SENSEX
NIFTY
GOLD
USD/INR

Weather

22    C
... ...View News by News Source

SIR ವಿರುದ್ಧ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಕೋಲ್ಕತಾ,ಫೆ.5: ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯಿಂದಾಗಿ ರಾಜ್ಯದ ಜನತೆ ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆಂದು ಆರೋಪಿಸುವ ನಿರ್ಣಯವನ್ನು ಪಶ್ಚಿಮಬಂಗಾಳ ಸರಕಾರವು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ. ನಿಯಮ ಸಂಖ್ಯೆ 169ರಡಿ ನಿರ್ಣಯವನ್ನು ಸದನದಲ್ಲಿ ಮಂಡಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಶೋವನ್‌ದೇಬ್ ಚಟ್ಟೋಪಾಧ್ಯಾಯ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಎಸ್‌ಐಆರ್ ಅಭಿಯಾನದಲ್ಲಿ ಈವರೆಗೆ 107 ಮಂದಿ ಆತಂಕಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಹೇಳಿದರು. ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ, ಸಿಇಸಿಯು ಕಿರುಕುಳದ ಆಯೋಗವಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದರು. ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕರು, ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರೆಗೆ ಅಡ್ಡಿಪಡಿಸುವ ಉದ್ದೇಶದಿಂದಲೇ ಮಮತಾ ಬ್ಯಾನರ್ಜಿ ಅವರು ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದರೆಂದು ಆಪಾದಿಸಿದರು.

ವಾರ್ತಾ ಭಾರತಿ 5 Feb 2026 9:32 pm

ರಾಯಚೂರಿನಲ್ಲಿ ಕೃಷಿ ಮೇಳಕ್ಕೆ ಭರ್ಜರಿ ಸ್ಪಂದನೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಉದ್ಘಾಟನೆ

ರಾಯಚೂರು : ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಕೃಷಿ ಮೇಳಕ್ಕೆ ರೈತರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ಕೃಷಿ ಮೇಳವನ್ನು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಗುರುವಾರ ಉದ್ಘಾಟಿಸಿದರು. ಕೃಷಿ ಮೇಳಕ್ಕೆ ನಿರ್ಮಿಸಲಾದ ಸ್ವಾಗತ ಕಮಾನು ವಿಶಿಷ್ಟ ವಿನ್ಯಾಸದಲ್ಲಿದ್ದು, ರೈತರನ್ನು ಕೈಬೀಸಿ ಆಹ್ವಾನಿಸುವಂತಿತ್ತು. ಮೇಳದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವೆಗಳ ಇಲಾಖೆ ಸೇರಿದಂತೆ ರೈತಪರ ಹಲವಾರು ಇಲಾಖೆಗಳು ಮಳಿಗೆಗಳನ್ನು ಸ್ಥಾಪಿಸಿ ಅಗತ್ಯ ಮಾಹಿತಿಯನ್ನು ರೈತರಿಗೆ ಒದಗಿಸುತ್ತಿವೆ. ಕೃಷಿ ವಿಶ್ವವಿದ್ಯಾಲಯವು ಮೇಳದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ರೈತ ಕೇಂದ್ರೀಕೃತ ಚಟುವಟಿಕೆಗಳನ್ನು ವ್ಯಾಪಕವಾಗಿ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಜಲಾನಯನ ಅಭಿವೃದ್ಧಿ ಯೋಜನೆಯಡಿ ವಿವಿಧ ಬಗೆಯ ಮಣ್ಣುಗಳ ಮಾದರಿ ಪ್ರದರ್ಶನ ಹಾಗೂ ಮಣ್ಣಿಗೆ ಹೊಂದುವ ಬೆಳೆ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣಾ ವಿಭಾಗದ ವತಿಯಿಂದ ಸವಳು–ಜವಳು ಮಣ್ಣನ್ನು ಫಲವತ್ತುಗೊಳಿಸುವ ವಿಧಾನಗಳು, ನೀರಿನ ಸಮರ್ಪಕ ಬಳಕೆ ಕುರಿತ ಮಾಹಿತಿ ನೀಡಲಾಗುತ್ತಿದೆ. ಭತ್ತ, ಹತ್ತಿ, ಬೇಳೆಕಾಳು, ಎಣ್ಣೆಕಾಳು, ಸಿರಿಧಾನ್ಯಗಳ ವಿವಿಧ ತಳಿಗಳು, ಸೂರ್ಯಕಾಂತಿ ಬೆಳೆಯನ್ನು ಲಾಭದಾಯಕವಾಗಿ ಬೆಳೆಯುವ ಕೃಷಿ ಕ್ರಮಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ನೈಸರ್ಗಿಕ ವಿಪತ್ತು ಹಾಗೂ ಕೃಷಿ ಹವಾಮಾನ ವಿಭಾಗದಿಂದ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ಕೃಷಿಗೆ ಸಂಬಂಧಿಸಿದ ನವೀನ ಮಾಹಿತಿಯನ್ನು ರೈತರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ವಿಶೇಷ ಆಕರ್ಷಣೆಯಾಗಿದ್ದು, ಕೀಟಗಳ ಜೀವವಿಧಾನ ಹಾಗೂ ವೈವಿಧ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ವಿವಿಧ ಬಗೆಯ ಉತ್ತಮ ಗುಣಮಟ್ಟದ ಬೀಜ ತಳಿಗಳು, ಕೀಟನಾಶಕಗಳು ಹಾಗೂ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನವೂ ರೈತರ ಗಮನ ಸೆಳೆಯುತ್ತಿದೆ. ಈ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸನಗೌಡ ದದ್ದಲ್, ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಪಾಮಯ್ಯ ಮುರಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಎಸ್‌ಪಿ ಅರುಣಾಂಗ್ಷು ಗಿರಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ, ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 9:31 pm

ಕಾರ್ಕಳ: ಸ್ಫೋಟಕ ಬಳಸಿ ಅಕ್ರಮ ಬಂಡೆ ಸ್ಫೋಟ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಕಾರ್ಕಳ, ಫೆ.5: ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸ್ಪೋಟಕವನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಕ್ಕುಂದೂರು ಗ್ರಾಮ ಅಯ್ಯಪ್ಪ ನಗರ ನಿವಾಸಿ ಟಿ. ರವಿಚಂದ್ರ (55) ಹಾಗೂ ಆತನ ಮಗ ಪವನ್ ಕುಮಾರ್ (31) ಬಂಧಿತ ಆರೋಪಿಗಳು. ಇವರು ಅಕ್ರಮವಾಗಿ ಯಾವುದೇ ಪರವಾನಿಗೆ ಹೊಂದದೇ ಸ್ಪೋಟಕ ಬಳಸಿ ಕಲ್ಲುಗಳನ್ನು ಸ್ಫೋಟಿಸಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಳೆದ ಜ.21ರಂದು ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆಯನ್ನು ಕೈಗೊಂಡ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್‌ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ವಾರ್ತಾ ಭಾರತಿ 5 Feb 2026 9:30 pm

ರಾಯಚೂರಿನಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ನಾಟಕೋತ್ಸವಕ್ಕೆ ಚಾಲನೆ

ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ವಿದ್ಯಾರ್ಥಿಗಳು ಅರಿಯಬೇಕು: ತಹಶೀಲ್ದಾರ್ ಅಬ್ದುಲ್ ಮಹೀದ್

ವಾರ್ತಾ ಭಾರತಿ 5 Feb 2026 9:27 pm

ಹಿಂದಿ ಮಾತ್ರವೇ ಬಲ್ಲ ಉತ್ತರ ಭಾರತೀಯರು ಪಾನಿಪೂರಿ ಮಾರಲು ತಮಿಳುನಾಡಿಗೆ ಬರುತ್ತಾರೆ: ವಿವಾದ ಸೃಷ್ಟಿಸಿದ ಸಚಿವ ಪನ್ನೀರ್‌ಸೆಲ್ವಂ ಹೇಳಿಕೆ

ಚೆನ್ನೈ,ಫೆ.5: ರಾಜ್ಯದ ದ್ವಿಭಾಷಾ ನೀತಿಯನ್ನು ಸಮರ್ಥಿಸುವ ಮತ್ತು ಉತ್ತರಭಾರತದ ರಾಜ್ಯಗಳ ವಲಸೆ ಕಾರ್ಮಿಕರು ತೀರಾ ಕೆಳಮಟ್ಟದ ಉದ್ಯೋಗಗಳಿಗಷ್ಟೇ ಸೀಮಿತರಾಗಿದ್ದಾರೆಂಬ ಹೇಳಿಕೆಗಳನ್ನು ನೀಡುವ ಮೂಲಕ ತಮಿಳುನಾಡು ಕೃಷಿ ಸಚಿವ ಎಂ.ಆರ್.ಕೆ. ಪನ್ನೀರ್‌ಸೆಲ್ವನ್ ಅವರು ವಿವಾದದ ಕಿಡಿ ಹಚ್ಚಿದ್ದಾರೆ. ಚೆನ್ನೈನಲ್ಲಿ ಗುರುವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಪನ್ನೀರ್‌ಸೆಲ್ವನ್, ‘‘ಉತ್ತರ ಭಾರತದ ಜನರು ಹಿಂದಿ ಭಾಷೆಯನ್ನು ಮಾತ್ರವೇ ಕಲಿತಿರುವುದರಿಂದ ಅವರಿಗೆ ತಮಿಳುನಾಡಿನಲ್ಲಿ ಸೀಮಿತ ಉದ್ಯೋಗಾವಕಾಶಗಳಷ್ಟೇ ಇವೆ ಮತ್ತು ಅವರು ಅತ್ಯಂತ ಕಡಿಮೆ ಆದಾಯ ತರುವ ಕೆಲಸಗಳನ್ನಷ್ಟೇ ಮಾಡಬೇಕಾಗುತ್ತದೆ. ಆದರೆ ತಮಿಳುನಾಡಿನ ವಿದ್ಯಾರ್ಥಿಗಳು ತಮಿಳು ಹಾಗೂ ಇಂಗ್ಲೀಷ್ ಕಲಿಯುವುದರಿಂದ ಭಾರೀ ಪ್ರಯೋಜನ ಪಡೆಯುತ್ತಿದ್ದಾರೆಂದು ಹೇಳಿದರು. ‘‘ಉತ್ತರಭಾರತದವರು ತಮಿಳುನಾಡಿಗೆ ಟೇಬಲ್‌ಗಳನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಬರುತ್ತಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಪಾನಿಪೂರಿ ಮಾರಾಟಗಾರರಾಗಿ ಕೆಲಸ ಮಾಡಲು ಇಲ್ಲಿಗೆ ಬರುವವರು ಕೇವಲ ಹಿಂದಿ ಭಾಷೆಯನ್ನು ಮಾತ್ರವೇ ಕಲಿತವರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ನಾವು ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿದ್ದು, ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಕಲಿತುಕೊಂಡಿದ್ದೇವೆ. ನಮ್ಮ (ತಮಿಳುನಾಡಿನ) ಮಕ್ಕಳು ವಿದೇಶಕ್ಕೆ ಹೋಗುತ್ತಿದ್ದಾರೆ ಮತ್ತು ಅಮೆರಿಕ, ಲಂಡನ್‌ಗಳಲ್ಲಿ ಕೋಟಿ ರೂ. ಸಂಪಾದಿಸುವಂತಹ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ’’ ಎಂದರು. ಎಂ.ಆರ್.ಕೆ. ಪನ್ನೀರ್‌ಸೆಲ್ವಂ ಅವರ ಹೇಳಿಕೆಯನ್ನು ಹೊರರಾಜ್ಯಗಳ ಪ್ರತಿಪಕ್ಷ ನಾಯಕರು ತೀವ್ರವಾಗಿ ಖಂಡಿಸಿದ್ದು, ಅವು ಸಂವೇದನಾರಹಿತವಾಗಿವೆ ಹಾಗೂ ವಿಭಜನವಾದಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಪನ್ನೀರ್‌ಸೆಲ್ವಂ ಅವರ ಹೇಳಿಕೆ ವಿವಾದಕ್ಕೆ ಗ್ರಾಸವಾದ ಬೆನ್ನಲ್ಲೇ ಡಿಎಂಕೆ ನಾಯಕರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಪಕ್ಷದ ವಕ್ತಾರ ಡಾ.ಸೈಯದ್ ಹಫೀಝುಲ್ಲಾ ಅವರು ಹೇಳಿಕೆಯೊಂದನ್ನು ನೀಡಿ, ಕಾನೂನುಬದ್ಧವಾಗಿ ಮಾಡುವ ಯಾವುದೇ ಕೆಲಸ ಕೂಡಾ ಘನತೆಯದ್ದೇ ಆಗಿದೆ. ಡಿಎಂಕೆ ಪಕ್ಷವು ಹಿಂದಿ ಭಾಷಿಕರನ್ನಾಗಲಿ ಅಥವಾ ಅವರು ಮಾಡುವ ಕೆಲಸವನ್ನಾಗಲಿ ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಪನ್ನೀರ್ ಸೆಲ್ವಂ ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದ್ದು, ಉತ್ತರ ಭಾರತೀಯರನ್ನು ನಿಂದಿಸುವಂತಹ ಯಾವುದೇ ಉದ್ದೇಶ ಅವರಿಗಿರಲಿಲ್ಲ ಎಂದು ಡಿಎಂಕೆಯ ಲೋಕಸಭಾ ಸದಸ್ಯ ಟಿ.ಆರ್.ಬಾಲು ಹೇಳಿದ್ದಾರೆ. ಹಿಂದಿ ಹೇರಿಕೆಯನ್ನು ರಾಜ್ಯವು ದೀರ್ಘಕಾಲದಿಂದಲೂ ವಿರೋಧಿಸುತ್ತಾ ಬಂದಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 5 Feb 2026 9:27 pm

ʼನಮ್ಮ ಮೆಟ್ರೋ ದರ ಏರಿಕೆʼ ನಮ್ಮ ವ್ಯಾಪ್ತಿಗೆ ಬರುವುದಿಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆಗೆ ಸರಕಾರ ಒಪ್ಪಿಗೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನನ್ನ ಬಳಿಗೆ ಇನ್ನು ಯಾವುದೇ ಕಡತ ಬಂದಿಲ್ಲ. ಕೇಂದ್ರ ಸರಕಾರದ ಕಾರ್ಯದರ್ಶಿ, ಬಿಎಂಆರ್‍ಸಿಎಲ್ ಮುಖ್ಯಸ್ಥರ ಒಂದು ಸಮಿತಿ ಇದೆ. ಅವರು ಬೆಲೆ ಏರಿಕೆ ತೀರ್ಮಾನ ಮಾಡಿದ್ದು, ನನಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ತಮ್ಮದೇ ಕೇಂದ್ರ ಸಚಿವರಿಗೆ ಈ ವಿಚಾರ ಹೇಳಬೇಕು. ಅವರು ಹೇಳಲು ಸಾಧ್ಯವೇ?. ನಮ್ಮ ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಸರಕಾರದ ವರೆಗೆ ಬರುವುದಿಲ್ಲ. ಕೇಂದ್ರದ ಸಚಿವಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿಗಳಿದ್ದರೂ ತೀರ್ಮಾನ ಮಾಡುವುದು’ ಎಂದು ತಿಳಿಸಿದರು. ಮೆಟ್ರೋ ದರ ಏರಿಕೆ ಹೇಗೆ ಬದಲಾವಣೆ ಮಾಡಲು ಸಾಧ್ಯ. ಬಿಜೆಪಿಯವರು ಕರ್ನಾಟಕದ ವರನ್ನೇ ಈ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಅನುಮತಿ ಕೊಡಿಸಲಿ. ಕೇಂದ್ರ ಸರಕಾರ ಮೆಟ್ರೋ ಯೋಜನೆಗೆ ನೀಡುವುದು ಕೇವಲ ಶೇ.12-13ರಷ್ಟು ಮಾತ್ರ ಎಂದು ಹೇಳಿದರು. ನಮ್ಮ ಮೆಟ್ರೋ ದರ ಏರಿಕೆ ವಿಚಾರ ನಮಗೆ ಸಂಬಂಧವಿಲ್ಲ. ಈ ಬಗ್ಗೆ ಅವರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ಹೀಗಾಗಿ ನಾನು ಸಂಪುಟದಲ್ಲಿ ಹಾಗೂ ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಲು ಆಗಿಲ್ಲ. ಮೆಟ್ರೋ ಪ್ರಯಾಣ ದರವನ್ನು ನಾನು ಬೇರೆ ನಗರಗಳ ದರದ ಜೊತೆ ಹೋಲಿಕೆ ಮಾಡಿ ನೋಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾಳೆ(ಫೆ.6) ಮಂಗಳೂರಿಗೆ ಹೋಗುತ್ತಿದ್ದೇನೆ, ನಾಡಿದ್ದು ರಾಯಚೂರು, ಅನಂತರ ಗದಗಕ್ಕೆ ಹೋಗುತ್ತಿದ್ದೇನೆ. ದಿಲ್ಲಿಗೆ ಹೋಗುವ ಸಂಬಂಧ ನಮ್ಮ ಕಾರ್ಯದರ್ಶಿ ಪ್ರವಾಸ ಪಟ್ಟಿ ಬಿಡುಗಡೆ ಮಾಡುತ್ತಾರೆಂದ ಅವರು, ನಾನು ಹೊಸದಿಲ್ಲಿಗೆ ಹೋದರೆ, ನಿಮಗೆ(ಮಾಧ್ಯಮ ಪ್ರತಿನಿಧಿಗಳಿಗೆ) ತಿಳಿಸಿಯೇ ಹೋಗುತ್ತೇನೆ ಎಂದು ಉತ್ತರಿಸಿದರು.

ವಾರ್ತಾ ಭಾರತಿ 5 Feb 2026 9:24 pm

ಬೆಂಗಳೂರು ಬಿಸಿನೆಸ್ ಕಾರಿಡಾರ್: ಒಂದೂವರೆ ವರ್ಷದಲ್ಲಿ ಮೊದಲ ಹಂತದ ಪೂರ್ಣಗೊಳಿಸುತ್ತೇವೆ ಎಂದ ಡಿಕೆ ಶಿವಕುಮಾರ್

ಬೆಂಗಳೂರು ಬಿಸಿನೆಸ್‌ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಮುಂದಿನ ಒಂದೂವರೆ ವರ್ಷದೊಳಗೆ ಪೂರ್ಣ ಮಾಡುತ್ತೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈಗಾಗಲೇ 600 ಭೂಮಾಲೀಕರು ಭೂಮಿ ನೀಡಲು ಒಪ್ಪಿಗೆ ನೀಡಿದ್ದಾರೆ. ಹಲವರಿ ಪರಿಹಾರ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ವಿಜಯ ಕರ್ನಾಟಕ 5 Feb 2026 9:19 pm

ಮಹಿಳೆಯರ ಪ್ರೀಮಿಯರ್ ಲೀಗ್ | ಆರ್‌ಸಿಬಿಗೆ ಕಪ್‌ ಗೆಲ್ಲಲು ಬೇಕು 204 ರನ್‌

ವಡೋದರ : ವಿಮೆನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಆರ್‌ ಸಿ ಬಿ ತಂಡಕ್ಕೆ 204 ರನ್ ಬೇಕಾಗಿದೆ. ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಡೆಲ್ಲಿ 204 ರನ್‌ ಗಳ ಗುರಿ ನೀಡಿದೆ.

ವಾರ್ತಾ ಭಾರತಿ 5 Feb 2026 9:19 pm

ಮೇಘಾಲಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗೆ ನರಕವಾಯ್ತು ಬದುಕು; ಸ್ಫೋಟ ದುರಂತದಲ್ಲಿ 16 ಕಾರ್ಮಿಕರ ಸಾವು

ಅಕ್ರಮ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ 16ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾಗಿರುವ ಮೇಘಾಲಯದಿಂದ ವರದಿಯಾಗಿದೆ. ಇಲ್ಲಿನ ಜಿಲ್ಲೆಯ ಥಾಂಗ್ಸು ಎಂಬ ಪ್ರದೇಶದಲ್ಲಿನ ಅಕ್ರಮ ಗಣಿಯೊಂದರಲ್ಲಿ ಫೆಬ್ರವರಿ 5 ಗುರುವಾರದಂದು ಈ ದುರ್ಘಟನೆ ನಡೆದಿದ್ದು ಈವರೆಗೆ 16 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಫೋಟದ ಸಮಯದಲ್ಲಿ ಗಣಿಯೊಳಗೆ ಎಷ್ಟು ಕಾರ್ಮಿಕರು ಸಿಲುಕಿದ್ದರು ಎಂಬ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಗಣಿಯೊಳಗಿನ ಕಿರಿದಾದ ಸುರಂಗದಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದ್ದು ರಕ್ಷಣಾ ಕಾರ್ಯ ಮುಂದುವರಿದಿದೆ. ಏತನ್ಮಧ್ಯೆ ಸ್ಫೋಟದ ವೇಳೆ ಗಾಯಗೊಂಡಿದ್ದ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದೆ. ಆತನಿಗೆ ಸುಟ್ಂಗಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿಲ್ಲಾಂಗ್‌ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೂರ್ವ ಜೈನ್ತಿಯಾ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಮೇಘಾಲ.ದಲ್ಲಿ ಹಿಂದಿನಿಂದಲೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ರಾಟ್ ಹೋಲ್ ಗಣಿಗಾರಿಕೆ(Rat Hole Mining) ವ್ಯಾಪಕವಾಗಿದೆ. ಪರಿಸರ ಹಾನಿ ಮತ್ತು ಜನರ ಸುರಕ್ಷತೆಯ ದೃಷ್ಟಿಯಿಂದ 2014ರಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಿತ್ತು. ಆದರೂ ಬಹಳಷ್ಟು ಕಡೆ ಅಕ್ರಮವಾಗಿ ಗಣಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗಿದೆ. ಇದೀಗ ಸ್ಱೋಟಗೊಂಡಿರುವ ಗಣಿ ಸಹ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂಬ ವಿಚಾರ ಪೊಲೀಸರಿಗೆ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

ವಿಜಯ ಕರ್ನಾಟಕ 5 Feb 2026 9:16 pm

ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯ ಭೂ ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಚೇರಿಯಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಹಿಂದಿನ ಪಿಆರ್‌ಆರ್) ರಸ್ತೆ ಯೋಜನೆಯ ಭೂ ಸಂತ್ರಸ್ತರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಪರಿಹಾರ ಚೆಕ್ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು. ಕಾಳತಮ್ಮನಹಳ್ಳಿ ಗ್ರಾಮದ ಸರ್ವೆ ನಂ. 113/2ರಲ್ಲಿನ ಒಟ್ಟು 2 ಎಕರೆ 9 ಗುಂಟೆ ವಿಸ್ತೀರ್ಣದ ಭೂಮಾಲಕ ಎನ್. ವೆಂಕಟೇಶ್ ಬಿನ್ ನಂಜಪ್ಪ ಮತ್ತು ಎಸ್.ಎನ್. ಆನಂದ್ ಕುಮಾರ್ ಬಿನ್ ನಂಜಪ್ಪ ಅವರಿಗೆ 65:35 ಅನುಪಾತದ ಯೋಜನೆಯಡಿ, 18,657 ಚದರ ಅಡಿ ವಿಸ್ತೀರ್ಣದ ಅಭಿವೃದ್ಧಿ ಹೊಂದಿದ ಪ್ರದೇಶದ ಪ್ರಮಾಣ ಪತ್ರವನ್ನು ವಿತರಿಸಿದರು. ಅದೇ ರೀತಿ ವಾಸುದೇವಪುರ ಗ್ರಾಮದ ಸರ್ವೆ ನಂ. 21ರಲ್ಲಿನ 4 ಎಕರೆ 36 ಗುಂಟೆ ವಿಸ್ತೀರ್ಣದ ಭೂಮಾಲೀಕ ಗ್ರೀನ್ ಆರ್ಚಡ್ರ್ಸ್ ಫಾರ್ಮ್ ಹೌಸಸ್ ಅವರಿಗೆ 65:35 ಅನುಪಾತದ ಯೋಜನೆಯಡಿ 41086.5 ಚದರ ಅಡಿ ವಿಸ್ತೀರ್ಣದ ಅಭಿವೃದ್ಧಿ ಹೊಂದಿದ ಪ್ರದೇಶದ ಪ್ರಮಾಣ ಪತ್ರವನ್ನು ವಿತರಿಸಿದರು. ಬಿದರೇನ ಅಗ್ರಹಾರದ ಸರ್ವೆ ನಂ. 9/14 ಮತ್ತು ಸರ್ವೆ ನಂ. 14/9ರ ಜಮೀನಿನ ಭೂಮಾಲಕ ಸಿ.ಎ. ಬಾಲಕೃಷ್ಣ ಅವರಿಗೆ 1.86 ಕೋಟಿ ರೂ. ಪರಿಹಾರ ನೀಡಲಾಯಿತು. ಆವಲಹಳ್ಳಿ ಗ್ರಾಮದ ಸರ್ವೆ ನಂ. 32/1ರ 2-33 ಎಕರೆಗೆ ಭೂಮಾಲಕ ಸಿ.ಎ. ಚಂದ್ರಶೇಖರ್, ಪುರುಷೋತ್ತಮ ಮತ್ತು ಶಾರದ ಅವರಿಗೆ 24,69,59,761 ರೂ. ಪರಿಹಾರ ವಿತರಿಸಲಾಯಿತು. ಚೀಮಸಂದ್ರ ಗ್ರಾಮದ ಸರ್ವೆ ನಂ. 66ರ 1-36 ಎಕರೆಗೆ ಭೂಮಾಲಕ ಕೃಷ್ಣಮೂರ್ತಿ ಅವರಿಗೆ 15,67,50,000 ರೂ. ಪರಿಹಾರ ವಿತರಿಸಲಾಯಿತು. ಇದೇ ಗ್ರಾಮದ ಸರ್ವೆ ನಂ. 64/3ರ 0-36 ಎಕರೆ ಮತ್ತು 64/4ರ 0-30 ಎಕರೆಗೆ ಭೂಮಾಲಕ ಮುನಿಯಪ್ಪ ಅವರಿಗೆ ಕ್ರಮವಾಗಿ 13,61,25,000 ರೂ.ಗಳ ಚೆಕ್ ಗಳನ್ನು ವಿತರಿಸಿದರು. ಇದೇ ವೇಳೆ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಆಯುಕ್ತ ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 9:12 pm

‘ಸಚಿವ ತಿಮ್ಮಾಪುರ ರಾಜೀನಾಮೆ’ಗೆ ಆಗ್ರಹಿಸುವ ಹೋರಾಟ ಜನತಾ ನ್ಯಾಯಾಲಯಕ್ಕೆ : ಆರ್.ಅಶೋಕ್

ಬೆಂಗಳೂರು : ‘ಅಬಕಾರಿ ಇಲಾಖೆಯಲ್ಲಿನ ಲಂಚ ಆರೋಪ ಸಂಬಂಧ ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸುವ ಹೋರಾಟವನ್ನು ‘ಜನತಾ ನ್ಯಾಯಾಲಯ’ಕ್ಕೆ ಕೊಂಡೊಯ್ಯಲಾಗುವುದು. ಕಾನೂನು ಹೋರಾಟ ನಡೆಸುವ ಬಗ್ಗೆಯೂ ಆಲೋಚನೆ ನಡೆಸಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಮಾತನಾಡಿದ ಅವರು, ಈ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಪ್ರಮುಖ ಸಾಕ್ಷ್ಯಗಳು ಸಿಗುವ ಸೂಚನೆಗಳಿವೆ. ಅವುಗಳ ಸಮೇತ ಸಾರ್ವಜನಿಕರ ಮುಂದೆ ಈ ಸರಕಾರದ ನಿಜಬಣ್ಣ ಬಯಲು ಮಾಡಲಾಗುವುದು. ಅಬಕಾರಿ ಇಲಾಖೆಯಲ್ಲಿ ನಡೆದಿರುವ 6 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಗರಣವನ್ನು ಅಧಿವೇಶನದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ ಎಂದರು. ತಿಮ್ಮಾಪುರ ರಾಜೀನಾಮೆ ಮತ್ತು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿದ್ದೆವು. ಆದರೆ, ಕಳಂಕಿತ ಸಚಿವರ ಬೆಂಬಲಕ್ಕೆ ಇಡೀ ಸಚಿವ ಸಂಪುಟವೇ ನಿಂತುಕೊಂಡಿತ್ತು. ರಾಜ್ಯದ ಇತಿಹಾಸದಲ್ಲಿ ಹಿಂದೆ ಎಂದೆಂದೂ ನಡೆದಿರಲಿಲ್ಲ. ಇಲ್ಲಿ ಲೂಟಿ ಮಾಡಿದ ಹಣವನ್ನು ನೆರೆ ರಾಜ್ಯಗಳ ಚುನಾವಣೆಗಳಿಗೆ ಬಳಕೆ ಮಾಡುತ್ತಿರುವುದು ಸ್ಪಷ್ಟ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಭ್ರಷ್ಟಾಚಾರದ ಮುಖವಾಡವನ್ನು ಅಧಿವೇಶನದಲ್ಲಿ ಕಳಚಿ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಹಗರಣಗಳ ಸುಳಿಯಲ್ಲೇ ಸಿಕ್ಕಿಕೊಂಡಿದೆ. ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಜತೆಗೆ ಖಜಾನೆ ಖಾಲಿಯಾಗಿದೆ. ತಮ್ಮ ಪಾಲಿನ ಶೇ.40ರಷ್ಟು ಹಣ ಭರಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಕೇಂದ್ರ ಸರಕಾರ ಜಾರಿಗೊಳಿಸಿರುವ ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ಧ ತಕರಾರು ತೆಗೆದಿದ್ದಾರೆ ಎಂದು ಟೀಕಿಸಿದರು. ಅಸಂಸದೀಯ ನಡುವಳಿಕೆ: ನಮ್ಮ ಶಾಸಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಶಾಸಕ ಶಿವಲಿಂಗೇಗೌಡ, ಅಸಂಸದೀಯವಾಗಿ ವರ್ತಿಸಿದ್ದು, ಸದನದಲ್ಲೇ ಅದನ್ನು ಖಂಡಿಸಿದ್ದೇವೆ. ಸರಿದಾರಿಯಲ್ಲಿ ಕಲಾಪ ನಡೆಸಬೇಕಿದ್ದ ಸ್ಪೀಕರ್ ಖಾದರ್ ಅವರು, ಕಾಂಗ್ರೆಸ್ ಪಕ್ಷದ ಪರ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ದೂರಿದರು.

ವಾರ್ತಾ ಭಾರತಿ 5 Feb 2026 9:08 pm

ಮನರೇಗಾ ಬಚಾವೋ ಸಂಗ್ರಾಮ್| ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ

ಮಂಗಳೂರು, ಫೆ.5: ಮನರೇಗಾ ಬಚಾವೋ ಸಂಗ್ರಾಮ್ ಪ್ರಯುಕ್ತ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯ ವತಿಯಿಂದ ಗುರುವಾರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ನಡೆಯಿತು. ನಗರದ ಬಲ್ಮಠದಲ್ಲಿರುವ ಶಾಂತಿನಿಲಯ ಸಭಾಂಗಣ ಬಳಿಯ ಮೈದಾನದಿಂದ ಹೊರಟ ಪಾದಯಾತ್ರೆಯು ಮಂಗಳೂರು ಮಹಾನಗರ ಪಾಲಿಕೆ ಎದುರಿನ ಮಹಾತ್ಮಾ ಗಾಂಧೀಜಿ ಪ್ರತಿಮೆಯವರೆಗೆ ಸಾಗಿತು. ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಕೇಂದ್ರ ಸರಕಾರವು ಸರಿಯಾದ ಚರ್ಚೆ ನಡೆಸದೆ ತರಾತುರಿಯಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ಬಿಜೆಪಿಗೆ ಮಹಾತ್ಮ ಗಾಂಧೀಜಿ, ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಯೋಜನೆಯ ಬಗ್ಗೆ ಕಾಂಗ್ರೆಸ್ ನಿರಂತರ ಪ್ರತಿಭಟನೆ ನಡೆಸಲಿದೆ ಎಂದರು. ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ ಮಹಾತ್ಮ ಗಾಂಧೀಜಿ ರಾಮರಾಜ್ಯದ ಕನಸು ಕಂಡಿದ್ದರು. ಭಾರತವು ಈ ಮಟ್ಟಿಗೆ ಬೆಳೆಯಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದ ಮನರೇಗಾ ಯೋಜನೆಯೂ ಪ್ರಮುಖವಾಗಿದೆ. ಈ ಯೋಜನೆಯನ್ನು ವಿಶ್ವಸಂಸ್ಥೆಯೂ ಪ್ರಶಂಶಿಸಿತ್ತು. 100 ದಿನಗಳ ಉದ್ಯೋಗದ ಮೂಲಕ ಜನರಿಗೆ ಅದು ಆಧಾರವಾಗಿತ್ತು. ಇದೀಗ ಕೇಂದ್ರ ಸರಕಾರದ ವಿಬಿ-ಜಿ ರಾಮ್-ಜಿ ಯೋಜನೆಯ ಮೂಲಕ ಅಧಿಕಾರ ಕೇಂದ್ರೀಕೃತಗೊಳಿಸಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷೆ ಅಪ್ಪಿಮಾತನಾಡಿ ರಸ್ತೆ, ಕೆರೆ, ಬಾವಿ, ಶೌಚಾಲಯ ಸೇರಿದಂತೆ ಇಡೀ ಹಳ್ಳಿಗಳ ಅಭಿವೃದ್ಧಿ ಮನರೇಗಾದಿಂದ ಸಾಧ್ಯವಿತ್ತು. ಈಗ ಕೇಂದ್ರ ಸರಕಾರ ಹೆಸರು ಬದಲಾಯಿಸಿ ಬಡವರು, ರೈತರು, ಮಹಿಳೆಯರಿಗೆ ಅನ್ಯಾನ ಮಾಡಿದೆ ಎಂದರು. ಪಾದಯಾತ್ರೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ನಿಗಮ, ಮಂಡಳಿಗಳ ಅಧ್ಯಕ್ಷರಾದ ಶಾಲೆಟ್ ಪಿಂಟೋ, ವಿಶ್ವಾಸ್‌ದಾಸ್, ಮಾಜಿ ಶಾಸಕ ಜೆ. ಆರ್. ಲೋಬೊ, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಕೆ., ಮುಖಂಡರುಗಳಾದ ಸುರೇಶ್ ಬಲ್ಲಾಳ್, ಅಬ್ದುಲ್ ಸಲೀಮ್, ಪ್ರಕಾಶ್ ಸಾಲ್ಯಾನ್, ಡೆನಿಸ್ ಡಿಸಿಲ್ವ, ಸುಹಾನ್ ಆಳ್ವ, ದಿನೇಶ್ ಮೂಳೂರ್, ಅಬ್ದುಲ್ ರವೂಫ್, ವಿನಯ್‌ರಾಜ್, ಪ್ರವೀಣ್‌ಚಂದ್ರ ಆಳ್ವ, ಅಶ್ರಫ್ ಬಜಾಲ್, ಟಿ.ಕೆ. ಸುಧೀರ್, ಮನೋರಾಜ್, ಚೇತನ್ ಬೆಂಗ್ರೆ, ಚಂದ್ರಕಲಾ ಜೋಗಿ, ರೂಪ ಚೇತನ್, ಆಸೀಫ್ ಬೆಂಗ್ರೆ, ಸಂಶುದ್ದಿನ್ ಕುದ್ರೋಳಿ, ಪ್ರಥ್ವಿರಾಜ್, ಹೊನ್ನಯ್ಯ, ಮೆಲ್ವಿನ್ ಕ್ಯಾಸ್ಟ್ತಲಿನೊ, ನಝೀರ್ ಬಜಾಲ್, ಶಾಂತಲಾ ಗಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 5 Feb 2026 9:04 pm

`ವಿಮಾನ ಬುಕ್ ಆಗಿದೆ; ಅವರಾಡೊಲ್ಲಾಂದ್ರೂ ನಮ್ಮ ಪ್ಲ್ಯಾನ್ ಬದಲಾಗೊಲ್ಲ'; ಪಾಕ್ ಬಹಿಷ್ಕಾರದ ಬಗ್ಗೆ ಮೊದಲ ಬಾರಿ ಮಾತನಾಡಿದ SKY!

