ಜ.26ರಂದು ಕೋಟದಲ್ಲಿ ಮಿಗ್-21ರ ಬಳಿ ಯೋಧರೊಂದಿಗೆ ಹೆಜ್ಜೆ: ಸಂಸದ ಕೋಟ
ಉಡುಪಿ, ಜ.22: ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ಆವರಣದಲ್ಲಿ ನಿಲ್ಲಿಸಲಾದ ಮಿಗ್-21 ಯುದ್ಧ ವಿಮಾನದ ಬಳಿ ಯೋಧರ ಸಮಾಗಮ ನಡೆಯಲಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 09:30ಕ್ಕೆ ಕೋಟ ಅಮೃತೇಶ್ವರಿ ದೇವಸ್ಥಾನದ ಆವರಣ ದಿಂದ 200ಕ್ಕೂ ಅಧಿಕ ಸಂಖ್ಯೆಯ ಯೋಧರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಕಾಲ್ನಡಿಗೆಯಲ್ಲಿ ಮಿಗ್-21 ಯುದ್ಧವಿಮಾನದ ಆವರಣ ತಲುಪಲಿ ದ್ದಾರೆ. ಯೋಧರೊಂದಿಗೆ ಹೆಜ್ಜೆ ಹಾಕಲು ಯುವಕರು, ಸಂಘ ಸಂಸ್ಥೆ ಗಳ ಮುಖ್ಯಸ್ಥರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಆಗಮಿಸಬೇಕೆಂದು ಸಂಸದ ಕೋಟ ಮನವಿ ಮಾಡಿದ್ದಾರೆ. ಸುಮಾರು 63 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯುದ್ಧ ವಿಮಾನವಾಗಿ ಕರ್ತವ್ಯ ನಿರ್ವಸಿದ ಮಿಗ್-21, ಕಾರ್ಗಿಲ್ ಯುದ್ಧದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದು, ಕೇಂದ್ರ ಸರಕಾರದ ರಕ್ಷಣಾ ಇಲಾಖೆಯು, ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತ ಥೀಂ ಪಾರ್ಕಿಗೆ ಮಿಗ್-21ನ್ನು ಕೊಡುಗೆಯಾಗಿ ನೀಡಿದೆ. ಗಣರಾಜ್ಯೋತ್ಸವದ ದಿನ ಮಿಗ್-21ರ ಬಳಿ ಧ್ಯಜಾರೋಹಣಾ ನಡೆಯಲಿದ್ದು, ಈ ಸಂಭ್ರಮದಲ್ಲಿ ಎಲ್ಲರೂ ಭಾಗವಹಿ ಸುವಂತೆ ಸಂಸದ ಕೋಟ ಕೋರಿದ್ದಾರೆ. ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಕಾರಂತ ಹುಟ್ಟೂರ ಪ್ರತಿಷ್ಠಾನ ಕೋಟ ಇವರ ಸಹಯೋಗದಲ್ಲಿ ಯೋಧರೊಂದಿಗೆ ಹೆಜ್ಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯೋಧರ ಕಾಲ್ನಡಿಗೆಯಲ್ಲಿ ನಿವೃತ್ತ ಮೇಜರ್ ಜನರಲ್ ಎಂ.ಭಟ್, ನಿವೃತ್ತ ಏರ್ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮತ್ತು ನಿವೃತ್ತ ಕಮೊಡರ್ ಅತುಲ್ ಕುಮಾರ್ ರಸ್ತೋಗಿ ಮತ್ತು ಹಿರಿಯ ಸೇನಾನಿಗಳು ಭಾಗವಹಿಸಲಿ ದ್ದಾರೆ ಎಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜ.25: ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ
ಮಂಗಳೂರು, ಜ.22: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಜ.25ರಂದು ಬೆಳಗ್ಗೆ 9ಕ್ಕೆ ನಗರದ ಕದ್ರಿಯ ಕೆ.ಪಿ.ಟಿ.ಮೈದಾನದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಬಿಗ್ಬಾಸ್-12ರ ವಿಜೇತ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
ಬೆಂಗಳೂರು: ಕಿರುತೆರೆಯ ರಿಯಾಲಿಟಿ ಶೋ ‘ಬಿಗ್ಬಾಸ್ ಕನ್ನಡ’ 12ನೇ ಆವೃತ್ತಿಯ ವಿಜೇತರಾಗಿರುವ ಗಿಲ್ಲಿ ನಟ ಯಾನೆ ನಟರಾಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಶುಭ ಹಾರೈಸಿದರು. ಗುರುವಾರ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ನಡೆದ ಈ ಭೇಟಿಯ ವೇಳೆ ಮುಖ್ಯಮಂತ್ರಿಗಳು ಗಿಲ್ಲಿನಟ ಅವರಿಗೆ ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು. ಬಿಗ್ಬಾಸ್ ಮನೆಯಲ್ಲಿ ಸತತ 112 ದಿನಗಳ ಕಾಲ ತಮ್ಮ ಸಹಜ ನಡವಳಿಕೆ, ಹಳ್ಳಿಯ ಸೊಗಡಿನ ಮಾತುಗಾರಿಕೆ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದ ಜನರ ಮನಗೆದ್ದ ಮಂಡ್ಯ ಜಿಲ್ಲೆಯ ಮಳವಳ್ಳಿಯ ದಡದಪುರ ಗ್ರಾಮದ ಗಿಲ್ಲಿನಟ, ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಗಿಲ್ಲಿನಟ ತಮಗೆ ಸಿಕ್ಕ ಜನಬೆಂಬಲ ಮತ್ತು ಪ್ರೀತಿಯ ಬಗ್ಗೆ ಹಂಚಿಕೊಂಡರು. ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉಪಸ್ಥಿತರಿದ್ದರು. ‘ಹಳ್ಳಿಯಿಂದ ಬಂದು ತನ್ನ ಪ್ರತಿಭೆ ಮತ್ತು ಸಹಜತೆಯಿಂದ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಗಳಿಸಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಕನ್ನಡ ಕಲೆ ಮತ್ತು ಸಂಸ್ಕೃತಿಗೆ ಹೆಸರು ತನ್ನಿ’ -ಸಿದ್ದರಾಮಯ್ಯ, ಮುಖ್ಯಮಂತ್ರಿ ‘ಜನಸಾಮಾನ್ಯರ ಪರವಾಗಿ ಸದಾ ನಿಲ್ಲುವ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ನನ್ನ ಜೀವನದ ಸ್ಮರಣೀಯ ಕ್ಷಣ. ಬಿಗ್ಬಾಸ್ ಗೆಲುವು ಕೇವಲ ನನಗಷ್ಟೇ ಅಲ್ಲ, ನನ್ನಂತೆ ಹಳ್ಳಿಯಿಂದ ಕನಸು ಹೊತ್ತು ಬಂದ ಪ್ರತಿಯೊಬ್ಬರಿಗೂ ಸಂದ ಗೆಲುವು’ -ಗಿಲ್ಲಿ ನಟ, ಬಿಗ್ಬಾಸ್-12ರ ವಿಜೇತ. 12ನೇ ಆವೃತ್ತಿಯ ಬಿಗ್ ಬಾಸ್ ವಿಜೇತ ಗಿಲ್ಲಿ ನಟರಾಜ್ ಅವರನ್ನು ಅಭಿನಂದಿಸಿ, ಮುಂದಿನ ಜೀವನ ಇನ್ನಷ್ಟು ಯಶಸ್ಸು, ಸಂತಸದಿಂದ ಕೂಡಿರಲಿ ಎಂದು ಶುಭ ಹಾರೈಸಿದೆ. pic.twitter.com/EiZAzqe6HH — Siddaramaiah (@siddaramaiah) January 22, 2026
ಬ್ಯಾರಿ ಅಕಾಡಮಿಯಿಂದ ಬ್ಯಾರಿ ಸಾಹಿತ್ಯ ಕಮ್ಮಟ
ದೇರಳಕಟ್ಟೆ, ಜ.22: ಆಧುನಿಕ ಶಿಕ್ಷಣ ಮತ್ತು ವಿವಿಧ ಆಕರ್ಷಣೆಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಕುಸಿತ ಉಂಟಾಗುತ್ತಿದೆ. ಯುವಜನರಲ್ಲಿ ಮಾನಸಿಕ ಒತ್ತಡಗಳು ಜಾಸ್ತಿಯಾಗುತ್ತಿವೆ ಹಾಗೂ ಮಾನವ ಸಂಬಂಧಗಳು ಶಿಥಿಲಗೊಳ್ಳುತ್ತಿವೆ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ದೇರಳಕಟ್ಟೆಯ ಕಣಚೂರು ಅಕಾಡಮಿ ಆಫ್ ಜನರಲ್ ಎಜುಕೇಶನ್ನ ಸಹಯೋಗದೊಂದಿಗೆ ಕಣಚೂರು ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಬ್ಯಾರಿ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭವ್ಯ ಪರಂಪರೆಯಿರುವ ಬ್ಯಾರಿ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ವಿದ್ಯಾರ್ಥಿ ಯುವಜನರು ಕೈಜೋಡಿಸಬೇಕು. ಬ್ಯಾರಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ಯುವಜನರು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಉಮರ್ ಯು. ಎಚ್. ಮನವಿ ಮಾಡಿದರು. ಅತಿಥಿಗಳಾಗಿ ಕಣಚೂರು ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ., ಕಣಚೂರು ಅಕಾಡಮಿ ಆಫ್ ಜನರಲ್ ಎಜುಕೇಶನ್ನ ಟ್ರಸ್ಟಿ ಉಮಯ್ಯ ಬಾನು, ಬ್ಯಾರಿ ಅಕಾಡಮಿಯ ಸದಸ್ಯ ಹಮೀದ್ ಹಸನ್ ಮಾಡೂರು ಭಾಗವಹಿಸಿದ್ದರು. ಲೇಖಕಿ ಶಮೀಮಾ ಕುತ್ತಾರ್ ಸಂಪನ್ಮೂಲ ವ್ಯಕ್ತಿಯಾಗಿ ಕಮ್ಮಟ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಮರಿಯಂ ನಿಯಾಫಾ ಸ್ವಾಗತಿಸಿದರು. ಆಯಿಶತ್ ನಾದಿಯಾ ವಂದಿಸಿದರು. ಹಿಸ್ನಾ ನಿಯಾಫ್ ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಕಾಮೆಂಟ್: ಪ್ರಕರಣ ದಾಖಲು
ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ ಆರೋಪದ ಮೇರೆಗೆ ಸೇಡಂ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಸೇಡಂ ಪಟ್ಟಣದ ನಿವಾಸಿ ಸಿದ್ದು ಪಾಟೀಲ್ ಕಾಮಣಿ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಫೇಸ್ಬುಕ್ನಲ್ಲಿ, “ನೀವು ನಿಮ್ಮ ಧ್ವನಿ ಎತ್ತಿದ್ದಕ್ಕಾಗಿ ಜೈಲು ಪಾಲಾಗುವ ಮತ್ತು ಅತ್ಯಾಚಾರಿಯು ಜಾಮೀನು ಪಡೆಯುವ ವಿಕಸಿತ ಭಾರತಕ್ಕೆ ಸ್ವಾಗತ” ಎಂಬ ಅರ್ಥದ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅನ್ನು ಸಂತೋಷ್ ಕುಮಾರ್ ರಂಜೋಳ ಎಂಬವರು ಶೇರ್ ಮಾಡಿದ್ದರು. ಅದೇ ಪೋಸ್ಟ್ಗೆ ಸಿದ್ದು ಪಾಟೀಲ್ ಕಾಮಣಿ ಅವಹೇಳನಕಾರಿ ಹಾಗೂ ನಿಂದನಾತ್ಮಕ ಕಾಮೆಂಟ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಡಾ.ಅಂಬೇಡ್ಕರ್ ಸೇವಾ ಸಮಿತಿಯ ಕರ್ನಾಟಕದ ಸೇಡಂ ತಾಲೂಕು ಅಧ್ಯಕ್ಷ ಈಶ್ವರಾಜ್ ರಂಗವಾರ ಅವರು ನೀಡಿರುವ ದೂರಿನ ಮೇರೆಗೆ ಸೇಡಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಸಿಸಿ ಸೂಚನೆಗೂ ಕ್ಯಾರೇ ಎನ್ನದ ಬಾಂಗ್ಲಾದೇಶ ಈಗ`ಹಿಟ್ ವಿಕೆಟ್'! ಟಿ20 ವಿಶ್ವಕಪ್ ಟೂರ್ನಿಗೇ ಬಾಯ್ಕಾಟ್!
ICC Vs BCB- ಕೊನೆಗೂ ತನ್ನ ಹಠಕ್ಕೆ ಬಿದ್ದಿರುವ ಬಾಂಗ್ಲಾದೇಶ ಇದೀಗ ಐಸಿಸಿಯ ಮಾತಿಗೂ ಕ್ಯಾರೇ ಅನ್ನದೆ ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸಿದೆ. ವಿಶ್ವಕಪ್ ಆಡುತ್ತೇವೆ, ಆದರೆ ಭಾರತದಲ್ಲಿ ಮಾತ್ರ ಅಲ್ಲ ಎಂಬ ತನ್ನ ನಿಲುವಿಗೆ ಬದ್ಧವಾಗಿರುವ ಅವರು ಐಸಿಸಿಯ ಸೂಚನೆಯನ್ನು ಧಿಕ್ಕರಿಸಿದೆ. ಐಸಿಸಿಯು ಬಾಂಗ್ಲಾಕ್ಕೆ ವಿಶ್ವಕಪ್ ಭಾಗವಹಿಸುವಿಕೆಯ ಬಗ್ಗ ಖಚಿತಪಡಿಸಲು 24 ಗಂಟೆಗಳ ಗಡುವು ನೀಡಿತ್ತು. ಆದರೆ ಯಾವುದಕ್ಕೂ ಬಾಂಗ್ಲಾದೇಶ ಸರ್ಕಾರ ಬಿಲ್ ಕುಲ್ ಭಾರತಕ್ಕೆ ತಂಡವನ್ನು ಕಳಿಸಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ
ಸಿವಿಲ್ ಇಂಜಿನಿಯರ್ಗೆ 6.35 ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ: ಅಪರಿಚಿತರು ಸಿವಿಲ್ ಇಂಜಿನಿಯರೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಂಬಳ್ಳಿಯ ಸಿವಿಲ್ ಇಂಜಿನಿಯರ್ ಚೇತನ್ ಕುಮಾರ್ (39) ಎಂಬವರ ಎರಡು ಬ್ಯಾಂಕ್ ಖಾತೆಗಳಿಂದ ಜ.20 ರಂದು ರಾತ್ರಿ ಹಂತ ಹಂತವಾಗಿ ಒಟ್ಟು 6,35,900ರೂ. ಹಣವು ಅವರಿಗೆ ತಿಳಿಯದೇ ಬೇರೆ ಖಾತೆಗೆ ವರ್ಗಾವಣೆ ಯಾಗಿರುವುದಾಗಿ ದೂರಲಾಗಿದೆ. ಚೇತನ್ ಕುಮಾರ್ ಮೊಬೈಲ್ಗೆ ಬ್ಯಾಂಕ್ನಿಂದ ಬಂದ ಸಂದೇಶದಿಂದ ಈ ವಂಚನೆ ತಿಳಿದು ಬಂತೆನ್ನಲಾಗಿದೆ.
ಧಾರವಾಡ | ಯುವತಿಯ ಮೃತದೇಹ ಪತ್ತೆ ಪ್ರಕರಣ: ಮದುವೆಯಾಗಬೇಕಿದ್ದ ಯುವಕನಿಂದಲೇ ಕೊಲೆ
ಆರೋಪಿಯ ಬಂಧನ
ಕಾರ್ಕಳ, ಜ.22: ನಲ್ಲೂರು ಗ್ರಾಮದ ಬಂಗರೋಡಿ ಎಂಬಲ್ಲಿ ಜ.21ರಂದು ಸಂಜೆ ವೇಳೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಶಿರ್ವ ಪಂಜಿಮಾರು ನಿವಾಸಿ ರವಿ(46), ಸ್ಟೀಫನ್(37), ಸೊರ್ಕಳ ನಿವಾಸಿ ಸತೀಶ್(45), ಕಟೀಲು ತಳವಾರುವಿನ ಅಡಿಗಪ್ಪ(31), ಉದ್ಯಾವರ ಸಂಪಿಗೆನಗರದ ಅಪ್ಪು(53), ಸಂದೀಪ್(42) ಬಂಧಿತ ಆರೋಪಿಗಳು. ಇವರಿಂದ 4 ಹುಂಜ ಕೋಳಿಗಳು, 3000ರೂ. ನಗದು, 2 ಬಾಳು ಕತ್ತಿ, ಒಂದು ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ.
ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಮಲ್ಪೆ, ಜ.22: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ರೇಣುಕಾ ಹರಿಶ್ಚಂದ್ರ (40) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜ.21ರಂದು ಸಂಜೆ ಮನೆಯ ಬೆಡ್ರೂಮ್ನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು: ವಿಪರೀತ ಕುಡಿತದ ಚಟ ಹೊಂದಿದ್ದ ಪೊಲಿಪು ಜೂನಿಯರ್ ಕಾಲೇಜು ಹತ್ತಿರದ ಬಾಡಿಗೆ ಮನೆ ನಿವಾಸಿ ನಿತೇಶ್ ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಜ.21ರಂದು ರಾತ್ರಿ ವೇಳೆ ಮನೆಯ ಹಾಲ್ನಲ್ಲಿನ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವೋಸ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಯುದ್ಧ ನಿಲ್ಲಿಸುವ ಬಗ್ಗೆ ಮಹತ್ವದ ಮಾತುಕತೆ ನಡೆಸಿದರು. ಈ ಸಭೆ ಸುಮಾರು ಒಂದು ಗಂಟೆ ಕಾಲ ನಡೆಯಿತು. ಇದೇ ವೇಳೆ, ಡೆನ್ಮಾರ್ಕ್ ಮತ್ತು ಕೆಲವು ಯುರೋಪಿಯನ್ ದೇಶಗಳ ಮೇಲೆ ಟ್ರಂಪ್ ಹೇರಿದ್ದ ಸುಂಕಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಗ್ರೀನ್ಲ್ಯಾಂಡ್ ಮೇಲಿನ ನಿಯಂತ್ರಣದ ಉದ್ದೇಶದಿಂದ ಈ ಸುಂಕಗಳನ್ನು ವಿಧಿಸಲಾಗಿತ್ತು. ಈ ನಿರ್ಧಾರವು ಡೆನ್ಮಾರ್ಕ್ಗೆ ನೆಮ್ಮದಿ ತಂದಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ವೇಲ್ಸ್ನಲ್ಲಿ ಶೂಟೌಟ್: ಮೂವರು ಮೃತ್ಯು; ಓರ್ವನ ಸ್ಥಿತಿ ಗಂಭೀರ
ಸಿಡ್ನಿ, ಜ.22: ಆಸ್ಟ್ರೇಲಿಯಾದ ನ್ಯೂ ಸೌತ್ವೇಲ್ಸ್ನಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಯುವತಿ ಸೇರಿದಂತೆ ಮೂವರು ಮೃತಪಟ್ಟಿದ್ದು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಳೆದ ವರ್ಷ ಡಿಸೆಂಬರ್ 14ರಂದು ಬಾಂಡಿ ಬೀಚ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರ ಗೌರವಾರ್ಥ ರಾಷ್ಟ್ರೀಯ ಶೋಕಾಚರಣೆಯ ದಿನದಂದೇ ಈ ದಾಳಿ ಸಂಭವಿಸಿದೆ. ನ್ಯೂ ಸೌತ್ವೇಲ್ಸ್ನ ಸೆಂಟ್ರಲ್ ವೆಸ್ಟ್ ಪ್ರದೇಶದ ಲೇಕ್ ಕಾರ್ಗೆಲಿಗೊ ನಗರದಲ್ಲಿ ಕಾರಿನಲ್ಲಿದ್ದ ಯುವತಿ ಹಾಗೂ ವ್ಯಕ್ತಿಯೊಬ್ಬನನ್ನು ಬಂದೂಕುಧಾರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಯುವತಿ ಆತನ ಮಾಜಿ ಸ್ನೇಹಿತೆಯಾಗಿದ್ದಳು ಎಂದು ವರದಿಯಾಗಿದೆ. ಬಳಿಕ ಇತರ ಇಬ್ಬರ ಮೇಲೆಯೂ ಗುಂಡು ಹಾರಿಸಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಹಂತಕನ ಬಗ್ಗೆ ಸುಳಿವು ದೊರಕಿದ್ದು ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು: ಪ್ರಕರಣ ದಾಖಲು
ಅಮಾಸೆಬೈಲು, ಜ.22: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಜ.21ರಂದು ಸಂಜೆ ವೇಳೆ ಮಚ್ಚಟ್ಟು ಗ್ರಾಮದ ಆಯಿಮುಳ್ಳು ಎಂಬಲ್ಲಿ ನಡೆದಿದೆ. ಗುಲಾಬಿ ಬೋವಿ ಎಂಬವರ ಮನೆಯ ಹಿಂಬದಿ ಮರದ ಬಾಗಿಲಿನ ಮರದ ಹಲಗೆಯನ್ನು ಮುರಿದು ಒಳನುಗ್ಗಿದ ಕಳ್ಳರು, ಬೆಡ್ರೂಮ್ನಲ್ಲಿರುವ ಕಪಾಟನ್ನು ಆಯುಧದಿಂದ ಮೀಟಿ ಜಖಂಗೊಳಿಸಿದ್ದಾರೆ. ಬಳಿಕ ಅದರಲ್ಲಿದ್ದ 4 ಪಾವನ್ ತೂಕದ ಚಿನ್ನದ ಕರಿಮಣಿ ಸರ, 1 ಪವನ್ ತೂಕದ ಚಿನ್ನದ ಚೈನ್, ಒಂದೂವರೆ ಪವನ್ ತೂಕದ 2 ಚಿನ್ನದ ಬಳೆಗಳು, 5 ಚಿನ್ನದ ಉಂಗುರ, 2 ಚಿನ್ನದ ಗುಂಡು, 2 ಚಿನ್ನದ ಜುಮ್ಕಿ ಸೇರಿದಂತೆ ಒಟ್ಟು ಸುಮಾರು 80 ಗ್ರಾಂ ತೂಕ ಚಿನ್ನಾಭರಣಗಳು ಮತ್ತು ಕಪಾಟಿನಲ್ಲಿದ್ದ 90,000ರೂ. ಹಣ ಕಳವು ಮಾಡಿದ್ದಾರೆ ಎಂದು ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 5.15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯಪಾಲರ ನಡೆ ಜನಪ್ರತಿನಿಧಿ ಸಭೆಗೆ ಎಸಗಿದ ಅವಮಾನ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ‘ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿರುವುದಲ್ಲದೆ, ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಎಸಗಿದ ಅವಮಾನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಗುರುವಾರ ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ಭಾಷಣ ಮೊಟಕುಗೊಳಿಸಿದ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿವರ್ಷದ ಆರಂಭದಲ್ಲಿ ನಡೆಯುವ ಹಾಗೂ ಹೊಸ ಸರಕಾರ ಸ್ಥಾಪನೆಗೊಂಡ ಸಂದರ್ಭದಲ್ಲಿ ನಡೆಸಲಾಗುವ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದು ಸಂವಿಧಾನದ ರೀತ್ಯಾ ರಾಜ್ಯಪಾಲರ ಕರ್ತವ್ಯ ಎಂದು ಹೇಳಿದರು. ಅದರಲ್ಲೂ, ಸಂವಿಧಾನ ಕಲಂ176 ಮತ್ತು 163 ರಂತೆ ಸರಕಾರದ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ಓದಲೇಬೇಕೆಂಬ ನಿಯಮವಿದೆ. ಇದು ಸಂವಿಧಾನ ಸ್ಥಾಪನೆಯಾದಾಗಿನಿಂದ ನಡೆದುಕೊಂಡಿರುವ ಪದ್ಧತಿ. ಆದರೆ, ರಾಜ್ಯಪಾಲರು ತಾವೇ ಸಿದ್ಧಪಡಿಸಿದ ಭಾಷಣವನ್ನು ಓದುವ ಮೂಲಕ ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ರಾಜ್ಯಪಾಲರ ಈ ನಡೆ, ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಸಂವಿಧಾನಬದ್ಧವಾದ ವಿಚಾರದ ಉಲ್ಲಂಘನೆಯಾಗಿದೆ ಎಂದರು. ಇಂತಹ ಸಂವಿಧಾನ ವಿರೋಧಿ ನಡೆ ಖಂಡಿಸಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಪ್ರತಿಭಟನೆ ಮಾಡಲಿದ್ದು, ಇಡೀ ರಾಜ್ಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರಕಾರ ತಾವು ಮಾಡಿದ ತಪ್ಪನ್ನು ಮರೆಮಾಚಲು ರಾಜ್ಯಪಾಲರ ಕೈಯಲ್ಲಿ ಬೇರೆ ಭಾಷಣವನ್ನು ಓದಿಸಿದ್ದಾರೆ. ಇದು ಸಂವಿಧಾನ ಬಾಹಿರ ಕೃತ್ಯ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಆಪಾದಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ರದ್ದುಪಡಿಸಿ, ‘ವಿಬಿ-ಜಿ ರಾಮ್ ಜಿ’ ಎಂಬ ಕಾಯ್ದೆಯನ್ನು ಕೇಂದ್ರ ಸರಕಾರ ಹೊಸದಾಗಿ ರಚಿಸಿದೆ. ಇದಕ್ಕೆ ನಮ್ಮ ಸರಕಾರದ ತೀವ್ರ ವಿರೋಧವಿದೆ ಎಂದ ಅವರು, ಮೊದಲು ಕಾಯ್ದೆಯಿಂದ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆಯಲಾಗಿದೆ. 2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಸಂವಿಧಾನ ನಿರ್ದೇಶನಗಳಂತೆ, ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗದ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಈ ಕಾಯ್ದೆಯಿಂದ ದಲಿತರು, ಕಾರ್ಮಿಕರು ಮತ್ತು ಮಹಿಳೆಯರು ಮತ್ತು ಸಣ್ಣ ರೈತರಿಗೆ ಅನುಕೂಲವಾಗುತ್ತಿದೆ ಎಂದು ಉಲ್ಲೇಖಿಸಿದರು. ಕೇಂದ್ರ ಸರಕಾರದ ಹೊಸ ಕಾಯ್ದೆಯಲ್ಲಿ ವಿಶೇಷವಾಗಿ ಶೇ.53 ಮಹಿಳೆಯರು, ಶೇ.28 ದಲಿತರಿದ್ದು, ಇವರಿಗೆ ಉದ್ಯೋಗದ ಖಾತ್ರಿ ಇಲ್ಲ. ಅವರು ಅಪೇಕ್ಷಿಸಿದ ಸ್ಥಳದಲ್ಲಿ, ಸಣ್ಣ ರೈತರು ಅವರ ಜಮೀನುಗಳಲ್ಲಿಯೇ ಕೆಲಸ ಮಾಡುವ ಅವಕಾಶವನ್ನು ಮುಂಚಿನ ಕಾಯ್ದೆ ಕಲ್ಪಿಸಿತ್ತು. ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಈ ನಿರ್ಣಯವನ್ನು ಕೇಂದ್ರ ಸರಕಾರ ಕೈಗೊಳ್ಳುತ್ತದೆ. ಕೇಂದ್ರ ಸರಕಾರ ನಿರ್ಧರಿಸುವ ಕಡೆಗಳಲ್ಲಿ ಬಡ ಕಾರ್ಮಿಕರು ಕೆಲಸ ಮಾಡಬೇಕಾಗಿದೆ. ಹಿಂದಿನ ಕಾಯ್ದೆಯಲ್ಲಿ ವರ್ಷದ 365 ದಿನಗಲ್ಲಿ ಯಾವಾಗಾಲಾದರೂ ಕೆಲಸ ಕೊಡಬಹುದಾಗಿದ್ದು, ಅದು ಸರಕಾರದ ಕರ್ತವ್ಯವಾಗಿತ್ತು. ಅಲ್ಲದೇ, ಈ ಬಗ್ಗೆ ಕ್ರಿಯಾಯೋಜನೆ ರಚಿಸುವ ಹಕ್ಕು ಆಯಾ ಗ್ರಾಮಸಭೇ ಮತ್ತು ಪಂಚಾಯಿತಿಗಳಿಗೆ ಅವಕಾಶವಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಈ ಅವಕಾಶವನ್ನು ರದ್ದು ಪಡಿಸಲಾಗಿದೆ ಎಂದು ವಿವರಿಸಿದರು. ಇನ್ನೊಂದೆಡೆ, ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ವಿರೋಧ ಪಕ್ಷದ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯವಿಲ್ಲ ಹಾಗೂ ಕೇಂದ್ರದ ಕಾಯ್ದೆಯಗಳನ್ನು ಸಹಕರಿಸಲೇಬೇಕೆಂಬ ನೀತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿ ನಮಗೆ ಅದರ ಬಗ್ಗೆ ವಿರೋಧವಿದ್ದು, ಈ ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿದೆ ಎಂದು ಸಿದ್ದರಾಮಯ್ಯ ನುಡಿದರು. ಹೊಸ ಕಾಯ್ದೆ ರದ್ದುಗೊಳ್ಳಲೇಬೇಕು: ‘ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದೇ ನಮ್ಮ ಉದ್ದೇಶ. ನಮ್ಮ ಪಕ್ಷ ಮತ್ತು ಸರಕಾರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮನರೇಗಾ ಮರುಸ್ಥಾಪನೆ ಮಾಡುವವರೆಗೆ ನಿರಂತರವಾಗಿ ನಮ್ಮ ಹೋರಾಟ ನಡೆಯಲಿದೆ. ಈ ಹಿಂದೆ ರೈತರ ವಿರೋಧಿ ಕಾಯ್ದೆಯನ್ನು ಕೇಂದ್ರ ಸರಕಾರ ವಾಪಸ್ಸು ತೆಗೆದುಕೊಂಡಂತೆ, ಈ ಹೊಸ ಕಾಯ್ದೆಯನ್ನು ವಾಪಸ್ಸು ತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ನಡೆಯಲಿದೆ’ ಎಂದು ಸಿದ್ದರಾಮಯ್ಯ ಹೇಳಿದರು. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು: ‘ಕೇಂದ್ರ ಸರಕಾರ ರಾಜ್ಯಪಾಲರನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಅಧಿವೇಶನದಲ್ಲಿ ಕೇವಲ 5 ನಿಮಿಷ ಓದಿ ಹೋಗಿದ್ದಾರೆ. ಕೇಂದ್ರ ಸರಕಾರ ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ರಾಜ್ಯಪಾಲರು ಕಾನೂನು ಚೌಕಟ್ಟಿನಲ್ಲಿ ಅವರ ಕೆಲಸ ಮಾಡಬೇಕು ಎನ್ನುವುದನ್ನು ಮರೆಯಬಾರದು’ -ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ ಸದನದ ಪಾವಿತ್ರ್ಯತೆ ಹಾಳು: ‘ಈ ರಾಜ್ಯ ಸರಕಾರವು ಸದನದ ಪಾವಿತ್ರ್ಯತೆಯನ್ನು ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿರುವುದು ದುರ್ದೈವ. ಸದನವು ಈ ನಾಡಿನ ಏಳಿಗೆಗೆ, ನಾಡಿನ ಅಭಿವೃದ್ಧಿಗೆ ಸಂಬಂಧಿಸಿ ಚರ್ಚೆ ಆಗಲು ವೇದಿಕೆ ಆಗಬೇಕೇ ಹೊರತು ಇವರ ರಾಜಕೀಯ ದ್ವೇಷಕ್ಕಾಗಿ ರಾಜ್ಯವನ್ನು ಕೇಂದ್ರ ಸರಕಾರದ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರ-ಕುತಂತ್ರಕ್ಕೆ ಸದನವನ್ನು ಬಳಸುವುದನ್ನು ಬಿಜೆಪಿ ವಿರೋಧಿಸುತ್ತದೆ’ -ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ‘ಕಾಂಗ್ರೆಸ್ಸಿನ ಗೂಂಡಾಗಿರಿ ಕೇವಲ ರಸ್ತೆಗಳಿಗೆ ಸೀಮಿತವಾಗಿತ್ತು. ಈಗ ಅದು ಸದನ ಪ್ರವೇಶವನ್ನೂ ಮಾಡಿದೆ. ರಾಜ್ಯಪಾಲರು ಭಾಷಣ ಓದುವ ಸಂದರ್ಭದಲ್ಲಿ ಕೆಲವು ಸದಸ್ಯರು ಅವರ ಮೇಲೆ ಬಿದ್ದು ಅವರನ್ನು ಥಳಿಸುವ ಹಂತಕ್ಕೂ ಬಂದಿದ್ದುದು, ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ’ -ಛಲವಾದಿ ನಾರಾಯಣಸ್ವಾಮಿ, ವಿಪಕ್ಷ, ವಿಧಾನ ಪರಿಷತ್ತು ‘ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್ ನಡೆಸಿದೆ. ರಾಜ್ಯಪಾಲರಿಗೆ ಯಾರೆಲ್ಲ ಅಗೌರವ ತೋರಿಸಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು. ಒಟ್ಟಿನಲ್ಲಿ ಕಾಂಗ್ರೆಸ್ ಗೂಂಡಾ ಪ್ರವೃತ್ತಿಯನ್ನ ಮುಂದುವರೆಸಿದೆ. ಕಾಂಗ್ರೆಸ್ನ ಸದಸ್ಯರಿಗೆ ನಾಚಿಕೆಯಾಗಬೇಕು. ರಾಜ್ಯಪಾಲರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸುತ್ತೆ’ -ಆರ್.ಅಶೋಕ್, ವಿಪಕ್ಷ ನಾಯಕ, ವಿಧಾನಸಭೆ
ಉಡುಪಿ, ಜ.22: ನಗರದ ವಿಎಸ್ಟಿ ರಸ್ತೆಯಲ್ಲಿರುವ ಯೂನಿಟಿ ಕಾಂಪ್ಲೆಕ್ಸ್ನ ಮಾಲಕ ಝಾಕೀರ್ ಹುಸೇನ್(66) ಇಂದು ಮುಂಜಾನೆ ನಿಧನರಾದರು. ನಿಷ್ಕಳಂಕ ಮನಸ್ಸಿನ, ಮೃದು ಸ್ವಭಾವದ ಇವರು, ಎಲ್ಲರಿಗೂ ಆತ್ಮೀಯರಾಗಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಛತ್ತೀಸ್ಗಢ| ಉಕ್ಕಿನ ಸ್ಥಾವರದಲ್ಲಿ ಸ್ಫೋಟ: 6 ಕಾರ್ಮಿಕರು ಮೃತ್ಯು, ಐವರಿಗೆ ಗಾಯ
ರಾಯಪುರ, ಜ. 22: ಛತ್ತೀಸ್ಗಢದ ಬಲೋದ್ಬಝಾರ್-ಬಾಟಾಪಾರ ಜಿಲ್ಲೆಯಲ್ಲಿರುವ ಉಕ್ಕಿನ ಸ್ಥಾವರದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಿಂದ ಕನಿಷ್ಠ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 5 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಟಾಪಾರ ಗ್ರಾಮೀಣ ಪ್ರದೇಶದ ಬಕುಲಾಹಿ ಗ್ರಾಮದಲ್ಲಿರುವ ರಿಯಲ್ ಇಸ್ಪ್ಯಾಟ್ ಆ್ಯಂಡ್ ಪವರ್ ಲಿಮಿಟೆಡ್ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ದೀಪಕ್ ಸೋನಿ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸ್ಥಾವರದ ಡಿಎಸ್ಸಿ (ದೂಳು ಸಂಗ್ರವಾಗುವ ಕೋಣೆ)ಯಲ್ಲಿ ಸ್ಫೋಟ ಸಂಭವಿಸಿತು. ಬಿಸಿ ದೂಳು ಕಾರ್ಮಿಕರ ಮೇಲೆ ಬಿದ್ದಿತು. ಇದರಿಂದ ಹಲವರಿಗೆ ಸುಟ್ಟ ಗಾಯಗಳಾದವು. 6 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರು, 5 ಮಂದಿ ಕಾರ್ಮಿಕರು ಗಂಭೀರ ಗಾಯಗೊಂಡರು ಎಂದು ತಿಳಿಸಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಹಿರಿಯ ಆಡಳಿತಾಧಿಕಾರಿಗಳು ಸ್ಥಳಕ್ಕೆ ದಾವಿಸಿದರು. ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು. ಗಾಯಗೊಂಡ 5 ಮಂದಿ ಕಾರ್ಮಿಕರನ್ನು ಬಿಲಾಸ್ಪುರದ ಛತ್ತೀಸ್ಗಢ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಸಿಐಎಂಎಸ್)ನಲ್ಲಿ ದಾಖಲಿಸಲಾಗಿದೆ ದೀಪಕ್ ಸೋನಿ ತಿಳಿಸಿದ್ದಾರೆ.
