ಬೆಂಗಳೂರು ದಕ್ಷಿಣ ನಗರ ಪಾಲಿಕೆ | ಜನಗಣತಿ ಸಿಬ್ಬಂದಿಗೆ 25 ಸಾವಿರ ರೂ. ಗೌರವಧನ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರದೇಶದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ-2027 ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ಎ.16 ರಿಂದ ಮೇ 15ರವರೆಗೆ ನಡೆಯಲಿದ್ದು, ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗೆ 25 ಸಾವಿರ ರೂ.ಗಳ ಗೌರವಧನವನ್ನು ಪಾವತಿ ಮಾಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಹೇಳಿದ್ದಾರೆ. ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಈ ಸಮೀಕ್ಷಾ ಕಾರ್ಯಕ್ಕೆ 4678 ಗಣತಿದಾರರು, 798 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿರುತ್ತದೆ. ಭಾರತ ಸರಕಾರದ ಆದೇಶದಂತೆ ಸಿಬ್ಬಂದಿಗಳಿಗೆ ಮನೆಪಟ್ಟಿ ಸಿದ್ಧತೆಗಾಗಿ 9 ಸಾವಿರ ರೂ. ಹಾಗೂ ಜನಗಣತಿ ಕಾರ್ಯಕ್ಕಾಗಿ 16 ಸಾವಿರ ರೂ. ಸೇರಿ ಒಟ್ಟು 25 ಸಾವಿರ ರೂ.ಗಳ ಗೌರವಧನವನ್ನು ನೀಡಲಾಗುತ್ತದೆ. ಅಲ್ಲದೆ ದಿನಕ್ಕೆ 400 ರೂ.ಗಳಂತೆ ತರಬೇತಿ ಭತ್ಯೆಯನ್ನು ನೀಡಲಾಗುತ್ತದೆ ಅವರು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿನ ಆರ್ಡಲಿ ವ್ಯವಸ್ಥೆ ಪರಿಷ್ಕರಣೆ: ಹೊರಗುತ್ತಿಗೆ ಆಧಾರದ ಸಿಬ್ಬಂದಿ ನಿಯೋಜನೆಗೆ ಸರಕಾರ ಆದೇಶ
ಬೆಂಗಳೂರು : ಪೊಲೀಸ್ ಇಲಾಖೆಯು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆರ್ಡಲಿಗಳನ್ನು ಒದಗಿಸುವ ಬದಲಿಗೆ ಪರ್ಯಾಯ ವ್ಯವಸ್ಥೆ ರೂಪಿಸುವ ಕುರಿತು ಸರಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಪೋಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಹೊರಡಿಸಿದ ಈ ಆದೇಶದಲ್ಲಿ, ಪ್ರಸ್ತುತ ಚಾಲ್ತಿಯಲ್ಲಿರುವ ಆರ್ಡಲಿ ವ್ಯವಸ್ಥೆಯನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಫೆಬ್ರವರಿ 19ರಂದು ಹೊರಡಿಸಲಾದ ಆದೇಶದನ್ವಯ, ಪ್ರಸ್ತುತ ಆರ್ಡಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ, ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ಪಡೆದು, ನಿಗದಿತ ಆರ್ಡಲಿ ಭತ್ಯೆಯನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಎಲ್ಲ ಘಟಕಾಧಿಕಾರಿಗಳಿಗೆ ಈ ಆದೇಶವನ್ನು ಪಾಲಿಸಲು ಸೂಚಿಸಲಾಗಿದ್ದು, ಅಗತ್ಯ ಕ್ರಮ ಕೈಗೊಂಡು 2026ರ ಎಪ್ರಿಲ್ 30ರೊಳಗೆ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಮೊದಲು ಹೊರಡಿಸಲಾಗಿದ್ದ ಆದೇಶಗಳಲ್ಲಿ ಇಲಾಖೆಯ ಆರ್ಡಲಿ ವ್ಯವಸ್ಥೆಯ ಕುರಿತು ಮೂಲಭೂತ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಹಿರಿಯ ಅಧಿಕಾರಿಗಳಿಗೆ ಆರ್ಡಲಿಗಳನ್ನು ಒದಗಿಸುವ ವಿಧಾನ ಮತ್ತು ಅದರ ನಿಯಮಾವಳಿಗಳನ್ನು ನಿರ್ಧರಿಸಲಾಗಿತ್ತು. ಹಿಂದಿನ ಆದೇಶವನ್ನು ಅನುಸರಿಸಿ, ಆರ್ಡಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗಳ ಕಾರ್ಯವಿಧಾನವನ್ನು ಸ್ಪಷ್ಟಪಡಿಸಬೇಕು. ಇದೀಗ ಆರ್ಡಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡುವ ಹಾಗೂ ಪರ್ಯಾಯ ವ್ಯವಸ್ಥೆ ರೂಪಿಸುವ ಸೂಚನೆ ನೀಡಲಾಗಿತ್ತು. ಇದೀಗ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ಪಡೆಯುವಂತೆ ನಿರ್ದೇಶಿಸಲಾಗಿದೆ.
ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಸಿ: ಮಂಜುನಾಥ್ ಭಂಡಾರಿ ಕರೆ
ಬೆಂಗಳೂರು : ‘ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದು, ಎಲ್ಪಿಜಿ ಸಿಲಿಂಡರ್ ಸಿಗದೇ ಹೋಟೆಲ್ಗಳು ಬಂದ್ ಆಗುತ್ತಿವೆ. ಆಟೋರಿಕ್ಷಾದವರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದಂತಹ ಸ್ಥಿತಿಯನ್ನು ಬಿಜೆಪಿ ನಿರ್ಮಿಸಿದೆ. ಬಿಜೆಪಿ ಕಾರ್ಯಕರ್ತರು ಬೆಲೆ ಏರಿಕೆಗೆ ಬಸವಳಿದಿದ್ದು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕರೆ ನೀಡಿದ್ದಾರೆ. ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘2014ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಗ್ಯಾಸ್ ಬೆಲೆ 400ರೂ.ಆಸುಪಾಸಿನಲ್ಲಿತ್ತು. ಈಗ ಎಲ್ಪಿಜಿ ಸಿಲಿಂಡರ್ ಬೆಲೆ 950ರೂ. ದಾಟಿದೆ. ಲೀಟರ್ಗೆ 70ರೂ. ಇದ್ದ ಪೆಟ್ರೋಲ್ ಈಗ 102 ರೂ.ಗಳ ಗಡಿ ದಾಟಿದೆ. ಡೀಸೆಲ್ 56 ರೂ.ಗಳಿಂದ 96 ರೂ.ಗಳಿಗೆ ಜಿಗಿದಿದೆ. ಹೆದ್ದಾರಿ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಗ್ಯಾಸ್ ಸಿಗದೆ ಹೋಟೆಲ್ ಉದ್ಯಮ ನೆಲ ಕಚ್ಚುವಂತೆ ಮಾಡಿರುವ ಹಾನಿಕಾರಕ ಪಕ್ಷ ಬಿಜೆಪಿಗೆ ಅವರದ್ದೆ ಪಕ್ಷದ ಕಾರ್ಯಕರ್ತರು ಈ ಉಪಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು’ ಎಂದು ಕರೆ ನೀಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಬದಲು ಪ್ರಧಾನಿ ಮೋದಿ ಬಳಿ ಮಾತನಾಡಿ ಕರ್ನಾಟಕಕ್ಕೆ ಬರಬೇಕಿದ್ದ ತೆರಿಗೆ ಪಾಲು ಕೊಡಿಸುವ ಕೆಲಸವನ್ನು ಮೊದಲು ಮಾಡಲಿ. 5 ವರ್ಷಗಳಲ್ಲಿ 1.25ಲಕ್ಷ ಕೋಟಿ ರೂ.ತೆರಿಗೆ ಹಣ ಕರ್ನಾಟಕಕ್ಕೆ ಬರಬೇಕಿತ್ತು. 15ನೆ ಹಣಕಾಸು ಆಯೋಗದ ಅನುದಾನ ಬಾಕಿಯಿದೆ. ಜಲಜೀವನ್ ಮಿಷನ್, ಮಹಾದಾಯಿ ಯೋಜನೆಗೆಂದು ಘೋಷಣೆ ಮಾಡಿದ್ದ ಅನುದಾನ ಕೊಡಿಸುವ ಕೆಲಸವನ್ನು ಮಾಡಲಿ ಎಂದು ಅವರು ಸವಾಲು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪರ ಕೊಡುಗೆ ಅಪಾರ. ದಾವಣಗೆರೆ ನಗರವನ್ನು ವಿದ್ಯಾನಗರಿಯನ್ನಾಗಿ ಮಾಡಿದ ಗರಿಮೆ ಶಾಮನೂರು ಸಲ್ಲುತ್ತದೆ. ಕ್ಷೇತ್ರದ ಮತದಾರರು ಶಾಮನೂರು ಅವರ ಕಾರ್ಯವನ್ನು ಸದಾ ಸ್ಮರಿಸುತ್ತಾರೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಕೈ ಹಿಡಿಯಲಿ ಎಂದು ಅವರು ಕೋರಿದ್ದಾರೆ. ‘ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಇಡೀ ದೇಶಕ್ಕೆ ಕರ್ನಾಟಕದ ಕಾಂಗ್ರೆಸ್ ಸರಕಾರ ಮಾದರಿ ಆಗಿದೆ. ನಮ್ಮದ್ದು ಜನಪರ ಪಕ್ಷವಾದರೆ, ಬಿಜೆಪಿಯವರದ್ದು ಕಾರ್ಪೊರೇಟ್ ಕಂಪೆನಿಗಳ ಪರವಾದ ಸರಕಾರ. ಅಂಬಾನಿ, ಅದಾನಿ ಹಿತಾಸಕ್ತಿಯೇ ಅವರಿಗೆ ಮುಖ್ಯವಾದರೆ, ಕಾಂಗ್ರೆಸ್ ಗೆ ಜನಸಾಮಾನ್ಯರ ಹಿತ ಮುಖ್ಯ’ ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ. ‘ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಜೋಶಿ ಮೊದಲು ಯಡಿಯೂರಪ್ಪ ಕುಟುಂಬ ರಾಜಕಾಣ ಹಾಗೂ ಮೈತ್ರಿ ಪಕ್ಷವಾದ ಜೆಡಿಎಸ್ನ ಕುಟುಂಬ ರಾಜಕಾರಣದ ಬಗ್ಗೆಯೂ ಜನರಿಗೆ ಹೇಳಬೇಕು. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಜೋಶಿಯವರಿಗಿಲ್ಲ. ಬಿಜೆಪಿ ಅವರದ್ದು ಜನರನ್ನು ಲೂಟಿ ಮಾಡಲು ಪಕ್ಷವಾದರೆ ಕಾಂಗ್ರೆಸ್ ಜನರ ಕೈ ಹಿಡಿಯುವ, ನುಡಿದಂತೆ ನಡೆಯುವ ಪಕ್ಷ’ -ಮಂಜುನಾಥ್ ಭಂಡಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಎ.21ಕ್ಕೆ ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ಬೆಂಗಳೂರು : ಸರಕಾರ ಚುನಾವಣಾ ಪೂರ್ವ ಸಾರಿಗೆ ನೌಕರರಿಗೆ ನೀಡಿರುವ ಪ್ರಣಾಳಿಕೆ ಭರವಸೆಗಳು ಹಾಗೂ ಇನ್ನಿತರೆ ಹಕ್ಕೊತ್ತಾಯಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಎ.8 ರಂದು ಚಿತ್ರದುರ್ಗದಿಂದ ರಾಜಧಾನಿಗೆ ಪಾದಯಾತ್ರೆ ನಡೆಸಿ, ಎ.21ರಿಂದ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ. ಸೋಮವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆಯುವ ಸರಕಾರ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 3 ವರ್ಷಗಳಾದರೂ ಇದುವರೆಗೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದರು. ಸಾರಿಗೆ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಭೆಗಳು ನಡೆದಿವೆ ಹೊರತು, ಸಮಸ್ಯೆಗಳನ್ನು ಈಡೇರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಬೇಸರದ ಸಂಗತಿ. ಇದರಿಂದ ಸಾರಿಗೆ ನೌಕರರು ತಮ್ಮ ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಇತರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾದ್ಯವಾಗದೆ, ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಸರಕಾರ ಚುನಾವಣಾ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರಕಾರಿ ನೌಕರರಂತೆ 7ನೇ ವೇತನ ಆಯೋಗದ ಮಾದರಿಯಲ್ಲಿ ಸಮಾನ ವೇತನವನ್ನು 2024ರ ಜ.1 ರಿಂದ ಅನ್ವಯವಾಗುವಂತೆ ನೀಡಬೇಕು. 2020ರ ಜ.1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಸದರಿ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡಬೇಕು. ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಡೆಸಬೇಕು ಎಂದು ಚಂದ್ರಶೇಖರ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಸುರೇಶ್, ರಾಧಾಕೃಷ್ಣ, ತಿಪ್ಪೇಸ್ವಾಮಿ, ಎಸ್.ನಾಗರಾಜು ಉಪಸ್ಥಿತರಿದ್ದರು.
ಎ.10ಕ್ಕೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ರಾಜ್ಯಮಟ್ಟದ ಬೃಹತ್ ಜನಸಮಾವೇಶ
ಬೆಂಗಳೂರು : ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ‘ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ವತಿಯಿಂದ ಎ.10ರಂದು ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಬೃಹತ್ ಜನಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ. ಸೋಮವಾರ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಡಿಎಎಸ್ಒ ನೇತೃತ್ವದಲ್ಲಿ ರಾಜ್ಯಾದ್ಯಂತ ಹಳ್ಳಿ-ಹಳ್ಳಿಗಳಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಒಕ್ಕೊರಲಿನಿಂದ ಧ್ವನಿಯೆತ್ತಿದ್ದಾರೆ ಎಂದರು. ನಾಡಿನ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳು ಬಡಮಕ್ಕಳನ್ನು ಶಿಕ್ಷಣದಿಂದ ಶಾಶ್ವತವಾಗಿ ದೂರ ತಳ್ಳುವ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ನಾಡಿನ ಜನತೆಯ ತೀವ್ರ ವಿರೋಧದ ನಡುವೆಯೂ ಸರಕಾರ ಶಾಲೆಗಳನ್ನು ಮುಚ್ಚುವ ಕೆಲಸವನ್ನು ಮುಂದುವರಿಸಿದೆ. ಈಗಾಗಲೇ ಯಾವಯಾವ ಶಾಲೆಗಳನ್ನು ವಿಲೀನಗೊಳಿಸಬೇಕೆಂದು ಮ್ಯಾಪಿಂಗ್ ನಡೆಸಿದೆ. ಅಧಿಕಾರಿಗಳಿಂದ ಮ್ಯಾಗ್ನೆಟ್ ಶಾಲೆಯ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಅಜಯ್ ಕಾಮತ್ ತಿಳಿಸಿದರು. ವಿಲೀನಗೊಳ್ಳುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ. ಎ.8 ಮತ್ತು 9 ರಂದು ನಡೆಯಲಿರುವ ಪೋಷಕರ ಸಭೆಗಳಲ್ಲಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕಳುಹಿಸುವಂತೆ ಒತ್ತಾಯಿಸಲು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. ಸಮಾವೇಶದಲ್ಲಿ ಹಿರಿಯ ಸಾಹಿತಿಗಳಾದ ಡಾ.ಹಂಪ ನಾಗರಾಜಯ್ಯ, ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಡಾ.ಅಲ್ಲಮಪ್ರಭು ಬೆಟ್ಟದೂರು, ವಿಶ್ರಾಂತ ಕುಲಪತಿಗಳಾದ ಪ್ರೊ.ಎ.ಮುರಿಗೆಪ್ಪ, ಪ್ರೊ.ಸಬಿಹಾ ಭೂಮಿಗೌಡ, ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ, ನ್ಯಾಯವಾದಿ ಹೇಮಲತಾ ಮಹಿಷಿ, ಶಿಕ್ಷಣ ತಜ್ಞ ನಿರಂಜನರಾಧ್ಯ ವಿ.ಪಿ., ದಸಂಸ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಜಯ್ ಕಾಮತ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅಶ್ವಿನಿ ಕೆ.ಎಸ್, ಸುಭಾಷ್ ಬೆಟ್ಟದಕೊಪ್ಪ, ವಿನಯ್ ಚಂದ್ರ ಉಪಸ್ಥಿತರಿದ್ದರು.
ಪಿಯುಸಿ ವರೆಗಿನ ಗಂಡು ಮಕ್ಕಳಿಗೆ ಉಚಿತ ಸಾರಿಗೆ : ಸ್ಪಷ್ಟೀಕರಣ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಸೇರಿದಂತೆ ಸಾರಿಗೆ ಬಸ್ಗಳಲ್ಲಿ ಪಿಯುಸಿ ವರೆಗಿನ ಗಂಡು ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಂಬಂಧ ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ’ವು ಶಿಫಾರಸ್ಸು ಮಾಡಿದೆ. ಆದರೆ, ಈ ಕುರಿತು ಸಾರಿಗೆ ಸಂಸ್ಥೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಕೆಎಸ್ಸಾರ್ಟಿಸಿ ಸ್ಪಷ್ಟಣೆ ನೀಡಿದೆ. ಸೋಮವಾರ ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಸಂಸ್ಥೆಯು, ಮಕ್ಕಳ ಹಕ್ಕುಗಳ ಆಯೋಗದವರು ಪಿಯುಸಿಯ ವರೆಗಿನ ಗಂಡು ಮಕ್ಕಳಿಗೂ ಉಚಿತ ಪ್ರಯಾಣ ನೀಡುವ ಬಗ್ಗೆ ಶಿಫಾರಸ್ಸನ್ನು ಮಾಡಿದ್ದು, ಸಾರಿಗೆ ನಿಗಮಗಳಿಗೆ ಕಳುಹಿಸಿದ್ದಾರೆ. ಆದರೆ ಈ ಬಗ್ಗೆ ಸಂಸ್ಥೆಯು ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಇಂಡಿಯಾ ಸ್ಕಿಲ್ಸ್ 2025-26 ರಾಷ್ಟ್ರೀಯ ಸ್ಪರ್ಧೆ: ಕರ್ನಾಟಕಕ್ಕೆ 3ನೆ ಸ್ಥಾನ
ಬೆಂಗಳೂರು : ಕೌಶಲ್ಯ ಕ್ಷೇತ್ರದಲ್ಲಿ ಕರ್ನಾಟಕ ಈಗ ಇಡೀ ದೇಶದಲ್ಲಿ ಮುಂಚೂಣಿಯತ್ತ ಸಾಗುತ್ತಿದೆ. ಇತ್ತೀಚೆಗೆ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ ಪೋ ಮಾರ್ಟ್ನಲ್ಲಿ ನಡೆದ ಇಂಡಿಯಾ ಸ್ಕಿಲ್ಸ್ 2025-26 ರಾಷ್ಟ್ರೀಯ ಸ್ಪರ್ಧೆಯಲ್ಲಿ ಕರ್ನಾಟಕ 3ನೇ ಸ್ಥಾನವನ್ನು ಪಡೆದುಕೊಂಡಿದೆ. 32 ಕೌಶಲ್ಯ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ 48 ಮಂದಿ ಭಾಗವಹಿಸಿದ್ದರು. ಒಟ್ಟು 29 ವಿಭಾಗದಲ್ಲಿ ಕರ್ನಾಟಕ ತನ್ನ ಹಿರಿಮೆ ಮೆರೆದಿದೆ. ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ, ಮೆಕಾಟ್ರಾನಿಕ್ಸ್, ಸಂಯೋಜಕ ಉತ್ಪಾದನೆ ಮತ್ತು ಬೇಕರಿ ಮತ್ತು ದೃಶ್ಯ ವ್ಯಾಪಾರೀಕರಣ ಸೇರಿದಂತೆ ಹೈಟೆಕ್ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಕರ್ನಾಟಕ ತಂಡದ ರಾಜ್ಯ ಅಧಿಕಾರಿ ಮತ್ತು ಮಾರ್ಗದರ್ಶಕ ಕ್ಯಾಪ್ಟನ್ ಕೌಸ್ತವ್ ನಾಥ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ಫಲಿತಾಂಶ ನಿಜಕ್ಕೂ ಗಮನಾರ್ಹ ಸಾಧನೆಯಾಗಿದೆ. ನಾವು ಅಪಾರ ಪ್ರತಿಭೆಯನ್ನು ತೋರಿಸಿದ್ದೇವೆ, ಮುಂದಿನ ಬಾರಿ ಅಗ್ರ ಸ್ಥಾನವನ್ನು ಪಡೆಯಲು ಉತ್ತಮ ರೀತಿಯಲ್ಲಿ ಪರಿಶ್ರಮ ಪಡುತ್ತೇವೆ ಎಂದು ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಹಿರಿಯ ಅಧಿಕಾರಿಗಳಾದ ಇ.ವಿ.ರಮಣ ರೆಡ್ಡಿ, ಮನೋಜ್ ಕುಮಾರ್ ಮೀನಾ, ಎಚ್.ಎನ್.ಗೋಪಾಲ ಕೃಷ್ಣ ಮತ್ತು ಬಿ.ಎಸ್. ಸುಮತಿ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಕೌಸ್ತವ್ ನಾಥ್ ತಿಳಿಸಿದ್ದಾರೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ತರಬೇತಿ ಪಡೆದ ಕರ್ನಾಟಕದ ವಿದ್ಯಾರ್ಥಿಗಳು 10 ಚಿನ್ನ, 6 ಬೆಳ್ಳಿ, 6 ಕಂಚು ಮತ್ತು 7 ಶ್ರೇಷ್ಠತೆ ಪದಕಗಳನ್ನು ಒಳಗೊಂಡಂತೆ ಒಟ್ಟು 29 ಪದಕಗಳನ್ನು ಪಡೆದುಕೊಂಡಿದ್ದಾರೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು ಈಗ ಚೀನಾದ ಶಾಂಘೈನಲ್ಲಿರುವ ವಲ್ರ್ಡ್ ಸ್ಕಿಲ್ಸ್ ಇಂಟರ್ ನ್ಯಾಷನಲ್ನಲ್ಲಿ ಭಾರತವನ್ನು ಪ್ರತಿನಿಧಿಸಲು ತರಬೇತಿ ಪಡೆಯಲಿದ್ದಾರೆ. ರಾಜ್ಯ ಸರಕಾರವು ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಮಾರ್ಗದರ್ಶನವನ್ನು ಒದಗಿಸಲು ಬದ್ಧವಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ, ಐರೋಪ್ಯ ಒಕ್ಕೂಟಗಳ ಒಪ್ಪಂದಗಳ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಒತ್ತಾಯ
ಬೆಂಗಳೂರು : ಕೇಂದ್ರ ಸರಕಾರವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದೊಂದಿಗೆ (ಇಯು) ಮಾಡಿಕೊಳ್ಳುತ್ತಿರುವ ಮುಕ್ತ ವಾಣಿಜ್ಯ ಒಪ್ಪಂದಗಳಿಂದ (ಎಫ್ಟಿಎ) ರಾಜ್ಯದ ರೈತರಿಗಾಗುವ ಮಾರಕ ಪರಿಣಾಮಗಳ ಕುರಿತು ಚರ್ಚಿಸಲು ಹಾಗೂ ರೈತರ ಹಿತರಕ್ಷಣೆಗಾಗಿ ತುರ್ತು ‘ವಿಶೇಷ ವಿಧಾನಸಭಾ ಅಧಿವೇಶನ’ ಕರೆಯಬೇಕು ಎಂದು ರಾಜ್ಯದ ವಿವಿಧ ರೈತ ಸಂಘಟನೆಗಳು, ಕೃಷಿ ತಜ್ಞರು ಮತ್ತು ಸಾಹಿತಿಗಳು ಒತ್ತಾಯಿಸಿದ್ದಾರೆ. ಸೋಮವಾರ ಈ ಸಂಬಂಧ ಕೃಷಿ ಆರ್ಥಿಕ ತಜ್ಞ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ಡಾ.ಎ.ಎನ್. ಎಲ್ಲಪ್ಪರೆಡ್ಡಿ, ಮಾಜಿ ಭಾರತೀಯ ಅರಣ್ಯ ಸೇವಾ ಅಧಿಕಾರಿಗಳು, ಪರಿಸರವಾದಿಗಳು, ಬೆಂಗಳೂರು ರೈತ ಮುಖಂಡರಾದ ಕೆ.ಟಿ.ಗಂಗಾಧರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮತ್ತು ಡಾ.ವಿಜಯಮ್ಮ, ಪರಿಸರವಾದಿ ನಾಗೇಶ ಹೆಗಡೆ ಸೇರಿದಂತೆ 30 ಮಂದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ರಾಷ್ಟ್ರಗಳೊಂದಿಗಿನ ಮುಕ್ತ ವಾಣಿಜ್ಯ ಒಪ್ಪಂದಗಳು ದೇಶದ ರೈತರ ಪಾಲಿಗೆ ಹಿಂದಿನ ‘ಮೂರು ಕೃಷಿ ಕಾಯ್ದೆಗಳಿಗಿಂತಲೂ’ ಹೆಚ್ಚು ಮಾರಕವಾಗಲಿವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಕರ್ನಾಟಕದ ಸುಮಾರು ಶೇ.68 ರೈತ ಕುಟುಂಬಗಳು ಸಾಲಬಾಧೆಯಲ್ಲಿರುವ ಈ ಸಂದರ್ಭದಲ್ಲಿ ಈ ಒಪ್ಪಂದಗಳು ಜಾರಿಯಾದರೆ ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಉಲ್ಬಣಗೊಂಡು ರೈತರ ಆತ್ಮಹತ್ಯೆಗಳು ಹೆಚ್ಚಾಗುವ ಆತಂಕ ಉಂಟಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಭಾರತದ ಸಂವಿಧಾನದ ಪ್ರಕಾರ ‘ಕೃಷಿ’ ಎಂಬುದು ರಾಜ್ಯ ಪಟ್ಟಿಯಲ್ಲಿರುವ ವಿಷಯ. ಆದರೆ ರಾಜ್ಯ ಸರಕಾರಗಳೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸದೆ, ಕೇಂದ್ರ ಸರಕಾರವು ಏಕಪಕ್ಷೀಯವಾಗಿ ಕೃಷಿ ಉತ್ಪನ್ನಗಳ ಮೇಲೆ ಸುಂಕ ಇಳಿಸುವುದು ಅಥವಾ ಮಾರುಕಟ್ಟೆಯನ್ನು ವಿದೇಶಿ ಕಂಪನಿಗಳಿಗೆ ಮುಕ್ತಗೊಳಿಸುವುದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ. ಅಲ್ಲದೆ ಅಮೆರಿಕಾದ ಮೆಕ್ಕೆಜೋಳ, ಸೋಯಾಬೀನ್ ಸೇರಿದಂತೆ ಜೈವಿಕ ತಂತ್ರಜ್ಞಾನದಿಂದ ಮಾರ್ಪಡಿಸಿದ ಕೃಷಿ ಉತ್ಪನ್ನಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಒಪ್ಪಂದಗಳ ಮೂಲಕ ಅಂತಹ ಕೃಷಿ ಉತ್ಪನ್ನಗಳು ಅವ್ಯಾಹತವಾಗಿ ದೇಶದೊಳಗೆ ನುಗ್ಗಲಿವೆ. ಇದು ರಾಜ್ಯದ ಜನರ ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಎದುರಾಗಿರುವ ದೊಡ್ಡ ಬೆದರಿಕೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಯುರೋಪಿನ ಸಬ್ಸಿಡಿ ಯುಕ್ತ ಹಾಲಿನ ಪುಡಿ, ಚೀಸ್ ಇತರ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಂಡರೆ, ನಮ್ಮ ಕೆಎಂಎಫ್ (ನಂದಿನಿ) ವ್ಯವಸ್ಥೆ ಕುಸಿಯಲಿದೆ. ಹೀಗಾಗಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಮಾದರಿಯಲ್ಲಿ ಕರ್ನಾಟಕ ಸರಕಾರವೂ ವಿಶೇಷ ಅಧಿವೇಶನ ಕರೆದು ಕೇಂದ್ರದ ಈ ಒಪ್ಪಂದಗಳ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Mysuru | 448 ಎಕರೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತ ಸಂಘದಿಂದ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಮೈಸೂರು : ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ 448 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೆ.ಐ.ಡಿ.ಬಿ ಕೈಗಾರಿಕರಣಕ್ಕೆ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಕಡುಬನಕಟ್ಟೆ ಗೇಟ್ ಬಳಿ ನಂಜನಗೂಡು- ಊಟಿ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಯಾವುದೇ ಕಾರಣಕ್ಕೂ ಭೂಮಿಯನ್ನು ಕೊಡುವುದಿಲ್ಲ ಎಂಬ ಘೋಷಣೆ ಕೂಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸಮಯದ ನಂತರ ರೈತರು ಹೆದ್ದಾರಿಯಿಂದ ಮುದ್ದಹಳ್ಳಿ ಗ್ರಾಮದವರೆಗೂ ಕಾಲ್ನಡಿಗೆಯಲ್ಲಿ ತೆರಳಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ನಂಜನಗೂಡಿನ ತಹಶೀಲ್ದಾರ್ ಅವರು ರೈತರ ಹಕ್ಕೊತ್ತಾಯ ಪತ್ರಗಳನ್ನು ಸ್ವೀಕರಿಸಿ ತ್ವರಿತವಾಗಿ ವಿಚಾರವನ್ನು ಸರಕಾರಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. ಹೋರಾಟದಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಮಂಜು ಕಿರಣ್ , ಶಿರಮಳ್ಳಿ ಮಂಜುನಾಥ, ಮುದ್ದಳ್ಳಿ ಗ್ರಾಮದ ವಿಜಯಲಕ್ಷ್ಮೀ, ಗೌರಮ್ಮ, ಗುರುಸ್ವಾಮಿ, ಮಲ್ಲಿಕಾರ್ಜುನ್ , ಗ್ರಾಮಸ್ಥರು ಭಾಗವಹಿಸಿದ್ದರು. ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಂಡು ರೈತರನ್ನು ದಮನ ಮಾಡುವುದು ಯಾವ ನ್ಯಾಯ? ಈ ಭೂಮಿಯಲ್ಲಿ ರೈತರು ತರಕಾರಿ, ಕಬ್ಬು, ಬಾಳೆ, ಜೋಳ, ರಾಗಿ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆದು ಬದುಕು ನಡೆಸುತ್ತಿದ್ದಾರೆ. ಇಂತಹ ಕೃಷಿಗೆ ಯೋಗ್ಯವಾದ ಭೂಮಿ ಕಬಳಿಸಿದರೆ ದೊಡ್ಡ ಹೋರಾಟವೇ ನಡೆಯುತ್ತದೆ. -ಮಂಜು ಕಿರಣ್, ರೈತ ಹೋರಾಟಗಾರ
Belagavi | ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿ ಚಿನ್ನ ದೋಚಿದ ಆರೋಪ: ಆರೋಪಿಯ ಬಂಧನ
ಬೆಳಗಾವಿ : ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹಣ ಹಾಗೂ ಚಿನ್ನ ದೋಚಿದ ಪ್ರಕರಣ ಬೆಳಗಾವಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ನಗರದ ಮಾಧವಾ ಕಾಲನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಈ ಪ್ರಕರಣದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಯುವತಿಯೊಂದಿಗೆ ಹೊಂದಿದ ಖಾಸಗಿ ಕ್ಷಣಗಳನ್ನು ವೀಡಿಯೊ ಮಾಡಿ, ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಲಕ್ಷಾಂತರ ರೂ. ವಸೂಲಿ ಮಾಡಿದ್ದಾನೆ. ಯುವತಿಯಿಂದ ಸುಮಾರು 19 ಲಕ್ಷ ರೂ. ಹಾಗೂ 1,500 ಗ್ರಾಂ ಚಿನ್ನಾಭರಣ ಪಡೆದುಕೊಂಡಿರುವುದಾಗಿ ಯುವತಿಯು ಶಹಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Belagavi | ಗೃಹಬಂಧನದಲ್ಲಿದ್ದ ಮಹಿಳೆ-ಮಕ್ಕಳ ರಕ್ಷಣೆ: ಪತಿ ವಶಕ್ಕೆ
ಬೆಳಗಾವಿ : ಟಿಳಕವಾಡಿ ಪ್ರದೇಶದ ಮನೆಯಲ್ಲಿ ಪತಿಯಿಂದಲೇ ಗೃಹಬಂಧನಕ್ಕೊಳಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಅಕ್ಕ ಪಡೆ ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ದಿಲ್ಲಿಯಿಂದ ಬಂದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅವರ ನಿರ್ದೇಶನದಂತೆ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಡಿ.ಪಿ.ನಿಂಬಾಳ್ಕರ್ ತಂಡದೊಂದಿಗೆ ಅಕ್ಕ ಪಡೆಯವರು ಸ್ಥಳ ಪತ್ತೆಹಚ್ಚಿದರು. ಬಳಿಕ ಮನೆಯಲ್ಲಿ ಬಂಧನದಲ್ಲಿದ್ದ ಮಹಿಳೆ ಹಾಗೂ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಕ್ಷಿಸಲ್ಪಟ್ಟ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ನಂತರ ವಿಮಾನದ ಮೂಲಕ ತವರೂರಾದ ದಿಲ್ಲಿಗೆ ರವಾನಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಥಾವರ್ಚಂದ್ ಗೆಹ್ಲೋಟ್ಗೆ ರಾಜ್ಯಪಾಲರಾಗಿ ಉಳಿಯುವ ನೈತಿಕತೆ ಇಲ್ಲ : ಟಿ.ಎ.ನಾರಾಯಣಗೌಡ
ಬೆಂಗಳೂರು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ಒಂದೇ ಒಂದು ನಿಮಿಷವೂ ರಾಜ್ಯಪಾಲರಾಗಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಖಂಡಿಸಿದ್ದಾರೆ. ಸೋಮವಾರ ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಎಸೆಸೆಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ಹೀಗಾಗಿ ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ಹೊಂದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯಪಾಲರು ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಮೂಗು ತೂರಿಸುವುದು ಅತ್ಯಂತ ಆಕ್ಷೇಪಾರ್ಹವಾದ ಬೆಳವಣಿಗೆಯಾಗಿದೆ. ರಾಜ್ಯ ಸರಕಾರವನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು, ಬೇಡಗಳನ್ನು ರಾಜ್ಯ ಸರಕಾರ ತೀರ್ಮಾನಿಸುತ್ತದೆ. ಹೀಗಿರುವಾಗ ಸರಕಾರದ ಮುಖ್ಯಸ್ಥರಾಗಿ ನಾಡಪರ ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಹಿಂದಿ ಮಾಫಿಯಾ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತದೆ ಎಂದು ಹೇಳಿದರು. ‘ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ’ ಎಂಬ ಅನಾಮಧೇಯ ಸಂಘಟನೆಯ ಮನವಿಗೆ ರಾಜ್ಯಪಾಲರು ತುರ್ತಾಗಿ ಪ್ರತಿಕ್ರಿಯಿಸಿ, ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವುದೇ ಒಂದು ದೊಡ್ಡ ದುಷ್ಟ ಹುನ್ನಾರವಾಗಿದೆ. ಕರ್ನಾಟಕವನ್ನು ವಲಸೆ ಬರುತ್ತಿರುವ ಹಿಂದಿಭಾಷಿಕರಿಗಾಗಿ ‘ಸುರಕ್ಷಿತ ಸ್ವರ್ಗ’ವನ್ನಾಗಿಸುವ ದೂರಗಾಮಿ ಉದ್ದೇಶಗಳು ಹಿಂದಿ ಮಾಫಿಯಾಗೆ ಇದೆ. ಅದರ ಭಾಗವಾಗಿಯೇ ರಾಜ್ಯಪಾಲರು ಈ ಪತ್ರ ಬರೆದಿದ್ದಾರೆ ಎಂದು ಟಿ.ಎ.ನಾರಾಯಣಗೌಡ ಹೇಳಿದರು. ರಾಜ್ಯ ಸರಕಾರವು ಕರ್ನಾಟಕದ ಶಿಕ್ಷಣ ನೀತಿಯನ್ನು ತೀರ್ಮಾನಿಸುತ್ತದೆ. ರಾಜ್ಯ ಸರಕಾರವನ್ನು ಇದಕ್ಕಾಗಿಯೇ ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಇದನ್ನು ಪ್ರಶ್ನಿಸಲು ರಾಜ್ಯಪಾಲರು ಯಾರು? ಸಂವಿಧಾನ ಅವರಿಗೆ ಈ ಅವಕಾಶ ನೀಡಿಲ್ಲ. ಹಿಂದಿ ಮಾಫಿಯಾ ಎಷ್ಟು ಬಲಶಾಲಿಯಾಗಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಹುತ್ತದ ಒಳಗೆ ಇನ್ನೆಷ್ಟು ಹಾವುಗಳು ಇವೆಯೋ ಗೊತ್ತಿಲ್ಲ. ಎಲ್ಲವೂ ಹೊರಬರಲಿ ಎಂದು ನಾವು ಕಾಯುತ್ತಿದ್ದೇವೆ ಎಂದು ಅವರು ಹೇಳಿದರು. ರಾಜ್ಯಪಾಲರ ಈ ಪತ್ರವನ್ನು ರಾಜ್ಯ ಸರಕಾರ ಕಸದ ಬುಟ್ಟಿಗೆ ಎಸೆಯಬೇಕು. ಕನ್ನಡಿಗರ ಹಿತದೃಷ್ಟಿಗೆ ವಿರುದ್ಧವಾಗಿ ಯಾರೇ ಏನೇ ಹೇಳಿದರೂ ಅದನ್ನು ರಾಜ್ಯ ಸರಕಾರ ಪರಿಗಣಿಸಬೇಕಿಲ್ಲ. ನಾವು ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿ ನಮ್ಮನ್ನು ಆಳಲು ಯತ್ನಿಸುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಮ್ಮ ಪ್ರಾಣ ಹೋದರೂ ನಮ್ಮ ನೆಲದ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ‘ಸರಕಾರವು ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ನೀಡುವ ನಿರ್ಧಾರ ಕೈಗೊಂಡಿದ್ದು, ಯಾರೇ ಇದನ್ನು ಬದಲಿಸುವ ಪ್ರಯತ್ನ ಮಾಡಿದರೂ ರಕ್ತಕ್ರಾಂತಿಯಾಗುತ್ತದೆ. ರಾಜ್ಯಪಾಲ ಗೆಹ್ಲೋಟ್ ಹಿಂದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಲ್ಲೆಲ್ಲಾ ತೃತೀಯ ಭಾಷೆಯಾಗಿ ಕನ್ನಡ ಕಲಿಸಲು ತಾಕೀತು ಮಾಡಲಿ. ಅಷ್ಟೇಕೆ ಅವರ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಈಗಲೂ ಎರಡೇ ಭಾಷೆಗಳನ್ನು ಕಲಿಸಲಾಗುತ್ತಿದೆ. ಮೂರನೇ ಭಾಷೆಯನ್ನಾಗಿ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಅಲ್ಲಿನ ಸರಕಾರದ ಮೇಲೆ ಅವರು ಒತ್ತಡ ಹೇರಲಿ. ಅದು ಸಾಧ್ಯವಿಲ್ಲದಿದ್ದರೆ ಕನ್ನಡಿಗರ ಮೇಲೆ ಯಾಕೆ ಹಿಂದಿ ಹೇರಲು ಯತ್ನಿಸುತ್ತಾರೆ. ಇಂಥ ನಾಡದ್ರೋಹಿ ರಾಜ್ಯಪಾಲ ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ’ -ಟಿ.ಎ.ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ
ದ್ವಿಚಕ್ರ ವಾಹನ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ : ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪರ್ಲಿಯಾ ಎಂಬಲ್ಲಿನ ವಸತಿ ಗೃಹದ ಶೆಡ್ಡಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣ ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಕಳವಾಗಿರುವ ದ್ವಿಚಕ್ರ ವಾಹನ ಸಹಿತ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸಜಿಪಮುನ್ನೂರು ಗ್ರಾಮದ ನಿವಾಸಿ ಹಸನ್ ಬಾವಾ (55) ಹಾಗೂ ಬಿ ಮೂಡ ಗ್ರಾಮದ ನಿವಾಸಿ ಇರ್ಶಾದ್ (37) ಎಂದು ಗುರುತಿಸಲಾಗಿದೆ. ಮಾರ್ಚ್ 21 ರಂದು ಪರ್ಲಿಯಾ ಎಂಬಲ್ಲಿನ ವಸತಿ ಗೃಹದ ಶೆಡ್ಡಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ ಸ್ಕೂಟರ್ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಕೆಕೆಆರ್ vs ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಮಳೆ ಅಡ್ಡಿ; ಎರಡೂ ತಂಡಗಳಿಗೆ ತಲಾ ಒಂದು ಅಂಕ
IPL 2026 KKR Vs PBKS: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಈ ಹಿನ್ನೆಲೆ ಎರಡು ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಭಟ್ಕಳ| ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ; ಹೋರಾಟ ಮುಂದುವರಿಸುವ ಎಚ್ಚರಿಕೆ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದಂತಹ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಖಂಡಿಸಿದ ಪರಿಸರವಾದಿ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಯೋಜನೆ ಹಿಂತೆಗೆದುಕೊಳ್ಳುವ ತನಕ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸುಬ್ರಹ್ಮಣ್ಯದ ಕುಮಾರದಾರಾ ಉಳಿಸಿ ಹೋರಾಟದಲ್ಲಿ ಭಾಗವಹಿಸಲು ಶಿರಸಿಯಿಂದ ತೆರಳುವ ವೇಳೆ ಸೋಮವಾರ ಭಟ್ಕಳದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಶ್ಚಿಮಘಟ್ಟ ಉಳಿಸುವ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದ್ದು, ಈಗಾಗಲೇ ಹಲವು ಮಾರಕ ಯೋಜನೆ ಗಳ ವಿರುದ್ಧ ಜನಾಂದೋಲನಗಳು ನಡೆದಿವೆ. ಕೆಲವು ಹೋರಾಟಗಳಲ್ಲಿ ಯಶಸ್ಸು ಕೂಡಾ ದೊರೆತಿದೆ. ಇದೀಗ 21ನೇ ಶತಮಾನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಹೋರಾಟ ನಡೆಯುತ್ತಿದ್ದು, ಇದು ಶರಾವತಿ ಅಭಯಾರಣ್ಯಕ್ಕೆ ಧಕ್ಕೆಯುಂಟು ಮಾಡುವ ಬೃಹತ್ ಜಲವಿದ್ಯುತ್ ಯೋಜನೆಯಾಗಿದೆ ಎಂದು ಹೇಳಿದರು. ಜಿಲ್ಲೆ ಸೂಕ್ಷ್ಮ ಪರಿಸರ ಪ್ರದೇಶವಾಗಿದ್ದು, ಭೂಕುಸಿತ, ಅರಣ್ಯ ನಾಶ ಹಾಗೂ ವನ್ಯಜೀವಿ ಕಾಯ್ದೆಗಳ ಉಲ್ಲಂಘನೆಗೆ ಈ ಯೋಜನೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಪಶ್ಚಿಮಘಟ್ಟ ಪ್ರದೇಶದ ಶಾಸಕರು, ಸಂಸದರು ಹಾಗೂ ಇತರೆ ಜನಪ್ರತಿನಿಧಿಗಳು ಒಗ್ಗೂಡಿ ಯೋಜನೆಯನ್ನು ವಿರೋಧಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಕುರಿತು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಭೆ ನಡೆಸಿ ಒಗ್ಗಟ್ಟಿನ ಧ್ವನಿಯನ್ನು ಎತ್ತುವ ಅಗತ್ಯವಿದೆ ಎಂದೂ ಅವರು ಹೇಳಿದರು. ಯೋಜನೆ ಸಂಪೂರ್ಣವಾಗಿ ನಿಲ್ಲುವ ತನಕ ಜಲಾಂದೋಲನ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಹೋರಾಟ ಹಲವು ಹಂತಗಳಲ್ಲಿ ನಡೆಯುತ್ತಿದ್ದು, ಸ್ವರ್ಣವಲ್ಲಿ ಸ್ವಾಮೀಜಿಯವರ ನೇತೃತ್ವದಲ್ಲಿ ಗಾಂಧೀಜಿಯವರ ಮಾದರಿಯಲ್ಲಿ ಜನಾಂದೋಲನ ನಡೆದಿರುವುದನ್ನು ಅವರು ಉಲ್ಲೇಖಿಸಿದರು. ಜಿಲ್ಲೆಯಲ್ಲಿ ರೈತರು, ಮೀನುಗಾರರು ಮತ್ತು ತೋಟಗಾರರು ಸಂಕಷ್ಟದಲ್ಲಿದ್ದು, ಸಾವಯವ ಕೃಷಿ, ಜೇನುಗಾರಿಕೆ ಉತ್ತೇಜನ ಹಾಗೂ ನಿರಾಶ್ರಿತರಿಗೆ ಪುನರ್ವಸತಿ ಅಗತ್ಯವಿದೆ ಎಂದು ಹೇಳಿದರು. ಇಂತಹ ಅಗತ್ಯಗಳನ್ನು ಕಡೆಗಣಿಸಿ ಮಾರಕ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನವನ್ನು ಜಿಲ್ಲೆಯ ಜಾಗೃತ ನಾಗರಿಕರು ಒಪ್ಪುವುದಿಲ್ಲ ಎಂದು ಅವರು ತಿಳಿಸಿದರು.