India Vs Pakistan- ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸಿರುವುದರ ವಿಚಾರವಾಗಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಈಗಾಗಲೇ ಮಾತನಾಡಿದ್ದರೂ ಭಾರತ ತಂಡ ನಾಯಕ ಸೂರ್ಯಕುಮಾರ್ ಯಾದವ್ ಅವರು ಈವರೆಗೂ ಮಾತನಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಅವರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆಡುವುದಿಲ್ಲ ಎಂದು ಹೇಳಿರುವವರು ಅವರು. ಹೀಗಾಗಿ ನಮ್ಮ ಯೋಜನೆಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಜಯ ಕರ್ನಾಟಕ 5 Feb 2026 8:51 pm

ಬಳ್ಳಾರಿ | ವಿವಿಧೆಡೆ ದಾಳಿ : ಇಬ್ಬರು ಬಾಲಕಾರ್ಮಿಕ ಮಕ್ಕಳ ರಕ್ಷಣೆ

ಬಳ್ಳಾರಿ: ನಗರದ ವಿವಿಧೆಡೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಕಾರದೊಂದಿಗೆ ಶುಕ್ರವಾರ ನಡೆಸಿದ ದಾಳಿಯಲ್ಲಿ ಇಬ್ಬರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ಅವರು ತಿಳಿಸಿದ್ದಾರೆ. ಪ್ಯಾನ್–ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನದ ಅಂಗವಾಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನೆ ಅವರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ, ಈ ದಾಳಿಯನ್ನು ಕೈಗೊಳ್ಳಲಾಯಿತು. ನಗರದ ದುರ್ಗಮ್ಮ ದೇವಸ್ಥಾನದ ಹತ್ತಿರದ ಕಪ್ಪಗಲ್ಲು ರಸ್ತೆ, ತಾಳೂರು ರಸ್ತೆ, ರೇಣುಕ ನಗರ ಹಾಗೂ ದುರ್ಗಮ್ಮ ಗುಡಿ ಸಮೀಪದ ವಿವಿಧ ಸ್ಥಳಗಳಲ್ಲಿರುವ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ ಸೇರಿದಂತೆ ವಿವಿಧ ಉದ್ದಿಮೆಗಳಿಗೆ ಟಾಸ್ಕ್‌ಫೋರ್ಸ್ ಸಮಿತಿ ಭೇಟಿ ನೀಡಿತು. ಈ ವೇಳೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿಯೇ ಮಕ್ಕಳ ಹೇಳಿಕೆಗಳನ್ನು ದಾಖಲಿಸಲಾಯಿತು. ರಕ್ಷಿಸಲಾದ ಮಕ್ಕಳನ್ನು ಮುಖ್ಯವಾಹಿನಿ ಶಿಕ್ಷಣಕ್ಕೆ ಸೇರಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದ್ದು, ಸಂಬಂಧಿಸಿದ ಉದ್ದಿಮೆ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್‌ಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಬಳ್ಳಾರಿ ತಾಲ್ಲೂಕು ಗ್ರೇಡ್–2 ತಹಶೀಲ್ದಾರ ವಿನಾಯಕ, ಕಾರ್ಮಿಕ ನಿರೀಕ್ಷಕರಾದ ರಮೇಶ್ (1ನೇ ವೃತ್ತ) ಮತ್ತು ಪರಶುರಾಮ್ (2ನೇ ವೃತ್ತ), ಆರೋಗ್ಯ ಇಲಾಖೆಯ ಮುಸ್ತಾಕ್ ಅಹಮದ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರಶಾಂತ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನೂರಪ್ಪ, ಉಮೇಶ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಚಂದ್ರಕಲಾ, ರೀಚ್ ಸಂಸ್ಥೆಯ ಸಂಯೋಜಕಿ ಬಸಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 5 Feb 2026 8:47 pm

ಫೆ.6: ಯುನಿವೆಫ್‌ನಿಂದ ರಮಝಾನ್ ಸ್ವಾಗತ ಕಾರ್ಯಕ್ರಮ

ಮಂಗಳೂರು, ಫೆ.5: ಯುನಿವೆಫ್ ಕರ್ನಾಟಕದ ವತಿಯಿಂದ ಫೆ.6ರ ಸಂಜೆ 7ಕ್ಕೆ ನಗರದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ರಮಝಾನ್ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ʼರಮಝಾನ್ ನಮ್ಮನ್ನು ಬದಲಿಸಲಿʼ ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಆಧ್ಯಾತ್ಮಿಕ ತರಗತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 5 Feb 2026 8:36 pm

ಫೆ.6: ಉಪಮುಖ್ಯಮಂತ್ರಿ ದ.ಕ.ಜಿಲ್ಲೆಗೆ ಭೇಟಿ

ಮಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫೆ.6ರಂದು ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 1:40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಪರಾಹ್ನ 3:30ಕ್ಕೆ ಪುತ್ತೂರು ತಾಲೂಕಿನ ಕಾಂಚನ ಬಜತ್ತೂರು ಶ್ರೀಲಕ್ಷ್ಮಿ ನಾರಾಯಣ ಸಂಗೀತ ಕಲಾ ಶಾಲೆ ವತಿಯಿಂದ ಆಯೋಜಿಸಿರುವ ನೂತನ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆ ಹಾಗೂ 72ನೇ ವಷರ್ದ ಕಾಂಚನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 6ಕ್ಕೆ ಪುತ್ತೂರು ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ನಗರದಲ್ಲಿ ವಾಸ್ತವ್ಯ ಹೂಡುವರು. ಫೆ.7ರಂದು ಬೆಳಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 5 Feb 2026 8:33 pm

ಹೆದ್ದಾರಿ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂಡುಬರುವ ವಿವಿಧ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಕ್ರಮಕೈಗೊಳ್ಳಲು ರಾ.ಹೆ. ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಅಗಲೀಕರಣ, ಬೈಪಾಸ್, ಫ್ಲೈ ಓವರ್ ಸೇರಿದಂತೆ 24 ವಿಧಧ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗುರುತಿಸಲಾಗಿತ್ತು. ಆದರೆ ಕೆಲವು ಪ್ರಮುಖ ಸ್ಥಳಗಳಲ್ಲಿ ಸಂಚಾರ ಕಾರಣ ಮುಂದೊಡ್ಡಿ ಕಾಮಗಾರಿಗಳನ್ನು ಇನ್ನೂ ಕೈಗೊತ್ತಿಕೊಳ್ಳದಿರುವುದು ಕಂಡು ಬಂದಿದೆ. ಇದರಿಂದ ಸಂಚಾರ ಸಮಸ್ಯೆ ಇನ್ನಷ್ಟು ದಟ್ಟಣೆಯಾಗಿದೆ. ಸಂಚಾರ ಪೊಲೀಸರ ಸಹಕಾರ ಪಡೆದು ಈ ಎಲ್ಲಾ ಕಾಮಗಾರಿಗಳನ್ನು ಮುಂದಿನ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಬ್ದುಲ್ಲಾ ಮಾತನಾಡಿ ಕೂಳೂರು ಹೊಸ ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಸೇತುವೆಯ ಒಂದು ಭಾಗ ಪೂರ್ಣ ಗೊಳ್ಳಲಿದೆ. ಕೂಳೂರಿನಿಂದ ಬೈಕಂಪಾಡಿವರೆಗೆ 6 ಲೇನ್‌ಗಳ ಹೆದ್ದಾರಿ ನಿರ್ಮಾಣಗೊಳ್ಳಲಿದೆ. ಈ ರಸ್ತೆಯ ಎರಡೂ ಕಡೆಗಳಲ್ಲಿ ಪ್ರತ್ಯೇಕವಾಗಿ ಸರ್ವಿಸ್ ರಸ್ತೆಯೂ ಇರಲಿದೆ ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತಿರುವು ಪಡೆಯುವ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿಭಾಯಿಸಲು ಹೊಸದಾಗಿ ರೈಲ್ವೆ ಅಂಡರ್‌ಪಾಸ್ ನಿರ್ಮಿಸಲು ಮಂಜೂರಾತಿ ದೊರಕಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಾವೇದ್ ಅಬ್ದುಲ್ಲಾ ಮಾಹಿತಿ ನೀಡಿದರು. ರಾ.ಹೆ.ಯ ಕೂಳೂರು ಬಳಿಕದ ಪ್ರದೇಶಗಳಲ್ಲಿ ಬೀದಿದೀಪ ಅಳವಡಿಸಬೇಕು ಎಂದು ಮಹಾನಗರಪಾಲಿಕೆಗೆ ಹಾಗೂ ರಾ.ಹೆ.ಯ ಕಲ್ಲಾಪು, ಜಪ್ಪಿನಮೊಗರು, ಮಹಾಕಾಳಿಪಡ್ಪು ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಸುವ ಬಗ್ಗೆ ಟ್ರಾಫಿಕ್ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ರಾ.ಹೆ. ಪ್ರಾಧಿಕಾರಕ್ಕೆ ಸೂಚಿಸಿದರು. ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಜಿಲ್ಲೆಯಲ್ಲಿ 2025ರ ಅ.30ರವರೆಗೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ 720 ಪ್ರಕರಣಗಳನ್ನು ದಾಖಲಿಸಿ 17.39 ಲಕ್ಷ ರೂ.ದಂಡ ಹಾಗೂ ಟಿಂಟೆಡ್ ಗ್ಲಾಸ್ ಅಳವಡಿಸಿದ ವಾಹನಗಳ ಮೇಲೆ 8,066 ಪ್ರಕರಣ ದಾಖಲಿಸಿ 38.39 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ನವಮಂಗಳೂರು ವ್ಯಾಪ್ತಿಯಲ್ಲಿ ಟ್ರಕ್, ಲಾರಿಗಳ ಪಾರ್ಕಿಂಗ್‌ಗೆ ತಣ್ಣೀರುಬಾವಿ ಮತ್ತು ಬೈಕಂಪಾಡಿಯಲ್ಲಿ ಎನ್‌ಎಂಪಿಎ ವತಿಯುಂದ ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಎಸ್ಪಿ ಡಾ.ಕೆ.ಅರುಣ್, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್, ಡಿಸಿಪಿ ರಶಂಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 8:28 pm

ರೀಲ್ಸ್, ಫೇಸ್‌ಬುಕ್ ಪೋಸ್ಟ್‌ಗಳಿಗಾಗಿ ಹಲ್ಲೆ, ಪೊಲೀಸರ ನಿಂದನೆ ಸಲ್ಲದು : ಪುನೀತ್‌ ಕೆರೆಹಳ್ಳಿಗೆ ಹೈಕೋರ್ಟ್ ಚಾಟಿ

ಬೆಂಗಳೂರು : ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಗೆ ತಡೆ‌ ನೀಡಿರುವ ಹೈಕೋರ್ಟ್, ʼರೀಲ್ಸ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳಿಗಾಗಿ ಹಲ್ಲೆ ನಡೆಸುವುದು ಅಥವಾ ಪೊಲೀಸರನ್ನು ನಿಂದಿಸುವುದನ್ನು ಒಪ್ಪಲಾಗದುʼ ಎಂದು ಪುನೀತ್ ಕೆರೆಹಳ್ಳಿಗೆ ಚಾಟಿ ಬೀಸಿದೆ. ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪುನೀತ್‌ ಕೆರೆಹಳ್ಳಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಆರೋಪ ಪಟ್ಟಿಗೆ ತಡೆ ನೀಡಲಾಗಿದೆ. ಅರ್ಜಿದಾರರು ಎರಡು ವಾರದಲ್ಲಿ ಡಿಸಿಪಿ ಮುಂದೆ ಹಾಜರಾಗಿ ಬಾಂಡ್‌ ಒದಗಿಸಬೇಕು ಮತ್ತು ಹೇಳಿಕೆ ದಾಖಲಿಸಬೇಕು. ಇಲ್ಲವಾದಲ್ಲಿ ಈಗ ನೀಡಿರುವ ಮಧ್ಯಂತರ ಆದೇಶ ಸ್ವಯಂಚಾಲಿತವಾಗಿ ರದ್ದಾಗಲಿದೆ ಎಂದ ನ್ಯಾಯಪೀಠ, ನ್ಯಾಯಾಂಗದ ಪರಿಶೀಲನೆಯಲ್ಲಿರುವ ಪ್ರಕರಣಗಳ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂದು ಪುನೀತ್ ಕೆರೆಹಳ್ಳಿಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪಿ.ಎನ್‌. ಮನಮೋಹನ್‌ ವಾದ ಮಂಡಿಸಿ, ಪ್ರಕರಣ ದಾಖಲಿಸಿ, ಅರ್ಜಿದಾರರಿಗೆ ಜನವರಿ 13ರಂದು ಅಂತಿಮ ನೋಟಿಸ್‌ ನೀಡಿ, ಜನವರಿ 16ರಂದು ಹಾಜರಾಗಲು ಸೂಚಿಸಲಾಗಿದೆ. ಆದರೆ, ಮರು ದಿನವೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅರ್ಜಿದಾರರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗಿಲ್ಲ ಎಂದರು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಬೇರೊಂದು ಪ್ರಕರಣದಲ್ಲಿ ಜಾಮೀನು ಸಂಬಂಧ ಬಾಂಡ್‌ ಸಲ್ಲಿಸುವಂತೆ ಆದೇಶ ಮಾಡಿರುವುದನ್ನು ಪುನೀತ್‌ ಪಾಲಿಸಿಲ್ಲ. ಈ ಸಂಬಂಧ ಸಮನ್ವಯ ನ್ಯಾಯಪೀಠ ಆದೇಶ ಮಾಡಿದೆ. ಅದಕ್ಕಾಗಿ ಪುನೀತ್‌ಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಅವರು ಹಾಜರಾಗಿ ಹೇಳಿಕೆ ನೀಡಲಿ. ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳವುದಿಲ್ಲ ಎಂದರಲ್ಲದೆ, ಸೋಲದೇವಹಳ್ಳಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧದ ಪ್ರಕರಣಗಳಿಗೆ ತಡೆ ನೀಡಿದ ಬಳಿಕ ಅವರು ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಗಳನ್ನು ಪೀಠದ ಮುಂದೆ ಇಡಲಾಗುವುದು ಎಂದರು. ಆಗ ನ್ಯಾಯಪೀಠ ಪುನೀತ್ ಪರ ವಕೀಲರನ್ನು ಕುರಿತು, ಮತ್ತೆ ಗಲಾಟೆ ಮಾಡಿದ್ದೀರಾ? ಸುಮ್ಮನೆ ಇರಲು ಆಗುವುದಿಲ್ಲವೇ? ಪ್ರಕರಣ ನ್ಯಾಯಾಂಗದ ಪರಿಶೀಲನೆಯಲ್ಲಿರುವಾಗ ನೀವು ಹಾಗೆ ಮಾಡಲು ಹೇಗೆ ಸಾಧ್ಯ, ಯಾಕೆ ಹೀಗೆಲ್ಲ ಮಾಡುತ್ತೀರಿ, ಎಚ್ಚರಿಕೆ ಇರಬೇಕಲ್ಲವೇ, ನಿಮ್ಮ ವಿರುದ್ಧ ಪ್ರಕರಣ ವಜಾ ಮಾಡಲಾಗಿಲ್ಲ, ತಡೆಯನ್ನಷ್ಟೇ ನೀಡಲಾಗಿದೆ ಎಂದು ಹೇಳಿತು. ಅದಕ್ಕೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರಿಗೆ ಸಲಹೆ ನೀಡಲಾಗುವುದು. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದರು. ಆಗ ನ್ಯಾಯಮೂರ್ತಿಗಳು, ಅಕ್ರಮ ವಲಸಿಗರ ವಿಚಾರವನ್ನು ಅರ್ಜಿದಾರರು ಎತ್ತಿದ್ದು, ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಯಾವುದೇ ವಿಚಾರವನ್ನು ಬಿಂಬಿಸುವ ರೀತಿಯಲ್ಲಿ ಬಿಂಬಿಸಬೇಕು ಎಂದರು‌ ಬಿ‌.ಎನ್. ಜಗದೀಶ್‌ ಅವರು, ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿ ಸಲ್ಲಿಸಲಾಗಿದೆ. ಸರ್ಕಾರ ಕ್ರಮಕೈಗೊಂಡಿದೆ. ಸರ್ಕಾರ ಕ್ರಮ ಕೈಗೊಂಡಿಲ್ಲ ಎನ್ನುವುದನ್ನು ಅರ್ಜಿದಾರರು ತೋರಿಸಲಿ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ನ್ಯಾಯಪೀಠ, ದೂರು ನೀಡಿ, ಸರ್ಕಾರ ಕ್ರಮಕೈಗೊಳ್ಳದಿದ್ದರೆ ನೋಡೋಣ. ರೀಲ್ಸ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗೆ ಇದೆಲ್ಲವನ್ನೂ ಮಾಡಬಾರದು. ಅರ್ಜಿದಾರರು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿತು.

ವಾರ್ತಾ ಭಾರತಿ 5 Feb 2026 8:20 pm

ಫೆ.9-12: ಸುಳ್ಯದಿಂದ ಮುಲ್ಕಿವರೆಗೆ ದ.ಕ. ಕಾಂಗ್ರೆಸ್‌ನಿಂದ ಪಾದಯಾತ್ರೆ

ಮಂಗಳೂರು, ಫೆ.5: ಕೇಂದ್ರ ಸರಕಾರವು ಮನ್‌ರೇಗಾ ಸ್ವರೂಪ ಬದಲಾವಣೆ ಹಾಗೂ ಮಹಾತ್ಮ ಗಾಂಧೀಜಿ ಹೆಸರು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದಿಂದ ಮುಲ್ಕಿ ವರೆಗೆ 4 ದಿನಗಳ 100 ಕಿಮೀ ಪಾದಯಾತ್ರೆಯನ್ನು ಫೆ.9ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಮತ್ತಿತರ ಪ್ರಮುಖರು ವಿವಿಧ ದಿನಗಳಲ್ಲಿ ಭಾಗವಹಿಸಲಿದ್ದಾರೆ ಎಂದರು. *ಸುಳ್ಯದಲ್ಲಿ ಚಾಲನೆ: ಫೆ.9ರಂದು ಬೆಳಗ್ಗೆ 8:30ಕ್ಕೆ ಸುಳ್ಯದ ಗಾಂಧಿನಗರದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾ ಗುವುದು. ಅಂದು ಸುಳ್ಯದ ಗಾಂಧಿನಗರದಿಂದ ಪುತ್ತೂರಿನ ಕುಂಬ್ರ ಜಂಕ್ಷನ್‌ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ವಿವರಿಸಿದರು. 2ನೇ ದಿನವಾದ ಫೆ.10ರಂದು ಕುಂಬ್ರ- ಮಾಣಿ, ಫೆ.11ರಂದು ಕಲ್ಲಡ್ಕ- ಫರಂಗಿಪೇಟೆ, ಫೆ.12ರಂದು ಮಂಗಳೂರಿನ ಲಾಲ್‌ಬಾಗ್‌ನಿಂದ ಮೂಲ್ಕಿವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಹರೀಶ್ ಕುಮಾರ್ ಮಾಹಿತಿ ನೀಡಿದರು. ಪ್ರತಿದಿನ 25- 28 ಕಿಮೀ ಪಾದಯಾತ್ರೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಉಪಹಾರ ಮುಗಿಸಿ, 8:30 ಗಂಟೆಗೆ ಪಾದಯಾತ್ರೆ ಆರಂಭಿಸಲಾಗುವುದು. ಮಧ್ಯಾಹ್ನ 2 ಗಂಟೆ ಭೋಜನ ವಿರಾಮದ ಬಳಿಕ ಸಂಜೆ 6 ಗಂಟೆವರೆಗೆ ಮುಂದುವರಿಯಲಿದೆ. ಪ್ರತಿದಿನ ಪಾದಯಾತ್ರೆಯ ಕೊನೆಯಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಫೆ.9ರಂದು ಕುಂಬ್ರ, ಫೆ.10ರಂದು ಮಾಣಿ, ಫೆ.11ರಂದು ಫರಂಗಿಪೇಟೆ, ಫೆ.12ರಂದು ಮೂಲ್ಕಿಯಲ್ಲಿ ಸಮಾವೇಶ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಪಾಲ್ಗೊ ಳ್ಳಲಿದ್ದಾರೆ. ಪಾದಯಾತ್ರೆಯ ಮೂಲಕ ಜನರಿಗೆ ಕೇಂದ್ರ ಸರಕಾರ ಮಾಡಿರುವ ಮೋಸವನ್ನು ಮನವರಿಕೆ ಮಾಡಲಾಗುವುದು ಎಂದು ಹೇಳಿದರು. *ತರಾತುರಿಯಲ್ಲಿ ಕಾಯ್ದೆ: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ, ಕೇಂದ್ರ ಸರಕಾರವು ಸರಿಯಾದ ಚರ್ಚೆಯನ್ನೇ ನಡೆಸದೆ ತರಾತುರಿಯಲ್ಲಿ ವಿಬಿ ಜಿರಾಮ್‌ಜಿ ಕಾಯ್ದೆ ಜಾರಿಗೆ ತಂದಿದೆ. ಜನಪ್ರಿಯ ಕಾರ್ಯಕ್ರಮದಿಂದ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆಸುವುದು ಮತ್ತು ಬಡವರನ್ನು ಮತ್ತಷ್ಟು ಬಡವರನ್ನಾಗಿ ಸುವುದೇ ಕೇಂದ್ರ ಸರಕಾರದ ಉದ್ದೇಶ. ಈ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ನಡೆಸಲಾಗುವುದು ಎಂದರು. ಮಾಜಿ ಶಾಸಕ ಜೆಆರ್ ಲೋಬೊ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಶಶಿಧರ ಹೆಗ್ಡೆ, ಭಾಸ್ಕರ ಕೆ., ಶುಭೋದಯ ಆಳ್ವ, ನವಾಝ್, ಸುಹಾನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 5 Feb 2026 8:19 pm

ತವರು ಜಿಲ್ಲೆ ಹಾಸನಗೆ ಕೇಂದ್ರದಿಂದ ಭರ್ಜರಿ ಅನುದಾನ ಕೊಡಿಸಿದ HDK : ಒಂದು ಹಾಲು, ಇನ್ನೊಂದು ರೈಲು

Central Grant for Hassan District : ಕೇಂದ್ರದ ಇಬ್ಬರು ಸಚಿವರನ್ನು ಭೇಟಿಯಾದ ಎಚ್.ಡಿ.ಕುಮಾರಸ್ವಾಮಿ, ಹಾಸನ ಜಿಲ್ಲೆಗೆ ವಿಶೇಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾದ ವೇಳೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಶಾಸಕ್ ಎಚ್.ಡಿ.ರೇವಣ್ಣ ಅವರ ಜೊತೆಗಿದ್ದರು. ಹಾಸನ ಹಾಲು ಡೈರಿಗೆ ಅನುದಾನ ಕೇಂದ್ರದಿಂದ ಸಿಕ್ಕಿದೆ.

ವಿಜಯ ಕರ್ನಾಟಕ 5 Feb 2026 8:19 pm

ಐದು ತೇಜಸ್ ವಿಮಾನಗಳು ಐಎಎಫ್ ವಿತರಣೆಗೆ ಸಿದ್ಧವಾಗಿವೆ: ಎಚ್‌ಎಎಲ್

ಹೊಸದಿಲ್ಲಿ,ಫೆ.5: ಹಿಂದುಸ್ಥಾನ ಎರೋನಾಟಿಕ್ಸ್ ಲಿ.(ಎಚ್‌ಎಎಲ್) ಅಮೆರಿಕದ ಜಿಇ ಎರೋಸ್ಪೇಸ್‌ನಿಂದ ಇಂಜಿನ್‌ಗಳ ಪೂರೈಕೆಯಲ್ಲಿ ವಿಳಂಬಗಳಾಗಿವೆೆಯಾದರೂ ಭಾರತೀಯ ವಾಯುಪಡೆಗೆ ವಿತರಿಸಲು ಐದು ತೇಜಸ್ ಲಘು ಯುದ್ಧ ವಿಮಾನಗಳು ಸಂಪೂರ್ಣವಾಗಿ ಸಿದ್ಧಗೊಂಡಿವೆ ಎಂದು ಗುರುವಾರ ತಿಳಿಸಿದೆ. ಐದು ಯುದ್ಧವಿಮಾನಗಳು ಐಎಎಫ್ ಸೂಚಿಸಿದ್ದ ಎಲ್ಲ ಅಗತ್ಯಗಳನ್ನು ಒಳಗೊಂಡಿವೆ ಎಂದು ಎಚ್‌ಎಎಲ್ ಹೇಳಿಕೆಯಲ್ಲಿ ತಿಳಿಸಿದೆ. ವಾಯುಪಡೆಯ ಯುದ್ಧವಿಮಾನಗಳ ಸೇರ್ಪಡೆ ಯೋಜನೆಯಲ್ಲಿ ಪ್ರಮುಖವಾಗಿರುವ ತೇಜಸ್ Mk1A ಕಾರ್ಯಕ್ರಮದಲ್ಲಿ ವಿಳಂಬಗಳ ಕುರಿತು ಕಳವಳಗಳ ನಡುವೆಯೇ ಎಚ್‌ಎಎಲ್‌ನ ಈ ಸ್ಪಷ್ಟನೆ ಹೊರಬಿದ್ದಿದೆ. ಒಂಭತ್ತು ಹೆಚ್ಚುವರಿ LCA Mk1A ಯುದ್ಧವಿಮಾನಗಳು ಈಗಾಗಲೇ ನಿರ್ಮಾಣಗೊಂಡಿದ್ದು, ಹಾರಾಟ ಪರೀಕ್ಷೆಯನ್ನು ನಡೆಸಲಾಗಿದೆ. ಎರೊಸ್ಪೇಸ್ ಜಿಇ ಇಂಜಿನ್‌ಗಳನ್ನು ಪೂರೈಸಿದ ಬಳಿಕ ಈ ವಿಮಾನಗಳನ್ನು ವಾಯುಪಡೆಗೆ ಹಸ್ತಾಂತರಿಸಲಾಗುವುದು. ಎಚ್‌ಎಎಲ್ ಈವರೆಗೆ ಐದು ಇಂಜಿನ್‌ಗಳನ್ನು ಸ್ವೀಕರಿಸಿದೆ ಮತ್ತು ಜಿಇಯಿಂದ ಒಟ್ಟಾರೆ ಪೂರೈಕೆ ಸ್ಥಿತಿಯು ಸುಧಾರಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. LCA Mk1A ತೇಜಸ್ ಯುದ್ಧ ವಿಮಾನದ ಸುಧಾರಿತ ಆವೃತ್ತಿಯಾಗಿದ್ದು, ಅತ್ಯಾಧುನಿಕ ವಿಮಾನ ವಿದ್ಯುನ್ಮಾನ ವ್ಯವಸ್ಥೆ, ರಾಡಾರ್, ಇಲೆಕ್ಟ್ರಾನಿಕ್ ಯದ್ಧ ವ್ಯವಸ್ಥೆಗಳು ಮತ್ತು ಹೆಚ್ಚುವರಿ ಕಾರ್ಯಾಚರಣೆ ಸಾಮರ್ಥ್ಯಗಳನ್ನು ಒಳಗೊಂಡಿದೆ. ಹಳೆಯ ಯುದ್ಧ ವಿಮಾನಗಳನ್ನು ಹಂತ ಹಂತವಾಗಿ ತೆಗೆದುಹಾಕುವ ವಾಯಪಡೆಯ ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.

ವಾರ್ತಾ ಭಾರತಿ 5 Feb 2026 8:19 pm

ಡ್ರಗ್ಸ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಜಾಗೃತಿ ಮೂಡಿಸಲು ಕ್ರಮ : ಜಿ.ಪರಮೇಶ್ವರ್

ಬೆಂಗಳೂರು : ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯದ ಎಲ್ಲ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಡ್ರಗ್ಸ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ. ಗುರುವಾರ ನಗರದ ಅರಮನೆ ಮೈದಾನದಲ್ಲಿ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ಇ-ಡಿಎಆರ್ ಅನುಷ್ಠಾನ ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026 ಸಮಾರೋಪ ಸಮಾರಂಭ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರವು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಪಣ ತೊಟ್ಟಿದ್ದು, ಡ್ರಗ್ಸ್ ಬಳಕೆಯಿಂದಾಗುವ ದುಷ್ಪರಿಣಾಮ ಮತ್ತು ಹಾನಿಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಮೈಸೂರು-ಬೆಂಗಳೂರು ಹೆದ್ದಾರಿ ಪ್ರಾರಂಭಿಸಿದ ಎರಡು ತಿಂಗಳಿಗೆ 120 ಜನ ಸಾವನ್ನಪ್ಪಿದರು. ಇದು ಆತಂಕ ಮೂಡಿಸಿತ್ತು. ರಸ್ತೆ ಸುರಕ್ಷತೆಯನ್ನು ಮರೆತುಬಿಟ್ಟಿದ್ದರು. ನಮ್ಮ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದಾಗ ಸುಮಾರು ಬ್ಲಾಕ್ ಸ್ಪಾಟ್‍ಗಳನ್ನು ಗುರುತಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ತಿಳಿಸಿದಾಗ ಬ್ಲಾಕ್ ಸ್ಪಾಟ್‍ಗಳನ್ನು ಸರಿಪಡಿಸಿದರು. ಇದಾದ ಬಳಿಕ ಅಪಘಾತಗಳು ಸಂಭವಿಸುತ್ತಿಲ್ಲ. ರಸ್ತೆಗಳನ್ನು ಮಾಡುವ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯನ್ನು ಗಮನಿಸಬೇಕು ಎಂದು ಅವರು ಹೇಳಿದರು. ದೇಶದಲ್ಲಿ 4.70 ಲಕ್ಷ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಕರ್ನಾಟಕದಲ್ಲಿ 43 ಸಾವಿರ ಅಪಘಾತ ಪ್ರಕರಣಗಳು ವರದಿಯಾಗಿವೆ. ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ. ನಗರದಲ್ಲಿ ಲಕ್ಷಾಂತರ ಅಪಘಾತಗಳಾಗಿ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ದುಡಿಮೆಗೆ ಹೋಗುತ್ತಾನೆ. ಅಪಘಾತದಿಂದ ಸಾವನ್ನಪ್ಪುತ್ತಾನೆ. ಆ ಕುಟುಂಬ ಸಾಕುವ ವ್ಯಕ್ತಿ ಮೃತಪಟ್ಟರೆ ಕುಟುಂಬದ ಪರಿಸ್ಥಿತಿ ಏನಾಗಬೇಕು. ಇದೇ ಕಾರಣಕ್ಕೆ ಸುರಕ್ಷತೆ ಬಹಳ ಮುಖ್ಯ ಎಂದು ಅವರು ವಿವರಿಸಿದರು. ನಗರದಲ್ಲಿ 500 ಜಂಕ್ಷನ್‍ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಟಿಫಿಯಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಡೀ ಬೆಂಗಳೂರು ನಗರವನ್ನು ಕಮಾಂಡ್ ಸೆಂಟರ್‍ನಿಂದ ಗಮನಿಸಬಹುದು. ಪ್ರತಿ ಜಂಕ್ಷನ್‍ನಲ್ಲಿ ಏನಾಗುತ್ತಿದೆ ಎಂಬುದನ್ನು ಟ್ರಾಫಿಕ್ ಕಮಾಂಡ್ ಸೆಂಟರ್‍ನಿಂದ ನೋಡಬಹುದು. ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತಗಳು ಕಡಿಮೆಯಾಗಿವೆ ಎಂದು ಅವರು ಸ್ಪಷ್ಟಪಡಿಸಿದರು. ವಾಹನ ಸವಾರರ ಪ್ರಾಣ ರಕ್ಷಣೆ ಮತ್ತು ಕುಟುಂಬಗಳ ರಕ್ಷಣೆ ಮಾಡಬೇಕಾದ ಕೆಲಸ ಆಗಬೇಕಿದೆ. ರಸ್ತೆ ಸುರಕ್ಷತೆಯ ಕುರಿತ ವಸ್ತು ಪ್ರದರ್ಶನ ಮೂರು ದಿನ ನಡೆಸಬೇಕು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನೋಡಿ, ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಕುರಿತು ಅರ್ಥವಾಗುತ್ತದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಮತ್ತಿತರರು ಇದ್ದರು.

ವಾರ್ತಾ ಭಾರತಿ 5 Feb 2026 8:10 pm

ಬಳ್ಳಾರಿ | VSKU ಸ್ನಾತಕೋತ್ತರ ಕೇಂದ್ರದಲ್ಲಿ 145.47 ಲಕ್ಷ ರೂ. ವೆಚ್ಚದ ‘ಸುವರ್ಣ ಮಹೋತ್ಸವ ಆಡಳಿತ ಭವನ’ ಉದ್ಘಾಟನೆ

ಬಳ್ಳಾರಿ / ಸಂಡೂರು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಂದಿಹಳ್ಳಿಯಲ್ಲಿ ಸ್ಥಿತಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ (VSKU) ಸ್ನಾತಕೋತ್ತರ ಕೇಂದ್ರಕ್ಕೆ ಅಭಿವೃದ್ಧಿಯ ಹೊಸ ಮೆಟ್ಟಿಲು ಏರಿದೆ. ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಕರ್ಯ ವೃದ್ಧಿಯ ಉದ್ದೇಶದಿಂದ 145.47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ‘ಸುವರ್ಣ ಮಹೋತ್ಸವ ಆಡಳಿತ ಭವನ’ವನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾದ ಈ. ತುಕಾರಾಮ್ ಅವರು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಈ. ತುಕಾರಾಮ್ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವಲ್ಲಿ ಈ ಸ್ನಾತಕೋತ್ತರ ಕೇಂದ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಒದಗಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮುನಿರಾಜು ಎಂ., ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ರವಿ ಬಿ. ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರ್ಕಾರದ ಖನಿಜ ನಿಗಮ ನಿಯಮಿತದ ಉಪಾಧ್ಯಕ್ಷ ಲಕ್ಷ್ಮಣ ಎಚ್., ಕಟ್ಟಡದ ಗುತ್ತೇದಾರರಾದ ಕೀರ್ತಿರಾಜ್ ಡಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನೂತನ ಆಡಳಿತ ಭವನದ ಉದ್ಘಾಟನೆಯಿಂದ ಕೇಂದ್ರದ ಆಡಳಿತ ಕಾರ್ಯಗಳು ಇನ್ಮುಂದೆ ಒಂದೇ ಸೂರಿನಡಿ ಸಮರ್ಪಕವಾಗಿ ನಡೆಯಲಿವೆ ಎಂಬ ವಿಶ್ವಾಸ ವ್ಯಕ್ತವಾಯಿತು.

ವಾರ್ತಾ ಭಾರತಿ 5 Feb 2026 8:07 pm

ನಗರಸಭಾ ವ್ಯಾಪ್ತಿಯ 376+ ಬಹುಮಹಡಿ ವಸತಿ ಸಮುಚ್ಛಯಗಳ ತ್ಯಾಜ್ಯ ನೀರು ನೇರ ಮಳೆ ನೀರಿನ ತೋಡಿಗೆ: ಉಡುಪಿ ಡಿಸಿ ಸ್ವರೂಪಾ ಟಿ.ಕೆ.

ಉಡುಪಿ, ಫೆ.5: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬಹುಮಹಡಿ ವಸತಿ ಸಮುಚ್ಛಯಗಳ ಸಂಖ್ಯೆ ದಿನೇದಿನ ಹೆಚ್ಚುತ್ತಿವೆ. ಪ್ರಸ್ತುತ ನಗರಸಭಾ ವ್ಯಾಪ್ತಿ ಯಲ್ಲಿರುವ 376ಕ್ಕೂ ಅಧಿಕ ವಸತಿ ಸಮುಚ್ಛಯಗಳು ತಮ್ಮಲ್ಲಿನ ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದೇ ಮಳೆ ನೀರು ಹರಿಯುವ ತೋಡುಗಳಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ನಗರ ಸಭೆ ವತಿಯಿಂದ ನೋಟೀಸ್ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದ್ದಾರೆ. ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಬಹುಮಹಡಿ ವಸತಿ ಸಮುಚ್ಛಯಗಳ (ಅಪಾರ್ಟ್‌ಮೆಂಟ್ಸ್) ಮಾಲಕರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ನಗರದ ಈ 376ಕ್ಕೂ ಅಧಿಕ ವಸತಿ ಸಮುಚ್ಛಯಗಳಲ್ಲಿ 200 ಸಮುಚ್ಛಯ ಗಳು ಮಣಿಪಾಲದಲ್ಲೂ, 105 ಉಡುಪಿ ನಗರದೊಳಗೆ ಹಾಗೂ 70ರಷ್ಟು ಮಲ್ಪೆ ವ್ಯಾಪ್ತಿಯಲ್ಲಿದ್ದು, ಸಮುಚ್ಛಯಗಳ ಮಾಲಕರು ತ್ಯಾಜ್ಯದ ನಿರ್ವಹಣೆ ಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಮುಂದಾಗಬೇಕು ಎಂದು ಅವರು ಸೂಚನೆಗಳನ್ನು ನೀಡಿದರು. ಬಹುಮಹಡಿ ವಸತಿ ಸಮುಚ್ಚಾಲಯಗಳು ಕೊಳಚೆ ಹಾಗೂ ತ್ಯಾಜ್ಯದ ನೀರನ್ನು ಶುದ್ಧೀಕರಣದ ನಿರ್ವಹಣೆ ಮಾಡು ವುದರೊಂದಿಗೆ ಮರು ಬಳಕೆ ಮಾಡಬೇಕು. ಒಂದೊಮ್ಮೆ ಕೊಳಚೆ ನೀರನ್ನು ಶುದ್ಧೀಕರಿಸದೆ ಎಲ್ಲೆಂದರಲ್ಲಿ ನದಿ-ತೋಡುಗಳಿಗೆ ಬಿಟ್ಟು ಜಲಮಾಲಿನ್ಯ ಉಂಟು ಮಾಡಿದರೆ ಅಂತಹವರ ವಿರುದ್ಧ ಮುಂದಿನ ದಿನಗಳಲ್ಲಿ ನಿರ್ದಾಕ್ಷಿಣ್ಯ ವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಎಚ್ಚರಿಕೆ ನೀಡಿದರು. ನಗರಸಭಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಕೊಳಚೆ ನೀರಿನ ಸಂಸ್ಕರಣ ಘಟಕಗಳು ಕೆಲವು ಅಪಾರ್ಟ್‌ ಮೆಂಟ್‌ಗಳಲ್ಲಿ ಮಾತ್ರ ಇವೆ. ಆದರೂ ಅವುಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೆಲವು ಅಪಾರ್ಟ್‌ ಮೆಂಟ್‌ಗಳಲ್ಲಿ ನಿರ್ವಹಣೆ ಘಟಕ ಇಲ್ಲದಿರುವುದು ಕಂಡು ಬಂದಿದೆ. ತ್ಯಾಜ್ಯ ನೀರು ನೇರವಾಗಿ ಜಲ ಮೂಲಗಳಿಗೆ ಸೇರಿ ಅದನ್ನು ಸಂಪೂರ್ಣ ಕಲ್ಮಶಗೊಳಿಸುತ್ತಿದೆ ಎಂದ ಅವರು, ನಮ್ಮ ಪರಿಸರವನ್ನು ಸ್ವಚ್ಛ ವಾಗಿ ಇಟ್ಟುಕೊಳ್ಳು ವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಅವುಗಳನ್ನು ಗಾರ್ಡನ್ ಸೇರಿದಂತೆ ಗಿಡಮರಗಳಿಗೆ ಮರುಬಳಕೆ ಮಾಡಿಕೊಳ್ಳಬಹುದು ಎಂದರು. ಎಲ್ಲಾ ಸಮುದಾಯಗಳು ನಗರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕೆಂಬ ಮನೋ ಭಾವವನ್ನು ಹೊಂದಿದ್ದು, ಇದರೊಂದಿಗೆ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು. ನಗರ ವ್ಯಾಪ್ತಿಯಲ್ಲಿ ಎಲ್ಲಾ ಬಹುಮಹಡಿ ವಸತಿ ಸಮುಚ್ಛಯ ಗಳು ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳನ್ನು ನಿರ್ಮಿಸುವುದರೊಂದಿಗೆ ಜಲಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದರು. ಆಯುಕ್ತರಿಗೆ ಸೂಚನೆ: ನಗರ ವ್ಯಾಪ್ತಿಯ ವಸತಿ ಸಮುಚ್ಚಯಗಳ ತ್ಯಾಜ್ಯ ನಿರ್ವಹಣಾ ಘಟಕಗಳ ಇರುವಿಕೆ, ಅವುಗಳ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಘಟಕ ಇಲ್ಲದೆ ಇರುವುದು ಹಾಗೂ ಮುಂದಿನ ದಿನಗಳಲ್ಲಿ ಅವು ವೈಜ್ಞಾನಿಕ ವಾಗಿ ತ್ಯಾಜ್ಯನೀರನ್ನು ನಿರ್ವಹಣೆ ಮಾಡುವ ಬಗ್ಗೆ ಸವಿಸ್ತಾರವಾದ ವಿವರವನ್ನು ಸರ್ವೇ ಮಾಡುವುದರ ಮೂಲಕ 20 ದಿನಗಳ ಒಳಗೆ ನೀಡುವಂತೆ ನಗರಸಭೆ ಆಯುಕ್ತರು ಹಾಗೂ ಪ್ರಾದೇಶಿಕ ಪರಿಸರ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್, ಬಹುಮಹಡಿ ವಸತಿ ಸಮುಚ್ಛಯಗಳ ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ‘ಈಗ ರಾತ್ರಿ ವೇಳೆಯಲ್ಲಿ ಕೆಲವರು ತ್ಯಾಜ್ಯ ನೀರನ್ನು ನದಿ- ತೋಡುಗಳಿಗೆ ಬಿಡುತ್ತಿದ್ದಾರೆಂಬ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇದರಿಂದ ಕೆಲ ಬಾವಿಗಳ ನೀರು ಸಹ ಕಲುಷಿತಗೊಂಡಿವೆ. ಹೀಗಾಗಿ ಎಲ್ಲರೂ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.’ -ಸ್ವರೂಪಾ ಟಿ.ಕೆ., ಉಡುಪಿ ಜಿಲ್ಲಾಧಿಕಾರಿ ಒಳಚರಂಡಿ ವ್ಯವಸ್ಥೆಗೆ 400 ಕೋಟಿ ರೂ.ಯೋಜನೆ ನಗರ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ನೈರ್ಮಲ್ಯ ಒಳಚರಂಡಿ ವ್ಯವಸ್ಥೆಗೆ ಈ ಹಿಂದೆ ಅಂದಾಜು 400 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿ, ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಸರಕಾರದಿಂದ ಈ ಬಗ್ಗೆ ಯಾವುದೇ ಒಪ್ಪಿಗೆ ದೊರೆತಿಲ್ಲ. ಇಲ್ಲಿನ ಭೂಪ್ರದೇಶ ಏರಿಳಿತದಿಂದ ಕೂಡಿದ್ದು, ಇದರಿಂದ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ರಸ್ತುತ ತ್ಯಾಜ್ಯಗಳನ್ನು ಕಡ್ಡಾಯವಾಗಿ ಸೇಫ್ಟಿಟ್ಯಾಂಕ್‌ಗಳ ಬಳಕೆಯೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಸಕ್ಕಿಂಗ್ ಯಂತ್ರಗಳ ಬಳಕೆ ಯೊಂದಿಗೆ ಘನ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿ ಮಾಡಬೇಕು ಎಂದು ಅವರು ಸೂಚನೆಗಳನ್ನು ನೀಡಿದರು.

