ಶೀಘ್ರದಲ್ಲಿ ನಾಗರಿಕರಿಗಾಗಿ ಆನ್ಲೈನ್ ಖಾತಾ ತಿದ್ದುಪಡಿ ಸೌಲಭ್ಯ : ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್
ಬೆಂಗಳೂರು : ನಾಗರಿಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ನಾಗರಿಕರೇ ಆನ್ಲೈನ್ ಖಾತಾ ತಿದ್ದುಪಡಿ ಮಾಡುವ ಸೌಲಭ್ಯವನ್ನು ಶೀಘ್ರದಲ್ಲಿ ಪರಿಚಯಿಸಲಾಗುವುದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ಗುರುವಾರ ಇಲ್ಲಿನ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ನಾಗರಿಕರು ತಮ್ಮ ಖಾತಾ ವಿವರಗಳಲ್ಲಿ ಇರುವ ದೋಷಗಳನ್ನು ಯಾವುದೇ ವಿಳಂಬವಿಲ್ಲದೆ ಸುಲಭವಾಗಿ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪುಗೊಳ್ಳಲಿದೆ. ಮಾಲಕರ ಹೆಸರು ಮತ್ತು ಆಸ್ತಿಯ ಅಳತೆ ಹೊರತುಪಡಿಸಿ, ಸ್ಥಳ, ವಾರ್ಡ್ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ನಾಗರಿಕರು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಡ್ರಾಫ್ಟ್ ಖಾತೆಯಿಂದ ಅಂತಿಮ ಖಾತೆಗೆ ಪ್ರಗತಿ: ಸುಮಾರು 25 ಲಕ್ಷ ಡ್ರಾಫ್ಟ್ ಖಾತಾ ಅರ್ಜಿಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಈಗಾಗಲೇ ಅಂತಿಮ ಇ-ಖಾತಾ ನೀಡಲಾಗಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದಲ್ಲಿ ಸರಾಸರಿ ಐದು ದಿನಗಳೊಳಗೆ ಅಂತಿಮ ಇ-ಖಾತಾ ನೀಡಲಾಗುತ್ತಿದೆ. ಡ್ರಾಫ್ಟ್ ಖಾತೆಯಿಂದ ಅಂತಿಮ ಖಾತೆಗೆ ಪರಿವರ್ತನೆಯ ಪ್ರಕ್ರಿಯೆ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಸುಗಮವಾಗಿ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಣೆ: ಪ್ರತಿದಿನ 1,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸರಾಸರಿ ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಿಸಲಾಗುತ್ತಿದೆ. ಇದು ಡಿಜಿಟಲ್ ಪ್ರಕ್ರಿಯೆಯ ವೇಗ ಮತ್ತು ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನೀಶ್ ಮೌದ್ಗಿಲ್ ಹೇಳಿದರು. ಖಾತಾ ತಿರಸ್ಕಾರ ಪ್ರಕ್ರಿಯೆಯಲ್ಲಿ ಕೆಲವು ಸವಾಲುಗಳು ಗಮನಕ್ಕೆ ಬಂದಿದ್ದು, ಇದನ್ನು ಸರಿಪಡಿಸಲು ರಿಜೆಕ್ಷನ್ ಆಡಿಟ್ ತಂಡವನ್ನು ರಚಿಸಲಾಗಿದೆ. ಈ ತಂಡವು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸುತ್ತಿದ್ದು, ತಿರಸ್ಕರಿಸಲಾದ ಅರ್ಜಿಗಳನ್ನು ಮರುಪರಿಶೀಲಿಸಿ ಅವುಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು. ಮ್ಯೂಟೇಷನ್ ಪ್ರಕ್ರಿಯೆಯಲ್ಲಿ ವಿಳಂಬವನ್ನು ಕಡಿಮೆ ಮಾಡಲು ಸ್ವಯಂಚಾಲಿತ ಮ್ಯೂಟೇಷನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಉಪ-ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆದ ವಹಿವಾಟುಗಳು ಈಗ ಸ್ವಯಂಚಾಲಿತವಾಗಿ ಮ್ಯೂಟೇಷನ್ ಆಗಲಿವೆ. ನೋಟಿಸ್ ಅವಧಿ ಪೂರ್ಣಗೊಂಡ ನಂತರ ಮ್ಯೂಟೇಷನ್ ಪೂರ್ಣಗೊಳ್ಳುತ್ತದೆ. ಏಳನೇ ದಿನದ ಬಳಿಕ ನಾಗರಿಕರಿಗೆSMSಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
Bengaluru | ಮನೆಗಳ್ಳತನ ಪ್ರಕರಣ : ಆರೋಪಿ ಬಂಧನ; 35 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳ ವಶ
ಬೆಂಗಳೂರು : ಮನೆಯೊಳಗೆ ನುಗ್ಗಿ ಹಣ, ಆಭರಣ ದೋಚಿ ಪರಾರಿಯಾಗಿದ್ದ ಪ್ರಕರಣದಡಿ ಆರೋಪಿಯೊಬ್ಬನನ್ನು ಇಲ್ಲಿನ ತಿಲಕನಗರ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಯನಗರ 4ನೇ ಬ್ಲಾಕ್ನ ನಿವಾಸಿಯೊಬ್ಬರು ಮನೆಯ ಬಾಗಿಲ ಚಿಲಕ ಹಾಕಿಕೊಂಡು ದಿನಸಿ ತರಲು ಸಮೀಪದ ಅಂಗಡಿಗೆ ತೆರಳಿದ್ದಾರೆ. ಕೆಲ ಸಮಯದ ಬಳಿಕ ನಿವಾಸಿಯ ತಂದೆ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿರುವುದು ಗಮನಿಸಿ ಒಳಗೆ ನೋಡಿದಾಗ ಬೀರುವಿನಲ್ಲಿಟ್ಟಿದ್ದ 423 ಗ್ರಾಂ ಚಿನ್ನಾಭರಣ, 110 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 50 ಸಾವಿರ ರೂ. ಹಣ ಕಳುವಾಗಿರುವುದು ಕಂಡುಬಂದಿದ್ದು, ತಕ್ಷಣ ಅವರು ತಿಲಕ್ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಬಾಣಸವಾಡಿಯ ಹೋಟೇಲ್ವೊಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿ ಗಿರಿನಗರ ಹಾಗೂ ಕೆ.ಆರ್.ಪುರ ಜ್ಯುವೆಲ್ಲರಿ ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದ ಸ್ವಲ್ಪ ಪ್ರಮಾಣದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ರಾಮಮೂರ್ತಿನಗರದ ಪಾರ್ಕ್ವೊಂದರ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟಿದ್ದ ಆಭರಣಗಳು ಸೇರಿದಂತೆ ಒಟ್ಟು 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Bengaluru | ಹೆತ್ತ ತಾಯಿಯನ್ನು ಮನೆಯ ನಾಲ್ಕನೆ ಮಹಡಿಯಿಂದ ತಳ್ಳಿ ಹತ್ಯೆಗೈದ ಮಗ
ಬೆಂಗಳೂರು : ಪಾಶ್ರ್ವವಾಯುವಿನಿಂದ(ಸ್ಟ್ರೋಕ್)ಬಳಲುತ್ತಿದ್ದ ಹೆತ್ತ ತಾಯಿಯನ್ನು ಮನೆಯ 4ನೇ ಮಹಡಿಯಿಂದ ತಳ್ಳಿ ಹತ್ಯೆಗೈದ ಮಗನೊಬ್ಬನನ್ನು ಇಲ್ಲಿನ ಆರ್.ಆರ್.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಬಂಧಿತ ಮಗ ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ(73) ಹತ್ಯೆಯಾದ ತಾಯಿ. ಎ.15ರಂದು ಮಧ್ಯಾಹ್ನ ಬೆಂಗಳೂರಿನ ಬಿಇಎಂಎಲ್ ಬಡಾವಣೆಯ 3ನೇ ಹಂತದಲ್ಲಿರುವ ಮನೆಯೊಂದರಲ್ಲಿ ಘಟನೆ ನಡೆದಿದೆ. ಈ ಸಂಬಂಧ ಮನೆ ಮಾಲಕ ವಿಕ್ರಮ್ ಎಂಬುವರು ನೀಡಿದ ದೂರು ಆಧರಿಸಿ ಬಿಎನ್ಎಸ್ ಸೆಕ್ಷನ್ 103(ಕೊಲೆ) ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೆಂಕಟೇಶ್ ಬಿಇಎಂಎಲ್ ಬಡಾವಣೆಯಲ್ಲಿ 2ನೇ ಮಹಡಿಯಲ್ಲಿ ತಾಯಿ ಹಾಗೂ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದರು. ಆರೋಪಿ ಶೋ ರೂಮ್ವೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿ. ಸಾವಿತ್ರಮ್ಮ ನಾಲ್ಕು ವರ್ಷಗಳಿಂದ ಪಾಶ್ರ್ವವಾಯು ಪೀಡಿತರಾಗಿ ಅಂಗಾಂಗಗಳ ಸ್ವಾಧೀನ ಕಳೆದುಕೊಂಡಿದ್ದರು. ಚಿಕಿತ್ಸೆ ನೀಡಿದರೂ ಗುಣಮುಖರಾಗಿರಲಿಲ್ಲ. ಆರೈಕೆ ಮಾಡುವುದೇ ಕಷ್ಟವಾಗಿತ್ತು. ಎ.15ರಂದು ಬುಧವಾರ ಮಧ್ಯಾಹ್ನ ಮನೆಗೆ ಬಂದ ಆರೋಪಿಯು ತಾಯಿ ಬಳಲುತ್ತಿರುವುದು ನೋಡಿ ಕಂಗಾಲಾಗಿದ್ದ. ಮಲಗಿದ್ದ ತಾಯಿಯನ್ನು ನಾಲ್ಕನೇ ಮಹಡಿಗೆ ಎತ್ತುಕೊಂಡು ಹೋಗಿ ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಕಂಡು ಮೇಲಿನಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಮಾಹಿತಿ ನೀಡಿದ್ದಾರೆ.
ಎ.18ರಂದು ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಬಂಟ್ವಾಳ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದೊಂದಿಗೆ ಮೇ 12 ರಂದು ಪಾಣೆಮಂಗಳೂರು ಸಮೀಪದ ಎಸ್ ಎಸ್ ಹಾಲ್ ನಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಎಪ್ರಿಲ್ 18 ರಂದು ಸಂಜೆ 4.00 ಕ್ಕೆ ಬಿ.ಸಿ.ರೋಡಿನ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಇದೇ ವೇಳೆ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಗುವುದು. ಬಂಟ್ವಾಳ ತಾಲೂಕಿನ ಬ್ಯಾರಿ ಭಾಷೆ ಮತ್ತು ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದು ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
IPL 2026 | ಮುಂಬೈ ವಿರುದ್ಧ ಪಂಜಾಬ್ ಕಿಂಗ್ಸ್ ಗೆ ಜಯ
ಕ್ವಿಂಟನ್ ಡಿಕಾಕ್ ಶತಕ ವ್ಯರ್ಥ, ಪ್ರಭ್ಸಿಮ್ರನ್ ಅರ್ಧಶತಕ
ಮುಂಬೈಗೆ ಮುಳುವಾದ ಶ್ರೇಯಸ್ ಅಯ್ಯರ್- ಪ್ರಭಸಿಮ್ರಾನ್ ಜೊತೆಯಾಟ; ಪಂಜಾಬ್ ಕಿಂಗ್ಸ್ ಅಜೇಯ ಓಟ
ಆರಂಭಕಾರ ಪ್ರಭಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅಮೋಘ ಶತಕದ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಬಳಗದ ಅಜೇಯ ಯಾತ್ರೆ ಮುಂದುವರಿದಿದೆ. ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ರದ್ದಿನಿಂದಾಗಿ ಒಟ್ಟು 9 ಅಂಕಗಳನ್ನು ಗಳಿಸಿರುವ ಪಂಜಾಬ್ ಇದೀಗ ಯಲ್ಲಿ ಆರ್ ಸಿಬಿಯನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದೆ. ಏತನ್ಮಧ್ಯೆ ಮುಂಬೈ ಇಂಡಿಯನ್ಸ್ ನ ಆರಂಭಕಾರ ಕ್ವಿಂಟನ್ ಡಿಕಾಕ್ ಅವರು ಹೊಡೆದ ಭರ್ಜರಿ ವ್ಯರ್ಥವಾಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 16ರ ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಇದಕ್ಕುತ್ತರವಾಗಿ ಪಂಜಾಬ್ ಕಿಂಗ್ಸ್ ತಂಡ ಇನ್ನೂ 21 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ಜಯಗಳಿಸಿತು. () ಸಂಕ್ಷಿಪ್ತ ಸ್ಕೋರ್ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 195/6, ಕ್ಲಿಂಟನ್ ಡಿ ಕಾಕ್ ಅಜೇಯ 112(60), ನಮನ್ ಧಿರ್ 50(31), ಹಾರ್ದಿಕ್ ಪಾಂಡ್ಯ 14(12), ಅರ್ಶದೀಪ್ ಸಿಂಗ್ 22ಕ್ಕೆ 3, ಮಾರ್ಕೋ ಯಾನ್ಸನ್ 30ಕ್ಕೆ 1, ಶಶಾಂಕ್ ಸಿಂಗ್ 19ಕ್ಕೆ 1. ಪಂಜಾಬ್ ಕಿಂಗ್ಸ್ 16.3 ಓವರ್ ಗಳಲ್ಲಿ 198/3, ಪ್ರಭಸಿಮ್ರಾನ್ ಸಿಂಗ್ ಅಜೇಯ 80(39), ಶ್ರೇಯಸ್ ಅಯ್ಯರ್ 68(35), ಕೂಪರ್ ಕಾನಲಿ17(12), ಗಜನಫರ್ 31ಕ್ಕೆ 2, ಶಾರ್ದೂಲ್ ಠಾಕೂರ್ 42ಕ್ಕೆ 1.
Kalaburagi | ಆಡಳಿತ, ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಮಾನತೆಯ ದಿಟ್ಟ ಹೆಜ್ಜೆ : ಅರುಣಕುಮಾರ ಪಾಟೀಲ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಭಟ್ಕಳ: ಕರ್ನಾಟಕ ಉರ್ದು ಅಕಾಡೆಮಿಯಿಂದ ಈದ್ ಮಿಲನ್, ರಾಷ್ಟ್ರೀಯ ಏಕತಾ ಮುಶಾಯಿರಾ
ಭಟ್ಕಳ: ಕರ್ನಾಟಕ ಉರ್ದು ಅಕಾಡೆಮಿಯ ವತಿಯಿಂದ ಭಟ್ಕಳದ ಆಮಿನಾ ಪ್ಯಾಲೇಸ್ ನಲ್ಲಿ ಗುರುವಾರ ರಾತ್ರಿ ಈದ್ ಮಿಲನ್ ಹಾಗೂ ರಾಷ್ಟ್ರೀಯ ಏಕತಾ ಮುಶಾಯಿರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಹ್ವಾನಿತ ಕವಿಗಳು ಹಾಗೂ ಸ್ಥಳೀಯ ಕವಿಗಳು ತಮ್ಮ ಮನೋಹರ ಕವನಗಳ ಮೂಲಕ ಪ್ರೇಕ್ಷಕರನ್ನು ಮನಮೋಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮೌಲಾನಾ ಮುಫ್ತಿ ಮೊಹಮ್ಮದ್ ಅಲಿ ವಹಿಸಿದ್ದು, ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉರ್ದು ವಿಷಯದಲ್ಲಿ ಶೇಕಡಾ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರಶಂಸಾ ಪತ್ರ ಹಾಗೂ ತಲಾ ರೂ. 1,000 ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಡಾ. ಅನೀಸ್ ಸಿದ್ದೀಖಿ ಹಾಗೂ ಶರೀಫ್ ಅಹ್ಮದ್ ಶರೀಫ್ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಲಶೆಟ್ಟಿ ಅವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರ ಠಾಣೆಯ ಪಿಎಸ್ಐ ನವೀನ್, ಇನಾಯತುಲ್ಲಾ ಶಾಬಂದ್ರಿ ಹಾಗೂ ಮೌಲಾನಾ ಮುಹಮ್ಮದ್ ಇಲ್ಯಾಸ್ ನದ್ವಿ ಸೇರಿದಂತೆ ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘಟನೆಗಳ ಗಣ್ಯರು ಹಾಜರಿದ್ದು, ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಮೌಲಾನಾ ಮುಫ್ತಿ ಮೊಹಮ್ಮದ್ ಅಲಿ, ಉರ್ದು ಭಾಷೆಯ ಪ್ರಚಾರ ಮತ್ತು ರಾಷ್ಟ್ರೀಯ ಏಕತೆ, ಸಮುದಾಯ ಸೌಹಾರ್ದತೆಗೆ ಅಕಾಡೆಮಿ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದರು. ಭಟ್ಕಳದಲ್ಲಿ ಉರ್ದು ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಸೂಕ್ತ ಜಾಗವನ್ನು ಮಂಜೂರು ಮಾಡಲು ತಹಶೀಲ್ದಾರ್ರನ್ನು ಮನವಿ ಮಾಡಿದರು. ಎರಡನೇ ಅಧಿವೇಶನದಲ್ಲಿ ಮುಶಾಯಿರಾ (ಉರ್ದು ಕವಿಗೋಷ್ಟಿ) ಕಾರ್ಯಕ್ರಮ ನಡೆಯಿತು. ಹೈದರಾಬಾದ್ನ ಖ್ಯಾತ ಕವಿ ಸರ್ದಾರ್ ಸಲೀಂ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಅಬ್ದುಲ್ ಕಾದಿರ್ ನಾಜಿಂ, ಪ್ರೊ. ರಿಯಾಝ್ ಮಹಮೂದ್, ಡಾ. ದಾವೂದ್ ಮೊಹ್ಸಿನ್, ಡಾ. ನಾತಿಕ್ ಅಲಿ ಪೂರಿ, ಅನ್ವರ್ ಖಾನ್, ಶೇಖ್ ಹಬೀಬ್, ಅಹ್ಮದ್ ಬಾಷಾ ಸಾಗರ್, ಶರೀಫ್ ಅಹ್ಮದ್ ಶರೀಫ್, ಅಸ್ಲಂ ಬನಾರಸಿ, ತನ್ವೀರ್ ಅಹ್ಮದ್ ಅಝೀಮ್, ಸರ್ದಾರ್ ಸಲೀಂ, ಸಿರಾಜ್ ಶೋಲಾಪುರಿ ಹಾಗೂ ರಫೀಕ್ ಸರ್ವರ್ ಸೇರಿದಂತೆ ಅತಿಥಿ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಇದೇ ವೇಳೆ ಸ್ಥಳೀಯ ಕವಿಗಳಾದ ಡಾ. ಮೊಹಮ್ಮದ್ ಹನೀಫ್ ಶಬಾಬ್, ಇಕ್ಬಾಲ್ ಸಯೀದಿ, ಇಬ್ನ್ ಹಸನ್, ಮೌಲಾನಾ ಸಮಾನ್ ಖಲೀಫಾ ನದ್ವಿ ಹಾಗೂ ಸುಹೈಲ್ ಅರ್ಷಿ ತಮ್ಮ ಕವನಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
Afzalpur | ಪ್ರಕಾಶ್ ಜಮಾದಾರ ಹೇಳಿಕೆಗೆ ಮಾಲಿಕಯ್ಯ ಗುತ್ತೇದಾರ್ ಬೆಂಬಲಿಗರಿಂದ ತಿರುಗೇಟು
ಅಫಜಲಪುರ: ದಿವಂಗತ ವಿಠ್ಠಲ್ ಹೇರೂರ ಅವರ ಹೆಸರನ್ನು ಬಳಸಿ ರಾಜಕಾರಣ ಮಾಡುತ್ತಿರುವ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ತಮ್ಮ ಹಿಂದಿನ ಇತಿಹಾಸವನ್ನು ಮರೆತಿದ್ದಾರೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ರಾಮಣ್ಣಾ ನಾಯಕೋಡಿ ಆರೋಪಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಠ್ಠಲ್ ಹೇರೂರ ಅವರು ಚುನಾವಣೆಗೆ ಸ್ಪರ್ಧಿಸಿದ ವೇಳೆ ಮೋಸ ಮಾಡಿ ಎಂ.ವೈ. ಪಾಟೀಲ್ ಅವರಿಗೆ ಬೆಂಬಲ ನೀಡಿದ ವಿಚಾರವನ್ನು ಕೋಲಿ ಸಮಾಜ ಮರೆತಿಲ್ಲ ಎಂದು ಹೇಳಿದರು. ನೀವು ಎಂ.ವೈ. ಪಾಟೀಲ್ ಹಿಂಬಾಲಕರಾಗಿ ಕೋಲಿ ಸಮಾಜಕ್ಕೆ ಎಷ್ಟು ನ್ಯಾಯ ಒದಗಿಸಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಕೇವಲ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದು, ಯಾವುದೇ ಪಕ್ಷದ ಸಿದ್ಧಾಂತ ಅಥವಾ ಬದ್ಧತೆ ಇಲ್ಲ ಎಂದು ಟೀಕಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಮುಖಂಡ ದೇವಿಂದ್ರ ಜಮಾದಾರ ಮಾತನಾಡಿ, ಮಾಲಿಕಯ್ಯ ಗುತ್ತೇದಾರ್ ಅವರ ಅವಧಿಯಲ್ಲಿ ಕೋಲಿ ಸಮಾಜದ ಅನೇಕ ಮಂದಿಗೆ ಪ್ರಮುಖ ಹುದ್ದೆಗಳು ಲಭಿಸಿವೆ. ಜ್ಯೋತಿ ಜಮಾದಾರ, ರುಕ್ಮಿಣಿ ಜಮಾದಾರ ತಾಪಂ ಅಧ್ಯಕ್ಷರಾಗಿ, ರಾಮಣ್ಣಾ ನಾಯಕೋಡಿ ಎಪಿಎಂಸಿ ಅಧ್ಯಕ್ಷರಾಗಿ, ಪುಂಡಲೀಕ ಕಟ್ಟಿಮನಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇರಿದಂತೆ ಹಲವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಮುಸ್ಲಿಂ ಸಮುದಾಯದ ಮುಖಂಡ ಜಮೀಲ್ ಗೌಂಡಿ ಮಾತನಾಡಿ, ಮಕ್ಬೂಲ್ ಪಟೇಲ್, ಪಪ್ಪು ಪಟೇಲ್, ಚಾಂದಪಾಷಾ ಅರ್ಜುಣಗಿ, ಅಕಲಾಕ್ ಸೋಲಾಪುರ, ಫಿರೋಜ್ ಜಾಗಿರದಾರ, ನಬೀಲಾಲ್ ಮಾಶಾಳಕರ ಸೇರಿದಂತೆ ಅನೇಕ ಮಂದಿಗೆ ವಿವಿಧ ಹುದ್ದೆಗಳ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಂಜೂರು ಅಹ್ಮದ್ ಅಗರಖೇಡ, ಶಂಕರಲಿಂಗ ಮೇತ್ರಿ, ಸುರೇಶ್ ಹಲಸಂಗಿ, ನಿಜಾಮುದ್ದೀನ್ ಜಮಾದಾರ, ಅವಧೂತ ಜಮಾದಾರ ಬನ್ನಟ್ಟಿ, ವಿಜುಗೌಡ ಪಾಟೀಲ್, ಶ್ರೀಮಂತ ಭಂಡಾರಿ, ರವಿ ಪಾಟೀಲ್, ವೀರಣ್ಣ ಬೂಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಇಸ್ರೇಲ್ ಹಾಗೂ ಲೆಬನಾನ್ ದೇಶಗಳು 10 ದಿನಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದ್ದಾರೆ. ಗಡಿಭಾಗದಲ್ಲಿ ಕಳೆದ ಹಲವು ವಾರಗಳಿಂದ ತೀವ್ರಗೊಂಡಿದ್ದ ಉದ್ವಿಗ್ನತೆಯ ನಡುವೆ ಈ ಅನಿರೀಕ್ಷಿತ ರಾಜತಾಂತ್ರಿಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ. ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್
The French Open | ಬಹುಮಾನ ಮೊತ್ತ ಶೇ.9.5ರಷ್ಟು ಹೆಚ್ಚಳ
ಪ್ಯಾರಿಸ್, ಎ.16: ಈ ವರ್ಷದ ಫ್ರೆಂಚ್ ಓಪನ್ ನಲ್ಲಿ ಬಹುಮಾನದ ಮೊತ್ತವು ಶೇ.9.5ರಷ್ಟು ಏರಿಕೆಯಾಗಲಿದ್ದು, ಒಟ್ಟು ಮೊತ್ತವು 61.7 ಮಿಲಿಯನ್ ಯುರೋಗಳಿಗೆ (72.69 ಮಿಲಿಯನ್ ಡಾಲರ್) ತಲುಪಿದೆ ಎಂದು ಪಂದ್ಯಾವಳಿಯ ಸಂಘಟಕರು ಗುರುವಾರ ತಿಳಿಸಿದ್ದಾರೆ. 2025ಕ್ಕೆ ಹೋಲಿಸಿದರೆ 5.4 ಮಿಲಿಯನ್ ಯುರೋ ಹೆಚ್ಚಳವಾಗಿದ್ದು, ಇದು ಮಣ್ಣಿನ ಟೆನಿಸ್ ಅಂಗಣದಲ್ಲಿ ಗ್ರ್ಯಾಂಡ್ ಸ್ಲಾಮ್ ಆಟಗಾರರ ಗಳಿಕೆಯಲ್ಲಿ ಸ್ಥಿರವಾದ ಏರಿಕೆಯನ್ನು ಸೂಚಿಸುತ್ತದೆ. ಆಯೋಜಕರು ಇತ್ತೀಚಿನ ವರ್ಷಗಳಲ್ಲಿ ಚಾಂಪಿಯನ್ ಗಳಿಗೆ ಮಾತ್ರವಲ್ಲದೆ, ಆರಂಭಿಕ ಹಂತಗಳಲ್ಲಿ ನಿರ್ಗಮಿಸುವ ಆಟಗಾರರಿಗೂ ಎಲ್ಲಾ ಸುತ್ತುಗಳಲ್ಲಿ ಬಹುಮಾನದ ಮೊತ್ತವನ್ನು ಹೆಚ್ಚಿಸುವತ್ತ ಗಮನಹರಿಸಿದ್ದಾರೆ. ರೋಲ್ಯಾಂಡ್-ಗ್ಯಾರೋಸ್ನಲ್ಲಿ ವರ್ಷಂಪ್ರತಿ ಆಯೋಜಿಸಲಾಗುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಸಮಾನ ಬಹುಮಾನ ಮೊತ್ತವನ್ನು ವಿತರಿಸಲಾಗುತ್ತಿದೆ. ಆದಾಯದ ಹೆಚ್ಚಿನ ಪಾಲಿಗಾಗಿ ಆಟಗಾರರಿಂದ ಒತ್ತಡ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ಯು.ಎಸ್. ಓಪನ್ ಆಯೋಜಕರು ಕಳೆದ ವರ್ಷ ಗ್ರ್ಯಾಂಡ್ ಸ್ಲಾಮ್ ಗಳಲ್ಲಿ ಅತಿ ದೊಡ್ಡ ಬಹುಮಾನ ಮೊತ್ತವಾದ 90 ಮಿಲಿಯನ್ ಡಾಲರ್ ನೀಡಿದ್ದರು. ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ 53.5 ಮಿಲಿಯನ್ ಪೌಂಡ್ ಗಳನ್ನು (72.40 ಮಿಲಿಯನ್ ಡಾಲರ್) ಪಾವತಿಸಲಾಗಿತ್ತು. ಈ ವರ್ಷದ ಆಸ್ಟ್ರೇಲಿಯನ್ ಓಪನ್ ನಲ್ಲಿ ದಾಖಲೆಯ 111.5 ಆಸ್ಟ್ರೇಲಿಯನ್ ಮಿಲಿಯನ್ (79.92 ಮಿಲಿಯನ್ ಡಾಲರ್) ಬಹುಮಾನ ನೀಡಲಾಗಿತ್ತು.
ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್; ಎಡಗೈ ವೇಗಿಗಳ ಕ್ಲಬ್ ಗೆ ಸೇರಿದ ಅರ್ಷದೀಪ್ ಸಿಂಗ್
ಹೊಸದಿಲ್ಲಿ, ಎ.16: ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಗಳನ್ನು ಪಡೆದರು. ಈ ಮೂಲಕ ಐಪಿಎಲ್ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿಗಳ ವಿಶೇಷ ಕ್ಲಬ್ ಗೆ ಪ್ರವೇಶಿಸಿದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅರ್ಷದೀಪ್ ಅವರು ಇನಿಂಗ್ಸ್ನ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಮುಂಬೈ ತಂಡದ ಆರಂಭಿಕ ಆಟಗಾರ ರಿಯಾನ್ ರಿಕೆಲ್ಟನ್ ಅವರನ್ನು 2 ರನ್ ಗೆ ಔಟ್ ಮಾಡಿದರು. ಇದರೊಂದಿಗೆ ಐಪಿಎಲ್ ನಲ್ಲಿ ತಮ್ಮ 100ನೇ ವಿಕೆಟ್ ಪೂರೈಸಿದರು. ಮುಂಬೈ ತಂಡವು ಚೇತರಿಸಿಕೊಳ್ಳುವ ಮೊದಲೇ ಅರ್ಷದೀಪ್ ಮತ್ತೊಮ್ಮೆ ಆಘಾತ ನೀಡಿದರು. ಎರಡನೇ ಓವರ್ ನ ಎರಡನೇ ಎಸೆತದಲ್ಲಿ ಮಾಜಿ ನಾಯಕ ಸೂರ್ಯಕುಮಾರ ಯಾದವ್ (0) ಅವರ ವಿಕೆಟ್ ಪಡೆದರು. ಅವಳಿ ವಿಕೆಟ್ ಪಡೆದ ಅರ್ಷದೀಪ್ ಅವರು ಐಪಿಎಲ್ ಇತಿಹಾಸದಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಎಡಗೈ ವೇಗಿಗಳಾದ ಟ್ರೆಂಟ್ ಬೌಲ್ಟ್, ಜಯದೇವ್ ಉನದ್ಕಟ್, ಆಶೀಷ್ ನೆಹ್ರಾ ಹಾಗೂ ಝಹೀರ್ ಖಾನ್ ಅವರನ್ನು ಒಳಗೊಂಡ ವಿಶೇಷ ಪಟ್ಟಿಗೆ ಸೇರಿದರು. ಅರ್ಷದೀಪ್ ಅವರಿಗೆ ಹಿಂದಿನ 11 ಐಪಿಎಲ್ ಇನಿಂಗ್ಸ್ಗಳಲ್ಲಿ ಪವರ್ ಪ್ಲೇನಲ್ಲಿ ಪಡೆದ ಮೊದಲ ವಿಕೆಟ್ ಇದಾಗಿದೆ. ಅರ್ಷದೀಪ್ ಅವರ ಸ್ಪೆಲ್ ಮುಂಬೈಗೆ ಆರಂಭಿಕ ಆಘಾತ ನೀಡಿದಷ್ಟೇ ಅಲ್ಲದೆ, ಪಂಜಾಬ್ ಪಾಳಯದಲ್ಲಿ ಹರ್ಷ ಮೂಡಿಸಿತು. ಆರು ಓವರ್ ಗಳ ನಂತರ 48 ರನ್ಗೆ ಎರಡು ವಿಕೆಟ್ ಕಳೆದುಕೊಂಡ ಮುಂಬೈ ತಂಡ ಸಂಕಷ್ಟಕ್ಕೆ ಸಿಲುಕಿತು. ಆಗ ಜೊತೆಯಾದ ಕ್ವಿಂಟನ್ ಡಿಕಾಕ್ ಹಾಗೂ ನಮನ್ ಧೀರ್ ತಂಡಕ್ಕೆ ಆಸರೆಯಾದರು. ///
ಅನಿಲ್ ಅಂಬಾನಿ ಕುರಿತು ವರದಿಯಲ್ಲಿ ಅನಗತ್ಯ ವಿವರಗಳನ್ನು ಸೇರಿಸಬೇಡಿ: ರಿಪಬ್ಲಿಕ್ ಟಿವಿಗೆ ಬಾಂಬೆ ಹೈಕೋರ್ಟ್ ಸೂಚನೆ
ಮುಂಬೈ, ಎ.16: ಉದ್ಯಮಿ ಅನಿಲ್ ಅಂಬಾನಿಯವರ ಹಣಕಾಸು ವಹಿವಾಟುಗಳು ಮತ್ತು ಅವರ ವಿರುದ್ಧ ನಡೆಯುತ್ತಿರುವ ತನಿಖೆಗಳ ಕುರಿತು ವರದಿ ಮಾಡುವಾಗ ಯಾವುದೇ ಅನಗತ್ಯ ವಿವರಗಳನ್ನು ಸೇರಿಸಬಾರದು ಎಂದು ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ರಿಪಬ್ಲಿಕ್ ಟಿವಿ ಮತ್ತು ಅದರ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಮೌಖಿಕವಾಗಿ ಸೂಚಿಸಿದೆ. ನ್ಯಾ. ಆರಿಫ್ ಡಾಕ್ಟರ್ ಅವರು ಸುದ್ದಿವಾಹಿನಿಯ ವಿರುದ್ಧ ಯಾವುದೇ ನಿಷೇಧಾಜ್ಞೆಯನ್ನು ಹೊರಡಿಸಲಿಲ್ಲ. ಆದರೆ ಅಂಬಾನಿ ವಿರುದ್ಧ ವರದಿ ಮಾಡುವಾಗ ಭಾಷೆ ಮತ್ತು ಶೈಲಿಯನ್ನು ಮಿತಗೊಳಿಸುವಂತೆ ಗೋಸ್ವಾಮಿಯವರಿಗೆ ಸೂಚಿಸಿದರು. ಕಾನೂನು ಕಲಾಪಗಳನ್ನು ವರದಿ ಮಾಡದಂತೆ ಯಾರನ್ನೂ ತಡೆಯಲು ಸಾಧ್ಯವಿಲ್ಲ. ಆದರೆ ಅದು ನ್ಯಾಯಾಲಯದ ಆದೇಶಗಳು ಮತ್ತು ದಾಖಲೆಗಳಲ್ಲಿನ ವಾಸ್ತವಾಂಶಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ನ್ಯಾಯಾಧೀಶರು ಹೇಳಿದರು. ಕಳೆದ ಮಾರ್ಚ್ನಲ್ಲಿ ರಿಪಬ್ಲಿಕ್ ಟಿವಿ ಮತ್ತು ಗೋಸ್ವಾಮಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದ ಅಂಬಾನಿ, ತನ್ನ ಹಣಕಾಸು ವಹಿವಾಟುಗಳ ಕುರಿತು ಸುದ್ದಿವಾಹಿನಿಯ ವರದಿಗಳು ತನ್ನ ವರ್ಚಸ್ಸಿಗೆ ಸರಿಪಡಿಸಲಾಗದ ಹಾನಿ ಉಂಟುಮಾಡಿವೆ ಎಂದು ಆರೋಪಿಸಿದ್ದರು. ರಿಪಬ್ಲಿಕ್ ಟಿವಿಯ ಒಡೆತನ ಹೊಂದಿರುವ ಎಆರ್ಜಿ ಔಟ್ ಲೈಯರ್, ಗೋಸ್ವಾಮಿ ಮತ್ತು ಇತರ ಅಪರಿಚಿತ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಅವರ ಅರ್ಜಿಯಲ್ಲಿ ಕೋರಲಾಗಿತ್ತು. ಹಿಂದಿನ ವಿಚಾರಣೆಯಲ್ಲಿಯೂ ನ್ಯಾಯಾಲಯವು ‘ಕೆಳಮಟ್ಟದ’ ಸುದ್ದಿಗಳನ್ನು ಪ್ರಕಟಿಸಬಾರದು ಮತ್ತು ವರದಿಗಾರಿಕೆಯಲ್ಲಿ ಅತಿಶಯೋಕ್ತಿಗಳನ್ನು ಕಡಿಮೆ ಮಾಡಬೇಕು ಎಂದು ರಿಪಬ್ಲಿಕ್ ಟಿವಿ ಹಾಗೂ ಗೋಸ್ವಾಮಿಗೆ ಸೂಚಿಸಿತ್ತು. ಗುರುವಾರದ ವಿಚಾರಣೆ ವೇಳೆ ಅಂಬಾನಿ ಪರ ವಕೀಲ ಮಹೇಶ್ ಜೇಠ್ಮಲಾನಿ, ಅಂಬಾನಿಯವರು ಆಕ್ಷೇಪ ಹೊಂದಿರುವ ರಿಪಬ್ಲಿಕ್ ಟಿವಿಯ ಕಾಮೆಂಟ್ ಗಳ ಪಟ್ಟಿಯನ್ನು ಒದಗಿಸಿದರೆ ಮತ್ತು ಇಂತಹ ಹೇಳಿಕೆಗಳು ನಿಜಕ್ಕೂ ಆಕ್ರಮಣಕಾರಿ ಎಂದು ಸುದ್ದಿ ವಾಹಿನಿಯು ಭಾವಿಸಿದರೆ ಅವುಗಳನ್ನು ಪುನರ್ಪರಿಶೀಲಿಸಬಹುದು ಎಂದು ತಿಳಿಸಿದರು. ನ್ಯಾಯಾಧೀಶರು ವಾಸ್ತವಿಕ ವರದಿಗಾರಿಕೆ ಮತ್ತು ಪ್ರಕರಣದಲ್ಲಿ ಆಸಕ್ತಿಯನ್ನು ಮೂಡಿಸುವ ವ್ಯಾಖ್ಯಾನಗಳ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದರು. ಸಾರ್ವಜನಿಕರಿಗೆ ವಿಷಯ ತಿಳಿಸುವ ಆಸಕ್ತಿ ಒಂದು ವಿಷಯ. ಆದರೆ ಅನಗತ್ಯ ವಿವರಗಳನ್ನು ಅಥವಾ ಅತಿಶಯೋಕ್ತಿಗಳನ್ನು ಸೇರಿಸುವ ಮೂಲಕ ಆಸಕ್ತಿ ಹುಟ್ಟಿಸುವುದು ಮತ್ತು ಪ್ರಚೋದಿಸುವುದು ಬೇರೆ ವಿಷಯ ಎಂದು ಹೇಳಿದರು. ಪರಸ್ಪರ ಮಾತುಕತೆಗಳ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬಹುದು ಎಂದೂ ಅವರು ಅಭಿಪ್ರಾಯಪಟ್ಟರು. ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಎ.29ಕ್ಕೆ ಮುಂದೂಡಿದರು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 13,262 ಕೋಟಿ ರೂ. ವೆಚ್ಚದ 11 ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಶಿಕ್ಷಣದಲ್ಲಿ ತಾರತಮ್ಯ ತಡೆಯಲು 'ಕರ್ನಾಟಕ ರೋಹಿತ್ ವೇಮುಲ ವಿಧೇಯಕ' ಜಾರಿಗೆ ಅನುಮೋದನೆ ದೊರೆತಿದೆ. ಜೊತೆಗೆ 436 ಕೋಟಿ ರೂ. ವೆಚ್ಚದ ಐಓಸಿ ಮೇಲ್ಸೇತುವೆ, ರಾಜಭವನ ಸೇರಿದಂತೆ ಕೆಲವು ಸರ್ಕಾರಿ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಎಎಐಗೆ ವಹಿಸಲು ನಿರ್ಧರಿಸಲಾಗಿದೆ.
ಬೆಂಗಳೂರು : ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತಾಗಿ ಕೇಂದ್ರ ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಲೇಖಕರು ಬಹಿರಂಗ ಪತ್ರ ಬರೆದಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಮಸೂದೆಯನ್ನು ತಡೆಯಲು ಅವರು ನಾಯಕತ್ವವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಮಾಜಿ ಪ್ರಧಾನಿಗೆ ಬಹಿರಂಗ ಪತ್ರ ಬರೆದಿರುವ ಲೇಖಕರಾದ ನಾಗೇಗೌಡ ಕೀಲಾರ ಹಾಗೂ ರಾಜೇಂದ್ರ ಪ್ರಸಾದ್ ಅವರು, ಕಳೆದ ಒಂದೂಕಾಲು ದಶಕದಲ್ಲಿ ದೆಹಲಿಯ ಒಕ್ಕೂಟ ಸರಕಾರವು (ಮೋದಿ ಸರಕಾರ) ರಾಜ್ಯ ಸರಕಾರಗಳ ಅಧಿಕಾರ, ಹಣ, ಸ್ವಾಯತ್ತತೆಗಳನ್ನು ಕಸಿದುಕೊಳ್ಳುವಂತಹ ಹಲವು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಬಂದಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಒಂದು ಕೇಂದ್ರೀಕೃತ ವ್ಯವಸ್ಥೆಯೊಳಗೆ ತರುವ ಬಹುದೊಡ್ಡ ಹುನ್ನಾರದಂತೆ ಕಾಣುತ್ತಿದೆ. ಈ ಬಗ್ಗೆ ವಿರೋಧ ಪಕ್ಷಗಳು ಅಲ್ಲಲ್ಲಿ ಪ್ರತಿರೋಧ ತೋರಿದ್ದರಾದರೂ ಸಫಲರಾಗಲು ಸಾಧ್ಯವಾಗಿಲ್ಲ. ಇದೆಲ್ಲವೂ ತಮ್ಮ ಗಮನದಲ್ಲಿರುತ್ತದೆಯಾದರೂ ನೆನಪಿಸುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಮೋದಿ ಅವರ ನೇತೃತ್ವದ ಒಕ್ಕೂಟ ಸರಕಾರವು 'ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ'ಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸಕಲ ಸಿದ್ದತೆ ನಡೆಸಿದೆ. ಇದು ದಕ್ಷಿಣ ಭಾರತದ ನಾಡು, ನುಡಿ ಮತ್ತು ಜನರನ್ನು ಉತ್ತರ ಭಾರತೀಯರ ದಾಸ್ಯಕ್ಕೆ ದೂಡುವ ಅಧಿಕೃತ ಶಾಸನವಾಗಿ ಹೊರಹೊಮ್ಮಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯಾನಂತರದ ಏಳೆಂಟು ದಶಕಗಳ ನಂತರವೂ ಉತ್ತರದ ಹಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣವನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಅಲ್ಲಿನ ಜನಸಂಖ್ಯೆ ಅತಿಯಾಗಿ, ದಕ್ಷಿಣದ ರಾಜ್ಯಗಳಿಗೆಡೆಗೆ ವಲಸೆ ವಿಪರೀತವಾಗಿದೆ. ಇದರಿಂದಾಗಿ ಇಲ್ಲಿನ ಸ್ಥಳೀಯರಿಗೆ ಉದ್ಯೋಗ, ವೃತ್ತಿಪರ ಅವಕಾಶಗಳು ಕಡಿಮೆಯಾಗಿ ಪೈಪೋಟಿ ಅನಾರೋಗ್ಯಕರವಾಗಿದೆ. ಇದೀಗ ಜನಸಂಖ್ಯೆಯ ಆಧಾರದ ಮೇಲೆ ಉತ್ತರದ ರಾಜ್ಯಗಳು ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಲಿವೆ. ಜನಸಂಖ್ಯೆ ನಿಯಂತ್ರಿಸಿದ್ದು ದಕ್ಷಿಣದ ಭಾರತದ ಜನರ ಅಪರಾಧವಾಯಿತೇ?!. ತೆರಿಗೆ ಹಣದ ಪಾಲು, ಅನುದಾನಗಳ ಪಾಲು ಸೇರಿದಂತೆ ಹಲವು ನಿಧಿಗಳ ಹಣದಲ್ಲಿ ದಕ್ಷಿಣದ ರಾಜ್ಯಗಳಿಗೆ ಮೋಸವಾಗುತ್ತಿದೆ. ಒಕ್ಕೂಟ ಸರಕಾರವು ಉತ್ತರ ರಾಜ್ಯಗಳ ಸಂವರ್ಧನೆಗಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ಪ್ಯಾಕೇಜು ನೀಡುತ್ತಿದ್ದು. ದಕ್ಷಿಣಕ್ಕೆ ಸಿಗುತ್ತಿರುವುದು ಬಿಡಿಗಾಸು ಮಾತ್ರ. ಮುಂದೆ ದಕ್ಷಿಣ ದ್ರಾವಿಡ ರಾಜ್ಯಗಳ ಒಟ್ಟು ಕ್ಷೇತ್ರಗಳಿಗಿಂತಲೂ ಉತ್ತರ ಪ್ರದೇಶ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೇ ಅಧಿಕವಾಗುತ್ತದೆ. ಅಲ್ಲಿಗೆ ದಕ್ಷಿಣದ ಕನ್ನಡಿಗರ, ಉಳಿದವರ ಗತಿಯೇನು? ಎಂದು ಅವರು ಪ್ರಶ್ನಿಸಿದ್ದಾರೆ. ಹಿಂದಿ ಭಾಷೆಯನ್ನು ಅಧಿಕೃತವಾಗಿ ಹೇರಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಒಕ್ಕೂಟ ಸರಕಾರವು ಅನುಸರಿಸುತ್ತಿದೆ. ಶಿಕ್ಷಣ, ಬ್ಯಾಂಕಿಂಗ್, ನಾಗರೀಕ ಸೇವಾ ಪರೀಕ್ಷೆಗಳು ಮತ್ತು ಆಡಳಿತದಲ್ಲೂ ಮೂರನೇ ಭಾಷೆಯಾಗಿ ಹೇರುತ್ತಿದೆ. ಆದರೆ ಉತ್ತರದ ರಾಜ್ಯಗಳು ಎರಡು ಭಾಷೆಗಳ ಪದ್ದತಿಯನ್ನು ಮಾತ್ರ ಅನುಸರಿಸುತ್ತಿವೆ. ಇದೆಂಥಾ ನೀತಿ. ಹಿಂದಿ ಪ್ರಚಾರ ಮತ್ತು ಬಳಕೆಗಾಗಿ ಸಾವಿರಾರು ಕೋಟಿಗಳನ್ನು ವ್ಯಯಿಸುತ್ತಿದೆ. ಆದರೆ ಕನ್ನಡಕ್ಕೆ ಸಿಗುತ್ತಿರುವುದೆಷ್ಟು ಎಂದು ನೋಡಿದರೆ ಬಹಳ ಸಂಕಟವಾಗುತ್ತದೆ. ಮುಂದೆ ಹೆಚ್ಚಿನ ಲೋಕಸಭಾ ಕ್ಷೇತ್ರಗಳು 'ಹಿಂದಿ ಭಾಗದವೇ' ಆದಾಗ ನಮ್ಮ ಪರಿಸ್ಥಿತಿ ಏನು?!ಇದುವರೆಗಿನ ಭಾರತದ ಪ್ರಧಾನಿಗಳನ್ನು ಗಮನಿಸಿದರೆ, ಒಟ್ಟು 15 ಜನರಲ್ಲಿ ನೀವು ಮತ್ತು ಪಿ ವಿ ನರಸಿಂಹರಾವ್ ಇಬ್ಬರನ್ನು ಬಿಟ್ಟು ಉಳಿದವರೆಲ್ಲಾ ಉತ್ತರ ಭಾರತೀಯರು. ರಾಜಕೀಯವಾಗಿ ಸಮಾನ ಅವಕಾಶವನ್ನು ದಕ್ಷಿಣ ಭಾರತದ ಜನನಾಯಕರಿಗೆ ಇದುವರೆಗೂ ನೀಡಲಾಗಿಲ್ಲ! ಇನ್ನು ಮುಂದೆ ಅಂತಹ ಆದ್ಯತೆ ಸಿಗುವ ಭರವಸೆ ಇಡಲಾಗುವುದೇ?! ಎಷ್ಟು ದಿನ ಉತ್ತರ ಭಾರತೀಯರ ದಾಸ್ಯದಲ್ಲಿರುವುದು?! ಸಂವಿಧಾನದ ಸಮಾನ ಅವಕಾಶ ಮತ್ತು ಸ್ಥಾನಮಾನ ದಕ್ಷಿಣಕ್ಕೆ ಸಿಗುವುದು ಯಾವಾಗ?! 543 ಕ್ಷೇತ್ರಗಳು ಇದ್ದಾಗಲೇ ಇಲ್ಲದ ಆದ್ಯತೆ, ಅಂದಾಜು 850 ಕ್ಷೇತ್ರಗಳು ಆದಾಗ, ಅದರಲ್ಲೂ ಅಂದಾಜು 305-10 ಕ್ಷೇತ್ರಗಳು ಬಿಮಾರು ಉತ್ತರ ರಾಜ್ಯಗಳೇ ಅದಾಗ ನಮ್ಮ ಪಾಡು ಏನು?! ಎಂದು ಕೇಳಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯು ದಕ್ಷಿಣದ ರಾಜ್ಯಗಳ ಸಾಂವಿಧಾನಿಕ ಸಾರ್ವಭೌಮತ್ವದ ಅಸ್ತಿತ್ವಕ್ಕೇ ಧಕ್ಕೆಯುಂಟುಮಾಡಲಿದೆ. ನಮ್ಮ ಜನರು ಜನಸಂಖ್ಯೆ ನಿಯಂತ್ರಿಸಿ, ಹಗಲಿರುಳು ದುಡಿದು ಸಂಪಾದಿಸಿ, ವಲಸಿಗರಿಗೂ ಅವಕಾಶಕೊಟ್ಟು, ತಾಯ್ನುಡಿಯನ್ನು ಉಸಿರಾಗಿಸಿಕೊಂಡು ಬಾಳಿ ಬದುಕಿದ್ದಾರೆ. ಅಂತಹ ಬದುಕನ್ನು ಉತ್ತರದ ದಾಸ್ಯಕ್ಕೆ ತಳ್ಳುವ ಈ ಮಸೂದೆಯನ್ನು ಜಾರಿಗೊಳ್ಳಲು ನಿಮ್ಮಂತಹ ಹಿರಿಯ ಸಂಸದೀಯ ನಾಯಕರು ಬಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಸಂಸತ್ತಿನ ಎರಡೂ ಸದನಗಳಲ್ಲಿರುವ ಅತ್ಯಂತ ಹಿರೀಕ ಸಂಸದೀಯ ಪಟುವೂ ನೀವೇ ಆಗಿದ್ದೀರಿ. ಅಷ್ಟಲ್ಲದೆ ದಕ್ಷಿಣವನ್ನು ಪ್ರತಿನಿಧಿಸಿರುವ ಪ್ರಧಾನಿಯೂ ನೀವಾಗಿದ್ದಿರಿ. ನಿಮ್ಮ ಪಕ್ಷವು ಬಿಜೆಪಿಯನ್ನು ಬೆಂಬಲಿಸಿರಬಹುದು, ಆದರೆ ಇಂತಹ ಮೋಸದ ಮಸೂದೆಯು ಮಂಡನೆಯನ್ನು ನೀವು ತಡೆಗಟ್ಟಬೇಕು. ನಿಮ್ಮ ಬದುಕಿನ ಸಮಯದಲ್ಲಿ ಇದು ಮಂಡನೆಯಾಗಿ ಜಾರಿಯಾದರೆ ಮುಂದಿನ ಪೀಳಿಗೆಗಳು ನಿಮ್ಮನ್ನು ನೆನೆಯಲಾರವು. ನೀವು ಕೂಡ ಉತ್ತರದ ವಂಚಕರೊಂದಿಗೆ ಸೇರಿ ನಮ್ಮ ನಾಡು, ನುಡಿ, ಜನಕ್ಕೆ ವಂಚಿಸಿದಂತಾಗುತ್ತದೆ ಎಂದು ಹೇಳಿದ್ದಾರೆ. ದಕ್ಷಿಣ ರಾಜ್ಯಗಳ ಎಲ್ಲಾ ಜನ ನಾಯಕರನ್ನು ಒಗ್ಗೂಡಿ, ಸಮಾಲೋಚಿಸಿ ಈ ಕ್ಷೇತ್ರ ಪುನರ್ವಿಂಗಡಣೆಯ ಮಸೂದೆಯನ್ನು ರದ್ದುಪಡಿಸಲು ನೀವು ನೇತೃತ್ವವಹಿಸಿ. ದಕ್ಷಿಣದ ಭಾರತದ ಜನರಿಗೆ ಒಕ್ಕೂಟ ಸರಕಾರದಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನ ಮುಂದಾದರೂ ದೊರೆಯುವಂತಾಗಲಿ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಧ್ಯಪ್ರದೇಶ| ಅತ್ಯಾಚಾರ ಆರೋಪ: ಬಿಜೆಪಿ ಕೌನ್ಸಿಲರ್ ಪುತ್ರನ ವಿರುದ್ಧ ಪ್ರಕರಣ ದಾಖಲು
ಭೋಪಾಲ, ಎ. 16: ವಿವಾಹವಾಗುವ ಭರವಸೆ ನೀಡಿ 27 ವರ್ಷದ ಯುವತಿಯನ್ನು ಅತ್ಯಾಚಾರಗೈದ ಆರೋಪದಲ್ಲಿ ಮಧ್ಯಪ್ರದೇಶದ ಸಾತ್ನಾದ ಬಿಜೆಪಿ ಕೌನ್ಸಿಲರ್ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬುಧವಾರ ಸಂಜೆ ಎಫ್ಐಆರ್ ದಾಖಲಿಸಲಾಗಿದೆ. ತಂಡ ಕೌನ್ಸಿಲರ್ ಮನೆ ಮೇಲೆ ದಾಳಿ ನಡೆಸಿದೆ. ಆದರೆ, ಆರೋಪಿ ಪರಾರಿಯಾಗಿದ್ದಾನೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿ ಯೋಗೇಂದ್ರ ಸಿಂಗ್ ಪರಿಹಾರ್ ತಿಳಿಸಿದ್ದಾರೆ. ಆತ ಇರುವ ಸ್ಥಳ ಜಬಲ್ಪುರ ಎಂಬುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಜಬಲ್ಪುರದ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುವ ಯುವತಿ ಹಲವು ವರ್ಷಗಳಿಂದ ಆರೋಪಿಯ ಸಂಪರ್ಕದಲ್ಲಿದ್ದಳು ಎಂದು ಪರಿಹಾರ್ ತಿಳಿಸಿದ್ದಾರೆ. ವಿವಾಹವಾಗುವ ಭರವಸೆ ನೀಡಿ ಆತ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಆದರೆ, ಈಗ ವಿವಾಹವಾಗುವುದಕ್ಕೆ ನಿರಾಕರಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆರೋಪಿಯ ತಾಯಿ ಬಿಜೆಪಿ ಸೇರುವ ಮುನ್ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಕೌನ್ಸಿಲರ್ ಆಗಿದ್ದರು.
Telangana SEEEPC Survey | 12 ಲಕ್ಷಕ್ಕೂ ಹೆಚ್ಚು ಮಂದಿಯಿಂದ ‘ಜಾತಿಯಿಲ್ಲ’ ಎಂಬ ಆಯ್ಕೆ!
ಹೈದರಾಬಾದ್: 2024ರ ತೆಲಂಗಾಣ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಸಮೀಕ್ಷೆ (SEEEPC)ಯಲ್ಲಿ ಅನಿರೀಕ್ಷಿತ ಅಂಶಗಳು ಪತ್ತೆಯಾಗಿದ್ದು, ಗಮನಾರ್ಹ ಪ್ರಮಾಣದ ಹಾಗೂ ವೈವಿಧ್ಯಮಯ ಗುಂಪಿನ ನಾಗರಿಕರು ತಮ್ಮನ್ನು ತಾವು ಯಾವುದೇ ಜಾತಿಗೆ ಸೇರಿದವರಲ್ಲ ಎಂದು ಗುರುತಿಸಿಕೊಂಡಿದ್ದಾರೆ. ಸದ್ಯ ತೆಲಂಗಾಣ ಜನಸಂಖ್ಯೆಯಲ್ಲಿ 10ನೇ ಅತಿ ದೊಡ್ಡ ಸಮುದಾಯವಾಗಿರುವ ಈ ಗುಂಪಿನ 12 ಲಕ್ಷ ಮಂದಿ ಸಾಂಪ್ರದಾಯಿಕ ಜಾತಿ ಪ್ರವರ್ಗದಲ್ಲಿ ಗುರುತಿಸಿಕೊಳ್ಳಲು ನಿರಾಕರಿಸಿ, ಅದನ್ನು ಮೀರುವ ನಾಗರಿಕ ಗುರುತನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ದತ್ತಾಂಶದಲ್ಲಿ ಪ್ರಧಾನವಾಗಿ ನಗರವಾಸಿ, ಸಾಕಷ್ಟು ಸುಶಿಕ್ಷಿತ ಹಾಗೂ ವೃತ್ತಿಪರ ಮತ್ತು ಅರ್ಹತೆ ಆಧಾರಿತ ವಲಯಗಳನ್ನು ಪ್ರತಿನಿಧಿಸುವ ವ್ಯಕ್ತಿಗಳ ವಿವರಗಳಿವೆ. ‘ಜಾತಿಯಿಲ್ಲ’ ಎಂದು ಹೇಳಿಕೊಂಡಿರುವ ಬಹುತೇಕ ನಾಗರಿಕರು ಹೈದರಾಬಾದ್ ನ ವಿಸ್ತರಿತ ಮಹಾನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಶಿಕ್ಷಣ ಪಡೆದ ವೃತ್ತಿಪರರು. ವಿಶೇಷವಾಗಿ ಐಎಎಸ್ ಅಥವಾ ಐಪಿಎಸ್ನಂತಹ ಉನ್ನತ ಸರ್ಕಾರಿ ಸೇವೆಗಳಲ್ಲಿ ಉದ್ಯೋಗದಲ್ಲಿರುವವರು ಅಥವಾ ಸಾಫ್ಟ್ವೇರ್, ಬಿಪಿಒ ಹಾಗೂ ಔಷಧ ಕ್ಷೇತ್ರದಂತಹ ನಗರ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಅವರ ಕುಟುಂಬಗಳು ಸಾಮಾನ್ಯವಾಗಿ ಮಧ್ಯಮದಿಂದ ಮೇಲ್ಮಧ್ಯಮ ವರ್ಗಕ್ಕೆ ಸೇರಿದ್ದು, ಉತ್ತಮ ಮನೆಗಳಲ್ಲಿ ವಾಸಿಸುತ್ತಿದ್ದು, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಮೇಲೆ ಸೀಮಿತ ಪ್ರಮಾಣದಲ್ಲಿ ಅವಲಂಬಿತರಾಗಿದ್ದಾರೆ. ಸಾರ್ವಜನಿಕವಾಗಿ ‘ಜಾತಿಯಿಲ್ಲ’ ಎಂದು ಹೇಳಿಕೊಂಡಿರುವ ಶೇ. 43 ಮಂದಿ ತಮ್ಮ ಬಳಿ ಜಾತಿ ಪ್ರಮಾಣಪತ್ರವಿದೆ ಎಂದು ತಿಳಿಸಿದ್ದಾರೆ. ಇವರಲ್ಲಿ ಶೇ. 13.5 ಮಂದಿ ಈ ಹಿಂದೆ ಮೀಸಲಾತಿ ಸೌಲಭ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ. ಈ ವ್ಯಕ್ತಿವಿವರಗಳು ಜಾತಿ ಸಂಬಂಧಿತ ಮಾರ್ಗಗಳ ಮೂಲಕ ಅವರ ಚಲನಶೀಲತೆಯ ಪಥ ರೂಪುಗೊಂಡಿರುವುದನ್ನು ಸೂಚಿಸುತ್ತವೆ. ಇದೀಗ ಜಾತಿ ತಟಸ್ಥತೆಯನ್ನು ಆಯ್ಕೆ ಮಾಡಿಕೊಂಡಿರುವುದಾದರೂ, ಅವರು ಇನ್ನೂ ಸಂಪೂರ್ಣವಾಗಿ ಸಮಾನವಾದ ಸಾಂಸ್ಥಿಕ ಮತ್ತು ವೃತ್ತಿಪರ ಜಾಗಗಳಲ್ಲಿ ನೆಲೆಗೊಳ್ಳಿಲ್ಲವೆಂಬುದು ಗಮನಾರ್ಹ. ತೆಲಂಗಾಣ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಸಮೀಕ್ಷೆಯಲ್ಲಿ ‘ಜಾತಿಯಿಲ್ಲ’ ಎಂಬ ಹೊಸ ಪ್ರವರ್ಗವನ್ನು ಪರಿಚಯಿಸಲಾಗಿದ್ದು, ಅದಕ್ಕೆ ಕ್ರಮ ಸಂಖ್ಯೆ 999 ಅನ್ನು ನೀಡಲಾಗಿದೆ. ಈ ಪ್ರವರ್ಗವನ್ನು ವಿಶಾಲವಾಗಿ ಇತರೆ ಜಾತಿಗಳು ಅಥವಾ ಸಾಮಾನ್ಯ ವರ್ಗಗಳಡಿ ವರ್ಗೀಕರಿಸಲಾಗಿದ್ದರೂ, ಇದು ಸಾಮಾಜಿಕವಾಗಿ ವಿಶಿಷ್ಟ ಗುಂಪನ್ನು ಪ್ರತಿನಿಧಿಸುತ್ತದೆ. ‘ಜಾತಿಯಿಲ್ಲ’, ‘ಧರ್ಮವಿಲ್ಲ’ ಹಾಗೂ ‘ಯಾವುದೇ ಸಾಮಾಜಿಕ ಪ್ರವರ್ಗವಿಲ್ಲ’ ಎಂಬ ತಟಸ್ಥ ಪ್ರವರ್ಗಗಳನ್ನು ಪರಿಗಣಿಸಬೇಕು ಎಂದು ಸಲ್ಲಿಸಿದ್ದ ರಿಟ್ ಅರ್ಜಿಗೆ ಪ್ರತಿಯಾಗಿ ತೆಲಂಗಾಣ ಸರ್ಕಾರ ಈ ಸೇರ್ಪಡೆ ಮಾಡಿದೆ. ಸೌಜನ್ಯ: deccanherald.com
ಮೀಸಲಾತಿ ವಿರೋಧಿಸಿದವರನ್ನು ಈ ದೇಶದ ಮಹಿಳೆಯರು ಕ್ಷಮಿಸಿಲ್ಲ: ಪ್ರಧಾನಿ ಮೋದಿ
ಹೊಸದಿಲ್ಲಿ, ಎ. 16: ದೇಶವೊಂದರ ಇತಿಹಾಸದಲ್ಲಿ ಕೆಲವು ‘‘ಮಹತ್ವದ ಕ್ಷಣಗಳು’’ ಇರುತ್ತವೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯು ಅಂತಹ ಕ್ಷಣಗಳಲ್ಲಿ ಒಂದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ‘‘ಮಹಿಳಾ ಮೀಸಲಾತಿಯು ಸುಮಾರು 30 ವರ್ಷಗಳ ಹಿಂದಿನ ಕಲ್ಪನೆಯಾಗಿದೆ ಎಂದು ಮಸೂದೆಯ ಜಾರಿ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸುತ್ತಾ ಅವರು ಹೇಳಿದರು. ‘‘25-30 ವರ್ಷಗಳ ಹಿಂದೆಯೇ ಇಂಥ ಮಸೂದೆಯೊಂದರ ಅಗತ್ಯವಿತ್ತು. ಈ ಕಲ್ಪನೆ ಮೊದಲು ಬಂದಾಗಲೇ ನಾವು ಅದನ್ನು ಜಾರಿಗೊಳಿಸಬೇಕಾಗಿತ್ತು. ಅದು ಸಾಧ್ಯವಾಗಿದ್ದರೆ, ಇಂದು ಆ ಕಲ್ಪನೆಯು ಗಣನೀಯವಾಗಿ ಪಕ್ವವಾಗಿರುತ್ತಿತ್ತು. ಅದು ಕಾಲ ಕಾಲಕ್ಕೆ ಅಗತ್ಯವಿದ್ದಂತೆ ಸುಧಾರಣೆಗಳನ್ನು ಕಂಡಿರುತ್ತಿತ್ತು. ಅಂತಿಮವಾಗಿ, ಪ್ರಜಾಪ್ರಭುತ್ವದ ನೈಜ ಸೌಂದರ್ಯವೇ ಇದಾಗಿದೆ’’ ಎಂದು ಮೋದಿ ಹೇಳಿದರು. ‘‘ದೇಶವೊಂದರ ಇತಿಹಾಸದಲ್ಲಿ ಕೆಲವು ಮಹತ್ವದ ಕ್ಷಣಗಳಿರುತ್ತವೆ. ಆ ಕಾಲದ ಸಮಾಜದ ಮಾನಸಿಕ ಸ್ಥಿತಿ ಮತ್ತು ಆ ಕ್ಷಣವನ್ನು ಗುರುತಿಸುವ ನಾಯಕತ್ವದ ಸಾಮರ್ಥ್ಯವು ಆ ಕ್ಷಣವನ್ನು ರಾಷ್ಟ್ರೀಯ ಪರಂಪರೆಯಾಗಿ ಮಾರ್ಪಡಿಸುತ್ತದೆ. ಇದು ಭಾರತದ ಸಂಸದೀಯ ಇತಿಹಾಸದಲ್ಲಿ ನಿಖರವಾಗಿ ಅಂಥ ಒಂದು ಕ್ಷಣವಾಗಿದೆ’’ ಎಂದು ಮೋದಿ ಅಭಿಪ್ರಾಯಪಟ್ಟರು. ಈ ನಿರ್ಧಾರವು ಒಂದು ರಾಜಕೀಯ ಪಕ್ಷಕ್ಕೆ ಲಾಭ ತರುವುದಿಲ್ಲ, ಇದು ದೇಶದ ಪ್ರಜಾಪ್ರಭುತ್ವದ ಪರವಾಗಿದೆ ಎಂದು ಅವರು ಹೇಳಿದರು. ‘‘ಈ ಹಕ್ಕನ್ನು ಮಹಿಳೆಯರಿಗೆ ನೀಡುವುದನ್ನು ವಿರೋಧಿಸಿದವರನ್ನು ಈ ದೇಶದ ಮಹಿಳೆಯರು ಕ್ಷಮಿಸಿಲ್ಲ. ಅವರು ಅದರ ಪರಿಣಾಮಗಳನ್ನು ಎದುರಿಸಿದ್ದಾರೆ. ನಾವೆಲ್ಲಾ ಜೊತೆಯಾಗಿ ಮುಂದುವರಿದರೆ, ಈ ನಿರ್ಧಾರದ ಪ್ರಯೋಜನವನ್ನು ಯವುದೇ ಒಂದು ರಾಜಕೀಯ ಪಕ್ಷ ಪಡೆದುಕೊಳ್ಳುವುದಿಲ್ಲ, ಬದಲಿಗೆ ಅದು ದೇಶದ ಪ್ರಜಾಪ್ರಭುತ್ವಕ್ಕೆ ಪೂರಕವಾಗಿರುತ್ತದೆ’’ ಎಂದು ಪ್ರಧಾನಿ ಮೋದಿ ನುಡಿದರು.
