Kanakagiri | ಆದಾಪುರ ಸರಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ ಭೂ ದಾನ
ಕನಕಗಿರಿ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ ಸಂಗಪ್ಪ ತಂಗಡಗಿ ಅವರು ತಾಲ್ಲೂಕಿನ ಆದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಬಿಸಿಯೂಟ ಕೊಠಡಿ, ಶಾಲಾ ಕಚೇರಿ ಸೇರಿ ಒಟ್ಟು 7 ಕೊಠಡಿಗಳಿವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದ್ದರೂ, ಶಾಲಾ ಜಾಗದ ಕೊರತೆ ಮತ್ತು ವಿವಾದ ಅಡ್ಡಿಯಾಗಿತ್ತು. ಈ ಹಿನ್ನೆಲೆ 2023ರ ವಿಧಾನಸಭಾ ಚುನಾವಣೆಯ ವೇಳೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ನೀಡಿದ್ದರು. ಆಗ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶಿವರಾಜ ತಂಗಡಗಿ ಅವರು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಶಾಲೆಗೆ ಒಂದು ಎಕರೆ ಜಾಗ ದಾನ ಮಾಡುವುದಾಗಿ ಭರವಸೆ ನೀಡಿದ್ದರು. ಭರವಸೆಯಂತೆ, ತಂಗಡಗಿ ಅವರ ತಾಯಿ ಹುಲಿಗೆಮ್ಮ ಸಂಗಪ್ಪ ಅವರು ಸ್ಥಳೀಯರಿಂದ ಒಂದು ಎಕರೆ ಭೂಮಿಯನ್ನು ಖರೀದಿಸಿ ಅದನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ. ರೈಸ್ ಟೆಕ್ನಾಲಜಿ ಪಾರ್ಕ್ ಯೋಜನೆಯಿಂದ ಈ ಭಾಗದಲ್ಲಿ ಭೂಮಿಯ ದರ ಹೆಚ್ಚಿರುವ ಸಂದರ್ಭದಲ್ಲಿ ಕೂಡಾ ಶಾಲೆಯ ಹಿತಕ್ಕಾಗಿ ಜಾಗ ದಾನ ಮಾಡಿರುವುದನ್ನು ಗ್ರಾಮಸ್ಥರು ಮೆಚ್ಚಿಕೊಂಡಿದ್ದಾರೆ. ಶನಿವಾರ ಕಾರಟಗಿಯ ಉಪನೋಂದಣಿ ಕಚೇರಿಯಲ್ಲಿ 80 ವರ್ಷ ವಯಸ್ಸಿನ ಹುಲಿಗೆಮ್ಮ ಸಂಗಪ್ಪ ತಂಗಡಗಿ ಅವರು ದಾನಪತ್ರವನ್ನು ರಾಜ್ಯಪಾಲರ ಹೆಸರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನೋಂದಣಿ ಮಾಡಿಸಿದರು. ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಬಿ.ಎಚ್, ಸರ್ಕಾರಿ ಭೂಮಿ ಇಲ್ಲದ ಊರಲ್ಲಿ ಖಾಸಗಿ ವ್ಯಕ್ತಿಯಿಂದ ಜಾಗ ಖರೀದಿಸಿ ಶಾಲೆಗೆ ದಾನವಾಗಿ ನೀಡಿರುವುದು ಅತ್ಯಂತ ಮಾದರಿಯ ನಡೆ. ಈ ಭಾಗದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ಶ್ಲಾಘನೀಯ ಎಂದು ಹೇಳಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 5 ಶಾಲಾ ಕೊಠಡಿಗಳು ಹಾಗೂ ರಾಜ್ಯ ವಲಯದಿಂದ ಒಂದು ಕೊಠಡಿ ಮಂಜೂರು ಮಾಡಿಸಿರುವುದಕ್ಕೆ ಸಚಿವ ಶಿವರಾಜ ತಂಗಡಗಿ ಅವರಿಗೆ ಶಿಕ್ಷಣ ಇಲಾಖೆ ಅಭಿನಂದನೆ ಸಲ್ಲಿಸಿದೆ. ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಇನಾಯತ್, ಶಿಕ್ಷಣ ಸಂಯೋಜಕರು ರಾಘವೇಂದ್ರ, ಶಶಿಧರಸ್ವಾಮಿ, ಪ್ರಭಾರ ಸಿಆರ್ಪಿ ರಾಜಕುಮಾರ, ಕಾರಟಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಮುಖ್ಯ ಶಿಕ್ಷಕರು ನರಹರಿ, ರಮೇಶ್ ಕುಕನೂರು, ಶಾಮಸುಂದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಡಿಯೊ ಬುಕ್ಗಾಗಿ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ದಲಾಯಿ ಲಾಮಾ
ಹೊಸದಿಲ್ಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಅವರು ತನ್ನ ‘ಮೆಡಿಟೇಷನ್ಸ್:ದಿ ರಿಫ್ಲೆಕ್ಷನ್ಸ್ ಆಫ್ ಹೀಸ್ ಹೋಲಿನೆಸ್ ದಿ ದಲಾಯಿ ಲಾಮಾ’ ಆಡಿಯೊ ಬುಕ್ಗಾಗಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದು, ಇದು 68ನೇ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಗಮನಾರ್ಹ ಘಳಿಗೆಯಾಗಿ ಗುರುತಿಸಲ್ಪಟ್ಟಿದೆ. ದಲಾಯಿ ಲಾಮಾರ ಆಲ್ಬಮ್ ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೇತಾಂಜಿ ಬ್ರೌನ್ ಜಾಕ್ಸನ್, ಕ್ಯಾಥಿ ಗಾರ್ವರ್ ಮತ್ತು ಫ್ಯಾಬ್ ಮೊರ್ವಾನ್ ಸೇರಿದಂತೆ ವಿವಿಧ ಕ್ಷೇತ್ರಗಳ ನಾಮನಿರ್ದೇಶಿತರನ್ನು ಹಿಂದಿಕ್ಕಿ ಸ್ಪೋಕನ್ ವರ್ಡ್ ವಿಭಾಗದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ. ದಲಾಯಿ ಲಾಮಾ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಗಾಯಕ-ಗೀತ ರಚನೆಕಾರ ರಫಸ್ ವೇನ್ರೈಟ್ ಅವರು ದಲಾಯಿ ಲಾಮಾ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ದಲಾಯಿ ಲಾಮಾರ ಈ ಆಲ್ಬಂ ನಿರ್ಮಾಣದಲ್ಲಿ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್,ಅವರ ಪುತ್ರರಾದ ಅಮಾನ್ ಅಲಿ ಬಂಗಾಶ್ ಮತ್ತು ಅಯಾನ್ ಅಲಿ ಬಂಗಾಶ ಸಹಕರಿಸಿದ್ದು, ಶಾಂತಿ,ಅನುಕಂಪ,ದಯೆ ಮತ್ತು ಭರವಸೆಯ ಸಾರ್ವತ್ರಿಕ ಮೌಲ್ಯಗಳನ್ನು ಬಿಂಬಿಸುವ ಪದಗಳು ಮತ್ತು ಸಂಗೀತ ಆಲ್ಬಮ್ನಲ್ಲಿ ಹದವಾಗಿ ಬೆರೆತುಕೊಂಡಿವೆ. ಪ್ರಶಸ್ತಿಯನ್ನು ಗೆದ್ದ ಬಳಿಕ ನೀಡಿದ ಹೇಳಿಕೆಯಲ್ಲಿ ದಲಾಯಿ ಲಾಮಾ, ‘ಈ ಗೌರವವನ್ನು ನಾನು ಕೃತಜ್ಞತೆ ಮತ್ತು ನಮ್ರತೆಯೊಂದಿಗೆ ಸ್ವೀಕರಿಸುತ್ತೇನೆ. ನಾನು ಇದನ್ನು ವೈಯಕ್ತಿಕ ವಿಷಯವನ್ನಾಗಿ ನೋಡುವುದಿಲ್ಲ,ನಾವು ಹಂಚಿಕೊಂಡಿರುವ ಸಾರ್ವತ್ರಿಕ ಜವಾಬ್ದಾರಿಗೆ ಸಿಕ್ಕ ಮಾನ್ಯತೆಯಾಗಿ ಪರಿಗಣಿಸುತ್ತೇನೆ. ಎಂಟು ಶತಕೋಟಿ ಮಾನವರ ಸಾಮೂಹಿಕ ಯೋಗಕ್ಷೇಮಕ್ಕೆ ಶಾಂತಿ,ಅನುಕಂಪ,ನಮ್ಮ ಪರಿಸರದ ಬಗ್ಗೆ ಕಾಳಜಿ ಹಾಗೂ ಮಾನವೀಯ ಏಕತೆಯ ತಿಳುವಳಿಕೆ ಅತ್ಯಗತ್ಯ ಎನ್ನುವುದು ನನ್ನ ನಿಜವಾದ ನಂಬಿಕೆಯಾಗಿದೆ. ಈ ಗ್ರ್ಯಾಮಿ ಗೌರವವು ಈ ಸಂದೇಶಗಳನ್ನು ವ್ಯಾಪಕವಾಗಿ ಹರಡಲು ನೆರವಾಗಲಿದೆ,ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’ ಎಂದು ತಿಳಿಸಿದ್ದಾರೆ. ದಲಾಯಿ ಲಾಮಾ ಈ ವರ್ಷ ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದವರ ಪಟ್ಟಿಗೆ ಸೇರಿಕೊಂಡಿದ್ದು, ಕೆ-ಪಾಪ್ ಕಲಾವಿದರು ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಬಳ್ಳಾರಿ | ಪಂಪಾಪತಿ ಹಂಪಮ್ಮದೇವಿ ಮಹಾರಥೋತ್ಸವ
ಬಳ್ಳಾರಿ : ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತೀರದಲ್ಲಿ ಪಂಪಾಪತಿ ಮತ್ತು ಹಂಪಮ್ಮದೇವಿ ಮಹಾರಥೋತ್ಸವವು ಸಂಭ್ರಮದಿಂದ ಜರುಗಿತು. ಮಹಾರಥೋತ್ಸವದ ಅಂಗವಾಗಿ ಕಂಕಣಧಾರಣೆ, ರಥಕ್ಕೆ ಕಳಸಧಾರಣೆ ಹಾಗೂ ಶ್ರೀ ಪಂಪಾಪತಿ ಹಂಪಮ್ಮದೇವಿಯ ಕಲ್ಯಾಣ ಮಹೋತ್ಸವವು ವಿಜೃಂಭಣೆಯಿಂದ ಜರುಗಿದವು. ರಾತ್ರಿ ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ ರಥಕ್ಕೆ ಹೂಗಳು, ತಳಿರು ತೋರಣಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು. ನಂತರ ಜಯಘೋಷಗಳೊಂದಿಗೆ ದೇವಸ್ಥಾನದ ಪದಾಧಿಕಾರಿಗಳು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಮಹಾರಥೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು, ಮಂಗಳವಾದ್ಯಗಳು ಭಾಗವಹಿಸಿದ್ದವು. ರಥೋತ್ಸವದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಕೋಟೆ, ಕಂಪ್ಲಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು
ಹೊಸದಿಲ್ಲಿ: ಮಹಾರಾಷ್ಟ್ರದ ಪುಣೆಯಲ್ಲಿ 2024ರಲ್ಲಿ ಇಬ್ಬರು ಯುವ ಸಾಫ್ಟ್ವೇರ್ ಇಂಜಿನಿಯರ್ಗಳನ್ನು ಬಲಿ ತೆಗೆದುಕೊಂಡಿದ್ದ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಆಶಿಷ್ ಮಿತ್ತಲ್,ಆದಿತ್ಯ ಸೂದ್ ಮತ್ತು ಅಮರ ಗಾಯಕ್ವಾಡ್ ಕಳೆದ 18 ತಿಂಗಳುಗಳಿಂದಲೂ ಜೈಲಿನಲ್ಲಿದ್ದು,ಮದ್ಯದ ಅಮಲಿನಲ್ಲಿ ಕಾರನ್ನು ಚಲಾಯಿಸುತ್ತಿದ್ದ 17ರ ಹರೆಯದ ಬಾಲಕನ ರಕ್ತದ ಮಾದರಿಗಳನ್ನು ತಿರುಚಲು ನೆರವಾಗಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ವಲ ಭುಯಾನ್ ಅವರ ಪೀಠವು,ಬಾಲಾಪರಾಧಿಗಳನ್ನು ಒಳಗೊಂಡ ಇಂತಹ ಪ್ರಕರಣಗಳಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ವೈಫಲ್ಯವನ್ನು ಬೆಟ್ಟು ಮಾಡಿತು. ಅಪಘಾತದ ಸಮಯದಲ್ಲಿ ಬಾಲಕ ಕುಡಿದಿರಲಿಲ್ಲ ಎಂದು ತೋರಿಸಲು ಆತನ ರಕ್ತದ ಮಾದರಿಗಳನ್ನು ಬದಲಿಸಲು ಪ್ರಯತ್ನಿಸಿದ್ದಕ್ಕಾಗಿ ಆತನ ಪೋಷಕರು,ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಇತರರನ್ನೂ ಬಂಧಿಸಲಾಗಿತ್ತು.
ಹೊಸದಿಲ್ಲಿ: 2026ರ ಜಾಗತಿಕ ಜಿಡಿಪಿಗೆ ಭಾರತವು ಎರಡನೇ ಅತಿದೊಡ್ಡ ಕೊಡುಗೆಯನ್ನು ನೀಡಲಿದೆ ಎಂದು ಅಂದಾಜಿಸಿರುವ ಜಾಗತಿಕ ಅಂಕಿಅಂಶಗಳ ವರದಿಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಳಿ ನಡೆಸಿದ್ದಾರೆ. ಸರಕಾರವನ್ನು ಟೀಕಿಸುವ ಭರದಲ್ಲಿ ಭಾರತದ ಅವಹೇಳನ ಮಾಡಬೇಡಿ ಎಂದು ರಾಹುಲ್ರನ್ನು ಆಗ್ರಹಿಸಿದ್ದಾರೆ. ಮಸ್ಕ್ ತನ್ನ ರವಿವಾರದ ಪೋಸ್ಟ್ನಲ್ಲಿ ‘ಶಕ್ತಿಯ ಸಮತೋಲನ ಬದಲಾಗುತ್ತಿದೆ’ ಎಂದು ಬರೆದಿದ್ದರು. ‘ಜಾಗತಿಕ ಬೆಳವಣಿಗೆಯಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ಶೇ.43.6ರಷ್ಟು ಕೊಡುಗೆ ನೀಡುತ್ತಿವೆ’ ಎಂಬ @stats_feed ನ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದರು. ಭಾರತದ ಆರ್ಥಿಕತೆ ಸತ್ತಿದೆ ಎಂದು ಪುನರುಚ್ಚರಿಸಿದ್ದು ಮತ್ತು 2026-27ರ ಕೇಂದ್ರ ಬಜೆಟ್ಗೆ ಆಕ್ಷೇಪಣೆಗಳು ಸೇರಿದಂತೆ ಬಿಜೆಪಿ ನೇತೃತ್ವದ ಸರಕಾರವು ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಕುರಿತು ರಾಹುಲ್ರ ನಿರಂತರ ಟೀಕೆಗಳ ನಡುವೆ ರಿಜಿಜು ಅವರ ಹೇಳಿಕೆಗಳು ಹೊರಬಿದ್ದಿವೆ. ರಾಷ್ಟ್ರದ ಸಾಧನೆಯನ್ನು ಎತ್ತಿ ತೋರಿಸಲು ಮಾತ್ರ ತಾನು ಮಸ್ಕ್ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದೇನೆ ಎಂದು ಎಕ್ಸ್ನಲ್ಲಿ ಬರೆದಿರುವ ರಿಜಿಜು,‘ನಾನು ಸಾಮಾನ್ಯವಾಗಿ ಭಾರತೀಯರಲ್ಲದವರು ನೀಡುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸರಕಾರವನ್ನು ಟೀಕಿಸುವುದು ಪ್ರಜಾಸತ್ತಾತ್ಮಕ ಹಕ್ಕು,ಆದರೆ ಭಾರತವನ್ನು ಅವಮಾನಿಸಬೇಡಿ ಮತ್ತು ಭಾರತದ ಸಾಧನೆಯನ್ನು ಕೀಳಾಗಿ ನೋಡಬೇಡಿ. ಹೆಮ್ಮೆಯ ಭಾರತೀಯರಾಗಿ ಎಂದು ರಾಹುಲ್ ಗಾಂಧಿಯವರಿಗೆ ತಿಳಿಸಲು ಮಾತ್ರ ನಾನು ಮಸ್ಕ್ ಪೋಸ್ಟ್ನ್ನು ಉಲ್ಲೇಖಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ. ಮಸ್ಕ್ ಹಂಚಿಕೊಂಡಿರುವ ಪೋಸ್ಟ್ ಐಎಂಎಫ್ ದತ್ತಾಂಶಗಳನ್ನು ಉಲ್ಲೇಖಿಸಿ ಅಗ್ರ 10 ದೇಶಗಳನ್ನು ಮತ್ತು 2026ರಲ್ಲಿ ಜಾಗತಿಕ ಜಿಡಿಪಿ ಬೆಳವಣಿಗೆಯಲ್ಲಿ ಅವುಗಳ ನಿರೀಕ್ಷಿತ ಕೊಡುಗೆಗಳನ್ನು ಪಟ್ಟಿ ಮಾಡಿದೆ. ಜೊತೆಗೆ,ಏಷ್ಯಾ-ಪೆಸಿಫಿಕ್ ಪ್ರದೇಶವು ಒಟ್ಟು ಜಾಗತಿಕ ಬೆಳವಣಿಗೆಯಲ್ಲಿ ಸುಮಾರು ಶೇ.50ರಷ್ಟು ಪಾಲನ್ನು ಹೊಂದಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಪಟ್ಟಿಯಲ್ಲಿ ಭಾರತವು ಶೇ.17ರಷ್ಟು ಜಿಡಿಪಿ ಕೊಡುಗೆ ಅಂದಾಜಿನೊಂದಿಗೆ ಅಮೆರಿಕಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಇಂಡೋನೇಶ್ಯಾ,ಅಮೆರಿಕ,ಚೀನಾ ಮತ್ತು ಜರ್ಮನಿ ಅನುಕ್ರಮವಾಗಿ ಶೇ.3.8,ಶೇ.9.9,ಶೇ.26.6 ಮತ್ತು ಶೇ.0.9 ರಷ್ಟು ಕೊಡುಗೆಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಈ ವರ್ಷದ ಜನವರಿಯಲ್ಲಿ ಐಎಂಎಫ್ 2025-26ರ ವಿತ್ತವರ್ಷಕ್ಕೆ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇ.7.3ಕ್ಕೆ ಮತ್ತು 2026-27ಕ್ಕೆ ಶೇ.6.4ಕ್ಕೆ ಹೆಚ್ಚಿಸಿತ್ತು.
ಬಳ್ಳಾರಿ | ಸ್ವ-ಉದ್ಯೋಗದಿಂದ ಸ್ವಾವಲಂಬಿ ಜೀವನ: ಶಿಲ್ಪರಾಣಿ
ಮಾದಕ ವಸ್ತು ಜಾಗೃತಿ ಅಭಿಯಾನ
ಬಲೂಚಿಸ್ತಾನದ ಗ್ವಾದರ್ ನಲ್ಲಿ ನೆಲದ ಕಾರ್ಯಾಚರಣೆ ಸ್ಥಗಿತಗೊಳಿಸಿದ ಚೀನಾ
ಬೀಜಿಂಗ್: ಬಲೂಚಿಸ್ತಾನದ ಗ್ವಾದರ್ ಸೇರಿದಂತೆ ವಿವಿಧೆಡೆ ಬಲೂಚಿಸ್ತಾನ್ ಪ್ರತ್ಯೇಕತಾವಾದಿ ಗುಂಪು ಬಿಎಲ್ಎ ಇತ್ತೀಚೆಗೆ ನಡೆಸಿದ ಸಂಘಟಿತ ದಾಳಿಯ ಬಳಿಕ ಪಾಕಿಸ್ತಾನದ ಆಯಕಟ್ಟಿನ ಬಂದರು ನಗರ ಗ್ವಾದರ್ನಲ್ಲಿ ಚೀನಾ ತನ್ನ ನೆಲದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ. ಗ್ವಾದರ್ನಲ್ಲಿ ನಿಯೋಜಿಸಲಾದ ಎಲ್ಲಾ `ಗ್ರೌಂಡ್ ಸ್ಟಾಫ್'ಗಳನ್ನು ವಿಶೇಷ ವಿಮಾನಗಳ ಮೂಲಕ ಸ್ಥಳಾಂತರಿಸಲಾಗಿದ್ದು ಈ ಪ್ರದೇಶದಲ್ಲಿ ಚೀನಾ ನೇತೃತ್ವದಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಚೀನಾಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪಾಕಿಸ್ತಾನದ ಸಿಬ್ಬಂದಿಗಳು ನಿರ್ವಹಿಸಲಿದ್ದು ಚೀನಾದ ತಂಡವು ಬೆಳವಣಿಗೆಗಳನ್ನು ಮೇಲುಸ್ತುವಾರಿ ನಡೆಸುತ್ತವೆ ಮತ್ತು ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ದೂರದಿಂದಲೇ ಪರಿಹರಿಸುತ್ತವೆ ಎಂದು ಇಸ್ಲಮಾಬಾದ್ನಲ್ಲಿನ ಚೀನಾದ ರಾಯಭಾರಿ ಕಚೇರಿಯ ಮೂಲಗಳು ಹೇಳಿವೆ. ತಾನು ಸಿಪಿಇಸಿ(ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್) ಸಂಬಂಧಿಸಿದ ಯೋಜನೆಗಳಿಂದ ಹಿಂದೆ ಸರಿದಿಲ್ಲ. ಪ್ರಸ್ತುತ ಅಮಾನತು ತಾತ್ಕಾಲಿಕವಾಗಿದೆ, ಆದರೆ ಅದರ ಅವಧಿಯು ಹೊಸ ಭದ್ರತಾ ಕ್ರಮಗಳು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಅವಲಂಬಿಸಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಪರಮಾಣು ಒಪ್ಪಂದದ ಬಗ್ಗೆ ಅಮೆರಿಕಾ ಜೊತೆ ಮಾತುಕತೆ ಆರಂಭಿಸಲು ಇರಾನ್ ಆದೇಶ: ವರದಿ
ಟೆಹ್ರಾನ್: ಅಮೆರಿಕಾದೊಂದಿಗೆ ಮಾತುಕತೆ ಆರಂಭಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ಆದೇಶಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ಫಾರ್ಸ್' ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ. `ಪರಮಾಣು ವಿಷಯದ ಬಗ್ಗೆ ಇರಾನ್ ಮತ್ತು ಅಮೆರಿಕಾ ಮಾತುಕತೆ ನಡೆಸಲಿವೆ' ಎಂದು ವರದಿ ಹೇಳಿದ್ದು ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೈ `ಅಮೆರಿಕಾದೊಂದಿಗಿನ ಉದ್ವಿಗ್ನತೆಯನ್ನು ನಿರ್ವಹಿಸಲು ವಿವಿಧ ರಾಜತಾಂತ್ರಿಕ ಆಯ್ಕೆಗಳನ್ನು ಇರಾನ್ ಪರಿಶೀಲಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ. ಪ್ರಾದೇಶಿಕ ರಾಷ್ಟ್ರಗಳ ನಡುವೆ ವಿವಿಧ ಸಂದೇಶಗಳನ್ನು, ವಿವಿಧ ಅಂಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ನಾವು ಪ್ರಸ್ತುತ ಪ್ರತೀ ರಾಜತಾಂತ್ರಿಕ ಪ್ರಕ್ರಿಯೆಯ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ' ಎಂದು ಹೇಳಿದ್ದರು. ಈ ಮಧ್ಯೆ, ಅಮೆರಿಕಾದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ `ಅಮೆರಿಕಾದ ಒತ್ತಡವನ್ನು ಪ್ರತಿರೋಧಿಸುವುದನ್ನು ಇರಾನ್ ಮುಂದುವರಿಸುತ್ತದೆ. ಇರಾನ್ ದೃಢವಾಗಿ ನಿಲ್ಲುತ್ತದೆ ಮತ್ತು ದೈವೇಚ್ಛೆಯಿದ್ದರೆ ಅಮೆರಿಕಾದ ಕಿಡಿಗೇಡಿತನ ಮತ್ತು ಕಿರುಕುಳ ಕೊನೆಗೊಳ್ಳುತ್ತದೆ' ಎಂದು ಹೇಳಿದ್ದಾರೆ. ಅಮೆರಿಕಾ ಮತ್ತು ಇರಾನ್ನ ನಡುವಿನ ಬಿಕ್ಕಟ್ಟಿಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸರಳವಿದೆ `ಅಮೆರಿಕಾವು ಇರಾನ್ ಅನ್ನು ಕಬಳಿಸಲು ಬಯಸುತ್ತಿದೆ ಮತ್ತು ಇರಾನ್ ರಾಷ್ಟ್ರ ಇದನ್ನು ತಡೆಯುತ್ತಿದೆ. ಅವರು ನಮ್ಮ ನೈಸರ್ಗಿಕ ಸಂಪನ್ಮೂಲಗಳು, ಕಾರ್ಯತಂತ್ರದ ಸ್ಥಾನವನ್ನು ಅಪೇಕ್ಷಿಸುತ್ತಿದ್ದಾರೆ'' ಎಂದು ಖಾಮಿನೈ ಪ್ರತಿಪಾದಿಸಿದ್ದಾರೆ. ಇರಾನ್ ಜೊತೆ ಒಪ್ಪಂದದ ಭರವಸೆಯಿದೆ ಎಂದ ಟ್ರಂಪ್: ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವ ಭರವಸೆಯಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ರಾಜತಾಂತ್ರಿಕತೆ ವಿಫಲವಾದರೆ ಫಲಿತಾಂಶ ಸ್ಪಷ್ಟವಾಗಿದೆ ಎಂದು ಎಚ್ಚರಿಸಿದ್ದಾರೆ. ಫ್ಲೋರಿಡಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಂಪ್ ` ಆ ಪ್ರದೇಶದಲ್ಲಿ ನಾವು ಅತೀ ದೊಡ್ಡ, ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಸಮರ ನೌಕೆಗಳನ್ನು ಹೊಂದಿದ್ದೇವೆ. ಮುಂದಿನ ಒಂದೆರಡು ದಿನಗಳಲ್ಲಿ ನಾವು ಒಪ್ಪಂದ ಮಾಡಿಕೊಳ್ಳುವ ಭರವಸೆಯಿದೆ. ಒಪ್ಪಂದ ಸಾಧ್ಯವಾಗದಿದ್ದರೆ, ಇರಾನ್ನ ನಾಯಕರು ಹೇಳಿದ ಮಾತು ಸರಿಯಾಗುತ್ತದಯೇ ಎಂಬುದನ್ನು ನೋಡಬೇಕಿದೆ' ಎಂದು ಹೇಳಿದರು. ಒಂದು ವೇಳೆ ಅಮೆರಿಕಾವು ಇರಾನ್ನ ಮೇಲೆ ದಾಳಿ ಮಾಡಿದರೆ ಅದು ಪ್ರಾದೇಶಿಕ ಸಂಘರ್ಷವಾಗುತ್ತದೆ ಎಂದು ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ರವಿವಾರ ಎಚ್ಚರಿಸಿದ್ದರು.
ವಿಜಯನಗರ | ‘ವಾತ್ಸಲ್ಯ ಮನೆ’ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ವಿಜಯನಗರ, ಫೆ. 2: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕರಿಗೆ ಮತ್ತು ಬಡತನದಲ್ಲಿರುವವರಿಗೆ ಮಾಸಾಶನ ನೀಡುವುದು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಹರಿಪುರ ಕ್ಷೇತ್ರ ಯೋಜನಾಧಿಕಾರಿ ಬಾಬು ಹೇಳಿದರು. ತಾಲೂಕಿನ ಉಚ್ಚಂಗಿದುರ್ಗ ಸಮೀಪದ ಯು.ಬೇವಿನಹಳ್ಳಿ ಗ್ರಾಮದಲ್ಲಿ ಭೋವಿ ತಿಮ್ಮಕ್ಕನಿಗೆ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರಾಗಿದ್ದ ವಾತ್ಸಲ್ಯ ಮನೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಭೋವಿ ತಿಮ್ಮಕ್ಕ ಎಂಬವರಿಗೆ ವಾಸಿಸಲು ಯೋಗ್ಯವಾದ ಮನೆ ಇಲ್ಲದ ಕಾರಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ಮಂಜೂರಾಗಿದೆ. ವಾತ್ಸಲ್ಯ ಮನೆ 1 ಲಕ್ಷ 35 ಸಾವಿರ ರೂ.ನಲ್ಲಿ ನಿರ್ಮಾಣವಾಗುತ್ತಿದೆ. ಶೌಚಾಲಯ, ಅಡುಗೆಕೋಣೆ, ಸೇರಿ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡುತ್ತೇವೆ ಎಂದರು. ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅನಿತಾ, ಮೇಸ್ತ್ರಿ ಆಲೂರು ಜಿಡಿ ಮಂಜುನಾಥ್, ಮಂಜುಳಾ, ಆರ್ಚಕರು ಪೂಜಾರ್ ಪ್ರೇಮ್ ಕುಮಾರ್, ಮಮತಾ,ಅನಿತಾ,ರೇಣುಕಾ, ಮತ್ತಿತರರು ಉಪಸ್ಥಿತರಿದ್ದರು.
ಬಾಂಗ್ಲಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲುಶಿಕ್ಷೆ
ಢಾಕ: ಸರ್ಕಾರಿ ವಸತಿ ಯೋಜನೆಯಲ್ಲಿ ಭೂಮಿ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ನ್ಯಾಯಾಲಯ ಸೋಮವಾರ 10 ವರ್ಷ ಜೈಲುಶಿಕ್ಷೆ ವಿಧಿಸಿದೆ. ಶೇಖ್ ಹಸೀನಾಗೆ ಪ್ರತೀ ಪ್ರಕರಣಗಳಲ್ಲಿ ಐದು ವರ್ಷದಂತೆ ಒಟ್ಟು 10 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಎಸ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇದೇ ಪ್ರಕರಣಗಳಲ್ಲಿ ಹಸೀನಾ ಅವರ ಸೋದರಳಿಯ ರದ್ವಾನ್ ಮುಜಿಬ್ ಸಿದ್ದಿಕ್, ಸೋದರ ಸೊಸೆ ಅಜ್ಮಿನಾ ಸಿದ್ದಿಕ್ಗೆ ಒಟ್ಟು 7 ವರ್ಷ ಜೈಲುಶಿಕ್ಷೆ, ಸೋದರ ಸೊಸೆ, ಬ್ರಿಟನ್ ಸಂಸದೆ ಟುಲಿಪ್ ಸಿದ್ದಿಕ್ಗೆ ಒಟ್ಟು 4 ವರ್ಷ ಜೈಲು ಶಿಕ್ಷೆ ವಿಧಿಸಿ ಢಾಕಾದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಬಾಂಗ್ಲಾದೇಶದಲ್ಲಿ ಪ್ರತಿಭಟನೆ ವ್ಯಾಪಕಗೊಳ್ಳುತ್ತಿದ್ದಂತೆಯೇ ಕಳೆದ ವರ್ಷದ ಆಗಸ್ಟ್ 5ರಂದು ಭಾರತಕ್ಕೆ ಪಲಾಯನ ಮಾಡಿದ್ದ ಹಸೀನಾರನ್ನು ʼದೇಶಭ್ರಷ್ಟೆ' ಎಂದು ಈ ಹಿಂದೆ ನ್ಯಾಯಾಲಯ ಘೋಷಿಸಿತ್ತು.
ಕೊಪ್ಪಳ | ‘ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದೇ ಮೇಲು’
ವಾಟ್ಸ್ ಆ್ಯಪ್ ಸ್ಟೇಟಸ್ ಮೂಲಕ ಅಸಮಾಧಾನ ಹೊರಹಾಕಿದ ಕೊಪ್ಪಳದ ಕಾನ್ಸ್ಟೇಬಲ್
ಬೆಂಗಳೂರು : ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿರುವ ಆಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 51 ಜನರನ್ನು ಅವರ ಹುದ್ದೆಗಳಿಂದ ವಜಾಗೊಳಿಸಿ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನೇಲೋಗಿಯ ‘ಭ್ರಷ್ಟಾಚಾರ ವಿರೋಧ ಪಕ್ಷ’ದ ರಾಷ್ಟ್ರೀಯ ಅಧ್ಯಕ್ಷ ಕಲ್ಲಾಲಿಂಗ ಈ. ಹೂಗಾರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಅರ್ಜಿಯು ವಿಚಾರಣಾ ಅರ್ಹತೆ (ಮೆರಿಟ್) ಹೊಂದಿಲ್ಲದಿರುವ ಕಾರಣ ವಜಾಗೊಳಿಸಲಾಗುತ್ತಿದೆ. ಅರ್ಜಿದಾರರಿಗೆ 10 ಲಕ್ಷ ರೂ. ದಂಡ ವಿಧಿಸಬೇಕಿತ್ತು. ಆದರೆ, ಅರ್ಜಿದಾರರು ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ)ನಿಂದ ವಜಾಗೊಂಡ ನೌಕರರಾಗಿದ್ದಾರೆ. ಆದ ಕಾರಣ ದಂಡ ವಿಧಿಸದೇ ಸುಮ್ಮನೇ ಬಿಡುತ್ತಿರುವುದಾಗಿ ಹೇಳಿತು. ಅರ್ಜಿದಾರರ ಮನವಿ: ಚುನಾವಣಾ ಆಯೋಗವನ್ನು ದುರುಪಯೋಗಪಡಿಸುಕೊಳ್ಳುವ ಮೂಲಕ ಸಂವಿಧಾನಕ್ಕೆ ಅವಮಾನಿಸಿರುವ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಪಿಟಿಸಿಎಲ್ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಸೇರಿ ಒಟ್ಟು 51 ಜನರನ್ನು ಅವರ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಬೇಕು. ಅವರ ವಿರುದ್ಧ ಸಿಬಿಐ, ಎನ್ಐಎ, ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಯಿಂದ ತುರ್ತು ತನಿಖೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ದುಬೈಯಲ್ಲಿ ಸಿಲುಕಿದ ಜಾರ್ಖಂಡ್ನ ಕಾರ್ಮಿಕರು; ನೆರವು ನೀಡುವಂತೆ ವೀಡಿಯೊದಲ್ಲಿ ಕೋರಿಕೆ
ರಾಂಚಿ: ಜಾರ್ಖಂಡ್ನ ಗಿರಿಡಿಹ, ಹಝಾರಿಬಾಗ್ ಹಾಗೂ ಬೊಕಾರೊ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ತೆರಳಿದ್ದ 14 ವಲಸೆ ಕಾರ್ಮಿಕರು ಕಳೆದ ಕೆಲವು ತಿಂಗಳುಗಳಿಂದ ದುಬೈಯಲ್ಲಿ ಸಿಲುಕಿಕೊಂಡಿದ್ದಾರೆ. ತಮ್ಮ ಕುಟುಂಬದ ಸದಸ್ಯರಿಗೆ ವೀಡಿಯೊ ಸಂದೇಶ ಕಳುಹಿಸಿರುವ ಅವರು, ಕೂಡಲೇ ನೆರವು ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಕೋರಿದ್ದಾರೆ. ದುಬೈಯಲ್ಲಿ ಸಿಲುಕಿಕೊಂಡ ಕಾರ್ಮಿಕರು ವೀಡಿಯೊ ಸಂದೇಶದ ಮೂಲಕ ತಮ್ಮ ಸಂಕಷ್ಟಗಳನ್ನು ಹಂಚಿಕೊಡಿದ್ದಾರೆ ಹಾಗೂ ನೆರವು ನೀಡುವಂತೆ ಕೋರಿದ್ದಾರೆ. ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ ಹೋರಾಟಗಾರ ಸಿಕಂದರ್ ಅಲಿ ಅವರಿಗೆ ಕೂಡ ಅವರು ವೀಡಿಯೊ ಕಳುಹಿಸಿದ್ದಾರೆ. ಅಲಿ ಅನಂತರ ಈ ವೀಡಿಯೊವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ವೀಡಿಯೊ ಸಂದೇಶದಲ್ಲಿ ಕಾರ್ಮಿಕರು ತಮ್ಮನ್ನು ನೇಮಿಸಿಕೊಂಡ ಕಂಪೆನಿ ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಲು ಒತ್ತಾಯಿಸುತ್ತಿದೆ. ತಮಗೆ ವೇತನ ಪಾವತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿಂದ ವೇತನ ಪಾವತಿಸದೇ ಇರುವುದರಿಂದ, ಆಹಾರ, ವಸತಿ ಹಾಗೂ ಇತರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ವೀಡಿಯೊದಲ್ಲಿ ಹೇಳಿದ್ದಾರೆ.
