. ಆನ್‍ಲೈನ್ ಪಾರದರ್ಶಕತೆ, ಸಮಯ-ಪರಿಮಿತಿ ಮತ್ತು ಸ್ವಯಂಚಾಲಿತ ಪ್ರಕ್ರಿಯೆಯ ಮೂಲಕ ಈ ಸೇವೆಗಳನ್ನೂ ಮತ್ತಷ್ಟು ಜನಪರಗೊಳಿಸಲಾಗಿದೆ. ಅಲ್ಲದೆ, ಇ ಖಾತಾ ಜೊತೆಗೆ ಎಲ್ಲ ದಾಖಲೆಗಳನ್ನೂ ಸಮೀಕರಣ ಮಾಡುವ ಮೂಲಕ ಜನರ ಆಸ್ತಿ ಮಾಲಕತ್ವಕ್ಕೆ ಮತ್ತಷ್ಟು ಬಲ ತುಂಬಲಾಗಿದೆ ಹಾಗೂ ಕಾನೂನು ತಕರಾರುಗಳಿಗೂ ಆಸ್ಪದ ಇಲ್ಲದಂತಾಗುತ್ತಿದೆ ಎಂದು ಅವರು ಹೇಳಿದರು. ನಗರೀಕರಣ ಹೆಚ್ಚಾದಂತೆ, ನಗರ ಆಸ್ತಿಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ ಯೋಜನಾ ಬದ್ಧ ಅಭಿವೃದ್ಧಿಯನ್ನು ಸುಗಮಗೊಳಿಸಲು ಮತ್ತು ಜನರಿಗೆ ಕೈಗೆಟುವ ದರದಲ್ಲಿ ಆಸ್ತಿ ಖರೀದಿಗೆ ಸಹಕರಿಸಲು ನಮ್ಮ ಸರಕಾರ ಬದ್ಧವಾಗಿದೆ. ಅದೇ ಸಮಯದಲ್ಲಿ ಜನಸಾಮಾನ್ಯರು ಉತ್ತಮ ಆಡಳಿತ ಪಡೆಯಲು ಹಾಗೂ ಸುಗಮವಾಗಿ ತಮ್ಮ ವ್ಯವಹಾರವನ್ನು ನಡೆಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ಸರಕಾರ ನಿರಂತರ ಸುಧಾರಣೆಗಳನ್ನು ತರುತ್ತಿದೆ. ಮಾಸ್ಟರ್ ಪ್ಲಾನ್‍ನಲ್ಲಿ ಸ್ವಯಂಚಾಲಿತ ಪರಿವರ್ತನೆಯು ಆ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ನುಡಿದರು. ದುರಾಡಳಿತದ ಒಂದು ಸಂಕೇತವಾಗಿ ನಡೆಯುತ್ತಿದ್ದ ಪರಿವರ್ತನೆ ಪ್ರಕ್ರಿಯೆಗಳನ್ನು ಸುಧಾರಿಸುವ ಮತ್ತು ಸರಳಗೊಳಿಸುವ ಮೂಲಕ, ಸರಕಾರವು ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸರಕಾರದ ಪ್ರಧಾನ ಕಾರ್ದರ್ಶಿ(ವಿಪತ್ತು ನಿವರ್ಹಣೆ) ಮೌನೀಶ್ ಮುದ್ಗಿಲ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 8:21 pm

ರಾಯಚೂರು ಕೇವಲ ಬಿಸಿಲುನಾಡಲ್ಲ, ಶಕ್ತಿಕೇಂದ್ರ : ಸಚಿವ ಶಿವರಾಜ ತಗಂಡಗಿ

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ

ವಾರ್ತಾ ಭಾರತಿ 7 Feb 2026 8:20 pm

ʼರೈಲ್ವೆ ಇಲಾಖೆʼ ರಾಜ್ಯಕ್ಕೆ 7,748ಕೋಟಿ ರೂ. : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರು : ರೈಲ್ವೆ ಇಲಾಖೆಯಡಿ ಕರ್ನಾಟಕಕ್ಕೆ ಒಟ್ಟು 7,748 ಕೋಟಿ ರೂ.ಮೊತ್ತ ಸಿಗಲಿದ್ದು, ಇದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ನೀಡಿದ್ದ ಮೊತ್ತಕ್ಕಿಂತ 9 ಪಟ್ಟು ಹೆಚ್ಚು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಶನಿವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಡಿ 800 ಕೋಟಿ ರೂ. ಕರ್ನಾಟಕ ರಾಜ್ಯಕ್ಕೆ ಸಿಗುತ್ತಿತ್ತು. ಇದೀಗ 7,748 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಸೆಮಿ ಕಂಡಕ್ಟರ್ ಕೈಗಾರಿಕೆಯಲ್ಲಿ ಬೆಂಗಳೂರು ಮತ್ತು ಮೈಸೂರು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು. ಈ ವರ್ಷದ ಕೇಂದ್ರ ಬಜೆಟ್ 2047ಕ್ಕೆ ವಿಕಸಿತ ಭಾರತದ ರೋಡ್ ಮ್ಯಾಪ್. 2047ಕ್ಕೆ ನಾವು ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದು ಸಂಕಲ್ಪ ಮಾಡಿದ್ದೇವೆ. ಅದಕ್ಕೆ ಈ ರೋಡ್ ಮ್ಯಾಪ್ ಪೂರಕ. ಉತ್ಪಾದನಾ ಕ್ಷೇತ್ರದ ನಾವೀನ್ಯತೆ ಹಾಗೂ ದೇಶವನ್ನು ಆಧುನಿಕ ವಿಶ್ವಕ್ಕೆ ಸಿದ್ಧಪಡಿಸುವುದು, ಸಮಾಜದ ಪ್ರತಿವರ್ಗವೂ ಬೆಳವಣಿಗೆಯ ಪ್ರಯೋಜನ ಪಡೆಯುವಂತೆ ಮಾಡುವ ಅಂತರ್ಗತ ಬೆಳವಣಿಗೆ, ನಾವು ಮಾಡಬೇಕಾದ ಕರ್ತವ್ಯಗಳೇ ಈ 3 ಕಂಬಗಳು ಎಂದು ವಿವರಿಸಿದರು. ಮೇಕ್ ಇನ್ ಇಂಡಿಯವು ಈಗಾಗಲೇ ಉತ್ತಮ ಸಾಧನೆ ಮಾಡಿದೆ. ಈ ಬಜೆಟ್‍ನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆಗೆ ಒತ್ತು ಕೊಡಲಾಗುತ್ತಿದೆ. ಬಯೋಫಾರ್ಮಕ್ಕೆ ಆದ್ಯತೆ ನೀಡಲಿದ್ದೇವೆ. ವಾಯುಯಾನ, ಬಾಹ್ಯಾಕಾಶ, ಕೈಗಾರಿಕೆಯಡಿ ಹೈಟೆಕ್ ಟೂಲ್ ರೂಮ್‍ಗಳು ಪ್ರಿಸಿಶನ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಅವರು ನುಡಿದರು.

ವಾರ್ತಾ ಭಾರತಿ 7 Feb 2026 8:14 pm

ಯಾದಗಿರಿ | ಅಕ್ರಮ ಧಂದೆ ತಡೆಯಲು ವಿಫಲ: ಇಬ್ಬರು ಎಎಸ್‌ಐ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು

ಯಾದಗಿರಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆ, ಸುರಪುರ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆ, ಇಸ್ಪೀಟು, ಮಟ್ಕಾ ಸೇರಿದಂತೆ ಇತರೆ ಅಕ್ರಮ ಧಂದೆಗಳನ್ನು ತಡೆಗಟ್ಟಲು ವಿಫಲರಾದ ಇಬ್ಬರು ಎಎಸ್‌ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ ಪಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ. ಅಮಾನತುಗೊಂಡವರಲ್ಲಿ ನಿಂಗಪ್ಪ (ಎಎಸ್‌ಐ), ಬಲರಾಮ (ಎಎಸ್‌ಐ), ತಾಯಣ್ಣ (ಪಿಸಿ) ಮತ್ತು ಲಕ್ಷ್ಮಣ (ಪಿಸಿ) ಸೇರಿದ್ದಾರೆ ಎಂದು ಹೇಳಿದರು. ಇಲಾಖಾ ನಿಯಮಾವಳಿಗಳ ಪ್ರಕಾರ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಅಮಾನತ್ತಿನಲ್ಲಿಯೇ ಇರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ಚಟುವಟಿಕೆಗಳು ಹೆಚ್ಚುತ್ತಿರುವ ಕುರಿತು ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳಿಂದ ದೂರುಗಳು ಬಂದಿದ್ದವು. ನದಿ ತೀರ ಪ್ರದೇಶಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ, ರಾತ್ರಿ ವೇಳೆ ಸಾಗಣೆ, ಸರ್ಕಾರಕ್ಕೆ ರಾಜಸ್ವ ನಷ್ಟ ಹಾಗೂ ಪರಿಸರ ಹಾನಿ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ವಿಶೇಷ ದಾಳಿ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಇಸ್ಪೀಟು ಅಡ್ಡೆಗಳು, ಮಟ್ಕಾ ಜೂಜಾಟ ಸೇರಿದಂತೆ ಇತರೆ ಅಕ್ರಮ ಧಂದೆಗಳ ವಿರುದ್ಧ ನಿಯಮಿತ ಕಾರ್ಯಾಚರಣೆ ನಡೆಸುವಂತೆ ನಿರ್ದೇಶನ ನೀಡಿದ್ದರೂ, ತಳಮಟ್ಟದಲ್ಲಿ ನಿರೀಕ್ಷಿತ ಮಟ್ಟದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶಿಸ್ತು ಕ್ರಮದ ಭಾಗವಾಗಿ ಅಮಾನತ್ತು ವಿಧಿಸಲಾಗಿದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ. ಖಡಕ್ ಎಚ್ಚರಿಕೆ “ಅಕ್ರಮ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಜನರ ವಿಶ್ವಾಸ ಕಾಪಾಡುವುದು ಪೊಲೀಸ್ ಇಲಾಖೆಯ ಪ್ರಮುಖ ಹೊಣೆಗಾರಿಕೆ. ಸೂಚನೆಗಳನ್ನು ಪಾಲಿಸದವರು ಯಾರೇ ಆಗಿರಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ,” ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಸ್‌ಪಿ ಕೈಗೊಂಡಿರುವ ಈ ಕ್ರಮಕ್ಕೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಅಕ್ರಮ ಧಂದೆಗಳ ವಿರುದ್ಧ ಇನ್ನಷ್ಟು ಕಠಿಣ ಕಾರ್ಯಾಚರಣೆಗಳು ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 7 Feb 2026 8:10 pm

1995ರ ಪ್ರಕರಣ | ರಾತ್ರೋರಾತ್ರಿ ಸಂಸದ ಪಪ್ಪು ಯಾದವ್ ಬಂಧನ

ದ್ವೇಷ ರಾಜಕಾರಣ ಎಂದ ರಾಹುಲ್ ಗಾಂಧಿ

ವಾರ್ತಾ ಭಾರತಿ 7 Feb 2026 8:08 pm

ಬೀದರ್ | ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಸಚಿವ ಈಶ್ವರ್ ಖಂಡ್ರೆ ಅವರಿಂದ ಚಾಲನೆ