ಭಟ್ಕಳ: ನಕಲಿ ಕ್ಲಿನಿಕ್ಗಳ ಮೇಲೆ ಅಧಿಕಾರಿಗಳಿಂದ ದಾಳಿ; ಮೂರು ಕ್ಲಿನಿಕ್ಗಳಿಗೆ ಸೀಲ್
ಭಟ್ಕಳ: ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ತಾಲೂಕು ಆರೋಗ್ಯಾಧಿಕಾರಿ (ಟಿಎಚ್ಒ) ಡಾ. ಸನಾ ನೇತೃತ್ವದ ತಂಡವು ಸೋಮವಾರ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ನಕಲಿ ಕ್ಲಿನಿಕ್ಗಳ ವಿರುದ್ಧ ದಾಳಿ ನಡೆಸಿ, ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಕ್ಲಿನಿಕ್ಗಳನ್ನು ಸೀಲ್ ಮಾಡಿದೆ. ಟಿಎಚ್ಒ, ನೋಡಲ್ ಅಧಿಕಾರಿ, ಆಯುಷ್ ಅಧಿಕಾರಿ, ನಗರ ಠಾಣೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಕೂಡಿದ ತಂಡವು ಪಟ್ಟಣದ ನಾಲ್ಕು ಕ್ಲಿನಿಕ್ಗಳು ಹಾಗೂ ಶಿರಾಲಿಯೊಂದರಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ವೈದ್ಯರ ವಿದ್ಯಾರ್ಹತೆಗಳಿಗೆ ಸಂಬಂಧಿಸಿದ ಎಂ.ಬಿ.ಬಿ.ಎಸ್, ಬಿ.ಎ.ಎಂ.ಎಸ್, ಬಿ.ಎಚ್.ಎಂ.ಎಸ್ ಮತ್ತು ಯುನಾನಿ ಪದವಿಗಳ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಯಿತು. ಪರಿಶೀಲನೆ ವೇಳೆ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ಮೂರು ಕ್ಲಿನಿಕ್ಗಳನ್ನು ತಕ್ಷಣವೇ ಸೀಲ್ ಮಾಡಲಾಗಿದೆ. ಮದಿನಾ ಕಾಲನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ ಮಾಲಕರು ಸ್ವಯಂಪ್ರೇರಿತವಾಗಿ ಕ್ಲಿನಿಕ್ನ್ನು ಬಂದ್ ಮಾಡಿದ್ದು, ಅವರ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ. ಈ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾ ಆರೋಗ್ಯ ಇಲಾಖೆಗೆ ರವಾನಿಸಲಾಗಿದ್ದು, ಸಮಗ್ರ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಸನಾ ತಿಳಿಸಿದ್ದಾರೆ. ಪಟ್ಟಣ ಹಾಗೂ ತಾಲೂಕಿನ ಇತರೆ ಭಾಗಗಳಲ್ಲಿಯೂ ಇಂತಹ ತಪಾಸಣೆ ಮುಂದುವರಿಯಲಿದೆ. ಸಾರ್ವಜನಿಕರು ಅನಧಿಕೃತ ವೈದ್ಯರಿಂದ ಚಿಕಿತ್ಸೆ ಪಡೆಯದೆ, ಮಾನ್ಯತೆ ಪಡೆದ ನೋಂದಾಯಿತ ವೈದ್ಯರನ್ನು ಮಾತ್ರ ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ | ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸುವಂತೆ ಸಿಪಿಎಂ ಕರೆ
ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಎ.9ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸುವಂತೆ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ರಾಜ್ಯ ಸಮಿತಿ ಮತದಾರರಿಗೆ ಕರೆ ನೀಡಿದೆ. ಸೋಮವಾರ ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಮಹಾಂತೇಶ್ ಹಾಗೂ ದಾವಣಗೆರೆ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಕೆ.ಎಚ್.ಆನಂದರಾಜ್, ಒಂದು ಕಾಲದಲ್ಲಿ ದಾವಣಗೆರೆ ಕಾರ್ಮಿಕ ವರ್ಗದ ಸೌಹಾರ್ದ ಕೇಂದ್ರವಾಗಿತ್ತು. ಆದರೆ, ಹಿಂದುತ್ವ ಕೋಮುವಾದವು ಆರೆಸ್ಸೆಸ್, ಬಿಜೆಪಿ ನೇತೃತ್ವದಲ್ಲಿ ಕಾರ್ಮಿಕ ವರ್ಗವನ್ನು ವಿಭಜಿಸಿ ಜನರ ಐಕ್ಯತೆಯನ್ನು ಮುರಿಯುವ ವ್ಯವಸ್ಥಿತ ಸಂಚನ್ನು ಕಳೆದ ಮೂರು ದಶಕಗಳಿಂದ ಮಾಡುತ್ತಲೆ ಬಂದಿದೆ ಎಂದು ತಿಳಿಸಿದ್ದಾರೆ. ಅದರ ಪರಿಣಾಮ 1989 ಹಾಗೂ 1994ರಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಹತ್ತಾರು ಬಡ ಜನರು ಜೀವ ಕಳೆದುಕೊಂಡಿದ್ದರು. ಮಾತ್ರವಲ್ಲ ನೂರಾರು ಕುಟುಂಬಗಳು ಕೋಮು ಸಂಘರ್ಷದ ಬೆಂಕಿಯಲ್ಲಿ ನಲುಗಿ ಹೋಗಿದ್ದವು. ತಮ್ಮ ಮತೀಯ ರಾಜಕೀಯಕ್ಕಾಗಿ ಇಂತಹ ಕೃತ್ಯಗಳನ್ನು ಆರೆಸ್ಸೆಸ್ ಹಾಗೂ ಬಿಜೆಪಿ ವ್ಯವಸ್ಥಿತವಾಗಿ ಅಲ್ಲಿನ ಅಮಾಯಕ ಹಾಗೂ ಮುಗ್ಧ ಜನರನ್ನು ಬಳಸಿಕೊಂಡಿದ್ದನ್ನು ದಾವಣಗೆರೆ ಜನರ ಮನಸ್ಸಿನಲ್ಲಿ ಇನ್ನೂ ಹಸಿ ಹಸಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಇತಿಹಾಸದಿಂದ ಪಾಠ ಕಲಿತಿರುವ ದಾವಣಗೆರೆ ಪ್ರಜ್ಞಾವಂತ ಜನರು ಇಂತಹ ಕೋಮು ಶಕ್ತಿಗಳನ್ನು ಮೂಲೆಗುಂಪು ಮಾಡುತ್ತಾ ಬಂದಿದ್ದಾರೆ. ಆದರೂ, ಪ್ರತಿವರ್ಷ ವಿಜಯದಶಮಿ, ಗಣೇಶ ಹಬ್ಬಗಳ ಸಂದರ್ಭಗಳಲ್ಲಿ ಇಂತಹ ಉನ್ಮಾದಗಳನ್ನು ನಿರಂತರವಾಗಿ ಸೃಷ್ಟಿಸಲಾಗುತ್ತಿದೆ. ಮುಸ್ಲಿಮ್ ಹಾಗೂ ವಿವಿಧ ಜಾತಿ, ಉಪ ಜಾತಿಯ ಹಿಂದೂಗಳ ಸಮ್ಮೀಳಿತವಾಗಿರುವ ದಾವಣಗೆರೆ ದಕ್ಷಿಣ ಮತಕ್ಷೇತ್ರವು ಭವಿಷ್ಯದಲ್ಲಿ ಶಾಂತಿ ಸೌಹಾರ್ದತೆಯ ಕೇಂದ್ರವಾಗಿ ಉಳಿಯುವುದು ತೀರ ಅವಶ್ಯಕವಾಗಿದೆ ಎಂದು ಪ್ರಕಾಶ್ ಪ್ರತಿಪಾದಿಸಿದ್ದಾರೆ. ಆರೆಸ್ಸೆಸ್ ಮತ್ತು ಅದರ ಸಂಘಟನೆಗಳ ಹಿಂದುತ್ವ ಕೋಮುವಾದ ಮತ್ತು ಎಸ್ಡಿಪಿಐ, ಜಮಾಅತೆ ಇಸ್ಲಾಮಿ ಹಿಂದ್ ಪಕ್ಷಗಳ ಮುಸ್ಲಿಮ್ ಮೂಲಭೂತವಾದ ಎರಡೂ ಭವಿಷ್ಯದಲ್ಲಿ ಜನತೆಯ ಐಕ್ಯತೆಯನ್ನು ನಾಶ ಮಾಡುತ್ತವೆ. ಸಾಮಾನ್ಯ ಹಿಂದೂಗಳು ಮತ್ತು ಮುಸ್ಲಿಮರು ಕೋಮು ಸೌಹಾರ್ದತೆಯಿಂದ ಬದುಕುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯದಿಂದ ಅಭ್ಯರ್ಥಿಯನ್ನು ನಿಲ್ಲಿಸುವುದರಲ್ಲಿ ಕಾಂಗ್ರೆಸ್ ಪಕ್ಷದ ಗೊಂದಲದ ಧೋರಣೆಯನ್ನು ಅಲ್ಪಸಂಖ್ಯಾತ ಸಮುದಾಯ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ ಚಾರಿತ್ರಿಕವಾಗಿ ಇಂತಹ ಅನ್ಯಾಯಗಳನ್ನು ಮಾಡುತ್ತಲೆ ಬಂದಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರೂ ಸೇರಿದಂತೆ ಜಾತ್ಯತೀತ ಜನತೆ ಎಡ-ಪ್ರಜಾಸತ್ತಾತ್ಮಕ ಪರ್ಯಾಗಳ ಜೊತೆ ಇರಬೇಕಾದ ಅಗತ್ಯವಿದೆ. ಕಾಂಗ್ರೆಸ್ನ ವಂಶಪಾರಂಪರ್ಯ, ಅವಕಾಶವಾದಿತನವನ್ನು ಭವಿಷ್ಯದಲ್ಲಿ ಎದುರಿಸಬೇಕಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಮತ್ತು ರಾಜ್ಯದ ಒಟ್ಟಾರೆ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳನ್ನು ಸೋಲಿಸಲು ಎಲ್ಲ ಜಾತ್ಯತೀತ, ಪ್ರಗತಿಪರ ಶಕ್ತಿಗಳು ಪ್ರಯತ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತೆ ಯೋಚಿಸಿ ಮತ ನೀಡಬೇಕೆಂದು ಸಿಪಿಐ(ಎಂ) ಪಕ್ಷವು ಕರೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
Mandya | ಸಿಗರೇಟ್ ವಿಚಾರವಾಗಿ ಮಾತಿನ ಚಕಮಕಿ; ರೌಡಿಶೀಟರ್ ಹತ್ಯೆ, ಇಬ್ಬರ ಸ್ಥಿತಿ ಗಂಭೀರ
ಮಂಡ್ಯ : ಯುವಕರ ಜಗಳ ವಿಕೋಪಕ್ಕೆ ತಿರುಗಿ ರೌಡಿಶೀಟರ್ ಭೀಕರ ಹತ್ಯೆಯಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ನಗರದಲ್ಲಿ ರವಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ. ಘಟನೆಯಲ್ಲಿ ಮೂಲತಃ ಮದ್ದೂರು ತಾಲೂಕು ಮರಳಿಗ ಗ್ರಾಮದ ಹಾಲಿ ಮದ್ದೂರಿನ ಸೋಮೇಗೌಡರ ಬೀದಿ ನಿವಾಸಿ ರೌಡಿಶೀಟರ್ ಯಶ್ವಂತ್ ಅಲಿಯಾಸ್ ಕಚ್ಚಿ(21) ಹತ್ಯೆಯಾಗಿದ್ದು, ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮದ್ದೂರು ನಗರದ ಹೊಳೆ ಆಂಜನೇಯಸ್ವಾಮಿ ದೇವಾಲಯ ರಸ್ತೆಯ ಪಟೇಲ್ ಸಾಮಿಲ್ ಬಳಿ ಈ ಘಟನೆ ನಡೆದಿದೆ. ಸಿಗರೇಟ್ ಹಂಚಿಕೊಳ್ಳುವ ವಿಚಾರವಾಗಿ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿ ಸಾಮಿಲ್ನಲ್ಲಿದ್ದ ಮರದ ತುಂಡುಗಳಿಂದ ಪರಸ್ಪರ ಹಲ್ಲೆ ನಡೆಯಿತು ಎನ್ನಲಾಗಿದೆ. ರೌಡಿಶೀಟರ್ ಯಶ್ವಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ದರ್ಶನ್ ಹಾಗೂ ಸಚಿನ್ ಅವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ್ಕುಮಾರ್, ಇತರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.
Raichur | ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟರಾಗಿ ದೀಪಾ ಗೊಡೆಪಾಡ್ ನೇಮಕ
ರಾಯಚೂರು: ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರನ್ನಾಗಿ (ಕಮಾಂಡೆಂಟ್) ಮಂಗಳವಾರಪೇಟೆಯ ದೀಪಾ ಗೊಡೆಪಾಡ್ ಅವರನ್ನು ನೇಮಕ ಮಾಡಲಾಗಿದೆ. ನಗರದ ಗೃಹರಕ್ಷಕ ದಳ ಕಚೇರಿಯಲ್ಲಿ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ದೀಪಾ ಗೊಡೆಪಾಡ್ ಅವರು, ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಹುದ್ದೆಯನ್ನು ವಹಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಮೇಲಧಿಕಾರಿಗಳ ಆದೇಶಗಳನ್ನು ಪಾಲಿಸಿ ನಿಷ್ಠೆಯಿಂದ ಕಾರ್ಯನಿರ್ವಹಿಸುವುದಾಗಿ ಹಾಗೂ ಗೃಹರಕ್ಷಕ ದಳದ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಭದ್ರತೆ ಒದಗಿಸುವುದಾಗಿ ಹೇಳಿದರು. ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಅವರು ನೇಮಕಾತಿ ಆದೇಶ ನೀಡುತ್ತಾ ಶುಭಾಶಯ ಕೋರಿದರು ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರವೀಂದ್ರನಾಥ ಪಟ್ಟಿ, ಮಲ್ಲೇಶ ಕೊಲಿಮಿ, ಸತ್ಯನಾರಾಯಣ, ವಿಶ್ವನಾಥ ಪಟ್ಟಿ, ಕೆ.ಇ.ಕುಮಾರ, ರಾಜು ಪಟ್ಟಿ, ಬಸವರಾಜ, ಭಾಸ್ಕರರಾಜ್, ಭೀಮಣ್ಣ ಮಂಚಾಲ, ಶೇಖರ ರಾಂಪೂರು, ಪ್ರಾಣೇಶಮಂಚಾಲ, ವಿನಯಕುಮಾರ,ಸೇರಿದಂತೆ, ಗೃಹ ರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇರಾನ್ ನಾದ್ಯಂತ ಇಸ್ರೇಲ್ ನಿಂದ ‘ದೊಡ್ಡ ಪ್ರಮಾಣದ’ ದಾಳಿ; 3 ವಿಮಾನ ನಿಲ್ದಾಣಗಳು ಗುರಿ
ಟೆಹ್ರಾನ್: ಇರಾನ್ ನಾದ್ಯಂತ ‘ದೊಡ್ಡ ಪ್ರಮಾಣದ’ ದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಟೆಹ್ರಾನ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸರಣಿ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ. ವೈಮಾನಿಕ ದಾಳಿಗಳಲ್ಲಿ ಇರಾನ್ ನ ಮೂರು ಪ್ರಮುಖ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ. ಈ ದಾಳಿಗಳು ಮಿಲಿಟರಿ ನೆಇ ಉದ್ದೇಶಿಸಿಕೊಂಡಿದ್ದವು ಎಂದು ಅದು ಸ್ಪಷ್ಟಪಡಿಸಿದೆ. ಗುರಿಯಾಗಿದ್ದ ವಿಮಾನ ನಿಲ್ದಾಣಗಳನ್ನು “ಬಹ್ರಾಮ್ ವಿಮಾನ ನಿಲ್ದಾಣ, ಮೆಹ್ರಾಬಾದ್ ವಿಮಾನ ನಿಲ್ದಾಣ ಮತ್ತು ಅಜ್ಮಯೇಶ್ ವಿಮಾನ ನಿಲ್ದಾಣ” ಎಂದು ಗುರುತಿಸಲಾಗಿದೆ. ದಾಳಿಯಿಂದ ಸಂಭವಿಸಿದ ಹಾನಿ ಹಾಗೂ ಸಾವು-ನೋವುಗಳ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ ಎಂದು Aljazeera ವರದಿ ಮಾಡಿದೆ.
ಇರಾನ್ ಯುದ್ಧವು ಇಲ್ಲಿಯವರೆಗೆ ಚೀನಾದ ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರಲಿಲ್ಲ ಯಾಕೆ?
ಕ್ಸಿ ಜಿಂಪಿಂಗ್ | Photo Credit : PTI ಇರಾನ್ ವಿರುದ್ಧದ ಇಸ್ರೇಲ್-ಅಮೆರಿಕ ಯುದ್ಧ ಮುಂದುವರೆದಂತೆ, ಭಾರತವು ಎಲ್ಪಿಜಿ ಕೊರತೆಯನ್ನು ಎದುರಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ನ ಸಂಭಾವ್ಯ ಕೊರತೆಯ ಬಗ್ಗೆ ಜನರು ಆತಂಕದಲ್ಲಿದ್ದಾರೆ. ಆದರೆ ಚೀನಾದ ದೊಡ್ಡ ಆರ್ಥಿಕತೆ, ದೊಡ್ಡ ಗ್ರಾಹಕ ಮಾರುಕಟ್ಟೆ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪೂರೈಕೆದಾರನ ಪಾತ್ರದ ಹೊರತಾಗಿಯೂ, ಚೀನಾದಿಂದ ಇದೇ ರೀತಿಯ ಸುದ್ದಿಗಳು ಯಾವುದೇ ಬಂದಿಲ್ಲ. ಚೀನಾ ಆರಂಭಿಕ ಪರಿಣಾಮಗಳಿಂದ ಹೇಗೆ ಪಾರಾಯಿತು? ಭವಿಷ್ಯದಲ್ಲಿ ಅದು ಹೇಗೆ ಮತ್ತು ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು? ಎಂಬ ಪ್ರಶ್ನೆ ಸಹಜ. ಕಳೆದ ಎರಡು ದಶಕಗಳಲ್ಲಿ ಚೀನಾ ಏನು ಮಾಡಿದೆ? ಎಂಬುದನ್ನು ನೋಡಿದರೆ ಈ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಚೀನಾ ಮಲಕ್ಕಾ ಸಂದಿಗ್ಧತೆಯನ್ನು ಹೇಗೆ ನಿಭಾಯಿಸಿತು? ಸುಮಾರು 15 ವರ್ಷಗಳ ಹಿಂದೆ, ವ್ಯಾಪಾರ ಮತ್ತು ಇಂಧನ ಸಾಗಣೆಗಾಗಿ ಮಲಕ್ಕಾ ಜಲಸಂಧಿಯ ಮೇಲಿನ ಅವಲಂಬನೆ ಮತ್ತು ಸುತ್ತಮುತ್ತಲಿನ ಶಾಶ್ವತ ಅಮೆರಿಕನ್ ಉಪಸ್ಥಿತಿಯ ಬಗ್ಗೆ ಚೀನಾದ ಕಳವಳ ಹೆಚ್ಚಾಗಿತ್ತು. ಅದಕ್ಕಾಗಿ ಚೀನಾ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ರಚಿಸುವ ಸಾಮರ್ಥ್ಯವನ್ನು ನಿರ್ಮಿಸುವ ಮೂಲಕ ಇದನ್ನು ಪರಿಹರಿಸಲು ಪ್ರಯತ್ನಿಸಿತು. ಅವುಗಳನ್ನು ತುಂಬಲು ದೀರ್ಘಾವಧಿಯ ಒಪ್ಪಂದಗಳನ್ನು ಬಳಸಿತು. ಇಂದು ಚೀನಾ ಸುಮಾರು 120 ದಿನಗಳ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ಹೊಂದಿದೆ. ಅದು ಅದರಲ್ಲಿ ಕೆಲವನ್ನು ಬಳಸಿಕೊಳ್ಳುತ್ತಿರಬಹುದು. ಚೀನಾದ ತೈಲ ನಿಕ್ಷೇಪಗಳು ಮತ್ತು ವೈವಿಧ್ಯೀಕರಣದ ಸಂಯೋಜನೆಯು ಹಾರ್ಮುಝ್ ಜಲಸಂಧಿಯಿಂದ ಆಮದುಗಳನ್ನು ಹಲವಾರು ತಿಂಗಳುಗಳ ಕಾಲ ನಿಭಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಡೇಟಾ ಸೂಚಿಸುತ್ತದೆ. ಮಲಕ್ಕಾ ಜಲಸಂಧಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಚೀನಾದ ಎರಡನೇ ವಿಧಾನವೆಂದರೆ ಮಧ್ಯ ಏಷ್ಯಾ ಮತ್ತು ರಷ್ಯಾದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಲು ಪೈಪ್ಲೈನ್ಗಳನ್ನು ನಿರ್ಮಿಸುವುದು. ಜಲಸಂಧಿಗಳು ಭೌಗೋಳಿಕ ರಾಜಕೀಯ ಸವಾಲಾಗಿದ್ದರೆ, ಮಧ್ಯ ಏಷ್ಯಾದ ನೆರೆಹೊರೆಯವರೊಂದಿಗಿನ ಅದರ ಸ್ಥಿರ ಸಂಬಂಧಗಳು ಭೌಗೋಳಿಕತೆಯನ್ನು ಒಂದು ಅವಕಾಶವನ್ನಾಗಿ ಮಾಡಿಕೊಂಡವು. ಈಗ ಚೀನಾದ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು 20 ಪ್ರತಿಶತವು ಈ ಪೈಪ್ ಲೈನ್ ಗಳ ಮೂಲಕವೇ ನಡೆಯುತ್ತದೆ. ಇದರಲ್ಲಿ ರಷ್ಯಾದಿಂದ ದಿನಕ್ಕೆ ಅಂದಾಜು 900,000 ಬ್ಯಾರೆಲ್ಗಳು ಸೇರಿವೆ. ಚೀನಾವು ಇರಾನ್-ಪಾಕಿಸ್ತಾನ-ಭಾರತ (IPI) ಮತ್ತು ತುರ್ಕಮೆನಿಸ್ತಾನ್-ಅಫ್ಘಾನಿಸ್ತಾನ್-ಪಾಕಿಸ್ತಾನ-ಭಾರತ (TAPI) ಪೈಪ್ಲೈನ್ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಹೆಚ್ಚಾಗಿ ವಿಫಲವಾಗಿದೆ. ಈ ಪ್ರದೇಶಕ್ಕೆ ಅಂತರ್ಗತವಾಗಿರುವ ನಿರಂತರ ಭೌಗೋಳಿಕ ರಾಜಕೀಯ ಮತ್ತು ಭದ್ರತಾ ಸವಾಲುಗಳಿಂದಾಗಿ ಅವು ಸ್ಥಗಿತಗೊಂಡಿವೆ. ಇತರರು ಅಸ್ಥಿರತೆಯಿಂದ ಹಿಂದೆ ಸರಿಯುತ್ತಿದ್ದರೆ, ಚೀನಾದ ರಾಷ್ಟ್ರೀಯ ತೈಲ ಕಂಪನಿಗಳು ಅಂಗೋಲಾ ಮತ್ತು ಸುಡಾನ್ನಂತಹ ರಾಷ್ಟ್ರಗಳ ಇಂಧನ ವಲಯಗಳಲ್ಲಿ ತಮ್ಮನ್ನು ತಾವು ನೆಲೆಗೊಳಿಸಲು ತಮ್ಮ ಬೃಹತ್ ಬಂಡವಾಳವನ್ನು ಬಳಸುತ್ತವೆ. ಈ ಪೂರ್ವಭಾವಿ, ಅಪಾಯ ಸಹಿಷ್ಣು ಮಾತುಕತೆ ಶೈಲಿಯು ಚೀನಾಕ್ಕೆ ಸಾಂಪ್ರದಾಯಿಕ ಪೂರೈಕೆ ಮಾರ್ಗಗಳನ್ನು ಮೀರಿ ವ್ಯಾಪಕ ಶ್ರೇಣಿಯ ಆಮದು ಮೂಲಗಳನ್ನು ಬೆಳೆಸಲು ಅವಕಾಶ ಮಾಡಿಕೊಟ್ಟಿದೆ. ಚೀನಾದ ಹವಾಮಾನ ಮತ್ತು ಇಂಧನ ತಂತ್ರಗಳು ಯಾವುವು? ತನ್ನ ಪಾಲಿಗೆ, ಜಾಗತಿಕ ಹವಾಮಾನ ಬದಲಾವಣೆ ಮಾತುಕತೆಗಳ ಆರಂಭಿಕ ದಿನಗಳಲ್ಲಿ, ಚೀನಾ ತನ್ನ ಇಂಗಾಲದ ಜಾಗವನ್ನು ರಕ್ಷಿಸಲು ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ನೊಂದಿಗೆ ಕೈಜೋಡಿಸಿ BASIC ಬ್ಲಾಕ್ ಅನ್ನು ರಚಿಸಿತು. ಅದು ವಿಶ್ವದ ಅತಿದೊಡ್ಡ ಮಾಲಿನ್ಯಕಾರಕ ಎಂಬ ತನ್ನ ಸ್ಥಾನಮಾನವನ್ನು ಬಳಸಿಕೊಂಡು, ಜೂನ್ 2008 ರಲ್ಲಿ, ಯುನೈಟೆಡ್ ನೇಷನ್ಸ್ ಫ್ರೇಮ್ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (UNFCCC) ಅಡಿಯಲ್ಲಿ ಯಾವುದೇ ಬದ್ಧತೆಗಳಿಗೆ ಒಪ್ಪಿಕೊಳ್ಳುವ ಮೊದಲು, ಯುಎಸ್-ಚೀನಾ ಹತ್ತು ವರ್ಷಗಳ ಇಂಧನ ಮತ್ತು ಪರಿಸರದ ಚೌಕಟ್ಟು ಸಹಕಾರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಈ ಸಹಕಾರ ಮತ್ತು ನಂತರದ ಜ್ಞಾನ ಮತ್ತು ತಂತ್ರಜ್ಞಾನ ವರ್ಗಾವಣೆಯು ಪ್ಯಾರಿಸ್ ಹವಾಮಾನ ಒಪ್ಪಂದದ ಯಶಸ್ಸಿಗೆ ಕಾರಣವಾಯಿತು. ಇದು ಸೌರ ಫಲಕಗಳು, ಪವನ ಶಕ್ತಿ, ಇಂಧನ ದಕ್ಷತೆ ಮತ್ತು ನಿರ್ವಹಣೆ, ಇಂಗಾಲದ ಸಂಗ್ರಹಣೆ ಮತ್ತು ಸೀಕ್ವೆಸ್ಟ್ರೇಶನ್, ಕಾರುಗಳು ಮತ್ತು ಬಸ್ಗಳು ಸೇರಿದಂತೆ ವಿದ್ಯುತ್ ಚಲನಶೀಲತೆ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಗೆ ಚೀನಾ ಅಡಿಪಾಯವನ್ನು ರಚಿಸಲು ಅವಕಾಶ ಮಾಡಿಕೊಟ್ಟಿತು. ಇದರೊಂದಿಗೆ, ವಿಶ್ವದ ಅತಿದೊಡ್ಡ ಕಲ್ಲಿದ್ದಲು ಬಳಕೆದಾರನಾಗಿರುವ ಚೀನಾ ಕೂಡ ಟೀಕೆಗಳನ್ನು ಎದುರಿಸಿದೆ. ಬೀಜಿಂಗ್ ಮತ್ತು ಇತರ ನಗರಗಳು ಎದುರಿಸಿದ ವಾಯು ಮಾಲಿನ್ಯದ ಸವಾಲನ್ನು ಪರಿಹರಿಸಲು ಮತ್ತು ಇಂಧನ ಪರಿವರ್ತನೆ ಯೋಜನೆಗಳನ್ನು ಕೈಗೊಳ್ಳಲು ಚೀನಾ ಸೀಮಿತ ಗುರಿಗಳ ಮೂಲಕ ಕೆಲಸ ಮಾಡಿದೆ. ತೈಲ ಬೇಡಿಕೆಯನ್ನು ಕಡಿಮೆ ಮಾಡಲು ವಿದ್ಯುತ್ ಚಾಲಿತ ವಾಹನಗಳು ಹೇಗೆ ಸಹಾಯ ಮಾಡಿದವು? ಮಧ್ಯಮ ವರ್ಗದ ಆರ್ಥಿಕತೆಯನ್ನು ಹೊಂದಿರುವ ಚೀನಾದ ಪಾತ್ರವೂ ಮುಖ್ಯವಾಗಿದೆ. ಚೀನಾ ವಿದ್ಯುತ್ ಚಾಲಿತ ವಾಹನಗಳ ಅತಿದೊಡ್ಡ ಗ್ರಾಹಕ. 2025 ರಲ್ಲಿ ಚೀನಾದಲ್ಲಿ ಮಾರಾಟವಾದ ಸುಮಾರು ಅರ್ಧದಷ್ಟು ಕಾರುಗಳು ವಿದ್ಯುತ್ ಚಾಲಿತ ವಾಹನಗಳಾಗಿದ್ದವು. ತೆರಿಗೆ ರಿಯಾಯಿತಿಗಳು, ಆದೇಶಗಳು ಮತ್ತು ಆದ್ಯತೆಯ ಲಾಟರಿ ಅವಕಾಶಗಳ ಮೂಲಕ ವಿದ್ಯುತ್ ಚಾಲಿತ ವಾಹನಗಳಿಗೆ ಅದರ ಆದ್ಯತೆಯ ನೀತಿಗಳು ಅನುಕೂಲಕರವಾಗಿವೆ. ಅದರ ಸ್ಕೇಲಿಂಗ್ ಸಾಮರ್ಥ್ಯಗಳು ಮತ್ತು ದೊಡ್ಡ ಗಾತ್ರದ ಗ್ರಾಹಕ ಮಾರುಕಟ್ಟೆಗಳು ಅವುಗಳ ಜನಪ್ರಿಯತೆಗೆ ಕಾರಣವಾಗಿವೆ. ಇದು 2025 ರಲ್ಲಿ ಚೀನಾ ತನ್ನ ಆಮದುಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಮತ್ತಷ್ಟು ಬೆಳೆಯಲಿದೆ. ಚೀನಾದ ಇಂಧನ ಬಳಕೆ ಕಡಿಮೆಯಾಗಿದೆ. 2026 ಕ್ಕೆ ಅದು 4.5% ರಷ್ಟು ಬೆಳವಣಿಗೆಯ ಸಾಧಾರಣ ಗುರಿಯನ್ನು ಹೊಂದಿದೆ. ಅದರ ನಿರ್ಮಾಣ ವಲಯವು ಬಹುತೇಕ ಸ್ಥಗಿತಗೊಂಡಿದೆ. ಇದರರ್ಥ ಸಿಮೆಂಟ್, ಕಬ್ಬಿಣ ಮತ್ತು ಉಕ್ಕು ಮತ್ತು ಇತರ ವಲಯಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿಶ್ವದ ಕಾರ್ಖಾನೆಯಾಗಿ ಚೀನಾದ ಪಾತ್ರವು ಒಂದು ದಶಕದ ಹಿಂದೆ ಇದ್ದ ಸ್ಥಿತಿಗೆ ಹೋಲಿಸಿದರೆ ಕ್ರಮೇಣ ಬದಲಾಗುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವಕಾಶಗಳು, ಪೂರ್ವಭಾವಿ ತಂತ್ರಗಳು, ಕಾರ್ಯತಂತ್ರ ಮತ್ತು ಸ್ಥಾನಮಾನದ ಕಾಳಜಿಗಳ ಸಂಯೋಜನೆಯು ಚೀನಾವು ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಾಗುವಂತೆ ಮಾಡಿವೆ.
