ಫೆಬ್ರವರಿ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 20) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ನಿರ್ಬಂಧಿತ ಪ್ರದೇಶದಲ್ಲಿ ನಮಾಝ್ ಮಾಡಿದ ಆರೋಪ: ವಿದ್ಯಾರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು
ಅಲಹಾಬಾದ್: ಸ್ಥಳೀಯಾಡಳಿತ ನಿಯೋಜಿಸಿದ ಸ್ಥಳದಲ್ಲಿ ನಮಾಝ್ ಮಾಡಿದ ಇಬ್ಬರು ವಿದ್ಯಾರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರನ್ನೊಳಗೊಂಡ ನ್ಯಾಯಪೀಠ, ಭವಿಷ್ಯದಲ್ಲಿ ಸ್ಥಳೀಯಾಡಳಿತ ನೀಡುವ ಸೂಚನೆಯನ್ನು ಮತ್ತು ನಿರ್ದಿಷ್ಟ ನಿರ್ಬಂಧಗಳನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿ, ಅಪರಾಧ ಪ್ರಕರಣ ಪ್ರಕ್ರಿಯೆಯನ್ನು ರದ್ದುಪಡಿಸಿದೆ. ಇಬ್ಬರು ಅರ್ಜಿದಾರರನ್ನು ಭಾರತೀಯ ದಂಡಸಂಹಿತೆಯ ಸೆಕ್ಷನ್ 143 ಮತ್ತು 188ರ ಅಡಿ ಅಪರಾಧ ಎಸಗಿದ ಆರೋಪದಲ್ಲಿ ಸಿಲುಕಿಸಿ ಎಫ್ಐಆರ್ ದಾಖಲಿಸಲಾಗಿತ್ತು. ಸಂತ ಕಬೀರ ನಗರದ ಕೋರ್ಟ್ ಈ ಅಪರಾಧವನ್ನು ಪರಿಗಣಿಸಿ, 2019ರ ಮೇ ತಿಂಗಳಲ್ಲಿ ಇವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಅರ್ಜಿದಾರರ ಮೇಲೆ ಯಾವುದೇ ಅಪರಾಧ ಚಟುವಟಿಕೆಗಳ ಇತಿಹಾಸ ಇಲ್ಲ ಹಾಗೂ ಇಬ್ಬರೂ ಕೇವಲ ವಿದ್ಯಾರ್ಥಿಗಳು ಎಂದು ಅರ್ಜಿದಾರರ ಪರ ವಕೀಲ ಅನಿಲ್ ಶ್ರೀವಾಸ್ತವ ವಾದ ಮಂಡಿಸಿದ್ದರು. ತಮ್ಮದೇ ಶ್ರದ್ಧೆ ಹಾಗೂ ನಂಬಿಕೆಯಡಿ ಪ್ರಾರ್ಥನೆ ಸಲ್ಲಿಸಲು ನಿರ್ಬಂಧ ವಿಧಿಸಿದ ಆಧಾರದಲ್ಲಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು. ಮೊದಲ ಅರ್ಜಿದಾರ ಉನ್ನತ ದರ್ಜೆಯ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಯಾಗಿದ್ದು, ಇಂಥ ಕ್ಷುಲ್ಲಕ ಅಪರಾಧಗಳಲ್ಲಿ ಸಿಲುಕಿಸುವ ಪ್ರಕ್ರಿಯೆ ಆತನ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನ್ಯಾಯಪೀಠ ಇಡೀ ಪ್ರಕ್ರಿಯೆ ರದ್ದುಪಡಿಸಲು ಆದೇಶಿಸಿದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೆಲ ಪ್ರದೇಶಗಳಲ್ಲಿ ನಮಾಝ್ ಕೈಗೊಳ್ಳದಂತೆ ನಿರ್ಬಂಧ ವಿಧಿಸಿದ್ದರೂ, ಉದ್ದೇಶಪೂರ್ವಕವಾಗಿ ನಮಾಝ್ ಮಾಡಲಾಗಿದೆ. ಸ್ಥಳೀಯಾಡಳಿತದ ನಿರ್ಬಂಧವನ್ನು ಉಲ್ಲಂಘಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್, ಎಫ್ಐಆರ್ ಹಾಗೂ ಸಮನ್ಸ್ ಆದೇಶ ರದ್ದುಪಡಿಸುವಂತೆ ಆದೇಶ ನೀಡಿತು.
ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಎಸ್ಪಿ ತಲೆಗೆ ಗಾಯ, ನಿಷೇಧಾಜ್ಞೆ ಜಾರಿ!
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ, ಕಿಡಿಗೇಡಿಗಳು ಶಿವಾಜಿ ಭಾವಚಿತ್ರದ ಮೇಲೆ ಚಪ್ಪಲಿ ಎಸೆದು ಕಲ್ಲು ತೂರಾಟ ನಡೆಸಿದ್ದಾರೆ. ಶಾಂತವಾಗಿ ಸಾಗುತ್ತಿದ್ದ ಮೆರವಣಿಗೆ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಲಾಗಿದ್ದು, ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಅವರ ತಲೆಗೆ ಪೆಟ್ಟು ಬಿದ್ದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ನಾರಾಯಣನ ಮಹಿಮೆಗಳನ್ನು ಸಾರುವ ಪುರಂದರದಾಸರ ವಿಶೇಷ ರಚನೆ: ಹಾಡು ಹಳತು ಭಾವ ನವೀನ ಸಂಚಿಕೆ- 125
ಪುರಂದರ ದಾಸರ ಕೀರ್ತನೆಗಳಲ್ಲಿ ವಿಶೇಷವಾದ ಮಹಾವಿಷ್ಣುವಿನ ದಶಾವತಾರಗಳ ಬಗ್ಗೆ ರಚಿಸಿದ ಕೀರ್ತನೆಯ ಭಾವಾರ್ಥವನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ವಿವರಿಸಿದ್ದಾರೆ ನೋಡಿ.
ಭಾರತದ ಅಕ್ಕಿಗೆ ವಿಶ್ವಸಂಸ್ಥೆ ಫಿದಾ: 5ವರ್ಷಗಳ ಐತಿಹಾಸಿಕ MoU - ರೈತರ ಪಾಲಿಗೆ ಶುಕ್ರದೆಸೆಯ ಅಧ್ಯಾಯ
India and United Nation MoU: ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ದಿನದಿಂದ ದಿನಕ್ಕೆ ಜಾಗತಿಕ ಮಟ್ಟದಲ್ಲಿ ದಾಪುಗಾಲು ಹಾಕುತ್ತಿರುವ ಭಾರತ, ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ವರ್ಷಕ್ಕೆ ಎರಡು ಲಕ್ಷ ಮೆಟ್ರಿಕ್ ಟನ್ ಅಕ್ಕಿ ರಫ್ತು ಒಪ್ಪಂದ ಇದಾಗಿದೆ.
ಶಕ್ತಿ ಯೋಜನೆ: ಜನವರಿ ಅಂತ್ಯಕ್ಕೆ 17,088.33 ಕೋಟಿ ರೂ. ವೆಚ್ಚ
ಸರಕಾರದಿಂದ 12,632.11 ಕೋಟಿ ರೂ. ಮರು ಪಾವತಿ, 4,456.22 ಕೋಟಿ ರೂ. ಬಾಕಿ
ಜಗತ್ತು ಕೃತಕ ಬುದ್ಧಿಮತ್ತೆಗೆ ತೆರೆದುಕೊಳ್ಳುತ್ತಿರುವ ದಿನಗಳಲ್ಲಿ ಭಾರತ ಅದರ ನಾಯಕತ್ವವನ್ನು ವಹಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಿದೆ. ಅದರ ಭಾಗವಾಗಿಯೇ ರಾಷ್ಟ್ರ ರಾಜಧಾನಿಯಲ್ಲಿ ಎಐ ಇಂಪ್ಯಾಕ್ಟ್ ಶೃಂಗ ಸಭೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಎಐಯು ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿ ತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾರತವು ಎಐ ತಂತ್ರಜ್ಞಾನದ ಯುಗದ ಮುಂಚೂಣಿಯಲ್ಲಿರಬೇಕಾದುದು ಅತ್ಯಗತ್ಯವಾಗಿದೆ. ಅದಕ್ಕೆ ಅಗತ್ಯವಿರುವ ಪ್ರತಿಭೆಗಳು ಮತ್ತು ಪೂರಕವಾಗಿರುವ ಇನ್ನಿತರ ಸಂಪನ್ಮೂಲಗಳು ಭಾರತದಲ್ಲಿ ವೆ. ಆದರೆ ಅವನ್ನು ಬಳಸಿ ಈ ದೇಶವನ್ನು ಆಧುನಿಕತೆಯೆಡೆಗೆ ಮುನ್ನಡೆಸುವ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಗಂಜಲ ಮತ್ತು ವಿಜ್ಞಾನವನ್ನು ಜೊತೆಯಾಗಿ ಕೊಂಡೊಯ್ಯುವ ರಾಜಕೀಯ ನಾಯಕರ ವಿರೋಧಾಭಾಸಗಳು ಭಾರತವನ್ನು ವಿಶ್ವದ ಮುಂದೆ ಪದೇ ಪದೇ ತಲೆತಗ್ಗಿಸುವಂತೆ ಮಾಡುತ್ತಿದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನುಗ್ಗಲು ಈ ವಿರೋಧಾಭಾಸ ನೀತಿಗಳೇ ಬಹುದೊಡ್ಡ ಅಡ್ಡಿಯಾಗಿವೆ. ಅಗಾಧ ದತ್ತಾಂಶಗಳೇ ಭಾರತದ ಅತಿದೊಡ್ಡ ಆಸ್ತಿ. ಇವುಗಳನ್ನು ಬಳಸಿಕೊಂಡು ಭವಿಷ್ಯದಲ್ಲಿ ಎಐಯಲ್ಲಿ ಭಾರತ ಮುನ್ನುಗ್ಗಬೇಕಾಗಿದೆ. ಆದರೆ, ಇಂದು ಭಾರತದ ದತ್ತಾಂಶಗಳನ್ನೇ ಅಮೆರಿಕದಂತಹ ದೇಶಗಳಿಗೆ ಅಡವಿಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅದು ನಿಜವೇ ಆಗಿದ್ದರೆ, ಇಂದು ಎಐ ಶೃಂಗಸಭೆಯ ಹೆಸರಿನಲ್ಲಿ ಸಂಭ್ರಮಿಸುವ ಭಾರತದ ಈ ಸಂಭ್ರಮ ಹೆಚ್ಚು ಸಮಯ ಬಾಳಲಾರದು. ಭಾರತದ ದತ್ತಾಂಶಗಳ ಮೇಲೆ ಅಮೆರಿಕದಂತಹ ದೇಶಗಳು ನಿಯಂತ್ರಣ ಸಾಧಿಸಿದರೆ ಅದು ಭಾರತದ ಎಲ್ಲ ಕ್ಷೇತ್ರಗಳ ಮೇಲೂ ಅಪಾಯಕಾರಿ ಪರಿಣಾಮ ಬೀರಬಹುದು. ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಹೊತ್ತಿಗೆ ಭಾರತವು ವಿಜ್ಞಾನ, ತಂತ್ರಜ್ಞಾನಗಳಲ್ಲಿ ಪೂರ್ಣಪ್ರಮಾಣದಲ್ಲಿ ಸ್ವಂತಿಕೆಯನ್ನು ಸಾಧಿಸುತ್ತದೆ ಎಂಬ ನಿರೀಕ್ಷೆಯನ್ನು ಜನರು ಇಟ್ಟಿದ್ದರು. ಅದಕ್ಕೆ ಪುಷ್ಟಿಕೊಡುವಂತೆಯೇ ಮೇಕ್ ಇನ್ ಇಂಡಿಯಾದಂತಹ ಯೋಜನೆಗಳನ್ನೂ ಅವರು ಘೋಷಿಸಿದ್ದರು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಮೋದಿಯ ಮೇಕ್ ಇನ್ ಇಂಡಿಯಾ ಸಂಪೂರ್ಣ ವಿಫಲವಾಗಿದೆ. ಸ್ವದೇಶಿ ಉತ್ಪನ್ನಗಳ ಹೆಸರಿನಲ್ಲಿ ವಿದೇಶಿ ಕಂಪೆನಿಗಳು ಭಾರತವನ್ನು ಲೂಟಿ ಹೊಡೆಯುತ್ತಿವೆ. ಇತ್ತ ಸ್ವದೇಶಿ ಹೆಸರಿನಲ್ಲಿ ಭಾರತದೊಳಗೆ ಪತಂಜಲಿಯಂತಹ ನಕಲಿ ಬಾಬಾಗಳು ಸರಕಾರದ ಸವಲತ್ತುಗಳನ್ನು ಬಾಚಿಕೊಂಡಿದ್ದಾರೆ. ಸ್ವಾಮಿಗಳು, ಬಾಬಾಗಳು ಸರಕಾರದ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ನೆಹರೂ, ಇಂದಿರಾಗಾಂಧಿಯಂತಹ ಹಿರಿಯ ನಾಯಕರು ನಿರ್ಮಿಸಿದ ಅಪ್ಪಟ ಭಾರತೀಯ ಸಂಸ್ಥೆಗಳು ಕಳೆದ ಹತ್ತು ವರ್ಷಗಳಲ್ಲಿ ಹಿನ್ನಡೆ ಅನುಭವಿಸಿದ್ದು ಅದಾನಿ, ಅಂಬಾನಿಯಂತಹ ಉದ್ಯಮಿಗಳು ಆಕಾಶದೆತ್ತರ ಬೆಳೆದು ನಿಂತಿದ್ದಾರೆ. ಇಂತಹ ಹೊತ್ತಿನಲ್ಲಿ, ಎಐ ಇಂಪ್ಯಾಕ್ಟ್ ಶೃಂಗ ಸಭೆ ಎಷ್ಟರಮಟ್ಟಿಗೆ ಭಾರತಕ್ಕೆ ಪೂರಕವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಭಾರತದ ಸಾಮಾಜಿಕ ವಲಯಗಳ ಮೇಲೆ ತನ್ನ ನಿಯಂತ್ರಣಗಳನ್ನು ಸಾಧಿಸಿಕೊಳ್ಳಲು ವಿದೇಶಿ ಕಂಪೆನಿಗಳು ಈ ಶೃಂಗಸಭೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿವೆೆ ಎನ್ನುವುದು ಹುರುಳಿಲ್ಲದ ಆರೋಪವೇನೂ ಅಲ್ಲ. ಇದೇ ಸಂದರ್ಭದಲ್ಲಿ ಈ ಎಐ ಇಂಪ್ಯಾಕ್ಟ್ ಶೃಂಗಸಭೆಯ ಹತ್ತು ಹಲವು ಅವ್ಯವಸ್ಥೆಗಳು, ಸೃಷ್ಟಿಯಾದ ಗೊಂದಲಗಳು ಭಾರತದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಿವೆ. ಮೊದಲ ದಿನವೇ ಸ್ಟಾಲ್ಗಳಲ್ಲಿ ಕೇಳಿ ಬಂದ ಕಳ್ಳತನಗಳ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಯಿತು. ಎಐಯಲ್ಲಿ ಮುಖ್ಯವಾಗಿ ವಿಜ್ಞಾನಿಗಳು, ತಂತ್ರಜ್ಞಾನಿಗಳು, ಅನ್ವೇಷಕರಿಗೆ ಆದ್ಯತೆ ನೀಡಬೇಕಾಗಿತ್ತು. ಆದರೆ ಉದ್ಯಮಿಗಳು ಮತ್ತು ರಾಜಕಾರಣಿಗಳೇ ವಿಜೃಂಭಿಸಿದರು. ಈ ಸಂದರ್ಭದಲ್ಲಿ ಅನ್ವೇಷಕರಿಗೆ ಬೇಕಾಗಿದ್ದ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಎಐ ಜ್ಞಾನವಿಲ್ಲದ ಅಧಿಕಾರಿಗಳು, ಮಧ್ಯವರ್ತಿಗಳು, ಕನ್ಸಲ್ಟೆಂಟ್ಗಳ ಮುಂದೆ ಅಸಲಿ ಸಂಶೋಧಕರು ಬಾಯಿಯಿಲ್ಲದೆ ಮೂಕರಾಗಬೇಕಾಯಿತು. ಭಾರತದ ಎಐ ಸಂಶೋಧನೆಗಳು ಸುದ್ದಿಯಾಗಬೇಕಾದ ಜಾಗದಲ್ಲಿ ಗಲ್ಗೋಟಿಯಾಸ್ ವಿವಿಯ ನಕಲಿ ಸಂಶೋಧನೆಗಳು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾದವು. ಇಂತಹ ಹಲವು ‘ಗಲ್ಗೋಟಿಯಾಸ್’ಗಳು ಈ ಸಭೆಯಲ್ಲಿ ನಿಜವಾದ ಪ್ರತಿಭೆಗಳ ಅವಕಾಶಗಳನ್ನು ನುಂಗಿ ಹಾಕಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಚೀನಾ ನಿರ್ಮಿತ ರೋಬೊಟ್ನ್ನು ತಾನೇ ಅಭಿವೃದ್ಧಿಪಡಿಸಿದ್ದಾಗಿ ಮಾಧ್ಯಮಗಳ ಮುಂದೆ ಹೇಳಿ ಭಾರತವನ್ನು ವಿಶ್ವದ ಮುಂದೆ ತಲೆತಗ್ಗಿಸುವಂತೆ ಈ ವಿಶ್ವವಿದ್ಯಾನಿಲಯ ಮಾಡಿತು. ವಿವಾದಿತ ರೋಬೊಟ್ ಯುನಿಟ್ರೀ ಗೋ 2 ಆಗಿದ್ದು ಇದನ್ನು ಚೀನಾ ಕಂಪೆನಿ ತಯಾರಿಸಿದೆ. ಭಾರತದಲ್ಲಿ ಇದನ್ನು ಆನ್ಲೈನ್ನಲ್ಲಿ ಸುಮಾರು 2 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಗಲ್ಗೋಟಿಯಾಸ್ ವಿವಿಯು ಇದಕ್ಕೆ ‘ಓರಿಯನ್’ ಎಂದು ಹೆಸರಿಟ್ಟು ತನ್ನ ವಿಶ್ವವಿದ್ಯಾನಿಲಯದ ಸಂಶೋಧನೆ ಎಂದು ಹೇಳಿಕೊಂಡು ನಗೆ ಪಾಟಲಿಗೀಡಾಯಿತು. ಅಷ್ಟೇ ಅಲ್ಲ, ದಕ್ಷಿಣ ಕೊರಿಯಾದ ಸಾಕರ್ಡ್ರೋನ್ನ್ನು ತಾನೇ ನಿರ್ಮಿಸಿರುವುದಾಗಿ ಹೇಳಿ ಅದರಲ್ಲೂ ಗೋಲ್ಮಾಲ್ ನಡೆಸಿ ಸಿಕ್ಕಿ ಬಿದ್ದಿದೆ. ಇದೀಗ ನೋಡಿದರೆ ಈ ವಿಶ್ವವಿದ್ಯಾನಿಲಯದ ಈ ಗೋಲ್ಮಾಲ್ ಆಕಸ್ಮಿಕ ಏನೂ ಅಲ್ಲ. ಈ ಗೋಲ್ಮಾಲ್ನ ಹಿಂದೆ ಸರಕಾರದ ಕೊಡುಗೆಯೂ ಸಾಕಷ್ಟಿದೆ ಎನ್ನುವುದು ಬೆಳಕಿಗೆ ಬರುತ್ತಿದೆ. 2011ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಶ್ವವಿದ್ಯಾನಿಲಯವನ್ನು ಸಾಕಿ ಬೆಳೆಸಿದ್ದೇ ಮೋದಿ ನೇತೃತ್ವದ ಸರಕಾರ. 2015ರಲ್ಲಿ ಈ ವಿಶ್ವವಿದ್ಯಾನಿಲಯ ಕೇಂದ್ರ ಸರಕಾರದಿಂದ ‘ಎಕ್ಸೆಲೆನ್ಸಿ ಇನ್ ಅಕಾಡಮೀಸ್’ಗೆ ಭಾಜವಾಯಿತು. ಕೊರೋನ ಕಾಲದಲ್ಲಿ ಇದೇ ವಿಶ್ವವಿದ್ಯಾನಿಲಯದ ಸಂಶೋಧಕನೊಬ್ಬ ‘ತಟ್ಟೆ ಲೋಟ ಬಡಿಯುವುದರಿಂದ ವೈರಸ್ನ್ನು ನಾಶ ಪಡಿಸಬಹುದು’ ಎನ್ನುವ ವಿಷಯದಲ್ಲಿ ಪ್ರಬಂಧ ಬರೆದು ಕುಖ್ಯಾತನಾಗಿದ್ದ. ಈ ವಿಶ್ವವಿದ್ಯಾನಿಲಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹಿರಂಗವಾಗಿ ಮೋದಿಯ ಪರವಾಗಿ ವಿದ್ಯಾರ್ಥಿಗಳಿಂದ ಪ್ರಚಾರ ಮಾಡಿಸಿತ್ತು. ಇಂತಹ ಹಿನ್ನೆಲೆಯಿರುವ ವಿಶ್ವವಿದ್ಯಾನಿಲಯದಿಂದ ಈ ದೇಶ ಇನ್ನೇನನ್ನು ನಿರೀಕ್ಷಿಸಬಹುದು? ಇಂದು ಈ ವಿಶ್ವವಿದ್ಯಾನಿಲಯ 3,000 ಕೋಟಿ ರೂಪಾಯಿಯ ಸೊತ್ತನ್ನು ಹೊಂದಿದೆ ಎನ್ನಲಾಗುತ್ತಿದ್ದು, ಸರಕಾರದಿಂದ ಇದು ಪಡೆದುಕೊಂಡಿರುವ ಸವಲತ್ತುಗಳು ತನಿಖೆಗೆ ಅರ್ಹವಾಗಿವೆ. ವಿಪರ್ಯಾಸವೆಂದರೆ, ಇಂತಹ ಗಲ್ಗೋಟಿಯಾಸ್ಗಳು ಭಾರತದಲ್ಲಿ ನೂರಾರಿವೆ. ಸ್ವದೇಶಿ ಉತ್ಪನ್ನದ ಹೆಸರಿನಲ್ಲಿ ಪತಂಜಲಿಯಂತಹ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿಗಳ ಸಬ್ಸಿಡಿಗಳನ್ನು ಸರಕಾರದಿಂದ ಪಡೆದಿವೆೆ. ನೂರಾರು ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ತನ್ನದಾಗಿಸಿವೆೆ. ಸರಕಾರಿ ಆಸ್ಪತ್ರೆಗಳಿಗೆ, ಅಲೋಪತಿ ಔಷಧಿಗಳಿಗೆ ಬಳಕೆಯಾಗಬೇಕಾದ ಸಾವಿರಾರು ಕೋಟಿ ರೂಪಾಯಿಗಳನ್ನು ಆಯುಷ್ ಹೆಸರಿನಲ್ಲಿ ಇಂತಹ ಸಂಸ್ಥೆಗಳು ಲೂಟಿ ಹೊಡೆಯುತ್ತಿವೆ. ಕೊರೋನ ಕಾಲದಲ್ಲಿ ಪತಂಜಲಿಯು ‘ಕೊರೋನಕ್ಕೆ ಔಷಧಿ ಸಂಶೋಧನೆ’ ಮಾಡಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡಿತ್ತು. ಹಸುವಿನ ಸೆಗಣಿ ಬಳಸಿ ಕ್ಯಾನ್ಸರ್ಗೆ ಔಷಧಿ ಕಂಡು ಹುಡುಕಲು ಉತ್ತರ ಪ್ರದೇಶದ ಜಬಲ್ಪುರದಲ್ಲಿರುವ ವಿಶ್ವವಿದ್ಯಾನಿಲಯಕ್ಕೆ ಸರಕಾರ ಸುಮಾರು ಮೂರೂವರೆ ಕೋಟಿ ರೂಪಾಯಿಯನ್ನು ಸುರಿದಿತ್ತು. ಆದರೆ ಪರಿಣಾಮ ಮಾತ್ರ ಶೂನ್ಯ. ಇದೇ ಸಂದರ್ಭದಲ್ಲಿ ಇಸ್ರೋ ಸಿಬ್ಬಂದಿಯ ಕೋಟ್ಯಂತರ ರೂಪಾಯಿಯನ್ನು ಸರಕಾರ ಬಾಕಿ ಉಳಿಸಿದೆ. ವಿಜ್ಞಾನಿಗಳಿಗೆ, ಅವರ ಸಂಶೋಧನೆಗಳಿಗೆ ಅಗತ್ಯ ಹಣವನ್ನು ನೀಡಲು ಸರಕಾರ ವಿಫಲವಾಗುತ್ತಿದೆ. ಈ ಎಲ್ಲ ಕಾರಣಗಳಿಂದಲೇ ಚೀನಾದ ರೋಬೊಟ್ ನಾಯಿಗಳಿಂದ ಭಾರತ ಕಚ್ಚಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮೊದಲು ಇಂತಹ ಗಲ್ಗೋಟಿಯಾಸ್ಗಳ ನಕಲಿ ನಾಯಿಗಳಿಗೆ ವೆಚ್ಚ ಮಾಡುವುದನ್ನು ನಿಲ್ಲಿಸಿ ಸರಕಾರ ಅರ್ಹ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಣ ಒದಗಿಸಬೇಕಾಗಿದೆ. ಆಗ ನಿಜವಾದ ಅರ್ಥದಲ್ಲಿ ಭಾರತವು ಎಐ ಕ್ರಾಂತಿಯ ನಾಯಕನಾಗಿ ಹೊರಹೊಮ್ಮಬಹುದು.
ಶೇ 200ರ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರಿಂದ ಭಾರತ-ಪಾಕ್ ಯುದ್ಧ ಸ್ಥಗಿತ: ಟ್ರಂಪ್
ಹೊಸದಿಲ್ಲಿ: ಶಾಂತಿ ಸಂಧಾನ ಮಾತುಕತೆಗಾಗಿ ಸುಂಕ ಕೇಂದ್ರೀಕೃತ ದೃಷ್ಟಿಕೋನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ವಿಶ್ವಸಂಸ್ಥೆಯ ಚೌಕಟ್ಟನ್ನು ಹೋಲುವ ತಮ್ಮದೇ ಶೈಲಿಯ ಶಾಂತಿಮಂಡಳಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, 2025ರ ಮೇ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಸಂಘರ್ಷದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಯುದ್ಧ ಮುಂದುವರಿಸಿದರೆ ಉಭಯ ದೇಶಗಳ ಮೇಲೆ 200 ಶೇಕಡ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ಸಮ್ಮುಖದಲ್ಲೇ ಟ್ರಂಪ್ ಈ ವಿಚಾರ ಬಹಿರಂಗಪಡಿಸಿದರು. ಉಭಯ ದೇಶಗಳ ನಡುವಿನ ಯುದ್ಧ ನಿಲ್ಲಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ತಾವೇ ಹೊಗಳಿಕೊಂಡ ಟ್ರಂಪ್, ಇದನ್ನು ದೃಢೀಕರಿಸಲು ಶಾಂತಿ ಯತ್ನದ ಬಗೆಗಿನ ಷರೀಫ್ ಹೇಳಿಕೆಯನ್ನು ಉಲ್ಲೇಖಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸುವ ಮೂಲಕ 2.5 ಕೋಟಿ ಜನರ ಜೀವವನ್ನು ಟ್ರಂಪ್ ರಕ್ಷಿಸಿದರು ಎಂದು ಸಿಬ್ಬಂದಿ ಮುಖ್ಯಸ್ಥರ ಸಮ್ಮುಖದಲ್ಲೇ ಪಾಕಿಸತಾನದ ಪ್ರಧಾನಿ ಹೇಳಿಕೆ ನೀಡಿದ್ದಾರೆ..ಯುದ್ಧ ರಭಸದಿಂದ ನಡೆಯುತ್ತಿತ್ತು..ವಿಮಾನಗಳನ್ನು ಹೊಡೆದು ಉರುಳಿಸಲಾಗುತ್ತಿತ್ತು. ಇಬ್ಬರ ಜತೆಯೂ ದೂರವಾಣಿ ಸಂಭಾಷಣೆ ನಡೆಸಿದೆ. ಮೋದಿಯವರನ್ನು ನಾನು ಚೆನ್ನಾಗಿ ಬಲ್ಲೆ.. ಸಂಘರ್ಷ ಬಗೆಹರಿಸಿಕೊಳ್ಳದಿದ್ದರೆ ನಿಮ್ಮ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದಿಢೀರನೇ ಒಪ್ಪಂದ ಕುದುರಿತು. ನೀವು ಯುದ್ಧ ಮುಂದುವರಿಸಿದರೆ ಇಬ್ಬರ ದೇಶಗಳ ಮೇಲೂ ಶೇಕಡ 200ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಅವರಿಬ್ಬರೂ ಯುದ್ಧ ಮುಂದುವರಿಸಲು ಬಯಸಿದ್ದರು. ಆದರೆ ಹಣದ ವಿಚಾರ ಬಂದಾಗ, ಹಣಕ್ಕೆ ಸಮಾನ ಯಾವುದೂ ಇಲ್ಲ ಎಂದು ಟ್ರಂಪ್ ವಿವರಿಸಿದರು. ದೊಡ್ಡ ಪ್ರಮಾಣದ ಹಣ ನಷ್ಟವಾಗುವ ವಿಚಾರ ಬಂದಾಗ, ಯುದ್ಧ ಮುಂದುವರಿಸಲು ಬಯಸುವುದಿಲ್ಲ ಎನ್ನುವುದು ನನ್ನ ಭಾವನೆ. 11 ವಿಮಾನಗಳನ್ನು ಹೊಡೆದು ಉರುಳಿಸಲಾಗಿತ್ತು. ತೀರಾ ದುಬಾರಿ ವಿಮಾನಗಳು ಎಂದು ಬಣ್ಣಿಸಿದರು. ಜಾಗತಿಕ ಶಾಂತಿಯನ್ನು ಸ್ಥಾಪಿಸುವ ಉದ್ದೇಶದ ಶಾಂತಿ ಮಂಡಳಿಯ ಮೊದಲ ಸಭೆಯಲ್ಲಿ ಟ್ರಂಪ್ ಈ ಭಾಷಣ ಮಾಡಿದರು. ಭಾರತ ಸೇರಿದಂತೆ ಹಲವು ದೇಶಗಳಿಗೆ ಈ ಮಂಡಳಿಯ ಸದಸ್ಯತ್ವಕ್ಕೆ ಆಹ್ವಾನ ನೀಡಲಾಗಿದೆ. ಪಾಕಿಸ್ತಾನ ತಕ್ಷಣವೇ ಮಂಡಳಿಯ ಸದಸ್ಯತ್ವ ಪಡೆದಿದೆ. ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಲು ತಾವು ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ನೀಡಿದ ಹೇಳಿಕೆಯಿಂದ ಭಾರತ ಇದುವರೆಗೂ ಅಂತರ ಕಾಯ್ದುಕೊಂಡು ಬಂದಿದೆ.
Karnataka Rain: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಸಾಧ್ಯತೆ: ಐಎಂಡಿ
Karnataka Rain Alert: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಒಣಹವೆ ಮುಂದುವರಿದಿದ್ದು, ಚಳಿ ಪ್ರಮಾಣ ಅಲ್ಪ ಇಳಿಕೆಯಾಗಿದೆ. ಈ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಕರ್ನಾಟಕದ ವಿವಿಧ ಭಾಗದಲ್ಲಿ ಮಳೆ ಆಗುವ ನಿರೀಕ್ಷೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹಿಂದೂ ಮಹಾಸಾಗರ ಮತ್ತು ಅದಕ್ಕೆ ಹೊಂದಿಕೊಂಡಿರುವ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ
Meghalaya | ಫುಟ್ಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ಶಿಲ್ಲಾಂಗ್ ಸಂಸದ ಮೃತ್ಯು
ಶಿಲ್ಲಾಂಗ್: ನಗರದಲ್ಲಿ ಫುಟ್ ಬಾಲ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಶಿಲ್ಲಾಂಗ್ ಲೋಕಸಭಾ ಸದಸ್ಯ ರಿಕಿ ಎಜೆ ಸಿಂಗ್ಕಾನ್ ಮೃತಪಟ್ಟಿದ್ದಾರೆ. ಮೇಘಾಲಯದ ವಾಯ್ಸ್ ಆಫ್ ಪೀಪಲ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ 54 ವರ್ಷ ವಯಸ್ಸಿನ ರಿಕಿ, ಸ್ನೇಹಿತರ ಜತೆ ಆಟವಾಡುತ್ತಿದ್ದಾಗ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ನಗರದ ಡಾ.ಎಚ್.ಗೋರ್ಡೋನ್ ರಾಬರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ರಾತ್ರಿ 8.42ರ ವೇಳೆಗೆ ಮೃತಪಟ್ಟರು ಎಂದು ಅಧಿಕೃತ ಮೂಲಗಳು ಹೇಳಿವೆ. ಮುಖ್ಯಮಂತ್ರಿ ಕೊನ್ರಾಡ್ ಕೆ.ಸಂಗ್ಮಾ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಸಿಂಗ್ಕಾನ್ ಅತ್ಯಂತ ಬದ್ಧತೆಯ ಜನಪ್ರತಿನಿಧಿಯಾಗಿದ್ದರು ಎಂದಿದ್ದಾರೆ. ಖಾಸಿ-ಜೈಂಟಿಯಾ ಬೆಟ್ಟ ಪ್ರದೇಶಗಳಲ್ಲಿ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯಿಂದ ಜನಪ್ರಿಯರಾಗಿದ್ದ ಸಿಂಗ್ಕಾನ್ ಅವರು ಶಿಲ್ಲಾಂಗ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರು 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದ ವಿನ್ಸೆಂಟ್ ಎಚ್ ಪಾಲಾ ವಿರುದ್ಧ 3.7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಮರೋಪಾದಿಯಲ್ಲಿ ಕಾರ್ಯ ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ, ಮುಂಬರುವ ಏಪ್ರಿಲ್ನಲ್ಲಿ ಮೂರನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಘೋಷಿಸಿದೆ. ಈ ಕುರಿತು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ದಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಸಿದ್ಧತೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕದಲ್ಲೂ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಕೆಂಪು ಚಿನ್ನದ ಘಾಟು: ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಡಗಿ ಮೆಣಸಿನಕಾಯಿ ದರ 90,000 ರೂಪಾಯಿ
ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಬ್ಯಾಡಗಿ ಮೆಣಸಿನಕಾಯಿ ಬಿತ್ತನೆ ಈ ವರ್ಷ ಅಷ್ಟಾಗಿ ಆಗಿಲ್ಲ. ಆದರೆ ಬೆಳೆದ ರೈತರಿಗೆ ಉತ್ತಮ ಇಳುವರಿ ಬಂದಿದ್ದು, ಬೇಡಿಕೆ ಹೆಚ್ಚಿರುವ ಕಾರಣ ಬ್ಯಾಡಗಿ ಮೆಣಸಿನಕಾಯಿಗೆ ಐತಿಹಾಸಿಕ ದಾಖಲೆಯ ಗರಿಷ್ಠ ದರ ಲಭಿಸಿದೆ. ರೋಣ ತಾಲೂಕಿನ ಸವಡಿ ಗ್ರಾಮದ ಯುವ ರೈತರ ಬ್ಯಾಡಗಿ ಮೆಣಸಿನಕಾಯಿ ಬೆಳೆದು ಬಂಗಾರದ ಬೆಲೆ ಪಡೆದಿದ್ದಾರೆ.
