ವಿಜಯ್ ಆಸ್ತಿ ಅಫಿಡವಿಟ್’ನಲ್ಲಿ ’100 ಕೋಟಿ ಬಿಗ್ ಮಿಸ್ಸಿಂಗ್’ : ಮದ್ರಾಸ್ ಹೈಕೋರ್ಟ್ ಚಾಟಿ, ಸಂಕಷ್ಟದಲ್ಲಿ ದಳಪತಿ
100 Crore Missing : ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ನಟ ವಿಜಯ್ ಅವರು, ನೂರು ಕೋಟಿ ಆಸ್ತಿಯನ್ನು ಮುಚ್ಚಿಟ್ಟಿದ್ದಾರೆ ಎನ್ನುವ ದೂರು, ಮದ್ರಾಸ್ ಕೋರ್ಟ್’ನಲ್ಲಿ ದಾಖಲಾಗಿದೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಆಸ್ತಿಮೌಲ್ಯವನ್ನು ವಿಜಯ್ ಹಾಕಿಕೊಂಡಿದ್ದಾರೆ. ಈ ಸಂಬಂಧ, ಮದ್ರಾಸ್ ಕೋರ್ಟ್ ನೋಟಿಸ್ ನೀಡಿದೆ.
ಕನ್ನಡ ಭಾಷಾ ಜ್ಞಾನ ಕಡ್ಡಾಯ ಪ್ರಸ್ತಾವನೆ: ಆಟೋ ಸಂಘಟನೆಗಳ ವಿರೋಧ
ರಾಜ್ಯದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಬೇಕೆಂಬ ಕೆಪಿಸಿಸಿ ವಕ್ತಾರರ ಸಲಹೆಯು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಟೋ ಚಾಲಕರ ಸಂಘಟನೆಗಳು ಇದನ್ನು ತರ್ಕಹೀನ ಹಾಗೂ ಅನಗತ್ಯವೆಂದು ತಿರಸ್ಕರಿಸಿವೆ. ಚಾಲಕರು ಮತ್ತು ಪ್ರಯಾಣಿಕರ ನಡುವಿನ ಸಂವಹನ ಕೊರತೆಯನ್ನು ನೀಗಿಸಲು ಪ್ರಾದೇಶಿಕ ಭಾಷೆ ಅಗತ್ಯವೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ತಪ್ಪುದಾರಿಗೆಳೆಯುವ ಸರಣಿ ಪೋಸ್ಟ್ ಆರೋಪ: ಮಧು ಕಿಶ್ವರ್ ವಿರುದ್ಧ ಪ್ರಕರಣ
ಚಂಡೀಗಢ: ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಹಾಗೂ ತಪ್ಪುದಾರಿಗೆಳೆಯುವ ಸರಣಿ ಪೋಸ್ಟ್ ಮಾಡಿದ ಆರೋಪದಲ್ಲಿ ಶಿಕ್ಷಣ ತಜ್ಞೆ ಮಧು ಕಿಶ್ವರ್ ವಿರುದ್ಧ ಚಂಡೀಗಢದಲ್ಲಿ ಪ್ರಕರಣ ದಾಖಲಾಗಿದೆ. ನಗರದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಮಧು ಕಿಶ್ವರ್ ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 (ಧರ್ಮ, ಜನಾಂಗ, ಭಾಷೆ ಆಧಾರವಾಗಿ ದ್ವೇಷ ಉಂಟುಮಾಡುವುದು), 336(1) (ಸುಳ್ಳು ಮಾಹಿತಿ), 356 (ಮಾನನಷ್ಟ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಚಂಡೀಗಢ ಪೊಲೀಸರು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಎಪ್ರಿಲ್ 19ರಂದು ದೂರುದಾರರು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಶ್ಲೀಲ ವಿಚಾರಗಳನ್ನು ಒಳಗೊಂಡ ತಪ್ಪುದಾರಿಗೆಳೆಯುವ ಪೋಸ್ಟ್ ಗಳು ಮತ್ತು ವೀಡಿಯೊಗಳನ್ನು ಹಂಚಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೂರುದಾರರ ಪ್ರಕಾರ, ಈ ಪೋಸ್ಟ್ ಗಳು ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜನರನ್ನು ತಪ್ಪುದಾರಿಗೆಳೆಯುವಂತಿವೆ. ಹಾನಿ ಉಂಟುಮಾಡುವ ಉದ್ದೇಶವೂ ಇದರಲ್ಲಿ ಇದೆ ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ, ಸಾಂವಿಧಾನಿಕ ಪ್ರಾಧಿಕಾರದ ಖ್ಯಾತಿಗೆ ಧಕ್ಕೆ ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ ಭಂಗಗೊಳಿಸುವ ಉದ್ದೇಶದಿಂದ ವಿಡಿಯೋ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವೀಡಿಯೊದಲ್ಲಿರುವ ವ್ಯಕ್ತಿ ಟ್ರಾವೆಲ್ ವ್ಲಾಗರ್ ಆಗಿದ್ದು, ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಟುವಟಿಕೆಗಳನ್ನು ಹಂಚಿಕೊಳ್ಳುತ್ತಾರೆ. ಮೂಲ ವೀಡಿಯೊವು ಅವರ ಖಾತೆಯಿಂದಲೇ ಹಂಚಿಕೆಯಾಗಿದೆ ಎಂದು ತಿಳಿಸಲಾಗಿದೆ. “ಮಹಿಳೆಯ ಹೇಳಿಕೆಯ ಪ್ರಕಾರ, ವೀಡಿಯೊದಲ್ಲಿರುವ ವ್ಯಕ್ತಿ ಅವರ ಪತಿಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪತಿ ಹಾಗೂ ವೀಡಿಯೊದಲ್ಲಿರುವ ಮತ್ತೊಬ್ಬ ಮಹಿಳೆಯ ಹೇಳಿಕೆಗಳನ್ನು ದಾಖಲಿಸಲಾಗಿದೆ,” ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ, ಕಿಶ್ವರ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ, ಸೋಮವಾರ ತಡರಾತ್ರಿ ಪೊಲೀಸರು ನೋಟಿಸ್ ನೀಡಲು ಮನೆಗೆ ಬಂದಿದ್ದರು ಎಂದು ತಿಳಿಸಿದ್ದಾರೆ. “ಕಾನೂನು ಪ್ರಕಾರ ರಾತ್ರಿ ವೇಳೆ ಮಹಿಳೆಯರನ್ನು ಭೇಟಿ ಮಾಡುವುದಕ್ಕೆ ನಿರ್ಬಂಧ ಇರುವುದರಿಂದ, ಬೆಳಿಗ್ಗೆ ಬರಲು ತಿಳಿಸಿದ್ದೇನೆ,” ಎಂದು ಅವರು ಹೇಳಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಅರ್ಧಕ್ಕೆ ನಿಂತ ಕಾಮಗಾರಿ; ಸಾರ್ವಜನಿಕರ ಪರದಾಟ
ರಸ್ತೆ ಮಧ್ಯೆಯೇ ಹರಿಯುತ್ತಿರುವ ಚರಂಡಿ ನೀರು: ರೋಗದ ಭೀತಿ
ಲಕ್ನೋ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಪೌರತ್ವ ಕುರಿತ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು, ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಬೇಕೆಂದು ಶಿಶಿರ್ ಅರ್ಜಿ ಸಲ್ಲಿಸಿದ್ದರು. ಎಪ್ರಿಲ್ 17ರಂದು ಮುಕ್ತ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲು ಪೀಠವು ಮೌಖಿಕವಾಗಿ ಸೂಚನೆ ನೀಡಿತ್ತು. ಆದರೆ ಆ ಆದೇಶವನ್ನು ಲಿಖಿತವಾಗಿ ಹೊರಡಿಸುವ ಮೊದಲು, ಎಪ್ರಿಲ್ 18ರಂದು ಅದನ್ನು ಸ್ಥಗಿತಗೊಳಿಸಲಾಯಿತು. ಮುಂದಿನ ವಿಚಾರಣೆಯಲ್ಲಿ, ರಾಹುಲ್ ಗಾಂಧಿಗೆ ನೋಟಿಸ್ ನೀಡಬೇಕೇ ಎಂಬ ಪ್ರಶ್ನೆಯನ್ನು ಪೀಠ ಪರಿಶೀಲಿಸಿತು. 2014ರ ತೀರ್ಪಿನ ಪ್ರಕಾರ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಆರೋಪಿಗೆ ತನ್ನ ವಾದ ಹೇಳಲು ಅವಕಾಶ ಕೊಡಬೇಕು ಎಂದು ನ್ಯಾಯಾಲಯ ಹೇಳಿತು. ಆದ್ದರಿಂದ, ಈ ವಿಷಯದಲ್ಲಿ ಎರಡೂ ಪಕ್ಷಗಳ ವಾದಗಳನ್ನು ಕೇಳಲು ಪ್ರಕರಣವನ್ನು ಮುಂದೂಡಲಾಯಿತು. ಈ ನಡುವೆ, ಅರ್ಜಿದಾರ ಶಿಶಿರ್ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಹಾಗೂ ಮಾಧ್ಯಮ ಸಂದರ್ಶನಗಳಲ್ಲಿ ನ್ಯಾಯಾಲಯದ ಬಗ್ಗೆ ಟೀಕೆ ಮಾಡಿರುವುದು ಪೀಠದ ಗಮನಕ್ಕೆ ಬಂದಿದೆ. ಈ ಹೇಳಿಕೆಗಳು ನ್ಯಾಯಾಲಯದ ಘನತೆಗೆ ಧಕ್ಕೆ ತರುವಂತಿವೆ ಎಂದು ನ್ಯಾಯಮೂರ್ತಿ ವಿದ್ಯಾರ್ಥಿ ಅಸಮಾಧಾನ ವ್ಯಕ್ತಪಡಿಸಿದರು. “ನ್ಯಾಯಾಲಯದ ವಿರುದ್ಧ ಈ ರೀತಿಯಾಗಿ ಮಾತನಾಡುವುದು ಹೇಗೆ ಸಮರ್ಥನೀಯ? ಮಾಧ್ಯಮಗಳಲ್ಲಿ ನೀವು ನೀಡುತ್ತಿರುವ ಹೇಳಿಕೆಗಳು ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುತ್ತಿವೆ. ನ್ಯಾಯಾಲಯವನ್ನು ರಾಜಕೀಯ ವೇದಿಕೆಯಾಗಿ ಬಳಸುತ್ತಿದ್ದೀರಿ,” ಎಂದು ನ್ಯಾಯಮೂರ್ತಿ ಕಿಡಿಕಾರಿದರು. ಅರ್ಜಿದಾರರು ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಶಿಶಿರ್ ತಮ್ಮ ವಾದದಲ್ಲಿ, ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ನ್ಯಾಯಾಲಯವನ್ನು ಗುರಿಯಾಗಿಸಿಲ್ಲ. ಅವು ನನ್ನನ್ನು ಪ್ರಕರಣದಿಂದ ಹಿಂದೆ ಸರಿಯಲು ಒತ್ತಾಯಿಸುವವರ ವಿರುದ್ಧವಾಗಿವೆ ಎಂದು ಹೇಳಿದರು. ಹಿಂದಿನ ಆದೇಶವನ್ನು ಮೆಚ್ಚಿಕೊಂಡಿರುವ ತಮ್ಮ ಪೋಸ್ಟ್ಗಳನ್ನೂ ಪರಿಗಣಿಸಲು ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿ, “ನ್ಯಾಯಾಲಯಕ್ಕೆ ಮೆಚ್ಚುಗೆಯ ಅಗತ್ಯವಿಲ್ಲ. ನಿಮ್ಮ ವಾದಗಳನ್ನು ಮೇಲ್ಮನವಿ ನ್ಯಾಯಾಲಯದಲ್ಲಿ ಮಂಡಿಸಬಹುದು,” ಎಂದು ಹೇಳಿದರು. ಶಿಶಿರ್ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಅಭಿಪ್ರಾಯ ಕೇಳುತ್ತಿರುವುದನ್ನೂ ಪೀಠ ಗಮನಿಸಿದೆ. ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆಯಲು ಪ್ರಯತ್ನಿಸುತ್ತಿರುವುದನ್ನೂ ಉಲ್ಲೇಖಿಸಿದೆ. “ಇಂತಹ ಪೋಸ್ಟ್ಗಳು ನ್ಯಾಯಾಲಯದ ಮೇಲೆ ಆಪಾದನೆ ಮಾಡುವಂತಿವೆ,” ಎಂದು ಪೀಠ ಅಭಿಪ್ರಾಯಪಟ್ಟಿತು. ಸರ್ಕಾರಿ ವಕೀಲರು ಮತ್ತು ಉಪ ಸಾಲಿಸಿಟರ್ ಜನರಲ್, ಶಿಶಿರ್ ಅವರ ಸಾಮಾಜಿಕ ಮಾಧ್ಯಮ ವರ್ತನೆಯನ್ನು ಸಮರ್ಥಿಸಲಾರವೆಂದು ಹೇಳಿದರು. ರಾಹುಲ್ ಗಾಂಧಿಗೆ ನೋಟಿಸ್ ನೀಡಬೇಕೇ ಎಂಬ ವಿಷಯದಲ್ಲಿ ಸ್ಪಷ್ಟ ನಿಲುವು ನೀಡದಿರುವುದಕ್ಕೂ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ವಾದ ಪ್ರಕ್ರಿಯೆ ಆರಂಭವಾಗುವ ಮೊದಲು ನ್ಯಾಯಮೂರ್ತಿ ವಿದ್ಯಾರ್ಥಿ ಪ್ರಕರಣದಿಂದ ಹಿಂದೆ ಸರಿದರು. ಮುಖ್ಯ ನ್ಯಾಯಮೂರ್ತಿಗಳ ನಿರ್ದೇಶನದಂತೆ ಈಗ ಈ ಪ್ರಕರಣವನ್ನು ಮತ್ತೊಂದು ಪೀಠದ ಮುಂದೆ ವಿಚಾರಣೆಗಾಗಿ ಪಟ್ಟಿ ಮಾಡಲಾಗುತ್ತದೆ. ಪ್ರಕರಣದ ಹಿನ್ನೆಲೆ: ಈ ವರ್ಷದ ಜನವರಿಯಲ್ಲಿ ಲಕ್ನೋ ಎಸಿಜೆಎಂ ನ್ಯಾಯಾಲಯವು ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶಿಶಿರ್ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಹೈಕೋರ್ಟ್ ಮುಂದೆ ಅರ್ಜಿದಾರರು, ರಾಹುಲ್ ಗಾಂಧಿಯವರು ಯುಕೆಯಲ್ಲಿ ನೋಂದಾಯಿತ ‘ಬ್ಯಾಕಾಪ್ಸ್ ಲಿಮಿಟೆಡ್’ ಕಂಪನಿಯನ್ನು ಸ್ಥಾಪಿಸಿದ್ದು, ಅದರ ದಾಖಲೆಗಳಲ್ಲಿ ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಉಲ್ಲೇಖಿಸಿದ್ದಾರೆ ಎಂದು ವಾದಿಸಿದರು. 2005 ಮತ್ತು 2006ರಲ್ಲಿ ಸಲ್ಲಿಸಿದ ವಾರ್ಷಿಕ ವರದಿಗಳಲ್ಲಿಯೂ ಇದೇ ಮಾಹಿತಿ ಇದೆ ಎಂದು ಅವರು ಹೇಳಿದರು. 2009ರಲ್ಲಿ ಕಂಪನಿಯನ್ನು ವಿಸರ್ಜಿಸಲಾಗಿದೆ ಎಂದೂ ತಿಳಿಸಿದ್ದರು. ಇದಲ್ಲದೆ, 2004ರ ಲೋಕಸಭಾ ಚುನಾವಣೆಯ ವೇಳೆ ಗಾಂಧಿಯವರು ಯುಕೆಯ ಲಂಡನ್ ನ ಬಾರ್ಕ್ಲೇಸ್ ಬ್ಯಾಂಕ್ ನಲ್ಲಿರುವ ಖಾತೆ ಹಾಗೂ ಕಂಪನಿಯ ಮಾಲಕತ್ವವನ್ನು ಬಹಿರಂಗಪಡಿಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ, ವಿದೇಶಿಯರ ಕಾಯ್ದೆ, ಪಾಸ್ಪೋರ್ಟ್ ಕಾಯ್ದೆ ಹಾಗೂ ಅಧಿಕೃತ ರಹಸ್ಯ ಕಾಯ್ದೆಗಳ ಅಡಿಯಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದರು.
SSLC Result: ಹಿಂದಿ ಭಾಷೆಗೆ ಗ್ರೇಡ್ ಬದಲು ಈ ವರ್ಷ ಅಂಕವೇ ಕೊಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ, ಫಲಿತಾಂಶ ಯಾವಾಗ?
ಕಡೆಗೂ ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಮೌಲ್ಯಮಾಪನ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಈ ವರ್ಷ ಗ್ರೇಡ್ ಬದಲು, ಹಿಂದಿಗೆ ಅಂಕವನ್ನೇ ಕೊಡಲಾಗುತ್ತದೆ.
ಅಮೀರ್ ಖುಸ್ರೋ ಗುಲಾಮಿ ರಾಜವಂಶದ ಪತನದಿಂದ ಆರಂಭಿಸಿ, ತುಘಲಕ್ ವಂಶದ ಉಚ್ಛ್ರಾಯವನ್ನು ಕಣ್ಣಾರೆ ಕಂಡವರು, ದಿಲ್ಲಿಯ ಸಿಂಹಾಸನದಲ್ಲಿ ಹನ್ನೊಂದು ಸುಲ್ತಾನರು ಗದ್ದುಗೆಯೇರಿದ್ದಕ್ಕೆ ಸಾಕ್ಷಿಯಾಗಿದ್ದರು. ಅಂತೆಯೇ ಏಳು ಸುಲ್ತಾನರ ಆಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಖುಸ್ರೋ 1275ರಿಂದ 1325ರ ವರೆಗಿನ ಭಾರತದ ರಾಜಕೀಯ, ಸಾಂಸ್ಕೃತಿಕ ಚರಿತ್ರೆಯ ಅಧಿಕೃತ ವಕ್ತಾರ. ಕಳೆದ ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ ‘ಕಲಬುರಗಿ ನೆಕ್ಸ್ಟ್ ಟ್ರಸ್ಟ್’ ವತಿಯಿಂದ ಜಿಲ್ಲಾಡಳಿತ ಮತ್ತು ರಂಗಶಂಕರ ಜಂಟಿಯಾಗಿ ಆಯೋಜಿಸಿದ ನಾಟಕೋತ್ಸವ ನಡೆಯಿತು. ಈ ನಾಟಕೋತ್ಸವದಲ್ಲಿ ಮುಂಬೈನ ಅಜಿತೇಶ್ ಗುಪ್ತಾ ರಚನೆಯ ಮತ್ತು ಮೋಹಿತ್ ಅಗರ್ವಾಲ್ ಅವರ ಜತೆಗೂಡಿ ನಿರ್ದೇಶನ ಮಾಡಿದ ‘ಜೋ ದೂ ಬಾ ಸೋ ಪಾರ್’ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಈ ನಾಟಕ ಅಮೀರ್ ಖುಸ್ರೋ ಅವರ ಬದುಕಿನ ಪಯಣದ ಕಥನ. ಖುಸ್ರೋ ಅವರ ಗುರು ಹಝ್ರತ್ ನಿಝಾಮುದ್ದೀನ್ ಔಲಿಯಾ ಅವರೊಂದಿಗಿನ ಪ್ರೇಮದ ಆಖ್ಯಾನವನ್ನು ಎಳೆಎಳೆಯಾಗಿ ಕಟ್ಟಿಕೊಡುತ್ತದೆ. ಖವ್ವಾಲಿ ಗಾಯನದೊಂದಿಗೆ ದಾಸ್ತಾನ್ನಲ್ಲಿ ಹೆಣೆಯಲಾದ ಆಸಕ್ತಿದಾಯಕ ವ್ಯಾಖ್ಯಾನಗಳು ಮತ್ತು ಪುಟ್ಟ ಪುಟ್ಟ ಕಥೆಗಳು ಬೆರಗು ಮೂಡಿಸಿದವು. ಸೂಫಿಸಂನ ಸಾರ ಮತ್ತು ಮಾನವಕುಲದಲ್ಲಿ ಶಾಶ್ವತವಾಗಿ ಪ್ರಸ್ತುತವಾಗುವ ಪ್ರೀತಿಯ ಸಂದೇಶದ ಎಲ್ಲರ ಒಳಗನ್ನು ತಾಕಿತು. ಈ ನಾಟಕವನ್ನು ನಾನು ನೋಡಿದೆ ಎನ್ನುವುದಕ್ಕಿಂತ ತನ್ಮಯತೆಯಿಂದ ಅನುಭವಿಸಿದೆ ಎನ್ನುವುದೇ ಸರಿ. ಈ ನಾಟಕ ಅಮೀರ್ ಖುಸ್ರೋ ಅವರ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲ ಮೂಡಿಸಿತು. ಆ ತಕ್ಷಣಕ್ಕೆ ನೆನಪಾದವರು ಕಲಬುರಗಿಯ ಹಿರಿಯ ಅನುವಾದಕರಾದ ರಿಯಾಝ್ ಅಹಮದ್ ಬೋಡೆ ಅವರು. ಕಾರಣ ಅವರ ಕೃತಿ ‘ಅಮೀರ್ ಖುಸ್ರೋ ಕಾವ್ಯಲೋಕ’ ವನ್ನು ಓದಬೇಕನ್ನಿಸಿತು. ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಕಟಿಸಿದ ಈ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿದಾಗ ಖುಸ್ರೋ ಕಾವ್ಯವು ಮನದೊಳಗೆ ಆವರಿಸಿತು. ಅಂತೆಯೇ ಖುಸ್ರೋನ ಬಗ್ಗೆ ಮತ್ತಷ್ಟು ತಿಳಿಯುವ ಹಸಿವನ್ನು ಹೆಚ್ಚಿಸಿತು. ಅಮೀರ್ ಖುಸ್ರೋ ಕನ್ನಡದ ವಚನ ಪರಂಪರೆಯ ಸಮಕಾಲೀನರು. ಬಸವಣ್ಣನ ನಂತರದವರು. ವಚನಕಾರರು ಕಾಯಕದ ಮಹತ್ವ ಹೇಳಿದಂತೆ ಖುಸ್ರೋ ಕೂಡ ‘ಕಾಯಕ’ ದ ಮೂಲಕವೇ ವ್ಯಕ್ತಿಗಳನ್ನು ಗುರುತಿಸುವ ಗುಣ ಹೊಂದಿದ್ದರು. ವಚನಕಾರ ಬಸವಣ್ಣನ ಜತೆ ಖುಸ್ರೋರ ಸಾಮ್ಯತೆಯೂ ಇದೆ. ಬಸವಣ್ಣ ರಾಜಶಾಹಿಯ ಜತೆಗಿದ್ದೂ ಮಾನವತೆಯ ಬಗ್ಗೆ ಹಂಬಲಿಸಿ ಸಮತೆಯ ಕನಸು ಕಂಡರು. ಅಂತೆಯೇ ಖುಸ್ರೋ ಕೂಡ ಸುಲ್ತಾನರ ಜತೆಗಿದ್ದೂ ‘ನಿನ್ನ ನೆನಹು ಮನದಲ್ಲಿ ಸುಳಿದೊಡೆ ಅದೆಂಥಾ ವಿನಾಶವು/ ಸುಲ್ತಾನನೆ ದಬ್ಬಾಳಿಕೆ ನಡೆಸಿದರೆ ಸಮೃದ್ಧಿಯು ಎಲ್ಲಿಹುದು’ ಎಂದು ಬರೆಯಬಲ್ಲವರಾಗಿದ್ದರು. ಕೆಲವು ಕವಿಗಳು ನಿರಂತರವಾದ ಬರಹ ಮತ್ತು ಕಾಣ್ಕೆಗಳ ಮೂಲಕ ಒಂದು ಪರಂಪರೆಯನ್ನೇ ಸೃಷ್ಟಿಸುತ್ತಾರೆ. ಹಾಗೆಯೇ ಅಮೀರ್ ಖುಸ್ರೋ ಕೇವಲ ಒಬ್ಬ ಕವಿ-ಇತಿಹಾಸಕಾರ ಮಾತ್ರವಲ್ಲ ಆತ ಹಲವು ಧಾರೆಗಳ ಒಂದು ಪರಂಪರೆಯನ್ನು ಹುಟ್ಟುಹಾಕಿದವರು. ಖುಸ್ರೋ ಕುರಿತು ಜಗತ್ತಿನ ಹಲವು ದೇಶಗಳು ಅಧ್ಯಯನ ಮಾಡುತ್ತಿವೆ. ಅಫ್ಘಾನಿಸ್ತಾನದ ಸರಕಾರವು ಡಾ. ರಾವನ್ ಫರ್ಹದಿ ಸಂಪಾದಕತ್ವದಲ್ಲಿ 1975ರಲ್ಲಿ ಖುಸ್ರೋ ಜೀವನ ಕೃತಿಗಳ ನಾಲ್ಕು ಸಂಪುಟಗಳನ್ನು ಪ್ರಕಟಿಸಿದೆ. ಪಾಕಿಸ್ತಾನದಲ್ಲಿ ಇಕ್ಬಾಲ್ ಸಲಾಹುದ್ದೀನ್ ಮತ್ತು ವಝೀರ್ ಉಲ್ ಹಸನ್ ಅವರ ಜಂಟಿ ಪ್ರಯತ್ನದಿಂದ 1972-75ರ ಅವಧಿಯಲ್ಲಿ ಖುಸ್ರೋ ಅವರ ಗಝಲ್ಗಳ ನಾಲ್ಕು ಸಂಪುಟಗಳನ್ನು ತರಲಾಗಿದೆ. ಖುಸ್ರೋರ ಕೃತಿಗಳು ತಾಷ್ಕೆಂಟ್, ಲೆನಿನ್ ಗ್ರಾಡ್, ಇಸ್ತಾಂಬುಲ್, ಬರ್ಲಿನ್, ಆಕ್ಸಫರ್ಡ್, ಲಂಡನ್, ದಿಲ್ಲಿ, ಮದ್ರಾಸ್ ಕರ್ನಾಟಕದ ಬಿಜಾಪುರ ಇಲ್ಲೆಲ್ಲಾ ಸಂರಕ್ಷಿಸಲ್ಪಟ್ಟಿವೆ. ಈಗಲೂ ಅಧ್ಯಯನಕ್ಕೆ ಒಳಗಾಗುತ್ತಿವೆ. ಹೀಗೆ ಖಸ್ರೋ ಕಾವ್ಯದ ಹರಿವು ಜಾಗತಿಕವಾಗಿ ಹಬ್ಬಿದೆ. ಕನ್ನಡದಲ್ಲಿ ದಿಲ್ಲಿ ಸುಲ್ತಾನರ ಇತಿಹಾಸದ ಪಾಠಗಳಲ್ಲಿ, ಬಿಡಿ ಬಿಡಿ ಕವಿತೆಗಳ ಅನುವಾದದಲ್ಲಿ ಖುಸ್ರೋ ಪರಿಚಯವಾಗಿದ್ದರು. ಹೀಗಿರುವಾಗ ಇಂತಹ ಮಹತ್ವದ ಜಾಗತಿಕ ಕವಿಯ ಆಯ್ದ ಗಝಲ್ ಮತ್ತು ಕವಿತೆಗಳನ್ನು ಅನುವಾದಿಸಿ ಆಪ್ತ ಪರಿಚಯದೊಂದಿಗೆ ರಿಯಾಝ್ ಅಹಮದ್ ಬೋಡೆ ಅವರು ಕನ್ನಡಿಗರಿಗೆ ಕೊಟ್ಟಿದ್ದಾರೆ. ಹೀಗಾಗಿ ಅವರು ಅಭಿನಂದನಾರ್ಹರು. ಇಂತಹದ್ದೊಂದು ಕೃತಿಯನ್ನು ಪ್ರಕಟಿಸಿದ ಕುವೆಂಪು ಭಾಷಾ ಭಾರತಿ ಕೂಡ ಮೆಚ್ಚುಗೆಗೆ ಅರ್ಹವಾದುದು. ಖುಸ್ರೋ ತಾನು ದೀರ್ಘಕಾಲ ಬದುಕಿದ ನಿರರ್ಥಕತೆಯ ಬಗ್ಗೆ ತನ್ನನ್ನು ತಾನೇ ಟೀಕಿಸಿಕೊಂಡಿದ್ದಾರೆ. ‘ದೀರ್ಘ ಆಯುಷ್ಯದ ಬಯಕೆಯಿಂದ ಏನು ಲಾಭ ದೊರೆಯಿತು/ ಬದುಕಿನ ಒಂದು ಕ್ಷಣವೂ ಸಂತಸದಿ ಎಂದೂ ಕಳೆಯಲಿಲ್ಲ’ ಎನ್ನುತ್ತಾರೆ. ಸುಲ್ತಾನರ ನಿರಂತರ ಸಂಘರ್ಷಗಳನ್ನು ಕಂಡ ಕವಿ ‘ದುರ್ದೈವಿ ಹೃದಯವು ಸಂತಸದಿ ಎಂದೂ ಇರಲಿಲ್ಲ/ ದುಗುಡ ದುಮ್ಮಾನದಿಂದ ಮುಕ್ತವಾಗಿ ಎಂದೂ ಇರಲಿಲ್ಲ’ ಎನ್ನುತ್ತಾರೆ. ಅಮೆರಿಕದ ಇತಿಹಾಸಕಾರ ರಿಚರ್ಡ್ ಎಂ. ಈಟನ್ ತನ್ನ ‘ಇಂಡಿಯಾ ಇನ್ ದ ಪರ್ಶಿಯನೇಟ್ ಏಜ್-1000-1765’ ಕೃತಿಯಲ್ಲಿ ಖುಸ್ರೋ ಬಗ್ಗೆ ಬರೆಯುತ್ತಾ ‘ಆ ಕಾಲದಲ್ಲಿ ಭಾರತದಲ್ಲಿ ಪ್ರಸಿದ್ಧ ಕವಿಗಳಾಗಿದ್ದ ಅಮೀರ್ ಹಸನ್, ಚರಿತ್ರೆಕಾರ ಝಿಯಾವುದ್ದೀನ್ ಬರನಿ ಮತ್ತು ಅಮೀರ್ ಖುಸ್ರೋ ಇವರೆಲ್ಲಾ ನಿಝಾಮುದ್ದೀನ್ ಔಲಿಯಾರ ಪ್ರಮುಖ ಶಿಷ್ಯರಾಗಿದ್ದರು. ಇವರ ಕೃತಿಗಳು ವ್ಯಾಪಕವಾಗಿ ಪ್ರಚಾರದಲ್ಲಿದ್ದ ಕಾರಣ ಮೂವರೂ ಶೇಕ್ ನಿಝಾಮುದ್ದೀನ್ ಮತ್ತವರ ಪಂಥದ ಹಾಗೂ ಆಶ್ರಯದಾತರಾದ ಸುಲ್ತಾನತ್ನ ನಿಲುವು, ಆದರ್ಶ, ಲೋಕದೃಷ್ಟಿಗಳ ರಾಯಭಾರಿಗಳೇ ಆಗಿದ್ದರು’ ಎನ್ನುತ್ತಾರೆ. ಹದಿಮೂರನೇ ಶತಮಾನದಲ್ಲಿ, ಚೆಂಗೇಸ್ ಖಾನ್ ಆಳ್ವಿಕೆಯಲ್ಲಿ ಮೊಗಲರ ದಬ್ಬಾಳಿಕೆಯಿಂದ ಬೇಸತ್ತು, ತುರ್ಕಿಯದ ಲಾಚಿನ್ ಪಂಗಡದ ಸರದಾರ ಅಮೀರ್ ಸೈಫುದ್ದೀನ್ ಮುಹಮ್ಮದ್ ಭಾರತಕ್ಕೆ ಬರುತ್ತಾರೆ. ಉತ್ತರ ಪ್ರದೇಶದ ಈಟಾ ಜಿಲ್ಲೆಯ ಪಟಿಯಾಲಿ ಎಂಬ ಸ್ಥಳದಲ್ಲಿ ನೆಲೆಸಿ, ಸುಲ್ತಾನ್ ಶಂಸುದ್ದೀನ್ ಅಲ್ತಮಷ್ನ ದರ್ಬಾರ್ನಲ್ಲಿ ಸೈನಿಕನಾಗಿ ಸೇರುತ್ತಾರೆ. ಇಮಾದುಲ್ ಮುಲ್ಕರ ಪುತ್ರಿಯ ಜೊತೆ ಇವರ ವಿವಾಹವಾಯಿತು. ಈ ದಂಪತಿಗೆ ಕ್ರಿ.ಶ. 1253 (ಹಿ.653)ರಲ್ಲಿ ಹುಟ್ಟಿದ ಮಗುವೇ ಅಬುಲ್ ಹಸನ್ (ಅಮೀರ್ ಖುಸ್ರೋ). ಖುಸ್ರೋ ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ತಂದೆಯ ಜೊತೆ ದಿಲ್ಲಿಗೆ ಬಂದು, ಖಾಜಿ ಅಸದುದ್ದೀನ್ ಮುಹಮ್ಮದರ ಶಿಷ್ಯತ್ವದಲ್ಲಿ ಶಿಕ್ಷಣ ಆರಂಭಿಸಿದರು. ತಂದೆಯವರು ವಿದ್ಯಾರ್ಜನೆಗಾಗಿ ಪ್ರಸಿದ್ಧ ಸೂಫಿ ಸಂತರಾದ ಹಝ್ರತ್ ಖ್ವಾಜಾ ನಿಝಾಮುದ್ದೀನ್ರವರ ಶಿಷ್ಯ (ಮುರೀದ್)ನನ್ನಾಗಿ ಸೇರಿಸಿದರು. ಖುಸ್ರೋ ಎಂಟು ವರ್ಷದವನಿದ್ದಾಗಲೇ ತಂದೆ ಯುದ್ಧದಲ್ಲಿ ಮಡಿದರು. ಮುಂದೆ ಅಜ್ಜ ವಯೋವೃದ್ಧ ಇಮಾದುಲ್ ಮುಲ್ಕ್ ಬಳಿ ಹಲವು ವಿದ್ಯೆಗಳನ್ನು ಕಲಿಯುತ್ತಾರೆೆ. ಮನೆಯ ಭಾಷೆ ಹಿಂದಿ(ಹಿಂದುವಿ) ಆಗಿತ್ತು. ಹಿಂದಿಯ ಜೊತೆಗೆ ಸಂಸ್ಕೃತ, ಅರಬಿ, ಫಾರ್ಸಿ, ತುರ್ಕಿ ಹಾಗೂ ಭಾರತೀಯ ಇನ್ನಿತರ ಪ್ರಾಂತೀಯ ಭಾಷೆಗಳನ್ನೂ ಕಲಿಯುತ್ತಾರೆ. ಖುಸ್ರೋ ಹನ್ನೆರಡನೇ ವಯಸ್ಸಿನಲ್ಲಿ ಕವಿತೆ ಮತ್ತು ರುಬಾಯಿ ರಚನೆ ಮಾಡುವ ಪ್ರತಿಭಾವಂತರಾಗಿದ್ದರು. ಖುಸ್ರೋ 17 ವರ್ಷದ ಚಿಕ್ಕ ವಯಸ್ಸಿನಲ್ಲಿ ಒಬ್ಬ ಕವಿಯಾಗಿ, ಕವಿಗೋಷ್ಠಿಗಳ ಕಣ್ಮಣಿಯಾಗಿದ್ದರು. ಖುಸ್ರೋರವರು ಗಝಲ್ ಕ್ಷೇತ್ರದಲ್ಲಿ ಸಾದಿಯವರಿಂದ, ಮಸ್ನವಿ ಕ್ಷೇತ್ರದಲ್ಲಿ ನಿಝಾಮಿಯವರಿಂದ, ಸೂಫಿ ಕಾವ್ಯಕ್ಷೇತ್ರದಲ್ಲಿ ಕಾಖಾನಿ ಹಾಗೂ ಸನಾಯಿ ಮತ್ತು ಖಸೀದಾ ಕ್ಷೇತ್ರದಲ್ಲಿ ಕಮಾಲ್ ಇಸ್ಮಾಯೀಲ್ರಿಂದ ಅತ್ಯಂತ ಪ್ರಭಾವಿತರಾಗಿದ್ದರು. ಖುಸ್ರೋರವರು ಏಕಕಾಲಕ್ಕೆ ಕವಿ, ಗದ್ಯಲೇಖಕ, ಕಲಾಕಾರ, ಸಂಗೀತಜ್ಞ, ಸಾಹಸಿ ಸೈನಿಕ ಹಾಗೂ ಸಂತ ಹೀಗೆ ಹಲವು ವೈಶಿಷ್ಟ್ಯಗಳ ಸಂಗಮವಾಗಿದ್ದರು. ಇಂತಹ ವಿಭಿನ್ನ ಸಾಹಿತ್ಯ ಸಿದ್ಧಿಗಳ ಕವಿ-ಲೇಖಕ ಭಾರತ ಮತ್ತು ಇರಾನ್ನಲ್ಲಿ ಮತ್ತೊಬ್ಬರಿಲ್ಲ ಎನ್ನುವುದು ವಿದ್ವಾಂಸರ ಅಭಿಮತ. ಅಮೀರ್ ಖುಸ್ರೋ ಗುಲಾಮಿ ರಾಜವಂಶದ ಪತನದಿಂದ ಆರಂಭಿಸಿ, ತುಘಲಕ್ ವಂಶದ ಉಚ್ಛ್ರಾಯವನ್ನು ಕಣ್ಣಾರೆ ಕಂಡವರು, ದಿಲ್ಲಿಯ ಸಿಂಹಾಸನದಲ್ಲಿ ಹನ್ನೊಂದು ಸುಲ್ತಾನರು ಗದ್ದುಗೆಯೇರಿದ್ದಕ್ಕೆ ಸಾಕ್ಷಿಯಾಗಿದ್ದರು. ಅಂತೆಯೇ ಏಳು ಸುಲ್ತಾನರ ಆಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಖುಸ್ರೋ 1275ರಿಂದ 1325ರವರೆಗಿನ ಭಾರತದ ರಾಜಕೀಯ, ಸಾಂಸ್ಕೃತಿಕ ಚರಿತ್ರೆಯ ಅಧಿಕೃತ ವಕ್ತಾರ. ಅಮೀರ್ ಖುಸ್ರೋ ಯಾವುದೇ ಜನಾಂಗೀಯ, ಧಾರ್ಮಿಕ ಅಥವಾ ಸಾಮಾಜಿಕ ಪೂರ್ವಾಗ್ರಹಗಳನ್ನು ಹೊಂದಿರಲಿಲ್ಲ. ತನ್ನ ಸಮಕಾಲೀನ ಇತಿಹಾಸಕಾರ ಬರಾನಿ, ಎಲ್ಲಾ ಶ್ರೇಷ್ಠಗುಣಗಳನ್ನು ಉನ್ನತ ಜಾತಿಯವರಿಗೂ, ಪ್ರತಿಯೊಂದು ದುರ್ಗುಣವನ್ನು ಕೆಳ ಜಾತಿಯವರಿಗೆ ಆರೋಪಿಸುವುದನ್ನು ಖುಸ್ರೋ ತೀವ್ರವಾಗಿ ಖಂಡಿಸುತ್ತಾರೆ. ಸಮಾಜದಲ್ಲಿ ಮನುಷ್ಯನ ಸ್ಥಾನವನ್ನು ಅವನ ಹುಟ್ಟು ಅಥವಾ ಕುಟುಂಬದ ಆಧಾರದ ಮೇಲೆ ನಿರ್ಧರಿಸುವ ನೀತಿಶಾಸ್ತ್ರವನ್ನು ದಿಕ್ಕರಿಸಿ ಮನುಷ್ಯನನ್ನು ಆತನ ಭಕ್ತಿ ಮತ್ತು ಕಾಯಕನಿಷ್ಠೆಯ ಆಧಾರದ ಮೇಲೆ ನಿರ್ಧರಿಸಬೇಕು ಎನ್ನುತಾರೆ. ಕಷ್ಟಪಟ್ಟು ದುಡಿಯುವ ಶ್ರಮಜೀವಿಗಳೇ ಶ್ರೇಷ್ಠಕುಲದವರು ಎನ್ನುತ್ತಾರೆ. ಮುಸ್ಲಿಮರಲ್ಲಿ ಉನ್ನತ ಸ್ಥಾನ ಪಡೆದಿದ್ದ ಉಲೆಮಾಗಳು ಸಾಮಾನ್ಯ ಜನರಿಗಿಂತ ಹೆಚ್ಚಿನವರೇನಲ್ಲ ಎಂದು ಹೇಳುತ್ತಾರೆ. ವ್ಯಕ್ತಿಯು ನ್ಯಾಯಸಮ್ಮತವಾದ ದುಡಿಮೆಯಿಂದ ಶ್ರೀಮಂತನಾಗಬೇಕೇ ವಿನಃ ಅನ್ಯಾಯದ ಮಾರ್ಗದಿಂದಲ್ಲ ಎನ್ನುವುದು ಖುಸ್ರೋ ನೀತಿಯಾಗಿತ್ತು. ಸಂಪತ್ತು ಇರುವುದು ಇಲ್ಲದವರಿಗೆ ಹಂಚುವುದಕ್ಕೇ ವಿನಃ ಸಂಗ್ರಹಿಸಿ ಕೂಡಿಡುವುದಕ್ಕಲ್ಲ ಎನ್ನುತ್ತಾರೆ. ಇದರಂತೆಯೇ ಗುರು ನಿಝಾಮುದ್ದೀನ್ ಔಲಿಯಾ ತೀರಿದ ನಂತರ ತನ್ನೆಲ್ಲಾ ಸಂಪತ್ತನ್ನು ಬಡಬಗ್ಗರಿಗೆ ಹಂಚಿ ಕಪ್ಪುಬಟ್ಟೆ ಧರಿಸಿ ಗುರುವಿನ ಸಮಾಧಿಯ ಬಳಿ ಧ್ಯಾನದಲ್ಲಿದ್ದು ಕೊನೆಯುಸಿರೆಳೆಯುತ್ತಾರೆ. ಭಾರತಕ್ಕೆ ವಲಸೆ ಬಂದ ಆರಂಭಿಕ ಮುಸ್ಲಿಮ್ ವಲಸಿಗರಲ್ಲಿ ಶ್ರೇಷ್ಠ ಮುಸ್ಲಿಮರ ಪೂರ್ವಜರು ಭಾರತದ ಹೊರಗಡೆಯವರಾಗಿರಬೇಕಿತ್ತು. ಭಾರತದೊಳಗೆ ಪೋಷಕರಿದ್ದರೆ ಅಂತಹವರನ್ನು ಕೀಳಾಗಿ ಕಾಣಲಾಗುತ್ತಿತ್ತು. ಹೀಗಾಗಿಯೇ ಬಲ್ಬನ್ ಭಾರತೀಯ ಮೂಲದವನೆಂದು ರಾಜ ಮನೆತನದಿಂದ ವಜಾಗೊಳಿಸಿದರು. ವಸ್ತುಸ್ಥಿತಿ ಹೀಗಿದ್ದರೂ ತಾಯಿಯ ಕಡೆಯಿಂದ ಶುದ್ಧ ಭಾರತೀಯರಾಗಿದ್ದ ಖುಸ್ರೋ ತಾನೊಬ್ಬ ‘ಭಾರತೀಯ’ ಎಂದು ಹೇಳಿಕೊಳ್ಳಲು ಎಂದಿಗೂ ಹಿಂಜರಿಯಲಿಲ್ಲ. ಬದಲಾಗಿ ಭಾರತ ನನ್ನ ‘ಜನ್ಮಸ್ಥಳ’ ಅದು ನನ್ನ ‘ತಾಯ್ನಾಡು’ ಎಂದು ಹೆಮ್ಮೆಪಡುತ್ತಿದ್ದರು. ನಾನೊಬ್ಬ ‘ಭಾರತೀಯ ಟರ್ಕಿಶ್’ ಅಥವಾ ‘ಟರ್ಕ್-ಹಿಂದುಸ್ಥಾನಿ’ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಖುಸ್ರೋ ಭಾರತೀಯ ಸಂಗೀತವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಹಾಗಾಗಿ ಪರ್ಷಿಯನ್ ಮತ್ತು ಭಾರತೀಯ ಸಂಗೀತವನ್ನು ಸಂಯೋಜಿಸಲು ಪ್ರಯತ್ನಿಸಿದರು. ಹೀಗೆ ಎರಡರ ಲಯ ಮೌಲ್ಯಗಳನ್ನು ಪ್ರಸ್ತುತಪಡಿಸುವ ಮಧುರ ಸಂಗೀತವನ್ನು ವಿಕಾಸಗೊಳಿಸಿದರು. ಹೀಗಾಗಿ ಖುಸ್ರೋಗೆ ಭಾರತದ ಸಂಗೀತ ಲೋಕ ಋಣಿಯಾಗಿದೆೆ. ಖುಸ್ರೋ ‘ಖವ್ವಾಲಿಯ ಜನಕ’. ಭಾರತ ಪಾಕಿಸ್ತಾನ ಹಾಗೂ ಇರಾನ್ ದೇಶಗಳಲ್ಲಿ ಗಝಲ್ ಶೈಲಿಯನ್ನು ಜನಪ್ರಿಯಗೊಳಿಸಿದರು. ಅಲ್ಲದೇ ಪರ್ಷಿಯನ್, ಅರೇಬಿಕ್ ಹಾಗೂ ಟರ್ಕಿಶ್ ಅಂಶಗಳನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಬೆಸೆದರು. ‘ಖಾಯಲ್ ಹಾಗೂ ತಾರಾನಾ’ ಶೈಲಿಯ ಸಂಗೀತಕ್ಕೂ ಜನಕರಾಗಿದ್ದಾರೆ. ಹೀಗಾಗಿಯೇ ಅಮೀರ್ ಖುಸ್ರೋರವರನ್ನು ಭಾರತದ ಗಿಳಿ ಎಂದೇ ಕರೆಯಲಾಗುತ್ತದೆ. ಖುಸ್ರೋ ತಮ್ಮ ಇಸ್ಲಾಮಿಕ್ ಮತ್ತು ಭಾರತೀಯ ಪರಂಪರೆಗಳ ನಡುವೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಲೇ ಈ ಎರಡರ ನಡುವಿನ ಅಂತರವನ್ನು ಪ್ರಜ್ಞಾಪೂರ್ವಕವಾಗಿ ತಗ್ಗಿಸಲು ಯತ್ನಿಸಿದ ಪ್ರವರ್ತಕರಾಗಿದ್ದರು. ಈ ಪ್ರಯತ್ನಗಳು ತಕ್ಷಣಕ್ಕೆ ಫಲ ನೀಡದಿದ್ದರೂ ಭವಿಷ್ಯದ ಪೀಳಿಗೆಗಳನ್ನು ಗಾಢವಾಗಿ ಪ್ರಭಾವಿಸಿದವು. ಅಮೀರ್ ಖುಸ್ರೋ ಅವರ ಭಕ್ತಿಗೀತೆ ಮತ್ತು ಹಾಡುಗಳ ಗಾಢ ಪ್ರಭಾವವು ಖುಸ್ರೋ ನಂತರದ ಭಾರತದ ಕೆಲವು ಮಹಾನ್ ಆಧ್ಯಾತ್ಮಿಕ ನಾಯಕರುಗಳಾದ ಗುರುನಾನಕ್, ಕಬೀರ್, ಸಂತ ನಾಮ್ ದೇವ್, ವಾರಿಸ್ ಶಾ ಮತ್ತು ಅಬ್ದುಲ್ ಲತೀಫ್ ಮೊದಲಾದವರ ಅರಿವು ಮತ್ತು ಮಾತುಗಳಲ್ಲಿ ಕಾಣಿಸುತ್ತದೆ. ಹೀಗಾಗಿ ಅವರು ಭಾರತೀಯ ಹೊಸ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ವಿವಿಧ ಧರ್ಮಗಳ ಜನರನ್ನು ಆಧ್ಯಾತ್ಮಿಕವಾಗಿ ಬೆಸೆಯಲು ಕಾರಣವಾಗಿದ್ದಾರೆ.