ವಿಜಯನಗರ | ಎಂ.ಎ.ಇ.ಎಸ್ ಪಾಲಿಟೆಕ್ನಿಕ್ನಲ್ಲಿ ಕ್ಯಾಂಪಸ್ ಸಂದರ್ಶನ: 129 ವಿದ್ಯಾರ್ಥಿಗಳ ಭಾಗಿ
ಹೊಸಪೇಟೆ/ವಿಜಯನಗರ: ಕಿರ್ಲೋಸ್ಕರ್ ಫೆರಾರೋಸ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ನಗರದ ಟಿ.ಎಂ.ಎ.ಇ.ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಈ ಕ್ಯಾಂಪಸ್ ಸಂದರ್ಶನದಲ್ಲಿ ಒಟ್ಟು 129 ವಿದ್ಯಾರ್ಥಿಗಳು ಹಾಜರಿದ್ದು, ವಿವಿಧ ವಿಭಾಗಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವಿದ್ಯಾರ್ಥಿಗಳ ವಿಭಾಗವಾರು ಭಾಗವಹಿಸುವಿಕೆ ವಿವರಗಳು ಹೀಗಿವೆ : ಎಸ್ಎಂವಿ ಪಾಲಿಟೆಕ್ನಿಕ್ನಿಂದ ಎಲೆಕ್ಟ್ರಿಕಲ್ 13 ಮತ್ತು ಮೆಕ್ಯಾನಿಕಲ್ 30 ವಿದ್ಯಾರ್ಥಿಗಳು ಭಾಗವಹಿಸಿದರು. ಟಿ.ಎಂ.ಎ.ಇ.ಎಸ್ ಪಾಲಿಟೆಕ್ನಿಕ್ನಿಂದ ಎಲೆಕ್ಟ್ರಿಕಲ್ 24, ಮೆಕ್ಯಾನಿಕಲ್ 26 ಮತ್ತು ಮೆಟಲರ್ಜಿ 24 ವಿದ್ಯಾರ್ಥಿಗಳು ಭಾಗವಹಿಸಿದರು. ಇತರೆ ಕಾಲೇಜುಗಳಿಂದ ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಮೆಟಲರ್ಜಿ ವಿಭಾಗಗಳಿಂದ ತಲಾ 1 ವಿದ್ಯಾರ್ಥಿ ಹಾಜರಾದರು. ಪಾಸ್ಔಟ್ ವಿದ್ಯಾರ್ಥಿಗಳಲ್ಲಿ ಮೆಕ್ಯಾನಿಕಲ್ 5 ಮತ್ತು ಎಲೆಕ್ಟ್ರಿಕಲ್ 4 ಮಂದಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಟಿ.ಎಂ.ಎ.ಇ.ಎಸ್ ಪಾಲಿಟೆಕ್ನಿಕ್ ಪ್ರಾಚಾರ್ಯರು, ಪ್ಲೇಸ್ಮೆಂಟ್ ಅಧಿಕಾರಿಗಳು ಹಾಗೂ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಕುರಿತು ಮಾರ್ಗದರ್ಶನ ನೀಡಿದರು. ಕಂಪನಿಯ ಪರವಾಗಿ ರಮೇಶ್, ಶ್ರೀನಿವಾಸ ಎನ್, ಫಿದಾ ಹುಸೇನ್, ಬಸವರಾಜ್ ಎಂ, ಶಿವಕುಮಾರ್ ಹಾಗೂ ಶಿವಾನಂದ್ ಅವರು ಸಂದರ್ಶನ ಪ್ರಕ್ರಿಯೆ ನಡೆಸಿದರು. ಇಂತಹ ಕ್ಯಾಂಪಸ್ ಸಂದರ್ಶನಗಳು ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಬಿಕ್ಲು ಶಿವ ಕೊಲೆ ಪ್ರಕರಣ; ಬೈರತಿ ಬಸವರಾಜ್ ಜಾಮೀನು ರದ್ದು ಕೋರಿ ಹೈಕೋರ್ಟ್ಗೆ ಸಿಐಡಿ ಅರ್ಜಿ
ಬೆಂಗಳೂರು : ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಅವರಿಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ರದ್ದು ಕೋರಿ ರಾಜ್ಯ ಸರಕಾರ (ಸಿಐಡಿ) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಜಾಮೀನು ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾರ್ಚ್ 12ರಂದು ಹೊರಡಿಸಿದ ಆದೇಶ ರದ್ದು ಕೋರಿ ಸಿಐಡಿ ತನಿಖಾಧಿಕಾರಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬಿ.ಎ. ಬಸವರಾಜ (ಬೈರತಿ ಬಸವರಾಜ್) ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ. ಪ್ರಕರಣ ಸಂಬಂಧ ಅರ್ಜಿದಾರರನ್ನು ಈಗಾಗಲೇ ಪೊಲೀಸ್ ವಶದಲ್ಲಿಟ್ಟುಕೊಂಡು ನಡೆಸಿರುವ ವಿಚಾರಣೆ ಪೂರ್ಣಗೊಂಡಿದ್ದು, ಮತ್ತೆ ಪೊಲೀಸ್ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂಬ ಅಂಶ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಿಂದ ತಿಳಿಯಲಿದೆ. ಆದ್ದರಿಂದ, ಅರ್ಜಿದಾರರಿಗೆ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್ 12ರಂದು ಹೊರಡಿಸಿದ್ದ ಆದೇಶದಲ್ಲಿ ತಿಳಿಸಿತ್ತು.
ಇರಾನ್ ವಿರುದ್ಧ ಅಮೆರಿಕ ಯುದ್ಧದಿಂದಾಗಿ 2026ರಲ್ಲಿ ಸ್ಟಾಗ್ ಫ್ಲೇಷನ್ ಸಾಧ್ಯತೆ ಇದೆಯೇ?
1970 ರ ದಶಕ ಮತ್ತು 1980 ರ ದಶಕದ ಆರಂಭದಲ್ಲಿ, ಹೆಚ್ಚಿನ ಪಾಶ್ಚಿಮಾತ್ಯ ದೇಶಗಳು ಸ್ಟಾಗ್ ಫ್ಲೇಷನ್ ಅನುಭವಿಸಿದವು. ಸ್ಟಾಗ್ ಫ್ಲೇಷನ್ ಅಂದರೆ ಹೆಚ್ಚಿನ ನಿರುದ್ಯೋಗ, ಹಣದುಬ್ಬರದ ಜತೆಗೆ ಆರ್ಥಿಕ ಬೆಳವಣಿಗೆ ನಿಧಾನಗತಿಯಾಗಿರುವುದು. ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ 1974 ರಲ್ಲಿ ಕ್ರಮವಾಗಿ -0.5% ಮತ್ತು -1.7%, ಮತ್ತು 1975 ರಲ್ಲಿ -0.2% ಮತ್ತು -0.7% ವಾರ್ಷಿಕ ಜಿಡಿಪಿ ಬೆಳವಣಿಗೆ ದರ ದಾಖಲಿಸಿತು. ಇದರೊಂದಿಗೆ 1974 ರಲ್ಲಿ ಅಮೆರಿಕದಲ್ಲಿ 11.1% ಮತ್ತು ಯುಕೆಯಲ್ಲಿ 16%, 1975 ರಲ್ಲಿ ಅಮೆರಿಕದಲ್ಲಿ 9.1% ಮತ್ತು ಯುಕೆಯಲ್ಲಿ 24.2% ಗ್ರಾಹಕ ಬೆಲೆ ಹಣದುಬ್ಬರ ಸಂಭವಿಸಿತು. 1979, 1980, 1981 ಮತ್ತು 1982 ರಲ್ಲಿ ಇದೇ ರೀತಿಯ ವಿದ್ಯಮಾನವನ್ನು ದಾಖಲಿಸಲಾಯಿತು. ಈ ವರ್ಷಗಳಲ್ಲಿ ಅಮೆರಿಕ ಕ್ರಮವಾಗಿ 3.2%, -0.3%, 2.5% ಮತ್ತು -1.8% ಜಿಡಿಪಿ ಬೆಳವಣಿಗೆಯನ್ನು ಹಾಗೂ 11.3%, 13.5%, 10.3% ಮತ್ತು 6.1% ವಾರ್ಷಿಕ ಗ್ರಾಹಕ ಬೆಲೆ ಹಣದುಬ್ಬರ ದರಗಳನ್ನು ದಾಖಲಿಸಿತು. ಬ್ರಿಟಿಷ್ ಕನ್ಸರ್ವೇಟಿವ್ ಪಕ್ಷದ ರಾಜಕಾರಣಿ ಇಯಾನ್ ಮ್ಯಾಕ್ಲಿಯೋಡ್ ಸೃಷ್ಟಿಸಿದ ಸ್ಟಾಗ್ಫ್ಲೇಷನ್ ಎಂಬ ಪದವು ಎರಡೂ ಐತಿಹಾಸಿಕ ನಿದರ್ಶನಗಳಲ್ಲಿ ತೈಲ ಕೊರತೆಯ ವಿದ್ಯಮಾನವನ್ನು ಸೂಚಿಸುತ್ತದೆ. ಮೊದಲನೆಯದು ಅಕ್ಟೋಬರ್ 1973 ರಲ್ಲಿ ಇಸ್ರೇಲ್ ಮತ್ತು ಈಜಿಪ್ಟ್-ಸಿರಿಯಾ ನಡುವಿನ ಯೋಮ್ ಕಿಪ್ಪೂರ್ ಯುದ್ಧದ ನಂತರ ಬಂದಿತು. ಅರಬ್ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯು ಇಸ್ರೇಲ್ ಅನ್ನು ಬೆಂಬಲಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಸಂಪೂರ್ಣ ತೈಲ ನಿರ್ಬಂಧವನ್ನು ಜಾರಿಗೆ ತಂದಿತು. ಎರಡನೇ ತೈಲ ಬಿಕ್ಕಟ್ಟು 1979 ರಲ್ಲಿ ಇರಾನ್ ನ ಇಸ್ಲಾಮಿಕ್ ಕ್ರಾಂತಿಯೊಂದಿಗೆ ಸಂಭವಿಸಿತು. ಒಂದು ವರ್ಷದ ನಂತರ ಇರಾಕ್ ಇರಾನ್ ಮೇಲೆ ಆಕ್ರಮಣ ಮಾಡಿತು. ಆ ಸಮಯದಿಂದ ಪ್ರಪಂಚವು 2008, 2022 ಮತ್ತು 2026 ರಲ್ಲಿ ಕನಿಷ್ಠ ಮೂರು ತೈಲ ಬಿಕ್ಕಟ್ಟುಗಳಿಗೆ ಸಾಕ್ಷಿಯಾಗಿದೆ. 2008 ರ ಬಿಕ್ಕಟ್ಟು ಸ್ಟಾಗ್ ಫ್ಲೇಷನ್ ಗೆ ಕಾರಣವಾಯಿತು, ಆದರೆ ಯಾವುದೇ ತೀವ್ರಗತಿಯ ಹಣದುಬ್ಬರವಿಲ್ಲ. 2022 ರ ರಷ್ಯಾ-ಉಕ್ರೇನ್ ಯುದ್ಧವು ಸ್ವಲ್ಪ ಹಣದುಬ್ಬರವನ್ನು ಉಂಟುಮಾಡಿತು, ಆದರೆ ದೊಡ್ಡ ಹಿಂಜರಿತವಾಗಲಿಲ್ಲ. 2026 ರಲ್ಲಿ ಸ್ಟಾಗ್ ಫ್ಲೇಷನ್ ಮತ್ತೆ ಬರುತ್ತದೆಯೇ? ಅದಕ್ಕೆ ಉತ್ತರಿಸುವ ಮೊದಲು, ಸ್ಟಾಗ್ ಫ್ಲೇಷನ್ ಎಂದರೇನು ಮತ್ತು ಅದು ಹೇಗೆ ಸಂಭವಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅರ್ಥಶಾಸ್ತ್ರದ ಪಠ್ಯಪುಸ್ತಕದಲ್ಲಿ ಹೇಳುವಂತೆ ಪೂರೈಕೆ ಮತ್ತು ಬೇಡಿಕೆ ರೇಖೆಗಳಿವೆ. ಬೆಲೆಗಳು (P) ಲಂಬವಾಗಿ ಮತ್ತು ಪ್ರಮಾಣ (Q) ಸಮತಲ ಅಕ್ಷದಲ್ಲಿ ಇರುತ್ತವೆ. ಪೂರೈಕೆ ರೇಖೆಯು ಎಡದಿಂದ ಬಲಕ್ಕೆ ಮೇಲಕ್ಕೆ ಇಳಿಜಾರಾಗಿದ್ದು, ಸಕಾರಾತ್ಮಕ ಸಂಬಂಧವನ್ನು ಚಿತ್ರಿಸುತ್ತದೆ. ಬೆಲೆಗಳು ಹೆಚ್ಚಾದಂತೆ, ಉತ್ಪಾದಕರಿಗೆ ನಿರ್ದಿಷ್ಟ ವಸ್ತುವಿನ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸಲು ಪ್ರೋತ್ಸಾಹಿಸಲಾಗುತ್ತದೆ. ಬೇಡಿಕೆ ರೇಖೆಯು ಇದಕ್ಕೆ ವಿರುದ್ಧವಾಗಿ ಕೆಳಮುಖವಾಗಿ ಇಳಿಜಾರಾಗಿರುತ್ತದೆ. ಗ್ರಾಹಕರು ಕಡಿಮೆ ಬೆಲೆಗೆ ಹೆಚ್ಚಿನ ಸರಕುಗಳನ್ನು ಮತ್ತು ಹೆಚ್ಚಿನ ದರದಲ್ಲಿ ಕಡಿಮೆ ಪ್ರಮಾಣವನ್ನು ಖರೀದಿಸುತ್ತಾರೆ. ಸ್ಟಾಗ್ಫ್ಲೇಷನ್ ಸಾಮಾನ್ಯವಾಗಿ ಋಣಾತ್ಮಕ ಪೂರೈಕೆ ಆಘಾತಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ, ಒಂದು ವಸ್ತುವಿನ ಪೂರೈಕೆಯಲ್ಲಿನ ಯಾವುದೇ ಹೆಚ್ಚಳ ಅಥವಾ ಇಳಿಕೆ ಅದರ ಬೆಲೆಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ. ಇಲ್ಲಿ ಇನ್ ಪುಟ್ ವೆಚ್ಚಗಳು, ಉತ್ಪಾದನಾ ಪರಿಸ್ಥಿತಿಗಳು ಮತ್ತು ತಂತ್ರಜ್ಞಾನ ಇತ್ಯಾದಿ ಅಂಶಗಳು ಸ್ಥಿರವಾಗಿರುತ್ತವೆ. ಇಲ್ಲಿ ಚಲನೆಯು ಒಂದೇ ಪೂರೈಕೆ ರೇಖೆಯ ಮೇಲೆ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಇರುತ್ತದೆ. ಪೂರೈಕೆ ಆಘಾತದ ಸಂದರ್ಭದಲ್ಲಿ, ಸಂಪೂರ್ಣ ಪೂರೈಕೆ ರೇಖೆಯು ಬಲಕ್ಕೆ ಅಥವಾ ಎಡಕ್ಕೆ ಬದಲಾಗುತ್ತದೆ. ಉತ್ಪಾದಕರು ಈಗ ಅದೇ ಬೆಲೆಗೆ ಹೆಚ್ಚು ಅಥವಾ ಕಡಿಮೆ ಸರಕುಗಳನ್ನು ಪೂರೈಸಲು ಮುಂದಾಗುತ್ತಾರೆ. ಸಕಾರಾತ್ಮಕ ಪೂರೈಕೆ ಆಘಾತವು ಸಾಮಾನ್ಯವಾಗಿ ಉತ್ಪಾದಕತೆಯನ್ನು ಹೆಚ್ಚಿಸುವ ತಂತ್ರಜ್ಞಾನ (ಉದಾ., AI) ಅಥವಾ ಕಡಿಮೆ ಇನ್ಪುಟ್ ವೆಚ್ಚಗಳಿಂದ ಉಂಟಾಗುತ್ತದೆ. ನಕಾರಾತ್ಮಕ ಪೂರೈಕೆ ಆಘಾತಗಳು ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಕೋಪಗಳು, ಸಶಸ್ತ್ರ ಸಂಘರ್ಷಗಳು ಅಥವಾ ಹಾರ್ಮುಝ್ ಜಲಸಂಧಿಯಂತಹ ನಿರ್ಣಾಯಕ ಕಡಲ ಕಾರಿಡಾರ್ಗಳ ದಿಗ್ಬಂಧನದಂತಹ ಜಾಗತಿಕ ಅಡ್ಡಿಪಡಿಗಳಿಂದ ಉಂಟಾಗುತ್ತವೆ. ಉತ್ಪಾದನೆ ಮತ್ತು ವ್ಯಾಪಾರಕ್ಕೆ ಉಂಟಾಗುವ ಅಡಚಣೆಗಳು ಪೂರೈಕೆ ರೇಖೆಯನ್ನು ಎಡಕ್ಕೆ ಬದಲಾಯಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅದೇ ಸ್ಟಾಗ್ ಫ್ಲೇಷನ್. ಸ್ಟಾಗ್ ಫ್ಲೇಷನ್ ಸಾಧ್ಯತೆ ಇದೆಯೇ? ಅದು ಪೂರೈಕೆ ಆಘಾತದ ಪ್ರಮಾಣ ಮತ್ತು ಅವಧಿಯನ್ನು ಅವಲಂಬಿಸಿರುತ್ತದೆ. ಜೆಪಿ ಮಾರ್ಗನ್ನ ಮುಖ್ಯ ಭಾರತೀಯ ಅರ್ಥಶಾಸ್ತ್ರಜ್ಞ ಸಜ್ಜಿದ್ ಝಡ್ ಚಿನೋಯ್ ಅವರ ಪ್ರಕಾರ, 2022 ರ ಬಿಕ್ಕಟ್ಟು ಹೆಚ್ಚಾಗಿ ತೈಲ ಬೆಲೆ ಆಘಾತವಾಗಿತ್ತು. ಪ್ರಸರಣ ಮಾರ್ಗವು ಬೆಲೆಗಳಾಗಿದ್ದು, 2022 ಮಾರ್ಚ್ 7 ರಂದು ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ ಗೆ 14 ವರ್ಷದ ಗರಿಷ್ಠ 139.13 ಡಾಲರ್ ಅನ್ನು ಮುಟ್ಟಿತು. ಪ್ರಸ್ತುತ ಬಿಕ್ಕಟ್ಟು ಬೆಲೆ ಮತ್ತು ಪೂರೈಕೆ ಕೊರತೆ ಎರಡನ್ನೂ ಒಳಗೊಂಡಿದ್ದು, ಇದು 2022 ಅಥವಾ 2008 ಕ್ಕಿಂತ ಹೆಚ್ಚು ಹಾನಿಕಾರಕವಾಗಿದೆ. ಬೆಲೆಗಳು ಮಾತ್ರವಲ್ಲ, ಇಂಧನ ಲಭ್ಯತೆಯೂ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಅನಿಲ ಅಥವಾ LPG ಲಭ್ಯವಿಲ್ಲದಿದ್ದಾಗ, ನೀವು ಕೈಗಾರಿಕಾ ಚಟುವಟಿಕೆಯಲ್ಲಿ ಹಠಾತ್ ನಿಲುಗಡೆಗೆ ಅಪಾಯವನ್ನುಂಟುಮಾಡುತ್ತೀರಿ. ಈ ಹಠಾತ್ ನಿಲುಗಡೆಗಳು ಆರ್ಥಿಕತೆಯನ್ನು ಬಾಧಿಸುತ್ತದೆ. ಕೋವಿಡ್ ಸಮಯದಲ್ಲಿ ನಾವು ಕಲಿತದ್ದೇನೆಂದರೆ, ಸಣ್ಣ ವ್ಯವಹಾರಗಳು ಸ್ಥಗಿತಗೊಂಡಾಗ ತಮ್ಮ ಹಳ್ಳಿಗಳಿಗೆ ತೆರಳಿರುವ ಕಾರ್ಮಿಕರನ್ನು ಮರಳಿ ಕರೆಯುವುದು ತುಂಬಾ ಕಷ್ಟ ಎಂದು ಚಿನೋಯ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. 1970 ರ ದಶಕದಲ್ಲಿ, ಭಾರತೀಯ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸಲು ಪ್ರಾರಂಭಿಸಿದ್ದರು, ಮನೆಗಳು ಅಡುಗೆಗಾಗಿ ಉರುವಲು ಮತ್ತು ಬೆರಣಿಯನ್ನು ಹೆಚ್ಚಾಗಿ ಅವಲಂಬಿಸಿದ್ದವು. ಜನರು ಪಾಲಿಯೆಸ್ಟರ್ ಮತ್ತು ನೈಲಾನ್ ಬಟ್ಟೆಗಳನ್ನು ಧರಿಸುತ್ತಿದ್ದರು. ಇಂದು ಹಾಗಿಲ್ಲ; ಯೂರಿಯಾ ಮತ್ತು ಡೈ-ಅಮೋನಿಯಂ ಫಾಸ್ಫೇಟ್ ತೋಟದ ಗೊಬ್ಬರವನ್ನು ಬದಲಾಯಿಸಿವೆ. ಎಲ್ಪಿಜಿ ಸಿಲಿಂಡರ್ ವ್ಯಾಪ್ತಿಯು ಸಾರ್ವತ್ರಿಕವಾಗಿದೆ. ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಮತ್ತು ಬಕೆಟ್ ಗಳಿಂದ ಪೈಪ್ ಗಳು ಮತ್ತು ಕೇಬಲ್ ಗಳವರೆಗೆ ಎಲ್ಲದರಲ್ಲೂ ಮಾನವ ನಿರ್ಮಿತ ಫೈಬರ್ಗಳಿವೆ. ಭಾರತೀಯ ಆರ್ಥಿಕತೆಯು ಈಗ ಪೂರ್ಣ ಪ್ರಮಾಣದ ಇಂಧನ ಬಿಕ್ಕಟ್ಟಿಗೆ ಹೆಚ್ಚು ದುರ್ಬಲವಾಗಿದೆ. ಇದು ಬೆಲೆಗಳು ಮಾತ್ರವಲ್ಲದೆ ತೈಲ, ಅನಿಲ ಮತ್ತು ಪೆಟ್ರೋಕೆಮಿಕಲ್ಸ್ ಹಾಗೂ ಅವುಗಳಿಂದ ಪಡೆದ ಉತ್ಪನ್ನಗಳ ಮೇಲೂ ಪರಿಣಾಮ ಬೀರುತ್ತದೆ. ಇಂಧನ ಅಡಚಣೆಗಳು ಸರಪಳಿ ಕ್ರಿಯೆಯನ್ನು ಪ್ರಚೋದಿಸಿದಾಗ, ಆರ್ಥಿಕ ಪರಿಣಾಮವು ಅನಿರೀಕ್ಷಿತವಾಗುತ್ತದೆ. ಸಣ್ಣ ಬದಲಾವಣೆಯು ಸಣ್ಣ ಫಲಿತಾಂಶಕ್ಕೆ ಕಾರಣವಾಗುವ ಸರಳ ಮಾದರಿಗಳಿಗಿಂತ ಭಿನ್ನವಾಗಿ, ಈ ಎರಡನೇ ಮತ್ತು ಮೂರನೇ ಕ್ರಮಾಂಕದ ಪರಿಣಾಮಗಳು ದೊಡ್ಡ ಪರಿಣಾಮಗಳನ್ನು ಸೃಷ್ಟಿಸುತ್ತವೆ. ಸ್ಟಾಗ್ ಫ್ಲೇಷನ್ ಎದುರಿಸುವುದು ಹೇಗೆ? ಈಗಾಗಲೇ ಗಮನಿಸಿದಂತೆ, ಹಣದುಬ್ಬರದ ವಿಷಯದಲ್ಲಿ ಪೂರೈಕೆ ಬಿಕ್ಕಟ್ಟಿನ ಅವಧಿಯು ಅದರ ಪ್ರಮಾಣದಷ್ಟೇ ಮುಖ್ಯವಾಗಿದೆ. ಇರಾನ್ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳುವುದಾದರೆ ಮತ್ತು ಪಶ್ಚಿಮ ಏಷ್ಯಾದ ತೈಲ ಸಂಸ್ಕರಣಾಗಾರಗಳು ಹಾಗೂ ನೈಸರ್ಗಿಕ ಅನಿಲ ಸಂಸ್ಕರಣಾ ಸೌಲಭ್ಯಗಳ ಮೇಲಿನ ದಾಳಿಗಳು ಉತ್ಪಾದನಾ ಪುನಃಸ್ಥಾಪನೆಗೆ ಮಹತ್ತರ ಹಾನಿ ಉಂಟುಮಾಡಿಲ್ಲವೆಂದು ಊಹಿಸಿದರೆ, 1970 ರ ಶೈಲಿಯ ಹಣದುಬ್ಬರವನ್ನು ತಪ್ಪಿಸಬಹುದು. ಹಿಂಜರಿತ ಅಥವಾ ಕಡಿಮೆ ಏಕ-ಅಂಕದ ಬೆಳವಣಿಗೆಯ ದರಗಳನ್ನು (ಭಾರತವು ಹಿಂದೆ ಎದುರಿಸಿದಂತೆ) ವಿಸ್ತರಣಾ ಹಣಕಾಸು (ಹೆಚ್ಚಿನ ಸರ್ಕಾರಿ ಖರ್ಚು ಮತ್ತು ಕಡಿಮೆ ತೆರಿಗೆ) ಮತ್ತು ವಿತ್ತೀಯ (ಬಡ್ಡಿದರಗಳನ್ನು ಕಡಿಮೆ ಮಾಡುವುದು) ನೀತಿಗಳ ಮೂಲಕ ಪರಿಹರಿಸಬಹುದು. ಹಣದುಬ್ಬರವನ್ನು ಹಣ ಪೂರೈಕೆಯನ್ನು ಬಿಗಿಗೊಳಿಸುವುದು ಮತ್ತು ಬಡ್ಡಿದರಗಳನ್ನು ಹೆಚ್ಚಿಸುವ ಮೂಲಕ ಮಾತ್ರ ನಿಭಾಯಿಸಬಹುದು. ಈ ಎರಡೂ ಸಾಧನಗಳು ಸ್ಟಾಗ್ಫ್ಲೇಷನ್ ಸಂದರ್ಭದಲ್ಲಿ ಸುಲಭವಾಗಿ ಕಾರ್ಯನಿರ್ವಹಿಸುವುದಿಲ್ಲ. ಒಂದು ಅಂಶವನ್ನು (ಹಣದುಬ್ಬರ) ನಿಯಂತ್ರಿಸಲು ಬಡ್ಡಿದರಗಳನ್ನು ಹೆಚ್ಚಿಸುವುದು ಇನ್ನೊಂದು ಅಂಶವನ್ನು (ನಿಧಾನಗತಿಯ ಬೆಳವಣಿಗೆ ಮತ್ತು ಹೆಚ್ಚಿನ ನಿರುದ್ಯೋಗ) ಹದಗೆಡಿಸಬಹುದು. ಪೂರೈಕೆ ನಿರ್ಬಂಧಿತವಾಗಿರುವಾಗ ಬೇಡಿಕೆಯನ್ನು ಉತ್ತೇಜಿಸಲು ಹಣಕಾಸು ಮತ್ತು ವಿತ್ತೀಯ ಸಡಿಲಗೊಳಿಸುವಿಕೆಯು ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಾಂಪ್ರದಾಯಿಕ ಹಣಕಾಸು ಮತ್ತು ವಿತ್ತೀಯ ಸಾಧನಗಳು ಬೇಡಿಕೆಯನ್ನು ನಿರ್ವಹಿಸಲು ವಿನ್ಯಾಸಗೊಳಿಸಲ್ಪಟ್ಟಿರುವುದರಿಂದ, ಅವು ಸ್ಟಾಗ್ಫ್ಲೇಷನ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಏಕೆಂದರೆ ಸಮಸ್ಯೆ ಜನರು ಹೆಚ್ಚು ಖರೀದಿಸುತ್ತಿರುವುದಲ್ಲ, ಜಗತ್ತು ಸಾಕಷ್ಟು ಉತ್ಪಾದಿಸುತ್ತಿಲ್ಲ ಎಂಬುದಾಗಿದೆ. ಇದನ್ನು ಸರಿಪಡಿಸಲು, ಪೂರೈಕೆ ಸರಪಳಿಗಳನ್ನು ಸುಧಾರಿಸಬೇಕಾಗಿದೆ.
ಮಣಿಪಾಲ ರಾಜೀವ ನಗರ ಕರ್ನಾಟಕ ಪಬ್ಲಿಕ್ ಶಾಲೆ: ಎ.8ರಂದು ಎರಡು ತರಗತಿ ಕೊಠಡಿಗಳ ಉದ್ಘಾಟನೆ
ಉಡುಪಿ, ಎ.6: ಲಯನ್ಸ್ ಕ್ಲಬ್ ಮಣಿಪಾಲ ವತಿಯಿಂದ ಮಣಿಪಾಲದ ರಾಜೀವ್ ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಸುಮಾರು 23 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಸ್ಮಾರ್ಟ್ ಟಿವಿಗಳಿಂದ ಸಜ್ಜುಗೊಂಡ ಎರಡು ವಿಶಾಲ ಆಂಗ್ಲಮಾಧ್ಯಮ ತರಗತಿ ಕೊಠಡಿಗಳ ಉದ್ಘಾಟನೆ ಎ.8ರಂದು ಬುಧವಾರ ನಡೆಯಲಿದೆ ಎಂದು ಮಣಿಪಾಲ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಡಾ.ಎಚ್. ಗಣೇಶ ಪೈ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಉದ್ಯಮ ಸಂಸ್ಥೆಗಳ ಸಿಎಸ್ಆರ್ ನಿಧಿಯ ಸಹಾಯದಿಂದ ಸಹಾಯ ಹಸ್ತ ಮಣಿಪಾಲ ಲಯನ್ಸ್ ಚಾರಿಟೇಬಲ್ ಫೌಂಡೇಷನ್ ಮೂಲಕ ಸುಸಜ್ಜಿತ ವಾದ ಈ ಎರಡು ವಿಶಾಲ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು. ಕಳೆದ ವರ್ಷ ಇದೇ ಶಾಲೆಗೆ ಸಭಾಂಗಣವೊಂದನ್ನು ನಿರ್ಮಿಸಿಕೊಟ್ಟಿದ್ದೇವೆ. ಅದೇ ರೀತಿ ಗ್ರಂಥಾಲಯಕ್ಕೆ ಹೊಸ ಪುಸ್ತಕಗಳೊಂದಿಗೆ ಶಾಲೆಗೆ 12 ಕಂಪ್ಯೂಟರ್ಗಳನ್ನು ಸಹ ನೀಡುವುದರೊಂದಿಗೆ ಮೂರು ಸ್ಮಾರ್ಟ್ ತರಗತಿ ಗಳನ್ನು ಸಹ ಒದಗಿಸಿದ್ದೇವೆ. ಮೊದಲು ಈ ಪ್ರೌಢ ಶಾಲೆಯಲ್ಲಿ 1ರಿಂದ 10ರವರೆಗೆ ಕನ್ನಡ ಮಾಧ್ಯಮ ಶಾಲೆ ಮಾತ್ರ ಇತ್ತು. ಈಗ ಆಂಗ್ಲ ಮಾಧ್ಯಮವನ್ನೂ ಪ್ರಾರಂಭಿಸಲಾಗಿದೆ. ಹೀಗಾಗಿ ಈಗ ಇಲ್ಲಿ 190ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತಿದ್ದಾರೆ ಎಂದು ಡಾ.ಗಣೇಶ್ ಪೈ ನುಡಿದರು. ಮಣಿಪಾಲ-ಅಲೆವೂರು ರಸ್ತೆಯಲ್ಲಿರುವ ರಾಜೀವನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಈ ಎರಡು ಹೊಸ ತರಗತಿ ಕೊಠಡಿಗಳನ್ನು ಎ.8ರಂದು ಬೆಳಗ್ಗೆ 9:30ಕ್ಕೆ ಲಯನ್ಸ್ ಜಿಲ್ಲೆ 317ರ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಉದ್ಘಾಟಿಸ ಲಿದ್ದಾರೆ.ಲಯನ್ ಸಂಸ್ಥೆಯ ವಿವಿಧ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು. ಮಣಿಪಾಲ ಲಯನ್ಸ್ ಕ್ಲಬ್ 34 ವರ್ಷಗಳ ತನ್ನ ಅಸ್ತಿತ್ವದಲ್ಲಿ ಮಣಿಪಾಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಾಜ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. 30ಕ್ಕೂ ಅಧಿಕ ಹೆಚ್ಚು ಕಣ್ಣು ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದು 2000ಕ್ಕೂ ಅಧಿಕ ಮಂದಿಗೆ ಕನ್ನಡಕಗಳನ್ನು ವಿತರಿಸಿದ್ದೇವೆ. ಕ್ಯಾನ್ಸರ್ನಿಂದ ಬಳಲುತ್ತಿರುವ ಮಕ್ಕಳಿಗಾಗಿ ಮಣಿಪಾಲ ಲಯನ್ಸ್ ಕ್ಲಬ್ ಮಕ್ಕಳ ವಾರ್ಡಿಗೆ ಮೈಕ್ರೋಸ್ಕೋಪ್ಗಳು, ಫ್ರಿಜ್ಗಳು, ಬಯೋ ಸೈರಿಲೈಸೇಶನ್ ಘಟಕಗಳನ್ನು ಒಳಗೊಂಡ ಆಧುನಿಕ ಸಾಧನಗಳನ್ನು ಒದಗಿಸಿದೆ. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಮಕ್ಕಳಿಗಾಗಿ ವಾಸಸ್ಥಳವನ್ನು ನಿರ್ಮಿಸಿ, ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನು ಒದಗಿಸಿದ್ದೇವೆ. ಮಣಿಪಾಲ ಲಯನ್ಸ್ ಕ್ಲಬ್ ಎ.18ರಿಂದ 25ರವರೆಗೆ ಜಾಗತಿಕ ಪರಿಸರ ಸಂರಕ್ಷಣಾ ವಾರವನ್ನು ಆಚರಿಸುತ್ತಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ರಮೇಶ್ ಕಿಣಿ ಹಾಗೂ ಅರ್ಚನ ಭಕ್ತ ಉಪಸ್ಥಿತರಿದ್ದರು.
ಕಲಬುರಗಿ | 2 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್
ಕಲಬುರಗಿ: ವ್ಯಕ್ತಿಯೊಬ್ಬರ ತಂದೆಯ ಹೆಸರಿನಲ್ಲಿರುವ ಜಾಗವನ್ನು ತಾಯಿಯ ಹೆಸರಿಗೆ ಮ್ಯುಟೇಶನ್ ಮಾಡಿಕೊಡುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ. ಕಲಬುರಗಿ ತಾಲೂಕಿನ ಕುಮಸಿ ಗ್ರಾಮ ಪಂಚಾಯತ್ನ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಬಂಧಿತ ವ್ಯಕ್ತಿಯಾಗಿದ್ದಾರೆ. ಗಣಜಲಖೇಡ ಗ್ರಾಮದ ಅನೀಲಕುಮಾರ್ ರಾಠೋಡ ಅವರು ತಮ್ಮ ತಂದೆಯ ಹೆಸರಿನಲ್ಲಿರುವ ಜಾಗವನ್ನು ತಾಯಿಯ ಹೆಸರಿಗೆ ಮ್ಯೂಟೇಶನ್ ಮಾಡಿಕೊಡುವ ಸಲುವಾಗಿ ಮಲ್ಲಿಕಾರ್ಜುನ ಅವರು 4,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಮೊತ್ತದಲ್ಲಿ ಈಗಾಗಲೇ ಫೋನ್ಪೇ ಮೂಲಕ 2,000 ರೂ. ಹಣವನ್ನು ಸ್ವೀಕರಿಸಿದ್ದು, ಉಳಿದ 2,000 ರೂ. ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಎಸ್ಪಿ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್-2 ರಾಜಶೇಖರ ಬಡದೆಸಾರ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದ್ದು, ಆರೋಪದ ಸತ್ಯಾಸತ್ಯತೆ ದೃಢಪಟ್ಟ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನರನ್ನು ಬಂಧಿಸಲಾಗಿದೆ.
ಅಮೆರಿಕದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಇರಾನ್: ಶಾಶ್ವತ ಯುದ್ಧ ವಿರಾಮಕ್ಕೆ ಪಟ್ಟು
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಮಂಡಿಸಿದ್ದ ತಾತ್ಕಾಲಿಕ ಕದನ ವಿರಾಮದ ಪ್ರಸ್ತಾವನೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಬೇಕೆಂದು ಇರಾನ್ ಪಟ್ಟು ಹಿಡಿದಿದೆ ಎಂದು ವರದಿಯಾಗಿದೆ. ಅಮೆರಿಕದ 15 ಅಂಶಗಳ ಪ್ರಸ್ತಾವನೆಗೆ ಪ್ರತಿಯಾಗಿ ಇರಾನ್ ತನ್ನದೇ ಆದ 10 ಅಂಶಗಳ ಪ್ರತಿ ಪ್ರಸ್ತಾವನೆಯನ್ನು ಪಾಕಿಸ್ತಾನದ
ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅನುಷ್ಠಾನ: ಕೇರಳ ರಾಜ್ಯವನ್ನು ಪ್ರಶಂಸಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಎ. 6: ಕೇರಳಂ ತನ್ನ ಪೊಲೀಸ್ ಠಾಣೆಗಳಲ್ಲಿ ಬಲಿಷ್ಠ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಶ್ಲಾಘಿಸಿದೆ. ಕೇರಳ ಮಾದರಿಯನ್ನು ರಾಷ್ಟ್ರವ್ಯಾಪಿ ಅನುಸರಿಸುವಂತೆ ಅದು ನಿರ್ದೇಶಿಸಿದೆ. 2025ರಲ್ಲಿ ಭಾರತದಾದ್ಯಂತ 11 ಕಸ್ಟಡಿ ಸಾವು ವರದಿಯಾದ ಹಿನ್ನೆಲೆಯಲ್ಲಿ ದಾಖಲಿಸಲಾಗಿರುವ ಸ್ವಯಂ ಪ್ರೇರಿತ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು. ಈ ಸಂದರ್ಭ ಅದು ಕೇರಳಂನ ಹಿರಿಯ ಅಧಿಕಾರಿಗಳು ಮೀಸಲಾದ ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದಲ್ಲಿ ಪೊಲೀಸ್ ಠಾಣೆಯ ದೃಶ್ಯಗಳನ್ನು ಗಮನಿಸಬಹುದು ಎಂಬುದನ್ನು ಗಮನಿಸಿತು. ಈ ವಿಚಾರವನ್ನು ಆ್ಯಮಿಕಸ್ ಕ್ಯೂರಿ ಸಿದ್ಧಾರ್ಥ್ ದವೆ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಕೇರಳಂ ಜೊತೆಗೆ ಮಧ್ಯಪ್ರದೇಶ ಹಾಗೂ ರಾಜಸ್ಥಾನವನ್ನು ಕೂಡ ಪೀಠ ಪ್ರಶಂಸಿಸಿತು.
LPG ಬಿಕ್ಕಟ್ಟು| ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ತರಾಟೆ
ಹೊಸದಿಲ್ಲಿ, ಎ. 6: ಎಲ್ಪಿಜಿ ಅನಿಲ ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ರೀತಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಇದನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದ ಸಂದರ್ಭ ಕೇಂದ್ರ ಸರಕಾರದ ನಿರ್ವಹಣೆಗೆ ಹೋಲಿಸಿದ್ದಾರೆ. ಈ ಬಿಕ್ಕಟ್ಟಿನ ಹೊರೆಯನ್ನು ಅದು ಬಡವರ ಮೇಲೆ ಹೇರುತ್ತಿದೆ ಎಂದು ಅವರು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡ ರಾಹುಲ್ ಗಾಂಧಿ ‘ಎಕ್ಸ್’ನ ತನ್ನ ಪೋಸ್ಟ್ನಲ್ಲಿ, ‘‘ನಾವು ಎಲ್ಪಿಜಿ ಬಿಕ್ಕಟ್ಟನ್ನು ಕೋವಿಡ್ ಅನ್ನು ನಿಭಾಯಿಸಿದ ರೀತಿಯಲ್ಲಿ ನಿಭಾಯಿಸುತ್ತೇವೆ ಎಂದು ಮೋದಿ ಜಿ ಹೇಳಿದ್ದಾರೆ. ನಿಜಕ್ಕೂ ಅವರು ಮಾಡಿದ್ದು ಅದನ್ನೇ. ಇಲ್ಲಿ ಕೂಡ ಕೋವಿಡ್ನಂತೆ ಸ್ಪಷ್ಟ ನೀತಿ ಇಲ್ಲ. ಭಾರೀ ಘೋಷಣೆಗಳನ್ನು ಮಾತ್ರ ಮಾಡಲಾಗಿದೆ. ಸಂಪೂರ್ಣ ಹೊರೆಯನ್ನು ಬಡವರ ಮೇಲೆ ಹೊರಿಸಲಾಗಿದೆ’’ ಎಂದಿದ್ದಾರೆ. ದಿನಗೂಲಿ ಕಾರ್ಮಿಕರ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ಗಮನ ಸೆಳೆದ ಅವರು, ಪ್ರತಿದಿನ 500-800 ಗಳಿಸುವ ವಲಸೆ ಕಾರ್ಮಿಕರಿಗೆ ಅಡುಗೆ ಅನಿಲ ಕೈಗೆಟಕುವುದಿಲ್ಲ. ಕಾರ್ಮಿಕನೊಬ್ಬ ರಾತ್ರಿ ಮನೆಗೆ ಮರಳಿದಾಗ ಸ್ಟೌ ಹೊತ್ತಿಸಲು ಕೂಡ ಆತನಲ್ಲಿ ಹಣ ಇರುವುದಿಲ್ಲ’’ ಎಂದು ಹೇಳಿದ್ದಾರೆ. ‘‘ಇದರ ಪರಿಣಾಮ ? ಜನರು ನಗರವನ್ನು ತೊರೆಯುತ್ತಿದ್ದಾರೆ. ಹಳ್ಳಿಗಳಿಗೆ ಹಿಂದಿರುಗುತ್ತಿದ್ದಾರೆ. ಜವಳಿ ಕಾರ್ಖಾನೆ ಹಾಗೂ ಇತರ ಕಾರ್ಖಾನೆಗಳ ಬೆನ್ನೆಲುಬಾಗಿರುವ ಈ ಕಾರ್ಮಿಕರು ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ’’ ಎಂದು ಅವರು ತಿಳಿಸಿದರು. ವ್ಯಾಪಕ ಆರ್ಥಿಕ ಸಂಕಷ್ಟದ ಬಗ್ಗೆ ಎಚ್ಚರಿಸಿದ ಅವರು, ‘‘ಜವಳಿ ವಲಯ ಈಗಾಗಲೆ ಐಸಿಯುನಲ್ಲಿದೆ. ಉತ್ಪಾದನಾ ವಲಯ ಉಸಿರಾಡಲು ಕಷ್ಟ ಪಡುತ್ತಿದೆ. ಈ ಬಿಕ್ಕಟ್ಟು ಎಲ್ಲಿಂದ ಹುಟ್ಟಿಕೊಂಡಿತು ? ಮಾತುಕತೆಯ ಸಂದರ್ಭದ ರಾಜತಾಂತ್ರಿಕ ಪ್ರಮಾದದಿಂದ. ಇಂದಿಗೂ ಸರಕಾರ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ತಮಿಳುನಾಡು| ತಂದೆ, ಮಗನ ಕಸ್ಟಡಿ ಸಾವು ಪ್ರಕರಣ: 9 ಪೊಲೀಸರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚೆನ್ನೈ, ಎ. 6: ಆರು ವರ್ಷಗಳ ಹಿಂದೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ತೂತುಕ್ಕುಡಿ ಜಿಲ್ಲೆಯಲ್ಲಿ ವ್ಯಾಪಾರಿ ಪಿ. ಜಯರಾಜ್ ಹಾಗೂ ಅವರ ಪುತ್ರ ಜೆ. ಬೆನಿಕ್ಸ್ ಅವರ ಕಸ್ಟಡಿ ಸಾವಿನ ಪ್ರಕರಣದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ನ್ಯಾಯಾಲಯವೊಂದು ಸೋಮವಾರ 9 ಮಂದಿ ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಮರಣದಂಡನೆಗೆ ಗುರಿಯಾದ ಪೊಲೀಸರೆಂದರೆ ಇನ್ಸ್ಪೆಕ್ಟರ್ ಶ್ರೀಧರ್, ಸಬ್-ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್, ರಘು ಗಣೇಶ್ ಹಾಗೂ ಪೊಲೀಸ್ ಸಿಬ್ಬಂದಿ ಮುರುಗನ್, ಸಮುದುರೈ, ಮುತ್ತುರಾಜಾ, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್ ಹಾಗೂ ವೈಲುಮುತ್ತು. ‘‘ಇದು ಅಧಿಕಾರ ದುರುಪಯೋಗದ ಪ್ರಕರಣ’’ ಎಂದು ಗಮನ ಸೆಳೆದ ನ್ಯಾಯಾಲಯ, ತಮಿಳುನಾಡಿನಲ್ಲಿ ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿದ್ದಾರೆ ಹಾಗೂ ಈ ತೀರ್ಪು ಪೊಲೀಸರಲ್ಲಿ ಭಯ ಉಂಟು ಮಾಡುವುದಿಲ್ಲ ಎಂದಿದೆ. ‘‘ತಂದೆ ಮತ್ತು ಮಗನನ್ನು ವಿವಸ್ತ್ರಗೊಳಿಸಿ ನಿರ್ದಯವಾಗಿ ಹಲ್ಲೆ ನಡೆಸಲಾಗಿದೆ. ಅದನ್ನು ಓದಿದಾಗ ಹೃದಯ ಕಂಪಿಸುತ್ತದೆ’’ ಎಂದು ನ್ಯಾಯಾಲಯ ಹೇಳಿದೆ. ವ್ಯಾಪಾರಿಗಳಿಗೆ ಬರ್ಬರ ಕಸ್ಟಡಿ ಚಿತ್ರಹಿಂಸೆ ಹಾಗೂ ಬಳಿಕ ಅವರ ಹತ್ಯೆಯನ್ನು ಅಪರೂಪದ ಪ್ರಕರಣ ಎಂದು ಬಣ್ಣಿಸಿದ ಸಿಬಿಐ, ಪರೋಲ್ಗೆ ಅವಕಾಶ ನೀಡದೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯ ಗರಿಷ್ಠ ದಂಡನೆ ವಿಧಿಸಬೇಕು ಎಂದು ಕೋರಿತ್ತು.
ಬಿಜೆಪಿ ಮತ್ತು ಸಿಪಿಎಂ ನಡುವೆ ಹೊಂದಾಣಿಕೆ: ಕೇರಳದಲ್ಲಿ ರಾಹುಲ್ ಗಾಂಧಿ ಆರೋಪ
ತ್ರಿಶೂರ್, ಎ. 6: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ‘‘ಅಹಂಕಾರಿಗಳು’’ ಎಂಬುದಾಗಿ ಕರೆದಿದ್ದಾರೆ. ಅವರಲ್ಲಿ ‘‘ಜನರೊಂದಿಗೆ ಕೆಲಸ ಮಾಡುವ’ ಮನೋಭಾವದ ಬದಲಿಗೆ ‘‘ಜನರನ್ನು ಆಳುವ’’ ಮನೋಭಾವವಿದೆ ಎಂದು ಹೇಳಿದ್ದಾರೆ. ತ್ರಿಶೂರ್ನ ಮಾಲದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇರಳದಲ್ಲಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಆಡಳಿತಾರೂಢ ಎಲ್ಡಿಎಫ್ ನಡುವಿನ ಕದನವಾಗಿದೆ ಎಂದು ಹೇಳಿದರು. ಎಲ್ಡಿಎಫ್ಗೆ ಬಿಜೆಪಿ ನೆರವು ನೀಡುತ್ತಿದೆ ಎಂಬುದಾಗಿಯೂ ರಾಹುಲ್ ಗಾಂಧಿ ಆರೋಪಿಸಿದರು. ‘‘ಅದೃಶ್ಯ ಕೈಯೊಂದು ಎಲ್ಡಿಎಫ್ಗೆ ಸಹಾಯ ಮಾಡುತ್ತಿದೆ’’. ಸರಕಾರವು ನೈಜ ಎಡಪಂಥೀಯ ಆಡಳಿತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದನ್ನು ಆಡಳಿತಾರೂಢ ಸಿಪಿಎಂ ಕಾರ್ಯಕರ್ತರೇ ಒಪ್ಪಿಕೊಳ್ಳುತ್ತಾರೆ ಎಂದು ನುಡಿದರು. ಬಿಜೆಪಿಯು ಕಾಂಗ್ರೆಸ್ ಮತ್ತು ಅದರ ನೇತೃತ್ವದ ಯುಡಿಎಫ್ನ್ನು ಕೇರಳ ಮತ್ತು ದೇಶಾದ್ಯಂತ ತನ್ನ ಪ್ರಧಾನ ರಾಜಕೀಯ ಎದುರಾಳಿ ಎಂಬುದಾಗಿ ನೋಡುತ್ತಿದೆ ಎಂದು ಹೇಳಿದರು. ‘‘ಇದಕ್ಕೆ ಪುರಾವೆ ಇಲ್ಲಿದೆ. ಪ್ರಧಾನಿ ಮೋದಿಯವರು ಬೇರೆ ಕಡೆ ಮಾಡುವ ಭಾಷಣಗಳಲ್ಲಿ ದೇವರು, ದೇವಸ್ಥಾನಗಳು ಮತ್ತು ಧರ್ಮದ ಬಗ್ಗೆ ಮಾತನಾಡುತ್ತಾರೆ. ಆದರೆ, ಕೇರಳದಲ್ಲಿ ಅವರು ಸಿಪಿಎಂ ನಾಯಕರು ಶಾಮೀಲಾಗಿರುವ ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ, ಅವರು ಮುಖ್ಯಮಂತ್ರಿ ಮತ್ತು ಸಿಪಿಎಂ ಪಕ್ಷವನ್ನು ರಕ್ಷಿಸಲು ಬಯಸಿದ್ದಾರೆ. ಅವರು ಇಲ್ಲಿ ಚಿನ್ನ, ಹಿಂದೂ ಧರ್ಮ ಮತ್ತು ದೇವಸ್ಥಾನಗಳನ್ನು ಮರೆತಿದ್ದಾರೆ. ಯಾಕೆಂದರೆ ಅವರು ಎಲ್ಡಿಎಫ್ನ್ನು ರಕ್ಷಿಸಲು ಬಯಸಿದ್ದಾರೆ’’ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಕಿಡ್ನಿ ಕಸಿ ಇನ್ನು ಸುಲಭ: ದೇಶದಲ್ಲೇ ಮೊದಲ ಬಾರಿ ಈಗ ಕರ್ನಾಟಕದಲ್ಲಿ 'ಬಹು ಜೋಡಿ ಕಿಡ್ನಿ ವಿನಿಮಯ' ಕ್ರಾಂತಿ
Multiple Pair Kidney Exchange Transplant Guidelines 2026- ಮೂತ್ರಪಿಂಡ ವೈಫಲ್ಯದ ರೋಗಿಗಳ ನೆರವಿಗಾಗಿ ಇದೀಗ ಕರ್ನಾಟಕ ಸರ್ಕಾರ 'ಬಹು ಜೋಡಿ ಕಿಡ್ನಿ ವಿನಿಮಯ ಕಸಿ ಮಾರ್ಗಸೂಚಿ-2026' ಪ್ರಕಟಿಸಿದೆ. ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೂ, ದಾನಿ-ಸ್ವೀಕೃತಿದಾರರ ಮೂರ್ನಾಲ್ಕು ಜೋಡಿಗಳ ನಡುವೆ ಪರಸ್ಪರ ಕಿಡ್ನಿ ವಿನಿಮಯಕ್ಕೆ ಈ ಯೋಜನೆ ಅವಕಾಶ ನೀಡುತ್ತದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ನಿರ್ದಿಷ್ಟ ಮಾರ್ಗಸೂಚಿ ರೂಪಿಸಲಾಗಿದ್ದು, 5,000ಕ್ಕೂ ಹೆಚ್ಚು ರೋಗಿಗಳಿಗೆ ಅನುಕೂಲವಾಗಲಿದೆ. ಇದು ಅಂಗಾಂಗ ದಾನದ ಕೊರತೆಗೆ ವೈಜ್ಞಾನಿಕ ಪರಿಹಾರ ನೀಡಲಿದೆ.
ಕೇರಳ ವಿಧಾನಸಭಾ ಚುನಾವಣೆ 2026 | 2011 ರಿಂದ ಕೇರಳದ ಜನರು ಯಾರಿಗೆ ಮತ ಹಾಕಿದ್ದಾರೆ?
ಕೇರಳದ ರಾಜಕೀಯ ಪ್ರಯಾಣವು ಕಠಿಣ ಹೋರಾಟದ ಜನಾದೇಶಗಳಿಂದ ಹಿಡಿದು ರಾಜಕೀಯ ಪೈಪೋಟಿಯವರೆಗೆ ಆಕರ್ಷಕ ಇತಿಹಾಸವನ್ನು ಹೊಂದಿದೆ. ಹಲವು ವರ್ಷಗಳಿಂದ ಕೇರಳ ರಾಜಕೀಯದಲ್ಲಿ LDF ಮತ್ತು UDF ನಡುವಿನ ಅಧಿಕಾರದ ಲಯಬದ್ಧ ಪರಿವರ್ತನೆ ಕಾಣುತ್ತಿತ್ತು. ಆದರೆ, 2021 ರ ವಿಧಾನಸಭಾ ಚುನಾವಣೆಗಳು ಈ ಯಥಾಸ್ಥಿತಿಯನ್ನು ಬದಲಿಸಿವೆ. ಆ ವರ್ಷ LDF ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಪ್ರಮುಖ ಚುನಾವಣೆಗಳ ಸಮಯದಲ್ಲಿ ಕೇರಳ ಆಗಾಗ್ಗೆ ಚರ್ಚೆಯ ಕೇಂದ್ರಬಿಂದುವಾಗಿದೆ. ಕೇರಳದಲ್ಲಿ ವಿಧಾನಸಭಾ ಚುನಾವಣೆಗಳು ಬಹುಶಃ ಎಡಪಕ್ಷಗಳಿಗೆ ಹೆಚ್ಚು ಅನುಕೂಲಕರವಾಗಿದ್ದರೂ, ಲೋಕಸಭಾ ಫಲಿತಾಂಶಗಳು ಕೇಂದ್ರಿತ ಒಕ್ಕೂಟಗಳಿಗೆ ಬಲವಾದ ಬೆಂಬಲವನ್ನು ಪ್ರತಿಬಿಂಬಿಸುತ್ತವೆ. 1957 ರಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಪ್ರವೃತ್ತಿ ಸ್ಪಷ್ಟವಾಗಿದೆ. 2011 ರಿಂದ ಅಧಿಕಾರಕ್ಕೆ ಬಂದ ಪಕ್ಷಗಳಿಗೆ ಕೇರಳ ಹೇಗೆ ಮತ ಹಾಕಿತು? 2011 - ಕಾಂಗ್ರೆಸ್ ನೇತೃತ್ವದ UDF ಅಧಿಕಾರಕ್ಕೆ 2011 ರ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಎರಡು ಪ್ರಮುಖ ಪಕ್ಷಗಳು 4 ಸ್ಥಾನಗಳ ಅಂತರದಲ್ಲಿ ಅತ್ಯಂತ ಕಡಿಮೆ ಅಂತರವನ್ನು ಹೊಂದಿದ್ದವು. ಅಲ್ಲಿ ಯುಡಿಎಫ್ ಮೇಲುಗೈ ಸಾಧಿಸಿತು. ಆ ವರ್ಷ, ಕೇರಳವು 1977 ರಿಂದೀಚೆಗೆ ಐತಿಹಾಸಿಕ ಪ್ರವೃತ್ತಿಯ ಬಹುತೇಕ ಏರಿಕೆಗೆ ಸಾಕ್ಷಿಯಾಯಿತು. ಆ ವರ್ಷ LDF 68 ಸ್ಥಾನಗಳನ್ನು ಪಡೆದರೆ, UDF 72 ಸ್ಥಾನಗಳನ್ನು ಗಳಿಸಿತು. ಇತ್ತೀಚಿನ ಪ್ರವೃತ್ತಿಗಳು ಮೂರನೇ ರಾಜಕೀಯ ಶಕ್ತಿಯ ಸ್ಥಿರ ಆರೋಹಣವನ್ನು ಎತ್ತಿ ತೋರಿಸುತ್ತವೆ. ಈ ಅಂಶಗಳು ಒಂದು ಕಾಲದಲ್ಲಿ ಒಮ್ಮೆ ‘ಅವರು’ ಅಧಿಕಾರಕ್ಕೇರಿದರೆ ನಂತರದ ಚುನಾವಣೆಯಲ್ಲಿ ‘ಇವರು’ ಎಂಬ LDF - UDF ನಡುವಿನ ಪೈಪೋಟಿಯಲ್ಲಿ ‘ಮೂರನೆಯವರು’ ಇದ್ದಾರೆ ಎಂಬುದನ್ನು ತೋರಿಸುತ್ತವೆ. 2011ರಲ್ಲಿ ಕಾಂಗ್ರೆಸ್ ನೇತೃತ್ವದ UDF 46.03% ಮತ ಹಂಚಿಕೆಯೊಂದಿಗೆ ಅಧಿಕಾರಕ್ಕೆ ಬಂದಿತು. ಎರಡೂ ಮೈತ್ರಿಕೂಟಗಳ ನಡುವೆ ಕೇವಲ 1,68,520 ಮತಗಳ ಅಂತರವಿತ್ತು. UDF 8,002,854 ಮತಗಳನ್ನು ಪಡೆದರೆ, ಎಲ್ಡಿಎಫ್ 7,834,334 ಮತಗಳನ್ನು ಗಳಿಸಿತು. LDFನ ಮತ ಹಂಚಿಕೆ 45.06% ಆಗಿತ್ತು. ಕೇರಳದಲ್ಲಿ 13ನೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 971; ಅದರಲ್ಲಿ 456 ಅಭ್ಯರ್ಥಿಗಳು ಸಿಪಿಐ, ಸಿಪಿಐ(ಎಂ), ಬಿಜೆಪಿ, ಬಿಎಸ್ಪಿ, ಎನ್ಸಿಪಿ ಇತ್ಯಾದಿ ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳಾಗಿದ್ದರು. ಏತನ್ಮಧ್ಯೆ, ಯುಡಿಎಫ್ನ ಯಶಸ್ಸಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಕೂಡ ಬೆಂಬಲ ನೀಡಿತು. ಅದು ಸ್ಪರ್ಧಿಸಿದ್ದ 24 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಪ್ರದರ್ಶನ ನೀಡಿತು. 2016 - LDF ಅಧಿಕಾರಕ್ಕೆ 2016 ರ ಹೊತ್ತಿಗೆ, ಕೇರಳದ ಮತದಾರರ ಊಹಿಸಬಹುದಾದ ಸ್ವರೂಪವು ಪೂರ್ಣ ಶಕ್ತಿಯೊಂದಿಗೆ ಮರಳಿತು. 2016 ರ ಫಲಿತಾಂಶಗಳು LDF 92 ಸ್ಥಾನಗಳನ್ನು ಗೆದ್ದು ಬಹುಮತದೊಂದಿಗೆ ಅಧಿಕಾರವನ್ನು ಮರಳಿ ಪಡೆದವು. UDFನ ಸ್ಥಾನಗಳು 47 ಕ್ಕೆ ಇಳಿದವು. ಮತ ಹಂಚಿಕೆಯ ದತ್ತಾಂಶವು UDFಗೆ ಕೇವಲ 38.6% ಮತಗಳೊಂದಿಗೆ ಕುಸಿತವನ್ನು ತೋರಿಸುತ್ತದೆ, ಆದರೆ ಎಲ್ಡಿಎಫ್ 42.58% ಮತ ಪಾಲನ್ನು ಪಡೆಯುವ ಮೂಲಕ ತನ್ನ ನೆಲೆಯನ್ನು ಸ್ಥಿರಗೊಳಿಸಿತು. LDF UDFಗಿಂತ 4% ಮತ ಪಾಲನ್ನು ಕಾಯ್ದುಕೊಂಡಿತು, ಇದು ಸ್ಥಾನಗಳ ವಿಷಯದಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಯಿತು. 2016 ರ ಮತ್ತೊಂದು ಮಹತ್ವದ ದತ್ತಾಂಶವೆಂದರೆ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಖಾತೆ ತೆರೆಯಿತು. ಹಿರಿಯ ನಾಯಕ ಓ. ರಾಜಗೋಪಾಲ್ ತಿರುವನಂತಪುರಂನ ನೇಮಂ ಸ್ಥಾನವನ್ನು ಗೆಲ್ಲುವ ಮೂಲಕ ಕೇರಳದ LDF - UDF ವ್ಯವಸ್ಥೆಯ ನಡುವೆ ಕಮಲ ಅರಳಿಸಿದರು. ಬಿಜೆಪಿಯ ಮತ ಹಂಚಿಕೆ 14.62% ಕ್ಕೆ ಏರಿತು. 2021 – ಮತ್ತೆ LDF 2011 ಮತ್ತು 2016 ರಲ್ಲಿ ಮತದಾರರು ಎಡಪಕ್ಷಗಳತ್ತ ಒಲವು ತೋರುವ ಪ್ರವೃತ್ತಿಯನ್ನು ತೋರಿಸಿದರೂ, 2021 ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಅಧಿಕಾರದಲ್ಲಿರುವ ಸರ್ಕಾರವನ್ನು ಮರು ಆಯ್ಕೆ ಮಾಡಲಾಯಿತು. ಪಿಣರಾಯಿ ವಿಜಯನ್ ನೇತೃತ್ವದ LDF 99 ಸ್ಥಾನಗಳನ್ನು ಗಳಿಸಿತು, ಇದು 2016 ರ ಫಲಿತಾಂಶಕ್ಕಿಂತ ಹೆಚ್ಚಾಗಿದೆ. ಆದರೆ ಯುಡಿಎಫ್ ಗಳಿಸಿದ್ದು ಕೇವಲ 41 ಸ್ಥಾನಗಳು. LDF 45.28% (94,07,662 ಮತಗಳು) ಮತ ಪಾಲನ್ನು ದಾಖಲಿಸಿತು, ಇದು 2016 ರ ವಿಧಾನಸಭಾ ಚುನಾವಣೆಯಲ್ಲಿ 43.35% ರಷ್ಟಿತ್ತು. ಇದಲ್ಲದೆ, ಎಡಪಕ್ಷವು 2019 ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತ 10.73% ಹೆಚ್ಚಿನ ಮತಗಳನ್ನು ಗಳಿಸಿದೆ. ಈ ಅಧಿಕಾರದ ಮುಂದುವರಿಕೆಯಲ್ಲಿ ಹಲವಾರು ಅಂಶಗಳು ಪಾತ್ರವಹಿಸಿವೆ. 2018 ರ ಪ್ರವಾಹ ಮತ್ತು COVID-19 ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಮೂಲಕ LDF ಸರ್ಕಾರವು ರಾಜಕೀಯ ಬಂಡವಾಳವನ್ನು ಗಳಿಸಿತು. ಇದಲ್ಲದೆ, ಕೇರಳ ಕಾಂಗ್ರೆಸ್ನ ಜೋಸ್ ಕೆ. ಮಣಿ ಬಣವನ್ನು ಮತ್ತೆ ತನ್ನ ತೆಕ್ಕೆಗೆ ತರಲು ಸಾಧ್ಯವಾಯಿತು, ಇದು ಕೇಂದ್ರ ಕೇರಳದ ಕ್ರಿಶ್ಚಿಯನ್ ಹೃದಯಭೂಮಿಯ ಮೇಲಿನ UDFನ ದೀರ್ಘ ಹಿಡಿತವನ್ನು ಮುರಿಯಿತು. 2026 - ಯಾರಿಗೆ ಮಣೆ? 2026 ರ ವಿಧಾನಸಭಾ ಚುನಾವಣೆಗಳು ಕೇರಳದ ಚುನಾವಣಾ ಇತಿಹಾಸದಲ್ಲಿ ಒಂದು ನಿರ್ಣಾಯಕ ಘಟ್ಟವಾಗಿದ್ದು, LDF ಐತಿಹಾಸಿಕ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಬಹುದೇ ಅಥವಾ UDF ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ ಎಂಬುದನ್ನು ಇದು ನಿರ್ಧರಿಸುತ್ತದೆ. ಏತನ್ಮಧ್ಯೆ, ಬಿಜೆಪಿ ನೇತೃತ್ವದ NDA ತನ್ನ ಮತ ಪಾಲನ್ನು 12% ಮತ್ತು 15% ರ ನಡುವೆ ಸ್ಥಿರಗೊಳಿಸಿದೆ. 2026 ರಲ್ಲಿ, ಬಿಜೆಪಿ ಈ ಮತಗಳನ್ನು ಸ್ಥಾನಗಳಾಗಿ ಪರಿವರ್ತಿಸುತ್ತಿದ್ದರೆ, LDF ಅಥವಾ UDF ಎರಡೂ ಸ್ವಂತವಾಗಿ 71 ಸ್ಥಾನಗಳನ್ನು ತಲುಪುವ ಸಾಧ್ಯತೆಯಿಲ್ಲ. ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಸಮೀಕ್ಷೆಗಳ ಫಲಿತಾಂಶಗಳು UDF ನಗರ ಪುರಸಭೆಗಳು ಮತ್ತು ನಿಗಮಗಳಲ್ಲಿ ತನ್ನ ಭದ್ರಕೋಟೆಯನ್ನು (ವಿಶೇಷವಾಗಿ ಮಲಬಾರ್ ಪ್ರದೇಶದಲ್ಲಿ) ಮರಳಿ ಪಡೆಯುತ್ತಿದೆ ಎಂದು ಸೂಚಿಸುತ್ತವೆ. 2026 ರಲ್ಲಿ ಪ್ರಮುಖ ಸ್ಪರ್ಧೆ ನಡೆಯುವ ಕ್ಷೇತ್ರಗಳು 2026 ರ ವಿಧಾನಸಭಾ ಚುನಾವಣೆಗಳು ನಿಕಟ ಸ್ಪರ್ಧೆಗೆ ಸಾಕ್ಷಿಯಾಗಲಿದ್ದು, ರಾಜ್ಯಾದ್ಯಂತ ಹಲವಾರು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನಡೆಯಲಿದೆ. ಕೊಟ್ಟಾರಕ್ಕರದಲ್ಲಿ ಹಿರಿಯ ಸಿಪಿಐ(ಎಂ) ನಾಯಕಿ ಆಯಿಷಾ ಪೊಟ್ಟಿ ಕಾಂಗ್ರೆಸ್ಗೆ ಪಕ್ಷಾಂತರಗೊಂಡಿರುವುದು LDFನ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರಿಗೆ ಸವಾಲಾಗಿ ಪರಿಣಮಿಸಿದೆ. ನೇಮಂ ಕ್ಷೇತ್ರವು ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತು ಹಾಲಿ ಶಾಸಕ ಹಾಗೂ ಸಚಿವ ವಿ. ಶಿವನ್ಕುಟ್ಟಿ ನಡುವಿನ ಪೈಪೋಟಿಗೆ ಸಜ್ಜಾಗಿದೆ. ವಟ್ಟಿಯೂರ್ ಕಾವು ತೀವ್ರ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಇಲ್ಲಿ LDFನ ವಿ.ಕೆ. ಪ್ರಶಾಂತ್, ಕಾಂಗ್ರೆಸ್ ನ ಕೆ. ಮುರಳೀಧರನ್ ಮತ್ತು ಎನ್ಡಿಎಯ ಆರ್. ಶ್ರೀಲೇಖಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪಾಲಾದಲ್ಲಿ, LDF ಮಿತ್ರಪಕ್ಷವಾದ ಕೇರಳ ಕಾಂಗ್ರೆಸ್ (ಮಣಿ) ಯ ಜೋಸ್ ಕೆ. ಮಣಿ ಸೋಲಿನಿಂದ ಚೇತರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಮಂಜೇಶ್ವರದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಕೆ.ಕೆ. ಶೈಲಜಾ ಪೆರಾವೂರ್ ನಲ್ಲಿ ಕಣಕ್ಕಿಳಿದಿದ್ದು, ಅವರು ಕಾಂಗ್ರೆಸ್ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ವಿರುದ್ಧ ಸ್ಪರ್ಧಿಸಲಿದ್ದಾರೆ, ಇದು ಅವರ ಸಾರ್ವಜನಿಕ ಬೆಂಬಲವನ್ನು ಪರೀಕ್ಷಿಸುತ್ತಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಪರವೂರಿನಲ್ಲಿ ಒತ್ತಡವನ್ನು ಎದುರಿಸುವ ಸಾಧ್ಯತೆಯಿದೆ. ಅದೇ ವೇಳೆ, ಸಿಪಿಐ(ಎಂ) ನಾಯಕ ಕಡಕಂಪಳ್ಳಿ ಸುರೇಂದ್ರನ್ ಕಝಕ್ಕೂಟಂ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿರುವಂತೆ ತೋರುತ್ತಿದೆ. ಪತ್ತಾನಾಪುರಂನಲ್ಲಿ LDFನ ಕೆ.ಬಿ. ಗಣೇಶ್ ಕುಮಾರ್ ಯುಡಿಎಫ್ಗೆ ಹೆಚ್ಚಿನ ಪೈಪೋಟಿ ನೀಡಲಿದ್ದು, ಬಿಜೆಪಿಯ ಶೋಭಾ ಸುರೇಂದ್ರನ್ ಪಾಲಕ್ಕಾಡ್ ನಲ್ಲಿ ತಮ್ಮ ಪಕ್ಷಕ್ಕೆ ಶಕ್ತಿ ತುಂಬುವ ನಿರೀಕ್ಷೆಯಿದೆ. ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹರಿಪಾಡ್ ನಲ್ಲಿ ತಮ್ಮ ತವರು ಕ್ಷೇತ್ರವನ್ನು ಉಳಿಸಿಕೊಳ್ಳಲು ನೋಡುತ್ತಿದ್ದಾರೆ. ಕೇರಳದಲ್ಲಿ ಬದಲಾವಣೆ ತರಲು ಮುಂದಾದ ಬಿಜೆಪಿ 2016 ರಲ್ಲಿ ಹಿರಿಯ ಬಿಜೆಪಿ ನಾಯಕ ಓ. ರಾಜಗೋಪಾಲ್ ಅವರು ಕೇರಳ ವಿಧಾನಸಭೆಯಲ್ಲಿ ಮೊದಲ ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿಯ ನಿರೀಕ್ಷೆಯನ್ನು ಹೆಚ್ಚಿಸಿದರು. ಆದರೆ 2021ರ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ ಗೆದ್ದಿದ್ದ ನೇಮಂ ಸೀಟು ಸಿಪಿಎಂ ಪಾಲಾಯಿತು. ಯಾವುದೇ ಸೀಟು ಗಳಿಸಲು ಬಿಜೆಪಿಗೆ ಸಾಧ್ಯವಾಗದೇ ಇದ್ದರೂ, ರಾಜ್ಯದಲ್ಲಿ ಪಕ್ಷವು ತನ್ನ ಮತ ಪಾಲನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಚುನಾವಣಾ ಆಯೋಗದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಜೆಪಿಯ ಮತ ಪಾಲು 2016 ರಲ್ಲಿ 10.53% ರಿಂದ 2021 ರಲ್ಲಿ 11.3% ಕ್ಕೆ ಸ್ವಲ್ಪ ಹೆಚ್ಚಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಗೋಪಿ ತ್ರಿಶೂರ್ ಸ್ಥಾನದಿಂದ ಗೆದ್ದಾಗ ಅದು 16.8% ಕ್ಕೆ ತೀವ್ರ ಏರಿಕೆ ಕಂಡಿತು. 2025 ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಮತ ಹಂಚಿಕೆ ಶೇ. 14.76 ಕ್ಕೆ ಇಳಿದಿದೆ. ಆದರೆ ತಿರುವನಂತಪುರಂ ಕಾರ್ಪೊರೇಷನ್, ತ್ರಿಪ್ಪೂಣಿತ್ತುರ ಮತ್ತು ಪಾಲಕ್ಕಾಡ್ ಪುರಸಭೆಗಳು ಸೇರಿದಂತೆ ಪ್ರಮುಖ ಸ್ಥಳೀಯ ಸಂಸ್ಥೆಗಳು ಬಿಜೆಪಿಗೆ ಹೋಯಿತು. ಈ ಅವಧಿಯಲ್ಲಿ, ಬಿಜೆಪಿ ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 40 ಸ್ಥಾನಗಳ ಮೇಲೆ ಗಮನಹರಿಸಿದೆ. ಇವುಗಳಲ್ಲಿ ನೇಮಂ, ಪಾಲಕ್ಕಾಡ್, ಮಂಜೇಶ್ವರ, ಕಝಕ್ಕೂಟಂ ಮತ್ತು ತ್ರಿಶೂರ್ನಂತಹ ಸ್ಥಾನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಕ್ಷೇತ್ರಗಳ ಹೊರತಾಗಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಕಾಸರಗೋಡು, ಮಲಂಪುಳ, ಆಟ್ಟಿಂಗಲ್ ಮತ್ತು ಚಾತ್ತನ್ನೂರ್ನಲ್ಲಿ ಪಕ್ಷವು ಪ್ರಬಲ ಶಕ್ತಿಯಾಗಿ ಕಂಡುಬರುತ್ತದೆ. ನೇಮಂ ತಿರುವನಂತಪುರಂ ಜಿಲ್ಲೆಯ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಘೋಷಿಸಿದ ಮೊದಲ ಅಭ್ಯರ್ಥಿಗಳಲ್ಲಿ ಅದರ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಕೂಡ ಒಬ್ಬರು. ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಈ ಸ್ಥಾನವನ್ನು ಗೆಲ್ಲುವ ಹೆಚ್ಚಿನ ಅವಕಾಶವನ್ನು ಹೊಂದಿದೆ. ರಾಜೀವ್ ಅವರು ಸಿಪಿಐ(ಎಂ)ನ ಹಾಲಿ ಶಾಸಕ ವಿ. ಶಿವನ್ಕುಟ್ಟಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 2021 ರಲ್ಲಿ ವಿ. ಶಿವನ್ಕುಟ್ಟಿ ನೇಮಂ ಸೀಟು ಗೆದ್ದಾಗ ಕೇರಳದಲ್ಲಿ ಗಳಿಸಿದ್ದ ಏಕೈಕ ಖಾತೆಯನ್ನು ಬಿಜೆಪಿ ಕಳೆದುಕೊಂಡಿತ್ತು. ಕಾಂಗ್ರೆಸ್ ತನ್ನ ಮಾಜಿ ಶಾಸಕ ಕೆ.ಎಸ್. ಶಬರಿನಾಥನ್ ಅವರನ್ನು ಇಲ್ಲಿ ಕಣಕ್ಕಿಳಿಸಿದೆ. ಈ ಬಾರಿ ನೇಮಂನಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ ನಡೆಯಲಿದೆ. 2021 ರಲ್ಲಿ 3,949 ಮತಗಳ ಅಲ್ಪ ಅಂತರದಿಂದ ಗೆದ್ದ ಸಿಪಿಐ(ಎಂ), ಬಿಜೆಪಿಯ ತೀವ್ರ ಪ್ರಚಾರದ ಬಿಸಿಯನ್ನು ಅನುಭವಿಸುತ್ತಿದೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಿಪಿಐ(ಎಂ) ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ನಂತರ ಈ ಬಾರಿಯೂ ನೇಮಂನಲ್ಲಿ ‘ಒಳ ಒಪ್ಪಂದ’ ಸುದ್ದಿಯಲ್ಲಿದೆ. ಶಿವನ್ಕುಟ್ಟಿಗೆ ಬೆಂಬಲ ಘೋಷಿಸಿದ SDPI, ಸಿಪಿಐ(ಎಂ) ಸ್ಥಳೀಯ ನಾಯಕತ್ವವು ತಮ್ಮ ಬೆಂಬಲವನ್ನು ಕೋರಿದೆ ಎಂದು ಹೇಳಿಕೊಂಡಿದೆ. ಪಾಲಕ್ಕಾಡ್ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ಇಲ್ಲಿ ಕಣಕ್ಕಿಳಿದಿದ್ದಾರೆ. 