ಕರ್ನಾಟಕದ ದೇಗುಲಗಳಲ್ಲಿ ಶೂಟಿಂಗ್ಗೆ ಬ್ರೇಕ್ ! ಅನುಮತಿ ಪಡೆದು, ಶುಲ್ಕ ಕಟ್ಟಿದ್ರೆ ಮಾತ್ರ ಅವಕಾಶ
ದೇಗುಲಗಳಲ್ಲಿ ಸುದ್ದಿ ಂಆಧ್ಯಮಗಳಿಗೂ ಸೇರಿದಂತೆ, ಸಿನಿಂಆ-ಧಾರವಾಹಿ-ಯೂಟ್ಯೂಬ್ ಚಾನೆಲ್ಗಳು ಹೀಗೆ ಯಾರಿಗೂ ಶೂಟಿಂಗ್ ಮಾಡುವ ಅವಕಾಶ ಕಟ್ಟುನಿಟ್ಟಾಗಿ ಬ್ಯಾನ್ ಮಾಡಲಾಗಿದೆ. ಅನಿವಾರ್ಯವಿದ್ದರೆ ಮೊದಲೇ ಕೇಂದ್ರ ಕಚೇರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಏನೆಲ್ಲಾ ನಿಯಮಗಳಿವೆ ? ಇಲ್ಲಿದೆ ನೋಡಿ ವಿವರ
ಮೈಸೂರಿನಲ್ಲಿ ಶೀಘ್ರವೇ ಕಿದ್ವಾಯಿ ಆಸ್ಪತ್ರೆ; ಬೆಂಗಳೂರು ಅಲೆದಾಟದಿಂದ ದೊರೆಯಲಿದೆ ಮುಕ್ತಿ
ಮೈಸೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂಬರುವ ನವೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು, ಜಿಲ್ಲೆಯ ಜನರಿಗೆ ನೆಮ್ಮದಿ ತಂದಿದೆ. ಇದರಿಂದ ಚಿಕಿತ್ಸೆಗಾಗಿ ಪ್ರತಿಬಾರಿ ಬೆಂಗಳೂರಿಗೆ ಅಲೆದಾಡುವ ಅನಿವಾರ್ಯತೆ ತಪ್ಪಲಿದ್ದು, ಕಾಮಗಾರಿ ಪೂರ್ಣಗೊಳ್ಳುವುದನ್ನು ಕಾಯುತ್ತಿದ್ದಾರೆ. ಆರಂಭದಲ್ಲಿ 100 ಬೆಡ್ ಸೌಲಭ್ಯ ಕಲ್ಪಿಸಿ ನಂತರ ಅದನ್ನು 350 ಬೆಡ್ಗೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಲಿಂಗಾಯತ-ಗಾಣಿಗ ಪ್ರತ್ಯೇಕ ಗುರುತುಗಳಲ್ಲ; ಹೈಕೋರ್ಟ್
ಬೆಂಗಳೂರು : 'ಲಿಂಗಾಯತ' ಮತ್ತು 'ಗಾಣಿಗ' ಎಂಬುದು ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಗಾಣಿಗ ಜಾತಿಯು ವಿಶಾಲವಾದ ಲಿಂಗಾಯತ ಸಮುದಾಯದೊಳಗಿನ ವಿಶಿಷ್ಟ ಉಪ ಜಾತಿಯಾಗಿದೆ ಎಂದು ಹೇಳಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಸುಳ್ಳು ಗಾಣಿಗ-ಲಿಂಗಾಯತ ಜಾತಿ ಮಾನ್ಯತೆ ಪ್ರಮಾಣಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆಂದು ಆಕ್ಷೇಪಿಸಿ ಪೊಲೀಸ್ ಕಾನ್ಸ್ಟೆಬಲ್ ಟಿ.ಎನ್. ಜಗದೀಶ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಲಿಂಗಾಯತ ಮತ್ತು ಗಾಣಿಗ ಪರಸ್ಪರ ಪ್ರತ್ಯೇಕವಾಗಿಲ್ಲ. ವಿಶಾಲವಾದ ಲಿಂಗಾಯತ ಪಂಗಡ ಅಸ್ತಿತ್ವದಲ್ಲಿರುವಾಗ ತಮ್ಮ ವೃತ್ತಿಪರ ಮತ್ತು ಸಾಮಾಜಿಕ ಗುರುತನ್ನು ಉಳಿಸಿಕೊಂಡ ವಿಭಿನ್ನ ಜಾತಿ-ಪಂಗಡಗಳನ್ನು ಸೇರಿಸುವ ಮೂಲಕ ಲಿಂಗಾಯತ ಸಮುದಾಯವು ವಿಕಸನಗೊಂಡಿದೆ. ಗಾಣಿಗವು ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಲಿಂಗಾಯತ (ಧಾರ್ಮಿಕ ಸಮುದಾಯ) ಮತ್ತು ಗಾಣಿಗ (ಎಣ್ಣೆ ತೆಗೆಯುವವರು) ಪರಸ್ಪರ ಪ್ರತ್ಯೇಕ ಗುರುತುಗಳು, ಗಾಣಿಗ ಎನ್ನುವುದಿ ವಿಶಾಲ ಲಿಂಗಾಯತ/ವೀರಶೈವ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದಾದ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ. ಧಾರ್ಮಿಕ ನೆಲೆಯಲ್ಲಿ ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಲಿಂಗಾಯತ ಮತ್ತು ಜಾತಿ ವರ್ಗೀಕರಣದಿಂದ ಗಾಣಿಗ ಆಗಿರಬಹುದು. ಗಾಣಿಗರು ಲಿಂಗಾಯತ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದು ಎಂದರೆ ಪ್ರತಿಯೊಬ್ಬ ಲಿಂಗಾಯತರು ಗಾಣಿಗ ಗುರುತನ್ನು ಪಡೆಯಬಹುದು ಎಂದಲ್ಲ. ಗುರುತುಗಳ ಸಹಬಾಳ್ವೆ ಕಾನೂನು ಸಾಧ್ಯತೆಯ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನೇಮಕಾತಿ ಎತ್ತಿಹಿಡಿದ ನ್ಯಾಯಾಲಯ: ಮೂರನೇ ಪ್ರತಿವಾದಿ ರಾಜಕುಮಾರ್ ವೈ. ಬೀಳಗಿ ಸರ್ಕಾರಿ ಅಧಿಕಾರಿಯಾಗಿ 15 ವರ್ಷ ಕರ್ತವ್ಯ ನಿರ್ವಹಿಸಿದ್ದು, ಸೇವಾವಧಿಯು ಜಾತಿ ಅಸ್ಮಿತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲವಾದರೂ, ಸಾಕ್ಷ್ಯಗಳ ದಾಖಲೆಗಳು ಜಾತಿ ಅಸ್ಮಿತೆಯನ್ನು ಗಣನೀಯವಾಗಿ ನಿರೂಪಿಸುತ್ತಿರುವಾಗ ಮತ್ತು ಯಾವುದೇ ವಂಚನೆಯನ್ನು ಪ್ರದರ್ಶಿಸದಿರುವಾಗ ನ್ಯಾಯಾಂಗ ಸಂಯಮದ ಅಗತ್ಯವನ್ನು ಬಲಪಡಿಸುತ್ತವೆ. ಸಾಕ್ಷ್ಯಾಧಾರದ ಶ್ರೇಣಿಗೆ ಸಂಬಂಧಿಸಿದ ವ್ಯಾಖ್ಯಾನಾತ್ಮಕ ವಿವಾದದ ಆಧಾರದ ಮೇಲೆ ಅಂತಹ ದೀರ್ಘಕಾಲದ ಸೇವೆಯನ್ನು ಕದಲಿಸುವುದು ನ್ಯಾಯಿಕ ಉದ್ದೇಶಕವನ್ನು ಮುನ್ನಡೆಸುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಬೀಳಗಿ ಅವರ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗದಲ್ಲಿ ಪಿಎಸ್ಐ ಆಗಿ ಅವರು ಮಾಡಿದ 15 ವರ್ಷಗಳ ಸೇವೆಯನ್ನು ಪರಿಗಣಿಸಿ, ಅವರ ನೇಮಕಾತಿಯ ಸಿಂಧುತ್ವವನ್ನು ಎತ್ತಿಹಿಡಿದಿದೆ. ಪ್ರಕರಣವೇನು? ಮೈಸೂರಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ಅರ್ಜಿದಾರರಾದ ಟಿ.ಎನ್. ಜಗದೀಶ್ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಸಬ್ ಇನ್ಸ್ಪೆಕ್ಟರ್ ಹುದ್ದೆ ಆಕಾಂಕ್ಷಿಯಾಗಿದ್ದರು. ಬಾಗಲಕೋಟೆಯ ರಾಜಕುಮಾರ್ ವೈ. ಬೀಳಗಿ ಇತರ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಲಿಂಗಾಯತ-ಗಾಣಿಗ ಸಮುದಾಯಕ್ಕೆ ನೀಡಲಾಗುವ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು, ಲಿಂಗಾಯತ-ಗಾಣಿಗ ಎಂಬ ಸುಳ್ಳು ಪ್ರಮಾಣಪತ್ರ ನೀಡುವ ಮೂಲಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಜಗದೀಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ: ಸಬ್ ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲು
ಬೆಂಗಳೂರು : ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಸಿದ ಆರೋಪದಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ಆರೋಪಿಯೇ ದೂರು ದಾಖಲಿಸಿದ್ದಾರೆ. ದೂರುದಾರ ಅವಿನಾಶ್ ಎಂಬಾತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ಅನುಮತಿ ಪಡೆದು ಮಾಗಡಿ ರಸ್ತೆ ಠಾಣೆ ಸಬ್ ಇನ್ಸ್ಪೆಕ್ಟರ್ ಕೌಶಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಗೋವಿಂದರಾಜನಗರ ಠಾಣೆ ಪೊಲೀಸರಿಗೆ ಒಪ್ಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಏನಿದು ಪ್ರಕರಣ?: ಅಗ್ರಹಾರ ದಾಸರಹಳ್ಳಿ ನಿವಾಸಿಯಾಗಿರುವ ಅವಿನಾಶ್ ತಾಯಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಸಂಬಂಧ ಕಳೆದ ವರ್ಷ ಜನವರಿಯಲ್ಲಿ ಅವಿನಾಶ್ ಹಾಗೂ ತಂದೆ, ತಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಸೈ ಕೌಶಿಕ್ ಆರೋಪಿತರನ್ನು ವಶಕ್ಕೆ ಪಡೆದಿದ್ದರು. ಬಂಧನ ಭೀತಿಯಿಂದ ಅವಿನಾಶ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ವಿಚಾರಣೆಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗಿದ್ದರು. ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಅವಿನಾಶ್ ಆರೋಪಿಸಿದ್ದಾರೆ.
ಜಾಗತಿಕ ‘ಸ್ವಾನ್' ಹಿರಿಯ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ
ಬೆಂಗಳೂರು : ಸ್ಮಾರ್ಟ್ ವಾಟರ್ ವಲಯದ ಜಾಗತಿಕ ಸಂಸ್ಥೆಯಾದ 'ಸ್ಮಾರ್ಟ್ ವಾಟರ್ ನೆಟ್ವರ್ಕ್ಸ್ ಫೋರಮ್'(ಸ್ವಾನ್) ತನ್ನ 5ನೇ ‘ಹಿರಿಯ ಯುಟಿಲಿಟಿ ಸಲಹಾ ಸಮಿತಿ'ಯನ್ನು ಪ್ರಕಟಿಸಿದ್ದು, ಈ ಜಾಗತಿಕ ಹಿರಿಯ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್, ಬ್ರೆಜಿಲ್ ಮತ್ತು ಅಮೆರಿಕದ ತಜ್ಞರು ಸಮಿತಿಯಲ್ಲಿದ್ದಾರೆ. 2026ರ ಜೂ.2 ರಿಂದ ಜೂ.4 ರವರೆಗೆ ಅಮೆರಿಕದ ಫ್ಲೋ ರಿಡಾದ ಟ್ಯಾಂಪಾದಲ್ಲಿ ನಡೆಯಲಿರುವ ‘ಸ್ವಾನ್ 16ನೇ ವಾರ್ಷಿಕ ಸಮ್ಮೇಳನ'ದಲ್ಲಿ ಸಮಿತಿಯ ಸದಸ್ಯರು ‘ನಿಮ್ಮ ಡಿಜಿಟಲ್ ಪ್ರಯಾಣದ ಅಳವಡಿಕೆ’ ಎಂಬ ವಿಷಯದ ಮೇಲೆ ಸಲಹೆಗಳನ್ನು ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಸಮಿತಿ ಸದಸ್ಯರು ಜಾಗತಿಕ ಮಟ್ಟದಲ್ಲಿ ನೀರಿನ ಸವಾಲುಗಳು, ಪ್ರಾದೇಶಿಕ ಪ್ರವೃತ್ತಿಗಳು ಮತ್ತು ಕಾರ್ಯತಂತ್ರದ ಸಂಶೋಧನಾ ಆದ್ಯತೆಗಳನ್ನು ಗುರುತಿಸಲು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಉದ್ಯಮಕ್ಕೆ ನೀಡಿದ ವ್ಯಾಪಕ ಕೊಡುಗೆಯ ಆಧಾರದ ಮೇಲೆ ಆಯ್ಕೆಯಾಗಿರುವ ಈ ತಂಡ, ‘ಸ್ವಾನ್'ನ ಭವಿಷ್ಯದ ಯೋಜನೆಗಳು ಮತ್ತು ಜಾಗತಿಕ ಉಪಕ್ರಮಗಳನ್ನು ಪರಿಶೀಲಿಸಲಿದೆ. ಇತ್ತೀಚೆಗೆ ಜಲಮಂಡಳಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ-ಆಧಾರಿತ ಉಪಕ್ರಮಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಡಾ. ಮನೋಹರ್ ಅವರಿಗೆ ಜಾಗತಿಕ ಮಟ್ಟದಲ್ಲಿ ಈ ನೇರ ಮನ್ನಣೆ ದೊರೆತಿದೆ. ಅವರ ಪ್ರಯತ್ನಗಳಿಂದಾಗಿ ಬೆಂಗಳೂರು ಸ್ಮಾರ್ಟ್ ನೀರು ನಿರ್ವಹಣೆಯ ಪ್ರಮುಖ ಸರಕಾರಿ ಜಲ ನಿರ್ವಹಣಾ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಭಾರತ ದೇಶದ ನೀರಿನ ಸವಾಲುಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸಲು ಇದು ಸಹಕಾರಿಯಾಗಿದೆ. ಜಾಗತಿಕವಾಗಿ ಸ್ಮಾರ್ಟ್ ವಾಟರ್ ವ್ಯವಸ್ಥೆಯನ್ನು ರೂಪಿಸುವಲ್ಲಿ 'ಸ್ವಾನ್' ಸಂಸ್ಥೆಯ ದೂರದೃಷ್ಟಿ ನನಗೆ ಅತ್ಯಂತ ಇಷ್ಟವಾಗಿದೆ. ನಾವು ಇಂದು ಎದುರಿಸುತ್ತಿರುವ ಸಂಕೀರ್ಣ ನೀರಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ಜಾಗತಿಕ ತಜ್ಞರೊಂದಿಗೆ ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ. -ಡಾ. ರಾಮ್ ಪ್ರಸಾತ್ ಮನೋಹರ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ
Bagalkote | ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಆರೋಪ; ಸ್ಥಳದಲ್ಲಿ ಬಿಗುವಿನ ವಾತಾವರಣ
ಬಾಗಲಕೋಟೆ : ಶಿವಾಜಿ ಜಯಂತಿ ಹಿನ್ನೆಲೆ ನಡೆಯುತ್ತಿದ್ದ ಮೆರವಣಿಗೆ ಸಮಯದಲ್ಲಿ ದುಷ್ಕರ್ಮಿಗಳು ಕಲ್ಲು ತೋರಾಟ ನಡೆಸಿರುವ ಆರೋಪ ಕೇಳಿ ಬಂದಿದ್ದು, ಬಾಗಲಕೋಟೆ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮರಾಠ ಸಮುದಾಯದ ವತಿಯಿಂದ ಸಂಜೆ ಸಮಯದಲ್ಲಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಕಿಲ್ಲಾದ ಅಂಬಾಭವಾನಿ ದೇವಾಲಯದಿಂದ ಪ್ರಾರಂಭವಾದ ಶಿವಾಜಿ ಮಹಾರಾಜರ ಮೆರವಣಿಗೆ ಪ್ರಮುಖ ರಸ್ತೆಯ ಮೂಲಕ ಬಸವೇಶ್ವರ ವೃತ್ತದಲ್ಲಿ ಹೋಗಿ ಬಳಿಕ ವಲ್ಲಭಭಾಯಿ ಚೌಕ ಮೂಲಕ ಕಿಲ್ಲಾದಲ್ಲಿ ಮುಕ್ತಾಯ ಆಗುತ್ತಿತ್ತು. ಮೆರವಣಿಗೆ ಸಾಗುತ್ತಿದ್ದ ಸಮಯದಲ್ಲಿ ಕೆಲ ದುಷ್ಕರ್ಮಿಗಳು ಕಲ್ಲು ತೋರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದುತ್ವ ಸಂಘಟನೆ ಮುಖಂಡರು, ಮೆರವಣಿಗೆ ಮೇಲೆ ಕಲ್ಲು ಎಸೆಗಿರುವ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ.
Chikkamagaluru | ಬೈಕ್ಗೆ ಅಡ್ಡಗಟ್ಟಿ ಯುವಕನ ಮೇಲೆ ಅನೈತಿಕ ಪೊಲೀಸ್ ಗಿರಿ; ಮೂವರು ಆರೋಪಿಗಳ ಬಂಧನ
ಚಿಕ್ಕಮಗಳೂರು, ಫೆ.19 : ಮುಸ್ಲಿಮ್ ಯುವತಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಎಂಬ ಕಾರಣಕ್ಕೆ ತಂಡವೊಂದು ಯುವಕನ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಗುರುವಾರ ನಡೆದಿರುವುದು ವರದಿಯಾಗಿದೆ. ಈ ಸಂಬಂಧ 7 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯೊಬ್ಬಳು ಯುವಕನಿಗೆ ಮೊಬೈಲ್ ಕರೆ ಮಾಡಿ ತನ್ನನ್ನು ಮಾರ್ಕೆಟ್ ರಸ್ತೆಯಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದವರೆಗೆ ಬೈಕ್ನಲ್ಲಿ ಬಿಡುವಂತೆ ಕೇಳಿಕೊಂಡಿದ್ದಳು ಎನ್ನಲಾಗಿದೆ. ಈ ವೇಳೆ ಬೈಕ್ನಲ್ಲಿ ಮಾರ್ಕೆಟ್ ಗೆ ತೆರಳಿದ ಯುವಕ, ಯುವತಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಕಡೆಗೆ ತೆರಳುತ್ತಿದ್ದಾಗ ಯುವಕರ ತಂಡವೊಂದು ಬೈಕನ್ನು ಅಡ್ಡಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ನಡೆಸಿ ಅನೈತಿಕ ಪೊಲೀಸ್ಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಈ ವೇಳೆ ಯುವತಿ ಮನೆಗೆ ತೆರಳಿದ್ದಳು. ಯುವಕನ ಪೋಷಕರು ಹಾಗೂ ತಂಡದ ನಡುವೆ ವಾದ ಪ್ರತಿವಾದಗಳು ನಡೆದಿದ್ದು, ನಂತರ ಯುವಕನನ್ನು ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನದ ವೇಳೆ 30ಕ್ಕೂ ಹೆಚ್ಚು ತಂಡದವರು ಯುವಕನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಲ್ಲದೆ, ಮನೆಯಲ್ಲಿದ್ದವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ನಯಾಝ್, ತಬ್ರೀಝ್, ಮುಹಮ್ಮದ್ ಹನೀಫ್ ಎಂಬವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಶಾಂತಿ ಮಾತುಕತೆ ವಿಫಲ ಎಂದ ಉಕ್ರೇನ್ ಅಧ್ಯಕ್ಷ, ಯುದ್ಧಕ್ಕೆ ಬ್ರೇಕ್ ಬೀಳುವುದೇ ಅನುಮಾನ | Ukraine And Russia
ಸ್ವಿಝರ್ಲ್ಯಾಂಡ್ನ ಜಿನೆವಾದಲ್ಲಿ ಇತ್ತೀಚೆಗೆ ರಷ್ಯಾ ಮತ್ತು ಉಕ್ರೇನ್ ಶಾಂತಿ ಒಪ್ಪಂದಕ್ಕಾಗಿ ಮಾತುಕತೆ ನಡೆಸಿದ್ದವು. ಶಾಂತಿ ಮಾತುಕತೆ ಮೂಲಕ ಯುದ್ಧ ನಿಲ್ಲಿಸಲು ರಷ್ಯಾ ಮತ್ತು ಉಕ್ರೇನ್ ಅಧಿಕಾರಿಗಳ ಜೊತೆಗೆ ಅಮೆರಿಕದ ಅಧಿಕಾರಿಗಳು ಕೂಡ ಊಟ ಹಾಗೂ ನಿದ್ದೆ ಬಿಟ್ಟು ಒದ್ದಾಡಿದ್ದರು. ಹೀಗೆ ಗಂಟೆ ಗಂಟೆ ಚರ್ಚೆ ಮಾಡಿ, ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂದು ಪ್ರಯತ್ನ ಮಾಡಿದ್ದರೂ
Kalaburagi | ಅಂಜುಮನ್ ಏ ಖಜಾಅತ್ ಅಧ್ಯಕ್ಷರಾಗಿ ಖಾಜಿ ಮುಹಮ್ಮದ್ ಆದಮ್ ಫಾರೂಖಿ ಅವಿರೋಧ ಆಯ್ಕೆ
ಕಲಬುರಗಿ: ಕರ್ನಾಟಕ ಅಂಜುಮನ್ -ಏ ಖಜಾಅತ್ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕದ ಖಾಜಿಗಳ ಸಭೆ ನಡೆಯಿತು. ಸಭೆಯಲ್ಲಿ ಅಂಜುಮನ್ -ಏ -ಖಜಾಯತ್ ಕರ್ನಾಟಕದ ಅಧ್ಯಕ್ಷರನ್ನಾಗಿ ಖಾಜಿ ಕೆಂಭಾವಿ & ಹುಣಸಗಿ ಖಾಜಿ ಮುಹಮ್ಮದ್ ಆದಮ್ ಫಾರೂಖಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ರಾಯಚೂರಿನ ಖಾಜಿಗಳ ಅಧ್ಯಕ್ಷರಾದ ಖಾಜಿ ಮುಹಮ್ಮದ್ ಹಮೀದ್ ಅಲಿ ಸಿದ್ದಿಕಿ ಅವರ ನೇತೃತ್ವದಲ್ಲಿ ನಡೆದ ಉಪಾಧ್ಯಕ್ಷರನ್ನಾಗಿ ಖಾಜಿ ಮಿರ್ ಇಬ್ರಾಹಿಂ ಅಲಿ, ಸೈಯದ್ ಗೌಸುದ್ದಿನ್, ಕಾರ್ಯದರ್ಶಿಯಾಗಿ ಖಾಜಿ ಹಮೀದ್ ಫೈಸಲ್ ಸಿದ್ದಿಕಿ, ಜಂಟಿ ಕಾರ್ಯದರ್ಶಿರಾಗಿ ಖಾಜಿ ಜಮೀರ್ ಅಹ್ಮದ್, ಖಜಾಂಚಿಯಾಗಿ ಖಾಜಿ ಆಜಾಮ್ ಸಿದ್ದಿಕಿ, ಖಾಜಿ ಸೈಯದ್ ಇಮ್ರಾನ್ ಸೇರಿದಂತೆ ಕಲ್ಯಾಣ ಕರ್ನಾಟಕದ ಅಂಜುಮನ್ ನ ಸದಸ್ಯರು ಖಾಜಿ ಮುಕ್ರಮ, ಖಾಜಿ ಸೈಯದ್ ಶಂಶಾಲಾಮ್ ಹುಸೈನಿ, ಖಾಜಿ ಶಂಶುದ್ದಿನ್, ಖಾಜಿ ಕೌತಾಲ್, ಖಾಜಿ ಆಸೀಫ ಜಿಲಾನಿ, ಖಾಜಿ ಅಬ್ದುಲ್ ಖಾಲೀಕ್, ಖಾಜಿ ಉತಕುರ್, ಖಾಜಿ ಹಾಫಿಜ್ ಮುಹಮ್ಮದ್, ಯುನೂಸ್, ಖಾಜಿ ಮೌಲಾನ ಜಮೀರ್ ಅಹ್ಮದ್, ಖಾಜಿ ಸಿರಾಜುದ್ದಿನ್ ತಿರಂದಾಸ್ ಸೇರಿದಂತೆ ಮುಂತಾದವರು ಇದ್ದರು.
ಪಾಕಿಸ್ತಾನದ ಕರಾಚಿ ದುರಂತಕ್ಕೆ ಮಕ್ಕಳು ಸೇರಿ 16 ಜನ ಬಲಿ, ಅನುಮಾನ ಮೂಡಿಸಿದ ಘಟನೆ | Pakistan Military
ಪಾಕಿಸ್ತಾನದ ಕರಾಚಿ ವಸತಿ ಸಮುಚ್ಚಯ ಒಂದರಲ್ಲಿ ಇದೀಗ ಭೀಕರ ದುರಂತ ಸಂಭವಿಸಿದ್ದು, ಇದೇ ದುರಂತಕ್ಕೆ ಸುಮಾರು 16 ಪಾಕಿಸ್ತಾನಿ ಪ್ರಜೆಗಳು ಬಲಿಯಾಗಿದ್ದಾರೆ. ಮಹಿಳೆಯರು &ಮಕ್ಕಳೂ ಸೇರಿ ಒಟ್ಟಾರೆ 16 ಜನ ದುರಂತದಲ್ಲಿ ಜೀವ ಬಿಟ್ಟಿದ್ದಾರೆ. ಸ್ಪೋಟಕ್ಕೆ ಅನಿಲ ಸೋರಿಕೆ ಕಾರಣ ಎಂಬ ಮಾಹಿತಿ ಈಗ ಪ್ರಾಥಮಿಕ ಹಂತದಲ್ಲಿ ಸಿಕ್ಕಿದ್ದರೂ ದುರಂತದ ಬಗ್ಗೆ ಸಾಕಷ್ಟು ಅನುಮಾನಗಳು ಕಾಡುತ್ತಾ
ವಿಜಯನಗರ | ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು: ಡಿಸಿ ಕವಿತಾ ಎಸ್. ಮನ್ನಿಕೇರಿ
ವಿಜಯನಗರ (ಹೊಸಪೇಟೆ): ಫೆ.28ರಿಂದ ಮಾ.17ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಪೊಲೀಸ್ ಬಂದೋಬಸ್ತ್ ಹಾಗೂ ಪ್ರಶ್ನೆಪತ್ರಿಕೆಗಳನ್ನು ಪೊಲೀಸ್ ಭದ್ರತೆಯಲ್ಲಿ ಸಾಗಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ನೋಡಲ್ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಪರೀಕ್ಷಾ ಮುಖ್ಯಸ್ಥರನ್ನು ಹೊರತುಪಡಿಸಿ ಇತರರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೇಂದ್ರಗಳಿಗೆ ಹಾಜರಾಗಬೇಕು. ಸಾರಿಗೆ ಸೌಲಭ್ಯ ಕಲ್ಪಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ. ಉತ್ತಮ ಫಲಿತಾಂಶಕ್ಕಾಗಿ ಸಂಜೆ ಪರಿಹಾರ ಬೋಧನೆ ಹಾಗೂ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದೆ. ಜಿಲ್ಲೆ ರಾಜ್ಯ ಮಟ್ಟದಲ್ಲಿ ಮೊದಲ 15 ಸ್ಥಾನಗಳೊಳಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪರೀಕ್ಷೆಯನ್ನು ಹಬ್ಬದಂತೆ ಭಯವಿಲ್ಲದೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 23 ಕೇಂದ್ರಗಳಲ್ಲಿ 14,801 ವಿದ್ಯಾರ್ಥಿಗಳು : ಜಿಲ್ಲೆಯಲ್ಲಿ ಒಟ್ಟು 23 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, 7,235 ಬಾಲಕಿಯರು ಮತ್ತು 5,143 ಬಾಲಕರು ಸೇರಿದಂತೆ ಒಟ್ಟು 14,801 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಲ್ಲಿ 12,378 ಹೊಸ ವಿದ್ಯಾರ್ಥಿಗಳು, 1,915 ಪುನರಾವರ್ತಿತರು, 500 ಖಾಸಗಿ ಅಭ್ಯರ್ಥಿಗಳು ಹಾಗೂ 8 ಮಂದಿ ವಿಷಯಾಧಾರಿತ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ ಬರೆಯಲಿದ್ದಾರೆ. 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ : ಪರೀಕ್ಷಾ ದಿನಗಳಲ್ಲಿ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದ್ದು, ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಡಿಡಿಪಿಯು ನಾಗರಾಜ್ ಹವಾಲ್ದಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅಮೆರಿಕ ಸೇನೆಯ ದಾಳಿ ಭೀತಿಯಲ್ಲಿ, ಸೇನಾ ನೆಲೆಗಳ ಬಳಿ ಸಿಮೆಂಟ್ ಗೋಡೆ ಕಟ್ಟಿಸುತ್ತಿದೆ ಇರಾನ್ | US Military
ಇರಾನ್ &ಅಮೆರಿಕ ನಡುವೆ ಮುಂದಿನ ಶನಿವಾರದಿಂದ ಯುದ್ಧ ಶುರುವಾಗುವ ಆತಂಕ ಈಗ ಆವರಿಸಿದೆ ಹಾಗೂ ಜಗತ್ತಿನಾದ್ಯಂತ ಈ ಚರ್ಚೆ ಜೋರಾಗಿದೆ. ಇದೇ ಸಮಯದಲ್ಲಿ ವಾರಾಂತ್ಯದಲ್ಲಿ ಇರಾನ್ ಮೇಲೆ ಅಮೆರಿಕ ಕಾರ್ಯಾಚರಣೆ ಶುರು ಮಾಡಿದರೆ ಅದರಿಂದ ಆಗುವ ಅಪಾಯಗಳ ಬಗ್ಗೆ ಕೂಡ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಸಂಭಾವ್ಯ ದಾಳಿ ಎದುರಿಸಲು ಇರಾನ್ ಸರ್ಕಾರ
ಅಫಜಲಪುರ | ಕಾರಭೋಸಗಾ ಕಾಡಸಿದ್ದೇಶ್ವರ ದೇವರ ಜಾತ್ರೆ ಸಂಪನ್ನ
ಅಫಜಲಪುರ: ತಾಲೂಕಿನ ಸುಕ್ಷೇತ್ರ ಅಮರ್ಜಾ ನದಿ ತೀರದ ಕಾರಭೋಸಗಾ ಗ್ರಾಮದ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಭ್ರಮದಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ತೆರೆ ಕಂಡಿತ್ತು. ಮಂಗಳವಾರ ಸಾಯಂಕಾಲ ಐದು ದಿನಗಳ ಕಾಲ ಪ್ರತಿಷ್ಠಾಪಿಸಿದ ನಂದಿ ಕೋಲುಗಳು ಅಮರ್ಜಾ ನದಿ ತೀರದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನಂತರ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಹತ್ತಿರದ ಹೊಲದಲ್ಲಿ ರಾತ್ರಿಯಿಂದ ಬೆಳಗಿನ ಜಾವ ಗೀಗೀ ಪದಗಳ ಹಾಡಕಿ ಜರುಗಿದವು. ಬೆಳಗಿನ ಜಾವ ನಂದಿ ಕೋಲುಗಳಿಗೆ ಹೂ ಮೂಡಿಸುವ ಕಾರ್ಯಕ್ರಮವು ಸಿಡಿ ಮದ್ದುಗಳ ನಡುವೆ ಚಿತ್ತಾಕರ್ಷಕ ಬೆಳಕಿನಲ್ಲಿ ನಡೆದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ಗ್ರಾಮದ ಅಗಸಿ ಬಳಿ ಬಂದು ಮತ್ತೆ ಅರ್ಥಗರ್ಭಿತ ವಾದ ಗೀಗೀ ಪದಗಳ ಹಾಡಿಕೆ ನಡೆಯಿತು. ಸಾಯಂಕಾಲ ಪಲ್ಲಕ್ಕಿ ಮತ್ತು ನಂದಿ ಕೋಲುಗಳು ಮೆರವಣಿಗೆ ಜೋತೆಗೆ ತನಾರತಿ ಹೋತ್ತ ಮೂವತ್ತೈದರ ಗ್ರಾಮದ ಶ್ರೀ ಮಠಕ್ಕೆ ಬಂದು ಐದು ಸುತ್ತು ಹಾಕುವ ಮೂಲಕ ಹರಕೆ ತೀರಿಸಿದರು. ನಂತರ ಉರುಳು ಸೇವೆ ಸಲ್ಲಿಸಿದ ನಂತರ ಜಾವಳ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಎರಡು ದಿನಗಳ ಕಾಲ ನಡೆದ ಜಾತ್ರೆ ಮಹಾಮಂಗಳಾರತಿಯೊಂದಿಗೆ ಅಸಂಖ್ಯಾತ ಭಕ್ತರು ಮತ್ತು ಶ್ರೀಮಠದ ಪೀಠಾಧಿಪತಿಗಳ ಸಮ್ಮುಖದಲ್ಲಿ ತೆರೆ ಬಿದ್ದಿದೆ.
ಆಳಂದ | ಸಿಯುಕೆಯಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ
ಆಳಂದ: ಸಂತ ಸೇವಾಲಾಲ್ ಮಹಾರಾಜರು ಮಹಾನ್ ಮಾನವತಾವಾದಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು ಎಂದು ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಕಲಬುರಗಿಯ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂತ ಸೇವಾಲಾಲ್ ಮಹಾರಾಜರ 287 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಸಂತ ಸೇವಾಲಾಲ್ ಮಹಾರಾಜರು ಯಾವಾಗಲೂ ಎಲ್ಲಾ ಜೀವಿಗಳ ಸಹಬಾಳ್ವೆಯನ್ನು ಪ್ರತಿಪಾದಿಸುತ್ತಿದ್ದರು. ನಾವು ಬದುಕಬೇಕು ಮತ್ತು ಇತರರನ್ನು ಬದುಕಲು ಬಿಡಬೇಕು ಎಂಬುದು ಅವರ ತತ್ವವಾಗಿತ್ತು. ನಮ್ಮ ದೇಶದ ಶ್ರೇಷ್ಠತೆ ಎಂದರೆ ವೈವಿಧ್ಯತೆಯಲ್ಲಿ ಏಕತೆ. ನಾವು ಇತರರ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸಬೇಕು. ಸಿಯುಕೆ ಒಂದು ಸಣ್ಣ ಭಾರತ, ನಮ್ಮಲ್ಲಿ ದೇಶಾದ್ಯಂತ ಅನೇಕ ರಾಜ್ಯಗಳ ವಿದ್ಯಾರ್ಥಿಗಳು ಇದ್ದಾರೆ ಮತ್ತು ನಾವು ಎಲ್ಲಾ ಸಮುದಾಯಗಳ ಹಬ್ಬಗಳನ್ನು ಆಚರಿಸುತ್ತೇವೆ ಎಂದರು. ಮುಖ್ಯ ಅತಿಥಿಗಳಾದ ಬಾಗಲಕೋಟೆಯ ನೀಲಾನಗರ ಶಕ್ತಿ ಪೀಠದ ಶ್ರೀ ಕುಮಾರ ಮಹಾರಾಜರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಂತ ಸೇವಾಲಾಲ್ ಮಹಾರಾಜರು 12ನೇ ಶತಮಾನದ ಶರಣರು ಪ್ರಸ್ತಾಪಿಸಿದ ಕಾಯಕ ಸಿದ್ದಾಂತದ ಮಹಾನ್ ಪ್ರತಿಪಾದಕರಾಗಿದ್ದರು. ಅವರು ವಿಚಾರವಾದಿ ಮತ್ತು ಪ್ರಾಯೋಗಿಕ ಚಿಂತಕರಾಗಿದ್ದರು ಎಂದರು. ಕುಲಸಚಿವರಾದ ಆರ್.ಆರ್.ಬಿರಾದಾರ್ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಡಾ.ಪಿ.ಎಸ್ ಕಟ್ಟಿಮನಿ ಸ್ವಾಗತಿಸಿದರು. ಶ್ರೀ ಸತ್ಯಂ ಜಾಧವ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಪ್ರೊ. ಚನ್ನವೀರ ಆರ್ ಎಂ, ಪ್ರೊ. ಎಂ.ಎಸ್ ಪಾಸೋಡಿ, ಪ್ರೊ. ವಿಕ್ರಮ ವಿಸಾಜಿ, ಪ್ರೊ. ವಿಜಯಕುಮಾರ, ಡಾ. ಗೋವಿಂದ ಜಾಧವ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸತೀಶ್ ಎಸ್ ಚೌಹಾಣ, ಡಾ. ಜೈಪಾಲ ರಾಥೋಡ್, ಡಾ. ಸಂಜೀವರಾಯಪ್ಪ, ಡಾ. ಶಿವಕುಮಾರ ಬೆಳ್ಳಿ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಬಂಜಾರ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.
Raichur | ಪಾಲಿಕೆಯ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ : ಹಳೆಯ ದಾಖಲೆಗಳು ಭಸ್ಮ
ರಾಯಚೂರು: ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ರಾತ್ರಿ 9 ಗಂಟೆಗೆ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಹಳೆಯ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಪಾಲಿಕೆಯ ಮೊದಲನೇ ಮಹಡಿಯಲ್ಲಿ ಕಂದಾಯ ವಿಭಾಗದ ಬಳಿ ಹೊರಗೆ ಕಟ್ಟಿಗೆಯ ಅಲ್ಮಾರಿಯಲ್ಲಿ ಇಡಲಾಗಿದ್ದ ಹಳೆಯ ದಾಖಲೆಗಳು ಬೆಂಕಿಗೆ ಆಹುತಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರು ಪೊಲೀಸರಿಂದ ಸಮಯೋಚಿತ ಕ್ಷಿಪ್ರ ಕ್ರಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ
Bengaluru Police Quick Operation-ಕೌಟುಂಬಿಕ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿರುವ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ 9.30ರ ಸುಮಾರಿಗೆ ಮಹಿಳೆಯೊಬ್ಬರು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ 112 ಕ್ಕೆ ಕರೆ ಮಾಡಿದ್ದರು. ಫೋನ್ ಲೊಕೇಶನ್ ಅನ್ನು ಕಂಡು ಹಿಡಿದ ಪೊಲೀಸರು ಬೆಳ್ಳಂದೂರು ಕರೆ ಸಮೀಪ ತಡಕಾಡಿದಾಗ ಮಹಿಳೆ ಆತ್ಮಹತ್ಯೆಗೆ ಸಿದ್ಧವಾಗಿರುವಾಗಲೇ ರಕ್ಷಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಟ್ರಾಫಿಕ್ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ ಮೇಲೆ ಗೂಡ್ಸ್ ಟೆಂಪೊ ಹತ್ತಿಸಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಜಾಲದಿಂದ ವರದಿಯಾಗಿದೆ.
