ಸಂಪೂರ್ಣ ಸ್ವಚ್ಛತೆಗೆ ಕಾನೂನು ಜಾರಿ ಅಗತ್ಯ: ಶೀನ ಶೆಟ್ಟಿ
ಉಳ್ಳಾಲ: ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸುವ ಕಾನೂನು ಇದ್ದರೂ, ಅದರ ಸಮರ್ಪಕ ಜಾರಿಯ ಕೊರತೆಯಿಂದ ಸಂಪೂರ್ಣ ಸ್ವಚ್ಛತೆ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹೇಳಿದರು. ಮಾದರಿ ಗ್ರಾಮ ಅಭಿಯಾನ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಹಾಗೂ ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕೃತ ಜನಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಬುಧವಾರ ನಡೆದ ಸಮುದಾಯ ಆರೋಗ್ಯ ಅರಿವು ಅಭಿಯಾನ, ಕಸ ಮುಕ್ತ ಗ್ರಾಮ–ಕ್ಯಾನ್ಸರ್ ಮುಕ್ತ ಗ್ರಾಮ, ಸ್ವಚ್ಛ ಮನೆ ಸ್ವಯಂ ಘೋಷಣೆ ಹಾಗೂ ಸಂವಾದ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಡಿಪು ಬೆಟ್ಟದಲ್ಲಿ ಮುಂದಿನ ತಿಂಗಳು ಉತ್ಸವ ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಉತ್ಸವ ಪ್ಲಾಸ್ಟಿಕ್ ಮುಕ್ತ ಹಾಗೂ ಸಂಪೂರ್ಣ ಸ್ವಚ್ಛತೆ ಸಾಧಿಸುವ ನಿಟ್ಟಿನಲ್ಲಿ ನಡೆಯಲಿದ್ದು, ಇಂದು ನಡೆಯುವ ಸಂವಾದ ಪೂರಕವಾಗಬೇಕಿದೆ ಎಂದು ಹೇಳಿದರು. ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಕೇವಲ ಗಿಡ ನೆಡುವುದಷ್ಟೇ ಸಾಕಾಗುವುದಿಲ್ಲ; ನೆಟ್ಟ ಗಿಡವನ್ನು ಕನಿಷ್ಠ ಮೂರುವರೆ ವರ್ಷಗಳವರೆಗೆ ಪೋಷಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು. ಮಂಗಳೂರನ್ನು ಹಣ್ಣುಗಳ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಬೃಹತ್ ಯೋಜನೆಯನ್ನು ಕೈಗೊಳ್ಳಲಾಗಿದೆ. ಜೈಪುರವು ತನ್ನ ವಿಶೇಷತೆಯಿಂದ ಗುರುತಿಸಿಕೊಂಡಿರುವಂತೆ, ಮಂಗಳೂರೂ ಮುಂದಿನ ದಿನಗಳಲ್ಲಿ “ಹಣ್ಣುಗಳ ನಗರ” ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಗುರಿ ಹೊಂದಿದೆ ಎಂದು ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಶಿಧರ್ ಪೊಯ್ಯತ್ತಬೈಲ್, ರಾಜ್ಯ ಸದಸ್ಯ ಶ್ರೀನಿವಾಸ ನಾಯಕ್, ನಿಟ್ಟೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಡಿ. ಮೊದಲಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್ ಪುಂಡಿಕೈ ನಿರೂಪಿಸಿದರು.
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion
ಇರಾನ್ ಸೇನೆಯನ್ನ ಈಗ ಯಾರೂ ತಡೆದು ನಿಲ್ಲಿಸಲು ಆಗುತ್ತಿಲ್ಲ, ಅದ್ರಲ್ಲೂ ತಮ್ಮ ದೇಶದಲ್ಲಿನ ದಾಳಿಗೆ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಇರಾನ್ ದೊಡ್ಡ ಮಟ್ಟದ ದಾಳಿ ಸಂಘಟಿಸಿದೆ. ಇದರ ಪರಿಣಾಮ ಅಮೆರಿಕ ಮೇಲೆ ಆಗುತ್ತಿಲ್ಲ, ಬದಲಾಗಿ ಅರಬ್ ಹಾಗೂ ಇಸ್ರೇಲ್ ದೇಶಗಳು ಈಗ ಇರಾನ್ ದಾಳಿ ಹಿನ್ನೆಲೆ ನಲುಗಿ ಹೋಗುವಂತೆ ಆಗಿದೆ. ಹಾಗೇ ಇಸ್ರೇಲ್ ಕೂಡ ಇರಾನ್
ದೇವಸ್ಥಾನದ ಅನ್ನಪ್ರಸಾದಕ್ಕೂ 'ಗ್ಯಾಸ್ ಟ್ರಬಲ್ ' ; ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?
ಇರಾನ್ - ಇಸ್ರೇಲ್, ಅಮೆರಿಕಾ ನಡುವಿನ ಯುದ್ಧದ ಪರಿಣಾಮ ಭಾರತದ ಮೇಲಾಗಿದೆ. ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಹೋಟೆಲ್, ಪಿಜಿ, ದೇವಸ್ಥಾನಗಳ ಮೇಲೆ ತಟ್ಟಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ಯಾಸ್ ಪೂರೈಕೆ ಕೊರತೆಯಿಂದ ಈಗಾಗಲೇ ಬೆಳಗ್ಗಿನ ಉಪಾಹಾರದಲ್ಲಿ ಬದಲಾವಣೆ ಮಾಡಲಾಗಿದೆ.
ರಾಜ್ಯಸಭಾ ಚುನಾವಣೆ : ಯಡಿಯೂರಪ್ಪ ಶಿಫಾರಸು ಒಂದು, ಬಿಜೆಪಿ ವರಿಷ್ಠರ ಬಳಿ ಇದೆ ಆಪ್ಷನ್ ಎರಡು
Rajya Sabha Election from Karnataka : ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಬಿಜೆಪಿ ನಾಯಕರೊಬ್ಬರು ಆಯ್ಕೆಯಾಗುತ್ತಾರಾ ಅಥವಾ ಮೈತ್ರಿಯಿಂದ ಯಾರನ್ನಾದರೂ ಆಯ್ಕೆ ಮಾಡಲಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಮೈತ್ರಿ ರಾಜ್ಯದಲ್ಲಿ ಭದ್ರವಾಗಿರಬೇಕು ಎನ್ನುವ ಇಂಗಿತವನ್ನು ಬಿಜೆಪಿಯ ವರಿಷ್ಠರು ಮತ್ತು ದಳಪತಿಗಳು ಮಾತನಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಅಭ್ಯರ್ಥಿಯ ಆಯ್ಕೆ ಮಹತ್ವಕ್ಕೆ ಕಾರಣವಾಗಬಹುದು.
ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ LPG ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದು ಸದ್ಯ ಭಾರತದ ಪ್ರತಿ ಮನೆ ಹಾಗೂ ಹೋಟೆಲ್ ಉದ್ಯಮದ ಮೇಲೆ ಭಾರಿ ಮರಿಣಾಮದ ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ, ಸದ್ಯ ಗ್ರಾಹಕರು ಇಂಡಕ್ಷನ್ ಸ್ಟೌವ್ ಗಳ ಮೊರೆ ಹೋಗಿದ್ದು, ಇದರ ಖರೀದಿಗೆ ಮುಗಿಬಿದ್ದಿದ್ದಾರೆ.ಈ ಬೆನ್ನಲ್ಲೇ, ಇದೀಗ ಬೆಂಗಳೂರಿನ ಗೃಹೋಪಯೋಗಿ ಉಪಕರಣಗಳ ಅಂಗಡಿ ಹಾಗೂ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಇಂಡಕ್ಷನ್ ಸ್ಟೌವ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಒಂದೇ ದಿನದಲ್ಲಿ ನಗರದಲ್ಲಿ ಬುಹುತೇಕ ಮಳಿಗೆಗಳಲ್ಲಿ ಸ್ಟಾಕ್ ಖಾಲಿಯಾಗುವಂತಹ ಪರಿಸ್ಥಿತಿ ಬಂದಿದೆ. ಈ ಕುರಿತ ವರದಿ ಇಲ್ಲಿದೆ..
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ: ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ, ಜನರ ಪರವಾಗಿ ಸಂಸತ್ತಿನಲ್ಲಿ ಮಾತನಾಡಲು ಒತ್ತಾಯ
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ -ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ರಾಜ್ಯದ ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಕೊರತೆಯಿಂದ ಜನರಿಗೆ ಸಮಸ್ಯೆ ಉಂಟಾಗಿದ್ದು, ರಾಜ್ಯದ ಜನರ ಪರವಾಗಿ ಸಂಸತ್ತಿನಲ್ಲಿ ಮಾತನಾಡಲು ಡಿಕೆಶಿ ಸಂಸದರಿಗೆ ಒತ್ತಾಯ ಮಾಡಿದ್ದಾರೆ. ಅಡುಗೆ ಅನಿಲ ಕೊರತೆಯಿಂದ ಜನರು ಪರದಾಡುತ್ತಿರುವ ಬಗ್ಗೆಯೂ ಅವರು ತಮ್ಮ ಮಾತಿನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಕುರಿತಾಗಿ ಮತ್ತಷ್ಟು ವಿವರ ಇಲ್ಲಿದೆ.
ಅಮೆರಿಕದ ಸೊಕ್ಕನ್ನು ಮುರಿಯಿತೇ ಇರಾನ್?
ಈ ಸಂಘರ್ಷದಲ್ಲಿ ಅಮೆರಿಕನ್ನರು ಸಾಯುತ್ತಿದ್ದಾರೆ. ಯುಎಸ್ ಶತಕೋಟಿ ಡಾಲರ್ ಖರ್ಚು ಮಾಡುತ್ತಿದೆ ಮತ್ತು ಸೌದಿ ಅರೇಬಿಯ ಕೇವಲ ಹೇಳಿಕೆಗಳನ್ನು ನೀಡುತ್ತಿದೆ ಎಂಬುದು ಟ್ರಂಪ್ ಅವರ ಮಿತ್ರ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಆಕ್ಷೇಪ. ಅವರ ಟ್ವೀಟ್ ಅನ್ನು ನೋಡಿದರೆ ಅಮೆರಿಕ ಅಸಹಾಯಕವಾಗಿದೆ ಎಂದು ತೋರುತ್ತದೆ. ಅದು ಸೌದಿ ಅರೇಬಿಯವನ್ನು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದೆ. ಆದರೆ ಇರಾನ್ಗೆ ಹೆದರಿರುವ ಸೌದಿ ಅರೇಬಿಯ ಅಮೆರಿಕದೊಂದಿಗೆ ನಿಲ್ಲುತ್ತಿಲ್ಲ. ಈಗಿನ ಸ್ಥಿತಿ ನೋಡಿದರೆ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ದೃಢವಾಗಿ ನಿಂತಿರುವ ಹಾಗೆ ಕಾಣುತ್ತಿದೆ. ಗಲ್ಫ್ ದೇಶಗಳಲ್ಲಿ ಮಾತ್ರ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಟ್ರಂಪ್ ದಿನಕ್ಕೊಂದು ಹೇಳಿಕೆ ಕೊಡುತ್ತಿರುವಾಗ, ಇರಾನ್ ಸರಕಾರ ಮಾತ್ರ ಮಾತು ಬದಲಿಸದೆ ನಿಂತಿದೆ. ಅಗತ್ಯವಿರುವವರೆಗೂ ನಾವು ಹೋರಾಡುತ್ತೇವೆ. ಶರಣಾಗುವ ಪ್ರಶ್ನೆಯೇ ಇಲ್ಲ. ಮಾತುಕತೆ ನಡೆಸುವುದಿಲ್ಲ ಎಂದಿದೆ. ಯಾವುದೇ ದಾಳಿಗಳು ನಡೆಯದಂತೆ ಖಾತರಿ ನೀಡಬೇಕು ಎಂದು ಅದು ಒತ್ತಾಯಿಸುತ್ತಿದೆ. ಇರಾನ್ ಅಮೆರಿಕದ ಮಾರುಕಟ್ಟೆಗಳನ್ನು ಅಲುಗಾಡಿಸಿದೆ. ಪರಿಸ್ಥಿತಿ ಶೀಘ್ರದಲ್ಲೇ ಬದಲಾಗದಿದ್ದರೆ, ಎರಡರಿಂದ ಮೂರು ವಾರಗಳಲ್ಲಿ ಇಡೀ ಪ್ರಪಂಚ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇರಾನ್ ಏನು ಹೇಳುತ್ತಿದೆ ಮತ್ತು ಟ್ರಂಪ್ ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಯಾರು ಹೆದರಿದ್ದಾರೆ, ಯಾರು ತೆರೆಮರೆಯಲ್ಲಿ ಅಡಗಿಕೊಳ್ಳಲು ನೋಡುತ್ತ ಬರೀ ಹೇಳಿಕೆಗಳ ಮೂಲಕ ಅಬ್ಬರಿಸುತ್ತಿದ್ದಾರೆ? ಮತ್ತು ನಿಜವಾಗಿಯೂ ಯಾರು ಬಹಿರಂಗವಾಗಿ ಹೋರಾಡಲು ತಯಾರಿದ್ದಾರೆ? ಈ ನಡುವೆ ಟ್ರಂಪ್ ಇರಾನ್ ಜೊತೆ ಮಾತುಕತೆ ನಡೆಸಲು ಸಿದ್ಧರಿರುವ ಬಗ್ಗೆ ವರದಿಗಳಿವೆ. ಇದು ಟ್ರಂಪ್ ಅವರ ಮತ್ತೊಂದು ತಂತ್ರವೇ ಎಂಬ ಅನುಮಾನವೂ ಇದೆ. ಟ್ರಂಪ್ ನಿರಂತರವಾಗಿ ತಮ್ಮ ಹೇಳಿಕೆಗಳನ್ನು ಬದಲಿಸುತ್ತಿದ್ದಾರೆ. ಆದರೆ ಕಳೆದ 11 ದಿನಗಳಿಂದ ಇರಾನ್ನ ಹೇಳಿಕೆಗಳು ಬದಲಾಗಿಲ್ಲ. ನಾವು ಹಿಂದೆ ಸರಿಯುವುದಿಲ್ಲ ಮತ್ತು ಅಗತ್ಯವಿರುವಷ್ಟು ಸಮಯ ಹೋರಾಡುತ್ತೇವೆ ಎಂಬುದು ಇರಾನ್ನ ನಿಲುವಾಗಿದೆ. ಇರಾನ್ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು Iಖಉಅ ಹೇಳಿದೆ. ಇರಾನ್ ಒಂದು ಕ್ಲಸ್ಟರ್ ಕ್ಷಿಪಣಿಯ ಫೋಟೊವನ್ನು ಬಿಡುಗಡೆ ಮಾಡಿದೆ. ಅದು ಒಂದೇ ತೆಳುವಾದ ಕ್ಷಿಪಣಿಯಂತೆ ಕಾಣುತ್ತದೆ. ಆದರೆ ಅದು ಆಕಾಶ ತಲುಪುತ್ತಿದ್ದಂತೆ ಅದರಿಂದ ಇನ್ನೂ ಹಲವಾರು ಕ್ಷಿಪಣಿಗಳು ಹೊರಹೊಮ್ಮುತ್ತವೆ. ಇರಾನ್ ಈ ಬಾರಿ ಇಸ್ರೇಲ್ ಮೇಲೆ ಕಡಿಮೆ ಕ್ಷಿಪಣಿಗಳನ್ನು ಹಾರಿಸಿದೆಯಾದರೂ, ಅದು ಇಸ್ರೇಲ್ಗೆ ದೊಡ್ಡ ಹೊಡೆತ ಕೊಟ್ಟಿದೆ. ಆದರೆ ಇರಾನ್ನ ನಿಜವಾದ ಗುರಿ ಅಮೆರಿಕ ಎಂಬುದು ವಿಶ್ಲೇಷಕರ ಅಭಿಪ್ರಾಯ. ಅಮೆರಿಕದ ಮಿಲಿಟರಿ ನೆಲೆಗಳಿರುವ ಕಾರಣಕ್ಕೆ ಅದು ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಿದೆ. ಇರಾನ್ನ ತಂತ್ರ ಸ್ಪಷ್ಟವಾಗಿದೆ. ಅದು ಅಮೆರಿಕದ ವಿರುದ್ಧ ಹೋರಾಡುತ್ತಿದೆ. ಗಲ್ಫ್ ರಾಷ್ಟ್ರಗಳು ಯುಎಸ್ ರಾಯಭಾರಿಗಳನ್ನು ಹೊರಹಾಕಿದರೆ ಮಾತ್ರ ಹಾರ್ಮುಝ್ ಮೂಲಕ ತೈಲ ಸಾಗಿಸಲು ಅವಕಾಶ ನೀಡುವುದಾಗಿ ಅದು ಹೇಳಿದೆ. ‘‘ನಮಗೆ ಕದನ ವಿರಾಮ ಬೇಡ. ನಾವು 10 ವರ್ಷಗಳ ಕಾಲ ಹೋರಾಡುತ್ತೇವೆ’’ ಎಂಬುದು ಅದರ ದೃಢವಾದ ನಿಲುವಾಗಿದೆ. ಕದನ ವಿರಾಮ ಬಯಸುವುದಾದಲ್ಲಿ, ಎಂದಿಗೂ ದಾಳಿ ಮಾಡುವುದಿಲ್ಲ ಎಂಬ ಗ್ಯಾರಂಟಿ ನೀಡುವಂತೆ ಅದು ತಾಕೀತು ಮಾಡುತ್ತಿದೆ. ತೈಲ ಸಾಗಾಟಕ್ಕೆ ತಡೆಯಾಗುವ ಮೂಲಕ ಇರಾನ್ ಗಲ್ಫ್ ರಾಷ್ಟ್ರಗಳ ಪ್ರಮುಖ ವ್ಯವಹಾರವನ್ನು ನಿರ್ಧರಿಸುತ್ತಿದೆ ಮತ್ತು ತೈಲ ಮತ್ತು ಅನಿಲ ಉತ್ಪಾದನೆಯಿಂದ ಪೂರೈಕೆ ಸರಪಳಿಯವರೆಗೆ ಎಲ್ಲವನ್ನೂ ಅದು ಅಡ್ಡಿಪಡಿಸಿದೆ. ಗಲ್ಫ್ ಭಾಗದಲ್ಲಿನ ಅತಿದೊಡ್ಡ ಸಂಸ್ಕರಣಾಗಾರಗಳ ಮೇಲಿನ ಇರಾನ್ ದಾಳಿಯ ಬಗ್ಗೆ ವರದಿಗಳು ಬರುತ್ತಲೇ ಇವೆ. ತೈಲ ಮತ್ತು ಅನಿಲ ಪೂರೈಕೆ ಬಿಕ್ಕಟ್ಟನ್ನು ಉಲ್ಬಣಗೊಳಿಸಲು ಇರಾನ್ ನೋಡುತ್ತಿರುವಂತಿದೆ. ಇರಾನ್ನ ಡ್ರೋನ್ಗಳು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ತಲುಪಬಹುದು. ಗಲ್ಫ್ ರಾಷ್ಟ್ರಗಳಲ್ಲಿನ ಯುಎಸ್ ಮಿಲಿಟರಿ ನೆಲೆಗಳು ಯುಎಸ್ಗಾಗಲೀ ಅಥವಾ ಗಲ್ಫ್ ರಾಷ್ಟ್ರಗಳಿಗಾಗಲೀ ಪ್ರಯೋಜಕವಾಗಿ ಉಳಿದಿಲ್ಲ. ಅವುಗಳ ಉಪಸ್ಥಿತಿಯ ಹೊರತಾಗಿಯೂ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಸಾಧಿಸಿದೆ. ನವೆಂಬರ್ 2025ರಲ್ಲಿ ಅಮೆರಿಕ ಸೌದಿ ಅರೇಬಿಯದೊಂದಿಗೆ ಆರ್ಥಿಕ ಮತ್ತು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತು. ಎರಡೂ ದೇಶಗಳ ನಡುವಿನ ಒಪ್ಪಂದ ಮಿಲಿಟರಿ ಸಹಕಾರ ಹೆಚ್ಚಿಸುವುದಾಗಿತ್ತು. ಆದರೆ ಈ ಯುದ್ಧದಲ್ಲಿ ಸೌದಿ ಅರೇಬಿಯ ಅಮೆರಿಕಕ್ಕೆ ಸಹಾಯ ಮಾಡಲು ಸಾಧ್ಯವೇ? ಟ್ರಂಪ್ ಅವರ ಮಿತ್ರ ಸೆನೆಟರ್ ಲಿಂಡ್ಸೆ ಗ್ರಹಾಂ ಈ ಒಪ್ಪಂದದ ಅರ್ಥವನ್ನು ಪ್ರಶ್ನಿಸಿದ್ದಾರೆ. ರಿಯಾದ್ನಲ್ಲಿರುವ ಯುಎಸ್ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರ ಟ್ವೀಟ್ನಲ್ಲಿ ಹೇಳಲಾಗಿದೆ. ಸೌದಿ ಅರೇಬಿಯ ಇರಾನ್ ವಿರುದ್ಧ ತನ್ನ ಮಿಲಿಟರಿಯನ್ನು ಬಳಸಲು ಬಯಸುವುದಿಲ್ಲ ಎಂದು ಲಿಂಡ್ಸೆ ಹೇಳುತ್ತಾರೆ. ಎರಡೂ ದೇಶಗಳ ಹಿತಾಸಕ್ತಿಯನ್ನು ಪೂರೈಸುವ ಹೋರಾಟದಲ್ಲಿ ತನ್ನೊಂದಿಗೆ ನಿಲ್ಲದ ದೇಶದೊಂದಿಗೆ ಯುಎಸ್ ಏಕೆ ರಕ್ಷಣಾ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಈ ಸಂಘರ್ಷದಲ್ಲಿ ಅಮೆರಿಕನ್ನರು ಸಾಯುತ್ತಿದ್ದಾರೆ. ಯುಎಸ್ ಶತಕೋಟಿ ಡಾಲರ್ ಖರ್ಚು ಮಾಡುತ್ತಿದೆ ಮತ್ತು ಸೌದಿ ಅರೇಬಿಯ ಕೇವಲ ಹೇಳಿಕೆಗಳನ್ನು ನೀಡುತ್ತಿದೆ ಎಂಬುದು ಲಿಂಡ್ಸೆ ಅವರ ಆಕ್ಷೇಪ. ಅವರ ಟ್ವೀಟ್ ಅನ್ನು ನೋಡಿದರೆ ಅಮೆರಿಕ ಅಸಹಾಯಕವಾಗಿದೆ ಎಂದು ತೋರುತ್ತದೆ. ಅದು ಸೌದಿ ಅರೇಬಿಯವನ್ನು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದೆ. ಆದರೆ ಇರಾನ್ಗೆ ಹೆದರಿರುವ ಸೌದಿ ಅರೇಬಿಯ ಅಮೆರಿಕದೊಂದಿಗೆ ನಿಲ್ಲುತ್ತಿಲ್ಲ. ಅಮೆರಿಕವನ್ನು ಬೆಂಬಲಿಸಲು ಗಲ್ಫ್ ರಾಷ್ಟ್ರಗಳು ಒಗ್ಗೂಡುತ್ತಿಲ್ಲ. ಇರಾನ್ನ ಹೇಳಿಕೆಗಳಲ್ಲಿ ಯಾವುದೇ ಮಾತುಕತೆ ಅಥವಾ ಹಿಮ್ಮೆಟ್ಟುವಿಕೆಯ ಸುಳಿವು ಕೂಡ ಇಲ್ಲ. ಇರಾನ್ ಮೇಲೆ ದಾಳಿಯಾಗುತ್ತಿಲ್ಲ, ವಿನಾಶ ನಡೆಯುತ್ತಿಲ್ಲ ಎಂದಲ್ಲ. ಅದೆಲ್ಲವೂ ನಡೆಯುತ್ತಿದೆ. ಆದರೆ ಇರಾನ್ ಹಿಂದೆ ಸರಿಯುತ್ತಿಲ್ಲ. ಈ ಯುದ್ಧಕ್ಕೆ ಅದರ ಮಾನಸಿಕ ಸಿದ್ಧತೆ ದೃಢವಾಗಿರುವಂತೆ ಕಾಣುತ್ತಿದೆ. ಇರಾನ್ನ ವಿದೇಶಾಂಗ ಸಚಿವರು ‘‘ನಾವು 20 ವರ್ಷಗಳಿಂದ ಈ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದೇವೆ ಮತ್ತು 10 ವರ್ಷಗಳ ಕಾಲ ಹೋರಾಡುತ್ತೇವೆ’’ ಎಂದಿದ್ದಾರೆ. ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ನಂತರ ಇರಾನ್ ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡಿದೆ. ಮುಜ್ತಬಾ ಖಾಮಿನೈ ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲವಾದರೂ ಜನರು ಅವರನ್ನು ಬೆಂಬಲಿಸಿ ಬೀದಿಗಿಳಿದಿದ್ದಾರೆ. ಇರಾನ್ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಕ್ಷಿಪಣಿ ವಿರೋಧಿ ವ್ಯವಸ್ಥೆಗಳಿಗೆ ಗಮನಾರ್ಹ ಹಾನಿ ಉಂಟುಮಾಡಿದೆ. ಇರಾನ್ನ ಕ್ಷಿಪಣಿಗಳು ಖಾಲಿಯಾಗಲಿವೆ ಎಂದು ಪಾಶ್ಚಿಮಾತ್ಯ ಮಾಧ್ಯಮಗಳು ಹೇಳುತ್ತಿದ್ದವು. ಇರಾನ್ನ ಶೇ. 80 ವಾಯು ರಕ್ಷಣಾ ಪಡೆಗಳು ಮತ್ತು ಅದರ ಶೇ. 60 ಕ್ಷಿಪಣಿ ಉಡಾವಣಾ ಕೇಂದ್ರಗಳನ್ನು ನಾಶಪಡಿಸಿದ್ದಾಗಿ ಇಸ್ರೇಲ್ ಹೇಳಿಕೊಂಡಿತು. ಆ ಹೇಳಿಕೆಯ ಕೆಲವೇ ಗಂಟೆಗಳ ನಂತರ ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿತು. ಇರಾನ್ ಈಗಲೂ ಯುಎಸ್ ಮತ್ತು ಇಸ್ರೇಲ್ನ ಬೆವರಿಳಿಸುತ್ತಿದೆ. ಈಗ ಯುಎಸ್ ತನ್ನ ಶಸ್ತ್ರಾಸ್ತ್ರಗಳನ್ನು ದಕ್ಷಿಣ ಕೊರಿಯಾ ಮತ್ತು ಹಿಂದೂ ಮಹಾಸಾಗರದಿಂದ ಮಧ್ಯಪ್ರಾಚ್ಯದ ದೇಶಗಳಿಗೆ ಸಾಗಿಸಬೇಕಾಗಿದೆ. ಪೆಂಟಗಾನ್ ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿರುವ ತನ್ನ ಪೇಟ್ರಿಯಾಟ್ ಕ್ಷಿಪಣಿ ಸಂಗ್ರಹವನ್ನು ಬಳಸಲು ಉದ್ದೇಶಿಸಿರುವ ಬಗ್ಗೆ ವರದಿಯಿದೆ. ಆದರೆ ಇರಾನ್ ತನ್ನ ದಾಳಿಯನ್ನು ಹೆಚ್ಚಿಸಬಹುದು ಎಂಬ ಆತಂಕವೂ ಇದೆ. ಇರಾನ್ ಬಗೆಗಿನ ಭಯ ಗಮನಾರ್ಹವಾಗಿ ಕಂಡುಬರುತ್ತದೆ. ಇರಾನ್ ಅಂತಹ ಮಹತ್ವದ ಸವಾಲನ್ನು ಒಡ್ಡುತ್ತದೆ ಎಂದು ಅಮೆರಿಕಕ್ಕೆ ತಿಳಿದಿರಲಿಲ್ಲವೇ? ಯುದ್ಧದ ಸಮಯದಲ್ಲಿ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಯುದ್ಧದ ವಿರುದ್ಧವಾಗಿದ್ದರು ಎಂಬ ಸುದ್ದಿ ಹೊರಬಂದಿದೆ. ವ್ಯಾನ್ಸ್ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆಂದು ಟ್ರಂಪ್ ಈಗ ಒಪ್ಪಿಕೊಂಡಿದ್ದಾರೆ. ಈಗ ಇರಾನ್ ಮಾತುಕತೆಗೆ ಬರಲು ತಯಾರಿಲ್ಲ ಎಂಬ ಕಾರಣದಿಂದ ಟ್ರಂಪ್ ಇರಾನ್ ಮೇಲೆ 20 ಪಟ್ಟು ಹೆಚ್ಚು ದಾಳಿ ಮಾಡಲಾಗುವುದು ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣ ಉತ್ತರವನ್ನು ಇರಾನ್ನ ರಾಷ್ಟ್ರೀಯ ಭದ್ರತಾ ಸಮಿತಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಕೊಟ್ಟಿದ್ದಾರೆ. ‘‘ಇರಾನ್ನ ಜನರು ನಿಮ್ಮ ಸುಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ’’ ಎಂದಿದ್ದಾರೆ. ‘‘ನಿಮಗಿಂತ ದೊಡ್ಡ ಜನರು ಬಂದು ಹೋಗಿದ್ದಾರೆ. ಆದರೆ ಅವರು ಇರಾನ್ನ ಜನರನ್ನು ನಾಶಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಜಾಗರೂಕರಾಗಿರಿ. ನೀವೇ ನಾಶವಾಗಬಹುದು’’ ಎಂದು ಲಾರಿಜಾನಿ ಪ್ರತಿ ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್ನ ಚಾನೆಲ್ ಫೋರ್ನಲ್ಲಿ ಇರಾನ್ನ ಪ್ರಾಧ್ಯಾಪಕರೊಂದಿಗಿನ ಸಂದರ್ಶನವನ್ನು ರವೀಶ್ ಕುಮಾರ್ ತಮ್ಮ ವೀಡಿಯೊದಲ್ಲಿ ಪ್ರಸ್ತಾಪಿಸಿದ್ದಾರೆ. ಇಸ್ರೇಲ್ ಇರಾನ್ನ ದೌರ್ಬಲ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿತು ಮತ್ತು ಅಮೆರಿಕಕ್ಕೆ ತಪ್ಪು ಮಾಹಿತಿ ನೀಡಿತು. ಆದ್ದರಿಂದ ಅವರು ಇರಾನ್ ಮೇಲೆ ದಾಳಿ ಮಾಡಿದರು ಎಂದು ಪ್ರೊಫೆಸರ್ ಮುಹಮ್ಮದ್ ಮರಾಂಡಿ ಹೇಳಿದ್ದಾರೆ. ನೆತನ್ಯಾಹು ಟ್ರಂಪ್ಗೆ ನಿಖರವಾದ ಮಾಹಿತಿ ನೀಡಿದ್ದಾರೆಯೇ ಅಥವಾ ಅವರನ್ನು ಇದರಲ್ಲಿ ಸಿಲುಕಿಸಿದ್ದಾರೆಯೇ? ಟ್ರಂಪ್ ನೆತನ್ಯಾಹು ಬಗ್ಗೆ ಯಾವುದೇ ಪ್ರಮುಖ ಹೇಳಿಕೆಗಳನ್ನು ನೀಡಿಲ್ಲ ಮತ್ತು ಅವರ ಅನೇಕ ಹೇಳಿಕೆಗಳಲ್ಲಿ ನೆತನ್ಯಾಹು ಉಲ್ಲೇಖವೇ ಇಲ್ಲ. ಯುದ್ಧ ಮುಗಿದಿದೆ ಎಂದು ಟ್ರಂಪ್ ಸಿಬಿಎಸ್ ನ್ಯೂಸ್ಗೆ ತಿಳಿಸಿದ್ದಾರೆ. ಇರಾನ್ ಶರಣಾಗುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂತಲೂ ಅವರೇ ಹೇಳುತ್ತಾರೆ. ಇರಾನ್ ತನ್ನ ತೈಲ ಸೌಕರ್ಯದ ಮೇಲೆ ದಾಳಿ ಮಾಡಿದರೆ ಅದರ ಮೇಲೆ ಇನ್ನೂ ತೀವ್ರ ದಾಳಿ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ. ‘‘ಇರಾನ್ ಡ್ರೋನ್ಗಳನ್ನು ಎಲ್ಲಿ ತಯಾರಿಸುತ್ತದೆ ಎಂದು ನಮಗೆ ತಿಳಿದಿದೆ. ನಾವು ಅವರ ಮೇಲೆ ದಾಳಿ ಮಾಡುತ್ತೇವೆ’’ ಎನ್ನುತ್ತಾರೆ. ‘‘ನಾವು ಇರಾನ್ ಕ್ಷಿಪಣಿ ಸಾಮರ್ಥ್ಯವನ್ನು ಶೇ. 10ರಷ್ಟು ಕಡಿಮೆ ಮಾಡಿದ್ದೇವೆ. ಇರಾನ್ನಲ್ಲಿರುವ ಪ್ರತಿಯೊಂದು ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ’’ ಎನ್ನುತ್ತಾರೆ. ಒಂದು ಕಡೆ ಇರಾನ್ ಹೋರಾಡುವ ಬಗ್ಗೆ ಮಾತನಾಡುತ್ತಿದೆ ಮತ್ತು ಹೋರಾಡುತ್ತಿದೆ. ಇನ್ನೊಂದು ಕಡೆ ಅಮೆರಿಕ ಕೆಲವೊಮ್ಮೆ ಯುದ್ಧ ನಿಲ್ಲಿಸುವ ಬಗ್ಗೆ ಮಾತನಾಡುತ್ತದೆೆ. ‘‘ಯುದ್ಧ ಮುಗಿದಿದೆ ಎಂದು ಹೇಳುತ್ತೀರಿ. ನಿಮ್ಮ ರಕ್ಷಣಾ ಕಾರ್ಯದರ್ಶಿ ಅದು ಈಗ ಶುರುವಾಗಿದೆ ಎಂದು ಹೇಳುತ್ತಾರೆ. ಹಾಗಾಗಿ ಸತ್ಯ ಯಾವುದು?’’ ಎಂದು ಒಬ್ಬ ಪತ್ರಕರ್ತ ಅವರನ್ನು ಕೇಳಿದರು. ಅದಕ್ಕೆ ಟ್ರಂಪ್ ‘‘ಎರಡೂ ಸರಿ’’ ಎಂದರು. ಟ್ರಂಪ್ ಅವರ ಹೇಳಿಕೆಗಳು ಉದ್ದೇಶ ಅಥವಾ ತಂತ್ರವನ್ನು ತೋರಿಸುವುದಿಲ್ಲ. ಟ್ರಂಪ್ ಒಂದು ರೀತಿಯಲ್ಲಿ ಯುದ್ಧ ತಡೆಯಲು ಮತ್ತು ಗೆಲುವನ್ನು ಘೋಷಿಸಲು ಬಯಸುತ್ತಾರೆ. ಕಳೆದ ವರ್ಷದ ಜೂನ್ನಲ್ಲಿ ಇರಾನ್ ಮೇಲಿನ ದಾಳಿಯ ನಂತರ ಟ್ರಂಪ್ ಏಕಪಕ್ಷೀಯವಾಗಿ ಯುದ್ಧ ಕೊನೆಗೊಳಿಸುವುದಾಗಿ ಘೋಷಿಸಿದರು ಮತ್ತು ತಾವೇ ಗೆದ್ದಿದ್ದೇವೆ ಎಂದು ಹೇಳಿಕೊಂಡರು. ಈ ಬಾರಿಯೂ ಟ್ರಂಪ್ ಇದೇ ರೀತಿ ಮಾಡಲು ಯೋಜಿಸುತ್ತಿದ್ದಾರೆಯೇ ಅಥವಾ ಹಾಗೆ ಮಾಡದಂತೆ ಅವರನ್ನು ತಡೆಯಲಾಗುತ್ತಿದೆಯೇ? ಯುದ್ಧ ಮುಗಿದಿದೆ ಎಂಬ ಹೇಳಿಕೆಯನ್ನು ಅವರು ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ತರಲು ಕೊಟ್ಟಿರಬಹುದು. ಆದರೆ ಅಂತಹ ಹೇಳಿಕೆಗಳ ಮೂಲಕ ಅವರು ಎಷ್ಟು ಕಾಲ ಮಾರುಕಟ್ಟೆಯನ್ನು ದಾರಿತಪ್ಪಿಸಬಹುದು? ಅವರ ಹೇಳಿಕೆಯ ನಂತರ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 100 ಡಾಲರ್ಗಿಂತ ಕಡಿಮೆಯಾದರೂ ಅದು 90 ಡಾಲರ್ಗಿಂತಲೂ ಮೇಲೆಯೇ ಇದೆ. ಅಮೆರಿಕ ಯುದ್ಧವನ್ನು ನಿಲ್ಲಿಸಬಹುದೇ ಎಂಬುದು ಅತ್ಯಂತ ಮುಖ್ಯವಾದ ಪ್ರಶ್ನೆ. ಈ ಬಾರಿ ಅಮೆರಿಕ ಮೊದಲು ಹೊರಟುಹೋದರೆ ನೆತನ್ಯಾಹು ತೀವ್ರ ರಾಜಕೀಯ ಹೊಡೆತ ಅನುಭವಿಸುತ್ತಾರೆ. ಟ್ರಂಪ್ ಆಡಳಿತವನ್ನು ಗಮನಿಸುವವರು ಹೇಗಾದರೂ ಯುದ್ಧದಿಂದ ಹೊರಬರಲು ತಯಾರಾಗಬೇಕು ಎಂದು ಬಯಸುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ಬರೆದಿದೆ. ಟ್ರಂಪ್ ತನ್ನ ಮಿಲಿಟರಿ ಉದ್ದೇಶ ಸಾಧಿಸಿರುವುದಾಗಿ ಘೋಷಿಸಬೇಕು ಎಂದು ಅವರು ಬಯಸುತ್ತಾರೆ. ಏಕೆಂದರೆ ದೀರ್ಘಕಾಲದ ಯುದ್ಧ ಟ್ರಂಪ್ ಅವರ ಬೆಂಬಲ ನೆಲೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಭಯಪಡುತ್ತಾರೆ. ಕಳೆದ ಏಳು ದಿನಗಳಲ್ಲಿ ಅಮೆರಿಕ 6 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ನಷ್ಟ ಅನುಭವಿಸಿದೆ ಮತ್ತು 8 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಷಯವನ್ನು ಪೆಂಟಗಾನ್ ಅಧಿಕಾರಿಗಳು ಕಾಂಗ್ರೆಸ್ಗೆ ತಿಳಿಸಿದ್ದಾರೆ. ಈಗ ಅಮೆರಿಕ ಏಕಪಕ್ಷೀಯವಾಗಿ ಯುದ್ಧ ನಿಲ್ಲಿಸಿದರೆ ಅದು ಇರಾನ್ಗೆ ಪ್ರಮುಖ ಗೆಲುವು ಮತ್ತು ಇಸ್ರೇಲ್ಗೆ ದೊಡ್ಡ ಸೋಲು. ಇಸ್ರೇಲ್ನಲ್ಲಿ ತನ್ನ ಬೆಂಬಲ ನೆಲೆ ಬಲವಾಗಿ ಉಳಿಯಲು ಯುದ್ಧ ಮುಂದುವರಿಯಬೇಕೆಂದು ನೆತನ್ಯಾಹು ಬಯಸುತ್ತಾರೆ ಮತ್ತು ಟ್ರಂಪ್ ಅಮೆರಿಕದಲ್ಲಿ ತನ್ನ ಕ್ಷೀಣಿಸುತ್ತಿರುವ ಬೆಂಬಲ ನೆಲೆ ಉಳಿಸಲು ಯುದ್ಧ ಕೊನೆಗೊಳ್ಳಬೇಕೆಂದು ಬಯಸುತ್ತಾರೆ. ಚುನಾವಣೆ ಗೆಲ್ಲಲು ಇಬ್ಬರೂ ನಾಯಕರು ಪ್ರಪಂಚದೊಂದಿಗೆ ಆಟವಾಡುತ್ತಿದ್ದಾರೆ. ಅಮೆರಿಕ ಈ ಯುದ್ಧದಲ್ಲಿ ಬಹಳ ಬಳಲುತ್ತಿದೆ. ಇದರಿಂದ ಟ್ರಂಪ್ ಏನನ್ನೂ ಸಾಧಿಸಲಿಲ್ಲ. ಇರಾನ್ ಮೇಲೆ ದಾಳಿ ಮಾಡುವ ನಿರ್ಧಾರದಿಂದಾಗಿ ಅವರು ಮತ್ತೊಂದು ಸಂಕಷ್ಟದಲ್ಲಿ ಸಿಲುಕಿರುವ ಹಾಗೆ ಕಾಣುತ್ತಿದೆ. ಇಸ್ರೇಲ್ ಕೂಡ ಅಮೆರಿಕವನ್ನು ಯುದ್ಧಕ್ಕೆ ಸೆಳೆದು ಅದನ್ನು ಈ ಇಕ್ಕಟ್ಟಿನ ಬಲೆಗೆ ಬೀಳಿಸಿದೆ ಎಂಬುದು ಸ್ಪಷ್ಟ.