Shreyas Iyer Stunning Catch- ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅದ್ಭುತ 'ರಿಲೇ ಕ್ಯಾಚ್' ಮೂಲಕ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯಲು ನೆರವಾದರು. ಬೌಂಡರಿ ಗೆರೆಯ ಬಳಿ ಸುಮಾರು 6 ಅಡಿ ಎತ್ತರಕ್ಕೆ ಜಿಗಿದು ಚೆಂಡನ್ನು ಹಿಡಿದ ಅಯ್ಯರ್, ತಾವು ಗೆರೆ ದಾಟುವ ಮುನ್ನ ಅದನ್ನು ಕ್ಸೇವಿಯರ್ ಬಾರ್ಟ್ಲೆಟ್ಗೆ ಎಸೆದರು. ಈ ಸ್ಮರಣೀಯ ಫೀಲ್ಡಿಂಗ್ ಪ್ರದರ್ಶನ ಕಂಡು ರೋಹಿತ್ ಶರ್ಮಾ ಬೆರಗಾದರು. ಈ ಸಾಹಸದ ನಂತರ ಅಯ್ಯರ್ ವಾಂಖೆಡೆ ಪ್ರೇಕ್ಷಕರನ್ನು ಕೆಣಕುವಂತೆ ಸಂಭ್ರಮಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ: ಪೋಪ್ ಲಿಯೋ
ಕ್ಯಾಮರೂನ್, ಎ.16: ಜಾಗತಿಕ ರಾಜಕೀಯ ಮತ್ತು ಯುದ್ಧ ಪರಿಸ್ಥಿತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೋಪ್ ಲಿಯೋ, “ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ” ಎಂದು ಹೇಳಿದ್ದಾರೆ. ಕ್ಯಾಮರೂನ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗಳಿಗೆ ಶತಕೋಟಿ ಡಾಲರ್ ಗಳನ್ನು ಖರ್ಚು ಮಾಡುವ ಪ್ರವೃತ್ತಿಯನ್ನು ಖಂಡಿಸಿದರು. “ಕೆಲವೇ ನಿರಂಕುಶ ನಾಯಕರು ಜಗತ್ತನ್ನು ಧ್ವಂಸಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದರು. ತಮ್ಮ ವಿರುದ್ಧ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ ಬಳಿಕ ಪ್ರತಿಕ್ರಿಯಿಸಿದ ಪೋಪ್, “ಯುದ್ಧದ ಮಾಸ್ಟರ್ಸ್ ಗೆ ನಾಶಮಾಡಲು ಒಂದು ಕ್ಷಣ ಸಾಕು. ಆದರೆ ಪುನರ್ ನಿರ್ಮಾಣಕ್ಕೆ ಇಡೀ ಜೀವನ ಸಾಲದು ಎಂಬುದನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ” ಎಂದು ಹೇಳಿದರು. “ಕೊಲೆ ಮತ್ತು ವಿನಾಶಕ್ಕೆ ಶತಕೋಟಿ ಹಣ ಖರ್ಚಾಗುತ್ತದೆ. ಆದರೆ ಚಿಕಿತ್ಸೆ, ಶಿಕ್ಷಣ ಮತ್ತು ಪುನರ್ ಸ್ಥಾಪನೆಗೆ ಅಗತ್ಯವಾದ ಸಂಪನ್ಮೂಲಗಳು ಎಲ್ಲಿಯೂ ಕಾಣುತ್ತಿಲ್ಲ” ಎಂದು ಪೋಪ್ ಲಿಯೋ ಅವರು ಬೇಸರ ವ್ಯಕ್ತಪಡಿಸಿದರು. ಜಗತ್ತಿನ ನಾಯಕರು ಶಾಂತಿ, ಮಾನವೀಯತೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಪೋಪ್ ಲಿಯೋ ಕರೆ ನೀಡಿದರು.
ಕಾಳಗಿ | ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಉತ್ಸವ
ಕಾಳಗಿ: ದಕ್ಷಿಣಕಾಶಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೀಲಕಂಠ ಕಾಳೇಶ್ವರ ಅಲಂಕೃತ ಬೆಳ್ಳಿ ಮೂರ್ತಿ ಪಲ್ಲಕ್ಕಿ ಉತ್ಸವವು ಜರುಗುವುದರೊಂದಿಗೆ ಜಾತ್ರೆ ತೆರೆ ಕಂಡಿತು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ದೇವಸ್ಥಾನದಿಂದ ಪ್ರಾರಂಭವಾದ ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಉತ್ಸವ ಅಪಾರ ಭಕ್ತ ಸಮೂಹದ ಮಧ್ಯೆ ಪಟ್ಟಣದ ಮುತ್ತನಕಟ್ಟಿ ಅಂಬಿಗರ ಚೌಡಯ್ಯ ದೇವಸ್ಥಾನ, ಚಾಮುಂಡೇಶ್ವರ ದೇವಸ್ಥಾನ, ಮರ್ಗಮ್ಮ ದೇವಸ್ಥಾನ, ಮುಖ್ಯಬಜಾರ ರಸ್ತೆ, ಚೌವಡಿ ಕಟ್ಟಿ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ಅರ್ಚಕರ ಮನೆಗೆ ತಲುಪಿತು. ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ಕಲಾ ತಂಡಗಳು ಹಾಗೂ ಡೊಳ್ಳು ಭಾಜ, ಭಜಂತ್ರಿ, ಹಲಗೆ, ಭಜನೆಗಳು ಮೆರಗು ನೀಡಿದವು. ಯುವಕರ ತಂಡ ಪಲ್ಲಕ್ಕಿ ಉತ್ಸವದಲ್ಲಿ ದಾಸೋಹ ವ್ಯವಸ್ಥೆ ಮಾಡಿತ್ತು. ನಂತರ ದೇವಸ್ಥಾನ ಆವರಣದಲ್ಲಿ ಪೈಲ್ವಾನರಿಂದ ನಡೆದ ಜಂಗಿ ಕುಸ್ತಿಯಲ್ಲಿ ವಿಜೇತರಿಗೆ ಬೆಳ್ಳಿ ಖಡ್ಗ ನೀಡಲಾಯಿತು. ವಿಧಾನ ಪರಿಷತ್ ಸದಸ್ಯ ಹಾಗೂ ನೀಲಕಂಠ ಕಾಳೇಶ್ವರ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಜಗದೇವ ಗುತ್ತೇದಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ಶರಣಗೌಡ ಪೊಲೀಸ್ ಪಾಟೀಲ, ಜಗದೀಶ್ ಮಾಲಿಪಾಟೀಲ, ನೀಲಕಂಠ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ಅನೀಲಕುಮಾರ ಮಾಲಿಪಾಟೀಲ, ವೇದಪ್ರಕಾಶ ಮೊಟಗಿ, ಸಂತೋಷ ಪಂತಗೆ, ಪರಮೇಶ್ವರ ಮಡಿವಾಳ, ಬಂಡಪ್ಪ ಬೊಮ್ಮಣ್ಣಿ, ಸೋಮಣ್ಣ ಮಕಪನೋರ, ಜಗನ್ನಾಥ ಚಂದನಕೇರಿ, ಶರಣಪ್ಪ ಮುಕರಂಬಿ, ಶಿವಕಿರಣ ಪ್ಯಾಟಿಮಠ, ನಾಗಯ್ಯಸ್ವಾಮಿ ಮಠಪತಿ, ಬಸವರಾಜ ಸಿಂಗಶೆಟ್ಟಿ, ಸಂತೊಷ ಕಡಬೂರ, ಯಲ್ಲಾಲಿಂಗ ಉನ್ನಿ, ಉದಯಕುಮಾರ ಸುಂಠಾಣ, ರೇವಣಸಿದ್ದ ಕಲಶೆಟ್ಟಿ, ಶಾಮರಾವ ಕಡಬೂರ, ಸುನೀಲ್ ರಾಜಾಪೂರ ಸೇರಿದಂತೆ ಅನೇಕರು ಇದ್ದರು.
ಸುರಪುರ | ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ವಿವರವುಳ್ಳ ಗ್ರಂಥ ಬಿಡುಗಡೆ
ಸುರಪುರ: ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಅಪರೂಪದ ಐತಿಹಾಸಿಕ ಘಟನೆಗಳನ್ನು ಒಳಗೊಂಡ ಅಪ್ಪಾರಾವ್ ವಕೀಲರ ಆತ್ಮಚರಿತ್ರೆ ಆಟೋ ಬಯೋಗ್ರಾಫಿ ಆಫ್ ಆನ್ ಅನಾನಿಮಸ್ ಫ್ರೀಡಮ್ ಫೈಟರ್ ಗ್ರಂಥವನ್ನು ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿರುವ ಡಾ. ಲಕ್ಷ್ಮಾರೆಡ್ಡಿ ಅವರ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರೊಫೆಸರ್ ಕೊಂಡ ರಾಮಚಂದ್ರರೆಡ್ಡಿ ಮಾತನಾಡಿ, ಹೈದರಾಬಾದ್ ವಿಮೋಚನ ಹೋರಾಟದ ಅಜ್ಞಾತ ಪುಟಗಳನ್ನು ದಿವಂಗತ ಅಪ್ಪಾರಾವ್ ವಕೀಲರು ಈ ಕೃತಿಯ ಮೂಲಕ ಸಮಾಜದ ಮುಂದೆ ತಂದಿದ್ದು, ಇದು ಮಹತ್ವದ ಐತಿಹಾಸಿಕ ದಾಖಲೆಯಾಗಲಿದೆ ಎಂದು ಹೇಳಿದರು. ಗ್ರಂಥದ ಮುದ್ರಣ ವೆಚ್ಚವನ್ನು ಡಾ. ಲಕ್ಷ್ಮಾರೆಡ್ಡಿ ವಹಿಸಿಕೊಂಡಿದ್ದು, ಸುರಪುರ ಕನ್ನಡ ಸಾಹಿತ್ಯ ಸಂಘದಿಂದ ಈ ಕೃತಿ ಪ್ರಕಟಿಸಲಾಗಿದೆ. ಕಾರ್ಯಕ್ರಮದಲ್ಲಿ ಸುರಪುರ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ ಹಾಗೂ ಗ್ರಂಥದ ಸಂಪಾದಕ ಮಂಡಳಿಯ ಸದಸ್ಯರಾದ ಜೆ ಆಗಸ್ಟಿನ್ ನ್ಯಾಯವಾದಿ, ಕೋಶ್ಯಾಧ್ಯಕ್ಷರಾದ ಪ್ರಕಾಶ್ ಚಂದ್ ಜೈನ್, ಉಸ್ಮಾನಿಯಾ ವಿಶ್ವವಿದ್ಯಾಲಯ ಹೈದರಾಬಾದ್ ನ ಕಲಾ ವಿಭಾಗದ ಡೀನ್ ಆಗಿರುವ ಡಾ.ಲಿಂಗಪ್ಪ ಗೋನಾಳ ಹಾಗೂ ಉಸ್ಮಾನಿಯಾ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರೊಫೆಸರ್ ಕೊಂಡ ರಾಮಚಂದ್ರರೆಡ್ಡಿ, ಆಂಧ್ರ ಪ್ರದೇಶದ ಮಾಜಿ ಹೈಕೋರ್ಟ್ ಗೌರ್ನ್ಮೆಂಟ್ ಅಡ್ವೊಕೇಟ್ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಡಾ. ಲಕ್ಷ್ಮಾರೆಡ್ಡಿ ಅವರು ಸೇರಿದಂತೆ ಇತರ ಬಂಧು ಬಳಗದವರು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆ-02: ನೋಂದಣಿಗೆ ವಿದ್ಯಾರ್ಥಿಗಳ ಪರದಾಟ
ಉಡುಪಿ: ಎ.30ರಿಂದ ಪ್ರಾರಂಭಗೊಳ್ಳುವ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕಾಗಿ ಆನ್ಲೈನ್ ಮೂಲಕ ನೋಂದಾಯಿ ಸಲು ಎ.17 ಶುಕ್ರವಾರ ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದ ತಾಂತ್ರಿಕ ತೊಂದರೆಯಿಂದಾಗಿ ವೆಬ್ಸೈಟ್ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಇದರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೊಂದಾಯಿಸಲು ವಿದ್ಯಾರ್ಥಿಗಳು ಪರದಾಡುತಿದ್ದಾರೆ ಎಂದು ಉಡುಪಿ ಸ್ನೇಹ ಟ್ಯುಟೋರಿಯಲ್ನ ಪ್ರಾಂಶುಪಾಲರಾದ ಉಮೇಶ್ ಚೇರ್ಕಾಡಿ ತಿಳಿಸಿದ್ದಾರೆ. ಕಾರಣಾಂತರಗಳಿಂದ ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಗೆ ಗೈರುಹಾಜರಾದ ಅಥವಾ ಫಲಿತಾಂಶ ಪೂರ್ಣ ಗೊಳಿಸದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ-2 ನಡೆಸಲು ಮಂಡಳಿ ಪ್ರಕಟಿಸಿದ್ದು, ಎ.30ರಂದು ಈ ಪರೀಕ್ಷೆ ನಡೆಯುವು ದಾಗಿ ಪ್ರಕಟಿಸಿದೆ. ಪರೀಕ್ಷೆಗೆ ಹೆಸರು ನೊಂದಾಯಿಸಲು ಎ.17ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದ ತಾಂತ್ರಿಕ ತೊಂದರೆಯಿಂದ ಮೊಬೈಲ್ ರಿಜಿಸ್ಟರ್ ಮಾಡಲಾಗದೇ, ಒಟಿಪಿ ಬಾರದೇ ಸೈಬರ್ ಸೆಂಟರ್ನ ಮೂಲಕ ನೊಂದಾಯಿಸಲು ಸಾದ್ಯವಾಗುತ್ತಿಲ್ಲ. ಅಲ್ಲದೇ ಆಪ್ಲೈನ್ನಲ್ಲಿ ಕಾಲೇಜಿ ನಲ್ಲಿ ನೊಂದಾಯಿಸಲು ಸಹ ಪ್ರಾಂಶುಪಾಲರಿಗೆ ಸಾಧ್ಯವಾಗದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಮಂಡಳಿ ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಕಣ್ಣುಮುಚ್ಚಿ ಕುಳಿತಿದೆ. ಇದರಿಂದಾಗಿ ಪುನರಾವರ್ತಿತ ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ವಿದ್ಯಾರ್ಥಿಗಳು ಸೈಬರ್ ಸೆಂಟರ್ನಿಂದ ಕಾಲೇಜಿಗೆ ಅಲೆದಾಡುತಿದ್ದಾರೆ ಎಂದು ಉಮೇಶ್ ಚೇರ್ಕಾಡಿ ಹೇಳಿದ್ದಾರೆ.
ಸೇನಾ ಸಂಘರ್ಷವು ಸಮಸ್ಯೆಯನ್ನು ಪರಿಹರಿಸಲಾರದು: ಪ್ರಧಾನಿ ನರೇಂದ್ರ ಮೋದಿ
ಹೊಸದಿಲ್ಲಿ, ಎ.15: ಪಶ್ಚಿಮ ಏಶ್ಯಾ ಹಾಗೂ ಉಕ್ರೇನ್ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷಗಳನ್ನು ಶಾಂತಿಯುತವಾಗಿ ಪರಿಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ. ಸೇನಾ ಸಂಘರ್ಷವು ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಆಸ್ಟ್ರಿಯಾದ ಫೆಡರಲ್ ಚಾನ್ಸಲರ್ ಕ್ರಿಶ್ಚಿಯನ್ ಸ್ಟಾಕರ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದರು. ಇಂದು ಇಡೀ ಜಗತ್ತು ಅತ್ಯಂತ ಗಂಭೀರ ಹಾಗೂ ಉದ್ವಿಗ್ನ ಪರಿಸ್ಥಿತಿ ಎದುರಿಸುತ್ತಿದೆ. ಜಾಗತಿಕ ಉದ್ವಿಗ್ನತೆಗಳ ಪರಿಣಾಮ ಎಲ್ಲಾ ದೇಶಗಳಲ್ಲಿ ಕೂಡ ಕಂಡು ಬರುತ್ತಿದೆ ಎಂದು ಹೇಳಿದರು. ಸಂಘರ್ಷಗಳನ್ನು ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಬೇಕು ಎಂಬ ಅಭಿಪ್ರಾಯವನ್ನು ಭಾರತ ಹಾಗೂ ಆಸ್ಟ್ರೀಯ ದೇಶಗಳು ಹಂಚಿಕೊಂಡಿವೆ ಎಂದು ಪ್ರಧಾನಿ ಹೇಳಿದರು. ಆಸ್ಟ್ರಿಯಾದ ಚಾನ್ಸಲರ್ ಭೇಟಿಯಿಂದ ವ್ಯಾಪಾರ ಮತ್ತು ಹೂಡಿಕೆಯಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ನಿರೀಕ್ಷೆ ಇದೆ ಎಂದು ಎಂದು ಮೋದಿ ಅವರು ಗಮನ ಸೆಳೆದರು. ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿದ ಅವರು, ಇದು ಯುರೋಪ್ ಒಕ್ಕೂಟದೊಂದಿಗೆ ಭಾರತದ ಸಂಬಂಧಗಳಲ್ಲಿ ಹೊಸ ಮಜಲನ್ನು ಆರಂಭಿಸಿದೆ ಎಂದರು. ಚಾನ್ಸೆಲರ್ ಸ್ಟಾಕರ್ ತಮ್ಮ ಮೊದಲ ಅಧಿಕೃತ ಭಾರತದ ಭೇಟಿಗಾಗಿ ಮಂಗಳವಾರ ಹೊಸದಿಲ್ಲಿಗೆ ಆಗಮಿಸಿದರು. ಈ ಭೇಟಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.
ಉತ್ತರ ಪ್ರದೇಶ| ಅಕ್ರಮ ನಿರ್ಮಾಣ ಆರೋಪ: ಸಂಭಲ್ನಲ್ಲಿ ಈದ್ಗಾ, ಇಮಾಮ್ಬಾರಾ ನೆಲಸಮಗೊಳಿಸಿದ ಅಧಿಕಾರಿಗಳು
ಲಕ್ನೋ, ಎ. 15: ಉತ್ತರಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ನಾಲ್ಕು ಬುಲ್ಡೋಝರ್ಗಳನ್ನು ಬಳಸಿ ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಈದ್ಗಾ ಹಾಗೂ ಇಮಾಮ್ಬಾರಾವನ್ನು ನೆಲಸಮಗೊಳಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆ ಕೊಟ್ವಾಲಿ ಸಂಭಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಿಚೋಲಿ ಗ್ರಾಮದಲ್ಲಿ ನಡೆದಿದೆ. ಈದ್ಗಾವನ್ನು ಸುಮಾರು 7 ಬಿಗಾ ಮೇವು ಭೂಮಿಯಲ್ಲಿ ನಿರ್ಮಿಸಲಾಗಿದೆ. ಇಮಾಮ್ಬಾರಾವನ್ನು ಗೊಬ್ಬರ ಗುಂಡಿಗೆ ಮೀಸಲಿರಿಸಲಾಗಿದ್ದ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸ್ಥಳದಲ್ಲಿ ಐದು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಹಾಗೂ ಪ್ರೊವಿನಿಕಲ್ ಆರ್ಮಡ್ ಕಾನ್ಸ್ಟೆಬ್ಯುಲರಿ (ಪಿಎಸಿ) ಯ ಒಂದು ಕಂಪೆನಿಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಭಟನೆಯ ಭೀತಿಯಿಂದ ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರನ್ನು ಚದುರಿಸಲಾಯಿತು. ಗ್ರಾಮಸ್ಥರ ದೂರುಗಳ ಹಿನ್ನೆಲೆಯಲ್ಲಿ ಲೇಖಪಾಲ್ ಸ್ಪರ್ಶ ಗುಪ್ತಾ ಅವರು ಜನವರಿ 18ರಂದು ತಹಶೀಲ್ದಾರ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಜನವರಿ 31ರಂದು ದಿನಪತ್ರಿಕೆಗಳಲ್ಲಿ ನೋಟಿಸನ್ನು ಪ್ರಕಟಿಸಲಾಗಿತ್ತು. ಯಾರಿಗಾದರೂ ಆಕ್ಷೇಪ ಇದ್ದರೆ, ಪ್ರತಿಕ್ರಿಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ, ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ. ಗುರುವಾರ ಬೆಳಗ್ಗೆ ಸುಮಾರು 7.30ಕ್ಕೆ ಅಪರ ಜಿಲ್ಲಾಧಿಕಾರಿ ನಿಧಿ ಪಟೇಲ್ ನಾಯಬ್ ತಹಶೀಲ್ದಾರ್ ದೀಪಕ್ ಕುಮಾರ್ ಜುರೈಲ್ ತಂಡದೊಂದಿಗೆ ಸ್ಥಳಕ್ಕೆ ತಲುಪಿದರು. ಕೆಲವರು ಉಳಿ ಹಾಗೂ ಸುತ್ತಿಗೆಗಳನ್ನು ಬಳಸಿ ಇಮಾಮ್ಬಾರವನ್ನು ನೆಲಸಮಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂತು. ಆದರೆ, ಅಧಿಕಾರಿಗಳು ಅವರನ್ನು ತೆರವುಗೊಳಿಸಿದರು. ಬಳಿಕ ಅವರು ಈದ್ಗಾ ಹಾಗೂ ಇಮಾಮ್ಬಾರವನ್ನು ನೆಲಸಮಗೊಳಿಸಿದರು. ಜಿಲ್ಲಾಡಳಿತದ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಸ್ಥಳೀಯ ಗ್ರಾಮಸ್ಥೆ ಝುಬೈದಾ, ಈ ಪ್ರದೇಶದಲ್ಲಿರುವ ಪ್ರತಿಯೊಬ್ಬರೂ ಇಮಾಮ್ಬಾರಾ ಹಾಗೂ ಈದ್ಗಾವನ್ನು ಬಳಸುತ್ತಾರೆ. ಬಡ ಕುಟುಂಬಗಳು ವಿವಾಹದ ಮೆರವಣಿಗೆ ಸಂದರ್ಭ ಇಲ್ಲಿ ತಂಗುತ್ತಾರೆ ಎಂದಿದ್ದಾರೆ. ಕಾನೂನು ಪ್ರತಿಯೊಬ್ಬರಿಗೂ ಒಂದೇ ಆಗಿದ್ದರೆ, ಈ ಕ್ರಮವನ್ನು ದೇವಾಲಯಗಳಿಗೆ ಕೂಡ ಅನ್ವಯಿಸಬೇಕು ಎಂದು ಝುಬೈದಾ ಹೇಳಿದ್ದಾರೆ.
ಮಂಗಳೂರು ಲಾಠಿ ಚಾರ್ಜ್ ಪ್ರಕರಣದ 101 ಆರೋಪಿಗಳ ಖುಲಾಸೆ
ಮಂಗಳೂರು, ಎ.16: ನಗರ ಪೊಲೀಸ್ ಕಮಿಷನರ್ ಕಚೇರಿಯ ಮುಂದೆ 2017ರ ಎ.4ರಂದು ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಎಲ್ಲಾ 101 ಆರೋಪಿಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಹ್ಮದ್ ಖುರೇಶಿ ಎಂಬಾತನನ್ನು ಅಕ್ರಮವಾಗಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೆ ದೌರ್ಜನ್ಯ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾಗಿದ್ದರು. ಈ ಸಂದರ್ಭ ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಕಲ್ಲುತೂರಾಟ ನಡೆದಿದೆ ಎಂಬ ಆರೋಪದಲ್ಲಿ ಹಲವರ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 101 ಮಂದಿಯ ವಿರುದ್ಧ ಅಂತಿಮ ವರದಿ ಸಲ್ಲಿಸಲಾಗಿತ್ತು. ಆ ಪೈಕಿ ಎರಡು ಪ್ರಕರಣಗಳು ಎರಡನೇ ಜೆಎಂಎಫ್ಸಿ ನ್ಯಾಯಾಲಯ ಮತ್ತು ಇನ್ನೊಂದು ಪ್ರಕರಣದ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಗಳನ್ನು ಸಾಬೀತುಪಡಿಸಲು ಸರಕಾರಿ ಪರ ವಕೀಲರು ವಿಫಲವಾಗಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟು ಪ್ರಕರಣದಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ವಕೀಲರಾದ ಆಸಿಫ್ ಬೈಕಾಡಿ, ಮುಫೀದಾ ರಹ್ಮಾನ್, ಇರ್ಷಾದ್ ಸಖಾಫಿ ಮೊಂಟೆಪದವು, ಅಯಾಝ್ ಚಾರ್ಮಾಡಿ, ಮುಹಮ್ಮದ್ ಆದಿಲ್, ನಿಶಾನ್ ಎಂ.ಕೆ, ರುಬೀನ, ಅಂಸೀನ ವಾದಿಸಿದ್ದರು.
Yadgiri | ಎ.15ರಿಂದ ಹೀಟ್ ವೇವ್ ಯಲ್ಲೋ ಅಲರ್ಟ್: ಮುನ್ನೆಚ್ಚರಿಕೆ ಕ್ರಮಗಳಿಗೆ ಜಿಲ್ಲಾಧಿಕಾರಿ ಸಲಹೆ
ಯಾದಗಿರಿ: ಜಿಲ್ಲೆಯಲ್ಲಿ ಏಪ್ರಿಲ್ 15ರಿಂದ 19ರವರೆಗೆ ಬಿಸಿಗಾಳಿ ತೀವ್ರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ‘ಹೀಟ್ ವೇವ್ ಯಲ್ಲೋ ಅಲರ್ಟ್’ ನೀಡಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬಿಸಿಗಾಳಿ (ಹೀಟ್ ವೇವ್) ಹಾಗೂ ಹೀಟ್ ಸ್ಟ್ರೋಕ್ನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ. ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಸಾಕಷ್ಟು ನೀರು ಕುಡಿಯುವುದು, ಹಗುರವಾದ ಹತ್ತಿ ಬಟ್ಟೆ ಧರಿಸುವುದು, ಟೋಪಿ ಅಥವಾ ಛತ್ರಿ ಬಳಸುವುದು ಅಗತ್ಯ. ಬಿಸಿಲಿನ ಅವಧಿಯಲ್ಲಿ ಶ್ರಮದಾಯಕ ಕೆಲಸಗಳನ್ನು ತಗ್ಗಿಸಬೇಕು ಎಂದು ಸಲಹೆ ನೀಡಲಾಗಿದೆ. ದೇಹದ ನಿರ್ಜಲೀಕರಣ ತಪ್ಪಿಸಲು ಮಜ್ಜಿಗೆ, ನಿಂಬೆ ನೀರು, ಓಆರ್ಎಸ್ ಮುಂತಾದ ದ್ರವ ಪದಾರ್ಥಗಳನ್ನು ಸೇವಿಸಬೇಕು. ಚಹಾ, ಕಾಫಿ, ಮದ್ಯಪಾನ ಹಾಗೂ ಕಾರ್ಬೋನೇಟೆಡ್ ಪಾನೀಯಗಳನ್ನು ಕಡಿಮೆ ಮಾಡಬೇಕು ಎಂದು ಸೂಚಿಸಲಾಗಿದೆ. ಶಿಶುಗಳು, ವೃದ್ಧರು ಹಾಗೂ ದೀರ್ಘಕಾಲದ ಕಾಯಿಲೆ ಇರುವವರು ವಿಶೇಷ ಜಾಗ್ರತೆ ವಹಿಸಬೇಕು. ಅನಾರೋಗ್ಯ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರೈತರು ಮತ್ತು ಕೃಷಿ ಕಾರ್ಮಿಕರು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾತ್ರ ಕೆಲಸ ನಿರ್ವಹಿಸಬೇಕು. ಜಾನುವಾರುಗಳಿಗೆ ಸಾಕಷ್ಟು ನೀರು ಮತ್ತು ನೆರಳು ಒದಗಿಸಬೇಕು ಎಂದು ತಿಳಿಸಲಾಗಿದೆ. ಬಿಸಿಗಾಳಿಯ ಪರಿಣಾಮ ಕಡಿಮೆಗೊಳಿಸಲು ಸಾರ್ವಜನಿಕರು ಸರ್ಕಾರ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ : ಉಡುಪಿ ಜಿಲ್ಲಾ ಸಮಿತಿ ರಚನೆ
ಮೂಳೂರು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ರಿ) ಇದರ ನೂತನ ಉಡುಪಿ ಜಿಲ್ಲಾ ಸಮಿತಿ ರಚಿಸುವ ಸಲುವಾಗಿ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಸಭಾಂಗಣದಲ್ಲಿ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಲ್ರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಳ್ರವರ ದುಆದೊಂದಿಗೆ ಸಭೆಯು ಪ್ರಾರಂಭವಾಯಿತು. ಸಂಸ್ಥೆಯ ಮ್ಯಾನೇಜರ್ ಅಲ್ ಹಾಜ್ ಯು.ಕೆ. ಮುಸ್ತಫ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಕೆ.ಎಸ್.ಸಿ ವಿಝನ್ 30 ಚೇರ್ಮೆನ್ ಹಾತಿಂ ಕೂಳೂರು ಹಾಗೂ ಕೇಂದ್ರ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಅರಮೆಕ್ಸ್ ಹಾಜರಿದ್ದರು. ವಿಝನ್ 30 ಚೇರ್ಮ್ಯಾನ್ ಹಾತಿಂ ಕೂಳೂರು ಮಾತನಾಡಿ ಶುಭಾಶಂಸೆಗೈದರು. ಚುನಾವನಾಧಿಕಾರಿ ಕೇಂದ್ರ ಸಮಿತಿಯ ಸದಸ್ಯ ಅಬ್ದುಲ್ ಅಝೀಝ್ ಮೂಳೂರುರವರ ನೇತೃತ್ವದಲ್ಲಿ ಡಿ.ಕೆ.ಎಸ್.ಸಿ ನೂತನ ಉಡುಪಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ ಕುಂಬೋಳ್, ಡೆವಲಪ್ಮೆಂಟ್ ಚೇರ್ಮೆನ್ ಆಗಿ ಅಬ್ದುಲ್ಲಾಹ್ ಹಾಜಿ ಸೂಪರ್ ಸ್ಟೋರ್, ಕಾಪು ಅಧ್ಯಕ್ಷರಾಗಿ ಹಾಜಿ ಅಬೂಬಕ್ಕರ್ ನೇಜಾರ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಅಹ್ಮದ್ ಕರ್ನಿರೆ ಆಯ್ಕೆಯಾದರು. ಹಣಕಾಸು ಕಾರ್ಯದರ್ಶಿಯಾಗಿ ಎ.ಹೆಚ್ ಅಬ್ದುಲ್ ಖಾದರ್ ಪಡುಬಿದ್ರಿ, ಉಪ ಹಣಕಾಸು ಕಾರ್ಯದರ್ಶಿಯಾಗಿ ನಝೀರ್ ಅಹ್ಮದ್ ಕೋಡಿ ಕನ್ನಂಗಾರ್, ಉಪಾಧ್ಯಕ್ಷರುಗಳಾಗಿ ಕೆ.ಎಚ್. ಮುಹಮ್ಮದ್ ಕನ್ನಂಗಾರ್, ಅಬ್ಬು ಹಾಜಿ ಮೂಳೂರು ಹಾಗೂ ಸಯ್ಯಿದ್ ಅಲಿ ಪಡುಬಿದ್ರಿ ಜೊತೆ ಕಾರ್ಯದರ್ಶಿಗಳಾಗಿ ಮೊಹಿದಿನ್ ಪಡುಬಿದ್ರಿ,(Ex.D.S.P) ಅಬ್ದುಲ್ಲ ಮೂಳೂರು ಹಾಗೂ ಹಮೀದ್ ಯೂಸುಫ್ ಮೂಳೂರು. ಸಂವಹನ ಕಾರ್ಯದರ್ಶಿಯಾಗಿ ವೈ.ಬಿ.ಸಿ. ಬಶೀರ್ ಅಲಿ, ಸಲಹೆಗಾರರಾಗಿ ಇಕ್ಬಾಲ್ ಕಲ್ಯಾಣಪುರ, ಲೆಕ್ಕಪರಿಶೋಧಕರಾಗಿ ಹಮೀದ್ ಅದ್ದು ಮುಂತಾದವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ದ.ಕ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷರಾದ ಮನ್ಸೂರ್ ರಯ್ಯಾನ್ ಕೃಷ್ಣಾಪುರ, ಸಂಘಟನಾ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಹಾಗೂ ಇನ್ನಿತರ ಸದಸ್ಯರು, ಘಟಕಗಳ ನಾಯಕರು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸಾಕ್ ಬೊಳ್ಳಾಯಿ ಕಾರ್ಯಕ್ರಮವನ್ನು ನಿರೂಪಿಸಿ, ಉಡುಪಿ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿ ಫಾರೂಕ್ ಅಹ್ಮದ್ ಕರ್ನಿರೆ ಧನ್ಯವಾದಗೈದರು.