Raichur | ಗೋರ್ಕಲ್ನಲ್ಲಿ ಇನಾಂಭೂಮಿ ವಂಚನೆ ಆರೋಪ: ತನಿಖೆಗೆ ಎಐಕೆಎಸ್ ಆಗ್ರಹ
ರಾಯಚೂರು: ಮಾನವಿ ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಬಜಂತ್ರಿ ಸಮುದಾಯಕ್ಕೆ ನೀಡಲಾಗಿದ್ದ ಇನಾಂಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಜಿಪಿಎ ಮೂಲಕ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ, ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಬಡ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಎಐಕೆಎಸ್ ರಾಜ್ಯ ಸಂಚಾಲಕ ಬಿ. ಬಸವಲಿಂಗಪ್ಪ ಆಗ್ರಹಿಸಿದರು. ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋರ್ಕಲ್ ಗ್ರಾಮದ ಶ್ರೀ ವೇಂಕಟೇಶ್ವರ ದೇವಸ್ಥಾನ ಹೆಸರಿನ ಖಿದಮತ್ ಇನಾಂಭೂಮಿಯ ಸರ್ವೆ ನಂ. 647/1 ರಲ್ಲಿ 3.24 ಎಕರೆ ಭೂಮಿಯನ್ನು ದಿ. ಮಲ್ಲಪ್ಪ ಹುಲಿಗೆಪ್ಪ ಅವರಿಗೆ ನೀಡಲಾಗಿತ್ತು. ಅವರ ನಿಧನದ ನಂತರ ಪತ್ನಿ ಯಲ್ಲಮ್ಮ ಅವರಿಗೆ ನಿಯಮಾನುಸಾರ ಇನಾಂ ಪಟ್ಟಾ ವರ್ಗಾವಣೆ ಆಗಿತ್ತು ಎಂದರು. ಯಲ್ಲಮ್ಮ ಅವರಿಗೆ ಗಂಡು ಸಂತಾನ ಇರದೇ ನಾಲ್ಕು ಪುತ್ರಿಯರು ಇದ್ದರು. 2017ರ ಏಪ್ರಿಲ್ 18ರಂದು ಕುಟುಂಬಕ್ಕೆ ಸಂಬಂಧವಿಲ್ಲದ ಬೇರೆ ಜಾತಿಯವರು ಜಿಪಿಎ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ನಂತರ 2017ರ ಡಿಸೆಂಬರ್ 23ರಂದು ಪುತ್ರಿಯರು ಪೋತಿ ವಿರಾಸತ್ ಅರ್ಜಿಯನ್ನು ಮಾನವಿ ಕಂದಾಯ ಅಧಿಕಾರಿಗಳಿಗೆ ಸಲ್ಲಿಸಿದ್ದರೂ, ಗ್ರಾಮ ಲೆಕ್ಕಾಧಿಕಾರಿ 10 ಸಾವಿರ ರೂ. ಹಣವನ್ನು ಫೋನ್ಪೇ ಮೂಲಕ ಪಡೆದುಕೊಂಡಿದ್ದಾರೆ ಎಂದು ದೂರಿದರು. ಕಂದಾಯ ಇಲಾಖೆ ಅಧಿಕಾರಿಗಳು ಮೃತ ಯಲ್ಲಮ್ಮಳ ಆಧಾರ ಕಾರ್ಡ್ ಹಾಗೂ ಮಹಿಳೆಯರ ಹೆಬ್ಬಟ್ಟು ಸಹಿಯನ್ನು ದುರುಪಯೋಗಪಡಿಸಿಕೊಂಡು ಆಸ್ತಿ ವರ್ಗಾವಣೆ ಮಾಡಿ ಪಹಣಿ ನೀಡಿರುವುದು ಗಂಭೀರ ವಂಚನೆ ಎಂದು ಹೇಳಿದರು. ಸಂಬಂಧವಿಲ್ಲದ ವ್ಯಕ್ತಿಗಳಾದ ಈರಣ್ಣ ಹನುಮಯ್ಯ, ಸಾಬಯ್ಯ ತಂದೆ ಹನುಮಯ್ಯ, ವಿರೇಶ ಹುಸೇನಪ್ಪ ಹಾಗೂ ಜಯಮ್ಮ ಯಂಕೋಬ್ ಹೆಸರಿಗೆ ಹಕ್ಕು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಪಾತ್ರವಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ತನಿಖೆ ನಡೆಸಿ ವಂಚಿತ ದಲಿತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಸಂತ್ರಸ್ತ ಕುಟುಂಬಗಳೊಂದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮುದಕಪ್ಪ ನಾಯಕ, ರವಿಕುಮಾರ ಹಾಗೂ ಸಂತ್ರಸ್ತ ಮಹಿಳೆಯರಾದ ಹುಲಿಗೆಮ್ಮ, ದ್ಯಾವಮ್ಮ, ಲಕ್ಷ್ಮೀ, ಶಾಂಭವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ; ಮೇ 5ರಿಂದ ವಿಚಾರಣೆ
ಹೊಸದಿಲ್ಲಿ, ಫೆ.19: ಪೌರತ್ವ ತಿದ್ದುಪಡಿ ಕಾಯ್ದೆ–2019 (CAA) ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮೇ 5ರಿಂದ ಆರಂಭಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿತು. ಮೇ 5ರಿಂದ ಆರಂಭವಾಗುವ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಅರ್ಜಿಗಳನ್ನು ಪರಿಗಣಿಸಿದ ಪೀಠ, ವಿಚಾರಣೆಯ ವೇಳಾಪಟ್ಟಿಯನ್ನು ನಿಗದಿಪಡಿಸಿತು. ಈ ಅರ್ಜಿ 2024ರ ಮಾರ್ಚ್ 19ರಂದು ಈ ಹಿಂದೆ ವಿಚಾರಣೆಗೆ ಪಟ್ಟಿ ಆಗಿತ್ತು. ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು, ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪ್ರತ್ಯೇಕವಾಗಿ ಆಲಿಸಬೇಕೆಂದು ಮನವಿ ಮಾಡಿದರು. ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಹಾಗೂ ಇಂಟರ್ಲೈನ್ ಪರ್ಮಿಟ್ ವ್ಯವಸ್ಥೆಯಿಂದ ಉದ್ಭವಿಸುವ ಪ್ರಶ್ನೆಗಳು ವಿಭಿನ್ನವಾಗಿರುವುದರಿಂದ ಪ್ರತ್ಯೇಕ ವಿಚಾರಣೆ ಅಗತ್ಯ ಎಂದು ಅವರು ಹೇಳದರು. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 2020ರ ಜನವರಿಯ ಆದೇಶದಂತೆ ಅಸ್ಸಾಂ ಮತ್ತು ತ್ರಿಪುರಾ ಸಂಬಂಧಿತ ವಿಷಯಗಳನ್ನು ಇತರ ಅರ್ಜಿಗಳಿಂದ ಬೇರ್ಪಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ದೇಶದ ಉಳಿದ ಭಾಗಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಮೊದಲು ಆಲಿಸಿ, ಬಳಿಕ ಅಸ್ಸಾಂ ಮತ್ತು ತ್ರಿಪುರಾ ಸಂಬಂಧಿತ ಅರ್ಜಿಗಳನ್ನು ಪರಿಗಣಿಸಬಹುದು ಎಂದು ಸಿಜೆಐ ಸೂಚಿಸಿದರು. ನ್ಯಾಯಾಲಯದ ಸೂಚನೆಯಂತೆ ಮೇ 5 ಮತ್ತು 6ರಂದು ಅರ್ಜಿಯ ಅರ್ಧ ದಿನದ ವಿಚಾರಣೆ ನಡೆಯಲಿದೆ. ಮೇ 6ರ ದ್ವಿತೀಯಾರ್ಧ ಹಾಗೂ ಮೇ 7ರಂದು ಪ್ರತಿವಾದಿಗಳ ವಾದಗಳು ಕೇಳಲಾಗುತ್ತದೆ. ಮೇ 12ರಂದು ಪ್ರತಿವಾದಗಳ ವಿಚಾರಣೆ ಮುಂದುವರಿಯಲಿದೆ. CAA–2019 ಪ್ರಕಾರ, 2014ರ ಡಿಸೆಂಬರ್ 31ರೊಳಗೆ ಮಾನ್ಯ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ಪಡೆಯಲು ಅವಕಾಶ ನೀಡಲಾಗಿದೆ. ಇಂತಹವರನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸದೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿರುವುದು ಮತ್ತು ಇತರ ನೆರೆಯ ರಾಷ್ಟ್ರಗಳಿಂದ ಸಂಘರ್ಷಕ್ಕೊಳಗಾಗಿ ಬಂದ ನಿರಾಶ್ರಿತರನ್ನು ಪರಿಗಣಿಸದಿರುವುದು ಸಂವಿಧಾನದ ಸಮಾನತೆಯ ಹಕ್ಕಿಗೆ ವಿರುದ್ಧವೆಂದು ಅರ್ಜಿದಾರರು ವಾದಿಸಿದ್ದಾರೆ. 2024ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರವು ಕಾಯ್ದೆ ಜಾರಿಗೆ ನಿಯಮಗಳನ್ನು ಅಧಿಸೂಚನೆ ಮಾಡಿ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿತ್ತು. CAA ನಿಯಮಗಳು–2024ನ್ನೂ ಪ್ರಶ್ನಿಸಲಾಗಿದ್ದರೂ, ಅವುಗಳ ವಿಚಾರಣೆ ಇನ್ನೂ ನಡೆಯಬೇಕಿದೆ. ಅಸ್ಸಾಂನ ಅರ್ಜಿದಾರರು CAA ಅಸ್ಸಾಂ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ. ಜೊತೆಗೆ, ಕೇರಳ ರಾಜ್ಯವು ಶಾಸನವನ್ನು ಪ್ರಶ್ನಿಸಿ ಮೊಕದ್ದಮೆ ಹೂಡಿದೆ. ಕೇಂದ್ರ ಸರ್ಕಾರವು, ಈ ಕಾಯ್ದೆಯಿಂದ ಯಾವುದೇ ಭಾರತೀಯ ನಾಗರಿಕನ ಪೌರತ್ವಕ್ಕೆ ಧಕ್ಕೆಯಾಗುವುದಿಲ್ಲ; ನಿರ್ದಿಷ್ಟ ವರ್ಗಗಳಿಗೆ ರಿಯಾಯಿತಿ ನೀಡಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಲ್ಲ ಎಂದು ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.
ಶೇಕಡಾ 5ರಷ್ಟು ಮೀಸಲಾತಿ ರದ್ದು, ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಸೌಲಭ್ಯ ನಿಲ್ಲಿಸಿದೆ ಈ ರಾಜ್ಯ... Muslim Quota
ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರವಾಗಿ ಕರ್ನಾಟಕದ ನೆರೆ ರಾಜ್ಯದಲ್ಲಿ ದೊಡ್ಡ ವಿವಾದ ಭುಗಿಲೆದ್ದು, ರಾಜಕೀಯ ಚರ್ಚೆಗಳು ಕೂಡ ಜೋರಾಗಿದ್ದವು. ಚುನಾವಣೆಗೆ ಕೂಡ ಇದೇ ಅಸ್ತ್ರ ಬಳಸಿಕೊಂಡು ಸೋಲು &ಗೆಲುವಿನ ಲೆಕ್ಕಾಚಾರ ಕೂಡ ಆರಂಭ ಆಗಿತ್ತು. ಸುಮಾರು 12 ವರ್ಷಗಳ ಕಾಲ ನಡೆದುಕೊಂಡು ಬಂದ ಈ ತಿಕ್ಕಾಟ ಈಗ ದಿಢೀರ್ ಅಂತ್ಯವಾಗಿದೆ. ಅಂದಹಾಗೆ ಮಹಾರಾಷ್ಟ್ರ ರಾಜ್ಯದಲ್ಲಿ
ದಿಲ್ಲಿಯಲ್ಲಿ ಇ-ತ್ಯಾಜ್ಯ ಮರುಬಳಕೆ ಕೇಂದ್ರಗಳ ಕೊರತೆ: CPCB ವರದಿ
ಹೊಸದಿಲ್ಲಿ: ವಿದ್ಯುನ್ಮಾನ ಅಥವಾ ಇ-ತ್ಯಾಜ್ಯ ಮರುಬಳಕೆ ಸೌಲಭ್ಯಗಳಿಲ್ಲದ 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿಯೂ ಒಂದಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಇದರೊಂದಿಗೆ, ಅಂತಾರಾಜ್ಯ ಇ-ತ್ಯಾಜ್ಯ ಸಾಗಣೆಯ ಕುರಿತು ರಾಷ್ಟ್ರ ರಾಜಧಾನಿ ದಿಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ ಎಂದೂ ತಿಳಿಸಿದೆ. ಆದರೆ, ವಿದ್ಯುಚ್ಛಕ್ತಿ ಮತ್ತು ವಿದ್ಯುನ್ಮಾನ ಸಾಧನಗಳ ಎಲ್ಲಾ 106 ಪ್ರವರ್ಗಗಳನ್ನು ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು, 2022ರ ಅಡಿ ಇ-ತ್ಯಾಜ್ಯಗಳಾಗಿ ಸಂಪೂರ್ಣವಾಗಿ ಪಟ್ಟಿ ಮಾಡಿರುವ ಏಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಪೈಕಿ ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯೂ ಒಂದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಇ-ತ್ಯಾಜ್ಯ ನಿರ್ವಹಣೆ ವಿಷಯದ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಎ. ಸೆಂಥಿಲ್ ವೇಲ್ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಇದಕ್ಕೂ ಮುನ್ನ ಹಸಿರು ನ್ಯಾಯಮಂಡಳಿಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೈಗೊಂಡ ಕ್ರಮದ ಕುರಿತು ವರದಿ ಕೋರಿತ್ತು. ಫೆಬ್ರವರಿ 12ರ ತನ್ನ ಆದೇಶದಲ್ಲಿ ಬಿಹಾರ, ಜಾರ್ಖಂಡ್ ಮತ್ತು ಉತ್ತರಾಖಂಡ ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿಕ್ರಿಯೆ ಸ್ವೀಕರಿಸಿದೆ ಎಂಬುದನ್ನು ನ್ಯಾಯಪೀಠ ಗಮನಕ್ಕೆ ತೆಗೆದುಕೊಂಡಿದೆ. ದಿಲ್ಲಿ ಸೇರಿದಂತೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇ-ತ್ಯಾಜ್ಯ ಮರುಬಳಕೆ ಸೌಲಭ್ಯಗಳ ಕೊರತೆಯನ್ನು ಹೊಂದಿವೆ ಎಂದೂ ಈ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಮಾನ್ ಮೊರ್ಕೆಲ್ ಭಾರತದ ಕೋಚ್, ದಕ್ಷಿಣ ಆಫ್ರಿಕಾಗೆ ಅಣ್ಣ ಅಲ್ಬೀ ತರಬೇತಿ; ಯಾರಿಗೆ ಬೆಂಬಲ ಎಂಬುದೇ ತಾಯಿಗೆ ಗೊಂದಲ!
ದೊಡ್ಡ ಮಗ ಒಂದು ತಂಡ, ಸಣ್ಣ ಮಗ ಮತ್ತೊಂದು ತಂಡ! ಹೀಗಾದರೆ ತಾಯಿ ಆದವಳು ಯಾರನ್ನು ಬೆಂಬಲಿಸಬೇಕು ಹೇಳಿ? ಇಂಥಹದ್ದೊಂದು ಸಮಸ್ಯೆ ಎದುರಾಗಿರುವುದು ಭಾರತ ತಂಡದ ಬೌಲಿಂಗ್ ಕೋಚ್ ಮಾನ್ ಮೊರ್ಕೆಲ್ ಅವರ ತಾಯಿ ಮರಿಯಾನಾ ಮೊರ್ಕೆಲ್ ಅವರಿಗೆ.ಅವರ ಹಿರಿಯ ಪುತ್ರ ಅಲ್ಬೀ ಮೊರ್ಕೆಲ್ ದಕ್ಷಿಣ ಆಫ್ರಿಕಾ ತಂಡದಲ್ಲಿ ಕನ್ಸಲ್ಟೆಂಟ್ ಕೋಚ್. ಇಬ್ಬರೂ ಸಹ ಆಡಿದ್ದಾರೆ. ಇದೀಗ ಫೆಬ್ರವರಿ 22 ಭಾನುವಾರದಂದು ಅಹ್ಮದಾಬಾದ್ ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಪಂದ್ಯ ನಡೆಯುವಾಗ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯುವಾಗ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಪ್ರಿಯೋರಿಯಾದಲ್ಲಿ ನೆಲೆಸಿರುವ ತಾಯಿಗೆ ಸಂಕಟ. ಮನೆಯ ಸದಸ್ಯರೆಲ್ಲರಿಗೂ ಗೊಂದಲ. ಪರಸ್ಪರ ವಿಚಾರ ವಿನಿಮಯ ಇಲ್ಲ ಈ ಬಗ್ಗೆ ಪಂದ್ಯದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಅಲ್ಬೀ ಮೊರ್ಕೆಲ್ ಅವರನ್ನು ನೀವು ಮಾನ್ ಜೊತೆ ಕೋಚಿಂಗ್ ಟಿಪ್ಪಣಿಗಳನ್ನು ವಿನಿಮಯ ಮಾಡಿಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ. ``ಇಲ್ಲ, ಈ ಸಂದರ್ಭದಲ್ಲಿ ನಾವು ಪರಸ್ಪರ ಮಾತೇ ಆಡುವುದಿಲ್ಲ. ನನ್ನ ಪ್ರಕಾರ ನಮಗಿಂತಲೂ ನಮ್ಮ ತಾಯಿ ತುಂಬಾ ತಲೆ ಬಿಸಿ ಮಾಡುತ್ತಿರುತ್ತಾರೆ. ದಕ್ಷಿಣ ಆಫ್ರಿಕಾವನ್ನು ಬೆಂಬಲಿಸಬೇಕೋ ಅಥವಾ ಭಾರತವನ್ನೋ ಎಂಬ ಬಗ್ಗೆ ಗೊಂದಲದಲ್ಲಿರುತ್ತಾರೆ ವಿನೋದ ಮಾಡಿದರು. ನಾವು ಅತ್ಯಂತ ಕಠಿಣವಾದ ಗುಂಪಿನಲ್ಲಿದ್ದೆವು. ಆದರೆ ವಿಶ್ವಕಪ್ ನ ನಿಜವಾದ ಸವಾಲು ಈಗ ಪ್ರಾರಂಭವಾಗಿದೆ ಎಂಬುದು ನನ್ನ ಅನಿಸಿಕೆ. ಈಗ ನಾವು ಭಾರತ, ಜಿಂಬಾಬ್ನೆ ಮತ್ತು ವೆಸ್ಟ್ ಇಂಡೀಸ್ ಅನ್ನು ಎದುರಿಸಬೇಕಿದೆ. ಹಾಗಾಗಿ ಇದು ಕಠಿಣ ಹಂತ. ಮೂರೂ ಉತ್ತಮ ಪಂದ್ಯಗಳಾಗಲಿವ. ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಲು ಇಲ್ಲಿ ಕಠಿಣ ಸವಾಲನ್ನು ಮೀರಿ ನಿಲ್ಲಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಒತ್ತಡ ನಿಭಾಯಿಸುವ ಶಕ್ತಿಯಿದೆ ನಮ್ಮ ಬಳಿ ಅತ್ಯಂತ ಅನುಭವಿ ಬೌಲರ್ ಗಳ ಸಮೂಹವಿದೆ. ಅದೇ ರೀತಿ ಬ್ಯಾಟಿಂಗ್ ಸಹ ಉತ್ತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಇರಬಹುದು, ಐಪಿಎಲ್ ಇರಬಹುದು ಅಥವಾ ಇನ್ನಾವುದೇ ಲೀಗ್ ಗಳಲ್ಲಿ ನಮ್ಮ ಹುಡುಗರು ಒತ್ತಡದ ಕ್ಷಣಗಳನ್ನು ನಿಭಾಯಿಸಿದ್ದಾರೆ. ಇದು ಸ್ವಲ್ಪ ವಿಭಿನ್ನವಾಗಿದ್ದರೂ ಇದನ್ನು ಚೆನ್ನಾಗಿ ನಿಭಾಯಿಸಬಲ್ಲರು. ಹೀಗಾಗಿ ನಾನು ಜಾಸ್ತಿ ಚಿಂತಿಸುತ್ತಿಲ್ಲ ಎಂದು ತಿಳಿಸಿದರು. ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್ ಆಗಿದ್ದ ಅಲ್ಬೀ ಮೊರ್ಕೆಲ್ ಅವರು 2004ರಿಂದ 2012ರವರೆಗೆ ದಕ್ಷಿಣ ಆಪ್ರಿಕಾ ತಂಡದ ಭಾಗವಾಗಿದ್ದರು. ಒಂದು ಟೆಸ್ಟ್, 58 ಅಂತಾರಾಷ್ಟ್ರೀಯ ಏಕದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದರು. ಇನ್ನು ಅವರ ಸಹೋದರ 2006ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಾನ್ ಮೊರ್ಕೆಲ್ ಅವರು 86 ಟೆಸ್ಟ್, 117 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿದ್ದರು.
Tamil Nadu | ಲಾವಣ್ಯ ಆತ್ಮಹತ್ಯೆ ಪ್ರಕರಣ; ಚಾರ್ಜ್ ಶೀಟ್ ನಲ್ಲಿ ಮತಾಂತರ ಆರೋಪ ತಳ್ಳಿ ಹಾಕಿದ ಸಿಬಿಐ
ಹೊಸದಿಲ್ಲಿ: 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದ ತಮಿಳುನಾಡಿನ ತಂಜಾವೂರು ಜಿಲ್ಲೆಯ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ 17 ವರ್ಷದ ವಿದ್ಯಾರ್ಥಿನಿ ಲಾವಣ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಕೊನೆಗೂ ತನ್ನ ತನಿಖಾ ವರದಿ ಹಾಗೂ ದೋಷಾರೋಪ ಪಟ್ಟಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಸೇಂಟ್ ಮೇಕೇಲ್ಸ್ ಬಾಲಕಿಯರ ಶಾಲೆಯ 65 ವರ್ಷದ ವಾರ್ಡನ್ ಸಿಸ್ಟರ್ ಸಗಾಯ ಮೇರಿ ವಿರುದ್ಧ ಅಪ್ರಾಪ್ತ ಬಾಲಕಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಮಕ್ಕಳ ಮೇಲೆ ಕ್ರೌರ್ಯ ಎಸಗಿದ ದೋಷಾರೋಪಗಳನ್ನು ಹೊರಿಸಲಾಗಿದೆ. ಮಹತ್ವದ ತನಿಖೆಯಲ್ಲಿ ಲಾವಣ್ಯ ಮೃತಪಟ್ಟ ಬಳಿಕ, ಆಕೆಯ ಪೋಷಕರು VHP ನಾಯಕ ಮುತ್ತುವೇಲ್ ಹಾಗೂ ತಂಜಾವೂರಿನ ವಿವಿಧ ಬಿಜೆಪಿ ನಾಯಕರ ಪ್ರಭಾವಕ್ಕೆ ಒಳಗಾಗಿದ್ದರು ಎಂಬುದರತ್ತ ಸಿಬಿಐ ತನಿಖೆ ಬೊಟ್ಟು ಮಾಡಿದೆ. ಮೃತ ಬಾಲಕಿಯ ದೇಹವನ್ನು ಸ್ವೀಕರಿಸಲು ನಿರಾಕರಿಸಬೇಕು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಈ ನಾಯಕರು ಲಾವಣ್ಯ ಪೋಷಕರಿಗೆ ಸೂಚಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ. ಆದರೆ, ಕಾನ್ವೆಂಟ್ ಶಾಲೆಯ ಸಿಸ್ಟರ್ಗಳು ಹಾಗೂ ಶಿಕ್ಷಕರಿಂದ ಮತಾಂತರದ ಪ್ರಯತ್ನಗಳು ನಡೆದಿದ್ದವು ಎಂಬ ಆರೋಪಗಳು ಸಾಬೀತಾಗಿಲ್ಲ ಎಂದು ಸಿಬಿಐ ಹೇಳಿದೆ. ಜೂನ್ 2018ರಿಂದ ಜನವರಿ 2022ರವರೆಗೆ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯನ್ನು ನಡೆಸುತ್ತಿದ್ದ ಸೇಂಟ್ ಮೈಕೇಲ್ಸ್ ಹೋಮ್ ಫಾರ್ ಚಿಲ್ಡ್ರನ್ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಹಾಗೂ ವಾರ್ಡನ್ ಸಗಾಯ ಮೇರಿಯನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. 17 ವರ್ಷದ ಅಪ್ರಾಪ್ತ ಬಾಲಕಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಆಕೆಯ ಮೇಲೆ ಕ್ರೌರ್ಯದ ಕೃತ್ಯಗಳನ್ನು ಎಸಗಿದ ಆರೋಪಗಳನ್ನು ತಿರುಚಿರಾಪಳ್ಳಿಯ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಾಥಮಿಕ ತನಿಖೆಗಳು ಪಕ್ಷಪಾತದಿಂದ ಕೂಡಿವೆ ಎಂಬ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ರಾಜ್ಯ ಪೊಲೀಸರಿಂದ ಸಿಬಿಐಗೆ ಈ ಪ್ರಕರಣದ ತನಿಖೆಯನ್ನು ಹಸ್ತಾಂತರಿಸಿತ್ತು. ಮೈಕಲ್ ಪಟ್ಟಿಯಲ್ಲಿನ ಸೇಕ್ರೆಡ್ ಹಾರ್ಟ್ ಹಿರಿಯ ಪ್ರೌಢ ಶಾಲೆಯಲ್ಲಿ ಲಾವಣ್ಯ 12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಜುಲೈ 26, 2005ರಂದು ಜನಿಸಿದ್ದ ಲಾವಣ್ಯ ತನ್ನ ಶಾಲೆಯಲ್ಲಿ ಅತ್ಯುತ್ತಮ ಸಾಧಕಿಯಾಗಿದ್ದಳು. ಹತ್ತನೇ ತರಗತಿ ಪರೀಕ್ಷೆಯಲ್ಲಿ 500 ಅಂಕಗಳಲ್ಲಿ 489 ಅಂಕಗಳನ್ನು ಪಡೆದು ಇಡೀ ಶಾಲೆಯಲ್ಲಿ ಪ್ರಥಮಳಾಗಿದ್ದಳು. ಮುಂದಿನ ದಿನಗಳಲ್ಲಿ ಆಕೆಗೆ ವೈದ್ಯೆಯಾಗುವ ಕನಸಿತ್ತು. ಜನವರಿ 9, 2022ರ ಸಂಜೆ ತನ್ನ ವಿದ್ಯಾರ್ಥಿನಿಲಯದ ಪ್ರಾರ್ಥನಾ ಸಭಾಂಗಣದಲ್ಲಿ ಆಕೆ ‘ಅಗ್ರೊಸೋನ್’ (ಪ್ಯಾರಾಕ್ವೇಟ್ 24%) ಎಂಬ ಕಳೆನಾಶಕವನ್ನು ಸೇವಿಸಿದ್ದಳು. ಇದರಿಂದ ಆಕೆಯ ಶೇ. 85ರಷ್ಟು ಅಂಗಾಂಗಗಳು ಹಾನಿಗೀಡಾಗಿದ್ದವು. ಬಳಿಕ, ಜನವರಿ 19, 2022ರಂದು ಆಕೆ ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ವಾರ್ಡನ್ನಿಂದ ಉಂಟಾದ ಅತೀವ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದಾಗಿ ಲಾವಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಅಭಿಪ್ರಾಯಕ್ಕೆ ಸಿಬಿಐ ಬಂದಿದೆ. ಮಂದ ದೃಷ್ಟಿ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದ ಸಿಸ್ಟರ್ ಸಗಾಯ ಮೇರಿ, ಲಾವಣ್ಯಳನ್ನು ಬಲವಂತವಾಗಿ ಆಡಳಿತಾತ್ಮಕ ಕೆಲಸಗಳಿಗೆ ಬಳಸಿಕೊಂಡಿದ್ದಳು. ಶುಲ್ಕ ಸಂಗ್ರಹ ನಿರ್ವಹಣೆ, ದಾಖಲೆಗಳ ವಿಲೇವಾರಿ ಹಾಗೂ ಲೆಕ್ಕಪರಿಶೋಧನೆಗಾಗಿ ವೋಚರ್ ಗಳನ್ನು ಸಿದ್ಧಪಡಿಸುವುದು ಸೇರಿದಂತೆ ವಿದ್ಯಾರ್ಥಿನಿಲಯದ ಲೆಕ್ಕಾಚಾರದ ಕೆಲಸಗಳಿಗೆ ಆಕೆಯನ್ನು ಬಳಸಲಾಗುತ್ತಿತ್ತು. ಈ ದಾಖಲೆಗಳಲ್ಲಿ ತಪ್ಪುಗಳಾದ ಕಾರಣಕ್ಕೆ ಆಕೆಯನ್ನು ಪದೇಪದೇ ನಿಂದಿಸಲಾಗುತ್ತಿತ್ತು. 2021ರಲ್ಲಿ ಕ್ರಿಸ್ಮಸ್ ರಜೆಗಾಗಿ ಮನೆಗೆ ತೆರಳಲು ಅವಕಾಶ ನೀಡುವ ಬದಲು, ತಿರುಚ್ಚಿಯಲ್ಲಿ ಲೆಕ್ಕಪರಿಶೋಧನೆ ಕಾರ್ಯ ಪೂರೈಸುವಂತೆ ಒತ್ತಡ ಹೇರಲಾಗಿತ್ತು. ಈ ದುರ್ಬಳಕೆ ಆಕೆಯ ಮಂಡಳಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದನ್ನು ತಡೆಯಿತು ಹಾಗೂ ಆಕೆಯನ್ನು ಹತಾಶೆ ಮತ್ತು ಅಸಹಾಯಕತೆಯ ಸ್ಥಿತಿಗೆ ತಳ್ಳಿತು. ಲಾವಣ್ಯಳ ನಿಧನದ ನಂತರ, ಆಕೆಯ ತಂದೆ ಮುರುಗನಂದಂ ಹಾಗೂ ಮಲತಾಯಿ ಶರಣ್ಯ VHP ನಾಯಕ ಮುತ್ತುವೇಲ್ ಹಾಗೂ ತಂಜಾವೂರಿನ ಕೆಲವು ಬಿಜೆಪಿ ನಾಯಕರ ಪ್ರಭಾವಕ್ಕೊಳಗಾದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಾಯಕರು ಲಾವಣ್ಯಳ ಮೃತದೇಹವನ್ನು ಶವಾಗಾರದಿಂದ ಸ್ವೀಕರಿಸದಂತೆ ಸೂಚಿಸಿ, ತಂಜಾವೂರು ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿಸಲಾಗಿದೆ. ಮುತ್ತುವೇಲ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತ ಅಪ್ರಾಪ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸುವ ವೀಡಿಯೊಗಳನ್ನು ಹಂಚಿಕೊಂಡಿದ್ದಾನೆ ಎಂಬ ಸಂಗತಿಯನ್ನು ಸಿಬಿಐ ಪತ್ತೆಹಚ್ಚಿದೆ. ಅಲ್ಲದೆ, ಮತಾಂತರದ ಕುರಿತು ಅಪಪ್ರಚಾರ ನಡೆಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಆ ಆರೋಪಗಳಿಗೆ ಅಂತಿಮವಾಗಿ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಮತಾಂತರದ ವಿವಾದವನ್ನು ಪರಿಶೀಲಿಸಲು ಸಿಬಿಐ ಶಾಲೆಯ ಇತಿಹಾಸ ಹಾಗೂ ದಾಖಲೆಗಳ ಕುರಿತು ವ್ಯಾಪಕ ಶೋಧನೆ ನಡೆಸಿತ್ತು. 2010ರವರೆಗೆ ಶಾಲೆ ತೊರೆದಿದ್ದ ಎಲ್ಲ ವಿದ್ಯಾರ್ಥಿಗಳ ವರ್ಗಾವಣೆ ಪತ್ರಗಳನ್ನು ಸಂಗ್ರಹಿಸಿ ಪರಿಶೀಲನೆಗೊಳಪಡಿಸಿತು. ಆ ಅವಧಿಯಲ್ಲಿ ವ್ಯಾಸಂಗ ಮಾಡಿದ ಯಾವುದೇ ವಿದ್ಯಾರ್ಥಿಯೂ ಮತಾಂತರಗೊಂಡಿರಲಿಲ್ಲ ಎಂಬುದು ತನಿಖೆಯಲ್ಲಿ ಪತ್ತೆಯಾಯಿತು. ಮತ್ತೊಬ್ಬ ವಿದ್ಯಾರ್ಥಿ ಮತಾಂತರದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದನೆಂಬ ವದಂತಿಗಳ ಕುರಿತೂ ಸಿಬಿಐ ತನಿಖೆ ನಡೆಸಿತ್ತು. ಆದರೆ, ಆ ಆರೋಪವೂ ಆಧಾರರಹಿತವೆಂದು ಪತ್ತೆಯಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಲಾವಣ್ಯ, ಪೊಲೀಸರು, ನ್ಯಾಯಿಕ ದಂಡಾಧಿಕಾರಿ ಹಾಗೂ ಮಕ್ಕಳ ಕಲ್ಯಾಣಾಧಿಕಾರಿಗೆ ನೀಡಿದ್ದ ಔಪಚಾರಿಕ ಹೇಳಿಕೆಯಲ್ಲಿ ವಾರ್ಡನ್ ನಿಂದ ಕೆಲಸಕ್ಕೆ ಸಂಬಂಧಿಸಿದ ಕಿರುಕುಳವನ್ನೇ ನಿರಂತರವಾಗಿ ಉಲ್ಲೇಖಿಸಿದ್ದಳು. ಧಾರ್ಮಿಕ ಮತಾಂತರದ ಕುರಿತು ಯಾವುದೇ ಉಲ್ಲೇಖ ಮಾಡಿರಲಿಲ್ಲ ಎಂಬ ಸಂಗತಿಯೂ ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲೇ, ಮತಾಂತರದ ಪ್ರಯತ್ನ ನಡೆದಿತ್ತು ಎಂಬ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಸಿಬಿಐ ತನ್ನ ದೋಷಾರೋಪದ ಸಾರಾಂಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಸೌಜನ್ಯ: thenewsminute.com
ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಡೇವಿಡ್ ಸಿಕ್ವೇರಾ ಅವರ ಆರೋಗ್ಯ ವಿಚಾರಿಸಿದ ಸ್ಪೀಕರ್ ಯುಟಿ ಖಾದರ್
ಉಡುಪಿ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಉದ್ಯೋಗಿ ಖ್ಯಾತ ಸಮಾಜ ಸೇವಕ ಡೇವಿಡ್ ಸಿಕ್ವೇರಾ ಇವರು ತೀವ್ರ ಬೆನ್ನು ನೋವಿನಿಂದ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಚಾರ ತಿಳಿದ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಕೋಟೇಶ್ವರಕ್ಕೆ ಆಗಮಿಸಿ ಡೇವಿಡ್ರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ತಮ್ಮ ಹಳೆಯ ರಾಜಕೀಯ ಓಡಾಟದ ದಿನಗಳನ್ನು ನೆನಪಿಸಿಕೊಂಡು ಸಮಾಜಕ್ಕೆ ತಮ್ಮಂತಹ ಸಮಾಜ ಸೇವಕರ ಅಗತ್ಯವಿದ್ದು ಶೀಘ್ರ ಗುಣಮುಖವಾಗಲೆಂದು ಯುಟಿ ಖಾದರ್ ಹಾರೈಸಿದರು.