ಭಾರತೀಯ ಮೂಲದ ಪರಿಸರ ವಿಜ್ಞಾನಿ ರಾಮನಾಥನ್ಗೆ ಕ್ರಾಫರ್ಡ್ ಪ್ರಶಸ್ತಿ
ವಾಷಿಂಗ್ಟನ್: ಭಾರತೀಯ ಮೂಲದ ಹವಾಮಾನ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ನಿಂದ ಭೂವಿಜ್ಞಾನದಲ್ಲಿ 2026ರ ಕ್ರಾಫರ್ಡ್ ಪ್ರಶಸ್ತಿಯನ್ನು ನೀಡಲಾಗಿದೆ. ಭೂವಿಜ್ಞಾನದ ನೊಬೆಲ್ ಎಂದು ಗುರುತಿಸಲಾಗುವ ಕ್ರಾಫರ್ಡ್ ಪ್ರಶಸ್ತಿಯು ರಾಮನಾಥನ್ ಅವರು ಎರಡು ದಶಕಗಳಿಂದ ಜಾಗತಿಕ ತಾಪಮಾನ ಏರಿಕೆ, ಕಂದು ಮೋಡಗಳ ಬಗ್ಗೆ ನಡೆಸಿದ ಸಂಶೋಧನೆಯನ್ನು ಗುರುತಿಸಿದೆ. 82 ವರ್ಷದ ರಾಮನಾಥನ್ ಮದುರೈಯಲ್ಲಿ ಜನಿಸಿದ್ದು ಅಣ್ಣಾಮಲೈ ವಿವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಗೌರವ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Gruhalakshmi Scheme: ಗೃಹಲಕ್ಷ್ಮಿ ಯೋಜನೆಯು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿದೆ. ಇದರಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ 2,000 ರೂಪಾಯಿ ಹಣ ಹಾಕಲಾಗುತ್ತದೆ. ಇದೀಗ ಬಾಕಿ ಉಳಿದಿದ್ದ ಕಂತುಗಳ ಬಿಡುಗಡೆ ಆಗಿದ್ದು, ಇದನ್ನು ಯಾವಾಗ ಖಾತೆಗೆ ಹಾಕಲಾಗುತ್ತದೆ ಎನ್ನುವ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಗ್ ಅಪ್ಡೇಟ್
ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ನಷ್ಟ ಎಷ್ಟು?
ಹೊಸದಿಲ್ಲಿ: ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯವೊಂದು 2,200 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆದಾಯವನ್ನು ಗಳಿಸುತ್ತದೆ. ಆದರೆ, ಮುಂಬರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಈ ಪಂದ್ಯಗಳ ಅನುಪಸ್ಥಿತಿಯು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು ಎಂಬ ಭೀತಿಯು ಸಂಘಟಕರನ್ನು ಕಾಡುತ್ತಿದೆ ಎಂದು ವರದಿಯಾಗಿದೆ. ನೆರೆಹೊರೆಯ ದೇಶಗಳ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವುದರಿಂದ, ಉಭಯ ದೇಶಗಳ ಕ್ರಿಕೆಟ್ ತಂಡಗಳು ಬಹುದೇಶಗಳು ಭಾಗವಹಿಸುವ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಭಾರತ-ಪಾಕ್ ಪಂದ್ಯಗಳು ವಾಣಿಜ್ಯಾತ್ಮಕವಾಗಿ ಎಷ್ಟು ಪ್ರಭಾವಶಾಲಿಯೆಂದರೆ, ಜಾಗತಿಕ ಪಂದ್ಯಾವಳಿಗಳಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಈ ತಂಡಗಳನ್ನು ಒಂದೇ ಗುಂಪಿನಲ್ಲಿ ಆಡಿಸುತ್ತದೆ. ಫೆಬ್ರವರಿ 15ರಂದು ಕೊಲಂಬೊದಲ್ಲಿ ಭಾರತದ ವಿರುದ್ಧ ನಡೆಯಲು ನಿಗದಿಯಾಗಿರುವ ಪಾಕಿಸ್ತಾನದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರಕಾರ ರವಿವಾರ ಘೋಷಿಸಿದೆ. ತನ್ನ ಈ ನಿರ್ಧಾರಕ್ಕೆ ಪಾಕಿಸ್ತಾನ ಅಂಟಿಕೊಂಡರೆ, ಅದು ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಳ್ಳುತ್ತದೆ. ಅದೇ ವೇಳೆ, ಈ ಪಂದ್ಯ ನಡೆಯದಿದ್ದರೆ ಐಸಿಸಿ ಮತ್ತು ಭಾರತದ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಜಿಯೋಸ್ಟಾರ್ ಮೇಲೂ ಗಣನೀಯ ಪ್ರಮಾಣದ ಆರ್ಥಿಕ ಹೊಡೆತ ಬೀಳುತ್ತದೆ. ಜಿಯೋಸ್ಟಾರ್ 200ರಿಂದ 250 ಕೋಟಿ ರೂ. ಜಾಹೀರಾತು ನಷ್ಟವನ್ನು ಅನುಭವಿಸಬಹುದಾಗಿದೆ. ಭಾರತ-ಪಾಕ್ ಐಸಿಸಿ ಪಂದ್ಯಗಳ ವೇಳೆ 10 ಸೆಕೆಂಡ್ಗಳ ಒಂದು ಜಾಹೀರಾತಿನ ಬೆಲೆ ಸುಮಾರು 40 ಲಕ್ಷ ರೂ.ಯಷ್ಟು ಆಗುತ್ತದೆ. ಈ ವಾಕೋವರ್ನಿಂದ ಭಾರತಕ್ಕೆ ಪೂರ್ಣ ಅಂಕಗಳು ಸಿಗುತ್ತದೆಯಾದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೇಲೆ ಆರ್ಥಿಕ ದಂಡವನ್ನು ವಿಧಿಸುವ ಅಧಿಕಾರ ಐಸಿಸಿಗೆ ಈಗಲೂ ಇದೆ. ಭಾರತ-ಪಾಕ್ ಪಂದ್ಯ ರದ್ದತಿಯ ಪರಿಣಾಮಗಳು ಭಾರತ-ಪಾಕಿಸ್ತಾನ ಐಸಿಸಿ ಪಂದ್ಯವೊಂದು ತರುವ ಆದಾಯ : 2,200 ಕೋಟಿ ರೂ.ಗೂ ಅಧಿಕ ನೇರಪ್ರಸಾರಕರ ಜಾಹೀರಾತು ನಷ್ಟ : ಸುಮಾರು 200- 250 ಕೋಟಿ ರೂ. ಪಂದ್ಯದ ವೇಳೆ 10 ಸೆಕೆಂಡ್ ಜಾಹೀರಾತೊಂದರ ದರ : ಸುಮಾರು 40 ಲಕ್ಷ ರೂ. ಜಾಗತಿಕ ವೀಕ್ಷಕರ ಸಂಖ್ಯೆ : 100 ಕೋಟಿಗೂ ಅಧಿಕ ಪಾಕ್ ನಿರ್ಧಾರವು ಕ್ರೀಡೆಯ ಆಶಯವನ್ನು ಕಡೆಗಣಿಸುತ್ತದೆ: ಐಸಿಸಿ ಐಸಿಸಿ ಪಂದ್ಯಾವಳಿಗಳಲ್ಲಿ ಆಯ್ದ ಪಾಲ್ಗೊಳ್ಳುವಿಕೆಯು ಕ್ರೀಡೆಯ ಆಶಯಗಳನ್ನು ಕಡೆಗಣಿಸುತ್ತದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಹೇಳಿದೆ. ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ಧಾರಕ್ಕೆ ಐಸಿಸಿ ಈ ಪ್ರತಿಕ್ರಿಯೆ ನೀಡಿದೆ. ‘‘ಈ ಆಯ್ದ ಪಾಲ್ಗೊಳ್ಳುವಿಕೆಯು ಜಾಗತಿಕ ಕ್ರೀಡಾ ಕೂಟವೊಂದರ ಪ್ರಾಥಮಿಕ ಆಶಯಕ್ಕೆ ಹೊಂದಿಕೊಳ್ಳುವುದಿಲ್ಲ. ಇಂಥ ಕ್ರೀಡಾಕೂಟಗಳಲ್ಲಿ ಎಲ್ಲಾ ಅರ್ಹ ತಂಡಗಳು ವೇಳಾಪಟ್ಟಿಯಂತೆ ಸಮಾನ ನೆಲೆಯಲ್ಲಿ ಸ್ಪರ್ಧಿಸಬೇಕೆಂದು ನಿರೀಕ್ಷಿಸಲಾಗುತ್ತದೆ’’ ಎಂದು ಅದು ಹೇಳಿದೆ. ‘‘ಕ್ರೀಡಾ ನೈತಿಕತೆ, ಸ್ಪರ್ಧಾತ್ಮಕತೆ, ಸ್ಥಿರತೆ ಮತ್ತು ನ್ಯಾಯಪರತೆಯ ಆಧಾರದಲ್ಲಿ ಐಸಿಸಿ ಪಂದ್ಯಾವಳಿಗಳನ್ನು ರೂಪಿಸಲಾಗಿದೆ. ಆಯ್ದ ಪಾಲ್ಗೊಳ್ಳುವಿಕೆಯು ಸ್ಪರ್ಧೆಗಳ ಆಶಯ ಮತ್ತು ಪಾವಿತ್ರ್ಯತೆಯನ್ನು ಕಡೆಗಣಿಸುತ್ತದೆ’’ ಎಂದು ಅದು ಅಭಿಪ್ರಾಯಪಟ್ಟಿದೆ.
ಗ್ರಾಮ ಪಂಚಾಯತಿ ಅಧಿಕಾರ ಮುಕ್ತಾಯ: ಸದಸ್ಯರ ಮುಂದುವರಿಕೆ? ಅಥವಾ ಚುನಾವಣೆ? ರಾಜ್ಯ ಸರ್ಕಾರದ ಸ್ಪಷ್ಟನೆ ಇಲ್ಲಿದೆ
ರಾಜ್ಯದ ಗ್ರಾಮ ಪಂಚಾಯತಿ ಸದಸ್ಯರ ಅವಧಿ ಮುಗಿಯುತ್ತಿದೆ. ಹೊಸ ಚುನಾವಣೆ ನಡೆಸುವವರೆಗೆ ಹಾಲಿ ಸದಸ್ಯರನ್ನೇ ಮುಂದುವರಿಸಬೇಕೆಂಬ ಪ್ರತಿಪಕ್ಷದ ಒತ್ತಾಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಹಾಲಿ ಸದಸ್ಯರನ್ನು ಮುಂದುವರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕೌಶಲ ಅಭಿವೃದ್ಧಿ ಪ್ರಕರಣ: ಚಂದ್ರಬಾಬು ನಾಯ್ಡುಗೆ ಈಡಿ ಕ್ಲೀನ್ ಚಿಟ್
ಅಮರಾವತಿ: ಕೌಶಲ್ಯ ಅಭಿವೃದ್ಧಿ ನಿಗಮ ಪ್ರಕರಣದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಜಾರಿ ನಿರ್ದೇಶನಾಲಯ (ಈಡಿ) ಕ್ಲೀನ್ ಚಿಟ್ ನೀಡಿದೆ. ಅಪರಾಧದಲ್ಲಿ ಚಂದ್ರಬಾಬು ನಾಯ್ಡು ಅವರ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರವಿಲ್ಲ ಎಂದು ಅದು ಹೇಳಿದೆ. ವಿಶಾಖಪಟ್ಟಣಂನ ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಜನವರಿ 31ರಂದು ಸಲ್ಲಿಸಲಾದ ಪೂರಕ ಆರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ, ಹಣ ಅಕ್ರಮ ವರ್ಗಾವಣೆಯೊಂದಿಗೆ ನಾಯ್ಡು ಅವರು ನಂಟು ಹೊಂದಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ. ಈ ಪ್ರಕರಣದಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ ಎಂದು ಹೇಳಿದೆ. ಕೌಶಲ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದಲ್ಲಿ ನಾಯ್ಡು ಅವರು ಭಾಗಿಯಾಗಿಲ್ಲ ಎಂದು ಈ ಹಿಂದೆ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಎಪಿ ಸಿಐಡಿ) ಕೂಡ ದೃಢಪಡಿಸಿತ್ತು. ವಿಜಯವಾಡ ಎಸಿಬಿ ನ್ಯಾಯಾಲಯ ಆರೋಪಗಳನ್ನು ಉಳಿಸಿಕೊಳ್ಳಲು ಯಾವುದೇ ಆಧಾರಗಳಿಲ್ಲ ಎಂದು ಪ್ರಕರಣವನ್ನು ಹಿಂಪಡೆಯುಲು ಅನುಮತಿ ನೀಡುವಾಗ ಸ್ಪಷ್ಟಪಡಿಸಿತ್ತು. ಕೌಶಲ್ಯ ಅಭಿವೃದ್ಧಿ ನಿಗಮ ಪ್ರಕರಣ 2023 ಸೆಪ್ಟಂಬರ್ನಲ್ಲಿ ನಾಯ್ಡು ಅವರ ಬಂಧನಕ್ಕೆ ಕಾರಣವಾಗಿತ್ತು. 2023 ಅಕ್ಟೋಬರ್ನಲ್ಲಿ ಜಾಮೀನು ಸಿಗುವ ವರೆಗೆ ಅವರು 53 ದಿನಗಳ ಕಾಲ ರಾಜಮುಂಡ್ರಿ ಕೇಂದ್ರ ಕಾರಾಗೃಹದಲ್ಲಿ ಕಳೆದಿದ್ದರು. ಈ ಪ್ರಕರಣ ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್ಎಸ್ಡಿಸಿ)ದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ 300 ಕೋಟಿ ರೂ. ಅಧಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಮತಾಂತರ ವಿರೋಧಿ ಕಾಯ್ದೆ ಪ್ರಶ್ನಿಸಿ ಪಿಐಎಲ್: ಕೇಂದ್ರ, ರಾಜ್ಯ ಸರಕಾರಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮತಾಂತರ ವಿರೋಧಿ ಕಾನೂನುಗಳನ್ನು ಪ್ರಶ್ನಿಸಿ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಇನ್ ಇಂಡಿಯಾ (ಎನ್ಸಿಸಿಐ) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರ ಹಾಗೂ ರಾಜಸ್ಥಾನ, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳ ಪ್ರತಿಕ್ರಿಯೆ ಕೇಳಿದೆ. ಈ ರಾಜ್ಯಗಳಲ್ಲಿ ಈ ಕಾನೂನುಗಳಿಗೆ ತಡೆ ನೀಡುವಂತೆ ಕೂಡ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಇನ್ ಇಂಡಿಯಾ (ಎನ್ಸಿಸಿಐ)ವನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಕೋರಿದ್ದಾರೆ. ಎನ್ಸಿಸಿಐಯ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡಿತು ಹಾಗೂ ಕೇಂದ್ರ ಸರಕಾರ, 12 ರಾಜ್ಯ ಸರಕಾರಗಳಿಂದ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು. ಹೊಸ ಅರ್ಜಿಯನ್ನು ಬಾಕಿ ಉಳಿದಿರುವ ಅರ್ಜಿಯೊಂದಿಗೆ ಸೇರಿಸುವಂತೆ ಆದೇಶಿಸಿದ ಮುಖ್ಯ ನ್ಯಾಯಮೂರ್ತಿ, ಮೂವರು ಸದಸ್ಯರ ಪೀಠ ಈ ಅರ್ಜಿಗಳನ್ನು ಒಟ್ಟಾಗಿ ಆಲಿಸಲಿದೆ ಎಂದರು. ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಕಾನೂನನ್ನು ಪ್ರಶ್ನಿಸಿದ ಇದೇ ರೀತಿಯ ಅರ್ಜಿಗಳು ಬಾಕಿ ಇವೆ. ನಮ್ಮ ಪ್ರತಿಕ್ರಿಯೆ ಸಿದ್ಧವಿದೆ. ಶೀಘ್ರದಲ್ಲಿ ಸಲ್ಲಿಸಲಿದ್ದೇವೆ ಎಂದರು.
ಕಲಬುರಗಿ | ಕೇಂದ್ರ ಬಜೆಟ್ ಯುವಜನ–ಕಾರ್ಮಿಕ ವಿರೋಧಿ : ಡಿವೈಎಫ್ಐ ಖಂಡನೆ
ಕಲಬುರಗಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026–27ರ ಕೇಂದ್ರ ಬಜೆಟ್ ಯುವಜನ ಮತ್ತು ಕಾರ್ಮಿಕ ವಿರೋಧಿಯಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಾಗತಿಕ ಭೌಗೋಳಿಕ ರಾಜಕೀಯ ಪುನರ್ರಚನೆಗಳ ನಡುವೆ ಭಾರತದ ಆರ್ಥಿಕತೆ ನಿರ್ಣಾಯಕ ಘಟ್ಟದಲ್ಲಿದೆ ಎಂದು 2025–26ರ ಆರ್ಥಿಕ ಸಮೀಕ್ಷೆಯೇ ಒಪ್ಪಿಕೊಂಡಿದ್ದರೂ, ದೇಶ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳಿಗೆ ಬಜೆಟ್ ಸ್ಪಂದಿಸಿಲ್ಲ ಎಂದರು. ಭಾರತವನ್ನು ಆರ್ಥಿಕ ಪ್ರಕ್ಷುಬ್ಧತೆಗೆ ಸಿದ್ಧಪಡಿಸುವ ಬದಲು, ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸುವ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರ ಪರಿಣಾಮವಾಗಿ ಕಾರ್ಮಿಕರು, ರೈತರು ಹಾಗೂ ನಿರುದ್ಯೋಗಿ ಯುವಕರ ಮೇಲೆ ಬಿಕ್ಕಟ್ಟಿನ ಹೊರೆ ಹೇರಲಾಗಿದೆ ಎಂದು ಟೀಕಿಸಿದರು. ಉದ್ಯೋಗ ಸೃಷ್ಟಿಯ ಕುರಿತು ಬಜೆಟ್ ಸಂಪೂರ್ಣ ಮೌನ ವಹಿಸಿದೆ. ಸಾರ್ವಜನಿಕ ವಲಯದ ಉದ್ಯೋಗ ವಿಸ್ತರಣೆಗೆ ಯಾವುದೇ ಪ್ರಸ್ತಾಪವಿಲ್ಲ. ಉದ್ಯೋಗ ಖಾತರಿ ಯೋಜನೆಗಳನ್ನು ಅರ್ಥಪೂರ್ಣವಾಗಿ ಬಲಪಡಿಸುವ ಕ್ರಮಗಳೂ ಕಾಣಿಸುತ್ತಿಲ್ಲ ಎಂದು ಹೇಳಿದರು. ʼಯುವ ಶಕ್ತಿʼ ಕುರಿತು ಹಣಕಾಸು ಸಚಿವರ ವಾಗ್ಮಿತೆ ಹಾಗೂ 2047ರ ಗುರಿಗಳನ್ನು ಮುಂದಿಟ್ಟುಕೊಂಡು ʼಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ”ದ ಕುರಿತು ಸ್ಥಾಯಿ ಸಮಿತಿ ರಚಿಸುವ ಪ್ರಸ್ತಾಪವು ವಂಚನೆಯಾಗಿಯೇ ಹೊರಹೊಮ್ಮಿದೆ. ಯುವಕರು ದೂರದ ಭರವಸೆಗಳು ಮತ್ತು ಸಮಿತಿಗಳ ಮೇಲೆ ಬದುಕಲು ಸಾಧ್ಯವಿಲ್ಲ; ಅವರಿಗೆ ಈಗಲೇ ಯೋಗ್ಯ ಉದ್ಯೋಗ ಅಗತ್ಯ ಎಂದು ಅವರು ಸ್ಪಷ್ಟಪಡಿಸಿದರು. ಗಿಗ್ ಕಾರ್ಮಿಕರ ಕಲ್ಯಾಣ, ಕಾನೂನು ಮಾನ್ಯತೆ ಅಥವಾ ಸಾಮಾಜಿಕ ಭದ್ರತೆ ಒದಗಿಸುವ ಕುರಿತು ಬಜೆಟ್ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ಮುಂದಾಗುವ ಮೂಲಕ ಮತ್ತು ‘ಸುಧಾರಣೆ’ಗಳ ಹೆಸರಿನಲ್ಲಿ ನಿಯಂತ್ರಕ ಮಾನದಂಡಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಸಂಚಾಲಕ ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಸಾನಿಯಾ ಉಪಸ್ಥಿತರಿದ್ದರು.
Uttarakhand | ಧಾರ್ಮಿಕ ಮೆರವಣಿಗೆ ವೇಳೆ ವಿರೋಧಿ ಗುಂಪುಗಳ ನಡುವೆ ಘರ್ಷಣೆ: ಇಬ್ಬರು ಮೃತ್ಯು
ಡೆಹ್ರಾಡೂನ್: ಹರಿದ್ವಾರ ಜಿಲ್ಲೆಯ ರೂರ್ಕಿಯ ಭಗವಾನ್ಪುರ ಪ್ರದೇಶದಲ್ಲಿ ರವಿವಾರ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಎರಡು ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು,ಇಬ್ಬರು ಮೃತಪಟ್ಟಿದ್ದಾರೆ ಮತ್ತು ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನತೆಯಿದ್ದು, ಭಾರೀ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬನಾರಸಿ ಗ್ರಾಮದಲ್ಲಿ ಸಂತ ರವಿದಾಸ ಶೋಭಾಯಾತ್ರೆಯ ಅಂಗವಾಗಿ ಮೆರವಣಿಗೆ ನಡೆದಿದ್ದು,ಸಾಮೂಹಿಕ ಭೋಜನದ ವೇಳೆ ಈ ಘಟನೆ ನಡೆದಿದೆ. ಸಂಜೆ ಐದು ಗಂಟೆಯ ಸುಮಾರಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿರುವ ಎರಡು ಗುಂಪುಗಳ ನಡುವೆ ವಾಗ್ವಾದ ಆರಂಭಗೊಂಡಿತ್ತು. ಶೀಘ್ರವೇ ಅದು ಹಿಂಸೆಗೆ ತಿರುಗಿದ್ದು, ಪಿಸ್ತೂಲುಗಳನ್ನೂ ಬಳಸಲಾಗಿತ್ತು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಆನಂದ (28) ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ರಾತ್ರಿ ಸಮೀಪದ ಹೊಲವೊಂದರಲ್ಲಿ ಎದುರಾಳಿ ಗುಂಪಿಗೆ ಸೇರಿದ ಮಾಂಗೆರಾಮ್ ಎಂಬಾತನ ಶವ ಪತ್ತೆಯಾಗಿತ್ತು. ಆತನನ್ನು ಥಳಿಸಿ ಕೊಲ್ಲಲಾಗಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಮೃತ ಆನಂದನ ಕುಟುಂಬ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ರಸ್ತೆಯ ಮಧ್ಯೆ ಶವವನ್ನು ಇರಿಸಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದರು. ಆರೋಪಿಗಳನ್ನು ಬಂಧಿಸುವವರೆಗೂ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಧಾವಿಸಿದ ಹಿರಿಯ ಪೋಲಿಸ್ ಅಧಿಕಾರಿಗಳು ಗುಂಪನ್ನು ಸಮಾಧಾನಗೊಳಿಸಿದ ಬಳಿಕ ತಡಸಂಜೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಗಾಯಗೊಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ʼರೋಹಿತ್ ವೇಮುಲಾʼ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹ
ಬೇಡಿಕೆ ಈಡೇರಿಕೆಗೆ ಆಗ್ರಹ: ಫೆ. 5ಕ್ಕೆ ಶಿಕ್ಷಕರ ‘ದೆಹಲಿ ಚಲೋ’ ಹೋರಾಟಕ್ಕೆ ಐಟಾ ಬೆಂಬಲ
ಭಟ್ಕಳ: ಶಿಕ್ಷಕ ಸಮುದಾಯ ಎದುರಿಸುತ್ತಿರುವ ದೀರ್ಘಕಾಲದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿ ಫೆಬ್ರುವರಿ 5ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ದೆಹಲಿ ಚಲೋ’ ಹೋರಾಟ ಹಮ್ಮಿಕೊಂಡಿದೆ. ಈ ಬೃಹತ್ ಚಳವಳಿಗೆ ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ಸಂಪೂರ್ಣ ಬೆಂಬಲ ನೀಡಿದೆ ಎಂದು ಐಟಾ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ ತಿಳಿಸಿದ್ದಾರೆ. ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯ ಮಟ್ಟದವರೆಗೆ ವಿವಿಧ ಶಿಕ್ಷಕ ಸಂಘಟನೆಗಳು ಒಗ್ಗೂಡಿ ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿಕೊಂಡಿದ್ದು, ಅದರ ನೇತೃತ್ವದಲ್ಲಿ ಫೆ.5ರಂದು ಬೆಳಿಗ್ಗೆ 10 ಗಂಟೆಯಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಧರಣಿ–ಸತ್ಯಾಗ್ರಹ ನಡೆಯಲಿದೆ. ಶಿಕ್ಷಕರ ಹಿತರಕ್ಷಣೆಗೆ ಸಂಬಂಧಿಸಿದಂತೆ ಈ ಹೋರಾಟದಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯನ್ನು (ಎನ್ಪಿಎಸ್) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಜಾರಿಗೊಳಿಸಬೇಕು, ಸೇವೆಯಲ್ಲಿರುವ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಿಂದ ವಿನಾಯಿತಿ ನೀಡಬೇಕು, ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಮತದಾನದ ಹಕ್ಕು ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ. ಇದಲ್ಲದೆ, 8ನೇ ವೇತನ ಆಯೋಗದ ವರದಿಯನ್ನು ನಿಗದಿತ ಅವಧಿಯಲ್ಲಿ ಜಾರಿಗೊಳಿಸಬೇಕು, ದೇಶಾದ್ಯಂತ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು, ಅತಿಥಿ ಮತ್ತು ಗುತ್ತಿಗೆ ಆಧಾರಿತ ಶಿಕ್ಷಕರನ್ನು ಕಾಯಂಗೊಳಿಸಿ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿದೆ. ನೂತನ ಶಿಕ್ಷಣ ನೀತಿಯಲ್ಲಿರುವ ವಿದ್ಯಾರ್ಥಿ ಮತ್ತು ಶಿಕ್ಷಕ ವಿರೋಧಿ ಅಂಶಗಳನ್ನು ಕೈಬಿಡಬೇಕು, ಸರ್ಕಾರಿ ಶಾಲೆಗಳ ವಿಲೀನ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಹಾಗೂ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಂದ ಮುಕ್ತಗೊಳಿಸಬೇಕು ಎಂಬ ಬೇಡಿಕೆಗಳನ್ನೂ ಹೋರಾಟದಲ್ಲಿ ಮುಂದಿಡಲಾಗಿದೆ. ಈ ಮಹತ್ವದ ‘ದೆಹಲಿ ಚಲೋ’ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಎಂ.ಆರ್. ಮಾನ್ವಿ ಮನವಿ ಮಾಡಿದ್ದಾರೆ.
ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ಕಾರ್ಯಾದೇಶ ನೀಡುವು ಸುಳ್ಳು: ಹೈಕೋರ್ಟ್ಗೆ ಸರ್ಕಾರ ಮಾಹಿತಿ
ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಫೆಬ್ರವರಿ ಅಂತ್ಯಕ್ಕೆ ಆರಂಭವಾಗಲಿದೆ ಎಂಬ ವರದಿ ಸುಳ್ಳು ಎಂದು ರಾಜ್ಯ ಅಡ್ವೊಕೇಟ್ ಜನರಲ್ ಹೈಕೋರ್ಟ್ಗೆ ತಿಳಿಸಿದರು. ಈ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯಿತು. ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಕಾಲಾವಕಾಶ ನೀಡಿತು. ವಿಚಾರಣೆ ಫೆ.23ಕ್ಕೆ ಮುಂದೂಡಲಾಗಿದೆ.