ವಾರ್ತಾ ಭಾರತಿ 5 Feb 2026 8:06 pm

ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಕುಟುಂಬದಿಂದ ಬೃಹತ್ ಭೂ ಕಬಳಿಕೆ: ಕಾಂಗ್ರೆಸ್ ಆರೋಪ

ಗುವಾಹಟಿ,ಫೆ.5: ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕುಟುಂಬವು ರಾಜ್ಯಾದ್ಯಂತ ಸುಮಾರು 12,000 ಬಿಘಾಗಳಷ್ಟು (3,960 ಎಕರೆಗೂ ಹೆಚ್ಚು) ಭೂಮಿಯನ್ನು ಕಬಳಿಸಿದೆ ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೌರವ್‌ ಗೊಗೊಯಿ ಆರೋಪಿಸಿದ್ದಾರೆ. ಇದೇ ವೇಳೆ ಗೊಗೊಯಿ ಸೇರಿದಂತೆ ಅಸ್ಸಾಂ ಕಾಂಗ್ರೆಸ್ ನಾಯಕರ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸುವುದಾಗಿ ಶರ್ಮಾ ಬೆದರಿಕೆಯೊಡ್ಡಿದ್ದಾರೆ. ಶರ್ಮಾ ಹೆದರಿದ್ದಾರೆ ಎನ್ನುವುದನ್ನು ಅವರ ಪ್ರತಿಕ್ರಿಯೆ ತೋರಿಸಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಕುಟುಕಿರುವ ಗೊಗೊಯಿ, ‘ಅವರಿಗೆ ಧೈರ್ಯವಿದ್ದರೆ ನುಣುಚಿಕೊಳ್ಳುವ ಬದಲು ನಮ್ಮೊಂದಿಗೆ ಜನತಾ ನ್ಯಾಯಾಲಯದಲ್ಲಿ ಹೋರಾಡಲಿ ’ ಎಂದು ಸವಾಲೆಸೆದಿದ್ದಾರೆ. ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಗೊಗೊಯಿ,‘ ಭೂಹಗರಣವನ್ನು ಮುಚ್ಚಿಹಾಕಲು ಮುಖ್ಯಮಂತ್ರಿಗಳು ನಾನು ಪಾಕಿಸ್ತಾನದೊಂದಿಗೆ ಸಂಪರ್ಕಗಳನ್ನು ಹೊಂದಿದ್ದೇನೆ ಎಂದು ಆರೋಪಿಸಿದ್ದಾರೆ ’ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ಶರ್ಮಾರ ಆಸ್ತಿಗಳ ಕುರಿತು ತನಿಖೆ ನಡೆಸಿದ್ದು,ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬ ರಾಜ್ಯಾದ್ಯಂತ ಸುಮಾರು 12,000 ಬಿಘಾಗಳಷ್ಟು ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ‘‘ www.whoishbs.com ’ ಎಂಬ ವೆಬ್‌ಸೈಟ್‌ನ್ನು ಆರಂಭಿಸಿದ್ದು, ಅದರಲ್ಲಿ ಶರ್ಮಾರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮತ್ತು ಅವರ ಭೂ ಕಬಳಿಕೆ ವಿವರಗಳನ್ನು ಪ್ರಕಟಿಸಿದೆ. ಶರ್ಮಾರಿಗೆ ಸಂಬಂಧಿಸಿದ ಆಸ್ತಿಗಳ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಸಾರ್ವಜನಿಕರನ್ನು ಕೋರಿರುವ ಕಾಂಗ್ರೆಸ್, ಅದಕ್ಕಾಗಿ ದೂರವಾಣಿ ಸಂಖ್ಯೆಯನ್ನೂ ಒದಗಿಸಿದೆ. ಶರ್ಮಾರ ಭೂಕಬಳಿಕೆ ಕುರಿತು ಕಾಂಗ್ರೆಸ್ ತನಿಖೆ ಮುಂದುವರಿದಿದೆ ಎಂದು ಹೇಳಿದ ಗೊಗೊಯಿ, ‘ಅವರು ಕೃಷಿ ಭೂಮಿಯನ್ನು ವಶಪಡಿಸಿಕೊಂಡು, ನಂತರ ಕೈಗಾರಿಕಾ ಭೂಮಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಾವು ಈ ಎಲ್ಲ ಪ್ರಕರಣಗಳ ಕುರಿತು ತನಿಖೆ ನಡೆಸುತ್ತೇವೆ’ ಎಂದು ತಿಳಿಸಿದರು. ಶರ್ಮಾ ಅಸ್ಸಾಂ ಮಾರಾಟವನ್ನು ಕುಟುಂಬ ವ್ಯವಹಾರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದ ಗೊಗೊಯಿ, ಶರ್ಮಾ ಕುಟುಂಬವು 17 ಕಂಪನಿಗಳ ಒಡೆತನವನ್ನು ಹೊಂದಿದೆ. ಅವರು 40,000 ಬಿಘಾ ಜಮೀನನ್ನು ಅದಾನಿಗಳು, ಅಂಬಾನಿಗಳು ಮತ್ತು ಪತಂಜಲಿಗೆ ನೀಡಿದ್ದಾರೆ. ಯೋಜನೆಗಳ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ವಾರ್ತಾ ಭಾರತಿ 5 Feb 2026 8:05 pm

ಅಕ್ರಮ ಹಣ ವರ್ಗಾವಣೆ ಪ್ರಕರಣ; ಶಾಸಕ ಸತೀಶ್ ಸೈಲ್‌ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅದಿರು ಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾದ ಶಾಸಕ ಸತೀಶ್‌ ಸೈಲ್‌ ಅವರಿಗೆ ಯಕೃತ್ ಕಸಿ ಮಾಡುವ ಅಗತ್ಯವಿದೆ ಎಂಬ ವರದಿಯ ಆಧಾರದಲ್ಲಿ ಹೈಕೋರ್ಟ್ ಗುರುವಾರ ವೈದ್ಯಕೀಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಪ್ರಕರಣದ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಜಾಮೀನುರಹಿತ ಬಂಧನ ವಾರಂಟ್‌ (ಎನ್‌ಬಿ‌ಡಬ್ಲ್ಯು) ಹೊರಡಿಸಿದ ಹಾಗೂ ಜಾರಿ ನಿರ್ದೇಶನಾಲಯ (ಈಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸತೀಶ್‌ ಸೈಲ್‌ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು. ಅರ್ಜಿದಾರರನ್ನು ಹಲವು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ವೈದ್ಯರು, ಯಕೃತ್‌ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಸೈಲ್ ಅನುಭವಿಸುತ್ತಿದ್ದಾರೆ. ಅವರಿಗೆ ಯಕೃತ್ ಕಸಿ (ಲಿವರ್ ಟ್ರಾನ್ಸ್‌ಪ್ಲಾಂಟ್) ಮಾಡಬೇಕಿದೆ ಎಂದು ತಿಳಿಸಿ ನ್ಯಾಯಾಲಯಕ್ಕೆ ವರದಿ ಹಾಗೂ ದಾಖಲೆ ಸಲ್ಲಿಸಿದ್ದಾರೆ. ಅರ್ಜಿದಾರರು ಕಾರಾಗೃಹದಲ್ಲಿದ್ದುಕೊಂಡು, ಲಿವರ್ ಕಸಿಗೆ ಒಳಗಾಗಿ ನಂತರ ಕಾಲಕಾಲಕ್ಕೆ ಚಿಕಿತ್ಸೆ ಪಡೆಯುವುದು ಕಷ್ಟವಾಗಲಿದೆ. ಆದ್ದರಿಂದ, ಸೈಲ್‌ಗೆ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ, ಸತೀಶ್‌ ಸೈಲ್‌ ಅವರು 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ವೈದ್ಯಕೀಯ ಸ್ಥಿತಿಗತಿ ಕುರಿತು 8 ವಾರಕ್ಕೊಮ್ಮೆ ನ್ಯಾಯಾಲಯಕ್ಕೆ ತಿಳಿಸಬೇಕು. ಲಿವರ್ ಕಸಿ ಬಗ್ಗೆ 2 ವಾರದಲ್ಲಿ ಮಾಹಿತಿ ನೀಡಬೇಕು. ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸುವಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು‌ ನ್ಯಾಯಾಲಯ ವಿಧಿಸಿದೆ. ನ್ಯಾಯಾಲಯದ ಈ ಆದೇಶ ಪ್ರತಿ ಲಭ್ಯವಾಗುವವರೆಗೆ ಅರ್ಜಿದಾರರಿಗೆ ಈಗಾಗಲೇ ಹೈಕೋರ್ಟ್ ಮಂಜೂರು ಮಾಡಿರುವ ಮಧ್ಯಂತರ ವೈದ್ಯಕೀಯ ಜಾಮೀನು ಮುಂದುವರಿಯಲಿದೆ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 5 Feb 2026 8:01 pm

ಬೆಂಗಳೂರು ಬಿಸಿನೆಸ್‌ ಕಾರಿಡಾರ್ ಭೂಸ್ವಾಧೀನ: ರೈತರಿಗೆ ಪರಿಹಾರ ವಿತರಿಸಿದ ಡಿಕೆ ಶಿವಕುಮಾರ್; ಎಕರೆಗೆ ಎಷ್ಟು ಸಿಕ್ಕಿತು?

ಬಿಡಿಎ ಕನಸಿನ ಯೋಜನೆ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರು ಭೂ ಮಾಲೀಕರು, ರೈತರಿಗೆ ಗುರುವಾರ ಪರಿಹಾರ ವಿತರಣೆ ಮಾಡಿದ್ದಾರೆ. ಕೆಲವರು ನಗದು ಪಡೆದಿದ್ದರೆ, ಇನ್ನೂ ಕೆಲವು ಅಭಿವೃದ್ಧಿ ಹೊಂದಿದ ಭೂಮಿಯನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 5 Feb 2026 7:57 pm

ಮಹಾರಾಷ್ಟ್ರ ಡಿಸಿಎಂ ಏಕನಾಥ್‌ ಶಿಂಧೆ ಕುರಿತು ಹೇಳಿಕೆ: ಕುನಾಲ್ ಕಾಮ್ರಾಗೆ ಶಾಸಕಾಂಗ ಸಮಿತಿ ಸಮನ್ಸ್

ಮುಂಬೈ,ಫೆ.5: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ಅವಹೇನಕಾರಿ ಹೇಳಿಕೆಗಳಿಗಾಗಿ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಹಕ್ಕುಚ್ಯುತಿ ನಿರ್ಣಯಕ್ಕೆ ಸಂಬಂಧಿಸಿದಂತೆ ಫೆ.17ರಂದು ತನ್ನ ಮುಂದೆ ಖುದ್ದಾಗಿ ಹಾಜರಾಗಿ ಹೇಳಿಕೆ ನೀಡುವಂತೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಹಕ್ಕು ಸಮಿತಿಯು ಅವರಿಗೆ ಸೂಚಿಸಿದೆ. ಗುರುವಾರ ಸಮಿತಿಯ ಮುಂದೆ ಹಾಜರಾಗುವಂತೆ ಕಾಮ್ರಾ ಮತ್ತು ಶಿವಸೇನೆ (ಯುಬಿಟಿ) ನಾಯಕಿ ಸುಷ್ಮಾ ಅಂಧಾರೆ ಅವರಿಗೆ 15 ದಿನಗಳ ಹಿಂದೆ ನೋಟಿಸ್‌ಗಳನ್ನು ಹೊರಡಿಸಲಾಗಿತ್ತು ಎಂದು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದ ಸಮಿತಿಯ ಅಧ್ಯಕ್ಷ ಬಿಜೆಪಿಯ ಎಂಎಲ್‌ಸಿ ಪ್ರಸಾದ್‌ ಲಾಡ್ ಅವರು, ವಿಚಾರಣೆಗಾಗಿ ತನಗೆ ಮುಂಬೈಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಮ್ರಾ ತಿಳಿಸಿದ್ದರಿಂದ ಫೆ.17ರಂದು ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಅಂಧಾರೆ ಅವರೂ ತಾನು ಜಿಲ್ಲಾ ಪರಿಷತ್ ಚುನಾವಣೆ ಪ್ರಚಾರದಲ್ಲಿ ವ್ಯಸ್ತವಾಗಿರುವುದಾಗಿ ತಿಳಿಸಿದ ಬಳಿಕ ಸಮಿತಿಯು ಅವರ ವಿಚಾರಣೆಯನ್ನೂ ಫೆ.17ಕ್ಕೆ ನಿಗದಿಗೊಳಿಸಿದೆ. ಮಾರ್ಚ್‌ನಲ್ಲಿ ಬಿಜೆಪಿ ಎಂಎಲ್‌ಸಿ ಪ್ರವೀಣ ದಾರೇಕರ್ ಅವರು ಕಾಮ್ರಾ ಮತ್ತು ಅಂಧಾರೆ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು ಸಲ್ಲಿಸಿದ್ದರು. ಕಾಮ್ರಾ ಶಿಂದೆಯವರನ್ನು ಅಪಹಾಸ್ಯ ಮಾಡಿದ್ದಾರೆ ಮತ್ತು ಮಹಾರಾಷ್ಟ್ರ ಶಾಸಕಾಂಗವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದ್ದರೆ, ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದ ಆರೋಪವನ್ನು ಅಂಧಾರೆ ವಿರುದ್ಧ ಹೊರಿಸಲಾಗಿದೆ. ಕಾಮ್ರಾ ಮಾ.23ರಂದು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೊದಲ್ಲಿ ಹಿಂದಿ ಚಿತ್ರದ ಹಾಡೊಂದನ್ನು ವಿಡಂಬನಾತ್ಮವಾಗಿ ಮಂಡಿಸಿದ್ದು, ಅದರಲ್ಲಿ ಶಿಂಧೆಯವರನ್ನು ಪರೋಕ್ಷವಾಗಿ ಟೀಕಿಸಿದ್ದರು. 2022ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಶಿಂಧೆಯವರ ಬಂಡಾಯ ಮತ್ತು ನಂತರದ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸುವಾಗ ಕಾಮ್ರಾ ಅವರನ್ನು ‘ದೇಶದ್ರೋಹಿ’ಗೆ ಹೋಲಿಸಿದ್ದರು. ಆದಾಗ್ಯೂ ಅವರು ಶಿಂಧೆಯವರ ಹೆಸರನ್ನು ಉಲ್ಲೇಖಿಸಿರಲಿಲ್ಲ. ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಶಿಂದೆ ನೇತೃತ್ವದ ಶಿವಸೇನೆ ಕಾರ್ಯಕರ್ತರು ಮಾ.23ರಂದು ರಾತ್ರಿ ವೀಡಿಯೊವನ್ನು ಚಿತ್ರೀಕರಿಸಲಾಗಿದ್ದ ಮುಂಬೈನ ಖಾರ್ ಪ್ರದೇಶದಲ್ಲಿಯ ದಿ ಹ್ಯಾಬಿಟಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು. ಮರುದಿನ ಮುಂಬೈ ಪೋಲಿಸರು ಕಾಮ್ರಾ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಎ.25ರಂದು ಬಾಂಬೆ ಉಚ್ಚ ನ್ಯಾಯಾಲಯವು ಕಾಮ್ರಾಗೆ ಬಂಧನದ ವಿರುದ್ಧ ರಕ್ಷಣೆಯನ್ನು ನೀಡಿತ್ತಾದರೂ ಅವರ ವಿರುದ್ಧ ತನಿಖೆ ಮುಂದುವರಿಸಲು ಅನುಮತಿಸಿತ್ತು.

ವಾರ್ತಾ ಭಾರತಿ 5 Feb 2026 7:53 pm

ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣ; ಎಚ್.ಡಿ.ರೇವಣ್ಣ ವಿರುದ್ಧದ ಆರೋಪ ನಿಗದಿ ಪ್ರಕ್ರಿಯೆಗೆ ನೀಡಿದ್ದ ತಡೆ ತೆರವು

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ವಿರುದ್ಧದ ಆರೋಪ ನಿಗದಿ ಪ್ರಕ್ರಿಯೆ ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿದೆ. ಇದರಿಂದ, ವಿಚಾರಣಾ ನ್ಯಾಯಾಲಯದಲ್ಲಿ ರೇವಣ್ಣ ವಿರುದ್ಧ ಆರೋಪ ನಿಗದಿ ಪ್ರಕ್ರಿಯೆ ಆರಂಭವಾಗಲಿದೆ. ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ಮೈಸೂರು ಜಿಲ್ಲೆಯ ಕೆ.ಆರ್‌. ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ರದ್ದು ಕೋರಿ ಎಚ್‌.ಡಿ. ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು. ರೇವಣ್ಣ ವಿರುದ್ಧದ ಆರೋಪ ನಿಗದಿ ಪ್ರಕ್ರಿಯೆ ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ 2026ರ ಜನವರಿ 29ರಂದು ಮಧ್ಯಂತರ ಆದೇಶ ಮಾಡಿದ್ದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ವೇಳೆ, ಅಂದರೆ ಫೆಬ್ರವರಿ 5ರಂದು ವಾದ ಮಂಡಿಸಬೇಕು ಎಂದು ರೇವಣ್ಣ ಪರ ವಕೀಲರಿಗೆ ನಿರ್ದಿಷ್ಟ ಸೂಚನೆ ನೀಡಿತ್ತು. ಆದರೆ, ರೇವಣ್ಣ ಪರ ವಕೀಲರು ಗುರುವಾರ ಮೆಮೊ ಸಲ್ಲಿಸಿ, ವಿಚಾರಣಾ ನ್ಯಾಯಾಲಯದಲ್ಲಿ ಹಾಜರಾಗಬೇಕಿರುವುದರಿಂದ ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು. ಇದರಿಂದ, ಅಸಮಾಧಾನಗೊಂಡ ನ್ಯಾಯಪೀಠ, ಮಧ್ಯಂತರ ಆದೇಶ ತೆರವುಗೊಳಿಸಿತಲ್ಲದೆ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ನ್ಯಾಯಪೀಠ ರೇವಣ್ಣ ಪರ ವಕೀಲ ಬಿ.ಎಂ. ಗಿರೀಶ್‌ ಕುಮಾರ್‌ ಅವರನ್ನು ಕುರಿತು, ಆರೋಪ ಮುಕ್ತಿ ಕೋರುವ ಸ್ವಾತಂತ್ರ್ಯ ನೀಡಲಾಗುವುದು ಸಕ್ಷಮ ನ್ಯಾಯಾಲಯದಲ್ಲಿ ಹೋಗಿ ಅರ್ಜಿ ಸಲ್ಲಿಸಿ. ಇಲ್ಲವಾದಲ್ಲಿ ಕೊಡುವ ದಿನಾಂಕದ ಸಿದ್ಧರಾಗಿ ವಿಚಾರಣೆಗೆ ಹಾಜರಾಗಿ ಎಂದು ತೀಕ್ಷ್ಣವಾಗಿ ನುಡಿಯಿತು. ನೀವು ದಂಡ ತೆರಲೇಬೇಕು, ವಿಚಾರಣೆ ನಡೆಸಲು ಇಲ್ಲಿ ನೂರಾರು ಪ್ರಕರಣಗಳಿವೆ. ಕಳೆದ ಬಾರಿ ಏಕೆ ಸಿದ್ಧರಾಗಿರಲಿಲ್ಲ? ಹೈಕೋರ್ಟ್‌ ಮುಂದೆ ವಿಚಾರಣೆ ಮುಂದೂಡಿಕೆಗೆ ಯಾವ ರೀತಿಯ ಮನವಿ ಮಾಡುತ್ತಿದ್ದೀರಿ? ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹೋಗಬೇಕು. ಅದಕ್ಕಾಗಿ ವಿಚಾರಣೆ ಮುಂದೂಡಬೇಕು ಎಂದು ಹೈಕೋರ್ಟ್‌ನಲ್ಲಿ ಕೇಳುತ್ತಿದ್ದೀರಿ, ಹೈಕೋರ್ಟ್‌ ಮಹತ್ವವನ್ನು ಕ್ಷೀಣವಾಗಿಸಬೇಡಿ. ಇಲ್ಲಿ ಅಹಂನ ವಿಚಾರವಿಲ್ಲ ಎಂದು ಕಿಡಿಕಾರಿತು. ಮೆಮೊ ಒಪ್ಪದ ಹೈಕೋರ್ಟ್: ವಿಚಾರಣಾ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಆರೋಪ ನಿಗದಿಪಡಿಸಬಾರದು ಎಂದು 2025ರ ಜನವರಿ 30ರಂದು ಮಧ್ಯಂತರ ಆದೇಶ ಮಾಡಲಾಗಿದ್ದು, ಅದು 2025ರ ಫೆಬ್ರವರಿ 7ರವರೆಗೆ ಚಾಲ್ತಿಯಲ್ಲಿತ್ತು. ಅಂದು ಅರ್ಜಿ ವಿಚಾರಣೆಗೆ ನಿಗದಿಯಾಗಿರಲಿಲ್ಲ. ಹಾಗಾಗಿ, ಮಧ್ಯಂತರ ಆದೇಶ ವಿಸ್ತರಣೆಯಾಗಿರಲಿಲ್ಲ. ಆನಂತರ ಪ್ರಕರಣ 2026ರ ಜನವರಿ 29ರಂದು ವಿಚಾರಣೆಗೆ ಪಟ್ಟಿಯಾಗಿತ್ತು. ಅಂದು ಈ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಆರೋಪ ನಿಗದಿ ಮಾಡಬಾರದು ಎಂದು ಆದೇಶಿಸಿತ್ತು. ಅಲ್ಲದೇ, ಮುಂದಿನ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಇಂದು ಅರ್ಜಿದಾರರ ಪರ ವಕೀಲರು, ವಿಚಾರಣಾ ನ್ಯಾಯಾಲಯದಲ್ಲಿ ವಕೀಲರನ್ನು ವಿಚಾರಣೆಗೆ ನಿಯೋಜಿಸಲಾಗಿದೆ. ಆದ್ದರಿಂದ, ಇಲ್ಲಿ ವಿಚಾರಣೆ ಮುಂದೂಡಬೇಕು ಎಂದು ಮೆಮೊ ಸಲ್ಲಿಸಿದ್ದಾರೆ. ಹೈಕೋರ್ಟ್‌ಗೆ ಇಂಥ ಮೆಮೊ ಸಲ್ಲಿಸಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿದಾರರು ವಾದ ಮಂಡಿಸಲು ಸಿದ್ಧರಿಲ್ಲ ಮತ್ತು ಹಿಂದಿನ ವಿಚಾರಣೆಯಲ್ಲೂ ಅರ್ಜಿದಾರರ ವಕೀಲರು ವಾದ ಮಂಡಿಸಲು ಸಿದ್ಧರಿರಲಿಲ್ಲ. ಕಳೆದ ವಿಚಾರಣೆ ವೇಳೆಯೇ, ನಿರ್ದಿಷ್ಟ ದಿನದಂದು ವಾದ ಮಂಡಿಸಲು ಸಿದ್ಧವಾಗುವಂತೆ ಅರ್ಜಿದಾರರಿಗೆ ಸೂಚಿಸಿದ್ದರೂ ಅವರು ಸಿದ್ಧರಾಗಿಲ್ಲ. ಈಗ ಮತ್ತೆ ವಕೀಲರು ವಿಚಾರಣೆ ಮುಂದೂಡಿಕೆ ಕೋರಿದ್ದಾರೆ. ಇದಕ್ಕೆ ನ್ಯಾಯಾಲಯ ಒಪ್ಪಿಲ್ಲ. ವಿಚಾರಣೆಗೆ ಅಸಮರ್ಥನೀಯ ಮನವಿ ಮಾಡಲಾಗಿದೆ. ಆದ್ದರಿಂದ, ಚಾಲ್ತಿಯಲ್ಲಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ವಾರ್ತಾ ಭಾರತಿ 5 Feb 2026 7:52 pm

ಬಳ್ಳಾರಿ | ಪಂಚ ಗ್ಯಾರಂಟಿ ಯೋಜನೆಗಳಿಂದ ಜನಕಲ್ಯಾಣ : ನಶ್ರದ್ ಬಾನು

ಬಳ್ಳಾರಿ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆಗೊಂಡಿದ್ದು, ಜನಕಲ್ಯಾಣಕ್ಕೆ ಈ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಶಿಡಗಿನಮೊಳ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಶ್ರದ್ ಬಾನು ಅವರು ಹೇಳಿದರು. ಬಳ್ಳಾರಿ ತಾಲ್ಲೂಕಿನ ಮೀನಳ್ಳಿ ಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕ್ಷೇತ್ರ ಪ್ರಚಾರ ಕಾರ್ಯಕ್ರಮದಡಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಜನಪರ ಯೋಜನೆಗಳ ಕುರಿತು ಜಾನಪದ ಸಂಗೀತದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಹಲವು ಅಭಿವೃದ್ಧಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಬದುಕನ್ನು ಸುಧಾರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅಕ್ಷಯ ಕಲಾ ಟ್ರಸ್ಟ್, ಹೊಸ ಯರಗುಡಿ ತಂಡದ ಕಲಾವಿದರು ಜಾನಪದ ಸಂಗೀತದ ಮೂಲಕ ಸರ್ಕಾರದ ಯೋಜನೆಗಳ ಕುರಿತು ಮನರಂಜನಾತ್ಮಕವಾಗಿ ಮಾಹಿತಿ ನೀಡಿದರು. ಈ ವೇಳೆ ಶಿಡಗಿನಮೊಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ತಾಯಣ್ಣ, ಉಪಾಧ್ಯಕ್ಷ ಮಹಾನಂದಿ ತಿಮ್ಮಯ್ಯ, ಅಂಗನವಾಡಿ ಕಾರ್ಯಕರ್ತೆ ವರಲಕ್ಷ್ಮಿ, ಅಕ್ಷಯ ಕಲಾ ಟ್ರಸ್ಟ್ ಅಧ್ಯಕ್ಷ ಹಾಗೂ ಕಲಾವಿದ ಹೆಚ್.ಜಿ. ಸುಂಕಪ್ಪ, ಕಲಾವಿದರಾದ ಸರ್ವಮಂಗಳಮ್ಮ, ಪಾರ್ವತಿ, ದೇವೇಂದ್ರಪ್ಪ, ತಮಟೆ ವಾದಕರಾದ ಸೋಮಶೇಖರ್, ನಾಗಮೂರ್ತಿ ಸೇರಿದಂತೆ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 7:51 pm

ವಿಜಯನಗರ | ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ವಿತರಣೆ

ವಿಜಯನಗರ (ಹರಪನಹಳ್ಳಿ) :ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶಯವು ನಿರ್ಗತಿಕರು ಹಾಗೂ ಬಡತನದಲ್ಲಿರುವ ಕುಟುಂಬಗಳಿಗೆ ಮಾಸಾಶನ ನೀಡುವುದರ ಜೊತೆಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಅಗತ್ಯ ವಸ್ತುಗಳನ್ನು ಒದಗಿಸುವುದಾಗಿದೆ ಎಂದು ಹರಿಪುರ ಕ್ಷೇತ್ರ ಯೋಜನಾಧಿಕಾರಿ ಬಾಬು ಹೇಳಿದರು. ತಾಲೂಕಿನ ಬಾಗಳಿ, ಹರಪನಹಳ್ಳಿ ಪಟ್ಟಣದ ಸುಣಗಾರಕೇರಿ, ಹೊಂಬಳಘಟ್ಟ, ಚಿಗಟೇರಿ, ಚೆನ್ನಾಪುರ, ರಾಮಘಟ್ಟ, ದಿದ್ದಿಗೆ ತಾಂಡಾ ಹಾಗೂ ಉಚ್ಚಂಗಿದುರ್ಗಾ ಗ್ರಾಮಗಳಲ್ಲಿ ಬಡತನದಲ್ಲಿರುವ 9 ಕುಟುಂಬಗಳಿಗೆ ದಿನನಿತ್ಯ ಅಗತ್ಯವಿರುವ ಉಪಯೋಗಿ ವಸ್ತುಗಳನ್ನು ವಿತರಿಸಿ ಅವರು ಮಾತನಾಡಿದರು. ಬಡ ಹಾಗೂ ನಿರ್ಗತಿಕ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ರೀತಿಯ ನೆರವು ನೀಡಲಾಗುತ್ತಿದೆ. ಸಮಾಜದ ದುರ್ಬಲ ವರ್ಗದವರು ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅನಿತಾ, ಮೇಲ್ವಿಚಾರಕಿ ಮಮತಾ, ಭವ್ಯ, ಸೇವಾ ಪ್ರತಿನಿಧಿ ಶಿಲ್ಪಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 7:48 pm

WPL 2026 Final: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ ಹಿಂದಿದೆ ಬಿಗ್‌ ಪ್ಲ್ಯಾನ್‌

WPL 2026 Final RCB: ಡಬ್ಲ್ಯೂಪಿಎಲ್‌ 2026ರ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್‌ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಪಿಚ್ ವರದಿ ಹಾಗೂ ಹಿಂದಿನ ಪಂದ್ಯಗಳ ಅನುಭವವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ,

ಒನ್ ಇ೦ಡಿಯ 5 Feb 2026 7:46 pm

ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ತಿರುವನಂತಪುರ,ಫೆ.5: ಕೇರಳ ವಿಧಾನಸಭೆಯು ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಮನರೇಗಾವನ್ನು ಮರುಸ್ಥಾಪಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಗುರುವಾರ ಅಂಗೀಕರಿಸಿದೆ. ಬಿಜೆಪಿಯೇತರ ಪಕ್ಷಗಳ ಆಡಳಿತದ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ವಿಧಾನಸಭೆಗಳು ಈಗಾಗಲೇ ಇಂತಹ ನಿರ್ಣಯಗಳನ್ನು ಅಂಗೀಕರಿಸಿವೆ. ಶಬರಿಮಲೆ ಚಿನ್ನ ಕಳುವು ಪ್ರಕರಣ ಕುರಿತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಪ್ರತಿಭಟನೆಗಳ ನಡುವೆಯೇ ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ.ರಾಜೇಶ್‌ ಅವರು ಮಂಡಿಸಿದ ನಿರ್ಣಯವನ್ನು ಸದನವು ಅಂಗೀಕರಿಸಿತು. ಸಂಪೂರ್ಣವಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದ ಮನರೇಗಾದ ಬದಲು ತರಲಾಗಿರುವ ವಿಬಿ-ಜಿ ರಾಮ್ ಜಿ ಕಾಯ್ದೆಯು ಶೇ.40ರಷ್ಟು ವೆಚ್ಚವನ್ನು ರಾಜ್ಯಗಳು ಭರಿಸುವುದನ್ನು ಅಗತ್ಯವಾಗಿಸಿದೆ ಎಂದು ಹೇಳಿದ ಅವರು, ಈ ಬಗ್ಗೆ ಹೊಸ ಶಾಸನವನ್ನು ತೀವ್ರವಾಗಿ ವಿರೋಧಿಸುತ್ತಿರುವ ಇತರ ದಕ್ಷಿಣ ರಾಜ್ಯಗಳು ವ್ಯಕ್ತಪಡಿಸಿರುವ ಕಳವಳವನ್ನು ಎತ್ತಿ ತೋರಿಸಿದರು. ವಿಬಿ-ಜಿ ರಾಮ್ ಜಿ ಕಾಯ್ದೆಯು ರಾಜ್ಯಗಳ ಮೇಲೆ ಭಾರೀ ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ ಮತ್ತು ಹಿಂದಿನ ಕಾನೂನಿನ ತಿರುಳಾಗಿದ್ದ ಹಕ್ಕು-ಆಧಾರಿತ ನಿಬಂಧನೆಗಳನ್ನು ಇದು ಹೊಂದಿಲ್ಲ ಎಂದು ಸಚಿವರು ಬೆಟ್ಟು ಮಾಡಿದರು. ನೂತನ ಯೋಜನೆಯಡಿ ಗ್ರಾಮ ಪಂಚಾಯತ್‌ಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಬೇಕಾಗುತ್ತದೆ ಮತ್ತು ಕೇಂದ್ರವು ಅಧಿಸೂಚಿಸಿದ ಪ್ರದೇಶಗಳಲ್ಲಿ ಮಾತ್ರ ಉದ್ಯೋಗ ಯೋಜನೆ ಲಭ್ಯವಾಗುತ್ತದೆ. ಪರಿಣಾಮವಾಗಿ ಕೇರಳದ ಅನೇಕ ಗ್ರಾಮ ಪಂಚಾಯತ್‌ಗಳು ಇತರ ರಾಜ್ಯಗಳಲ್ಲಿಯ ಗ್ರಾಮ ಪಂಚಾಯತ್‌ಗಳಿಗಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿರುವುದರಿಂದ ಅವುಗಳನ್ನು ಉನ್ನತ ವರ್ಗಕ್ಕೆ ಸೇರಿಸಬಹುದು ಮತ್ತು ಉದ್ಯೋಗ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಬಹುದು ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದರು.

ವಾರ್ತಾ ಭಾರತಿ 5 Feb 2026 7:46 pm

ರಾಯಚೂರು ಜಿಲ್ಲಾ ಉತ್ಸವಕ್ಕೆ ಕಲಾತಂಡಗಳ ಅದ್ದೂರಿ ಮೆರಗು

ರಾಯಚೂರು : ಜಿಲ್ಲಾ ಉತ್ಸವದ ಅಂಗವಾಗಿ ಗುರುವಾರ ಆಯೋಜಿಸಲಾದ ವಿವಿಧ ಕಲಾತಂಡಗಳ ಪ್ರದರ್ಶನ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು. ನಗರದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಡಾ. ಶಿವರಾಜ ಎಸ್. ಪಾಟೀಲ, ಬಸನಗೌಡ ದದ್ದಲ್‌ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ಸಂಘದಿಂದ ಬಂಗಾರ ಬಜಾರ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಜಿಲ್ಲಾ ಉತ್ಸವದ ಮುಖ್ಯ ವೇದಿಕೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ದೇವದುರ್ಗ ತಾಲೂಕಿನ ಬಂಡೆಗುಡ್ಡ ತಮ್ಮಣ್ಣ ರಾಥೋಡ್ ಕಲಾತಂಡ, ಅರಕೇರಾ ತಾಲೂಕಿನ ಬಂಡೆಗುಡ್ಡ, ಲಮಾಣಿ ನೃತ್ಯ, ಸಿಂಧನೂರು ತಾಲೂಕಿನ ಯಾಪಲಪರ್ವಿ ಹಗಲು ವೇಷ, ದೊಡ್ಡ ಹಲಗಿ (ಹುಬ್ಬಳ್ಳಿ), ರಾಮನಗರದ ಯಕ್ಷಗಾನ, ಮಸ್ಕಿಯ ಗೊಂಬೆ ಕುಣಿತ, ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕಹಳೆ ವಾದ್ಯ, ಚಿತ್ರದುರ್ಗದ ಕೋಳಿ ಕುಣಿತ, ಸಿಂಧನೂರಿನ ವೀರಗಾಸೆ, ಸಿರವಾರದ ಹಗಲು ವೇಷ ಕಲಾತಂಡ, ಮಹಾರಾಷ್ಟ್ರದ ಸೋಲಾಪುರದ ನಾಸಿಕ್ ಡೋಳ್ ಡ್ಯಾನ್ಸ್, ವಿಜಯನಗರ ಜಿಲ್ಲೆಯ ಹಂಪಿ–ನಂದಿಬೇವೂರು ಜಾನಪದ ಕಲಾತಂಡ (ಸಿ. ವೀರೇಶ), ಕೊಪ್ಪಳ ಜಿಲ್ಲೆಯ ಗಂಗಾವತಿಯ ತಾಶ್ ರಾಮ್ ಡೋಳ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಗೊರವರ ಕುಣಿತ ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸಿದ್ದವು. ಇದೇ ವೇಳೆ ನಂದಿಕೋಲು ಕುಣಿತ, ಚಾಂಜ್ ಮೇಳ, ಹಗಲು ವೇಷ, ಗೊರವ ಕುಣಿತ, ತಮಟೆ ವಾದನ, ಲಂಬಾಣಿ ನೃತ್ಯ, ಭದ್ರಕಾಳಿ ಕುಣಿತ, ಕರಡಿ ಮಜಲು ಮೊದಲಾದ ಜಾನಪದ ಹಾಗೂ ಸಾಂಸ್ಕೃತಿಕ ಕಲಾಪ್ರದರ್ಶನಗಳು ಜನಮನ ಸೆಳೆದವು. ಜಿಲ್ಲೆಯ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 20ಕ್ಕೂ ಅಧಿಕ ಕಲಾತಂಡಗಳ ಪ್ರದರ್ಶನ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಉತ್ಸವದ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಿತು. ಮೆರವಣಿಗೆಯುದ್ದಕ್ಕೂ ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.                