ಜ.15ರಿಂದ ರಾ.ಪಿಂಚಣಿ ಯೋಜನೆಗಳಡಿ ಅಸಂಘಟಿತ ಕಾರ್ಮಿಕರ ನೋಂದಣಿಗೆ ವಿಶೇಷ ಅಭಿಯಾನ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಜ.22: ಕೇಂದ್ರ ಸರಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆಯಲ್ಲಿ ಜಿಲ್ಲೆಯ ಸಣ್ಣ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಗಳಡಿ ನೋಂದಾಯಿಸಲು ಜನವರಿ 15ರಿಂದ ಮಾರ್ಚ್ 15ರವರೆಗೆ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ. ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ ಹಾಗೂ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಗಳಡಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರನ್ನು, ವ್ಯಾಪಾರಿಗಳನ್ನು ಹಾಗೂ ಸ್ವಯಂ ಉದ್ಯೋಗಿಗಳು ಅವರ ವಯಸ್ಸಿಗನುಗುಣವಾಗಿ ಮಾಸಿಕ 55 ರೂ.ಗಳಿಂದ 200 ರೂ.ವರೆಗೆ ವಂತಿಕೆ ಪಾವತಿಸಿದ್ದಲ್ಲಿ 60 ವರ್ಷದ ನಂತರ ತಿಂಗಳಿಗೆ 3000 ರೂ. ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ ಎಂದು ಜಿಲ್ಲಾದಿಕಾರಿ ವಿವರಿಸಿದರು. ಆದಾಯ ತೆರಿಗೆ ಪಾವತಿದಾರರು, ಇ.ಎಸ್.ಐ, ಇ.ಪಿ.ಎಫ್, ಎನ್.ಪಿ.ಎಸ್ ಯೋಜನೆಯ ಫಲಾನುಭವಿಗಳಿಗೆ ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಅವಕಾಶರುವುದಿಲ್ಲ ಎಂದೂ ಸ್ವರೂಪ ಟಿ.ಕೆ. ತಿಳಿಸಿದರು. ಅಸಂಘಟಿತ ವಲಯದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರಕಾರ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಹಾಗೂ ಎನ್ಪಿಎಸ್ ಟ್ರೇಡರ್ಸ್ ಎಂಬ ಮಹತ್ವಾಕಾಂಕ್ಷಿ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದೆಯ ಎಲ್ಲಾ ವರ್ಗಗಳ ಅಸಂಘಟಿತ ಕಾರ್ಮಿಕರು ಈ ಯೋಜನೆಗಳಡಿ ನೋಂದಾಯಿಸಿಕೊಳ್ಳಲು ಅವಕಾಶಗಳಿವೆ ಎಂದೂ ಅವರು ಹೇಳಿದರು. 18ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್, ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗುವುದರೊಂದಿಗೆ ಯೋಜನೆಯ ಪ್ರಯೋಜನ ಪಡೆಯಬಹುದು ಎಂದೂ ಅವರು ವಿವರಿಸಿದರು. ಹೆಚ್ಚು ಅಸಂಘಟಿತ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ, ಕಾರ್ಮಿಕರು ಸೇರಿವಂತಹ ವಿವಿಧ ಸಮಾರಂಭಗಳಲ್ಲಿ ಶಿಬಿರಗಳನ್ನು ಆಯೋಜಿಸಿ, ಯೋಜನೆಯ ಕುರಿತು ಅರಿವು ಮೂಡಿಸುವುದರೊಂದಿಗೆ ವಿಶೇಷ ನೋಂದಣಿ ಅಭಿಯಾನದಡಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ನೋಂದಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯಡಿ ಜಿಲ್ಲೆಯಲ್ಲಿ 7275 ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವಗುರಿಯನ್ನು ನಿಗದಿ ಪಡಿಸಲಾಗಿದೆ. ನರೇಗಾ ಕಾರ್ಮಿಕರು, ಎಸ್ಹೆಚ್ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮನೆ ಕೆಲಸದವರು, ಕೃಷಿ ಕಾರ್ಮಿಕರು, ಮೀನುಗಾರರು ಸೇರಿದಂತೆ ವಿವಿಧ ಅಸಂಘಟಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವುದರೊಂದಿಗೆ ಇದರ ಸದುಪಯೋಗ ಪಡೆಬಹುದಾ ಗಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು. ಚಂದಾದಾರರು 10 ವರ್ಷದ ಒಳಗೆ ಯೋಜನೆಯಿಂದ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಗೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ. 10 ವರ್ಷಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಗೆ ಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿ ರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವ ಮೊತ್ತ ಹೆಚ್ಚಿರುತ್ತದೋ ಅದನ್ನು ಪಾವತಿಸಲಾಗುವುದು ಎಂದೂ ಸ್ವರೂಪ ಟಿ.ಕೆ. ತಿಳಿಸಿದರು. ಫಲಾನುಭವಿಯು ನಿರಂತರವಾಗಿ ವಂತಿಗೆಯನ್ನು ಪಾವತಿಸುತ್ತಿದ್ದು, 60 ವರ್ಷದ ಒಳಗೆ ಮೃತರಾದರೆ ಅಥವಾ ಶಾಶ್ವತ ಅಂಗ ನ್ಯೂನ್ಯತೆಯಿಂದ ವಂತಿಗೆಯನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಫಲಾನುಭವಿಯ ಸಂಗಾತಿ ಯೋಜನೆಯಡಿ ಸೇರಲು ಅವಕಾಶವಿದ್ದು, ವಂತಿಗೆಯನ್ನು ಪಾವತಿಸಿ ಯೋಜನೆಯಡಿ ಮುಂದುವರಿಯಬಹುದು ಅಥವಾ ಅವರ ವಂತಿಗೆಯನ್ನು ಬಡ್ಡಿಯೊಂದಿಗೆ ಪಡೆದುಕೊಳ್ಳಬಹುದು ಎಂದರು. ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಎರಡೂ ಯೋಜನೆಗಳ ಕುರಿತು ಆಶಾ, ಅಂಗನವಾಡಿ ಕಾರ್ಯಕರ್ತೆ ಯರು, ಪಶು ಸಖಿಯರು, ಕೃಷಿ ಸಖಿ ಯರು ಯೋಜನೆಯ ಕುರಿತಂತೆ ಅರಿವು ಮೂಡಿಸಿ ಯೋಜನೆಯ ಫಲಾನುಭವಿ ಗಳನ್ನಾಗಿಸಬೇಕು ಎಂದೂ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪರ ಬ್ಯಾಟ್ ಬೀಸಿದ ತಮಿಳುನಾಡಿನ ಸಿ.ಎಂ ಎಂ.ಕೆ ಸ್ಟಾಲಿನ್
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯಪಾಲರ ಕಾರ್ಯವೈಖರಿಯ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದಾರೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಜ್ಯಪಾಲರು ಹಾಗೂ ಆಡಳಿತ ಪಕ್ಷಗಳ ನಡುವೆ ತಿಕ್ಕಾಟವಿತ್ತು. ಈ ತಿಕ್ಕಾಟವು ಇದೀಗ ಕರ್ನಾಟಕಕ್ಕೂ ವಿಸ್ತರಿಸಿದೆ. ಕರ್ನಾಟಕದಲ್ಲೂ ರಾಜ್ಯಪಾಲರು
ರೈಲುಗಳಿಗೆ ಕಲ್ಲೆಸೆಯುವವರ ವಿರುದ್ಧ ಕಠಿಣ ಕ್ರಮ: ರೈಲ್ವೆ ಇಲಾಖೆ ಎಚ್ಚರಿಕೆ
ಹೊಸದಿಲ್ಲಿ, ಜ. 22: ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಎಚ್ಚರಿಸಿದೆ. ಇದುವರೆಗೆ 1,000ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. 600 ಮಂದಿಯನ್ನು ಬಂಧಿಸಲಾಗಿದೆ ಎಂದು ಅದು ತಿಳಿಸಿದೆ. ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರೈಲ್ವೆ ಸಚಿವಾಲಯ, ವಿವಿಧ ರೈಲ್ವೆ ವಲಯಗಳಲ್ಲಿ ಕಲ್ಲು ತೂರಾಟದ ಘಟನೆಗಳನ್ನು ಭಾರತೀಯ ರೈಲ್ವೆ ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಹೇಳಿದೆ. ಇಂತಹ ಕಾನೂನಬಾಹಿರ ಕೃತ್ಯಗಳು ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿಯ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದಲ್ಲದೆ, ಅಮೂಲ್ಯವಾದ ಸಾರ್ವಜನಿಕ ಆಸ್ತಿಗೆ ಗಮನಾರ್ಹ ಹಾನಿ ಉಂಟು ಮಾಡುತ್ತದೆ ಎಂದು ಅದು ಗಮನ ಸೆಳೆದಿದೆ. ಅಧಿಕೃತ ದತ್ತಾಂಶದ ಪ್ರಕಾರ, 2025 ಜುಲೈ ಹಾಗೂ ಡಿಸೆಂಬರ್ ನಡುವೆ ಭಾರತೀಯ ರೈಲ್ವೆ ಜಾಲದಲ್ಲಿ ಕಲ್ಲು ತೂರಾಟದ ಒಟ್ಟು 1,698 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಈ ಘಟನೆಗಳಲ್ಲಿ ಭಾಗಿಯಾದ 665 ಮಂದಿಯನ್ನು ಬಂಧಿಸಲಾಗಿದೆ. ವಲಯವಾರು ದತ್ತಾಂಶದ ಪ್ರಕಾರ ಉತ್ತರ ರೈಲ್ವೆಯಲ್ಲಿ ಅತಿ ಹೆಚ್ಚು 363 ಪ್ರಕರಣಗಳು ವರದಿಯಾಗಿವೆ. ಪೂರ್ವ ರೈಲೆಯಲ್ಲಿ 219 ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಮಧ್ಯ ರೈಲ್ವೆಯಲ್ಲಿ 140, ಉತ್ತರ ಮಧ್ಯ ರೈಲ್ವೆಯಲ್ಲಿ 126, ಪಶ್ಚಿಮ ರೈಲ್ವೆಯಲ್ಲಿ 116 ಹಾಗೂ ದಕ್ಷಿಣ ರೈಲ್ವೆಯಲ್ಲಿ 108 ಪ್ರಕರಣಗಳು ದಾಖಲಾಗಿವೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಮಾಡಲಾದ ಬಂಧನಗಳು ಸುಸ್ಥಿರ ಕಾನೂನು ಜಾರಿ ಪ್ರಯತ್ನವನ್ನು ಪ್ರತಿಬಿಂಬಿಸಿದೆ. ಅಲ್ಲದೆ ಪ್ರಯಾಣಿಕರು ಸುರಕ್ಷತೆಗೆ ಹಾಗೂ ರೈಲ್ವೆ ಸೊತ್ತುಗಳಿಗೆ ಹಾನಿ ಉಂಟು ಮಾಡುವ ಚಟುವಟಿಕೆಗಳ ಕುರಿತ ಶೂನ್ಯ ಸಹಿಷ್ಣುತೆಯನ್ನು ಪ್ರತಿಬಿಂಬಿಸಿದೆ ಎಂದು ಸಚಿವಾಲಯ ಹೇಳಿದೆ.
S I R ನಿಯಮಗಳನ್ನು ಕಡೆಗಣಿಸಬಹುದೇ? ಪ್ರಕ್ರಿಯೆ ಪಾರದರ್ಶಕವಾಗಿರಬೇಕು: ಚುನಾವಣಾ ಆಯೋಗಕ್ಕೆ ಸುಪ್ರೀಂ ಕಿವಿಮಾತು
ಹೊಸದಿಲ್ಲಿ, ಜ. 22: ಚುನಾವಣಾ ಆಯೋಗವು ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಕಲಂ 21(3)ರಡಿ ಅನಿಯಂತ್ರಿತ ಅಧಿಕಾರವನ್ನು ಹೊಂದಿರಲು ಸಾಧ್ಯವಿಲ್ಲ. ನಿಬಂಧನೆಯು ಆಯೋಗಕ್ಕೆ ‘ಅದು ಸೂಕ್ತವೆಂದು ಭಾವಿಸುವ ರೀತಿಯಲ್ಲಿ’ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಸಲು ಅಧಿಕಾರ ನೀಡಿದೆ ನಿಜ. ಆದರೆ ಅಂತಹ ‘ರೀತಿಯು’ ಸಾಂವಿಧಾನಿಕ ಚೌಕಟ್ಟು ಮತ್ತು ನೈಸರ್ಗಿಕ ನ್ಯಾಯದ ತತ್ವಗಳ ಒಳಗೆ ಇರಬೇಕು ಹಾಗೂ ಪಾರದರ್ಶಕವಾಗಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಬುಧವಾರ ವಿವಿಧ ರಾಜ್ಯಗಳಲ್ಲಿ ಎಸ್ಐಆರ್ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ. ಜಾಯಮಾಲ್ಯ ಬಾಗ್ಚಿ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು. ಮತದಾರರ ಪಟ್ಟಿಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮಗಳಿಂದ, ವಿಶೇಷವಾಗಿ ಆಕ್ಷೇಪಗಳ ಸಲ್ಲಿಕೆ ಮತ್ತು ಹಕ್ಕು ಕೋರಿಕೆ ಪ್ರಕ್ರಿಯೆಯನ್ನು ವಿವರಿಸುವ ಮತದಾರರ ನೋಂದಣಿ ನಿಯಮಗಳು–1960ರ ನಿಯಮ 13ರಡಿ ಫಾರ್ಮ್ 6ರಿಂದ ವಿಮುಖಗೊಳ್ಳಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆಯೇ? ಎಸ್ಐಆರ್ ಗಾಗಿ ಫಾರ್ಮ್ 6ರಲ್ಲಿ ಪಟ್ಟಿ ಮಾಡಿರುವ ದಾಖಲೆಗಳನ್ನು ಮೀರಿ ತನ್ನದೇ ಆದ ದಾಖಲೆಗಳನ್ನು ನಿಗದಿಪಡಿಸಬಹುದೇ? ಎಂದು ನ್ಯಾ. ಬಾಗ್ಚಿ ಅವರು ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರನ್ನು ಪ್ರಶ್ನಿಸಿದರು. ನಿಯಮ 13 ಫಾರ್ಮ್ 6ನ್ನು ಅಧಿಸೂಚಿಸಲು ಅಧಿಕಾರ ನೀಡುವ ನಿಯಮವಾಗಿದೆ. ಫಾರ್ಮ್ 6ರಲ್ಲಿ ಸುಮಾರು ಆರು ದಾಖಲೆಗಳಿದ್ದರೆ, ನಿಮ್ಮ ಎಸ್ಐಆರ್ನಲ್ಲಿ 11 ದಾಖಲೆಗಳನ್ನು ನಿಗದಿಪಡಿಸಲಾಗಿದೆ. ನೀವು ಜನ್ಮಸ್ಥಳ, ವಾಸಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳ ಸಂಖ್ಯೆಯನ್ನು ಹೆಚ್ಚಿಸಬಹುದೇ ಅಥವಾ ಕಡಿತಗೊಳಿಸಬಹುದೇ? ನೀವು ಫಾರ್ಮ್ 6ರಲ್ಲಿರುವ ದಾಖಲೆಗಳನ್ನು ನೋಡುವುದಿಲ್ಲ, 11 ದಾಖಲೆಗಳನ್ನು ಮಾತ್ರ ನೋಡುತ್ತೀರಾ ಎಂಬುದಕ್ಕೆ ಉತ್ತರಿಸಬೇಕು ಎಂದು ನ್ಯಾ. ಬಾಗ್ಚಿ ಹೇಳಿದರು. ಹೌದು, ಅಧಿಕಾರ ನಿರ್ಬಂಧಿತವಲ್ಲ ಎಂಬ ಕುರಿತು ಯಾವುದೇ ಚರ್ಚೆಗೆ ಅವಕಾಶವಿಲ್ಲ. ಆದರೆ ಅದು ಚುನಾವಣಾ ಆಯೋಗಕ್ಕೆ ವಿಶಿಷ್ಟವಾಗಿದೆ. ಈ ವಿಷಯದಲ್ಲಿ ಆಯೋಗವು ವ್ಯಾಪಕ ವಿವೇಚನಾಧಿಕಾರ ಹೊಂದಿದ್ದರೂ, ಎಸ್ಐಆರ್ಗೆ ಮಾರ್ಗಸೂಚಿಯೂ ಇದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದ್ವಿವೇದಿ, ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಶಾಸನಬದ್ಧ ನಿಯಮಗಳ ಪ್ರಕಾರವೇ ನಡೆಸಬೇಕೆಂದಿಲ್ಲ. ಆದರೆ ಯಾವುದೇ ವಿಶೇಷ ಸಂದರ್ಭಗಳು ಅಸ್ತಿತ್ವದಲ್ಲಿದ್ದರೆ ಅದು ವಿಭಿನ್ನವಾಗಿ ನಡೆಯಬಹುದು ಎಂದು ಹೇಳಿದರು. ಸಮಾನತೆ, ನ್ಯಾಯಪರತೆ ಮತ್ತು ಪಾರದರ್ಶಕತೆಯ ಮೂಲಭೂತ ಸಾಂವಿಧಾನಿಕ ತತ್ವಗಳನ್ನು ಕಡೆಗಣಿಸಿ ಎಸ್ಐಆರ್ ನಡೆಸಬಹುದು ಎಂದು ಚುನಾವಣಾ ಆಯೋಗ ಹೇಳುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಯುವಜನರನ್ನು ತೀವ್ರವಾದಕ್ಕೆ ಸೆಳೆಯಲು ಯತ್ನಿಸಿದ ಆರೋಪ: ಉತ್ತರ ಕನ್ನಡದ ವ್ಯಕ್ತಿಗೆ 10 ವರ್ಷ ಜೈಲು
ಹೊಸದಿಲ್ಲಿ,ಜ.22: ಯುಜನರನ್ನು ತೀವ್ರವಾದದೆಡೆಗೆ ಸೆಳೆಯಲು ಹಾಗೂ ಅವರನ್ನು ಪಾಕ್ ಮೂಲದ ಲಷ್ಕರೆ ತಯ್ಯಬಾಗೆ ಸೇರ್ಪಡೆಗೊಳಿಸಲು ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿ ಪ್ರಕರಣದ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ನಿವಾಸಿಯೊಬ್ಬನಿಗೆ ವಿಶೇಷ ಎನ್ಐಎ ನ್ಯಾಯಾಲಯ ಬುಧವಾರ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಸಯ್ಯದ್ ಎಂ. ಇದ್ರಿಸ್ ಶಿಕ್ಷೆ ವಿಧಿಸಲ್ಪಟ್ಟ ಆರೋಪಿಯಾಗಿದ್ದು, ಆತನಿಗೆ ಭಾರತೀಯ ದಂಡಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ಯುಎಪಿಎ) ಕಾಯ್ದೆಯಡಿ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ನ್ಯಾಯಾಲಯವು ಆರೋಪಿಗೆ 70 ಸಾವಿರ ರೂ. ದಂಡವನ್ನು ವಿಧಿಸಿದೆ. ಈ ಪ್ರಕರಣದ ತನಿಖೆಯು 2020ರ ಎಪ್ರಿಲ್ನಲ್ಲಿ ಪಶ್ಚಿಮಬಂಗಾಳ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರಿಸಲ್ಪಟ್ಟಿತ್ತು. ತನಿಖೆಯ ಹಂತದಲ್ಲಿ ಎನ್ಐಎಯು ಇದ್ರಿಸ್ ಹಾಗೂ ಜಮ್ಮುಕಾಶ್ಮೀರ ನಿವಾಸಿ ಅಲ್ತಾಫ್ ಅಹ್ಮದ್ ರಾಥೆರ್ ಎಂಬವರನ್ನು ಬಂಧಿಸಿತ್ತು. ಇವರಿಬ್ಬರು , ತಾನಿಯಾ ಪರ್ವೀನ್ ಎಂಬಾಕೆಯ ಜೊತೆ ಸೇರಿಕೊಂಡು, ಪಶ್ಚಿಮಬಂಗಾಳದಲ್ಲಿ ಲಷ್ಕರೆ ತಯ್ಯಬಾದ ಘಟಕವನ್ನು ಸ್ಥಾಪಿಸಲು ಸಂಚು ಹೂಡಿದ್ದರು ಎಂದು ಎನ್ಐಎ ಆಪಾದಿಸಿದೆ. ಇವರ ಬಂಧನಕ್ಕೆ ಮುನ್ನ ಪಶ್ಚಿಮ ಬಂಗಾಳ ಪೊಲೀಸರು ತಮಗೆ ದೊರೆತ ಮಾಹಿತಿಯ ಮೇರೆಗೆ ಉತ್ತರ ಪರಗಣ ಜಿಲ್ಲೆಯ ಬದೂರಿಯಾದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯೊಂದರಲ್ಲಿ ತಾನಿಯಾ ಪರ್ವೀನ್ಳನ್ನು ಬಂಧಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಕಾನೂನುಬಾಹಿರ ಸಾಹಿತ್ಯ ಸೇರಿದಂತೆ ಅಕ್ರಮ ಸಾಮಾಗ್ರಿಗಳನ್ನು ಪತ್ತೆಹಚ್ಚಿದ್ದರು.
