ಟ್ರಂಪ್ ಅವರ ‘ಶಾಂತಿ ಮಂಡಳಿ’ಯ ಉದ್ದೇಶ ಏನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇದರಲ್ಲಿ ಯಾವೆಲ್ಲ ದೇಶಗಳಿವೆ?
ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ಕಾರ್ಯಕ್ರಮದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ‘ಶಾಂತಿ ಮಂಡಳಿ’ (Board of Peace) ಅನ್ನು ಉದ್ಘಾಟಿಸಿದ್ದಾರೆ. ಗಾಝಾದಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಈ ಮಂಡಳಿಯನ್ನು ರಚಿಸಲಾಗಿದೆ. ಇಸ್ರೇಲ್ ಹಾಗೂ ಗಾಝಾ ಪಟ್ಟಿಯ ಹಮಾಸ್ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಭಾಗವಾಗಿ ಟ್ರಂಪ್ ಈ ‘ಶಾಂತಿ ಮಂಡಳಿ’ಯನ್ನು ಘೋಷಿಸಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ಗಾಝಾ ಯುದ್ಧವನ್ನು ಅಂತ್ಯಗೊಳಿಸುವ ಯೋಜನೆಯನ್ನು ಪ್ರಕಟಿಸುವ ವೇಳೆ ಟ್ರಂಪ್ ಮೊದಲ ಬಾರಿಗೆ ಶಾಂತಿ ಮಂಡಳಿಯ ಆಲೋಚನೆಯನ್ನು ಮುಂದಿಟ್ಟಿದ್ದರು. ನಂತರ ಗಾಝಾವನ್ನು ಮೀರಿ ಜಗತ್ತಿನ ಇತರ ಸಂಘರ್ಷ ಪ್ರದೇಶಗಳಿಗೂ ಇದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದರು. ಕಳೆದ ವರ್ಷ ನವೆಂಬರ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಶಾಂತಿ ಮಂಡಳಿಗೆ ಅನುಮೋದನೆ ನೀಡಿತ್ತು. ದಾವೋಸ್ ಶೃಂಗಸಭೆಯ ಸಂದರ್ಭ ನಡೆದ ಉನ್ನತ ಮಟ್ಟದ ಸಮಾರಂಭದಲ್ಲಿ ಟ್ರಂಪ್ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ಹಿರಿಯ ರಾಜತಾಂತ್ರಿಕರಿಗೆ ಆತಿಥ್ಯ ವಹಿಸಿದ್ದರು. ಶ್ವೇತಭವನ ಈ ಸಭೆಯನ್ನು ಹೊಸ ಗುಂಪಿನ ಅಧಿಕೃತ ಉದ್ಘಾಟನೆ ಎಂದು ಬಣ್ಣಿಸಿದೆ. ಆದರೆ ಮಂಡಳಿಗೆ ಸಂಬಂಧಿಸಿದ ಅಧಿಕೃತ ದಾಖಲೆ ಅಥವಾ ಸದಸ್ಯರ ಪೂರ್ಣ ಪಟ್ಟಿಯನ್ನು ಪ್ರಕಟಿಸಲಾಗಿಲ್ಲ. ಈ ಸಂದರ್ಭದಲ್ಲಿ ಟ್ರಂಪ್ ಅವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಜರಿದ್ದರು. ಇಸ್ರೇಲ್–ಹಮಾಸ್ ಯುದ್ಧವು “ನಿಜವಾಗಿಯೂ ಅಂತ್ಯದ ಹಂತದಲ್ಲಿದೆ” ಎಂದು ಟ್ರಂಪ್ ಹೇಳಿದ್ದು, ಗಾಝಾದಲ್ಲಿ ಉಳಿದಿರುವ ಹಿಂಸಾಚಾರವನ್ನು “ಸಣ್ಣ ಬೆಂಕಿ” ಎಂದು ವರ್ಣಿಸಿ, ಅದನ್ನು ಶೀಘ್ರ ನಂದಿಸಬಹುದು ಎಂದು ಹೇಳಿದ್ದಾರೆ. ಗಾಝಾ, ಶಾಂತಿ ಮಂಡಳಿಗೆ ಒಂದು ‘ಪರೀಕ್ಷಾ ನೆಲೆ’ಯಾಗಿ ಕಾರ್ಯನಿರ್ವಹಿಸಲಿದೆ. ಇದು ಯಶಸ್ವಿಯಾದರೆ ಇದೇ ಮಾದರಿಯನ್ನು ಇತರ ಸಂಘರ್ಷ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಜಾಗತಿಕ ಸಂಸ್ಥೆಗಳ ಪರಿಣಾಮಕಾರಿತ್ವದ ಕುರಿತಾಗಿ ದೀರ್ಘಕಾಲದಿಂದಿರುವ ಟೀಕೆಗಳ ನಡುವೆಯೂ, ಮಂಡಳಿ “ವಿಶ್ವಸಂಸ್ಥೆಯೊಂದಿಗೆ ಸಹಕರಿಸಲಿದೆ” ಎಂದು ಟ್ರಂಪ್ ತಿಳಿಸಿದ್ದಾರೆ. ಇತ್ತೀಚಿನ ಬೆಳವಣಿಗೆಗಳು ಈ ಉಪಕ್ರಮವನ್ನು ಇನ್ನಷ್ಟು ತುರ್ತುಗೊಳಿಸಿವೆ. ಕೆಲವು ಹೋರಾಟಗಳು ನಿಧಾನಗೊಂಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಇದೀಗ ಹಲವು ಅರಬ್ ರಾಷ್ಟ್ರಗಳೊಂದಿಗೆ ಹತ್ತಿರವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ವೇಳೆ ಗಾಝಾ, ಲೆಬನಾನ್, ಇರಾಕ್ ಮತ್ತು ಯೆಮೆನ್ನಲ್ಲಿ ಸಶಸ್ತ್ರ ಗುಂಪುಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಮೆರಿಕದ ನಿರ್ಬಂಧಗಳು ಇರಾನ್ನ ಆರ್ಥಿಕತೆಯ ಮೇಲೆ ಒತ್ತಡ ಹೇರಿದ್ದರೂ, ದಾವೋಸ್ ಶೃಂಗಸಭೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಅಧಿಕೃತ ಮಾತುಕತೆಗಳು ನಡೆದಿಲ್ಲ. ಟ್ರಂಪ್ ಶಾಂತಿ ಮಂಡಳಿಯನ್ನು ರಚಿಸಿದ್ದೇಕೆ? 2025ರ ಕೊನೆಯಲ್ಲಿ ಟ್ರಂಪ್ ಇಸ್ರೇಲ್–ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದ ಯುದ್ಧಾನಂತರದ ಆಡಳಿತ ಯೋಜನೆಗೆ ಒತ್ತಾಯಿಸಿದಾಗ ಶಾಂತಿ ಮಂಡಳಿಯ ಹಿಂದಿನ ಕಲ್ಪನೆ ರೂಪುಗೊಂಡಿತು. ದೀರ್ಘಾವಧಿಯ ರಾಜಕೀಯ ಹಾಗೂ ಆರ್ಥಿಕ ಮೇಲ್ವಿಚಾರಣೆ ಇಲ್ಲದ ಕದನ ವಿರಾಮಗಳು ವಿಫಲವಾಗುತ್ತವೆ ಎಂದು ಟ್ರಂಪ್ ವಾದಿಸಿದ್ದಾರೆ. ಆ ಕೊರತೆಯನ್ನು ಈ ಮಂಡಳಿ ತುಂಬುತ್ತದೆ ಎನ್ನುವುದು ಅವರ ಅಭಿಪ್ರಾಯ. ಔಪಚಾರಿಕವಾಗಿ, ಶಾಂತಿ ಮಂಡಳಿಯನ್ನು ಸಂಘರ್ಷಪೀಡಿತ ಪ್ರದೇಶಗಳಲ್ಲಿ ಸ್ಥಿರತೆ ಪುನಃಸ್ಥಾಪಿಸುವುದು, ಸಂಸ್ಥೆಗಳನ್ನು