ನಾಗರಿಕರ ಅಸಡ್ಡೆ: ಪ್ಲಾಸ್ಟಿಕ್ ತಿನ್ನುತ್ತಿರುವ ಜಾನುವಾರುಗಳು
ಯಡ್ರಾಮಿ: ಪುಟ್ಟ ಮಗು ಚಾಕ್ಲೆಟ್ಟೋ, ಐಸ್ಕ್ರೀಮೋ ತಿನ್ನುತ್ತ ಬಾಯಿಗೆ ಸ್ವಲ್ಪ ಕಾಗದ ಅಥವಾ ಪ್ಲಾಸ್ಟಿಕ್ ಹೋದರೆ ಪ್ರಳಯವಾದಂತೆ ವರ್ತಿಸುವ ಮನುಷ್ಯನ ಈ ಸೂಕ್ಷ್ಮತೆ ರಸ್ತೆ ಪಕ್ಕ ಪ್ಲಾಸ್ಟಿಕ್ನಲ್ಲಿ ಆಹಾರ ಸುತ್ತಿ ಬಿಸಾಡುವಾಗ ಅದೆಲ್ಲಿ ಅಡಗಿರುತ್ತದೋ ಗೊತ್ತಿಲ್ಲ. ಸಗರ ನಾಡು ಎಂದೇ ಖ್ಯಾತಿ ಪಡೆದಿರುವ ಯಡ್ರಾಮಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಚೀಲ, ಬಾಟಲ್ಗಳು ಕಣ್ಣಿಗೆ ರಾಚುತ್ತಿವೆ. ಸ್ವಚ್ಛಂದವಾಗಿ ಹುಲ್ಲುಗಾವಲಿನಲ್ಲಿ ತಿರುಗಾಡಿಕೊಂಡಿದ್ದ ನಾಯಿ, ಹಂದಿ, ಹಸುಗಳ ಹೊಟ್ಟೆಯಲ್ಲೂ ಈಗೀಗ ಮೂಟೆಗಟ್ಟಲೇ ಪ್ಲಾಸ್ಟಿಕ್ ಪತ್ತೆಯಾಗುತ್ತಿದೆ. ಆದರೆ, ಇದಕ್ಕೆ ದೂಷಿಸಬೇಕಾದುದು ಪ್ಲಾಸ್ಟಿಕ್ ನ್ನು ಅಲ್ಲ. ಬದಲಾಗಿ, ಅದನ್ನು ವೈಜ್ಞಾನಿಕವಾಗಿ ನಿರ್ವಹಿಸದೇ ಎಲ್ಲೆಂದರಲ್ಲಿ ಬಿಸಾಡುವ ನಾಗರಿಕರ ಅಸಡೆಯನ್ನು. ಮನೆಯಲ್ಲಿ ಉಳಿದ ಆಹಾರ, ಕೊಳೆತ ತರಕಾರಿ, ಹಾಳಾದ ಹಣ್ಣುಗಳನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ರಸ್ತೆ ಪಕ್ಕ ಎಸೆಯುವ ಜನರಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ. ಜಾನುವಾರುಗಳು ಆಹಾರವನ್ನು ತಿನ್ನುವ ಧಾವಂತದಲ್ಲಿ ಪ್ಲಾಸ್ಟಿಕ್ ಕೂಡಾ ಅವುಗಳ ಹೊಟ್ಟೆ ಸೇರುತ್ತಿವೆ. ಜೀರ್ಣವಾಗಿ ಹೊರ ಹೋಗದೆ, ಆ ಪ್ಲಾಸ್ಟಿಕ್ ಗಳು ಹೊಟ್ಟೆಯಲ್ಲಿಯೇ ಉಳಿದುಕೊಳ್ಳುತ್ತದೆ. ಪ್ರಾಣಿಗಳ ಹೊಟ್ಟೆಯಲ್ಲಿ ಶೇ.75ರಷ್ಟು ಪ್ಯಾಸ್ಟಿಕ್ ತುಂಬುವವರೆಗೆ ಗೊತ್ತಾಗುವುದಿಲ್ಲ. ಯಾವುದೇ ಲಕ್ಷಣಗಳು ಸಹ ಗೋಚರಿಸುವುದಿಲ್ಲ ಜಾನುವಾರುಗಳಲ್ಲಿ ನಾಲ್ಕು ಉದರಗಳಿದ್ದು ಅದರಲ್ಲಿ ತುಂಬ ದೊಡ್ಡದಾದ ರುಮೇನ್ನಲ್ಲಿ ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ದೊಡ್ಡ ಜಾನುವಾರುಗಳ ದೊಡ್ಡ ಹೊಟ್ಟೆಯು 150 ಕೆ.ಜಿ.ವರೆಗೆ ಇದ್ದು ಇದರ ಬಹುಭಾಗ ಪ್ಲಾಸ್ಟಿಕ್ ಆಕ್ರಮಿಸಿಕೊಳ್ಳುತ್ತದೆ. ಶಸ್ತ್ರ ಚಿಕಿತ್ಸೆಯ ಮೂಲಕ 40 ರಿಂದ 80 ಕೆ.ಜಿವರೆಗೆ ದನಗಳ ಹೊಟ್ಟೆಯಿಂದ ಪ್ಲಾಸ್ಟಿಕ್ ಹೊರತೆಗೆದ ಉದಾಹರಣೆಗಳೂ ಇವೆ. ನಿರಂತರವಾಗಿ ಆಹಾರದ ಮುಖಾಂತರ ಪ್ಲಾಸ್ಟಿಕ್ ಹೊಟ್ಟೆ ಸೇರುವುದರಿಂದ ನಿಧಾನವಾಗಿ ಲಿವರ್ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಲಕ್ಷಣಗಳು ಗೋಚರವಾಗುತ್ತವೆ. ಅಲ್ಲಿಯವರೆಗೆ ಆರೋಗ್ಯದಲ್ಲೇನೂ ಸಮಸ್ಯೆ ಉಂಟಾಗುವುದಿಲ್ಲ. ದನ-ಕರುಗಳಿಗೆ ಚಿಕಿತ್ಸೆ ನೀಡಿ ಹೊಟ್ಟೆಯಿಂದ ಪ್ಲಾಸ್ಟಿಕ್ ತೆಗೆಯಬಹುದು. ಆದರೆ ವನ್ಯಜೀವಿಗಳಿಗೆ ಈ ಅದೃಷ್ಟ ಕಡಿಮೆ. ಅವುಗಳಲ್ಲಿ ಯಾವುದೇ ರೋಗ ಕಾಣಿಸಿಕೊಂಡರೂ ಗೊತ್ತಾಗುವುದಿಲ್ಲ. ಹೀಗಾಗಿ ಸಾವೊಂದೇ ಅವುಗಳ ಮುಂದಿರುವ ಆಯ್ಕೆ. ಅಪ್ಪಿತಪ್ಪಿ ಸತ್ತಿದ್ದು ಗಮನಕ್ಕೆ ಬಂದಾಗ ಪರೀಕ್ಷೆ ವೇಳೆ ಅವುಗಳ ಹೊಟ್ಟೆಯಲ್ಲೂ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ ಎನ್ನುತ್ತಾರೆ ಹಿರಿಯ ಪಶುವೈದ್ಯರು. ಪ್ಲಾಸ್ಟಿಕ್ ಸಮಸ್ಯೆಯಲ್ಲ. ಅದನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವುದರಿಂದ ಸಮಸ್ಯೆಗಳಾಗುತ್ತಿವೆ. ಅದರಲ್ಲೂ ಪ್ಲಾಸ್ಟಿಕ್ನಲ್ಲಿ ಆಹಾರ ಪದಾರ್ಥಗಳನ್ನು ಸುತ್ತಿ ಬಿಸಾಡುವುದರಿಂದ ಅವುಗಳನ್ನು ಸೇವಿಸುವ ಪ್ರಾಣಿಗಳ ಹೊಟ್ಟೆಗೆ ಪ್ಲಾಸ್ಟಿಕ್ ಸೇರಿ ಆರೋಗ್ಯದ ಸಮಸ್ಯೆ ಆಗುತ್ತಿದೆ. ಪೌಷ್ಟಿಕಾಂಶ ಕೊರತೆಯಿಂದ ಜಾನುವಾರುಗಳು ಪ್ಲಾಸ್ಟಿಕ್, ಬಟ್ಟೆ, ಹಗ್ಗ ಇತ್ಯಾದಿಗಳನ್ನು ತಿನ್ನುತ್ತವೆ. ರೈತರು ಪಟ್ಟಣ ಪ್ರದೇಶಗಳಲ್ಲಿ ಜಾನುವಾರುಗಳನ್ನು ಬಿಡಾಡಿಯಾಗಿ ಬಿಡದೇ ಮನೆಯಲ್ಲಿ ಪೋಷಿಸಬೇಕು. ಜಾನುವಾರು ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನದಂತೆ ನೋಡಿಕೊಳ್ಳಬೇಕು. <ಡಾ. ಪ್ರಭು ಕಲ್ಲೂರ, ಮುಖ್ಯ ಪಶು ವೈದ್ಯಾಧಿಕಾರಿ, ಆಡಳಿತ ಪಶು ಆಸ್ಪತ್ರೆ, ಯಡ್ರಾಮಿ
ಯುದ್ಧ ಯಾರೇ ಪ್ರಾರಂಭ ಮಾಡಿರಲಿ ಸಾವು-ನೋವುಗಳು ಮಾತ್ರ ಎಲ್ಲೆಡೆ ತಪ್ಪಿದ್ದಲ್ಲ. ಯುದ್ಧದಿಂದ ಪಡೆಯುವುದಾರೂ ಏನು? ಲಕ್ಷಾಂತರ ವಿಧವೆಯರು, ಅಸಂಖ್ಯ ಅನಾಥರು, ಸಾವಿರಾರು ಕಂದಮ್ಮಗಳ ಅನುಪಸ್ಥಿತಿ, ಊಹಿಸದಷ್ಟು ಅಂಗವಿಕಲರು, ಬುದ್ಧಿ ಮಾಂದ್ಯರು, ಕಂಡು ಕೇಳರಿಯದ ವ್ಯಾಧಿಗಳು, ಇಡೀ ವಾತಾವರಣ ವಿಷಾನಿಲಪೂರಿತವಾಗುವುದು ಹೀಗೆ ಸಂಕಟಗಳ ಸರಮಾಲೆಯೇ ಯುದ್ಧದಿಂದ ಪಡೆಯಬಹುದಾದ ಫಲಿತಗಳು. ಎರಡು ಮಹಾಯುದ್ಧಗಳಲ್ಲಿ ಈ ಎಲ್ಲ ಅನಿಷ್ಟಗಳನ್ನು ಕಂಡಿದ್ದೇವಷ್ಟೆ. ಆದರೂ ಮನುಷ್ಯರು ಪಾಠ ಕಲಿಯುತ್ತಿಲ್ಲವೆಂದಾದರೆ ಇದರ ಮರ್ಮವೇನು? ಯುದ್ಧ ಜಗತ್ತಿನ ಯಾವ ಮೂಲೆಯಲ್ಲಿಯೇ ಸಂಭವಿಸಲಿ, ಅದರ ಪರಿಣಾಮ ಮಾತ್ರ ಇಡೀ ವಿಶ್ವ ಅನುಭವಿಸಬೇಕಾಗುತ್ತದೆ. ಗ್ಯಾಸ್ ಸಿಲಿಂಡರ್ಗಳಿಗಾಗಿ ಜನ ಎಲ್ಲೆಲ್ಲೂ ಒದ್ದಾಡುತ್ತಿರುವುದೇ ಸಾಕ್ಷಿ. ರಾಷ್ಟ್ರಕವಿ ಕುವೆಂಪು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಒಂದು ಕಡೆ (ಎರಡನೇ ಮಹಾಯುದ್ಧದ ಸಂದರ್ಭವೆಂದು ತೋರುತ್ತದೆ) ಹೀಗೆ ಹೇಳುತ್ತಾರೆ. ‘ಎಲ್ಲಿಯೋ ನಡೆದ ಯುದ್ಧವೊಂದು ಭಾರತದ ಯಕಶ್ಚಿತ್ ಹಳ್ಳಿಯೊಂದರ ಕೂಡು ಕುಟುಂಬವೊಂದನ್ನು ಒಡೆದು ಹಾಕಿ ಇನ್ನು ಮುಂದೆಂದೂ ಕೂಡದಂತೆ ಮಾಡಿತು’ ಎಂದು ಬರೆಯುತ್ತಾರೆ. ಅದು ಹೇಗೆಂದರೆ ಮಲೆನಾಡು ಅಡಿಕೆ, ತೆಂಗು, ಬಾಳೆ, ಮೆಣಸು, ಗೋಡಂಬಿ ಇತ್ಯಾದಿ ವಾಣಿಜ್ಯ ಬೆಳೆಗಳ ನಾಡಲ್ಲವೆ? ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ವೆಂಕಟಪ್ಪಗೌಡರದು ಕೃಷಿಕ ಮನೆತನ. ದೊಡ್ಡ ಕೂಡು ಕುಟುಂಬ. ಮನೆತುಂಬ ಮಕ್ಕಳು, ಮೊಮ್ಮಕ್ಕಳು. ಕುವೆಂಪು ಅವರ ಮಲೆನಾಡಿನ ಚಿತ್ರಗಳು ಅಥವಾ ಅವರ ಆತ್ಮಚರಿತ್ರೆ ‘ನೆನಪಿನ ದೋಣಿಯಲಿ’ ಓದಿದ ಯಾರಿಗಾದರೂ ಅವರ ಕುಟುಂಬದ ಚಿತ್ರಣ ಕಣ್ಮುಂದೆ ಸುಳಿಯದಿರದು. ತುಂಬಾ ಖರ್ಚು ಮಾಡಿ ಬೆಳೆದ ಅಡಿಕೆ ಮೂಟೆಗಳನ್ನು ಮಾರಾಟ ಮಾಡಲೆಂದು ಕಳಿಸುತ್ತಾರೆ. ವಿದೇಶಗಳಿಗೆ ರಫ್ತಾಗುವ ಉತ್ತಮ ತಳಿಯ ಅಡಿಕೆ ಅದು. ಮೂಟೆಗಳೇನೋ ಹಡಗುಗಳಿಗೆ ತುಂಬಿಸಲಾಯಿತು. ಅಷ್ಟರಲ್ಲಿ ಯುದ್ಧ ಪ್ರಾರಂಭವಾಗಿ ಅಡಿಕೆ ಮೂಟೆ ಹೊತ್ತ ಹಡಗುಗಳು ಮದ್ರಾಸ್ನ ಬಂದರುಗಳಲ್ಲಿ ತಿಂಗಳುಗಟ್ಟಲೆ ಕೊಳೆಯತೊಡಗಿದವು. ಸಗಟು ವ್ಯಾಪಾರಿಗಳು ಕೈ ಚೆಲ್ಲಿ ಕುಳಿತರು. ಮಾಲು ನಿಗದಿತ ಸ್ಥಳಕ್ಕೆ ಮುಟ್ಟದೆ ಸಗಟು ವ್ಯಾಪಾರಿಗಳಿಗೆ ಹಣ ಬಟವಾಡೆಯಾಗದು. ತತ್ಪರಿಣಾಮ ರೈತರ ಕೈಗಳಿಗೆ ಹಣ ದಕ್ಕುವಂತೆಯೇ ಇಲ್ಲ. ಈ ಕಡೆ ಬೆಳೆದ ಮಾಲು ಮನೆಯಲ್ಲಿಯೂ ಇಲ್ಲ. ಆ ಕಡೆ ವಿದೇಶಗಳಿಗೆ ತಲುಪುವಂತೆಯೂ ಇಲ್ಲ. ಹಡಗಿನಲ್ಲಿ ದಾಸ್ತಾನಾದ ಅಡಿಕೆ ಸಮುದ್ರದ ಉಪ್ಪು ಹವೆಯಲ್ಲಿ ಬೂಸ್ಟು ಹಿಡಿಯುವುದು ಗ್ಯಾರಂಟಿ. ವೆಂಕಟಪ್ಪಗೌಡರು ಬೆಳೆಗಾಗಿ ಮಾಡಿದ ಸಾಲದ ಬಡ್ಡಿ ಏರುತ್ತಲೇ ನಡೆಯಿತು. ಸಾಲಗಾರರ ತಗಾದೆ, ಮನೆ ಖರ್ಚು ನಿಭಾಯಿಸಲಾಗದ ಒದ್ದಾಟ. ಬೇಡವೆಂದರೂ ದೊಡ್ಡ ವ್ಯಾಪಾರಕ್ಕೆ ಕೈ ಹಾಕಿದ ಕುವೆಂಪು ಅವರ ತಂದೆಗೂ ದೊಡ್ಡಪ್ಪನಿಗೂ ಮನಸ್ತಾಪ ಸುರುವಾಯಿತಂತೆ. ಬೆಳೆಯುತ್ತಿರುವ ಸಾಲದ ಹೊರೆಗಂಜಿ ದೊಡ್ಡಪ್ಪ ತಾವು ಬೇರೆ ಆಗುವುದಾಗಿ ಹಟ ಹಿಡಿದರಂತೆ. ಎಷ್ಟೆಲ್ಲಾ ಪ್ರಯತ್ನ ಪಟ್ಟರೂ ಆರ್ಥಿಕ ಸಂಕಟವು ಅವರ ಕುಟುಂಬವನ್ನು ಒಗ್ಗಟ್ಟಾಗಿ ನಿಲ್ಲಿಸದೆ ಹೋಯಿತು. ಹೀಗೆಂದು ತುಂಬಾ ವಿಷಾದದಿಂದ ಕವಿ ಕುವೆಂಪು ಯುದ್ಧದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹಾಗೆ ನೋಡಿದರೆ ಆ ಕಾಲಕ್ಕೆ ವೆಂಕಟಪ್ಪಗೌಡರದು ಅನುಕೂಲಸ್ಥ ಮನೆತನವೇ. ಉಂಡುಟ್ಟು ಸಮೃದ್ಧವಾಗಿ ಇದ್ದ ಕುಟುಂಬ. ಇಂಥವರ ಮನೆತನಗಳೇ ಯುದ್ಧದ ಕರಾಳತೆಗೆ ಸಿಲುಕಿ ನೆಲಕಚ್ಚಿರಬೇಕಾದರೆ ಕೂಲಿ ಕಾರ್ಮಿಕರ, ದುಡಿಯುವ ತಳಸಮುದಾಯಗಳ ಬದುಕು ಅದೆಷ್ಟು ದುರ್ಭರವಾಗಿರಬಹುದು ಎಂಬುದನ್ನು ಊಹಿಸಲಾದೀತೆ? ಯುದ್ಧ ಕಾಲದಲ್ಲಿ ಮಾಮೂಲಿ ಚಿಮಣಿ ಎಣ್ಣೆಗಾಗಿ ಬಡಿದಾಡುವ ಬಡ ಕುಟುಂಬವೊಂದರ ದಾರುಣ ಚಿತ್ರವನ್ನು ಕಾದಂಬರಿಕಾರ ನಿರಂಜನರು ತಮ್ಮ ‘ಎಣ್ಣೆ! ಚಿಮಣಿ ಎಣ್ಣೆ!’ ಕಥೆಯಲ್ಲಿ ಮನೋಜ್ಞವಾಗಿ ಹಿಡಿದಿಟ್ಟಿದ್ದನ್ನು ಗಮನಿಸಬಹುದು. ಅಂದು ಕಥೆಗಳಾಗಿ ಓದಿದ ಪ್ರಸಂಗಗಳು ಇಂದು ಎಲ್ಲರೂ ಹಾಯಬೇಕಾದ ಅನುಭವಗಳಾಗಿ ಇದಿರಾಗುತ್ತಿವೆ. ಯುದ್ಧ ನಡೆದಿರುವುದು ಇಸ್ರೇಲ್, ಅಮೆರಿಕ ಮತ್ತು ಇರಾನ್ಗಳ ನಡುವೆ ಮಾತ್ರವಲ್ಲ. ಜಗತ್ತಿನ ಎಲ್ಲ ದೇಶಗಳಲ್ಲಿ ಬಾಂಬ್ ದಾಳಿಯಿಲ್ಲದ ಆದರೆ ಅದಕ್ಕಿಂತ ಭೀಕರವಾದ ಆರ್ಥಿಕ ಹಿಂಜರಿತದ ಯುದ್ಧಗಳು ಸುರುವಾಗಿವೆ. ಈಗಾಗಲೇ ನಮ್ಮಲ್ಲಿ ಸಣ್ಣ-ಪುಟ್ಟ ಹೋಟೆಲ್, ಚಹಾದ ಬಂಡಿ, ಮೆಸ್ಗಳು, ಹಾಸ್ಟೆಲ್ಗಳು ಮುಚ್ಚಿವೆ. ಹೆಚ್ಚಿನ ಹೋಟೆಲ್ಗಳಲ್ಲಿ ಎಲ್ಲ ತಿಂಡಿಗಳ ಬೆಲೆ ದುಪ್ಪಟ್ಟು ಏರಿದೆ. ಸರಕು ಸಾಗಣೆಗಳ ಬೆಲೆಯಂತೂ ಯಾರ ಅಂಕೆಗೂ ಸಿಗದಂತೆ ಗಗನಕ್ಕೆ ಏರಿ ಆಗಿದೆ. ಉಪ್ಪಿನಿಂದ ಹಿಡಿದು ಉಳ್ಳಾಗಡ್ಡಿವರೆಗೂ ಎಲ್ಲವೂ ದುಬಾರಿಯಾಗಿವೆ. ಬಡವರಂತೂ ಹೈರಾಣಾಗಿದ್ದಾರೆ. ಆದರೆ ಮಧ್ಯಮ, ಮೇಲ್ಮಧ್ಯಮ ವರ್ಗದವರು ಕೂಡ ಮುಗಿಲಿಗೆ ಬಾಯಿ ತೆರೆಯುತ್ತಿದ್ದಾರೆ. ದೇಶದಲ್ಲಿ ಗ್ಯಾಸ್ ಸಿಲಿಂಡರ್ಗಾಗಿ ಹಾಹಾಕಾರ ನಡೆಯುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ‘‘ದೇಶದಲ್ಲಿ ಯಾವುದೇ ರೀತಿಯ ತೈಲ, ಅಡುಗೆ ಅನಿಲಕ್ಕೆ ಕೊರತೆ ಇಲ್ಲ. ಯುದ್ಧದಿಂದ ಭಾರತದ ಮೇಲೆ ಯಾವುದೇ ದುಷ್ಪರಿಣಾಮವಾಗಿಲ್ಲ’’ ಎಂದು ನಿರ್ಲಜ್ಜೆಯಿಂದ ಸುಳ್ಳು ಹೇಳುತ್ತಿದೆ. ಅಂಧ ಭಕ್ತರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹತಾಶೆಯಿಂದ ಆಗಾಗ ಪ್ರಧಾನಿಗಳನ್ನು ಸಮರ್ಥಿಸಿಕೊಳ್ಳುವ ಬೇಗುದಿಗೆ ಬಲಿಯಾಗುತ್ತಿದ್ದಾರೆ. ಈ ನಡುವೆ ಯುದ್ಧ ಸಂಬಂಧಿ ತರಹೆವಾರಿ ವಾದ ವರಸೆಗಳು ಹುಟ್ಟಿಕೊಳ್ಳುತ್ತಿವೆ. ಮೊನ್ನೆ ಆಟೋದಲ್ಲಿ ತೆರಳತ್ತಿರುವಾಗ ರೇಟು ಏರಿಸಿದ್ದರ ಕುರಿತು ಚೌಕಾಸಿಗೆ ಇಳಿದರೆ ಆತ ಹೇಳುವ ಮಾತುಗಳು ದಿಗ್ಮೂಢಳನ್ನಾಗಿ ಮಾಡಿದವು. ಯುದ್ಧ ಕುರಿತು ಆತ ತನ್ನ ನಿತ್ಯ ಬದುಕಿನ ನಿಗಿ ನಿಗಿ ಕೆಂಡದಂಥ ಸತ್ಯಗಳನ್ನು ಬಿಚ್ಚಿಡುವುದರೊಂದಿಗೆ ಕೆಲವು ಸ್ವಾರಸ್ಯಕರ ಊಹೆಗಳನ್ನು ಮುಂದಿಟ್ಟನು. ಹಿಟ್ಲರ್ ಯಹೂದಿಗಳನ್ನು ಬೆನ್ನಟ್ಟಿ ಹೊಡೆಯುತ್ತಿರುವಾಗ ಜರ್ಮಿನಿಯಿಂದ ತಪ್ಪಿಸಿಕೊಂಡು ಬಂದ ಕೆಲವರು ಫೆಲೆಸ್ತೀನ್ನಲ್ಲಿ ಆಶ್ರಯ ಪಡೆದುಕೊಂಡು ಇಸ್ರೇಲ್ ಎಂಬ ದೇಶ ಕಟ್ಟಿಕೊಂಡರಷ್ಟೆ. ಇಸ್ರೇಲ್ ಹುಟ್ಟಿದ್ದರ ಕುರಿತು ಆಟೋಚಾಲಕನ ವರಸೆ ಏನೆಂದರೆ ಯಹೂದಿಗಳ ಒಂದು ಚಿಕ್ಕ ಮಗುವು ಹಿಟ್ಲರ್ನ ಹದ್ದುಗಣ್ಣಿನಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿರಲಿಲ್ಲವಂತೆ. ಹೀಗಾಗಿ ಹಿಟ್ಲರ್ನೇ ತಿಳಿದರೂ ತಿಳಿಯದಂತೆ ಕೆಲವೊಬ್ಬರು ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟನಂತೆ. ಏಕೆಂದರೆ ಯಹೂದಿಗಳನ್ನು ಸಂಹಾರ ಮಾಡಿದ್ದಕ್ಕಾಗಿ ಜಗತ್ತು ತನ್ನನ್ನು ಹಳಿಯುತ್ತಿರಬಹುದು. ಆದರೆ ಮುಂದೊಂದು ದಿನ ಈ ಯಹೂದಿಗಳು ಯಾರು? ಅವರೆಷ್ಟು ದುಷ್ಟರು ಎಂಬುದು ಜಗತ್ತಿಗೆ ಅರ್ಥವಾಗುತ್ತದೆ. ಹೀಗೆ ಅರ್ಥವಾಗಲೆಂದೇ ಕೆಲವೊಬ್ಬರನ್ನು ಉಳಿಸಿದ್ದಾನಂತೆ. ಇನ್ನೊಬ್ಬ ಹೇಳಿದ್ದೇನೆಂದರೆ ಅಲ್ಪ-ಸ್ವಲ್ಪ ಯಹೂದಿಗಳನ್ನು ಹಿಟ್ಲರ್ ಉಳಿಸಬಾರದಾಗಿತ್ತಂತೆ ಹೀಗೆ ಉಳಿಸಿದ್ದೇ ಹಿಟ್ಲರ್ ಮಾಡಿದ ತಪ್ಪಾಗಿದೆಯಂತೆ. ಅಂದರೆ ಹಿಟ್ಲರ್ ನಡೆಸಿದ ಮಾರಣ ಹೋಮವನ್ನು ಅವೈಜ್ಞಾನಿಕವಾಗಿ ಸಮರ್ಥಿಸಿಕೊಳ್ಳುವಂಥ ಸ್ಥಿತಿಗೆ ಮನುಷ್ಯರು ತಲುಪಿದ್ದಾರೆ ಎಂದರೆ ಈಗ ನಡೆಯುತ್ತಿರುವ ಯುದ್ಧ ಅದೆಷ್ಟು ಅಮಾನವೀಯವಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಕುವೆಂಪು ತಮ್ಮ ಬೆರಳ್ಗೆ ಕೊರಳ್ ನಾಟಕದಲ್ಲಿ ಒಂದೆಡೆ ‘ಹಿಂಸೆಗೆ ಹಿಂಸೆ ಉತ್ತರವಲ್ಲ ವತ್ಸಾ’ ಎಂದು ಉದ್ಗಾರ ತೆಗೆಯುತ್ತಾರೆ. ಇಂದು ಹಿಂಸೆಯನ್ನು ಹಿಂಸೆಯಿಂದಲೇ ದಮನಿಸಬಹುದೆಂಬ ನಂಬಿಕೆಯತ್ತ ಜನಸಮುದಾಯಗಳು ವಾಲುತ್ತಿರುವುದು ಮಾನವ ಜಗತ್ತಿನ ಅಂತ್ಯದತ್ತ ಸೂಚನೆ ನೀಡುವಂತಿದೆ. ಹಿಂಸೆಗಾಗಿ ಹಿಂಸೆ ತಪ್ಪು ಎನ್ನುತ್ತಲೇ ಹಿಂಸೆಯಿಂದ ತಪ್ಪಿಸಿಕೊಳ್ಳಲು ಹಿಂಸೆ ಅನಿವಾರ್ಯವೆಂಬ ವಾದವೊಂದು ಮುನ್ನೆಲೆಗೆ ಬರುತ್ತಿದೆ. ತನಗೆ ಬೇಕಾದುದನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆಯು ತರ್ಕಬದ್ಧವಾಗುತ್ತಿದೆ. ಯುದ್ಧ ಯಾರೇ ಪ್ರಾರಂಭ ಮಾಡಿರಲಿ ಸಾವು-ನೋವುಗಳು ಮಾತ್ರ ಎಲ್ಲೆಡೆ ತಪ್ಪಿದ್ದಲ್ಲ. ಯುದ್ಧದಿಂದ ಪಡೆಯುವುದಾರೂ ಏನು? ಲಕ್ಷಾಂತರ ವಿಧವೆಯರು, ಅಸಂಖ್ಯ ಅನಾಥರು, ಸಾವಿರಾರು ಕಂದಮ್ಮಗಳ ಅನುಪಸ್ಥಿತಿ, ಊಹಿಸದಷ್ಟು ಅಂಗವಿಕಲರು, ಬುದ್ಧಿ ಮಾಂದ್ಯರು, ಕಂಡು ಕೇಳರಿಯದ ವ್ಯಾಧಿಗಳು, ಇಡೀ ವಾತಾವರಣ ವಿಷಾನಿಲಪೂರಿತವಾಗುವುದು ಹೀಗೆ ಸಂಕಟಗಳ ಸರಮಾಲೆಯೇ ಯುದ್ಧದಿಂದ ಪಡೆಯಬಹುದಾದ ಫಲಿತಗಳು. ಎರಡು ಮಹಾಯುದ್ಧಗಳಲ್ಲಿ ಈ ಎಲ್ಲ ಅನಿಷ್ಟಗಳನ್ನು ಕಂಡಿದ್ದೇವಷ್ಟೆ. ಆದರೂ ಮನುಷ್ಯರು ಪಾಠ ಕಲೆಯುತ್ತಿಲ್ಲವೆಂದಾದರೆ ಇದರ ಮರ್ಮವೇನು? ಯುದ್ಧ ಅಥವಾ ಹಿಂಸೆಯು ಮನುಷ್ಯರ ಸ್ವಭಾವಜನ್ಯ ಪ್ರವೃತ್ತಿಯೇ? ಅಥವಾ ಇದನ್ನು ಮನುಷ್ಯರ ಮನ ಮಸ್ತಕಗಳಲ್ಲಿ ಉದ್ದೇಶ ಪೂರ್ವಕವಾಗಿ ಕಸಿ ಮಾಡಲಾಗುತ್ತದೆಯೆ? ಈ ಕುರಿತು ಜಗತ್ತಿನಾದ್ಯಂತ ಸಮಾಜ ವಿಜ್ಞಾನಿಗಳು ಸಂಶೋಧನೆ ಮಾಡುತ್ತಲೇ ಬರುತ್ತಿರುವರಾದರೂ ಇದುವರೆಗೂ ಇದಕ್ಕೆ ಸೂಕ್ತ ಉತ್ತರ ದೊರೆತಂತಿಲ್ಲ. ಯುದ್ಧಗಳನ್ನು ಅನಿವಾರ್ಯವಾಗಿಸುತ್ತಿರುವ ಆಳುವವರ ಮನೋಸ್ಥಿತಿ ಏನೇ ಇರಲಿ. ಅದರ ಹಿಂದಿನ ಧನದಾಹ ಮಾತ್ರ ಕಣ್ಣಿಗೆ ಎದ್ದು ಕಾಣಿಸುತ್ತಿದೆ. ರಾಜಕೀಯ ಅರ್ಥಶಾಸ್ತ್ರದ ನಡೆಗಳನ್ನು ತಿಳಿದುಕೊಳ್ಳಲು ದೊಡ್ಡ ಸಂಶೋಧನೆಗಳೇನು ಬೇಕಿಲ್ಲ. ಇರಾನ್ ಮೇಲೆ ಇಸ್ರೇಲ್ ಮೂಲಕ ದಾಳಿ ಮಾಡುತ್ತಿರುವ ಅಮೆರಿಕದ ಧನ ದಾಹ ಅರಿಯದ್ದೇನಲ್ಲ. ಮಧ್ಯ ಏಶ್ಯದ ಅರಬ್ ದೇಶಗಳಲ್ಲಿ ಹರಡಿಕೊಂಡಿರುವ ಅಪಾರ ತೈಲ ಸಂಪತ್ತಿನ ಮೇಲೆ ಅಮೆರಿಕಕ್ಕೆ ಯಾವತ್ತಿನಿಂದಲೂ ಕಣ್ಣಿದೆಯಷ್ಟೇ. ಈ ಹಿಂದೆ 1953-54ಕ್ಕಿಂತ ಮೊದಲು ಇರಾನ್ನ ತೈಲಬಾವಿಗಳನ್ನು ಅಮೆರಿಕದಲ್ಲಿನ ಬ್ರಿಟಿಷ್ ಕಂಪೆನಿಗಳು ನಿಯಂತ್ರಿಸುತ್ತಿದ್ದವು. ಆಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಾ ಸರಕಾರ ಉರುಳಿಸಿ ರೆಝಾ ಷಾ ಪಹ್ಲವಿ ಆಳ್ವಿಕೆಯನ್ನು ತಂದಿತು. ಅಮೆರಿಕ ತೈಲ ನಿಕ್ಷೇಪವಿರುವ ದೇಶಗಳಲ್ಲಿ ತನ್ನ ಕೈಗೊಂಬೆಯಾಗುವ ಸರಕಾರಗಳನ್ನೇ ವಿಶೇಷವಾಗಿ ರಾಜಮನೆತನಗಳ ಆಳ್ವಿಕೆಯನ್ನು ತರಲು ಮುಂದಾಗುತ್ತದೆ. ರೆಝಾ ಷಾ ಪಹ್ಲವಿ ಸರಕಾರ ಬಂದೊಡನೆ ಮತ್ತೆ ಅಮೆರಿಕದ ತೈಲ ಲೂಟಿ ಎಗ್ಗಿಲ್ಲದೆ ಮುಂದುವರಿಯಿತು. ಕೈಗೊಂಬೆ ಸರಕಾರದ ದುರಾಡಳಿತದಿಂದ ಬೇಸತ್ತು ಇರಾನ್ನ ಜನತೆ ದೊಡ್ಡ ಮಟ್ಟದಲ್ಲಿ ದಂಗೆ ಎದ್ದು 1979ರಲ್ಲಿ ರೆಝಾ ಷಾ ಪಹ್ಲವಿ ಸರಕಾರವನ್ನು ಪತನಗೊಳಿಸಿದರು. ಅಮೆರಿಕ ಮತ್ತೆ ತೈಲ ನಿಕ್ಷೇಪದಿಂದ ದೂರ ಸರಿಯುವಂತಾಯಿತು. ಆಯತುಲ್ಲಾ ರೂಹುಲ್ಲಾ ಖೊಮೇನಿ ನೇತೃತ್ವದ ಸರಕಾರ ಸ್ಥಾಪಿತವಾಗಿ ಧರ್ಮಾಧಾರಿತ ಆಡಳಿತ ನಡೆಸುತ್ತ ಬಂದಿತು. ಖೊಮೇನಿ ಆಡಳಿತ ಹಲವು ಅಪಸವ್ಯಗಳಿಗೆ ದಾರಿ ಮಾಡಿಕೊಟ್ಟಿತ್ತಾದರೂ ತಮ್ಮ ತೈಲಬಾವಿಗಳ ಮೇಲೆ ನಿಯಂತ್ರಣ ಸಾಧಿಸಿತ್ತು. ಅಮೆರಿಕಕ್ಕೆ ಇದುವೇ ನುಂಗಲಾರದ ತುತ್ತಾಗಿತ್ತು. ಹೇಗಾದರೂ ಮಾಡಿ ಈಗಿನ ಖಾಮಿನೈ ಆಡಳಿತವನ್ನು ಕಿತ್ತೆಸೆದು ಅಮೆರಿಕದಲ್ಲಿರುವ ರೆಝಾ ಷಾ ಪಹ್ಲವಿ ಮಗನಿಗೆ ಅಧಿಕಾರ ವರ್ಗಾಯಿಸುವ ಹುನ್ನಾರ ಮಾಡುತ್ತಿದೆ. ರೆಝಾ ಷಾ ಪಹ್ಲವಿ ಪುತ್ರನ ಆಡಳಿತ ಚಲಾವಣೆಗೊಂಡರೆ ತನ್ನ ತೈಲ ಲೂಟಿ ದಂಧೆಯನ್ನು ನಡೆಸಬಹುದೆಂಬ ಇರಾದೆ ಅಮೆರಿಕದ್ದು. ತನ್ನ ಕುಟಿಲ ಕಾರಸ್ಥಾನಗಳಿಗೆ ತಕ್ಕುದಾದ ಅಭಿಪ್ರಾಯಗಳನ್ನು ವಿಶ್ವದಾದ್ಯಂತ ಹರಿಬಿಡುತ್ತಿದೆ. ಇರಾನ್ ಒಂದು ದುಷ್ಟರಾಷ್ಟ್ರವೆಂಬ ಅಭಿಪ್ರಾಯವನ್ನು ಬಿತ್ತಿ ಬೆಳೆಯುತ್ತಿದೆ. ಅಲ್ಲಿ ಪ್ರಜಾಪ್ರಭುತ್ವವಿಲ್ಲ. ಜನರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ. ಮಹಿಳೆಯರನ್ನು ಎಲ್ಲದರಲ್ಲಿಯೂ ಹತ್ತಿಕ್ಕಲಾಗುತ್ತಿದೆ ಎಂಬ ಅಂಶಗಳು ವಿಶ್ವದಾದ್ಯಂತ ಬಿತ್ತಲಾಗುತ್ತಿದೆ. ಇದರಲ್ಲಿ ಹುರುಳಿಲ್ಲದಿಲ್ಲ. ಇರಾನ್ನಲ್ಲಿ ಧರ್ಮಾಧಾರಿತ ಆಳ್ವಿಕೆ ನಡೆಸಬೇಕೆಂಬ ದುರ್ಭಾವವೊಂದು ಮನೆ ಮಾಡಿಕೊಂಡಿದ್ದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಅಮೆರಿಕ ಇರಾನನ್ನು ವಿರೋಧಿಸುತ್ತಿರುವ ಕಾರಣ ಇದಲ್ಲ. ಈ ಎಲ್ಲ ಅಂಶಗಳು ಜಾಗತಿಕ ಮಟ್ಟದಲ್ಲಿ ಇರಾನನ್ನು ದುಷ್ಟರಾಷ್ಟ್ರವೆಂದು ಬಿಂಬಿಸಲು ಒದಗಿ ಬಂದಿರುವ ಮುಖವಾಡಗಳು. ಅಸಲಿಗೆ ಇರಾನ್ನಲ್ಲಿರುವ ಅಗಾಧ ತೈಲಬಾವಿಗಳ ಮೇಲೆ ನಿಯಂತ್ರಣ ಸಾಧಿಸುವುದೇ ಅಮೆರಿಕದ ಗುರಿ ಎಂಬುದು ಈಗ ಜಗತ್ತಿಗೆ ಮನವರಿಕೆಯಾಗಿದೆ. ಆದರೆ ಭಾರತ ಮಾತ್ರ ತನಗೇನೂ ಗೊತ್ತಿರದಂತೆ ಮುಗುಮ್ಮಾಗಿ ವರ್ತಿಸುವುತ್ತಿರುವುದಕ್ಕೆ ಬೇರೆಯದೇ ಕಾರಣಗಳಿವೆ. ದೇಶದಲ್ಲಿ ಮುಸ್ಲಿಮ್ ವಿರೋಧಿ ಭಾವನೆಯನ್ನು ಇನ್ನಷ್ಟು ಹುರಿಗಟ್ಟಿಸಬೇಕೆಂಬ ದುಷ್ಟ ಹುನ್ನಾರದ ಭಾಗವಾಗಿ ಅಮೆರಿಕವನ್ನು ಓಲೈಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಬಹುದೆಂದು ಭಾವಿಸಿದ ಆರೆಸ್ಸೆಸ್, ಬಿಜೆಪಿಗಳಿಗೆ ಅಧಿಕಾರ ಮುಖ್ಯವೇ ಹೊರತು ತನ್ನ ಪ್ರಜೆಗಳ ಯೋಗಕ್ಷೇಮವಲ್ಲ. ಹೀಗಾಗಿಯೇ ಭಾರತ ಅಮೆರಿಕಕ್ಕೆ ಡೊಗ್ಗು ಸಲಾಮು ಹೊಡೆಯುವುದಷ್ಟೇ ಅಲ್ಲ. ಅದರ ಧಮಕಿಗೆ ಅಂಜಿ ಕುಸಿಯುತ್ತಿದೆ. ಅಮೆರಿಕ ಭಾರತದ ಮೇಲೆ ಹೇರಿದ ಟ್ಯಾರಿಫ್, ಭಾರತೀಯರನ್ನು ಟ್ರಂಪ್ ಕೈ ಕೋಳ ಹಾಕಿ ಹೆಡೆಮುರಿ ಕಟ್ಟಿ ವಾಪಸ್ ಕಳಿಸಿದ್ದು, ರಶ್ಯ, ಇರಾನ್ಗಳಿಂದ ತೈಲ ಖರೀದಿಸದಂತೆ ದಿಗ್ಬಂಧನ ವಿಧಿಸಿದ್ದು, ಪಾಕಿಸ್ತಾನದ ಮೇಲಿನ ದಾಳಿಯನ್ನು ಟ್ರಂಪ್ ತಾನೇ ನಿಲ್ಲಿಸಿದ್ದಾಗಿ ಹೇಳಿದ್ದು. ಹೀಗೆ ಅಮೆರಿಕ ಭಾರತವನ್ನು ಹೆಜ್ಜೆ ಹೆಜ್ಜೆಗೂ ನಿಯಂತ್ರಿಸುತ್ತಿರುವುದು ಅರಿಯದ್ದೇನಲ್ಲ. ಇದೆಲ್ಲವೂ ದೇಶದ ಹಿತಕ್ಕಾಗಿಯೇ ಎಂದು ನಂಬಿಕೊಂಡು ಬರುತ್ತಿರುವ ಮಬ್ಭಕ್ತರ ಭಜನೆಯಲ್ಲಿ ದೇಶ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗುವುದಂತೂ ಖಚಿತ. ವಚನಕಾರ ಅಲ್ಲಮನ ಕ್ಷಮೆ ಕೋರಿ ಹೇಳುವುದಾದರೆ ಹೊನ್ನಿಗಾಗಿ ಸತ್ತವರು ಕೋಟಿ ಕೋಟಿ, ಹೆಣ್ಣಿಗಾಗಿ ಸತ್ತವರು ಕೋಟಿ ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಕೋಟಿ. ಈಗ ಎಣ್ಣೆಗಾಗಿ ಸಾಯಿಸಲ್ಪಡುತ್ತಿರುವವರು ಕೋಟ್ಯಾನು ಕೋಟಿ ಎಂಬ ಹೊಸ ಸಾಲೊಂದನ್ನು ಸೇರಿಸಿ ನೋಡಬೇಕೆನಿಸುತ್ತದೆ. ಅಮೆರಿಕ, ಇಸ್ರೇಲ್ ದೇಶಗಳು ಇರಾನ್ನ ಜನತೆಯನ್ನು ಮಾತ್ರ ಕೊಲ್ಲುತ್ತಿಲ್ಲ. ಅದು ತನ್ನ ದೇಶದ ನಾಗರಿಕರನ್ನು ಸಾವಿನ ದವಡೆಗೆ ನೂಕುತ್ತಿದೆ. ಬಸವಣ್ಣನವರ ‘ಕೊಂದವರುಳಿವರೆ ಕೂಡಲಸಂಗಮದೇವಾ’ ಎಂಬ ಮಾತೀಗ ಅನುರಣಿತವಾಗುತ್ತಿದೆ.
Bagalakote | ಯುವಕನನ್ನು ಕೊಲೆಗೈದು ಕಾರಿನ ಜೊತೆ ಸುಟ್ಟು ಹಾಕಿದ ದುಷ್ಕರ್ಮಿಗಳು
ಬಾಗಲಕೋಟೆ: ಯುವಕನೋರ್ವನನ್ನು ಕೊಲೆಗೈದು ಮೃತದೇಹವನ್ನು ಆತನದ್ದೇ ಕಾರಿನಲ್ಲಿರಿಸಿ ಸುಟ್ಟು ಹಾಕಿದ ಬೆಚ್ಚಿ ಬೀಳಿಸುವ ಘಟನೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ಬಳಿ ಸೋಮವಾರ ಸಂಜೆ ನಡೆದಿದೆ. ಸೋಮಲಿಂಗ ಪಡಸಲಗಿ (36) ಕೊಲೆಯಾದ ಯುವಕ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸೋದರ ಸಂಬಂಧಿಯಿಂದಲೇ ಸೋಮಲಿಂಗ ಅವರ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೃತರ ಸೋದರ ಸಂಬಂಧಿ ಸದಾಶಿವ ಪಡಸಲಗಿ, ರವಿ ಪಾಟೀಲ ಹಾಗೂ ನವಿ ಎಂಬವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ. ಘಟನೆ ವಿವರ: ಸೋಮಲಿಂಗ ಪಡಸಲಗಿ ಸೋಮವಾರ ಸಂಜೆ ಹೊಸ ಕಾರು ಖರೀದಿಸಿ ಪೂಜೆ ಸಲ್ಲಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೊಲೆ ನಡೆದಿದೆ. ಸಾವಳಗಿ ಜಂಕ್ಷನ್ ಬಳಿ ಕಾಯ್ದು ಕುಳಿತಿದ್ದ ಸೋಮಲಿಂಗ ಅವರ ದೊಡ್ಡಪ್ಪನ ಮಗ ಸದಾಶಿವ ಪಡಸಲಗಿ ಹಾಗೂ ಇತರರು ಸೋಮಲಿಂಗ ಅವರ ಕಾರನ್ನು ಅಡ್ಡಗಟ್ಟಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮಾರಕಾಯುಧಗಳಿಂದ ಇರಿದು ಸೋಮಲಿಂಗರನ್ನು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಕಾರಿನಲ್ಲಿರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಡ್ಯ: ಮತ್ತೆ ಭ್ರೂಣಲಿಂಗ ಪರೀಕ್ಷೆ ಬಯಲು
ಮಂಡ್ಯ : ಜಿಲ್ಲೆಯ ಹಲವೆಡೆ ನಿಯಮ ಉಲ್ಲಂಘಿಸಿ ಹೆಣ್ಣುಭ್ರೂಣ ಪತ್ತೆ ನಡೆಸಿರುವುದು ಲೋಕಾಯುಕ್ತ ಪೊಲೀಸರು ಕಳೆದ ಶುಕ್ರವಾರ ನಡೆಸಿದ ದಾಳಿಯಿಂದ ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಬಯಲಾಗಿದ್ದ ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳಿಂದ ಜಿಲ್ಲೆಗೆ ಕಳಂಕ ಮೆತ್ತಿಕೊಂಡಿತ್ತು. ಆ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದರೂ, ಮತ್ತೆ ಮರುಕಳಿಸಿರುವುದು ಆತಂಕ ಮೂಡಿಸಿದೆ. ಕೆ.ಆರ್.ಪೇಟೆ ತಾಲೂಕು ಕುಪ್ಪಹಳ್ಳಿ ಗ್ರಾಮದ ಕೆ.ಎನ್.ಮಂಜುನಾಥ ಅವರು ಕೆ.ಆರ್.ಪೇಟೆ ಪಟ್ಟಣದ ನಾವಿ ಡಯಾಗೋಸ್ಟಿಕ್ ಸೆಂಟರ್ ಮತ್ತು ಕುಶಾಲ್ ಡಾಂಗೋಸ್ಟಿಕ್ ಸೆಂಟರ್ಗಳಲ್ಲಿ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದರ ಬಗ್ಗೆ ರಾಜ್ಯ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶೋಧ ನಡೆಸಿ ವರದಿ ನೀಡುವಂತೆ ಉಪಲೋಕಾಯುಕ್ತ ಬಿ.ವೀರಪ್ಪ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದರು. ಉಪಲೋಕಾಯುಕ್ತರ ಆದೇಶದಂತೆ ಜಿಲ್ಲಾಸ್ಪತ್ರೆ ಮತ್ತು ಎಲ್ಲಾ ತಾಲೂಕು ಸರಕಾರಿ ಆಸ್ಪತ್ರೆಗಳು ಒಳಗೊಂಡಂತೆ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ, ಅಕ್ರಮವಾಗಿ ಹೆಣ್ಣುಭ್ರೂಣ ಪತ್ತೆ ಕಾರ್ಯ ನಡೆಸಿರುವುದು ಬಹಿರಂಗಗೊಂಡಿದೆ. ಈ ಸಂಬಂಧ ಹಲವು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ಗಳ ಮಾಲಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. 31 ಬಾಲಗರ್ಭಿಣಿಯರಿಗೆ ಭ್ರೂಣಲಿಂಗ ಪತ್ತೆ: ಕೆ.ಆರ್.ಪೇಟೆ ಪಟ್ಟಣದ ಎರಡು ಖಾಸಗಿ ಡಯಾಗ್ನಾಸ್ಟಿಕ್ ಸೆಂಟರ್ಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ 31 ಬಾಲಗರ್ಭಿಣಿಯರಿಗೆ ಭ್ರೂಣಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ. ನಾವಿ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 2024ನೇ ಸಾಲಿನಲ್ಲಿ 19 ಮತ್ತು 2025ನೇ ಸಾಲಿನಲ್ಲಿ 5 ಒಟ್ಟು 24 ಬಾಲ ಗರ್ಭಿಣಿಯರಿಗೆ ಹಾಗೂ ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 7 ಬಾಲ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿರುವುದು ಪತ್ತೆಯಾಗಿದೆ. ಕುಶಾಲ್ ಡಯಾಗ್ನಾಸ್ಟಿಕ್ ಸೆಂಟರ್ನಲ್ಲಿ 2018ನೇ ಸಾಲಿನಿಂದ ಈವರೆಗೆ 10,101 ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿದ್ದು, ಈ ಪೈಕಿ ಕೇವಲ 3,629 ಪ್ರಕರಣಗಳ ಮಾಹಿತಿಯನ್ನು ಮಾತ್ರ ರಿಜಿಸ್ಟರ್ನಲ್ಲಿ ನಮೂದಿಸಲಾಗಿದೆ. ಉಳಿದ 6,472 ಸ್ಕ್ಯಾನಿಂಗ್ ವಿವರಗಳನ್ನು ನಮೂದಿಸಿಲ್ಲ. 18 ವರ್ಷದೊಳಗಿನ (ಅಪ್ರಾಪ್ತ ವಯಸ್ಸಿನ) ಹೆಣ್ಣು ಮಕ್ಕಳು ಸ್ಕ್ಯಾನಿಂಗ್ಗೆ ಬಂದರೆ ಪೋಕ್ಸೊ ಕಾಯ್ದೆ ಪ್ರಕಾರ ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತರಬೇಕು. ಆದರೆ, ಸ್ಕ್ಯಾನಿಂಗ್ ಸೆಂಟರ್ನವರು ಇದನ್ನು ಉಲ್ಲಂಘಿಸಿ ಸ್ಕ್ಯಾನಿಂಗ್ ಮಾಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಎಚ್.ಡಿ.ಸುನಿಲ್ಕುಮಾರ್, ಮೈಸೂರಿನ ಡಿವೈಎಸ್ಪಿ ವೆಂಕಟೇಶ್, ಬೆಂಗಳೂರು ದಕ್ಷಿಣ ಜಿಲ್ಲೆಯ ಡಿವೈಎಸ್ಪಿ ಶಿವಪ್ರಸಾದ್, ಮಂಡ್ಯ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಬಿ.ಪಿ.ಬ್ಯಾಟರಾಯಗೌಡ, ಲೇಪಾಕ್ಷಮೂರ್ತಿ, ಇತರೆ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು. ಸರಕಾರಿ ಆಸ್ಪತ್ರೆಯಲ್ಲಿ ಯಂತ್ರವಿದ್ದರೂ ತಜ್ಞರಿಲ್ಲ ಮಂಡ್ಯ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಯಂತ್ರಗಳಿವೆ. ಆದರೆ, ನಿರ್ವಹಣೆಗೆ ರೇಡಿಯಾಲಜಿಸ್ಟ್ಗಳು ಇಲ್ಲ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಕ್ರಮವಹಿಸಿಲ್ಲ. ಇದನ್ನೇ ನೆಪಮಾಡಿಕೊಂಡು ಸರಕಾರಿ ಆಸ್ಪತ್ರೆ ವೈದ್ಯರು ಗರ್ಭಿಣಿಯರನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಶಿಫಾರಸು ಮಾಡುತ್ತಿದ್ದಾರೆ ಎಂಬುದಾಗಿ ಲೋಕಾಯುಕ್ತ ಪೊಲೀಸರು ವರದಿಯಲ್ಲಿ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ನೀವು ಕೊಡುವ ಫ್ರೀಬೀಸೂ ಬೇಕು, ಕೆಲಸವೂ ಬೇಕು, ತಮಿಳು ಅಸ್ಮಿತೆಯೂ ಬೇಕು : ಯುವ ಸಮುದಾಯದ ಮನಸ್ಥಿತಿ
ದ್ರಾವಿಡ ಸಂಸ್ಕೃತಿಯ ಶ್ರೀಮಂತ ಹರವು ಹೊಂದಿರುವ ತಮಿಳುನಾಡಿನ ರಾಜಕೀಯ ಚಿತ್ರಣವು ದೇಶದ ಇತರ ಭಾಗಗಳಿಗಿಂತ ವಿಭಿನ್ನ ಹಾಗೂ ಸಂಕೀರ್ಣವಾಗಿದೆ. ಇಲ್ಲಿ ಕೇವಲ ಚೆನ್ನೈ ಮಾತ್ರವಲ್ಲದೆ ಕೊಯಮತ್ತೂರು, ಮದುರೈ ಮತ್ತು ಕಾಂಚಿಪುರಂನಂತಹ ನಗರಗಳು ಕೈಗಾರಿಕಾ ಕೇಂದ್ರಗಳಾಗಿ ಬೆಳೆದಿರುವುದು ರಾಜ್ಯದ ಆರ್ಥಿಕ ಶಕ್ತಿಯನ್ನು ಸಾಬೀತುಪಡಿಸುತ್ತದೆ. ಈ ಬೆಳವಣಿಗೆಯ ಹಿಂದೆ ಸ್ಥಳೀಯರ ಕಾಯಕ ನಿಷ್ಠೆ ಮತ್ತು ಶ್ರಮದ ದೊಡ್ಡ ಪಾಲಿದೆ.