ಚೆನ್ನೈ,ಜ.23: ಸನಾತನ ಧರ್ಮದ ಕುರಿತಾಗಿ ಉಪಮುಖ್ಯಮಂತ್ರಿ ಉದಯಾನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆಗಳು ದ್ವೇಷಭಾಷಣವೆಂಬ ಮದ್ರಾಸ್ ಹೈಕೋರ್ಟ್ನ ಅಭಿಪ್ರಾಯವನ್ನು ಡಿಎಂಕೆ ಗುರುವಾರ ವಿರೋಧಿಸಿದ್ದು, ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗಳು ಅಥವಾ ಸಿದ್ಧಾಂತವು ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವವನ್ನು ಬೀರಬಾರದು ಎಂದು ಪ್ರತಿಪಾದಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಡಿಎಂಕೆ ವಕ್ತಾರ ಸರವಣನ್ ಅಣ್ಣಾ ದೊರೈ ಅವರು, ಮದ್ರಾಸ್ ಹೈಕೋರ್ಟ್ನ ಆದೇಶವು ‘ ಕೇಳಿರದಂತಹ ಯಾವುದೇ ವಿಷಯವನ್ನು ಖಂಡಿಸಬಾರದು’ ಎಂಬ ನ್ಯಾಯಶಾಸ್ತ್ರದ ಮೂಲಭೂತ ತತ್ವಕ್ಕೆ ಅನುಗುಣವಾಗಿಲ್ಲವೆಂದು ಹೇಳಿದ್ದಾರೆ. ಸನಾತನ ಧರ್ಮದ ಕುರಿತು ಉಯಾನಿಧಿ ಸ್ಟಾಲಿನ್ ಅವರು ನೀಡಿದ್ದ ಹೇಳಿಕೆಗಳನ್ನು ಬಿಜೆಪಿ ನಾಯಕ ಅಮಿತ್ ಮಾಲವೀಯ ಅವರು ತಿರುಚಿದ್ದಾರೆಂದು ಆರೋಪಿಸಿ 2023ರಲ್ಲಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿಹಾಕಿದ ಬಳಿಕ ಡಿಎಂಕೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಶ್ರೀಮತಿ ಅವರು ಅವರು ಸ್ಟಾಲಿನ್ ಅವರ ಹೇಳಿಕೆಯು ದ್ವೇಷಭಾಷಣಕ್ಕೆ ಸಮನಾದುದಾಗಿದೆ ಎಂದರು. ‘‘ನಾವು ಡೆಂಗ್, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ (ಕೋವಿಡ್-19) ವೈರಸ್ ಅನ್ನು ವಿರೋಧಿಸುವುದು ಮಾತ್ರವಲ್ಲದೆ ಅವುಗಳ ಮೂಲೋತ್ಪಾಟನೆ ಮಾಡಬೇಕಾಗಿದೆ. ಅದೇ ರೀತಿ ಸನಾತನ (ಧರ್ಮ)ವನ್ನು ಕೇವಲ ವಿರೋಧಿಸುವುದು ಮಾತ್ರವಲ್ಲದೆ ಅದು ಕೂಡಾ ತೊಡೆದು ಹಾಕಬೇಕಾಗಿದೆ’’ ಎಂದು ಹೇಳಿದ್ದರೆನ್ನಲಾಗಿದೆ. ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಸಂದರ್ಭದಲ್ಲಿ ಉದಯಾನಿಧಿ ಸ್ಟಾಲಿನ್ ಅವರು ಸಚಿವರಾಗಿದ್ದರು ಹಾಗೂ ಅವರು 2024ರ ಸೆಪ್ಟೆಂಬರ್ನಲ್ಲಿ ಉಪಮುಖ್ಯಮಂತ್ರಿ ಹುದ್ದೆಗೇರಿದ್ದರು. ಸ್ಟಾಲಿನ್ ಈ ಹೇಳಿಕೆಯನ್ನು ಮಾಲವೀಯ ಅವರು ಖಂಡಿಸಿದ್ದು ಡಿಎಂಕೆ ನಾಯಕನು ಹಿಂದೂಗಳ ನರಮೇಧಕ್ಕೆ ಕರೆ ನೀಡಿದ್ದಾರೆಂದು ಆಪಾದಿಸಿದ್ದರು. ತಮಿಳುನಾಡಿನ ತಿರುಚ್ಚಿ ನಗರದ ಪೊಲೀಸರು ದ್ವೇಷಭಾಷಣದ ಆರೋಪದಲ್ಲಿ ಮಾಲವೀಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ದಯಾನಿಧಿ ಸ್ಟಾಲಿನ್ ಕುರಿತಾಗಿ ಹೈಕೋರ್ಟ್ ನೀಡಿದ ತೀರ್ಪು, ಡಿಎಂಕೆಯ ಸಂಕುಚಿತಹಾಗೂ ಹಿಂದೂವಿರೋಧಿ ಮನಸ್ಥಿತಿಗೆ ಬೀಸಿದ ಚಾಟಿಯಾಗಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಗುರುವಾರ ಪ್ರತಿಕ್ರಿಯಿಸಿದ್ದಾರೆ
ಹೊಸದಿಲ್ಲಿ, ಜ. 22: 2000 ಇಸವಿಯಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನಗೆ ಮರಣ ದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಪ್ರಕರಣದ ದೋಷಿ ಹಾಗೂ ಲಷ್ಕರೆ ತಯ್ಯಬ ಭಯೋತ್ಪಾದಕ ಮುಹಮ್ಮದ್ ಆರಿಫ್ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ಗುರುವಾರ ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಸರಕಾರಕ್ಕೆ ನೋಟಿಸ್ ನೀಡಿದೆ. ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಎರಡು ಬಾರಿ ಎತ್ತಿಹಿಡಿದಿತ್ತು. ದೋಷಿಯ ಪರವಾಗಿ ವಕೀಲ ಪಯೋಶಿ ರಾಯ್ ಮಂಡಿಸಿದ ವಾದವನ್ನು ಪರಿಗಣಿಸಿದ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠವೊಂದು ದಿಲ್ಲಿ ಸರಕಾರಕ್ಕೆ ನೋಟಿಸ್ ನೀಡಿತು. 2000 ಡಿಸೆಂಬರ್ 22ರಂದು, ಲಷ್ಕರೆ ತಯ್ಯಬಕ್ಕೆ ಸೇರಿದವರೆನ್ನಲಾದ ಮೂವರು ಭಯೋತ್ಪಾದಕರು ಕೆಂಪು ಕೋಟೆಯನ್ನು ಪ್ರವೇಶಿಸಿ ಮೂವರು ಸೈನಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಕುರಿತು ತನಿಖೆ ನಡೆಸಿದ ದಿಲ್ಲಿ ಪೊಲೀಸರು, ಘಟನೆ ನಡೆದ ಮರುದಿನ ಕೆಂಪು ಕೋಟೆಯ ಹೊರಗಡೆ ಫೋನ್ ಸಂಖ್ಯೆ ಬರೆಯಲ್ಪಟ್ಟಿದ್ದ ಚೀಟಿಯೊಂದನ್ನು ಪತ್ತೆಹಚ್ಚಿದರು. ಆ ಫೋನ್ ಸಂಖ್ಯೆಯ ಕರೆಗಳ ಆಧಾರದಲ್ಲಿ ಪಾಕಿಸ್ತಾನಿ ರಾಷ್ಟ್ರೀಯ ಆರಿಫ್ನನ್ನು ಬಂಧಿಸಿದರು. ಅವನು ಭಾರತವನ್ನು ಅಕ್ರಮವಾಗಿ ಪ್ರವೇಸಿದ್ದನು ಎನ್ನಲಾಗಿದೆ. ಆರಿಫ್ನ ಆರೋಪ ಸಾಬೀತಾಗಿದೆ ಎಂದು ಘೋಷಿಸಿದ ದಿಲ್ಲಿಯ ನ್ಯಾಯಾಲಯವೊಂದು, 2005 ಅಕ್ಟೋಬರ್ 31ರಂದು ಮರಣ ದಂಡನೆ ವಿಧಿಸಿತ್ತು. ಈ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ 2007 ಸೆಪ್ಟಂಬರ್ನಲ್ಲಿ ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್ನಲ್ಲಿ ಅವನ ಮೊದಲ ಮರುಪರಿಶೀಲನಾ ಅರ್ಜಿಯನ್ನು ಇಬ್ಬರು ನ್ಯಾಯಾಧೀಶರ ನ್ಯಾಯಪೀಠವೊಂದು 2011 ಆಗಸ್ಟ್ನಲ್ಲಿ ತಿರಸ್ಕರಿಸಿ ಮರಣ ದಂಡನೆಯನ್ನು ಎತ್ತಿಹಿಡಿದಿತ್ತು. 2022 ನವೆಂಬರ್ 3ರಂದು, ಸುಪ್ರೀಂ ಕೋರ್ಟ್ನ ಮೂವರು ನ್ಯಾಯಾಧೀಶರ ಪೀಠವೊಂದು ಅವನ ಎರಡನೇ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದೆ.
ಆಂಧ್ರದಲ್ಲಿ 16ರೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ? ಮಹತ್ವದ ಸುಳಿವು ನೀಡಿದ ಸಚಿವ ಎನ್.ಲೋಕೇಶ್
ಹೊಸದಿಲ್ಲಿ,ಜ.22: ಆಸ್ಟ್ರೇಲಿಯಾ ಕಳೆದ ತಿಂಗಳು ಜಾರಿಗೊಳಿಸಿರುವ ರೀತಿಯಲ್ಲೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲು ರಾಜ್ಯ ಸರಕಾರವು ಚಿಂತನೆ ನಡೆಸುತ್ತಿದೆ ಎಂಬ ಮಹತ್ವದ ಸುಳಿವನ್ನು ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ನೀಡಿದ್ದಾರೆ. ದಾವೋಸ್ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ನೇಪಥ್ಯದಲ್ಲಿ ಬ್ಲೂಮ್ಬರ್ಗ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲೋಕೇಶ್, ನಿರ್ದಿಷ್ಟ ವಯಸ್ಸಿನೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವಿಷಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿರುವುದಿಲ್ಲ. ಮಕ್ಕಳನ್ನು ಇಂತಹ ವೇದಿಕೆಗಳಿಂದ ದೂರವಿಡಲು ಬಲವಾದ ಕಾನೂನು ಚೌಕಟ್ಟು ಅಗತ್ಯವಾಗಿದೆ ಎಂದು ಹೇಳಿದರು. ಕಳೆದ ವರ್ಷದ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾದ ಅಂಥೋನಿ ಆಲ್ಬಾನೀಸ್ ಸರಕಾರವು ವಿಶ್ವದಲ್ಲಿ ಮೊದಲ ಬಾರಿಗೆ 16 ವರ್ಷದೊಳಗಿನ ಮಕ್ಕಳು ಟಿಕ್ಟಾಕ್, ಎಕ್ಸ್,ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಸ್ನ್ಯಾಪ್ಚಾಟ್ಗಳಂತಹ ಪ್ರಮುಖ ಸಾಮಾಜಿಕ ಮಾಧ್ಯಮ ಸೇವೆಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಈ ನಿಷೇಧದಡಿ ಮಕ್ಕಳು ಹೊಸ ಖಾತೆಗಳನ್ನು ತೆರೆಯುವಂತಿಲ್ಲ ಮತ್ತು ಅಸ್ತಿತ್ವದಲ್ಲಿರುವ ಪ್ರೊಫೈಲ್ಗಳನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಇಂತಹ ಕ್ರಮವನ್ನು ತೆಗೆದುಕೊಳ್ಳುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಆಂಧ್ರಪ್ರದೇಶದಲ್ಲಿಯ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಅನುಷ್ಠಾನಗೊಂಡರೆ ಆಂಧ್ರಪ್ರದೇಶವು ಮಕ್ಕಳಿಂದ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಿದ ದೇಶದ ಮೊದಲ ರಾಜ್ಯವಾಗಲಿದೆ. ಲೋಕೇಶ್ ಅವರನ್ನು ಬೆಂಬಲಿಸಿದ ಟಿಡಿಪಿ ರಾಷ್ಟ್ರೀಯ ವಕ್ತಾರ ದೀಪಕ್ ರೆಡ್ಡಿಯವರು, ಹಿಂದಿನ ವೈಎಸ್ಆರ್ಸಿಪಿ ಸರಕಾರದ ಅವಧಿಯಲ್ಲಿ ಮಹಿಳೆಯರ ವಿರುದ್ಧ ಕ್ರೂರ ಮತ್ತು ಅವಹೇಳನಕಾರಿ ದಾಳಿಗಳನ್ನು ನಡೆಸಲು ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದರು. ಮಕ್ಕಳು ಆನ್ಲೈನ್ನಲ್ಲಿ ಮುಕ್ತವಾಗಿ ಲಭ್ಯವಾಗುತ್ತಿರುವ ನಕಾರಾತ್ಮಕ ಮತ್ತು ಹಾನಿಕಾರಕ ವಿಷಯಗಳನ್ನು ಗ್ರಹಿಸಲು ಭಾವನಾತ್ಮಕವಾಗಿ ಪ್ರಬುದ್ಧರಾಗಿರುವುದಿಲ್ಲ. ಇದನ್ನು ಸರಕಾರದ ಕಣ್ಗಾವಲು ಎಂದು ಅರ್ಥೈಸಬೇಕಿಲ್ಲ. ಇದು ಮಕ್ಕಳನ್ನು ಹಾನಿಕಾರಕ ವಿಷಯ ಮತ್ತು ಆನ್ಲೈನ್ ನಕಾರಾತ್ಮಕತೆಯಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದರು. ಕಳೆದ ವರ್ಷ ಮದ್ರಾಸ್ ಉಚ್ಚ ನ್ಯಾಯಾಲಯವು ಕೂಡ ಆಸ್ಟ್ರೇಲಿಯಾದಂತಹ ಕಾನೂನನ್ನು ತರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.
ಡಾ. ಅಬ್ದುಲ್ ಕಲಾಂ ವಸತಿ ಹಾಗೂ ಮುಸ್ಲಿಂ ವಸತಿ ಶಾಲೆಗಳಿಗೆ ಸೇರ್ಪಡೆ: ಅರ್ಜಿ ಆಹ್ವಾನ
ಮಂಗಳೂರು, ಜ.22: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದ.ಕ. ಜಿಲ್ಲೆಯ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಸರಕಾರಿ ಮುಸ್ಲಿಂ ವಸತಿ ಶಾಲೆಗಳಿಗೆ 2026-27ನೇ ಸಾಲಿನಲ್ಲಿ 6ನೇ ತರಗತಿಗೆ ಉಚಿತ ಪ್ರವೇಶಕ್ಕಾಗಿ ಸೇವಾ ಸಿಂಧು ಪೋರ್ಟಲ್ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿಗಳನ್ನು ಫೆ.10ರೊಳಗೆ https://sevasindhuservices.karnataka.gov.in| ಸಲ್ಲಿಸಬಹುದು ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಸಲ್ಲಿಸಬಹುದಾಗಿದೆ. ಉಳ್ಳಾಲ ತಾಲೂಕಿನ ಅಸೈಗೋಳಿಯಯಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ (ಆಂಗ್ಲ ಮಾಧ್ಯಮ-ಸಿಬಿಎಸ್ಇ) ಮತ್ತು ಉಳ್ಳಾಲ ತಾಲೂಕಿನ ಅಸೈ ಮದಕದ ಸರಕಾರಿ ಮುಸ್ಲಿಂ ವಸತಿ ಶಾಲೆ (ಆಂಗ್ಲ ಮಾಧ್ಯಮ-ರಾಜ್ಯ) ಗಳಾಗಿವೆ. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮಂಗಳೂರು (08242433078), ಬಂಟ್ವಾಳ (08255232470), ಬೆಳ್ತಂಗಡಿ (0826295335), ಪುತ್ತೂರು (08251237078), ಸುಳ್ಯ (08257230666) ಅಥವಾ ಇಲಾಖೆಯ ವೆಬ್ಸೈಟ್ https://dom.karnataka.gov.in ಸಹಾಯವಾಣಿ: 8277799990ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ದ.ಕ.ಜಿಲ್ಲಾ ಅಧಿಕಾರಿಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೇಂದ್ರವು ಮನರೇಗಾ ರದ್ದತಿಯೊಂದಿಗೆ ಕೃಷಿ ಕಾನೂನುಗಳ ತಪ್ಪನ್ನು ಪುನರಾವರ್ತಿಸಲು ಬಯಸುತ್ತಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ,ಜ.22: ಮನರೇಗಾದ ಬದಲಿಗೆ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ತರುವ ಮೋದಿ ಸರಕಾರದ ನಿರ್ಧಾರವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೂತನ ಕಾಯ್ದೆಯನ್ನು ಈಗ ರದ್ದುಗೊಂಡಿರುವ ಕೃಷಿ ಕಾನೂನುಗಳಿಗೆ ಹೋಲಿಸಿದರು. ರಚನಾತ್ಮಕ್ ಕಾಂಗ್ರೆಸ್ ಆಯೋಜಿಸಿದ್ದ ರಾಷ್ಟ್ರೀಯ ಮನರೇಗಾ ಕಾರ್ಮಿಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನೂತನ ಕಾಯ್ದೆಯ ವಿರುದ್ಧ ಒಗ್ಗಟ್ಟಾಗುವಂತೆ ಕಾರ್ಮಿಕರು ಮತ್ತು ಬಡ ನಾಗರಿಕರನ್ನು ಆಗ್ರಹಿಸಿದರು. ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಬಡವರಿಗೆ ದುಡಿಯುವ ಖಚಿತ ಹಕ್ಕನ್ನು ಒದಗಿಸುವುದು ಮತ್ತು ತನ್ಮೂಲಕ ಅವರ ಸಬಲೀಕರಣ ಮನರೇಗಾದ ಉದ್ದೇಶವಾಗಿತ್ತು,ಆದರೆ ಬಿಜೆಪಿ ಆ ಪರಿಕಲ್ಪನೆಯನ್ನು ಅಂತ್ಯಗೊಳಿಸಲು ಬಯಸಿದೆ ಎಂದು ಹೇಳಿದರು. ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ,‘ನಾವೆಲ್ಲರೂ ಒಗ್ಗಟ್ಟಾಗಿ ಆ ಕಾನೂನುಗಳು ರದ್ದುಗೊಳ್ಳುವಂತೆ ಮಾಡಿದ್ದೆವು. ಈಗ ಸರಕಾರವು ಕಾರ್ಮಿಕರ ವಿಷಯದಲ್ಲಿಯೂ ಅಂತಹುದೇ ಕಾನೂನುಗಳನ್ನು ತರುವ ಪ್ರಯತ್ನವನ್ನು ಮಾಡುತ್ತಿದೆ’ ಎಂದರು. ನಿರ್ಧಾರ ಕೈಗೊಳ್ಳುವುದನ್ನು ಕೇಂದ್ರೀಕರಿಸಿದ್ದಕ್ಕಾಗಿ ನೂತನ ಕಾನೂನನ್ನು ಟೀಕಿಸಿದ ಅವರು, ಬಿಜೆಪಿ ಆಡಳಿತದ ರಾಜ್ಯಗಳು ಆದ್ಯತೆಯ ನಿಧಿ ಹಂಚಿಕೆಗಳನ್ನು ಪಡೆಯಲಿವೆ ಎಂದು ಆರೋಪಿಸಿದರು. ಈ ಹಿಂದೆ ಕಾರ್ಮಿಕರಿಗೆ ಲಭಿಸುತ್ತಿದ್ದ ಲಾಭಗಳನ್ನು ಈಗ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ವರ್ಗಾಯಿಸಬಹುದು ಎಂದು ಎಚ್ಚರಿಕೆ ನೀಡಿದ ಅವರು, ಸಂಪತ್ತು ಕೆಲವೇ ಜನರ ಬಳಿ ಕೇಂದ್ರೀಕೃತವಾಗಿರುವುದು ಮತ್ತು ಬಡವರು ಕಾರ್ಪೊರೇಟ್ ದೈತ್ಯರನ್ನು ಅವಲಂಬಿಸಿರುವುದು; ಇದು ಅವರ ಭಾರತದ ಮಾದರಿಯಾಗಿದೆ ಎಂದರು. ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕು. ಹಕ್ಕು ಆಧಾರಿತ ಯೋಜನೆಯಾಗಿ ಮನರೇಗಾವನ್ನು ಮರುಜಾರಿಗೊಳಿಸಬೇಕು ಮತ್ತು ಪಂಚಾಯತ್ಗಳ ಅಧಿಕಾರವನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಜ.10ರಿಂದ 45 ದಿನಗಳ ರಾಷ್ಟ್ರವ್ಯಾಪಿ ‘ಮನರೇಗಾ ಬಚಾವೊ ಸಂಗ್ರಾಮ್’ ಅಭಿಯಾನವನ್ನು ನಡೆಸುತ್ತಿದೆ.
ಜ. 24ರಿಂದ ಸಮಸ್ತ ಪಬ್ಲಿಕ್ ಪರೀಕ್ಷೆ: ದ.ಕ ಜಿಲ್ಲೆಯಲ್ಲಿ 10,586 ಪರೀಕ್ಷಾರ್ಥಿಗಳು
ಜ. 23ರಂದು ಮಾಹಿತಿ ಶಿಬಿರ
ಮಂಗಳೂರು| ಜೋಡಿಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್ನ ಸದಸ್ಯ ಸೆರೆ
29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ
ಕರ್ನಾಟಕದ ರಾಜಕೀಯ ಇತಿಹಾಸ ಕಂಡು ಕೇಳರಿಯದ ವಿದ್ಯಮಾನಕ್ಕೆ ಇಂದು (ಜ. 22-ಗುರುವಾರ) ಸಾಕ್ಷಿಯಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದಲು ನಿರಾಕರಿಸಿದ್ದು, ಪೂರ್ತಿ ಭಾಷಣ ಮಾಡದೇ ಕೇವಲ ಎರಡು ನಿಮಿಷಗಳ ಭಾಷಣ ಮಾಡಿದ್ದಾರೆ. ರಾಜ್ಯಪಾಲರ ಈ ನಿರ್ಧಾರ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇಂದು ಇಡೀ ದಿನ ನಡೆದ ಪ್ರಮುಖ ಬೆಳವಣಿಗೆಗಳ ಸಮಗ್ರ ಮಾಹಿತಿ ಇಲ್ಲಿದೆ ನೋಡಿ.
ಅನ್ನಪೂರ್ಣ ಶೆಣೈಗೆ ಐಇಇಇ ಉತ್ತಮ ವಿದ್ಯಾರ್ಥಿ ಸ್ವಯಂಸೇವಕ ಪ್ರಶಸ್ತಿ
ಉಡುಪಿ: ಬಂಟಕಲ್ಲು ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾ ದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಅನ್ನಪೂರ್ಣ ಶೆಣೈ ಅವರಿಗೆ ಐಇಇಇ ಘಟಕ ಬೆಂಗಳೂರು ವಿಭಾಗದಿಂದ ಉತ್ತಮ ವಿದ್ಯಾರ್ಥಿ ಸ್ವಯಂ ಸೇವಕಿ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾದ ಐಇಇಇ ಬೆಂಗಳೂರು ವಿಭಾಗದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ಅನ್ನಪೂರ್ಣ ಶೆಣೈ ಐಇಇಇ ಘಟಕದ ವಿದ್ಯಾರ್ಥಿ ಚಟುವಟಿಕೆಯನ್ನು ಬಲಪಡಿಸುವಲ್ಲಿ ತೋರಿದ ನಾಯಕತ್ವ, ಸಮರ್ಪಣೆ ಹಾಗೂ ನಿರಂತರ ಸೇವೆ ಮತ್ತು ತಾಂತ್ರಿಕ ಕಾರ್ಯಾಗಾರಗಳು, ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳು, ಸದಸ್ಯತ್ವ ಉಪಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದಕ್ಕಾಗಿ ದೊರೆತಿದೆ.
ಬೈಂದೂರು: ಚಿಕ್ತಾಡಿ ಬಳಿ ಮತ್ತೊಂದು ಚಿರತೆ ಬೋನಿಗೆ
ಬೈಂದೂರು, ಜ.22: ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ತಾಡಿ ಎಂಬಲ್ಲಿ ಒಂದು ವಾರದ ಅಂತರದಲ್ಲಿ ಎರಡನೇ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಜ.16ರಂದು ಹೇರೂರು ಗ್ರಾಮದ ಚಿಕ್ತಾಡಿ ಎಂಬಲ್ಲಿರುವ ಖಾಸಗಿ ತೋಟದಲ್ಲಿ ಇಲಾಖೆಯಿಟ್ಟ ಬೋನಿಗೆ ಅಂದಾಜು 3 ವರ್ಷ ಪ್ರಾಯದ ಹೆಣ್ಣು ಚಿರತೆ ಬಿದ್ದಿದ್ದು ಅದನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿತ್ತು. ಚಿರತೆಗಳ ಓಡಾಟದ ಬಗ್ಗೆ ಸಾರ್ವಜನಿಕರಿಂದ ಮತ್ತೆ ದೂರುಗಳು ಬಂದ ಹಿನ್ನೆಲೆ ಅರಣ್ಯಾಧಿಕಾರಿಗಳು ಅದೇ ಸ್ಥಳದಲ್ಲಿ ಮತ್ತೆ ಬೋನು ಇರಿಸಿದ್ದು ಜ.22ರಂದು ಬೆಳಗ್ಗೆ ಮತ್ತೊಂದು ಚಿರತೆ ಸೆರೆಯಾಗಿದೆ. ಈ ಮೂಲಕ ಆರು ದಿನಗಳ ಅಂತರದಲ್ಲಿ 2 ಚಿರತೆಗಳು ಬೋನಿಗೆ ಬಿದ್ದಿವೆ. ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಕೆ. ಸದಾಶಿವ, ಗಸ್ತು ಅರಣ್ಯ ಪಾಲಕರಾದ ಶೃತಿ ಗೌಡ, ಮಂಜುನಾಥ, ರಾಜೇಶ್, ಅರಣ್ಯ ವೀಕ್ಷಕ ಸುರೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿದರು.