ಯುದ್ಧ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್
ಮಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಇದರ ನಡುವೆ ಸೌದಿ ಅರೇಬಿಯಾದ ರಾಸ್ ತನುರಾ ಬಂದರಿನಿಂದ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊತ್ತ ತೈಲ ಟ್ಯಾಂಕರ್ 'ಶೆನ್ಲಾಂಗ್' ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿದೆ. ಇರಾನ್ ನಿರ್ಬಂಧಿಸಿದ್ದ 'ಹಾರ್ಮುಜ್ ಜಲಸಂಧಿ'ಯನ್ನು ದಾಟಿ ಸುರಕ್ಷಿತವಾಗಿ ಮುಂಬೈ ತಲುಪಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡ ಬಳಿಕವೂ ಭಾರತಕ್ಕೆ
ಮಾಜಿ CJI ದೀಪಕ್ ಮಿಶ್ರಾ ಪ್ರಕರಣಗಳಿಗೆ 1 ಕೋಟಿ ರೂ. ಪಾವತಿ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನು ರಕ್ಷಿಸಲು ತಾನು ದಾಖಲಿಸಿದ್ದ ಪ್ರಕರಣಗಳ ಶುಲ್ಕವಾಗಿ ಒಂದು ಕೋಟಿ ರೂ. ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ವಕೀಲ ಅಶೋಕ್ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ, ಈ ಅರ್ಜಿ ತಪ್ಪು ಗ್ರಹಿಕೆಯದ್ದಾಗಿದೆ ಎಂದು ಅಭಿಪ್ರಾಯಪಟ್ಟಿತು. ಅವರ ಅರ್ಜಿಯನ್ನು ಹೈಕೋರ್ಟ್ ಸೂಕ್ತವಾಗಿಯೇ ವಜಾಗೊಳಿಸಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು. “ನೀವು ಯಾವುದೇ ವೆಚ್ಚಗಳನ್ನು ಭರಿಸಿಲ್ಲ. ನೀವು ವೈಯಕ್ತಿಕವಾಗಿ ಹಾಜರಾಗಿದ್ದೀರಿ,” ಎಂದು ಅಶೋಕ್ ಪಾಂಡೆಯನ್ನು ಉದ್ದೇಶಿಸಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ಅದಕ್ಕೆ ಪ್ರತಿಯಾಗಿ, “ನಾನು ಮೊಕದ್ದಮೆಯನ್ನು ನಡೆಸಲು ಸುಮಾರು 2 ಲಕ್ಷ ರೂ. ವೆಚ್ಚ ಮಾಡಿದ್ದೇನೆ. ಈ ಹಣವನ್ನು ನನ್ನ ಪುತ್ರಿಯಿಂದ ಪಡೆದಿದ್ದೆ,” ಎಂದು ಅಶೋಕ್ ಪಾಂಡೆ ಪ್ರತಿವಾದ ಮಂಡಿಸಿದರು. ಇದಲ್ಲದೆ, ಮಾನ್ಯ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಜಿ ನ್ಯಾಯಾಧೀಶರೊಂದಿಗೆ ಸಂಬಂಧವಿದೆ ಎಂದೂ ಅಶೋಕ್ ಪಾಂಡೆ ಹೇಳಿದರು. ಅದಕ್ಕೆ ಪ್ರತಿಯಾಗಿ, “ನ್ಯಾಯಾಧೀಶರೊಬ್ಬರ ವಿರುದ್ಧ ಎಲ್ಲ ಕೊಳಕು ಆರೋಪಗಳನ್ನು ಮಾಡಿದ ಬಳಿಕ, ‘ಮಾನ್ಯರೆ’ ಎಂಬ ಪದವನ್ನು ಏಕೆ ಬಳಸುತ್ತಿದ್ದೀರಿ?” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಕಿಡಿಕಾರಿದರು. ಮಾಜಿ ಮುಖ್ಯ ನ್ಯಾಯಾಧೀಶರು ವಾಗ್ದಂಡನೆಯನ್ನು ಎದುರಿಸುವಾಗ ಯಾರೂ ಅವರ ನೆರವಿಗೆ ಬರಲಿಲ್ಲ ಎಂದು ಅರ್ಜಿದಾರ ಅಶೋಕ್ ಪಾಂಡೆ ಹೇಳಿದರು. ಅದಕ್ಕೆ ಪ್ರತಿಯಾಗಿ, “ಯಾರೂ ಕೂಡ ಸಾಮಾಜಿಕ ಸೇವೆಗೆ ಹಣಕಾಸಿನ ಮರುಪಾವತಿಯನ್ನು ನಿರೀಕ್ಷಿಸಬಾರದು,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವ್ಯಂಗ್ಯವಾಗಿ ಹೇಳಿದರು. “ನೀವು ಸಂಸ್ಥೆಗೆ ಅದ್ಭುತ ಸಾಮಾಜಿಕ ಸೇವೆಯನ್ನು ನೀಡಿದ್ದೀರಿ. ಅದಕ್ಕೆ ಹೇಗೆ ನೀವು ಒಂದು ಕೋಟಿ ಅಥವಾ ಎರಡು ಕೋಟಿ ರೂ. ಎಂದು ಬೆಲೆ ಕಟ್ಟುತ್ತೀರಿ?” ಎಂದು ಅವರು ವಕೀಲ ಅಶೋಕ್ ಪಾಂಡೆಯನ್ನು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನು ಅವಮಾನ, ಕಿರುಕುಳ ಮತ್ತು ಪದಚ್ಯುತಿಯಿಂದ ತಪ್ಪಿಸಿ ಅವರನ್ನು ರಕ್ಷಿಸಲು ನಾನು ಸುಪ್ರೀಂ ಕೋರ್ಟ್ನಲ್ಲಿ ಕೆಲವು ಪ್ರಕರಣಗಳನ್ನು ದಾಖಲಿಸಿದ್ದೇನೆ. ಹೀಗಾಗಿ, ಆ ಪ್ರಕರಣಗಳ ವೆಚ್ಚವಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಒಂದು ಕೋಟಿ ರೂ. ಮರುಪಾವತಿಸುವಂತೆ ಸೂಚಿಸಬೇಕು ಎಂದು ವಕೀಲ ಅಶೋಕ್ ಪಾಂಡೆ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಯುದ್ಧದ ಪರಿಣಾಮ ಕೊಪ್ಪಳದಲಿ ಗ್ಯಾಸ್ ಕೊರತೆ
ವಾಣಿಜ್ಯ ಸಿಲಿಂಡರ್ಗೆ ಹೆಚ್ಚುವರಿ ಬೆಲೆ; ಹೋಟೆಲ್ ಉದ್ಯಮ ಮುಚ್ಚುವ ಭೀತಿ
ಇರಾನ್ ಸರ್ಕಾರ ಪತನದ ತಕ್ಷಣದ ಅಪಾಯವಿಲ್ಲ: ಅಮೆರಿಕ ಗುಪ್ತಚರ ವರದಿ
ಯುದ್ದದಿಂದ ಇರಾನ್ ಪತನಗೊಳ್ಳಲ್ಲ ಎಂದ ಇಸ್ರೇಲ್!
West Bengal | 22ನೇ ರಾಜ್ಯಪಾಲರಾಗಿ ಆರ್.ಎನ್. ರವಿ ಪ್ರಮಾಣವಚನ
ಕೋಲ್ಕತ್ತಾ: ಮಾಜಿ ಐಪಿಎಸ್ ಅಧಿಕಾರಿ ಆರ್.ಎನ್. ರವಿ ಅವರು ಪಶ್ಚಿಮ ಬಂಗಾಳದ 22ನೇ ರಾಜ್ಯಪಾಲರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಕೋಲ್ಕತ್ತಾದ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಕಲ್ಕತ್ತಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಅವರು ಅವರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ, ಹಿರಿಯ ಸಚಿವ ಹಾಗೂ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಹಾಗೂ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರ ಸಮ್ಮುಖದಲ್ಲಿ ಈ ಸಮಾರಂಭ ನಡೆಯಿತು. ಆದರೆ, ವಿರೋಧ ಪಕ್ಷದ ಬಿಜೆಪಿ ಪಾಳಯದ ಯಾವುದೇ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾರ್ಚ್ 5ರಂದು ಸಿ.ವಿ. ಆನಂದ ಬೋಸ್ ರಾಜೀನಾಮೆ ನೀಡಿದ ಬಳಿಕ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಆರ್.ಎನ್. ರವಿ ಅವರು ಈ ಹಿಂದೆ ನಾಗಾಲ್ಯಾಂಡ್, ಮೇಘಾಲಯ ಹಾಗೂ ತಮಿಳುನಾಡು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
Gold: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ನಿಧಿ ನೀಡಿ ಪ್ರಮಾಣಿಕತೆ ಮೆರೆದಿದ್ದ ಪ್ರಜ್ವಲ್ ರಿತ್ತಿ ಕುಟುಂಬವು ಹೊಸ ಬೇಡಿಕೆಯೊಂದನ್ನು ಇರಿಸಿದ್ದು, ಇದು ಸರ್ಕಾರ ಹಾಗೂ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಈ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ರಿತ್ತಿ ಕುಟುಂಬಕ್ಕೆ ಚಿನ್ನದ ನಿಧಿ ಸಿಕ್ಕಿತ್ತು. ನಿಧಿ
ವಾಣಿಜ್ಯ ಸಿಲಿಂಡರ್ ಪೂರೈಕೆ ಬಂದ್: ಕಂಗೆಟ್ಟ ಹೋಟೆಲ್ ಉದ್ಯಮ,ಸಿಬ್ಬಂದಿಗೆ ಕೆಲಸ ಕಳೆದುಕೊಳ್ಳುವ ಆತಂಕ
ಕೇಂದ್ರ ಸರಕಾರದ ಸೂಚನೆಯಂತೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಸ್ಥಗಿತದ ಪರಿಣಾಮ ಹೋಟೆಲ್ ಉದ್ಯಮ ಅಕ್ಷರಶಃ ಕಂಗಾಲಾಗಿದೆ. ಸದ್ಯ ಹೋಟೆಲ್ಗಳಲ್ಲಿಇರುವ ಸಿಲಿಂಡರ್ಗಳು ಒಂದೆರಡು ದಿನಕ್ಕೆ ಸಾಕಾಗಬಹುದು. ಮುಂದೆ ಹೇಗೆ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ ಹೋಟೆಲ್ನವರು. ಏತನ್ಮಧ್ಯೆ ಕಟ್ಟಿಗೆ ಬಳಸುವ ಬಗ್ಗೆ ಚರ್ಚೆಗಳು ನಡೆದಿವೆ.
Uttar Pradesh | ರಸ್ತೆ ಗುಂಡಿಯ ಪವಾಡ; ಪ್ರಜ್ಞೆಗೆ ಮರಳಿದ ಕೋಮಾದಲ್ಲಿದ್ದ ಮಹಿಳೆ!
ಲಕ್ನೋ: ಕೋಮಾದಲ್ಲಿದ್ದ 50 ವರ್ಷದ ಮಹಿಳೆಯೊಬ್ಬರನ್ನು ಮನೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ, ರಸ್ತೆ ಗುಂಡಿಗೆ ಬಿದ್ದು ಮುಂದೆ ಸಾಗುವಾಗ ಪ್ರಜ್ಞೆಗೆ ಮರಳಿರುವ ಘಟನೆ ಬರೇಲಿ–ಹರಿದ್ವಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 74ರಲ್ಲಿ ನಡೆದಿದೆ. ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟಿದ್ದ ವಿನೀತಾ ಶುಕ್ಲಾ ಎಂಬ ಮಹಿಳೆಯನ್ನು ಬದುಕುಳಿಯುವ ಯಾವುದೇ ಭರವಸೆ ಇಲ್ಲದೆ ಬರೇಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 24ರಂದು ಆಕೆಯ ದುಃಖತಪ್ತ ಪತಿ ಕುಲ್ದೀಪ್ ಕುಮಾರ್ ಶುಕ್ಲಾ ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಮನೆಗೆ ಮರಳಿ ಕರೆದೊಯ್ಯುತ್ತಿದ್ದರು. ಈ ವೇಳೆ ಆ್ಯಂಬುಲೆನ್ಸ್ ರಸ್ತೆ ಗುಂಡಿಯಿರುವ ಹೆದ್ದಾರಿಯಲ್ಲಿ ಸಿಲುಕಿಕೊಂಡಿತು. ಇದರಿಂದ ಆ್ಯಂಬುಲೆನ್ಸ್ ಗುಂಡಿಗೆ ಬಿದ್ದು ಎದ್ದಿತು. ಈ ದಿಢೀರ್ ಬೆಳವಣಿಗೆ ಊಹಿಸಲೂ ಸಾಧ್ಯವಿಲ್ಲದ ಚಮತ್ಕಾರವನ್ನೇ ಮಾಡಿತು. ಈ ಕುರಿತು ಪ್ರತಿಕ್ರಿಯಿಸಿರುವ ವಿನೀತಾ ಶುಕ್ಲಾರ ಪತಿ ಕುಲ್ದೀಪ್ ಕುಮಾರ್ ಶುಕ್ಲಾ, “ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುವಂತೆ ನಾನು ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದೆ. ಆಕೆ ಉಸಿರಾಡುತ್ತಿರಲಿಲ್ಲ. ಆದರೆ, ಇಳಿಮುಖವಾಗುತ್ತಿರುವ ಹೃದಯ ಬಡಿತ ಮಾತ್ರವಿತ್ತು” ಎಂದು ತಿಳಿಸಿದ್ದಾರೆ. “ಆ್ಯಂಬುಲೆನ್ಸ್ ಹಫೀಝ್ಗಂಜ್ ಬಳಿ ತಲುಪಿದಾಗ ಹೆದ್ದಾರಿಯ ದೊಡ್ಡ ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡಿತು. ಈ ವೇಳೆ ವಾಹನವು ತುಂಬಾ ಒರಟಾಗಿ ಚಲಿಸಿತು” ಎಂದು ಅವರು ಮಂಗಳವಾರ ಹೇಳಿದ್ದಾರೆ. “ಅದರ ಮುಂದಿನ ಕ್ಷಣವೇ ಪವಾಡ ನಡೆಯಿತು. ನನ್ನ ಪತ್ನಿ ಮತ್ತೆ ಸಹಜವಾಗಿ ಉಸಿರಾಡಲು ಪ್ರಾರಂಭಿಸಿದಳು. ನಾನು ತಕ್ಷಣವೇ ಎಲ್ಲಾ ಅಂತ್ಯಕ್ರಿಯೆ ಸಿದ್ಧತೆಗಳನ್ನು ತಡೆಹಿಡಿಯುವಂತೆ ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿದೆ” ಎಂದು ಅವರು ತಿಳಿಸಿದ್ದಾರೆ. ತಕ್ಷಣವೇ ಕುಲ್ದೀಪ್ ಶುಕ್ಲಾ ತಮ್ಮ ಪತ್ನಿಯನ್ನು ಪಿಲ್ಭಿಟ್ನಲ್ಲಿರುವ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತುರ್ತು ವೈದ್ಯಕೀಯ ನಿಗಾವಣೆಯಡಿ ಚಿಕಿತ್ಸೆ ನೀಡಿದ ನಂತರ ಸೋಮವಾರ ಆಕೆಯನ್ನು ಮನೆಗೆ ಕರೆತರಲಾಗಿದೆ. “ಸಾವನ್ನು ಗೆದ್ದಿರುವ ಆಕೆ ಈಗ ಎಚ್ಚರವಾಗಿರುವುದಷ್ಟೇ ಅಲ್ಲ, ನಮ್ಮೊಂದಿಗೆ ಮಾತನಾಡುತ್ತಲೂ ಇದ್ದಾಳೆ” ಎಂದು ಕುಲ್ದೀಪ್ ಕುಮಾರ್ ಶುಕ್ಲಾ ಸಂತಸ ಹಂಚಿಕೊಂಡಿದ್ದಾರೆ.
ಮಧ್ಯಪ್ರಾಚ್ಯ ಉದ್ವಿಗ್ನ | ತೈಲ ಟ್ಯಾಂಕರ್ ಗಳ ಮೇಲೆ ದಾಳಿ: ಇರಾಕ್ ನ ತೈಲ ಬಂದರು ಕಾರ್ಯಾಚರಣೆ ಸ್ಥಗಿತ
ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಬಹ್ರೇನ್, ಕುವೈತ್, ಯುಎಇ ಮತ್ತು ಸೌದಿ ಅರೇಬಿಯಾ ದೇಶಗಳು ಇರಾನಿನಿಂದ ಉಡಾಯಿಸಲಾದ ಹೆಚ್ಚಿನ ಕ್ಷಿಪಣಿಗಳು ಹಾಗೂ ಡ್ರೋನ್ ಗಳನ್ನು ತಡೆಹಿಡಿದಿವೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ ಎರಡು ವಿದೇಶಿ ತೈಲ ಟ್ಯಾಂಕರ್ ಗಳ ಮೇಲೆ ನಡೆದ ಮಾರಕ ದಾಳಿಯ ನಂತರ ಇರಾಕ್ ತನ್ನ ತೈಲ ಬಂದರುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು Aljazeera ವರದಿ ಮಾಡಿದೆ. ಕೊಲ್ಲಿಯಲ್ಲಿ ತೈಲ ಟ್ಯಾಂಕರ್ ಗಳ ಮೇಲೆ ನಡೆದ ದಾಳಿಗಳ ಕುರಿತು ಇರಾಕ್ ತೈಲ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಸಮುದಾಯವು ಕಡಲ ಮಾರ್ಗಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯ ಒತ್ತಾಯಿಸಿದೆ. “ಅಂತರರಾಷ್ಟ್ರೀಯ ಕಡಲ ಮಾರ್ಗಗಳು ಮತ್ತು ಇಂಧನ ಪೂರೈಕೆ ಮಾರ್ಗಗಳಲ್ಲಿ ಸಂಚರಿಸುವ ನೌಕೆಗಳ ಸುರಕ್ಷತೆ ಮತ್ತು ಭದ್ರತೆ ಪ್ರಾದೇಶಿಕ ಸಂಘರ್ಷಗಳು ಮತ್ತು ಪೈಪೋಟಿಯಿಂದ ಪ್ರತ್ಯೇಕವಾಗಿ ಉಳಿಯಬೇಕು,” ಎಂದು ಇರಾಕ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಸಚಿವಾಲಯ ತಿಳಿಸಿದೆ. ಇರಾಕ್ ಕರಾವಳಿಯ ಬಳಿ ರಾತ್ರೋರಾತ್ರಿ ಎರಡು ತೈಲ ಟ್ಯಾಂಕರ್ ಗಳಿಗೆ ಬೆಂಕಿ ಹಚ್ಚಿದ ಮಾರಕ ದಾಳಿಯ ನಂತರ ಈ ಹೇಳಿಕೆಗಳು ಹೊರಬಂದಿವೆ.
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion
ಭಾರತದಲ್ಲಿ ಗ್ಯಾಸ್ ಹಾಗೂ ತೈಲ ಸಮಸ್ಯೆ ಜೋರಾಗಿದ್ದು, ಸಾಮಾನ್ಯ ಜನರು ಈಗ ನರಳುತ್ತಿದ್ದಾರೆ. ಹೋಟೆಲ್ ಸೇರಿದಂತೆ ವಿವಿಧ ವಲಯಗಳು ಈಗ ಗ್ಯಾಸ್ ಸಮಸ್ಯೆ ಪರಿಣಾಮ ಒದ್ದಾಡಿ ಹೋಗಿದ್ದು, ಹೊರ್ಮುಜ್ ಜಲಸಂಧಿ ಬಂದ್ ಆಗಿದ್ದ ಕಾರಣಕ್ಕೆ ಒದ್ದಾಟ ಜೋರಾಗಿತ್ತು. ಭಾರತವೂ ಸೇರಿ ಜಗತ್ತಿನ ಹಲವು ದೇಶಗಳ ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಸೇನೆಯು ನಿರ್ಬಂಧ ಹೇರಿತ್ತು. ಹೊರ್ಮುಜ್ ಜಲಸಂಧಿ
5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ನೂತನ ಟ್ಯಾಂಕ್ ಸೋರಿಕೆ
1.80 ಕೋಟಿ ರೂ. ಕಾಮಗಾರಿ ಅಕ್ರಮ ಆರೋಪ: ತನಿಖೆಗೆ ಆಗ್ರಹ
ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಸ್ಥಗಿತ, ಪುನಾರಂಭ ಸಮರ್ಥಿಸಿಕೊಂಡ ಈಶ್ವರ ಖಂಡ್ರೆ
ಬೆಂಗಳೂರು : ಕಳೆದ ನವೆಂಬರ್ ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತುಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರು. ಸಫಾರಿ ದೇಶಾದ್ಯಂತ ಹಲವು ವರ್ಷಗಳಿಂದ ನಡೆಯುತ್ತಿದೆ. ಒಂದು ಸಮೀಕ್ಷೆಯನ್ನೂ ನಡೆಸದೆ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು, ಸಫಾರಿಯನ್ನು ಏಕಾಏಕಿ ನಿಲ್ಲಿಸಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಹಾನಿ ಆಗಿತ್ತು, ಒಬ್ಬರು ಶಾಶ್ವತವಾಗಿ ಅಂಗವಿಕಲರಾದರು, ಹುಲಿಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡುತ್ತಿದ್ದವು. ಜನರ ಅಮೂಲ್ಯ ಜೀವ ರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು. ನವೆಂಬರ್ ನಲ್ಲಿ ತಾವು ಚಾಮರಾಜನಗರದಲ್ಲಿ ಈ ಸಂಬಂಧ ಸಭೆ ನಡೆಸಿದಾಗ ಹಲವು ರೈತ ಸಂಘಟನೆಗಳು ಸಫಾರಿ ರಾತ್ರಿಯವರೆಗೂ ನಡೆಯುತ್ತಿದೆ. ಹೆಚ್ಚಿನ ವಾಹನಗಳ ಸಂಚಾರ ಇದೆ. ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ ಇದರಿಂದ ವಿಚಲಿತವಾಗಿ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಮನವಿ ನೀಡಿದ್ದರು. ಈ ಮಧ್ಯೆ ತಾವು ಬೀದರ್ ನಲ್ಲಿದ್ದಾಗ ಒಂದು ವಾರದ ಅಂತರದಲ್ಲಿ ಮತ್ತೊಂದು ಹುಲಿದಾಳಿ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಿಬ್ಬಂದಿ ಮತ್ತು ವಾಹನವನ್ನು ಕಾಡಿನಂಚಿನ ಗ್ರಾಮದಲ್ಲಿ ನಿಗಾ ಇಡಲು ಬಳಸಲಾಯಿತು ಎಂದು ತಿಳಿಸಿದರು. ಬಂಡೀಪುರದಲ್ಲಿ 314 ಕಿ.ಮೀ. ಗಡಿ ಇದೆ. ಅದರಲ್ಲಿ 100 ಕಿಮೀ ಗಡಿ ಹೆಚ್ಚಿನ ಸಂಘರ್ಷ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರ ಸ್ಥಾಪಿಸಿ, ಸಿಬ್ಬಂದಿ ನೇಮಿಸಿ ಅವರಿಂದ 14 ಗಂಟೆ ಗಸ್ತು ಹಾಕಲು ಸೂಚಿಸಲಾಯಿತು. ಸಮಗ್ರ ಕಮಾಂಡ್ ಸೆಂಟರ್ ಕಾರ್ಯಾರಂಭ ಮಾಡಿಸಲಾಯಿತು. ಮುಂದೆ ಅನಾಹುತ ನಡೆಯದಂತೆ ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡ ಬಳಿಕ ಸಫಾರಿ ಪುನಾರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮಿಗಿಲಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಯನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಿ, ಆ ತಜ್ಞರ ಸಮಿತಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಸಫಾರಿ ಪುನಾರಂಭ ಮಾಡಲಾಗಿದೆ ಎಂದು ವಿವರಿಸಿದರು. 1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು. 3 ವರ್ಷಗಳ ಹಿಂದೆ ಗಣತಿ ನಡೆದಾಗ ಅಲ್ಲಿ 150 ಹುಲಿ ಇದ್ದವು. ಈಗ ಹುಲಿಗಳ ಸಂಖ್ಯೆ 175ಕ್ಕೇ ಏರಿದೆ. ಕಾಡಿನ ಧಾರಣಾ ಸಾಮರ್ಥ್ಯ ತಿಳಿಯಲು ತಜ್ಞರ ಸಮಿತಿಯಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಕಾಡು ಹೆಚ್ಚುತ್ತಿಲ್ಲ. ಬದಲಾಗಿ ಕ್ಷೀಣಿಸುತ್ತಿದೆ. ಸಫಾರಿ ಪುನಾರಂಭ ಮಾಡಿದ ಬಳಿಕ ಪ್ರತಿಷ್ಠಾನಕ್ಕೆ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದಲ್ಲಿ ಜನಸಂಪರ್ಕ ಸಭೆ ಮಾಡಲು, ಶಿಕ್ಷಣ, ಮೂಲಸೌಕರ್ಯ ಹೆಚ್ಚಳಕ್ಕೆ, ಉದ್ಯೋಗ ಸೃಷ್ಟಿಗೆ ಬಳಸಲು ಸೂಚಿಸಲಾಗಿದೆ ಎಂದು ಸದನಕ್ಕೆ ಈಶ್ವರ ಖಂಡ್ರೆ ತಿಳಿಸಿದರು.
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು
ನವದೆಹಲಿ; ಪರಿಸರ ಸ್ನೇಹಿ ಸಾರಿಗೆ ಉತ್ತೇಜನ, ಇ-ಚಲನಶೀಲತೆ ಹೆಚ್ಚಿಸುವ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಜಾರಿಗೆ ತಂದ 'ಪಿಎಂ ಇ-ಬಸ್ ಯೋಜನೆ' (PM-eBus Scheme) ಭಾಗವಾಗಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ನೂರಾರು ಎಲೆಕ್ಟ್ರಿಕಲ್ ಬಸ್ಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯಗಳಿಗೆ ಎಷ್ಟು ಇ-ಬಸ್ಗಳು ಸಿಗಲಿವೆ? ಪೂರ್ಣ ಮಾಹಿತಿ ಇಲ್ಲಿದೆ. 'ಪಿಎಂ
ದಿಲ್ಲಿ | ಮಟಿಯಾಲ ಕೊಳಗೇರಿಯಲ್ಲಿ ಅಗ್ನಿ ಅನಾಹುತ: ವಿಡಿಯೊ ವೈರಲ್
ಹೊಸದಿಲ್ಲಿ: ಬುಧವಾರ ರಾತ್ರಿ ದಿಲ್ಲಿಯ ಮಟಿಯಾಲ ಗ್ರಾಮದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಈ ಘಟನೆಯಲ್ಲಿ ಕೊಳಗೇರಿಗಳ ಗುಂಪು ಹಾಗೂ ಮೀನು ಮಾರುಕಟ್ಟೆ ಬಳಿ ಇರುವ ಗುಜರಿ ವಸ್ತುಗಳ ಗೋದಾಮುಗಳು ಹಾನಿಗೀಡಾಗಿವೆ. ಆದರೆ, ತಕ್ಷಣಕ್ಕೆ ಈ ಘಟನೆಯಲ್ಲಿ ಯಾವುದೇ ಸಾವುನೋವು ಅಥವಾ ಗಾಯಾಳುಗಳ ವರದಿ ಬಂದಿಲ್ಲ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. #WATCH | Visuals of the aftermath of a massive fire at a fish market in Matiala village in the Uttam Nagar Area of West Delhi, that broke out late last night. As per Delhi Fire Services, Approximately 300 to 400 slums were destroyed. The cause of the fire is still unclear. The… pic.twitter.com/EFbRiWmdb7 — ANI (@ANI) March 12, 2026 ಬುಧವಾರ ರಾತ್ರಿ ಸುಮಾರು 11.54ಕ್ಕೆ ಕೊಳಗೇರಿಗಳ ಗುಂಪಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿಯನ್ನು ಸ್ವೀಕರಿಸಲಾಯಿತು. ಅದರ ಬೆನ್ನಿಗೇ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ವಾಹನಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಯಿತು ಎಂದು ದಿಲ್ಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೈರುತ್ಯ ದಿಲ್ಲಿಯ ಮಟಿಯಾಲ ಪ್ರದೇಶದಲ್ಲಿರುವ ಮೀನು ಮಾರುಕಟ್ಟೆ ಬಳಿಯ ಕೊಳಗೇರಿಗಳ ಗುಂಪಿನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿಂದ, ಕನಿಷ್ಠ 80 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ. ಈ ಅಗ್ನಿ ಅನಾಹುತದಲ್ಲಿ ಪ್ಲಾಸ್ಟಿಕ್ ಸೇರಿದಂತೆ ಗುಜರಿ ವಸ್ತುಗಳೂ ಸುಟ್ಟು ಹೋಗಿವೆ ಎಂದು ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಗುಡಿಸಲುಗಳನ್ನು ತೀವ್ರ ದಹನಕಾರಿ ವಸ್ತುಗಳಾದ ಬಿದಿರು, ಟಾರ್ಪಾಲಿನ್ ಹಾಗೂ ಪ್ಲಾಸ್ಟಿಕ್ ತಗಡುಗಳಿಂದ ನಿರ್ಮಿಸಲಾಗಿತ್ತು. ಅದೃಷ್ಟವಶಾತ್ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ” ಎಂದು ಅವರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದರಿಂದ ನೂರಾರು ಕೊಳಗೇರಿಗಳು ನಾಶವಾಗಿವೆ ಎಂದು ವರದಿಯಾಗಿತ್ತು. ಅಂದಾಜು 300ರಿಂದ 400 ಕೊಳಗೇರಿಗಳು ಈ ಅಗ್ನಿ ಅನಾಹುತದಲ್ಲಿ ನಾಶವಾಗಿವೆ ಎಂದು ತಿಳಿಸಲಾಗಿದೆ. ಆದರೆ, ಈ ಅಗ್ನಿ ಅನಾಹುತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈವರೆಗೆ ಯಾವುದೇ ಸಾವುನೋವಿನ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸುಮಾರು 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು ಹಾಗೂ ಬೆಳಗ್ಗೆ 3.45ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ
ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರ ವಿಶೇಷ ಬರಹ ಇಲ್ಲಿದೆ. ನಾನು ವಿವಾಹಿತ, ಹಾಗಾಗಿ ಬ್ರಹ್ಮಚಾರಿಯಲ್ಲ. ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ. ನಾನು ಹೀಗೆಂದು ಡೈಲಾಗ್ ಹೊಡೆದರೆ ಅಲ್ಲಿದ್ದ ಸ್ವಾಮೀಜಿಗಳೂ ಸೇರಿದಂತೆ ಎಲ್ಲರೂ ಗೊಳ್ಳೆಂದು ನಕ್ಕರು. ಯಾಕೆಂದರೆ ಅದು
ಮತ್ತೆ ಕುಸಿಯಿತು ಚಿನ್ನ; ಬೆಳ್ಳಿಗೂ ಬೆಲೆ ಕಡಿಮೆ…
ಹೇಗಿದೆ ಮಂಗಳೂರಿನ ಚಿನಿವಾರ ಪೇಟೆ?
ನಿತೀಶ್ ಬಳಿಕ ಜೆಡಿಯು ಭವಿಷ್ಯವೇನು?