ಬೀದರ್: ಪಾಪನಾಶ ದೇವಾಲಯ ಅಭಿವೃದ್ಧಿಯಾಗಬೇಕು ಎಂಬುದು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದ್ದು, ಸಂಸದ ಸಾಗರ್ ಖಂಡ್ರೆ ಅವರ ಸತತ ಪ್ರಯತ್ನದಿಂದ ಅದು ಈಡೇರಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ನಗರದ ಪಾಪನಾಶ ದೇವಾಲಯ ಆವರಣದಲ್ಲಿ ಶನಿವಾರ ಭಾರತ ಸರ್ಕಾರದ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಂಯುಕ್ತಾಶ್ರಯದಲ್ಲಿ ಪ್ರಸಾದ್ ಯೋಜನೆಯಡಿ 22.41 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. 2024ರ ಮಾರ್ಚ್ ತಿಂಗಳಲ್ಲಿ ಪ್ರಧಾನಿಯವರು ವರ್ಚ್ಯುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರೂ, ನಂತರ ಪ್ರಗತಿ ಕಾಣಿಸಲಿಲ್ಲ. ಸಂಸದರಾಗಿದ ಬಳಿಕ ಸಾಗರ್ ಖಂಡ್ರೆ ಅವರು ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಇದೀಗ ಕಾಮಗಾರಿ ಆರಂಭವಾಗಿದ್ದು, ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಶಿವರಾತ್ರಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಭೇಟಿ ನೀಡುವ ಪಾಪನಾಶ ದೇವಸ್ಥಾನದ ಜೀರ್ಣೋದ್ಧಾರದಿಂದ ಭಕ್ತರಿಗೆ ಹೆಚ್ಚಿನ ಸೌಲಭ್ಯ ಒದಗಲಿದೆ. ಜೊತೆಗೆ 10 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಸ್ಥಾಪನೆ, ವಿಮಾನಯಾನ ಮರುಚಾಲನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ವಿವರಿಸಿದರು. ಸಂಸದ ಸಾಗರ್ ಖಂಡ್ರೆ ಮಾತನಾಡಿ, ದೇವಾಲಯ ಪರಿಸರದಲ್ಲಿ ಜಾತ್ರಾ ಸಂಕೀರ್ಣ, ಕೆರೆ ಹಾಗೂ ಸುತ್ತಮುತ್ತಲಿನ ಅಭಿವೃದ್ಧಿ, ಅನ್ನದಾಸೋಹ ಕಟ್ಟಡ, ಯಾತ್ರಿಕರ ವಿಶ್ರಾಂತಿ ಗೃಹ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕೇಂದ್ರ, ಪಾರ್ಕಿಂಗ್ ವ್ಯವಸ್ಥೆ, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ತರಬಾರದು ಎಂದೂ ಅವರು ಹೇಳಿದರು. ಬಡಜನರಿಗಾಗಿ 50 ಸಾವಿರ ಮನೆಗಳ ಮಂಜೂರು, 100 ಕೋಟಿ ರೂ. ವೆಚ್ಚದ ರೈಲ್ವೆ ಕಾಮಗಾರಿ ಸೇರಿದಂತೆ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ಜಾರಿಯಲ್ಲಿವೆ ಎಂದರು. ಪೌರಾಡಳಿ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು, ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿಯಾಗಬೇಕು ಎಂದು ಹೇಳಿ, ಪಾಪನಾಶ ಅಭಿವೃದ್ಧಿಗೆ ತಮ್ಮ ಇಲಾಖೆಯಿಂದ 5 ಕೋಟಿ ರೂ., ಬೀದರ್ ಕೋಟೆಗೆ 10 ಕೋಟಿ ರೂ. ಹಾಗೂ ಕೆರೆ ಅಭಿವೃದ್ಧಿಗೆ 50 ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿದರು. ಜಿಲ್ಲೆಯ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ 100 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು. ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಅವರು ಸಂಸದ ಸಾಗರ್ ಖಂಡ್ರೆ ಅವರ ಪ್ರಯತ್ನವನ್ನು ಶ್ಲಾಘಿಸಿ, ಎಲ್ಲರ ಸಹಕಾರದಿಂದ ಮತ್ತಷ್ಟು ಅಭಿವೃದ್ಧಿ ಸಾಧ್ಯವೆಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಹೆಚ್ಚುವರಿ ಎಸ್ಪಿ ಚಂದ್ರಕಾಂತ್ ಪೂಜಾರಿ, ಸಹಾಯಕ ಆಯುಕ್ತ ಮುಹಮ್ಮದ್‌ ಶಕೀಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಹಾಗೂ ಹಣಮಂತರಾವ್ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಶಂಕುಸ್ಥಾಪನೆ ವಿರೋಧಿಸಿ ಬಿಜೆಪಿ ಪ್ರತಿಭಟನೆ : ಪಾಪನಾಶ ದೇವಾಲಯ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ ನೀಡುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. 2024ರ ಮಾ.7ರಂದು ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದ್ದ ಕಾಮಗಾರಿಗೆ ಮರುಚಾಲನೆ ನೀಡುವುದು ಸರಿಯಲ್ಲ ಎಂದು ಆರೋಪಿಸಿದರು. ಪ್ರತಿಭಟನೆ ವೇಳೆ ಮಾಜಿ ಕೇಂದ್ರ ಸಚಿವ ಭಗವಂತ್ ಖುಬಾ, ಶಾಸಕರಾದ ಸಿದ್ದಲಿಂಗಪ್ಪ ಪಾಟೀಲ್, ಶೈಲೇಂದ್ರ ಬೆಲ್ದಾಳೆ, ಎಂಎಲ್ಸಿ ಎಂ.ಜಿ. ಮೂಳೆ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.      

ವಾರ್ತಾ ಭಾರತಿ 7 Feb 2026 8:01 pm

ಆಂಡ್ರಾಯ್ಡ್‌ ನಿಂದ ಐಫೋನ್‌ ಗೆ ಫೈಲ್ ಶೇರಿಂಗ್; ಸಮಸ್ಯೆ ಪರಿಹರಿಸಿದ ಗೂಗಲ್

ಆಂಡ್ರಾಯ್ಡ್‌ ನಿಂದ ಆ್ಯಪಲ್‌ ಗೆ ಫೈಲ್‌ಗಳನ್ನು ಕಳುಹಿಸುವುದನ್ನು ಸರಳಗೊಳಿಸುವ ವ್ಯವಸ್ಥೆಯನ್ನು ಗೂಗಲ್ ಪರಿಚಯಿಸಲಿದೆ. ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ನಡುವೆ ಫೋಟೋ ಅಥವಾ ಫೈಲ್‌ಗಳನ್ನು ಕಳುಹಿಸುವ ಸಮಸ್ಯೆ ಇತ್ತು. ಇದೀಗ ಆ ಸಮಸ್ಯೆಗೆ ಗೂಗಲ್ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದು, ಬಹು ನಿರೀಕ್ಷಿತ ‘ಏರ್ ಡ್ರಾಪ್’ (Airdrop) ಮಾದರಿಯ ಶೇರಿಂಗ್ ಫೀಚರ್ ಅನ್ನು ಎಲ್ಲಾ ಆಂಡ್ರಾಯ್ಡ್ ಫೋನ್‌ ಗಳಿಗೆ ವಿಸ್ತರಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಗೂಗಲ್ ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ‘ಪಿಕ್ಸೆಲ್ 10’ ಸರಣಿಯ ಫೋನ್‌ ಗಳಲ್ಲಿ ಐಫೋನ್ ಜೊತೆ ಫೈಲ್ ಹಂಚಿಕೊಳ್ಳುವ ಆಯ್ಕೆಯನ್ನು ಪ್ರಾಯೋಗಿಕವಾಗಿ ನೀಡಿತ್ತು. ‘ಕ್ವಿಕ್ ಶೇರ್’ ಮೂಲಕ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್‌ ಬುಕ್‌ ಗಳಿಗೆ ನೇರವಾಗಿ ಫೈಲ್ ಕಳುಹಿಸಲು ಅವಕಾಶ ಮಾಡಿಕೊಟ್ಟಿತ್ತು. ಇದೀಗ ಈ ಫೀಚರ್ ಕೇವಲ ಪಿಕ್ಸೆಲ್ ಫೋನ್‌ ಗಳಿಗೆ ಸೀಮಿತವಾಗಿರದೆ 2026ರಲ್ಲಿ ಇತರೆ ಎಲ್ಲಾ ಆಂಡ್ರಾಯ್ಡ್ ಫೋನ್‌ ಗಳಿಗೂ ಲಭ್ಯವಿರಲಿದೆ. ►ಫೈಲ್‌ ಗಳ ನೇರ ವರ್ಗಾವಣೆ ತೈಪೆಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಗೂಗಲ್‌ ನ ಆಂಡ್ರಾಯ್ಡ್ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಎರಿಕ್ ಕೇ, “ಕಂಪೆನಿ ತನ್ನದೇ ಸಾಧನಗಳಲ್ಲಿ ಫೀಚರ್ ಅನ್ನು ಪರೀಕ್ಷೆ ನಡೆಸಿದ ನಂತರ ಮುಂದಿನ ಹಂತಕ್ಕೆ ಸಿದ್ಧವಾಗಿದೆ. ಗೂಗಲ್ ಫೋನ್‌ ಗಳಲ್ಲಿ ಈಗಾಗಲೇ ತಂತ್ರಜ್ಞಾನ ವಿಶ್ವಾಸಾರ್ಹವಾಗಿ ಕೆಲಸ ಮಾಡಿದ್ದು, ಇತರ ಆಂಡ್ರಾಯ್ಡ್ ವ್ಯವಸ್ಥೆಗಳಿಗೂ ಸೌಲಭ್ಯವನ್ನು ವಿಸ್ತರಿಸುವತ್ತ ಗಮನ ಹರಿಸಿದ್ದೇವೆ” ಎಂದು ಹೇಳಿದ್ದಾರೆ. “ಕಳೆದ ವರ್ಷ ನಾವು ಏರ್ ಡ್ರಾಪ್‌ನ ಪರಸ್ಪರ ಕಾರ್ಯಸಾಧ್ಯತೆಯನ್ನು ಪರಿಚಯಿಸಿದ್ದೇವೆ. 2026ರಲ್ಲಿ ಅದನ್ನು ಇನ್ನಷ್ಟು ಸಾಧನಗಳಿಗೆ ವಿಸ್ತರಿಸಲಿದ್ದೇವೆ. ಈ ವ್ಯವಸ್ಥೆಯು ಐಫೋನ್‌ ಗಳ ಜೊತೆಗೆ ಮಾತ್ರವಲ್ಲ, ಐಪ್ಯಾಡ್‌ ಗಳು ಮತ್ತು ಮ್ಯಾಕ್‌ ಬುಕ್‌ ಗಳ ಜೊತೆಗೂ ಕೆಲಸ ಮಾಡಬೇಕು ಎಂದು ನಾವು ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ಇದೀಗ ಕಾರ್ಯಕ್ಷಮತೆಯನ್ನು ಸಾಬೀತು ಮಾಡಿರುವ ಹಿನ್ನೆಲೆಯಲ್ಲಿ ಶೀಘ್ರವೇ ನಾವು ಸಿಹಿಸುದ್ದಿಯನ್ನು ನೀಡಲಿದ್ದೇವೆ” ಎಂದು ಅವರು ಹೇಳಿದ್ದಾರೆ. ಫೈಲ್‌ ಗಳ ಸುರಕ್ಷಿತ ಹಂಚಿಕೆ ಒಮ್ಮೆ ವಿಸ್ತರಿಸಿದ ನಂತರ ಆಂಡ್ರಾಯ್ಡ್ ಬಳಕೆದಾರರು ಥರ್ಡ್ ಪಾರ್ಟಿ ಆ್ಯಪ್‌ಗಳು ಅಥವಾ ಕ್ಲೌಡ್ ಲಿಂಕ್‌ ಗಳನ್ನು ಅವಲಂಬಿಸದೆ, ಕ್ವಿಕ್ ಶೇರ್ ಬಳಸಿಕೊಂಡು ಸಮೀಪದಲ್ಲಿರುವ ಐಫೋನ್‌ ಗಳು, ಐಪ್ಯಾಡ್‌ ಗಳು ಮತ್ತು ಮ್ಯಾಕ್‌ ಬುಕ್‌ ಗಳೊಂದಿಗೆ ಫೋಟೋಗಳು, ವೀಡಿಯೊಗಳು ಮತ್ತು ಫೈಲ್‌ ಗಳನ್ನು ನೇರವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಕೆಲಸ ಮತ್ತು ಮನೆಗಳಲ್ಲಿ ವಿಭಿನ್ನ ಸಾಧನಗಳನ್ನು ಬಳಸುವ ಅಥವಾ ಆಂಡ್ರಾಯ್ಡ್ ಮತ್ತು ಆ್ಯಪಲ್ ಸಾಧನಗಳ ನಡುವೆ ನಿಯಮಿತವಾಗಿ ಬದಲಿಸುತ್ತಿರುವವರಿಗೆ ಆಗುತ್ತಿರುವ ಸಮಸ್ಯೆ ಇದರಿಂದ ಗಮನಾರ್ಹವಾಗಿ ಕಡಿಮೆಯಾಗಲಿದೆ. ಡೇಟಾ ವರ್ಗಾವಣೆ ಸಾಧ್ಯತೆ ಗೂಗಲ್ ಫೈಲ್ ಶೇರಿಂಗ್ ಮೀರಿ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯವಾಗುವಂತಹ ವ್ಯವಸ್ಥೆ ರೂಪಿಸಲು ಸಿದ್ಧವಾಗುತ್ತಿದೆ. ಐಒಎಸ್ ಬಗ್ಗೆ ನೇರವಾಗಿ ಉಲ್ಲೇಖಿಸದೆ, ಸಾಧನಗಳನ್ನು ಬದಲಿಸಿದಾಗ ಡೇಟಾವನ್ನು ವರ್ಗಾಯಿಸುವ ಸಮಸ್ಯೆಯಿಲ್ಲದೆ ಮುಂದುವರಿಯಲು ಸಾಧ್ಯವಾಗುವಂತೆ ಕ್ವಿಕ್ ಶೇರ್ ಅನ್ನು ಅಭಿವೃದ್ಧಿಪಡಿಸುವುದಾಗಿ ಗೂಗಲ್ ಹೇಳಿದೆ. ಇಂತಹ ವ್ಯವಸ್ಥೆ ಯಾವಾಗ ಸಿದ್ಧವಾಗುತ್ತದೆ ಎನ್ನುವುದನ್ನು ಗೂಗಲ್ ಹೇಳದೆ ಇದ್ದರೂ, ಆ್ಯಪಲ್‌ ನಿಂದ ಆಂಡ್ರಾಯ್ಡ್ ಫೋನ್‌ ಗಳು ಹೆಚ್ಚು ದೂರವಿಲ್ಲದಂತೆ ವ್ಯವಸ್ಥೆ ರೂಪಿಸಲು ಪ್ರಯತ್ನಿಸುವುದು ಖಚಿತವಾಗಿದೆ.