ರಾಯಚೂರು | ಹೆಚ್ಐವಿ ಸೋಂಕಿತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ: ಜಿಪಂ ಸಿಇಓ ಸೂಚನೆ
ಅಂತರ ಇಲಾಖೆ ಸಮನ್ವಯ ಸಮಿತಿ ಸಭೆ
ಕೊಪ್ಪಳ | ಸಂಸದ ಹಿಟ್ನಾಳ್ ಹೇಳಿಕೆ ಖಂಡನಾರ್ಹ: ಬಸವರಾಜ ಕ್ಯಾವಟರ್
ಕೊಪ್ಪಳ: ಸಾಣಾಪೂರ ಬಳಿ ಕಳೆದ ವರ್ಷ ನಡೆದ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ವಿದೇಶಿ ಪ್ರಜೆಯ ಕೊಲೆ ಪ್ರಕರಣವನ್ನು ‘ಸಣ್ಣ ಘಟನೆ’ ಎಂದು ಸಂಸದ ರಾಜಶೇಖರ ಹಿಟ್ನಾಳ್ ಹೇಳಿರುವುದು ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವೈದ್ಯ ಬಸವರಾಜ ಕ್ಯಾಟವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಸಂಸದರಿಗೆ ಇಂತಹ ಹೇಳಿಕೆ ಶೋಭೆಯಲ್ಲ ಎಂದು ಹೇಳಿದರು. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸಹಕಾರದೊಂದಿಗೆ ಆಯೋಜಿಸಿದ್ದ ‘ಕೊಪ್ಪಳ ಅನ್ವೇಷಿಸಿ’ ಎಂಬ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಬ್ಲಾಗರ್ಗಳು ಹಾಗೂ ಪ್ರವಾಸಿ ಮಿತ್ರರ ಎದುರು ಹಿಟ್ನಾಳ್ ಅವರು ಇಂತಹ ಅಸಂಬದ್ಧ ಹೇಳಿಕೆ ನೀಡಿ ಜಿಲ್ಲೆಯ ಮಾನಮರ್ಯಾದೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು. ಆನೆಗೊಂದಿ ಭಾಗದಲ್ಲಿ ಡ್ರಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆಡಳಿತ ಪಕ್ಷದಲ್ಲಿರುವ ಜನಪ್ರತಿನಿಧಿಗಳ ಬೆಂಬಲದಿಂದಲೇ ಇಂತಹ ಅಕ್ರಮಗಳು ನಡೆಯುತ್ತಿವೆ. ಇವುಗಳಿಗೆ ಕಡಿವಾಣ ಹಾಕದಿರುವುದೇ ಇಂತಹ ದುರ್ಘಟನೆಗಳು ಸಂಭವಿಸಲು ಕಾರಣವಾಗಿದೆ ಎಂದು ಹೇಳಿದರು. ಪೊಲೀಸ್ ಬೀಟ್ ವ್ಯವಸ್ಥೆಯನ್ನು ಬಲಪಡಿಸಿ, ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಿದರೆ ದೇಶಿ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಸಾಧ್ಯತೆ ಇದೆ. ಆದರೆ, ಪ್ರವಾಸೋದ್ಯಮ ಉತ್ತೇಜಿಸುವ ವೇದಿಕೆಯಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ‘ಚಿಕ್ಕ ಘಟನೆ’ ಎಂದು ಬಿಂಬಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅವರು ಹೇಳಿದರು. ವಿದೇಶಿ ಮಹಿಳೆಯ ಮೇಲಿನ ಅತ್ಯಾಚಾರ ಹಾಗೂ ವಿದೇಶಿ ಪ್ರಜೆಯ ಕೊಲೆ ಪ್ರಕರಣದ ನಂತರ ಆನೆಗೊಂದಿ ಭಾಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಶೇ.50ರಷ್ಟು ಕುಸಿದಿದೆ. ಪ್ರತಿ ವರ್ಷ ಸುಮಾರು 30 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದರೆ, ಇದೀಗ ಅದರ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಇದಕ್ಕೆ ಆಡಳಿತ ಪಕ್ಷದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ಸಣ್ಣದಾಗಿ ಕಾಣುವ ಮನಸ್ಥಿತಿಯಿಂದ ಸಂಸದ ಹಿಟ್ನಾಳ್ ಹೊರಬರಬೇಕು. ಪ್ರವಾಸಿಗರಿಗೆ ಭದ್ರತೆ ಒದಗಿಸಿ ಪ್ರವಾಸೋದ್ಯಮ ಉತ್ತೇಜಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಬಸವರಾಜ ಕ್ಯಾಟವರ್ ಅವರು ಒತ್ತಾಯಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಮಾದರಿ ಗ್ಯಾರಂಟಿ ಯೋಜನೆ ಘೋಷಿಸಿದ ಬಿಜೆಪಿ ಮಿತ್ರ ಪಕ್ಷ ಎಐಎಡಿಎಂಕೆ
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ - 2026ಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ತಮಿಳುನಾಡಿನ ವಿರೋಧ ಪಕ್ಷವಾಗಿರುವ ಹಾಗೂ ಬಿಜೆಪಿ ಮೈತ್ರಿ ಪಕ್ಷವಾಗಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ /AIADMK) ಕರ್ನಾಟಕ ಮಾದರಿ ಅನುಸರಿಸಲು ಮುಂದಾಗಿದೆ. ಹೌದು ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ
ಮತದಾರರ ಪಟ್ಟಿಯ ಮ್ಯಾಪಿಂಗ್: ಉಡುಪಿ ಜಿಲ್ಲೆಯ ಮತದಾರರಿಗೆ ಮುಸ್ಲಿಮ್ ಒಕ್ಕೂಟ ಸೂಚನೆ
ಉಡುಪಿ: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯದಾದ್ಯಂತ 2002ರ ಮತದಾರರ ಪಟ್ಟಿಯೊಂದಿಗೆ ಹೊಸದಾಗಿ ಪರಿಷ್ಕೃತ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಮತದಾರರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆ ದೇಶದ ಪ್ರತಿಯೊಬ್ಬ ನಾಗರಿಕನ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ. ಆದ್ದರಿಂದ 2002ರ ಮತದಾರರ ಪಟ್ಟಿಯಲ್ಲಿರುವ ನಿಮಗೆ ಸಂಬಂಧಿಸಿದ ಮತದಾರರ ವಿವರವು ಪ್ರಸ್ತುತ ಚಾಲ್ತಿ ಯಲ್ಲಿರುವ ಪಟ್ಟಿಯಲ್ಲಿ ಇದೆಯೋ ಇದ್ದರೆ ವಿವರಗಳು ಸರಿಯಾಗಿದೆಯೋ ಎಂಬುದನ್ನು ಖಾತ್ರಿ ಪಡಿಸಿ ಕೊಳ್ಳುವಂತೆ ಅವರು ಎಲ್ಲಾ ಮತದಾರರಿಗೂ ಸಲಹೆ ನೀಡಿದೆ. ಮತದಾರ ರೆಲ್ಲರೂ ಈ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಸಹಕರಿಸಿ ತಮ್ಮ ಮತದಾನದ ಹಕ್ಕನ್ನು ಖಾತ್ರಿ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ ಉಡುಪಿ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ. ‘ನಿಮ್ಮ ಮತದಾನದ ಹಕ್ಕಿನ ರಕ್ಷಣೆ ನಿಮ್ಮ ಜವಾಬ್ದಾರಿಯಾಗಿದೆ’. ಈ ಬಗ್ಗೆ ಈಗಾಗಲೇ ಉಡುಪಿ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ವಾರ್ಡ್ನ ಜವಾಬ್ದಾರಿ ಹೊಂದಿರುವ ಬಿಎಲ್ಒ ಅವರನ್ನು ಸಂಪರ್ಕಿಸಿ 2002ರ ಮತದಾರರ ಪಟ್ಟಿಯೊಂದಿಗೆ ಈಗಿನ ಮತದಾರರ ಪಟ್ಟಿಯಲ್ಲಿರುವ ನಿಮ್ಮ ವಿವರಗಳನ್ನು ಕೂಡಲೇ ಮ್ಯಾಪ್ ಮಾಡಿಸಿಕೊಳ್ಳಿರಿ ಎಂದು ಮೌಲಾ ಸೂಚನೆ ನೀಡಿದ್ದಾರೆ. ಒಂದು ವೇಳೆ ನಿಮ್ಮ ವಿವರಗಳು 2002ರ ಮತದಾರರ ಪಟ್ಟಿಯಲ್ಲಿ ಇಲ್ಲದೇ ಇದ್ದರೆ, ನಿಮ್ಮ ತಂದೆ- ತಾಯಂದಿರ ಅಥವಾ ಅಜ್ಜ- ಅಜ್ಜಿಯಂದಿರ ವಿವರಗಳನ್ನೂ ನಿಮ್ಮ ದಾಖಲೆಗಳ ಮ್ಯಾಪಿಂಗ್ಗಾಗಿ ಬಳಸಿಕೊಳ್ಳಬಹುದು. ವಿಶೇಷವಾಗಿ ಈ ಅವಧಿಯಲ್ಲಿ ತಮ್ಮ ವಾಸ್ತವ್ಯವನ್ನು ಬದಲಾಯಿಸಿದವರು ಮ್ಯಾಪಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೇ ವಿವಾಹದ ಬಳಿಕ ಬೇರೆ ಕಡೆಗಳಲ್ಲಿ ತಮ್ಮ ವಾಸ್ತವ್ಯ ಬದಲಿಸಿಕೊಳ್ಳುವ ಮಹಿಳೆಯರು ಈ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ ಎಂದವರು ತಿಳಿಸಿದ್ದಾರೆ. ಈ ಬಗ್ಗೆ ಈಗ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮಸೀದಿ ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿ ಗಳು ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಜನರಿಗೆ ಮಾಹಿತಿ ನೀಡುವುದಲ್ಲದೆ ಎಲ್ಲಾ ರೀತಿಯಲ್ಲಿ ಸಹಕರಿಸಬೇಕು ಎಂದು ಒಕ್ಕೂಟದ ಅಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೀದರ್ | ವಸತಿಯುತ ಶಾಲೆಗಳ 6ನೇ ತರಗತಿ ಪ್ರವೇಶ ಅರ್ಜಿ ದಿನಾಂಕ ವಿಸ್ತರಿಸಲು ಮಹೇಶ್ ಗೋರಾನಾಳಕರ್ ಒತ್ತಾಯ
ಬೀದರ್: ವಿವಿಧ ವಸತಿಯುತ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ. ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣದಂತೆ ಅಗತ್ಯವಿರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳು ಸಮಯಕ್ಕೆ ದೊರಕದ ಕಾರಣ ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅಸಾಧ್ಯವಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜ.25ರ, 2026 ಆಗಿದ್ದು, ಹಲವಾರು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣದ ಪ್ರಕಾರ ಹೊಸ ಪ್ರಮಾಣ ಪತ್ರಗಳನ್ನು ಇನ್ನೂ ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಗೆ ಕನಿಷ್ಠ 15 ದಿನಗಳ ಕಾಲಾವಕಾಶ ವಿಸ್ತರಿಸಬೇಕು. ಅಲ್ಲದೆ, ತಾತ್ಕಾಲಿಕವಾಗಿ ಹಳೆಯ ದಾಖಲೆಗಳ ಆಧಾರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಜೊತೆಗೆ ತಹಸೀಲ್ದಾರ್ಗಳಿಗೆ ತ್ವರಿತವಾಗಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ವಿತರಿಸುವಂತೆ ಸರ್ಕಾರ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬೀದರ್ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರ ಸಮಸ್ಯೆ ಶೀಘ್ರ ಬಗೆಹರಿಸಲು ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ
ಬೀದರ್: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಜಿಲ್ಲೆಯ ಎಲ್ಲಾ ಕಬ್ಬು ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2,950 ರೂ. ದರ ನಿಗದಿಪಡಿಸಿ ಪ್ರತಿ 15 ದಿನಕ್ಕೊಮ್ಮೆ ಹಣ ಪಾವತಿಸುವುದಾಗಿ ನೀಡಿದ್ದ ಆಶ್ವಾಸನೆಯನ್ನು ಪಾಲಿಸುತ್ತಿಲ್ಲ. ಕೆಲ ಕಾರ್ಖಾನೆಗಳು ಒಂದು ತಿಂಗಳಿಗೂ ಹೆಚ್ಚು ಅವಧಿಯಾದರೂ ರೈತರಿಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಲಾಯಿತು. ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ಅನೇಕ ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ವಿಶೇಷವಾಗಿ ಔರಾದ್ ತಾಲೂಕಿನ ಚಟ್ನಾಳ್ ಗ್ರಾಮದ ಸುಮಾರು 70 ರೈತರಿಗೆ ಸಂಪೂರ್ಣ ಬೆಳೆ ಹಾನಿಯಾದರೂ ಪರಿಹಾರ ವಿತರಿಸಿಲ್ಲ ಎಂದು ಸಂಘದ ಮುಖಂಡರು ದೂರಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಬ್ಬು ಕಟಾವು ಗ್ಯಾಂಗ್ಗಳ ಕೊರತೆ, ಬೆಳೆ ವಿಮೆ ಪರಿಹಾರದ ವಿಳಂಬ, ತೊಗರಿ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸುವುದು, ಹೊರ ರಾಜ್ಯಗಳಿಂದ ಕಬ್ಬು ತರದಂತೆ ನಿರ್ಬಂಧ ವಿಧಿಸುವುದು ಹಾಗೂ ಎಪಿಎಂಸಿಗಳಲ್ಲಿ ಅಕ್ರಮ ಕಡಿತ ಮತ್ತು ಕಮಿಷನ್ ವಸೂಲಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಲಾಯಿತು. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು. ಮುಂದಾಗುವ ಯಾವುದೇ ಅಹಿತಕರ ಘಟನೆಗೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ್ ಬಿರಾದಾರ್, ಜಿಲ್ಲಾ ಪ್ರ. ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ, ಬಾಬು ಮಾದಪ್ಪಾ, ರಾಜಕುಮಾರ್ ಪಾಟೀಲ್, ಪ್ರಕಾಶ್ ಬಾವಗೆ, ಗಣಪತಿ ಕಾಶೆಪ್ಪಾ, ಶ್ರೀನಿವಾಸ್ ಶಾಮರಾವ್, ಗುರುನಾಥ್ ಮಾಣಿಕರಾಯ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
2025ನೇ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿಗೆ ಮೊಜಾಂಬಿಕ್ನ ಮಾನವ ಹಕ್ಕುಗಳ ಹೋರಾಟಗಾರ್ತಿ ಗ್ರಾಸಾ ಮಾಶೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ಪೋಷಣೆ, ಆರ್ಥಿಕ ಸಬಲೀಕರಣ ಮತ್ತು ಸಂಕಷ್ಟಕರ ಸಂದರ್ಭಗಳಲ್ಲಿ ನಡೆಸಿದ ಮಹತ್ವದ ಮಾನವೀಯ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ತಿಳಿಸಿದೆ. ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರ ಅಧ್ಯಕ್ಷತೆಯಲ್ಲಿ ನಡೆದ ತೀರ್ಪುಗಾರರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಶಸ್ತಿಯು 1 ಕೋಟಿ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ಒಳಗೊಂಡಿದೆ. ಗ್ರಾಸಾ ಮಾಶೆಲ್ ಆಫ್ರಿಕಾದ ಪ್ರಮುಖ ಮಹಿಳಾ ನಾಯಕಿ. ರಾಜಕಾರಣಿ ಮತ್ತು ಮಾನವತಾವಾದಿಯಾಗಿರುವ ಅವರು, ಜೀವನಪೂರ್ತಿ ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಿದ್ದಾರೆ. ಎಲ್ಲರಿಗೂ ಸಮಾನ ನ್ಯಾಯ ಹಾಗೂ ಸಮಾನ ಸಮಾಜ ನಿರ್ಮಾಣದ ಮೂಲಕ ದುರ್ಬಲ ಸಮುದಾಯಗಳ ಜೀವನ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಟ್ರಸ್ಟ್ ಹೇಳಿದೆ. ಮಾಶೆಲ್ ಅವರ ಮೊದಲ ಪತಿ ಮೊಜಾಂಬಿಕ್ನ ಪ್ರಥಮ ಅಧ್ಯಕ್ಷರಾಗಿದ್ದ ಸಮೋರಾ ಮೊಯಿಸೆಸ್ ಮಾಶೆಲ್. ಅವರು 1986ರಲ್ಲಿ ನಿಧನರಾದರು. ಬಳಿಕ ಮಾಶೆಲ್ ಅವರು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ವಿವಾಹವಾದರು. 1945 ಅಕ್ಟೋಬರ್ 17ರಂದು ಗ್ರಾಮೀಣ ಮೊಜಾಂಬಿಕ್ನಲ್ಲಿ ಜನಿಸಿದ ಗ್ರಾಸಾ ಸಿಂಬಿನ್ (ಗ್ರಾಸಾ ಮಾಶೆಲ್) ಮೆಥಡಿಸ್ಟ್ ಮಿಷನ್ ಶಾಲೆಗಳಲ್ಲಿ ಶಿಕ್ಷಣ ಪಡೆದರು. ನಂತರ ಲಿಸ್ಬನ್ ವಿಶ್ವವಿದ್ಯಾಲಯದಲ್ಲಿ ಜರ್ಮನ್ ಭಾಷೆ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನ ಪಡೆದರು. ಅಲ್ಲಿಯೇ ಅವರಿಗೆ ಸ್ವಾತಂತ್ರ್ಯ ಮತ್ತು ರಾಜಕೀಯ ಪ್ರಜ್ಞೆ ಬೆಳೆದಿತು ಎಂದು ಟ್ರಸ್ಟ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 1973ರಲ್ಲಿ ಮೊಜಾಂಬಿಕ್ಗೆ ಮರಳಿದ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಶಿಕ್ಷಕಿಯಾಗಿ ಮೊಜಾಂಬಿಕ್ ಲಿಬರೇಶನ್ ಫ್ರಂಟ್ (FRELIMO)ಗೆ ಸೇರ್ಪಡೆಯಾದರು. 1975ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಮೊಜಾಂಬಿಕ್ ನ ಮೊದಲ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರಾಗಿ ನೇಮಕಗೊಂಡರು. ಅವರ ಅಧಿಕಾರಾವಧಿಯಲ್ಲಿ ಶಾಲಾ ದಾಖಲಾತಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿತು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಹುಡುಗರ ಪಾಲ್ಗೊಳ್ಳುವಿಕೆ ಶೇ.40ರಿಂದ ಶೇ.90ಕ್ಕೆ ಏರಿಕೆಯಾದರೆ, ಹುಡುಗಿಯರ ಪಾಲ್ಗೊಳ್ಳುವಿಕೆ ಶೇ.75ಕ್ಕಿಂತ ಹೆಚ್ಚಾಯಿತು ಎಂದು ತಿಳಿಸಲಾಗಿದೆ. 1990ರ ದಶಕದಲ್ಲಿ ಮಕ್ಕಳ ಮೇಲೆ ಸಶಸ್ತ್ರ ಸಂಘರ್ಷಗಳ ಪರಿಣಾಮ ಕುರಿತು ಸಮಗ್ರ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆ ಅವರಿಗೆ ನೀಡಿತು. 1996ರಲ್ಲಿ ಅವರು ಸಿದ್ಧಪಡಿಸಿದ “ಮಕ್ಕಳ ಮೇಲೆ ಸಶಸ್ತ್ರ ಸಂಘರ್ಷದ ಪರಿಣಾಮ” ಎಂಬ ವರದಿ, ಯುದ್ಧ ವಲಯಗಳಲ್ಲಿ ವಿಶ್ವಸಂಸ್ಥೆ ಮತ್ತು ಸದಸ್ಯ ರಾಷ್ಟ್ರಗಳ ಕಾರ್ಯವಿಧಾನಗಳ ಮೇಲೆ ಆಳವಾದ ಪ್ರಭಾವ ಬೀರಿತು. ಈ ದಣಿವರಿಯದ ಕಾರ್ಯಕ್ಕಾಗಿ ಅವರಿಗೆ ವಿಶ್ವಸಂಸ್ಥೆಯ ನ್ಯಾನ್ಸೆನ್ ನಿರಾಶ್ರಿತರ ಪ್ರಶಸ್ತಿ ನೀಡಲಾಯಿತು. 1997ರಲ್ಲಿ ಬ್ರಿಟನ್ ಸರ್ಕಾರವು ಡೇಮ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (DBE) ಗೌರವವನ್ನು ಪ್ರದಾನ ಮಾಡಿತು. 1993ರ ಡಿಸೆಂಬರ್ನಲ್ಲಿ ಮಕ್ಕಳ ಹಕ್ಕುಗಳ ಸಮಿತಿಯ ಶಿಫಾರಸಿನ ಮೇರೆಗೆ, ಯುದ್ಧಗಳಿಂದ ಮಕ್ಕಳು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಸಮಗ್ರ ಅಧ್ಯಯನ ನಡೆಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಲಾಯಿತು. ಈ ಮಹತ್ವದ ಅಧ್ಯಯನದ ನೇತೃತ್ವ ವಹಿಸಲು ಗ್ರಾಸಾ ಮಾಶೆಲ್ ಅವರನ್ನು ನೇಮಕ ಮಾಡಲಾಯಿತು. ಎರಡು ವರ್ಷಗಳ ಅವಧಿಯಲ್ಲಿ ಅವರು ಸಂಘರ್ಷದಿಂದ ಪ್ರಭಾವಿತ ಹಲವಾರು ದೇಶಗಳಿಗೆ ಭೇಟಿ ನೀಡಿ ಮಕ್ಕಳು, ಕುಟುಂಬಗಳು, ಕಾರ್ಯಕರ್ತರು ಮತ್ತು ಅಧಿಕಾರಿಗಳ ಅನುಭವಗಳನ್ನು ದಾಖಲಿಸಿದರು. 1996ರಲ್ಲಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಈ ವರದಿ, ಯುದ್ಧದಲ್ಲಿ ಸಿಲುಕಿದ ಲಕ್ಷಾಂತರ ಮಕ್ಕಳ ಮೇಲಿನ ಕ್ರೌರ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿತು. ಈ ವರದಿಗೆ ಮೊದಲು ಮಕ್ಕಳನ್ನು ಯುದ್ಧದ “ಆಕಸ್ಮಿಕ ಸಂತ್ರಸ್ತರು” ಎಂದು ಮಾತ್ರ ನೋಡಲಾಗುತ್ತಿತ್ತು. ಆದರೆ ಮಕ್ಕಳ ನೋವು ನೇರ ಬಿಕ್ಕಟ್ಟಾಗಿದ್ದು, ಅವರಿಗೆ ವಿಶೇಷ ರಕ್ಷಣೆಯ ಅಗತ್ಯವಿದೆ ಎಂಬ ಅರಿವನ್ನು ಮಾಶೆಲ್ ಜಾಗತಿಕ ಮಟ್ಟದಲ್ಲಿ ಮೂಡಿಸಿದರು. “ಪ್ರತಿಯೊಂದು ಸಂಸ್ಕೃತಿಯೂ ತನ್ನ ಮಕ್ಕಳ ಮೂಲಭೂತ ಅಗತ್ಯಗಳ ಮೇಲೆ ಕಾಳಜಿ ವಹಿಸುವುದೇ, ಯುದ್ಧವನ್ನು ಮೀರಿ ಶಾಂತಿಯತ್ತ ಸಾಗುವ ಅತ್ಯುತ್ತಮ ಮಾರ್ಗ” ಎಂದು ಗ್ರಾಸಾ ಮಾಶೆಲ್ ಹೇಳಿದ್ದಾರೆ. ಅವರು ದಿ ಎಲ್ಡರ್ಸ್ ಸಂಸ್ಥೆಯ ಸ್ಥಾಪಕ ಸದಸ್ಯೆಯಾಗಿದ್ದು, ಗರ್ಲ್ಸ್ ನಾಟ್ ಬ್ರೈಡ್ಸ್ ಎಂಬ ಎನ್ಜಿಒ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಸುಸ್ಥಿರ ಅಭಿವೃದ್ಧಿ ಗುರಿಗಳ ವಕಾಲತ್ತು ಗುಂಪಿನ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2010ರಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ, ಆಹಾರ ಭದ್ರತೆ ಮತ್ತು ಉತ್ತಮ ಆಡಳಿತ ಉತ್ತೇಜನಕ್ಕಾಗಿ ಗ್ರಾಸಾ ಮಾಶೆಲ್ ಟ್ರಸ್ಟ್ ಸ್ಥಾಪಿಸಿದರು. ಜಿಜಿಲೆ ಇನ್ಸ್ಟಿಟ್ಯೂಟ್ ಫಾರ್ ಚೈಲ್ಡ್ ಡೆವಲಪ್ಮೆಂಟ್ ಸ್ಥಾಪನೆಯಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ. 2018ರಲ್ಲಿ ಮಹಿಳೆಯರು ಮತ್ತು ಹದಿಹರೆಯದವರ ಯೋಗಕ್ಷೇಮಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಅತ್ಯುನ್ನತ ಗೌರವವಾದ WHO ಚಿನ್ನದ ಪದಕ ನೀಡಿ ಅವರನ್ನು ಗೌರವಿಸಲಾಯಿತು.
ಕಲಬುರಗಿ | ಸರಕಾರಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಪಕ್ಷಿ ವೀಕ್ಷಣೆ ಕಾರ್ಯಕ್ರಮ
ಕಲಬುರಗಿ: ನಗರದ ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳಲ್ಲಿ ಪಕ್ಷಿಗಳ ಕುರಿತು ಅರಿವು ಮೂಡಿಸುವುದು, ಅವುಗಳ ನಡೆ-ನುಡಿಗಳು ಹಾಗೂ ವಿಶೇಷ ವೈಶಿಷ್ಟ್ಯಗಳನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಬೆಳಗ್ಗೆ 6.30ರಿಂದ 9.30ರವರೆಗೆ ನಡೆದ ಪಕ್ಷಿ ವೀಕ್ಷಣೆಯಲ್ಲಿ 25ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳನ್ನು ಗುರುತಿಸಲಾಯಿತು. ಈ ವೇಳೆ ಪಕ್ಷಿಗಳ ವಿಭಿನ್ನ ಭಂಗಿ ಹಾಗೂ ಚಟುವಟಿಕೆಗಳನ್ನು ಕ್ಯಾಮರದಲ್ಲಿ ಸೆರೆಹಿಡಿಯಲಾಯಿತು. ವಿಶೇಷವಾಗಿ ಕಾಪರ್ ಸ್ಮಿತ್ ಬಾರ್ಬೆಟ್ (ಕಂಚುಕುಟಿಕ) ಮರದಲ್ಲಿ ಹೊಳ್ಳೆ ಮಾಡುವ ವಿಧಾನ ಹಾಗೂ ಬಾಲದಂಡೆ ಹಕ್ಕಿಯ ಮನಮೋಹಕ ಹಾರಾಟದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಚಿತ್ತಾಪುರ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಅವರು ಮಾತನಾಡಿ, ಪಕ್ಷಿಗಳನ್ನು ವೀಕ್ಷಿಸುವ ಮೂಲಕ ಅವುಗಳ ಕುರಿತ ಕುತೂಹಲಕರ ಮಾಹಿತಿಯನ್ನು ದಾಖಲಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪಕ್ಷಿಗಳ ಹೆಸರು, ವರ್ತನೆ ಹಾಗೂ ವಾಸಸ್ಥಾನಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಆಸಕ್ತಿಯಿಂದ ತಿಳಿದುಕೊಂಡರು. ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಮಹೇಶ್, ಡಾ. ರಾಜಶೇಖರ್, ಡಾ. ಅನಿತಾ, ಐಶ್ವರ್ಯ, ಆಸಿಫ್ ಹಾಗೂ ಆಸಕ್ತ ಪಕ್ಷಿ ವೀಕ್ಷಣೆ ತಂಡದ ಪವನ್ ಮೋಹನ್ ರಾವ್, ಅಭಿಷೇಕ್ ಉಪ್ಪಾರ್ ಅವರು ಪಕ್ಷಿಗಳ ವಿವಿಧ ವರ್ತನಾ ಲಕ್ಷಣಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಕಲಬುರಗಿ ಪಕ್ಷಿ ವೀಕ್ಷಣೆ ತಂಡದ ಸದಸ್ಯರು ಭಾಗವಹಿಸಿದ್ದರು.
ಸಂಪಾದಕೀಯ | ರಾಜ್ಯಪಾಲರು ಕೇಂದ್ರ-ರಾಜ್ಯಗಳ ನಡುವೆ ಸೇತುವೆಯಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮುಂಬೈ ಮೇಯರ್ ಚುನಾವಣೆಗೆ ಭಾರೀ ಟ್ವಿಸ್ಟ್, ಬಿಎಂಸಿ ಮೀಸಲಾತಿಗೆ ಶಿವಸೇನೆ ಉದ್ಧವ್ ಬಣ ಕಿಡಿ
ಮಹಾರಾಷ್ಟ್ರದ ನಗರಾಭಿವೃದ್ಧಿ ಇಲಾಖೆಯು ಗುರುವಾರ ನಡೆಸಿದ ಲಾಟರಿ ಪ್ರಕ್ರಿಯೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಮೇಯರ್ ಸ್ಥಾನವನ್ನು 'ಸಾಮಾನ್ಯ ಮಹಿಳೆ' ವರ್ಗಕ್ಕೆ ಮೀಸಲಿರಿಸಲಾಗಿದೆ. ಇದರೊಂದಿಗೆ ಮುಂಬೈಗೆ ಮಹಿಳಾ ಮೇಯರ್ ಸಿಗುವುದು ಖಚಿತವಾಗಿದೆ. ಆದರೆ, ಮೀಸಲಾತಿ ರೋಸ್ಟರ್ ಪದ್ಧತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಈ ಪ್ರಕ್ರಿಯೆಯನ್ನು ಬಹಿಷ್ಕರಿಸಿದೆ. ಸರದಿ ಪ್ರಕಾರ ಒಬಿಸಿ ವರ್ಗಕ್ಕೆ ಸಿಗಬೇಕಿದ್ದ ಸ್ಥಾನವನ್ನು ಮತ್ತೆ ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ ಎಂಬುದು ಅವರ ಆಕ್ಷೇಪವಾಗಿದೆ.