ಕೋಲಾರದಲ್ಲಿ 'ಆರೋಗ್ಯ ಕವಚ'ಕ್ಕೆ ಅನಾರೋಗ್ಯ: ಕೆಟ್ಟು ನಿಂತ ಆಂಬ್ಯುಲೆನ್ಸ್ಗಳು, ಸಿಬ್ಬಂದಿಯಿಲ್ಲದೆ ರೋಗಿಗಳ ಪರದಾಟ!
ಕೋಲಾರದಲ್ಲಿ ಆರೋಗ್ಯ ಕವಚವಾಗಿರಬೇಕಾದ ಆಂಬ್ಯುಲೆನ್ಸ್ ಗಳು ಕೆಟ್ಟು ನಿಂತಿದ್ದು,ಸಿಬ್ಬಂದಿ ಕೊರತೆ ಹಾಗೂ ಸಮರ್ಪಕ ಸೇವೆಯ ಕೊರತೆಯಿಂದಾಗಿ ರೋಗಿಗಳು ಹಾಗೂ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ನಿರ್ಮಾಣದ ಬಳಿಕ ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದ್ದು, ಸೂಕ್ತ ಆಂಬ್ಯುಲೆನ್ಸ್ ಸೇವೆಯಿಲ್ಲದೆ, ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ದಾಖಲಾಗುವಂತಹ ದಯನೀಯ ಸ್ಥಿತಿಯಿದ್ದು, ಕೆಲವೊಮ್ಮೆ ಪ್ರಥಮ ಚಿಕಿತ್ಸೆ ಲಭಿಸದೆ ಗಾಯಾಳುಗಳು ಸಾವನ್ನಪ್ಪಿರುವ ಘಟನೆ ನಡೆಯುತ್ತಿವೆ. ಈ ಕುರಿತು ಮಾಹಿತಿ ಇಲ್ಲಿದೆ..
ನದಿ, ಕೆರೆಗಳಲ್ಲಿ ಮಕ್ಕಳು ಈಜಲು ಹೋಗದಂತೆ ಪೋಷಕರ ಕಟ್ಟೆಚ್ಚರ ಅಗತ್ಯ
ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಹವಮಾನಕ್ಕೆ ಹೊಂದಿರುವ ವೈಶಿಷ್ಟ ಜಿಲ್ಲೆ ಚಾಮರಾಜನಗರ ಜಿಲ್ಲೆ. ಇದೀಗ ಈ ಜಿಲ್ಲೆಯಲ್ಲಿ ಮಿತಿ ಮೀರಿದ ತಾಪಮಾನ ಅಧಿಕಾವಾಗಿದ್ದು, ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಬಳಕೆ ಮಾಡಿಕೊಳ್ಳುವ ಸಮಯವಿದು. ಬಿಸಿಲಿನ ತಾಪಮಾನದಿಂದ ಪಾರಾಗಲು ನೀರಿಗಿಳಿದು ಜಲಕ್ರೀಡೆಯಲ್ಲಿ ತೊಡಗುವವರೇ ಹೆಚ್ಚು. ಇದೀಗ ಶಾಲೆಗಳಿಗೆ ಬೇಸಿಗೆ ರಜೆ ಇದೆ, ಪ್ರಸ್ತುತ ಶಾಲೆಯಲ್ಲಿ ವ್ಯಾಸಾಂಗ ಮಾಡುವ ಮಕ್ಕಳು ಬೇಸಿಗೆ ರಜೆಗೆಂದು ಸಂಬಂಧಿಕರ ಮತ್ತು ನೆಂಟರಿಷ್ಟರ ಮನೆಗೆ ತೆರಳುವುದು ವಾಡಿಕೆ . ಅದರಲ್ಲೂ ಗ್ರಾಮಾಂತರ ಪ್ರದೇಶಕ್ಕೆ ಹೆಚ್ಚಾಗಿ ಮಕ್ಕಳು ಬೇಸಿಗೆಯಲ್ಲಿ ಸಮಯ ಕಳೆಯುವುದುಂಟು. ಆವೇಳೆಯಲ್ಲಿ ಮಕ್ಕಳು ಮೋಜಿಗಾಗಿ ನೀರಿಗಿಳಿಯುವುದುಂಟು. ಅದೆಷ್ಟೋ ಮಕ್ಕಳಿಗೆ ಈಜು ಬಾರದೆ ನೀರು ಪಾಲಾಗಿರುವ ಘಟನೆಗಳು ನಡೆದಿದೆ. ಜಿಲ್ಲೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳು ಪ್ರತಿ ವರ್ಷ ವರದಿಯಾಗುತ್ತಲೇ ಇವೆ. ಬಿಸಿಲುಗಾಲ ಸೃಷ್ಟಿಸುತ್ತಿರುವ ಸಾವಿನ ಬಲೆಯೇ ಈಜು-ಮೋಜು. ಜಿಲ್ಲಾ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2025ರಲ್ಲಿ 31 ಜನರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತೆರೆದ ಬಾವಿ, ಕೆರೆ, ನದಿ, ಕೃಷಿ ಕೆರೆ ನೀರಿನಲ್ಲಿ ಹುಡುಗರು ಈಜಾಡಲು ಇಳಿಯುತ್ತಿರುವುದು. ಹೊಂಡಗಳಿಗೆ ಇಳಿದು ಈಜಲು ಹೋದವರು ನೀರುಪಾಲಾಗಿದ್ದಾರೆ. ಕಾಲು ಜಾರಿ ಅಥವಾ ಜಾನುವಾರುಗಳನ್ನು ತೊಳೆಯುವಾಗ ಅಚಾನಕ್ ಆಗಿ ನೀರಿಗೆ ಬಿದ್ದು ಜೀವ ಕಳೆದುಕೊಂಡವರೂ ಇದರಲ್ಲಿ ಸೇರಿಕೊಂಡಿದ್ದಾರೆ. ನೀರಿಗಿಳಿದು ಮೃತಪಟ್ಟವರು: 2024ರ ಎ.5ರಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಜಲಾಶಯದಲ್ಲಿ ಬಟ್ಟೆ ಒಗೆಯಲುಹೋಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದರು. ಪುದೂರಿನ ಮೀನಾ(34) ಮತ್ತು ಇವರ ಮಕ್ಕಳಾದ ಪವಿತ್ರಾ(14), ಕೀರ್ತಿ(11) ಮೃತಪಟ್ಟರು. ಇವರೊಂದಿಗೆ ಹೋಗಿದ್ದ ಮತ್ತೊಬ್ಬ ಮಗ ಸುರೇಂದ್ರನಿಂದ ತಾಯಿ ಮತ್ತು ಸಹೋದರಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಆಕಸ್ಮಿಕ ಸಾವಿಗೆ ಉದಾಹರಣೆಯಾಗಿದೆ. ಇನ್ನು ಈಜಲು ಹೋಗಿ ಪ್ರಾಣ ಕಳೆದುಕೊಂಡ ಪ್ರಕರಣಗಳಲ್ಲಿ ಕಳೆದ ವರ್ಷ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮೇದನಿ ಗ್ರಾಮದ ಕಾವೇರಿ ನದಿಯಲ್ಲಿ ಕೊಳ್ಳೇಗಾಲದ ದೇವಾಂಗಪೇಟೆಯ ಭರತ್(17) ಮತ್ತು ಲಿಖಿತ್ (17) ಈಜಲು ಹೋಗಿ ನೀರು ಪಾಲಾದರು. ಕೊಳ್ಳೇಗಾಲದ ಶಿವನಸಮುದ್ರ ವೆಸ್ಲಿ ಸೇತುವೆ ಬಳಿ ಈಜಲು ಹೋಗಿ ಬೆಂಗಳೂರಿನ ಜೆ.ಪಿ.ನಗರದ ನಿವಾಸಿ ಶಾಹಿಲ್ ಪಾಷಾ(23) ನೀರಿನಲ್ಲಿ ಮುಳುಗಿ ಮೃತಪಟ್ಟ. ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಕೆರೆಯಲ್ಲಿ ಅಭಯ್ ಗೌಡ (13), ಕೃಷ್ಣಾಪುರದ ವೃಷಭೇಂದ್ರ (14) ಮೃತರಾದರು. ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ತಮ್ಮಡಹಳ್ಳಿ ಕೆರೆಯಲ್ಲೂ ಕಳೆದ ಕೆಲವು ವರ್ಷಗಳ ಹಿಂದೆ ನೀರಿಗಿಳಿದು ನಾಲ್ಕು ಮಂದಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕೃಷಿ ಹೊಂಡ ಮೃತ್ಯುಕೂಪ: ಸುಡು ಬಿಸಿಲಿನಲ್ಲಿ ತಣ್ಣನೆಯ ಅನುಭವ ಪಡೆಯಲು ಕೃಷಿ ಹೊಂಡಕ್ಕೆ ಇಳಿದವರು ಮೃತ್ಯುಕೂಪದಲ್ಲಿ ಸಿಲುಕಿ ಪ್ರಾಣ ಬಿಟ್ಟಿರುವ ಅನೇಕ ಉದಾರಹಣೆಗಳು ಜಿಲ್ಲೆಯಲ್ಲಿ ಇವೆ. 2025ರ ಜೂನ್ನಲ್ಲಿ ಚಾಮರಾಜನಗರ ಜಿಲ್ಲೆಯ ಹನೂರಿನ ಆನೆಗುಂದಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಪಿ.ಜಿ.ಪಾಳ್ಯದ ಚಾಮರಾಜು(25), ಆಕಾಶ್(22) ಮೃತಪಟ್ಟಿದ್ದರು. ಇದಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ನೀರುಪಾಲಾದ ದುರ್ಘಟನೆ ನಡೆದಿತ್ತು. ಜಲಕ್ರೀಡೆಗೂ ಮುನ್ನ ಜಾಗೃತಿ ವಹಿಸಿ: ಸುಡುವ ಬೇಸಿಗೆ ನೀರಿಗೆ ಇಳಿಯುವಂತೆ ಪ್ರೇರೇಪಿಸುತ್ತಿದೆ. ಬೇಸಿಗೆ ರಜೆಯ ಆರಂಭವನ್ನು ಮಜವಾಗಿ ಕಳೆಯಲು ಶುರು ಮಾಡಿರುವ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ನೀರಿಗೆ ಇಳಿಯುವ ಮುನ್ನ ಎಚ್ಚರವಹಿಸಬೇಕಾಗಿದೆ. ನೀರಿನ ಆಳ, ಸುಳಿಯ ಬಗ್ಗೆ ತಿಳಿಯದೆ ಸ್ನೇಹಿತರೊಂದಿಗೆ ಆಟವಾಡುತ್ತಾ ಜೀವಕ್ಕೆ ಅಪಾಯ ತಂದುಕೊಳ್ಳುವ ಭೀತಿ ಇದೆ. ಈ ಕಾರಣಕ್ಕೆ ಬೇಸಿಗೆಯಲ್ಲಿ ಪಾಲಕರು ಮಕ್ಕಳನ್ನು ಸ್ನೇಹಿತರೊಂದಿಗೆ ಹೊರಗೆ ಕಳುಹಿಸುವ ಮುನ್ನ ಎಚ್ಚರವಹಿಸುವ ಅಗತ್ಯವಿದೆ. ಕಳೆದ ವರ್ಷ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ 31 ಇದ್ದು, 2026ರ ಜನವರಿಯಿಂದ ಈವರೆಗೆ ಅದಾಗಲೇ ನೀರಿನಲ್ಲಿ ಮುಳುಗಿ ಸತ್ತವರ ಸಂಖ್ಯೆ 4ಕ್ಕೇರಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೇನಕಲ್ ಫಾಲ್ಸ್ಗೆ ಕುಟುಂಬ ಸಮೇತ ಹೋಗಿದ್ದ ಯಳಂದೂರಿನ ಗುಂಬಳ್ಳಿ ಗ್ರಾಮದ ನಿವಾಸಿ ಲಿಂಗರಾಜು(42) ಈಜಲು ನೀರಿಗೆ ಇಳಿದು ಸುಳಿಗೆ ಸಿಲುಕಿ ಮೃತಪಟ್ಟರು. ಜಿಲ್ಲೆಯ ಕೆರೆಗಳು, ನದಿಯಲ್ಲಿ ನೀರುಪಾಲಾಗುತ್ತಿರುವವರು ಸಾಲಿನಲ್ಲಿ ಮತ್ಯಾವ ಕುಟುಂಬದ ಕುಡಿ ಇದೆಯೋ ಜವರಾಯನೇ ಬಲ್ಲ. ಬೇಸಿಗೆ ಸಮಯದಲ್ಲಿ ಮಕ್ಕಳು ಮೋಜಿಗಾಗಿ ಈಜಲು ಕೆರೆ, ಕಟ್ಟೆ, ನದಿ, ತೆರೆದ ಬಾವಿಗಳಿಗೆ ಹೋಗುತ್ತಾರೆ. ಅಲ್ಲಿ ಯಾವುದೇ ರೀತಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದಿಲ್ಲ. ಈಜು ಬಾರದೆ ಇದ್ದರೂ ನೀರಿಗಿಳಿಯುವ ದುಸ್ಸಾಹಸ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಅವಘಡ ಸಂಭವಿಸುತ್ತದೆ. ಇದರ ಬದಲು ಈಜು ತರಬೇತಿ ಪಡೆಯಲು ಸೇರಿಕೊಳ್ಳುವುದು ಉತ್ತಮ. -ಹರೀಶ್ ಕುಮಾರ್, ಪ್ರಭಾರ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ, ಚಾಮರಾಜನಗರ ಮಕ್ಕಳ ಮೇಲೆ ಪಾಲಕರು ಭವಿಷ್ಯದ ಭರವಸೆ ಇಟ್ಟುಕೊಂಡಿರುತ್ತಾರೆ. ಈಜಾಟದ ಮೋಜು, ಮನರಂಜನೆಗಾಗಿ ಜೀವ ಬಲಿಯಾಗಬಾರದು. ಸುಡು ಸುಡು ಬಿಸಿಲಿನ ತಾಪ ಪರಿಹಾರದ ನಿಟ್ಟಿನಲ್ಲಿ ತಣ್ಣಗೆ ನೀರಿಗಿಳಿದು ಈಜುವ ಮೋಜು ಖುಷಿ ಕೊಡುತ್ತದೆ. ಜತೆಗೆ ಗೊತ್ತಿಲ್ಲದಂತೆ ಪ್ರಾಣವನ್ನೂ ಬಲಿ ಪಡೆದುಕೊಳ್ಳುತ್ತಿದೆ. ಬೇಸಿಗೆ ರಜೆಯಲ್ಲಿ ನೀರಿನಲ್ಲಿ ಇಳಿದು ಈಜಾಡುವುದೊಂದೇ ಆಟವಲ್ಲ. ಮಕ್ಕಳು ಕಾಲ ಕಳೆಯಲು ಹಲವು ಆಟಗಳಿವೆ. ಈಜಲು ಹೋಗಿ ಆಗಿರುವ ದುರಂತಗಳಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಿಕೊಡಬೇಕು. -ವಿ.ಶ್ರೀನಿವಾಸಪ್ರಸಾದ್, ಜಿಲ್ಲಾ ನೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ, ಚಾಮರಾಜನಗರ
ಬಸವಲಿಂಗಪ್ಪ 102: ಕನ್ನಡದ ನೆಲದಲ್ಲಿ ಚಳವಳಿಯ ಬೇರು
ಬಿ.ಬಸವಲಿಂಗಪ್ಪನವರು ಕೈಗೊಂಡ ಸುಧಾರಣಾಕ್ರಮಗಳು ಮೇಲ್ವರ್ಗದ ಹಿಂದೂಗಳ ಮನಸ್ಸಿನಲ್ಲಿ ಅವರನ್ನು ವಿರೋಧಿಸುವ ಮನೋಭಾವವನ್ನು ಬೆಳೆಸಿತು. ಇವರನ್ನು ಹೀಗೆ ಬಿಟ್ಟರೆ ತಮಗೆ ಉಳಿಗಾಲವಿಲ್ಲ ಎಂದು ತಿಳಿದು ಬೂಸಾ ಚಳವಳಿಯಲ್ಲಿ ಬಸವಲಿಂಗಪ್ಪ ಅವರನ್ನು ಬಲಿ ತೆಗೆದುಕೊಂಡರು. ಒಂದು ಕಡೆ ಇದರಿಂದ ದಲಿತರಿಗೆ ನಷ್ಟ ಉಂಟಾದರೂ ಆನಂತರದ ದಿನಗಳಲ್ಲಿ ಜಾಗೃತಿ ಮೂಡಿಸಿದಂತಾಯಿತು. ಕನ್ನಡ ನಾಡಿನಲ್ಲಿ ನಡೆದಿರುವ ಪ್ರಗತಿಪರ ಚಳವಳಿಗಳಲ್ಲಿ ಬೂಸಾ ಪ್ರಮುಖವಾದದ್ದು. 1970ರ ದಶಕದಲ್ಲಿ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿದ ಚಳವಳಿ ಇದಾಗಿದೆ. ಈ ಚಳವಳಿಯ ಕೇಂದ್ರ ಬಿಂದು ಬಿ.ಬಸವಲಿಂಗಪ್ಪ. ಇವರು ದಲಿತ ಸಮುದಾಯದಲ್ಲಿ ಹುಟ್ಟಿ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ನಿರ್ದಿಷ್ಟ ಛಾಪನ್ನು ಮೂಡಿಸಿರುವವರಾಗಿದ್ದಾರೆ. ಕರ್ನಾಟಕ ರಾಜ್ಯದ ಸಚಿವರಾಗಿ ಅನೇಕ ಜವಾಬ್ದಾರಿಯುತ ಖಾತೆಗಳನ್ನು ನಿರ್ವಹಿಸಿ ಜನಪರವಾದ ಸೇವೆ ಸಲ್ಲಿಸಿ ಅಭಿವೃದ್ಧಿಗಾಗಿ ದುಡಿದಿದ್ದಾರೆ. 1957ರಲ್ಲಿ ಶಾಸನ ಸಭೆಯನ್ನು ಪ್ರವೇಶಿಸಿ 1958ರಲ್ಲಿ ಉಪಗೃಹಮಂತ್ರಿಯಾಗಿ ದಕ್ಷತೆಯಿಂದ ದಲಿತ ನಾಯಕತ್ವಕ್ಕೆ ಬುನಾದಿ ಹಾಕಿದರು. 1972ರಲ್ಲಿ ಡಿ.ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ಪೌರಾಡಳಿತ ಮತ್ತು ವಸತಿ ಸಚಿವರಾಗಿ ಬಿ.ಬಸವಲಿಂಗಪ್ಪ ಅವರು ನೇಮಕಗೊಂಡು ದೇಶದಲ್ಲೇ ಪ್ರಥಮ ಬಾರಿಗೆ ದಲಿತರು ತಲೆ-ತಲಾಂತರಗಳಿಂದ ಊರವರು ಮಾಡಿದ ಮಲ-ಮೂತ್ರಗಳನ್ನು ತಲೆಯ ಮೇಲೆ ಹೊತ್ತು ಸಾಗಿಸುವ ಅಮಾನವೀಯ ಪದ್ಧತಿಯನ್ನು ರದ್ದುಮಾಡಿ ಇಡೀ ದೇಶದ ಗಮನ ಸೆಳೆದವರು. ನವೆಂಬರ್ 19, 1973 ರಂದು ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ಸಂಸ್ಥೆ ಏರ್ಪಡಿಸಿದ್ದ ‘ಹೊಸ ಅಲೆಗಳು’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಾಗ ಮೊದಲಿಗೆ ಲಾಯರ್ ಸಂಜೀವಯ್ಯ ಅವರು ಇಂಗ್ಲಿಷ್ನಲ್ಲಿ ಭಾಷಣ ಮಾಡಲು ತೊಡಗಿದರಂತೆ, ನೆರದಿದ್ದ ಸಭಿಕರಲ್ಲಿ ಕೆಲವರು ಸಂಜೀವಯ್ಯ ಅವರ ವಿರುದ್ಧ ‘ಕನ್ನಡ... ಕನ್ನಡ...’ ಎಂದು ಕೂಗುತ್ತಿದ್ದರಂತೆ. ಅದಕ್ಕೆ ಸಂಜೀವಯ್ಯ ಅವರು ಇಂಗ್ಲಿಷ್ನಲ್ಲೇ ಭಾಷಣ ಮುಂದುವರಿಸಿದರಂತೆ. ಅವರ ಮನಸ್ಸಿನಲ್ಲಿ ಏನಿತ್ತೊ? ಎಸ್ಸಿ/ಎಸ್ಟಿಗಳೂ ಕೂಡ ಇಂಗ್ಲಿಷ್ನಲ್ಲಿ ವಿದ್ವತ್ ಪೂರ್ಣವಾಗಿ ಮಾತನಾಡಬಲ್ಲರೆಂಬ ಮಾದರಿಗೆ ಸಂಕೇತವೆಂಬಂತೆ ಮಾತನಾಡಿದರೋ?. ನಂತರದ ಭಾಷಣವನ್ನು ಬಿ. ಬಸವಲಿಂಗಪ್ಪ ಅವರು ಮಾತಿಗೆ ತೊಡಗಿದ ಕೊಂಚ ಸಮಯದಲ್ಲಿ ಸಂಜೀವಯ್ಯನವರು ಮಾಡಿದ ಇಂಗ್ಲಿಷ್ ಭಾಷಣ ಹಾಗೂ ಅದಕ್ಕೆ ಅಡ್ಡಿಪಡಿಸಿದ ಕನ್ನಡಾಭಿಮಾನಿಗಳ ವರಸೆ ಎಲ್ಲವನ್ನು ಗ್ರಹಿಕೆಗೆ ತಂದುಕೊಂಡು ಏರಿದ ದನಿಯಲ್ಲಿ ‘‘ಕನ್ನಡದಲ್ಲೇನಿದೆ.. ಅದರಲ್ಲಿ ಬಹುಪಾಲು ಬೂಸಾ...’’ ಎಂದು ಮಾತನಾಡಿದರು. ಇದು ಬಸವಲಿಂಗಪ್ಪ ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು. ನಂತರ ನಡೆದದ್ದು ಇತಿಹಾಸ. ರಾಜಕೀಯ ಕುತಂತ್ರ ಹಾಗೂ ಸಂಪ್ರದಾಯವಾದಿಗಳ ದಲಿತ ವಿರೋಧಿ ಧೋರಣೆಯಿಂದಾಗಿ ಆ ಮಾತಿನ ಅರ್ಥ ಬೇರೆಯದೆ ಸ್ವರೂಪ ಪಡೆದುಕೊಂಡಿತು. ರಾಜ್ಯಾದ್ಯಂತ ಈ ಕುರಿತು ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡವು. ನವೆಂಬರ್ 20, 1973ರ ಬೆಳಗಾಗುವುದರೊಳಗೆ ಈ ವಿಷಯ ಪತ್ರಿಕೆಗಳಲ್ಲಿ ವಿಭಿನ್ನವಾದ, ಜನರನ್ನು ರೊಚ್ಚಿಗೇಳಿಸುವ ಶೈಲಿಯಲ್ಲಿ ‘ಕನ್ನಡ ಪುಸ್ತಕ ಓದುವುದರಿಂದ ವಿಚಾರ ಶಕ್ತಿ, ದೇಶಪ್ರೇಮ ಬರದು’ ಎಂಬ ಶೀರ್ಷಿಕೆಯಲ್ಲಿ ‘‘ಕನ್ನಡ ಪುಸ್ತಕವನ್ನು ಓದುವುದರಿಂದ ದೇಶಪ್ರೇಮ, ಸ್ವಾತಂತ್ರ್ಯ, ವಿಚಾರಶಕ್ತಿ, ಧೈರ್ಯ, ಸೇವಾ ಭಾವನೆಗಳು ಬರುವುದಿಲ್ಲ’’ ಎಂಬುದು ಬಿ.ಬಸವಲಿಂಗಪ್ಪ ಅವರ ಖಚಿತ ಅಭಿಪ್ರಾಯ ಎಂದು ಸಂಪ್ರದಾಯವಾದಿಗಳ ಪತ್ರಿಕೆ ಬರೆಯಿತು. ಈ ಮೂಲಕ ಕೆಲವು ಮೂಲಭೂತವಾದಿಗಳು ಅವರ ವಿರುದ್ಧವಾಗಿಯೇ ಕೆಲಸ ಶುರುಮಾಡಿದರು. ಇಡೀ ರಾಜ್ಯದ ಜನತೆ ಎರಡು ಗುಂಪುಗಳಾದವು. ಬಸವಲಿಂಗಪ್ಪನವರ ಬೆಂಬಲಕ್ಕೆ ಒಂದು ಗುಂಪು, ಅವರನ್ನು ವಿರೋಧಿಸುವ ಮತ್ತೊಂದು ಗುಂಪು ಸೃಷ್ಟಿಗೊಂಡವು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವೆಂಬರ್ 27, 1973ರಂದು ಬಸವಲಿಂಗಪ್ಪನವರ ಹೇಳಿಕೆ ಕುರಿತಂತೆ ಪರ-ವಿರೋಧ ಪ್ರತಿಭಟನಾ ಮೆರವಣಿಗೆಗಳು ಪ್ರಾರಂಭವಾದವು. ಕೆ.ಆರ್. ಸರ್ಕಲ್ ಬಳಿ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ಮಾಡಿ ಆರು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದರು. ರಂಗಾಚಾರ್ಲು ಪುರಭವನದ ಬಳಿ ಒಂದು ಗುಂಪಿನ ಮೆರವಣಿಗೆ ಬಂದಾಗ, ಪ್ರತಿ ಗುಂಪಿನ ಮೆರವಣಿಗೆ ಸಮೀಪಿಸುತ್ತಿರುವುದನ್ನು ಕಂಡ ವಿದ್ಯಾರ್ಥಿಗಳು ಕಲ್ಲು ತೂರಿಸಿದರಲ್ಲದೆ ಕೈ ಮಾಡುವ ದೃಷ್ಟಿಯಿಂದ ಮುನ್ನುಗ್ಗಿದಾಗ ಇದ್ದ ಪೊಲೀಸರು ಲಾಠಿ ಪ್ರಹಾರ ಮಾಡಿ ಒಂದು ಗುಂಪನ್ನು ಚದುರಿಸಿದರು. ದಲಿತರ ನಾಯಕ ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಎಷ್ಟೋ ಜನ ದೌರ್ಜನ್ಯಕ್ಕೆ ಒಳಗಾದರು. ದೈಹಿಕವಾಗಿ ಹಲ್ಲೆಗೊಳಗಾದ ಜನ ಒಳಗೊಳಗೆ ಮರುಕ ಪಟ್ಟರು. ಕನ್ನಡ ಸಿರಿಭರಿತ ಪರಂಪರೆ ಮತ್ತು ಮೌಲ್ಯ ಸಾಹಿತ್ಯಗಳ ಪರಿಚಯವೂ ಇಲ್ಲದೆ ಪೌರಾಡಳಿತ ಸಚಿವ ಬಿ. ಬಸವಲಿಂಗಪ್ಪನವರು ಕನ್ನಡವನ್ನು ಅವಹೇಳನ ಮಾಡಿದ್ದಾರೆಂದು ಅವರನ್ನು ಮಂತ್ರಿ ಪದವಿಯಿಂದ ತೆಗೆಯುವವರೆಗೂ ಹೋರಾಟ ನಡೆಸಲು ಕ್ರಿಯಾ ಸಮಿತಿಯೊಂದನ್ನು ರಚಿಸಬೇಕೆಂದು ಕನ್ನಡ ಚಳವಳಿಗಾರರ ಕೇಂದ್ರ ಕಾರ್ಯ ಸಮಿತಿಯು ನಿರ್ಧರಿಸಿತು. ಬಿ.ಬಸವಲಿಂಗಪ್ಪ ವಿರೋಧಿಗಳು ಆವರನ್ನು ತಮ್ಮ ಊರ ಒಳಗಡೆ ಪ್ರವೇಶಿಸದಂತೆ ನಿರ್ಬಂಧಿಸಿ, ಅವಕಾಶ ಕೊಡಕೂಡದೆಂದು ಪ್ರತಿಭಟಿಸಿದರು. ಆದರೆ ಬಸವಲಿಂಗಪ್ಪ ಅವರು ಕರ್ನಾಟಕ ಏಕೀಕರಣ ಚಳವಳಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ 1956ರಲ್ಲಿ ಕರ್ನಾಟಕ ರಾಜ್ಯ ರಚನೆಯಾಗುವ ತನಕ ಈ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಚೆಲುವ ಕನ್ನಡ ನಾಡಿನ ಉದಯಕ್ಕಾಗಿ ದುಡಿದವರು. ಹೀಗೆ ಕನ್ನಡ ಅಭಿವೃದ್ಧಿಗಾಗಿ ದುಡಿದ ಬಿ.ಬಸವಲಿಂಗಪ್ಪ ಅವರ ವಿರುದ್ಧವೇ ಕನ್ನಡ ಚಳವಳಿಗಾರರು ಪ್ರತಿಭಟಿಸುವ ಮೂಲಕ ಹಾಗೆಯೇ ಬೆಂಗಳೂರನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಿದರು. ಇಂತಹ ಮಹಾನ್ ಕನ್ನಡ ಅಭಿಮಾನಿ ಹಾಗೂ ಹೋರಾಟಗಾರ ಬಿ. ಬಸವಲಿಂಗಪ್ಪ ಅವರು ಡಿಸೆಂಬರ್ 03, 1973ರಂದು ವಿಷಯ ಸಂಬಂಧಿಸಿದಂತೆ ಸ್ವತಃ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಾರೆ. ಬಸವಲಿಂಗಪ್ಪ ಅವರ ಸ್ಪಷ್ಟನೆ: ‘‘ಕನ್ನಡ ಭಾಷೆ ವಿರುದ್ಧ ನಾನು ಎಂದೂ ಮಾತಾಡಿಲ್ಲ. ಆದರೆ ಕೆಲವು ಕನ್ನಡ ಪುಸ್ತಕಗಳ ಬಗ್ಗೆ ಮಾತ್ರವೆಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ ಮತ್ತು ಆ ಬಗ್ಗೆ ತುಂಬಾ ಗೌರವ ಹೊಂದಿರುವವನಾಗಿದ್ದೇನೆ. ನನ್ನ ಭಾಷೆ ಈ ವಿಚಾರವನ್ನು ತಿಳಿಯದಿದ್ದಲ್ಲಿ ಆ ರೀತಿಯಲ್ಲಿ ತಿಳಿದುಕೊಳ್ಳುವಂತೆ ವಿದ್ಯಾರ್ಥಿಗಳು ಎಲ್ಲಾ ವರ್ಗಗಳನ್ನು ಕೋರಿಕೊಳ್ಳುತ್ತೇನೆ’’ ಎಂದು ಮನಪೂರ್ವಕವಾಗಿ ಬಸವಲಿಂಗಪ್ಪ ಅವರು ರಾಜ್ಯದ ಜನತೆಯನ್ನು ವಿನಂತಿಸಿದರು. ಹಾಗೆಯೇ ಅಂದು ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರು ‘‘ಬಿ. ಬಸವಲಿಂಗಪ್ಪ ಅವರು ಮಾತನಾಡಿದರೆನ್ನಲಾದ ಟೀಕೆಗೆ ಸಂಬಂಧಿಸಿದಂತೆ ಪ್ರಸ್ತುತ ನಡೆಯುತ್ತಿರುವ ಪರ ಹಾಗೂ ವಿರೋಧಿ ಚಳವಳಿಯಿಂದ ನಾನು ತೀವ್ರ ಮನನೊಂದಿದ್ದೇನೆ. ಬಸವಲಿಂಗಪ್ಪನವರ ಸ್ಪಷ್ಟೀಕರಣ ವಿವಾದವನ್ನು ಕೊನೆಗೊಳಿಸುವುದೆಂದು ನಾನು ನಿರೀಕ್ಷಿಸಿದೆ. ದುರದೃಷ್ಟವಶಾತ್ ಚಳವಳಿ ಹಾಗೂ ಪ್ರತಿ ಚಳವಳಿ ಮುಂದುವರಿಯುತ್ತಿವೆ’’ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸುತ್ತಾರೆ. ಆದರೆ ಯಾರೇ ವಿನಂತಿಸಿದರೂ ಬೂಸಾ ಚಳವಳಿ ದಿನದಿಂದ ದಿನಕ್ಕೆ ತನ್ನ ಉಗ್ರ ಸ್ವರೂಪವನ್ನು ಪಡೆದುಕೊಂಡಿತು. ಆನಂತರ ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಇಡೀ ಶೋಷಿತ ಸಮುದಾಯ ಪ್ರತಿ ಹೋರಾಟಕ್ಕೆ ನಿಂತವು. ಡಾ. ಸಿದ್ದಲಿಂಗಯ್ಯ ಅವರೂ ಸೇರಿ ಬಹುತೇಕರು ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರ ಬೆಂಬಲಕ್ಕೆ ನಿಂತರು. ಅದರೆ ಬಸವಲಿಂಗಪ್ಪ ಅವರನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಮಂತ್ರಿ ಸಂಪುಟದಿಂದ ತೆಗೆದುಹಾಕಬೇಕೆಂಬ ಒತ್ತಡ ವಿಪರೀತವಾಯಿತು. ಡಿಸೆಂಬರ್ 14, 1973ರಂದು ಬಿ. ಬಸವಲಿಂಗಪ್ಪ ಅವರು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ದಿಲ್ಲಿಯಿಂದಲೇ ರಾಜೀನಾಮೆ ಪತ್ರ ಕಳುಹಿಸಿಕೊಟ್ಟರು. ಡಾ. ಸಿದ್ದಲಿಂಗಯ್ಯ ಅವರು ಹೇಳುವಂತೆ ‘‘ನಮ್ಮ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಮೊದಲ ಹಲ್ಲೆ ಇದಾಗಿತ್ತು. ತನಗೆ ಅನ್ನಿಸಿದ್ದನ್ನು ಹೇಳುವ ಹಕ್ಕು ಅದರಲ್ಲೂ ದಲಿತರಿಗೆ ಇಲ್ಲ ಅನ್ನುವುದು ಬಹಳ ಚಿಂತಾಜನಕವಾದ ವಿಚಾರ. ಯಾರು ಏನು ಬೇಕಾದರೂ ಹೇಳಬಹುದು. ಆದರೆ ಒಬ್ಬ ದಲಿತ ಹೇಳಿದಾಗ ಜನ ಹುಷಾರಾಗಿ ಬಿಡುತ್ತಿದ್ದರು. ಅದರಲ್ಲೂ ಬಸವಲಿಂಗಪ್ಪ ಹೇಳಿದರೆ ಇನ್ನೂ ಹುಷಾರಾಗಿ ಬಿಡುತ್ತಿದ್ದರು.’’ ಇದು ಸಂಪ್ರದಾಯವಾದಿಗಳ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ. ರಾಜೀನಾಮೆ ನೀಡಿದ ನಂತರದ ದಿನದಲ್ಲಿ ರಾಷ್ಟ್ರಕವಿ ಕುವೆಂಪು ‘‘ಈ ಬೂಸಾ ಸಾಹಿತ್ಯ ಅಂತ ಯಾವುದನ್ನು ಕರೆಯುತ್ತೇವೆಯೋ ಅದು ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿಯೂ ಇರುತ್ತದೆ. ಸುಮಾರು ಮುಕ್ಕಾಲು ಪಾಲಿನ ಮೇಲೆ ಇರುವುದು ಬೂಸಾ ಸಾಹಿತ್ಯವೆ. ದನ, ಎಮ್ಮೆ ಸಾಕುವವರಿಗೆ ಗೊತ್ತು ಬೂಸಾವೇ ಮುಖ್ಯ, ಪ್ರಧಾನವಾದ ಆಹಾರ’’ ಅಂತ ಹೇಳಿ ಬಿ. ಬಸವಲಿಂಗಪ್ಪ ಅವರ ಬೂಸಾದ ಮಾತಿನ ಹಿನ್ನೆಲೆಯನ್ನು ಸಮರ್ಥಿಸಿದರು. ‘‘ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದಾಗ ಹಾಗೇಕೆ ಕರೆದರೆಂಬ ಪ್ರಶ್ನೆಯನ್ನು ನಮಗೆ ನಾವು ಕೇಳಿಕೊಳ್ಳಬೇಕು. ನಮ್ಮ ಮತ ಧರ್ಮಗಳಿಂದ ಮೊದಲಿನಿಂದಲೂ ವಂಚಿತರಾಗಿ ಹೊರಗುಳಿದ ಪಂಚಮರಿಗೆ ಮತೀಯ ಸಾಹಿತ್ಯದಿಂದ ತುಂಬಿದ ಕನ್ನಡ ಸಾಹಿತ್ಯ ಅರ್ಥಹೀನವಾಗಿ ಕಂಡರೆ ಅದರಲ್ಲೇನು ಆಶ್ವರ್ಯವಿದೆ? ಅಲ್ಲದೆ ಪಂಚಮರು ಕನ್ನಡ ಸಾಹಿತ್ಯದ ಇಂಥ ಮತೀಯ ಪರಂಪರೆಯನ್ನು ಉದ್ವಿಗ್ನತೆಯಲ್ಲಿ ತ್ಯಜಿಸಲಾದಾಗ ಮಹಾರಾಷ್ಟ್ರದ ಮಹರ್ ಜನಾಂಗದ ಲೇಖಕರಂತೆ (ದಲಿತ ಪ್ಯಾಂಥರ್ಸ್) ಇವರು ಕನ್ನಡಕ್ಕೆ ನಿಜವಾಗಿಯೂ ಹೊಸದಾದದ್ದನ್ನು ಸೇರಿಸಲು ಸಾಧ್ಯತೆಯಿಲ್ಲವೇ?’’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು.ಆರ್.ಅನಂತಮೂರ್ತಿ ಅವರು ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಪತ್ರಿಕೆಗೆ ಲೇಖನ ಬರೆಯುತ್ತಾರೆ. ಹೀಗೆ ಬಸವಲಿಂಗಪ್ಪನವರ ಪರವಾಗಿ ದಲಿತೇತರ ಪ್ರಗತಿಪರರಾದ ಅಗ್ರಹಾರ ಕೃಷ್ಣಮೂರ್ತಿ, ಕಾಳೇಗೌಡ ನಾಗವಾರ, ಕರಿಗೌಡ ಬೀಚನಹಳ್ಳಿ, ಶೂದ್ರ ಶ್ರೀನಿವಾಸ್ ಅವರು ಬೆಂಬಲಿಸಿ ಆ ಮೂಲಕ ಒಂದು ಹೊಸ ಸಮಾಜದ ಸೃಷ್ಟಿಗೆ ಬಯಸಿದರು. ಹಾಗೆಯೇ ಈ ಬೂಸಾ ಪ್ರಕರಣವಂತೂ ದಲಿತರಲ್ಲಿ ಜಾಗೃತಿ ಮೂಡಿಸಿದಂತಹ ಚಳವಳಿಯಾಗಿದೆ. ಆ ದಿನಗಳಲ್ಲಿ ಇದು ಕಷ್ಟಕರವಾದ ಪರಿಸ್ಥಿತಿಗಳನ್ನು ಹುಟ್ಟುಹಾಕಿದರೂ ಆನಂತರದ ದಿನಗಳಲ್ಲಿ ಅದರಿಂದ ಒಳ್ಳೆಯ ಫಲ ಸಿಕ್ಕಿತು. ಇದರ ಪ್ರತಿಫಲವಾಗಿ ದಲಿತರೆಲ್ಲರು ಒಗ್ಗೂಡಿ ಸ್ವಾಭಿಮಾನ, ಆತ್ಮಗೌರವ, ಸಂಘರ್ಷ ಮತ್ತು ಪರಿವರ್ತನೆ ಎಂಬ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು 1974 ಡಿಸೆಂಬರ್ 28, 29 ಮತ್ತು 30 ರಂದು ಭದ್ರಾವತಿಯಲ್ಲಿ ದಲಿತ ಲೇಖಕರ ಮತ್ತು ಕಲಾವಿದರ ಬಳಗ ಎನ್ನುವ ಹೆಸರಿನಲ್ಲಿ ಪ್ರಥಮ ಸಮಾವೇಶವನ್ನು ನಡೆಸಲಾಯಿತು. ಈ ಸಮಾವೇಶವನ್ನು ಬಿ. ಬಸವಲಿಂಗಪ್ಪ ಅವರೇ ಉದ್ಘಾಟಿಸಿ ಮಾತನಾಡುತ್ತಾ ‘‘ಈ ಕ್ರಾಂತಿಯ ಸಂಕೇತ ಏನು? ಬಸವಣ್ಣ ತನ್ನ ಕಾಲದಲ್ಲಿ ಏನು ಬಸವ ಕಲ್ಯಾಣದಲ್ಲಿ ಪ್ರಾರಂಭ ಮಾಡಿದನೋ ಅದು ಈ ಹೊತ್ತು ಪ್ರಾರಂಭವಾಯಿತು ಅಂತ ನನಗನ್ನಿಸುತ್ತದೆ. ಜಾತಿ ಭೇದವಿಲ್ಲದೆ, ಮತ ಭೇದವಿಲ್ಲದೆ, ಇಪ್ಪತ್ತು ಮೂವತ್ತು ಸಾವಿರ ಜನ, ಈ ಸಮೂಹ ಒಂದು ಕಡೆ ಸೇರಿ ಯಾವೊಬ್ಬ ಮನುಷ್ಯ ಸಂಕೇತ ರೂಪವಾಗಿ ಒಂದು ಸಮಾಜದಲ್ಲಿ ಬದಲಾವಣೆಯಾಗಬೇಕು, ವಿಚಾರಶಕ್ತಿ ಬದಲಾವಣೆಯಾಗಬೇಕು ಅಂತ ಹೇಳಿಬಿಟ್ಟು ಸಂಕಲ್ಪಮಾಡಿದ್ದೀರಿ. ಈ ಸಮಾಜದ ವ್ಯವಸ್ಥೆಯನ್ನು ವಿಚಾರ ಸರಣಿಯನ್ನು ಬದಲಾವಣೆ ಮಾಡಬೇಕು. ನೀವು ಇಂತಹ ಕೆಲಸ ಮಾಡುತ್ತೀರೆಂದು ನನಗೆ ಆಸೆ ಮೂಡಿದೆ. ನೀವೆಲ್ಲರೂ ಬಸವಣ್ಣನವರ ಅನುಭವ ಮಂಟಪದಂತೆ ಒಂದು ಮಾನವೀಯತೆಯ ಸಮಾಜವನ್ನು ಸೃಷ್ಟಿ ಮಾಡಬೇಕು ಅಂತ ಹೇಳಿ ಆತ ಪ್ರಾರಂಭ ಮಾಡಿದ ಈ ಹೊತ್ತು ನಾವು ಪುನಃ ಅದನ್ನು ಪ್ರಾರಂಭ ಮಾಡಿದರೆ ನನಗನ್ನಿಸುತ್ತದೆ ಖಂಡಿತವಾಗಿಯೂ ನಮಗೆ ಯಶಸ್ಸು ದೊರಕುತ್ತದೆ’’ ಎಂದು ಹೇಳಿ ದಲಿತರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು. ಒಂದು ರೀತಿಯಲ್ಲಿ ದಲಿತರ ಸಾಮೂಹಿಕ ಸಂಘಟನೆಯನ್ನು ಹುಟ್ಟುಹಾಕಿದರು. ಕೇವಲ ಪ್ರಾದೇಶಿಕವಾಗಿದ್ದ ದಲಿತ ಸಂಘರ್ಷ ಸಮಿತಿ, ದಲಿತ ಕ್ರಿಯಾ ಸಮಿತಿಗಳು ಬಲಿಷ್ಠವಾಗಿ ಒಂದೆಡೆ ಐಕ್ಯಗೊಂಡು ಪೂರ್ಣ ಪ್ರಮಾಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂದು ನಾಮಕರಣವಾಯಿತು. ನಂತರದ ದಿನದಲ್ಲಿ ದಲಿತ ಸಾಹಿತಿಗಳು ಹೋರಾಟಗಾರರು ಒಗ್ಗೂಡಿ ಪಂಚಮ ಪತ್ರಿಕೆ ತಂದರು. ನಂತರ ಸುದ್ಧಿ ಸಂಗಾತಿ ಹುಟ್ಟುಹಾಕಿದರು. ದಲಿತ ಚಳವಳಿಗೆ ಪೂರಕವಾಗಿ ಮುಂಗಾರು, ಮಾನವ, ರುಜುವಾತು, ಶೂದ್ರ, ಸಂಕ್ರಮಣ, ಲಂಕೇಶ್ ಪತ್ರಿಕೆಗಳು ಬೆಂಬಲವಾಗಿ ನಿಂತವು. ಸಮಾಜ ಸುಧಾರಕರಾಗಿ... 1972ರಲ್ಲಿ ದೇವರಾಜ ಅರಸು ನಾಯಕತ್ವದಲ್ಲಿ ಪೌರಾಡಳಿತ ಸಚಿವಾಗಿ ದಲಿತರು ತಲೆ ತಲಾಂತರಗಳಿಂದ ಊರವರು ಮಾಡಿದ ಮಲ-ಮೂತ್ರಗಳನ್ನು ತಲೆಯ ಮೇಲೆ ಹೊತ್ತು ಹಾಕುವ ಅಮಾನೀಯ ಪದ್ಧತಿಯನ್ನು ಇಡೀ ರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ರದ್ದುಗೊಳಿಸಿದರು. ಮತ್ತೊಬ್ಬರ ಮಲ-ಮೂತ್ರಗಳನ್ನು ಒಂದೇ ಒಂದು ಜನಾಂಗ ಕಾಲಾನುಕಾಲದಿಂದ ತಲೆ ಮೇಲೆ ಹೊತ್ತು ಸಾಗಿಸುವಂತಹದ್ದು ನಾಚಿಗೇಡಿನ ಪದ್ಧತಿ ಎಂದು ತಿಳಿದು ವಿರೋಧಿಸಿದರು ಹಾಗೆಯೇ ರದ್ದುಗೊಳಿಸಿದರು ಇದು ಬಸವಲಿಂಗಪ್ಪ ಅವರ ಅತ್ಯಂತ ಕ್ರಾಂತಿಕಾರಕ ಸಾಧನೆಯಾಗಿದೆ. ದಲಿತರು ಮಲ ಹೊರುವುದನ್ನು ಅದೆಷ್ಟು ನಿಶ್ಚಿತವಾದ ಕಾರ್ಯಕ್ರಮ ಮಾಡಿಕೊಂಡು ಅವರು ನಿಲ್ಲಿಸಿದರು. ಆಗ ಬಂದ ವಾಗ್ವಾದಗಳು, ಜನ ಕೋರ್ಟಿಗೆ ಹೋಗಿದ್ದು ಮತ್ತು ದಿಲ್ಲಿಯಿಂದ ಇಂದಿರಾ ಗಾಂಧಿ ಸರಕಾರದಿಂದ ಒಬ್ಬರು ಬಂದು ಸದ್ಯಕ್ಕೆ ಇದಾಗದೆ ಇದ್ದರೆ ಕೊನೆ ಪಕ್ಷ ಒಂದು ಗಂಟೆಯಾದರೂ ಮಲ ತೆಗೆದುಕೊಂಡು ಹೋಗುವುದಕ್ಕೆ ಒಪ್ಪಬಹುದಲ್ಲ ಅಂತ ಅಂದಾಗ ಅದಕ್ಕೂ ಒಪ್ಪದೆ ಬಸಲಿಂಗಪ್ಪನವರು ಅದನ್ನು ಸಾಧಿಸಿದ್ದು ನಮ್ಮ ಕಾಲದ ಒಂದು ದೊಡ್ಡ ಮಡಿವಂತಿಕೆಯ ಸಮಾಜವನ್ನು ದಿಗ್ಭ್ರಮೆಗೊಳಿಸಿತು. ವಸತಿ ಸಚಿವರಾಗಿ ಗೃಹಮಂಡಳಿ ವತಿಯಿಂದ ಮನೆಗಳನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರ ವರ್ಗಗಳಿಗೆ ಮೀಸಲಿಡುವುದಕ್ಕೆ ಕಾರಣಕರ್ತರಾದರು. ಗ್ರಾಮಾಂತರ ಪ್ರದೇಶದಲ್ಲಿ ಜನತಾಗೃಹ ಯೋಜನೆಯನ್ನು ಆರಂಭಿಸಿದರು. ಮನೆ ನಿರ್ಮಿಸಲು ಅಸಮರ್ಥರಾದ ಸಮಾಜದ ವಸತಿ ರಹಿತ ದುರ್ಬಲ ವರ್ಗದವರಿಗಾಗಿ ಸ್ವಾಯತ್ತ ಮಂಡಳಿಗಳಲ್ಲಿ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಲೆವಿ ಎಂದು ನಿಧಿಯನ್ನು ಪ್ರಾರಂಭಿಸಿದರು. ಹೊಸದಾಗಿ ರಚನೆಗೊಂಡ ಬಡಾವಣೆಗಳಲ್ಲಿ ಶೇ. 18ರಷ್ಟು ನಿವೇಶನಗಳನ್ನು ದಲಿತರಿಗಾಗಿ ಮೀಸಲಿಟ್ಟರು. ದೇವದಾಸಿ ಪದ್ಧತಿಯ ಅಮಾನೀಯ ಮಹಿಳಾ ಶೋಷಣೆಯನ್ನು ಕಟುವಾಗಿ ಅಲ್ಲಗೆಳೆದು ಬದುಕಿಗೆ ಸೂಕ್ತ ಬದಲಾವಣೆಗಳನ್ನು ತರುವಲ್ಲಿ ಮುಂದಾದರು. ಹಾಗೆಯೇ ಕರ್ನಾಟಕ ರಾಜ್ಯ ಸೇವೆಯಲ್ಲಿ ಪರಿಶಿಷ್ಟರ ಮೀಸಲಾತಿಯ ಕಡ್ಡಾಯ, ಭಡ್ತಿ, ನೇಮಕಾತಿಯಲ್ಲಿ ಮೀಸಲು, ರೋಸ್ಟರ್ ಹೀಗೆ ದಲಿತರ ನಿಯಮವನ್ನು ಜಾರಿಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದವರು ಬಿ. ಬಸವಲಿಂಗಪ್ಪ. ಇವೆಲ್ಲವೂ ಮೇಲ್ವರ್ಗದ ಹಿಂದೂಗಳ ಮನಸ್ಸಿನಲ್ಲಿ ಬಿ. ಬಸವಲಿಂಗಪ್ಪ ಅವರನ್ನು ವಿರೋಧಿಸುವ ಮನೋಭಾವವನ್ನು ಬೆಳೆಸಿತು. ಇವರನ್ನು ಹೀಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ತಿಳಿದು ಬೂಸಾ ಚಳವಳಿಯಲ್ಲಿ ಬಸವಲಿಂಗಪ್ಪ ಅವರನ್ನು ಬಲಿ ತೆಗೆದುಕೊಂಡರು. ಒಂದು ಕಡೆ ಇದರಿಂದ ದಲಿತರಿಗೆ ನಷ್ಟ ಉಂಟಾದರೂ ಆನಂತರದ ದಿನಗಳಲ್ಲಿ ಜಾಗೃತಿ ಮೂಡಿಸಿದಂತಾಯಿತು. ಒಂದು ದೃಷ್ಟಿಯಲ್ಲಿ ಚಾರಿತ್ರಿಕವಾಗಿ ಇದು ಕರ್ನಾಟಕದ ನೆಲದಲ್ಲಿ ದಲಿತ ಸಂಘಟನೆಗೆ ಮೂಲ ಪ್ರೇರಕ ಶಕ್ತಿಯೂ ಆಗಿದೆ.