ವಾರ್ತಾ ಭಾರತಿ 7 Feb 2026 8:00 pm

ಶ್ರವಣ ದೋಷದ ಬಗ್ಗೆ ಜಾಗೃತಿ ಅಗತ್ಯ: ಖಾದರ್ ಶಾ

ಶ್ರವಣ ತಪಾಸಣಾ ಶಿಬಿರಕ್ಕೆ ಚಾಲನೆ

ವಾರ್ತಾ ಭಾರತಿ 7 Feb 2026 7:58 pm

Ranji Tophy- ಮಾಯಾಂಕ್ ಅಗರ್ವಾಲ್ ಸೆಂಚುರಿ ಮಿಸ್! ಮುಂಬೈ ವಿರುದ್ಧ ಪ್ರಥಮ ಇನ್ನಿಂಗ್ಸ್ ಮುನ್ನಡೆ ಗಳಿಸಿದರೂ ಎಡವಿದ ಕರ್ನಾಟಕ

ಮಾಜಿ ನಾಯಕ ಮಾಯಾಂಕ್ ಅಗರ್ವಾಲ್ ಅವರ 92 ರನ್ ಗಳ ಸಹಾಯದಿಂದ ಕರ್ನಾಟಕ ತಂಡ ಮುಂಬೈ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಸಂಪೂರ್ಣ ವೈಫಲ್ಯದಿಂದಾಗಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿರುವುದರಿಂದ ಪರಿಸ್ಥಿತಿಯ ಸಂಪೂರ್ಣ ಲಾಭ ಎತ್ತುವಲ್ಲಿ ಯಶಸ್ವಿಯಾಗಿರುವ ಮುಂಬೈ ಪಂದ್ದದಲ್ಲಿ ಮತ್ತೆ ಚಿಗುರಿಕೊಂಡಿದೆ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ 2ನೇ ದಿನಾಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ. ಒಟ್ಟಾರೆ ಮುಂಬೈ ತಂಡ 136 ಗಳ ಮುನ್ನಡೆಯಲ್ಲಿದ್ದು 3ನೇ ದಿನ ಕರ್ನಾಟಕ ಕಡಿವಾಣ ಹಾಕಲೇ ಬೇಕಾಗಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್ (36) ಮತ್ತು ಅಖಿಲ್ ಹೆರ್ವಾಡ್ಕರ್(33) ಮೊದಲ ವಿಕೆಟ್ ಗೆ 77 ರನ್ ಜೊತೆಯಾಟವಾಡಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಆಕಾಶ್ ಆನಂದ್(ಅಜೇಯ 53) ಮತ್ತು ಮುಷೀರ್ ಖಾನ್ (ಅಜೇಯ 49) ಅವರು 3ನೇ ವಿಕೆಟ್ ಗೆ 112 ರನ್ ಗಳ ಜೊತೆಯಾಟವಾಡಿದ್ದು ಭಾನುವಾರಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿಯನ್ನು ಭಾನುವಾರ ಬೇಗನೇ ಬೇರ್ಪಡಿಸಿ ಮುಂಬೈ ತಂಡವನ್ನು ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಿದರೆ ಕರ್ನಾಟಕ ತಂಡ ಪಂದ್ಯಕ್ಕೆ ಮರಳಬಹುದು. ಕರ್ನಾಟಕ ನಾಟಕೀಯ ಕುಸಿತ ಇದಕ್ಕೂ ಮೊದಲು 1ನೇ ದಿನಾಂತ್ಯಕ್ಕೆ ಗಳಸಿದ್ದ ದೇವದತ್ ಪಡಿಕ್ಕಲ್ ನೇತೃತ್ವದ ಕರ್ನಾಟಕ 2ನೇ ದಿನವಾದ ಶನಿವಾರದಂದು ಕರುಣ್ ನಾಯರ್(4) ಆವರನ್ನು ಬೇಗನೇ ಕಳೆದುಕೊಂಡಿತು. ಹೀಗಾಗಿ ಮಾಯಾಂಕ್ ಅಗರ್ವಾಲ್ ಮೇಲೆ ಸಂಪೂರ್ಣ ಒತ್ತಡ ಬಿತ್ತು. ರವಿಚಂದ್ರನ್ ಸ್ಮರಣ್, ಶ್ರೇಯಸ್ ಗೋಪಾಲ್ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಗೆ ಅಟ್ಟಿದ ಮೋಹಿತ್ ಆವಸ್ಥಿ ಕರ್ನಾಟಕ ತಂಡದ ಮೇಲೆ ಒತ್ತಡ ಹೇರಿದರು. ಈ ಒತ್ತಡದಿಂದ ತಂಡ ಹೊರಬರಲೇ ಇಲ್ಲ. ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಒಬ್ಬರೇ ಒಬ್ಬರು ಎರಡಂಕೆಯ ಮೊತ್ತವನ್ನೂ ತಲುಪದ್ದು ಇದಕ್ಕೆ ಸಾಕ್ಷಿ. ಒಂದು ತುದಿಯಲ್ಲಿ ಮಾಯಾಂಕ್ ಆಗರ್ವಾಲ್ ಅವರು ಇನ್ನಿಂಗ್ಸ್ ಕಟ್ಟುವ ಪ್ರಯತ್ನ ನಡೆಸುತ್ತಲೇ ಇದ್ದರು. 134 ಎಸೆತಗಳಿಂದ 92 ರನ್ ಗಳಿಸಿ ಔಟಾದರು. ಅಂತಿಮವಾಗಿ ತಂಡ 173 ರನ್ ಗಳಿಗೆ ಆಲೌಟ್ ಆಯಿತು. 53 ರನ್ ಗಳ ಅಲ್ಪ ಮುನ್ನಡೆ ಗಳಿಸಿದ್ದೇ ದ ಹೆಗ್ಗಳಿಕೆಯಾಯಿತು. ಪಂದ್ಯವನ್ನು ಡ್ರಾಗೊಳಿಸಿದಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ಸೆಮಿಫೈನಲ್ ಗೆ ಪ್ರವೇಶಿಸಲಿದೆ. ಆದರೆ ಪಂದ್ಯದಲ್ಲಿ ಇನ್ನೂ 3 ದಿನಗಳು ಬಾಕಿ ಉಳಿದಿರುವುದರಿಂದ ಫಲಿತಾಂಶ ಬರುವ ಸಾಧ್ಯತೆ ಹೆಚ್ಚಿದೆ. ಸಂಕ್ಷಿಪ್ತ ಸ್ಕೋರ್ ಮುಂಬೈ ಪ್ರಥಮ ಇನ್ನಿಂಗ್ಸ್ 120ಕ್ಕೆ ಆಲೌಟ್, ಅಖಿಲ್ ಹೆರ್ವಾಡ್ಕರ್ 60, ಶಾರ್ದೂಲ್ ಠಾಕೂರ್ 16, ಸಿದ್ದಾರ್ಥ್ ಲಾಡ್ 12, ಪ್ರಸಿದ್ಧ ಕೃಷ್ಣ 21ಕ್ಕೆ 3, ವಿದ್ವತ್ ಕಾವೇರಪ್ಪ 38ಕ್ಕೆ 3, ಶ್ರೇಯಸ್ ಗೋಪಾಲ್ 4ಕ್ಕೆ 3 ಕರ್ನಾಟಕ 173ಕ್ಕೆ ಆಲೌಟ್, ಮಾಯಾಂಕ್ ಅಗರ್ವಾಲ್ 92, ಕೆಎಲ್ ರಾಹುಲ್ 28, ದೇವದತ್ ಪಡಿಕ್ಕಲ್ 17, ಮೋಹಿತ್ ಆವಸ್ಥಿ 27ಕ್ಕೆ 4, ತುಷಾಪ್ ದೇಶಪಾಂಡೆ 33ಕ್ಕೆ 4. ಮುಂಬೈ ದ್ವಿತೀಯ ಇನ್ನಿಂಗ್ಸ್ 189/2, ಯಶಸ್ವಿ ಜೈಸ್ವಾಲ್ 38, ಅಖಿಲ್ ಹೆರ್ವಾಡ್ಕರ್ 33, ಆಕಾಶ್ ಅನಂದ್ ನಾಟೌಟ್ 53, ಮುಷೀರ್ ಖಾನ್ ನಾಟೌಟ್ 49, ಶ್ರೇಯಸ್ ಗೋಪಾಲ್ 35ಕ್ಕೆ 1.

ವಿಜಯ ಕರ್ನಾಟಕ 7 Feb 2026 7:51 pm

ಜಿಬಿಎ ಬಿ ಖಾತಾ ಸೈಟ್ ಮಾಲೀಕರಿಗೆ ಸಿಹಿ ಸುದ್ದಿ: ಎ-ಖಾತಾ ಪರಿವರ್ತನೆ ಈಗ ಮತ್ತಷ್ಟು ಸುಲಭ

ನಗರೀಕರಣ ಹೆಚ್ಚಾದಂತೆ, ನಗರ ಆಸ್ತಿಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ ಯೋಜನಾ ಬದ್ಧ ಅಭಿವೃದ್ಧಿಯನ್ನು ಸುಗಮಗೊಳಿಸಲು ಮತ್ತು ಜನರಿಗೆ ಕೈಗೆಟುವ ದರದಲ್ಲಿ ಆಸ್ತಿ ಖರೀದಿಗೆ ಸಹಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದೇ ಸಮಯದಲ್ಲಿ ಜನಸಾಮಾನ್ಯರು ಉತ್ತಮ ಆಡಳಿತ ಪಡೆಯಲು ಹಾಗೂ ಸುಗಮವಾಗಿ ತಮ್ಮ ವ್ಯವಹಾರವನ್ನು ನಡೆಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರ ಸುಧಾರಣೆಗಳನ್ನು ತರುತ್ತಿದೆ ಎಂದು ಕಂದಾಯ ಸಚಿವರ ಕೃಷ್ಣ ಬೈರೇಗೌಡ ತಿಳಿಸಿದರು. ಮಾಸ್ಟರ್ ಪ್ಲಾನ್ನಲ್ಲಿ ಸ್ವಯಂಚಾಲಿತ ಪರಿವರ್ತನೆಯು ಆ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ದುರಾಡಳಿತದ ಒಂದು ಸಂಕೇತವಾಗಿ ನಡೆಯುತ್ತಿದ್ದ ಪರಿವರ್ತನೆ ಪ್ರಕ್ರಿಯೆಗಳನ್ನು ಸುಧಾರಿಸುವ ಮತ್ತು ಸರಳಗೊಳಿಸುವ ಮೂಲಕ, ಸರ್ಕಾರವು ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯ ಕರ್ನಾಟಕ 7 Feb 2026 7:48 pm

Bengaluru | ಎಸ್‍ಐಆರ್ ವಿರೋಧಿಸಿ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ

ಬೆಂಗಳೂರು : ನನ್ನ ಮತ, ನನ್ನ ಹಕ್ಕು ಆಂದೋಲನ ಹಾಗೂ ನಾಗರಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಮತದಾನದ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ವಿರೋಧಿಸಿ, ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು. ಎಸ್‍ಐಆರ್ ಪ್ರಕ್ರಿಯೆಯು ಭಾರತದ 10 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿನ 7 ಕೋಟಿಗೂ ಹೆಚ್ಚು ಜನರ ಮತದಾನದ ಹಕ್ಕನ್ನು ಈಗಾಗಲೇ ಕಸಿದಿದೆ. ಅದರಿಂದ ಬಹುತೇಕ ಅಂಚಿನಲ್ಲಿರುವ ಸಮುದಾಯದವರನ್ನು, ವಿಶೇಷವಾಗಿ ಮಹಿಳೆಯರ ಮತದಾನದ ಹಕ್ಕನ್ನು ಇದು ನಿರಾಕರಿಸುತ್ತದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ವಕೀಲ ವಿನಯ್ ಶ್ರೀನಿವಾಸ್, ‘ಸಂವಿಧಾನದ ಪರ ಎಂದು ಹೇಳುವ ರಾಜ್ಯ ಸರಕಾರ ಎಸ್‍ಐಆರ್ ವಿಷಯದಲ್ಲಿ ಯಾಕೆ ಮೌನವಾಗಿದೆ. ಯಾವಾಗಲೂ ಮಾಧ್ಯಮಗಳಲ್ಲಿ ರಾಜ್ಯದ ಸಿಎಂ ಐದು ವರ್ಷ ಯಾರಾಗಿರುತ್ತಾರೆ ಎನ್ನುವುದೇ ಚರ್ಚೆ ಆಗಿರುತ್ತದೆ. ಹೀಗಿದ್ದಾಗ ಮತ ಹಾಕಿ ಅವರನ್ನು ಅಧಿಕಾರಕ್ಕೆ ತಂದ ಜನರ ಹಕ್ಕುಗಳನ್ನು ಯಾರು ಕಾಪಾಡುತ್ತಾರೆ’ ಎಂದು ಪ್ರಶ್ನಿಸಿದರು. ‘ಎಸ್‍ಐಆರ್ ಕುರಿತು ಸರಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ತಿಳಿದಿಲ್ಲ. ಮನರೇಗಾ ರಕ್ಷಣೆಗಾಗಿ ವಿಶೇಷ ಅಧಿವೇಶನ ಕರೆದಿದ್ದಾರೆ. ಅದೇ ಅಧಿವೇಶನದಲ್ಲಿ ಎಸ್‍ಐಆರ್ ವಿರುದ್ಧ ನಿರ್ಣಯ ಕೈಗೊಳ್ಳಬಹುದಿತ್ತು. ಒಂದು ಸಲ ಅಧಿಕಾರಕ್ಕೆ ಬಂದ ಮೇಲೆ ಮತದಾರರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಅವರು ದೂರಿದರು. ಶಿಕ್ಷಣ ತಜ್ಞ ಶ್ರೀಪಾದ ಭಟ್ ಮಾತನಾಡಿ, ‘ಶತ್ರುಗಳು ಪಕ್ಕದಲ್ಲೇ ಇದ್ದಾರೆ ಎನ್ನುವಂತೆ ರಾಜ್ಯದ ಕಾಂಗ್ರೆಸ್ ಸರಕಾರ ವರ್ತಿಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾತನಾಡುವುದೇ ಒಂದು ರಾಜ್ಯ ಕಾಂಗ್ರೆಸ್ ನಾಯಕರು ಮಾತನಾಡುವುದೇ ಒಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಎಸ್‍ಐಆರ್ ವಿರೋಧಿಸುವುದಿಲ್ಲ ಎಂದು ಹೇಳಿರುವುದು ದೊಡ್ಡ ಆಘಾತಕಾರಿ. ಕಾಂಗ್ರೆಸ್ ಯಾರ ಮತ ತೆಗೆದುಕೊಂಡು ಅಧಿಕಾರಕ್ಕೆ ಬಂದಿದೆ. ತಮಗೆ ಮತ ಹಾಕಿದ ಮತದಾರರನ್ನೇ ಮತಪಟ್ಟಿಯಿಂದ ಹೊರಗೆ ತೆಗೆಯುವ ದ್ರೋಹ ಬಗೆಯುತ್ತಿದೆ’ ಎಂದು ತಿಳಿಸಿದರು. ಅತೀ ಹೆಚ್ಚು ಪ್ರಮಾಣದ ಮಹಿಳೆಯರು ಎಸ್‍ಐಆರ್‌ ನಿಂದ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‍ಐಆರ್ ವಿರೋಧಿಸಿ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಬೇಕು. ಅಡ್ಡ ಗೋಡೆಯ ಮೇಲೆ ದೀಪ ಇಡುವ ಪ್ರಯತ್ನ ಮಾಡಬಾರದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಸ್ಲಂ ಜನಾಂದೋಲನದ ಸಂಚಾಲಕ ನರಸಿಂಹಮೂರ್ತಿ, ಸಾವಿತ್ರಿ ಬಾಯಿಫುಲೆ ಮಹಿಳಾ ಸಂಘಟನೆಯ ಸಂಚಾಲಕಿ ಚಂದ್ರಮ್ಮ, ಜಮಾಅತೆ ಇಸ್ಲಾಂ ಹಿಂದ್‍ನ ಕರ್ನಾಟಕದ ಉಪಾಧ್ಯಕ್ಷ ಯೂಸೂಫ್ ಖನ್ನಿ, ಎಐಸಿಸಿಟಿಯುನ ಕೇಂದ್ರ ಸಮಿತಿ ಸದಸ್ಯೆ ಮೈತ್ರೇಯಿ ಕೃಷ್ಣನ್, ಕಾರ್ಮಿಕ ಹೋರಾಟಗಾರ ಕೆ.ವಿ.ಭಟ್, ಪಿ.ಪಿ.ಅಪ್ಪಣ್ಣ, ಎನ್‍ಎಫ್‍ಐಡಬ್ಲ್ಯೂ ರಾಜ್ಯಾಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್, ಮಮತಾ ಮತ್ತಿತರರು ಉಪಸ್ಥಿತರಿದ್ದರು. ಪ್ರಮುಖ ಆಗ್ರಹಗಳು: ‘ಕೇಂದ್ರ ಸರಕಾರ ಕೂಡಲೇ ಎಸ್‍ಐಆರ್ ಹಿಂಪಡೆಯಬೇಕು. ರಾಜ್ಯ ಸರಕಾರ ಎಸ್‍ಐಆರ್ ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು. ಸಂವಿಧಾನದ ಅಡಿಯಲ್ಲಿ ಎಸ್‍ಐಆರ್‌ ಗೆ ಅವಕಾಶವಿದೆಯೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕರ್ನಾಟಕದಲ್ಲಿ ಎಸ್‍ಐಆರ್ ಜಾರಿಗೊಳಿಸಬಾರದು. ಕರ್ನಾಟಕದಲ್ಲಿ ಎಸ್‍ಐಆರ್‍ನ ತಯಾರಿಗಾಗಿ ಮತದಾರರ ಪಟ್ಟಿಗಳ ಮ್ಯಾಪಿಂಗ್ ಪ್ರಕ್ರಿಯೆ ಆತುರಾತುರವಾಗಿ ನಡೆಯುತ್ತಿದೆ ಅದನ್ನು ನಿಲ್ಲಿಸಬೇಕು. ವಿರೋಧ ಪಕ್ಷಗಳು ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಸ್‍ಐಆರ್ ವಿರುದ್ಧ ಸ್ಪಷ್ಟವಾಗಿ ನಿಂತು, ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಬೇಕು’ ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 7 Feb 2026 7:47 pm