Bidar | ಜಿಲ್ಲೆಯ ಎಲ್ಲಾ ಇಲಾಖೆಗಳು ಕೆ-ಜಿಐಎಸ್ ಆವೃತ್ತಿ 2.0ರ ಪ್ರಯೋಜನ ಪಡೆಯಿರಿ : ಎಡಿಸಿ ಶಿವಾನಂದ್ ಕರಾಳೆ
ಬೀದರ್: ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಸುಧಾರಿತ ಆವೃತ್ತಿಯಾದ ಕೆ-ಜಿಐಎಸ್ 2.0 ಅನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಆಯೋಜಿಸಿದ ಕಾರ್ಯಾಗಾರದಲ್ಲಿ ಎಲ್ಲಾ ಇಲಾಖೆಗಳು ಇದರ ಪ್ರಯೋಜನ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಹೇಳಿದರು. ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ನಡೆದ ಕೆ-ಜಿಐಎಸ್ 2.0 ತಾಂತ್ರಿಕ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಆಸ್ತಿಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ನಿಖರ ಮೇಲ್ವಿಚಾರಣೆಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಅತ್ಯಂತ ಅಗತ್ಯವಾಗಿದೆ. ಕೆ-ಜಿಐಎಸ್ 2.0 ಆವೃತ್ತಿ ಭೂಮಿಯ ಅಂಕಿ-ಅಂಶಗಳು, ನಕ್ಷೆಗಳು ಹಾಗೂ ಇಲಾಖಾವಾರು ದತ್ತಾಂಶಗಳನ್ನು ವೇಗವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡಲಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜೇಶ್ ಎನ್.ಎಲ್. ಅವರು, ಕೆ-ಜಿಐಎಸ್ ಯೋಜನೆಯ ಉದ್ದೇಶಗಳು ಹಾಗೂ ಅಭಿವೃದ್ಧಿ ಕುರಿತು ವಿವರಿಸಿದರು. 2016ರಲ್ಲಿ ಕೆ-ಜಿಐಎಸ್ 1.0 ಜಾರಿಗೆ ಬಂದಿದ್ದು, ಸುಮಾರು 600 ಜಿಐಎಸ್ ಪದರಗಳು ಹಾಗೂ 20 ಲಕ್ಷಕ್ಕೂ ಹೆಚ್ಚು ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಜೊತೆಗೆ 41 ಮೊಬೈಲ್ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸಿ ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ಕೆ-ಜಿಐಎಸ್ ಯೋಜನೆಗೆ 2024ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ ಲಭಿಸಿರುವುದನ್ನು ಉಲ್ಲೇಖಿಸಿ, ಸ್ಥಳೀಯ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಆಧಾರದಲ್ಲಿ ಪರಿಹಾರ ಕಂಡುಕೊಳ್ಳಲು ಈ ತಂತ್ರಜ್ಞಾನ ಸಹಾಯಕವಾಗಲಿದೆ ಎಂದರು. ಕಾರ್ಯಾಗಾರದಲ್ಲಿ ಇ-ಆಡಳಿತ ಇಲಾಖೆಯ ವೈಜ್ಞಾನಿಕ ಅಧಿಕಾರಿಗಳಾದ ಕರುಣಾಕರ್ ಸಂಗನಬಸಪ್ಪ ಹಾಗೂ ಲಕ್ಷ್ಮೀಜಿ ಅವರು ಕೆ-ಜಿಐಎಸ್ 2.0 ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶರಣಪ್ಪ ಕೊಟ್ಟಪ್ಪಗೊಳ್, ಡಿವೈಎಸ್ಪಿ ದೂದಪೀರ್ ಮುಲ್ಲಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Bidar | ಬ್ರೀಮ್ಸ್ನಲ್ಲಿ ಅಕ್ರಮ ನೇಮಕ ಆರೋಪ: ಗುತ್ತಿಗೆ ನೌಕರರ ವಜಾಗೆ ಕರವೇ ಒತ್ತಾಯ
ಬೀದರ್: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಬ್ರೀಮ್ಸ್ ಸಂಸ್ಥೆಯಲ್ಲಿ ಕಾನೂನುಬಾಹಿರವಾಗಿ ನೇಮಕಗೊಂಡಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬ್ರೀಮ್ಸ್ನ ಮಾಜಿ ನಿರ್ದೇಶಕರಾಗಿದ್ದ ಡಾ. ಶಿವಕುಮಾರ್ ಶೆಟಕರ್ ಅವರ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಸುಮಾರು 10ರಿಂದ 12 ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳನ್ನು ಕಾನೂನುಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶುಶ್ರೂಷಕ ಅಧಿಕಾರಿ ಲಿಂಗರಾಜ್ ಹಿರೇಮಠ್, ಟ್ಯೂಟರ್ ಡಾ. ಜೈಸಿಂಗ್ ಡಿ. ಹಾಗೂ ಕಚೇರಿ ಅಧಿಕ್ಷಕ ಶ್ರೀನಿವಾಸ್ ಜಮಾದಾರ್ ಸೇರಿದಂತೆ ಕೆಲವರು ಸೇರಿ ಈ ನೇಮಕಾತಿಗಳನ್ನು ನಡೆಸಿದ್ದಾರೆ ಎಂದು ದೂರಲಾಗಿದೆ. ನೇಮಕಗೊಂಡ ಕೆಲ ಸಿಬ್ಬಂದಿಗಳು ಸಂಸ್ಥೆಯಲ್ಲಿ ನಿಯಮಿತವಾಗಿ ಸೇವೆ ಸಲ್ಲಿಸದೇ, ಅಕ್ರಮವಾಗಿ ಹಾಜರಾತಿ ತೋರಿಸಿ ವೇತನ ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಿಬ್ಬಂದಿಗಳನ್ನು ಗುರುತಿಸಿ 15 ದಿನಗಳೊಳಗೆ ಸೇವೆಯಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಬ್ರೀಮ್ಸ್ ಸಂಸ್ಥೆ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮರ್ಜಾಪುರ್, ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾವ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗೇಶ್ ರಾಯಣ್ಣೂರ್, ಜಿಲ್ಲಾ ಸಹ ಕಾರ್ಯದರ್ಶಿ ಅಲೆಕ್ಸಾಂಡರ್, ಜಿಲ್ಲಾ ಮುಖಂಡ ಸಂಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಗಿರೀಶ್ ಓಂಕಾರೆ, ದಕ್ಷಿಣ ಕ್ಷೇತ್ರದ ಉಪಾಧ್ಯಕ್ಷ ಧನರಾಜ್ ಚಿಟ್ಟಾವಾಡಿ, ದಕ್ಷಿಣ ಕ್ಷೇತ್ರದ ಕಾರ್ಯದರ್ಶಿ ರಾಜಗೊಂಡ, ಅನಿಲ್ ಕಮಠಾಣಾ ಹಾಗೂ ಸುಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಮೆರಿಕದ ನೆಲೆಗಳನ್ನು ಗುರಿಯಾಗಿಸಲು ಚೀನಾದ ಬೇಹುಗಾರಿಕಾ ಉಪಗ್ರಹ ಬಳಸಿದ ಇರಾನ್: ವರದಿ
ನ್ಯೂಯಾರ್ಕ್, ಎ.16: ಇರಾನ್ 2024ರ ಅಂತ್ಯದಲ್ಲಿ ರಹಸ್ಯವಾಗಿ ಚೀನಾದ ಬೇಹುಗಾರಿಕಾ ಉಪಗ್ರಹವನ್ನು ಪಡೆದಿದ್ದು, ಇದು ಪ್ರಸ್ತುತ ಯುದ್ಧದ ಸಂದರ್ಭದಲ್ಲಿ ಮಧ್ಯಪ್ರಾಚ್ಯದಾದ್ಯಂತ ಅಮೆರಿಕ ಮಿಲಿಟಿರಿ ನೆಲೆಗಳನ್ನು ಗುರಿಯಾಗಿಸಲು ನೆರವಾಗಿತ್ತು ಎಂದು `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ. `ಅರ್ಥ್ ಐ ಕಂಪೆನಿ' ಎಂಬ ಚೀನೀ ಸಂಸ್ಥೆ ನಿರ್ಮಿಸಿದ್ದ `ಟಿಇಇ-01ಬಿ' ಉಪಗ್ರಹವನ್ನು ಚೀನಾ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಬಳಿಕ ಅದನ್ನು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಖರೀದಿಸಿತ್ತು ಎಂದು ಸೋರಿಕೆಯಾದ ಇರಾನ್ ಮಿಲಿಟರಿ ದಾಖಲೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ. ಇರಾನ್ನ ಮಿಲಿಟರಿ ಕಮಾಂಡರ್ಗಳು ಉಪಗ್ರಹವನ್ನು ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಮೇಲ್ವಿಚಾರಣೆ ಮಾಡಲು ನಿರ್ದೇಶಿಸಿದರು ಎಂದು ಉಪಗ್ರಹ ಚಿತ್ರಣ ಮತ್ತು ಕಕ್ಷೆಯ ವಿಶ್ಲೇಷಣೆಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ. ಒಪ್ಪಂದದ ಭಾಗವಾಗಿ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಇತರ ಪ್ರದೇಶಗಳಾದ್ಯಂತ ವಿಸ್ತರಿಸಿರುವ ನೆಟ್ವರ್ಕ್ನೊಂದಿಗೆ ಬೀಜಿಂಗ್ ಮೂಲದ ಉಪಗ್ರಹ ನಿಯಂತ್ರಣ ಮತ್ತು ಡೇಟಾ ಸೇವೆಗಳ ಪೂರೈಕೆದಾರ `ಎಂಪೋಸ್ಯಾಟ್' ನಿರ್ವಹಿಸುವ ಕೇಂದ್ರಗಳಿಗೆ ಐಆರ್ಜಿಸಿ ಪ್ರವೇಶವನ್ನು ಪಡೆದುಕೊಂಡಿದೆ ಎಂದು ವರದಿ ಹೇಳಿದೆ. ಚೀನಾದ ವಿದೇಶಾಂಗ ಇಲಾಖೆ ವರದಿಯನ್ನು ನಿರಾಕರಿಸಿದೆ. ಇತ್ತೀಚೆಗೆ, ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಚೀನಾದ ಹೆಸರಿಗೆ ಕಳಂಕ ತರುವ ಕಾರ್ಯವನ್ನು ನಡೆಸುತ್ತಿದ್ದು, ಈ ವರದಿ ಇಂತಹ ಪ್ರಯತ್ನಗಳ ಭಾಗವಾಗಿದೆ ಎಂದು ವಿದೇಶಾಂಗ ಇಲಾಖೆ ಖಂಡಿಸಿದೆ.
Humnabad | ಡಾ ಬಿ.ಆರ್ ಅಂಬೇಡ್ಕರ್ಗೆ ಅವಮಾನ ಆರೋಪ : ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ
ಹುಮನಾಬಾದ್: ಎ.14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಅಂಗವಾಗಿ ಹಣಕುಣಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಗಂಧಾ ಹಾಗೂ ಆಡಳಿತಾಧಿಕಾರಿಗಳು ಭಾವಚಿತ್ರಕ್ಕೆ ಗೌರವ ಸಲ್ಲಿಸದೇ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ದಲಿತ್ ಪ್ಯಾಂಥರ್ ಸಂಘಟನೆ ಒತ್ತಾಯಿಸಿದೆ. ಗುರುವಾರ ಹುಮನಾಬಾದ್ ತಹಶೀಲ್ದಾರ್ ಅವರ ಮೂಲಕ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಆಡಳಿತಾಧಿಕಾರಿಗಳ ಕರ್ತವ್ಯವಾಗಿದ್ದು, ಈ ಬಾರಿ ಅವರು ಯಾವುದೇ ರೀತಿಯ ಗೌರವ ಸಲ್ಲಿಸದೇ ಮಹಾನ್ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರು ಈ ಬಗ್ಗೆ ಪ್ರಶ್ನಿಸಿದಾಗ, ಆಡಳಿತದಿಂದ ಯಾವುದೇ ಆದೇಶ ಅಥವಾ ಸಹಾಯಧನ ಬಂದಿಲ್ಲ ಎಂದು ಉಡಾಫೆಯ ಉತ್ತರ ನೀಡಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಗಣಪತಿ ಅಷ್ಟೋರೆ, ವೈಜಿನಾಥ್ ಶಿಂಧೆ, ಸುಶೀಲಕುಮಾರ್ ಭೂಲಾ, ಸಿದ್ಧಾರ್ಥ ಜಾನ್ವೀರ್, ರಾಹುಲ್ ಚಿಟಗುಪ್ಪಕರ್, ರವಿ ಶಿಂಧೆ, ವಿಠಲ್ ಶಿವನಾಯಕ್, ಉದಯಕುಮಾರ್, ಲಕ್ಷ್ಮಣ್ ಶಿಂಧೆ, ಪ್ರಭು ಮಟ್ಟೆನೋರ್ ಹಾಗೂ ರಾಜಪ್ಪ ಸಾಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತುಕತೆಗೆ ನಿರಾಕರಿಸಿದ ಲೆಬನಾನ್ ಅಧ್ಯಕ್ಷ
ಬೈರೂತ್, ಎ.16: ಯೋಜಿತ ಸಭೆಗೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಲು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ನಿರಾಕರಿಸಿದ್ದಾರೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಗುರುವಾರ ವರದಿ ಮಾಡಿದೆ. ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಇಸ್ರೇಲ್ ಮತ್ತು ಲೆಬನಾನ್ ನಾಯಕರ ನಡುವೆ ನೇರ ಮಾತುಕತೆ ನಡೆಯಲಿದೆ. ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಸ್ಥಗಿತಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದರು. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತನಾಡಲು ಲೆಬನಾನ್ ಅಧ್ಯಕ್ಷರು ನಿರಾಕರಿಸಿದ್ದಾರೆ. ಈ ವಿಷಯವನ್ನು ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಜೊತೆ ಫೋನ್ನಲ್ಲಿ ನಡೆಸಿದ ಮಾತುಕತೆ ಸಂದರ್ಭ ಸ್ಪಷ್ಟಪಡಿಸಿದ್ದಾರೆ. ಮತ್ತು ಅಮೆರಿಕವು ಲೆಬನಾನ್ನ ಸ್ಥಿತಿಯನ್ನು ಅರ್ಥ ಮಾಡಿಕೊಂಡಿದೆ ಎಂದು ಲೆಬನಾನ್ ಸರಕಾರದ ಮೂಲಗಳು ಹೇಳಿವೆ.
Humnabad | ವಿವಿಧ ಕಳ್ಳತನ ಪ್ರಕರಣ : 34.55 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ, 26 ಆರೋಪಿಗಳ ಬಂಧನ
ಹುಮನಾಬಾದ್: ಚಿಟಗುಪ್ಪಾ, ಬಸವಕಲ್ಯಾಣ, ಮುಡಬಿ, ಮಂಠಾಳ್ ಹಾಗೂ ಹುಮನಾಬಾದ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ, ಒಟ್ಟು 34 ಲಕ್ಷ 55 ಸಾವಿರ ರೂ. ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ 26 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ 4.15 ಲಕ್ಷ ರೂ. ಮೌಲ್ಯದ ಕೇಬಲ್ ವೈರ್, ಕಬ್ಬಿಣದ ರಾಡು, ಮೋಟಾರ್ ಸೇರಿದಂತೆ ಸಾಮಾನುಗಳನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಲಾಗಿದೆ ಎಂದರು. ಹಂದಿಕೇರಾ ಗ್ರಾಮದಲ್ಲಿ 2 ಎಮ್ಮೆ ಹಾಗೂ 1 ಕೋಣ ಕಳ್ಳತನ ಪ್ರಕರಣದಲ್ಲಿ 3.50 ಲಕ್ಷ ರೂ. ಮೌಲ್ಯದ ಒಂದು ಎಮ್ಮೆ, 1 ಲಕ್ಷ ರೂ. ನಗದು ಮತ್ತು ಒಂದು ಗೂಡ್ಸ್ ವಾಹನವನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ. ಮಾಣಿಕ್ ನಗರದಲ್ಲಿ ಮನೆ ಬೀಗ ಮುರಿದು 8 ಲಕ್ಷ ರೂ. ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 7.52 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಚಿಟಗುಪ್ಪಾ ಠಾಣೆ ವ್ಯಾಪ್ತಿಯ ಹಳ್ಳಿಖೇಡ (ಕೆ) ಗ್ರಾಮದಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 5.50 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಮಹಿಳೆಯ ಕೊರಳಿಂದ ಚಿನ್ನದ ಸರ ಕಳವು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 80 ಸಾವಿರ ರೂ. ಮೌಲ್ಯದ ಸರವನ್ನು ವಶಪಡಿಸಿಕೊಂಡಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಬಸವಕಲ್ಯಾಣ ಠಾಣೆ ವ್ಯಾಪ್ತಿಯಲ್ಲಿ ಸೋಯಾಬಿನ್ ಕಳ್ಳತನ ಹಾಗೂ 70 ಸಾವಿರ ರೂ. ಜೇಬು ಕಳ್ಳತನ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 80 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯ 40 ಸಾವಿರ ರೂ. ಕಳ್ಳತನ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು 35 ಸಾವಿರ ರೂ. ಜಪ್ತಿ ಮಾಡಿ ನೋಟಿಸ್ ನೀಡಿ ಬಿಡಲಾಗಿದೆ. ಮುಡಬಿ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಆಕಳು ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 1 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಾರ್ನಲ್ಲಿ ನಡೆದ 22 ಸಾವಿರ ರೂ. ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 25 ಸಾವಿರ ರೂ. ಮೌಲ್ಯದ ನಗದು ಮತ್ತು ಸ್ಕೂಟಿ ವಶಪಡಿಸಿಕೊಂಡಿದ್ದಾರೆ. ಪಲ್ಸರ್ ಬೈಕ್ ಕಳ್ಳತನ ಪ್ರಕರಣದಲ್ಲಿ 80 ಸಾವಿರ ರೂ. ಮೌಲ್ಯದ ಬೈಕ್ ಕಲಬುರಗಿ ಗಂಜ್ನಲ್ಲಿ ಪತ್ತೆಯಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ. ಮಂಠಾಳ್ ಠಾಣೆ ವ್ಯಾಪ್ತಿಯಲ್ಲಿ 70 ಸಾವಿರ ರೂ. ಮೌಲ್ಯದ ಬೈಕ್ ಕಳ್ಳತನ ಪ್ರಕರಣದಲ್ಲಿ ಬೆರಳು ಮುದ್ರೆಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬೈಕ್ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ ಲಭ್ಯ
ಉಡುಪಿ, ಎ.16: ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಉಡುಪಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ವಿಭಾಗದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಈಗ ತನ್ನ ಸೇವಾವ್ಯಾಪ್ತಿಯನ್ನು ವಿಸ್ತರಿಸಿದ್ದು ಸಮಾಜದ ಶ್ರಮಜೀವಿಗಳಾದ ಕಾರ್ಮಿಕ ವರ್ಗದವರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ನೌಕರರ ರಾಜ್ಯ ವಿಮಾ (ಇಎಸ್ಐ) ಸೌಲಭ್ಯವನ್ನು ಅಧಿಕೃತವಾಗಿ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿವಿ ಭಂಡಾರಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಆಸ್ಪತ್ರೆಯು ಇಎಸ್ಐ ನಿಯಮ ಗಳನ್ನು ಅಕ್ಷರಶಃ ಪಾಲಿಸುವ ಮೂಲಕ, ಅದರ ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ಅರ್ಹ ಫಲಾನುಭವಿಗಳಿಗೆ ಅತ್ಯಂತ ಪ್ರಾಮಾಣಿಕ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲು ಬದ್ಧವಾಗಿದೆ. ವಿಮೆ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ಗೌರವಯುತ ಮತ್ತು ನಗದು ರಹಿತ ಚಿಕಿತ್ಸೆ ತಲುಪಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ಪ್ರಮುಖ ಚಿಕಿತ್ಸಾ ಸೌಲಭ್ಯಗಳನ್ನು ವಿವರಿಸಿದ ಅವರು, ಮನೋವೈದ್ಯಕೀಯ ಚಿಕಿತ್ಸೆ, ಅಮಲು ಪದಾರ್ಥ ವಿಮುಕ್ತಿ ಚಿಕಿತ್ಸೆ, ಆಟಿಸಂ ಮತ್ತು ಕಲಿಕಾ ನ್ಯೂನತೆಗಳ ಚಿಕಿತ್ಸೆ, ವಾಕ್ ಚಿಕಿತ್ಸೆ, ವೃತ್ತಿಪರ ಚಿಕಿತ್ಸೆ, ಕಣ್ಣಿನ ಮತ್ತು ದಂತ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸಾ ಸೇವೆ ಇಲ್ಲಿ ಲಭ್ಯವಿದೆ ಎಂದರು. ಆಸ್ಪತ್ರೆ ಈಗಾಗಲೇ ಸರ್ಕಾರದ ಹಲವಾರು ಮಹತ್ವಾಕಾಂಕ್ಷಿ ಯೋಜನೆ ಗಳೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆ, ಐಟಿಡಿಪಿ ಹಾಗೂ ಕೊಂಕಣ ರೈಲ್ವೆ ಸಿಬ್ಬಂದಿಗಳ ಆರೋಗ್ಯ ಸೇವೆ, ಕರ್ನಾಟಕ ಸರಕಾರ ಸಹಭಾಗಿತ್ವದ ‘ಮಾನಸಧಾರ’ ಯೋಜನೆ, ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಇರುವ ಸರಕಾರದ ಇಸಿಆರ್ಸಿ ಕೇಂದ್ರದ ನಿರ್ವಹಣೆ (ಬೀದಿಯಲ್ಲಿ ಅಲೆದಾಡುವ ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ ಚಿಕಿತ್ಸೆ ನೀಡುವುದು) ಆಸ್ಪತ್ರೆ ಮಾಡುತ್ತಿದೆ ಎಂದರು. ಇಎಸ್ಐ ಸೌಲಭ್ಯದ ಪ್ರಯೋಜನ ಪಡೆಯಲು ಇಚಿಸುವ ಫಲಾನುಭವಿ ಗಳು ತಮ್ಮ ಇಎಸ್ಐ ಕಾರ್ಡ್ ಇ-ಪೆಹಚಾನ್ ಕಾರ್ಡ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ಆಸ್ಪತ್ರೆಯನ್ನು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ. ದೂರವಾಣಿ: 0820-2535299 / 2535399 ಸಂಪರ್ಕಿಸಬಹುದು ಎಂದು ನಾಡಿನ ಖ್ಯಾತ ಮನೋವೈದ್ಯರಾದ ಡಾ.ಭಂಡಾರಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರುಮನೆ, ಡಾ.ದೀಪಕ್ ಮಲ್ಯ, ಡಾ.ಮಾನಸ್ ಇ.ಆರ್ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.
ಡಾ.ಎಂ.ಎ.ಸಲೀಂ ಅವಧಿ ವಿಸ್ತರಣೆ: 2027ರ ಆ.29ರ ವರೆಗೆ ಡಿಜಿ-ಐಜಿಪಿಯಾಗಿ ಕರ್ತವ್ಯ
ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಎಂ.ಎ.ಸಲೀಂ ಅವರ ಸೇವಾ ಅವಧಿಯನ್ನು ವಿಸ್ತರಿಸಿ ರಾಜ್ಯ ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿದ್ದು, 2027ರ ಆಗಸ್ಟ್ 29ರವರೆಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ. 1993ರ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿರುವ ಡಾ.ಎಂ.ಎ.ಸಲೀಂ ಅವರು, ಈ ಹಿಂದೆ ಅಪರಾಧ ತನಿಖಾ ದಳ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ(ಡಿಜಿಪಿ) ಸೇವೆ ಸಲ್ಲಿಸಿದ್ದರು.
Raichur | ಬಿಎಸ್ಎನ್ಎಲ್ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ವಿಳಂಬ: ಪ್ರತಿಭಟನೆ
ರಾಯಚೂರು: ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಂಸ್ಥೆಗಳಿಂದ ನಿವೃತ್ತರಾದ ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ನೀಡುವಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಅಖಿಲ ಭಾರತ ಬಿಎಸ್ಎನ್ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಿಂಚಣಿದಾರರು, ಫೆಬ್ರವರಿ 27ರಂದು ಹೊರಡಿಸಲಾದ ಡಿಪಿಇ ಆದೇಶವನ್ನು ತಕ್ಷಣ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಕೈಗಾರಿಕಾ ತುಟ್ಟಿ ಭತ್ಯೆ ಪರಿಷ್ಕರಣೆ ಮಾಡುವ ಪದ್ಧತಿ ಇದ್ದರೂ, ಈ ಬಾರಿ ಅನಗತ್ಯ ವಿಳಂಬವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 1997, 2007 ಹಾಗೂ 2017ರ ವೇತನ ಮಾಪಕಗಳ ಅಡಿಯಲ್ಲಿ ಸಿಪಿಎಸ್ಇ ಉದ್ಯೋಗಿಗಳಿಗೆ ಜನವರಿ 1ರಿಂದ ಅನ್ವಯವಾಗುವ ಐಡಿಎ ದರಗಳನ್ನು ನಿಗದಿಪಡಿಸಲಾಗಿದೆ. 2007ರ ವೇತನ ಮಾಪಕಕ್ಕೆ ಅನುಗುಣವಾಗಿ ಡಿಒಟಿ (ಐಡಿಎ) ಪಿಂಚಣಿದಾರರು ಡಿಆರ್ ಹೆಚ್ಚಳಕ್ಕೆ ಅರ್ಹರಾಗಿದ್ದಾರೆ. ಆದಾಗ್ಯೂ, ಸಂಬಂಧಿತ ದೂರಸಂಪರ್ಕ ಇಲಾಖೆ ಇನ್ನೂ ಆದೇಶ ಜಾರಿಗೆ ತರದಿರುವುದು ಲಕ್ಷಾಂತರ ಪಿಂಚಣಿದಾರರಲ್ಲಿ ಆತಂಕ ಮೂಡಿಸಿದೆ ಎಂದು ತಿಳಿಸಿದರು. ದೇಶಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಪಿಂಚಣಿದಾರರು ಇದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಫೆ.27ರ ಆದೇಶವನ್ನು ತಕ್ಷಣ ಜಾರಿಗೆ ತರಬೇಕು, ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಿದ ಡಿಆರ್ ನೀಡಬೇಕು, ಆದೇಶದ ಪ್ಯಾರಾ 5 ಅನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ತುಟ್ಟಿ ಪರಿಹಾರವನ್ನು ಸ್ವಯಂಚಾಲಿತವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಏಪ್ರಿಲ್ 30ರಂದು ದೇಶಾದ್ಯಂತ ಸಿಸಿಎ/ಬಿಎಸ್ಎನ್ಎಲ್ ಕಚೇರಿಗಳ ಮುಂದೆ ಬೃಹತ್ ಶಾಂತಿಯುತ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ವಲಯ ಉಪಾಧ್ಯಕ್ಷ ಎಸ್.ವಿ.ಅರಳಿ, ಜಿಲ್ಲಾಧ್ಯಕ್ಷ ಸಿದ್ದಪ್ಪ, ಜಿಲ್ಲಾ ಕಾರ್ಯದರ್ಶಿ ಸೈಯದ್ ಅಕ್ಬರ್ ಹುಸೇನ್, ಖಜಾಂಚಿ ಮೊಹ್ಮದ್ ಯೂನೂಸ್, ಗೌರವಾಧ್ಯಕ್ಷ ಬಸವರಾಜ, ಬಾಬುಲಾಲ್, ಮುಕ್ತಾ ಯರನಾಕರ ಸೇರಿದಂತೆ ಅನೇಕರಿದ್ದರು.
ಕುಂದಾಪುರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಇಚ್ಛಾಶಕ್ತಿ ತೋರದ ಅಧಿಕಾರಿಗಳ ವಿರುದ್ಧ ಶಾಸಕರ ಆಕ್ರೋಶ
ಕುಂದಾಪುರ, ಎ.16: ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೂರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಪ್ರಸ್ತಾಪಗೊಂಡ ಸಮಸ್ಯೆಗಳಿಗೆ ಇವತ್ತಿಗೂ ಪರಿಹಾರ ಸಿಕ್ಕಿಲ್ಲ. ಕಳೆದ ಸಭೆಗೂ ಇಂದಿನ ಸಭೆಗೂ ನಡುವೆ ಕೇವಲ ಪತ್ರ ವ್ಯವಹಾರ ನಡೆದಿದ್ದು ಬಿಟ್ಟರೆ ಬೇರೆನೂ ಪ್ರಗತಿ ಆಗಿಲ್ಲ. ಪತ್ರ ಬರೆದು ಸುಮ್ಮನೆ ಕುಳಿತರೆ ಹೇಗೆ? ಸಮಸ್ಯೆ ಪರಿಹಾರಕ್ಕೆ ಇಚ್ಚಾಶಕ್ತಿ ತೋರಿಸುತ್ತಿಲ್ಲ. ಸಭೆಯಲ್ಲಿ ಪ್ರತಿಬಾರಿ ಅದೇ ಸಮಸ್ಯೆಗಳನ್ನು ಮತ್ತೆ ಮತ್ತೆ ಹೇಳಿದರೆ ಏನು ಮಾಡಲು ಸಾಧ್ಯ ಎಂದು ಕುಂದಾಪುರ ಶಾಸಕ ಕಿರಣ್ಕುಮಾರ್ ಕೊಡ್ಗಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಜೆಜೆಎಂ ಯೋಜನೆಯಡಿ 3 ವರ್ಷಗಳಿಂದ ಏನೂ ಕೆಲಸ ಆಗಿಲ್ಲ. ಅವರಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಒಂದು ಹೆಜ್ಜೆ ಕೂಡ ಮುಂದೆ ಹೋಗಿಲ್ಲ, ಎಲ್ಲ ಕಡೆ ಪೈಪ್ಲೈನ್ ಆಗಿದೆ ಬಿಟ್ಟರೆ ನೀರಿಲ್ಲ. ಯಾವುದಕ್ಕೂ ಒಂದು ಪ್ಲಾನ್ ಇಲ್ಲ. ಭೂಸ್ವಾಧೀನ ಮಾಡಿಕೊಂಡಿಲ್ಲ. ಹೊಸ ಟ್ಯಾಂಕ್ ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಪೈಪ್ಲೈನ್ ಮಾಡಿದ ಬಳಿಕ ಮೀಸಲು ಅರಣ್ಯ ಅನುಮತಿಗೆ ಬರೆದರೆ ಹೇಗೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿ ಎಂದರು. ಕೋಟೇಶ್ವರದಲ್ಲಿ ಹಾನಿಯಾದ 280 ಮೀ. ಪೈಪ್ಲೈನ್ನ್ನು ಗ್ರಾ.ಪಂ. ಮೂಲಕ ಸರಿಪಡಿಸಲಾಗಿದೆ ಎಂದು ಕೋಟೇಶ್ವರ ಪಿಡಿಒ ಹೇಳಿದರೆ, ಗೋಪಾಡಿಯಲ್ಲಿ 340 ಮೀ. ಪೈಪ್ಲೈನ್ ಹಾನಿಯಾಗಿದ್ದು, ನೀರು ಸರಬರಾಜು ಮಾಡುವ ಬಾವಿಯಲ್ಲಿ ಎಪ್ರಿಲ್ ಅಂತ್ಯಕ್ಕಾಗುವಷ್ಟು ನೀರಿದ್ದು, ಮೇನಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಗೋಪಾಡಿ ಪಿಡಿಒ ಹೇಳಿದರು. ಗೋಪಾಡಿಯಲ್ಲಿ ಶಾಲೆ ಸಮೀಪ ಟ್ಯಾಂಕ್ ನಿರ್ಮಿಸಲು ಸ್ಥಳೀಯರ ಆಕ್ಷೇಪವಿದ್ದು, ಕೋಟೇಶ್ವರದ ಕುಂಬ್ರಿ ಭಾಗದಲ್ಲಿ ನೀರು ಕಲುಷಿತವಾಗಿದೆ ಎಂದು ಶಾಸಕರು ಸಭೆಯ ಗಮನಕ್ಕೆ ತಂದರು. ಬೀಜಾಡಿಯಲ್ಲಿ ಕುಡಿಯುವ ನೀರು ಸರಬರಾಜು ಬಾವಿಯನ್ನು ಆಳ ಗೊಳಿಸಬೇಕು ಎಂದು ಬೀಜಾಡಿ ಪಿಡಿಒ ಹೇಳುತ್ತಿದ್ದಂತೆಯೇ, ಕಳೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಈಗ ಮತ್ತೆ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಗೊಂಡರು. ಮಲ್ಯಾಡಿಯಲ್ಲಿ ತೆರೆದ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದೆ. ಕೊರ್ಗಿ ಗ್ರಾಮದ ಕುಂಜನಕಟ್ಟೆ ಎಂಬಲ್ಲಿ ಬಾವಿಗೆ ಫಿಲ್ಟರ್ ಅಳವಡಿಸಬೇಕು. ಗುಡ್ಡಟ್ಟು ಎಂಬಲ್ಲಿ ಬಾವಿಗೆ ಫಿಲ್ಟರ್ ಅಳವಡಿಸಬೇಕು. ಯಡಾಡಿ- ಮತ್ಯಾಡಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ, ಮಡಾಮಕ್ಕಿ-ಶೇಡಿಮನೆ ಭಾಗದಲ್ಲಿ ನೀರಿನ ಸಮಸ್ಯೆ ಇದೆ ಎಂದು ಪಿಡಿಒಗಳು ಸಭೆಯ ಗಮನಕ್ಕೆ ತಂದರು. ಗಿಳಿಯಾರು ಭಾಗದಲ್ಲಿ ನೀರಿನ ಸಮಸ್ಯೆ ಇದ್ದು 2 ದಿನಕ್ಕೊಮ್ಮೆ ನೀರು ನೀಡಲಾಗುತ್ತಿದೆ. ಐರೋಡಿಯಲ್ಲಿ ದಿನ ಬಿಟ್ಟು ದಿನ ನೀರು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಆವರ್ಸೆ ಗ್ರಾಮದ ನಾಲ್ಕು ಟ್ಯಾಂಕ್ಗಳಿಗೆ ವಾರಾಹಿ ನೀರಿನ ಹರಿವು ತುಂಬಾ ಕಡಿಮೆಯಿದ್ದು, ಟ್ಯಾಂಕ್ ತುಂಬಲು ತುಂಬಾ ಸಮಯ ಬೇಕಾಗುತ್ತದೆ. ನೀರು ರಭಸವಾಗಿ ಬರುವಂತೆ ಮಾಡಬೇಕು ಎಂದು ಪಿಡಿಒ ಸಭೆಯ ಗಮನಕ್ಕೆ ತಂದರು. ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್, ಕುಂದಾಪುರ ಇಒ ಮಹೇಶ ಕೆ.ಜಿ., ಬ್ರಹ್ಮಾವರ ಇಒ ಎಚ್.ವಿ. ಇಬ್ರಾಹಿಂಪುರ, ಕಾರ್ಕಳ ಇಒ ಪ್ರಶಾಂತ್, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಉದಯ ಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.
Raichur | ಜನನ–ಮರಣ ಪ್ರಮಾಣಪತ್ರ ವಿಭಾಗದಲ್ಲಿ ಅವ್ಯವಸ್ಥೆ ಆರೋಪ : ಕ್ರಮಕ್ಕೆ ಕರವೇಯಿಂದ ಆಗ್ರಹ
ರಾಯಚೂರು: ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಹಾಗೂ ಅಧಿಕ ಶುಲ್ಕ ವಸೂಲಿ ಆರೋಪಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾ ಘಟಕದವರು ಗುರುವಾರ ಜಿಲ್ಲಾಡಳಿತ ಭವನದ ಎದುರು ಮನವಿ ಸಲ್ಲಿಸಿದರು. ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ಸಿಬ್ಬಂದಿಗಳು ಸಮರ್ಪಕ ಪರಿಶೀಲನೆ ನಡೆಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದರಿಂದ ಜನರು ಹಲವು ಬಾರಿ ಕಚೇರಿಗೆ ಸುತ್ತಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ, ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ ಎಂದು ದೂರಿದರು. ಮಹಬೂಬ್ ಪಾಶಾ ಅವರ ಜನನ ಪ್ರಮಾಣಪತ್ರ ಪ್ರಕರಣವನ್ನು ಉದಾಹರಿಸಿ, ಕೋರ್ಟ್ ಆದೇಶದಂತೆ ಸಲ್ಲಿಸಿದ ಅರ್ಜಿಯಲ್ಲಿಯೂ ತಪ್ಪು ಮಾಹಿತಿಯನ್ನು ನಮೂದಿಸಿ ಪ್ರಮಾಣಪತ್ರ ನೀಡಲಾಗಿದೆ. ನಂತರ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೂ ಮತ್ತೆ ಮತ್ತೆ ತಪ್ಪುಗಳನ್ನು ಮಾಡಲಾಗುತ್ತಿದ್ದು, ಪ್ರತಿ ಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದೇ ರೀತಿ ಹಲವು ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ದಾಖಲೆಗಳನ್ನು ನಮೂದಿಸಿ ನಂತರ ತಿದ್ದುಪಡಿ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ದಾಖಲೆಗಳಿಲ್ಲದಿದ್ದರೆ ರೂ.500 ರಿಂದ 1000ರವರೆಗೆ ಲಂಚ ಪಡೆದು ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಖಲೀಲ್ ಪಾಷಾ, ರಾಚಯ್ಯ ಸ್ವಾಮಿ, ಬಂದೇನವಾಜ್, ಜಾಫರ್, ಸೈಯದ್ ಮನ್ಸೂರ್, ಮನ್ನಾನ್, ಫಾರೂಕ್, ತಾಹೇರ್, ಸುದರ್ಶನರೆಡ್ಡಿ, ಈರಣ್ಣ, ಅಬ್ದುಲ್ ಹಬೀಬ್, ಮೌಲಾ, ಬಾಬು, ಗುರು, ಪಾಂಡುರಂಗ, ಮಹೆಬೂಬ್, ಹುಸೇನ್, ಬಾಬಾಫಕ್ರುದ್ದಿನ್, ಆನಂದ, ಶಕ್ಷಾವಲಿ, ಸೈಯದ್ ಮಹೆಬೂಬ್, ಸಾದೀಕ್, ನಿಸಾರ್ ಸೇರಿದಂತೆ ಅನೇಕರಿದ್ದರು.
ಎ.17ರಿಂದ ಲ್ಯಾಂಡ್ ಮಾರ್ಕ್ ಫೋರಮ್ನ ಅಂತರರಾಷ್ಟ್ರೀಯ ಕಾರ್ಯಾಗಾರ; ಸ್ಪೀಕರ್ ಯು.ಟಿ. ಖಾದರ್ ಭಾಗಿ
ಹೊಸದಿಲ್ಲಿ: ಲ್ಯಾಂಡ್ ಮಾರ್ಕ್ ಫೋರಮ್ ಸಂಸ್ಥೆ ಆಯೋಜಿಸಿರುವ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರವು ಹೊಸದಿಲ್ಲಿಯಲ್ಲಿ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರವು ಎ.17 ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 11ರವರೆಗೆ ನಡೆಯಲಿದೆ. ವಿಶ್ವದ ವಿವಿಧ ದೇಶಗಳಿಂದ ಸುಮಾರು 200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದು, ನಾಯಕತ್ವ, ವ್ಯಕ್ತಿತ್ವ ವಿಕಾಸ, ಪರಿಣಾಮಕಾರಿ ಸಂವಹನ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತಂತೆ ಚರ್ಚೆಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.
ಕ್ಷೇತ್ರ ಮರುವಿಂಗಡಣೆ ಮೂಲಕ ಗೆಲ್ಲುವ ಕ್ಷೇತ್ರಗಳನ್ನು ಹೆಚ್ಚಿಸಲು ಬಿಜೆಪಿಯಿಂದ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ ಆರೋಪ
ಹೊಸದಿಲ್ಲಿ, ಎ. 16: ದೋಷಪೂರಿತ ಕ್ಷೇತ್ರ ಮರುವಿಂಗಡಣೆ ಮಸೂದೆ ಮೂಲಕ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ತಾನು ಗೆಲ್ಲುವ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ. ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವ ಸೋಗಿನಲ್ಲಿ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಪುನರ್ ರೂಪಿಸಲು ಈ ಮಸೂದೆಯು ಅವಕಾಶ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ‘‘ಮಹಿಳಾ ಮೀಸಲಾತಿಯ ಸೋಗಿನಲ್ಲಿರುವ ದೋಷಪೂರಿತ ಕ್ಷೇತ್ರ ಮರುವಿಂಗಡಣಾ ಮಸೂದೆಗಳು ಸಂಸತ್ತನ್ನು ಅಪಹರಿಸಲು ಪ್ರತಿಪಕ್ಷವು ಬಿಡುವುದಿಲ್ಲ. ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯ ವಿರುದ್ಧ ನಾವು ಹೋರಾಡುತ್ತೇವೆ’’ ಎಂದು ಅವರು ಹೇಳಿದರು. ‘‘ಕ್ಷೇತ್ರಗಳನ್ನು ಪುನರ್ವಿಂಗಡಿಸಿ ಆಡಳಿತಾರೂಢ ಪಕ್ಷವು ಪ್ರಬಲವಾಗಿರುವ ಪ್ರದೇಶಗಳಲ್ಲಿ ಸ್ಥಾನಗಳನ್ನು ಹೆಚ್ಚಿಸುವ ಯೋಜನೆಯನ್ನು ಸರಕಾರ ಹೊಂದಿದೆ’’ ಎಂದು ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು. ‘‘ಹೀಗೆ ಮಾಡಲು ಅವರು ನೆಪವಾಗಿ ಮಹಿಳಾ ಮೀಸಲಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ, ಅವರು ಈಗಾಗಲೇ 2023ರಲ್ಲಿ ತಂದಿರುವ ಸಾಂವಿಧಾನಿಕ ತಿದ್ದುಪಡಿಗಳಿಗೆ ಮತ್ತೆ ತಿದ್ದುಪಡಿಗಳನ್ನು ತರುತ್ತಿದ್ದಾರೆ’’ ಎಂದು ಅವರು ಬೆಟ್ಟು ಮಾಡಿದರು.
Rohit Sharma Injury- ಐಪಿಎಲ್ 2026ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಮುಂಬೈ ಇಂಡಿಯನ್ಸ್ನ ರೋಹಿತ್ ಶರ್ಮಾ ಗಾಯದ ಕಾರಣ ಹೊರಗುಳಿದಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹ್ಯಾಮ್ಸ್ಟ್ರಿಂಗ್ ಸಮಸ್ಯೆಗೆ ಒಳಗಾಗಿದ್ದ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ರಾಂತಿ ಪಡೆದಿದ್ದಾರೆ. ರೋಹಿತ್ ಚೇತರಿಸಿಕೊಳ್ಳಲು ಇನ್ನು ಎರಡು ಪಂದ್ಯಗಳ ಕಾಲಾವಕಾಶ ಬೇಕಾಗಬಹುದು ಎಂದು ನಾಯಕ ಹಾರ್ದಿಕ್ ಪಾಂಡ್ಯ ಖಚಿತಪಡಿಸಿದ್ದಾರೆ. ಭರ್ಜರಿ ಫಾರ್ಮ್ನಲ್ಲಿದ್ದ ರೋಹಿತ್ ಅನುಪಸ್ಥಿತಿಯು ತಂಡದ ಬ್ಯಾಟಿಂಗ್ ಸಂಯೋಜನೆಗೆ ದೊಡ್ಡ ಹಿನ್ನಡೆಯಾಗಿದ್ದು, ಅವರ ಬದಲಿಗೆ ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಸ್ಯಾಂಟ್ನರ್ ಕೂಡ ಅನಾರೋಗ್ಯದಿಂದ ಪಂದ್ಯ ತಪ್ಪಿಸಿಕೊಂಡಿದ್ದಾರೆ.
ನವದೆಹಲಿ: ಮಹಿಳಾ ಮೀಸಲಾತಿ ಮತ್ತು ನೂತನ ಸಂಸದೀಯ ಕ್ಷೇತ್ರ ನಿರ್ಣಯಕ್ಕೆ ಸಂಬಂಧಿಸಿದ ಸಾಂವಿಧಾನಿಕ ಕ್ರಮಗಳನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಲೋಕಸಭೆಯಲ್ಲಿ ಬಲವಾಗಿ ಬೆಂಬಲಿಸಿ ಮಾತನಾಡಿದ್ದು, ಈ ಕ್ರಮಗಳನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. 2029 ರಿಂದ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಈ ಕ್ರಮ ಅತ್ಯಂತ ಅವಶ್ಯಕ ಎಂದು ವಿವರಿಸಿದ್ದಾರೆ. ದಕ್ಷಿಣದ ಹಾಗೂ ಸಣ್ಣ ರಾಜ್ಯಗಳ
ಶಾಸಕ ವಿನಯ್ ಕುಲಕರ್ಣಿ ಕಣ್ಣೀರು! ಶಿಕ್ಷೆ ಪ್ರಕಟಕ್ಕೂ ಮುನ್ನ ಜಡ್ಜ್ ಮುಂದೆ ಕೊನೆ ಮಾತು ಹೇಳಿದ್ದೇನು?
ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಲಯದಲ್ಲಿ ಕಣ್ಣೀರಿಟ್ಟಿದ್ದು, ಶಿಕ್ಷೆ ಪ್ರಕಟಕ್ಕೂ ಮುನ್ನ ನ್ಯಾಯಾಧೀಶರ ಮುಂದೆ ಕೊನೆಯ ಮಾತುಗಳನ್ನಾಡಿದ್ದಾರೆ. ಮಕ್ಕಳು, ಕ್ಷೇತ್ರ ಹಾಗೂ ತಮ್ಮ ಕೃಷಿ ಜೀವನ, ರಾಜಕೀಯ ಪಿತೂರಿ ಉಲ್ಲೇಖಿಸಿ ಶಿಕ್ಷೆ ಪ್ರಮಾಣ ಕಡಿಮೆ ನೀಡುವಂತೆ ಮನವಿ ಮಾಡಿದ್ದಾರೆ.
National Highway: ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಿಗ್ ಅಪ್ಡೇಟ್
National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಕೆಲವು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲವಯ ಹೆದ್ದಾರಿಗಳು ಅಭಿವೃದ್ಧಿ ಕಾಮಗಾರಿಗಳ ಹಂತದಲ್ಲಿವೆ. ಈ ಸಾಲಿಗೆ ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕವನ್ನು ಸಂಪರ್ಕಿಸುವ NH ಕೂಡ ಸೇರಿದೆ. ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766Cಯಡಿ ಬರುವ ಬೈಂದೂರು- ಕೊಲ್ಲೂರು ನಡುವಿನ 38 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ವೇಗ
ವಿರಾಟ್ ಕೊಹ್ಲಿಗೆ ಮರೆತು ಹೋಯಿತೇ ತಮ್ಮದೇ ಮಾತು? ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಾಗ ಅಭಿಮಾನಿಗಳಿಗೆ ನೆನಪಾಯ್ತು!
Virat Kohli And Impact Player Rule 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವ ದಿನವೇ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದ ವಿರಾಟ್ ಕೊಹ್ಲಿ, ಲಖನೌ ವಿರುದ್ಧದ ಪಂದ್ಯದಲ್ಲಿ ಅನಿವಾರ್ಯವಾಗಿ ಅದೇ ನಿಯಮದಡಿ ಕಣಕ್ಕಿಳಿದಿದ್ದಾರೆ. ಪಾದದ ನೋವಿನ ಕಾರಣ ಫೀಲ್ಡಿಂಗ್ ಮಾಡದ ಅವರು, ಸುಯಶ್ ಶರ್ಮಾ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿ 48 ರನ್ ಗಳಿಸಿದರು. ಈ ಮೂಲಕ ತಮ್ಮ ಹಳೆಯ ಹೇಳಿಕೆಯಿಂದ ಅವರು ಹಿಂದೆ ಸರಿದರಾ ಎಂಬ ಚರ್ಚೆ ಶುರುವಾಗಿದೆ. ಪೂರ್ಣ ಫಿಟ್ನೆಸ್ ಇದ್ದರೆ ಮಾತ್ರ ಆಡುವುದಾಗಿ ಈ ಹಿಂದೆ ಅವರು ಸಂದರ್ಶನದಲ್ಲಿ ತಿಳಿಸಿದ್ದರು.
ಗುರುಗ್ರಾಮ| ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿ ಆತ್ಮಹತ್ಯೆ
ಗುರುಗ್ರಾಮ,ಎ.16: ಸಿಬಿಎಸ್ಇ 10ನೇ ತರಗತಿಯ ಫಲಿತಾಂಶಗಳು ಬುಧವಾರ ಪ್ರಕಟಗೊಂಡ ಬೆನ್ನಲ್ಲೆ ಇಲ್ಲಿಯ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು. ಕುನಾಲ್ (16) ಮೃತ ವಿದ್ಯಾರ್ಥಿಯಾಗಿದ್ದು,ನಿರೀಕ್ಷಿತ ಅಂಕಗಳು ಬಾರದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಜತೋಲಿ ಪ್ರದೇಶದ ಬಾಬಾ ಹರದೇವ ಕಾಲನಿಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಕುನಾಲ್ ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದ. ಆದರೆ ಫಲಿತಾಂಶ ತನ್ನ ನಿರೀಕ್ಷೆಯಂತೆ ಬರದಿದ್ದರಿಂದ ಬೇಸರಗೊಂಡಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ಪೋಷಕರು ಮರುಪರೀಕ್ಷೆ ಬರೆಯುವಂತೆ ಮಗನಿಗೆ ಉತ್ತೇಜನವನ್ನೂ ನೀಡಿದ್ದರು. ಆದರೆ ಆತ ಖಿನ್ನತೆಗೆ ಒಳಗಾಗಿದ್ದ. ಫಲಿತಾಂಶ ಪ್ರಕಟಗೊಂಡ ಬಳಿಕ ಕುನಾಲ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಎ.18ರಿಂದ ಪದವು ಕುಲಶೇಖರದಲ್ಲಿ ಬಿಂಬಪ್ರತಿಷ್ಠೆ, ಬ್ರಹ್ಮಕಲಶೋತ್ಸವ
ಮಂಗಳೂರು: ನಗರದ ಪದವು ಕುಲಶೇಖರದಲ್ಲಿ ಹಿಂದು ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಶನೈಶ್ಚರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಎ. 18 ರಿಂದ 24 ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಅವರು ದೇವಾಲಯದ ಆವರಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಎಂ. ಗಿರಿಧರ ಭಟ್ ಮತ್ತು ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಏಪ್ರಿಲ್ 18ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದೆ. 108 ಕಾಯಿ ಗಣಯಾಗ, ರುದ್ರಯಾಗ ಹಾಗೂ ಏಪ್ರಿಲ್ 22 ರವರೆಗೆ ಲಕ್ಷ್ಮೀನಾರಾಯಣ ಪ್ರಧಾನ ಹೋಮ ನಡೆಯಲಿದ್ದು, ಏಪ್ರಿಲ್ 23 ರಂದು ಗಣಪತಿ, ದುರ್ಗಾ, ನವಗ್ರಹ ಸಹಿತ ಶ್ರೀ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲ ಶಾಭಿಷೇಕ ನೆರವೇರಲಿದೆ. ಏಪ್ರಿಲ್ 24 ರಂದು ಚಂಡಿಕಾಯಾಗ ಮತ್ತು ಸಮಗ್ರ ಶನೈಶ್ಚರ ಮಹಾಯಾಗದೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ. ಉತ್ಸವದ ಅಂಗವಾಗಿ ಏಪ್ರಿಲ್ 19 ರಂದು ಬೆಳಿಗ್ಗೆ 9 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಪದವು ದೇವಸ್ಥಾನದವರೆಗೆ ಹಸಿರುವಾಣಿ (ಹೊರೆಕಾಣಿಕೆ) ಮೆರವಣಿಗೆ ನಡೆಯಲಿದ್ದು, ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಚಾಲನೆ ನೀಡಲಿದ್ದಾರೆ. ಅಂದು ಸಂಜೆ ಶಿವಾಜಿ ಮಂಟಪದಲ್ಲಿ ಹಿಂದು ಯುವಸೇನೆಯ ಸಮಾವೇಶ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಯಕ್ಷಗಾನ, ನಾಟಕ ಹಾಗೂ ಸಂಗೀತ ಲಹರಿಗಳು ಪ್ರದರ್ಶನ ಗೊಳ್ಳಲಿವೆ. ಪ್ರತಿದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ವೇದವ್ಯಾಸ ಕಾಮತ್, ಪ್ರದಾನ ಕಾರ್ಯದರ್ಶಿ ಬಾಸ್ಕರ ಚಂದ್ರ ಶೆಟ್ಟಿ, ಶನಿಶ್ಚರ ಪೂಜಾ ಸಮಿತಿ ಅದ್ಯಕ್ಷರಾದ ರಾಮಚಂದ್ರ ಚೌಟ, ಮಾತೃಮಂಡಳಿ ಅಧ್ಯಕ್ಷರಾದ ವಿಜಯ ಅರುಣ್, ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ ಮತ್ತು ಉಮೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
Raichur | ಬಿಸಿಲಿನಿಂದ ಜನರಿಗೆ ರಕ್ಷಣೆ ನೀಡಲು ನೆರಳಿನ ವ್ಯವಸ್ಥೆ ಮಾಡಲು ಎಐಡಿಎಸ್ಒ ಮನವಿ
ರಾಯಚೂರು: ನಗರದ ವಿವಿಧ ವೃತ್ತಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಉರಿ ಬಿಸಿಲಿನಿಂದ ಜನರನ್ನು ರಕ್ಷಿಸಲು ನೆರಳಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಪದಾಧಿಕಾರಿಗಳು ಮಹಾನಗರ ಪಾಲಿಕೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ನಗರದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು, 43 ಡಿಗ್ರಿ ಸೆಲ್ಸಿಯಸ್ವರೆಗೆ ದಾಖಲಾಗುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟುಮಾಡಿದೆ. ಬೆಳಿಗ್ಗೆ 10 ಗಂಟೆಯಿಂದಲೇ ಜನರು ಹೊರಗೆ ಬರಲು ಕಷ್ಟಪಡುತ್ತಿದ್ದಾರೆ. ಬಿಸಿಲಿನ ತೀವ್ರತೆ ಮತ್ತು ಬಿಸಿ ಗಾಳಿ ಜನರನ್ನು ಹೈರಾಣಾಗಿಸುತ್ತಿದ್ದು, ಸಂಜೆ 4.30 ಆದರೂ ಸಹ ತಾಪಮಾನದಲ್ಲಿ ಇಳಿಕೆಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಟ್ರಾಫಿಕ್ ಸಿಗ್ನಲ್ಗಳಲ್ಲಿ ನಿಂತುಕೊಳ್ಳುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ವೃದ್ಧರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಬಿಸಿಲಿನ ಪರಿಣಾಮವಾಗಿ ದೇಹದ ಅಸ್ವಸ್ಥತೆ, ದಾಹ, ತಲೆ ಸುತ್ತುವುದು ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ, ನಗರದ ಎಲ್ಲಾ ಪ್ರಮುಖ ಟ್ರಾಫಿಕ್ ಸಿಗ್ನಲ್ಗಳಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ನೆರಳಿನ ವ್ಯವಸ್ಥೆ (ಶೆಡ್ಗಳು/ಷೆಲ್ಟರ್ಗಳು) ಕಲ್ಪಿಸುವುದು ಅಗತ್ಯವಾಗಿದೆ ಎಂದು ಆಗ್ರಹಿಸಿದರು. ಇನ್ನೂ ಒಂದೂವರೆ ತಿಂಗಳ ಕಾಲ ಬಿಸಿಲಿನ ತೀವ್ರತೆ ಮುಂದುವರಿಯಲಿದ್ದು, ಮುಂದಿನ ಒಂದು ವಾರದಲ್ಲಿ 42ರಿಂದ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಉಲ್ಲೇಖಿಸಿ ತಿಳಿಸಿದರು. ಈಗಾಗಲೇ ಮಹಾನಗರ ಪಾಲಿಕೆ ಕೆಲವು ಸ್ಥಳಗಳಲ್ಲಿ ‘ಅಮೃತ ನೆರಳು’ ಕೇಂದ್ರಗಳನ್ನು ಸ್ಥಾಪಿಸಿರುವುದು ಸ್ವಾಗತಾರ್ಹವಾದರೂ, ಅವು ಕೆಲವೇ ವೃತ್ತಗಳಿಗೆ ಸೀಮಿತವಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ಇಂತಹ ವ್ಯವಸ್ಥೆಗಳನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ನಂತರ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಐಡಿವೈಒ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಜಿಲ್ಲಾ ಕಾರ್ಯದರ್ಶಿ ವಿನೋದ ಕುಮಾರ, ಸಂಘಟನೆಯ ಪದಾಧಿಕಾರಿ ಮೌನೇಶ, ನೂರ್ ಪಾಶಾ, ಅಶೋಕ, ಹಿರಿಯ ನಾಗರಿಕರಾದ ವೀರೇಶ ಬಾಬು, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ರುದ್ರಯ್ಯ ಗುಣಾರಿ, ಅಣ್ಣಪ್ಪ, ತಾಯಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಹೊರಟ ಸರಕಾರ: ಗೌರವ್ ಗೊಗೋಯ್
ಹೊಸದಿಲ್ಲಿ, ಎ. 16: ಸರಕಾರ ಮಂಡಿಸಿರುವ ಮೂರು ಮಸೂದೆಗಳು ‘‘ಮಹಿಳಾ ವಿರೋಧಿ, ಜಾತಿ ಗಣತಿ ವಿರೋಧಿ, ಸಂವಿಧಾನ ವಿರೋಧಿ ಮತ್ತು ದೇಶದ ಒಕ್ಕೂಟ ವ್ಯವಸ್ಥೆ ವಿರೋಧಿಯಾಗಿದೆ ಎಂಬುದಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ ಗುರುವಾರ ಲೋಕಸಭೆಯಲ್ಲಿ ಆರೋಪಿಸಿದ್ದಾರೆ. ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೊಳಿಸುವ ನೈಜ ಬದ್ಧತೆ ಸರಕಾರಕ್ಕೆ ಇದ್ದರೆ, ಲೋಕಸಭೆಯ ಪ್ರಸಕ್ತ ಬಲದ ಆಧಾರದಲ್ಲೇ ತಕ್ಷಣ ಜಾರಿಗೊಳಿಸಬೇಕು ಎಂದು ಅವರು ಹೇಳಿದರು. ಸರಕಾರವು ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ತನಗೆ ಬೇಕಾದಂತೆ ಕ್ಷೇತ್ರಗಳನ್ನು ವಿಭಜಿಸುವ ಮೂಲಕ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಸೂದೆಗಳ ಚರ್ಚೆ ವೇಳೆ ಮಾತನಾಡಿದ ಗೊಗೋಯಿ ಆರೋಪಿಸಿದರು. ‘‘ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಮ್ನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮೂಲಕ ಅವರು ಏನು ಮಾಡಿರುವರೋ, ಅದನ್ನು ಮಹಿಳಾ ಮೀಸಲಾತಿ ಹೆಸರಿನಲ್ಲಿ ಇಡೀ ದೇಶದಲ್ಲಿ ಮಾಡಲು ಬಯಸಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು. ಸರಕಾರದ ಕೃತ್ಯಗಳು ‘‘ನಾಚಿಕೆಗೇಡಿನವು’’ ಎಂದು ಅವರು ಬಣ್ಣಿಸಿದರು.
Delhi | ಇಂದಿರಾಗಾಂಧಿ ಏರ್ ಪೋರ್ಟ್ ನಲ್ಲಿ ಆಕಾಸ ಏರ್ ಗೆ ಢಿಕ್ಕಿ ಹೊಡೆದ ಸ್ಪೈಸ್ ಜೆಟ್ ವಿಮಾನ
ಹೊಸದಿಲ್ಲಿ, ಎ.16: ದಿಲ್ಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಆಕಾಸ ಏರ್ ವಿಮಾನಕ್ಕೆ ಸ್ಪೈಸ್ ಜೆಟ್ ವಿಮಾನ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಎರಡೂ ವಿಮಾನಗಳಿಗೆ ಹಾನಿಯಾಗಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ರನ್ವೇ ಮೇಲೆ ಸಾಗುವ ವೇಳೆ ಸ್ಪೈಸ್ ಜೆಟ್ ಸಂಸ್ಥೆಯ ಬೋಯಿಂಗ್ ಬಿ737-700 ವಿಮಾನ ನಿಯಂತ್ರಣ ತಪ್ಪಿ ಮುಂದೆ ಸಾಗಿದ್ದು, ನಿಂತಿದ್ದ ಆಕಾಸ ಏರ್ ವಿಮಾನದ ಹಿಂಭಾಗದ ಎಡ ಭಾಗಕ್ಕೆ ಢಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಸ್ಪೈಸ್ ಜೆಟ್ ವಿಮಾನದ ಬಲ ರೆಕ್ಕೆಗೂ ಹಾನಿಯಾಗಿದೆ. ಆ ಸಮಯದಲ್ಲಿ ಆಕಾಸ ಏರ್ ವಿಮಾನ ದಿಲ್ಲಿಯಿಂದ ಹೈದರಾಬಾದ್ ಗೆ ತೆರಳಲು ಸಿದ್ಧವಾಗಿತ್ತು. ಘಟನೆಯ ಬಳಿಕ ಸುರಕ್ಷತಾ ಕ್ರಮವಾಗಿ ವಿಮಾನವನ್ನು ಸೇವೆಯಿಂದ ಹಿಂತೆಗೆದು ಟರ್ಮಿನಲ್ ಗೆ ಕಳುಹಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಆಕಾಸ ಏರ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸ್ಪೈಸ್ ಜೆಟ್ ವಿಮಾನವನ್ನೂ ತಕ್ಷಣವೇ ಸೇವೆಯಿಂದ ಹಿಂತೆಗೆದು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ಘಟನೆಯ ನಿಖರ ಕಾರಣ ತಿಳಿದುಬರಬೇಕಿದ್ದು, ವಿಮಾನಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮಾದಕ ವಸ್ತು ಸೇವನೆ ಮಾಡಿದ ಆರೋಪ: ಯುವಕ ಸೆರೆ
ಮಂಗಳೂರು, ಎ.16: ನಗರದ ಬಂದರ್ ದಕ್ಕೆ ಪರಿಸರದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಹೊಯಿಗೆ ಬಜಾರ್ ನಿವಾಸಿ ಪ್ರಣಮ್ ಸಾಲಿಯಾನ್ (30)ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಠಾಣೆಯ ಸಿಬ್ಬಂದಿ ಸಾಗರ್ ದೆವಕತ್ತಿ ಜೊತೆ ಬುಧವಾರ ಅಪರಾಹ್ನ ಗಸ್ತು ನಿರತರಾಗಿದ್ದ ವೇಳೆ ಆರೋಪಿ ಪೊಲೀಸರನ್ನು ಕಂಡು ತಪ್ಪಿಸಲು ಯತ್ನಿಸಿದ. ಸಂಶಯದ ಮೇರೆಗೆ ಹಿಡಿದು ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಸಂಶಯಗೊಂಡು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.
