SENSEX
NIFTY
GOLD
USD/INR

Weather

23    C
... ...View News by News Source

ತಮಿಳುನಾಡು ವಿಧಾನಸಭಾ ಚುನಾವಣೆ| ಪ್ರತಿ ಕುಟುಂಬಗಳಿಗೆ ತಲಾ 2,000 ರೂ.ನೆರವು ಸೇರಿದಂತೆ 5 ಭರವಸೆಗಳನ್ನು ನೀಡಿದ AIADMK

ಚೆನ್ನೈ: ಶನಿವಾರ ಎಲ್ಲರಿಗಿಂತ ಮುಂಚಿತವಾಗಿ ಚುನಾವಣಾ ಭರವಸೆಗಳನ್ನು ಪ್ರಕಟಿಸಿರುವ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ, ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳಿಗೆ ಮಾಸಿಕ ತಲಾ 2,000 ರೂ. ನೆರವು, ನಗರ ಬಸ್‌ಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ, ಹಾಗೂ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ಅವಧಿಯನ್ನು 125 ದಿನಗಳಿಂದ 150 ದಿನಗಳಿಗೆ ಹೆಚ್ಚಿಸುವುದಾಗಿ ಸೇರಿದಂತೆ ಐದು ಭರವಸೆಗಳನ್ನು ನೀಡಿದೆ. ಈ ಐದು ಚುನಾವಣಾ ಭರವಸೆಗಳನ್ನು ಪ್ರಕಟಿಸಲು ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಜನ್ಮದಿನವನ್ನು ಆಯ್ದುಕೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಪಕ್ಷದ ಪ್ರಣಾಳಿಕೆ ಮಹಿಳೆಯರನ್ನು ಮೊದಲ ಸ್ಥಾನದಲ್ಲಿರಿಸುವುದರೊಂದಿಗೆ ಕಲ್ಯಾಣ, ಘನತೆ ಮತ್ತು ಆರ್ಥಿಕ ನ್ಯಾಯದ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. “ಈ ಭರವಸೆಗಳು ಜನರನ್ನು ಮೊದಲ ಸ್ಥಾನದಲ್ಲಿಡುವ ಎಐಎಡಿಎಂಕೆಯ ಆಡಳಿತ ಪರಂಪರೆಯನ್ನು ಪ್ರತಿಫಲಿಸುತ್ತವೆ. ನಮ್ಮ ಗುರಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಜೀವನೋಪಾಯವನ್ನು ಬಲಪಡಿಸುವುದು, ಎಲ್ಲರಿಗೂ ವಸತಿಯನ್ನು ಖಾತರಿಗೊಳಿಸುವುದು ಹಾಗೂ ಕಾರ್ಮಿಕರ ಘನತೆಯನ್ನು ಮರುಸ್ಥಾಪಿಸುವುದಾಗಿದೆ” ಎಂದು ಅವರು ತಿಳಿಸಿದ್ದಾರೆ. ‘ಕುಳವಿಕ್ಕು’ ಎಂದು ಹೆಸರಿಸಲಾದ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಯ ಖಾತೆಗೆ ಮಾಸಿಕ ತಲಾ 2,000 ರೂ. ನೆರವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ಡಿಎಂಕೆ ಸರಕಾರ ಜಾರಿಗೆ ತಂದಿರುವ ‘ಕಲೈಗ್ನರ್ ಮಗಳಿರ್ ಉರಿಮೈ ತಿಟ್ಟಂ’ ಯೋಜನೆಯಡಿ ರಾಜ್ಯದಲ್ಲಿ ಸುಮಾರು 1.31 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 1,000 ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಮೊತ್ತವನ್ನು ಎಐಎಡಿಎಂಕೆ ತನ್ನ ಚುನಾವಣಾ ಭರವಸೆಯಲ್ಲಿ ಎಲ್ಲಾ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ 2,000 ರೂ.ಗೆ ಏರಿಸುವುದಾಗಿ ಘೋಷಿಸಿದೆ.

ವಾರ್ತಾ ಭಾರತಿ 17 Jan 2026 8:30 pm

Maharashtra ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಠಾಕ್ರೆ–ಪವಾರ್ ಎದುರು ಬಿಜೆಪಿ ಪ್ರಾಬಲ್ಯ; 2029 ಚುನಾವಣೆಗೆ ಹೆಚ್ಚಿದ ನಿರೀಕ್ಷೆ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, 29 ಮಹಾನಗರ ಪಾಲಿಕೆಗಳ 2,869 ಸ್ಥಾನಗಳಲ್ಲಿ 1,425 ಸ್ಥಾನಗಳನ್ನು ಗೆದ್ದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯಲ್ಲಿ ಜಯ ಸಾಧಿಸಿರುವ ಬಿಜೆಪಿ, ರಾಜ್ಯದ ಏಕೈಕ ಅತಿದೊಡ್ಡ ಮತ್ತು ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. 227 ಸದಸ್ಯ ಬಲದ ಬಿಎಂಸಿಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದಿದ್ದು, ಶಿವಸೇನಾ 29 ಸ್ಥಾನಗಳನ್ನು ಪಡೆದುಕೊಂಡಿದೆ. ಶಿವಸೇನಾ (ಯುಬಿಟಿ) 65 ಮತ್ತು ಎಂಎನ್‌ಎಸ್ ಆರು ಸ್ಥಾನಗಳನ್ನು ಗೆದ್ದಿವೆ. ವಂಚಿತ್ ಬಹುಜನ ಅಘಾಡಿ (ವಿಬಿಎ) ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ 24 ಸ್ಥಾನಗಳನ್ನು ಗಳಿಸಿದ್ದು, ಎಐಎಂಐಎಂ 8, ಎನ್‌ಸಿಪಿ 3, ಸಮಾಜವಾದಿ ಪಕ್ಷ 2 ಮತ್ತು ಎನ್‌ಸಿಪಿ (ಎಸ್‌ಪಿ) ಕೇವಲ ಒಂದು ಸ್ಥಾನ ಗಳಿಸಿವೆ. ಪುಣೆ ಚುನಾವಣೆಯಲ್ಲಿ ಬಿಜೆಪಿ 119 ಸ್ಥಾನಗಳನ್ನು ಗೆದ್ದು ಪವಾರ್ ಕುಟುಂಬಕ್ಕೆ ರಾಜಕೀಯ ಹೊಡೆತ ನೀಡಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 27 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅದರ ಮಿತ್ರಪಕ್ಷ ಎನ್‌ಸಿಪಿ (ಎಸ್‌ಪಿ) ಮೂರು ಸ್ಥಾನಗಳನ್ನು ಮತ್ತು ಕಾಂಗ್ರೆಸ್ 15 ಸ್ಥಾನಗಳನ್ನು ಪಡೆದಿವೆ. ಛತ್ರಪತಿ ಸಂಭಾಜಿನಗರದಲ್ಲಿ ಬಿಜೆಪಿ 57, ಶಿವಸೇನಾ 13, ಕಾಂಗ್ರೆಸ್ 1 ಮತ್ತು ಎಐಎಂಐಎಂ 33 ಸ್ಥಾನಗಳನ್ನು ಗಳಿಸಿವೆ. ಅಂತಿಮ ಲೆಕ್ಕಾಚಾರದ ಪ್ರಕಾರ, ಒಟ್ಟು 2,869 ಸ್ಥಾನಗಳಲ್ಲಿ ಬಿಜೆಪಿ 1,425 ಸ್ಥಾನಗಳನ್ನು ಗೆದ್ದಿದೆ. ಶಿವಸೇನಾ 399, ಕಾಂಗ್ರೆಸ್ 324, ಎನ್‌ಸಿಪಿ 167, ಶಿವಸೇನಾ (ಯುಬಿಟಿ) 155, ಎನ್‌ಸಿಪಿ (ಎಸ್‌ಪಿ) 36, ಎಂಎನ್‌ಎಸ್ 13, ಬಿಎಸ್‌ಪಿ 6, ಇತರ ಪಕ್ಷಗಳು 129, ಮಾನ್ಯತೆ ಪಡೆಯದ ಪಕ್ಷಗಳು 196 ಮತ್ತು 19 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶಗಳು 2029ರ ಚುನಾವಣೆಗೆ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಬಿಜೆಪಿಯನ್ನು ರಾಜ್ಯದ ಏಕೈಕ ಅತಿದೊಡ್ಡ ಮತ್ತು ಬಲಿಷ್ಠ ಪಕ್ಷವಾಗಿ ಬಿಂಬಿಸಿವೆ. ಈ ಫಲಿತಾಂಶಗಳು ಮಹಾಯುತಿಯೊಳಗಿನ ಸಂಭಾವ್ಯ ಅಧಿಕಾರ ಪ್ರಾಬಲ್ಯವನ್ನು ತೋರಿಸುವುದರ ಜತೆಗೆ, ವಿರೋಧ ಪಕ್ಷವಾಗಿರುವ ಮಹಾ ವಿಕಾಸ್ ಅಘಾಡಿಯ ಭವಿಷ್ಯದ ಬಗ್ಗೆ ಸಹ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮರಾಠಿ ಮತ ಬ್ಯಾಂಕ್‌ ನ ಕ್ರೋಡೀಕರಣ 20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್ ಮತ್ತು ರಾಜ್ ಠಾಕ್ರೆ ಅವರ ಪ್ರಯತ್ನಗಳು ಮರಾಠಿ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವ ಉದ್ದೇಶ ಹೊಂದಿದ್ದವು. ಆ ಭಾವನಾತ್ಮಕ ಆಕರ್ಷಣೆ ಮುಂಬೈನ ಪ್ರಮುಖ ಮರಾಠಿ ಮತದಾರರ ಪ್ರದೇಶಗಳಾದ ದಾದರ್, ಮಾಹಿಮ್, ಪರೇಲ್ ಸೇರಿದಂತೆ ಕೆಲವು ವಾರ್ಡ್‌ಗಳಲ್ಲಿ ಪರಿಣಾಮ ಬೀರಿತು. ಈ ಕ್ಷೇತ್ರಗಳಲ್ಲಿ ಠಾಕ್ರೆ ಬಣದ ಶಿವಸೇನಾ, ಶಿಂಧೆ ಬಣದ ಅಭ್ಯರ್ಥಿಗಳನ್ನು ಸೋಲಿಸಿತು. ಆದರೆ ರಾಜ್ಯದ ಉಳಿದ ಭಾಗಗಳಲ್ಲಿ ಉದ್ಧವ್ ಠಾಕ್ರೆ ಅವರಿಗೆ ಹಿನ್ನಡೆ ಎದುರಾಯಿತು. ಉದ್ಧವ್ ಬಣಕ್ಕೆ ಹಿನ್ನಡೆ; ಫಲಿತಾಂಶಗಳು ಹೇಳುವುದೇನು? ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣಾ ಫಲಿತಾಂಶಗಳು ಉದ್ಧವ್ ಠಾಕ್ರೆ ಮತ್ತು ಶಿವಸೇನಾ (ಯುಬಿಟಿ)ಗೆ ನಿರ್ಣಾಯಕ ತಿರುವು ತಂದಿವೆ. ಭಾರತದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲಿನ 25 ವರ್ಷಗಳ ಆಡಳಿತ ಈ ಚುನಾವಣೆಯೊಂದಿಗೆ ಅಂತ್ಯಗೊಂಡಿದೆ. ಬಿಎಂಸಿ ಕೇವಲ ಅಧಿಕಾರದ ಸಂಕೇತವಲ್ಲ; ಪಕ್ಷದ ರಾಜಕೀಯ ಪ್ರಭಾವ ಮತ್ತು ಆರ್ಥಿಕ ಬಲದ ಪ್ರಮುಖ ಮೂಲವೂ ಆಗಿತ್ತು. ಮಹಾರಾಷ್ಟ್ರದ ಪುರಸಭೆಗಳಲ್ಲಿ ಆಡಳಿತಾರೂಢ ಮಹಾಯುತಿ ಗೆಲ್ಲುವ ಮೂಲಕ ಬಿಜೆಪಿಯ ನಗರ ಪ್ರಾಬಲ್ಯ ಇನ್ನಷ್ಟು ಗಟ್ಟಿಯಾಗಿದೆ. ಸೀಮಿತ ಸಂಪನ್ಮೂಲಗಳೊಂದಿಗೆ ಹೋರಾಡುತ್ತಾ ಉದ್ಧವ್ ಠಾಕ್ರೆ ಮುಂಬೈ ಕೇಂದ್ರಿತ ಪ್ರಚಾರ ನಡೆಸಿದ್ದರು. ಅವರು ‘ಮರಾಠಿ ಮನೂಸ್’ಗಾಗಿ ಕಲ್ಯಾಣದ ಸಂದೇಶ ಹಾಗೂ ಸೇನೆಯ ಸಾಂಪ್ರದಾಯಿಕ ತಳಮಟ್ಟದ ಜಾಲವನ್ನು ಅವಲಂಬಿಸಿದ್ದರು. ಸೋದರ ಸಂಬಂಧಿ ರಾಜ್ ಠಾಕ್ರೆಯೊಂದಿಗೆ ಯುದ್ಧತಂತ್ರದ ಸಮನ್ವಯವು ಮರಾಠಿ ಮತಗಳನ್ನು ಕ್ರೋಢೀಕರಿಸುವ ಗುರಿಯನ್ನು ಹೊಂದಿತ್ತು. ಈ ತಂತ್ರವು ಶಿವಸೇನಾ (ಯುಬಿಟಿ)ಗೆ ದಕ್ಷಿಣ–ಮಧ್ಯ ಮುಂಬೈನಲ್ಲಿ, ದಾದರ್‌ ನಿಂದ ಬೈಕುಲ್ಲಾದವರೆಗೆ ಬಲವಾದ ಮತಾಧಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದರೂ, ಬಿಎಂಸಿ ಅಧಿಕಾರ ಕಳೆದುಕೊಳ್ಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಏಕನಾಥ್ ಶಿಂಧೆ ನೇತೃತ್ವದ ಪ್ರತಿಸ್ಪರ್ಧಿ ಬಣದೊಂದಿಗೆ ಹೋಲಿಸಿದರೆ, ಠಾಕ್ರೆ ಮುಂಬೈನಲ್ಲಿ ತನ್ನ ನೆಲೆಯನ್ನು ಉಳಿಸಿಕೊಂಡರು. 25 ವರ್ಷಗಳ ಬಳಿಕ ಬಿಎಂಸಿ ಅಧಿಕಾರ ಕಳೆದುಕೊಂಡಿದ್ದರೂ, ಠಾಕ್ರೆಗಳು ತಮ್ಮ ಮರಾಠಿ ಗುರುತಿನ ರಾಜಕೀಯವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. “ಈ ಹೋರಾಟ ಇನ್ನೂ ಮುಗಿದಿಲ್ಲ” ಎಂದು ಶಿವಸೇನಾ (ಯುಬಿಟಿ) ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಮರಾಠಿಗಳಿಗೆ ಯೋಗ್ಯ ಗೌರವ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಈ ಸೋಲು ಶಿವಸೇನಾ (ಯುಬಿಟಿ)ಗೆ ತೀವ್ರ ಹೊಡೆತ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲಿನ ನಿಯಂತ್ರಣವು ದಶಕಗಳ ಕಾಲ ಅವಿಭಜಿತ ಶಿವಸೇನೆಗೆ ಪೋಷಕ ಜಾಲಗಳು, ಅಸ್ಮಿತೆ ಮತ್ತು ಸಾಂಸ್ಥಿಕ ಬಲಕ್ಕೆ ವಿಶಿಷ್ಟ ಪ್ರವೇಶವನ್ನು ನೀಡಿತ್ತು. ಆದರೆ ಇದೀಗ ಪಕ್ಷ ವಿರೋಧ ಪಕ್ಷದ ಸ್ಥಾನಕ್ಕೆ ಸರಿದಿದೆ. ಸೋಲಿನ ಬಳಿಕ ಪಕ್ಷಾಂತರವನ್ನು ತಡೆಯುವುದು, ಮಹಾ ವಿಕಾಸ್ ಅಘಾಡಿಯ ಪತನದಿಂದ ಪಾಠ ಕಲಿಯುವುದು ಮತ್ತು ವಿಧಾನ ಪರಿಷತ್ತಿನಲ್ಲಿ ಅವಧಿ ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಸವಾಲು ಉದ್ಧವ್ ಠಾಕ್ರೆ ಎದುರಾಗಿದೆ. ತಮ್ಮ ಸಾಂಪ್ರದಾಯಿಕ ಭದ್ರಕೋಟೆಗಳನ್ನು ಮೀರಿ ಪ್ರಸ್ತುತವಾಗಿರಲು, ಸೇನಾ (ಯುಬಿಟಿ) ರಾಜಕೀಯವನ್ನು ಮರುಕಲ್ಪಿಸಿಕೊಳ್ಳಬೇಕಾಗಿದೆ. ಮೂಲ ಮರಾಠಿ ಮತದಾರರನ್ನು ಮೀರಿ ಆಕರ್ಷಣೆಯನ್ನು ವಿಸ್ತರಿಸುವುದು ಹಾಗೂ ನಗರ ಆಡಳಿತದ ಎರಡೂ ಹಂತಗಳನ್ನು ನಿಯಂತ್ರಿಸುತ್ತಿರುವ ಬಿಜೆಪಿಯನ್ನು ಎದುರಿಸಬಲ್ಲ ಒಕ್ಕೂಟವನ್ನು ಪುನರ್‌ನಿರ್ಮಿಸುವುದು ಅಗತ್ಯವಾಗಿದೆ. ಪುಣೆ ಮುನ್ಸಿಪಲ್ ಚುನಾವಣೆಯಲ್ಲಿ ಪವಾರ್ ಬ್ರ್ಯಾಂಡ್‌ಗೆ ಹಿನ್ನಡೆ ಪುಣೆ ಮತ್ತು ಪಿಂಪ್ರಿ–ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶಗಳು ಸ್ಪಷ್ಟ ರಾಜಕೀಯ ಸಂದೇಶವನ್ನು ನೀಡಿವೆ. ಈ ನಗರ ಶಕ್ತಿ ಕೇಂದ್ರಗಳಲ್ಲಿ ಒಂದು ಕಾಲದಲ್ಲಿ ನಿರ್ಣಾಯಕವೆಂದು ಪರಿಗಣಿಸಲ್ಪಟ್ಟಿದ್ದ ಪವಾರ್ ಬ್ರ್ಯಾಂಡ್ ಹಿನ್ನಡೆಯನ್ನು ಅನುಭವಿಸಿದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಎರಡು ಬಣಗಳ ನಡುವೆ ಯುದ್ಧತಂತ್ರದ ಸಮನ್ವಯ ಇದ್ದರೂ, ನಿರೀಕ್ಷಿಸಿದ ಮಟ್ಟಿಗೆ ಮತಗಳು ಬಂದಿಲ್ಲ. ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಕಳೆದ ದಶಕದಲ್ಲಿ ಪುಣೆಯ ಮತದಾರರ ಆದ್ಯತೆಗಳಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಮಧ್ಯಮ ವರ್ಗ, ಮೊದಲ ಬಾರಿಗೆ ಮತದಾನ ಮಾಡುವವರು ಮತ್ತು ಅಪಾರ್ಟ್‌ಮೆಂಟ್‌ ಗಳಲ್ಲಿ ವಾಸಿಸುವ ಜನರು ಸ್ಥಳೀಯ ನಾಯಕತ್ವಕ್ಕಿಂತ ಆಡಳಿತ, ಮೂಲಸೌಕರ್ಯ ಮತ್ತು ರಾಷ್ಟ್ರೀಯ ರಾಜಕೀಯ ನಿರೂಪಣೆಗಳಿಗೆ ಹೆಚ್ಚು ಸ್ಪಂದಿಸುತ್ತಿದ್ದಾರೆ. ಈ ಬದಲಾವಣೆಗೆ ಪವಾರ್ ಬ್ರ್ಯಾಂಡ್‌ಗಳು ಹೊಂದಿಕೊಳ್ಳಲು ವಿಫಲವಾದವು. ಪಿಂಪ್ರಿ–ಚಿಂಚ್‌ವಾಡ್ ವಿಭಿನ್ನವಾಗಿರಲಿದೆ ಎಂಬ ನಿರೀಕ್ಷೆಯಿದ್ದರೂ, ಅಲ್ಲಿ ದೊರೆತ ಫಲಿತಾಂಶಗಳು ಎನ್‌ಸಿಪಿ ಪಾಳಯವನ್ನು ನಿರಾಶೆಗೊಳಿಸಿವೆ. ಅಜಿತ್ ಪವಾರ್ ಅವರ ವೈಯಕ್ತಿಕ ಪ್ರಭಾವವಿದ್ದರೂ, ಬಲವಾದ ಸಾಂಸ್ಥಿಕ ಒಗ್ಗಟ್ಟು ಮತ್ತು ಸ್ಪಷ್ಟ ರಾಜಕೀಯ ನಿರೂಪಣೆ ಇಲ್ಲದೆ ವರ್ಚಸ್ಸು ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ಈ ಫಲಿತಾಂಶಗಳು ಸೂಚಿಸುತ್ತವೆ. ತೃಪ್ತಿಕರ ಸಾಧನೆ ಮಾಡಿದ ಕಾಂಗ್ರೆಸ್ ಬಿಜೆಪಿ ಮತ್ತು ಶಿವಸೇನಾ (ಶಿಂಧೆ) ನಂತರ ರಾಜ್ಯಾದ್ಯಂತ ಅತಿ ಹೆಚ್ಚು ಮುನ್ಸಿಪಲ್ ಕಾರ್ಪೊರೇಷನ್ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ, ಮಹಾರಾಷ್ಟ್ರದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಹೊರಗೆ ಬಿಜೆಪಿ ಬಳಿಕ ಕಾಂಗ್ರೆಸ್‌ ನ ಪ್ರಾಬಲ್ಯವಿದೆ. ಹಲವು ನಗರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸ್ಥಳೀಯ ನಾಯಕತ್ವದ ಪಾತ್ರ ಮಹತ್ವದ್ದಾಗಿದೆ. ಕೊಲ್ಹಾಪುರದಲ್ಲಿ ಸತೇಜ್ ‘ಬಂಟಿ’ ಪಾಟೀಲ್ ಮತ್ತು ಲಾತೂರಿನಲ್ಲಿ ಅಮಿತ್ ದೇಶಮುಖ್ ನಿರ್ವಹಿಸಿದ ಪಾತ್ರವು ಗಮನಾರ್ಹವಾಗಿದೆ. ಇದಕ್ಕೆ ವಿರುದ್ಧವಾಗಿ, ಸೋಲಾಪುರದಂತಹ ಸ್ಥಳಗಳಲ್ಲಿ ಸ್ಥಳೀಯ ನಾಯಕತ್ವದ ವಿಭಜನೆ ಪಕ್ಷದ ಪ್ರದರ್ಶನಕ್ಕೆ ಧಕ್ಕೆಯುಂಟುಮಾಡಿದೆ. ಅಕೋಲಾ, ಅಮರಾವತಿ ಮತ್ತು ನಾಗ್ಪುರದಂತಹ ನಗರಗಳಲ್ಲಿ ವಿಬಿಎ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಲಾಭ ಕಂಡಿದೆ. ನವಯಾನ ಬೌದ್ಧ, ಮುಸ್ಲಿಂ ಮತದಾರರು ಮತ್ತು ಪ್ರಗತಿಪರ ವರ್ಗಗಳನ್ನು ಕ್ರೋಢೀಕರಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಆದರೆ ಥಾಣೆ, ನವಿ ಮುಂಬೈ, ಕಲ್ಯಾಣ–ಡೊಂಬಿವಿಲಿ, ವಸೈ–ವಿರಾರ್, ಪನ್ವೇಲ್ ಮತ್ತು ಉಲ್ಹಾಸ್‌ನಗರಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ. ಮುಸ್ಲಿಂ ಬಹುಸಂಖ್ಯಾತ ಭಿವಂಡಿ–ನಿಜಾಂಪುರ ಮತ್ತು ಮುಸ್ಲಿಂ–ಕ್ರಿಶ್ಚಿಯನ್ ಜನಸಂಖ್ಯೆ 20 ಶೇಕಡಕ್ಕೂ ಹೆಚ್ಚು ಇರುವ ಮೀರಾ–ಭಯಂದರ್‌ನಲ್ಲಿ ಮಾತ್ರ ಪಕ್ಷ ಉತ್ತಮ ಪ್ರದರ್ಶನ ನೀಡಿದೆ. ಹಿಂದೂ ಮಧ್ಯಮ ವರ್ಗದ ಪ್ರದೇಶಗಳಲ್ಲಿ ಪಕ್ಷದ ಹಿಡಿತ ದುರ್ಬಲವಾಗಿಯೇ ಉಳಿದಿದ್ದು, ಮುಸ್ಲಿಂ ಮತ್ತು ದಲಿತರಂತಹ ಪ್ರಮುಖ ಜನಸಂಖ್ಯಾ ಗುಂಪುಗಳಲ್ಲಿ ಬೆಂಬಲವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.

ವಾರ್ತಾ ಭಾರತಿ 17 Jan 2026 8:25 pm

ಹಾಸ್ಟೆಲ್ ವಾರ್ಡನ್ ನಾಪತ್ತೆ

ಉಡುಪಿ, ಜ.17: ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ವಿದ್ಯಾರ್ಥಿ ನಿಲಯದ ಒಂದನೇ ಮಹಡಿಯಲ್ಲಿ ವಾಸವಿದ್ದ ಚಿತ್ರದುರ್ಗ ಮೂಲದ ದರ್ಶನ್ ಎಸ್ (23) ಎಂಬ ಯುವಕ ಜನವರಿ 12ರಂದು ರಾತ್ರಿ 8 ಬಳಿಕ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ದೂ.ಸಂಖ್ಯೆ: 0820-2520444, ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 9480805408 ಹಾಗೂ ಪೊಲೀಸ್ ಉಪನಿರೀಕ್ಷಕರು ದೂ.ಸಂಖ್ಯೆ: 9480805445ನ್ನು ಸಂಪರ್ಕಿಸಬಹುದು ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 17 Jan 2026 8:24 pm

ಜ.19, 20: ಉಡುಪಿ ಜಿಲ್ಲಾ ಸರಕಾರಿ ನೌಕರರ ಕ್ರೀಡಾಕೂಟ

ಉಡುಪಿ, ಜ.17: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಶಾಖೆಗಲ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜನವರಿ 19 ಮತ್ತು 20ರಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜ.19ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಯಶ್‌ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಶಾಸಕರಾದ ವಿ.ಸುನಿಲ್ ಕುಮಾರ್, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 17 Jan 2026 8:20 pm

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಹೌರಾ-ಗುವಾಹಟಿ ನಡುವೆ ಸಂಚರಿಸಲಿರುವ ರೈಲು

ವಾರ್ತಾ ಭಾರತಿ 17 Jan 2026 8:20 pm

ಪಿ.ಎಂ. ಶ್ರಮಯೋಗಿ ಮಾನ್-ಧನ್ ಯೋಜನೆ: ವಿಶೇಷ ನೋಂದಣಿ ಅಭಿಯಾನ

ಉಡುಪಿ, ಜ.17: ಕೇಂದ್ರ ಸರಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಹಾಗೂ ವ್ಯಾಪಾರಿ ಗಳಿಗೆ ಮತ್ತು ಸ್ವಉದ್ಯೋಗಿಗಳಿಗೆ ರಾಷ್ಟ್ರೀಯ ಪೆನ್ಷನ್ (ಎನ್‌ಪಿಎಸ್ ಟ್ರೇಡರ್ಸ್‌) ಯೋಜನೆಗಳಡಿ ಅಸಂಘಟಿತ ವಲಯದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳನ್ನು ನೋಂದಾಯಿಸಲು ಜ. 15ರಿಂದ ಮಾರ್ಚ್ 15ರವರೆಗೆ ‘ವಿಶೇಷ ನೋಂದಣಿ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. 18ರಿಂದ 40 ವರ್ಷ ದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ಹೆಸರು ನೋಂದಾಯಿಸಬಹುದಾಗಿದೆ. ಇದರಲ್ಲಿ ವಯಸ್ಸಿಗನುಗುಣವಾಗಿ ಮಾಸಿಕವಾಗಿ 55 ರೂ.ನಿಂದ 200 ರೂ.ವರೆಗೆ ವಂತಿಕೆ ಪಾವತಿ ಮಾಡಬೇಕು. ಕೇಂದ್ರ ಸರಕಾರದ ವತಿಯಿಂದ ಅಷ್ಟೇ ವಂತಿಕೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಸದರಿ ಮೊತ್ತವನ್ನು ಸಂಗ್ರಹಿಸಲಾ ಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಮಾಸಿಕ 3000 ರೂ. ಪಿಂಚಣಿ ಸೌಲಭ್ಯ ಪಡೆಯಬಹುದು. ಈ ಯೋಜನೆಯಡಿ ನರೇಗಾ ಕಾರ್ಮಿಕರು, ಎಸ್.ಹೆಚ್.ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮೀನುಗಾರರು, ಇನ್ನಿತರೆ ಅಸಂಘಟಿತ ವಲಯಗಳ ಕಾರ್ಮಿಕರು ಹಾಗೂ ವ್ಯಾಪಾರಿಗಳು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ರಜತಾದ್ರಿಯ ಕಾರ್ಮಿಕ ಅಧಿಕಾರಿಗಳ ಕಚೇರಿ ಅಥವಾ ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಸಂಪರ್ಕಿಸ ಬಹುದು ಎಂದು ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 17 Jan 2026 8:14 pm

Chikkamagaluru | ಡಿಸಿಸಿ ಬ್ಯಾಂಕ್ ಚುನಾವಣೆ; ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು; ಕಾಂಗ್ರೆಸ್‍ಗೆ ಮುಖಭಂಗ

ಚಿಕ್ಕಮಗಳೂರು : ಕುತೂಹಲ ಮೂಡಿಸಿದ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಮೈತ್ರಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. 13 ನಿರ್ದೇಶಕರ ಸ್ಥಾನಗಳಲ್ಲಿ 11 ಬಿಜೆಪಿ ಹಾಗೂ 2 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಶನಿವಾರ ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 4ರ ವರೆಗೂ ಮತದಾನ ಪ್ರಕ್ರಿಯೆ ನಡೆದು 4:30ರ ಬಳಿಕ ಮತ ಎಣಿಕೆ ಕಾರ್ಯ ನಡೆಯಿತು. ಚಿಕ್ಕಮಗಳೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಎರಡು ಸ್ಥಾನಕ್ಕೆ ಎಂ.ಎಸ್.ನಿರಂಜನ್, ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ ಸ್ಫರ್ಧಿಸಿದ್ದರು. ಬಲಾಢ್ಯರು ಈ ಕ್ಷೇತ್ರದಿಂದ ಸ್ಫರ್ಧಿಸಿದ್ದರಿಂದ ಡಿಸಿಸಿ ಬ್ಯಾಂಕ್ ಚುನಾವಣೆ ಬಾರಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಬಿಜೆಪಿ ಮುಖಂಡರೇ ಆಗಿದ್ದ ಎಂ.ಎಸ್.ನಿರಂಜನ್ ಈ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರದ ಫಲಿತಾಂಶದ ಮೇಲೆ ಹೆಚ್ಚು ಕುತೂಹಲ ಮೂಡಿತ್ತು. ಚಿಕ್ಕಮಗಳೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಎರಡು ಸ್ಥಾನಗಳಿಗೆ ಒಟ್ಟು 32 ಮತದಾರರಿದ್ದು, ಎಸ್.ಎಲ್.ಭೋಜೇಗೌಡ 30 ಮತಗಳನ್ನು ಪಡೆದು ಜಯಶೀಲರಾದರೇ, 27ಮತಗಳನ್ನು ಪಡೆಯುವ ಮೂಲಕ ಸಿ.ಟಿ.ರವಿ ಗೆಲುವು ಸಾಧಿಸಿದರು. ಮೈತ್ರಿ ಪಕ್ಷದ ಅಭ್ಯರ್ಥಿಗಳ ಎದುರು ಸ್ಫರ್ಧಿಸಿದ್ದ ಎಂ.ಎಸ್.ನಿರಂಜನ್ ಕೇವಲ 5 ಮತಗಳನ್ನು ಪಡೆದುಕೊಳ್ಳುವ ಮೂಲಕ ಬಲಾಢ್ಯ ಸ್ಫರ್ಧಿಗಳ ಎದುರು ಸೋಲು ಕಂಡರು. ಚಿಕ್ಕಮಗಳೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹಾಗೂ ಮಾಜಿ ಮಂತ್ರಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸ್ಫರ್ಧಿಸಿದ್ದರಿಂದ ಈ ಚುನಾವಣೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಕೊಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಯು.ಎಸ್.ಪ್ರಜ್ವಲ್, ಕೆ.ಎಸ್.ರವೀಂದ್ರ ಹಾಗೂ ಬಿ.ಎಸ್.ಸತೀಶ್ ಸ್ಫರ್ಧೆ ಮಾಡಿದ್ದರು. ಯು.ಎಸ್.ಪ್ರಜ್ವಲ್ 5 ಮತ, ಕೆ.ಎಸ್.ರವೀಂದ್ರ ಶೂನ್ಯ, ಬಿ.ಎಸ್.ಸತೀಶ್ 6 ಮತಗಳನ್ನು ಪಡೆದುಕೊಳ್ಳುವ ಮೂಲಕ ಬಿ.ಎಸ್.ಸತೀಶ್ ಜಯಶೀಲರಾದರು. ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಒಂದು ಸ್ಥಾನಕ್ಕೆ ಕೆ.ಎಸ್.ಆನಂದ್ ಹಾಗೂ ಎಚ್.ಕೆ.ದಿನೇಶ್ ಹೊಸೂರು ಸ್ಫರ್ಧಿಸಿದ್ದು, ಕೆ.ಎಸ್.ಆನಂದ್ 3ಮತಗಳನ್ನು ಪಡೆದುಕೊಂಡರೇ, ಎಚ್.ಕೆ.ದಿನೇಶ್ ನಾಲ್ಕು ಮತಗಳನ್ನು ಪಡೆದುಕೊಳ್ಳುವ ಮೂಲಕ ಕಡೂರು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ವಿರುದ್ಧ ಗೆಲುವಿನ ನಗೆ ಬೀರಿದರು. ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಗ್ರಾಮೀಣ ಅಭಿವೃದ್ಧಿ ಮತ್ತು ಇತರ ಕ್ಷೇತ್ರದ 1ಸ್ಥಾನಕ್ಕೆ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಟಿ.ಎಲ್.ರಮೇಶ್ ಸ್ಫರ್ಧಿಸಿದ್ದು, ಎಂ.ಪಿ.ಕುಮಾರಸ್ವಾಮಿ 38 ಮತಗಳನ್ನು ಪಡದುಕೊಂಡರೇ, ಟಿ.ಎಲ್.ರಮೇಶ್ 56 ಮತಗಳನ್ನು ಪಡೆಯುವ ಮೂಲಕ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಎದುರು ಗೆಲುವು ಸಾಧಿಸಿದರು. ಒಟ್ಟಾರೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು  ಗೆಲುವು ಸಾಧಿಸಿದರು. ಕಾಂಗ್ರೆಸ್‍ಗೆ ಮುಖಭಂಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾರಂಭದಲ್ಲಿಯೇ ಸಂಪೂರ್ಣ ಕೈಚೆಲ್ಲಿದ್ದರೇ, ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯೋತ್ಪನ ಸಹಕಾರ ಸಂಘಗಳ ಒಂದು ಕ್ಷೇತ್ರದಿಂದ ಕಡೂರು ಶಾಸಕ ಕೆ.ಎಸ್.ಆನಂದ್ ಹಾಗೂ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗಳು ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಇತರೆ ಸಹಕಾರ ಸಂಘಗಳ ಒಂದು ಕ್ಷೇತ್ರದಿಂದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಫರ್ಧಿಸಿದ್ದರು. ಇಬ್ಬರು ಸೋಲು ಕಾಣುವ ಮೂಲಕ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ. ಜಿಲ್ಲೆಯಲ್ಲಿ ಐದು ಜನ ಶಾಸಕರಿದ್ದರೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ. ಸಂಭ್ರಮಾಚಾರಣೆ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಎಸ್.ಎಲ್.ಭೋಜೇಗೌಡ ಹಾಗೂ ಸಿ.ಟಿ.ರವಿ ಸೇರಿದಂತೆ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿ ದ್ದಂತೆ, ಬ್ಯಾಂಕ್ ಮುಂಭಾಗ ಜಮಾಯಿಸಿದ್ದ ಮುಖಂಡರು ಹಾಗೂ ಪದಾಧಿಕಾರಿಗಳು ಮೈತ್ರಿ ಪಕ್ಷದ ಪರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಹಿಸಿ ಹಂಚಿ ಸಂಭ್ರಮಿಸಿದರು. ಗೆಲುವಿನ ಹರ್ಷದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಚುನಾವಣೆ ಹಿನ್ನಲೆ ಬೀಗಿ ಭದ್ರತೆ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ನಗರದ ರತ್ನಗಿರಿ ರಸ್ತೆಯಲ್ಲಿರುವ ಬ್ಯಾಂಕ್ ಆವರಣದ ಸುತ್ತಮುತ್ತ ನಿಷೇಧಾಜ್ಞೆಯನ್ನು ವಿಧಿಸಲಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಬಸ್‍ನಲ್ಲಿ ಬಂದು ಮತದಾನ ಮಾಡಿದ ಮತದಾರರು: ಚುನಾವಣೆ ಕಣದಲ್ಲಿ ಬಲಾಢ್ಯರ ಸ್ಫರ್ಧೆಯಿಂದ ಚುನಾವಣೆ ಕಣ ಜಿಲ್ಲೆಯಲ್ಲಿ ರಂಗೇರಿತ್ತು. ಮತದಾರರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ (ಅಡ್ಡಮತದಾನ ಭಯದಿಂದ) ಎಸ್.ಎಲ್.ಭೋಜೇಗೌಡ ಮತ್ತು ಸಿ.ಟಿ.ರವಿ ಮತದಾರರು ಮತ್ತು ಪಕ್ಷದ ಕಾರ್ಯಕರ್ತರ ಜತೆ ಧರ್ಮಸ್ಥಳ ಯಾತ್ರೆಯನ್ನು ಕೈಗೊಂಡಿದ್ದರು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಶನಿವಾರ ಮತದಾನ ಪ್ರಕ್ರಿಯೆ ನಡೆಯುವ ವೇಳೆ ಎಸ್.ಎಲ್.ಭೋಜೇಗೌಡ ಮತ್ತು ಸಿ.ಟಿ.ರವಿ ಖುದ್ದಾಗಿ 28 ಮತದಾರರನ್ನು ಮಿನಿ ಬಸ್‍ನಲ್ಲಿ ಕರೆತಂದಿದ್ದು ವಿಶೇಷವಾಗಿತ್ತು. ʼಅಭೂತಪೂರ್ವ ಬೆಂಬಲವನ್ನು ರೈತ ಸಮುದಾಯ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬ್ಯಾಂಕಿನ ಆಡಳಿತ ಚುಕ್ಕಾಣಿಯನ್ನು ಎನ್‍ಡಿಎ ಒಕ್ಕೂಟಕ್ಕೆ ಒಪ್ಪಿಸಿದ್ದಾರೆ. ರೈತ ಸಮುದಾಯದ ಏಳಿಗೆಗೆ ಶ್ರಮಿಸುತ್ತೇವೆʼ -ಎಸ್.ಎಲ್.ಭೋಜೇಗೌಡ. ʼಇದು ನಿರೀಕ್ಷಿತ ಗೆಲುವು, ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷವನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರೈತರ ಏಳಿಗೆ ಹಾಗೂ ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ರಮಿಸುತ್ತೇವೆʼ -ಸಿ.ಟಿ.ರವಿ.

ವಾರ್ತಾ ಭಾರತಿ 17 Jan 2026 8:14 pm

RCB ಅಭಿಮಾನಿಗಳಿಗೆ ಬಂಪರ್‌ ಸುದ್ದಿ, ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ ಆಯೋಜನೆಗೆ ಸರ್ಕಾರ ಗ್ರೀನ್‌ ಸಿಗ್ನಲ್

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ ಜೂನ್‌ನಲ್ಲಿ ನಡೆದ ಕಾಲ್ತುಳಿತದ ದುರಂತದ ನಂತರ, ಭದ್ರತಾ ಕಾರಣಗಳಿಗಾಗಿ ಇಲ್ಲಿ ಪಂದ್ಯಗಳನ್ನು ನಿಷೇಧಿಸಲಾಗಿತ್ತು. ಇದೀಗ ಸರ್ಕಾರದ ಗೃಹ ಇಲಾಖೆಯು ಕೆಎಸ್‌ಸಿಎಗೆ ಷರತ್ತುಬದ್ಧ ಅನುಮತಿ ನೀಡಿದೆ. ಆರ್‌ಸಿಬಿ ತಂಡವು ಜನಸಂದಣಿಯನ್ನು ನಿರ್ವಹಿಸಲು ಅತ್ಯಾಧುನಿಕ ಎಐ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದ್ದು, ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿ ತವರು ನೆಲದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.