ಬೆಳ್ತಂಗಡಿ| ಅಖಿಲ ಭಾರತ ಮುಷ್ಕರ ಅಂಗವಾಗಿ ವಾಹನ ಜಾಥಾ; ʼಮೋದಿ ಮೋದಿʼ ಘೋಷಣೆ ಕೂಗಿ ತಂಡದಿಂದ ಕಾರ್ಯಕ್ರಮಕ್ಕೆ ಅಡ್ಡಿ

ಬೆಳ್ತಂಗಡಿ; ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಕೊಕ್ಕಡದಲ್ಲಿ ಅಖಿಲ ಭಾರತ ಮುಷ್ಕರ ಪ್ರಚಾರದ ಅಂಗವಾಗಿ ನಡೆದ ವಾಹನ ಜಾಥಾ ಕಾರ್ಯಕ್ರಮದ ವೇಳೆ ತಂಡವೊಂದು ʼಮೋದಿ ಮೋದಿʼ ಎಂಬ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ವಾಹನ ಜಾಥಾದ ಅಂಗವಾಗಿ ಕೊಕ್ಕಡದಲ್ಲಿ 7 ಗಂಟೆಯ ಸುಮಾರಿಗೆ ಸಭಾ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಿದ್ದರು.ಈ ಸಂದರ್ಭ ಏಕಾಏಕಿ ಸುಮಾರು 20 ಮಂದಿಯ ಗುಂಪು ಸೇರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದು, ʼಮೋದಿ ಮೋದಿʼ ಎಂಬ ಘೋಷಣೆಯನ್ನು ಕೂಗುತ್ತಾ ಇದ್ದರು. ಈ ವೇಳೆ ಸಭಾ ಕಾರ್ಯಕ್ರಮ ಮುಗಿಸಿ ಜಾಥಾ ಹಿಂತಿರುಗಿದೆ. ಈ ಬಗ್ಗೆ ಜಾಥಾದ ನೇತೃತ್ವ ವಹಿಸಿದ್ದ ಬಿ.ಎಂ ಭಟ್ ಅವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಸಿಪಿಐಎಂ ಖಂಡನೆ;- ಕಾರ್ಮಿಕರ, ರೈತರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಹಮ್ಮಿಕೊಂಡಿದ್ದ ವಾಹನ ಜಾಥಾ ವೇಳೆ ಕಿಡಿಗೇಡಿಗಳ ತಂಡ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿರು ವುದು ಖಂಡನೀಯ ಎಂದು ಸಿಪಿಐಎಂ ತಾಲೂಕು ಸಮಿತಿ ಕಾರ್ಯದರ್ಶಿ ಬಿ. ಭಟ್ ತಿಳಿಸಿದ್ದಾರೆ. ಸರಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ, ರೈತ ವಿರೋಧಿಯ ವಿರುದ್ಧ ಕಾರ್ಮಿಕ ಸಂಘಟನೆಗಳು ನಡೆಸು ತ್ತಿರುವ ಹೋರಾಟ ನಿರಂತರವಾಗಿ ಮುಂದಿವರಿಯಲಿದೆ ಎಂದಿರುವ ಅವರು ಕಾರ್ಮಿಕರ ಹೋರಾಟದಿಂದ ಭಯ ಗೊಂಡಿರುವ ಬಿಜೆಪಿ ಹಾಗು ಬೆಂಬಲಿಗರು ಪ್ರಚಾರ ಜಾಥಾಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಫೆ.12 ರಂದು ನಡೆಯುವ ಅಖಿಲ ಭಾರತ ಮಯಷ್ಕರವನ್ನು ಯಶಸ್ವಿಗೊಳಿಸಲು ಸಿಪಿಐಎಂ ಪಕ್ಷ ಬೆಂಬಲ ನೀಡಲಿದೆ. ಮುಷ್ಕರ ಯಶಸ್ವಿ ಯಾಗಿಸಲು ಎಲ್ಲರೂ ಪ್ರಯತ್ನಿಸುವಂತೆ ಬಿ.ಎಂ ಭಟ್ ಕರೆ ನೀಡಿದ್ದಾರೆ.

ವಾರ್ತಾ ಭಾರತಿ 7 Feb 2026 7:42 pm

‘ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ’; ಕ್ರಮವಹಿಸಲು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಆದೇಶ

ಬೆಂಗಳೂರು : ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣಪತ್ರ (Life Certificate) ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಿ ಕೂಡಲೇ ಕ್ರಮ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಮುಖ್ಯಮಂತ್ರಿ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ಪರಿಶೀಲನೆ ಮಾಡಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಮನವಿಯಲ್ಲೇನಿತ್ತು..?: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಈಗಾಗಲೆ ರಾಜ್ಯಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ 2023ರ ಜೂನ್ ತಿಂಗಳಿನಿಂದ ಸರಕಾರದ ಆದೇಶದನ್ವಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮಾಸಿಕ 2 ಸಾವಿರ ರೂ. ಪಾವತಿಸಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಯೋಜನೆಯ ಫಲಾನುಭವಿ ಮಹಿಳೆಯಾಗಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯಡಿ 1,24,12,543 ಅರ್ಹ ಫಲಾನುಭವಿಗಳಿಗೆ ಈವರೆಗೂ ಸುಮಾರು 57,300 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಪಾವತಿ ಮಾಡಲಾಗಿದೆ. ಈ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಮರಣ ಹೊಂದಿರುವವರ ಮಾಹಿತಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ಗೃಹಲಕ್ಷ್ಮಿ ಯೋಜನೆಯಡಿ ಪಾವತಿಯಾಗುವ ಮೊತ್ತವು ಮರಣ ಹೊಂದಿರುವ ಫಲಾನುಭವಿಗಳಿಗೆ ಕೆಲವು ಕಡೆ ಪಾವತಿಯಾಗುದನ್ನು ತಡೆಗಟ್ಟುವುದು ಅವಶ್ಯವಾಗಿರುತ್ತದೆ. ಇದರಿಂದ ಸರಕಾರವು ಪಾವತಿಸುವ ಮೊತ್ತವು ಸದ್ವಿನಿಯೋಗವಾಗಲು ಹಾಗೂ ಸರಕಾರದ ಹಣ ಇತರೆ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು. ನಿವೃತ್ತ ಸರಕಾರಿ ನೌಕರರಿಗೆ ಪಾವತಿಸುವ ಪಿಂಚಣಿ ಮೊತ್ತವನ್ನು ಪಡೆಯಲು ಅವರು ಪ್ರತಿ ವರ್ಷ ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ತಮ್ಮ ಜೀವಿತ ಪ್ರಮಾಣ ಸಲ್ಲಿಸುವುದನ್ನು ಕಡ್ಡಾಯಗೊಳಿಸಿರುವ ಮಾದರಿಯಲ್ಲಿ, ಗೃಹಲಕ್ಷ್ಮಿ ಯೋಜನೆಯಡಿಯ ಅರ್ಹ ಫಲಾನುಭವಿಗಳು ಸಹ ಪ್ರತಿ ವರ್ಷ ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ತಮ್ಮ ಜೀವಿತ ಪ್ರಮಾಣ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಹಾಗೂ ಇತರೆ ಮಾರ್ಗೋಪಾಯಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಗೂಳಿಗೌಡ ಕೋರಿದ್ದರು.

ವಾರ್ತಾ ಭಾರತಿ 7 Feb 2026 7:41 pm

T20 ವಿಶ್ವಕಪ್‌ | USA ಎದುರು ಭಾರತದ ಟಾಪ್‌ಆರ್ಡರ್ ಕುಸಿತ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ಅಮೆರಿಕ ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಪವರ್‌ಪ್ಲೇ ಅವಧಿಯಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿದೆ. ತಂಡದ ಮೊತ್ತ 8 ರನ್ ಆಗಿದ್ದಾಗಲೇ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಶೂನ್ಯಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ಅಲಿ ಖಾನ್ ಎಸೆತದಲ್ಲಿ ಸಂಜಯ್ ಕೃಷ್ಣಮೂರ್ತಿ ಕೈಗೆ ಕ್ಯಾಚ್ ನೀಡಿದ ಅವರು ಪೆವಿಲಿಯನ್ ಸೇರಿದರು. ಇದಾದ ಬಳಿಕ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮ ಜೋಡಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿತು. ನಾಲ್ಕು ಓವರ್‌ಗಳ ಅಂತ್ಯಕ್ಕೆ ಭಾರತ 33 ರನ್ ಗಳಿಸಿತ್ತು. ಇಶಾನ್ ಕಿಶನ್ 10 ರನ್ ಹಾಗೂ ತಿಲಕ್ ವರ್ಮ 24 ರನ್ ಗಳಿಸಿ ಕ್ರೀಸ್‌ನಲ್ಲಿ ಮುಂದುವರಿದಿದ್ದರು. ಆದರೆ ಐದನೇ ಓವರ್‌ನಲ್ಲಿ ಅಮೆರಿಕ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಶ್ಯಾಡ್ಲಿ ವ್ಯಾನ್ ಶಾಲ್ಕ್‌ವೈಕ್ ಎಸೆತದಲ್ಲಿ ಇಶಾನ್ ಕಿಶನ್ ಔಟಾದರು. ಆಫ್‌ಸ್ಟಂಪ್ ಹತ್ತಿರದ ಫುಲ್‌ಲೆಂಗ್ತ್ ಚೆಂಡನ್ನು ಮಿಡ್‌ಆಫ್ ಮೇಲೆ ಎತ್ತಲು ಯತ್ನಿಸಿದ ಅವರು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿಫಲರಾದ ಪರಿಣಾಮ ಮಿಲಿಂದ್ ಕುಮಾರ್ ಕೈಗೆ ಕ್ಯಾಚ್ ಒಪ್ಪಿಸಿದರು. ಕಿಶನ್ 16 ಎಸೆತಗಳಲ್ಲಿ 20 ರನ್ ಗಳಿಸಿ ನಿರ್ಗಮಿಸಿದರು. ಭಾರತ 45ಕ್ಕೆ 2 ವಿಕೆಟ್ ಕಳೆದುಕೊಂಡಿತು. ಅದಾದ ಕೆಲವೇ ಕ್ಷಣಗಳಲ್ಲಿ ತಿಲಕ್ ವರ್ಮ ಕೂಡ ಪೆವಿಲಿಯನ್ ಸೇರಿದರು. ಪುಲ್ ಶಾಟ್ ಪ್ರಯತ್ನಿಸಿದ ಅವರು ಚೆಂಡನ್ನು ಎತ್ತರಕ್ಕೆ ಎತ್ತಿದ ಪರಿಣಾಮ ಮಿಡ್‌ವಿಕೆಟ್‌ನಲ್ಲಿ ನಾಯಕ ಮೋನಾಂಕ್ ಪಟೇಲ್ ಸುಲಭ ಕ್ಯಾಚ್ ಪಡೆದರು. ವರ್ಮ 16 ಎಸೆತಗಳಲ್ಲಿ 25 ರನ್ ಗಳಿಸಿದರು. ಭಾರತ 46ಕ್ಕೆ 3 ವಿಕೆಟ್ ಕಳೆದುಕೊಂಡಿತು. ಅದೇ ಓವರ್‌ನಲ್ಲಿ ಶಿವಮ್ ದುಬೆ ಗೋಲ್ಡನ್ ಡಕ್‌ಗೆ ನಿರ್ಗಮಿಸಿದ್ದು ಭಾರತದ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿತು. ನಿಧಾನಗತಿಯ ಶಾರ್ಟ್ ಚೆಂಡಿಗೆ ಆಡಿದ ಪುಲ್ ಪ್ರಯತ್ನ ಟಾಪ್ ಎಡ್ಜ್ ಆಗಿ ಶಾರ್ಟ್ ಫೈನ್ ಲೆಗ್ ಕಡೆಗೆ ತೇಲಿದ ಚೆಂಡನ್ನು ಸೌರಭ್ ನೇತ್ರವಲ್ಕರ್ ಸುರಕ್ಷಿತವಾಗಿ ಹಿಡಿದರು. ಭಾರತ 46ಕ್ಕೆ 4 ವಿಕೆಟ್ ಕಳೆದುಕೊಂಡಿತು. ಪವರ್‌ಪ್ಲೇ ಅವಧಿಯಲ್ಲೇ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡ ಭಾರತ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದೆ. ಅಮೆರಿಕ ತಂಡ ಶಿಸ್ತಿನ ಬೌಲಿಂಗ್ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ವಾರ್ತಾ ಭಾರತಿ 7 Feb 2026 7:35 pm