ಸಂಸತ್ನ ಮೇಲ್ಮನೆ ಇರುವುದು ಹಿರಿಯರಿಗೆ. ಒಂದು ಕಾಲಕ್ಕದು ‘ಅನುಭವ ಮಂಟಪ’. ಈಗ ‘ರಾಜಕೀಯ ಪುನರ್ವಸತಿ ಕೇಂದ್ರ’. ಬಿಹಾರ ಮುಖ್ಯಮಂತ್ರಿಯನ್ನೂ ಅಲ್ಲಿಗೆ ಕಳಿಸಲಾಗುತ್ತಿದೆ. ಅವರಿಗೆ ಎಲ್ಲ ದಾರಿಗಳೂ ಬಂದ್ ಆಗಿರುವುದರಿಂದ ಮೋದಿ, ಶಾ ಹೇಳಿದಂತೆ ಕೇಳಬೇಕು. ಅವರದ್ದು ಅಸಹಾಯಕ ಸ್ಥಿತಿ. ಚುನಾವಣೆಗೆ ಮುನ್ನ ‘ಮಹಾಘಟಬಂಧನ್’ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಬಿಜೆಪಿ ನಾಯಕರಿಗೆ ನಿತೀಶ್ ಕುಮಾರ್ ಸುಲಭದ ತುತ್ತಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಕ್ರಿಯ ರಾಜಕಾರಣ ಇಷ್ಟು ಬೇಗ ಮುಗಿಯಲಿದೆ ಎಂದು ಯಾರೂ ಎಣಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೆಡಿಯು ನಾಯಕನನ್ನು ಸುಲಭವಾಗಿ ಪಕ್ಕಕ್ಕೆ ಸರಿಸಬಹುದೆಂಬ ನಿರೀಕ್ಷೆ ಇರಲಿಲ್ಲ. ಬಹುಶಃ ನಿತೀಶ್ಗೇ ಅಂದಾಜು ಸಿಕ್ಕಿರಲಿಕ್ಕಿಲ್ಲ. ವಿಧಾನಸಭೆ ಚುನಾವಣೆಯಲ್ಲೇ ಮಿತ್ರನನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಫಲಿತಾಂಶ ಬಂದ ತಕ್ಷಣ ಗೇಟ್ಪಾಸ್ ಕೊಟ್ಟರೆ ಜನ ಸಿಟ್ಟಾಗಬಹುದೆಂದು ಸುಮ್ಮನಿದ್ದಿರಬಹುದು. ಇದೀಗ ‘ಅಖಾಡ’ ಸಜ್ಜುಗೊಳಿಸಿ, ರಾಜ್ಯ ರಾಜಕಾರಣಕ್ಕೆ ಗುಡ್ ಬೈ ಹೇಳಿಸಲಾಗುತ್ತಿದೆ. ಸಂಸತ್ನ ಮೇಲ್ಮನೆ ಇರುವುದು ಹಿರಿಯರಿಗೆ. ಒಂದು ಕಾಲಕ್ಕದು ‘ಅನುಭವ ಮಂಟಪ’. ಈಗ ‘ರಾಜಕೀಯ ಪುನರ್ವಸತಿ ಕೇಂದ್ರ’. ಬಿಹಾರ ಮುಖ್ಯಮಂತ್ರಿಯನ್ನೂ ಅಲ್ಲಿಗೆ ಕಳಿಸಲಾಗುತ್ತಿದೆ. ಅವರಿಗೆ ಎಲ್ಲ ದಾರಿಗಳೂ ಬಂದ್ ಆಗಿರುವುದರಿಂದ ಮೋದಿ, ಶಾ ಹೇಳಿದಂತೆ ಕೇಳಬೇಕು. ಅವರದ್ದು ಅಸಹಾಯಕ ಸ್ಥಿತಿ. ಚುನಾವಣೆಗೆ ಮುನ್ನ ‘ಮಹಾಘಟಬಂಧನ್’ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಬಿಜೆಪಿ ನಾಯಕರಿಗೆ ನಿತೀಶ್ ಕುಮಾರ್ ಸುಲಭದ ತುತ್ತಾಗಿದ್ದಾರೆ. ಅವರಿಗೆ ಬಂದಿರುವ ಸ್ಥಿತಿ ಬಗ್ಗೆ ಜೆಡಿಯು ಒಳಗಾಗಲೀ ಅಥವಾ ಹೊರಗಾಗಲೀ ಸಣ್ಣ ಪ್ರತಿರೋಧವೂ ಇಲ್ಲ. ನಿತೀಶ್ ಕುಮಾರ್ ‘ಅವಕಾಶವಾದಿ ರಾಜಕಾರಣಿ’ 2005ರಿಂದ ಅಧಿಕಾರದಲ್ಲಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಹೀನಾಯವಾಗಿ ಸೋಲುಂಡಾಗ ಅಲ್ಪ ಕಾಲ ಕುರ್ಚಿ ಖಾಲಿ ಮಾಡಿದ್ದರು. ಅದು ಜನರ ಕಣ್ಣೊರೆಸಲು ಆಡಿದ್ದ ನಾಟಕ. ಅಧಿಕಾರದಲ್ಲಿ ಉಳಿಯಲು ಒಮ್ಮೆ ಮಹಾಘಟಬಂಧನ್, ಮತ್ತೊಮ್ಮೆ ಎನ್ಡಿಎ ಹೀಗೆ ಅತ್ತಿಂದಿತ್ತ, ಇತ್ತಿಂದತ್ತ ಜಿಗಿದಾಟ ಮಾಡಿದ್ದಾರೆ. ‘ಅದಕ್ಕೆ ಪಲ್ಟೂ ರಾಂ’ ಎಂದು ‘ಖ್ಯಾತಿ’ ಪಡೆದಿದ್ದಾರೆ. ಅತೀ ಬುದ್ಧಿವಂತಿಕೆ ಕೆಲವೊಮ್ಮೆ ಹೇಗೆ ಕೈಕೊಡುತ್ತದೆ ಎಂಬುದಕ್ಕೆ ನಿತೀಶ್ ಅವರ ರಾಜಕೀಯ ಬದುಕೇ ಸಾಕ್ಷಿ. ಬಿಹಾರ ವಿಧಾನಸಭೆಗೆ 2015ರಲ್ಲಿ ನಡೆದ ಚುನಾವಣೆ ಸಮೀಕ್ಷೆಗಾಗಿ ಒಂದು ತಿಂಗಳು ಅಲ್ಲಿ ಅಡ್ಡಾಡಿದ್ದೆ. ಕರ್ನಾಟಕ ಮತ್ತಿತರ ರಾಜ್ಯಗಳಿಂದ ನಿತೀಶ್ ಅವರ ಗೆಳೆಯರು, ಅಭಿಮಾನಿಗಳು ಮತ್ತು ಬೆಂಬಲಿಗರು ಬಂದಿದ್ದರು. ಆಳಂದ ಶಾಸಕ ಬಿ.ಆರ್. ಪಾಟೀಲರೂ ಇದ್ದರು. ಜೆಡಿಯು ಪರ ಪ್ರಚಾರ ಮಾಡಲು ಅವರೆಲ್ಲರೂ ಬಂದಿದ್ದರು. ಮೂಲತಃ ಲೋಹಿಯಾ ಹಾಗೂ ಜೆ.ಪಿ. ಚಳವಳಿಯಲ್ಲಿ ಬೆಳೆದಿದ್ದವರು. ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ನಿತೀಶ್ ಹೊಸ ರಾಜಕೀಯ ಶಕ್ತಿ ಕಟ್ಟಬಹುದೆಂಬ ಕನಸು ಅವರಿಗಿತ್ತು. ಪರ್ಯಾಯ ಶಕ್ತಿ ಹೋಗಲಿ, ಅವರದೇ ಪಕ್ಷ ಉಳಿಯುವುದು ಈಗ ಕಷ್ಟವಿದೆ. ‘ಕಾಂಗ್ರೆಸ್ ಮುಕ್ತ ಭಾರತ’ದ ಮಾತಾಡುತ್ತಿರುವ ಬಿಜೆಪಿ, ಪ್ರಾದೇಶಿಕ ಪಕ್ಷಗಳನ್ನೂ ನುಂಗುತ್ತಿದೆ. ಪ್ರಾದೇಶಿಕ ಪಕ್ಷಗಳ ಮುಖಂಡರಿಗೆ ಈ ಅಪಾಯ ಅರ್ಥವಾಗುತ್ತಿಲ್ಲ! ಬಿಜೆಪಿ ಮಿತ್ರ ಪಕ್ಷಗಳಾಗಿದ್ದ ಪಂಜಾಬಿನ ಶಿರೋಮಣಿ ಅಕಾಲಿದಳ, ಒಡಿಶಾದ ಬಿಜು ಜನತಾ ದಳ, ಮಹಾರಾಷ್ಟ್ರದ ಶಿವಸೇನೆ (ಯುಬಿಟಿ) ಪಕ್ಷಗಳಿಗೆ ಬಂದಿರುವ ಸ್ಥಿತಿ ಮಿಕ್ಕ ಮಿತ್ರರಿಗೂ ಬರಬಹುದು. ತಮಿಳುನಾಡು ಮಿತ್ರ ಪಕ್ಷ ಎಐಎಡಿಎಂಕೆ, ಕರ್ನಾಟಕದ ಮಿತ್ರ ಪಕ್ಷ ಜೆಡಿಎಸ್ಗೆ ಇದೇ ಗತಿ ಬಂದರೆ ಅಚ್ಚರಿಯಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ಕಥೆ ಮುಗಿದಿದೆ. ಅಲ್ಲಿ ಕಾಂಗ್ರೆಸ್ ಕುಟುಕುಟು ಜೀವ ಹಿಡಿದುಕೊಂಡಿದೆ. ಎಡ ಪಕ್ಷಗಳ ಜಾಗದಲ್ಲಿ ಬಿಜೆಪಿ ಕೂತಿದೆ. ತನ್ನ ಕಡು ವೈರಿ, ಮಮತಾ ಅವರ ಟಿಎಂಸಿ ಮುಗಿಸಲು ಯತ್ನ ನಡೆದಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಒಡೆದು, ತಲೆ ಎತ್ತದಂತೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಿಎಸ್ಪಿ ಪೂರ್ಣ ನೆಲ ಕಚ್ಚಿದೆ. ಇವುಗಳ ಸಾಲಿಗೀಗ ಜೆಡಿಯು ಸೇರುತ್ತಿದೆ. ನಿತೀಶ್ ನಿರ್ಗಮನದ ಬಳಿಕ ಅವರ ಪಕ್ಷದ ಭವಿಷ್ಯ ಏನಾಗುವುದೋ? ಅನಾರೋಗ್ಯ ಕಾರಣ ನಿತೀಶ್ ಅವರನ್ನು ಬದಲಾಯಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಪ್ರಚಾರ ಸಮಯದಲ್ಲಿ ಅವರು ಕೆಲವು ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲೇ ಸಮಕಾಲೀನರಾದ ಮೋದಿ ಅವರ ಕಾಲಿಗೆ ಬಿದ್ದಿದ್ದಾರೆ. ಇದು ಸಣ್ಣ ತುಣುಕಷ್ಟೆ. ಇನ್ನೂ ಹಲವು ಎಡವಟ್ಟುಗಳಿವೆ. ಈ ಕಾರಣ ಮುಂದಿಟ್ಟುಕೊಂಡು ರಾಜ್ಯಸಭೆಗೆ ಕಳಿಸಲಾಗುತ್ತಿದೆ. ನಿತೀಶ್ ಪದಚ್ಯುತಿಯ ಹಿಂದೆ ಅವರದೇ ಪಕ್ಷದ ಕೆಲ ಮುಖಂಡರ ಷಡ್ಯಂತ್ರವಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ. ಬಿಹಾರ ಬಿಜೆಪಿ ಮುಖಂಡರೊಬ್ಬರು ನಿತೀಶ್ ಉತ್ತರಾಧಿಕಾರಿ ಆಗಲಿದ್ದಾರೆ. ಈಗಾಗಲೇ ಕೆಲವು ಹೆಸರು ಚಲಾವಣೆಯಲ್ಲಿವೆ. ಇದುವರೆಗೆ ಜೆಡಿಯು ಬೆಂಬಲದಿಂದ ಗೆಲ್ಲುತ್ತಿದ್ದ ಬಿಜೆಪಿ ನಂಬರ್ ಒನ್ ಪಕ್ಷ. ಮುಖ್ಯಮಂತ್ರಿ ಬದಲು, ಜೆಡಿಯುಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಜೆಡಿಯು ಪ್ರಾಥಮಿಕ ಸದಸ್ಯತ್ವ ಪಡೆದಿರುವ ನಿತೀಶ್ ಪುತ್ರ ನಿಶಾಂತ್ ಕುಮಾರ್ಗೆ ಈ ಹುದ್ದೆ ಸಿಗಲಿದೆ ಎಂಬ ಸುದ್ದಿ ಇದೆ. ತಂದೆಯ ರಾಜಕೀಯ ಪರಂಪರೆಯನ್ನು ಮಗ ಮುಂದುವರಿಸಲಿದ್ದಾರೆ. ಪ್ರಶ್ನೆ ಇರುವುದು ಅದಲ್ಲ, ಜೀವನದುದ್ದಕ್ಕೂ ಕುಟುಂಬ ರಾಜಕಾರಣ ವಿರೋಧಿಸಿಕೊಂಡು ಬಂದ ನಿತೀಶ್ ಈಗ ಕುಟುಂಬ ರಾಜಕಾರಣಕ್ಕೆ ಜೋತು ಬೀಳುತ್ತಿದ್ದಾರೆ. ನಿಜಕ್ಕೂ ಇದು ವಿಪರ್ಯಾಸ. ನಿತೀಶ್ ಕುಮಾರ್ ತಮ್ಮ ಮಗನಿಗೆ ಮುಖ್ಯಮಂತ್ರಿ ಸ್ಥಾನವನ್ನೇ ಕೇಳಬಹುದಿತ್ತು. ಅನುಭವ ಇಲ್ಲ ಎಂಬ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ. ಹಾಗಿದ್ದರೆ, ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಗಿದ್ದವರು, ಆಗಿರುವವರಿಗೆಲ್ಲರಿಗೂ ಅನುಭವ ಇದೆಯೇ? ಅಷ್ಟೇ ಏಕೆ,. ಯಾವ ಅನುಭವ ಇಲ್ಲದ ಜಯ್ ಶಾ ಬಿಸಿಸಿಐ ಅಧ್ಯಕ್ಷರಾಗಿಲ್ಲವೇ? ಎಷ್ಟೋ ರಾಜಕಾರಣಿಗಳ ಮಕ್ಕಳು ಮುಖ್ಯಮಂತ್ರಿ ಹುದ್ದೆ ನಿಭಾಯಿಸಿಲ್ಲವೇ? ಅದೂ ಹೋಗಲಿ, ಮಗ ಮುಖ್ಯಮಂತ್ರಿ ಆಗುವುದು ಬೇಡ ಎನ್ನುವುದಾದರೆ, ತಮ್ಮ ಪಕ್ಷದ ಹಿರಿಯ ನಾಯಕರೊಬ್ಬರನ್ನು ಕೂರಿಸಬಹುದಿತ್ತು. ವಿಧಾನಸಭೆ ಚುನಾವಣೆಗೆ ಮುನ್ನ ಮತ್ತು ಬಳಿಕ ಬಿಜೆಪಿ ನಾಯಕರು ಜಾಣ್ಮೆ ಹೆಜ್ಜೆಗಳನ್ನು ಇಟ್ಟಿದ್ದಾರೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಾರೆ. ಒಂದೆಡೆ ಕಾಂಗ್ರೆಸ್ ಮತ್ತು ಆರ್ಜೆಡಿ ನೆಲ ಕಚ್ಚುವಂತೆ ಮಾಡಿದ್ದಾರೆ. ಇನ್ನೊಂದೆಡೆ ಜೆಡಿಯು ಮುಂದೆ ಹೋಗದಂತೆ ನೋಡಿಕೊಂಡಿದ್ದಾರೆ. ಸೀಟು ಹಂಚಿಕೆಯಲ್ಲಿ ಜೆಡಿಯುಗೆ ಹೆಚ್ಚಿನ ಮಹತ್ವ ನೀಡಿಲ್ಲ. ತನ್ನಷ್ಟೇ ಸೀಟು ಹಂಚಲಾಗಿತ್ತು. ಬಳಿಕ ಪ್ರಚಾರ ಸಭೆಗಳಲ್ಲಿ ದೋಸ್ತಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದು ಅಪರೂಪ. ಪ್ರತೀ ಹಂತದಲ್ಲಿ ಮಾಧ್ಯಮದ ಜತೆ ನಿತೀಶ್ ಮಾತನಾಡದಂತೆ ಮಾಡಲಾಯಿತು. ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಇದು ಖಚಿತವಾಗಿತ್ತು ನಿತೀಶ್ ಅವರನ್ನು ‘ಮುಖ್ಯಮಂತ್ರಿ ಅಭ್ಯರ್ಥಿ’ಯಾಗಿ ಎನ್ಡಿಎ ಬಿಂಬಿಸಲಿಲ್ಲ. ‘ಶಾಸಕಾಂಗ ಸಭೆ’ಯಲ್ಲಿ ನಾಯಕನ ಆಯ್ಕೆ ನಡೆಯಲಿದೆ ಎಂದಿದ್ದರು ಶಾ. ‘ಚುನಾವಣೆಗೆ ನಿತೀಶ್ ನೇತೃತ್ವ’ ಎಂದು ಮೋದಿ ಹೇಳಿದ್ದರು. ಈ ಭಲೇ ಜೋಡಿಗೆ ಜೆಡಿಯು ಮುಖಂಡನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಇಷ್ಟವಿರಲಿಲ್ಲ. ಆದರೆ, ಉಭಯ ಪಕ್ಷಗಳ ಎರಡನೇ ಹಂತದ ಕೆಲ ನಾಯಕರು, ‘ನಿತೀಶ್ ಅವರೇ ಮುಖ್ಯಮಂತ್ರಿ’ ಎಂದು ಹೇಳಿ ಗೊಂದಲ ತಿಳಿಗೊಳಿಸಿದರು. ಕಾಕತಾಳೀಯವೆಂಬಂತೆ ಮುಖ್ಯಮಂತ್ರಿ ಆಯ್ಕೆಯೂ ವಿಳಂಬವಾಯಿತು. ಬಿಹಾರದಲ್ಲಿ ಬಿಜೆಪಿಗೆ ನಿತೀಶ್ ಅವರ ಬೆಂಬಲ ಅಗತ್ಯವಿತ್ತು. ಪರಿಣಾಮಕಾರಿಯಾಗಿ ಬಳಸಿಕೊಂಡರು. ಒಟ್ಟಾರೆ ಚುನಾವಣೆಯಲ್ಲಿ ಎನ್ಡಿಎಗಿದ್ದ ಅನುಕೂಲಗಳು ಆರ್ಜೆಡಿ ಮತ್ತು ಕಾಂಗ್ರೆಸ್ಗೆ ಇರಲಿಲ್ಲ. ಬಿಜೆಪಿಗೆ ಅನುಕೂಲವಾಗಿದ್ದೂ ನಿತೀಶ್ ಅವರ ಕಾರಣಕ್ಕೆ. ಜೆಡಿಯುಗೆ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದರು. ಅದಕ್ಕೆ ಅವರು ಕೈಗೊಂಡಿರುವ ಮಹಿಳಾ ಹಾಗೂ ಶಾಲಾ ಬಾಲಕಿಯರ ಪರವಾದ ಕಾರ್ಯಕ್ರಮಗಳು ಕಾರಣ. ಯಾದವರು ಮತ್ತು ಮುಸ್ಲಿಮರನ್ನು ಹೊರತುಪಡಿಸಿ ಹಿಂದುಳಿದವರು, ಅತೀ ಹಿಂದುಳಿದವರು ಹಾಗೂ ಪಸ್ಮಂದ ಮುಸ್ಲಿಮರು ಜೆಡಿಯು ಪರವಾಗಿ ನಿಂತರು. ಬಿಜೆಪಿಯಿಂದಾಗಿ ಮೇಲ್ವರ್ಗದ ಮತಗಳು ಎನ್ಡಿಎ ಪಾಲಿಗೆ ಬಂದವು. ಚಿರಾಗ್ ಪಾಸ್ವಾನ್ ಮತ್ತಿತರರ ಕಾರಣಕ್ಕೆ ದಲಿತರು ಹಾಗೂ ಮಹಾ ದಲಿತರ ಮತಗಳೂ ಬಿದ್ದವು. ಜೆಡಿಯು ಮತ್ತು ಬಿಜೆಪಿ ನಡುವೆ ಸಮಾನವಾಗಿ ಟಿಕೆಟ್ಗಳು ಹಂಚಿಕೆಯಾದರೂ ಸೀಟುಗಳ ಗಳಿಕೆಯಲ್ಲಿ ನಿತೀಶ್ ಹಿಂದೆ ಬಿದ್ದರು. ಬಿಜೆಪಿ 89 ಸ್ಥಾನ ಸಿಕ್ಕಿತು. ಜೆಡಿಯುಗೆ ನಾಲ್ಕು ಸ್ಥಾನ ಕಡಿಮೆಯಾಯಿತು. ಮತ ಗಳಿಕೆಯಲ್ಲೂ ಬಿಜೆಪಿ ಮಿತ್ರ ಪಕ್ಷಕ್ಕಿಂತ ಕೊಂಚ ಮುಂದಿದೆ. ಬಿಜೆಪಿಗೆ ಶೇ 20.08ರಷ್ಟು ಮತಗಳು ಬಿದ್ದಿವೆ. ಜೆಡಿಯುಗೆ ಶೇ. 19.25ರಷ್ಟು ಮತಗಳು ಬಂದಿವೆ. ಮತ ಗಳಿಕೆಯಲ್ಲಿ ಆರ್ಜೆಡಿ ಎಲ್ಲ ಪಕ್ಷಗಳಿಗಿಂತ ಮುಂದಿದ್ದರೂ ಸೀಟುಗಳಾಗಿ ಪರಿವರ್ತನೆ ಆಗಿಲ್ಲ. ಕಾಂಗ್ರೆಸ್ ಮತಗಳು ಇದ್ದಷ್ಟೇ ಇದ್ದರೂ ನಿರೀಕ್ಷಿಸಿದಷ್ಟು ಸ್ಥಾನಗಳು ಸಿಕ್ಕಿಲ್ಲ. ಬಿಜೆಪಿ ನಾಯಕರ ಮುಂದೆ ಜೆಡಿಯು ನಾಯಕ ನಿತೀಶ್ ಮಂಡಿಯೂರಲು ಇವೆಲ್ಲ ಅಂಶಗಳು ಸೇರಿಕೊಂಡಿವೆ. ಬಿಹಾರ ಸಮಾಜವಾದಿ ಚಳವಳಿಯ ಪ್ರಯೋಗ ಶಾಲೆ. ಈ ಪ್ರಯೋಗ ಶಾಲೆಯಲ್ಲಿ ಬೆಳೆದು ಬಂದವರು ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಮತ್ತು ಜೆಡಿಯುನ ನಿತೀಶ್ ಕುಮಾರ್. ಲೋಹಿಯಾ ಅವರ ತತ್ವ ಮತ್ತು ಸಿದ್ಧಾಂತ ಅವರನ್ನು ಪ್ರಭಾವಿಸಿತ್ತು. ಕಾಂಗ್ರೆಸ್ 1990ರ ಸುಮಾರಿಗೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಲಾಲು ದರ್ಬಾರ್ ನಡೆಯುತಿತ್ತು. ಒಂದೂವರೆ ದಶಕದ ನಂತರ ನಿತೀಶ್ರ ಕಾರುಬಾರು. ಇದೀಗ ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದಾರೆ. ಬಿಜೆಪಿಗೆ ದಾರಿ ಬಿಡುತ್ತಿದ್ದಾರೆ. ಮೂರೂವರೆ ದಶಕಗಳ ಬಳಿಕ ಬಲಪಂಥೀಯ ಚಿಂತನೆಯ ಸರಕಾರವೊಂದು ರಾಜ್ಯದಲ್ಲಿ ತನ್ನ ಆಧಿಪತ್ಯ ಸ್ಥಾಪಿಸುತ್ತಿದೆ. ಜೆಡಿಯು ಪೂರ್ಣ ಬಿಜೆಪಿಯಲ್ಲಿ ವಿಲೀನವಾಗುವುದೇ ಅಥವಾ ಹೋಳಾಗುವುದೇ ಅಥವಾ ಅಸ್ತಿತ್ವ ಉಳಿಸಿಕೊಳ್ಳುವುದೇ?
ಬೆಳ್ತಂಗಡಿ : ಬಾಲಕಿಗೆ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು
ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು
Sullia | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ, ಮತ್ತೊಂದು ಪ್ರಕರಣ ದಾಖಲು
ಸುಳ್ಯ: ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ನೆರಿಯ ನಿವಾಸಿ ಶರತ್ ಎಸ್. (24) ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಕಲಂ 457 ಐಪಿಸಿ ರಲ್ಲಿ ಆರೋಪಿಗೆ ಆರು ತಿಂಗಳ ಸಾದ ಸಜೆ ಹಾಗೂ 500 ದಂಡ, ಕಲಂ 380 ಐಪಿಸಿಯಲ್ಲಿ 10 ತಿಂಗಳ ಸಾದ ಸಜೆ ಹಾಗೂ 500 ದಂಡವನ್ನು ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ 10 ದಿನಗಳ ಹೆಚ್ಚುವರಿ ಸಜೆ ನೀಡಿ ಆದೇಶಿಸಿದೆ. ಮುಂದುವರಿದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಆರೋಪಿ ಶರತ್ ವಿರುದ್ಧ ಬಿಎನ್ ಎಸ್ ಕಲಂ 269ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 1000 ರೂ. ದಂಡ ಅಥವಾ 10 ದಿನಗಳ ಕಾರಾಗೃಹ ವಾಸ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ತನಿಖಾಧಿಕಾರಿಗಳಾಗಿ ಎಸ್ಸೈ ಸಂತೋಷ ಬಿ.ಪಿ. ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕರಾಗಿ ಪ್ರೀತಿ ಎಂ.ಸಿ. ವಾದ ಮಂಡಿಸಿದ್ದಾರೆ.
Gold and Silver Rate : ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆ ಹಾದಿಯಲ್ಲಿ, ಇಂದಿನ ದರ ಹೀಗಿದೆ
ಚಿನ್ನ ಮತ್ತು ಬೆಳ್ಳಿ ಧಾರಣೆ ತುಸು ಇಳಿಕೆ ಹಾದಿಯಲ್ಲಿದ್ದು ಗ್ರಾಹಕರಿಗೆ ನೆಮ್ಮದಿ ತರುವ ವಿಚಾರ ಇದಾಗಿದೆ. ಈಗ ಶುಭ ಸಮಾರಂಭಗಳ ಸೀಸನ್ ಶುರುವಾಗಲಿದ್ದು, ಚಿನ್ನ ಬೆಳ್ಳಿ ಖರೀದಿಗೆ ಸಕಾಲವಾಗಿದೆ. ಬೆಲೆಯೂ ತುಸು ಇಳಿದಿರುವುದರಿಂದ ನಿರಾಳವಾಗಿದೆ ಎನ್ನಬಹುದು. ಇಂದಿನ ದರ ಹೇಗಿದೆ? ಇಲ್ಲಿದೆ ಮಾಹಿತಿ.
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ
Gold Rate March 12: ಯುದ್ಧದ ಕಾರ್ಮೋಡದ ನಡುವೆಯೇ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆಯಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಬಂಗಾರ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಚಿನ್ನದ ಬೆಲೆಯು ಮಾರ್ಚ್ 12ರ ಗುರುವಾರ 10,900 ರೂ. ಇಳಿಕೆಯಾಗಿದೆ. ಮಾರ್ಚ್ 12ರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ
Bantwal | ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಭಗವಾಧ್ವಜ ಧ್ವಜ ಹಿಡಿದ ಭಾರತ ಮಾತೆಗೆ ಡಿಎಚ್ಒ ಪುಷ್ಪಾರ್ಚನೆ
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
Belthangady : ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ದೂರುದಾರ ಆತ್ಮಹತ್ಯೆಗೆ ಯತ್ನ
ಬೆಳ್ತಂಗಡಿ : ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ಮರುತನಿಖೆಯನ್ನು ಎಸ್ಐಟಿ ಅಧಿಕಾರಿಗಳು ನಡೆಸುತ್ತಿರುವ ಬೆನ್ನಲ್ಲೇ ದೂರುದಾರ ಹಾಗೂ ಪ್ರಮುಖ ಸಾಕ್ಷಿಯಾಗಿರುವ ಹರೀಶ್ ಮುಗೇರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ ನಲ್ಲಿ 2022ರ ಡಿಸೆಂಬರ್ 18ರಂದು ನಡೆದ ಶ್ರೀಧರ(30) ಕೊಲೆ ಪ್ರಕರಣದಲ್ಲಿ ದೂರುದಾರನಾಗಿರುವ ಹರೀಶ್ ಬಿ. ಮುಗೇರ ಕಳೆದ (ಮಾ.11ರಂದು) ರಾತ್ರಿ ಶಿಬಾಜೆಯ ಸಾರಾ ಫಾರ್ಮ್ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಅವರ ಜೊತೆಗೆ ಇದ್ದವರು ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರೀಧರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳು ಮಾ.3 ರಂದು ವಿಚಾರಣೆಗಾಗಿ ನೋಟಿಸ್ ನೀಡಿ ಹರೀಶ್ ರನ್ನು ಕರೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದರು. ಈ ಮಧ್ಯೆ ಹರೀಶ್ ಆತ್ಮಹತ್ಯೆಗೆ ಯತ್ನಿಸದಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಇರಾಕ್ ಬಳಿ US ತೈಲ ಟ್ಯಾಂಕರ್ ʼಸೇಫ್ ಸಿ ವಿಷ್ಣುʼ ಮೇಲೆ ಇರಾನ್ ಸೂಸೈಡ್ ಬೋಟ್ ದಾಳಿ: ಓರ್ವ ಭಾರತೀಯ ಪ್ರಜೆ ಸಾವು!
ಮಧ್ಯಪ್ರಾಚ್ಯದಲ್ಲಿ ಇರಾನ್ ಹಾಗೂ ಅಮೆರಿಕಾ ನಡುವಿನ ಯುದ್ದ ತಾರಕಕ್ಕೇರಿದ್ದು, ಇರಾನ್ ಹೊರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿದೆ. ಈ ನಡುವೆ ಇರಾಕ್ ನ ಜಲಪ್ರದೇಶದಲ್ಲಿ US ಧ್ವಜವಿದ್ದ ಸೇಫ್ ಸಿ ವಿಷ್ಣು ಎಂಬ ತೈಲ ಟ್ಯಾಂಕರ್ ಮೇಲೆ ಸೂಸೈಡ್ ದೋಣಿಯ ಮೂಲಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಟ್ಯಾಂಕರ್ ನಲ್ಲಿದ್ದ ಭಾರತೀಯ ಪ್ರಜೆಯೊಬ್ಬ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇನ್ನು, ಈ ದಾಳಿಯ ತೀವ್ರತೆಗೆ ಸಂಪೂರ್ಣ ಹಡಗು ಧ್ವಂಸವಾಗಿದ್ದು, ಬೆಂಕಿ ಕೆನ್ನಾಲಿಗೆ ಆಗಸದೆತ್ತರಕ್ಕೆ ಚಿಮ್ಮುತ್ತಿರುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಭಾರತ - ಗಲ್ಫ್ ವಿಮಾನ ಮಾರ್ಗ: ’ಹಾಲಿಗೆ ಹುಳಿಬಿದ್ದರೂ, ಹುಳಿಗೆ ಹಾಲು ಬಿದ್ದರೂ, ಕೆಡುವುದು ಹಾಲೇ’
India Gulf Aerial Routes : ಮಧ್ಯಪ್ರಾಚ್ಯ ವಲಯದಲ್ಲಿನ ಅಶಾಂತಿ, ಉದ್ವಿಗ್ನತೆ ಮತ್ತು ಸಂಘರ್ಷಗಳು ಭಾರತ ಗಲ್ಫ್ ದೇಶಗಳ ನಡುವಿನ ವಿಮಾನಯಾನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತಿದೆ. ಈ ಭಾಗದ ವಾಯುಪ್ರದೇಶಗಳನ್ನು ಬಳಸಿಕೊಳ್ಳಲು ಆಯಾಯ ದೇಶಗಳು ನಿರ್ಬಂಧಿಸಿರುವ ಹಿನ್ನಲೆಯಲ್ಲಿ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ.
ಎಲ್ಪಿಜಿ ಸಿಲಿಂಡರ್ ಕೊರತೆಯ ವಾಸ್ತವವನ್ನು ಸರಕಾರ ಎಷ್ಟು ದಿನ ಮರೆಮಾಚಲು ಸಾಧ್ಯ?
ದೇಶಾದ್ಯಂತ ಹಲವಾರು ನಗರಗಳಿಂದ ಹೋಟೆಲ್ ಮತ್ತು ಆಹಾರ ಮಳಿಗೆಗಳು ಮುಚ್ಚುವ ಸುದ್ದಿಗಳು ಬರುತ್ತಿವೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳು ಸಿಗುವುದು ಕಷ್ಟಕರವಾಗಿದೆ. ಗೃಹಬಳಕೆಯ ಸಿಲಿಂಡರ್ಗಳ ಕೊರತೆಯೂ ತಲೆದೋರಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜು ವ್ಯವಸ್ಥೆ ಸರಿಹೋಗದಿದ್ದರೆ ಖಂಡಿತ ಅವ್ಯವಸ್ಥೆ ಉಂಟಾಗುತ್ತದೆ. ಲಕ್ಷಾಂತರ ಜನರು ತಮ್ಮ ಜೀವನೋಪಾಯಕ್ಕಾಗಿ ಸಣ್ಣ ಮತ್ತು ದೊಡ್ಡ ಹೋಟೆಲ್ಗಳನ್ನು ನೆಚ್ಚಿಕೊಂಡಿರುತ್ತಾರೆ. ಇನ್ನೊಂದೆಡೆ, ಹೊರಗೆ ಕೆಲಸ ಮಾಡುವವರಿಗೆ ಕೈಗೆಟುಕುವ ದರದ ಸ್ಟ್ರೀಟ್ ಫುಡ್ ಸಿಗದೇ ಹೋದರೆ ಕಷ್ಟ. ಸಿಲಿಂಡರ್ಗಳು ಲಭ್ಯವಿಲ್ಲದಿದ್ದರೆ ಲಕ್ಷಾಂತರ ಜನರು ಕೈಗೆಟುಕುವ ಆಹಾರ ಸಿಗದಂತಾಗಿ ಪರದಾಡಬೇಕಾಗುತ್ತದೆ. ಆದರೂ ಗ್ಯಾಸ್ ಸಿಲಿಂಡರ್ ಬಿಕ್ಕಟ್ಟಿನ ಬಗ್ಗೆ ದೊಡ್ಡ ಮಾಧ್ಯಮಗಳು ಏನನ್ನೂ ಹೇಳುತ್ತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಜನರು ಗ್ಯಾಸ್ ಸಿಲಿಂಡರ್ಗಳಿಗಾಗಿ ಸಾಲುಗಟ್ಟಿ ನಿಂತಿರುವುದನ್ನು ತೋರಿಸುವ ವೀಡಿಯೊಗಳು ಕಾಣಿಸುತ್ತಿವೆ. ಸಿಲಿಂಡರ್ ಕೊರತೆ ತಲೆದೋರಿದ್ದರೆ ಆ ವಾಸ್ತವವನ್ನು ಸರಕಾರ ಎಷ್ಟು ದಿನ ಮರೆಮಾಚಲು ಸಾಧ್ಯ? ಲಕ್ಷಾಂತರ ಸಣ್ಣ ಹೋಟೆಲ್ಗಳು, ದರ್ಶಿನಿಗಳು ಮತ್ತು ಸಾಮಾನ್ಯ ಅಂಗಡಿಯವರು ದೊಡ್ಡ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಇದು ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಣ್ಣ ಪಟ್ಟಣಗಳಿಂದ ಗ್ರಾಮಗಳವರೆಗೂ ಬಿಸಿ ಮುಟ್ಟಿಸುವ ಬಿಕ್ಕಟ್ಟಾಗಿದೆ. ಭಾರತದಲ್ಲಿ ಸಿಲಿಂಡರ್ಗಳ ಕೊರತೆ ಮಾತ್ರವಲ್ಲ, ಸರಿಯಾದ ಮಾಹಿತಿಯ ಕೊರತೆಯೂ ಇದೆ. ಸರಕಾರ ಮತ್ತು ಗೋದಿ ಮೀಡಿಯಾಗಳು ಜನರಿಗೆ ನಿಖರ ಮತ್ತು ಸಕಾಲಿಕ ಮಾಹಿತಿಯನ್ನು ಒದಗಿಸುತ್ತಿರುವಂತೆ ಕಾಣುತ್ತಿಲ್ಲ. ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಯಾವುದೇ ಪೂರೈಕೆ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ಉದ್ಯೋಗ ಮತ್ತು ಕೈಗೆಟುಕುವ ಆಹಾರಕ್ಕಾಗಿ ಲಕ್ಷಾಂತರ ಜನರು ವಾಣಿಜ್ಯ ಗ್ಯಾಸ್ ಅನ್ನು ಅವಲಂಬಿಸಿದ್ದಾರೆ. ಆದರೆ ಸಚಿವರ ಟ್ವೀಟ್ ಗ್ಯಾಸ್ ಬಿಕ್ಕಟ್ಟು ಇದೆಯೆಂಬುದನ್ನೇ ನಿರಾಕರಿಸುತ್ತದೆ. ಆದರೆ ಅದೇ ಹೊತ್ತಲ್ಲಿ ಹೋಟೆಲ್ ಸಂಘ ಗ್ಯಾಸ್ ಸಿಲಿಂಡರ್ಗಳು ಲಭ್ಯವಿಲ್ಲ ಎಂದು ಹೇಳುತ್ತಿದೆ. ಹೋಟೆಲ್ಗಳನ್ನು ಮುಚ್ಚಬೇಕಾಗಬಹುದು ಎಂಬ ಆತಂಕವನ್ನು ಸಂಘ ವ್ಯಕ್ತಪಡಿಸಿದೆ. ಒಮ್ಮೆ ಬುಕ್ಕಿಂಗ್ ಮಾಡಿದ ನಂತರ 25 ದಿನಗಳವರೆಗೆ ಮತ್ತೊಂದು ಸಿಲಿಂಡರ್ಗಾಗಿ ಬುಕ್ಕಿಂಗ್ ಮಾಡಲು ಸಾಧ್ಯವಿಲ್ಲ ಎಂಬ ಸುದ್ದಿ ಬಂತು. ಅದರ ಬಳಿಕ ಕೇಂದ್ರ ಸರಕಾರ ದೇಶೀಯ ಗ್ಯಾಸ್ ಸಿಲಿಂಡರ್ ಮತ್ತು ಸಿಎನ್ಜಿ ಪೂರೈಕೆಯ ಮೇಲೆ ಎಸ್ಮಾ, ಅಂದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ ವಿಧಿಸಿದೆ ಎಂಬ ಸುದ್ದಿ ಬಂತು. ಗೃಹಬಳಕೆ ಸಿಲಿಂಡರ್ ಬೆಲೆಗಳನ್ನು 60 ರೂ. ಹಾಗೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು 115 ರೂ. ಹೆಚ್ಚಿಸಲಾಗಿದೆ. ಆದರೆ ಮಾರ್ಚ್ 9ರಂದು ಸಚಿವರು ಮಾಡಿರುವ ಟ್ವೀಟ್ ಮಾತ್ರ ಎಲ್ಲವೂ ಸಾಮಾನ್ಯವಾಗಿದೆ ಎಂಬ ಭ್ರಮೆ ಹುಟ್ಟಿಸುವಂತಾಗಿದೆ. ಎಲ್ಲವೂ ಸಾಮಾನ್ಯವಾಗಿದ್ದರೆ ಎಸ್ಮಾ ಏಕೆ ವಿಧಿಸಲಾಯಿತು? ಎರಡು ಸಿಲಿಂಡರ್ ಬುಕ್ಕಿಂಗ್ಗಳ ನಡುವೆ 25 ದಿನಗಳ ಅಂತರ ಏಕೆ? ಪೂರೈಕೆ ಮಾಹಿತಿಯನ್ನು ಏಕೆ ಮರೆಮಾಡಲಾಗಿದೆ ಮತ್ತು ಅದನ್ನು ಎಷ್ಟು ಸಮಯದವರೆಗೆ ಮರೆಮಾಚಲಾಗುತ್ತದೆ? ಸರಕಾರ ಏಕೆ ಸತ್ಯವನ್ನು ಮಾತನಾಡುತ್ತಿಲ್ಲ? ಗ್ಯಾಸ್ ಸಿಲಿಂಡರ್ ಬಿಕ್ಕಟ್ಟು ಪತ್ರಿಕೆಗಳು ಮತ್ತು ಟಿವಿ ಚಾನೆಲ್ಗಳಲ್ಲಿ ಕಾಣಿಸಿಕೊಳ್ಳದಂತೆ ತಡೆಯಲಾಗುತ್ತಿದೆಯೆ? ಇದು ಕೋಲ್ಕತಾ, ದಿಲ್ಲಿ, ಚೆನ್ನೈ ಮತ್ತು ಬೆಂಗಳೂರಿನಂಥ ಮಹಾನಗರಗಳಲ್ಲಿ ಮಾತ್ರ ತಲೆದೋರಿರುವ ಬಿಕ್ಕಟ್ಟಲ್ಲ. ವಾಣಿಜ್ಯ ಸಿಲಿಂಡರ್ಗಳನ್ನು ದೊಡ್ಡ ಹೋಟೆಲ್ಗಳಲ್ಲಿ ಮಾತ್ರವಲ್ಲ, ಸಣ್ಣ ಅಂಗಡಿಗಳಲ್ಲಿ ಮತ್ತು ಸಾವಿರಾರು ನಗರಗಳು ಹಾಗೂ ಪಟ್ಟಣಗಳಲ್ಲಿಯೂ ಬಳಸಲಾಗುತ್ತದೆ. ದಿನನಿತ್ಯದ ಆಹಾರ ತಯಾರಿಸುವ ಲೆಕ್ಕವಿಲ್ಲದಷ್ಟು ಅಂಗಡಿಗಳು ಇರಬಹುದು. ಅಂಥ ಲಕ್ಷಾಂತರ ಸಣ್ಣ ಹೋಟೆಲ್ನವರು ಮತ್ತು ಅಂಗಡಿಯವರು ಒಂದು ಅಥವಾ ಎರಡು ವಾಣಿಜ್ಯ ಸಿಲಿಂಡರ್ಗಳನ್ನು ಅವಲಂಬಿಸಿರುತ್ತಾರೆ. ಸಿಲಿಂಡರ್ಗಳು ಸಿಗದೇ ಹೋದರೆ ಅವರು ಅಂಗಡಿಗಳನ್ನು ಮತ್ತು ಹೋಟೆಲ್ಗಳನ್ನು ಮುಚ್ಚುವ ಸ್ಥಿತಿ ಬರುತ್ತದೆ. ಸಿಲಿಂಡರ್ಗಳು ಬರದಿದ್ದರೆ ಲಕ್ಷಾಂತರ ಕೆಲಸಗಾರರು ಮತ್ತು ಕೂಲಿ ಕಾರ್ಮಿಕರಿಗೆ ಊಟ ಇಲ್ಲದಂತಾಗುತ್ತದೆ. ಧಾಬಾಗಳು ಮತ್ತು ಸ್ಟ್ರೀಟ್ ಫುಡ್ ಸ್ಟಾಲ್ಗಳು ಲಕ್ಷಾಂತರ ಜನರ ಪಾಲಿನ ಊಟ ಪೂರೈಸುತ್ತವೆ. ಯಾರಾದರೂ ಅವುಗಳ ಬಗ್ಗೆ, ಅವನ್ನು ನೆಚ್ಚಿರುವವರ ಬಗ್ಗೆ ಕಾಳಜಿ ವಹಿಸುತ್ತಾರೆಯೆ? ಭಾರತ ವಾರ್ಷಿಕವಾಗಿ ಸುಮಾರು 3 ಕೋಟಿ ಟನ್ ಎಲ್ಪಿಜಿ ಬಳಸುತ್ತದೆ. ಶೇ. ಇದರಲ್ಲಿ 62ರಷ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಶೇ. 85ರಿಂದ 90 ಎಲ್ಪಿಜಿ ಆಮದುಗಳು ಸೌದಿ ಅರೇಬಿಯದಿಂದ ಹಾರ್ಮುಝ್ ಮೂಲಕ ಭಾರತಕ್ಕೆ ಬರುತ್ತವೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸಿಲಿಂಡರ್ ಸಂಪರ್ಕಗಳಿವೆ ಎಂದು ಸರಕಾರವೇ ಹೇಳುತ್ತದೆ. ಈಗ ಆ ಸಿಲಿಂಡರ್ಗಳನ್ನು ಮರುಭರ್ತಿ ಹೇಗೆ ಮಾಡುವುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಯುದ್ಧದ ಸಮಯದಲ್ಲಿ ಪೂರೈಕೆ ಕೊರತೆಯನ್ನು ಸರಕಾರ ಹೇಗೆ ನಿಭಾಯಿಸುತ್ತದೆ? ಅದಕ್ಕೆ ಸರಕಾರದ ಸಿದ್ಧತೆ ಏನು? ಅದಾಗದೇ ಹೋದರೆ ವಸ್ತುಗಳು ತುಂಬಾ ದುಬಾರಿಯಾಗಬಹುದು ಮತ್ತು ಅನೇಕ ವಸ್ತುಗಳು ಜನಸಾಮಾನ್ಯರ ಕೈಗೆಟುಕದಂತಾಗಬಹುದು. ಇದು ಎರಡು ವಾರಗಳ ಕಾಲ ಮುಂದುವರಿದರೆ ಪರಿಸ್ಥಿತಿ ಏನಾಗಬಹುದು? ವರದಿಗಳ ಪ್ರಕಾರ ಪಂಜಾಬ್ನಲ್ಲಿ ವಾಣಿಜ್ಯ ಎಲ್ಪಿಜಿ ಸರಬರಾಜು ಸ್ಥಗಿತಗೊಳಿಸಲಾಗಿದೆ. ರಾಜಸ್ಥಾನದ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಧಾಬಾಗಳು ಮತ್ತು ರಸ್ತೆಬದಿಯ ಸ್ಟಾಲ್ಗಳಲ್ಲಿ ಎಲ್ಪಿಜಿ ಕೊರತೆ ಉಂಟಾಗಿದೆ. ಚೆನ್ನೈ ಹೋಟೆಲ್ಗಳ ಸಂಘದ ಪ್ರಕಾರ ಚೆನ್ನೈನಲ್ಲಿ ವಾಣಿಜ್ಯ ಎಲ್ಪಿಜಿ ಅವಲಂಬಿಸಿರುವ 10,000ಕ್ಕೂ ಹೆಚ್ಚು ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಿವೆ. ಮಧ್ಯಮ ಗಾತ್ರದ ರೆಸ್ಟೋರೆಂಟ್ಗಳು ಪ್ರತಿದಿನ 5ರಿಂದ 10 ಸಿಲಿಂಡರ್ಗಳನ್ನು ಬಳಸುತ್ತವೆ. ಸಿಲಿಂಡರ್ ಸರಬರಾಜು ನಿಂತರೆ ಆ ಹೋಟೆಲ್ಗಳೂ ಮುಚ್ಚುವ ಸ್ಥಿತಿ ಬರುತ್ತದೆ. ಅಡ್ಡಿಪಡಿಸಿದರೆ ಮಾರ್ಚ್ 10ರಿಂದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕಾಗಬಹುದು. ದೋಸೆಗೆ ಹೆಸರುವಾಸಿಯಾದ ಬೆಂಗಳೂರಿನ ವಿದ್ಯಾರ್ಥಿ ಭವನ ಕೂಡ ಸಂಕಷ್ಟ ಎದುರಿಸುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ತವಾಗಳಲ್ಲಿ ಎರಡರ ಕೆಲಸ ನಿಲ್ಲಿಸಲಾಗಿದೆ. ಅಲ್ಲದೆ ಸರ್ವೀಸ್ ಹಾಲ್ ಅನ್ನು ಕೂಡ ಮುಚ್ಚಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಷ್ಟವಾಗಲಿದೆ. ಕೋಲ್ಕತಾ ಮತ್ತು ಮುಂಬೈನಿಂದಲೂ ಇದೇ ರೀತಿಯ ವರದಿಗಳಿವೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ಚೆನ್ನೈ ಹೋಟೆಲ್ ಅಸೋಸಿಯೇಷನ್ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪತ್ರ ಬರೆದಿದೆ. ವಿತರಕರು ವಾಣಿಜ್ಯ ಸಿಲಿಂಡರ್ಗಳ ಪೂರೈಕೆಯನ್ನು ನಿಲ್ಲಿಸಿದ್ದರು ಎಂಬ ವರದಿಗಳಿವೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ವಾಣಿಜ್ಯ ಬಳಕೆ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿರುವ ಬಗ್ಗೆ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಪೂರೈಕೆ ಶೀಘ್ರ ಪುನರಾರಂಭಗೊಳ್ಳದಿದ್ದರೆ ಅನೇಕ ಹೋಟೆಲ್ಗಳು ಮುಚ್ಚಲಿವೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ. ಸಿಲಿಂಡರ್ ಪೂರೈಕೆಯಲ್ಲಿನ ಈ ಹಠಾತ್ ಸ್ಥಗಿತದಿಂದ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಎಷ್ಟೋ ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಆಸ್ಪತ್ರೆಯಲ್ಲಿನ ರೋಗಿಗಳು ಕೈಗೆಟುಕುವ ಊಟದಿಂದ ವಂಚಿತರಾಗಬಹುದು. ಎಲ್ಪಿಜಿ ಮೇಲೆ ಯಾವುದೇ ನಿಷೇಧವಿಲ್ಲ ಎಂದು ಸರಕಾರ ಹೇಳುತ್ತಲೇ ಇದೆ. ಆದರೂ ಹೋಟೆಲ್ ಉದ್ಯಮದ ದುಃಸ್ಥಿತಿಯನ್ನು ಪರಿಗಣಿಸಿ ಪೆಟ್ರೋಲಿಯಂ ಸಚಿವಾಲಯ ಎಲ್ಪಿಜಿ ಪೂರೈಕೆಯಲ್ಲಿನ ಅಡಚಣೆಗಳ ತನಿಖೆಗೆ ಒಂದು ಸಮಿತಿ ರಚಿಸಿದೆ. ಮುಂಬೈ ಹೋಟೆಲ್ ಅಸೋಸಿಯೇಷನ್ ಹೇಳುವ ಪ್ರಕಾರ ಅಲ್ಲಿನ ಸುಮಾರು ಶೇ. 20 ಹೋಟೆಲ್ಗಳು ಈಗಾಗಲೇ ಮುಚ್ಚಲ್ಪಟ್ಟಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಶೇ. 50ರಷ್ಟು ಹೋಟೆಲ್ಗಳನ್ನು ಮುಚ್ಚಬೇಕಾಗುತ್ತದೆ. ಕೊನೆಗೆ ಎಲ್ಲಾ ಹೋಟೆಲ್ಗಳು ಮುಚ್ಚಬೇಕಾದ ಪರಿಸ್ಥಿತಿ ಕೂಡ ಉದ್ಭವಿಸಬಹುದು. ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕೂಡ ಇಂಥದೇ ಆತಂಕವನ್ನು ಈಗಾಗಲೇ ವ್ಯಕ್ತಪಡಿಸಿದೆ. ಹೋಟೆಲ್ಗಳು, ಧಾಬಾಗಳು ಮತ್ತು ಸಣ್ಣ ಅಂಗಡಿಗಳು ಮುಚ್ಚಿದರೆ ಜನರಿಗೆ ಆಹಾರ ಸಿಗದೇ ಹೋಗುತ್ತದೆ ಮತ್ತು ಅಂಗಡಿಯವರ ಆದಾಯವೂ ನಿಲ್ಲುತ್ತದೆ. ಇದಕ್ಕೆ ಪರಿಹಾರವನ್ನು ಟ್ರಂಪ್ ಮತ್ತು ನೆತನ್ಯಾಹು ತಮ್ಮ ಜೇಬಿನಿಂದ ಕೊಡುತ್ತಾರೆಯೇ ಎಂದು ಪತ್ರಕರ್ತ ರವೀಶ್ ಕುಮಾರ್ ಪ್ರಶ್ನಿಸುತ್ತಾರೆ. ಸಿಲಿಂಡರ್ ಪೂರೈಕೆ ಶೀಘ್ರದಲ್ಲೇ ಪುನರಾರಂಭವಾಗದೇ ಹೋದರೆ ಪರಿಸ್ಥಿತಿ ಹದಗೆಡುವುದು ಖಚಿತ. ಸರಕಾರ ಎಸ್ಮಾವನ್ನು ಜಾರಿಗೆ ತಂದಿದೆ. ಎಲ್ಪಿಜಿ ಸರಬರಾಜುಗಳನ್ನು ಸಾಧ್ಯವಾದಷ್ಟು ಹೆಚ್ಚಿಸಲು ಸೂಚಿಸಲಾಗಿದೆ. ಅನಿಲ ಮತ್ತು ತೈಲ ಬಿಕ್ಕಟ್ಟು ಭಾರತದಲ್ಲಿ ಮಾತ್ರವಲ್ಲ; ಇದು ಅನೇಕ ದೇಶಗಳಲ್ಲಿ ತಲೆದೋರುತ್ತಿದೆ. ಬೆಲೆಗಳು ಏರುತ್ತಿವೆ. ಸಿಲಿಂಡರ್ನಂತಹ ಅಗತ್ಯದ ವಿಚಾರದಲ್ಲೂ ಸರಕಾರ ಇಷ್ಟು ನಿರ್ಲಕ್ಷ್ಯದಿಂದ ಎಲ್ಲವೂ ಸರಿಯಿದೆ ಎಂದು ಹೇಳುತ್ತಿರುವುದು ಅರ್ಥವಾಗುತ್ತಿಲ್ಲ. ಸರಕಾರಕ್ಕೆ ಜನಸಾಮಾನ್ಯರ ಜೀವನೋಪಾಯಕ್ಕಿಂತ ತನ್ನ ರಾಜಕೀಯವೇ ಮುಖ್ಯವಾಗಿದೆ ಎಂಬುದು ಈ ಬಿಕ್ಕಟ್ಟಿನ ಹೊತ್ತಲ್ಲಿ ಮತ್ತೊಮ್ಮೆ ಕಾಣುತ್ತಿದೆ.
ಕಾವೇರಿ ಊರಲ್ಲೇ ಜಲದಾಹ ; ಖಾಸಗಿ ಬೋರ್ವೆಲ್ ವಶಕ್ಕೆ ಪಡೆದು ನೀರು ಪೂರೈಸಲು ಸಿದ್ಧತೆ
ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಕುಡಿಯುವ ನೀರಿಗಾಗಿ ಬಹುತೇಕ ಅವಲಂಬಿಸಿರುವ ಕೆಆರ್ಎಸ್ ಜಲಾಶಯದ(ಕನ್ನಂಬಾಡಿಕಟ್ಟೆ) ನೀರಿನ ಮಟ್ಟ 111.58 ಅಡಿಗೆ ಕುಸಿದಿದೆ. ಗರಿಷ್ಠ 124.80 ಅಡಿಗಳು ಎತ್ತರದ, 49.452ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 33.341 ಟಿಎಂಸಿ ಅಡಿ ನೀಡಿದೆ. ಇದರಲ್ಲಿ24.962 ಟಿಎಂಸಿ ಅಡಿ ನೀರಷ್ಟೇ ಬಳಕೆ ಲಭ್ಯವಿದೆ.
ಈಗ ಇಸ್ರೇಲ್-ಇರಾನ್-ಅಮೆರಿಕ ಯುದ್ಧದ ಬಿಸಿ ಭಾರತಕ್ಕೂ ಮುಟ್ಟಿದೆ. ತೈಲ ಸರಬರಾಜು ಕ್ಷೀಣಿಸಿದೆ. ಭಾರತದ ಅಗತ್ಯಗಳ ಶೇ. 40 ಪೂರೈಸುತ್ತಿದ್ದ ಖತರ್ ತುರ್ತುಪರಿಸ್ಥಿತಿಯ ಕಾರಣದಿಂದ ಭಾರತಕ್ಕೆ ಅಂತಲ್ಲ ವಿಶ್ವದ ಅನೇಕ ದೇಶಗಳಿಗೆ ಮಾಡುತ್ತಿದ್ದ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಬಹರೈನ್ ಕೂಡಾ ಪೂರೈಕೆಯನ್ನು ನಿಲ್ಲಿಸಿದೆ. ನಮ್ಮಲ್ಲಿ ಸರಕಾರ ಎಷ್ಟೇ ಬಾಯಿ ಬಡಾಯಿ ಕೊಚ್ಚಿಕೊಂಡರೂ ವಾಸ್ತವ ಬೇರೆಯೇ ಕತೆಯನ್ನು ಹೆಳುತ್ತಿದೆ. ಯುದ್ಧ ನಿಲ್ಲದಿದ್ದರೆ ಮುಂದಣ ದಿನಗಳು ಭೀಕರವಾಗಲಿವೆ. ಇರಾನಿನ ಮೇಲೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯು ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲವೆಂಬುದು ಈಗ ಜಗಜ್ಜಾಹೀರಾಗಿದೆ. ಹಲವು ವಾರಗಳಿಂದ ಕೊತಕೊತ ಕುದಿಯುತ್ತಿದ್ದ ಶೀತಲ ಸಮರದ ಬಳಿಕ ಇಂತಹ ಒಂದು ಹಸ್ತಕ್ಷೇಪ ನಡೆಯುತ್ತದೆಯೆಂಬುದನ್ನು ವಿವೇಕಿಗಳು, ಪ್ರಾಜ್ಞರು ಊಹಿಸಿದ್ದರು. ಇದರ ನಡುವೆಯೂ ಭಾರತದ ಪ್ರಧಾನಿ ಇಸ್ರೇಲ್ಗೆ ಐತಿಹಾಸಿಕ ಭೇಟಿ ನೀಡಿ ತಮ್ಮ ಎಂದಿನ ವರಸೆಯಲ್ಲಿ (ಅಂದರೆ ಅಬ್ ಕೀ ಬಾರ್.. ಟ್ರಂಪ್ ಸರಕಾರ್.. ಎಂಬ ಹಾಗೆ) ಇಸ್ರೇಲ್ನೊಂದಿಗೆ ಭಾರತ ಎಂಬ ತಮ್ಮ ಪಲ್ಲವಿಯನ್ನು ಹಾಡಿದ್ದರು. ಈಗ ಯುದ್ಧ ಮುಂದುವರಿದಿದೆ. ಇದಿನ್ನೂ ಮೂರನೇ ವಿಶ್ವ ಸಮರದ ಅಧಿಕೃತ ಮುನ್ನುಡಿಯಾಗಿಲ್ಲ. ಆದರೆ ಮಧ್ಯಪೂರ್ವವೆಂದು ಹಿಂದೆ ಕರೆಸಿಕೊಳ್ಳುತ್ತಿದ್ದ ಈಗ ಪಶ್ಚಿಮ ಏಶ್ಯವೆಂದು ಕರೆಯಲ್ಪಡುವ ಭೂಭಾಗದ ಈ ಬೆಂಕಿ ವಿಶ್ವಾದ್ಯಂತ ಹಬ್ಬಿದೆ. ಪ್ರಾಯಃ ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಜಪಾನ್ ಮತ್ತು ಮ್ಯಾನ್ಮಾರ್ನ ಪೂರ್ವಕ್ಕಿರುವ ಮತ್ತು ದಕ್ಷಿಣ ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾದ ದೇಶಗಳಿಗೆ ತಲುಪಿದಂತಿಲ್ಲ. ಸಕಾರಣ ವಿಶೇಷವೆಂದರೆ ಅಮೆರಿಕದ ಬದ್ಧ ಎದುರಾಳಿಗಳಂತಿರುವ ಎರಡು ಮಹಾನ್ ಶಕ್ತಿಗಳಾದ ರಶ್ಯ ಮತ್ತು ಚೀನಾ ಇನ್ನೂ ಈ ಯುದ್ಧದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲು ಮುಂದೆ ಬಂದಿಲ್ಲ. ಪುಟ್ಟ ರಾಷ್ಟ್ರವಾದರೂ ರಶ್ಯ, ಚೀನಾಗಳಂತೆ ಅಮೆರಿಕದ ವಿರುದ್ಧ ಧೋರಣೆಯನ್ನು ಹೊಂದಿರುವ ಉತ್ತರ ಕೊರಿಯಾ ಬೆದರಿಕೆಯ ಮಾತುಗಳನ್ನಾಡಿದರೂ ತನ್ನ ಅಣುಶಕ್ತಿಯನ್ನು ತೆರೆದಿಲ್ಲ. ಅಮೆರಿಕದ ಹೆಡೆಯಡಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಕ್ಯೂಬಾ ಯಾವಾಗ ಬೇಕಾದರೂ ವೆನೆಝುುವೆಲಾದಂತೆ ಅಮೆರಿಕದ ತುತ್ತಾಗಬಹುದೆಂದು ನಿರೀಕ್ಷಿಸಿದರೂ ಹಾಗಾಗದಿರುವುದು ವಿಶ್ವವಿದ್ಯಮಾನಗಳ ಒಂದು ಅಚ್ಚರಿಯೇ ಸರಿ. ಬ್ರಿಟಿಷರು ಬಿಟ್ಟು ಹೋದ ವಸಾಹತುಶಾಹಿ ವಿಕೃತಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನವು ಕೈಗೆತ್ತಿಕೊಂಡಿರುವುದು ಈಗ ಹಲವು ದಶಕಗಳ ಕಥೆ. ಅಮೆರಿಕ ಇಂದು ಜಗತ್ತಿನ ಒಂದು ದೈತ್ಯ ಶಕ್ತಿ. ಭಾರತದಂತಹ (ಬಡ ಎನ್ನುವುದಕ್ಕೆ ಅಭಿವೃದ್ಧಿಶೀಲ ಎಂದು ಹೆಸರಿಸಲಾಗಿದೆ!) ದೇಶಗಳ ಕನಸಿನ ಸ್ವರ್ಗ. ಅಮೆರಿಕ ತನ್ನದೇ ಆದ ನಿರುದ್ಯೋಗ, ಬೆಲೆಯೇರಿಕೆ ಮುಂತಾದ ಸಮಸ್ಯೆಗಳಲ್ಲಿ ಮುಳುಗಿದರೂ ಅದನ್ನೆಲ್ಲ ಮೀರಿಸಿಯೋ, ದಾಟಿಯೋ ಜಗತ್ತಿನ ಎಲ್ಲ ದೇಶಗಳ ವ್ಯವಹಾರದಲ್ಲಿ ಸಕ್ರಿಯ ಮತ್ತು ಪರಿಣಾಮಕಾರೀ ಪಾತ್ರವನ್ನು ನಿರ್ವಹಿಸುತ್ತಿದೆ. ಅನೇಕ ಪುಟ್ಟ ದೇಶಗಳ ಆಳ್ವಿಕೆಯನ್ನು ಕೊನೆಗೊಳಿಸುವುದು, ಬದಲಾಯಿಸುವುದು ಮುಂತಾದ ಅನಿಷ್ಟ ಪರಂಪರೆಯನ್ನು ಹಿಂದೆ ಸೋವಿಯೆತ್ ಒಕ್ಕೂಟವೂ ನಡೆಸಿತ್ತು. ಆದರೆ ಈಗ ಇದು ಅಮೆರಿಕದ ಏಕಸ್ವಾಮ್ಯವೆಂಬಂತಿದೆ. ಒಂದೆಡೆ ಇಂದಿನ ಜಗತ್ತು ಆರ್ಥಿಕತೆಯ ಮೇಲೆ ನಿಂತಿದೆಯೆಂದೆನ್ನಿಸಿದರೂ ಅದು ನಿಜವಾಗಿ ಶಸ್ತ್ರಾಸ್ತ್ರ ಮತ್ತು ಕೈಗಾರಿಕೆಗಳ ಆಧಾರದಲ್ಲೇ ಮುನ್ನಡೆಯುತ್ತಿದೆ. ಭಾರತವು ಜಗತ್ತಿನ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವೆಂದು ಪ್ರಚಾರವಾಗಿದೆಯಾದರೂ ಅದು ಬಾಹ್ಯಶಕ್ತಿಗಳನ್ನು ಎಷ್ಟು ಅವಲಂಬಿಸಿದೆಯೆಂದು ಗೊತ್ತಾಗುವುದು ಅದರ ನಿಲುವಿನಲ್ಲಿಯೇ. ಬಹಳ ದಶಕಗಳಿಂದ ಭಾರತವು ಆರ್ಥಿಕವಾಗಿ ಸ್ವಾವಲಂಬಿಯಾಗುವ ಮುನ್ನವೂ ವಿಶ್ವಗೌರವವನ್ನು ಗಳಿಸಿದ್ದರೆ ಅದಕ್ಕೆ ಕಾರಣ ಅದರ ಅಲಿಪ್ತ ನೀತಿ. ಯಾವ ಗುಂಪಿಗೂ ಸೇರದೆ ತನ್ನ ಹಿತವನ್ನು ಭಾರತವು ಗಳಿಸಿಕೊಂಡಿತ್ತು. ಅಮೆರಿಕ ಮತ್ತು ರಶ್ಯಗಳಿಂದ ಸಮಾನ ಅಂತರವನ್ನು ಕಾಪಾಡಿಕೊಂಡಿತ್ತು. ಇನ್ನೊಂದು ದೇಶದ ಆಂತರಿಕ ರಾಜಕೀಯದಲ್ಲಿ ಭಾರತ 1971ರ ಬಾಂಗ್ಲಾ ಯುದ್ಧದ ವರೆಗೂ ಹಸ್ತಕ್ಷೇಪವನ್ನು ಮಾಡಿರಲಿಲ್ಲ. ಆಗಲೂ ಭಾರತವು ಇದು ತನಗೆ ಅನಿವಾರ್ಯವೆಂದು ಜಾಗತಿಕ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳಲು ಯಶಸ್ವಿಯಾಯಿತು. ಆನಂತರ ಭಾರತಕ್ಕೆ ಅಂತಹ ಸಂದರ್ಭವೇ ಬರಲಿಲ್ಲ. ಭಾರತ-ಪಾಕಿಸ್ತಾನ ಕಲಹಗಳು ಸತತವಾಗಿ ನಡೆದರೂ ಅದು ಉಭಯತರ ಅಸ್ತಿತ್ವಕ್ಕೆ ಧಕ್ಕೆ ತರಲಿಲ್ಲ. ಭಾರತವನ್ನು ಹಾಡಿ ಹೊಗಳುವ ವಿಶ್ವದ ಹಿರಿಯ ದೇಶಗಳು ತೀರ ಗಂಭೀರ ಚಿಂತನೆಗಳಲ್ಲಿ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಂಡಂತೆ ಕಾಣಿಸುವುದಿಲ್ಲ. ಭಾರತವು ತನ್ನಷ್ಟಕ್ಕೆ ತಾನೇ ವಿಶ್ವಗುರುವೆಂದು ಬಡಾಯಿ ಕೊಚ್ಚಿಕೊಂಡರೂ ಮತ್ತು ನಿವೃತ್ತರಾಗುವ ಅಧಿಕಾರಿ ಸ್ವೀಕರಿಸುವಂತೆ ಪ್ರಶಂಸೆಯನ್ನು ಪಡೆದರೂ ಅದು ಪ್ರತ್ಯಕ್ಷವಾಗಿ ಮೂರ್ತವಾಗಿ ಕಂಡುಬರುವುದಿಲ್ಲ. ಈಚೆಗೆ ರಶ್ಯ-ಉಕ್ರೇನ್ ನಡುವಣ ಯುದ್ಧದಲ್ಲಿ ವಿಶ್ವಸಂಸ್ಥೆಯು ಅಕ್ಷರಶಃ ವಿಫಲವಾಯಿತು. ಅಲ್ಲಿ ನಡೆದ ಅನೇಕ ನಡವಳಿಕೆಗಳು ಪ್ರಹಸನದಂತೆ ನಡೆಯುತ್ತಿವೆ. ಯಾವುದೇ ಗಂಭೀರ ಮತ್ತು ಆಗಬೇಕಾದ ಕ್ರಮದಲ್ಲಿ ಅದರ ಶಾಶ್ವತ ಸದಸ್ಯರುಗಳಲ್ಲಿ ಯಾರಾದರೊಬ್ಬರು ವಿಟೋ ಜಾರಿಗೊಳಿಸಿ ವಿಫಲಗೊಳಿಸುತ್ತಿದ್ದಾರೆ. ಅದರ ಅನೇಕ ಅಂಗಸಂಸ್ಥೆಗಳು ಪ್ರಬಲ ದೇಶಗಳ ಸಹಾಯ ಮತ್ತು ಭಾಗವಹಿಸುವಿಕೆ ಅಷ್ಟೇ ಅಲ್ಲ ಸಹಕಾರದ ಹೊರತಾಗಿ ಮೊಳೆಯವು. ಪುಟಿನ್ ವಿರುದ್ಧದ ದಸ್ತಗಿರಿ ವಾರಂಟ್ ಕಾಗದದಲ್ಲೇ ಉಳಿದಿದೆ. ಗಾಝಾದಲ್ಲಿ ನಡೆದ ಇಸ್ರೇಸ್ನ ದುಂಡಾವರ್ತನೆಯನ್ನು ಜಗತ್ತು ಒಕ್ಕೊರಲಿನಲ್ಲಿ ಖಂಡಿಸಿತಾದರೂ ಇಸ್ರೇಲ್ ನಡೆಸಿದ ನರಮೇಧವನ್ನು ತಡೆಯಲಾರದಾಯಿತು. ವಿಶ್ವಸಂಸ್ಥೆಯು ಇಸ್ರೇಲ್ನ ವಿರುದ್ಧ ಕಠಿನ ನಿಲುವನ್ನು ತಳೆಯಿತಾದರೂ ಅದು ಮಾತಿಗೇ ಸೀಮಿತವಾಯಿತು. ಅಂತರ್ರಾಷ್ಟ್ರೀಯ ನ್ಯಾಯಾಲಯವು ನೆತನ್ಯಾಹುವಿನ ವಿರುದ್ಧ ನೀಡಿದ ಆದೇಶವೂ ಕಾಗದದಲ್ಲೇ ಉಳಿಯಿತು. ಅಮೆರಿಕವು ಇಸ್ರೇಲನ್ನು ದತ್ತು ತೆಗೆದುಕೊಂಡಂತೆ ಫೆಲೆಸ್ತೀನ್ ವಿವಾದದಲ್ಲಿ ವರ್ತಿಸಿದ್ದರಿಂದ ಇತರ ದೇಶಗಳು-ಭಾರತವೂ ಸೇರಿದಂತೆ-ಮೌನವಾದವು. ಮನುಕುಲದ ಒಂದು ಭಾರೀ ದುರಂತಕ್ಕೆ ಸಾಕ್ಷಿಯಾದವು. ಇತ್ತೀಚೆಗಿನ ಅಂತರ್ರಾಷ್ಟ್ರೀಯ ವಿವಾದಗಳ ಸಂದರ್ಭದಲ್ಲಿ ಅನೇಕ ದೇಶಗಳು ಪ್ರಾಯಃ ಭಾರತದ ಜಾಗತಿಕ ಪ್ರಚಾರವೈಖರಿಯನ್ನು ಗಮನಿಸಿ-ಭಾರತದತ್ತ ಮುಖಮಾಡಿದವು. ಆದರೆ ಎಲ್ಲ ವಿವಾದಗಳ ಪಕ್ಷಕಾರದೇಶಗಳು ಅವೆರಡೂ ದೇಶಗಳು ತಮಗನ್ನಿಸಿದಂತೆ ಮುನ್ನಡೆದವು. ಗಾಝಾ ಇರಲಿ, ಉಕ್ರೇನ್ ಇರಲಿ, ಕೊನೆಗೂ ಅಮೆರಿಕ ದೇಶವು ಒಂದಿಷ್ಟು ನಿಯಂತ್ರಣ ಹೊಂದಿದಂತೆ ಭಾಸವಾದರೂ ಅದು ಕೂಡಾ ನಿರೀಕ್ಷಿತ ಫಲಿತಾಂಶವನ್ನು ಕಾಣಲಿಲ್ಲ; ಪರಿಣಾಮವನ್ನೂ ಬೀರಲಿಲ್ಲ. ಅಮೆರಿಕದ ಅಧ್ಯಕ್ಷರು ಪದೇ ಪದೇ ತಾನು ಅಲ್ಲಿನ ಯುದ್ಧವನ್ನು ನಿಲ್ಲಿಸಿದೆನೆಂದು ಹೇಳಿಕೊಂಡರೂ ಅದಿನ್ನೂ ಅಮಾನವೀಯವಾಗಿ ಮುಂದುವರಿಯುತ್ತಲೇ ಇದೆ. ಜೊತೆಗೆ ಭಾರತ-ಪಾಕಿಸ್ತಾನದ ನಡುವಣ ಸಂಘರ್ಷವನ್ನೂ ತಾನು ನಿಲ್ಲಿಸಿದೆನೆಂದು ಹೇಳಿದರೂ ಭಾರತ-ಪಾಕಿಸ್ತಾನಗಳ ನಡವಳಿಕೆಯನ್ನು ಗಮನಿಸಿದರೆ ಅದು ಮೇಲ್ನೋಟಕ್ಕೆ ಇರಬಹುದೆಂದು ಅನ್ನಿಸುತ್ತದೆ ಆದರೆ ವಾಸ್ತವ ನೆಲೆಯಲ್ಲಿ ಅಂಕಿ-ಅಂಶಗಳ ಅಭಾವದಲ್ಲಿ ಅದೆಷ್ಟರ ಮಟ್ಟಿನ ಸತ್ಯವೆಂದು ಹೇಳಲಾಗದು. ಇಂತಹ ಹತ್ತಾರು ಉದಾಹರಣೆಗಳು ಅಮೆರಿಕದ ಇತ್ತೀಚೆಗಿನ ಜಾಗತಿಕ ರಾಜನೀತಿಯಲ್ಲಿ ಕಾಣಿಸುತ್ತವೆ. ಭಾರತವು ಇರಾನ್ನೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿತ್ತು. ಈ ಸಂದರ್ಭದಲ್ಲಿ ಭಾರತವು 370 ಕೋಟಿ ಡಾಲರ್ ಬಂಡವಾಳ ಹಾಕಿದ ಹತ್ತು ವರ್ಷಗಳ ಚಾಬಹಾರ್ ಬಂದರಿನ ಒಪ್ಪಂದ ಜಾರಿಯಲ್ಲಿತ್ತು. ಇದರಲ್ಲಿ 120 ಕೋಟಿ ಡಾಲರ್ ಬಂದರಿನ ಮೂಲಭೂತ ಅವಶ್ಯಕತೆಗಳಿಗೂ ಉಳಿದ ಮೊತ್ತವು ಭಾರತಕ್ಕೆ ಬಹಳ ಅಗತ್ಯವಿದ್ದ ಅಂದರೆ ಅಫ್ಘಾನಿಸ್ತಾನ, ಪಾಕಿಸ್ತಾನಗಳನ್ನು ಸಂಪರ್ಕಿಸದೆ ಇರಾನ್ನ ಮೂಲಕ ಭಾರತಕ್ಕೆ ಸರಕು ಸಾಗಣೆಯಾಗುವ ಅನುಕೂಲದ ವ್ಯವಸ್ಥೆಗೂ ಆಗಿತ್ತು. (ಇದರ ಇತರ ವಿವರಗಳು ಇಲ್ಲಿ ಅಪ್ರಸ್ತುತ.) ಇರಾನ್ನಂತಹ ದೇಶ ಭಾರತಕ್ಕೆ ಬಹುಕಾಲದಿಂದ ಸ್ನೇಹಿತನಾದರೂ ಅಮೆರಿಕ-ಇಸ್ರೇಲ್ ಯುದ್ಧ ಅಥವಾ ದಾಳಿಯ ತಯಾರಿಯಲ್ಲಿರುವಾಗ ನಮ್ಮ ಪ್ರಧಾನಿ ಇಸ್ರೇಲ್ಗೆ ಹೋಗಿ ಅಪೂರ್ವ ಸಖ್ಯ ಬೆಳೆಸಿ ಬಂದರು. ಭಾರತದೊಳಗೇ ಇಸ್ರೇಲ್ನ ಕುರಿತು ಸಾಕಷ್ಟು ಅಸಮಾಧಾನವಿರುವಾಗಲೇ ಮತ್ತು ಬಹುಕಾಲದಿಂದ ಇರಾನ್ನೊಂದಿಗೆ ಈ ಒಳ್ಳೆಯ ಸಂಬಂಧವನ್ನು ಹೊಂದಿರುವಾಗಲೇ ನಮ್ಮ ಪ್ರಧಾನಿ ಅನಾಮತ್ತಾಗಿ ನಾವು 140 ಕೋಟಿ ಭಾರತೀಯರು ಇಸ್ರೇಲ್ನೊಂದಿಗಿದ್ದೇವೆ ಎಂದರು. ಅವರಿನ್ನೂ ಭಾರತಕ್ಕೆ ಬಂದು ಉಡುಪು ಬದಲಾಯಿಸಿಕೊಳ್ಳುವ ಮೊದಲೇ ಅಮೆರಿಕ ಮತ್ತು ಇಸ್ರೇಲ್ ಇರಾನ್ನ ಮೇಲೆ ದಾಳಿ ನಡೆಸಿದವು. ಅಷ್ಟೇ ಅಲ್ಲ, ಏನಾಯಿತೆಂದು ಗೊತ್ತಾಗುವ ಹೊತ್ತಿಗೆ ಇಸ್ರೇಲ್ನ ಧಾರ್ಮಿಕ ನಾಯಕ ಖಾಮಿನೈಯವರನ್ನು ಹತ್ಯೆಮಾಡಿದರು. ಈ ಹತ್ಯೆಯನ್ನು ಖಂಡಿಸಲು ಭಾರತ ಮನಸ್ಸು ಮಾಡಲಿಲ್ಲ. ವಿಚ್ಛೇದಗೊಂಡ ಸಂಗಾತಿಯ ಸಾವು ಮಾಜಿ ಜೊತೆಗಾರನಿಗೂ ನೋವು ತರುತ್ತದೆ. ಆದರೆ ಭಾರತವು ಅಮೆರಿಕದ ಭಯವೋ ಇಸ್ರೇಲ್ನೊಂದಿಗಿನ ಹೊಸ ನಿಗೂಢ ಬಾಂಧವ್ಯವೋ ಇರಾನನ್ನು ಮತ್ತು ಅಲ್ಲಿ ಹೂಡಿದ ಬಂಡವಾಳವನ್ನು ಮರೆತೇಬಿಟ್ಟಿತು. ಈಗ ಇಸ್ರೇಲ್-ಇರಾನ್-ಅಮೆರಿಕ ಯುದ್ಧದ ಬಿಸಿ ಭಾರತಕ್ಕೂ ಮುಟ್ಟಿದೆ. ತೈಲ ಸರಬರಾಜು ಕ್ಷೀಣಿಸಿದೆ. ಭಾರತದ ಅಗತ್ಯಗಳ ಶೇ. 40 ಪೂರೈಸುತ್ತಿದ್ದ ಖತರ್ ತುರ್ತುಪರಿಸ್ಥಿತಿಯ ಕಾರಣದಿಂದ ಭಾರತಕ್ಕೆ ಅಂತಲ್ಲ ವಿಶ್ವದ ಅನೇಕ ದೇಶಗಳಿಗೆ ಮಾಡುತ್ತಿದ್ದ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಬಹರೈನ್ ಕೂಡಾ ಪೂರೈಕೆಯನ್ನು ನಿಲ್ಲಿಸಿದೆ. ನಮ್ಮಲ್ಲಿ ಸರಕಾರ ಎಷ್ಟೇ ಬಾಯಿ ಬಡಾಯಿ ಕೊಚ್ಚಿಕೊಂಡರೂ ವಾಸ್ತವ ಬೇರೆಯೇ ಕತೆಯನ್ನು ಹೆಳುತ್ತಿದೆ. ಯುದ್ಧ ನಿಲ್ಲದಿದ್ದರೆ ಮುಂದಣ ದಿನಗಳು ಭೀಕರವಾಗಲಿವೆ. ಇರಾನ್ ಮತ್ತು ಪಶ್ಚಿಮ ಏಶ್ಯದ ಅರಬ್ ದೇಶಗಳ ನಡುವೆ ಯಾವ ವೈರವೂ ಇಲ್ಲ; ಸ್ಪರ್ಧೆಯೂ ಇಲ್ಲ. ಇರಾನ್ ಪರ್ಶಿಯಾ ಮೂಲದ ದೇಶವಾದರೆ ಇವೆಲ್ಲ ಅರಬ್ ಮೂಲದ ದೇಶಗಳು. ಇರಾನ್ ಧಾರ್ಮಿಕ ಮೂಲಭೂತವಾದವನ್ನು ನಡೆಸಿಯೂ ಅಭಿವೃದ್ಧಿಹೊಂದಿದೆ. ಅಣುಶಕ್ತಿಯನ್ನೂ ಪಡೆದಿದೆ. ರಶ್ಯ-ಚೀನಾಗಳೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದೆ. ಈ ಯುದ್ಧದ ವ್ಯಂಗ್ಯವೆಂದರೆ ಇರಾನ್ ಒಂದೆಡೆ ಏಕಾಂಗಿಯಾಗಿ ಅಮೆರಿಕ ಮತ್ತು ಇಸ್ರೇಲ್ನ ವಿರುದ್ಧವೆಂಬಂತೆ ಹೋರಾಡುತ್ತಿದ್ದರೆ ಇಸ್ರೆಲಿನೊಂದಿಗೆ ನಷ್ಟವನ್ನು ಅನುಭವಿಸುತ್ತಿರುವುದು ಪಶ್ಚಿಮ ಏಶ್ಯದ ಅರಬ್ ದೇಶಗಳು. ಈ ದೇಶಗಳು ಇನ್ನೂ ಪ್ರತಿಕ್ರಿಯಿಸದೇ ಇರುವುದು ಮೇಲ್ನೋಟಕ್ಕೆ ವಿಚಿತ್ರವಾಗಿ ಕಾಣಿಸಿದರೂ ಅದೊಂದು ಗಹನವಾದ ರಾಜಕಾರಣ. ಎಲ್ಲರಿಗೂ ಗೊತ್ತಿರುವಂತೆ ಈ ಅರಬ್ ದೇಶಗಳು ಅಮೆರಿಕದ ಜೊತೆ ಬಹಳ ನಿಕಟ ಸಂಬಂಧ ಹೊಂದಿ ಅಲ್ಲಿನ ವಾಯು/ಸೇನಾ/ನೌಕಾನೆಲೆಗಳಿಗೆ ತಮ್ಮ ಜಾಗವನ್ನು ನೀಡಿದ್ದವು. ಅಮೆರಿಕ ಈ ರೀತಿಯ ನೆಲೆಗಳನ್ನು ಬಹಳಷ್ಟು ದೇಶಗಳಲ್ಲಿ ಹೊಂದಿದೆ. ಇದರಿಂದಾಗಿ ತನ್ನ ನೆಲದಲ್ಲಿ ಒಂದು ಹನಿರಕ್ತವೂ ಹರಿಯದೆ, ಒಂದಿಷ್ಟೂ ಹಾನಿಯಾಗದೆ ಯುದ್ಧಮಾಡುವ ಅವಕಾಶವನ್ನು ಹೊಂದಿದೆ. ಈಗ ಅವುಗಳ ಈ ನೆಲೆಗಳನ್ನು ನಾಶಮಾಡದೆ ಇರಾನ್ಗೆ ಯುದ್ಧಮಾಡಲು ಸಾಧ್ಯವಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ ನೆಲೆ ನೀಡಿದ ದೇಶಗಳಿಗೆ ಹಾನಿಯಾಗುವುದನ್ನು ತಪ್ಪಿಸುವಂತಿಲ್ಲ. ಇರಾನ್ ಈ ವ್ಯವಹಾರದಲ್ಲಿ ಶಿವಲಿಂಗದ ಮೇಲಿನ ಚೇಳನ್ನು ಘಾಸಿಗೊಳಿಸುವಾಗ ಶಿವಲಿಂಗಕ್ಕೂ ಹಾನಿಮಾಡುವ ಅನಿವಾರ್ಯತೆಯನ್ನು ಹೊಂದಿದೆ. ಅರಬ್ ದೇಶಗಳಿಗೆ ಇದು ಅರ್ಥವಾಗಿದೆ. ಅವು ತಮಗೆ ವೈರವಿಲ್ಲದ ಒಂದು ದೇಶದ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುವ ಯುದ್ಧದಲ್ಲಿ ಪ್ರತೀಕಾರದ ದಾಳಿಗೆ ತಾವು ತುತ್ತಾಗುವ ವಿಚಿತ್ರವನ್ನು ಕಾಣುತ್ತಿವೆ. ಈಗಾಗಲೇ ಬಹರೈನ್ನಲ್ಲಿ ಅಲ್ಲಿನ ಜನರು ತಮ್ಮ ಆಡಳಿತದ ವಿರುದ್ಧ ದನಿಯೆತ್ತಿದ್ದಾರೆ. ಖತರ್ ದೇಶವು ಅರಬ್ ದೇಶಗಳ ಪರವಾಗಿ ಅಮೆರಿಕಕ್ಕೆ ಈಗಾಗಲೇ ಅಗತ್ಯ ಸಂದೇಶವನ್ನು ನೀಡಿ ತಮ್ಮನ್ನು ಈ ಯುದ್ಧದಿಂದ ಹೊರಗಿಡುವಂತೆ ಕರೆಕೊಟ್ಟಿದೆ. ಅಬುಧಾಬಿಯ ಆಡಳಿತವು ತಾವೇಕೆ ಇರಾನ್ನ ವಿರುದ್ಧ ಪ್ರತಿದಾಳಿ ನಡೆಸುತ್ತಿಲ್ಲವೆಂಬುದಕ್ಕೆ ವಿವರಣೆ ನೀಡಿದೆ. ಅಮೆರಿಕ ಮತ್ತದರ ಎಲ್ಲ ವಿಶ್ವಾಸಿಗರು ಇರಾನ್ನ ಸಾಮರ್ಥ್ಯವನ್ನು ಕಡೆಗಣಿಸಿದರೇನೋ ಎಂದು ಈ ಕ್ಷಣಕ್ಕೆ ಅನ್ನಿಸುವಂತಿದೆ. ದೇಶದೊಳಗಿನ ಚುನಾವಣೆಗಳನ್ನು ಗೆಲ್ಲುವ ತರಾತುರಿಯಲ್ಲಿ ಭಾರತದ ಅಂತರ್ರಾಷ್ಟ್ರೀಯ ಹೆಜ್ಜೆ ಈಗಾಗಲೇ ಸಾಕಷ್ಟು ಹಾದಿ ತಪ್ಪಿದೆ. ಮುಂದೆ ಯಾದರೂ ಜಾಗರೂಕವಾಗದೇ ಇದ್ದರೆ ಬರಲಿರುವ ದಿನಗಳಲ್ಲಿ ಭಾರತವು ಈ ಬೆಂಕಿಯ ಶಾಖವನ್ನು ತಡೆಯಲಾಗದೇ ಹೋಗಲೂಬಹುದು. ದೇಶ ಮಾತ್ರವಲ್ಲ 140 ಕೋಟಿ ಭಾರತೀಯರು ಈ ಬಾಹ್ಯಶಾಖಕ್ಕೆ ಕುಕ್ಕರಿನೊಳಗಿನ ವಸ್ತುವಿನಂತೆ ಆಂತರಿಕವಾಗಿ ಬೆಂದುಹೋಗಲೂಬಹುದು.