Gujarat | ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ವರನ ಮೇಲೆ ದಾಳಿ
ಪಟನ್: ಮದುವೆ ದಿನ ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ವರನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಗುಜರಾತಿನ ಪಟನ್ ಜಿಲ್ಲೆಯ ಚಂದ್ರುಮನಾ ಗ್ರಾಮದಲ್ಲಿ ನಡೆದಿದೆ. ಸೋಮವಾರ ದಲಿತ ಸಮುದಾಯದ ವರ ವಿಶಾಲ ಚಾವ್ಡಾ ತನ್ನ ವಿವಾಹ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಸಾಗುತ್ತಿದ್ದಾಗ ಪ್ರಬಲ ಸಮುದಾಯದ ಗುಂಪೊಂದು ತಡೆದಿತ್ತು. ಕೆಳಜಾತಿಯ ವರ ಕುದುರೆ ಸವಾರಿ ಮಾಡುತ್ತಿದ್ದುದು ಅವರನ್ನು ಕೆರಳಿಸಿತ್ತು. ‘ಈ ಗ್ರಾಮದಲ್ಲಿ ದಲಿತನೋರ್ವನಿಗೆ ಕುದುರೆ ಸವಾರಿ ಮಾಡಲು ಎಷ್ಟು ಧೈರ್ಯ?’ ಎಂದು ಅಬ್ಬರಿಸಿದ ಗುಂಪು ಚಾವ್ಡಾ ಮತ್ತು ಆತನ ಸಂಬಂಧಿಗಳ ಮೇಲೆ ಕತ್ತಿಗಳಿಂದ ಹಲ್ಲೆ ನಡೆಸಿದೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ಬಂದೋಬಸ್ತ್ ಏರ್ಪಡಿಸಿದ್ದಾರೆ. ಇದೊಂದು ಪ್ರತ್ಯೇಕ ಘಟನೆಯಲ್ಲ,ಇಂತಹ ಘಟನೆಗಳು ಗುಜರಾತಿನಲ್ಲಿ ನಡೆಯುತ್ತಲೇ ಇರುತ್ತವೆ. ಗಾಂಧಿನಗರದಿಂದ ಬನಾಸ್ಕಾಂತಾವರೆಗೂ ದಲಿತ ವರ ಕುದುರೆ ಸವಾರಿ ಮಾಡುವುದು ಹಿಂಸಾಚಾರಕ್ಕೆ ಕಾರಣವಾಗಿರುವ ಘಟನೆಗಳು ನಡೆದಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವೆಕಾಂಡೋ ಪಂದ್ಯ: ದ.ಕ.ಜಿಲ್ಲೆಗೆ ಚಿನ್ನ, ಬೆಳ್ಳಿ ಪದಕ
ಮಂಗಳೂರು: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಟ್ವೆಕಾಂಡೋ ಚಾಂಪಿಯನ್ ಶಿಪ್-2026 (8ನೇ ಕೆಟಿಎ ಕಪ್) ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯ ಟ್ವೆಕಾಂಡೋ ಕ್ರೀಡಾಪಟುಗಳು 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ. 12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಫಾನ್ ರಹ್ಮತುಲ್ಲಾ ಅಹ್ಮದ್ ಸುರತ್ಕಲ್ ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಷ್ಣು ಇಡ್ಯಾ-ಸುರತ್ಕಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಫಾನ್ ಅವರು ರಹಮತುಲ್ಲಾ ಅಹ್ಮದ್-ಫಾತಿಮಾ ಫರ್ಝಾನಾ ದಂಪತಿಯ ಪುತ್ರ. ವಿಷ್ಣು ಅವರು ರವಿ-ಜ್ಯೋತಿ ದಂಪತಿಯ ಪುತ್ರ. 15 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಆಯಾನ್ ಅಹ್ಮದ್ ಮಂಗಳೂರು ಹಾಗೂ 14 ವರ್ಷದೊಳಗಿನ ಬಾಲಕಿ ಯರ ವಿಭಾಗದಲ್ಲಿ ಕುಳಾಯಿಯ ಅವಂತಿಕಾ ಎಸ್. ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಅಯಾನ್ ಅಹ್ಮದ್ ಅವರು ನಜೀಮ್ ಅಹ್ಮದ್ - ಸುನೇನಾ ನಜೀಮ್ ದಂಪತಿಯ ಪುತ್ರ. ಅವಂತಿಕಾ ಅವರು ವಿನೋದ್ ಎಸ್.-ಸುಮಾ ಕೆ ದಂಪತಿಯ ಪುತ್ರಿ. ದ.ಕ. ಟ್ವೇಕಾಂಡೋ ಸಂಘದ ಪ್ರಧಾನ ಕಾರ್ಯದರ್ಶಿ ಇಶಾಕ್ ಇಸ್ಮಾಯಿಲ್ ನಂದಾವರ ಈ ಕ್ರೀಡಾಪಟು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಮಂಗಳೂರು: ನಗರ ಹೊರವಲಯದ ಕಸಬಾ ಬೆಂಗ್ರೆಯ ನಿವಾಸಿ ಮುಹಮ್ಮದ್ ಸಫ್ವಾನ್ (28) ಎಂಬಾತ ಜ.28ರಂದು ತನ್ನ ಮನೆಯಿಂದ ಹೊರಟು ಹೋಗಿದ್ದು, ಮರಳಿ ಬಂದಿಲ್ಲ ಎಂದು ಪಣಂಬೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 5.6 ಅಡಿ ಎತ್ತರದ, ಸಾಧಾರಣ ಶರೀರದ, ಎಣ್ಣೆಕಪ್ಪು ಮೈಬಣ್ಣದ ಸಫ್ವಾನ್ ಕಾಣೆಯಾದ ಬಿಳಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ತುಳು, ಬ್ಯಾರಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಈತನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಕಾನೂನು ಸುವ್ಯವಸ್ಥೆ ಹಳಿ ತಪ್ಪಲು ಬಿಡುವುದಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು, ಯಾವುದೇ ಕಾರಣಕ್ಕೂ ಹಳಿ ತಪ್ಪಲು ನಾನು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪ್ರಸ್ತಾವಿಸಿದ ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಉತ್ತರಿಸಿದ ಅವರು, ದೇಶದ 125 ನಗರಗಳಲ್ಲಿ ಸಮೀಕ್ಷೆ ನಡೆಸಿರುವ ಚೆನ್ನೈ ಮೂಲದ ಅವತಾರ್ ಸಂಸ್ಥೆಯು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರಿಗೆ ಪ್ರಥಮ ಸ್ಥಾನ ನೀಡಿದೆ ಎಂದು ಹೇಳಿದರು. ಮಾದಕ ವಸ್ತುಗಳ ವಿರುದ್ಧ ಸಮರ: ಮಾದಕ ವಸ್ತುಗಳು(ಡ್ರಗ್ಸ್) ತಯಾರಿಸುವಂತಹ ಅತೀ ಹೆಚ್ಚು ಲ್ಯಾಬೋರೇಟರಿಗಳು ಗುಜರಾತ್, ರಾಜಸ್ತಾನ ಹಾಗೂ ಮಹಾರಾಷ್ಟ್ರದಲ್ಲಿವೆ. ಮಾದಕ ವಸ್ತುಗಳ ನಿಯಂತ್ರಣದ ವಿಚಾರದಲ್ಲಿ ಯಾವುದೆ ರಾಜಿಯಿಲ್ಲ. ಈಗಾಗಲೆ ನಮ್ಮ ಸರಕಾರ ಸಾವಿರಾರು ಕೋಟಿ ರೂ.ಮೌಲ್ಯದ ಡ್ರಗ್ಸ್ ಅನ್ನು ಹಿಡಿದಿದೆ. ಪೆಡ್ಲರ್ಗಳು ಹಾಗೂ ಬಳಕೆದಾರರ ವಿರುದ್ಧ ಸಾವಿರಾರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಪೊಲೀಸರ ಮೂಲಕ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸುಮಾರು 16 ಲಕ್ಷ ವಿದ್ಯಾರ್ಥಿಗಳನ್ನು ನಾವು ತಲುಪಿದ್ದೇವೆ. ಪೊಲೀಸ್ ಅಧಿಕಾರಿಗಳು ತಮ್ಮ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ, ಅದರ ಲ್ಯಾಬೋರೇಟರಿಗಳು ಎಲ್ಲಿವೆ ಎಂಬುದರ ಕುರಿತು ನಿಗಾವಹಿಸಬೇಕು. ಅಲ್ಲದೇ, ಯಾವುದೆ ಹೊಸ ಕೆಮಿಕಲ್ ಫ್ಯಾಕ್ಟರಿ, ಲ್ಯಾಬೋರೇಟರಿಗಳು ಆರಂಭವಾದರೆ ಪೊಲೀಸರು ಹೋಗಿ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. ಬಾಂಗ್ಲಾದೇಶಿಯರು ಅಕ್ರಮವಾಗಿ ಭಾರತದ ಗಡಿಯೊಳಗೆ ಹೇಗೆ ಪ್ರವೇಶಿಸುತ್ತಾರೆ? ದೇಶದ ಗಡಿಯನ್ನು ಕಾಯುವುದು ಯಾರು? ಇದರಲ್ಲಿ ಕೇಂದ್ರ ಸರಕಾರದ ಜವಾಬ್ದಾರಿ ಇಲ್ಲವೇ? ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. 370 ಮಂದಿ ಅಕ್ರಮ ಬಾಂಗ್ಲಾದೇಶಿಯರನ್ನು ಗುರುತಿಸಲಾಗಿದೆ. ಈ ಪೈಕಿ 196 ಜನರನ್ನು ಗಡಿಪಾರು ಮಾಡಲಾಗಿದೆ. ಉಳಿದವರ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೆ ಅವರನ್ನು ಗಡಿಪಾರು ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು. ಅಕ್ರಮವಾಗಿ ನಮ್ಮ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಮಾಡಲು ವಿಶೇಷ ಅಭಿಯಾನ ನಡೆಸಲು ಉದ್ದೇಶಿಸಿದ್ದೇವೆ. ಸೈಬರ್ ಅಪರಾಧಗಳ ತಡೆಗೆ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಪ್ರತ್ಯೇಕ ವಿಭಾಗ ರಚನೆ ಮಾಡಿದ್ದೇವೆ. ಅದರಲ್ಲಿ, ಎಡಿಜಿ, ಐಜಿ ಮಟ್ಟದ ಅಧಿಕಾರಿಗಳಿದ್ದಾರೆ. ಪೊಲೀಸರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು. ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಇರಬೇಕು. ಅದನ್ನು ಉಲ್ಲಂಘಿಸುವವರಿಗೆ ಇಲಾಖೆಯಲ್ಲಿ ಇಟ್ಟುಕೊಂಡು ಏನು ಮಾಡಬೇಕು. ನಾವು ಹಿರಿಯ ಅಧಿಕಾರಿಗಳು ಸೇರಿದಂತೆ 125 ಮಂದಿ ಅಮಾನತ್ತು ಮಾಡಿದ್ದೇವೆ. ಭ್ರಷ್ಟಾಚಾರವನ್ನು ಸಂಪೂರ್ಣ ನಿಗ್ರಹಿಸಲು ಸಾಧ್ಯವಿಲ್ಲದಿದ್ದರೂ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ
ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಹಾಗೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆದ ಒಪ್ಪಂದದಂತೆ ಕಾಂಗ್ರೆಸ್ ಬೆಂಬಲಿತ 10 ಮಂದಿ ಅಭ್ಯರ್ಥಿಗಳು ಹಾಗೂ ಸಹಕಾರ ಭಾರತಿಯ ಇಬ್ಬರು ಅಭ್ಯರ್ಥಿಗಳು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಫೆ.8ರಂದು ಮತದಾನ ನಿಗದಿಯಾಗಿತ್ತು. ಇದಕ್ಕಾಗಿ 25 ನಾಮಪತ್ರಗಳು ಸಲ್ಲಿಕೆಯಾಗಿತ್ತು. ನಾಮಪತ್ರ ಹಿಂಪಡೆಯುವ ದಿನವಾದ ಫೆ.2ರಂದು 10 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹಾಗೂ ಎರಡು ಮಂದಿ ಸಹಕಾರ ಭಾರತಿಯ ಅಭ್ಯರ್ಥಿಗಳನ್ನು ಉಳಿದವರು ನಾಮಪತ್ರ ಹಿಂದೆಗೆದುಕೊಂಡರು. ಅವಿರೋಧ ಆಯ್ಕೆಯಾದವರು: ನಿರ್ದೇಶಕ ಸ್ಥಾನಕ್ಕೆ ಸಾಲಗಾರ ಸಾಮಾನ್ಯದಿಂದ ಅಬ್ದುಲ್ ಲತೀಫ್, ನೀಲಪ್ಪ ಗೌಡ, ಡಾ. ರಾಜ್ಗೋಪಾಲ ಶರ್ಮಾಬಿ., ತೋಯಜಾಕ್ಷ ಶೆಟ್ಟಿ, ಜಾರಪ್ಪ ಗೌಡ ಆಯ್ಕೆಯಾಗಿದ್ದಾರೆ. ಸಾಲಗಾರ ಅನುಸೂಚಿತ ಜಾತಿಯಿಂದ ಶಾಂತಾ, ಸಾಲಗಾರ ಅನುಸೂಚಿತ ಪಂಗಡದಿಂದ ಲಕ್ಷ್ಮಣ ನಾಯ್ಕ, ಸಾಲಗಾರ ಮಹಿಳೆಯಿಂದ ಜಯಲಕ್ಷ್ಮೀ, ರೇವತಿ ಪಿ., ಸಾಲಗಾರ ಹಿಂದುಳಿದ ವರ್ಗ (ಬಿ)ಯಿಂದ ಸುನೀಲ್ ನೆಲ್ಸನ್ ಪಿಂಟೋ, ಸಾಲಗಾರ ಹಿಂದುಳಿದ ವರ್ಗ (ಎ)ಯಿಂದ ತನಿಯಪ್ಪ ಪೂಜಾರಿ, ಸಾಲಗಾರರಲ್ಲದ್ದರಿಂದ ಬೇಬಿ ಆಯ್ಕೆಯಾಗಿದ್ದಾರೆ. ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 20 ವರ್ಷಗಳನ್ನು ಪೂರ್ಣಗೊಳಿಸಿದ್ದು, ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಈ ಹಿಂದಿನ ನಾಲ್ಕು ಅವಧಿಗಳಲ್ಲೂ ಚುನಾವಣೆ ನಡೆದಿತ್ತು. ನಾಲ್ಕು ಅವಧಿಗಳಲ್ಲೂ ನಿರ್ದೇಶಕ ರಾಗಿ ಆಯ್ಕೆಯಾಗಿ ತೋಯಜಾಕ್ಷ ಶೆಟ್ಟಿಯವರೇ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರಲ್ಲದೆ, ಸಂಘವನ್ನು ಪ್ರಗ ತಿಯ ಪಥದಲ್ಲಿ ಮುನ್ನಡೆಸಿದ್ದರು. ಆದರೆ ಈ ಬಾರಿ ಮಾತ್ರ ಹೊಂದಾಣಿಕೆಯೊಂದಿಗೆ ಸಾಗಿದ್ದು, ಹಾಗಾಗಿ ಅವಿರೋಧ ಆಯ್ಕೆ ನಡೆದಿದೆ. ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಈ ಬಾರಿ ನಾವು ಸೌಹಾರ್ದತೆಯ ಒಪ್ಪಂದ ಮಾಡಿಕೊಂಡು ಚುನಾವಣೆ ನಡೆಯದೇ ಅವಿರೋಧ ಆಯ್ಕೆಯಾಗುವಂತೆ ನೋಡಿ ಕೊಂಡಿದ್ದೇವೆ. ಈ ಮೂಲಕ ಬ್ಯಾಂಕಿಗೆ ಆಗುವ ಖರ್ಚು ಕೂಡಾ ಉಳಿಯುವಂತಾಗಿದೆ. ಚುನಾವಣೆ ನಡೆದಾಗ ಬ್ಯಾಂಕಿಗೂ ಖರ್ಚು, ಅಭ್ಯರ್ಥಿಗೂ ಖರ್ಚು. ಚುನಾವಣೆಯಲ್ಲಿ ಎದುರು ಬದುರಾಗುವಾಗ ಪರಸ್ಪರ ಮನಸ್ತಾಪಗಳು ಸಹಜ. ಆದ್ದರಿಂದ ಈ ಬಾರಿ ನಾವು ಪರಸ್ಪರ ಮಾತನಾಡಿಕೊಂಡು 10+2ರ ಒಪ್ಪಂದ ಮಾಡಿಕೊಂಡಿದ್ದೆವು. ಎಲ್ಲರೂ ಜೊತೆಗೂಡಿ ಸಂಘವನ್ನು ಇನ್ನಷ್ಟು ಬೆಳೆಸುವುದೇ ನಮ್ಮ ಕನಸು. - ತೋಯಜಾಕ್ಷ ಶೆಟ್ಟಿ ನಿಕಟಪೂರ್ವಾಧ್ಯಕ್ಷರು, ಪೆರ್ನೆ ಸಿಎ ಬ್ಯಾಂಕ್
ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆದೇಶ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಇದೇ ಮಾರ್ಚ್ ಅಂತ್ಯದೊಳಗೆ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಲಿರುವುದರಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರ ಅವಧಿಯು ಮುಕ್ತಾಯಗೊಳ್ಳುತ್ತಿರುವುದರಿಂದ ಮುಂದಿನ ಚುನಾವಣೆ ನಡೆಸುವವರೆಗೂ ಆಡಳಿತಾಧಿಕಾರಿಯನ್ನು ನೇಮಿಸುವ ಬದಲು ಈಗಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಬೇಕೆಂದು ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ದೊಡ್ಡನಗೌಡ ಪಾಟೀಲ್ ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು. ಚುನಾವಣೆ ನಡೆಸುವುದು ತುಂಬಾ ತಡವಾಗುವುದಾದರೆ ಮಾತ್ರ ಕಾನೂನಿನಡಿ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಲು ಅವಕಾಶವಿರುತ್ತದೆ. ಆದರೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸುವ ಅವಶ್ಯಕತೆ ಬರುವುದಿಲ್ಲ. ಚುನಾವಣೆಯನ್ನು ಸರಕಾರ ಆದಷ್ಟು ಬೇಗ ನಡೆಸಲಿದೆ. ಆದಾಗ್ಯೂ ಚುನಾವಣೆ ನಡೆಸುವುದು ತಡವಾದಲ್ಲಿ ಸದಸ್ಯರ ಮನವಿ ಕುರಿತು ಕಾನೂನಿನಡಿ ಪರಿಶೀಲಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Bengaluru | ರಸ್ತೆಯಲ್ಲಿ ತೆರೆದಿದ್ದ ಕಾಂಕ್ರಿಟ್ ಚೇಂಬರ್ಗೆ ಬಿದ್ದು ಬಾಲಕ ಮೃತ್ಯು
ಬೆಂಗಳೂರು : ಬೆಂಗಳೂರಿನ ಕನಕಪುರ ಮಾರ್ಗದ ಪೈಪ್ಲೈನ್ ರಸ್ತೆಯಲ್ಲಿ ತೆರೆದಿದ್ದ ಕಾಂಕ್ರೀಟ್ ಚೇಂಬರ್ಗೆ ಬಿದ್ದು 9ನೇ ತರಗತಿಯ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಂ (14) ಎಂಬಾತ ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ರಜನಿಕಾಂತ್ ಮತ್ತು ಪುಷ್ಪಾ ದಂಪತಿಯ ಪುತ್ರ ಪ್ರೀತಂ, ಜ.28ರ ಬೆಳಗ್ಗೆ 9 ಗಂಟೆಗೆ ಮನೆಯಿಂದ ಆಟವಾಡಲು ಹೊರ ಹೋಗಿದ್ದ. ಆದರೆ, ಸಂಜೆಯಾದರೂ ಮಗ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಮಗ ಕಾಣೆಯಾದ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಲಕ ನಾಪತ್ತೆಯಾದ ಮೂರು ದಿನಗಳ ನಂತರ, ಅಂದರೆ ಜ.31ರ ಶನಿವಾರ ರಾತ್ರಿ ಪೈಪ್ಲೈನ್ ರಸ್ತೆಯಲ್ಲಿರುವ ಜಲಮಂಡಳಿಯ ಚೇಂಬರ್ನಿಂದ ತೀವ್ರವಾದ ಕೊಳೆತ ವಾಸನೆ ಬರಲಾರಂಭಿಸಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಚೇಂಬರ್ ಒಳಗೆ ಇಣುಕಿ ನೋಡಿದಾಗ ಬಾಲಕನ ಶವ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಸದ್ಯ, ಬಾಲಕನ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತಿಮ ಸಂಸ್ಕಾರಕ್ಕಾಗಿ ಕೊಳ್ಳೇಗಾಲಕ್ಕೆ ರವಾನಿಸಲಾಗಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮೃತ ಬಾಲಕನ ತಂದೆ ರಜನಿಕಾಂತ್ ಮಾತನಾಡಿ, ಚೇಂಬರ್ ಮುಚ್ಚಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ನನ್ನ ಮಗನ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹನುಮ ಕಲ್ಯಾಣ’ ಪೌರಾಣಿಕ ಆಖ್ಯಾನದ ಪ್ರದರ್ಶನ
ಬ್ರಹ್ಮಾವರ, ಫೆ.2: ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಾದ ನೂಪುರ ಯಕ್ಷೇತ್ಥಾನ ಟ್ರಸ್ಟ್ ವಂಡಾರು ವತಿಯಿಂದ ಶುಭಾಶಯ ಜೈನ್ ವಿರಚಿತ ಹನುಮ ಕಲ್ಯಾಣ ಎಂಬ ಪೌರಾಣಿಕ ಆಖ್ಯಾನದ ಪ್ರದರ್ಶನ ರವಿವಾರ ಮೈರ್ಕೊಮೆಯ ಸಪ್ತಪದಿ ಕನ್ವೆನ್ಷನ್ ಹಾಲ್ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಗೋಶಾಲೆಯ ಮುಖ್ಯಸ್ಥರಿಗೆ ಕಾರ್ಯಕ್ರಮ ದಿಂದ ಸಂಗ್ರಹವಾದ ಒಂದು ಲಕ್ಷ ರೂ. ಮೊತ್ತದ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಉಳಿದ ಒಂದು 1.30ಲಕ್ಷರೂ. ಮೊತ್ತವನ್ನೂ ಗೋಶಾಲೆಗೆ ಹಸ್ತಾಂತರಿಸುವ ಕುರಿತು ನಾದ ಟ್ರಸ್ಟ್ ಅಧ್ಯಕ್ಷ ಗೋವಿಂದ ವಂಡಾರು ಘೋಷಣೆ ಮಾಡಿದರು. ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ಮುಖ್ಯಸ್ಥ ರಾಜೇಂದ್ರ ಚಕ್ಕೆ, ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀಕ್ಷೇತ್ರ ಮಂದಾರ್ತಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಧನಂಜಯ ಶೆಟ್ಟಿ, ಯಕ್ಷ ಪೋಷಕರಾದ ಚೋರಾಡಿಯ ರಾಜೀವ ಶೆಟ್ಟಿ, ಕೊಕ್ಕರ್ಣೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ವಂಡಾರು, ಯಕ್ಷಗಾನ ಪೋಷಕ ಆಂದ್ರೂ ಡಿಸಿಲ್ವ, ಕೊಕ್ಕರ್ಣೆಯ ರಾಮಚಂದ್ರ ಶಾಸ್ತ್ರಿ, ಪ್ರಸಂಗಕರ್ತೆ ಶುಭಾಶಯ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಾಪಕರಾದ ಶಶಿಧರ್ ಶೆಟ್ಟಿ ನಂಚಾರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಬೆಂಗಳೂರಿಗೆ ಆಗಮಿಸಬೇಕಿದ್ದ Air India ವಿಮಾನದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ ದೋಷ; ತಪ್ಪಿದ ಸಂಭಾವ್ಯ ಅನಾಹುತ
ಹೊಸದಿಲ್ಲಿ: ಕಳೆದ ವರ್ಷ ಅಹ್ಮದಾಬಾದ್ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ತನಿಖೆಯ ನಡುವೆಯೇ ಸೋಮವಾರ ಲಂಡನ್ನಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ ದೋಷ ಕಂಡು ಬಂದಿದ್ದು, ವಿಮಾನವನ್ನು ಕಾರ್ಯಾಚರಣೆಯಿಂದ ಹಿಂದೆಗೆದುಕೊಳ್ಳಲಾಗಿದೆ ಎಂದು ವಾಯುಯಾನ ಸಂಸ್ಥೆಯ ವಕ್ತಾರರೋರ್ವರು ತಿಳಿಸಿದರು. ‘ಹಾರಾಟವನ್ನು ಆರಂಭಿಸುವ ಮುನ್ನ ತಪಾಸಣೆ ನಡೆಸಿದ್ದ ನಮ್ಮ ಪೈಲಟ್ ಓರ್ವರು ಇಂಧನ ಸ್ವಿಚ್ನಲ್ಲಿ ಸಂಭಾವ್ಯ ದೋಷವನ್ನು ಪತ್ತೆ ಹಚ್ಚಿದ್ದರು. ಇಂಜಿನ್ ಚಾಲೂ ಮಾಡುವ ಸಂದರ್ಭದಲ್ಲಿ ಸ್ವಿಚ್ ಎರಡು ಸಲ ‘ರನ್’ ಸ್ಥಿತಿಯಲ್ಲಿ ಇರಲು ವಿಫಲಗೊಂಡಿತ್ತು ಮತ್ತು ‘ಕಟ್ಆಫ್’ ಸ್ಥಿತಿಗೆ ಚಲಿಸಿತ್ತು. ಮಾಹಿತಿ ಲಭಿಸಿದ ತಕ್ಷಣ ನಾವು ವಿಮಾನದ ಹಾರಾಟವನ್ನು ನಿಲ್ಲಿಸಿದ್ದೇವೆ ಮತ್ತು ಸಂಪೂರ್ಣ ತಪಾಸಣೆ ನಡೆಸುತ್ತಿದ್ದೇವೆ. ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ಈ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದರು. ಕಳೆದ ವರ್ಷದ ಅಪಘಾತದ ಬಳಿಕ ಡಿಜಿಸಿಎ ನಿರ್ದೇಶನದ ಮೇರೆಗೆ ಏರ್ ಇಂಡಿಯಾ ತನ್ನ ಎಲ್ಲ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ಗಳ ತಪಾಸಣೆ ನಡೆಸಿತ್ತು ಮತ್ತು ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ ಎಂದು ಅವರು ತಿಳಿಸಿದರು. ಜುಲೈ 2025ರಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ್ದ ಡ್ರೀಮ್ಲೈನರ್ ಅಪಘಾತ ಪ್ರಕರಣದಲ್ಲಿ ತನಿಖಾಧಿಕಾರಿಗಳ ಪ್ರಾಥಮಿಕ ವರದಿಯು, ವಿಮಾನವು ಟೇಕ್ಆಫ್ ಆದ ಕೆಲವೇ ಸೆಕೆಂಡ್ಗಳ ಬಳಿಕ ಇಂಧನ ನಿಯಂತ್ರಣ ಸ್ವಿಚ್ಗಳು ಅಲ್ಪಾವಧಿಗೆ ಆಫ್ ಆಗಿದ್ದರಿಂದ ಇಂಜಿನ್ಗೆ ಇಂಧನದ ಕೊರತೆಯಾಗಿತ್ತು ಎಂದು ಸೂಚಿಸಿತ್ತು. ಈ ದುರಂತದಲ್ಲಿ 260 ಜನರು ಸಾವನ್ನಪ್ಪಿದ್ದರು.
Bengaluru | ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿ ಮೃತ್ಯು
ಬೆಂಗಳೂರು : ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಭಾರತಿನಗರದ ಫ್ರೂಟ್ಸ್ ಮಾರ್ಕೆಟ್ ಬಳಿ ವರದಿಯಾಗಿದೆ. ಇರ್ಫಾನ್ ಮುಲ್ಲಾನಿ(26) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಜ.30ರಂದು ಘಟನೆ ನಡೆದಿದೆ. ಸಂಬಂಧಿಕರ ಮನೆಗೆ ಬಂದಿದ್ದ ಇರ್ಫಾನ್ ಇದ್ದಕ್ಕಿದ್ದಂತೆ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಭಾರತಿನಗರ ಠಾಣೆಯಲ್ಲಿ ಅಸಹಜ ಸಾವು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿಗೆ ವಿಶೇಷ ರೈಲು
ಉಡುಪಿ, ಫೆ.2: ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜನರ ವಿಶೇಷ ಬೇಡಿಕೆಯಂತೆ ಯಶವಂತಪುರ- ಮಡಗಾಂವ್ ಜಂಕ್ಷನ್- ಯಶವಂತಪುರ ನಡುವೆ ಕೊಂಕಣ ರೈಲ್ವೆಯ ಸಹಯೋಗದೊಂದಿಗೆ ನೈರುತ್ಯ ರೈಲ್ವೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ. ರೈಲು ನಂ.06507 ಯಶವಂತಪುರ- ಮಡಗಾಂವ್ ಜಂಕ್ಷನ್ ಎಕ್ಸ್ಪ್ರೆಸ್ ವಿಶೇಷ ರೈಲು ಫೆ.13ರಂದು ಶುಕ್ರವಾರ ಅಪರಾಹ್ನ 12:30ಕ್ಕೆ ಯಶವಂತಪುರ ದಿಂದ ಹೊರಟು ಮರುದಿನ ಮುಂಜಾನೆ 6:45ಕ್ಕೆ ಮಡಗಾಂವ್ ತಲುಪಲಿದೆ. ರೈಲು ನಂ.06508 ಮಡಗಾಂವ್ ಜಂಕ್ಷನ್- ಯಶವಂತಪುರ ಎಕ್ಸ್ಪ್ರೆಸ್ ರೈಲು ಫೆ.16ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮಡಗಾಂವ್ ಜಂಕ್ಷನ್ನಿಂದ ಹೊರಟು ಮರುದಿನ ಮುಂಜಾನೆ 4:45ಕ್ಕೆ ಯಶವಂತಪುರ ತಲುಪಲಿದೆ. ಈ ರೈಲಿಗೆ ಚಿಕ್ಕಬಾಣಾವರ, ಚೆನ್ನರಾಯಪಟ್ಟಮ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್, ಅಂಕೋಲ ಹಾಗೂ ಕಾರವಾರಗಳಲ್ಲಿ ನಿಲುಗಡೆ ಇರಲಿದೆ. ಈ ರೈಲು ಒಟ್ಟು 20 ಕೋಚ್ಗಳನ್ನು ಹೊಂದಿರಲಿದೆ. ಇವುಗಳಲ್ಲಿ ಫಸ್ಟ್ ಕ್ಲಾಸ್ 2ಟಯರ್ 1ಕೋಚ್, 2ಟಯರ್ ಎಸಿ-2, 3ಟಯರ್ ಎಸಿ-2, ಸ್ಲೀಪರ್ ಕೋಚ್-9, ಜನರಲ್-4 ಹಾಗೂ ಎಸ್ಎಲ್ಆರ್-2 ಕೋಚ್ಗ ಳಿರುತ್ತವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
Mudigere | ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ: ಪಶ್ಚಿಮ ಘಟ್ಟಗಳ ಸೂಕ್ಷ್ಮ ಹುಲ್ಲುಗಾವಲು ಭಸ್ಮ
ಚಿಕ್ಕಮಗಳೂರು : ದಕ್ಷಿಣ ಕನ್ನಡ–ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಮೂಡಿಗೆರೆ ಅರಣ್ಯ ವಲಯದೊಳಗೆ ಸಂಭವಿಸಿರುವ ಈ ಅಗ್ನಿ ಅವಘಡದಲ್ಲಿ ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿದೆ. ಗಾಳಿಯ ವೇಗ ಹೆಚ್ಚಿರುವುದರಿಂದ ಬೆಂಕಿ ಕ್ಷಿಪ್ರವಾಗಿ ಹರಡುತ್ತಿದೆ. ರಸ್ತೆಯ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿದೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪರಿಸ್ಥಿತಿಯನ್ನು ನಿರಂತರವಾಗಿ ನಿಗಾ ವಹಿಸಲಾಗುತ್ತಿದ್ದು, ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ತರಲು ಪ್ರಯತ್ನಗಳು ಮುಂದುವರಿದಿವೆ.
ಮಹಿಳೆಯರ ಸಾಧನೆಯು ಆಶಾದಾಯಕ ಬೆಳವಣಿಗೆ: ಡಾ. ಮೋಹನ ಆಳ್ವ
ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ
ಸಿಎಂ ಸೇರಿದಂತೆ 139 ಶಾಸಕರೂ ನನ್ನ ಬಲ; ಸಿದ್ದರಾಮಯ್ಯ ಅವರು ಶೇ.100ರಷ್ಟು ನನ್ನ ಜತೆಗಿದ್ದಾರೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ‘ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. One man with Courage makes a majority ಎಂಬುದನ್ನು ನಾನು ನಂಬಿದ್ದೇನೆ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ, ಒಬ್ಬನೇ ಸಾಕು. ಆತನ ಜೊತೆ 140 ಜನರೂ ಇರುತ್ತಾರೆ, ಇನ್ನೂ ಜಾಸ್ತಿನೂ ಆಗುತ್ತಾರೆ. ನೋಡೋಣ 2028ರಲ್ಲಿ ಏನಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ‘ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಕ್ಕೆ ತಿರುಗೇಟು ನೀಡಿದರು. ‘ಒಂದು ತಿಂಗಳಿಂದ ಡಿ.ಕೆ.ಶಿವಕುಮಾರ್ ಮಾತು, ಟ್ವೀಟ್ಗಳು ನೂರು ಅರ್ಥ ಬರುವಂತಿದ್ದು, ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ’ ಎಂದು ಆರ್.ಅಶೋಕ್ ಉಲ್ಲೇಖಿಸಿದರು. ಬಳಿಕ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ‘ಅಶೋಕ್ ಅವರೇ, ನೀವು ಹಿರಿಯ ರಾಜಕಾರಣಿ. ಯಾರು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವಿದ್ಯಾರ್ಥಿ ನಾಯಕನಿಂದ ಬೆಳೆದು ಬಂದವನು. ನನ್ನದೇ ಆದ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿದ್ದೇನೆ. ಪಕ್ಷ ನನಗೆ ಚಿಕ್ಕವಯಸ್ಸಿಗೆ ಟಿಕೆಟ್ ಕೊಟ್ಟಿದ್ದು, ಇಲ್ಲಿಯವರೆಗೂ ಬೆಳೆದಿದ್ದೇನೆ. ರಾಜಕೀಯದಲ್ಲಿ ಏಳು-ಬೀಳು ಸಹಜ. ನಾನು ಎಂತೆಂತಹವರ ಏಳು-ಬೀಳು ನೋಡಿದ್ದೇನೆ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ತಿಂಗಳು ಕಳೆದರೆ ನಾನು ಪಕ್ಷದ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತದೆ’ ಎಂದರು. ‘ಸಿಎಂ ಸಿದ್ದರಾಮಯ್ಯ ಸೇರಿದಂತೆ 139 ಶಾಸಕರೂ ನನ್ನ ಬಲ. ಸಿದ್ದರಾಮಯ್ಯ ಅವರು ಶೇ.100ರಷ್ಟು ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ. ನಾವು ಜನಕ್ಕೆ ಮಾತು ಕೊಟ್ಟಿದ್ದು, ಆ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ, ಮುಂದೆಯೂ ನಡೆಯುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಅವರ ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರು ಕಷ್ಟಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ’ ಎಂದು ಹೇಳಿದರು. ‘ನಿಮ್ಮ ಟ್ವೀಟ್ ಅರ್ಥವೇನು’ ಎಂದು ಅಶೋಕ್ ಪುನಃ ಪ್ರಶ್ನಿಸಿದರು. ‘ನೀವು ಟ್ವೀಟ್ ಅನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ’ ಎಂದು ಹೇಳಿದರು. ಯಾರ್ಯಾರೋ ಮಾತನಾಡುವುದಕ್ಕೆ ನಾನು ಉತ್ತರ ನೀಡಲು ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಹಾಗೂ ನಿಮ್ಮ (ಬಿಜೆಪಿ) ಪಕ್ಷದಲ್ಲಿ ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರಕಾರದಲ್ಲಿ ಎಷ್ಟೋ ಸಿಎಂ ಬದಲಾದರು, ಸಚಿವ ಸಂಪುಟಗಳೇ ಬದಲಾದವು. ಹೀಗಾಗಿ ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ, ನೀವು ಸುಮ್ಮನೇ ತಲೆಕೆಡಿಸಿಕೊಳ್ಳಬೇಡಿ’ ಎಂದು ಶಿವಕುಮಾರ್ ವಿವರಣೆ ನೀಡಿದರು.
ರಿಕ್ಷಾ ಢಿಕ್ಕಿ: ಪಾದಚಾರಿ ಮೃತ್ಯು, ಮೂವರಿಗೆ ಗಾಯ
ಬ್ರಹ್ಮಾವರ, ಫೆ.2: ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.1ರಂದು ರಾತ್ರಿ 8ಗಂಟೆ ಸುಮಾರಿಗೆ ಹೇರೂರು ಗ್ರಾಮದ ಕೊಳಂಬೆ ಬಸ್ಸ್ ನಿಲ್ದಾಣದ ಸಮೀಪ ನಡೆದಿದೆ. ಮೃತರನ್ನು 52ನೇ ಹೇರೂರು ಗ್ರಾಮದ ಕೊಳಂಬೆ ನಿವಾಸಿ ರಿಚ್ಚರ್ಡ್ ಡಿಸೋಜ(70) ಎಂದು ಗುರುತಿಸಲಾಗಿದೆ. ರಿಕ್ಷಾ ಚಾಲಕ ಜಗದೀಶ್ ಪೂಜಾರಿ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅವರ ಪತ್ನಿ ಗೌರಿ ಮತ್ತು ಮಗಳು ಜನ್ಯ ಎಂಬವರು ಗಾಯಗೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ರಿಕ್ಷಾ, ರಸ್ತೆಯನ್ನು ದಾಟಲು ರಸ್ತೆ ಬದಿ ನಿಂತಿದ್ದ ರಿಚರ್ಡ್ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ರಿಕ್ಷಾ ರಸ್ತೆಯಲ್ಲಿ ಪಲ್ಟಿಯಾಯಿತ್ತೆನ್ನಲಾಗಿದೆ. ಇದರಲ್ಲಿ ಗಂಭೀರವಾಗಿ ಗಾಯ ಗೊಂಡ ರಿಚರ್ಡ್ ಡಿಸೋಜ, ಫೆ.2ರಂದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ: ಮೂವರು ಆತ್ಮಹತ್ಯೆ
ಮಣಿಪಾಲ, ಫೆ.2: ವೈಯಕ್ತಿಕ ಕಾರಣದಿಂದ ಮನನೊಂದ ಮಣಿಪಾಲದ ಕಲ್ಕುಡ ಅಪಾರ್ಟಮೆಂಟ್ನ ಕೆಳಗಡೆ ಬಾಡಿಗೆ ಮನೆಯ ನಿವಾಸಿ ಗ್ಯಾನೇಂದ್ರ ಖಾತ್ರಿ ಎಂಬವರ ಪತ್ನಿ ಶಾಂತಿ ಖಾತ್ರಿ(25) ಎಂಬವರು ಫೆ.1ರಂದು ಸಂಜೆ ವೇಲೆ ಮನೆಯ ಶೀಟಿನ ರಾಡ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಬ್ರಿ: ಮದ್ಯಪಾನ ಮಾಡುವ ಚಟ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕೆರೆಬೆಟ್ಟು ಗ್ರಾಮದ ಅಸ್ರಂಬಳ್ಳಿ ನಿವಾಸಿ ಜಗದೀಶ್ ಆಚಾರ್ಯ(54) ಎಂಬವರು ಫೆ.1ರಂದು ರಾತ್ರಿ ವೇಳೆ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ: ಅನಾರೋಗ್ಯ ಹಾಗೂ ಪತ್ನಿ ಮಗಳು ತೀರಿಕೊಂಡ ಬಗ್ಗೆ ಚಿಂತೆಯಲ್ಲಿ ಮಾನಸಿಕವಾಗಿ ನೊಂದ ಬೇಳೂರು ಗ್ರಾಮದ ಬಡಾಬೆಟ್ಟು ನಿವಾಸಿ ಶಿವರಾಮ ಶೆಟ್ಟಿ (78) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.2ರಂದು ಬೆಳಗಿನ ಜಾವ ಮನೆಯ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ| ಕಳವು ಪ್ರಕರಣ: 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಉಡುಪಿ: ಮಲ್ಪೆ ಬೀಚ್ನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆಶಾ ಸುಮಿತ್ರ ಕೃಷ್ಣ ಹಾಗೂ ರೇಖಾ ದಾನಪ್ಪ ಬಂಧಿತ ಆರೋಪಿಗಳು. ಇವರು ಮಲ್ಪೆ ಬೀಚ್ನಲ್ಲಿ ಕಳವು ಪ್ರಕರಣ ದಲ್ಲಿ ಭಾಗಿಯಾಗಿ ಸುಮಾರು 11 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಇವರನ್ನು ಮಲ್ಪೆ ಠಾಣಾ ಸಿಬ್ಬಂದಿ ಸುರೇಶ್ ಕುಮಾರ್, ವಿಶ್ವನಾಥ್ ಮತ್ತು ಸಿಂಚನ ಅವರ ತಂಡ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸ ಮನೆ ಎಂಬಲ್ಲಿ ಜ.31ರಂದು ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು. ಇವರನ್ನು ಮಂಗಳೂರು ಕಾರಾಗೃಹಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು, ಫೆ.2: ಭಾರತದ ಗ್ರೀನ್ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯ ತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದ ಚೌಟ ಅವರು, ಕಡಲನಗರಿ ಮಂಗಳೂರಿನ ಸಮುದ್ರ ತೀರದಲ್ಲಿ ಪವನ ಶಕ್ತಿ ಉತ್ಪಾದನೆಗೆ ವಿಪುಲ ಅವಕಾಶವಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ವರದಿಯನ್ನು ಉಲ್ಲೇಖಿಸಿ, ಭಾರತದ ಭರವಸೆಯ ಕಡಲ ಪವನ ಇಂಧನ ‘ವಲಯ-2ರಲ್ಲಿ ಮಂಗಳೂರು ಕರಾವಳಿ’ ಗುರುತಿಸಿಕೊಂಡಿದ್ದು, ಮಂಗಳೂರು ಕರಾವಳಿಯು ಸುಮಾರು 6,490 ಚ.ಕಿಮೀ. ಪ್ರದೇಶವು ಪವನ ಇಂಧನ ಉತ್ಪಾದನೆಗೆ ಹೆಚ್ಚು ಪೂರಕವಾಗಿದೆ. ಇಲ್ಲಿ ಭೂಕಂಪನ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಅಪಾಯ ಕಡಿಮೆ ಇರುವುದರಿಂದ ದೀರ್ಘಕಾಲದ ಪವನ ಇಂಧನ ಯೋಜನೆಗಳ ಸ್ಥಾಪನೆಗೆ ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ಪ್ರದೇಶವಾಗಿದೆ. ಹೀಗಾಗಿ, ಮಂಗಳೂರು ಕಡಲ ತೀರವನ್ನು ಪವನ ಶಕ್ತಿ ಉತ್ಪಾದನೆ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಚೌಟ ಆಗ್ರಹಿಸಿದರು. ನವ ಮಂಗಳೂರು ಬಂದರಿನ ಕಾರ್ಯತಂತ್ರದ ಪ್ರಯೋಜನವನ್ನು ಒತ್ತಿ ಹೇಳಿದ ಚೌಟ ಅವರು, ಅತ್ಯುತ್ತಮ ಮೂಲಸೌಕರ್ಯ, ಬಹು ಬರ್ತ್ಗಳು, ಹೆಚ್ಚಿನ ಸರಕು ನಿರ್ವಹಣಾ ಸಾಮರ್ಥ್ಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಗಳು ಈ ಬಂದರಿನಲ್ಲಿದೆ. ವಿಂಡ್ ಟರ್ಬೈನ್ಗಳಂತಹ ಬೃಹತ್ ಯಂತ್ರೋಪಕರಣಗಳ ಸಾಗಣೆ ಮತ್ತು ಜೋಡಣೆಗೆ ಇಲ್ಲಿ ಪೂರಕ ವ್ಯವಸ್ಥೆಯಿದೆ. ಇದು ಕಡಲ ಪವನ ಇಂಧನ ಯೋಜನೆಗಳ ನಿರ್ವಹಣೆಗೆ ಒಂದು ಪ್ರಮುಖ ಲಾಜಿಸ್ಟಿಕ್ ನೆಲೆಯನ್ನಾಗಿ ಪರಿವರ್ತಿಸಬಹುದು ಎಂದು ಅಭಿಪ್ರಾಯಪಟ್ಟರು. ಎಂಆರ್ ಪಿಎಲ್, ಒಎಂಪಿಎಲ್ , ಯುಪಿಸಿಎಲ್ ಮತ್ತು ಮಂಗಳೂರು ಎಸ್ಇಝಡ್ ನಂತಹ ಬೃಹತ್ ಕೈಗಾರಿಕೆಗಳ ಕೇಂದ್ರವಾಗಿರುವುದರಿಂದ, ಇಲ್ಲಿ ತಯಾರಾಗುವ ಗ್ರೀನ್ ಎನರ್ಜಿಗೂ ಸ್ಥಳೀಯವಾಗಿಯೇ ದೊಡ್ಡ ಮಟ್ಟದ ಮಾರುಕಟ್ಟೆ ಲಭ್ಯವಿದೆ. ಹೀಗಾಗಿ ಕಡಲ ಪವನ ಶಕ್ತಿಯ ಉತ್ಪಾದನೆಯಾಗುವ ವಿದ್ಯುತ್ನ್ನು ನೇರವಾಗಿ ಮಾರಾಟ ಮಾಡಲು ಸುಲಭವಾಗುತ್ತದೆ. ಇವುಗಳೊಂದಿಗೆ ನೇರ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿ ಕೊಳ್ಳುವ ಮೂಲಕ ಯೋಜನೆಯ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ತ್ವರಿತ ಅನುಷ್ಠಾನಕ್ಕೂ ಇದು ಸಹಕಾರಿ ಎಂದು ಚೌಟ ಪ್ರತಿಪಾದಿಸಿದ್ದಾರೆ. ಕರ್ನಾಟಕಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದು, 2025ರ ಆರಂಭದಲ್ಲಿ ರಾಜ್ಯದ ಗರಿಷ್ಠ ವಿದ್ಯುತ್ ಬೇಡಿಕೆಯು 18,000 ಮೆಗಾವ್ಯಾಟ್ ದಾಟಿದ್ದು, ಇಂಥಹ ಸಂದರ್ಭದಲ್ಲಿ ಪರ್ಯಾಯ ಇಂಧನ ಉತ್ಪಾದಿಸುವ ಪವನ ಶಕ್ತಿಯನ್ನು ಉತ್ತೇಜಿ ಸುವ ಅಗತ್ಯವಿದೆ. ಕರ್ನಾಟಕದ ಕರಾವಳಿಯಲ್ಲಿ ಗಾಳಿಯ ವೇಗವು ತುಲನಾತ್ಮಕವಾಗಿ ಕಡಿಮೆ ಇದ್ದರೂ, ಅರಬ್ಬಿ ಸಮುದ್ರದಲ್ಲಿ ಕಡಲಾಚೆಯ ಗಾಳಿ ಇಂಧನ ಅಭಿವೃದ್ಧಿಪಡಿಸುವುದು ದಕ್ಷಿಣ ಭಾರತದ ಇಂಧನ ಭದ್ರತೆಗೆ ಅತ್ಯಗತ್ಯ ವಾಗಿದೆ. ಜೊತೆಗೆ ಬಂಗಾಳ ಕೊಲ್ಲಿಯು ಸದಾ ಚಂಡಮಾರುತದ ಭೀತಿ ಎದುರಿಸುತ್ತಿರುವುದರಿಂದ, ಅರಬ್ಬಿ ಸಮುದ್ರದ ಈ ವಲಯವು ಪವನ ಶಕ್ತಿಯ ಬಲವರ್ಧನೆಗೆ ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. 2030ರ ವೇಳೆಗೆ 500 ಜಿಡಬ್ಲ್ಯು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಭಾರತದ ಗುರಿಯನ್ನು ತಲುಪಲು ಮಂಗಳೂರು ಪವನ ಶಕ್ತಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ತಕ್ಷಣವೇ ಸಂಪನ್ಮೂಲಗಳ ಮೌಲ್ಯಮಾಪನ, ಯೋಜನೆಗಳ ಪ್ರಾಯೋಗಿಕ ಅನುಷ್ಠಾನ ಮತ್ತು ಕೈಗಾರಿಕಾ ಸಮಾಲೋಚನೆ ಗಳನ್ನು ನಡೆಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನವೀಕರಿಸಬಹುದಾದ ಇಂಧನ ಸಚಿವಾಲಯವನ್ನು ಸಂಸದ ಚೌಟ ಅವರು ಸದನದಲ್ಲಿ ಆಗ್ರಹಿಸಿದರು.