ವಾರ್ತಾ ಭಾರತಿ 5 Feb 2026 7:43 pm

ಫೆ.21ರಂದು ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ

ಮಂಗಳೂರು: ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ವತಿ ಯಿಂದ ಫೆ.21 ರಂದು ವಿವೇಕಾ ನಂದ ಕಾಲೇಜ್ ಆಫ್ ಇಂಜಿನಿ ಯರಿಂಗ್ ಟೆಕ್ನಾಲಜಿ ಪುತ್ತೂರು ಇಲ್ಲಿ ಆಯೋಜಿಸ ಲಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕೆ.ಇ.ಜಯರಾಮ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ 'ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ'ಯಡಿ ಗ್ರಾಮೀಣ ಪ್ರದೇಶದ ಬಡ ಯುವಜನರಿಗೆ ಕೌಶಲ್ಯಾ ಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಸರ್ಕಾರ/ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಮತ್ತು ವಿವಿಧ ಯೋಜನಾ ಅನುಷ್ಠಾನ1;1 ಸಂಸ್ಥೆಗಳ ಮೂಲಕ ಯೋಜನೆಯನ್ನು ಅನಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ60:40 ರ ಅನುಪಾತದಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಇದು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಸಂಪೂರ್ಣ ಉಚಿತ ಯೋಜನೆಯಾಗಿದೆ. ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡುವುದು ದೀನ್ ದಯಾಳ್‌ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಕಾರ್ಯಕ್ರಮದ ವಾರ್ಷಿಕ ಯೋಜನೆ 2019-2023ರ ಉಪ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕೌಶಲ್ಯಯುತ ಯುವ ಜನರಿಗೆ ಉದ್ಯೋಗ ಕಲ್ಪಿಸುವುದು. ಈ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸಿ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಪಡಿ ಸುವುದಾಗಿದೆ. ಈ ಕಾರ್ಯಕ್ರಮದ ಮೂಲಕ ಉದ್ಯಮದಾರರು. ಕಾರ್ಯಕ್ರಮ ಅನುಷ್ಠಾನ ಸಂಸ್ಥೆಗಳು ಹಾಗೂ ಗ್ರಾಮೀಣ ಯುವಜನರನ್ನು ಒಂದೆಡೆಯಲ್ಲಿ ಸೇರಿಸಲು ಸೂಕ್ತ ವೇದಿಕೆಯಾಗಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ,ಡಿಡಿಯು -ಜಿಕೆವೈ ಎನ್ಆರ್ ಎಲ್ ಎನ್ ಯೋಜನೆಯಡಿ ಸದರಿ ಈ ಮೇಳಕ್ಕೆ ಬೆಂಗಳೂರು, ಮಂಗಳೂರು ಮತ್ತುಐ.ಟಿ,ಸಾಪ್ಟ್ ವೇರ್ , ಆಟೋಮೊ ಬೈಲ್, ಬ್ಯಾಂಕ್, ಹಣಕಾಸು, ಸೇವಾ ವಲಯ ,ರಿಟೈಲ್,ಶಿಕ್ಷಣ, ವೈದ್ಯಕೀಯ ಸೇರಿದಂತೆ 80ಕ್ಕೂ ಅಧಿಕ ಕಂಪೆನಿಗಳ ಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ. ಎಸ್ ಎಸ್ ಎಲ್ ಸಿಯಿಂದ ಸ್ನಾತಕೋತ್ತರ ಪದವಿ, ಐಟಿಐ,ಡಿಪ್ಲೊಮ,ಇಂಜಿನಿಯರಿಂಗ್, ನರ್ಸಿಂಗ್, ಪ್ಯಾರಾ ಮೆಡಿಕಲ್ ಕೋರ್ಸ್ ಮಾಡಿದ ನಿರುದ್ಯೋಗಿ ಯುವಕ ಯುವತಿಯರಿಗೆ ಸುರ್ವಣಾವಕಾಶ, ಉದ್ಯೋಗಾಂಕ್ಷಿಗಳು ಭಿತ್ತಿ ಪತ್ರದಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ಹೆಸರು ಮತ್ತು ವಿವರವನ್ನು ನೋಂದಣಿ ಮಾಡಲು ಕೋರಲಾಗಿದೆ ಎಂದವರು ಮಾಹಿತಿ ನೀಡಿದರು.

ವಾರ್ತಾ ಭಾರತಿ 5 Feb 2026 7:40 pm

ರಾಜ್ಯ ಬಜೆಟ್ | ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 7,900 ಕೋಟಿ ರೂ.ಪ್ರಸ್ತಾವನೆ ಸಲ್ಲಿಕೆ : ಝಮೀರ್ ಅಹ್ಮದ್

ಬೆಂಗಳೂರು : ರಾಜ್ಯ ಸರಕಾರದ 2026-27ನೇ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 7,900 ಕೋಟಿ ರೂ. ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ವಸತಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು. ಗುರುವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ವತಿಯಿಂದ ಆಯೋಜಿಸಲಾಗಿದ್ದ 2025-26ನೆ ಸಾಲಿನ ಸ್ವಾವಲಂಬಿ ಸಾರಥಿ, ವೃತ್ತಿ ಪ್ರೋತ್ಸಾಹ ಸೇರಿದಂತೆ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ರೂ.ಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಕಳೆದ ವರ್ಷ ನಮ್ಮ ಇಲಾಖೆಗೆ 4,500 ಕೋಟಿ ರೂ.ಗಳನ್ನು ನೀಡಿದ್ದರು. 2026-27ನೆ ಸಾಲಿಗೆ 7900 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಸಿದ್ದೇವೆ. ಕನಿಷ್ಠ 6000 ರಿಂದ 6500 ಕೋಟಿ ರೂ.ಸಿಗುವ ನಿರೀಕ್ಷೆಯಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು. ಅಲ್ಪಸಂಖ್ಯಾತರ ಸಮುದಾಯದವರು ನವೋದ್ಯಮಗಳನ್ನು ಆರಂಭಿಸಲು 2025-26ನೆ ಸಾಲಿನಲ್ಲಿ ಎಲಿವೇಟ್ ಮೈನಾರಿಟೀಸ್ ಕಾರ್ಯಕ್ರಮದ ಮೂಲಕ 30 ನವೋದ್ಯಮಗಳನ್ನು ಗುರುತಿಸಿ 9 ಕೋಟಿ ರೂ.ಆರ್ಥಿಕ ನೆರವು ಒದಗಿಸಲಾಗಿದೆ. ಪ್ರತಿಯೊಂದು ನವೋದ್ಯಮವು 21 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳ ನೆರವು ಪಡೆದಿದೆ ಎಂದು ಅವರು ಹೇಳಿದರು. ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ 12,751 ವಿದ್ಯಾರ್ಥಿಗಳಿಗೆ 131.39 ಕೋಟಿ ರೂ., ವಿದೇಶ ಶಿಕ್ಷಣ ಯೋಜನೆಯಡಿ 200 ಫಲಾನುಭವಿಗಳಿಗೆ 20 ಕೋಟಿ ರೂ., ನೇರ ವ್ಯಾಪಾರ ಸಾಲ ಯೋಜನೆಯಡಿ 100 ಫಲಾನುಭವಿಗಳಿಗೆ 15 ಕೋಟಿ ರೂ.ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಮುದಾಯ ಆಧಾರಿತ ತರಬೇತಿ ಯೋಜನೆಯಡಿ 1085 ಫಲಾನುಭವಿಗಳಿಗೆ 6.56 ಕೋಟಿ ರೂ. ನೆರವು ಒದಗಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು. ವೃತ್ತಿ ಪ್ರೋತ್ಸಾಹ ಯೋಜನೆಯಡಿ 550 ಫಲಾನುಭವಿಗಳಿಗೆ 50 ಸಾವಿರ ರೂ.ಸಬ್ಸಿಡಿ ಹಾಗೂ 50 ಸಾವಿರ ರೂ.ಸಾಲ ಸೇರಿದಂತೆ ಒಟ್ಟು ತಲಾ 1 ಲಕ್ಷ ರೂ.ಗಳಂತೆ 5.50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಶ್ರಮ ಶಕ್ತಿ ಯೋಜನೆಯಡಿ 1000 ಫಲಾನುಭವಿಗಳಿಗೆ ತಲಾ 50 ಸಾವಿರ ರೂ.(25 ಸಾವಿರ ರೂ.ಸಬ್ಸಿಡಿ ಹಾಗೂ 25 ಸಾವಿರ ರೂ.ಸಾಲ)ಗಳಂತೆ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಚಾಲಕರು ಮಾಲಕರು ಆಗಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿರುವ ಸ್ವಾವಲಂಬಿ ಸಾರಥಿ ಯೋಜನೆಯಡಿ(ಟ್ಯಾಕ್ಸಿ ಮತ್ತು ಗೂಡ್ಸ್) 623 ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ 174 ಫಲಾನುಭವಿಗಳಿಗೆ ಗೂಡ್ಸ್ ಆಟೋಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಒಟ್ಟು 797 ಫಲಾನುಭವಿಗಳಿಗೆ 20 ಕೋಟಿ ರೂ.ಗಳ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು. ಮನುಷ್ಯನಿಗೆ ಶಿಕ್ಷಣ ತುಂಬಾ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಶಿಕ್ಷಣವು ಒಂದು ಪ್ರಬಲ ಅಸ್ತ್ರ. ಪ್ರತಿಯೊಬ್ಬರಿಗೂ ತನ್ನ ಹಾಗೂ ತನ್ನ ಕುಟುಂಬದ ಭವಿಷ್ಯ ರೂಪಿಸಲು ಶಿಕ್ಷಣ ಸಹಕಾರಿಯಾಗಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, 2025-26ನೆ ಸಾಲಿನಲ್ಲಿ ಕೆಎಂಡಿಸಿ ವತಿಯಿಂದ ವಿವಿಧ ಸವಲತ್ತುಗಳಿಗಾಗಿ ಆನ್‍ಲೈನ್ ಮೂಲಕ 60 ಸಾವಿರ ಮಂದಿ ಅರ್ಜಿ ಹಾಕಿದ್ದರು. ಇದರಲ್ಲಿ 20 ಸಾವಿರ ಅರ್ಜಿಗಳನ್ನು ಸ್ವೀಕೃತಗೊಳಿಸಿ ಸುಮಾರು 250 ಕೋಟಿ ರೂ.ವೆಚ್ಚದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು. ಅಲ್ಪಸಂಖ್ಯಾತ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ರಾಜ್ಯ ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳು ಅದರ ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಮೌಲಾನಾ ಮಕ್ಸೂದ್ ಇಮ್ರಾನ್, ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ವ್ಯವಸ್ಥಾಪಕ ನಿರ್ದೇಶಕ ಶೇಖ್ ಲತೀಫ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 7:40 pm

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ: ಕವಿಗೋಷ್ಠಿ

ಕಾವ್ಯವು ಮಾನವೀಯ ಮೌಲ್ಯ ಬೆಳೆಸುವ ಬಲಿಷ್ಠ ಅಸ್ತ್ರ: ರಂಗಣ್ಣ ಪಾಟೀಲ್ ಅಳ್ಳುಂಡಿ

ವಾರ್ತಾ ಭಾರತಿ 5 Feb 2026 7:38 pm

ಕುದ್ರೋಳಿ: ಎಸ್‌ಐಆರ್ ಬಗ್ಗೆ ಮಾಹಿತಿ ಶಿಬಿರ

ಮಂಗಳೂರು : ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಕುದ್ರೋಳಿ ಜಾಮಿಯಾ ಮಸೀದಿಯ ಸಭಾಂಗಣದಲ್ಲಿ ಎಸ್‌ಐಆರ್ ಬಗ್ಗೆ ಗುರುವಾರ ಮಾಹಿತಿ ಶಿಬಿರ ನಡೆಯಿತು. ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಜಾಮಿಯಾ ಮಸೀದಿಯ ಖಾಝಿ ಮೌಲಾನ ಶೇಖ್ ಮುತಹರ್ ಹುಸೈನ್ ದುಆಗೈದು ಶಿಬಿರ ಉದ್ಘಾಟಿಸಿದರು. ಹೈಕೋರ್ಟ್ ನ್ಯಾಯವಾದಿ ಮೇತ್ರಿ ಮುಹಮ್ಮದ್ ಇಸ್ಮಾಯಿಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಎಸ್‌ಐಆರ್ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷರಾದ ಹಾಜಿ ಭಾಷಾ ಸಾಹೇಬ್ ಕುಂದಾಪುರ, ಮಾಜಿ ಮೇಯರ್ ಕೆ. ಅಶ್ರಫ್, ಹಾಜಿ ಎಸ್.ಎಂ. ರಶೀದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಜಮಾಅತೆ ಇಸ್ಲಾಂ ಹಿಂದ್‌ನ ಅಶ್ರಫ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ಎಂ.ಎಚ್.ಮೊಯಿದಿನ್, ಪ್ರಧಾನ ಕಾರ್ಯದರ್ಶಿ ಹಾಜಿ ರಫೀಕ್ ಕೊಡಾಜೆ, ಕುದ್ರೋಳಿ ಜಾಮಿಯಾ ಮಸೀದಿಯ ಉಪಾಧ್ಯಕ್ಷ ಹಾಜಿ ಮಕ್ಬುಲ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ಎಸ್.ಎ.ಖಲೀಲ್ ಅಹ್ಮದ್, ಒಕ್ಕೂಟದ ಉಪಾಧ್ಯಕ್ಷ ಅದ್ದು ಕೃಷ್ಣಾಪುರ ಮತ್ತಿತರರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 5 Feb 2026 7:37 pm

ಸಂಹಿತೆಗಳು ಜಾರಿಯಾದರೆ ಕಾರ್ಮಿಕ ವರ್ಗ ಮತ್ತೆ ಗುಲಾಮಗಿರಿಯತ್ತ: ಫಣೀಂದ್ರ

ದ.ಕ.ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾಕ್ಕೆ ಚಾಲನೆ

ವಾರ್ತಾ ಭಾರತಿ 5 Feb 2026 7:29 pm

ಮೇಘಾಲಯ| ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ಕನಿಷ್ಠ 16 ಮಂದಿ ಮೃತ್ಯು

ಶಿಲ್ಲಾಂಗ್: ಮೇಘಾಲಯದ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ 16 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಲ್ಲಿದ್ದಲಿಗೆ ಪ್ರಸಿದ್ಧವಾದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪ್ರಕರಣ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. “ನಾವು 16 ಮೃತದೇಹಗಳನ್ನು ಪತ್ತೆಹಚ್ಚಿದ್ದೇವೆ. ಅವುಗಳನ್ನು ಇನ್ನೂ ಗುರುತಿಸಲಾಗಿಲ್ಲ. ಗಾಯಾಳುವನ್ನು ಶಿಲ್ಲಾಂಗ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರಿಗೆ ಸುಟ್ಟ ಗಾಯಗಳಾಗಿವೆ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ. ಘಟನೆಯ ಮಾಹಿತಿ ಲಭಿಸಿದ ತಕ್ಷಣವೇ ಪೊಲೀಸ್ ಹಾಗೂ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ರಾಜ್ಯ ರಾಜಧಾನಿ ಶಿಲ್ಲಾಂಗ್‌ನಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮತ್ತೊಂದು ತಂಡವೂ ಘಟನಾ ಸ್ಥಳದತ್ತ ತೆರಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಗಣಿ ಮಾಲೀಕರು ಹಾಗೂ ಗಣಿಯನ್ನು ನಡೆಸುತ್ತಿರುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದರ ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ,” ಎಂದು ಎಸ್‌ಪಿ ವಿಕಾಶ್ ಕುಮಾರ್ ಹೇಳಿದ್ದಾರೆ. “ನಮ್ಮ ತಂಡದ ವಾಪಸಾತಿಗಾಗಿ ಕಾಯುತ್ತಿದ್ದೇವೆ. ಅವರ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ

ವಾರ್ತಾ ಭಾರತಿ 5 Feb 2026 7:28 pm

‘ಪ್ರಭಾರ ಡಿಜಿಪಿ’ ನೇಮಿಸುವ ಸಂಸ್ಕೃತಿ: ಸುಪ್ರೀಂ ಕೋರ್ಟ್ ತರಾಟೆ

ಹೊಸದಿಲ್ಲಿ,ಫೆ.5: ರಾಜ್ಯ ಸರಕಾರಗಳು ನಿಯಮಿತ ಪೋಲಿಸ್ ಮಹಾ ನಿರ್ದೇಶಕರ (ಡಿಜಿಪಿ) ಹುದ್ದೆಗೆ ನೇಮಕಾತಿಗಾಗಿ ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಶಿಫಾರಸುಗಳನ್ನು ಕಳುಹಿಸುವ ಬದಲು ‘ಪ್ರಭಾರ ’ ಡಿಜಿಪಿಗಳನ್ನು ನೇಮಿಸುವ ಪರಿಪಾಠವನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ಪ್ರಶ್ನಿಸಿದೆ. ಈ ಪದ್ಧತಿಯಿಂದ ಅರ್ಹ ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳು ಡಿಜಿಪಿ ಹುದ್ದೆಗೆ ಪರಿಗಣನೆಯಿಂದ ವಂಚಿತರಾಗುತ್ತಾರೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಪೀಠವು, ರಾಜ್ಯ ಸರಕಾರಗಳು ಪ್ರಕಾಶ ಸಿಂಗ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಡಿಜಿಪಿ ಆಯ್ಕೆಗಾಗಿ ಸಕಾಲದಲ್ಲಿ ಹೆಸರುಗಳನ್ನು ಸಲ್ಲಿಸುವಲ್ಲಿ ವಿಫಲಗೊಳ್ಳುತ್ತಿವೆ ಮತ್ತು ಬದಲಿಗೆ ಪ್ರಭಾರ ಡಿಜಿಪಿಯನ್ನು ನೇಮಿಸುತ್ತಿವೆ ಎಂದು ಬೆಟ್ಟು ಮಾಡಿತು. ಈ ಪದ್ಧತಿಯನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವು ಡಿಜಿಪಿಗಳ ಆಯ್ಕೆಗಾಗಿ ಸಕಾಲಿಕ ಪ್ರಸ್ತಾವನೆಗಳನ್ನು ಕೋರಿ ರಾಜ್ಯ ಸರಕಾರಗಳಿಗೆ ಪತ್ರ ಬರೆಯಲು ಯುಪಿಎಸ್‌ಸಿಗೆ ಅಧಿಕಾರ ನೀಡಿತು. ಯಾವುದೇ ರಾಜ್ಯವು ಇದನ್ನು ಅನುಸರಿಸದಿದ್ದರೆ ಯುಪಿಎಸ್‌ಸಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದೂ ಹೇಳಿತು. ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ, ರಾಜ್ಯ ಸರಕಾರವು ಯುಪಿಎಸ್‌ಸಿ ಶಾರ್ಟ್‌ಲಿಸ್ಟ್ ಮಾಡಿದ ಮೂವರು ಅಧಿಕಾರಿಗಳ ಪೈಕಿ ಓರ್ವರನ್ನು ಡಿಜಿಪಿಯನ್ನಾಗಿ ನೇಮಿಸಬೇಕು. ರಾಜ್ಯಸರಕಾರವು ಶಿಫಾರಸು ಮಾಡಿರುವ ಹೆಸರುಗಳನ್ನು ಪರಿಗಣಿಸುವಂತೆ ತೆಲಂಗಾಣ ಉಚ್ಚ ನ್ಯಾಯಾಲಯವು ಯುಪಿಎಸ್‌ಸಿಗೆ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆಯನ್ನು ನಡೆಸುತ್ತಿದ್ದ ಸರ್ವೋಚ್ಚ ನ್ಯಾಯಾಲಯವು ಡಿಜಿಪಿಗಳ ಸಕಾಲಿಕ ನೇಮಕಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿತು. ರಾಜ್ಯ ಸರಕಾರವು ಡಿಜಿಪಿ ಆಯ್ಕೆಯಲ್ಲಿ ಅತಿಯಾದ ವಿಳಂಬವನ್ನು ಮಾಡಿದೆ ಎಂಬ ಕಾರಣದಿಂದ ಯುಪಿಎಸ್‌ಸಿ ಈ ನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯದ ಹಿಂದಿನ ಡಿಜಿಪಿ ಅನುರಾಗ ಶರ್ಮಾ ಅವರು 2017ರಲ್ಲಿ ನಿವೃತ್ತರಾಗಿದ್ದರು. ಅದರ ಬಳಿಕ ರಾಜ್ಯ ಸರಕಾರವು ಯುಪಿಎಸ್‌ಸಿಗೆ ಯಾವುದೇ ಶಿಫಾರಸು ಸಲ್ಲಿಸಿರಲಿಲ್ಲ. ಅಂತಿಮವಾಗಿ ರಾಜ್ಯ ಸರಕಾರವು ಎಪ್ರಿಲ್ 2025ರಲ್ಲಿ ಶಿಫಾರಸನ್ನು ಕಳುಹಿಸಿತ್ತು. ಆದರೆ, ಈಗಾಗಲೇ ಗಣನೀಯ ವಿಳಂಬವಾಗಿದೆ ಎಂಬ ಕಾರಣಕ್ಕಾಗಿ ಯುಪಿಎಸ್‌ಸಿ ಅದರ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಇದು ಗಂಭಿರ ಲೋಪ ಎಂದು ಪರಿಗಣಿಸಿದ್ದ ಯುಪಿಎಸ್‌ಸಿ, ರಾಜ್ಯ ಸರಕಾರವು ಮೊದಲು ಪ್ರಕಾಶ ಸಿಂಗ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಸ್ಪಷ್ಟನೆಯನ್ನು ಅಥವಾ ಆದೇಶವನ್ನು ಕೋರಬೇಕು ಎಂದು ಸೂಚಿಸಿತ್ತು. ಇತರ ಕೆಲವು ರಾಜ್ಯಗಳೂ ಇಂತಹ ವಿಳಂಬ ತಂತ್ರವನ್ನು ಅನುಸರಿಸುತ್ತಿವೆ ಎಂದೂ ಅದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ಯುಪಿಎಸ್‌ಸಿಯ ಕಳವಳಗಳನ್ನು ಒಪ್ಪಿಕೊಂಡ ಸರ್ವೋಚ್ಚ ನ್ಯಾಯಾಲಯವು ಇಂತಹ ವಿಳಂಬಗಳು ಈಗ ನಿವೃತ್ತರಾಗಿರುವ ಮತ್ತು ಸರಕಾರದಿಂದ ಕಡೆಗಣಿಸಲ್ಪಟ್ಟಿದ್ದ ಅನೇಕ ಹಿರಿಯ ಪೋಲಿಸ್ ಅಧಿಕಾರಗಳ ವೃತ್ತಿಜೀವನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿವೆ ಎಂದು ಬೆಟ್ಟು ಮಾಡಿತು. ಆದಾಗ್ಯೂ ಯುಪಿಎಸ್‌ಸಿಯ ಆಕ್ಷೇಪಣೆಯು ಪರಿಸ್ಥಿತಿಯನ್ನು ಸರಿಪಡಿಸಲು ನೆರವಾಗುವುದಿಲ್ಲ, ಬದಲಿಗೆ ತಪ್ಪಿತಸ್ಥ ರಾಜ್ಯಗಳಿಗೆ ಸಹಕಾರಿಯಾಗುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿತು. ಅದರಂತೆ, ತೆಲಂಗಾಣಕ್ಕೆ ಡಿಜಿಪಿ ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಯುಪಿಎಸ್‌ಸಿಗೆ ನಿರ್ದೇಶನ ನೀಡಿತು. ರಾಜ್ಯ ಸರಕಾರವು ಸಾಧ್ಯವಾದಷ್ಟು ಶೀಘ್ರ ಡಿಜಿಪಿ ಹುದ್ದೆಗೆ ನೇಮಕಾತಿಗಾಗಿ ಶಿಫಾರಸು ಮಾಡಬೇಕು ಎಂದು ಸೂಚಿಸಿದ ನ್ಯಾಯಾಲಯವು, ಅಗತ್ಯ ಕ್ರಮವನ್ನು ಕೈಗೊಳ್ಳಲು ಯುಪಿಎಸ್‌ಸಿಗೆ ನಾಲ್ಕು ವಾರಗಳ ಸಮಯಾವಕಾಶವನ್ನು ನೀಡಿತು.

ವಾರ್ತಾ ಭಾರತಿ 5 Feb 2026 7:26 pm

ಟಿ20 ವಿಶ್ವಕಪ್ ನಲ್ಲಿ 3 ತಂಡಗಳಿಗೆ ಭಾರತ ಮೂಲದವರದ್ದೇ ಸಾರಥ್ಯ!: ಅವರಲ್ಲೊಬ್ಬ ಜಸ್ಪ್ರೀತ್ ಬುಮ್ರಾ ಜೊತೆ ಆಡಿದಾತ

ICC T20 Wolrd Cup 2026- ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಒಮ್ಮೆ ಈ ತಂಡಗಳ ಮೇಲೆ ಕಣ್ಣು ಹಾಯಿಸಿದರೆ ಭಾರತೀಯ ಮೂಲಕ ಕ್ರಿಕೆಟಿಗರು ಬಹಳಷ್ಟು ಸಂಖ್ಯೆಯಲ್ಲಿರುವುದು ಗಮನಕ್ಕೆ ಬಾರದೇ ಇರದು. ಅದೇನೂ ಹೊಸ ಸಂಗತಿಯಲ್ಲ. ಆದರೆ ಈ ಬಾರಿ 3 ತಂಡಗಳಿಗೆ ಭಾರತ ಮೂಲದ ಆಟಗಾರರೇ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ವಿಶೇಷವಾಗಿದೆ. ಫೆಬ್ರವರಿ 7ರಂದು ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಭಾರತೀಯ ಮೂಲದ ಮೊನಾಂಕ್ ಪಟೇಲ್ ನೇತೃತ್ವದ ಅಮೆರಿಕ ತಂಡವನ್ನು ಎದುರಿಸಲಿದೆ!

ವಿಜಯ ಕರ್ನಾಟಕ 5 Feb 2026 7:20 pm

ಮಂಗಳೂರಿನಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ದ.ಕ. ಡಿಸಿ ದರ್ಶನ್ ಎಚ್.ವಿ

ಮಂಗಳೂರು: ಮಂಗಳೂರು ನಗರದಲ್ಲಿ ಹೆಲಿಕಾಪ್ಟರ್‌ಗಳಿಗೆ ಶಾಶ್ವತ ಹೆಲಿಪ್ಯಾಡ್ ನಿರ್ಮಿಸುವ ಆವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಜಾಗ ನಿಗದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್‌ವಿ ಹೇಳಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಗಳೂರಿನಲ್ಲಿ ಆನೇಕ ಆಸ್ಪತ್ರೆಗಳು ಇರುವ ಕಾರಣದಿಂದಾಗಿ ಮೆಡಿಕಲ್ ತುರ್ತು ಆವಶ್ಯಕತೆಗಳಿಗೆ , ವಿಐಪಿ ಗಳಿಗೆ, ಹೆಲಿಟ್ಯೂರಿಸಮ್‌ಗೆ ಹೆಲಿಪ್ಯಾಡ್ ಅಗತ್ಯ. ನಗರದಲ್ಲಿ ಪ್ರತ್ಯೇಕ ಹೆಲಿಪ್ಯಾಡ್ ಇಲ್ಲದ ಕಾರಣದಿಂದಾಗಿ ವಿಐಪಿಗಳು ಆಗಮಿಸುವಾಗ ಪ್ರತಿಬಾರಿಯೂ ಸಮಸ್ಯೆ ಎದುರಾಗುತ್ತಿದೆ. ಹೆಲಿಟೂರಿಸಮ್‌ಗೂ ಶಾಶ್ವತ ಹೆಲಿಪಾಡ್ ಹೆಚ್ಚು ಅನುಕೂಲವಾಗುತ್ತದೆ ಎಂದು ನುಡಿದರು. *ಪಿಲಿಕುಳ ಮೃಗಾಲಯ ಬಂದ್ ಆದೇಶ ಬಂದಿಲ್ಲ: ಪಿಲಿಕುಳ ಮೃಗಾಲಯ ಬಂದ್ ಮಾಡಬೇಕೆಂದು ಹೈಕೋರ್ಟ್ ಆದೇಶ ಕೊಟ್ಟಿರುವುದು ತಮಗೆ ಗೊತ್ತಿಲ್ಲ. ಅಂತಹ ಯಾವುದೇ ಆದೇಶ ತಮಗೆ ಬಂದಿಲ್ಲ . ಪಿಲಿಕುಳದಲ್ಲಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದರ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ಬಿಟ್ಟು ಕೊಡುವ ಪ್ರಸ್ತಾವನೆ ಇದೆ. ಅರಣ್ಯ ಇಲಾಖೆ ನಿರ್ವಹಣೆಗೆ ಒಪ್ಪಿಕೊಂಡಿದ್ದಾರೆ. ಅವರಿಗೆ ಹಸ್ತಾಂತರಿಸುವ ಮೊದಲು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಮುಂದಿನ ವಿಚಾರದಲ್ಲಿ ಈ ಬಗ್ಗೆ ಡಿಎಫ್‌ಒ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. *ಟ್ರೇಡ್ ಲೈಸನ್ಸ್ ನಿರಾಕರಣೆ ಇಲ್ಲ: ಕನ್ನಡ ಕಡ್ಡಾಯ ಎಂದು ಹೇಳಿದರೆ ಇನ್ನೊಂದು ಭಾಷೆಯನ್ನು ಬಳಸಬಾರದು ಎಂದರ್ಥವಲ್ಲ. ಕನ್ನಡ ಭಾಷೆಯನ್ನು ಹೆಚ್ಚು ಬಳಸಲು ಉತ್ತೇಜನ ನೀಡುವುದು ಸರಕಾರದ ಉದ್ದೇಶವಾಗಿದೆ. ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸದಿದ್ದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂಬ ಆದೇಶವನ್ನು ತಾನು ನೀಡಿಲ್ಲ. ಆ ರೀತಿ ಆದೇಶ ಮಾಡಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಈ ಮಾಹಿತಿ ಸತ್ಯಕ್ಕೆ ದೂರವಾಗಿದೆ. ಕರ್ನಾಟಕದಲ್ಲಿ ನಾಮಫಲಕಗಳು ಆಡಳಿತ ಭಾಷೆ ಕನ್ನಡದಲ್ಲಿ ಇರಬೇಕು. ಕನ್ನಡದೊಂದಿಗೆ ಸ್ಥಳೀಯ ಇತರ ಭಾಷೆಗಳನ್ನು ಬಳಸಬಾರದು ಎಂದೇನು ಇಲ್ಲ ಎಂದು ನುಡಿದರು. *ನಂತೂರ್‌ನಲ್ಲಿ ಫ್ಲೈ ಓವರ್ ನಿರ್ಮಾಣ ಖಚಿತ: ರಾಷ್ಟ್ರೀಯ ಹೆದ್ದಾರಿಯ ನಂತೂರಿನಲ್ಲಿ ಫ್ಲೈವರ್ ನಿರ್ಮಿಸುವ ಪ್ರಸ್ತಾವನೆಗ ಸಂಬಂಧಿ ಸಮಗ್ರ ಯೋಜನಾ ವರದಿ ( ಡಿಪಿಆರ್) ತಯಾರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಡಿಪಿಆರ್ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಬೈಕಂಪಾಡಿ-ಕೆಐಒಸಿಎಲ್ ಮತ್ತು ನಂತೂರು- ಕೆಪಿಟಿ ಎರಡೂ ಕಡೆ ಫ್ಲೈಓವರ್ ನಿರ್ಮಾಣವಾಗುವುದು ಖಚಿತ . ಕೆಪಿಟಿಯಲ್ಲಿ ಫ್ಲೈ ಓವರ್ ರದ್ದಾಗಿದೆ ಎಂಬ ಮಾಹಿತಿ ಸರಿಯಲ್ಲಎಂದು ಸ್ಪಷ್ಟಪಡಿಸಿದರು. * ಮಂಗಳೂರು ಪ್ರೆಸ್ ಕ್ಲಬ್‌ಗೆ ಮೊದಲ ಬಾರಿ ಭೇಟಿ ನೀಡಿದ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪತ್ರಿಕಾ ಭವನದಲ್ಲಿನ ವ್ಯವಸ್ಥೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ, ಕೆಯುಡಬ್ಲ್ಯುಜೆ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 7:19 pm

ಕಲಬುರಗಿ | ಗುಲ್ಬರ್ಗಾ ವಿಶ್ವವಿದ್ಯಾಲಯದ ಅಕ್ರಮಗಳ ತನಿಖೆಗೆ ಬಿಜೆಪಿ ಯುವ ಮೋರ್ಚಾ ಆಗ್ರಹ

ಬಿಎಡ್, ಪಿಜಿ ಫಲಿತಾಂಶ ವಿಳಂಬಕ್ಕೆ ಖಂಡನೆ

ವಾರ್ತಾ ಭಾರತಿ 5 Feb 2026 7:17 pm

Virajpet | ವಿಬಿ-ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ

ಮಡಿಕೇರಿ : ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸಿ, ಪೊನ್ನಂಪೇಟೆಯವರೆಗೆ ಬೃಹತ್ ಪ್ರತಿಭಟನಾ ಜಾಥ ನಡೆಯಿತು. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸೇರಿದಂತೆ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಪ್ರಮುಖರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಗೋಣಿಕೊಪ್ಪಲಿನಲ್ಲಿ ಸಮಾವೇಶಗೊಂಡ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರದ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತಾ ಸಮಾರು ನಾಲ್ಕು ಕಿ.ಮೀ. ದೂರದ, ತಾಲ್ಲೂಕು ಕೇಂದ್ರ ಪೊನ್ನಪೇಟೆಯವರೆಗೆ ಕಾಲ್ನಡಿಗೆ ಜಾಥ ನಡೆಸಿದರು. ಜಾಥಾ ಪೊನ್ನಂಪೇಟೆಯನ್ನು ತಲುಪಿದ ಬಳಿಕ ಪಕ್ಷದ ಪ್ರಮುಖರು ಅಲ್ಲಿನ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ, ಈ ಹಿಂದಿನ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಬದಲಾಗಿ ಕೇಂದ್ರ ಸರಕಾರ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೇಲೆ ಮಹಾತ್ಮಾ ಗಾಂಧಿ ಮನರೇಗಾ ಯೋಜನೆ 2005ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದೀಗ ಕೇಂದ್ರ ಸರಕಾರ ಅಂತಹ ಉತ್ತಮ ಯೋಜನೆಯನ್ನು ರದ್ದು ಪಡಿಸಿ, ಅದರಲ್ಲಿನ ಉತ್ತಮ ಅಂಶಗಳನ್ನು ಕೈಬಿಟ್ಟು ವಿಬಿ ಜಿ ರಾಮ್ ಜಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರದ ಈ ಯೋಜನೆಯ ಬಗ್ಗೆ ಜಿಲ್ಲೆಯ ಆರು ಬ್ಲಾಕ್‍ಗಳಲ್ಲಿಯೂ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ನಡೆಯಬೇಕೆಂದು ತಿಳಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಐತಿಹಾಸಿಕವಾದ ಮಹಾತ್ಮಾ ಗಾಂಧಿ ಮನರೇಗಾ ಯೋಜನೆಗೆ ಕಾನೂನು ತಿದ್ದುಪಡಿ ಮಾಡುವ ಮೂಲಕ ವಿಬಿ ಜಿ ರಾಮ್ ಜಿ ಎನ್ನುವ ಯೋಜನೆಯನ್ನು ತರುವ ಮೂಲಕ ಕೇಂದ್ರ್ರ ಸರಕಾರ ಗ್ರಾಮೀಣ ಜನರ, ಕಾರ್ಮಿಕರ, ಮಹಿಳೆಯರ, ಶೋಷಿತರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆಯೆಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ವಿರಾಜಪೇಟೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು. 

ವಾರ್ತಾ ಭಾರತಿ 5 Feb 2026 7:13 pm

ಅಫಜಲಪುರ | ದೇವಲ ಗಾಣಗಾಪುರದಲ್ಲಿ ಗೋಪಾಲ ಕಾವಲಿ–ಪಲ್ಲಕ್ಕಿ ಉತ್ಸವ: ಲಕ್ಷಾಂತರ ಭಕ್ತರು ಭಾಗಿ

ಅಫಜಲಪುರ: ತಾಲೂಕಿನ ದೇವಲ ಗಾಣಗಾಪುರದ ಶ್ರೀ ದತ್ತ ಮಹಾರಾಜರ ದೇವಸ್ಥಾನದಲ್ಲಿ ಮಾಘ ಉತ್ಸವದ ಅಂಗವಾಗಿ ಗುರುವಾರ ಲಕ್ಷಾಂತರ ಭಕ್ತರ ಸಾನ್ನಿಧ್ಯದಲ್ಲಿ ಗೋಪಾಲ ಕಾವಲಿ (ಮೊಸರಿನ ಗಡಿಗೆ ಒಡೆಯುವ) ಹಾಗೂ ನರಸಿಂಹ ಸರಸ್ವತಿ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ನೆರವೇರಿತು. ಬೆಳಗಿನ ಜಾವ 2 ಗಂಟೆಗೆ ದತ್ತ ಮಹಾರಾಜರ ನಿರ್ಗುಣ ಪಾದುಕೆಗಳಿಗೆ ಕೇಸರ, ಚಂದನ ಹಾಗೂ ಅತ್ತರ್ ಲೇಪನದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ, 10 ಗಂಟೆಗೆ ನೈವೇದ್ಯ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ 12 ಗಂಟೆಗೆ ಗೋಪಾಲ ಕಾವಲಿ ಉತ್ಸವದ ಅಂಗವಾಗಿ ಮೊಸರಿನ ಗಡಿಗೆ ಒಡೆಯುವ ಕಾರ್ಯಕ್ರಮ ನಡೆಯಿತು. “ದತ್ತ ಮಹಾರಾಜರ ಜಯಘೋಷ”ದ ನಡುವೆ ಪೂಜಾರಿಗಳು ದೇವಸ್ಥಾನದ ಮೇಲ್ಭಾಗದಲ್ಲಿ ಕಟ್ಟಿದ್ದ ಎರಡು ಮೊಸರಿನ ಗಡಿಗೆಗಳನ್ನು ಒಡೆದರು. ನಂತರ ಆ ಮೊಸರನ್ನು ದತ್ತ ಮಹಾರಾಜರ ಮಹಾತೀರ್ಥವೆಂದು ಭಕ್ತರಿಗೆ ವಿತರಿಸಲಾಯಿತು. ಗೋಪಾಲ ಕಾವಲಿ ನಂತರ ದತ್ತ ಮಹಾರಾಜರ ಹಾಗೂ ನರಸಿಂಹ ಸರಸ್ವತಿ ಅವರ ಬೆಳ್ಳಿ ಪಾದುಕೆಗಳನ್ನು ಪಲ್ಲಕ್ಕಿಯಲ್ಲಿ ಇರಿಸಿ ಭಕ್ತಿಪೂರ್ವಕ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಪಲ್ಲಕ್ಕಿ ಉತ್ಸವದ ಅಂಗವಾಗಿ ಭಕ್ತರು ಭೀಮಾ ನದಿಯ ತೀರದಲ್ಲಿರುವ ರುದ್ರಪಾದ ತೀರ್ಥಕ್ಷೇತ್ರಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಸಾಲಕಾರಿ ಪ್ರಿಯಾಂಕ ಪೂಜಾರಿ ಮಾತನಾಡಿದರು. ದೇವಾಲಯದ ಆವರಣದಲ್ಲಿ ಸ್ಥಳಾವಕಾಶ ಕಡಿಮೆಯಿದ್ದರಿಂದ ಭಕ್ತರು ಹೊರಗಿನಿಂದಲೇ ಉತ್ಸವ ವೀಕ್ಷಿಸಿದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ದತ್ತಾತ್ರೇಯ ದರ್ಶನಕ್ಕಾಗಿ ಆಗಮಿಸಿದ್ದರು. ಹಲವರು ಪಾದಯಾತ್ರೆಯ ಮೂಲಕ ದೇವಲ ಗಾಣಗಾಪುರ ತಲುಪಿದರು. ಕಾರ್ಯಕ್ರಮದಲ್ಲಿ ಅರ್ಚಕರಾದ ನಾಗೇಶ್ ಪೂಜಾರಿ, ದತ್ತಾತ್ರೇಯ ಪೂಜಾರಿ, ಮನೋಹರ ಪೂಜಾರಿ, ಚಂದ್ರವಿಲಾಸ ಪೂಜಾರಿ, ಉದಯಭಟ್ಟ್ ಪೂಜಾರಿ, ಕರುಣಾಕರ ಪೂಜಾರಿ, ದಿಗಂಬರ ಪೂಜಾರಿ, ಕಿರಣ್ ಪೂಜಾರಿ, ಪ್ರಸಾದ್ ಪೂಜಾರಿ, ಪ್ರಖ್ಯಾತ ಪೂಜಾರಿ, ಗುಂಡುಭಟ್ಟ್ ಪೂಜಾರಿ, ಶ್ರೀಧರ್ ಪೂಜಾರಿ, ಪ್ರಫುಲ್ ಪೂಜಾರಿ ಉಪಸ್ಥಿತರಿದ್ದರು. ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ದೇವಸ್ಥಾನ ಸಮಿತಿಯ ದತ್ತು ಎಲ್. ನಿಂಬರಗಿ ಹಾಗೂ ಸತೀಶ್ ರಜಪೂತ್ ಭಾಗವಹಿಸಿದ್ದರು.