ಕೊಲ್ಲೂರು: ಪ್ರಾಮಾಣಿಕತೆಗೆ ನಿದರ್ಶನವಾದ ಎರಡು ಘಟನೆ; ಸಾರ್ವಜನಿಕರಿಂದ ಶ್ಲಾಘನೆ
ಕುಂದಾಪುರ, ಫೆ.19: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ದುಬಾರಿ ಮೊಬೈಲ್ ಫೋನ್, ನಗದನ್ನು ಪೊಲೀಸರ ಸಮ್ಮುಖದಲ್ಲಿ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಒಂದೇ ದಿನದಲ್ಲಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಗುರುವಾರ) ವರದಿಯಾಗಿದೆ. ಘಟನೆಯೊಂದರಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ಸುಮಾರು 15 ಸಾವಿರ ರೂಪಾಯಿ ನಗದು ಹಣವಿದ್ದ ಬ್ಯಾಗನ್ನು ಹೆಸರು ಹೇಳಲು ಇಚ್ಚಿಸದ ಪ್ರವಾಸಿಗರೊಬ್ಬರು ತಂದು ಠಾಣೆಗೆ ಒಪ್ಪಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಭಿಷೇಕ್ ಎಂಬ ಕೇರಳದ ಕೊಲ್ಲಂ ಪೊಲೀಸ್ ಠಾಣೆಯ ಸಿಬ್ಬಂದಿ ಪತ್ನಿಯ ಸುಮಾರು 3 ಸಾವಿರ ರೂ. ನಗದು ಮತ್ತು ಐಫೋನ್ ಮೊಬೈಲ್ ಇದ್ದ ಬ್ಯಾಗನ್ನು ಕೊಡಚಾದ್ರಿ ಜೀಪ್ ಚಾಲಕ ಮುದೂರಿನ ಶರತ್ ಎನ್ನುವರು ಠಾಣೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಎರಡು ಪ್ರತ್ಯೇಕ ಘಟನೆಯಲ್ಲಿ ನಗ-ನಗದು ಕಳೆದುಕೊಂಡವರಿಗೆ ಅವರ ವಸ್ತುಗಳನ್ನು ಕೊಲ್ಲೂರು ಪೊಲೀಸ್ ಠಾಣೆಯ ಮುಖಾಂತರ ಹಸ್ತಾಂತರಿಸಿದ್ದು ಪ್ರವಾಸಿಗ ಮತ್ತು ಜೀಪ್ ಚಾಲಕರ ಪ್ರಾಮಾಣಿಕತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೇವೆ ಪುನರಾರಂಭ: ಆರೋಗ್ಯ ಇಲಾಖೆ ಸ್ಪಷ್ಟನೆ
ಬೆಂಗಳೂರು : ಸರಕಾರಿ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್ ಐ ಸ್ಕ್ಯಾನಿಂಗ್ ಸೇವೆಗಳನ್ನು ನೀಡಲು ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಸಂಸ್ಥೆಯು ಫೆ.18ರಿಂದ ಸೇವೆಗಳನ್ನು ನಿಲ್ಲಿಸಿದ್ದು, ರಾಜ್ಯ ಸರಕಾರವು ಪರ್ಯಾಯ ವ್ಯವಸ್ಥೆಯನ್ನು ಮಾಡಿದೆ. ಹಾಗೆಯೇ ಎರಡು ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್ ಐ ಸ್ಕ್ಯಾನಿಂಗ್ ಸೇವೆ ಪುನರಾರಂಭವಾಗಲಿದೆ ಎಂದು ಆರೋಗ್ಯ ಇಲಾಖೆಯು ಸ್ಪಷ್ಟಪಡಿಸಿದೆ. ಗುರುವಾರ ಆರೋಗ್ಯ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ರಾಜ್ಯ ಸರಕಾರವು 2017ರಿಂದ ರಾಜ್ಯದ 13 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಸೇವೆಯನ್ನು ನೀಡಲು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡ್ ರೋಗಿಗಳಿಗೆ ಉಚಿತವಾಗಿ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಶೇ.30ರಷ್ಟು ಸಹಾಯಧನದೊಂದಿಗೆ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದೆ. ಸರಕಾರವು 2019ರಿಂದ 143 ಕೋಟಿ ರೂ. ಪಾವತಿ ಉಳಿಸಿಕೊಂಡಿದೆ ಎಂದು ಖಾಸಗಿ ಸಂಸ್ಥೆ ಆರೋಪಿಸಿದೆ. ಈ ಆರೋಪ ಆಧಾರರಹಿತವಾಗಿದ್ದು, ಈ ಮೊತ್ತವನ್ನು ಪಾವತಿಸಲಾಗುವುದಿಲ್ಲ. ಸಿಟಿ ಮತ್ತು ಎಂಆರ್ ಐ ಸ್ಕ್ಯಾನಿಂಗ್ ಸೇವೆಗಳನ್ನು ಒದಗಿಸಲು ಕರ್ನಾಟಕ ಸರಕಾರವು ಸಾಕಷ್ಟು ಹಣವನ್ನು ಹೊಂದಿದೆ. ಸರಿಯಾದ ಪಾವತಿಗಳನ್ನು ಮಾತ್ರ ಬಿಡುಗಡೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಈಗ ಖಾಸಗಿ ಸಂಸ್ಥೆಯು ಸ್ಕ್ಯಾನಿಂಗ್ ಸೇವೆಗಳನ್ನು ನಿಲ್ಲಿಸಿದೆ. ಆದರೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಎಂಪನೆಲ್ ಮಾಡಲಾದ ಸರಕಾರಿ/ಖಾಸಗಿ ವೈದ್ಯಕೀಯ ಕಾಲೇಜುಗಳು/ಖಾಸಗಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೇವೆಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯು ಹೇಳಿದೆ.
ಲಿಂಗಸುಗೂರು | ಬಾಲ್ಯ ವಿವಾಹ ಮುಕ್ತ ತಾಲೂಕು ಮಾಡಲು ಸರ್ವರ ಪಾತ್ರ ಅಗತ್ಯ : ಸುಜಾತ ಹೂನೂರು
ಲಿಂಗಸುಗೂರು: ತಾಲೂಕನ್ನು ಬಾಲ್ಯ ವಿವಾಹ ಮುಕ್ತ ತಾಲೂಕನ್ನಾಗಿ ರೂಪಿಸಲು ಎಲ್ಲರ ಪಾತ್ರ ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಹೂನೂರು ಹೇಳಿದರು. ತಾಲೂಕಿನ ಕಸ್ತೂರಬಾ ಗಾಂಧಿ ಬಾಲಕಿಯರ ವಿದ್ಯಾಲಯ ಹಾಗೂ ಸರ್ಕಾರಿ ಪ್ರೌಢಶಾಲೆ ಬಯ್ಯಾಪೂರಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಲಿಂಗಸುಗೂರು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು POCSO Act ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಬಾಲ್ಯ ವಿವಾಹ’ ಪದ್ಧತಿ ಮಕ್ಕಳ ಬಾಲ್ಯವನ್ನು ಹಾಳುಮಾಡುವ ಸಾಮಾಜಿಕ ಪಿಡುಗಾಗಿದೆ. ಇದನ್ನು ನಿರ್ಮೂಲನೆಗೊಳಿಸಲು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು. ಬಾಲ್ಯ ವಿವಾಹವು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು. ಮಕ್ಕಳಿಗೆ ಕಾನೂನಿನ ಬಗ್ಗೆ ಸಮಗ್ರ ಅರಿವು ಇರಬೇಕು. ಕಾನೂನು ತೊಡಕುಗಳಿಗೆ ಸಿಕ್ಕಿಕೊಳ್ಳದೆ ಸತ್ಪ್ರಜೆಯಾಗಿ ಬದುಕಬೇಕು ಎಂದು ಸಲಹೆ ನೀಡಿದರು. ಮಕ್ಕಳು ದೇಶದ ಭವಿಷ್ಯವಾಗಿದ್ದು, ತಮ್ಮ ಹಕ್ಕುಗಳು ಹಾಗೂ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸಬೇಕು. ಇತ್ತೀಚೆಗೆ ಹುಡುಗರ ಮೇಲೆಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಹೆಚ್ಚಿನ ಗಮನ ವಹಿಸಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ವೆಂಕಟೇಶ ಪಿ.ಎಸ್.ಐ ಮುದಗಲ್, ಶಿವಶಂಕರ ಹೆಚ್. ಪ್ರಭಾರಿ ಮುಖ್ಯಗುರು, ಶಿಕ್ಷಕಿ ಪಾರ್ವತಿ, ಶಿಕ್ಷಣ ಸಂಯೋಜಕ ಮಹಾಂತೇಶ ಬಳ್ಳೋಳ್ಳಿ, ಅಪ್ಪಣ್ಣ ಎ.ಆರ್. ಹವಾಲ್ದಾರ, ವಿಜಯ ಮೇಟಿ, ಜಿ. ಸೌಂಧರಿ, ಸೈಯದ್ ವದುದ್, ವೀರೇಶ ಹಡಪಾದ, ಜರ್ತಾನ ಅಫ್ರೀನ್, ಮೈಬೂಬಸಾಬ ಬಾಗವಾನ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಕ್ಷಣಾ ಸಾಧನ, ಮುಂಜಾಗ್ರತೆ ಇಲ್ಲದೆ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುವ ಕಾರ್ಯ; ಆಗದಿರಲಿ ಪ್ರಾಣಕ್ಕೆ ಸಂಚಕಾರ
ಮನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಮೃತಪಟ್ಟ ದಾರುಣ ಘಟನೆ ಕಲಬುರ್ಗಿ ಜಿಲ್ಲೆಯ ಹೀರಾಪೂರ ಪ್ರದೇಶದ ಬಬಲಾದ ರಸ್ತೆ ಸಮೀಪ ಮಾದರಸನಹಳ್ಳಿಯಲ್ಲಿ ಫೆ. 18ರಂದು ನಡೆದಿದೆ. ಮೃತರನ್ನು ಹೀರಾಪೂರ ವ್ಯಾಪ್ತಿಯ ಮಾದರಸನಹಳ್ಳಿಯ ನಿವಾಸಿ ಶಿವಕುಮಾರ್ ನಂದೂರಕರ್ (52) ಹಾಗೂ ಇಂದಿರಾ ನಗರದ ನಿವಾಸಿ ರತನ್ ಭುಜಂಗರಾವ ಹೊಟ್ಕರ್ (60) ಎಂದು ಗುರುತಿಸಲಾಗಿದೆ. ಶಿವಕುಮಾರ್ ಮತ್ತು ರತನ್ ಸ್ನೇಹಿತರಾಗಿದ್ದು, ಶಿವಕುಮಾರ್ ಅವರ ಮನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದಿದ್ದಾಗ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ರತನ್ ಮೊದಲು ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಾಗ ಉಸಿರುಗಟ್ಟಿದೆ. ಆತನನ್ನು ರಕ್ಷಿಸಲು ಶಿವಕುಮಾರ್ ಟ್ಯಾಂಕ್ ಗೆ ಇಳಿದಿದ್ದು, ವಿಷಕಾರಿ ಅನಿಲ ಸೇವನೆಯಿಂದ ಇಬ್ಬರೂ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಅಶೋಕ್ ನಗರ ಪೊಲೀಸರು ಇದನ್ನು ಅಸ್ವಾಭಾವಿಕ ಸಾವಿನ ಪ್ರಕರಣವೆಂದು ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಸರಿಯಾದ ಸುರಕ್ಷತಾ ಪ್ರೋಟೋಕಾಲ್ ಗಳನ್ನು ಅನುಸರಿಸಲಾಗಿದೆಯೇ ಮತ್ತು ಕಾರ್ಮಿಕರಿಗೆ ರಕ್ಷಣಾ ಸಾಧನಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ದುರಂತವು ನೈರ್ಮಲ್ಯ ಕಾರ್ಮಿಕರು ಎದುರಿಸುತ್ತಿರುವ ಅಪಾಯವನ್ನು ಮತ್ತು ಸೆಪ್ಟಿಕ್ ಟ್ಯಾಂಕ್ಗಳು ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ಸ್ವಚ್ಛಗೊಳಿಸುವಾಗ ಸುರಕ್ಷತಾ ಪ್ರೋಟೋಕಾಲ್ಗಳ ತುರ್ತು ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸೆಪ್ಟಿಕ್ ಟ್ಯಾಂಕ್ಗಳಲ್ಲಿ ಮೀಥೇನ್, ಹೈಡ್ರೋಜನ್ ಸಲ್ಫೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ ನಂತಹ ಅಪಾಯಕಾರಿ ಅನಿಲಗಳು ಇರುವ ಸಾಧ್ಯತೆ ಇದೆ; ಇವು ಸೀಮಿತ ಸ್ಥಳಗಳಲ್ಲಿ ಕೆಲವೇ ನಿಮಿಷಗಳಲ್ಲಿ ಪ್ರಾಣಕ್ಕೆ ಸಂಚಕಾರವಾಗಬಹುದು. ►ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ವೇಳೆ ಸಂಭವಿಸಿದ ದುರಂತಗಳು 2025 ಅಕ್ಟೋಬರ್ 20ರಂದು ಹಿಸಾರ್ ಜಿಲ್ಲೆಯ ಹನ್ಸಿಯಲ್ಲಿರುವ ಹೋಟೆಲ್ ನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಗರ್ಹಿ ಗ್ರಾಮದ ಸೋಮೀರ್ ಮತ್ತು ಜಮಾವರಿ ಗ್ರಾಮದ ವೀರೇಂದರ್ ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಒಳಚರಂಡಿ ಮೋಟಾರ್ ದೋಷಗೊಂಡಿದ್ದರಿಂದ ಇಬ್ಬರೂ ಟ್ಯಾಂಕ್ ಒಳಗೆ ಇಳಿದಿದ್ದರು. ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಟ್ಯಾಂಕ್ ಗೆ ಇಳಿದ ತಕ್ಷಣ ಒಬ್ಬ ಕಾರ್ಮಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಸಹೋದ್ಯೋಗಿ ಇಳಿದಾಗ ಆತನು ಕೂಡ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ. ಈ ಘಟನೆ ನಡೆದ ಆರು ವಾರಗಳ ನಂತರ ಹರಿಯಾಣ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿತ್ತು. 2025 ಮೇ 27ರಂದು ಜೈಪುರದ ಸೀತಾಪುರ ಕೈಗಾರಿಕಾ ಪ್ರದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಕಣಗಳನ್ನು ಹೊರತೆಗೆಯಲು ಸೆಪ್ಟಿಕ್ ಟ್ಯಾಂಕ್ ಗೆ ಇಳಿದಿದ್ದ ನಾಲ್ವರು ವ್ಯಕ್ತಿಗಳು ವಿಷಕಾರಿ ಹೊಗೆಯಿಂದ ಸಾವಿಗೀಡಾದ ಘಟನೆ ವರದಿಯಾಗಿತ್ತು. ಸಂಜೀವ್ ಪಾಲ್, ಹಿಮಾಂಶು ಸಿಂಗ್, ರೋಹಿತ್ ಪಾಲ್ ಮತ್ತು ಅರ್ಪಿತ್ ಯಾದವ್ ಎಂಬ ಕಾರ್ಮಿಕರು 10 ಅಡಿ ಆಳದ ಟ್ಯಾಂಕ್ ಗೆ ಇಳಿದಿದ್ದರು. ಮೊದಲಿಗೆ ಇವರು ಟ್ಯಾಂಕ್ ಗೆ ಇಳಿಯಲು ನಿರಾಕರಿಸಿದ್ದರು. ಆದರೆ ಹೆಚ್ಚುವರಿ ಹಣ ನೀಡುವುದಾಗಿ ಕಂಪೆನಿ ಭರವಸೆ ನೀಡಿದ ಬಳಿಕ ಇಳಿದಿದ್ದರು ಎನ್ನಲಾಗಿದೆ. 2025 ಮೇ 23ರಂದು ಬಿಕಾನೇರ್ನ ಉಣ್ಣೆಯ ಉಡುಪು ಘಟಕದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾಗಿದ್ದರು. ಕರ್ಣಿ ಕೈಗಾರಿಕಾ ಪ್ರದೇಶದ ಭವಾನಿ ಉಣ್ಣೆ ಮಿಲ್ ನಲ್ಲಿ ಈ ದುರಂತ ಸಂಭವಿಸಿದೆ. ಉಣ್ಣೆಯ ದಾರಗಳನ್ನು ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕ ಪ್ರಕ್ರಿಯೆಯಿಂದ ಟ್ಯಾಂಕ್ ತ್ಯಾಜ್ಯ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಅಲ್ಲಿ ಸಂಗ್ರಹವಾದ ವಿಷಕಾರಿ ಅನಿಲವನ್ನು ಉಸಿರಾಡಿ ಸಾಗರ್ (32), ಅನಿಲ್ (30) ಮತ್ತು ಗಣೇಶ್ ಕರ್ಣಿ (28) ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2025 ಮೇ 16ರಂದು ಗುಜರಾತ್ ನ ಅಹಮದಾಬಾದ್ ನಗರದ ಡ್ಯಾನಿಲಿಮ್ಡಾ ಪ್ರದೇಶದ ಜೀನ್ಸ್ ತೊಳೆಯುವ ಘಟಕದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮೂವರು ಕಾರ್ಮಿಕರು ವಿಷಕಾರಿ ಅನಿಲವನ್ನು ಉಸಿರಾಡಿ ಸಾವಿಗೀಡಾಗಿದ್ದರು. ಕಾರ್ಮಿಕರಾದ ಪ್ರಕಾಶ್ ಪರ್ಮಾರ್, ವಿಶಾಲ್ ಠಾಕೋರ್ ಮತ್ತು ಸುನಿಲ್ ರಥ್ವಾ ಟ್ಯಾಂಕ್ ಗೆ ಇಳಿದಿದ್ದು, ಅಲ್ಲಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. 2025 ನವೆಂಬರ್ 4ರಂದು ನೋಯ್ಡಾದ ಸೆಕ್ಟರ್ 63ರ ಛೋತ್ಪುರ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ 7 ಅಡಿ ಆಳದ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಅದರೊಳಗೆ ಬಿದ್ದು ಇಬ್ಬರು ಸಹೋದರರು ಸಾವಿಗೀಡಾದ ಘಟನೆ ವರದಿಯಾಗಿದೆ. ಮನೆಯ ಒಳಚರಂಡಿ ಪೈಪ್ಲೈನ್ ಕೆಟ್ಟುಹೋಗಿದ್ದರಿಂದ ಅದನ್ನು ಸರಿಪಡಿಸಲು ಚಂದ್ರಭನ್ ಮತ್ತು ರಾಜು ಮ್ಯಾನ್ ಹೋಲ್ ಅನ್ನು ಭಾಗಶಃ ತೆರೆದಿದ್ದರು. ಸ್ವಚ್ಛಗೊಳಿಸುವಾಗ ಚಂದ್ರಭನ್ ಕಾಲು ಜಾರಿ ಬಿದ್ದಿದ್ದು, ಕಿರಿಯ ಸಹೋದರ ರಾಜು ರಕ್ಷಿಸಲು ಪ್ರಯತ್ನಿಸಿದರೂ ಇಬ್ಬರೂ ಟ್ಯಾಂಕ್ ಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2025 ಅಕ್ಟೋಬರ್ನಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನದಲ್ಲಿ ತಮಿಳುನಾಡು ಮೂಲದ ಮೂವರು ಕಾರ್ಮಿಕರು ಹೋಟೆಲ್ ನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದು ಸಾವಿಗೀಡಾಗಿದ್ದರು. ಅದೇ ವರ್ಷ ಡಿಸೆಂಬರ್ನಲ್ಲಿ ತೆಲಂಗಾಣದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದಿದ್ದ ಅನ್ಯರಾಜ್ಯದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರು. ಕಳೆದ ವರ್ಷ ಜೂನ್ ನಲ್ಲಿ ಉತ್ತರಪ್ರದೇಶದ ಪಿಲಿಭಿತ್ ನಲ್ಲಿ ತಮ್ಮ ಮನೆಯ ಹೊರಗಿರುವ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಒಂದೇ ಕುಟುಂಬದ ಮೂವರು ಸದಸ್ಯರು ಸಾವಿಗೀಡಾಗಿದ್ದರು. ಭಾರತದಾದ್ಯಂತ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವ ವೇಳೆ 2023ರಲ್ಲಿ 63 ಮಂದಿ, 2024ರಲ್ಲಿ 50 ಮಂದಿ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಾಗ ಕನಿಷ್ಠ 347 ಜನರು ಸಾವನ್ನಪ್ಪಿದ್ದಾರೆ ಎಂದು 2025ರಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾದರೆ ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು. ಅಪಘಾತದಿಂದ ಅಂಗವೈಕಲ್ಯ ಉಂಟಾದರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಕನಿಷ್ಠ 10 ಲಕ್ಷ ರೂ. ಪರಿಹಾರ ಪಾವತಿಸಬೇಕು. ಅಂಗವೈಕಲ್ಯ ಶಾಶ್ವತ ಸ್ವರೂಪದ್ದಾಗಿದ್ದರೆ ಕನಿಷ್ಠ ಪರಿಹಾರವನ್ನು 20 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ ಎಂದು ಕಳೆದ ವರ್ಷ ಬಲರಾಮ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತಿಳಿಸಿತ್ತು.
ಉಡುಪಿ| ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಯತ್ನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಉಡುಪಿ, ಫೆ.19: ಪೆರ್ಡೂರು ಗ್ರಾಮದಲ್ಲಿ ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಾಡಿಗಾರಿನ ರಾಘವೇಂದ್ರ (36) ಹಾಗೂ ಪೆರ್ಡೂರು ಕುಂಜದಕಟ್ಟೆ ಸುಧೀಂದ್ರ ಶೆಟ್ಟಿ ಯಾನೆ ಬಾಬು (36) ಎಂದು ಗುರುತಿಸಲಾಗಿದೆ. ಫೆ.17ರ ರಾತ್ರಿ 10:30ರ ಸುಮಾರಿಗೆ ರಾಘವೇಂದ್ರ ಮತ್ತು ಸುಧೀಂದ್ರ ಅವರು ಪೆರ್ಡೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿದ್ದ ಕರುವನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದರೆಂದು ಆರೋಪಿಸಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರ ಕಲಂ 5, 12ರಂತೆ ಪ್ರಕರಣ ದಾಖಲಾಗಿತ್ತು. ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಅವರ ನಿರ್ದೇಶನದಂತೆ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹಿರಿಯಡಕ ಠಾಣೆಯ ಪೊಲೀಸರು ರಾಘವೇಂದ್ರ (36) ಮತ್ತು ಸುಧೀಂದ್ರ ಶೆಟ್ಟಿ ಬಾಬು (36) ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದಲ್ಲದೇ ಅವರು ಕೃತ್ಯಕ್ಕೆ ಬಳಸಿದ ಅಟೋರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Yadgiri | ಎಸೆಸೆಲ್ಸಿ ಪರೀಕ್ಷೆ ಹಿನ್ನೆಲೆ : ಪಾಲಕರಿಗೆ ಸಚಿವರಿಂದ ಪತ್ರ
ಯಾದಗಿರಿ: ಜಿಲ್ಲೆಯ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕ-ಪೋಷಕರಿಗೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ 10ನೇ ತರಗತಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಹಂತವಾಗಿದ್ದು, ಇನ್ನೂ ಸುಮಾರು 40 ದಿನಗಳಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧರಾಗುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದ ಶಾಲಾ ಅವಧಿಗೆ ಮುನ್ನ ಹಾಗೂ ನಂತರ ವಿಶೇಷ ತರಗತಿಗಳು, ಘಟಕ ಪರೀಕ್ಷೆಗಳು, ಪರೀಕ್ಷಾ ಭಯ ನಿವಾರಣೆಗೆ ಆಪ್ತ ಸಮಾಲೋಚನೆ, ಮುಖ್ಯ ಘಟಕಾಂಶಗಳ ಪುನರಾವರ್ತನೆ ಹಾಗೂ ರಾತ್ರಿ ತರಗತಿಗಳ ಮೂಲಕ ಪೂರಕ ಶೈಕ್ಷಣಿಕ ವಾತಾವರಣ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಳಿದಿರುವ 40 ದಿನಗಳಲ್ಲಿ ವಿದ್ಯಾರ್ಥಿಗಳನ್ನು ಕೃಷಿ ಅಥವಾ ಮನೆ ಕೆಲಸಗಳಲ್ಲಿ ತೊಡಗಿಸಬಾರದು. ಟಿ.ವಿ. ಮತ್ತು ಮೊಬೈಲ್ ಬಳಕೆ ನಿಯಂತ್ರಿಸಿ, ಪ್ರತಿದಿನ ಶಾಲೆಗೆ ಕಳುಹಿಸಿ, ಓದಿಗೆ ಪ್ರೋತ್ಸಾಹ ನೀಡಿ ಮನೆಯಲ್ಲಿ ಉತ್ತಮ ಅಧ್ಯಯನ ವಾತಾವರಣ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಗುಣಮಟ್ಟದ ಶಿಕ್ಷಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಅವರು ಪತ್ರದಲ್ಲಿ ಕರೆ ನೀಡಿದ್ದಾರೆ.
ಉಕ್ರೇನ್ ಆಹಾರ ಸರಬರಾಜು ಮಾರ್ಗಕ್ಕೆ ಪೆಟ್ಟು, ಅದಿರು ರಫ್ತಿಗೂ ಅಡ್ಡಿ ಮಾಡಿದ ರಷ್ಯಾ ದಾಳಿ | Ukraine And Russia
ರಷ್ಯಾ ಸೇನೆ ಉಕ್ರೇನ್ ವಿರುದ್ಧ ಭೀಕರ ದಾಳಿ ಮಾಡುತ್ತಾ ಉಕ್ರೇನ್ ದೇಶದ ಆಹಾರ ಸರಪಳಿಗೆ ದೊಡ್ಡ ಪೆಟ್ಟು ಕೊಡುತ್ತಿದೆ. ಇದರ ಜೊತೆಗೆ ಅದಿರು ರಫ್ತು ಕೂಡ ಬಂದ್ ಆಗುವಂತೆ ಮಾಡಿದ್ದು, ಬಂದರು ಪ್ರದೇಶಗಳ ಮೇಲೆ ನಡೆದಿರುವ ರಷ್ಯಾ ದಾಳಿಯಿಂದ ಇದೀಗ ಉಕ್ರೇನ್ ಪರದಾಡುತ್ತಿದೆ. ಹೀಗೆ ಕಳೆದ 4 ವರ್ಷಗಳಿಂದ ನಿರಂತರವಾಗಿ ನಡೆದ ಯುದ್ಧ ಘೋರ ವಾತಾವರಣ ಸೃಷ್ಟಿಸಿದೆ.
Bidar | ಒಳಮೀಸಲಾತಿಯ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಅನಿಲಕುಮಾರ್ ಬೆಲ್ದಾರ್
ಬೀದರ್ : ಒಳಮೀಸಲಾತಿ ಕುರಿತ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವವರೆಗೆ ಹಳೆ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇಲ್ಲವಾದರೆ ಬಲಗೈ ಜಾತಿಗಳ ಒಕ್ಕೂಟದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಲಗೈ ಜಾತಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಬೆಲ್ದಾರ್ ಎಚ್ಚರಿಸಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯನ್ನು ಗುಂಪು-ಎ, ಬಿ, ಸಿ ಎಂದು ವರ್ಗೀಕರಿಸಿ ಜಾತಿ ಪ್ರಮಾಣ ಪತ್ರ ವಿತರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಕಳೆದ ಎರಡು ವರ್ಷಗಳಿಂದ ಒಳಮೀಸಲಾತಿ ಕಾರಣದಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದು, ವಯೋಮಿತಿ ಮೀರಿದ ಅಭ್ಯರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಸ್ತುತ ಪದ್ದತಿ ಬಲಗೈ ಸಮುದಾಯಗಳಿಗೆ ಅನ್ಯಾಯಕಾರಿಯಾಗಿದ್ದು, ಮುಖ್ಯಮಂತ್ರಿ ತಕ್ಷಣ ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ ಮಾತನಾಡಿ, ಪರಿಶಿಷ್ಟ ಜಾತಿಯ ಎಲ್ಲಾ ಪ್ರವರ್ಗಗಳಿಗೆ ನಿಗದಿತ ಪ್ರಮಾಣದಲ್ಲಿ ಮೀಸಲಾತಿ ಹಂಚಿಕೆ ಆಗುವಂತೆ ನೇಮಕಾತಿ ಪ್ರಾಧಿಕಾರ ರಚಿಸಿ, ಹುದ್ದೆಗಳನ್ನು ಕ್ರೂಢೀಕರಣದ ಮೂಲಕ ಭರ್ತಿ ಮಾಡಬೇಕು ಎಂದರು. ವಿಶ್ವವಿದ್ಯಾಲಯಗಳಲ್ಲಿ ವಿಭಾಗಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸುವುದರಿಂದ ಗುಂಪು-ಎ ಗೆ ಹೆಚ್ಚಿನ ಹುದ್ದೆಗಳು ಮೀಸಲಾಗುತ್ತಿದ್ದು, ಗುಂಪು-ಬಿ ಮತ್ತು ಸಿ ಗೆ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದರು. ಅಧಿಕಾರಿಗಳ ತಪ್ಪು ಮಾಹಿತಿಯಿಂದ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ, ಶೀಘ್ರ ಪರಿಹಾರ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಡಿಎಸ್ಎಸ್ ಜಿಲ್ಲಾ ಸಂಚಾಲಕ ಬಾಬುರಾವ್ ಪಾಸ್ವಾನ್ ಮಾತನಾಡಿ, ರಾಜ್ಯಪಾಲರ ಬಳಿ ನಿಯೋಗ ಕೊಂಡೊಯ್ದು ಅವೈಜ್ಞಾನಿಕ ಒಳಮೀಸಲಾತಿ ಜಾರಿ ಮಾಡಬಾರದು ಎಂದು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ್ ದೀನೆ, ಡಿಎಸ್ಎಸ್ ಸಂಚಾಲಕ ಶಿವಕುಮಾರ ನೀಲಿಕಟ್ಟಿ, ಬಿವಿಪಿ ಅಧ್ಯಕ್ಷ ಸಂದೀಪ್ ಕಾಂಟೆ, ಬಿವಿಎಸ್ ಅಧ್ಯಕ್ಷ ಪ್ರದೀಪ್ ನಾಟೇಕರ್, ಅಂಬಾದಾಸ್ ಗಾಯಕವಾಡ್, ಪುಟ್ಟು ದೀನೆ, ದಿಲೀಪ್ ಭೋಸ್ಲೆ, ರಮೇಶ್ ಪಾಸ್ವಾನ್, ಸೂರ್ಯಕಾಂತ್ ಸಾದೂರೆ, ಗೌರಿಶಂಕರ ವಾಘಮಾರೆ ಹಾಗೂ ಭೀಮರಾವ್ ಸೇರಿದಂತೆ ಇತರರು ಇದ್ದರು.
ಕಾಪು: ಯುವಕನ ಕೊಲೆ ಯತ್ನ ಪ್ರಕರಣ; ಆರೋಪಿಗೆ ಜೈಲುಶಿಕ್ಷೆ, ದಂಡ
ಉಡುಪಿ, ಫೆ.19: ಕ್ಷುಲ್ಲಕ ಕಾರಣಕ್ಕೆ ಕಾಪು ತಾಲೂಕು ಕೋಟೆ ಗ್ರಾಮದ ಯುವಕನೋರ್ವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿ ದೋಷಿ ಎಂದು ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವರ್ ತೀರ್ಪು ಪ್ರಕಟಿಸಿದ್ದಾರೆ. ಅಭಿಷೇಕ್ ಶ್ರೀಯಾನ್ ಎಂಬಾತ ಪ್ರಕರಣದ ದೋಷಿಯಾಗಿದ್ದು ಕೊಲೆಯತ್ನ ಅಪರಾದಕ್ಕೆ 3 ವರ್ಷ 10 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ, 20 ಸಾವಿರ ದಂಡ ವಿಧಿಸಲಾಗಿದೆ. ಇದೇ ಕೃತ್ಯದಡಿ ದಾಖಲಾದ ಇತರ ಮೂರು ವಿವಿಧ ಅಪರಾಧಗಳಿಗೆ ಒಟ್ಟು 30 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಆರೋಪಿಯಿಂದ ವಸೂಲಾದ ದಂಡದ ಹಣದ ಪೈಕಿ 45 ಸಾವಿರ ರೂ. ಹಣವನ್ನು ದೂರುದಾರನಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಲಾಗಿದೆ. ಘಟನೆ ಹಿನ್ನೆಲೆ: 2021ರ ಜೂನ್ 22 ರಂದು ಕಾಪು ತಾಲೂಕು ಕೋಟೆ ಗ್ರಾಮದ ನಿವಾಸಿಯಾದ ಶರತ್ ದೇವಾಡಿ ಗನು ತನ್ನ ಸ್ನೇಹಿತನ ಹುಟ್ಟು ಹಬ್ಬವನ್ನು ಆಚರಿಸಲು ಸ್ನೇಹಿತರೊಂದಿಗೆ ಕೋಟೆ ಗ್ರಾಮದ ಪಾಪನಾಶಿನಿ ಹೊಳೆಯ ಬದಿಯಲ್ಲಿ ಕೂಡಿಕೊಂಡು ಮಾತನಾಡಿಕೊಂಡಿರುವಾಗ ರಾತ್ರಿ ಸುಮಾರು 11:00 ಗಂಟೆಯ ಸಮಯಕ್ಕೆ ಆರೋಪಿ ಅಭಿಷೇಕ್ ಶ್ರೀಯಾನ್ ಬೈಕ್ನಲ್ಲಿ ಬಂದು ಶರತ್ ದೇವಾಡಿಗನ ಬಳಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಶರತ್ಗೆ ಇರಿದಿದ್ದ. ಅಲ್ಲೇ ಇದ್ದ ಆತನ ಸ್ನೇಹಿತರು ಶರತ್ ರಕ್ಷಣೆಗೆ ಬಂದಿದ್ದರು. ಚೂರಿಯನ್ನು ಅಲ್ಲಿಯೇ ಎಸೆದು ಬೈಕಿನಲ್ಲಿ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದ. ಗಂಭೀರ ಗಾಯಗೊಂಡ ಶರತ್ನನ್ನು ಸ್ನೇಹಿತರು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು 7 ದಿನಗಳ ಕಾಲ ಒಳರೋಗಿಯಾಗಿ ದಾಖಲಾಗಿ ಚೇತರಿಸಿಕೊಂಡಿದ್ದ. ಈ ಬಗ್ಗೆ ಶರತ್ ದೇವಾಡಿಗ ನೀಡಿದ ದೂರಿನ ಆಧಾರದಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕಾಪು ಪೊಲೀಸ್ ಠಾಣೆ ಅಂದಿನ ಪಿಎಸ್ಐ ರಾಘವೇಂದ್ರ ಸಿ. ಅವರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ಅವರು ವಾದ ಮಂಡಿಸಿದ್ದರು.
ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟ| ಫೆ.21ಕ್ಕೆ ಮಹಿಳೆಯರ ಸಮಾವೇಶ
ಉಡುಪಿ, ಫೆ.19: ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ 5ನೇ ಕರ್ನಾಟಕ ರಾಜ್ಯ ಎಲ್ಲೈಸಿ ದುಡಿಯುವ ಮಹಿಳೆಯರ ಸಮಾವೇಶವು ಉಡುಪಿ ನಗರದ ಲಿಕೋ ಬ್ಯಾಂಕ್ನ ವಜ್ರಮಹೋತ್ಸವ ಕಟ್ಟಡದಲ್ಲಿ ಫೆ.21ರಂದು ನಡೆಯಲಿದೆ. ಸಮಾವೇಶವನ್ನು ಕನ್ನಡ ಲೇಖಕಿ, ಕವಿ ಮತ್ತು ಪ್ರಗತಿಪರ ಶಿಕ್ಷಣ ತಜ್ಞರಾಗಿರುವ ದಾಂಡೇಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ವಿನಯ ಒಕ್ಕುಂದ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ.ಎನ್. ರವೀಂದ್ರನಾಥ್, ಜತೆ ಕಾರ್ಯದರ್ಶಿ ಕೆ ಗೋಪಾಲ್ ಹಾಗೂ ಉಪಾಧ್ಯಕ್ಷ ಎಂ. ರವಿ ಅಲ್ಲದೇ ರಾಜ್ಯ ಮಹಿಳಾ ಉಪ ಸಮಿತಿ ಸಂಚಾಲಕಿ ಎಚ್.ಆರ್. ಗಾಯತ್ರಿ ಉಪಸ್ಥಿತರಿರುವರು. ದಕ್ಷಿಣ ಮಧ್ಯ ವಲಯ ವಿಮಾ ನೌಕರ ಒಕ್ಕೂಟದ ಅಧ್ಯಕ್ಷ ಪಿ ಸತೀಶ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಕರ್ನಾಟಕದ ಭಾರತೀಯ ಜೀವವಿಮಾ ನಿಗಮದ ಎಂಟು ವಿಭಾಗಗಳಿಂದ ಸುಮಾರು 200 ಮಹಿಳಾ ಪ್ರತಿನಿಧಿಗಳು ಹಾಗೂ ಸಹೋದರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಶಿವಾಜಿ ಆಡಳಿತ ವ್ಯವಸ್ಥೆ ದೂರದೃಷ್ಟಿ ನಾಯಕತ್ವಕ್ಕೆ ಸಾಕ್ಷಿ: ಎಂ.ಎ ಗಫೂರ್
ಉಡುಪಿ, ಫೆ.19: ಧೈರ್ಯ, ಶೌರ್ಯ ಹಾಗೂ ಧೀಮಂತ ವ್ಯಕ್ತಿತ್ವಕ್ಕೆ ಹೆಸರಾಗಿರುವ ಛತ್ರಪತಿ ಶಿವಾಜಿ, ತನ್ನ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿ ಕೊಂಡಿದ್ದ ಕೌಶಲ್ಯಗಳು ಅವರ ದೂರದೃಷ್ಟಿ ನಾಯಕತ್ವಕ್ಕೆ ಸಾಕ್ಷಿ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದ್ದಾರೆ. ಗುರುವಾರ ನಗರದ ಸರಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು ಮತ್ತು ಛತ್ರಪತಿ ಶಿವಾಜಿ ವಿವಿದ್ದೋ ದ್ದೇಶ ಸಹಕಾರ ಸಂಘ ಉಡುಪಿ ಇವರ ಸಹಯೋಗದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿವಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ಚಿಕ್ಕ ವಯಸಿನಲ್ಲಿಯೇ ಆಸಾಧಾರಣ ನಾಯಕತ್ವ ಗುಣಗಳನ್ನು ಹೊಂದಿದ್ದ ಶಿವಾಜಿ, ಆರಂಭಿಕ ವರ್ಷಗಳಲ್ಲಿ ತಾಯಿಯ ಪ್ರೇರಣೆಯಿಂದ ಉತ್ತಮ ವ್ಯಕ್ತಿತ್ವವನ್ನು ಮೈಗೊಡಿಸಿಕೊಂಡಿದ್ದು, ಮಹಿಳೆಯರಲ್ಲಿ ಸಮಸಮಾಜ ನಿರ್ಮಾಣ ಮಾಡಲು ಶಕ್ತಿ ತುಂಬಲು ಪ್ರಯತ್ನಿಸಿದ್ದರು ಎಂದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಈ ಹಿಂದೆ ನಾಡು, ನುಡಿಗೆ ಸೇವೆ ಸಲ್ಲಿಸಿದ ಸಾಧಕರನ್ನು ಮರೆಯಬಾರದೆಂಬ ನೆಲೆಯಲ್ಲಿ ಹಾಗೂ ಅವರಿಗೆ ಗೌರವ ಸಲ್ಲಿಸುವ ಉದ್ದೇಶ ದಿಂದ ಸರಕಾರ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇವರ ಆದರ್ಶ, ಜೀವನ ಚರಿತ್ರೆ ಯುವಪೀಳಿಗೆಗೆ ದಾರಿದೀಪವಾಗಲಿದೆ ಎಂದು ಹಾರೈಸಿದರು. ಎಂ.ಐ.ಟಿ ಮಣಿಪಾಲದ ನಿವೃತ್ತ ಪ್ರಾಧ್ಯಾಪಕ ಡಾ. ನಾರಾಯಣ ಶೆಣೈ ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿ, ಕ್ರಿ.ಶ.1640ರ ಫೆಬ್ರವರಿ 19 ಅಂದರೆ ಸುಮಾರು 396 ವಷರ್ಗಳ ಹಿಂದೆ ಜನಿಸಿದ ಶಿವಾಜಿಯು ಅಂದಿನ ಕಾಲ ಘಟ್ಟದಲ್ಲಿಯೇ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ್ದರು. ಜನ ಸಾಮಾನ್ಯರಲ್ಲಿ ರಾಷ್ಟ್ರೀಯತೆಯನ್ನು ಜಾಗೃತಿ ಗೊಳಿಸಿದರೆ ಉತ್ತಮ ಸಮಾಜ ಕಟ್ಟಬಹುದು ಎಂಬುದಕ್ಕೆ ಶಿವಾಜಿ ನಿದರ್ಶನ ಎಂದರು. ಇದೇ ಸಂದರ್ಭದಲ್ಲಿ ಮರಾಠ ಸಮುದಾಯದ ಪವರ್ಲಿಫ್ಟಿಂಗ್ನಲ್ಲಿ ಸಾಧನೆಗೈದ ಪ್ರತಿಕ್ಷಾ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿದ್ದೋದ್ದೇಶ ಸಹಕಾರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಬಸ್ರೂರು ಶಾರದಾ ಕಾಲೇಜು ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ ವಂದಿಸಿದರು.