ಫೆ.12: ಕೇಂದ್ರ ಸರಕಾರದ 4 ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಜೆಸಿಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಉಡುಪಿ, ಜ.2: ದೇಶದ ಕೋಟ್ಯಾಂತರ ಮಂದಿ ಕಾರ್ಮಿಕರನ್ನು ಮಾಲಕರ ಗುಲಾಮರನ್ನಾಗಿಸುವ ಕೇಂದ್ರದ ನಾಲ್ಕು ನೂತನ ಕಾಮಿಕ ಸಂಹಿತೆಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಒಂದು ದಿನ ಬೃಹತ್ ಪ್ರತಿಭಟನೆಯನ್ನು ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಫೆ.12ರಂದು ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊ ಳ್ಳಲಾಗುವುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ. ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಕಾರ್ಮಿಕ ಸಂಘಟನೆ ಬಿಎಂಎಸ್ನ್ನು ಹೊರತು ಪಡಿಸಿ ದೇಶದ ಎಲ್ಲಾ 10 ಪ್ರಮುಖ ಕಾರ್ಮಿಕ ಸಂಘಟನೆಗಳು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಅಲ್ಲದೇ ರೈತ, ಕಾರ್ಮಿಕ, ಕೃಷಿ ಕೂಲಿಕಾರ, ಮಹಿಳಾ, ವಿದ್ಯಾರ್ಥಿ-ಯುವಜನ, ವಿಮಾ, ಬ್ಯಾಂಕ್ ನೌಕರರ ಸಂಘಗಳು, ದಲಿತ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲವನ್ನು ಸಾರಿವೆ ಎಂದು ಹೇಳಿದರು. ದೇಶದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರ ಅವುಗಳನ್ನು 4 ಕಾರ್ಮಿಕ ಸಂಹಿತೆಗಳನ್ನಾಗಿಸಿ ಕಳೆದ ನವೆಂಬರ್ 21ರಂದು ಅಧಿಕೃತವಾಗಿ ಜಾರಿಗೊಳಿಸುವ ಪ್ರಕಟಣೆ ನೀಡಿದೆ. ಈ ಸಂಹಿತೆಗಳು 2019 ಮತ್ತು 2020ರಲ್ಲೇ ಲೋಕಸಭೆಯಲ್ಲಿ ಪಾಸಾಗಿದ್ದರೂ, ದೇಶಾದ್ಯಂತ ಕಾರ್ಮಿಕ ವರ್ಗ ಇವುಗಳ ವಿರುದ್ಧ ನಡೆಸಿದ ಸತತ ಹೋರಾಟ ದಿಂದ ಅದನ್ನು ಜಾರಿಗೊಳಿಸಲು ಸಾದ್ಯವಾಗಿರಲಿಲ್ಲ ಎಂದವರು ಹೇಳಿದರು. ಆದರೆ ಇದೀಗ ಕೇಂದ್ರದ ಬಿಜೆಪಿ ಸರಕಾರ ಕಾರ್ಪೋರೇಟ್ ಕಂಪೆನಿಗಳ ಹಾಗೂ ಬಂಡವಾಳಗಾರರ ಒತ್ತಡದಿಂದ ಈ ಎಲ್ಪಿಜಿ ನೀತಿಗಳನ್ನು ಆದ್ಯತೆ ಮೇಲೆ ಜಾರಿಗೊಳಿಸಲು ಮುಂದಾಗಿವೆ. ಇದರಿಂದಾಗಿ ವಿದ್ಯುತ್, ದೂರ ಸಂಪರ್ಕ, ಕಲ್ಲಿದ್ದಲು, ಗಣಿಗಾರಿಕೆ, ರೈಲ್ಲ, ಹೆದ್ದಾರಿ, ಬಂದರುಗಳೆಲ್ಲವೂ ಖಾಸಗಿ ಕಾರ್ಪೋರೇಟ್ ಕಂಪೆನಿಗಳಿಗೆ ವರ್ಗಾಯಿಸಲಾಗುತ್ತಿದೆ ಎಂದರು. ಬಿಜೆಪಿ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆ ಜಾರಿಗೊಂಡರೆ ಬಂಡವಾಳಶಾಹಿಗಳಿಗೆ ಅಗ್ಗದ ದರದಲ್ಲಿ ಕಾರ್ಮಿಕರನ್ನು ಮಾರಾಟ ಮಾಡಲು ಅವಕಾಶವಿದೆ. ಇದರಿಂದ ಶ್ರೀಮಂತರು ಹಾಗೂ ಬಡವರ ನಡುವಿನ ಅಸಮಾನತೆ ಇನ್ನಷ್ಟು ಹೆಚ್ಚುವುದು ಖಂಡಿತ ಎಂದು ಸುರೇಶ್ ಕಲ್ಲಾಗರ ಹೇಳಿದರು. ಜೆಟಿಸಿ ಉಡುಪಿ ಜಿಲ್ಲಾ ಸಮಿತಿಯ ಸಂಚಾಲಕ ಕವಿರಾಜ್ ಕಾಂಚನ್ ಮಾತನಾಡಿ, ಫೆ.12ರಂದು ಉಡುಪಿ ಜಿಲ್ಲೆಯ ಉಡುಪಿ ಅಜ್ಜರಕಾಡು ಹುತಾತ್ಮ ಚೌಕದ ಬಳಿ (ಬೆಳಗ್ಗೆ 10:30), ಕಾರ್ಕಳ ಬಸ್ ನಿಲ್ದಾಣದ ಬಳಿ (10:00), ಕುಂದಾಪುರದ ಸ್ತ್ರ ಸರ್ಕಲ್ ಬಳಿ (9:30) ಹಾಗೂ ಬೈಂದೂರಿನ ತಹಶೀಲ್ದಾರ್ ಕಚೇರಿ ಎದುರು (9:30)ಕ್ಕೆ ಪ್ರತಿಭಟನೆ ನಡೆಯಲಿದೆ ಎಂದರು. ಉಡುಪಿಯಲ್ಲಿ ಬೆಳಗ್ಗೆ 9:30ಕ್ಕೆ ಜೆಸಿಟಿ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಹಳ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯಿಂದ ಪ್ರಾರಂಭಗೊಂಡು ಕೆಎಂ ಮಾರ್ಗ, ಕೋರ್ಟ್ ರೋಡ್, ಜೋಡುಕಟ್ಟೆ ಮಾರ್ಗವಾಗಿ ಸಾಗಿ ಅಜ್ಜರಕಾಡು ಹುತಾತ್ಮ ಚೌಕದ ಬಳಿ ಮುಕ್ತಾಯಗೊಂಡು ಅಲ್ಲೇ ಬಹಿರಂಗ ಸಭೆ ನಡೆಯಲಿದೆ ಎಂದರು. ಪತ್ರಿಕಾಗೋಷಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಇಂಟಕ್ನ ಕಿರಣ್ ಹೆಗ್ಡೆ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ವಿ, ಎಐಟಿಯುಸಿಯ ಯು.ಶಿವಾನಂದ ಉಪಸ್ಥಿತರಿದ್ದರು.
ಫೆ.8: ಮಣಿಪಾಲ ಮ್ಯಾರಥಾನ್ಗೆ 22,000ಕ್ಕೂ ಅಧಿಕ ಕ್ರೀಡಾಳುಗಳು
ಉಡುಪಿ, ಫೆ.2: ರಾಷ್ಟ್ರ ಮಟ್ಟದ ಮಾನ್ಯತೆ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸ್ಪಟ್ಟಿರುವ ‘ಮಣಿಪಾಲ ಮ್ಯಾರಥಾನ್’ನ ಎಂಟನೇ ಆವೃತ್ತಿ ಇದೇ ಫೆ.8ರಂದು ಮಣಿಪಾಲ ಕೆಎಂಸಿ ಗ್ರೀನ್ಸ್ನಲ್ಲಿ ನಡೆಯಲಿದ್ದು, ಈ ಬಾರಿ ದಾಖಲೆಯ 22,000ಕ್ಕೂ ಅಧಿಕ ಓಟಗಾರರು ವಿದೇಶಗಳಿಂದ ಹಾಗೂ ದೇಶಾದ್ಯಂತದಿಂದ ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ. ಮಣಿಪಾಲದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 42ಕಿ.ಮೀ.ಗಳ ಫುಲ್ ಮ್ಯಾರಥಾನ್, 21 ಕಿ.ಮೀ.ನ ಹಾಫ್ ಮ್ಯಾರಥಾನ್, 10ಕಿ.ಮೀ, 5ಕಿ.ಮೀ. ಹಾಗೂ ಮೂರು ಕಿ.ಮೀ. ವಿಭಾಗಗಳಲ್ಲಿ ವಿವಿಧ ವಯೋಮಾನದವರಿಗೆ ಸ್ಪರ್ಧೆಗಳು ನಡೆಯಲಿವೆ ಎಂದರು. ‘ಹಸಿರು ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಓಟ’ ಎಂಬ ಸಂದೇಶದಡಿ ಈ ಬಾರಿ ಮ್ಯಾರಥಾನ್ ನಡೆಯಲಿದ್ದು, ಫೆ.8ರ ರವಿವಾರ ಮುಂಜಾನೆ 5:00ಗಂಟೆಗೆ ಕೆಎಂಸಿ ಗ್ರೀನ್ಸ್ನಲ್ಲಿ ಫುಲ್ ಮ್ಯಾರಥಾನ್ಗೆ ಚಾಲನೆ ನೀಡಲಾ ಗುವುದು ಎಂದ ಅವರು ಹಾಫ್ ಮ್ಯಾರಥಾನ್ ಅಲ್ಲಿಂದಲೇ ಬೆಳಗ್ಗೆ 5:30ಕ್ಕೆ ಪ್ರಾರಂಭಗೊಳ್ಳಲಿದೆ. 6:00ಗಂಟೆಗೆ 10ಕಿ.ಮೀ., 6:20ಕ್ಕೆ 5ಕಿ.ಮೀ. ಹಾಗೂ 7:30ಕ್ಕೆ ಮೂರು ಕಿ.ಮೀ. ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಾಗುತ್ತದೆ. ವಿಶೇಷ ಚೇತನರಿಗಾಗಿ ಹಮ್ಮಿಕೊಂಡಿರುವ ಓಟಕ್ಕೆ 8:30ಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ ಎಂದು ಡಾ.ಬಲ್ಲಾಳ್ ವಿವರಿಸಿದರು. ಎಲ್ಲಾ ವಿಭಾಗಗಳಲ್ಲೂ ಒಟ್ಟಾರೆಯಾಗಿ ದಾಖಲೆಯ 22,000ಕ್ಕೂ ಅಧಿಕ ಮಂದಿ ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಫುಲ್ ಮ್ಯಾರಥಾನ್ನಲ್ಲಿ ದುಬಾಯಿ, ಇಂಗ್ಲೆಂಡ್, ಇಥಿಯೋಪಿಯಾ, ಜರ್ಮನಿ, ಜಪಾನ್, ಕಿನ್ಯಾ, ಮಲೇಷಿಯಾ, ನೇಪಾಳ, ಶ್ರೀಲಂಕಾ, ಅಮೆರಿಕ ಸೇರಿದಂತೆ ಇನ್ನೂ ಅನೇಕ ದೇಶಗಳ 100ಕ್ಕೂ ಅಧಿಕ ಮಂದಿ ಹೆಸರು ನೊಂದಾಯಿಸಿ ಕೊಂಡಿದ್ದಾರೆ ಎಂದರು. ಮಣಿಪಾಲ ಮ್ಯಾರಥಾನ್ನ ವಿಜೇತರಿಗೆ 25ಲಕ್ಷ ರೂ.ಗಳಿಗೂ ಅಧಿಕ ಬಹುಮಾನ ಮೊತ್ತವನ್ನು ನೀಡಲಾಗುತ್ತದೆ. ಫುಲ್ ಮ್ಯಾರಥಾನ್ನಲ್ಲಿ ಮೊದಲಿಗರಾಗಿ ಗುರಿತಲುಪುವ ಪುರುಷ ಮತ್ತು ಮಹಿಳಾ ಅಥ್ಲೀಟ್ಗೆ ತಲಾ 1,00,000ರೂ. ನಗದು ಬಹುಮಾನವಿರುತ್ತದೆ. ರನ್ನರ್ಅಪ್ಗೆ ತಲಾ 75,000ರೂ., ತೃತೀಯ ಸ್ಥಾನಿಗೆ 50,000ರೂ.ನಗದು ಬಹುಮಾನ ದೊರೆಯಲಿದೆ ಎಂದು ಮಾಹೆಯ ಕ್ರೀಡಾ ಸಮಿತಿಯ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ತಿಳಿಸಿದರು. ಅದೇರೀತಿ 21ಕಿ.ಮೀ.ಗಳ ಹಾಫ್ ಮ್ಯಾರಥಾನ್ನ ಎರಡೂ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವ ವರು ತಲಾ 50,000ರೂ., 30,000ರೂ. ಹಾಗೂ 20,000ರೂ. ಗೆಲ್ಲಲಿದ್ದಾರೆ. 10ಕಿ.ಮೀ.ನ ವಿಜೇತರಿಗೆ ಕ್ರಮವಾಗಿ 20ಸಾವಿರ, 15 ಸಾವಿರ ಹಾಗೂ 10ಸಾವಿರ ರೂ. ನಗದು ಬಹುಮಾನಗಳಿವೆ. 5ಕಿ.ಮೀ. ಓಟದ ವಿಜೇತರಿಗೆ ಕ್ರಮವಾಗಿ 10ಸಾವಿರ, 7ಸಾವಿರ ಹಾಗೂ 5ಸಾವಿರ ರೂ. ದೊರೆಯಲಿದೆ. ಅಲ್ಲದೇ 40ವರ್ಷ ಮೇಲ್ಪಟ್ಟವರಿಗೆ, 50 ವರ್ಷ ಮೇಲ್ಪಟ್ಟವರಿಗೆ ಹಾಗೂ 60ವರ್ಷ ಮೇಲ್ಪಟ್ಟವರಿಗೂ ಪ್ರತ್ಯೇಕ ಬಹುಮಾನಗಳಿರುತ್ತವೆ ಎಂದು ಡಾ.ನಾಯಕ್ ವಿವರಿಸಿದರು. ಫುಲ್ ಮ್ಯಾರಥಾನ್ ಮಾಹೆ ಗ್ರೀನ್ಸ್ನಿಂದ ಪ್ರಾರಂಭಗೊಂಡು ಪೆರಂಪಳ್ಳಿ, ಅಂಬಾಗಿಲು, ಸಂತೆಕಟ್ಟೆ, ಕೆಮ್ಮಣ್ಣು, ಹೂಡೆ, ಮಲ್ಪೆ ಬೀಚ್, ಕಲ್ಮಾಡಿ, ಕಿದಿಯೂರು, ಉದ್ಯಾವರ, ಕಿನ್ನಿಮೂಲ್ಕಿ , ಉಡುಪಿ, ಕಲ್ಸಂಕ ಮಾರ್ಗವಾಗಿ ಮಾಹೆ ತಲುಪಲಿದೆ. 10ಕಿ.ಮೀ. ಓಟವನ್ನು ವಿಶೇಷವಾಗಿ ಕೊಳಲಗಿರಿ ಹಾವಂಜೆ ಬಳಿ ನಿರ್ಮಿಸಿರುವ ಮಣಿಪಾಲ ಹಾಸ್ಪಿಸ್ ಆ್ಯಂಡ್ ರಿಸ್ಪೈಟ್ ಕೇಂದ್ರದ ಮೂಲಕ ಓಡಿಸಲಾಗುವುದು ಎಂದು ಡಾ.ಶರತ್ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯಶಪಾಲ್ ಸುವರ್ಣ, ಮಾಹೆಯ ಅಧಿಕಾರಿಗಳಾದ ಡಾ.ನಾರಾಯಣ ಸಭಾಹಿತ್, ಡಾ.ಗಿರಿಧರ್ ಕಿಣಿ ಮುಂತಾದವರು ಉಪಸ್ಥಿತರಿದ್ದರು. ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ ಕಳೆದ ನವೆಂಬರ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆದ ಮೊದಲ ಅಂಧ ಮಹಿಳೆಯರ ಟ್ವೆಂಟಿ20 ವಿಶ್ವಕಪ್ ಕ್ರಿಕೆಟ್ನ್ನು ಗೆದ್ದುಕೊಂಡಿರುವ ಭಾರತೀಯ ಮಹಿಳಾ ತಂಡವನ್ನು ಫೆ.7ರಂದು ಸಂಜೆ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿ ವ್ಯೂ ನಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಮಾಹೆಯ ಕುಲಪತಿಗಳಾದ ಲೆ.ಜ.ಡಾ. ಎಂ.ಡಿ.ವೆಂಕಟೇಶ್ ತಿಳಿಸಿದರು. ದೈಹಿತ ನ್ಯೂನತೆಯ ಹೊರತಾಗಿಯೂ ಭಾರತೀಯ ಮಹಿಳೆಯರು ತೋರಿದ ದಿಟ್ಟ ಪ್ರದರ್ಶನವನ್ನು ಪ್ರೋತ್ಸಾಹಿ ಸುವ ದೃಷ್ಟಿಯಿಂದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಸನ್ಮಾನಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಗುವಾಹಾಟಿ: ಒಡಿಶಾ ಪರಬ್ 2026 ಸಮಾಪ್ತಿ: ಈಶಾನ್ಯ ಭಾರತದೊಂದಿಗೆ ಸಾಂಸ್ಕೃತಿಕ, ಪ್ರವಾಸೋದ್ಯಮ, ವ್ಯಾಪಾರ ಬಾಂಧವ್ಯ ಬಲ
Odisha Parab 2026: ಒಡಿಶಾ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ಒಡಿಶಾ ಪರಬ್ 2026 ಎನ್ನುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ. ಮೂರು ದಿನಗಳ ಕಾಲ ನಡೆದ ಈ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಪ್ರದರ್ಶನವು ಒಡಿಶಾ ಮತ್ತು ಈಶಾನ್ಯ ಭಾರತದ ನಡುವೆ ಸಾಂಸ್ಕೃತಿಕ ಬಾಂಧವ್ಯ, ಅನಿವಾಸಿ (ವಲಸಿಗರು) ಸಮುದಾಯದ ಸಂಪರ್ಕ ಹಾಗೂ ಪ್ರವಾಸೋದ್ಯಮ ಮತ್ತು
ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾದ ನರವಾಣೆ ಅವರ ಅಪ್ರಕಟಿತ ಪುಸ್ತಕದಲ್ಲೇನಿದೆ?
ರಾಜನಾಥ್ ಸಿಂಗ್ , ರಾಹುಲ್ ಗಾಂಧಿ | Photo Credit : PTI ಕಾರವಾನ್ ಲೇಖನದಲ್ಲಿ ಮುಖ್ಯವಾಗಿ ಉಲ್ಲೇಖಿಸಲಾಗಿರುವ ವಿವಾದಾತ್ಮಕ ಪುಸ್ತಕದ ಕೆಲವು ಭಾಗಗಳಲ್ಲಿ 2020 ಆಗಸ್ಟ್ 31ರಂದು ನರವಾಣೆ ಕರ್ತವ್ಯದಲ್ಲಿರುವಾಗ ಎದುರಿಸಿದ ಹತಾಶ ಚಿತ್ರಣವನ್ನು ವಿವರಿಸಲು ಪ್ರಯತ್ನಿಸಿದೆ. ಲೋಕಸಭೆಯಲ್ಲಿ ಸೋಮವಾರ ನಡೆದ ಇಡೀ ಚರ್ಚೆಯು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ” ಎನ್ನುವ ಅಪ್ರಕಟಿತ ಪುಸ್ತಕದ ಸುತ್ತ ತಿರುಗಿದೆ. ಪೆಂಗ್ವಿನ್ ಬುಕ್ಸ್ ಸಂಸ್ಥೆಯ ಪ್ರಕಾಶಿತ ಪ್ರಶ್ನಾರ್ಹ ಆತ್ಮಚರಿತ್ರೆ 2024ರಲ್ಲಿ ಬಿಡುಗಡೆಯಾಗಬೇಕತ್ತು. ಅಮೆಝಾನ್ ಪುಸ್ತಕದ ಪಟ್ಟಿಯಲ್ಲಿದ್ದರೂ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಫೆ.1ರಂದು ‘ದಿ ಕಾರವಾನ್’ ನಿಯತಕಾಲಿಕೆಯು “ನರವಾಣೆಯ ಸತ್ಯದ ಕ್ಷಣ” ಎನ್ನುವ ಶೀರ್ಷಿಕೆಯಡಿ ಲೇಖನವನ್ನು ಪ್ರಕಟಿಸುವ ಮೂಲಕ ಮರೆತು ಹೋಗಿರುವ ಪುಸ್ತಕದ ಚರ್ಚೆಯನ್ನು ಮತ್ತೆ ಮುಂಚೂಣಿಗೆ ತಂದಿದೆ. ಲೇಖನದ ಸಾರಾಂಶ ಪಠ್ಯವು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೇರವಾಗಿ ಉಲ್ಲೇಖಿಸಿರುವುದು ಆರೋಪ- ಪ್ರತ್ಯಾರೋಪಗಳ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. “ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯು ಕೇಂದ್ರ ಸರ್ಕಾರವು ಚೀನಾ ಗಡಿ ಬಿಕ್ಕಟ್ಟನ್ನು ಹೇಗೆ ತಿರುಚಿದೆ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ಸಾರಾಂಶದಲ್ಲಿ ಹೇಳಲಾಗಿದೆ. ಮನೋಜ್ ಮುಖಂದ್ ನರವಾಣೆಯವರು ತಮ್ಮ ಅನುಭವವನ್ನು ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ ಎಂದು ಲೇಖನ ಹೇಳಿದೆ. ಇದೀಗ ನಿವೃತ್ತ ಭಾರತೀಯ ಸೇನಾ ಜನರಲ್ ಆಗಿರುವ ನರವಾಣೆ 2019ರ ಡಿಸೆಂಬರ್ನಿಂದ 2022 ಎಪ್ರಿಲ್ ನಡುವೆ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿದ್ದರು. ಕಾರವಾನ್ ಲೇಖನದಲ್ಲಿ ಮುಖ್ಯವಾಗಿ ಉಲ್ಲೇಖಿಸಲಾಗಿರುವ ವಿವಾದಾತ್ಮಕ ಪುಸ್ತಕದ ಕೆಲವು ಭಾಗಗಳಲ್ಲಿ 2020 ಆಗಸ್ಟ್ 31ರಂದು ನರವಾಣೆ ಕರ್ತವ್ಯದಲ್ಲಿರುವಾಗ ಎದುರಿಸಿದ ಹತಾಶ ಚಿತ್ರಣವನ್ನು ವಿವರಿಸಲು ಪ್ರಯತ್ನಿಸಿದೆ. “ಫೂರ್ವ ಲಡಾಖ್ನಲ್ಲಿ ನಾಲ್ಕು ಚೀನೀ ಟ್ಯಾಂಕ್ಗಳು ಪದಾತಿ ಸೈನ್ಯದ ಬೆಂಬಲದೊಂದಿಗೆ ರೆಚಿನ್ ಲಾ ಕಡೆಗೆ ಕಡಿದಾದ ಪರ್ವತದ ಹಾದಿಯಲ್ಲಿ ಮುಂದೆ ಬರಲಾರಂಭಿಸಿದ್ದವು. ವಿವಾದಿತ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಈ ಚಲನವಲನವನ್ನು ಲೆಫ್ರಿನೆಂಟ್ ಜನರಲ್ ಯೋಗೇಶ್ ಜೋಶಿ ಆಗಿನ ಸೇನಾ ಮುಖ್ಯಸ್ಥರಿಗೆ ವರದಿ ಮಾಡಿದ್ದಾರೆ” ಎಂದು ನಿಯತಕಾಲಿಕದ ಲೇಖನ ತಿಳಿಸಿದೆ. “ಸೇನಾ ಮುಖ್ಯಸ್ಥರು ತಕ್ಷಣ ನಾಯಕರಿಗೆ ಕರೆ ಮಾಡಲಾರಂಭಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮೊದಲಾದವರಿಗೆ ಕರೆ ಮಾಡಿದ್ದಾರೆ” ಎಂದು ಕಾರವಾನ್ ಲೇಖನ ಹೇಳಿದೆ. ಈ ಮೊದಲು ಇಂಡಿಯನ್ ಎಕ್ಸ್ಪ್ರೆಸ್ ಕೂಡ ವರದಿ ಮಾಡಿರುವಂತೆ ರಾಜನಾಥ್ ಸಿಂಗ್ ಅವರು ಪ್ರಧಾನಿ ಮೋದಿಯವರ ಅನುಮೋದನೆಯನ್ನು ತಿಳಿಸಿದ್ದು, ಆಗಿನ ಸೇನಾ ಮುಖ್ಯಸ್ಥರಿಗೆ “ನಿಮಗೆ ಏನು ಸೂಕ್ತವೆಂದು ಅನಿಸುತ್ತದೆಯೋ ಅದನ್ನು ಮಾಡಿ (Jo ucchit samjho woh karo)” ಎಂದು ಹೇಳಿದ್ದಾರೆ. #WATCH | Delhi: Lok Sabha LoP and Congress MP Rahul Gandhi says, This is not me, this is what the Army Chief (former) has written in a book. The book is not being allowed to be published. It is languishing, and this is the Army Chief's perspective. Why are they so scared of the… pic.twitter.com/GnWYRAPYIA — ANI (@ANI) February 2, 2026 ನರವಾಣೆ ಪುಸ್ತಕ ಪ್ರಕಟವಾಗದೆ ಇರಲು ಕಾರಣವೇನು? ಅತ್ಯಂತ ಸೂಕ್ಷ್ಮವಾದ ಸೇನಾ ಕಾರ್ಯಾಚರಣೆಗಳು ಮತ್ತು ಅದನ್ನು ಸರ್ಕಾರ ನಿಭಾಯಿಸಿರುವ ರೀತಿಯ ಕುರಿತ ವಿವರಗಳನ್ನು ಬಹಿರಂಗಪಡಿಸಿದ ಕಾರಣದಿಂದ ಪುಸ್ತಕದ ಬಿಡುಗಡೆ ಅನಿಶ್ಚಿತತೆಯಲ್ಲಿರುವುದರಿಂದ ನರವಾಣೆಯ ಮೊದಲ ಪುಸ್ತಕ ವಿವಾದಕ್ಕೆ ಸಿಲುಕಿದೆ. ಒಂದು ಪುಸ್ತಕದಲ್ಲಿ ಸೂಕ್ಷ್ಮ ಮಾಹಿತಿ ಇರುವಾಗ ಅದರ ಸಾರ್ವಜನಿಕ ಬಿಡುಗಡೆಗೆ ಸರ್ಕಾರದ ಅನುಮೋದನೆಗೆ ಕಾಯುವುದು ಸಾಮಾನ್ಯ ಕಾರ್ಯವಿಧಾನವಾಗಿದ್ದರೂ, ಒಂದು ವರ್ಷಕ್ಕೂ ಹೆಚ್ಚು ಅವಧಿ ಕಳೆದರೂ ಪುಸ್ತಕವನ್ನು ಇನ್ನೂ ಪ್ರಕಟಿಸಲಾಗಿಲ್ಲ. ನರವಾಣೆಯ ಆತ್ಮಚರಿತ್ರೆ ರಕ್ಷಣಾ ಸಚಿವಾಲಯದ ಆದೇಶದ ಮೇರೆಗೆ ಪರಿಶೀಲನೆಗೆ ಒಳಗಾಗುತ್ತಿದೆ ಎಂದು ಹೇಳಲಾಗಿದೆ. ಆತ್ಮಚರಿತ್ರೆಯಲ್ಲಿ 2022ರ ಅಗ್ನಿಪಥ್ ನೇಮಕಾತಿ ಯೋಜನೆಯ ಕುರಿತಂತೆ ಅಭಿಪ್ರಾಯಗಳನ್ನೂ ಸಹ ಒಳಗೊಂಡಿದೆ ಎಂದು ವರದಿಯಾಗಿದೆ. ತಮ್ಮ ಪುಸ್ತಕ ಪ್ರಕಟವಾಗದೆ ಇರುವ ಬಗ್ಗೆ ನರವಾಣೆ ಬಹಿರಂಗವಾಗಿ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, “ನನ್ನ ಕೆಲಸ ಪುಸ್ತಕ ಬರೆಯವುದು ಮಾತ್ರವಾಗಿದೆ. ಅದನ್ನು ಪ್ರಕಟಿಸುವ ಜವಾಬ್ದಾರಿ ಪ್ರಕಾಶಕರದ್ದು” ಎಂದು ಹೇಳಿದ್ದಾರೆ. “ರಕ್ಷಣಾ ಸಚಿವಾಲಯದ ಬಳಿ ಅನುಮೋದನೆ ಕೇಳುವುದು ನನ್ನ ಕೆಲಸವಲ್ಲ. ಇದೀಗ ಪುಸ್ತಕ ಪ್ರಕಾಶಕರು ಮತ್ತು ರಕ್ಷಣಾ ಸಚಿವಾಲಯದ ಮುಂದೆ ಇದೆ. ಸಚಿವಾಲಯಕ್ಕೆ ಒಪ್ಪಿಗೆಯಾದಾಗ ಅನುಮೋದನೆ ನೀಡಬಹುದು” ಎಂದು ಅವರು ಹೇಳಿದ್ದರು.
ಬಳ್ಳಾರಿ | ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ
ಬಳ್ಳಾರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ, ನಗರದ ಶ್ರೀ ಕೋಟೆ ಮಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಮೂರು ದಿನಗಳ (ಫೆ.1ರಿಂದ 3ರವರೆಗೆ) ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಹಾರೀಸ್ ಸುಮೇರ್ ಅವರು ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಮೇಳದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ತಯಾರಿಸಿದ ವಿವಿಧ ಬಗೆಯ ಕೈಗಾರಿಕಾ ಹಾಗೂ ಗೃಹೋಪಯೋಗಿ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ. ರವಿಕುಮಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಜಿಪಂ ಯೋಜನಾ ನಿರ್ದೇಶಕ ಬಸವರಾಜ ಹಿರೇಮಠ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿನೋದ್ ಕುಮಾರ್ ಸೇರಿದಂತೆ ಎನ್ಆರ್ಎಲ್ಎಂ ಯೋಜನೆಯ ಸಿಬ್ಬಂದಿಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳು ಉಪಸ್ಥಿತರಿದ್ದರು.
‘ಬಂಗ ಭವನ’ದಲ್ಲಿ ಎಸ್ಐಆರ್ ಸಂತ್ರಸ್ತ ನಿವಾಸಿಗಳಿಗೆ ದಿಲ್ಲಿ ಪೊಲೀಸರಿಂದ ಕಿರುಕುಳ, ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ
ಹೊಸದಿಲ್ಲಿ: ದಿಲ್ಲಿಯಲ್ಲಿರುವ ‘ಬಂಗ ಭವನ’ದ ಹೊರಗಡೆ ಭಾರೀ ಪ್ರಮಾಣದಲ್ಲಿ ಪೊಲೀಸರ ನಿಯೋಜನೆ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ನೀಡಲಾಗುತ್ತಿದೆ ಎನ್ನಲಾದ ಕಿರುಕುಳವನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರತಿಭಟಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗ ಭವನದಲ್ಲಿ ವಾಸಿಸುತ್ತಿರುವ ಪಶ್ಚಿಮ ಬಂಗಾಳದ ಜನರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಿದರು ಹಾಗೂ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ನಿಯೋಜನೆಯನ್ನು ಪ್ರಶ್ನಿಸಿದರು. ಆದರೆ, ನಾನು ಪೊಲೀಸರನ್ನು ದೂರುವುದಿಲ್ಲ, ನಾನು ದೂರುವುದು ‘‘ಮೇಲಿನವರನ್ನು’’ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ರನ್ನು ಭೇಟಿಯಾಗಲು ಮಮತಾ ಬ್ಯಾನರ್ಜಿ ರವಿವಾರ ಹೊಸದಿಲ್ಲಿಗೆ ಬಂದಿದ್ದಾರೆ. ಅವರು ಹೊಸದಿಲ್ಲಿಯಲ್ಲಿರುವ ಪಶ್ಚಿಮಬಂಗಾಳ ಸರಕಾರದ ಅತಿಥಿಗೃಹ ಬಂಗ ಭವನದಲ್ಲಿ ತಂಗಿದ್ದಾರೆ. ಕಟ್ಟಡದ ಹೊರಗೆ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ನಾನಿಲ್ಲಿಗೆ ಬಂದಿರುವುದು ಪ್ರತಿಭಟನೆ ನಡೆಸಲು ಅಲ್ಲ, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳಿಗೆ ನ್ಯಾಯ ಕೊಡಿಸುವುದಕ್ಕಾಗಿ ಎಂದು ಅವರು ಹೇಳಿದರು. ‘‘ಪಶ್ಚಿಮಬಂಗಾಳದ ಜನರಿಗೆ ಬಂಗ ಭವನದಲ್ಲಿ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ದಾವೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ನಮಗೆ ಚುನಾವಣಾ ಆಯೋಗವನ್ನು ಭೇಟಿಯಾಗಲಿಕ್ಕಿದೆ. ಅಧಿಕೃತ ಅನುಮೋದನೆ ಪಡೆದುಕೊಂಡೇ ನಾವು ಇಲ್ಲಿಗೆ ಬಂದಿದ್ದೇವೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರಣಕ್ಕಾಗಿ ಜನರು ಮೃತರಾಗಿದ್ದಾರೆ. ಅವರ ಕುಟುಂಬಗಳು ಮಾಧ್ಯಮಗಳೊಂದಿಗೆ ಮಾತನಾಡಬಾರದೇ?’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಪ್ರಶ್ನಿಸಿದರು.
ಕೇಂದ್ರ-ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಬೇಕು : ಆರ್.ಅಶೋಕ್
ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ.ಆದರೆ, ಕರ್ನಾಟಕದ ಕಾಂಗ್ರೆಸ್ ಸರಕಾರ ಕೇಂದ್ರದ ವಿರುದ್ದ ಪದೇ ಪದೇ ಕಾಲು ಕೆರೆದು ಜಗಳವಾಡುತ್ತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿದ್ದರಿಂದಾಗಿ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ರೈಲು ಅನುಷ್ಠಾನಕ್ಕೆ ಬಂದವು. ಆದರೆ, ಕಾಲು ಕೆರೆದು ಜಗಳವಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಉಲ್ಲೇಖಿಸಿದರು. ರಾಜ್ಯಪಾಲರ ಭಾಷಣದಲ್ಲಿ 12 ಪುಟಗಳಷ್ಟು ವಿಬಿ-ಜಿ ರಾಮ್ಜಿ ಯೋಜನೆಯನ್ನು ಟೀಕಿಸಲು ಬಳಕೆ ಮಾಡಿದ್ದಾರೆ ಎಂದು ಟೀಕಿಸಿದರು. ಆಗ ಸಚಿವ ರಾಮಲಿಂಗಾರೆಡ್ಡಿ ಮಧ್ಯಪ್ರವೇಶಿಸಿ, ವಿಬಿ ಜಿ ರಾಮ್ಜಿ ಯಲ್ಲಿರುವುದು ಶ್ರೀರಾಮನ ಹೆಸರಲ್ಲ ಎಂದು ಉಲ್ಲೇಖಿಸಿದರು.ಇದಕ್ಕೆ ಸಚಿವ ಭೈರತಿ ಸುರೇಶ್ ದನಿಗೂಡಿಸಿ ಬಿಜೆಪಿಯವರು ಎಲ್ಲದಕ್ಕೂ ದೇವರನ್ನೆ ಎಳೆದು ತರುವುದು ಏಕೆ ಎಂದು ಪ್ರಶ್ನಿಸಿದರು. ಆಗ ಬಿಜೆಪಿ ಸದಸ್ಯ ಸುರೇಶ್ಕುಮಾರ್, ರಾಜ್ಯಪಾಲರ ಭಾಷಣದಲ್ಲಿ ವಿಬಿ-ಜಿ ರಾಮ್ ಜಿ ಅನ್ನು ಕಾಂಗ್ರೆಸ್ ಸರಕಾರ ವಿಬಿ ಗ್ರಾಮ್ ಜೀ ಎಂದು ಬದಲಾವಣೆ ಮಾಡಿದೆ. ರಾಮನ ಕಂಡರೆ ಇವರಿಗೆ ಸಹನೆ ಇಲ್ಲ ಎಂದರು. ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿಯೇ ರಾಮ ಇದ್ದಾನೆ ಎಂದು ಭೈರತಿ ಸುರೇಶ್ ಹೇಳಿದಾಗ, ಅಶೋಕ್ ಅವರು ಇವರೇ ಆಗಿದ್ದರೆ ರಾಮನ ಹೆಸರು ಇಟ್ಟುಕೊಳ್ಳುತ್ತಿರಲಿಲ್ಲ. ಅವರ ತಂದೆ ನಾಮಕರಣ ಮಾಡಿದ್ದಕ್ಕೆ ಆ ಹೆಸರು ಉಳಿದಿದೆ ಎಂದು ಅಶೋಕ್ ಲೇವಡಿ ಮಾಡಿದರು.