ವಿಜಯ ಕರ್ನಾಟಕ 17 Jan 2026 8:10 pm

ಜ.18ರಂದು ಪುತ್ತಿಗೆಯಿಂದ ಶೀರೂರಿಗೆ ‘ಪರ್ಯಾಯ’ ಹಸ್ತಾಂತರ

ಉಡುಪಿ, ಜ.17: ಪ್ರತಿ ಎರಡು ವರ್ಷಗಳಿಗೊಮ್ಮೆ ಉಡುಪಿಯ ಜನತೆ ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ‘ಪರ್ಯಾಯ ಮಹೋತ್ಸವ’ ಮತ್ತೆ ಬಂದಿದೆ. ರವಿವಾರ ಮುಂಜಾನೆ ಈ ಬಾರಿಯ ಪರ್ಯಾಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದಿಂದ ಶೀರೂರು ಮಠಕ್ಕೆ ಹಸ್ತಾಂತರಗೊಳ್ಳಲಿದೆ. ಅದ್ದೂರಿಯ, ವರ್ಣರಂಜಿತ ಮೆರವಣಿಗೆಯಲ್ಲಿ ಸಾಗಿಬರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರು, ಮುಂಜಾನೆ 5:45ಕ್ಕೆ ಸರಿಯಾಗಿ ತಮ್ಮ 21ರ ಕಿರುಪ್ರಾಯದಲ್ಲೇ ಮೊದಲ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿ ಮುಂದಿನ ವರ್ಷಗಳ ಕಾಲ ಉಡುಪಿಯ ಪರ್ಯಾಯ ಪೀಠಾಧಿಪತಿ ಎನಿಸಿಕೊಳ್ಳಲಿದ್ದಾರೆ. ಕಳೆದೆರಡು ವರ್ಷಗಳಿಂದ ಪರ್ಯಾಯವನ್ನು ನಡೆಸಿಕೊಟ್ಟ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮಠದ ಅಧಿಕಾರ ಹಸ್ತಾಂ ತರದ ಸಂಕೇತವಾದ ಅಕ್ಷಯಪಾತ್ರೆ, ಸಟುಗ ಹಾಗೂ ಕೀಲಿಕೈಯನ್ನು ನೀಡುವ ಮೂಲಕ ಕೃಷ್ಣ ಪೂಜೆಯ ಅಧಿಕಾರವನ್ನೂ ಕಿರಿಯ ಸ್ವಾಮೀಜಿಗೆ ಒಪ್ಪಿಸುತ್ತಾರೆ. ಕರಾವಳಿ ಜಿಲ್ಲೆಗಳ ನಾಡಹಬ್ಬವೆಂದೇ ಖ್ಯಾತಿ ಪಡೆದಿರುವ ಈ ಭಾಗದ ಬಹುದೊಡ್ಡ ಸಾಂಸ್ಕೃತಿಕ ಉತ್ಸವ ‘ಶ್ರೀಕೃಷ್ಣ ಮಠದ ಪರ್ಯಾಯ’ಕ್ಕೆ ಉಡುಪಿ ಮತ್ತೊಮ್ಮೆ ಸಜ್ಜಾಗಿ ನಿಂತಿದೆ. ಈ ಮೂಲಕ ಸುಮಾರು ಎಂಟು ನೂರು ವರ್ಷಗಳ ಹಿಂದೆ ಉಡುಪಿಯಲ್ಲಿ ಶ್ರೀಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದರ ಪೂಜೆಗೆ ತನ್ನ ಎಂಟು ಮಂದಿ ಶಿಷ್ಯರನ್ನು ನಿಯೋಜಿಸಿ ಅವರಿಗೆ ಸರತಿಯಂತೆ ತಲಾ ಎರಡು ತಿಂಗಳ ಕೃಷ್ಣ ಪೂಜೆಯ ಅಧಿಕಾರವನ್ನು ನೀಡಿದ ದ್ವೈತ ಮತದ ಸ್ಥಾಪಕ ಶ್ರೀಮಧ್ವಾಚಾರ್ಯರು ಪ್ರಾರಂಭಿಸಿದ ಪರಂಪರೆ ಈಗಲೂ ಮುಂದುವರಿಯಲಿದೆ. ಶ್ರೀಮಧ್ವಾಚಾರ್ಯರು ಎರಡು ತಿಂಗಳ ಪರ್ಯಾಯ ವ್ಯವಸ್ಥೆ ಮಾಡಿದ್ದರೆ, ಈ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ಗಳನ್ನು ಮಾಡಿದ ಸೋದೆ ಮಠದ ಶ್ರೀವಾದಿರಾಜ ತೀರ್ಥರು (1481-1601) ಅದನ್ನು ಎರಡು ವರ್ಷಗಳಿಗೆ ಏರಿಸಿದರು. ವಾದಿರಾಜರಿಂದ 1522ರಿಂದ ಪ್ರಾರಂಭಗೊಂಡ ಎರಡು ವರ್ಷಗಳ ಪರ್ಯಾಯ ಈಗಲೂ ನಿರ್ವಿಘ್ನ ವಾಗಿ ಮುಂದುವರಿದುಕೊಂಡು ಬಂದಿದೆ. ಅಷ್ಟಮಠಗಳೊಳಗೆ ಎಷ್ಟೇ ಭಿನ್ನಮತಗಳಿದ್ದು, ವಿವಾದದ ಮಟ್ಟಕ್ಕೇರಿ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಈವರೆಗೆ ಪ್ರತಿ ಎರಡು ವರ್ಷಗಳಿ ಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಅಧಿಕಾರದ ಹಸ್ತಾಂತರ ಮಾತ್ರ ಯಾವುದೇ ಅಡೆತಡೆಯಿಲ್ಲದೇ ನಡೆದುಕೊಂಡು ಬಂದಿದೆ. ದ್ವೈವಾರ್ಷಿಕ ಪರ್ಯಾಯದಲ್ಲಿ ಈಗ ನಡೆಯುತ್ತಿರುವುದು 253ನೇ ಪರ್ಯಾಯವಾಗಿದೆ. ತಮ್ಮ ಎರಡು ವರ್ಷಗಳ ಪರ್ಯಾಯಾವಧಿಯನ್ನು ಶಿಷ್ಯರಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಯಶಸ್ವಿ ಯಾಗಿ ಮುಗಿಸಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ರವಿವಾರ ಮುಂಜಾನೆ 5:45ಕ್ಕೆ ಶ್ರೀಕೃಷ್ಣನ ಪೂಜೆಯ ಅಧಿಕಾರದ ಹಸ್ತಾಂತರದ ದ್ಯೋತಕವಾದ ಅಕ್ಷಯ ಪಾತ್ರೆ ಹಾಗೂ ಮಠದ ಕೀಲಿಕೈಯನ್ನು ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಗೆ ನೀಡಲಿದ್ದಾರೆ. ಬಳಿಕ ಶೀರೂರು ಶ್ರೀಗಳು ಮಧ್ವ ಪೀಠಾರೋಹಣ ಮಾಡುವರು. ಇಲ್ಲಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಶೀರೂರು ಶ್ರೀಗಳೇ ಶ್ರೀಕೃಷ್ಣನ ಪೂಜೆಗೆ ಅಧಿಕೃತ ಅಧಿಕಾರ ಪಡೆದಂತಾಗುತ್ತದೆ. ಕಳೆದೊಂದು ವಾರದಿಂದ ನಿರಂತರವಾಗಿ ನಡೆಯುತಿದ್ದ ಪುತ್ತಿಗೆ ಶ್ರೀಗಳ ಪರ್ಯಾಯ ಸಮಾರೋಪ ಸಮಾರಂಭ ಇಂದು ರಥಬೀದಿಯಲ್ಲಿ ಅವರಿಗೆ ಪೌರ ಸನ್ಮಾನ ನೀಡುವ ಮೂಲಕ ಮುಕ್ತಾಯಗೊಂಡಿದೆ. ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರ ಕಳೆದೆರಡು ವರ್ಷಗಳ ತಮ್ಮ ನಾಲ್ಕನೇ ಪರ್ಯಾಯಾವಧಿಯನ್ನು ವಿಶ್ವ ಗೀತಾ ಪರ್ಯಾಯ ಎಂದು ಕರೆದು ಕೊಂಡಿದ್ದಾರೆ. ಸ್ವಾಮೀಜಿ ಅವರ ಕೋಟಿ ಗೀತಾ ಲೇಖನ ಯಜ್ಞದ ಸಂಕಲ್ಪಕ್ಕೂ ನಾಡಿನ ಜನತೆಯಿಂದ ನಿರೀಕ್ಷೆಗೆ ಮೀರಿದ ಬೆಂಬಲ ವ್ಯಕ್ತವಾಗಿದೆ. ಈ ಕೋಟಿ ಗೀತಾ ಲೇಖನ ಯಜ್ಞ ಇನ್ನೂ ಎರಡು ವರ್ಷಗಳ ಕಾಲ ಮುಂದುವರಿಯ ಲಿದೆ ಎಂದು ಅವರು ಈಗಾಗಲೇ ಪ್ರಕಟಿಸಿದ್ದಾರೆ. ಪುತ್ತಿಗೆ ಶ್ರೀಗಳ ಭಗವದ್ಗೀತಾ ಅಭಿಯಾನದ ವಿವಿಧ ಹಂತಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಷ್ಟ್ರಮಟ್ಟದ ಹಲವು ಗಣ್ಯರು ಉಡುಪಿಗೆ ಹಾಗೂ ಮಠಕ್ಕೆ ಬಂದು ಹೋಗಿದ್ದಾರೆ. ಇದಲ್ಲದೇ ಕೃಷ್ಣನಿಗೆ ಸುವರ್ಣ ಪಾರ್ಥಸಾರಥಿ ರಥ, ಕನಕನ ಕಿಂಡಿಗೆ ಸುವಣ‰ ಕವಚ, ಕನಕಮಯ ಸುವರ್ಣ ಮಂಟಪ, ಸುವರ್ಣ ಭಗವದ್ಗೀತೆ ಇತ್ಯಾದಿ ಸಮರ್ಪಣೆಗೊಂಡಿವೆ. ಆದರೆ ತಾವು ಬಯಸಿದಂತೆ ಕಲ್ಸಂಕದಲ್ಲಿ ಶ್ರೀಕೃಷ್ಣ ಮಠಕ್ಕೆ ಪ್ರವೇಶ ದ್ವಾರ ನಿರ್ಮಿಸುವ ಕನಸು ಕೈಗೂಡಿಲ್ಲ. ಅವರು ಮಾಡಿರುವ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖವಾದುದು ಎಂಜಲು ಎಲೆ ತ್ಯಾಜ್ಯದ ನಿರ್ವಹಣೆಗೆ ಘಟಕವೊಂದನ್ನು ಮಠದ ಆವರಣದಲ್ಲಿ ನಿರ್ಮಿಸಿ ಕಾರ್ಯಾರಂಭ ಮಾಡಿ ರುವುದು. ಹಿಂದಿನ ಮೂರನೇ ಪರ್ಯಾಯದಂತೆ ಪುತ್ತಿಗೆ ಶ್ರೀಗಳ ನಾಲ್ಕನೇ ಪರ್ಯಾಯವೂ ಯಾವುದೇ ವಿವಾದಗಳಿಲ್ಲದೇ ಮುಗಿದಿರುವುದು ಅವರ ‘ವಿದೇಶ ಸಂಚಾರ’ ವಿವಾದ ಸದ್ದಿಲ್ಲದೇ ಬಗೆಹರಿದಿರುವುದಕ್ಕೆ ಸಾಕ್ಷಿಯಾಗಿದೆ. ಪರ್ಯಾಯ ಪೀಠವೇರುವ 21ರ ಹರೆಯದ ಶ್ರೀವೇದವರ್ಧನ ತೀರ್ಥರಿಗೆ ಇದು ಚೊಚ್ಚಲ ಪರ್ಯಾಯ. 2018ರಲ್ಲಿ ಅಕಸ್ಮಿಕವಾಗಿ ತೀರಿಕೊಂಡ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ತೆರವು ಮಾಡಿದ ಪೀಠದಲ್ಲಿ ಕುಳಿತಿರುವ ಶ್ರೀವೇದವರ್ಧನ ತೀರ್ಥರಿಗೆ ‘ಹಿರಿಯ ಸ್ವಾಮೀಜಿ’ ಹಾಕಿಕೊಟ್ಟು ಹೋದ ‘ಶೀರೂರು ಪರಂಪರೆ’ಯ ಭಾರವಿದೆ. 2021ರ ಮೇ 14ರಂದು ದ್ವಂದ್ವ ಮಠವಾದ ಸೋದೆ ಮಠದ ಶ್ರೀಗಳಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ ಶ್ರೀವೇದವರ್ಧನ ತೀರ್ಥರು ನಾಲ್ಕೇ ವರ್ಷಕ್ಕೆ ಸರ್ವಜ್ಞ ಪೀಠವೇರುವ ಅದೃಷ್ಟ ಪಡೆದಿದ್ದಾರೆ. ಜನಸಾಮಾನ್ಯರ ಸ್ವಾಮೀಜಿ ಎನಿಸಿದ್ದ ಶ್ರೀಲಕ್ಷ್ಮೀವರ ತೀರ್ಥರು ತೆರವು ಮಾಡಿದ ಪೀಠವನ್ನು ಶ್ರೀವೇದವರ್ಧನರು ಯಾವ ರೀತಿ ತುಂಬುತ್ತಾರೆ ಎಂಬುದನ್ನು ಅವರ ಲಕ್ಷಾಂತರ ಅಭಿಮಾನಿ ಕುತೂಹಲದಿಂದ ಎದುರು ನೋಡುತ್ತಿದೆ. ಬಿಗುಭದ್ರತೆ: ಪರ್ಯಾಯಕ್ಕಾಗಿ ನಗರ ಸಂಪೂರ್ಣ ಸಜ್ಜಾಗಿ ನಿಂತಿದೆ. ನಗರದ ಪ್ರತಿಯೊಂದು ಕಟ್ಟಡಗಳು ರಂಗುರಂಗಿನ ಬಣ್ಣ ತಳೆದು, ಇಡೀನಗರವೇ ಮದುಮಗಳಂತೆ ಸಿಂಗರಿಸಿಕೊಂಡು ನಿಂತಿದೆ. ಪರ್ಯಾಯ ಶಾಂತಿಯುತವಾಗಿ ನಡೆಯುಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ನಗರದಲ್ಲಿ ಗಸ್ತು ತಿರುಗುತಿದ್ದಾರೆ. ಸುಮಾರು ಮೂರು ಲಕ್ಷ ಜನರು ಈ ಬಾರಿಯ ಪರ್ಯಾಯವನ್ನು ವೀಕ್ಷಿಸುವ ನಿರೀಕ್ಷೆ ಪರ್ಯಾಯ ಸ್ವಾಗತ ಸಮಿತಿಯದ್ದಾಗಿದೆ. 32ನೇ ಪರ್ಯಾಯ ಚಕ್ರದ ಐದನೇ ಪರ್ಯಾಯ ಉಡುಪಿಯ ಶ್ರೀಕೃಷ್ಣನನ್ನು ಶ್ರೀಮಧ್ವಾಚಾರ್ಯರು 1278ರ ಮಕರ ಸಂಕ್ರಮಣದ ದಿನದಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರೆಂದು ಪ್ರತೀತಿ ಇದೆ. ಎರಡು ವರ್ಷಗಳಿಗೊಮ್ಮೆ ಪರ್ಯಾಯ ಬದಲಾಗುವ ಕ್ರಮ 1522ರಲ್ಲಿ ಪ್ರಾರಂಭಗೊಂಡಿತು. ಈ ವ್ಯವಸ್ಥೆ ಪಲಿಮಾರು ಮಠದಿಂದ ಆರಂಭಗೊಂಡು ಅದರ ಬಳಿಕ ಅನುಕ್ರಮವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಕೊನೆಯಲ್ಲಿ ಪೇಜಾವರ ಮಠದೊಂದಿಗೆ ಪರ್ಯಾಯದ ಒಂದು ಚಕ್ರ 16 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ. ಹೀಗೆ ಸಾಗಿ ಬಂದ ಪರ್ಯಾಯ 2002ರಲ್ಲಿ 30ನೇ ಚಕ್ರವನ್ನು ಪೂರ್ಣಗೊಳಿಸಿದೆ. 2018ರಲ್ಲಿ ಪೇಜಾವರ ಮಠದ ಪರ್ಯಾಯದವರೆಗೆ ಎಲ್ಲಾ ಮಠಗಳೂ ಸರದಿಯಂತೆ 31 ಪರ್ಯಾಯಗಳನ್ನು ನಡೆಸಿವೆ. ಇದೀಗ ಪರ್ಯಾಯದ 32ನೇ ಚಕ್ರ ಚಾಲ್ತಿಯಲ್ಲಿದೆ. ಇದರಲ್ಲಿ ಈಗಾಗಲೇ ಪಲಿಮಾರು, ಅದಮಾರು, ಕೃಷ್ಣಾಪುರ ಹಾಗೂ ಇಂದಿಗೆ ಪುತ್ತಿಗೆ ಮಠಗಳು ತಮ್ಮ ಪರ್ಯಾಯವನ್ನು ಮುಗಿಸಿವೆ. ನಾಳೆ ಮುಂಜಾನೆ ಶೀರೂರು ಶ್ರೀಗಳ ಪರ್ಯಾಯ ಆರಂಭಗೊಳ್ಳಲಿದೆ. ಇದು ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ 253ನೇ ದ್ವೈವಾರ್ಷಿಕ ಪರ್ಯಾಯೋತ್ಸವ. ಶೀರೂರು ಮಠದ ಯತಿ ಪರಂಪರೆ ಆಚಾರ್ಯ ಮಧ್ವರ ನೇರ ಶಿಷ್ಯರಲ್ಲೊಬ್ಬರಾದ ಶ್ರೀವಾಮನ ತೀರ್ಥರು ಶೀರೂರು ಮಠದ ಆದ್ಯ ಯತಿಗಳು. ಇದುವರೆಗೆ ಶೀರೂರು ಮಠದ ಪರಂಪರೆಯಲ್ಲಿ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರವರೆಗೆ 30 ಮಂದಿ ಯತಿಗಳು ಸಂದು ಹೋಗಿದ್ದು, ಇದೀಗ ಸರ್ವಜ್ಞ ಪೀಠಾರೋಹಣ ಮಾಡುವ ಶ್ರೀವೇದವರ್ಧನ ತೀರ್ಥರು ಈ ಮಠದ 31ನೇ ಯತಿಗಳು.  

ವಾರ್ತಾ ಭಾರತಿ 17 Jan 2026 7:59 pm

‘ವಿಬಿ-ಜಿ ರಾಮ್ ಜಿ ಕಾಯ್ದೆ’ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದೊಂದೇ ದಾರಿ : ಬಿ.ಆರ್.ಪಾಟೀಲ್

ಬೆಂಗಳೂರು : ಕೇಂದ್ರ ಸರಕಾರವು ‘ವಿಬಿ-ಜಿ ರಾಮ್ ಜಿ' ಕಾಯ್ದೆಯನ್ನು ಜಾರಿ ಮಾಡಿದ್ದು, ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದೊಂದೇ ದಾರಿ, ಬೇರೆ ದಾರಿಯೇ ಇಲ್ಲ ಎಂದು ರಾಜ್ಯ ಸರಕಾರದ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಕರೆ ನೀಡಿದ್ದಾರೆ. ಶನಿವಾರ ನಗರದ ಗಾಂಧಿ ಭವನದಲ್ಲಿ ಮನರೇಗಾ ರಕ್ಷಣಾ ಒಕ್ಕೂಟವು ಆಯೋಜಿಸಿದ್ದ ‘ಉದ್ಯೋಗ ಖಾತರಿ ಧ್ವಂಸದ ವಿಬಿ-ಜಿ ರಾಮ್-ಜಿ ಕಾನೂನಿನ ಅಪಾಯ ಮತ್ತು ಮುನ್ನೆಚ್ಚರಿಕೆ’ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರವು ಯಾವುದೇ ರೀತಿಯ ಚರ್ಚೆ ಮಾಡದೆ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ’ ಯೋಜನೆಯನ್ನು ತೆಗೆದು ಹಾಕಿದೆ. ಅದರ ಬದಲಿಗೆ ‘ವಿಬಿ-ಜಿ ರಾಮ್ ಜಿ' ಕಾಯ್ದೆಯನ್ನು ಜಾರಿ ಮಾಡುತ್ತಿದೆ. ಈಗಾಗಲೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಸೇರಿ ಬಹುತೇಕ ರಾಜ್ಯ ಸರಕಾರಗಳು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದು, ಈ ನೂತನ ಕಾಯ್ದೆ ಮೂಲಕ ರಾಜ್ಯಗಳನ್ನು ಮತ್ತಷ್ಟು ಆರ್ಥಿಕ ಬಿಕ್ಕಟ್ಟಿಗೆ ದೂಡೂತ್ತಿದೆ ಎಂದು ಅವರು ಆರೋಪಿಸಿದರು. ದೇಶದ ಜನರಿಗೆ ಆಹಾರ ಭದ್ರತಾ ಕಾಯ್ದೆ ಮತ್ತು ಉದ್ಯೋಗದ ಹಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಇನ್ನು ಜನರು ಭರವಸೆಯಿಂದ ವಾಸಿಸುತ್ತಿದ್ದಾರೆ. ಇಲ್ಲದಿದ್ದರೆ, ಉದ್ಯೋಗವನ್ನು ಹುಡುಕುತ್ತಾ ನಗರಗಳಿಗೆ ವಲಸೆ ಬರುತ್ತಿದ್ದರು. ಕೃಷಿಯಲ್ಲಿ ಯಂತ್ರೋಪಕರಣಗಳು ಬಂದಿರುವುದರಿಂದ ಈಗಲೂ ಹಳ್ಳಿ ಜನರು ಉದ್ಯೋಗವನ್ನು ಹುಡುಕುತ್ತಾ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಆದರೆ ಉದ್ಯೋಗ ಖಾತರಿ ಯೋಜನೆ ವಲಸೆ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಚಿಂತಕ ಕೆ.ಪಿ ಸುರೇಶ್ ಮಾತನಾಡಿ, ಮನರೇಗಾವನ್ನು ‘ವಿಬಿ-ಜಿ ರಾಮ್ ಜಿ’ ಎಂದು ಹೆಸರು ಬದಲಿಸಿರುವುದು ಮಾತ್ರವಲ್ಲ, ಇಡೀ ಯೋಜನೆಯ ನಿಯಂತ್ರಣವನ್ನು ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ದುಡಿಯುವ ಜನರ ಕೆಲಸದ ಹಕ್ಕನ್ನು ಕಸಿದುಕೊಳ್ಳುತ್ತದೆ. ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೇರುತ್ತದೆ ಎಂದು ಆರೋಪಿಸಿದರು. ಮನರೇಗಾ ಯೋಜನೆಗೆ ಶೇ.90ರಷ್ಟು ಅನುದಾನವನ್ನು ಕೇಂದ್ರ ಕೊಡುತ್ತಿತ್ತು. ಶೇ.10ರಷ್ಟನ್ನು ರಾಜ್ಯಗಳು ಭರಿಸುತ್ತಿದ್ದವು. ಯಾವ ಪ್ರದೇಶಕ್ಕೆ ಎಷ್ಟು ಉದ್ಯೋಗಗಳ ಬೇಡಿಕೆ ಇದೆ ಎಂಬುದನ್ನು ಗ್ರಾಮ ಸಭೆಗಳು ನಿರ್ಧರಿಸುತ್ತಿದ್ದವು. ಅದಕ್ಕೆ ಅನುಗುಣವಾಗಿ ಉದ್ಯೋಗ ಮತ್ತು ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈಗ ಯಾವ ರಾಜ್ಯದ ಯಾವ ಪ್ರದೇಶಕ್ಕೆ ಎಷ್ಟು ಉದ್ಯೋಗ ಕೊಡಬೇಕು ಎಂಬುದನ್ನೂ ಕೇಂದ್ರವೇ ನಿರ್ಧರಿಸಲಿದೆ ಎಂದು ಅವರು ಹೇಳಿದರು. ‘ವಿಬಿ-ಜಿ ರಾಮ್ ಜಿ’ ಕಾಯ್ದೆಯಡಿ ಕೇಂದ್ರದ ಪಾಲನ್ನು ಶೇ.60ಕ್ಕೆ ಇಳಿಸಿದ್ದು, ರಾಜ್ಯಗಳು ಶೇ.40ರಷ್ಟು ಅನುದಾನವನ್ನು ಭರಿಸಬೇಕೆಂದು ಹೇಳುತ್ತಿದೆ. ಇಡೀ ತೆರಿಗೆ ವ್ಯವಸ್ಥೆಯಲ್ಲಿ ಶೇ.75 ಆದಾಯವನ್ನು ಪಡೆಯುವ ಕೇಂದ್ರ ಸರಕಾರವು, ರಾಜ್ಯಗಳಿಗೆ ದೊರೆಯಬೇಕಾದ ನ್ಯಾಯಯುತ ಅನುದಾನವನ್ನು ಕಡಿತ ಮಾಡಿದೆ. ಅಲ್ಲದೆ, ರಾಜ್ಯಗಳಿಗೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಶೇ.40ರಷ್ಟು ಅನುದಾನವನ್ನೂ ಕೇಂದ್ರವೇ ಪರೋಕ್ಷವಾಗಿ ಕೊಡುತ್ತದೆ. ಆದುದರಿಂದ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಕಡಿತ ಮಾಡಿ ಹೆಚ್ಚಿನ ಹೊರೆಯಾಗುವಂತೆ ಮಾಡಿದೆ ಎಂದು ಅವರು ಹೇಳಿದರು. ರೈತ ಸಂಘದ ಮುಖಂಡ ಎನ್.ಡಿ. ವಸಂತ್ ಕುಮಾರ್ ಮಾತನಾಡಿ, ಬಿಜೆಪಿ ಸರಕಾರವು ದೇಶಾದ್ಯಂತ ಉದ್ಯೋಗ ಖಾತರಿ ನೀಡುವ ಕಾಯ್ದೆಯನ್ನೇ ತಲೆಕೆಳಗೆ ಮಾಡಲು ಸಂಚು ರೂಪಿಸಿದೆ. ಅತ್ಯುತ್ತಮ ಕಾಯ್ದೆಯನ್ನು ಜಾರಿಗೆ ತಂದಿದ್ದ ಕಾಂಗ್ರೆಸ್, ಈಗ ಅದನ್ನು ಉಳಿಸಿಕೊಳ್ಳುವ ರೀತಿ ಸಮರ್ಥವಾಗಿ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಮನರೇಗಾ ಉಳಿವಿಗಾಗಿ ಎಲ್ಲರೂ ಹೋರಾಟ ಕಟ್ಟಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ದಲಿತ ಮುಖಂಡ ಇಂಧೂದರ ಹೊನ್ನಾಪುರ, ಶಾರಾದಾ ಗೋಪಾಲ್, ಪ್ರಕಾಶ್ ಕಮ್ಮರಡಿ, ಮೈತ್ರೇಯಿ ಕೃಷ್ಣನ್, ಚೆನ್ನಮ್ಮ, ರೇಣುಕ ಸೇರಿದಂತೆ ಮತ್ತಿತರರು ಇದ್ದರು. ‘ಬಿಜೆಪಿ ದೇಶದ ಅಧಿಕಾರ ಹಿಡಿದಾಗಿನಿಂದ ಭಾರತದ ಪ್ರಗತಿಯಲ್ಲಿ ಹಿಂಚಲನೆ ಆರಂಭವಾಗಿದೆ. ಈಗ, ಮನರೇಗಾ ಯೋಜನೆಯನ್ನು ಮಣ್ಣುಪಾಲು ಮಾಡುತ್ತಿದೆ. ಮನರೇಗಾ ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಮುಂಚೂಣಿಗೆ ಬರುತ್ತಿಲ್ಲ. ಕಾಂಗ್ರೆಸ್ ಅನ್ನು ನೆಚ್ಚಿ ಹೋರಾಟ ಕಟ್ಟಲು ಸಾಧ್ಯವೂ ಇಲ್ಲ. ಹೀಗಾಗಿ ಎಲ್ಲ ಜನಪರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು’ -ಇಂಧೂದರ ಹೊನ್ನಾಪುರ, ಹಿರಿಯ ಪತ್ರಕರ್ತ ವಿಚಾರ ಸಂಕಿರಣದಲ್ಲಿ ತೆಗೆದುಕೊಂಡ ನಿರ್ಣಯಗಳು: 1. ಇದೇ ಜ.26ರಂದು ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲೂ ಗ್ರಾಮಸಭೆ ಮಾಡಿ ‘ವಿಬಿ-ಜಿ ರಾಮ್ ಜಿ’ ಕಾನೂನನ್ನು ತಿರಸ್ಕರಿಸಬೇಕು. 2. ಒಕ್ಕೂಟದಿಂದ ‘ವಿಬಿ-ಜಿ ರಾಮ್ ಜಿ’ ಮತ್ತು ಹಿಂದಿನ ಮನರೇಗಾ ಕುರಿತು ಜನರಿಗೆ ಮಾಹಿತಿ ನೀಡುವ ಕರಪತ್ರಗಳನ್ನು ಹೊರತರುವುದು. 3. ಹುತಾತ್ಮ ದಿನವಾದ ಜ.30ರಂದು ತಾಲೂಕು, ಜಿಲ್ಲಾ ಮಟ್ಟದಿಂದ ಪ್ರಧಾನ ಮಂತ್ರಿಗಳಿಗೆ ಕಾಯ್ದೆಯನ್ನು ಹಿಂಪಡೆಯಲು ಮನವಿ ಸಲ್ಲಿಸುವುದು. 4. ದಿಲ್ಲಿಯಲ್ಲಿ ಜ. 22ರಂದು ನಡೆಯುತ್ತಿರುವ ಸಭೆಗೆ ಒಕ್ಕೂಟದಿಂದ ಕನಿಷ್ಟ 20 ಜನ ಭಾಗವಹಿಸುವುದು. 5. ಸಹಭಾಗಿ ಸಂಘಟನೆಗಳಾದ ಸಂಯುಕ್ತ ಹೋರಾಟ ಮತ್ತು ಜೆಸಿಟಿಯು ಸಂಘಟಿಸುತ್ತಿರುವ ಜ.21ರ ಟೌನ್ ಹಾಲ್ ಎದುರು ನಡೆಯುವ ಹೋರಾಟ ಮತ್ತು ಫೆ.12ರಂದು ನಡೆಯುವ ಕರ್ನಾಟಕ ಬಂದ್‍ಗಳಲ್ಲಿಯೂ ಒಕ್ಕೂಟವು ಭಾಗವಹಿಸಿ ಬೆಂಬಲ ನೀಡುವುದು. 6. ಫೆ.2ಕ್ಕೆ ಮನರೇಗಾಗೆ 20 ವರ್ಷ ಆಗುವ ಸಂದರ್ಭದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮಹಾ ಪಂಚಾಯತ್ ನಡೆಸಲು ಯೋಚಿಸಲಾಗಿದೆ.  

ವಾರ್ತಾ ಭಾರತಿ 17 Jan 2026 7:57 pm

ಯಾದಗಿರಿ | ಇಬ್ರಾಹಿಂಪುರದಲ್ಲಿ ಸಾಯಿಬಾಬಾ ಜಾತ್ರಾ ಮಹೋತ್ಸವಕ್ಕೆ ಚಾಲನೆ : ಹಸೆಮಣೆ ಏರಿದ ಹತ್ತು ಜೋಡಿಗಳು

ಯಾದಗಿರಿ: ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರದ 4ನೇ ಜಾತ್ರಾ ಮಹೋತ್ಸವವು ನಾಡಿನ ಹರಗುರು ಚರಮೂರ್ತಿಗಳು, ಸಾಹಿತಿಗಳು, ಗಣ್ಯರು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಸಾಯಿಬಾಬಾ ಭಕ್ತರ ಸಮ್ಮುಖದಲ್ಲಿ ಶನಿವಾರ ನೆರವೇರಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಗುರು ಪಾಟೀಲ್, ಸರ್ವಧರ್ಮಗಳ ಸಕಾರ ಮೂರ್ತಿಯಾದ ಸಾಯಿಬಾಬಾ ಅವರ ಜಾತ್ರೆಯನ್ನು ಆಚರಿಸುವ ಮೂಲಕ ಜಾತ್ಯತೀತ ತತ್ವಗಳನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ದಿಗ್ಗಿ ಮಹಾರಾಜ್ ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಪ್ರೇರಣೆಯಾಗಬೇಕು. ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರಳತೆ ಹಾಗೂ ಸಮಾಜಮುಖಿ ಚಿಂತನೆ ಮೆರೆದಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಭಗವಂತ ಎಲ್ಲವನ್ನೂ ನೀಡುತ್ತಾನೆ. ಆದರೆ ಇಂತಹ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಮಾಡುವವರು ವಿರಳ. ಈ ನಿಟ್ಟಿನಲ್ಲಿ ದಿಗ್ಗಿ ಮಹಾರಾಜ್ ಅವರ ಸೇವೆ ಅನನ್ಯವಾಗಿದೆ ಎಂದರು. ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಹಾಗೂ ಕಡಕೋಳದ ರುದ್ರಮುನಿ ಸ್ವಾಮಿಗಳು ಮಾತನಾಡಿದರು. ಬೆಳಿಗ್ಗೆ ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ಆಶ್ರಮದ ರೂವಾರಿಗಳಾದ ದಿಗ್ಗಿ ಮಹಾರಾಜ್, ಸಿದ್ದಪಾಜಿ ದಿಗ್ಗಿ ಹಾಗೂ ಕುಟುಂಬಸ್ಥರಿಂದ ನೆರವೇರಿದವು. ನಂತರ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುಮಾರು ಹತ್ತು ಜೋಡಿಗಳ ಸಾಮೂಹಿಕ ವಿವಾಹ ಜರುಗಿತು. ಡಿ.ಜಾನ್ ಸಂಸ್ಥೆಯ ಶಾಲಾ ಮಕ್ಕಳಿಂದ ಭರತನಾಟ್ಯ ಪ್ರದರ್ಶನ, ಬಸವಣ್ಣನವರ ವಚನ ಗಾಯನ ನಡೆಯಿತು. ಲಿಂಗೈಕ್ಯರಾದ ಕಾಗಿನೆಲೆ ಸಿದ್ದರಾಮನಂದಪೂರಿ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಪೀಠಾಧಿಪತಿಗಳು, ಸಾಹಿತಿಗಳು ಹಾಗೂ ಗಣ್ಯರಾದ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂಯುಹಳ್ಳಿ, ಮಾಜಿ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಸಾಹಿತಿ ಡಾ.ಸಿದ್ದರಾಮ ಹೊನ್ಕಲ್, ಶಾಂತರೆಡ್ಡಿ ದೇಸಾಯಿ, ಆರ್. ಮಹಾದೇವಪ್ಪ ಗೌಡ ಅಬ್ಬೆತುಮಕೂರು, ಡಾ. ರವೀಂದ್ರನಾಥ ಹೊಸಮನಿ, ರಾಯಪ್ಪ ಗೌಡ ಹುಡೆದ್, ಪತ್ರಕರ್ತ ಪ್ರಕಾಶ ದೊರೆ, ನೀಲಕಂಠ ಬಡಿಗೇರ, ಉಮೇಶ ಮುದ್ನಾಳ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಶ್ರೀಶೈಲ್ ಪೂಜಾರಿ ಸ್ವಾಗತಿಸಿದರು. ಮಹಾಂತೇಶ ಹೂಲಕೊಟಿ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಜ.18ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭೆ, ಸಂಗೀತ ಹಾಗೂ ನೃತ್ಯ ಗಾಯನ ಕಾರ್ಯಕ್ರಮಗಳು ನಡೆಯಲಿದ್ದು, ಡಾಲಿ ಧನಂಜಯ ಸೇರಿದಂತೆ ಇತರ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 17 Jan 2026 7:56 pm

ಬಳ್ಳಾರಿ | ಪರೀಕ್ಷಾ ಕೇಂದ್ರಗಳ ಸುತ್ತಲು ನಿಷೇಧಾಜ್ಞೆ ಜಾರಿ : ಡಿಸಿ ನಾಗೇಂದ್ರ ಪ್ರಸಾದ್ ಕೆ. ಆದೇಶ

ಬಳ್ಳಾರಿ : ನಗರದ 4 ಪರೀಕ್ಷಾ ಕೇಂದ್ರಗಳಲ್ಲಿ ದೆಹಲಿಯ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ಜ.18 ರಂದು ಆಲ್ ಇಂಡಿಯಾ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ-2026 ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಆವರಣವನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲಿನ ಜೆರಾಕ್ಸ್ ಸೆಂಟರ್ ಮತ್ತು ಇಂಟರ್‌ನೆಟ್ ಸೆಂಟರ್‌ಗಳನ್ನು ಕಾರ್ಯನಿರ್ವಹಿಸದಂತೆ ಆದೇಶಿಸಿದ್ದು, ಆ ಪ್ರದೇಶದಲ್ಲಿ ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಆದೇಶವು ಪರೀಕ್ಷೆಯ ಮೇಲ್ವಿಚಾರಣೆ ಕಾರ್ಯನಿರ್ವಹಿಸುವ ಸಿಬ್ಬಂದಿಯವರೆಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 17 Jan 2026 7:51 pm