2016 ರಲ್ಲಿ ಪಾಲಕ್ಕಾಡ್ ನಲ್ಲಿ ಸಿಪಿಐ(ಎಂ) ಅನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಶೋಭಾ; ಅಲ್ಲಿ ಅವರು ಎರಡನೇ ಸ್ಥಾನ ಪಡೆದರು. ಅಂದಿನಿಂದ, ಸ್ಪರ್ಧೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದೆ. ಲೈಂಗಿಕ ಕಿರುಕುಳ ಪ್ರಕರಣಗಳ ಸರಣಿಯಿಂದಾಗಿ ಪಕ್ಷದಿಂದ ವಜಾಗೊಳಿಸಲಾದ ತನ್ನ ಮಾಜಿ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರ ಮೇಲಿನ ‘ಆರೋಪ’ದ ಭಾರದೊಂದಿಗೆ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ. ಪಕ್ಷವು ಕಾಂಗ್ರೆಸ್ನ ದೀರ್ಘಕಾಲದ ಬೆಂಬಲಿಗ ನಟ-ನಿರ್ದೇಶಕ ರಮೇಶ್ ಪಿಶಾರಡಿ ಅವರನ್ನು ಕಣಕ್ಕಿಳಿಸಿದೆ. ಮತ್ತೊಂದೆಡೆ, ಎಡಪಂಥೀಯರು ಉದ್ಯಮಿ ಎನ್.ಎಂ.ಆರ್. ರಝಾಕ್ ಅವರನ್ನು ಕರೆತಂದಿದ್ದಾರೆ. ಪಾಲಕ್ಕಾಡ್, ಆಲಪ್ಪುಳ ಅಥವಾ ಕಝಕ್ಕೂಟಂ ಆಗಿರಲಿ, ಅವರು ಸ್ಪರ್ಧಿಸಿದಲ್ಲೆಲ್ಲಾ ಬಿಜೆಪಿಯ ಮತ ಪಾಲನ್ನು ನಿರಂತರವಾಗಿ ಹೆಚ್ಚಿಸಿಕೊಂಡಿರುವುದರಿಂದ ಶೋಭಾ ಅವರ ಗೆಲುವಿನ ವಿಶ್ವಾಸ ಮೂಡಿದೆ. ಈಳವ ಸಮುದಾಯದ ಕೆಲವು ವಿಭಾಗಗಳಿಂದ ಅವರು ಗಮನಾರ್ಹ ಬೆಂಬಲವನ್ನು ಕ್ರೋಢೀಕರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಬೆಂಬಲ ಪಾಲಕ್ಕಾಡ್ ಗೂ ಮುಂದುವರಿಯುವ ಸಾಧ್ಯತೆಯಿದೆ. ಕಝಕ್ಕೂಟಂ ಬಿಜೆಪಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವ ಮತ್ತೊಂದು ಪ್ರಮುಖ ಸ್ಥಾನ ಕಝಕ್ಕೂಟಂ. ಇಲ್ಲಿ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರು ಮಾಜಿ ದೇವಸ್ವಂ ಸಚಿವ ಹಾಗೂ ಸಿಪಿಐ(ಎಂ)ನ ಹಾಲಿ ಶಾಸಕ ಕಡಕಂಪಳ್ಳಿ ಸುರೇಂದ್ರನ್ ಅವರಿಗೆ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ. ಟಿ. ಶರತ್ ಚಂದ್ರ ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ. UDF ಮತ್ತು NDA ಎರಡೂ ತಮ್ಮ ಪ್ರಚಾರದಲ್ಲಿ ಎತ್ತಿ ತೋರಿಸಿರುವ ವಿಷಯವಾದ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣವು ಇಲ್ಲಿ ಪ್ರಮುಖ ಚರ್ಚಾ ವಿಷಯವಾಗಿದೆ. ಮಾತೃಭೂಮಿ ನ್ಯೂಸ್ ನಡೆಸಿದ ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ಸಿಪಿಐ(ಎಂ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ಜೋರಾಗಲಿದ್ದು, ಬಿಜೆಪಿ ಸ್ವಲ್ಪ ಮುನ್ನಡೆಯನ್ನು ತೋರಿಸಿದೆ. ಮಂಜೇಶ್ವರ ಮಂಜೇಶ್ವರದಲ್ಲಿನ ಚುನಾವಣಾ ಚಿತ್ರಣವು ಕೇರಳದ ಉಳಿದ ಭಾಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇಲ್ಲಿ, ಎಕೆಎಂ ಅಶ್ರಫ್ ಪ್ರತಿನಿಧಿಸುವ UDF ಘಟಕ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಕೆ. ಸುರೇಂದ್ರನ್ ಪ್ರತಿನಿಧಿಸುವ ಬಿಜೆಪಿ ನಡುವೆ ಪೈಪೋಟಿ ಇದೆ. ಕರ್ನಾಟಕದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಮಂಜೇಶ್ವರದಲ್ಲಿ 2016 ರಿಂದ ತೀವ್ರ ಪೈಪೋಟಿ ನಡೆಯುತ್ತಿದೆ. ಆ ವರ್ಷ, ಬಿಜೆಪಿಯ ಆಗಿನ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ IUML ಅಭ್ಯರ್ಥಿ ಪಿ.ಬಿ. ಅಬ್ದುಲ್ ರಝಾಕ್ ವಿರುದ್ಧ ಕೇವಲ 89 ಮತಗಳ ಅಂತರದಿಂದ ಸೋತರು. ಕೆ. ಸುರೇಂದ್ರನ್ ಅವರ ಹೆಸರನ್ನು ಹೋಲುವ BSP ಅಭ್ಯರ್ಥಿ ಕೆ. ಸುಂದರ ಅವರು 467 ಮತಗಳನ್ನು ಗಳಿಸುವ ಮೂಲಕ ಇಲ್ಲಿನ ಬಿಜೆಪಿ ಲೆಕ್ಕಾಚಾರಗಳನ್ನು ತಪ್ಪಿಸಿದರು ಎನ್ನಲಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುರೇಂದ್ರನ್ ಮತ್ತೊಮ್ಮೆ ಸೋತರು. ಆಗ ಅಂತರ ಕೇವಲ 745 ಮತಗಳಷ್ಟಿತ್ತು. ಹಾಲಿ ಶಾಸಕ ಎಕೆಎಂ ಅಶ್ರಫ್ ಅವರು 2021 ರ ತಮ್ಮ ಗೆಲುವನ್ನು ಪುನರಾವರ್ತಿಸುವ ವಿಶ್ವಾಸ ಹೊಂದಿದ್ದಾರೆ. ಸಿಪಿಐ(ಎಂ) ತನ್ನ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಅವರನ್ನು ಕಣಕ್ಕಿಳಿಸಿದೆ. ತ್ರಿಶೂರ್ 2016 ರಲ್ಲಿ ಸಿಪಿಐನ ವಿ.ಎಸ್. ಸುನಿಲ್ ಕುಮಾರ್ ತ್ರಿಶೂರ್ ಸ್ಥಾನವನ್ನು 42.19% ಮತಗಳೊಂದಿಗೆ ಗೆದ್ದರು. ಆಗ ಯುಡಿಎಫ್ ಪರವಾಗಿ ಸ್ಪರ್ಧಿಸಿದ್ದ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ 36.7% ಮತಗಳನ್ನು ಗಳಿಸಿದರು. 2021 ರಲ್ಲಿ ಸಿಪಿಐನ ಪಿ. ಬಾಲಚಂದ್ರನ್ ಕೇವಲ 946 ಮತಗಳ ಅಲ್ಪ ಅಂತರದಿಂದ ಈ ಸ್ಥಾನವನ್ನು ಗೆದ್ದಿದ್ದು, ಪದ್ಮಜಾ ಎರಡನೇ ಸ್ಥಾನ ಪಡೆದರು. ಈ ಬಾರಿ ಪದ್ಮಜಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 2024 ರಲ್ಲಿ ಬಿಜೆಪಿಯ ಸುರೇಶ್ ಗೋಪಿ ತ್ರಿಶೂರ್ ಲೋಕಸಭಾ ಸ್ಥಾನವನ್ನು ಗೆದ್ದಿದ್ದಾರೆ ಎಂಬ ಒಂದೇ ಒಂದು ಭರವಸೆಯಿಂದ ಪದ್ಮಜಾ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ತ್ರಿಶೂರ್ನ ಮಾಜಿ ಮೇಯರ್ ರಾಜನ್ ಜೆ. ಪಲ್ಲನ್, ಸಿಪಿಐ ಪಕ್ಷದ ಕವಿ ಮತ್ತು ಬರಹಗಾರ ಅಲಂಕೋಡ್ ಲೀಲಾಕೃಷ್ಣನ್ ಅವರು ಕಣದಲ್ಲಿದ್ದಾರೆ.
ವಿಜಯನಗರ | ಅಪಘಾತದಲ್ಲಿ ಅರಣ್ಯ ಇಲಾಖೆಯ ಇಬ್ಬರು ಕಾವಲುಗಾರರು ಮೃತ್ಯು ಪ್ರಕರಣ : ಪರಿಹಾರಕ್ಕೆ ಒತ್ತಾಯ
ಉದ್ಯೋಗ ಭರವಸೆ ನೀಡಿದ ಅರಣ್ಯ ಇಲಾಖೆ
ಉಪಚುನಾವಣೆಯ ನಂತರ ಪಿಯುಸಿ ಫಲಿತಾಂಶ ಪ್ರಕಟ ಸಾಧ್ಯತೆ
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಮುಗಿದಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಉಪಚುನಾವಣೆಯ ಮತದಾನದ (ಎ.9) ನಂತರ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಫೆ.28 ರಿಂದ ಮಾ.17ರವರೆಗೆ ನಡೆದಿದ್ದ ಪಿಯು ಪರೀಕ್ಷೆಗೆ ರಾಜ್ಯಾದ್ಯಂತ 7,10, 363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಮೊದಲು ಎ.7 ರಂದು ಫಲಿತಾಂಶ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಹೀಗಾಗಿ ಫಲಿತಾಂಶ ಪ್ರಕಟಿಸಲು ಮಂಡಳಿಯು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಫಲಿತಾಂಶ ಈ ಮೊದಲು ನಿಗದಿಯಾಗಿದ್ದಂತೆ ಎ.7 ರಂದು ಪ್ರಕಟವಾಗುತ್ತಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಮೂಲಗಳು ತಿಳಿಸಿವೆ. ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪ ಚುನಾವಣೆಯ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಉಪಸ್ಥಿತಿಯಲ್ಲಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗ ಈವರೆಗೆ ಒಪ್ಪಿಗೆ ನೀಡದಿರುವುದರಿಂದ ಫಲಿತಾಂಶ ಪ್ರಕಟ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸಲು ಅನುಮತಿ ನೀಡುವಂತೆ ಪರೀಕ್ಷಾ ಮಂಡಳಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಆಯೋಗವು ಇಲ್ಲಿಯವರೆಗೂ ಫಲಿತಾಂಶದ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆಯೋಗ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ ಬಳಿಕವಷ್ಟೇ ಫಲಿತಾಂಶ ಪ್ರಕಟಣೆಯ ದಿನಾಂಕದ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ
ರಾಜ್ಯದ ವಿಜಯಪುರ ಹಾಗೂ ಚಿಕ್ಕಬಳ್ಳಾಪುರದ 2 ಪ್ರತಿಷ್ಠಿತ ಆಸ್ಪತ್ರೆಗಳಿಗೆ ರೆಫರಲ್ನಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆ ಹಾಗೂ ವಿಜಯಪುರದ ಬಿಎಂ ಪಾಟೀಲ್ ವೈದ್ಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧಿಧನಾ ಕೇಂದ್ರಕ್ಕೆ ಎಬಿಎಆರ್ಕೆಯಡಿ ರೆಫರಲ್ ಇಲ್ಲದೆ ಚಿಕಿತ್ಸೆ ನೀಡಲು ಸೂಚನೆ ನೀಡಿದೆ.
Kalaburagi | ಎಸ್ಐಆರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸುವಂತೆ ವೆಲ್ಫೇರ್ ಪಾರ್ಟಿ ಆಗ್ರಹ
ಕಲಬುರಗಿ : ಎಪ್ರಿಲ್–ಮೇ 2026ರಲ್ಲಿ ಕರ್ನಾಟಕದಲ್ಲಿ ಜಾರಿಗೊಳಿಸಲಾಗುತ್ತಿರುವ ಮತದಾರರ ವಿಶೇಷ ತೀವ್ರ ಪರಿಶೀಲನೆ (SIR) ಪ್ರಕ್ರಿಯೆಯನ್ನು ಕಾನೂನುಬದ್ಧ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿಯ ಕಲಬುರಗಿ ಜಿಲ್ಲಾ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜಾರಿಗೊಂಡ ಎಸ್ಐಆರ್ ಪ್ರಕ್ರಿಯೆಯಲ್ಲಿ ಕಂಡುಬಂದ ಅನಿಯಮಿತತೆಗಳು ಹಾಗೂ ಪ್ರಕ್ರಿಯಾತ್ಮಕ ವೈಫಲ್ಯಗಳನ್ನು ಉಲ್ಲೇಖಿಸಲಾಗಿದೆ. ಅಸಂಗತ ದಾಖಲೆಗಳ ಅವಶ್ಯಕತೆಯಿಂದ ಅನೇಕ ನೈಜ ಮತದಾರರು ತೊಂದರೆ ಅನುಭವಿಸಿದ್ದು, ಕೆಲವರು ಮತದಾನದ ಹಕ್ಕಿನಿಂದ ವಂಚಿತರಾಗಿರುವುದು ಗಂಭೀರ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಬಾಕಿಯಿರುವುದರಿಂದ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಜಾರಿಗೊಳಿಸುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿಯೊಂದು ಮನೆಗೂ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಕನಿಷ್ಠ ಮೂರು ಬಾರಿ ಭೇಟಿ ನೀಡಬೇಕು. ವಾಸಸ್ಥಳ ಬದಲಾಯಿಸಿರುವ ಮತದಾರರ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ, ನೈಜ ಮತದಾರರನ್ನು ತಪ್ಪಾಗಿ “ಕಾಣೆಯಾದ ಮತದಾರರು” ಎಂದು ವರ್ಗೀಕರಿಸುವುದನ್ನು ತಪ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ನಮೂನೆ–7 ಅರ್ಜಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ವೀಕರಿಸಬೇಕು. ಅವುಗಳ ಬಗ್ಗೆ ಕಠಿಣ ಪರಿಶೀಲನೆ ನಡೆಸಬೇಕು. ಹಳೆಯ ಪಟ್ಟಿಗಳಲ್ಲಿರುವ ಹೆಸರು ಅಥವಾ ಪಿತೃನಾಮದ ದೋಷಗಳಿಗೆ ಮತದಾರರನ್ನು ಹೊಣೆಗಾರರನ್ನಾಗಿಸಬಾರದು ಹಾಗೂ “ತಾರ್ಕಿಕ ವೈಷಮ್ಯ” ಎಂಬ ನೆಪದಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಜಿಲ್ಲಾ ಅಧ್ಯಕ್ಷ ಸಲೀಮ್ ಚಿತ್ತಾಪುರಿ, ರಾಜ್ಯ ಕಾರ್ಯದರ್ಶಿ ಮುಬೀನ್ ಅಹಮದ್, ನಾಸಿರುದ್ದೀನ್, ರಿಜ್ವಾನ್ ಸಿದ್ದಿಕಿ, ಸಾದಿಕ್ ಪಟೇಲ್, ಹೈದರ್ ಅಲಿ ಬಗ್ಬನ್, ಮೌಲಾನಾ ಅಬ್ದುಲ್ ಹಮೀದ್ ಬಕ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Yadgiri | ಬಯಲು ಗ್ರಂಥಾಲಯ ಲೋಕಾರ್ಪಣೆ: ಓದುವ ಅಭ್ಯಾಸ ಬೆಳೆಸಿಕೊಳ್ಳಲು ಮರೆಪ್ಪ ಚಟ್ಟೇರಕರ್ ಕರೆ
ಯಾದಗಿರಿ: ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಓದುವ ಮೂಲಕ ಪ್ರಸ್ತುತ ವಿದ್ಯಮಾನಗಳ ಅರಿವು ಹೆಚ್ಚುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಂಚಾಲಕ ಮರೆಪ್ಪ ಚಟ್ಟೇರಕರ್ ಹೇಳಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಬಯಲು ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಓದಿನ ಮೂಲಕ ಸಮಾಜ, ರಾಜಕೀಯ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಸ್ಪಷ್ಟ ಅರಿವು ಪಡೆಯಬಹುದು ಎಂದು ತಿಳಿಸಿದರು. ಪುಸ್ತಕಗಳು ಮತ್ತು ಪತ್ರಿಕೆಗಳ ಓದಿನಿಂದ ವ್ಯಕ್ತಿಯ ಜ್ಞಾನ ವಿಸ್ತಾರವಾಗುತ್ತದೆ. ಇಂದಿನ ಜಗತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಲು ಓದಿನ ಮಹತ್ವ ಅಪಾರವಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಓದುವ ಸಂಸ್ಕೃತಿ ಕುಂಠಿತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಬಯಲು ಗ್ರಂಥಾಲಯಗಳ ಸ್ಥಾಪನೆ ಜ್ಞಾನ ವೃದ್ಧಿಗೆ ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡರಾದ ಗೋಪಾಲ ತೆಳಗೇರಿ, ಸೈದಪ್ಪ ಕೂಲೂರ್, ಭೀಮರಾಯ ಹೊಸ್ಮನಿ, ಪರಶುರಾಮ ಒಡೆಯರ್, ನಿಂಗಪ್ಪ ಬೀರನಾಳ, ಮಂಜುನಾಥ ಗುರುಸಣಗಿ, ಶ್ರೀಕಾಂತ್ ಸುಂಗಲಕರ್, ಹಣಮಂತ ಮೀಲ್ಟ್ರೀ, ಭೀಮರಾಯ ಸುಂಗಲಕರ್ (ಡ್ಯಾನಿ), ವಸಂತ ಸುಂಗಲಕರ್, ಮರಿಲಿಂಗ ಕುರಕುಂಬಳಕರ್, ಮಲ್ಲಿಕಾರ್ಜುನ ಒಡೆಯರ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ನಗರದ ಯುವಕರು ಉಪಸ್ಥಿತರಿದ್ದರು.
ತಾತ್ಕಾಲಿಕ ಕದನವಿರಾಮ ತಿರಸ್ಕರಿಸಿದ ಇರಾನ್: 45 ದಿನಗಳ ಕದನ ವಿರಾಮ ಪ್ರಸ್ತಾವನೆ ಮುಂದಿಟ್ಟ ಅಮೆರಿಕ
ದುಬೈ, ಎ. 6: ಹಾರ್ಮುಝ್ ಜಲಸಂಧಿಯನ್ನು ತೆರೆಯಲು ಅಮೆರಿಕ ನೀಡಿರುವ ಗಡುವು ಮುಕ್ತಾಯಗೊಳ್ಳಲು ಒಂದು ದಿನ ಬಾಕಿಯಿರುವಂತೆಯೇ, ಅಮೆರಿಕ ಮತ್ತು ಇರಾನ್ ಸೋಮವಾರ ತಮ್ಮ ಐದು ವಾರಗಳ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವ ಒಪ್ಪಂದದ ರೂಪುರೇಷೆಗಳನ್ನು ಪರಿಶೀಲಿಸಿವೆ. ಆದರೆ, ಜಲಸಂಧಿಯನ್ನು ಕ್ಷಿಪ್ರವಾಗಿ ತೆರೆಯಬೇಕೆಂಬ ಅಮೆರಿಕದ ಒತ್ತಡಕ್ಕೆ ಮಣಿಯಲು ಇರಾನ್ ನಿರಾಕರಿಸಿದೆ. ಯುದ್ಧವನ್ನು ಕೊನೆಗೊಳಿಸುವ ಕುರಿತ ಅಮೆರಿಕದ ಪ್ರಸ್ತಾವನೆಗೆ ಸಂಬಂಧಿಸಿ ತನ್ನ 10 ಅಂಶಗಳ ಉತ್ತರವನ್ನು ಪಾಕಿಸ್ತಾನದ ಮೂಲಕ ವಾಶಿಂಗ್ಟನ್ಗೆ ಕಳುಹಿಸಿರುವುದಾಗಿ ಇರಾನ್ ತಿಳಿಸಿದೆ. ಈ ಉತ್ತರದಲ್ಲಿ ಇರಾನ್ ತಾತ್ಕಾಲಿಕ ಕದನವಿರಾಮವೇರ್ಪಡುವುದನ್ನು ತಳ್ಳಿಹಾಕಿದೆ ಮತ್ತು ತನ್ನದೇ ನಿಬಂಧನೆಗಳಿಗೆ ಅನುಗುಣವಾಗಿ ಯುದ್ಧ ಕೊನೆಗೊಳ್ಳಬೇಕೆಂದು ಶರತ್ತು ಹಾಕಿದೆ. ಅಮೆರಿಕ ಹಾಗೂ ಇರಾನ್ ನಡುವೆ 45 ದಿನಗಳ ಕದನವಿರಾಮವನ್ನು ಏರ್ಪಡಿಸುವ ಕರಡು ಪ್ರಸ್ತಾವನೆಯನ್ನು ರಚಿಸಲಾಗಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅದಕ್ಕೆ ಇನ್ನಷ್ಟೇ ಅನುಮೋದನೆ ನೀಡಬೇಕಾಗಿದೆ. ಅಲ್ಲಿಯವರೆಗೆ ಇರಾನ್ ವಿರುದ್ಧ ಸೇನಾಕ್ರಮಣ ‘ಅಪರೇಶನ್ ಎಪಿಕ್ ಫ್ಯೂರಿ’ ಮುಂದುವರಿಯಲಿದೆ ಎಂದು ಶ್ವೇತಭವನ ತಿಳಿಸಿದೆ. ಇರಾನ್ ಜೊತೆ ಕದನ ವಿರಾಮವನ್ನು ಏರ್ಪಡಿಸುವ ಪ್ರಸ್ತಾವದ ಕುರಿತು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಶ್ವೇತಭವನದ ಅಧಿಕಾರಿಯೊಬ್ಬರು ಹೀಗೆ ಉತ್ತರಿಸಿದ್ದಾರೆ. ಇಂಧನ ಹೊತ್ತ ಹಡಗುಗಳು ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಲು ಅವಕಾಶ ನೀಡುವ ಒಪ್ಪಂದಕ್ಕೆ ಮಂಗಳವಾರ ಸಂಜೆಯ ಒಳಗೆ ಇರಾನ್ ಸಹಿ ಹಾಕದಿದ್ದರೆ ಟೆಹ್ರಾನ್ಗೆ ‘‘ನರಕ ದರ್ಶನ’’ ಮಾಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ರವಿವಾರ ರಾತ್ರಿ ನಿರಂತರ ಮಾತುಕತೆಗಳ ಮೂಲಕ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ರೂಪುಗೊಂಡಿದೆ. ಈ ಒಪ್ಪಂದವು ತಕ್ಷಣ ಯುದ್ಧವಿರಾಮ ಜಾರಿಗೆ ಬರಬೇಕೆಂಬ ಪ್ರಸ್ತಾವವನ್ನು ಹೊಂದಿದೆ. ಯುದ್ಧವಿರಾಮದ ಬಳಿಕ, ಶಾಂತಿ ಒಪ್ಪಂದವೊಂದರ ಬಗ್ಗೆ ಮಾತುಕತೆಗಳು ನಡೆಯಬೇಕು ಹಾಗೂ ಈ ಮಾತುಕತೆಗಳು ಮುಂದಿನ 15- 20 ದಿನಗಳಲ್ಲಿ ಕೊನೆಗೊಳ್ಳಬೇಕು ಎಂಬುದಾಗಿಯೂ ಹಾಲಿ ಕರಡು ಒಪ್ಪಂದ ಹೇಳುತ್ತದೆ ಎಂದು ಮೂಲವೊಂದು ತಿಳಿಸಿದೆ ಎಂದು ‘ರಾಯ್ಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಶಲ್ ಅಸೀಮ್ ಮುನೀರ್ ರಾತ್ರಿಯಿಡೀ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್, ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್ ವಿದೇಶ ಸಚಿವ ಅಬ್ಬಾಸ್ ಅರಾಕ್ಚಿ ಜೊತೆ ಸಂಪರ್ಕದಲ್ಲಿದ್ದರು ಎಂದು ಮೂಲ ಹೇಳಿದೆ. ಹಾರ್ಮುಝ್ ಜಲಸಂಧಿಯನ್ನು ಮಂಗಳವಾರದ ಒಳಗೆ ತೆರೆಯುವ ಒಪ್ಪಂದವೊಂದಕ್ಕೆ ಇರಾನ್ ಸಹಿ ಹಾಕದಿದ್ದರೆ ಆ ದೇಶದ ಇಂಧನ ಮತ್ತು ಸಾರಿಗೆ ಮೂಲಸೌಕರ್ಯಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗುವುದು ಎಂಬುದಾಗಿ ‘ಟ್ರುತ್ ಸೋಶಿಯಲ್’ನಲ್ಲಿ ರವಿವಾರ ಹಾಕಿದ ಸಂದೇಶವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ತಡ ರವಿವಾರ ಹಾಕಿದ ಇನ್ನೊಂದು ಸಂದೇಶದಲ್ಲಿ ಟ್ರಂಪ್ ನಿಖರವಾದ ಗಡುವು ನೀಡಿದ್ದರು- ‘‘ಮಂಗಳವಾರ ರಾತ್ರಿ 8 ಗಂಟೆ ಈಸ್ಟರ್ನ್ ಟೈಮ್! (ಬುಧವಾರ 0000 ಜಿಎಮ್ಟಿ)- (ಭಾರತೀಯ ಕಾಲಮಾನ ಬುಧವಾರ ಮುಂಜಾನೆ 5:30)’’. ಇರಾನ್ ಹಿತಾಸಕ್ತಿಗೆ ಪೂರಕವಾದ ಶರತ್ತುಗಳು: ವಿದೇಶಾಂಗ ಸಚಿವಾಲಯ ಯುದ್ಧವಿರಾಮ ಒಪ್ಪಂದದ ಬಗ್ಗೆ ಇರಾನ್ ತನ್ನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ನಿಲುವುಗಳನ್ನು ಸಿದ್ಧಪಡಿಸಿದೆ ಹಾಗೂ ಅವುಗಳನ್ನು ಮಧ್ಯವರ್ತಿಗಳ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ಒಪ್ಪಂದಕ್ಕಾಗಿ ತಾನು ಸಿದ್ಧಪಡಿಸಿರುವ ಷರತ್ತುಗಳ ವಿವರಗಳನ್ನು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು ಎಂದು ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಾಗೇಯಿ ತಿಳಿಸಿದರು. ಆದರೆ, ತಾನು ಕಳುಹಿಸಿರುವ ಯುದ್ಧವಿರಾಮ ಅಂಶಗಳಿಗೂ, ಗಡುವುಗಳು ಮತ್ತು ಯುದ್ಧಾಪರಾಧಗಳನ್ನು ನಡೆಸುವ ಬೆದರಿಕೆಗಳಿಗೂ ಸಂಬಂಧವಿಲ್ಲ’’ ಎಂದು ಅವರು ನುಡಿದರು. ‘‘ನ್ಯಾಯಸಮ್ಮತ ಎಂಬುದಾಗಿ ತಾನು ಭಾವಿಸುವ ಬೇಡಿಕೆಗಳನ್ನು ಸ್ಪಷ್ಟವಾಗಿ ಮುಂದಿಡಲು ಇರಾನ್ ಹಿಂಜರಿಯುವುದಿಲ್ಲ ಹಾಗೂ ಹಾಗೆ ಮಾಡುವುದನ್ನು ರಾಜಿಯ ಲಕ್ಷಣ ಎಂಬುದಾಗಿ ವ್ಯಾಖ್ಯಾನಿಸಬಾರದು. ಬದಲಾಗಿ, ತನ್ನ ನಿಲುವುಗಳ ಬಗ್ಗೆ ಅದು ಹೊಂದಿರುವ ಆತ್ಮವಿಶ್ವಾಸದ ಅಭಿವ್ಯಕ್ತಿ ಅದು ಎಂಬುದಾಗಿ ಭಾವಿಸಬೇಕು’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ವಕ್ತಾರರು ತಿಳಿಸಿದರು. 15 ಅಂಶಗಳ ಯೋಜನೆ ಮುಂತಾದ ಅಮೆರಿಕದ ಮೊದಲಿನ ಬೇಡಿಕೆಗಳನ್ನು ತಿರಿಸ್ಕರಿಸಲಾಗಿದೆ ಎಂದು ಅವರು ಹೇಳಿದರು.
Raichur | ಸಿಎಚ್ ಪೌಡರ್ ಮಿಶ್ರಿತ ಶೇಂದಿ ಮಾರಾಟ: ಆರೋಪಿ ಬಂಧನ
ರಾಯಚೂರು: ಸಿ.ಎಚ್ ಪೌಡರ್ ಮಿಶ್ರಿತ ಶೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಎ.5 ರಂದು ಬೆಳಿಗ್ಗೆ 8 ಗಂಟೆಗೆ ಗದ್ವಾಲ್ ರಸ್ತೆಯ ಎ. ಪಾಪರೆಡ್ಡಿ ಮಿಲ್ ಸಮೀಪ ಪೆಟ್ರೋಲಿಂಗ್ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕೆಂಚಪ್ಪ (40) ಎಂಬ ನವಾಬಗಡ್ಡ ನಿವಾಸಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಸಿ.ಎಚ್ ಪೌಡರ್ ಮಿಶ್ರಿತ ಶೇಂದಿಯನ್ನು ಮಾರಾಟ ಮಾಡುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 30/2026 ಅಡಿ ಬಿ.ಎನ್.ಎಸ್-2023ರ 275, 286, 123 ಹಾಗೂ ಕೆ.ಇ ಕಾಯ್ದೆಯ 32, 34ರಡಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Sirwar | ಡಾ.ಬಾಬು ಜಗಜೀವನ ರಾಮ್ರವರ 119ನೇ ಜಯಂತಿ ಆಚರಣೆ
ಸಮಸಮಾಜ ನಿರ್ಮಾಣದಲ್ಲಿ ಬಾಬೂಜಿ ಅವರ ಕೊಡುಗೆ ಅನನ್ಯ : ಅಬ್ರಹಾಂ ಹೊನ್ನಟಿಗಿ
ಮಾದಕ ವಸ್ತು ಸೇವನೆ ಆರೋಪ: ಯುವಕ ಸೆರೆ
ಮಂಗಳೂರು, ಎ.6: ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇಲೆ ಯುವಕನ ವಿರುದ್ದ ಕಾವೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಕುಂಟಿಕಾನದಲ್ಲಿರುವ ಬಾರ್ವೊಂದರ ಬಳಿ ಶನಿವಾರ ರಾತ್ರಿ 9ಕ್ಕೆ ಕಾಪಿಗುಡ್ಡೆಯ ವೇಣುಗೋಪಾಲ (21) ಎಂಬಾತ ಮಾದಕ ವಸ್ತು ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ವಿಚಾರಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ : ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ
ಬೆಳ್ತಂಗಡಿ : ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಕಾಂತಾರ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಡಿವೈನ್ಸ್ಟಾರ್ ರಿಷಬ್ ಶೆಟ್ಟಿ, ದಂಪತಿ ಸಮೇತ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್, ಆರ್ಯಮನ್ ಹಾಗೂ ಕಿಯಾಂಶ್ ಉಪಸ್ಥಿತರಿದ್ದರು. ನಂತರ ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬಸ್ಥರಿಂದ ರಂಗಪೂಜೆ ಸೇವೆ ನೆರವೇರಿತು.
Bidar | ಕಲಾವಿದರನ್ನು ಸಲಹುವ ಹಾರಕೂಡ ಶ್ರೀಮಠ : ಸಿದ್ದಬಸವ ಕಬೀರ ಸ್ವಾಮಿ
ಬೀದರ್ : ಕವಿ, ಕಲಾವಿದ ಮತ್ತು ಸಾಹಿತಿಗಳಿಗೆ ಸೂಕ್ತ ಹಾಗೂ ಶ್ರೇಷ್ಠ ಅವಕಾಶಗಳನ್ನು ಕಲ್ಪಿಸುವ ಮೂಲಕ ಹಾರಕೂಡ ಶ್ರೀಮಠವು ವಿಶಿಷ್ಟ ಸೇವೆ ಸಲ್ಲಿಸುತ್ತಿದೆ ಎಂದು ಸಿದ್ದಬಸವ ಕಬೀರ ಸ್ವಾಮಿಗಳು ಹೇಳಿದರು. ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಸೋಮವಾರ ಬೆಳಗ್ಗೆ ನಡೆದ ಧಾರ್ಮಿಕ ಸಭೆಗೆ ನೇತೃತ್ವ ವಹಿಸಿ ಅವರು ಮಾತನಾಡಿದರು. ಹಾರಕೂಡ ಮಠವು ಅಭಿನವ ಅನುಭವ ಮಂಟಪದಂತಿದ್ದು, ಇಲ್ಲಿ ಎಲ್ಲಾ ಜಾತಿ–ಧರ್ಮಗಳ ಜನರು ಒಂದಾಗಿ ಬೆರೆತು ಸೌಹಾರ್ದದಿಂದ ಜೀವನ ನಡೆಸುವ ಮೌಲ್ಯಗಳು ಬೆಳೆಯುತ್ತಿವೆ. ಸರ್ವಧರ್ಮ ಸಮನ್ವಯದ ಸುಂದರ ತಾಣವಾಗಿ ಮಠವು ಬೆಳೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಡಾ. ಚನ್ನವೀರ ಶಿವಾಚಾರ್ಯರು ಬಸವಣ್ಣ ಹಾಗೂ ಬಸವಾದಿ ಶರಣರ ಚಿಂತನೆಗಳನ್ನು ಅಂತರಂಗದಲ್ಲಿ ಅಳವಡಿಸಿಕೊಂಡು, ಬಸವ ತತ್ವವನ್ನು ಸಮಾಜಕ್ಕೆ ಪರಿಣಾಮಕಾರಿಯಾಗಿ ತಲುಪಿಸುತ್ತಿರುವ ಆದರ್ಶ ಶಿವಾಚಾರ್ಯರಾಗಿದ್ದಾರೆ. ಇಂತಹ ಮಹಾನ್ ಯತಿವರ್ಯರನ್ನು ಪಡೆದ ಈ ನೆಲ ಧನ್ಯವಾಗಿದೆ ಎಂದು ಅವರು ಹೇಳಿದರು. ಹಾರಕೂಡ ಮಠಕ್ಕೆ ಭೇಟಿ ನೀಡಿದ್ದು ಹಾಗೂ ಚನ್ನವೀರ ಶಿವಾಚಾರ್ಯರ ದರ್ಶನ ಆಶೀರ್ವಾದ ಪಡೆದಿದ್ದು ತನ್ನಲ್ಲಿ ಹೊಸ ಆಧ್ಯಾತ್ಮಿಕ ಚೈತನ್ಯ ಮೂಡಿಸಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಮಠದ ಪೀಠಾಧಿಪತಿ ಡಾ. ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಬಸವಕಲ್ಯಾಣ ದೇವಸ್ಥಾನ ಪಂಚಕಮಿಟಿ (ಬಿಡಿಪಿಸಿ)ಯ ಆಡಳಿತ ಮಂಡಳಿಯ ಅಧ್ಯಕ್ಷ ಅನೀಲಕುಮಾರ್ ರಗಟೆ, ಉಪಾಧ್ಯಕ್ಷ ಮಲ್ಲಿಕಾರ್ಜುನ್ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ್ ಖೂಬಾ, ಕಾರ್ಯದರ್ಶಿಗಳಾದ ಅಶೋಕ್ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಬಿಡಿಪಿಸಿ ಸಹಕಾರದರ್ಶಿ ಬಸವರಾಜ್ ಬಾಲಕೀಲೆ, ಸುನೀಲ್ ರಾಯವಾಡೆ, ನಿರ್ದೇಶಕರಾದ ಬಸವರಾಜ್ ಕೋರಕೆ, ಇರಣ್ಣಾ ಹಲಶೆಟ್ಟೆ, ಭದ್ರಿನಾಥ್ ಪಾಟೀಲ್, ವಿವೇಕಾನಂದ್ ಹೊದಲೂರೆ, ಬಸವರಾಜ್ ತೊಂಡಾರೆ, ಮಲ್ಲಿಕಾರ್ಜುನ್ ಚಿರಡೆ, ಸುನೀಲಕುಮಾರ್ ಹೊಳಕುಂದೆ, ರಾಜಕುಮಾರ ಹೊಳಕುಂದೆ ಹಾಗೂ ಪುಷ್ಪಾವತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಲ್ಲಿನಾಥ್ ಹಿರೇಮಠ್ ಸ್ವಾಗತಿಸಿದರು. ಕಾರ್ತಿಕ್ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ್ ಸಂಗೀತ ಸೇವೆ ಸಲ್ಲಿಸಿದರು. ಭಕ್ತ ಕುಂಬಾರ್ ನಿರೂಪಿಸಿದರು.
ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಯತ್ನಾಳ್-ವಿಶ್ವನಾಥ್ ಬಹಿರಂಗವಾಗಿ ಹೇಳಿದ್ದಾರೆ : ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಅವರದೇ ಪಕ್ಷದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಹಿರಂಗವಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸಿದ್ದರಾಮಯ್ಯ ವಿಶ್ವಾಸದ್ರೋಹಿ ಎಂದು ಯಡಿಯೂರಪ್ಪ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದ ಹೆಲಿಪ್ಯಾಡ್ನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ ಎನ್ನುವುದನ್ನು ಉಲ್ಲೇಖಿಸಿ ಯಡಿಯೂರಪ್ಪ ಆರೋಪ ಮಾಡಬೇಕು. ಅರಳು ಮರಳು ಯಡಿಯೂರಪ್ಪ ಆಧಾರ ಸಹಿತವಾಗಿ ಮಾತನಾಡಬೇಕು ಎಂದರು. ತಮ್ಮ ಜಾತಿಯ ಅಭ್ಯರ್ಥಿ ಆದ ಕಾರಣ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನುವ ಯಡಿಯೂರಪ್ಪ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ದಾವಣಗೆರೆ ದಕ್ಷಿಣದಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಅಲ್ಲೆ ಠಿಕಾಣಿ ಹೂಡಿ ಪ್ರಚಾರ ಮಾಡಿದ್ದೇನೆ. ಅವರು ಯಾವ ಜಾತಿ ?. ನಾವು ಜಾತಿ ಕಾರಣಕ್ಕೆ ಪ್ರಚಾರ ಮಾಡುವುದಿಲ್ಲ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇವೆ ಎಂದರು. ಉಪ ಚುನಾವಣೆ ನಡೆಯುತ್ತಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು.
ಪೂರ್ವ ಅಫ್ಘಾನಿಸ್ತಾನದ ಗಡಿಪ್ರದೇಶದಲ್ಲಿ ಘರ್ಷಣೆ: 6 ಪಾಕ್ ಯೋಧರು ಮೃತ್ಯು
ಕಾಬೂಲ್, ಎ.6: ಪೂರ್ವ ಅಫ್ಘಾನಿಸ್ತಾನದ ಗಡಿಪ್ರದೇಶದಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಪಡೆಗಳ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿದ್ದು ಪಾಕಿಸ್ತಾನದ 6 ಸೈನಿಕರು ಹತರಾಗಿದ್ದಾರೆ ಎಂದು ತಾಲಿಬಾನ್ ಮೂಲಗಳು ಹೇಳಿವೆ. ಖೋಸ್ಟ್ ಪ್ರಾಂತದ ತಾನಿ ಜಿಲ್ಲೆಯಲ್ಲಿ ರವಿವಾರ ತಡರಾತ್ರಿ ಪ್ರಾರಂಭಗೊಂಡ ಘರ್ಷಣೆ ಕ್ರಮೇಣ ತೀವ್ರಗೊಂಡಿದ್ದು ಎರಡೂ ಪಡೆಗಳ ನಡುವೆ ಗುಂಡಿನ ಚಕಮಕಿ ಮತ್ತು ಮೋರ್ಟಾರ್ ಶೆಲ್ ದಾಳಿ ನಡೆದಿದೆ. ಘರ್ಷಣೆಯಲ್ಲಿ ಪಾಕಿಸ್ತಾನದ 6 ಯೋಧರು ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ತಾಲಿಬಾನ್ ಮೂಲಗಳು ಹೇಳಿವೆ. ಪಾಕಿಸ್ತಾನದ ಮಿಲಿಟರಿ ಹೊರಠಾಣೆಯನ್ನು ತಾಲಿಬಾನ್ ಹೋರಾಟಗಾರರು ವಶಪಡಿಸಿಕೊಂಡಿದ್ದು ಪಾಕಿಸ್ತಾನದ ಯೋಧರ ಮೃತದೇಹಗಳನ್ನು ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Delimitation : 'ಉತ್ತರ ಭಾರತೀಯರು ವೋಟ್ ಹಾಕಲ್ಲಾಂತ ಕಾಂಗ್ರೆಸ್ ಒಪ್ಪಿಕೊಂಡಂತಿದೆ' - ಬಿಜೆಪಿ ವ್ಯಂಗ್ಯ
Union Government Delimitation Exercise : ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ವಿನಾ ಕಾರಣ ತಗಾದೆ ಎತ್ತುತ್ತಿದೆ. ಇವರ ಹೇಳಿಕೆಯನ್ನು ನೋಡಿದರೆ, ಉತ್ತರ ಭಾರತದಲ್ಲಿ ಇವರಿಗೆ ಗೆಲ್ಲಬೇಕೆಂದು ಇಲ್ಲವೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಿದ್ದು, ಆ ವೇಳೆ, ಪ್ರಮಾದ ಆಗಿದ್ದರೆ, ಯಾಕೆ ಸರಿಪಡಿಸಲಿಲ್ಲ ಎಂದು ಜೋಶಿ ಪ್ರಶ್ನಿಸಿದ್ದಾರೆ.
ಆರ್ಸಿಬಿ ಸ್ಟಾರ್ ಟಿಮ್ ಡೇವಿಡ್ ಅಬ್ಬರದ ಹಿಂದಿದೆ ದಿನೇಶ್ ಕಾರ್ತಿಕ್ ಕೈವಾಡ: ಸ್ಫೋಟಕ ಮಾಹಿತಿ ರಿವೀಲ್
IPL 2026 RCB: ಎಂ.ಚಿನ್ನಸ್ವಾಮಿಯಲ್ಲಿ ನಡೆದ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ ಟಿಮ್ ಡೇವಿಡ್ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡದ ಗೆಲವಿಗೆ ಪ್ರಮುಖ ಪಾತ್ರವಹಿಸಿದರು. ಪಂದ್ಯದ ನಂತರ ಮಾತನಾಡಿದ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಕಾರಣ ಯಾರೆಂದು ಬಹಿರಂಗಬಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 70 ರನ್ ಚಚ್ಚಿ
ಜೆಇಇ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದ ವಿದ್ಯಾರ್ಥಿ: ಪ್ರಕರಣ ದಾಖಲು
ಮಣಿಪಾಲ, ಎ.6: ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ನಲ್ಲಿ ಫೋಟೋ ತೆಗೆದು ಪ್ರಸಾರ ಮಾಡಲು ಯತ್ನಿಸಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಎ.5ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸುವ ಜೆ.ಇ.ಇ ಮೈನ್ಸ್ ಪರೀಕ್ಷೆ ನಡೆದಿದ್ದು, ಪರೀಕ್ಷೆಯನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ನಡೆಸಲಾಗಿತ್ತು. ಬೆಳಿಗ್ಗೆ ಸುಮಾರು 149 ಮಕ್ಕಳು ಮಧ್ಯಾಹ್ನ 133 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಮಧ್ಯಾಹ್ನ 3 ಗಂಟೆಯಿಂದ ಪರೀಕ್ಷೆ ಪ್ರಾರಂಭವಾಗಿದ್ದು, ಪರೀಕ್ಷೆಗೆ ಒಳಗೆ ಬರುವ ವಿದ್ಯಾರ್ಥಿಗಳಿಗೆ ವಿಳಾಸದ ಮಾಹಿತಿ ಬಗ್ಗೆ ಮೂಲ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹಾಗೂ ಪರೀಕ್ಷೆಯ ಹಾಲ್ ಟಿಕೇಟ್ ತೆಗೆದುಕೊಂಡು ಬರಲು ಅನುಮತಿ ಇರುತ್ತದೆ. ಆದರೆ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ಉತ್ತರಖಂಡದ ವಿದ್ಯಾರ್ಥಿ ಅರೀದಮಾನ್ ಸಿಂಗ್ ಸಾಂಗ್ ಪರೀಕ್ಷೆಯ ಸಮಯ ಪರೀಕ್ಷಾ ಹಾಲ್ನಲ್ಲಿ ಕಂಪ್ಯೂಟರ್ ಸಿಸ್ಟಮ್ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ಆತನ ಮೊಬೈಲಿನಿಂದ ಸಂಪೂರ್ಣ ಪೋಟೋ ತೆಗೆದು ಅದನ್ನು ಹೊರಗಡೆ ಕಳುಹಿಸಿ ಪ್ರಸಾರ ಮಾಡಲು ಯತ್ನಿಸಿದ್ದಾನೆ ಎಂದು ಪರೀಕ್ಷಾ ಕೇಂದ್ರದ ಪರಿವೀಕ್ಷಕ ವಿ.ಕೆ ಮನೋಹರ್ ಕುಮಾರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇರಾನ್ನ ಅತಿ ದೊಡ್ಡ ಪೆಟ್ರೊಕೆಮಿಕಲ್ಸ್ ಸೌಲಭ್ಯದ ಮೇಲೆ ಇಸ್ರೇಲ್ ದಾಳಿ: ವರದಿ
ಜೆರುಸಲೇಂ, ಎ.6: ಇರಾನ್ನ ಅತೀ ದೊಡ್ಡ ಪೆಟ್ರೋಲಿಯಂ ಸಂಕೀರ್ಣದ ಮೇಲೆ ಬಲವಾದ ದಾಳಿ ನಡೆಸಿರುವುದಾಗಿ ಇಸ್ರೇಲ್ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಸೋಮವಾರ ಹೇಳಿದ್ದಾರೆ. ಪೆಟ್ರೋಲಿಯಂ ಸೌಲಭ್ಯದ ಬಳಿ ಹಲವು ಸ್ಫೋಟಗಳು ನಡೆದಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಬುಶೆಹ್ರ್ ಪ್ರಾಂತದ ಅಸಲುಯೆಹ್ ನಗರದಲ್ಲಿರುವ, ಇರಾನ್ನ 50%ದಷ್ಟು ಪೆಟ್ರೋಕೆಮಿಕಲ್ಸ್ ಉತ್ಪಾದಿಸುವ ಅತೀ ದೊಡ್ಡ ಪೆಟ್ರೋಕೆಮಿಕಲ್ ಸೌಲಭ್ಯದ ಮೇಲೆ ದಾಳಿ ನಡೆಸಲಾಗಿದೆ. ಶನಿವಾರ ನೈಋತ್ಯ ಖುಜೆಸ್ತಾನ್ ಪ್ರಾಂತದ ಮಹಶಹರ್ ಪೆಟ್ರೋಕೆಮಿಕಲ್ ವಿಶೇಷ ವಲಯದ ಮೇಲೆ ಇಸ್ರೇಲ್ ಇದೇ ರೀತಿಯ ದಾಳಿಯನ್ನು ನಡೆಸಿತ್ತು. ಇರಾನ್ನ 85%ದಷ್ಟು ಪೆಟ್ರೊಕೆಮಿಕಲ್ ರಫ್ತುಗಳನ್ನು ಹೊಂದಿರುವ ಎರಡೂ ಸೌಲಭ್ಯಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು ಇರಾನ್ಗೆ ತೀವ್ರ ಆರ್ಥಿಕ ಆಘಾತ ನೀಡಲಾಗಿದೆ' ಎಂದು ಕಾಟ್ಝ್ ಪ್ರತಿಪಾದಿಸಿದ್ದಾರೆ.
ವಾಯವ್ಯ ಪಾಕಿಸ್ತಾನದಲ್ಲಿ ಸರಕಾರಿ ಕಚೇರಿ ಮೇಲೆ ದಾಳಿ: ಇಬ್ಬರು ಮೃತ್ಯು
ಪೇಷಾವರ, ಎ.6: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವ ಪ್ರಾಂತದಲ್ಲಿ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಗೆ ಸಂಯೋಜನೆಗೊಂಡಿರುವ ಭಯೋತ್ಪಾದಕರು ಸರಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದು ಪೊಲೀಸ್ ಕಾನ್ಸ್ಟೆಬಲ್ ಮತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಬನ್ನು ಜಿಲ್ಲೆಯಲ್ಲಿರುವ ರಾಷ್ಟ್ರೀಯ ಅಂಕಿಅಂಶ ಮತ್ತು ನೋಂದಣಿ ಪ್ರಾಧಿಕಾರದ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ಬಳಿಕ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಪೊಲೀಸ್ ಕಾನ್ಸ್ಟೆಬಲ್ ಮತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇತರ ಹಲವರು ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಉನ್ನತ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ವಿದ್ಯುತ್ ಶಾರ್ಟ್ ಸಕ್ಯೂರ್ಟ್: ಮನೆ ಸಂಪೂರ್ಣ ಸುಟ್ಟು ಭಸ್ಮ
ಕುಂದಾಪುರ, ಎ.6: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಇಡೀ ಮನೆ ಸುಟ್ಟು ಕರಕಲಾದ ಘಟನೆ ಶನಿವಾರ ತಡರಾತ್ರಿ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ನಡೆದಿದೆ. ಹಂದಕುಂದ ಅರೆಕಲ್ಲು ಮನೆಯ ಗಣಪು ಶೆಡ್ತಿ ಎಂಬವರು ತನ್ನ ಮೊಮ್ಮಗ ನೊಂದಿಗೆ ಮನೆಯ ಹತ್ತಿರದ ಭಜನಾ ಕಾರ್ಯಕ್ರಮಕ್ಕಾಗಿ ಮನೆಗೆ ಬೀಗ ಹಾಕಿ ತೆರಳಿದ್ದರು. ರಾತ್ರಿ 12 ಗಂಟೆ ನಂತರ ಮನೆಯಲ್ಲಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ನಸುಕಿನ ವೇಳೆ 2 ಗಂಟೆಯ ಸುಮಾರಿಗೆ ಮನೆಯ ಹತ್ತಿರದ ದಾರಿಯಲ್ಲಿ ಹೋಗುತ್ತಿದ್ದವ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ, ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ಆದರೆ ಅದಾಗಲೇ ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ವ್ಯಾಪ್ತಿದ್ದು, ಮನೆಯ ಮಾಡು, ಗೋಡೆಗಳಿಗೆ ಹಾನಿಯಾಗಿದೆ. ಮನೆ ಒಳಗಿದ್ದ ಚಿನ್ನಾಭರಣ, ನಗದು, ಟಿವಿ, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಬರೆ, ಪಾತ್ರೆಗಳೆಲ್ಲವೂ ಸುಟ್ಟು ಕರಕರಲಾಗಿದೆ. ಇದರಿಂದ ಸುಮಾರು 5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬಳಿಕ ಕುಂದಾಪುರದ ಅಗ್ನಿ ಶಾಮಕ ದಳದ ತಂಡದವರು, ಸ್ಥಳೀಯರೆಲ್ಲ ಸೇರಿ, ಬೆಂಕಿ ನಂದಿಸುವ ಮೂಲಕ ಹತ್ತಿರದಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ಹರಡವುದನ್ನು ತಪ್ಪಿಸಿದ್ದಾರೆ.
Ballari | ಸಂಡೂರಿನಲ್ಲಿ EMTT ತರಬೇತಿ ಕಾರ್ಯಾಗಾರ ಆರಂಭ: ಶಿಕ್ಷಕರಿಗೆ ದ್ವಿಭಾಷಾ ಬೋಧನೆಗೆ ಕೌಶಲ್ಯಾಭಿವೃದ್ಧಿ
ಬಳ್ಳಾರಿ/ಸಂಡೂರು: ರಾಷ್ಟ್ರೀಯ ಶಿಕ್ಷಣ ಹಾಗೂ ಸಂಶೋಧನೆ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಕೇಂದ್ರ ಬಳ್ಳಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಂಡೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಬೋಧಿಸುವ ಸೇವಾನಿರತ ಶಿಕ್ಷಕರಿಗೆ EMTT (ಇಂಗ್ಲೀಷ್ ಮೀಡಿಯಂ ಟೀಚರ್ಸ್ ಟ್ರೈನಿಂಗ್) ತರಬೇತಿ ಕಾರ್ಯಾಗಾರವು ಸೋಮವಾರ ಸಂಡೂರಿನ ಗುರುಭವನದಲ್ಲಿ ಆರಂಭವಾಯಿತು. ಏಪ್ರಿಲ್ 6ರಿಂದ 11ರವರೆಗೆ ನಡೆಯಲಿರುವ ಈ ಐದು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ನೀಡಲು ಶಿಕ್ಷಕರು ಅಗತ್ಯವಾದ ಕೌಶಲ್ಯ ಮತ್ತು ವಿಧಾನಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯವೆಂದು ಹೇಳಿದರು. ಇದೇ ಉದ್ದೇಶದಿಂದ ಇಲಾಖೆಯ ಮಾರ್ಗಸೂಚಿಗಳಂತೆ EMTT ತರಬೇತಿ ಆಯೋಜಿಸಲಾಗಿದ್ದು, ಶಿಕ್ಷಕರು ಇದರ ಸಂಪೂರ್ಣ ಪ್ರಯೋಜನ ಪಡೆದು ತಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತರಬೇತಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತಮ್ಮಯ್ಯ ಎಲ್.ಹೆಚ್., ಪರಶುರಾಮ್ ಚೌಗಲೆ, ಅನ್ನಪೂರ್ಣ, ಮಂಜುಶ್ರೀ, ರಘುನಂದನ್ ಸೇರಿದಂತೆ ತಾಲೂಕಿನ ಅನೇಕ ಶಿಕ್ಷಕರು ಉಪಸ್ಥಿತರಿದ್ದರು. ಈ ತರಬೇತಿ ಕಾರ್ಯಾಗಾರವು ದ್ವಿಭಾಷಾ ಬೋಧನಾ ವಿಧಾನಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಮಾರ್ಗದರ್ಶನ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕಸ್ಟಡಿಯಲ್ಲಿದ್ದ ತಂದೆ- ಮಗನಿಗೆ ಚಿತ್ರಹಿಂಸೆ ನೀಡಿ ಕೊಲೆ ಪ್ರಕರಣ: ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ
ಸಾತಂಕುಲಂ ತಂದೆ-ಮಗನ ಕಸ್ಟಡಿ ಸಾವಿನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಂಬತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಮಧುರೈ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಎಲ್ಲಾ ಒಂಬತ್ತು ಆರೋಪಿಗಳಿಗೂ ಮರಣದಂಡನೆ ವಿಧಿಸಿದೆ.ವಾರದ ಹಿಂದೆ ಮಧುರೈನ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೂನ್ 2020 ರಲ್ಲಿ ಪಿ ಜಯರಾಜ್ ಮತ್ತು ಅವರ ಮಗ ಜೆ ಬೆನ್ನಿಕ್ ಅವರ ಕಸ್ಟಡಿ ಚಿತ್ರಹಿಂಸೆ ಮತ್ತು ಸಾವಿನಲ್ಲಿ ಅವರ ಪಾತ್ರಕ್ಕಾಗಿ ಎಲ್ಲಾ ಒಂಬತ್ತು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇದೀಗ ಏಪ್ರಿಲ್ 6ರ ಸೋಮವಾರದಂದು ಶಿಕ್ಷೆಯನ್ನು ವಿಧಿಸಲಾಗಿದೆ. ಸಾಮಾನ್ಯ ನಾಗರಿಕರು ಇದೇ ತಪ್ಪನ್ನು ಮಾಡಿದ್ದಿದ್ದರೆ ಸಾಮಾನ್ಯ ಶಿಕ್ಷೆಯನ್ನು ನೀಡಬಹುದಿತ್ತು, ಆದರೆ ಅಪರಾಧ ಮಾಡಿದವರು ಪೊಲೀಸರು ಎಂದು ನ್ಯಾಯಾಧೀಶ ಮುತ್ತುಕುಮಾರನ್ ಆದೇಶ ನೀಡುವ ವೇಳೆ ಹೇಳಿದರು. ಹಲ್ಲೆಗೆ ಇನ್ ಸ್ಪೆಕ್ಟರ್ ಪ್ರಚೋದನೆ ಈ ಪ್ರಕರಣವು ಕಸ್ಟಡಿ ಹಿಂಸಾಚಾರದ ಸ್ಪಷ್ಟ ನಿದರ್ಶನವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ತಂದೆ ಮತ್ತು ಮಗನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂಬುದಕ್ಕೆ ಸಾಕ್ಷಿಗಳಿವೆ. ಇನ್ಸ್ಪೆಕ್ಟರ್ ಎಸ್ ಶ್ರೀಧರ್ ಅವರು ಈ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇತರ ಸಿಬ್ಬಂದಿ ಸಹ ಹಿಂಸಾಚಾರದಲ್ಲಿ ಭಾಗವಹಿಸಿದ್ದು ಬಳಿಕ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ.
ಹುಬ್ಬಳ್ಳಿ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ; ನಿರಂಜನ ಹಿರೇಮಠ್ ಹೇಳಿದ್ದೇನು?
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಜಿಮ್ ತರಬೇತುದಾರ, ಆರೋಪಿ ಸಮೀರ್ ನನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಹಾ ಹಿರೇಮಠ್ ತಂದೆ ನಿರಂಜನ ಹಿರೇಮಠ್ ಪ್ರತಿಕ್ರಿಯಿಸಿದ್ದು, ʼನನ್ನ ಮಗಳ ಹತ್ಯೆಯಲ್ಲೂ ಈ ಸಮೀರ್ ಹಾಗೂ ಅತನ ಸಹೋದರಿ, ತಂದೆಯ ಕೈವಾಡ ಇರಬಹುದುʼ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ʼನೇಹಾ ಹಿರೇಮಠ್ ರನ್ನು ಹತ್ಯೆಗೈದ ಫಯಾಝ್ ಕೂಡ ಇದೇ ಜಿಮ್ನಲ್ಲಿ ತರಬೇತಿ ಪಡೆಯುತ್ತಿದ್ದʼ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸಮೀರ್ ತಂದೆ ಆಗಾಗ ಕಾಲ್ ಮಾಡುತ್ತಿದ್ದರು. ನಿಮ್ಮ ಏರಿಯಾದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ಏರ್ಪಡಿಸೋಣ, ಆರ್ಥಿಕ ನೆರವು ನೀಡುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ, ಆಗಾಗ್ಗೆ ತಮ್ಮ ಮನೆಗೆ ಬರುವಂತೆ ಆಹ್ವಾನಿಸುತ್ತಿದ್ದರು. ನಾನು ಎಷ್ಟೇ ಕರೆದರು ಹೋಗಲಿಲ್ಲ. ಹೋಗಿದ್ರೆ ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.
ಜೀವರಕ್ಷಕ ಸಿಬ್ಬಂದಿಗಳ ಹುದ್ದೆ: ಅರ್ಜಿ ಆಹ್ವಾನ
ಉಡುಪಿ, ಎ.6: ಜಿಲ್ಲೆಯ ಮಲ್ಪೆ ಬೀಚ್ ಹಾಗೂ ತ್ರಾಸಿ ಮರವಂತೆ ಬೀಚ್ಗಳಲ್ಲಿ ಜೀವರಕ್ಷಕ ಸಿಬ್ಬಂದಿಗಳನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿಯೋಜಿಸಲು ಉದ್ದೇಶಿಸಿದ್ದು, ಜಿಲ್ಲೆಯಲ್ಲಿ ಜೀವರಕ್ಷಕ ತರಬೇತಿ ಹೊಂದಿರುವ ಸಿಬ್ಬಂದಿಗಳಿಂದ ಈ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 14,958ರೂ. ವೇತನದೊಂದಿಗೆ ಪಿ.ಎಫ್ ಹಾಗೂ ಇ.ಎಸ್.ಐ ಸೌಕರ್ಯ ಕಲ್ಪಿಸಲಾಗುವುದು. ಬೀಚ್ ಜೀವರಕ್ಷಕ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿರುವ ಕನಿಷ್ಟ 18 ರಿಂದ 40 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಎಪ್ರಿಲ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್, ಎರಡನೇ ಮಹಡಿ, ಕೊಠಡಿ ಸಂಖ್ಯೆ: 303, ಮಣಿಪಾಲ ದೂರವಾಣಿ ಸಂಖ್ಯೆ:0820-2574868ಅನ್ನು ಸಂಪರ್ಕಿಸ ಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಇನ್ನೊಬ್ಬರ ಸಾಧನೆ ನಮಗೆ ಧನಾತ್ಮಕ ಪ್ರೇರಣೆಯಾಗಬೇಕು: ಕಾರ್ತಿಕ್
ರಾಜ್ಯಮಟ್ಟದ ಅಂತರಕಾಲೇಜು ಸ್ಪರ್ಧೆ ‘ಪ್ರಜ್ಞಾ-2026’ ಉದ್ಘಾಟನೆ
ವಿಜಯನಗರ | ಎ.20ರಂದು ಬಸವ ಜಯಂತಿ ವಿಜೃಂಭಣೆಯಿಂದ ಆಚರಣೆ : ಡಿಸಿ ಕವಿತಾ ಮನ್ನಿಕೇರಿ
ವಿಜಯನಗರ (ಹೊಸಪೇಟೆ) : ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಏಪ್ರಿಲ್ 20ರಂದು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಸವ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಜಯಂತಿ ದಿನ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಕೊಟ್ಟೂರ ಮಠದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸರ್ಕಾರದ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಲಾಗುತ್ತದೆ. ನಗರದ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಬಸವಣ್ಣನವರ ತತ್ವ ಮತ್ತು ದಾರ್ಶನಿಕತೆ ಕುರಿತು ಯುವ ಪೀಳಿಗೆಗೆ ಅರಿವು ಮೂಡಿಸಲು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ವಿವರಿಸಿದರು. ಭವ್ಯ ಮೆರವಣಿಗೆ : ಜಯಂತಿ ಅಂಗವಾಗಿ ಬೃಹತ್ ಮೆರವಣಿಗೆ ಕೂಡ ಆಯೋಜಿಸಲಾಗಿದ್ದು, ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊಟ್ಟೂರು ಮಠದ ಬಳಿ ಮುಕ್ತಾಯಗೊಳ್ಳಲಿದೆ. ಮೆರವಣಿಗೆಯನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ನಡೆಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎನ್ಸಿಪಿ ನಾಯಕ ರಾಮಾವತಾರ್ ಜಗ್ಗಿ ಹತ್ಯೆ ಪ್ರಕರಣ| ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಚತ್ತೀಸ್ಗಢ ಹೈಕೋರ್ಟ್
ರಾಯಪುರ,ಎ. 6: 2003ರ ಎನ್ಸಿಪಿ ನಾಯಕ ರಾಮಾವತಾರ್ ಜಗ್ಗಿ ಅವರ ಹತ್ಯೆ ಪ್ರಕರಣದಲ್ಲಿ ಚತ್ತೀಸ್ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಚತ್ತೀಸ್ಗಢ ಉಚ್ಚ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ರಾಯಪುರ ವಿಚಾರಣಾ ನ್ಯಾಯಾಲಯ 2007ರಲ್ಲಿ ನೀಡಿದ ತೀರ್ಪಿನಲ್ಲಿ ಅಮಿತ್ ಜೋಗಿಯನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಚತ್ತೀಸ್ಗಢ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಹಾಗೂ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ವರ್ಮಾ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ, ಸಿಬಿಐಯ ಮೇಲ್ಮನವಿಯನ್ನು ಅಂಗೀಕರಿಸಿತ್ತು ಹಾಗೂ ರಾಯ್ಪುರ ವಿಚಾರಣಾ ನ್ಯಾಯಾಲಯ 2007 ಮೇ 31ರಂದು ನೀಡಿದ ತೀರ್ಪನ್ನು ರದ್ದುಗೊಳಿಸಿತು. ಮಾಜಿ ಶಾಸಕ ಅಮಿತ್ ಜೋಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಹಾಗೂ ಸೆಕ್ಷನ್ 120-ಬಿ ಅಡಿಯಲ್ಲಿ ತಪ್ಪೆಸಗಿದ್ದಾರೆ ಎಂದು ನ್ಯಾಯಾಲಯ ಪರಿಗಣಿಸಿತು. ಉಚ್ಚ ನ್ಯಾಯಾಲಯ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆಯ ಜೊತೆಗೆ 1,000 ದಂಡ ವಿಧಿಸಿದೆ. ಈ ದಂಡವನ್ನು ಪಾವತಿಸಲು ವಿಫಲವಾದರೆ ಮತ್ತೆ 6 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.
ಕನ್ನಡದ್ರೋಹಿಗಳಿಗೆ ಇಲ್ಲಿ ಜಾಗವಿಲ್ಲ: ರಾಜ್ಯಪಾಲರ ವಿರುದ್ಧ ಟಿ.ಎ.ನಾರಾಯಣಗೌಡ ಆಕ್ರೋಶ
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಗ್ರೇಡಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡರು ತೀವ್ರ ವಾಗ್ದಾಳಿ ನಡೆಸಿದ್ದಾರೆ. #GoBackGovernor ಎಂಬ ಹ್ಯಾಶ್ಟ್ಯಾಗ್ ಬಳಸುವ ಮೂಲಕ ಅಭಿಯಾನಕ್ಕೆ ಕರೆ ನೀಡಿದ್ದಾರೆ. ತಮ್ಮ ಪೋಸ್ಟ್ನ ಆರಂಭದಲ್ಲಿ
ಗುವಾಹಾಟಿ, ಎ. 6: ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ಪತ್ನಿಯ ವಿದೇಶದಲ್ಲಿರುವ ಆಸ್ತಿಯ ಬಗ್ಗೆ ಬಹಿರಂಗಪಡಿಸಿಲ್ಲ. ಆದುದರಿಂದ ಅವರ ಉಮೇದುವಾರಿಕೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಹಿಮಂತ ಬಿಸ್ವಾ ಶರ್ಮಾ ಅವರ ಕುಟುಂಬ ದುಬೈಯಲ್ಲಿ ಆಸ್ತಿ ಹೊಂದಿದೆಯೇ, ಅಮೆರಿಕದ ವ್ಯೋಮಿಂಗ್ನಲ್ಲಿ ಕಂಪೆನಿಗಳನ್ನು ಹೊಂದಿದೆಯೇ ಅಥವಾ ಬೇನಾಮಿ ಕಂಪೆನಿಗಳ ಮೂಲಕ ಆಸ್ತಿಗಳನ್ನು ವರ್ಗಾಯಿಸಿದೆಯೇ ಎಂಬ ಬಗ್ಗೆ ಪಕ್ಷ ಪ್ರಶ್ನೆಗಳನ್ನು ಎತ್ತಿದ ದಿನಗಳ ಬಳಿಕ ಈ ದೂರು ದಾಖಲಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಸಲ್ಲಿಸಿದ ದೂರಿನಲ್ಲಿ ಜಲೂಕಬಾರಿಯಲ್ಲಿ ಶರ್ಮಾ ಅವರ ಪ್ರತಿಸ್ಪರ್ಧಿ ಬಿದಿಶಾ ನಿಯೋಗ್ ಅವರು, ಇಂತಹ ಮಾಹಿತಿಯನ್ನು ಮರೆಮಾಚಿದ ಆರೋಪದ ಕುರಿತು ತನಿಖೆ ನಡೆಸುವಂತೆ ಕೂಡ ಕೋರಿದ್ದಾರೆ. ‘‘ಫಾರ್ಮ್ 26ರಲ್ಲಿ ಸ್ಪಷ್ಟ ಶಾಸನಬದ್ಧ ಸೂಚನೆಗಳಿದ್ದರೂ ಅಫಿಡವಿಟ್ ವಿದೇಶದಲ್ಲಿರುವ ಯಾವುದೇ ಆಸ್ತಿಯನ್ನು ಬಹಿರಂಗಪಡಿಸಿಲ್ಲ. ದುಬೈ ಭೂ ಇಲಾಖೆಯ ದಾಖಲೆಗಳು ಅಭ್ಯರ್ಥಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಯುಎಇ ದುಬಾಯಿಯ ಅಲ್ ಬರ್ಶಾ ಸೌತ್ ಫೋರ್ತ್ನಲ್ಲಿ ಎರಡು ಮೌಲ್ಯಯುತ ಆಸ್ತಿಯ ಮಾಲಕತ್ವ/ಪಲಾನುಭವಿಯಾಗಿದ್ದಾರೆ’’ ಎಂದು ನಿಯೋಗ್ ದೂರಿನಲ್ಲಿ ಆರೋಪಿಸಿದ್ದಾರೆ. ಶರ್ಮಾ ಅವರ ಪತ್ನಿಗೆ ಸೇರಿದೆ ಎಂದು ಹೇಳಲಾಗಿರುವ ಎರಡು ಆಸ್ತಿಗಳನ್ನು ಅವರು ಉಲ್ಲೇಖಿಸಿದ್ದಾರೆ. ಅವುಗಳನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸಿಲ್ಲ. ಇದು ಕಡ್ಡಾಯ ನಿಯಮಗಳ ಉಲ್ಲಂಘನೆ. ಇದರಿಂದ ನಾಮಪತ್ರವನ್ನು ತಿರಸ್ಕರಿಸಬಹುದು ಎಂದು ಅವರು ಹೇಳಿದ್ದಾರೆ. ವಿದೇಶದಲ್ಲಿರುವ ಆಸ್ತಿಗಳನ್ನು ಮರೆ ಮಾಚಿರುವ ಬಗ್ಗೆ ಕೂಡಲೇ ತನಿಖೆ ನಡೆಸಬೇಕು. ಹಿಮಂತ ಬಿಸ್ವಾ ಶರ್ಮಾ ಅವರ ನಾಮಪತ್ರವನ್ನು ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 36ರ ಅಡಿಯಲ್ಲಿ ತಿರಸ್ಕರಿಸಬೇಕು. 125ಎ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿಯೋಗ್ ಆಗ್ರಹಿಸಿದ್ದಾರೆ.