ಆಪ್ತರಿಗೆ ಹಿನ್ನಡೆಯಾದರೂ ಸಿದ್ದರಾಮಯ್ಯ ಮೌನ, ನಡೆಯ ಹಿಂದಿದ್ಯಾ ನಾಲ್ಕು ಪ್ರಬಲ ಕಾರಣಗಳು!
ಕೆ ಎನ್ ರಾಜಣ್ಣ, ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ಸೇರಿದಂತೆ ಆಪ್ತರ ವಿರುದ್ಧ ಸರಣಿ ಕ್ರಮಗಳಾಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಯಾಕೆ ಮೌನಕ್ಕೆ ಜಾರಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿತ್ತು. ಆಪ್ತರಿಗೆ ಹಿನ್ನಡೆ ಆಗುತ್ತಿದ್ದರೂ ಸಿದ್ದರಾಮಯ್ಯ ಮೌನ ಅಸಹಾಯಕತೆಯ ಸಂಕೇತ ಎಂದೂ ಬಿಂಬಿಸಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಮೌನಕ್ಕೆ ಕೆಲವೊಂದು ಪ್ರಬಲ ಕಾರಣಗಳು ಇವೆ ಎಂಬ ಚರ್ಚೆಗಳು ವಿಶ್ಲೇಷಣೆಗಳು ನಡೆಯುತ್ತಿವೆ. ಹಾಗಾದರೆ ಸಿದ್ದರಾಮಯ್ಯ ಈ ನಡೆಯ ಹಿಂದೆ ಏನೇನು ಕಾರಣಗಳಿವೆ?
ರಂಗೋತ್ಸವ 2026 : ಕುಂಜತ್ತಬೈಲ್ ರಂಗ ಸ್ವರೂಪ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ
ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ʼರಂಗೋತ್ಸವ 2026' 4ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮರಕಡ ಸರಕಾರಿ ಶಾಲಾ ಆವರಣದಲ್ಲಿ ನಡೆಯಿತು. ಓಷಿಯನ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಇನಾಯತ್ ಅಲಿ ʼರಂಗೋತ್ಸವ 2026' ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮರಕಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಭವಾನಿ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ರಂಗೋತ್ಸವ 2026' ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರಿಸರ ವಾದಿ ದಿನೇಶ್ ಹೊಳ್ಳಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗ ಸ್ವರೂಪ ಸಂಸ್ಥೆಯ ಅಧ್ಯಕ್ಷ ರಹ್ಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶರತ್ ಕುಮಾರ್, ಮರಕಡ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ಅತಿಥಿಗಳಾಗಿ ಭಾಗವಹಿಸಿದರು. ಝುಬೇರ್ ಖಾನ್ ಕುಡ್ಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ವಂದಿಸಿದರು. ಪ್ರೇಮನಾಥ್ ಮರ್ಣೆ ಮತ್ತು ತಸ್ಲೀಮಾ ಬಾನು ಹನೀಷಾ ಸವಾದ್ ಕಾರ್ಯಕ್ರಮ ನಿರೂಪಿಸಿದರು.
ಪ್ರಥಮ ಚಿಕಿತ್ಸೆ * ಶಾಖಾಘಾತಕ್ಕೆ ತುತ್ತಾದ ವ್ಯಕ್ತಿಯನ್ನು ನೆರಳಿರುವ ತಂಪಾಗಿರುವ ಪ್ರದೇಶಕ್ಕೆ ಕರೆದೊಯ್ದು ಬಟ್ಟೆಗಳನ್ನು ಸಡಿಲಿಸಿ ಚರ್ಮಕ್ಕೆ ತಂಪಾದ ಗಾಳಿ ಮತ್ತು ನೀರನ್ನು ಸಿಂಪಡಿಸಬೇಕು. ಬೆವರುವಿಕೆಯನ್ನು ಉತ್ತೇಜಿಸಬೇಕಾದ ಕ್ರಿಯೆಯನ್ನು ಹೆಚ್ಚುಗೊಳಿಸಬೇಕು. ತೊಡೆಸಂಧಿ ಮತ್ತು ಕೈ ಸಂಧಿಗಳಲ್ಲಿ ಐಸ್ ಪ್ಯಾಕ್ ಇಡಬೇಕು. * ವ್ಯಕ್ತಿಗೆ ಆಹಾರ ಸೇವಿಸಲು ಸಾಧ್ಯವಾದಲ್ಲಿ, ತಂಪಾದ ನೈಸರ್ಗಿಕ ಪಾನೀಯಗಳಾದ ನೀರು, ಎಳನೀರು, ಲಿಂಬೆ ಜ್ಯೂಸ್, ಹಣ್ಣಿನರಸ, ನೀಡಬಹುದು. ಕೃತಕಪಾನೀಯಗಳಾದ ಪೆಪ್ಸಿ, ಕೋಕ್ ನೀಡಬೇಡಿ. ಆಲ್ಕೋಹಾಲ್ಯುಕ್ತ ಮತ್ತು ಕೆಫಿನ್ಯುಕ್ತ ಪಾನೀಯಗಳನ್ನು ನೀಡಬಾರದು. * ದೇಹದ ಉಷ್ಣತೆಯನ್ನು ದಾಖಲು ಮಾಡಬೇಕು. ದೇಹದ ಉಷ್ಣತೆ 101oಈಗಿಂತಲೂ ಕಡಿಮೆ ಆಗುವವರೆಗೆ ದೇಹವನ್ನು ತಂಪಾಗಿಸುವ ಯತ್ನವನ್ನು ಮುಂದುವರಿಸತಕ್ಕದ್ದು, ಐಸ್ ಬ್ಲಾಂಕೆಟ್ಗಳನ್ನು ಬಳಸಬಹುದಾಗಿದೆ. * ವ್ಯಕ್ತಿಯ ನಾಡಿ ಬಡಿತ, ರಕ್ತದೊತ್ತಡ ಮತ್ತು ಉಷ್ಣತೆಯನ್ನು ನಿರಂತರವಾಗಿ ದಾಖಲು ಮಾಡಿ ನಿಯಂತ್ರಣಕ್ಕೆ ಬರುವಲ್ಲಿವರೆಗೆ ಪ್ರಥಮ ಚಿಕಿತ್ಸೆ ಮುಂದುವರಿಸಬೇಕು. ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಬಿಸಿಲಿನ ಆರ್ಭಟ ಜೋರಾಗಿದೆ. ಬಾಹ್ಯ ವಾತಾವರಣದ ಉಷ್ಣತೆ 42 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಿದೆ. ಬಿರು ಬಿಸಿಲಲ್ಲಿ ಕೆಲಸ ಮಾಡುತ್ತಿರುವವರು ಬಿಸಿಲಿನ ಹೊಡೆತಕ್ಕೆ ತುತ್ತಾಗುತ್ತಾರೆ. ಇದರಿಂದಾಗಿ ಜೀವಕ್ಕೂ ಕುತ್ತು ಬರಬಹುದು. ಈ ವಿಪರೀತ ಬಿಸಿಲಿನ ಕಾರಣದಿಂದ ದೇಹಕ್ಕೆ ಉಂಟಾಗುವ ಆಘಾತವನ್ನು ಸನ್ಸ್ಟ್ರೋಕ್ ಅಥವಾ ಶಾಖಾಘಾತ ಎಂದೂ ಕರೆಯುತ್ತಾರೆ. ನಮ್ಮ ದೇಹದಲ್ಲಿ ನಿರಂತರವಾಗಿ ಚಯಾಪಚಯ ಜೈವಿಕ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಈ ಜೈವಿಕ ಕ್ರಿಯೆಯ ಸಂದರ್ಭದಲ್ಲಿ ದೇಹದಲ್ಲಿ ಶಾಖ ಉತ್ಪಾದನೆಯಾಗುತ್ತದೆ. ಈ ಶಾಖ ಚರ್ಮದ ಮುಖಾಂತರ, ಶಾಖದ ವಿಕಿರಣದಿಂದ ಅಥವಾ ಬೆವರುವಿಕೆಯಿಂದ ದೇಹದಿಂದ ಹೊರ ಹಾಕಲ್ಪಡುತ್ತದೆ. ಆದರೂ ಕೆಲವೊಮ್ಮೆ ತೀವ್ರವಾದ ಸೂರ್ಯನ ಶಾಖ, ಹೆಚ್ಚಿದ ಆದ್ರತೆ ಮತ್ತು ಬಿಸಿಲಿನ ಧಗೆಯನ್ನು ಲೆಕ್ಕಿಸದೆ ಮಾಡುವ ದೈಹಿಕ ಪರಿಶ್ರಮದ ಕೆಲಸದ ಸಂದರ್ಭದಲ್ಲಿ, ದೇಹಕ್ಕೆ ತನ್ನೊಳಗೆ ಉಂಟಾದ ಶಾಖವನ್ನು ಹೊರ ಹಾಕಲು ಸಾಧ್ಯವಾಗದೇ ಇರಬಹುದು. ಆಗ ದೇಹದ ಉಷ್ಣತೆಯು 106oಈ ಅಥವಾ 41.1 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಬಹುದು. ಇದಲ್ಲದೆ ಕೆಲವೊಮ್ಮೆ ದೇಹಕ್ಕೆ ಬೇಕಾದ ಸೂಕ್ತ ಪ್ರಮಾಣದ ನೀರಿನಂಶ ದೊರಕದೆ ಇದ್ದಾಗ ದೇಹ ನಿರ್ಜಲೀಕರಣಗೊಳ್ಳುತ್ತದೆ. ಈ ಕಾರಣದಿಂದ ನೀರಿನ ಕೊರತೆಯಿಂದ ವ್ಯಕ್ತಿಯ ಬೆವರುವಿಕೆ ಕಡಿಮೆಯಾಗಿ ದೇಹದೊಳಗೆ ಉತ್ಪಾದನೆಯಾದ ಶಾಖವನ್ನು ಪರಿಣಾಮಕಾರಿಯಾಗಿ ಹೊರ ಹಾಕಲು ಸಾಧ್ಯವಾಗದೆ ದೇಹದ ಉಷ್ಣತೆ ಹೆಚ್ಚಾಗಿ, ಸನ್ ಸ್ಟ್ರೋಕ್ಗೆ ಕಾರಣವಾಗಬಹುದು. ಶಾಖಾಘಾತದ ಲಕ್ಷಣಗಳು ಏನು? * ವಿಪರೀತ ಆಯಾಸ, ಸುಸ್ತು, ವಾಂತಿ, ವಾಕರಿಕೆ, ಕಿರಿಕಿರಿ, ದೌರ್ಬಲ್ಯ, ತಲೆನೋವು, ತಲೆಸುತ್ತುವುದು, ಸ್ನಾಯು ಸೆಳೆತ ಮತ್ತು ಸ್ನಾಯುಗಳಲ್ಲಿ ನೋವು ಕಂಡು ಬರುತ್ತದೆ. ಲಕ್ಷಣಗಳು ವ್ಯಕ್ತಿಯ ದೇಹದ ಪ್ರಕೃತಿ, ದೇಹದ ತೂಕ ಮತ್ತು ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನವಾಗಿ ಪ್ರಕಟಗೊಳ್ಳಬಹುದಾಗಿದೆ. * ಉಸಿರಾಟದ ತೀವ್ರತೆ ಮತ್ತು ಹೃದಯದ ಬಡಿತ ಹೆಚ್ಚಳವಾಗುತ್ತದೆ. ದೇಹದ ಉಷ್ಣತೆ ಏರುವುದು, ಬೆವರದೇ ಇರುವುದು, ಬಿಸಿ ಕೆಂಪು ಅಥವಾ ಒಣ ತ್ವಚೆ ಇರುತ್ತದೆ. * ನಾಡಿ ಬಡಿತ ಜೋರಾಗಬಹುದು, ರಕ್ತದೊತ್ತಡ ಕಡಿಮೆಯಾಗುವುದು, ಉಸಿರಾಟದ ತೊಂದರೆ ಕಂಡು ಬರುವುದು. * ಯಾವುದೇ ಚಿಕಿತ್ಸೆ ತಕ್ಷಣವೇ ದೊರಕದೇ ಇದ್ದಲ್ಲಿ ವ್ಯಕ್ತಿ ಹಠಾತ್ತನೆ ಕೋಮಾಕ್ಕೆ ಜಾರುವ ಸಾಧ್ಯತೆ ಇರುತ್ತದೆ. ಯಾರಲ್ಲಿ ಹೆಚ್ಚು ಕಂಡುಬರುತ್ತದೆ? * ಶಿಶುಗಳು ಮತ್ತು ಹೆಚ್ಚು ವಯಸ್ಸಾದವರಲ್ಲಿ ಈ ಸನ್ ಸ್ಟ್ರೋಕ್ ಹೆಚ್ಚು ಕಂಡುಬರುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರು, ಶ್ವಾಸಕೋಶದ ಕಾಯಿಲೆ ಇರುವವರು, ಮೂತ್ರ ಪಿಂಡದ ಸಮಸ್ಯೆ ಇರುವವರು ಮತ್ತು ದೇಹದ ರಕ್ಷಣಾ ವ್ಯವಸ್ಥೆ ಕುಸಿದ ಕಾಯಿಲೆ ಇರುವವರಲ್ಲಿ ಶಾಖಾಘಾತ ಹೆಚ್ಚು ಕಂಡುಬರುತ್ತದೆ. * ಹೊರಾಂಗಣ ಆಟಗಳಲ್ಲಿ ತೊಡಗಿಸಿಕೊಳ್ಳುವ ಕ್ರೀಡಾಪಟುಗಳಲ್ಲಿ ಹೆಚ್ಚು ಕಂಡುಬರುತ್ತದೆ. 3. ಹೊರಾಂಗಣದಲ್ಲಿ ಸೂರ್ಯನ ಶಾಖ ತಡೆದುಕೊಂಡು ಕೆಲಸ ಮಾಡುವವರು, ದೈಹಿಕ ಶ್ರಮವುಳ್ಳ ಕೆಲಸ ಮಾಡುವವರಲ್ಲಿ ಶಾಖಾಘಾತ ಬಹಳ ಸಾಮಾನ್ಯ. ತಡೆಗಟ್ಟುವುದು ಹೇಗೆ? 1. ದೇಹದ ತಾಪಮಾನವನ್ನು ತಗ್ಗಿಸಲು ಬೇಸಿಗೆ ಸಮಯದಲ್ಲಿ ಕನಿಷ್ಠ 3ರಿಂದ 4ಲೀಟರ್ ನೀರು ಕುಡಿಯಬೇಕು. 2. ಚರ್ಮ ಹೆಚ್ಚು ಬಿಸಿಯಾಗಿದ್ದರೆ ಒದ್ದೆ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಬೇಕು ದೇಹವನ್ನು ತಂಪಾಗಿಸಬೇಕು. 3. ಬೇಸಿಗೆ ಕಾಲದಲ್ಲಿ ಹೆಚ್ಚು ದಪ್ಪಗಿರುವ ಮತ್ತು ಬಿಗಿಯಾಗಿರುವ ಬಟ್ಟೆ ಧರಿಸಬಾರದು. ತೆಳುವಾದ ಹತ್ತಿ ಬಟ್ಟೆಯನ್ನು ಧರಿಸಿ ತಂಪುಗಾಳಿ ದೇಹಕ್ಕೆ ತಲುಪುವಂತಿರಬೇಕು. ಗಾಢ ಬಣ್ಣದ ಮತ್ತು ಕಪ್ಪು ಬಟ್ಟೆಗಳನ್ನು ಬಳಸುವುದು ಸೂಕ್ತವಲ್ಲ, ಯಾಕೆಂದರೆ ಅವುಗಳು ಶಾಖವನ್ನು ಹೀರಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. 4. ದೇಹವನ್ನು ತಂಪಾಗಿರಿಸಬೇಕೆಂದು ಅತಿಯಾದ ಐಸ್ಕ್ರೀಮ್ ತಿನ್ನುವುದು ಮತ್ತು ಹೆಚ್ಚು ಕೃತಕ ಸಕ್ಕರೆ ಹಾಕಿದ ಸಿದ್ಧ ಪಾನೀಯವನ್ನು ಸೇವಿಸುವುದು ಮೂರ್ಖತನ. 5. ಬೇಸಿಗೆಯಲ್ಲಿ ಸಾಕಷ್ಟು ನೀರಿನಾಂಶ ಇರುವ ಆಹಾರವನ್ನು ಸೇವಿಸಬೇಕು ಗಂಜಿ, ಹಾಲು, ಎಳನೀರು, ಮಜ್ಜಿಗೆ ಇತ್ಯಾದಿ ಪೇಯಗಳಿಗೆ ಆಧ್ಯತೆ ನೀಡಿ. 6. ಬಿಸಿಲ ಧಗೆ ಹೆಚ್ಚಾಗಿರುವ ಹೊರಗಿನ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು. ವಿಪರೀತ ಬಿಸಿಲು ಇರುವ ಮಧ್ಯಾಹ್ನ ಸಮಯದಲ್ಲಿ ಶ್ರಮದಾಯಕ ಕೆಲಸವನ್ನು ಮಾಡಬಾರದು.
ಅಕ್ಷಯ ತೃತೀಯದಂದು ದಾಖಲೆ ಮಟ್ಟಕ್ಕೆ ಚಿನ್ನ ಖರೀದಿ! ಸೇಲ್ ಆದ ಬಂಗಾರ ಎಷ್ಟು ಕೆಜಿ ಗೊತ್ತಾ?
[…] The post ಅಕ್ಷಯ ತೃತೀಯದಂದು ದಾಖಲೆ ಮಟ್ಟಕ್ಕೆ ಚಿನ್ನ ಖರೀದಿ! ಸೇಲ್ ಆದ ಬಂಗಾರ ಎಷ್ಟು ಕೆಜಿ ಗೊತ್ತಾ? first appeared on Vistara News .
ವಿಶ್ವದ 20 ಶ್ರೀಮಂತರ ಪಟ್ಟಿ ಬಿಡುಗಡೆ - ಅದರಲ್ಲಿ ಇಬ್ಬರು ಭಾರತೀಯ ಕುಬೇರರು : ಯಾರು ಬಲ್ಲಿರೇನು?
Top 20 Billionaires: ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ 2026ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್ 20 ಪಟ್ಟಿಯಲ್ಲಿ ಭಾರತದ ಇಬ್ಬರು ಕುಬೇರರು ಸ್ಥಾನವನ್ನು ಪಡೆದಿದ್ದಾರೆ. ಟೆಸ್ಲಾ, ಎಕ್ಸ್ ಒಡೆಯ ಎಲಾನ್ ಮಸ್ಕ್, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಾಪ್ 10ನಲ್ಲಿರುವ ಶ್ರೀಮಂತರಲ್ಲಿ ಫ್ರಾನ್ಸ್ ದೇಶದ ಒಬ್ಬರನ್ನು ಹೊರತು ಪಡಿಸಿದರೆ, ಮಿಕ್ಕೆಲ್ಲಾ ಕುಬೇರರು ಅಮೆರಿಕದವರು.
ಚಿನ್ನ ಬೆಳ್ಳಿ ದರ ಇಮದು ಏರಿಕೆಯಾಗಿಲ್ಲ. ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದ್ದು, ಅಕ್ಷಯ ತೃತೀಯ ದಿನ ಭರ್ಜರಿ ವ್ಯವಹಾರ ನಡೆದಿದ್ದು, ಮಾರಾಟಗಾರರಲ್ಲಿ ಹೊಸ ಉತ್ಸಾಹ ಬಂದಿದೆ.
ಜರ್ಮನಿಯ ಡ್ಯೂಸ್ಬರ್ಗ್ ಪ್ರದೇಶದಲ್ಲಿ ಗುರುದ್ವಾರವೊಂದರಲ್ಲಿ ಬಣಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಈ ಘಟನೆಯಲ್ಲಿ ಕನಿಷ್ಠ 11 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಘರ್ಷಣೆಗಳಲ್ಲಿ ಚಾಕು, ಬಂದೂಕು ಸೇರಿದಂತೆ ವಿವಿಧ ಮಾರಣಾಂತಿಕ ಸಾಧನಗಳನ್ನು ಬಳಸಿರುವುದಾಗಿ ತಿಳಿದುಬಂದಿದ್ದು, ಗುರುದ್ವಾರದಲ್ಲಿನ ನಿಧಿಗಳ ನಿರ್ವಹಣೆ ಕುರಿತು ಬಣಗಳ ನಡುವೆ ನಡೆದಿರುವ ಸಂಘರ್ಷ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ..
ಮಣಿಪುರ, ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ 5.2 ರಷ್ಟು ತೀವ್ರತೆಯ ಪ್ರಬಲ ಭೂಕಂಪ
ಮಣಿಪುರದ ನೋನಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಈಶಾನ್ಯ ಭಾರತದಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ವರದಿಯಂತೆ ರಿಕ್ಟರ್ ಮಾಪಕದಲ್ಲಿ ಗಮನಾರ್ಹ ತೀವ್ರತೆ ದಾಖಲಿಸಿರುವ ಈ ಕಂಪನವು ಕೇವಲ ಮಣಿಪುರಕ್ಕೆ ಸೀಮಿತವಾಗದೆ, ನೆರೆಯ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲೂ ಪ್ರಬಲವಾಗಿ ಅನುಭವಕ್ಕೆ ಬಂದಿದೆ.
ಕರ್ನಾಟಕದ ಹಲವೆಡೆ ಭಾರಿ ಬಿಸಿಲಿಂದ ಜನ ಕಂಗೆಟ್ಟಿರುವ ಮಧ್ಯೆಯೇ, ಬೇಸಿಗೆ ಮಳೆ ಅಲ್ಲಲ್ಲಿ ಸುರಿಯುತ್ತಿದೆ.
ದಶಕಗಳಿಂದೀಚೆಗೆ ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಮಳೆಗೂ ನಗರಗಳು ಮುಳುಗುತ್ತಿವೆ, ಗ್ರಾಮೀಣ ಭಾಗದ ನದಿಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿಗುಡ್ಡ ಕುಸಿತ, ಹೆದ್ದಾರಿ ಬಂದ್ ಸುದ್ದಿಗಳು ಕೇಳಿಬರುತ್ತವೆ. ಕಳೆದ ಬಾರಿಯಂತೆ ಈ ಬಾರಿಯೂ ಮುಂಗಾರು ಮಳೆ ಬಿರುಸಾಗುವ ಲಕ್ಷಣವಿದ್ದು, ಅದಕ್ಕೆ ತಕ್ಕಂತೆ ಸಿದ್ಧರಾಗಬೇಕಿದೆ. ಈ ನಿಟ್ಟಿನಲ್ಲಿ ವಿಜಯ ಕರ್ನಾಟಕ ಮುಂಗಾರು ಮುನ್ನೆಚ್ಚರ ಅಭಿಯಾನ ಇಂದಿನಿಂದ ಆರಂಭ.
ಪ್ರಮಾಣಪತ್ರಗಳ ವಿವರ ಲೆಕ್ಕ ಪರಿಶೋಧಕರಿಗೆ ಸಲ್ಲಿಸದ ಬಿಬಿಎಂಪಿ
2023-24ನೇ ಸಾಲಿನ ಯೋಜನೆಗಳಿಗಾಗಿ 4,102 ಕೋಟಿ ರೂ. ಬಳಕೆ
CET Exam 2026: ಏಪ್ರಿಲ್ 23, 24ಕ್ಕೆ ಸಿಇಟಿ ಪರೀಕ್ಷೆ, 3.30 ಲಕ್ಷ ವಿದ್ಯಾರ್ಥಿಗಳು ಸಜ್ಜು: KEA
ಬೆಂಗಳೂರು: ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (UGCET 2026) ಇದೇ ಏಪ್ರಿಲ್ 23 ಮತ್ತು 24ರಂದು ನಡೆಯಲಿವೆ. ಒಟ್ಟು 3.30 ಲಕ್ಷ ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ. ಸಿಇಟಿ
ಜಂಗಮಕೋಟೆ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನಕ್ಕೆ ವಿರೋಧ, ರೈತರ ಹೋರಾಟಕ್ಕಿಲ್ಲ ಕಾವು
ಜಂಗಮಕೋಟೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ಭೂಸ್ವಾಧೀನದ ವಿರುದ್ಧ ನಡೆಯುತ್ತಿದ್ದ ಹೋರಾಟವು ಸದ್ಯ ತನ್ನ ಹಾದಿ ತಪ್ಪಿದ್ದು, ಬಿಜೆಪಿ ಮತ್ತು ಜೆಡಿಎಸ್ ನಡುವಿನ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ಸಂಸದ ಡಾ. ಕೆ. ಸುಧಾಕರ್ ಅವರು ಶಾಸಕ ಬಿ.ಎನ್. ರವಿಕುಮಾರ್ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ ನಂತರ, ಈ ಹೋರಾಟವು ರೈತರ ಹಿತರಕ್ಷಣೆಗಿಂತ ಹೆಚ್ಚಾಗಿ ರಾಜಕೀಯ ಕೆಸರೆರಚಾಟಕ್ಕೆ ಸೀಮಿತಗೊಂಡಿದೆ.
ಮಹಿಳಾ ಮೀಸಲಾತಿಗೆ ಸೋಲು : ಬಿಜೆಪಿ ವಿರುದ್ದ ಕಾಂಗ್ರೆಸ್ ನಾರಿಶಕ್ತಿಯರ 'Pan India' ಕೌಂಟರ್, ಪ್ಲ್ಯಾನ್ ರೆಡಿ!
Congress Mahila Congress Vs BJP : ಕ್ಷೇತ್ರ ಪುನರ್ ವಿಂಗಡಣೆಗೆ ತುಳುಕು ಹಾಕಿ, ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿತ್ತು. ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇರಲಿಲ್ಲ. ಬಿಜೆಪಿಯ ಸುಳ್ಳು ಆಪಾದನೆಗೆ ಕೌಂಟರ್ ಕೊಡಲು, ದೇಶಾದ್ಯಂತ ಪ್ರತಿಭಟನೆ ಮತ್ತು ಪೋಸ್ಟ್’ಕಾರ್ಡ್ ಅಭಿಯಾನ ನಡೆಸಲು, ಕಾಂಗ್ರೆಸ್ಸಿನ ಮಹಿಳಾ ಘಟಕ ನಿರ್ಧರಿಸಿದೆ.
ಉಡುಪಿಯಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ ಆತಂಕದ ಮೊರೆತ: ಕಡಲ್ಕೊರೆತ, ವಿಪರೀತ ಮಿಂಚು-ಸಿಡಿಲಿಗೆ ಇದೆಯೇ ಪರಿಹಾರ?
ಇನ್ನೊಂದು ತಿಂಗಳಲ್ಲಿ ಮುಂಗಾರು ಪ್ರವೇಶವಾಗಲಿದೆ. ಪ್ರತೀ ಬಾರಿ ಕಡಲ್ಕೊರೆತದಿಂದ ನಿರ್ಗತಿಕರಾಗುವ ಜನ, ಸಿಡಿಲು-ಮಿಂಚಿಗೆ ಬಲಿಯಾಗುವ ಜನ ಜಾನುವಾರು, ಪ್ರವಾಹ ಸ್ಥಿತಿ ಇವುಗಳಿಗೆಲ್ಲ ಪರಿಹಾರ ಕೊಡಬೇಕಾದ ಆಡಳಿತ ಮುಂಗಾರು ಬಂದಾಗಲೇ ಸಿದ್ಧರಾಗ್ತೇವೆ ಎನ್ನುವ ಧೋರಣೆಯಲ್ಲಿ ಇದ್ದಂತಿದೆ.
ಆಪಲ್ ಸಾಮ್ರಾಜ್ಯಕ್ಕೆ ಹೊಸ ಬಾಸ್! ಯಾರು ಈ ಜಾನ್ ಟೆರ್ನಸ್?
ಸುದೀರ್ಘ ಕಾಲ ಆಪಲ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಟಿಮ್ ಕುಕ್ ಅವರು ಸಿಇಒ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಕಂಪನಿಯ ಹಾರ್ಡ್ವೇರ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದ ಜಾನ್ ಟೆರ್ನಸ್ ಅವರು ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಜಾನ್ ಟೆರ್ನಸ್ ಅವರು ಸೆಪ್ಟೆಂಬರ್ 1, 2026 ರಿಂದ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಪಶ್ಚಿಮ ಬಂಗಾಳ | ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ನಿಷೇಧ: ಪ್ರವಾಸೋದ್ಯಮಕ್ಕೆ ಭಾರೀ ನಷ್ಟ
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂದಿನ ಹದಿನೈದು ದಿನಗಳ ಅವಧಿಯಲ್ಲಿ ಒಂಬತ್ತೂವರೆ ದಿನ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಭಾರಿ ನಷ್ಟ ಉಂಟಾಗಲಿದೆ. ವಿವಿಧ ಜಿಲ್ಲಾಡಳಿತಗಳ ಆದೇಶವು ಆತಿಥ್ಯ ಉದ್ಯಮ ಹಾಗೂ ಸಂಜೆಯ ಪಾನಪ್ರಿಯರನ್ನು ಕಂಗೆಡಿಸಿದೆ. ಚುನಾವಣಾ ಆಯೋಗದ ನಿಯಮಾವಳಿಯ ಅನ್ವಯ 48 ಗಂಟೆಗಳ ಕಾಲ ಮಾತ್ರ ಮದ್ಯನಿಷೇಧ ಜಾರಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಜಿಲ್ಲಾಡಳಿತದಿಂದ ಮದ್ಯನಿಷೇಧ ಕುರಿತು ಮೌಖಿಕ ಆದೇಶ ಬಂದಿದೆ ಎಂದು ಅಬ್ಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಆಲ್ಕೋಹಾಲ್ ಮಾರಾಟದಲ್ಲಿ ಭಾರಿ ಹೆಚ್ಚಳ ಕಂಡುಬಂದಿರುವ ಬೆನ್ನಲ್ಲೇ, ಮತದಾರರು ಮದ್ಯದ ಆಮಿಷಗಳಿಗೆ ಬಲಿಯಾಗಬಾರದು ಎಂಬ ಕಾರಣಕ್ಕೆ ನಿಷೇಧದ ಅವಧಿಯನ್ನು ವಿಸ್ತರಿಸಿ ನಿಗಾ ವಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಸುಮಾರು 5 ಸಾವಿರ ಬಾರ್ ಮತ್ತು ಮದ್ಯ ಮಾರಾಟ ಮಳಿಗೆಗಳಿದ್ದು, ದಿನಕ್ಕೆ 80–90 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗುತ್ತಿದೆ. ಮದ್ಯ ಮಾರಾಟ ನಿಷೇಧದಿಂದ ಆತಿಥ್ಯ ಉದ್ಯಮಕ್ಕೆ ರಾಜ್ಯದಾದ್ಯಂತ ಸುಮಾರು 1400 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದ್ದು, ಕೊಲ್ಕತ್ತಾ ನಗರದಲ್ಲೇ 900 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಹೇಳಲಾಗಿದೆ.
Karnataka Weather: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏ.25ರವರೆಗೆ ಮಳೆ, ತಾಪಮಾನ ಮುನ್ಸೂಚನೆ ಹೀಗಿದೆ
ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದರ ಮಧ್ಯೆ ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಗಂಟೆಗೆ 30-40 ಕಿಲೋ ಮೀಟರ್ ವೇಗದ ಗಾಳಿ ಮತ್ತು ಗುಡುಗು ಸಹಿತ ಜೋರು ಮಳೆ ಆಗಿದೆ. ಗಾಳಿಯ ಅಬ್ಬರಕ್ಕೆ ರಸ್ತೆ ಬದಿ ವ್ಯಾಪಾರಸ್ಥರು ಪರದಾಡಿದ್ದಾರೆ. ಇದೀಗ ಮುಂದಿನ ಒಂದು ವಾರವು ವಿವಿಧ ಜಿಲ್ಲೆಗಳಲ್ಲಿ ಮಳೆ, ಬಿಸಿಲಿನ ಶಾಖ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ
ಜಿಬಿಎ ಗೆ ತೆರಿಗೆ ಕಟ್ಟದ ಲಕ್ಷಾಂತರ ಕಟ್ಟಡ ಮಾಲೀಕರು ಬೆಂಗಳೂರಲ್ಲಿದ್ದಾರೆ. ಎಷ್ಟೇ ನೋಟಿಸ್ ಕೊಟ್ಟರೂ, ಹರಾಜು ಪ್ರಕ್ರಿಯೆಗೆ ಮುಂದಾದರೂ ಮಾಲೀಕರು ಮಾತ್ರ ಜಗ್ಗುತ್ತಿಲ್ಲ. ಹೀಗಾಗಿ ಜಿಬಿಎ ಆಸ್ತಿಗಳನ್ನು ತಾನೇ ಖರೀದಿಗೆ ಮುಂದಾಗಿದೆ.
ಬಿಡಿಎ ಶಿವರಾಮ ಕಾರಂತ ಬಡಾವಣೆ ನಿವೇಶನಗಳತ್ತ ಆಕಾಂಕ್ಷಿಗಳ ಚಿತ್ತ: ಸೈಟ್ಗಾಗಿ ಇನ್ನೆಷ್ಟು ದಿನ ಕಾಯಬೇಕು?
ಶಿವರಾಮ ಕಾರಂತ ಬಡಾವಣೆ ಸಾಕಷ್ಟು ಸುದ್ದಿಯಲ್ಲಿರುವ , ಶೀಘ್ರ ಅಭಿವೃದ್ಧಿಯಾಗುತ್ತಿರುವ ಬಡಾವಣೆಯಾದರೂ ನಿವೇಶನ ಹಂಚಿಕೆಗೆ ಇನ್ನೂ ದಿನ ಬಂದಿಲ್ಲ. ಭೂಮಿ ಕೊಟ್ಟು ನಿರ್ಗತಿಕರಾಗಿರುವ ರೈತರು, ನಿವೇಶನ ಹಂಚಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
Jasprit Bumrah: ಕೊನೆಗೂ ಈ ಸೀಸನ್ನಲ್ಲಿ ಮೊದಲ ವಿಕೆಟ್ ಪಡೆದು ಸಂಭ್ರಮಿಸಿದ ವಿಶ್ವದ ನಂ.1 ಬೌಲರ್ ಜಸ್ಪ್ರಿತ್ ಬುಮ್ರಾ
Jasprit Bumrah: ಅಹಮದಾಬಾದ್ನಲ್ಲಿ ಸೋಮವಾರ (ಏಪ್ರಿಲ್ 20) ನಡೆದ ಐಪಿಎಲ್ 2026ರ 30ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ 99 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತು. ವಿಶೇಷ ಅಂದ್ರೆ, ಈ ಸೀಸನ್ ಆರಂಭದಿಂದ ಕಳೆದ ಐದು ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದ ವಿಶ್ವದ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ, ಅಂತಿಮವಾಗಿ ವಿಕೆಟ್
ಜೆಇಇ ಫಲಿತಾಂಶ ಪ್ರಕಟ; ಆದಿತ್ಯ ಸಿಂಗ್ಗೆ 87ನೆ ರ್ಯಾಂಕ್
ಬೆಂಗಳೂರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ದೇಶದ ಪ್ರತಿಷ್ಟಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಫಲಿತಾಂಶ ಪ್ರಕಟಿಸಿದ್ದು, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಮಾರತ್ತಹಳ್ಳಿ ಬ್ರಾಂಚ್ನಲ್ಲಿ ಕಲಿಯುತ್ತಿರುವ ಆದಿತ್ಯ ಸಿಂಗ್ ಅಖಿಲ ಭಾರತ ಮಟ್ಟದಲ್ಲಿ 87ನೆ ರ್ಯಾಂಕ್(ಶೇ.99-99), ರಾಮ್ ನಿಖಿಲ್-135ನೆ ರ್ಯಾಂಕ್(ಶೇ.99.99), ತನ್ಮಯ ಎಚ್.ಜಿ. -381ನೇ ರ್ಯಾಂಕ್, ಸುಧನವನ್-497ನೆ ರ್ಯಾಂಕ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸೀಮಾ ಬೊಪಣ್ಣ ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎ.24ರ ಮಧ್ಯಾಹ್ನ 2 ಗಂಟೆಗೆ ಸಚಿವ ಸಂಪುಟದ ವಿಶೇಷ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮುಂದಿನ ತಿಂಗಳು ಹೊಸ ರಾಜಕೀಯ ಪಕ್ಷ: ಯತ್ನಾಳ್
ವಿಜಯಪುರ : ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ವಿಚಾರ ಪ್ರಾರಂಭ ಮಾಡುತ್ತೇನೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಜಿಲ್ಲಾ ಕೇಂದ್ರ ನಂತರ ತಾಲೂಕು ಕೇಂದ್ರ ಪ್ರವಾಸ ಮಾಡುತ್ತೇನೆ. ಹಿಂದೂಪರ ಚಿಂತನೆ ಉಳ್ಳವರು, ನಿರುದ್ಯೋಗಿ ಯುವಕರು, ಅಭಿವೃದ್ಧಿ ಚಿಂತನೆ ಪರ ಇರುವ ಜನರ ಸಭೆ ಮಾಡುತ್ತೇನೆ. ಜನರ ಅಭಿಪ್ರಾಯ ಪಡೆದು ಮುಂದೆ ಪ್ರಾದೇಶಿಕ ಪಕ್ಷ ಕಟ್ಟುವ ಬಗ್ಗೆ ಚಿಂತನೆ ಮಾಡುತ್ತೇನೆ. ಚುನಾವಣೆ ಆಯೋಗ ಪಕ್ಷಕ್ಕೆ ಯಾವ ಚಿಹ್ನೆ ಕೊಡುತ್ತಾರೆ ನೋಡಬೇಕು ಎಂದು ಅವರು ಹೇಳಿದರು. ಹಿಂದುತ್ವ, ನಿರುದ್ಯೋಗ, ಅಭಿವೃದ್ಧಿ ಮೂರು ಉದ್ದೇಶಗಳೊಂದಿಗೆ ಸಭೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಬಗ್ಗೆ ಜನರ ಅಭಿಪ್ರಾಯ ಪಡೆಯುತ್ತೇನೆ. ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಪ್ರಾರಂಭವಾಗಿದೆ. ಮೇ ತಿಂಗಳಲ್ಲಿ ಒಳ್ಳೆಯ ಮುಹೂರ್ತ ನೋಡಿ ರಾಜ್ಯದಂತ ಪ್ರವಾಸ ಮಾಡುತ್ತೇನೆ ಎಂದು ಯತ್ನಾಳ್ ತಿಳಿಸಿದರು.
ವಕೀಲೆಗೆ ಬೂಟು ಕಾಲಿನಿಂದ ಒದ್ದು ಹಲ್ಲೆ ಆರೋಪ; ಮಹಿಳಾ ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶ
ಬೆಂಗಳೂರು : ರಸ್ತೆ ಜಗಳ (ರೋಡ್ ರೇಜ್) ಸಂಬಂಧ ದೂರು ನೀಡಲು ತೆರಳಿದ್ದ ಮಹಿಳಾ ವಕೀಲೆ ಠಾಣೆಯಲ್ಲಿ ದಾಂಧಲೆ ಎಬ್ಬಿಸಿದ್ದಾರೆ ಎಂಬ ಕಾರಣಕ್ಕೆ ಬೂಟು ಕಾಲಿನಲ್ಲಿ ಒದ್ದು ಹಲ್ಲೆ ನಡೆಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶಿಸಿದೆ. ನಗರದ ಮೈಕೋ ಲೇಔಟ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ವಕೀಲೆ ನಬೋನಿತಾ ಸೇನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಇದೇ ವೇಳೆ, ಅರ್ಜಿದಾರ ವಕೀಲೆಯ ವಿರುದ್ಧ ತಡೆ ನೀಡುವುದಕ್ಕೂ ನ್ಯಾಯಪೀಠ ನಿರಾಕರಿಸಿದೆ. ಪೊಲೀಸ್ ಠಾಣೆಯ ಟೇಬಲ್ ಮೇಲಿನ ಕೆಲ ದಾಖಲೆಗಳನ್ನು ಅರ್ಜಿದಾರೆ ಎಳೆದು ಬಿಸಾಡಿದರು ಎಂಬ ಕಾರಣಕ್ಕೆ ಮಹಿಳಾ ಪೊಲೀಸ್ ಅಧಿಕಾರಿ ಪದ್ಮಾವತಿ ಅವರು ಸಕಾರಣವಿಲ್ಲದೆ ಬೂಟಿನ ಕಾಲಿನಲ್ಲಿ ಒದ್ದಿದ್ದಾರೆ ಎನ್ನುವುದು ಠಾಣೆಯ ಸಿಸಿ ಕ್ಯಾಮರಾ ದೃಶ್ಯಾವಳಿಯಿಂದ ಖಾತ್ರಿಯಾಗಿದೆ. ಆದರೂ, ಪದ್ಮಾವತಿ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಆದ್ದರಿಂದ, ಇಂಥ ಕೃತ್ಯ ಎಸಗಿದ ಅಧಿಕಾರಿಗೆ ಇಲಾಖಾ ವಿಚಾರಣೆಯ ಮೂಲಕ ಎಚ್ಚರಿಕೆ ನೀಡುವುದಲ್ಲ, ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಆದೇಶಿಸಿತು. ವಕೀಲೆಯ ನಡೆಗೂ ಹೈಕೋರ್ಟ್ ಆಕ್ಷೇಪ: ವಿಚಾರಣೆಯ ವೇಳೆ ನ್ಯಾಯಪೀಠ ಅರ್ಜಿದಾರೆ ವಕೀಲೆಯನ್ನು ಕುರಿತು, ಪೊಲೀಸ್ ಠಾಣೆಯಲ್ಲಿ ದಾಂಧಲೆ ಸೃಷ್ಟಿಸಿದ್ದೇಕೆ? ಠಾಣೆಯ ಕಾಗದಗಳನ್ನು ಬಿಸಾಡಿರುವುದು ಏಕೆ? ಪ್ರಕರಣ ದಾಖಲಿಸಿದ್ದು, ವಿಳಂಬವಾಯಿತು ಎಂದು ಹೀಗೆಲ್ಲ ಮಾಡಬಹುದೇ? ನಿಮಗೆ ಬೂಟಿನ ಕಾಲಿನಲ್ಲಿ ಒದ್ದ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಲಾಗುವುದು. ಆದರೆ, ವಕೀಲೆಯಾಗಿದ್ದು ಕೊಂಡು ನೀವು ನಡೆದುಕೊಂಡಿರುವ ರೀತಿಯೂ ಸರಿಯಲ್ಲ. ಪೊಲೀಸ್ ಅಧಿಕಾರಿಯಾಗಿ ಅವರು ನಡೆದುಕೊಂಡಿರುವುದೂ ಸರಿಯಿಲ್ಲ. ಆದ್ದರಿಂದ, ನಿಮ್ಮ ವಿರುದ್ಧದ ಪ್ರಕರಣವೂ ಮುಂದುವರಿಯಲಿದೆ ಎಂದು ಹೇಳಿತು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸುವುದಕ್ಕೆ ವಿರೋಧವಿಲ್ಲ. ಆದರೆ, ಈ ಅರ್ಜಿಯನ್ನು ಮುಕ್ತಾಯಗೊಳಿಸಬಾರದು. ಅರ್ಜಿದಾರೆ ಅತ್ಯಂತ ಕೆಟ್ಟ ಭಾಷೆ ಬಳಸಿದ್ದಾರೆ ಎಂದರು. ಅರ್ಜಿದಾರೆಯ ಪರ ವಾದ ಮಂಡಿಸಿದ ವಕೀಲ ಡಿ.ಎಲ್. ಮೂರ್ತಿ, ಪೊಲೀಸರು ಎರಡು ಗಂಟೆ ಕಾಯುವಂತೆ ಮಾಡಿದ್ದಾರೆ. ಪ್ರಕರಣದಿಂದಾಗಿ ಕೆಲಸವೂ ಹೋಗಿದೆ ಎಂದರು. ಆಗ ನ್ಯಾಯಪೀಠ, ಪೊಲೀಸ್ ಅಧಿಕಾರಿ ಪದ್ಮಾವತಿ ಅವರ ಸೇವಾ ದಾಖಲೆಗಳಲ್ಲಿ ಪ್ರಕರಣ ದಾಖಲಾಗಿರುವುದನ್ನು ಉಲ್ಲೇಖಿಸಬೇಕು. ಅವರಿಗೆ ಯಾವುದೇ ಪದೋನ್ನತಿ ನೀಡಬಾರದು. ಇನ್ಸ್ಪೆಕ್ಟರ್ (ಮಡಿವಾಳ ಪೊಲೀಸ್ ಠಾಣೆ) ಆಗಿಯೇ ಅವರು ನಿವೃತ್ತಿ ಹೊಂದಬೇಕು ಎಂದು ಹೇಳಿತು. ಮುಂದುವರಿದು, ಎರಡು ಗಂಟೆ ಕಾಯಿಸಲಾಗಿದೆ ಎಂದು ಠಾಣೆಯ ಟೇಬಲ್ ಮೇಲಿನ ದಾಖಲೆಗಳನ್ನು ಆಕ್ರೋಶದಿಂದ ಮಹಿಳಾ ವಕೀಲೆ ಎತ್ತಿ ಬಿಸಾಡಿದ್ದರು. ಇದರಿಂದ, ರಾತ್ರಿ ಗಸ್ತನಲ್ಲಿದ್ದ ಇನ್ಸ್ಪೆಕ್ಟರ್ ಪದ್ಮಾವತಿ ಅವರು ಬೂಟು ಕಾಲಿನಲ್ಲಿ ವಕೀಲೆಯ ಮೇಲೆ ಹಲ್ಲೆ ನಡೆಸಿದ್ದರು. ಇತರ ಪೊಲೀಸರು ಏಕೆ ಇದನ್ನು ತಡೆಯಲಿಲ್ಲ ಎಂದು ಕೇಳಿತು. ಪ್ರಕರಣವೇನು? ಅರ್ಜಿದಾರ ವಕೀಲೆ 2025ರ ಫೆಬ್ರವರಿ 23ರಂದು ಕಾರಿನಲ್ಲಿ ತೆರಳುತ್ತಿದ್ದಾಗ ಆಟೋ ಚಾಲಕನೊಬ್ಬ ಕಾರನ್ನು ಹಿಂದಿಕ್ಕಿ ಅಡ್ಡಗಟ್ಟಿ ಕಾರಿಗೆ ಕಲ್ಲಿನಿಂದ ಹಲ್ಲೆ ನಡೆಸಿ, ಕಿಟಕಿಯ ಗಾಜು ಪುಡಿಗಟ್ಟಿದ್ದನು. ಈ ಸಂಬಂಧ ದೂರು ದಾಖಲಿಸಲು ವಕೀಲೆ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಎರಡು ಗಂಟೆ ಪೊಲೀಸರು ಕಾಯುವಂತೆ ಮಾಡಿದ್ದರಿಂದ ಸಿಟ್ಟಿಗೆದ್ದ ಆಕೆ ಠಾಣೆಯಲ್ಲಿ ದಾಂದಲೆ ಎಬ್ಬಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಪದ್ಮಾವತಿ ವಕೀಲೆಗೆ ಬೂಟು ಕಾಲಿನಿಂದ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
MI Vs GT: ತಿಲಕ್ ವರ್ಮಾ ಸಿಡಿಲಬ್ಬರದ ಶತಕ, ಮುಂಬೈ ಇಂಡಿಯನ್ಸ್ ಬೌಲರ್ಗಳ ದಾಳಿಗೆ ಗುಜರಾತ್ ಟೈಟಾನ್ಸ್ ಧೂಳೀಪಟ
MI Vs GT IPL 2026: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 20) ಐಪಿಎಲ್ 2026ರ 30ನೇ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 99 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ತಿಲಕ್ ವರ್ಮಾ ಅವರ ಸ್ಫೋಟಕ ಶತಕ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಮುಂಬೈ ಸತತ ಸೋಲಿನ ಸುಳಿಯಿಂದ
Karnataka High Court- ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಬ್ಯಾಂಕಿನ ಮೊಹರು ಅಥವಾ ಸಹಿಯಿಲ್ಲದ ಕಂಪ್ಯೂಟರ್ ಆಧಾರಿತ 'ರಿಟರ್ನ್ ಮೆಮೊ'ಗಳನ್ನು ಮಾನ್ಯ ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚೆಕ್ ಕ್ಲಿಯರಿಂಗ್ ಪ್ರಕ್ರಿಯೆ ವಿದ್ಯುನ್ಮಾನ ವಿಧಾನದಲ್ಲಿ ನಡೆಯುವುದರಿಂದ ಭೌತಿಕ ಸಹಿ ಅಥವಾ ಸೀಲು ಕಡ್ಡಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಮೂಲಕ 3 ಲಕ್ಷ ರೂಪಾಯಿ ಸಾಲದ ಪ್ರಕರಣದಲ್ಲಿ ಆರೋಪಿಯ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳು, ಕೆಳಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆ ಮತ್ತು ದಂಡವನ್ನು ಎತ್ತಿ ಹಿಡಿದಿದ್ದಾರೆ. ಈ ಆದೇಶವು ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ ಕಾನೂನು ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ
ಬೆಂಗಳೂರು : ಗೃಹ ಇಲಾಖೆಯ ಅಧೀನದಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಡಿಸಿಆರ್ಇ (ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ) ಇನ್ಸ್ಪೆಕ್ಟರ್ ಟಿ.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ. ಈ ಬಗ್ಗೆ ಡಿಸಿಆರ್ಇನ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರಿಗೆ ಬರೆದ ಪತ್ರವನ್ನು ಅವರು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ. ಈ ಸಂಬಂಧ ಇತ್ತೀಚೆಗೆ ವೀಡಿಯೊವನ್ನು ಕೂಡಾ ಬಿಡುಗಡೆ ಮಾಡಿರುವ ಅವರು, ಎಸ್ಸಿ, ಎಸ್ಟಿ ಮೇಲಿನ ದೌರ್ಜನ್ಯ ಪ್ರಕರಣ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ಕಿರುಕುಳ ಆಗುತ್ತಿದೆ ಎಂದು ದೂರಿದ್ದಾರೆ. ಟಿ.ಆರ್.ಶ್ರೀನಿವಾಸ್ ಅವರು ವೀಡಿಯೊದಲ್ಲಿ ಡಿಸಿಆರ್ಇನ ಎಸ್ಪಿ ಕರಿಬಸನಗೌಡ ಹಾಗೂ ಡಿವೈಎಸ್ಪಿ ಮಹೇಶ್ವರಗೌಡ ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಮೇಲ್ಜಾತಿಯ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಮತ್ತು ತನ್ನ ವಿರುದ್ಧ ಸುಳ್ಳು ದೂರುಗಳನ್ನು ಸ್ವೀಕರಿಸಿ, ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಎಂದು ಇನ್ಸ್ಪೆಕ್ಟರ್ ಟಿ.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ. ತನ್ನನ್ನು ಅಧಿಕೃತವಾಗಿ ಡಿಸಿಆರ್ಇನಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ. ಆದರೆ, ಎಸ್ಪಿ ಕರಿಬಸನಗೌಡರು ಹಾಗೂ ಕೆಳಹಂತದ ಡಿವೈಎಸ್ಪಿ ಮಹೇಶ್ವರಗೌಡ ಅವರು, ತನ್ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆಯೆಂದು ನಕಲಿ ದಾಖಲೆ ಸೃಷ್ಟಿಸಿ ಕಳಿಸಿದ್ದಾರೆ. ಇದು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ( ಕೆಎಟಿ) ಆದೇಶಕ್ಕೆ ವಿರುದ್ಧವಾದುದಾಗಿದೆ. 20 ವರ್ಷ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಕೆಲಸ ಮಾಡಿದ್ದು, ಈಗ ನನ್ನ ವಿರುದ್ಧ ಕುತಂತ್ರ ನಡೆಸಲಾಗುತ್ತಿದೆ ಎಂದು ಟಿ.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ. ದಲಿತರ ಪರ ಕೆಲಸ ಮಾಡುವುದು, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ದೊಡ್ಡ ತಪ್ಪು ಅಂತನಿಸುತ್ತದೆ. ಅದರಲ್ಲೂ ನಾವು ದಲಿತರೆಂದು ಸಾಕಷ್ಟು ಕೆಲಸ ಕಾರ್ಯ ಮಾಡುತ್ತಾ ಬರುತ್ತಿದ್ದೇವೆ. ದಲಿತ ಅಧಿಕಾರಿಗಳಿಗೆ ಕರ್ನಾಟಕ ಸರಕಾರದಲ್ಲಿ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಇಲಾಖೆಯಲ್ಲಿ ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ, ಬದಲಿಗೆ ಎಲ್ಲವೂ ಮೇಲ್ಜಾತಿಯವರದ್ದೇ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅವಘಡ ಆಗುವುದಕ್ಕೆ ಕಾರಣ ಮಾಡಿಕೊಡಬೇಡಿ ಎಂದು ಟಿ.ಆರ್.ಶ್ರೀನಿವಾಸ್ ವೀಡಿಯೊದಲ್ಲಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ಅವಘಡಕ್ಕೆ ನೀವೇ ಹೊಣೆಗಾರರು ಎಂದು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಡಿಜಿ-ಐಜಿಪಿ ಅವರನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ಕಳೆದ ತಿಂಗಳು ಶ್ರೀನಿವಾಸ್ ಅವರನ್ನು ಡಿಸಿಆರ್ಇನಿಂದ ವರ್ಗಾವಣೆ ಮಾಡಲಾಗಿತ್ತು. ಆದರೆ ಶ್ರೀನಿವಾಸ್ ಅವರು ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ (ಕೆಎಟಿ)ದ ಮೊರೆಹೋಗಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು. ಡಿಸಿಆರ್ಇ ಇನ್ಸ್ಪೆಕ್ಟರ್ ಶ್ರೀನಿವಾಸ್ ಮಾಡಿರುವ ಆರೋಪಗಳನ್ನು ಎಸ್ಪಿ ಕರಿಬಸನ ಗೌಡ ನಿರಾಕರಿಸಿದ್ದಾರೆ.