ರಾಜ್ಯದ ʼನವೋದ್ಯಮ ನೀತಿ 2025-30ʼ ಅನಾವರಣ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಮುಂದಿನ ಐದು ವರ್ಷಗಳಲ್ಲಿ ಉದ್ಯಮಶೀಲತೆಗೆ ಇನ್ನಷ್ಟು ಉತ್ತೇಜನ ನೀಡಿ ಕರ್ನಾಟಕವನ್ನು ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ‘ನವೋದ್ಯಮ ನೀತಿ 2025-2030ನ್ನು ರಾಜ್ಯ ಸರಕಾರವು ಅನಾವರಣಗೊಳಿಸಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ರಾಷ್ಟ್ರೀಯ ‘ನವೋದ್ಯಮ ಮಾಸ’ದ ಭಾಗವಾಗಿ, ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಆಶ್ರಯದಲ್ಲಿ ನಡೆದ ನವೋದ್ಯಮಗಳಿಗೆ ನೆರವಾಗುವ ‘ಐಡಿಯಾ 2 ಪಿಒಸಿ ಎಲೆವೇಟ್ 2025’ ಉಪಕ್ರಮದ 146 ವಿಜೇತರ ಸನ್ಮಾನ ಸಮಾರಂಭದಲ್ಲಿ ಈ ನೀತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಮುಖ್ಯಾಂಶಗಳು: ರಾಜ್ಯದಲ್ಲಿ 25 ಸಾವಿರ ನವೋದ್ಯಮ ಸ್ಥಾಪಿಸುವ ಗುರಿ, ನೀತಿ ಜಾರಿಗೆ 570.67 ಕೋಟಿ ರೂ. ಮೊತ್ತ ನಿಗದಿ, ಮಹಿಳೆ ನೇತೃತ್ವದ ಹಾಗೂ ಗ್ರಾಮೀಣ ನವೋದ್ಯಮಗಳಿಗೆ ಆದ್ಯತೆ, ನವೋದ್ಯಮಗಳ ಎಲ್ಲ ಹಂತಗಳಲ್ಲಿ ಸರಕಾರದ ಬೆಂಬಲದ ಭರವಸೆ, ಮುಂದಿನ ಐದು ವರ್ಷಗಳ ಉದ್ಯಮಶೀಲ ಬೆಳವಣಿಗೆಗೆ ಮಾರ್ಗಸೂಚಿ ಹೊಂದಿರುವ ಈ ನೀತಿಯು, 2030ರ ವೇಳೆಗೆ ಬೆಂಗಳೂರು ಆಚೆಗಿನ ಕ್ಲಸ್ಟರ್‍ಗಳಲ್ಲಿ ಕನಿಷ್ಠ 10 ಸಾವಿರ ನವೋದ್ಯಮಗಳು ಸೇರಿದಂತೆ ರಾಜ್ಯದಾದ್ಯಂತ 25 ಸಾವಿರ ನವೋದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ಈ ನೀತಿ ಜಾರಿಗೊಳಿಸಲು ಇಲಾಖೆಯು 570.67 ಕೋಟಿ ರೂ. ಮೊತ್ತವನ್ನು ಮೀಸಲು ಇರಿಸಿದೆ, ಹಣಕಾಸು, ಪೋಷಣೆ, ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ, ಅಂತರ್‍ರಾಷ್ಟ್ರೀಯ ಸಹಯೋಗ, ಸೇರ್ಪಡೆ, ಸುಸ್ಥಿರತೆ ಮತ್ತು ನಿಯಂತ್ರಣ ಕ್ರಮಗಳಿಗೆ ನೆರವು ಒಳಗೊಂಡಂತೆ ಒಟ್ಟು ಏಳು ಪ್ರಮುಖ ಆಧಾರ ಸ್ತಂಭಗಳನ್ನು ಈ ನೀತಿಯು ಆಧರಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಮಹಿಳಾ ನೇತೃತ್ವದ ಉದ್ಯಮಗಳು, ತಳಮಟ್ಟದ ನಾವೀನ್ಯಕಾರರು, ಗ್ರಾಮೀಣ ಉದ್ಯಮಿಗಳು ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಎಲ್ಲರ ಒಳಗೊಳ್ಳುವಿಕೆಗೆ ಆದ್ಯತೆ ನೀಡಲಿದೆ, ಸರಕಾರ ಮೊದಲು-ಯೋಜನೆಯಡಿ, ಉತ್ಪನ್ನ ಮತ್ತು ಪರಿಹಾರ ನೀಡುವ ನವೋದ್ಯಮ(ಸ್ಟಾರ್ಟ್‍ಅಪ್)ಗಳಿಗೆ ರಾಜ್ಯ ಸರಕಾರವನ್ನು ತಮ್ಮ ಮೊದಲ ಗ್ರಾಹಕರಾಗಿ ಹೊಂದುವ ವಿಶಿಷ್ಟ ಅವಕಾಶವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಆರಂಭಿಕ ಪರಿಕಲ್ಪನೆಯಿಂದ ಆರಂಭಿಸಿ ಜಾಗತಿಕ ವಿಸ್ತರಣೆ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸುವ ಹಂತದವರೆಗೂ ನವೋದ್ಯಮಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು. ನವೋದ್ಯಮಿಗಳಿಗೆ ಸನ್ಮಾನ: ಸನ್ಮಾನಕ್ಕೆ ಪಾತ್ರರಾದ ನವೋದ್ಯಮಿಗಳಲ್ಲಿ 103 ಎಲೆವೇಟ್ 2025 ವಿಜೇತರು, 33 ಎಲೆವೇಟ್ ಉನ್ನತಿ ವಿಜೇತರು ಮತ್ತು 10 ಎಲೆವೇಟ್ ಅಲ್ಪಸಂಖ್ಯಾತ ನವೋದ್ಯಮಿಗಳು ಸೇರಿದ್ದಾರೆ. ಅರ್ಹ ನವೋದ್ಯಮಗಳಿಗೆ ಒಟ್ಟು 38.85 ಕೋಟಿ ರೂ. ಮೊತ್ತದ ಅನುದಾನ ವಿತರಿಸಲಾಗಿದೆ. ಎಲೆವೇಟ್ ಕಾರ್ಯಕ್ರಮದಡಿಯಲ್ಲಿ ಗುರುತಿಸಲ್ಪಟ್ಟ ನವೋದ್ಯಮಗಳಿಗೆ 50 ಲಕ್ಷ ರೂ.ವರೆಗೆ ಒಂದು ಬಾರಿಯ ಅನುದಾನ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಇದರ ಜೊತೆಗೆ, ಉತ್ಪನ್ನ ಅಭಿವೃದ್ಧಿ ಮತ್ತು ದೃಢೀಕರಣಕ್ಕೆ ನೆರವಾಗಲು ನವೋದ್ಯಮಗಳಿಗೆ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುವ ಸರಕಾರಿ ಬೆಂಬಲಿತ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಮಾರ್ಗದರ್ಶನ ಮತ್ತು ಸೂಕ್ತ ನೆರವು ನೀಡಲಾಗುತ್ತಿದೆ. ಎಲೆವೇಟ್ ಮೂಲಕ, ರಾಜ್ಯದಾದ್ಯಂತದ ನವೋದ್ಯಮಿಗಳು ತಮ್ಮ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಎಲೆವೇಟ್ ಕಾರ್ಯಕ್ರಮದಡಿ ಉದ್ಯಮಶೀಲತೆಯ ಪಯಣದ ವಿವಿಧ ಹಂತಗಳಲ್ಲಿ ಭರವಸೆ ಮೂಡಿಸಿರುವ ನವೋದ್ಯಮಗಳನ್ನು ಗುರುತಿಸಿ ಅಗತ್ಯ ಬೆಂಬಲ ನೀಡಲಾಗುತ್ತಿದೆ. ನವೋದ್ಯಮಗಳು ಸುಸ್ಥಿರ ರೀತಿಯಲ್ಲಿ ಬೆಳೆಯಲು ಅನುವು ಮಾಡಿಕೊಡಲಾಗುತ್ತಿದೆ. ನವೋದ್ಯಮಗಳ ಒಡೆತನದಲ್ಲಿ ಯಾವುದೆ ಪಾಲು ತೆಗೆದುಕೊಳ್ಳದೆ ಹಣಕಾಸಿನ ನೆರವು ನೀಡುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ಭರವಸೆಯದಾಯಕ ನವೋದ್ಯಮಗಳ ಬಗ್ಗೆ ರಾಜ್ಯ ಸರ್ಕಾರ ತಳೆದಿರುವ ಪ್ರಗತಿಪರ ಮತ್ತು ಅನುಕೂಲಕರ ಧೋರಣೆಗೆ ನಿದರ್ಶನವಾಗಿದೆ ಎಂದು ಅವರು ತಿಳಿಸಿದರು. ಮೂರು ಹೊಸ ಉಪಕ್ರಮಗಳ ಘೋಷಣೆ: ಎಲೆವೇಟ್ 2025 ಕಾರ್ಯಕ್ರಮದಲ್ಲಿ, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ರಾಜ್ಯದ ಸ್ಟಾರ್ಟ್‍ಅಪ್ ವ್ಯವಸ್ಥೆ ಬಲಪಡಿಸುವ, ಡೀಪ್‍ಟೆಕ್ ನಾವೀನ್ಯತೆಗೆ ವೇಗ ನೀಡುವ ಮತ್ತು ಬೆಂಗಳೂರಿನ ಆಚೆಗೆ ಉದ್ಯಮಶೀಲತೆ ವಿಸ್ತರಿಸುವ ಗುರಿ ಹೊಂದಿರುವ ಮೂರು ಹೊಸ ಉಪಕ್ರಮಗಳನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಲಾಯಿತು. ನಾವೀನ್ಯತೆ ಆಧಾರಿತ ಕೈಗಾರಿಕಾ ಪರಿವರ್ತನೆಯಲ್ಲಿ ಕರ್ನಾಟಕದ ನಾಯಕತ್ವವನ್ನು ಪುನಃ ದೃಢಪಡಿಸಲು ಎಲೆವೇಟ್ ನೆಕ್ಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ 150 ಕೋಟಿ ರೂ. ನಿಗದಿಪಡಿಸಲಾಗಿದೆ. ಆಯ್ಕೆಯಾದ ಪ್ರತಿಯೊಂದು ಅರ್ಹ ನವೋದ್ಯಮವು 1 ಕೋಟಿ ರೂ. ನೆರವು ಪಡೆಯಲಿದೆ. ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್‌, ಐಒಟಿ, ಬ್ಲಾಕ್‍ಚೇನ್, ಎಆರ್/ವಿಆರ್, ರೋಬೊಟಿಕ್ಸ್, ಡ್ರೋನ್ ಮತ್ತಿತರ ಕ್ಷೇತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್‍ಅಪ್‍ಗಳಿಗೆ ಎಲೆವೇಟ್ ನೆಕ್ಸ್ಟ್ ನೆರವಾಗಲಿದೆ. ಬೆಂಗಳೂರು ಆಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಸಮೂಹಗಳಲ್ಲಿ ನವೋದ್ಯಮಗಳ ಸ್ಥಾಪನೆ ಉತ್ತೇಜಿಸಲು ಆರಂಭಿಕ ಹಂತದ ಹಣಕಾಸು ನೆರವು ಒದಗಿಸುವ ಉದ್ದೇಶಕ್ಕೆ 75 ಕೋಟಿ ರೂ.ಮೊತ್ತದ ನಿಧಿ ಸ್ಥಾಪಿಸುವ ನಿರ್ಧಾರ ಪ್ರಕಟಿಸಲಾಗಿದೆ. ಸಮಾರಂಭದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್., ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮತ್ತು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Jan 2026 7:48 pm

ಇರಾನ್‌ ಅಶಾಂತಿಗೆ ಸಂಬಂಧಿಸಿದಂತೆ ಎರಡು ಉತ್ತಮ ಸಂಗತಿ ಹೇಳಿದ ಶಶಿ ತರೂರ್‌; ನೀಡಿದ ಸಲಹೆ ಇನ್ನೂ ಸೂಪರ್‌

ಇರಾನ್‌ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಪ್ರತಿಭಟನೆಗಳ ಕಿಚ್ಚು ಕಡಿಮೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇರಾನ್‌ ಸರ್ಕಾರ 800ಕ್ಕೂ ಹೆಚ್ಚು ಪ್ರತಿಭಟನಾಕಾರರ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಿರುವುದು ಮತ್ತು ಇರಾನ್‌ ಮೇಲೆ ಮಿಲಿಟರಿ ಕಾರ್ಯಾಚರಣೆಯ ಯೋಜನೆಯಿಂದ ಅಮೆರಿಕ ಹಿಂದೆ ಸರಿದಿರುವುದು ಉತ್ತಮ ಬೆಳವಣಿಗೆ ಎಂದು ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕುತ್ತಿರುವ ಖಮೇನಿ ಆಡಳಿತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಬೇಕಿದೆ ಎಂದು ಶಶಿ ತರೂರ್‌ ಸಲಹೆ ನೀಡಿದ್ದಾರೆ.

ವಿಜಯ ಕರ್ನಾಟಕ 17 Jan 2026 7:30 pm

Suntikoppa | ಈಜಲು ತೆರಳಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ನೀರುಪಾಲು

ಮಡಿಕೇರಿ : ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಸುಂಟಿಕೊಪ್ಪ ಸಮೀಪದ ಗರಗಂದೂರು ಮಲಿಕಾರ್ಜುನ ಕಾಲೋನಿಯ ಮಾದಾಪುರ ಹೊಳೆಯಲ್ಲಿ ಶನಿವಾರ ನಡೆದಿದೆ. ಸುಂಟಿಕೊಪ್ಪದ ಪಂಪ್‌ಹೌಸ್ ನಿವಾಸಿಗಳಾದ ಸುಂಟಿಕೊಪ್ಪ ಆಟೋಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶರೀಫ್ ಅವರ ಪುತ್ರ ಮಹಮ್ಮದ್ ರಾಯಿಝ್‌ (16) ಹಾಗೂ ಸರದಾರ್ ಅವರ ಪುತ್ರ ಮುಹಮ್ಮದ್ ನಿಹಾಲ್ (16) ಮೃತರು. ಇವರಿಬ್ಬರು ಖಾಸಗಿ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜು ಮುಗಿಸಿ ಮನೆಗೆ ತೆರಳುವ ಸಂದರ್ಭ ಮಾದಾಪುರ ಹೊಳೆಯಲ್ಲಿ ಈಜಲು ನೀರಿಗಿಳಿದಿದ್ದ ವಿದ್ಯಾರ್ಥಿಗಳು ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಈಜು ತಜ್ಞರ ಸಹಾಯದಿಂದ ಮೃತದೇಹಗಳನ್ನು ಹೊಳೆಯಿಂದ ಹೊರತೆಗೆಯಲಾಗಿದೆ. 

ವಾರ್ತಾ ಭಾರತಿ 17 Jan 2026 7:29 pm

ಕಂಪ್ಲಿ | ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿಯೇ ಮುಖ್ಯ: ಶಾಸಕ ಗಣೇಶ್‌

ಕಂಪ್ಲಿ: ಕಂಪ್ಲಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿಯ ಅವಶ್ಯಕತೆ ಇರುವುದನ್ನು ಮನಗಂಡು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಕಚೇರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಜೆ.ಎನ್. ಗಣೇಶ್‌ ಹೇಳಿದರು. ಪಟ್ಟಣದ ವೀರಶೈವ ಭವನದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ, ಕುರುಗೋಡು ಬಿಇಒ ಕಚೇರಿ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೊದಲ ಬಾರಿಗೆ ಶಾಸಕನಾದಾಗ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿದ್ದವು. ನಂತರದ ದಿನಗಳಲ್ಲಿ ಹೆಚ್ಚಿನ ಅನುದಾನ ಬಳಸಿಕೊಂಡು ಶೈಕ್ಷಣಿಕ ಬದಲಾವಣೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಭವನದ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು. ಅಧಿಕಾರ ಎನ್ನುವುದು ಶಾಶ್ವತವಲ್ಲ, ಜನರೊಂದಿಗೆ ನಾವು ಗಳಿಸುವ ಪ್ರೀತಿ ಮತ್ತು ವಿಶ್ವಾಸ ಮಾತ್ರ ಕೊನೆಯವರೆಗೂ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ವಿವಿಧ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ನಿವೃತ್ತ ಶಿಕ್ಷಕರಾದ ವಿರೇಶ, ಎಲೆಗಾರ ಪಾರ್ವತಿ, ಶೀಲಾವತಿ, ಸರ್ವಮಂಗಳ, ರಾಘವೇಂದ್ರ, ಹುಲಿಕುಂಟಾಚಾರ್ ಹಾಗು ಇ. ಶಾಂತ ಗಡ್ಡಾದ್, ನಾಗವೇಣಿ, ಎನ್.ಲೋಕೇಶ, ಮರಿಸ್ವಾಮಿ, ಮುದುಕಪ್ಪ, ಬಸವನಗೌಡ, ವೆಂಕಟರಮಣ, ಗಾದಿಲಿಂಗಪ್ಪ, ಹೊಸಗೇರಪ್ಪ, ವೈ. ಎಂ. ಈರಮ್ಮ, ಸಂಗನಗೌಡ ಗೌಡರ್, ವಿರೇಶ, ಈರಮ್ಮ, ನರಸಿಂಹಲು, ಎಸ್.ಚಂದ್ರಪ್ಪ, ಶೃತಿಕುಮಾರಿ, ರಂಗಪ್ಪ, ಮಡಿವಾಳಪ್ಪ, ಎನ್. ಶಿವಕುಮಾರ, ಕೆ. ಮೌನೇಶ, ಎಸ್. ಭವ್ಯಶ್ರೀ, ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿಕಾಂತ ಬಣಕಾರ, ಸದ್ಯೋಜಾತಪ್ಪ, ಅನ್ನದಾನೇಶ್, ರೇಣುಕಾದೇವಿ, ಸುನೀತಾ ಕುಮಾರಿ, ಶ್ಯಾಮಲಾ ಪಿ. ಜೆ. ವಿರೇಶ ಕೆ., ಮೇಲಾರೆಡ್ಡಿ, ಜಬೀನಾ, ಬಿ. ಜಯಮ್ಮ, ಲಕ್ಕಪ್ಪ, ರಂಗಪ್ಪ ಕಟ್ಟಿಮನಿ, ಮಡಿವಾಳಪ್ಪ, ಶಾಬನ, ರೇಣುಕಾ ಆರ್. ಎಚ್, ಪರಶುರಾಮ, ಬಿ. ಸಾವಿತ್ರಿ, ಪಿ. ಎನ್. ರಾಜಾಭಕ್ಷಿ, ವಿರುಪಾಕ್ಷಪ್ಪ, ಶ್ರೀ ವಿಜಯ ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಇಒ ಸಿದ್ದಲಿಂಗಮೂರ್ತಿ, ಇಒ ಆರ್.ಕೆ.ಶ್ರೀಕುಮಾರ, ಎಡಿ ಮಲ್ಲನಗೌಡ ಕೆ.ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ದೊಡ್ಡಬಸಪ್ಪ, ಪ್ರಮುಖರಾದ ಪಿ.ನಾಗೇಶ್ವರರಾವ್, ಸಿ.ಆರ್.ಹನುಮಂತ, ಲಿಂಗಪ್ಪ, ಟಿ.ಎಂ.ಬಸವರಾಜ, ರೇವಣ್ಣ, ಮಂಜುನಾಥ, ಯುಗಾದಿ ಶಿವರಾಜ, ಗಾದಿಲಿಂಗಪ್ಪ, ಜಡೆಪ್ಪ, ಸುಗ್ಗೇನಹಳ್ಳಿ ರಮೇಶ, ಬಸವರಾಜ ಪಾಟೀಲ್, ಸುಜಾತ ಸೇರಿದಂತೆ ಸಿಆರ್ಪಿಗಳು, ಖಾಸಗಿ ಆಡಳಿತ ಮಂಡಳಿಯ ಮುಖ್ಯಸ್ಥರು ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Jan 2026 7:27 pm

ಜೆಡಿಎಸ್‌ಗೆ ಇಬ್ಬರು ಶಾಸಕರು ಗುಡ್‌ ಬೈ, ಹೊಸ ಪಕ್ಷ ಸೇರ್ಪಡೆ! ದಳಪತಿಗಳಿಗೆ ಆಘಾತ ಉಂಟುಮಾಡಿದ ಕೇರಳ ಬೆಳವಣಿಗೆ

ಕೇರಳದಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ರಾಜ್ಯ ಘಟಕವು ತನ್ನ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧ ಕಡಿದುಕೊಂಡು, 'ಇಂಡಿಯನ್ ಸೋಷಿಯಲಿಸ್ಟ್ ಜನತಾ ದಳ' (ಐಎಸ್‌ಜೆಡಿ) ಎಂಬ ಹೊಸ ಪಕ್ಷದಲ್ಲಿ ವಿಲೀನಗೊಂಡಿದೆ. ಎಚ್.ಡಿ. ದೇವೇಗೌಡ ನೇತೃತ್ವದ ರಾಷ್ಟ್ರೀಯ ಜೆಡಿಎಸ್ ಬಿಜೆಪಿಯ ಎನ್‌ಡಿಎ ಒಕ್ಕೂಟಕ್ಕೆ ಸೇರ್ಪಡೆಗೊಂಡಿದ್ದನ್ನು ವಿರೋಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೊಚ್ಚಿಯಲ್ಲಿ ನಡೆದ ಸಮಾವೇಶದಲ್ಲಿ ಈ ಬಗ್ಗೆ ಅಧಿಕೃತ ನಿರ್ಣಯ ಕೈಗೊಳ್ಳಲಾಗಿದ್ದು, ಪಕ್ಷದ ಶಾಸಕರಾದ ಮ್ಯಾಥ್ಯೂ ಟಿ. ಥಾಮಸ್ ಮತ್ತು ಕೆ. ಕೃಷ್ಣನ್‌ಕುಟ್ಟಿ ಹೊಸ ಪಕ್ಷದ ಭಾಗವಾಗಿದ್ದಾರೆ.

ವಿಜಯ ಕರ್ನಾಟಕ 17 Jan 2026 7:25 pm

ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಬಾಕಿ ವೇತನ ಪಾವತಿಗೆ ಸರ್ಕಾರ ಕ್ರಮ, 175.75 ಕೋಟಿ ರೂ. ಬಿಡುಗಡೆ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರು ಮತ್ತು ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದ ಮಹತ್ವದ ಘೋಷಣೆ! ಕಳೆದ ಎರಡು ತಿಂಗಳ ಬಾಕಿ ವೇತನ ಹಾಗೂ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ಕೇಂದ್ರದಿಂದ 175.75 ಕೋಟಿ ರೂ. ಅನುದಾನ ಜಿಲ್ಲೆಗಳಿಗೆ ತಲುಪಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಭವಿಷ್ಯದಲ್ಲಿ ಕೇಂದ್ರದ ಅನುದಾನ ವಿಳಂಬವಾದರೂ, ರಾಜ್ಯ ಸರ್ಕಾರವೇ ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವ ಭರವಸೆ ನೀಡಿದೆ.

ವಿಜಯ ಕರ್ನಾಟಕ 17 Jan 2026 7:25 pm

ಯುವಕನಿಗೆ ಕೊಲೆ ಬೆದರಿಕೆ ಆರೋಪ: ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲು

ಮಂಗಳೂರು, ಜ.17: ಯುವಕನಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ದಂತೆ ಕಾವೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿಯ ಉಪಜಾತಿಯಾದ ಮುಂಡಾಲ ಸಮುದಾಯಕ್ಕೆ ಸೇರಿದ ಮುಲ್ಕಿಯ ಅರುಣ್ ಕುಮಾರ್ ಎಂಬವ ರಿಗೆ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಸುರತ್ಕಲ್ ತಡಂಬೈಲ್ ನಿವಾಸಿ ನವೀನ್ ಎಂಬಾತ ಮೊಬೈಲ್‌ನಲ್ಲಿ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಅರುಣ್ ಕುಮಾರ್ ಖಾಸಗಿ ಕಂಪೆನಿಯಲ್ಲಿ ಸೆಕ್ಯುರಿಟಿ ಸುಪರ್‌ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಜ.12ರಂದು ಸಂಜೆ ಅದೇ ಕಂಪೆನಿಯ ಮತ್ತೋರ್ವ ಉದ್ಯೋಗಿ ನವೀನ್ ಎಂಬಾತ ಫೋನ್ ಮಾಡಿ ಕೆಲಸಕ್ಕೆ ಜನ ಇಲ್ಲ. ಬೇಗ ಕರೆದುಕೊಂಡು ಬಾ ಎನ್ನುತ್ತಾ ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಅರುಣ್ ಕುಮಾರ್ 3ನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಆದೇಶದಂತೆ ಜ.16ರಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಾರ್ತಾ ಭಾರತಿ 17 Jan 2026 7:24 pm

ಬಳ್ಳಾರಿಯ ಕಂಪ್ಲಿ ಬಳಿ ಪಾಮ್ ಆಯಿಲ್ ಟ್ಯಾಂಕರ್ ಪಲ್ಟಿ : ಎಣ್ಣೆಗಾಗಿ ಕೊಡ-ಬಿಂದಿಗೆಗಳೊಂದಿಗೆ ಮುಗಿಬಿದ್ದ ಜನ!

ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಮಾರೆಮ್ಮ ದೇವಸ್ಥಾನದ ಬಳಿ ಪಾಮ್ ಆಯಿಲ್ ತುಂಬಿದ್ದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ. ಈ ವೇಳೆ ಟ್ಯಾಂಕರ್‌ನಿಂದ ಸೋರುತ್ತಿದ್ದ ಎಣ್ಣೆಯನ್ನು ಸಂಗ್ರಹಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಕೊಡ, ಬಿಂದಿಗೆ ಹಾಗೂ ಬಕೆಟ್‌ಗಳೊಂದಿಗೆ ಮುಗಿಬಿದ್ದ ದೃಶ್ಯ ಕಂಡುಬಂತು. ಪಾಮ್ ಆಯಿಲ್ ತುಂಬಿದ್ದ ಟ್ಯಾಂಕರ್ ಚಳ್ಳಕೇರಿಯಿಂದ ಗಂಗಾವತಿಗೆ ತೆರಳುತ್ತಿತ್ತು. ದೇವಲಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ಬಿರುಕು ಬಿಟ್ಟಿದ್ದು, ಎಣ್ಣೆ ಹಳ್ಳದಂತೆ ಹರಿಯಲಾರಂಭಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮಹಿಳೆಯರು, ಪುರುಷರು ಮತ್ತು ಮಕ್ಕಳು ಎನ್ನದೆ ನೂರಾರು ಜನರು ಪ್ಲಾಸ್ಟಿಕ್ ಕ್ಯಾನ್ ಹಾಗೂ ಡ್ರಮ್‌ಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿದರು. ಎಣ್ಣೆ ಹಿಡಿಯಲು ಜನರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಪಘಾತದಲ್ಲಿ ಲಾರಿ ಚಾಲಕನಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಕುಡುತಿನಿ ಠಾಣೆಯ ಪೊಲೀಸರು, ಜನರನ್ನು ಚದುರಿಸಲು ಮತ್ತು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು. ರಸ್ತೆಯ ಮೇಲೆ ಎಣ್ಣೆ ಚೆಲ್ಲಿದ್ದರಿಂದ ವಾಹನಗಳು ಸ್ಕಿಡ್ ಆಗುವ ಭೀತಿ ಎದುರಾಗಿತ್ತು. ಹೀಗಾಗಿ ವಾಹನ ಸವಾರರು ಅತ್ಯಂತ ನಿಧಾನಗತಿಯಲ್ಲಿ ಸಂಚರಿಸಿದರು. ಇದರಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 17 Jan 2026 7:22 pm

ಖತರ್ ಕಕ್ಕಿಂಜೆ ಶರೀಅತ್ ಕಾಲೇಜು ನೂತನ ಸಮಿತಿಗೆ ಆಯ್ಕೆ

ದೋಹ, ಜ.17: ಖತರ್ ಕಕ್ಕಿಂಜೆ ಶರೀಅತ್ ಕಾಲೇಜಿನ ನೂತನ ಸಮಿತಿಯ ರಚನಾ ಸಭೆಯು ದೋಹಾದ ಐನ್ ಖಾಲಿದ್‌ನ ಗ್ರೀನ್ಸ್ ರೆಸ್ಟೋರೆಂಟ್ ಹಾಲ್‌ನಲ್ಲಿ ನಡೆಯಿತು. ಹಂಝ ಎ.ಕೆ. ಕಿರಾಅತ್ ಪಠಿಸಿದರು. ಝೈನುದ್ದೀನ್ ಹಾಶಿಮಿ ಉಪನ್ಯಾಸ ನೀಡಿದರು. ಶರಿಅತ್ ಕಾಲೇಜಿನ ಸಾಧನೆ ಹಾಗೂ ಸಮಿತಿಯ ಬಗ್ಗೆ ರಶೀದ್ ಅಬ್ದುಲ್ ಹಮೀದ್ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಮೀದ್ ಫೈಝಿ ಉಸ್ತಾದ್‌ರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಿತಿಯ ಕಾರ್ಯದರ್ಶಿ ಉನೈಜ್ ಬಿ.ಎಲ್. ವಾರ್ಷಿಕ ವರದಿ ವಾಚಿಸಿದರು. ರಶೀದ್ ಅಬ್ದುಲ್ ಹಮೀದ್ ನೂತನ ಸಮಿತಿಗೆ ಅಧಿಕೃತ ಚಾಲನೆ ನೀಡಿದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಆದಮ್ ಹೈದ್ರೋಸ್ ಚಾರ್ಮಾಡಿ, ಅಧ್ಯಕ್ಷರಾಗಿ ರಫೀಕ್ ಯು.ಪಿ., ಉಪಾಧ್ಯಕ್ಷರಾಗಿ ಉನೈಜ್ ಬಿ.ಎಲ್., ಹಮೀದ್ ಸೊರಂಗ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಎ.ಕೆ., ಕಾರ್ಯದರ್ಶಿಯಾಗಿ ಸಲೀಂ ಯು.ಕೆ, ಇಲ್ಯಾಸ್ ಪಿ.ಕೆ., ಕೋಶಾಧಿಕಾರಿಯಾಗಿ ಉಸ್ಮಾನ್ ಪಿ.ಕೆ., ಸಂಚಾಲಕರಾಗಿ ಝೈನುದ್ದೀನ್ ಹಾಶಿಮಿ ಉಸ್ತಾದ್, ಮಾಧ್ಯಮ ಪ್ರತಿನಿಧಿಯಾಗಿ ಅಜ್ಮಲ್ ರಹ್ಮಾನ್ ಹಾಗು ಅಂಶಾದ್ ಚಾರ್ಮಾಡಿ, ಸಲಹಾ ಸಮಿತಿಯಾಗಿ ರಶೀದ್ ಅಬ್ದುಲ್ ಹಮೀದ್, ಅಕ್ಬರ್ ಎ.ಕೆ., ಆಸೀಫ್ ಎಂ.ಎ. ಆಯ್ಕೆಯಾಗಿದ್ದಾರೆ.

ವಾರ್ತಾ ಭಾರತಿ 17 Jan 2026 7:21 pm

ಶಹಾಬಾದ್‌ | ಸಿ.ಎ ಇಂಗಿನಶೆಟ್ಟಿ ಕಾಲೇಜಿನಲ್ಲಿ ಬಿಳ್ಕೊಡುಗೆ ಸಮಾರಂಭ

ಶಹಾಬಾದ್‌ : ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಪರಿಶ್ರಮವೇ ಹೊರತು ಅನ್ಯಮಾರ್ಗವಿಲ್ಲ ಎಂದು ಕಾಲೇಜಿನ ಉಪನ್ಯಾಸಕಿ ಶರಣಮ್ಮ ಕೊಳ್ಳಿ ಹೇಳಿದರು. ಶಹಾಬಾದ್‌ ನಗರದ ಪ್ರತಿಷ್ಠಿತ ಶ್ರೀ ಸಿ.ಎ ಇಂಗಿನಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಅಂಕಗಳ ಜೊತೆಗೆ ಜೀವನದ ಮೌಲ್ಯಗಳು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಿರಾಶರಾಗಬಾರದು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಕಠಿಣ ಪರಿಸ್ಥಿತಿ ಎದುರಿಸುವ ಛಲ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಹಿರಿಯ ಉಪನ್ಯಾಸಕ ರಾಜಕುಮಾರ ಭಾಸದ್ಕರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಪ್ರಮುಖವಾಗಿರುತ್ತದೆ, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಗಳು ಮೈಗೂಡಿಸಿಕೊಳ್ಳಬೇಕು, ಆತ್ಮವಿಶ್ವಾಸದಿಂದ ಮುನ್ನಡೆದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ದಿಲೀಪ್ ಎಲ್ ಶೆಟ್ಟಿ, ಸದಸ್ಯರಾದ ಅನಿಲ್ ಕುಮಾರ್ ಬೋರ್ಗೌಕರ್, ಎಸ್.ಜಿ.ವರ್ಮ ಹಿಂದಿ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಮಲ್ಲಿನಾಥ್ ಪಾಟೀಲ್, ಉಪನ್ಯಾಸಕರಾದ ಸಾಬಣ್ಣ ಗುಡ್ಲಾ, ಶರಣಪ್ಪ ಹಲಕರ್ಟಿ, ಪದ್ಮಶ್ರೀ ಜೋಶಿ, ದೀಪಾ, ಅಶ್ವಿನಿ ಮೋಹಿತೆ, ಸುಮರಾಣಿ ಗೌಳಿ, ವೀರಯ್ಯ ಹಿರೇಮಠ್, ಸುಗಯ್ಯ ಗಂಟೆ ಮಠ, ರಮೇಶ್ ಮಹೇಂದ್ರಕರ್ ಉಪಸ್ಥಿತರಿದ್ದರು. ಗೌರಿ ಹಾಗೂ ರಿತಿಕಾ ನಿರೂಪಿಸಿದರು. ತನಾಜ್ ಸ್ವಾಗತಿಸಿದರು. ಸೀಮಾ ವಂದಿಸಿದರು.

ವಾರ್ತಾ ಭಾರತಿ 17 Jan 2026 7:13 pm

ನಿಟ್ಟೂರು ಶಾಲಾ ವಾರ್ಷಿಕೋತ್ಸವ: 125ನೇ ವರ್ಷಾಚರಣೆ ಲಾಂಛನ ಬಿಡುಗಡೆ

ಉಡುಪಿ, ಜ.17: ನಿಟ್ಟೂರು ತಾಂಗದಗಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 124ನೇ ವರ್ಷದ ಶಾಲಾ ವಾರ್ಷಿಕೋತ್ಸವವು ಇತ್ತೀಚೆಗೆ ಅಮರ ಕಲಾಮಂದಿರದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್ 125ನೇ ವರ್ಷಾಚರಣೆಯ ಲಾಂಛನವನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಜಯಕರ ಶೆಟ್ಟಿ ಪಳ್ಳಿ ಕಾವೇರಿಬೆಟ್ಟು ವಹಿಸಿದ್ದರು. ಪ್ರಸ್ತುತ ನಿವೃತ್ತಿ ಹೊಂದಿದ ಶಾಲಾ ದೈಹಿಕ ಶಿಕ್ಷಕ ರಾಮಪ್ಪ ಎಸ್.ದೊಡ್ಮನಿ ಹಾಗೂ ಕರಂಬಳ್ಳಿ ವಾರ್ಡಿನ ನಿಕಟಪೂರ್ವ ನಗರಸಭಾ ಸದಸ್ಯ ಕೆ.ಗಿರಿಧರ್ ಆರ್ಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶ್ಯಾಮಲ ಕೆ. ಮತ್ತು ದಿನೇಶ ಆಚಾರ್ಯರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಹಳೆ ವಿದ್ಯಾರ್ಥಿಗಳಿಗಾಗಿ ನಡೆಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ಐವನ್ ಪುರ್ಟಡೋ, ಡಾ.ಪ್ರತಿಮಾ ಜೆ.ಆಚಾರ್ಯ, ಹಾಜಿ ಎಂ.ಇಕ್ಬಾಲ್, ಆಡಳಿತ ಸಮಿತಿಯ ಡೇನಿಸ್ ಕರ್ನೇಲಿಯೊ, ಶಾಲಾ ವಿದ್ಯಾರ್ಥಿ ನಾಯಕಿ ರಾಯಿಷಾ ರಫೀದ, ಹಳೆ ವಿದ್ಯಾರ್ಥಿ ಸಂಘದ ಸುವರ್ಣ ನಿಧಿ ಅಧ್ಯಕ್ಷ ರಾಮಚಂದ್ರ ಆಚಾರ್ಯ, ಶಿಕ್ಷಕರಕ್ಷಕ ಸಂಘದ ಕವಿತಾ ಶೆಟ್ಟಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಬಾರಿತ್ತಾಯ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕರ್ನೇಲಿಯೊ ವರದಿ ವಾಚಿಸಿದರು. ಸಂಘದ ವರದಿಯನ್ನು ಕಾರ್ಯದರ್ಶಿ ಬಾಲಚಂದ್ರ ಗಾಟಸ್ಕರ್ ವಾಚಿಸಿದರು. ಸನ್ಮಾನ ಪತ್ರ ಮತ್ತು ಅಭಿನಂದನ ಪತ್ರವನ್ನು ಲಕ್ಷ್ಮೀನಾರಾಯಣ ಬಿ ಆಚಾರ್ಯ, ಕಮಲಾಕ್ಷ ಶೇಟ್, ಮಹಮ್ಮದ್ ಸಿದ್ಧಿಕ್, ಸಮಿತ ವಾಚಿಸಿದರು. ಪಟ್ಟಿಯನ್ನು ಕ್ರೀಡಾ ಕಾರ್ಯದರ್ಶಿ ಕೃಷ್ಣಮೂರ್ತಿ ಆಚಾರ್ಯ ವಾಚಿಸಿದರು. ಸಚೇಂದ್ರ ಕಕ್ಕುಂಜೆ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾಯಕ್ ವಂದಿಸಿದರು. ಹರೀಶ್ ಕರಂಬಳ್ಳಿ ಸಹಕಾರ ನೀಡಿದರು. ಹಳೆ ವಿದ್ಯಾರ್ಥಿ ಗಳಿಂದ ವಿಕ್ರಂ ಮಂಚಿ ರಚಿಸಿ ನಾಗರಾಜ ವರ್ಕಾಡಿ ನಿರ್ದೇಶನದ ಎನ್ನಿನಿ ಬೇತೆ ಆಯಿನಿ ಬೇತೆ ಎಂಬ ನಾಟಕ ಪ್ರದರ್ಶಿಸಲಾಯಿತು.

ವಾರ್ತಾ ಭಾರತಿ 17 Jan 2026 7:13 pm

ಕಲಬುರಗಿ | ತೊಗರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಜ.20ರಂದು ಪ್ರತಿಭಟನೆ : ಶರಣಬಸಪ್ಪ ಮಮಶೆಟ್ಟಿ

ಕಲಬುರಗಿ: ಜಿಲ್ಲೆಯ ರೈತರ ಆರ್ಥಿಕತೆ ನಿರ್ಧರಿಸುವ ತೊಗರಿ ಪ್ರತಿ ಟನ್ ಗೆ 12,500 ರೂ. ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ, ಜ.20 ರಂದು ಇಲ್ಲಿನ ನೆಹರೂ ಗಂಜ್ ಪ್ರದೇಶದಲ್ಲಿರುವ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಯುಕ್ತ ಹೋರಾಟ - ಕರ್ನಾಟಕ ಸಮಿತಿಯ ಸಂಚಾಲಕ, ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲೇ ಅತಿ ಹೆಚ್ಚು ತೊಗರಿ ಬೆಳೆಯುವ ನಾಡು ನಮ್ಮ ಕಲಬುರಗಿ ಜಿಲ್ಲೆ ಆಗಿದೆ, ಇಲ್ಲಿನ ಉತ್ಕೃಷ್ಟ ಮಟ್ಟದ ತೊಗರಿಯು ವಿಶ್ವದೆಲ್ಲೆಡೆ ಖ್ಯಾತಿ ಪಡೆದಿದ್ದಲ್ಲದೆ ಜಿಐ ಟ್ಯಾಗ್ ಕೂಡ ಪಡೆದಿದೆ. ಇಷ್ಟಾದರೂ ತೊಗರಿಗೆ ಸೂಕ್ತ ಬೆಂಬಲ ಬೆಲೆ ನೀಡುತ್ತಿಲ್ಲ, ಹಾಗಾಗಿ ಕೂಡಲೇ ಸ್ವಾಮಿನಾಥನ್ ವರದಿ ಪ್ರಕಾರ ಎಂಎಸ್ಪಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ಹಾಲು ಉತ್ಪಾದಕರ ಸಹಕಾರ ಸಂಘಗಳ (ಕೆಎಂಎಫ್) ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು, ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂಪಾಯಿ ಬೆಂಬಲ ಬೆಲೆ ನೀಡಬೇಕು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ತಲಾ 1,000 ರೂಪಾಯಿ ಪ್ರೋತ್ಸಾಹಧನ ಕೊಡಬೇಕು. ಹೊರದೇಶದ ತೊಗರಿಗೆ ಶೇ.50ರಷ್ಟು ಆಮದು ಶುಲ್ಕ ಹಾಕಬೇಕು, ತೊಗರಿ ತುರ್ತು ಖರೀದಿ ಕೇಂದ್ರ ಸ್ಥಾಪನೆ, ಬೆಳೆ ವಿಮೆ ಮಂಜೂರು ಮತ್ತಿತ್ತರ ಬೇಡಿಕೆಗಳು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಿದರು. ಮುಖಂಡ ಮಹೇಶ್ ಎಸ್.ಬಿ. ಅವರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಭೀಮಾಶಂಕರ ಮಾಡ್ಯಾಳ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್ ಮತ್ತಿತರರು ಇದ್ದರು.

ವಾರ್ತಾ ಭಾರತಿ 17 Jan 2026 7:09 pm

ಟಿಕೆಟ್ ರಹಿತ ಪ್ರಯಾಣ : ಡಿಸೆಂಬರ್ ತಿಂಗಳಲ್ಲಿ 4,353 ಪ್ರಯಾಣಿಕರಿಂದ 8ಲಕ್ಷ ರೂ.ದಂಡ ವಸೂಲಿ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಸಾರ್ಟಿಸಿ) ಡಿಸೆಂಬರ್ ತಿಂಗಳಲ್ಲಿ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 4,353 ಪ್ರಯಾಣಿಕರಿಂದ ಒಟ್ಟು 8ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ದಂಡ ವಸೂಲಿ ಮಾಡಿದೆ. ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 43,553 ವಾಹನಗಳನ್ನು ತನಿಖೆಗೊಳಪಡಿಸಿ 4,207 ಪ್ರಕರಣಗಳನ್ನು ಪತ್ತೆಹಚ್ಚಿ, 4,353 ಟಿಕೆಟ್ ರಹಿತ ಪ್ರಯಾಣಿಕರಿಂದ 8,08,704 ರೂ.ಗಳನ್ನು ದಂಡ ವಸೂಲಿ ಮಾಡಿದೆ. ಅಲ್ಲದೆ, ಇದೇ ವೇಳೆ ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 1,14,500 ರೂ.ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮವನ್ನು ಜರುಗಿಸಲಾಗಿದೆ ಎಂದು ತಿಳಿಸಲಾಗಿದೆ.