Kalaburagi | ಗುಲ್ಬರ್ಗಾ ವಿವಿ ಘಟಿಕೋತ್ಸವ: ಭೌರಮ್ಮ ಬಸವರಾಜಗೆ 2 ಚಿನ್ನದ ಪದಕ
ಕಲಬುರಗಿ: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಭೌರಮ್ಮ ಬಸವರಾಜ ಕಲಬುರಗಿ ಸಾ.ರೇವೂರ್ (ಬಿ ) ಇವರಿಗೆ ಎರಡು ಚಿನ್ನದ ಪದಕ ಲಭಿಸಿವೆ. ಜೀವಣ್ಣ ಮಸಳಿ ಬಾಗಲಕೋಟ ಮತ್ತು ಆರ್.ಕೆ.ಜೋಶಿ ಅವರ ಹೆಸರಿನ ಮೇಲೆ ಸ್ಥಾಪಿಸಲಾಗಿದ್ದು, ಪತ್ರಿಕೋದ್ಯಮ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಈ ಚಿನ್ನದ ಪದಕಗಳನ್ನು ನೀಡಲಾಗುತ್ತಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದ 43ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಜ್ಞಾನಗಂಗಾ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಫೆ.24 ರಂದು ಬೆಳಿಗ್ಗೆ 11 ಗಂಟೆಗೆ ಚಿನ್ನದ ಪದಕ ವಿತರಿಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಎಸ್.ಉಡಿಕೇರಿ ತಿಳಿಸಿದರು. ರಾಜ್ಯದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಗಣ್ಯರಿಗೆ ಗೌರವ ಡಾಕ್ಟರೇಟ್ ಮತು ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯಗಳ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಪುಣೆಯ ಉನ್ನತ ರಕ್ಷಣಾ ತಂತ್ರಜ್ಞಾನ ಸಂಸ್ಥೆ (ಡೀಮ್ಡ್ ವಿಶ್ವವಿದ್ಯಾಲಯ)ಯ ವಿಶ್ರಾಂತ ಕುಲಪತಿ ಪ್ರೊ.ಎಲ್.ಎಂ.ಪಟ್ನಾಯಕ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ವಿಭಾಗದ ಸoಯೋಜಕರಾದ ಡಾ. ಸುರೇಶ ಜಂಗೆ ಮತ್ತು ಉಪನ್ಯಾಸಕರು ಅಭಿನಂಧಿಸಿದ್ದಾರೆ.
ಕಲಬುರಗಿ | ಬೇಸಿಗೆ ಕುಡಿಯುವ ನೀರು ಸಮಸ್ಯೆಯ ಸ್ಪಂದನೆಗೆ ತುರ್ತು ಪರಿಹಾರ ತಂಡ ರಚನೆ: ವರ್ಷಾ ರಾಜೀವ ಜಾನೆ
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮವಾಗಿ 55 ವಾರ್ಡ್ಗಳಿಗೆ ತಕ್ಷಣ ಸ್ಪಂದನೆಗೆ “ತುರ್ತು ಪರಿಹಾರ ತಂಡ” ಸ್ಥಾಪಿಸಲಾಗಿದ್ದು, ಕುಡಿಯುವ ನೀರಿನ ಏನೇ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸದರಿ ತಂಡದ ಅಧಿಕಾರಿ-ಸಿಬ್ಬಂದಿಗಳನ್ನು ಸಂಪರ್ಕಿಸಬೇಕೆಂದು ಮಹಾನಗರ ಪಾಲಿಕೆಯ ಮೇಯರ್ ವರ್ಷಾ ರಾಜೀವ ಜಾನೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬುಧವಾರ ಜರುಗಿದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಂತೆ ಗುರುವಾರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ., ಎಲ್ & ಟಿ ಕಂಪನಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಇನ್ನು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ ಅವರೊಂದಿಗೂ ಚರ್ಚಿಸಿ ಅವರ ನಿರ್ದೇಶನದಂತೆ ಕೆ.ಯು.ಐ.ಡಿ.ಎಫ್.ಸಿ. ಮತ್ತು ಎಲ್ & ಟಿ ಅಧಿಕಾರಿಗಳನ್ನೊಳಗೊಂಡ ತುರ್ತು ಪರಿಹಾರ ತಂಡ ರಚಿಸಿದೆ. ಒಂದು ವೇಳೆ ಸಾರ್ವಜನಿಕರ ಕರೆಗಳನ್ನು ತಂಡ ಸ್ವೀಕರಿಸದಿದ್ದಲ್ಲಿ ನೇರವಾಗಿ ತಮ್ಮ ವಾಟ್ಸ್ಯಾಪ್ ಸಂಪರ್ಕ ಸಂಖ್ಯೆ: ಸಂ.9060749999ಗೆ ಜಿ.ಪಿ.ಎಸ್. ಫೋಟೋ ಮತ್ತು ಲೋಕೇಷನ್ ಕಳುಹಿಸಿದಲ್ಲಿ ಕೂಡಲೆ ಸ್ಪಂದಿಸಲಾಗುವುದು ಎಂದು ಮೇಯರ್ ಅವರು ಸ್ಪಷ್ಟಪಡಿಸಿದ್ದಾರೆ. ವಾರ್ಡ್ ವಾರು ತಂಡದ ಅಧಿಕಾರಿಗಳ ವಿವರ : ವಾರ್ಡ್ 1 ಮತ್ತು 19ಕ್ಕೆ ರವೀಂದ್ರ ಪಾಟೀಲ-9448147069, ರಾಣಾ-7760473467 ಹಾಗೂ ಎಲ್ವರ್ ಸನ್-9566526733. ವಾರ್ಡ್ 2, 3 ಹಾಗೂ 4ಕ್ಕೆ ರಾಣಾ-7760473467 ಹಾಗೂ ಎಲ್ವರ್ ಸನ್-9566526733. ವಾರ್ಡ್ 5 ಮತ್ತು 12ಕ್ಕೆ ರವೀಂದ್ರ ಪಾಟೀಲ-9448147069, ರಾಣಾ-7760473467 ಹಾಗೂ ಎಲ್ವರ್ ಸನ್-9566526733. ವಾರ್ಡ್ 6ಕ್ಕೆ ರವೀಂದ್ರ ಪಾಟೀಲ-9448147069, ವೀರೇಂದ್ರ ಪಾಟೀಲ-9986358100 ಹಾಗೂ ಎಲ್ವರ್ ಸನ್-9566526733. ವಾರ್ಡ್ 7ಕ್ಕೆ ರವೀಂದ್ರ ಪಾಟೀಲ-9448147069, ರಾಹುಲ-7353280628 ಹಾಗೂ ಯುವರಾಜ-8600822668. ವಾರ್ಡ್ 8ಕ್ಕೆ ರಾಹುಲ-7353280628, ರಾಣಾ-7760473467 ಹಾಗೂ ಯುವರಾಜ-8600822668. ವಾರ್ಡ್ 9 ಮತ್ತು 25ಕ್ಕೆ ರಾಹುಲ-7353280628 ಹಾಗೂ ಯುವರಾಜ-8600822668. ವಾರ್ಡ್ 10ಕ್ಕೆ ರಾಹುಲ-7353280628, ವೀರೇಂದ್ರ ಪಾಟೀಲ-9986358100 ಹಾಗೂ ಯುವರಾಜ-8600822668. ಇನ್ನು ವಾರ್ಡ್ ಸಂ. 1 ರಿಂದ 4ರ ವರೆಗಿನ ನಿವಾಸಿಗಳು ಸಹಾಯವಾಣಿ ಸಂಖ್ಯೆ 18004258247 ಸಂಪರ್ಕಿಸಬಹುದಾಗಿದೆ. ವಾರ್ಡ್ 11, 22 ಹಾಗೂ 23ಕ್ಕೆ ರವೀಂದ್ರ ಪಾಟೀಲ-9448147069 ಮತ್ತು ವೀರೇಂದ್ರ ಪಾಟೀಲ-9986358100. ವಾರ್ಡ್ 13ಕ್ಕೆ ರಾಣಾ-7760473467 ಹಾಗೂ ಎಲ್ವರ್ ಸನ್-9566526733. ವಾರ್ಡ್ 14ಕ್ಕೆ ರಾಣಾ-7760473467, ನಬಿ ಶೇಕ್-7967987082 ಹಾಗೂ ಎಲ್ವರ್ ಸನ್-9566526733. ವಾರ್ಡ್ 15 ಮತ್ತು 16ಕ್ಕೆ ನಬಿ ಶೇಕ್-7967987082 ಹಾಗೂ ಎಲ್ವರ್ ಸನ್-9566526733. ವಾರ್ಡ್ 17 ಮತ್ತು 29ಕ್ಕೆ ಪ್ರವೀಣ-6362667321 ಹಾಗೂ ಎಲ್ವರ್ ಸನ್-9566526733. ವಾರ್ಡ್ 18 ಮತ್ತು 20ಕ್ಕೆ ನಬಿ ಶೇಕ್-7967987082, ಪ್ರವೀಣ-6362667321 ಹಾಗೂ ಎಲ್ವರ್ ಸನ್-9566526733. ವಾರ್ಡ್ 24ಕ್ಕೆ ರವೀಂದ್ರ ಪಾಟೀಲ-9448147069, ವೀರೇಂದ್ರ ಪಾಟೀಲ-9986358100, ನಬಿ ಶೇಕ್-7967987082 ಹಾಗೂ ಎಲ್ವರ್ ಸನ್-9566526733. ವಾರ್ಡ್ 26, 40, 42 ಹಾಗೂ 43ಕ್ಕೆ ಸುಪ್ರಿತ್-879244097, ಖುರಂ-7795245903 ಹಾಗೂ ಯುವರಾಜ-8600822668. ವಾರ್ಡ್ 27 ಮತ್ತು 41ಕ್ಕೆ ಖುರಂ-7795245903 ಹಾಗೂ ಯುವರಾಜ-8600822668. ವಾರ್ಡ್ 28 ಮತ್ತು 31ಕ್ಕೆ ರವೀಂದ್ರ ಪಾಟೀಲ-9448147069, ಪ್ರವೀಣ-6362667371 ಹಾಗೂ ಎಲ್ವರ್ ಸನ್-9566526733. ವಾರ್ಡ್ 30ಕ್ಕೆ ಪ್ರವೀಣ-6362667321, ನಿಖಿಲ-8073506378 ಹಾಗೂ ಎಲ್ವರ್ ಸನ್-9566526733. ವಾರ್ಡ್ 32, 47 ಮತ್ತು 48ಕ್ಕೆ ನಿಖಿಲ-8073506378 ಹಾಗೂ ಎಲ್ವರ್ ಸನ್-9566526733. ವಾರ್ಡ್ 33 ಮತ್ತು 34ಕ್ಕೆ ರವೀಂದ್ರ ಪಾಟೀಲ-9448147069 ಹಾಗೂ ಸಮೀರ್-9538634555. ವಾರ್ಡ್ 35ಕ್ಕೆ ರವೀಂದ್ರ ಪಾಟೀಲ-9448147069, ವೀರೇಂದ್ರ ಪಾಟೀಲ-9986358100 ಹಾಗೂ ಸಮೀರ್-9538634555. ವಾರ್ಡ್ 36ಕ್ಕೆ ಅನೀಲ-9916364899, ವೀರೇಂದ್ರ ಪಾಟೀಲ-9986358100, ರವೀಂದ್ರ ಪಾಟೀಲ-9448147069, ಹಾಗೂ ಯುವರಾಜ-8600822668. ವಾರ್ಡ್ 37ಕ್ಕೆ ಅನೀಲ-9916364899, ವೀರೇಂದ್ರ ಪಾಟೀಲ-9986358100, ಅಂಕಿತ-9890872237 ಹಾಗೂ ಯುವರಾಜ-8600822668. ವಾರ್ಡ್ 38 ಮತ್ತು 39ಕ್ಕೆ ಸುಪ್ರಿತ್-8792440497 ಹಾಗೂ ಯುವರಾಜ-8600822668. ವಾರ್ಡ್ 44ಕ್ಕೆ ಅನೀಲ-9916364899 ಹಾಗೂ ಯುವರಾಜ-8600822668. ವಾರ್ಡ್ 45ಕ್ಕೆ ಅನೀಲ-9916364899, ವೀರೇಂದ್ರ ಪಾಟೀಲ-9986358100 ಹಾಗೂ ಯುವರಾಜ-8600822668. ವಾರ್ಡ್ 46 ಮತ್ತು 49ಕ್ಕೆ ಮಹೇಂದ್ರ-8310407827, ಸಮೀರ್-9538634555, ಅನೀಲ-9916364899, ಸಿದ್ದಾಂತ-9503721329, ರವೀಂದ್ರ ಪಾಟೀಲ-9448147069 ಹಾಗೂ ಯುವರಾಜ-8600822668. ವಾರ್ಡ್ 50ಕ್ಕೆ ನಿಖಿಲ-8073506378 ಹಾಗೂ ಯುವರಾಜ-8600822668. ವಾರ್ಡ್ 51ಕ್ಕೆ ಮಹೇಶ-8867260240 ಮತ್ತು ಸಿದ್ದಾಂತ-9503721329. ವಾರ್ಡ್ 52ಕ್ಕೆ ಮಹೇಶ-8867260240, ಮಹೇಂದ್ರ-8310407827 ಹಾಗೂ ಸಿದ್ದಾಂತ-9503721329. ವಾರ್ಡ್ 53ಕ್ಕೆ ಮಹೇಂದ್ರ-8310407827 ಹಾಗೂ ಸಿದ್ದಾಂತ-9503721329. ವಾರ್ಡ್ 54 ಮತ್ತು 55ಕ್ಕೆ ಮಹೇಶ-8867260240 ಹಾಗೂ ಸಿದ್ದಾಂತ-9503721329. ಇನ್ನು ವಾರ್ಡ್ 1 ರಿಂದ 25ಕ್ಕೆ ಕೆ.ಯು.ಐ.ಎಫ್.ಡಿ.ಸಿ. ಸಹಾಯಕ ಅಭಿಯಂತ ಸಂತೋಷಕುಮಾರ-7204758439 ಮತ್ತು ವಾರ್ಡ್ 26 ರಿಂದ 55ಕ್ಕೆ ಕೆ.ಯು.ಐ.ಎಫ್.ಡಿ.ಸಿ. ಸಹಾಯಕ ಅಭಿಯಂತ ಸೂರ್ಯಕಾಂತ ಎಸ್.-9845151356 ಜವಾಬ್ದಾರಿ ನೀಡಿದ್ದು, ಒಟ್ಟಾರೆಯಾಗಿ ಕೆ.ಯು.ಐ.ಎಫ್.ಡಿ.ಸಿ. ಕಾರ್ಯಪಾಲಕ ಅಭಿಯಂತ ಭೀಮರಾವ ವದ್ರಿ-9448347908 ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಮೇಯರ್ ವರ್ಷಾ ರಾಜೀವ ಜಾನೆ ತಿಳಿಸಿದ್ದಾರೆ.
ಇರಾನ್ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ: ವರದಿ
ವಾಷಿಂಗ್ಟನ್, ಫೆ.19: ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಉನ್ನತ ಸಲಹೆಗಾರರ ಜೊತೆ ಮಹತ್ವದ ತುರ್ತು ಸಭೆ ನಡೆಸಿರುವುದಾಗಿ ವರದಿಯಾಗಿದೆ. ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿಗೆ ಟ್ರಂಪ್ ಆದೇಶಿಸಬಹುದು ಎಂದು ಅಮೆರಿಕದ ಪ್ರಮುಖ ಮಿತ್ರರಾಷ್ಟ್ರದ ಮೂಲಗಳು ಹೇಳಿರುವುದಾಗಿ ` ದಿ ಡೈಲಿ ಮಿರರ್' ವರದಿ ಮಾಡಿದೆ. ಇರಾನ್ನಲ್ಲಿ ದೊಡ್ಡ ಯುದ್ದವನ್ನು ಅಮೆರಿಕ ಪ್ರಾರಂಭಿಸಬಹುದು ಮತ್ತು ಇದು ಹಲವು ವಾರಗಳ ಅವಧಿಯ ಕಾರ್ಯಾಚರಣೆ ಆಗಿರಬಹುದು ಎಂದು ವರದಿ ಹೇಳಿದೆ. ಆದರೆ ಇದು ಪೂರ್ವ ನಿಗದಿತ ಸಭೆಯಾಗಿದ್ದು ಜಿನೆವಾದಲ್ಲಿ ಇರಾನ್ ನಿಯೋಗದ ಜೊತೆ ನಡೆಸಿದ ಪರೋಕ್ಷ ಮಾತುಕತೆಯ ಬಗ್ಗೆ ಟ್ರಂಪ್ಗೆ ವಿವರಿಸಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ಹೇಳಿದ್ದಾರೆ. ತಕ್ಷಣ ಇರಾನ್ ತೊರೆಯುವಂತೆ ಪೋಲ್ಯಾಂಡ್ ಪ್ರಜೆಗಳಿಗೆ ಸೂಚನೆ ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕಾ ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಪೋಲ್ಯಾಂಡ್ ಪ್ರಜೆಗಳು ತಕ್ಷಣ ಅಲ್ಲಿಂದ ನಿರ್ಗಮಿಸುವಂತೆ ಪೋಲ್ಯಾಂಡ್ನ ಪ್ರಧಾನಿ ಡೊನಾಲ್ಡ್ ಟಸ್ಕ್ ಗುರುವಾರ ಆಗ್ರಹಿಸಿದ್ದಾರೆ. ಇರಾನ್ ಕೂಡಾ ತನ್ನ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸಿದ್ದು ಗುರುವಾರ ಒಮಾನ್ ಸಮುದ್ರದಲ್ಲಿ ರಶ್ಯ ಮತ್ತು ಇರಾನ್ನ ನೌಕಾಪಡೆಗಳು ಜಂಟಿ ಸಮರಾಭ್ಯಾಸ ನಡೆಸಿವೆ. ಜೊತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಸೇನೆಯನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಇರಾನ್ನೊಂದಿಗೆ ಸಂಭವನೀಯ ಯುದ್ದಕ್ಕೆ ಸಿದ್ಧರಾಗುವಂತೆ ಇಸ್ರೇಲ್ ಪಡೆಗೆ ಸೂಚನೆ ಟ್ರಂಪ್ರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಇರಾನ್ ಬುದ್ಧಿವಂತಿಕೆ ತೋರಬೇಕು ಎಂದು ಅಮೆರಿಕ ಕರೆ ನೀಡಿರುವಂತೆಯೇ, ಇರಾನ್ ಜೊತೆಗೆ ಸಂಭವನೀಯ ಯುದ್ದಕ್ಕೆ ಸಿದ್ಧರಾಗುವಂತೆ ದೇಶದ ಮುಂಚೂಣಿ ಕಮಾಂಡ್ಗೆ ಹಾಗೂ ರಕ್ಷಣಾ ತಂಡಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಸೂಚನೆ ನೀಡಿರುವುದಾಗಿ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್ನ ಹಲವಾರು ಭದ್ರತಾ ಏಜೆನ್ಸಿಗಳಲ್ಲಿ ಕಟ್ಟೆಚ್ಚರದ ಸ್ಥಿತಿ ಘೋಷಿಸಲಾಗಿದೆ. ಇರಾನ್ ಕುರಿತ ಪ್ರಮುಖ ಭದ್ರತಾ ಸಭೆಯನ್ನು ಈ ವಾರಾಂತ್ಯಕ್ಕೆ ಮರು ನಿಗದಿ ಪಡಿಸಲಾಗಿದೆ ಎಂದು ವರದಿ ಹೇಳಿದೆ.
ಆಸೀಸ್ ಮಹಿಳೆಯರ ವಿರುದ್ಧದ ಟಿ20 ಸರಣಿ: 2ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು
ಕ್ಯಾನ್ಬೆರ, ಫೆ. 19: ಜಾರ್ಜಿಯಾ ವೋಲ್ ಮತ್ತು ಬೆತ್ ಮೂನಿ ನಡುವಿನ ದಾಖಲೆಯ ಆರಂಭಿಕ ವಿಕೆಟ್ ಭಾಗೀದಾರಿಕೆಯ ನೆರವಿನಿಂದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯ ಮಹಿಳೆಯರು ಭಾರತೀಯ ಮಹಿಳೆಯರನ್ನು 19 ರನ್ಗಳಿಂದ ಸೋಲಿಸಿದ್ದಾರೆ. ಇದರೊಂದಿಗೆ, ಮೂರು ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯ 1-1ರಿಂದ ಸಮಬಲಗೊಳಿಸಿದೆ. ಜಾರ್ಜಿಯ-ಬೆತ್ ಜೋಡಿಯು ಮೊದಲ ವಿಕೆಟ್ಗೆ 128 ರನ್ಗಳನ್ನು ಸೇರಿಸಿತು. ಇದು ಮಹಿಳೆಯರ ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯದ ಅತಿ ಹೆಚ್ಚಿನ ಆರಂಭಿಕ ಭಾಗೀದಾರಿಕೆಯಾಗಿದೆ. ಗೆಲ್ಲಲು 164 ರನ್ಗಳ ಗುರಿಯನ್ನು ಪಡೆದ ಭಾರತೀಯ ಮಹಿಳೆಯರಿಗೆ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 144 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಶಫಾಲಿ ವರ್ಮಾ (29) ಮತ್ತು ಸ್ಮತಿ ಮಂಧಾನ (31) ಉತ್ತಮ ಆರಂಭ ನೀಡಿದರಾದರೂ ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಭಾರತೀಯ ಇನಿಂಗ್ಸ್ ಕುಸಿತ ಕಂಡಿತು. ನಾಯಕಿ ಹರ್ಮನ್ಪ್ರೀತ್ ಕೌರ್ 30 ಎಸೆತಗಳಲ್ಲಿ 36 ರನ್ಗಳನ್ನು ಗಳಿಸಿದರು. ಭಾರತದ ಕೊನೆಯ ಆರು ವಿಕೆಟ್ಗಳು ಕೇವಲ ಏಳು ರನ್ಗಳಿಗೆ ಉರುಳಿತು. ಆಸ್ಟ್ರೇಲಿಯ ಪರವಾಗಿ ಆ್ಯಶ್ಲೇ ಗಾರ್ಡನರ್ ಮೂರು ವಿಕೆಟ್ಗಳನ್ನು ಪಡೆದರೆ, ಕಿಮ್ ಗಾರ್ತ್, ಅನಾಬೆಲ್ ಸದರ್ಲ್ಯಾಂಡ್ ಮತ್ತು ಸೋಫೀ ಮೋಲಿನೋಸ್ ತಲಾ ಎರಡು ವಿಕೆಟ್ಗಳನ್ನು ಉರುಳಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ಮಹಿಳೆಯರು 20 ಓವರ್ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 163 ರನ್ ಗಳಿಸಿದರು. ಆರಂಭಿಕ ಆಟಗಾರ್ತಿ ಜಾರ್ಜಿಯಾ ವೋಲ್ 57 ಎಸೆತಗಳಲ್ಲಿ 88 ರನ್ಗಳನ್ನು ಸಿಡಿಸಿದರೆ, ಇನ್ನೋರ್ವ ಆರಂಭಿಕ ಆಟಗಾರ್ತಿ ಬೆತ್ ಮೂನಿ 39 ಎಸೆತಗಳಲ್ಲಿ 46 ರನ್ಗಳನ್ನು ಗಳಿಸಿದರು.
ಬಿಜೆಪಿ ಸರಕಾರ ತನ್ನ 9 AI ವೀಡಿಯೊಗಳನ್ನು ಬಲವಂತವಾಗಿ ಅಳಿಸಿದೆ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ, ಫೆ. 18: ಕೃತಕ ಬುದ್ಧಿ ಮತ್ತೆ ಬಳಸಿ ಸೃಷ್ಟಿಸಿದ ತನ್ನ 9 ವೀಡಿಯೊಗಳನ್ನು ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ಬಲವಂತವಾಗಿ ಅಳಿಸಿವೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಿನ್ನಾಭಿಪ್ರಾಯದ ಪ್ರತಿಯೊಂದು ಧ್ವನಿಯನ್ನು ಹತ್ತಿಕ್ಕುವ ಬದಲು ರಾಷ್ಟ್ರದ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸಬೇಕು ಎಂದು ಅದು ಹೇಳಿದೆ. ರಾಜಕೀಯ ಎದುರಾಳಿಗಳ ವಿರುದ್ಧದ ನಿರ್ಬಂಧಿಸುವ ನಿಯಮಗಳನ್ನು ದುರಪಯೋಗಪಡಿಸಿಕೊಳ್ಳುವ ಮೂಲಕ ವೀಡಿಯೊವನ್ನು ಅಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯ ಕೊರತೆ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ನ ಈ ಆರೋಪಕ್ಕೆ ಸರಕಾರ ಅಥವಾ ಬಿಜೆಪಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್, ಭಾರತದ ಕೃತಕ ಬುದ್ಧಿ ಮತ್ತೆಯ ಕತ್ತು ಹಿಚುಕಲು ಮೋದಿ ಸರಕಾರ ಮಾಡದ ಪ್ರಯತ್ನವಿಲ್ಲ ಎಂದಿದ್ದಾರೆ. ‘‘ಮೊದಲನೆಯದಾಗಿ, ನಮ್ಮ ಎಲ್ಲಾ ದತ್ತಾಂಶವನ್ನು ವ್ಯಾಪಾರ ಒಪ್ಪಂದದ ಭಾಗವಾಗಿ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ. ಈಗ ಎಐ ಶೃಂಗ ಸಭೆಯಲ್ಲಿ ತಪ್ಪಾಗಿ ನಿರ್ವಹಣೆ ಮಾಡುವ ಮೂಲಕ ಮುಜುಗರ ಉಂಟು ಮಾಡಲಾಗಿದೆ. ಭಾರತದ ವರ್ಚಸ್ಸಿಗೆ ಧಕ್ಕೆ ತಂದಿರುವ ಕಳ್ಳತನ ಹಾಗೂ ಅನುಸರಣೆಯ ನಾಚಿಕೆಗೇಡಿನ ವರದಿಗಳು ಕೂಡ ಬಹಿರಂಗಗೊಂಡಿವೆ’’ ಎಂದು ಹೇಳಿದ್ದಾರೆ. ಆದರೆ, ವಿಪರ್ಯಾಸವೆಂದರೆ, ಕೃತಕ ಬುದ್ಧಿ ಮತ್ತೆಯ ಬಗ್ಗೆ ದೊಡ್ಡ ಹೇಳಿಕೆಗಳನ್ನು ನೀಡುವ ಅದೇ ನರೇಂದ್ರ ಮೋದಿ ಅವರು ವಾಸ್ತವವಾಗಿ ಕೃತಕ ಬುದ್ಧಿ ಮತ್ತೆಗೆ ಭಯ ಪಡುತ್ತಾರೆ ಎಂದು ತಿಳಿಸಿದರು.
ತಮಿಳುನಾಡು ವಕ್ಫ್ ಮಂಡಳಿಯ ಕಾರ್ಯ ನಿರ್ವಹಣೆಯನ್ನು ನಿರ್ಬಂಧಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಹೊಸದಿಲ್ಲಿ,ಫೆ.19: ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ವಿಫಲಗೊಂಡಿದ್ದಕ್ಕಾಗಿ ತಮಿಳುನಾಡು ವಕ್ಫ್ ಮಂಡಳಿಯ ಕಾರ್ಯ ನಿರ್ವಹಣೆಯನ್ನು ನಿರ್ಬಂಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ತಡೆಹಿಡಿದಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಜ.8ರಂದು ಹೊರಡಿಸಿದ್ದ ಆದೇಶದಲ್ಲಿ ಉಚ್ಚ ನ್ಯಾಯಾಲಯವು ಓರ್ವ ಬಾರ್ ಕೌನ್ಸಿಲ್ ಸದಸ್ಯ ಮತ್ತು ವೃತ್ತಿಪರ ಅನುಭವ ಹೊಂದಿರುವ ಓರ್ವ ವ್ಯಕ್ತಿಯನ್ನು ನಾಮ ನಿರ್ದೇಶನ ಮಾಡುವ ಶಾಸನಬದ್ಧ ಅಗತ್ಯವನ್ನು ಪಾಲಿಸಲಾಗಿಲ್ಲ ಎಂದು ಹೇಳಿತ್ತು. ತಮಿಳುನಾಡು ವಕ್ಫ್ ಮಂಡಳಿಯು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಗುರುವಾರ ಕೈಗೆತ್ತಿಕೊಂಡಿತ್ತು. ಖಂಡಿತವಾಗಿಯೂ, ಹೈಕೋರ್ಟ್ ತಪ್ಪು ಮಾಡಿದೆ ಎಂದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ವಕ್ಫ್ ಮಂಡಳಿಯನ್ನು ನಿಷ್ಕ್ರಿಯಗೊಳಿಸಿದ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲಾಗಿದೆ. ಅವಶ್ಯಕತೆಯ ಸಿದ್ಧಾಂತವು ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು. ಅವಶ್ಯಕತೆಯ ಸಿದ್ಧಾಂತವು ಅಸಾಧಾರಣ ಸಂದರ್ಭಗಳಡಿ ಕೆಲವು ಕ್ರಿಯೆಗಳನ್ನು ಸಮರ್ಥಿಸುವ ಕಾನೂನು ತತ್ವವಾಗಿದೆ. ವಕ್ಫ ಮಂಡಳಿ ಪರ ನ್ಯಾಯವಾದಿ ಪಿ.ವಿಲ್ಸನ್ ಅವರು, ಈಗಾಗಲೇ ಮಂಡಳಿಗೆ ಎಂಟು ಸದಸ್ಯರನ್ನು ನೇಮಿಸಲಾಗಿದ್ದು, ಇನ್ನು ಕೇವಲ ಮೂವರ ನಾಮನಿರ್ದೇಶನ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಮಂಡಳಿಯು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳುತ್ತಿದೆ ಎಂದು ಪೀಠಕ್ಕೆ ನಿವೇದಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನಾಂಕದಂದು ಉಳಿದಿರುವ ನೇಮಕಾತಿಗಳ ಬಗ್ಗೆ ತಿಳಿಸುವಂತೆ ನಿರ್ದೇಶನ ನೀಡಿತು.