ಫೆ.6: ರಾಜ್ಯಾದ್ಯಂತ ‘ಕರಿಕಾಡ’ ಸಿನಿಮಾ ಬಿಡುಗಡೆ
ಮಂಗಳೂರು, ಫೆ.2: ‘‘ಕರಿಕಾಡ ಸಿನಿಮಾವನ್ನು ಫೆ.6ರಂದು ಕರ್ನಾಟಕ ರಾಜ್ಯದಾದ್ಯಂತ ನೂರು ಥಿಯೇಟರ್ಗಳಲ್ಲಿ ಮಾಡಲಾಗುತ್ತದೆ. ಎಂದು ಚಿತ್ರದ ನಾಯಕ ನಟ ಕಾಡ ನಟರಾಜ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಸೋಮವಾರ ಮಾಹಿತಿ ನೀಡಿದ ಅವರು ನಾಯಕನಟನಾಗಿ ತಾನು ಅಭಿನಯಿಸಿದ್ದು, ನಾಯಕಿಯಾಗಿ ತುಳು ಸಿನಿಮಾಗಳಲ್ಲಿ ನಟಿಸಿರುವ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಯಶ್ ಶೆಟ್ಟಿ, ರಾಜು ಬೆಳವಾಡಿ, ದಿ.ರಾಕೇಶ್ ಪೂಜಾರಿ, ಚಂದ್ರಪ್ರಭಾ ಮತ್ತಿತರರು ನಟಿಸಿದ್ದಾರೆ ಎಂದು ತಿಳಿದರು. ಕಳಸ, ಕುದ್ರೆಮುಖ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚನ್ನಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕರಿ ಅಂದ್ರೆ ಆನೆ, ಕಾಡ ಅಂದ್ರೆ ನಾಯಕನ ಹೆಸರು ಎಂದು ಮಾಹಿತಿ ನೀಡಿದರು. ಚಿತ್ರದ ನಿರ್ಮಾಪಕಿ ದೀಪ್ತಿ ದಾಮೋದರ್ ಮಾತಾಡಿ, ‘ಸಿನಿಮಾದಲ್ಲಿ ಎಲ್ಲರೂ ಕಷ್ಟಪಟ್ಟು ನಟಿಸಿದ್ದಾರೆ. ನಾವೆಲ್ಲರೂ ಸಿನಿಮಾ ನೋಡಲು ಉತ್ಸುಕರಾಗಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು. ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕೆ. ವೆಂಕಟೇಶ್ ಮಾತಾಡಿ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು 6 ಹಾಡುಗಳನ್ನು ತಾನು ಬರೆದಿದ್ದೇನೆ. ಎಲ್ಲ ಹಾಡುಗಳು ಕೂಡ ಚೆನ್ನಾಗಿ ಮೂಡಿಬಂದಿದ್ದು 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಕಂಟೆಂಟ್ ಸಿನಿಮಾದಲ್ಲಿದ್ದು ಜನರು ಇಷ್ಟಪಡುವುದರಲ್ಲಿ ಎರಡು ಮಾತಿಲ್ಲ ಎಂದರು. ನಟಿ ನಿರೀಕ್ಷಾ ಶೆಟ್ಟಿ ಮಾತಾಡಿ, ‘‘ನನ್ನ ಮೊದಲ ಕನ್ನಡ ಸಿನಿಮಾ ಇದಾಗಿದೆ. ಮೊದಲನೇ ಶೋ ಮಂಗಳೂರಲ್ಲಿ ನಡೆಯುತ್ತಿರುವುದು ಇನ್ನಷ್ಟು ಖುಷಿ ತಂದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿತರಕ ಬಾಲಕೃಷ್ಣ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು. ‘ ಕರಿಕಾಡ’ ಸಿನಿಮಾ ಕುರಿತು ಒಂದಿಷ್ಟು ‘ಕರಿಕಾಡ’ ಇದೊಂದು ಆಕ್ಷನ್ ಥ್ರಿಲ್ಲರ್ ಹಾಗೂ ಮ್ಯೂಸಿಕಲ್ ಜರ್ನಿ ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಬಣ್ಣದ ಲೋಕದ ಕನಸು ಹೊತ್ತು ಕಾಡ ನಟರಾಜ್ ‘ಕರಿಕಾಡ’ ಚಿತ್ರದ ಮೂಲಕ ಪ್ರೇಕ್ಷಕರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಬರುತ್ತಿದ್ದಾರೆ. ಕಾಡ ನಟರಾಜ್ ಈ ಸಿನಿಮಾದ ನಾಯಕರಾಗಿದ್ದು ಸದಾ ಚಿತ್ರಜಗತ್ತಿನ ಕನಸು ಕಾಣುತ್ತಾ ಐಟಿ ವಲಯದಲ್ಲಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕೆಲಸ ಮಾಡ್ತಿರೋ ಕಲಾವಿದ. 2024 ಆಗಸ್ಟ್ 15ರಂದು ಸಕಲ ತಯಾರಿಗಳೊಂದಿಗೆ ‘ಕರಿಕಾಡ’ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತ ಕೆಲಸಕ್ಕೆ ರಜೆ ಸಿಕ್ಕಾಗೆಲ್ಲ ಅಭಿನಯ ಮಾಡಿ ನವೆಂಬರ್ 2024ರ ಒಳಗೆ ಸಿನಿಮಾದ ಮಾತಿನ ಭಾಗ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ ಕಾಡ ನಟರಾಜ್. ತಾವೇ ಈ ಸಿನಿಮಾದ ಕಥೆ ಬರೆದಿರೋದು ವಿಶೇಷ. ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಕಾಡ ನಟರಾಜ್ ಅವರ ಧರ್ಮಪತ್ನಿ ದೀಪ್ತಿ ದಾಮೋದರ್ ತನ್ನ ಗಂಡನ ಕನಸಿನ ಗುರಿಗೆ ದಾರಿ ತೋರಿಸಿದ್ದಾರೆ. ಈ ದಾರಿಗೆ ಸ್ನೇಹಿತರಾದ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದ ಸಾಥ್ ನೀಡಿದ್ದಾರೆ. ಇನ್ನೂ ಚಿತ್ರಕಥೆ ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಕೆ.ವೆಂಕಟೇಶ್ ಹೊತ್ತಿದ್ದಾರೆ. ‘ಕರಿಕಾಡ’ ಚಿತ್ರಕ್ಕೆ ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಗಿರಿ ಅವರುಗಳ ರಾಗ ಸಂಯೋಜನೆ ಇದೆ. ಶಶಾಂಕ್ ಶೇಷಗಿರಿ ಅವರು ರಾಗ ಸಂಯೋಜನೆ ಜೊತೆಗೆ ಜಬರ್ದಸ್ತ್ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಕ್ಯಾಮರಾ ಸಾರಥಿಯಾಗಿ ಜೀವನ್ ಗೌಡ ಕೆಲಸ ಮಾಡಿದ್ದಾರೆ. ದೀಪಕ್ ಸಿ.ಎಸ್ ಸಂಕಲನವಿದೆ. ಕರಿಕಾಡ ಕನ್ನಡದ ಜೊತೆಗೆ ತೆಲುಗು, ತಮಿಳ್, ಹಿಂದಿ, ಹಾಗೂ ಮಲಯಾಳಂ ನಲ್ಲೂ ಸಹ ಚಿತ್ರ ಬಿಡುಗಡೆಯಾ ಗುತ್ತಿದ್ದು, ಇದೆ ಫೆಬ್ರವರಿ 6ಕ್ಕೆ ರಾಜ್ಯಾದಂತ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ಈಗಾಗಲೇ ಟೈಟಲ್ ಟೀಸರ್, ಟೀಸರ್ ಹಾಗೂ ಮೂರು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರದ ಟ್ರೈಲರ್ ಸಹ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನದಲ್ಲಿ ಚಿತ್ರ ತಂಡವಿದೆ. ಮಂಜು ಸ್ವಾಮಿ , ಯಶ್ ಶೆಟ್ಟಿ , ಗೋವಿಂದ ಗೌಡ , ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ದಿ.ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಬಲರಾಜ್ ವಾಡಿ , ಮಾಸ್ಟರ್ ಆರ್ಯನ್ ಹಾಗೂ ಮುಂತಾದವರು ತಾರಾಗಣದಲ್ಲಿದ್ದಾರೆ.
ಫೆ.7: :ಪುಟ್ಟ ರೋಗಿಗಳು ದೊಡ್ಡ ನಿರ್ಧಾರಗಳು - ವೈದ್ಯಕೀಯ ಕಾರ್ಯಾಗಾರ
ಉಳ್ಳಾಲ : ನಾಟೇಕಲ್ ಪ್ರದೇಶದಲ್ಲಿರುವ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ಶಾಸ್ತ್ರ ಮತ್ತು ಚಿಕಿತ್ಸಾ ವಿಭಾಗ ಮತ್ತು ಸೂಕ್ಷ್ಮ ಜೀವ ವಿಜ್ಞಾನ ಶಾಸ್ತ್ರ ವಿಭಾಗ ಹಾಗೂ ಔಷಧ ಶಾಸ್ತ್ರ ವಿಭಾಗ ಸಹಯೋಗದಲ್ಲಿ ಒಂದು ದಿನದ ಅವಧಿಯ ಪುಟ್ಟ ರೋಗಿಗಳು ದೊಡ್ಡ ನಿರ್ಧಾರಗಳು ಶೀರ್ಷಿಕೆಯಡಿ ಸಮಗ್ರ, ವೈದ್ಯಕೀಯ ಕಾರ್ಯಾಗಾರವು ಫೆ.7 ರಂದು ಬೆಳಿಗ್ಗೆ 10:30 ಕ್ಕೆ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರೋ. ಡಾ| ಶಂಶಾದ್ ಖಾನ್ ಹೇಳಿದರು. ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನುರವರು ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಹಮ್ಮಿಕೊಂಡ ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮ ದಲ್ಲಿ ರಾಷ್ಟ್ರ ಮಟ್ಟದ ವಿವಿಧ ವೈದ್ಯಕೀಯ ಪ್ರತಿಷ್ಠಿತ ಸಂಸ್ಥೆಗಳ ನುರಿತ ಮಕ್ಕಳ ಶಾಸ್ತ್ರ ತಜ್ಞರು, ಔಷಧ ಶಾಸ್ತ್ರ ತಜ್ಞರು ಮತ್ತು ಸೂಕ್ಷ್ಮ ಜೀವ ವಿಜ್ಞಾನ ಶಾಸ್ತ್ರ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಮಕ್ಕಳ ಚಿಕಿತ್ಸೆಯಲ್ಲಿ ಅತಿಯಾದ ಅನಾವಶ್ಯಕವಾದ ರೋಗ ನಿರೋಧಕ ಔಷಧ ಬಳಕೆಯಿಂದ, ಬ್ಯಾಕ್ಟಿರಿಯಾಗಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿದ್ದು, ಈ ಸಮಸ್ಯೆಗೆ ವೈದ್ಯಕೀಯ ವೃತ್ತಿಪರರಲ್ಲಿ ತರ್ಕಬದ್ಧ ಔಷಧೋಪಚಾರ ಮತ್ತು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು. ಸುದ್ದಿ ಗೋಷ್ಠಿ ಯಲ್ಲಿ ಔಷಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಾ| ಯಶ್ವಂತ್ ಕುಮಾರ್ ರೈ, ಮಕ್ಕಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ| ಒನೀಲ್ ಫೆರ್ನಾಂಡಿಸ್, ಮಕ್ಕಳ ಶಾಸ್ತ್ರ ತಜ್ಞರು ಡಾ.ಪೃಥ್ವಿ ಉಪಸ್ಥಿತರಿದ್ದರು.
ಅವರು ನಮ್ಮನ್ನು ಅವಮಾನಿಸಿದರು; ಸಂತ್ರಸ್ತರ ಅಳಲು ಆಲಿಸಲಿಲ್ಲ: ಚುನಾವಣಾ ಆಯೋಗದ ಸಭೆಯಿಂದ ಹೊರ ನಡೆದ ಮಮತಾ ಬ್ಯಾನರ್ಜಿ
ಇಷ್ಟು ಅಹಂಕಾರದ ಚುನಾವಣಾ ಆಯುಕ್ತರನ್ನು ನಾನೆಂದೂ ನೋಡಿಲ್ಲ ಎಂದ ಪಶ್ಚಿಮ ಬಂಗಾಳ ಸಿಎಂ
ಅಹಿಂದ ಸಂಘಟನೆ ಬಲವರ್ಧನೆಗೆ ಜಿಲ್ಲಾದ್ಯಂತ ಚಳವಳಿ: ಡಾ. ನಾಗೇಶ ನಾಯ್ಕ ಕಾಗಾಲ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಹಿಂದ ಸಂಘಟನೆಯನ್ನು ಬಲಗೊಳಿಸಿ ಜನರಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ ಹೇಳಿದರು. ರವಿವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಭೆಗಳನ್ನು ನಡೆಸಿ ಚರ್ಚೆ ಕೈಗೊಳ್ಳಲಾಗುತ್ತಿದೆ ಎಂದರು. ಯುವಜನರನ್ನು ರಾಜಕೀಯವಾಗಿ ಸಶಕ್ತರನ್ನಾಗಿಸುವುದು, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಸಾಮಾಜಿಕ ಚಳವಳಿಗಳ ಬಲವರ್ಧನೆಯ ಮೂಲಕ ರಾಜಕೀಯ ಸಬಲೀಕರಣ ಸಾಧಿಸುವ ನಿಟ್ಟಿನಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಚಲನಾ ಸಮಿತಿಗಳನ್ನು ರಚಿಸಲಾಗುವುದು. ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳನ್ನು ಆಧಾರವಾಗಿ ತೆಗೆದುಕೊಂಡು ಹೋರಾಟದ ತಳಹದಿ ರೂಪಿಸಲಾಗುವುದು ಎಂದು ಹೇಳಿದರು. ಭಟ್ಕಳದಲ್ಲಿ ಎಲ್ಲಾ ಪ್ರಮುಖರು ಅಹಿಂದ ಸಂಘಟನೆ ಬಲಪಡಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ಇ–ಸ್ವತ್ತು, ಅರಣ್ಯ ಅತಿಕ್ರಮಣ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿದ್ದು, ಈ ವಿಷಯಗಳಲ್ಲಿ ಜನಜಾಗೃತಿ ಮೂಡಿಸಿ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಹೇಳಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಈಗಾಗಲೇ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದರು. ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ವಸೂಲಿ ನಡೆಯುತ್ತಿರುವುದು ಗಂಭೀರ ವಿಚಾರವಾಗಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು. ಅಗತ್ಯವಿದ್ದರೆ ಕರಾವಳಿ ಭಾಗದ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು. ಹಿರಿಯ ಮುಖಂಡ ರಾಮಾ ಎಂ. ಮೊಗೇರ ಮಾತನಾಡಿ, ಜಿಲ್ಲೆಯಲ್ಲಿ ಅಹಿಂದ ಸಂಘಟನೆಯ ಅಗತ್ಯವಿದ್ದು, ಅಹಿಂದ ವರ್ಗದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಜಾಗೃತಿ ಮೂಡಬೇಕಾಗಿದೆ ಎಂದರು. ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಅಹಿಂದ ಸಂಘಟನೆ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಹಾಗೂ ಮಾರುಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ.ಡಿ. ನಾಯ್ಕ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶಕುಮಾರ ನಾಯ್ಕ, ಸಾಲಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ವೆಂಕಟಯ್ಯ ಬೈರುಮನೆ, ಕುಮಟಾದ ಸುಧಾಕರ, ಶಿವಾನಂದ ನಾಯ್ಕ (ಶಿರಸಿ), ಕೆ. ಸುಲೇಮಾನ್, ಶ್ರೀಧರ ನಾಯ್ಕ, ಟಿ.ಡಿ. ನಾಯ್ಕ, ದಿನೇಶ್ ಗೊಂಡ, ವೆಂಕಟೇಶ್ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಶೇಷ ಮಕ್ಕಳ ಶಾಲಾ ಶಿಕ್ಷಕರು, ಸಿಬ್ಬಂದಿಗೆ ಸಮಾನ ವೇತನ ಕೋರಿ ಅರ್ಜಿ; ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು : ರಾಜ್ಯದ ವಿಶೇಷ ಮಕ್ಕಳ ಶಾಲೆಗಳ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಸಮಾನ ವೇತನ ನೀಡಲು ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಬೋಧಕೇತರರ ಸಂಘ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಜ್ಯ ಅಂಗವಿಕಲರ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿತು.
ಕೊಲೆಯತ್ನ ಪ್ರಕರಣ: ಆರೋಪಿಗೆ ಶಿಕ್ಷೆ
ಮಂಗಳೂರು, ಫೆ.2: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಕುರುಡುಕಟ್ಟೆ ಎಂಬಲ್ಲಿ ತನ್ನ ಮಗನ ಜಾಗದಲ್ಲಿ ಸೊಪ್ಪುಕತ್ತರಿಸುತ್ತಿದ್ದ ವೆಂಕಪ್ಪನಾಯ್ಕ ಎಂಬವರಿಗೆ ಜಾತಿ ನಿಂದನೆ ಮಾಡಿ ಹಲ್ಲೆಗೈದ ಆರೋಪಿ ನಾರಾಯಣ ಗೌಡ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯವು 20,500 ರೂ. ದಂಡ ವಿಧಿಸಿ ಆದೇಶ ನೀಡಿದೆ. 2019ರ ಮೇ 6ರಂದು ವೆಂಕಪ್ಪನಾಯ್ಕ ತನ್ನ ಮಗ ದೇವಪ್ಪನಾಯ್ಕರ ಜಾಗದಲ್ಲಿ ಸೊಪ್ಪುಕತ್ತರಿಸುತ್ತಿದ್ದಾಗ ನಾರಾಯಣ ಗೌಡ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕಬ್ಬಿಣದ ರಾಡ್ನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅಡಾವತ್ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ನ್ಯಾಯಾಧೀಶ ಜಗದೀಶ ವಿ.ಎನ್ ಪ್ರಕರಣದ ವಿಚಾರಣೆ ನಡೆಸಿ ಆರೋಪಿ ನಾರಾಯಣ ಗೌಡನಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಪೈಕಿ 20 ಸಾವಿರ ರೂ. ಸಂತ್ರಸ್ತ ವೆಂಕಪ್ಪನಾಯ್ಕಗೆ ನೀಡಬೇಕು. 500 ರೂ. ವನ್ನು ಸರಕಾರಕ್ಕೆ ಪಾವತಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದಾರೆ.
ಡಿಕೆಎಸ್ಸಿ ಜುಬೈಲ್ ಘಟಕದ ಅಧ್ಯಕ್ಷರಾಗಿ ಮುಸ್ತಫಾ ಮೈನ ಆಯ್ಕೆ
ಮಂಗಳೂರು,ಫೆ.2:ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನದ ಜುಬೈಲ್ ಘಟಕದ ಮಹಾಸಭೆಯು ಅಧ್ಯಕ್ಷ ಮುಹಮ್ಮದ್ ಅಲಿ ಕೃಷ್ಣಾಪುರ ಅವರ ಅಧ್ಯಕ್ಷತೆಯಲ್ಲಿ ಜುಬೈಲ್ನಲ್ಲಿ ಜರಗಿತು. ಜಾಫರ್ ಮುಂಡ್ಕೂರ್ ವಾರ್ಷಿಕ ವರದಿ ಹಾಗೂ ಹಣಕಾಸು ಕಾರ್ಯದರ್ಶಿ ಅನ್ವರ್ ಪಡುಬಿದ್ರಿ ಲೆಕ್ಕಪತ್ರ ಮಂಡಿಸಿ ದರು. ಡಿಕೆಎಸ್ಸಿ ದಮ್ಮಾಂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತೃತ್ವದಲ್ಲಿ 2026-27ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮುಸ್ತಫಾ ಮೈನ, ಉಪಾಧ್ಯಕ್ಷರಾಗಿ ಅನ್ವರ್ ಪಡುಬಿದ್ರೆ, ಜಾಫರ್ ಮುಂಡ್ಕೂರ್, ಪ್ರಧಾನ ಕಾರ್ಯ ದರ್ಶಿಯಾಗಿ ಮುಹಮ್ಮದ್ ಮುಸ್ತಫ ಹೊಸನಗರ, ಕಾರ್ಯದರ್ಶಿಗಳಾಗಿ ಅಬ್ದುಲ್ ಹಕೀಮ್ ನೆಕ್ಕರೆ, ಉಬೈದ್ ಸುರಿಬೈಲ್, ಯಹ್ಯಾ ಕೆಸಿ ರೊಡ್, ಹಣಕಾಸು ಕಾರ್ಯದರ್ಶಿಯಾಗಿ ಶಮೀರ್ ಪಲಿಮಾರ್, ಸಮಿತಿಯ ಅಭಿವೃದ್ಧಿ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಕೃಷ್ಣಾಪುರ, ಸಂವಹನ ಕಾರ್ಯದರ್ಶಿಯಾಗಿ ಅಶ್ರಫ್ ನಾಳ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಸಲಹೆಗಾರರನ್ನಾಗಿ ಕೆ ಎಚ್. ರಫೀಕ್ ಸೂರಿಂಜೆ, ಸುಲೈಮಾನ್ ಮಿಲನ್ ಸೂರಿಂಜೆ, ಅಬ್ದುಲ್ ಹಮೀದ್ ಉಳ್ಳಾಲ್, ಅಬ್ದುಲ್ ಹಮೀದ್ ಕಾಪು, ಅಬ್ದುಲ್ ಕರೀಂ ಪಾಣೆಮಂಗಳೂರು, ಹಾತಿಂ ಕೂಳೂರು, ಅಬೂಬಕ್ಕರ್ ಬರ್ವ, ಇಕ್ಬಾಲ್ ಮಲ್ಲೂರ್ ಆಯ್ಕೆ ಮಾಡಲಾಯಿತು. ಡಿಕೆಎಸ್ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್, ಜುಬೈಲ್ ಉಸ್ತುವಾರಿ ಉಸ್ಮಾನ್ ಹೊಸಂಗಡಿ, ಜುಬೈಲ್ ಯೂತ್ವಿಂಗ್ ಸಾಮಿತ್ ಪಡುಬಿದ್ರಿ, ದಮ್ಮಾಂ ಘಟಕದ ಅಧ್ಯಕ್ಷ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ತುಖ್ಬ ಘಟಕದ ಅಧ್ಯಕ್ಷ ಜೆಪ್ಪುಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು. ಡಿಕೆಎಸ್ಸಿ ಕೇಂದ್ರ ಸಮಿತಿಯ ದಾಯಿ ಅಬ್ದುರ್ರಶೀದ್ ಸಅದಿ ದುಆಗೈದರು. ಡಿಕೆಎಸ್ಸಿ ದಮ್ಮಾಂ ವಲಯ ಸಂಘಟಕ ಝುಬೈರ್ ಸಖಾಫಿ ಕಿರಾಅತ್ ಪಠಿಸಿದರು. ಅನ್ವರ್ ಪಡುಬಿದ್ರಿ ಸ್ವಾಗತಿಸಿದರು. ಶಾಫಿ ಶುಐಬ್ ವಂದಿಸಿದರು.
ಗ್ಯಾರಂಟಿಗಳಿಗೆ 1.16 ಲಕ್ಷ ಕೋಟಿ ರೂ.ಅನುದಾನ ಒದಗಿಸಿದ್ದೇವೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯವನ್ನು ಸರ್ವತೋಮುಖವಾಗಿ ಬೆಳೆಸುವ ಉದ್ದೇಶ ನಮಗಿದೆ. ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇದುವರೆಗೆ 1.16 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಅನುದಾನ ಒದಗಿಸಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನರ ಕೊಂಡುಕೊಳ್ಳುವ ಶಕ್ತಿ ಆರೋಗ್ಯಕರವಾಗಿದೆ. ನೀವು ಬಡವರ, ಮಧ್ಯಮ ವರ್ಗದವರ ವಿರೋಧಿಗಳು. ಹಾಗಾಗಿ ಇದು ನಿಮಗೆ ಕಾಣುವುದಿಲ್ಲ ಎಂದು ವಿಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಸರಕಾರದ ಪರವಾಗಿ ಉತ್ತರಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಜನರು ವಿಪರೀತ ಸಂಕಷ್ಟದಲ್ಲಿದ್ದಾರೆ. ಅವರ ದುಡಿಮೆಗಳೆಲ್ಲ ನಿಂತು ಹೋಗಿವೆ, ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಹಾಗಾಗಿ ಪ್ರತಿ ಕುಟುಂಬಕ್ಕೆ ಒಂದು ಸಾರಿ 10 ಸಾವಿರ ರೂ.ಕೊಡಿ ಎಂದು ಯಡಿಯೂರಪ್ಪ ಮತ್ತು ಬೊಮ್ಮಾಯಿಗೆ ಹೇಳಿದ್ದೆ. ನೀವು ಒಂದು ರೂಪಾಯಿಯಾದ್ರೂ ಕೊಟ್ರಾ? ಎಂದು ಪ್ರಶ್ನಿಸಿದರು. ಸಂವೇದನೆಯನ್ನೂ ಐಸಿಯುನಲ್ಲಿಟ್ಟಿದ್ರಾ?: ಜನ ಸಂಕಷ್ಟದ ಸುಳಿಯಲ್ಲಿದ್ದಾಗ ನಿಮ್ಮ ಸಂವೇದನೆ ಎಲ್ಲಿ ಹೋಗಿತ್ತು? ನಿಮಗೆ ಆಕ್ಸಿಜನ್ ಕೊಟ್ಟು ರೋಗಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ? ರೋಗಿಗಳು ಒದ್ದಾಡಿ ಪ್ರಾಣ ಬಿಟ್ಟಾಗ ನಿಮ್ಮ ಸಂವೇದನೆಯನ್ನೂ ಐಸಿಯುನಲ್ಲಿಟ್ಟಿದ್ರಾ? ನಮಗೆ ಸಂವೇದನೆಯಿದೆ. ಪಶುಪಾಲಕರ ಕುರಿ-ಮೇಕೆ, ಎತ್ತು, ಎಮ್ಮೆ, ಹಸು, ಕೋಣ ಮರಣ ಹೊಂದಿದರೆ ಪರಿಹಾರ ಕೊಡುತ್ತಿದ್ದ ಅನುಗ್ರಹ ಯೋಜನೆಯನ್ನು ನಿಲ್ಲಿಸಿದ್ರಿ, ಕೃಷಿ ಭಾಗ್ಯ ಯೋಜನೆ ನಿಲ್ಲಿಸಿದ್ರಿ ಆಗ ನಿಮಗೆ ಸಂವೇದನೆ ನೆನಪಾಗಲಿಲ್ವೆ? ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಆಗ ನಿಮ್ಮ ಆಡಳಿತ ಹದಗೆಟ್ಟಿರಲಿಲ್ಲವೆ? ದಲಿತರು, ಹಿಂದುಳಿದ ವರ್ಗಗಳ ನೆನಪಾಗಿರಲಿಲ್ಲವೆ? ನಾವು ದಲಿತ ಸಮುದಾಯದ ಆತಂಕ ಕೇಳಿಸಿಕೊಂಡಿದ್ದೇವೆ. ಅದಕ್ಕಾಗಿಯೇ ದಲಿತರ ಭೂಮಿ ಬಲಾಢ್ಯರ ಕೈಗೆ ಹೋಗಬಾರದೆಂದು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಸಂವೇದನಾ ಶೀಲ ಸರಕಾರ ಆಗಿರುವುದರಿಂದಲೇ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರ ಮನವಿಗೆ ಮಣಿದು ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಉಲ್ಲೇಖಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಗೊಬ್ಬರ ಕೊಡಲಾಗದೆ ಹಾವೇರಿಯಲ್ಲಿ ಗೋಲಿಬಾರ್ ಮಾಡಿ ಕೊಂದು ಹಾಕಲಾಯಿತು. ಆದರೆ ಮುಧೋಳದಲ್ಲಿ ರೈತರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಟ್ರ್ಯಾಕ್ಟರ್ ಮುಂತಾದ ವಾಹನ, ರೈತರ ಕಬ್ಬಿಗೆ ಬೆಂಕಿ ಹಚ್ಚಿದಾಗಲೂ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಿದ್ದೇವೆಯೆ ಹೊರತು ನಾವು ಗೋಲಿಬಾರ್ ಮಾಡಿ ಕೊಲ್ಲಲು ಹೋಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಕೇಂದ್ರ ಸರಕಾರದ ಅಸಹಕಾರದ ನಡುವೆಯೂ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳವನ್ನು 250 ರೂ. ವರೆಗೆ ಪ್ರೋತ್ಸಾಹ ಧನ ನೀಡುವುದರ ಮೂಲಕ ಸುಮಾರು 40 ಲಕ್ಷ ಕ್ವಿಂಟಾಲ್ ಜೋಳ ಖರೀದಿ ಮಾಡಲಾಗುತ್ತಿದೆ. ಕೆಎಂಎಫ್ ಮೂಲಕ ಖರೀದಿಸಲು ಹಾಗೂ ಎಥೆನಾಲ್ ಉತ್ಪಾದಕರು, ಪೌಲ್ಟ್ರಿ, ಪಶು ಆಹಾರ ತಯಾರಕರ ಜೊತೆ ಸಭೆ ಮಾಡಿ ಮೆಕ್ಕೆಜೋಳ ಖರೀದಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ದಿವಾಳಿಯಾಗಿರುವ ಕೇಂದ್ರ ಸರಕಾರ: ಪ್ರಕೃತಿ ವಿಕೋಪಕ್ಕೆ ಕಳೆದ ತಿಂಗಳು 250 ಕೋಟಿ ರೂ., ಮುಖ್ಯಮಂತ್ರಿಗಳ ವಿಶೇಷ ಅನುದಾದಡಿ 2,445 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ನಮ್ಮ ಸರಕಾರ ದಿವಾಳಿಯಾಗಿಲ್ಲ. ಕೇಂದ್ರ ಸರಕಾರ ದಿವಾಳಿ ಆಗಿದೆ. ನಿನ್ನೆ ಕೇಂದ್ರ ಸರಕಾರ ಬಜೆಟ್ ಮಂಡಿಸಿದೆ. ಮನೆಗಳ ನಿರ್ಮಾಣಕ್ಕೆ 19,490 ಕೋಟಿ ರೂ. ಇದ್ದ ಅನುದಾನವನ್ನು ಪರಿಷ್ಕೃತ ಅಂದಾಜಿನಲ್ಲಿ 7500 ಕೋಟಿ ರೂ.ಗಳಿಗೆ ಇಳಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಬಜೆಟ್ನಲ್ಲಿ 8,260 ಕೋಟಿ ರೂ.ಇಟ್ಟು, ಪರಿಷ್ಕರಣೆ ಮಾಡಿ 6,372 ಕೋಟಿ ರೂ.ಮಾಡಿದ್ದಾರೆ. 2026-27ರಲ್ಲಿ 6,587 ಕೋಟಿ ರೂ.ಗಳಿಗೆ ಇಳಿಸಿದ್ದಾರೆ. ಪಿಎಂ ಇಂಟರ್ನ್ಶಿಪ್ ಪ್ರೋ ಗ್ರಾಂ ನಲ್ಲಿ 10,831 ಕೋಟಿ ರೂ. ಇಟ್ಟಿದ್ದರು, ಅದನ್ನು 526 ಕೋಟಿ ರೂ.ಗಳಿಗೆ ಪರಿಷ್ಕರಣೆ ಮಾಡಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆ 5,100 ಕೋಟಿ ರೂ.ಗಳಿಂದ 3,861 ಕೋಟಿ ರೂ.ಗಳಿಗೆ ಇಳಿಸಿದ್ದಾರೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು. ನಾವು ಮೂರು ವರ್ಷದಿಂದ ಬಜೆಟ್ ನಲ್ಲಿ ಬೆಲೆ ಏರಿಸಿದ್ದರೂ., ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಿದೆ. ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ 2023-24 ರಿಂದ ಇಲ್ಲಿಯವರೆಗೆ 1,17,197 ಕೋಟಿ ರೂ.ಗಳನ್ನು ನೀಡಿದ್ದೇವೆ. ವಿವಿಧ ಸಮುದಾಯಗಳ ನಿಗಮ ಮಂಡಳಿಗಳಿಗೆ ನಮ್ಮ ಅವಧಿಯಲ್ಲಿ 1538.60 ಕೋಟಿ ರೂ.ಗಳನ್ನು ನೀಡಲಾಗಿದೆ. ಹಿಂದುಳಿದ ವರ್ಗಗಳಿಗಾಗಿ 2023-24 ರಿಂದ ಈವರೆಗೆ 220 ಹಾಸ್ಟೆಲ್ಗಳನ್ನು ನಿರ್ಮಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. 2013-14 ರಿಂದ 18ರ ಅವಧಿಯಲ್ಲಿ ನಾವು 15 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದೇವು. ಈ ಪೈಕಿ 14.52 ಲಕ್ಷ ಮನೆಗಳನ್ನು ನಿರ್ಮಿಸಲಾಯಿತು. ಆದರೆ, ಬಿಜೆಪಿಯವರು ನಾಲ್ಕು ವರ್ಷಗಳಲ್ಲಿ ಕೇವಲ 5 ಲಕ್ಷ ಮನೆಗಳನ್ನು ಮಾತ್ರ ಕಟ್ಟಿದರು. ನಾವು ಜನಪರವಾದ, ಸಮಾಜಮುಖಿಯಾದ ಆಡಳಿತವನ್ನು ನೀಡುತ್ತಿದ್ದು, ನಮ್ಮ ಅಭಿವೃದ್ಧಿ ಮಾದರಿಯನ್ನು 21 ಕ್ಕಿಂತ ಹೆಚ್ಚು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ಆದುದರಿಂದ, ರಾಜ್ಯಪಾಲರು, ಸರಕಾರದ ಭಾಷಣವನ್ನು ಓದಿದ್ದರೆ, ನಮ್ಮ ಜನಪರ ಆಡಳಿತದ ಬಗ್ಗೆ ಜನರಿಗೆ ಅರಿವು ನೀಡಿದಂತಾಗುತ್ತಿತ್ತು ಎಂದು ಮುಖ್ಯಮಂತ್ರಿ ತಿಳಿಸಿದರು. ಪ್ರತಿಪಕ್ಷಗಳ ಸಭಾತ್ಯಾಗ: ‘ಗುತ್ತಿಗೆದಾರರ ಸಂಘದವರು ಈ ಸರಕಾರವನ್ನು ಶೇ.65ರಷ್ಟು ಕಮಿಷನ್ ಸರಕಾರ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಸರಕಾರ ಉತ್ತರ ಕೊಟ್ಟಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ 5 ಸಾವಿರ ಕೋಟಿ ರೂ.ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಆ ಹಣ ಎಲ್ಲಿ ಹೋಯಿತು ಗೊತ್ತಿಲ್ಲ. ಇದೊಂದು ‘ಇಲ್ಲಗಳ ಸರಕಾರ’ ಎಂದು ಆರೋಪಿಸಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಜ.22ರಂದು ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂಗೀಕರಿಸಲಾಯಿತು.
25 ಲಕ್ಷ ರೂ. ವಂಚನೆ ಪ್ರಕರಣ: ನಟ ಗೋವಿಂದ, ಬಿಜೆಪಿ ಸಂಸದ ಮನೋಜ್ ತಿವಾರಿ ಹೆಸರು ಉಲ್ಲೇಖ
ಹೊಸದಿಲ್ಲಿ: ಗಾಝಿಯಾಬಾದ್ ಮೂಲದ ಮ್ಯಾಕ್ಸಿಝೋನ್ ಟಚ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನಡೆದಿದ್ದ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ನಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಸೇರಿದಂತೆ ಬಾಲಿವುಡ್ ನಟರಾದ ಗೋವಿಂದ, ಶಕ್ತಿ ಕಪೂರ್ ಹಾಗೂ ಚಂಕಿ ಪಾಂಡೆ ಹೆಸರುಗಳು ಉಲ್ಲೇಖವಾಗಿವೆ ಎಂದು ವರದಿಯಾಗಿದೆ. ನಕಲಿ ಹೂಡಿಕೆ ಯೋಜನೆಯ ಮೂಲಕ ಮ್ಯಾಕ್ಸಿಝೋನ್ ಟಚ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಮ್ಮನ್ನು ವಂಚಿಸಿದೆ ಎಂದು ಹಲವಾರು ಹೂಡಿಕೆದಾರರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. Deccan Herald ವರದಿಯ ಪ್ರಕಾರ, ಈ ವಂಚನೆಯ ಮೊತ್ತ 25 ಲಕ್ಷ ರೂ. ಆಗಿದ್ದು, ಈ ವಂಚನೆಯು ಬೃಹತ್ ಪ್ರಮಾಣದ ಹೂಡಿಕೆ ಹಾಗೂ 600 ಕೋಟಿ ರೂ. ಮೌಲ್ಯದ ಕ್ರಿಪ್ಟೊಕರೆನ್ಸಿ ವಂಚನೆಯೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ. ವಂಚನೆಗೊಳಗಾದ ಹೂಡಿಕೆದಾರ ಜಸ್ಪಾಲ್ ಸಿಂಗ್ ಎಂಬವರು ನೀಡಿದ ದೂರನ್ನು ಆಧರಿಸಿ ಈ ಎಫ್ಐಆರ್ ದಾಖಲಾಗಿದೆ. ಹೂಡಿಕೆದಾರರಿಗೆ ಶೇ. 15ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಹೂಡಿಕೆದಾರರು ಬಡ್ಡಿಯನ್ನೂ ಪಡೆದಿಲ್ಲ ಅಥವಾ ಮೂಲ ಬಂಡವಾಳವನ್ನೂ ಹಿಂಪಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಬಾಲಿವುಡ್ ನಟರು ಈ ಹೂಡಿಕೆಯ ಪ್ರಚಾರ ಮಾಡಿ, ಈ ಯೋಜನೆಯತ್ತ ತುಂಬಾ ಜನರನ್ನು ಸೆಳೆದಿದ್ದರು ಎಂದೂ ದೂರಿನಲ್ಲಿ ಆರೋಪಿಸಲಾಗಿದೆ. ಈ ದೂರಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2025ರಲ್ಲಿ ಮ್ಯಾಕ್ಸಿಝೋನ್ ಟಚ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾದ ಚಂದರ್ ಭೂಷಣ್ ಸಿಂಗ್ ಹಾಗೂ ಅವರ ಪತ್ನಿ ಪ್ರಿಯಾಂಕಾ ಸಿಂಗ್ ಅವರನ್ನು ಬಂಧಿಸಲಾಗಿತ್ತು ಎಂದು ವರದಿಗಳು ಹೇಳಿವೆ.