Bidar| ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ
ಬೀದರ್ : ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಂಯುಕ್ತ ಕಿಸಾನ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು. ಮನವಿಯಲ್ಲಿ, 2025ರ ಅ.12ರಿಂದ 18ರವರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಸಮಸ್ಯೆಗಳು ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂಪಡೆಯಲಾಗಿತ್ತು. ಆದರೆ ಇದುವರೆಗೆ ಪ್ರಮುಖ ಸಮಸ್ಯೆಗಳು ಪರಿಹಾರವಾಗಿಲ್ಲವೆಂದು ಸಂಘಟನೆ ಆರೋಪಿಸಿದೆ. ಮುಖ್ಯ ಬೇಡಿಕೆಗಳಾಗಿ, ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ಗೆ 2,950 ರೂ. ನೀಡದೇ ಇರುವುದನ್ನು ಖಂಡಿಸಿ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಲಾಗಿದೆ. ಜೊತೆಗೆ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿ, ವಿಶೇಷ ಅನುದಾನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದಲ್ಲದೇ, ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು, 6 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಬೇಕು, ಖರೀಫ್ ಹಂಗಾಮಿಗೆ ಅಗತ್ಯ ಬೀಜ ಮತ್ತು ರಸಗೊಬ್ಬರವನ್ನು ಪಿಕೆಪಿಎಸ್ ಮೂಲಕ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ನಕಲಿ ಬೀಜ ಮತ್ತು ಗೊಬ್ಬರ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೂಡ ಒತ್ತಾಯಿಸಲಾಗಿದೆ. ಸಕ್ಕರೆಯ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್ಗೆ 5,000 ರೂ. ನಿಗದಿಪಡಿಸುವುದು ಹಾಗೂ ಕಾರಂಜಾ ಆಣೆಕಟ್ಟಿನ ಕಾಲುವೆಗಳ ಮೂಲಕ ರೈತರ ಹೊಲಗಳಿಗೆ ನೀರು ಪೂರೈಸುವಂತೆ ಮನವಿ ಮಾಡಲಾಗಿದೆ. ಈ ಎಲ್ಲಾ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸದಿದ್ದಲ್ಲಿ ತೀವ್ರ ಹೋರಾಟ ಕೈಗೊಳ್ಳುವುದಾಗಿ ಸಂಯುಕ್ತ ಕಿಸಾನ ಮೋರ್ಚಾ ಎಚ್ಚರಿಸಿದೆ. ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಶಿವರಾಯ್ ಮುದಾಳೆ, ವೀರಶೆಟ್ಟಿ ವಟಂಬೆ, ಸಂಚಾಲಕ ಮಲ್ಲಿಕಾರ್ಜುನ್ ಸ್ವಾಮಿ, ಮಾರುತಿ ಬೌದ್ಧೆ, ಬಾಬುರಾವ್ ಹೊನ್ನಾ, ಶಿವರಾಜ ಪಾಟೀಲ್ ಅತಿವಾಳ್, ಬಸವರಾಜ್ ಅಷ್ಟೂರೆ, ವಿಠಲರೆಡ್ಡಿ, ಸರ್ವೋದಯ ಪಕ್ಷದ ಕೋಂಡಿಬಾ ಪಾಂಡ್ರೆ, ಶಾಂತಮ್ಮ ಮೂಲಗೆ, ಕಾರ್ಯಾಧ್ಯಕ್ಷ ನಾಗಶೆಟ್ಟೆಪ್ಪಾ ಲಂಜವಾಡೆ, ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್, ಎಂ.ಡಿ. ಖಮರ್ ಪಟೇಲ್, ನನ್ನೆಸಾಬ್, ಎಂ.ಡಿ. ಶಫಾಯತ್ ಅಲಿ, ಜೈಶೀಲಕುಮಾರ್, ಡಿ ಎಸ್ ಎಸ್ ಮುಖಂಡ ಅರುಣ್ ಪಟೇಲ್, ವೀರಾರೆಡ್ಡಿ, ವಿಠಲರಾವ್ ಮೇತ್ರೆ, ಬಾವುರಾವ್ ನೆಲವಾಡೆ ಹಾಗೂ ರಾಜ್ಯ ರೈತ ಸಂಘದ ರಾಜೇಂದ್ರ ಪಾಟೀಲ್ ಸೇರಿದಂತೆ ಇತರರು ಇದ್ದರು.
ಅಮೆರಿಕದ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ: ಇರಾನ್ ಬೆಂಬಲಿತ ಇರಾಕಿ ಗುಂಪು ಎಚ್ಚರಿಕೆ
ಬಗ್ದಾದ್, ಎ.6: ಹಾರ್ಮುಝ್ ಜಲಸಂಧಿಯನ್ನು ಬಲಪ್ರಯೋಗಿಸಿ ತೆರೆಯಲು ಪ್ರಯತ್ನಿಸಿದರೆ ಅಮೆರಿಕ ಮತ್ತು ಇಸ್ರೇಲ್ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಬೆಂಬಲಿತ ಇರಾಕಿ ಗುಂಪು ಕಟೈಬ್ ಹಿಜ್ಬುಲ್ಲಾ ಎಚ್ಚರಿಕೆ ನೀಡಿರುವುದಾಗಿ `ಪ್ರೆಸ್ ಟಿವಿ' ಸೋಮವಾರ ವರದಿ ಮಾಡಿದೆ. ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವ ಯಾವುದೇ ಪ್ರಯತ್ನವು ಎಲ್ಲಾ ತೈಲ ಮತ್ತು ಇಂಧನ ಸೌಲಭ್ಯಗಳ ಸಂಪೂರ್ಣ ನಾಶಕ್ಕೆ ಕಾರಣವಾಗುತ್ತದೆ ಎಂದು ಶತ್ರುಗಳು ತಿಳಿದಿರಬೇಕು. ಜಲಸಂಧಿಯು ಶತ್ರುಗಳಿಗೆ ತೆರೆದಿರುವುದಿಲ್ಲ ಮತ್ತು ಬಲವಂತದ ಕ್ರಮವು ತೀವ್ರ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಕಟೈಬ್ ಹಿಜ್ಬುಲ್ಲಾದ ಮೂಲಗಳು ಎಚ್ಚರಿಕೆ ನೀಡಿವೆ ಎಂದು ವರದಿ ತಿಳಿಸಿದೆ.
ಇರಾನ್ನ ವಸತಿ ಕಟ್ಟಡಕ್ಕೆ ಅಪ್ಪಳಿಸಿದ ಕ್ಷಿಪಣಿ: ಕನಿಷ್ಠ 13 ಮಂದಿ ಮೃತ್ಯು
ಟೆಹ್ರಾನ್, ಎ.6: ಸೋಮವಾರ ಬೆಳಿಗ್ಗೆ ಟೆಹ್ರಾನ್ನ ಹೊರವಲಯದ ಪ್ರದೇಶದಲ್ಲಿ ವಸತಿ ಕಟ್ಟಡವನ್ನು ಗುರಿಯಾಗಿಸಿ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಸೋಮವಾರ ನಡೆದ ಮತ್ತೊಂದು ದಾಳಿಯಲ್ಲಿ ಟೆಹ್ರಾನ್ನ ಶರೀಫ್ ವಿಶ್ವವಿದ್ಯಾಲಯದ ಗ್ಯಾಸ್ ಸ್ಟೇಷನ್ಗೆ ಕ್ಷಿಪಣಿ ಅಪ್ಪಳಿಸಿದ್ದು ಅನಿಲ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ. ಸೋಮವಾರ ಟೆಹ್ರಾನ್ನಾದ್ಯಂತ ವಸತಿ ಪ್ರದೇಶಗಳ ಮೇಲೆ ಸರಣಿ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಟೆಹ್ರಾನ್ ಪ್ರಾಂತದ ಮೇಲೆ ರವಿವಾರ ತಡರಾತ್ರಿ ನಡೆದ ಜಂಟಿ ದಾಳಿಯಲ್ಲಿ 10 ವರ್ಷದೊಳಗಿನ ನಾಲ್ವರು ಬಾಲಕಿಯರು ಮತ್ತು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ ಎಂದು `ಫಾರ್ಸ್' ಸುದ್ದಿಸಂಸ್ಥೆ ವರದಿ ಮಾಡಿದೆ.
Aland | ಜನಗಣತಿ ಕಾರ್ಯ ಯಶಸ್ಸಿಗೆ ನಾಗರಿಕರ ಸಹಕಾರ ಅಗತ್ಯ: ತಹಶೀಲ್ದಾರ್ ಅಣ್ಣಾರಾವ್ ಪಾಟೀಲ
ಆಳಂದ: ದೇಶದ ಬುನಾದಿಯಾಗಿರುವ ಜನಗಣತಿ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕರ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದ್ದು, ಯಾರೂ ಗಣತಿಯಿಂದ ಹೊರಗುಳಿಯದಂತೆ ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಹೇಳಿದರು. ಪಟ್ಟಣದ ಜ್ಯೂನಿಯರ್ ಕಾಲೇಜು ಕಟ್ಟಡದಲ್ಲಿ 2026-27ನೇ ಸಾಲಿನ ಜನಗಣತಿ ಸಿದ್ಧತಾ ಅಂಗವಾಗಿ ಗಣತಿದಾರರಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಬಹುಕಾಲದ ನಂತರ ನಡೆಯುತ್ತಿರುವ ಈ ಜನಗಣತಿ ಕಾರ್ಯ ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿ ಹಂತದಲ್ಲಿ ನಡೆಯಲಿದೆ. ನಂತರ ಎ.16ರಿಂದ ಮೇ 15ರವರೆಗೆ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು. ಈ ಜನಗಣತಿಯಿಂದ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಆರೋಗ್ಯ, ಶಿಕ್ಷಣ, ವಸತಿ ಹಾಗೂ ಮೂಲಸೌಕರ್ಯಗಳ ಕುರಿತ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಆದ್ದರಿಂದ ಈ ಪ್ರಕ್ರಿಯೆಯಲ್ಲಿ ಯಾವುದೇ ದೋಷಗಳಾಗದಂತೆ ಅಧಿಕಾರಿಗಳು ಮತ್ತು ಗಣತಿದಾರರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಕಾರ್ಯನಿರ್ವಹಣೆಯಲ್ಲಿ ಯಾವುದೇ ಅಡಚಣೆ ಎದುರಾದಲ್ಲಿ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಸಾರ್ವಜನಿಕರೂ ಸಹ ಗಣತಿದಾರರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ತರಬೇತಿಯಲ್ಲಿ ಗ್ರೇಡ್-2 ಅಧಿಕಾರಿ ಬಿ.ಜಿ. ಕುದರಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ಎಇಇ ಸಂಗಮೇಶ ಬಿರಾದಾರ, ಜನಗಣತಿ ಶಾಖೆಯ ಶಿರಸ್ತೆದಾರ ರಾಕೇಶ್ ಶೀಲವಂತ, ಚುನಾವಣಾ ಶಾಖೆಯ ಮಹೇಶಕುಮಾರ ಸಜ್ಜನ್ ಸೇರಿದಂತೆ ಹಲವರು ಭಾಗವಹಿಸಿದರು. ಎರಡನೇ ದಿನದ ತರಬೇತಿಯಲ್ಲಿ ತಾಲೂಕಿನ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸ್ವಯಂ ಗಣತಿ ಕುರಿತು ವಿಶೇಷ ತರಬೇತಿ ನೀಡಲಾಯಿತು.
IPL-2026| ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಸಮೀರ್ ರಿಝ್ವಿ
ಹೊಸದಿಲ್ಲಿ, ಎ.6: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಎಲ್ಲಾ ತಂಡಗಳು ಎರಡು ಪಂದ್ಯಗಳನ್ನು ಆಡಿವೆ. ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈಸೂಪರ್ ಕಿಂಗ್ಸ್ ತಲಾ ಮೂರು ಪಂದ್ಯಗಳನ್ನು ಆಡಿವೆ. ಹೀಗಾಗಿ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ಗಾಗಿ ಸ್ಪರ್ಧೆ ಏರ್ಪಟ್ಟಿದೆ. ಆರೆಂಜ್ ಕ್ಯಾಪ್: ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ಲಭಿಸುತ್ತದೆ. 2024ರ ಐಪಿಎಲ್ನಲ್ಲಿ 51 ರನ್ ಹಾಗೂ 2025ರ ಐಪಿಎಲ್ನಲ್ಲಿ 121ರನ್ ಗಳಿಸಿದ್ದ ಸಮೀರ್ ರಿಝ್ವಿ ಈ ಬಾರಿ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡೂ ಬಾರಿಯು ನಾಲ್ಕನೇ ಕ್ರಮಾಂಕದಲ್ಲಿ ಆಡಿರುವ ರಿಝ್ವಿ ಎರಡೂ ಸಂದರ್ಭದಲ್ಲಿ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಲಕ್ನೊ ವಿರುದ್ಧ ಆಡಿರುವ ಮೊದಲ ಪಂದ್ಯದಲ್ಲಿ 47 ಎಸೆತಗಳಲ್ಲಿ ಔಟಾಗದೆ 70 ರನ್ ಗಳಿಸಿದ್ದ ರಿಝ್ವಿ, ಮುಂಬೈ ಇಂಡಿಯನ್ಸ್ ವಿರುದ್ಧ ಆಡಿರುವ ಎರಡನೇ ಪಂದ್ಯದಲ್ಲಿ 51 ಎಸೆತಗಳಲ್ಲಿ 90 ರನ್ ಗಳಿಸಿದ್ದರು. ಈ ಎರಡು ಇನಿಂಗ್ಸ್ಗಳಿಗಾಗಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿಯನ್ನು ಪಡೆದಿದ್ದರು. ಒಟ್ಟು 160 ರನ್ ಗಳಿಸಿರುವ ರಿಝ್ವಿಗೆ ಹೈದರಾಬಾದ್ ತಂಡದ ಬ್ಯಾಟರ್ ಹೆನ್ರಿಕ್ ಕ್ಲಾಸೆನ್(145 ರನ್)ಪೈಪೋಟಿ ನೀಡುತ್ತಿದ್ದಾರೆ. ಕ್ಲಾಸೆನ್ 147ರ ಸ್ಟ್ರೈಕ್ರೇಟ್ನಲ್ಲಿ 31, 52 ಹಾಗೂ 62 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ಬ್ಯಾಟರ್ ರೋಹಿತ್ ಶರ್ಮಾ ಒಟ್ಟು 113 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಆರ್ಸಿಬಿಯ ದೇವದತ್ತ ಪಡಿಕ್ಕಲ್(111 ರನ್), ಪಂಜಾಬ್ ಕಿಂಗ್ಸ್ನ ಕೂಪರ್ ಕೊನಲಿ(107 ರನ್)ಹಾಗೂ ಕೆಕೆಆರ್ನ ಎ.ರಘುವಂಶಿ(103)ನೂರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಪರ್ಪಲ್ ಕ್ಯಾಪ್ : ಪ್ರಸಕ್ತ ಐಪಿಎಲ್ನಲ್ಲಿ ನಾಲ್ವರು ಬೌಲರ್ಗಳು ತಲಾ ಐದು ವಿಕೆಟ್ಗಳನ್ನು ಉರುಳಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ರವಿ ಬಿಷ್ಣೋಯಿ ರಾಜಸ್ಥಾನ ರಾಯಲ್ಸ್ ಪರವಾಗಿ 41 ರನ್ಗೆ ನಾಲ್ಕು ವಿಕೆಟ್ಗಳನ್ನು ಪಡೆದಿದ್ದರು. ಸದ್ಯ ಅವರು ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ. ಕೆಕೆಆರ್ನ ಬ್ಲೆಸ್ಸಿಂಗ್ ಮುಝರ್ಬನಿ ಎಸ್ಆರ್ಎಚ್ ವಿರುದ್ಧ ನಾಲ್ಕು ವಿಕೆಟ್ ಉರುಳಿಸಿದ್ದರು. ಪಂಜಾಬ್ ಕಿಂಗ್ಸ್ನ ವಿಜಯಕುಮಾರ ವೈಶಾಕ್, ಆರ್ಸಿಬಿಯ ಜೇಕಬ್ ಡಫಿ ಹಾಗೂ ಸಿಎಸ್ಕೆಯ ಅನ್ಶುಲ್ ಕಾಂಬೋಜ್ ಕೂಡ ಒಟ್ಟು ಐದು ವಿಕೆಟ್ ಪಡೆದಿದ್ದಾರೆ.
Kalaburagi | ವಿದ್ಯಾರ್ಥಿಗಳ ಸೇವಾ ಮನೋಭಾವ ಶ್ಲಾಘನೀಯ : ಡಾ.ಕರಿಗೂಳೇಶ್ವರ
ಕಲಬುರಗಿ : ಇಂದಿನ ಬಹುತೇಕ ಮಹಾವಿದ್ಯಾಲಯಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕಗಳು ಇದ್ದರೂ, ಎನ್.ವಿ.ಕಾಲೇಜಿನ ವಿದ್ಯಾರ್ಥಿಗಳು ತೋರಿಸಿರುವ ಸೇವಾ ಮನೋಭಾವ ಅತ್ಯಂತ ಶ್ಲಾಘನೀಯ ಎಂದು ಡಾ.ಕರಿಗೂಳೇಶ್ವರ ಅಭಿಪ್ರಾಯಪಟ್ಟರು. ಕಲಬುರಗಿ ತಾಲೂಕಿನ ಔರಾದ್ (ಬಿ) ಗ್ರಾಮದ ಶ್ರೀ ಸ್ವಾಮಿ ಸಮರ್ಥ ದೇವಸ್ಥಾನದ ಆವರಣದಲ್ಲಿ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ, ಐ.ಕ್ಯೂ.ಎ.ಸಿ. ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳಿಗೆ ಸಮಯ ಪಾಲನೆ, ಶಿಸ್ತು ಹಾಗೂ ಹಸಿವಿನ ಮಹತ್ವವನ್ನು ತಿಳಿಸಿಕೊಡುವುದರ ಜೊತೆಗೆ ಅವರೊಳಗಿನ ಅಡಗಿರುವ ಪ್ರತಿಭೆಯನ್ನು ಹೊರತೆಗೆದೆಯುವ ವೇದಿಕೆಯಾಗಿವೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೂತನ ವಿದ್ಯಾಲಯ ಸಂಸ್ಥೆಯ ಕಾಲೇಜು ಶೈಕ್ಷಣಿಕ ಮಂಡಳಿಯ ಸದಸ್ಯರಾದ ಡಾ. ಸದಾಶಿವ ಆರ್. ಜಿಡಗೀಕರ್ ಮಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ನೆರವಾಗುತ್ತವೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೋಹಿನಿ ಸದಾಶಿವ ಜಿಡಗೀಕರ್ ಕೂಡ ಮಾತನಾಡಿದರು. ವೇದಿಕೆಯಲ್ಲಿ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಎನ್.ಎಸ್.ಎಸ್. ಅಧಿಕಾರಿ ಡಾ. ದಯಾನಂದ ಎಂ. ಶಾಸ್ತ್ರಿ, ಶ್ರೀಕಾಂತ್ ಪಂಡಿತ ಹಾಗೂ ಡಾ. ಮಲ್ಲಿನಾಥ ಎಸ್. ತಳವಾರ ಉಪಸ್ಥಿತರಿದ್ದರು.
ಮಿಸ್ಟರಿ ಸ್ರಿನ್ನರ್ ಗಳಾದ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಗಳು. ಅವರಿಬ್ಬರಲ್ಲಿ ಒಬ್ಬರು ತಂಡದಲ್ಲಿದ್ದರೂ ಎದುರಾಳಿ ತಂಡ ನಿರಾಳವಾಗುತ್ತದೆ. ಅಂಥದ್ದರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಇವರಿಬ್ಬರೂ ಹೊರಗುಳಿದಿದ್ದಾರೆ. ಇದಕ್ಕೆ ಅನಾರೋಗ್ಯವೇ ಕಾರಣ ಎಂದು ನಾಯಕ ಅಜಿಂಕ್ಯ ರಹಾನೆ ಅವರು ತಿಳಿಸಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಸೋಮವಾರ ಟಾಸ್ ಗೆದ್ದ ಅಜಿಂಕ್ಯ ರಹಾನೆ ಅವರು ಬ್ಯಾಟಿಂಗ್ ಆಯ್ದುಕೊಂಡರು. ಬಳಿಕ ನಿರೂಪಕರ ಜೊತೆ ಮಾತನಾಡಿದ ಅವರು, ವಿಕೆಟ್ ಉತ್ತಮವಾಗಿ ಕಾಣುತ್ತಿರುವುದರಿಂದ ನಾವು ಮೊದಲು ಬ್ಯಾಟಿಂಗ್ ಅನ್ನು ಆರಿಸಿಕೊಂಡಿದ್ದೇವೆ. ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದರು. ವರುಣ್ ಚಕ್ರವರ್ತಿ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಪಂದ್ಯದಲ್ಲಿ ಬೆರಳಿನ ಗಾಯಗೊಂಡಿದ್ದರಿಂದ ಹೊರಗುಳಿದಿದ್ದರೆ, ಸುನಿಲ್ ನರೈನ್ ಅವರು ಅನಾರೋಗ್ಯದಿಂದಾಗಿ ಪಂದ್ಯವನ್ನು ಆಡುತ್ತಿಲ್ಲ. ಅವರಿಬ್ಬರ ಬದಲಿಗೆ ನಮದೀಪ್ ಸೈನಿ ಮತ್ತು ರೋವ್ಮನ್ ಪೊವೆಲ್ ಅವರು ಆಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.()ಇದೇವೇಳೆ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿರುವ ಮಧ್ಯಮ ವೇಗಿ ಹರ್ಷಿತ್ ರಾಣಾ ಅವರು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡವನ್ನು ಹುರಿದುಂಬಿಸುವ ಸಲುವಾಗಿ ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಆಗಮಿಸಿದ್ದು ಗಮನ ಸೆಳೆಯಿತು. ಬಾರ್ಲೆಟ್ ಮಾರಕ ಬೌಲಿಂಗ್ ಅಜಿಂಕ್ಯೆ ರಹಾನೆ ಬಳಗದ ಲೆಕ್ಕಾಚಾರವನ್ನು ಪಂಜಾಬ್ ಕಿಂಗ್ಸ್ ತಂಡದ ಮಧ್ಯಮ ವೇಗಿ ಕ್ಸೇವಿಯರ್ ಬಾರ್ಲೆಟ್ ಅವರು ಬುಡಮೇಲು ಮಾಡಿದರು. ಅಪಾಯಕಾರಿ ಫಿನ್ ಅಲೆನ್(6 ಎಸೆತದಲ್ಲಿ 8 ರನ್) ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು 2ನೇ ಓವರ್ ನ 4ನೇ ಮತ್ತು ಕೊನೇ ಎಸೆತದಲ್ಲಿ ಔಟ್ ಮಾಡಿದರು. ಹೀಗಾಗಿ ಕೋಲ್ಕತಾ ತಂಡ ಸಂಕಷ್ಟದಲ್ಲಿ ಸಿಲುಕಿತು. 3.4 ಓವರ್ ಗಳಾದಾಗ ಮಳೆ ಬಂದ ಕಾರಣ ಪಂದ್ಯಕ್ಕೆ ಅಡಚಣೆಯಾಯಿತು. ಈ ವೇಳೆ 6 ಎಸೆತದಿಂದ 8 ರನ್ ಗಳಿಸಿದ್ದ ನಾಯಕ ಅಜಿಂಕ್ಯ ರಹಾನೆ ಮತ್ತು 7 ಎಸೆತದಿಂದ ಅಷ್ಟೇ ರನ್ ಗಳಿಸಿದ ಅಂಗಕ್ರಿಶ್ ರಘುವಂಶಿ ಕ್ರೀಸ್ ಕಾಯ್ದುಕೊಂಡಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್ ಅಜಿಂಕ್ಯ ರಹಾನೆ(ನಾಯಕ) ಫಿನ್ ಅಲೆನ್, ಕ್ಯಾಮೆರಾನ್ ಗ್ರೀನ್, ಆಂಗಕ್ರಿಶ್ ರಘುವಂಶಿ, ರೋವ್ಮನ್ ಪೊವೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ನವದೀಪ್ ಸೈನಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್ ಶ್ರೇಯಸ್ ಅಯ್ಯರ್ (ನಾಯಕ), ಪ್ರಭಸಿಮ್ರಾನ್ ಸಿಂಗ್, ಕೂಪರ್ ಕೊನೊಲಿ, ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್ಕುಮಾರ್ ವೈಶಾಕ್, ಅರ್ಷ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಬೆಂಗಳೂರು| ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸ್ಟ್ಯಾಂಡ್ ಉದ್ಘಾಟನೆ
ಬೆಂಗಳೂರು, ಎ.5: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರವಿವಾರ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಸ್ಟ್ಯಾಂಡ್ಗಳನ್ನು ಅವರ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು. ಕರ್ನಾಟಕದ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್ಸಿಎ)ಅಧ್ಯಕ್ಷರು ಹಾಗೂ ಇಬ್ಬರು ಲೆಜೆಂಡ್ಗಳ ದೀರ್ಘಕಾಲದ ಸಹ ಆಟಗಾರ ವೆಂಕಟೇಶ್ ಪ್ರಸಾದ್ ಹಾಗೂ ಉಪಾಧ್ಯಕ್ಷ ಸುಜೀತ್ ಸೋಮ್ಸುಂದರ್ ಸಂಸ್ಥೆಯ ಇತರ ಸದಸ್ಯರುಗಳೊಂದಿಗೆ ಅಧಿಕೃತ ಅನಾವರಣ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಿದರು. ಚಿನ್ನಸ್ವಾಮಿ ಸ್ಟೇಡಿಯಂನ ಎಂಡ್ಸ್/ಸ್ಟ್ಯಾಂಡ್ಗಳಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 24,177 ರನ್ ಗಳಿಸಿರುವ ದ್ರಾವಿಡ್, 956 ಅಂತರ್ರಾಷ್ಟ್ರೀಯ ವಿಕೆಟ್ಗಳನ್ನು ಗಳಿಸಿರುವ ಕುಂಬ್ಳೆ ಹಾಗೂ ಭಾರತದ ಮಾಜಿ ಮಹಿಳಾ ಕ್ರಿಕೆಟರ್ ಶಾಂತಾ ರಂಗಸ್ವಾಮಿ ಅವರ ಹೆಸರನ್ನು ಇಡಲಾಗುವುದು ಎಂದು ಫೆಬ್ರವರಿ 14ರಂದು ಕೆಎಸ್ಸಿಎ ಪ್ರಕಟಿಸಿತ್ತು. ‘‘ಇದು ನನ್ನ ಪಾಲಿಗೆ ಎರಡನೇ ಮನೆಯಿದ್ದಂತೆ, ನಮ್ಮ ಮನೆಗಳಿಗಿಂತ ಹೆಚ್ಚು ಸಮಯವನ್ನು ಇಲ್ಲೇ ಕಳೆದಿದ್ದೇವೆ. ಈ ಸ್ಥಳವು ನನಗೆ ಎಲ್ಲವನ್ನೂ ನೀಡಿದೆ. ಪ್ರತಿಷ್ಠಿತ ಮೈದಾನವು ನನ್ನ ಜೀವನಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಸ್ಟೇಡಿಯಂನ ಸ್ಟ್ಯಾಂಡ್ಗೆ ನನ್ನ ಹೆಸರನ್ನು ಇಡಲು ನಿರ್ಧರಿಸಿರುವ ವೆಂಕಟೇಶ ಪ್ರಸಾದ್ ಹಾಗೂ ಅವರ ಸಮಿತಿಗೆ ಧನ್ಯವಾದಗಳು’’ ಎಂದು ದ್ರಾವಿಡ್ ಹೇಳಿದ್ದಾರೆ. ದ್ರಾವಿಡ್ ಅವರ ತಾಯಿ ಪುಷ್ಪಾ ದ್ರಾವಿಡ್ ಹಾಗೂ ಸಹೋದರ ವಿಜಯ ಅವರು ಭವ್ಯ ಕ್ಷಣಕ್ಕೆ ಸಾಕ್ಷಿಯಾದರು. ಕುಂಬ್ಳೆ ಅವರ ಪತ್ನಿ ಚೇತನಾ, ಮಗ ಮಯಾಸ್ ಹಾಗೂ ಪುತ್ರಿಯರಾದ ಆರೂನಿ ಹಾಗೂ ಸ್ವಸ್ಥಿ ಕೂಡ ಈ ವೇಳೆ ಉಪಸ್ಥಿತರಿದ್ದರು.
Aland | ಮುಂಗಾರು ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ: ತಿಪ್ಪೇಸ್ವಾಮಿ
ಆಳಂದ: ತಾಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರು ರಸಗೊಬ್ಬರ ಖರೀದಿಸಲು ಎಫ್ಐಡಿ (ರೈತ ಐಡಿ) ಸಂಖ್ಯೆ ಕಡ್ಡಾಯವಾಗಿರಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಸೂಚನೆಯಂತೆ, ಎಫ್ಐಡಿ ಆಧಾರದ ಮೇಲೆ ಕೆ-ಕಿಸಾನ್ ತಂತ್ರಾಂಶ ಮತ್ತು ಪಿಒಎಸ್ ಯಂತ್ರಗಳ ಮೂಲಕವೇ ರಸಗೊಬ್ಬರ ವಿತರಣೆ ನಡೆಯಲಿದೆ. ರೈತರ ಹೆಸರಿನಲ್ಲಿ ಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಹಾಗೂ ಮಿತವಾಗಿ ಗೊಬ್ಬರ ಬಳಕೆ ಮಾಡಲು ಈ ಕ್ರಮ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಿತ್ತನೆ ಮಾಡಿದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಅಗತ್ಯವಿರುವ ಪ್ರಮಾಣದ ರಸಗೊಬ್ಬರ ಮಾತ್ರ ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಎಫ್ಐಡಿ ಹೊಂದಿಲ್ಲದ ರೈತರು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಮೊಬೈಲ್ ಸಂಖ್ಯೆ ಹಾಗೂ ಜಾತಿ ಪ್ರಮಾಣಪತ್ರದೊಂದಿಗೆ ರೈತ ಸಂಪರ್ಕ ಕೇಂದ್ರ, ಕರ್ನಾಟಕ-ಒನ್, ಗ್ರಾಮ-ಒನ್ ಕೇಂದ್ರಗಳು ಅಥವಾ ಸಂಬಂಧಿತ ಇಲಾಖೆಗಳ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಮಾರಾಟಗಾರರು ಕಡ್ಡಾಯವಾಗಿ ರೈತರ ಎಫ್ಐಡಿ ನಮೂದಿಸಿ ಗೊಬ್ಬರ ಮಾರಾಟ ಮಾಡಬೇಕು. ನಿಗದಿತ ಬೆಲೆಗೆ ಮಾತ್ರ ಮಾರಾಟ ಮಾಡಬೇಕು ಹಾಗೂ ದರ ಮತ್ತು ದಾಸ್ತಾನು ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ರೈತರು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
Afzalpur | ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಭಂವರ್ಸಿಂಗ್ ಮೀನಾ
ಅಫಜಲಪುರ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳಿಗೆ ಈ ಸಮಸ್ಯೆ ವ್ಯಾಪಿಸುವ ಮುನ್ನ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸಿಇಒ ಭಂವರ್ಸಿಂಗ್ ಮೀನಾ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕುಡಿಯುವ ನೀರಿನ ನಿರ್ವಹಣೆ ಕುರಿತ ಮುಂಜಾಗ್ರತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಪಿಡಿಒಗಳು ಕೇಂದ್ರಸ್ಥಾನದಲ್ಲಿದ್ದು ಯಾವುದೇ ರೀತಿಯ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡದೇ ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು. ನೀರಿನ ಮೂಲಗಳ ಕೊರತೆ ಎದುರಾದಲ್ಲಿ ಜನರಿಗೆ ನೆಪ ಹೇಳದೇ ಖಾಸಗಿ ಮೂಲಗಳಿಂದಲಾದರೂ ನೀರು ಒದಗಿಸಬೇಕು. ಅನುದಾನ ಕೊರತೆಯಿದ್ದರೆ 15ನೇ ಹಣಕಾಸು, ಕೆಕೆಆರ್ ಡಿಬಿ, ಪಂಚಾಯತ್ ರಾಜ್ ಇಲಾಖೆ, ತಾಪಂ, ಜಿಪಂ ಹಾಗೂ ಸಚಿವ-ಶಾಸಕರ ನಿಧಿಗಳನ್ನು ಬಳಸಿಕೊಂಡು ಸಮಸ್ಯೆ ಪರಿಹರಿಸಬೇಕು ಎಂದು ಹೇಳಿದರು. ಈ ಹಿಂದೆ ನೀರಿನ ಸಮಸ್ಯೆ ಕಂಡುಬಂದ 23 ಗ್ರಾಮಗಳ ಮೇಲೆ ವಿಶೇಷ ನಿಗಾ ವಹಿಸಿ, ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇರುವ 6 ಗ್ರಾಮಗಳಲ್ಲಿ ನಿರಂತರ ಮೇಲ್ವಿಚಾರಣೆ ಮತ್ತು ತುರ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು. ತೀವ್ರ ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ತಾತ್ಕಾಲಿಕವಾಗಿ ಖಾಸಗಿ ಬೋರ್ವೆಲ್ಗಳ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು. ಗ್ರಾಮ, ತಾಂಡಾಗಳ ನೀರಿನ ಸಮಸ್ಯೆಗಳ ಬಗ್ಗೆ ದೂರುಗಳನ್ನು ದಾಖಲಿಸಲು ತಾಪಂ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚನೆ ನೀಡಿದರು. ತಹಶೀಲ್ದಾರ್ ಸಂಜೀವಕುಮಾರ ದಾಸರ ಹಾಗೂ ತಾಪಂ ಇಒ ವೀರಣ್ಣ ಕೌಲಗಿ ಮಾತನಾಡಿ, ಸಾರ್ವಜನಿಕರು ನೀರಿನ ಸಮಸ್ಯೆಗಳಿಗಾಗಿ ಸಹಾಯವಾಣಿ ಸಂಖ್ಯೆ 9187476270 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ಗಳ ಸ್ವಚ್ಛತೆ ಹಾಗೂ ಕ್ಲೋರಿನೇಶನ್ ಕಾರ್ಯವನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೇಳಿದರು. ಸಭೆಯಲ್ಲಿ ಗ್ರಾಪಂ ಪಿಡಿಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Kalaburagi | ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಕೊರತೆ ಇಲ್ಲ: ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್
ಕಲಬುರಗಿ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇದನ್ನು ಮನಗಂಡು ಜಿಲ್ಲೆಯಲ್ಲಿ ಡಿ.ಎ.ಪಿ, ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳ ಒಟ್ಟು 35,785 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದ್ದು, ಯಾವುದೇ ಕೊರತೆ ಇರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ. ನಗರದ ಹಳೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮುಂಗಾರು ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಯೂರಿಯಾ ಮಾರಾಟಕ್ಕೆ ರೈತರ ಫಾರ್ಮರ್ ಐಡಿ (ಎಫ್ಐಡಿ) ಸಂಖ್ಯೆ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು. ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ವಿವರ ನಮೂದಿಸಿ, ಅವರ ಜಮೀನಿನ ವಿಸ್ತೀರ್ಣ ಮತ್ತು ಬೆಳೆ ಆಧಾರದ ಮೇಲೆ ಅಗತ್ಯ ಪ್ರಮಾಣದ ಯೂರಿಯಾ ಮಾತ್ರ ವಿತರಣೆ ಮಾಡಲಾಗುತ್ತದೆ ಎಂದು ವಿವರಿಸಿದರು. ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಅಥವಾ ಕೃಷಿಯೇತರ ಉದ್ದೇಶಗಳಿಗೆ ಗೊಬ್ಬರ ವಿತರಿಸಿದರೆ ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ಹಾಗೂ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇದೇ ವೇಳೆ, ಅಧಿಕ ಪ್ರಮಾಣದಲ್ಲಿ ಯೂರಿಯಾ ಬಳಕೆಯನ್ನು ತಗ್ಗಿಸಲು ಸಂಯುಕ್ತ ರಸಗೊಬ್ಬರಗಳಾದ 20:20:0:13, 14:35:14, 15:15:15, 10:26:26, 12:32:16, 22:22:11 ಮುಂತಾದ ಗೊಬ್ಬರಗಳನ್ನು ಬಳಸುವಂತೆ ರೈತರಿಗೆ ಸಲಹೆ ನೀಡಲಾಗಿದೆ. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ (ಜಾರಿದಳ) ಶಿವಕುಮಾರ ಪ್ರಸಾದ್ ಮಾತನಾಡಿ, ಯಾವುದೇ ಕಾರಣಕ್ಕೂ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಕೃತಕ ಅಭಾವ ಸೃಷ್ಟಿಸಬಾರದು. ಹೆಚ್ಚುವರಿ ದರಕ್ಕೆ ಮಾರಾಟ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು. ಸಭೆಯಲ್ಲಿ ಕಲಬುರಗಿ ವಿಭಾಗದ ಉಪ ಕೃಷಿ ನಿರ್ದೇಶಕ (ಜಾರಿದಳ) ರಾದ ಮೃತ್ಯಂಜಯ ಪತಂಗೆ, ಕಲಬುರಗಿ ಜಿಲ್ಲೆಯ ಎಲ್ಲಾ ಸಹಾಯಕ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, (ಜಾರಿದಳ), ಕಲಬುರಗಿ, ಕೃಷಿ ಅಧಿಕಾರಿಗಳು, ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲೆಯ ಕೃಷಿ ಪರಿಕರ ವಿತರಕರು ಉಪಸ್ಥಿತರಿದ್ದರು.
ಉಡುಪಿ: ಎ.8ಕ್ಕೆ ‘ಯಕ್ಷಗಾನ ಮತ್ತು ಕಾರಂತರು’ ವಿಚಾರಗೋಷ್ಠಿ
ಉಡುಪಿ, ಎ.6: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಉಡುಪಿಯ ಯಕ್ಷಗಾನ ಕೇಂದ್ರ ಹಾಗೂ ಎಂಜಿಎಂ ಸಂಧ್ಯಾ ಕಾಲೇಜುಗಳ ಸಹಯೋಗದಲ್ಲಿ ಎಪ್ರಿಲ್ 8ರಂದು ಬೆಳಗ್ಗೆ 10:00 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಯಕ್ಷಗಾನ ಮತ್ತು ಕಾರಂತರು ವಿಷಯದ ಕುರಿತು ವಿಚಾರಗೋಷ್ಠಿ ಹಾಗೂ ‘ಅಳವು ಅರಿಯದ ಭಾಷೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಉದ್ಘಾಟಿಸ ಲಿದ್ದು, ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ, ಶಿಕ್ಷಣ ತಜ್ಞ ಹರಿಪ್ರಸಾದ್ ರೈ ಪುಸ್ತಕವನ್ನು ಬಿಡುಗಡೆ ಗೊಳಿಸಲಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರು ‘ಯಕ್ಷಗಾನ ಕಲಾಮೀಮಾಂಸೆ ಮತ್ತು ಅಧ್ಯಯನ: ಕಾರಂತರ ದೃಷ್ಟಿಕೋನ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ರಾದ ಡಾ.ದೇವಿದಾಸ್ ನಾಯಕ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ ಮುಖ್ಯ ಅತಿಥಿಗಳಾಗಿ ಭಾಗವ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಾರಾಮ ತೋಳ್ಪಾಡಿ, ಮಣಿಪಾಲ ಮಾಹೆಯ ನಿವೃತ್ತ ಪ್ರಾಧ್ಯಾಪಕ ಮತ್ತು ಚಿಂತಕ ಪ್ರೊ.ಕೆ.ಫಣಿರಾಜ್ ಹಾಗೂ ಮಂಗಳೂರಿನ ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ರಾಮದಾಸ ಪ್ರಭು ಅವರು ಕೃತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಸಲಿ ದ್ದಾರೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
ನಟಿ ರಶ್ಮಿಕಾ ಮಂದಣ್ಣಗೆ ತವರಿನ ಉಡುಗೊರೆ; ಕೊಡಗಿನ ಐಷಾರಾಮಿ ವಾಸದ ಮನೆ ಮಗಳ ಹೆಸರಿಗೆ ಬರೆದುಕೊಟ್ಟ ಅಪ್ಪ!