ಕಲಬುರಗಿ | ಇಬ್ಬರು ರೌಡಿ ಶೀಟರ್ಗಳು ಬೆಂಗಳೂರಿಗೆ ಗಡಿಪಾರು
ಕಲಬುರಗಿ: ಇಲ್ಲಿನ ವಿಶ್ವವಿದ್ಯಾಲಯ ಹಾಗೂ ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಇಬ್ಬರು ರೌಡಿ ಶೀಟರ್ ಗಳನ್ನು ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ. ಈ ಕುರಿತು ಪ್ರಕರಣೆ ನೀಡಿರುವ ನಗರ ಪೊಲೀಸ್ ಆಯುಕ್ತಾಲಯವು, ವಿವಿ ಠಾಣೆಯ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಸೋನಿಯಾ ಗಾಂಧಿ ಕಾಲೋನಿ ನಿವಾಸಿ ಮುನ್ನಾ ಅಲಿಯಾಸ್ ಮಿರ್ಜಾ ಮುನ್ನಾವರ ಎಂಬ ಆರೋಪಿಯನ್ನು ಎ ರೌಡಿ ಎಂದು ಗುರುತಿಸಲಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈತನನ್ನು ಬೆಂಗಳೂರು ನಗರದ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಗರದ ಹೊರವಲಯದ ಪಟ್ಟಣ ಗ್ರಾಮದ ನಿವಾಸಿ, ರೌಡಿಶೀಟರ್ ಲಕ್ಷ್ಣಿಪುತ್ರ ಶರಣಬಸಪ್ಪ ತುಗದಿ ಎಂಬಾತನನ್ನು ಬೆಂಗಳೂರು ನಗರದ ಕೋಣನಕುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ತಿಳಿಸಿದೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 23.88 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರು : ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ಗಳಲ್ಲಿ 23.88 ಕೋಟಿ ರೂ. ಮೌಲ್ಯದ 4.776 ಕೆ.ಜಿ ಕೊಕೇನ್ ಪತ್ತೆಯಾಗಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್ಸಿಬಿ) ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದು, ಎರಡು ದಿನಗಳ ಹಿಂದೆ ಕತಾರ್ನ ದೋಹಾದಿಂದ ಬಂದ ಪ್ರಯಾಣಿಕನ ಬಳಿ ಇದ್ದ ಬ್ಯಾಗ್ಗಳನ್ನು ತಪಾಸಣೆ ನಡೆಸಿದಾಗ ಭಾರೀ ಪ್ರಮಾಣದ ಕೊಕೇನ್ ಪತ್ತೆಯಾಗಿದೆ. ಮಹಿಳೆಯರು ಬಳಸುವ ಕೈಚೀಲದಲ್ಲಿ ಮರೆಮಾಚಿ ಕೊಕೇನ್ ಸಾಗಿಸಲಾಗುತ್ತಿತ್ತು. ಈ ಚೀಲದ ಕೆಳಭಾಗದಲ್ಲಿ ಕೆಮಿಕಲ್ನಿಂದ ಮಾಡಲಾದ ಬಟ್ಟೆಯ ಪದರುಗಳ ಒಳಗೆ ಕೊಕೇನ್ ಇಡಲಾಗಿತ್ತು. ಪ್ರಯಾಣಿಕರನ್ನು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಪ್ರಯಾಣಿಕ ಬ್ರೆಜಿಲ್ ದೇಶದ ನಿವಾಸಿಯಾಗಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಎನ್ಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ರಣಜಿ: 15ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟ ಕರ್ನಾಟಕ
ಲಕ್ನೊ,ಫೆ.19: ರಣಜಿ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದ ಐದನೇ ದಿನವಾದ ಗುರುವಾರ ಕರ್ನಾಟಕ ಕ್ರಿಕೆಟ್ ತಂಡವು ಉತ್ತರಾಖಂಡ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ ಆಲೌಟ್ ಮಾಡುವಲ್ಲಿ ವಿಫಲವಾದರೂ, ಮೊದಲ ಇನಿಂಗ್ಸ್ನಲ್ಲಿ ಪಡೆದಿದ್ದ ಭರ್ಜರಿ ಮುನ್ನಡೆಯ ಆಧಾರದಲ್ಲಿ 15ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದೆ. 2014-15ರ ಋತುವಿನ ನಂತರ ಮೊದಲ ಬಾರಿ ಈ ಸಾಧನೆ ಮಾಡಿದೆ. ಗೆಲ್ಲಲು 827 ರನ್ ಗುರಿ ಪಡೆದಿದ್ದ ಉತ್ತರಾಖಂಡ ತಂಡವು ಉಭಯ ನಾಯಕರು ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಲು ಮುಂದಾದಾಗ 62 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 260 ರನ್ ಗಳಿಸಿತ್ತು. ಶ್ರೇಯಸ್ ಗೋಪಾಲ್(3-83) ಹಾಗೂ ಪ್ರಸಿದ್ಧ ಕೃಷ್ಣ (2-17)ತಮ್ಮೊಳಗೆ ಐದು ವಿಕೆಟ್ಗಳನ್ನು ಹಂಚಿಕೊಂಡರು. ಒಂದು ಹಂತದಲ್ಲಿ ಉತ್ತರಾಖಂಡ ತಂಡವು 6 ವಿಕೆಟ್ಗಳ ನಷ್ಟಕ್ಕೆ 156 ರನ್ ಗಳಿಸಿತ್ತು. ಏಳನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 104 ರನ್ ಸೇರಿಸಿದ ಅಭಯ್ ನೇಗಿ(ಔಟಾಗದೆ 57, 66 ಎಸೆತ, 5 ಬೌಂಡರಿ,3 ಸಿಕ್ಸರ್) ಹಾಗೂ ಸೌರಭ್ ರಾವತ್(ಔಟಾಗದೆ 53, 114 ಎಸೆತ, 4 ಬೌಂಡರಿ, 2 ಸಿಕ್ಸರ್) ಉತ್ತರಾಖಂಡ ತಂಡವನ್ನು ಅತ್ಯಂತ ಹೀನಾಯ ಸೋಲಿನಿಂದ ಪಾರು ಮಾಡಿದರು. ಇದಕ್ಕೂ ಮೊದಲು ಕರ್ನಾಟಕ ತಂಡವು 6 ವಿಕೆಟ್ಗಳ ನಷ್ಟಕ್ಕೆ 299 ರನ್ನಿಂದ ತನ್ನ ಎರಡನೇ ಇನಿಂಗ್ಸ್ ಆರಂಭಿಸಿತು. ದಿನದ ಮೊದಲ ಎಸೆತದಲ್ಲಿ ವಿಜಯಕುಮಾರ್ ವೈಶಾಕ್(0) ಅವರು ಎಡಗೈ ಸ್ಪಿನ್ನರ್ ಮಯಾಂಕ್ ಮಿಶ್ರಾ (4-69)ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. 70 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಕೆ.ಎಲ್.ರಾಹುಲ್ ನಿನ್ನೆಯ ಮೊತ್ತಕ್ಕೆ ಕೇವಲ16 ರನ್ ಗಳಿಸಿದರು. ಆದರೆ ಅವರಿಗೆ ಮತ್ತೊಂದೆಡೆ ಉತ್ತಮ ಜೊತೆಗಾರರು ಸಿಗಲಿಲ್ಲ. ರಾಹುಲ್ ಔಟಾಗದೆ 86 ರನ್(103 ಮಿಶ್ರಾ ಅವರು ಶಿಖರ್ ಶೆಟ್ಟಿ ಹಾಗೂ ಪ್ರಸಿದ್ಧ ಕೃಷ್ಣರನ್ನು ಔಟ್ ಮಾಡಿದರು. ನಾಲ್ಕನೇ ದಿನದಾಟದಲ್ಲಿ ಕ್ಯಾಚ್ ಪಡೆಯುವ ಯತ್ನದಲ್ಲಿದ್ದಾಗ ತನ್ನ ಕೈಗೆ ಗಾಯ ಮಾಡಿಕೊಂಡಿದ್ದ ಕರ್ನಾಟಕ ತಂಡದ ನಾಯಕ ದೇವದತ್ತ ಪಡಿಕ್ಕಲ್ ಇಂದು ಬ್ಯಾಟಿಂಗ್ಗೆ ಇಳಿಯಲಿಲ್ಲ. ರಾಹುಲ್ ಔಟಾಗದೆ 86 ರನ್ ಗಳಿಸಿದ್ದು, ಮೊದಲ ಇನಿಂಗ್ಸ್ನಲ್ಲಿ 141 ರನ್ ಗಳಿಸಿದ್ದರು. ಉತ್ತರಾಖಂಡದ ಪರ ಮಯಾಂಕ್ ಮಿಶ್ರಾ ನಾಲ್ಕು ವಿಕೆಟ್ಗೊಂಚಲು ಪಡೆದರು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಉತ್ತರಾಖಂಡದ ಆಟಗಾರರಾದ ವೈಶಾಕ್ ಹಾಗೂ ಪ್ರಶಾಂತ್ ಚೋಪ್ರಾ ಎರಡನೇ ಓವರ್ನಲ್ಲಿ ಶೂನ್ಯಕ್ಕೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಿದ ಅವ್ನೀಶ್ ಸುಧಾ 71 ಎಸೆತಗಳಲಿ 66 ರನ್ ಗಳಿಸಿದರು. ಅವ್ನೀಶ್ ಔಟಾದಾಗ ಉತ್ತರಾಖಂಡ ತಂಡವು 107 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನೂ 49 ರನ್ ಸೇರಿಸುವಷ್ಟರಲ್ಲಿ ಉತ್ತರಾಖಂಡ ತಂಡವು ಜೆ.ಸುಚಿತ್ ಹಾಗೂ ನಾಯಕ ಕೃನಾಲ್ ಚಂದೇಲಾರನ್ನು ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. ಆಗ ಕರ್ನಾಟಕ ತಂಡ ಭಾರೀ ಗೆಲುವಿನತ್ತ ಚಿತ್ತಹರಿಸಿತ್ತು. ಆದರೆ ರಾವತ್ ಹಾಗೂ ನೇಗಿ 135 ಎಸೆತಗಳಲ್ಲಿ ನಡೆಸಿದ ಜೊತೆಯಾಟದ ಬಲದಿಂದ ಉತ್ತರಾಖಂಡ ತಂಡ ಚೇತರಿಸಿಕೊಂಡಿತು. ರಾವತ್ 100 ಎಸೆತಗಳಲಿ ತನ್ನ ಅರ್ಧಶತಕ ಪೂರೈಸಿದರು. ನೇಗಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದು, 58 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಐದು ಬೌಂಡರಿಗಳ ಸಹಿತ ಅರ್ಧಶತಕ ಗಳಿಸಿದರು. ದಿನದಾಟದಲ್ಲಿ 14 ಓವರ್ಗಳು ಆಡಲು ಬಾಕಿ ಇರುವಾಗ ತಂಡಗಳ ಸದಸ್ಯರು ಪರಸ್ಪರ ಕೈಕುಲುಕಿ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದರು. ಕರ್ನಾಟಕ ತಂಡವು ಜಮ್ಮು-ಕಾಶ್ಮೀರ ತಂಡವನ್ನು ಫೆಬ್ರವರಿ 24ರಿಂದ ಹುಬ್ಬಳಿಯಲ್ಲಿ ಆರಂಭವಾಗಲಿರುವ ರಣಜಿ ಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಜಮ್ಮು-ಕಾಶ್ಮೀರ ಮೊದಲ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದ್ದರೆ, ಕರ್ನಾಟಕ ತಂಡ 9ನೇ ಬಾರಿ ರಣಜಿ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ವ್ಯಕ್ತಿಯ ಅಕ್ರಮ ಬಂಧನ: ಎರಡೂವರೆ ಲಕ್ಷ ರೂ. ಪರಿಹಾರ ನೀಡಿಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಆದೇಶ
ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಪರಿಹಾರ ನೀಡಲು ಆದೇಶ ನೀಡಿದೆ. ಪೊಲೀಸರು ಅಕ್ರಮವಾಗಿ ಬಂಧಿಸಿ ನಾಲ್ಕು ದಿನಗಳ ಬಳಿಕ ಎಫ್ಐಆರ್ ಹಾಕಿದ್ದರು. ನನ್ನ ಪತಿ ಕಾಣುತ್ತಿಲ್ಲ ಎಂದು ಪತ್ನಿ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು. ಸದ್ಯ ಕೋರ್ಟ್ ತನಿಖೆ ನಡೆಸಿ ದಂಡ ಹಾಕಿದೆ.
ಲಿಂಗಾಯತ, ಗಾಣಿಗ ಪ್ರತ್ಯೇಕವಲ್ಲ; 2 ಎ ಸಿಂಧುತ್ವ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಲಿಂಗಾಯತ ಜಾತಿ, ಗಾಣಿಗ ಜಾತಿಯು ಕಾನೂನಿನ ಪ್ರಕಾರ ಪ್ರತ್ಯೇಕವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ವಿಶಾಲವಾದ ಲಿಂಗಾಯತ ಗುಂಪಿನಲ್ಲಿ ಗಾಣಿಗ ಒಂದು ವಿಶಿಷ್ಟ ಜಾರಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ಮೂಲಕ 2 ಎ ಸಿಂಧುತ್ವ ಎತ್ತಿಹಿಡಿದ್ದಾರೆ. ಮೀಸಲಾತಿ ದುರುಪಯೋಗ ಬಗ್ಗೆ ಬಂದಿದ್ದ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಡಿಯಾಗೊ ಗಾರ್ಸಿಯಾವನ್ನು ಬಿಟ್ಟು ಕೊಡಬೇಡಿ: ಇರಾನ್ ಮೇಲಿನ ದಾಳಿಗೆ ಅದು ಅತ್ಯಗತ್ಯ; ಬ್ರಿಟನ್ಗೆ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, ಫೆ.19: ಹಿಂದೂ ಮಹಾಸಾಗರದಲ್ಲಿ ವ್ಯೂಹಾತ್ಮಕವಾಗಿ ನಿರ್ಣಾಯಕ ಸೇನಾ ನೆಲೆಯಾಗಿರುವ ಡಿಯಾಗೊ ಗಾರ್ಸಿಯಾವನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡಬಾರದು. ಒಂದು ವೇಳೆ ಅಮೆರಿಕವು ಇರಾನ್ ವಿರುದ್ಧ ದಾಳಿ ಪ್ರಾರಂಭಿಸಿದರೆ ಅದು ಅತ್ಯಗತ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಟನ್ಗೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಡಿಯಾಗೊ ಗಾರ್ಸಿಯಾದ ನಿಯಂತ್ರಣವನ್ನು ಮತ್ತು ಚಾಗೋಸ್ ದ್ವೀಪಗಳ ಮೇಲಿನ ಸಾರ್ವಭೌಮತ್ವವನ್ನು ಪ್ರಧಾನಿ ಕೀರ್ ಸ್ಟಾರ್ಮರ್ ಯಾವತ್ತೂ ಕಳೆದುಕೊಳ್ಳಬಾರದು. ಅದು ಬ್ರಿಟನ್ ಕೈಯಲ್ಲೇ ಇರಬೇಕು ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಚಾಗೋಸ್ ದ್ವೀಪಗಳನ್ನು ಮಾರಿಷಸ್ಗೆ ಹಿಂದಿರುಗಿಸುವ ಮತ್ತು ಡಿಯಾಗೊ ಗಾರ್ಸಿಯಾದಲ್ಲಿನ ಅಮೆರಿಕ-ಬ್ರಿಟನ್ ಜಂಟಿ ಸೇನಾ ನೆಲೆಯನ್ನು 100 ವರ್ಷಗಳವರೆಗೆ ಗುತ್ತಿಗೆಗೆ ಪಡೆಯುವ ಒಪ್ಪಂದವನ್ನು ಬ್ರಿಟನ್ ಯೋಜಿಸಿದೆ. ಚಾಗೋಸ್ ದ್ವೀಪಗಳ ಭಾಗವಾಗಿರುವ ಆಯಕಟ್ಟಿನ ಡಿಯಾಗೊ ಗಾರ್ಸಿಯಾದಲ್ಲಿರುವ ಅಮೆರಿಕ-ಬ್ರಿಟನ್ ಜಂಟಿ ಸೇನಾ ನೆಲೆಯು ಬೃಹತ್ ಬಾಂಬರ್ ವಿಮಾನಗಳು ಇಳಿಯಬಲ್ಲ ರನ್ವೇ, ಸಮರ ನೌಕೆಗಳನ್ನು ನಿಯೋಜಿಸುವ ವ್ಯವಸ್ಥೆಗಳನ್ನು ಹೊಂದಿದೆ. ಇದು ಅಮೆರಿಕ ಮತ್ತು ಬ್ರಿಟನ್ ಪಡೆಗಳಿಗೆ ಮಧ್ಯಪ್ರಾಚ್ಯ, ಪೂರ್ವ ಆಫ್ರಿಕಾ ಮತ್ತು ಏಶ್ಯಾದಾದ್ಯಂತ ಕಾರ್ಯಾಚರಣೆ ನಡೆಸಲು ಅನುವು ಮಾಡಿಕೊಡುತ್ತದೆ. ಬ್ರಿಟನ್ 1968ರಲ್ಲಿ ಮಾರಿಷಸ್ಗೆ ಸ್ವಾತಂತ್ರ್ಯ ನೀಡುವ ಮೊದಲು ಮಾರಿಷಸ್ನಿಂದ ಚಾಗೋಸ್ ದ್ವೀಪವನ್ನು ಬೇರ್ಪಡಿಸಿ ತನ್ನ ನಿಯಂತ್ರಣದಲ್ಲೇ ಇರಿಸಿಕೊಂಡಿತ್ತು.
ನಂದಿನಿ ಉತ್ಪನ್ನಗಳ ವಿರುದ್ಧ ಅಪಪ್ರಚಾರ ಆರೋಪ: ಎಫ್ಐಆರ್ ದಾಖಲು
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡಿರುವ ಆರೋಪದಡಿ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಕುರಿತಂತೆ ಕೆಎಂಎಫ್ನ ಪದ್ಮಾವತಿ ಆರ್. ಎಂಬುವರು ನೀಡಿದ ದೂರಿನ್ವಯ ಡಾ.ಶರಣ್ಯ ಎಂಬುವರ ವಿರುದ್ಧ ಬಿಎನ್ ಎಸ್ ಕಾಯ್ದೆಯ 353(1)(ಬಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ 66(ಡಿ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ಕ್ರಮಗಳಿಂದ ಜನಾಂಗೀಯ ನಿರ್ಮೂಲನೆ ಭಯ ಹೆಚ್ಚಿದೆ: ವಿಶ್ವಸಂಸ್ಥೆ ಕಳವಳ
ಜಿನೆವಾ, ಫೆ.19: ಇಸ್ರೇಲ್ನ ಹೆಚ್ಚುತ್ತಿರುವ ದಾಳಿಗಳು ಮತ್ತು ಫೆಲೆಸ್ತೀನೀಯರ ಬಲವಂತದ ಸ್ಥಳಾಂತರಗಳು ಗಾಝಾ ಪಟ್ಟಿ ಮತ್ತು ಪಶ್ಚಿಮದಂಡೆಯಲ್ಲಿ ಜನಾಂಗೀಯ ನಿರ್ಮೂಲನೆಯ' ಬಗ್ಗೆ ಕಳವಳವನ್ನು ಹೆಚ್ಚಿಸಿದೆ ಎಂದು ಗುರುವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ವಿಶ್ವಸಂಸ್ಥೆ ಹೇಳಿದೆ. ಗಾಝಾದಲ್ಲಿನ ಯುದ್ದದ ಸಮಯದಲ್ಲಿ ಇಸ್ರೇಲ್ನ ಮಿಲಿಟರಿ ನಡವಳಿಕೆಯ ಸಂಚಿತ ಪರಿಣಾಮ, ಜೊತೆಗೆ ಭೂಪ್ರದೇಶದ ಮೇಲೆ ಅದರ ದಿಗ್ಬಂಧನವು ಗಾಝಾದಲ್ಲಿ ಫೆಲೆಸ್ತೀನೀಯರ ಜೀವನ ಪರಿಸ್ಥಿತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ತೀವ್ರವಾದ ದಾಳಿಗಳು, ಸಂಪೂರ್ಣ ನೆರೆಹೊರೆಗಳ ಕ್ರಮಬದ್ಧ ನಾಶ ಮತ್ತು ಮಾನವೀಯ ನೆರವಿನ ನಿರಾಕರಣೆಯು ಗಾಝಾದಲ್ಲಿ ಶಾಶ್ವತ ಜನಸಂಖ್ಯಾ ಬದಲಾವಣೆಯ ಗುರಿಯನ್ನು ಹೊಂದಿದೆ. ಇದು ಬಲವಂತದ ವರ್ಗಾವಣೆಯೊಂದಿಗೆ ಶಾಶ್ವತ ಸ್ಥಳಾಂತರದ ಉದ್ದೇಶವನ್ನು ತೋರುತ್ತದೆ ಮತ್ತು ಗಾಝಾ ಹಾಗೂ ಪಶ್ಚಿಮದಂಡೆಯಲ್ಲಿ ಜನಾಂಗೀಯ ನಿರ್ಮೂಲನೆಯ ಆತಂಕವನ್ನು ಹೆಚ್ಚಿಸಿದೆ ಎಂದು ವರದಿ ಹೇಳಿದೆ. 2024ರ ನವೆಂಬರ್ 1ರಿಂದ 2025ರ ಅಕ್ಟೋಬರ್ 31ರವರೆಗಿನ ಅವಧಿಗೆ ಸಂಬಂಧಿಸಿದ ವರದಿ ಇದಾಗಿದೆ. ಆಕ್ರಮಿತ ಪಶ್ಚಿಮದಂಡೆ ಮತ್ತು ಸ್ವಾಧೀನಪಡಿಸಿಕೊಂಡ ಪೂರ್ವ ಜೆರುಸಲೇಂನಲ್ಲಿ ಇಸ್ರೇಲಿ ಪಡೆಗಳಿಂದ ಕಾನೂನುಬಾಹಿರ ಬಲದ ವ್ಯವಸ್ಥಿತ ಬಳಕೆ, ವ್ಯಾಪಕವಾದ ಅನಿಯಂತ್ರಿತ ಬಂಧನ ಮತ್ತು ಫೆಲೆಸ್ತೀನೀಯರ ಮನೆಗಳನ್ನು ಕಾನೂನುಬಾಹಿರವಾಗಿ ನೆಲಸಮಗೊಳಿಸುವ ಕ್ರಮಗಳನ್ನು ಫೆಲೆಸ್ತೀನಿಯನ್ ಜನರ ಮೇಲೆ ದಬ್ಬಾಳಿಕೆಗೆ ಹಾಗೂ ಪ್ರಾಬಲ್ಯ ಸಾಧಿಸಲು ನಡೆಸಲಾಗಿದೆ. ಈ ಉಲ್ಲಂಘನೆಗಳು ಆಕ್ರಮಿತ ಪಶ್ಚಿಮದಂಡೆಯ ಪಾತ್ರ, ಸ್ಥಿತಿ ಮತ್ತು ಜನಸಂಖ್ಯಾ ಸಂಯೋಜನೆಯನ್ನು ಬದಲಾಯಿಸುತ್ತಿವೆ ಹಾಗೂ ಜನಾಂಗೀಯ ನಿರ್ಮೂಲನೆಯ ಗಂಭೀರ ಕಾಳಜಿಯನ್ನು ಹೆಚ್ಚಿಸಿದೆ ಎಂದು ವರದಿ ಹೇಳಿದೆ. ಗಾಝಾದಲ್ಲಿ ಅಪಾರ ಪ್ರಮಾಣದಲ್ಲಿ ನಾಗರಿಕರ ನಿರಂತರ ಹತ್ಯೆ, ಕ್ಷಾಮದ ಹರಡುವಿಕೆ ಮತ್ತು ಉಳಿದಿರುವ ನಾಗರಿಕ ಮೂಲಸೌಕರ್ಯಗಳ ನಾಶವನ್ನು ವರದಿ ಖಂಡಿಸಿದ್ದು 12 ತಿಂಗಳ ಅವಧಿಯಲ್ಲಿ 157 ಮಕ್ಕಳು ಸೇರಿದಂತೆ ಕನಿಷ್ಠ 463 ಫೆಲೆಸ್ತೀನೀಯರು ಹಸಿವಿನಿಂದ ಮೃತಪಟ್ಟಿದ್ದಾರೆ. ಉಪವಾಸದಿಂದ ಸಾಯುವುದು ಅಥವಾ ಆಹಾರ ಪಡೆಯಲು ಪ್ರಯತ್ನಿಸುವಾಗ ಹತರಾಗುವ ಅಪಾಯಕ್ಕೆ ಒಡ್ಡಿಕೊಳ್ಳುವ ಅಮಾನವೀಯ ಆಯ್ಕೆಯನ್ನು ಫೆಲೆಸ್ತೀನೀಯರು ಎದುರಿಸುತ್ತಿದ್ದಾರೆ. ಕ್ಷಾಮ ಮತ್ತು ಅಪೌಷ್ಟಿಕತೆಯ ಪರಿಸ್ಥಿತಿಯು ಇಸ್ರೇಲ್ ಸರಕಾರ ಕೈಗೊಂಡ ಕ್ರಮಗಳ ನೇರ ಫಲಿತಾಂಶವಾಗಿದೆ ಎಂದು ವರದಿ ಹೇಳಿದೆ. ವರದಿ ಮಾಡಿದ ಅವಧಿಯಲ್ಲಿ ಹಮಾಸ್ ಹಾಗೂ ಇತರ ಸಶಸ್ತ್ರ ಗುಂಪುಗಳು ಒತ್ತೆಯಾಳುಗಳನ್ನು `ಚೌಕಾಶಿ ಸಾಧನಗಳಾಗಿ' ಬಳಸಿಕೊಂಡವು. ಒತ್ತೆಯಾಳುಗಳನ್ನು ನಡೆಸಿಕೊಂಡ ರೀತಿ ಯುದ್ದಾಪರಾಧಕ್ಕೆ ಸಮವಾಗಿದೆ. ಇಸ್ರೇಲ್ ಪಡೆಗಳು, ಹಮಾಸ್ ಹಾಗೂ ಇತರ ಫೆಲೆಸ್ತೀನಿಯನ್ ಸಶಸ್ತ್ರ ಗುಂಪುಗಳು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳ ಸಂಪೂರ್ಣ ಉಲ್ಲಂಘನೆ ಮತ್ತು ದುರುಪಯೋಗ ಮಾಡಿಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ : ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು : ಕಮಿಷನ್ ಎನ್ನುವುದು ಹಿಂದೆಯೂ ಇತ್ತು, ಈಗಲೂ ಇದೆ. ಮುಂದೆಯೂ ಇರುತ್ತೆ. ಹೀಗಾಗಿ, ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಿಕೊಳ್ಳಬೇಕಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆ ಕೆಲಸಕ್ಕೆ ಕಮಿಷನ್ ನೀಡುತ್ತಿರುವ ವ್ಯವಸ್ಥೆ ಇದ್ದಲ್ಲಿ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ. ದಾಖಲೆಗಳು ಇದ್ದರೆ ಲೋಕಾಯುಕ್ತಕ್ಕೆ ದೂರು ಸಹ ನೀಡಬಹುದು. ಆದರೆ, ಆರೋಪ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು. ಬಜೆಟ್ ಬೆಂಬಲ ಇಲ್ಲದೇ ಬಿಜೆಪಿ ತನ್ನ ಅವಧಿಯಲ್ಲಿ ಕಾಮಗಾರಿ ಟೆಂಡರ್ ಕೊಟ್ಟಿದೆ. ಆ ರೀತಿ ಬಿಜೆಪಿ ಸರಕಾರ ಮಾಡದೇ ಇದ್ದಿದ್ದರೆ ಈ ರೀತಿಯ ಗೊಂದಲ ಆಗುತ್ತಿರಲಿಲ್ಲ. ಕೆಲಸ ಆಗಿದೆ, ಆದರೆ ಅನುದಾ ಬಿಡುಗಡೆಗೆ ಸಮಯ ಬೇಕು. ಹಿಂದಿನ ಸರಕಾರ ಮಾಡಿರುವ ತಪ್ಪು ಅದು. ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ ಜಾಸ್ತಿ ಬಾಕಿ ಇದೆ ಎಂದು ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆಯಲ್ಲಿರುವ ಬಜೆಟ್ಗೆ ಸರಿದೂಗಿಸುವ ಕೆಲಸ ಮಾಡುತ್ತಿದ್ದೇವೆ. ಇವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಮುಂದೆ ತೋರಿಸುತ್ತೇನೆ. ನಾವು ಹೊಸ ಕಾಮಗಾರಿ ಪ್ರಕ್ರಿಯೆ ಆರಂಭಿಸಿಲ್ಲ ಎಂದ ಅವರು, ನಮ್ಮ ಇಲಾಖೆಯಲ್ಲಿ 12 ಸಾವಿರ ಕೋಟಿ ರೂ. ಬಾಕಿ ಇತ್ತು. ಈಗಾಗಲೇ 3 ಸಾವಿರ ಕೋಟಿ ಕಾಮಗಾರಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪಣಂಬೂರು: ಸಹೋದ್ಯೋಗಿಯ ಕೊಲೆ ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ, ದಂಡ
ಪಣಂಬೂರು: ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿ ಇರುವ ಮೀನಗಾರಿಕಾ ಬೋಟ್ ತಯಾರಿಸುವ ಮತ್ತು ರಿಪೇರಿ ಮಾಡುವ ಯಾರ್ಡ್ ನಲ್ಲಿ ಸಹೋದ್ಯೋಗಿಯನ್ನು ಕೊಲೆಗೈದ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಕೇರಳದ ಕಣ್ಣೂರು ಜಿಲ್ಲೆಯ ಕೂವೇರಿ ಚಪ್ಪರಪದವು ಮಡಂತಟ್ಟು ನೀರ್ಪೇಲ್ಮನೆ ನಿವಾಸಿ ಜಾನ್ಸ್ ನ್ ಎನ್.ವಿ ಅಲಿಯಾಸ್ ಬಿನೋಯ್ ( 53 ) ಶಿಕ್ಷೆಗೆ ಒಳಗಾದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಣಂಬೂರು ಗ್ರಾಮದ ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿ ಇರುವ ಮೀನಗಾರಿಕಾ ಬೋಟ್ ಗಳನ್ನು ತಯಾರಿಸುವ ಮತ್ತು ರಿಪೇರಿ ಮಾಡುವ ಯಾರ್ಡ್ ನಲ್ಲಿ ಕಬ್ಬಿಣದ ಕೆಲಸ ಮಾಡಿಕೊಂಡಿದ್ದ ಬಿನು.ಜಿ ಮತ್ತು ಮರದ ಕೆಲಸ ಮಾಡಿಕೊಂಡಿದ್ದ ಜಾನ್ಸನ್ ಎನ್.ವಿ. ಅಲಿಯಾಸ್ ಬಿನೋಯ್ ಎಂಬವರ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿತ್ತು. ಈ ವೇಳೆ ಜಾನ್ಸನ್ ಬಿನು ಅವರಿಗೆ ಕಬ್ಬಿಣದ ರಾಡ್ ನಿಂದ ಚುಚ್ಚಿ ಕೊಲೆಗೈದಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪಣಂಬೂರು ಪೊಲೀಸರು ಅ.ಕ್ರ ನಂಬ್ರ 102/2023 ಕಲಂ:302 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾ ರೋಪಣಾ ಪತ್ರ ಸಲ್ಲಿಸಿದ್ದರು. ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಸೆ.302 ಐಪಿಸಿ ಕಾಯ್ದೆ ಅಡಿಯಲ್ಲಿ 5 ವರ್ಷ ಸಾದಾ ಕಾರಾವಾಸ ಶಿಕ್ಷೆ ಮತ್ತು ಕಲಂ:304(2) ಐಪಿಸಿ ಕಾಯ್ದೆ ಅಡಿಯಲ್ಲಿ 25,000 ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಕರಣದ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಆಗಿನ ಪ್ರಭಾರ ಪೊಲೀಸ್ ನಿರೀಕ್ಷಕರಾಗಿದ್ದ ಪ್ರಸ್ತುತ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿರುವ ಸಂದೀಪ್.ಜಿ.ಎಸ್. ಅವರು ತನಿಖೆ ನಡೆಸಿ ಬಳಿಕ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ .ಎಂ. ಅವರು ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
Bengaluru | ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ; ವೃದ್ಧ ಸಜೀವ ದಹನ
ಬೆಂಗಳೂರು : ಮನೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡು ವೃದ್ಧರೊಬ್ಬರು ಸಜೀವ ದಹನವಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ಮೈಲಸಂದ್ರದ ತಿಮರಾಯಪ್ಪ ಸರ್ಕಲ್ ಸಮೀಪದ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮೈಲಾರಪ್ಪ (80) ಸಜೀವ ದಹನವಾಗಿದ್ದಾರೆ. ಮೈಲಾರಪ್ಪ ಅವರಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಎಡಗಾಲು ಕತ್ತರಿಸಿದ್ದು, ಓಡಾಡಲು ಆಗುವುದಿಲ್ಲ. ಈ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ರಾತ್ರಿ ವೇಳೆ ಇವರ ಮೊಮ್ಮಗ ಜೊತೆಯಲ್ಲಿರುತ್ತಿದ್ದರು. .ನಿನ್ನೆ ರಾತ್ರಿ 11 ಗಂಟೆ ಸುಮಾರಿನಲ್ಲಿ ಸಂಬಂಧಿಯೊಬ್ಬರು ಊಟ ಕೊಡಲು ಹೋಗಿದ್ದಾಗ ನನಗೆ ಆರೋಗ್ಯ ಸರಿ ಇಲ್ಲ. ಮಾತ್ರೆ ಕೊಡಲು ಹೇಳಿದ್ದಾರೆ. ಅದರಂತೆ ಸಂಬಂಧಿ ಮಾತ್ರೆ ತಂದುಕೊಟ್ಟು ಮನೆಗೆ ಹೋಗಿದ್ದಾರೆ. ಇಂದು ಬೆಳಗಿನ ಜಾವ 2.20 ರ ಸುಮಾರಿನಲ್ಲಿ ಮೈಲಾರಪ್ಪ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ತಕ್ಷಣ ನೆರೆಹೊರೆಯವರು ಬಂದು ಬೆಂಕಿಯನ್ನು ನಂದಿಸಿ ನೋಡಿದಾಗ ಮೈಲಾರಪ್ಪ ಅವರು ಸಜೀವ ದಹನವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆರ್ಆರ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ| ಉಡುಪಿ ಜಿಲ್ಲೆಯಲ್ಲಿ 8 ದೂರುಗಳ ವಿಚಾರಣೆ; 12 ಹೊಸ ದೂರು ಸ್ವೀಕಾರ
ಉಡುಪಿ, ಫೆ.19: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್.ಕೆ ವಂಟಿಗೋಡಿ ಅವರು ಇಂದು ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲೆಯ ಸಾರ್ವಜನಿಕರಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 12 ಹೊಸ ದೂರುಗಳನ್ನು ಸ್ವೀಕರಿಸಿದರು. ಉಡುಪಿ ಜಿಲ್ಲೆಯಲ್ಲಿ ಸದ್ಯ 9 ದೂರುಗಳ ವಿಚಾರಣೆಯ ಹಂತದಲ್ಲಿವೆ. ಇವುಗಳಲ್ಲಿ ಹಾಜಿ ಅಬ್ದುಲ್ಲಾ ಆಸ್ಪತ್ರೆಗೆ ಸಂಬಂಧಿಸಿದ ದೂರಿನ ಕುರಿತು ಸರಕಾರದ ಆರೋಗ್ಯ ಇಲಾಖೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದ ಶ್ಯಾಮ್ ಭಟ್, ಉಳಿದ ಎಂಟು ದೂರುಗಳ ಕುರಿತು ವರದಿ ದೊರಕಿದ್ದು, ಶೀಘ್ರವೇ ವಿಚಾರಣೆ ನಡೆಸಿ ಇತ್ಯರ್ಥ ಪಡಿಸಲಾಗುವುದು ಎಂದರು. ಇಂದು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 12 ಹೊಸ ದೂರುಗಳನ್ನು ಆಯೋಗ ಸ್ವೀಕರಿಸಿದೆ. ಇವುಗಳ ಕುರಿತು ವರದಿ ನೀಡುವಂತೆ ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಅವುಗಳ ವಿಚಾರಣೆ ನಡೆಯಲಿದೆ. ಇಂದು ಸ್ವೀಕರಿಸಿರುವ ದೂರುಗಳಲ್ಲಿ ಹೆಚ್ಚಿನವು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇವೆ. ಉಳಿದಂತೆ ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಸಹ ಸ್ವೀಕರಿಸ ಲಾಗಿದೆ ಎಂದು ಅವರು ವಿವರಿಸಿದರು. ಆಯೋಗಕ್ಕೆ ದೂರು ನೀಡಿ: ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾಹಿತಿಗಳನ್ನು ಹಂಚಿ ಕೊಂಡ ಶ್ಯಾಮ್ ಭಟ್, 2023ರಲ್ಲಿ ಆಯೋಗದಲ್ಲಿ ಸುಮಾರು 8,500 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಈಗ ಜಿಲ್ಲಾ ಮಟ್ಟದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಕಳೆದ ತಿಂಗಳ ಕೊನೆಗೆ ಈ ಸಂಖ್ಯೆ 3,500ಕ್ಕೆ ಇಳಿದಿದೆ. ಪ್ರತಿ ತಿಂಗಳು ರಾಜ್ಯದಲ್ಲಿ 600ರಿಂದ 700 ಹೊಸ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಅವುಗಳ ವಿಚಾರಣೆ ಯನ್ನೂ ಆಯೋಗ ಮಾಡುತ್ತದೆ ಎಂದರು. ಮಾನವ ಹಕ್ಕುಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು. ಇಲ್ಲದಿದ್ದರೆ ಆಯೋಗಕ್ಕೆ ನೇರವಾಗಿ ದೂರು ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಅಥವಾ ಅಂಚೆ ಮೂಲಕವೂ ದೂರು ಸಲ್ಲಿಸಲು ಅವಕಾಶ ವಿದೆ ಎಂದು ಅವರು ವಿವರಿಸಿದರು. ಆಯೋಗಕ್ಕೆ ಜಿಲ್ಲಾ ಮಟ್ಟದಲ್ಲಿ ಯಾವುದೇ ಕಚೇರಿ ಇರುವುದಿಲ್ಲ. ಜಿಲ್ಲೆಗಳಲ್ಲಿ ನಕಲಿ ಹೆಸರಿನಲ್ಲಿ ಕೆಲವು ಸಂಸ್ಥೆ ಹಾಗೂ ವ್ಯಕ್ತಿಗಳು ಕಾರ್ಯಾಚರಿಸುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು. 2007ರಲ್ಲಿ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಗಿದ್ದು, ಅಂದಿನಿಂದ 2023ರವರೆಗೆ ನಿರಂತರ ವಾಗಿ ಕಾರ್ಯನಿರ್ವಹಿಸಿತ್ತು. ಸರಕಾರದಿಂದ ನೇಮಕಗೊಂಡ ಆಯೋಗದ ಅಧ್ಯಕ್ಷ ನಾರಾಯಣ ಸ್ವಾಮಿ ಅವರು ಲೋಕಪಾಲ ಹುದ್ದೆಗೆ ನೇಮಕಗೊಂಡ ಕಾರಣ, ಇದೀಗ ತಾನು ಆಯೋಗದ ಹಂಗಾಮಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತಿದ್ದೇನೆ ಎಂದರು. ಬೆಂಗಳೂರಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಲ್ತುಳಿತದಿಂದ ಸಾವುನೋವು ಗಳಾದಾಗ ಸರಕಾರ 10 ಲಕ್ಷ ರೂ. ಪರಿಹಾರ ಘೋಷಿಸಿತ್ತು. ನಾವು ಅದನ್ನು 25 ಲಕ್ಷ ರೂ.ಗಳಿಗೆ ಏರಿಸಲು ಶಿಫಾರಸ್ಸು ಮಾಡಿದ್ದು, ಸರಕಾರಕ್ಕೆ ಅದನ್ನು ಅನುಮೋದಿಸಿ ಸತ್ತವರ ಕುಟುಂಬಗಳಿಗೆ 25 ಲಕ್ಷ ರೂ.ಪರಿಹಾರ ನೀಡಿತ್ತು ಎಂದರು. ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಯಾರೂ ಆಯೋಗಕ್ಕೆ ದೂರು ಸಲ್ಲಿಸಬಹುದು. ಕೆಲವೊಮ್ಮೆ ಈ ಬಗ್ಗೆ ವರದಿ ಬಂದಾಗ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತದೆ ಎಂದು ಶ್ಯಾಮ್ ಭಟ್ ವಿವರಿಸಿದರು. ಇಂದು ಉಡುಪಿ ಭೇಟಿಯ ಸಂದರ್ಭದಲ್ಲಿ ಉಡುಪಿ ಸರಕಾರಿ ಜಿಲ್ಲಾಸ್ಪತ್ರೆ, ಪೊಲೀಸ್ ಸ್ಟೇಶನ್, ಉಡುಪಿ ಜೈಲಿಗೆ ಬೇಟಿ ನೀಡಿದ್ದೇವೆ. ಅಲ್ಲದೇ ಕೆಲವು ಹಾಸ್ಟೆಲ್ ಹಾಗೂ ಸರಕಾರಿ ಬಸ್ ನಿಲ್ದಾಣಕ್ಕೆ ತೆರಳಿ ಪರಿಶೀಲಿಸಿದ್ದೇವೆ. ಬಸ್ ನಿಲ್ದಾಣದಲ್ಲಿ ಶುಚಿತ್ವ ಚೆನ್ನಾಗಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಹಾಸ್ಟೆಲ್ಗಳಲ್ಲಿ ವ್ಯವಸ್ಥೆ ಹಾಗೂ ಶುಚಿತ್ವ ಚೆನ್ನಾಗಿತ್ತು. ಮಕ್ಕಳಿಂದ ಯಾವುದೇ ದೂರು ಕೇಳಿಬಂದಿಲ್ಲ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲಿಸ್ ಅಧೀಕ್ಷಕ ಹರಿರಾಂ ಶಂಕರ್ ಉಪಸ್ಥಿತರಿದ್ದರು.