ಬಜೆಟ್| ಮೀನುಗಾರಿಕಾ ಕ್ಷೇತ್ರಕ್ಕೆ ಗರಿಷ್ಠ ಅನುದಾನ ಮೀಸಲಿಡಲಾಗಿದೆ: ನಳಿನ್ ಕುಮಾರ್ ಕಟೀಲ್
ಮಂಗಳೂರು, ಫೆ.2: ಕೇಂದ್ರ ಸರಕಾರದ 2026-27ರ ಬಜೆಟ್ನಲ್ಲಿ ಮೀನುಗಾರಿಕಾ ಕ್ಷೇತ್ರಕ್ಕೆ ಇದುವರೆಗಿನ ಅತ್ಯಧಿಕ ವಾರ್ಷಿಕ ಅನುದಾನವಾಗಿ 2,761.80 ಕೋಟಿ ಮೀಸಲಿಡಲಾಗಿದೆ ಎಂದು ಮಾಜಿ ಸಂಸದ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಯನ್ನು ಬಲಪಡಿಸುವುದು, ರಫ್ತು ಹೆಚ್ಚಿಸುವುದು ಮತ್ತು ಮೀನುಗಾರರು ಹಾಗೂ ಮೀನು ಸಾಕಾಣಿಕೆದಾರರ ಜೀವನೋಪಾಯವನ್ನು ಸುಧಾರಿಸುವುದರ ಮೇಲೆ ಕೇಂದ್ರ ಸರಕಾರದ ಒತ್ತಾಸೆ ಸ್ಪಷ್ಟವಾಗಿದೆ. ಒಟ್ಟು ಅನುದಾನದಲ್ಲಿ 2,530 ಕೋಟಿ ರೂಪಾಯಿ ಯೋಜನಾ ಆಧಾರಿತ ಕ್ರಮಗಳಿಗೆ ಮೀಸಲಾ ಗಿದ್ದು, ಪ್ರಧಾನ ಮಂತ್ರಿ ಮತ್ಸಸಂಪದಾ ಯೋಜನೆಯಿಂದ 2026-27ಕ್ಕೆ 2500 ಕೋಟಿ ರೂ ಅನುದಾನವನ್ನು ಪಡೆದಿದೆ ಎಂದು ಮಾಹಿತಿ ನೀಡಿದರು. ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕಾ ಮೌಲ್ಯ ಸರಪಳಿಯನ್ನು ಬಲಪಡಿಸುವ ಉದ್ದೇಶದಿಂದ 500 ಜಲಾಶಯ ಗಳು ಮತ್ತು ಅಮೃತ್ ಸರೋವರಗಳ ಏಕೀಕೃತ ಅಭಿವೃದ್ಧಿಗೆ ಹಾಕಿರುವ ಯೋಜನೆಯಡಿಯಲ್ಲಿ ಸ್ಪಾರ್ಟ್ ಅಪ್ಗಳು, ಮಹಿಳಾ ನೇತೃತ್ವದ ಗುಂಪುಗಳು ಹಾಗೂ ಮೀನುಗಾರರ ಉತ್ಪಾದಕ ಸಂಸ್ಥೆಗಳು ಭಾಗವಹಿಸುವ ಮೂಲಕ ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ನುಡಿದರು. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪ್ರಮುಖ ನಗರಗಳ ಅಭಿವೃದ್ಧಿಗಾಗಿ ನಗರ ಆರ್ಥಿಕ ವಲಯ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಲ್ಲಿ ಐದು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂಪಾಯಿಗಳನ್ನು ಬೆಂಗಳೂರಿಗೆ ನೀಡಲಾಗುತ್ತದೆ. ರೇಷ್ಮೆಗೆ ರಾಷ್ಟ್ರೀಯ ಫೈಬರ್ ಸ್ಕೀಮ್, ಫಲ ಬಿಡದ ಹಳೆಯ ತೆಂಗು ತೆಗೆದು ಹೊಸ ಸಸಿ ನೆಡಲು ನೆರವು. ಗೋಡಂಬಿಗೆ ಜಾಗತಿಕ ಬ್ರ್ಯಾಂಡ್ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ. ಬೆಂಗಳೂರಿಗೆ 2 ಹೈಸ್ಪೀಡ್ ರೈಲು ಕಾರಿಡಾರ್, ಬೆಂಗಳೂರಿನಿಂದ ಹೈದ್ರಾಬಾದಿಗೆ ಹಾಗೂ ಬೆಂಗಳೂರಿನಿಂದ ಚೆನ್ನೈಗೆ ಹೈಸ್ಪೀಡ್ ರೈಲು ಯೋಜನೆ ಘೋಷಿಸಲಾಗಿದೆ. ಇದರಿಂದ ವ್ಯಾಪಾರ, ವ್ಯವಹಾರ ಅಭಿವೃದ್ಧಿ ಕಾಣಲಿವೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 2026-27ನೇ ಸಾಲಿನಲ್ಲಿ ವಿಶೇಷ 500 ಕೋಟಿ ರೂಪಾಯಿ ಗಳನ್ನು ಕೂಡ ಮೀಸಲಿಡಲಾಗಿದೆ. ಕಳೆದ ಬಾರಿ 350 ಕೋಟಿ ರೂಪಾಯಿ ನೀಡಲಾಗಿತ್ತು. ರಾಜ್ಯದ ರೈಲ್ವೆ ಯೋಜನೆಗಳಿಗೆ 7748 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ರೈಲು ಮಾರ್ಗ ನಿರ್ಮಾಣ, ಜೋಡಿ ಹಳಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಲಾಗಿದೆ. 17 ಕ್ಯಾನ್ಸರ್ ಔಷಧಿ ಹಾಗೂ ಮಧುಮೇಹ ಔಷಧಿಗಳು ಅಗ್ಗದ ದರದಲ್ಲಿ ಸಿಗುವಂತೆ ವ್ಯವಸ್ಥೆ. ಇಂತಹ ಔಷಧಿಗಳ ಮೇಲಿನ ಕನಿಷ್ಠ ಸೀಮಾ ಸುಂಕವನ್ನು ರದ್ದುಗೊಳಿಸಲಾಗಿದೆ. ಈ ಬಾರಿ ಬಜೆಟಿನಲ್ಲಿ ಸ್ತ್ರೀಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ , ಭಾರತದಲ್ಲಿ ಡೇಟಾ ಸೆಂಟರ್ ತೆರೆಯುವ ವಿದೇಶಿ ಕಂಪನಿಗಳಿಗೆ 2047 ರವರೆಗೂ ತೆರಿಗೆ ರಜೆ ನೀಡುವುದಾಗಿ ಕೇಂದ್ರ ಸರಕಾರ ಮಹತ್ವದ ಘೋಷಣೆಯನ್ನು ಮಾಡಿದೆ. ಪಶು ಆಹಾರ ಮತ್ತು ಹತ್ತಿ ಬೀಜ ಪೂರೈಕೆಯಲ್ಲಿ ತೊಡಗಿರುವ ಸಹಕಾರಿ ವಲಯದ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದೆ ಎಂದು ಮಾಹಿತಿ ನೀಡಿದರು. ಆರ್ಥಿಕತೆಯಲ್ಲಿ ಜಗತ್ತಿನಲ್ಲೇ ಭಾರತವನ್ನು ನಂ.1 ಸ್ಥಾನಕ್ಕೆ ಕೊಂಡೊಯ್ಯುವುದು ಕೇಂದ್ರ ಸರಕಾರದ ಗುರಿಯಾ ಗಿದೆ. ಉದ್ಯೋಗ ಮತ್ತು ಕೃಷಿ ಕ್ಷೇತ್ರದ ಮೇಲೆ ಹೆಚ್ಚು ಆದ್ಯತೆ, ಬಯೋಫಾರ್ಮ್ ಹಬ್ಗೆ 10 ಲಕ್ಷ ಕೋಟಿ ರೂ, 3 ಹೊಸ ಫಾರ್ಮಾ ಕಾಲೇಜು, ಮೆಡಿಕಲ್ ಟೂರಿಸಮ್ಗೆ ಒತ್ತು ನೀಡಲಾಗಿದೆ ಎಂದು ವಿವರಿಸಿದರು. *ಬೆಂಗಳೂರಿಗೆ ನಾನು ನಾಲ್ಕು ಗಂಟೆಯಲ್ಲಿ ತಲುಪುತ್ತೇನೆ:ದೇಶದ ಪ್ರತಿಯೊಂದು ಮನೆಯವರು ನರೇಂದ್ರ ಮೋದಿ ಸರಕಾರದ ಒಂದಲ್ಲ ಒಂದು ಯೋಜನೆ ಪ್ರಯೋಜನ ಪಡೆದಿದ್ದಾರೆ. ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಯಡಿ ಕಾಂಕ್ರಿಟೀಕರಣ ಸುಂದರವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗಲು ಆನಂದವಾಗುತ್ತದೆ. ನಾನು ನಾಲ್ಕು ಗಂಟೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ತಲುಪುತ್ತೇನೆ ಎಂದರು. *ರೈಲ್ವೇ ಎಲ್ಲ ಯೋಜನೆಗಳು 50-50: ಕೇಂದ್ರ ಸರಕಾರದ ಯಾವುದೇ ಯೋಜನೆಯನ್ನು ಜಾರಿಗೊಳಿಸುವ ಇಚ್ಛಾಶಕ್ತಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕಿಲ್ಲ. ಎಲ್ಲ ಯೋಜನೆಗಳಿಗೆ ಅಡ್ಡಿಪಡಿಸುತ್ತಿದೆ. ರಾಜ್ಯದಲ್ಲಿ ಅನುಷ್ಠಾನಗೊಳ್ಳುವ ರೈಲ್ವೇ ಯೋಜನೆಗಳಿಗೆ ಕೇಂದ್ರ ಸರಕಾರ ಶೇ 50ರಷ್ಟು ಅನುದಾನ ನೀಡಿದರೆ ಉಳಿದ ಶೇ50ರಷ್ಟು ಅನುದಾನವನ್ನು ರಾಜ್ಯ ಸರಕಾರ ಭರಿಸಬೇಕು. ಇದು ಹಿಂದೆ ಮಲ್ಲಿಕಾರ್ಜುನ ಖರ್ಗೆ ರೈಲ್ವೇ ಸಚಿವರಾಗಿದ್ದಾಗ ಆಗಿರುವ ಒಪ್ಪಂದ ಎಂದು ಹೇಳಿದರು. *ರಾಜ್ಯ ಸರಕಾರ ಶ್ವೇತಪತ್ರ ಹೊರಡಿಸಲಿ: ಜಿಎಸ್ಟಿ ನಿಯಮಗಳು ಎಲ್ಲ ರಾಜ್ಯಗಳಿಗೂ ಒಂದೇ ರೀತಿಯಾಗಿದೆ. ಜಿಎಸ್ಟಿ ಪಾಲು ಕೇಂದ್ರ ಸರಕಾರ ರಾಜ್ಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂದು ಹೇಳುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಜಿಎಸ್ಟಿ ಸದಸ್ಯರಾಗಿದ್ದರೂ, ಜಿಎಸ್ಟಿ ಸಭೆಗಳಿಗೆ ಯಾಕೆ ಹೋಗುತ್ತಿಲ್ಲ. ಅಲ್ಲಿ ಹೋಗಿ ಯಾಕೆ ಮಾತನಾಡುತ್ತಿಲ್ಲ. ಎಂದು ಪ್ರಶ್ನಿಸಿದರು. ಕರ್ನಾಟಕ ಸರಕಾರ ಶ್ವೇತ ಪತ್ರ ಹೊರಡಿಸಲಿ. ಆಗ ಕೇಂದ್ರ ಸರಕಾರ ಎಷ್ಟು ಹಣ ಕೊಡುತ್ತದೆ. ರಾಜ್ಯ ಸರಕಾರ ಎಷ್ಟು ಹಣ ನೀಡುತ್ತದೆ ಸ್ಪಷ್ಟವಾಗುತ್ತದೆ ಎಂದು ಹೇಳಿದರು. * ಬಿಲ್ ಪಾವತಿ ಬಾಕಿಯಾಗಲು ಕೇಂದ್ರ ಸರಕಾರ ಕಾರಣವಲ್ಲ: ಗುತ್ತಿಗೆದಾರರಿಗೆ ಬಿಲ್ ಪಾವತಿ ಬಾಕಿಯಾಗಲು ಕೇಂದ್ರ ಸರಕಾರ ಕಾರಣವಲ್ಲ ರಾಜ್ಯ ಸರಕಾರದ ವೈಫಲ್ಯ ಕಾರಣವಾಗಿದೆ. 16 ವರ್ಷ ಬಜೆಟ್ ಮಂಡಿಸಿರುವ ಅಪಾರ ಅನುಭವ ಇರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಣಾಳಿಕೆಯನ್ನು ಹೊರಡಿಸುವಾಗ ಈ ರಾಜ್ಯದ ವೆಚ್ಚದ ಬಗ್ಗೆ ಯೋಚಿಸಬೇಕಿತ್ತು. ಆದರೆ ಆ ಬಗ್ಗೆ ಯೋಚಿಸದೆ ಮಾಡಿರುವ ಎಡವಟ್ಟಿನ ಕಾರಣ ಈಗ ರಾಜ್ಯ ಸರಕಾರ ಸಂಕಷ್ಟದಲ್ಲಿ ಸಿಲುಕಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ , ಪಾಲಿಕೆಯ ಚುನಾವಣೆ ರಾಜ್ಯ ಸರಕಾರ ಮಾಡದಿರಲು ಮುಖ್ಯ ಮಂತ್ರಿ ಕುರ್ಚಿಯ ಗೊಂದಲ ಕಾರಣವಾಗಿದೆ ಎಂದರು. ವಿಜಯೇಂದ್ರ ಎಲ್ಲರಿಗೂ ಅಧ್ಯಕ್ಷರು: ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ್ದು ಬಿಜೆಪಿಯ ರಾಷ್ಟ್ರೀಯ ನಾಯಕರು. ಅವರು ಬಿಜೆಪಿಯ ರಾಜ್ಯದ ಎಲ್ಲರಿಗೂ ಅಧ್ಯಕ್ಷರು. ರಾಜ್ಯದಲ್ಲಿ ಅತ್ಯಂತ ಕ್ರೀಯಾಶೀಲವಾಗಿ ಪಕ್ಷವನ್ನು ಅವರು ಮುನ್ನೆಡೆಸುತ್ತಿದ್ದಾರೆ,ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯ ಇರುವುದು ಅದೇನು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷನಾಗಿ ನೇಮಕ ಗೊಂಡು ಒಂದು ವಾರ ಕಳೆಯುವಷ್ಟರಲ್ಲಿ ನಳಿನ್ ಕುಮಾರ್ ಅವರನ್ನು ಬಿಜೆಪಿ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬರಲು ಆರಂಭಿಸಿತ್ತು. ಆದರೆ ನನಗೆ 4 ವರ್ಷ ಮತ್ತು 8 ತಿಂಗಳು ಬಿಜೆಪಿ ರಾಜ್ಯ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ನಳಿನ್ ಕುಮಾರ್ ಕಟೀಲ್ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ , ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ದ.ಕ. ಬಿಜೆಪಿ ಮಾಧ್ಯಮ ಸಂಚಾಲಕ ವಸಂತ್ ಜೆ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಫೆಬ್ರವರಿ 2ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 2) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
Bengaluru | ಯುವಕನನ್ನು ಅಡ್ಡಗಟ್ಟಿ 31.38 ಲಕ್ಷ ನಗದು ದರೋಡೆ: ಪ್ರಕರಣ ದಾಖಲು
ಬೆಂಗಳೂರು : ಯುವಕನನ್ನು ಅಡ್ಡಗಟ್ಟಿದ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ಬೆದರಿಸಿ ಬರೋಬ್ಬರಿ 31.38 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ರವಿವಾರ(ಫೆ.1) ವರದಿಯಾಗಿದೆ. ಖಾಸಗಿ ಕಂಪೆನಿಯೊಂದರಲ್ಲಿ ಹಣ ಸಂಗ್ರಹಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಕೈಲಾಸ್(27) ಎಂಬಾತ ದರೋಡೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಫೆ.1ರ ರವಿವಾರ ಸಂಜೆ ಸುಮಾರು 4:20ರ ಸುಮಾರಿಗೆ ಕೈಲಾಸ್ ಅವರು ಕಂಪೆನಿಯ ವಿವಿಧ ಶಾಖೆಗಳಿಂದ ಒಟ್ಟು 31,38,625 ರೂ. ಹಣವನ್ನು ಸಂಗ್ರಹಿಸಿ, ತಮ್ಮ ದ್ವಿಚಕ್ರ ವಾಹನದಲ್ಲಿ ಇಟ್ಟುಕೊಂಡು ಸಕಲವಾರದಿಂದ ಬನ್ನೇರುಘಟ್ಟ ರಸ್ತೆಯತ್ತ ಬರುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ಆರೋಪಿಗಳು, ಏಕಾಏಕಿ ಕೈಲಾಸ್ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ ಹಾಕಿ ಹಣವಿದ್ದ ದ್ವಿಚಕ್ರ ವಾಹನ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳು ಕೃತ್ಯ ನಡೆದ ಒಂದು ಕಿ.ಮೀ. ದೂರದಲ್ಲಿ ದ್ವಿಚಕ್ರ ವಾಹನವನ್ನು ಬಿಟ್ಟು, ಅದರಲ್ಲಿದ್ದ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ. ಈ ಘಟನೆಯ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತ ಕೈಲಾಸ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಮಟ್ಟು ಪರಿಸರದಲ್ಲಿ 23 ಪ್ರಬೇಧಗಳ 219 ಹಕ್ಕಿಗಳ ವೀಕ್ಷಣೆ
ಕಾಪು, ಫೆ.2: ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಪಿತ್ರೋಡಿ ಹಾಗೂ ಮಟ್ಟು ಪರಿಸರದಲ್ಲಿ ಜ.31ರಂದು ಸಂಜೆ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರಾಸಕ್ತರು ಕಾಲ್ನಡಿಗೆಯ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ 23 ಪ್ರಬೇಧಗಳ 219 ಹಕ್ಕಿಗಳನ್ನು ಪಟ್ಟಿ ಮಾಡಿದರು. ಇದರಲ್ಲಿ ಬ್ಲಾಕ್ ಹೆಡೆಡ್ ಐಬಿಸ್, ಗುಲಾಬಿ ಕೊರಳಿನ ಗಿಳಿ, ಸಣ್ಣ ಕುಟ್ರ, ಕಾಡು ಗೊರವಂಕ, ಚುಕ್ಕೆ ಬೆಳವ, ಗದ್ದೆ ಮಿಂಚುಳ್ಳಿ, ನೀಲಿ ಮಿಂಚುಳ್ಳಿ, ಕೆಂಪು ಟಿಟ್ಟಿಭ, ದೊಡ್ಡ ಬೆಳ್ಳಕ್ಕಿ, ಕೊಳದ ಬಕ, ಸಣ್ಣ ಕಳ್ಳಿಪೀರ, ಗದ್ದೆಗೊರವ, ಗಲ್ ಸೇರಿದಂತೆ 23 ಪ್ರಬೇಧಗಳು ಒಳಗೊಂಡಿವೆ. ಬಳಿಕ ಮಟ್ಟುಗುಳ್ಳ ಬೆಳೆಗಾರರ ಜತೆ ಸಂವಾದ ನಡೆಯಿತು. ಮಟ್ಟು ಗುಳ್ಳ ಬೆಳೆಗಾರರ ಸಂಘದ ಪ್ರಬಂಧಕ ಮಟ್ಟು ಲಕ್ಷ್ಮಣ್, ಗಿರೀಶ್ ಆರ್ಚಾ, ಪ್ರತಿಮಾ ಆರ್ಚಾ, ಮೇಧಾ ನಾಯಕ್, ರಮ್ಯಾ ಕಾಮತ್, ರಾಜಶ್ರೀ ಎಸ್., ವೈಭವ್ ಯಡಿಯಾಳ್, ವಿದ್ಯಾಶ್ರೀ ಎಸ್., ಪ್ರಸನ್ನ ಉದ್ಯಾವರ ಉಪಸ್ಥಿತರಿದ್ದರು. ಡಾ.ಗಣೇಶ್ ಪ್ರಸಾದ್ ಜಿ.ನಾಯಕ್ ಕಾರ್ಯಕ್ರಮ ಸಂಯೋಜಿಸಿದರು.
Bengaluru | ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ಓರ್ವನ ಹತ್ಯೆ
ಬೆಂಗಳೂರು : ಆಟೋ ಪಾರ್ಕಿಂಗ್ ವಿಚಾರವಾಗಿ ಸ್ನೇಹಿತರ ನಡುವೆ ಆರಂಭವಾಗಿದ್ದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ಫೆ.1ರ ತಡರಾತ್ರಿ ಇಲ್ಲಿನ ನಾಯಂಡಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ವರದಿಯಾಗಿದೆ. ಚಾಕುವಿನಿಂದ ಇರಿದು ಗುಣ(28) ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ಆತನ ಸ್ನೇಹಿತ ವೇಲು ಎಂಬಾತ ಗಾಯಗೊಂಡಿದ್ದಾನೆ. ಈ ಪ್ರಕರಣ ಸಂಬಂಧ ವಿನೋದ್, ಅಜಿತ್, ಕುಮಾರ್ ಮತ್ತು ದೀನ ಎಂಬುವರನ್ನು ಬಂಧಿಸಿರುವುದಾಗಿ ಬ್ಯಾಟರಾಯನಪುರ ಠಾಣೆ ಪೊಲೀಸರು ತಿಳಿಸಿದ್ದಾರೆ. ಒಂದೇ ಏರಿಯಾ ನಿವಾಸಿಗಳಾಗಿದ್ದ ಗುಣ ಹಾಗೂ ವಿನೋದ್ ನಡುವೆ ಆಟೋ ನಿಲ್ಲಿಸುವ ವಿಚಾರಕ್ಕೆ ಎರಡು ದಿನಗಳ ಹಿಂದಷ್ಟೇ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ವಿನೋದ್, ಅಜಿತ್ ಹಾಗೂ ಕುಮಾರ್ ಸೇರಿ ಗುಣನ ಆಟೋ ಜಖಂಗೊಳಿಸಿದ್ದರು. ಈ ಪ್ರಕರಣ ಬ್ಯಾಟರಾಯನಪುರ ಠಾಣೆ ಮೆಟ್ಟಿಲೇರಿದ ಬಳಿಕ ಎರಡೂ ಕಡೆಯವರಿಗೆ ಪೊಲೀಸರು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ್ದರು. ಅದೇ ವಿಚಾರವಾಗಿ ಫೆ.1ರ ತಡರಾತ್ರಿ ಪೊಲೀಸ್ ಠಾಣೆಗೆ ತೆರಳಿ ವಾಪಸ್ ಬಂದ ಗುಣ ಎಂಬುವನಿಗೆ ಆರೋಪಿ ವಿನೋದ್, ಮತ್ತವನ ಕಡೆಯವರು ಸೇರಿಕೊಂಡು ಚಾಕು ಇರಿದಿದ್ದು, ಆತನ ಸ್ನೇಹಿತ ವೇಲು ಎಂಬಾತನಿಗೂ ಗಾಯಗಳಾಗಿದ್ದವು. ತಕ್ಷಣ ಗುಣನನ್ನು ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಮೂವರು ಹತ್ಯೆ ಪ್ರಕರಣವೊಂದರ ಆರೋಪಿಗಳಾಗಿದ್ದವರು. ಅವರವರ ನಡುವೆಯೇ ಆರಂಭವಾದ ಗಲಾಟೆ ಹತ್ಯೆ ಮಾಡುವ ಹಂತಕ್ಕೆ ತಲುಪಿದೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾಸಿ ಬೋಟು, ವಾಟರ್ಸ್ಪೋರ್ಟ್ಸ್ಗಳಿಗೆ ಪರವಾನಿಗೆ ಪಡೆಯಲು 45 ದಿನಗಳ ಕಾಲಾವಕಾಶ: ಎಸ್ಪಿ ಹರಿರಾಂ ಶಂಕರ್
ಉಡುಪಿ, ಫೆ.2: ಉಡುಪಿ ಜಿಲ್ಲೆಯಲ್ಲಿ ಪ್ರವಾಸಿ ಬೋಟು ಸೇರಿದಂತೆ ವಾಟರ್ ಸ್ಪೋರ್ಟ್ಸ್ಗಳಿಗೆ ಪ್ರವಾಸೋದ್ಯಮ ಸಹಿತ ವಿವಿಧ ಇಲಾಖೆಗಳಿಂದ ಅನುಮತಿ ಹಾಗೂ ಪರವಾನಿಗೆ ಪಡೆಯಲು 45 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಕರಾವಳಿ ಕಾವಲು ಪೊಲೀಸ್ ಪ್ರಭಾರ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಪ್ರವಾಸಿ ಬೋಟ್/ಹೌಸ್ ಬೋಟ್/ಕಯಾಕಿಂಗ್/ಪ್ರವಾಸಿ ದೋಣಿ/ಪ್ಯಾರಜೂಟ್/ಬನಾನರೈಡ್/ಸರ್ಫಿಂಗ್/ಜೆಟ್ಟಿ/ಬಂಫಿ/ಬೋಟ್ ರೈಂಡಿಂಗ್ ಎಂಬ ವಾಟರ್ ಸ್ಪೋರ್ಟ್ಸ್ ನಡೆಸುತ್ತಿರುವವರು ವಿವಿಧ ಇಲಾಖೆಗಳಿಂದ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಹಾಗೂ ಪರವಾನಿಗೆ ಪಡೆಯಲು 45 ದಿನಗಳ ಕಾಲಾವಕಾಶ ನೀಡಲಾಗಿದೆ. 45 ದಿನಗಳ ನಂತರವೂ ನಿಯಮ ಮತ್ತು ಕಾನೂನು ಮೀರಿ ಜಲಕ್ರೀಡೆ ನಡೆಸಿ, ಯಾವುದೇ ದುರಂತ ಸಂಭವಿಸಿ ಯಾರಾದರೂ ಮೃತರಾದರೆ ಕಲಂ 105ರ ಭಾರತೀಯ ನ್ಯಾಯ ಸಂಹಿತೆ 2023ರ ಅಡಿಯಲ್ಲಿ ಅಪರಾಧ ವಾಗುತ್ತದೆ. ಆದುದರಿಂದ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದು ಜಲಕ್ರೀಡೆಗಳನ್ನು ನಡೆಸಬೇಕು ಎಂದು ಅವರು ತಿಳಿಸಿದರು. ಮೋಟರೈಸ್ ಬೋಟು ನಡೆಸಲು ಬಂದರು ಇಲಾಖೆಯಿಂದ ನೊಂದಾವಣಾ ಪ್ರಮಾಣ ಪತ್ರ, ಸಂಬಂಧ ಪಟ್ಟ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಹೊಂದಿರಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪತ್ರ, ವಿಮಾ ಪ್ರಮಾಣ ಪತ್ರ, ಬೋಟ್ ನಡೆಸಲು ಸಾರಂಗ ಪ್ರಮಾಣ ಪತ್ರ ಇರಬೇಕು. ನಾನ್ ಮೋಟರೈಸ್ ಬೋಟ್/ದೋಣಿ ನಡೆಸಲು ಸಂಬಂಧಪಟ್ಟ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಹೊಂದಿರಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪತ್ರ, ವಿಮಾ ಪ್ರಮಾಣ ಪತ್ರ, ಬೋಟ್ ನಡೆಸಲು ಸಾರಂಗ ಪ್ರಮಾಣ ಪತ್ರ, ವಾಟರ್ ಸೋರ್ಟ್ಸ್ ನಡೆಸಲು ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ನ ಪ್ರಮಾಣ ಪತ್ರ ಹೊಂದಿರಬೇಕು. ಕಯಾಕಿಂಗ್/ಪ್ಯಾರಚೂಟ್/ಬನಾನ ರೈಡ್/ಜೆಟ್ಲಿ ನಡೆಸಲು ಸಂಬಂಧ ಪಟ್ಟ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ, ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪತ್ರ, ಜೆಟ್ಲಿ ನಡೆಸಲು ಸಾರಂಗ ಪ್ರಮಾಣ ಪತ್ರ, ವಾಟರ್ ಸೋರ್ಟ್ಸ್ ನಡೆಸಲು ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ನ ಪ್ರಮಾಣ ಪತ್ರ ಹೊಂದಿರಬೇಕು. ಜಲಕ್ರೀಡೆ ನಡೆಸುವ ಸಮಯದಲ್ಲಿ ಪ್ರವಾಸಿಗರಿಗೆ ಲೈಪ್ ಜಾಕೇಟ್ನ್ನು ಕಡ್ಡಾಯವಾಗಿ ಧರಿಸುವಂತೆ ಕ್ರಮ ಕೈಗೊಳ್ಳಬೇಕು. ಲೈಫ್ಬಾಯ್, ಪ್ರಥಮ ಚಿಕಿತ್ಸೆ ಕಿಟ್, ಅಗ್ನಿಶಾಮಕ ಸಾಧನ ಹಾಗೂ ಇನ್ನಿತರ ಸುರಕ್ಷತಾ ಸಲಕರಣೆಗಳನ್ನು ಬೋಟ್/ದೋಣಿಯಲ್ಲಿ ಇಟ್ಟುಕೊಳ್ಳಬೇಕು. ಸಂಬಂಧ ಪಟ್ಟ ಮಾಲಕರು ಜಲಕ್ರೀಡೆ ನಡೆಸುವ ಸ್ಥಳದಲ್ಲಿ ಪ್ರವಾಸಿಗರಿಗೆ/ಸಾರ್ವಜನಿಕರಿಗೆ ಫಲಕಗಳನ್ನು ಅಳವಡಿಸಿ ಅರಿವು ಮೂಡಿಸಬೇಕು. ಸಾರಂಗ ಪತ್ರವನ್ನು ಹೊಂದಿದವರು ಮಾತ್ರ ಬೋಟ್ ಚಲಾಯಿಸಬೇಕು. ಸಂಬಂಧಪಟ್ಟ ಪ್ರಾಧಿಕಾರದವರು ನಾವೆಯ ಪರಿಶೀಲನೆ ಸಮಯದಲ್ಲಿ ದಾಖಲಾತಿಗಳನ್ನು ಕೇಳಿದ್ದಲ್ಲಿ ಅವುಗಳನ್ನು ಕಡ್ಡಾಯವಾಗಿ ಹಾಜರುಪಡಿಸ ಬೇಕು. ಯಾವುದೇ ರೀತಿಯ ಜಲಕ್ರೀಡೆ ನಡೆಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ನಿರಪೇಕ್ಷಣಾ ಪತ್ರವನ್ನು ಪಡೆದು ಕಾಯನಿರ್ವಹಿಸಬೇಕು ಎಂದು ಎಸ್ಪಿ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.
ಫೆ.6ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ
ಉಡುಪಿ, ಫೆ.2: ಉಡುಪಿ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ನಿರೀಕ್ಷಕರು ಮತ್ತು ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಫೆಬ್ರವರಿ 6 ರಂದು ಬೆಳಗ್ಗೆ 11ರಿಂದ ಅಪರಾಹ್ನ 1:30ರವರೆಗೆ ಕಾರ್ಕಳ ತಾಲೂಕು ಸರಕಾರಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಮತ್ತು ಲೋಕಾಯುಕ್ತ ಜನಸಂಪರ್ಕ ಸಭೆ ನಡೆಸಲಿದ್ದಾರೆ. ಉಳಿದ ದಿನಗಳಲ್ಲಿಯೂ ಸಹ ಸಾರ್ವಜನಿಕರು ಅಹವಾಲುಗಳಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ. ಸಂಖ್ಯೆ: 0820-2958881, ಮೊ.ನಂ: 9364062581, ಪೊಲೀಸ್ ನಿರೀಕ್ಷಕರು-1 ದೂ.ಸಂಖ್ಯೆ: 0820-2536661,ಮೊ.ನಂ: 9364062695 ಹಾಗೂ ಪೊಲೀಸ್ ನಿರೀಕ್ಷಕರು-2 ಮೊ.ನಂ: 9364062696 ಅಥವಾ ಅರ್ಜಿದಾರರು ನಮೂನೆ 1ಮತ್ತು 2 ರಲ್ಲಿ ಭರ್ತಿ ಮಾಡಿ, ಅಫಿಡವಿಟ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಅಥವಾ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್ ಅಂಬೇಡ್ಕರ್ ವೀಥಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದು. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧವೂ ಸಹ ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.
ಉಡುಪಿ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಮಹಾಂಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿಯ ಮಾರಿ ಜಾತ್ರೆ ಹಿನ್ನೆಲೆ ಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ದೇಶಿಯ ಮದ್ಯ ಮಾರಾಟ) ನಿಯಮಗಳು 1968ರ ನಿಯಮ 3ರಡಿ ನೀಡಿರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965ರ ನಿಯಮ 21ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ, ಗುಜ್ಜಾಡಿ ಹಾಗೂ ಗಂಗೊಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಫೆಬ್ರವರಿ 4ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12:00ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್, ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಮೇಲ್ಕಂಡ ಗ್ರಾಮಗಳ ವ್ಯಾಪಿಯಲ್ಲಿ ಒಣದಿನ ಎಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಆದೇಶ ಹೊರಡಿಸಿದ್ದಾರೆ.
ಡಿಜಿಟಲ್ ಆ್ಯಪ್ ಆಧಾರಿತ ಆಟೋಗೆ ಸರಕಾರದ ಪರವಾನಿಗೆ ಕಡ್ಡಾಯ: ಉಡುಪಿ ಡಿಸಿ ಸ್ವರೂಪಾ
ʼಸಾಧಕ-ಬಾಧಕ ಚರ್ಚಿಸಿ ಅನುಷ್ಠಾನʼ
ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ | ಅನಗತ್ಯ ಊಹಾಪೋಹ ಬೇಡ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಕುರಿತು ಸುಮ್ಮನೆ ಅನಗತ್ಯ ಊಹಾಪೋಹಗಳು ಆಗಬಾರದು. ವಿಶೇಷ ತಂಡದ ತನಿಖಾ ವರದಿ ಬಂದ ನಂತರ ನಿಜಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಜೆ.ರಾಯ್ ಪ್ರಕರಣದ ಬಗ್ಗೆ ಅನಗತ್ಯ ಊಹಾಪೋಹಗಳು ಸೃಷ್ಠಿಯಾಗಬಾರದು ಎಂಬ ಕಾರಣದಿಂದಲೇ ತಕ್ಷಣ ಎಸ್ಐಟಿ ರಚನೆ ಮಾಡಿದ್ದೇವೆ. ಎಸ್ಐಟಿ ತಂಡದ ತನಿಖಾ ವರದಿ ಏನು ಬರುತ್ತದೆ, ಯಾರ ಪಾತ್ರಗಳು ಏನಿದೆ ಎಂದು ನೋಡಬೇಕಾಗುತ್ತದೆ ಎಂದರು. ಎಸ್ಐಟಿ ತನಿಖೆ ಚುರುಕು: ರಾಯ್ ಅವರ ಆತ್ಮಹತ್ಯೆಯ ಕುರಿತು ಎಸ್ಐಟಿ ತಂಡದ ತನಿಖೆ ಚುರುಕುಗೊಂಡಿದ್ದು, ಫೆ.2ರ ಸೋಮವಾರ ರಾಯ್ ಅವರ ಪತ್ನಿ ಹಾಗೂ ಮಕ್ಕಳ ಹೇಳಿಕೆಗಳನ್ನು ಎಸ್ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಜೊತೆಗೆ ರಾಯ್ ಅವರು ತಮ್ಮ ದಿನನಿತ್ಯದ ಆಗುಹೋಗುಗಳ ಬಗ್ಗೆ ಬರೆಯುತ್ತಿದ್ದ ಡೈರಿಯನ್ನು ವಶಕ್ಕೆ ಪಡೆದಿದ್ದಾರೆ. ರಾಯ್ ಅವರ ನಿತ್ಯದ ಭೇಟಿಗಳು, ವ್ಯವಹಾರಿಕ ನಿರ್ಧಾರಗಳ ಕುರಿತು ಡೈರಿಯಲ್ಲಿ ಬರೆದಿರುವುದು ಪತ್ತೆಯಾಗಿದೆ. ಆದರೆ, ಡೈರಿಯಲ್ಲಿರುವ ಅಂಶಗಳನ್ನು ಡೆತ್ ನೋಟ್ ಎನ್ನಲಾಗದು ಎಂಬ ಮಾಹಿತಿಯನ್ನು ಎಸ್ಐಟಿ ಮೂಲಗಳು ಸ್ಪಷ್ಟಪಡಿಸಿವೆ. ರಾಯ್ ಅವರು ತಮ್ಮ ಆತ್ಮಹತ್ಯೆಗೆ ಬಳಸಿರುವ ಪಿಸ್ತೂಲ್ ಅನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ಬೆಲ್ಜಿಯಮ್ ಮೇಡ್ ಸ್ಮಾರ್ಟ್, ಮಿನಿ ಸೌಂಡ್ಲೆಸ್ ಪಿಸ್ತೂಲ್ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೇಲ್ನೋಟಕ್ಕೆ ಇದು ಪರವಾನಗಿ ಪಡೆದಿರುವ ಪಿಸ್ತೂಲ್ ಎಂಬುದು ಗೊತ್ತಾಗಿದೆ. ಸದ್ಯ, ಪಿಸ್ತೂಲ್ ಹಾಗೂ ಗುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.