5 ರಿಂದ 17 ವರ್ಷದೊಳಗಿನವರಿಗೆ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ಗೆ ಸೆ.30ರ ವರೆಗೆ ಕಾಲಾವಕಾಶ
ಬೆಂಗಳೂರು : ರಾಜ್ಯದಲ್ಲಿನ 5 ರಿಂದ 17 ವರ್ಷದೊಳಗಿನವರಿಗೆ ಸೆಪ್ಟೆಂಬರ್ 30ರ ವರೆಗೆ ಆಧಾರ್ ಸಂಖ್ಯೆಯ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಲು ಕಾಲಾವಕಾಶ ನೀಡಲಾಗಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಗುರುವಾರ ಈ ಸಂಬಂಧ ಆದೇಶ ಹೊರಡಿಸಿರುವ ಸರಕಾರ, ರಾಜ್ಯದ ಎಲ್ಲ ಆಧಾರ್ ಸೇವಾ ಕೇಂದ್ರಗಳಲ್ಲಿ ಈ ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಹಾಗೂ ಸಂಬಂಧಿತ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದೆ. ಎಲ್ಲ ಪೋಷಕರು ಜವಾಬ್ದಾರಿಯಿಂದ ಈ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಗ್ರಾಮ ಪಂಚಾಯತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಈ ವಿಷಯದ ಕುರಿತು ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಅಪ್ಡೇಟ್ ಏತಕ್ಕೆ? : ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸುವುದರಿಂದ ಹಲವು ಸರಕಾರಿ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದು, ಸರಕಾರದ ಯೋಜನೆಗಳ ಲಾಭ ಪಡೆಯುವುದು ಹಾಗೂ ವಿದ್ಯಾರ್ಥಿ ವೇತನ-ತರಬೇತಿ ಸೌಲಭ್ಯಗಳನ್ನು ಪಡೆಯುವುದು ಒಳಗೊಂಡಿದೆ.
Kalaburagi | ಮಾನಸಿಕ ಗುಲಾಮಗಿರಿಯಿಂದ ಹೊರಬನ್ನಿ: ನಿಜಗುಣಾನಂದ ಸ್ವಾಮೀಜಿ ಕರೆ
135ನೇ ಜಯಂತ್ಯೋತ್ಸವ ಸಮಾರೋಪ ಸಮಾರಂಭ
ಕಾರವಾರ: ರಾಸಾಯನಿಕ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಸ್ಫೋಟ
ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಸಮೀಪದ ರಾಸಾಯನಿಕ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಏಕಾಏಕಿ ಸ್ಫೋಟಗೊಂಡು ಬೆಂಕಿಗೆ ಆಹುತಿಯಾದ ಘಟನೆ ಗುರುವಾರ ಸಂಭವಿಸಿದೆ. ಈ ಅಪಘಾತ ಸಂಭವಿಸಿದ ಬೆನ್ನಲ್ಲೇ ಟ್ಯಾಂಕರ್ ಚಾಲಕ ನಾಪತ್ತೆಯಾಗಿದ್ದು, ಆತನ ಸ್ಥಿತಿಯ ಬಗ್ಗೆ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳದಲ್ಲಿ ಶೋಧ ಕಾರ್ಯವನ್ನು ಚುರುಕುಗೊಳಿಸಿವೆಯಾದರೂ, ಉರಿಯುತ್ತಿರುವ ಬೆಂಕಿಯ ಕೆನ್ನಾಲಗೆ ಮತ್ತು ಅತಿಯಾದ ಶಾಖದಿಂದಾಗಿ ಕಾರ್ಯಾಚರಣೆಗೆ ತೀವ್ರ ಅಡೆತಡೆ ಉಂಟಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಕೋಲಾ-ಹುಬ್ಬಳ್ಳಿ ನಡುವಿನ ಈ ಬ್ಯುಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ರಸ್ತೆಯ ಎರಡೂ ಬದಿಗಳಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಟ್ಯಾಂಕರ್ನಲ್ಲಿದ್ದ ರಾಸಾಯನಿಕ ಪದಾರ್ಥದ ಸ್ವರೂಪದಿಂದಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವುದು ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಕ್ಕಿಗಳಿಗೆ 10,000 ರೂ ಸ್ಟೈಪೆಂಡ್ನೊಂದಿಗೆ ಎನ್ಐಸಿಯಿಂದ ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಘೋಷಣೆ
ಬೆಂಗಳೂರು: ನೀವು ಭವಿಷ್ಯದ ತಂತ್ರಜ್ಞಾನವನ್ನು ರೂಪಿಸುವ, ಹೊಸ ಕೋಡಿಂಗ್ (Coding) ಕಲಿಯುವ ಮತ್ತು ಪ್ರಪಂಚದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಂತಹ ಆವಿಷ್ಕಾರಗಳನ್ನು ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಬರುವ 'ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್' (NIC) ಇದೀಗ ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್
Kalaburagi | ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 1.25 ರೂ. ಲಕ್ಷ ದಂಡ
ಕಲಬುರಗಿ : ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,25,000 ರೂ. ದಂಡ ವಿಧಿಸಿ ಕಲಬುರಗಿಯ ವಿಶೇಷ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಮಲರಾಜ ಬಾಬು ನಾಯ್ಕೋಡಿ(24) ಶಿಕ್ಷೆಗೆ ಒಳಗಾದ ಯುವಕ ಎಂದು ತಿಳಿದುಬಂದಿದೆ. ಪ್ರಕರಣದ ವಿವರಗಳ ಪ್ರಕಾರ, ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಚೂರ ಗ್ರಾಮದ 17 ವರ್ಷದ ಬಾಲಕಿಯೊಂದಿಗೆ ಆರೋಪಿ ಮಲರಾಜ (24), ಕಳೆದ ಕೆಲವು ತಿಂಗಳಿನಿಂದ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದು, ಬಳಿಕ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ನೆಪದಲ್ಲಿ ಅಪಹರಿಸಿದ್ದನು. 2025ರ ಫೆ.16ರಂದು ರಾತ್ರಿ ಕೊಂಚೂರ ಗ್ರಾಮದ ಅಂಜನೇಯ ದೇವಸ್ಥಾನದ ಸಮೀಪದಿಂದ ಮೋಟಾರ್ ಸೈಕಲ್ನಲ್ಲಿ ಕರೆದುಕೊಂಡು ಹೋಗಿ, ಯಾದಗಿರಿ ರೈಲು ನಿಲ್ದಾಣದ ಮೂಲಕ ಬೆಂಗಳೂರಿನ ಯಲಹಂಕಕ್ಕೆ ತೆರಳಿ, ಬಳಿಕ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜೋಡಿಹೊಸಹಳ್ಳಿ ಗ್ರಾಮದ ಹೊಲದಲ್ಲಿರುವ ಶೆಡ್ನಲ್ಲಿ ಇರಿಸಿದ್ದನು. ಅಲ್ಲಿ ಫೆ.17ರಿಂದ 21ರವರೆಗೆ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟು, ಮದುವೆಯ ನೆಪದಲ್ಲಿ ಪುಸಲಾಯಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣವನ್ನು ವಾಡಿ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಅವರ ನೇತೃತ್ವದಲ್ಲಿ ತನಿಖೆ ನಡೆಸಿ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳಡಿ ಆರೋಪಿ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಮುಜೀರ್ ಉಲ್ಲಾ ಸಿ.ಜಿ. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಲರಾಜನಿಗೆ ಪೋಕ್ಸೋ ಕಾಯ್ದೆಯ ಕಲಂ 6ರಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ. ಇದೇ ವೇಳೆ, ಬಿಎನ್ಎಸ್ ಕಲಂ 137(2) ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 25,00 ರೂ.0 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ 5 ತಿಂಗಳ ಸಾಧಾ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಇದಲ್ಲದೆ, ಪೀಡಿತ ಬಾಲಕಿಗೆ 3 ಲಕ್ಷ ರೂ. ಪರಿಹಾರವನ್ನು ಕಾನೂನು ಪ್ರಾಧಿಕಾರದಿಂದ ಒಂದು ತಿಂಗಳೊಳಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ಅವರು ವಾದ ಮಂಡಿಸಿದ್ದರು.
Kalaburagi | ಡಾ.ಶಿವಕುಮಾರ ಸ್ವಾಮಿಗಳ ಜಯಂತಿ : ಗುರುವಂದನಾ ಮಹೋತ್ಸವ
ಕಲಬುರಗಿ : ಜಿಲ್ಲಾ ವೀರಶೈವ ಸಮಾಜ ಹಾಗೂ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಶಿವಕುಮಾರ ಮಹಾಶಿವಯೋಗಿಗಳವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಆಚರಿಸಲಾಯಿತು. ತುಮಕೂರ ಸಿದ್ಧಗಂಗಾಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿದ್ದರು. ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಸಮಾರಂಭವನ್ನು ಉದ್ಘಾಟಿಸಿದರು. ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನೇತೃತ್ವದಲ್ಲಿ ಸಮಾರಂಭ ಜರುಗಿತು. ಕರುಣೇಶ್ವರ ಶಿವಾಚಾರ್ಯರು, ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಶಿವಲಿಂಗೇಶ್ವರ ಮಹಾಸ್ವಾಮಿಗಳು, ಅಪ್ಪಾರಾವ ದೇವಿಮುತ್ಯಾ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ, ಶರಣಬಸವೇಶ್ವರ ಸಂಸ್ಥಾನದ ಬಸವರಾಜ ದೇಶಮುಖ, ರಾಜು ಭೀಮಳ್ಳಿ, ಅಲ್ಲಮಪ್ರಭು ದೇಶಮುಖ, ಜಯಶ್ರೀ ಮತ್ತಿಮೂಡ, ನೀಲಕಂಠರಾವ ಮೂಲಗೆ, ಅರುಣಕುಮಾರ ಪಾಟೀಲ, ದೇವಿಂದ್ರಪ್ಪ ಅವಂಟಿ, ಚನ್ನಬಸಯ್ಯಗುರುವಿನ, ಕಲ್ಯಾಣಪ್ಪ ಪಾಟೀಲ, ಸಂಗಮೇಶ ನಾಗನಳ್ಳಿ, ಶರಣು ಭೂಸನೂರ, ಮಂಜು ರೆಡ್ಡಿ, ರಾಜಕುಮಾರ ಕೋಟೆ, ವಿಶ್ವನಾಥ ಪಾಟೀಲ, ಪ್ರಶಾಂತ ಗುಡ್ಡಾ, ಈಶ್ವರ ಪನಶೆಟ್ಟಿ, ಶ್ರೀಶೈಲ ಘೋಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಂತರ ಕಾರ್ಯನಿರತರ ಪತ್ರಕರ್ತರ ಸಂಘದ ಚುನಾಯಿತ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಲೋಕಸಭೆಯಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದರು. ಗೃಹ ಸಚಿವರ ವಿರುದ್ಧ ಹರಿಹಾಯ್ದ ಪ್ರಿಯಾಂಕಾ, ನಿಮ್ಮ ಸುಳ್ಳುಗಳು ಮಹಿಳೆಯರಿಗೆ ಚನ್ನಾಗಿ ಗೊತ್ತಾಗುತ್ತದೆ. ಮಹಿಳಾ ಮೀಸಲಾತಿ ವಿಷಯ ಸ್ವಾಗತಾರ್ಹ ಆದರೆ, ಇದರ ಹಿಂದೆ ರಾಜಕೀಯ ವಾಸನೆ ಇದೆ. ನಿಮ್ಮ ಕುತಂತ್ರ ನೋಡಿ ಚಾಣಕ್ಯನೇ ಶಾಕ್ ಆಗುತ್ತಿದ್ದ ಎಂದು ಟಾಂಗ್ ಕೊಟ್ಟಿದ್ದಾರೆ.
ಲಾಡ್ಜ್ನಲ್ಲಿರಿಸಿದ್ದ ಬ್ಯಾಗ್ನಿಂದ ಚಿನ್ನಾಭರಣ ಕಳವು: ಪ್ರಕರಣ ದಾಖಲು
ಮಂಗಳೂರು, ಎ.16: ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್ವೊಂದರಲ್ಲಿ ಇರಿಸಿದ್ದ ಬ್ಯಾಗ್ನಿಂದ ಚಿನ್ನಾಭರಣ ಕಳವಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್ನಲ್ಲಿ ತಾನು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಎ.13ರಂದು ಬೆಳಗ್ಗೆ 6:30ರಿಂದ ವಾಸ್ತವ್ಯ ಹೊಂದಿದ್ದು, ಎ.15ರಂದು ಬೆಳಗ್ಗೆ 8:30ಕ್ಕೆ ತಣ್ಣೀರುಬಾವಿ ಬೀಚ್ಗೆ ಹೋಗುವ ವೇಳೆ ಬ್ಯಾಗ್ ನಲ್ಲಿ ಲ್ಯಾಪ್ಟಾಪ್, ಮಕ್ಕಳ ಎರಡು ಉಂಗುರ, ಪತ್ನಿಯ ಒಂದು ಉಂಗುರ ಮತ್ತು ತನಗೆ ಸೇರಿದ ಬ್ರಾಸ್ಲೆಟ್ ಗಳನ್ನಿಟ್ಟು ರೂಮ್ಗೆ ಲಾಕ್ ಮಾಡಿ ಕೀಯನ್ನು ಕೊಂಡು ಹೋಗಿದ್ದೆ. ಅಂದು ಪೂ.11:30 ವಾಪಸ್ ರೂಮ್ಗೆ ಬಂದು ಬ್ಯಾಗ್ಗಳನ್ನು ಪರಿಶೀಲಿಸಿದಾಗ ಒಡವೆಗಳನ್ನು ಇರಿಸಿದ್ದ ಪ್ಲಾಸ್ಟಿಕ್ ಬಾಕ್ಸ್ನಿಂದ ಸುಮಾರು 10 ಗ್ರಾಂ ತೂಕದ ತನ್ನ 1.40 ಲಕ್ಷ ರೂ. ಮೌಲ್ಯದ ಬ್ರಾಸ್ಲೆಟ್ ಇರಲಿಲ್ಲ. ಉಳಿದ ವಸ್ತುಗಳು ಯಥಾ ಸ್ಥಿತಿಯಲ್ಲಿತ್ತು. ಸದ್ರಿ ಸೊತ್ತನ್ನು ನಕಲಿ ಕೀ ಬಳಸಿ ಬಾಗಿಲು ತೆರೆದು ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಎ.ಎನ್. ಶಿವ ಎಂಬವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾರು ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
ಮಂಗಳೂರು, ಎ.16: ನಗರದ ಉರ್ವಸ್ಟೋರ್ ಜಂಕ್ಷನ್ ಬಳಿ ಸ್ಕೂಟರ್ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಹಾಗೂ ಹಿಂಬದಿ ಸವಾರ ಗಾಯಗೊಂಡ ಘಟನೆ ಬುಧವಾರ ನಡೆದಿದೆ. 74ರ ಹರೆಯದ ಬಿ.ಎಚ್. ವೆಂಕಟರಮಣ ಪೈ ಮೃತಪಟ್ಟಿದ್ದು, ಅವರ ಮೊಮ್ಮಗ 10ರ ಹರೆಯದ ಅಥರ್ವ ಗಾಯಗೊಂಡಿರುವುದಾಗಿ ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ. ಎ.15ರಂದು ಬೆಳಗ್ಗೆ 8:15ಕ್ಕೆ ವೆಂಕಟರಮಣ ಸ್ಕೂಟರ್ನಲ್ಲಿ ತನ್ನ ಮೊಮ್ಮಗ ಅಥರ್ವನನ್ನು ಕೂರಿಸಿಕೊಂಡು ಮನೆಯಿಂದ ಬಿಜೈ ಕಾಪಿಕಾಡ್ ಕಡೆಗೆ ಹೊರಟಿದ್ದರು. ಉರ್ವಸ್ಟೋರ್ ಜಂಕ್ಷನ್ ಬಳಿ ಯು ಟರ್ನ್ ತೆಗೆದು ಕೊಳ್ಳುತ್ತಿರುವ ವೇಳೆ ಕೊಟ್ಟಾರ ಚೌಕಿ ಕಡೆಯಿಂದ ಕಾರನ್ನು ಅದರ ಚಾಲಕ ಮುಹಮ್ಮದ್ ಶಂಶೀರ್ ಎಂಬಾತ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದರು. ವೆಂಕಟರಮಣ ಗಂಭೀರ ಗಾಯಗೊಂಡಿದ್ದರೆ, ಅಥರ್ವನಿಗೆ ತರಚಿದ ಗಾಯವಾಗಿತ್ತು. ಸಾರ್ವಜನಿಕರು ಹಾಗೂ ಕಾರು ಚಾಲಕ ನಗರದ ಎಜೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೆಂಕಟರಮಣ ಪೈ 8:49ಕ್ಕೆ ಮೃತಪಟ್ಟಿರುವುದಾಗಿದೆ ಬಿ.ಎಚ್. ಮಹೇಶ್ ಪೈ ದೂರಿನಲ್ಲಿ ತಿಳಿಸಿದ್ದಾರೆ.
Ballari | ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಿ: ಪಿಡಿಒ ಶೇಷಗಿರಿ
ಬಳ್ಳಾರಿ / ಕಂಪ್ಲಿ: ಇಂದಿನ ಜೀವನದ ಒತ್ತಡದಲ್ಲಿ ಜನರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದು, ಇದರಿಂದ ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಪಿಡಿಒ ಹಾರ್ವಿ ಶೇಷಗಿರಿ ಹೇಳಿದರು. ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ವಿನೂತನ ಪದವಿ ಕಾಲೇಜಿನ ನೇತೃತ್ವದಲ್ಲಿ ಎನ್ಎಸ್ಎಸ್ ಶಿಬಿರದ ಅಂಗವಾಗಿ, ಕಂಪ್ಲಿ ತಾಲೂಕು ಜೆಸಿಐ ಸೋನಾ ಘಟಕ ಹಾಗೂ ವೀರಬ್ರಹ್ಮೇಂದ್ರ ಸ್ವಾಮಿ ಪಾಲಿಕ್ಲಿನಿಕ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೇಸಿಗೆ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಆರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ಶಿಬಿರದಲ್ಲಿ ತಜ್ಞ ವೈದ್ಯರಾದ ಜೆಸಿ ಡಾ. ಭರತ್ ಪದ್ಮಶಾಲಿ, ಜೆಸಿ ಡಾ. ಶ್ರದ್ಧಾ ಭರತ್ ಹಾಗೂ ಜೆಸಿ ಡಾ. ಪ್ರವೀಣ್ ಅವರು ಭಾಗವಹಿಸಿ, ವಯಸ್ಕರು ಮತ್ತು ಹಿರಿಯ ನಾಗರಿಕರಿಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿದರು. ಸುಮಾರು 150ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ವೈದ್ಯಕೀಯ ಸಲಹೆ ಹಾಗೂ ಔಷಧಿಗಳನ್ನು ಪಡೆದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಫಾರೂಕ್, ಶಿಕ್ಷಕ ರಾಮುಲು, ಪ್ರಾಂಶುಪಾಲ ಮದ್ದಾನೆಪ್ಪ ಬಿಡನಾಳ, ಉಪನ್ಯಾಸಕರು, ಸಿಬ್ಬಂದಿ ವರ್ಗ, ಎನ್ಎಸ್ಎಸ್ ಶಿಬಿರಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
2nd PUC Result-2026 : ವಾಣಿಜ್ಯ ವಿಭಾಗದಲ್ಲಿ ಕುಶಾಲ್ಗೆ 584 ಅಂಕ
ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಹೊಸದುರ್ಗದ ಎಸ್.ನಿಜಲಿಂಗಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ಕುಶಾಲ್ ಎಚ್.ಎಂ ವಾಣಿಜ್ಯ ವಿಭಾಗದಲ್ಲಿ 584 (ಶೇ.97.33) ಅಂಕಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮಹೇಂದ್ರ ಬಾಬು ಬಿ.ಎಂ. ಹಾಗೂ ಕಾವ್ಯ ಅವರ ಪುತ್ರ.
ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ವಿಧೇಯಕದ ಬಗ್ಗೆ ಚರ್ಚಿಸಲು, ಇಂದಿನಿಂದ (ಏ.16-ಗುರುವಾರ) ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ. ವಿಶೇಷವಾಗಿ ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಕುರಿತು ಸುದೀರ್ಘವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದರಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಎರಡೂ ಮಸೂದೆ ಬೆಂಬಲಿಸಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ.
ಕೊಟ್ಟೂರು | ಹರಾಳು ಗ್ರಾಮದಲ್ಲಿ ಅಂಬೇಡ್ಕರ್, ಜಗಜೀವನ ರಾಮ್ ಜಯಂತಿ ಆಚರಣೆ
ಕೊಟ್ಟೂರು (ವಿಜಯನಗರ): ತಾಲೂಕಿನ ಹರಾಳು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಹಾಗೂ ಅಭಿವೃದ್ಧಿ ಹರಿಕಾರ ಜಗಜೀವನ ರಾಮ್ ಅವರ 119ನೇ ಜನ್ಮದಿನಾಚರಣೆಯನ್ನು ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ನಂತರ ಕರಿಯಮ್ಮ ದೇವಸ್ಥಾನ ಹಾಗೂ ಸರ್ಕಾರಿ ಶಾಲೆ ಮಾರ್ಗವಾಗಿ ಗ್ರಾಮಸ್ಥರು ಭವ್ಯ ಮೆರವಣಿಗೆ ನಡೆಸಿದರು. ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಬೆಣ್ಣಿಹಳ್ಳಿ ನಾಗರಾಜ ಹಾಗೂ ಸಂಘದ ಪದಾಧಿಕಾರಿಗಳಾದ ಬಿ. ದಂಡೆಪ್ಪ, ಬಿ. ಹಂಪಣ್ಣ, ಬಿ. ನಾಗರಾಜ, ಎಂ. ರಮೇಶ್, ಎಂ. ಬಸವರಾಜ, ಪರುಸಪ್ಪ ಉಲುವತ್ತಿ ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಈ ಸಂದರ್ಭದಲ್ಲಿ ಹಿರಿಯರು, ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಮಹನೀಯರಿಗೆ ಗೌರವ ನಮನ ಸಲ್ಲಿಸಿದರು.
Vijayanagara | ದಾದಾಪೀರ್ಗೆ ʼಸರಸ್ವತಿ ಕನ್ನಡ ರತ್ನʼ ರಾಜ್ಯ ಪ್ರಶಸ್ತಿ
ವಿಜಯನಗರ: ಜಿಲ್ಲೆಯ ಕೊಟ್ಟೂರು ತಾಲೂಕಿನ ಪತ್ರಿಕಾ ವರದಿಗಾರರಾದ ದಾದಾಪೀರ್ ಅವರು ಸಮಾಜಸೇವಾ ಕ್ಷೇತ್ರದಲ್ಲಿ ನೀಡಿರುವ ಮಹತ್ವದ ಕೊಡುಗೆಗಳನ್ನು ಗುರುತಿಸಿ, ದಾವಣಗೇರಿಯ ಸರಸ್ವತಿ ದಾಸಪ್ಪ ಶಣೈ ಪ್ರತಿಷ್ಠಾನವು ಪ್ರತಿವರ್ಷ ನೀಡುವ ಪ್ರತಿಷ್ಠಿತ ʼಸರಸ್ವತಿ ಕನ್ನಡ ರತ್ನʼ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಎ.19ರಂದು ರವಿವಾರ ದಾವಣಗೆರೆ ನಗರದ ಚನ್ನಗಿರಿ ವಿರುಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪತ್ರಕರ್ತ ದಾದಾಪೀರ್ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿ, ತಮ್ಮ ಪೋಷಕರು, ಗುರುಗಳು ಹಾಗೂ ಸ್ವಗ್ರಾಮಕ್ಕೆ ಕೀರ್ತಿ ತರುವಂತೆ ಶುಭಾಶಯಗಳನ್ನು ವ್ಯಕ್ತಪಡಿಸಲಾಗಿದೆ.
ಹಳೇ ಶಹಾಬಾದ್ನಲ್ಲಿ 893ನೇ ಬಸವ ಜಯಂತಿ ಉತ್ಸವ : ಎ.20ರಂದು ಸಾಂಸ್ಕೃತಿಕ ನಾಯಕನ ಭವ್ಯ ಮೆರವಣಿಗೆ
ಕಲಬುರಗಿ : ಜಿಲ್ಲೆಯ ಶಹಾಬಾದ್ ಪಟ್ಟಣದ ಹಳೇ ಶಹಾಬಾದ್ನಲ್ಲಿ 893ನೇ ಬಸವ ಜಯಂತಿ ಉತ್ಸವದ ನಿಮಿತ್ಯ ಬಸವಾದಿ ಶರಣರ ಒಕ್ಕೂಟ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಘಟಕ ಹಾಗೂ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಹಳೇ ಶಹಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಸ್ಕೃತಿಕ ನಾಯಕನ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ಎ.17 ಮತ್ತು 18 ರಂದು ಎರಡು ದಿನಗಳ ಕಾಲ ಸಂಜೆ 7 ಗಂಟೆಗೆ ಹಳೇ ಶಹಾಬಾದಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ದಿ. ಸ್ಪಿರಿಟ್ ಕಲಾ ತಂಡ ಮತ್ತು ಚಿನ್ಮಯಿ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಎ.17ರ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸುವರು. ರಾವೂರು ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲಬುರಗಿಯ ಪಿ.ಡಿ.ಎ. ಇಂಜಿನೀಯರಿಂಗ್ ಕಾಲೇಜಿನ ಉಪನ್ಯಾಸಕ ಸಂಜಯ್ ಮಾಕಲ್ ಉಪನ್ಯಾಸ ನೀಡುವರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮರೆಪ್ಪ ಹಳ್ಳಿ ಧ್ವಜಾರೋಹಣ ನೆರವೇರಿಸಲಿದ್ದು, ಡಿ.ಎಸ್.ಪಿ. ಶಂಕರಗೌಡ ಪಾಟೀಲ ಸೇರಿದಂತೆ ಸ್ಥಳೀಯ ಅನೇಕ ಮುಖಂಡರುಗಳು ಅತಿಥಿಗಳಾಗಿ ಆಗಮಿಸುವರು. ಎ.18ರ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಬುರಗಿಯ ಮಕ್ತಂಪುರ ಗದ್ದುಗೆ ಮಠದ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳ ನೇತೃತ್ವ ಮತ್ತು ಶ್ರೀ ವೀರಭದ್ರೇಶ್ವರ ಚಾರಿಟೇನಲ್ ಟ್ರಸ್ಟ್ ಅಧ್ಯಕ್ಷಬಸವರಾಜ ತರನಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎ.20ಕ್ಕೆ ಸಾಂಸ್ಕೃತಿಕ ನಾಯಕನ ಭವ್ಯ ಮೆರವಣಿಗೆ : ಇನ್ನು ಎ.20 ರಂದು ಸಂಜೆ 6 ಗಂಟೆಗೆ ಹಳೇ ಶಹಾಬಾದ್ನಲ್ಲಿ ನಡೆಯುವ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಿ.ಪಿ.ಐ ಪರಶುರಾಮ ವನಂಜಕರ್ ಚಾಲನೆ ನೀಡುವರು. ಶಹಾಬಾದ್ ಹಡಪದ ಅಪ್ಪಣ್ಣನವರ ಮಠದ ಮ.ನಿ.ಪ್ರ. ರಾಜಶಿವಯೋಗಿಗಳ ನೇತೃತ್ವ ಮತ್ತು ಶಹಾಬಾದ್ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಘಟಕದ ಅಧ್ಯಕ್ಷ ಬಸವಣಪ್ಪ ವಾಲಿ ಅಧ್ಯಕ್ಷತೆಯಲ್ಲಿ ನಡೆಯುವ ಮೆರವಣಿಗೆಯಲ್ಲಿ ಸ್ಥಳೀಯ ಅನೇಕ ಮುಖಂಡರು ಭಾಗಿಯಾಗುವರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಹಾಂತಗೌಡ ಪಾಟೀಲ ಧ್ವಜಾರೋಹಣ ಮಾಡುವರು.
ಸಿಬಿಎಸ್ಇ ಪರೀಕ್ಷೆ: ಆಳ್ವಾಸ್ ಶಾಲೆಗೆ ಶೇ.100 ಫಲಿತಾಂಶ
ಮೂಡುಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ನಡೆಸಿದ ಹತ್ತನೆ ತರಗತಿಯ ಫಲಿತಾಂಶ ದಲ್ಲಿ ಆಳ್ವಾಸ್ ಶಾಲೆಯು ಸತತ ಆರನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ. ಈ ಬಾರಿ 46 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಕರ್ನಾಟಕದ ಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅನಘಾ ಉಮೇಶ್ ರಾವ್ (ಶೇ.99.2), ಪ್ರಮತ್ ಔರಾದ್ವರ್ (ಶೇ.99), ಆದ್ಯಾ ಭಟ್ (ಶೇ. 99), ಅನುರಾಧ(ಶೇ.99), ವಾತ್ಸಲ್ಯ ಎನ್ (ಶೇ.98), ಧನ್ವಿತ್ ಪಿ.ಬಿ.(ಶೇ.97.2), ನಮ್ರತಾ (ಶೇ.97.2), ಮನೋಘ್ನ (ಶೇ.97), ಶ್ವೇತಾ(ಶೇ.97), ಶಿವಾನಿ ಜಿ.ಎ.(ಶೇ.97), ವಾಘ್ಮಿ ಪ್ರಶಾಂತ್ (ಶೇ.97), ಅವನಿ ಪಿ. ಶೆಟ್ಟಿ (ಶೇ.96.6), ವಿಭಾಸ್ (ಶೇ.96.6), ಯಕ್ಷಿತಾ (ಶೇ.96.4), ಸೃಜನ್ (ಶೇ.96.4), ಗೌತಮ್ (ಶೇ.96.4), ಪ್ರತೀಕ್ಷಾ ಕೆ.ಎಂ. (ಶೇ.96.4), ಸಾನ್ವಿ (ಶೇ.96.4), ಜನಿತ್ (ಶೇ.96.2), ಭಾರ್ಗವ್ (ಶೇ.96), ಜಶ್ಮಿತಾ (ಶೇ.96), ಐಶ್ರೀ ಶೆಟ್ಟಿ (ಶೇ.96), ಆದಿಲ್ (ಶೇ.96), ಧೃತಿ (ಶೇ.96.4), ನಿಶ್ವಲ್ (ಶೇ.96.4), ಹಿತೈಶಿ (ಶೇ.96), ಪ್ರಥಮ್ (ಶೇ.96), ಆದ್ರಿತ್ (ಶೇ.95.4), ಸುಮಿತ್ (ಶೇ.95.2), ಐಶಾನಿ (ಶೇ.95.2), ಭೃತಿ (ಶೇ.95), ಪೂರ್ವಿಕ್ (ಶೇ.95), ತರುಂಜನ್ (ಶೇ.95), ಸಾಯಿದೀಕ್ಷಾ, ಅಂಜನಾತಯನ್ (ಶೇ.95), ಗ್ಲೋರಿ ಪ್ರಕಾಶ್(ಶೇ.95), ಅಂಜನಿ (ಶೇ.95), ದಿವ್ಯಾ (ಶೇ. 95), ಧನ್ಯಾ(ಶೇ.95), ನಿಶಾ (ಶೇ.95), ಅಧ್ವಿತಿ(ಶೇ.95), ಯಶಶ್ವಿ (ಶೇ.95), (ಶೇ.95), ಸಂಜನಾ(ಶೇ.95), ಹರ್ಷವರ್ಧನ್ ಸಿದ್ಧಾರ್ಥ(ಶೇ.95) ರೋಹಿತ್ (ಶೇ.95) ಸಿದ್ಧಾರ್ಥ (ಶೇ.95) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ. 116 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದರೆ, 185 ವಿದ್ಯಾರ್ಥಿಗಳು ಶೇ.85 ಹಾಗೂ 225ವಿದ್ಯಾರ್ಥಿಗಳು ಶೇ.80ಕ್ಕಿಂತ ಅಧಿಕ ಅಂಕವನ್ನು ಗಳಿಸಿದ್ದಾರೆ. ಸಂಸ್ಕೃತದಲ್ಲಿ 7ವಿದ್ಯಾರ್ಥಿಗಳು, ಹಿಂದಿಯಲ್ಲಿ 4 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 3, ಕನ್ನಡದಲ್ಲಿ 3, ವಿಜ್ಞಾನ ಹಾಗೂ ಇಂಗ್ಲೀಷ್ನಲ್ಲಿ ತಲಾ ಓರ್ವ ವಿದ್ಯಾರ್ಥಿ ಶೇ.100 ಅಂಕ ಪಡೆದಿದ್ದಾರೆ. ಇವುಗಳ ಜೊತೆಯಲ್ಲಿ ಐಟಿ ವಿಷಯದಲ್ಲಿ 17 ವಿದ್ಯಾಥಿಗಳು ಶೇ.100 ಅಂಕ ಗಳಿಸಿದ್ದಾರೆ. ವಿಷಯವಾರು ಅಂಕಗಳಲ್ಲಿ, 36 ವಿದ್ಯಾರ್ಥಿಗಳು ಶೇ.100, 69 ವಿದ್ಯಾರ್ಥಿಗಳು ಶೇ.99 ಅಂಕ, 117 ವಿದ್ಯಾರ್ಥಿಗಳು ಶೇ. 98, 175ವಿದ್ಯಾರ್ಥಿಗಳು ಶೇ.97, 255 ವಿದ್ಯಾರ್ಥಿಗಳು ಶೇ.96, 335 ವಿದ್ಯಾಥಿಗಳು ಶೇ. 95 ಅಂಕಗಳಿಸಿದ್ದಾರೆ. ಜಗತ್ತಿನಾದ್ಯಂತ ಶೇ95ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು 2.24 ಶೇಕಡಾವಾರು ಆದರೆ, ಆಳ್ವಾಸ್ನಲ್ಲಿ ಶೇ.10.33 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಶೇ.90ಕ್ಕಿಂತ ಅಧಿಕ ಶೇ8.96ಆದರೆ, ಆಳ್ವಾಸ್ನಲ್ಲಿ ಶೇ.26 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಸಲುವಾಗಿ ಆಳ್ವಾಸ್ ಸಿಬಿಎಸ್ಇ ಶಾಲೆಯಲ್ಲಿ ಕಠಿಣವಾದ ಸ್ಟ್ಯಾಂಡರ್ಡ ಮ್ಯಾಥ್ಸ್ ವಿಷಯವನ್ನು ಇತರ ವಿಷಯಗಳೊಂದಿಗೆ ಭೋದಿಸಲಾ ಗುತ್ತಿದ್ದು, ಈ ವಿಷಯ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಆಳ್ವ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿ ಪ್ರೀತಂ ಕುಂದರ್, ಆಳ್ವಾಸ್ ಸಿ.ಬಿ.ಎಸ್.ಇ ಶಾಲೆಯ ಮುಖ್ಯ ಶಿಕ್ಷಕ ಮುಹಮ್ಮದ್ ಶಫಿ ಶೇಖ್ ಉಪಸ್ಥಿತರಿದ್ದರು.