ಮಾರುತಿ ಸುಝುಕಿ ಇ ವಿಟಾರ ಎಲೆಕ್ಟ್ರಿಕ್ ಕಾರು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು: ಮಾರುತಿ ಸುಝುಕಿಯ ಎಲೆಕ್ಟ್ರಿಕ್ ಕಾರು ಇ ವಿಟಾರವನ್ನು ನಗರದ ಭಾರತ್ ಆಟೋಕಾರ್ಸ್ ಲಿಮಿಟೆಡ್ ನ ನೆಕ್ಸಾ ಪ್ರದರ್ಶನ ಮಳಿಗೆಯಲ್ಲಿಂದು ದಾಯ್ಜಿವರ್ಲ್ಡ್ ಸಮೂಹದ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಎಲೆಕ್ಟ್ರಿಕ್ ಕಾರುಗಳಿಗೆ ಒಳ್ಳೆಯ ಭವಿಷ್ಯವಿದೆ. ಕಾರುಗಳ ಚಾಲನೆಯ ಜೊತೆ ಸುರಕ್ಷತೆಗೂ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಖ್ಯಾತ ವೈದ್ಯರಾದ ಡಾ.ಮುರಳೀಧರ ಯಡಿಯಾಳ್ ಭಾಗವಹಿಸಿ ಮಾತನಾಡುತ್ತಾ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಪರಿಸರ ಸ್ನೇಹಿಯಾಗಿದೆ. ಇದರಿಂದ ಸಾಕಷ್ಟು ಇಂಧನ ಉಳಿಸಬಹುದು, ಪರಿಸರವನ್ನು ಕಾರ್ಬನ್ ನಿಂದ ಮುಕ್ತವಾಗಿಸಬಹುದು. ಭವಿಷ್ಯದಲ್ಲಿ ಈ ಕಾರುಗಳು ಇನ್ನಷ್ಟು ಜನಪ್ರಿಯವಾಗಬಹುದು ಎಂದು ಶುಭ ಹಾರೈಸಿದರು. ಮಾರುತಿ ಸುಝುಕಿ ಏರಿಯಾ ಮ್ಯಾನೇಜರ್ ಮಾಯಾಂಕ್ ಚೋತಿವಾಲ್ ಮಾತನಾಡುತ್ತಾ, ದೇಶದಲ್ಲಿ ಸುಮಾರು 1000 ಚಾರ್ಜಿಂಗ್ ಪಾಯಿಂಟ್ ಗಳಿವೆ. ಈ ಕೇಂದ್ರಗಳ ಮಾಹಿತಿ ಪಡೆಯಲು ಆ್ಯಪ್ ಕೂಡ ಗ್ರಾಹಕರು ಬಳಸಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಭಾರತ್ ಬೀಡಿ ಸಂಸ್ಥೆಯ ಅಧ್ಯಕ್ಷ ಸುಬ್ರಾಯ ಪೈ, ಭಾರತ್ ಆಟೋ ಕಾರ್ಸ್ ಲಿ.ಇದರ ಆಡಳಿತ ನಿರ್ದೇಶಕ ಸುಧೀರ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೋ ರೂಂ ಮ್ಯಾನೇಜರ್ ಸೂರಜ್ ವಂದಿಸಿದರು. ಪೂಜಾ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು.
ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ : ಕೆ.ವಿ.ಪ್ರಭಾಕರ್
ಪ್ರೆಸ್ ಕ್ಲಬ್ ವತಿಯಿಂದ ಸತೀಶ್ ಜಾರಕಿಹೊಳಿ ಅವರಿಗೆ ʼವರ್ಷದ ವ್ಯಕ್ತಿ ಪ್ರಶಸ್ತಿʼ ಪ್ರದಾನ
ಬಬಲಾದಿ ಭವಿಷ್ಯ 2026: ಏಳಾನೆ ಮುಂಗಾರು, ಒಂಭತ್ತಾನೆ ಹಿಂಗಾರು; ರಾಜಕೀಯದಲ್ಲಿ ಮಹಾ ತಿರುವು - ಏನಿದರ ಅರ್ಥ?
ಪ್ರತಿ ವರ್ಷದಂತೆ ಈ ಬಾರಿಯೂ ವಿಜಯಪುರದ ಬಬಲಾದಿ ಸ್ವಾಮೀಜಿಯು ಭವಿಷ್ಯ ನುದಿಡಿದ್ದಾರೆ. 2026ನೇ ವರ್ಷವು ಏರಿಳಿತಗಳಿಂದ ಕೂಡಿದ ವರ್ಷವಾಗಲಿದೆ ಎಂದು ಬಬಲಾದಿ ಸದಾಶಿವ ಮುತ್ತಜ್ಜ ಕಾಲಜ್ಞಾನ ಹೇಳಿದ್ದಾರೆ. ರಾಜಕಾರಣದಲ್ಲಿ ಹೊಸ ತಿರುವು. ರೋಗ, ಯುದ್ಧ ಮತ್ತು ಪ್ರಕೃತಿ ವಿಕೋಪಗಳ ಎಚ್ಚರಿಕೆಯ ಜೊತೆಗೆ, ರೈತರಿಗೆ ಹಾಗೂ ದೇಶದ ಆರ್ಥಿಕತೆಗೆ ಲಾಭವಾಗುವ ಮಾತುಗಳು ಕೂಡ ಹೇಳಿದ್ದಾರೆ.. ಬಬಲಾದಿ ಕಾಲಜ್ಞಾನ ಹೇಗಿದೆ? 2026ರಲ್ಲಿ ಏನೆಲ್ಲಾ ಆಗಲಿದೆ ವಿವರ ಇಲ್ಲಿದೆ.
ಉಡುಪಿ: ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗ
ಉಡುಪಿ, ಫೆ.19: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಟಿ.ಶ್ಯಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯರಾದ ಎಸ್.ಕೆ ವಂಟಿಗೋಡಿ ಅವರು ಇಂದು ನಗರದ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲಿಸಿದರಲ್ಲದೇ, ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾಸ್ಪತ್ರೆಯ ನೋಂದಣಿ ಕೇಂದ್ರ, ರೋಗಿಗಳ ವಾರ್ಡ್, ತೀವ್ರ ನಿಗಾ ಘಟಕ, ಔಷಧಿ ಉಗ್ರಾಣ, ಆಸ್ಪತ್ರೆಯ ಸ್ವಚ್ಛತೆ ಕುರಿತಂತೆ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ರೋಗಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ಉದ್ದನೆಯ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚು ನೊಂದಣಿ ಕೌಂಟರ್ ತೆರೆಯುವಂತೆ ಜಿಲ್ಲಾ ಸರ್ಜನ್ಗೆ ಸೂಚಿಸಿದರು. ಅಲ್ಲದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿರುವ ರೋಗಿಗಳಿಂದ ಚಿಕಿತ್ಸೆ ಗುಣಮಟ್ಟ, ಔಷಧಿಗಳ ಲಭ್ಯತೆ, ವೈದ್ಯರ ಕಾರ್ಯವೈಖರಿ ಕುರಿತಂತೆ ಮಾಹಿತಿಗಳನ್ನು ಕೇಳಿ ಪಡೆದರು. ಆಸ್ಪತ್ರೆಯ ಸ್ವಚ್ಛತೆ, ಶುಭ್ರತೆ ಪರಿಶೀಲಿಸಿದ ಅವರು, ಆಸ್ಪತ್ರೆಯ ಒಳ ಕಾರಿಡಾರ್ಗಳಲ್ಲಿ ಬೆಳಕಿನ ಅಭಾವವಿರುವುದನ್ನು ಗಮನಿಸಿ ಕಾರಿಡಾರ್ಗಳಲ್ಲಿ ಲೈಟ್ಗಳನ್ನು ಅಳವಡಿಸಲು ಸೂಚನೆ ನೀಡಿದರು. ರಾಜ್ಯದ ಔಷಧಿ ಕೇಂದ್ರಗಳಿಂದ ಸರಬರಾಜಾದ ಔಷಧಿ ಸೇರಿದಂತೆ ಮತ್ತಿತರ ಪರಿಕರಗಳನ್ನು ಉಗ್ರಾಣದ ಒಳಭಾಗದಲ್ಲಿ ಇಡದೇ ಕಾರಿಡಾರ್ ಗಳಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಪ್ರಶ್ನಿಸಿದ ಅವರು, ಔಷಧಿಗಳು ಅವಧಿ ಮುನ್ನವೇ ಜನಸಾಮಾನ್ಯರಿಗೆ ಉಪಯೋಗಕ್ಕೆ ಬರುವಂತೆ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು. ಆಸ್ಪತ್ರೆಯಲ್ಲಿ ಜಾಗದ ಕೊರತೆ ಇದ್ದು, ನೂತನ ಕಟ್ಟಡ ಕಾರ್ಯಾರಂಭ ಮಾಡಿದಾಗ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾ ಸರ್ಜನ್ ತಿಳಿಸಿದರು. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಸ್ಪತ್ರೆಯ ಕಟ್ಟಡದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿಗಳ ಬಗ್ಗೆ ಹಾಗೂ ಹೆಚ್ಚುವರಿ ಬೇಡಿಕೆಗಳಿಗಾಗಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ನೂತನ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ವಿರುವ ಹೆಚ್ಚುವರಿ 4.5 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇನ್ನೆರಡು ತಿಂಗಳೊಳಗೆ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡು ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್. ಆಯೋಗದ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ.ವಾಸುದೇವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು, ಇತರರು ಉಪಸ್ಥಿತರಿದ್ದರು.
ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆ ಅಧಿಕಾರಿಗಳ ಕರ್ತವ್ಯ: ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್
ಉಡುಪಿ, ಫೆ.19: ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳೇ ಮಾನವ ಹಕ್ಕುಗಳಾಗಿದ್ದು, ಇವುಗಳ ಸಂರಕ್ಷಣೆ ಸರಕಾರಿ ಅಧಿಕಾರಿ ಗಳ ಕರ್ತವ್ಯ. ಇವುಗಳ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ಆಯೋಗಕ್ಕೆ ದೂರು ನೀಡಬಹುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹೇಳಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಗುರುವಾರ ಉಡುಪಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಇವರ ವತಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣಗಳ ವಿಲೇವಾರಿ, ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸರಕಾರಿ ಅಧಿಕಾರಿಗಳು ಮಾನವ ಹಕ್ಕುಗಳ ಸಂರಕ್ಷಣಾ ಅಧಿಕಾರಿಗಳಾಗಿ ದ್ದಾರೆ. ಇವರು ಜನಸಾಮಾನ್ಯರ ಮಾನವ ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಅಹವಾಲು ಗಳನ್ನು ಇಲಾಖಾ ಅಧಿಕಾರಿಗಳ ಮುಂದೆ ತಂದಾಗ ಅವರೊಂದಿಗೆ ಸೌಜನ್ಯ ಹಾಗೂ ಸಂಯಮ ದೊಂದಿಗೆ ನಡೆದುಕೊಂಡು, ದೂರುಗಳನ್ನು ಆಲಿಸಿ, ನಿಯಮಾನುಸಾರ ಅವುಗಳನ್ನು ಬಗೆಹರಿಸಲು ಮುಂದಾಗ ಬೇಕು ಎಂದರು. ಸಾರ್ವಜನಿಕರು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಆಯೋಗದ ಮುಂದೆ ದೂರುಗಳನ್ನು ಸಲ್ಲಿಸುತ್ತಾರೆ. ದೂರುಗಳಿಗೆ ಸಂಬಂಧಿಸಿ ದಂತೆ ವರದಿಯನ್ನು ನೀಡಲು ನೋಟಿಸ್ ನೀಡುತ್ತೇವೆ. ಅವುಗಳನ್ನು ಸಕಾಲದಲ್ಲಿ ನೀಡಬೇಕು. ವರದಿಯನ್ನು ಪರಿಶೀಲಿಸಿದಾಗ ಒಂದೊಮ್ಮೆ ತಪ್ಪು ಮಾಡಿರುವುದು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಕೆಲವೊಂದು ಗಂಭೀರ ಪ್ರಕರಣಗಳಲ್ಲಿ ಪರಿಹಾರವನ್ನು ಒದಗಿಸಲು ಸಹ ಶಿಫಾರಸ್ಸು ಮಾಡಲಾಗುವುದು ಎಂದರು. ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟಿನಿಂದಲೇ ನೈಸರ್ಗಿಕವಾಗಿ ಮಾನವ ಹಕ್ಕುಗಳನ್ನು ಪಡೆದಿರುತ್ತಾನೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತವಾಗಿ ಬದುಕುವ ಹಕ್ಕು ಇದೆ. ಇವುಗಳ ಉಲ್ಲಂಘನೆ ಆದ ಸಂದರ್ಭದಲ್ಲಿ ಅವುಗಳನ್ನು ಪ್ರಶ್ನಿಸುವ ಹಕ್ಕು ಸಹ ಆತನಿಗಿದೆ ಎಂದರು. ಸರಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಇವುಗಳು ಅರ್ಹರಿಗೆ ತಲುಪಬೇಕು. ಇವು ಅನರ್ಹರಿಗೆ ತಲುಪದಂತೆ ಎಚ್ಚರಿಕೆ ವಹಿಸಬೇಕು ಎಂದ ಅವರು, ಒಂದೊಮ್ಮೆ ಕಾನೂನಿನ ಅಡಿಯಲ್ಲಿ ಸೇವೆಗಳನ್ನು ಪಡೆಯಲು ಹಕ್ಕು ಹೊಂದಿದ್ದು, ಅವುಗಳನ್ನು ನೀಡಲು ವಿಳಂಬ ಮಾಡುವುದು ಸಹ ಕಾನೂನಿನ ಉಲ್ಲಂಘನೆ ಎನಿಸಿಕೊಳ್ಳುತ್ತದೆ ಎಂದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಉಡುಪಿ ಜಿಲ್ಲೆಯನ್ನು ಭೌಗೋಳಿಕವಾಗಿ ಇತರೆ ಜಿಲ್ಲೆಗಳಿಗೆ ಹೋಲಿಸಿ ದ್ದಲ್ಲಿ ತುಂಬಾ ವ್ಯತ್ಯಾಸವಿದೆ. ಸರಕಾರದ ಕೆಲವು ಯೋಜನೆ, ಕಾರ್ಯಕ್ರಮ ಹಾಗೂ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲು ಇಲ್ಲಿ ಕೆಲವೊಂದು ಮಾರ್ಪಾಡುಗಳು ಹಾಗೂ ವಿನಾಯಿತಿಗಳ ಅಗತ್ಯವಿದೆ. ಜಿಲ್ಲೆಯಲ್ಲಿ ಹೆಚ್ಚಿನ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆಗಳಿವೆ. ಈ ಹಿಂದೆ 3 ತಾಲೂಕು ಇದ್ದ ಉಡುಪಿ ಜಿಲ್ಲೆಯು ಪ್ರಸ್ತುತ 7 ತಾಲೂಕಾಗಿ ಮಾರ್ಪಟಾಗಿದ್ದರೂ ಸಹ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಲ್ಲಾ ಇಲಾಖೆಗಳಲ್ಲೂ ಉತ್ತಮವಾಗಿ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲಿಸ್ ಅಧೀಕ್ಷಕ ಹರಿರಾಂ ಶಂಕರ್, ಕುಂದಾಪುರ ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಎಂ ಬಾಬು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಇತರರು ಉಪಸ್ಥಿತರಿದ್ದರು.
ಗ್ಲೋಬಲ್ ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ಕಲಬುರಗಿಯ ವೈದ್ಯೆಗೆ ಜಾಗತಿಕ ಮಾನ್ಯತೆ
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಅನಿತಾ ಗೌರಾ ಕೋಣಿನ್ ಅವರು ನವದೆಹಲಿಯಲ್ಲಿ ನಡೆದ Global AI Impact Summit 2026 ನಲ್ಲಿ ಆಯ್ಕೆಯಾಗಿದ್ದು ಭಾಗವಹಿಸುವ ಮೂಲಕ ಕಲಬುರಗಿಗೆ ಕೀರ್ತಿ ತಂದಿದ್ದಾರೆ. ಈ ಸಮಿಟ್ಗೆ 135 ದೇಶಗಳಿಂದ 15,500ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಸಮಿಟ್ ಸಮಿತಿಯು ಪರಿಶೀಲಿಸಿ ಮೊದಲ ಹಂತದಲ್ಲಿ 791 ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಿತು. ಅನಂತರ ಈ 791 ಮಂದಿಗೆ ಜ್ಯೂರಿ ಸಮಿತಿಯು ಆನ್ಲೈನ್ ಸಂದರ್ಶನ ನಡೆಸಿ ಅಂತಿಮವಾಗಿ 150 ಮಂದಿ ವೈದ್ಯರನ್ನು ಆಯ್ಕೆ ಮಾಡಿತು. ಈ ಪಟ್ಟಿಯಲ್ಲಿ ಡಾ. ಅನಿತಾ ಗೌರಾ ಕೋಣಿನ್ ಅವರು ಟಾಪ್ 150ರಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಾಧನೆಯಾಗಿದೆ. ಜಾಗತಿಕ ಮಟ್ಟದ ಈ ಕಾರ್ಯಕ್ರಮಕ್ಕೆ ಅವರಿಗೆ ಅಧಿಕೃತ ಆಹ್ವಾನ ಲಭಿಸಿದ್ದು, ಸಮಿಟ್ನ ಮೊಬೈಲ್ ಅಪ್ಲಿಕೇಶನ್ನಲ್ಲಿಯೂ ಅವರ ಹೆಸರನ್ನು ಪ್ರಕಟಿಸಲಾಗಿದೆ.
ಮುಂದಿನ ಹಂತದ S I R ಗೆ ಸಿದ್ಧವಾಗಿರಿ: 18 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಆಯೋಗ ಸೂಚನೆ
ಪಟ್ಟಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ - ತೆಲಂಗಾಣ
ವಾಡಿ ರೈಲ್ವೆ ನಿಲ್ದಾಣಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಬಿಜೆಪಿ ಮನವಿ
ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ ಮುಂಬಯಿ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕ ಪ್ರತೀಕ್ ಗೋಸ್ವಾಮಿ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಬಿಜೆಪಿ ಮುಖಂಡರು ಬುಧವಾರ ಮನವಿ ಸಲ್ಲಿಸಿದರು. ವಾಡಿ ರೈಲ್ವೆ ನಿಲ್ದಾಣವು ಒಂದುವರೆ ಶತಮಾನದ ಇತಿಹಾಸ ಹೊಂದಿದ್ದು, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎರಡು ಬಾರಿ ಭೇಟಿ ನೀಡಿದ ಐತಿಹಾಸಿಕ ನಿಲ್ದಾಣವಾಗಿದೆ. ಆದ್ದರಿಂದ ಸುರಕ್ಷಿತ, ಸುಂದರ ಹಾಗೂ ಐತಿಹಾಸಿಕ ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹಾಗೂ ಮುಖಂಡ ರಾಜು ಮಕ್ಕಣ್ಣ ಮನವಿ ಮಾಡಿದರು. ಅಮೃತ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರೂ, ಕಾಮಗಾರಿ ವಿಳಂಬ ಹಾಗೂ ಕಳಪೆ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರೈಲ್ವೆ ಪ್ಲೈಓವರ್ ಹಾಗೂ ಬ್ರಿಡ್ಜ್ ಕಾಮಗಾರಿ ಕಳಪೆ ಆಗಿರುವುದಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಾರ್ಡ್ 20, 21, 22 ಹಾಗೂ 23 (ಹನುಮಾನ ನಗರ, ವಿಜಯನಗರ, ಸೋಮ್ಲಾ ತಾಂಡಾ, ಇಂದಿರಾನಗರ) ನಿವಾಸಿಗಳಿಗೆ ಒಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಿಸಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಕಲಬುರಗಿ-ಕೊಲ್ಲಾಪುರ, ಕಲಬುರಗಿ-ಬಿದರ ಹಾಗೂ ಕಲಬುರಗಿ-ದೌಂಡ ರೈಲುಗಳನ್ನು ವಾಡಿವರೆಗೆ ವಿಸ್ತರಿಸುವಂತೆ, ವಾಡಿ-ಕಾಚಿಗುಡಾ ಪ್ಯಾಸೆಂಜರ್ ರೈಲನ್ನು ಕಲಬುರಗಿಯಿಂದ ಪ್ರಾರಂಭಿಸುವಂತೆ ಹಾಗೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ವಾಡಿ ನಿಲ್ದಾಣದಲ್ಲಿ ನಿಲ್ದಾಣ ಒದಗಿಸುವಂತೆ ಮನವಿ ಸಲ್ಲಿಸಿದರು. ನಿಲ್ದಾಣದ ಕೊಳಚೆ ನೀರು ವಾರ್ಡ್ 20ರಲ್ಲಿ ಹರಿಯುತ್ತಿರುವುದನ್ನು ತಡೆಯಲು ಒಳಚರಂಡಿ ವ್ಯವಸ್ಥೆ ನಿರ್ಮಿಸಬೇಕು. ಶೌಚಾಲಯ ಮತ್ತು ವೇಟಿಂಗ್ ಹಾಲ್ ಸಮರ್ಪಕವಾಗಿ ನಿರ್ಮಿಸಬೇಕು. ಪ್ರಥಮ ಚಿಕಿತ್ಸೆಗಾಗಿ ವೈದ್ಯರೊಂದಿಗೆ ಔಷಧ ಅಂಗಡಿ, ಸ್ವದೇಶಿ ಮಳಿಗೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಗುಟ್ಕಾ, ಧೂಮಪಾನ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಲ್ದಾಣದಲ್ಲಿ ಎಸ್ಕಲೇಟರ್ ಅಳವಡಿಸಿ, ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶರಣಗೌಡ ಚಾಮನೂರ, ಯಮನಪ್ಪ ನವನಳ್ಳಿ, ಭೀಮಶಾ ಜಿರೋಳ್ಳಿ, ಶಿವಶಂಕರ ಕಾಶೆಟ್ಟಿ, ವೀರಣ್ಣ ಗೌಡ ಮೆಲಸೀಮಿ, ಚಂದ್ರಶೇಖರ ಹಾವೇರಿ, ಯಂಕಮ್ಮ ಗೌಡಗಾಂವ, ಉಮಾಬಾಯಿ ಗೌಳಿ, ಗೋಪಾಲ ರಾಠೋಡ, ಮನೋಹರ ಚವ್ಹಾಣ, ರವಿ ಚವ್ಹಾಣ, ರಾಮದಾಸ ಚವ್ಹಾಣ, ಶಂಕರ ಚವ್ಹಾಣ, ವಿನೋದ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇಶದಲ್ಲಿ ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ 7ಕ್ಕೆ ಇಳಿಕೆ: ಸರಕಾರಿ ಸಮೀಕ್ಷೆ
ಹೊಸದಿಲ್ಲಿ, ಫೆ. 19: ದೇಶದಲ್ಲಿ ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ ಎಂಟರಿಂದ ಏಳಕ್ಕೆ ಇಳಿದಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ಈ ಬೆಳವಣಿಗೆಯು 2026ರ ಮಾರ್ಚ್ ವೇಳೆಗೆ ನಕ್ಸಲ್ ಹೋರಾಟವನ್ನು ಕೊನೆಗೊಳಿಸುವ ಕೇಂದ್ರ ಸರಕಾರದ ಘೋಷಣೆಗೆ ಪೂರಕವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ. ‘ಎಡಪಂಥೀಯ ಉಗ್ರವಾದವನ್ನು ನಿಭಾಯಿಸುವ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ’ಯ ಸಮಗ್ರ ಮರುಪರಿಶೀಲನೆಯನ್ನು ಇತ್ತೀಚೆಗೆ ಕೇಂದ್ರ ಸರಕಾರ ಕೈಗೊಂಡಿತ್ತು. ಈ ಕಸರತ್ತಿನಲ್ಲಿ, ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಒಂಭತ್ತು ರಾಜ್ಯಗಳ 38 ಜಿಲ್ಲೆಗಳಲ್ಲಿ ನಕ್ಸಲ್ ಪರಿಸ್ಥಿತಿಯನ್ನು ಅವಲೋಕಿಸಲಾಗಿತ್ತು. ನಕ್ಸಲ್ ಹಿಂಸಾಚಾರ ಮತ್ತು ಚಟುವಟಿಕೆಗಳು ಈಗಲೂ ವರದಿಯಾಗುತ್ತಿರುವ ‘‘ಎಡಪಂಥೀಯ ತೀವ್ರವಾದ ಪ್ರಭಾವಿತ ಜಿಲ್ಲೆಗಳ’’ ಸಂಖ್ಯೆ ಈಗ ಎಂಟರಿಂದ ಏಳಕ್ಕೆ ಇಳಿದಿದೆ ಎಂದು ನೂತನ ಸಮೀಕ್ಷೆ ತಿಳಿಸಿದೆ. 2025 ಡಿಸೆಂಬರ್ನಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಈ ಸಂಖ್ಯೆ 8 ಆಗಿತ್ತು.
ಸುರಪುರ | ಹಿರಿಯ ನಾಗರಿಕರ ರಕ್ಷಣೆಗಾಗಿ ‘ಆಸರೆ’ ಯೋಜನೆಗೆ ಚಾಲನೆ
ಸುರಪುರ: ಹಿರಿಯ ನಾಗರಿಕರ ಸುರಕ್ಷತೆ, ಗೌರವ ಹಾಗೂ ಆರೈಕೆಯನ್ನು ಖಚಿತಪಡಿಸಲು ಪೊಲೀಸ್ ಇಲಾಖೆಯ ವತಿಯಿಂದ ಸಮುದಾಯ ಪೊಲೀಸ್ ‘ಆಸರೆ’ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಎಂ ಅವರು ನಗರದ ತಿಮ್ಮಾಪೂರು ಓಣಿಯ ಹಿರಿಯರಾದ ನಿಂಗಮ್ಮ ಹಾಗೂ ನಾಗಮ್ಮ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ವಿಚಾರಿಸಿದರು. ಹಣ್ಣುಹಂಪಲು ನೀಡಿ ಉಪಚರಿಸಿದ ಅವರು, ಯಾವುದೇ ತೊಂದರೆ ಉಂಟಾದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದರು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೂ ಕೂಡ ಬೀಟ್ ಪೊಲೀಸರಿಗೆ ತಿಳಿಸಲು ಸಲಹೆ ನೀಡಿದರು. ಪೊಲೀಸ್ ಇಲಾಖೆಯ ‘ಆಸರೆ’ ಯೋಜನೆಯಡಿ ಹಿರಿಯ ನಾಗರಿಕರಿಗೆ ಅಗತ್ಯ ಸಹಾಯ ಸಹಕಾರ ಸದಾಕಾಲವೂ ಲಭ್ಯವಾಗಲಿದೆ ಎಂದರು. ಯಾವುದೇ ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿದರೆ ಪೊಲೀಸರು ತಕ್ಷಣವೇ ನೆರವಿಗೆ ಬರುತ್ತಾರೆ ಎಂದು ಆತ್ಮಸ್ಥೈರ್ಯ ತುಂಬಿದರು. “ಪೊಲೀಸರು ನಿಮ್ಮ ರಕ್ಷಕರು, ಪೊಲೀಸರ ಬಗ್ಗೆ ಭಯವಲ್ಲ ಭರವಸೆ ಇರಲಿ. ಯಾದಗಿರಿ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ ಇರುತ್ತದೆ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಪೇದೆ ದಯಾನಂದ ಜಮಾದಾರ್ ಉಪಸ್ಥಿತರಿದ್ದರು.
‘ನವಿಟೇರ್’ ವೈಫಲ್ಯ: ದೇಶದಾದ್ಯಂತ ವಿಮಾನ ಹಾರಾಟದಲ್ಲಿ ಅಲ್ಪ ವ್ಯತ್ಯಯ
ಹೊಸದಿಲ್ಲಿ, ಫೆ. 19: ವಿಮಾನಗಳ ಟಿಕೆಟ್ ಕಾದಿರಿಸುವಿಕೆ ಮತ್ತು ಹಾರಾಟವನ್ನು ನಿಯಂತ್ರಿಸುವ ವ್ಯವಸ್ಥೆ ‘ನವಿಟೇರ್’ನ ವೈಫಲ್ಯದಿಂದಾಗಿ ಗುರುವಾರ ಬೆಳಗ್ಗೆ ಭಾರತದಾದ್ಯಂತ ವಿಮಾನಗಳ ಹಾರಾಟ ಸ್ವಲ್ಪ ಸಮಯ ವ್ಯತ್ಯಯಗೊಂಡಿತು. ದೇಶದ ಹಾಗೂ ಏಶ್ಯಾ-ಪೆಸಿಫಿಕ್ ಮತ್ತು ಯುರೋಪ್ ವಲಯದ ಕೆಲವು ಭಾಗಗಳ ಹಲವು ವಿಮಾನಯಾನ ಸಂಸ್ಥೆಗಳ ಕಾರ್ಯನಿರ್ವಹಣೆ ವ್ಯತ್ಯಯಗೊಂಡಿತು. ಭಾರತದಲ್ಲಿ, ಗುರುವಾರ ಬೆಳಗ್ಗೆ ಏರ್ ಇಂಡಿಯಾವನ್ನು ಹೊರತುಪಡಿಸಿ, ಈ ವ್ಯವಸ್ಥೆಯನ್ನು ಬಳಸುವ ಎಲ್ಲಾ ವಾಯಯಾನ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಕಾಣಿಸಿಕೊಂಡಿತು ಎಂದು ಮೂಲವೊಂದು ತಿಳಿಸಿದೆ. ‘‘ನಿಯಂತ್ರಣ ವ್ಯವಸ್ಥೆಯ ವೈಫಲ್ಯವು ಬೆಳಗ್ಗೆ 6:45 ಮತ್ತು 7:28ರ ನಡುವೆ ಇಂಡಿಗೋ, ಏರ್ ಇಂಡಿಯಾ ಎಕ್ಸ್ಪ್ರೆಸ್, ಆಕಾಸ ಏರ್ ಮತ್ತು ಸ್ಪೈಸ್ಜೆಟ್ ಏರ್ಲೈನ್ಸ್ನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿತು. ಬಳಿಕ ಬೆಳಗ್ಗೆ 8:10ರಿಂದ 8:25ರ ನಡುವೆ ಈ ಸಮಸ್ಯೆಯು ಆಗಾಗ ಪುನರಾವರ್ತನೆಯಾಯಿತು. ಹಾಗಾಗಿ, ದಿಲ್ಲಿಯ ಇಂದಿರಾ ಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನಕ್ಕೆ ಹತ್ತುವ ಪ್ರಕ್ರಿಯೆ ತಾತ್ಕಾಲಿಕವಾಗಿ ವಿಳಂಬವಾಯಿತು ಎಂದು ವಿಮಾನ ನಿಲ್ದಾಣವೊಂದರ ಅಧಿಕಾರಿಯೊಬ್ಬರು ತಿಳಿಸಿದರು.
ಸುರಪುರ | ಕಿರದಳ್ಳಿ ಮಾಲಗತ್ತಿ ಗ್ರಾಮ ಪಂಚಾಯತ್ಗಳಲ್ಲಿ ಅವ್ಯವಹಾರ ಆರೋಪ : ತನಿಖೆಗೆ ಒತ್ತಾಯ
ಸುರಪುರ: ತಾಲೂಕಿನ ಕಿರದಳ್ಳಿ ಹಾಗೂ ಮಾಲಗತ್ತಿ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಅನುದಾನ ದುರ್ಬಳಕೆ ನಡೆದಿದೆ ಎಂದು ಆರೋಪಿಸಿ ವಿಶ್ವಮಾನವ ಡಾ.ಭೀಮರಾವ್ ಅಂಬೇಡ್ಕರ್ ರಕ್ಷಣಾ ವೇದಿಕೆಯ ಮುಖಂಡರು ತನಿಖೆಗೆ ಒತ್ತಾಯಿಸಿದ್ದಾರೆ. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಅವರಿಗೆ ಮನವಿ ಸಲ್ಲಿಸಿದ ವೇದಿಕೆಯ ಮುಖಂಡರು, 15ನೇ ಹಣಕಾಸು ಯೋಜನೆ ಅಡಿಯಲ್ಲಿ ಕಿರದಳ್ಳಿ ಮತ್ತು ಮಾಲಗತ್ತಿ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಂದಿದ್ದರೂ ಯಾವುದೇ ಕಾಮಗಾರಿಗಳು ನಡೆದಿಲ್ಲ ಎಂದು ಆರೋಪಿಸಿದರು. ಗಣಕಯಂತ್ರ ಪರಿಕರಗಳ ಖರೀದಿ ಮಾಡದೇ, ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳದೇ, ಅಂಗವಿಕಲರಿಗೆ ಮೀಸಲಿಟ್ಟ ಅನುದಾನ ಬಳಕೆ ಮಾಡದೇ ಹಣ ಡ್ರಾ ಮಾಡಿಕೊಂಡು ಅಕ್ರಮ ಎಸಗಲಾಗಿದೆ ಎಂದು ದೂರಿದರು. ಕೂಡಲೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತನಿಖೆ ಕೈಗೊಳ್ಳದಿದ್ದರೆ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಲ ಭೀಮಪ್ಪ ದೊಡ್ಡಮನಿ, ಜಿಲ್ಲಾ ಉಪಾಧ್ಯಕ್ಷ ರಾಮಯ್ಯ ದೊರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಭು ಕಚಕನೂರ, ಮುಖಂಡ ಭೀಮಣ್ಣ ಖಂಡ್ರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಂದಾಯ ಇಲಾಖೆ ಗುಡ್ನ್ಯೂಸ್: ಬಾಕಿ ವ್ಯಾಜ್ಯ ಪ್ರಕರಣಗಳ ಇತ್ಯರ್ಥಕ್ಕೆ 9 ವಿಶೇಷ ಜಿಲ್ಲಾಧಿಕಾರಿಗಳ ನೇಮಕ
ಬೆಂಗಳೂರು: ಕರ್ನಾಟಕದ ಕಂದಾಯ ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಆಂದೋಲನ ಮಾದರಿಯಲ್ಲಿ ತ್ವರಿತವಾಗಿ ವಿಲೆವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಈ ಮೂಲಕ ಹತ್ತಾರು ಸಾವಿರ ಪ್ರಕರಣಗಳನ್ನು ರಾಜ್ಯಾದ್ಯಂತ ವಿಲೇವಾರಿ ಮಾಡಲಾಗುತ್ತಿದ್ದು, ಬಾಕಿ ಪ್ರಕರಣಗಳಿಗೆ ತ್ವರಿತವಾಗಿ ಇತ್ಯರ್ಥವಾಗಲಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಗುರುವಾರ (ಫೆ.19) ಕಂದಾಯ ಇಲಾಖೆ ಸಚಿವ
ಛತ್ತೀಸ್ಗಡ| ಒಂದೇ ರೀತಿಯಲ್ಲಿ ಮಣಿಗಂಟನ್ನು ಕತ್ತರಿಸಿ ಗಾಯ ಮಾಡಿಕೊಂಡ 35 ವಿದ್ಯಾರ್ಥಿಗಳು!
ರಾಯಪುರ,ಫೆ.19: ಛತ್ತೀಸ್ಗಡದ ಧಮ್ತಾರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಿಗೂಢ ಸರಣಿ ಘಟನೆಗಳಲ್ಲಿ 35 ಶಾಲಾ ಮಕ್ಕಳು ಶಾಲೆಯ ಆವರಣದಲ್ಲಿ ಬ್ಲೇಡ್ಗಳಿಂದ ತಮ್ಮ ಮಣಿಗಂಟುಗಳನ್ನು ಕತ್ತರಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಮಕ್ಕಳು ಪರಸ್ಪರ ಅನುಕರಿಸಿದ್ದಾರೆ ಎನ್ನಲಾಗಿದೆ. ಈ ಕೃತ್ಯಕ್ಕೆ ಬೇರೆ ಯಾವುದೇ ಕಾರಣವನ್ನು ಈವರೆಗೆ ನಿರ್ಧರಿಸಲಾಗಿಲ್ಲ. ಘಟನೆಯು ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಲಾ ಮೇಲ್ವಿಚಾರಣೆ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೂಲಗಳ ಪ್ರಕಾರ ಆರರಿಂದ ಎಂಟನೇ ತರಗತಿಯ 21 ಬಾಲಕರು ಮತ್ತು 14 ಬಾಲಕಿಯರು ಪರಸ್ಪರರನ್ನು ಅನುಕರಿಸಿ ಸ್ವತಃ ಗಾಯ ಮಾಡಿಕೊಂಡಿದ್ದಾರೆ. ಘಟನೆಯು ಬೆಳಕಿಗೆ ಬರುವ ಮುನ್ನ ಸುಮಾರು ಒಂದು ತಿಂಗಳಿನಿಂದಲೂ ಈ ಆತಂಕಕಾರಿ ಪ್ರವೃತ್ತಿ ಮುಂದುವರಿದಿದ್ದು, ಶಾಲಾ ಆಡಳಿತದ ನಿರ್ಲಕ್ಷ್ಯವನ್ನು ಹಲವರು ಆರೋಪಿಸಿದ್ದಾರೆ. ಫೆ.13ರಂದು ಪೋಷಕರು ಮಕ್ಕಳ ಕೈಗಳಲ್ಲಿ ಗಾಯದ ಗುರುತುಗಳನ್ನು ಗಮನಿಸಿ ಶಾಲಾ ಅಧಿಕಾರಿಗಳಿಗೆ ತಿಳಿಸಿದಾಗ ಘಟನೆಯು ಬೆಳಕಿಗೆ ಬಂದಿದೆ. ನಂತರ ಅಧಿಕಾರಿಗಳು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಶಾಲೆಯ ಆವರಣದಲ್ಲಿ ಬ್ಲೇಡ್ಗಳು ಹೇಗೆ ತಲುಪಿದ್ದವು ಮತ್ತು ವಾರಗಳು ಕಳೆದರೂ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಗಾಯಗಳನ್ನು ಗಮನಿಸಲು ಶಿಕ್ಷಕರು ವಿಫಲಗೊಂಡಿದ್ದು ಹೇಗೆ ಎಂದು ಕುಪಿತ ಪೋಷಕರು ಪ್ರಶ್ನಿಸಿದ್ದಾರೆ. ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಬಳಕೆ ಸೇರಿದಂತೆ ಸಂಭವನೀಯ ಬಾಹ್ಯ ಕಾರಣಗಳ ಬಗ್ಗೆಯೂ ಕಳವಳಗಳು ವ್ಯಕ್ತವಾಗುತ್ತಿವೆ. ತಾವು ಈಗ ಸುರಕ್ಷತಾ ಕ್ರಮಗಳನ್ನು ಬಲಗೊಳಿಸುತ್ತಿರುವುದಾಗಿ ಶಾಲಾ ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರೆ. ಆದರೆ ಗಾಯಗಳನ್ನು ಗಮನಿಸುವಲ್ಲಿ ವಿಳಂಬವು ತೀವ್ರ ಟೀಕೆಗಳಿಗೆ ಕಾರಣವಾಗಿದೆ. ಈ ಘಟನೆಯು ಸರಕಾರಿ ಶಾಲೆಗಳಲ್ಲಿಯ ಮೇಲ್ವಿಚಾರಣೆ ವ್ಯವಸ್ಥೆ ಮತ್ತು ಮಕ್ಕಳ ಒಟ್ಟಾರೆ ಸುರಕ್ಷತೆಯ ಮೇಲೆ ಬೆಳಕು ಚೆಲ್ಲಿದೆ. ಈ ನಡುವೆ, ಉಪವಿಭಾಗಾಧಿಕಾರಿ ನಭ್ ಸಿಂಗ್ ಅವರು, ಗೇಮಿಂಗ್ ಚಾಲೆಂಜ್ ಮತ್ತು ಮಾದಕ ದ್ರವ್ಯ ಸೇವನೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ‘ಫೆ.13ರಂದು ನಮಗೆ ಘಟನೆಯ ಕುರಿತು ಗೊತ್ತಾದಾಗ ಕೈಗೆ ಗಾಯ ಮಾಡಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲು ತಂಡವೊಂದನ್ನು ನಾವು ಕಳುಹಿಸಿದ್ದೆವು. ನಾವು ಪೋಷಕರ ಮೊಬೈಲ್ ಫೋನ್ಗಳನ್ನೂ ಪರಿಶೀಲಿಸಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಗೇಮಿಂಗ್ ಚಾಲೆಂಜ್ ನಮಗೆ ಕಂಡುಬಂದಿಲ್ಲ. ನಾವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇವೆ. ಪ್ರಾಥಮಿಕ ವಿಚಾರಣೆಯು ಮಾದಕ ದ್ರವ್ಯ ವ್ಯಸನವನ್ನೂ ತಳ್ಳಿ ಹಾಕಿದೆ. ಮೇಲ್ನೋಟಕ್ಕೆ ಮಾತ್ರ ಗಾಯಗಳಾಗಿದ್ದು, ಅವು ಆಳವಾಗಿಲ್ಲ’ ಎಂದು ಅವರು ತಿಳಿಸಿದರು.