ಸೆಸ್-ಸಚಾರ್ಜ್ ಮೂಲಕ 6 ಲಕ್ಷ ಕೋಟಿ ರೂ.ಸಂಗ್ರಹ; ರಾಜ್ಯಗಳಿಗೆ ಒಂದು ಪೈಸೆಯೂ ಇಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕೇಂದ್ರ ಸರಕಾರ ಸೆಸ್ ಮತ್ತು ಸಚಾರ್ಜ್ ಮೂಲಕ ಸುಮಾರು 6ಲಕ್ಷ ಕೋಟಿ ರೂ. ವಸೂಲಿ ಮಾಡುತ್ತಿದೆ. ಇದರಲ್ಲಿ ರಾಜ್ಯಗಳಿಗೆ ಒಂದು ಪೈಸೆಯೂ ಬರುವುದಿಲ್ಲ. ಈ ಬಗ್ಗೆ ಧ್ವನಿ ಎತ್ತಿ ರಾಜ್ಯಗಳಿಗೂ ಪಾಲು ನೀಡಿ ಎಂದು ನಮ್ಮ ಸರಕಾರ ಒತ್ತಾಯಿಸಿದ್ದರೂ, ಇದು ಜಾರಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಸರಕಾರದ ಪರವಾಗಿ ಉತ್ತರಿಸಿದ ಅವರು, ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನುದಾನ ಕಡಿತದ ಬಗ್ಗೆ ನಾನೇ ಹಲವು ಬಾರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ವಿತ್ತ ಸಚಿವರನ್ನು ಈ ಸಂಬಂಧ ಭೇಟಿ ಮಾಡಲಾಗಿದೆ. ಜಿಎಸ್ಟಿ ಸಮಿತಿ ಸಭೆಯಲ್ಲಿ ರಾಜ್ಯ ಸರಕಾರ ತನ್ನ ನಿಲುವನ್ನು ಮಂಡಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2022 ರಿಂದ ಪ್ರತಿ ವರ್ಷ ರಾಜ್ಯಕ್ಕೆ 18 ರಿಂದ 20 ಸಾವಿರ ಕೋಟಿ ರೂ.ಗಳಷ್ಟು ಜಿಎಸ್ಟಿ ಪರಿಹಾರ ನಷ್ಟವಾಗಿದೆ. ಅಂದರೆ, 4 ವರ್ಷಗಳಲ್ಲಿ 75 ರಿಂದ 80 ಸಾವಿರ ಕೋಟಿ ರೂ.ನಷ್ಟವಾಗಿದೆ. ಜಿಎಸ್ಟಿ ಪರಿಹಾರದ ಸೆಸ್ಸನ್ನು ಕೇಂದ್ರದವರು ಜನರಿಂದ ಸಂಗ್ರಹಿಸುವುದನ್ನು ನಿಲ್ಲಿಸಿದ್ದರೆ ಒಪ್ಪುತ್ತಿದ್ದೆ. 2025-26 ರಲ್ಲಿ 1.67 ಲಕ್ಷ ಕೋಟಿ ರೂ.ಗಳಷ್ಟು ಸೆಸ್ಸನ್ನು ಸಂಗ್ರಹಿಸಿದ್ದಾರೆ. ಈ ವರ್ಷ ಎಲ್ಲ ಸೆಸ್, ಸಚಾರ್ಜ್ ಮುಂತಾದವು ಸೇರಿ 6 ಲಕ್ಷ ಕೋಟಿ ರೂ.ಸಂಗ್ರಹಿಸುತ್ತಿದ್ದಾರೆ ಮುಖ್ಯಮಂತ್ರಿ ಅಂಕಿ ಅಂಶ ನೀಡಿದರು. 16ನೆ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ. 14ನೆ ಹಣಕಾಸು ಆಯೋಗವು ನಮಗೆ ಶೇ.4.71ರಷ್ಟು ತೆರಿಗೆ ಹಂಚಿಕೆ ಮಾಡಿತ್ತು. ಅದಕ್ಕಿಂತ ಹೆಚ್ಚಿನ ಅನುದಾನ ಸಿಕ್ಕರೆ ಮಾತ್ರ ನಮಗೆ ನ್ಯಾಯ ದೊರೆಯುತ್ತದೆ. ಆದರೆ, 16ನೆ ಹಣಕಾಸು ಆಯೋಗವು ಶೇ.4.131 ರಷ್ಟನ್ನು ಮಾತ್ರ ಶಿಫಾರಸ್ಸು ಮಾಡಿದೆ. ತೆರಿಗೆ ಪಾಲನ್ನು ಶೇ.50ಕ್ಕೆ ಏರಿಸಿ ಎಂದು ಕೇಳಿದ್ದೆವು. ಆದರೆ, ಶೇ.41ರಷ್ಟೇ ಕೊಟ್ಟಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕರ್ನಾಟಕದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 5 ವರ್ಷಗಳಲ್ಲಿ 37,372 ಕೋಟಿ ರೂ. ಸಿಕ್ಕಿದ್ದರೆ, ಉತ್ತರಪ್ರದೇಶಕ್ಕೆ 1.17 ಲಕ್ಷ ಕೋಟಿ ರೂ., ಮಹಾರಾಷ್ಟ್ರಕ್ಕೆ 79.6 ಸಾವಿರ ಕೋಟಿ ರೂ., ಮಧ್ಯಪ್ರದೇಶಕ್ಕೆ 48 ಸಾವಿರ ಕೋಟಿ ರೂ. ದೊರೆಯಲಿದೆ. ಹಾಗೆಯೇ ಪ್ರಕೃತಿ ವಿಕೋಪ ನಿಧಿಯಲ್ಲೂ ರಾಜ್ಯಕ್ಕೆ ಭಾರಿ ಅನ್ಯಾಯ ಮಾಡಲಾಗಿದೆ. ನಮಗೆ 5,135 ಕೋಟಿ ರೂ., ಮಹಾರಾಷ್ಟ್ರಕ್ಕೆ 31,597 ಕೋಟಿ ರೂ., ಗುಜರಾತಿಗೆ 6,766 ಕೋಟಿ ರೂ. ಸಿಗಲಿದೆ ಎಂದು ಅವರು ಮಾಹಿತಿ ನೀಡಿದರು. ಬೆಂಗಳೂರಿನ ಅಭಿವೃದ್ಧಿಗೆ, ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು, ಅನುದಾನಗಳನ್ನು ಕೇಳಿದ್ದೆವು. ನಯಾಪೈಸೆ ಕೊಡಲಿಲ್ಲ. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ‘ಗ್ರಾಮೀಣಾಭಿವೃದ್ಧಿಗೆ ಮನರೆಗಾ ಸಂಜೀವಿನಿ’ ಎಂದಿದ್ದರು. ಆದರೆ ಅಂದು ಬೆಂಬಲಿಸಿದವರು ಇಂದು ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಿರೋಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಕೇಂದ್ರ ವಿತ್ತ ಸಚಿವರು ಕೃಷ್ಣಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಅನುದಾನ ನೀಡುವುದಾಗಿ ಘೋಷಿಸಿದ್ದನ್ನು ಕೊಡಲಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಲ್ಲ. 15ನೆ ಹಣಕಾಸು ಆಯೋಗದಲ್ಲಿ ಶಿಫಾರಸ್ಸು ಮಾಡಲಾಗಿದ್ದ 11,495 ಕೋಟಿ ರೂ.ಗಳು ರಾಜ್ಯಕ್ಕೆ ನೀಡಲಿಲ್ಲ. 14ನೆ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೊಡುತ್ತಿದ್ದ ಶೇ.4.71ರಷ್ಟು ತೆರಿಗೆ ಹಂಚಿಕೆ ಪ್ರಮಾಣವನ್ನು 15ನೆ ಆಯೋಗದಲ್ಲಿ ಶೇ.3.64ಕ್ಕೆ ಇಳಿಸಿದ್ದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ 1.25 ಲಕ್ಷ ಕೋಟಿ ರೂ.ಕೊರತೆ ಉಂಟಾಯಿತು. ರಾಜ್ಯದಿಂದ 4.50 ಲಕ್ಷ ಕೋಟಿ ರೂ. ತೆರಿಗೆ ಕೊಟ್ಟರೆ, ನಮಗೆ ಕೇವಲ 55 ರಿಂದ 60 ಸಾವಿರ ಕೋಟಿ ರೂ. ಬರುತ್ತದೆ ಎಂದು ಅವರು ಹೇಳಿದರು.
ಕಾಸರಗೋಡು| ತಂದೆಯಿಂದ ಮಗಳ ಕೊಲೆ: ಆರೋಪಿ ಸೆರೆ
ಕಾಸರಗೋಡು: 18 ವರ್ಷದ ಮಗಳನ್ನು ತಂದೆಯೇ ಕಡಿದು ಕೊಲೆಗೈದಿದ್ದಾನೆ ಎನ್ನಲಾದ ದಾರುಣ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ಇಂದು ಸಂಜೆ ನಡೆದಿದೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ತೂಮಿನಾಡಿನ ಜುಮೈಲಾ ಕೊಲೆಗೀಡಾದ ಯುವತಿ. ಕೃತ್ಯ ನಡೆಸಿದ ಆರೋಪದಲ್ಲಿ ತಂದೆ ಉಮ್ಮರ್ ಫಾರೂಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಜುಮೈಲಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲಾಗಲಿಲ್ಲ, ಕೃತ್ಯ ನಡೆಯುವ ಸಮಯದಲ್ಲಿ ತಾಯಿ ಕೂಡಾ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. ವಿದೇಶದಲ್ಲಿದ್ದ ಉಮ್ಮರ್ ಫಾರೂಕ್ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದು, ಆಸ್ತಿಗಾಗಿ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರೈಲ್ವೆ ಬಜೆಟ್: ಕರ್ನಾಟಕ್ಕೆ 7,748 ಕೋಟಿ ರೂ. ಅನುದಾನ; 61 ನಿಲ್ದಾಣಗಳ ಪುನಾರಾಭಿವೃದ್ಧಿ - ಸಚಿವ ವಿ ಸೋಮಣ್ಣ ಮಾಹಿತಿ
ಕರ್ನಾಟಕಕ್ಕೆ ಈ ಬಾರಿ ರೈಲ್ವೆ ಬಜೆಟ್ನಲ್ಲಿ 7,748 ಕೋಟಿ ರೂ. ನೀಡಲಾಗಿದ್ದು, 61 ನಿಲ್ದಾಣಗಳ ಪುನರಾಭಿವೃದ್ಧಿಗೆ 2,110 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ದಶಕದಲ್ಲಿ ಬಜೆಟ್ ಹಂಚಿಕೆ ಒಂಬತ್ತು ಪಟ್ಟು ಹೆಚ್ಚಳವಾಗಿದ್ದು, 52,950 ಕೋಟಿ ರೂ. ಮೌಲ್ಯದ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ. 12 ಜೋಡಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸಂಚರಿಸುತ್ತಿವೆ.
ಯಾದಗಿರಿ | ಎಂಎಸ್ಎಂಇಗಳ ಕಾರ್ಯಕ್ಷಮತೆ ವೃದ್ಧಿಗೆ ಝಡ್ & ಲಿಯನ್ ಕುರಿತು ಅರಿವು ಕಾರ್ಯಗಾರ
ಯಾದಗಿರಿ : ಜಿಲ್ಲಾ ಕೈಗಾರಿಕಾ ಕೇಂದ್ರ, ಸುರಪುರ ಹಾಗೂ ಶಹಾಪೂರ ತಾಲೂಕುಗಳ ಕೈಗಾರಿಕಾ ಅಸೋಸಿಯೇಷನ್ಗಳು ಮತ್ತು ಕೆ.ಎಸ್.ಎಂ.ಸಿ.ಎ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ವೇಗಗೊಳಿಸುವ ಉದ್ದೇಶದ ರಾಂಪ್ ಯೋಜನೆಯಡಿ ಝಡ್ & ಲಿಯನ್ ಕುರಿತು ಒಂದು ದಿನದ ಅರಿವು ಕಾರ್ಯಗಾರ ಶಹಾಪೂರದಲ್ಲಿ ಜರುಗಿತು. ಶಹಾಪೂರದ ಬಿ.ಬಿ. ರಸ್ತೆದಲ್ಲಿರುವ ಶುಭಾಶ್ರೀ ಹೋಟೆಲ್ನಲ್ಲಿ ನಡೆದ ಕಾರ್ಯಗಾರವನ್ನು ಯಾದಗಿರಿ ಜಿಲ್ಲಾ ಕಾಟನ್ ಜಿನ್ನಿಂಗ್ ಅಸೋಸಿಯೇಷನ್ ವ್ಯವಸ್ಥಾಪಕ ಪಾಲುದಾರ ಹಾಗೂ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್ನ ಮಣಿಕಂಠ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸತೀಶಕುಮಾರ, ಈ ಭಾಗದಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಝಡ್ & ಲಿಯನ್ ಪ್ರಮಾಣೀಕರಣದ ಬಗ್ಗೆ ಕೈಗಾರಿಕೋದ್ಯಮಿಗಳು ಅರಿವು ಪಡೆದುಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಹಾಪೂರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಮುಸ್ತಫಾ ದರ್ಬಾನ್, ತಾಲ್ಲೂಕಿನಲ್ಲಿ ಕೈಗಾರಿಕಾ ಬೆಳವಣಿಗೆಗೆ ಅಪಾರ ಅವಕಾಶಗಳಿದ್ದು, ಆರ್ಥಿಕವಾಗಿ ಸದೃಢರಾದವರು ಬೇರೆ ವಲಯಗಳಲ್ಲಿ ಹೂಡಿಕೆ ಮಾಡುವ ಬದಲಾಗಿ ಕೈಗಾರಿಕಾ ವಲಯದಲ್ಲಿ ಹೂಡಿಕೆ ಮಾಡಿದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಯಾದಗಿರಿ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ (ಗ್ರಾಕೈ) ಮುಕುಂದ ರೆಡ್ಡಿ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜ್ಯೋತಿ ಕೃಷ್ಣ (ಅಸಿಸ್ಟೆಂಟ್), ರಾಧಾ, ಎಂ.ಎ. ಸಲೀಮ್, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಾರತೀಯ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ದುರಹಂಕಾರಿ - ಸುಳ್ಳುಗಾರ: ಮಮತಾ ಬ್ಯಾನರ್ಜಿ
Mamata Banerjee: ಭಾರತೀಯ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ದುರಹಂಕಾರಿ ಮತ್ತು ಸುಳ್ಳುಗಾರ ಎಂದು ಕರೆದಿದ್ದಾರೆ. ಭಾರತದಾದ್ಯಂತ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿದೆ. ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರದ ನಿರ್ಧಾರಗಳನ್ನು ತೀವ್ರವಾಗಿ ಖಂಡಿಸುವುದನ್ನು ಮುಂದುವರಿಸಿರುವ ಪಶ್ವಿಮ ಬಂಗಾಳದ
ಔರಾದ್ | ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ : ಅಧಿಕಾರಿಗಳ ಅಮಾನತಿಗೆ ಮನವಿ
ಬೀದರ್ : ಔರಾದ್ ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ದಲ್ಲಾಳಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೈಜೋಡಿಸಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಒತ್ತಾಯಿಸಿದೆ. ಸೋಮವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಹೊಸ ಪಡಿತರ ಚೀಟಿ ನೀಡಲು ಅರ್ಜಿದಾರರಿಂದ 3 ರಿಂದ 5 ಸಾವಿರ ರೂಪಾಯಿ ವರೆಗೆ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಣ ನೀಡುವವರಿಗೆ ಮಾತ್ರ ಪಡಿತರ ಚೀಟಿ ಮಂಜೂರು ಮಾಡಲಾಗುತ್ತಿದ್ದು, ಬಡವರು ಹಣ ನೀಡಲು ಅಸಮರ್ಥರಾದರೆ ವಿವಿಧ ನೆಪ ಹೇಳಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ದೂರಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ಪಡಿತರ ಚೀಟಿಗಳನ್ನು ಮಂಜೂರು ಮಾಡುತ್ತಿದ್ದು, ಕೆಲವು ಆನ್ಲೈನ್ ಕೇಂದ್ರಗಳ ಮಾಲೀಕರ ಸಹಾಯದಿಂದ ಲಂಚ ಸಂಗ್ರಹಿಸಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಕೆಲ ಅಧಿಕಾರಿಗಳು ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ ಪಡಿತರ ಚೀಟಿಗಳನ್ನು ಹೊಂದಿದ್ದು, ಕುಟುಂಬ ಸದಸ್ಯರ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಯಾವುದೇ ನೋಟಿಸ್ ಪ್ರಕಟಿಸದೇ ಹಾಗೂ ಮಾಧ್ಯಮಗಳಲ್ಲಿ ಪ್ರಕಟಣೆ ನೀಡದೇ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ಫಲಾನುಭವಿಗಳಿಂದ ಸುಮಾರು 3 ಸಾವಿರ ರೂಪಾಯಿ ಹಣವನ್ನು ತಾಲೂಕು ಆಹಾರ ಇಲಾಖೆಗೆ ನೀಡುವಂತೆ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ಹಣ ಅಕ್ರಮವಾಗಿ ಸಂಗ್ರಹವಾಗುತ್ತಿದೆ ಎಂದು ತಿಳಿಸಲಾಗಿದೆ. ಈ ಕುರಿತು ಈಗಾಗಲೇ ತಹಸೀಲ್ದಾರ್ ಅವರಿಗೆ ದೂರು ನೀಡಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದಕ್ಕೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಪ ನಿರ್ದೇಶಕರ ಕಚೇರಿ ಎದುರು ಸಾಂಕೇತಿಕ ಸತ್ಯಾಗ್ರಹ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಎಚ್ಚರಿಕೆ ನೀಡಿದೆ.
ವಿಧಾನಸಭೆಯಲ್ಲಿ ಬಾಂಗ್ಲಾ ಗದ್ದಲ: ವಿಪಕ್ಷಗಳ ಆರೋಪಗಳಿಗೆ ಖಡಕ್ ಉತ್ತರ ಕೊಟ್ಟ ಸಿದ್ದು, ಪರಂ!
ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಸದನದಲ್ಲಿ ತೀವ್ರ ಚರ್ಚೆ ನಡೆಯಿತು. ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಬಿಜೆಪಿ ಆರೋಪಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದರು. 197 ಜನರನ್ನು ಈಗಾಗಲೇ ಗಡಿಪಾರು ಮಾಡಲಾಗಿದ್ದು, 320 ಮಂದಿಯನ್ನು ಗುರುತಿಸಿ ವಾಪಸ್ ಕಳುಹಿಸುವ ಭರವಸೆ ನೀಡಿದರು. ಪುನೀತ್ ಕೆರೆಹಳ್ಳಿ ಕ್ರಮ ಕಾನೂನು ಉಲ್ಲಂಘನೆ ಎಂದೂ ಸ್ಪಷ್ಟಪಡಿಸಿದರು.
ರಾಮನಗರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ನಿಖಿಲ್ ಕುಮಾರಸ್ವಾಮಿ
ಚಿಕ್ಕಮಗಳೂರು : ರಾಮನಗರ ಜಿಲ್ಲೆ ನಮ್ಮ ತಂದೆಯವರ ಕರ್ಮಭೂಮಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರಿಗೆ ರಾಜಕೀಯ ಜನ್ಮ ನೀಡಿದ ಭೂಮಿ, ಹಾಗಾಗಿ ರಾಮನಗರ ಬಿಟ್ಟು ಹೋಗುವ ಅಥವಾ ಬೇರೆ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಸೋಮವಾರ ಆಲ್ದೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮನಗರದಲ್ಲಿ ನಮ್ಮನ್ನು ನಂಬಿಕೊಂಡಿರುವ ಕಾರ್ಯಕರ್ತರು ಮತ್ತು ಮುಖಂಡರು, ನಮ್ಮನ್ನು ಪ್ರೀತಿಸುವ ಜನರಿದ್ದಾರೆ. ಹಿಂದಿನ ನಾಲ್ಕು ಚುನಾವಣೆಗಳಲ್ಲಿ ಜಿಲ್ಲೆಯ ಜನ ನಮ್ಮನ್ನು ಕೈಬಿಟ್ಟಿಲ್ಲ. ಬೇರೆ ಬೇರೆ ಕಾರಣಕ್ಕೆ ಕೆಲವು ಸಂದರ್ಭಗಳಲ್ಲಿ ಏರುಪೇರು ಆಗಿದೆ. ದೇವೇಗೌಡರ ಕುಟುಂಬ ಜಿಲ್ಲೆಯ ಜನರಿಗಾಗಿ ದುಡಿದಿದೆ. ಸರ್ವಾಂಗೀಣಾ ಅಭಿವೃದ್ಧಿಗೆ ಶ್ರಮಿಸಿದೆ. ಹಾಗಾಗಿ ಆ ಜಿಲ್ಲೆಯನ್ನು ಬಿಟ್ಟು ಹೋಗುವ ಪ್ರಶ್ನೆಯೆ ಇಲ್ಲ ಎಂದರು. ಪ್ರತಿಪಕ್ಷಗಳಿಗೆ ಇರುವ ಹಕ್ಕನ್ನು ಸದೆಬಡಿಯುವ ಪ್ರಯತ್ನ : ದ್ವೇಷ ಭಾಷಣ ಕಾಯ್ದೆ ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳಿಗೆ ಇರುವ ಹಕ್ಕನ್ನು ಸದೆಬಡಿಯುವ ಪ್ರಯತ್ನವಾಗಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ಮಸೂದೆಯಾಗಿದೆ. ರಾಜ್ಯಪಾಲರು ಎಲ್ಲಾ ಅಂಶಗಳನ್ನು ಗಮನಿಸಿ ಒಳ್ಳೆಯ ತೀರ್ಮಾನ ಕೈಗೊಂಡಿದ್ದು, ಅವರ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದರು. ರಾಜ್ಯಪಾಲರ ಘನತೆಯನ್ನು ತಗ್ಗಿಸುವ ಪ್ರಯತ್ನಗಳು ಸರಕಾರದ ಕಡೆಯಿಂದ ಆಗಬಾರದು, ಅವರನ್ನು ಮುಜುಗರಕ್ಕೆ ಸಿಲುಕಿಸುವುದು, ಅವರ ಗೌರವಕ್ಕೆ ಧಕ್ಕೆ ತರುವುದನ್ನು ಸರಕಾರ ಕೈಬಿಡಬೇಕು. ರಾಜ್ಯಪಾಲರು ಒಂದು ವಾಕ್ಯ ಓದಬೇಕೆ? ಒಂದು ಪ್ಯಾರ ಓದಬೇಕೆ? ಅಥವಾ ಒಂದು ಪದದಲ್ಲಿ ಮುಗಿಸಬೇಕೆ ? ಎನ್ನುವುದು ಅವರಿಗೆ ಬಿಟ್ಟಿರುವ ವಿಚಾರ. ಅವರು ಎಲ್ಲವನ್ನು ಓದಿಕೊಂಡಿದ್ದಾರೆ. ಮುಜುಗರಕ್ಕೆ ಈಡಾಗುವ ಅಂಶಗಳನ್ನು ಹಾಕಿದ್ದರು, ಅವುಗಳನ್ನು ನೋಡಿಕೊಂಡೆ ರಾಜ್ಯಪಾಲರು ಅವರ ಘನತೆಯನ್ನು ಕಾಪಾಡಿಕೊಂಡು ಆ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿದ್ದಾರೆ ಎಂದರು.
ಬೀದರ್ | 15ನೇ ಹಣಕಾಸು ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ಪಂಚಾಯತ್ ಅಧಿಕಾರಿಗಳ ಅಮಾನತಿಗೆ ಒತ್ತಾಯ
ಬೀದರ್ : ಚಿಟಗುಪ್ಪಾ ತಾಲ್ಲೂಕಿನ ಮುಸ್ತರಿ ಹಾಗೂ ಇಟಗಾ ಗ್ರಾಮ ಪಂಚಾಯತಿಗಳಲ್ಲಿ 15ನೇ ಹಣಕಾಸು ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತಪ್ಪಿತಸ್ಥ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಸಂತೋಷ್ ಒತ್ತಾಯಿಸಿದ್ದಾರೆ. ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮುಸ್ತರಿ ಗ್ರಾಮ ಪಂಚಾಯತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರಿಸಿದ ಅನುದಾನವನ್ನು ಯಾವುದೇ ಕಾಮಗಾರಿ ಕೈಗೊಳ್ಳದೇ ನಕಲಿ ಬಿಲ್ಲುಗಳ ಮೂಲಕ ದೂರುಪಯೋಗ ಮಾಡಲಾಗಿದೆ ಎಂದು ದೂರಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯತಿಗೆ ಲಭ್ಯವಾಗುವ ಅನುದಾನದಲ್ಲಿ ಶೇ.5ರಷ್ಟು ವಿಶೇಷ ಚೇತನರಿಗಾಗಿ ಮೀಸಲಿರಿಸಿದ ಹಣವನ್ನು ಕೂಡ ಯಾವುದೇ ಕಾಮಗಾರಿ ನಡೆಸದೇ ನಕಲಿ ಬಿಲ್ಲು ಸೃಷ್ಟಿಸಿ ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಲಾಗಿದೆ. ಇದೇ ರೀತಿಯಲ್ಲಿ ಇಟಗಾ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ಶೇ.25ರ ಬಟವಾಡೆ ಅನುದಾನದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಕಂಡು ಬಂದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮುಸ್ತರಿ ಗ್ರಾಮ ಪಂಚಾಯತಿಯಲ್ಲಿ ಕೂಡ 15ನೇ ಹಣಕಾಸು ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಶೇ.25ರ ಬಟವಾಡೆ ಅನುದಾನ ಹಾಗೂ ಸಣ್ಣಪುಟ್ಟ ಖರೀದಿಗಳ ದಾಖಲೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ, ಇಟಗಾ ಹಾಗೂ ಮುಸ್ತರಿ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಸಮಗ್ರ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ್ ಅವರು ಒತ್ತಾಯಿಸಿದ್ದಾರೆ.
ಅಂಗಡಿ, ಹೊಟೇಲ್ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ: ದ.ಕ. ಜಿಲ್ಲಾಧಿಕಾರಿ ದರ್ಶನ್
ಮಂಗಳೂರು: ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿಗಳು, ಹೊಟೇಲ್ ಸಹಿತ ವಾಣಿಜ್ಯ ಸಂಸ್ಥೆಗಳ ನಾಮಪಲಕಗಳಲ್ಲಿ ಹೆಸರುಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಮೂದಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್ವಿ ಸೂಚಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ದ.ಕ.ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಮಂಜೂರು ಮಾಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ ಷರತ್ತು ವಿಧಿಸಿ ಮಂಜೂರು ಮಾಡಬೇಕು. ಈ ಬಗ್ಗೆ ಆಗ್ಗಿಂದಾಗೆ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ರಾ.ಹೆ.ಗಳಲ್ಲಿ ವಿವಿಧ ಸೂಚನಾ ಫಲಕಗಳಲ್ಲಿ ಕನ್ನಡದಲ್ಲಿ ಮಾಹಿತಿ ನಮೂದಿಸಲು ರಾ.ಹೆ. ಪ್ರಾಧಿಕಾರಕ್ಕೆ ಸೂಚಿಸ ಲಾಗುವುದು. ಬ್ಯಾಂಕುಗಳಲ್ಲಿ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿಯೂ ಒದಗಿಸಲು ಬ್ಯಾಂಕುಗಳ ಸಮಿತಿ ಸಭೆಯಲ್ಲಿ ನಿರ್ದೇಶಿಸಲಾಗುವುದು ಎಂದರು. ಆಂಗ್ಲ ಮಾಧ್ಯಮ ಶಾಲೆಗಳು ಮತ್ತು ಕಾಲೇಜುಗಳ ನಾಮಫಲಕಗಳಲ್ಲಿ ಕನ್ನಡದಲ್ಲಿಯೂ ಹೆಸರು ಬರೆಯಬೇಕು. ಖಾಸಗಿ ಬಸ್ಗಳ ಬೋರ್ಡುಗಳಲ್ಲಿ ಕನ್ನಡದಲ್ಲಿ ಊರಿನ ಹೆಸರು ಬರೆಯುವ ಬಗ್ಗೆ ಕ್ರಮ ವಹಿಸಲಾಗುವುದು ಎಂದ ಜಿಲ್ಲಾಧಿಕಾರಿ ನಗರದ ಮಾಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳ ನಾಮಫಲಕದಲ್ಲಿ ಹೆಸರನ್ನು ಕನ್ನಡದಲ್ಲಿ ನಮೂದಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆಗೆ ಸೂಚಿಸಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿದೆ. ಈ ಸಮಸ್ಯೆಗೆ ಪರಿಹರಿ ಕಲ್ಪಿಸಬೇಕು. ಕೆಲವು ಉದ್ಯಮ ಗಳಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ನೇಮಿಸಲಾಗುತ್ತಿದ್ದು, ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಠೇವಣಿ ಹಾಗೂ ಹಣ ಹಿಂತೆಗೆಯುವಿಕೆ ಚೀಟಿಯನ್ನೂ ಕನ್ನಡದಲ್ಲಿ ಒದಗಿಸಬೇಕು. ಗ್ರಾಮೀಣ ಪ್ರದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಜ್ಞಾನವಿಲ್ಲದ ಸಿಬ್ಬಂದಿಯು ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸ್ಥಳೀಯರ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಯ ಗಮನ ಸೆಳೆದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಮಾತನಾಡಿ ನಗರದಲ್ಲಿ ಜಿಲ್ಲಾ ಮಟ್ಟದ ಕನ್ನಡ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಲು ಆಗ್ರಹಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ., ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ.ಸಂತೋಷ್ ಕುಮಾರ್ ಜಿ, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್ದಾಸ್ ನಾಯಕ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ದೇವಿಪ್ರಸಾದ್, ರಾಜಶೇಖರ್ ಅಜ್ರಿ, ರಾಜೇಶ್ ಡಿಸೋಜ, ದಿವಾಕರ್ ದಾಸ್, ಹಸೈನಾರ್ ತಾಳಿತ್ತನೂಜಿ ಮತ್ತಿತ ರರು ಉಪಸ್ಥಿತರಿದ್ದರು.
WPL 2026 RCB: ಡಬ್ಲ್ಯೂಪಿಎಲ್ 2026 ಫೈನಲ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಆಡುವ ತಂಡ ಇದೇ ನೋಡಿ
WPL 2026 RCB: ಡಬ್ಲ್ಯೂಪಿಎಲ್ 2026 ಕೊನೇ ಘಟಕ್ಕೆ ಬಂದು ತಪುಲಿದ್ದು, ಈಗಾಗಲೇ ಆರ್ಸಿಬಿ ನೇರ ಫೈನಲ್ ಪ್ರವೇಶ ಪಡೆದಿದೆ. ಇನ್ನೂ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಯಾವ ತಂಡ ಕಾಣಿಸಿಕೊಳ್ಳಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2024ರಲ್ಲಿ ಟ್ರೋಫಿ ಗೆದ್ದು, 2025ರಲ್ಲಿ ಕೈತಪ್ಪಿತ್ತು. ಮೊದಲು 2023 ಹಾಗೂ
ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಸಂಸತ್ತಿನಲ್ಲಿ ಕೋಲಾಹಲ
ರಾಹುಲ್ ಗಾಂಧಿ ಭಾಷಣ ತಡೆದ ಲೋಕಸಭಾಧ್ಯಕ್ಷ
ಸದನ ಸ್ವಾರಸ್ಯ: ನೀನು ಹಾಲಂತೆ, ನಾನು ಸಕ್ಕರೆಯಂತೆ! ಡಿಕೆಶಿ ಕಡೆ ಕೈತೋರಿಸಿ ಸಿದ್ದರಾಮಯ್ಯ ಮಾತು
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಸಂಬಂಧವನ್ನು 'ಹಾಲು-ಸಕ್ಕರೆ'ಗೆ ಹೋಲಿಸಿ, ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು. 'ಸಮಯ ಉತ್ತರ ಕೊಡುತ್ತೆ' ಎಂದು ಡಿಕೆಶಿ ಪ್ರತಿಕ್ರಿಯಿಸಿದರೆ, ವಿಪಕ್ಷ ನಾಯಕ ಆರ್. ಅಶೋಕ್ ಆ ಸಮಯ ಯಾವುದು ಎಂದು ವ್ಯಂಗ್ಯವಾಡಿದರು. ಸರ್ಕಾರದ ಸಂವೇದನಾಶೀಲ ನಡೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಜಿಮ್ ನಲ್ಲಿ ಬೆನ್ನುನೋವು ಬಂದಲ್ಲಿ ಏನು ಮಾಡಬೇಕು?