MI Vs GT- ತಿಲಕ್ ಶತಕಕ್ಕೆ ದಿಕ್ಕು ತಪ್ಪಿದ ಗುಜರಾತ್ ಟೈಟಾನ್ಸ್ ಅನ್ನು ಕಟ್ಟಿಹಾಕಿದ ಅಶ್ವನಿ; ಹಾರ್ದಿಕ್ ಬಳಗ ಜಯಭೇರಿ
ಸಂಕಷ್ಟದ ಸಮಯದಲ್ಲಿ ತಿಲಕ್ ವರ್ಮಾ ಅತ್ಯುದ್ಭುತ ಶತಕ, ಬಳಿಕ ಅಶ್ವನಿ ಕುಮಾರ್ ನೀಡಿದ ಬಲವಾದ ಹೊಡೆತ! ಇದರಿಂದ ಕಂಗೆಟ್ಟ ಗುಜರಾತ್ ಟೈಟಾನ್ಸ್ ತಂಡ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 99 ರನ್ ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ ಆಡಿರುವ 6 ಪಂದ್ಯಗಳಿಂದ 2ನೇ ಗೆಲುವು ದಾಖಲಿಸಿದ ಹಾರ್ದಿಕ್ ಪಾಂಡ್ಯ ಬಳಗ ಇದೀಗ ಒಟ್ಟು 4 ಅಂಕಗಳೊಂದಿಗೆ ಯಲ್ಲಿ ಕೊನೇ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಪ್ರಿಲ್ 20 ಸೋಮವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ಟೈಟಾನ್ಸ್ ತಂಡ ಕೇವಲ 15.5 ಓವರ್ ಗಳಲ್ಲಿ 100 ರನ್ ಗಳಿಗೆ ಆಲೌಟ್ ಆಯಿತು. () ಸಂಕ್ಷಿಪ್ತ ಸ್ಕೋರ್ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 199/5, ತಿಲಕ್ 101(45), ನಮನ್ ಧಿರ್ 45(32), ಸೂರ್ಯಕುಮಾರ್ 15(10), ಹಾರ್ದಿಕ್ 15(10), ರಬಾಡ 33ಕ್ಕೆ3, ಸಿರಾಜ್ 25ಕ್ಕ 1, ಪ್ರಸಿದ್ಧ ಕೃಷ್ಣ 54ಕ್ಕೆ1. ಗುಜರಾತ್ ಟೈಟಾನ್ಸ್ 15.5 ಓವರ್ ಗಳಲ್ಲಿ 100ಕ್ಕೆ ಆಲೌಟ್, ವಾಶಿಂಗ್ಟನ್ ಸುಂದರ್ 26(17), ಗಿುಲ್ 14(13), ಶಾರುಖ್ ಖಾನ್ 17(13), ರಬಾಡಾ 12(14), ಅಶ್ವನಿ ಕುಮಾರ್ 24ಕ್ಕೆ 4, ಗಜನ್ ಫರ್ 17ಕ್ಕೆ 2, ಮಿಚೆಲ್ ಸ್ಯಾಂಟ್ನರ್ 16ಕ್ಕೆ 2.
IPL 2026 | ಗುಜರಾತ್ ವಿರುದ್ಧ ಮುಂಬೈಗೆ 99 ರನ್ಗಳ ಭರ್ಜರಿ ಜಯ
ಅಹ್ಮದಾಬಾದ್, ಎ.20: ಮಧ್ಯಮ ಸರದಿಯ ಬ್ಯಾಟರ್ ತಿಲಕ್ ವರ್ಮಾ ಐಪಿಎಲ್ ನಲ್ಲಿ ಗಳಿಸಿದ ಚೊಚ್ಚಲ ಶತಕ (ಔಟಾಗದೆ 101, 45 ಎಸೆತ, 8 ಬೌಂಡರಿ, 7 ಸಿಕ್ಸರ್) ಹಾಗೂ ಅಶ್ವನಿ ಕುಮಾರ್ (4-24) ಅಮೋಘ ಬೌಲಿಂಗ್ ಬೆಂಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು 99 ರನ್ ಗಳ ಅಂತರದಿಂದ ಮಣಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್ ನ 30ನೇ ಪಂದ್ಯದಲ್ಲಿ ಗುಜರಾತ್ ತಂಡದಿಂದ ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ತಂಡವು ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 199 ರನ್ ಗಳಿಸುವಲ್ಲಿ ಶಕ್ತವಾಯಿತು. ಗೆಲ್ಲಲು 200 ರನ್ ಗುರಿ ಪಡೆದ ಗುಜರಾತ್ ತಂಡ ಯಾವುದೇ ಹಂತದಲ್ಲೂ ಹೋರಾಟವನ್ನು ನೀಡದೆ 15.5 ಓವರ್ಗಳಲ್ಲಿ 100 ರನ್ ಗಳಿಸಿ ಸರ್ವಪತನ ಕಂಡಿದೆ. ಸಾಯಿ ಸುದರ್ಶನ್ (0) ಜಸ್ಪ್ರಿತ್ ಬುಮ್ರಾ ಅವರ ಇನಿಂಗ್ಸ್ನ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಜೋಸ್ ಬಟ್ಲರ್ (5 ರನ್) ಎರಡನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಶುಭಮನ್ ಗಿಲ್ (14 ರನ್) ಅವರಿಗೆ ಅಶ್ವನಿ ಕುಮಾರ್ ಪೆವಿಲಿಯನ್ ಹಾದಿ ತೋರಿಸಿದರು. ಗ್ಲೆನ್ ಫಿಲಿಪ್ಸ್ (6 ರನ್), ರಾಹುಲ್ ಟೆವಾಟಿಯಾ (8 ರನ್), ರಶೀದ್ ಖಾನ್ (4 ರನ್), ಶಾರುಖ್ ಖಾನ್ (17 ರನ್) ಪೆವಿಲಿಯನ್ಗೆ ಪರೇಡ್ ನಡೆಸಿದರು. ಮುಂಬೈ ಪರ ಅಶ್ವನಿ ಕುಮಾರ್ ಯಶಸ್ವಿ ಪ್ರದರ್ಶನ ನೀಡಿದರು. ಮಿಚೆಲ್ ಸ್ಯಾಂಟ್ನರ್ (2-16) ಹಾಗೂ ಘಝಾನ್ ಫರ್ (2-17) ತಲಾ ಎರಡು ವಿಕೆಟ್ ಗಳನ್ನು ಪಡೆದರು. ಇದಕ್ಕೂ ಮೊದಲು ಮುಂಬೈ ತಂಡದ ಇನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿಕಾಕ್ (13 ರನ್, 11 ಎಸೆತ) ಹಾಗೂ ದಾನಿಶ್ ಮಾಲೆವಾರ್ (2 ರನ್, 4 ಎಸೆತ) ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಚೊಚ್ಚಲ ಪಂದ್ಯವನ್ನಾಡಿದ ದಾನಿಶ್ ಕೇವಲ ಎರಡು ರನ್ ಗೆ ಔಟಾದರು. ಡಿಕಾಕ್ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಸೂರ್ಯಕುಮಾರ ಯಾದವ್ (15 ರನ್) ಅವರು ಕಾಗಿಸೊ ರಬಾಡಗೆ ಕ್ಲೀನ್ ಬೌಲ್ಡ್ ಆದರು. ನಾಲ್ಕನೇ ವಿಕೆಟ್ ಗೆ 52 ರನ್ ಸೇರಿಸಿದ ತಿಲಕ್ ವರ್ಮಾ (ಔಟಾಗದೆ 101 ರನ್) ಹಾಗೂ ನಮನ್ ಧೀರ್ (45 ರನ್, 32 ಎಸೆತ, 6 ಬೌಂಡರಿ, 1 ಸಿಕ್ಸರ್) ತಂಡವನ್ನು ಆಧರಿಸಿದರು. ಧೀರ್ ಔಟಾದ ನಂತರ ನಾಯಕ ಹಾರ್ದಿಕ್ ಪಾಂಡ್ಯ (15 ರನ್, 16 ಎಸೆತ) ಅವರೊಂದಿಗೆ ಐದನೇ ವಿಕೆಟ್ ಗೆ 81 ರನ್ ಜೊತೆಯಾಟ ನಡೆಸಿದ ತಿಲಕ್ ತಂಡದ ಮೊತ್ತವನ್ನು ಹಿಗ್ಗಿಸಿದರು. 15 ರನ್ ಗೆ ಔಟಾದ ಪಾಂಡ್ಯ ಟೂರ್ನಿಯಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದರು. ತಿಲಕ್ ವರ್ಮಾ 45 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಗಳ ಸಹಿತ ಔಟಾಗದೆ 101 ರನ್ ಗಳಿಸಿ ಮುಂಬೈ ತಂಡವು ಗುಜರಾತ್ ತಂಡದ ಗೆಲುವಿಗೆ ಬರೋಬ್ಬರಿ 200 ರನ್ ಗುರಿ ನೀಡುವಲ್ಲಿ ನೆರವಾದರು. ಗುಜರಾತ್ ತಂಡದ ಪರ ಕಾಗಿಸೊ ರಬಾಡ (3-33) ಯಶಸ್ವಿ ಪ್ರದರ್ಶನ ನೀಡಿದರು. ಮುಹಮ್ಮದ್ ಸಿರಾಜ್ (1-25) ಹಾಗೂ ಪ್ರಸಿದ್ಧ ಕೃಷ್ಣ (1-54) ತಲಾ ಒಂದು ವಿಕೆಟ್ ಗಳನ್ನು ಪಡೆದರು. ►ಸಂಕ್ಷಿಪ್ತ ಸ್ಕೋರ್ ಮುಂಬೈ ಇಂಡಿಯನ್ಸ್: 20 ಓವರ್ ಗಳಲ್ಲಿ 199/5 (ತಿಲಕ್ ವರ್ಮಾ ಔಟಾಗದೆ 101, ನಮನ್ ಧೀರ್ 45, ಕಾಗಿಸೊ ರಬಾಡ 3-33) ಗುಜರಾತ್ ಟೈಟಾನ್ಸ್: 15.5 ಓವರ್ ಗಳಲ್ಲಿ 100 ರನ್ಗೆ ಆಲೌಟ್ (ಸುಂದರ್ 26, ಶಾರುಖ್ ಖಾನ್ 17, ಅಶ್ವನಿ ಕುಮಾರ್ 4-24, ಮಿಚೆಲ್ ಸ್ಯಾಂಟ್ನರ್ 2-16, ಘಝಾನ್ ಫರ್ 2-17)
DK Shivakumar: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡಲಾಗುತ್ತದೆ. ಇದೀಗ ಇದೇ ಮಾದರಿಯನ್ನು ಪಕ್ಕದ ರಾಜ್ಯ ತಮಿಳುನಾಡಿನಲ್ಲೂ ಜಾರಿ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ. ತಮಿಳುನಾಡಿನ ಉತ್ತಂಗರೈ
ವಿಮಾನ ಪತನ ವರದಿ ನಿರಾಕರಿಸಿದ ಛತ್ತೀಸ್ ಗಢ ಸರಕಾರ; ಯಾವುದೇ ಪುರಾವೆ ಪತ್ತೆಯಾಗಿಲ್ಲ ಎಂದ ಅಧಿಕಾರಿಗಳು
ರಾಯ್ಪುರ್: ಜಷ್ಪುರ್ ಜಿಲ್ಲೆಯಲ್ಲಿ ಖಾಸಗಿ ವಿಮಾನವೊಂದು ಪತನವಾಗಿದೆ ಎಂಬ ವರದಿಗಳನ್ನು ಸೋಮವಾರ ಅಲ್ಲಗಳೆದಿರುವ ಛತ್ತೀಸ್ ಗಢ ಸರಕಾರ, ಅಂತಹ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಗುಡ್ಡಗಾಡಿನಲ್ಲಿ ವಿಮಾನ ಪತನದ ಸ್ಫೋಟವನ್ನು ಕೇಳಿರುವುದಾಗಿ ಸ್ಥಳೀಯರು ಯಾರೂ ವರದಿ ಮಾಡಿಲ್ಲ ಎಂದೂ ಅದು ಹೇಳಿದೆ. ಜಷ್ಪುರ್-ನಾರಾಯಣ್ಪುರ್ ಪ್ರಾಂತ್ಯದಲ್ಲಿರುವ ಗುಡ್ಡಗಾಡಿನಲ್ಲಿ ಖಾಸಗಿ ವಿಮಾನವೊಂದು ಪತನಗೊಂಡು, ಇಬ್ಬರು ಪೈಲಟ್ ಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ ಬಳಿಕ ಈ ಸ್ಪಷ್ಟನೆ ಹೊರಬಿದ್ದಿದೆ. ಆದರೆ, ವಿಮಾನ ಪತನವಾಗಿರುವ ಯಾವುದೇ ವರದಿಗಳು ಬಂದಿಲ್ಲ ಎಂದು ರಾಜ್ಯ ಸರಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿವೆ. ಘಟನಾ ಸ್ಥಳದಲ್ಲಿ ದಟ್ಟವಾದ ಹೊಗೆ ಕಂಡು ಬಂದಿತ್ತು. ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳು, ವಿಮಾನ ಪತನದ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಜಿಲ್ಲಾಡಳಿತದ ಪ್ರಕಾರ, ಜಷ್ಪುರ್ ಜಿಲ್ಲೆಯ ನಾರಾಯಣ್ ಪುರ್ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸುತ್ತಿದೆ ಎಂಬ ವರದಿಗಳು ಬಂದಿದ್ದವು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ರೋಹಿತ್ ವ್ಯಾಸ್ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಲಾಲ್ ಉಮೆಂದ್ ಸಿಂಗ್ ತಪಾಸಣೆ ನಡೆಸಿದರು ಎಂದು ಹೇಳಲಾಗಿದೆ. ಈ ಕುರಿತು ಸ್ಥಳೀಯರಿಂದ ಮಾಹಿತಿಗಳನ್ನು ಪಡೆಯಲಾಯಿತು. ಯಾವ ಗ್ರಾಮಸ್ಥರೂ ಕೂಡ ಯಾವುದೇ ರೀತಿಯ ಸ್ಫೋಟದ ಸದ್ದು ಕೇಳಿಸಿತು ಎಂದು ಹೇಳಿಲ್ಲ ಹಾಗೂ ವಿಮಾನ ಪತನವಾಗಿರುವ ಬಗ್ಗೆ ಈವರೆಗೆ ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ರಾಜ್ಯ ಸರಕಾರ ಹೇಳಿದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ತಂಡಗಳು ಡ್ರೋನ್ ಕ್ಯಾಮೆರಾ ಬಳಸಿಕೊಂಡು ಈ ಪ್ರದೇಶದ ಮೇಲೆ ನಿಗಾ ವಹಿಸಿವೆ. ಆದರೆ, ಜಿಲ್ಲಾಡಳಿತಕ್ಕೂ ವಿಮಾನ ಪತನದ ಯಾವುದೇ ಪುರಾವೆ ದೊರೆತಿಲ್ಲ ಎಂದು ತಿಳಿದು ಬಂದಿದೆ.
ಕನಕಗಿರಿ | ಬಸವೇಶ್ವರರು ಸಮಾಜದ ಅಂಕುಡೊಂಕು ತಿದ್ದಿದ ಮಹಾನ್ ದಾರ್ಶನಿಕ : ವಿರುಪಾಕ್ಷಿ
ಕನಕಗಿರಿ: ಜಗಜ್ಯೋತಿ ಬಸವೇಶ್ವರರು ತಮ್ಮ ವಚನಗಳ ಮೂಲಕ ಆಗಿನ ಸಮಾಜದಲ್ಲಿ ಬೇರೂರಿದ್ದ ಅಂಕುಡೊಂಕು ತಿದ್ದಿದ ಮಹಾನ್ ದಾರ್ಶನಿಕ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುಪಾಕ್ಷಿ ತಿಳಿಸಿದರು. ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ಹಾಗೂ ಇಲ್ಲಿನ ವೀರಶೈವ ಲಿಂಗಾಯತ ಸಮಾಜದ ಸಹಯೋಗದಲ್ಲಿ ಸೋಮವಾರ ಬಸವೇಶ್ವರ ವೃತ್ತದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವಣ್ಣನವರು ಗೊಡ್ಡು ಸಂಪ್ರದಾಯ, ಕಂದಾಚಾರ, ಧಾರ್ಮಿಕ ಮೌಢ್ಯ ಇತರೆ ಸಾಮಾಜಿಕ ಪಿಡುಗುಗಳ ವಿರುದ್ದ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದರು ಎಂದು ತಿಳಿಸಿದರು. ಬಸವಣ್ಣನವರ ವಿಚಾರಗಳನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡರೆ ದೇಶದಲ್ಲಿ ಮೇಲು ಕೀಳು, ಶ್ರೇಷ್ಠ ಕನಿಷ್ಠ ಎಂಬ ಭಾವನೆ ಇರುತ್ತಿರಲಿಲ್ಲ ಎಂದು ಹೇಳಿದರು. ಪಿಐ ನಾರಾಯಣ ವಿ ಮಾತನಾಡಿ, ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬಸವಣ್ಣನವರು ಉನ್ನತ ಕುಲದಲ್ಲಿ ಜನಿಸಿದರೂ ಎಲ್ಲಾ ವರ್ಗದವರಿಗೂ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು ಎಂದು ತಿಳಿಸಿದರು. ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಬೋಧಿಸಿದ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ತಹಶೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿ, ಸತ್ಯ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಬರುತ್ತದೆ ಎಂಬುದನ್ನು ಬಸವಣ್ಣನ ವಚನಗಳ ಮೂಲಕ ಮನದಟ್ಟು ಮಾಡಿಕೊಳ್ಳಬೇಕು, ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿ ಎಲ್ಲಾ ಜಾತಿ, ವರ್ಗದ ಜನರನ್ನು ಒಂದುಗೂಡಿಸಿ ಸಮಾನತೆಯ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದರು ಎಂದರು. ತಾಲ್ಲೂಕು ಪಂಚಾಯತ್ ಪ್ರಭಾರ ಇಒ ರಾಜಶೇಖರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ವಕ್ತಾರ ಶರಣಬಸಪ್ಪ ಭತ್ತದ, ನಿವೃತ್ತ ಶಿಕ್ಷಕ ದೊಡ್ಡಪ್ಪ ಭಾವಿಕಟ್ಟಿ, ನೀಲಕಂಠ ಬಡಿಗೇರ ಮಾತನಾಡಿದರು. ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಕಂಠಿರಂಗ ನಾಯಕ, ಖಜಾನಾಧಿಕಾರಿ ದುರ್ಗಾಸಿಂಗ್, ಅರಣ್ಯ ವಲಯ ಪಾಲಕ ಮಹಾಂತೇಶ ಕುಂಬಾರ, ಮೇಲ್ವಿಚಾರಕರಾದ ಹುಸೇನಬೀ, ಪಂಪನಗೌಡ, ಸಿ ಆರ್ ಪಿ ವಿಜಯಕುಮಾರ ಹೊಸಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗಪ್ಪ ಸಜ್ಜನ, ಸುರೇಶ ಗುಗ್ಗಳಶೆಟ್ರ, ಅನಿಲಕುಮಾರ ಬಿಜ್ಜಳ, ಶೇಷಪ್ಪ ಪೂಜಾರ, ಸಿದ್ದೇಶ ಕಲುಬಾಗಿಲಮಠ, ರಾಕೇಶ ಕಂಪ್ಲಿ, ಗಂಗಾಧರ ಚೌಡ್ಕಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ವಾಗೀಶ ಹಿರೇಮಠ, ಪ್ರಶಾಂತ ಪ್ರಭುಶೆಟ್ಟರ್,ಶರಣಪ್ಪ ಭಾವಿಕಟ್ಟಿ, ವೈದ್ಯ ಡಾ.ಬಸವರಾಜ, ವಿವಿಧ ಸಂಘ- ಸಂಸ್ಥೆಗಳ ಪ್ರಮುಖರಾದ ಸಂಗಯ್ಯಸ್ವಾಮಿ, ಪಾಮಣ್ಣ ಅರಳಿಗನೂರು, ಸಿಂಧು ಬಲ್ಲಾಳ, ಸೇರಿದಂತೆ ಇತರರು ಇದ್ದರು.
ತಮ್ಮ ಅರ್ಜಿಯ ವಿಚಾರಣೆಯಿಂದ ಸ್ವಯಂ ಹಿಂದೆ ಸರಿಯಬೇಕು ಎಂದು ಕೋರಿದ್ದ ಆಪ್ ಮುಖ್ಯಸ್ಥ
ಕುಕನೂರಿನಲ್ಲಿ 893ನೇ ಬಸವ ಜಯಂತಿ ಆಚರಣೆ
ಸಮಾನತೆ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಗಮೇಶ್ ಗುತ್ತಿ ಕರೆ
ಕಳೆದ ವಾರ ವೀಡಿಯೊವೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಕೇಂದ್ರವನ್ನು ಉದ್ದೇಶಿಸಿ, ಇದು ಚುನಾವಣಾ ಸಮಯ ಮತ್ತು ಗಮನ ಬೇರೆಡೆ ಇರುವುದರಿಂದ, ನೀವು ದಿಲ್ಲಿಯಲ್ಲಿ ಸದ್ದಿಲ್ಲದೆ ಕ್ಷೇತ್ರ ವಿಂಗಡಣೆಯನ್ನು ಕೈಗೊಳ್ಳಬಹುದು ಎಂದು ಭಾವಿಸಬೇಡಿ. ಆ ಯೋಚನೆಯನ್ನು ಸಹ ಇಟ್ಟುಕೊಳ್ಳಬೇಡಿ. ನೀವು ಹಿಂದೆಂದೂ ನೋಡಿರದ ತಮಿಳುನಾಡನ್ನು ನೀವು ನೋಡುತ್ತೀರಿ. ಭಾರತವು 1950 ಮತ್ತು 1960 ರ ದಶಕದ ಡಿಎಂಕೆಯ ಉತ್ಸಾಹವನ್ನು ಮತ್ತೊಮ್ಮೆ ನೋಡುತ್ತದೆ ಎಂದು ಹೇಳಿದ್ದರು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 1950 ಮತ್ತು 1960 ರ ದಶಕದಲ್ಲಿ ಏನು ಮಾಡಿತ್ತು? ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಸ್ಟಾಲಿನ್ ಈಗ ಅದನ್ನು ಏಕೆ ಬಳಸುತ್ತಿದ್ದಾರೆ? ಇದಕ್ಕಾಗಿ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಬೇಕು. ►ದ್ರಾವಿಡ ಮುನ್ನೇತ್ರ ಕಳಗಂ 1949 ರಲ್ಲಿ ಸಿ. ಎನ್. ಅಣ್ಣಾದೊರೈ ಅವರಿಂದ ಸ್ಥಾಪಿಸಲ್ಪಟ್ಟ ಡಿಎಂಕೆ, ಇ. ವಿ. ರಾಮಸ್ವಾಮಿ ನಾಯ್ಕರ್ ನೇತೃತ್ವದ ವಿಶಾಲ ದ್ರಾವಿಡ ಚಳುವಳಿಯಿಂದ (ದ್ರಾವಿಡರ್ ಕಳಗಂ, ಅಥವಾ ಡಿಕೆ) ಹೊರಹೊಮ್ಮಿತು. ಪೆರಿಯಾರ್ (ಮಹಾನ್ ವ್ಯಕ್ತಿ) ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾಮಸ್ವಾಮಿ, ಭಾರತೀಯ ರಾಜಕೀಯ, ಸಂಸ್ಕೃತಿ ಮತ್ತು ಧರ್ಮದಲ್ಲಿ ಉತ್ತರದ ಪ್ರಾಬಲ್ಯವನ್ನು ತೀವ್ರವಾಗಿ ಟೀಕಿಸಿದರು. ದಕ್ಷಿಣ ಭಾರತದಲ್ಲಿ ದ್ರಾವಿಡ ನಾಡು ಎಂದು ಕರೆಯಲ್ಪಡುವ ಪ್ರತ್ಯೇಕ ರಾಷ್ಟ್ರದ ರಚನೆಯನ್ನು ಅವರು ಪ್ರತಿಪಾದಿಸಿದರು. ಡಿಎಂಕೆ ಸ್ವತಃ ಅವರ ಹಿಂದಿನ ಅನುಯಾಯಿಗಳ ಗುಂಪಿನಿಂದ ರಚಿಸಲ್ಪಟ್ಟಿತು. ಡಿಎಂಕೆ ವಹಿಸಿದ ಪ್ರಧಾನ ಪಾತ್ರವಿಲ್ಲದೆ ತಮಿಳುನಾಡು ರಾಜಕೀಯದ ಇತಿಹಾಸವನ್ನು ಬರೆಯಲಾಗುವುದಿಲ್ಲ ಎಂದು ಹೇಳುವುದು ಸತ್ಯ ಎಂದು ವಿಜಯ ರಾಮಸ್ವಾಮಿ ಹಿಸ್ಟಾರಿಕಲ್ ಡಿಕ್ಷನರಿ ಆಫ್ ದಿ ತಮಿಳಸ್ (2017) ನಲ್ಲಿ ಗಮನಿಸಿದ್ದಾರೆ. ಡಿಕೆಯ ರಾಜಕೀಯ ವಿಭಾಗ ಮತ್ತು ಇಂದಿನ ಹೆಚ್ಚಿನ ದ್ರಾವಿಡ ಪಕ್ಷಗಳಿಗೆ ಸೈದ್ಧಾಂತಿಕ ಪೂರ್ವಗಾಮಿಯಾಗಿದ್ದ ಜಸ್ಟೀಸ್ ಪಾರ್ಟಿಯಿಂದ (1925–44) ಬಲವಾಗಿ ಪ್ರಭಾವಿತವಾದ ಡಿಎಂಕೆ, ಆಸ್ತಿಕ ಪದ್ಧತಿಗಳ ವಿರುದ್ಧ ತನ್ನನ್ನು ತಾನು ಇರಿಸಿಕೊಂಡಿತು. ಇದು ಸಾಮಾಜಿಕ ನ್ಯಾಯ, ಜಾತಿ ಸಮಾನತೆ ಮತ್ತು ಬ್ರಾಹ್ಮಣ ವಿರೋಧಿ ನೀತಿಯನ್ನು ಅನುಸರಿಸಿತು. 1957 ರ ಚುನಾವಣೆಯಲ್ಲಿ, ಡಿಎಂಕೆ ತಮಿಳುನಾಡು ವಿಧಾನಸಭೆಯಲ್ಲಿ 15 ಸ್ಥಾನಗಳನ್ನು ಮತ್ತು ಕೇಂದ್ರ ಸಂಸತ್ತಿನಲ್ಲಿ ಎರಡು ಸ್ಥಾನಗಳನ್ನು ಗೆದ್ದಿತು. ಇಂಡಿಯಾ ಆಫ್ಟರ್ ಗಾಂಧಿ (2007) ಎಂಬ ಪುಸ್ತಕದಲ್ಲಿ ರಾಮಚಂದ್ರ ಗುಹಾ ಹೀಗೆ ಬರೆದಿದ್ದಾರೆ: ಅವರು ಬೆರಳೆಣಿಕೆಯಷ್ಟು ಸ್ಥಾನಗಳನ್ನು ಗೆದ್ದಿದ್ದರೂ ವಿಧಾನಸಭಾ ಚುನಾವಣೆಗಳಲ್ಲಿ ಅವರ ಯಶಸ್ಸುಗಳು ಕಳವಳಕಾರಿಯಾಗಿದ್ದವು. ಏಕೆಂದರೆ ಪಕ್ಷವು ಜನಾಂಗೀಯತೆ ಅಥವಾ ಭಾಷೆಯ ಆಧಾರದ ಮೇಲೆ ಹೊಸ ಪ್ರಾಂತ್ಯಕ್ಕಾಗಿ ಅಲ್ಲ, ಬದಲಾಗಿ ಪ್ರತ್ಯೇಕ ರಾಷ್ಟ್ರ-ರಾಜ್ಯಕ್ಕಾಗಿ ನಿಂತಿತು. ►ಹಿಂದಿ ವಿರೋಧಿ ನಿಲುವು ಚೀನಾ-ಭಾರತ ಯುದ್ಧವು ತನ್ನ ಪ್ರತ್ಯೇಕತಾವಾದಿ ವೇದಿಕೆಯನ್ನು ಕೈಬಿಡಲು ಪ್ರೇರೇಪಿಸಿದರೂ, ಡಿಎಂಕೆ ತಮಿಳು ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯನ್ನು ಬೆಂಬಲಿಸುವುದನ್ನು ಮುಂದುವರೆಸಿತು. ಅದರ ರಾಜಕೀಯ ಬೆಳವಣಿಗೆ ಭಾಷಾ ರಾಜಕೀಯಕ್ಕೆ ನಿಕಟ ಸಂಬಂಧ ಹೊಂದಿತ್ತು. 1949 ರಲ್ಲಿ, ಸಂವಿಧಾನ ಸಭೆಯು ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆಯಾಗಿ ಆಯ್ಕೆ ಮಾಡಿತು. 15 ವರ್ಷಗಳ ಗ್ರೇಸ್ ಅವಧಿ (ಜನವರಿ 26, 1965 ರವರೆಗೆ) ಯಲ್ಲಿ ಇಂಗ್ಲಿಷ್ ನೊಂದಿಗೆ ಮುಂದುವರಿಯುತ್ತದೆ. ಈ ಅವಧಿ ಮುಗಿಯುತ್ತಿದ್ದಂತೆ, ಹಿಂದಿ ಅಧಿಕೃತ ಸಂವಹನದಲ್ಲಿ ಪ್ರಾಬಲ್ಯ ಸಾಧಿಸುತ್ತದೆ ಎಂಬ ಭಯ ಹೆಚ್ಚಾಯಿತು. 1956 ರಲ್ಲಿ, ತಮಿಳು ಸಂಸ್ಕೃತಿ ಅಕಾಡೆಮಿಯು ಇಂಗ್ಲಿಷ್ ಒಕ್ಕೂಟದ ಅಧಿಕೃತ ಭಾಷೆಯಾಗಿ ಮತ್ತು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ನಡುವೆ ಮತ್ತು ಒಂದು ರಾಜ್ಯ ಸರ್ಕಾರ ಮತ್ತು ಇನ್ನೊಂದು ರಾಜ್ಯ ಸರ್ಕಾರಗಳ ನಡುವೆ ಸಂವಹನಕ್ಕಾಗಿ ಭಾಷೆಯಾಗಿ ಮುಂದುವರಿಯಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು. ಸಹಿ ಮಾಡಿದವರಲ್ಲಿ ಸಿ. ಎನ್. ಅಣ್ಣಾದೊರೈ, ಇ. ವಿ. ರಾಮಸ್ವಾಮಿ ಮತ್ತು ಸಿ. ರಾಜಗೋಪಾಲಾಚಾರಿ ಇದ್ದಾರೆ. ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸುವ ಮೂಲಕ ಡಿಎಂಕೆ ಅಭಿಯಾನವನ್ನು ಮುನ್ನಡೆಸಿತು. ಈ ಹಿಂದಿ ವಿರೋಧಿ ವೇದಿಕೆಯು 1967 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿತು. ಮೊದಲು ಅಣ್ಣಾದೊರೈ ಮತ್ತು ನಂತರ ಎಂ. ಕರುಣಾನಿಧಿ ನೇತೃತ್ವದಲ್ಲಿ, ಇಬ್ಬರೂ ರಾಜಕೀಯ ಪ್ರಭಾವವನ್ನು ನಿರ್ಮಿಸಲು ತಮಿಳು ಸಿನಿಮಾವನ್ನು ಬಳಸಿಕೊಂಡರು. ಅಣ್ಣಾ ಎಂದು ಕರೆಯಲ್ಪಡುವ ಅಣ್ಣಾದೊರೈ, ಹಿಂದಿಗೆ ವಿಶೇಷ ಅರ್ಹತೆ ಇಲ್ಲ ಎಂದು ವಾದಿಸಿದರು. ಇತರ ಯಾವುದೇ ಭಾಷೆಗಿಂತ ಹೆಚ್ಚಿನ ಭಾರತೀಯರು ಹಿಂದಿ ಮಾತನಾಡುತ್ತಾರೆ ಎಂಬ ವಾದಕ್ಕೆ, 'ನಮ್ಮ ರಾಷ್ಟ್ರೀಯ ಪಕ್ಷಿಯನ್ನು ಆಯ್ಕೆಮಾಡುವಾಗ ಸಂಖ್ಯಾತ್ಮಕ ಶ್ರೇಷ್ಠತೆಯ ತತ್ವವನ್ನು ನಾವು ಒಪ್ಪಿಕೊಳ್ಳಬೇಕಾದರೆ, ಆಯ್ಕೆ ನವಿಲು ಆಗುತ್ತಿರಲಿಲ್ಲ, ಸಾಮಾನ್ಯ ಕಾಗೆ ಆಗುತ್ತಿತ್ತು' ಎಂದು ಅಣ್ಣಾ ವ್ಯಂಗ್ಯವಾಗಿ ಉತ್ತರಿಸಿದ್ದರು ಎಂದು ಗುಹಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಗಡುವು ಸಮೀಪಿಸುತ್ತಿದ್ದಂತೆ, ವಿರೋಧ ತೀವ್ರಗೊಂಡಿತು. ಗಣರಾಜ್ಯೋತ್ಸವದ ಹತ್ತು ದಿನಗಳ ಮೊದಲು, ಅಣ್ಣಾದೊರೈ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ತಮ್ಮ ಪಕ್ಷವು ಭಾಷಾ ಬದಲಾವಣೆಯ ದಿನವನ್ನು ಶೋಕದ ದಿನವಾಗಿ ಆಚರಿಸುತ್ತದೆ ಎಂದು ಪತ್ರ ಬರೆದಿದ್ದರು. ಜನವರಿ 26 ರಂದು ಹಿಂದಿಯನ್ನು ಅಧಿಕೃತಗೊಳಿಸುವ ನಿರ್ಧಾರಕ್ಕೆ ಶಾಸ್ತ್ರಿ ಮತ್ತು ಅವರ ಸರ್ಕಾರ ಬೆಂಬಲ ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಡಿಎಂಕೆ ರಾಜ್ಯಾದ್ಯಂತ ಪ್ರತಿಭಟನಾ ಆಂದೋಲನವನ್ನು ಪ್ರಾರಂಭಿಸಿತು. ಹಳ್ಳಿಗಳಾದ್ಯಂತ, ಹಿಂದಿ ರಾಕ್ಷಸಿಯ ಪ್ರತಿಕೃತಿಗಳನ್ನು ಸುಟ್ಟುಹಾಕಲಾಯಿತು. ಹಿಂದಿ ಪುಸ್ತಕಗಳು ಮತ್ತು ಸಂವಿಧಾನದ ಸಂಬಂಧಿತ ಪುಟಗಳಿಗೆ ಬೆಂಕಿ ಹಚ್ಚಲಾಯಿತು. ರೈಲ್ವೆ ನಿಲ್ದಾಣಗಳು ಮತ್ತು ಅಂಚೆ ಕಚೇರಿಗಳಲ್ಲಿ, ಹಿಂದಿ ನಾಮಫಲಕಗಳನ್ನು ತೆಗೆದುಹಾಕಲಾಯಿತು ಅಥವಾ ಅವುಗಳಿಗೆ ಮಸಿ ಬಳಿಯಲಾಯಿತು. ಪಟ್ಟಣಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ನಡುವೆ ಗಂಭೀರ ಘರ್ಷಣೆಗಳು ನಡೆದವು. ಮುಷ್ಕರಗಳು ಮತ್ತು ಮೆರವಣಿಗೆಗಳು, ಬಂದ್ ಗಳು, ಹರತಾಳಗಳು ಮತ್ತು ಧರಣಿಗಳ ಮೂಲಕ ಆಂದೋಲನವು ಸಾಮೂಹಿಕ ರೂಪಗಳನ್ನು ಪಡೆದುಕೊಂಡಿತು. ವೈಯಕ್ತಿಕ ಪ್ರತಿಭಟನೆಯ ಒಂದು ರೂಪವಿತ್ತು ಅದು ತುಂಬಾ ಆತಂಕಕಾರಿಯಾಗಿತ್ತು. ಗಣರಾಜ್ಯೋತ್ಸವದಂದು, ಮದ್ರಾಸ್ ನಲ್ಲಿ ಇಬ್ಬರು ವ್ಯಕ್ತಿಗಳು ಬೆಂಕಿ ಹಚ್ಚಿಕೊಂಡರು. ಒಬ್ಬ ವ್ಯಕ್ತಿಯು ತಮಿಳಿನ ಬಲಿಪೀಠದಲ್ಲಿ ತನ್ನನ್ನು ತಾನು ಬಲಿಕೊಡಲು ಬಯಸುವುದಾಗಿ ಹೇಳುವ ಪತ್ರವನ್ನು ಬರೆದಿದ್ದರು. ಮೂರು ದಿನಗಳ ನಂತರ ತಿರುಚ್ಚಿಯಲ್ಲಿ ಇಪ್ಪತ್ತು ವರ್ಷದ ವ್ಯಕ್ತಿಯೊಬ್ಬರು ವಿಷ ಸೇವಿಸಿದರು. ಅವರು ಕೂಡ ತಮ್ಮ ಆತ್ಮಹತ್ಯೆ ತಮಿಳಿಗಾಗಿ ಎಂದು ಹೇಳುವ ಟಿಪ್ಪಣಿಯನ್ನು ಬರೆದಿದ್ದರು. ಈ 'ಹುತಾತ್ಮರು' ಹೆಚ್ಚು ಮುಷ್ಕರಗಳು ಮತ್ತು ಬಹಿಷ್ಕಾರಗಳಿಗೆ ಕಾರಣರಾದರು, ಎಂದು ಗುಹಾ ಅವರು ನಿರ್ದಿಷ್ಟವಾಗಿ ಕೆಲವು ಪ್ರತಿಭಟನೆಗಳನ್ನು ನೆನಪಿಸಿಕೊಳ್ಳುತ್ತಾರೆ. ►ಗಮನಾರ್ಹ ಹೋಲಿಕೆಗಳು ಈ ಪ್ರತಿಭಟನೆಗಳ ತೀವ್ರತೆ ಕೇಂದ್ರ ಸರ್ಕಾರವನ್ನು ಗಾಬರಿಗೊಳಿಸಿತು. ಜನವರಿ 31 ರಂದು, ಹಿರಿಯ ಕಾಂಗ್ರೆಸ್ ನಾಯಕರ ಗುಂಪು ಬೆಂಗಳೂರಿನಲ್ಲಿ ಸಭೆ ಸೇರಿ, ಹಿಂದಿ ಭಾಷೆಯನ್ನು ಆತುರದಿಂದ ಹೇರುವುದರಿಂದ ರಾಷ್ಟ್ರೀಯ ಏಕತೆಗೆ ಧಕ್ಕೆಯಾಗಬಹುದು ಎಂದು ಎಚ್ಚರಿಸಿತು. ಪ್ರಧಾನಿ ಶಾಸ್ತ್ರಿ ಅವರು ಹೆಚ್ಚುತ್ತಿರುವ ಒತ್ತಡಕ್ಕೆ ಸಿಲುಕಿದರು. ಅವರ ಹೃದಯ ಹಿಂದಿ ಮತಾಂಧರ ಜೊತೆಗಿತ್ತು. ಆದರೆ ಅವರ ತಲೆ ಇತರ ಧ್ವನಿಗಳನ್ನು ಕೇಳುವಂತೆ ಅವರನ್ನು ಒತ್ತಾಯಿಸಿತು. ಫೆಬ್ರವರಿ 11 ರಂದು ಮದ್ರಾಸ್ ನಿಂದ ಇಬ್ಬರು ಕೇಂದ್ರ ಮಂತ್ರಿಗಳ ರಾಜೀನಾಮೆ ಅವರ ಕೈಯನ್ನು ಬಲವಂತಪಡಿಸಿತು. ಅದೇ ಸಂಜೆ ಪ್ರಧಾನಿಯವರು ಆಲ್-ಇಂಡಿಯಾ ರೇಡಿಯೋದಲ್ಲಿ 'ದುರಂತ ಘಟನೆಗಳ' ಬಗ್ಗೆ ಮರುಗಿದರು, ಅಂತಾರೆ ಗುಹಾ. ಜನರು ಬಯಸುವವರೆಗೂ ಇಂಗ್ಲಿಷ್ ಭಾಷೆ ಮುಂದುವರಿಯುತ್ತದೆ ಎಂಬ ಜವಾಹರಲಾಲ್ ನೆಹರೂ ಅವರ ಭರವಸೆಯನ್ನು ಗೌರವಿಸುವುದಾಗಿ ಶಾಸ್ತ್ರಿ ದೃಢಪಡಿಸಿದರು. ನಂತರ ಅವರು ನಾಲ್ಕು ಭರವಸೆಗಳನ್ನು ನೀಡಿದರು. ಅವುಗಳೆಂದರೆ: ರಾಜ್ಯಗಳು ತಮ್ಮ ಆಯ್ಕೆಯ ಭಾಷೆಯಲ್ಲಿ ತಮ್ಮ ವ್ಯವಹಾರಗಳನ್ನು ನಡೆಸಬಹುದು; ಅಂತರರಾಜ್ಯ ಸಂವಹನವು ಇಂಗ್ಲಿಷ್ ನಲ್ಲಿ ಅಥವಾ ಇಂಗ್ಲಿಷ್ ಅನುವಾದದೊಂದಿಗೆ ಇರುತ್ತದೆ; ಹಿಂದಿಯೇತರ ರಾಜ್ಯಗಳು ಈ ವ್ಯವಸ್ಥೆಯಲ್ಲಿ ಬದಲಾವಣೆಯಿಲ್ಲದೆ ಕೇಂದ್ರದೊಂದಿಗೆ ಇಂಗ್ಲಿಷ್ ನಲ್ಲಿ ಪತ್ರವ್ಯವಹಾರ ಮಾಡಬಹುದು; ಮತ್ತು ಕೇಂದ್ರ ಮಟ್ಟದಲ್ಲಿ ಅಧಿಕೃತ ವ್ಯವಹಾರಕ್ಕಾಗಿ ಇಂಗ್ಲಿಷ್ ಮುಂದುವರಿಯುತ್ತದೆ. ಗುಹಾ ಅವರ ಪ್ರಕಾರ, ಅವರು ನಂತರ ನಿರ್ಣಾಯಕ ಐದನೇ ಭರವಸೆಯನ್ನು ಸೇರಿಸಿದರು. ಅದೇನೆಂದರೆ ಅಖಿಲ ಭಾರತ ನಾಗರಿಕ ಸೇವೆಗಳ ಪರೀಕ್ಷೆಯನ್ನು ಹಿಂದಿಯಲ್ಲಿ ಮಾತ್ರ ನಡೆಸುವ ಬದಲು ಇಂಗ್ಲಿಷ್ ನಲ್ಲಿ ನಡೆಸಲಾಗುವುದು. ಪ್ರಸ್ತಾವಿತ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಉತ್ತರ ಮತ್ತು ದಕ್ಷಿಣ ವಿಭಜನೆಯ ನಿರೀಕ್ಷೆಯನ್ನು ಹುಟ್ಟುಹಾಕಿದಂತೆ, 1950 ಮತ್ತು 1960 ರ ದಶಕದ ಭಾಷಾ ಚರ್ಚೆಗಳೊಂದಿಗೆ ಸಮಾನಾಂತರಗಳು ಗಮನಾರ್ಹವಾಗಿವೆ. ಬಹುಶಃ, ಸ್ಟಾಲಿನ್ ಈ ಪ್ರತಿರೋಧದ ಮನೋಭಾವವನ್ನು ಪ್ರಚೋದಿಸುತ್ತಿರಬಹುದು.
ಹೊಸದಿಲ್ಲಿ,ಎ.20: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಗಳಲ್ಲಿ ಐದರಿಂದ ಏಳು ಲಕ್ಷ ಹೊಸ ಮತದಾರರ ಸೇರ್ಪಡೆಯ ವಿರುದ್ಧ ಮೌಖಿಕ ಮನವಿಯನ್ನು ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ. ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ಪ್ರಶ್ನಿಸಿರುವ ಅರ್ಜಿದಾರರ ಪರ ನ್ಯಾಯವಾದಿ ಮೇನಕಾ ಗುರುಸ್ವಾಮಿ ಅವರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠದ ಮುಂದೆ ವಿಷಯನ್ನು ಉಲ್ಲೇಖಿಸಿದರು. ಮಾಧ್ಯಮ ವರದಿಗಳನ್ನು ಪ್ರಸ್ತಾವಿಸಿ ಗುರುಸ್ವಾಮಿ ಅವರು, ಚುನಾವಣಾ ಆಯೋಗವು ಫಾರ್ಮ್ 6ನ್ನು ಬಳಸಿಕೊಂಡು ರಾಜ್ಯದಲ್ಲಿ ಸುಮಾರು ಐದರಿಂದ ಏಳು ಲಕ್ಷ ಹೊಸ ಮತದಾರರನ್ನು ಸೇರ್ಪಡೆಗೊಳಿಸಿದೆ. ಇದು ಹೆಸರು ಅಳಿಸುವಿಕೆಯ ವಿರುದ್ಧ ಮತದಾರರ ಮೇಲ್ಮನವಿಗಳನ್ನು ಮೇಲ್ಮನವಿ ನ್ಯಾಯಮಂಡಳಿಗಳು ಪರಿಗಣಿಸಿದರೆ ಮಾತ್ರ ಅಂತಹ ಸೇರ್ಪಡೆಗಳಿಗೆ ಅವಕಾಶ ನೀಡಿರುವ ನ್ಯಾಯಾಲಯದ ಹಿಂದಿನ ಆದೇಶವನ್ನು ಉಲ್ಲಂಘಿಸಿದೆ ಎಂದು ವಾದಿಸಿದರು. ಈ ಫಾರ್ಮ್ 6ನ್ನು ಬೃಹತ್ ಪ್ರಮಾಣದಲ್ಲಿ ಸಲ್ಲಿಸಲು ನ್ಯಾಯಾಲಯದ ಆದೇಶವನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಚುನಾವಣೆಗಳ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತದೆ. ಕಟ್-ಆಫ್ ದಿನಾಂಕದ ಬಳಿಕ ಫಾರ್ಮ 6ರ ಮೂಲಕ ಮತದಾರರ ಸೇರ್ಪಡೆಗೆ ಅನುಮತಿಯಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಅವರು ಗಮನವನ್ನು ಸೆಳೆದರು. ಆದರೆ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸದ ಹೊರತು ಮನವಿಯನ್ನು ಅಂಗೀಕರಿಸಲಾಗುವುದಿಲ್ಲ ಎಂದು ಅವರಿಗೆ ತಿಳಿಸಿದ ನ್ಯಾಯಾಲಯವು, ‘ನೀವು ಅದನ್ನು ಪ್ರಶ್ನಿಸಿ, ನಾವು ನೋಡುತ್ತೇವೆ’ ಎಂದು ಹೇಳಿತು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಎ.23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದ್ದು,ಮೇ 4ರಂದು ಮತಎಣಿಕೆ ನಡೆಯಲಿದೆ.
ಭಾರತೀಯ ವಸ್ತುಗಳಿಗೆ ಸುಂಕ: ನೇಪಾಳದಲ್ಲಿ ಪ್ರತಿಭಟನೆ
ಕಠ್ಮಂಡು, ಎ. 20: ಭಾರತದಿಂದ ತರುವ ನೂರು ನೇಪಾಳಿ ರೂಪಾಯಿ (63 ಭಾರತೀಯ ರೂಪಾಯಿ)ಗಿಂತ ಹೆಚ್ಚಿನ ಬೆಲೆಯ ವಸ್ತುಗಳಿಗೆ ಕಸ್ಟಮ್ಸ್ ಸುಂಕ ವಿಧಿಸುವ ನೇಪಾಳ ಸರಕಾರದ ಆದೇಶದ ವಿರುದ್ಧ ಭಾರತದೊಂದಿಗೆ ಗಡಿ ಹೊಂದಿರುವ ಬೀರ್ಗಂಜ್ ಪಟ್ಟಣದಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರದ ಈ ಆದೇಶದಿಂದಾಗಿ ದೈನಂದಿನ ಅಗತ್ಯ ವಸ್ತುಗಳ ವೆಚ್ಚವು ಗಣನೀಯವಾಗಿ ಏರಿಕೆಯಾಗಿದೆ ಹಾಗೂ ಆದೇಶವು ಸಾಂಪ್ರದಾಯಿಕ ಗಡಿಯಾಚೆಯ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸ್ಥಳೀಯರು ಹೇಳುತ್ತಾರೆ. ಕಂದಾಯ ಸೋರಿಕೆ ಮತ್ತು ಅನೌಪಚಾರಿಕ ಆಮದುಗಳನ್ನು ತಡೆಯುವ ದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಭದ್ರತಾ ಸಂಸ್ಥೆಗಳು ನೇಪಾಳದ ದಕ್ಷಿಣದ ಗಡಿಯಲ್ಲಿ ತಪಾಸಣೆಯನ್ನು ಹೆಚ್ಚಿಸಿದ ಬಳಿಕ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ನೇಪಾಳದ ಗಡಿಯಲ್ಲಿ ವಾಸಿಸುತ್ತಿರುವ ಜನರು ಆಹಾರ ವಸ್ತುಗಳು, ಬಟ್ಟೆ, ರಸಗೊಬ್ಬರ ಮತ್ತು ದಿನಬಳಕೆಯ ವಸ್ತುಗಳ ಖರೀದಿಗಾಗಿ ಭಾರತೀಯ ಮಾರುಕಟ್ಟೆಗಳಿಗೆ ಆಗಾಗ ಹೋಗುತ್ತಿರುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಈ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿವೆ ಹಾಗೂ ಕಡಿಮೆ ಬೆಲೆಗೆ ಸಿಗುತ್ತವೆ ಎನ್ನುವುದು ಅವರ ವಾದವಾಗಿದೆ.