ಬಜೆಟ್ ಪೂರ್ವಭಾವಿ ಸಭೆ | ಆರೋಗ್ಯ, ಶಿಕ್ಷಣ, ಸಣ್ಣ ಕೈಗಾರಿಕಾ ಕ್ಷೇತ್ರಗಳಿಗೆ ಆದ್ಯತೆ

ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿಯಾಗಿ ಮೂರನೇ ದಿನವಾದ ಇಂದು ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಆಹಾರ ಇಲಾಖೆ ಸಚಿವರುಗಳು-ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಶನಿವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿನ ಶಕ್ತಿ ಭವನದಲ್ಲಿ 2026-27ನೇ ಸಾಲಿನ ವಿವಿಧ ಇಲಾಖೆಗಳ ಅನುದಾನದ ಬೇಡಿಕೆ ಹಾಗೂ ನೂತನ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳ ಅಗತ್ಯತೆಗಳು, ಸವಾಲುಗಳು ಮತ್ತು ಮುಂದಿನ ವರ್ಷಕ್ಕೆ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳ ಕುರಿತು ಸಭೆಯಲ್ಲಿ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಆರೋಗ್ಯ ಇಲಾಖೆಯೊಂದಿಗೆ ನಡೆದ ಚರ್ಚೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆ, ಸರಕಾರಿ ಆಸ್ಪತ್ರೆಗಳ ಅಗತ್ಯ ಮೂಲಸೌಕರ್ಯ ಸುಧಾರಣೆ, ವೈದ್ಯಕೀಯ ಸಿಬ್ಬಂದಿ ನೇಮಕಾತಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯಕ್ಷಮತೆ ಮತ್ತು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಕುರಿತು ಮಾತುಕತೆ ನಡೆಸಿದ್ದಾರೆಂದು ಗೊತ್ತಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಭೆಯಲ್ಲಿ ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು, ಶಿಕ್ಷಕರ ಕೊರತೆ ನೀಗಿಸುವುದು, ವಿದ್ಯಾರ್ಥಿಗಳಿಗೆ ಮೂಲಸೌಕರ್ಯ, ಪೌಷ್ಟಿಕ ಆಹಾರ ಯೋಜನೆಗಳ ಪರಿಣಾಮಕಾರಿತ್ವ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಜೆಟ್‍ನಲ್ಲಿ ಜನಕಲ್ಯಾಣಕ್ಕೆ ಆದ್ಯತೆ ನೀಡಬೇಕಿದ್ದು, ಸಮಾಜದ ಎಲ್ಲ ವರ್ಗಗಳಿಗೆ ಯೋಜನೆಗಳ ಲಾಭ ತಲುಪುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಇಲಾಖೆಗಳು ತಳಮಟ್ಟದ ವಾಸ್ತವಾಂಶಗಳನ್ನು ಗಮನದಲ್ಲಿಟ್ಟು ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಸೂಚಿಸಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಭೆಯಲ್ಲಿ ಉದ್ಯೋಗ ಸೃಷ್ಟಿ, ಸ್ಥಳೀಯ ಉದ್ಯಮಗಳಿಗೆ ಉತ್ತೇಜನ, ನವೋದ್ಯಮಗಳಿಗೆ ಬೆಂಬಲ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ವಿಸ್ತರಣೆ ಕುರಿತಂತೆ ಅಧಿಕಾರಿಗಳು ತಮ್ಮ ಸಲಹೆಗಳನ್ನು ಮುಂದಿಟ್ಟರು. ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಈ ಕ್ಷೇತ್ರದ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸಿಎಂ ಸೂಚಿಸಿದರು. ಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಣ್ಣ ಕೈಗಾರಿಕೆ ಇಲಾಖೆ ಸಚಿವ ಶರಣಬಸಪ್ಪ ದರ್ಶನಾಪುರ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಝ್ ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 7:34 pm

ಕಲಬುರಗಿ | ಫೆ.10, 11ರಂದು ಕೆಬಿಎನ್ ವಿವಿಯಲ್ಲಿ ʼಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಮ್ಮೇಳನʼ : ಡಾ.ಕನೀಜ್ ಫಾತಿಮಾ

ಕಲಬುರಗಿ : ಬಿಬಿ ರಝಾ ಮಹಿಳಾ ಪದವಿ ವಿದ್ಯಾಲಯ, ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಸಸ್ಯಶಾಸ್ತ್ರ ವಿಭಾಗ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಂಯುಕ್ತಾಶ್ರಯದಲ್ಲಿ ಫೆ.10 ಮತ್ತು 11ರಂದು ನಗರದ ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ “ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಮ್ಮೇಳನ” ಹಮ್ಮಿಕೊಳ್ಳಲಾಗಿದೆ ಎಂದು ಬಿಬಿ ರಝಾ ಮಹಿಳಾ ಪದವಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಕನೀಜ್ ಫಾತಿಮಾ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.10ರಂದು ಬೆಳಗ್ಗೆ 10 ಗಂಟೆಗೆ ಕೆಬಿಎನ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ಡಾ. ಸಯ್ಯದ್ ಮುಸ್ತಫಾ ಅಲ್ ಹುಸೈನಿ ಅವರು ಸಮ್ಮೇಳನವನ್ನು ಉದ್ಘಾಟಿಸುವರು ಎಂದು ತಿಳಿಸಿದರು. ಉಪಕುಲಪತಿ ಪ್ರೊ. ಅಲಿಝಾ ಮೂಸ್ವಿ, ಕೆಎಸ್‌ಟಿಎ ಅಧ್ಯಕ್ಷ ಪ್ರೊ. ರಾಜಾಸಾಬ್, ಶಾಸಕಿ ಕನೀಜ್ ಫಾತಿಮಾ, ಎಂಎಲ್ಸಿ ಶಶೀಲ್ ನಮೋಶಿ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಫೆ.11ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಸಮ್ಮೇಳನವು ಒಟ್ಟು 14 ಪ್ರಮುಖ ವಿಷಯಗಳನ್ನು ಒಳಗೊಂಡಿದ್ದು, ನಾಲ್ಕು ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ಜೈವಿಕ ವಿಜ್ಞಾನಗಳ ಇತ್ತೀಚಿನ ಪ್ರಗತಿಗಳು ಹಾಗೂ ಭವಿಷ್ಯದ ದಿಕ್ಕುಗಳ ಕುರಿತು ಚರ್ಚೆ ನಡೆಯಲಿದೆ. ಯುವ ಸಂಶೋಧಕರು ಮತ್ತು ಮಹಿಳಾ ವಿಜ್ಞಾನಿಗಳಿಗೆ ವಿಶೇಷ ಉತ್ತೇಜನ ನೀಡಲಾಗುತ್ತಿದೆ. ಯುಜಿ, ಪಿಜಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗಾಗಿ ಅತ್ಯುತ್ತಮ ಮೌಖಿಕ ಹಾಗೂ ಪೋಸ್ಟರ್ ಪ್ರಸ್ತುತಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಒಟ್ಟು ಮೂರು ವಿಭಾಗಗಳಲ್ಲಿ 18 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು. ಈಗಾಗಲೇ ದೇಶದ ವಿವಿಧ ವಿಶ್ವವಿದ್ಯಾಲಯಗಳಿಂದ ಸುಮಾರು 500 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನವರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ.ಸಯ್ಯದ್ ಅಬ್ರಾರ್, ಡಾ.ಶಬಾನಾ ಬೇಗಂ, ಡಾ.ಬಿ.ಜ್ಯೋತಿ ಮತ್ತು ಡಾ.ರುಮಾನಾ ಮಿರದೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 7:33 pm

ರಾಜ್ಯದಲ್ಲಿ ಸೈಬರ್ ವಂಚಕರ ವಿರುದ್ಧ ಕಾರ್ಯಾಚರಣೆ : 13 ಜನ ಸೆರೆ, 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆ ಬೆಳಕಿಗೆ

ಬೆಂಗಳೂರು : ರಾಜ್ಯಾದ್ಯಂತ ಸೈಬರ್ ವಂಚಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಐಡಿ ಸೈಬರ್ ಕಮಾಂಡ್ ವಿಭಾಗದ ಅಧಿಕಾರಿಗಳು, 13 ಆರೋಪಿಗಳನ್ನು ಬಂಧಿಸಿ, 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆಗಳ ದೊಡ್ಡ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮಹಾಂತಿ, ಕಳೆದ ಮೂರು ದಿನಗಳಿಂದ ರಾಜ್ಯದ 29 ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಸರಣಿ ದಾಳಿ ನಡೆಸಲಾಗಿದ್ದು, ಈ ವೇಳೆ 25 ಎಟಿಎಂ ಕಾರ್ಡ್‍ಗಳು, 13 ಚೆಕ್ ಬುಕ್‍ಗಳು ಹಾಗೂ 12 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಬಂಧಿತ ಆರೋಪಿಗಳು 10 ರಿಂದ 20 ಸಾವಿರ ರೂ. ಹಣ ನೀಡಿ ಸಾರ್ವಜನಿಕರಿಂದ ವೈಯಕ್ತಿಕ ಗುರುತಿನ ದಾಖಲೆಗಳು ಹಾಗೂ ಬ್ಯಾಂಕ್ ವಿವರಗಳನ್ನು ಪಡೆದು ನಕಲಿ ಹಾಗೂ ಮ್ಯೂಲ್ ಖಾತೆಗಳನ್ನು ಸೃಷ್ಟಿಸುತ್ತಿದ್ದರು. ಈ ಖಾತೆಗಳನ್ನು ಏಜೆಂಟರ ಮೂಲಕ ಸೈಬರ್ ಅಪರಾಧಿಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಆನ್‍ಲೈನ್ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಡಿಜಿಟಲ್ ಅರೆಸ್ಟ್ ರೀತಿಯ ವಂಚನೆಗಳಿಗೆ ಬಳಸಲಾಗುತ್ತಿತ್ತು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದರು. ಸೈಬರ್ ಕಮಾಂಡ್ ಪ್ರಾರಂಭವಾಗಿ ಕೇವಲ ಮೂರು ತಿಂಗಳಾಗಿದ್ದು, ಈ ಅವಧಿಯಲ್ಲೇ ದೊಡ್ಡ ಜಾಲವನ್ನು ಪತ್ತೆಹಚ್ಚಲಾಗಿದೆ ಎಂದ ಅವರು, ದಾಳಿ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಒಬ್ಬ ಆರೋಪಿ ಬಂಧನಕ್ಕೊಳಗಾಗಿದ್ದು, ಆತ ಒಬ್ಬನೆ 19 ಬ್ಯಾಂಕ್ ಖಾತೆಗಳನ್ನು ಹೊಂದಿದ್ದನು. ಆ ಖಾತೆಗಳ ಮೂಲಕ ಸುಮಾರು 11 ಕೋಟಿ ರೂ. ವಹಿವಾಟು ನಡೆದಿದ್ದು, ಈ ಸಂಬಂಧ 96 ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಮಾತ್ರವೇ 55 ಕೋಟಿ ರೂ. ವಂಚನೆ ನಡೆದಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು. ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಮ್ಯೂಲ್ ಖಾತೆ ಮಾರಾಟದ ಹಿಂದಿರುವ ರೂವಾರಿಗಳನ್ನು ಪತ್ತೆಹಚ್ಚುವುದಾಗಿದ್ದು, ಮುಂದಿನ ದಿನಗಳಲ್ಲೂ ಈ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪ್ರಣವ್ ಮೊಹಂತಿ ಉಲ್ಲೇಖಿಸಿದರು.