ನಟಿ ರಶ್ಮಿಕಾ ಮಂದಣ್ಣಗೆ ಮದುವೆ ಬಳಿಕ ಮೊದಲ ತವರಿನ ಉಡುಗೊರೆ ಸಿಕ್ಕಿದೆ. ಕೊಡಗಿನ ವಿರಾಜಪೇಟೆಯ ಐಷಾರಾಮಿ ಮನೆಯನ್ನು ಅವರ ಅಂತೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಮಂದಣ್ಣ ಅವರು ರಶ್ಮಿಕಾ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ. ಸೋಮವಾರ ಸ್ವತಃ ವಿರಾಜಪೇಟೆ ಉಪ ನೋಂದಾಣಿ ಕಚೇರಿಗೆ ನಟಿ ಆಗಮಿಸಿ ದಾಖಲೆ ಪತ್ರ ವರ್ಗಾವಣೆ ಕೆಲಸ ಮುಗಿಸಿದರು.
Kalaburagi | ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಆದರ್ಶ ನಾಯಕ: ಕುಲಪತಿ ಉಡಿಕೇರಿ
ಕಲಬುರಗಿ: ಬಾಬೂಜಿ ಎಂದೇ ಖ್ಯಾತರಾದ ಡಾ. ಬಾಬು ಜಗಜೀವನರಾಮ್ ಅವರು ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ ಹೋರಾಟದ ಮೂಲಕ ಆದರ್ಶ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಅಭಿಪ್ರಾಯಪಟ್ಟರು. ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಧಾಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದ 119ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ನಂತರ ದೇಶದಲ್ಲಿ ಉಂಟಾದ ಆಹಾರ ಸಮಸ್ಯೆಯನ್ನು ನಿವಾರಿಸಲು ಬಾಬೂಜಿ ಮಹತ್ವದ ಪಾತ್ರವಹಿಸಿದರು. ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರದ ಕೊರತೆಯನ್ನು ನೀಗಿಸಿ, ಶೋಷಿತರ ಸಂಕಷ್ಟಗಳಿಗೆ ಸ್ಪಂದಿಸಿದ ಮಹಾನ್ ನಾಯಕ ಎಂದು ಅವರು ಹೇಳಿದರು. ಕೇಂದ್ರ ಮಂತ್ರಿಮಂಡಲದ ಸದಸ್ಯರಾಗಿ ಅವರು ಸಾರಿಗೆ, ಆಹಾರ, ರೈಲ್ವೆ, ಕೃಷಿ, ಸಂವಹನ, ಸಮುದಾಯ ಅಭಿವೃದ್ಧಿ, ಕಾರ್ಮಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಲವರ್ಧನೆಗೆ ಆದ್ಯತೆ ನೀಡಿದ ಅವರು ಜನಪರ ನಾಯಕನಾಗಿದ್ದರು ಎಂದು ತಿಳಿಸಿದರು. ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಮಾತನಾಡಿ, ಬಡತನದ ನಡುವೆಯೂ ವಿದ್ಯಾಭ್ಯಾಸ ಪಡೆದು ಸಾಧನೆ ಮಾಡಿದ ಬಾಬು ಜಗಜೀವನರಾಮ್ ಅವರು ಕಠಿಣ ಪರಿಶ್ರಮದ ಪ್ರತೀಕವಾಗಿದ್ದಾರೆ. ಅಧಿಕಾರಕ್ಕಿಂತ ಸೇವೆ ಮತ್ತು ತ್ಯಾಗವೇ ಮುಖ್ಯ ಎಂಬ ಸಂದೇಶವನ್ನು ಅವರು ನೀಡಿದರು ಎಂದರು. ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದ ಬಾಬೂಜಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಸಮಾಜದ ಅಭಿವೃದ್ಧಿಗೆ ಮಾರ್ಗ ಎಂದು ತಿಳಿಸಿದ್ದರು. ಕೃಷಿ ಸಚಿವರಾಗಿ ಹೊಸ ತಂತ್ರಜ್ಞಾನಗಳ ಮೂಲಕ ಹಸಿರು ಕ್ರಾಂತಿಗೆ ಉತ್ತೇಜನ ನೀಡಿ ದೇಶಕ್ಕೆ ಆಹಾರ ಭದ್ರತೆ ಒದಗಿಸಿದ ಮಹಾನ್ ನಾಯಕರು ಎಂದು ಅವರು ಸ್ಮರಿಸಿದರು. ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ, ಬಾಬು ಜಗಜೀವನರಾಮ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ದೇವಿದಾಸ್ ಮಾಲೆ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ವಿಭಾಗದ ಡಾ. ಚಂದ್ರಕಾಂತ ಬಿರಾದಾರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬ್ರಹ್ಮಾವರ: ಕ್ರಾಸ್ಲ್ಯಾಂಡ್ ಕಾಲೇಜಿನಲ್ಲಿ ಕೌಶಲ್ಯ ತರಬೇತಿ ಉದ್ಘಾಟನೆ
ಬ್ರಹ್ಮಾವರ, ಎ.6: ದೇಶದ ಅಭಿವೃದ್ಧಿಗೆ ಕೌಶಲ್ಯಾಧಾರಿತ ತರಬೇತಿ ಅತಿ ಅಗತ್ಯವಿದ್ದು, ಯುವ ಜನತೆ ತಮ್ಮ ಆಸಕ್ತಿಯ ಕೌಶಲ್ಯ ತರಬೇತಿ ಪಡೆದು ಸ್ವಯಂ ಉದ್ಯೋಗದತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಕಾಲೇಜಿನಲ್ಲಿ 35 ಮಂದಿ ವಿದ್ಯಾರ್ಥಿಗಳಿಗೆ ಇಂದು ಪ್ರಾರಂಭಗೊಂಡ ಉದ್ಯೋಗ ಆಧಾರಿಕ ಕೌಶಲ್ಯ ತರಬೇತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ, ಪ್ರಶಿಕ್ಷಣಾರ್ಥಿಗಳಿಗೆ ಉಚಿತ ಕಿಟ್ ವಿತರಿಸಿ ಅವರು ಮಾತನಾಡುತಿದ್ದರು. ದೀನ್ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಜೆವೈ) ಭಾರತ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಒಂದು ಪ್ರಮುಖ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ಕಾರ್ಯಕ್ರಮವಾಗಿದೆ ಎಂದು ವಿವರಿಸಿದ ಸಂಸದ ಕೋಟ, ಈ ಯೋಜನೆ ಯಡಿ 18ರಿಂದ 35 ವರ್ಷ ವಯಸ್ಸಿನ ಗ್ರಾಮೀಣ ಬಡ ಯುವಕರಿಗೆ ಉಚಿತ ತರಬೇತಿ ಮತ್ತು ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಮೂರು ತಿಂಗಳ ಉಚಿತ ತರಬೇತಿ ನೀಡಿ, ಮಾಸಿಕವಾಗಿ 3,500ರೂ. ಸ್ಟೈಪಂಡ್ ಫಂಡ್ ನೀಡ ಲಾಗುತ್ತಿದೆ. ಉದ್ಯೋಗ ದೊರೆತ ನಂತರ ಪ್ರತಿ ತಿಂಗಳು 1,200 ರೂ.ನಂತೆ ಒಟ್ಟು 6 ತಿಂಗಳ ಅವಧಿಗೆ 7200 ರೂ.ಗಳನ್ನು ಸಹಾಯಧನವಾಗಿ ವಿದ್ಯಾರ್ಥಿಗಳಿಗೆ ನೇರವಾಗಿ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಪಾವತಿಸಲಾ ಗುತ್ತದೆ. ಈ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ದೇಶದ ಅಭಿವೃದ್ಧಿಗೆ ಕೌಶಲ್ಯಾಧಾರಿತ ತರಬೇತಿ ಮತ್ತು ಉದ್ಯೋಗ ಅತ್ಯಂತ ಪ್ರಮುಖವಾಗಿದ್ದು, ಕೇಂದ್ರದ ಯೋಜನೆ ಗಳನ್ನು ಪರಿಣಾಮಕಾರಿಯಾಗಿ ಸದುಪಯೋಗ ಪಡೆದುಕೊಳ್ಳಲು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕ್ರಾಸ್ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ಕ್ಲೈವ್, ತರಬೇತಿಯ ಮುಖ್ಯಸ್ಥ ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ಯೋಜನೆಯ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕ ವಿಜಯ್ಕುಮಾರ್ ಪ್ರಾಸ್ತಾವಿಕ ಮಾತುಗಳ ವೇಳೆ ಸಂಪೂರ್ಣ ಮಾಹಿತಿ ನೀಡಿದರು. ದೀಪಾ ಅನಂತರಾವ್ ಕಿತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.
RCB: ಆರ್ಸಿಬಿ ಬೆಸ್ಟ್ ಫಿನಿಶರ್ ಹೆಸರು ರಿವೀಲ್ ಮಾಡಿದ ನಾಯಕ ರಜತ್ ಪಾಟಿದಾರ್
RCB IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಅವರ ಫಿನಿಶಿಂಗ್ ಕೌಶಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮತ್ತೊಂದೆಡೆ, ಸಿಎಸ್ಕೆ ತಂಡ ಸೋಲಿನ ಹಾದಿ ಹಿಡಿದಿದೆ.
Kalaburagi | ಯುವಕರ ಪಾತ್ರ ದೇಶ ನಿರ್ಮಾಣದಲ್ಲಿ ಮಹತ್ವದ್ದಾಗಿದೆ : ಡಾ. ದಯಾನಂದ ಹೊಡಲ್
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್.ಇರಾಣಿ ಪದವಿ ಮಹಾವಿದ್ಯಾಲಯ, ಕಲಬುರಗಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ಸಂಯುಕ್ತ ಆಶ್ರಯದಲ್ಲಿ 2025-2026ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ.ದಯಾನಂದ ಹೊಡಲ್ ಅವರು ಮಾತನಾಡಿ, ಶಕ್ತಿಶಾಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಯುವಕರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದಲ್ಲಿಯೇ ಶಕ್ತಿಯಾಗಿದ್ದು, ಅವರಲ್ಲಿ ಉತ್ಸಾಹ, ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ಪರಿಶ್ರಮ ಇರುವುದರಿಂದ ದೇಶದ ಅಭಿವೃದ್ಧಿಗೆ ಪ್ರಮುಖ ಶಕ್ತಿಯಾಗುತ್ತಾರೆ ಎಂದು ಹೇಳಿದರು. ಯುವಕರು ಶಿಕ್ಷಣದ ಮೂಲಕ ಜ್ಞಾನವನ್ನು ಪಡೆದು ಅದನ್ನು ಸಮಾಜದ ಒಳ್ಳೆಯಕ್ಕಾಗಿ ಬಳಸಬೇಕು. ತಂತ್ರಜ್ಞಾನ, ವಿಜ್ಞಾನ, ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳಲ್ಲಿ ಯುವಕರ ಭಾಗವಹಿಸುವಿಕೆ ಹೆಚ್ಚಿದಂತೆ ದೇಶದ ಆರ್ಥಿಕ ಅಭಿವೃದ್ಧಿ ವೇಗವಾಗುತ್ತದೆ. ಉದ್ಯಮಶೀಲತೆಯ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದೂ ಯುವಕರ ಪ್ರಮುಖ ಹೊಣೆಗಾರಿಕೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮೈತ್ರಾದೇವಿ ಶಿವರಾಯ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಹಾಗೂ ದೇಶದ ಪ್ರಗತಿ ಮತ್ತು ರಕ್ಷಣೆಗೆ ಕೈಜೋಡಿಸಬಹುದು ಎಂದು ಸಲಹೆ ನೀಡಿದರು. ಪ್ರವೀಣ್ ಪವಾರ್ ಅವರು ನಿರೂಪಿಸಿದರು. ವಿದ್ಯಾಸಾಗರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಲ್ಪಿಜಿ ಸಮಸ್ಯೆ: ಸಚಿವ ಕೆ.ಎಚ್.ಮುನಿಯಪ್ಪ ನಿವಾಸಕ್ಕೆ ಆಟೋ ಚಾಲಕರ ಮುತ್ತಿಗೆ
ಚಾಲಕರು ಪ್ರತಿಭಟನೆ ಮಾಡುವುದಾದರೆ, ಪ್ರಧಾನಿ ಮೋದಿ ನಿವಾಸಕ್ಕೆ ಹೋಗಿ ಪ್ರತಿಭಟಿಸಬೇಕು : ಕೆ.ಎಚ್.ಮುನಿಯಪ್ಪ
ಸಂಪೂರ್ಣ ಇರಾನ್ ಸರ್ವನಾಶ ಮಾಡುವ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್; ಇದೇ ಫೈನಲ್ ತಾನೆ ಎಂದ ಮೊಜ್ತಬಾ ಖಮೇನಿ!
ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಹೇಳಿಕೆಗಳು, ಭಾರೀ ಗೊಂದಲವನ್ನು ಸೃಷ್ಟಿಸುತ್ತಿವೆ. ಒಮ್ಮೆ ಇರಾನ್ ಜೊತೆಗೆ ಕದನ ವಿರಾಮ ಒಪ್ಪಂದದ ಬಗ್ಗೆ ಮಾತನಾಡುವ ಟ್ರಂಪ್, ಮತ್ತೊಮ್ಮೆ ಇರಾನ್ ಮೇಲಿನ ದಾಳಿಗಳನ್ನು ತೀವ್ರಗೊಳಿಸುವ ಕುರಿತು ಹೇಳಿಕೆ ನೀಡುತ್ತಾರೆ. ಇದಿಗ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಇಡೀ ಇರಾನ್ನನ್ನು ಸರ್ವನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ಷರು ಬೆದರಿಕೆ ಹಾಕಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇಲ್ಲಿದೆ ಮಾಹಿತಿ.
Kalaburagi | ಶ್ರೀ ಶರಣಬಸವೇಶ್ವರ ಮಹಾದಾಸೋಹಕ್ಕೆ ಆಹಾರ ಧಾನ್ಯ ಸಮರ್ಪಣೆ : ಭವ್ಯ ಮೆರವಣಿಗೆ
ಕಲಬುರಗಿ: ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ, ಗುಲ್ಬರ್ಗಾ ದಾಲ್ ಮಿಲ್ಲರ್ಸ್ ಅಸೋಶಿಯೇಷನ್, ಕೃಷಿ ಪರಿಕರ ಮಾರಾಟಗಾರರ ಸಂಘ ಹಾಗೂ ಅಕ್ಕಿ ವ್ಯಾಪಾರಸ್ಥರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ನೆಹರು ಗಂಜ ಹನುಮಾನ ಮಂದಿರದಿಂದ ಸಕಲ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಮುಖ್ಯಾಂತರ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮಹಾದಾಸೋಹಕ್ಕೆ ಆಹಾರ ಧಾನ್ಯ ಸಮರ್ಪಣೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಮಂತ ಉದನೂರ, ಸಂತೋಷ್ ಲಂಗರ್, ಶರಣಬಸಪ್ಪ ತಾವರಗೇರಾ, ಬಸವರಾಜ್ ತಡಕಲ್, ಮಲ್ಲಿಕಾರ್ಜುನ್ ಮಾನಕರ, ಬಸವರಾಜ ಮಂಗಲಗಿ, ಅಶೋಕ್ ಚನ್ನಬಸಪ್ಪ ಸಿರಗೊಂಡ, ರಾಜಶೇಖರ್, ಚಂದ್ರಶೇಖರ್ ಕೊಬಾಳ, ರವೀಂದ್ರ ಮಾದಮ್ ಶೆಟ್ಟಿ, ಶರಣಬಸಪ್ಪ ನಂದಿಕೂರ, ಸಂತೋಷ ಪಾಟೀಲ, ಸತೀಶ ರಂಗಾ, ಲಿಂಗಬಸಪ್ಪ ರಾಯನಾಡ ಸೇರಿದಂತೆ ವ್ಯಾಪಾರಸ್ಥರು, ಭಕ್ತರು ಹಾಗೂ ಸಾರ್ವಜನಿಕರು, ಸಂಘದ ಪದಾಧಿಕಾರಿಗಳು ಇದ್ದರು.
Kalaburagi | ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಆಚರಣೆ
ಕಲಬುರಗಿ: ನಗರದ ಜಿಲ್ಲಾ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ ಅವರ 119ನೇ ಜಯಂತಿಯನ್ನು ವಿಜೃಂಭಣೆಯಿoದ ಆಚರಿಸಲಾಯಿತು. ಕಾರ್ಯಕ್ರಮವು ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಕಾರ್ಯಾಧ್ಯಕ್ಷ ರಾಮಚಂದ್ರ ಅಟ್ಟೂರ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ಶಾಮರಾವ್ ಸುರನ್, ಮಹಾಂತಪ್ಪ ಮದರಿ, ಶಂಕರಗೌಡ ಪಾಟೀಲ, ಚಂದ್ರಕಾoತ ಮೋರೆ, ದೇವಿಂದ್ರಪ್ಪ ಹಸನಾಪುರ, ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ ಹಾಗೂ ಸದಸ್ಯರಾದ ಸುನೀತಾ, ಮಾನಂದಾ ಎಸ್ ಪದಶೆಟ್ಟಿ, ಗೀತಾ, ಉಮಾದೇವಿ ಹೂಗಾರ್, ಅನುರಾಧ ಕೆ.ಆರ್, ಚಂದ್ರಕಲಾ ವಾಡಿ, ಮಲ್ಲಿಕಾರ್ಜುನ ಸಂಗಾಣಿ, ವಿಠಲ್ ಜಾಧವ್, ಎಸ್.ಬಿ. ಮುಸ್ತಫಾ, ಅನ್ವರ್ ಪಟೇಲ್ ಕಗ್ಗನಮಡಿ, ನರಸಯ್ಯ ಕಲಾಲ್, ಸುನಿಲ್ ಗಾಜರೆ, ಖಾಜಾ ಪಟೇಲ್ ಸರಡಗಿ, ಶಿವಲಿಂಗಪ್ಪ ಪಾಟೀಲ, ಮಾಣಿಕ್ ಪ್ರಭು ಶಹಾಪುರ, ನಾಗೇಶ್ ಹೆಬ್ಬಾಳ, ಕಿಶೋರ್ ಕುಮಾರ್, ಗಂಗಾಧರ ಪಂಚಾಳ, ಸಂಜುಕುಮಾರ್ ಮಡಕಿ, ವಿಕ್ರಮ್ ಆಳಂದ, ಏಸುನಾಥ್, ಹಣಮಂತ ಕಂದಳ್ಳಿ, ಅಬ್ದುಲ್ ಗನಿ ಸಾಬಿರ್, ಶ್ರೀಧರ್ ಕೊಲ್ಲೂರ್, ಸಿದ್ರಾಮಪ್ಪ ಹೊದ್ಲೂರ, ಶ್ರೀನಿವಾಸ ಜಮಾದಾರ್, ಹೊಬ್ಸಿಂಗ್ ಚವ್ಹಾಣ, ವಿಜಯಕುಮಾರ್ ಸಾವಳಗಿ, ಹನುಮಂತರಾವ್ ಸಂಗೊಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಸ್ .ಯು. ಪಣಿಯಾಡಿ ಜನ್ಮ ದಿನಾಚರಣೆ
ಮಂಗಳೂರು: ತುಳುವರು ತಮ್ಮ ನಾಡು ನುಡಿ, ಸಾಹಿತ್ಯ ಸಂಸ್ಕೃತಿ ಗಳ ಕುರಿತು ಅಭಿಮಾನದಿಂದ ದುಡಿಯ ಬೇಕಾಗಿದೆ. ಎಸ್. ಯು. ಪಣಿಯಾಡಿಯವರು ಹಾಕಿಕೊಟ್ಟ ತುಳುವ ಚಳುವಳದ ಆಶಯ ಗಳನ್ನು ಅರಿತು ಕೊಂಡು ಮುನ್ನಡೆ ಸ ಬೇಕು ಎಂದು ಹಿರಿಯ ಕನ್ನಡ ತುಳು ಸಾಹಿತಿ ಮತ್ತು ಪತ್ರಕರ್ತ ಯಶವಂತ ಬೋಳೂರು ನುಡಿದರು. ಅವರು ತುಳು ಚಳುವಳದ ನೇತಾರ ಸಾಹಿತಿ ಎಸ್. ಯು. ಪಣಿಯಾಡಿಯವರ ಜನ್ಮದಿನದ ನೆನಪಿನಲ್ಲಿ ಮಂಗಳೂರಿನ ಕವಿ ಮಿತ್ರರು ಸುಲ್ತಾನ ಬತ್ತೇರಿ ಯ ಬೋಳೂರು ಬೇ ಯಲ್ಲಿ ಹಮ್ಮಿಕೊಂಡಿದ್ದ ಪಣಿಯಾಡಿ ನೆನಪು ತುಳು ಕವಿಗೋಷ್ಠಿ..ಮಾತು ಕತೆ ಯಲ್ಲಿ ಮಾತನಾಡಿದರು. ಗೋವಿಂದ ದಾಸ ಕಾಲೇಜು ನ ವಿಶ್ರಾಂತ ಪ್ರಾಂಶು ಪಾಲ ಪ್ರೊ. ಕೃಷ್ಣ ಮೂರ್ತಿ ಪಿ. ಮಾತನಾಡಿ ಎಸ್. ಯು. ಪಣಿ ಯಾಡಿ ಯವರು ತುಳುವ ಮಹಾ ಸಭೆ, ತುಳುನಾಡ್ ಪ್ರೆಸ್, ತುಳುನಾಡ್ ಬ್ಯಾಂಕ್, ಅಂತ ರಂಗ ಪತ್ರಿಕೆ ಗಳನ್ನು ನಡೆಸುವ ಜೊತೆಗೆ ಸ್ವಾತಂತ್ರ್ಯ ಹೋರಾಟ ಮತ್ತು ತುಳು ಚಳುವಳಿ ಗಳ ನ್ನು ಮುನ್ನಡೆಸಿ ದವರು ಎಂದರು. ಕನ್ನಡ ನವೋ ದಯ ಸಾಹಿತ್ಯ ಘಟ್ಟ ದ ಸಂದರ್ಭದಲ್ಲಿ ಯೇ ತುಳು ಭಾಷೆ ಯಲ್ಲಿ ಸಾಹಿತ್ಯ ರಚನೆ ಯ ಕಾರ್ಯ ಕ್ಕೆ ಪಣಿ ಯಾಡಿಯವರು ಶ್ರಮಿಸಿ ದರು ಎಂದರು. ಸಾಹಿತಿ ರಘು ಇಡ್ಕಿದು ಅವರು ತುಳುವ ಸಾಹಿತ್ಯ ಮಾಲೆ ಯಲ್ಲಿ ಪ್ರಕಟವಾಗಿದ್ದ ನಾರಾಯಣ ಕಿಲ್ಲೆ ಯವರ ಕಾನಿಗೆ ಕವನ ಸಂಕಲನ ದ ತುಳುನಾಡ್ ಕವನ ಹಾ ಗು ಮಾಧವ ತಿಂಗಳಾಯರ ಜನ ಮರ್ಲ್ ನಾಟಕ ದ ಮಂಗಲ ಪದ್ಯ ವಾಚಿಸಿ ಪಣಿ ಯಾಡಿ ಯವರ ಕಾಲಘಟ್ಟದ ತುಳು ಸಾಹಿತ್ಯ ವಿಶೇಷತೆಗಳನ್ನು ತಿಳಿಸಿದರು. ಹಿರಿಯ ಕವಿ ಡಾ. ಸುರೇಶ ನೆಗಳಗುಳಿ, ಪಿಂಗಾ ರ ಪತ್ರಿಕೆ ಯ ಸಂಪಾದಕ ರೇಮಂಡ್ ಡಿಕುನಾ ತಾಕೊಡೆ, ಅಮೃತ ಪ್ರಕಾಶ ಪತ್ರಿಕೆ ಯ ಸಂಪಾದಕಿ ಮಾಲತಿ ಶೆಟ್ಟಿ ಮಾಣುರು,ತುಳುವೆರೆ ಕಲ ದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಸುಬ್ರಾಯ ಭಟ್, ವೆಂಕಟೇಶ್ ಗಟ್ಟಿ, ಸುಧಾ ನಾಗೇಶ್ ಕವಿತೆ ಗಳನ್ನು ವಾಚಿಸಿದರು.ನಾಗೇಶ್, ದೇವದಾಸ ಬೋಳೂರು ಮತ್ತಿತರರು ಉಪಸ್ಥಿತ ರಿದ್ದರು.
ಶೃಂಗೇರಿ ಚುನಾವಣೆ ಮತಗಳ ಮರು ಎಣಿಕೆಗೆ ಕರ್ನಾಟಕ ಹೈಕೋರ್ಟ್ ಆದೇಶ! ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡ ಸಂಕಷ್ಟ
ಶೃಂಗೇರಿ ಕಾಂಗ್ರೆಸ್ ಶಾಸಕರಿಗೆ ಸಂಕಷ್ಟ ಎದುರಾಗಿದೆ. 2023 ರ ಚುನಾವಣೆಯ ಅಂಚೆ ಮತಗಳ ಎಣಿಕೆ ಮಾಡಿ ಮತ್ತೊಮ್ಮೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಇನ್ನು ಇಬ್ಬರ ನಡುವೆ ಮತಗಳ ಅಂತರ 200 ಇದ್ದು, ಮರು ಎಣಿಕೆಗೆ ಕೋರ್ಟ್ ಸೂಚನೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಮೂಡುಬಿದಿರೆ: ಜಮೀಯ್ಯತುಲ್ ಫಲಾಹ್ ವತಿಯಿಂದ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ
ಮೂಡುಬಿದಿರೆ: ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕ ಇವರ ವತಿಯಿಂದ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದೇರಳಕಟ್ಟೆ ಇದರ ಗ್ರಾಮೀಣ ಆರೋಗ್ಯ ಮತ್ತು ರಕ್ಷಣೆ ಅಭಿವೃದ್ಧಿ ಕೇಂದ್ರ ಹಾಗೂ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆಯ ಸಮುದಾಯ ದಂತ ಆರೋಗ್ಯ ವಿಭಾಗದ ಸಹಯೋಗ ದಲ್ಲಿ ಕಾಶಿಪಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಶಿಬಿರ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಪೆರಾಡಿ ಪ್ರಾಥಮಿಕ ಕೃಷಿ ಪಧಿನ ಸಹಕಾರಿ ಬ್ಯಾಂಕ್ (ನಿ) ಇದರ ಅಧ್ಯಕ್ಷರಾದ ಸತೀಶ್ ಕೆ. ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ಶೇಖ್ ನೂರುದ್ದೀನ್ ವಹಿಸಿದ್ದರು. ಕಾರ್ಯದರ್ಶಿ ಅಶ್ರಫ್ ಮಾರೋಡಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಯೆನೆಪೋಯ ದಂತ ಕಾಲೇಜಿನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಉಪನ್ಯಾಸಕರಾದ ಡಾ. ಅಝೀಝ್ ಹಾಗೂ ಗಾಯತ್ರಿ ಅವರು ಶಿಬಿರದ ಕುರಿತು ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿದ್ದ ಕಾಶಿಪಟ್ಣ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಪುತ್ತು ಮೋನು ಎಸ್., ಕಾಶಿಪಟ್ಣ ಗರಡಿ ಫ್ರೆಂಡ್ಸ್ ಅಧ್ಯಕ್ಷರಾದ ಮನೋಜ್ ಕೆ., ಕಾಶಿಪಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವಿದ್ಯಾನಂದ, ಮುಖ್ಯ ಶಿಕ್ಷಕಿ ವಸುಧಾ ಭಟ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಕಾಶಿಪಟ್ಟ ಘಟಕದ ಹಮೀದ್, ಜಮೀಯ್ಯತುಲ್ ಫಲಾಹ್ ದ ಹಿರಿಯ ಸದಸ್ಯರಾದ ಅಬ್ದುಲ್ ರವೂಫ್ ಮತ್ತು ಮುಹಮ್ಮದ್ ಶಾಕಿರ್ ಉಪಸ್ಥಿತರಿದ್ದರು. ಯೆನೆಪೋಯ ವೈದ್ಯಕೀಯ ತಂಡದ ಡಾ. ಸಿರಾಸ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಕಾಶಿಪಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 150ಕ್ಕೂ ಹೆಚ್ಚು ಸಾರ್ವಜನಿಕರು ಸಾಮಾನ್ಯ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಚರ್ಮ ರೋಗ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆ, ದಂತ ತಪಾಸಣೆ ಮತ್ತು ಚಿಕಿತ್ಸೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳ ಪ್ರಯೋಜನ ಪಡೆದುಕೊಂಡರು. ಜಮೀಯ್ಯತುಲ್ ಫಲಾಹ್ ಖಜಾಂಚಿ ಶೈಖ್ ಅಬ್ದುಲ್ ಗಫೂರ್ ಧನ್ಯವಾದ ಸಮರ್ಪಿಸಿದರು.
Middle East War: ಯುಎಸ್ ಕೊಟ್ಟ ಗಡುವು ಅಂತ್ಯ, ಮತ್ತೊಂದು ಜಲಸಂಧಿ ಬಂದ್ಗೆ ಇರಾನ್ ಸಜ್ಜು, ಭಾರತಕ್ಕೆ ಮನವಿ
ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ದಾಳಿಗಳು ಇವತ್ತು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹಾರ್ಮುಜ್ ಜಲಸಂಧಿ ತೆರೆಯಬೇಕು. ಶರಣಾಗಬೇಕು ಇಲ್ಲವೇ ಸಂಧಾನಕ್ಕೆ ಬರಬೇಕು. ಇದಾಗದಿದ್ದರೆ ಮಾರಕ ದಾಳಿ ಮಾಡುವುದಾಗಿ ಇರಾನ್ ದೇಶಕ್ಕೆ ಯುಎಸ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಟು ಎಚ್ಚರಿಕೆ ನೀಡಿದ್ದಾರೆ. ಅಂಜದ ಇರಾನ್ ಸೋಮವಾರ ಹಾರ್ಮುಜ್ ಜಲಸಂಧಿಯಂತೆ ಮತ್ತೊಂದು ತೈಲ
ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ರಾಷ್ಟ್ರೀಯ ನೌಕಯಾನ ದಿನಾಚರಣೆ
ಮರ್ಚೆಂಟ್ ನೇವಿ ಸಪ್ತಾಹದ ಸಮಾರೋಪ
Shivamogga | ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ; ಹೊತ್ತಿ ಉರಿದ ಕಾರು, ಚಾಲಕ ಅಪಾಯದಿಂದ ಪಾರು
ಶಿವಮೊಗ್ಗ : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ತೀರ್ಥಹಳ್ಳಿಯ ನಾಲೂರು ಕೊಳಿಗೆ ಬಳಿ ನಡೆದಿದೆ. ಉಡುಪಿಯಿಂದ ಸೊರಬಕ್ಕೆ ಡಸ್ಟರ್ ಕಾರು ತೆರಳುತ್ತಿತ್ತು. ತೀರ್ಥಹಳ್ಳಿ ತಾಲೂಕಿನ ನಾಲೂರು ಕೊಳಿಗೆ ಬಳಿ ಬರುತ್ತಿದ್ದಂತೆ ಡಸ್ಟರ್ ಕಾರಿನನ ಇಂಜಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಗುಡ್ಡಕ್ಕೆ ಢಿಕ್ಕಿ ಹೊಡೆದಿದೆ. ಕಾರು ನೋಡ ನೋಡುತ್ತಿದ್ದಂತೆಯೇ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನೆ ಸಂಭವಿಸಿದಾಗ ಕಾರಿನಲ್ಲಿ ಚಾಲಕ ಒಬ್ಬರೇ ಇದ್ದು, ಕೂಡಲೇ ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನನ್ನ ಸೊರಬದ ಸುಹೇಲ್ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಿಜೆಪಿ ಸ್ಥಾಪನಾ ದಿನಾಚರಣೆ: ಹಿರಿಯ ಕಾರ್ಯಕರ್ತರಿಗೆ ಸನ್ಮಾನ
ಉಡುಪಿ, ಎ.6: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಸ್ಥಾಪನಾ ದಿನಾಚರಣೆಯು ಎ.6ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರುಗಳಾದ ಕೆ.ಟಿ.ಪೂಜಾರಿ ಕೊಡವೂರು, ಕಾಳು ಶೇರಿಗಾರ್ ಕೊಡವೂರು, ದಯಾನಂದ ನಾಯಕ್ ಮಣಿಪಾಲ, ಬಿ.ರಮಾನಾಥ ಹೆಗ್ಡೆ ಹೆರ್ಗ, ಹೆರಿಯ ಅಮ್ಮುಂಜೆ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸನ್ಮಾನಿತರನ್ನು ಅಭಿನಂದಿಸಿ, ಸ್ಥಾಪನಾ ದಿನಾಚರಣೆಯ ಕುರಿತು ಮಾತನಾಡಿದರು. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಸ್ಥಾಪನಾ ದಿನದ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಮೊದಲಾದವರು ಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ವಂದೇ ಮಾತರಂ ಹಾಡಿದರು. ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಸ್ವಾಗತಿಸಿ, ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ, ಗಿರೀಶ್ ಎಂ. ಅಂಚನ್ ವಂದಿಸಿದರು.
ಸಿಇಐಆರ್ ಪೋರ್ಟಲ್ನಲ್ಲಿ ಪತ್ತೆ ಹಚ್ಚಲಾದ 241 ಮೊಬೈಲ್ ವಾರಸುದಾರರಿಗೆ ಹಸ್ತಾಂತರ
ಉಡುಪಿ, ಎ.6: ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಳೆದುಕೊಂಡ ಮೊಬೈಲ್ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಲಾದ ವಾರೀಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಸೋಮವಾರ ಜರಗಿತು. ಮೊಬೈಲ್ ಕಳೆದುಕೊಂಡು ಸಿಇಐಆರ್ ಪೋರ್ಟಲ್ ಮೂಲಕ ದೂರು ದಾಖಲಿಸಿದ್ದ ಮೊಬೈಲ್ಗಳ ಪೈಕಿ ಕಳೆದ ಒಂದು ವಾರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದು, ಆ ಮೊಬೈಲ್ಗಳನ್ನು ಜಿಲ್ಲೆಯ ಎಲ್ಲಾ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಮೂಲ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಹೀಗೆ ಜಿಲ್ಲೆಯಲ್ಲಿ ಒಟ್ಟು 241 ಮೊಬೈಲ್ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಉಡುಪಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ವಿವಿಧೆಡೆ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಮಾಡಿದ ಒಟ್ಟು 48 ಮೊಬೈಲ್ಗಳ ಪೈಕಿ 22 ಮೊಬೈಲ್ಗಳನ್ನು ಮೂಲ ವಾರಸುದಾರರಿಗೆ ಉಡುಪಿ ನಗರ ಠಾಣೆಯಲ್ಲಿ ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಲಾದ 50 ಮೊಬೈಲ್ಗಳನ್ನು ಮೂಲ ವಾರಸುದಾರರಿಗೆ ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ನೇತೃತ್ವದಲ್ಲಿ ಕುಂದಾಪುರ ನಗರ ಠಾಣೆಯಲ್ಲಿ ಹಸ್ತಾಂತರಿಸಲಾಯಿತು. ಕೊಲ್ಲೂರು ಠಾಣೆ ಎಸ್ಸೈ ವಿನಯ್ ಎಂ.ಕೊರ್ಲಹಳ್ಳಿ ವಾರೀಸುದಾರರು ಮರಳಿ ಪಡೆದ ಮೊಬೈಲ್ ಫೋನ್ ಅನ್ಲಾಕ್ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರ ನಗರ ಠಾಣೆ ನಿರೀಕ್ಷಕ ಜಯರಾಮ್ ಗೌಡ, ಪಿಎಸ್ಐ ನಂಜಾ ನಾಯ್ಕ್, ಪೊಲೀಸ್ ಉಪವಿಭಾಗದ ವಿವಿಧ ಠಾಣೆಗಳ ಎಸ್ಸೈಗಳಾದ ಪವನ್ ನಾಯಕ್, ಐ.ಆರ್. ಗಡ್ಡೇಕರ್, ಸುನೀಲ್ ಕುಮಾರ್, ನಿರಂಜನ್ ಗೌಡ, ಪುಷ್ಪಾ, ನವೀನ್ ಬೋರ್ಕರ್ ಹಾಜರಿದ್ದರು. 2025-26 ಸಾಲಿನಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಕುಂದಾಪುರ ನಗರ, ಗ್ರಾಮಾಂತರ, ಶಂಕರನಾರಾಯಣ, ಅಮಾಸೆಬೈಲು, ಕೊಲ್ಲೂರು, ಬೈಂದೂರು, ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದು ಕೊಂಡವರು ಸಿಇಐಆರ್ ಪೋರ್ಟಲ್ನಲ್ಲಿ ದಾಖಲಿಸಿದ ಪ್ರಕರಣ ದಲ್ಲಿ ಒಟ್ಟು 318 ಫೋನ್ಗಳನ್ನು ಪತ್ತೆಮಾಡಿ ಆಯಾಯ ಠಾಣೆಯಲ್ಲಿ ಸಂಬಂದಪಟ್ಟವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

24 C