ಅಮೆರಿಕ ಜೊತೆಗಿನ ನಿಕಟ ಆರ್ಥಿಕ ಸಂಬಂಧವು ‘‘ದೌರ್ಬಲ್ಯ’’ದಂತಾಗಿದೆ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ
ಒಟ್ಟಾವ, ಎ. 20: ಅಮೆರಿಕದೊಂದಿಗಿನ ದಶಕಗಳ ಅವಧಿಯ ಭಾಗೀದಾರಿಕೆ ಬಳಿಕ, ಉಭಯ ದೇಶಗಳ ನಡುವಿನ ನಿಕಟ ಆರ್ಥಿಕ ಸಂಬಂಧವು ಕೆನಡದ ‘‘ದೌರ್ಬಲ್ಯ’’ದಂತಾಗಿದೆ’’ ಹಾಗೂ ಅದನ್ನು ಸರಿಪಡಿಸಬೇಕಾಗಿದೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ರವಿವಾರ ಬಿಡುಗಡೆಗೊಳಿಸಿದ 10 ನಿಮಿಷಗಳ ವೀಡಿಯೊದಲ್ಲಿ, ಅಮೆರಿಕದೊಂದಿಗಿನ ಕೆನಡಾದ ಸಂಬಂಧದ ಬಗ್ಗೆ ಕಾರ್ನಿ ಟಿಪ್ಪಣಿಗಳನ್ನು ಮಾಡಿದ್ದಾರೆ. ಯಾವುದೇ ಒಂದು ದೇಶವನ್ನು ಅತಿಯಾಗಿ ಅವಲಂಬಿಸುವುದರಿಂದ ಕೆನಡಾ ದೂರ ಸರಿಯಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ‘‘ಜಗತ್ತು ಈಗ ಹೆಚ್ಚು ಅಪಾಯಕಾರಿಯಾಗಿದೆ ಮತ್ತು ವಿಭಜನೆಗೊಂಡಿದೆ. ಅಮೆರಿಕವು ವ್ಯಾಪಾರ ಕುರಿತ ತನ್ನ ಧೋರಣೆಯಲ್ಲಿ ಮೂಲಭೂತ ಬದಲಾವಣೆಯನ್ನು ಮಾಡಿದೆ. ಅದು ತನ್ನ ಸುಂಕಗಳನ್ನು ಮಹಾ ಆರ್ಥಿಕ ಹಿಂಜರಿತದ ಅವಧಿಯಲ್ಲಿ ಇದ್ದ ಮಟ್ಟಕ್ಕೆ ಹೆಚ್ಚಿಸಿದೆ’’ ಎಂದು ಕಾರ್ನಿ ಹೇಳಿದ್ದಾರೆ. ‘‘ಅಮೆರಿಕದೊಂದಿಗಿನ ನಮ್ಮ ನಿಕಟ ಸಂಬಂಧದ ಹಿನ್ನೆಲೆಯಲ್ಲಿ ನಾವು ಹಿಂದೆ ಹೊಂದಿದ್ದ ನಮ್ಮ ಶಕ್ತಿಗಳು ಈಗ ದೌರ್ಬಲ್ಯಗಳಾಗಿ ಬದಲಾಗಿವೆ. ಆ ದೌರ್ಬಲ್ಯಗಳನ್ನು ನಾವು ಸರಿಪಡಿಸಬೇಕಾಗಿದೆ’’ ಎಂದು ಅವರು ಹೇಳಿದ್ದಾರೆ. ಕೆನಡಾ ಪ್ರಧಾನಿಯ ಹೇಳಿಕೆಗಳು, ದಶಕಗಳ ಆರ್ಥಿಕ ಸಹಕಾರದ ಬಳಿಕ, ಅಮೆರಿಕ-ಕೆನಡಾ ಸಂಬಂಧದಲ್ಲಿ ಆಗುತ್ತಿರುವ ಬದಲಾವಣೆಯತ್ತ ಬೆಟ್ಟು ಮಾಡುತ್ತಿವೆ ಎಂಬುದಾಗಿ ವಿಶ್ಲೇಷಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿತ್ರ ದೇಶಗಳಿಗೂ ಶತ್ತು ದೇಶಗಳಿಗೂ ಅಗಾಧ ಸುಂಕ ವಿಧಿಸುವ ಬೆದರಿಕೆಗಳನ್ನು ಹಾಕುತ್ತಿದ್ದಾರೆ.
ಎ.21: ಇಖ್ರಾ ಅರಬಿಕ್ ಸ್ಕೂಲ್ನ ವಾರ್ಷಿಕ ಕಾರ್ಯಕ್ರಮ
ಮಂಗಳೂರು, ಎ.20: ನಗರದ ಇಖ್ರಾ ಅರಬಿಕ್ ಸ್ಕೂಲ್ನ 25ನೆ ವಾರ್ಷಿಕ ಮತ್ತು ಹಿಫ್ಝ್ (ಕುರಾನ್ ಕಂಠಪಾಠ)ಗಳಿಗೆ ಅಭಿನಂದನಾ ಕಾರ್ಯಕ್ರಮವು ಎ.21ರಂದು ನಗರದ ಪುರಭವನದಲ್ಲಿ ನಡೆಯಲಿದೆ. ಬೆಳಗ್ಗೆ 9ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮಿಲ್ಲತ್ ಫೌಂಡೇಶನ್ನ ಟ್ರಸ್ಟಿ ಫಾತಿಮಾ ಮುಹಮ್ಮದ್ ರಿಯಾಝ್ ಮತ್ತು ದಿ ಹಿಲ್ಫೋರ್ಡ್ ಸ್ಕೂಲ್ನ ಪ್ರಾಂಶುಪಾಲೆ ಲುಬ್ನಾ ಝಾಕಿಯಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ 3ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಭಟ್ಕಳದ ಜಾಮಿಯಾ ಇಸ್ಲಾಮಿಯಾದ ಪ್ರಾಂಶುಪಾಲ ಮೌಲಾನಾ ಮಕ್ಬೂಲ್ ಅಹ್ಮದ್ ಕೊಬಟ್ಟೆ ನದ್ವಿ, ಬೋಳಂಗಡಿಯ ಹವ್ವಾ ಜುಮಾ ಮಸ್ಜಿದ್ನ ಖತೀಬ್ ಮೌಲಾನ ಯಹ್ಯಾ ತಂಙಳ್ ಮದನಿ, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಅಖುರಾ ಸ್ಪೆಷಾಲಿಟಿ ಆಸ್ಪತ್ರೆಯ ಚೆಯರ್ಮ್ಯಾನ್ ಡಾ. ತಾಹಾ ಮತೀನ್, ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ನ ಚೆಯರ್ಮ್ಯಾನ್ ಡಾ.ಸಿ.ಪಿ. ಹಬೀಬ್ ರಹ್ಮಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೌಲಾನ ಅಬುಲ್ ಹಸನ್ ಅಲಿ ನದ್ವಿ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಇಖ್ರಾ ಅರಬಿಕ್ ಸ್ಕೂಲ್ನ ಪ್ರಾಂಶುಪಾಲ ಮೌಲಾನ ಸಾಲಿಮ್ ಖಲೀಫಾ ನದ್ವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
MI Vs GT IPL 2026: ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್ 20) ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಎಂಐ ಕ್ರಿಶ್ ಭಗತ್ ಮತ್ತು ದನೀಶ್ ಮಲೇರ್ ಇಬ್ಬರು ಯುವ ಆಟಗಾರರಿಗೆ ಅವಕಾಶ ನೀಡಿದೆ. ಹಾಗಾದ್ರೆ ಇವರು ಯಾರು ಎನ್ನುವ ಪ್ರಶ್ನೆಗೆ ಉತ್ತರ
ಅರಣ್ಯ ಒತ್ತುವರಿ ಆರೋಪ; ರಮೇಶ್ ಕುಮಾರ್ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ಜಮೀನನ್ನು ಮೇಲ್ಮನವಿದಾರರಾದ ಕೆ.ಆರ್. ರಮೇಶ್ ಕುಮಾರ್ 30 ದಿನಗಳೊಳಗೆ ಖಾಲಿ ಮಾಡಿ ಶಾಂತಿಯುತವಾಗಿ ಹಸ್ತಾಂತರಿಸಬೇಕು ಎಂದು ಮೇಲ್ಮನವಿ ಪ್ರಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ-ಬೆಂಗಳೂರು) ಹೊರಡಿಸಿರುವ ಆದೇಶದ ಸಂಬಂಧ ಏಪ್ರಿಲ್ 21ರವರೆಗೆ ಆತುರದ ಕ್ರಮಕೈಗೊಳ್ಳದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಹಾಗೂ ಕೋಲಾರ ಜಿಲ್ಲಾಧಿಕಾರಿ 2013, 2014 ಹಾಗೂ 2025ರಲ್ಲಿ ಸಲ್ಲಿಸಿರುವ ವರದಿ ಸಂಬಂಧ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಧ್ಯಂತರ ಮಾಡಿ, ಅರ್ಜಿ ವಿಚಾರಣೆ ಮುಂದೂಡಿದೆ. ಪ್ರಕರಣವೇನು? ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ ಏಪ್ರಿಲ್ 10ರಂದು ಮೇಲ್ಮನವಿ ಪ್ರಾಧಿಕಾರ ಆದೇಶಿಸಿತ್ತು. 2011ರ ಜೂನ್ 24ರಂದು ಕೋಲಾರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಒತ್ತುವರಿ ತೆರವಿಗೆ ಆದೇಶಿಸಿದ್ದ ಕ್ರಮವನ್ನು ಮೇಲ್ಮನವಿ ಪ್ರಾಧಿಕಾರ ಎತ್ತಿಹಿಡಿದಿದೆ. 2025ರ ಜನವರಿ 15 ಹಾಗೂ 16ರಂದು ನಡೆಸಲಾದ ಜಂಟಿ ಸಮೀಕ್ಷೆಯಲ್ಲಿ ಒತ್ತುವರಿ ಆಗಿರುವುದು ದೃಢಪಟ್ಟಂತೆ ಹೊಡಹುಡ್ಯ ಗ್ರಾಮದ ಸರ್ವೆ ಸಂಖ್ಯೆ 1ರಲ್ಲಿ ಆರು ಎಕರೆ ಮತ್ತು ಸರ್ವೆ ಸಂಖ್ಯೆ 2ರಲ್ಲಿನ 54 ಎಕರೆ 23 ಗುಂಟೆ ಸೇರಿ ಒಟ್ಟು 60 ಎಕರೆ 23 ಗುಂಟೆ ಜಮೀನನ್ನು ತೆರವುಗೊಳಿಸಬೇಕು ಎಂದು ಆದೇಶಿಸಿದ್ದಾರೆ. ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಮೇಲ್ಮನವಿದಾರರು ನಿಗದಿತ ಅವಧಿಯೊಳಗೆ ಖಾಲಿ ಮಾಡದಿದ್ದಲ್ಲಿ, ಕೋಲಾರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯು ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು. ಸಂಬಂಧಿತ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಬೇಕು ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 64ಎ (2) ಪ್ರಕಾರ ವೆಚ್ಚ ಮಸೂಲಿ ಮಾಡಬೇಕು ಎಂದೂ ಸೂಚನೆ ನೀಡಿದ್ದಾರೆ. ಇದರಿಂದ, ರಮೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮುರ್ಡೇಶ್ವರ ಬೀಚ್ನಲ್ಲಿ ಗಾಂಜಾ ಸೇವನೆ: ಆರೋಪಿ ಪೊಲೀಸ್ ವಶಕ್ಕೆ
ಭಟ್ಕಳ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರ ಬೀಚ್ನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಣೆಬೆನ್ನೂರು ತಾಲ್ಲೂಕಿನ ನಿವಾಸಿ ಉದಯ ಕುಮಾರ (34) ಎಂಬಾತನೇ ಪೊಲೀಸ್ ವಶಕ್ಕೆ ಒಳಗಾದ ವ್ಯಕ್ತಿ . ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮಾತೋಬಾರ ದೇವಸ್ಥಾನದ ಸಮೀಪದ ಬೀಚ್ ಪ್ರದೇಶದಲ್ಲಿ ಈತ ಸಾರ್ವಜನಿಕವಾಗಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬ ಅನುಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪಿಎಸ್ಐ ಹನುಮಂತ ಬಿರಾದಾರ ಅವರ ನೇತೃತ್ವದ ಪೊಲೀಸ್ ತಂಡವು ಆರೋಪಿತನನ್ನು ವಶಕ್ಕೆ ಪಡೆದು, ಭಟ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ಪಾಸಿಟಿವ್ ಎಂದು ದೃಢಪಟ್ಟಿದೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
MI Vs GT - ಆಮೆಗತಿಯಲ್ಲಿದ್ದ ತಿಲಕ್ ವರ್ಮಾಗೆ ಟೈಂ ಔಟ್ ವೇಳೆ ಕೀ ಕೊಟ್ಟ ಹಾರ್ದಿಕ್ ಪಾಂಡ್ಯ: ಮತ್ತೆ ಬಂತು ನೋಡಿ ಶತಕ!
ಮೊದಲ 22 ಎಸೆತದಲ್ಲಿ 19 ರನ್, ಮುಂದಿನ 23 ಎಸೆತದಲ್ಲಿ 81 ರನ್! ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ಮುಗಿಯುವುದರೊಳಗೆ 45 ಎಸೆತದಲ್ಲಿ 101 ರನ್! ಇದು ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿ ಚೊಚ್ಟಲ ಶತಕ ಹೊಡೆದ ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಅವರ ಅತ್ಯದ್ಭುತ ಇನ್ನಿಂಗ್ಸ್ ನ ಪರಿ. ಇದಕ್ಕೆಲ್ಲಾ ಕಾರಣವಾಗಿದ್ದು ನಾಯಕ ಪಾರ್ದಿಕ್ ಪಾಂಡ್ಯ ಅವರು 2ನೇ ಸ್ಟ್ರಾಟರ್ಜಿಕ್ ಟೈಂ ಔಟ್ ವೇಳೆ ಬಿಸಿ ಮುಟ್ಟಿಸಿದ್ದು. ಅಲ್ಲಿಂದ ಬಳಿಕ ತಿಲಕ್ ಅವರ ಬ್ಯಾಟಿಂಗ್ ಶೈಲಿಯೇ ಬದಲಾಯಿತು. ನೋಡು ನೋಡುತ್ತಿದ್ದಂತೆ ರನ್ ಕೊಳ್ಳೆ ಹೊಡೆಯತೊಡಗಿದರು. 33 ಎಸೆತದಲ್ಲಿ ಅರ್ಧಶತಕ ಪೂರೈಸಿದ ಅವರು 45 ಎಸೆತದಲ್ಲಿ ಶತಕವನ್ನೂ ಗಳಿಸಿದರು.()ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳು ಮುಗಿದಾಗ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಇಡೀ ಇನ್ನಿಂಗ್ಸ್ ನಲ್ಲಿ ಹೈಲೈಟ್ ಆಗಿದ್ದು ತಿಲಕ್ ವರ್ಮಾ ಅವರ ಶತಕ. ಸಂಕ್ಷಿಪ್ತ ಸ್ಕೋರ್ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 199/5, ತಿಲಕ್ ವರ್ಮಾ 101(45), ನಮನ್ ಧಿರ್ 45(35), ಸೂರ್ಯಕುಮಾರ್ ಯಾದವ್ 15(10), ಹಾರ್ದಿಕ್ ಪಾಂಡ್ಯ 15(16), ಕಗಿಸೋ ರಬಾಡ 33ಕ್ಕೆ 3, ಸಿರಾಜ್ 25ಕ್ಕೆ 1, ಪ್ರಸಿದ್ಧ ಕೃಷ್ಣ 54ಕ್ಕೆ 1.
2011 ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಪುನರ್ವಿಂಗಡಣೆ ಮಾಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಹಿನ್ನಡೆಯಾದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಮನ್ ಕೀ ಬಾತ್ ಭಾಷಣದಲ್ಲಿ, ವಿರೋಧ ಪಕ್ಷಗಳು ಮಹಿಳಾ ಸಬಲೀಕರಣವನ್ನು ತಡೆಯುತ್ತಿವೆ ಎಂದು ಆರೋಪಿಸಿದರು. ಆದರೆ ಸಂಸದೀಯ ದಾಖಲೆಗಳು ಮತ್ತು ಈ ವಿಷಯದ ಬಗ್ಗೆ ಇರುವ ಶಾಸಕಾಂಗ ದಾಖಲೆಗಳು ಪ್ರಧಾನ ಮಂತ್ರಿ ಮೂಲಭೂತವಾಗಿ ಸತ್ಯಗಳನ್ನು ತಿರುಚಿದ್ದು ದೇಶದ ಜನರನ್ನು ದಾರಿ ತಪ್ಪಿಸಿದ್ದಾರೆ ಎಂದು ತೋರಿಸುತ್ತದೆ. ಎಪ್ರಿಲ್ 17 ರಂದು, ಲೋಕಸಭೆಯಲ್ಲಿನ ವಿರೋಧ ಪಕ್ಷವು ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸಲು 2011 ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಪುನರ್ವಿಂಗಡಣೆ ಮಾಡಲು ಪ್ರಯತ್ನಿಸುವ ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯ ವಿರುದ್ಧ ಮತ ಚಲಾಯಿಸಿತು. ಮಸೂದೆಯು ಪರವಾಗಿ 298 ಮತಗಳನ್ನು ಮತ್ತು ವಿರುದ್ಧ 213 ಮತಗಳನ್ನು ಪಡೆಯಿತು, ಇದು ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು (352 ಮತಗಳು) ಕಡಿಮೆ ಮಾಡಿದ್ದು, ಇದರ ಪರಿಣಾಮ ಮಸೂದೆ ಸೋತಿತು. 12 ವರ್ಷಗಳ ಅಧಿಕಾರದಲ್ಲಿ ನರೇಂದ್ರ ಮೋದಿ ಸರ್ಕಾರವು ಸಂಸತ್ತಿನಲ್ಲಿ ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವಲ್ಲಿ ವಿಫಲವಾದದ್ದು ಇದೇ ಮೊದಲು. ಮತದಾನದ ನಂತರ, ಕೇಂದ್ರ ಸಚಿವರು ಮತ್ತು ಬಿಜೆಪಿಯ ಹಿರಿಯ ನಾಯಕರು ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್, ಮಹಿಳಾ ವಿರೋಧಿ ಎಂದು ಹೇಳಿ, ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು. ಆದರೆ ಕಾಂಗ್ರೆಸ್ ಈ ಕ್ರಮವನ್ನು ಮಹಿಳಾ ಮೀಸಲಾತಿಯ ನೆಪದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಜಾರಿಗೆ ತರಲು ನರೇಂದ್ರ ಮೋದಿ ಮತ್ತು ಅಮಿತ್ ಶಾ ನಡೆಸುತ್ತಿರುವ ಕೆಟ್ಟ ಪ್ರಯತ್ನ ಎಂದು ಕರೆದಿದೆ. ►ಮೋದಿ ಹೇಳಿದ್ದು ಏನು? ಎಪ್ರಿಲ್ 18 ರಂದು ತಮ್ಮ ಪೂರ್ವ-ದಾಖಲಿತ ಭಾಷಣದಲ್ಲಿ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ವಿಪಕ್ಷಗಳು ಭಾರತದ ನಾರಿ ಶಕ್ತಿಯ ಬೆಳವಣಿಗೆಗೆ ಅಡ್ಡಿ ಪಡಿಸಿದ್ದಾರೆ. ಅವರ ಕ್ರಮಗಳು ಮಹಿಳೆಯರ ಕನಸುಗಳನ್ನು ಛಿದ್ರಗೊಳಿಸಿವೆ ಎಂದು ಹೇಳಿದರು. ರಾಜಕೀಯ ಸ್ವಾರ್ಥದಿಂದ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಹೆಚ್ಚಿನ ಮಹಿಳೆಯರು ಶಾಸಕಾಂಗಗಳನ್ನು ಪ್ರವೇಶಿಸಿದರೆ ಕುಟುಂಬ ರಾಜಕಾರಣದ ಪಕ್ಷಗಳು ಅಧಿಕಾರದ ಮೇಲಿನ ಹಿಡಿತವನ್ನು ಕಳೆದುಕೊಳ್ಳುವ ಭಯವನ್ನು ಹೊಂದಿವೆ ಎಂದು ಮೋದಿ ಆರೋಪಿಸಿದರು. ಈ ವಿಷಯವನ್ನು ಉದ್ದೇಶಪೂರ್ವಕವಾಗಿ ರೂಪಿಸಿದ ಅವರು, ವಿರೋಧ ಪಕ್ಷವು ಮಹಿಳಾ ಕಲ್ಯಾಣ ಮತ್ತು ಸಬಲೀಕರಣವನ್ನು ವಿರೋಧಿಸುವ ಮೂಲಕ ಗಂಭೀರ ಪಾಪ ಮಾಡಿದೆ ಎಂದು ಹೇಳಿದರು. ಸಂವಿಧಾನದ ರಚನಾಕಾರರ ದೃಷ್ಟಿಕೋನವನ್ನು ಅವಮಾನಿಸಿದೆ ಎಂದು ವಾದಿಸಿದರು. 30 ನಿಮಿಷಗಳ ಭಾಷಣದ ಉದ್ದಕ್ಕೂ, ಮೋದಿ ಎಪ್ರಿಲ್ 17 ರಂದು ಸಂಸತ್ತಿನಲ್ಲಿ ನಡೆದ ಬೆಳವಣಿಗೆಗಳನ್ನು ಮಹಿಳಾ ಕಲ್ಯಾಣ ಮತ್ತು ಸಬಲೀಕರಣಕ್ಕೆ ಹಿನ್ನಡೆ ಎಂದು ಪ್ರಸ್ತುತಪಡಿಸಿದರು. ಇದಕ್ಕೆ ಪ್ರತಿಪಕ್ಷಗಳ ಕ್ರಮಗಳೇ ಕಾರಣ ಎಂದು ಹೇಳಿದರು. ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ವಿರೋಧ ಪಕ್ಷಗಳು ಪಾಪ ಮಾಡಿವೆ. ಇದಕ್ಕಾಗಿ ಅವರಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ. ಮಸೂದೆಯನ್ನು ಸೋಲಿಸುವ ಮೂಲಕ ವಿರೋಧ ಪಕ್ಷಗಳು ನಮ್ಮ ಸಂವಿಧಾನವನ್ನು ಅವಮಾನಿಸಿವೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇಡೀ ದೇಶದ ಮುಂದೆ ಈ ಪ್ರಾಮಾಣಿಕ ಪ್ರಯತ್ನದ ಭ್ರೂಣಹತ್ಯೆ ಮಾಡಿವೆ. ಅವರು ಭ್ರೂಣಹತ್ಯೆ ಮಾಡಿದ್ದಾರೆ. ಮಹಿಳಾ ಕಲ್ಯಾಣದ ಪ್ರಸ್ತಾಪವು ವಿಫಲವಾದಾಗ, ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಸ್ಪಿಯಂತಹ ಕುಟುಂಬ ರಾಜಕಾರಣದ ಪಕ್ಷಗಳು ಸಂತೋಷದಿಂದ ಚಪ್ಪಾಳೆ ತಟ್ಟಲು ಪ್ರಾರಂಭಿಸಿದವು ಎಂದು ನೋಡಿ ನನಗೆ ತುಂಬಾ ನೋವಾಯಿತು. ಅವರು ಮಹಿಳಾ ಕಲ್ಯಾಣವನ್ನು ತಿರಸ್ಕರಿಸಿ ಮತ ಚಲಾಯಿಸಿದರು ಎಂದು ಹೇಳುವಾಗ ಮೋದಿ ಗದ್ಗದಿತರಾದರು. ►ದಾಖಲೆ ಏನು ತೋರಿಸುತ್ತದೆ? ವಿರೋಧ ಪಕ್ಷವು ಮಹಿಳಾ ಮೀಸಲಾತಿಯನ್ನು ವಿರೋಧಿಸಿದೆ ಎಂಬ ಹೇಳಿಕೆಯು ಕೇವಲ ಸತ್ಯಗಳ ತಪ್ಪು ನಿರೂಪಣೆಯಾಗಿದೆ. 2023 ರಲ್ಲಿ, ಸಂಸತ್ತು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುವ ನಾರಿ ಶಕ್ತಿ ವಂದನ ಅಧಿನಿಯಮವನ್ನು ಬಹುತೇಕ ಸರ್ವಾನುಮತದ ಬೆಂಬಲದೊಂದಿಗೆ ಅಂಗೀಕರಿಸಿತು. ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಸದಸ್ಯರು ಸೇರಿದಂತೆ ಒಟ್ಟು 454 ಲೋಕಸಭಾ ಸದಸ್ಯರು ತಿದ್ದುಪಡಿಯ ಪರವಾಗಿ ಮತ ಚಲಾಯಿಸಿದರು. ಮುಸ್ಲಿಂ ಮತ್ತು ಒಬಿಸಿ ಮಹಿಳೆಯರಿಗೆ ಉಪ-ಕೋಟಾಗಳ ಅನುಪಸ್ಥಿತಿಯನ್ನು ಉಲ್ಲೇಖಿಸಿ ಇಬ್ಬರು ಸಂಸದರು ಮಾತ್ರ ಇದನ್ನು ವಿರೋಧಿಸಿದರು. ರಾಜ್ಯಸಭೆಯಲ್ಲಿ, ಮಸೂದೆಯನ್ನು 214-0 ಮತಗಳಿಂದ ಅಂಗೀಕರಿಸಲಾಯಿತು. ಆ ಸಮಯದಲ್ಲಿ, ಮೋದಿ ಸ್ವತಃ ವಿರೋಧ ಪಕ್ಷದ ಬೆಂಬಲವನ್ನು ಸ್ವಾಗತಿಸಿದರು. ಈ ಪಕ್ಷಗಳು ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತವೆ ಎಂಬ ಪ್ರಸ್ತುತ ಹೇಳಿಕೆಯು ಹಿಂದಿನ ನಿಲುವುಗಳಿಗೆ ಹೊಂದಿಕೆಯಾಗುವುದಿಲ್ಲ. 2023 ರ ತಿದ್ದುಪಡಿಯು ಮೀಸಲಾತಿಯು ಹೊಸ ಜನಗಣತಿ ಮತ್ತು ನಂತರದ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದರ ಮೇಲೆ ಅವಲಂಬಿತವಾಗಿದೆ. ಅಮಿತ್ ಶಾ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದಂತೆ, ಇದು 2029 ರ ನಂತರ ಅನುಷ್ಠಾನವನ್ನು ಪರಿಣಾಮಕಾರಿಯಾಗಿ ವಿಳಂಬಗೊಳಿಸಿತು. ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಆಗ ಪುನರ್ವಿಂಗಡಣೆಗಾಗಿ ಕಾಯದೆ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬಹುದು ಎಂದು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರವು, ಯಾವ ಕ್ಷೇತ್ರಗಳನ್ನು ಮೀಸಲಿಡಲಾಗುವುದು ಎಂಬುದನ್ನು ನಿರ್ಧರಿಸಲು ಮತ್ತು ರಾಜಕೀಯ ಪಕ್ಷಪಾತದ ಆರೋಪಗಳನ್ನು ತಪ್ಪಿಸಲು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಅಗತ್ಯ ಎಂದು ಸಮರ್ಥಿಸಿಕೊಂಡಿತು. ಈ ಕಾಯ್ದೆಯನ್ನು ಅಂಗೀಕರಿಸಿದ ಎರಡೂವರೆ ವರ್ಷಗಳ ನಂತರ, 2026 ಎಪ್ರಿಲ್ 16 ರಂದು ಸರ್ಕಾರವು ಅಧಿಸೂಚನೆ ಹೊರಡಿಸಿತು. ►ವಿರೋಧ ಪಕ್ಷದ ವಿರುದ್ಧ ಮೋದಿ ಅವರ ಆರೋಪ ದಾರಿತಪ್ಪಿಸುವಂತಿತ್ತು ಏಕೆ? ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಕ್ಷೇತ್ರ ಪುನರ್ವಿಂಗಡಣೆಯು ತಟಸ್ಥ ಕಾರ್ಯವಿಧಾನದ ಹೆಜ್ಜೆಯಲ್ಲ. ಸಂವಿಧಾನದ (84 ನೇ ತಿದ್ದುಪಡಿ) ಅಡಿಯಲ್ಲಿ, ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆಯನ್ನು 2026 ರವರೆಗೆ ಸ್ಥಗಿತಗೊಳಿಸಲಾಗಿದೆ. ಈ ಸ್ಥಗಿತವನ್ನು ತೆಗೆದುಹಾಕಿದ ನಂತರ, ಹೊಸ ಕ್ಷೇತ್ರ ಪುನರ್ವಿಂಗಡಣೆಯು ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಸಮತೋಲನವನ್ನು ಬದಲಾಯಿಸುವ ನಿರೀಕ್ಷೆಯಿದೆ. ಹೆಚ್ಚಿನ ಜನಸಂಖ್ಯೆಯ ಬೆಳವಣಿಗೆಯನ್ನು ಹೊಂದಿರುವ ರಾಜ್ಯಗಳು, ಉದಾಹರಣೆಗೆ ಉತ್ತರ ಪ್ರದೇಶ ಮತ್ತು ಬಿಹಾರ ಬಿಜೆಪಿಯ ರಾಜಕೀಯ ಬೆಂಬಲ ನೆಲೆ ಎಂದು ಪರಿಗಣಿಸಲಾಗಿದೆ. ಇವು ಹೆಚ್ಚು ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ, ಆದರೆ ಜನಸಂಖ್ಯಾ ಬೆಳವಣಿಗೆಯನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿದಿರುವ ಹಲವಾರು ದಕ್ಷಿಣ ರಾಜ್ಯಗಳು ಸಂಭಾವ್ಯ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಇದು ಮಹಿಳಾ ಪ್ರಾತಿನಿಧ್ಯದ ಪ್ರಶ್ನೆಯಿಂದ ಪ್ರತ್ಯೇಕವಾದ ಫೆಡರಲ್ ಪರಿಣಾಮಗಳೊಂದಿಗೆ ಡಿಲಿಮಿಟೇಶನ್ ಅನ್ನು ರಾಜಕೀಯವಾಗಿ ಸೂಕ್ಷ್ಮ ಸಮಸ್ಯೆಯನ್ನಾಗಿ ಮಾಡಿದೆ. ಎಪ್ರಿಲ್ 17 ರಂದು ಲೋಕಸಭೆಯಲ್ಲಿ ಸೋತ ಮಸೂದೆಯು 2023 ರಲ್ಲಿ ಅಂಗೀಕರಿಸಲ್ಪಟ್ಟ ಮಹಿಳಾ ಮೀಸಲಾತಿ ಕಾನೂನು ಅಲ್ಲ, ಆದರೆ 2011 ರ ಜನಗಣತಿಯನ್ನು ಬಳಸಿಕೊಂಡು ಲೋಕಸಭಾ ಸ್ಥಾನಗಳನ್ನು ಪುನರ್ವಿಂಗಡಿಸುವ ಮೂಲಕ ಕ್ಷೇತ್ರ ಪುನರ್ವಿಂಗಡಣೆಯನ್ನು ಮುನ್ನಡೆಸುವ ಪ್ರಸ್ತಾಪವಾಗಿದೆ. ಮಹಿಳೆಯರಿಗೆ 33% ಕೋಟಾದ ಅನುಷ್ಠಾನವನ್ನು ತ್ವರಿತಗೊಳಿಸುವ ಒಂದು ಹೆಜ್ಜೆಯಾಗಿ ಇದನ್ನು ಯೋಜಿಸಲಾಗಿತ್ತು. ಮಹಿಳಾ ಮೀಸಲಾತಿ ಮಸೂದೆಗೆ ಡಿಲಿಮಿಟೇಶನ್ ಮಸೂದೆಯನ್ನು ಲಿಂಕ್ ಮಾಡುವುದು ಅನಗತ್ಯ ಎಂದು ವಿರೋಧ ಪಕ್ಷಗಳು ವಾದಿಸಿದವು. 2023 ರ ಕಾನೂನು ಈಗಾಗಲೇ ಹೊಸ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ನಂತರವೇ ಮೀಸಲಾತಿ ಜಾರಿಗೆ ಬರಬೇಕೆಂದು ಆದೇಶಿಸುತ್ತದೆ, ಇವೆರಡೂ ಇನ್ನೂ ಪೂರ್ಣಗೊಳ್ಳಬೇಕಾಗಿದೆ. ಇದಕ್ಕಾಗಿ ಕಾಯುವ ಬದಲು, ಸರ್ಕಾರವು ಅಸ್ತಿತ್ವದಲ್ಲಿರುವ 543 ಸ್ಥಾನಗಳ ಬಲದೊಳಗೆ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಲು ಕಾನೂನನ್ನು ತಿದ್ದುಪಡಿ ಮಾಡಬಹುದು ಎಂದು ವಿರೋಧ ಪಕ್ಷಗಳು ವಾದಿಸಿವೆ. ಮಹಿಳಾ ಪ್ರಾತಿನಿಧ್ಯವನ್ನು ತ್ವರಿತಗೊಳಿಸುವುದು ಸರ್ಕಾರದ ಗುರಿಯಾಗಿದ್ದರೆ, ಹಳೆಯ ಜನಗಣತಿ ದತ್ತಾಂಶವನ್ನು ಬಳಸಿಕೊಂಡು ಕ್ಷೇತ್ರ ಪುನರ್ವಿಂಗಡಣೆಯ ಸಮಯವನ್ನು ಮಾರ್ಪಡಿಸಲು ಸರ್ಕಾರ ಏಕೆ ಆಯ್ಕೆ ಮಾಡಿಕೊಂಡಿತು, ಆದರೆ ಕ್ಷೇತ್ರ ಪುನರ್ವಿಂಗಡಣೆಯ ಅಗತ್ಯವನ್ನು ಸಂಪೂರ್ಣವಾಗಿ ತೆಗೆದುಹಾಕುವುದನ್ನು ಏಕೆ ಪರಿಗಣಿಸಲಿಲ್ಲ ಎಂದು ಅವರು ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ಮೊದಲ ಸತ್ಯವೆಂದರೆ ಇದು ಮಹಿಳಾ ಮಸೂದೆಯಲ್ಲ. ಇದಕ್ಕೂ ಮಹಿಳಾ ಸಬಲೀಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದು ಭಾರತದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಪ್ರಯತ್ನವಾಗಿದೆ.” ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಸೋತ ಮಸೂದೆಯನ್ನು “ಸೀರೆಯಲ್ಲಿ ಸುತ್ತಿದ ಕ್ಷೇತ್ರ ಪುನರ್ವಿಂಗಡಣೆ” ಎಂದು ಬಣ್ಣಿಸಿದರು. ಶಾಸಕಾಂಗ ದಾಖಲೆಯು ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಪಕ್ಷಗಳಾದ್ಯಂತ ಸ್ಥಿರವಾದ ಬೆಂಬಲವನ್ನು ತೋರಿಸುತ್ತದೆ. ಆ ಸುಧಾರಣೆಯನ್ನು ವಿಳಂಬಗೊಳಿಸಬೇಕೇ ಮತ್ತು ವಿವಾದಾತ್ಮಕ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿಸಬೇಕೇ ಎಂಬುದರ ಕುರಿತು ಭಿನ್ನಾಭಿಪ್ರಾಯವಿದೆ. ಆ ಸಂದರ್ಭದಲ್ಲಿ, ಮತದಾನವನ್ನು ಮಹಿಳಾ ಕಲ್ಯಾಣಕ್ಕೆ ಮಾಡಿದ ದ್ರೋಹ ಎಂದು ಬಿಂಬಿಸುವ ಮೋದಿಯವರ ಮಾತು ದಾರಿತಪ್ಪಿಸುವಂತಿತ್ತು ಮತ್ತು ವಾಸ್ತವಗಳಿಂದ ಕೂಡಿಲ್ಲ. ►ಸತ್ಯಗಳನ್ನು ತಿರುಚಿದ ಮಾಧ್ಯಮಗಳು ಮಾಧ್ಯಮದ ಒಂದು ಗಮನಾರ್ಹ ವಿಭಾಗವು ಶಾಸಕಾಂಗ ಸೂಕ್ಷ್ಮತೆಯನ್ನು ಪ್ರತಿಬಿಂಬಿಸದೆ ಸರ್ಕಾರದ ದನಿಯಾಯಿತು. ಹಲವಾರು ಮಾಧ್ಯಮಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಸೋಲಿಸಲಾಗಿದೆ ಎಂದು ಹೇಳುವ ಪ್ರಮುಖ, ಬ್ಯಾನರ್ ಶೀರ್ಷಿಕೆಗಳನ್ನು ಹೊಂದಿದ್ದವು. ನಿಜವಾಗಿಯೂ ಇದು ತಪ್ಪಾದ ಹೇಳಿಕೆಯಾಗಿದೆ. ವರದಿಯ ಪ್ರಮಾಣ ಮತ್ತು ನಿಯೋಜನೆಯನ್ನು ಗಮನಿಸಿದರೆ ಈ ತಪ್ಪು ನಿರೂಪಣೆಯು ವಿಶೇಷವಾಗಿ ಮಹತ್ವದ್ದಾಗಿತ್ತು. ಅನೇಕ ಪತ್ರಿಕೆಗಳು 64-ಪಾಯಿಂಟ್ ಫಾಂಟ್ ಗಳಲ್ಲಿ ದೊಡ್ಡದಾಗಿ ಮುಖಪುಟದಲ್ಲಿ ಸುದ್ದಿ ಪ್ರಕಟಿಸಿದವು. ಇದು ಎಪ್ರಿಲ್ 17 ರ ಸಂಸತ್ತಿನ ಕಲಾಪಗಳ ಸತ್ಯಗಳನ್ನು ಸಂಪೂರ್ಣವಾಗಿ ತಪ್ಪಾಗಿ ಪ್ರತಿನಿಧಿಸುತ್ತದೆ. ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ, ದಿ ಹಿಂದೂ ಪತ್ರಿಕೆಯು ಸೋತಿರುವ ಮಸೂದೆ ಮಹಿಳಾ ಮೀಸಲಾತಿ ಕಾನೂನಿಗೆ ಸಂಬಂಧಿಸಿದ್ದು ಅಲ್ಲ ಎಂದು ನಿಖರವಾಗಿ ವರದಿ ಮಾಡಿದೆ. ದಿ ಹಿಂದೂವಿನಲ್ಲಿನ ಸುದ್ದಿ ಶೀರ್ಷಿಕೆ: United Opposition defeats Delimitation Bill (ವಿರೋಧ ಪಕ್ಷವು ಒಂದಾಗಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಸೋಲಿಸಿದೆ) ದಿ ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ Opposition Stands, women’s bill falls ಎಂದು ಶೀರ್ಷಿಕೆ ಇದೆ. ಈ ಶೀರ್ಷಿಕೆಯು ಎರಡು ವಿಭಿನ್ನ ಶಾಸಕಾಂಗ ಬೆಳವಣಿಗೆಗಳನ್ನು ಸಂಯೋಜಿಸಿರುವುದರಿಂದ ಅದು ದಾರಿತಪ್ಪಿಸುವಂತಿತ್ತು. ಈ ಹಿಂದೆ ಸೂಚಿಸಿದಂತೆ, ಎಪ್ರಿಲ್ 17 ರಂದು ನಡೆದ ಮತದಾನವು 2023 ರಲ್ಲಿ ಅಂಗೀಕರಿಸಲ್ಪಟ್ಟ ಮಹಿಳಾ ಮೀಸಲಾತಿ ಕಾನೂನಿನ ಮೇಲೆ ಅಲ್ಲ, ಬದಲಾಗಿ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಪ್ರತ್ಯೇಕ ಸಂವಿಧಾನ ತಿದ್ದುಪಡಿ ಮಸೂದೆಯದ್ದಾಗಿತ್ತು. ಇಂಡಿಯನ್ ಎಕ್ಸ್ಪ್ರೆಸ್ ಶೀರ್ಷಿಕೆಯು ಸಂಸತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸಿದೆ ಎಂದು ಹೇಳಿದ್ದು, ಅದು ನಿಜವಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಪತ್ರಿಕೆಯನ್ನು ಟೀಕಿಸಿದ್ದು, ಶೀರ್ಷಿಕೆಯು ತಪ್ಪಾಗಿದೆ ಎಂದು ಸೂಚಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯು ಸಹ ಮುಖ್ಯ ಶೀರ್ಷಿಕೆಯು ಸರ್ಕಾರದ ಹಿನ್ನಡೆಯನ್ನು ಉಲ್ಲೇಖಿಸಿದರೆ, ಉಪಶೀರ್ಷಿಕೆಯು ಮಹಿಳಾ ಕೋಟಾದ ಮಸೂದೆ ಎಂದಿದೆ. ದಿ ಹಿಂದೂ ಸರಿಯಾಗಿ ಅರ್ಥಮಾಡಿಕೊಂಡಿದ್ದರೂ, ಅದೇ ಗುಂಪಿನ ದಿ ಹಿಂದೂ ಬಿಸಿನೆಸ್ ಲೈನ್ ದಾರಿತಪ್ಪಿಸುವ ಶೀರ್ಷಿಕೆಯನ್ನು ಪ್ರಕಟಿಸಿತು. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಕೋರುವ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ, 2026 ಅನ್ನು ಶುಕ್ರವಾರ ಸಂಜೆ ಲೋಕಸಭೆಯಲ್ಲಿ ಸೋಲಿಸಲಾಯಿತು... ಎಂಬ ಸುದ್ದಿಯ ಆರಂಭಿಕ ವಾಕ್ಯವೇ ತಪ್ಪಾಗಿದೆ. ತಪ್ಪುದಾರಿಗೆಳೆಯುವ ಅಥವಾ ವಾಸ್ತವಿಕವಾಗಿ ತಪ್ಪಾದ ಶೀರ್ಷಿಕೆಗಳನ್ನು ಹೊಂದಿದ್ದ ಇತರ ಪತ್ರಿಕೆಗಳೆಂದರೆ ಜನಸತ್ತಾ (ಹಿಂದಿ), ಇಂಗ್ಲಿಷ್ ದಿನಪತ್ರಿಕೆಗಳು - ದಿ ಪಯೋನೀರ್, ದಿ ಏಷ್ಯನ್ ಏಜ್ ಮತ್ತು ದಿ ಟ್ರಿಬ್ಯೂನ್. ಸುದ್ದಿ ವಾಹಿನಿಗಳು ಮತ್ತು ಡಿಜಿಟಲ್ ಸುದ್ದಿ ಮಾಧ್ಯಮಗಳು ಸಹ ಇದೇ ರೀತಿಯ ತಪ್ಪು ಶೀರ್ಷಿಕೆಗಳನ್ನು ಪ್ರಕಟಿಸಿದವು. ಇವೆಲ್ಲವೂ ಎಪ್ರಿಲ್ 17 ರ ಕಲಾಪಗಳನ್ನು ಸಂಸತ್ತಿನಲ್ಲಿ ಮಹಿಳಾ ಕೋಟಾ ಮಸೂದೆಯ ಸೋಲು ಎಂದು ವಿವರಿಸಿದವು. ಅವುಗಳಲ್ಲಿ ಟೈಮ್ಸ್ ನೌ, ಎನ್ಡಿಟಿವಿ, ರಿಪಬ್ಲಿಕ್, ಎಎನ್ಐ, ನ್ಯೂಸ್ ಎಕ್ಸ್, ನ್ಯೂಸ್ 18, ಲೇಟೆಸ್ಟ್ಲೀ, ದಿ ಪ್ರಿಂಟ್, ಕ್ಲಾರಿಯನ್ ಇಂಡಿಯಾ ಮತ್ತು ನ್ಯೂಸ್ 9 ಸೇರಿವೆ.
ಎ.21ರಿಂದ ದ.ಕ. ಜಿಲ್ಲೆಯಲ್ಲಿ ತಾಪಮಾನ ಏರಿಕೆ: ಕೆಎಸ್ಎನ್ಡಿಎಂಸಿ ಮುನ್ಸೂಚನೆ
ಮಂಗಳೂರು, ಎ.20: ದ.ಕ.ಜಿಲ್ಲೆಯ ಮಂಗಳೂರು, ಉಳ್ಳಾಲ, ಬಂಟ್ವಾಳ, ಮೂಡುಬಿದಿರೆ, ಪುತ್ತೂರು, ಕಡಬ ಹಾಗೂ ಉಡುಪಿ ತಾಲೂಕಿನ ಬ್ರಹ್ಮಾವರ, ಹೆಬ್ರಿ, ಕಾರ್ಕಳ ತಾಲೂಕಿನಲ್ಲಿ ಎ.21ರಿಂದ 23ರವರೆಗೆ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ)ವು ಈ ಬಗ್ಗೆ ಸೋಮವಾರ ಮುನ್ಸೂಚನೆ ನೀಡಿದೆ. ಕೆಲವು ದಿನಗಳಿಂದ ಜಿಲ್ಲೆಯ ಹಲವೆಡೆ ತಾಪಮಾನ 37 ಡಿ.ಸೆ.ಗೂ ಏರಿಕೆ ಕಾಣುತ್ತಿದೆ. ತಾಪಮಾನ ಏರಿಕೆಯ ಜೊತೆಗೆ ತೀವ್ರ ಉಷ್ಣತೆಯ ಅಪಾಯವು ಈ ತಾಲೂಕು ವ್ಯಾಪ್ತಿಯಲ್ಲಿ ಕಾಡುವ ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತಿಳಿಸಿದೆ.
ಬೆಂಗಳೂರು ನಮ್ಮ ಮೆಟ್ರೋ 3 ಹಂತ ಕಿತ್ತಳೆ ಮಾರ್ಗ ಭೂಸ್ವಾಧೀನ ಪ್ರಕ್ರಿಯೆ ಚುರುಕು; ಸ್ವತ್ತು ಗುರುತು ಎಲ್ಲೆಲ್ಲಿ?
ನಮ್ಮ ಮೆಟ್ರೋ 3ನೇ ಹಂತದ ಹೊಸಹಳ್ಳಿ-ಕಡಬಗೆರೆ 'ಕಿತ್ತಳೆ ಮಾರ್ಗ' ಕಾಮಗಾರಿಗಾಗಿ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿದೆ. ಹೊಸಹಳ್ಳಿ-ಕೆಎಚ್ಬಿ ಕಾಲೊನಿವರೆಗಿನ ಸ್ವತ್ತುಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿದೆ. ಡಬಲ್ ಡೆಕ್ಕರ್ ನಿರ್ಮಾಣದ ಯೋಜನೆಯಿರುವುದರಿಂದ ಒಟ್ಟು 6.72 ಲಕ್ಷ ಚ.ಮೀ ಜಮೀನು ಅಗತ್ಯವಿದೆ. ಜೈಕಾ ಸಂಸ್ಥೆಯ 6,100 ಕೋಟಿ ರೂ. ಸಾಲದ ನೆರವಿನೊಂದಿಗೆ, ಒಟ್ಟು ₹15,611 ಕೋಟಿ ವೆಚ್ಚದ ಈ ಯೋಜನೆಯು 2032ರ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ.
Yadgiri | ಬಸವ ತತ್ವ ಅಳವಡಿಕೆ ಮಾಡಿದಾಗಲೇ ಜಯಂತಿ ಸಾರ್ಥಕ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ: ಬಸವಣ್ಣನವರ ತತ್ವಾದರ್ಶಗಳನ್ನು ಮತ್ತು ಬಸವಾದಿ ಶರಣರ ವಿಚಾರಗಳನ್ನು ನಾವು, ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿ ಆಚರಿದ್ದು ಸ್ವಾರ್ಥಕವಾಗುತ್ತದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಬಸವೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಸಾಮಾಜಿಕ, ಅಸಮಾನತೆಯನ್ನು ಹೋಗಲಾಡಿಸಿ ಮನುಷ್ಯರೆಲ್ಲರೂ ಸಮಾನರು ಎಂದು ಸಾರಿದ್ದರು. ಅದಕ್ಕಾಗಿಯೇ ಅವರನ್ನು ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಎಂದು ಕರೆಯಲಾಗುತ್ತದೆ ಎಂದರು. ಬಿಜ್ಜಳನ ಆಸ್ಥಾನದಲ್ಲಿ ಭಂಡಾರ ಮಂತ್ರಿಯಾಗಿದ್ದರೂ ಒಂದು ನಯಾಪೈಸೆಯೂ ಅಪವ್ಯಯವಾಗದಂತೆಯೇ ನೋಡಿಕೊಂಡ ಅಪ್ಪಟ್ಟ ಪ್ರಮಾಣಿಕ ಬಸವಣ್ಣನವರು ಎಂಬುದು ನಮ್ಮಗೆಲ್ಲ ಹೆಮ್ಮೆಯ ಸಂಗತಿ ಎಂದರು. ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಮಾತನಾಡಿ, ಬಸವಣ್ಣನವರ ಅಂದಿನ ಕ್ರಾಂತಿ, ವಚನಗಳ ವಿಶ್ಲೇಷಣೆ ಇಂದಿಗೂ ಪ್ರಸ್ತತವಾಗಿವೆ. ಅವರ ಸಮ ಸಮಾಜದ ನಿರ್ಮಾತರೆಂದರು. ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ವಿಶೇಷ ಉಪನ್ಯಾಸ ನೀಡಿ, ಬಸವಣ್ಣ ನವರು ವ್ಯಕ್ತಿಯಲ್ಲ, ಶಕ್ತಿ. ಜಗತ್ತೇ ಬೆರಗಾಗುವಂತ ಕೆಲಸಗಳನ್ನು 12ನೇ ಶತಮಾನದಲ್ಲಿ ಮಾಡಿದ್ದಾರೆಂದರು. ಯುಡಾ ಅಧ್ಯಕ್ಷ ಬಾಬುರಾವ ಕಾಣ್ಣೂರ, ಹೆಚ್ಚುವರಿ ಎಸ್ಪಿ ಧರಣೇಶ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ ವೇದಿಕೆಯಲ್ಲಿ ಇದ್ದರು. ಶರಣು ವಠಾರ ಪ್ರಾರ್ಥಿಸಿದರು. ಪ್ರಿಯಾಂಕಾ ಪಾಟೀಲ್ ನಿರೂಪಿಸಿದರು. ಉತ್ತರಾದೇವಿ ಮಠಪರಿ ವಂದಿಸಿದರು. ಆರಂಭದಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ದಾಳ, ಭೀಮನಗೌಡ ಕ್ಯಾತನಾಳ್, ಅನ್ನಪೂರ್ಣ ಸಿ.ಪಾಟೀಲ್, ಶಶಿಕಲಾ ಬಿ.ಕ್ಯಾತನಾಳ್, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ, ತಾಲೂಕು ಅಧ್ಯಕ್ಷ ರಾಜಶೇಖರ ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಲಾಸ ಪಾಟೀಲ್, ವೆಂಕಟರೆಡ್ಡಿ ಅಬ್ಬೆತುಮಕೂರು ಸೇರಿದಂತೆಯೇ ಇತರರಿದ್ದರು.