ವಾರ್ತಾ ಭಾರತಿ 7 Feb 2026 7:26 pm

ಪಾರಾದೀಪ್ ಫಾಸ್ಫೇಟ್ಸ್ ಮತ್ತೆ ಎಂಸಿಎಫ್ ಆಗಿ ಮರುನಾಮಕರಣಕ್ಕೆ ಆಡಳಿತ ಸಮಿತಿ ಒಪ್ಪಿಗೆ : ಐವನ್ ಡಿಸೋಜ

ಮಂಗಳೂರು, ಫೆ.7: ಮಂಗಳೂರಿನ ಹೆಮ್ಮೆಯ ಗುರುತಾಗಿರುವ ಮಂಗಳೂರು ರಾಸಾಯನಿಕ ಮತ್ತು ಗೊಬ್ಬರ ಕಾರ್ಖಾನೆ (ಎಂಸಿಎಫ್) ಹೆಸರನ್ನು ಪಾರಾದೀಪ್ ಫಾಸ್ಫೇಟ್ಸ್ ಎಂದು ಮರುನಾಮಕರಣ ಮಾಡಿರುವುದನ್ನು ಮತ್ತೆ ಬದಲಾಯಿಸಿ ಹಿಂದಿನಂತೆ ಎಂಸಿಎಫ್ ಹೆಸರನ್ನು ಮರು ನಾಮಕರಣ ಮಾಡಲು ಒಪ್ಪಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ತಿಳಿಸಿದರು. ಮಂಗಳೂರು ಮಹಾನಗರಪಾಲಿಕೆ ಕಟ್ಟಡದಲ್ಲಿರುವ ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಎಂಸಿಎಫ್ ಹೆಸರನ್ನು ಬದಲಾಯಿದ ಬೆನ್ನಲ್ಲೇ ಸಂಸ್ಥೆ ಉಳಿಸಲು ತಾತ್ವಿಕ ಸಮ್ಮತಿ ನೀಡಿದೆ ಎಂದು ವಿವರಿಸಿದರು. 1971ರಲ್ಲಿ ಕೇವಲ 13 ಕೋಟಿ ಬಂಡವಾಳ ಹೂಡಿಕೆಯಿಂದ ಸ್ಥಾಪಿತವಾಗಿ 1976ರಲ್ಲಿ ಉತ್ಪಾದನೆ ಆರಂಭಿಸಿದ ಮಂಗಳೂರು ರಾಸಾಯನಿಕ ಮತ್ತು ಗೊಬ್ಬರ ಕಾರ್ಖಾನೆ 1991ರ ತನಕ ಸರಕಾರ ಮತ್ತು ಖಾಸಗಿಯವರ ಜಂಟಿ ಒಡತನದಲ್ಲಿತ್ತು. ಕಳೆದ 35 ವರ್ಷಗಳಿಂದ ಖಾಸಗಿ ಒಡತನಕ್ಕೆ ಒಳಪಟ್ಟು ಬಿರ್ಲಾ ಅಡ್ವೆಂಟೆಝ್ ಮಾಲಕತ್ವದಲ್ಲಿದೆ. ಕಳೆದ ಅ.16ರಂದು ಪಾರಾದೀಪ್ ಫಾಸ್ಪೇಟ್ಸ್ ಒಡಿಸ್ಸಾ ಮೂಲದ ಕಂಪೆನಿಯೊಂದಿಗೆ ವಿಲೀನಗೊಂಡಿತ್ತು. ಬಳಿಕ ಎಂಸಿಎಫ್ ಕಂಪೆನಿಯ ಹೆಸರನ್ನು ರಾತ್ರೋರಾತ್ರಿ ಪಾರದೀಪ್ ಫಾಸ್ಫೇಟ್ಸ್ ಎಂದು ಮರು ನಾಮಕರಣ ಮಾಡಿತ್ತು ಎಂದರು. ಸ್ಥಳೀಯರು, ಸಂಸ್ಥೆಯ ಮಾಜಿ ಉದ್ಯೋಗಿಗಳು ಇದರ ವಿರುದ್ಧ ಹೋರಾಟ ಆರಂಭಿಸಿದರು. ಜನಪ್ರತಿನಿಧಿಗಳ , ಸಾರ್ವಜನಿಕರ ಗಮನ ಸೆಳೆದು ಹೋರಾಟ ಮುಂದುವರಿಸಿದ್ದರು. ಜ.19ರಂದು ತಾನು ಸುದ್ದಿಗೋಷ್ಠಿ ಕರೆದು ಮಂಗಳೂರಿನ ಹೆಮ್ಮೆಯ ಗುರುತಾದ ಎಂಸಿಎಫ್ ಹೆಸರನ್ನು ನಾಮಫಲಕದಲ್ಲಿ ಕೂಡಲೇ ಮರುಸ್ಥಾಪಿಸುವಂತೆ ಆಗ್ರಹಿಸಲಾಗಿತ್ತು. ಕಂಪೆನಿಯ ಅಧಿಕಾರಿಗಳನ್ನು ಸಂಪರ್ಕಿಸಿ ಎಚ್ಚರಿಕೆ ನೀಡಿದ್ದೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಬಳಿಕ ಹೆಚ್ಚೆತ್ತುಕೊಂಡ ಆಡಳಿತ ಮಂಡಳಿ ಹಿಂದಿನಂತೆ ಎಂಸಿಎಫ್ ಹೆಸರನ್ನು ಮರುಸ್ಥಾಪಿಸಲು ಒಪ್ಪಿಕೊಂಡು, ನಾಮಫಲಕದಲ್ಲಿ ಸೇರಿಸಿದ್ದಾರೆ. ಆದರೆ ಹೆಸರಿನ ಅಕ್ಷರದ ಗಾತ್ರ ಸಣ್ಣದಾಗಿದೆ ಎಂದರು. ನಮ್ಮ ನೆಲ, ಜಲವನ್ನು ಪಡೆದು ಸ್ಥಾಪನೆಗೊಂಡ ಕಂಪೆನಿಗಳು ಇಂತಹ ವರ್ತನೆಯನ್ನು ಕೈ ಬಿಡಬೇಕು. ಹೆಸರು ಬದಲಾಯಿಸುವ ಕಂಪೆನಿಗಳಿಗೆ ಪಾಠವಾಗಬೇಕು ಎಂದು ಹೇಳಿದರು. ಕಂಪೆನಿಗಳು ಇಲ್ಲಿ ಆಗುವ ತನಕ ಎಲ್ಲರ ಸಹಕಾರ ಪಡೆಯುತ್ತವೆ. ಬಳಿಕ ಅವೆಲ್ಲವೂ ತಮ್ಮ ದಾರಿಯಲ್ಲಿ ಸಾಗುತ್ತವೆ. ಇದು ಸರಿಯಲ್ಲ ಎಂದರು. ಪಾರ್ಲಿಮೆಂಟ್‌ನಲ್ಲಿ ರಾಷ್ಟ್ರಪತಿ ವಂದನಾ ನಿರ್ಣಯ ಭಾಷಣದ ಮೇಲೆ ಸದನದಲ್ಲಿ ಆಗಿರುವ ಚರ್ಚೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಸದನಕ್ಕೆ ಬಂದು ಉತ್ತರ ನೀಡಬೇಕಾಗಿರುವುದು ನಮ್ಮ ದೇಶದ ಸಂಪ್ರದಾಯ. ಆದರೆ ಈ ಸಂಪ್ರದಾಯವನ್ನು ಪ್ರಧಾನಿ ನರೇಂದ್ರ ಮೋದಿ ಮುರಿದಿದ್ದಾರೆ ಎಂದು ನುಡಿದರು. ಡಿಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ, ಮನಪಾ ಮಾಜಿ ಸದಸ್ಯ ನವೀನ್ ಡಿ ಸೋಜ, ಕಾಂಗ್ರೆಸ್ ಧುರೀಣ ಸತೀಶ್ ಪಿಂಗಲ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 7:23 pm

ಕನಕಗಿರಿ | ಅಖಿಲ ಭಾರತ ಮುಷ್ಕರ: ಫೆ.12ರಂದು ಸ್ವಯಂ ಪ್ರೇರಿತ ಬಂದ್ : ನಿರುಪಾದಿ ಬೆಣಕಲ್

ಕನಕಗಿರಿ: ಉದ್ಯೋಗ ಖಾತ್ರಿ ಯೋಜನೆ ಸಂಬಂಧಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಸ್ವತಂತ್ರ ವಲಯಗಳ ನೌಕರರ ಒಕ್ಕೂಟಗಳು ಫೆ.12ರಂದು ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ನಿರುಪಾದಿ ಬೆಣಕಲ್ ತಿಳಿಸಿದ್ದಾರೆ. ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಮುಷ್ಕರ ಸಂಬಂಧ ಪೋಸ್ಟರ್ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಲಪಡಿಸಿ ದಿನಗೂಲಿ ಕಾರ್ಮಿಕರಿಗೆ ದಿನಕ್ಕೆ 600 ರೂ. ನಿಗದಿ ಮಾಡಬೇಕು ಹಾಗೂ ವರ್ಷಕ್ಕೆ 200 ಮಾನವ ದಿನಗಳ ಕೆಲಸ ಒದಗಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ವಿಮಾ ಕಾಯ್ದೆ ರದ್ದುಪಡಿಸುವುದು ಹಾಗೂ ದುಡಿಯುವ ವರ್ಗಕ್ಕೆ ವಿರುದ್ಧವಾಗಿದೆ ಎನ್ನಲಾಗುತ್ತಿರುವ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ (ಲೇಬರ್ ಕೋಡ್) ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು. ದೇಶದ ಸಂಪತ್ತಿನ ಸಂರಕ್ಷಣೆ, ದುಡಿಯುವ ಜನರ ಹಕ್ಕುಗಳ ರಕ್ಷಣೆ ಮತ್ತು ಮಾನವ ವಿರೋಧಿ ನೀತಿಗಳ ವಿರುದ್ಧ ಈ ಸಾರ್ವತ್ರಿಕ ಮುಷ್ಕರ ನಡೆಯಲಿದೆ ಎಂದು ತಿಳಿಸಿದರು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿಐಟಿಯು ತಾಲೂಕಿನ ಮುಖಂಡರಾದ ಮಲ್ಲಪ್ಪ ಮ್ಯಾಗಡೆ, ನಿಂಗಪ್ಪ, ಶಿವು, ಲಕ್ಷ್ಮೀ ಸೋನಾರೆ, ಅಮರಮ್ಮ, ಮೌಲಾಹುಸೇನ ಸುಳೆಕಲ್, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ಬಾಳಪ್ಪ ಹುಲಿಹೈದರ, ಪರಶುರಾಮ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ, ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 7:18 pm

ಕನಕಗಿರಿ | ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹನುಮೇಶ ನಾಯಕ ಕರೆ

ಕನಕಗಿರಿ: ಫೆ.8 ಮತ್ತು 9ರಂದು ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾಲ್ಮೀಕಿ ಧರ್ಮದರ್ಶಿ ಸದಸ್ಯ ಹನುಮೇಶ ನಾಯಕ ಕರೆ ನೀಡಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯ ಅಂಗವಾಗಿ ವಿವಿಧ ಚಿಂತನಾ ಗೋಷ್ಠಿಗಳು ಹಾಗೂ ಕಾರ್ಯಕ್ರಮಗಳು ನಡೆಯಲಿದ್ದು, ಸಮಾಜದವರು ಅವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜಾಗೃತರಾಗಬೇಕೆಂದು ಮನವಿ ಮಾಡಿದರು. ಜಾತ್ರೆಗೆ ತೆರಳುವವರಿಗೆ 40 ಕ್ರೂಸರ್ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ವೈಯಕ್ತಿಕ ವಾಹನಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಾಜ ಬಾಂಧವರಿಗೆ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ರಾಮು ಆಗೋಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗರಾಜ ಇದ್ಲಾಪುರ, ನಗರ ಘಟಕ ಅಧ್ಯಕ್ಷ ನರಸಪ್ಪ ನಾಯಕ, ಪದಾಧಿಕಾರಿಗಳಾದ ನಿಂಗಪ್ಪ ನಾಯಕ, ಪಂಪಾಪತಿ ತರ್ಲಕಟ್ಟಿ, ಶರಣಪ್ಪ ಸೋಮಸಾಗರ, ಮಂಜುನಾಥ, ಯಂಕನಗೌಡ ಕಾಟಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 7:09 pm