ವಾರ್ತಾ ಭಾರತಿ 17 Jan 2026 7:08 pm

ಕಾಳಗಿ | ರಾಜಾಪೂರ ಗ್ರಾಪಂ ಅಧ್ಯಕ್ಷರಾಗಿ ಮತ್ತೆ ಮುಂದುವರೆದ ಪ್ರಕಾಶರೆಡ್ಡಿ

ಕಾಳಗಿ : ತಾಲೂಕಿನ ರಾಜಾಪೂರ ಗ್ರಾಪಂ ಅಧ್ಯಕ್ಷ ಪ್ರಕಾಶರೆಡ್ಡಿ ಸದಸ್ಯತ್ವ ಪಂಚಾಯತ್ ರಾಜ್ ಇಲಾಖೆ ರದ್ದುಗೊಳಿದನ್ನು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಮತ್ತೆ ರಾಜಾಪೂರ ಗ್ರಾಪಂ ಅಧ್ಯಕ್ಷರಾಗಿ ಪ್ರಕಾಶರೆಡ್ಡಿ ಅವರೇ ಮುಂದುವರೆಯಲಿದ್ದಾರೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.‌ಬಸಲಿಂಗಪ್ಪ ಡಿಗ್ಗಿ ತಿಳಿಸಿದ್ದಾರೆ. ಈ ಹಿಂದೆ ರಾಜಾಪೂರ ಗ್ರಾಪಂ ಅಧ್ಯಕ್ಷ ಪ್ರಕಾಶರೆಡ್ಡಿ ಅವರ ಮೇಲಿನ ಲಂಚದ ಆರೋಪ ಸಾಬೀತಾಗಿದ್ದರಿಂದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಕಾಶರೆಡ್ಡಿ ಅವರ ಗ್ರಾಮ ಪಂಚಾಯತ್ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನು ಮರು ಪ್ರಶ್ನಿಸಿ ಪ್ರಕಾಶರೆಡ್ಡಿ ಅವರು ಕಲಬುರಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದಾಗ ಗ್ರಾಪಂ ಸದಸ್ಯತ್ವ ಅನರ್ಹತೆಗೆ ತಡೆಯಾಜ್ಞೆ ನೀಡಿದೆ, ಹಾಗಾಗಿ ಮತ್ತೆ ಪ್ರಕಾಶರೆಡ್ಡಿ ಮಲ್ಲರೆಡ್ಡಿ ಅವರೇ ರಾಜಾಪೂರ ಗ್ರಾಪಂ ಅಧ್ಯಕ್ಷರಾಗಿ ಮುಂದುವರೆಯಲ್ಲಿದ್ದಾರೆ ಎಂದು ಡಾ. ಬಸಲಿಂಗಪ್ಪ ಡಿಗ್ಗಿ ತಿಳಿಸಿದ್ದಾರೆ.

ವಾರ್ತಾ ಭಾರತಿ 17 Jan 2026 7:05 pm

ಕುಂದಾಪುರ: ಮರಳಲ್ಲಿ ಅರಳಿದ ನಮ್ಮೂರ ಶಾಲೆ!

ಕುಂದಾಪುರ: ಕುಂದಾಪುರ ಪಾರಿಜಾತದ ವತಿುಂದ ದಿ.ರಾಮ ಚಂದ್ರ ಭಟ್ ಮತ್ತು ದಿ.ಅಹಲ್ಯ ಭಟ್ ಸನೆನಪಿಗಾಗಿ ಕೋಡಿ ಬೀಚ್‌ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಆಕರ್ಷಣೀಯ ’ನಮ್ಮೂರ ಶಾಲೆ’ ಪರಿಕಲ್ಪನೆಯ ಬೃಹತ್ ಮರಳು ಶಿಲ್ಪಾಕೃತಿ ಕಣ್ಮನ ಸೆಳೆಯುತ್ತಿದೆ. ಸರಕಾರಿ ಶಾಲಾ ಮಕ್ಕಳ ಧ್ಯೇಯವನ್ನಿಟ್ಟುಕ್ಕೊಂಡು ಸ್ವಾತಂತ್ರತೆಯನ್ನು ಮತ್ತು ಬಣ್ಣದ ಕನಸ್ಸನ್ನು ಕಾಣುವ ಗಾಳಿಪಟದ ವರ್ಣನೆಯೊಂದಿಗೆ ಶಾಲಾ ದೃಶ್ಯ ಹಾಗೂ ಗಾಳಿಪಟ ಉತ್ಸವ ಎಂಬ ಬರಹದೊಂದಿಗೆ ಬಳಪವನ್ನು ಹಿಡಿದುಕೊಂಡ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಭಾವನೆಯನ್ನು ಅಭಿವ್ಯಕ್ತಿಸುವ ಕಲಾಕೃತಿಯನ್ನು ಸ್ಯಾಂಡ್ ಥೀಂ ಉಡುಪಿಯ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ರಚಿಸಿದ್ದಾರೆ. 15 ಅಡಿ ಅಗಲ ಮತ್ತು 6 ಅಡಿ ಎತ್ತರದಲ್ಲಿ ರಚಿಸಲಾಗಿರುವ ಈ ಕಲಾಕೃತಿಯ ವೀಕ್ಷಣೆಗೆ ಜ.18ರಂದು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ವಾರ್ತಾ ಭಾರತಿ 17 Jan 2026 7:02 pm

ಆಳಂದ | ಮಾಜಿ ಸಚಿವ ಭೀಮಣ್ಣ ಖಂಡ್ರೆಗೆ ಶ್ರದ್ಧಾಂಜಲಿ

ಆಳಂದ : ಶುಕ್ರವಾರ ಸಂಜೆ ನಿಧನರಾದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರಿಗೆ ವೀರಶೈವ ಲಿಂಗಾಯತ್ ಮಹಾಸಭಾ ತಾಲೂಕು ಘಟಕದ ಆಶ್ರಯದಲ್ಲಿ ಸಮಾಜ ಬಾಂಧವರು ಶನಿವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಪಟ್ಟಣದ ಬಸ್ ನಿಲ್ದಾಣ ಬಳಿಯ ವೀರಶೈವ ಲಿಂಗಾಯತ ಮಹಾಸಭಾ ಪ್ರಾಂಗಣದಲ್ಲಿನ ವಿಶ್ವಗುರು ಬಸಣ್ಣಣವರ ಪ್ರತಿಮೆ ಬಳಿ ಲಿಂ. ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭೀಮಣ್ಣ ಖಂಡ್ರೆ ಅವರ ವ್ಯಕ್ತಿತ್ವನ್ನು ಸ್ಮರಿಸಿದ ಮುಖಂಡರು, ಆಳಂದ ತಾಲೂಕಿನ ಸಮಾಜಿಕ, ರಾಜಕೀಯವಾಗಿ ಬಹು ಹತ್ತಿರದ ನಂಟು ಹೊಂದಿದ್ದರು. ಅವರ ಜನಪರ ಮತ್ತು ಸಮಾಜಪರ ಕಾಳಜಿಯುಳ್ಳ ನಾಯಕತ್ವದೊಂದಿಗೆ ಯುವ ಸಮುದಾಯಕ್ಕೆ ಮಾದರಿ ವ್ಯಕ್ತಿತ್ವನ್ನು ಬಿಟ್ಟುಕೊಟ್ಟಿದ್ದಾರೆ. ಅವರ ಅಗಲಿಕೆಗೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷ ಶ್ರೀಶೈಲ ಖಜೂರಿ ಮತ್ತು ಸಿದ್ಧು ಪಾಟೀಲ ಮೋಘಾ, ನ್ಯಾಯವಾದಿ ಮಹಾದೇವ ಹತ್ತಿ ಅವರು ಹೇಳಿದರು. ಮಹಾಸಭಾ ಕಾರ್ಯದರ್ಶಿ ಕಲ್ಲಪ್ಪ ಹತ್ತರಕಿ, ಹಿರಿಯ ಮುಖಂಡ ಮಲ್ಲಪ್ಪ ಹತ್ತರಕಿ, ಮಲ್ಲಿಕಾರ್ಜುನ ಕಂದಗುಳೆ, ಶ್ರೀಶೈಲ ಹತ್ತರಕಿ, ಬಸವಸೇನೆ ತಾಲೂಕು ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಳಿ ಸಮಾಜ ಅಧ್ಯಕ್ಷ ಪಂಡಿತ ಶೇರಿಕಾರ, ವಿಎಸ್‌ಎಸ್‌ಎನ್ ಅಧ್ಯಕ್ಷ ಭಾರತ ಪಾಟೀಲ, ಭೂವಿ ಸಮಾಜದ ಕನಕಪ್ಪ ದಂಡಗುಲೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ವಾಡೆ, ಪಂಚಮಸಾಲಿ ಸಮಾಜ ಅಧ್ಯಕ್ಷ ಆನಂದ ಎಸ್. ದೇಶಮುಖ, ಸಂತೋಷ ವಾಲೆ, ಬಾಬುರಾವ್ ಗೊಬ್ಬರೆ ಭೂಸನೂರ, ಚನ್ನಪ್ಪ ಹತ್ತರಕಿ, ರಾಮ ಹತ್ತರಕಿ, ಸಿದ್ಧು ಶೇಖಾಪೂರ, ಶಿವರಾಯ ಸರಸಂಬಿ ಮತ್ತಿತರು ಉಪಸ್ಥಿತರಿದ್ದು ಖಂಡ್ರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಗಣ್ಯರ ಸಂತಾಪ : ಶತಾಯುಷಿ ಭೀಮಣ್ಣ ಖಂಡ್ರೆ ಅವರ ಅಗಲಿಕೆಗೆ ಶಾಸಕ ಬಿ.ಆರ್.ಪಾಟೀಲ್‌, ಮಾಜಿ ಶಾಸಕ ಸುಭಾಷ ಗುತ್ತೇದಾರ್‌, ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳಿ, ಪಂಚಗ್ಯಾರಂಟಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ, ಹೋರಾಟಗಾರ ರಮೇಶ ಲೋಹಾರ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ, ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಬಂಜಾರಾ ಸಮಾಜದ ರಾಜು ಚವ್ಹಾಣ, ಸುಭಾಷ ಫೌಜಿ, ಗುತ್ತಿಗೆದಾರ ರೇವಣಸಿದ್ಧಪ್ಪ ನಾಗೂರೆ, ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೆಯ ಕುಡಕಿ, ಬಾಬುರಾವ್ ಅರುಣೋದಯ, ಹಿರಿಯ ದಯಾನಂದ ಶೇರಿಕಾರ, ಬಿಜೆಪಿ ಮುಖಂಡ ಅಶೋಕ ಹತ್ತರಕಿ, ಬಸವರಾಜೇಂದ್ರ ಗುಂಡೆ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 17 Jan 2026 7:02 pm

ಒಗ್ಗಟ್ಟಿನಲ್ಲಿ ದೇಶ ಕಟ್ಟುವ ಕಾರ್ಯ ಅಗತ್ಯ: ಭಾವೀ ಪರ್ಯಾಯ ಶಿರೂರು ಶ್ರೀ

ಉಡುಪಿ ಕಾಂಗ್ರೆಸ್ ಭವನದಲ್ಲಿ ಭಜನಾ ಕಾರ್ಯಕ್ರಮ

ವಾರ್ತಾ ಭಾರತಿ 17 Jan 2026 7:00 pm

ಡಾ.ಗಿರಿಜಾ ಶಾಸ್ತ್ರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ

ಉಡುಪಿ, ಜ.17: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಮಂಗಳೂರು ಇವುಗಳ ಸಂಯುಕ್ತ ಆಶ್ರಯ ದಲ್ಲಿ ಹಿರಿಯ ಲೇಖಕಿ ಡಾ.ಗಿರಿಜಾ ಶಾಸ್ತ್ರಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಶನಿವಾರ ಉಡುಪಿ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಮಾತನಾಡಿ, ಚದುರಿ ಹೋಗಿರುವ ಮುಳಿಯ ತಿಮ್ಮಪ್ಪಯ್ಯ ಅವರ ಬರೆದ ಅನೇಕ ಕೃತಿಗಳು ಒಟ್ಟುಗೂಡಿಸಿ ಸಮಗ್ರ ಸಂಪುಟ ಹೊರತರಬೇಕು. ಅಲ್ಲದೆ ಅವರ ಕುರಿತು ನಡೆಸಿರುವ ಪಿಎಚ್‌ಡಿ ಅಧ್ಯಯನವನ್ನು ಕೃತಿಯಾಗಿ ರಚಿಸ ಬೇಕು. ಇದಕ್ಕೆಲ್ಲ ಬೇಕಾದ ಆರ್ಥಿಕ ನೆರವು ನೀಡುವ ಕಾರ್ಯವನ್ನು ಸರಕಾರ ಮಾಡಬೇಕಾಗಿದೆ ಎಂದರು. ಮುಳಿಯ ತಿಮ್ಮಪ್ಪಯ್ಯ ಹೊರಗಿನ ಸಂಪರ್ಕ ಇಲ್ಲದೆಯೇ ದೇಶಿ ಮೂಲಕ ಅಧ್ಯಯನ ಮಾಡಿದರು. ಇಂದಿನ ಯುವ ಪೀಳಿಗೆ ಮುಳಿಯ ತಿಮ್ಮಪ್ಪಯ್ಯ ಅವರನ್ನು ಓದಿಲ್ಲ. ಹಾಗಾಗಿ ಯುವ ಸಮುದಾಯಕ್ಕೆ ಅವರ ಪರಿಚಯ ಮಾಡುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು. ಅಧ್ಯಕ್ಷತೆಯನ್ನು ಮುಳಿಯ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ.ನಾ ದಾಮೋದರ ಶೆಟ್ಟಿ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕಿ ಡಾ.ಸರಸ್ವತಿ ಅಭಿನಂದನಾ ಭಾಷಣ ಮಾಡಿದರು. ಮುಳಿಯ ಕುಟುಂಬಸ್ಥರಾದ ರಾಘವಯ್ಯ, ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 17 Jan 2026 6:57 pm

ಯಾದಗಿರಿ | ಮಾಜಿ ಸಚಿವ ರಾಜೂ ಗೌಡ ಅವರ ಕಾರಿಗೆ ಟ್ರಕ್ ಢಿಕ್ಕಿ : ಪ್ರಾಣಾಪಾಯದಿಂದ ಪಾರು

ಯಾದಗಿರಿ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯ ಮುಗಿಸಿ ಮರಳುತ್ತಿದ್ದ ಮಾಜಿ ಸಚಿವ ರಾಜೂ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ತಡರಾತ್ರಿ ನಗರದ ಗಂಜ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ರಾಜೂ ಗೌಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಸಿಸಿಎಲ್ ಪಂದ್ಯ ಮುಗಿಸಿಕೊಂಡು ಹೈದರಾಬಾದ್ ಮಾರ್ಗವಾಗಿ ತಮ್ಮ ಊರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಂಜ್ ಹೈವೇ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಕ್ ಒಂದು ರಾಜೂ ಗೌಡ ಅವರ ಕಾರಿಗೆ ಹಿಂದಿನಿಂದ ಬಲವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರಾಜೂ ಗೌಡ ಅವರಿಗೆ ಸ್ವಲ್ಪ ಮಟ್ಟಿನ ತರಚಿದ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯವಾಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜೂ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ವಾರ್ತಾ ಭಾರತಿ 17 Jan 2026 6:55 pm

ಚಿತ್ತಾಪುರ | ಸಮಾಜಕ್ಕೆ ಭೀಮಣ್ಣ ಖಂಡ್ರೆಯವರ ಕೊಡುಗೆ ಅಪಾರ: ನಾಗರಾಜ ಭಂಕಲಗಿ

ಚಿತ್ತಾಪುರ: ಭೀಮಣ್ಣ ಖಂಡ್ರೆ ಅವರು ಸರಳ ಜೀವನ, ನಿಸ್ವಾರ್ಥ ಸೇವೆ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಗುಣಗಳಿಂದ ಸಮಾಜ ಸೇವೆಗೆ ಮಾದರಿಯಾಗಿದ್ದರು. ಸಮಾಜದ ವಿರುದ್ಧ ಅವೈಜ್ಞಾನಿಕವಾಗಿ ಮಂಡಿಸಲಾದ ಹಾವನೂ‌ರ್ ವರದಿಯನ್ನು ಧೈರ್ಯದಿಂದ ವಿರೋಧಿಸಿ ವೀರಶೈವ ಸಮಾಜದ ಹಕ್ಕುಗಳ ರಕ್ಷಣೆಗೆ ಮುಂಚೂಣಿಯಲ್ಲಿ ನಿಂತ ನಾಯಕರಾಗಿದ್ದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು. ಪಟ್ಟಣದ ವರುಣ ನಗರದ ಶರಣಬಸವೇಶ್ವರ ಮಂದಿರದ ಸಭಾಭವನದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, 102 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಅಜಾತಶತ್ರುವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ, ಏಕೀಕರಣಕ್ಕಾಗಿ ಹೋರಾಡಿದ್ದ ಅವರು, ಶಾಸಕರಾಗಿ, ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಮುಖಂಡ ಮಲ್ಲರೆಡ್ಡಿ ಗೋಪಸೇನ್ ಮಾತನಾಡಿ, ಖಂಡ್ರೆ ಅವರ ನಿಧನದಿಂದ ಸಮಾಜ ಮಾತ್ರವಲ್ಲದೆ ಇಡೀ ರಾಜ್ಯವೇ ತೀವ್ರ ಆಘಾತ ಅನುಭವಿಸುತ್ತಿದೆ ಎಂದು ಹೇಳಿದರು. ಮುಖಂಡ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ವೀರಶೈವ ಸಮಾಜಕ್ಕೆ ಅನ್ಯಾಯವಾದಾಗ ಧೈರ್ಯವಾಗಿ ಸಿಡಿದು ನಿಂತ ಹೋರಾಟಗಾರರು ಖಂಡ್ರೆ ಎಂದು ಸ್ಮರಿಸಿದರು. ಯುವ ಮುಖಂಡ ಪ್ರಸಾದ ಅವಂಟಿ ಅವರು, ಖಂಡ್ರೆ ಅವರು ತೋರಿಸಿದ ಮಾರ್ಗದರ್ಶನದಂತೆ ಸಮಾಜದ ಹಿತಕ್ಕಾಗಿ ಒಗ್ಗಟ್ಟಿನಿಂದ ಮುಂದುವರೆಯಬೇಕು ಎಂದು ಕರೆ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಘಟನೆ ಬಲಪಡಿಸುವಲ್ಲಿ ಖಂಡ್ರೆ ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದರು. ಇದೇ ವೇಳೆ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೇಹಲ್ ಪಾಟೀಲ್ ಬೆಳಗುಂಪಾ, ಅಶೋಕ ನಿಪ್ಪಾಣಿ, ಬಸವರಾಜ ಕಾಳಗಿ, ಸೋಮಶೇಖರ ಅಜಲಾಪುರ್, ಅನಿಲಕುಮಾರ ವಡ್ಡಡಗಿ, ರವೀಂದ್ರ ಗೊಬ್ಬುರ, ಎಸ್.ಎನ್. ಪಾಟೀಲ, ಚಂದ್ರಶೇಖರ ಉಟಗೂರ್, ನಾಗರೆಡ್ಡಿ ಗೋಪಸೇನ್, ಬಸವರಾಜ ಸಂಕನೂರ, ಶಿವರಾಜ ಪಾಳೇದ್, ರಮೇಶ್ ಕಾಳನೂ‌ರ್, ಸಂಗಣ್ಣಗೌಡ ಸಂಕನೂರ, ಬಸವರಾಜಗೌಡ ಆಲೂರ್, ಮಂಜುನಾಥ ಪೊಲೀಸ್ ಪಾಟೀಲ್‌, ಅಂಬರೀಶ್ ಸುಲೇಗಾಂವ್, ರಾಚು ಬೊಮ್ಮನಳ್ಳಿ, ಮಲ್ಲಿಕಾರ್ಜುನ ದಂಡಗುಂಡ, ಸಿದ್ದು ರಾಜಾಪುರ, ವೀರಭದ್ರಪ್ಪ ಗುರುಮಿಠಕಲ್, ಕೋಟೇಶ್ವರ ರೇಷ್ಮೆ, ಶರಣಗೌಡ ಸೂಲಹಳ್ಳಿ, ಸಂತೋಷ ಹಾವೇರಿ, ರವಿ ಸಿಂಪಿ, ಅಡೆಪ್ಪ ಖಣದಾಳ ಇದ್ದರು.

ವಾರ್ತಾ ಭಾರತಿ 17 Jan 2026 6:48 pm

ಕಲಬುರಗಿ | ಬಂಜಾರಾ ಸೇವಾ ಸಂಘದ ಕಾರ್ಯದರ್ಶಿಯಾಗಿ ವಿನೋದ್ ಚೌಹಾಣ್ ಆಯ್ಕೆ

ಕಲಬುರಗಿ : ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘವು ಇತ್ತೀಚೆಗೆ ಸಭೆ ನಡೆಸಿ ಈ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಬಿ.ಬಿ ನಾಯಕ್ ತಿಳಿಸಿದ್ದಾರೆ. ಕರ್ನಾಟಕ ಪ್ರದೇಶ ಲಂಬಾಣಿ ಸಮುದಾಯದಲ್ಲಿ ಕ್ರಿಯಾಶೀಲರಾಗಿ ಸಂಘಟನೆಗೆ ಶ್ರಮಿಸುತ್ತಿರುವ ವಿನೋದ್ ಕುಮಾರ್ ಚೌಹಾಣ್, ಪ್ರಧಾನ ಕಾರ್ಯದರ್ಶಿ ಸ್ಥಾನ ಅಲಂಕರಿಸಿರುವುದು ಸಂಘಕ್ಕೆ ಶಕ್ತಿ ಬಂದಿದೆ ಎಂದು ಸಭೆಯಲ್ಲಿ ಅಭಿಪ್ರಾಯದ ಆನಂದ ಚೌಹಾಣ್ ಚಿಂಚೋಳಿ, ಲಕ್ಷ್ಮಣ ಚೌಹಾಣ್, ರಮೇಶ್ ರಾಠೋಡ್ ಕಾರಬಾರಿ, ಲಾಲಪ್ಪ ರಾಥೋಡ್, ಕಿಶನ್ ನಾಯಕ್, ವಸಂತ ಚೌಹಾಣ್, ರಾಠೋಡ್ ರೇಣುಕಾ ರಾಥೋಡ್, ಸುನಿತಾ ಜಾಧವ್, ಕವಿತಾ ರಾಥೋಡ್, ಸಂಗೀತಾ ಚೌಹಾಣ್ ಲಲಿತಾಬಾಯಿ ರಾಥೋಡ್ ಮತ್ತಿತರು ಇದ್ದರು.

ವಾರ್ತಾ ಭಾರತಿ 17 Jan 2026 6:42 pm

ಸಿಂಧನೂರು ಜಿಲ್ಲಾ ಕೇಂದ್ರಕ್ಕಾಗಿ ವಿಶೇಷ ಅಧಿವೇಶನದಲ್ಲಿ ಧ್ವನಿ ಎತ್ತಲು ಕರವೇ ರಾಮಕೃಷ್ಣ ಭಜಂತ್ರಿ ಒತ್ತಾಯ

ಸಿಂಧನೂರು: ಇದೇ ಜನವರಿ 22ರಿಂದ 31ರವರೆಗೆ ನಡೆಯುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ‘ಸಿಂಧನೂರು ಜಿಲ್ಲೆ’ ರಚನೆಗೆ ಕುರಿತು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಧ್ವನಿ ಎತ್ತಬೇಕು ಹಾಗೂ ಮಾಜಿ ಸಚಿವರು, ಶಾಸಕರು, ಸಂಸದರೂ ಕೂಡ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಂಧನೂರು ತಾಲೂಕು ಕೇಂದ್ರ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಕಲಬುರಗಿ ಜಿಲ್ಲೆಗಳ ಮಧ್ಯಭಾಗದಲ್ಲಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಹೊಂದುವ ಮೂಲಕ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ವಿಶಿಷ್ಠತೆಯನ್ನು ಹೊಂದಿದ್ದು, ತಾಲೂಕಿನಲ್ಲಿ ವಿವಿಧ ರಾಜ್ಯಗಳ ವಿವಿಧ ಸಂಸ್ಕೃತಿಗಳ ಜನರು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಡಿಪ್ಲೊಮಾ ಕಾಲೇಜು, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಯ ಅಗತ್ಯತೆ ಇದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಹಾಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಧ್ವನಿ ಎತ್ತುವುದರಿಂದ ಸರ್ಕಾರದ ಗಮನ ಸೆಳೆಯಬಹುದಾಗಿದೆ. ಅಲ್ಲದೇ ಮಾಜಿ ಸಚಿವರು, ಶಾಸಕರು ಹಾಗೂ ಸಂಸದರು ಸರ್ಕಾರಕ್ಕೆ ಪತ್ರ ಬರೆದು ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಬೇಕು ಎಂದು ರಾಮಕೃಷ್ಣ ಭಜಂತ್ರಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಗೌಡ, ತಾಲೂಕು ಅಧ್ಯಕ್ಷ ಎಲ್.ರಾಜಾಸಾಬ್ ಗಾಂಧಿನಗರ, ನಗರ ಘಟಕದ ಅಧ್ಯಕ್ಷ ಆರ್.ಎಕ್ಸ್.ಸುರೇಶ, ತಾಲೂಕು ಉಪಾಧ್ಯಕ್ಷ ಬಸವರಾಜ, ಎಸ್.ಎಸ್.ಪಾಷಾ ಇನ್ನಿತರರು ಇದ್ದರು

ವಾರ್ತಾ ಭಾರತಿ 17 Jan 2026 6:39 pm

ಹಿಮವಿಲ್ಲದ ಹಿಮಾಲಯ: ಕಡಿಮೆಯಾದ ನೀರಿನ ಲಭ್ಯತೆ, ಬೆಳೆಗಳಿಗೂ ಭೀತಿ

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಈ ಬಾರಿ ಅಪರೂಪದಷ್ಟು ಒಣ ಚಳಿಗಾಲ ಅನುಭವವಾಗಿದ್ದು, ಸಾಮಾನ್ಯವಾಗಿ ಹಿಮದಿಂದ ಮುಚ್ಚಿರಬೇಕಾದ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಪರ್ವತ ಶಿಖರಗಳು ಬಹುತೇಕ ಬರಿದಾಗಿವೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಡಿಸೆಂಬರ್ ಮತ್ತು ಜನವರಿಯಲ್ಲಿ ಉತ್ತರಾಖಂಡದಲ್ಲಿ ಮಳೆಯೇ ದಾಖಲಾಗಿಲ್ಲ. ಹಿಮಾಚಲ ಪ್ರದೇಶದಲ್ಲಿ 1901ರಿಂದಲೂ ದಾಖಲಾಗಿರುವ ಮಾಹಿತಿಯಲ್ಲಿ, ಈ ಬಾರಿ ಆರನೇ ಅತಿ

ಒನ್ ಇ೦ಡಿಯ 17 Jan 2026 6:36 pm

PHOTOS | ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಶನಿವಾರ ಪಶ್ಚಿಮ ಬಂಗಾಳದ ಮಾಲ್ಡಾ ಟೌನ್‌ನಿಂದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿದ್ದಾರೆ. 

ವಾರ್ತಾ ಭಾರತಿ 17 Jan 2026 6:36 pm

ಮಾನ್ವಿ | ಪೇಂಟ್ ಅಂಗಡಿಯಲ್ಲಿ ಅಗ್ನಿ ಅವಘಡ : ಅಪಾರ ನಷ್ಟ

ಮಾನ್ವಿ : ಪಟ್ಟಣದ ಬಸವ ವೃತ್ತದ ಹತ್ತಿರ ಇರುವ ಲಕ್ಷ್ಮೀ ವೆಂಕಟೇಶ್ವರ ಪೇಂಟ್ ಅಂಗಡಿಗೆ ಶುಕ್ರವಾರ ಬೆಳಗಿನ ಜಾವ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ ಲಕ್ಷಾಂತರ ಮೌಲ್ಯದ ವಿವಿಧ ಕಂಪನಿಗಳ ಪೇಂಟ್ ಸೇರಿದಂತೆ ಅಂಗಡಿಯಲ್ಲಿನ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು ಎಂದು ಅಂಗಡಿ ಮಾಲಕ ಬಿ.ವೀರೇಶ ಬಾಬು ರವರಿಗೆ ತಿಳಿಸಿದ್ದಾರೆ.

ವಾರ್ತಾ ಭಾರತಿ 17 Jan 2026 6:36 pm

ಸಿಂಧನೂರು | ಕರ್ನಾಟಕ ರಾಜ್ಯ ಯುವ ಆಯೋಗ ಸ್ಥಾಪಿಸಲು ಒತ್ತಾಯಿಸಿ ಎಸ್‌ವೈಎಂನಿಂದ ಮನವಿ

ಸಿಂಧನೂರು: ರಾಜ್ಯದ ಕೋಟ್ಯಂತರ ಯುವಜನರ ಹಿತರಕ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಮಾನಸಿಕ ಆರೋಗ್ಯದ ಸುಧಾರಣೆಗಾಗಿ 'ಕರ್ನಾಟಕ ರಾಜ್ಯ ಯುವ ಆಯೋಗ'ವನ್ನು ತಕ್ಷಣವೇ ಸ್ಥಾಪಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ತಾಲೂಕು ಸಮಿತಿ ಶನಿವಾರ ಒತ್ತಾಯಿಸಿದೆ. ಈ ಕುರಿತು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಲಾಯಿತು. ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಯುವಜನಸಂಖ್ಯೆಯಿದ್ದು, ಅವರು ಶಿಕ್ಷಣ, ನಿರುದ್ಯೋಗ, ಮಾನಸಿಕ ಒತ್ತಡ ಹಾಗೂ ಮಾದಕ ವ್ಯಸನದಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. 2022 ರಿಂದ 2025ರ ನವೆಂಬರ್‌ವರೆಗೆ ರಾಜ್ಯದಲ್ಲಿ ದಾಖಲಾದ 9,450 ಆತ್ಮಹತ್ಯೆ ಪ್ರಕರಣಗಳಲ್ಲಿ ಬಹುಪಾಲು ಯುವಜನರದ್ದೇ ಆಗಿರುವುದು ಆತಂಕಕಾರಿ ವಿಷಯ ಎಂದು ಸಂಘಟಕರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. 2022ರ ರಾಜ್ಯ ಯುವ ನೀತಿ ಜಾರಿಯಲ್ಲಿದ್ದರೂ, ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸಲು ಮತ್ತು ಯುವಜನರ ಅಹವಾಲುಗಳನ್ನು ಆಲಿಸಲು ಕಾನೂನುಬದ್ಧ ಸಂಸ್ಥೆಯ ಕೊರತೆಯಿದೆ. ಕೇರಳ, ಅಸ್ಸಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಆಯೋಗ ರಚನೆಯಾಗಬೇಕು. ಮಾದಕ ವಸ್ತು ತಡೆ, ನಾಯಕತ್ವ ಅಭಿವೃದ್ಧಿ ಹಾಗೂ ಉದ್ಯೋಗ ಮಾರ್ಗದರ್ಶನ ನೀಡಲು ಈ ಆಯೋಗವು ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಲಾಗಿದೆ. ಯುವಜನರಲ್ಲಿ ಕಂಡುಬರುತ್ತಿರುವ ಶೇ. 30ರಷ್ಟು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನೀಗಿಸಲು ಹಾಗೂ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರವು ಈ ಕೂಡಲೇ ಶಾಸನಾತ್ಮಕ ಪ್ರಕ್ರಿಯೆ ಆರಂಭಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ವಸಿಮ್ ಹಾಗೂ ತಾಲೂಕು ಅಧ್ಯಕ್ಷ ಅಬುಲೈಸ್ ನಾಯಕ್, ಮನುಜಮತ ಬಳಗದ ಬಸವರಾಜ ಬಾದರ್ಲಿ, ವಿದ್ಯಾರ್ಥಿ ಸಂಘಟನೆಯ ಚಾಂದ್‌ಪಾಷ, ಯುವ ಮುಖಂಡ ಸುಹೈಲ್ ದೇಸಾಯಿ, ಸಂಘಟನೆಯ ತಾಲೂಕು ಉಪಾಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿಗಳಾದ ನಯಿಮ್ ಇರ್ಫಾನ್, ಮುಸ್ತಾಕ್, ಅಝರ್, ಶಬೀರ್, ಆಸಿಫ್, ಫಾರೂಕ್, ರಿಯಾಝ್‌, ಯಾಸೀನ್ ಮುಲ್ಲಾ ಇನ್ನಿತರರಿದ್ದರು.

ವಾರ್ತಾ ಭಾರತಿ 17 Jan 2026 6:32 pm

ಇರಾನ್‌ ಅಶಾಂತಿಯಲ್ಲಿ ಅಮೆರಿಕದ ಕೈವಾಡ, ಪ್ರತಿಭಟನಾಕಾರರ ಸಾವಿಗೆ ಡೊನಾಲ್ಡ್‌ ಟ್ರಂಪ್‌ ಕಾರಣ; ಯುದ್ಧ ನಗಾರಿ ಬಾರಿಸಿದ ಖಮೇನಿ!

ಇರಾನ್‌ನಲ್ಲಿ ಭುಗಿಲೆದ್ದಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅದನ್ನು ಬಲಪ್ರಯೋಗ್ದ ಮೂಲಕ ನಿರ್ದಯವಾಗಿ ಹತ್ತಿಕ್ಕುವ ಪ್ರಯತ್ನಗಳು ಆತಂಕವನ್ನು ಹುಟ್ಟಿಸಿವೆ. ಈ ಮಧ್ಯೆ ಇರಾನ್‌ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಇರಾನ್‌ ಅಶಾಂತಿಯಲ್ಲಿ ಅಮೆರಿಕದ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಭಟನಾಕಾರರ ಸಾವಿಗೆ ಡೊನಾಲ್ಡ್‌ ಟ್ರಂಪ್‌ ಕಾರಣ ಎಂಬ ಅವರ ಆರೋಪ ಇದೀಗ ಚರ್ಚೆಗೆ ಗ್ರಾಸವಾಗಿದೆ.

ವಿಜಯ ಕರ್ನಾಟಕ 17 Jan 2026 6:29 pm

ವಿಮಾನಯಾನ ಸಂಸ್ಥೆ ಖರೀದಿಸ್ತಾರಾ ಎಲಾನ್‌ ಮಸ್ಕ್‌? ಕುತೂಹಲ ಹುಟ್ಟಿಸಿದೆ ನಂ.1 ಶ್ರೀಮಂತನ ಪೋಸ್ಟ್‌

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮತ್ತು ಪ್ರಸಿದ್ಧ ವಿಮಾನಯಾನ ಸಂಸ್ಥೆ ರೈಯಾನ್‌ಏರ್‌ನ ಸಿಇಒ ಮೈಕೆಲ್ ಒ'ಲಿಯರಿ ನಡುವೆ ಭಾರಿ ವಾಕ್ಸಮರ ನಡೆದಿದೆ. ತಮ್ಮ ವಿಮಾನಗಳಲ್ಲಿ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಇಂಟರ್ನೆಟ್ ಅಳವಡಿಸಲು ಒ'ಲಿಯರಿ ನಿರಾಕರಿಸಿದ್ದಲ್ಲದೆ, ಅದರ ತಾಂತ್ರಿಕತೆಯ ಬಗ್ಗೆ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್, ಒ'ಲಿಯರಿ ಅವರನ್ನು 'ಮೂರ್ಖ' ಎಂದು ಕರೆದಿದ್ದಾರೆ. ಇದರ ಬೆನ್ನಲ್ಲೇ ರೈಯಾನ್‌ಏರ್ ಟ್ವಿಟರ್‌ನಲ್ಲಿ ಮಸ್ಕ್ ಅವರನ್ನು ಕಾಲೆಳೆದಾಗ, ಸಿಟ್ಟಿಗೆದ್ದ ಮಸ್ಕ್ 'ನಾನೇ ಈ ಏರ್‌ಲೈನ್ ಖರೀದಿಸಿ, 'ರೈಯಾನ್' ಎಂಬ ಹೆಸರಿನ ವ್ಯಕ್ತಿಯನ್ನೇ ಅದರ ಬಾಸ್ ಮಾಡಲಾ?' ಎಂದು ಕೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ವಿಜಯ ಕರ್ನಾಟಕ 17 Jan 2026 6:19 pm

ಡಾ.ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಗೆ ಪಾದಯಾತ್ರೆ ಮೂಲಕ ಹುಮನಾಬಾದ್ ನಿಂದ ಭಾಲ್ಕಿಗೆ ಹೊರಟ ಅಭಿಮಾನಿ

ಹುಮನಾಬಾದ್ : ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ಅವರು ಶುಕ್ರವಾರ ರಾತ್ರಿ ನಿಧನ ಹೊಂದಿದ್ದು, ಭಾಲ್ಕಿಯ ಶಾಂತಿಧಾಮದಲ್ಲಿ ಶನಿವಾರ ನಡೆಯಲಿರುವ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹುಮನಾಬಾದ್‌ನ ಖಂಡ್ರೆ ಪರಿವಾರದ ಅಭಿಮಾನಿ ಹಾಗೂ ದಲಿತ ಮುಖಂಡ ಲಕ್ಷ್ಮಿಪುತ್ರ ಮಾಳಗೆ ಅವರು ಪಾದಯಾತ್ರೆ ಕೈಗೊಂಡಿದ್ದಾರೆ. ಪಾದಯಾತ್ರೆ ಆರಂಭಿಸುವ ಮುನ್ನ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ನಾಯಕರ ಆಶೀರ್ವಾದ ಪಡೆದು ಭಾಲ್ಕಿಯತ್ತ ಪ್ರಯಾಣ ಬೆಳೆಸಿದರು. ಹುಮನಾಬಾದ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಭಾಲ್ಕಿ ನಗರಕ್ಕೆ ಜಲಸಂಗಿ, ದುಬಲಗುಂಡಿ ಹಾಗೂ ಏಣಕೂರ್ ಮಾರ್ಗವಾಗಿ ಲಕ್ಷ್ಮಿಪುತ್ರ ಮಾಳಗೆ ಅವರು ಪಾದಯಾತ್ರೆ ನಡೆಸಲಿದ್ದಾರೆ. ಜಿಲ್ಲೆಯ ಮಹಾನ್ ಚೇತನಕ್ಕೆ ಈ ಮೂಲಕ ವಿಶಿಷ್ಟವಾಗಿ ಗೌರವ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಿಪುತ್ರ ಮಾಳಗೆ, ಲೋಕನಾಯಕ ಭೀಮಣ್ಣ ಖಂಡ್ರೆ ಅವರನ್ನು ಕಳೆದುಕೊಂಡಿರುವುದು ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಸರ್ವಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದ ಇಂತಹ ಧೀಮಂತ ನಾಯಕರು ಸಿಗುವುದು ಅಪರೂಪ. ಅವರ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಅವರ ಮೇಲಿರುವ ಅಭಿಮಾನ ಹಾಗೂ ಗೌರವದ ಸಂಕೇತವಾಗಿ ನಾನು ಪಾದಯಾತ್ರೆ ಮೂಲಕ ತೆರಳಿ ಅಂತಿಮ ದರ್ಶನ ಪಡೆಯಲಿದ್ದೇನೆ,ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Jan 2026 6:19 pm

ಇಂದೋರ್‌ನಲ್ಲಿ ಫೈನಲ್‌ ಪಂದ್ಯಕ್ಕೂ ಮುನ್ನ ಕುಡಿಯುವ ನೀರಿಗಾಗಿ 3 ಲಕ್ಷ ರೂ.ನ ಪ್ಯೂರಿಫೈಯರ್ ಯಂತ್ರ ತರಿಸಿಕೊಂಡ ಶುಭ್ಮನ್ ಗಿಲ್! ಕಾರಣವೇನು?