ವಾರ್ತಾ ಭಾರತಿ 5 Feb 2026 7:11 pm

ಶಹಾಬಾದ್‌ | ಬಡ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ

ಶಹಾಬಾದ್‌ : ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಕುಮಾರ ಕಪನೂರ ರವರ 47ನೇ ಹುಟ್ಟು ಹಬ್ಬವನ್ನು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಆವರಣದಲ್ಲಿ ಅವರ ಅಭಿಮಾನಿಗಳು ಸಡಗರ ಸಂಭ್ರಮದಿಂದ ಹುಟ್ಟು ಹಬ್ಬವನ್ನು ಆಚರಿಸಿದರು. ಯುವ ಮುಖಂಡ ಪ್ರಕಾಶ ತಳಕೇರಿ ಮಾತನಾಡಿ, ಜನ್ಮದಿನವನ್ನು ಅದ್ಧೂರಿ, ಆಡಂಬರದಿಂದ ಮಾಡದೆ ಬಡ ಜನರಿಗೆ, ಶೋಷಿತರಿಗೆ, ಸಂಕಷ್ಟದಲ್ಲಿರುವ ಜನರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತಿರಬೇಕು ಎಂಬ ರಾಜು ಅಣ್ಣ ಕಪನೂರ ಅವರ ಸೂಚನೆಯಂತೆ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ರವಿ ಕಪನೂರ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳ ಜತೆಗೆ ದಾನಿಗಳು ನೀಡುವ ಎಲ್ಲಾ ಸೌಲಭ್ಯಗಳನ್ನು ಪಡೆದು ಶೈಕ್ಷಣಿಕ ಪ್ರಗತಿಯನ್ನು ಹೊಂದಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಮುಂದಿನ ಸತ್ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಬಸವರಾಜ ಅಷ್ಠಗಿ, ಯುವ ಮುಖಂಡ ಕಿರಣ ಚವ್ಹಾಣ ಯವರು ಕಪನೂರ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಶಾಲೆಯ ಮಕ್ಕಳಿಗೆ ಸಿಹಿ ಹಂಚಿ, ನೂರಾರು ಪರೀಕ್ಷಾ ಪ್ಯಾಡ್, ಪುಸ್ತಕ, ಪೇನ್‌, ಪೆನ್ಸಿಲ್ ಗಳನ್ನು ವಿತರಿಸುವ ಮ‌ೂಲಕ ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ರವಿ ಕಪನೂರ, ಸದಾನಂದ ಅಷ್ಠಗಿ, ಬಸವರಾಜ ಅಷ್ಠಗಿ, ವಸಂತ, ವಿಕ್ರಮ, ಪರಶುರಾಮ ಚಲುವಾದಿ, ಅಶೋಕ ಮೂಸಲಗಿ, ಉದಯ, ಶರಣು ನಾಟೇಕರ, ಶಿವರಾಂ, ರಾಜು ನಾಟೇಕರ, ಬಸವರಾಜ ಮಯೂರ, ರಾಜೇಶ ಯಂಗುಂಟಿಕರ ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದರು.

ವಾರ್ತಾ ಭಾರತಿ 5 Feb 2026 7:06 pm

ಕಲಬುರಗಿ ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿಗೆ ಒತ್ತಾಯ: ಸಿಎಂ–ನಗರಾಭಿವೃದ್ಧಿ ಸಚಿವರಿಗೆ ಮನವಿ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು, ವಾಹನ ಚಾಲಕರು ಹಾಗೂ ಲೋಡರ್ಸ್–ಕ್ಲೀನರ್‌ಗಳಿಗೆ ಖಾಯಂ ನೇಮಕಾತಿ ನೀಡುವಂತೆ ಆಗ್ರಹಿಸಿ, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಪೌರ ಕಾರ್ಮಿಕರ ಒಕ್ಕೂಟದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಮನವಿಯಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2017–18ನೇ ಸಾಲಿನಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನೇರ ಪಾವತಿ ಅಡಿಯಲ್ಲಿ 445 ಹಾಗೂ ನೇರ ನೇಮಕಾತಿಯಡಿ ಒಟ್ಟು 889 ಖಾಲಿ ಹುದ್ದೆಗಳಿದ್ದರೂ ಇಂದಿಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ. ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಆಯುಕ್ತರು ಈ ವಿಷಯದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ನಿಯೋಗ ದೂರಿದೆ. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಭದ್ರತೆಗಾಗಿ ಕೂಡಲೇ ನೇರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಶೀಘ್ರದಲ್ಲೇ ನೇಮಕಾತಿ ಆದೇಶ ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ನಿಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಲೋಡರ್, ಪ್ಲೇನರ್‌ಗಳು, ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಎಂ. ಮುಡ್ಡಿ, ಮುಖಂಡರಾದ ಶಶಿಧರ್ ಅಮಟೆ, ರಾಜು ಕಟ್ಟಿಮನಿ, ಶಿವಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 7:02 pm

ಕುಂಭಾಭಿಷೇಕ ಉತ್ಸವದಲ್ಲಿ ಮಧುರೈ ದೇವಾಲಯಗಳಲ್ಲಿ ತಾರತಮ್ಯ ಮಾಡುವಂತಿಲ್ಲ: ಮದ್ರಾಸ್ ಹೈಕೋರ್ಟ್

ಧಾರ್ಮಿಕ ಆಚರಣೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇರಬೇಕು. ಅಲ್ಲಿ ತಾರತಮ್ಯ ಸಲ್ಲದು. ಮಧುರೈನ ಮೇಲಪನಂಕಡಿ ಗ್ರಾಮದ ಹಲವಾರು ದೇವಾಲಯಗಳಲ್ಲಿ ನಡೆಯಲಿರುವ ಕುಂಭಾಭಿಷೇಕ ಉತ್ಸವದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಪ್ರತಿನಿಧಿ ಸಮಿತಿಯನ್ನು ರಚಿಸುವಂತೆ ಸೂಚನೆ ನೀಡಿದೆ.

ವಿಜಯ ಕರ್ನಾಟಕ 5 Feb 2026 7:00 pm

ಚಿಂಚೋಳಿ | ಒಳ ಮೀಸಲಾತಿ : ಮಸೂದೆ ಮರು ಸಲ್ಲಿಕೆಗೆ ಸರಕಾರಕ್ಕೆ ‘ಮಾದರ ಮಹಾಸಭಾ’ ಗಡುವು

ಚಿಂಚೋಳಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಂಗೀಕರಿಸಿದ್ದ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವುದನ್ನು ಕರ್ನಾಟಕ ಮಾದರ ಮಹಾಸಭಾ ತೀವ್ರವಾಗಿ ಖಂಡಿಸಿದೆ. ಸರ್ಕಾರವು ಯಾವುದೇ ಕಾಲಹರಣ ಮಾಡದೆ ತಕ್ಷಣವೇ ಈ ಮಸೂದೆಯನ್ನು ಮರು ಸಲ್ಲಿಕೆ ಮಾಡಬೇಕು ಎಂದು ಆಗ್ರಹಿಸಿದ ಮುಖಂಡರು, ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸುಮಾರು ಮೂರು ದಶಕಗಳ ಸುದೀರ್ಘ ಹೋರಾಟದ ಫಲವಾಗಿ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಆಯೋಗದ ವರದಿಯ ಅನ್ವಯ ಈ ಮಸೂದೆ ಸಿದ್ಧವಾಗಿತ್ತು. ಬೆಳಗಾವಿ ಅಧಿವೇಶನದಲ್ಲಿ ಅನುಮೋದನೆಗೊಂಡ ಈ ಮಹತ್ವದ ನಿರ್ಧಾರಕ್ಕೆ ರಾಜ್ಯಪಾಲರು ಸ್ಪಷ್ಟೀಕರಣ ಕೇಳಿರುವುದು ಅಚ್ಚರಿ ಮೂಡಿಸಿದೆ. ಪಂಜಾಬ್ ಸರ್ಕಾರ ಮತ್ತು ದೇವಿಂದರ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡುವ ರಾಜ್ಯದ ಅಧಿಕಾರವನ್ನು ಎತ್ತಿಹಿಡಿದಿದೆ. ಹೀಗಿರುವಾಗ ನ್ಯಾಯಾಂಗ ಪರಿಶೀಲನೆಯ ನೆಪದಲ್ಲಿ ಶಾಸಕಾಂಗದ ಪ್ರಕ್ರಿಯೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು. ನಾಗಮೋಹನ ದಾಸ್ ಆಯೋಗದ ವರದಿಯು ಅತ್ಯಂತ ವೈಜ್ಞಾನಿಕವಾಗಿದ್ದು, ದತ್ತಾಂಶಗಳ ಆಧಾರದ ಮೇಲೆ ಸಿದ್ಧವಾಗಿದೆ. ಎ, ಬಿ, ಸಿ ಮತ್ತು ಡಿ ಗುಂಪುಗಳಿಗೆ ರೋಸ್ಟರ್ ಬಿಂದು ನಿಗದಿಪಡಿಸುವಾಗ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಮಸೂದೆ ಜಾರಿಯಾದರೆ ಮಾತ್ರ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಅವರು ತಿಳಿಸಿದರು. ಒಂದು ವೇಳೆ ಸರಕಾರ ಈ ಮಸೂದೆಯನ್ನು ತಕ್ಷಣವೇ ರಾಜ್ಯಪಾಲರಿಗೆ ಮರು ಸಲ್ಲಿಕೆ ಮಾಡದಿದ್ದರೆ, ರಾಜ್ಯಾದ್ಯಂತ ಇರುವ ಒಳ ಮೀಸಲಾತಿ ಹೋರಾಟಗಾರರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷರಾದ ಗೋಪಾಲರಾವ್ ಕಟ್ಟಿಮನಿ, ಹಿರಿಯ ಮುಖಂಡರಾದ ಶಾಮರಾವ್ ಓಂಕಾರ್, ನರಸಪ್ಪ ಕಿವಣೋಕರ, ಶರಣಪ್ಪ ನೋತಿನೋಲ, ಮಲ್ಲು ಕೋಡಬಂಲ್, ವಿಜಯರಾಜ್ ಕೊರಡಂಪಳ್ಳಿ ಸೇರಿದಂತೆ ಸಮುದಾಯದ ಇತರೆ ಮುಖಂಡರು ಇದ್ದರು.

ವಾರ್ತಾ ಭಾರತಿ 5 Feb 2026 6:57 pm

ಕಲಬುರಗಿ | ಶರಣಬಸವ ವಿಶ್ವವಿದ್ಯಾಲಯದ ನೂತನ ಕುಲಸಚಿವ, ಡೀನ್ ಗೆ ಸನ್ಮಾನ

ಕಲಬುರಗಿ : ಶರಣಬಸವ ವಿಶ್ವವಿದ್ಯಾಲಯದ ನೂತನ ಕುಲಸಚಿವರಾದ ಡಾ.ಲಕ್ಷ್ಮಿ ಪಾಟೀಲ್ ಮಾಕಾ ಮತ್ತು ವಿಶ್ವವಿದ್ಯಾಲಯದ ನೂತನ ಡೀನ್ ಡಾ.ಶಿವಕುಮಾರ ಜವಳಿಗಿ ಮತ್ತು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸುಜಾತಾ ಮಲ್ಲಾಪುರ ಅವರನ್ನು ಗುರುವಾರ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಸನ್ಮಾನಿಸಿದರು. ಸನ್ಮಾನಿಸಿದ ನಂತರ ಮಾತನಾಡಿದ ದೇಶಮುಖ ಅವರು, ವಿಶ್ವವಿದ್ಯಾಲಯದಲ್ಲಿ ಡಾ.ಲಕ್ಷ್ಮಿ ಪಾಟೀಲ್ ಮಾಕಾ, ಡಾ.ಜವಳಿಗಿ ಮತ್ತು ಡಾ.ಸುಜಾತಾ ಮಲ್ಲಾಪುರ ಅವರ ಕಠಿಣ ಶ್ರಮ ಪಟ್ಟಿದ್ದಾರೆ. ಅವರೆಲ್ಲರ ಪರಿಶ್ರಮವು ಅವರಿಗೆ ಉತ್ತಮ ಪ್ರತಿಫಲವನ್ನು ನೀಡಿದೆ ಎಂದು ಹೇಳಿದರು. ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರು ಎರಡು ದಶಕಗಳ ಹಿಂದೆಯೇ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ದೂರದೃಷ್ಟಿಯನ್ನು ಹೊಂದಿದ್ದರು ಮತ್ತು ಶೈಕ್ಷಣಿಕ ಯಶಸ್ಸನ್ನು ಸಾಧಿಸುವ ಹಾಗೂ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗುವ ಹಾದಿಯಲ್ಲಿ ಶರಣಬಸವ ವಿಶ್ವವಿದ್ಯಾಲಯವನ್ನು ದೃಢವಾಗಿ ಮುನ್ನಡೆಸಿದ್ದರು ಎಂದು ಸ್ಮರಿಸಿದರು. ಡಾ. ಲಕ್ಷ್ಮಿ ಪಾಟೀಲ್ ಮಾಕಾ ಮಾತನಾಡಿ, ಶೈಕ್ಷಣಿಕ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಲಿಂಗೈಕ್ಯ ಡಾ.ಅಪ್ಪಾಜಿಯವರು ಹೇಗೆ ಪ್ರೇರೆಪಿಸಿದರು ಎಂಬುದನ್ನು ನೆನಪಿಸಿಕೊಂಡರು ಮತ್ತು ಅವರು ವೈದ್ಯೆಯಾಗಬೇಕೆಂದು ಬಯಸಿದ್ದಾಗ, ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ಸಲಹೆ ನೀಡಿದವರು ಡಾ.ಅಪ್ಪಾಜಿ. ನನ್ನ ಜೀವನದ ಪ್ರತಿ ಹಂತದಲ್ಲೂ ಅವರು ಪ್ರಮುಖ ಬೆಳಕಾಗಿದ್ದರು ಎಂದು ಹೇಳಿದರು. ವಿವಿ ಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ವಿವಿಯ ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಯ ಕುಲಸಚಿವ(ಮೌಲ್ಯಮಾಪನ) ಡಾ.ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ.ಕಿರಣ ಮಾಕಾ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 6:49 pm

ಆಯವ್ಯಯ ಮಂಡನೆಗೆ ಸಿದ್ಧತೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ವಿಧಾನ ಮಂಡಲ ಜಂಟಿ ಅಧಿವೇಶನದ ಬೆನ್ನಲ್ಲೇ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಮಂಡನೆಗೆ ಸರಣಿಯಾಗಿ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ. ಗುರುವಾರ ಇಲ್ಲಿನ ರೇಸ್‍ಕೋರ್ಸ್ ಶಕ್ತಿ ಭವನದಲ್ಲಿ ಅರಣ್ಯ, ಕಾನೂನು-ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ, ತೋಟಗಾರಿಕೆ, ಗಣಿ ಭೂ ವಿಜ್ಞಾನ, ಕಾರ್ಮಿಕ, ಒಳಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳು, ಉನ್ನತ ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಚರ್ಚೆ ಸಮಾಲೋಚನೆ ನಡೆಸಿದರು. ಮಾರ್ಚ್ 6ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ತಮ್ಮ ದಾಖಲೆಯ 17ನೆ ಬಜೆಟ್ ಅನ್ನು ಮಂಡಿಸಲಿದ್ದಾರೆ. ಅದಕ್ಕೆ ಪೂರ್ವ ಭಾವಿಯಾಗಿ ಇಂದಿನಿಂದ ಬಜೆಟ್ ತಯಾರಿಕೆಗೆ ಚಾಲನೆ ನೀಡಿದ್ದಾರೆ. 2026-27ನೆ ಸಾಲಿಗೆ ಘೋಷಣೆ ಮಾಡಬೇಕಾದ ಹೊಸ ಯೋಜನೆಗಳ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಹಿಂದಿನ ಬಜೆಟ್‍ನಲ್ಲಿ ಘೋಷಿಸಲಾದ ಯೋಜನೆಗಳು, ಅನುದಾನ ಬಿಡುಗಡೆ ಮತ್ತು ವೆಚ್ಚವಾಗಿರುವ ಹಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಣಾಳಿಕೆಯಲ್ಲಿನ ಭರವಸೆಗಳು, ಬಜೆಟ್‍ನಲ್ಲಿ ಅವುಗಳ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಚರ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳು ಯಶಸ್ವಿಯಾದ ಬಳಿಕ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಹೊಸದಾಗಿ ಯಾವ ಯೋಜನೆಗಳನ್ನು ನೀಡಲಿದ್ದಾರೆ ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಾರ್ತಾ ಭಾರತಿ 5 Feb 2026 6:48 pm

ರಾಗಿ ಕಳ್ಳ, ಕೊಬ್ಬರಿ ಕಳ್ಳ ಅಂತ ಬಿಜೆಪಿಗರು ಕುಣಿದ್ರು! ನನ್ನನ್ನು ಟಾರ್ಗೆಟ್ ಮಾಡಲಾಗ್ತಿದೆ: ಶಿವಲಿಂಗೇಗೌಡ ಆರೋಪ

ಬುಧವಾರ ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳು ಎಲ್ಲೆಡೆ ಚರ್ಚೆ ಆಗುತ್ತಿವೆ. ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಆಡಿರುವ ಮಾತುಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ವತಃ ಶಿವಲಿಂಗೇಗೌಡ ಅವರು ಈ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಯಾಕಾಗಿ ನಾನು ಆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ ಎಂದು ಅವರು ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ಹಾಗಾದರೆ ಅವರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

ವಿಜಯ ಕರ್ನಾಟಕ 5 Feb 2026 6:46 pm

ಕಲಬುರಗಿ | ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಕಲಬುರಗಿ: ರೇಷ್ಮೆ ಇಲಾಖೆ ವತಿಯಿಂದ 2023-24 ಹಾಗೂ 2024-25ನೇ ಸಾಲಿಗೆ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಅರ್ಹ ರೇಷ್ಮೆ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ರೇಷ್ಮೆ ಉಪನಿರ್ದೇಶಕರು ತಿಳಿಸಿದ್ದಾರೆ. ಕನಿಷ್ಠ ಒಂದು ಎಕರೆ ಹಿಪ್ಪು ನೇರಳೆ ತೋಟ ಹಾಗೂ ಪ್ರತ್ಯೇಕ ಹುಳು ಸಾಕಾಣಿಕೆ ಮನೆ ಹೊಂದಿರಬೇಕು. 100 ಮೊಟ್ಟೆಗೆ ಸರಾಸರಿ ರೇಷ್ಮೆ ಗೂಡಿನ ಇಳುವರಿ ಕನಿಷ್ಠ 65 ಕೆ.ಜಿ. ಇರಬೇಕು. ಒಂದು ಎಕರೆ ರೇಷ್ಮೆ ಗೂಡಿನ ಒಟ್ಟು ಉತ್ಪಾದನೆ 500 ಕೆ.ಜಿ. ಗಿಂತ ಕಡಿಮೆ ಇರಬಾರದು. ಅರ್ಜಿದಾರರು ರೇಷ್ಮೆ ಪಾಸ್ ಬುಕ್, ರೇಷ್ಮೆ ಮೊಟ್ಟೆ ಹಾಗೂ ಚಾಕಿ ಖರೀದಿಸಿದ ರಸೀದಿಗಳು ಮತ್ತು ರೇಷ್ಮೆಗೂಡು ಮಾರಾಟ ಮಾಡಿರುವ ಕುರಿತಾದ ಸಮಗ್ರ ದಾಖಲೆಗಳನ್ನು ಹೊಂದಿರಬೇಕು. ಆಸಕ್ತಿಯುಳ್ಳ ಅರ್ಹ ಬೆಳೆಗಾರರು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ಆಯಾ ತಾಲೂಕು ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿಗಳು/ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ 2026ರ ಫೆ.9 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ರೇಷ್ಮೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ವಾರ್ತಾ ಭಾರತಿ 5 Feb 2026 6:45 pm

ಕಲಬುರಗಿ | ಲಿಪಿಕ ಹುದ್ದೆ ನೇಮಕಾತಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಕಲಬುರಗಿ: ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಓರ್ವ ಲಿಪಿಕ ಹುದ್ದೆಯನ್ನು ನೇಮಕಾತಿ ಮಾಡಿಕೊಳ್ಳಲು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಗಣಕ ಯಂತ್ರದ ಲಿಪಿಕ ಜ್ಞಾನವನ್ನು ಹೊಂದಿರುವ ಮತ್ತು ಅಕೌಂಟ್ ಬಗ್ಗೆ ಅನುಭವವುಳ್ಳ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿದಾರರು ಕಲಬುರಗಿ ನಗರ ವ್ಯಾಪ್ತಿಯೊಳಗೆ ಖಾಯಂ ಅಥವಾ ತಾತ್ಕಾಲಿಕ ವಿಳಾಸ ಹೊಂದಿರಬೇಕು. ಇಚ್ಛೆಯುಳ್ಳ ಮಾಜಿ ಸೈನಿಕರು “ಸ್ವಯಂ ಲಿಖಿತ ಅರ್ಜಿ ಮತ್ತು ಬಯೊಡಾಟಾ” ದೊಂದಿಗೆ 2026ರ ಫೆಬ್ರವರಿ 10ರ ಸಂಜೆ 5 ಗಂಟೆಯೊಳಗಾಗಿ ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸಂದರ್ಶನದ ದಿನಾಂಕ ನಿಗದಿಪಡಿಸಲಾಗುತ್ತದೆ. ನಂತರ ಮಾಜಿ ಸೈನಿಕರು ಮೂಲ ದಾಖಲೆಗಳೊಂದಿಗೆ ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-225003 ಗೆ ಸಂಪರ್ಕಿಸಲು ಕೋರಲಾಗಿದೆ.

ವಾರ್ತಾ ಭಾರತಿ 5 Feb 2026 6:44 pm

ಕೊಪ್ಪಳ | ರೈಲ್ವೆ ಹಳಿಯ ಬಳಿ ಯುವಕನ ಮೃತದೇಹ ಪತ್ತೆ

ಕೊಪ್ಪಳ : ತಾಲೂಕಿನ ಕುಷ್ಟಗಿ ಪಟ್ಟಣದ ರೈಲ್ವೆ ಗೇಟ್ ಸಮೀಪದ ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾದ ಘಟನೆ ಬುಧವಾರ ತಡರಾತ್ರಿ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಗಂಗಾವತಿ ನಿವಾಸಿ ಕೊಟ್ರೇಶ್ (27) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ತಡರಾತ್ರಿ ರೈಲು ಗುದ್ದಿದ ಪರಿಣಾಮ ಯುವಕ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತ ಕೊಟ್ರೇಶ್ ಅವರು ಕೊಪ್ಪಳದಲ್ಲಿರುವ ಕಲ್ಯಾಣಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವಕನ ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

ವಾರ್ತಾ ಭಾರತಿ 5 Feb 2026 6:41 pm

ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ | ಪ್ರಹ್ಲಾದ್ ಜೋಶಿ, ಎಚ್‍ಡಿಕೆ ಸ್ಪಂದನೆ ಸ್ವಾಗತಾರ್ಹ: ಎಂ.ಬಿ.ಪಾಟೀಲ್

ಬೆಂಗಳೂರು : ಬೆಂಗಳೂರು-ಪುಣೆ-ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯ ಎಂದು ನಾನು ಹೇಳಿದ್ದೆ. ಕೇಂದ್ರ ಸಚಿವರಾದ ಜೋಶಿ ಮತ್ತು ಎಚ್‍ಡಿಕೆ ಈ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚಿಸಿರುವುದಕ್ಕೆ ಧನ್ಯವಾದ ಹೇಳುತ್ತೇನೆ. ಇದರಲ್ಲಿ ರಾಜಕೀಯವೇನೂ ಇಲ್ಲ. ಇದು ಕೇವಲ ಭೇಟಿಗೆ ಮಾತ್ರ ನಿಲ್ಲದೆ, ತಾರ್ಕಿಕ ಅಂತ್ಯ ಕಾಣುವಂತೆ ಮಾಡಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಮನವಿ ಮಾಡಿದ್ದಾರೆ. ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬಯಿ ನಡುವೆ ಉತ್ತಮ ಸಂಪರ್ಕ ವ್ಯವಸ್ಥೆ ಬರಬೇಕು. ಇದರಿಂದ ಮಧ್ಯ ಮತ್ತು ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಭಾಗಗಳಿಗೆ ಅಪಾರ ಲಾಭವಿದೆ ಎಂದು ಹೇಳಿದರು. ಕೇಂದ್ರ ಸರಕಾರದ ಬಜೆಟ್‍ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಸೇರಿದಂತೆ 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಿಸಿದ್ದಾರೆ. ಆದರೆ ಈ ಎರಡೂ ಯೋಜನೆಗಳಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಿಲ್ಲ. ಬೆಂಗಳೂರು-ಪುಣೆ-ಮುಂಬೈ ಮಧ್ಯೆ ಇಂತಹ ಯೋಜನೆ ಬಂದರೆ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಸಾಂಗ್ಲಿ, ಕೊಲ್ಲಾಪುರ ಹೀಗೆ ಹಲವು ಪ್ರದೇಶಗಳಿಗೆ ಪ್ರಯೋಜನವಾಗಿ, ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿ ಸಾಧ್ಯವಾಗಲಿದೆ. ಇದೀಗ ಆ ನಿಟ್ಟಿನಲ್ಲಿ ಇಬ್ಬರೂ ಕೇಂದ್ರ ಸಚಿವರು ಕಾರ್ಯಪ್ರವೃತ್ತರಾಗಿರುವುದು ಸ್ವಾಗತಾರ್ಹ ಕ್ರಮ ಎಂದು ಅವರು ನುಡಿದರು. ಕುಮಾರಸ್ವಾಮಿ ಮತ್ತು ಜೋಶಿ ಈ ವಿಚಾರದ ಬಗ್ಗೆ ಗಮನ ಹರಿಸಿರುವುದು ಒಳ್ಳೆಯದು. ಇಂತಹ ವಿಚಾರಗಳಲ್ಲಿ ನಾವು ರಾಜಕೀಯ ಮಾಡಬಾರದು. ಯೋಜನೆಯ ಬಗ್ಗೆ ಪ್ರಧಾನಿ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್, ರೈಲು ಸಚಿವ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು. ಶಾಸಕರ ಸಭೆ ತಪ್ಪಲ್ಲ : ನಾಲ್ಕು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿರುವ ಲಿಂಗಾಯತ ಶಾಸಕರ ಸಭೆ ನಡೆದಿದ್ದು ಇದು ಶಕ್ತಿ ಪ್ರದರ್ಶನವೇನೂ ಅಲ್ಲ. ಅಶೋಕ ಪಟ್ಟಣ ಮತ್ತು ಬಿ.ಆರ್.ಪಾಟೀಲ್ ಈ ಸಭೆ ಕರೆದಿದ್ದರು. ಸಮುದಾಯದ ಹಿತಾಸಕ್ತಿ ಕುರಿತು ಅಲ್ಲಿ ಚರ್ಚೆ ನಡೆಯಿತಷ್ಟೇ ಎಂದು ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮನರೇಗಾ ಮರು ಸ್ಥಾಪಿಸಿ: ಈ ಹಿಂದೆ ಯುಪಿಎ ಸರಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಯನ್ನು ಬಿಜೆಪಿ ನಾಯಕರಾದ ಆಡ್ವಾಣಿ, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಹೊಗಳಿದ್ದರು. ಇದೀಗ ಮೋದಿ ಸರಕಾರ ಇದನ್ನು ಹಾಳು ಮಾಡಿದ್ದು, ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸಿದೆ. ಬಿಜೆಪಿ ಸಂಸದರೇ ಈ ಬಗ್ಗೆ ದನಿ ಎತ್ತಿ, ತಮ್ಮ ಬೆಲೆ ಉಳಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ವಾರ್ತಾ ಭಾರತಿ 5 Feb 2026 6:41 pm

ʼಹೈಸ್ಪೀಡ್ ರೈಲ್ವೆ ಕಾರಿಡಾರ್ʼ ರೈಲ್ವೆ ಸಚಿವರನ್ನು ಅಭಿನಂದಿಸಿದ ಎಚ್.ಡಿ.ದೇವೇಗೌಡ

ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲ್ವೆ ಕಾರಿಡಾರ್ ಬೀದರ್‌ವರೆಗೆ ವಿಸ್ತರಿಸಲು ಮನವಿ

ವಾರ್ತಾ ಭಾರತಿ 5 Feb 2026 6:32 pm

PM Modi Speech: ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆಯೂ ಭಾಷಣ ಮುಂದುವರೆಸಿದ ಪ್ರಧಾನಿ ಮೋದಿ

PM Modi Speech: ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ದೇಶವು ಎಲ್ಲಾ ಕ್ಷೇತ್ರಗಳಲ್ಲೂ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನಕ್ಕೆ ಏರಿದೆ ಎಂದು ಉಲ್ಲೇಖಿಸಿದ ಅವರು, ಪ್ರಮುಖ ಆರ್ಥಿಕ ರಾಷ್ಟ್ರಗಳ ಪೈಕಿ

ಒನ್ ಇ೦ಡಿಯ 5 Feb 2026 6:09 pm

ʼನಮ್ಮ ಮೆಟ್ರೋʼ ಟಿಕೆಟ್ ದರ ಶೇ.5 ರಷ್ಟು ಹೆಚ್ಚಳ: ಫೆ.9ರಿಂದ ಜಾರಿ

ಬೆಂಗಳೂರು : ನಮ್ಮ ಮೆಟ್ರೋ ರೈಲ್ವೆ ಪ್ರಯಾಣ ದರವನ್ನು ಶೇ.5ರಷ್ಟು ಹೆಚ್ಚಳ ಮಾಡಿದ್ದು, ಈ ನೂತನ ದರ ಏರಿಕೆಯು ಫೆ.9ರಿಂದ ಜಾರಿಗೆ ಬರಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‍ಸಿಎಲ್) ತಿಳಿಸಿದೆ. ಗುರುವಾರ ಬಿಎಂಆರ್‍ಸಿಎಲ್ ಪ್ರಕಟನೆ ಹೊರಡಿಸಿದ್ದು, ದರ ನಿಗದಿ ಸಮಿತಿ (ಎಫ್‍ಎಫ್‍ಸಿ) ಪ್ರಕಾರ ಬಿಎಂಆರ್‍ಸಿಎಲ್‍ಗೆ 7.5 ವರ್ಷಗಳ ನಂತರ ಪರಿಷ್ಕೃಯ ದರ ರಚನೆಯನ್ನು ಮತ್ತು 29ರಿಂದ 10ರ ವರೆಗಿನ ದರದ ವಲಯಗಳನ್ನು ಶಿಫಾರಸು ಮಾಡುವಾಗ ದರ ಪರಿಷ್ಕರಣೆ ಸರಾಸರಿ ಶೇ.51.55ರಷ್ಟು ಹೆಚ್ಚಳಕ್ಕೆ ಕಾರಣವಾಯಿತು ಎಂದು ಹೇಳಿದೆ. ಭವಿಷ್ಯದಲ್ಲಿ ಇಂತಹ ದರ ಹೆಚ್ಚಳದ ಪರಿಸ್ಥಿತಿಯನ್ನು ತಪ್ಪಿಸುವ ದೃಷ್ಟಿಯೊಂದಿಗೆ, ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು, ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ.5 ಯಾವುದು ಕಡಿಮೆಯೋ ಮತ್ತು ಮುಂದಿನ ಒಂದು ರೂಪಾಯಿಗೆ ಪೂರ್ಣಾಂಕಗೊಳಿಸಿ ದರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಈ ಕಾರ್ಯವಿಧಾನವು, ವಾರ್ಷಿಕವಾಗಿ ಅಲ್ಪ ದರ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಬಿಎಂಆರ್‍ಸಿಎಲ್ ಮೇಲೆ ಬದ್ಧವಾಗಿರುವ ಎಫ್‍ಎಫ್‍ಸಿಯ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, ಬಿಎಂಆರ್‍ಸಿಎಲ್ ನಿಂದ ಎಫ್‍ಎಫ್‍ಸಿ ಶಿಫಾರಸು ಮಾಡಲಾದ ದರಗಳನ್ನು ಜಾರಿಗೆ ತಂದ ದಿನಾಂಕದಿಂದ ಒಂದು ವರ್ಷ (9 ಫೆಬ್ರವರಿ 2025) ಮುಕ್ತಾಯಗೊಂಡ ನಂತರ, 2026ರ ಫೆ.9 ರಿಂದ ಜಾರಿಗೆ ಬರುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆಯನ್ನು ಜಾರಿಗೆ ತರಲಾಗುವುದು. 96.10 ಕಿ.ಮೀ.ಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ 1 ರೂ. ಮತ್ತು ಗರಿಷ್ಠ 5 ರೂ. ರಷ್ಟು ಅಲ್ಪ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದೆ. 2024-25 (31 ಮಾರ್ಚ್ 2025) ಹಣಕಾಸು ವರ್ಷದ ಅಂಕಿ ಅಂಶಗಳನ್ನು ಹಣಕಾಸು ವರ್ಷ 2023-24 (31 ಮಾರ್ಚ್ 2024)ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಸೂತ್ರ-ಆಧಾರಿತ ದರ ಪರಿಷ್ಕರಣೆ ಶೇ.10.20ರಷ್ಟು ವೆಚ್ಚ ಹೆಚ್ಚಳವನ್ನು ಸೂಚಿಸುತ್ತದೆ. ಆದಾಗ್ಯೂ, ಎಫ್‍ಎಫ್‍ಸಿ ನಿಬಂಧನೆಗೆ ಅನುಗುಣವಾಗಿ ದರ ಪರಿಷ್ಕರಣೆಯನ್ನು ಕೇವಲ ಶೇ.5ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಬಿಎಂಆರ್‍ಸಿಎಲ್ ಹೇಳಿದೆ. ಪರಿಷ್ಕೃತ ಪಟ್ಟಿ ಪ್ರಕಾರ, 2 ಕಿ.ಮೀ ವರೆಗಿನ ಅಲ್ಪದೂರ ಪ್ರಯಾಣಕ್ಕೆ ಇದ್ದ ಕನಿಷ್ಠ ದರವು 10 ರೂ.ಗಳಿಂದ 11 ರೂ.ಗೆ ಹೆಚ್ಚಳವಾಗಲಿದೆ. 30 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸುವವರಿಗೆ 90 ರೂ.ಗಳಿದ್ದ ದರವು 95 ರೂ.ಗೆ ಏರಿಕೆಯಾಗಿದೆ. ಇತರ ದರ ಸ್ಲ್ಯಾಬ್‍ಗಳು 1 ರೂ. ರಿಂದ 5 ರೂ. ವರಗೆ ಪ್ರಮಾಣಾನುಗುಣವಾಗಿ ಹೆಚ್ಚಳವಾಗಿವೆ. ಈ ವಾರ್ಷಿಕ ಶೇ.5ರಷ್ಟು ದರ ಹೆಚ್ಚಳವು ಒಂದು ದಿನ, ಮೂರು ದಿನ ಮತ್ತು ಐದು ದಿನಗಳ ಪಾಸ್‍ಗಳೂ ಸೇರಿ ಪ್ರವಾಸಿ ಕಾರ್ಡ್‍ಗಳು ಮತ್ತು ಗ್ರೂಪ್ ಟಿಕೆಟ್‍ಗಳಿಗೂ ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ರಿಯಾಯಿತಿ ಮುಂದುವರಿಕೆಯು ಸದ್ಯ ಇರುವ ಎಲ್ಲ ಪ್ರಯಾಣಿಕ ರಿಯಾಯಿತಿಗಳು ಹಾಗೆಯೇ ಮುಂದುವರೆಯಲಿವೆ. ಸ್ಮಾರ್ಟ್ ಕಾರ್ಡ್ ಮತ್ತು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆದಾರರಿಗೆ ಪೀಕ್ ಸಮಯದಲ್ಲಿ ಶೇ.5ರಷ್ಟು ಹಾಗೂ ಪೀಕ್ ಇಲ್ಲದ ಸಮಯದಲ್ಲಿ ಶೇ.10ರಷ್ಟು ರಿಯಾಯಿತಿ ಮುಂದುವರೆಸಲಾಗಿದೆ. ರವಿವಾರ ಮತ್ತು ಮೂರು ಗೊತ್ತುಪಡಿಸಿದ ರಾಷ್ಟ್ರೀಯ ರಜಾದಿನಗಳಲ್ಲಿ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ಅನ್ವಯಿಸಲಿದೆ ಬಿಎಂಆರ್‍ಸಿಎಲ್ ತಿಳಿಸಿದೆ.