ಜ.29ಕ್ಕೆ ಕರ್ನಾಟಕ ಸಾರಿಗೆ ನೌಕರರ ಮುಷ್ಕರ: ನಾಲ್ಕೂ ನಿಗಮದಿಂದ ಬೆಂಬಲ! ಬಸ್ ಸೇವೆಯಲ್ಲಿ ವ್ಯತ್ಯಯ, ಮುಖ್ಯಾಂಶಗಳು
ಬೆಂಗಳೂರು: ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ ವೇತನ ಪರಿಷ್ಕರಣೆ ಸೇರಿದಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಲ್ಲ ನಾಲ್ಕು ಸಂಸ್ಥೆಗಳ ಸಾರಿಗೆ ನೌಕರರಿಂದ ಜನವರಿ 29ರಂದು ಮುಷ್ಕರ ನಡೆಯಲಿದೆ. ಈ ಹಿಂದೆ ಘೋಷಿಸಿದ್ದ ಮುಷ್ಕರವು ವಿವಿಧ ಕಾರಣಗಳಿಂದ ಮುಂದೂಡಿಕೆ ಆಗಿತ್ತು. ಇದೀಗ ಸರ್ಕಾರ ಯಾವುದೇ ರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣಕ್ಕೆ ರಾಜ್ಯವ್ಯಾಪಿ 'ಬೆಂಗಳೂರು ಚಲೋ'
ಕಲಬುರಗಿ | ಕ್ರೀಡೆಗಳಲ್ಲಿ ಗೆಲುವು ಸಾಧಿಸಲು ಶಿಸ್ತು, ಸಮಯ ಮುಖ್ಯ : ಡಾ.ಪಂಡಿತ್
ಕಲಬುರಗಿ : ಕ್ರೀಡಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಲು ಶಿಸ್ತು ಮತ್ತು ಸಮಯ ಪಾಲನೆ ಬಹಳ ಮುಖ್ಯ ಎಂದು ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಂಡಿತ್ ಬಿ.ಕೆ. ಅವರು ಅಭಿಪ್ರಾಯಪಟ್ಟರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘ ಸಂವಿಧಾನ ದಿನಾಚರಣೆ ಅಂಗವಾಗಿ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಂವಿಧಾನ ಪ್ರೀಮಿಯರ್ ಲೀಗ್-2026 ಪುರುಷ ಮತ್ತು ಮಹಿಳೆಯರ ಕ್ರಿಕೆಟ್ ಆರನೇ ದಿನದ ಪಂದ್ಯಾವಳಿಗೆ ಟಾಸ್ ಮಾಡಿ ಮಾತನಾಡಿ, ಶಿಸ್ತು ಮತ್ತು ಸಮಯ ಪಾಲನೆಯಿಂದ ನಿಮ್ಮ ಪ್ರತಿಭೆಗೆ ಯಶಸ್ಸು ಸಿಗಲಿದೆ. ಆತ್ಮಸ್ಥೈರ್ಯ, ದೈಹಿಕ ಸದೃಢತೆ ಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳಿಗೆ ನವಚೈತನ್ಯ ಬರುತ್ತದೆ ಎಂದು ಹೇಳಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮತ್ತು ಪ್ರತಿಭೆ ಪ್ರದರ್ಶನಕ್ಕೆ ಸಮಾನ ಆದ್ಯತೆ ನೀಡಬೇಕು. ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಛಲದಿಂದ ಪ್ರಯತ್ನಿಸಿದಾಗ ಬಹುಮುಖ ವ್ಯಕ್ತಿತ್ವದೊಂದಿಗೆ ಸಾಧಕನಾಗಿ ಬೆಳೆಯಬಹುದು ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ ಸರ್ವರಿಗೂ ಸಮಾನ ಅವಕಾಶ ನೀಡಿದೆ. ಅವರ ಜೀವನ ಮತ್ತು ಚಿಂತನೆ ನಮ್ಮಲ್ಲರಿಗೂ ಮಾರ್ಗ ತೋರಿಸುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳನ್ನು ಪ್ರತಿ ಗ್ರಾಮೀಣ ಪ್ರದೇಶಗಳ ಜನರಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ಕೇವಲ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅಳವಡಿಸಿದರೆ ಸಾಲದು ಸಂವಿಧಾನದ ಮಹತ್ವ ಮತ್ತು ಹೋರಾಟದ ಜೀವನವನ್ನು ಪ್ರತಿಯೊಬ್ಬರ ಮನ ಮತ್ತು ಮನೆಗೂ ತಲುಪಿಸಬೇಕು. ಅವರ ಹೆಸರಿನಲ್ಲಿ ಈ ಪಂದ್ಯಾವಳಿ ನಡೆದಿರುವುದು ಹೆಮ್ಮೆ ಎನಿಸಿದೆ. ಮುಂದೆಯೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಕ್ರೀಡೆ, ಕಾರ್ಯಾಗಾರ, ಸಮ್ಮೇಳನ, ವಿಚಾರ ಸಂಕಿರಣ ಆಯೋಜನೆ ಮಾಡುವ ಕೆಲಸವಾಗಲಿ ಎಂದು ಆಶಿಸಿದರು. ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಅರುಣ ಕುಮಾರ ಕುರ್ನೆ ಮಾತನಾಡಿದರು. ಡಾ.ವಿಜಯಕುಮಾರ ಬೀಳಗಿ, ಡಾ.ಶಂಭುನಾಥ ನಡಗೇರಿ, ಡಾ.ಸೂಲಬಾಯಿ ಹಿತವಂತ, ಡಾ.ಪಲ್ಲವಿ, ಡಾ.ಅಭಯಕುಮಾರ್ ಪೋತೆ ಮುಂತಾದವರಿದ್ದರು. ಜ.17 ರಿಂದ ಆರಂಭವಾದ ಸಂವಿಧಾನ ಪ್ರೀಮಿಯರ್ ಲೀಗ್-2026 ಪುರುಷ ಮತ್ತು ಮಹಿಳೆಯರ ಕ್ರಿಕೆಟ್ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ತಂಡಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಮೊದಲ ಸುತ್ತಿನ ಲೀಗ್ ಪಂದ್ಯದಲ್ಲಿ ಒಟ್ಟು 29 ತಂಡಗಳು ಪ್ರದರ್ಶನ ನೀಡಿದವು. ಸೆಮಿಫೈನಲ್ ಪಂದ್ಯದಲ್ಲಿ 19 ಪುರುಷ ತಂಡಗಳು, 10 ಮಹಿಳಾ ತಂಡಗಳು ಪ್ರದರ್ಶನ ನೀಡಲಿವೆ.
ಕಲಬುರಗಿ | ಜಂಟಿ ಸದನದಲ್ಲಿ ಮಾತನಾಡದ ರಾಜ್ಯಪಾಲರ ನಡೆ, ಅಸಂವಿಧಾನಿಕ: ಸಿಪಿಎಂ ಖಂಡನೆ
ಕಲಬುರಗಿ: ರಾಜ್ಯ ಸರ್ಕಾರ ಕರೆದಿದ್ದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ, ತಮ್ಮದೇ ಮಾತುಗಳನ್ನು ಹೇಳಿ ನಿರ್ಗಮಿಸಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ನಡೆ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಪ್ರತಿವರ್ಷದ ಮೊದಲ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಂತ್ರಿಮಂಡಲ ಸಿದ್ಧಪಡಿಸಿದ ಭಾಷಣವನ್ನು ಓದಬೇಕೆಂದು ಸಂವಿಧಾನದ ಕಲಂ 176 ಸ್ಪಷ್ಟವಾಗಿ ತಿಳಿಸುತ್ತದೆ. ಆದರೆ ರಾಜ್ಯಪಾಲರು ಇದನ್ನು ಪಾಲಿಸದೆ ಸಂವಿಧಾನಬಾಹಿರವಾಗಿ ವರ್ತಿಸಿರುವುದು ಸರ್ವಾಧಿಕಾರತ್ವದ ಮನೋಭಾವವನ್ನು ತೋರಿಸುತ್ತದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ತಾವು ರಾಜ್ಯ ಸರ್ಕಾರದ ಪ್ರತಿನಿಧಿಗಳೆಂಬುದನ್ನು ಮರೆತು, ಕೇಂದ್ರ ಸರ್ಕಾರದ ಅಥವಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಂತೆ ವರ್ತಿಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರಗಳೊಂದಿಗೆ ನಿರಂತರವಾಗಿ ತಿಕ್ಕಾಟ ನಡೆಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಒಕ್ಕೂಟವಾದಿ ಸ್ವರೂಪವನ್ನು ಬಲಪಡಿಸುವ ಬದಲು, ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನದಲ್ಲಿದೆ. ಇದು ಸಂವಿಧಾನದ ಮೌಲ್ಯಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ಅಪರೂಪದ ಪಾಲಪೂವನ್ ಆಮೆ ಮೊಟ್ಟೆಗಳು ಪತ್ತೆ - 37 ಮೊಟ್ಟೆಗಳಿಗೆ ಅರಣ್ಯ ಇಲಾಖೆ ರಕ್ಷಣೆ
ಕಾಸರಗೋಡಿನ ಕುಂಡಂಗುಯಿ ಚೊಟ್ಟದ ಪಯಸ್ವಿನಿ ಹೊಳೆತೀರದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಪಾಲಪೂವನ್ ಆಮೆಯ 37 ಮೊಟ್ಟೆಗಳು ಪತ್ತೆಯಾಗಿವೆ. ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಮೊಟ್ಟೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಮರಿಗಳು ಹೊರಬಂದ ಬಳಿಕ ಹೊಳೆಗೆ ಬಿಡಲು ಸಿದ್ಧತೆ ನಡೆಸಿದೆ. ಈ ಅಪರೂಪದ ಆಮೆಯ ಸಂರಕ್ಷಣೆಗೆ ಇದು ಮಹತ್ವದ ಹೆಜ್ಜೆಯಾಗಿದೆ.
ಜೇವರ್ಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಲೆಯ ಮೇಲೆ ಕಲ್ಲು ಹೊತ್ತು ಅನಿರ್ಧಿಷ್ಟಾವಧಿ ಧರಣಿ
ಜೇವರ್ಗಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯ ನೇತೃತ್ವದಲ್ಲಿ ಜೇವರ್ಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಹಾಗೂ ತಾಲೂಕು ಪಂಚಾಯತ್ ಕಚೇರಿ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಿತು. ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ರೈತರು ತಲೆಯ ಮೇಲೆ ಸೈಜುಗಲ್ಲುಗಳನ್ನು ಹೊತ್ತು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲಾ ರೈತರಿಗೆ ಬೆಳೆ ಪರಿಹಾರ ಧನ ಹಾಗೂ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ಒದಗಿಸಬೇಕು, ತೊಗರಿಗೆ ಕನಿಷ್ಠ 12,000 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಜೊತೆಗೆ 2005ರ ಉದ್ಯೋಗ ಖಾತ್ರಿ ಕಾಯ್ದೆಗೆ ವಿಬಿ ಜಿ ರಾಮ್ಜಿ ಮೂಲಕ ಮಾಡಲಾದ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ರೈತರು ಒತ್ತಾಯಿಸಿದರು. ಧರಣಿಯಲ್ಲಿ ತಾಲೂಕು ಅಧ್ಯಕ್ಷ ಸುಭಾಷ್ ಹೊಸಮನೆ, ಕಾರ್ಯದರ್ಶಿ ರೇವು ನಾಯಕ್, ಜಾಧವ್ ಮಲ್ಕಪ್ಪ ಹರನೂರ್ (ಕೋರ್ಕೂರು), ಬಸವರಾಜ ನಡುವಿನಕೆರೆ, ಸಿದ್ದಪ್ಪ ಹಂಗರಗಿ, ನಿಂಗಣ್ಣ, ಶ್ರೀಕಾಂತ್ ದಾಸರ್, ಉಸ್ಮಾನ್ ಅಲಿ ಇನಾಮದಾರ, ಸಕ್ರಪ್ಪ ಮ್ಯಾಗೇರಿ, ಭೀಮರಾಯ ದಾಸರ, ಸಿದ್ದಣ್ಣ ಅದ್ವಾನಿ, ರಮೇಶ್ ಬಂದ್ರವಾಡ, ಗುರಪ್ಪ ಮುಖ, ರಾಜು ಸಾತ್ಕೇಡ, ಈರಣ್ಣ ರಾಥೋಡ್, ಯಲ್ಲಾಲಿಂಗ ತಳವಾರ್, ಬಸವರಾಜ ಅನ್ನೊರು, ಮಹಾಂತೇಶ್ ನಾಯ್ಕೋಡಿ, ಮಲ್ಲಿಕಾರ್ಜುನ್ ಹೊಸಮನಿ, ಲಕ್ಷ್ಮಣ್ ಕವಾಲ್ದಾರ್, ಬಾಲರಾಜ್ ಕೋಟೆ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಭೀಮಣ್ಣ ಖಂಡ್ರೆ, ಪ್ರೊ.ಮಾಧವ್ ಗಾಡ್ಗೀಳ್ರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ
ಬೆಂಗಳೂರು: ಮಾಜಿ ಸಚಿವ ಭೀಮಣ್ಣ ಖಂಡ್ರೆ, ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್ ಹಾಗೂ ಮಾಜಿ ಶಾಸಕ ಕೆ.ಲಕ್ಕಣ್ಣ ಅವರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರುಗಳ ಗದ್ದಲದ ಮಧ್ಯೆಯೇ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗುರುವಾರ ‘ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ’ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ‘ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ಗದ್ದಲ-ಗೊಂದಲದ ನಡುವೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು. ಭೀಮಣ್ಣ ಖಂಡ್ರೆ, ಪ್ರೊ. ಮಾಧವ ಗಾಡ್ಗೀಳ್ ಹಾಗೂ ಕೆ.ಲಕ್ಕಣ್ಣರ ನಿಧನವಾಗಿರುವುದನ್ನು ಸದನಕ್ಕೆ ತಿಳಿಸಿದರು. ಭೀಮಣ್ಣ ಖಂಡ್ರೆಯವರು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಜನಿಸಿದ್ದು, ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಗಡಿಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹೈ.ಕ.ವಿಮೋಚನೆಗಾಗಿ ಹೋರಾಡಿದ್ದು, ಕರ್ನಾಟಕ ಏಕೀಕರಣದ ರೂವಾರಿಯಾಗಿದ್ದರು ಎಂದು ಸ್ಮರಿಸಿದರು. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಪರಿಷತ್ ಸದಸ್ಯರಾಗಿದ್ದರು. ಕನ್ನಡ ಶಿಕ್ಷಣ, ಶರಣತ್ವದ ದೀಕ್ಷೆ ಪಡೆದಿದ್ದ ಖಂಡ್ರೆ ಉರ್ದು, ಪಾರ್ಸಿ, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿದ್ದರು. ವೀರಶೈವ ಮಹಾಸಭೆಯ ರಾಷ್ಟ್ರೀಯಾಧ್ಯಕ್ಷ ಸೇವೆ ಸಲ್ಲಿಸಿದ್ದ ಅವರು, 6 ದಶಕಗಳ ಕಾಲ ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಮಾಧವ ಗಾಡ್ಗೀಳ್ ಪುಣೆಯಲ್ಲಿ ಜನಿಸಿದ್ದು, ಪರಿಸರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಾರಿಸರಿಕ ವಿಜ್ಞಾನ ಕೇಂದ್ರ ಮತ್ತು ಸೆಂಟರ್ ಪಾರ್ಕ್ ಥಿಯೇರಿಟಿಕಲ್ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಆಧುನಿಕ ಪರಿಸರ ಸಂಶೋಧನೆಗಳ ಅಧ್ಯಯನಕ್ಕೆ ನಾಂದಿ ಹಾಡಿದ್ದರು. ಪಶ್ಚಿಮ ಘಟ್ಟಗಳ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದರು. 250ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ, ಚಾಂಪಿಯನ್ ಆಫ್ ದಿ ಅರ್ಥ್ ಗೌರವಕ್ಕೆ ಪಾತ್ರರಾಗಿದ್ದರು. ಪದಶ್ರೀ, ಪದಭೂಷಣ, ಶಾಂತಿ ಸ್ವರೂಪ್ ಭಟ್ನಾಗರ್, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಗಾಡ್ಗಿಳ್ ಅವರು ಜ.7ರಂದು ನಿಧನ ಹೊಂದಿದ್ದಾರೆ ಎಂದು ವಿಷಾದಿಸಿದರು. ಮಾಜಿ ಶಾಸಕ ಕೆ.ಲಕ್ಕಣ್ಣ ಅವರು ಕುಣಿಗಲ್ ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದ್ದರು. ಕೈಗಾರಿಕೋದ್ಯಮಿಯಾಗಿದ್ದ ಅವರು 2 ಬಾರಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಅವರು 1989ರಲ್ಲಿ ರಾಜಾಜಿನಗರ ಕ್ಷೇತ್ರದಿಂದ 9ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಜ.11ರಂದು ನಿಧನ ಹೊಂದಿದ್ದಾರೆ ಎಂದು ಸ್ಪೀಕರ್ ಖಾದರ್ ತಿಳಿಸಿದರು. ಸ್ಪೀಕರ್ ಮಂಡಿಸಿದ ಸಂತಾಪ ಸೂಚನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಭೀಮಣ್ಣ ಖಂಡ್ರೆ 103 ವರ್ಷಗಳ ಕಾಲ ಬದುಕಿದ್ದ ಶತಾಯುಷಿ. ನಾಲ್ಕು ಬಾರಿ ಶಾಸಕರಾಗಿದ್ದರು. ಮಹಾತ್ಮ ಗಾಂಧೀಜಿಯಿಂದ ಪ್ರೇರಣೆ ಪಡೆದು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಅವರ ಗುಣಗಾನ ಮಾಡಿದರು. ಅದೇ ರೀತಿಯಲ್ಲಿ ಮಾಜಿ ಶಾಸಕ ಕೆ.ಲಕ್ಕಣ್ಣ ಹಾಗೂ ಪರಿಸರ ತಜ್ಞ ಪ್ರೊ.ಮಾಧವ ಗಾಡ್ಗೀಳ್ ಅವರ ಗುಣಗಾನ ಮಾಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಆ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಶರಣಪ್ರಕಾಶ್ ಪಾಟೀಲ್, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ಸದಸ್ಯರಾದ ಜಿ.ಟಿ.ದೇವೇಗೌಡ, ಎಂ.ಟಿ.ಕೃಷ್ಣಪ್ಪ, ಬಿ.ವೈ.ವಿಜಯೇಂದ್ರ, ಬಿ.ಆರ್.ಪಾಟೀಲ್ ಸೇರಿದಂತೆ ಇನ್ನಿತರ ಸದಸ್ಯರು ಸಂತಾಪ ಸೂಚಿಸಿದರು. ಅಗಲಿದ ಗಣ್ಯರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
1984ರ ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಖುಲಾಸೆ
ಹೊಸದಿಲ್ಲಿ: 1984ರಲ್ಲಿ ದಿಲ್ಲಿಯ ಜನಕ್ಪುರಿ ಹಾಗೂ ವಿಕಾಸ್ಪುರಿ ಪ್ರದೇಶಗಳಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಪ್ರಕರಣದಲ್ಲಿ, ದಿಲ್ಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯವು ಗುರುವಾರ ಕಾಂಗ್ರೆಸ್ ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದೆ. ಈ ಹಿಂಸಾಚಾರದಲ್ಲಿ ಇಬ್ಬರು ಸಿಖ್ ನಾಗರಿಕರು ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರ ಪಾತ್ರವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿಚಾರಣೆಯ ವೇಳೆ, ಅವರು ಘಟನೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ವಾದಿಸಿದ್ದರು. ವಿಶೇಷ ನ್ಯಾಯಾಧೀಶ ದಿಗ್ವಿಜಯ್ ಸಿಂಗ್ ಅವರು ಮೌಖಿಕವಾಗಿ ಸಂಕ್ಷಿಪ್ತ ಆದೇಶ ಪ್ರಕಟಿಸಿ ಕುಮಾರ್ ಅವರನ್ನು ಖುಲಾಸೆಗೊಳಿಸಿದರು. 1984ರ ನವೆಂಬರ್ 1ರಂದು ಜನಕ್ಪುರಿಯಲ್ಲಿ ಸೋಹನ್ ಸಿಂಗ್ ಹಾಗೂ ಅವರ ಅಳಿಯ ಅವತಾರ್ ಸಿಂಗ್ ಹತ್ಯೆ ಮತ್ತು ನವೆಂಬರ್ 2ರಂದು ವಿಕಾಸ್ಪುರಿಯಲ್ಲಿ ಗುರ್ಚರಣ್ ಸಿಂಗ್ ಅವರನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣಗಳಿಗೆ ಸಂಬಂಧಿಸಿ, 2015ರ ಫೆಬ್ರವರಿಯಲ್ಲಿ ವಿಶೇಷ ತನಿಖಾ ತಂಡವು ಕುಮಾರ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಿತ್ತು. 2023ರ ಆಗಸ್ಟ್ನಲ್ಲಿ ನ್ಯಾಯಾಲಯವು ಕುಮಾರ್ ವಿರುದ್ಧ ಗಲಭೆ ಹಾಗೂ ದ್ವೇಷ ಪ್ರಚೋದನೆ ಆರೋಪಗಳನ್ನು ರೂಪಿಸಿತ್ತು. ಆದರೆ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಸದ್ಯ ಜೈಲಿನಲ್ಲಿರುವ ಸಜ್ಜನ್ ಕುಮಾರ್ ಅವರಿಗೆ, 1984ರ ನವೆಂಬರ್ 1ರಂದು ಸರಸ್ವತಿ ವಿಹಾರ್ ಪ್ರದೇಶದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣದೀಪ್ ಸಿಂಗ್ ಹತ್ಯೆ ಪ್ರಕರಣದಲ್ಲಿ, ಕಳೆದ ವರ್ಷ ಫೆಬ್ರವರಿ 25ರಂದು ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಪ್ರಕರಣವು ‘ಅಪರೂಪದ ಪ್ರಕರಣ’ದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಈ ಹತ್ಯೆ ಪ್ರಕರಣವು, 2018ರ ಡಿಸೆಂಬರ್ 17ರಂದು ದಿಲ್ಲಿ ಹೈಕೋರ್ಟ್ ಪಾಲಂ ಕಾಲೋನಿ ಪ್ರದೇಶದಲ್ಲಿ ನಡೆದ ಐದು ಜನರ ಹತ್ಯೆ ಪ್ರಕರಣದಲ್ಲಿ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಘಟನೆಯ ಮುಂದುವರಿಕೆಯಾಗಿದೆ. ಈ ಗಲಭೆಗಳು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ನಡೆದವು. 1984ರ ದಂಗೆಯ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗದ ವರದಿ ಪ್ರಕಾರ, ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 587 ಎಫ್ಐಆರ್ ಗಳು ದಾಖಲಾಗಿದ್ದು, 2,733 ಮಂದಿ ಮೃತಪಟ್ಟಿದ್ದರು. ಈ ಪೈಕಿ 240 ಪ್ರಕರಣಗಳನ್ನು ‘ಪತ್ತೆಯಾಗದ’ ಎಂದು ಮುಚ್ಚಲಾಗಿದ್ದು, 250 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಕೇವಲ 28 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಪಾಲಂ ಕಾಲೋನಿ ಹತ್ಯೆ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಜ್ಜನ್ ಕುಮಾರ್ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ.