Kalaburagi | ಬಸವ ಜಯಂತಿ : ನಗರದೆಲ್ಲೆಡೆ ಶರಣ ಸಂಸ್ಕೃತಿ ಮೆರಗು
ಕಲಬುರಗಿ: ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ನಗರದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಬಸವಣ್ಣ ಹಾಗೂ ಕಾಯಕ ಶರಣರ ಭಾವಚಿತ್ರಗಳ ಅದ್ದೂರಿ ಮೆರವಣಿಗೆಯೂ ಜರುಗಿತು. ನಗರದ ನಗರೇಶ್ವರ ಶಾಲೆಯ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇಲ್ಲಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಾದ ಹುಮನಾಬಾದ್ ಬೇಸ್, ಸೂಪರ್ ಮಾರ್ಕೆಟ್, ಸಿಟಿ ಸೆಂಟ್ರಲ್ ಮಾಲ್ ಮೂಲಕ ಹಾದು ಅಂತಿಮವಾಗಿ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ತಲುಪಿ ಸಂಪನ್ನಗೊಂಡಿತು. ಮಾರ್ಗದುದ್ದಕ್ಕೂ ಸಾಲು ಸಾಲಾಗಿ ನಿಂತಿದ್ದ ಜನರು ಬಸವಣ್ಣನವರ ಸ್ತಬ್ಧಚಿತ್ರಕ್ಕೆ ಪುಷ್ಪವೃಷ್ಟಿ ಕರೆದರು. ಮೆರವಣಿಗೆಯಲ್ಲಿ ಬಸವಣ್ಣನವರ ಮೂರ್ತಿ, ನುಲಿಯ ಚಂದಯ್ಯ, ಡೋಹರ ಕಕ್ಕಯ್ಯ, ದೇವರ ದಾಸಿಮಯ್ಯ, ಮಾದರ ಚನ್ನಯ್ಯ, ನಿಜಶರಣ ಅಂಬಿಗರ ಚೌಡಯ್ಯ, ಮೇದಾರ ಕೆತಯ್ಯನವರು, ಸೇರಿದಂತೆ 10 ಕ್ಕೂ ಹೆಚ್ಚು ಭಾವಚಿತ್ರಗಳ ಗಮನ ಸೆಳೆದವು. ಗಮನ ಸೆಳೆದ ಸಾಂಸ್ಕೃತಿಕ ಕಲಾ ತಂಡಗಳು : ಮೆರವಣಿಗೆಗೆ ಸಾಂಸ್ಕೃತಿಕ ಕಳೆ ನೀಡಲು ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಕಲಾ ತಂಡಗಳು ಜನರ ಗಮನ ಸೆಳೆದವು. ರಾಮನಗರದ ಕಪಾಳಮ್ಮ ಕಲಾ ತಂಡದ ಪೂಜೆ ಕುಣಿತ ಹಾಗೂ ಬಳ್ಳಾರಿಯ ಗಂಭೀರ ಶೈಲಿಯ ಕಹಳೆ ವಾದನ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಕಲಬುರಗಿ ಜಿಲ್ಲೆಯ ಶ್ರೀಚಂದ್ ಗ್ರಾಮದ ಕಲಾವಿದರ ಡೊಳ್ಳು ಕುಣಿತ, ಹಲಗೆ ವಾದನ, ಲಂಬಾಣಿ ನೃತ್ಯ ಹಾಗೂ ಶಹನಾಯಿ ಮೇಳಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ನೂರಾರು ಮಹಿಳೆಯರು ಕಳಸ ಹೊತ್ತು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಯುವಜನತೆ ಡಿಜೆ ಗೀತೆಗಳ ಸದ್ದಿಗೆ ನೃತ್ಯ ಮಾಡುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ದೊಡ್ಡಪ್ಪ ಅಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಹಾಗೂ ಮೆರವಣಿಗೆಯುದ್ದಕ್ಕೂ ಸಚಿವ ಶರಣಬಸವಪ್ಪ ದರ್ಶನಾಪುರ, ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್.ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ, ಮುಖಂಡರಾದ ಅಮರನಾಥ್ ಪಾಟೀಲ್, ಭೀಮಾಶಂಕರ್ ಬಿಲಗುಂದಿ, ಸೋಮಶೇಖರ್ ಗೋನಾಯಕ್, ಅರುಣಕುಮಾರ್ ಪಾಟೀಲ್ ಕೊಡಲಹಂಗಾರಗಾ, ಶಿವಕಾಂತ್ ಮಹಾಜನ್, ಜಗನಾಥ್ ಶೇಗಜಿ, ಡಾ.ಸುಧಾ ಹಾಲಕಾಯಿ, ಗೌರಿ ಚಿಚಕೋಟಿ, ಲಿಂಗರಾಜ್ ಕಣ್ಣಿ ಸೇರಿದಂತೆ ಸಾವಿರಾರು ಬಸವ ಅನುಯಾಯಿಗಳು ಪಾಲ್ಗೊಂಡಿದ್ದರು.
ಮಾದಕ ವಸ್ತು ಸೇವನೆ ಮಾಡಿದ ಆರೋಪ: ಮೂವರ ಬಂಧನ
ಮಂಗಳೂರು, ಎ.20: ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಪ್ರತ್ಯೇಕ ಪ್ರಕರಣದಲ್ಲಿ ಪಾಂಡೇಶ್ವರ ಮತ್ತು ಕದ್ರಿ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. *ನಗರದ ಅತ್ತಾವರ ಫಳ್ನೀರ್ ರಸ್ತೆಯಲ್ಲಿರುವ ಖಾಸಗಿ ಕಟ್ಟಡವೊಂದರ ರಿಕ್ರಿಯೇಶನ್ ಕ್ಲಬ್ವೊಂದಕ್ಕೆ ಶನಿವಾರ ರಾತ್ರಿ 9ಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ದಾಳಿ ಮಾಡಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಮಂಜೇಶ್ವರ ತಾಲೂಕಿನ ಕುಂಜತ್ತೂರಿನ ಬಿ.ವಿ. ರಾಜು (31) ಮತ್ತು ಸುರತ್ಕಲ್ ಕೃಷ್ಣಾಪುರದ ಶೆಜಿನ್ (18) ಎಂಬವರನ್ನು ಬಂಧಿಸಿದ್ದಾರೆ. *ನಗರದ ಕದ್ರಿ ಪಾರ್ಕ್ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಉಡುಪಿ ಜಿಲ್ಲೆಯ ಕುಂಜಿಬೆಟ್ಟು ನಿವಾಸಿ ರಾಶೀದ್ ಖಾನ್ ಎಂಬಾತನನ್ನು ಕದ್ರಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಮಣಿಕಂಠ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಬ್ಯಾಂಕ್ ವಂಚನೆ ಪ್ರಕರಣ| ರಿಲಾಯನ್ಸ್ ಕಮ್ಯುನಿಕೇಷನ್ನ ಇಬ್ಬರು ಹಿರಿಯ ಅಧಿಕಾರಿಗಳ ಬಂಧನ
ಹೊಸದಿಲ್ಲಿ, ಎ. 20: ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಮೂಹದ ಕಂಪೆನಿ ರಿಲಾಯನ್ಸ್ ಕಮ್ಯುನಿಕೇಷನ್ (ಆರ್ಕಾಮ್)ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಸೋಮವಾರ ತಿಳಿಸಿದೆ. ಬಂಧಿತ ಅಧಿಕಾರಿಗಳನ್ನು ಆರ್ಕಾಮ್ನ ಉಪಾಧ್ಯಕ್ಷ ಅನಿಲ್ ಕಲ್ಯಾ ಹಾಗೂ ಸಹ ಅಧ್ಯಕ್ಷ ಡಿ.ವಿಶ್ವನಾಥನ್ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ದೂರಿನ ಆಧಾರದಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಆರ್ಕಾಮ್, ಅನಿಲ್ ಅಂಬಾನಿ ಮತ್ತು ಇತರರಿಗೆ ಸಂಬಂಧಿಸಿ ತನಿಖೆ ಆರಂಭಿಸಲಾಗಿದೆ. ಈ ಕಂಪೆನಿಗೆ ಬ್ಯಾಂಕ್ ಸಾಲ ಮಂಜೂರು ಮಾಡಿದೆ. ಆದರೆ, ಆರೋಪಿ ಸಾಲಗಾರರ ವಂಚನೆಯ ಚಟುವಟಿಕೆಗಳ ಕಾರಣದಿಂದ ಸಾಲದಾತರಿಗೆ 2.229.05 ಕೋಟಿ.ರೂ. ನಷ್ಟ ಉಂಟಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೂರಿನಲ್ಲಿ ಆರೋಪಿಸಿದೆ. 17 ಸಾರ್ವಜನಿಕ ವಲಯದ ಬ್ಯಾಂಕ್ಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ 19,694 ಕೋಟಿ. ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಆರ್ಕಾಮ್ ತನ್ನದೇ ಅಧಿಕಾರಿಗಳು ನಿಯಂತ್ರಿಸುತ್ತಿದ್ದ ಶೆಲ್ ಕಂಪೆನಿಗಳನ್ನು ಬಳಸಿ ಪರೋಕ್ಷ ವಹಿವಾಟುಗಳನ್ನು ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದಲ್ಲದೆ, ತನ್ನ ಸಮೂಹ ಸಂಸ್ಥೆಗಳೊಂದಿಗೆ ನಕಲಿ ಸೇವೆಗೆ ಸಂಬಂಧಿಸಿದ ವಹಿವಾಟುಗಳಿಗಾಗಿ ಆರ್ಕಾಮ್ ಸಾಲ ರಿಯಾಯತಿ ಪತ್ರ(ಎಲ್ಸಿ) ಪಡೆದುಕೊಂಡಿದೆ. ಇದರಿಂದ ಬ್ಯಾಂಕ್ಗಳಿಗೆ ಭಾರೀ ನಷ್ಟ ಉಂಟಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ನಾನು ರಾಜಕಾರಣ ಮಾಡುತ್ತೇನೆ : ಸಿಎಂ ಸಿದ್ದರಾಮಯ್ಯ
ಮೈಸೂರು/ಹುಣಸೂರು: ಸಮಾಜದ ಪರಿವರ್ತನೆಗೆ ಬಸವಣ್ಣನ ವಿಚಾರಗಳು ಅತ್ಯಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ತಾಲ್ಲೂಕು ಕುರುಬರ ಅಭಿವೃದ್ಧಿ ಸಮಿತಿ ಇವರ ವತಿಯಿಂದ ಹುಣಸೂರಿನ ಕನಕ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಗಣಪತಿ ದೇವಸ್ಥಾನ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಸ್ಥಾನವನ್ನು ಉದ್ಘಾಟನೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ನಾನು ರಾಜಕಾರಣ ಮಾಡುತ್ತೇನೆ. ನನ್ನ ಇಡೀ ರಾಜಕೀಯ ಜೀವನದ 42 ವರ್ಷಗಳಿಂದಲೂ ಜನರು ಬೆಂಬಲಿಸುತ್ತಾ ಬಂದಿದ್ದಾರೆ ಎಂದರು. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ : ನಮ್ಮ ಸರಕಾರ ಜನಪರವಾದ ಕೆಲಸ ಮಾಡಿದ್ದು, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕಾದರೆ ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರಿಗೂ ಸಮಾನ ಅವಕಾಶಗಳು, ಜಾತಿ ವರ್ಗ ರಹಿತವಾದ ಸಮಾಜ ನಿರ್ಮಾಣವಾಗಬೇಕೆನ್ನುವುದು ನಮ್ಮ ಸರಕಾರದ ಉದ್ದೇಶ. ಇತಿಹಾಸ ತಿಳಿಯದವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಮೌಢ್ಯಗಳಿಂದ ದೂರವಿದ್ದು, ಜಾತಿ, ವರ್ಗಗಳನ್ನು ಬಿಟ್ಟಾಗ ಬಸವಣ್ಣನವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು. ಬಸವಣ್ಣನವರು ಸಮಾಜದ ಜಾತಿವ್ಯವಸ್ಥೆ ಮತ್ತು ಅಸಮಾನತೆಗಳನ್ನು ಹೋಗಲಾಡಿಸಲು ಹೋರಾಡಿದ ಸಮಾಜ ಸುಧಾರಕರು. ಮೌಢ್ಯಗಳಿಂದ ದೂರವಿರುವ, ಜಾತಿ ಮತ್ತು ವರ್ಗರಹಿತ ಸಮಾಜ ನಿರ್ಮಾಣವನ್ನು ಅವರು ಬಯಸಿದ್ದರು. ಬಸವಣ್ಣನವರು ಮೇಲ್ಜಾತಿಗೆ ಸೇರಿದವರಾದರೂ, ಸಮಾಜದ ಕಟ್ಟಕಡೆಯ ಅಸ್ಪೃಶ್ಯತೆಯ ಜಾತಿಯಲ್ಲಿ ಹುಟ್ಟಿದವನು ಎಂದು ಹೇಳಿಕೊಳ್ಳುತ್ತಿದ್ದರು. ಬಸವಾದಿ ಶರಣರು ಸಮಾಜ ಪರಿವರ್ತನೆಗೆ ಪೂರ್ಣ ಪ್ರಮಾಣದಲ್ಲಿ ಸಫಲರಾಗಲಿಲ್ಲ. ಬಸವ ವಿಚಾರಗಳು ಹಿಂದೆಯೂ, ಇಂದಿಗೂ, ಭವಿಷ್ಯದಲ್ಲಿಯೂ ಪ್ರಸ್ತುತವಾಗಿದೆ. ಮನುಷ್ಯ ಸಮಾಜ ನಿರ್ಮಾಣ ಮಾಡಲು ಬಯಸಿದ ಬಸವಣ್ಣನವರು ಒಬ್ಬ ಮಾನವತಾವಾದಿ ಎಂದರು. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ, ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯಕ್ಷಗಾನ ಕೇಂದ್ರದಿಂದ ಅರ್ಜಿ ಆಹ್ವಾನ
ಉಡುಪಿ, ಎ.20: ನಗರದ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ತರಬೇತಿಗಾಗಿ ಸೇರಲು ಬಯಸುವ 7ನೇ ತರಗತಿಯಿಂದ 10ನೇ ತರಗತಿವರೆಗಿನ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ, ಶಾಲಾ ವಿದ್ಯಾಭ್ಯಾಸ, ಉಚಿತ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಇರುತ್ತದೆ. ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಯಕ್ಷಗಾನ ಕೇಂದ್ರದ ಪ್ರಕಟಣೆ ತಿಳಿಸಿದೆ. ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನವಾಗಿರುತ್ತದೆ. ಆಸಕ್ತರು ದೂರವಾಣಿ ಸಂಖ್ಯೆ:9900907702/ 9901190392/ 9945245144ನ್ನು ಸಂಪರ್ಕಿಸುವಂತೆ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿಯಲ್ಲಿ ಬಾಸ್ಕೆಟ್ಬಾಲ್ ಸ್ಟೇಡಿಯಂ: ಪ್ರಸಾದ್ರಾಜ್ ಕಾಂಚನ್
ಜಿಲ್ಲಾ ಬಾಸ್ಕೆಟ್ಬಾಲ್ ಸಂಸ್ಥೆ ಉದ್ಘಾಟನೆ
ಗೋವಾದ ‘ಪೋಷಕ ಸಂತ’ರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಬಲಪಂಥೀಯ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು
ಪಣಜಿ,ಎ.20: ಗೋವಾದ ‘ಪೋಷಕ ಸಂತ’ ಎಂದೇ ಹೆಸರಾಗಿರುವ ಸೈಂಟ್ ಫ್ರಾನ್ಸಿಸ್ ಝೇವಿಯರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಬಲಪಂಥೀಯ ಕಾರ್ಯಕರ್ತ ಗೌತಮ ಖಟ್ಟರ್ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸನಾತನ ಮಹಾಸಂಘದ ಸ್ಥಾಪಕರಾಗಿರುವ ಖಟ್ಟರ್ ಶನಿವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೀಡಿಯೊ ವೈರಲ್ ಆದ ಬಳಿಕ ವಿವಾದ ಭುಗಿಲೆದ್ದಿದೆ. ಸ್ವಾಮಿ ಬ್ರಹ್ಮೇಶಾನಂದ, ರಾಜ್ಯದ ಸಾರಿಗೆ ಸಚಿವ ಮಾವಿನ್ ಗೊಡಿನ್ಹೋ, ಬಿಜೆಪಿ ಶಾಸಕರಾದ ಸಂಕಲ್ಪ ಅಮೋಣಕರ್ ಮತ್ತು ದಾಜಿ ಸಾಲ್ಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಪದಾಧಿಕಾರಿ ಪೀಟರ್ ಡಿಸೋಜಾ ಅವರು ವಾಸ್ಕೋ ಪೋಲಿಸ್ ಠಾಣೆಯಲ್ಲಿ ಖಟ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಕ್ಕಾಗಿ ಖಟ್ಟರ್ ವಿರುದ್ಧ ಪ್ರಕರಣ ದಾಖಲಾಗಿದ್ದು,ಕಾನೂನಿನಂತೆ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ದಕ್ಷಿಣ ಗೋವಾ ಎಸ್ಪಿ ಸಂತೋಷ್ ದೇಸಾಯಿ ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ನಾಯಕರು ಖಟ್ಟರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ನಡುವೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಸನಾತನ ಧರ್ಮ ರಕ್ಷಾ ಸಮಿತಿಯು ಖಟ್ಟರ್ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿದೆ ಮತ್ತು ಕ್ರೈಸ್ತರ ಸಾಮರಸ್ಯದ ಸಹಬಾಳ್ವೆಯನ್ನು ಉಲ್ಲೇಖಿಸಿ ಅವರ ಕ್ಷಮೆಯನ್ನು ಕೋರಿದೆ.
ಕ್ರೈಮಿಯದಲ್ಲಿ ರಶ್ಯ ಯುದ್ಧನೌಕೆಗಳ ಮೇಲೆ ಉಕ್ರೇನ್ ದಾಳಿ
ಕೀವ್, ಎ. 20: ಉಕ್ರೇನ್ ಮತ್ತು ರಶ್ಯ ರವಿವಾರ ರಾತ್ರಿ ಪರಸ್ಪರರ ವಿರುದ್ಧ ದಾಳಿಗಳನ್ನು ನಡೆಸಿವೆ. ಉಕ್ರೇನ್ನ ಡ್ರೋನ್ಗಳು ಕಪ್ಪು ಸಮುದ್ರದಲ್ಲಿರುವ ರಶ್ಯದ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಯುದ್ಧನೌಕೆಗಳ ಮೇಲೆ ದಾಳಿ ನಡೆಸಿದರೆ, ರಶ್ಯವು ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್ನಾದ್ಯಂತ ಇರುವ ಹಲವು ವಲಯಗಳ ಮೇಲೆ ಬಾಂಬ್ಗಳನ್ನು ಹಾಕಿದೆ. ರಶ್ಯ-ಆಕ್ರಮಿತ ಕ್ರೈಮಿಯದ ಸೆವಸ್ಟೊಪೊಲ್ ಕೊಲ್ಲಿಯಲ್ಲಿರುವ ರಶ್ಯದ ಎರಡು ಯುದ್ಧನೌಕೆಗಳು ಮತ್ತು ಒಂದು ರೇಡಾರ್ ಸ್ಟೇಶನ್ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್ನ ಜಿಯುಆರ್ ಸೇನಾ ಬೇಹುಗಾರಿಕಾ ಘಟಕ ಹೇಳಿಕೊಂಡಿದೆ. 150 ಮಿಲಿಯ ಡಾಲರ್ (ಸುಮಾರು 1,395 ಕೋಟಿ ರೂಪಾಯಿ) ಬೆಲೆಯ ಹಡಗುಗಳ ಮೇಲೆ ಡ್ರೋನ್ ಯಶಸ್ವಿಯಾಗಿ ಅಪ್ಪಳಿಸಿದೆ ಮತ್ತು ರೇಡಾರ್ ಸಲಕರಣೆಯೊಂದು ಧ್ವಂಸಗೊಂಡಿದೆ ಎಂದು ಅದು ಹೇಳಿದೆ. ರಶ್ಯದಲ್ಲಿ, ಉಕ್ರೇನ್ ಡ್ರೋನ್ಗಳು ಟುವಾಪ್ಸ್ ಬಂದರಿನ ಮೇಲೆ ದಾಳಿ ನಡೆಸಿದ್ದು, ಕನಿಷ್ಠ ಒಬ್ಬ ವ್ಯಕ್ತಿ ಮೃತರಾಗಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ. ಸಾಗಾಟ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ವೆನಿಯಮಿನ್ ಕೊಂಡ್ರಟೀವ್ ತಿಳಿಸಿದ್ದಾರೆ. ಈ ಬಂದರಿನ ಮೇಲೆ ನಡೆದ ದಾಳಿಯು ಮೂರು ದಿನಗಳಲ್ಲಿ ಎರಡನೆಯದಾಗಿದೆ.
ಲಂಡನ್, ಎ. 20: ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಫೆಲೆಸ್ತೀನ್ ಜನತೆಗೆ ಬೆಂಬಲ ವ್ಯಕ್ತಪಡಿಸಿರುವ ಶೈಕ್ಷಣಿಕ ವ್ಯಕ್ತಿಗಳ ಮೇಲೆ ನಿಗಾ ಇಡಲು ಮಾಜಿ ಸೇನಾ ಬೇಹುಗಾರಿಕಾ ಅಧಿಕಾರಿಗಳು ನಡೆಸುವ ಖಾಸಗಿ ಸಂಸ್ಥೆಯೊಂದಕ್ಕೆ ಹನ್ನೆರಡು ಬ್ರಿಟಿಷ್ ವಿಶ್ವವಿದ್ಯಾನಿಲಯಗಳು ಹಣ ಪಾವತಿಸಿವೆ ಎನ್ನುವುದು ಬಹಿರಂಗವಾಗಿದೆ. ಬ್ರಿಟನ್ನ ಕೆಲವು ಅತ್ಯುನ್ನತ ವಿಶ್ವವಿದ್ಯಾನಿಲಯಗಳ ಪರವಾಗಿ ಹೋರಸ್ ಸೆಕ್ಯುರಿಟಿ ಕನ್ಸಲ್ಟೆನ್ಸಿ ಲಿಮಿಟೆಡ್ ಎಂಬ ಬೇಹುಕಾರಿಕಾ ಸಂಸ್ಥೆಯು ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಜಾಲಾಡಿವೆ ಹಾಗೂ ಅವರನ್ನು ಭಯೋತ್ಪಾದನೆ-ನಿಗ್ರಹ ಬೆದರಿಕೆ ವಿಶ್ಲೇಷಣೆಗೆ ರಹಸ್ಯವಾಗಿ ಒಳಪಡಿಸಿವೆ ಎನ್ನುವುದನ್ನು ಅಲ್ ಜಝೀರ ಇಂಗ್ಲಿಷ್ ಮತ್ತು ಲಿಬರ್ಟಿ ಇನ್ವೆಸ್ಟಿಗೇಟ್ಸ್ ನಡೆಸಿದ ಜಂಟಿ ತನಿಖೆಯಲ್ಲಿ ಪತ್ತೆಯಾಗಿದೆ. ತನ್ನನ್ನು ‘‘ಪ್ರಮುಖ ಬೇಹುಗಾರಿಕಾ’’ ಸಂಸ್ಥೆ ಎಂಬುದಾಗಿ ಕರೆದುಕೊಳ್ಳುವ ಹೋರಸ್ಗೆ ಈ ವಿಶ್ವವಿದ್ಯಾಲಯಗಳು 2022ರಿಂದ ಕನಿಷ್ಠ 4,40,000 ಪೌಂಡ್ (ಸುಮಾರು 5.53 ಕೋಟಿ ರೂಪಾಯಿ) ಪಾವತಿಸಿವೆ. ಬೇಹುಗಾರಿಕೆಗೆ ಒಳಗಾದವರಲ್ಲಿ ಮ್ಯಾಂಚೆಸ್ಟರ್ ಮೆಟ್ರೊಪಾಲಿಟನ್ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸ ನೀಡಲು ಆಹ್ವಾನಿತರಾಗಿದ್ದ ಓರ್ವ ಫೆಲೆಸ್ತೀನ್ ಶೈಕ್ಷಣಿಕ ವ್ಯಕ್ತಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಪಿಎಚ್ಡಿ ವಿದ್ಯಾರ್ಥಿಯೊಬ್ಬರು ಸೇರಿದ್ದಾರೆ. 2024 ಅಕ್ಟೋಬರ್ನಲ್ಲಿ, ಬ್ರಿಸ್ಟಲ್ ವಿಶ್ವವಿದ್ಯಾನಿಲಯವು ಬೇಹುಗಾರಿಕಾ ಸಂಸ್ಥೆಗೆ ವಿದ್ಯಾರ್ಥಿ ಪ್ರತಿಭಟನಾ ಗುಂಪುಗಳ ಪಟ್ಟಿಯೊಂದನ್ನು ಕೊಟ್ಟು, ಅವರ ನಡೆಗಳ ಬಗ್ಗೆ ಮಾಹಿತಿಗಳನ್ನು ನೀಡುವಂತೆ ಕೊರಿತ್ತು ಎನ್ನುವುದನ್ನು ವಿಶ್ವವಿದ್ಯಾಲಯದ ಆಂತರಿಕ ಇಮೇಲ್ ವೊಂದು ತಿಳಿಸಿದೆ. ವಿದ್ಯಾರ್ಥಿಗಳ ಕ್ಯಾಂಪಸ್ ಪ್ರತಿಭಟನಾ ಚಟುವಟಿಕೆಗಳ ಬಗ್ಗೆ ಮುನ್ನೆಚ್ಚರಿಕಾ ಮಾಹಿತಿಗಳನ್ನು ಪಡೆಯಲು ಒಟ್ಟು 12 ವಿಶ್ವವಿದ್ಯಾನಿಲಯಗಳು ಬೇಹುಗಾರಿಕಾ ಸಂಸ್ಥೆಗೆ ಹಣ ನೀಡಿರುವುದು ಪತ್ತೆಯಾಗಿದೆ. ಬೇಹುಗಾರಿಕೆಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯ, ಇಂಪೀರಿಯಲ್ ಕಾಲೇಜ್ ಲಂಡನ್, ವಿಶ್ವವಿದ್ಯಾಲಯ ಕಾಲೇಜ್ ಲಂಡನ್ (ಯುಸಿಎಲ್), ಕಿಂಗ್ಸ್ ಕಾಲೇಜ್ ಲಂಡನ್ (ಕೆಸಿಎಲ್), ಶೆಫೀಲ್ಡ್ ವಿಶ್ವವಿದ್ಯಾಲಯ, ಲೀಸೆಸ್ಟರ್ ವಿಶ್ವವಿದ್ಯಾಲಯ, ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯ ಮತ್ತು ಕಾರ್ಡಿಫ್ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯ ಹಣ ನೀಡಿರುವ ಇತರ ವಿಶ್ವವಿದ್ಯಾಲಯಗಳಾಗಿದೆ ಎಂದು ವರದಿಯು ತಿಳಿಸಿದೆ.
ಕಾರ್ಕಳ| ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ; ಬದಲಿ ಸಂಚಾರ ವ್ಯವಸ್ಥೆ
ಉಡುಪಿ: ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಎ.18ರಿಂದ 22ರವರೆಗೆ ರಥೋತ್ಸವ ನಡೆಯಲಿರುವುದರಿಂದ ಎ.22ರಂದು ಸಂಜೆ 4ಗಂಟೆಯಿಂದ ಮರುದಿನ ಬೆಳಗ್ಗೆ 6:00ಗಂಟೆಯವರೆಗೆ ಮೂರು ಮಾರ್ಗ ದಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್ವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಪರ್ಯಾಯ ಸಂಚಾವರ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಈ ಸಮಯದಲ್ಲಿ ಘನವಾಹನಗಳು ಬಂಗ್ಲೆಗುಡ್ಡೆ- ಹಿರಿಯಂಗಡಿ-ಪುಲ್ಕೇರಿ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡುರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್ಗಳು ತಾಲೂಕು ಜಂಕ್ಷನ್ನಿಂದ ಕಲ್ಲೊಟ್ಟೆ, ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸ ಬೇಕು. ಸ್ಟೇಟ್ಬ್ಯಾಂಕ್- ಮೂರು ಮಾರ್ಗದಲ್ಲಿ ಸಂಚರಿಸುವ ಲಘು ವಾಹನ ಹಾಗೂ ದ್ವಿಚಕ್ರ ವಾಹನಗಳು ಸ್ಟೇಟ್ಬ್ಯಾಂಕ್ ಜಂಕ್ಷನ್ನಿಂದ ಗಾಂಧಿ ಮೈದಾನವಾಗಿ ಅಂಚೆಕಚೇರಿ, ಕಾಮಧೇನು ಹೊಟೇಲ್ ಜಂಕ್ಷನ್ ಮಾರ್ಗ ವಾಗಿ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಗಂಗೊಳ್ಳಿ, ಎ.20: ಅನಾರೋಗ್ಯದಿಂದ ಬಳಲುತ್ತಿದ್ದ ಹಕ್ಲಾಡಿ ಗ್ರಾಮದ ಚಂದ್ರ ಮೊಗವೀರ(48) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ಎ.19ರಂದು ರಾತ್ರಿ ಮನೆಯ ಅಂಗಳದಲ್ಲಿರುವ ಬಾವಿಗೆ ಅಳವಡಿಸಿದ ಕಬ್ಬಿಣದ ಪೈಪ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜೆಕಾರು: ಮರ್ಣೆ ಗ್ರಾಮದ ಕುಂಟಿನಿ ಮನೆ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಬೆಳ್ತಂಗಡಿ ಮೂಲದ ಆನಂದ ಸೆರ್ವೆಗಾರ್(65) ಎಂಬವರು ವಿಪರೀತ ಮದ್ಯಪಾನ ಮಾಡುವ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಎ.19ರಂದು ರಾತ್ರಿ ಮನೆಯ ಮುಂಭಾಗದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆರುಸಲೇಮ್, ಎ.20: ದಕ್ಷಿಣ ಲೆಬನಾನ್ನಲ್ಲಿ ಯೇಸು ಕ್ರಿಸ್ತರ ಪ್ರತಿಮೆಯೊಂದನ್ನು ಧ್ವಂಸಗೊಳಿಸಿದ ಸೈನಿಕನ ವಿರುದ್ಧ ‘‘ಕಠಿಣ ಕ್ರಮ’’ ತೆಗೆದುಕೊಳ್ಳುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಹೇಳಿದ್ದಾರೆ. ಇಸ್ರೇಲ್ ಸೈನಿಕನೊಬ್ಬ ಶಿಲುಬೆಯಿಂದ ಕೆಳಗೆ ಬಿದ್ದಿರುವ ಯೇಸು ಕ್ರಿಸ್ತರ ಪ್ರತಿಮೆಯ ತಲೆಗೆ ದೊಡ್ಡ ಸುತ್ತಿಗೆಯಿಂದ ಬಡಿಯುವುದನ್ನು ತೋರಿಸುವ ಪೋಟೊವೊಂದು ವೈರಲ್ ಆಗಿದೆ. ‘‘ಇಸ್ರೇಲ್ ರಕ್ಷಣಾ ಪಡೆಯ ಸೈನಿಕನೊಬ್ಬ ದಕ್ಷಿಣ ಲೆಬನಾನ್ನಲ್ಲಿ ಕ್ಯಾಥೊಲಿಕ್ ಧಾರ್ಮಿಕ ಸಂಕೇತವೊಂದಕ್ಕೆ ಹಾನಿ ಮಾಡಿದ್ದಾನೆ ಎನ್ನುವ ವಿಷಯವನ್ನು ಕೇಳಿ ನನಗೆ ಆಘಾತ ಮತ್ತು ಬೇಸರವಾಗಿದೆ. ನಾನು ಇದನ್ನು ಕಟುವಾಗಿ ಖಂಡಿಸುತ್ತೇನೆ. ಸೇನಾಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಪರಾಧಿಯ ವಿರುದ್ಧ ಸೂಕ್ತ ಕಠಿಣ ಶಿಸ್ತು ಕ್ರಮವನ್ನು ಅವರು ತೆಗೆದುಕೊಳ್ಳಲಿದ್ದಾರೆ’’ ಎಂದು ನೆತನ್ಯಾಹು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.
ರಾಜಸ್ಥಾನ| ಎಚ್ಪಿಸಿಎಲ್ ರಿಫೈನರಿಯಲ್ಲಿ ಅಗ್ನಿ ಅವಘಡ
ಜೈಸಲ್ಮೇರ್,ಎ.20: ರಾಜಸ್ಥಾನದ ಬಲೋಟ್ರಾದಲ್ಲಿಯ ಎಚ್ಪಿಸಿಎಲ್ ಪಚಪಾದ್ರಾ ತೈಲ ಸಂಸ್ಕರಣಾಗಾರದಲ್ಲಿ ಸೋಮವಾರ ಅಪರಾಹ್ನ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಈ ರಿಫೈನರಿಯನ್ನು ಉದ್ಘಾಟಿಸಲಿದ್ದರು. ಬೆಂಕಿಗೆ ಅಧಿಕೃತ ಕಾರಣ ಮತ್ತು ಅದು ಯಾವ ವಿಭಾಗದಲ್ಲಿ ಸಂಭವಿಸಿದೆ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದಾಗ್ಯೂ ದೃಢಪಡದ ಮೂಲಗಳು ತಿಳಿಸಿರುವಂತೆ ಮೋದಿಯವರು ಮಂಗಳವಾರ ಉದ್ಘಾಟಿಸಲಿದ್ದ ಕ್ರೂಡ್ ಡಿಸ್ಟಿಲೇಶನ್ ಯೂನಿಟ್ ಮತ್ತು ವ್ಯಾಕ್ಯೂಮ್ ಡಿಸ್ಟಿಲೇಶನ್ ಯೂನಿಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿಯನ್ನು ನಂದಿಸಲು ಡಝನ್ಗಟ್ಟಲೆ ಅಗ್ನಿಶಾಮಕ ಯಂತ್ರಗಳನ್ನು ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪ್ರದೇಶವನ್ನು ತೆರವುಗೊಳಿಸಲಾಗಿತ್ತು ಮತ್ತು ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಹೊರಗೆ ಸಾಗಿಸಲಾಗಿತ್ತು. ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
Bengaluru | ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಆರ್ಟಿಒ ಅಧಿಕಾರಿಗೆ ಜೀವ ಬೆದರಿಕೆ: ಪ್ರಕರಣ ದಾಖಲು
ಬೆಂಗಳೂರು : ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಅಪರಿಚಿತನೊಬ್ಬ ಕರೆ ಮಾಡಿ ಮಹಾರಾಷ್ಟ್ರದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ(ಆರ್ಟಿಒ) ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ. ಪ್ರಸಾದ್ ಶಿವದಾಸ್ ನಾಲ್ವಡೆ ಎಂಬವರು ನೀಡಿದ ದೂರಿನನ್ವಯ ಅಪರಿಚಿತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಪ್ರಸಾದ್ ಶಿವದಾಸ್ ನಾಲ್ವಡೆ ನೀಡಿದ ದೂರಿನಂತೆ ಮಹಾರಾಷ್ಟ್ರದ ಕಾಶಿಗಾಂವ್ ಠಾಣೆಯ ಪೊಲೀಸರು ಶೂನ್ಯ ಎಫ್ಐಆರ್ ದಾಖಲಿಸಿದ್ದರು. ಬಳಿಕ ಘಟನೆ ನಡೆದ ಆಧಾರದ ಮೇಲೆ ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ.
ಮನೆಯೊಳಗೆ ನುಗ್ಗಿ ಕೀ ಕದ್ದು ಸ್ಕೂಟರ್ನೊಂದಿಗೆ ಪರಾರಿಯಾದ ಕಳ್ಳರು!
ಕಾರ್ಕಳ, ಎ.20: ಮನೆಯೊಳಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿ, ಬಳಿಕ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿಕೊಂಡು ಹೋದ ಘಟನೆ ಕಾರ್ಕಳ ಕರಿಯಕಲ್ಲು ಎಂಬಲ್ಲಿ ನಡೆದಿದೆ. ಉಜಿರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ಶೆಟ್ಟಿ ಎಂಬವರು ಎ.16ರಂದು ಮನೆಗೆ ಬೀಗ ಹಾಕಿ ಹೋಗಿದ್ದು, ಎ.19ರಂದು ಬೆಳಗ್ಗೆ ಮನೆಯಲ್ಲಿ ಕಳವು ನಡೆದಿರುವುದು ಕಂಡುಬಂದಿದೆ. ಈ ಅವಧಿಯಲ್ಲಿ ಮನೆಯ ಮುಖ್ಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನೊಳಗಿದ್ದ ಬಟ್ಟೆಯನ್ನು ಚೆಲ್ಲಾಪಿಲ್ಲಿ ಮಾಡಿದ್ದು, ನಂತರ ಮನೆಯ ಒಳಗಡೆ ಇರಿಸಿದ್ದ ಸ್ಕೂಟರ್ನ ಕೀಯನ್ನು ತೆಗೆದುಕೊಂಡು ಬಂದು ಮನೆಯ ಹೊರಗಡೆ ನಿಲ್ಲಿಸಿದ ಕೆಎ-20-ಇಎಸ್-8541 ನಂಬರಿನ ಸ್ಕೂಟರ್ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾ ಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮ್ಮುಕಾಶ್ಮೀರ| ಕಣಿವೆಗೆ ಉರುಳಿದ ಬಸ್: ಮೃತರ ಸಂಖ್ಯೆ 21ಕ್ಕೆ ಏರಿಕೆ, 60 ಮಂದಿಗೆ ಗಾಯ
ಶ್ರೀನಗರ, ಎ.20: ಜಮ್ಮು ಹಾಗೂ ಕಾಶ್ಮೀರದ ಉದಮ್ಪುರದಲ್ಲಿ ಸೋಮವಾರ ಪ್ರಯಾಣಿಕರ ಬಸ್ಸೊಂದು ಕಣಿವೆಗೆ ಉರುಳಿ ಬಿದ್ದು ಕನಿಷ್ಠ 21 ಮಂದಿ ಮೃತಪಟ್ಟಿದ್ದು, ಇತರ 60 ಮಂದಿ ಗಾಯಗೊಂಡಿದ್ದಾರೆ. ಬಸ್ ಬೆಳಗ್ಗೆ ಸುಮಾರು 10 ಗಂಟೆಗೆ ಕಾಗೋರ್ಟ್ ಗ್ರಾಮದ ಸಮೀಪ ಕಡಿದಾದ ತಿರುವಿನಲ್ಲಿ ಸಂಚರಿಸುತ್ತಿರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದರು ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಗೊಂಡವರನ್ನು ಅವಶೇಷಗಳ ಅಡಿಯಿಂದ ಹೊರಗೆ ಎಳೆದು ತೆಗೆದರು. ಅನಂತರ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸಂತಸ್ತರನ್ನು ಸ್ಥಳಾಂತರಿಸುವ ಹಾಗೂ ತೆರವು ಕಾರ್ಯಾಚರಣೆಯಲ್ಲಿ ಸೇರಿಕೊಂಡರು. 20 ಮಂದಿಯನ್ನು ರಕ್ಷಿಸಲಾಗಿದೆ. ಅವರನ್ನು ಜಿಎಂಸಿ ಉಧಮ್ಪುರಕ್ಕೆ ಸ್ಥಳಾಂತರಿಸಲಾಗಿದೆ. ತೀವ್ರ ಗಾಯಗೊಂಡವರನ್ನು ವಿಶೇಷ ಚಿಕಿತ್ಸೆಗಾಗಿ ಜಿಎಂಸಿ ಜಮ್ಮುವಿಗೆ ಶಿಫಾರಸು ಮಾಡಲಾಗಿದೆ. ಗಾಯಗೊಂಡವರಲ್ಲಿ ಹಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಪರಿಹಾರ ಘೋಷಿಸಿದ್ದಾರೆ.
IPL 2026: ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟರುವ ಸನ್ ರೈಸರ್ಸ್ ಗೆ ಡೆಲ್ಲಿ ಸವಾಲು; ಹೇಗಿದೆ ಹೈದರಾಬಾದ್ ಪಿಚ್?
SRH Vs DC Match Preview- ಐಪಿಎಲ್ 2026ರ 31ನೇ ಪಂದ್ಯದಲ್ಲಿ ಇಂದು ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಸತತ ಎರಡು ಜಯಗಳಿಂದ ಬೀಗುತ್ತಿರುವ ಹೈದರಾಬಾದ್, ಅಭಿಷೇಕ್ ಶರ್ಮಾ ಹಾಗೂ ಕ್ಲಾಸೆನ್ ಫಾರ್ಮ್ ಮೇಲೆ ನಂಬಿಕೆಯಿಟ್ಟಿದೆ. ಅತ್ತ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ, ರಾಹುಲ್ ಮತ್ತು ಮಿಲ್ಲರ್ ಬಲದೊಂದಿಗೆ ಹೈದರಾಬಾದ್ಗೆ ಸವಾಲು ನೀಡಲು ಸಜ್ಜಾಗಿದೆ. ಹೈದರಾಬಾದ್ನ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ರನ್ ಮಳೆ ನಿರೀಕ್ಷಿಸಲಾಗಿದ್ದು, ಅಂಕಿಅಂಶಗಳ ಸಮಬಲದ ಹೋರಾಟವುಳ್ಳ ಈ ಪಂದ್ಯವು ಅಂಕಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ.
‘ಕುದ್ಮುಲ್ ರಂಗರಾಯರು’ ಕೃತಿ ಬಿಡುಗಡೆ
ಉಡುಪಿ : ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸುಲೋಚನಾ ಪಚ್ಚಿನಡ್ಕ ಬರೆದ ಮಾನವ ತಾವಾದಿ, ಶಿಕ್ಷಣ ಪ್ರೇಮಿ, ದಲಿತೋದ್ಧಾರಕರಾದ ಕುದ್ಮುಲ್ ರಂಗರಾಯರ ಬಗೆಗಿನ ಕೃತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಇತ್ತೀಚೆಗೆ ಬೆಂಗಳೂರು ವಿಧಾನ ಸೌಧದ ಬ್ಯಾಂಕ್ವಿಟ್ ಹಾಲ್ನಲ್ಲಿ ಬಿಡುಗಡೆಗೊಳಿಸಿದರು. ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕಾರ್ಯದರ್ಶಿ ಸಂತೋಷ ಹಾನಗಲ್, ನಾಡೋಜ, ಬರಗೂರು ರಾಮಚಂದ್ರಪ್ಪ, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್.ಭೋಜೇಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುನಾಥ್, ಲೇಖಕಿ ಸುಲೋಚನಾ ಪಚ್ಚಿನಡ್ಕ ಉಪಸ್ಥಿತರಿದ್ದರು. ಇದು ಸುಲೋಚನಾ ಪಚ್ಚಿನಡ್ಕ ಅವರ ಎಂಟನೆಯ ಕೃತಿ ಆಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಾಮರಸ್ಯದ ನೆಲೆಗಳು ಯೋಜನೆಯಡಿಯಲ್ಲಿ ಪ್ರಕಟಗೊಂಡ 41 ಕೃತಿಗಳಲ್ಲಿ ಒಂದಾಗಿದೆ.
ಮಧ್ಯಪ್ರದೇಶ| ಐಪಿಎಸ್ ಅಧಿಕಾರಿಗೆ ಬಿಜೆಪಿ ಶಾಸಕ ಪ್ರೀತಮ್ ಲೋಧಿ ಬೆದರಿಕೆ
ಭೋಪಾಲ, ಎ. 20: ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿರುವ ಪ್ರೀತಮ್ ಲೋಧಿ ಪ್ರಸ್ತುತ ಉತ್ತರ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೆರಾ ಉಪ ವಿಭಾಗದ ಎಸ್ಡಿಒಪಿಯಾಗಿ ನೇಮಕಗೊಂಡಿರುವ 2022ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಆಯುಷ್ ಜಾಖರ್ ಅವರಿಗೆ ಬೆದರಿಕೆ ಹಾಕುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ. ತನ್ನ ಪುತ್ರ ಕರೇರಾಗೆ ಹಿಂದಿರುಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ. ಆತನನ್ನು ಯಾರಿಗಾದರೂ ತಡೆಯಲು ಸಾಧ್ಯವಿದೆಯೇ ಎಂದು ಪ್ರೀತಮ್ ಲೋಧಿ ಪ್ರಶ್ನಿಸಿದ್ದಾರೆ. ಹತ್ಯೆ ಹಾಗೂ ಹತ್ಯೆ ಪ್ರಯತ್ನ ಸೇರಿದಂತೆ ಸುಮಾರು 48 ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವ ಪ್ರೀತಮ್ ಲೋಧಿ ರವಿವಾರ ಸಂಜೆ ಒಂದು ವೀಡಿಯೊ ಬಿಡುಗಡೆ ಮಾಡಿದ್ದಾರೆ. ಈ ವೀಡಿಯೊದಲ್ಲಿ ಅವರು ಪುತ್ರ ದಿನೇಶ್ ಲೋಧಿಯನ್ನು ತನ್ನ ಕಚೇರಿಗೆ ಕರೆಸಿಕೊಂಡಿದ್ದ ಐಪಿಎಸ್ ಅಧಿಕಾರಿ ಆಯುಷ್ ಜಾಖರ್ಗೆ ಬೆದರಿಕೆ ಒಡ್ಡಿದ್ದಾರೆ. ಎಪ್ರಿಲ್ 16ರಂದು ದಿನೇಶ್ ಲೋಧಿ ಚಲಾಯಿಸುತ್ತಿದ್ದ ಥಾರ್ ರಾಕ್ಸ್ ಕಾರು ಢಿಕ್ಕಿಯಾಗಿ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಗಾಯಗೊಂಡಿದ್ದರು. ಈ ಅಪಘಾತದ ತನಿಖೆಗೆ ಸಂಬಂಧಿಸಿದಂತೆ ದಿನೇಶ್ ಲೋಧಿ ಅವರನ್ನು ಜಾಖರ್ ಅವರು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು. ಅನಂತರ ಅದರ ಒಂದು ವೀಡಿಯೊ ಬಹಿರಂಗವಾಗಿತ್ತು. ಅದರಲ್ಲಿ ಕಚೇರಿಯಲ್ಲಿ ಜಾಖರ್ ಅವರ ಮುಂದೆ ದಿನೇಶ್ ಲೋಧಿ ನಿಂತುಕೊಂಡು ಮಾತನಾಡುತ್ತಿರುವುದು ಕಂಡು ಬಂದಿತ್ತು. ಪ್ರೀತಮ್ ಲೋದಿ ತನ್ನ ವೀಡಿಯೊದಲ್ಲಿ ಪುತ್ರ ದಿನೇಶ್ ಲೋಧಿ ಕರೇರಾದಲ್ಲಿ ಮತ್ತೆ ಕಾಣಿಸಿಕೊಳ್ಳಬಾರದು ಎಂದು ಜಾಖರ್ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಜಾಖರ್ ಈ ಆರೋಪವನ್ನು ನಿರಾಕರಿಸಿದ್ದು
ಮಹಾರಾಷ್ಟ್ರ| 5 ಕೋಟಿ.ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ; ಮಹಿಳೆಯ ಬಂಧನ
ಕಲ್ಯಾಣ್ ಎ. 20: ಮಹಾರಾಷ್ಟ್ರದ ಕಲ್ಯಾಣ್ ತಾಲೂಕು ಪೊಲೀಸರ ನೆರವಿನೊಂದಿಗೆ ಮಾದಕ ದ್ರವ್ಯ ನಿಯಂತ್ರಣ ಬ್ಯುರೊ (ಎನ್ಸಿಬಿ)ದ ಮುಂಬೈ ಘಟಕ ಟಿಟ್ವಾಲದಲ್ಲಿ 35 ವರ್ಷದ ಮಹಿಳೆಯನ್ನು ಬಂಧಿಸಿ 5 ಕೋ.ರೂ.ಗೂ ಅಧಿಕ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಮಹಿಳೆಯ ವಶದಲ್ಲಿ 2.3 ಕಿ.ಗ್ರಾಂ. ಎಂಡಿಎಂಎ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆ ವಾಸಿಸುತ್ತಿದ್ದ ಟಿಟ್ವಾಲದಲ್ಲಿರುವ ಫ್ಲ್ಯಾಟ್ನಲ್ಲಿ ಎನ್ಸಿಬಿ ತಂಡ ಶನಿವಾರ ತಡ ರಾತ್ರಿ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಎನ್ಸಿಬಿ 5,000 ಮಾತ್ರೆಗಳನ್ನು ವಶಪಡಿಸಿಕೊಂಡಿತು. ಮಾದಕ ದ್ರವ್ಯ ಪೂರೈಕೆಗೆ ಸಂಬಂಧಿಸಿ ಎಪ್ರಿಲ್ 15ರಂದು ವ್ಯಕ್ತಿಯೋರ್ವನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆತ ಮಾದಕ ದ್ರವ್ಯ ಪೂರೈಕೆಯಲ್ಲಿ ಈ ಮಹಿಳೆ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧಾರದಲ್ಲಿ ಆಕೆ ವಾಸಿಸುವ ಸ್ಥಳದ ಮೇಲೆ ಎನ್ಸಿಬಿ ದಾಳಿ ನಡೆಸಲಾಗಿತ್ತು. ಎನ್ಸಿಬಿ ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಅಲ್ಲದೆ, ಮಾದಕ ದ್ರವ್ಯದ ಬೃಹತ್ ಜಾಲ ಹಾಗೂ ಪೂರೈಕೆ ಸರಪಣಿ ಗುರುತಿಸಲು ತನಿಖೆ ಮುಂದುವರಿಸಿದೆ.
ನಮ್ಮ ಸಾಮರ್ಥ್ಯ ಬಳಸುತ್ತಿರುವಾಗ ಸೌಲಭ್ಯ ನೀಡಲೇನು ತೊಂದರೆ: ಪ್ರೇಮಾ
ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಸುವರ್ಣ ಸಂಭ್ರಮ
ಕೇರಳದಲ್ಲಿ ವೈರಿಗಳು, ತಮಿಳುನಾಡಿನಲ್ಲಿ ಮಿತ್ರರು; ನನ್ನಿಲಂನಲ್ಲಿ SDPI ನಾಯಕನ ಪರ ಕಾಂಗ್ರೆಸ್–ಸಿಪಿಎಂ ಪ್ರಚಾರ!