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ರೋಚಕ ಘಟ್ಟ ತಲುಪಿದೆ, 1-1 ಸಮಬಲದೊಂದಿಗೆ ನಾಳಿನ ಪಂದ್ಯ ನಿರ್ಣಾಯಕವಾಗಿದೆ. ಆಟಗಾರರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕಲುಷಿತ ನೀರಿನ ಸಮಸ್ಯೆಯಿಂದ ಎಚ್ಚೆತ್ತುಕೊಂಡ ನಾಯಕ ಶುಭಮನ್ ಗಿಲ್, ವೈಯಕ್ತಿಕವಾಗಿ ವಾಟರ್ ಪ್ಯೂರಿಫೈಯರ್ ಅಳವಡಿಸಿಕೊಂಡಿದ್ದಾರೆ. ತಂಡವು ದೈವಬಲದೊಂದಿಗೆ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ವಿಜಯ ಕರ್ನಾಟಕ 17 Jan 2026 6:15 pm

ಶಾಸಕ ಭರತ್ ರೆಡ್ಡಿ ಬಂಧಿಸಲು ಗೋವಿಂದ ಕಾರಜೋಳ ಒತ್ತಾಯ

ಕಾಂಗ್ರೆಸ್ ಸರಕಾರದ ವಿರುದ್ಧ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ

ವಾರ್ತಾ ಭಾರತಿ 17 Jan 2026 6:13 pm

ಸಂವಿಧಾನದ ಅಡಿಯಲ್ಲೇ ನಿಮಗೆ ಪಾಠ ಕಲಿಸುತ್ತೇವೆ : ಶಾಸಕ ಭರತ್ ರೆಡ್ಡಿಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು

ಬಳ್ಳಾರಿ: ಗಾಲಿ ಜನಾರ್ಧನ ರೆಡ್ಡಿಯವರ ಮನೆ ಸುಟ್ಟು ಭಸ್ಮ ಮಾಡಲು ನನಗೆ ಐದು ನಿಮಿಷ ಸಾಕು ಎಂದು ಹೇಳಿಕೆ ನೀಡಿರುವ ಶಾಸಕ ಭರತ್ ರೆಡ್ಡಿ ಅವರ ಮಾತುಗಳು ಒಬ್ಬ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಳ್ಳಾರಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಳ್ಳಾರಿಯಲ್ಲಿ ಎಂತಹ ಭಸ್ಮಾಸುರನಿಗೆ ಜನ್ಮ ನೀಡಿದ್ದೀರಿ? ಜನಾರ್ಧನ ರೆಡ್ಡಿಯವರನ್ನು ಮುಗಿಸಿಬಿಡುವುದಾಗಿ ಹೇಳಲು ನಿಮಗೇನು ಅಷ್ಟು ತಾಕತ್ತಿದೆಯೇ? ಎಂದು ಸವಾಲು ಹಾಕಿದ ಅವರು, ನಾವು ಯಾವುದಕ್ಕೂ ಹೆದರುವವರಲ್ಲ. ನಿಮ್ಮಂತೆ ನಾವು ದುಂಡಾವರ್ತಿ ಮಾಡುವುದಿಲ್ಲ, ಬದಲಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲೇ ನಿಮಗೆ ಪಾಠ ಕಲಿಸುತ್ತೇವೆ, ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಕಿವಿಮಾತು ಹೇಳಿದ ಛಲವಾದಿ, ಕೋಪ ಮಾಡಿಕೊಂಡು ಮೂಗು ಕೊಯ್ದುಕೊಂಡರೆ ಅದು ಮತ್ತೆ ಬೆಳೆಯುವುದಿಲ್ಲ. ನಿಮ್ಮ ಕೋಪದ ಕೂಸು, ಪಾಪದ ಕೂಸೇ ಇಂದು ನಿಮ್ಮ ಮೇಲೆ ಹಗೆತನ ಸಾಧಿಸುತ್ತಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ನುಡಿದರು

ವಾರ್ತಾ ಭಾರತಿ 17 Jan 2026 6:10 pm

ʼರಾಯಚೂರು ಉತ್ಸವ-2026ʼ | ವಾಲಿಬಾಲ್, ಕಬ್ಬಡಿ ಕ್ರೀಡಾಕೂಟಕ್ಕೆ ಚಾಲನೆ

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ʼಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ʼರ ಅಂಗವಾಗಿ ಜ.17ರಂದು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ವಾಲಿಬಾಲ್, ಕಬ್ಬಡಿ ಕ್ರೀಡಾಕೂಟಕ್ಕೆ ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ ಅವರು ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸುಮಾರು 75 ತಂಡಗಳಾಗಿ ವಿವಿಧ ಕ್ರೀಡೆಯಲ್ಲಿ ಭಾಗಿಯಾದರು. ಕಬ್ಬಡಿಯಲ್ಲಿ ಪುರುಷರ 20 ತಂಡಗಳು ಮತ್ತು ಮಹಿಳೆಯರ 10 ತಂಡಗಳು ಭಾಗಿಯಾಗಿದ್ದವು. ಅಲ್ಲದೆ ವಾಲಿಬಾಲ್‌ ನಲ್ಲಿ ಪುರುಷರ 25 ತಂಡಗಳು ಮತ್ತು ಮಹಿಳೆಯರ 20 ತಂಡಗಳು ಭಾಗಿಯಾಗಿದ್ದವು. ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಮಿತಿ ಕಾರ್ಯದರ್ಶಿ ಹಾಗೂ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ ಶಾಂವತಗೇರಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ರಂಗಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪರುಶರಾಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸೂಪರಿಡೆಂಟ್ ಸಂತೋಷ್, ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.    

ವಾರ್ತಾ ಭಾರತಿ 17 Jan 2026 6:04 pm

ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಸಹಿ ಆಂದೋಲನಕ್ಕೆ ಬಸವರಾಜ ಬಳ್ಳೊಳ್ಳಿ ಚಾಲನೆ

79ನೇ ದಿನಕ್ಕೆ ಕಾಲಿಟ್ಟ ಕಾರ್ಖಾನೆ ವಿರೋಧಿ ಹೋರಾಟ

ವಾರ್ತಾ ಭಾರತಿ 17 Jan 2026 6:01 pm

ಕಲಬುರಗಿ | ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ ಸಿಬ್ಬಂದಿ

ಕಲಬುರಗಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಪ್ರಥಮ ದರ್ಜೆ ಸಹಾಯಕರೊಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಕಮಲಾಪುರ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದಿದೆ. ಕಮಲಾಪುರ ತಹಶೀಲ್ದಾರ್ ಕಾರ್ಯಾಲಯದಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಶಿಕಾಂತ್ ಜಂಜೀರ್ ಎಂಬಾತರೆ ಸಿಕ್ಕಿಬಿದ್ದ ಸಿಬ್ಬಂದಿಯಾಗಿದ್ದಾರೆ. ಎಫ್‌ಡಿಎ ಶಶಿಕಾಂತ್ ಅವರು, ತಹಶೀಲ್ದಾರ್ ಅವರು ನಡೆಸಿದ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆದೇಶ ಪ್ರತಿಯನ್ನು ನೀಡಲು ಫಲಾನುಭವಿಗಳಿಗೆ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡುವಂತೆ ಒತ್ತಾಯಿಸುತ್ತಿರುವುದರಿಂದ ಕಿಶನ್ ರಾಠೋಡ್ ಎಂಬಾತರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ತನಿಖಾಧಿಕಾರಿಯಾದ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಮುರಗುಂಡಿ ಅವರ ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 17 Jan 2026 5:54 pm

ಮುಂಬೈನಲ್ಲಿ ಮತ್ತೆ ‘ರೆಸಾರ್ಟ್ ರಾಜಕೀಯ’; ಶಿಂಧೆ ಬಣದ ಶಿವಸೇನೆಯ ಕಾರ್ಪೊರೇಟರ್‌ಗಳು ಫೈವ್ ಸ್ಟಾರ್ ಹೋಟೆಲ್‌ ಗೆ ಶಿಫ್ಟ್!

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ (ಬಿಎಂಸಿ)ನಲ್ಲಿ ಅಧಿಕಾರ ರಚನೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ತನ್ನ ಹೊಸದಾಗಿ ಆಯ್ಕೆಯಾದ ಎಲ್ಲ ಕಾರ್ಪೊರೇಟರ್‌ಗಳನ್ನು ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಉಳಿಯುವಂತೆ ಸೂಚಿಸಿದೆ. ಈ ಕ್ರಮದೊಂದಿಗೆ ನಗರ ರಾಜಕಾರಣದಲ್ಲಿ ಮತ್ತೆ ‘ರೆಸಾರ್ಟ್ ರಾಜಕೀಯ’ದ ಚರ್ಚೆ ಆರಂಭವಾಗಿದೆ ಎಂದು indiatoday.in ವರದಿ ಮಾಡಿದೆ. ಪಕ್ಷದ ಮೂಲಗಳ ಪ್ರಕಾರ, ಶಿಂಧೆ ಸೇನಾ ಟಿಕೆಟ್‌ ನಲ್ಲಿ ಆಯ್ಕೆಯಾದ 29 ಕಾರ್ಪೊರೇಟರ್‌ ಗಳು ಬುಧವಾರ ಮಧ್ಯಾಹ್ನದೊಳಗೆ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ಗೆ ಆಗಮಿಸಿ, ಮುಂದಿನ ಮೂರು ದಿನಗಳವರೆಗೆ ಅಲ್ಲಿಯೇ ಉಳಿಯಲಿದ್ದಾರೆ. ಬಿಎಂಸಿ ನಾಯಕತ್ವದ ಕುರಿತು ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಪಕ್ಷಗಳಿಂದ ‘ ಕುದುರೆ ವ್ಯಾಪಾರ’ ಪ್ರಯತ್ನಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 29 ಸ್ಥಾನಗಳನ್ನು ಹೊಂದಿರುವ ಶಿಂಧೆ ಬಣ, ಸ್ವಂತ ಬಹುಮತದ ಕೊರತೆಯಲ್ಲಿರುವ ಬಿಜೆಪಿಗೆ ನಿರ್ಣಾಯಕ ಬೆಂಬಲಿಗನಾಗಿ ಹೊರಹೊಮ್ಮಿದೆ. ದೇಶದ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆಯಾದ ಬಿಎಂಸಿಯಲ್ಲಿ ಅಧಿಕಾರದ ಹಕ್ಕು ಅಧಿಕೃತವಾಗುವವರೆಗೆ ಎಲ್ಲ ಕಾರ್ಪೊರೇಟರ್‌ಗಳು ಒಟ್ಟಿಗೆ ಇರಬೇಕೆಂಬುದು ಶಿಂಧೆಯ ಉದ್ದೇಶ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಇಂತಹ ಕ್ರಮ ಹೊಸದಲ್ಲ. 2019ರ ವಿಧಾನಸಭೆ ಚುನಾವಣೆಯ ನಂತರದ ಬಿಕ್ಕಟ್ಟು ಹಾಗೂ 2022ರ ಶಿವಸೇನೆ ವಿಭಜನೆಯ ಸಂದರ್ಭದಲ್ಲಿ ಪಕ್ಷಾಂತರದ ಭೀತಿಯಿಂದ ಶಾಸಕರನ್ನು ಹೋಟೆಲ್‌ಗಳಲ್ಲಿ ಉಳಿಸಿದ್ದ ಉದಾಹರಣೆಗಳಿವೆ. ಈ ಬೆಳವಣಿಗೆಗೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಪ್ರತಿಕ್ರಿಯಿಸಿ, “ತಮ್ಮ ಕೌನ್ಸಿಲರ್‌ಗಳನ್ನು ಯಾರು ತಮ್ಮತ್ತ ಸೆಳೆಯುತ್ತಾರೆ? ಈ ಅನುಭವ ಯಾರಿಗೆ ಇದೆ?” ಎಂದು ಪ್ರಶ್ನಿಸಿದರು. ಇತ್ತ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಧಿಕಾರ, ಹಣ ಮತ್ತು ಒತ್ತಡದ ದುರುಪಯೋಗವಾಗಿದೆ ಎಂದು ಆರೋಪಿಸಿದರು. ಬಿಎಂಸಿ ಮೇಯರ್ ಸ್ಥಾನವನ್ನು ತಮ್ಮ ಪಕ್ಷ ಬಯಸಿದ್ದರೂ, ಪ್ರಸ್ತುತ ಸಂಖ್ಯಾಬಲದ ಕೊರತೆಯನ್ನು ಅವರು ಒಪ್ಪಿಕೊಂಡರು. ಬಿಎಂಸಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 227 ವಾರ್ಡ್‌ಗಳಲ್ಲಿ 89 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿದೆ. ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಪಡೆದು ಮಹಾಯುತಿ ಮೈತ್ರಿಕೂಟದ ಸಂಖ್ಯೆಯನ್ನು 118ಕ್ಕೆ ತಲುಪಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 65 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ 24 ಸ್ಥಾನಗಳನ್ನು ಪಡೆದರೆ, ಎಐಎಂಐಎಂ ಎಂಟು ಸ್ಥಾನಗಳನ್ನು ಗೆದ್ದಿದೆ.

ವಾರ್ತಾ ಭಾರತಿ 17 Jan 2026 5:52 pm

88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ʼಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಪೋಲೀಸ್ ಇಲಾಖೆ ಕೆಲವು ಠಾಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇನ್ನು ಕೆಲವೆಡೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸುಮಾರು 88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರಕಾರ ಮಾತ್ರವಲ್ಲದೆ, ಪೋಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂಥ ಕೆಲಸವಿದು ಎಂದರು. 2003 ರಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಯಚೂರು ಜಿಲ್ಲೆಯ ಕವಿತಾಳ, ಪೊಲೀಸ್ ಠಾಣೆ ದೇಶದಲ್ಲಿಯೇ ಉತ್ತಮ ಪೋಲೀಸ್ ಠಾಣೆಗಳ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದರು. ಪೋಲೀಸ್ ಸಬ್ ಇನ್ಸ್‌ಪೆಕ್ಟರ್, ಎಎಸ್‌ಪಿ, ಡಿವೈಎಸ್‌ಪಿ, ಎಸಿಪಿ ಇವರಿಗೆ ಗೊತ್ತಿಲ್ಲದೆ ಯಾವ ಅಪರಾಧವೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ವಿಶೇಷವಾಗಿ ದುರ್ಬಲರಿಗೆ ರಕ್ಷಣೆ ನೀಡಬೇಕು. ಬಲಾಢ್ಯರ ಕೈಗೊಂಬೆಗಳಂತೆ ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ ಎಂದರು. ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು. ಕಳ್ಳತನ, ಸುಲಿಗೆ, ದರೋಡೆ, ಕೊಲೆ ಮುಂತಾದ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಸೈಬರ್ ಅಪರಾಧ ಹಾಗೂ ಡ್ರಗ್ಸ್ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಯುವಜನರು ಇದರಿಂದ ಹಾಳಾಗುತ್ತಿದ್ದು, ಕರ್ನಾಟಕವನ್ನು ಮಾದಕ ವಸ್ತು ಮುಕ್ತಾ ರಾಜ್ಯವಾಗಿಸಬೇಕೆಂದು ಸರಕಾರ ಘೋಷಣೆ ಮಾಡಿದೆ. ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು. ಜೊತೆಗೆ ಯುವಜನರನ್ನೂ ರಕ್ಷಿಸಬಹುದು ಎಂದರು. ಡ್ರಗ್ಸ್ ದಂಧೆ ಮಾಡುವ ವಿದೇಶಿಯರನ್ನು ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು : ರಾಜ್ಯವನ್ನು ಮಾದಕವಸ್ತು ಮುಕ್ತ ಮಾಡಬೇಕಾದರೆ ಡ್ರಗ್ಸ್ ಮಾರಾಟ ಮಾಡುವವರನ್ನು ವಿಚಾರಣೆ ಮಾಡಿದರೆ ಅಥವಾ ಮಾದಕ ವಸ್ತು ವ್ಯಸನಿಗಳನ್ನು ವಿಚಾರಿಸಿದರೆ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಬಹುದು. ಸರಬರಾಜು ಮಾಡುವವರನ್ನು ವಿಚಾರಣೆಗೆ ಗುರಿ ಪಡಿಸಿದರೆ ಉತ್ಪಾದಕರು ಹಾಗೂ ಸರಬರಾಜುದಾರರು ಯಾರು ಎಂದು ತಿಳಿಯುತ್ತದೆ. ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಕೆಲಸವನ್ನು ತಕ್ಷಣದಿಂದಲೇ ಮಾಡಬೇಕೆಂದು ಸೂಚಿಸಲಾಗಿದೆ. ವಿದೇಶಿಯರು ಜಾಮೀನಿನ ಮೇಲೆ ಬಿಡುಗಡೆಯಾಗಿ ಇಲ್ಲೇ ಉಳಿದರೆ ಪುನಃ ಅದೇ ಅಪರಾಧದಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ವಿದೇಶಿಯರನ್ನು ಯಾವುದೇ ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ ಎಂದರು. ಡ್ರಗ್ಸ್ ಪತ್ತೆ ಹಚ್ಚುವಲ್ಲಿ ವಿಫಲರಾದ ಪೊಲೀಸರ ಮೇಲೆ ಕ್ರಮಕ್ಕೆ ಸೂಚನೆ : ಮಹಾರಾಷ್ಟ್ರದ ಪೊಲೀಸರಿಗೆ ಬೆಂಗಳೂರಿಗೆ ಬಂದು ಡ್ರಗ್ಸ್ ಪತ್ತೆ ಹಚ್ಚಲು ಸಾಧ್ಯವಾದರೆ, ರಾಜ್ಯದ ಪೊಲೀಸರು ಏಕೆ ಮಾಡಬಾರದು? ರಾಜ್ಯದ ಪೊಲೀಸರು ಇದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು, ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಐಪಿಎಲ್ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಡಿ ಮೈಕಲ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ, ಅವರ ಶಿಫಾರಸ್ಸುಗಳನ್ನು ಪಾಲಿಸಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಅವರು ಅಲ್ಪಾವಧಿ ಶಿಫಾರಸ್ಸುಗಳನ್ನು ಕೂಡಲೆ ಜಾರಿಗೆ ತರಬೇಕು ಹಾಗೂ ದೀರ್ಘಾವಧಿಯಲ್ಲಿ ಉಳಿದವನ್ನು ಪಾಲಿಸಬೇಕಿದೆ. ಶಿಫಾರಸುಗಳನ್ನು ಜಾರಿ ಮಾಡಲೇಬೇಕು ಎಂದರು. ಬಳ್ಳಾರಿ ಘಟನೆ: ತನಿಖಾ ವರದಿ ಬಂದ ನಂತರ ತಪಿತಸ್ಥರ ಮೇಲೆ ಕ್ರಮ : ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಬಳ್ಳಾರಿ ಸೂಕ್ಷ್ಮ ಪ್ರದೇಶವಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ. ತನಿಖಾ ವರದಿ ಬಂದ ನಂತರ ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜೀವ್ ಗೌಡರನ್ನು ಬಂಧಿಸಲಾಗುವುದು : ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಶಿಡ್ಲಘಟ್ಟದ ಪೌರಾಯುಕ್ತರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿಗಳು, ಅವರು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲಾಗುವುದು. ಅವರ ಮೇಲೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ಪಕ್ಷದವರಾಗಲಿ, ಕಾನೂನಿಗಿಂತ ಯಾರೂ ಮೇಲಲ್ಲ ಎಂದರು.

ವಾರ್ತಾ ಭಾರತಿ 17 Jan 2026 5:42 pm

ವಿಶ್ವದಾಖಲೆ ಧೂಳೀಪಟ ಮಾಡಿದ ವೈಭವ್ ಸೂರ್ಯವಂಶಿ : ಸುವರ್ಣಾಕ್ಷರಗಳಲ್ಲಿ ದಾಖಲಾದ ಹೊಸ ಇತಿಹಾಸ

India's 14 year Sensational Vaibha Suryavanshi : ಹದಿನಾಲ್ಕರ ವಯಸ್ಸಿನಲ್ಲೇ ತನ್ನ ಬಿರುಸು ಬ್ಯಾಟಿಂಗ್’ಗೆ ಹೆಸರಾದ ವೈಭವ್ ಸೂರ್ಯವಂಶಿ, ಅಂಡರ್ 19 ವಿಶ್ವಕಪ್ ಕ್ರಿಕೆಟ್’ನಲ್ಲಿ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಬಾಂಗ್ಲಾದೇಶದ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಸೂರ್ಯವಂಶಿ ತನ್ನದಾಗಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 17 Jan 2026 5:30 pm

ಮುಂಬೈ ಫಲಿತಾಂಶದ ಬೆನ್ನಲ್ಲೇ ಕಿಂಗ್‌ ಮೇಕರ್‌ ಶಿಂಧೆ ಬಣದ ಕಾರ್ಪೊರೇಟರ್‌ಗಳು ಹೋಟೆಲ್‌ಗೆ ಶಿಫ್ಟ್‌; ಕಾರಣ ಏನು?

ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದ್ದರೂ, ಮುಂಬೈನಲ್ಲಿ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಶಿಂಧೆ ಬಣವು ತನ್ನ ಹೊಸ ಕಾರ್ಪೊರೇಟರ್‌ಗಳನ್ನು ಐಷಾರಾಮಿ ಹೋಟೆಲ್‌ಗೆ ಸ್ಥಳಾಂತರಿಸುತ್ತಿದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ ಎಂದು ವಿಶ್ಲೇಷಿಸಲಾಗಿದೆ. ಒಂದು ವೇಳೆ ವಿರೋಧ ಪಕ್ಷಗಳೆಲ್ಲಾ ಒಂದಾದರೆ ಅಧಿಕಾರ ಹಿಡಿಯಲು ಅವರಿಗೆ ಇನ್ನು ಕೇವಲ 8 ಸದಸ್ಯರ ಅಗತ್ಯವಿರುತ್ತದೆ, ಹೀಗಾಗಿ ಪಕ್ಷಾಂತರದ ಭೀತಿ ಶಿಂಧೆ ಬಣಕ್ಕಿದೆ.

ವಿಜಯ ಕರ್ನಾಟಕ 17 Jan 2026 5:29 pm

ಉಗ್ರವಾದ ಗಂಟುಮೂಟೆ ಕಟ್ಟಿ ಹಿಂದೂ ಮಹಾಸಾಗರಕ್ಕೆ ಎಸೆಯುತ್ತೇವೆ; ಶೆಹಬಾಜ್‌ ಷರೀಫ್‌ ಜೋಕ್‌ ಆಫ್‌ ದಿ ಇಯರ್‌!

ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಹೇಳಿಕೆಗಳನ್ನು ಖುದ್ದು ಪಾಕಿಸ್ತಾನಿ ನಾಗರಿಕನೇ ನಂಬದ ದಿನಮಾನಗಳಿವು. ಅಂತದ್ದರಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಉಗ್ರವಾದವನ್ನು ಹೆಡೆಮುರಿ ಕಟ್ಟಿ ಹಿಂದೂ ಮಹಾಸಾಗರಕ್ಕೆ ಎಸೆಯುತ್ತೇವೆ ಎಂದು ಹೇಳಿದರೆ, ಅದನ್ನು ನಂಬುವ ಸ್ಥಿತಿಯಲ್ಲಿ ಕೇವಲ ಭಾರತ ಮಾತ್ರವಲ್ಲ ಇಡೀ ಜಗತ್ತು ಕೂಡ ಇಲ್ಲ. ಆದರೂ ಪಾಕಿಸ್ತಾನ ಉಗ್ರವಾದದ ವಿರುದ್ಧ ಹೋರಾಡುವ ಮಾತುಗಳನ್ನಾಡಿದ್ದು, ಹಾಗಿದ್ದರೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಕಾರ್ಯತಂತ್ರವೇನು? ಅದರ ಭಯೋತ್ಪಾದನೆಯ ವಿಶ್ಲೇಷಣೆ ಏನು? ಬನ್ನಿ ನೋಡೋಣ.

ವಿಜಯ ಕರ್ನಾಟಕ 17 Jan 2026 5:25 pm

WPL 2026 RCB: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸ್ಪಿನ್‌ ಮೋಡಿಗೆ ಕನ್ನಡತಿ ಸಜ್ಜು: ಆರ್‌ಸಿಬಿ ಪ್ಲೇಯಿಂಗ್ 11

WPL 2026 RCB: ಈಗಾಗಲೇ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಆರ್‌ಸಿಬಿಯು ಇಂದು (ಜನವರಿ 17) ಡೆಲ್ಲಿ ಕ್ಯಾಪಿಟಲ್ಸ್‌ ಎದುರಿಸಲು ಸಜ್ಜಾಗಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಹಾಗೂ ಪಂದ್ಯದ ಸಮಯ, ನೇರಪ್ರಸಾರದ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆರ್‌ಸಿಬಿಯು ಈ ಬಾರಿ ಡಬ್ಲ್ಯೂಪಿಎಲ್‌ನಲ್ಲಿ ಸತತ ಮೂರು ಗೆಲವು ಕಂಡು ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಇನ್ನೂ ಇಂದು

ಒನ್ ಇ೦ಡಿಯ 17 Jan 2026 5:08 pm

ಸೌದಿ ಗುಹೆಗಳಲ್ಲಿ ಮೊದಲ ಬಾರಿಗೆ ಚೀತಾ ಮಮ್ಮಿಗಳು ಪತ್ತೆ!

ಹೊಸದಿಲ್ಲಿ: ವಿಜ್ಞಾನಿಗಳು ಉತ್ತರ ಸೌದಿ ಅರೇಬಿಯದ ಗುಹೆಗಳಲ್ಲಿ ನೈಸರ್ಗಿಕವಾಗಿ ಮಮ್ಮಿಗಳಾಗಿ ರೂಪಾಂತರಗೊಂಡ ಚೀತಾಗಳ ಅವಶೇಷಗಳನ್ನು ಪತ್ತೆ ಹಚ್ಚಿದ್ದು, ಇದೇ ಮೊದಲ ಬಾರಿಗೆ ಈ ಅಪರೂಪದ ಶೋಧ ನಡೆದಿದೆ. ಅವಶೇಷಗಳು 130 ಮತ್ತು 1,800ಕ್ಕೂ ಹೆಚ್ಚು ವರ್ಷಗಳ ನಡುವಿನಷ್ಟು ಹಿಂದಿನದಾಗಿವೆ. ಸಂಶೋಧಕರು ಅರಾರ್ ನಗರದ ಬಳಿಯ ಸ್ಥಳದಲ್ಲಿ ಏಳು ಚೀತಾ ಮಮ್ಮಿಗಳು ಮತ್ತು ಇತರ ಚೀತಾಗಳ 54 ಮೂಳೆಗಳನ್ನು ಪತ್ತೆ ಹಚ್ಚಿದ್ದಾರೆ. ಮಮ್ಮೀಕರಣವು ಶವಗಳು ಕೊಳೆಯುವುದನ್ನು ನಿಧಾನಿಸುತ್ತದೆ ಮತ್ತು ಸಾವಿನ ಬಳಿಕ ಶವಗಳ ಸಂರಕ್ಷಣೆಗೆ ನೆರವಾಗುತ್ತದೆ. ಈಜಿಪ್ಟ್‌ನ ಮಮ್ಮಿಗಳು ಹೆಚ್ಚು ಪ್ರಸಿದ್ಧವಾಗಿದ್ದರೆ,ಮರಳುಗಾಡು,ನೀರ್ಗಲ್ಲು ಪ್ರದೇಶಗಳು ಮತ್ತು ಜೌಗು ಭೂಮಿಗಳಲ್ಲಿಯೂ ಮಮ್ಮೀಕರಣವು ನೈಸರ್ಗಿಕವಾಗಿ ನಡೆಯುತ್ತದೆ. ಹೊಸದಾಗಿ ಪತ್ತೆಯಾಗಿರುವ ಚೀತಾ ಮಮ್ಮಿಗಳು ಮಂಕಾದ ಕಣ್ಣುಗಳು ಮತ್ತು ಸಂಕುಚಿತ ಕಾಲುಗಳನ್ನು ಹೊಂದಿದ್ದು,ಒಣಗಿದ ಹೊಟ್ಟಿನಂತೆ ಕಾಣುತ್ತಿವೆ. ‘ಇಂತಹುದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ’ ಎಂದು ಇಟಲಿಯ ಫ್ಲಾರೆನ್ಸ್ ವಿವಿಯ ಜೋನ್ ಮಡುರೆಲ್-ಮಲಪೀರಾ ಹೇಳಿದರು. ಅವರು ಈ ಸಂಶೋಧನೆಯಲ್ಲಿ ಭಾಗಿಯಾಗಿರಲಿಲ್ಲ. ಚೀತಾಗಳು ಇಷ್ಟೊಂದು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದ್ದು ಹೇಗೆ ಎಂಬ ಬಗ್ಗೆ ವಿಜ್ಞಾನಿಗಳಿಗೆ ಖಚಿತವಿಲ್ಲ. ಆದಾಗ್ಯೂ ಗುಹೆಗಳಲ್ಲಿನ ಶುಷ್ಕ ಪರಿಸ್ಥಿತಿಗಳು ಮತ್ತು ಸ್ಥಿರವಾದ ತಾಪಮಾನಗಳು ಮಮ್ಮೀಕರಣಕ್ಕೆ ನೆರವಾಗಿರಬಹುದು ಎಂದು ಅಧ್ಯಯನವು ಸೂಚಿಸಿದೆ. ಸಂಶೋಧನಾ ವರದಿಯು ಕಮ್ಯುನಿಕೇಷನ್ಸ್ ಅರ್ತ್ ಆ್ಯಂಡ್ ಎನ್ವಿರಾನ್ಮೆಂಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಸಂಶೋಧಕರು ಹಿಂದೆ ರಷ್ಯಾದಲ್ಲಿ ಬಾಗುಕತ್ತಿಯಂತಹ ಹಲ್ಲುಗಳನ್ನು ಹೊಂದಿದ್ದ ಬೆಕ್ಕಿನ ಮರಿ ಸೇರಿದಂತೆ ಇತರ ಬೆಕ್ಕುಗಳ ಮಮ್ಮಿಗಳನ್ನು ಪತ್ತೆ ಹಚ್ಚಿದ್ದರು. ಆದಾಗ್ಯೂ ಚೀತಾದಂತಹ ದೊಡ್ಡ ಪ್ರಾಣಿಗಳು ಇಷ್ಟೊಂದು ಸುಸ್ಥಿತಿಯಲ್ಲಿ ಸಂರಕ್ಷಿತಗೊಂಡಿದ್ದು ತುಂಬ ಅಪರೂಪವಾಗಿದೆ. ಇದಕ್ಕೆ ಸೂಕ್ತ ವಾತಾವರಣದ ಜೊತೆಗೆ ಶವಗಳು ಹಕ್ಕಿಗಳು ಮತ್ತು ಹೈನಾಗಳಂತಹ ಕೊಳೆತ ಪದಾರ್ಥಗಳನ್ನು ತಿನ್ನುವ ‘ಜಾಡಮಾಲಿ’ಗಳಿಂದ ತಪ್ಪಿಸಿಕೊಂಡಿರಬೇಕು. ಈ ಪ್ರದೇಶದಲ್ಲಿ ಪ್ರಾಚೀನ ಚೀತಾಗಳ ಸಂರಕ್ಷಿತ ಪಳೆಯುಳಿಕೆಗಳ ಶೋಧವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಜಗತ್ತಿನ ಈ ಭಾಗದಲ್ಲಿ ದೀರ್ಘ ಕಾಲದ ಹಿಂದೆ ವಾಸವಾಗಿದ್ದ ಚೀತಾಗಳ ಇಷ್ಟೊಂದು ಸುಸ್ಥಿತಿಯಲ್ಲಿರುವ ಅವಶೇಷಗಳು ಪತ್ತೆಯಾಗಿರುವುದು ಅಭೂತಪೂರ್ವವಾಗಿದೆ ಎಂದು ವರದಿಯ ಲೇಖಕರಾಗಿರುವ ಸೌದಿ ಅರೇಬಿಯದ ರಾಷ್ಟ್ರೀಯ ವನ್ಯಜೀವಿ ಕೇಂದ್ರದ ಅಹ್ಮದ್ ಬೌಗ್ ಹೇಳಿದ್ದಾರೆ. ಚೀತಾಗಳು ಒಂದು ಕಾಲದಲ್ಲಿ ಆಫ್ರಿಕಾದಾದ್ಯಂತ ಮತ್ತು ಏಷ್ಯಾದ ಭಾಗಗಳಲ್ಲಿ ವಾಸವಾಗಿದ್ದವು,ಆದರೆ ಇಂದು ಅವುಗಳ ಸಂಖ್ಯೆ ಈ ಪ್ರಮಾಣದ ಕೇವಲ ಶೇ.9ಕ್ಕೆ ಇಳಿದಿದ್ದು, ದಶಕಗಳಿಂದಲೂ ಅರೇಬಿಯನ್ ಪರ್ಯಾಯ ದ್ವೀಪಗಳಿಂದ ಮಾಯವಾಗಿವೆ. ಆವಾಸ ಸ್ಥಾನದ ನಷ್ಟ, ಬೇಟೆ ಮತ್ತು ಆಹಾರದ ಕೊರತೆ ಅವುಗಳ ಅವನತಿಗೆ ಪ್ರಮುಖ ಕಾರಣಗಳಾಗಿವೆ ಎನ್ನುತ್ತಾರೆ ತಜ್ಞರು. ವಿಜ್ಞಾನಿಗಳಿಗೆ ಇದೇ ಮೊದಲ ಬಾರಿಗೆ ನೈಸರ್ಗಿಕವಾಗಿ ಮಮ್ಮೀಕೃತ ದೊಡ್ಡ ಬೆಕ್ಕುಗಳ ವಂಶಾವಳಿಯ ಅಧ್ಯಯನವೂ ಸಾಧ್ಯವಾಗಿದೆ. ಈ ಚೀತಾಗಳು ಏಷ್ಯಾ ಮತ್ತು ವಾಯುವ್ಯ ಆಫ್ರಿಕಾದ ಆಧುನಿಕ ಚೀತಾಗಳೊಂದಿಗೆ ನಿಕಟ ಸಂಬಂಧ ಹೊಂದಿವೆ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ಈ ಮಾಹಿತಿಯು ಚೀತಾಗಳು ಅಸ್ತಿತ್ವದಲ್ಲಿರದ ಪ್ರದೇಶಗಳಲ್ಲಿ ಅವುಗಳನ್ನು ಮರಳಿ ತರುವ ಭವಿಷ್ಯದ ಪ್ರಯತ್ನಗಳಿಗೆ ನೆರವಾಗಬಹುದು.

ವಾರ್ತಾ ಭಾರತಿ 17 Jan 2026 5:05 pm

ಮಹಾರಾಷ್ಟ್ರ ಮುನ್ಸಿಪಲ್ ಚುನಾವಣೆಗಳು: ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ ಉವೈಸಿಯ ಎಐಎಂಐಎಂ; ಇಮ್ಮಡಿಗೊಂಡ ಬಲ

ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚಿನ ಮಹಾನಗರ ಪಾಲಿಕೆಗಳ ಚುನಾವಣೆಗಳಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿರುವ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ತನ್ನ ಕಾರ್ಪೊರೇಟರ್‌ಗಳ ಬಲವನ್ನು ಬಹುತೇಕ ದ್ವಿಗುಣಗೊಳಿಸಿಕೊಂಡಿದ್ದು,ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ಪ್ರಾತಿನಿಧ್ಯವನ್ನು ಗಮನಾರ್ಹವಾಗಿ ವಿಸ್ತರಿಸಿಕೊಂಡಿದೆ. ಎಐಎಂಐಎಂ ರಾಜ್ಯಾದ್ಯಂತ 29 ಮನಪಾಗಳ ಪೈಕಿ ಸ್ಪರ್ಧಿಸಿದ್ದ 12 ಕಡೆಗಳಲ್ಲಿ ಒಟ್ಟು 114 ಸ್ಥಾನಗಳನ್ನು ಗಳಿಸಿದೆ. ಹಿಂದಿನ ಮುನ್ಸಿಪಲ್ ಚುನಾವಣೆಗಳಲ್ಲಿ ಅದು ಗಳಿಸಿದ್ದ 48 ಸ್ಥಾನಗಳಿಗೆ ಹೋಲಿಸಿದರೆ ಇದು ಗಣನೀಯ ಏರಿಕೆಯಾಗಿದೆ. ಪಕ್ಷವು ಛತ್ರಪತಿ ಸಂಭಾಜಿನಗರದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದೆ. ಅಲ್ಲಿ 33 ಸ್ಥಾನಗಳನ್ನು ಗೆದ್ದಿರುವ ಎಐಎಂಐಎಂ ಮುನ್ಸಿಪಲ್ ಚುನಾವಣೆಗಳಲ್ಲಿ ತಾನು ಪ್ರಮುಖ ಶಕ್ತಿ ಎನ್ನುವುದನ್ನು ಸಾಬೀತುಗೊಳಿಸಿದೆ. ಅದು ಮಾಲೆಗಾಂವ್‌ನಲ್ಲಿ 21,ನಾಂದೇಡ್‌ನಲ್ಲಿ 13,ಅಮರಾವತಿಯಲ್ಲಿ 15, ಧುಲೆಯಲ್ಲಿ 10 ಮತ್ತು ಸೊಲ್ಲಾಪುರದಲ್ಲಿ ಎಂಟು ಸ್ಥಾನಗಳನ್ನು ಗಳಿಸಿದೆ. ಪಕ್ಷವು ಮುಂಬೈ ಮಹಾನಗರ ಪ್ರದೇಶದಲ್ಲಿ ಸಣ್ಣ, ಆದರೆ ರಾಜಕೀಯವಾಗಿ ಗಮನಾರ್ಹ ಗಳಿಕೆಯನ್ನು ಸಾಧಿಸಿದೆ. ಮುಂಬೈನಲ್ಲಿ ಆರು ಮತ್ತು ಥಾಣೆಯಲ್ಲಿ ಐದು ಸ್ಥಾನಗಳನ್ನು ಅದು ಗೆದ್ದಿದೆ. ಪಕ್ಷವು ಅಕೋಲಾದಲ್ಲಿ ಮೂರು, ಅಹ್ಮದ್‌ನಗರ ಮತ್ತು ಜಾಲ್ನಾಗಳಲ್ಲಿ ತಲಾ ಎರಡು ಹಾಗೂ ಚಂದ್ರಾಪುರ ಮತ್ತು ಪರ್ಭನಿಯಲ್ಲಿ ತಲಾ ಒಂದು ಸ್ಥಾನಗಳನ್ನೂ ಗಳಿಸಿದೆ. 2012ರಲ್ಲಿ 81 ಸದಸ್ಯಬಲದ ನಾಂದೇಡ್ ಮಹಾನಗರ ಪಾಲಿಕೆಯಲ್ಲಿ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಎಐಎಂಐಎಂ ಮಹಾರಾಷ್ಟ್ರದಲ್ಲಿ ತನ್ನ ಮೊದಲ ಚುನಾವಣಾ ಗೆಲುವನ್ನು ದಾಖಲಿಸಿತ್ತು. ಅದು ತೆಲಂಗಾಣದ ಹೊರಗಿನ ರಾಜ್ಯದಲ್ಲಿ ಪಕ್ಷದ ಚೊಚ್ಚಲ ವಿಜಯವೂ ಆಗಿತ್ತು. ಪಕ್ಷದ ಮಹಾರಾಷ್ಟ್ರ ಘಟಕದಲ್ಲಿ ಗಣನೀಯ ಆಂತರಿಕ ಪ್ರಕ್ಷುಬ್ಧತೆ ಮತ್ತು ತುಲನಾತ್ಮಕವಾಗಿ ಮಂದಗತಿಯ ಪ್ರಚಾರದ ಹೊರತಾಗಿಯೂ ಎಐಎಂಐಎಂ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದೆ. ಮತದಾನಕ್ಕೆ ಕೆಲವೇ ದಿನಗಳ ಮೊದಲು ಪಕ್ಷದ ಮುಂಬೈ ಘಟಕದ ಅಧ್ಯಕ್ಷ ಫಾರೂಕ್ ಶಾಬ್ದಿ ರಾಜೀನಾಮೆ ನೀಡಿದ್ದರೆ, ರಾಜ್ಯ ಘಟಕದ ಅಧ್ಯಕ್ಷ ಇಮ್ತಿಯಾಜ್ ಜಲೀಲ್ ಅವರು ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಬೆದರಿಕೆಗಳನ್ನು ಎದುರಿಸಿದ್ದರು. ಇದು ಚುನಾವಣೆಗಳ ಮುನ್ನ ಪಕ್ಷದಲ್ಲಿಯ ಗುಂಪುಗಾರಿಕೆಯನ್ನು ಎತ್ತಿ ತೋರಿಸಿತ್ತು. ಹಲವಾರು ನಗರ ಕೇಂದ್ರಗಳಲ್ಲಿ ಮುಸ್ಲಿಮ್ ಮತಗಳನ್ನೇ ನಂಬಿಕೊಂಡಿದ್ದ ಸಮಾಜವಾದಿ ಪಾರ್ಟಿಯ ದುರ್ಬಲ ಪ್ರದರ್ಶನದ ಸಮಯದಲ್ಲೇ ಎಐಎಂಐಎಂ ಉತ್ತಮ ಸಾಧನೆಯನ್ನು ತೋರಿಸಿದೆ. ಕುತೂಹಲಕಾರಿಯಾಗಿ ಎಐಎಂಐಎಂ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮತ್ತು ಎನ್‌ಸಿಪಿ (ಎಸ್‌ಪಿ)ಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ.