ವಾರ್ತಾ ಭಾರತಿ 5 Feb 2026 6:08 pm

ದೆಹಲಿಯಲ್ಲಿ ನಿತಿನ್ ನಬಿನ್ ಹಾಗೂ ಬಿವೈ ವಿಜಯೇಂದ್ರ ಭೇಟಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೊಟ್ಟಿದ್ದಾರಾ ಮಹತ್ವದ ಸೂಚನೆ

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್ ಅವರು ವಿಜಯೇಂದ್ರ ಅವರಿಗೆ ಏನು ಸೂಚನೆಗಳನ್ನು ನೀಡಿದ್ದಾರೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಮಾಹಿತಿಯ ಪ್ರಕಾರ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಬಿಜೆಪಿ ಪಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟಗಳ ಕುರಿತಾಗಿ ವಿಜಯೇಂದ್ರ ಅವರು ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಜಯ ಕರ್ನಾಟಕ 5 Feb 2026 6:01 pm

ಅಬುದಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ 49 ಕೋಟಿ ರೂ. ಗೆದ್ದ ಉಡುಪಿ ಯುವಕ ಶಾಂತನು! ಸಿಗುತ್ತೆ 24.5 ಕೋಟಿ ರೂ

ವಿದೇಶದಲ್ಲಿ ಉಡುಪಿ ಮೂಲದ ಯುವಕನೊಬ್ಬ 49 ಕೋಟಿ ರೂ. ಮೊತ್ತದ ಬಿಗ್‌ ಟಿಕೆಟ್‌ ಡ್ರಾ ಗೆದ್ದಿದ್ದಾನೆ. ಸ್ನೇಹಿತನ ಜತೆ ಸೇರಿ ಟಿಕೆಟ್‌ ಖರೀದಿಸಿದ ಕಾರಣ ಅರ್ಧ ಹಣ ಮಾತ್ರ ಯುವಕನಿಗೆ ಸಿಗಲಿದೆ. ಇನ್ನು ಟಿಕೆಟ್‌ ಮೊತ್ತ 15 ಸಾವಿರ ರೂಪಾಯಿ ಆಗಿದ್ದು, 20 ಮಿಲಿಯನ್‌ ದಿರಮ್‌ ಬಹುಮಾನ ನಿಗದಿಪಡಿಸಲಾಗಿತ್ತು.

ವಿಜಯ ಕರ್ನಾಟಕ 5 Feb 2026 6:00 pm

ಮಂಗಳೂರು ನಗರ ಸೆನ್ ಕ್ರೈಂ ಪೊಲೀಸರ ಕಾರ್ಯಾಚರಣೆ| ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ 11 ಮಂದಿಯ ಬಂಧನ

ಮಂಗಳೂರು, ಫೆ.5: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಉತ್ತರ ಭಾರತ ಮೂಲದ 11 ಮಂದಿಯನ್ನು ಮಂಗಳೂರು ಸೆನ್ ಕೈಂ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಗುರುವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಬಂಧಿತರನ್ನು ಗುಜರಾತ್‌ನ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್‌ನ ಪುಪ್ಲ ಶಿವಕುಮಾರ್ ರಾವ್ (32) ಮತ್ತು ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24) ಮತ್ತು ಹರ್ಷ ಮಿಸ್ರಾ (22) ಹಾಗೂ ಮುಹಮ್ಮದ್ ಆಕೀಬ್ ಅಲಿ (27), ನೌಶಾದ್ ಅಲಿ (34), ಬಿಹಾರ್‌ನ ರಾಜೀವ್ ರಂಜನ್ ಕುಮಾರ್ (30), ರಾಜಸ್ತಾನದ ಓಂ ಪ್ರಕಾಶ್ ಯಾದವ್ (37) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 1 ಲ್ಯಾಪ್‌ಟಾಪ್, 21 ಮೊಬೈಲ್ ಪೋನ್‌ಗಳು, ವಿವಿಧ ಕಂಪನಿಯ 20 ಸಿಮ್‌ಕಾರ್ಡ್‌ಗಳು, ಬೇರೆ ಬೇರೆ ಬ್ಯಾಂಕ್‌ಗಳ 20 ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ನಗರದ ವ್ಯಕ್ತಿಯೊಬ್ಬರಿಂದ 1.38 ಕೋ.ರೂ.ವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ ಬಗ್ಗೆ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು 11 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಭಾರತ ಮೂಲದ ಈ ವಂಚಕರು ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋ.ರೂ. ವಂಚನೆ ಮಾಡುತ್ತಿದ್ದರು. ಈ ತಂಡದಲ್ಲಿ 16 ಮಂದಿ ಭಾರತೀಯರು ಹಾಗೂ ಚೈನಾದ ಹಲವರಿದ್ದಾರೆ. ನೇಪಾಳದ ಪೊಲೀಸರು ಚೈನಾದ ವಂಚಕರನ್ನು ಬಂಧಿಸಿದ್ದಾರೆ. ಭಾರತೀಯ ವಂಚಕರ ಪೈಕಿ ಐವರು ತಲೆಮರೆಸಿ ಕೊಂಡಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದರು. ಆರೋಪಿಗಳ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ 624 ಬ್ಯಾಂಕ್ ಖಾತೆಗಳ ವಿವರಗಳು ಕಂಡು ಬಂದಿದೆ. ಈ ಬ್ಯಾಂಕ್ ಖಾತೆಗಳ ಮೇಲೆ 4,580ಕ್ಕೂ ಅಧಿಕ NCRP PORTALನಲ್ಲಿ ಪ್ರಕರಣಗಳು ದಾಖಲಾಗಿದೆ. ಆ ಪೈಕಿ 1 ಬ್ಯಾಂಕ್ ಖಾತೆಯಲ್ಲಿ 167 ಕೋ.ರೂ. ವರ್ಗಾವಣೆಯಾಗಿದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚನೆಗೆ ಬಳಸಿದ 10 ಬ್ಯಾಂಕ್ ಖಾತೆಗಳಿಗೆ ಸುಮಾರು 30,70,26,725 ರೂ. ವರ್ಗಾವಣೆಯಾಗಿದೆ. ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆಯಲು ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ. ವಂಚಕರ ಒಂದು ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್‌ರನ್ನು ನೇಮಕ ಮಾಡಿಕೊಂಡು ವಂಚನೆಯ ಹಣವನ್ನು ವರ್ಗಾವಣೆ ಮಾಡುವುದು ಹಾಗೂ ಹಣವನ್ನು USDTನಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಾರೆ. ವಂಚಕರ ಇನ್ನೊಂದು ತಂಡವು ಕಾಂಬೋಡಿಯಾ ಮತ್ತಿತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹಣ ಗಳಿಸುವ ಆಮೀಷ ಒಡ್ಡಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ. ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದೂರುದಾರರಿಗೆ ನೀಡಿದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ NCRP PORTAL ನಲ್ಲಿ ಸುಮಾರು 128 ಪ್ರಕರಣಗಳು ಮತ್ತು 36 ಎಫ್‌ಐಆರ್ ದಾಖಲಾಗಿರುತ್ತದೆ ಎಂದು ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. *ವಂಚಕರು ಬೇರೆ ಬೇರೆ ಕಂಪನಿಯ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮೂಲಕ ನಿಜವಾದ ಹೆಸರುಗಳನ್ನು ಮರೆ ಮಾಚಿ ಜಾಹೀರಾತು ಮೂಲಕ ಕಾರ್ಪೋರೇಟ್ ಖಾತೆಗಳು, ಕರೆಂಟ್ ಖಾತೆಗಳು, USDT TO INR Exchange, Management Operator ಗಳು ಮತ್ತು OTP Worker ಬೇಕಾಗಿದ್ದಾರೆ ಎಂಬುದಾಗಿ ಟೆಲಿಗ್ರಾಂ ಮತ್ತು ಇನ್‌ಸ್ಟಾ ಗ್ರಾಂ ಮೂಲಕ ಬ್ಯಾಂಕ್ ಖಾತೆದಾರರನ್ನು ಸಂಪರ್ಕಿಸುತ್ತಾರೆ. ದುರಾಸೆಗೊಳಗಾದವರು ಅವರನ್ನು ಸಂಪರ್ಕಿಸಿದಾಗ ಶೇ.5ರಿಂದ ಶೇ.10 ಕಮಿಷನ್ ಕೊಡುವುದಾಗಿ ಮತ್ತು ಅವರಿಗೆ ಬೇಕಾದ ವಿಮಾನ ಟಿಕೆಟ್, ಕ್ಯಾಬ್ ಬುಕ್ಕಿಂಗ್, ಹೊಟೇಲ್, ಲಾಡ್ಜ್ ವ್ಯವಸ್ಥೆ ನೀಡುವುದಾಗಿ ಆಮಿಷ ಒಡ್ಡಿ ದುಬೈ, ನೇಪಾಳ ಮತ್ತಿತರ ಕಡೆ ಕರೆಸಿಕೊಳ್ಳುತ್ತಾರೆ. ನಂತರ ಖಾತೆದಾರರು ಮತ್ತು ಖಾತೆಗಳನ್ನು ಪೂರೈಸು ವವರಿಗೆ ನಿರ್ದಿಷ್ಟ ಸ್ಥಳದಲ್ಲಿ ವ್ಯವಸ್ಥೆ ಮಾಡುತ್ತಾರೆ. ವಂಚಕರು ತಮಗೆ ಸೇರಿದ ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳಿಗೆ ಖಾತೆದಾರರ ಸಿಮ್‌ಗಳನ್ನು ಹಾಕಿಕೊಂಡು Net Banking ಮುಖಾಂತರ ವಂಚನೆಯ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ವಂಚನೆ ಮಾಡಿದ ಹಣದಿಂದ USDT ಗಳನ್ನು ಬೇರೆ ಬೇರೆ ಕಡೆಯಿಂದ ಖರೀದಿ ಮಾಡಿ ಪ್ರತಿದಿನ ವಿದೇಶದಲ್ಲಿನ ಆರೋಪಿತರಿಗೆ ಕಳುಹಿಸುತ್ತಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು. * ಕಾಂಬೋಡಿಯಾ ಮತ್ತು ದುಬೈಗಳಲ್ಲಿ ಕುಳಿತು ಭಾರತದ ನಾಗರಿಕರಿಗೆ ಮುಖ್ಯ ವಂಚಕರು ಅಪರಿಚಿತ ವಾಟ್ಸ್‌ಆ್ಯಪ್ ಮೊಬೈಲ್ ಸಂಖ್ಯೆಗಳ ಮೂಲಕ ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್‌ಬುಕ್‌ಗಳ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸಿ ಹೆಚ್ಚಿನ ಲಾಭಂಶ ನೀಡುವುದಾಗಿ ಆಮಿಷವೊಡ್ಡುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಾಂಶ ಬಂದಿರುವುದಾಗಿ ಆ್ಯಪ್ ಮೂಲಕ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪಪ್ರಮಾಣದ ಲಾಭಾಂಶದ ಹಣ ನೀಡಿ ನಂಬಿಕೆ ಬರುವ ಹಾಗೆ ಮಾಡಿದ ನಂತರ ಉಳಿದ ಹಣನ್ನು ಡ್ರಾ ಮಾಡಬೇಕಾದರೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕೆಂದು ಒತ್ತಾಯಿಸಿ ಹಣವನ್ನು ಹೂಡಿಕೆ ಮಾಡಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು ಸುಮಾರು 60 ಲಕ್ಷದಿಂದ 1 ಕೋ.ರೂ.ವರೆಗೆ ಹೂಡಿಕೆ ಮಾಡಿಸುತ್ತದೆ. ಡಿಜಿಟಲ್ ಸ್ಲೇವರಿ ಬಗ್ಗೆ ಎಚ್ಚರವಿರಲಿ ವಿದೇಶಗಳಲ್ಲಿ ಕೆಲಸಕ್ಕೆ ಯತ್ನಿಸುತ್ತಿರುವ ಯುವಕರಿಗೆ ನಕಲಿ ಜಾಹಿರಾತು ಅಥವಾ ಏಜೆಂಟ್‌ಗಳ ಮೂಲಕ ನಂಬಿಸಿ ಅವರನ್ನು ಟೂರಿಸ್ಟ್ ವೀಸಾದಲ್ಲಿ ಮಧ್ಯ ಪ್ರಾಂಚ್ಯ ದೇಶಗಳಿಗೆ ಕರೆದುಕೊಂಡು ಹೋಗಿ ಅವರಿಂದ ದಾಖಲೆಗಳು ಮತ್ತು ಪಾಸ್‌ಪೋರ್ಟ್ ತೆಗೆದುಕೊಂಡು ಅವರನ್ನು ಅಲ್ಲೇ ವಶದಲ್ಲಿಟ್ಟುಕೊಳ್ಳುತ್ತಾರೆ. ಅವರಿಂದಲೇ ಅಮಾಯಕ ಹೂಡಿಕೆದಾರರಿಗೆ ಅವರ ಮಾತೃಭಾಷೆಯಲ್ಲೇ ಮಾತನಾಡಿಸಿ ಹಣ ವರ್ಗಾಯಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ, ಉಪಹಾರ ನೀಡದೆ ಮತ್ತು ಕುಟುಂಬದೊಂದಿಗೆ ಸಂಪರ್ಕ ಮಾಡಲು ಅವಕಾಶ ಕೊಡದೆ ಕೂಡಿ ಹಾಕುತ್ತಾರೆ. ಭಾರತೀಯರನ್ನು ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದು, ಈ ಬಗ್ಗೆ ಯುವಕರು ಎಚ್ಚರಿಕೆ ವಹಿಸುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. *ಉದ್ಯೋಗಕ್ಕೆ ವಿದೇಶಗಳಿಗೆ ಏಜೆನ್ಸಿ ಮೂಲಕ ಹೋಗುವ ಯುವಕರು ಪ್ರೊಟೆಕ್ಟ್ಸ್ ಆಫ್ ಇಮಿಗ್ರೇಟ್ಸ್ ಬಳಿ ನೊಂದಣಿ ಆಗಿರುವ ಏಜೆನ್ಸಿ ಬಗ್ಗೆ ಸರಿಯಾದ ಮಾಹಿತಿ ಪಡೆದು ಅವರ ಮೂಲಕ ಕೆಲಸಗಳನ್ನು ಪಡೆದು ಚೆಕ್ ಮಾಡಿ ಉದ್ಯೋಗಕ್ಕೆ ವಿದೇಶಕ್ಕೆ ಹೋಗುವುದು ಉತ್ತಮ. ವಿದೇಶದಲ್ಲಿ ಉತ್ತಮ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅವರನ್ನು ಸೈಬರ್ ಸ್ಲೇವರಿ ಆಗಿ ಕೆಲಸ ಮಾಡಿಸುತ್ತಿದ್ದ ದ.ಕ. ಜಿಲ್ಲೆಯ 6 ಮಂದಿಯನ್ನು ರಕ್ಷಿಸಲಾಗಿದೆ. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. *ವಂಚಕರು ಆನ್‌ಲೈನ್ ಮೂಲಕ USDTಗಳನ್ನು ಖರೀದಿ ಮಾಡಿಕೊಂಡು ಅದೇ ದಿನ ಬೇರೆ ದೇಶಗಳಿಗೆ ಕಳುಹಿಸುವುದರಿಂದ ವಿದೇಶಕ್ಕೆ ಹಣ ಹೋಗುತ್ತದೆ. ವಂಚನೆಗೊಳಗಾದ ದೂರುದಾರರು ಅದೇ ದಿನ ದೂರು ನೀಡದೆ ವಿಳಂಬಿಸಿದರೆ ಹಣ ಮರಳಿ ಪಡೆಯುವುದು ಕಷ್ಟವಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. *ಬ್ಯಾಂಕ್ ಖಾತೆ ನೀಡುವಾಗ ಎಚ್ಚರ ವಹಿಸಿ ಕಮಿಷನ್ ಆಸೆಗೆ ಒಳಗಾಗಿ ಬ್ಯಾಂಕ್ ಖಾತೆಯನ್ನು ವಂಚಕರಿಗೆ ನೀಡಿದರೆ ಖಾತೆದಾರರು ಸಹ ಆರೋಪಿತರಾಗು ತ್ತಾರೆ. ಮುಖ್ಯ ವಂಚಕರು ವಿದೇಶದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದರಿಂದ ಪ್ರಮುಖ ಆರೋಪಿಗಿಂತ ಮೊದಲೇ ಕಮಿಷನ್ ಆಸೆಗೆ ಒಳಗಾದವರನ್ನು ಕಾನೂನು ಪ್ರಕಾರ ದಸ್ತಗಿರಿ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. *ವಿದೇಶದಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯ ಆಕರ್ಷಿತ ಜಾಹೀರಾತು ಗಳನ್ನು ನೋಡಿ ಹೆಚ್ಚಿನ ಲಾಭಾಂಶದ ವಂಚನೆಗೆ ಒಳಗಾಗಬೇಡಿ. ಹೂಡಿಕೆ ಮಾಡುವಾಗ ನಕಲಿ ಸೆಬಿ ಸರ್ಟಿಪಿಕೆಟ್, ನಕಲಿ ಡಿಮೇಟ್ ಖಾತೆಗಳನ್ನು ನೋಡಿ ಮೋಸ ಹೋಗಬೇಡಿ. ಹೆಚ್ಚು ಹಣ ಗಳಿಸಬೇಕೆಂಬ ಆಸೆಗೆ ಬಿದ್ದ ಹೆಚ್ಚಿನ ಸಂಖ್ಯೆಯ ವಿದ್ಯಾವಂತರು ಇತ್ತಿಚೀನ ದಿನಗಳಲ್ಲಿ ಆನ್‌ಲೈನ್ ಹೂಡಿಕೆ, ಹಣ ದ್ವಿಗುಣ, ಟ್ರೇಡಿಂಗ್ ಹೂಡಿಕೆಯ ಜಾಲದಲ್ಲಿ ಸಿಲುಕಿ ಹಣವನ್ನು ಕಳೆದುಕೊಳ್ಳುತ್ತಿರುತ್ತಾರೆ. ಹಾಗಾಗಿ ಹೂಡಿಕೆ ಮಾಡಬೇಕಾದರೆ SEBI Registration ಆಗಿರುವ ಸಂಸ್ಥೆ ಅಥವಾ ಬ್ರೋಕರ್ ರವರಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಮಾಡಿಸಬೇಕು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. *ವಂಚನೆಯಾದ 1 ಗಂಟೆಯೊಳಗೆ 1930ಕ್ಕೆ ಕರೆ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣ ದೂರು ನೀಡಬೇಕು. ಆನ್‌ಲೈನ್ ಗೇಮ್, ನಕಲಿ ಲೋನ್ ಆ್ಯಪ್, ನಕಲಿ ಪಾರ್ಟ್ ಟೈಮ್ ಜಾಬ್, ನಕಲಿ ಜಾಬ್ ಆಫರ್‌ಗಳಿಂದ ದೂರ ಇರಬೇಕು. APK ಫೈಲ್ ಮತ್ತು ಲಿಂಕ್‌ಗಳ ಬಗ್ಗೆ ಜಾಗೃತೆ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳು, ಆಕರ್ಷಿಕ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಪ್ರೇಮ, ಗೆಳೆತನದ ಮೂಲಕ ಬ್ಯಾಂಕ್ ಖಾತೆಗಳನ್ನು ಮತ್ತು ಸಿಮ್‌ಗಳನ್ನು ನೀಡುವುದು, ಅರೆನಗ್ನ, ನಗ್ನಚಿತ್ರಗಳನ್ನು ಹಂಚಿಕೊಳ್ಳುವುದರಿಂದ ದೂರವಿರಿ ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. *ವಿಡೀಯೋ ಕಾಲ್ ಮೂಲಕ CBI, POLICE, JUDGES, CUSTOMS, SEBI, TRAI ಮುಂತಾದ ಇಲಾಖೆಗಳನ್ನು ಬಳಸಿಕೊಳ್ಳುವ ನಕಲಿ ಅಧಿಕಾರಿಗಳಂತೆ ನಟಿಸಿ ಬಂಧನ ಬೆದರಿಕೆ ನೀಡಿ ಹಣವನ್ನು ಲೂಟಿ ಮಾಡುವ ವ್ಯಕ್ತಿಗಳಿಂದ ದೂರವಿರಿ. ಆನ್‌ಲೈನ್ ಮೂಲಕ ಹೊಟೇಲ್, ಕ್ಯಾಬ್, ಫ್ಲೈಟ್ಸ್ ಬುಕ್ಕಿಂಗ್ ಮಾಡುವಾಗ ಎಚ್ಚರದಿಂದಿರಬೇಕು. ಗೂಗಲ್‌ನಲ್ಲಿ ಸಿಗುವಂತಹ ಯಾವುದೇ ಕಸ್ಟಮರ್ ಕೇರ್‌ಗಳ ಬಗ್ಗೆ ಎಚ್ಚರದಿಂದಿರಬೇಕು. ಯಾವುದೇ ಒಟಿಪಿಗಳನ್ನು ಶೇರ್ ಮಾಡಬಾರದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದ್ದಾರೆ.

ವಾರ್ತಾ ಭಾರತಿ 5 Feb 2026 5:52 pm

ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ: ವಿಪಕ್ಷಗಳ ಗದ್ದಲ, ಕೋಲಾಹಲದ ನಡುವೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮಾತು

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು. ದೇಶ ವೇಗವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ. ನಾವು ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತೆ 3 ನೇ ಸ್ಥಾನಕ್ಕೇರಿದೆ. ದೊಡ್ಡ ದೊಡ್ಡ ಆರ್ಥಿಕತೆಯಲ್ಲಿ ಭಾರತದ ಬೆಳವಣಿಗೆ ಹೆಚ್ಚಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಧಾನಿ ಮೋದಿ ಭಾಷಣದ ವೇಳೆ ವಿಪಕ್ಷಗಳು ಸದ್ದು ಗದ್ದಲ ಉಂಟು ಮಾಡಿದವು. ಇದೇ ವೇಳೆ ವಿಪಕ್ಷಗಳು ಸಭಾತ್ಯಾಗ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ವಿಜಯ ಕರ್ನಾಟಕ 5 Feb 2026 5:52 pm

Explained- ಭಾರತ ವಿರುದ್ಧ ಆಡೊಲ್ಲ ಎಂದಿರುವ ಪಾಕ್ ಸೂಪರ್ 8 ತಲುಪೋದು ಸುಲಭವೇ? ಎಡವಟ್ಟಾದರೆ ಟೂರ್ನಿಯಿಂದಲೇ ಔಟ್!

India Vs Pakistan Cricket Rivalry- ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ ನಿಂದ ಹೊರಗಿಟ್ಟಿರುವುದನ್ನು ವಿರೋಧಿಸಿ ಪಾಕಿಸ್ತಾನವು ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹುಷ್ಕರಿಸುವುದಾಗಿ ಹೇಳಿಕೊಂಡಿದೆಯಷ್ಟೇ. ಹಾಗಾದಲ್ಲಿ ಪಾಕಿಸ್ತಾನ ತಂಡ ಗುಂಪು ಹಂತದಲ್ಲಿ ಉಳಿದ ಮೂರು ಪಂದ್ಯಗಳನ್ನು ಆಡಿ ಸೂಪರ್ 8 ಹಂತಕ್ಕೇರಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಉಳಿದ ಮೂರರಲ್ಲಿ ಮೂರು ಪಂದ್ಯಗಳನ್ನು ಗೆದ್ದಲ್ಲಿ ಖಂಡಿತ ಸಾಧ್ಯ. ಆದರೆ ಈ ಹಂತದಲ್ಲಿ ಒಂದು ಪಂದ್ಯ ಸೋತರೂ ಏನು ಬೇಕಾದರೂ ಆಗಬಹುದು.

ವಿಜಯ ಕರ್ನಾಟಕ 5 Feb 2026 5:49 pm

ನರವಣೆ ಪುಸ್ತಕ ಬಗ್ಗೆ ಚರ್ಚೆಯಾಗಲಿ ; ಕೇಂದ್ರ ಸರಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರು ಬರೆದಿರುವ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಎಂಬ ಪುಸ್ತಕದಲ್ಲಿ 2020 ರಲ್ಲಿ ಚೀನಾ ಗಡಿಯಲ್ಲಿ ನಡೆದ ಸಂಘರ್ಷದ ವೇಳೆ ಹೇಗೆ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿತು ಎಂಬ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರವನ್ನು ಸಂಸತ್ ಅಧಿವೇಶನದಲ್ಲಿ ಚರ್ಚಿಸಲು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಅವರಿಗೆ ಮಾತನಾಡಲು ಅವಕಾಶ ನೀಡದೆ ಬಿಜೆಪಿ ತನ್ನ ವೈಫಲ್ಯವನ್ನು ಜನರಿಂದ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯ ಕರ್ನಾಟಕ 5 Feb 2026 5:31 pm

ಜನರು ವಯಸ್ಸಾಗುತ್ತಿದ್ದಂತೆ ಅಂತರ್ಮುಖಿಯಾಗುವುದೇಕೆ?

ಸಾಮಾಜಿಕವಾಗಿ ಅಂತರ್ಮುಖಿಯಾಗುವ ಬೆಳವಣಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನಗಳು ಪರಿಶೀಲಿಸಿವೆ. ವಯಸ್ಸಾಗುತ್ತಿದ್ದಂತೆ ವೈಯಕ್ತಿಕ ಬದಲಾವಣೆಗಳನ್ನು ಗಮನಿಸುವುದು ಬಹುಶಃ ಸಾಧ್ಯವಾಗುವುದಿಲ್ಲ. ಬಹಳಷ್ಟು ಮಂದಿ ಹೆಚ್ಚು ಅಂತರ್ಮುಖಿಯಾಗಿಬಿಡುತ್ತಾರೆ. ಈ ವರ್ತನೆಯ ಕುರಿತಂತೆ ಅನೇಕ ಅಧ್ಯಯನಗಳು ನಡೆದಿವೆ. ಕಾಲಾನುಸಾರ ಮೆದುಳು ಮತ್ತು ಸಾಮಾಜಿಕ ವರ್ತನೆಗಳು ಹೇಗೆ ಹೊರಹೊಮ್ಮುತ್ತವೆ ಎಂಬ ಬಗ್ಗೆ ಅಧ್ಯಯನಗಳು ನಡೆದಿವೆ. ಆದರೆ ಹೀಗೆ ಅಂತರ್ಮುಖಿಯಾಗುವ ಕಡೆಗಿನ ವಾಲಿಕೆ ಉತ್ತಮವೇ ಅಥವಾ ಸಲ್ಲದೆಯೇ? ಉತ್ತರ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಮತ್ತು ಕಾರಣಗಳೂ ವಿಭಿನ್ನವಾಗಿರಬಹುದು. ► ವಯಸ್ಸಾದಂತೆ ಅಂತರ್ಮುಖಿಯಾಗುವ ಹಿಂದಿನ ವಿಜ್ಞಾನ ವಯಸ್ಸಿನ ಜೊತೆಗೆ ವ್ಯಕ್ತಿತ್ವ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಪರಿಶೀಲಿಸಿವೆ. 2018ರಲ್ಲಿ ಜರ್ನಲ್ ಆಫ್ ನ್ಯೂರೋಬಯಾಲಜಿ ಆಫ್ ಏಜಿಂಗ್ನಲ್ಲಿ ಪ್ರಕಟವಾದ ಗಮನಾರ್ಹ ಅಧ್ಯಯನವು ಪ್ರಿಫ್ರಂಟಲ್ ಕಾರ್ಟೆಕ್ಸ್‌ (ಸಾಮಾಜಿಕ ಸಂವಹನ ಮತ್ತು ಸ್ವಯಂ ಅರಿವಿಗೆ ಮುಖ್ಯವಾಗಿರುವ ಮೆದುಳಿನ ಪ್ರದೇಶ) ವಯಸ್ಸಾದಂತೆ ಕುಗ್ಗುತ್ತದೆ ಮತ್ತು ಕಡಿಮೆ ಸಕ್ರಿಯವಾಗುತ್ತದೆ ಎಂದು ಕಂಡುಹಿಡಿದಿದೆ. ಹೀಗೆ ಕುಗ್ಗುವುದರಿಂದ ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಕಡಿಮೆಯಾಗಬಹುದು ಮತ್ತು ಆತ್ಮಾವಲೋಕನ ಹೆಚ್ಚಾಗಬಹುದು. ಮೆದುಳು ಈ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಿರುವಂತೆ ವ್ಯಕ್ತಿಗಳು ಸ್ವಾಭಾವಿಕವಾಗಿ ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳಲು ಹಿಂಜರಿಯಬಹುದು ಮತ್ತು ಹೆಚ್ಚು ಅಂತರ್ಮುಖಿಯಾಗಬಹುದು. ► ಪ್ರಬುದ್ಧತೆಯಿಂದ ಭಾವನಾತ್ಮಕ ಸ್ಥಿರತೆ ಇಂತಹದೇ ಇನ್ನೊಂದು ಸಂಶೋಧನೆಯನ್ನು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನಡೆಸಿದೆ. ಸುಮಾರು 21ರಿಂದ 60ರ ನಡುವಿನ ವಯಸ್ಸಿನ 1,32,515 ವಯಸ್ಕರನ್ನು ಒಳಗೊಂಡ ಈ ಅಧ್ಯಯನವು ಮುಖ್ಯವಾಗಿ ಐದು ಪ್ರಮುಖ ವೈಯಕ್ತಿಕ ಚಹರೆಗಳಾದ ಬಹಿರ್ಮುಖತೆ, ಒಪ್ಪಿಕೊಳ್ಳುವಿಕೆ, ಆತ್ಮಸಾಕ್ಷಿ, ನರರೋಗ ಮತ್ತು ಮುಕ್ತತೆ ಹೇಗೆ ಬದಲಾಗುತ್ತವೆ ಎಂಬುದರ ಮೇಲೆ ಕೇಂದ್ರೀಕರಿಸಿದೆ. ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಷಿಯಲ್ ಸೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರಬುದ್ಧರಾದಂತೆ ವ್ಯಕ್ತಿಗಳು ಭಾವನಾತ್ಮಕವಾಗಿ ಹೆಚ್ಚು ಸ್ಥಿರರಾಗುತ್ತಾರೆ, ಹೊಂದಾಣಿಕೆ ಬರುತ್ತದೆ ಮತ್ತು ಆತ್ಮಸಾಕ್ಷಿ ಬೆಳೆಯುತ್ತದೆ. ಬಹಿರ್ಮುಖತೆ ವಯಸ್ಸಾದಂತೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಬಹಳಷ್ಟು ಮಂದಿಗೆ ಜೀವನದಲ್ಲಿ ಸಂತೃಪ್ತಿ ಸಿಗಲು ಜನರೊಂದಿಗೆ ಕಳೆಯುವ ಸಮಯ ಕಡಿಮೆಯಾಗಬೇಕು ಮತ್ತು ಬಾಹ್ಯ ಪ್ರಚೋದನೆಯ ಅಗತ್ಯವೂ ಕಡಿಮೆಯಾಗುತ್ತದೆ. ಹೀಗಾಗಿ ವಯಸ್ಸಾದಂತೆ ಶಾಂತ ಮತ್ತು ಸಂಯಮದಿಂದ ಬೆಳೆಯುವುದು ಭಾವನಾತ್ಮಕ ಸಮತೋಲನದ ಕಡೆಗೆ ವ್ಯಕ್ತಿತ್ವದ ಬದಲಾವಣೆಯಾಗುತ್ತದೆ. ► ಸ್ವಭಾವಜನ್ಯ ಪ್ರಬುದ್ಧತೆಯ ವಿದ್ಯಮಾನ ವ್ಯಕ್ತಿತ್ವದ ವಿಕಸನವು ಮೆದುಳಿನ ಬದಲಾವಣೆ ಮಾತ್ರವಲ್ಲ, ಸ್ವಭಾವಜನ್ಯ ಪ್ರಬುದ್ಧತೆಯ ವಿಷಯವೂ ಆಗಿರುತ್ತದೆ. ವ್ಯಕ್ತಿತ್ವಗಳು ವಯಸ್ಸಾದಂತೆ ಹೇಗೆ ಹೆಚ್ಚು ಸಮತೋಲಿತವಾಗುತ್ತವೆ ಎಂಬುದನ್ನು ವಿವರಿಸಲು ಮನೋವಿಜ್ಞಾನಿಗಳು ಬಳಸುವ ಪದವೇ ‘ಸ್ವಭಾವಜನ್ಯ ಪ್ರಬುದ್ಧತೆ’. ತಮ್ಮ ಜೀವನದ ಬಹುಭಾಗವನ್ನು ಇತರರನ್ನು ಮೆಚ್ಚಿಸುವ ಬಹಿರ್ಮುಖಿ ವ್ಯಕ್ತಿತ್ವವನ್ನು ಬದಲಿಸಿಕೊಂಡು ಹೆಚ್ಚು ಸಂಯಮದಿಂದ ಇರುವ ಬೆಳವಣಿಗೆಯನ್ನು ಇದು ಸೂಚಿಸುತ್ತದೆ. ‘ಮೌನ: ಮಾತನಾಡುವುದನ್ನು ಬಿಡದ ಜಗತ್ತಿನಲ್ಲಿ ಅಂತರ್ಮುಖಿಗಳ ಶಕ್ತಿ’ ಎನ್ನುವ ಸೂಸಾನ್ ಕೇನ್ ಅವರ ಅಧ್ಯಯನದ ಪ್ರಕಾರ, ಪ್ರಬುದ್ಧತೆಯು ವಯಸ್ಸಾದಂತೆ ಹೆಚ್ಚು ಅಂತರ್ಮುಖಿಯಾಗಿ ವರ್ತಿಸುವಂತೆ ಮಾಡುತ್ತದೆ. “ವಯಸ್ಸಿಗೆ ತಕ್ಕಂತೆ ಮೃದುವಾಗುವ ಉತ್ತಮ ವೈನ್” ಎಂದು ಈ ಬೆಳವಣಿಗೆಯನ್ನು ಅವರು ವಿವರಿಸುತ್ತಾರೆ. ಅಂದರೆ, ಬದಲಾವಣೆಯು ನಕಾರಾತ್ಮಕವಲ್ಲ; ಬದಲಾಗಿ ಸ್ವಾಭಾವಿಕವಾಗಿ ವಯಸ್ಸಾಗುವ ಪ್ರಕ್ರಿಯೆಯ ಭಾಗವಾಗಿದೆ. ಇದು ಭಾವನಾತ್ಮಕ ಸಮತೋಲನ ಮತ್ತು ಆತ್ಮಾವಲೋಕನದ ಹಾದಿಯಾಗಿರುತ್ತದೆ. ► ಒಂಟಿತನ Vs ಏಕಾಂತ ಬದಲಾವಣೆಗೆ ಕಾರಣ ಮತ್ತು ಜೀವನದ ಮೇಲೆ ಅದರ ಪರಿಣಾಮವನ್ನು ಆಧರಿಸಿ ಅಂತರ್ಮುಖಿಯಾಗುವುದು ಉತ್ತಮವೇ ಅಲ್ಲವೇ ಎಂದು ಹೇಳಬಹುದು. ಮನಶ್ಶಾಸ್ತ್ರಜ್ಞೆ ಪ್ರಿಯಂವದಾ ತೆಂಡುಲ್ಕರ್ ಅವರ ಪ್ರಕಾರ, “ಅಂತರ್ಮುಖಿಯಾಗುವುದು ಧನಾತ್ಮಕವಾಗಿಯೂ ಇರಬಹುದು ಮತ್ತು ಋಣಾತ್ಮಕವಾಗಿಯೂ ಇರಬಹುದು. ಭಾವನಾತ್ಮಕ ಬಳಲಿಕೆ ಅಥವಾ ಸಾಮಾಜಿಕ ಸಂಬಂಧಗಳನ್ನು ನಿರ್ವಹಿಸಲು ಅಸಮರ್ಥರಾಗಿ ಒಬ್ಬರು ಅಂತರ್ಮುಖಿಯಾಗಿದ್ದರೆ, ಅವರು ಒಂಟಿತನದ ಭಾವನೆಯನ್ನು ಹೊಂದಿರಬಹುದು.” ಅನೇಕ ಅಧ್ಯಯನಗಳು ತೋರಿಸಿರುವಂತೆ ಸಾಮಾಜಿಕ ಜೀವನದ ಸಂವಹನಗಳ ಗುಣಮಟ್ಟವು ಒಟ್ಟು ಯೋಗಕ್ಷೇಮಕ್ಕೆ ನೇರವಾಗಿ ಸಂಬಂಧಿಸಿದೆ. ಜನರೊಂದಿಗೆ ಸಂಪರ್ಕ ಕಳೆದುಕೊಳ್ಳುವುದು ಅಥವಾ ಹೆಚ್ಚು ಹಿಂದೆ ಸರಿಯುವುದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ ತಮ್ಮ ಜೀವನವಿಡೀ ಎಲ್ಲರನ್ನು ಮೆಚ್ಚಿಸುತ್ತಾ ಬಹಿರ್ಮುಖವಾಗಿದ್ದವರು ಅಂತರ್ಮುಖಿಯಾಗುವುದು ಹೆಚ್ಚು ಸಂಯಮ ತಂದುಕೊಂಡಿರುವ ಬೆಳವಣಿಗೆಯಾಗಿರುತ್ತದೆ. ಅಂತಹವರು ತಮ್ಮದೇ ವೆಚ್ಚದಲ್ಲಿ ಇತರರನ್ನು ಸಂತುಷ್ಟಿಗೊಳಿಸಲು ಮಾನಸಿಕ ಶಕ್ತಿಯನ್ನು ವ್ಯಯಿಸುವ ಅಗತ್ಯವಿಲ್ಲ ಎಂದು ಅರಿತುಕೊಳ್ಳಬಹುದು. ಇಂತಹವರಿಗೆ ಅಂತರ್ಮುಖಿಯಾಗುವುದು ಉತ್ತಮ ಬೆಳವಣಿಗೆಯಾಗಿರುತ್ತದೆ.