Ganga Expressway: ಭಾರತದ ಅತಿದೊಡ್ಡ ಗ್ರೀನ್ಫೀಲ್ಡ್ ಹೆದ್ದಾರಿ ಯೋಜನೆಯಿಂದ ಪ್ರಾದೇಶಿಕ ಅಭಿವೃದ್ಧಿಗೆ ಹೊಸ ವೇಗ
ಭಾರತದ ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆ ಪೈಕಿ ಒಂದಾದ ಗಂಗಾ ಎಕ್ಸ್ಪ್ರೆಸ್ವೇ, ದೇಶದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದೆ. ವಿಶ್ವದ ಅತ್ಯಂತ ಸಸ್ಯಶ್ಯಾಮಲ ಹಾಗೂ ಜನಸಾಂದ್ರತೆ ಹೆಚ್ಚಿರುವ ಪ್ರದೇಶಕ್ಕೆ ಜೀವನಾಡಿ ಆಗಿರುವ ಗಂಗಾ ನದಿ ಹೆಸರನ್ನು ಹೆದ್ದಾರಿಗೆ ನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸಿ ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ
ಅಮೆರಿಕದ ಪಶ್ಚಿಮ ಕರಾವಳಿಗೆ ಇರಾನ್ನಿಂದ ಡ್ರೋನ್ ದಾಳಿ ಸಾಧ್ಯತೆ: ಎಫ್ಬಿಐ ಎಚ್ಚರಿಕೆ
ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇರಾನ್ನಿಂದ ಡ್ರೋನ್ ದಾಳಿ ಸಂಭವಿಸುವ ಸಾಧ್ಯತೆಯ ಬಗ್ಗೆ ಎಫ್ಬಿಐ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುವ ಮೊದಲು ಇರಾನ್ ಅಚ್ಚರಿ ಡ್ರೋನ್ ದಾಳಿ ನಡೆಸುವ ಆಶಯ ಹೊಂದಿತ್ತು ಎಂಬ ಮಾಹಿತಿ ದೊರೆತಿದ್ದರೂ, ಯುದ್ಧ ಆರಂಭವಾದ ನಂತರ ಇರಾನ್ನ ಸೈನಿಕ ಸಾಮರ್ಥ್ಯ ಕುಂದಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ದ ತಾರಕಕ್ಕೇರಿದ್ದು, ಈ ಯುದ್ದಕ್ಕೆ ಕೊನೆಯೆಂದು ಎಂಬ ಪ್ರಶ್ನೆಗಳು ಕಾಡುತ್ತಿವೆ. ಈ ನಡುವೆ ಇರಾನ್ ಅಧ್ಯಕ್ಷ ಮಸೂದ್ ಪೆಜಿಶ್ಕಿಯಾನ್ ಇರಾನ್ ಯುದ್ದವನ್ನು ನಿಲ್ಲಿಸಿ ಶಾಂತಿಮಂತ್ರ ಜಪಿಸಲು ಸಿದ್ದ ಎಂದು ತಿಳಿಸಿದೆ. ಆದರೆ, ಈ ಯುದ್ದಕ್ಕೆ ತೆರೆ ಬೀಳಬೇಕಾದರೆ 3 ಷರತ್ತುಗಳಿದ್ದು, ಇದನ್ನು ಒಪ್ಪಿಕೊಂಡು ಅದರಂತೆ ನಡೆದುಕೊಂಡರೆ ಮಾತ್ರ ಸಾಮರಸ್ಯ ಸಾಧಿಸಲು ಸಾಧ್ಯ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಷರತ್ತುಗಳು ರಷ್ಯಾ ಹಾಗೂ ಪಾಕಿಸ್ತಾನದೊಂದಿಗೆ ಮಾತುಕತೆಗಳ ಬೆನ್ನಲ್ಲೇ ಘೋಷಿಸಿದ್ದು, ಏನದು ಯುದ್ದ ನಿಲ್ಲಿಸಲು ಇರಾನ್ ಇಟ್ಟಿರುವ 3 ಷರತ್ತುಗಳು ಎಂಬ ಮಾಹಿತಿ ಇಲ್ಲಿದೆ..
ಒಮಾನ್ | ಸಲಾಲ ಬಂದರಿನಲ್ಲಿ ಸ್ಫೋಟ; ತೈಲ ಸಂಗ್ರಹಾಗಾರಕ್ಕೆ ಇರಾನ್ ಡ್ರೋನ್ ಬಡಿದ ಶಂಕೆ
ಟೆಹರಾನ್: ಇರಾನ್- ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಮರ ಮತ್ತಷ್ಟು ತಾರಕಕ್ಕೇರಿದ್ದು, ಕೊಲ್ಲಿ ಪ್ರದೇಶದ ಅತ್ಯಂತ ಆಯಕಟ್ಟಿನ ಮಹತ್ವದ ಸಾಗರ ಕೇಂದ್ರಗಳಿಗೆ ವ್ಯಾಪಿಸಿದೆ. ಬುಧವಾರ ಒಮಾನ್ ದೇಶದ ಸಲಾಲಾ ಬಂದರಿನ ತೈಲ ಸಂಗ್ರಹ ಟ್ಯಾಂಕ್ ಗಳಿಗೆ ಹಲವು ಇರಾನಿ ಡ್ರೋನ್ಗಳು ಬಡಿದಿವೆ. ಇದು ಬೆಂಕಿಗೆ ಕಾರಣವಾಗಿದ್ದು, ಜಾಗತಿಕವಾಗಿ ಇಂಧನ ಹಾಗೂ ಶಿಪ್ಪಿಂಗ್ ಮಾರುಕಟ್ಟೆಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಹಲವು ಡ್ರೋನ್ಗಳನ್ನು ಛೇದಿಸಲಾಗಿದ್ದರೂ ಕೆಲ ಇತರ ಡ್ರೋನ್ಗಳು ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಬಂದರಿನಲ್ಲಿ ತೈಲ ಸಂಗ್ರಹ ಮೂಲಸೌಕರ್ಯಕ್ಕೆ ಅಪ್ಪಳಿಸಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ದಾಳಿಯಿಂದ ಕನಿಷ್ಠ ಎರಡು ಇಂಧನ ಟ್ಯಾಂಕ್ ಗಳಲ್ಲಿ ದೊಡ್ಡಪ್ರಮಾಣದ ಬೆಂಕಿ ಅನಾಹುತ ಸಂಭವಿಸಿದ್ದರೂ, ಯಾವುದೇ ಸಾವು ನೋವು ಸಂಭವಿಸಿಲ್ಲ. ಅಲ್ಲೇ ಪಕ್ಕದಲ್ಲಿ ಲಂಗರು ಹೂಡಿದ್ದ ವ್ಯಾಪಾರಿ ಹಡಗುಗಳಿಗೂ ಹಾನಿಯಾಗಿಲ್ಲ. ಆದರೆ ಈ ಘಟನೆಯಿಂದ ಯುದ್ಧವು ಇರಾನ್, ಇಸ್ರೇಲ್ ಮತ್ತು ಅಮೆರಿಕದ ನೆಲೆಗಳನ್ನು ದಾಟಿ ಪಸರಿಸುತ್ತಿದ್ದು, ಕೊಲ್ಲಿ ರಾಷ್ಟ್ರಗಳ ಇಂಧನ ಮೂಲಸೌಕರ್ಯ ಮತ್ತು ಸಾಗರ ವ್ಯಾಪಾರ ಮಾರ್ಗಗಳಿಗೆ ಭಾರಿ ಅಪಾಯ ಒದಗಿದೆ. ಅರಬ್ಬೀ ಸಮುದ್ರದಲ್ಲಿರುವ ಒಮಾನ್ ದೇಶದ ಧೋಫಾರ್ ಪ್ರದೇಶದಲ್ಲಿರುವ ಸಲಾಲಾ ಬಂದರು ಮಧ್ಯಪ್ರಾಚ್ಯದ ಪ್ರಮುಖ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ ಕೇಂದ್ರವಾಗಿದೆ. ಈ ಬಂದರು ಕಂಟೈನರ್ ಸಂಚಾರ ಮತ್ತು ತೈಲ ಸಂಗ್ರಹಾಗಾರಗಳನ್ನು ನಿರ್ವಹಿಸುತ್ತದೆ ಮತ್ತು ಏಷ್ಯಾ, ಯೂರೋಪ್ ಹಾಗೂ ಆಫ್ರಿಕಾ ನಡುವೆ ಸಂಚರಿಸುವ ಹಡಗುಗಳಿಗೆ ಬಂಕರ್ ಕಾರ್ಯಾಚರಣೆ ಸೌಲಭ್ಯವನ್ನು ಒದಗಿಸುತ್ತದೆ. ಈ ವ್ಯವಸ್ಥೆಯ ಮೇಲೆ ಡ್ರೋನ್ ದಾಳಿ ನಡೆದಾಗ ಬಂದರಿನ ಸಂಗ್ರಹ ಪ್ರದೇಶದಲ್ಲಿದ್ದ ತೈಲ ಟ್ಯಾಂಕ್ ಗಳಿಗೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಆಕಾಶದಲ್ಲಿ ದಟ್ಟವಾದ ಹೊಗೆ ವ್ಯಾಪಿಸಿದೆ. ತೈಲ ಡಿಪೋದ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚುತ್ತಿರುವ ವಿಡಿಯೊಗಳು ವೈರಲ್ ಆಗಿವೆ.
Sullia | ಉಗ್ರಾಣಿ ಅಬ್ದುಲ್ಲಾ ನಿಧನ
ಸುಳ್ಯ : ಸುಳ್ಯ ಗಾಂಧಿನಗರ ನಾವೂರು ನಿವಾಸಿ ಹಿರಿಯ ವ್ಯಾಪಾರಿ ಸ್ನೇಹಜೀವಿ ಉಗ್ರಾಣಿ ಅಬ್ದುಲ್ಲಾ (80) ಮಾ.12 ರಂದು ಬೆಳಗಿನ ಜಾವ ನಿಧನರಾದರು. ಸುಳ್ಯ ಅನ್ಸಾರಿಯಯಾ ಯತೀಂ ಖಾನದ ಮಾಜಿ ನಿರ್ದೇಶಕರಾಗಿದ್ದ ಉಗ್ರಾಣಿ ಅಬ್ದುಲ್ಲಾ, ಕಳೆದ ಹಲವು ದಶಕಗಳಿಂದ ಸುಳ್ಯದ ಜನತಾ ಸ್ಟೋರ್ ಹಿಂಬಾಗದಲ್ಲಿ ಗೋಣಿ ಚೀಲ, ಡ್ರಮ್ ಹಾಗೂ ಇನ್ನಿತರ ಪ್ಲಾಸ್ಟಿಕ್ ಸಾಮಗ್ರಿಗಳ ವ್ಯಾಪಾರ ನಡೆಸುತ್ತಿದ್ದರು. ಸುಳ್ಯದ ಹಿರಿಯ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದ ಅವರು ಸಾರ್ವಜನಿಕರೊಂದಿಗೆ ಆತ್ಮೀಯ ಹಾಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು (ಮಾ.12 ರಂದು) ಮಧ್ಯಾಹ್ನ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾರತವನ್ನು ಆಪ್ತಮಿತ್ರನನ್ನಾಗಿ ಉಳಿಸಿಕೊಳ್ಳುವ ಮುಂದುವರಿದ ಇರಾನ್ ಪ್ರಯತ್ನ: ಏನಿದು ಪಶ್ಚಿಮ ಏಷ್ಯಾ ಲೆಕ್ಕಾಚಾರ?
India and Iran Ties : ಇಸ್ರೇಲ್ ಮತ್ತು ಅಮೆರಿಕಾದ ನಡುವೆ ಭಾರತ ಉತ್ತಮ ಸಂಬಂಧವನ್ನು ಹೊಂದಿದ್ದರೂ, ಈ ಎರಡು ದೇಶಗಳ ಶತ್ರು ಇರಾನ್, ಭಾರತವನ್ನು ದೂರ ಮಾಡಿಕೊಳ್ಳಲು ಬಯಸುತ್ತಿಲ್ಲ. ಇರಾನ್, ಭಾರತವನ್ನು ಬರೀ ತೈಲ ಖರೀದಿಯ ಅಥವಾ ಇನ್ಯಾವುದೋ ವ್ಯಾಪಾರದ ದೃಷ್ಟಿಯಿಂದ ನೋಡದೇ ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತಬಲ್ಲ ಪ್ರಬಲ ದೇಶವಾಗಿ ನೋಡುತ್ತಿದೆ. ಭಾರತವನ್ನು ಯಾಕೆ ಇರಾನ್, ಆಪ್ತಮಿತ್ರನನ್ನಾಗಿ ನೋಡುತ್ತಿದೆ?
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪದಚ್ಯುತಗೊಳಿಸಲು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲು
ಲೋಕಸಭೆಯ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ವಜಾಗೊಳಿಸುವಂತೆ ಕೋರುವ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸಲಾಯಿತು. ಇದರೊಂದಿಗೆ ನಿರ್ಣಯ ವಜಾಗೊಂಡಿದ್ದು, ಓಂ ಬಿರ್ಲಾ ಅವರ ಸ್ಪೀಕರ್ ಸ್ಥಾನ ಅಬಾಧಿತವಾಗಿದೆ. ವಿಧೇಯಕದ ಪರವಾಗಿ ಅಗತ್ಯ ಮತಗಳನ್ನು ಪಡೆಯುವಲ್ಲಿ ಪ್ರತಿಪಕ್ಷಗಳು ವಿಫಲವಾದವು.
ಅನುದಾನದ ಸಮಸ್ಯೆಯಿಂದ ಸ್ಥಗಿತವಾಗಿದ್ದ ತೆಂಗು ವೈಜ್ಞಾನಿಕ ಸಮೀಕ್ಷೆ ಪುನಾರಂಭ
ಕಳೆದ ಬಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ತೆಂಗು ಸಮೀಕ್ಷೆ, ಈ ವರ್ಷ ಪುನಾರಂಭಗೊಂಡಿದೆ. ಸಮೀಕ್ಷೆ ಪೂರ್ಣಗೊಂಡು ತೆಂಗು ಬೆಳೆಗಾರರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಅನುದಾನಕ್ಕಷ್ಟೇ ಸೀಮಿತವಾಗದೆ ವೈಜ್ಞಾನಿಕವಾಗಿ ನಡೆಯಲೆಂಬುದು ರೈತರ ಆಶಯ.
ಮೂರು ಷರತ್ತುಗಳನ್ನು ಪೂರೈಸಿದರೆ ಮಾತ್ರ ಮಾತುಕತೆ: ಯುದ್ಧ ವಿರಾಮದ ಕುರಿತು ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಹೇಳಿಕೆ
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರವಾಗಿರುವ ಸಂದರ್ಭದಲ್ಲಿ, ಯುದ್ಧವನ್ನು ಕೊನೆಗೊಳಿಸಲು ಮೂರು ಪ್ರಮುಖ ಷರತ್ತುಗಳನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಮುಂದಿಟ್ಟಿದ್ದಾರೆ. ನಿನ್ನೆ ಹಾಗೂ ಇಂದು ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಅವರು, ಈ ಷರತ್ತುಗಳು ಈಡೇರಿದರೆ ಇರಾನ್ ಮಾತುಕತೆಗೆ ಮರಳಲು ಸಿದ್ಧವಿದೆ ಎಂದು ಸೂಚಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಪೆಜೆಶ್ಕಿಯನ್ ಹೇಳುವಂತೆ, ಮೊದಲನೆಯದಾಗಿ ಇರಾನ್ನ ಸಾರ್ವಭೌಮ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಮಾನ್ಯತೆ ನೀಡಬೇಕು. ಎರಡನೆಯದಾಗಿ, ಇತ್ತೀಚಿನ ಸಂಘರ್ಷದಿಂದ ದೇಶದಲ್ಲಿ ಉಂಟಾದ ವಿನಾಶಕ್ಕೆ ಪರಿಹಾರ ಪಾವತಿಸಬೇಕು. ಮೂರನೆಯದಾಗಿ, ಭವಿಷ್ಯದಲ್ಲಿ ಇಂತಹ ಆಕ್ರಮಣಗಳು ಮರುಕಳಿಸದಂತೆ ದೃಢವಾದ ಅಂತರರಾಷ್ಟ್ರೀಯ ಭದ್ರತಾ ಖಾತರಿ ನೀಡಬೇಕು. ಈ ಕುರಿತು ಇನ್ನೊಂದು ಕಡೆಯಿಂದ ಪ್ರತಿಕ್ರಿಯೆಗಾಗಿ ಇರಾನ್ ಕಾಯುತ್ತಿದೆ. ಆದರೆ ಎದುರಾಳಿಗಳ ಮೇಲೆ ನಂಬಿಕೆ ಇಲ್ಲ ಎಂದು ಇರಾನ್ ಅಧಿಕಾರಿಗಳು ಹಲವು ಬಾರಿ ಹೇಳಿದ್ದಾರೆ. ಇನ್ನೊಂದೆಡೆ, ಕುವೈತ್, ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ದೇಶಗಳು ಇರಾನಿನ ಹಲವು ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಪ್ರತಿಬಂಧಿಸಿರುವುದಾಗಿ ವರದಿಯಾಗಿದೆ. ಇದರ ಮಧ್ಯೆ ಇರಾಕ್ನ ಅಲ್-ಫಾ ಬಂದರಿನಲ್ಲಿ ಎರಡು ವಿದೇಶಿ ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ತೈಲ ಟ್ಯಾಂಕರ್ಗಳನ್ನು ರಕ್ಷಿಸುವುದಾಗಿ ಘೋಷಿಸಿದ್ದಾರೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಬ್ಯಾರೆಲ್ಗೆ 200 ಡಾಲರ್ ಮಟ್ಟಕ್ಕೇರಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ಇಸ್ರೇಲಿ ಸೇನೆ ಲೆಬನಾನ್ ರಾಜಧಾನಿ ಬೈರುತ್ ಮೇಲೆ ಭಾರಿ ದಾಳಿಗಳನ್ನು ಮುಂದುವರಿಸುತ್ತಿರುವುದಾಗಿ ವರದಿಯಾಗಿದ್ದು, ಇರಾನ್ ಮತ್ತು ಹೆಜ್ಬೊಲ್ಲಾ ಸಂಘಟನೆಗಳು ಇಸ್ರೇಲ್ ಮೇಲೆ ಸಂಯೋಜಿತ ದಾಳಿಗಳನ್ನು ಆರಂಭಿಸಿರುವುದಾಗಿ ತಿಳಿದುಬಂದಿದೆ. ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಈ ಸಂಘರ್ಷದ ಪರಿಣಾಮವಾಗಿ ಪ್ರದೇಶದಾದ್ಯಂತ ಸಾವುನೋವುಗಳು ಹೆಚ್ಚುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.
ವಿಶ್ವಕಪ್ ಪ್ರಶಸ್ತಿ: ಭಾರತದ ಸಾಧನೆ ಶ್ಲಾಘಿಸಿದ ಪಾಕ್ ಆಲ್ ರೌಂಡರ್
ಕರಾಚಿ: ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡವನ್ನು ಪಾಕಿಸ್ತಾನದ ಆಲ್ ರೌಂಡರ್ ಇಮಾದ್ ವಸೀಮ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಪಿಚ್ ಗಳ ಬಗ್ಗೆ ಮತ್ತು ಭಾರತಕ್ಕೆ ಲಾಭದಾಯಕವಾಗುವ ವಾತಾವರಣವಿತ್ತು ಎಂಬ ಟೀಕೆಗಳ ನಡುವೆಯೂ ಇಡೀ ಟೂರ್ನಿಯಲ್ಲಿ ಭಾರತ ಪ್ರಾಬಲ್ಯ ಮೆರೆದಿದೆ ಎಂದು ಅವರು ಹೇಳಿದ್ದಾರೆ. ಭಾನುವಾರ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ನಲ್ಲಿ ನ್ಯೂಝಿಲೆಂಡ್ ತಂಡವನ್ನು 96 ರನ್ನುಗಳಿಂದ ಬಗ್ಗುಬಡಿದು ಭಾರತ ಪ್ರಶಸ್ತಿ ಉಳಿಸಿಕೊಂಡಿತ್ತು. ಈ ಮೂಲಕ ಜಾಗತಿಕ ಟೂರ್ನಿಗಳಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ಟೂರ್ನಿಯಲ್ಲಿ ಪರಿಸ್ಥಿತಿಗಳು ಭಾರತಕ್ಕೆ ಪೂರಕವಾಗಿದ್ದವು ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ ಇಂಥ ಪ್ರತಿಪಾದನೆಯನ್ನು ತಳ್ಳಿಹಾಕಿದ ವಾಸಿಂ, ಪಿಚ್ ಗಳು ಎಲ್ಲ ತಂಡಗಳಿಗೂ ನ್ಯಾಯಸಮ್ಮತವಾಗಿದ್ದವು ಎಂದು ವಿಶ್ಲೇಷಿಸಿದ್ದಾರೆ. ಭಾರತಕ್ಕೆ ಪೂರಕವಲ್ಲದ ವಾತಾವರಣದ ನಿದರ್ಶನಗಳೂ ಇವೆ. ಆದಾಗ್ಯೂ ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು ಎಂದು ಗುಣಗಾನ ಮಾಡಿದ್ದಾರೆ. ಅಂಪೈರ್ ಗಳು ಭಾರತದ ಪರವಾಗಿದ್ದರು ಅಥವಾ ಸ್ಪಿನ್-ಸ್ನೇಹಿ ಪಿಚ್ಗಳನ್ನು ಸಿದ್ಧಪಡಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಈ ಟೂರ್ನಿಯಲ್ಲಿ ಪಿಚ್ ಗಳು ಸಮತೋಲನದಲ್ಲಿದ್ದವು. ಕೆಲವೊಮ್ಮೆ ಭಾರತಕ್ಕೆ ವಿರುದ್ಧವಾದ ಪರಿಸ್ಥಿತಿಯೂ ಇತ್ತು. ಆದಾಗ್ಯೂ ಪ್ರಬಲ ಪ್ರದರ್ಶನ ನೀಡುವಲ್ಲಿ ಭಾರತ ಯಶಸ್ವಿಯಾಯಿತು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು ಎಂದು ಪಾಕಿಸ್ತಾನಿ ಟಿವಿ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಹೇಳಿದರು. ಭಾರತದ ಯಶಸ್ಸನ್ನು ಪ್ರಶ್ನಿಸುವ ಬದಲು ಇತರ ತಂಡಗಳು ಭಾರತ ಹೇಗೆ ಉತ್ತಮವಾಗಿ ಆಡಿತು ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಅವರು ಅಭಿಪ್ರಾಯಪಟ್ಟರು.
ಮಧ್ಯಪ್ರಾಚ್ಯಕ್ಕೆ ಚಾಮರಾಜನಗರ ಕಪ್ಪುಶಿಲೆ ರಫ್ತು ಸ್ಥಗಿತ ; ಗಣಿ ಮಾಲೀಕರು, ಸರಕಾರಕ್ಕೆ ನಷ್ಟ
ವಿಧಾನ ಪರಿಷತ್ ಸದಸ್ಯರಾದ ಶಿವಕುಮಾರ್ ಅವರು ಜಿಲ್ಲೆಯಲ್ಲಿ ಕಪ್ಪು ಶಿಲೆ ಗಣಿಗಾರಿಕೆ ಎಷ್ಟು ನಡೆಯುತ್ತಿವೆ. ಅದರಿಂದ ಎಷ್ಟು ರಾಜಧನ ದೊರೆಯುತ್ತಿದೆ ಹಾಗೂ ಎಲ್ಲೆಲ್ಲಿಗೆ ಕಪ್ಪುಶಿಲೆ ರಫ್ತಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಸರಕಾರ ಮಾಹಿತಿ ಒದಗಿಸಿದೆ. ಇದರಿಂದ ರಾಜಧನದಲ್ಲಿಕುಂಠಿತವಾಗಿರುವುದು ಹಾಗೂ ಯುದ್ಧದ ಪರಿಣಾಮ ರಫ್ತಿನ ಪ್ರಮಾಣ ತಗ್ಗಿರುವ ಸಂಗತಿಯನ್ನ ಅಧಿವೇಶನಕ್ಕೆ ನೀಡಲಾಗಿದೆ.
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್
Karnataka Weather Mar 12: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿಸಿಲು ಹೆಚ್ಚಾಗುತ್ತಿದೆ. ಮುಂದಿನ ವಾರದಿಂದ ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ, ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯ ನೈಋತ್ಯ ಮತ್ತು ಶ್ರೀಲಂಕಾದ ಉತ್ತರ ಭಾಗದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5
ಟಿ20 ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತಕ್ಕೆ ಐಸಿಸಿಯಿಂದ 24 ಕೋಟಿ; ಇತರ ದೇಶಗಳಿಗೆ ಸಿಕ್ಕಿದ್ದೆಷ್ಟು?
ಹೊಸದಿಲ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬುಧವಾರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ ದೇಶಗಳಿಗೆ ಒಟ್ಟು 11.25 ದಶಲಕ್ಷ ಡಾಲರ್ ಅಂದರೆ 103 ಕೋಟಿ ರೂಪಾಯಿಗಳ ಬಹುಮಾನ ಮೊತ್ತವನ್ನು ಹಂಚಿಕೆ ಮಾಡಿ ಅಂತಿಮ ವಿತರಣೆಯನ್ನು ಘೋಷಿಸಿದೆ. ಐಸಿಸಿ 2024ರಲ್ಲಿ ಆಟಗಾರರ ಬಹುಮಾನ ಮೊತ್ತವನ್ನು ಹೆಚ್ಚಿಸಿದ ನೀತಿಗೆ ಅನುಸಾರವಾಗಿ ಆಟಗಾರರ ಬಹುಮಾನ ನಿಧಿಯನ್ನು ಹಂಚಿಕೆ ಮಾಡಲಾಗಿದೆ. ಗುಂಪು ಹಂತ, ಸೂಪರ್8, ಸೆಮಿಫೈನಲ್ ಹಾಗೂ ಫೈನಲ್ ತಲುಪಿದ ತಂಡಗಳಿಗೆ ತೆರಿಗೆ ಬದ್ಧತೆ ಪೂರ್ವ ಅಥವಾ ಕಡಿತಕ್ಕೆ ಮೊದಲು ಘೋಷಿಸಲಾದ ಮೊತ್ತ ಇದಾಗಿರುತ್ತದೆ. ಒಟ್ಟಾರೆ ಮೊತ್ತದಲ್ಲಿ ಮೂಲವಾಗಿ ಪಾಲ್ಗೊಂಡಿದ್ದಕ್ಕೆ ತಂಡಗಳಿಗೆ ಪಾವತಿ ಮಾಡುವ ಮೊತ್ತ (2.25 ಲಕ್ಷ ಡಾಲರ್), ತಂಡಗಳ ಅಂತಿಮ ಸ್ಥಾನ, ಗೆಲುವಿನ ಬೋನಸ್ ಗಳು ಹಾಗೂ ಪ್ರತಿ ಹಂತಕ್ಕೆ ಏರಿದಂತೆ ಸಿಗುವ ಮೊತ್ತ ಸೇರಿದೆ. ಐಸಿಸಿ ಪ್ರಕಟಣೆಯ ಪ್ರಕಾರ, ಭಾರತ 26.39 ಲಕ್ಷ ಡಾಲರ್ ಅಂದರೆ ಸುಮಾರು 24.25 ಕೋಟಿ ರೂಪಾಯಿ ಬಹುಮಾನ ಪಡೆದಿದೆ. ನ್ಯೂಝಿಲೆಂಡ್ (13.08 ಕೋಟಿ), ಸೆಮಿಫೈನಲ್ ನಲ್ಲಿ ಸೋತ ದಕ್ಷಿಣ ಆಫ್ರಿಕಾ (9.24 ಕೋಟಿ), ಇಂಗ್ಲೆಂಡ್ (8.96 ಕೋಟಿ) ಕೂಡಾ ಭಾರಿ ಮೊತ್ತ ಪಡೆದಿವೆ. ಪಾಕಿಸ್ತಾನ ತಂಡಕ್ಕೆ 4.80 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಮತ್ತು ಬೆಂಬಲ ಸಿಬ್ಬಂದಿಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ 131 ಕೋಟಿ ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದರು. ಇದು ಭಾರತ ತಂಡ ಈ ಹಿಂದೆ ಯಾವುದೇ ಗೆಲುವಿಗೆ ಪಡೆದದ್ದಕ್ಕಿಂತ ದೊಡ್ಡ ಬಹುಮಾನ ಮೊತ್ತವಾಗಿದೆ.
ಮೈಸೂರು : ವಾಣಿಜ್ಯ ಬಳಕೆಗೆ ಸಿಲಿಂಡರ್ ಕೊರತೆ: ಹೊಟೇಲ್ಗಳಲ್ಲಿ ಟೀ ಬಂದ್
ಮಧ್ಯ ಪ್ರಾಚ್ಯ ದೇಶಗಳ ಉದ್ವಿಗ್ನತೆಯಿಂದ ಭಾರತದ ಹೊಟೇಲ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ವಾಣಿಜ್ಯ ಬಳಕೆಗೆ ಸಿಲಿಂಡರ್ ಕೊರತೆ ಉಂಟಾಗಿದೆ. ಹೀಗಾಗಿ ಅತೀ ಹೆಚ್ಚು ಮಾರಾಟವಾಗುವ ಟೀಗೆ ತಾತ್ಕಾಲಿಕವಾಗಿ ಕೊಕ್ ನೀಡಲು ಹೋಟೆಲ್ ಮಾಲೀಕರು ತೀರ್ಮಾನಿಸಿದ್ದಾರೆ.