ಸಕ್ರಿಯವಾಗಿರುವುದು ಆರೋಗ್ಯಕರವಾಗಿದ್ದರೂ ಸಹ ತಪ್ಪು ಕಸರತ್ತು, ತೀವ್ರವಾದ ವ್ಯಾಯಾಮ ಅಥವಾ ಕೆಲವೊಂದು ಭಂಗಿಗಳ ಆಯ್ಕೆ ಅದಾಗಲೇ ಇರುವ ನೋವು ಅಥವಾ ಗಾಯಗಳನ್ನು ಹದಗೆಡಿಸಬಹುದು. ಜಿಮ್ಗೆ ಹೋಗಿ ವ್ಯಾಯಾಮ ಮಾಡುವವರಿಗೆ ಬೆನ್ನು ನೋವು ಸಾಮಾನ್ಯ ಸಮಸ್ಯೆ. ಅನೇಕ ಮಂದಿ ಯಾವ ಚಲನೆ ಉತ್ತಮ ಮತ್ತು ಯಾವುದು ದೇಹಕ್ಕೆ ಸೂಕ್ತವಲ್ಲ ಎಂದು ತಿಳಿದುಕೊಳ್ಳದೆ ವ್ಯಾಯಾಮ ಮುಂದುವರಿಸಿ ಇನ್ನಷ್ಟು ಅನಾರೋಗ್ಯವನ್ನು ತಂದುಕೊಳ್ಳುತ್ತಾರೆ. ಸಕ್ರಿಯವಾಗಿರುವುದು ಆರೋಗ್ಯಕರವಾಗಿದ್ದರೂ ಸಹ ತಪ್ಪು ಕಸರತ್ತು, ತೀವ್ರವಾದ ವ್ಯಾಯಾಮ ಅಥವಾ ಕೆಲವೊಂದು ಭಂಗಿಗಳ ಆಯ್ಕೆ ಅದಾಗಲೇ ಇರುವ ನೋವು ಅಥವಾ ಗಾಯಗಳನ್ನು ಹದಗೆಡಿಸಬಹುದು. ಹೀಗಾಗಿ ಜಿಮ್ ದಿನಚರಿಯನ್ನು ಒಟ್ಟು ಆರೋಗ್ಯಕ್ಕೆ ಸೂಕ್ತವಾಗುವಂತೆ ಬಳಸಿಕೊಳ್ಳುವುದು ಅತಿ ಮುಖ್ಯ. ಫಿಟ್ನೆಸ್ ವೃತ್ತಿಪರರ ಪ್ರಕಾರ ಬೆನ್ನು ನೋವು ಬಂದಾಕ್ಷಣ ಜಿಮ್ ತ್ಯಜಿಸುವುದು ಸೂಕ್ತವಲ್ಲ. ಬದಲಾಗಿ ಬೆನ್ನುಮೂಳೆಯ ಮೇಲೆ ಒತ್ತಡ ಬೀಳದಂತಹ ಚಲನೆಗಳನ್ನು ಹಾಗೂ ತಂತ್ರಗಳನ್ನು ಯೋಜಿಸಬೇಕು. ಈ ಕಾಳಜಿಗಳನ್ನು ಸುರಕ್ಷಿತವಾಗಿ ನಿಭಾಯಿಸುವುದು ಹೇಗೆ ಎಂದು ಹಿಯರ್ನೌ ಆಫೀಶಿಯಲ್ನ ಹಿರಿಯ ಫಿಟ್ನೆಸ್ ಮತ್ತು ಜೀವನಶೈಲಿ ಸಲಹೆಗಾರರಾದ ಸಾಧನಾ ಸಿಂಗ್ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿವರ ನೀಡಿದ್ದಾರೆ; ಮಾಡಬಾರದು ► ಚಲನಶೀಲತೆ ಮತ್ತು ನಿಷ್ಕ್ರಿಯತೆಯ ಮಿತಿಯನ್ನು ತಿಳಿದುಕೊಳ್ಳದೆ ಹೆಚ್ಚಿನ ಕಸರತ್ತಿಗೆ ಮುಂದಾಗಬಾರದು. ಅತಿಯಾದ ಸ್ಕ್ವಾಟ್ಗಳು, ಡೆಡ್ಲಿಫ್ಟ್ಗಳು ಅಥವಾ ಲೆಗ್ ಪ್ರೆಸ್ಗಳಂತಹ ಚಲನೆಗಳು ಬೆನ್ನುಮೂಳೆಯ ಮೇಲೆ ಒತ್ತಡ ಹೇರಬಹುದು. ಹೀಗಾಗಿ ಅದಾಗಲೇ ಬೆನ್ನು ನೋವು ಇದ್ದರೆ ತೀವ್ರವಾಗಿ ತಿರುಗಬಹುದು. ► ಕಡಿಮೆ ಪ್ರಯತ್ನದಲ್ಲಿ ಹೆಚ್ಚು ಲಾಭ ಪಡೆಯಲು ಯತ್ನಿಸುವ ಬದಲಾಗಿ ನಿಯಂತ್ರಿತ ಚಲನೆಗೆ ಪ್ರಾಮುಖ್ಯತೆ ಕೊಡಬೇಕು. ನಿಯಂತ್ರಿತ ಚಲನೆಗೆ ಪ್ರಯತ್ನಿಸದೆ ಇದ್ದಲ್ಲಿ ಸ್ನಾಯುಗಳ ತೊಡಗಿಸಿಕೊಳ್ಳುವಿಕೆ ಕಡಿಮೆಯಾಗುತ್ತದೆ ಮತ್ತು ಬೆನ್ನುಮೂಳೆಯ ರಚನೆಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ► ವಾರ್ಮಪ್ ನಿಯಮಗಳನ್ನು ಅಲಕ್ಷಿಸಬಾರದು. ಸೂಕ್ತವಾದ ವಾರ್ಮಪ್ ವ್ಯಾಯಾಮಗಳನ್ನು ಮಾಡದೆ ಭಾರವಾದ ಕಸರತ್ತುಗಳಿಗೆ ಇಳಿದರೆ ಬೆನ್ನುಮೂಳೆಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ► ಬಹುತೇಕರು ನೋವಿನ ನಡುವೆಯೇ ವ್ಯಾಯಾಮ ಮುಂದುವರಿಸುತ್ತಾರೆ. ನೋವು ಅಥವಾ ಅಹಿತಕರ ಭಾವನೆಯನ್ನು ಸಾಮಾನ್ಯ ಎಂದುಕೊಳ್ಳುತ್ತಾರೆ. ಇದರಿಂದ ಸಣ್ಣ ಉರಿ ಅಥವಾ ಗಾಯಗಳು ದೊಡ್ಡ ಸಮಸ್ಯೆ ಒಡ್ಡಬಹುದು. ಮಾಡಬೇಕಾಗಿರುವುದು ► ಚಲನಶೀಲತೆ ಮತ್ತು ಸ್ಥಿರತೆ ಎರಡೂ ಒಳಗೊಂಡ ಕಡಿಮೆ ಪರಿಣಾಮದ ವ್ಯಾಯಾಮಗಳನ್ನು ಮೊದಲು ಮಾಡಬೇಕು. ಬೆನ್ನುಮೂಳೆಗೆ ಹೊರೆ ಬೀಳದಂತಹ ಭಂಗಿಗಳ ವ್ಯಾಯಾಮ ಆಯ್ಕೆ ಮಾಡಬೇಕು. ► ನಿಯಂತ್ರಿತ ವ್ಯಾಯಾಮಕ್ಕೆ ಬೆಂಬಲ ಪಡೆದು ಕಸರತ್ತುಗಳನ್ನು ಮಾಡುವುದು ಉತ್ತಮ. ಬೆನ್ನಿಗೆ ಬೆಂಬಲ ನೀಡುವಂತಹ ಯಂತ್ರಗಳ ಸಹಾಯದಿಂದ ವ್ಯಾಯಾಮ ಆರಂಭಿಸಬಹುದು. ► ವ್ಯಾಯಾಮ ಮಾಡುವಾಗ ನೋವು ಕಂಡುಬಂದರೆ ತಕ್ಷಣವೇ ನಿಲ್ಲಿಸಬೇಕು. ಸ್ನಾಯುವಿಗೆ ಆಯಾಸವಾದ ಅನುಭವವಾದಲ್ಲಿ 48ರಿಂದ 72 ಗಂಟೆಗಳ ವಿಶ್ರಾಂತಿ ತೆಗೆದುಕೊಳ್ಳಬೇಕು. ಸೌಮ್ಯ ಚಲನೆಯ ನಂತರವೂ ನೋವು ಕಡಿಮೆಯಾಗದೆ ಇದ್ದರೆ ಎಚ್ಚರಿಕೆಯ ಗಂಟೆಯಾಗಿರುತ್ತದೆ. ತಕ್ಷಣವೇ ಪರಿಣತ ವೈದ್ಯರನ್ನು ಸಂಪರ್ಕಿಸಬೇಕು. ► ತೂಕ ಎತ್ತುವುದು, ಯಂತ್ರವನ್ನು ಬಳಸುವುದು, ಸಾಮೂಹಿಕ ತರಗತಿಯನ್ನು ತೆಗೆದುಕೊಳ್ಳುವುದು—ಯಾವುದೇ ಮಾಡುತ್ತಿದ್ದರೂ ಭಂಗಿ, ಚಲನೆ ಅಥವಾ ಭಾರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಹೊಂದಿಕೊಳ್ಳಬೇಕು.
ಕೆಮ್ಮಣ್ಣುಗುಂಡಿಯಲ್ಲಿ ಹುಲಿ ಪ್ರತ್ಯಕ್ಷ; ಕಣ್ತುಂಬಿಕೊಂಡ ಪ್ರವಾಸಿಗರು, ವಿಡಿಯೋ ವೈರಲ್
ಚಿಕ್ಕಮಗಳೂರು: ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರಿಗೆ ಅಪರೂಪದ ಹಾಗೂ ರೋಮಾಂಚನಕಾರಿ ಅನುಭವ ಲಭಿಸಿದೆ. ಇಲ್ಲಿನ ಜಂಗಲ್ ರೆಸಾರ್ಟ್ನಿಂದ ಹೆಬ್ಬೆ ಫಾಲ್ಸ್ ಕಡೆಗೆ ತೆರಳುತ್ತಿದ್ದ ಸಫಾರಿ ವಾಹನದ ಮುಂದೆ ಅರಣ್ಯ ರಸ್ತೆಯಲ್ಲೇ ಹುಲಿ ಪ್ರತ್ಯಕ್ಷವಾಗಿ ಪ್ರವಾಸಿಗರನ್ನು ಅಚ್ಚರಿಗೊಳಿಸಿದೆ. ರಸ್ತೆಯ ಮಧ್ಯೆ ನಿಧಾನವಾಗಿ ನಡೆದು ಹೋಗುತ್ತಿದ್ದ ಹುಲಿಯ ಗಾಂಭೀರ್ಯತೆ ನಡೆಯು ಪ್ರವಾಸಿಗರನ್ನು ಕೆಲ ಕ್ಷಣ
ಎಸಿ ಕೋರ್ಟ್ಗಳಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ
ಬೆಂಗಳೂರು : ‘ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ(ಎಸಿ ಕೋರ್ಟ್)ದಲ್ಲಿನ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಮಾರ್ಚ್ ಅಂತ್ಯದ ವೇಳೆಗೆ ವಿಲೇವಾರಿ ಮಾಡಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದಿಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೋಮವಾರ ವಿಕಾಸಸೌಧದಿಂದ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘2023ಕ್ಕೂ ಮುಂಚೆ ಆಡಳಿತ ನಡೆಸಿದ ಸರಕಾರಗಳು ಎಸಿ ಕೋರ್ಟ್ನಲ್ಲಿ ಅವಧಿ ಮೀರಿದ 62,857 ತಕರಾರು ಪ್ರಕರಣಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಹೋಗಿದ್ದವು. ಅಲ್ಲದೆ, 11 ಸಾವಿರ ಪ್ರಕರಣಗಳನ್ನು ದಾಖಲು ಮಾಡಿರಲಿಲ್ಲ. ಹೀಗಾಗಿ ಎಸಿ ಕೋರ್ಟ್ಗಳಲ್ಲಿ ಒಟ್ಟಾರೆ 73ಸಾವಿರ ಪ್ರಕರಣಗಳ ಬಾಕಿ ಇದ್ದವು. ಜನಸಾಮಾನ್ಯರು ದಿನನಿತ್ಯ ಸರಕಾರಿ ಕಚೇರಿಗೆ ಅಲೆಯುವ ಸ್ಥಿತಿ ಇತ್ತು. ನಾವು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಈ ಎಲ್ಲ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ನೀಡಿ ಶೀಘ್ರ ವಿಲೇವಾರಿ ಮಾಡಲಾಗುವುದೆಂದು ಆಶ್ವಾಸನೆ ನೀಡಿದ್ದೆವು. ಇದೀಗ ಆ ಪ್ರಕರಣಗಳನ್ನು ಪ್ರಸ್ತುತ 10,656ಕ್ಕೆ ಇಳಿಸಲಾಗಿದೆ. ಆ ಮೂಲಕ ಜನರು ಸರಕಾರಿ ಕಚೇರಿಗೆ ಅಲೆಯುವ ಪ್ರಸಂಗಕ್ಕೆ ಅಂತ್ಯ ಹಾಡಲಾಗಿದೆ ಎಂದರು. ಮಾರ್ಚ್ ವೇಳೆಗೆ ವಿಲೇ : ಎಸಿ ಕೋರ್ಟ್ಗಳಲ್ಲಿ ಎರಡೂವರೆ ವರ್ಷದಿಂದ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ. ಆದರೂ, ಇನ್ನೂ 10ಸಾವಿರಕ್ಕೂ ಅಧಿಕ ಅವಧಿ ಮೀರಿದ ಪ್ರಕರಣಗಳು ಬಾಕಿ ಇದೆ. ಈ ಪೈಕಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಅಧಿಕ ಸಂಖ್ಯೆಯ ಪ್ರಕರಣಗಳು ಬಾಕಿ ಇವೆ. ಈ ಎಲ್ಲ ಪ್ರಕರಣಗಳನ್ನೂ ಮಾರ್ಚ್ ಅಂತ್ಯದ ವೇಳೆಗೆ ವಿಲೇವಾರಿ ಮಾಡಬೇಕು ಎಂದು ಕೃಷ್ಣಬೈರೇಗೌಡ ತಾಕೀತು ಮಾಡಿದರು. ಬೆಂಗಳೂರಿನಿಂದಲೇ ಆರಂಭ: ಅವಧಿ ಮೀರಿದ ಎಲ್ಲ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂಬ ಉದ್ದೇಶದಿಂದ ಎರಡೂವರೆ ವರ್ಷಗಳಿಂದ ಉಪ ವಿಭಾಗಾಧಿಕಾರಿಗಳಿಗೆ ಅದನ್ನೇ ಪ್ರಮುಖ ಜವಾಬ್ದಾರಿ ಎಂದು ವಹಿಸಲಾಗಿತ್ತು. ಆದರೆ, ಇದೀಗ ಉಪ ವಿಭಾಗಾಧಿಕಾರಿಗಳು ಬೇರೆ ಪ್ರಮುಖ ಕೆಲಸಗಳ ಕಡೆಗೂ ಮುಖ ಮಾಡಬೇಕಿದೆ ಎಂದರು. ಗ್ರಾಮ ಲೆಕ್ಕಾಧಿಕಾರಿಗಳು ರಾಜ್ಯದಲ್ಲಿರುವ ಎಲ್ಲ ಸರಕಾರಿ ಜಮೀನುಗಳ ವಿವರಗಳನ್ನೂ ಬೀಟ್ ಆಪ್ನಲ್ಲಿ ದಾಖಲು ಮಾಡಿದ್ದಾರೆ. ಇದರ ಆಧಾರದಲ್ಲಿ ಸರಕಾರಿ ಜಮೀನು ಒತ್ತುವರಿ ಆಗಿದ್ದರೆ, ಭೂಮಿ ಸರ್ವೇ ಮಾಡಿಸಿ ತಹಶೀಲ್ದಾರರಿಂದ ಆದೇಶ ಹೊರಡಿಸಿ ಒತ್ತುವರಿ ತೆರವು ಮಾಡಬೇಕು. ಈ ಕೆಲಸ ಬೆಂಗಳೂರಿನಿಂದಲೇ ಆರಂಭವಾಗಬೇಕು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ವರ್ಗಾವಣೆ
ಕಲಬುರಗಿ : ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ಅವರನ್ನು ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಗೆ ವಿಶೇಷ ಕರ್ತವ್ಯಕ್ಕಾಗಿ ವರ್ಗಾಯಿಸಿ, ಕಾರಾಗೃಹ ಮತ್ತು ಸುಧಾರಣೆ ಸೇವಾ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಇದೇ ವೇಳೆ, ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಪ್ರಭಾರವನ್ನು ಮುಂದಿನ ಆದೇಶದವರೆಗೆ ನಿರ್ವಹಿಸುವಂತೆ, ಬೆಂಗಳೂರಿನ ಪ್ರಧಾನ ಕಚೇರಿಯ ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಲಬುರಗಿ ಸೆಂಟ್ರಲ್ ಜೈಲು ಕೈದಿಗಳ ನಡುವಿನ ಹೊಡೆದಾಟ, ಜೈಲು ಅಧಿಕಾರಿಗಳ ವಿರುದ್ಧ ಲಂಚದ ಆರೋಪ, ಜೈಲಿನೊಳಗೆ ಕೈದಿಗಳಿಗೆ ದುಬಾರಿ ಮದ್ಯ ಮತ್ತು ಸಿಗರೇಟ್ಗಳ ರಾಜಾತಿಥ್ಯ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳ ಹಿನ್ನೆಲೆಯಲ್ಲಿ ನಿರಂತರವಾಗಿ ಸುದ್ದಿಯಲ್ಲಿತ್ತು. ಈ ಅಕ್ರಮ ಚಟುವಟಿಕೆಗಳ ಕುರಿತು ವಿಸ್ತೃತ ತನಿಖೆ ನಡೆಸಲು, ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಪಿ.ವಿ. ಆನಂದ ರೆಡ್ಡಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸುವಂತೆ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದರು. ಇದಲ್ಲದೆ, ಅಲೋಕ್ ಕುಮಾರ್ ಅವರು ಖುದ್ದಾಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.
‘ದ್ವೇಷ ಭಾಷಣ ತಡೆ ವಿಧೇಯಕ’ ರಾಷ್ಟ್ರಪತಿ ಪರಿಶೀಲನೆಗೆ ರವಾನಿಸಿದ ರಾಜ್ಯಪಾಲರು
ಬೆಂಗಳೂರು : ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ)ವಿಧೇಯಕ’ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕದೆ, ರಾಷ್ಟ್ರಪತಿಗೆ ರವಾನಿಸಿದ್ದಾರೆ. ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ)ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕದೆ ರಾಷ್ಟ್ರಪತಿಯವರಿಗೆ ವಿಧೇಯಕದ ಪರಿಶೀಲನೆಗಾಗಿ ಕಳುಹಿಸಿದ್ದಾರೆ. ರಾಜ್ಯಪಾಲರ ಈ ನಿರ್ಧಾರ ಸರಕಾರದಿಂದ ಟೀಕೆಗೆ ಗುರಿಯಾಗಿದ್ದು, ಒಂದು ರೀತಿಯಲ್ಲಿ ಸರಕಾರಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಧೇಯಕಕ್ಕೆ ಸಂಬಂಧಿಸಿದಂತೆ ಒಟ್ಟು 29 ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದು, ರಾಷ್ಟ್ರಪತಿಗೆ ರವಾನೆ ಮಾಡಿದ್ದಾರೆ. ಇದರಿಂದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ)ವಿಧೇಯಕ’ ಮತ್ತೊಮೆ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ರಾಜ್ಯಪಾಲರು ಹಾಗೂ ಆಡಳಿತಾರೂಢ ಕಾಂಗ್ರೆಸ್ ಸರಕಾರದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಬಂದಿದೆ. ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದು ರಾಜ್ಯಪಾಲರು ಹೇಳಿದ್ದು, ಈ ಅಸ್ಪಷ್ಟತೆಯಿಂದ ಧರ್ಮ, ಜಾತಿ, ಜನಾಂಗ, ವ್ಯಕ್ತಿಗಳ ಮೇಲೆ ಪೂರ್ವಾಗ್ರಹದಿಂದ ಕ್ರಮ ಜರುಗುವ ಸಾಧ್ಯತೆಯನ್ನು ಹೆಚ್ಚಿಸಲಿದೆ. ವಿಧೇಯಕವನ್ನು ಉಭಯ ಸದನಗಳಲ್ಲಿ ಸಮಗ್ರ ಚರ್ಚೆಗೆ ಒಳಪಡಿಸದೇ ಅಂಗೀಕರಿಸಲಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಫೆ.27ಕ್ಕೆ ಜಿಎಎಫ್ಎಕ್ಸ್ ಸಮ್ಮೇಳನ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಅನಿಮೇಷನ್, ವಿಷುಯಲ್ ಎಫೆಕ್ಪ್, ಗೇಮಿಂಗ್ ಮತ್ತು ಕಾಮಿಕ್ಸ್(ಎವಿಜಿಸಿ)ಗೆ ಸಂಬಂಧಿಸಿದಂತೆ ಏಷ್ಯಾದ ಅತಿದೊಡ್ಡ ವಾರ್ಷಿಕ ಸಮ್ಮೇಳನ ಮತ್ತು ಪ್ರದರ್ಶನ ಎಂದೇ ಖ್ಯಾತಿ ಆಗಿರುವ ‘ಬೆಂಗಳೂರು ಜಿಎಎಫ್ಎಕ್ಸ್-2026’ ಅನ್ನು ಫೆ.27ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸೋಮವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಅಸೋಸಿಯೇಷನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ(ಎಬಿಎಐ) ಸಹಯೋಗದಡಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಮಾಡಲು ಇಚ್ಛಿಸುವ ಕನಸುಗಾರರು ಒಟ್ಟು ಸೇರಲಿದ್ದಾರೆ. ಹೊಸ ಚಿಂತನೆ ಮತ್ತು ತಂತ್ರಜ್ಞಾನಕ್ಕೆ ಸಮ್ಮೇಳನ ಪ್ರೋತ್ಸಾಹ ನೀಡಲಿದೆ ಎಂದು ಅವರು ತಿಳಿಸಿದರು. ಈ ತಿಂಗಳಾಂತ್ಯಕ್ಕೆ ನಡೆಯಲಿರುವ ಬೆಂಗಳೂರು ಜಿಎಎಫ್ಎಕ್ಸ್-7ನೆ ಆವೃತ್ತಿಯಾಗಿದ್ದು, ಫೆ.27ರಿಂದ ಮಾ.1ರವರೆಗೆ ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ನಲ್ಲಿ ನಡೆಯಲಿದೆ. ವಿಕಾಸದ ಮರುವ್ಯಾಖ್ಯಾನವು ಈ ವರ್ಷದ ಮುಖ್ಯ ಆಶಯವಾಗಿದ್ದು, ತನ್ಮಯಗೊಳಿಸುವ ಮಾಧ್ಯಮ ಉದ್ಯಮಗಳಲ್ಲಿನ ಬೆಳವಣಿಗೆಯ ಮುಂದಿನ ಹಂತವನ್ನು ಪ್ರತಿಬಿಂಬಿಸಲಿದೆ. ಮಾನವನ ಸೃಜನಶೀಲತೆ ಮತ್ತು ಮುಂದುವರಿದ ತಂತ್ರಜ್ಞಾನಗಳು ಕತೆ ಹೇಳುವಿಕೆ, ಗೇಮಿಂಗ್, ಅನಿಮೇಷನ್ ಈ ಸಮಾವೇಶದಲ್ಲಿ ಸಂಗಮಗೊಳ್ಳಲಿವೆ ಎಂದು ಸಚಿವರು ವಿವರಿಸಿದರು. ಈ ಬಾರಿಯ ಸಮ್ಮೇಳನದಲ್ಲಿ ಪ್ರಮುಖ ಸಿನೆಮಾಗಳಾದ ಕಾಂತಾರ ಚಾಪ್ಟರ್ 1, ನೆಟ್ಫ್ಲಿಕ್ಸ್ ನ ಕುರುಕ್ಷೇತ್ರ, ಮಹಾವತಾರ ನರಸಿಂಹ, ಧುರಂಧರ್ ಮತ್ತು ಲೋಕಹ ಸೇರಿದಂತೆ ಭಾರಿ ಯಶಸ್ಸು ಕಂಡಿರುವ ಜನಪ್ರಿಯ ಚಿತ್ರ ನಿರ್ಮಾಣಗಳ ಕುರಿತು ವಿಶೇಷ ಸಭಾ ಕಾರ್ಯಕ್ರಮ ಇರಲಿದೆ. ಲೇಖಕ ಆನಂದ ನೀಲಕಂಠನ್ ಜೊತೆಗೆ ಭಾರತದ ಪುರಾಣಗಳ ಕುರಿತು ಪುಸ್ತಕದಿಂದ ಪರದೆಯವರೆಗಿನ ಸಂವಾದ ಕಾರ್ಯಕ್ರಮ, ಕಾಂತಾರ, ಬಾಹುಬಲಿ ಮತ್ತು ಒಜಿ ಚಲನಚಿತ್ರಗಳ ಛಾಯಾಗ್ರಹಣ ನಿರ್ದೇಶಕರು ಭಾಗವಹಿಸಲಿರುವ ಛಾಯಾಗ್ರಹಣ ಮತ್ತು ವರ್ಚುವಲ್ ಪ್ರೊ ಡಕ್ಷನ್ ಸಭಾ ಕಾರ್ಯಕ್ರಮಗಳು ಸಹ ಈ ಸಮಾವೇಶದ ಪ್ರಮುಖ ಆಕರ್ಷಣೆಗಳಾಗಿವೆ ಎಂದೂ ಅವರು ವಿವರಿಸಿದರು. 50ಕ್ಕೂ ಹೆಚ್ಚು ಸಭಾ ಕಾರ್ಯಕ್ರಮಗಳು, ಮಾಸ್ಟರ್ ಕ್ಲಾಸ್ಗಳು ಮತ್ತು ಕಾರ್ಯಾಗಾರಗಳಲ್ಲಿ 100ಕ್ಕೂ ಹೆಚ್ಚು ಭಾಷಣಕಾರರು ತಮ್ಮ ಚಿಂತನೆಗಳನ್ನು ಸಭಿಕರ ಜೊತೆ ಹಂಚಿಕೊಳ್ಳಲಿದ್ದಾರೆ. ಜಿಎಎಫ್ಎಕ್ಸ್ 2026 ಐಎಲ್ಎಂ, ನೆಟ್ಫ್ಲಿಕ್ಸ್, ಎಂಆರ್ಎಕ್ಸ್, ಬೇಸ್ ಎಫ್ಎಕ್ಸ್, ಮೊಂಕ್ ಸ್ಟುಡಿಯೊಸ್ ಮತ್ತು ದಿ ಪೆರ್ಲಿನ್ ನಂತಹ ಪ್ರಮುಖ ಸ್ಟುಡಿಯೊಗಳಿಂದ ಜಾಗತಿಕ ಪರಿಣತರ ಜೊತೆಗೆ ಸಭೆ ಆಯೋಜಿಸಲಿದೆ. ಅದೇ ರೀತಿ, ಆಸ್ಕರ್ ಮತ್ತು ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆಟ್ರ್ಸ್ (ಬಿಎಎಫ್ಟಿಎ) ನಾಮ ನಿರ್ದೇಶಿತ ಯೋಜನೆಗಳಿಂದ ನಿರ್ಮಾಣ ಸಂವಾದ, ಬಲವಾದ ಗೇಮಿಂಗ್ ಟ್ರ್ಯಾಕ್ ಮತ್ತು ವಿಶ್ವ ದರ್ಜೆಯ ವಿಎಫ್ಎಕ್ಸ್ ಮಾಸ್ಟರ್ ಕ್ಲಾಸ್ಗಳನ್ನು ಒಳಗೊಂಡಿರಲಿದೆ ಎಂದೂ ಸಚಿವರು ಹೇಳಿದರು. ಒಂದು ದಶಕಕ್ಕೂ ಹೆಚ್ಚು ಕಾಲ, ಬೆಂಗಳೂರು ಜಿಎಎಫ್ಎಕ್ಸ್ ಭಾರತದ ಎವಿಜಿಸಿ ವಲಯಕ್ಕೆ ವೇಗವರ್ಧಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಭೆ, ತಂತ್ರಜ್ಞಾನ, ಸರಕಾರದ ನೀತಿಗಳು ಮತ್ತು ಜಾಗತಿಕ ಅವಕಾಶಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಿ ಕೊಡುತ್ತಿದೆ. ಸ್ಟುಡಿಯೊಗಳು, ನವೋದ್ಯಮಗಳು ಮತ್ತು ಹೊಸ ತಲೆಮಾರಿನ ಸೃಷ್ಟಿಕರ್ತರ ಬೆಳವಣಿಗೆಗೆ ವೇಗ ನೀಡುವುದರ ಜೊತೆಗೆ ಭಾರತದ ಸೃಜನಶೀಲ ಸಾಮಥ್ರ್ಯಗಳನ್ನು ಜಗತ್ತಿಗೆ ಪ್ರದರ್ಶಿಸಲು ನೆರವಾಗುತ್ತಿದೆ. ವಿಕಾಸದ ಮರುವ್ಯಾಖ್ಯಾನವು ಎವಿಜಿಸಿ ಬೆಳವಣಿಗೆಯ ಮುಂದಿನ ಹಂತವು ಡೀಪ್ ಟೆಕ್ನಾಲಜಿ ಮತ್ತು ಮಾನವನ ಸೃಜನಶೀಲತೆಯ ಸಂಗಮದಿಂದ ಸಾಧ್ಯವಾಗಲಿದೆ ಎನ್ನುವ ಕರ್ನಾಟಕದ ನಂಬಿಕೆಯನ್ನು ಬಲವಾಗಿ ಪ್ರತಿಬಿಂಬಿಸಲಿದೆ ಎಂದು ಅವರು ತಿಳಿಳಿಸಿದರು. ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಮಾತನಾಡಿ, ತಂತ್ರಜ್ಞಾನ ಮತ್ತು ಮಾನವನ ಕಲ್ಪನೆಯು ಒಟ್ಟಿಗೆ ಬೆಳೆಯುವ ಭವಿಷ್ಯಕ್ಕೆ ಸಿದ್ಧವಾದ ಸೃಜನಶೀಲ ಆರ್ಥಿಕತೆ ನಿರ್ಮಿಸುವ ಕರ್ನಾಟಕದ ದೀರ್ಘಕಾಲೀನ ಬದ್ಧತೆಯನ್ನು ಈ ಸಮಾವೇಶವು ಪ್ರತಿನಿಧಿಸುತ್ತದೆ. ಎವಿಜಿಸಿ ಮತ್ತು ತನ್ಮಯಗೊಳಿಸುವ ಮಾಧ್ಯಮ ವಲಯಗಳು ವೇಗವಾಗಿ ಬದಲಾವಣೆಗೊಳ್ಳುತ್ತಿದ್ದಂತೆ, ನಮ್ಮ ಗಮನವು ಕೌಶಲಗಳು, ಸ್ಟುಡಿಯೊಗಳು, ನವೋದ್ಯಮಗಳು, ಮೂಲಸೌಕರ್ಯ ಮತ್ತು ಜಾಗತಿಕ ಪಾಲುದಾರಿಕೆಗಳಂತಹ ಸಂಪೂರ್ಣ ಪ್ರಕ್ರಿಯೆಯನ್ನು ಬಲಪಡಿಸುತ್ತಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಬಿಎಐ ಅಧ್ಯಕ್ಷ ಬಿರೆನ್ ಘೋಸ್, ಫೇಸ್ 1 ವರ್ಲ್ಡ್ ನ ನಿರ್ದೇಶಕ ಓಮ್ ಪ್ರದತ್ ಸೇರಿದಂತೆ ಪ್ರಮುಖರಿದ್ದರು.
ಅಫಜಲಪುರ | ಕೇಂದ್ರ ಬಜೆಟ್ ವಿರುದ್ಧ ರೈತ–ಕಾರ್ಮಿಕರ ಆಕ್ರೋಶ : ಬಜೆಟ್ ಪ್ರತಿಗೆ ಬೆಂಕಿ
ಅಫಜಲಪುರ : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರೈತರು ಹಾಗೂ ಅಸಂಘಟಿತ ಕಾರ್ಮಿಕರು ಕೇಂದ್ರ ಸರ್ಕಾರ ಮಂಡಿಸಿರುವ 2026–27ನೇ ಸಾಲಿನ ಬಜೆಟ್ ಪ್ರತಿಗೆ ಬೆಂಕಿ ಹಚ್ಚಿ ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರೈತ ಹಾಗೂ ಕಾರ್ಮಿಕ ಹೋರಾಟಗಾರ ಶ್ರೀಮಂತ ಬಿರಾದಾರ, ಕೇಂದ್ರ ಬಜೆಟ್ ರೈತ ಮತ್ತು ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿದರು. ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಭದ್ರತೆ, ಗ್ರಾಮೀಣ ಉದ್ಯೋಗ ಸೃಷ್ಟಿ ಕುರಿತು ಯಾವುದೇ ಸ್ಪಷ್ಟ ಹಾಗೂ ಪರಿಣಾಮಕಾರಿ ಪ್ರಸ್ತಾವನೆಗಳು ಇಲ್ಲ. ಅಲ್ಲದೆ ರಸಗೊಬ್ಬರ ಸಬ್ಸಿಡಿಯನ್ನು 15,679 ಕೋಟಿ ರೂ. ಕಡಿತಗೊಳಿಸಿರುವುದು ರೈತರ ಮೇಲಿನ ಮತ್ತೊಂದು ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಸಿ.ಐ.ಟಿ.ಯು ಅಧ್ಯಕ್ಷೆ ಶಾಂತಾ ಘಂಟೆ ಮಾತನಾಡಿ, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ನೌಕರರು ಸೇರಿದಂತೆ ದುಡಿಯುವ ವರ್ಗದ ಕಾರ್ಮಿಕರಿಗೆ ಬೆಲೆ ಏರಿಕೆಗೆ ಅನುಗುಣವಾದ ಆರ್ಥಿಕ ಭದ್ರತೆ ನೀಡದೇ ಕೇಂದ್ರ ಸರ್ಕಾರ ಬಡ ಕಾರ್ಮಿಕರಿಗೆ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಜನಜೀವನದ ಆಧಾರವಾಗಿರುವ ಕೃಷಿ ಕ್ಷೇತ್ರವನ್ನು ಪುನಶ್ಚೇತನಗೊಳಿಸುವ ಬದಲು, ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಕೃಷಿಯನ್ನು ನಿರ್ಲಕ್ಷಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ರೈತರ ಕುರಿತು ಕೇವಲ ಒಮ್ಮೆ ಮಾತ್ರ ಉಲ್ಲೇಖ ಮಾಡಿರುವುದಲ್ಲದೆ, ಗ್ರಾಮೀಣ ಕಾರ್ಮಿಕರ ಬಗ್ಗೆ ಯಾವುದೇ ಪ್ರಸ್ತಾಪವೇ ಇಲ್ಲ ಎಂದು ಪ್ರತಿಭಟನಾಕಾರರು ಖಂಡಿಸಿದರು. ಈ ವೇಳೆ ಫೆ.12ರಂದು ದೇಶಾದ್ಯಂತ ನಡೆಯುವ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ರೈತರು ಮತ್ತು ಕಾರ್ಮಿಕರಿಗೆ ಕರೆ ನೀಡಲಾಯಿತು. ಪ್ರತಿಭಟನೆಯಲ್ಲಿ ಶಿವಾನಂದ ಹೋಟಕರ್, ಬಿಸ್ಮಿಲ್ ಖೇಡಗಿ, ಕಲಾವತಿ ಯಳಸಂಗಿ, ಶಿವಲೀಲ ಪಾಟೀಲ್, ಮಹಾಂತೇಶ ಬಳೂಂಡಗಿ, ಶ್ರೀಶೈಲ ಪತ್ತಾರ, ಶಾಂತಾ ಕುಂಬಾರ, ಶರಣಬಸು, ಜಗದೇವಿ ಕರಜಗಿ, ಶಿವು ಪೂಜಾರಿ, ಬೀರಣ್ಣ ನಿಂಬಾಳ, ಶ್ರೀಮಂತ ಸಿಂದಗಿ, ಅಶೋಕ ಛತ್ರಿ, ಚಾಂದಸಾಹೇಬ ಶೇಖ್, ಮಷಾಕ್ ನದಾಪ್, ಪ್ರಮೋದ, ಸಿದ್ದು ಜಮಾದಾರ, ವಿಜಯಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು.
‘ರಾಜ್ಯಪಾಲರ ಭಾಷಣ’ ವಿವಾದ | ‘ವಾರ್ತಾಭಾರತಿ ಪತ್ರಿಕೆ ಸಂಪಾದಕೀಯ’ ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ವಿಧಾನ ಮಂಡಲ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ‘ರಾಜ್ಯಪಾಲರ ಭಾಷಣ’ದ ವಿಷಯ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ರಾಜ್ಯಪಾಲರ ಭಾಷಣದ ಕುರಿತು ವಿಧಾನಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ವಾರ್ತಾಭಾರತಿ ಪತ್ರಿಕೆ’ಯ ಸಂಪಾದಕೀಯವನ್ನು ಉಲ್ಲೇಖಿಸಿದರು. ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್, ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಅವಕಾಶ ನೀಡಿದರು. ಬಳಿಕ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ‘ರಾಜ್ಯಪಾಲರು ಸರಕಾರ ಸಿದ್ದಪಡಿಸಿದ್ದ ಭಾಷಣವನ್ನು ಸಂಪೂರ್ಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ ‘ಜೈ ಸಂವಿಧಾನ’ ಎನ್ನುವುದನ್ನೂ ಉಲ್ಲೇಖಿಸಲಿಲ್ಲ. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯಲಿಲ್ಲ, ಇದು ಸರಿಯಲ್ಲ’ ಎಂದು ಆಕ್ಷೇಪಿಸಿದರು. ಈ ಕುರಿತು ರಾಜ್ಯದ ದಿನಪತ್ರಿಕೆಗಳಲ್ಲಿನ ಸಂಪಾದಕೀಯಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ‘ಜ.23ರಂದು ವಾರ್ತಾಭಾರತಿ ಪತ್ರಿಕೆಯಲ್ಲಿನ ಸಂಪಾದಕೀಯವನ್ನು ಉಲ್ಲೇಖಿಸಿದರು. ‘ಜ.22ರ ಗುರುವಾರದಂದು ಅಧಿವೇಶನದಲ್ಲಿ ಗೆಹ್ಲೋಟ್ ಅವರ ನಡವಳಿಕೆ ರಾಜ್ಯಪಾಲ ಘನತೆಗೆ ತಕ್ಕುದಾಗಿರಲಿಲ್ಲ. ಸರಕಾರದ ನಿರ್ಧಾರ, ನಿರ್ಣಯಗಳು ತನ್ನ ಅಥವಾ ಕೇಂದ್ರ ಸರಕಾರದ ಮೂಗಿನ ನೇರಕ್ಕಿರಬೇಕು ಎಂಬಂತಿತ್ತು ಅವರ ವರ್ತನೆ. ಆ ಮೂಲಕ ಒಕ್ಕೂಟ ವ್ಯವಸ್ಥೆಯ ಹಿರಿಮೆಗೆ ಧಕ್ಕೆ ತಂದರು. ಮಾತ್ರವಲ್ಲ, ಸಂವಿಧಾನದ ಆಶಯಗಳಿಗೆ ಚ್ಯುತಿಯುಂಟು ಮಾಡಿದರು. ಈಗಾಗಲೇ ಜಾರಿಯಲ್ಲಿರುವ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಅವರು ತುಪ್ಪ ಸುರಿದಿದ್ದಾರೆ’ ಎಂದು ಸಿಎಂ ಪ್ರಸ್ತಾಪ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ವಿ.ಸುನೀಲ್ಕುಮಾರ್, ‘ವಾರ್ತಾಭಾರತಿ ಪತ್ರಿಕೆ ನಿಮ್ಮ ಸಚಿವ ಸಂಪುಟದಲ್ಲಿದೆಯೇ?’ ಎಂದು ಪ್ರಶ್ನಿಸಿದರು. ‘ಆ ಪತ್ರಿಕೆಯ ಪ್ರತಿನಿಧಿಗಳು ಯಾರೂ ನಮ್ಮ ಪಕ್ಷದಲ್ಲಿಲ್ಲ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಭೈರತಿ ಸುರೇಶ್, ‘ವಾರ್ತಾಭಾರತಿ’ ಪ್ರತಿನಿಧಿಗಳು ಯಾರು ನಮ್ಮ ಸಚಿವ ಸಂಪುಟದಲ್ಲಿ ಇಲ್ಲ. ಬೇರೆ ಪತ್ರಿಕೆಯೊಂದರ ಸಂಪಾದಕರು ನಿಮ್ಮ(ಬಿಜೆಪಿ)ಪಕ್ಷದಲ್ಲಿ ಸದಸ್ಯರಾಗಿದ್ದರು’ ಎಂದು ಉಲ್ಲೇಖಿಸಿದರು.

20 C