ವಾರ್ತಾ ಭಾರತಿ 5 Feb 2026 5:30 pm

ಅದೇ ರೀಲ್ಸ್ ಪದೇಪದೆ ಬರುತ್ತಿದೆಯೆ? ಇನ್‌ಸ್ಟಾಗ್ರಾಂ ಆಲ್ಗಾರಿದಂ ಹೇಗೆ ಬದಲಿಸಬೇಕು? ಇಲ್ಲಿದೆ ವಿವರ…

ಮೆಟಾ ಬಳಕೆದಾರರಿಗೆ ಇನ್‌ಸ್ಟಾಗ್ರಾಂ ರೀಲ್ಸ್‌ಗಳ ಸಲಹೆಗಳನ್ನು ಮರುಹೊಂದಿಸಲು ಅನುಮತಿಸುತ್ತದೆ. ಅನಗತ್ಯ ಟ್ರೆಂಡ್‌ಗಳು, ಅಪ್ರಸ್ತುತ ವೀಡಿಯೊಗಳು ಮತ್ತು ಹಳೆಯ ಆಸಕ್ತಿಗಳನ್ನು ಫೀಡ್‌ನಿಂದ ತೆಗೆದು ಹಾಕಬಹುದಾಗಿದೆ. ರೀಲ್ಸ್ ಇದೀಗ ಇನ್‌ಸ್ಟಾಗ್ರಾಂನ ಅತಿ ಜನಪ್ರಿಯ ಫೀಚರ್ ಆಗಿದೆ. ಫಿಟ್ನೆಸ್, ಮನೋರಂಜನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವೈವಿಧ್ಯಮಯ ವಿಷಯಗಳಲ್ಲಿ ಸಂಕ್ಷಿಪ್ತ ವೀಡಿಯೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಸಾರ ಮಾಡಲಾಗುತ್ತದೆ. ಕಳೆದ ವರ್ಷ ಮೆಟಾ ‘ರೀಲ್ಸ್-ಫಸ್ಟ್’ ಎನ್ನುವ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದು, ಬಳಕೆದಾರರ ವೀಕ್ಷಣಾ ಅಭ್ಯಾಸಗಳನ್ನು ಅನುಸರಿಸಿ ಪ್ರತ್ಯೇಕವಾಗಿ ಸಿದ್ಧಪಡಿಸಿದ ಶಿಫಾರಸು ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ನಿಮ್ಮ ಆಸಕ್ತಿಯಲ್ಲದ ರೀಲ್ಸ್‌ಗಳು ಪದೇಪದೆ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ನಿಮಗೆ ಬಹಳ ಅಪ್ರಸ್ತುತವೆನಿಸಿದ ವೀಡಿಯೊಗಳು, ಬಯಸದ ಟ್ರೆಂಡ್‌ಗಳು ಅಥವಾ ನಿಮಗೆ ತೃಪ್ತಿ ಸಿಗದ ಕಂಟೆಂಟ್‌ ಗಳು ಬರುತ್ತವೆ ಎಂದಾದಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಆಲ್ಗಾರಿದಂ ಅನ್ನು ರಿಸೆಟ್ ಮಾಡಿದರೆ ನಿಮ್ಮ ಫೀಡ್ ರಿಫ್ರೆಶ್ ಆಗಿಬಿಡುತ್ತದೆ. ನಿಮ್ಮ ಒಟ್ಟು ಅನುಭವವೂ ಸುಧಾರಿಸುತ್ತದೆ. ಇನ್‌ಸ್ಟಾಗ್ರಾಂ ಆಲ್ಗಾರಿದಂ ಬಹುತೇಕ ಬಳಕೆದಾರರ ತೊಡಗಿಸಿಕೊಳ್ಳುವಿಕೆ ಮೇಲೆ ಇರುತ್ತದೆ. ಅಂದರೆ ಸಾಫ್ಟ್‌ವೇರ್ ಬಳಕೆದಾರರ ಆಸಕ್ತಿಯ ಬಗ್ಗೆ ಕಲಿತುಕೊಳ್ಳುತ್ತದೆ ಮತ್ತು ಫೀಡ್ ಅನ್ನು ಅದಕ್ಕೆ ತಕ್ಕಂತೆ ಹೊಂದಿಸುತ್ತದೆ. ಅದು ನಿಮ್ಮ ಮರುವೀಕ್ಷಣೆ, ಲೈಕ್‌ಗಳು ಅಥವಾ ಕಾಮೆಂಟ್‌ಗಳನ್ನು ಗಮನಿಸಿ ಫೀಡ್ ನೀಡುತ್ತದೆ. ಆದರೆ ಸರಿಯಾಗಿ ಗಮನ ಕೊಡದೆ ಸಂವಹನ ನಡೆಸಿದಲ್ಲಿ ಆಲ್ಗಾರಿದಂ ಮೇಲೆ ಪರಿಣಾಮ ಬೀರಬಹುದು. ಅದರಿಂದ ಸಂಬಂಧಿತ ವೀಡಿಯೊಗಳು ಪದೇಪದೆ ಫೀಡ್‌ಗೆ ಬರಬಹುದು. ಬಳಕೆದಾರರ ಆಸಕ್ತಿಯಲ್ಲಿನ ಬದಲಾವಣೆಯಿಂದಲೂ ಇನ್‌ಸ್ಟಾಗ್ರಾಂ ರೀಲ್ಸ್ ಆಲ್ಗಾರಿದಂ ರಿಸೆಟ್ ಆಗಬಹುದು. ಕೆಲವು ತಿಂಗಳ ಹಿಂದೆ ಆಸಕ್ತಿ ಇದ್ದ ಕಂಟೆಂಟ್‌ಗಳ ಮೇಲೆ ಪ್ರಸ್ತುತ ಆಸಕ್ತಿ ಇಲ್ಲದೇ ಇರಬಹುದು. ಹೆಚ್ಚುವರಿಯಾಗಿ ಅಪ್ರಸ್ತುತ ಮತ್ತು ಅಸಮಾಧಾನಗೊಳಿಸುವ ವಿಷಯಗಳನ್ನು ಪತ್ತೆಹಚ್ಚುವ ಸಂದರ್ಭಗಳೂ ಇವೆ. ಇದರಿಂದಾಗಿ ಆಲ್ಗಾರಿದಂ ಮರುಹೊಂದಿಸಬೇಕಾಗುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಶಿಫಾರಸು ಮಾಡಲಾದ ವಿಷಯಗಳನ್ನು ಮರುಹೊಂದಿಸುವುದು ಆ್ಯಪ್‌ನ ಇಂಟಿಗ್ರೇಟೆಡ್ ಫೀಚರ್ ಆಗಿರುತ್ತದೆ. ನಿಮ್ಮ ರೀಲ್ಸ್ ಆಲ್ಗಾರಿದಂ ಅನ್ನು ಈ ರೀತಿಯಾಗಿ ರಿಸೆಟ್ ಮಾಡಬಹುದಾಗಿದೆ: * ಇನ್‌ಸ್ಟಾಗ್ರಾಂ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ತೆರೆಯಿರಿ. * ಮೇಲಿನ ಬಲ ಮೂಲೆಯಲ್ಲಿ ಇರುವ ಮೂರು ಗೆರೆಗಳ ಐಕಾನ್ ಅನ್ನು ಟ್ಯಾಪ್ ಮಾಡಿ. * ಮೆನುವಿನಲ್ಲಿ “ಕಂಟೆಂಟ್ ಪ್ರಿಫರೆನ್ಸಸ್”ಗೆ ಹೋಗಿ. * ‘ರಿಸೆಟ್ ಸಜೆಸ್ಟೆಡ್ ಕಂಟೆಂಟ್’ ಅನ್ನು ಕ್ಲಿಕ್ ಮಾಡಿ. * ಸ್ಕ್ರೀನ್‌ನಲ್ಲಿ ತೋರಿಸಿದ ಮಾಹಿತಿಯನ್ನು ಗಮನಿಸಿ ಮತ್ತು ನಿಯಮಗಳನ್ನು ಒಪ್ಪಿಕೊಳ್ಳಿ. * ‘ರಿಸೆಟ್ ಸಜೆಸ್ಟೆಡ್ ಕಂಟೆಂಟ್’ ಅನ್ನು ದೃಢೀಕರಿಸಿ. ರಿಸೆಟ್ ಪೂರ್ಣಗೊಂಡ ಬಳಿಕ ಇನ್‌ಸ್ಟಾಗ್ರಾಂ ನಿಧಾನವಾಗಿ ನಿಮ್ಮ ಸಲಹೆಗಳನ್ನು ಪ್ರತ್ಯೇಕವಾಗಿ ನಿಮಗಾಗಿಯೇ ಸಿದ್ಧಪಡಿಸಲು ಆರಂಭಿಸುತ್ತದೆ. ಆದರೆ ಒಮ್ಮೆ ರಿಸೆಟ್ ಮಾಡಿದ ನಂತರ ಹಿಂದಿನ ಅದೇ ಫೀಡ್ ಅನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ.

ವಾರ್ತಾ ಭಾರತಿ 5 Feb 2026 5:25 pm

ರೇಬಿಸ್ ವಿರೋಧಿ ಇಂಜೆಕ್ಷನ್ ಪಡೆದ ಬಾಲಕಿ ಸಾವು; ರೇಬಿಸ್ ಇಂಜೆಕ್ಷನ್ ಪರಿಣಾಮ ಬೀರದಿರಲು ಕಾರಣಗಳೇನು?

ರೇಬಿಸ್ ಲಸಿಕೆಯಿಂದ ತಡೆಗಟ್ಟಬಹುದಾದ, ಪ್ರಾಣಿಯಿಂದ ಹರಡುವ ವೈರಲ್ ರೋಗವಾಗಿದೆ. ಇದು ಕೇಂದ್ರ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಮಕ್ಕಳು ಪದೇಪದೇ ಸಾಕು ಪ್ರಾಣಿಗಳನ್ನು ಮತ್ತು ಮುಖ್ಯವಾಗಿ ನಾಯಿಗಳನ್ನು ಮುಟ್ಟಿದಾಗ ಗಾಯವಾದರೆ ರೇಬಿಸ್ ವಿರೋಧಿ ಇಂಜೆಕ್ಷನ್ ಸಾಮಾನ್ಯವಾಗಿ ನೀಡಲಾಗುತ್ತದೆ. ಆದರೆ ತೆಲಂಗಾಣದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಹೀಗೆ ಆಂಟಿ-ರೇಬಿಸ್ ಇಂಜೆಕ್ಷನ್ ತೆಗೆದುಕೊಂಡ ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ. ಜನವರಿ 25ರಂದು ಕಮರೆಡ್ಡಿ ಅಯ್ಯಪ್ಪನಗರದ ತನ್ನ ಮನೆಯಲ್ಲಿ ಆಡುತ್ತಿದ್ದಾಗ ಬೀದಿ ನಾಯಿ ಆಕೆಗೆ ಕಚ್ಚಿತ್ತು. ತಕ್ಷಣವೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಫೆಬ್ರವರಿ 1ರಂದು ಮೂರನೇ ಇಂಜೆಕ್ಷನ್‌ಗಾಗಿ ಹೆತ್ತವರು ಮಗುವನ್ನು ಕರೆತಂದಿದ್ದಾರೆ. ಇಂಜೆಕ್ಷನ್ ತೆಗೆದುಕೊಂಡ ತಕ್ಷಣ ಮಗು ಪ್ರಜ್ಞೆ ಕಳೆದುಕೊಂಡಿದೆ. ಆಕೆಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪಿದಾಗ ವೈದ್ಯರು ಆಕೆಯ ನಾಡಿ ಮಿಡಿತ ನಿಂತಿದೆ ಎಂದು ಹೇಳಿದ್ದಾರೆ. ಪೋಷಕರು ಮತ್ತು ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯ ಪೀಠೋಪಕರಣಗಳನ್ನು ಒಡೆದು ಪ್ರತಿಭಟನೆ ನಡೆಸಿದ್ದಾರೆ. ಇದೀಗ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ ತನಿಖೆ ನಡೆಸುತ್ತಿದ್ದಾರೆ. ► ರೇಬಿಸ್ ಎಂದರೇನು? ರೇಬಿಸ್ ಲಸಿಕೆಯಿಂದ ತಡೆಗಟ್ಟಬಹುದಾದ, ಪ್ರಾಣಿಯಿಂದ ಹರಡುವ ವೈರಲ್ ರೋಗವಾಗಿದೆ. ಇದು ಕೇಂದ್ರ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ನಾಯಿಗಳು, ಬೆಕ್ಕುಗಳು, ಜಾನುವಾರುಗಳು ಮತ್ತು ವನ್ಯಜೀವಿಗಳು ಸೇರಿದಂತೆ ಸಸ್ತನಿಗಳಿಗೆ ರೇಬಿಸ್ ಸೋಂಕು ತಗಲುತ್ತದೆ. ಇದು ಲಾಲಾರಸದ ಮೂಲಕ ಜನರು ಮತ್ತು ಪ್ರಾಣಿಗಳಿಗೆ ಹರಡುತ್ತದೆ. ಸಾಮಾನ್ಯವಾಗಿ ಕಚ್ಚುವುದು, ಗೀರುವುದು ಅಥವಾ ಲೋಳೆಪೊರೆಯ ನೇರ ಸಂಪರ್ಕದ ಮೂಲಕ ಇದು ಹರಡುತ್ತದೆ. “ಒಮ್ಮೆ ರೇಬಿಸ್‌ನ ಲಕ್ಷಣಗಳು ಕಂಡುಬಂದರೆ ಶೇ 100ರಷ್ಟು ಮಾರಕವಾಗಿರುತ್ತದೆ” ಎನ್ನುತ್ತವೆ ವಿಶ್ವ ಆರೋಗ್ಯ ಸಂಸ್ಥೆಯ ವಿವರಗಳು. ಮಾನವ ರೇಬಿಸ್ ಪ್ರಕರಣಗಳಲ್ಲಿ ಶೇ 99ರಷ್ಟು ಮಂದಿಗೆ ನಾಯಿ ಕಚ್ಚಿರುವುದರಿಂದಲೇ ರೋಗ ಹರಡುತ್ತದೆ. ಈ ರೋಗಕ್ಕೆ ಬಹುಪಾಲು 5ರಿಂದ 14 ವರ್ಷದ ಮಕ್ಕಳು ಬಲಿಯಾಗುತ್ತಾರೆ. ► ರೇಬಿಸ್ ಲಸಿಕೆ ಪರಿಣಾಮಕಾರಿಯಾಗದೆ ಇರಲು ಕಾರಣವೇನು? ವಿಶ್ವ ಆರೋಗ್ಯ ಸಂಸ್ಥೆಯ ವಿವರಗಳ ಪ್ರಕಾರ ರೇಬಿಸ್ ಲಸಿಕೆ ಪರಿಣಾಮ ಬೀರದೆ ಇರಲು ಅನೇಕ ಕಾರಣಗಳಿವೆ. ಪ್ರಾಥಮಿಕವಾಗಿ ಪೋಸ್ಟ್ ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್ (PEP) ಲಸಿಕೆಯ ಪರಿಣಾಮವನ್ನು ಕಡಿಮೆಗೊಳಿಸಬಹುದು ಮತ್ತು ಕೆಲವೊಮ್ಮೆ ಮಾರಕವಾಗಿ ಪರಿಣಮಿಸಬಹುದು. * ಪ್ರಾಣಿಗಳಿಂದ ಗಾಯ/ಗೀರು ಆದ ಒಂದು ದಿನಕ್ಕಿಂತ ಹೆಚ್ಚು ಸಮಯದ ನಂತರ PEP ಪ್ರಾರಂಭಿಸುವುದರಿಂದ ರೇಬಿಸ್ ವೈರಸ್ ನರಗಳ ಉದ್ದಕ್ಕೂ ಮೆದುಳಿಗೆ ಚಲಿಸುವ ಸಾಧ್ಯತೆ ಹೆಚ್ಚುತ್ತದೆ. ವ್ಯಕ್ತಿ ತಕ್ಷಣ ರೇಬಿಸ್ ಲಸಿಕೆ ಪಡೆಯದಿದ್ದರೆ ವೈರಸ್ ಕೇಂದ್ರ ನರಮಂಡಲ ತಲುಪುವ ಅಪಾಯವಿದೆ. * ಸೋಪು ಮತ್ತು ನೀರು ಅಥವಾ ವೈರಸಿಡಲ್ ಏಜೆಂಟ್‌ ಗಳಿಂದ ಸಂಪೂರ್ಣವಾಗಿ ತೊಳೆಯುವುದರಿಂದ ಗಾಯದ ಮೇಲೆ ವೈರಲ್ ಹೊರೆ ಕಡಿಮೆಯಾಗುತ್ತದೆ. ತೊಳೆಯದೆ ಬಿಟ್ಟುಬಿಡುವುದು ಅಥವಾ ಗಾಯ ತೆರೆದಿಡುವುದರಿಂದ ವೈರಸ್ ಅದರಲ್ಲೇ ಉಳಿದು ಹರಡಬಹುದು. * ರೇಬಿಸ್ ಇಮ್ಯುನೊಗ್ಲೊಬ್ಯುಲಿನ್ ಎಲ್ಲಾ ಗಾಯಗಳಲ್ಲೂ ನುಸುಳಬೇಕಾಗಿದೆ. ಅದರ ಬದಲಾಗಿ ಇಂಟ್ರಾಮಸ್ಕ್ಯುಲರ್ ಆಗಿ ಮಾತ್ರ ನೀಡಿದ ಇಂಜೆಕ್ಷನ್ ಗಾಯದ ಬುಡದಲ್ಲಿಯೇ ವೈರಸ್ ಅನ್ನು ತಟಸ್ಥಗೊಳಿಸಲು ವಿಫಲವಾಗಬಹುದು. * ಎಚ್‌ಐವಿ ಅಥವಾ ಇಮ್ಯುನೊಸಪ್ರೆಸಂಟ್‌ಗಳಂತಹ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ರೋಗಿಗಳು ಪೂರ್ಣ PEP ಪಡೆದಿದ್ದರೂ ಸಾಕಷ್ಟು ಪ್ರತಿಕಾಯಗಳನ್ನು ಉತ್ಪಾದಿಸದೇ ಇರಬಹುದು. ಇದು ಅಂತಿಮವಾಗಿ ಮಾರಕವಾಗಿ ಪರಿಣಮಿಸಬಹುದು. * ತಪ್ಪಾದ ಸ್ಥಳಗಳು, ಅಪೂರ್ಣ ಸರಣಿಗಳು ಅಥವಾ RIG ಜೊತೆಗೆ ಮಿಶ್ರಣದಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ವೈರಸ್ ಕೇಂದ್ರ ನರಮಂಡಲಕ್ಕೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. * 2–8 ಡಿಗ್ರಿ ಸೆಲ್ಸಿಯಸ್ ಮೀರಿದ ಶಾಖ ಅಥವಾ ಚಳಿಯಲ್ಲಿ ಲಸಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಅವಧಿ ಮೀರಿದ, ಕಡಿಮೆ ಶಕ್ತಿಯ ಅಥವಾ ಸರಿಯಾಗಿ ಬಾಟಲಿಗಳನ್ನು ನಿರ್ವಹಿಸದೆ ಇದ್ದರೆ ರಕ್ಷಣೆ ನೀಡಲು ವಿಫಲವಾಗಬಹುದು.

ವಾರ್ತಾ ಭಾರತಿ 5 Feb 2026 5:19 pm

ಬೆಂಗಳೂರು-ಪುಣೆ ಹೈಸ್ಪೀಡ್ ರೈಲು: ಜೋಶಿ, ಕುಮಾರಸ್ವಾಮಿ ನಡೆಗೆ ಎಂ.ಬಿ. ಪಾಟೀಲ್ ಮೆಚ್ಚುಗೆ

ಬೆಂಗಳೂರು: ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬೈ ನಡುವೆ 'ಹೈಸ್ಪೀಡ್ ರೈಲು ಕಾರಿಡಾರ್' ನಿರ್ಮಾಣವಾಗಬೇಕೆಂಬ ರಾಜ್ಯದ ಬೇಡಿಕೆಗೆ ಕೇಂದ್ರ ಮಟ್ಟದಲ್ಲಿ ಸ್ಪಂದನೆ ಸಿಕ್ಕಿದೆ. ಈ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತುಕತೆ ನಡೆಸಿರುವುದನ್ನು ರಾಜ್ಯದ ಬೃಹತ್ ಮತ್ತು ಮಧ್ಯಮ

ಒನ್ ಇ೦ಡಿಯ 5 Feb 2026 5:01 pm

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ; ಶಾಸಕ ನಂಜೇಗೌಡ ಆಯ್ಕೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ : 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಮತಗಳ ಮರುಎಣಿಕೆಯ ನಂತರವೂ, ನಂಜೇಗೌಡರು ತಮ್ಮ ಎದುರಾಳಿ ಬಿಜೆಪಿಯ ಕೆ ಎಸ್ ಮಂಜುನಾಥ್ ಗೌಡ ಅವರಿಗಿಂತ 250ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬುದನ್ನು ಪೀಠ ಗಮನಿಸಿ, ಈ ಆದೇಶ ನೀಡಿದೆ. ತಮ್ಮ ಶಾಸಕ ಸ್ಥಾನವನ್ನು ರದ್ದು ಮಾಡಿದ್ದ ಕರ್ನಾಟಕ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜೋಯ್​​ಮಲ್ಯ ಬಾಗ್ಚಿ ಅವರಿದ್ದ ಪೀಠ, ನಂಜೇಗೌಡ ಅವರ ಆಯ್ಕೆಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಕಾಂಗ್ರೆಸ್ ಶಾಸಕರ ಆಯ್ಕೆಯನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್‌ 2025ರ ಸೆಪ್ಟಂಬರ್​ನಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

ವಾರ್ತಾ ಭಾರತಿ 5 Feb 2026 5:01 pm

`ಕಾಂಗ್ರೆಸ್ ಯೋಜನೆ ತಿಳಿದೇ ಸದನಕ್ಕೆ ಬಾರದಂತೆ ಮೋದಿಗೆ ವಿನಂತಿಸಿದ್ದೆ'!; ಕಿಡಿ ಹೊತ್ತಿಸಿದ ಸ್ಪೀಕರ್ ಓಂ ಬಿರ್ಲಾ ಹೇಳಿಕೆ!

OM Birla On Congress MPs- ಕಾಂಗ್ರೆಸ್ ಸಂಸದರು ಪ್ರಧಾನಿ ಮೋದಿ ಸೀಟಿನ ಮುಂದೆ ಪ್ರತಿಭಟನೆ ನಡೆಸುತ್ತಾರೆಂದು ಸ್ಪೀಕರ್ ಗೆ ಮೊದಲೇ ತಿಳಿದಿತ್ತೇ? ಅದೇ ಕಾರಣಕ್ಕೆ ಪ್ರಧಾನಿ ಸಂಸತ್ತಿಗೆ ಆಗಮಿಸಲಿಲ್ಲವೇ? ಹೌದು ತನಗೆ ಈ ಬಗ್ಗೆ ಮೊದಲೇ ಮಾಹಿತಿ ಇದ್ದಿದ್ದರಿಂದಲೇ ತಾನು ಪ್ರಧಾನಿ ಮೋದಿ ಅವರನ್ನು ಸದನಕ್ಕೆ ಬಾರದಂತೆ ವಿನಂತಿಸಿ ಮಂದಾಗಬಹುದಾಗಿದ್ದ ಅನುಚಿತ ಘಟನೆಯನ್ನು ತಡೆದೆ ಎಂದು ತಿಳಿಸಿದ್ದಾರೆ. ಅವರ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ಕಿಡಿಕಿಡಿಯಾಗಿದ್ದು, ಹಾಗಿದ್ದರೆ ಮಹಿಳಾ ಎಂಪಿ, ಅದರಲ್ಲೂ ದಲಿತ ಮಹಿಳಾ ಎಂಪಿ ಪ್ರತಿಭಟನೆ ನಡೆಸುವುದು ತಪ್ಪೇ ಎಂದು ತಿರುಗೇಟು ನೀಡಿದಿ

ವಿಜಯ ಕರ್ನಾಟಕ 5 Feb 2026 4:58 pm

ಸೋನಮ್ ವಾಂಗ್‌ಚುಕ್ ಬಂಧನ ಪ್ರಶ್ನಿಸಿ ಅರ್ಜಿ | ವಿಚಾರಣೆ ಫೆ. 9ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 9ಕ್ಕೆ ಮುಂದೂಡಿದೆ. ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ನಡೆದ ಬಂಧನ ಕಾನೂನುಬಾಹಿರ ಎಂದು ಹೇಳಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಪಿ.ಬಿ. ವರಾಲೆ ಅವರ ಪೀಠವು ಗುರುವಾರ (ಫೆಬ್ರವರಿ 5, 2026) ವಿಚಾರಣೆಯನ್ನು ಮುಂದೂಡಿತು. ಬುಧವಾರ (ಫೆಬ್ರವರಿ 4) ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಬಂಧನವನ್ನು ಸರ್ಕಾರ ಮರುಪರಿಶೀಲಿಸುವ ಸಾಧ್ಯತೆ ಇದೆಯೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಕಳೆದ ವರ್ಷ ಲೇಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿ 161 ಮಂದಿ ಗಾಯಗೊಂಡ ಪ್ರಕರಣಕ್ಕೆ ವಾಂಗ್‌ಚುಕ್ ಕಾರಣರಾಗಿದ್ದಾರೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ನ್ಯಾಯಾಲಯಕ್ಕೆ ತಿಳಿಸಿದರು. ಮಂಗಳವಾರ (ಫೆಬ್ರವರಿ 3) ಕೇಂದ್ರ ಸರ್ಕಾರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವು ಗಡಿ ಪ್ರದೇಶದ ಸೂಕ್ಷ್ಮತೆ ಒಳಗೊಂಡ ಪ್ರದೇಶದಲ್ಲಿ ಜನರನ್ನು ಪ್ರಚೋದಿಸಿದ್ದಕ್ಕಾಗಿ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ಬಂಧನವನ್ನು ಸಮರ್ಥಿಸಿಕೊಂಡ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, NSA ಅಡಿಯಲ್ಲಿ ಬಂಧನ ಆದೇಶಿಸುವಾಗ ಎಲ್ಲಾ ವಿಧಿನಿಯಮಗಳು ಮತ್ತು ಕಾರ್ಯವಿಧಾನ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸೋಮವಾರ (ಫೆಬ್ರವರಿ 2) ಕೇಂದ್ರ ಸರ್ಕಾರ, ನೇಪಾಳ ಮತ್ತು ಬಾಂಗ್ಲಾದೇಶದಂತೆಯೇ ಪ್ರತಿಭಟನೆಗಳಿಗೆ ಜನರನ್ನು ಪ್ರಚೋದಿಸಲು ವಾಂಗ್‌ಚುಕ್ ಪ್ರಯತ್ನಿಸಿದ್ದಾರೆ ಎಂದು ಹೇಳಿತ್ತು. ಅರಬ್ ದೇಶಗಳಲ್ಲಿ ಸರ್ಕಾರಗಳನ್ನು ಉರುಳಿಸಿದ ‘ಅರಬ್ ಸ್ಪ್ರಿಂಗ್’ ಮಾದರಿಯ ಚಳವಳಿಯನ್ನು ವಾಂಗ್‌ಚುಕ್ ಉಲ್ಲೇಖಿಸಿದ್ದಾರೆ ಎಂದೂ ಮೆಹ್ತಾ ತಿಳಿಸಿದರು. ಭಾರತದ ರಕ್ಷಣೆಗೆ ಪೂರ್ವಾಗ್ರಹ ಪೀಡಿತ ರೀತಿಯಲ್ಲಿ ವರ್ತಿಸುವುದನ್ನು ತಡೆಯಲು ವ್ಯಕ್ತಿಗಳನ್ನು ಬಂಧಿಸಲು NSA ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುತ್ತದೆ. ಗರಿಷ್ಠ ಬಂಧನ ಅವಧಿ 12 ತಿಂಗಳುಗಳಾಗಿದ್ದು, ಅಗತ್ಯವಿದ್ದಲ್ಲಿ ಅದನ್ನು ಮೊದಲೇ ರದ್ದುಗೊಳಿಸುವ ಅವಕಾಶವೂ ಇದೆ. ಜ. 29ರಂದು ಜೋಧ್‌ಪುರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದ ವಾಂಗ್‌ಚುಕ್, ‘ಅರಬ್ ಸ್ಪ್ರಿಂಗ್’ ಮಾದರಿಯಲ್ಲಿ ಸರ್ಕಾರವನ್ನು ಉರುಳಿಸಲು ಕರೆ ನೀಡಿದ್ದಾರೆಂಬ ಆರೋಪಗಳನ್ನು ತಳ್ಳಿಹಾಕಿ, ಟೀಕಿಸಲು ಮತ್ತು ಪ್ರತಿಭಟಿಸಲು ಪ್ರಜಾಪ್ರಭುತ್ವದ ಹಕ್ಕು ತಮ್ಮಲ್ಲಿದೆ ಎಂದು ಸ್ಪಷ್ಟಪಡಿಸಿದ್ದರು. ವಾಂಗ್‌ಚುಕ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಬಂಧನ ಪ್ರಾಧಿಕಾರವನ್ನು ದಾರಿ ತಪ್ಪಿಸಲು ಪೊಲೀಸರು “ಎರವಲು ಪಡೆದ ಸಾಮಗ್ರಿ” ಮತ್ತು ಆಯ್ದ ವೀಡಿಯೊಗಳನ್ನು ಅವಲಂಬಿಸಿದ್ದಾರೆ ಎಂದು ವಾದಿಸಿದರು. ಗೀತಾಂಜಲಿ ಜೆ. ಆಂಗ್ಮೋ ಅವರು, ಬಂಧನ ಕಾನೂನುಬಾಹಿರವಾಗಿದ್ದು, ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಅನಿಯಂತ್ರಿತ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಲಡಾಖ್‌ ಗೆ ರಾಜ್ಯ ಸ್ಥಾನಮಾನ ನೀಡುವಂತೆ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ ಎರಡು ದಿನಗಳ ಬಳಿಕ, ಕಳೆದ ವರ್ಷದ ಸೆಪ್ಟೆಂಬರ್ 26ರಂದು ವಾಂಗ್‌ಚುಕ್ ಅವರನ್ನು ಬಂಧಿಸಲಾಗಿತ್ತು. ಸರ್ಕಾರ ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದರು ಎಂದು ಆರೋಪಿಸಿತ್ತು. ಲಡಾಖ್ ಹಾಗೂ ದೇಶದಾದ್ಯಂತ ತಳಮಟ್ಟದ ಶಿಕ್ಷಣ, ನಾವೀನ್ಯತೆ ಮತ್ತು ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆಗಳಿಗಾಗಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಾಂಗ್‌ಚುಕ್ ಅವರನ್ನು ಹಠಾತ್ ಗುರಿಯಾಗಿಸಲಾಗಿದೆ ಎಂಬುದು “ಅಸಂಬದ್ಧ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ 24ರಂದು ಲೇಹ್‌ನಲ್ಲಿ ನಡೆದ ದುರಂತಕರ ಹಿಂಸಾಚಾರ ಘಟನೆಗಳಿಗೆ ವಾಂಗ್‌ಚುಕ್ ಅವರ ಹೇಳಿಕೆಗಳು ಅಥವಾ ಕ್ರಮಗಳು ಯಾವುದೇ ರೀತಿಯಲ್ಲೂ ಕಾರಣವಾಗುವುದಿಲ್ಲ ಎಂದು ಗೀತಾಂಜಲಿ ಜೆ. ಆಂಗ್ಮೋ ತಿಳಿಸಿದ್ದಾರೆ. ವಾಂಗ್‌ಚುಕ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಿಂಸಾಚಾರವನ್ನು ಖಂಡಿಸಿದ್ದು, ಹಿಂಸಾಚಾರವು ಲಡಾಖ್‌ನ “ತಪಸ್ಯೆ” ಹಾಗೂ ಐದು ವರ್ಷಗಳ ಶಾಂತಿಯುತ ಹೋರಾಟದ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು. ಅದನ್ನು ತಮ್ಮ ಜೀವನದ ಅತ್ಯಂತ ದುಃಖದ ದಿನವೆಂದು ಕೂಡ ಅವರು ಅಭಿಪ್ರಾಯಪಟ್ಟಿದ್ದರು.

ವಾರ್ತಾ ಭಾರತಿ 5 Feb 2026 4:55 pm

ಹಿರಿಯ ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್ ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

Ravi D. Channannavar: ರಾಜ್ಯ ಸರ್ಕಾರ ಆಗಾಗ ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡುತ್ತಲಿರುತ್ತದೆ. ಇದೀಗ ಹಿರಿಯ ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಒನ್ ಇ೦ಡಿಯ 5 Feb 2026 4:54 pm

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: 4–5 ದಿನಗಳಲ್ಲಿ ಜಂಟಿ ಹೇಳಿಕೆಗೆ ಸಹಿ ಸಾಧ್ಯತೆ: ಸಚಿವ ಪಿಯೂಷ್ ಗೋಯಲ್

ಹೊಸದಿಲ್ಲಿ: ಭಾರತ–ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ವೇಗ ಪಡೆದಿದ್ದು, ಮುಂದಿನ ನಾಲ್ಕು ರಿಂದ ಐದು ದಿನಗಳೊಳಗೆ ಜಂಟಿ ಹೇಳಿಕೆಯನ್ನು ಅಂತಿಮಗೊಳಿಸಿ ಸಹಿ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಸುಂಕ ಕಡಿತಕ್ಕೆ ಅವಕಾಶ ಕಲ್ಪಿಸುವ ಕಾನೂನುಬದ್ಧ ಒಪ್ಪಂದಕ್ಕೆ ಮಾರ್ಚ್ ಮಧ್ಯಭಾಗದೊಳಗೆ ಸಹಿ ಮಾಡುವ ನಿರೀಕ್ಷೆಯಿದೆ ಎಂದೂ ಅವರು ಹೇಳಿದರು. ವ್ಯಾಪಾರ ಒಪ್ಪಂದದ ವಿವರಗಳ ಕುರಿತು ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಇದು ದೊಡ್ಡ ದ್ವಿಪಕ್ಷೀಯ ಒಪ್ಪಂದದ ‘ಮೊದಲ ಹಂತ’ ಎಂದು ಗೋಯಲ್ ಸ್ಪಷ್ಟಪಡಿಸಿದರು. ಜಂಟಿ ಹೇಳಿಕೆಗೆ ಸಹಿ ಆದ ಬಳಿಕ ಸಮಗ್ರ ಕಾನೂನು ಒಪ್ಪಂದದ ಪ್ರಕ್ರಿಯೆ ಮುಂದುವರಿಯಲಿದೆ ಎಂದರು. ಜಂಟಿ ಹೇಳಿಕೆಯ ನಂತರ ಭಾರತದಿಂದ ಅಮೆರಿಕಕ್ಕೆ ರಫ್ತು ಆಗುವ ಉತ್ಪನ್ನಗಳ ಮೇಲಿನ ಸುಂಕವನ್ನು 18 ಶೇಕಡಾಕ್ಕೆ ಇಳಿಸುವ ಸಂಬಂಧ ಅಮೆರಿಕ ಸರ್ಕಾರ ಕಾರ್ಯಕಾರಿ ಆದೇಶ ಹೊರಡಿಸುವ ಸಾಧ್ಯತೆ ಇದೆ. ಫೆಬ್ರವರಿ 2ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ಬಳಿಕ ‘ಭಾರತದಲ್ಲಿ ತಯಾರಿಸಿದ’ ಉತ್ಪನ್ನಗಳಿಗೆ ಕಡಿಮೆ ಸುಂಕ ಅನ್ವಯವಾಗಲಿದೆ ಎಂದು ಘೋಷಿಸಲಾಗಿತ್ತು. ಪ್ರಸ್ತುತ ಭಾರತೀಯ ಸರಕುಗಳಿಗೆ ರಷ್ಯಾದ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದಂತೆ 25 ಶೇಕಡಾ ಪರಸ್ಪರ ಸುಂಕ ಹಾಗೂ 25 ಶೇಕಡಾ ಹೆಚ್ಚುವರಿ ಸುಂಕ ವಿಧಿಸಲಾಗಿದೆ. ಒಪ್ಪಂದದ ಮೊದಲ ಹಂತದ ಕಾನೂನುಬದ್ಧ ಒಪ್ಪಂದಕ್ಕೆ ಮಾರ್ಚ್ ಮಧ್ಯಭಾಗದಲ್ಲಿ ಸಹಿ ಮಾಡುವ ವಿಶ್ವಾಸವಿದೆ ಎಂದು ಗೋಯಲ್ ಹೇಳಿದರು. ಜಂಟಿ ಹೇಳಿಕೆಯ ಬಳಿಕ ಅದನ್ನು ಕಾನೂನು ಒಪ್ಪಂದವಾಗಿ ಪರಿವರ್ತಿಸಲಾಗುವುದು ಹಾಗೂ ಈ ಒಪ್ಪಂದದಲ್ಲಿ ಯಾವುದೇ ಹೂಡಿಕೆ ಬದ್ಧತೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮಾತನಾಡಿ, ಜಂಟಿ ಹೇಳಿಕೆಗೆ ಸಹಿ ಮಾಡಿದ ಬಳಿಕ ಅದನ್ನು ಕಾನೂನುಬದ್ಧ ಒಪ್ಪಂದವಾಗಿ ರೂಪಿಸಿ, ಮಾರ್ಚ್ ಮಧ್ಯದಲ್ಲಿ ಸಹಿ ಮಾಡುವ ಭರವಸೆಯಿದೆ ಎಂದು ಹೇಳಿದರು.