ಗಲಾಟೆ ಪ್ರಕರಣ; ಅನಂತಕುಮಾರ್ ಹೆಗಡೆ ಪುತ್ರನ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು : ಗಲಾಟೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಪುತ್ರ ಅಶುತೋಷ್ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ. ಎಫ್ಐಆರ್ ಮತ್ತು ಆರೋಪ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೇ ಇರುವುದರಿಂದ ಪ್ರಕರಣದಿಂದ ಕೈಬಿಡುವಂತೆ ಕೋರಿ ಅಶುತೋಷ್ ಹೆಗಡೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ನಾಲ್ಕನೇ ಆರೋಪಿ ಅಶುತೋಷ್ ವಿರುದ್ಧ ಮೇಲ್ನೋಟಕ್ಕೆ ಅಪರಾಧವಾಗುವಂಥ ಆರೋಪಗಳಿಲ್ಲ. ಮುಂದಿನ ವಿಚಾರಣೆಗೆ ಒಳಪಟ್ಟು ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ನಾಲ್ಕನೇ ಆರೋಪಿಗೆ ಮಾತ್ರ ಈ ಮಧ್ಯಂತರ ಆದೇಶ ಸೀಮೀತವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಶುತೋಷ್ ಪರ ವಾದ ಮಂಡಿಸಿದ್ದ ವಕೀಲ ಪವನ್ಚಂದ್ರ ಶೆಟ್ಟಿ, ಎಫ್ಐಆರ್ ಅಥವಾ ಆರೋಪ ಪಟ್ಟಿಯಲ್ಲಿ ಅಶುತೋಷ್ ಹೆಸರಿಲ್ಲ. ತನ್ನ ಅಜ್ಜನನ್ನು ನೋಡಲು ಅವರು ಭಾರತಕ್ಕೆ ಬಂದಿದ್ದರು. ತಂದೆಯ ಅಧಿಕೃತ ಕಾರಿನಲ್ಲಿ ವಾಪಸ್ ಬರುವಾಗ ಕೃತ್ಯ ನಡೆದಿದ್ದು, ಅದರಲ್ಲಿ ಅಶುತೋಷ್ ಪಾತ್ರವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಅರ್ಜಿಯಲ್ಲಿ ಮೊದಲಿಗೆ ಅಶುತೋಷ್ ಪಕ್ಷಕಾರರಾಗಿಲ್ಲ. ಆದ್ದರಿಂದ, ತಿದ್ದುಪಡಿ ಅಥವಾ ಪ್ರತ್ಯೇಕ ಅರ್ಜಿ ಸಲ್ಲಿಸಿದರೆ ನ್ಯಾಯಾಲಯದ ಅದನ್ನು ಪರಿಗಣಿಸಬಹುದು ಎಂದಿದ್ದರು. ಪ್ರಕರಣವೇನು? ತುಮಕೂರಿನಲ್ಲಿ ಮದುವೆಯಲ್ಲಿ ಪಾಲ್ಗೊಂಡು ಕಾರ್ನಲ್ಲಿ ಹಳೇ ನಿಜಗಲ್ ಬಳಿ ಬರುತಿದ್ದಾಗ ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಮತ್ತೊಂದು ಕಾರಿನ ಚಾಲಕ ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದರು. ಇದರಿಂದ, ನಮ್ಮೊಂದಿಗಿದ್ದ ಸಲ್ಮಾನ್ ಖಾನ್ ಎಂಬಾತನ ಮೂರು ಹಲ್ಲುಗಳು ಮುರಿದಿವೆ ಎಂದು ಗಾಯಾಳು, ಹಾಲೇನಹಳ್ಳಿಯ ಸೈಫ್ ಖಾನ್ ದೂರು ನೀಡಿದ್ದರು. ಅನಂತ್ ಕುಮಾರ್ ಹೆಗಡೆ ಅವರು ಆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್ ಕುಮಾರ್ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಆರೋಪಿಸಿದ್ದರು. ದೂರು ಆಧರಿಸಿ ದಾಬಸ್ಪೇಟೆ ಠಾಣೆ ಪೊಲೀಸರು ಅನಂತ್ ಕುಮಾರ್ ಹೆಗಡೆ, ಅವರ ಭದ್ರತಾ ಸಿಬ್ಬಂದಿ ಶ್ರೀಧರ್ ಹಾಗೂ ಕಾರು ಚಾಲಕ ಮಹೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು: ಗೆಳೆಯರ ಬಳಗದಿಂದ ಶರೀಫ್ ಹಾಜಿ ವೈಟ್ಸ್ಟೋನ್ಗೆ ಸನ್ಮಾನ
ಮಂಗಳೂರು, ಎ.16: ಸಮಾಜಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಅನನ್ಯ ಕೊಡುಗೆ ನೀಡಿದ ಉದ್ಯಮಿ ಶರೀಫ್ ಹಾಜಿ ವೈಟ್ ಸ್ಟೋನ್ ಅವರಿಗೆ ಗೆಳೆಯರ ಬಳಗ ಮಂಗಳೂರು ವತಿಯಿಂದ ಸನ್ಮಾನ ಕಾರ್ಯಕ್ರಮವು ನಗರದ ವೈಟ್ ಸ್ಟೋನ್ ಪ್ರೀಮಿಯರ್ ಇನ್ ಸಭಾಂಗಣದಲ್ಲಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಸಾಪ ದ.ಕ.ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಂಡೆ ಪೆಂಙಳ್ ಅಭಿಯಾನದ ಅಧ್ಯಕ್ಷ ಮನ್ಸೂರ್ ಅಹಮ್ಮದ್ ಅಝಾದ್, ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದೈಜಿವರ್ಲ್ಡ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿದರು. ಹರ್ಷದ್ ಕಂದಕ್, ಉದ್ಯಮಿ ಸಿ.ಆರ್ ಅಬೂಬಕ್ಕರ್ ಉಪಸ್ಥಿತರಿದರು. ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ ತೊಕ್ಕೊಟ್ಟು ಅಭಿನಂದನಾ ಪತ್ರ ವಾಚಿಸಿದರು. ಗೆಳೆಯರ ಬಳಗ ಮಂಗಳೂರು ಅಧ್ಯಕ್ಷ ಡಿ.ಐ. ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಕಾರ್ಯದರ್ಶಿ ಸಾಜಿದ್ ಉಳ್ಳಾಲ್ ವಂದಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಸೀಮೆನ್ಸ್ ಹೆಲ್ತಿನಿಯರ್ಸ್ ತಂಡ
ಉದ್ದೇಶಿತ ಯೋಜನೆ ಕುರಿತು ಸುದೀರ್ಘ ಚರ್ಚೆ
Kalaburagi | ಸೋಲಾಪುರ ವಿಭಾಗದ ಮಾರ್ಗವಾಗಿ ಮುಂಬೈ–ಚೆನ್ನೈ ನಡುವೆ 16 ಸಮರ್ ಸ್ಪೆಷಲ್ ರೈಲುಗಳು
ಕಲಬುರಗಿ: ಬೇಸಿಗೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಆಧರಿಸಿ ಸೆಂಟ್ರಲ್ ರೈಲ್ವೆ ಸೋಲಾಪುರ ವಿಭಾಗದ ಮಾರ್ಗವಾಗಿ ಮುಂಬೈ ಮತ್ತು ಚೆನ್ನೈ ನಡುವೆ ಒಟ್ಟು 16 ಸಮರ್ ಸ್ಪೆಷಲ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಸೆಂಟ್ರಲ್ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ವಿಕ್ರಮ್ ತಿಳಿಸಿದ್ದಾರೆ. ಈ ವಿಶೇಷ ರೈಲುಗಳು ಸೋಲಾಪುರ ವಿಭಾಗದ ಕುರ್ಡುವಾಡಿ, ಸೋಲಾಪುರ, ಕಲಬುರಗಿ ಮತ್ತು ವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. CSMT ಮುಂಬೈ–ಚೆನ್ನೈ ಸೆಂಟ್ರಲ್ ವಾರಂತ್ಯ ಸ್ಪೆಷಲ್ (16 ಟ್ರಿಪ್ಗಳು): ರೈಲು ಸಂಖ್ಯೆ 01015 ವಾರಂತ್ಯ ವಿಶೇಷ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈನಿಂದ ಪ್ರತಿ ರವಿವಾರ ರಾತ್ರಿ 00.20ಕ್ಕೆ (19-04-2026 ರಿಂದ 07-06-2026ರವರೆಗೆ) ಹೊರಡಲಿದ್ದು, ಅದೇ ದಿನ ರಾತ್ರಿ 23.30ಕ್ಕೆ ಚೆನ್ನೈ ಸೆಂಟ್ರಲ್ ರೈಲ್ವೆ ಸ್ಟೇಷನ್ ತಲುಪಲಿದೆ. (8 ಟ್ರಿಪ್ಗಳು). ರೈಲು ಸಂಖ್ಯೆ 01016 ವಾರಂತ್ಯ ವಿಶೇಷ ರೈಲು ಚೆನ್ನೈ ಸೆಂಟ್ರಲ್ನಿಂದ ಪ್ರತಿ ಸೋಮವಾರ ಬೆಳಗ್ಗೆ 04.00ಕ್ಕೆ (20-04-2026 ರಿಂದ 08-06-2026ರವರೆಗೆ) ಹೊರಡಲಿದ್ದು, ಮುಂದಿನ ದಿನ ಬೆಳಗ್ಗೆ 04.15ಕ್ಕೆ CSMT ಮುಂಬೈ ತಲುಪಲಿದೆ. (8 ಟ್ರಿಪ್ಗಳು) ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ದಾದರ್, ಠಾಣೆ, ಕಲ್ಯಾಣ, ಲೋಣಾವಳಾ, ಪುಣೆ, ದೌಂಡ್, ಕುರ್ಡುವಾಡಿ, ಸೋಲಾಪುರ, ಕಲಬುರಗಿ, ವಾಡಿ, ಕೃಷ್ಣಾ, ರೈಚೂರು, ಮಂತ್ರಾಲಯಂ ರಸ್ತೆ, ಅದೋನಿ, ಗುಂಟಕಲ್, ಗೂಟಿ, ತಾಡಿಪತ್ರಿ, ಯೆರ್ರಗುಂಟ್ಲ, ಕಡಪಾ, ರಾಜಂಪೇಟ, ರೇಣಿಗುಂಟ, ಅರಕ್ಕೋಣಂ ಮತ್ತು ತಿರುವಳ್ಳೂರು ನಿಲ್ದಾಣಗಳು ತಲುಪಲಿವೆ. ಈ ರೈಲುಗಳ ಟಿಕೆಟ್ ಕಾಯ್ದಿರಿಕೆ ವಿಶೇಷ ಶುಲ್ಕದೊಂದಿಗೆ ಎಲ್ಲಾ ಕಂಪ್ಯೂಟರೈಸ್ಡ್ ರಿಸರ್ವೇಶನ್ ಕೇಂದ್ರಗಳಲ್ಲಿ ಹಾಗೂ IRCTC ವೆಬ್ಸೈಟ್ನಲ್ಲಿ ಲಭ್ಯವಿದೆ. ಅನ್ ರಿಜವರ್ ಬೋಗಿಗಳ ಟಿಕೆಟ್ಗಳನ್ನು ನಿಲ್ದಾಣ ಕೌಂಟರ್ಗಳಲ್ಲಿ ಹಾಗೂ RailOne ಆಪ್ ಮೂಲಕ ಪಡೆಯಬಹುದಾಗಿದ್ದು, ಪ್ರಯಾಣಿಕರು ಮಾನ್ಯ ಟಿಕೆಟ್ಗಳೊಂದಿಗೆ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಕೋಲ್ಡ್ ಸ್ಟೋರೇಜ್ ಜಾಗ ಖಾಲಿ ಮಾಡುವಂತೆ ಬಿ.ಎಂ.ಫಾರೂಕ್ಗೆ ನೋಟಿಸ್
ಬೆಂಗಳೂರು : ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ಬಿ.ಎಂ.ಫಾರೂಕ್ ಮಾಲಕತ್ವದ ಮೆ. ಫಿಜಾ ಗ್ಲೋಬಲ್ ಆಗೋವೆಂಚರ್ಸ್ ಸಂಸ್ಥೆಯ ಹಿಡಿತದಲ್ಲಿರುವ ಪೂಜೇನಹಳ್ಳಿ ಸಮಗ್ರ ಶೀತಲ ಸರಪಳಿ ಘಟಕವನ್ನು (ಕೋಲ್ಡ್ ಸ್ಟೋರೇಜ್) ಕೆಪೆಕ್ಗೆ ವಾಪಸ್ ಮಾಡಿ, ಜಾಗ ಖಾಲಿ ಮಾಡಬೇಕು ಎಂದು ಸ್ವಾಧೀನ ಅಧಿಕಾರಿ ಸಿ.ಎನ್.ಶಿವಪ್ರಕಾಶ್ ನೋಟಿಸ್ ಜಾರಿ ಮಾಡಿದ್ದಾರೆ. ಕೆಪೆಕ್ ಸಂಸ್ಥೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 27.50 ಕೋಟಿ ರೂ. ಖರ್ಚು ಮಾಡಿ, ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪೂಜೇನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಸಮಗ್ರ ಶೀತಲ ಸರಪಳಿ ಘಟಕವನ್ನು ನಿರ್ಮಿಸಿದೆ. ಈ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 15 ವರ್ಷಗಳ ಅವಧಿಗೆ ವಾರ್ಷಿಕ 1.55 ಕೋಟಿ ರೂ. ಪರವಾನಗಿ ಶುಲ್ಕದ ಆಧಾರದ ಮೇಲೆ ಮೆ. ಫಿಜಾ ಗ್ಲೋಬಲ್ ಆಗೋವೆಂಚರ್ಸ್ ಸಂಸ್ಥೆಗೆ 2024ರಲ್ಲಿ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಬಿ.ಎಂ. ಫಾರೂಕ್ ಮಾಲಕತ್ವದ ಫಿಜಾ ಗ್ಲೋಬಲ್ ಆಗೋವೆಂಚರ್ಸ್ ಮೊದಲ ವರ್ಷ ಶೇ.10ರಷ್ಟು ಮಾತ್ರ ಪಾವತಿಸಿದ್ದು, ಉಳಿದ ಮೊತ್ತ ಪಾವತಿ ಮಾಡಿಲ್ಲ. ಬಾಕಿ ಮೊತ್ತವು 2.48 ಕೋಟಿ ರೂ.ಗೆ ಹೆಚ್ಚಳವಾಗಿದೆ. ಅಲ್ಲದೆ ಪ್ರತಿದಿನ 50,969 ರೂ. ಹೆಚ್ಚಾಗುತ್ತಿದೆ. ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ವಿದ್ಯುತ್ ಸಂಪರ್ಕವನ್ನೂ ಬೆಸ್ಕಾಂ ಕಡಿತಗೊಳಿಸಿದೆ. ಇದಲ್ಲದೆ, ಉದ್ದೇಶಿತ ಕೆಲಸಕ್ಕಾಗಿ ಸೌಲಭ್ಯವನ್ನು ಬಳಸದೇ ಅನ್ಯ ಉದ್ದೇಶಕ್ಕೆ ಬಳಸಲಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನೂ ಪಾಲನೆ ಮಾಡಿಲ್ಲ. ಬಾಳೆಹಣ್ಣು ಸಂಸ್ಕರಣಾ ಹಾಲ್ನಲ್ಲಿ ದಾಖಲೆಗಳಿಲ್ಲದ ಸಿದ್ದ ಉಡುಪುಗಳು ಪತ್ತೆಯಾಗಿವೆ. ಈ ಎಲ್ಲ ಕಾರಣಗಳಿಂದ 2025ರ ಜು.28ರಂದು ಒಪ್ಪಂದ ರದ್ದುಗೊಳಿಸಲಾಗಿತ್ತು. ಆದರೆ, ಈ ಆವರಣವನ್ನು ತೊರೆಯದೇ ಆಕ್ರಮಿಸಿಕೊಂಡಿದ್ದು, ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಬಲಪ್ರಯೋಗದ ಮೂಲಕ ವಶಕ್ಕೆ : ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಕ್ರಮಣದಾರರನ್ನು ಒಕ್ಕಲೆಬ್ಬಿಸುವ) ಕಾಯ್ದೆ, 1974ರ ಕಲಂ 5ರ ಉಪ-ಕಲಂ (1)ರ ಅಡಿಯಲ್ಲಿರುವ ಅಧಿಕಾರವನ್ನು ಚಲಾಯಿಸಿ, ಬಲಪ್ರಯೋಗದ ಮೂಲಕ ವಶಕ್ಕೆ ಪಡೆಯಲಾಗುವುದು ಎಂದು ಎ.10ರಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸ್ವಾಧೀನ ಅಧಿಕಾರಿ ಸಿ.ಎನ್. ಶಿವಪ್ರಕಾಶ್ ಆದೇಶ ಹೊರಡಿಸಿದ್ದಾರೆ. ‘ನಾನು ಈ ಮೂಲಕ ಮೆ. ಫಿಜಾ ಗ್ಲೋಬಲ್ ಆಗೋವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಅದರ ಎಲ್ಲ ಸಂಬಂಧಿತ ವ್ಯಕ್ತಿಗಳಿಗೆ ಈ ಆದೇಶ ಪ್ರಕಟವಾದ ನಲವತ್ತೈದು ದಿನಗಳೊಳಗೆ ಆ ಸಾರ್ವಜನಿಕ ಅವರಣವನ್ನು ಖಾಲಿ ಮಾಡಬೇಕು. ವಿಫಲವಾದರೆ ಬಲಪ್ರಯೋಗದ ಮೂಲಕ ಒಕ್ಕಲೆಬ್ಬಿಸಲಾಗುವುದು. ಅನಧಿಕೃತ ಆಕ್ರಮಣದ ಅವಧಿಯ ಹಾನಿ ಮತ್ತು ಬಾಕಿ ಶುಲ್ಕವನ್ನು ಭೂಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುವುದು’ ಎಂದು ಸ್ವಾಧೀನ ಅಧಿಕಾರಿ ಸಿ.ಎನ್. ಶಿವಪ್ರಕಾಶ್ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ದ್ವಿತೀಯ PUC ಪರೀಕ್ಷೆ-2 ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ, ಏಪ್ರಿಲ್ 18 ಕೊನೆಯ ದಿನ
ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮಹತ್ವದ ಹಾಗೂ ನಿರಾಳತೆ ತರುವಂತಹ ಸುದ್ದಿಯೊಂದನ್ನು ನೀಡಿದೆ. ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಅಂತಿಮ ಗಡುವನ್ನು ಇದೀಗ ಏಪ್ರಿಲ್ 18, 2026ರವರೆಗೆ ವಿಸ್ತರಿಸಿ ಮಂಡಳಿಯು
ಕರಾವಳಿಯಲ್ಲಿ ಏರುತ್ತಿರುವ ತಾಪಮಾನ: ಶಾಖದ ಹೊಡೆತದಿಂದ ಆರೋಗ್ಯ ಕಾಪಾಡಲು ಸಲಹೆ - ಸೂಚನೆ
ಉಡುಪಿ, ಎ.16: ಪ್ರಸ್ತುತ ಕರಾವಳಿ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ ಏರುತಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ತಾಪಮಾನ 33ರಿಂದ 34 ಡಿಗ್ರಿ ತಲುಪುತ್ತಿದೆ. ಆದರೆ ಗಾಳಿಯಲ್ಲಿರುವ ಅಧಿಕ ತೇವಾಂಶದಿಂದಾಗಿ ಉಷ್ಣತೆಯ ನಿಜವಾದ ಅನುಭವ 38 ಡಿಗ್ರಿಯಷ್ಟಿರುತ್ತದೆ ಎಂದು ಹವಾಮಾನ ಮಾಪಕಗಳು ಸೂಚಿಸುತ್ತಿವೆ. ಈಗಾಗಲೇ ಹವಾಮಾನ ಇಲಾಖೆ ಈ ಬಾರಿಯ ಬೇಸಿಗೆಯಲ್ಲಿ (ಮಾರ್ಚ್ನಿಂದ ಮೇ ಕೊನೆಯವರಿಗೆ ಅಥವಾ ಮಳೆಗಾಲ ಪ್ರಾರಂಭ ಗೊಳ್ಳುವ ಜೂನ್ ಮೊದಲ ವಾರದವರೆಗೆ) ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಸಾಧ್ಯತೆ ಇದ್ದು, ಕರಾವಳಿಯಲ್ಲೂ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸೂಚನೆ ನೀಡಿದೆ. ಹೀಗಾಗಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ವಿಶೇಷ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಬಿರು ಬಿಸಿಲಿನಿಂದ ಉಂಟಾಗುವ ಬಳಲಿಕೆ, ನಿರ್ಜಲೀಕರಣ ಹಾಗೂ ಶಾಖಾ ಘಾತ (ಹೀಟ್ ಸ್ಟ್ರೋಕ್)ಗಳನ್ನು ತಡೆಯಲು ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನತೆಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದೆ. ಅತೀ ಹೆಚ್ಚಿನ ತಾಪಮಾನದಿಂದಾಗುವ ಅನಾರೋಗ್ಯವನ್ನು ತಡೆಗಟ್ಟಲು ಸಾರ್ವಜನಿಕರು ಸಾಧ್ಯವಾದಷ್ಟು ಗರಿಷ್ಠ ತಾಪಮಾನದ ಅವಧಿಯಾದ ಅಪರಾಹ್ನ 12ರಿಂದ 3:00ಗಂಟೆಯವರೆಗೆ ಬಿಸಿಲಿಗೆ ಹೋಗುವುದನ್ನು ಕಡಿಮೆ ಮಾಡ ಬೇಕು. ಬಾಯಾರಿಕೆಯ ಅನುಭವವಾಗದಿದ್ದರೂ ಸಹ ಸಾಕಷ್ಟು ನೀರು ಕುಡಿಯುತ್ತಿರಬೇಕು. ಸಾಧ್ಯವಾದಷ್ಟು ಹಗುರ ವಾದ, ತಿಳಿಬಣ್ಣದ, ಸಡಿಲವಾದ ಹತ್ತಿಬಟ್ಟೆಗಳನ್ನು ಧರಿಸಬೇಕು.ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ/ಟೋಪಿ, ಬೂಟು ಅಥವಾ ಚಪ್ಪಲಿಗಳನ್ನು ಬಳಸಬೇಕು. ವಾತಾವರಣದ ಉಷ್ಣತೆ ಹೆಚ್ಚಿರುವಾಗ ಅಂದರೆ 11:00ಗಂಟೆಯಿಂದ 3:00ರವರೆಗೆ ಶ್ರಮದಾಯಕ ಚಟುವಟಿಕೆ ಗಳನ್ನು ಆದಷ್ಟು ತಪ್ಪಿಸಬೇಕು. ಇದೇ ಅವಧಿಯಲ್ಲಿ ಹೊರಾಂಗಣಗಳಲ್ಲಿ ನಡೆಯುವ ಸಭಾ, ಸಮಾರಂಭಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ/ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯಾಡುವ ವ್ಯವಸ್ಥೆ ಹಾಗೂ ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ಪ್ರಯಾಣಿಸುವಾಗ ನೀರನ್ನು ಜೊತೆಯಲ್ಲಿ ಕೊಂಡೊಯ್ಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯ ಗಳನ್ನು ಸೇವಿಸಬಾರದು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಜ್ಜಿಗೆ ಕುಡಿಯಿರಿ: ಸಾಧ್ಯವಿದ್ದಷ್ಟು ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓಆರ್ಎಸ್ನ್ನು ಬಳಸ ಬೇಕು. ಋತುಮಾನದಲ್ಲಿ ಲಭ್ಯವಿರುವ ಹಾಗೂ ಅಧಿಕ ನೀರಿನ ಅಂಶವನ್ನು ಹೊಂದಿರುವ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್ ಹಣ್ಣುಗಳನ್ನು, ತರಕಾರಿ, ಸೊಪ್ಪು, ಎಳನೀರು ಗಳನ್ನು ಹೆಚ್ಚಾಗಿ ಸೇವಿಸಬೇಕು. ಸಾಕುಪ್ರಾಣಿಗಳನ್ನು ಸಹ ನೆರಳಿನಲ್ಲಿ ಇರಿಸಿ, ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸುತ್ತಿರಬೇಕು. ಮನೆಯನ್ನು ತಂಪಾಗಿರಿಸಲು ಪರದೆ, ಶಟರ್ ಅಥವಾ ಸನ್ಶೇಡ್ಗಳನ್ನು ಬಳಸಬೇಕು. ಹೊರಗೆ ತೆರಳುವಾಗ ನೀರಿನ ಬಾಟೆಲ್, ಛತ್ರಿ, ಟೋಪಿ ಅಥವಾ ಕ್ಯಾಪ್, ಹೆಡ್ಕವರ್, ಹ್ಯಾಂಡ್ಟವೆಲ್, ಹ್ಯಾಂಡ್ ಫ್ಯಾನ್, ಎಲೆಕ್ಟ್ರೋಲೈಟ್, ಗ್ಲೂಕೋಸ್, ಓಆರ್ಎಸ್ನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್ ಅನ್ನು ಒಯ್ಯುವುದು ಉತ್ತಮ. ಅಲ್ಲದೇ ಆರೋಗ್ಯ ಇಲಾಖೆ ಆಗಾಗ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅತೀ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ಆರೋಗ್ಯದ ಮೇಲೆ ನಿರ್ಜಲೀಕರಣ, ಶಾಖಸೆಳೆತ, ಶಾಖದ ಬಳಲಿಕೆ ಮತ್ತು ಶಾಖದ ಆಘಾತ ದಂತಹ ವ್ಯತಿರಿಕ್ತ ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ತಾಪಮಾನದಿಂದ ಆಘಾತಕ್ಕೊಳಗಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆಯಾದ ಬಟ್ಟೆಯಿಂದ ಮೈ ಒರೆಸಬೇಕು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕುತ್ತಿರಬೇಕು. ನೀರು ಅಥವಾ ಪುನರ್ಜಲೀಕರಣ ಪಾನೀಯ ಗಳಾದ ಓಆರ್ಎಸ್, ನಿಂಬೆ ಪಾನಕ ನೀಡಬೇಕು. ವ್ಯಕ್ತಿಗೆ ತಂಪಾದ ಗಾಳಿಯ ವ್ಯವಸ್ಥೆ ಮಾಡಬೇಕು. ರೋಗಲಕ್ಷಣಗಳು ಉಲ್ಬಣಿಸಿದರೆ ವೈದ್ಯರನ್ನು ಸಂಪರ್ಕಿಸಬೇಕು. ಅತೀ ಹೆಚ್ಚು ತಾಪಮಾನದಿಂದ ಉದ್ಭವಿಸುವ ರೋಗ ಲಕ್ಷಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
West Bengal | ಅಧಿಕಾರಿಗಳ ವರ್ಗಾವಣೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ
ಇದೇ ಮೊದಲ ಬಾರಿಯಲ್ಲ ಎಂದ ಸರ್ವೋಚ್ಚ ನ್ಯಾಯಾಲಯ
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿ: ಚೆಕ್ ಪೋಸ್ಟ್ಗಳಲ್ಲಿ ರಸಗೊಬ್ಬರ ತಪಾಸಣೆ ಕಡ್ಡಾಯ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಈ ಬಾರಿ ರಸಗೊಬ್ಬರ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯಿದೆ.ಹೀಗಾಗಿ, ರಾಜ್ಯದ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ರಸಗೊಬ್ಬರ ತಪಾಸಣೆ ಕಡ್ಡಾಯಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರು ಮೇವಿನ ಸ್ಥಿತಿಗತಿ, ಹವಾಮಾನ ಪರಿಸ್ಥಿತಿ ಹಾಗೂ ಕೃಷಿ ಚಟುವಟಿಕೆಗಳ ಸಿದ್ಧತೆ ಕುರಿತ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಈ ಬಾರಿ ರಸಗೊಬ್ಬರ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ವ್ಯಾಪಾರಿಗಳು ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನು ಇರಿಸುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಸಮಯದಲ್ಲಿ ರಸಗೊಬ್ಬರ ಲಭ್ಯತೆಯನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಅದರಲ್ಲೂ ಯೂರಿಯಾ, ಡಿಎಪಿ ಸರಿಯಾಗಿ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ರಸಗೊಬ್ಬರ ಸಾಗಾಟ ಮಾಡುವುದನ್ನು ನಿಯಂತ್ರಿಸಬೇಕು. ಇದಕ್ಕಾಗಿ ಚೆಕ್ ಪೋ ಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಬೇಕು ಎಂದ ಅವರು, ಹಾವೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಮಾರಾಟವಾಗಿದ್ದು, ಇದಕ್ಕೆ ಕಾರಣವೇನು? ರಸಗೊಬ್ಬರ ಮಾರಾಟದ ಮೇಲೆ ನಿರಂತರ ನಿಗಾ ವಹಿಸಿ, ಅರ್ಹ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸಚಿವ ಸ್ಥಾನ ಕೇಳವುದು ತಪ್ಪಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು : ಶಾಸಕರು ಸಚಿವ ಸ್ಥಾನ ಕೇಳವುದು ತಪ್ಪಲ್ಲ. ಸಂಪುಟ ಪುನರ್ ರಚನೆ ಆಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿಂದೆ ಮಂತ್ರಿ ಆಗಿದ್ದಾಗ ಪುನರ್ ರಚನೆ ಆಗಿತ್ತು. ಅದೇ ರೀತಿ, ಈಗಲೂ ಬೇರೆಯವರಿಗೆ ಸಚಿವ ಸ್ಥಾನ ಸಿಗಬೇಕು. ಪಕ್ಷದ ಹಂತದಲ್ಲಿ ಅದು ಆಗುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ನುಡಿದರು. ಸಂಸತ್ನಲ್ಲಿ ಕ್ಷೇತ್ರ ಮರು ವಿಂಗಡಣೆ ವಿಧೇಯಕ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಗಳಲ್ಲಿ ಈಗ ಇರುವ ಲೋಕಸಭೆ ಕ್ಷೇತ್ರಗಳ ಪೈಕಿ ಶೇ.50ರಷ್ಟು ಕ್ಷೇತ್ರ ಹೆಚ್ಚಳ ಮಾಡಿದರೆ ಯಾವುದೇ ಅನ್ಯಾಯ ಆಗಲ್ಲ. ಆದರೆ, ಮಹಿಳಾ ಮೀಸಲಾತಿ ಕೊಡಲು ಕ್ಷೇತ್ರ ಹೆಚ್ಚು ಮಾಡುವ ಅವಶ್ಯಕತೆ ಇಲ್ಲ. ಎಷ್ಟೇ ಸ್ಥಾನ ಇದ್ದರು ಶೇ.33% ಮೀಸಲು ಕೊಡಬೇಕು ಅಷ್ಟೇ ಎಂದರು. ಪಂಚಾಯತಿ, ನಗರ ಪಾಲಿಕೆಯಲ್ಲಿ ಈಗಾಗಲೇ ಶೇ.50ರಷ್ಟು ಮಹಿಳಾ ಮೀಸಲಾತಿ ಇದೆ. ಕೇಂದ್ರ ಹಿಂದೆ ಮಸೂದೆ ಬಂದಾಗಲೇ ಮಹಿಳಾ ಮೀಸಲಾತಿ ಕೊಟ್ಟಿದ್ದರೆ ಇಷ್ಟು ಹೊತ್ತಿಗೆ ಮಹಿಳಾ ಮೀಸಲಾತಿ ಇರುತ್ತಿತ್ತು. ಈಗ ಕೇಂದ್ರ ಸರಕಾರದವರು ತಡೆ ಮಾಡಿದ್ದಾರೆ. ಈಗಲೂ ಈಗ ಇರುವ ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಮಾಡಲಿ ಎಂದೂ ಅವರು ಆಗ್ರಹಿಸಿದರು.
ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮಗಳು ಅನಿವಾರ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ
ಬೆಂಗಳೂರು : ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಝಮೀರ್ ಅಹ್ಮದ್ ಖಾನ್ ಅಥವಾ ನಾನೇ ಆಗಿರಲಿ. ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮಗಳು ಅನಿವಾರ್ಯ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಾವು ಕೆಲಸ ಮಾಡಿದ್ದು, ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ನಾನು ಪ್ರಚಾರ ಮಾಡಿಲ್ಲ. ನನಗೆ ವಹಿಸಿದ್ದ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇಲ್ಲಿ ಅಲ್ಪಸಂಖ್ಯಾತರ ನಾಯಕರ ನಡುವೆ ಗೊಂದಲ ಬಂದಿದೆ. ಅದನ್ನು ಬಗೆಹರಿಸಬೇಕೆ ಹೊರತು, ಬೇರೆ ರೀತಿಯ ವ್ಯಾಖ್ಯಾನ ಅಗತ್ಯವಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಆಪ್ತರನ್ನು ಗುರಿ ಮಾಡಲಾಗಿದೆ ಎಂಬುದು ಸಲ್ಲ. ಪಕ್ಷಕ್ಕೆ ತೊಂದರೆಯಾಗುವಂತಹ ಕೆಲಸ ಯಾರೇ ಮಾಡಿದರೂ ಕ್ರಮಗಳು ಅನಿವಾರ್ಯ. ಡಿ.ಕೆ.ಶಿವಕುಮಾರ್, ಜಗ್ಗಿ ವಾಸುದೇವ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಸದ್ಗುರು ಈ ಮೊದಲು ರಾಹುಲ್ಗಾಂಧಿ ಯಾರು ಎಂದು ಗೊತ್ತಿಲ್ಲ ಎಂದು ಹೇಳಿಕೆ ನೀಡಿರಬಹುದು. ಡಿಕೆಶಿ ಕಾರ್ಯಕ್ರಮಕ್ಕೆ ಹೋಗಿ ನಾನು ರಾಹುಲ್ಗಾಂಧಿ ಪಕ್ಷದವನು ಎಂದು ಹೇಳಿ ಬಂದಿದ್ದಾರೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ಅಮಿತ್ ಶಾ
ಮಾಲ್ಡಾ,ಎ.16: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾಲ್ಡಾ ಜಿಲ್ಲೆಯ ಗಜೋಲ್ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, “ಇದು ಭಾರತ; ಇಲ್ಲಿ ಬಾಬರಿ ಮಸೀದಿ ನಿರ್ಮಿಸಲು ಯಾರಿಗೂ ಅವಕಾಶ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಆಮ್ ಜನತಾ ಉನ್ನಾಯನ್ ಪಕ್ಷದ ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ಬಾಬರಿ ಮಾದರಿಯ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವ ಹಿನ್ನೆಲೆ ಶಾ ಈ ಹೇಳಿಕೆ ನೀಡಿದ್ದಾರೆ. ಕಬೀರ್ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ “ಏಜೆಂಟ್” ಎಂದು ಆರೋಪಿಸಿದ ಅಮಿತ್ ಶಾ, “ಅವರು ಬ್ಯಾನರ್ಜಿ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು. ಈ ಪ್ರಸ್ತಾಪದ ಬಳಿಕ ಕಳೆದ ಡಿಸೆಂಬರ್ ನಲ್ಲಿ ಕಬೀರ್ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. “ಕಬೀರ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿ ಸರಕಾರ ಬಂದರೆ ಇಂತಹ ಯಾವುದೇ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ” ಎಂದು ಅಮಿತ್ ಶಾ ಹೇಳಿದರು. ಮಾಣಿಕ್ ಚಕ್ ನಲ್ಲಿ ನಡೆದ ಮತ್ತೊಂದು ರ್ಯಾಲಿಯಲ್ಲಿ, “ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಕನಸುಗಳು ಭಗ್ನಗೊಳ್ಳಲಿವೆ” ಎಂದು ಟೀಕಿಸಿದರು. ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಹುಮಾಯೂನ್ ಕಬೀರ್ ಅವರು ಕಳೆದ ವರ್ಷ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ 33ನೇ ವಾರ್ಷಿಕೋತ್ಸವದ ಅಂಗವಾಗಿ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. 86 ಕೋಟಿ ರೂ. ವೆಚ್ಚದಲ್ಲಿ ಎಂಟು ಎಕರೆ ಖಾಸಗಿ ಭೂಮಿಯಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದೆ. ಈ ವಿಷಯ ರಾಜ್ಯದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸೋಮವಾರ ಬಿರ್ಭುಮ್ ಮತ್ತು ಪಶ್ಚಿಮ ಬರ್ಧಮಾನ್ ಜಿಲ್ಲೆಗಳಲ್ಲಿ ನಡೆದ ರ್ಯಾಲಿಗಳಲ್ಲಿಯೂ ಶಾ, “ಮಮತಾ ಬ್ಯಾನರ್ಜಿ ಮತ್ತು ಕಬೀರ್ ಇಬ್ಬರೂ ಒಂದೇ ರೀತಿಯವರು” ಎಂದು ಆರೋಪಿಸಿದ್ದರು. ರಾಣಿಗಂಜ್ ನಲ್ಲಿ ನಡೆದ ಸಭೆಯಲ್ಲಿ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರೆಂದು ಆರೋಪಿಸಿ, ಅದನ್ನು ಕಬೀರ್ ಪ್ರಸ್ತಾಪಿಸಿದ ಮಸೀದಿ ನಿರ್ಮಾಣ ಯೋಜನೆಗೆ ಸಂಬಂಧಿಸಿ ಟೀಕಿಸಿದರು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದವು ಎಂದು ಅಮಿತ್ ಶಾ ಹೇಳಿದರು. ಆದರೆ, 2019ರ ಜನಾದೇಶದ ಬಳಿಕ ಬಿಜೆಪಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದೆ ಎಂದು ಅವರು ಉಲ್ಲೇಖಿಸಿದರು. ಕಬೀರ್ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು 1,000 ಕೋಟಿ ರೂ. ಒಪ್ಪಂದದಲ್ಲಿ 200 ಕೋಟಿ ರೂಪಾಯಿ ಮುಂಗಡ ಪಡೆದಿದ್ದಾರೆ ಎಂಬ ಆರೋಪಗಳಿರುವ ವೈರಲ್ ವೀಡಿಯೊವನ್ನೂ ಅವರು ಉಲ್ಲೇಖಿಸಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಕಬೀರ್ ಅವರ ಸಿದ್ಧಾಂತಗಳು ಬಿಜೆಪಿಗೆ ಸಂಪೂರ್ಣ ವಿರುದ್ಧ. ಅವರ ಜೊತೆ ಮೈತ್ರಿ ಮಾಡುವುದಕ್ಕಿಂತ ಬಿಜೆಪಿ 20 ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳಲು ಸಿದ್ಧ” ಎಂದು ಹೇಳಿದರು.
ಯೋಗೇಶ್ ಗೌಡ ಕೊಲೆ ಪ್ರಕರಣ: ಹತ್ಯೆಗೆ ಕಾರಣವಾದ ಅಂಶಗಳೇನು? ವಿನಯ್ ಕುಲಕರ್ಣಿ ಪಾತ್ರ ಏನು
ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿಜಯ್ ಕುಲಕರ್ಣಿ ದೋಷಿ ಎಂದು ಸಾಬೀತಾಗಿದೆ. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪನ್ನು ನೀಡಿದೆ. ಒಟ್ಟು 17 ಆರೋಪಗಳನ್ನು ಅಪರಾಧಿಗಳೆಂದು ಘೋಷಿಸಿದೆ. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಾಗಿದೆ. ಹಾಗಾದರೆ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಹತ್ಯೆಗೆ ಕಾರಣವಾದ ಅಂಶಗಳೇನು? ಈ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಪಾತ್ರ ಏನು ಎಂಬ ವಿವರ ಇಲ್ಲಿದೆ.
Raichur | ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ಸದಸ್ಯರಿಂದ ವಿವಿಧ ಕಡೆ ಭೇಟಿ, ಪರಿಶೀಲನೆ
ರಾಯಚೂರು: ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ಸದಸ್ಯ ಜಟೋತು ಹುಸೇನ್ ಅವರು ಗುರುವಾರ ರಾಯಚೂರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊದಲಿಗೆ ನಗರದ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆಯ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು ಹಾಗೂ ಸರ್ಕಾರದ ಸೌಲಭ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯ ಒಳಹೊರಗಿನ ಸ್ವಚ್ಛತೆ ಕಾಪಾಡುವುದು ಮತ್ತು ಚಿಕಿತ್ಸೆ ಸಂಬಂಧಿತ ಮಾಹಿತಿಯನ್ನು ನಾಮಫಲಕದಲ್ಲಿ ಪ್ರದರ್ಶಿಸುವುದಕ್ಕೂ ನಿರ್ದೇಶನ ನೀಡಿದರು. ಅವರು ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ಅಹವಾಲುಗಳನ್ನು ಆಲಿಸಿದರು. ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಏರ್ ಕಂಡಿಷನಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ ಅವರು, ರೋಗಿಗಳ ಸಂಬಂಧಿಕರಿಗೆ ಕುಳಿತುಕೊಳ್ಳಲು ಹಾಗೂ ಊಟದ ವ್ಯವಸ್ಥೆ ಕಲ್ಪಿಸಲು ಆಯೋಗದಿಂದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಕುರಿತು 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ನಗರದ ವಡವಟ್ಟಿ ಹಾಗೂ ಅಸ್ಕಿಹಾಳ ಪ್ರದೇಶಗಳ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಆಹಾರ ಧಾನ್ಯಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇರಬಾರದು ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕವೇ ದಾಖಲಿಸಬೇಕು ಹಾಗೂ ರಿಜಿಸ್ಟರ್ ಮತ್ತು ಬಯೋಮೆಟ್ರಿಕ್ ಹಾಜರಾತಿಗಳಲ್ಲಿ ವ್ಯತ್ಯಾಸವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ರಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸೂರ್ಯಕಾಂತ್, ಡಾ.ಅರವಿಂದ ಸಾಗವಿ, ಡಾ.ಜಯಕೃಷ್ಣ, ಡಾ.ಸೋಮಶೇಖರ, ಡಾ. ಶರಣಬಸವ ಸೇರಿದಂತೆ ರಿಮ್ಸ್ ಆಸ್ಪತ್ರೆಯ ವಿವಿಧ ವಿಭಾಗದ ಮುಖ್ಯಸ್ಥರು, ವಿವಿಧ ವಸತಿ ನಿಲಯಗಳ ನಿಲಯ ಪಾಲಕರು ಇದ್ದರು.
Bengaluru | 11.86 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ಜಪ್ತಿ: 10 ಮಂದಿ ಆರೋಪಿಗಳ ಬಂಧನ
ಬೆಂಗಳೂರು : ಬೆಂಗಳೂರು ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಸುಮಾರು 11.86 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿ, ಇಬ್ಬರು ವಿದೇಶಿ ಮಹಿಳೆಯರು ಹಾಗೂ ಹೊರರಾಜ್ಯದ ಐವರು ಸೇರಿದಂತೆ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ. ನಗರದ ಯಲಹಂಕ, ಡಿ.ಜೆ.ಹಳ್ಳಿ, ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ 5.9 ಕೆ.ಜಿ. ಎಂಡಿಎಂಎ, 1.15 ಕೆ.ಜಿ. ಕೊಕೇನ್, 21 ಕೆ.ಜಿ. ಗಾಂಜಾ ಮತ್ತು 19 ಗ್ರಾಂ ಎಕ್ಸ್ ಟೆಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ, ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪೈಕಿ ವಿದೇಶಿ ಮಹಿಳೆಯರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿ ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಎ.17: ಅಡ್ಯಾರ್ ಕಣ್ಣೂರಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಮಂಗಳೂರು, ಎ.16: ಗಲ್ಫ್ ಬ್ರದರ್ಸ್ ಅಡ್ಯಾರ್ ಕಣ್ಣೂರು (ರಿ) ಇದರ ವತಿಯಿಂದ ಅಡ್ಯಾರ್ ಕಣ್ಣೂರು ಜಮಾತಿಗೊಳಪಟ್ಟ 13 ಕರಿಯದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ (5, 7, 10, 12ನೇ ತರಗತಿ) ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿ ಯರಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಓರ್ವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮ ಮಾ.17ರಂದು ಮಗ್ರಿಬ್ ನಮಾಝ್ ಬಳಿಕ ಬೋರುಗುಡ್ಡೆ ಬದ್ರಿಯಾ ಹಯಾತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ. ಅದಲ್ಲದೆ ಬ್ಯಾಚುಲರ್ಸ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಪದವಿ ಪಡೆದ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Raichur | ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟನೆ
ರಾಯಚೂರು : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಈಗಾಗಲೇ ಇಲಾಖೆ ಒಪ್ಪಿಕೊಂಡಿರುವಂತೆ ಎಲ್ಲಾ ನೌಕರರಿಗೆ 5,000 ರೂ. ವೇತನ ಹೆಚ್ಚಳ ಮಾಡಿ ತಕ್ಷಣ ಆದೇಶ ಹೊರಡಿಸಬೇಕು ಎಂದು ನೌಕರರು ಒತ್ತಾಯಿಸಿದರು. ಜೊತೆಗೆ ನಿವೃತ್ತ ಹಾಗೂ ನಿಧನ ಹೊಂದಿದ ನೌಕರರ ಕುಟುಂಬಗಳಿಗೆ ರೂ.6 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸೇವಾ ಹಿರಿತನದ ಆಧಾರದ ಮೇಲೆ ವೇತನ ನೀಡಬೇಕು ಹಾಗೂ ಸ್ವಚ್ಛವಾಹಿನಿ ನೌಕರರ ಸಭೆ ಕರೆದು ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಬೇಕು. 18–20 ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್ಗಳಾಗಿ ಕೆಲಸ ಮಾಡುತ್ತಿರುವ ನೌಕರರನ್ನು ನಿಯಮಿತಗೊಳಿಸಬೇಕು. ಜೊತೆಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಮನವಿ ಮಾಡಿದರು. ಇದಲ್ಲದೆ ಬಾಕಿ ವೇತನ ಹಾಗೂ ನಿವೃತ್ತಿ ಉಪದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ನೌಕರರು ಸರ್ಕಾರವನ್ನು ಒತ್ತಾಯಿಸಿದರು. ಪತ್ರಿಭಟನೆಯಲ್ಲಿ ಮಲ್ಲಿಕಾರ್ಜುನ, ಪಾಂಡುರಂಗ, ಆಂಜಿನೇಯ ಮಾಡಗಿರಿ, ಜಂಬಣ್ಣ, ವೀರೇಶ, ಸುರೇಶ ಮಾನ್ವಿ, ಡಿ. ಶರಣಬಸವ, ಗಿರಿಯಪ್ಪ ಪೂಜಾರಿ, ಅಂಬಣ್ಣ ನಾಯಕ, ಚಂದ್ರು, ಸುಭಾಸ್ ಸಾಬ್, ಶಿವಪ್ಪ ನಾಯಕ, ವೆಂಕಪ್ಪ, ಶರಣಬಸವ, ಷಣ್ಮಖಪ್ಪ, ಶಿವರಾಜಸ್ವಾಮಿ, ಈರಪ್ಪ, ಪಂಚಯ್ಯ, ಬಸವರಾಜಗೌಡ, ಸಗರಪ್ಪ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.
ವಿನೋದ್ ಕಾಂಬ್ಳಿಗೆ ಮತ್ತೆ ಆರೋಗ್ಯ ಸಮಸ್ಯೆ: ನೆರವಿಗೆ ನಿಂತ ಗೆಳೆಯರು; ಆಪ್ತಮಿತ್ರನನ್ನು ಬಿಟ್ಟುಕೊಡದ ತೆಂಡೂಲ್ಕರ್
Vinod Kambli Illness- ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಮೆದುಳಿತ ಪಾರ್ಶ್ವವಾಯು (Stroke) ವಿಗೆ ತುತ್ತಾಗುವ ಅಪಾಯದಲ್ಲಿದ್ದಾರೆ. ಇದರಿಂದಾಗಿ ಅವರು ಸ್ಮರಣಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮಧ್ಯಪಾನ ತ್ಯಜಿಸಿದ್ದರೂ ಧೂಮಪಾನ ಮುಂದುವರಿಸಿರುವುದು ಆರೋಗ್ಯವನ್ನು ಹದಗೆಡಿಸಿದೆ ಎಂದು ಆಪ್ತ ಮಾರ್ಕಸ್ ಕೌಟೊ ತಿಳಿಸಿದ್ದಾರೆ. ಇದೀಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಅವರ ಕೆಲವು ಆಪ್ತಮಿತ್ರ ಸೇರಿ ಕಾಂಬ್ಳಿ ಅವರ ನೆರವಿಗೆ ಧಾವಿಸಿದ್ದಾರೆ. ವಾಟ್ಸಾಪ್ ಗುಂಪನ್ನು ರಚಿಸಿ ಆರ್ಥಿಕ ನೆರವು ನೀಡುತ್ತಿದ್ದಾರೆ.
ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯುವುದರ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಗಳೂರು, ಎ.16: ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಾಟ ಮಾಡಲಾಗುತ್ತಿದ್ದು, ಇದರ ವಿರುದ್ಧ ಸುಮಾರು 17 ಬಾರಿ ದೂರು ನೀಡಿದರೂ ಕ್ರಮವಾಗಿಲ್ಲ. ಮುಂದಿನ ಶೈಕ್ಷಣಿಕ ಆರಂಭವಾಗುವುದರೊಳಗೆ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಖಾಸಗಿ (ವೈಟ್ ಬೋರ್ಡ್) ವಾಹನದ ಚಾಲಕರು, ಮಾಲಕರು ನಿಯಮ ಮೀರಿ ಮಕ್ಕಳನ್ನು ಖಾಸಗಿ ಕರೆದುಕೊಂಡು ಹೋಗುತ್ತಿದ್ದಾರೆ ಇದು ಅಪಾಯಕಾರಿಯಾಗಿದೆ. ತ್ರಾಸಿಯಲ್ಲಿ ಕೆಲ ವರ್ಷದ ಹಿಂದೆ ಖಾಸಗಿ ವಾಹನದಲ್ಲಿ ವಿದ್ಯಾರ್ಥಿಗಳನ್ನು ಸಾಗಾಟ ಮಾಡಿದ ಸಂದರ್ಭ ದುರ್ಘಟನೆಯಾಗಿತ್ತು. ಈ ಸಂದರ್ಭ ಮಕ್ಕಳಿಗೂ ಸಮರ್ಪಕವಾದ ಪರಿಹಾರವೂ ಸಿಕ್ಕಿಲ್ಲ. ಇಂತಹ ಘಟನೆಗಳು ನಮ್ಮ ಕಣ್ಣ ಮುಂದಿದ್ದರೂ ಮಂಗಳೂರು ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ವಾಹನ ಸಂಚಾರ ನಿಯಮಗಳನ್ನೇ ಉಲ್ಲಂಘಿಸಿ ಖಾಸಗಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದರು. ಟೂರಿಸ್ಟ್ ವಾಹನಗಳ ಮಾಲಕರು ದುಬಾರಿ ತೆರಿಗೆ, ಇನ್ಸೂರೆನ್ಸ್ ಸೇರಿದಂತೆ ಸುಮಾರು 23ಸಾವಿರ ರೂ. ಕಟ್ಟಿ ವಾಹನ ಓಡಿಸುತ್ತಾರೆ. ಸರಕಾರದ ನಿರ್ದೇಶನದಂತೆ ಪ್ಯಾನಿಕ್ ಬಟನ್ಗಾಗಿ 14ಸಾವಿರ ರೂ. ಕಟ್ಟಬೇಕಾಗಿದೆ. ಆದರೆ ಖಾಸಗಿ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಗಲಿ, ದುಬಾರಿ ಇನ್ಸೂರೆನ್ಸ್ ಆಗಲಿ, ಯಾವುದೇ ರೀತಿಯ ತೆರಿಗೆಗಳನ್ನು ಪಾವತಿಸದೆ ಬಾಡಿಗೆ ಆಧಾರದಲ್ಲಿ ಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ, ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಸ್ಥಾಪನಾಧ್ಯಕ್ಷ ಮೋಹನ್ ಕುಮಾರ್ ಅತ್ತಾವರ, ಕಾರ್ಯಾಧ್ಯಕ್ಷ ಕಿರಣ್ ಲೇಡಿಹಿಲ್, ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುರತ್ಕಲ್ ಉಪಸ್ಥಿತರಿದ್ದರು.
Kalaburagi | ಪೋಕ್ಸೋ ಪ್ರಕರಣ: ಆರೋಪಿಗೆ 1.25 ಲಕ್ಷ ರೂ. ದಂಡ, 20 ವರ್ಷ ಕಠಿಣ ಜೈಲು ಶಿಕ್ಷೆ
ಕಲಬುರಗಿ : ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿತನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,25,000 ರೂ. ದಂಡ ವಿಧಿಸಿ ಕಲಬುರಗಿಯ ವಿಶೇಷ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ನಿವಾಸಿ ನಾಗೇಶ ಅಲಿಯಾಸ್ ಸಂಜು (23) ಶಿಕ್ಷೆಗೆ ಒಳಗಾದ ಯುವಕ ಎಂದು ತಿಳಿದುಬಂದಿದೆ. ಪ್ರಕರಣದ ವಿವರಗಳ ಪ್ರಕಾರ, ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 16 ವರ್ಷದ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ಮೋಸಗೊಳಿಸಿದ್ದ ಆರೋಪಿತ ನಾಗೇಶ ಅಲಿಯಾಸ್ ಸಂಜು, ಬಳಿಕ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಕ್ರಮವಾಗಿ ಬಂಧನದಲ್ಲಿಟ್ಟು ಹಲವು ದಿನಗಳ ಕಾಲ ಅತ್ಯಾಚಾರ ಎಸಗಿದ್ದನು. 2024ರ ಸೆ.10ರಿಂದ ನ.6ರವರೆಗೆ ಸುಮಾರು 56 ದಿನಗಳ ಕಾಲ ಬಾಲಕಿಯನ್ನು ಬೆಳ್ಳಂದೂರು ಪ್ರದೇಶದ ಮನೆಯೊಂದರಲ್ಲಿ ಇರಿಸಿಕೊಂಡು, ಜಬರದಸ್ತಿಯಿಂದ ದೌರ್ಜನ್ಯ ಎಸಗಿದ ಬಗ್ಗೆ ತನಿಖೆಯಲ್ಲಿ ಬಹಿರಂಗವಾಗಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವಬೆದರಿಕೆ ಹಾಕಿದ್ದನ್ನೂ ತಿಳಿದುಬಂದಿದೆ. ಘಟನೆಯ ಬಳಿಕ ತನಿಖೆ ನಡೆಸಿದ ಯಡ್ರಾಮಿ ಪೊಲೀಸ್ ಠಾಣೆಯ ಸಿಪಿಐ ರಾಜೇಸಾಹೇಬ ನದಾಫ ಅವರ ನೇತೃತ್ವದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಆರೋಪಿತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಹಾಗೂ ಪೋಕ್ಸೋ ಕಾಯ್ದೆಯಡಿ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಮುಜೀರ್ ಉಲ್ಲಾ ಸಿ.ಜಿ. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ನಾಗೇಶ ಅಲಿಯಾಸ್ ಸಂಜು (23) ಎಂಬಾತನಿಗೆ ಪೋಕ್ಸೋ ಕಾಯ್ದೆಯ ಕಲಂ 6ರಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿದರು. ದಂಡ ಪಾವತಿಸಲು ವಿಫಲವಾದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದರು. ಇದೇ ಪ್ರಕರಣದಲ್ಲಿ ಬಿಎನ್ಎಸ್ ಕಲಂ 137(2) ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ 5 ತಿಂಗಳ ಸಾಧಾ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಇದಲ್ಲದೆ, ಪೀಡಿತ ಬಾಲಕಿಗೆ 3 ಲಕ್ಷ ರೂ. ಪರಿಹಾರವನ್ನು ಕಾನೂನು ಪ್ರಾಧಿಕಾರದಿಂದ ಒಂದು ತಿಂಗಳೊಳಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು.
ಕರ್ನಾಟಕದ 5 ಜಿಲ್ಲೆ ಹೊರತುಪಡಿಸಿ ಎಲ್ಲಾ ಕಡೆ ಮುಂಗಾರು ಕೊರತೆ! ಮಳೆಗಾಲದ ಬಗ್ಗೆ CM ಸಿದ್ದರಾಮಯ್ಯ ಮಹತ್ವದ ಮಾಹಿತಿ
ರಾಜ್ಯದಲ್ಲಿ ಈ ಬಾರಿ ಮುಂಗಾರು ಕೊರತೆಯಾಗಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕ 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಯಲ್ಲಿ ಮುಂಗಾರಿ ನಿರೀಕ್ಷೆ ಮಟ್ಟದಲ್ಲಿ ಇರುವುದಿಲ್ಲ ಎಂದು ಸಿಎಂ ಹೇಳಿದ್ದು, ಅಗತ್ಯ ಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು, ಎ.16: ಸುಮಾರು 400 ವರ್ಷಗಳ ಇತಿಹಾಸವಿರುವ ಎಮ್ಮೆಮಾಡು ಹಝ್ರತ್ ಸೂಫಿ ಶಹೀದ್ (ರ) ಮತ್ತು ಸೈಯ್ಯಿದ್ ಹಸನ್ ಸಖಾಫ್ ಅಲ್ ಹಳ್ರಮೀ (ರ) ಹಾಗೂ ಇತರ ಔಲಿಯಾಗಳ ಹೆಸರಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ಎ. 17ರಿಂದ 24ರ ತನಕ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಮ್ ಜಮಾಅತ್ (ಟಿಐಎಂಜೆ) ಕಮಿಟಿ ಅಧ್ಯಕ್ಷ ಕೆ.ಎಂ.ಹುಸೈನ್ ಸಖಾಫಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎ.17ರ ಜುಮಾ ನಮಾಝ್ ಬಳಿಕ ಧ್ವಜಾರೋಹಣ , ಮಖಾಂ ಝಿಯಾರತ್ ಬಳಿಕ ಉರೂಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯದುಲ್ ಉಲಮಾ ಸೈಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಲಿರುವರು ಎಂದು ಮಾಹಿತಿ ನೀಡಿದರು. ರಾತ್ರಿ 8:30ಕ್ಕೆ ಸ್ಥಳೀಯ ಖತೀಬ್ ಅಬ್ದುಲ್ ರಾಝಿಕ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುದರ್ರಿಸ್ ಎ.ಪಿ.ಹಂಸ ಸಖಾಫಿ ಮೇಲ್ಮುರಿ ಪ್ರಧಾನ ಪ್ರವಚನ ನೀಡಲಿದ್ದಾರೆ . ಕೋಯ ಕಾಪಾಡ್ ನೇತೃತ್ವದಲ್ಲಿ ರಾತೀಬ್ ನಡೆಯಲಿದೆ.18 ರಂದು ರಾತ್ರಿ 7:00 ಗಂಟೆಗೆ ದ್ವಿಕ್ರ್ ದುಆ ಮಜ್ಲಿಸ್ ಸೈಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ನೇತೃತ್ವದಲ್ಲಿ ಜರುಗಲಿದೆ. ಮುಸ್ತಫಾ ಸಖಾಫಿ ತೆನ್ನಲ ಧಾರ್ಮಿಕ ಪ್ರವಚನ ನೀಡಲಿರುವರು. 19 ರಂದು ರಾತ್ರಿ ಸೂಫಿ ಶಹೀದ್ ದರ್ಗಾದಲ್ಲಿ ಖತಮುಲ್ ಕುರ್ಆನ್ ಮಜ್ಲಿಸ್ ಸೈಯ್ಯಿದ್ ಶಿಹಾಬುದ್ದೀನ್ ಮುತ್ತನೂರ್ ತಂಙಳ್ ನೇತೃತ್ವದಲ್ಲಿ ನಡೆಯಲಿದ್ದು, ಬಳಿಕ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಪ್ರವಚನ ನೀಡಲಿರುವರು. ಎ. 20ರಂದು ಮಧ್ಯಾಹ್ನ ಪಾಣಕ್ಕಾಡ್ ಸಯ್ಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾರ್ವಜನಿಕ ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕರ್ ಮುಸ್ಲಿಯರ್ ಮುಖ್ಯ ಭಾಷಣ ಮಾಡುವರು. ಖುದ್ವತುಸ್ಸಾದಾತ್ ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್ ಹಿತ ನುಡಿಗಳನ್ನಾಡುವರು. ಡಾ. ಎ.ಪಿ. ಅಬ್ದುಲ್ ಹಕೀಂ ಅಝ್ಝರಿ ಕಾಂತಪುರಂ , ಕರ್ನಾಟಕ ವಿಧಾನ ಸಭೆ ಸ್ಪೀಕರ್ ಯು .ಟಿ. ಖಾದರ್ ವಕ್ಫ್ ಮತ್ತು ವಸತಿ ಸಚಿವ ಝಮೀರ್ ಅಹಮದ್, ಕೊಡಗು ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಎ ಎಸ್ ಪೊನ್ನಣ್ಣ, ಡಾ.ಮಂತರಗೌಡ, ಎನ್ ಎ ಹಾರಿಸ್ ಮಾಜಿ ಸಭಾಪತಿ ಕೆ ಜಿ ಬೋಪಯ್ಯ, ಕರ್ನಾಟಕ ವಖ್ಫ್ ಕೌನ್ಸೆಲ್ ಉಪಾಧ್ಯಕ್ಷ ಶಾಫಿ ಸಅದಿ ಬೆಂಗಳೂರು, ಶಾಂತಮಲ್ಲಿಕಾರ್ಜುನ ಸಾಮೀಜಿ ಅರಮೇರಿ ಮಠ, ಕರ್ನಾಟಕ ವಖ್ಫ್ ಮಂಡಳಿ ಅಧ್ಯಕ್ಷ ಹಾಫಿಝ್ ಸೈಯ್ಯಿದ್ ಮುಹಮ್ಮದ್ ಅಲಿ ಅಲ್ ಹುಸೈನಿ , ಮಾಜಿ ಶಾಸಕ ಇಬ್ರಾಹೀಂ ಮಾಸ್ಟರ್ ಸುಂಟಿಕೊಪ್ಪ , ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ . ಹನೀಫ್ ಹಾಜಿ ಸೇರಿದಂತೆ ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಲಿದ್ದಾರೆ. 4 ಗಂಟೆಗೆ ಲಕ್ಷಾಂತರ ಮಂದಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:30ಕ್ಕೆ ಅನ್ವರ್ ಮುಹಿಯದ್ದೀನ್ ಹುದವಿ ಆಲುವ ಧಾರ್ಮಿಕ ಪ್ರವಚನ ನೀಡಲಿರುವರು. ಎ.21 ರಂದು ರಾತ್ರಿ ನವಾಸ್ ಮನ್ನಾನಿ ಪನವೂರ್, ಎ.22 ರಂದು ಡಾ.ಮುಹಮ್ಮದ್ ಫಾರೂಕ್ ನಯೀಮಿ , 23ರಂದು ರಾತ್ರಿ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಧಾರ್ಮಿಕ ಪ್ರವಚನ ನೀಡಲಿರುವರು. ಎ.24 ರಂದು ಮಧ್ಯಾಹ್ನ 2 ಗಂಟೆಗೆ ಸೈಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉರೂಸ್ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಸಯ್ಯದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ನೆರವೇರಿಸುವರು. ಸೈಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಐದರೂಸಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ವಕೀಲರಾದ ಡಾ.ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮುಖ್ಯ ಪ್ರವಚನ ನೀಡುವರು. ಸೈಯ್ಯಿದ್ ತುರಾಬ್ ತಂಙಳ್ ಸಖಾಫಿ ಅಲ್ ಅಝರಿ ಕ್ಯಾಲಿಕಟ್ ನೇತೃತ್ವದಲ್ಲಿ ಸಮಾರೋಪ ದುಆ ಮಜ್ಲಿಸ್ ನಡೆಯಲಿದೆ ಎಂದು ಕೆ.ಎಂ.ಹುಸೈನ್ ಸಖಾಫಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಸದಸ್ಯರಾದ ಅಶ್ರಫ್ ಜೌಹರಿ ಎಮ್ಮೆಮಾಡು, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

28 C