ಕೊಪ್ಪಳ | 100ನೇ ದಿನಕ್ಕೆ ಕಾಲಿಟ್ಟ ಬಲ್ದೋಟ ವಿರೋಧಿ ಧರಣಿ

ಚುನಾವಣೆ ಬಹಿಷ್ಕಾರಕ್ಕೆ ಪಂಡಿತಾರಾಧ್ಯ ಶ್ರೀ ಕರೆ

ವಾರ್ತಾ ಭಾರತಿ 7 Feb 2026 7:03 pm

ಕಸತ್ಯಾಜ್ಯ ಮರುಪೂರಣಗೊಳಿಸುವ ಕಾರ್ಖಾನೆ ನಿರ್ಮಾಣಕ್ಕೆ ವಿರೋಧ

ಉಡುಪಿ: ನಗರದ ಬೀಡಿನಗುಡ್ಡೆ ವೃತ್ತದಿಂದ ಅಲೆವೂರು ಸಂಪರ್ಕಿಸುವ ಮುಖ್ಯ ರಸ್ತೆ ಸಮೀಪ ಕಸ ತ್ಯಾಜ್ಯಗಳನ್ನು ಮರುಪೂರಣ ಗೊಳಿಸುವ ಕಾರ್ಖಾನೆ ನಿರ್ಮಾಣದ ಹಂತದಲ್ಲಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಬರುವ 35 ವಾರ್ಡುಗಳಲ್ಲಿ ಸಂಗ್ರಹಗೊಂಡ ಕಸಗಳನ್ನು ಇಲ್ಲಿ ದಾಸ್ತಾನು ಇಟ್ಟು, ಹಂತ ಹಂತವಾಗಿ ನಿರ್ಮಾಣವಾಗುವ ಕಾರ್ಖಾನೆಯಲ್ಲಿ ಮರುಬಳಕೆಗೆ ಯೋಗ್ಯವಾದ ಕಚ್ಚಾವಸ್ತು, ಗೊಬ್ಬರ ಸಿದ್ಧಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಯೋಜನೆ ಸಮಾಜಕ್ಕೆ ಪೂರಕವಾಗಿದ್ದರೂ, ನಗರ ಭಾಗದಲ್ಲಿ ಕಾರ್ಖಾನೆ ರೂಪಿಸುತ್ತಿರುವ ಅವೈಜ್ಞಾನಿಕವಾಗಿದೆ. ನಗರದಿಂದ ಹೊರ ವಲಯದಲ್ಲಿರುವ ಜನವಸತಿ ರಹಿತ ಪ್ರದೇಶದಲ್ಲಿ ಈ ಕಾರ್ಖಾನೆ ಸ್ಥಾಪಿಸುವುದು ವೈಜ್ಞಾನಿಕ ಕ್ರಮವಾಗಿದೆ. ಈ ಕಾರ್ಖಾನೆಯಿಂದ ಪರಿಸರ ಮಾಲಿನ್ಯ ಉಂಟಾಗುವುದು ಖಂಡಿತ ಎಂದು ಸಮಾಜ ಸೇವಕ, ನಗರಸಭೆಯ ಮಾಜಿ ಸದಸ್ಯ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ. ಯಂತ್ರೋಪಕರಣಗಳ ಕರ್ಕಶ ಸದ್ದಿನಿಂದ ಶಬ್ಧ ಮಾಲಿನ್ಯವಾಗುದಲ್ಲದೆ, ಸಂಗ್ರಹಿಸಿಡುವ ಕಸ ತಾಜ್ಯಗಳಿಂದ ಗಬ್ಬು ವಾಸನೆ ಪರಿಸರದಲ್ಲಿ ಪಸರಿಸಿ ವ್ಯಾಧಿಗಳ ಹುಟ್ಟಿಗೆ ಕಾರಣವಾಗಬಹುದು. ಇಂಧನದಿಂದ ಕರ್ತವ್ಯ ನಿರ್ವಹಿಸುವ ಘನ ಯಂತ್ರಗಳು, ಹೊರಸೂಸುವ ಧೂಮದಿಂದ ವಾಯು ಮಾಲಿನ್ಯ ಉಂಟಾಗಿ ನಗರದ ಜನತೆಯು ಉಸಿರಾಡಲು ವಿಷಗಾಳಿಯನ್ನು ಸೇವಿಸಬೇಕಾದ ಎದುರಾಗುತ್ತದೆ. ಈ ಪ್ರದೇಶದಲ್ಲಿ ವಸತಿ ಸಮುಚ್ಚಯಗಳು, ವಸತಿಗಳು, ವಾಣಿಜ್ಯ ಕಟ್ಟಡಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಶೃದ್ಧಾ ಕೇಂದ್ರಗಳು, ವಲಸೆ ಕಾರ್ಮಿಕರ ಸಾವಿರಾರು ಜೋಪಡಿಗಳು ಇಲ್ಲಿವೆ. ನಗರ ಪ್ರದೇಶದಲ್ಲಿ ಮಾರಕ ಎನಿಸಿರುವ ಈ ಯೋಜನೆ ರದ್ದುಗೊಳಿಸಬೇಕು. ಆಯಾಕಟ್ಟಿನ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಪರಿಸರವಾಗಳು, ಸಂಘ ಸಂಸ್ಥೆಗಳ, ಹಾಗೂ ನಾಗರಿಕ ಸಮಾಜದ ಬೆಂಬಲ ಪಡೆದು ಪ್ರತಿಭಟಿನೆ ನಡೆಸಲಾಗು ವುದು ಎಂದು ನಿತ್ಯಾನಂದ ಒಳಕಾಡು ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 7 Feb 2026 7:01 pm

T20 World Cup- ಹರ್ಷಿತ್ ರಾಣಾ ಬದಲಿಯಾಗಿ ಬಂದ ಸಿರಾಜ್ ಗೆ ನೇರ ಕಣಕ್ಕೆ! ಜಸ್ಪ್ರೀತ್ ಬುಮ್ರಾ ಹೊರಗಿಡಲೇನು ಕಾರಣ?

ಗಾಯಾಳು ಹರ್ಷಿತ್ ರಾಣಾ ಅವರಿಗೆ ಬದಲಿಯಾಗಿ ಶುಕ್ರವಾರವಷ್ಟೇ ತಂಡಕ್ಕೆ ಸೇರ್ಪಡೆಗೊಂಡಿದ್ದ ಅನುಭವಿ ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ 2026 ಟೂರ್ನಿಯ ಮೊದಲ ಪಂದ್ಯದಲ್ಲೇ ಆಡುವ ಅವಕಾಶ ಸಿಕ್ಕಿದೆ. ಅಮೆರಿಕ ವಿರುದ್ಧ ಪಂದ್ಯದಲ್ಲಿ ತಂಡದ ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ ಅವರು ಅನಾರೋಗ್ಯದಿಂದ ಹೊರಗುಳಿಯಬೇಕಾದ ಕಾರಣ ಮೊಹಮ್ಮದ್ ಸಿರಾಜ್ ಅವರಿಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಫೆಬ್ರವರಿ 7 ಶನಿವಾರದಂದು ನಡುವೆ ನಡೆಯುತ್ತಿರುವ ಎ ಬಣದ ಪಂದ್ಯದಲ್ಲಿ ಟಾಸ್ ಗೆದ್ದ ಅಮೆರಿಕ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ. ಟಾಸ್ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು, ಜಸ್ಪ್ರೀತ್ ಬುಮ್ರಾ ಅವರು ಅನಾರೋಗ್ಯದಿಂದಾಗಿ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೊಹಮ್ಮದ್ ಸಿರಾಜ್ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರು ಗಾಯಗೊಂಡಿದ್ದರಿಂದ ಅವರನ್ನು ಹೊರಹಾಕಿ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು. ಹೀಗಾಗಿ ಶುಕ್ರವಾರವಷ್ಟೇ ಅವರು ತಂಡವನ್ನು ಸೇರಿಕೊಂಡಿದ್ದರು. ಇದೀಗ ಕಣಕ್ಕಿಳಿಯುವ ಅವಕಾಶ ಅವರಿಗೆ ಲಭಿಸಿದ್ದು ಟಿ20 ಸ್ಪೆಷಲಿಸ್ಟ್ ಮಧ್ಯಮ ವೇಗಿ ಅರ್ಶದೀಪ್ ಸಿಂಗ್ ಅವರ ಜೊತೆ ದಾಳಿಗಿಳಿಯಲಿದ್ದಾರೆ. ಭಾರತ ಪ್ಲೇಯಿಂಗ್ ಇಲೆವೆನ್ ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ

ವಿಜಯ ಕರ್ನಾಟಕ 7 Feb 2026 6:59 pm

ಫೆ.10: ಬ್ರಹ್ಮಾವರ ತಾಲ್ಲೂಕು ಮಟ್ಟದ ಸವಿತಾ ಸಮಾಜ ಸಮಾವೇಶ

ಉಡುಪಿ: ಬ್ರಹ್ಮಾವರ ತಾಲ್ಲೂಕು ಮಟ್ಟದ ಸವಿತಾ ಸಮಾಜದ ಘಟಕಗಳು ಹಾಗೂ ವಲಯ ಸಂಘಟನೆಗಳನ್ನು ಬಲಪಡಿಸುವ ಜೊತೆಗೆ, ಜಿಲ್ಲೆಯಾದ್ಯಂತ ಇರುವ ಘಟಕಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಫೆ.10ರಂದು ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಸಂದೀಪ್ ಪರಿಯಾಳ ತಿಳಿಸಿದ್ದಾರೆ. ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಿತಾ ಸಮಾಜದ ಘಟಕಗಳಲ್ಲಿ ಕ್ಷೇಮನಿಧಿ, ದರಪಟ್ಟಿ ಒಗ್ಗಟ್ಟು, ಪ್ರವಾಸ ಹಾಗೂ ವೃತ್ತಿಪರ ಸಂಘಟನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಯೋಜನೆ ಗಳನ್ನು ಅನುಷ್ಠಾನಗೊಳಿಸುವ ಗುರಿಯನ್ನು ಸಂಘಟನೆಯು ಹೊಂದಿದೆ ಎಂದರು. ಪ್ರತಿ ವರ್ಷ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಹಾವಂಜೆ ಘಟಕ, ಬಾರಕೂರು, ಕೊಕ್ಕರ್ಣೆ- ಮಂದಾರ್ತಿ, ಬ್ರಹ್ಮಾವರ, ಪೇತ್ರಿ ಘಟಕಗಳು ಹಾಗೂ ಕೋಟ ವಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊ ಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ರಾಜು ಸಿ.ಭಂಡಾರಿ, ಸವಿತಾ ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಬ್ರಹ್ಮಾವರ ತಾಲ್ಲೂಕು ಗೌರವಾಧ್ಯಕ್ಷ ಶಿವರಾಮ ಭಂಡಾರಿ, ಪ್ರಧಾನ ಕಾರ್ಯದರ್ಶಿ ಪುನೀತ್ ಭಂಡಾರಿ, ರಾಜ್ಯ ಪ್ರತಿನಿಧಿ ಬನ್ನಂಜೆ ಗೋವಿಂದ ಭಂಡಾರಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Feb 2026 6:59 pm