ವಾರ್ತಾ ಭಾರತಿ 5 Feb 2026 4:52 pm

ಅಫಜಲಪುರ | ವಾರ್ಡ್ ಹೆಸರಿನ ವಿಚಾರಕ್ಕೆ ಕಾಂಗ್ರೆಸ್–ಬಿಜೆಪಿ ಮುಖಂಡರ ಮಧ್ಯೆ ಮಾರಾಮಾರಿ

ತಹಶೀಲ್ದಾರ್ ಸಮ್ಮುಖದಲ್ಲೇ ಗಲಾಟೆ

ವಾರ್ತಾ ಭಾರತಿ 5 Feb 2026 4:45 pm

ಚಿಂಚೋಳಿ | ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ನಾಟಕಕ್ಕಿದೆ : ಸಂತೋಷ್ ಗಡಂತಿ

ಚಿಂಚೋಳಿ: ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ನಾಟಕಗಳಿಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಗಡಂತಿ ಅವರು ತಿಳಿಸಿದರು. ತಾಲೂಕಿನ ತಾಜಲಾಪುರ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ 'ಮಾರುತೇಶ್ವರ ನವ ಯುವಕ ನಾಟ್ಯ ಸಂಘ'ದ ವತಿಯಿಂದ ಆಯೋಜಿಸಲಾಗಿದ್ದ ರೌಡಿ ರಾಜ್ಯದಲ್ಲಿ ಅಬ್ಬರಿಸಿದ ಹೆಬ್ಬುಲಿ (ಅಥವಾ ಜೋಡಿ ಹುಲಿಗಳ ಅಬ್ಬರ) ಎಂಬ ಸಾಮಾಜಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಟಕಗಳು ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳನ್ನು ಎತ್ತಿತೋರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಹಿರಿಯರು ಮತ್ತು ಯುವ ಪೀಳಿಗೆ ನಾಟಕಗಳ ಮೂಲಕ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂದು ಗಡಂತಿ ಹೇಳಿದರು. ಕರ್ನಾಟಕ ರಾಜ್ಯ ನಾಟಕ ಬರಹಗಾರರ ಸಂಘದ ಅಧ್ಯಕ್ಷ ಶಂಕರ ಜಿ.ಹಿಪ್ಪರಗಿ ಮಾತನಾಡಿ, ಚಿಂಚೋಳಿ ತಾಲೂಕು ನಾಟಕ ಕಲಾವಿದರ ನೆಲೆಬೀಡಾಗಿದೆ. ಇಲ್ಲಿನ ಅನೇಕ ಹವ್ಯಾಸಿ ಕಲಾವಿದರು ತಮ್ಮ ನಟನಾ ಕೌಶಲದಿಂದ ಇಂದು ಸಿನಿಮಾ ರಂಗದಲ್ಲೂ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಬಿಎಸ್‌ಪಿ ಮುಖಂಡ ಗೌತಮ ಬೊಮ್ಮನಳ್ಳಿ, ಸತೀಶರೆಡ್ಡಿ ತಾಜಲಾಪುರ, ಶಾಮರಾವ್ ಕೊರವಿ, ಚಂದ್ರಶೇಖರ್ ಗುತ್ತೇದಾರ್, ಜಗನ್ನಾಥ ಕಟ್ಟಿ, ಅಶೋಕ ಚವ್ಹಾಣ್, ರಾಜು ಪವಾರ್, ಗೋಪಾಲ ಜಾಧವ್, ಹೈದರ್ ಅಲಿ ಮಾಸ್ಟರ್ ಹಾಗೂ ಗ್ರಾಮದ ಮುಖಂಡರು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಾರ್ತಾ ಭಾರತಿ 5 Feb 2026 4:29 pm

33 ಗಂಟೆ ಬಂದ್ ಆಗಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮಾರ್ಗ ರೀ ಓಪನ್, ಕಾರಣ ತಿಳಿಯಿರಿ | Mumbai-Pune Expressway

ಟ್ರಾಫಿಕ್ ಜಾಮ್ ಅನ್ನೋದು ಕೇವಲ ಒಂದು ನಗರಕ್ಕೆ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ಇದೇ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಕಾಟ ಹೆಚ್ಚಾಗಿ ಜನ ಹೈರಾಣಾಗಿ ಹೋಗಿದ್ದಾರೆ. ಇಷ್ಟೆಲ್ಲದರ ನಡುವೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಭಯಾನಕ ಟ್ರಾಫಿಕ್ ಕಂಡಿದ್ದು, ಪ್ರಯಾಣಿಕರು ಸತತ 33 ಗಂಟೆಗಳ ಕಾಲ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಸಾವಿರಾರು ವಾಹನಗಳು ಸಾಲುಗಟ್ಟಿ

ಒನ್ ಇ೦ಡಿಯ 5 Feb 2026 4:27 pm

ಚಿತ್ತಾಪುರ | ಕ್ಷಯರೋಗ ಸೋಂಕಿತರನ್ನು ದತ್ತು ಪಡೆದು ಟಿಬಿ ಮುಕ್ತ ಗ್ರಾಮಕ್ಕೆ ಶ್ರಮಿಸಿ : ಡಾ.ವೀರನಾಥ

ಚಿತ್ತಾಪುರ: ಕ್ಷಯರೋಗ ಸೋಂಕಿತರನ್ನು ದತ್ತು ಪಡೆದುಕೊಂಡು ಟಿಬಿ ಮುಕ್ತ ಗ್ರಾಮಕ್ಕೆ ಶ್ರಮಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಡಾ.ವೀರನಾಥ ಹೇಳಿದರು. ಪಟ್ಟಣದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಕೋಶ ಸಂಯುಕ್ತಾಶ್ರಯದಲ್ಲಿ ಪರಿಣಾಮಕಾರಿ ಅನುಷ್ಠಾನ ಸಾಮರ್ಥ್ಯಾಭಿವೃದ್ದಿ ಮತ್ತು ಮೇಲ್ವಿಚಾರಣೆ ಕುರಿತು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಿದರು. ಕ್ಷಯರೋಗ ಹೊಂದಿರುವ ರೋಗಿಗೆ ರೋಗ ನಿಯಂತ್ರಣಕ್ಕಾಗಿ ಸರ್ಕಾರದಿಂದ ಪ್ರತಿ ತಿಂಗಳು 1000 ರೂ. ನೀಡಲಾಗುತ್ತಿದೆ. ಆದರೂ ರೋಗಿಯು ಸರಿಯಾದ ಪೌಷ್ಟಿಕ ಆಹಾರದ ಕ್ರಮ ಅನುಸರಿಸದ ಪರಿಣಾಮ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ ಗ್ರಾಮ ಮಟ್ಟದಲ್ಲೇ ಕ್ಷಯ ರೋಗಿಗಳನ್ನು ದತ್ತು ಪಡೆದುಕೊಂಡು, ಅವರಿಗೆ ಬೇಕಾದ ಪೌಷ್ಟಿಕ ಆಹಾರವನ್ನು ನೀಡಿ, ಟಿಬಿ ಮುಕ್ತ ಗ್ರಾಮ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಟಿಬಿ ಮುಕ್ತ ಗ್ರಾಮ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು. ಆರಂಭದಲ್ಲಿ ಚಿತ್ತಾಪುರ ತಾಲೂಕಿನ ಭೀಮನಳ್ಳಿ, ಸನ್ನತಿ, ದಂಡೋತಿ, ಕಮರವಾಡಿ, ಕಡಬೂರು ಗ್ರಾಮಗಳಲ್ಲಿ ಟಿಬಿ ಮುಕ್ತ ಗ್ರಾಮ ಪಂಚಾಯಿತಿ ಘೋಷಣೆ ಮಾಡಬೇಕಾಗಿದೆ. ಇದರಿಂದ ಸ್ಥಳೀಯ ಗ್ರಾಮ ಪಂಚಾಯತ್‌ ಕ್ಷಯರೋಗ ತಡೆಗಟ್ಟುವ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಹೇಳಿದರು. ಕ್ಷಯ ರೋಗ ಮುಕ್ತ ಗ್ರಾಮದ ಪ್ರಮುಖ ಅಂಶಗಳು : ವಯಸ್ಕರಿಗೆ BCG ಲಸಿಕೆ : 16 ಜಿಲ್ಲೆಗಳಲ್ಲಿ ವಯಸ್ಕರಿಗೆ ಬಿಸಿಜಿ ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ, ಇದು ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ಷಯ ರೋಗದ (TB) ಸಾಮಾನ್ಯ ನಿಯಂತ್ರಕ ಕ್ರಮಗಳಲ್ಲಿ ರೋಗಿಗಳಿಗೆ 6-12 ತಿಂಗಳ ಕಾಲ ನಿರಂತರ ಔಷಧಿ ನೀಡಿಕೆ (DOTS), ಕೆಮ್ಮುವಾಗ ಬಾಯಿ ಮುಚ್ಚಿಕೊಳ್ಳುವುದು, ಉತ್ತಮ ವಾತಾಯನ (Ventilation), ಮತ್ತು ಬಾಲ್ಯದಲ್ಲಿ ಬಿ.ಸಿ.ಜಿ (BCG) ಲಸಿಕೆ ಪಡೆಯುವುದು ಮುಖ್ಯ. ಸೋಂಕಿತರೊಂದಿಗೆ ನಿಕಟ ಸಂಪರ್ಕ ಕಡಿಮೆ ಮಾಡುವುದು, ಪೌಷ್ಟಿಕ ಆಹಾರ, ಮತ್ತು ರೋಗ ಲಕ್ಷಣಗಳಿದ್ದಲ್ಲಿ ಶೀಘ್ರ ಪರೀಕ್ಷೆ ಮಾಡಿಸಿಕೊಳ್ಳುವುದು ರೋಗ ಹರಡುವುದನ್ನು ತಡೆಗಟ್ಟ ಬಹುದಾಗಿದೆ ಎಂದು ಟಿಬಿ ಬಗ್ಗೆ ಪಿಡಿಓ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ಕ್ಷಯ ರೋಗಿಗಳ ಆಹಾರ ಪದ್ದತಿ : ಅಪೌಷ್ಟಿಕತೆಯಿಂದ ಬಳಲುವ ಜನರಲ್ಲಿ ಟಿಬಿ ಸೋಂಕು ಕಾಣಿಸಿಕೊಳ್ಳುತ್ತದೆ. ಸರಿಯಾದ ಪೌಷ್ಟಿಕಾಂಶದ ಕೊರತೆ ಉಂಟಾದಾಗ ಕ್ಷಯ ರೋಗದ ಬ್ಯಾಕ್ಟೀರಿಯಾಗಳು ದೇಹವನ್ನು ಅಧಿಕ ಪ್ರಮಾಣದಲ್ಲಿ ಬಾಧಿಸುತ್ತವೆ. ಹಾಗಾಗಿ ಅಂತಹ ಸಮಯದಲ್ಲಿ ಆರೋಗ್ಯವನ್ನು ಸುಧಾರಿಸುವಂತಹ ಜೀವಸತ್ವ, ಖನಿಜಾಂಶಗಳು ಮತ್ತು ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಕಬ್ಬಿಣಾಂಶ, ವಿಟಮಿನ್ ಬಿ, ಹೆಚ್ಚಿಸುವಂತಹ ಹಸಿರು ತರಕಾರಿ, ಸೊಪ್ಪು, ಸಿರಿಧಾನ್ಯಗಳ ಆಹಾರ, ಕ್ಯಾರೆಟ್, ಚೆರ್ರಿ, ಟೊಮ್ಯಾಟೋ ಹಾಗೂ ವಿಟಮಿನ್ ಸಿ ಭರಿತವಾದ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಎಂದು ತಾಲೂಕು ಕ್ಷಯರೋಗ ಹಿರಿಯ ಮೇಲ್ವಿಚಾರಕ ಉದಯಕುಮಾರ್ ಭಾಗೋಡಿ ಮಾಹಿತಿ ನೀಡಿದರು. ಇ.ಓ ಮುಹಮ್ಮದ್‌ ಅಕ್ರಮ್‌ ಪಾಷಾ, ಮನರೇಗಾ ಸಹಾಯಕ ನಿರ್ದೇಶಕ ಪಂಡಿತ್ ಸಿಂದೆ, ಶ್ರೀಮಂತ ಸಂಗಾವಿ, ಮನರೇಗಾ ಜಿಲ್ಲಾ ತಾಂತ್ರಿಕ ಸಿಬ್ಬಂದಿ ರಾಜು ವಂಟಿ, ಗಣೇಶ, ತಾಲೂಕು ಕ್ಷಯರೋಗ ಹಿರಿಯ ಮೇಲ್ವಿಚಾರಕ ಉದಯಕುಮಾರ್ ಭಾಗೋಡಿ, ಶ್ರೀಕಾಂತ್ ಇದ್ದರು.

ವಾರ್ತಾ ಭಾರತಿ 5 Feb 2026 4:26 pm

ಬಿಹಾರ ಚುನಾವಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಪ್ರಶಾಂತ್‌ ಕಿಶೋರ್‌ ನೇತೃತ್ವದ ಜನ ಸುರಾಜ್ ಪಕ್ಷ; ಚುನಾವಣೆ ನಡೆಸುವಂತೆ ಮನವಿ

ಹೊಸದಿಲ್ಲಿ: ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷವು 2025ರ ಬಿಹಾರ ವಿಧಾನಸಭೆ ಚುನಾವಣೆಯನ್ನು ಪ್ರಶ್ನಿಸಿ ರಾಜ್ಯದಲ್ಲಿ ಮರುಚುನಾವಣೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈ ಅರ್ಜಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಂಡಿದೆ. ಇಂಡಿಯಾ ಮೈತ್ರಿಕೂಟವು ಕೇವಲ 35 ಸ್ಥಾನಗಳಿಗೆ ಸೀಮಿತವಾಗಿದ್ದು, ಕಾಂಗ್ರೆಸ್‌ಗೆ ಆರು ಸ್ಥಾನಗಳು ಲಭಿಸಿವೆ. ಜನ ಸುರಾಜ್ ಪಕ್ಷವು ಖಾತೆ ತೆರೆಯಲು ವಿಫಲವಾಗಿದ್ದು, ಅದರ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಬಳಿಕ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ ಮಹಿಳೆಯರಿಗೆ ತಲಾ 10,000 ರೂ. ನೇರ ಹಣ ವರ್ಗಾವಣೆ ಮಾಡುವ ಮೂಲಕ ಬಿಹಾರ ಸರ್ಕಾರವು ಮಾದರಿ ಸಂಹಿತೆ ಉಲ್ಲಂಘಿಸಿದೆ ಎಂದು ಪಕ್ಷವು ಅರ್ಜಿಯಲ್ಲಿ ಆರೋಪಿಸಿದೆ. ಮಹಿಳಾ ಮತದಾರರಿಗೆ ನೇರ ಹಣ ವರ್ಗಾವಣೆಯ ವಿರುದ್ಧ ಸಂವಿಧಾನದ ವಿಧಿ 324 ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸಣ್ಣ ಉದ್ಯಮ ಆರಂಭಿಸಲು, ಸ್ವಯಂ ಉದ್ಯೋಗ ಹಾಗೂ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ತಲಾ 10,000 ರೂ. ಆರಂಭಿಕ ಆರ್ಥಿಕ ನೆರವು ನೀಡಲಾಗುತ್ತಿದೆ.

ವಾರ್ತಾ ಭಾರತಿ 5 Feb 2026 4:24 pm

ಹನಿಮೂನ್ ಮರ್ಡರ್ 2.0 | ಹಿಟ್‌ ಆಂಡ್‌ ರನ್‌ ಎಂದು ಬಿಂಬಿಸಿ ಪತಿ ಹತ್ಯೆ; ಪತ್ನಿಯೇ ರೂಪಿಸಿದ್ದ ಸಂಚು ಬಯಲು

ಶ್ರೀ ಗಂಗಾನಗರ(ರಾಜಸ್ಥಾನ): ನವವಿವಾಹಿತ ದಂಪತಿಗಳು ಸಂಜೆ ನಡಿಗೆಗೆ ತೆರಳಿದ್ದ ವೇಳೆ ಸಂಭವಿಸಿದ ಹಿಟ್–ಅಂಡ್–ರನ್ ಪ್ರಕರಣವು ಪೊಲೀಸ್ ತನಿಖೆಯಲ್ಲಿ ಸಂಚು ಎಂದು ಬಯಲಾಗಿದ್ದು, ಪತ್ನಿಯೇ ತನ್ನ ಪತಿಯನ್ನು ಕೊಲೆಗೈದು ಅದನ್ನು ರಸ್ತೆ ಅಪಘಾತವಾಗಿ ತೋರಿಸಲು ಯತ್ನಿಸಿದ್ದಾಳೆ ಎಂಬ ಆರೋಪ ಬೆಳಕಿಗೆ ಬಂದಿದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ನಡೆದ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ ಆಶಿಶ್ ಮತ್ತು ಅಂಜು ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಮೊದಲಿಗೆ ಪೊಲೀಸರಿಗೆ ದೊರಕಿತ್ತು. ಘಟನೆಯಲ್ಲಿ ಆಶಿಶ್ ಸ್ಥಳದಲ್ಲೇ ಮೃತಪಟ್ಟರೆ, ಅಂಜು ತನ್ನ ಚಿನ್ನಾಭರಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಳು. ಆಕೆ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆದರೆ ಪ್ರಕರಣವು ನಂತರ ತಿರುವು ಪಡೆದು, ಮೇಘಾಲಯದಲ್ಲಿ ನಡೆದ ಹನಿಮೂನ್ ಕೊಲೆ ಪ್ರಕರಣದಂತೆಯೇ ಸಂಚು ರೂಪಿಸಿರುವುದು ಬಹಿರಂಗವಾಗಿದೆ. ಶ್ರೀ ಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಅವರು ನೀಡಿದ ವಿವರದ ಪ್ರಕಾರ, ಜನವರಿ 30ರಂದು ರಾತ್ರಿ ಸುಮಾರು 9 ಗಂಟೆ ವೇಳೆಗೆ ದಂಪತಿಗಳು ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು. ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಗಿದ್ದು, ವೈದ್ಯರು ಆಶಿಶ್ ಮೃತಪಟ್ಟಿರುವುದಾಗಿ ಘೋಷಿಸಿದರು. “ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಬಂದಿತ್ತು. ಸ್ಥಳ ಪರಿಶೀಲನೆ ನಡೆಸಿ ತಾಂತ್ರಿಕ ದೃಷ್ಟಿಕೋನದಿಂದ ತನಿಖೆ ಮುಂದುವರಿಸಲು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (FSL) ತಂಡವನ್ನೂ ಕರೆಸಿದ್ದೇವೆ,” ಎಂದು ದುಹಾನ್ ತಿಳಿಸಿದ್ದಾರೆ. 23 ವರ್ಷದ ಅಂಜು, ತಾನು ಮತ್ತು ತನ್ನ ಪತಿ ಸಂಜೆ ನಡಿಗೆಗೆ ತೆರಳಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ತಾನು ಧರಿಸಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆದರೆ ತನಿಖೆಯ ವೇಳೆ ಆಕೆಯ ಹೇಳಿಕೆ ಮತ್ತು ವಾಸ್ತವಾಂಶಗಳ ನಡುವೆ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರಲ್ಲಿ ಅನುಮಾನ ಮೂಡಿತು. ವೈದ್ಯಕೀಯ ವರದಿ ಪ್ರಕಾರ ಆಶಿಶ್ ಅವರ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಕತ್ತು ಹಿಸುಕಿದ ಲಕ್ಷಣಗಳೂ ಪತ್ತೆಯಾಗಿವೆ. ಇನ್ನೊಂದೆಡೆ ಅಂಜು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿರುವುದು ಸಂಶಯ ಹೆಚ್ಚಿಸಿತು. ಫೋನ್ ದಾಖಲೆಗಳ ಪರಿಶೀಲನೆಯ ವೇಳೆ ಅಂಜು ಮನೆಯ ಹತ್ತಿರ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದದ್ದು ದೃಢಪಟ್ಟಿದೆ. ಮಾಜಿ ಗೆಳೆಯನೊಂದಿಗೆ ಮರುಸಂಪರ್ಕ ಅಂಜು ಮತ್ತು ಆಶಿಶ್ ಮೂರೇ ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಅಂಜು ಅತೃಪ್ತರಾಗಿದ್ದು, ಶೀಘ್ರದಲ್ಲೇ ತಮ್ಮ ಊರಿಗೆ ಮರಳಿದಳು ಎಂದು ವರದಿಯಾಗಿದೆ. ಅಲ್ಲಿ ಮಾಜಿ ಗೆಳೆಯ ಸಂಜು ಜೊತೆ ಮರು ಸಂಪರ್ಕ ಬೆಳೆಸಿ ಆಶಿಶ್ ಹತ್ಯೆಗೆ ಇಬ್ಬರೂ ಸಂಚು ರೂಪಿಸಿದ್ದರೆಂಬ ಆರೋಪ ಕೇಳಿಬಂದಿದೆ. “ಊಟದ ಬಳಿಕ ಅಂಜು ಆಶಿಶ್ ಅವರನ್ನು ನಡೆಯಲು ಕರೆದೊಯ್ದಿದ್ದಳು,” ಎಂದು ದುಹಾನ್ ತಿಳಿಸಿದ್ದಾರೆ. ಜನವರಿ 30ರ ರಾತ್ರಿ ಅಂಜು ಆಶಿಶ್ ಅವರನ್ನು ಒಂಟಿ ರಸ್ತೆಗೆ ಕರೆದೊಯ್ದು, ಅಲ್ಲಿ ಸಂಜು ಹಾಗೂ ಅವನ ಸಹಚರರಾದ ರೋಹಿತ್ ಅಲಿಯಾಸ್ ರಾಕಿ ಮತ್ತು ಬಾದಲ್ ಅಲಿಯಾಸ್ ಸಿದ್ಧಾರ್ಥ್ ಪೊದೆಗಳಲ್ಲಿ ಅಡಗಿ ಕುಳಿತಿದ್ದರು ಎಂದು ಆರೋಪಿಸಲಾಗಿದೆ. “ಅವರು ಆಶಿಶ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದು, ಬಳಿಕ ಅದನ್ನು ರಸ್ತೆ ಅಪಘಾತದಂತೆ ತೋರಿಸಲು ಪ್ರಯತ್ನಿಸಿದರು,” ಎಂದು ದುಹಾನ್ ವಿವರಿಸಿದ್ದಾರೆ. ಸಂಚಿನ ಭಾಗವಾಗಿ ಅಂಜು ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗಳಿಗೆ ನೀಡಿ ದರೋಡೆ ನಡೆದಂತೆ ನಾಟಕವಾಡಿದಳು. ದಾಳಿಯ ಬಳಿಕ ತಾನೇ ಪ್ರಜ್ಞಾಹೀನಳಂತೆ ನಟಿಸಿದ್ದರೂ, ಆಶಿಶ್ ದೇಹದ ಮೇಲಿನ ಗಾಯಗಳೇ ಸಂಚು ಬಯಲಾಗಲು ಕಾರಣವಾಯಿತು. ಅಂಜು ತನ್ನ ಹೇಳಿಕೆಯನ್ನು ಪದೇಪದೇ ಬದಲಾಯಿಸುತ್ತಿದ್ದುದರಿಂದ ಮತ್ತು ಘಟನೆಗಳ ಕ್ರಮದಲ್ಲಿ ವ್ಯತ್ಯಾಸ ತೋರಿದ್ದರಿಂದ ಅನುಮಾನ ಗಟ್ಟಿಯಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮೇಘಾಲಯದ ಹನಿಮೂನ್ ಕೊಲೆ ಪ್ರಕರಣದ ಹೋಲಿಕೆ ಈ ಘಟನೆ ಮೇಘಾಲಯದಲ್ಲಿ ನಡೆದ ಹನಿಮೂನ್ ಕೊಲೆ ಪ್ರಕರಣದ ನೆನಪನ್ನು ಮೂಡಿಸಿದೆ. ರಾಜಾ ರಘುವಂಶಿ ಮತ್ತು ಅವರ ನವವಿವಾಹಿತ ಪತ್ನಿ ಸೋನಮ್ ಮದುವೆಯ ಬಳಿಕ ಮೇ ತಿಂಗಳಲ್ಲಿ ಹನಿಮೂನ್ ನಿಮಿತ್ತ ಮೇಘಾಲಯಕ್ಕೆ ತೆರಳಿದ್ದರು. ಹನ್ನೆರಡು ದಿನಗಳ ಬಳಿಕ ರಾಜಾ ಮೃತದೇಹ ಅರಣ್ಯದಲ್ಲಿ ಪತ್ತೆಯಾಯಿತು. ತನಿಖೆಯಲ್ಲಿ ಸೋನಮ್ ತನ್ನ ಪ್ರೇಮಿ ಹಾಗೂ ಕುಟುಂಬದ ವ್ಯವಹಾರದಲ್ಲಿ ಮಾಜಿ ಕಾರ್ಮಿಕನಾಗಿದ್ದ ರಾಜ್ ಕುಶ್ವಾಹ ಜೊತೆಗೂಡಿ ರಾಜಾನನ್ನು ಕೊಂದು ಅದನ್ನು ಅಪಘಾತವೆಂದು ಬಿಂಬಿಸಲು ಸಂಚು ರೂಪಿಸಿದ್ದಾಳೆ ಎಂಬುದು ಬಹಿರಂಗವಾಯಿತು. ಹನಿಮೂನ್ ವೇಳೆ ಬಾಡಿಗೆ ಹಂತಕರಿಂದ ರಾಜಾ ಮೇಲೆ ಮಚ್ಚಿನಿಂದ ದಾಳಿ ನಡೆಸಿ, ಬಳಿಕ ಮೃತದೇಹವನ್ನು ಕಮರಿಗೆ ಎಸೆಯಲಾಗಿತ್ತು ಹಾಗೂ ಫೋನ್ ಸ್ವಿಚ್ ಆಫ್ ಮಾಡಲಾಗಿತ್ತು. ಕೊಲೆ ನಡೆದ ಕೆಲ ದಿನಗಳ ಬಳಿಕ ಸೋನಮ್ ಉತ್ತರ ಪ್ರದೇಶದ ಗಾಜಿಪುರದ ಧಾಬಾದಲ್ಲಿ ಕಾಣಿಸಿಕೊಂಡಾಗ ವಶಕ್ಕೆ ಪಡೆಯಲಾಯಿತು. ಕುಶ್ವಾಹ ಹಾಗೂ ಇತರ ಮೂವರು ಬಾಡಿಗೆ ಹಂತಕರನ್ನೂ ನಂತರ ಬಂಧಿಸಲಾಯಿತು.

ವಾರ್ತಾ ಭಾರತಿ 5 Feb 2026 4:23 pm

WPL 2026 Final: ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌ ಫೈನಲ್‌ ಪಂದ್ಯದ ಸಮಯ, ಸ್ಥಳ, ನೇರಪ್ರಸಾರ, ಪ್ಲೇಯಿಂಗ್‌ 11 ವಿವರ

WPL 2026 Final: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2026 ಫೈನಲ್‌ ಪಂದ್ಯ ಇಂದು (ಫೆಬ್ರವರಿ 5) ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯದಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜೆಮಿಮಾ ರೋಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಹಾಗಾದ್ರೆ, ಸಮಯ, ಸ್ಥಳ, ನೇರಪ್ರಸಾರ ಹಾಗೂ ಪ್ಲೇಯಿಂಗ್‌ 11

ಒನ್ ಇ೦ಡಿಯ 5 Feb 2026 4:14 pm

Gaza | ಇಸ್ರೇಲ್ ವೈಮಾನಿಕ ದಾಳಿಯಲ್ಲಿ 18 ಮಂದಿ ಮೃತ್ಯು

ಗಾಝಾ, ಫೆ.4: ಗಾಝಾದಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 6 ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿರುವುದಾಗಿ ಫೆಲೆಸ್ತೀನಿಯನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಮಧ್ಯೆ, ರಫಾ ಗಡಿದಾಟು ಮೂಲಕ ರೋಗಿಗಳ ಸ್ಥಳಾಂತರ ಪ್ರಕ್ರಿಯೆಯನ್ನು ಇಸ್ರೇಲ್ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ. ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರ ಹಾಗೂ ಗಾಝಾ ನಗರದ ಉತ್ತರ ಭಾಗದಲ್ಲಿ ಇಸ್ರೇಲ್ ಪಡೆಗಳು ವೈಮಾನಿಕ ಮತ್ತು ಗುಂಡಿನ ದಾಳಿ ನಡೆಸಿವೆ. ಮೃತರಲ್ಲಿ 5 ತಿಂಗಳ ಮಗು ಸೇರಿದಂತೆ 6 ಮಕ್ಕಳು ಸೇರಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಝಾದಲ್ಲಿ ಇಸ್ರೇಲಿ ಸೈನಿಕರ ಮೇಲೆ ಬಂದೂಕುಧಾರಿ ಗುಂಡು ಹಾರಿಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ಪಡೆ ಪ್ರತಿದಾಳಿ ನಡೆಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಬುಧವಾರ ರಫಾ ಗಡಿದಾಟು ಮೂಲಕ ನಿರ್ಗಮಿಸಲು ರೋಗಿಗಳು ಖಾನ್ ಯೂನಿಸ್‌ ನ ಆಸ್ಪತ್ರೆಯಲ್ಲಿ ಸಿದ್ಧವಾಗಿದ್ದರೂ ಸ್ಥಳಾಂತರ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ರೆಡ್ ಕ್ರೆಸೆಂಟ್ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 5 Feb 2026 4:13 pm

ಚಾಮರಾಜನಗರ | ಮತ್ತೆ ನಾಲ್ಕು ಹಸುಗಳ ದಿಢೀರ್ ಸಾವು : ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಮಾಮರದೊಡ್ಡಿ ಸಮೀಪದ ಗುಣ್ಣೂರು ಗ್ರಾಮದಲ್ಲಿ ಗುರುವಾರ ಮತ್ತೆ ನಾಲ್ಕು ಹಸುಗಳು ದಿಢೀರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಣ್ಣೂರು ಗ್ರಾಮದ ಬಳಿಯ ಜಮೀನು ಬಯಲಲ್ಲಿ ತಂಗವೇಲು ಅವರಿಗೆ ಸೇರಿದ ನಾಲ್ಕು ಹಸುಗಳು ಮೃತಪಟ್ಟಿರುವುದು ಪತ್ತೆಯಾಗಿದೆ. ಮಂಗಳವಾರ ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಆರು ಹಸುಗಳು ದಿಢೀರ್ ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೇ ಇದೀಗ ಗುಣ್ಣೂರು ಗ್ರಾಮದಲ್ಲಿ ನಾಲ್ಕು ಹಸುಗಳ ಸಾವು ಸಂಭವಿಸಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹಾಗೂ ಅನುಮಾನಗಳು ಮೂಡಿವೆ. ಜಾನುವಾರುಗಳ ಸರಣಿ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. 

ವಾರ್ತಾ ಭಾರತಿ 5 Feb 2026 4:08 pm

Delhi | ಸೈಬರ್ ವಂಚನೆ ಪ್ರಕರಣಗಳಲ್ಲಿ 55 ಮಂದಿಯ ಬಂಧನ

ಹೊಸದಿಲ್ಲಿ, ಫೆ.4: ದಿಲ್ಲಿ ಪೊಲೀಸರು ಕಳೆದ ಒಂದು ತಿಂಗಳಿನಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಹಲವಾರು ಅಂತರ್‌ರಾಜ್ಯ ಸೈಬರ್ ವಂಚನೆ ಜಾಲಗಳನ್ನು ಭೇದಿಸಿದ್ದು, 55 ಮಂದಿಯನ್ನು ಬಂಧಿಸಿದ್ದಾರೆ ಹಾಗೂ 4.84 ಕೋಟಿ ಮೌಲ್ಯದ ಅಪಹೃತ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 1.55 ಕೋಟಿ ರೂ. ಹಣವನ್ನು ಮುಟ್ಟುಗೋಲು ಹಾಕಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಅವಧಿಯಲ್ಲಿ ಸುಮಾರು 39 ಲಕ್ಷ ರೂ.ವನ್ನು ನ್ಯಾಯಾಲಯದ ಆದೇಶದ ಮೂಲಕ ಡಿಜಿಟಲ್ ಬಂಧನ ಸೇರಿದಂತೆ ವಿವಿಧ ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಬಾಧಿತರಾದವರಿಗೆ ಹಿಂತಿರುಗಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ (ಪಶ್ಚಿಮ) ದಾರಡೆ ಶರದ್ ಭಾಸ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಹಾಗೂ ದಿಲ್ಲಿಯಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, 55 ಮಂದಿಯನ್ನು ಬಂಧಿಸಲಾಗಿದೆ. ಜನವರಿ ತಿಂಗಳಲ್ಲಿ ಪೊಲೀಸರು 20 ಸೈಬರ್ ಪ್ರಕರಣಗಳನ್ನು ಭೇದಿಸಿದ್ದು, ಈ ಪೈಕಿ 13 ಪ್ರಕರಣಗಳನ್ನು ವಿಚಾರಣೆಯ ನಂತರ ವಿಲೇವಾರಿ ಮಾಡಲಾಗಿದೆ. ದಿಲ್ಲಿಯ ಜನಕಪುರಿ ಪ್ರದೇಶದಲ್ಲಿ ಕೇಂದ್ರ ಸರಕಾರದ ನಿವೃತ್ತ ಉದ್ಯೋಗಿಯೊಬ್ಬರನ್ನು ಸೈಬರ್ ವಂಚಕರು ಡಿಜಿಟಲ್ ಬಂಧನಕ್ಕೆ ಒಳಪಡಿಸಿ ಅವರಿಂದ 15 ಲಕ್ಷ ರೂ.ಲಪಟಾಯಿಸಿದ ಘಟನೆ ಬೆಳಕಿಗೆ ಬಂದ ಬಳಿಕ ಸೈಬರ್ ವಂಚಕರ ಜಾಲದ ವಿರುದ್ಧ ಸಮಗ್ರ ತನಿಖೆ ಆರಂಭಿಸಲಾಯಿತು ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 5 Feb 2026 4:07 pm

CEC ಜ್ಞಾನೇಶ್ ಕುಮಾರ್ ವಿರುದ್ಧ ವಿಪಕ್ಷಗಳಿಂದ ವಾಗ್ದಂಡನೆ ನಿರ್ಣಯ?

ಹೊಸದಿಲ್ಲಿ, ಫೆ.4: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದುರ್ನಡತೆಯಿಂದ ವರ್ತಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ಗೊತ್ತುವಳಿ ಮಂಡಿಸುವ ಬಗ್ಗೆ ಪ್ರತಿಪಕ್ಷಗಳು ಜಂಟಿ ಸಮಾಲೋಚನೆ ನಡೆಸಲಿವೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಬುಧವಾರ ತಿಳಿಸಿದ್ದಾರೆ. ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸುವಂತೆ ಮಮತಾ ಬ್ಯಾನರ್ಜಿ ಸೋಮವಾರ ವಿಪಕ್ಷಗಳಿಗೆ ಕರೆ ನೀಡಿದ್ದರು. ಆದಾಗ್ಯೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಈ ವಿಷಯವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮತದಾರ ಪಟ್ಟಿಯ ತ್ವರಿತ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿವಾದಕ್ಕೆ ಸಂಬಂಧಿಸಿ ಮಂಗಳವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಇತರ ಚುನಾವಣಾಧಿಕಾರಿಗಳ ಜೊತೆ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಮಮತಾ ಅವರು ಅರ್ಧದಲ್ಲೇ ಸಭೆಯಿಂದ ಹೊರನಡೆದಿದ್ದರು. ಸಭೆಯಲ್ಲಿ ಮುಖ್ಯ ಚುನಾವಣಾಧಿಕಾರಿ ತನ್ನೊಂದಿಗೆ ಉದ್ದಟತನದಿಂದ ವರ್ತಿಸಿದ್ದರು ಹಾಗೂ ತನ್ನನ್ನು ಅವಮಾನಿಸಿದ್ದರೆಂದು ಮಮತಾ ಆಪಾದಿಸಿದ್ದರು. ಎಸ್‌ಐಆರ್ ಪ್ರಕ್ರಿಯೆಯಿಂದ ಬಾಧಿತರಾದ ಪಶ್ಚಿಮ ಬಂಗಾಳದ ಕೆಲವು ನಾಗರಿಕರ ಜೊತೆ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಮತದಾರಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರಲ್ಲಿ ಹೆಚ್ಚಿನವರು ಟಿಎಂಸಿ ಬೆಂಬಲಿಗರೇ ಎಂದು ಹೇಳಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಅವರ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡನೆಯಾದರೂ, ಅವರ ದುರ್ನಡತೆ ಅಥವಾ ಅಸಮರ್ಥತೆ ಸಾಬೀತಾದಲ್ಲಿ ಮಾತ್ರ ಅವರನ್ನು ವಜಾಗೊಳಿಸಬಹುದಾಗಿದೆ. ವಾಗ್ದಂಡನೆ ನಿರ್ಣಯದ ಬಳಿಕ ಅವರನ್ನು ವಜಾಗೊಳಿಸಲು ನಿರ್ಣಯವನ್ನು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮಂಡಿಸಬಹುದಾಗಿದೆ. ಮತದಾನದ ವೇಳೆ ಉಪಸ್ಥಿತರಿರುವ ಸಂಸದರ ಪೈಕಿ ಮೂರನೇ ಎರಡರಷ್ಟು ಮಂದಿ ನಿರ್ಣಯದ ಪರವಾಗಿ ಮತ ಚಲಾಯಿಸಿರಬೇಕಾಗುತ್ತದೆ.

ವಾರ್ತಾ ಭಾರತಿ 5 Feb 2026 4:05 pm

ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್

ವಾರ್ತಾ ಭಾರತಿ 5 Feb 2026 4:04 pm

ರಾಯಚೂರು ಜಿಲ್ಲಾ ಉತ್ಸವದ ಆಹಾರ ಮೇಳ : ಮೊದಲ ದಿನವೇ ತಿಂಡಿ–ತಿನಿಸುಗಳಿಗೆ ಜನರ ದಂಡು

ರಾಯಚೂರು :ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶಾಲವಾಗಿ ಆಯೋಜಿಸಲಾದ ಆಹಾರ ಮೇಳಕ್ಕೆ ಉತ್ಸವದ ಮೊದಲ ದಿನವೇ ಜನರಿಂದ ಭರ್ಜರಿ ಸ್ಪಂದನೆ ದೊರೆತಿತು. ಬೆಳಿಗ್ಗೆಯಿಂದಲೇ ವಿವಿಧ ಬಗೆಯ ತಿಂಡಿ–ತಿನಿಸುಗಳನ್ನು ಸವಿಯಲು ಜನರು ಮಳಿಗೆಗಳತ್ತ ಮುಗಿಬಿದ್ದ ದೃಶ್ಯ ಕಂಡುಬಂದಿತು. ಆಹಾರ ಮೇಳವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರು ವಿವಿಧ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ತಾಜಾ ಜಿಲೇಬಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಮಳಿಗೆಯಲ್ಲಿ ವಿಶೇಷವಾಗಿ ತಯಾರಿಸಲಾದ ಕೇಕ್‌ನ್ನು ಕತ್ತರಿಸಿ ಆಹಾರ ಮೇಳದ ಸಂಭ್ರಮಕ್ಕೆ ಚಾಲನೆ ನೀಡಿದರು. ಅವರೊಂದಿಗೆ ಆಗಮಿಸಿದ್ದ ಗಣ್ಯರು ಕೂಡ ತಿಂಡಿ–ತಿನಿಸುಗಳ ರುಚಿಯನ್ನು ಆಸ್ವಾದಿಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಪಾಮಯ್ಯ ಮುರಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ್ ಕಾಂದು, ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಕೃಷಿ ವಿವಿ ಕುಲಪತಿ ಡಾ. ಎಂ. ಹನುಮಂತಪ್ಪ, ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಆಹಾರ ಮೇಳದಲ್ಲಿ ಚಿಕ್ಕಮಗಳೂರು, ಗದಗ, ಮೈಸೂರು, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಸ್ಥರು ತಮ್ಮದೇ ಆದ ವಿಶೇಷ ತಿಂಡಿ–ಖಾದ್ಯಗಳನ್ನು ಜನರಿಗೆ ಪರಿಚಯಿಸಿದರು. ಫಾಸ್ಟ್ ಫುಡ್‌ಗಳಿಂದ ಹಿಡಿದು, ಹಣ್ಣುಗಳ ಜ್ಯೂಸ್‌, ಮಂಡಾಳು ಒಗ್ಗರಣೆ, ಮಿರ್ಚಿ ಬಜ್ಜಿ, ಬದನೆಕಾಯಿ ಬಜ್ಜಿ, ಪಾಪ್ ಕಾರ್ನ್‌, ಗೋಬಿ ಮಂಚೂರಿ, ನೂಡಲ್ಸ್‌, ಆಂಧ್ರಾ ಸ್ವೀಟ್ಸ್‌, ನಾನಾ ಬಗೆಯ ಹಪ್ಪಳ–ಸಂಡಿಗೆಗಳವರೆಗೆ ನಾಡಿನ ನಾನಾ ಭಾಗಗಳ ತಿನಿಸುಗಳು ಒಂದೇ ಸೂರಿನಡಿ ಲಭ್ಯವಿದ್ದವು. ಉತ್ಸವದ ಮೊದಲ ದಿನವೇ ಆಹಾರ ಮೇಳಕ್ಕೆ ಸಾಗರೋಪಾದಿಯಲ್ಲಿ ಜನರು ಆಗಮಿಸಿದ್ದು, ರಾಯಚೂರು ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆ ಹಾಗೂ ತಾಲ್ಲೂಕುಗಳಿಂದಲೂ ಜನರು ಉತ್ಸವವನ್ನು ಕಣ್ಣಾರೆ ನೋಡಲು ಬಂದಿದ್ದರು. ಹಲವು ಶಾಲೆಗಳ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಮೇಳಕ್ಕೆ ಭೇಟಿ ನೀಡಿ ತಿಂಡಿ–ತಿನಿಸುಗಳನ್ನು ಸವಿದು ಸಂಭ್ರಮಿಸಿದರು. ಆಹಾರ ಮೇಳದ ಮೊದಲ ದಿನವೇ ಮಳಿಗೆಗಳಲ್ಲಿ ಉತ್ತಮ ವ್ಯಾಪಾರವಾಗಿದ್ದು, ಫೆ.7ರವರೆಗೆ ನಡೆಯುವ ಉತ್ಸವದಲ್ಲಿ ಇನ್ನಷ್ಟು ವ್ಯಾಪಾರ ಮತ್ತು ಲಾಭ ದೊರೆಯುವ ನಿರೀಕ್ಷೆಯಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ವಾರ್ತಾ ಭಾರತಿ 5 Feb 2026 4:01 pm