Yadgiri | ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿಯಾಮವಳಿ: ಸರ್ಕಾರದ ವಿರುದ್ಧ ಮಲ್ಲಪ್ಪ ಸಂಕೀನ್ ಆಕ್ರೋಶ
ಯಾದಗಿರಿ: ವಿಧಾನಸೌಧದ ಅಂಗಳದಲ್ಲಿ ಮಾಧ್ಯಮಗಳ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಹೊಸ ನಿಯಾಮವಳಿ ರೂಪಿಸಿರುವುದನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವದ ಪವಿತ್ರ ಸ್ಥಳದಲ್ಲೇ ಮಾಧ್ಯಮಗಳ ಮೇಲೆ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿರುವುದು ಆಘಾತಕಾರಿ ಎಂದರು. ಇದು ಜನರ ಧ್ವನಿಯನ್ನು ಕುಂಠಿತಗೊಳಿಸುವ ಕ್ರಮವಾಗಿದ್ದು, ಸರ್ಕಾರ ತಕ್ಷಣವೇ ಆದೇಶವನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿವಾದಾತ್ಮಕ ಆದೇಶ ಹೊರಡಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿಧಾನಸೌಧದಲ್ಲಿ ಭದ್ರತೆ ನೆಪವೊಡ್ಡಿ ಮಾಧ್ಯಮಗಳ ವಾಕ್ಸ್ವಾತಂತ್ರ್ಯ ಹರಣ ಮಾಡುವಂತಹ ಕ್ರಮ ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಅವರು ಟೀಕಿಸಿದರು. ಭದ್ರತೆ ಸಮಸ್ಯೆಗಳಿದ್ದರೆ ಅವುಗಳನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರದದೇ ಆಗಿದ್ದು, ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎಂದರು. ಮಾಧ್ಯಮಗಳಿಂದ ಯಾವುದೇ ಗಣ್ಯರ ಭದ್ರತೆಗೆ ಲೋಪವಾಗುವುದಿಲ್ಲ. ಸರ್ಕಾರ ಇದನ್ನು ಅರಿತು, ಮಾಧ್ಯಮಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
Kerala| ಜಾತಿ ತಾರತಮ್ಯ, ಬೆದರಿಕೆ ಆರೋಪಿಸಿ ದೇವಸ್ಥಾನದ ಕೆಲಸ ತೊರೆದ ದಲಿತ ಅರ್ಚಕ
ತಿರುವನಂತಪುರ,ಫೆ.19: ಎರ್ನಾಕುಲಂ ಜಿಲ್ಲೆಯ ಅಳಂಗಡ್ನಲ್ಲಿ ದೇವಸ್ವಂ ಉದ್ಯೋಗಿಗಳ ಒಕ್ಕೂಟದಿಂದ ಜಾತಿ ತಾರತಮ್ಯ, ಬೆದರಿಕೆಗಳು ಮತ್ತು ಸುಳ್ಳು ದೂರುಗಳನ್ನು ಆರೋಪಿಸಿ ದಲಿತ ಅರ್ಚಕರೋರ್ವರು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಅನ್ಯಾಯದ ಪದ್ಧತಿಗಳನ್ನು ಅನುಸರಿಸಲು ತಾನು ನಿರಾಕರಿಸಿದ್ದರಿಂದ ತನ್ನ ವಿರುದ್ಧ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಕೆಲಸದ ಸ್ಥಳದಲ್ಲಿ ಪ್ರತಿಕೂಲ ವಾತಾವರಣ ಸೃಷ್ಟಿಯಾಗಿದೆ ಎಂದು ಅರ್ಚಕ ಪಿ.ಆರ್.ವಿಷ್ಣು (23) ಹೇಳಿದ್ದಾರೆ. ವಿಷ್ಣು ಅಳಂಗಾಡ್ನ ಮಾಲಿಕಾಂಪೀಡಿಕಾ ವಥುರಕ್ಕಾವು ದೇವಸ್ಥಾನದಲ್ಲಿ ನಿಯಮಿತ ಅರ್ಚಕರ ಬದಲಿಯಾಗಿ ಅರೆಕಾಲಿಕ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ತಿಂಗಳುಗಳ ಹಿಂದೆ ತಿರುವಾಂಕೂರು ದೇವಸ್ವಂ ನೇಮಕಾತಿ ಮಂಡಳಿಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಬಳಿಕ ಅವರನ್ನು ಆಯ್ಕೆ ಮಾಡಿತ್ತು. ಕೆಲವೇ ತಿಂಗಳುಗಳಲ್ಲಿ ನಕಲಿ ವಿಳಾಸಗಳಿಂದ ವಿಷ್ಣು ವಿರುದ್ಧ ಸುಳ್ಳುದೂರುಗಳು ದೇವಸ್ಥಾನಕ್ಕೆ ಬರತೊಡಗಿದ್ದವು ಎಂದು ಹೇಳಲಾಗಿದೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಷ್ಣು, ಸನಾತನ ಧರ್ಮದ ಮೇಲಿನ ಪ್ರೀತಿಯಿಂದಾಗಿ ತಾನು ಈ ಕೆಲಸದತ್ತ ಆಕರ್ಷಿತನಾಗಿದ್ದೆ ಮತ್ತು ಇದಕ್ಕಾಗಿ ತಾನು ತಾಂತ್ರಿಕ ಪೂಜೆಗಳಲ್ಲಿ ಕಠಿಣ ತರಬೇತಿ ಪಡೆಯಬೇಕಾಯಿತು ಎಂದು ತಿಳಿಸಿದರು. ‘ನನ್ನನ್ನು ಕಳ್ಳನೆಂದು ಹಣೆಪಟ್ಟಿ ಅಂಟಿಸಲು ಪ್ರಯತ್ನಗಳು ನಡೆದಿದ್ದವು. ವಿಗ್ರಹದ ಮೇಲಿದ್ದ ಚಿನ್ನಾಭರಣಗಳನ್ನು ತೆಗೆದು ಅವುಗಳ ಬದಲಿಗೆ ನಕಲಿ ಆಭರಣಗಳಿರಿಸಲಾಗಿದೆ ಎನ್ನುವುದು ಗೊತ್ತಾದಾಗ ನನಗೆ ಆಘಾತವಾಗಿತ್ತು. ನನಗೆ ಅನುಮಾನ ಬಂದು ವಿಗ್ರಹದ ಮೇಲಿನ ಆಭರಣಗಳ ಅಸಲಿಯತ್ತನ್ನು ಪರೀಕ್ಷಿಸಲು ಅಕ್ಕಸಾಲಿಗನೋರ್ವನನ್ನು ಸಂಪರ್ಕಿಸಿದ್ದೆ. ಕಳ್ಳನೆಂಬ ಹಣೆಪಟ್ಟಿ ಅಂಟಿಸಿಕೊಳ್ಳುವುದರಿಂದ ನಾನು ಕೂದಲೆಳೆಯ ಅಂತರದಿಂದ ಪಾರಾಗಿದ್ದೆ’ ಎಂದು ತಿಳಿಸಿದರು. ದಿನಗೂಲಿ ಕಾರ್ಮಿಕ ಪಿ.ಕೆ.ರಮೇಶನ್ ಮತ್ತು ಗೃಹಿಣಿ ಸೌಮ್ಯಾ ರಮೇಶನ್ ಅವರ ಪುತ್ರರಾಗಿರುವ ವಿಷ್ಣು,ತನ್ನ ಕುಟುಂಬವನ್ನೂ ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಹೇಳಿದರು. ‘ಸ್ಥಳೀಯ ವ್ಯಕ್ತಿಯೋರ್ವನ ವಿರುದ್ಧ ನಾನು ಹಿಂದೆ ದಾಖಲಿಸಿದ್ದ ಪೊಲೀಸ್ ದೂರನ್ನು ಹಿಂದೆಗೆದುಕೊಳ್ಳುವಂತೆ ವಿವಿಧ ಕಡೆಗಳಿಂದ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಬುಧವಾರ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷರ ಕಚೇರಿಯು ನನ್ನನ್ನು ಕರೆಸಿತ್ತು. ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ನನ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ನನ್ನನ್ನು ಅವಮಾನಿಸಿದ ಜನರ ವಿರುದ್ಧ ಕ್ರಮವನ್ನು ತೆಗೆದುಕೊಂಡರೆ ನನ್ನ ರಾಜೀನಾಮೆಯನ್ನು ಮರುಪರಿಶೀಲಿಸುವುದಾಗಿ ನಾನು ಅವರಿಗೆ ತಿಳಿಸಿದ್ದೇನೆ’ ಎಂದರು. ‘ನಮ್ಮ ಅರ್ಚಕರನ್ನು ಟಿಡಿಬಿ ಆಯುಕ್ತರು ಆಯ್ಕೆ ಮಾಡಿರುವುದರಿಂದ ಅವರ ವಿರುದ್ಧ ಜಾತಿ ತಾರತಮ್ಯವನ್ನು ಎಸಗಲು ಯಾರಿಗೂ ನಮ್ಮ ಸಂಘಟನೆಯು ಅವಕಾಶ ನೀಡುವುದಿಲ್ಲ. ವಿಷ್ಣು ಅವರನ್ನು ಅವಮಾನಿಸಿರುವ ಟಿಡಿಬಿ ಸಿಬ್ಬಂದಿ ವಿರುದ್ಧ ನಾವು ಕ್ರಮವನ್ನು ತೆಗೆದುಕೊಳ್ಳುತ್ತೇವೆ’ ಎಂದು ದೇವಸ್ವಂ ಉದ್ಯೋಗಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಜಿತ್ ಕುಮಾರ್ ತಿಳಿಸಿದರು.
ಶಾಂತಿ ಮಂಡಳಿ ಸೇರಿದ ಪಾಕಿಸ್ತಾನ, ಅಮೆರಿಕಗೆ ಮತ್ತಷ್ಟು ಹತ್ತಿರವಾಗಲು ಪ್ಲಾನ್ | Pakistan Economy
ಪಾಕಿಸ್ತಾನದ ಆರ್ಥಿಕ ಅರಾಜಕತೆ ಮತ್ತೆ ಮುಂದುವರಿದಿದ್ದು, ಅಲ್ಲಿನ ಪರಿಸ್ಥಿತಿ ಈಗ ಹೇಗೆ ಆಗಿದೆ ಅಂದರೆ ತುತ್ತು ಅನ್ನಕ್ಕೂ ಜನ ಪರದಾಡುತ್ತಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರ ಮಾತ್ರ ಉಗ್ರರನ್ನು ಪೋಷಣೆ ಮಾಡುತ್ತಾ ಜಾಲಿ ಜಾಲಿಯಾಗಿ ಇದೆ. ಅಲ್ಲದೆ ಸೇನೆಗೆ ಕೂಡ ಸಾವಿರಾರು ಕೋಟಿ ರೂಪಾಯಿ ಹಣ ಸುರಿದು ಪಾಕಿಸ್ತಾನದ ರಾಜಕಾರಣಿಗಳು ಇಡೀ ದೇಶವನ್ನೇ ಬೀದಿಗೆ ತಂದಿದ್ದಾರೆ. ಮತ್ತೊಂದೆಡೆ ಜಗತ್ತಿನ
Yadgiri | ಶಿವಾಜಿ ಅವರ ಹೋರಾಟ, ತ್ಯಾಗ, ಬಲಿದಾನ ಯುವಜನಾಂಗಕ್ಕೆ ಸ್ಫೂರ್ತಿ : ಡಿಸಿ ಹರ್ಷಲ್ ಭೋಯರ್
ಯಾದಗಿರಿ: ಛತ್ರಪತಿ ಶಿವಾಜಿ ಅವರ ಸ್ವರಾಜ್ಯ ಹೋರಾಟ, ತ್ಯಾಗ ಮತ್ತು ಬಲಿದಾನ ಯುವಜನಾಂಗಕ್ಕೆ ಸ್ಫೂರ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಹೇಳಿದರು. ನಗರದ ಭವಾನಿ ಮಂದಿರದಲ್ಲಿ ಛತ್ರಪತಿ ಶಿವಾಜಿ ಜಯಂತ್ಯೋತ್ಸವ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಶಿವಾಜಿ ಮಹಾರಾಜರು ಮರಾಠಿಗರಿಗೆ ದೈವಸ್ವರೂಪಿಯಾಗಿದ್ದು, ಸ್ವರಾಜ್ಯಕ್ಕಾಗಿ ನಡೆಸಿದ ಹೋರಾಟ, ಪರಾಕ್ರಮ ಹಾಗೂ ತ್ಯಾಗ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು. ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರೊಂದಿಗೆ ನಡೆದ ಸಂಘರ್ಷ ಹಾಗೂ ಮರಾಠಾ ಸಾಮ್ರಾಜ್ಯದ ವಿಸ್ತಾರ ಗರ್ವದ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಶಿವಾಜಿ ಮಹಾರಾಜರು ಎಲ್ಲ ಸಮಾಜಕ್ಕೂ ಗೌರವ ನೀಡಿದ ನಾಯಕರು. ಅವರ ಸೇನೆಯಲ್ಲಿ ಮುಸ್ಲಿಮರೂ ಇದ್ದರು ಎಂಬುದು ವಿಶೇಷ. ಸರ್ಕಾರ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿರುವುದು ಐತಿಹಾಸಿಕ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪಾರ್ವತಿ ಬುದೂರ ಅವರು, ತಾಯಿ ಜೀಜಾಬಾಯಿ ಅವರಿಂದ ಸಂಸ್ಕಾರ ಪಡೆದ ಶಿವಾಜಿ ಧೈರ್ಯ, ದೇಶಾಭಿಮಾನ ಮತ್ತು ಮಹಿಳೆಯರಿಗೆ ಗೌರವ ನೀಡುವ ಗುಣಗಳನ್ನು ಬೆಳೆಸಿಕೊಂಡಿದ್ದರು. ಗೆರಿಲ್ಲಾ ಯುದ್ಧ ನೀತಿಯ ಮೂಲಕ ಸ್ವಧರ್ಮ ರಕ್ಷಣೆ ಮತ್ತು ಪರಕಿಯರ ದಾಳಿಗಳನ್ನು ತಡೆದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗಾಯತ್ರಿ ಧವಳೆ ಘೋಷವಾಕ್ಯಗಳನ್ನು ಹೇಳಿದರು. ಮಹಿಳೆಯರಿಂದ ಶಿವಾಜಿ ಕುರಿತು ತೊಟ್ಟಿಲು ತೂಗುವ ಕಾರ್ಯಕ್ರಮವೂ ನಡೆಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಮರಾಠಾ ಸಮಾಜದ ಜಿಲ್ಲಾಧ್ಯಕ್ಷ ರಾಜಕುಮಾರ್ ಢವಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೆ.22 ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಭರತನಾಟ್ಯ ರಂಗಪ್ರವೇಶ
ಮಂಗಳೂರು, ಫೆ.19: ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಇವರ ಭರತನಾಟ್ಯ ರಂಗಪ್ರವೇಶವು ಫೆ.22 ರಂದುಸಂಜೆ 5 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ನೃತ್ಯ ಸುಧಾ (ರಿ) ಸಂಸ್ಥೆಯ ಸ್ಥಾಪಕಿ ಮತ್ತು ಶ್ರೀಯಾ ತಾಯಿ ವಿದುಷಿ ಸೌಮ್ಯ ಸುಧೀಂದ್ರ ರಾವ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಅವರು ಸಂತ ಅಲೋಶಿಯೆಸ್ ಪರಿಗಣಿತ ವಿವಿಯಲ್ಲಿ ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಾರೆ ಎಂದು ಹೇಳಿದರು. ಶ್ರೀಯಾ ರಾವ್ ಭರತ ನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಶಾಂತಲಾ ಪ್ರಶಸ್ತಿ ವಿಜೇತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ , ಸಂತ ಅಲೋಶಿಯಸ್ ಪರಿಗಣಿತ ವಿವಿ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಎಸ್ ಜೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ರಾಮ್ ಮೂರ್ತಿ ರಾವ್, ಮಾಜಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಯಾ ಇವರ ಮೃದಂಗ ಗುರುಗಳಾದ ವಿದ್ವಾನ್ ರವಿಕುಮಾರ್ ಕುಂಜೂರು ಇವರಿಗೆ ಗುರುವಂದನೆ ಮಾಡಲಾಗುವುದು ಎಂದು ವಿದುಷಿ ಸೌಮ್ಯ ಸುಧೀಂದ್ರ ರಾವ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸುಧೀಂದ್ರ ರಾವ್, ವಿದುಷಿ ಸಹನಾ, ವಿದುಷಿ ನವ್ಯಾ ಭಟ್ ಉಪಸ್ಥಿತರಿದ್ದರು.
ಗುರುಮಠಕಲ್ | ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ : ಶಾಸಕ ಕಂದಕೂರ ಅಭಿಮತ
ಆನೂರ ಕೆ., ಹತ್ತಿಕುಣಿ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು
ಉಡುಪಿ: ಸಮತಾ ಸೈನಿಕ ದಳದಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
► ಹನೆಹಳ್ಳಿ ಕೃಷ್ಣ ಕಗ್ಗೊಲೆ ಸಿಐಡಿ ತನಿಖೆಗೆ; ಅಂಬೇಡ್ಕರ್► ಮನೆ ನಿರ್ಮಾಣಕ್ಕೆ 9 ಲಕ್ಷ ರೂ. ನೀಡಲು ಆಗ್ರಹ
20 ವರ್ಷ ಹಳೆಯ ಅತ್ಯಾಚಾರ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದೆ. ಆತ ಮಾಡಿದ್ದು ಅತ್ಯಾಚಾರವಲ್ಲ, ಅತ್ಯಾಚಾರಕ್ಕೆ ಪ್ರಯತ್ನ ಎಂದು ಹೇಳಿದ ಕೋರ್ಟ್ ಏಳು ವರ್ಷಗಳ ಜೈಲು ಶಿಕ್ಷೆಯ ಬದಲು ಮೂರು ವರ್ಷ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 2004ರಲ್ಲಿ ಧಮ್ತಾರಿ ಜಿಲ್ಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಯ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದಾರೆ. ಕೋರ್ಟ್ ಹೇಳಿದ್ದೇನು? ಸಂಭೋಗ ನಡೆಯದೆ ಕೇವಲ ಸ್ಖಲನವಾಗಿರುವುದು ಅತ್ಯಾಚಾರಕ್ಕೆ ಪ್ರಯತ್ನ, ಅದು ಅತ್ಯಾಚಾರವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಂತ್ರಸ್ತೆಯ ಸಾಕ್ಷ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಆಕೆಯ ಹೇಳಿಕೆಗಳಲ್ಲಿ ಏಕರೂಪತೆ ಕಂಡುಬಂದಿಲ್ಲ. ಒಮ್ಮೆ ನೀಡಿದ ಹೇಳಿಕೆಗೂ ಮತ್ತೊಮ್ಮೆ ನೀಡಿದ ಹೇಳಿಕೆಗೂ ವ್ಯತ್ಯಾಸವಿತ್ತು. ಹೀಗಾಗಿ ಅತ್ಯಾಚಾರ ನಡೆದಿದೆ ಎಂದು ಕಾನೂನುಬದ್ಧವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ. ಅತ್ಯಾಚಾರದ ಆರೋಪವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಫೆಬ್ರವರಿ 16ರಂದು ನ್ಯಾಯಾಲಯ ತಿಳಿಸಿದೆ. ಮೇಲ್ಮನವಿದಾರನು ಸಂಭೋಗ ನಡೆಸಿಲ್ಲ; ಆದರೆ ಅದಕ್ಕಾಗಿ ಪ್ರಯತ್ನಿಸಿದ್ದಾನೆ. ಬಲವಂತದ ಸಂಭೋಗ ನಡೆದರೆ ಮಾತ್ರ ಅದು ಅತ್ಯಾಚಾರವಾಗುತ್ತದೆ; ಇಲ್ಲವಾದರೆ ಅದು ಅತ್ಯಾಚಾರಕ್ಕೆ ಪ್ರಯತ್ನ ಪ್ರಕರಣವಾಗುತ್ತದೆ. ಅತ್ಯಾಚಾರ ಎಂದು ಪರಿಗಣಿಸಲು ಸಂಭೋಗ ನಡೆದಿರಬೇಕು, ಕೇವಲ ಸ್ಖಲನ ಸಾಕಾಗುವುದಿಲ್ಲ. ಸಂತ್ರಸ್ತೆ ನೀಡಿದ ನಂತರದ ಹೇಳಿಕೆ ಪ್ರಕಾರ, ಆರೋಪಿ ಸಂಭೋಗ ನಡೆಸಿಲ್ಲ. ವಿಚಾರಣೆಯಲ್ಲಿ ಮಹಿಳೆ ಭಾಗಶಃ ಸಂಭೋಗದ ಸಾಧ್ಯತೆಯನ್ನು ಉಲ್ಲೇಖಿಸಿದ್ದರೂ, ಆ ಪುರಾವೆಗಳು ಅತ್ಯಾಚಾರದ ಪ್ರಯತ್ನವನ್ನು ಮಾತ್ರ ಸಾಬೀತುಪಡಿಸುತ್ತವೆ, ಅತ್ಯಾಚಾರ ನಡೆದಿದೆ ಎಂಬುದನ್ನು ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಲೈಂಗಿಕ ದೌರ್ಜನ್ಯ ಮತ್ತು ಉದ್ದೇಶ ಸ್ಪಷ್ಟವಾಗಿದ್ದರೂ, 2013ರ ಹಿಂದಿನ ಐಪಿಸಿ ವ್ಯಾಖ್ಯಾನದ ಪ್ರಕಾರ ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಜನನಾಂಗದ ಉಜ್ಜುವಿಕೆ ಹಾಗೂ ಭಾಗಶಃ ಸಂಪರ್ಕ, ವೀರ್ಯದ ಉಪಸ್ಥಿತಿ ಅತ್ಯಾಚಾರದ ಪ್ರಯತ್ನವನ್ನು ಸೂಚಿಸುತ್ತವೆ; ಆದರೆ ಅತ್ಯಾಚಾರದ ಕಟ್ಟುನಿಟ್ಟಾದ ಕಾನೂನು ವ್ಯಾಖ್ಯಾನವನ್ನು ಪೂರೈಸುವುದಿಲ್ಲ ಎಂದು ನ್ಯಾಯಮೂರ್ತಿ ವ್ಯಾಸ್ ಗಮನಿಸಿದ್ದಾರೆ. ಸುಪ್ರೀಂ ಕೋರ್ಟ್ನ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿ, ನ್ಯಾಯಾಲಯ ಅತ್ಯಾಚಾರ ಮತ್ತು ಅತ್ಯಾಚಾರ ಪ್ರಯತ್ನದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದೆ. ಸಂತ್ರಸ್ತೆಯನ್ನು ಕೋಣೆಯೊಳಗೆ ಬಲವಂತವಾಗಿ ಕರೆದೊಯ್ಯುವುದು, ಅವಳನ್ನು ವಿವಸ್ತ್ರಗೊಳಿಸುವುದು, ಜನನಾಂಗದ ಮೇಲೆ ಉಜ್ಜುವಿಕೆ ಮಾಡುವುದು ಅತ್ಯಾಚಾರ ಪ್ರಯತ್ನವಾಗುತ್ತದೆ. ಆದರೆ ನಿರ್ಣಾಯಕ ಪುರಾವೆಗಳಿಲ್ಲದೆ ಐಪಿಸಿ ಸೆಕ್ಷನ್ 376 ಅನ್ವಯಿಸಲಾಗುವುದಿಲ್ಲ. ಹೀಗಾಗಿ, ಶಿಕ್ಷೆಯನ್ನು ಐಪಿಸಿ ಸೆಕ್ಷನ್ 376 ಓದಿ 511 ಅಡಿಯಲ್ಲಿ ಅತ್ಯಾಚಾರ ಪ್ರಯತ್ನ ಎಂದು ಬದಲಾಯಿಸಲಾಯಿತು. ಏನಿದು ಪ್ರಕರಣ? ಈ ಪ್ರಕರಣವು 2004ರ ಮೇ 21ರಂದು ಧಮ್ತಾರಿ ಜಿಲ್ಲೆಯಲ್ಲಿ ನಡೆದಿದೆ. ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿ ಸಂತ್ರಸ್ತೆಯನ್ನು ಬಲವಂತವಾಗಿ ಅವಳ ಮನೆಯಿಂದ ತನ್ನ ಮನೆಗೆ ಎಳೆದುಕೊಂಡು ಹೋಗಿ, ಅವಳನ್ನು ವಿವಸ್ತ್ರಗೊಳಿಸಿ, ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭೋಗಕ್ಕೆ ಪ್ರಯತ್ನಿಸಿದ್ದನು. ಆತ ಸಂತ್ರಸ್ತೆಯನ್ನು ಕೋಣೆಯೊಳಗೆ ಬಂಧಿಸಿ, ಅವಳ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿದ್ದನು. ಗಂಟೆಗಳ ಬಳಿಕ ಸಂತ್ರಸ್ತೆಯ ತಾಯಿ ಅವಳನ್ನು ರಕ್ಷಿಸಿದ್ದರು. 2005ರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(1) ಮತ್ತು 342 ಅಡಿಯಲ್ಲಿ ದೋಷಿ ಎಂದು ಘೋಷಿಸಿ, ಅತ್ಯಾಚಾರ ಪ್ರಕರಣದಲ್ಲಿ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಅಕ್ರಮ ಬಂಧನಕ್ಕೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಆರೋಪಿ ಮೇಲ್ಮನವಿ ಸಲ್ಲಿಸಿದ್ದನು. ಹೈಕೋರ್ಟ್ ಸಂತ್ರಸ್ತೆಯ ಸಾಕ್ಷ್ಯ ಹಾಗೂ ವೈದ್ಯಕೀಯ ವರದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿತು. ಆರಂಭಿಕ ಹೇಳಿಕೆಯಲ್ಲಿ ಸಂತ್ರಸ್ತೆ ಆರೋಪಿ ಲೈಂಗಿಕ ಕ್ರಿಯೆ ನಡೆಸಿದ್ದಾನೆಂದು ಆರೋಪಿಸಿದ್ದಳು. ನಂತರ ನೀಡಿದ ಹೇಳಿಕೆಯಲ್ಲಿ, ಆರೋಪಿ ಸಂಭೋಗ ನಡೆಸಿಲ್ಲ; ತನ್ನ ಖಾಸಗಿ ಭಾಗಗಳನ್ನು ಅವಳ ಖಾಸಗಿ ಭಾಗಗಳ ಮೇಲೆ ಇರಿಸಿದ್ದಾನೆಂದು ತಿಳಿಸಿದ್ದಳು. ವೈದ್ಯಕೀಯ ವರದಿಯಲ್ಲಿ ಕನ್ಯಾಪೊರೆ ಅಕ್ಷತವಾಗಿರುವುದು ಗಮನಿಸಲ್ಪಟ್ಟಿತು; ಆದರೆ ಬಟ್ಟೆ ಮೇಲೆ ವೀರ್ಯ ಪತ್ತೆಯಾಗಿತ್ತು. ಜನನಾಂಗದ ಉಜ್ಜುವಿಕೆ ಮತ್ತು ವೀರ್ಯದ ಉಪಸ್ಥಿತಿ ಅತ್ಯಾಚಾರ ಪ್ರಯತ್ನವನ್ನು ಸೂಚಿಸುತ್ತವೆ; ಆದರೆ ಅತ್ಯಾಚಾರದ ಕಟ್ಟುನಿಟ್ಟಾದ ಕಾನೂನು ವ್ಯಾಖ್ಯಾನವನ್ನು ಪೂರೈಸಲಿಲ್ಲ ಎಂದು ನ್ಯಾಯಮೂರ್ತಿ ವ್ಯಾಸ್ ಹೇಳಿದ್ದಾರೆ. ಪ್ರತಿವಾದಿ ಸಂತ್ರಸ್ತೆಯ ವಯಸ್ಸನ್ನು ಪ್ರಶ್ನಿಸಲು ಪ್ರಯತ್ನಿಸಿದ್ದರೂ, ನ್ಯಾಯಾಲಯ ಆ ವಾದವನ್ನು ತಿರಸ್ಕರಿಸಿತು. ಐಪಿಸಿ ಸೆಕ್ಷನ್ 376(1) ಅಡಿಯಲ್ಲಿ ವಿಧಿಸಿದ ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಬದಲಿಗೆ ಐಪಿಸಿ ಸೆಕ್ಷನ್ 376 ಓದಿ 511 ಅಡಿಯಲ್ಲಿ ಮೇಲ್ಮನವಿದಾರನನ್ನು ದೋಷಿ ಎಂದು ಘೋಷಿಸಿತು. ಪರಿಷ್ಕೃತ ಶಿಕ್ಷೆಯಲ್ಲಿ ಮೂರು ವರ್ಷ ಆರು ತಿಂಗಳ ಕಠಿಣ ಜೈಲು ಶಿಕ್ಷೆ, ದಂಡ ಹಾಗೂ ಐಪಿಸಿ ಸೆಕ್ಷನ್ 342 ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಸೇರಿವೆ. ಮೇಲ್ಮನವಿದಾರನು ವಿಚಾರಣೆಯ ಅವಧಿಯಲ್ಲಿ ಈಗಾಗಲೇ ಸುಮಾರು ಒಂದು ವರ್ಷ ಒಂದು ತಿಂಗಳು ಕಸ್ಟಡಿಯಲ್ಲಿ ಕಳೆದಿದ್ದಾನೆ. ಸಿಆರ್ಪಿಸಿ ಸೆಕ್ಷನ್ 428 ಅಡಿಯಲ್ಲಿ ಆ ಅವಧಿಯನ್ನು ಶಿಕ್ಷೆಯಿಂದ ಕಡಿತಗೊಳಿಸಲು ಆತ ಅರ್ಹನಾಗಿದ್ದಾನೆ ಎಂದು ನ್ಯಾಯಾಲಯ ಹೇಳಿದೆ. 1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 428 ಪ್ರಕಾರ, ತನಿಖೆ ಅಥವಾ ವಿಚಾರಣೆಯ ಅವಧಿಯಲ್ಲಿ ಬಂಧನದಲ್ಲಿ ಕಳೆದ ಕಾಲಾವಧಿಯನ್ನು ಅಂತಿಮ ಶಿಕ್ಷೆಯಿಂದ ಕಡಿತಗೊಳಿಸಬೇಕು. ಆರೋಪಿ ಜಾಮೀನಿನಲ್ಲಿರುವುದರಿಂದ, ಎರಡು ತಿಂಗಳೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು; ಇಲ್ಲವಾದರೆ ಬಲವಂತದ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಸೂಚಿಸಿದೆ.
Tamil Nadu | ಚುನಾವಣಾ ಸಿದ್ಧತೆಯನ್ನು ಚುರುಕುಗೊಳಿಸಿದ ಟಿವಿಕೆ: ಫೆ.27ರಂದು ಪ್ರಣಾಳಿಕೆ ಬಿಡುಗಡೆ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ತನ್ನ ಚುನಾವಣಾ ಸಿದ್ಧತೆಯನ್ನು ಚುರುಕುಗೊಳಿಸಿದೆ. ತನ್ನ ಚುನಾವಣಾ ಪ್ರಣಾಳಿಕೆಯನ್ನು ಫೆಬ್ರವರಿ 27ರಂದು ಬಿಡುಗಡೆ ಮಾಡಲು ಸಜ್ಜಾಗಿರುವ ಟಿವಿಕೆ, ನೆಲಮಟ್ಟದ ಸಂಘಟನಾತ್ಮಕ ಕಾರ್ಯಗಳಿಗೆ ಈಗಾಗಲೇ ಸಂಪೂರ್ಣವಾಗಿ ಚಾಲನೆ ನೀಡಿದೆ. ಪಕ್ಷದ ಮೂಲಗಳ ಪ್ರಕಾರ, ತಮಿಳುನಾಡು ವಿಧಾನಸಭೆಯ ಎಲ್ಲ 234 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಪಕ್ಷದ ನಾಯಕತ್ವ ಚಾಲನೆ ನೀಡಿದೆ. ಪ್ರಾಥಮಿಕ ಹಂತದಲ್ಲಿ ಪ್ರತಿ ಕ್ಷೇತ್ರಕ್ಕೆ ಮೂವರು ಪ್ರಬಲ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ತಾತ್ಕಾಲಿಕ ಪಟ್ಟಿಯಲ್ಲಿರುವ ಶೇ. 80ರಷ್ಟು ಮಂದಿ ಜಿಲ್ಲಾ ಕಾರ್ಯದರ್ಶಿಗಳಾಗಿದ್ದು, ಸ್ಥಳೀಯ ಮಟ್ಟದಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸಿಕೊಳ್ಳಲು ತಳಮಟ್ಟದ ಸಂಘಟಕರಿಗೆ ಮನ್ನಣೆ ನೀಡಲಾಗಿದೆ. ಜೊತೆಗೆ ಜಿಲ್ಲಾ ಹಂತದ ನಾಯಕರು, ಪ್ರಮುಖ ರಾಜ್ಯ ಪದಾಧಿಕಾರಿಗಳು ಹಾಗೂ ಹೆಸರಾಂತ ಆಡಳಿತಗಾರರ ಹೆಸರನ್ನೂ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗಿದೆ. ಈ ಪಟ್ಟಿಯು ಸಂಘಟನಾತ್ಮಕ ನಿಷ್ಠೆ ಮತ್ತು ಆಡಳಿತಾತ್ಮಕ ಅನುಭವಗಳ ಸಮತೋಲನದ ಕಾರ್ಯತಂತ್ರವನ್ನು ಪ್ರತಿಬಿಂಬಿಸುತ್ತಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
Raichur | ರಿಮ್ಸ್ ಆಸ್ಪತ್ರೆಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಭೇಟಿ
ಕೆಲಸ ಕಳೆದುಕೊಂಡ ಸಫಾಯಿ ಕರ್ಮಚಾರಿಗಳ ಮರುನೇಮಕಕ್ಕೆ ಆದೇಶ
ನನಗೆ ಯಾವ ಕರ್ಮ, ಬೆಂಗಳೂರು ಕಸನ ಕನಕಪುರಕ್ಕೆ ಹಾಕಿಸಿಕೊಳ್ಳಿ; ಆ ಅನುದಾನ ನೀವೇ ತಗೊಳ್ಳಿ: ಧೀರಜ್ ಮುನಿರಾಜು ತಿರುಗೇಟು
ಬೆಂಗಳೂರು ತ್ಯಾಜ್ಯ ವಿಲೇವಾರಿ ಸದ್ಯ ಬಿಜೆಪಿ ಕಾಂಗ್ರೆಸ್ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಸ ವಿಲೇವಾರಿಗೆ ಅವಕಾಶ ಕೊಡದಿದ್ದರೆ ಆ ಊರಲ್ಲಿ ಕಸ ಎತ್ತಲು ಬಿಡಲ್ಲ ಎಂದಿದ್ದ ಡಿಕೆ ಶಿವಕುಮಾರ್ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ತಿರುಗೇಟು ನಿಡಿದ್ದಾರೆ. ಬೆಂಗಳೂರು ತ್ಯಾಜ್ಯ ಕನಕಪುರಕ್ಕೆ ಹಾಕಿಸಿಕೊಳ್ಳಿ, ಆ ಅನುದಾನ ನೀವೇ ಪಡೆದುಕೊಳ್ಳಿ ಎಂದಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳನ್ನು ನಿಯೋಜಿಸಿದ ಅಮೆರಿಕ; ಇರಾನ್ ಮೇಲೆ ದಾಳಿ ನಡೆಸಲು US ಸಿದ್ಧತೆ ಹೇಗಿದೆ?
ಟ್ರಂಪ್ ಅವರ ಅಂತಿಮ ಒಪ್ಪಿಗೆ ಮಾತ್ರ ಬಾಕಿ!

22 C