ವಾರ್ತಾ ಭಾರತಿ 17 Jan 2026 4:59 pm

ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಸೋಲು: ಹೋರಾಟವಿನ್ನೂ ಮುಗಿದಿಲ್ಲ ಎಂದ ಠಾಕ್ರೆ ಸೋದರರು

ಮುಂಬೈ: 25 ವರ್ಷಗಳ ನಂತರ ದೇಶದ ಅತ್ಯಂತ ಶ್ರೀಮಂತ ನಗರ ಪಾಲಿಕೆಯ ಮೇಲಿನ ನಿಯಂತ್ರಣ ಕಳೆದುಕೊಂಡಿರುವ ಠಾಕ್ರೆ ಸೋದರ ಸಂಬಂಧಿಗಳು, “ಈ ಹೋರಾಟವಿನ್ನೂ ಮುಗಿದಿಲ್ಲ” ಎಂದು ಘೋಷಿಸಿದ್ದಾರೆ. ಇದರೊಂದಿಗೆ ಮರಾಠಿ ಅಸ್ಮಿತೆಯ ರಾಜಕೀಯವನ್ನು ಮುಂದುವರಿಸಿರುವ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಅವಿಭಜಿತ ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಫೋಟೊವನ್ನು ಶಿವಸೇನೆ (ಉದ್ಧವ್ ಬಣ) ಹಂಚಿಕೊಂಡಿದೆ. ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಜಯ ಗಳಿಸಿದ್ದು, ಆಡಳಿತಾರೂಢ ಮಹಾಯುತಿ ಮೈತ್ರಿಕೂಟವನ್ನು ಸೋಲಿಸಲು ಒಂದಾಗಿದ್ದ ಠಾಕ್ರೆಗಳಿಂದ ಅಧಿಕಾರ ಕಸಿದುಕೊಂಡಿವೆ. ಹೀಗಾಗಿ ಎರಡೂವರೆ ದಶಕದ ಬಳಿಕ ಬಿಎಂಸಿ ಆಡಳಿತದಿಂದ ಠಾಕ್ರೆ ಕುಟುಂಬ ಕೆಳಕ್ಕಿಳಿದಿದೆ. ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಈ ಸೋದರ ಸಂಬಂಧಿಗಳು ಮರಾಠಿ ಅಸ್ಮಿತೆಯನ್ನು ಮತದಾರರ ಮುಂದೆ ಪ್ರದರ್ಶಿಸಿದ್ದರು. ಹಲವು ವರ್ಷಗಳ ಬಳಿಕ ಒಂದಾಗಿದ್ದ ಠಾಕ್ರೆ ಸೋದರರಿಗೆ ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆ ರಾಜಕೀಯದಲ್ಲಿ ಹೊಸ ಅಧ್ಯಾಯ ತೆರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುನಾವಣಾ ಫಲಿತಾಂಶದಲ್ಲಿ ಅವರಿಗೆ ಭಾರಿ ಹಿನ್ನಡೆಯುಂಟಾಗಿದೆ. 227 ವಾರ್ಡ್ ಗಳ ಪೈಕಿ 65 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷವು, “ಮರಾಠಿಗಳಿಗೆ ಅರ್ಹವಾದ ಗೌರವ ಸಿಗುವವರೆಗೆ ನಮ್ಮ ಹೋರಾಟ ಹೀಗೆಯೇ ಮುಂದುವರಿಯಲಿದೆ” ಎಂದು ಭರವಸೆ ನೀಡಿದ್ದಾರೆ. ಮತ್ತೊಂದೆಡೆ “ಸೋಲು ಎಂದರೆ ಎದೆಗುಂದಿ ಬಿಟ್ಟುಕೊಡುವುದಲ್ಲ. ಮರಾಠಿಗರ ವಿರುದ್ಧವಾಗಿ ಏನಾದರೂ ನಡೆಯುತ್ತಿರುವುದನ್ನು ಕಂಡರೆ, ನಮ್ಮ ಕಾರ್ಪೊರೇಟರ್ ಗಳು ಖಂಡಿತವಾಗಿಯೂ ಮೊಣಕಾಲೂರಿಸಿ ಕುಳ್ಳರಿಸಲಿದ್ದಾರೆ” ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಸಿದ್ದಾರೆ. “ನಮ್ಮ ಹೋರಾಟ ಮರಾಠಿ ಜನರಿಗಾಗಿ, ಮರಾಠಿ ಭಾಷೆಗಾಗಿ, ಮರಾಠಿ ಅಸ್ಮಿತೆಗಾಗಿ ಮತ್ತು ಸಮೃದ್ಧ ಮಹಾರಾಷ್ಟ್ರಕ್ಕಾಗಿ. ಈ ಹೋರಾಟವೇ ನಮ್ಮ ಅಸ್ತಿತ್ವ. ಅಂತಹ ಹೋರಾಟಗಳು ದೀರ್ಘಕಾಲೀನ ಸ್ವರೂಪದ್ದಾಗಿವೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ” ಎಂದು ಅವರು ಹೇಳಿದ್ದಾರೆ. ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕೇವಲ ಆರು ವಾರ್ಡ್ ಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ವಾರ್ತಾ ಭಾರತಿ 17 Jan 2026 4:57 pm

ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಅಸಾಧ್ಯ, ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವವರೆಗೂ ಹೋರಾಟ: ಬಸವರಾಜ ಬೊಮ್ಮಾಯಿ

ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಅಸಾಧ್ಯ, ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವವರೆಗೂ ಹೋರಾಟ ನಿಲ್ಲದು ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರು ಮನೆಯಲ್ಲಿ ಇದ್ದಾರೆ ಅಂತ ಅವರ ಮನೆ ಮೇಲೆ ಗುಂಡು ಹಾರಿಸಿದ್ದಾರೆ. ಭರತ ರೆಡ್ಡಿಗೆ ಶಾಪ ಕಂಡಿತವಾಗಲೂ ತಟ್ಟುತ್ತದೆ. ಜನಾರ್ದನ ರೆಡ್ಡಿ ಅವರನ್ನು ರಾಜಕೀಯವಾಗಿ ಯಾವ ರೀತಿಯಲ್ಕೂ ಮುಗಿಸಲು ಸಾಧ್ಯವಿಲ್ಲ. ಅವರು ಬಳ್ಳಾರಿಗೆ ಮಾಡಿದ ಸಹಾಯ ಜನರಿಗೆ ಮಾಡಿದ ಕೆಲಸ ಬಹಳಷ್ಟಿದೆ. 2008 ರ ನಂತರ ಬಳ್ಳಾರಿಯ ರಸ್ತೆ ಅಭಿವೃದ್ದಿ, ಕುಡಿಯುವ ನಿರು ಜನರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದರು.

ವಿಜಯ ಕರ್ನಾಟಕ 17 Jan 2026 4:56 pm

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿಲ್ಲದ ದಾಳಿ: ಶಾಲಾ ಶಿಕ್ಷಕನ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಸಿಲ್ಹೆಟ್‌ನಲ್ಲಿ ಹಿಂದೂ ಶಿಕ್ಷಕರ ಮನೆಗೆ ಬೆಂಕಿ ಹಚ್ಚಿದ ಘಟನೆ ಜನರಲ್ಲಿ ಭೀತಿ ಮೂಡಿಸಿದೆ. ಕೇವಲ 24 ದಿನಗಳಲ್ಲಿ 9ನೇ ಪ್ರಮುಖ ದಾಳಿಯಾಗಿದ್ದು, ಹಲವು ಹಿಂದೂಗಳು ಜೀವ ಕಳೆದುಕೊಂಡಿದ್ದಾರೆ. ಭಾರತ ಸರ್ಕಾರ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ವಿಜಯ ಕರ್ನಾಟಕ 17 Jan 2026 4:41 pm

ಪಂಜಾಬಿ ಗಾಯಕನಿಗೆ 10 ಕೋಟಿ ರೂ. ನೀಡುವಂತೆ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ

ಮೊಹಾಲಿ (ಪಂಜಾಬ್): ಸ್ನೇಹಿತ ಮತ್ತು ಸಹ ಗಾಯಕ ಬಿ ಪ್ರಾಕ್ ಅವರಿಗೆ 10 ಕೋಟಿ ರೂ. ನೀಡುವಂತೆ ಹೇಳಬೇಕು, ಇಲ್ಲದಿದ್ದರೆ ಒಂದು ವಾರದೊಳಗೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನನಗೆ ಬೆದರಿಕೆ ಕರೆ ಬಂದಿದೆ ಎಂದು ಪಂಜಾಬಿ ಗಾಯಕ ದಿಲ್ನೂರ್ ಮೊಹಾಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಹಾಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವ ದಿಲ್ನೂರ್, ನನಗೆ ಕರೆ ಮಾಡಿದ್ದ ವ್ಯಕ್ತಿ ತನ್ನನ್ನು ಅರ್ಜು ಬಿಷ್ಣೋಯಿ ಎಂದು ಹೇಳಿಕೊಂಡಿದ್ದು, ನಾನು ಲಾರೆನ್ಸ್ ಬಿಷ್ಣೋಯಿ ಗುಂಪಿಗೆ ಸೇರಿದವನು ಎಂದು ಹೇಳಿದ್ದಾನೆ ಎಂದು ತಿಳಿಸಿದ್ದಾರೆ. ಬಿ ಪ್ರಾಕ್ ಬಾಲಿವುಡ್ ಮತ್ತು ಪಂಜಾಬಿ ಸಂಗೀತ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ. ಕೇಸರಿ ಚಿತ್ರದ ತೇರಿ ಮಿಟ್ಟಿ, ಫಿಲ್ಹಾಲ್, ಪಚ್ತಾವೋಗೆ, ಶೇರ್ಷಾ ಸಿನಿಮಾದ ರಾಂಜಾ, ಮಾನ ದಿಲ್ ಮತ್ತು ಕೇಸರಿಯಾ ರಂಗ್ ಸೇರಿದಂತೆ ಹಲವು ಹಿಟ್ ಸಾಂಗ್‌ನಲ್ಲಿ ಕೆಲಸ ಮಾಡಿದ್ದಾರೆ. ಜನವರಿ 5ರಂದು ವಿದೇಶದಿಂದ ಎರಡು ಮಿಸ್ಡ್ ಕಾಲ್ ಸ್ವೀಕರಿಸಿದ್ದೇನೆ. ಆದರೆ ಅದಕ್ಕೆ ನಾನು ಉತ್ತರಿಸಿರಲಿಲ್ಲ. ಮರುದಿನ ಮತ್ತೊಂದು ಕರೆ ಸ್ವೀಕರಿಸಿದ್ದು, ಅದು ಮತ್ತೊಂದು ವಿದೇಶಿ ಸಂಖ್ಯೆಯಿಂದ ಬಂದಿತ್ತು. ನಾನು ಕರೆಗೆ ಉತ್ತರಿಸಿದೆನಾದರೂ, ಸಂಶಯಾಸ್ಪದವಾಗಿ ಕಂಡು ಬಂದಿದ್ದರಿಂದ ಸಂಪರ್ಕ ಕಡಿತಗೊಳಿಸಿದೆ. ಬಳಿಕ ನಾನು ವಾಯ್ಸ್ ಮೆಸೇಜ್ ವೊಂದನ್ನು ಸ್ವೀಕರಿಸಿದ್ದು, ಆ ಸಂದೇಶದಲ್ಲಿ 10 ಕೋಟಿ ರೂ.ಗಳನ್ನು ಪಾವತಿಸಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸುವ ಬಗ್ಗೆ ತಿಳಿಸಲಾಗಿದೆ ಎಂದು ದಿಲ್ನೂರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. “ಈ ಕುರಿತ ತನಿಖೆ ಆರಂಭಿಸಿದ್ದೇವೆ. ಕರೆಗಳ ವಿವರ ಮತ್ತು ಆಡಿಯೊ ಸಂದೇಶಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 17 Jan 2026 4:35 pm

ಕ್ರಿಮಿನಲ್ ಕೇಸ್‌ಗಳಲ್ಲಿ ಪೊಲೀಸರೇ ಭಾಗಿ ನಾಚಿಗೇಡಿನ ವಿಷಯ: ಸಿಎಂ ಸಿದ್ದರಾಮಯ್ಯ ತರಾಟೆ

ಅಪರಾಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಕಳೆದ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ನಾಚಿಗೇಡಿನ ವಿಷಯ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬೆಂಗಳೂರಿನ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಕಚೇರಿಯಲ್ಲಿ ಆಯೋಜಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒನ್ ಇ೦ಡಿಯ 17 Jan 2026 4:07 pm

ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದರು. ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ವತಿಯಿಂದ ಸಾವಿರ ಆಸ್ಪತ್ರೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ ಗಳ ಆರೋಗ್ಯ ಸಂಬಂಧಿಸಿದಂತೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ. ಇದಕ್ಕಾಗಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಆವರಣದಲ್ಲಿ ಸರಕಾರ 10 ಎಕರೆ ಸ್ಥಳವನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಒಪ್ಪಂದವಾಗಿದೆ ಎಂದರು. ಅಜೀಂ ಪ್ರೇಮ್ ಜಿ ಅವರ ಈ ಮಹತ್ಕಾರ್ಯಕ್ಕೆ ಸರಕಾರ ಆಭಾರಿಯಾಗಿದೆ. ಅದರಲ್ಲಿಯೂ ಉಚಿತವಾಗಿ ಈ ಕಾರ್ಯವನ್ನು ನೆರವೇರಿಸಲು ಮುಂದಾಗಿರುವುದು ಶ್ರೇಷ್ಠ ಕಾರ್ಯ ಎಂದರು . ಶಿಕ್ಷಣಕ್ಕೆ ನೆರವು ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಕಳೆದ 25 ವರ್ಷಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದೆ. 2021ರಲ್ಲಿ ಶಿಕ್ಷಕರ ತರಬೇತಿಗೆ, 2024 ರಲ್ಲಿ ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯವರೆಗೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಕೊಡುವ ಕಾರ್ಯಕ್ರಮಕ್ಕೆ ಒಂದೂವರೆ ಕೋಟಿ ರೂ ನೀಡುವ ಮೂಲಕ ಕೈಜೋಡಿಸಿದ್ದಾರೆ. ಸರಕಾರಿ ಕಾಲೇಜುಗಳಲ್ಲಿ ಓದಿರುವವವರಿಗೆ ವರ್ಷಕ್ಕೆ 30 ಸಾವಿರ ವಿದ್ಯಾರ್ಥಿ ವೇತನವನ್ನು ದೀಪಿಕಾ ವಿದ್ಯಾರ್ಥಿ ವೇತನದಡಿ ನೀಡುತ್ತಿದ್ದಾರೆ ಎಂದು ತಿಳಿಸಿದ ಮುಖ್ಯಮಂತ್ರಿಗಳು,  ಅಜೀಂ ಪ್ರೇಮ್ ಜಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ವಾರ್ತಾ ಭಾರತಿ 17 Jan 2026 4:06 pm

ಬಿಜೆಪಿ ಮೇಲೆ ದೇಶದ Gen Z ಭರವಸೆ; ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಅಬ್ಬರದ ಚುನಾವಣಾ ಭಾಷಣ

ಮಹಾರಾಷ್ಟ್ರ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ಸಾಧಿಸಿರುವ ಬಿಜೆಪಿ, ಈ ಜಯದ ಹುಮ್ಮಸ್ಸಿನಲ್ಲಿ ಪಶ್ಚಿಮ ಬಂಗಾಳಕ್ಕೆ ಲಗ್ಗೆ ಇಟ್ಟಿದೆ. ಇಲ್ಲಿನ ಮಾಲ್ಡಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ದೇಶದ ಯುವಜನತೆ ಬಿಜೆಪಿಯ ಅಭಿವೃದ್ಧಿ ಮಾದರಿಯನ್ನು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಪಾಲಿಕೆ ಚುನಾವಣೆಗಳ ಫಲಿತಾಂಶಗಳೇ ಸಾಕ್ಷಿ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಪ್ರಧಾನಿ ಮೋದಿ ರಾಜ್ಯದ ಮತದಾರರಲ್ಲಿ ಮನವಿ ಮಾಡಿದ್ದಾರೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 17 Jan 2026 4:04 pm

ಭಾರತ-ನ್ಯೂಝಿಲೆಂಡ್ ಏಕದಿನ ಸರಣಿ | ಇಂದೋರ್‌ಗೆ 3 ಲಕ್ಷ ರೂ. ಮೌಲ್ಯದ ವಾಟರ್‌ ಫಿಲ್ಟರ್‌ ಕೊಂಡೊಯ್ದ ಶುಭಮನ್ ಗಿಲ್!

ಕಲುಷಿತ ನೀರು ಕುಡಿದು ಹಲವರು ಮೃತಪಟ್ಟ ಬಳಿಕ ಚರ್ಚೆಗೆ ಗ್ರಾಸವಾಗಿದ್ದ ಇಂದೋರ್‌

ವಾರ್ತಾ ಭಾರತಿ 17 Jan 2026 4:00 pm

ʼಕಾಂಗ್ರೆಸ್ ಮುಖಂಡರಿಂದಲೇ ಕೈ ಕಾರ್ಯಕರ್ತನ ಕೊಲೆʼ; ಬಿಜೆಪಿಯಿಂದ 10 ಲಕ್ಷ ಪರಿಹಾರ: ಬಿ ವೈ ವಿಜಯೇಂದ್ರ

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಶೇಖರ್ ಸಾವಿನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಚೆಲ್ಲಾಟ ಆಡದೇ ಸಮಗ್ರ ತನಿಖೆ ಮಾಡಿಸಬೇಕು. ಬಡ ಕುಟುಂಬಕ್ಕೆ ನ್ಯಾಯ ಸಿಗಲು ಸಿಬಿಐ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಇಂದು ಮೃತ ರಾಜಶೇಖರ್ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,

ಒನ್ ಇ೦ಡಿಯ 17 Jan 2026 3:59 pm

ಹೊಸ ಕಾರು ಉತ್ಪಾದನಾ ಘಟಕ ಆರಂಭಿಸಲಿದೆ ಮಾರುತಿ ಸುಜುಕಿ, ₹35,000 ಕೋಟಿ ಹೂಡಿಕೆ; ಯಾವ ರಾಜ್ಯದಲ್ಲಿ ಸ್ಥಾಪನೆ?

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಗುಜರಾತ್‌ನಲ್ಲಿ ತನ್ನ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬರೋಬ್ಬರಿ 35,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಶನಿವಾರ ಗುಜರಾತ್ ಸರ್ಕಾರ ಈ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಹೊಸ ಘಟಕವು ವಾರ್ಷಿಕ 10 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಹೆಚ್ಚುತ್ತಿರುವ ದೇಶೀಯ ಬೇಡಿಕೆ ಮತ್ತು ರಫ್ತು ಅಗತ್ಯಗಳನ್ನು ಪೂರೈಸಲು ಕಂಪನಿಗೆ ಸಹಕಾರಿಯಾಗಲಿದೆ.

ವಿಜಯ ಕರ್ನಾಟಕ 17 Jan 2026 3:59 pm

ಚಿನ್ನಸ್ವಾಮಿ ದುರಂತ, ಬಳ್ಳಾರಿ ಗಲಾಟೆ, ಎಟಿಎಂ ದರೋಡೆ ವಿಚಾರವಾಗಿ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ

ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಅಭಿವೃದ್ಧಿ ಪರಸ್ಪರ ಪೂರಕವಾಗಿವೆ. ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಬಂಡವಾಳ ಹೂಡಿಕೆ ಹೆಚ್ಚಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವುದು, ನ್ಯಾಯ ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಮ್, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಬಿ.ಬಿ.ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯ ಕರ್ನಾಟಕ 17 Jan 2026 3:58 pm

ವಿವಾದ ಹುಟ್ಟುಹಾಕಿದ AR ರೆಹಮಾನ್‌ ʼಧರ್ಮʼದ ಹೇಳಿಕೆ: ರೆಹಮಾನ್‌ ಆರೋಪದ ಬಗ್ಗೆ ಗಾಯಕರು ಹೇಳೊದೇನು?

ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಬಾಲಿವುಡ್‌ನಲ್ಲಿ ತಮ್ಮ ಧರ್ಮದ ಕಾರಣದಿಂದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಗಾಯಕ ಶಾನ್, ಹರಿಹರನ್ ಮತ್ತು ಲೆಸ್ಲಿ ಲೂಯಿಸ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಂಗೀತ ಲೋಕದಲ್ಲಿ ಬದಲಾವಣೆಗಳಾಗಿವೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು, ಕೆಲವರು ಹಾಗೇನು ಇಲ್ಲ ಎಂದು ರೆಹಮಾನ್‌ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.

ವಿಜಯ ಕರ್ನಾಟಕ 17 Jan 2026 3:55 pm

ಬಾಲಿವುಡ್ ನಲ್ಲಿ ಕೆಲಸ ಬೇಕಿದ್ದರೆ ‘ಘರ್ ವಾಪ್ಸಿ’ ಮಾಡಿ: ಎ.ಆರ್. ರೆಹಮಾನ್ ಗೆ ವಿಶ್ವ ಹಿಂದೂ ಪರಿಷತ್ ಸಲಹೆ

ಹೊಸದಿಲ್ಲಿ: ಬಾಲಿವುಡ್ ನಲ್ಲಿ ಕೆಲಸಕಳೆದುಕೊಂಡಿರುವ ಬಗ್ಗೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ಇತ್ತೀಚಿನ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ ಶನಿವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಮತ್ತೆ ಕೆಲಸ ಬೇಕಿದ್ದರೆ ರೆಹಮಾನ್ ಅವರು ‘ಘರ್ ವಾಪ್ಸಿ’ ಮಾಡಬೇಕು ಎಂದು ವಿಹಿಂಪ ರಾಷ್ಟ್ರೀಯ ವಕ್ತಾರ ವಿನೋದ ಬನ್ಸಾಲ್ ಹೇಳಿದ್ದಾರೆ. ಬಹುಶಃ ಕೋಮುವಾದದ ಕಾರಣದಿಂದಾಗಿ ತಾನು ಕಳೆದ ಎಂಟು ವರ್ಷಗಳಲ್ಲಿ ಹಿಂದಿ ಚಿತ್ರೋದ್ಯಮದಲ್ಲಿ ಕೆಲಸ ಕಳೆದುಕೊಂಡಿರಬಹುದು ಎಂಬ ರೆಹಮಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬನ್ಸಾಲ್, ರೆಹಮಾನ್ ಒಂದು ನಿರ್ದಿಷ್ಟ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ರೆಹಮಾನ್ ಕೂಡ ಒಮ್ಮೆ ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿಯವರು ನಾಯಕರಾಗಿದ್ದ ಗುಂಪಿನ ನಾಯಕರಾಗಿರುವಂತೆ ಕಾಣುತ್ತಿದೆ ಎಂದರು. ಅನ್ಸಾರಿಯವರು ಹತ್ತು ವರ್ಷಗಳ ಕಾಲ ಲಾಭಗಳನ್ನು ಪಡೆದಿದ್ದರು ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದ್ದರು, ಆದರೆ ನಿವೃತ್ತಿಯ ಬಳಿಕ ಭಾರತವನ್ನು ಅವಮಾನಿಸಿದ್ದರು ಎಂದು ಆರೋಪಿಸಿದರು. ರೆಹಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಬನ್ಸಾಲ್, ಒಮ್ಮೆ ರೆಹಮಾನ್ ಎಲ್ಲ ಭಾರತೀಯರು ಮತ್ತು ಹಿಂದುಗಳ ಮೆಚ್ಚುಗೆಗೆ ಪಾತ್ರರಾಗಿದ್ದರು, ಆದರೆ ಈಗ ತನಗೇಕೆ ಕೆಲಸ ಸಿಗುತ್ತಿಲ್ಲ ಎನ್ನುವದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ವ್ಯವಸ್ಥೆಯ ವಿರುದ್ಧ ಕೆಟ್ಟ ಮಾತುಗಳನ್ನಾಡುವ ಮೂಲಕ ಇಡೀ ಉದ್ಯಮಕ್ಕೆ ಅಪಖ್ಯಾತಿ ತರುತ್ತಿದ್ದಾರೆ ಎಂದರು. ರೆಹಮಾನ್ ಒಮ್ಮೆ ಹಿಂದೂ ಆಗಿದ್ದರು. ಅವರೇಕೆ ಇಸ್ಲಾಮ್ ಧರ್ಮಕ್ಕೆಮತಾಂತರಗೊಂಡಿದ್ದರು? ಈಗ ‘ಘರ್ ವಾಪ್ಸಿ’ ಮಾಡಿ. ನಿಮಗೆ ಮತ್ತೆ ಕೆಲಸ ಸಿಗಲು ಆರಂಭವಾಗಬಹುದು ಎಂದು ಹೇಳಿದ ಬನ್ಸಾಲ್, ಇಂತಹ ಹೇಳಿಕೆಗಳು ರಾಜಕಾರಣಿಗಳಿಗೆ ಸೂಕ್ತವಾಗಿರಬಹುದು, ಆದರೆ ಕಲಾವಿದನಿಗೆ ಅಲ್ಲ ಎಂದರು. ಬಿಬಿಸಿ ಏಶ್ಯನ್ ನೆಟ್ವರ್ಕ್ ಗೆ ನೀಡಿದ್ದ ಸಂದರ್ಶನದಲ್ಲಿ ರೆಹಮಾನ್, ಹಲವು ವರ್ಷಗಳಿಂದಲೂ ತಾನು ಬಾಲಿವುಡ್ ನಲ್ಲಿ ಹೊರಗಿನವನು ಎಂಬಂತೆ ಭಾಸವಾಗುತ್ತಿದ್ದು, ಕಳೆದ ಎಂಟು ವರ್ಷಗಳಿಂದಲೂ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಹೇಳಿದ್ದರು. ಸಂಭಾವ್ಯ ಕಾರಣಗಳ ಕುರಿತು ಮಾತನಾಡಿದ ಅವರು, ‘ಅದು ಕೋಮುವಾದ ಆಗಿರಬಹುದು, ಆದರೆ ಅದು ನನ್ನ ಮುಂದಿಲ್ಲ’ ಎಂದೂ ಹೇಳಿದ್ದರು. ತಾನು ಕೆಲಸದ ಅರಸಾಟದ ಹಿಂದೆ ಬಿದ್ದಿಲ್ಲ ಎಂದು ಹೇಳಿದ್ದ ರೆಹಮಾನ್, ‘ಎಲ್ಲವೂ ಒಳ್ಳೆಯದೇ. ಕುಟುಂಬದೊಂದಿಗೆ ಕಳೆಯಲು ಈಗ ನನ್ನ ಬಳಿ ಹೆಚ್ಚು ಸಮಯವಿದೆ. ನಾನು ಕೆಲಸದಹುಡುಕಾಟದಲ್ಲಿಲ್ಲ. ಕೆಲಸ ನನ್ನ ಬಳಿ ಬರಬೇಕು ಎಂದು ನಾನು ಬಯಸುತ್ತೇನೆ. ನನ್ನ ಪ್ರಾಮಾಣಿಕತೆಯು ಕೆಲಸವನ್ನು ಗಳಿಸಬೇಕು. ನನಗೆ ಏನು ಸಿಗಬೇಕೋ ಅದನ್ನು ನಾನು ಪಡೆಯುತ್ತೇನೆ’ಎಂದಿದ್ದರು.

ವಾರ್ತಾ ಭಾರತಿ 17 Jan 2026 3:51 pm

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ: ಜಿ.ಪರಮೇಶ್ವರ್‌ ಭೇಟಿಯಾದ ಯುವ ಕರ್ನಾಟಕ ವೇದಿಕೆ

ಬೆಂಗಳೂರು: ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದಿರುವ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಕನ್ನಡಿಗ ಭಕ್ತರು ಹಾಗೂ ಟಿಟಿ ವಾಹನ ಚಾಲಕರ ಮೇಲೆ ನಡೆದ ಹಲ್ಲೆ ಘಟನೆಗಳನ್ನು ತೀವ್ರವಾಗಿ ಖಂಡಿಸಿ ಯುವ ಕರ್ನಾಟಕ ವೇದಿಕೆ ವತಿಯಿಂದ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು. ಶಬರಿಮಲೆ ಯಾತ್ರೆ ಪವಿತ್ರ ಧಾರ್ಮಿಕ ಯಾತ್ರೆಯಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ

ಒನ್ ಇ೦ಡಿಯ 17 Jan 2026 3:42 pm

MRPLಗೆ ಮೂರನೇ ತ್ರೈಮಾಸಿಕದಲ್ಲಿ ಭಾರಿ ಲಾಭ: 29,720 ಕೋಟಿ ರೂ. ಆದಾಯ ಗಳಿಕೆ, ಹೊಸ ದೇಶಗಳಿಂದ ಕಚ್ಚಾ ತೈಲ ಆಮದು

ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಈ ‌ವರ್ಷ ಭಾರಿ ಲಾಭವನ್ನು ಗಳಿಸಿದೆ.ಕಂಪನಿಯ ಆದಾಯ 29,720 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಬಾರಿ ವಾಣಿಜ್ಯ ವ್ಯವಹಾರದಲ್ಲಿ ಎಂಆರ್‌ಪಿಎಲ್‌ ಹೊಸ ಹೆಜ್ಜೆ ಇಟ್ಟಿದ್ದು, ಇದೇ ಮೊದಲ ಬಾರಿಗೆ ಲಿಬಿಯಾದಿಂದ ಕಚ್ಚಾ ತೈಲವನ್ನು ಪೂರೈಕೆ ಮಾಡಿಸಿಕೊಂಡಿದೆ.

ವಿಜಯ ಕರ್ನಾಟಕ 17 Jan 2026 3:42 pm

ಇರಾನ್ ಹಿಂಸಾಚಾರ; ದೇಶವ್ಯಾಪಿ ಪ್ರತಿಭಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 3,000ಕ್ಕೆ ಏರಿಕೆ; ದಶಕಗಳಲ್ಲೇ ಭೀಕರ ಹಿಂಸಾಚಾರಕ್ಕೆ ಸಾಕ್ಷಿ!

ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಜನಸಾಮಾನ್ಯರ ಆಕ್ರೋಶ ತಾರಕಕ್ಕೇರಿದೆ. ದೇಶದಾದ್ಯಂತ ನಡೆದ ಪ್ರತಿಭಟನೆಗಳಲ್ಲಿ 3,000ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಇಂಟರ್ನೆಟ್ ಸಂಪರ್ಕ ಪುನರಾರಂಭಗೊಂಡಿದ್ದು, ಅಮೆರಿಕ ಅಧ್ಯಕ್ಷರ ಮಧ್ಯಸ್ಥಿಕೆಯಿಂದ 800 ಪ್ರತಿಭಟನಾಕಾರರ ಮರಣದಂಡನೆ ಶಿಕ್ಷೆಯನ್ನು ಹಿಂಪಡೆಯಲಾಗಿದೆ. ಭಾರತೀಯ ವಿದ್ಯಾರ್ಥಿಗಳು ಹಾಗೂ ಯಾತ್ರಿಕರು ತೀವ್ರ ಸಂಕಷ್ಟದಲ್ಲಿದ್ದು, ಅಂತಾರಾಷ್ಟ್ರೀಯ ಸಮುದಾಯ ಇರಾನ್ ಸರ್ಕಾರದ ಕ್ರಮಗಳನ್ನು ತೀವ್ರವಾಗಿ ಖಂಡಿಸಿದೆ.

ವಿಜಯ ಕರ್ನಾಟಕ 17 Jan 2026 3:38 pm

1.53 ಲಕ್ಷ ಕೋಟಿ ರೂ. ಹೊಸ ಹೂಡಿಕೆ: ಬಿಗ್‌ ಅಪ್‌ಡೇಟ್‌ ಕೊಟ್ಟ ಎಂ ಬಿ ಪಾಟೀಲ

ಬೆಂಗಳೂರು: ಕಳೆದ ವರ್ಷದ ಫೆಬ್ರುವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿದ ನಂತರದ 11 ತಿಂಗಳ ಅವಧಿಯಲ್ಲಿ ರಾಜ್ಯವು 1.53 ಲಕ್ಷ ಕೋಟಿ ರೂ.ಗಳಷ್ಟು ಹೊಸ ಹೂಡಿಕೆಯ ಹಲವು ಕೈಗಾರಿಕಾ ಯೋಜನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶನಿವಾರ ತಿಳಿಸಿದ್ದಾರೆ. ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ದಾವೋಸ್ ಆರ್ಥಿಕ

ಒನ್ ಇ೦ಡಿಯ 17 Jan 2026 3:25 pm

ಕೈಜಾರಿದ ಬಿಎಂಸಿ; ಠಾಕ್ರೆ ಸಹೋದರರ ಎಮೋಷನಲ್‌ ಲೆಟರ್‌, ಮರಾಠಿ ಅಸ್ಮಿತೆ ರಾಜಕಾರಣ ಬಿಡದಿರಲು ನಿರ್ಧಾರ

ಬರೋಬ್ಬರಿ 25 ವರ್ಷಗಳ ಕಾಲ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅನ್ನು ಆಳಿದ್ದ ಠಾಕ್ರೆ ಕುಟುಂಬದ ಹಿಡಿತದ ಏಕೀಕೃತ ಶಿವಸೇನೆ, ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಅನಭವಿಸಿದೆ. ಬಿಎಂಸಿ ಈಗ ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆಯ ತೆಕ್ಕೆಗೆ ಬಂದಿದೆ. ಬಿಎಂಸಿಗಾಗಿ ಒಂದಾಗಿದ್ದ ಉದ್ಧವ್‌ ಮತ್ತು ರಾಜ್‌ ಠಾಕ್ರೆ ಸಹೋದರರು ಮ್ಯಾಜಿಕ್‌ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಸಹೋದರರು ರಾಜ್ಯದ ಜನತೆಗೆ ಬರೆದ ಬಹಿರಂಗ ಪತ್ರದಲ್ಲಿ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ.

ವಿಜಯ ಕರ್ನಾಟಕ 17 Jan 2026 3:23 pm

ಜ.16ರಂದು ರಿಲೀಸ್‌ ಆದ Can This Love Be Translated? ಸಿರೀಸ್ ಹವಾ ಶುರು: ಇಂಡಿಯನ್ ಕೆ-ಡ್ರಾಮಾ ಪ್ರಿಯರಿಗೆ ಸ್ಪೆಷಲ್‌ ಸಂದೇಶ ಕೊಟ್ಟ ಕಿಮ್ ಸಿಯೋನ್-ಹೋ

ಕೆ-ಡ್ರಾಮಾ ಸ್ಟಾರ್ ಕಿಮ್ ಸಿಯೋನ್-ಹೋ ಅಭಿನಯದ 'Can This Love Be Translated?' ಸೀರೀಸ್ ಬಿಡುಗಡೆಯಾದ ದಿನವೇ ಭಾರತದಲ್ಲಿ ಹವಾ ಸೃಷ್ಷಿಸಿದೆ. ಬಿಡುಗಡೆಗೂ ಮುನ್ನವೇ ಭಾರತೀಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ನಟ, ತಮ್ಮ ಪಾತ್ರ ಮತ್ತು ಕಥಾಹಂದರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅಂತರಾಷ್ಟ್ರೀಯ ಭಾಷಾಂತರಕಾರ ಮತ್ತು ಗ್ಲೋಬಲ್ ಸ್ಟಾರ್ ನಡುವಿನ ಸ್ನೇಹ, ಪ್ರೀತಿಯ ಕಥೆಯನ್ನು ಈ ಸೀರೀಸ್ ಹೊಂದಿದೆ.