ಚೆನ್ನೈ: ಚುನಾವಣಾ ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗುವಂಥ ಬೆಳವಣಿಗೆ ತಮಿಳುನಾಡಿನಲ್ಲಿ ಕಂಡುಬಂದಿದೆ. ಕೇರಳದಲ್ಲಿ ಪರಸ್ಪರ ಎದುರಾಳಿಗಳಾಗಿ ಹೋರಾಡುವ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು, ತಮಿಳುನಾಡಿನ ತಿರುವಾರೂರು ಜಿಲ್ಲೆಯ ನನ್ನಿಲಂ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ವೇದಿಕೆಯಲ್ಲಿ ಸೇರಿ ಪ್ರಚಾರ ನಡೆಸುತ್ತಿರುವುದು ಗಮನ ಸೆಳೆಯುತ್ತಿದೆ. ಇದಕ್ಕಿಂತಲೂ ವಿಶೇಷವೆಂದರೆ, ಈ ಎರಡೂ ಪಕ್ಷಗಳು SDPI ರಾಜ್ಯಾಧ್ಯಕ್ಷ ನೆಲ್ಲೈ ಮುಬಾರಕ್ ( V.M.S. Mohammed Mubarak )ಪರವಾಗಿ ಒಗ್ಗಟ್ಟಿನಿಂದ ಮತಯಾಚನೆ ಮಾಡುತ್ತಿವೆ. ಈ ಬೆಳವಣಿಗೆ ದೇಶದ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಂದರೆ SDPI ಪಕ್ಷ ತಮಿಳುನಾಡಿನಲ್ಲಿ ಆಡಳಿತಾರೂಢ DMK ನೇತೃತ್ವದ ಮೈತ್ರಿಕೂಟದ ಭಾಗವಾಗಿದೆ. ನನ್ನಿಲಂ ಕ್ಷೇತ್ರದಲ್ಲಿ SDPI ತಮಿಳುನಾಡು ಘಟಕದ ಅಧ್ಯಕ್ಷ ನೆಲ್ಲೈ ಮುಬಾರಕ್ ಕಣಕ್ಕಿಳಿದಿದ್ದಾರೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅವರು ಕಣದಲ್ಲಿರುವುದು DMK ಅಭ್ಯರ್ಥಿಯಾಗಿ. ಅವರ ಚುನಾವಣಾ ಚಿಹ್ನೆ DMKಯ ಉದಯಿಸುತ್ತಿರುವ ಸೂರ್ಯ. ಹಾಗಾಗಿ ಚುನಾವಣಾ ಆಯೋಗದ ಪ್ರಕಾರ ಮುಬಾರಕ್ ಅವರು DMK ಅಭ್ಯರ್ಥಿ. ಇವರಿಗೆ ಆಡಳಿತಾರೂಢ DMK ನೇತೃತ್ವದ ಮೈತ್ರಿಕೂಟ ಬೆಂಬಲ ಘೋಷಿಸಿದೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಂ ಲೀಗ್ ಸೇರಿದಂತೆ ಹಲವು ಪ್ರಮುಖ ಪಕ್ಷಗಳಿವೆ. ಈ ಎಲ್ಲ ಪಕ್ಷಗಳ ನಾಯಕರು ಈಗ DMK ಅಭ್ಯರ್ಥಿಯಾಗಿರುವ SDPI ರಾಜ್ಯಾಧ್ಯಕ್ಷನ ಗೆಲುವಿಗಾಗಿ ಶ್ರಮಿಸುತ್ತಿವೆ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಬದ್ಧ ವಿರೋಧಿಗಳು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ SDPI ಯಾರಿಗೆ ಬೆಂಬಲ ನೀಡಿದೆ ಎಂಬ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಗಳೂ ತೀವ್ರವಾಗಿದ್ದವು. ಆದರೆ ತಮಿಳುನಾಡಿನಲ್ಲಿ ರಾಜಕೀಯ ಸಮೀಕರಣ ಸಂಪೂರ್ಣ ಬೇರೆಯೇ ಆಗಿದ್ದು , ನನ್ನಿಲಂನ ಬೀದಿ ಬೀದಿಗಳಲ್ಲಿ ಕಾಂಗ್ರೆಸ್ ನ ಕೈ ಚಿಹ್ನೆ ಮತ್ತು ಸಿಪಿಎಂನ ಕುಡುಗೋಲು–ಸುತ್ತಿಗೆ ಚಿಹ್ನೆಗಳು SDPI ಹಾಗು DMK ಧ್ವಜದೊಂದಿಗೆ ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿವೆ. ಪ್ರಚಾರ ವಾಹನಗಳಲ್ಲಿ DMK ನಾಯಕ ಎಂ.ಕೆ. ಸ್ಟಾಲಿನ್ ಅವರ ಭಾವಚಿತ್ರದೊಂದಿಗೆ ಮೈತ್ರಿ ಪಕ್ಷಗಳ ಚಿಹ್ನೆಗಳೂ ರಾರಾಜಿಸುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ SDPI ನಾಯಕರು, “ತಮಿಳುನಾಡಿನಲ್ಲಿ ನಾವು ಒಂದು ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಮುಖ್ಯ ಗುರಿ ಬಿಜೆಪಿ ಹಾಗೂ AIADMK ಮೈತ್ರಿಯನ್ನು ಸೋಲಿಸುವುದು” ಎಂದು ತಿಳಿಸಿದ್ದಾರೆ. Photo Credit ; X ನನ್ನಿಲಂ ಕ್ಷೇತ್ರದಲ್ಲಿ ನೆಲ್ಲೈ ಮುಬಾರಕ್ ಅವರಿಗೆ ಎದುರಾಳಿಯಾಗಿ AIADMKಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್. ಕಾಮರಾಜ್ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯವಾಗಿರುವುದರಿಂದ DMK ಮೈತ್ರಿಕೂಟದ ಬೆಂಬಲ ಮುಬಾರಕ್ ಅವರಿಗೆ ಬಲ ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. DMK ನೇತೃತ್ವದ ಮೈತ್ರಿಕೂಟದಲ್ಲಿ ಒಟ್ಟು 23ಕ್ಕೂ ಹೆಚ್ಚು ಸಣ್ಣಪಕ್ಷಗಳೂ ಸೇರಿಕೊಂಡಿವೆ. ಸಿಪಿಎಂ ಪ್ರಭಾವ ಹೆಚ್ಚಿರುವ ಈ ಭಾಗದಲ್ಲಿ ಕಾರ್ಮಿಕರು ಮತ್ತು ಕೃಷಿಕರ ಮತಗಳು ನಿರ್ಣಾಯಕವಾಗಿವೆ. ಕಳೆದ ಮೂರು ಚುನಾವಣೆಯಲ್ಲಿ AIADMK ಜಯಗಳಿಸಿರುವ ಹಿನ್ನೆಲೆಯಲ್ಲಿ, ಈ ಬಾರಿ ಆ ಕೋಟೆಯನ್ನು ಭೇದಿಸಲು SDPI, ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ರಾಜಕೀಯ ಅನಿವಾರ್ಯತೆ ಅಥವಾ ಸೈದ್ಧಾಂತಿಕ ಹೊಂದಾಣಿಕೆಯ ಹೊರತಾಗಿ ನನ್ನಿಲಂ ಕ್ಷೇತ್ರ ಈಗ ತಮಿಳುನಾಡಿನ ಚುನಾವಣೆಯಲ್ಲಿ ಪ್ರಮುಖ ‘ಹಾಟ್ ಸ್ಪಾಟ್’ ಆಗಿ ಹೊರಹೊಮ್ಮಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಾನ್ಸ್ಟೇಬಲ್ (ಟೆಕ್ನಿಕಲ್ & ಟ್ರೇಡ್ಸ್ಮನ್ ಮತ್ತು ಪಯೋನೀರ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ ಸೈಟ್ ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿ 9,195 ಹುದ್ದೆಗಳಿಗೆ ನಡೆಯಲಿದೆ. CRPF ಅರ್ಜಿ ಸಲ್ಲಿಕೆ 2026 ಏಪ್ರಿಲ್ 20ರಿಂದ ಪ್ರಾರಂಭವಾಗಿದ್ದು, ಅಭ್ಯರ್ಥಿಗಳು 2026 ಮೇ 19ರವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಕನಿಷ್ಠ ವಯಸ್ಸು 18–21 ವರ್ಷಗಳು ಮತ್ತು ಗರಿಷ್ಠ ವಯಸ್ಸು 23–27 ವರ್ಷಗಳು (01 ಜನವರಿ 2026ರಂತೆ) ಇರಬೇಕು. ಅಭ್ಯರ್ಥಿಗಳು CRPF ಟ್ರೇಡ್ಸ್ಮನ್ ನೇಮಕಾತಿ 2026ಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20 ಏಪ್ರಿಲ್ 2026 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 19 ಮೇ 2026 ಅರ್ಜಿ ಶುಲ್ಕ * ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: ರೂ. 100/- * ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ: ಶುಲ್ಕವಿಲ್ಲ ವಯೋಮಿತಿ 18–23 ವರ್ಷಗಳು / 21–27 ವರ್ಷಗಳು (ಹುದ್ದೆಯ ಪ್ರಕಾರ) ಒಟ್ಟು ಹುದ್ದೆಗಳು 9,195 ಹುದ್ದೆಗಳು ಹುದ್ದೆಗಳ ವಿವರ ಶೈಕ್ಷಣಿಕ ಅರ್ಹತೆ * ಕಾನ್ಸ್ಟೇಬಲ್ (ಡ್ರೈವರ್): ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿದ್ದು, ಮಾನ್ಯ ಚಾಲನಾ ಪರವಾನಗಿ ಹೊಂದಿರಬೇಕು. * ಕಾನ್ಸ್ಟೇಬಲ್ (ಮೋಟಾರ್ ಮೆಕಾನಿಕ್): 10ನೇ ತರಗತಿ ಉತ್ತೀರ್ಣರಾಗಿದ್ದು, 2 ವರ್ಷಗಳ ಐಟಿಐ ಪ್ರಮಾಣಪತ್ರ ಹೊಂದಿರಬೇಕು. * ಕಾನ್ಸ್ಟೇಬಲ್ (ಇತರ ಹುದ್ದೆಗಳು): 10ನೇ ತರಗತಿ ಉತ್ತೀರ್ಣರಾಗಿದ್ದು, ಸಂಬಂಧಿತ ವ್ಯಾಪಾರದಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. * ಕಾನ್ಸ್ಟೇಬಲ್ ಟ್ರೇಡ್ಸ್ಮನ್ (ಪಯೋನೀರ್ ವಿಂಗ್): 10ನೇ ತರಗತಿ ಉತ್ತೀರ್ಣರಾಗಿದ್ದು, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವ ಇರಬೇಕು. ಆಯ್ಕೆ ಪ್ರಕ್ರಿಯೆ * CBT ಪರೀಕ್ಷೆ * PET & PST * ದಾಖಲೆ ಪರಿಶೀಲನೆ * ವೈದ್ಯಕೀಯ ಪರೀಕ್ಷೆ
ನಾಸಿಕ್ TCS ಪ್ರಕರಣಕ್ಕೆ ಕಾರ್ಪೊರೇಟ್ ಜಿಹಾದ್ ಎಂಬ ಹಣೆಪಟ್ಟಿ ಕಟ್ಟಿ ಯಾವ ರೀತಿ ಪ್ರಚಾರ ಮಾಡಲಾಯಿತು?
ಟಿಸಿಎಸ್ ನ ನಾಸಿಕ್ ಘಟಕದಲ್ಲಿ ಲೈಂಗಿಕ ಕಿರುಕುಳ, ಬಲವಂತದ ಮತಾಂತರ ಆರೋಪದ ಸುದ್ದಿ ಹೊರಹೊಮ್ಮುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಬೇರೆಯೇ ನಿರೂಪಣೆಯೊಂದು ಕಾಣಿಸಿಕೊಂಡಿತು. ಅದೇನೆಂದರೆ ಭಾರತದ ಕಾರ್ಪೊರೇಟ್ ವಲಯದಲ್ಲಿ ಧರ್ಮ ನೋಡಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುವುದು. ನಾಸಿಕ್ ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಬಿಪಿಒ ಒಳಗೆ ಏನಾಯಿತು ಎಂಬುದನ್ನು ತನಿಖಾಧಿಕಾರಿಗಳು ಹೇಳುವ ಮೊದಲೇ ಕಾರ್ಪೊರೇಟ್ ಜಿಹಾದ್ ಎಂಬ ಪದ ವೈರಲ್ ಆಯಿತು. ಅದು ಹ್ಯಾಶ್ ಟ್ಯಾಗ್ ಗಳಾಗಿ, ಮಾಧ್ಯಮ ಮುಖ್ಯಾಂಶಗಳಾಗಿ, ಇನ್ಸ್ಟಾ ಗ್ರಾಮ್ ರೀಲ್ಸ್ ಮತ್ತು ಕಂಪೆನಿಗಳಲ್ಲಿ ಇದೇ ರೀತಿಯ ಅನುಭವಗಳನ್ನು ಹೊಂದಿರುವ ಅನಾಮಧೇಯ ಪೋಸ್ಟ್ ಗಳ ಮೂಲಕ ಹರಡಿತು. ಟಿಸಿಎಸ್ ನಲ್ಲಿ ನಡೆದಿರುವುದೇನು ಎಂಬುದರ ಬಗ್ಗೆ ತಿಳಿದಿರುವ ಸಂಗತಿಗಳು ಸೀಮಿತವಾಗಿವೆ. ಮಾರ್ಚ್ ಅಂತ್ಯದಲ್ಲಿ, ಸಹೋದ್ಯೋಗಿಗಳಿಂದ ನಿರಂತರ ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳೆಯೊಬ್ಬರು ನಾಸಿಕ್ ನ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು. ಇಸ್ಲಾಮಿಕ್ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಒತ್ತಡ ಹೇರಲಾಗಿದೆ ಎಂದು ಅವರು ಆರೋಪಿಸಿದರು. ನಂತರದ ದಿನಗಳಲ್ಲಿ, ಹೆಚ್ಚಿನ ಮಹಿಳೆಯರು ಇದೇ ರೀತಿಯ ದೂರುಗಳೊಂದಿಗೆ ಮುಂದೆ ಬಂದರು ಎಂದು ವರದಿಗಳು ಹೇಳುತ್ತವೆ. ನಾಸಿಕ್ ನ ಡಿಯೋಲಾಲಿ ಕ್ಯಾಂಪ್ ಮತ್ತು ಮುಂಬೈ ನಾಕಾ ಪೊಲೀಸ್ ಠಾಣೆಗಳಲ್ಲಿ ಬಹು ಎಫ್ಐಆರ್ ಗಳನ್ನು ದಾಖಲಿಸಲಾಗಿದೆ. ಬೂಮ್ ಲೈವ್ ಒಂಭತ್ತು ಎಫ್ಐಆರ್ ಗಳನ್ನು ಪರಿಶೀಲಿಸುವಲ್ಲಿ ಯಶಸ್ವಿಯಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ, ಕಿರುಕುಳ ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ನಿಬಂಧನೆಗಳಿಗೆ ಸಂಬಂಧಿಸಿದ ಆರೋಪಗಳು ಸೇರಿವೆ. ಹಲವಾರು ಉದ್ಯೋಗಿಗಳನ್ನು ಬಂಧಿಸಲಾಗಿದೆ. ಆರಂಭದಲ್ಲಿ ಹಲವಾರು ವರದಿಗಳಲ್ಲಿ ನಿದಾ ಖಾನ್ ಎಂಬ ಮಹಿಳೆಯನ್ನು HR ವಿಭಾಗದ ಮುಖ್ಯಸ್ಥೆ ಎಂದು ಗುರುತಿಸಲಾಗಿತ್ತು. ಆದರೆ ಅವರು ಎಚ್ಆರ್ ಹೆಡ್ ಅಲ್ಲ ಎಂದು ಅವರ ಕಿರಿಯ ಸಹೋದರ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ನಿದಾ ಖಾನ್ ಮಾರ್ಕೆಟ್ ತಂಡದಲ್ಲಿ ಟೆಲಿ-ಕಾಲರ್ ಆಗಿದ್ದು, 2021 ಡಿಸೆಂಬರ್ ನಲ್ಲಿ ಸಂಸ್ಥೆಗೆ ಸೇರಿದ್ದರು. ಆಕೆ ಹಿರಿಯ ಉದ್ಯೋಗಿ ಅಲ್ಲ ಎಂದು ಹೇಳಿರುವ ಮೂಲಗಳನ್ನು ವರದಿ ಉಲ್ಲೇಖಿಸಿದೆ. ಎಫ್ಐಆರ್ ನಲ್ಲಿ ಹೆಸರಿಸಲಾದವರಲ್ಲಿ ಅವರೂ ಒಬ್ಬರು. ಪೊಲೀಸರು ನಿದಾ ಖಾನ್ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ತನಿಖೆಯಲ್ಲಿರುವವರನ್ನು ಅಮಾನತುಗೊಳಿಸಲಾಗಿದೆ. ಕಿರುಕುಳ ಮತ್ತು ಬಲವಂತದ ಬಗ್ಗೆ ತನ್ನ ಶೂನ್ಯ-ಸಹಿಷ್ಣುತೆ ನೀತಿಯನ್ನು ಪುನರುಚ್ಚರಿಸಿದೆ ಎಂದು TCS ಹೇಳಿದೆ. ರಾಜ್ಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಯಾವುದೇ ವಿಚಾರಣೆ ಮುಕ್ತಾಯಗೊಂಡಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗಿಲ್ಲದ ಕಾರಣ ಏನಾಯಿತು ಎಂಬುದರ ಸಂಪೂರ್ಣ ಚಿತ್ರಣ—ಯಾವುದೇ ಧಾರ್ಮಿಕ ದಬ್ಬಾಳಿಕೆ ಸಂಘಟಿತವಾಗಿದೆಯೇ ಅಥವಾ ಪ್ರಾಸಂಗಿಕವಾಗಿದೆಯೇ? ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲ. SIT ಡಿಜಿಟಲ್ ಪುರಾವೆಗಳು ಮತ್ತು ಸಾಕ್ಷ್ಯವನ್ನು ಪರಿಶೀಲಿಸುತ್ತಿದೆ. ►ವಿಚಾರಣೆ ಮುನ್ನವೇ ತೀರ್ಪು ನಾಸಿಕ್ ಪ್ರಕರಣ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಹಾಸ್ಯದ ವಿಷಯವಾಯಿತು. ಒಬ್ಬ ಹುಡುಗ ನಮಾಝ್ ಮಾಡಲು ಪ್ರಯತ್ನಿಸುತ್ತಿರುವುದನ್ನು TCS ಸಂದರ್ಶನ ತಯಾರಿ ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಲಾಯಿತು. 2025ರ ಬಾಲಿವುಡ್ ಸಿನಿಮಾ ಧುರಂದರ್ನಲ್ಲಿ ಭಯೋತ್ಪಾದಕರನ್ನು ಚಿತ್ರಿಸುವ ದೃಶ್ಯವನ್ನು TCS ದೈನಂದಿನ ಸ್ಟ್ಯಾಂಡ್ ಅಪ್ ಕರೆ ಎಂಬ ಶೀರ್ಷಿಕೆಯೊಂದಿಗೆ ಮೀಮ್ ಗಳಾಗಿ ಹರಿದಾಡಿತು. ಮಿಮಿ ಚಿತ್ರದ ಒಂದು ದೃಶ್ಯ ಮತ್ತು ವಿವಾದಾತ್ಮಕ ಇಸ್ಲಾಮಿಕ್ ಧರ್ಮೋಪದೇಶಕ ಝಾಕಿರ್ ನಾಯಕ್ ಅವರ ಫೋಟೋವನ್ನು ಕೂಡಾ ಈ ರೀತಿ ತಮಾಷೆ ಮಾಡಲು ಬಳಸಲಾಗಿದೆ. ಗುರುತಿಸಬಹುದಾದ ಮುಸ್ಲಿಂ ಚಿತ್ರ ಅಥವಾ ಕ್ರಿಯೆಯನ್ನು ತೆಗೆದುಕೊಂಡು, ಅದನ್ನು TCS ನಾಸಿಕ್ ಪ್ರಕರಣಕ್ಕೆ ಲಿಂಕ್ ಮಾಡಿ ಸಂಕೀರ್ಣವಾದ, ಬಗೆಹರಿಯದ ಕ್ರಿಮಿನಲ್ ತನಿಖೆಯನ್ನು ಮೂರು ಸೆಕೆಂಡುಗಳಲ್ಲಿ ಧರ್ಮದ ಪಂಚ್ ಲೈನ್ ಜೊತೆಗೆ ಹೈಲೈಟ್ ಮಾಡುವುದು ಇಲ್ಲಿನ ಟೆಂಪ್ಲೇಟ್ ಆಗಿದೆ. ರೀಲ್ಸ್, ಹೆಚ್ಚಿನ ಸಾಮಾಜಿಕ ಖಾತೆಗಳು ಮತ್ತು ವೇದಿಕೆಗಳಲ್ಲಿ ಈ ಮಾದರಿಯನ್ನು ಕಾಣಬಹುದು. X ನಲ್ಲಿ ಕಾರ್ಪೊರೇಟ್ ಜಿಹಾದ್ ಎಂಬ ಪದ ಟ್ರೆಂಡ್ ಆಯಿತು. ಈ ಪದವನ್ನು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು ಸಾರ್ವಜನಿಕ ಭಾಷಣದಲ್ಲಿ ಪುನರುಚ್ಚರಿಸಿದರು. ಅವರು ಆಪಾದಿತ ನಡವಳಿಕೆಯನ್ನು ವೈಯಕ್ತಿಕ ಅಪರಾಧ ನಡವಳಿಕೆಯಾಗಿ ಅಲ್ಲ, ಆದರೆ ಕಾರ್ಪೊರೇಟ್ ಭಾರತದೊಳಗೆ ಧಾರ್ಮಿಕ ಗುರಿಯ ವಿಶಾಲವಾದ, ಸಂಘಟಿತ ಮಾದರಿಯ ಪುರಾವೆಯಾಗಿ ರೂಪಿಸಲು ಇದನ್ನು ಬಳಸಿದರು. ಆರ್ಗನೈಸರ್ ವೀಕ್ಲಿ ಸೇರಿದಂತೆ ಬಲಪಂಥೀಯ ಮಾಧ್ಯಮಗಳು ಕಾರ್ಪೊರೇಟ್ ಜಿಹಾದ್ ಶೀರ್ಷಿಕೆಯಡಿಯಲ್ಲಿ ಬಹು ಲೇಖನಗಳನ್ನು ಪ್ರಕಟಿಸಿದವು. ಈ ಪ್ರಕರಣವನ್ನು ಇತರ ಆಪಾದಿತ ಜಿಹಾದ್ ಗಳ ವರ್ಗೀಕರಣದ ಜೊತೆಗೆ ಪಟ್ಟಿಮಾಡಿದವು. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಜನಸಂಖ್ಯಾ ಜಿಹಾದ್, ಮತಾಂತರ ಜಿಹಾದ್, ಸ್ಪಿಟ್ ಜಿಹಾದ್, ಡ್ರಗ್ ಜಿಹಾದ್ ಜೊತೆಗೆ ಕಾರ್ಪೊರೇಟ್ ಜಿಹಾದ್ ಕೂಡ ಸೇರಿತು. ನಾಸಿಕ್ ಪ್ರಕರಣವು ಪ್ರತ್ಯೇಕವಾಗಿಲ್ಲ, ಅದು ಇತರ ನಗರಗಳಿಗೆ ವಿಸ್ತರಿಸಿರುವ ಜಾಲದ ಭಾಗವಾಗಿದೆ ಎಂದು ಸೂಚಿಸುವ ಹೇಳಿಕೆಯನ್ನು ಹಿಂದೂ ಜನಜಾಗೃತಿ ಸಮಿತಿ ನೀಡಿತು. ಅಲ್ಲಿಂದ ಸಾಮಾಜಿಕ ಮಾಧ್ಯಮದಲ್ಲಿ ಟೆಕ್ ಮಹೀಂದ್ರಾ, ಫ್ಲಿಪ್ ಕಾರ್ಟ್ ಮತ್ತು ಇತರ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಳ್ಳುವ ಜನರಿಂದ ಅನಾಮಧೇಯ ಪೋಸ್ಟ್ ಗಳು ಕಾಣಿಸಿಕೊಂಡವು. ಅದರಲ್ಲಿ ಮುಸ್ಲಿಂ ಉದ್ಯೋಗಿಗಳು ತಮ್ಮ ಸಮುದಾಯವನ್ನು ಉತ್ತೇಜಿಸುವುದು, ಹಿಂದೂ ಸಹೋದ್ಯೋಗಿಗಳನ್ನು ಕಡೆಗಣಿಸುವುದು ಅಥವಾ ಇದೇ ರೀತಿಯ ಧಾರ್ಮಿಕ ಪರಿವರ್ತನೆಗೆ ಒತ್ತಡ ತರುವುದಾಗಿ ಆರೋಪಿಸಲಾಗಿದೆ. ►ಪರಿಚಿತ ಟೆಂಪ್ಲೇಟ್ ಆ ರೀತಿ ಸುಳ್ಳು ಆರೋಪಗಳು ಹೊಸದಲ್ಲ. ಕಾರ್ಪೊರೇಟ್ ಜಿಹಾದ್ ಎಲ್ಲಿಂದ ಬರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಅದರ ಹಿಂದಿನ ರಾಜಕೀಯ ಪದಭಂಡಾರವನ್ನು ನೋಡಬೇಕಿದೆ. ಭಾರತೀಯ ಸಾರ್ವಜನಿಕ ಚರ್ಚೆಯಲ್ಲಿ ಕೋಮು ಪ್ರತ್ಯಯವಾಗಿ ಜಿಹಾದ್ ಎಂಬ ಪದವನ್ನು ಕಳೆದ ಹದಿನೈದು ವರ್ಷಗಳಿಂದ ವಿಸ್ತರಿಸುತ್ತಿರುವ ಮುಸ್ಲಿಂ ಚಟುವಟಿಕೆಗಳಿಗೆ ಅನ್ವಯಿಸಲಾಗಿದೆ. ಸಂಶೋಧಕರು ಮತ್ತು ಮಾಧ್ಯಮ ವಿಶ್ಲೇಷಕರು ವಿವಿಧ ಕ್ಷೇತ್ರಗಳಲ್ಲಿ ಅದರ ಬಳಕೆಯನ್ನು ದಾಖಲಿಸಿದ್ದಾರೆ: ಲವ್ ಜಿಹಾದ್, ಕೊರೊನಾ ಜಿಹಾದ್, ಲ್ಯಾಂಡ್ ಜಿಹಾದ್, ಯುಪಿಎಸ್ಸಿ ಜಿಹಾದ್, ನಾರ್ಕೋಟಿಕ್ ಜಿಹಾದ್, ಆರ್ಥಿಕ್ ಜಿಹಾದ್. ಹೀಗೆ ಜಿಹಾದ್ ಪದಗಳನ್ನು ಒಂದೊಂದು ವಿಷಯದೊಂದಿಗೆ ಸೇರಿಸಿ ಬಳಸಲಾಗಿದೆ. ಅದನ್ನು ಮುಸ್ಲಿಂ ವ್ಯಕ್ತಿಗಳನ್ನು ಒಳಗೊಂಡ ನೈಜ ಅಥವಾ ಆಪಾದಿತ ಘಟನೆಯನ್ನು ವೈಯಕ್ತಿಕ ಅಥವಾ ಸಾಂಸ್ಥಿಕ ವೈಫಲ್ಯವೆಂದು ಅಲ್ಲ, ಆದರೆ ಹಿಂದೂಗಳ ವಿರುದ್ಧ ಸಂಘಟಿತ, ಧಾರ್ಮಿಕವಾಗಿ ಪ್ರೇರಿತ ಯೋಜನೆಯ ಪುರಾವೆಯಾಗಿ ಮರುರೂಪಿಸಲಾಗುತ್ತದೆ. ಈ ಪದದ ಹುಟ್ಟಿನ ಕುರಿತು ನೋಡಿದರೆ, ಇದು ಕನಿಷ್ಠ 2009ರ ಹಿಂದಿನದು. ಲವ್ ಜಿಹಾದ್ ಎಂಬ ಪದವು ಮೊದಲು ಕೇರಳ ಹೈಕೋರ್ಟ್ ಆದೇಶದಲ್ಲಿ ಮಹಿಳೆಯರನ್ನು ಮದುವೆಯಾಗಲು ಮತ್ತು ಮತಾಂತರ ಮಾಡಲು ಹಿಂದೂಗಳಾಗಿ ನಟಿಸಿದ ಮುಸ್ಲಿಂ ಪುರುಷರನ್ನು ವಿವರಿಸಲು ಬಳಸಲಾಗಿತ್ತು. ಈ ಪರಿಕಲ್ಪನೆಯನ್ನು ಬಳಿಕ ಹಿಂದುತ್ವ ಸಂಘಟನೆಗಳು ಬೇರೆ ಬೇರೆ ವಿಷಯಗಳಿಗೆ ಬಳಸಿಕೊಂಡವು. 2018ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ವ್ಯಾಪಕ ತನಿಖೆಯ ನಂತರ, ಮುಸ್ಲಿಮೇತರ ಮಹಿಳೆಯರನ್ನು ವಿವಾಹದ ಮೂಲಕ ಇಸ್ಲಾಂಗೆ ಮತಾಂತರಿಸಲು ಯಾವುದೇ ಸಂಘಟಿತ ಪಿತೂರಿ ನಡೆದಿರುವುದಕ್ಕೆ ಪುರಾವೆಗಳು ಕಂಡುಬಂದಿಲ್ಲ. ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಈ ಪದಕ್ಕೆ ಯಾವುದೇ ಕಾನೂನು ವ್ಯಾಖ್ಯಾನವಿಲ್ಲ ಎಂದು ಒಪ್ಪಿಕೊಂಡಿದೆ. ಆದರೆ ಇದು ನಿರೂಪಣೆಯ ಬೆಳವಣಿಗೆಯನ್ನು ನಿಧಾನಗೊಳಿಸಿಲ್ಲ. ಇದೇ ರೀತಿಯ ಮತ್ತೊಂದು ಪದ ಯುಪಿಎಸ್ಸಿ ಜಿಹಾದ್. 2020ರಲ್ಲಿ ಬಲಪಂಥೀಯ ಮಾಧ್ಯಮ ಸುದರ್ಶನ್ ನ್ಯೂಸ್ ಯುಪಿಎಸ್ಸಿ ಜಿಹಾದ್ ಎಂದು ಆರೋಪಿಸಿ ವಿವಾದಾತ್ಮಕ ಸರಣಿಯನ್ನು ಪ್ರಸಾರ ಮಾಡಿತು. ಈ ಕಾರ್ಯಕ್ರಮವು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳ ಹೆಚ್ಚುತ್ತಿರುವ ಯಶಸ್ಸನ್ನು ಅರ್ಹತೆಯ ಸಾಧನೆಯಾಗಿ ಅಲ್ಲ, ಬದಲಾಗಿ ಭಾರತೀಯ ಅಧಿಕಾರವರ್ಗದಲ್ಲಿ ಒಳನುಸುಳಲು ಸಂಘಟಿತ ಪಿತೂರಿಯಾಗಿ ರೂಪಿಸಿತು. ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಪ್ರಸಾರವನ್ನು ನಿರ್ಬಂಧಿಸಿತು. ಲವ್ ಜಿಹಾದ್ ಹಕ್ಕುಗಳ ಸುತ್ತಲಿನ ತಪ್ಪು ಮಾಹಿತಿಯಲ್ಲಿ ಇದೇ ರೀತಿಯ ಮಾದರಿಯನ್ನು ಕಾಣಬಹುದು. ಬೆಂಗಳೂರಿನಲ್ಲಿ 2024ರಲ್ಲಿ ನಡೆದ ಕೊಲೆ ಪ್ರಕರಣವನ್ನು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಲವ್ ಜಿಹಾದ್ ಎಂದು ತಪ್ಪಾಗಿ ರೂಪಿಸಿದರು. ನಂತರ ತನಿಖೆಗಳು ಈ ಹಕ್ಕುಗಳು ಆಧಾರರಹಿತವೆಂದು ಕಂಡುಬಂತು. ಅದೇ ವರ್ಷ, ತಬ್ಲಿಗೀ ಜಮಾಅತ್ ಸಭೆಯೊಂದಿಗೆ ಗುರುತಿಸಲಾದ ಕೋವಿಡ್-19 ಕ್ಲಸ್ಟರ್ ನಂತರ, #CoronaJihad ಎಂಬ ಹ್ಯಾಶ್ ಟ್ಯಾಗ್ ಒಂದು ವಾರದಲ್ಲಿ ಟ್ವಿಟರ್ ನಲ್ಲಿ ಸುಮಾರು 300,000 ಬಾರಿ ಕಾಣಿಸಿಕೊಂಡಿತು, ಇದು ಅಂದಾಜು 165 ಮಿಲಿಯನ್ ಬಳಕೆದಾರರನ್ನು ತಲುಪಿತು ಎಂದು ಡಿಜಿಟಲ್ ಹಕ್ಕುಗಳ ಗುಂಪು ಈಕ್ವಿಟಿ ಲ್ಯಾಬ್ಸ್ ತಿಳಿಸಿದೆ. ಯಾವುದೇ ಆರೋಪಗಳು ಸಾಬೀತಾಗುವ ಮೊದಲೇ ಮುಸ್ಲಿಮರು ಉದ್ದೇಶಪೂರ್ವಕವಾಗಿ ಸಾಂಕ್ರಾಮಿಕ ರೋಗವನ್ನು ಹರಡುತ್ತಿದ್ದಾರೆ ಎಂದು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು. ಕಾರ್ಪೊರೇಟ್ ಜಿಹಾದ್ ಈ ವರ್ಗೀಕರಣದ ಇತ್ತೀಚಿನ ಪುನರಾವರ್ತನೆಯಾಗಿದೆ. ►ತ್ವರಿತ ಪ್ರಚಾರಕ್ಕಾಗಿ ಮೀಮ್ಸ್ ಇನ್ಸ್ಟಾ ಗ್ರಾಮ್ ವಿಷಯಗಳನ್ನು ಬೂಮ್ ಲೈವ್ ಪರಿಶೀಲಿಸಿದ್ದು, ಯಾವುದೇ ಫ್ಯಾಕ್ಟ್ ಚೆಕ್ ಗಳಿಗಿಂತ ವೇಗವಾಗಿ ಹರಡುವ ಮತ್ತು ಹೆಚ್ಚು ಕಾಲ ಉಳಿಯುವ ಕೋಮು ನಿರೂಪಣೆಯನ್ನು ನಿರ್ಮಿಸಲು ಅವುಗಳನ್ನು ಬಳಸಲಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಲವ್ ಜಿಹಾದ್ ನಿರೂಪಣೆಗಳನ್ನು ಅಧ್ಯಯನ ಮಾಡುವ ಸಂಶೋಧಕರು ಹಾಸ್ಯ ಮತ್ತು ವಿಡಂಬನೆಯನ್ನು ಹಿಂದುತ್ವ ಪ್ರವಚನದೊಳಗೆ ಉದ್ದೇಶಪೂರ್ವಕ ಪ್ರಚಾರ ಸಾಧನಗಳಾಗಿ ಗುರುತಿಸಿದ್ದಾರೆ. TCS ಮೀಮ್ಸ್ ಈ ಮಾದರಿಯನ್ನು ಅನುಸರಿಸುತ್ತವೆ. ಓಸ್ಲೋ ವಿಶ್ವವಿದ್ಯಾಲಯದ ಆಧುನಿಕ ದಕ್ಷಿಣ ಏಷ್ಯಾ ಅಧ್ಯಯನಗಳ ಪ್ರಾಧ್ಯಾಪಕಿ ಕಥಿಂಕಾ ಫ್ರೊಯ್ಸ್ಟಾಡ್, 2021ರ ಜರ್ನಲ್ ಲೇಖನ Sound Biting Conspiracy: From India with ‘Love Jihad’ ನಲ್ಲಿ ಅಂತಹ ನಿರೂಪಣೆಗಳನ್ನು ಪರಿಶೀಲಿಸಿದ್ದಾರೆ. ಅದರ ಸ್ವರೂಪದಿಂದಾಗಿ ಅವು ಪರಿಣಾಮಕಾರಿಯಾಗಿ ಹರಡುತ್ತವೆ ಎಂದು ಅವರು ಬೂಮ್ ಲೈವ್ಗೆ ತಿಳಿಸಿದ್ದಾರೆ. ಡಿಜಿಟಲ್ ಸಂವಹನವು ಸ್ಥಾಪಿತ ಗಡಿಗಳು ಮತ್ತು ನೆಟ್ ವರ್ಕ್ ಗಳನ್ನು ಹೇಗೆ ಮೀರುತ್ತದೆ ಎಂಬುದನ್ನು ನಾವು ಬಹಳ ಹಿಂದೆಯೇ ನೋಡಿದ್ದೇವೆ. ಸಾಮಾನ್ಯ ಭಾಷೆಯಲ್ಲಿ ವಿವರಿಸಲಾಗದ ಹಾಸ್ಯ, ಅಚ್ಚರಿಯ ಉಲ್ಲಂಘನೆಗಳು ಮತ್ತು ದೃಶ್ಯೀಕರಿಸಿದ ಕಲ್ಪನೆಗಳನ್ನು ಸೇರಿಸುವ ಸಂದೇಶಗಳು ವೇಗವಾಗಿ ವೈರಲ್ ಆಗುತ್ತವೆ ಎಂದು ಅವರು ಹೇಳಿದರು. X ನಲ್ಲಿ ಕಾರ್ಪೊರೇಟ್ ಜಿಹಾದ್ ಟ್ರೆಂಡ್ ಆಗಿರುವುದು ಮತ್ತೊಂದು ಪದರವನ್ನು ಸೇರಿಸುತ್ತದೆ. ಟ್ರೆಂಡಿಂಗ್ ವಿಷಯವು ಸ್ವಯಂಪ್ರೇರಿತ ಸಾಮೂಹಿಕ ಒಮ್ಮತದ ನೋಟವನ್ನು ಸೃಷ್ಟಿಸುತ್ತದೆ. ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ಮಿಷನ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸೌರೀಶ್ ಘೋಷ್, ಈ ಪ್ರವೃತ್ತಿಯನ್ನು ವಿಶಾಲವಾದ ರಾಜಕೀಯ ಸಂದರ್ಭದಲ್ಲಿ ನೋಡಬೇಕು ಎಂದು ಹೇಳಿದ್ದಾರೆ. ಅಂತಹ ನಿರೂಪಣೆಗಳು ಸಾಂಸ್ಕೃತಿಕ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಪುನರಾವರ್ತಿತ ಸಂದೇಶಗಳ ಮೂಲಕ ಮುಸ್ಲಿಮರನ್ನು ಶತ್ರು ಎಂದು ನಿರ್ಮಿಸುವ ಇಸ್ಲಾಮೋಫೋಬಿಕ್ ಚೌಕಟ್ಟಿನ ದೀರ್ಘ ಮಾದರಿಯ ಭಾಗವಾಗಿವೆ. ಇದು ಬಲಪಂಥೀಯ ರಾಜಕೀಯಕ್ಕೆ ಸಂಬಂಧಿಸಿದೆ. ಮೀಮ್ಸ್, ರೀಲ್ಸ್ ಮತ್ತು ವೈರಲ್ ಪೋಸ್ಟ್ ಗಳ ಮೂಲಕ ಅಂತಹ ಸಂದೇಶವನ್ನು ವರ್ಧಿಸಲು ಸಾಮಾಜಿಕ ಮಾಧ್ಯಮವು ಪ್ರಮುಖ ಸಾಧನವಾಗಿದೆ. ಕಳೆದ 15 ವರ್ಷಗಳಿಂದ ಇಸ್ಲಾಮೋಫೋಬಿಯಾವು ಪ್ರಚಾರದ ಮೂಲಕ ಮತ್ತು ಸಂಸ್ಕೃತಿ ಉದ್ಯಮದ ಮೂಲಕ ತಳಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ನೋಡಿದ್ದೇವೆ ಎಂದು ಘೋಷ್ ಹೇಳಿದ್ದಾರೆ. ►ಕಾರ್ಪೊರೇಟ್ ಹೊಣೆಗಾರಿಕೆ ಇದರ ಮಧ್ಯೆ, ಕೆಲಸದ ಸ್ಥಳದ ಹೊಣೆಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತೀರಾ ಕಡಿಮೆ ಗಮನ ನೀಡಲಾಗಿದೆ. ನಾಸಿಕ್ ಪ್ರಕರಣದಲ್ಲಿ ಹಲವಾರು ದೂರುದಾರರು ಸುಮಾರು ವರ್ಷಗಳ ನಂತರ ದುಷ್ಕೃತ್ಯವನ್ನು ವರದಿ ಮಾಡಿದ್ದಾರೆ ಮತ್ತು ಆ ದೂರುಗಳನ್ನು ಪರಿಹರಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. ನಿಷ್ಕ್ರಿಯತೆಯ ಆರೋಪ ಹೊತ್ತಿರುವ ಮಾನವ ಸಂಪನ್ಮೂಲ ವ್ಯವಸ್ಥಾಪಕರ ಕಸ್ಟಡಿಯನ್ನು ಕೋರಿದಾಗ ಅಧಿಕಾರಿಗಳು ಈ ಅಂಶವನ್ನು ಎತ್ತಿ ತೋರಿಸಿದ್ದಾರೆ. ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH) ಚೌಕಟ್ಟಿನೊಂದಿಗೆ ಕಂಪೆನಿಯ ಅನುಸರಣೆಯ ಲೆಕ್ಕಪರಿಶೋಧನೆಗೆ ಕಾರ್ಮಿಕ ಹಕ್ಕುಗಳ ಗುಂಪು ಕರೆ ನೀಡಿದೆ. POSH ಕಾಯ್ದೆ, 2013ರ ಅಡಿಯಲ್ಲಿ, ಲೈಂಗಿಕ ಕಿರುಕುಳದ ಯಾವುದೇ ಲಿಖಿತ ದೂರನ್ನು ಆಂತರಿಕ ಸಮಿತಿ (IC) ತೆಗೆದುಕೊಳ್ಳಬೇಕು, ಅದು 90 ದಿನಗಳಲ್ಲಿ ತನ್ನ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಮತ್ತು ದೂರನ್ನು ಪ್ರತಿವಾದಿಯೊಂದಿಗೆ ಹಂಚಿಕೊಳ್ಳಬೇಕು ಎಂದು ಬೂಮ್ ಲೈವ್ ಜೊತೆ ಮಾತನಾಡಿದ ಸಿಂಪ್ಲಿಎಚ್ಆರ್ ಸೊಲ್ಯೂಷನ್ಸ್ನ ವ್ಯವಸ್ಥಾಪಕ ಪಾಲುದಾರ ರಜನೀಶ್ ಸಿಂಗ್ ಹೇಳಿದ್ದಾರೆ. ಪ್ರಕ್ರಿಯೆಯ ಸಮಯದಲ್ಲಿ ದೂರುದಾರರಿಗೆ ಮಧ್ಯಂತರ ಪರಿಹಾರವನ್ನು ಕಾನೂನು ಒದಗಿಸುತ್ತದೆ. ಆಂತರಿಕ ಸಮಿತಿ ಇಲ್ಲದೇ POSH ನಿಬಂಧನೆಗಳನ್ನು ಅನುಸರಿಸದಿದ್ದರೆ, ನೊಂದ ವ್ಯಕ್ತಿಯು ಪೊಲೀಸ್, ಸ್ಥಳೀಯ ದೂರು ಸಮಿತಿ ಅಥವಾ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು. ಆಂತರಿಕ ಸಮಿತಿ ಇದ್ದರೂ ಸಹ ಈ ಆಯ್ಕೆಗಳು ಲಭ್ಯವಿರುತ್ತವೆ. ಸಂಸ್ಥೆಯು ಅದರಲ್ಲಿ ನೋಂದಾಯಿಸಲ್ಪಟ್ಟಿದ್ದರೆ SHE-Box ಪೋರ್ಟಲ್ ಮೂಲಕವೂ ದೂರುಗಳನ್ನು ಸಲ್ಲಿಸಬಹುದು. TCS ನಾಸಿಕ್ ಘಟನೆಯ ಸುತ್ತಲಿನ ಪ್ರಾಥಮಿಕ ವರದಿಗಳ ಆಧಾರದ ಮೇಲೆ, ಇದು ತನ್ನ ಸಂಸ್ಕೃತಿಗೆ ಹೆಸರುವಾಸಿಯಾದ ಕಂಪೆನಿಯಲ್ಲಿ ಸಂಭವಿಸಿದೆ ಎಂಬುದು ಸ್ವಲ್ಪ ಆತಂಕಕಾರಿ ಸಂಗತಿಯಾಗಿದೆ. ಇದು ನಾಯಕತ್ವ ಮತ್ತು ಮಾನವ ಸಂಪನ್ಮೂಲ ಎರಡರ ಕಡೆಯ ಲೋಪವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಅಂತಹ ವಿಷಯಗಳ ಬಗ್ಗೆ ಕಾರ್ಯಪಡೆಯನ್ನು ನಿಯತಕಾಲಿಕವಾಗಿ ಸಂವೇದನಾಶೀಲಗೊಳಿಸುವಲ್ಲಿ ಸಂಸ್ಥೆಗಳು ಹೆಚ್ಚು ಪೂರ್ವಭಾವಿಯಾಗಿರಬೇಕು ಎಂದು ಸಿಂಗ್ ಹೇಳಿದ್ದಾರೆ.
ಗುರುಮಠಕಲ್ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಣೆ
ಗುರುಮಠಕಲ್ : ಪಟ್ಟಣದ ಪ್ರಮುಖ ಕೇಂದ್ರವಾದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿಯನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಾರ್ಥಕವಾಗಿ ಆಚರಿಸಲಾಯಿತು. ಬಸವೇಶ್ವರ ವೃತ್ತದಲ್ಲಿ ಜರುಗಿದ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ, ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಬಸವಣ್ಣನವರು ಹಾಕಿಕೊಟ್ಟ ಸಮಾನತೆಯ ಹಾದಿ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ, ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಹಿರೇಮಠ, ನರಸಿರೆಡ್ಡಿ ಗಡಸುಗುರ್, ಕೆ. ದೇವದಾಸ್, ಲಿಂಗಪ್ಪ, ಜಗದೀಶ್ ಬೂಮಾ, ಅಶೋಕ್ ಶನಿವಾರ, ಶಂಕ್ರಯ್ಯ ಸ್ವಾಮಿ, ಶಿವಕುಮಾರ್ ಜಾಡರ್, ನರಸಿರೆಡ್ಡಿ ಇಟಿಕಲ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದರು. ಪುರಸಭೆ ಕಾರ್ಯಾಲಯದಲ್ಲಿ ಬಸವಣ್ಣ ಜಯಂತಿ ಆಚರಣೆ ಮಾಡಲಾಯಿತು. ಪುರಸಭೆಯ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ್ ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಔರಾದ್ | ಬಸವಣ್ಣನವರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ : ಶಾಸಕ ಪ್ರಭು ಚವ್ಹಾಣ
ಔರಾದ್: ಅಸಮಾನತೆ, ಅಂಧಶ್ರದ್ಧೆ ಹಾಗೂ ಸಾಮಾಜಿಕ ಅನ್ಯಾಯಗಳನ್ನು ನಿರ್ಮೂಲನೆ ಮಾಡಲು ಜೀವನದುದ್ದಕ್ಕೂ ಶ್ರಮಿಸಿದ್ದ ವಿಶ್ವಗುರು ಬಸವಣ್ಣನವರು ನೀಡಿದ ಕಾಯಕ, ಸಿದ್ದಾಂತ ಸೇರಿದಂತೆ ಎಲ್ಲ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಶಾಸಕ ಪ್ರಭು ಚವ್ಹಾಣ ಅವರು ಹೇಳಿದರು. ತಾಲ್ಲೂಕು ಆಡಳಿತದ ವತಿಯಿಂದ ತಹಶಿಲ್ ಕಚೇರಿ ಆವರಣದಲ್ಲಿ ಸೋಮವಾರ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ-ಮತ ಭೇದಗಳನ್ನು ದೂರ ಮಾಡಿ ಸಮಾನತೆಯ ನೆಲೆಯಲ್ಲಿ ಬದುಕುವ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ ಎಂದರು. ಬಸವಣ್ಣನವರು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಜೊತೆಗೆ ಸಾಮಾಜದಲ್ಲಿರುವ ಅಂಕುಡೊಂಕುಗಳನ್ನು ಸರಿಪಡಿಸಲು ತನ್ನದೇ ಆದ ಕೊಡುಗೆ ನೀಡಿದ್ದರು. ಬಸವಣ್ಣನವರ ವಚನಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ದಾರಿದೀಪವಾಗಿದ್ದು, ಇವುಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿ ಉಪನ್ಯಾಸ ನೀಡಿ, ಬಸವಣ್ಣನವರನ್ನು ಪೂಜೆ ಮಾಡಿ ದೇವರನ್ನಾಗಿ ಮಾಡುವುದು ಬೇಕಾಗಿಲ್ಲ. ಅವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ಗೌರವ ಸಲ್ಲಿಸಿದಂತಾಗಿ ನಾಡಿನಲ್ಲಿ ಶಾಂತಿ, ಸಮೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಪಾಟೀಲ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಆರಕ್ಷಕ ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ್, ಪುರಸಭೆಯ ಮುಖ್ಯಾಧಿಕಾರಿ ರವಿ ಸುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ರಾಠೋಡ್, ತಾಲ್ಲೂಕು ಆರೋಗ್ಯಾಧಿಕಾರಿ ಅನೀಲಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಉತ್ತಮ್ ಸಂಘನಾಯಕ್ ಸೇರಿದಂತೆ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ನಿರೂಪಿಸಿ ವಂದಿಸಿದರು.
ಆಳಂದ | ವಿಶ್ವಗುರು ಬಸವಣ್ಣನವರ ಜಯಂತಿ
ಆಳಂದ : ಬಸವಣ್ಣನವರ ವಚನಗಳು ಸಮಾಜದ ಪರಿವರ್ತನೆಗೆ ದಿಕ್ಕು ತೋರಿದ ಅಮೂಲ್ಯ ಸಂದೇಶಗಳನ್ನು ಒಳಗೊಂಡಿದ್ದು, ಯುವಜನತೆ ಅವುಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ಹೇಳಿದರು. ಪಟ್ಟಣದ ಹೊರವಲಯದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು. ಬಸವಣ್ಣನವರ ವಚನಗಳಲ್ಲಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಕ್ತಿ ಅಡಗಿದೆ. “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ಪರಿಕಲ್ಪನೆ ವಿಶ್ವಮಾನ್ಯವಾಗಿದ್ದು, ಶ್ರಮದ ಮಹತ್ವವನ್ನು ಸಾರುತ್ತದೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮೂಲಭೂತ ಆಲೋಚನೆಗೆ ಬಸವಣ್ಣನವರು ಬುನಾದಿ ಹಾಕಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೆ ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸಮಾಜ ಅಧ್ಯಕ್ಷ ಶರಣಬಸಪ್ಪ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾವಿದ ಶಿವಶರಣಪ್ಪ ಪೂಜಾರಿ ಅವರು ತಬಲಾ ಸಾಥಿ ಅಶೋಕ ಆಳಂದ ಅವರ ಸಹಕಾರದೊಂದಿಗೆ ವಚನ ಗಾಯನ ನಡೆಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು. ತಾಪಂ ಇಒ ಮಾನಪ್ಪ ಕಟ್ಟಿಮನಿ ಸ್ವಾಗತಿಸಿದರು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ತಾಲೂಕು ಆಡಳಿತ ಆವರಣದಲ್ಲಿನ ಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾರ್ಲಾಪಣೆ ನಡೆಯಿತು. ಬಿಸಿಎಂ ಅಧಿಕಾರಿ ನಾಗಪ್ಪ ನಾಗನೂರ, ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ಗ್ರೇಡ್-2 ತಹಶೀಲ್ದಾರ್ ಬಿ.ಜಿ.ಕುದರಿ, ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಲಖಾನಿ ಹೋಳ್ಕರ್, ಭೂನೋಂದಣಿ ಅಧಿಕಾರಿ ರೂಪಾ ಪಾಟೀಲ, ಡಾ. ಯಲ್ಲಪ್ಪ ಇಂಗಳೆ ಹಾಗೂ ನಾಗರಿಕ ಮುಖಂಡ ಮೌಲಾ ಮುಲ್ಲಾ, ರೇವಣಸಿದ್ಧಪ್ಪ ನಾಗೂರೆ, ಶಿವುಪುತ್ರ ನಡಗೇರಿ, ವೀರಶೈವ ಮಹಾಸಭಾ ಉಪಾಧ್ಯಕ್ಷ ಶ್ರೀಶೈಲ ಖಜೂರಿ, ಸಿದ್ಧಗೌಡ ಪಾಟೀಲ ಮಗ್ಗಿ, ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಹಿರಿಯ ಬಾಬುರಾವ್ ಮಡ್ಡೆ, ಮಲ್ಲಪ್ಪ ಹತ್ತರಕಿ, ಶಂಕರರಾವ್ ದೇಶಮುಖ, ರಾಮ ಹತ್ತರಕಿ, ಮಹಾದೇವ ಹತ್ತಿ, ಸಿದ್ದು ಹಿರೋಳಿ, ಇಕ್ಬಾಲ ಬಿಲಗುಂದಿ ಸೇರಿದಂತೆ ವೀರಶೈವ ಲಿಂಗಾಯತ ಕಾರ್ಯಕರ್ತರು ನಾಗರಿಕರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

33 C