ಅಶ್ಲೀಲ ವಿಡಿಯೋ: ರಾಮಚಂದ್ರ ರಾವ್ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಕೋರ್ಟ್ ನಿರ್ಬಂಧ
ಬೆಂಗಳೂರು: ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯ ವರ್ತನೆ ತೋರಿದ್ದ ಹಿರಿಯ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಇತ್ತ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಅಶ್ಲೀಲ ವಿಡಿಯೋ ಬಹಿರಂಗವಾಗುತ್ತಿದ್ದು, ನ್ಯಾಯಲಯವು ಮಾನಹಾನಿಕರ ಸುದ್ದಿಗಳನ್ನ ಬಿತ್ತರಿಸದಂತೆ ನಿರ್ಬಂಧ ವಿಧಿಸಿದೆ. ಅಶ್ಲೀಲ ವಿಡಿಯೊ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಕೆ ರಾಮಚಂದ್ರ ರಾವ್
ಮೈಸೂರು: ಆರೋಗ್ಯ ಕ್ಷೇತ್ರದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ
ವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಸೂಚನೆಯಲ್ಲಿ ಹೇಳಿದೆ. ವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ವೃತ್ತಿಜೀವನ ಹುಡುಕುತ್ತಿರುವವರಿಗೆ ಉತ್ತಮ ಅವಕಾಶವಾಗಿದೆ. ಆಸಕ್ತಿ ಅಭ್ಯರ್ಥಿಗಳು ಜನವರಿ 27ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಹೀಗಿದೆ ಅರಿವಳಿಕೆ ತಜ್ಞರು 2, ಪ್ರಸೂತಿ ಮತ್ತುಸ್ತ್ರೀರೋಗ ತಜ್ಞರು 1, ಮಕ್ಕಳ ತಜ್ಞರು 2, ಒ.ಟಿ. ಟೆಕ್ನಿಷಿಯನ್ 1, ತಾಲೂಕು ಆಶಾ ಮೆಂಟರ್ 1, ಪ್ರಯೋಗಶಾಲಾ ತಂತ್ರಜ್ಞರು 2, ಶೂಶ್ರೂಷಕ ಅಧಿಕಾರಿಗಳು 16, ದಂತ ಶಸ್ತ್ರಚಿಕಿತ್ಸಕರು 6, ಫಿಜಿಷಿಯನ್ 1, ವೈದ್ಯಾಧಿಕಾರಿಗಳು 2, ಆಪ್ತ ಸಮಾಲೋಚಕರು 1, ಶುಶ್ರೂಷಕ ಅಧಿಕಾರಿ 1, ಎಪಿಡಮಾಲಜಿಸ್ಟ್ 2, ವೈದ್ಯಾಧಿಕಾರಿಗಳು 2, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 4, ಆರೋಗ್ಯ ನಿರೀಕ್ಷಣಾಧಿಕಾರಿಗಲು 2, ಶುಶ್ರೂಷಕ ಅಧಿಕಾರಿಗಳು 4, ವೈದ್ಯಾಧಿಕಾರಿಗಳು 4, ಆರೋಗ್ಯ ನಿರೀಕ್ಷಣಾಧಿಕಾರಿಗಳು 4, ಶುಶ್ರೂಷಕ ಅಧಿಕಾರಿಗಳು 5, ಹಿರಿಯ ವೈದ್ಯಾಧಿಕಾರಿ (ಡಿಆರ್ಟಿಬಿ ಕೇಂದ್ರ) 1, ವೈದ್ಯಾಧಿಕಾರಿ 1, ಕ್ಷಯರೋಗ ಆರೋಗ್ಯ ಸಂದರ್ಶಕ (ಟಿಬಿಎಚ್ವಿ) 1 ಹುದ್ದೆ ಸೇರಿದಂತೆ ಒಟ್ಟು 67 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ ಹೆಚ್ಚಿನ ಮಾಹಿತಿಗೆ ಜಿಲ್ಲಾ ಆರೋಗ್ಯ ಕಚೇರಿಯನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು DHFWS ಮೈಸೂರು ನೇಮಕಾತಿ ಅಧಿಸೂಚನೆ 2026 ಪ್ರಕಾರ, ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10, 12ನೇ ತರಗತಿ, ಡಿಪ್ಲೊಮಾ, GNM, ANM, MPW, DMLT, MLT, B.Sc, BDS, ಪದವಿ, D.Ch, DA, MBBS, MPH, DNB, MD ಸೇರಿದಂತೆ ಸಂಬಂಧಿತ ಶೈಕ್ಷಣಿಕ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು. ಹುದ್ದೆಯ ಪ್ರಕಾರ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಮಾನದಂಡಗಳು ವಿಭಿನ್ನವಾಗಿರುವುದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಪರಿಶೀಲಿಸುವುದು ಅಗತ್ಯವಾಗಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆಗೆ ಮುನ್ನ ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜೊತೆಗೆ ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ದಾಖಲೆಗಳು, ವ್ಯಕ್ತಿವಿವರ ಮತ್ತು ಅನುಭವ ಪ್ರಮಾಣಪತ್ರಗಳು (ಅನ್ವಯಿಸಿದಲ್ಲಿ) ಮುಂತಾದ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸುವುದು ಒಳಿತು. ಈ ಕೆಳಗಿನ ಲಿಂಕ್ನಲ್ಲಿ ವಿವರವಾದ ಅಧಿಸೂಚನೆಯನ್ನು ನೋಡಬಹುದು: https://pdfjobsjankari.com/dhfws-mysore-recruitment-2026-67-medical-nursing-officers-vacancies/#goog_rewarded
ಗ್ಯಾರಂಟಿ ಯೋಜನೆಗಳಿಂದ ಶೇ.89ರಷ್ಟು ಫಲಾನುಭವಿಗಳ ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ: ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಿಂದ ಶೇ.89ರಷ್ಟು ಫಲಾನುಭವಿಗಳು ತಮ್ಮ ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ ಕಂಡಿದ್ದೇವೆ ಎಂದಿದ್ದಾರೆ ಎಂದು ರಾಜ್ಯ ಸರಕಾರವು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳಿಗೆ ಇದುವರೆಗೆ 1,16,706 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಈ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲು ಎಫ್ಪಿಐ ಮೂಲಕ ಕಿಂಗ್ಸ್ ಕಾಲೇಜ್ ಲಂಡನ್, ಜಸ್ಟ್ ಜಾಬ್ಸ್ ನೆಟ್ವರ್ಕ್, ಎಕ್ಸ್ಕೆಡಿಆರ್ ಫೋರಮ್, ಅಝೀಂ ಪ್ರೇಮ್ ಜಿ ವಿವಿ, ಇಂಡಸ್ ಆಕ್ಷನ್ ಹಾಗೂ ಲೋಕನೀತಿ/ಸಿಎಸ್ಡಿಎಸ್ ನಂತಹ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಈ ಸಂಸ್ಥೆಗಳು ವ್ಯಾಪಕವಾಗಿ ನಡೆಸಿರುವ ಅಧ್ಯಯನಗಳು ರಾಜ್ಯದಲ್ಲಿ ಆಹಾರ ಭದ್ರತೆ, ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿರುವುದನ್ನು ದೃಢಪಡಿಸಿವೆ. ಜನರು ಗ್ಯಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಕ ಆಹಾರ, ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಬ್ಯಾಂಕ್ ಖಾತೆಗಳಿಗೆ ಸರಕಾರದಿಂದ ನಗದು ವರ್ಗಾವಣೆ ಪಡೆದ ಕುಟುಂಬಗಳ ಪ್ರಮಾಣ 2022ರಲ್ಲಿ ಶೇ.9.3ರಷ್ಟಿದ್ದದ್ದು 2024ರ ವೇಳೆಗೆ ಅದು ಶೇ.72.7ಕ್ಕೆ ಏರಿಕೆಯಾಗಿದೆ. ಅಝೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಅಧ್ಯಯನದಂತೆ, ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳೂ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದ್ದು, ಇದು ನಗರದ ಚಲನಶೀಲತೆಯಲ್ಲಿ ಆದ ಪ್ರಮುಖ ಬದಲಾವಣೆಯಾಗಿದೆ ಎಂದು ತಿಳಿಸಲಾಗಿದೆ. ಈ ಯೋಜನೆಯಿಂದ ಪ್ರತಿ ಮಹಿಳೆಗೆ ಮಾಸಿಕ ಸರಾಸರಿ 1,500 ರಿಂದ 2 ಸಾವಿರ ರೂ. ಉಳಿತಾಯವಾಗುತ್ತಿದೆ. ರಾಜ್ಯದಾದ್ಯಂತ ಶೇ.19 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.34ರಷ್ಟು ಮಹಿಳೆಯರು ಉತ್ತಮ ಸಂಬಳದ ಕೆಲಸಗಳನ್ನು ಪಡೆಯಲು ಈ ಯೋಜನೆ ನೆರವಾಗಿದೆ. ಶೇ.83 ರಷ್ಟು ಜನರು ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ. ‘ಹಸಿವು ಮುಕ್ತ ಕರ್ನಾಟಕ’ದ ಕನಸನ್ನು ನನಸು ಮಾಡುತ್ತಿರುವ ‘ಅನ್ನಭಾಗ್ಯ' ಯೋಜನೆಯಿಂದಾಗಿ ಶೇ.83ರಷ್ಟು ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಆದ ಉಳಿತಾಯದ ಹಣದಲ್ಲಿ ಬೇಳೆಕಾಳು, ತರಕಾರಿ, ಹಣ್ಣು, ಮೊಟ್ಟೆ ಮತ್ತು ಮಾಂಸ ಮುಂತಾದ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಕುಟುಂಬದ ಪೌಷ್ಠಿಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಲಾಗಿದೆ. ‘ಗೃಹಲಕ್ಷ್ಮಿ’ ಯೋಜನೆಯಿಂದ ಶೇ.80ರಷ್ಟು ಮಹಿಳೆಯರು, ತಾವು ಹೆಚ್ಚು ಆರ್ಥಿಕವಾಗಿ ಸ್ವತಂತ್ರರಾಗಿರುವುದಾಗಿ ಹಾಗೂ ಕುಟುಂಬದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಶೇ.37ರಷ್ಟು ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಹಣವನ್ನು ಕುಟುಂಬದ ಹಳೆಯ ಸಾಲ ಮರುಪಾವತಿಸಲು ಬಳಸುವ ಮೂಲಕ ಸಾಲ ಮುಕ್ತರಾಗುತ್ತಿದ್ದಾರೆ ಎಂದು ನುಡಿಯಲಾಗಿದೆ. ಸರಕಾರವು ಜಾರಿಗೆ ತಂದಿರುವ ಮಹಿಳಾ ಸಬಲೀಕರಣದ ಯೋಜನೆಗಳಿಂದ ಕರ್ನಾಟಕವು ಹೊಸ ಮಾದರಿಯನ್ನು ಪ್ರಾರಂಭಿಸಿದೆ. ಈ ಯೋಜನೆಗಳಿಂದ ಕೇವಲ ಆರ್ಥಿಕ ನೆರವು ಮಾತ್ರವಲ್ಲದೆ, ಸಾಮಾಜಿಕ ಪರಿವರ್ತನೆಯೂ ಸಾಧ್ಯವಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಯುವ ಜನತೆಗೆ ಆಸರೆಯಾಗಿರುವ ‘ಯುವ ನಿಧಿ' ಯೋಜನೆಯ ಫಲವಾಗಿ ಶೇ.28ರಷ್ಟು ಯುವಕರು ಕೌಶಲ್ಯ ಕಲಿಕೆಯಲ್ಲಿ ತೊಡಗಿಸಿಕೊಂಡರೆ, ಶೇ.20ರಷ್ಟು ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ‘ಗೃಹಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ'ಯನ್ನು ಸ್ಥಾಪಿಸಲಾಗಿದೆ. ಅಪಾಯ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ಒದಗಿಸುವ ಉದ್ದೇಶದಿಂದ 2025-26ನೇ ಸಾಲಿನಲ್ಲಿ ‘ಅಕ್ಕಪಡೆ' ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಭಾಷಣದಲ್ಲಿ ಪ್ರಸ್ತಾವಿಸಲಾಗಿದೆ.
ದುಬಾರಿ ವೇತನದ ದಾದಿಯರು! ಯುವಜನತೆಯ ಭಿನ್ನ ವೃತ್ತಿ ನೋಟ
ಆಧುನಿಕ ತಲೆಮಾರು ಕೆಲಸದಲ್ಲಿ ಹೊಂದಾಣಿಕೆ ಬಯಸುತ್ತಿದ್ದಾರೆ. ಸಮತೋಲನ ಬೇಕು ಎನ್ನುತ್ತಿದ್ದಾರೆ. ಜೊತೆಗೆ ಅರ್ಥಪೂರ್ಣ ಯಶಸ್ಸು ಬೇಗನೇ ಸಿಗಬೇಕು ಎಂದು ಬಯಸುತ್ತಾರೆ. ಇತ್ತೀಚೆಗೆ ಯುವಜನರು ಭಿನ್ನ ರೀತಿಯ ವೃತ್ತಿಜೀವನವನ್ನು ಆರಿಸಿಕೊಳ್ಳುತ್ತಿದ್ದಾರೆ. ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕ ಆರೋಗ್ಯ ಮತ್ತು ವೃತ್ತಿ-ಜೀವನ ಸಮತೋಲನದ ಬಗ್ಗೆ ಮಾತನಾಡುತ್ತಿರುವುದರ ಜೊತೆಗೆ ನಿಜ ಜೀವನದಲ್ಲಿ ಸಾಂಪ್ರದಾಯಿಕ ವೃತ್ತಿಜೀವನವನ್ನು ತೊರೆಯಲು ಬಯಸಿದ್ದಾರೆ. ದೀರ್ಘ ಸಮಯ ಕೆಲಸ ಮಾಡುವುದು ಕಠಿಣ ಕಾರ್ಪೋರೇಟ್ ಉದ್ಯೋಗಗಳು, ಅಧಿಕ ಒತ್ತಡದ ಮ್ಯಾನೇಜ್ಮೆಂಟ್ ಉದ್ಯೋಗಗಳು ಆದ್ಯತೆಯಿಂದ ಹೊರ ಬರುತ್ತಿವೆ. ಬದಲಾಗಿ ಆಧುನಿಕ ತಲೆಮಾರು ಕೆಲಸದಲ್ಲಿ ಹೊಂದಾಣಿಕೆ ಬಯಸುತ್ತಿದ್ದಾರೆ. ಸಮತೋಲನ ಬೇಕು ಎನ್ನುತ್ತಿದ್ದಾರೆ. ಜೊತೆಗೆ ಅರ್ಥಪೂರ್ಣ ಯಶಸ್ಸು ಬೇಗನೇ ಸಿಗಬೇಕು ಎಂದು ಬಯಸುತ್ತಾರೆ. ಕಾರ್ಪೋರೇಟ್ ಉದ್ಯೋಗಕ್ಕೆ ಪರ್ಯಾಯ ಕುತೂಹಲಕಾರಿ ವಿಚಾರವೆಂದರೆ ಮಕ್ಕಳನ್ನು ನೋಡಿಕೊಳ್ಳುವ ದಾದಿಯರ ಕೆಲಸ! ಕೆಲವು ಯುವ ವೃತ್ತಿಪರರಿಗೆ ಶ್ರೀಮಂತ ಕುಟುಂಬಗಳಿಗೆ ದಾದಿಯರಾಗಿ ಕೆಲಸ ಮಾಡುವುದು ಕಾರ್ಪೋರೇಟ್ ಉದ್ಯೋಗಗಳಿಗೆ ಪರ್ಯಾಯವಾದ ಆಕರ್ಷಕ ಉದ್ಯೋಗ ಆಯ್ಕೆಯಾಗುತ್ತಿದೆ. ಈ ಕೆಲಸದಲ್ಲಿ ಆಕರ್ಷಕ ಹಣ ಪಾವತಿಯಾಗುತ್ತದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣ ಮಾಡುವ ಅವಕಾಶ ಸಿಗುತ್ತಿದೆ. ಹಿತಕರವಾಗಿ ಜೀವನ ನಡೆಸುವ ವ್ಯವಸ್ಥೆಯೂ ಇರುತ್ತದೆ. ಬಹುತೇಕ ಆರಂಭಿಕ ಮಟ್ಟದ ಉದ್ಯೋಗಗಳಲ್ಲಿ ಇವುಗಳ ಕೊರತೆ ಇರುತ್ತದೆ. ಎಐ ತಮ್ಮ ಕೆಲಸವನ್ನು ಬದಲಿಸುವ ಆತಂಕ ಮತ್ತು ಅನಿಶ್ಚಿತತೆ ಕಾಡುತ್ತಿರುವ ಸಂದರ್ಭದಲ್ಲಿ ದುಬಾರಿ ವೇತನದ ದಾದಿಯರ ಕೆಲಸ ಪ್ರಾಯೋಗಿಕ ಮತ್ತು ಉತ್ತಮ ಆಯ್ಕೆ ಎಂದು ಕಾಣುತ್ತಿದೆ. ಈ ಉದ್ಯೋಗದಲ್ಲಿ ಅತಿಯಾದ ನಿರೀಕ್ಷೆಗಳಿದ್ದರೂ ಮತ್ತು ದೀರ್ಘ ಕೆಲಸ ಮಾಡಬೇಕಾಗಿದ್ದರೂ ಅವರು ಸಿದ್ಧರಾಗುತ್ತಿದ್ದಾರೆ. ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಕ್ಯಾಸ್ಡಿ ಒ ಹಾಗನ್, ಕಳೆದ ವರ್ಷ ಬಿಲಿಯನೇರ್ ಕುಟುಂಬವೊಂದಕ್ಕೆ ದಾದಿಯಾಗಿ ಕೆಲಸ ಮಾಡಿ ಸುದ್ದಿಯಾಗಿದ್ದರು. 28ರ ವಯಸ್ಸಿನಲ್ಲಿ ಅವರು ಆರೋಗ್ಯಸೇವೆ, ನಿವೃತ್ತಿ ಯೋಜನೆ, ವೇತನಸಹಿತ ವಿರಾಮ, ಖಾಸಗಿ ಅಡುಗೆಭಟ್ಟರಿಂದ ತಯಾರಾದ ಉತ್ತಮ ಆಹಾರ, ಮತ್ತು ಕಾರ್ಯಸ್ಥಳದಲ್ಲಿರುವಾಗ ಧರಿಸಬೇಕಾದ ಸಮವಸ್ತ್ರವನ್ನೂ ಪಡೆದುಕೊಂಡಿದ್ದಾರೆ. ಇವೆಲ್ಲದರ ಜೊತೆಗೆ ಅಂತಾರಾಷ್ಟ್ರೀಯ ಪ್ರಯಾಣವೂ ಸಿಗುತ್ತಿದೆ. ದುಬಾರಿ ದಾದಿಯಾಗುವ ನಿರ್ಧಾರಕ್ಕೆ ಕಾರಣವೇನು? ಹೀಗಾಗಿ ದುಬಾರಿ ದಾದಿಯಾಗುವ ಕೆಲಸ ಯುವ ವೃತ್ತಿಪರರಿಗೆ ಉತ್ತಮ ಆಯ್ಕೆ ಎಂದು ಅನಿಸುತ್ತಿದೆ. ಆದರೆ ಕಾರ್ಪೋರೇಟ್ ಉದ್ಯೋಗದಲ್ಲಿ ಯುವಜನರು ಆಸಕ್ತಿ ಹೊಂದಿರದೆ ಇರಲು ಕಾರಣವೇನು? ಕಾರ್ಪೋರೇಟ್ ತರಬೇತುದಾರರು ಮತ್ತು ವೃತ್ತಿ ಪ್ರಗತಿಯ ತರಬೇತುದಾರರಾಗಿರುವ ಶಿವಾಂಗಿ ಶ್ರೀವಾಸ್ತವ ಪ್ರಕಾರ ಯುವಜನತೆ ತಮ್ಮ ಹಿರಿಯರು ದೀರ್ಘಕಾಲ ಕೆಲಸ ಮಾಡಿ ಸುಸ್ತಾಗಿರುವುದನ್ನು ಕಂಡಿದ್ದಾರೆ. “ಜನರು 10-12 ಗಂಟೆಗಳ ಕಾಲ ಕೆಲಸ ಮಾಡಿ ಕಂಪನಿಗಳಿಗೆ ಬದ್ಧತೆಯನ್ನು ತೋರಿಸಿದರೂ ಭವಿಷ್ಯದ ಪ್ರಗತಿಯನ್ನು ಕಾಣುತ್ತಿಲ್ಲ. ಕೆಲಸ ಕಳೆದುಕೊಳ್ಳುವ ಆತಂಕ, ಕೆಲಸದಲ್ಲಿ ಪ್ರಗತಿಯಾಗದೆ ಇರುವುದು ಮತ್ತು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಕೆಲಸ ಕಠಿಣವಾಗಿದ್ದರೆ ಬಹುಮಾನವೂ ಸ್ಪಷ್ಟವಾಗಿರಬೇಕಲ್ಲವೆ?” ಎನ್ನುತ್ತಾರೆ ಶಿವಾಂಗಿ. ಬಹಳಷ್ಟು ಮಂದಿಗೆ ಇಂದು ಕಾರ್ಪೋರೇಟ್ ಉದ್ಯೋಗವೆಂದರೆ ದೀರ್ಘಾವಧಿ ಕೆಲಸ ಮಾಡುವುದು, ಸ್ವಾತಂತ್ರ್ಯ ಇಲ್ಲದಿರುವುದು ಮತ್ತು ಪಾವತಿಸಿದ ಹಣ ಬಾಡಿಗೆ ಮತ್ತು ಸಾಧಾರಣ ಜೀವನಶೈಲಿಗೂ ಸಾಕಾಗುವುದಿಲ್ಲ. ಪ್ರಗತಿಯ ಭರವಸೆ ಇದ್ದರೂ, ಬಹಳ ದೂರವಿರುತ್ತದೆ. ಅನಿಶ್ಚಿತತೆ ಇರುತ್ತದೆ ಮತ್ತು ಷರತ್ತುಗಳು ಇರುತ್ತವೆ. “ಹೊಸ ತಲೆಮಾರು ಸೋಮಾರಿಗಳಲ್ಲ. ಆದರೆ, ಭವಿಷ್ಯ ಚೆನ್ನಾಗಿರುತ್ತದೆ ಎಂದುಕೊಂಡು ಹೆಚ್ಚು ತ್ಯಾಗ ಮಾಡಲು ಸಿದ್ಧರಿರುವುದಿಲ್ಲ. ಜೀವನದೊಳಗೆ ತುಂಬಿಕೊಳ್ಳುವಂತಹ ವೃತ್ತಿಯನ್ನು ಬಯಸುತ್ತಾರೆ. ಜೀವನ ವೃತ್ತಿಯಲ್ಲಿ ಕಳೆದುಹೋಗುವುದು ಅವರಿಗೆ ಬೇಕಿಲ್ಲ” ಎನ್ನುತ್ತಾರೆ ಶಿವಾಂಗಿ. ಸುಸ್ತಾಗುವ ಕಾರ್ಪೋರೇಟ್ ಉದ್ಯೋಗ ಬೇಕಿಲ್ಲ! ಮನಶ್ಶಾಸ್ತ್ರಜ್ಞ ಡಾ ರಾಹುಲ್ ಚಂಢಾಕ್ ಹೇಳುವ ಪ್ರಕಾರ ಕಾರ್ಪೋರೇಟ್ ಉದ್ಯೋಗಗಳು ಮೌಲ್ಯಗಳು ಅಥವಾ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ. ಹೀಗಾಗಿ ಯುವಜನತೆ ಅದನ್ನು ಬಯಸುತ್ತಿಲ್ಲ. “ಬಹಳಷ್ಟು ಯುವಕರು ವೇತನ ಅಥವಾ ಹುದ್ದೆಯ ಹೆಸರಿಗಿಂತ ಮಿಗಿಲಾದುದನ್ನು ಬಯಸುತ್ತಾರೆ. ಕೆಲಸಕ್ಕೆ ಉದ್ದೇಶ ಬೇಕು, ಹೊಂದಾಣಿಕೆಗೆ ಅವಕಾಶವಿರಬೇಕು ಮತ್ತು ವ್ಯತ್ಯಾಸ ತರಲು ಬಯಸಿದ್ದಾರೆ. ಕಠಿಣ ಶ್ರೇಣಿ ವ್ಯವಸ್ಥೆ, ಕಠಿಣ ಕೆಲಸದ ಸಮಯ ಮತ್ತು ಸೀಮಿತವಾಗಿರುವ ಸೃಜನಶೀಲ ಸ್ವಾತಂತ್ರ್ಯ ಹಳೇ ಫ್ಯಾಷನ್ ಎಂದು ನಂಬಿದ್ದಾರೆ.” “ದೀರ್ಘಕಾಲ ಕೆಲಸ ಮಾಡುವುದು, ಒತ್ತಡ ಎದುರಿಸುವುದು ಮತ್ತು ಕೆಲಸಕ್ಕೆ ಪ್ರಶಂಸೆ ದೊರೆಯದೆ ಇದ್ದಾಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತು ಆವರಿಸುತ್ತದೆ” ಎನ್ನುತ್ತಾರೆ ರಾಹುಲ್. ಬಹುತೇಕ ಯುವಜನರು ದೀರ್ಘ ಕೆಲಸದ ಸಮಯ ಮತ್ತು ಕಡಿಮೆ ವೇತನ, ಗುರುತಿಸುವಿಕೆ ತಡವಾಗುವ ಕಾರ್ಪೋರೇಟ್ ಉದ್ಯೋಗಗಳ ಬದಲಾಗಿ ಉತ್ತಮ ಹಣ ಸಿಗುವ, ಸ್ಪಷ್ಟವಾದ ಜವಾಬ್ದಾರಿಗಳಿರುವ ಮತ್ತು ವೃತ್ತಿಪರ ರಾಜಕೀಯ ಕಡಿಮೆ ಇರುವ ಸಾಂಪ್ರದಾಯಿಕವಲ್ಲದ ಉದ್ಯೋಗಗಳನ್ನು ಬಯಸುತ್ತಿದ್ದಾರೆ. ಹೀಗಾಗಿ ದಾದಿಯಂತಹ ವೃತ್ತಿ ಹೆಚ್ಚು ನೇರ ಉದ್ಯೋಗವಾಗಿ ಕಾಣುತ್ತಿರುವುದರಲ್ಲಿ ತಪ್ಪೇನಿಲ್ಲ. ಮಗುವಿನ ಆರೈಕೆಗೆ ಸೀಮಿತವಾಗಿಲ್ಲ ದಾದಿಯರು ಎನ್ನುವ ಪಾತ್ರ ಇದೀಗ ಕೇವಲ ಮಗುವನ್ನು ಗಮನಿಸುವುದು ಎನ್ನುವ ಪಾತ್ರಕ್ಕೆ ಸೀಮಿತವಾಗಿಲ್ಲ. ಸ್ಥಿತಿವಂತರ ಕುಟುಂಬಗಳಲ್ಲಿ ಮತ್ತು ಮುಖ್ಯವಾಗಿ ಮೆಟ್ರೋ ನಗರಗಳಲ್ಲಿ ಶಿಕ್ಷಿತ, ವಿಶ್ವಾಸಾರ್ಹ, ಇಂಗ್ಲಿಷ್ ಮಾತನಾಡುವ ದಾದಿಯರ ಅಗತ್ಯ ಹೆಚ್ಚಿದೆ. ಕಲಿಕೆಗೆ ಅವಕಾಶ, ಕುಟುಂಬದ ಜೊತೆಗೆ ಪ್ರಯಾಣದ ಅವಕಾಶ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ ಭಾಗವಹಿಸುವ ನಿಜವಾದ ಜವಾಬ್ದಾರಿ ಅವರದ್ದಾಗಿರುತ್ತದೆ. ಹೀಗಾಗಿ ಜೀವನಶೈಲಿ ಮತ್ತು ಹಣ ಮಾತ್ರ ಮುಖ್ಯವಾಗಿರುವುದಿಲ್ಲ, ಕೆಲಸದ ಕುರಿತ ಸ್ಪಷ್ಟತೆಯೂ ಮುಖ್ಯವಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ಅಭಿಪ್ರಾಯವೂ ಮುಖ್ಯವಾಗಿರುತ್ತದೆ. ಬಹುತೇಕ ದಾದಿಯರು ಶಾಂತ ಪರಿಸರ, ಸುಂದರ ಮನೆಗಳು, ಖುಷಿಯಾಗಿರುವ ಮಕ್ಕಳ ಜೊತೆಗೆ ಕಳೆಯುವುದನ್ನು ಇಷ್ಟಪಡುತ್ತಾರೆ. ಇದು ಒಂದು ತರಹ ಸಂತೋಷ ಮತ್ತು ಭಾವನಾತ್ಮಕವಾಗಿ ಸಮಾಧಾನದಿಂದ ಇರುವ ಜೀವನವೆಂದು ಕಾಣುತ್ತದೆ. ಯುವಜನರಿಗೆ ಗೌರವ, ಸ್ಪಷ್ಟವಾದ ಕೆಲಸದ ಸಮಯ, ನಿರೀಕ್ಷಿತ ದೈನಂದಿನ ಚಟುವಟಿಕೆಗಳು ಇಷ್ಟವಾಗುತ್ತವೆ. ಇಂತಹ ಕೆಲಸದ ಪರಿಸರ ಇಲ್ಲದ ದೀರ್ಘ ಕೆಲಸದ ಸಮಯ ಅಥವಾ ನಿರಂತರವಾಗಿ ಲಭ್ಯವಿರಬೇಕಾಗಿರುವ ಅಗತ್ಯವು ಮಾನಸಿಕ ಸುಸ್ತಿಗೆ ಕಾರಣವಾಗಬಹುದು. “ಯುವಜನರಿಗೆ ದಾದಿಯರಂತಹ ಕೆಲಸ ತಾತ್ಕಾಲಿಕವಾದ ವೃತ್ತಿಯ ಹಂತವಾಗಿರಬಹುದು. ಮುಂದಿನ ಹಂತವನ್ನು ನಿರ್ಧರಿಸುವ ಮೊದಲು ಕಾರ್ಪೋರೇಟ್ ಒತ್ತಡದಿಂದ ದೂರವಾಗಿ ಗೌರವಯುತವಾಗಿ ಹಣ ಗಳಿಸುವ ಸಂತೋಷ ಇರಬಹುದು. ಇನ್ನು ಕೆಲವರಿಗೆ ಇದು ದೀರ್ಘಾವಧಿಯ ವೃತ್ತಿಯೂ ಆಗಿರಬಹುದು” ಎನ್ನುತ್ತಾರೆ ಶಿವಾಂಗಿ. ಕೃಪೆ: ಇಂಡಿಯಾ ಟುಡೆ
ಬೀದರ್ | ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ಆಗ್ರಹಿಸಿ ಪ್ರತಿಭಟನೆ
ಬೀದರ್ : ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಐ ಪಕ್ಷ ಹಾಗೂ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರಿಗೆ ಗುರುವಾರ ಸಿಪಿಐ ಪಕ್ಷ ಹಾಗೂ ರೈತ ಸಂಘರ್ಷ ಸಮನ್ವಯ ಸಮಿತಿಯ ನೂರಾರು ಜನರು ಜಮಾವಣೆಗೊಂಡು ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಎಂದು ಘೋಷಣೆ ಕೂಗಿದರು. ನಂತರ ಅಂಬೇಡ್ಕರ್ ವೃತ್ತದ ಮೂಲಕ ಸಹಾಯಕ ಆಯುಕ್ತರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ, ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಸಚಿವ ಮತ್ತು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೀದರ್ ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಸಕ್ರಮಗೊಳಿಸಬೇಕು. ಫಾರಂ ನಂ.57 ಸಲ್ಲಿಕೆಗೆ ಅವಧಿ ವಿಸ್ತರಿಸಬೇಕು. ಅಕ್ರಮ–ಸಕ್ರಮ ಸಮಿತಿ ಸಭೆಗಳನ್ನು ತಕ್ಷಣ ಕರೆಯಬೇಕು ಎಂದು ಒತ್ತಾಯಿಸಲಾಗಿದೆ. ಫಾರಂ ನಂ.50, 53 ಹಾಗೂ 57 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದರಿಂದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳು ವಿಲೇವಾರಿ ಮಾಡಲಿಲ್ಲ. ಸರ್ಕಾರ ಸಾಗುವಳಿ ಚೀಟಿಯನ್ನು ಫಾರಂ ನಂ.7 ರಲ್ಲಿ ನೀಡಿದ್ದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇಲ್ಹಾಳ, ಹೊನ್ನಿಕೇರಿ, ಕಪಲಾಪೂರ (ಜೆ), ಬೇಳಕೇರಾ, ಶಮಶಾನಗರ, ಟಿ. ಮಿರ್ಜಾಪೂರ, ಜಕನಾಳ, ಬೇಮಳಖೇಡಾ, ನಂದಿಹಾಳ, ಸುಂಧಾಳ, ಹಂದಿಕೇರಾ ಹಾಗೂ ಕೋನ ಮೇಳಕುಂದಾ ಸೇರಿದಂತೆ ಇನ್ನು ಹಲವಾರು ಗ್ರಾಮಗಳಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಕಿರುಕುಳ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾವಿರಾರು ಎಕರೆ ಭೂಮಿ ನೀಡುತ್ತಿರುವಾಗ, ಬಡ ಜನರು ದಶಕಗಳಿಂದ ಉಳುಮೆ ಮಾಡುತ್ತಿರುವ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ದೂರಲಾಗಿದೆ. ತಕ್ಷಣವೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿ ಸಭೆ ನಡೆಸಿ, ಫಾರಂ ನಂ. 50, 53 ಮತ್ತು 57 ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ನಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡದಿದ್ದಲ್ಲಿ ಫೆ.12 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯ ಬಾಬುರಾವ್ ಹೊನ್ನಾ, ಜಿಲ್ಲಾ ಕಾರ್ಯದರ್ಶಿ ನಜೀರ್ ಅಹ್ಮದ್, ಸರ್ವೋದಯ ಪಕ್ಷದ ಅಧ್ಯಕ್ಷ ಕೋಂಡಿಬಾ ಪಾಂಡ್ರೆ, ಬಸವರಾಜ್ ಅಷ್ಟೂರೆ, ಸೂರ್ಯಕಾಂತ್ ಮದಕಟ್ಟಿ, ಜೈಶೀಲಕುಮಾರ್, ಶೀಲಾ ಸಾಗರ್, ಮೋಹಿದಮಿಯ್ಯಾ, ವೀರಶೆಟ್ಟಿ ವಟಂಬೆ, ಘಾಳೆಪ್ಪಾ ಕಪಲಾಪೂರ್, ಪ್ರಭು ಹುಚಕನಳ್ಳಿ, ಪ್ರಭು ತಗಣಿಕರ್, ಚಂದ್ರಕಾಂತ್ ಬರ್ದಾಪೂರ್, ಶಫಾಯತ್ ಅಲಿ, ಶಿವಮೂರ್ತಿ, ವಿಠಲ್, ಸೂರ್ಯಕಾಂತ್ ಬರ್ದಾಪೂರ್ ಹಾಗೂ ಮುನಿರೋದ್ದೀನ್ ಬಗದಲ್ ಹಾಗೂ ಖದೀರಮಿಯ್ಯಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಚಿನ್ನ, ಬೆಳ್ಳಿ ದರದಲ್ಲಿ ದಿಢೀರ್ ಕುಸಿತ, ನೆಲಕಚ್ಚಿದ ಬೆಳ್ಳಿ ಇಟಿಎಫ್; ಹೂಡಿಕೆದಾರರು ಈಗ ಏನು ಮಾಡಬೇಕು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್ಲ್ಯಾಂಡ್ ವಿಚಾರವಾಗಿ ಫೆಬ್ರವರಿ 1ರಿಂದ ಜಾರಿಯಾಗಬೇಕಿದ್ದ ಸುಂಕಗಳನ್ನು ರದ್ದುಗೊಳಿಸುವುದಾಗಿ ಮತ್ತು ಮಿಲಿಟರಿ ಬಲಪ್ರಯೋಗ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಬೆಳವಣಿಗೆಯಿಂದ ಯುದ್ಧದ ಭೀತಿ ಕಡಿಮೆಯಾಗಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳಾದ ಚಿನ್ನ ಮತ್ತು ಬೆಳ್ಳಿಯಿಂದ ಹಣ ಹಿಂಪಡೆಯುತ್ತಿದ್ದಾರೆ. ಪರಿಣಾಮವಾಗಿ, ಜನವರಿ 22 ರಂದು ಭಾರತದಲ್ಲಿ ಟಾಟಾ ಸಿಲ್ವರ್ ಇಟಿಎಫ್ ಶೇ. 21ರಷ್ಟು ಮತ್ತು ಬಿರ್ಲಾ ಗೋಲ್ಡ್ ಇಟಿಎಫ್ ಶೇ. 12ರಷ್ಟು ಭಾರೀ ಕುಸಿತ ಕಂಡಿವೆ.