ವಿಜಯ ಕರ್ನಾಟಕ 17 Jan 2026 3:06 pm

ವಿವಿಧತೆಯಲ್ಲಿ ಏಕತೆ ಸಾರುವ ಬೀದರ್

ಧಾರ್ಮಿಕ, ಭಾಷಿಕ, ಜನಾಂಗೀಯ ಮತ್ತು ಸಾಂಸ್ಕೃತಿಕ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎಂದು ಸಾರುವ ಭಾವನೆಗೆ ಏಕತೆಯನ್ನುಬಹುದು. ಭಾರತದಲ್ಲಿ ಹೇಗೆ ಹಬ್ಬದ ಆಚರಣೆಗಳು, ಉಡುಗೆ ತೊಡುಗೆಗಳು, ಮಾತಾಡುವ ಭಾಷೆಗಳು, ಪಾಲಿಸುವ ಧರ್ಮಗಳು ಬೇರೆ ಬೇರೆ ಇವೆಯೋ ಹಾಗೆಯೇ ಬೀದರ್ ನಲ್ಲಿಯೂ ಈ ಎಲ್ಲಾ ವಿಶೇಷತೆಗಳನ್ನು ಕಾಣಬಹುದು. ಒಂದು ರೀತಿ ಬೀದರನ್ನು ‘ಪುಟ್ಟ ಭಾರತ’ ಎಂದು ಕರೆದರೆ ತಪ್ಪಾಗಲಾರದು. ಬೀದರ್ ಜಿಲ್ಲೆಯು ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದ ಗಡಿ ಭಾಗವನ್ನು ಹೊಂದಿದೆ. ಇತ್ತ ಪೂರ್ವಕ್ಕೆ ತೆಲಂಗಾಣದ ನಿಜಾಮಾಬಾದ್ ಮತ್ತು ಮೇದಕ ಜಿಲ್ಲೆಗಳಿವೆ. ಇಲ್ಲಿಯ ಜನರು ತೆಲುಗು ಭಾಷೆಯನ್ನು ಮಾತನಾಡುತ್ತಾರೆ ಮತ್ತು ವ್ಯವಹಾರಿಕ ಭಾಷೆ ಕೂಡ ತೆಲುಗು. ಅತ್ತ ಪಶ್ಚಿಮ ಭಾಗದಲ್ಲಿ ಮಹಾರಾಷ್ಟ್ರದ ಲಾತೂರ, ನಾಂದೇಡ ಮತ್ತು ಉಸ್ಮಾನಾಬಾದ್ ಜಿಲ್ಲೆಗಳಿವೆ. ಇಲ್ಲಿಯ ಜನರು ಹೆಚ್ಚು ಮರಾಠಿ ಭಾಷಿಗರಾಗಿದ್ದಾರೆ. ದಕ್ಷಿಣ ಗಡಿ ಭಾಗಕ್ಕೆ ಹೋದರೆ ಕರ್ನಾಟಕದ ಬಿಸಿಲು ನಾಡು ಕಲಬುರಗಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಬೀದರಿನ ಕನ್ನಡಕ್ಕೂ, ಕಲಬುರಗಿಯ ಕನ್ನಡಕ್ಕೂ ತುಂಬಾ ವ್ಯತ್ಯಾಸ ಕಾಣಬಹುದು. ಸುತ್ತಲು ಅರಣ್ಯಗಳಿಂದ ಸುತ್ತುವರಿಯಲ್ಪಟ್ಟ ಬೀದರ್ ತಂಪಾದ ಪ್ರದೇಶವಾಗಿದ್ದು, ಹಿತವಾದ ವಾತಾವರಣವನ್ನು ಅನುಭವಿಸಬಹುದು. ಆದರೆ ಕಲಬುರಗಿಯಲ್ಲಿ ಬಿಸಿಲು ನೆತ್ತಿಗೇರಿರುತ್ತದೆ. ಬೀದರಿನಲ್ಲಿ ಈ ಹಿಂದೆ ಮೌರ್ಯರು,ಶಾತವಾಹನರು, ರಾಷ್ಟ್ರಕೂಟರು, ಚಾಲುಕ್ಯರು, ಕಾಕತೀಯರು, ಬಹುಮನಿ ಸುಲ್ತಾನರು, ಬರೀದಶಾಹಿಗಳು, ಮೊಘಲರು ಮತ್ತು ನಿಜಾಮರು ಸೇರಿದಂತೆ ಹಲವಾರು ರಾಜವಂಶಗಳು ಆಳ್ವಿಕೆ ಮಾಡಿರುವ ಇತಿಹಾಸವನ್ನು ನಾವು ಓದಿದ್ದೇವೆ. ಮೊಘಲರು ಮತ್ತು ನಿಜಾಮರ ಆಡಳಿತದ ಪ್ರಭಾವವನ್ನು ಇಂದಿಗೂ ಬೀದರ್ನಲ್ಲಿ ಕಾಣಬಹುದು. ಉರ್ದು ಭಾಷೆ ಆಗ ಬೀದರಿನಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಈಗಲೂ ಉರ್ದು ಶಾಲೆಗಳನ್ನು ಮತ್ತು ಉರ್ದು ಭಾಷೆ ಮಾತನಾಡುವ ಜನರನ್ನು ಮತ್ತು ಅಲ್ಲಲ್ಲಿ ಉರ್ದು ಬೋರ್ಡುಗಳನ್ನು ಕಾಣಬಹುದು. ಬೀದರಿನ ಓಲ್ಡ್ ಸಿಟಿ ಅಥವಾ ಹಳೆಯ ಬೀದರಿನಲ್ಲಿ ಹೆಚ್ಚು ಜನ ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡುತ್ತಾರೆ. ಬೀದರಿನ ಮಹಮ್ಮದ್ ಗವಾನ್ ಮದರಸ ಐತಿಹಾಸಿಕ ಕಟ್ಟಡಗಳಲ್ಲಿ ಒಂದು. ಇದು ಮಿನಾರ್ಗಳು ಮಸೀದಿ, ಗ್ರಂಥಾಲಯ, ಉಪನ್ಯಾಸ ಸಭಾಂಗಣ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಒಳಗೊಂಡಿತ್ತು. ಇದು ಆಗಿನ ಕಾಲದ ಒಂದು ದೊಡ್ಡ ವಿಶ್ವವಿದ್ಯಾಲಯ. ಇರಾನ್ ಮತ್ತು ಇರಾಕ್ನಿಂದ ಅನೇಕ ವಿದ್ವಾಂಸರು ಬಂದು ಇಲ್ಲಿ ಪ್ರವಚನ ಕೊಡುತ್ತಿದ್ದರು ಮತ್ತು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅನ್ಯ ಮುಸ್ಲಿಂ ದೇಶಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕೆ ಎಂದು ಇಲ್ಲಿ ಬಂದು ಇಲ್ಲಿಯೇ ಉಳಿದು ತಮ್ಮ ಪರಂಪರೆಯನ್ನು ಕೂಡ ಕೊಡುಗೆಯಾಗಿ ಬಿಟ್ಟು ಹೋಗಿದ್ದಾರೆ. ಹೀಗೆ ಉರ್ದು ಭಾಷೆ ಈಗಲೂ ಪ್ರಚಲಿತ. ಗುರುದ್ವಾರ ಎಂದರೆ ಇದು ಸಿಕ್ಕಧರ್ಮದವರಿಗೆ ಇರುವಂತಹ ಪವಿತ್ರ ಸ್ಥಳ. ಇದನ್ನು ಗುರುನಾನಕ್ ದೇವರಿಗೆ ಸಮರ್ಪಿಸಲಾಗಿದೆ. ಇವರು ಬೀದರ ಭೇಟಿಗೆ ಬಂದಾಗ ಇಲ್ಲಿ ಬರದ ಛಾಯೆ ಆವರಿಸಿತ್ತು. ನೀರಿಲ್ಲದೆ ಜನರು ಪರದಾಡುವ ಸ್ಥಿತಿ ತಲುಪಿದಾಗ ಗುರುನಾನಕ್ ತಮ್ಮ ಭಕ್ತಿಯ ಶಕ್ತಿಯಿಂದ ಕಾಲಿನಿಂದ ಕಲ್ಲಿನ ಮೇಲೆ ಜೋರಾಗಿ ಒತ್ತಿದಾಗ ನೀರು ಝಲ್ಲೆಂದು ಚಿಮ್ಮಿತು ಎಂದು ಹಿರಿಯರು ಹೇಳುತ್ತಾರೆ. ಅಲ್ಲಿನಿಂದ ಇಲ್ಲಿಯವರೆಗೆ ಬೀದರಿನಲ್ಲಿ ನೀರಿಗೆ ಬರಗಾಲವಿಲ್ಲ ಎಂದು ಪ್ರತೀತಿ ಇದೆ. ಆ ನೀರಿನ ಝರಿಯ ಉದ್ಭವ ಈಗಲೂ ನಿಗೂಢ. ಆದರೂ ಸದಾ ಹರಿಯುವ ಚಿಲುಮೆ ಇದು. ಈ ನೀರು ಸಿಹಿಯಾಗಿದ್ದು ಕುಡಿಯಲು ಯೋಗ್ಯ ಮತ್ತು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಪ್ರತಿ ವರ್ಷ ಗುರುಪೂರ್ಣಿಮೆಗೆ ಪಂಜಾಬಿನಿಂದ ಲಕ್ಷ ಲಕ್ಷ ಜನರು ಬೀದರಿಗೆ ಬಂದು ಗುರುನಾನಕ್ ಅವರ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಿಖ್ ಧರ್ಮದವರ ವಿಶೇಷ ವೇಷ ಭೂಷಣಗಳು ಅವರನ್ನು ವಿಶೇಷವಾಗಿ ಕಾಣುವಂತೆ ಮಾಡುತ್ತವೆ. ಸಿಖ್ ಜನರು ಸಾಂಕೇತಿಕವಾಗಿ ಪೇಟ ಎಂದರೆ ಕೇಶವನ್ನು ಮುಚ್ಚಿ ಡಲು ಬಳಸುವ ಸಾಧನ ಧರಿಸುತ್ತಾರೆ. ಇವರು ತಮ್ಮ ಕೂದಲನ್ನು ಕತ್ತರಿಸುವುದಿಲ್ಲ. ಮಹಿಳೆಯರೇ ಇರಲಿ ಪುರುಷರೇ ಇರಲಿ ಅವರು ಕೂದಲನ್ನು ಕತ್ತರಿಸಬಾರದು ಎನ್ನುವ ನಿಯಮವಿದೆ. ಆ ಕೂದಲನ್ನು ಮುಚ್ಚಿಡಲು ಗಂಡಸರು ಪೇಟವನ್ನು ಧರಿಸುತ್ತಾರೆ. ಇವರು ಈ ಕೇಶ ರಾಶಿಯನ್ನು ಕ್ರಮಬದ್ಧವಾಗಿಡಲು ಕಂಗಾ/ ಬಾಚಾಣಿಕೆ ಎನ್ನುವ ಸಾಧನವನ್ನು ಬಳಸುತ್ತಾರೆ. ಇವರ ಸೊಂಟಕ್ಕೆ ಯಾವಾಗಲೂ ಕೃಪಾ ಅಥವಾ ಕಿರಪಾನ್ ಎನ್ನುವ ಶಸ್ತ್ರವಿರುತ್ತದೆ. ಇದು ಸಿಕ್ಕಧರ್ಮದ ಸಂಕೇತವು ಹೌದು ಮತ್ತು ಸ್ವರಕ್ಷಣೆಗೆ ಇರುವಂತಹ ಅಸ್ತ್ರ. ಕಚ್ಚೆ ಕೂಡ ಸಿಕ್ಕ ಧರ್ಮದ ಪದ್ಧತಿಯ ಪ್ರಕಾರ ಅವರು ಧರಿಸುವ ಒಂದು ಕೆಳವಸ್ತ್ರ. ಇವರು ಕಡಗವನ್ನು ಕೈಗೆ ಹಾಕಿಕೊಳ್ಳುತ್ತಾರೆ. ಇದು ಅವರ ಶೌರ್ಯದ ಸಂಕೇತ. ಈ ರೀತಿ ಸಿಖ್ ಜನರನ್ನು ಬೀದರಿನಲ್ಲಿ ನಾವು ಸಾಮಾನ್ಯವಾಗಿ ಎಲ್ಲಾ ಕಡೆಯೂ ಕಾಣಬಹುದು. ಹೀಗೆ ಇವರುವಿಶೇಷವಾಗಿಯೂ ವಿಭಿನ್ನವಾಗಿಯೂ ಕಂಡರೂ ಬೀದರಿನ ಜನರೊಂದಿಗೆ ಬೆರತು ಅವರೇ ಸ್ವಂತ ಉದ್ಯೋಗಗಳನ್ನು ಮಾಡಿಕೊಂಡು, ಕೆಲವರು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕಾಲಿರಿಸಿ, ಹೋಟೆಲ್ ಉದ್ಯಮದಲ್ಲೂ ಜಯಗೊಳಿಸಿ, ಬೀದರಿನ ಭಾಗವಾಗಿದ್ದಾರೆ. ಬೀದರ ಕೂಡ ಯುದ್ಧ ವಿಮಾನಗಳನ್ನು ಹಾರಿಸಲು ಕಲಿಸುವ ಒಂದು ತರಬೇತಿ ಕೇಂದ್ರ. ಹಾಗಾಗಿ ಉತ್ತರ ಭಾರತದ ಹಲವಾರು ಯುವಕರು ಈ ಕೆಲಸವನ್ನು ಅರಸಿ ಇಲ್ಲಿಗೆ ಬರುತ್ತಾರೆ. ಹಾಗಾಗಿ ಹಿಂದಿ ಭಾಷೆಯ ಪ್ರಭಾವ ಜಾಸ್ತಿ ಇದೆ. ಇಲ್ಲಿ ಮೆಡಿಕಲ್ ಕಾಲೇಜ್ ಮತ್ತು ಎಂಜಿನಿಯರಿಂಗ್ ಕಾಲೇಜ್ ಇರುವುದರಿಂದ ಮರಾಠಿ, ತೆಲುಗು, ಪಂಜಾಬಿ ಭಾಷಿಗರು ಸಾಮಾನ್ಯವಾಗಿದ್ದಾರೆ. ದಾಂಡಿಯ ನವರಾತ್ರಿ ಉತ್ಸವದಲ್ಲಿ ಗುಜರಾತಿನ ನೃತ್ಯ ಪ್ರಕಾರ. ಆದರೆ ಈಗ ಇದು ಬೀದರಿನಲ್ಲಿಯೂ ‘ದಾಂಡಿಯ ರಾತ್ರಿ’ ಆಯೋಜಿಸುವುದನ್ನು ಕಾಣಬಹುದು. ದೀಪಾವಳಿ ಸಮಯದಲ್ಲಿ ಆಚರಿಸಲ್ಪಡುವ ಮರಾಠಿಗರ ಹಬ್ಬ, ‘ಬಾವ್ ಬೀಜ’ ಕೂಡ ದೀಪಾವಳಿ ಸಮಯದಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಅಲ್ಲಲ್ಲಿಕರವಾಚೌತ್, ಬಾಯಿದೋಜ, ಈದ್,ಕ್ರಿಸ್ಮಸ್, ಹಬ್ಬಗಳ ಆಚರಣೆಗಳು ಇವೆ. ಬೌದ್ಧರು, ಜೈನ್ಯರು, ಸಿಖ್ಖರು, ಮುಸ್ಲಿಮರೂ, ಕ್ರಿಶ್ಚಿಯನ್ನರು,ಹಿಂದುಗಳು ಸೇರಿದಂತೆ, ಬಸವ ನಾಡು, ಶರಣರ ನಾಡೆಂದೇ ಹೆಸರುವಾಸಿಯಾದ ಈ ಗಡಿನಾಡು, ಎಲ್ಲರನ್ನು ಒಪ್ಪಿಕೊಂಡು, ಅಪ್ಪಿಕೊಂಡಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಬೀದರ್ ಜಿಲ್ಲೆಯನ್ನು ವೈವಿಧ್ಯತೆಯಲ್ಲಿ ಏಕತೆ ಸಾರುವ ಜಾಗವೆಂದರೆ ಅತಿಶಯೋಕ್ತಿಯಾಗಲಾರದು.

ವಾರ್ತಾ ಭಾರತಿ 17 Jan 2026 2:49 pm

ಕಾಂಗ್ರೆಸ್ ಭವನ ಟ್ರಸ್ಟ್‌ಗೆ ರಿಯಾಯಿತಿ ದರದಲ್ಲಿ ಸಿಎ ನಿವೇಶನಗಳ ಮಂಜೂರು: 16.89 ಕೋಟಿ ರೂ. ನಷ್ಟ

ಬೆಂಗಳೂರು: ರಾಜ್ಯದ 6 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿದ್ದ ಸಿಎ ನಿವೇಶನಗಳನ್ನು ನಿಯಮ ಮೀರಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ ಶೇ.5ರಷ್ಟು ರಿಯಾಯಿತಿ ದರದಲ್ಲಿ ಮಂಜೂರು ಮಾಡಿರುವ ಪರಿಣಾಮ ಸರಕಾರದ ಬೊಕ್ಕಸಕ್ಕೆ 16.89 ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ. 2023ರಿಂದ 2025ರ ಡಿಸೆಂಬರ್‌ವರೆಗೆ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಎ ನಿವೇಶನಗಳನ್ನು ಮಂಜೂರು ಮಾಡುವ ಸಂಬಂಧ ಕಾಂಗ್ರೆಸ್ ಭವನ ಟ್ರಸ್ಟ್ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಪೈಕಿ 5 ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಅಳತೆಯ ಸಿಎ ನಿವೇಶನಗಳನ್ನು ಪೌರಾಡಳಿತ ಇಲಾಖೆಯು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿತ್ತು. ಮಂಜೂರಾತಿಗೆ ಬಾಕಿ ಇದ್ದ 6 ಸ್ಥಳೀಯ ಸಂಸ್ಥೆಗಳ ಪ್ರಸ್ತಾವಗಳನ್ನು ಸಚಿವ ಸಂಪುಟವು ಅನುಮೋದಿಸಿದೆ. ರಾಜಕೀಯ ಪಕ್ಷಗಳ ಭವನಗಳಿಗೆ ನಾಗರಿಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲು ಕೆಟಿಸಿಪಿ (ಸಿಎ ನಿವೇಶನ ಹಂಚಿಕೆ) ನಿಯಮಗಳಲ್ಲಿ ಅವಕಾಶವಿಲ್ಲ. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನೆ ಆಯುಕ್ತಾಲಯವು ಸರಕಾರಕ್ಕೆ ಸ್ಪಷ್ಟ ಅಭಿಪ್ರಾಯ ನೀಡಿತ್ತು. ಆದರೂ ಈ ಎಲ್ಲ ಅಭಿಪ್ರಾಯಗಳನ್ನು ಬದಿಗೊತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರವು ನಿವೇಶನ ಮೌಲ್ಯದ ಶೇ.5ರಷ್ಟು ದರ ವಿಧಿಸಿ ಖಾಯಂ ಆಗಿ ಮಂಜೂರು ಮಾಡಿದೆ. ಈ ಸಂಬಂಧ 2026ರ ಜನವರಿ 13ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು The-file.in ಗೆ ಲಭ್ಯವಾಗಿದೆ. ಕೇಳಿದ್ದು ಗುತ್ತಿಗೆಗೆ, ಆದೇಶವಾಗಿದ್ದು ಖಾಯಂ ಮಂಜೂರಾತಿಗೆ: ಕಲಬುರಗಿ ಜಿಲ್ಲೆಯ ಅಫ್ಜ ಲಪುರ ಪುರಸಭೆ ವ್ಯಾಪ್ತಿಯಲ್ಲಿ 1,120.60 ಚದರ ಮೀಟರ್ ವಿಸ್ತೀರ್ಣದ ಜಾಗವನ್ನು ನಾಗರಿಕ ಸೌಲಭ್ಯ ನಿವೇಶನಕ್ಕಾಗಿ ಕಾಯ್ದರಿಸಿತ್ತು. ಈ ನಿವೇಶನವನ್ನು ಸಾಮಾಜಿಕ ಉದ್ದೇಶಕ್ಕಾಗಿ ಮಾರುಕಟ್ಟೆ ಮೌಲ್ಯದಂತೆ ಶೇ.100ರಷ್ಟು ನಿಗದಿಪಡಿಸಿ 30 ವರ್ಷ ಗುತ್ತಿಗೆ ಆಧಾರದದ ಮೇಲೆ ಮಂಜೂರು ಮಾಡಲು ಕಲಬುರಗಿ ಜಿಲ್ಲೆಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕೋರಿದ್ದರು. ಈ ಪ್ರಸ್ತಾವವನ್ನು ಪೌರಾಡಳಿತ ಇಲಾಖೆಯು ತಿರಸ್ಕರಿಸಿತ್ತು. ಕರ್ನಾಟಕ ಯೋಜನಾ ಪ್ರಾಧಿಕಾರಗಳ ನಿಯಿಮ 2016-17ರ ನಿಯಮ 2(3) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಹೇಳಿತ್ತು. ಆದರೆ ನಗರಾಭಿವೃದ್ಧಿ ಇಲಾಖೆಯು ಕಡತವನ್ನು ಸಚಿವ ಸಂಪುಟದ ಮುಂದಿರಿಸಿ ಮಂಜೂರಾತಿಗೆ ಒಪ್ಪಿಗೆ ಪಡೆದಿದೆ. ಸ್ಥಳೀಯ ನಗರಾಭಿವೃದ್ಧಿ ಯೋಜನಾ ಕೋಶವು 30 ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರಾತಿಗೆ ಕೋರಿದ್ದರೇ ನಗರಾಭಿವೃದ್ಧಿ ಇಲಾಖೆಯು ಖಾಯಂ ಆಗಿ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಕಾಳಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರ್ವೇ ನಂಬರ್ 230/3 ಹಾಗೂ ಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ ಸರ್ವೇ ನಂಬರ್ 143/2ರಲ್ಲಿನ 1,086.50 ಚದರ ಮೀಟರ್ ವಿಸ್ತೀರ್ಣವನ್ನು ನಾಗರಿಕ ಸೌಲಭ್ಯಕ್ಕಾಗಿ ಮೀಸಲಿರಿಸಿತ್ತು. ಸಿಎ ನಿವೇಶನವನ್ನು 30 ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರಾತಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಈ ಪ್ರಕರಣದಲ್ಲಿಯೂ ಸಹ ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಪೌರಾಡಳಿತ ಇಲಾಖೆ ಹೇಳಿತ್ತು. ಆದರೆ, ಪೌರಾಡಳಿತ ಸಚಿವ ರಹೀಂ ಖಾನ್ ಅವರು ಆದೇಶದಂತೆ ಈ ವಿಷಯವನ್ನು ಸಚಿವ ಸಂಪುಟದ ಮುಂದಿಡಲಾಗಿತ್ತು. ಕಡೆಯಲ್ಲಿ ಈ ಪ್ರಕರಣದಲ್ಲಿಯೂ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹುಲಿಗುಡ್ಡ ಗ್ರಾಮದ ಸರ್ವೇ ನಂಬರ್ 13/8ರಲ್ಲಿ ಇದ್ದ 5 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕೋರಿದ್ದರು. ಮಾರುಕಟ್ಟೆ ದರದ ಪ್ರಕಾರ 4,400 ರೂ..ಗಳಂತೆ ಒಟ್ಟು 1,068 ವಿಸ್ತೀರ್ಣದ ಚದರ ಮೀಟರ್ ಜಾಗಕ್ಕೆ 46,99,200 ರೂ.ಆಗಲಿದೆ. ಆದರೆ ಈ ಪ್ರಕರಣದಲ್ಲಿಯೂ ನಗರಾಭಿವೃದ್ಧಿ ಇಲಾಖೆಯು ಶೇ.5ರ ದರದಲ್ಲಿ ಮಂಜೂರು ಮಾಡಲು ಆದೇಶಿಸಿದೆ. ಆರ್ಥಿಕ ಪರಿಣಾಮಗಳನ್ನು ಪರಿಗಣಿಸಲಿಲ್ಲವೇಕೆ?: ನಗರ ಸ್ಥಳೀಯ ಸಂಸ್ಥೆ ಮಾಲಕತ್ವದ ನಿವೇಶನಗಳನ್ನು ಮಾರುಕಟ್ಟೆ ಮಾರ್ಗಸೂಚಿ ಬೆಲೆ ಮಂಜೂರು ಮಾಡಲು 2017ರ ಅನ್ವಯ ಅವಕಾಶವಿಲ್ಲ. ಸಾರ್ವಜನಿಕ ಹರಾಜು ಮೂಲಕವೇ ವಿಲೇವಾರಿ ಮಾಡಬೇಕು. ಸಾರ್ವಜನಿಕ ಹರಾಜು ಮಾಡದಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ನಷ್ಟ ಉಂಟಾಗಲಿದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ದುರ್ಬಲವಾಗುತ್ತದೆ ಎಂದು ಅರ್ಥಿಕ ಇಲಾಖೆಯು ಸ್ಪಷ್ಟವಾಗಿ ಅಭಿಪ್ರಾಯಿಸಿತ್ತು. ಹಾಗೆಯೇ ರಾಜ್ಯದ ನಗರ ಯೋಜನಾ ಪ್ರಾಧಿಕಾರಗಳಿಗೆ ಸರಕಾರದಿಂದ ಯಾವುದೇ ಅನುದಾನವೂ ಇಲ್ಲ. ಪ್ರಾಧಿಕಾರಗಳು ಸ್ವ-ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕಾರ್ಯನಿರ್ವಹಿಸುತ್ತವೆ. ಕರ್ನಾಟಕ ಯೋಜನಾ ಪ್ರಾಧಿಕಾರಗಳ 2017ರ ಅಧಿಸೂಚನೆ ಪ್ರಕಾರ ನಾಗರಿಕ ಸೌಲಭ್ಯ ಉದ್ದೇಶದ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಅವಕಾಶವೇ ಇಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿತ್ತು. ಆದರೆ, ಸಚಿವ ಸಂಪುಟವು ಈ ಆರ್ಥಿಕ ಪರಿಣಾಮಗಳನ್ನು ಪರಿಗಣಿಸಿಲ್ಲ. ಬದಲಿಗೆ ವಿವಿಧ ನಗರ ಯೋಜನಾ ಪ್ರಾಧಿಕಾರಗಳು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ನಿವೇಶನಗಳನ್ನು ಬ್ಲಾಕ್ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡುವ ಸಲುವಾಗಿ ಶೇ. 5ರ ದರದಲ್ಲಿ ಖಾಯಂ ಆಗಿ ಮಂಜೂರು ಮಾಡಲು ಸಚಿವ ಸಂಪುಟವು ತೀರ್ಮಾನಿಸಿದೆ. ಈ ನಿರ್ಣಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ವ್ಯಕ್ತಪಡಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ಈ ಕುರಿತು ವಿಧಾನ ಪರಿಷತ್‌ನಲ್ಲಿ ಸದಸ್ಯ ಚಿದಾನಂದ ಎಂ. ಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಮಾಹಿತಿ ಒದಗಿಸಿದ್ದರು. ಈಗಾಗಲೇ ಮಂಜೂರು ಮಾಡಿರುವ ಮತ್ತು ಮಂಜೂರಾತಿಗೆ ಬಾಕಿ ಇರುವ ಸಿಎ ನಿವೇಶನಗಳ ಮಾರುಕಟ್ಟೆಯ ಮೌಲ್ಯ 4.07 ಕೋಟಿ ರೂ. ಇದೆ. ಈ ಪೈಕಿ 5 ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಸಿಎ ನಿವೇಶನಗಳ ಮಾರುಕಟ್ಟೆ ಮೌಲ್ಯವು 1,82,75,528 ರೂ. ಇದೆ. ಆದರೆ ಈ 5 ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಸಿಎ ನಿವೇಶನಗಳಿಗೆ ಸರಕಾರವು 9,13,776 ರೂ. ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ಅನುಮೋದಿಸಿತ್ತು. ರಿಯಾಯಿತಿ ದರದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಸಿಎ ನಿವೇಶನ ಮಂಜೂರು ಮಾಡಿರುವುದರಿಂದ ಒಟ್ಟು ಎಷ್ಟು ನಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಅವರು ಕೇಳಿದ್ದರು. ಆದರೆ ಸರಕಾರವು ನಷ್ಟದ ಮೊತ್ತವನ್ನು ಉತ್ತರದಲ್ಲಿ ತಿಳಿಸಿರಲಿಲ್ಲ. ದೇವನಹಳ್ಳಿಯಲ್ಲೇ 16.45 ಕೋಟಿ ರೂ. ನಷ್ಟ ದೇವನಹಳ್ಳಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ-10ರಲ್ಲಿರುವ ಅಜ್ಮಲ್ ಬಡಾವಣೆಯಲ್ಲಿ 6,841.97 ಚ.ಮೀಟರ್ ವಿಸ್ತೀರ್ಣದ ನಿವೇಶನವನ್ನು (ಖಾತೆ ಸಂಖ್ಯೆ; 3224/49/2/5/51/52/2) ನಾಗರಿಕ ಸೌಲಭ್ಯಕ್ಕಾಗಿ ಮೀಸಲಿರಿಸಿ ಕಾಯ್ದಿರಿಸಿತ್ತು. 2025-26ನೇ ಸಾಲಿನ ಮಾರ್ಗಸೂಚಿ ದರ ಪಟ್ಟಿಯಂತೆ ಪ್ರತಿ ಚದರ ಮೀಟರ್‌ಗೆ 23,000 ಇದೆ. ಅಲ್ಲದೇ ಈ ನಿವೇಶನವು ಮೂಲೆ ನಿವೇಶನವಾಗಿದ್ದರಿಂದ ಪ್ರತಿ ಚದರ ಮೀಟರ್‌ಗೆ ಶೇ.10ರಷ್ಟು ಅಂದರೇ 2,300 ರೂ.ನಂತೆ ಒಟ್ಟು 25,300 ರೂ.ಆಗಲಿದೆ. ಇದರ ಪ್ರಕಾರ 6,841.97 ಚದರ ಮೀಟರ್ ವಿಸ್ತೀರ್ಣದ ಈ ನಿವೇಶನಕ್ಕೆ 17,31,01,841 ರೂ.ಇದೆ. ಈ ನಿವೇಶನವನ್ನು 30 ವರ್ಷಗಳ ಅವಧಿಗೆ ಲೀಸ್ ಆಧಾರದ ಮೇಲೆ ಮಂಜೂರು ಮಾಡಲು ಕೋರಿತ್ತು. ಆದರೆ, ನಿಯಮಗಳ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರಕಾರದ ಸ್ವಾಮ್ಯದಲ್ಲಿರುವ ಮಂಡಳಿ, ಶಾಲೆ, ಹಾಸ್ಟೆಲ್‌ಗಳು, ಸಂಘ ಸಂಸ್ಥೆಗಳು, ಇನ್ನಿತರ ಸಂಘ ಸಂಸ್ಥೆಗಳಿಗೆ ಮಾರ್ಗಸೂಚಿ ದರದ ಶೇ.25, ಶೇ. 50 ಹಾಗೂ ಪ್ರಸ್ತುತ ಮಾರುಕಟ್ಟೆ ದರದಲ್ಲಿ ನಿವೇಶನ ಮಾಡಬೇಕಿತ್ತು. ಅಲ್ಲದೇ ಸಾರ್ವಜನಿಕ ಹರಾಜು ಮೂಲಕವೇ ಮಾರಾಟ ಮಾಡಬೇಕಿತ್ತು. ಮತ್ತೊಂದು ವಿಶೇಷವೆಂದರೇ ಈ ಪ್ರಸ್ತಾವದಲ್ಲಿ ಯಾವ ದರದಲ್ಲಿ ಮಂಜೂರು ಮಾಡಬೇಕು ಎಂದು ಸಚಿವ ಸಂಪುಟದ ಟಿಪ್ಪಣಿಯಲ್ಲಿಯೂ ಪ್ರಸ್ತಾವಿಸಿರಲಿಲ್ಲ. ಆದರೆ, 2026ರ ಜ.13ರಂದು ಹೊರಡಿಸಿರುವ ಆದೇಶದ ಪ್ರಕಾರ ನಿವೇಶನ ಮೌಲ್ಯದ ಶೇ.5ರಷ್ಟನ್ನು ವಿಧಿಸಿ ಖಾಯಂ ಆಗಿ ಮಂಜೂರು ಮಾಡಿದೆ. ನಗರಾಭಿವೃದ್ಧಿ ಇಲಾಖೆಯ ಈ ನಿರ್ಧಾರದಿಂದಾಗಿ ಸ್ಥಳೀಯ ಪುರಸಭೆಗೆ ಅಂದಾಜು 16.45 ಕೋಟಿ ರೂ.ನಷ್ಟು ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ವಾರ್ತಾ ಭಾರತಿ 17 Jan 2026 2:35 pm