ಕೆಪಿಟಿಸಿಎಲ್ ಥೀಮ್ ಪಾರ್ಕ್ ಕಾಮಗಾರಿ ಶೀಘ್ರದಲ್ಲೇ ಪೂರ್ಣ : ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು : ಕೆಪಿಟಿಸಿಎಲ್ ವತಿಯಿಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಥೀಮ್ ಪಾರ್ಕ್ ಕಾಮಗಾರಿಯನ್ನು ಎಪ್ರಿಲ್ ಒಳಗಾಗಿ ಪೂರ್ಣಗೊಳಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್, ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಸರ್ವಜ್ಞನಗರ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲನೆ ನಡೆಸಿದ ಅವರು, ಎಚ್.ಬಿ.ಆರ್.ಲೇಔಟ್‍ನ 5ನೆ ಬ್ಲಾಕ್‍ನ ಕೆಪಿಟಿಸಿಎಲ್ ಸ್ಟೇಷನ್ ಬಳಿ ನಿರ್ಮಾಣಗೊಳ್ಳುತ್ತಿರುವ ಥೀಮ್ ಪಾರ್ಕ್‍ಗೂ ಭೇಟಿ ನೀಡಿದರಲ್ಲದೆ, ಗುಣಮಟ್ಟದ ಕಾಮಗಾರಿ ನಡೆಸುವುದರ ಜತೆಗೆ ತ್ವರಿತವಾಗಿ ಕೆಲಸ ಮುಗಿಸಬೇಕು. ಸಮಾಜಕ್ಕೆ ಹಸಿರಿನ ಮಹತ್ವ ತಿಳಿಸುವ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿರುವ ಈ ಥೀಮ್ ಪಾರ್ಕ್ ಕ್ಷೇತ್ರಕ್ಕೆ ಮಾತ್ರವಲ್ಲ, ರಾಜ್ಯದಲ್ಲೂ ಮಾದರಿಯಾಗಿರಬೇಕು ಎಂದರು. ಕೆಪಿಟಿಸಿಎಲ್ ನ ಜನಪರ ಬದ್ಧತೆಯನ್ನು ಸಾರುವ ಉದ್ದೇಶದಿಂದ ಈ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಇಲ್ಲಿ ತರಬೇತಿ ಕೇಂದ್ರ, ಗ್ರಾಮೀಣ ಆಟಗಳನ್ನು ಪ್ರೊತ್ಸಾಹಿಸುವ ಕೇಂದ್ರ, ಬಯಲು ರಂಗಮಂದಿರ, ವಾಕಿಂಗ್ ಪಾಥ್ ಹಾಗೂ ಓಪನ್ ಜಿಮ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ವ್ಯವಸ್ಥೆ, ಮ್ಯಾಪಿಂಗ್ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ರೂಪಿಸಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಅವರು ನಿರ್ದೇಶನ ನೀಡಿದರು. ನೀರು ಸರಬರಾಜು ಯೋಜನೆ: ಸರ್ವಜ್ಞನಗರ ಕ್ಷೇತ್ರ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕಳೆದ ಹಲವು ವರ್ಷಗಳಿಂದ ಇರುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಎಚ್.ಬಿ.ಆರ್.ಲೇಔಟ್ 1ನೆ ಬ್ಲಾಕ್, ಸುಬ್ಬಯ್ಯ ಲೇಔಟ್ 1ನೆ ಮುಖ್ಯರಸ್ತೆಯ ಸಮೀಪ ಅಳವಡಿಸಲಾಗುತ್ತಿರುವ ನೀರಿನ ಪೈಪ್‍ಲೈನ್ ಯೋಜನೆಯನ್ನು ಪರಿಶೀಲಿಸಿದ ಜಾರ್ಜ್, ಜಲ ಮಂಡಳಿ ಅಧಿಕಾರಿಗಳಿಂದ ಈ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದು ತ್ವರಿತವಾಗಿ ಕೆಲಸ ಮುಂದುವರಿಸುಂತೆ ಸೂಚಿಸಿದರು. ಶಾಲಾ ಕೊಠಡಿ ಮತ್ತು ಊಟದ ಕೊಠಡಿ ಉದ್ಘಾಟನೆ: ಇದೇ ವೇಳೆ ಸಚಿವರು ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಎಚ್.ಬಿ.ಆರ್.ವಾರ್ಡ್ ಸಂಖ್ಯೆ 78ರಲ್ಲಿರುವ ಕಾಡುಗೊಂಡನಹಳ್ಳಿ ಸರಕಾರಿ ಕನ್ನಡ ಮಾದರಿ ಪಾಠಶಾಲೆಯಲ್ಲಿ ನಿರ್ಮಿಸಿರುವ ಕೊಠಡಿ ಹಾಗೂ ಊಟದ ಕೊಠಡಿಯನ್ನು ಉದ್ಘಾಟಿಸಿದರು. ಅಲ್ಲದೆ, ವೀರಣ್ಣಪಾಳ್ಯ ಮುಖ್ಯರಸ್ತೆ ಮತ್ತು 4ನೆ ಅಡ್ಡರಸ್ತೆ-ಇಂದಿರಾ ಕ್ಯಾಂಟೀನ್ ರಸ್ತೆ ಮತ್ತು ನಾಗವಾರ ಮುಖ್ಯರಸ್ತೆಯಿಂದ ರೈಲ್ವೆ ಗೇಟ್‍ವರೆಗಿನ ವಿನಾಯಕ ದೇವಸ್ಥಾನದ ರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅನುದಾನದಡಿಯಲ್ಲಿ ಮಂಜೂರು ಮಾಡಲಾದ ರಸ್ತೆ ಕಾಮಗಾರಿಗಳಿಗೆ ಅವರು ಗುದ್ದಲಿ ಪೂಜೆ ನೆರವೇರೆಸಿದರು. ಜತೆಗೆ ಗೋವಿಂದಪುರ ಮುಖ್ಯರಸ್ತೆ ಮತ್ತು ನೆಹರು ರಸ್ತೆ, ಹೆಣ್ಣೂರು ರಸ್ತೆಯಿಂದ ಕುಲ್ಲಪ್ಪ ವೃತ್ತದವರೆಗೆ ಪ್ರಗತಿಯಲ್ಲಿರುವ ಪಾದಚಾರಿ ಮಾರ್ಗ ಹಾಗೂ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯ ಪ್ರಗತಿ ಪರಿಶೀಲನೆ ಅವರು ನಡೆಸಿದರು. ಜಲಸುಸ್ಥಿರತೆಗೆ ಕೊಡುಗೆ ನೀಡುತ್ತಿರುವ ಬಾಣಸವಾಡಿ ಕೆರೆ: ಕ್ಷೇತ್ರದಲ್ಲಿ ಭವಿಷ್ಯದ ಜಲಸುಸ್ಥಿರತೆಗೆ ಕೊಡುಗೆ ನೀಡುತ್ತಿರುವ ಬಾಣಸವಾಡಿ ಕೆರೆಯ ಪುನಃಶ್ಚೇತನ ಕಾಮಗಾರಿಯನ್ನು ಪರಿಶೀಲಿಸಿದ ಜಾರ್ಜ್, ಕೆರೆಯು ಬೆಂಗಳೂರು ಮಹಾನಗರದ ಪ್ರಮುಖ ಕೆರೆಗಳಲ್ಲೊಂದಾಗಿದ್ದು, ಕೆರೆಯ ಪುನಃಶ್ಚೇತನ ಹಾಗೂ ಅಭಿವೃದ್ಧಿಯು, ಭವಿಷ್ಯದಲ್ಲಿ ನಗರಕ್ಕೆ ನೀರಿನ ಕೊರತೆ ಬಾರದಂತೆ ಕೊಡುಗೆ ನೀಡಲಿದೆ ಎಂದು ತಿಳಿಸಿದರು. ಒಳಚರಂಡಿ ವ್ಯವಸ್ಥೆಯ ಪುನಶ್ಚೇತನ ಕಾಮಗಾರಿಗೆ ಚಾಲನೆ: ಎಚ್‍ಆರ್‍ಬಿಆರ್ ಲೇಔಟ್ 1ನೆ ಬ್ಲಾಕ್ 8ನೆ ಮುಖ್ಯರಸ್ತೆಯ ಸಮೀಪದಲ್ಲಿ ಒಳಚರಂಡಿ ವ್ಯವಸ್ಥೆಯ ಪುನಃಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ ಸಚಿವರು, ಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ನೀರಿನ ಸರಾಗ ಹರಿವಿಗೆ ಅನುಕೂಲವಾಗುವಂತೆ ಚರಂಡಿ ವ್ಯವಸ್ಥೆಯನ್ನು ಪರಿಷ್ಕರಿಸಲಾಗುತ್ತಿದ್ದು, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಾದ್ಯಂತ ಒಳಚರಂಡಿ ಮೂಲಸೌಕರ್ಯ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಬಾಣಸವಾಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭ: ಬಾಣಸವಾಡಿ ಮುಖ್ಯ ರಸ್ತೆಯ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ ಓ ಪ್ಲಾಂಟ್) ಉದ್ಘಾಟಿಸಿದ ಜಾರ್ಜ್, ಕ್ಷೇತ್ರದ ಜನತೆಯ ಉತ್ತಮ ಆರೋಗ್ಯಕ್ಕಾಗಿ, ಶುದ್ಧ ಕುಡಿಯುವ ನೀರಿನ ಮೂಲಸೌಕರ್ಯವನ್ನು ಕಲ್ಪಿಸಲಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ನೀರು ಜನತೆಗೆ ಲಭ್ಯವಾಗುತ್ತಿದೆ ಎಂದು ತಿಳಿಸಿದರು. ಕ್ರೀಡಾ ಸಂಕೀರ್ಣ ಉನ್ನತೀಕರಣ ಪರಿಶೀಲನೆ: ಕ್ಷೇತ್ರದ ಯುವಜನತೆಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ, ಕ್ಷೇತ್ರದ ಓಎಂಬಿಆರ್ ಲೇಔಟ್‍ನಲ್ಲಿನ ಆಟದ ಮೈದಾನದಲ್ಲಿ ಉನ್ನತೀಕರಣಗೊಳ್ಳುತ್ತಿರುವ ಕ್ರೀಡಾ ಸಂಕೀರ್ಣ ಹಾಗೂ ಇನ್ನಿತರ ಮೂಲಸೌಕರ್ಯ ವ್ಯವಸ್ಥೆಗಳ ಕಾಮಗಾರಿಗಳನ್ನು ಇದೇ ವೇಳೆ ಅವರು ಪರಿಶೀಲಿಸಿದರು. ಕ್ರೀಡಾ ಸಂಕೀರ್ಣದ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ತ್ವರಿತವಾಗಿ ಕೆಲಸ ಮುಗಿಸಿ ಅದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಬಿಡಿಎ ಆಯುಕ್ತರು ಹಾಗೂ ಇತರೆ ಅಧಿಕಾರಿಗಳಿಗೆ ಜಾರ್ಜ್ ತಾಕೀತು ಮಾಡಿದರು.

ವಾರ್ತಾ ಭಾರತಿ 7 Feb 2026 6:58 pm

ಎರಡನೇ ಆವೃತ್ತಿ ಕರಾವಳಿ ಟೆಕ್ವಾಟಡೋ ಚಾಂಪಿಯನ್‌ಶಿಪ್

ಉಡುಪಿ, ಫೆ.7: ಉಡುಪಿ ಜಿಲ್ಲೆ ಶೈಕ್ಷಣಿಕ ಮಾತ್ರವಲ್ಲ ಕ್ರೀಡಾ ಕ್ಷೇತ್ರ ದಲ್ಲೂ ಮುಂದುವರೆದಿದೆ. ಆತ್ಮರಕ್ಷಣೆಯ ಕಲೆ ಬರೀ ಕ್ರೀಡೆಗೆ ಸೀಮಿತ ವಲ್ಲ. ಬದಲಾಗಿ ಅದು ನಮ್ಮ ಜೀವನದ ಅಡಿಪಾಯವಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ. ಕರ್ನಾಟಕ ಟೆಕ್ವಾಟಡೋ ಪ್ರಾಯೋಜಕತ್ವದಲ್ಲಿ ಯಕ್ಷಿತ್ ಯುವ ಫೌಂಡೇಶನ್‌ನ ಕೃಪಾಪೋಷಣೆ ಅಡಿಯಲ್ಲಿ ಉಡುಪಿ ಜಿಲ್ಲಾ ಟೆಕ್ವಾಟಡೋ ಸಂಸ್ಥೆ ವತಿಯಿಂದ ಇತ್ತೀಚೆಗೆ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಸಬ್ ಜೂನಿಯರ್, ಕ್ಯಾಡೆಟ್, ಜೂನಿಯರ್ ಮತ್ತು ಸೀನಿಯರ್ ವಿಭಾಗದ, ಎರಡನೇ ಆವೃತ್ತಿಯ ಕರಾವಳಿ ಟೆಕ್ವಾಟಡೋ ಚಾಂಪಿಯನ್ ಶಿಪ್ -2026ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಉಡುಪಿ ಜಿಲ್ಲಾ ಟೆಕ್ವಾಟಡೋ ಸಂಸ್ಥೆಯ ಗೌರವಾಧ್ಯಕ್ಷ ವಾದಿರಾಜ ರಾವ್ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಟೆಕ್ವಾಟಡೋ ಸಂಸ್ಥೆಯ ಅಧ್ಯಕ್ಷೆ ರಮ್ಯಾ ವಿ. ವಹಿಸಿದ್ದರು. ಯಕ್ಷಿತ್ ಯುವ ಫೌಂಡೇಶನ್ ಅಧ್ಯಕ್ಷ ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್-2025ರ ಪುರಸ್ಕೃತ, ಶ್ರೀಪಾದ ರವಿ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಶಾರೀರಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಜಗದೀಶ್ ಗಸ್ತಿ, ಓಪುಲಾ ಸಾಫ್ಟ್‌ವೇರ್‌ನ ಸಿಇಒ ಸುಭಾಷ್ ಸಾಲ್ಯಾನ್, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭು, ಯಕ್ಷಿತ್ ಯುವ ಫೌಂಡೇಶನ್ ಟ್ರಸ್ಟಿ ಸ್ವಪ್ನಿಲ್ ಪಾಟೀಲ್, ಕ್ರೀಡಾಕೂಟದ ಆಯೋಜಕ ಕಾರ್ಯದರ್ಶಿ ರಾಜಶೇಖರ್ ಕೆ.ಪಿ. ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 350ಕ್ಕಿಂತಲೂ ಹೆಚ್ಚಿನ ಕ್ರೀಡಾಪಟುಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಗೆದ್ದ ವಿಜೇತರಿಗೆ ಪದಕ ಮತ್ತು ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಸಮಾರೋಪ ಸಮಾರಂಭ ದಲ್ಲಿ ಚಾಂಪಿಯನ್ ತಂಡಗಳಿಗೆ ಟ್ರೋಫಿ ವಿತರಿಸಲಾಯಿತು. ಅಕ್ಷಯ್ ಹೆಗಡೆ ಮತ್ತು ಗೀತಾ ವಾದಿರಾಜ ರಾವ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 7 Feb 2026 6:54 pm

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯಲು ಚಿಂತನೆ

ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದಿದೆ. ಸೇನಾ ಕ್ಯಾಂಟೀನ್ ಗಳಲ್ಲಿ ಮಾಜಿ ಸೈನಿಕರಿಗೆ ಸಬ್ಸಿಡಿ ದರದಲ್ಲಿ ಸ್ಟೋರ್ ಇರುವ ರೀತಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಸಬ್ಸಿಡಿ ದರದಲ್ಲಿ ಸ್ಟೋರ್ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತಾಗಿ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಶನಿವಾರ ನಡೆದ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್)‌ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಬಗ್ಗೆ ತಿಳಿಸಿದರು.

ವಿಜಯ ಕರ್ನಾಟಕ 7 Feb 2026 6:49 pm

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆಗೆ ಬಿತ್ತು ಸದ್ಯಕ್ಕೆ ಬ್ರೇಕ್?

ನಮ್ಮ ಮೆಟ್ರೋ ಪ್ರಯಾಣಿಕರ ಪಾಲಿಗೆ ಇದು ಗುಡ್ ನ್ಯೂಸ್. ರಾಜ್ಯದಲ್ಲಿ ಮೆಟ್ರೋ ದರ ಏರಿಕೆಗೆ ಸದ್ಯ ಬ್ರೇಕ್ ಬಿದ್ದಿದೆ. ಹಾಗಂತ ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿಕೊಂಡಿದ್ದಾರೆ. ಮೆಟ್ರೋ ದರ ಏರಿಕೆಯ ಕುರಿತಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ತೀವ್ರ ಜಟಾಪಟಿ ನಡೆಯುತ್ತಿರುವ ಸಂದರ್ಭದಲ್ಲೇ ದರ ಏರಿಕೆ ಪ್ರಸ್ತಾವದ ಬಗ್ಗೆ ಕೇಂದ್ರ ಸಚಿವ ಮನೋಹರ್ ಕಟ್ಟರ್ ಅವರ ಜೊತೆಗೆ ಮಾತುಕತೆಯನ್ನು ನಡೆಸಿದ್ದೇನೆ ಎಂದು ಸೂರ್ಯ ತಿಳಿಸಿದ್ದಾರೆ. ಅಲ್ಲದೆ ಸೋಮವಾರದಿಂದ ದರ ಏರಿಕೆ ಮಾಡದಂತೆ ಸಚಿವರು ಸಮಿತಿಗೆ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಜಯ ಕರ್ನಾಟಕ 7 Feb 2026 6:42 pm