ʼಲ್ಯಾಂಡ್ ಲಾರ್ಡ್ʼ: ರೈತನ ಪಾತ್ರದಲ್ಲಿ ಮಿಂಚಲಿರುವ ದುನಿಯಾ ವಿಜಯ್
‘ಲ್ಯಾಂಡ್ ಲಾರ್ಡ್’ ಹೆಸರೇ ಹೇಳುವಂತೆ ಭೂಮಾಲೀಕರ ದರ್ಪದ ಕತೆ. ಜೀತದಾಳುವಿನ ನೋವಿನ ಕತೆ. ದುನಿಯಾ ವಿಜಯ್ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ರೈತನಾಗಿ ತೆರೆಮೇಲೆ ಬರುತ್ತಿದ್ದಾರೆ. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿರುವ ‘ಲ್ಯಾಂಡ್ ಲಾರ್ಡ್’ ಸಿನಿಮಾ ಭೂಮಾಲೀಕರ ತುಳಿತಕ್ಕೆ ಒಳಗಾದವರ ಸುತ್ತ ಹೆಣೆದ ಕತೆಯನ್ನು ಒಳಗೊಂಡಿದೆ. ದೌರ್ಜನ್ಯಕ್ಕೆ ಒಳಗಾಗುವ ಕುಟುಂಬ ಸೆಟೆದು ನಿಂತು ಸಂತ್ರಸ್ತರಾದವರಲ್ಲಿ ಶಕ್ತಿ ತುಂಬುವ ಕತೆ ಇದೆ. ಈ ಹಿಂದೆ ಜಡೇಶ್ ಅವರು ಬರೆದಿದ್ದ ‘ಕಾಟೇರ’ ಸಿನಿಮಾದ ಕತೆಯೂ ಇದೇ ಮಾದರಿಯಲ್ಲಿತ್ತು. “ನನಗೆ ಹಳ್ಳಿ ಎಂದರೆ ಇಷ್ಟ, ನನಗೆ ಪ್ರಕೃತಿ, ಮೌನ ಮತ್ತು ಹಳ್ಳಿ ಎಂದರೆ ಇಷ್ಟ. ಅದೇ ವಿಷಯದಲ್ಲಿ ಲ್ಯಾಂಡ್ಲಾರ್ಡ್ ಅನ್ನು ನಾವು ಬೆಳಗ್ಗೆ ಬಿಡುಗಡೆ ಮಾಡುತ್ತಿದ್ದೇವೆ. ಎಲ್ಲ ರೈತರ ಮನೆಯ ಕಷ್ಟವನ್ನು ಹೇಳುವ ಸಿನಿಮಾ ಮಾಡಿರುವುದು ಸಂತೋಷ ತಂದಿದೆ. ಎಷ್ಟು ಕಷ್ಟ ಅನುಭವಿಸಿದರೂ ನಾನೊಬ್ಬ ಬಡ ರೈತನ ಮಗನಾಗಿ ರೈತರ ಪರವಾಗಿ ನಿಂತಿದ್ದೇನೆ ಎಂದು ಖುಷಿಯಾಗಿದೆ” ಎಂದು ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ವಿಜಯ್ ತಮ್ಮ ಅಭಿಮಾನಿಗಳಿಗೆ ‘ಎಕ್ಸ್’ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳುಹಿಸಿದ್ದಾರೆ. ‘ಲ್ಯಾಂಡ್ ಲಾರ್ಡ್” ಹೆಸರೇ ಹೇಳುವಂತೆ ಭೂಮಾಲೀಕರ ದರ್ಪದ ಕತೆ. ಜೀತದಾಳುವಿನ ನೋವಿನ ಕತೆ. ದುನಿಯಾ ವಿಜಯ್ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಿದ್ದರೂ, ಅವರೇ ನಾಯಕ. ಅಮಾನವೀಯ, ಅಹಂಕಾರಿ ಭೂಮಾಲೀಕನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಸಿನಿಮಾದಲ್ಲಿ ರಚಿತಾ ರಾಮ್, ರಾಜ್ ಬಿ ಶೆಟ್ಟಿ ಮತ್ತು ಹಿರಿಯ ನಟಿ ಉಮಾಶ್ರೀ ನಟಿಸಿದ್ದಾರೆ. ವಿಜಯ್ ಪುತ್ರಿ ರಿತನ್ಯ ಅವರೂ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಟ ಶಿಶಿರ್ ಬೈಕಾಡಿ ಪಾತ್ರವೂ ಗಮನ ಸೆಳೆಯುವಂತಿದೆ. ರಾಕೇಶ್ ಅಡಿಗ ಸಹ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಕೋಲಾರ ಪ್ರದೇಶದ ಗ್ರಾಮೀಣ ಹೋರಾಟಗಳನ್ನು ಚಿತ್ರ ಪರಿಶೋಧಿಸುತ್ತದೆ. ಅಲ್ಲಿನ ದೃಶ್ಯಗಳು, ಅಬ್ಬರದ ಸಂಗೀತ ಮತ್ತು ನಿಜವಾದ ರೈತ-ಭೂಮಾಲೀಕರ ಘರ್ಷಣೆಯಲ್ಲಿ ಬೇರೂರಿರುವ ಆಕ್ಷನ್ – ಥ್ರಿಲ್ಲರ್ ಸಿನಿಮಾ ಇದಾಗಿದೆ. ಸಿನಿಮಾವನ್ನು ಜನವರಿ 23ರಂದು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಹೇಮಂತ್ ಗೌಡ ಮತ್ತು ಕೆವಿ ಸಂಪತ್ ಅವರು ಬಂಡವಾಳ ಹೂಡಿದ್ದಾರೆ. ಸಂಭಾಷಣೆ ಬರೆದಿರುವುದು ಮಾಸ್ತಿ ಉಪ್ಪಾರಹಳ್ಳಿ.
ಟಿ-20 ವಿಶ್ವಕಪ್ 2026 ಟೂರ್ನಿಯಿಂದ ಹಿಂದೆ ಸರಿದ ಬಾಂಗ್ಲಾದೇಶ
T-20 World Cup 2026: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ 2026 ಟಿ-20 ವಿಶ್ವಕಪ್ ಗ್ರೂಪ್ ಪಂದ್ಯಗಳನ್ನು ಭಾರತದ ಹೊರಗೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿತ್ತು. ಆದರೆ, ಈ ಮನವಿಯನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದ ಒಂದು ದಿನದ ಬಳಿಕ ಭದ್ರತಾ ಕಾಳಜಿಯನ್ನ ಉಲ್ಲೇಖಿಸಿ ಬಾಂಗ್ಲಾದೇಶ ಟೂರ್ನಿಯಿಂದ ಹಿಂದೆ ಸರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗ್ರಾಮೀಣ ಸೇವೆಗೆ ನಿಯೋಜನೆಗೊಂಡ ವೈದ್ಯರ ಮಾಸಿಕ ವೇತನ ಕಡಿತ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಸರ್ಕಾರಿ ಕೋಟಾದಡಿ ಎಂಬಿಬಿಎಎಸ್ ಪ್ರವೇಶ ಪಡೆದು 2024 ಮತ್ತು 2025ನೇ ಸಾಲಿನಲ್ಲಿ ಕೋರ್ಸ್ ಪೂರ್ಣಗೊಳಿಸಿ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷದ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ವೈದ್ಯರ ಮಾಸಿಕ ವೇತನ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಲಬುರಗಿ ನಿವಾಸಿ ಡಾ. ಶಶಿಕುಮಾರ್ ಸೇರಿ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಲ್ಲಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ 38 ಮಂದಿ ಎಂಬಿಬಿಎಸ್ ಪದವೀಧರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು. ಇದೇ ವಿಷಯವಾಗಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳನ್ನೂ ಸಹ ಈ ಅರ್ಜಿಯೊಂದಿಗೆ ವಿಚಾರಣೆಗೆ ನಿಗದಿಪಡಿಸಲು ರಿಜಿಸ್ಟ್ರಿಗೆ ಸೂಚಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಮನವಿ ಏನು? ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಮುಗಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಗೆ ನಿಯೋಜನೆಗೊಂಡ ವೈದ್ಯರಿಗೆ ಮಾಸಿಕ 62 ಸಾವಿರ ರೂ. ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ನಿಯೋಜನೆಗೊಂಡ ವೈದ್ಯರಿಗೆ ಮಾಸಿಕ ವೇತನ 75 ಸಾವಿರ ರೂ. ನಿಗದಿಪಡಿಸಿ 2025ರ ಆಗಸ್ಟ್ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಏಕಾಏಕಿ 2025ರ ಅಕ್ಟೋಬರ್ 28ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿ, ವೇತನವನ್ನು ಮಾಸಿಕ 60 ಸಾವಿರ ರೂ. ಕಡಿತಗೊಳಿಸಲಾಗಿದೆ. ಇದು ಕಾನೂನುಬಾಹಿರವಾಗಿದೆ. ಹಳೇ ಅಧಿಸೂಚನೆಯಂತೆ ಮಾಸಿಕ ವೇತನ ನೀಡಬೇಕು. ಅದರಂತೆಯೇ ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ ವೇತನದ ಹಿಂಬಾಕಿ ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಸಸ್ಯಗಳು ‘ಉಸಿರಾಡುವುದನ್ನು’ ನೋಡುವ ಸಾಧನ ಕಂಡು ಹಿಡಿದ ಸಂಶೋಧಕರು!
ಈ ಸಂಶೋಧನೆ ಏಕೆ ಮುಖ್ಯ?; ಇಲ್ಲಿದೆ ಮಾಹಿತಿ…
ದಾವೋಸ್ನಲ್ಲಿ ಅಸ್ತಿತ್ವಕ್ಕೆ ಬಂದ ಗಾಜಾ ಶಾಂತಿ ಮಂಡಳಿ; ಪಾಕಿಸ್ತಾನ ಇದೆ ಎಂದ ಮೇಲೆ ನಗುವುದೋ ಅಳುವುದೋ ನೀವೇ ಹೇಳಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಈ ಶಾಂತಿ ಮಂಡಳಿಯ ಸನ್ನದು ಪ್ರತಿಗೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ. ಈ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಗಾಜಾ ಶಾಂತಿ ಮಂಡಳಿ ಪ್ರತಿಗೆ ಸಹಿ ಹಾಕಿದ್ದು, ಮಂಡಳಿಯ ಅಧಿಕೃತ ಸದಸ್ಯತ್ವವನ್ನೂ ಪಡೆದುಕೊಂಡಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಗಣರಾಜ್ಯೋತ್ಸವ 2026: ಕರ್ನಾಟಕದಿಂದ ‘ಮಿಲ್ಲೆಟ್ ಟು ಮೈಕ್ರೋಚಿಪ್’ ಸ್ತಬ್ಧಚಿತ್ರ ಪ್ರದರ್ಶನ
ಬೆಂಗಳೂರು: ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರವನ್ನು 2026ರ ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ
ಭಾರತದಲ್ಲಿ 40 ಕೆಲಸ ತೊರೆಯುವ ವಯಸ್ಸಾಗುತ್ತಿದೆಯೆ?
40ರ ವಯಸ್ಸಿನ ನಂತರ ನಿಧಾನವಾಗುವ ವೃತ್ತಿಜೀವನ
ಕಾರಟಗಿ | ಉಳೇನೂರು ಗ್ರಾಮವನ್ನು ವ್ಯಸನಮುಕ್ತಗೊಳಿಸಲು ಗ್ರಾಮಸ್ಥರ ಸಂಕಲ್ಪ
ಮದ್ಯ, ಜೂಜಾಟ ನಿಷೇಧಿಸಲು ಗ್ರಾಮಸಭೆಯಲ್ಲಿ ನಿರ್ಣಯ
ಭಾರತದಲ್ಲೂ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೋಷಿಯಲ್ ಮೀಡಿಯಾ ಪ್ರವೇಶ ನಿರ್ಬಂಧ ಸಾಧ್ಯತೆ
ಸೋಷಿಯಲ್ ಮೀಡಿಯಾ ಈಗ ಬಳಕೆ ಮಾತ್ರವಲ್ಲ ಅದೊಂದು ವ್ಯಸನವಾಗಿಯೂ ಬದಲಾಗಿದೆ. ಅದರಲ್ಲೂ ಅಪ್ರಾಪ್ತ ವಯಸ್ಸಿನ ಮಕ್ಕಳು ಸೋಷಿಯಲ್ ಮೀಡಿಯಾ ಬಳಕೆ ಮಾಡುವ ವಿಚಾರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಈಚೆಗೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸೋಷಿಯಲ್ ಮೀಡಿಯಾ ಬಳಕೆ ಮಾಡುವುದನ್ನು ನಿಷೇಧಿಸುವ ಪ್ರಮುಖ ನಿರ್ಧಾರವನ್ನು ಆಸ್ಟ್ರೇಲಿಯಾ ತೆಗೆದುಕೊಂಡಿತ್ತು. ಮಕ್ಕಳ ಸುರಕ್ಷತೆ ಹಾಗೂ ಸೋಷಿಯಲ್ ಮೀಡಿಯಾ
RCB ಕಪ್ ಗೆದ್ದಿದ್ದರ ಬಗ್ಗೆ ಈಗ ಧೋನಿ ಹೇಳಿದ್ದೇನು? ಫ್ಯಾನ್ಸ್ ಕ್ರೇಝ್ ಬಗ್ಗೆ ಅಂತೂ CSK ಸ್ಟಾರ್ ಅಚ್ಚರಿಯ ಮಾತು!
MS Dhoni On RCB- ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಗೆದ್ದಾಗ ವಿಶ್ವದ ಮೂಲೆಮೂಲೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಏನು ಹೇಳಿದ್ದರು ಎಂದು ಯಾರಿಗೂ ನೆನಪಿಲ್ಲ. ಇದೀಗ ಅವರು ಈ ಬಗ್ಗೆ ಮಾತನಾಡಿದ್ದು ಆರ್ ಸಿಬಿಯ ಅಭೂತಪೂರ್ವ ಯಶಸ್ಸಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸಂಕಷ್ಟದ ಸಮಯದಲ್ಲೂ ತಂಡದ ಕೈಬಿಡದ ಆರ್ ಸಿಬಿ ಫ್ಯಾನ್ ಗಳ ಉತ್ಸಾಹದ ಬಗ್ಗೆಯೂ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರ ಪಿಂಚಣಿ ಯೋಜನೆ: ಕಟ್ಟಡ ಕಾರ್ಮಿಕರಿಗೆ ಮಾಸಿಕ 3,000 ರೂ. ಪಿಂಚಣಿ ಹಾಗೂ ವಿವಿಧ ಸೌಲಭ್ಯಗಳು! ನೋಂದಣಿ ಹೇಗೆ?
ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೃದ್ಧಾಪ್ಯ, ಮರಣಾ ನಂತರ ಕುಟುಂಬಕ್ಕೆ ಆಸರೆಯಾಗುವ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. 60 ವರ್ಷ ತುಂಬಿದವರಿಗೆ ಮಾಸಿಕ 3000 ರೂ. ಪಿಂಚಣಿ, ಅಂಗವಿಕಲರಿಗೆ 2000 ರೂ. ಹಾಗೂ ಮರಣಾ ನಂತರ ಕುಟುಂಬಕ್ಕೆ 1500 ರೂ. ಪಿಂಚಣಿ ಲಭ್ಯವಿದೆ. ಶೈಕ್ಷಣಿಕ, ಹೆರಿಗೆ, ಮದುವೆ, ಉಪಕರಣಗಳ ನೆರವೂ ಇದೆ. ನೋಂದಣಿ ಮತ್ತು ನವೀಕರಣಕ್ಕೆ ಅವಕಾಶವಿದೆ.
ಮುಂಬೈ ಮೇಯರ್ ಸ್ಥಾನ ಮಹಿಳೆಗೆ ಮೀಸಲು, ಪಟ್ಟಕ್ಕಾಗಿ ರಾಜಕೀಯ ಕಿತ್ತಾಟ ಜೋರು
ಮುಂಬೈ: ಭಾರತದ ವಾಣಿಜ್ಯ ರಾಜಧಾನಿ ಹಾಗೂ ಮಹಾನಗರಿ ಎಂದು ಮುಂಬೈ ಸಿಟಿಯನ್ನು ಜನರು ಕರೆಯುತ್ತಾರೆ, ಜಗತ್ತಿನಾದ್ಯಂತ ಗುರುತಿಸುತ್ತಾರೆ. ಕೋಟಿ ಕೋಟಿ ಜನರಿಗೆ ಆಶ್ರಯ ನೀಡಿರುವ ಇದೇ ಮುಂಬೈ ನಗರ, ಪ್ರತಿವರ್ಷ ನೂರಾರು ಲಕ್ಷ ಕೋಟಿ ರೂಪಾಯಿ ವ್ಯಾಪಾರ &ವಹಿವಾಟು ನಡೆಸುತ್ತಾ ಬಂದಿದೆ. ಪ್ರಮುಖವಾಗಿ ಮುಂಬೈ ಷೇರು ಮಾರುಕಟ್ಟೆ ದೇಶದ ಆರ್ಥಿಕತೆ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ
ಲಕ್ಕುಂಡಿಗೆ ರಿಯಲ್ ಎಸ್ಟೇಟ್ ಕುಳಗಳ ದೌಡು - ಕೋಟಿ ರೂ. ದಾಟಿದ ಭೂಮಿ ಬೆಲೆ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಚಿನ್ನ ಮತ್ತು ಐತಿಹಾಸಿಕ ಕಲಾಕೃತಿಗಳು ಪತ್ತೆಯಾದ ನಂತರ ರಿಯಲ್ ಎಸ್ಟೇಟ್ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು, ಒಂದು ಎಕರೆ ಭೂಮಿಗೆ ಕೋಟಿ ರೂ.ಗೂ ಅಧಿಕ ಬೆಲೆ ತಲುಪಿದೆ. ಉತ್ಖನನದಿಂದ ಹೊರಬರುತ್ತಿರುವ ಸಂಪತ್ತು ಗ್ರಾಮಸ್ಥರಲ್ಲಿ ಆರ್ಥಿಕ ಭವಿಷ್ಯದ ಬಗ್ಗೆ ಆಶಾಭಾವನೆ ಮೂಡಿಸಿದೆ.
ಹಾಸನ: ಜಿಬಿಎ ಚುನಾವಣೆಯಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರವಾಗಿ ರಾಜ್ಯ ಸರ್ಕಾರ ನಡೆ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ. ನಮ್ಮ ಪಕ್ಷ ಇದುವರೆಗೂ ಇವಿಎಂ ಬಗ್ಗೆ ಚರ್ಚೆ ಮಾಡಿಲ್ಲ. ಬ್ಯಾಲೆಟ್ ಪೇಪರ್ ಬಗ್ಗೆನೂ ಚರ್ಚೆ ಮಾಡಿಲ್ಲ. ಚರ್ಚೆ ಮಾಡುತ್ತಿರುವವರು ಯೋಚನೆ ಮಾಡಬೇಕು, ಕಾಂಗ್ರೆಸ್ನವರು
ಮಲೆ ಮಹದೇಶ್ವರ ಬೆಟ್ಟಕ್ಕೆ ಜ. 24ರವರೆಗೆ ಪಾದಯಾತ್ರೆ, ದ್ವಿಚಕ್ರ ವಾಹನ ಸಂಚಾರ ಬಂದ್
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು, ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದಿನಿಂದ (ಜ. 22) ಜನವರಿ 24ರ ಮಧ್ಯರಾತ್ರಿಯವರೆಗೆ ಭಕ್ತರು ಕಾಲ್ನಡಿಗೆಯಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬೆಟ್ಟಕ್ಕೆ ತೆರಳುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ
Uttar Pradesh | ಮೊರಾದಾಬಾದ್ನಲ್ಲಿ ಮರ್ಯಾದೆಗೇಡು ಹತ್ಯೆ ಶಂಕೆ; ಅಂತರ್ಧರ್ಮೀಯ ಜೋಡಿಯ ಕೊಲೆ
ಯುವತಿಯ ಇಬ್ಬರು ಸಹೋದರರ ಬಂಧನ
ಇಸ್ರೇಲ್ ವಿರೋಧ ಲೆಕ್ಕಿಸದೆ ಗಾಜಾ ಶಾಂತಿ ಮಂಡಳಿ ಸದಸ್ಯತ್ವ ಪಡೆದ ಪಾಕಿಸ್ತಾನ; ಕೊಡಲು 1 ಬಿಲಿಯನ್ ಡಾಲರ್ ಎಲ್ಲಿದೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿ ಈಗಷ್ಟೇ ಒಂದು ರೂಪ ಪಡೆಯುತ್ತಿದೆ. ಈ ಮಂಡಳಿಯನ್ನು ಸೇರುವಂತೆ ಟ್ರಂಪ್ ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳಿಗೆ ಆಹ್ವಾನ ನೀಡಿದ್ದಾರೆ. ಅಮೆರಿಕದ ಆಹ್ವಾನವನ್ನು ಸ್ವೀಕರಿಸಿರುವ ಪಾಕಿಸ್ತಾನ, ಗಾಜಾ ಶಾಂತಿ ಮಂಡಳಿ ಸೇರುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಡೊನಾಲ್ಡ್ ಟ್ರಂಪ್ ಭೇಟಿಯ ಕೆಲವೇ ಕ್ಷಣಗಳ ಬಳಿಕ ಈ ಘೋಷಣೆ ಹೊರಬಿದ್ದಿದೆ.