ಕೋಮುವಾದದ ಕಾಲದಲ್ಲಿ ಅರಸು ಮತ್ತು ಸಿದ್ದರಾಮಯ್ಯ

‘ದೇವರಾಜ ಅರಸು ಕಾಲಕ್ಕೂ ಸಿದ್ದರಾಮಯ್ಯ ಕಾಲಕ್ಕೂ ವ್ಯತ್ಯಾಸಗಳಿವೆ. ಅರಸು ಅವರಿಗೆ ಕೋಮು ವಾದದ ಸವಾಲುಗಳಿರಲಿಲ್ಲ. ಸಿದ್ದರಾಮಯ್ಯ ಅವರು ಕೋಮುವಾದದ ಸವಾಲುಗಳನ್ನು ಎದುರಿಸಬೇಕಾಗಿದೆ’ ಎಂದು ಸಿದ್ದರಾಮಯ್ಯ ಮತ್ತು ದೇವರಾಜ ಅರಸು ರಾಜಕಾರಣವನ್ನು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯ ಸರಕಾರದ ವೈಫಲ್ಯಗಳಿಗೆ ಇದೊಂದು ಸಮರ್ಥನೆಯಷ್ಟೇ. ದೇವರಾಜ ಅರಸು ಅವರು ಸಿದ್ದರಾಮಯ್ಯರಿಗಿಂತಲೂ ಕಟುವಾದ ಕೋಮುವಾದವನ್ನು ಎದುರಿಸಿದ್ದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿ ಎದುರಿಸಿದ್ದ ‘ಕಷ್ಟದ ಕಾಲ’ದ ಮುಂದೆ ಸಿದ್ದರಾಮಯ್ಯನವರ ಕಾಲ ಏನೇನೂ ಅಲ್ಲ. ದೇವರಾಜ ಅರಸು ಅವರಿಗೆ ಇದ್ದ ಎದುರಾಳಿಗಳು ಒಬ್ಬಿಬ್ಬರಲ್ಲ. ಕಾಂಗ್ರೆಸ್(ಒ), ಜನಸಂಘ, ಆರೆಸ್ಸೆಸ್, ಸಿಪಿಐ, ಸಿಪಿಐಎಂ, ರೈತ ಸಂಘ, ಕನ್ನಡ ಚಳವಳಿ, ವಿದ್ಯಾರ್ಥಿ ಚಳವಳಿಗಳು ದೇವರಾಜ ಅರಸುರವರನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದವು. ಎಲ್ಲಕ್ಕಿಂತ ಆಗ ಕರ್ನಾಟಕದಲ್ಲಿ ಭಾರೀ ಪ್ರಭಾವಶಾಲಿಯಾಗಿದ್ದ ಕಾರ್ಮಿಕ ಚಳವಳಿಯು ದೇವರಾಜ ಅರಸು ಅವರನ್ನು ವಿರೋಧಿಸುತ್ತಿತ್ತು. ರಾಜೀನಾಮೆ ಎಂಬ ಪದ ದೇವರಾಜ ಅರಸು ಅವರನ್ನು ಕಾಡಿದಷ್ಟು ಯಾವ ರಾಜಕಾರಣಿಯನ್ನೂ ಕಾಡಿದ್ದಿಲ್ಲ. ಇವೆಲ್ಲವನ್ನು ಎದುರಿಸಿಕೊಂಡು ದೇವರಾಜ ಅರಸರು ಕೋಮುವಾದವನ್ನು ನಿಗ್ರಹಿಸಿ, ಉಳುವವನೇ ಹೊಲದೊಡೆಯ ಎಂದು ಭೂ ಸುಧಾರಣಾ ಕಾಯ್ದೆ, ರಾಜ್ಯದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ (ಅಹಿಂದ) ಸಮುದಾಯಗಳಿಗೆ ಸೇರಿದ ಅನೇಕರಿಗೆ ಭೂಮಿ ದಕ್ಕುವಂತೆ ಮಾಡಿದ್ದಲ್ಲದೇ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಬೇಕಾದ ಯೋಜನೆಗಳನ್ನು ರೂಪಿಸಿದರು. ಸಿದ್ದರಾಮಯ್ಯನವರು ಏನೂ ಮಾಡಿಲ್ಲವೆಂದಲ್ಲ; ಹಾಗಂತ ಕೋಮುವಾದ, ಅಸಮಾನತೆ, ದಲಿತ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಅವರ ಶ್ರಮ ಏನೇನೂ ಇಲ್ಲ. ಹಾಗಾಗಿ ದೇವರಾಜ ಅರಸು ಜೊತೆ ಸಿದ್ದರಾಮಯ್ಯರ ಹೋಲಿಕೆಯೇ ಸಲ್ಲ. ಹಾಗೆ ಹೋಲಿಕೆಗೆ ಅರ್ಹರಾಗದಿರುವಿಕೆಗೆ ದೇವರಾಜ ಅರಸರ ‘ಕಾಲ’ವನ್ನು ತೋರಿಸಿ ನುಣುಚಿಕೊಳ್ಳುವಂತಿಲ್ಲ. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಹತ್ತಾರು ಕೋಮುಗಲಭೆಗಳು, ಗುಂಡು ಹಾರಾಟಗಳು, ಲಾಠಿಚಾರ್ಜ್‌ಗಳು ನಡೆದಿವೆ. ಸಿದ್ದರಾಮಯ್ಯರ ಅವಧಿಯಲ್ಲೂ ಕೋಮುಗಲಭೆ, ಪೊಲೀಸರಿಂದ ಮುಸ್ಲಿಮ್ ವ್ಯಾಪಾರಿ ಮೇಲೆ ಶೂಟೌಟ್, ಕೊಲೆಗಳು, ಅನೈತಿಕ ಪೊಲೀಸ್‌ಗಿರಿಗಳು, ದಲಿತರ ಮೇಲಿನ ದಾಳಿ, ಹತ್ಯೆಗಳು ನಡೆದಿವೆೆ. ದೇವರಾಜ ಅರಸು ಕಾಲದಲ್ಲಿ ಅವರು ಈ ಹಿನ್ನ್ನೆಲೆಯಲ್ಲಿ ಭಾರೀ ಪ್ರತಿಭಟನೆಗಳನ್ನು ಎದುರಿಸಿದರು. ಸಿದ್ದರಾಮಯ್ಯರ ಕಾಲದಲ್ಲಿ ಏನೂ ಆಗಿಲ್ಲವೇನೋ ಅನ್ನುವ ರೀತಿಯ ಸಮಾಜದ ಪ್ರತಿಕ್ರಿಯೆ ಇದೆ. ಅರಸು ಕಾಲದಲ್ಲಿ ಸಿಪಿಐ, ಸಿಪಿಐಎಂ, ರೈತ ಸಂಘ, ಕನ್ನಡ ಚಳವಳಿಯ ಹತ್ತಾರು ಶಾಸಕರು ಸಾಹಿತಿ, ಚಿಂತಕರ ಜೊತೆ ಬೀದಿಯಲ್ಲಿದ್ದರು. ಇಂದು ಜಾತ್ಯತೀತ ಪಕ್ಷ, ಸಂಘಟನೆಗಳ, ಸೈದ್ಧಾಂತಿಕ ಹಿನ್ನೆಲೆಯ ನಾಡಿನ ಸಾಕ್ಷಿ ಪ್ರಜ್ಞೆಗಳು ಸಿದ್ದರಾಮಯ್ಯರ ಮನೆಯಲ್ಲೇ ಸದಾ ಕಾಲ ಕಾಣ ಸಿಗುತ್ತಾರೆ. ದೇವರಾಜ ಅರಸುರವರಿಗೆ ಸಿದ್ದರಾಮಯ್ಯರಂತ ‘ಅಮೃತ ಕಾಲ’ದ ಭಾಗ್ಯ ಇರಲಿಲ್ಲ. ಇಂತಹ ಅಮೃತ ಕಾಲದಲ್ಲಿ ಸಿದ್ದರಾಮಯ್ಯನವರು ದೇವರಾಜ ಅರಸುರಂತಹ ಸಾಧನೆ ಮಾಡಿದ್ದಾರೆಯೇ? ಇಲ್ಲ ಎಂದಾದರೆ, ಅದಕ್ಕಾಗಿ ‘ಕಾಲ’ವನ್ನು ದೂರುವ ಅಗತ್ಯವಿಲ್ಲ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗಿನ ಕಾಲದ ಕೆಲವು ಘಟನೆಗಳನ್ನು ನೋಡೋಣ. 1973 ಸೆಪ್ಟಂಬರ್ ತಿಂಗಳ ಸಮಯ. ಮೈಸೂರು ರಾಜ್ಯದ ಇತಿಹಾಸದಲ್ಲೇ ಎಂದೂ ಕಾಣದಂತಹ ಒಂದು ಭಯಂಕರ ಗಲಭೆ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇಡೀ ರಾಜ್ಯಾದ್ಯಂತ ಕೋಮುಗಲಭೆ ಉಂಟಾಗುತ್ತದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಕೋಮು ವಿಷಜ್ವಾಲೆ ಹರಡುತ್ತಿರುತ್ತದೆ. ನಾಗರಿಕ ಜನಜೀವನ ಅಸ್ತವ್ಯಸ್ಥಗೊಳ್ಳುತ್ತದೆ. 144 ಸೆಕ್ಷನ್‌ಗಳು, ಕರ್ಫ್ಯೂಗಳು ಯಾವುದೂ ಕೂಡಾ ಕೋಮು ಗಲಭೆ ಯನ್ನು ತಣ್ಣಗಾಗಿಸಲು ಸಾಧ್ಯವಾಗಲಿಲ್ಲ. ಬಹುಶಃ ಕೇವಲ ಧರ್ಮದ ಕಾರಣಕ್ಕಾಗಿ ಕೋಮುಗಲಭೆ ನಡೆದಿದ್ದರೆ ನಿಲ್ಲುತ್ತಿತ್ತೋ ಏನೋ! ಆದರೆ ಈ ಕೋಮುಗಲಭೆಯ ಮೂಲ ಇದ್ದಿದ್ದು ಹಸಿವಿನಲ್ಲಿ! ರಾಜ್ಯದಲ್ಲಿನ ನಿರುದ್ಯೋಗ ಮತ್ತು ಬೆಲೆಏರಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಮೈಸೂರು ರಾಜ್ಯ ಬಂದ್‌ಗೆ ವಿದ್ಯಾರ್ಥಿಗಳು ಕರೆ ಕೊಟ್ಟಿದ್ದರು. ಈ ಬಂದ್‌ಗೆ ರೈತ ಸಂಘ, ಕನ್ನಡಚಳವಳಿಗಳು, ಎಡಪಂಥೀಯ ಸಂಘಟನೆಗಳು, ಪಕ್ಷಗಳು ಬೆಂಬಲ ನೀಡಿದ್ದವು. ರಾಜ್ಯದ ಎಲ್ಲಾ ಕಡೆ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು. ಆದರೆ, ಮಂಡ್ಯದ ಮದ್ದೂರಿನಲ್ಲಿ ಮಾತ್ರ ಸಮಸ್ಯೆಯಾಯಿತು. ಮದ್ದೂರಿನಲ್ಲಿ ವಿದ್ಯಾರ್ಥಿಗಳು ಜಾಥಾ ನಡೆಸುತ್ತಿದ್ದ ವೇಳೆ ‘ಹಬೀಬ್ ಟ್ರೆಡರ್ಸ್’ ಹೆಸರಿನ ಅಂಗಡಿ ತೆರೆದಿರುವುದನ್ನು ಗಮನಿಸಿದರು. ಹಾಗಾಗಿ ವಿದ್ಯಾರ್ಥಿಯೊಬ್ಬ ಜಾಥಾದಿಂದ ನೇರ ಅಂಗಡಿಯತ್ತಾ ಹೋಗಿ, ಅಂಗಡಿ ಮಾಲಕನಿಗೆ ಬಂದ್ ಹಿನ್ನೆಲೆ ವಿವರಿಸಿ ಅಂಗಡಿಯ ಷಟರ್ ಎಳೆದನು. ಅಂಗಡಿ ಮಾಲಕ ಇದನ್ನು ಪ್ರತಿರೋಧಿಸಿದ್ದಲ್ಲದೇ, ತನ್ನಲ್ಲಿದ್ದ ಬಾಳೆಹಣ್ಣು ಕೊಯ್ಯುವ ಚೂರಿಯಿಂದ ವಿದ್ಯಾರ್ಥಿಗೆ ಇರಿದನು. ವಿದ್ಯಾರ್ಥಿಯ ಸಾವು ಸಂಭವಿಸಿತು. ಇದನ್ನು ತಡೆಯಲು ಹೋದ ಇಬ್ಬರಿಗೆ ಚೂರಿ ಇರಿತವಾಯಿತು. ಒಳ್ಳೆ ಆಶಯದ ವಿದ್ಯಾರ್ಥಿ ಹೋರಾಟವು ಕೋಮುಗಲಭೆಯಾಗಿ ಪರಿವರ್ತನೆಯಾಯಿತು. ಹೀಗೆ ಆರಂಭವಾದ ಕೋಮುಗಲಭೆ ಇಡೀ ರಾಜ್ಯಾದ್ಯಂತ ಪಸರಿಸಿತು. ಪೊಲೀಸರು ಲಾಠಿಚಾರ್ಜ್ ಮಾಡಿದರು. ರಾಜ್ಯದಲ್ಲಿ ಒಟ್ಟು 231 ಮನೆಗಳಿಗೆ ಬೆಂಕಿ ಹಾಕಲಾಯಿತು. ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಾಟ ಮಾಡಬೇಕಾಯಿತು. ಕೋಮುಗಲಭೆಯಿಂದ ತಪ್ಪಿಸಿಕೊಂಡು ಬಂದ ಹೋಟೆಲ್ ಸಪ್ಲೈಯರ್ ಒಬ್ಬ ತನ್ನ ಮನೆ ಸೇರಲು ಹತ್ತಡಿ ಇರುವಾಗ ರಸ್ತೆಯಲ್ಲಿದ್ದ ಪೊಲೀಸರು ಗುಂಡು ಹಾರಿಸಿದರು. ಆತ ಸ್ಥಳದಲ್ಲೇ ಕುಸಿದು ಬಿದ್ದ. ಕುಸಿದು ಬಿದ್ದ ಮಗನನ್ನು ಕಂಡ ತಂದೆ ಓಡೋಡಿ ಬಂದು ಮಗನಿಗೆ ನೀರು ಕುಡಿಸುತ್ತಿರುವಾಗ ಪೊಲೀಸರು ತಂದೆಯ ಮೇಲೂ ಗುಂಡಿನ ದಾಳಿ ನಡೆಸಿದರು. ಅಪ್ಪ ಮಗ ಇಬ್ಬರೂ ಸಾವನ್ನಪ್ಪಿದರು. ಇದು ಕೋಮುಗಲಭೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲ, ದೇವರಾಜ ಅರಸು ಅವರನ್ನು ವಿಲನ್ ಆಗಿ ಬಿಂಬಿಸಿತು. ದೇವರಾಜ ಅರಸು ಅವರು ಈಗ ಅನಿವಾರ್ಯವಾಗಿ ಸೈನ್ಯವನ್ನು ಕರೆಸಿಕೊಳ್ಳಬೇಕಿತ್ತು. ಹಾಗಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆದ ದೇವರಾಜ ಅರಸು ಅವರು ‘ಮಿಲಿಟರಿ ಸಹಾಯ’ ಕೇಳಿದರು. ಈಗ ಎಲ್ಲರೂ ಸೇರಿ ಅರಸು ಅವರ ರಾಜೀನಾಮೆ ಕೇಳಿದರು. ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಲಾಗದ ಮುಖ್ಯಮಂತ್ರಿ ಎಂಬುದನ್ನು ಒಪ್ಪಿಕೊಂಡ ಬಳಿಕ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಲಾಯಿತು. ಕೇಂದ್ರದ ಮಿಲಿಟರಿ ಸಹಾಯ ಕೇಳಿದ್ದಾರೆ ಎಂದರೆ ರಾಷ್ಟ್ರಪತಿ ಆಳ್ವಿಕೆಗೆ ಸೂಕ್ತ ಸಮಯ ಎಂಬ ಆಗ್ರಹಗಳು ಕೇಳಿ ಬಂತು. ಇವೆಲ್ಲವನ್ನೂ ಮೆಟ್ಟಿ ನಿಂತು ದೇವರಾಜ ಅರಸು ಅವರು ಕೋಮುಗಲಭೆಯನ್ನು ನಿಗ್ರಹಿಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದರು. ಅವರು ಅವರ ಜಾತ್ಯತೀತ, ಕೋಮುವಿರೋಧಿ ಸಿದ್ಧಾಂತದಿಂದ ಒಂದು ಹೆಜ್ಜೆಯೂ ಹಿಂದಡಿ ಇಡಲಿಲ್ಲ. ಇವೆಲ್ಲದರ ಮಧ್ಯೆ ದಲಿತ-ಹಿಂದುಳಿದ-ಅಲ್ಪಸಂಖ್ಯಾತರ ಪರ ಯೋಜನೆಗಳನ್ನು ರೂಪಿಸಿದರು. ಕೋಮುವಾದ ಎನ್ನುವುದು ಅವರಿಗೆ ನೆಪವಾಗಲಿಲ್ಲ. ಇದಕ್ಕೂ ಮೊದಲು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯವರಿಗೆ ಕಟ್ಟಡ ಅನುಮತಿ ನೀಡಿದ್ದರೂ ಜನಸಂಘದವರು ಅದನ್ನು ವಿರೋಧಿಸಿ ಗದ್ದಲ ಎಬ್ಬಿಸಿದರು. 1972ರ ಮಾರ್ಚ್ 17ರಂದು ಈ ಸಂಬಂಧ ಹುಬ್ಬಳ್ಳಿ ಪಾಲಿಕೆಯಲ್ಲಿ ಸಭೆ ನಡೆಯುತ್ತಿರುವಾಗ ಪಾಲಿಕೆ ಕಚೇರಿ ಎದುರು ಎರಡು ಗುಂಪುಗಳ ಜನರು ಸೇರಿದರು. ಪರಸ್ಪರ ಘೋಷಣೆ, ಕಲ್ಲು ತೂರಾಟವೂ ಆರಂಭವಾಯಿತು. ಪೊಲೀಸರು ಲಾಠಿ ಚಾರ್ಜ್ ನಡೆಸಿ ಈ ಅಕ್ರಮ ಗುಂಪನ್ನು ಚದುರಿಸಿದರು. ಆದರೆ ಅವರು ಆ ಪ್ರದೇಶದಿಂದ ಹೊರಟು ನಗರದಲ್ಲಿನ ಇತರ ಭಾಗಗಳಲ್ಲಿ ಕಲ್ಲು ತೂರಾಟ ನಡೆಸಿದರು. ಅಂದು ಸಂಜೆ 6:45ಕ್ಕೆ ಮೈಸೂರು ಪೊಲೀಸ್ ಕಾಯ್ದೆಯ ಸೆಕ್ಷನ್ 35ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಇದು ಏಳು ದಿನಗಳ ಕಾಲ ಜಾರಿಯಲ್ಲಿದ್ದು, ನಂತರ ಮಾರ್ಚ್ 31, 1972ರವರೆಗೆ ವಿಸ್ತರಿಸಲಾಯಿತು. ಅದೇ ದಿನ ಸಂಜೆ ಸುಮಾರು 7 ಗಂಟೆಗೆ, ಜನಸಂಘದ ಶ್ರೀಕಾಂತ್ ವಾಮನ್ ಚಿಪ್ಕರ್ ಎಂಬವರಿಗೆ ಅಪರಿಚಿತರು ಚಾಕು ಇರಿದರು. 1972ರ ಮಾರ್ಚ್ 21ರಂದು ಬೆಳಗ್ಗೆ 4:30 ಗಂಟೆಗೆ ಶ್ರೀಕಾಂತ್ ವಾಮನ್ ಚಿಪ್ಕರ್ ಅವರು ನಿಧನರಾದರು. ಅಂದು ಮಧ್ಯಾಹ್ನ ಸುಮಾರು 12 ಗಂಟೆಗೆ ನಗರದಲ್ಲಿನ ವಿವಿಧ ಭಾಗಗಳಲ್ಲಿ ಗುಂಪುಗಳು ಸೇರಿ ಕಲ್ಲು ತೂರಾಟ ಆರಂಭಿಸಿತು. ಪೊಲೀಸರು ಲಾಠಿ ಚಾರ್ಜ್ ನಡೆಸಿ ಈ ಗುಂಪುಗಳನ್ನು ಚದುರಿಸಿದರು. ಓಣಿಯ ಬಳಿ ಗುಂಪೊಂದು ಮಸೀದಿಗೆ ಬೆಂಕಿ ಹಚ್ಚಿತು. ಪೊಲೀಸರು ಮತ್ತು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿ ಮಸೀದಿಗೆ ಆಗುವ ಹಾನಿಯನ್ನು ತಡೆದರು. ಈದ್ಗಾ ಮೈದಾನದ ಬಳಿ ಇದ್ದ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಯಿತು. ಈ ಘಟನೆಯಲ್ಲಿ 13 ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಈ ಘಟನೆಯ ಸಂಬಂಧ ಮುಖ್ಯಮಂತ್ರಿ ದೇವರಾಜ ಅರಸು ಅವರು ವಿಧಾನಸಭೆಯಲ್ಲಿ ಹೇಳಿಕೆ ನೀಡುವಾಗ ಮಧ್ಯಪ್ರವೇಶಿಸಿದ ಸಿಪಿಐ ಶಾಸಕರು ‘‘ಇದು ಜನಸಂಘದ ಪಿತೂರಿ ಅಲ್ಲವೇ? ಜನಸಂಘದ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಹೇಳಿ’’ ಎಂದು ಪ್ರಶ್ನಿಸುತ್ತಾರೆ. ಆಗ ಭಾವುಕವಾಗಿ ಉತ್ತರಿಸಿದ ದೇವರಾಜ ಅರಸು ಅವರು ‘‘ಜನಸಂಘವೋ, ಕಾಂಗ್ರೆಸ್ ಒ ಪಕ್ಷದವರೋ, ಕಾಂಗ್ರೆಸ್ ಆರ್ ಪಕ್ಷದವರೋ ಗೊತ್ತಾಗ್ತಾ ಇಲ್ಲ’’ ಎಂದು ಮಾರ್ಮಿಕವಾಗಿ ಬೇಸರ ವ್ಯಕ್ತಪಡಿಸಿದ್ದರು. ನಂತರ ತಕ್ಷಣ ಸಾವರಿಸಿಕೊಂಡು ‘‘ಮಾನ್ಯ ಶಾಸಕರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ’’ ಎನ್ನುವ ಮೂಲಕ ಜನಸಂಘದ ಕೋಮುವಾದವನ್ನು ನಿರ್ಲಕ್ಷಿಸುವಂತಿಲ್ಲ ಎಂಬ ಸೂಚನೆ ನೀಡಿದರು. ದೇವರಾಜ ಅರಸು ಅವರಿಗಿದ್ದ ಶತ್ರುಪಾಳಯ ಹೇಗಿತ್ತು? ಯಾವ್ಯಾವ ಹೆಸರಿನಲ್ಲಿತ್ತು ಎನ್ನುವುದನ್ನು ಈ ಘಟನೆ ಸೂಚಿಸುತ್ತದೆ. ಕೇವಲ ಕೋಮುಗಲಭೆಗಳು ಮಾತ್ರವಲ್ಲ, ಕಾರ್ಮಿಕ ಚಳವಳಿ ದೇವರಾಜ ಅರಸರನ್ನು ಇನ್ನಿಲ್ಲದಂತೆ ಕಾಡಿದ್ದವು. ಹೊರಗಡೆ ಬೀದಿಯಲ್ಲಿ ಕಾರ್ಮಿಕ ಚಳವಳಿ ನಡೆದರೆ, ಅದನ್ನು ಪ್ರತಿನಿಧಿಸಿ ವಿಧಾನಸಭೆಯ ಒಳಗಡೆ ಸಿಪಿಐ, ಸಿಪಿಐಎಂ, ಕನ್ನಡ ಚಳವಳಿ, ರೈತ ಸಂಘದ ಶಾಸಕರು ಪ್ರತಿಭಟನೆ, ಸಭಾತ್ಯಾಗ ನಡೆಸುತ್ತಿದ್ದವು. ಈಗಿನಂತೆ ಬೀದಿಯಲ್ಲಿ ನಡೆಯುವ ಪ್ರತಿಭಟನೆಗೆ ಸದನದಲ್ಲಿ ಉತ್ತರ ಕೊಡದಿರುವ ಅವಕಾಶ ದೇವರಾಜ ಅರಸು ಅವರಿಗೆ ಇರಲಿಲ್ಲ. ಕಡ್ಡಾಯವಾಗಿ ಬೀದಿ ಚಳವಳಿಗಳಿಗೆ ಸದನದಲ್ಲಿ ಉತ್ತರ ನೀಡಲೇಬೇಕಿತ್ತು. 1972 ಎಪ್ರಿಲ್ 7ರಂದು ಎನ್.ಜಿ.ಇ.ಎಫ್. ಫ್ಯಾಕ್ಟರಿಯಲ್ಲಿ ಕಾರ್ಮಿಕರು ಪ್ರತಿಭಟನೆ ಘೋಷಿಸಿದ್ದರು. ಪ್ರತಿಭಟನೆ ಇನ್ನೂ ಆರಂಭಗೊಂಡಿರಲಿಲ್ಲ. ಇನ್ನೂ ಕೆಲಸ ಮಾಡುತ್ತಿದ್ದಾಗ ಪೊಲೀಸ್‌ರು ಅಲ್ಲಿಗೆ ಪ್ರವೇಶ ಮಾಡಿ ಕಾರ್ಮಿಕರನ್ನು ಸಿಕ್ಕಾಪಟ್ಟೆ ಹೊಡೆದಿದ್ದರು. ಇದರಿಂದ ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದೇವರಾಜ ಅರಸು ಅವರ ಸರಕಾರ ಬಂದು ಆಗ ಬಹುಶಃ ಒಂದು ತಿಂಗಳಾಗಿದೆಯಷ್ಟೆ! ಸಿಪಿಐ ಪಕ್ಷದ ಶಾಸಕರು ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಾರೆ. ಮುಖ್ಯಮಂತ್ರಿಗಳು ಪೊಲೀಸರ ಮೇಲೆ ಮತ್ತು ಫ್ಯಾಕ್ಟರಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಖ್ಯಮಂತ್ರಿಗಳು ವಿಧಾನಸಭೆಯನ್ನು ಮುಂದೂಡಿ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಪ್ರತಿಭಟನಾಕಾರರ ಆರೋಗ್ಯ ವಿಚಾರಿಸಬೇಕು ಎಂದು ಒತ್ತಾಯಪಡಿಸುತ್ತಾರೆ. ಇದು ಗದ್ದಲಕ್ಕೆ ಕಾರಣವಾಗಿ, ಸ್ಪೀಕರ್ ಅವರು ವಿಧಾನಸಭೆಯನ್ನು ಊಟದ ವಿರಾಮಕ್ಕೆ ಮುಂದೂಡುತ್ತಾರೆ. ಊಟದ ವಿರಾಮದ ಸಮಯದಲ್ಲಿ ವಿಧಾನಸೌಧದಿಂದ ಹೊರಟ ವಾಟಾಳ್ ನಾಗರಾಜರು ಆಸ್ಪತ್ರೆಗೆ ಹೋಗಿ ಗಾಯಾಳು ಕಾರ್ಮಿಕ ಮುಖಂಡರನ್ನು ಭೇಟಿಯಾಗಿ, ಅವರ ರಕ್ತಸಿಕ್ತ ಬಟ್ಟೆಯೊಂದನ್ನು ಮಡಚಿ ಪೊಟ್ಟಣದಲ್ಲಿರಿಸಿಕೊಂಡು ಸದನದೊಳಗೆ ಬರುತ್ತಾರೆ. ಮಧ್ಯಾಹ್ನದ ನಂತರ ಸಿಪಿಐ ಶಾಸಕರ ವಿಷಯವನ್ನು ಕನ್ನಡ ಚಳವಳಿಯ ಶಾಸಕ ವಾಟಾಳ್ ನಾಗರಾಜ್ ಕೈಗೆತ್ತಿಕೊಳ್ಳುತ್ತಾರೆ. ‘ದಯವಿಟ್ಟು ಸದನ ಮುಂದಕ್ಕೆ ಹಾಕಿ, ನಿಮ್ಮ ಪೊಲೀಸರಿಂದ ಗಾಯಗೊಂಡಿರುವ ಕಾರ್ಮಿಕ ನಾಯಕರನ್ನು ಭೇಟಿಯಾಗಿ’ ಎಂದು ಒತ್ತಾಯಿಸುತ್ತಾರೆ. ಮುಖ್ಯಮಂತ್ರಿ ದೇವರಾಜ ಅರಸರು ಬಗ್ಗದೇ ಇದ್ದಾಗ ಪೊಟ್ಟಣ ಬಿಚ್ಚಿ, ರಕ್ತಸಿಕ್ತ ಬಟ್ಟೆಯನ್ನು ಮುಖ್ಯಮಂತ್ರಿ ದೇವರಾಜ ಅರಸರ ಮುಖಕ್ಕೆ ಬಿಸಾಡುತ್ತಾರೆ. ‘‘ಈ ಸರಕಾರಿ ಕಾರ್ಖಾನೆಯ ಕಾರ್ಮಿಕರ ಮೇಲೆ ನಡೆಸಿದಂಥ ಹಲ್ಲೆಯ ಪರಿಣಾಮವಾಗಿ ಕಾರ್ಮಿಕನೊಬ್ಬನ ರಕ್ತದ ಕಲೆಯಿರುವ ಬಟ್ಟೆಯನ್ನು ಕೊಟ್ಟು ಹೋಗುತ್ತೇನೆ. ಇದು ಹೊಸ ಸರಕಾರದ ಪ್ರಥಮ ಕೊಡುಗೆ. ಈ ರಕ್ತಪಾತದ ಬಟ್ಟೆ ನೋಡಿದರೆ ಕಣ್ಣಿನಲ್ಲಿ ರಕ್ತ ಬರುತ್ತದೆ ಮತ್ತು ಅತೀವ ದುಃಖವಾಗುತ್ತದೆ. ನನಗೆ ಅದನ್ನು ನೋಡಲು ಸಾಧ್ಯವಾಗುತ್ತಿಲ್ಲ. ನನಗೆ ಏನು ಮಾತನಾಡುವುದಕ್ಕೂ ಮನಸ್ಸು ಬರುತ್ತಾ ಇಲ್ಲ’’ಎಂದು ಹೇಳಿ ವಾಟಾಳ್ ನಾಗರಾಜ್ ಅವರು ಸಭಾತ್ಯಾಗ ಮಾಡುತ್ತಾರೆ. ದೇವರಾಜ ಅರಸು ಅವರು ಕಾರ್ಮಿಕ, ರೈತ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಪರವಾಗಿದ್ದರೂ ಅವರ ಸುತ್ತ ಸಾಹಿತಿ-ಚಿಂತಕರು, ಜಾತ್ಯತೀತರ ಕೋಟೆ ಇರಲಿಲ್ಲ. ಹಾಗಾಗಿ ದೇವರಾಜ ಅರಸು ಅವರನ್ನೂ, ಅವರ ಸರಕಾರವನ್ನೂ ಅನುಮಾನದಿಂದಲೇ ನೋಡುತ್ತಿದ್ದರು. ಅವರ ಸಮಾಜವಾದವನ್ನು ‘ನಕಲಿ ಸಮಾಜವಾದ’ಎಂದೇ ನೇರವಾಗಿ ಟೀಕಿಸುತ್ತಿದ್ದರು. ಕಾರ್ಮಿಕರ ಪ್ರತಿಭಟನೆಯ ವೇಳೆ ಪೊಲೀಸರು ಫೋಮ್‌ನ ಅಶ್ರುವಾಯು ಸಿಡಿಸಿದರು. ಇದರಿಂದಾಗಿ ಕಾರ್ಮಿಕರಾಗಿದ್ದ ಅಮಲನಾಥ್ ಎಂಬವರು ನಿಧನರಾದರು. ಇದನ್ನು ಸಿಪಿಐನ ಮಲ್ಲೇಶ್ವರಂ ಶಾಸಕ ಎಂ.ಎಸ್. ಕೃಷ್ಣನ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ದೇವರಾಜ ಅರಸು ಅವರು ಅದಕ್ಕೆ ಉತ್ತರ ನೀಡುತ್ತಿದ್ದರು. ತಕ್ಷಣ ಮಧ್ಯಪ್ರವೇಶಿಸಿದ ಸಿಪಿಐ ಶಾಸಕ ಎಂ.ಎಸ್. ಕೃಷ್ಣನ್ ಅವರು ‘‘ಮುಖ್ಯಮಂತ್ರಿಗಳೇ, ನೀವು ಪೊಲೀಸರು ಬರೆದುಕೊಟ್ಟಿದ್ದನ್ನು ಓದುವುದನ್ನು ಬಿಡಿ. ವಾಸ್ತವ ಏನೆಂದು ತಿಳಿದು ಉತ್ತರ ನೀಡಿ’’ ಎಂದರು. ಪ್ರತ್ಯುತ್ತರ ನೀಡಿದ ದೇವರಾಜ ಅರಸು ಅವರು ‘‘ನಿಮ್ಮ ಪಕ್ಷ (ಸಿಪಿಐ) ಅಧಿಕಾರಕ್ಕೆ ಬಂದಾಗ ಪೊಲೀಸ್ ಇಲಾಖೆಯನ್ನು ಇಟ್ಟುಕೊಳ್ಳಬೇಡಿ. ಇಲಾಖೆಯನ್ನು ರದ್ದು ಮಾಡಿಬಿಡಿ’’ ಎಂದು ವ್ಯಂಗ್ಯವಾಗಿ ಹೇಳಿದರು. ತಕ್ಷಣ ಎದ್ದು ನಿಂತ ವಾಟಾಳ್ ನಾಗರಾಜರು ‘‘ಎಲ್ಲಿಯವರೆಗೆ ಸಮಾಜವಾದದ ಸುಳ್ಳು ಘೋಷಣೆ ನಡೆಯುತ್ತಿರುತ್ತದೋ ಅಲ್ಲಿಯವರೆಗೆ ನೀವೇ ಅಧಿಕಾರದಲ್ಲಿರುತ್ತೀರಿ. ಅಸಲೀ ಸಮಾಜವಾದಿಗಳು ಅಧಿಕಾರಕ್ಕೆ ಬರಲಾಗಲ್ಲ’’ ಎನ್ನುತ್ತಾರೆ. ಇವೆಲ್ಲವೂ ಉದಾಹರಣೆ ಮಾತ್ರ. ಇಂತಹ ನೂರಾರು ಘಟನೆಗಳ ಸಾವಿರಾರು ಪುಟಗಳ ಪುಸ್ತಕವನ್ನೇ ಬರೆಯಬಹುದು. ಹೀಗೆ ಒಂದು ಕಡೆ ಕೋಮುವಾದಿಗಳು, ಇನ್ನೊಂದೆಡೆ ಕಾಂಗ್ರೆಸ್ (ಒ) ಗುಂಪು ಮತ್ತೊಂದೆಡೆ ಅತ್ಯುಗ್ರ ಸ್ವರೂಪದಲ್ಲಿದ್ದ ಕಾರ್ಮಿಕ-ಎಡ-ದಲಿತ ಚಳವಳಿಗಳನ್ನು ದೇವರಾಜ ಅರಸರು ಎದುರಿಸಬೇಕಿತ್ತು. ಅದಲ್ಲದೆ, ದೇವರಾಜ ಅರಸರ ಕಾಲದಲ್ಲಿ ಪ್ರತಿಪಕ್ಷದ ನಾಯಕರಾಗಿದ್ದವರು ಎಸ್. ಬಂಗಾರಪ್ಪ ಎಂಬ ಬೆಂಕಿ ಚೆಂಡು. ಅರಸರು ಕೂತರೂ, ನಿಂತರೂ ಸೈದ್ಧಾಂತಿಕ ಸ್ಪಷ್ಟತೆಯಿಂದ ವಿರೋಧಿಸುವ ಬಂಗಾರಪ್ಪರಂತಹ ಇನ್ನೊಬ್ಬ ವಿರೋಧ ಪಕ್ಷದ ನಾಯಕನನ್ನು ರಾಜ್ಯ ಕಂಡಿಲ್ಲ. ಬಂಗಾರಪ್ಪ ಮತ್ತು ದೇವರಾಜ ಅರಸು ಅವರು ಸದನದಲ್ಲಿ ನಡೆಸಿದ ಸಂಘರ್ಷಗಳನ್ನು ಓದುವಾಗಲೇ ನಾವು ದಂಗಾಗಿ ಹೋಗುತ್ತೇವೆ. ಬಂಗಾರಪ್ಪ, ಎಚ್.ಡಿ. ದೇವೇಗೌಡ, ಸಿಪಿಐ, ಸಿಪಿಐಎಂ, ಕನ್ನಡ ಚಳವಳಿ, ರೈತ ಸಂಘದ ಘಟಾನುಘಟಿ ಶಾಸಕ ವಿರೋಧಗಳ ಮಧ್ಯೆ ಅವರೆಲ್ಲರೂ ಒಪ್ಪುವ ದಲಿತ-ಹಿಂದುಳಿದ-ಅಲ್ಪಸಂಖ್ಯಾತರ ಪರವಾಗಿನ ಯೋಜನೆಗಳನ್ನು ಜಾರಿಗೆ ತರಬೇಕಿತ್ತು. ಇಂತಹ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಎದುರಿಸಿದ್ದಾರೆಯೇ ? ಸಿದ್ದರಾಮಯ್ಯರಿಗೆ ಈ ಸಮಾಜದ ಪ್ರಜ್ಞಾವಂತರು, ಸಾಹಿತಿ, ಚಿಂತಕರು, ಜಾತ್ಯತೀತ ಪಕ್ಷಗಳು, ರೈತ-ಕನ್ನಡ ಸಂಘಟನೆಗಳು, ಜಾತಿ ಎಲ್ಲಾ ಬೆಂಬಲ ಇದ್ದು ಅವರಿಗೊಂದು ‘ಕಂಫರ್ಟ್ ರೆನ್’ ಸೃಷ್ಟಿಸಿಕೊಟ್ಟಿದೆ. ಕೋಮುವಾದವನ್ನು ಏಕಾಂಗಿಗೊಳಿಸಿ ಸಿದ್ದರಾಮಯ್ಯರಿಗೆ ಬಲ ತುಂಬಿದರೂ ಬಹುಸಂಖ್ಯಾತ ದಲಿತ-ಅಲ್ಪಸಂಖ್ಯಾತ-ಹಿಂದುಳಿದವರ ಪರ ಕೆಲಸ ಮಾಡಲಾಗುತ್ತಿಲ್ಲ ಎಂದರೆ ಅದು ವೈಫಲ್ಯವಲ್ಲದೆ ಇನ್ನೇನೂ ಅಲ್ಲ. ಈ ವೈಫಲ್ಯವನ್ನು ‘ಕಾಲ’ದಲ್ಲಿ ಮರೆಮಾಚುವಂತಿಲ್ಲ. ದೇವರಾಜ ಅರಸರ ಸಂಕಟದ ಕಾಲವನ್ನು ಸಿದ್ದರಾಮಯ್ಯನವರ ಕಂಫರ್ಟ್ ರೆನ್‌ಗೆ ಹೋಲಿಸುವುದೇ ವಾಸ್ತವವನ್ನು ದಾರಿ ತಪ್ಪಿಸುವ ಪ್ರಕ್ರಿಯೆಯಾಗಿದೆ.

ವಾರ್ತಾ ಭಾರತಿ 17 Jan 2026 2:26 pm

ಮುಂಬಯಿ ಮೇಯರ್‌ಗಾಗಿ ಬಿಜೆಪಿ ಮತ್ತು ಶಿಂಧೆ ಶಿವಸೇನೆ ನಡುವೆ ಸ್ಪರ್ಧೆ? ʻಠಾಕ್ರೆ ಲೆಗೆಸಿʼ ಹೆಸರಲ್ಲಿ ಉದ್ಧವ್‌ ಕಡೆ ನೋಡ್ತಾರಾ ಏಕನಾಥ್‌?

ಬರೋಬ್ಬರಿ 25 ವರ್ಷಗಳ ಕಾಲ ಏಕೀಕೃತ ಶಿವಸೇನೆಯ ಹಿಡಿತದಲ್ಲಿದ್ದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ನಲ್ಲಿ, ಇನ್ನು ಮುಂದೆ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ)ಯ ಆಡಳಿತ ಶುರುವಾಗಲಿದೆ. ಬಿಎಂಸಿ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಮಹಾಯುತಿ ಮೈತ್ರಿಕೂಟದಲ್ಲಿ, ಮುಂಬಯಿ ಮೇಯರ್‌ ಪಟ್ಟಕ್ಕಾಗಿ ಸ್ಪರ್ಧೆ ಏರ್ಪಡುವ ಸಾಧ್ಯತೆ ಇಲ್ಲದಿಲ್ಲ. ಮೇಯರ್‌ ಪಟ್ಟ ಗಳಿಸಲು ಬಾಳ್‌ ಠಾಕ್ರೆ ಪರಂಪರೆಯನ್ನು ಮುನ್ನೆಲೆಗೆ ತಂದಿರುವ ಶಿವಸೇನೆ ಶಿಂಧೆ ಬಣ, ಬಿಜೆಪಿಗೆ ತಲೆನೋವು ತಂದಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 17 Jan 2026 2:23 pm

ಇರಾನ್ ಪ್ರತಿಭಟನೆಯ ಭಯಾನಕತೆ ಬಿಚ್ಚಿಟ್ಟ ಭಾರತೀಯ ಪ್ರಜೆಗಳು, ಆಪರೇಷನ್ ಸ್ವದೇಶ್ ಸಕ್ಸಸ್! Operation Swades

ನವದೆಹಲಿ: ಭಾರತೀಯರು ಇರಾನ್ ನೆಲದಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ನೋಡ ನೋಡುತ್ತಲೇ ಇಡೀ ಇರಾನ್ ಈಗ ಧಗಧಗ ಅಂತಿದೆ. ಹೀಗಿದ್ದಾಗ 10,000ಕ್ಕೂ ಹೆಚ್ಚು ಭಾರತೀಯರ ಪರಿಸ್ಥಿತಿ ಇರಾನ್ ನೆಲದಲ್ಲಿ ಅತಂತ್ರವಾಗಿತ್ತು. ಭಾರತ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇರಾನ್ ನೆಲದಿಂದ ಭಾರತೀಯರನ್ನು ಕರೆದುಕೊಂಡು ಬರಲು

ಒನ್ ಇ೦ಡಿಯ 17 Jan 2026 2:21 pm

ʻಮೈತುಂಬಾ ಬಟ್ಟೆ ಧರಿಸ್ಬೇಕುʼ ಎಂದ ನಟನ ವಿರುದ್ಧ ನಟಿ ಕಿಡಿ; ಆಂಟಿ ಎಂದು ಟೀಕೆ, ಬೆದರಿಕೆ ಕರೆ ಮಾಡಿದವರ ವಿರುದ್ಧ ಅನಸೂಯ ಮಾಡಿದ್ದಿಷ್ಟು

ಹೆಣ್ಣುಮಕ್ಕಳು ಮೈತುಂಬಾ ಬಟ್ಟೆ ಧರಿಸಿದರೆ ಮಾತ್ರ ಪುರುಷರುನೋಡ್ತಾರೆ ಎಂದು ಸಿನಿಮಾವೊಂದರ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ನಟ ಶಿವಾಜಿ ಅವರು ಮಾತನಾಡಿ, ಟ್ರೋಲ್‌ಗೆ ಒಳಗಾಗಿದ್ದರು. ಅವರ ಈ ಹೇಳಿಕೆ ಖಂಡಿಸಿ, ನಟಿ ಅನಸೂಯಾ ಅವರು ಪೋಸ್ಟ್‌ ಹಂಚಿಕೊಂಡಿದ್ದರು. ಅವರ ಈ ಹೇಳಿಕೆ ನಂತರ ಸಾಕಷ್ಟು ಜನರು ಅವರ ವಿರುದ್ಧ ಟೀಕೆ ಮಾಡಿ, ಕಾಮೆಂಟ್ ಮಾಡಿದ್ದರು. ಆಂಟಿ ಎಂದು ಹೀಗೆಳೆದಿದ್ದರು ಅವರು ಸದ್ಯ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ಕೊಟ್ಟು, ಟ್ರೋಲರ್ಸ್‌ ವಿರುದ್ಧ ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿದ್ದರು.

ವಿಜಯ ಕರ್ನಾಟಕ 17 Jan 2026 2:21 pm

ಸರಳತೆ, ಸಚ್ಚಾರಿತ್ರ್ಯ, ಸರ್ವಧರ್ಮ ಸಮಭಾವದ ಜೀವನಶೈಲಿಯಿಂದಾಗಿ ಬೀದರ್ ಜನರ ಮೆಚ್ಚಿನ ಬಾಬಾ ಎನಿಸಿಕೊಂಡಿದ್ದ 'ಭೀಮಣ್ಣ ಖಂಡ್ರೆ'

ಬೀದರ್ ಜಿಲ್ಲೆಯ ಹೆಮ್ಮೆಯ ಪುತ್ರ, ಭೀಮಣ್ಣ ಖಂಡ್ರೆ ಅವರ ಬದುಕಿನ ಹಾದಿ, ಸಾಧನೆಗಳ ಕಿರುನೋಟ. ಸರಳತೆಯ ಮೂರ್ತಿ, ಸಜ್ಜನಿಕೆಯ ಪ್ರತೀಕ, ನ್ಯಾಯಕ್ಕಾಗಿ ಧ್ವನಿ ಎತ್ತಿದ ಧೀಮಂತ. ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಅವರ ಕೊಡುಗೆ ಅಪಾರ. ಶಾಸಕರಾಗಿ, ಸಚಿವರಾಗಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದವರು. ರೈತರ ಕಣ್ಮಣಿಯಾಗಿ, ನಿರ್ಭೀತಿಯ ರಾಜಕಾರಣಿಯಾಗಿ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಅವರ ಕಾರ್ಯಗಳು ನಿಜಕ್ಕೂ ಅನನ್ಯ.

ವಿಜಯ ಕರ್ನಾಟಕ 17 Jan 2026 2:18 pm

ಸೂರಿಕುಮೇರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಾಸಿಂಗ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸೂರಿಕುಮೇರು ಜಂಕ್ಷನ್ ಸಮೀಪ ಸೂಕ್ತ ರಸ್ತೆ ವಿಭಜಕ (ಕ್ರಾಸಿಂಗ್) ಒದಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬರಿಮಾರು ಮಹಮ್ಮಾಯಿ ದೇವಸ್ಥಾನ, ಸೂರಿಕುಮೇರು ಬದ್ರಿಯಾ ಜುಮಾ ಮಸೀದಿ ಹಾಗೂ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಕ್ರಾಸಿಂಗ್ ಇಲ್ಲದ ಕಾರಣ, ಬರಿಮಾರು–ಸರಪಾಡಿ, ಸೂರಿಕುಮೇರು–ಕೋರ್ಯ ಸೇರಿದಂತೆ ಹಲವು ಒಳರಸ್ತೆಗಳ ಸಂಪರ್ಕ ಕಷ್ಟಕರವಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕ್ರಾಸಿಂಗ್ ಇಲ್ಲದ ಹಿನ್ನೆಲೆಯಲ್ಲಿ ಒಂದೆರಡು ಕಿಲೋಮೀಟರ್ ಸುತ್ತಿ ಹೋಗಿ ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಳೀರದಿಂದ ಸೂರಿಕುಮೇರುವರೆಗೆ ಸೂಕ್ತ ಸ್ಥಳದಲ್ಲಿ ಕ್ರಾಸಿಂಗ್ ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಮಸ್ಯೆಯನ್ನು ಒಂದು ತಿಂಗಳೊಳಗೆ ಪರಿಹರಿಸದಿದ್ದಲ್ಲಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಆಳ್ವ, ಮೆಲ್ವಿನ್ ಕಿಶೋರ್ ಮಾರ್ಟಿಸ್ ಸೇರಿದಂತೆ ಪ್ರಮುಖರಾದ ಹಸೈನಾರ್ ಸಂಕ, ಕೃಷ್ಣಪ್ಪ, ವಸಂತ, ರೋನಿ ಬೋನಿಸ್, ಸತೀಶ್ ಪ್ರಭು, ಲಕ್ಷ್ಮೀನಾರಾಯಣ, ಹನೀಫ್ ಸಂಕ, ಮುಜೀಬ್ ಮತ್ತಿತರರು ಹಾಗೂ ನೂರಾರು ಸ್ಥಳೀಯ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಮುಖಂಡರು ಹಾಗೂ ನಾಗರಿಕರು ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಕಾಮಗಾರಿ ಇಲಾಖೆಯ ಇಂಜಿನಿಯರ್‌ಗಳಾದ ಬಿನೋದ್ ಮತ್ತು ಚಿದಾನಂದ ಅವರು ಮನವಿ ಸ್ವೀಕರಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ವಾರ್ತಾ ಭಾರತಿ 17 Jan 2026 2:17 pm

ನಾಳೆ ಕೊಡಾಜೆಯಲ್ಲಿ ರಾಜ್ಯ ಮಟ್ಟದ ದಫ್ ಸ್ಪರ್ಧೆ

ನೂತನ ಕಚೇರಿ ಉದ್ಘಾಟನೆ ►ಸನ್ಮಾನ ಹಾಗೂ ಐಕ್ಯತಾ ಜಸ್ನೆ–2026

ವಾರ್ತಾ ಭಾರತಿ 17 Jan 2026 2:12 pm

ಪತ್ರಕರ್ತ ಸೈಯದ್ ನಯೀಮ್ ಅಶ್ರಫ್ ನಿಧನ

ರಾಯಚೂರು: ನಗರದ ಪ್ರಸಿದ್ಧ ದರ್ಗಾ ಹಜರತ್ ಸೈಯದ್ ಶಂಸ್‌ ಆಲಂ ಹುಸೇನಿ (ರಹಮತುಲ್ಲಾ ಅಲೈಹಿ) ಅವರ ಕುಟುಂಬದ ಪ್ರಮುಖರು ಹಾಗೂ ಪತ್ರಕರ್ತರಾಗಿದ್ದ ಸೈಯದ್ ನಯೀಮ್ ಅಶ್ರಫ್ ಹುಸೇನಿ (48) ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನರಾದರು. ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಅವರು ಹಲವು ಸುದ್ದಿವಾಹಿನಿಗಳು ಹಾಗೂ ಉರ್ದು ದಿನಪತ್ರಿಕೆಗಳಿಗೆ ಸೇವೆ ಸಲ್ಲಿಸಿ, ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಇಂದು ಸಂಜೆ 6.30ಕ್ಕೆ ‌ ಸೈಯದ್ ಶಂಸ್‌ ಆಲಂ ಹುಸೇನಿ ಖಬರ್ ಸ್ಥಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 17 Jan 2026 2:08 pm

ಬಳ್ಳಾರಿ ಫೈರಿಂಗ್‌ ನಲ್ಲಿ ಮೃತಪಟ್ಟ ರಾಜಶೇಖರ್ ಮನೆಗೆ ಭೇಟಿ, 10 ಲಕ್ಷ ಪರಿಹಾರ: ಸಿಬಿಐ ತನಿಖೆಗೆ ಬಿವೈ ವಿಜಯೇಂದ್ರ ಆಗ್ರಹ

ರಾಮುಲು ಅವರ ವೇಗ- ಜನಾರ್ಧನ ರೆಡ್ಡಿಯವರ ಶಕ್ತಿ, ಬಿರುಗಾಳಿ ಮತ್ತು ಬೆಂಕಿಯಂತೆ ಎಂದು ಅವರು ನುಡಿದರು. ಇದೇ ಕಾರಣಕ್ಕಾಗಿ ಬಳ್ಳಾರಿಯಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿಸಿದರು. ಅವರ ಬಳಿ ಎಷ್ಟು ಗುಂಡಿದೆಯೋ ನಾವೂ ನೋಡೋಣ ಎಂದು ಸವಾಲು ಹಾಕಿದರು. ಅವರೆಷ್ಟೇ ಗುಂಡು ಹೊಡೆದರೂ ನಮ್ಮ ಶಕ್ತಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ಹುಬ್ಬಳ್ಳಿಯಲ್ಲಿ ಪೊಲೀಸರು ದಲಿತ ಹೆಣ್ಮಗಳ ಬಟ್ಟೆ ತೆಗೆದಿದ್ದಾರೆ. ಅವರೇ ತೆಗೆದಿದ್ದಾರೆಂದು ಕಮೀಷನರ್ ಸುಳ್ಳು ಕಟ್ಟು ಕಥೆ ಹೇಳಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ವಿಜಯ ಕರ್ನಾಟಕ 17 Jan 2026 2:04 pm

ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ ಕಾರ್ಯಕ್ರಮ

ಪಕ್ಷಿಗಳು ಉತ್ತಮ ಪರಿಸರದ ಸಂಕೇತ: ರಾಜೇಶ್ ನಾಯಕ್

ವಾರ್ತಾ ಭಾರತಿ 17 Jan 2026 2:04 pm

ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ತಮಿಳುನಾಡು ವಿರುದ್ದ ಕರ್ನಾಟಕ ತಂಡಕ್ಕೆ ಜಯ

ಸಿದ್ದಯ್ಯನಪುರದ ವಿದ್ಯಾರ್ಥಿಯ ಸಾಧನೆ

ವಾರ್ತಾ ಭಾರತಿ 17 Jan 2026 2:01 pm