LPG Crisis: ಭಾರತದ ಎಲ್ಪಿಜಿ ಬಿಕ್ಕಟ್ಟಿನ ಚರ್ಚೆಯ ಹಿಂದಿನ ವಾಸ್ತವ: ನೀತಿ ವೈಫಲ್ಯವಲ್ಲ, ಜಾಗತಿಕ ಇಂಧನ ಆಘಾತ
ಇತ್ತೀಚಿನ ವಾರಗಳಲ್ಲಿ ಕೇಂದ್ರ ಸರ್ಕಾರವು ಮಾರ್ಚ್ 7, 2026 ರಂದು ದೇಶೀಯ ಅಡುಗೆ ಅನಿಲದ (ಗ್ಯಾಸ್ ಸಿಲಿಂಡರ್) ಬೆಲೆಯಲ್ಲಿ 60 ರೂಪಾಯಿ ಹೆಚ್ಚಳವನ್ನು ಅನುಮೋದಿಸಿದ ನಂತರ ಭಾರತದ LPG ಬೆಲೆ ನೀತಿಯು ರಾಜಕೀಯ ದಾಳಿಗೆ ಒಳಗಾಗಿದೆ. ಹೆಚ್ಚುತ್ತಿರುವ ಜಾಗತಿಕ ಇಂಧನ ವೆಚ್ಚಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಸರ್ಕಾರ ವಿಫಲವಾಗಿದೆ ಎಂಬುದಕ್ಕೆ ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು ಪುರಾವೆಯಾಗಿ
ಜೂನ್ ವೇಳೆಗೆ ತುಂಗಭದ್ರಾ ಡ್ಯಾಂಗೆ ಒಳಹರಿವು ಆರಂಭ ಆಗುತ್ತದೆ. ಹೀಗಾಗಿ ಮೇ ತಿಂಗಳ ಅರ್ಧದ ವೇಳೆಗೆ ಗೇಟ್ ಕೆಲಸ ಸಂಪೂರ್ಣ ಮುಗಿಯುವ ಅಗತ್ಯವಿದೆ. ಆದರೆ ಈಗಿರುವ ವೇಗದಲ್ಲೇ ಸಾಗಿದರೆ, ಗೇಟ್ ಅಳವಡಿಕೆ ಕಷ್ಟಸಾಧ್ಯ. ಆದ್ರೆ ಹೆಚ್ಚುವರಿ ತಂಡಗಳ ಜೊತೆಗೂ ಕೆಲಸ ಮಾಡುವ ಅವಕಾಶವಿದೆ. ಈ ಡ್ಯಾಂ ನೀರಿನ್ನೆ ನೆಚ್ಚಿಕೊಂಡು 10 ಲಕ್ಷ ಎಕರೆ ಕೃಷಿಭೂಮಿಯಲ್ಲಿ ಕೃಷಿ ಮಾಡಲಾಗುತ್ತದೆ.
IDFC ಫಸ್ಟ್ ಬ್ಯಾಂಕ್ 590 ಕೋಟಿ ರೂ. ವಂಚನೆ ಪ್ರಕರಣ; ಹರ್ಯಾಣ, ಚಂಡೀಗಢದ 19 ಸ್ಥಳಗಳಲ್ಲಿ ED ಶೋಧ
ಚಂಡೀಗಢ: ಚಂಡೀಗಢದಲ್ಲಿರುವ ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ಹರ್ಯಾಣ ಸರ್ಕಾರ ಠೇವಣಿ ಇರಿಸಿದ್ದ 590 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬುಧವಾರ ಹರ್ಯಾಣ ಮತ್ತು ಚಂಡೀಗಢದ ಒಟ್ಟು 19 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಹಣ ದುರುಪಯೋಗದ ಪ್ರಕರಣದ ತನಿಖೆ ಹಾಗೂ ಅಪರಾಧ ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಲು ಆರೋಪಿಗಳಿಗೆ ವಾಸ್ತವ್ಯಕ್ಕೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ವಿವಿಧ ಉದ್ಯಮ ಸಂಸ್ಥೆಗಳ ವಿರುದ್ಧ ಹರ್ಯಾಣ ಮತ್ತು ಚಂಡೀಗಢದಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ನಿಧಿಗಳನ್ನು ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿಯಾಗಿ ಇರಿಸಬೇಕಾಗಿತ್ತು. ಆದರೆ, ಈ ಹಣವನ್ನು ನಿಶ್ಚಿತ ಠೇವಣಿಯಲ್ಲಿ ಇರಿಸದೇ ಕೆಲವು ಆರೋಪಿಗಳು ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಪ್ರಮುಖ ಆರೋಪಿಗಳು, ಈ ಅಪರಾಧ ಪ್ರಕ್ರಿಯೆ ಬೆಳಕಿಗೆ ಬಂದ ಬ್ಯಾಂಕಿನ ಮಾಜಿ ಅಧಿಕಾರಿಗಳು, ವಂಚನೆಯ ಫಲಾನುಭವಿಗಳು ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ಗಳು ಸೇರಿದಂತೆ ಆರೋಪಿಗಳಿಗೆ ವಾಸ್ತವ್ಯಕ್ಕೆ ನೆರವು ಒದಗಿಸಿದ್ದರೆಂದು ಶಂಕಿಸಲ್ಪಟ್ಟ ವಿವಿಧ ಉದ್ಯಮ ಸಂಸ್ಥೆಗಳ ಸ್ಥಳಗಳಲ್ಲಿ ದಾಳಿ ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಬೃಹತ್ ಮೊತ್ತದ ನಿಧಿಯನ್ನು ಹಲವು ಶೆಲ್ ಕಂಪನಿಗಳ ಮೂಲಕ ಸಣ್ಣಪುಟ್ಟ ಆಭರಣ ಸಂಸ್ಥೆಗಳಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ವಹಿವಾಟುಗಳಲ್ಲಿ ಭಾರಿ ಪ್ರಮಾಣದ ಹಣ ಚಲನವಲನ ನಡೆದಿರುವುದು ಬೆಳಕಿಗೆ ಬಂದಿದೆ. ಬಳಿಕ ಚಿನ್ನ ಖರೀದಿಯ ನೆಪದಲ್ಲಿ ಈ ಮೊತ್ತವನ್ನು ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಣಕಾಸು ವಂಚನೆಯಲ್ಲಿ ಗಮನಾರ್ಹ ಪ್ರಮಾಣದ ನಗದು ಹಿಂಪಡೆಯಲಾಗಿದೆ ಎಂಬುದೂ ತನಿಖೆಯಲ್ಲಿ ಗಮನಕ್ಕೆ ಬಂದಿದೆ. ಟ್ರೈಸಿಟಿ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಚಂಡೀಗಢ ಮೂಲದ ಹೋಟೆಲ್ ಉದ್ಯಮಿ ವಿಕ್ರಂ ವಾಧ್ವಾ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿದೆ. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಆತ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಲಕ್ಕುಂಡಿ ಉತ್ಖನನಕ್ಕೆ ತೆರೆ: 47 ದಿನಗಳಲ್ಲಿ ಭೂಗರ್ಭದಲ್ಲಿದ್ದ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷ ಪತ್ತೆ
ನಿಧಿ ಸಿಕ್ಕ ಬಳಿಕ ಭಾರಿ ಕುತೂಹಲ ಕೆರಳಿಸಿದ್ದ ಲಕ್ಕುಂಡಿಯಲ್ಲಿ 47 ದಿನಗಳ ಕಾಲ ಉತ್ಖನನ ಮಾಡಲಾಗಿದೆ. ಇನ್ನೂ ಕೂಡಾ 101 ಗುಡಿಗಳು, ಬಾವಿಗಳನ್ನು ಪತ್ತೆಹಚ್ಚುವ ಕಾರ್ಯ ನಿರಂತರವಾಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದು, ಸದ್ಯಕ್ಕಂತೂ ಉತ್ಖನನ ಕಾರ್ಯಕ್ಕೆ ತೆರೆ ಎಳೆಯಲಾಗಿದೆ.
ಭಾರತಕ್ಕೆ ಬರುತ್ತಿದ್ದ ನೌಕೆ ಮೇಲೆ ಹರ್ಮುಜ್ ಜಲಸಂಧಿ ದಾಟುತ್ತಿದ್ದಾಗ ಇರಾನ್ ದಾಳಿ : ತೀವ್ರ ಖಂಡನೆ
ಮಧ್ಯಪ್ರಾಚ್ಯ ಸಂದರ್ಷ ಆರಂಭವಾದ ದಿನಗಳಿಂದ ಇದೇ ಮೊದಲು ಭಾರತದ ನೌಕೆ ಮೇಲೆ ನೇರ ದಾಳಿಯಾಗಿದೆ, ನೌಕೆ ಹೊತ್ತಿ ಉರಿದಿದೆ. ಇನ್ನೊಂದೆಡೆ ಕೊಲ್ಲಿ ರಾಷ್ಟ್ರಗಳು ಹಾಗೂ ಇರಾನ್ ರಸಗೊಬ್ಬರ ಉತ್ಪಾನೆ ಹಾಗೂ ರಫ್ತು ಎರಡನ್ನೂ ಸಂಪೂರ್ಣ ಸ್ಥಗಿತಮಾಡಿದ್ದು, ರೈತರಿಗೂ ಈಗ ತಲೆನೋವಾಗಿ ಪರಿಣಮಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಇರಾನ್ ವಿರುದ್ಧ ಗುಡುಗಿದ್ದಾರೆ. ಮತ್ತೆ, ಮತ್ತೆ ದೊಡ್ಡ ಮಟ್ಟದಲ್ಲಿ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿರುವ ಇರಾನ್ ಸೇನೆ ಹಾಗೂ ಇರಾನ್ ನಾಯಕರಿಗೆ ಈಗ ಡೊನಾಲ್ಡ್ ಟ್ರಂಪ್ ಅವರು ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ರೀತಿ ಮತ್ತೆ ತಿಕ್ಕಾಟ ಮುಂದುವರಿದರೆ ಅಮೆರಿಕ ಸೇನೆ ದೊಡ್ಡ ಮಟ್ಟದಲ್ಲಿ ದಾಳಿ ಮಾಡುವ
ಈ ತಿಂಗಳ ಆರಂಭದಲ್ಲಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಲವಾರು ವಿರೋಧ ಪಕ್ಷಗಳ ನಾಯಕರಿಗೆ ಕರೆ ಮಾಡಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಬಯಸಿದ್ದಾರೆಂದು ತಿಳಿಸಿದರು. ಸಭೆಯ ಕಾರಣವನ್ನು ಅವರು ಬಹಿರಂಗಪಡಿಸಲಿಲ್ಲ. ಸಮಾಜವಾದಿ ಪಕ್ಷದೊಂದಿಗಿನ ಅಂತಹ ಒಂದು ಸಭೆ ಮಾರ್ಚ್ 5 ರಂದು ನಿಗದಿಯಾಗಿತ್ತು. ಕಾಕತಾಳೀಯವಾಗಿ, ರಾಜ್ಯಸಭೆಗೆ ಪ್ರವೇಶಿಸಲು ಉತ್ಸುಕರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ನಾಮಪತ್ರಗಳನ್ನು ಸಲ್ಲಿಸುತ್ತಿದ್ದ ದಿನವೂ ಅದೇ ಆಗಿತ್ತು. ಅಮಿತ್ ಶಾ ದೆಹಲಿಯಿಂದ ಪಾಟ್ನಾಗೆ ವಿಮಾನದಲ್ಲಿ ಬಂದಿದ್ದರು. ಸಮಾಜವಾದಿ ಪಕ್ಷದೊಂದಿಗಿನ ಸಭೆಗೆ ಸಮಯಕ್ಕೆ ಸರಿಯಾಗಿ ಅವರು ಸಂಜೆಯ ವೇಳೆಗೆ ರಾಜಧಾನಿಗೆ ಹಿಂತಿರುಗುವ ನಿರೀಕ್ಷೆಯಿತ್ತು. ಆದರೆ ಪಾಟ್ನಾದಲ್ಲಿನ ಬೆಳವಣಿಗೆಗಳು ಅವರ ಪ್ರಯಾಣವನ್ನು ವಿಳಂಬಗೊಳಿಸಿದವು. ಹಾಗಾಗಿ ಸಭೆಯನ್ನು ಮರುನಿಗದಿಪಡಿಸಬೇಕಾಯಿತು. ಅಮಿತ್ ಶಾ ಇತ್ತೀಚೆಗೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯ (ಅಧಿಕೃತವಾಗಿ ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆಯಲಾಗುತ್ತದೆ) ತ್ವರಿತ ಅನುಷ್ಠಾನಕ್ಕೆ ಬಯಸುತ್ತಿದೆ ಎಂದು ಹೇಳಿದರು. ಕಾನೂನು ಪ್ರಸ್ತುತ “ಕಾಯುವ ಅವಧಿಯನ್ನು” ಹೊಂದಿದೆ. ಹೊಸ ಜನಗಣತಿ ಮುಗಿದ ನಂತರ ಮತ್ತು ಡಿಲಿಮಿಟೇಶನ್ ಮಾಡಿದ ಬಳಿಕ ಮಹಿಳೆಯರಿಗೆ ಮೀಸಲಾತಿ ಜಾರಿಗೆ ಬರುತ್ತದೆ ಎಂದು ಹೇಳುವ ಕಾಯ್ದೆಯ ಸೆಕ್ಷನ್ 5 ವಿಧಿಸಿರುವ ಎರಡು ಮಿತಿಗಳನ್ನು ತೆಗೆದುಹಾಕುವ ಪ್ರಸ್ತಾಪವನ್ನು ಶಾ ಮಂಡಿಸಿದರು. ಈ ಆರಂಭಿಕ ಸಲಹೆಗಳ ಸಮಯವು ಬಹಳ ಮುಖ್ಯವಾಗಿದೆ. 2027ರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಅವುಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಆಡಳಿತದಲ್ಲಿದೆ. ಮಹಿಳಾ ಮೀಸಲಾತಿ ಮಸೂದೆ ಆ ವೇಳೆಗೆ ವಾಸ್ತವವಾಗಿ ಜಾರಿಗೆ ಬಂದರೆ, ಅದು ಆ ಚುನಾವಣೆಗಳ ಮೇಲೆ ಭಾರಿ ಪರಿಣಾಮ ಬೀರಬಹುದು. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಮೂರನೇ ಅವಧಿಗೆ ಗೆಲ್ಲಲು ಪ್ರಯತ್ನಿಸುತ್ತಿದೆ. ಹಿಂದೆ ಬಿಜೆಪಿ ಲೋಕಸಭಾ ಚುನಾವಣೆ ಗೆಲ್ಲಲು ರಾಜ್ಯವು ಸಹಾಯ ಮಾಡಿದ್ದರೂ, ಈಗ ಹಾಗಿಲ್ಲ. 2017ರಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು, ಆದರೆ 2022ರಲ್ಲಿ ಆ ಸಂಖ್ಯೆ 255ಕ್ಕೆ ಇಳಿದಿದೆ. 2024ರ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಮತ್ತು ಅವುಗಳನ್ನು ರಾಜ್ಯ ವಿಧಾನಸಭೆಗೆ ಅನ್ವಯಿಸಿದರೆ, ಸಮಾಜವಾದಿ ಪಕ್ಷವು ಪ್ರಸ್ತುತ 178 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಅದರ ಮಿತ್ರ ಪಕ್ಷವಾದ ಕಾಂಗ್ರೆಸ್ ಜೊತೆಗೆ, ಮೈತ್ರಿಕೂಟವು 403 ಸದಸ್ಯರ ವಿಧಾನಸಭೆಯಲ್ಲಿ 202ರ ಬಹುಮತದ ಗಡಿಯನ್ನು ಆರಾಮವಾಗಿ ದಾಟುತ್ತದೆ. ಚುನಾವಣಾ ಲೆಕ್ಕಾಚಾರವನ್ನು ಬದಿಗಿಟ್ಟರೆ, ಬಿಜೆಪಿಯೊಳಗೆ ಅಸಮಾಧಾನದ ಪ್ರದೇಶಗಳಿವೆ. ಪಕ್ಷವು ಇಲ್ಲಿಯವರೆಗೆ ಆಂತರಿಕ ಕುಂದುಕೊರತೆಗಳು ಬಹಿರಂಗಗೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ, ಆದರೆ ಈಗ ಬಿರುಕುಗಳು ಗೋಚರಿಸುತ್ತಿವೆ. ಉದಾಹರಣೆಗೆ, ಈ ವರ್ಷದ ಜನವರಿಯಲ್ಲಿ ಬುಂದೇಲ್ಖಂಡ್ನ ಗ್ರಾಮೀಣ ಕ್ಷೇತ್ರವಾದ ಚರಖಾರಿಯ ಬಿಜೆಪಿ ಶಾಸಕರು ರಾಜ್ಯ ಜಲ ಸಚಿವ ಸ್ವತಂತ್ರ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದರು. ಅಚ್ಚರಿಯ ಅಂಶ ವಿರೋಧ ಪಕ್ಷಗಳನ್ನು ಅನೌಪಚಾರಿಕವಾಗಿ ಸಂಪರ್ಕಿಸುವ ಮೂಲಕ ಶಾಸಕಾಂಗ ಪೂರ್ವ ಸಮಾಲೋಚನೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿದ್ದರೂ, ಸರ್ಕಾರದ ಈ ಕ್ರಮವು ಅಚ್ಚರಿಯ ಅಂಶವನ್ನು ಹೊಂದಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗ, ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೊದಲು ಮಹಿಳೆಯರಿಗೆ ಯಾವ ಸ್ಥಾನಗಳನ್ನು ಮೀಸಲಿಡಲಾಗುವುದು ಎಂಬುದನ್ನು ಆಡಳಿತ ತಿಳಿಸುವವರೆಗೆ ವಿರೋಧ ಪಕ್ಷಗಳು ಕಾಯಬೇಕಾಗುತ್ತದೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಐತಿಹಾಸಿಕವಾಗಿ ಮಹಿಳಾ ಶಾಸಕರ ಉಪಸ್ಥಿತಿ ಕಡಿಮೆಯಾಗಿದೆ. ಯುಪಿ ವಿಧಾನಸಭೆಯ ವೆಬ್ಸೈಟ್ ಪ್ರಕಾರ, 403 ಸದಸ್ಯ ಬಲದಲ್ಲಿ 51 ಮಹಿಳಾ ಶಾಸಕರಿದ್ದಾರೆ. ಅಂದರೆ 12.6%. ಇದು ಲೋಕಸಭೆಯ ದಾಖಲೆಗಿಂತ ಹೆಚ್ಚು ಭಿನ್ನವಾಗಿಲ್ಲ. 18ನೇ ಲೋಕಸಭೆಯಲ್ಲಿ ಕೇವಲ 14% ಮಹಿಳಾ ಸಂಸದರಿದ್ದಾರೆ. 51 ಶಾಸಕಿಯರಲ್ಲಿ 30 ಮಂದಿ ಬಿಜೆಪಿಯವರು ಮತ್ತು 15 ಮಂದಿ ಸಮಾಜವಾದಿ ಪಕ್ಷದವರು. ಮಹಿಳಾ ಅಭ್ಯರ್ಥಿಗಳನ್ನು ಹುಡುಕುವಲ್ಲಿ ಬಿಜೆಪಿ ನಮಗಿಂತ ಉತ್ತಮ ಸ್ಥಾನದಲ್ಲಿದೆ ಎಂಬುದು ನಿಜ, ಏಕೆಂದರೆ ಬಿಜೆಪಿ ನಮಗಿಂತ ಹೆಚ್ಚಿನ ಮಹಿಳೆಯರನ್ನು ಹೊಂದಿದೆ ಎಂದು ಎಸ್ಪಿಯ ಹಿರಿಯ ನಾಯಕರೊಬ್ಬರು ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ. ಜಾತಿ ಆಧಾರಿತ ಭಿನ್ನಾಭಿಪ್ರಾಯ ಬಿಜೆಪಿ ಪ್ರಸ್ತುತ ವಿವಿಧ ಜಾತಿ ಗುಂಪುಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿದೆ. ಸಾಮಾನ್ಯವಾಗಿ ಪಕ್ಷವನ್ನು ಬೆಂಬಲಿಸುವ ಬ್ರಾಹ್ಮಣರು ಅತೃಪ್ತರಾಗಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಅಡಿಯಲ್ಲಿ ಅವರು ಮೂಲೆಗುಂಪಾಗಿದ್ದಾರೆ ಎಂದು ಭಾವಿಸುತ್ತಾರೆ, ಅಲ್ಲಿ ಠಾಕೂರ್ ಗುಂಪು ಹೆಚ್ಚಿನ ಶಕ್ತಿಯನ್ನು ಹೊಂದಿದೆ ಎಂದು ತೋರುತ್ತದೆ. ಯುಜಿಸಿ ಸಮಾನತೆಯ ನಿಯಮಗಳ ಕುರಿತು ಇತ್ತೀಚೆಗೆ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಬ್ರಾಹ್ಮಣ ಪ್ರತಿಭಟನೆಗಳು ಹೆಚ್ಚು ಧ್ವನಿ ಎತ್ತಿದ್ದರೂ, ಪಕ್ಷವು ಒಬಿಸಿ ಬೆಂಬಲವನ್ನು ಕಳೆದುಕೊಳ್ಳುವ ಬಗ್ಗೆ ಹೆಚ್ಚು ಚಿಂತಿತವಾಗಿದೆ. 2024ರ ಚುನಾವಣೆಯಲ್ಲಿ ಅನೇಕ ಒಬಿಸಿ ಮತದಾರರು ಬಿಜೆಪಿಯಿಂದ ದೂರ ಸರಿಯಲು ಪ್ರಾರಂಭಿಸಿದರು. ಇದು ಉತ್ತರ ಪ್ರದೇಶದಲ್ಲಿ ಪಕ್ಷವು ಬಹಳಷ್ಟು ನೆಲೆಯನ್ನು ಕಳೆದುಕೊಳ್ಳಲು ಕಾರಣವಾಯಿತು. 2019ರಲ್ಲಿ 62 ಸ್ಥಾನಗಳಿದ್ದದ್ದು 2024ರಲ್ಲಿ 33ಕ್ಕೆ ಇಳಿದಿದೆ. ಸಮಾಜವಾದಿ ಪಕ್ಷದ (ಎಸ್ಪಿ) ನಾಯಕಿಯೊಬ್ಬರು ಮಹಿಳಾ ಮೀಸಲಾತಿ ಮಸೂದೆಯು ಈ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಭಾವಿಸುವುದಿಲ್ಲ. ಮಹಿಳೆಯರ ಮೇಲೆ ಕೇಂದ್ರೀಕರಿಸುವ ಮೂಲಕ ನೀವು ಜಾತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಏಕೆಂದರೆ ಮಹಿಳಾ ಅಭ್ಯರ್ಥಿಗಳು ಸಹ ಒಂದು ಜಾತಿಗೆ ಸೇರಿದವರು. ಮತದಾರರು ಇನ್ನೂ ಅದರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದಿದ್ದಾರೆ. ಆರಂಭಿಕ ದಿನಗಳು ಭಾರತದಲ್ಲಿ ಸರ್ಕಾರದಲ್ಲಿ ಮಹಿಳೆಯರ ಸಂಖ್ಯೆ ಯಾವಾಗಲೂ ಕಡಿಮೆಯೇ ಇತ್ತು. ಆರಂಭದಲ್ಲಿ ಸಂವಿಧಾನ ಸಭೆಯಲ್ಲಿ (ಭಾರತದ ಸಂವಿಧಾನವನ್ನು ರಚಿಸಿದ ಸಮಿತಿ) ಕೇವಲ 15 ಮಹಿಳೆಯರು ಮಾತ್ರ ಇದ್ದರು. ಆ ಆರಂಭಿಕ ದಿನಗಳಲ್ಲಿ ರೇಣುಕಾ ರೇ ಅವರಂತಹ ಕೆಲವು ಮಹಿಳಾ ನಾಯಕರು ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವುದರ ವಿರುದ್ಧ ವಾದಿಸಿದರು. ಇತರ “ಮುಂದುವರಿದ” ದೇಶಗಳಲ್ಲಿ ಕಂಡುಬರುವ ಮಹಿಳಾ ಮತದಾನದ ಹಕ್ಕುಗಳಿಗಾಗಿ ನಡೆದ ಚಳುವಳಿಗಳನ್ನು ಅವರು ಕೀಳಾಗಿ ನೋಡಿದರು. ಕೆಲವು ಸ್ಥಾನಗಳನ್ನು ಮಹಿಳೆಯರಿಗೆ ಮಾತ್ರ ಮೀಸಲಿಟ್ಟರೆ, ಅವು ಬೇರೆ ಸ್ಥಾನಗಳನ್ನು ಗೆಲ್ಲುವುದನ್ನು ತಡೆಯಬಹುದು ಎಂದು ಅವರು ಚಿಂತಿಸಿದರು. “ಕೇವಲ ಸಾಮರ್ಥ್ಯ”ದ ಆಧಾರದ ಮೇಲೆ ಜನರನ್ನು ಆಯ್ಕೆ ಮಾಡಿದರೆ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ಅವರು ನಂಬಿದ್ದರು. ಆದರೆ ಮುಂದಿನ 50 ವರ್ಷಗಳಲ್ಲಿ ಈ ಅಭಿಪ್ರಾಯ ಬದಲಾಯಿತು. ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಅಧಿಕಾರಕ್ಕೆ ತರಲು “ಕೇವಲ ಸಾಮರ್ಥ್ಯ” ಸಾಕಾಗುವುದಿಲ್ಲ ಎಂಬುದು ಸ್ಪಷ್ಟವಾಯಿತು. 1996ರಲ್ಲಿ ಸಂಸತ್ತಿನಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡಲು ಹೊಸ ಕಾನೂನನ್ನು ಪ್ರಸ್ತಾಪಿಸಲಾಯಿತು. ಸರ್ಕಾರವು ಇದು ಬೇಗ ಅಂಗೀಕಾರವಾಗುತ್ತದೆ ಎಂದು ಆಶಿಸಿತು, ಆದರೆ ಅದು ವಾಗ್ವಾದಗಳಿಗೆ ಕಾರಣವಾಯಿತು. ಕೆಲವು ಸಂಸದರು ಸಾಕಷ್ಟು “ಸಮರ್ಥ ಮಹಿಳೆಯರು” ಇದ್ದಾರೆಯೇ ಎಂದು ಅನುಮಾನಿಸಿದರು. ಇತರರು ಈ ಕಾನೂನಿನಲ್ಲಿ ಹಿಂದುಳಿದ ಜಾತಿಗಳ ಮಹಿಳೆಯರಿಗೆ ವಿಶೇಷ ಉಪ-ಕೋಟಾ ಇರಬೇಕು ಎಂದು ವಾದಿಸಿದರು. 15 ವರ್ಷಗಳ ಅವಧಿಗೆ ಕಾನೂನನ್ನು ತಕ್ಷಣ ಜಾರಿಗೆ ತರಬೇಕು ಎಂದು ಒಂದು ಸಮಿತಿ ಸೂಚಿಸಿತು. ಆದಾಗ್ಯೂ ಈ ಪ್ರಸ್ತಾವನೆ ಅಂಗೀಕಾರವಾಗಲಿಲ್ಲ ಮತ್ತು ಒಂದು ಬಾರಿ ಅವಧಿ ಮೀರಿತು. ನಂತರ 1998ರಿಂದ 2003ರ ನಡುವೆ ನಾಲ್ಕು ಬಾರಿ ಮಸೂದೆ ವಿಫಲವಾಯಿತು. 2008ರಲ್ಲಿ ಹೊಸ ಸರ್ಕಾರವು ಮತ್ತೆ ಪ್ರಯತ್ನಿಸಿತು. ಆದರೆ ಮಸೂದೆ 2014ರಲ್ಲಿ ಮತ್ತೊಮ್ಮೆ ಅವಧಿ ಮೀರಿತು. ಅಂತಿಮವಾಗಿ 2023ರಲ್ಲಿ ಪ್ರಸ್ತುತ ಸರ್ಕಾರವು ಅದನ್ನು ಮತ್ತೆ ತಂದಿತು. ಆದರೆ ಜನಗಣತಿ ಮತ್ತು ಡಿಲಿಮಿಟೇಶನ್ ಮುಗಿದ ನಂತರವೇ ಕಾನೂನು ಜಾರಿಗೆ ಬರಬಹುದು ಎಂದು ಹೇಳುವ ನಿಯಮವನ್ನು ಸೇರಿಸಲಾಯಿತು. ಇದರಿಂದ “ಅನಿರ್ದಿಷ್ಟ ವಿಳಂಬ” ಉಂಟಾಯಿತು. ಅಂದರೆ ಅದು ನಿಜವಾಗಿಯೂ ಯಾವಾಗ ಜಾರಿಗೆ ಬರುತ್ತದೆ ಎಂಬುದು ಸ್ಪಷ್ಟವಾಗಿರಲಿಲ್ಲ. ವಿರೋಧ ಪಕ್ಷದ ನಾಯಕರು ಈ ವಿಳಂಬವನ್ನು ಟೀಕಿಸಿದ್ದಾರೆ. ಮಹಿಳಾ ಸ್ಥಾನಗಳನ್ನು ಜನಗಣತಿಗೆ ಸಂಪರ್ಕಿಸಲು ಯಾವುದೇ ಕಾರಣವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾದಿಸಿದರು. ಸ್ಪಷ್ಟವಾದ ಆರಂಭಿಕ ದಿನಾಂಕವಿಲ್ಲದೆ ಈ ಕಾನೂನು ಕೇವಲ “ಜುಮ್ಲಾ” (ಖಾಲಿ ಭರವಸೆ) ಆಗಿ ಉಳಿಯಬಹುದು ಎಂದು ಅವರು ಎಚ್ಚರಿಸಿದರು. ಮಹಾರಾಷ್ಟ್ರದಿಂದ ಬಿಹಾರದವರೆಗೆ ಹಲವಾರು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಮಹಿಳಾ ಮತದಾರರು ವಿಶ್ವಾಸಾರ್ಹ ಬೆಂಬಲ ನೆಲೆಯಾಗಿದ್ದಾರೆ. ದೀರ್ಘಕಾಲದ ಭರವಸೆಯಿಂದ ನಿಜವಾದ ಮೀಸಲಾತಿಗೆ ಬದಲಾಯಿಸುವುದರಿಂದ ಈ ಬೆಂಬಲ ಮತ್ತಷ್ಟು ಬಲಪಡಿಸಬಹುದು. ಆದರೆ ಮಹಿಳೆಯರು ನಿಜವಾಗಿಯೂ ಮಹಿಳಾ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಬಯಸುತ್ತಾರೆಯೇ ಎಂಬುದು ಸ್ಪಷ್ಟವಿಲ್ಲ. ರಾಜಕೀಯದಲ್ಲಿ ಇಂತಹ ನಡೆಗಳು ಸಾಮಾನ್ಯವಾಗಿ ಒಂದು ಪ್ರಯತ್ನವಾಗಿದ್ದು, ಅದರ ಫಲಿತಾಂಶಗಳು ಅನಿಶ್ಚಿತವಾಗಿರುತ್ತವೆ.
ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ನಿಧನ
ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ (74) ಬುಧವಾರ ಸಂಜೆ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಉಡುಪಿ ಜಿಲ್ಲೆ ಕೊರಂದರ ಪಾಳ್ಯದಲ್ಲಿ ರಘುರಾಮ್ ಶೆಟ್ಟಿ ಮತ್ತು ಶಾರದಾ ಅವರ ಜ್ಯೇಷ್ಠ ಪುತ್ರರಾಗಿ 1952ರ ನವೆಂಬರ್ 6 ರಂದು ಜನಿಸಿದರು. ಸುಮಾರು 56 ವರ್ಷಗಳಿಂದ ಮೈಸೂರಿನ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಪತ್ರಿಕಾ ಕ್ಷೇತ್ರವಲ್ಲದೆ ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಕನ್ನಡ ಚಿತ್ರೋದ್ಯಮದಲ್ಲಿ ಪತ್ರಕರ್ತರಾಗಿ ಹೆಸರಾಗಿದ್ದ ಕೆ. ಜೆ. ಕುಮಾರ್, ಕನ್ನಡ ಚಿತ್ರ ರಂಗದ ದಿಗ್ಗಜರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್, ರಜನಿ ಕಾಂತ್, ಶಶಿಕುಮಾರ್, ನಿರ್ಮಾಪಕರಾದ ದ್ವಾರಕೀಶ್, ವೀರಸ್ವಾಮಿ, ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಪತ್ನಿ ಉಷಾ, ಪುತ್ರಿ ಸುನಯ ಶೆಟ್ಟಿ, ಸೋದರಿ ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಪ್ರಕಾಶ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಾಳೆ(ಗುರುವಾರ) ಮಧ್ಯಾಹ್ನದ ನಂತರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂತಾಪ: ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ವಿಧಾನಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಟೋಲ್ ರದ್ದತಿಗೆ ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ
Satish Jarkiholi Assurance- ರಾಜ್ಯ ಹೆದ್ದಾರಿಗಳಲ್ಲಾಗಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಾಗಲಿ ದ್ವಿಚಕ್ರ ವಾಹನ ಸವಾರರಿಗೆ ಟೋಲ್ ವಿಧಿಸುವ ನಿಯಮವಿಲ್ಲ. ಆದರೆ ನೈಸ್ ರಸ್ತೆಯಲ್ಲಿ ಟೋಲ್ ಹಾಕುವ ಬಗ್ಗೆ ಜನರಿಗೆ ಅಸಮಾಧಾನ ಇತ್ತು. ಇದೀಗ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಟೋಲ್ ಸಂಗ್ರಹ ರದ್ದುಪಡಿಸುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಟೋಲ್ ಆದಾಯ ಮತ್ತು ಹೂಡಿಕೆಯ ಮರುಪರಿಶೀಲನೆಗೆ ಉಪಸಮಿತಿ ರಚಿಸಲಾಗಿದ್ದು, ಸಮಾಲೋಚಕರ ವರದಿ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮಹಾಕುಂಭ ವೈರಲ್ ತಾರೆ ಮೊನಾಲಿಸಾ ಭೋಸ್ಲೆ ಕೇರಳದಲ್ಲಿ ವಿವಾಹ; ರಕ್ಷಣೆ ಕೋರಿದ ದಂಪತಿ
ತಿರುವನಂತಪುರ: ಪ್ರಯಾಗರಾಜ್ ನಲ್ಲಿ 2025ರಲ್ಲಿ ನಡೆದ ಮಹಾಕುಂಭ ಮೇಳದ ವೇಳೆ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಬುಧವಾರ ಕೇರಳದಲ್ಲಿ ತಮ್ಮ ಸಂಗಾತಿ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದಾರೆ. ತಿರುವನಂತಪುರದ ವಿಝಿಂಜಮ್ ನಲ್ಲಿರುವ ದೇವಸ್ಥಾನದಲ್ಲಿ ಈ ವಿವಾಹ ನೆರವೇರಿದೆ. ಇಂದೋರ್ ಮೂಲದ ಮೊನಾಲಿಸಾ, ಮಹಾಕುಂಭ ಮೇಳದ ಸಂದರ್ಭದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ದೇಶದಾದ್ಯಂತ ಗಮನ ಸೆಳೆದಿದ್ದರು. ದಂಪತಿಗಳು ರಜೆಯ ನಿಮಿತ್ತ ಕೇರಳಕ್ಕೆ ಬಂದಿದ್ದು, ಇಲ್ಲಿಯೇ ಮದುವೆಯಾಗಲು ತೀರ್ಮಾನಿಸಿದ್ದಾಗಿ ಫರ್ಮಾನ್ ಖಾನ್ ವರದಿಗಾರರಿಗೆ ತಿಳಿಸಿದ್ದಾರೆ. ‘ನಾವು ಆರು ತಿಂಗಳ ಹಿಂದೆ ಭೇಟಿಯಾದೆವು. ಬಳಿಕ ಒಟ್ಟಿಗೆ ಕೆಲಸ ಮಾಡಲು ಆರಂಭಿಸಿದ್ದೇವೆ. ಅವರು ನನಗೆ ಪ್ರಪೋಸ್ ಮಾಡಿದರು. ಕೇರಳಕ್ಕೆ ಬಂದಾಗ ಈ ದೇವಸ್ಥಾನ ನಮಗೆ ಇಷ್ಟವಾಯಿತು. ಆದ್ದರಿಂದ ಇಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು. ಇನ್ನೊಂದೆಡೆ ಕೆಲವು ವರದಿಗಳ ಪ್ರಕಾರ, ಮೊನಾಲಿಸಾ ಪೂವಾರ್ ಪ್ರದೇಶದಲ್ಲಿ ನಡೆಯುತ್ತಿದ್ದ ಚಲನಚಿತ್ರ ಚಿತ್ರೀಕರಣದ ನಿಮಿತ್ತ ಕೇರಳದಲ್ಲಿದ್ದರು ಎನ್ನಲಾಗಿದೆ. ತಮ್ಮ ಅಂತರ್ಧರ್ಮೀಯ ಸಂಬಂಧಕ್ಕೆ ಕುಟುಂಬದಿಂದ ವಿರೋಧ ವ್ಯಕ್ತವಾಗಿದ್ದು, ಸಂಭಾವ್ಯ ಬೆದರಿಕೆಗಳ ಭೀತಿಯಿಂದ ದಂಪತಿಗಳು ಥಂಪನೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ರಕ್ಷಣೆ ಕೋರಿದ್ದಾರೆ ಎಂದು ವರದಿಯಾಗಿದೆ. ‘ನಮ್ಮ ಸಂಬಂಧವನ್ನು ನನ್ನ ಕುಟುಂಬ ಒಪ್ಪಿಕೊಂಡಿಲ್ಲ. ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಮೊನಾಲಿಸಾ ಮದುವೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಮದುವೆ ರಾಜಕೀಯ ವಲಯದಲ್ಲಿಯೂ ಗಮನ ಸೆಳೆದಿದೆ. ಸಮಾರಂಭದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) [ಸಿಪಿಐ(ಎಂ)] ನಾಯಕರು ಭಾಗವಹಿಸಿ ದಂಪತಿಗಳಿಗೆ ಬೆಂಬಲ ಸೂಚಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇರಳ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ, ‘ಜಾತ್ಯತೀತ ಮೌಲ್ಯಗಳು ಮತ್ತು ಮಾನವೀಯತೆಯ ಮೇಲಿನ ಪ್ರೀತಿಗೆ ಕೇರಳ ಹೆಸರುವಾಸಿಯಾಗಿದೆ. ಈ ಭೂಮಿಯ ಜನರು ಅದಕ್ಕಾಗಿ ಪ್ರಪಂಚದ ಮುಂದೆ ಹೆಮ್ಮೆಯಿಂದ ನಿಲ್ಲಬಹುದು’ ಎಂದು ಹೇಳಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಈ ಮದುವೆಯನ್ನು ‘ನಿಜವಾದ ಕೇರಳ ಸ್ಟೋರಿ’ ಎಂದು ಕರೆದರು. ರಾಜ್ಯವನ್ನು ಧಾರ್ಮಿಕ ಮೂಲಭೂತೀಕರಣದ ಕೇಂದ್ರವಾಗಿ ಚಿತ್ರಿಸಿದ ವಿವಾದಾತ್ಮಕ ಚಲನಚಿತ್ರ ಸರಣಿಯನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದರು. ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಎ.ಎ. ರಹೀಮ್ ಮಾತನಾಡಿ, ‘ಅಂತರ್ಧರ್ಮೀಯ ಅಥವಾ ಅಂತರ್ಜಾತಿ ವಿವಾಹಗಳನ್ನು ಭಾರತದ ಅನೇಕ ಭಾಗಗಳಲ್ಲಿ ಜನರು ಯೋಚಿಸಲೂ ಸಾಧ್ಯವಾಗುವುದಿಲ್ಲ. ಆದರೆ ಕೇರಳದ ಶಕ್ತಿ ಎಂದರೆ ಅಂತಹ ವಿವಾಹಗಳು ಇಲ್ಲಿ ಸಹಜವಾಗಿ ನಡೆಯುತ್ತವೆ’ ಎಂದು ಹೇಳಿದರು. ಇದಕ್ಕೂ ಮೊದಲೂ ಅಂತರ್ಧರ್ಮೀಯ ದಂಪತಿಗಳು ಸುರಕ್ಷತೆಗಾಗಿ ಕೇರಳಕ್ಕೆ ಆಶ್ರಯ ಪಡೆಯುತ್ತಿರುವ ಘಟನೆಗಳು ವರದಿಯಾಗಿವೆ. 2025ರ ಫೆಬ್ರವರಿಯಲ್ಲಿ ಜಾರ್ಖಂಡ್ ನ ಅಂತರ್ಧರ್ಮೀಯ ದಂಪತಿಗಳಾದ ಮುಹಮ್ಮದ್ ಗಾಲಿಬ್ (30) ಮತ್ತು ಆಶಾ ವರ್ಮಾ (27) ಅವರು ಕೊಲೆ ಬೆದರಿಕೆಗಳು ಮತ್ತು ‘ಲವ್ ಜಿಹಾದ್’ ಆರೋಪಗಳನ್ನು ಎದುರಿಸಿದ ಬಳಿಕ ತಮ್ಮ ರಾಜ್ಯದಿಂದ ಪಲಾಯನ ಮಾಡಿ ಕೇರಳಕ್ಕೆ ಬಂದಿದ್ದರು. ಆ ವೇಳೆ ಗಾಲಿಬ್ ಮಾಧ್ಯಮಗಳೊಂದಿಗೆ ಮಾತನಾಡಿ, ಸ್ನೇಹಿತನ ಸಲಹೆ ಹಾಗೂ ಹಿಂದೆ ಕೇರಳಕ್ಕೆ ಭೇಟಿ ನೀಡಿದ ಅನುಭವದ ಆಧಾರದ ಮೇಲೆ ರಾಜ್ಯದ ಕೋಮು ಸಾಮರಸ್ಯದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದರಿಂದ ಕೇರಳವನ್ನು ಆರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಸೌಜನ್ಯ: thenewsminute.com
ಭೂ ಸ್ವಾಧೀನ ವಿಚಾರದಲ್ಲಿ ರೈತರಿಗೆ ಅನ್ಯಾಯ ತಪ್ಪಿಸಲು ಮಾರ್ಗಸೂಚಿ ದರ ಪರಿಷ್ಕರಣೆ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆ ಪರಿಹಾರದ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವುದೊಂದೆ ಪರಿಹಾರವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂ ಸ್ವಾಧೀನಕ್ಕೆ ರೈತರಿಗೆ ಪರಿಹಾರ ನೀಡುವ ಸಂಬಂಧ 2013ರ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಈ ಕಾನೂನಿನ ಪ್ರಕಾರ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಅಂತಹ ಭೂಮಿಗೆ ಹೊಸದಾಗಿ ಮಾರ್ಗಸೂಚಿ ದರವನ್ನು ಪರಿಷ್ಕರಿಸುವುದಿಲ್ಲ ಎಂದರು. ಬದಲಾಗಿ ಹಿಂದಿನ ಮಾರ್ಗಸೂಚಿ ದರ ಅಥವಾ ಹಿಂದಿನ ಮೂರು ವರ್ಷದ ಮಾರುಕಟ್ಟೆಯ ನೋಂದಾಯಿತ ಸೇಲ್ ಡೀಡ್(ಮಾರಾಟ ಪತ್ರ) ದರವನ್ನು ಪರಿಗಣಿಸಲಾಗುತ್ತದೆ. ಆ ಪೈಕಿ ಭೂಮಿ ಹೆಚ್ಚಿನ ದರಕ್ಕೆ ವಹಿವಾಟು ಆಗಿರುವ ಆಧಾರದಲ್ಲಿ ಸರಾಸರಿ ಮೊತ್ತವನ್ನು ಪರಿಹಾರವಾಗಿ ನಿಗದಿಪಡಿಸಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕೆ.ಎಸ್.ನವೀನ್, ಹಳೆಯ ಮಾರ್ಗಸೂಚಿ ದರದ ಆಧಾರದಲ್ಲೇ ಪರಿಹಾರದ ಮೊತ್ತವನ್ನು ನಿಗದಿಪಡಿಸುವುದು ರೈತರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ಎಂಬ ಮರುಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ಸರಕಾರ ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಭೂ ಸ್ವಾಧೀನ ಮಾಡುತ್ತಲೇ ಇರುತ್ತದೆ. ಕಾಲದಿಂದ ಕಾಲಕ್ಕೆ ದರ ಪರಿಷ್ಕರಣೆ ಮಾಡದಿದ್ದಲ್ಲಿ ರೈತರಿಗೆ ನಷ್ಟವಾಗುತ್ತದೆ ಎಂಬುದು ಸತ್ಯ. ಇದೇ ಕಾರಣಕ್ಕೆ ನಾವೂ ಸಹ ಮಾರ್ಗಸೂಚಿ ದರ ಪರಿಷ್ಕರಣೆ ಆಗಬೇಕು ಎನ್ನುತ್ತೇವೆ. ಆದರೆ, ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವಿಷಾದಿಸಿದರು. ಕೆಲವು ಕಡೆ ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕೆಲವು ಕಡೆ ಭೂಮಿ ಮಾರ್ಗಸೂಚಿ ದರ 2 ಲಕ್ಷ ಇದ್ದರೆ, ಮಾರುಕಟ್ಟೆ ಮೌಲ್ಯ 70ರಿಂದ 80 ಲಕ್ಷ ಇದೆ. ಪರಿಣಾಮ ಕಪ್ಪು ಹಣದ ವಹಿವಾಟಿಗೂ ಇದು ಕಾರಣವಾಗಿದೆ. ಹೀಗಾಗಿ ಈ ಎಲ್ಲಾ ಅಕ್ರಮ ವಹಿವಾಟುಗಳನ್ನೂ ನಿಯಂತ್ರಿಸಿ ರೈತರಿಗೂ ನ್ಯಾಯಬದ್ಧ ಪರಿಹಾರ ನೀಡಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆಯೊಂದೇ ಪರಿಹಾರ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.
ʼತಮಿಳುನಾಡಿಗೆ ಬೆಣ್ಣೆ, ನಮಗೆ ಸುಣ್ಣʼ: ಕೇಂದ್ರದ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ
ಬೆಂಗಳೂರು: ‘ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರ ಸರಕಾರವು ಕರ್ನಾಟಕ ರಾಜ್ಯದ ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳ ಬಗ್ಗೆ ಇಂತಹ ನಿರ್ಧಾರ ಘೋಷಿಸದೆ ಇರುವುದು ತಾರತಮ್ಯ ಧೋರಣೆ ಪ್ರದರ್ಶನ. ಇದು ಸರಿಯಲ್ಲ. ಅವರಿಗೆ ಬೆಣ್ಣೆ, ನಮಗೆ ಸುಣ್ಣ ಎಂದರೆ ಹೇಗೆ?’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ. ಬುಧವಾರ ನಗರದಲ್ಲಿ ಮಾತನಾಡಿರುವ ಅವರು, ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರವು ಹತ್ತಿರದಲ್ಲೇ ಇರುವ ತಮಿಳುನಾಡು ರಾಜ್ಯದ ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು ಹೀಗೆ ಮಾಡಿರಬಹುದು. ಆದರೆ, ನಮ್ಮ ರಾಜ್ಯದ ಬೇಡಿಕೆ ಬಗ್ಗೆ ಕೇಂದ್ರದ ಉದಾಸೀನ ಮನೋಭಾವ ಪ್ರದರ್ಶಿಸಿರುವುದು ಪ್ರಶ್ನಾರ್ಹ ಎಂದು ಆಕ್ಷೇಪಿಸಿದರು. ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಆಗುತ್ತದೆ ಎಂದು ಕಳೆದ ವರ್ಷ(2025ರ ಜೂನ್ 24ರಂದು) ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡುಗೆ ಪತ್ರ ಬರೆಯಲಾಗಿತ್ತು. ಈಗ ನೋಡಿದರೆ ಹೀಗಾಗಿದೆ. ಕೇಂದ್ರ ಸಚಿವ ಜೋಶಿ, ಸಂಸದರಾದ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಇದೀಗ ಧ್ವನಿ ಎತ್ತಿ, ರಾಜ್ಯದ ಹಿತಾಸಕ್ತಿಯ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು. ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣ ಎರಡರ ಪೈಕಿ ಒಂದನ್ನಾದರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಬೇಕು. ಎರಡನ್ನೂ ಉನ್ನತೀಕರಿಸಿದರೆ ಅದು ಇನ್ನೂ ಸ್ವಾಗತಾರ್ಹ. ರಾಜ್ಯದ ಅಗತ್ಯವನ್ನು ಕೇಂದ್ರ ಸರಕಾರ ಮನಗಾಣಬೇಕು. ಇದರಿಂದ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಟಾಸ್ಕ್ ಫೋರ್ಸ್ ರಚನೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬೇಸಿಗೆ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಮುಂದಿನ ವಾರ ಟಾಸ್ಕ್ ಫೋರ್ಸ್ ರಚನೆ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿ ಸದಸ್ಯ ದುರ್ಯೋಧನ ಐಹೊಳೆ ಪ್ರಸ್ತಾಪಿಸಿ, ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮಕ್ಕೆ ಎಷ್ಟು ಕೊಳವೆ ಬಾವಿ ಕೊರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸದಸ್ಯ ಸಿ.ಸಿ.ಪಾಟೀಲ್, ಬಹಳಷ್ಟು ಕಡೆ ನೀರಿನ ಮೂಲವೇ ಇರುವುದಿಲ್ಲ. ಅಂತಹ ಗ್ರಾಮಗಳಿಗೆ ಹೆಚ್ಚುವರಿ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದು ಹೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ನೀರಿನ ಮೂಲಗಳು ಇಲ್ಲದ ಕಡೆಗೆ ಹೆಚ್ಚುವರಿ ಹೆಡ್ ಟ್ಯಾಂಕ್ ಮಾಡಲು ಅವಕಾಶವಿಲ್ಲ. ಅಂತಹ ಪ್ರಕರಣಗಳಿದ್ದರೆ ತಮಗೆ ಮಾಹಿತಿ ನೀಡಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು. ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವಬಹುದು ಎಂಬ ಮುಂಜಾಗ್ರತೆಯಿಂದ ಮುಂದಿನ ವಾರವೇ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಳ್ಳಾರಿ | ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆ
ಬಳ್ಳಾರಿ / ಕಂಪ್ಲಿ: ಶರಣರು ಮತ್ತು ಮಹಾತ್ಮರು ನೀಡಿದ ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿದ್ದು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಪಾವನಗೊಳಿಸಬೇಕು ಎಂದು ಮುಖಂಡರು ಕರೆ ನೀಡಿದರು. ಪಟ್ಟಣದಲ್ಲಿ ಸೋಮವಾರ ರೇಣುಕಾಚಾರ್ಯ ಅವರ ಜಯಂತಿಯನ್ನು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು. ಪಂಚಲೋಹದ ಮೂರ್ತಿ ಹಾಗೂ ಕಳಸ-ಕನ್ನಡಿಗಳೊಂದಿಗೆ ಸಕಲ ಮಂಗಳವಾದ್ಯಗಳ ನಡುವೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಶ್ರೀ ಶಾರದಾ ಶಾಲೆ ಸಣಾಪುರ ರಸ್ತೆ ಆವರಣದಿಂದ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಗತ್ರಯ ಸಂಸ್ಕೃತ ಪಾಠಶಾಲಾಯಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಪಂಚಲೋಹದ ಶ್ರೀ ರೇಣುಕಾಚಾರ್ಯರ ಮೂರ್ತಿ ವಿಶೇಷ ಆಕರ್ಷಣೆಯಾಗಿತ್ತು. ಕಳಸ-ಕನ್ನಡಿ, ಮಂಗಳವಾದ್ಯಗಳು ಹಾಗೂ ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದವು. ಮೆರವಣಿಗೆ ಸಣಾಪುರ ರಸ್ತೆಯ ಶ್ರೀ ಶಾರದಾ ಶಾಲೆಯಿಂದ ಆರಂಭವಾಗಿ ಹಳೆ ಬಸ್ ನಿಲ್ದಾಣ ಮತ್ತು ಡಾ ರಾಜ್ಕುಮಾರ್ ಮುಖ್ಯ ರಸ್ತೆಯ ಮೂಲಕ ಸಾಗಿತು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಡಿಕೇರಿ: ಅಣ್ಣನಿಂದಲೇ ತಂಗಿ ಸೇರಿದಂತೆ ಇಬ್ಬರ ಕೊಲೆ
ಮಡಿಕೇರಿ: ಅಣ್ಣನೇ ತನ್ನ ತಂಗಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ನಡೆದಿದೆ. ಅಡಿಯರ ಯಶೋಧ (45) ಹಾಗೂ ಕುಂಞ ರಾಮ(47) ಕೊಲೆಯಾದ ವ್ಯಕ್ತಿಗಳು. ಚಂದು (65) ಎಂಬಾತ ಕೊಲೆ ಆರೋಪಿಯಾಗಿದ್ದು, ಈತನನ್ನು ಭಾಗಮಂಡಲ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಎನ್ ಬಿಂದುಮಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ದೇಶದಲ್ಲಿ ಎಲ್ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಾಗರಿಕರಿಗೆ ಭರವಸೆ ನೀಡಿದೆ. ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅನಿಲ ಪೂರೈಕೆ ಮತ್ತಷ್ಟು ಸುಧಾರಿಸಲಿದೆ. ಹೀಗಾಗಿ ಜನರು ಭಯ ಬೀಳುವ ಅಗತ್ಯವಿಲ್ಲ, ಸಿಲಿಂಡರ್ ಗಾಗಿ ಮುಗಿಬೀಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದೇವೇಳೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ.
ಕಲಬುರಗಿ | ಲಾಡ್ಲೆ ಮಶಾಕ್ ದರ್ಗಾದ ಕುರಿತು ಅವಹೇಳನಕಾರಿ ಕಾಮೆಂಟ್: ಪ್ರಕರಣ ದಾಖಲು
ಕಲಬುರಗಿ: ಆಳಂದ ಪಟ್ಟಣದಲ್ಲಿರುವ ಹಝ್ರತ್ ಲಾಡ್ಲೆ ಮಶಾಕ್ ದರ್ಗಾದ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿರುವ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಅನಿಲ್ ಚೌಹಾಣ್ ಎಂಬಾತನ ವಿರುದ್ಧವೇ ಎಫ್ಐಆರ್ ದಾಖಲಾಗಿರುವುದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಮಸೀದಿ ಹಾಗೂ ಲಾಡ್ಲೆ ಮಶಾಕ್ ದರ್ಗಾವನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಬೇಕು ಎಂಬ ಅರ್ಥದ ಕಾಮೆಂಟ್ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಆಳಂದ ಪಟ್ಟಣದ ನಿವಾಸಿ ಖಲೀಲ್ ಅನ್ಸಾರಿ ಎಂಬುವವರ ದೂರಿನ ಮೇರೆಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜ್ಯದಲ್ಲಿ ಸುಡುತ್ತಿದೆ ಬಿಸಿಲು: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಮನೆಯಿಂದ ಹೊರಬರುವ ಮುನ್ನ ಇರಲಿ ಎಚ್ಚರ
ಮಂಗಳೂರು: ರಾಜ್ಯಾದ್ಯಂತ ಬಿಸಿಲ ಝಳ ವಿಪರೀತವಾಗಿ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಬೇಸಿಗೆಯ ಆರಂಭದಲ್ಲೇ ಸುಡುತ್ತಿರುವ ಸೂರ್ಯನ ಪ್ರಖರತೆಗೆ ಕರಾವಳಿ ಜಿಲ್ಲೆಗಳು ತತ್ತರಿಸಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' (Yellow Alert) ಘೋಷಿಸಿದೆ. ಕರಾವಳಿ ಕರ್ನಾಟಕದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಜನರ ಆತಂಕಕ್ಕೆ
ಅನುಕಂಪದ ಆಧಾರಿತ ನೌಕರಿ ವಿಳಂಬ: ಹುದ್ದೆ ನಿಯೋಜಿಸದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವಿರುದ್ಧ ಕುಟುಂಬಗಳ ಆಕ್ರೋಶ
ಮೃತಪಟ್ಟ ನೌಕರರ ಅವಲಂಬಿತರಿ ಸರ್ಕಾರದಿಂದ ನೀಡುವ ನೌಕರಿಯು ಸೂಕ್ತ ಸಮಯದಲ್ಲಿ ಲಭ್ಯವಾಗುತ್ತಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಿಯೋಜನೆಗೊಂಡ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ ಮಾಡದೆ ಅಲೆದಾಡಿಸಲಾಗುತ್ತಿದೆ. ಇಲಾಖೆ ನಿರ್ಲಕ್ಷ್ಯಕ್ಕೆ 36 ಅಭ್ಯರ್ಥಿಗಳು ವರ್ಷಗಳಿಂದ ಕಾಯುತ್ತಿದ್ದು, ಅವರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿವೆ. ಈ ಬಗ್ಗೆ ವಿವರ ಇಲ್ಲಿದೆ.
Mandya | ಅರ್ಚಕ ಸಿದ್ದಲಿಂಗಪ್ಪ ಕೊಲೆ ಪ್ರಕರಣ: ಪತ್ನಿ ಸೇರಿ ನಾಲ್ವರು ಆರೋಪಿಗಳ ಬಂಧನ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಮರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಅವರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಸಿದ್ದಲಿಂಗಪ್ಪನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾ.6ರಂದು ತಡರಾತ್ರಿ ಅರ್ಚಕ ಸಿದ್ದಲಿಂಗಪ್ಪ ಅವರನ್ನು ಕೊಲೆ ಮಾಡಿ ಬೈಕ್ ಸಮೇತ ಮೃತದೇಹವನ್ನು ಗ್ರಾಮದ ಹೊರವಲಯದ ನಾಲೆಗೆ ತಳ್ಳಿ ಅಪಘಾತ ಎಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಭೇದಿಸಲು ಎಸ್ಪಿ ಡಾ.ಶೋಭಾರಾಣಿ ವಿ.ಜೆ. ಅವರ ಮಾರ್ಗದರ್ಶನದಲ್ಲಿ ಎಎಸ್ಪಿಗಳಾದ ಸಿ.ಇ. ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ ಮತ್ತು ಡಿವೈಎಸ್ಪಿ ಯು.ಡಿ. ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪತ್ನಿಯೇ ಅರ್ಚಕ ಸಿದ್ದಲಿಂಗಪ್ಪ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು, ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಪತ್ನಿ ಶಾಲಿನಿ, ಆಕೆಯ ಪ್ರಿಯಕರ ಮರಳಾಗಾಲ ಗ್ರಾಮದ ಹರೀಶ್ ಎಂ.ಸಿ., ಆತನ ಸ್ನೇಹಿತರಾದ ಅದೇ ಗ್ರಾಮದ ಸಂತೋಷ್ ಕುಮಾರ್ ಎಂ.ಆರ್. ಹಾಗೂ ಗಣೇಶ್ ಬಿ.ಆರ್. ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ ಅದೇ ಗ್ರಾಮದ ಹರೀಶ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ಸಂಬಂಧ ಸಿದ್ದಲಿಂಗಪ್ಪ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಶಾಲಿನಿ ತನ್ನ ಪತಿಯನ್ನು ಹತ್ಯೆ ಮಾಡುವಂತೆ ತನ್ನ ಪ್ರಿಯಕರಿಗೆ ಹೇಳಿದ್ದಳು. ಅದರಂತೆ ಪ್ರಿಯಕರ ಹರೀಶ್ ತನ್ನ ಇಬ್ಬರು ಸ್ನೇಹಿತರ ಜೊತೆಯಲ್ಲಿ ಸಿದ್ದಲಿಂಗಪ್ಪ ಅವರನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಡಾ.ಶೋಭರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಯಚೂರು | ಸ್ವಧರ್ಮ ಪಾಲನೆ ಜೊತೆ ಪರಧರ್ಮ ಸಹಿಷ್ಣುತೆ ಕಾಪಾಡಿ : ಕೃಷ್ಣಾ ಶಾವಂತಗೇರಿ
ಸೌಹಾರ್ದ ಇಫ್ತಾರ್ ಕೂಟದಲ್ಲಿ ಅಭಿಮತ
ಕಲಬುರಗಿ | ಶಿಕ್ಷಕರಿಗೆ ಬೀದಿ ನಾಯಿಗಳ ಜವಾಬ್ದಾರಿ ನೀಡುವುದು ಬೇಸರದ ಸಂಗತಿ: ನಮೋಶಿ
ಕಲಬುರಗಿ: ರಾಜ್ಯದ ಎಲ್ಲಾ ಶಿಕ್ಷಕರು ಮತದಾನ ಕಾರ್ಯ, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಇದೀಗ ಸರ್ಕಾರವು ಬೀದಿ ನಾಯಿಗಳ ನಿಯಂತ್ರಣದ ಜವಾಬ್ದಾರಿಯನ್ನೂ ಶಿಕ್ಷಕರಿಗೆ ನೀಡಿರುವುದು ಬೇಸರದ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಶಾಲಾ ಶಿಕ್ಷಕರನ್ನೇ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡುವಂತೆ ಸೂಚಿಸಿರುವುದು ಸರಿಯಲ್ಲ ಎಂದು ಹೇಳಿದರು. ಶಿಕ್ಷಕರು ಈಗಾಗಲೇ ಮತದಾನದ ಕೆಲಸ, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಮಕ್ಕಳಿಗೆ ಹಾಲು ಹಾಗೂ ಮೊಟ್ಟೆ ವಿತರಣೆ ಸೇರಿದಂತೆ ಹಲವು ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಬೀದಿ ನಾಯಿಗಳ ನಿಯಂತ್ರಣದ ಹೊಣೆಗಾರಿಕೆಯನ್ನು ನೀಡುವುದು ಶಿಕ್ಷಕರ ಮೇಲೆ ಅನಗತ್ಯ ಭಾರ ಹಾಕಿದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಕೆಲಸಗಳಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳ ಕಲಿಕೆಯ ಮಟ್ಟ ಮತ್ತು ಪರೀಕ್ಷಾ ಫಲಿತಾಂಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಹೀಗಾಗಿ ಶಿಕ್ಷಕರಿಗೆ ನೀಡಿರುವ ಬೀದಿ ನಾಯಿಗಳ ನಿಯಂತ್ರಣದ ಜವಾಬ್ದಾರಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ನಮೋಶಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಲಬುರಗಿ | ಶಾಲಾ ವಾಹನ ಢಿಕ್ಕಿ: ಸ್ಥಳದಲ್ಲೇ ವಿದ್ಯಾರ್ಥಿ ಮೃತ್ಯು
ಕಲಬುರಗಿ: ಶಾಲಾ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ಬಳಿ ಬುಧವಾರ ನಡೆದಿದೆ. ಮಹಾಗಾಂವ್ ಕ್ರಾಸ್ನಲ್ಲಿರುವ ಮೌಂಟ್ ವೇವ್ ಶಾಲೆಯ ವಿದ್ಯಾರ್ಥಿ ಸಂಗಮೇಶ ಜಗನ್ನಾಥ್ ಬಾಮ್ನೆ(8) ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಸಿಪಿಐ ಶಿವಶಂಕರ್ ಸಾಹು ಹಾಗೂ ಕ್ರೈಂ ಪಿಎಸ್ಐ ವಿಶ್ವನಾಥ್ ಬಾಕಳೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೈರಸಿ ದಂಧೆ ನೇಲೆ ಕೇಂದ್ರ ನಿಗಾ: ಕಾಪಿರೈಟ್ ಉಲ್ಲಂಘಿಸಿದ 3100+ ಚಾನೆಲ್ ನಿಷೇಧಿಸಲು ಟೆಲಿಗ್ರಾಂಗೆ ಆದೇಶ
Central Government Order To Telegram- ಪೈರಸಿ ದಂಧೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಇದೀಗ ಕೃತಿಸ್ವಾಮ್ಯ ಉಲ್ಲಂಘಿಸಿ ಸಿನಿಮಾ, ವೆಬ್ ಸರಣಿ ಹಾಗೂ ಶೈಕ್ಷಣಿಕ ಪಠ್ಯಗಳನ್ನು ಅಕ್ರಮವಾಗಿ ಹಂಚಿಕೊಳ್ಳುತ್ತಿದ್ದ 3,100ಕ್ಕೂ ಹೆಚ್ಚು ಚಾನೆಲ್ಗಳನ್ನು ನಿಷೇಧಿಸಲು ಟೆಲಿಗ್ರಾಂಗೆ ಆದೇಶಿಸಿದೆ. ಒಂದು ವೇಳೆ ಈ ಆದೇಶ ಪಾಲಿಸದಿದ್ದರೆ ಭಾರತದಲ್ಲಿ ಟೆಲಿಗ್ರಾಮ್ ಕಾರ್ಯನಿರ್ವಹಣೆಗೆ ನಿರ್ಬಂಧ ಹೇರುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಚಲನಚಿತ್ರ ನಿರ್ಮಾಪಕರು ಸ್ವಾಗತಿಸಿದ್ದು, ಟೆಲಿಗ್ರಾಮ್ ಸಂಸ್ಥೆಯು ಸಹ ಸರ್ಕಾರದೊಂದಿಗೆ ಸಹಕರಿಸುವುದಾಗಿ ಹೇಳಿದೆ.
ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ಸಂಗ್ರಹಿಸಿಡುವುದೂ ಅಪರಾಧ; ಆರೋಪಿ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಮೊಬೈಲ್ ಪೋನ್ನಲ್ಲಿ ಸಂಗ್ರಹಿಸಿಡುವುದೂ ಸಹ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಅಪರಾಧವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಮೊಬೈಲ್ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಸಂಗ್ರಹಿಸಿದ್ದ ಆರೋಪದಲ್ಲಿ ಪೋಕ್ಸೊ ಕಾಯ್ದೆಯ ಸೆಕ್ಷನ್ 15 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67(ಬಿ) ಅಡಿಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕೇರಳದ ತ್ರಿಶೂರು ಜಿಲ್ಲೆಯ ಪಿ.ಜೆ. ಬಿನೋಜ್ (38) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳು ಮೊಬೈಲ್ ಪೋನ್ನಲ್ಲಿ ಸಂಗ್ರಹಿಸಲಾಗಿದೆಯಷ್ಟೆ. ಆದರೆ, ಯಾರಿಗೂ ಅವುಗಳನ್ನು ಕಳುಹಿಸಿಲ್ಲ. ಆದ್ದರಿಂದ, ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಅಪರಾಧಗಳು ತನಗೆ ಅನ್ವಯವಾಗುವುದಿಲ್ಲ ಎಂಬ ಅರ್ಜಿದಾರನ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೊಗಳನ್ನು ಪ್ರಸರಣ ಮಾಡುವುದಷ್ಟೇ ಅಲ್ಲ; ಪ್ರಸಾರವಾಗುವ ಸಾಮರ್ಥ್ಯವನ್ನು ಹೊಂದಿರುವ ಮಕ್ಕಳ ಅಶ್ಲೀಲ ಪೋಟೋ ಹಾಗೂ ವಿಡಿಯೊಗಳನ್ನು ಸಂಗ್ರಹಿಸಿಡುವುದೂ ಸಹ ಪೋಕ್ಸೊ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ತನ್ನ ಫೋನ್ನಿಂದ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊ ರವಾನಿಸಿಲ್ಲ ಎಂಬ ಕಾರಣಕ್ಕಾಗಿ ಆತ ಅಪರಾಧಕ್ಕೆ ಹೊಣೆಗಾರನಾಗಿರುವುದಿಲ್ಲ ಎಂದು ಅರ್ಥೈಸಲಾಗದು. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಈಗಾಗಲೇ ಅರ್ಜಿದಾರನ ವಿರುದ್ಧ ದೋಷಾರೋಪಗಳನ್ನು ಹೊರಡಿಸಿದೆ. ಪ್ರಕರಣವು ಸಾಕ್ಷ್ಯಧಾರಗಳ ವಿಚಾರಣಾ ಹಂತದಲ್ಲಿದೆ. ಆತ ಪೂರ್ಣಪ್ರಮಾಣದ ವಿಚಾರಣೆಯಿಂದಲೇ ದೋಷಮುಕ್ತವಾಗಿ ಬರಲಿ. ಈ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ. ಪ್ರಕರಣದ ಹಿನ್ನೆಲೆ: ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಅರ್ಜಿದಾರರ ಮೊಬೈಲ್ ಫೋನ್ ಅನ್ನು ತನಿಖೆಯ ವೇಳೆ ವಶಕ್ಕೆ ಪಡೆದಿದ್ದ ಪೊಲೀಸರು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಿದ್ದರು. ಈ ವೇಳೆ, ಮೊಬೈಲ್ ಸ್ಟೋರೇಜ್ ಬಾಕ್ಸ್ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳು ಹೇರಳವಾಗಿರುವುದು ಪತ್ತೆಯಾಗಿತ್ತು. ಇದರಿಂದ, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು, ಅರ್ಜಿದಾರನ ವಿರುದ್ಧ ಐಟಿ ಕಾಯ್ದೆ ಸೆಕ್ಷನ್ 67(ಬಿ) ಮತ್ತು ಪೋಕ್ಸೊ ಕಾಯ್ದೆ ಸೆಕ್ಷನ್ 15ರ ಅನ್ವಯ ಮಕ್ಕಳ ಅಶ್ಲೀಲ ಚಿತ್ರಗಳ ರಚನೆ, ಬ್ರೌಸಿಂಗ್, ಸಂಗ್ರಹಣೆ ಮತ್ತು ಪ್ರಸರಣ ಶಿಕ್ಷಾರ್ಹ ಅಪರಾಧ ಎಂಬ ಅಂಶಗಳ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅರ್ಜಿದಾರನ ವಿರುದ್ಧ ನಗರದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್ಟಿಎಸ್ಸಿ-1) ದೊಷಾರೋಪ ಹೊರಿಸಿ ವಿಚಾರಣೆ ನಡೆಸುತ್ತಿತ್ತು. ಇದರಿಂದ, ತನ್ನ ವಿರುದ್ಧದ ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಮಲೆ ಮಹದೇಶ್ವರ ಬೆಟ್ಟದ ಅನ್ನದಾಸೋಹ, ಲಾಡು ಪ್ರಸಾದಕ್ಕೂ ಕವಿದ ಯುದ್ಧದ ಕಾರ್ಮೋಡ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಇದೀಗ ಕೇವಲ ಅಂತಾರಾಷ್ಟ್ರೀಯ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ನಮ್ಮ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೂ ತಟ್ಟಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ವಿಶ್ವಾದ್ಯಂತ ತೈಲ ಹಾಗೂ ಅನಿಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ರಾಜ್ಯದೆಲ್ಲೆಡೆ ಗ್ಯಾಸ್ ಸಿಲಿಂಡರ್ ಅಭಾವ ತಲೆದೋರಿದೆ. ಇದರ ನೇರ ಪರಿಣಾಮ ಇದೀಗ
ಕರಾವಳಿಯ ವಾತಾವರಣ ಸರಿಪಡಿಸಿದರೆ ಬೆಂಗಳೂರಿನಂತೆ ಅಲ್ಲಿಯೂ ಜಿಡಿಪಿ ದರ ಹೆಚ್ಚಾಗಲಿದೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಕರಾವಳಿ ಭಾಗದ ವಾತಾವರಣ ಸರಿಪಡಿಸಿದರೆ ರಾಜಧಾನಿ ಬೆಂಗಳೂರಿನಂತೆ ಅಲ್ಲಿಯೂ ಜಿಡಿಪಿ ದರ ಹೆಚ್ಚಾಗಲಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ್ ಕಾಮತ್ ಪ್ರಶ್ನೆಗೆ ಉತ್ತರಿಸಿದ ಅವರು, ಕರಾವಳಿ ಭಾಗದಲ್ಲಿ ಸ್ಟಾರ್ಟ್ ಅಪ್ ಗಳ ಸ್ಥಾಪನೆಗೆ ರಾಜ್ಯ ಸರಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಟೆಕ್ನೋವಾಂಜಾ ಸಮ್ಮೇಳನ, ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್, ಕರ್ನಾಟಕ ಆಕ್ಸಿಲರೇಷನ್ ನೆಟ್ವರ್ಕ್ ಅಡಿಯಲ್ಲಿ ಕರಾವಳಿ ಪ್ರದೇಶದ ಸ್ಟಾರ್ಟ್ ಅಪ್ ಗಳಿಗಾಗಿ ಮಂಗಳೂರಿನಲ್ಲಿ ಶೈನ್ ಫೌಂಡೇಷನ್ ಅನ್ನು ಗುರುತಿಸಲಾಗಿದೆ ಎಂದರು. ಎಲಿವೇಟ್ ಯೋಜನೆಯಡಿ 90 ನವೋದ್ಯಮಗಳಿಗೆ ಒಟ್ಟು 1,970 ಲಕ್ಷ ಅನುದಾನ ನೀಡುವ ಮೂಲಕ ಕರಾವಳಿ ಜಿಲ್ಲೆಯನ್ನು ಉತ್ತೇಜಿಸಲಾಗಿದೆ. ಆದರೆ, ಅಲ್ಲಿನ ವಾತಾವರಣ ಸರಿಪಡಿಸಿದರೆ ಜಿಡಿಪಿ ಸಹ ವೃದ್ಧಿ ಆಗಲಿದೆ. ಇದಕ್ಕಾಗಿ ಎಲ್ಲರೂ ಪ್ರಯತ್ನ ಮಾಡಬೇಕಾಗಿದೆ ಎಂದು ಸಚಿವರು ಉಲ್ಲೇಖಿಸಿದರು. 3 ವರ್ಷಗಳಿಂದ ರಾಜ್ಯದಲ್ಲಿ ಒಟ್ಟು 2129 ಕಂಪೆನಿ, ಸ್ಟಾರ್ಟ್ ಆ್ಯಪ್ ಕಂಪೆನಿಗಳು ಆರಂಭಗೊಂಡಿದ್ದು, ಸುಮಾರು 2.50 ಲಕ್ಷ ಉದ್ಯೋಗಾವಕಾಶಗಳು ದೊರಕಿವೆ. ಐಟಿ ವಲಯಕ್ಕೆ ಸಂಬಂಧಿಸಿದಂತೆ ಸುಮಾರು 5 ಒಡಂಬಡಿಕೆಗಳು ಹಾಗೂ ಬಿಟಿ ವಲಯಕ್ಕೆ ಸಂಬಂಧಿಸಿದಂತೆ ಸುಮಾರು 13 ಹಾಗೂ ಸ್ಟಾರ್ಟ್ ಅಪ್ ವಲಯಲ್ಲಿ ಸುಮಾರು 475 ನವೋದ್ಯಮಗಳಿಗೆ ತ್ರಿಪಕ್ಷೀಯ ಕರಾರು ಒಪ್ಪಂದ, ರಾಜೀವ್ ಗಾಂಧಿ ಉದ್ಯಮಶೀಲತೆಯಡಿ ಒಟ್ಟು 60 ನಾವೀನ್ಯಕಾರರೊಂದಿಗೆ ತ್ರಿಪಕ್ಷೀಯ ಒಪ್ಪಂದ, ಮಹಿಳಾ ಉದ್ಯಮ ಶೀಲತಾ 4 ಸಂಸ್ಥೆಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ ಹಾಗೂ ಗ್ರಾಸ್ ರೂಟ್ ಇನ್ನೋವೇಶನ್ ಕಾರ್ಯಕ್ರಮದಡಿ 27 ನವೋದ್ಯಮಗಳಿಗೆ ತ್ರಿಪಕ್ಷೀಯ ಕರಾರು ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ ಎಂದು ಅವರು ವಿವರಿಸಿದರು.
ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ರೈತರಿಗೆ ಅನುಕೂಲ ಆಗುವಂತೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಲಾಭವಾಗುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್.ಆರ್.ವಿಶ್ವನಾಥ್ ಗಮನ ಸೆಳೆದ ಸೂಚನೆಗೆ ಉತ್ತರಿಸಿದ ಅವರು, ಸದ್ಯದಲ್ಲಿಯೇ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ, ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಯಲ್ಲಿ ರೈತರಿಗೆ ಅನುಕೂಲ ಆಗುವಂತೆ ಮತ್ತು ಬಿಡಿಎಗೆ ಲಾಭವಾಗುವಂತೆ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಯಲಹಂಕದಲ್ಲಿ ನಿರ್ಮಿಸಲಾಗಿರುವ ಬಡಾವಣೆ ಬಹುತೇಕ ಪೂರ್ಣಗೊಂಡಿದ್ದು, ಹೈಕೋರ್ಟ್ ಎರಡೂವರೆ ತಿಂಗಳ ಹಿಂದೆಯೆ ಜಮೀನು ನೀಡಿರುವ ರೈತರಿಗೆ ಮೊದಲು ಪರ್ಯಾಯ ನಿವೇಶನಗಳನ್ನು ನೀಡಿ, ನಂತರ ಸಾರ್ವಜನಿಕರಿಗೆ ನೀಡುವಂತೆ ತಿಳಿಸಿದ್ದರೂ ಇನ್ನೂ ಯಾವುದೇ ರೀತಿಯಲ್ಲಿ ಸರಕಾರ ಕ್ರಮ ವಹಿಸಲಿಲ್ಲ ಎಂದು ವಿಶ್ವನಾಥ್ ಹೇಳಿದರು. ಅಲ್ಲದೇ, ಮೂಲೆ ವಿವೇಶನಗಳನ್ನು ಬಿಡಿಎ ಹರಾಜು ಮಾಡಬಹುದು, ಆದರೆ 100, 80 ಮತ್ತು 60 ಅಡಿ ರಸ್ತೆಯ ನಿವೇಶನಗಳನ್ನು ಕಾಯ್ದಿರಿಸಿಕೊಳ್ಳುವುದು ಸರಿಯಲ್ಲ. ರೈತರಿಗೂ ಆ ನಿವೇಶನಗಳು ಸಿಗಬೇಕು ಎಂದು ಅವರು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, ನಮಗಿಂತ ನಿಮಗೆ ಬಿಡಿಎ ಬಗ್ಗೆ ಹೆಚ್ಚು ಗೊತ್ತು. ನೀವು ಬಿಡಿಎ ಅಧ್ಯಕ್ಷರಾಗಿದ್ದವರು. ಆದಷ್ಟು ಜಮೀನು ನೀಡಿರುವವರಿಗೆ ಅವರ ಜಾಗದಲ್ಲಿಯೇ ನಿವೇಶನ ನೀಡಬೇಕು ಎಂದುಕೊಂಡಿದ್ದೇವೆ. ಆದರೆ ಬಹಳಷ್ಟು ಜನರು ಒಂದೇ ಜಾಗದಲ್ಲಿ ನಮಗೆ ನಿವೇಶನಗಳನ್ನು ಕೊಡಿ, ನಮಗೆ ಅನುಕೂಲ ಆಗುತ್ತದೆ ಎಂದು ಕೇಳಿಕೊಂಡಿದ್ದಾರೆ. ಹಾಗಾಗಿ ಅವರ ಮನವಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದರು. ಒಬ್ಬರಿಗೆ 100 ಅಡಿ ರಸ್ತೆ ಇರುವಲ್ಲಿ ಕೊಟ್ಟು, ಮತ್ತೊಬ್ಬರಿಗೆ ಕೊಡದಿರುವುದು ಸರಿಯಾಗುವುದಿಲ್ಲ. ಹಾಗೆಯೇ ಬಡಾವಣೆ ಮಾಡುವಾಗ ಇದೇ ಜಮೀನಿನಲ್ಲಿ 100 ಅಡಿ ರಸ್ತೆ ಬರುವಂತೆ ಮಾಡಲು ಸಾಧ್ಯವಿರುವುದಿಲ್ಲ. ನಾವು ಈ ಸಮಸ್ಯೆಗಾಗಿ ಹೊಸ ಸಾಫ್ಟ್ ವೇರ್ ಅನ್ನು ಸಿದ್ಧಪಡಿಸುತ್ತಿದ್ದೇವೆ. ಜಮೀನು ನೀಡಿದವರಿಗೆ 9600 ನಿವೇಶಗಳನ್ನು ನೀಡುವುದರಲ್ಲಿ ನಮ್ಮ ತಕರಾರು ಏನು ಇಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಇಲ್ಲಿಯವರೆಗೆ ಈ ಬಡಾವಣೆ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ನಿವೇಶನಕ್ಕೆ ಅರ್ಜಿಗಳನ್ನು ತೆಗೆದುಕೊಳ್ಳಲು ಆಗಿಲ್ಲ. ಅದರಿಂದಾಗಿ ಪ್ರತಿ ವರ್ಷ ಒಂದು ಸಾವಿರ ಕೋಟಿ ರೂ.ನಷ್ಟವಾಗುತ್ತಿದೆ ಎಂದು ಅವರು ತಿಳಿಸಿದರು. ನಾನೇ ಒತ್ತಡ ಹಾಕಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದೇನೆ. ಸರಕಾರ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸದ್ಯದಲ್ಲಿಯೇ ತಮ್ಮನ್ನೂ ಒಳಗೊಂಡಂತೆ ಬಿಡಿಎ ಕಚೇರಿಯಲ್ಲಿ ಒಂದು ಸಭೆಯನ್ನು ನಡೆಸಿ ತೀರ್ಮಾನ ಮಾಡೋಣ ಎಂದು ಶಾಸಕರಿಗೆ ಉಪಮುಖ್ಯಮಂತ್ರಿ ಭರವಸೆ ನೀಡಿದರು.
ಉತ್ತರಾಖಂಡದ ಬಾಗೇಶ್ವರದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ : 2026ರ ಆರಂಭದಲ್ಲಿ 60 ಪ್ರಕರಣಗಳು ವರದಿ
ಬಾಗೇಶ್ವರ, ಮಾ. 11: ಉತ್ತರಾಖಂಡದ ಬಾಗೇಶ್ವರದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಧಿಕೃತ ದತ್ತಾಂಶದ ಪ್ರಕಾರ 2025ರಲ್ಲಿ ಇಲ್ಲಿನ ನಿವಾಸಿಗಳು ವಿವಿಧ ಸೈಬರ್ ವಂಚನೆಗಳಿಂದ 2,76,99,510 ರೂ. ಕಳೆದುಕೊಂಡಿದ್ದಾರೆ. 2026ರ ಆರಂಭದಲ್ಲಿ 60 ಪ್ರಕರಣಗಳು ವರದಿಯಾಗಿವೆ. ಕಾನೂನು ಜಾರಿ ಸಂಸ್ಥೆಗಳು ನಕಲಿ ಖಾತೆಗಳಲ್ಲಿರುವ 1,34,14,424 ರೂ.ಗಳನ್ನು ಸ್ತಂಭನಗೊಳಿಸಲು ಸಫಲರಾಗಿದ್ದಾರೆ. ಆದರೆ, ವಸೂಲಾತಿ ಪ್ರಕ್ರಿಯೆ ನಿಧಾನವಾಗಿದೆ. ಇದುವರೆಗೆ ಸಂತ್ರಸ್ತರಿಗೆ 41,32,944 ರೂ. ಮಾತ್ರ ಹಿಂದಿರುಗಿಸಲಾಗಿದೆ. ವಿಭಾಗೀಯ ಆಯುಕ್ತರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪುನರ್ ಪರಿಶೀಲನಾ ಸಭೆಯ ಸಂದರ್ಭ ಮಂಡಿಸಲಾದ ಅಂಕಿ-ಅಂಶಗಳು ಆತಂಕಕಾರಿ ಚಿತ್ರಣವನ್ನು ಮುಂದಿರಿಸಿದೆ. ಪೊಲೀಸರು ಕ್ರಮ ತೆಗೆದುಕೊಳ್ಳುವ ಮುನ್ನವೇ ವಂಚಕರು ಸುಲಿಗೆ ಮಾಡಿದ ಮೊತ್ತದಿಂದ ಗಣನೀಯ ಸುಮಾರು 1.42 ಕೋಟಿ.ರೂ.ವನ್ನು ತೆಗೆದಿದ್ದಾರೆ. ಯಶಸ್ವಿಯಾಗಿ ಸ್ತಂಭನಗೊಳಿಸಲಾದ ಖಾತೆಯಿಂದ ಸಂತ್ರಸ್ತರಿಗೆ ಹಣ ಹಿಂದಿರುಗಿಸಲು ಕಾನೂನು ಹಾಗೂ ಕಾರ್ಯವಿಧಾನಗಳು ಅಡೆತಡೆ ಒಡ್ಡುತ್ತಿವೆ. ಹಣವನ್ನು ಸ್ತಂಭನಗೊಳಿಸಿದ ಬಳಿಕ ಮರು ಪಾವತಿ ಪ್ರಕ್ರಿಯೆಯು ಸಾಮಾನ್ಯವಾಗಿ ಜಟಿಲವಾಗಿರುತ್ತದೆ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ. ಹಣ ವಸೂಲಿಯಲ್ಲಿ ಯಶಸ್ಸು ಕಡಿಮೆ ಇದ್ದರೂ ಜಿಲ್ಲಾ ಪೊಲೀಸರು ದಾಖಲಾದ 469 ದೂರುಗಳಲ್ಲಿ 450 ದೂರುಗಳನ್ನು ಪರಿಹರಿಸಲಾಗಿದೆ ಎಂದು ಹೇಳುತ್ತಾರೆ. ಇದು ಕಾಗದದಲ್ಲಿ ಮಾತ್ರ ದೂರುಗಳು ಪರಿಹಾರವಾಗುತ್ತಿರುವ ಬಗ್ಗೆ ಗಮನ ಸೆಳೆದಿದೆ.
ಸಿ.ಎ. ಇಂಟರ್ ಮೀಡಿಯೆಟ್ ಫಲಿತಾಂಶ : ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ
ಮೂಡುಬಿದಿರೆ: 2026 ಜನವರಿಯಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯ ಗ್ರೂಪ್-01 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 13.96 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 08 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 44.44 ಫಲಿತಾಂಶ ಬಂದಿದ್ದು, ಗ್ರೂಪ್-02 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 15.54 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 06 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 60 ಫಲಿತಾಂಶ ಬಂದಿದ್ದು ಹಾಗೂ ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 9.39 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 06 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 22 ಫಲಿತಾಂಶ ದಾಖಲಿಸಿದ್ದಾರೆ. 2026 ಜನವರಿಯಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ತನ್ವಿ ಬಿ ಪೂಜಾರಿ, ರೆಹೆನಾಜ್, ಮೇಘನಾ ಪಿ ದೇವಾಡಿಗ ಹಾಗೂ ವೈಶ್ಣವಿ ಯು.ಕೆ. ಇವರು ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಇಂಟರ್ ಮೀಡಿಯಟ್ ಗ್ರೂಪ್-02 ವಿಭಾಗದಲ್ಲಿ ತನುಶ್ರೀ ಯು, ಪ್ರಜ್ಞಾ ಪೂಜಾರಿ, ಸ್ವಾತಿ, ಪನ್ನಗ ಜೈನ್, ಧನ್ಯಾ ಜಿ ಶೆಟ್ಟಿ ಹಾಗೂ ಗಿರೀಶ್ ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಇಂಟರ್ ಮೀಡಿಯಟ್ ಗ್ರೂಪ್-01 ವಿಭಾಗದಲ್ಲಿ ಶ್ರೀನಿಧಿ, ಅಚಿಂತ್ಯ ಭಾರಧ್ವಜ್, ಅಮೃತಾ ಪ್ರವೀಣ್ ಕಟ್ವಾ, ವೃಂದಾ ವಿ. ವಿ. ರೈ, ಅನಿಶಾ, ದಿನೇಶ್ ಎನ್., ಝಾನ್ಸಿ ಎಂ. ಹಾಗೂ ಪೂರ್ಣ ಪೂಜಾರಿ ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ಡೀನ್ ಪ್ರಶಾಂತ್ ಎಮ್ಡಿ ಹಾಗೂ ಸಂಯೋಜಕಿ ಅಪರ್ಣಾ ಅಭಿನಂದಿಸಿದ್ದಾರೆ.
ಬಳ್ಳಾರಿ | ವಿದ್ಯಾರ್ಥಿಗಳ ಜ್ಞಾನ ಪ್ರದರ್ಶನ ಕಾರ್ಯಕ್ರಮ
ಬಳ್ಳಾರಿ / ಕಂಪ್ಲಿ: ತಾಲೂಕಿನ ಎಮ್ಮಿಗನೂರುನಲ್ಲಿರುವ ಶ್ರಿ ವೆಂಕಯ್ಯ ಮೆಮೋರಿಯಲ್ ಸ್ಕೂಲ್ ನಲ್ಲಿ ನರ್ಸರಿ ತರಗತಿಯಿಂದ 2ನೇ ತರಗತಿ ವಿದ್ಯಾರ್ಥಿಗಳ ವರ್ಷಪೂರ್ತಿ ಕಲಿಕೆಯ ಫಲಕಗಳ ಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜ್ಯೋತಿ ಅವರು, ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಅಡಗಿಕೊಂಡಿದ್ದು ಅವುಗಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಆ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಶಾಲಾ ಸಂಸ್ಥಾಪಕ ತಾಂಡವ ಕೃಷ್ಣ ಮಾತನಾಡಿ, ಮಕ್ಕಳಿಗೆ ಭೌತಿಕ, ಮಾನಸಿಕ ಮತ್ತು ಜ್ಞಾನಾತ್ಮಕ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರದರ್ಶನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಕಾರ್ಯದರ್ಶಿಗಳಾದ ಎ ಸುನಿತ, ಮುಖ್ಯಗುರುಗಳಾದ ಕೆ. ಎಚ್. ರಾಮು ಶಿಕ್ಷಕರಾದ ಬರ್ಮಾ, ವಿದ್ಯಾರ್ಥಿಗಳ ಪಾಲಕರಾದ ರಾಜಸಾಬ್. ಬಿ ಜಡಿ ಮೂರ್ತಿ, ವೀರೇಶ್, ಓರ್ವಾಯಿ. ಪಲ್ಲವಿ, ಶಾರದಾ, ನೀಲಮ್ಮ, ಲಕ್ಷ್ಮೀನಾರಾಯಣ, ವಿಜಯಲಕ್ಷ್ಮಿ, ಶಾಂಭವಿ, ಗೀತಾ, ಹಾಗೂ ರಾಯಮಣಿ ಎಲ್ಲಾ ಶಿಕ್ಷಕಿಯರು ಸೇರಿದಂತೆ ಪಾಲಕ- ಪೋಷಕರು ಉಪಸ್ಥಿತರಿದ್ದರು.
ಬಳ್ಳಾರಿ | ಮೌಲಾನಾ ಆಝಾದ್ ಮಾದರಿ ಶಾಲೆ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ
ಬಳ್ಳಾರಿ / ಕಂಪ್ಲಿ: ತಾಲೂಕಿನ ಸಕ್ಕರೆ ಕಾರ್ಖಾನೆಯ ಬಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಲು ಮುಂದಾಗಿರುವ ಮೌಲಾನಾ ಆಝಾದ್ ಮಾದರಿ ಶಾಲಾ ಕಟ್ಟಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಬೇರೆಡೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಹಳೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಅವರು, ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಅರವಿ ಬಸವನಗೌಡ, ಸಕ್ಕರೆ ಕಾರ್ಖಾನೆ ಬಳಿಯ ಈ ಸರ್ಕಾರಿ ಶಾಲೆ ಹಲವು ದಶಕಗಳಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಅವರ ಭವಿಷ್ಯ ರೂಪಿಸುತ್ತಿದೆ. ಶಾಲೆಗೆ ವಿಶಾಲವಾದ ಆಟದ ಮೈದಾನವಿದ್ದು, ಈಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಏಕಾಏಕಿ ಆಜಾದ್ ಮಾದರಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು. ಇದರಿಂದ ಮಕ್ಕಳ ಆಟದ ಮೈದಾನಕ್ಕೆ ಸಮಸ್ಯೆಯಾಗುವ ಜೊತೆಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಿ ಬೇರೆಡೆ ಸೂಕ್ತ ಸ್ಥಳ ಗುರುತಿಸಿ ಶಾಲೆ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು. ಯುವ ಮುಖಂಡ ಎನ್ ಮನೋಜಗೌಡ ಮಾತನಾಡಿ, ಮೌಲಾನಾ ಆಜಾದ್ ಮಾದರಿ ಶಾಲೆಗೆ ವಿರೋಧವಿಲ್ಲ. ಆದರೆ ಈಗಿರುವ ಸರ್ಕಾರಿ ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ. ಸ್ಥಳೀಯರ ಹಕ್ಕೋತ್ತಾಯದಂತೆ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಹೇಳಿದರು. ಶಾಲೆ ಅನುಮೋದನೆಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ನೀಡದೇ, ತಮ್ಮ ಇಚ್ಛೆಯಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸ್ಥಳೀಯರ ವಿರೋಧದ ನಡುವೆಯೂ ಕಾಮಗಾರಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಮುಖಂಡರೊಂದಿಗೆ ಚರ್ಚಿಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ರಾಜಶೇಖರ್, ಯರ್ರಿಸ್ವಾಮಿ, ಟಿ.ವಿ.ಸುದರ್ಶನರೆಡ್ಡಿ, ಮಲ್ಲಪ್ಪ, ಆದಿ ನಾರಾಯಣಿ, ಸುಂಕಪ್ಪ, ರಬಿಯಾ ನಿಸಾರ್, ಲಲಿತಾ ಸೇರಿದಂತೆ ಎಸ್ ಡಿ ಎಂ ಸಿ ಯವರು, ಮುಖಂಡರು, ಹಳೇ ವಿದ್ಯಾರ್ಥಿಗಳು ಇದ್ದರು.
ವಿಟ್ಲ| ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪ; 4 ಮಂದಿ ಸೆರೆ
ವಿಟ್ಲ: ನೇರಳಕಟ್ಟೆ ಭಗವಂತಕೋಡಿ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಶ್ರಫ್ ಜಿ., ಆಶ್ರಫ್ ಎನ್ ಎ., ಅಫ್ವಾನ್ ಮತ್ತು ಹಫೀಝ್ ಯಾನೆ ಅಪ್ಪಿ ಬಂಧಿತ ಆರೋಪಿಗಳು, ಅವರಿಂದ 1.79,700ರೂ. ಅಂದಾಜು ಬೆಲೆಯ 17.97 ಗ್ರಾಂ ತೂಕದ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಶ್ರಫ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತು ಎಮ್.ಡಿ.ಎಮ್.ಎಯನ್ನು ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸರು ಅಶ್ರಫ್ ಜಿ,ಯ ಮನೆಗೆ ತೆರಳಿದಾಗ ಅಲ್ಲಿ ಆತ ಜತೆ ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಮತ್ತು ಅಶ್ರಫ್ ಎನ್ ಎ. ಅವರಿದ್ದರು. ಆತನ ಮನೆಯನ್ನು ಪರಿಶೀಲಿಸಿದಾಗ ಎಂಡಿಎಂಎ ಮಾದಕ ವಸ್ತು, ಚೂರಿ ಹಾಗೂ ಇತರೆ ಸೊತ್ತುಗಳು ಪತ್ತೆಯಾಗಿವೆ, ಅವುಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಳ್ಳಾರಿ | ಹೊಸ ದರೋಜಿ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಹನುಮಂತಪ್ಪ ಅವಿರೋಧ ಆಯ್ಕೆ
ಬಳ್ಳಾರಿ / ಕಂಪ್ಲಿ: ತಾಲೂಕು ಸಮೀಪದ ಹೊಸ ದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಎನ್.ವಿ.ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಈ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಹನುಮಂತಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಬಿ ನಾಗರಾಜ್ ಘೋಷಿಸಿದರು. ಚುನಾವಣೆ ಪ್ರಕ್ರಿಯೆ ವೇಳೆ ಮುಖ್ಯ ಕಾರ್ಯನಿರ್ವಾಹಕ ವಿ ಮಲ್ಲಿಕಾರ್ಜುನ್, ಸಹಕಾರ ಸಂಘದ ಅಧ್ಯಕ್ಷ ಪಿ ಎಸ್ ಲಿಂಗಪ್ಪ ಹಾಗೂ ನಿರ್ದೇಶಕರಾದ ರಾಮಾಂಜನೇಯ, ಡಿ ವಿ ಮಂಜುನಾಥ್, ಎಸ್ ವೆಂಕಟೇಶ್, ಎನ್ ಮರಿಸ್ವಾಮಿ, ಎಚ್ ದಾನಪ್ಪ, ಕೆ ತಿಮ್ಮಯ್ಯ ಮತ್ತು ವಲಿ ಮಸಿಡಿ ಉಪಸ್ಥಿತರಿದ್ದರು. ನಂತರ ನೂತನ ಉಪಾಧ್ಯಕ್ಷರಾದ ಹನುಮಂತಪ್ಪ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಹಕಾರ ಸಂಘದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ವಿಜಯನಗರ | ಅಕ್ರಮ ಪಡಿತರ ಅಕ್ಕಿ ಸಾಗಣೆ ಪತ್ತೆ: 360 ಚೀಲ ವಶ
ವಿಜಯನಗರ: ನಗರದ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಮಾರ್ಚ್ 9, 2026 ರಂದು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿತು. ಈ ವೇಳೆ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಅಕ್ಕಿ ಚೀಲಗಳನ್ನು ಪರಿಶೀಲಿಸಿದಾಗ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ ಒಟ್ಟು 360 ಅಕ್ಕಿ ಚೀಲಗಳು (18,240 ಕೆ.ಜಿ.) ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 4,10,400 ರೂ. ಆಗಿದೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 49/26 ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಮೇಘಾಲಯ | ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಘರ್ಷಣೆ : ಘರೋ ಗುಡ್ಡಗಾಡು ಜಿಲ್ಲಾ ಮಂಡಳಿ ಚುನಾವಣೆ ಮುಂದೂಡಿಕೆ
ಇಂಫಾಲ,ಜೂ.11: ಸ್ವಾಯತ್ತ ಘರೋ ಗುಡ್ಡಗಾಡು ಜಿಲ್ಲಾ ಮಂಡಳಿಗೆ ಎಪ್ರಿಲ್ 10ರಂದು ನಡೆಯಲಿದ್ದ ಚುನಾವಣೆಯನ್ನು ಮುಂದೂಡಲಾಗಿದೆಯೆಂದು ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಕೆ. ಸಂಗ್ಮಾ ಅವರು ತಿಳಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಪಶ್ಚಿಮ ಘರೋ ಜಿಲ್ಲೆಯಲ್ಲಿ ನಡೆದ ಘರ್ಷಣೆ ಸಂದರ್ಭ ಶಂಕಿತ ಪೊಲೀಸ್ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದ ಮರುದಿನ ಸಂಗ್ಮಾ ಅವರು ಈ ಹೇಳಿಕೆ ನೀಡಿದ್ದಾರೆ. ಜನತೆಯ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಚುನಾವಣೆಗಳನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಅವರು ಹೇಳಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಮುಂದುವರಿಸುವ ಬಗ್ಗೆ ಮಾತುಕತೆಯ ಮೂಲಕ ನಿರ್ಧರಿಸಲಾಗುವುದು ಎಂದವರು ತಿಳಿಸಿದ್ದಾರೆ. ಚಿನಿಬಾಂಗ್ ಪ್ರದೇಶದಲ್ಲಿ ಚುನಾವಣೆಗೆ ಸಂಬಂಧಿಸಿ ಬುಡಕಟ್ಟು ಹಾಗೂ ಬುಡಕಟ್ಟೇತರ ಜನರ ನಡುವೆ ಘರ್ಷಣೆ ನಡೆದ ವೇಳೆ ಪೊಲೀಸ್ ಗೋಲಿಬಾರ್ ನಡೆಯಿತೆನ್ನಲಾಗಿದೆ. ಮೃತಪಟ್ಟವರೆಲ್ಲರೂ ಬುಡಕಟ್ಟೇತರ ನಿವಾಸಿಗಳೆಂದು ಪಶ್ಚಿಮ ಘರೋ ಗುಡ್ಡಗಾಡು ಜಿಲ್ಲೆಯ ಉಪ ಆಯುಕ್ತ ವಿಭೋರ್ ಅಗರ್ವಾಲ್ ತಿಳಿಸಿದ್ದಾರೆ. ಮಂಡಳಿ ಚುನಾವಣೆಗೆ ಬುಡಕಟ್ಟು ಸಮುದಾಯದವರಲ್ಲದ ವ್ಯಕ್ತಿಗಳು ಸ್ಪರ್ಧಿಸುವುದನ್ನು ನಿಷೇಧಿಸುವ ಅಧಿಸೂಚನೆಯನ್ನು ಹೊರಡಿಸಿದ ಬಳಿಕ ಜಿಲ್ಲೆಯಲ್ಲಿ ಜನಾಂಗೀಯ ಉದ್ವಿಗ್ನತೆ ತಲೆದೋರಿದೆ.
ಬಹುಸಾವಿರ ಕೋಟಿ ‘ ಗೆಯಿನ್ಬಿಟ್ಕಾಯಿನ್’ ಹಗರಣ | ಸಿಬಿಐನಿಂದ ಮುಖ್ಯ ಆರೋಪಿಯ ಬಂಧನ
ಹೊಸದಿಲ್ಲಿ,ಮಾ.11: ಬಹುಸಾವಿರ ಕೋಟಿ ಗೆಯಿನ್ಬಿಟ್ಕಾಯಿನ್ ಕ್ರಿಪ್ಟೊಕರೆನ್ಸಿ ಹಗರಣಕ್ಕೆ ಸಂಬಂಧಿಸಿ ಡಾರ್ವಿನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಯೂಷ್ ವಾರ್ಶ್ನೆ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಶುಕ್ರವಾರ ಬಂಧಿಸಿದೆ. ವೇರಿಯೇಬಲ್ಟೆಕ್ ಪ್ರೈ.ಲಿಮಿಟೆಡ್ ಎಂಬ ಸಂಸ್ಥೆಯು ನಡೆಸುತ್ತಿತ್ತೆನ್ನಲಾದ ಪೊಂಝಿ ಸ್ಕೀಮ್ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸ್ಕೀಮ್ನಡಿ ಕ್ರಿಪ್ಟೋಕರೆನ್ಸಿ ಹೂಡಿಕೆಗಳಿಂದ ಅತಿಯಾದ ಲಾಭವನ್ನು ಪಡೆಯಬಹುದೆಂಬ ಭ್ರಮೆ ಮೂಡಿಸಿ ಹೂಡಿಕೆದಾರರನ್ನು ಸೆಳೆಯಲಾಗುತ್ತಿತ್ತು. ಹೀಗೆ ಹೂಡಿಕೆದಾರರಿಂದ ಸಂಗ್ರಹಿಸಲಾದ ಹಣವನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿತ್ತು. ಭಾರತೀಯ ದಂಡಸಂಹಿತೆಯ ಸೆಕ್ಷನ್ಗಳಾದ 120 ಬಿ, 406 ಹಾಗೂ 420 ಮತ್ತು 2000ನೇ ಇಸವಿಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ರಡಿ ತನಿಖೆಯನ್ನು ನಡೆಸಲಾಗುತ್ತದೆ. ಗೆಯಿನ್ಬಿಟ್ಕಾಯಿನ್ ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿ ಎಫ್ಐಆರ್ ದಾಖಲಿಸುವಂತೆ 2023ರ ಡಿಸೆಂಬರ್ 13ರಂದು ಸುಪ್ರೀಂಕೋರ್ಟ್ ಆದೇಶಿಸಿದ ಬಳಿಕ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೊಂಡಿತ್ತು.
ಮಣಿಪಾಲ: ಅಖಿಲ ಭಾರತ ಅಂತರ ವಿವಿ ಚೆಸ್ ಪ್ರಾರಂಭ; ದಿಲ್ಲಿ ವಿವಿಗೆ ಮಣಿದ ಮುಂಬೈ ವಿವಿ
ಮಣಿಪಾಲ, ಮಾ.11: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ಪುರುಷರ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಚೆಸ್ ಚಾಂಪಿಯನ್ಷಿಪ್ ಇಂದು ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ. ಪೈ ಸಭಾಂಗಣದಲ್ಲಿ ಪ್ರಾರಂಭಗೊಂಡಿದ್ದು, ಮೊದಲ ದಿನದ ಪಂದ್ಯದಲ್ಲಿ ಹೊಸದಿಲ್ಲಿಯ ದಿಲ್ಲಿ ವಿವಿ ತಂಡ, ಮುಂಬಯಿ ವಿವಿ ತಂಡವನ್ನು ಪರಾಭವಗೊಳಿಸಿ ಶುಭಾರಂಭ ಮಾಡಿದೆ. ಮೊದಲ ದಿನದ ಉಳಿದ ಪಂದ್ಯಗಳಲ್ಲಿ ಚೆನ್ನೈನ ಎಸ್ಆರ್ಎಂ ಐಎಸ್ಟಿ ವಿವಿ, ಪಶ್ಚಿಮ ಬಂಗಾಲದ ಅದಮಾಸ್ ವಿವಿಯನ್ನು ಹಾಗೂ ಆಂಧ್ರಪ್ರದೇಶ ಗುಂಟೂರಿನ ಕೆಎಲ್ಇಎಫ್ ವಿವಿ, ಮರವಾಡಿ ವಿವಿಯನ್ನು ಹಿಮ್ಮೆಟ್ಟಿಸಿ ಪೂರ್ಣ ಅಂಕ ಸಂಪಾದಿಸಿದವು. ತಮಿಳುನಾಡಿನ ವಿಐಟಿ ವೆಲ್ಲೂರು ತಂಡ, ಕೇರಳ ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ ಕೈಯಲ್ಲಿ ಪರಾಭ ಗೊಂಡರೆ, ಪುಣೆಯ ಭಾರತಿ ವಿದ್ಯಾಪೀಠ, ಮೀರತ್ನ ಚಟೌಧುರಿ ಚರಣ್ ಸಿಂಗ್ ವಿವಿಯನ್ನು ಸೋಲಿಸಿತು. ಪರುಲ್ ವಿವಿ ದಿನದ ಕೊನೆಯ ಪಂದ್ಯದಲ್ಲಿ ಚಂಡೀಗಢದ ಪಂಜಾಬ್ ವಿವಿಯನ್ನು ಪರಾಭವಗೊಳಿಸಿತು. ಭಾರತೀಯ ವಿವಿಗಳ ಸಂಘದ (ಎಐಯು) ಸಹಯೋಗದಲ್ಲಿ ಮಾಹೆ ನಾಲ್ಕು ದಿನಗಳ ಚಾಂಪಿಯನ್ಷಿಪ್ನ್ನು ಆಯೋಜಿಸುತ್ತಿದ್ದು, ದೇಶಾದ್ಯಂತ ದಿಂದ ಒಟ್ಟು 12 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ. ತಂಡದಲ್ಲಿ ಮೂವರು ಗ್ರಾಂಡ್ಮಾಸ್ಟರ್ಗಳು ಹಾಗೂ ಮೂವರು ಇಂಟರ್ನೇಷನಲ್ ಮ್ಯಾಸ್ಟರ್ಗಳನ್ನು ಹೊಂದಿರುವ ಚೆನ್ನೈನ ಎಸ್ಆರ್ಎಂ ಐಎಸ್ಟಿ ತಂಡ ಅಗ್ರಶ್ರೇಯಾಂಕವನ್ನು ಪಡೆದಿದೆ. ಚೆಸ್ ಸ್ಪರ್ಧೆಯನ್ನು ಮಾಹೆಯ ಪ್ರೊವೈಸ್ ಚಾನ್ಸಲರ್ (ಆರೋಗ್ಯ ವಿಜ್ಞಾನ) ಡಾ.ಶರತ್ಕುಮಾರ್ ಅವರು ಉದ್ಘಾಟಿಸಿದರು. ಎಐಯು ವೀಕ್ಷಕರಾದ ಡಾ.ನರೇಂದ್ರ ಗೌರ್, ಮಾಹೆ ಕ್ರೀಡಾ ಕೌನ್ಸಿಲ್ನ ಕಾರ್ಯದರ್ಶಿ ಡಾ.ವಿನೋದ ಸಿ.ನಾಯಕ್, ಹೆಚ್ಚುವರಿ ಕಾರ್ಯದರ್ಶಿ ಡಾ.ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಉಪೇಂದ್ರ ನಾಯಕ್ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಐಪಿಎಲ್ 2026: ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿ ಪ್ರಕಟ, ದಿನಾಂಕ, ಸಮಯ ಸ್ಥಳದ ವಿವರ ತಿಳಿಯಿರಿ
IPL 2026: ವಿಶ್ವದ ಅತ್ಯಂತ ಶ್ರೀಮಂತ ಲೀಗ್ಗಳಲ್ಲಿ ಒಂದಾದ ಐಪಿಎಲ್ 2026 ಟೂರ್ನಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಇಂದು (ಮಾರ್ಚ್ 11) ಪ್ರಕಟಿಸಿದೆ. ಸದ್ಯಕ್ಕೆ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಉಳಿದ ಪಂದ್ಯಗಳ ವಿವರಗಳನ್ನು ನಂತರ ಪ್ರಕಟಿಸಲಾಗುವುದು. ಮುಂದಿನ ತಿಂಗಳು ಏಪ್ರಿಲ್ 12ರ ವರೆಗೆ ನಡೆಯಲಿರುವ ಪಂದ್ಯಗಳ ಪಟ್ಟಿ ಇದೀಗ
ಅಫಜಲಪುರ | ತಹಶೀಲ್ ಕಚೇರಿ ಆವರಣದಲ್ಲಿ ಉರುಳಿ ಬಿದ್ದ ವಿದ್ಯುತ್ ಕಂಬ : ತಪ್ಪಿದ ಭಾರಿ ಅನಾಹುತ
ಅಫಜಲಪುರ: ಪಟ್ಟಣದ ಅಫಜಲಪುರ ತಹಶೀಲ್ ಕಚೇರಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ವಿದ್ಯುತ್ ಕಂಬ ಆಕಸ್ಮಿಕವಾಗಿ ಉರುಳಿ ಬಿದ್ದ ಘಟನೆ ಸಂಭವಿಸಿದ್ದು, ಆ ವೇಳೆ ಸ್ಥಳದಲ್ಲಿ ಯಾರೂ ಇಲ್ಲದಿದ್ದ ಕಾರಣ ಭಾರಿ ಅನಾಹುತ ತಪ್ಪಿದೆ ಎಂದು ಕರ್ನಾಟಕ ವಿದ್ಯುತ್ ಮಂಡಳಿ ಸಿಬ್ಬಂದಿಗಳು ತಿಳಿಸಿದ್ದಾರೆ. ಕಚೇರಿ ಆವರಣದಲ್ಲಿರುವ ನೀರಿನ ಟ್ಯಾಂಕ್ ಕಾಂಪೌಂಡ್ ಹತ್ತಿರದ ಗಿಡದ ಬುಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದಾಗಿ ತಿಳಿದುಬಂದಿದೆ. ಇದರಿಂದ ಗಿಡ ದುರ್ಬಲಗೊಂಡು ಮುರಿದು, ಪಕ್ಕದಲ್ಲಿದ್ದ ವಿದ್ಯುತ್ ಪ್ರವಾಹ ಹರಿಯುತ್ತಿದ್ದ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣವೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಪ್ರವಾಹವನ್ನು ಸ್ಥಗಿತಗೊಳಿಸಿ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸಿದರು. ಈ ಕುರಿತು ಮಾಹಿತಿ ಪಡೆದ ತಹಸೀಲ್ದಾರ ಸಂಜೀವಕುಮಾರ್ ದಾಸರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೊಸ ವಿದ್ಯುತ್ ಕಂಬವನ್ನು ಅಳವಡಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಈ ಘಟನೆ ಹಿನ್ನೆಲೆ ತಹಶೀಲ್ ಕಚೇರಿಯಲ್ಲಿ ಸುಮಾರು ಎರಡು ರಿಂದ ಮೂರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿ ಕೆಲವು ಆಡಳಿತಾತ್ಮಕ ಕಾರ್ಯಗಳು ಸ್ಥಗಿತಗೊಂಡಿದ್ದವು.
ಮೂಡುಬಿದಿರೆ: ಮಹಿಳೆಯ ಸಂಶಯಾಸ್ಪದ ಸಾವು; ಪ್ರಕರಣ ದಾಖಲು
ಮೂಡುಬಿದಿರೆ: ತಲೆಗೆ ಏಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋವ೯ರು ಮಂಗಳವಾರ ರಾತ್ರಿ ಮೃತಪಟ್ಟಿದ್ದು ಇದು ಸಂಶಯಾಸ್ಪದ ಸಾವು ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ. ಪುತ್ತಿಗೆ ವಿದ್ಯಾಗಿರಿಯ ನಿವಾಸಿ ದಿನೇಶ್ ಎಂಬವರ ಪತ್ನಿ ಸವಿತಾ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಮಹಿಳೆ. ಅವರು ಎರಡು ದಿನಗಳ ಹಿಂದೆ ತಲೆಗೆ ಏಟು ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಗಂಡ ದಿನೇಶ್ ಪ್ರತಿದಿನ ಆಕೆಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಇದೀಗ ಕೂಡಾ ಈ ಸ್ಥಿತಿಗೆ ಆತನೇ ಕಾರಣ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆಕೆಯ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ಬಿದ್ದು ಗಂಭೀರ ಗಾಯಗೊಂಡಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ದಿನೇಶ್ ಅವರು ಲ್ಯಾಂಡ್ ವ್ಯವಹಾರ ನಡೆಸುತ್ತಿದ್ದಾರೆ. ಕವಿತಾ ಅವರ ತಾಯಿ ಕೂಡಾ ಇವರ ಜತೆಯಲ್ಲೇ ಇದ್ದು ಎರಡು ವಷ೯ಗಳ ಹಿಂದೆ ಮೃತಪಟ್ಟಿದ್ದರು. ಒಟ್ಟಾರೆಯಾಗಿ ಈ ಸಾವಿನ ಬಗ್ಗೆ ಕವಿತಾ ಅವರ ಸಂಬಂಧಿಕರು ಮತ್ತು ಮನೆಯ ಸಮೀಪದವರು ಸಂಶಯ ವ್ಯಕ್ತ ಪಡಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

32 C