ರಾಜ್ಯಪಾಲರು Vs ಸರ್ಕಾರ - ಸಂಘರ್ಷಕ್ಕೆ 35ವರ್ಷಗಳ ಇತಿಹಾಸ : ಇಲ್ಲಿದೆ, 6 ದೊಡ್ಡ ತಿಕ್ಕಾಟದ ಘಟನೆಗಳು
Conflicts between Governor Vs Karnataka Government : ರಾಜ್ಯಪಾಲರು ಮತ್ತು ಕರ್ನಾಟಕ ಸರ್ಕಾರದ ನಡುವಿನ ಸಂಘರ್ಷ / ಮನಸ್ತಾಪ / ಶೀತಲ ಸಮರ ಇಂದು ನಿನ್ನೆಯದಲ್ಲ. 1990ರಲ್ಲಿ ವೀರೇಂದ್ರ ಪಾಟೀಲರ ಕಾಲದಿಂದ ಆರಂಭವಾಗಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯ ವರೆಗೂ ಇದು ಮುಂದುವರಿದಿದೆ. ಸಿದ್ದರಾಮಯ್ಯ ಸರ್ಕಾರ ಬರೆದು ಕೊಟ್ಟಿದ್ದ ಭಾಷಣವನ್ನು ರಾಜ್ಯಪಾಲರಾದ ಗೆಹ್ಲೋಟ್ ಓದದೇ ಸದನದಿಂದ ಹೊರಬಂದ ವಿದ್ಯಮಾನ ಇಂದು (ಜ. 22) ನಡೆದಿದೆ. ಈ ಹಿನ್ನಲೆಯಲ್ಲಿ ಹಿಂದಿನ ಐದು ವಿದ್ಯಮಾನಗಳ ಪಟ್ಟಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಮುಂಬೈ ಮೇಯರ್ ಹುದ್ದೆಯಲ್ಲಿ ಮಹಿಳಾ ಮೀಸಲು: ಲಾಟರಿ ಪ್ರಕ್ರಿಯೆಗೆ ಉದ್ಧವ್ ಶಿವಸೇನೆ ಆಕ್ಷೇಪ
ಸಭೆಯಿಂದ ಹೊರನಡೆದ ಪಕ್ಷದ ಸದಸ್ಯರು
PHOTOS | ಬೆಂಗಳೂರಿನಲ್ಲಿ ಅಂಬಾರಿ ‘ಡಬಲ್ ಡೆಕ್ಕರ್ ಬಸ್’ಗೆ ಚಾಲನೆ
ಲಕ್ನೊ: ಮಂಗಳವಾರ ವರ್ಗಾವಣೆಗೊಳಿಸಿರುವ 14 ಮಂದಿ ನ್ಯಾಯಾಂಗ ಅಧಿಕಾರಿಗಳ ಪೈಕಿ, 2024ರಲ್ಲಿ ನಡೆದ ಸಂಭಲ್ ಹಿಂಸಾಚಾರದ ವೇಳೆ ಮುಸ್ಲಿಂ ವ್ಯಕ್ತಿಗೆ ಗುಂಡಿಟ್ಟು ಹತ್ಯೆಗೈದಿದ್ದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿದ್ದ ಸಂಭಲ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಭಾಂಶು ಸುಧೀರ್ ಕೂಡ ಸೇರಿದ್ದಾರೆ. ಈ ವರ್ಗಾವಣೆಯ ವಿರುದ್ಧ ಪ್ರತಿಭಟನೆ ನಡೆಸಿರುವ ವಕೀಲರು, “ಇದು ನ್ಯಾಯದ ಹತ್ಯೆ” ಎಂದು ಖಂಡಿಸಿದ್ದಾರೆ. ಸಂಭಲ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಲ್ ಇನ್ಸ್ಪೆಕ್ಟರ್ ಅನುಜ್ ಚೌಧರಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜನವರಿ 9ರಂದು ನ್ಯಾ. ವಿಭಾಂಶು ಸುಧೀರ್ ಆದೇಶಿಸಿದ್ದರು. ಇದರ ಬೆನ್ನಲ್ಲೇ ಅವರ ವರ್ಗಾವಣೆಯಾಗಿದೆ. ಅವರನ್ನು ಸುಲ್ತಾನಪುರದ ಸಿವಿಲ್ ನ್ಯಾಯಾಧೀಶ (ಹಿರಿಯ ಶ್ರೇಣಿ)ರನ್ನಾಗಿ ವರ್ಗಾಯಿಸಲಾಗಿದೆ. ಇದೀಗ ಸಂಭಲ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಗಿ ಆದಿತ್ಯ ಸಿಂಗ್ ಅವರನ್ನು ನೇಮಿಸಲಾಗಿದೆ. ಇದಕ್ಕೂ ಮುನ್ನ, ಶ್ರೀ ಹರಿಹರ ದೇವಾಲಯ ವಿರುದ್ಧ ಶಾಹಿ ಜಾಮಾ ಮಸೀದಿ ಪ್ರಕರಣದಲ್ಲಿ ಸ್ಥಳ ಸಮೀಕ್ಷೆ ನಡೆಸುವಂತೆ ನ್ಯಾ. ಆದಿತ್ಯ ಸಿಂಗ್ ಆದೇಶಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾ. ವಿಭಾಂಶು ಸುಧೀರ್ ಅವರ ವರ್ಗಾವಣೆಯನ್ನು ಖಂಡಿಸಿ ಚಾಂದೌಸಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಕೀಲರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ‘ಇದು ನ್ಯಾಯದ ಹತ್ಯೆ’ ಎಂದು ಬಣ್ಣಿಸಿದರು. ಪೊಲೀಸ್ ಅಧಿಕಾರಿಗಳ ವಿರುದ್ಧ ಆದೇಶ ನೀಡಿದ್ದಕ್ಕೆ ಉತ್ತಮ ನ್ಯಾಯಾಧೀಶರಿಗೆ ಹಿಂಬಡ್ತಿ ನೀಡಲಾಗಿದೆ ಎಂದು ಅವರು ಆರೋಪಿಸಿದರು. “ನ್ಯಾ. ವಿಭಾಂಶು ಸುಧೀರ್ ಅವರು ಜಿಲ್ಲೆಯ ನ್ಯಾಯ ವಿತರಣೆ ವ್ಯವಸ್ಥೆಯಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಅವರ ಅವಧಿಯಲ್ಲಿ ಕೇವಲ ಎಂಟು ದಿನಗಳಲ್ಲಿ ಪ್ರಕರಣಗಳು ಇತ್ಯರ್ಥವಾಗುತ್ತಿದ್ದವು. ಅವರು ಪೊಲೀಸ್ ಸಿಬ್ಬಂದಿ ಹಾಗೂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯ ವಿರುದ್ಧ ಆದೇಶ ಹೊರಡಿಸಿದ ನಂತರ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಅವರ ವರ್ಗಾವಣೆಯನ್ನು ರದ್ದುಗೊಳಿಸಲೇಬೇಕು” ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಬಾರ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ರಾಜೇಶ್ ಯಾದವ್ ಆಗ್ರಹಿಸಿದ್ದಾರೆ. ನ್ಯಾ. ವಿಭಾಂಶು ಸುಧೀರ್ ಅವರ ವರ್ಗಾವಣೆ ತಪ್ಪು ಎಂದು ಹೇಳಿದ ವಕೀಲ ರೋಶನ್ ಸಿಂಗ್ ಯಾದವ್, ಈ ವರ್ಗಾವಣೆಯನ್ನು ಒತ್ತಡದ ಕಾರಣಕ್ಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. “ಉತ್ತಮ ನ್ಯಾಯಾಧೀಶರನ್ನು ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ಈ ವರ್ಗಾವಣೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ನಾನು ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ. What’s happening in Sambhal deserves attention and respect. The Sambhal bar is protesting the transfer of the Chief Judicial Magistrate after he passed orders directing registration of FIRs against police officials, including an ASP. Whether one agrees with those orders or not,… pic.twitter.com/pubs9UypG6 — Deadly Law (@DeadlyLaw) January 21, 2026
ಬಿಗ್ ಬಾಸ್ ಸೀಸನ್ 12 ರ ವಿಜೇತ ಗಿಲ್ಲಿ ನಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಸಿಎಂ ಗಿಲ್ಲಿಯನ್ನು ಶಬ್ಬಾಶ್ ಎಂದು ಹೊಗಳಿ, ಅವರ ಜನಪ್ರಿಯತೆ ಹೆಚ್ಚಾಗಿದೆ ಎಂದರು. ಅತಿ ಹೆಚ್ಚು ಮತಗಳನ್ನು ಪಡೆದ ಸಾಧನೆಯನ್ನು ಸಿಎಂ ಉಲ್ಲೇಖಿಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೂಡ ಗಿಲ್ಲಿಯ ಪ್ರತಿಭೆಯನ್ನು ಶ್ಲಾಘಿಸಿದರು. ಗಿಲ್ಲಿ 50 ಲಕ್ಷ ರೂ. ಬಹುಮಾನ ಪಡೆದರು.
SWR: ಬೆಂಗಳೂರು-ರಾಧಿಕಾಪುರ ವೀಕ್ಲಿ ಎಕ್ಸ್ಪ್ರೆಸ್ ರೈಲು ಸಂಚಾರ ಶುರು, 5 ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲ
ಬೆಂಗಳೂರು: ನೈಋತ್ಯ ರೈಲ್ವೆಯು (SWR) ಬೆಂಗಳೂರಿನಿಂದ ರಾಧಿಕಾರಪುಕ್ಕೆ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು (Bengaluru SMVT-Radhikapur Express Train) ಕಾರ್ಯಾಚರಣೆ ಆರಂಭಿಸಿದೆ. ಬೆಂಗಳೂರಿನಿಂದ ತೆರಳುವ ಒಟ್ಟು ಐದು ರಾಜ್ಯಗಳ ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದೆ. ಕರ್ನಾಟಕದಿಂದ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳ ರೈಲು ಸಂಪರ್ಕ ಮತ್ತಷ್ಟು ಬಲಗೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರು
Viral Video: ಇಳಿವಯಸ್ಸಲ್ಲಿ ವ್ಲಾಗ್ ಶುರು ಮಾಡಿ ಇನ್ಸ್ಟಾಗ್ರಾಮ್ ಸ್ಟಾರ್ ಆದ 70ರ ಅಜ್ಜ..
ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಉತ್ತರ ಪ್ರದೇಶದ 70 ವರ್ಷದ ವಿನೋದ್ ಕುಮಾರ್ ಶರ್ಮಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿವೃತ್ತಿ ಜೀವನದಲ್ಲಿ ಸುಮ್ಮನೆ ಕೂರಲು ಇಷ್ಟಪಡದ ಇವರು, ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ತಮ್ಮದೇ ಆದ ಹೊಸ ಖಾತೆಯನ್ನು ತೆರೆದು ವ್ಲಾಗ್ ಮಾಡಲು ಶುರು ಮಾಡಿದ್ದಾರೆ. ಇವರು ಪೋಸ್ಟ್ ಮಾಡಿದ ಮೊದಲ ವಿಡಿಯೋವೇ ಈಗ ಸೋಶಿಯಲ್
ಭೋಜಶಾಲೆ ಸಂಕೀರ್ಣದಲ್ಲಿ ಹಿಂದೂ-ಮುಸ್ಲಿಂರಿಬ್ಬರಿಗೂ ಪ್ರಾರ್ಥನೆಗೆ ಅವಕಾಶ ; ಸುಪ್ರೀಂ ಕೋರ್ಟ್ನ ಮಹತ್ವದ ಆದೇಶ
ಧಾರ ಜಿಲ್ಲೆಯ ಭೋಜಶಾಲೆ ಸಂಕೀರ್ಣದಲ್ಲಿ ಹಿಂದೂ ಮತ್ತು ಮುಸ್ಲಿಂರಿಬ್ಬರಿಗೂ ಪ್ರಾರ್ಥನೆ ಸಲ್ಲಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸರಸ್ವತಿ ಪೂಜೆ ಮತ್ತು ಜುಮಾ ಪ್ರಾರ್ಥನೆ ಒಂದೇ ದಿನ ಬಂದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವಾದಿತ ಪ್ರಕರಣವನ್ನು ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾಯಿಸಲಾಗಿದೆ. ಅಲ್ಲಿ ಶೀಘ್ರದಲ್ಲೇ ವಿಚಾರಣೆ ನಡೆಯಲಿದೆ. ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ನನ್ನ ಸರ್ಕಾರವು ಅಭಿವೃದ್ಧಿ ಸೇರಿ ಈ ವಿಚಾರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ: ಸಿ.ಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಜಂಟಿ ಅಧಿವೇಶನಕ್ಕೆ ಸಿದ್ಧಪಡಿಸಿದ್ದ ಭಾಷಣವನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಓದಿರಲಿಲ್ಲ. ಬದಲಿಗೆ ಅವರೇ ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಿ ರಾಜ್ಯಪಾಲರು ಹಿಂದಿರುಗಿದ್ದರು. ಈ ನಡೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಭಾರೀ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನ ಸರ್ಕಾರವು ಅಭಿವೃದ್ಧಿ,
ಸೋಲ್ನಲ್ಲಿ ನಡೆಯುತ್ತಿರುವ 'V TYPE非ʼ ಫೊಟೋಬುಕ್ ಎಕ್ಸಿಬಿಷನ್ ಗೆ ಸರ್ಪೈಸ್ ವಿಸಿಟ್ ಕೊಟ್ಟ BTS V
BTS V, ಸೋಲ್ನಲ್ಲಿ ನಡೆಯುತ್ತಿರುವ ತಮ್ಮ ಹೊಸ ಫೋಟೋಬುಕ್ V TYPE ಪ್ರದರ್ಶನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಅಭಿಮಾನಿಯೊಬ್ಬರು V ಯನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಪ್ರದರ್ಶನವು ಫೆಬ್ರವರಿ 1 ರವರೆಗೆ ನಡೆಯಲಿದೆ.ಇದರಲ್ಲಿ ಹಲವು ವಿಭಿನ್ನದೃಷ್ಟಿಕೋನ ಹಾಗೂ ವೈಬ್ ನಲ್ಲಿ ಫೋಟೋ ಸರಣಿಗಳಿರಲಿವೆ.
ಹುಬ್ಬಳ್ಳಿ | ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ನಡೆಸಿರುವ ಘಟನೆ ನಗರದ ಗೌಶಿಯಾ ಟೌನ್ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಮೃತರನ್ನು ಅಹ್ಮದ್ ರಜಾಕ್ ಶಹಪೂರ್ (48) ಎಂದು ಗುರುತಿಸಲಾಗಿದೆ. ಘಟನೆಯ ಹಿನ್ನೆಲೆ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅಹ್ಮದ್ ರಜಾಕ್ ಅವರ ಸಹೋದರ ಮತ್ತು ಅವರ ಅಳಿಯನ ನಡುವೆ ಗಲಾಟೆ ನಡೆದಿದೆ. ಅಹ್ಮದ್ ರಜಾಕ್ ಅವರ ಸಹೋದರನ ಮಗಳ ಪತಿ ಸದ್ದಾಂ, ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಮಾವನ ಮನೆಗೆ ಆಗಮಿಸಿದ್ದನು. ಈ ವೇಳೆ ಮನೆ ಹೊರಗಡೆ ನಿಂತು ಗಲಾಟೆ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಗಲಾಟೆ ಹೆಚ್ಚಾಗುತ್ತಿದ್ದುದನ್ನು ಗಮನಿಸಿದ ಅಹ್ಮದ್ ರಜಾಕ್, ಅಳಿಯನಾದ ಸದ್ದಾಂಗೆ ಬುದ್ದಿವಾದ ಹೇಳಲು ಮುಂದಾದಾಗ, ದಿಢೀರನೆ ಸದ್ದಾಂ ಕಲ್ಲಿನಿಂದ ರಜಾಕ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ರಜಾಕ್ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸದ್ದಾಂನನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೆ ಆ್ಯಸಿಡ್ ಎರಚುವುದಾಗಿ ಬೆದರಿಕೆ! ಪತ್ರ ಪೊಲೀಸರಿಗೆ ಹಸ್ತಾಂತರಿಸಿದ ಅಧಿಕಾರಿ
ಶಿಡ್ಲಘಟ್ಟ ಪೌರಾಯುಕ್ತೆಗೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಪತ್ರ ಬಂದಿದ್ದು, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಫ್ಲೆಕ್ಸ್ ತೆರವು ವಿಚಾರಕ್ಕೆ ಸಂಬಂಧಿಸಿ ಪೌರಾಯುಕ್ತೆಯನ್ನು ನಿಂದಿಸಿ ಧಮ್ಕಿ ಹಾಕಿದ್ದ ರಾಜೀವ್ ಗೌಡರನ್ನು ಪಕ್ಷದಿಂದ ಅಮಾನತು ಮಾಡಲು ಕೆಪಿಸಿಸಿಗೆ ಪತ್ರ ಬರೆಯಲಾಗಿದೆ.
ರಾಜ್ಯಪಾಲರ ನಡೆಯಿಂದ BJP ರಾಷ್ಟ್ರ ಗೀತೆ, ಕನ್ನಡಿಗರ ವಿರೋಧಿ ಅನ್ನೋದು ಜಗಜ್ಜಾಹೀರಾಗಿದೆ: ಪ್ರಿಯಾಂಕ್
ಇಂದು ಕನ್ನಡಿಗರ ಅಸ್ಮಿತೆ, ಸಂವಿಧಾನದ ಮೌಲ್ಯಗಳಿಗೆ ಮೊದಲ ಬಾರಿಗೆ ದೊಡ್ಡ ಹೊಡೆತ ಬಿದ್ದಿದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಪೂರ್ಣ ಭಾಷಣ ಮಾಡದೆ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಹೊರನಡೆದಿದ್ದಾರೆ.ರಾಷ್ಟ್ರಗೀತೆ ನುಡಿಸುವ ಮೊದಲೇ ಸದನದಿಂದ ಹೊರನಡೆದು ರಾಷ್ಟ್ರಗೀತೆ ಮತ್ತು ಸಂವಿಧಾನಕ್ಕೆ ಅಪಮಾನಿಸಿದ್ದಾರೆ. ಇವರ ಮೂಲಕ ತಾವು ಸಂವಿಧಾನದ ವಿರೋಧಿಗಳು, ಕನ್ನಡಿಗರನ್ನು ವಿರೋಧಿಸುವವರು ಎಂದು ಬಿಜೆಪಿ ತೋರ್ಪಡಿಸಿಕೊಳ್ಳುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ಮಾಡಿದ್ದಾರೆ.
ಸರ್ಕಾರ v/s ಲೋಕಭವನ: ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಅವಮಾನ ಎಂದು ಬಿಜೆಪಿ ವಾಗ್ದಾಳಿ
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಕೇಂದ್ರದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯಪಾಲರ ಭಾಷಣದ ವೇಳೆ ಆಡಳಿತ ಪಕ್ಷದವರು ಅಗೌರವ ತೋರಿದ್ದು ಖಂಡನೀಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಮನ್ ರೇಗಾ ಸುಧಾರಣೆಗಳ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಗೂಂಡಾಗಿರಿ ಪ್ರದರ್ಶನಕ್ಕೆ ಸಿಎಂ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆಗ್ರಹಿಸಿದ್ದಾರೆ.
BPL Ration Card: ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್ ನ್ಯೂಸ್
BPL Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಹಲವು ವಿಧಗಳಿದ್ದು, ಈ ಪೈಕಿ ಬಿಪಿಎಲ್ ಕಾರ್ಡ್ಗೆ ಹಲವು ಸರ್ಕಾರಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಹೊಸ ಪಡಿತರ ಚೀಟಿಯ ಆದಾಯ ಮಿತಿ ಹೆಚ್ಚಳದ ಬಗ್ಗೆ ಕೆಂದ್ರ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದೆ. ಹಾಗಾದ್ರೆ, ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಇನ್ನೂ ನಕಲಿ ದಾಖಲೆ
Trump 2.0: ಒಂದು ವರ್ಷ, ನೂರೆಂಟು ಲೆಕ್ಕಾಚಾರ; ನಿಂತ ಯುದ್ಧಗಳ ಹಿಂದಿನ ಸತ್ಯವೇನು?
ವಾಷಿಂಗ್ಟನ್ ಡಿ.ಸಿ: ಅಮೆರಿಕದ ಅಧ್ಯಕ್ಷೀಯ ಪೀಠದಲ್ಲಿ ಡೊನಾಲ್ಡ್ ಟ್ರಂಪ್ ಅವರು ಕುಳಿತು ಇಂದಿಗೆ (ಜನವರಿ 2026) ಸರಿಯಾಗಿ ಒಂದು ವರ್ಷ. ಶ್ವೇತಭವನದ ಓವಲ್ ಆಫೀಸ್ನಲ್ಲಿ ಕುಳಿತಿರುವ ಟ್ರಂಪ್ ಅವರ ಕಣ್ಣು ಈಗ ಪಕ್ಕದ ಗೋಡೆಯ ಮೇಲಿರುವ ಗಡಿಯಾರದ ಮೇಲಲ್ಲ, ಬದಲಿಗೆ ನಾರ್ವೆಯ ಓಸ್ಲೋದಲ್ಲಿ ನೀಡಲಾಗುವ 'ನೋಬೆಲ್ ಶಾಂತಿ ಪುರಸ್ಕಾರ'ದ ಮೇಲಿದೆ. ಕಳೆದ 365 ದಿನಗಳಲ್ಲಿ ಜಗತ್ತು ಕಂಡದ್ದು
ಪುತ್ತೂರು ಯುವತಿಗೆ ವಂಚನೆ ಪ್ರಕರಣ | ಜ.31ರೊಳಗೆ ಮದುವೆ ನಡೆಯದಿದ್ದರೆ ಫೆ.7ರಂದು ಮಗುವಿಗೆ ನಾಮಕರಣ: ಪ್ರತಿಭಾ ಕುಳಾಯಿ
ಮಂಗಳೂರು, ಜ.22: ಪುತ್ತೂರಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರೀತಿಸಿ ಮಗುವಾದ ಬಳಿಕ ಮದುವೆಯಾಗಲು ನಿರಾಕರಿಸಿರುವ ಪ್ರಕರಣದಲ್ಲಿ ಸಂಧಾನಕ್ಕೆ ಯುವಕನ ಮನೆಯವರನ್ನು ಒಪ್ಪಿಸಲು ಸಂಧಾನಕ್ಕೆ ಮುಂದಾರುವ ಹಿನ್ನೆಲೆಯಲ್ಲಿ ಜ.24ರಂದು ನಿಗದಿಯಾಗಿದ್ದ ಮಗುವಿನ ನಾಮಕರಣವನ್ನು ಸದ್ಯ ಕೈಬಿಡಲಾಗಿದೆ. ಜನವರಿ 31ರೊಳಗೆ ಮದುವೆ ನಡೆಯದಿದ್ದರೆ ಫೆಬ್ರವರಿ 7ರಂದು ನಾಮಕರಣ ಕಾರ್ಯಕ್ರಮ ನಡೆಯಲಿದೆ. ನಂತರ ಯಾವುದೇ ಸಂಧಾನ ಇಲ್ಲ ಎಂದು ಹಿಂದುಳಿದ ವರ್ಗಗಳ ಅಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದ್ದಾರೆ. ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.24ರಂದು ಕಲ್ಲಡ್ಕದಲ್ಲಿ ಮಗುವಿಗೆ ನಾಮಕರಣಕ್ಕೆ ದಿನ ನಿಗದಿಪಡಿಸಲಾಗಿತ್ತು. ಆದರೆ ಮಗುವಿನ ಅಜ್ಜಿ ನಮಿತಾಗೆ ಆಚಾರ್ಯ ಸಮುದಾಯದ ಉಡುಪಿ ಒಕ್ಕೂಟದ ಪದಾಧಿಕಾರಿ ಮಧು ಆಚಾರ್ಯ ಎಂಬವರು ಕರೆ ಮಾಡಿ ಕೃಷ್ಣ ಜೆ.ರಾವ್ ಅವರ ಕುಟುಂಬ ಮದುವೆಗೆ ಒಪ್ಪಿರುವುದಾಗಿ ತಿಳಿಸಿದ್ದಾರೆ. ಸ್ವಲ್ಪ ಕಾಲಾವಕಾಶ ಕೇಳಿದ್ದಲ್ಲದೆ ತೊಟ್ಟಿಲು ಹಾಕುವ ಕಾರ್ಯಕ್ರಮ ಬೇಡ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿ ನಾಮಕರಣದ ದಿನ ಬದಲಾಯಿಸಲಾಗಿದೆ. ಹಿಂದೆಯೂ ಆರು ತಿಂಗಳು ನಮ್ಮನ್ನು ದಾರಿ ತಪ್ಪಿಸಲಾಗಿದ್ದು ಈ ಬಾರಿ ಹಾಗಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಸಂಧಾನಕ್ಕೆ ನಮಿತಾ ಮತ್ತು ಆಕೆಯ ಮಗಳು ಮಾತ್ರ ಬರಬೇಕು ಎಂಬ ಷರತ್ತನ್ನು ವಿಧಿಸಿದ್ದು, ನಾವದನ್ನು ಒಪ್ಪುವುದಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಯಾಕೆಂದರೆ ಅವರಲ್ಲಿಗೆ ಹೋದರೆ ಏನು ಬೇಕಾದರೂ ಆಗಬಹುದೆನ್ನುವ ಭಯವಿದೆ. ಆದರೂ ಸಂಧಾನಕ್ಕೆ ನಾನು ಹಾಗೂ ನಂಜುಂಡಿ ಹೋಗುವುದಿಲ್ಲ. ಸಂಧಾನ ಪುತ್ತೂರು ಪೊಲೀಸ್ ಠಾಣೆಯಲ್ಲೇ ಆಗಲಿ ಅಥವಾ ಮಂಗಳೂರು ಎಸ್ಪಿ ಅವರ ಬಳಿ ನಡೆಯಲಿ ಎಂದು ಪ್ರತಿಭಾ ಬೇಡಿಕೆ ಮುಂದಿಟ್ಟಿದ್ದಾರೆ. ಕೃಷ್ಣ ಜೆ.ರಾವ್ ಕುಟುಂಬ ಮದುವೆಗೆ ಒಪ್ಪುವುದಿಲ್ಲ ಎಂದು ಪುತ್ತೂರು ಶಾಸಕರೂ ಹೇಳಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು ಕೇಸಿನಿಂದ ಹೊರಬರಲು ನಾಟಕ ನಡೆಯುತ್ತಿರುವ ಶಂಕೆ ಇದೆ. ಹಿಂದೆಯೂ ಮಗುವನ್ನು ಆಶ್ರಮಕ್ಕೆ ನೀಡಬೇಕು, ಕೇಸು ಹಿಂದಕ್ಕೆ ಪಡೆಯಬೇಕು, ಮದುವೆಯ ನಂತರ ವಿಚ್ಛೇದನ ಪಡೆಯುವಂತೆ ಬೇಡಿಕೆ ಇಟ್ಟಿದ್ದರು ಎಂದು ಪ್ರತಿಭಾ ಆರೋಪಿಸಿದರು. ಮದುವೆ ಕಾನೂನುಬದ್ಧವಾಗಿ ಆನ್ ಲೈನ್ ಅಥವಾ ಯಾವುದೇ ರೀತಿಯಲ್ಲಾದರೂ ಆಗಲಿ. ಯಾವುದೇ ರೀತಿಯಲ್ಲಾದರೂ ಈ ಪ್ರಕರಣ ಅಂತ್ಯವಾಗಬೇಕು, ಇಬ್ಬರ ತಪ್ಪಿಗೂ ಪ್ರಾಯಶ್ಚಿತವಾಗಬೇಕು. ಮದುವೆಯಾಗಿ ಒಂದಾಗದಿದ್ದರೆ ಕಾನೂನು ಪ್ರಕಾರ ವಿಚ್ಛೇದನ ಪಡೆಯಲಿ. ಯಾವುದೇ ಗೋಷ್ಠಿ ಅಥವಾ ಸಭೆಗಳಿಗೆ ಹೋಗಬಾರದೆಂದು ಷರತ್ತು ವಿಧಿಸಿದ್ದರಿಂದ ನಮಿತಾ ಭಾಗವಹಿಸಿಲ್ಲ. ಜ.31ರೊಳಗೆ ಮದುವೆ ಆಗದಿದ್ದರೆ ಮುಂದಕ್ಕೆ ಸಂಧಾನವೇ ಇಲ್ಲ, ಫೆ.7ರಂದು ಅದ್ಧೂರಿಯಾಗಿ ಮಗುವಿನ ನಾಮಕರಣ ನಡೆಯಲಿದೆ. ಜೊತೆಗೆ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಾ ಎಚ್ಚರಿಸಿದರು.
ಸೇನಾ ವಾಹನ ಕಂದಕಕ್ಕೆ ಬಿದ್ದು 10 ಯೋಧರ ದುರ್ಮರಣ - ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ದುರಂತ
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಭೀಕರ ದುರಂತ ಸಂಭವಿಸಿದೆ. 17 ಯೋಧರಿದ್ದ ವಾಹನ ನಿಯಂತ್ರಣ ಕಳೆದುಕೊಂಡು 200 ಅಡಿ ಆಳಕ್ಕೆ ಬಿದ್ದ ಪರಿಣಾಮ 10 ಮಂದಿ ವೀರ ಯೋಧರು ಹುತಾತ್ಮರಾಗಿದ್ದಾರೆ. ಖಾನಿ ಟಾಪ್ ಬಳಿ ನಡೆದ ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕಲಬುರಗಿ | ತೊಗರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು
ಕಲಬುರಗಿ : ಎಂ.ಎಸ್.ಸ್ವಾಮಿನಾಥನ್ ವರದಿ ಪ್ರಕಾರ ತೊಗರಿಗೆ ಬೆಂಬಲ ಬೆಲೆ ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಎತ್ತಿನಬಂಡಿ ಹಾಗೂ ಟ್ರ್ಯಾಕ್ಟರ್ ಗಳನ್ನು ಮುಂದಿಟ್ಟುಕೊಂಡು ರೈತರು ಆಹೋರಾತ್ರಿ ಧರಣಿ ಪ್ರಾರಂಭಿಸಿದರು. ಪ್ರತಿ ಟನ್ ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡಬೇಕು, ಹಾಲು ಉತ್ಪಾದಕರ ಸಹಕಾರ ಸಂಘಗಳ (ಕೆಎಂಎಫ್) ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ತಲಾ 1,000 ರೂಪಾಯಿ ಪ್ರೋತ್ಸಾಹಧನ ನೀಡಬೇಕು. ಹೊರದೇಶದ ತೊಗರಿಗೆ ಶೇ.50ರಷ್ಟು ಆಮದು ಶುಲ್ಕ ಹಾಕಬೇಕು, ತೊಗರಿ ತುರ್ತು ಖರೀದಿ ಕೇಂದ್ರ ಸ್ಥಾಪನೆ, ಬೆಳೆ ವಿಮೆ ಮಂಜೂರು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕೆಂದು ರೈತರು ಆಗ್ರಹಿಸಿದರು. ಅಲ್ಲದೆ, ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲಮನ್ನಾ ಮಾಡಬೇಕು, ರೈತರ, ಕೃಷಿ ಕಾರ್ಮಿಕರ ವಿರೋಧಿಯಾಗಿರುವ ವಿಬಿ ಜಿರಾಮ್ ಜಿ ಕಾಯ್ದೆ ಜಾರಿಗೊಳಿಸುತ್ತಿರುವುದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಧರಣಿಯಲ್ಲಿ ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಮಹೇಶ್ ಎಸ್.ಬಿ., ಭೀಮಾಶಂಕರ ಮಾಡ್ಯಾಳ, ಮೌಲಾ ಮುಲ್ಲಾ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ಸಿದ್ದಪ್ಪ ಕಲಶೆಟ್ಟಿ, ಮೌನೇಶ್ ನಾಲವಾರ, ವೀರಣ್ಣ ಗಂಗಾಣಿ, ಸಿದ್ದಮ್ಮ ಮುತ್ತಗಿ, ಜಾಫರ್ ಖಾನ್, ಗುಂಡಪ್ಪ ಅರಣಕಲ, ಸಿದ್ಧಾರ್ಥ್ ಠಾಕೂರ್, ಸಲೀಂ ಅಹಮದ್ ಚಿತ್ತಾಪುರ, ವಿದ್ಯಾಸಾಗರ ಮಾಲಿ ಬಿರಾದಾರ, ಪ್ರಭು ಖೇಣಿ, ಶಂಕರ ಹೂಗಾರ್, ಶ್ಯಾಮರಾವ್ ದಿಗ್ಗಾಂವ, ಇಬ್ರಾಹಿಂ ಪಟೇಲ್, ಸೇರಿದಂತೆ ಮತ್ತಿತರರು ಹಾಜರಿದ್ದರು.

20 C