ಮರುನಿರ್ಮಿಸುವುದು ಹಾಗೂ ದೀರ್ಘಕಾಲೀನ ಭದ್ರತೆಯನ್ನು ಖಚಿತಪಡಿಸುವ ಉದ್ದೇಶ ಹೊಂದಿರುವ ಅಂತರರಾಷ್ಟ್ರೀಯ ಸಂಸ್ಥೆಯಾಗಿ ವಿವರಿಸಲಾಗಿದೆ. ದೊಡ್ಡ ಸಭೆಗಳು ಹಾಗೂ ಸಂಕೀರ್ಣ ಅಧಿಕಾರ ರಚನೆಯ ಮೂಲಕ ಕಾರ್ಯನಿರ್ವಹಿಸುವ ವಿಶ್ವಸಂಸ್ಥೆಯಂತಲ್ಲದೆ, ಈ ಮಂಡಳಿಯನ್ನು ಸಣ್ಣ, ಕೇಂದ್ರೀಕೃತ ಮತ್ತು ವೇಗವಾಗಿ ನಿರ್ಧಾರ ಕೈಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಮಂಡಳಿ ರಾಜತಾಂತ್ರಿಕತೆ, ಆರ್ಥಿಕ ಹೂಡಿಕೆ ಮತ್ತು ಭದ್ರತಾ ಖಾತರಿಗಳನ್ನು ಸಂಯೋಜಿಸುವ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರ ಆಡಳಿತ ರಚನೆ ಸಾಂಪ್ರದಾಯಿಕ ಅಂತರಸರ್ಕಾರಿ ಸಂಸ್ಥೆಗಳಿಗಿಂತ ಕಾರ್ಪೊರೇಟ್ ಶೈಲಿಗೆ ಹೆಚ್ಚು ಹತ್ತಿರವಾಗಿದೆ. ಅಂದರೆ, ಉಸ್ತುವಾರಿ ಹೊಂದಿರುವ ವ್ಯಕ್ತಿಗೆ ಮಂಡಳಿಯ ಕಾರ್ಯವ್ಯಾಪ್ತಿ ಹಾಗೂ ಸದಸ್ಯತ್ವದ ಕುರಿತು ಹೆಚ್ಚಿನ ಅಧಿಕಾರವಿರುತ್ತದೆ. ಇದರ ಅತ್ಯಂತ ವಿವಾದಾತ್ಮಕ ಅಂಶ ನಾಯಕತ್ವವಾಗಿದೆ. ನಿಯಮಾವಳಿಯ ಪ್ರಕಾರ ಟ್ರಂಪ್ ಸ್ವತಃ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದು, ಅವರ ಅವಧಿಗೆ ಯಾವುದೇ ನಿಗದಿತ ಅಂತಿಮ ದಿನಾಂಕವಿಲ್ಲ. ಈ ಅಂಶಕ್ಕೆ ಯುರೋಪಿಯನ್ ರಾಜತಾಂತ್ರಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ರಾಷ್ಟ್ರೀಯ ನಾಯಕತ್ವ ಮತ್ತು ಅಂತರರಾಷ್ಟ್ರೀಯ ಅಧಿಕಾರದ ನಡುವಿನ ರೇಖೆ ಮಸುಕಾಗುತ್ತದೆ ಎಂಬುದು ಅವರ ಆಕ್ಷೇಪ. ಆದರೆ ಟ್ರಂಪ್ ಇದನ್ನು “ನಿಯಂತ್ರಣವಲ್ಲ, ನಿರಂತರತೆ” ಎಂದು ಸಮರ್ಥಿಸಿಕೊಂಡಿದ್ದು, ನಾಯಕತ್ವವು ಪದೇಪದೇ ಬದಲಾಗುವುದರಿಂದ ಶಾಂತಿ ಪ್ರಯತ್ನಗಳು ವಿಫಲವಾಗುತ್ತವೆ ಎಂದು ವಾದಿಸಿದ್ದಾರೆ. ಈ ವ್ಯವಸ್ಥೆಯ ಮೂಲಕ ಮಂಡಳಿ ಸರ್ಕಾರಗಳು, ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ಹೂಡಿಕೆದಾರರೊಂದಿಗೆ ನೇರವಾಗಿ ಸಮನ್ವಯ ಸಾಧಿಸಬಹುದು. ಇದರಿಂದ ಪುನರ್ನಿರ್ಮಾಣಕ್ಕೆ ಹಣ ಹಂಚಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಧಿಕಾರ ವರ್ಗಾವಣೆಯ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಮಂಡಳಿಗೆ ಲಭ್ಯವಾಗುತ್ತದೆ. ಶಾಂತಿ ಮಂಡಳಿಯಲ್ಲಿ ಯಾರು ಸದಸ್ಯರು? ಆರಂಭಿಕ ಹಂತದಲ್ಲಿ ಶಾಂತಿ ಮಂಡಳಿಯಲ್ಲಿ ರಾಜಕೀಯ ನಾಯಕರು, ರಾಜತಾಂತ್ರಿಕರು ಮತ್ತು ರಾಜ್ಯ ಪ್ರತಿನಿಧಿಗಳು ಸೇರಿದ್ದಾರೆ. ಮಂಡಳಿಯ ಅಧ್ಯಕ್ಷತೆಯನ್ನು ಟ್ರಂಪ್ ವಹಿಸಿದ್ದು, ಸ್ಥಾಪಕ ಕಾರ್ಯನಿರ್ವಾಹಕ ಸದಸ್ಯರನ್ನು ಅವರೇ ಘೋಷಿಸಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಟ್ರಂಪ್ನ ಆಪ್ತ ಮಿತ್ರ ಹಾಗೂ ಅಂತರರಾಷ್ಟ್ರೀಯ ಮಾತುಕತೆಯಲ್ಲಿ ತೊಡಗಿಸಿಕೊಂಡಿರುವ ಸ್ಟೀವ್ ವಿಟ್ಕಾಫ್ ಪ್ರಮುಖರು. ಟ್ರಂಪ್ ಏಳು ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯನ್ನು ನೇಮಕ ಮಾಡಿದ್ದಾರೆ. ಅವರು: ಮಾರ್ಕೊ ರೂಬಿಯೊ – ಯುಎಸ್ ವಿದೇಶಾಂಗ ಕಾರ್ಯದರ್ಶಿ ಜರೆಡ್ ಕುಶ್ನರ್ – ಮಧ್ಯಪ್ರಾಚ್ಯ ಪ್ರಾದೇಶಿಕ ಏಕೀಕರಣ ತಂತ್ರಜ್ಞ ಸ್ಟೀವ್ ವಿಟ್ಕಾಫ್ – ಮಧ್ಯಪ್ರಾಚ್ಯಕ್ಕೆ ಯುಎಸ್ ವಿಶೇಷ ರಾಯಭಾರಿ ಟೋನಿ ಬ್ಲೇರ್ – ಬ್ರಿಟನ್ ಮಾಜಿ ಪ್ರಧಾನಿ ಅಜಯ್ ಬಂಗಾ – ವಿಶ್ವಬ್ಯಾಂಕ್ ಅಧ್ಯಕ್ಷ ಮಾರ್ಕ್ ರೋವನ್ – ಅಪೊಲೊ ಗ್ಲೋಬಲ್ ಮ್ಯಾನೇಜ್ಮೆಂಟ್ ಸಿಇಒ ನಿಕೋಲೇ ಮ್ಲಾಡೆನೋವ್ – ಗಾಝಾದ ಉನ್ನತ ಪ್ರತಿನಿಧಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಂಡಳಿ ವ್ಯಕ್ತಿಗಳಿಗಿಂತ ದೇಶಗಳ ಭಾಗವಹಿಸುವಿಕೆಗೆ ಒತ್ತು ನೀಡಿದೆ. ಸೌದಿ ಅರೇಬಿಯಾ, ಯುಎಇ, ಈಜಿಪ್ಟ್, ಖತರ್, ಜೋರ್ಡಾನ್, ಬಹ್ರೇನ್, ಟರ್ಕಿ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ಮೊದಲಾಗಿ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿದ ದೇಶಗಳಾಗಿವೆ. ಮೊರಾಕೊ, ಕೊಸೊವೊ, ಹಂಗೇರಿ, ವಿಯೆಟ್ನಾಂ, ಅರ್ಮೇನಿಯಾ, ಅಜೆರ್ಬೈಜಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್ ಮತ್ತು ಪರಾಗ್ವೆಯಂತಹ ದೇಶಗಳು ಆಹ್ವಾನವನ್ನು ಸ್ವೀಕರಿಸಿವೆ ಅಥವಾ ಬೆಂಬಲ ಸೂಚಿಸಿವೆ. ದೃಢೀಕರಿಸಿದ ಸದಸ್ಯರಲ್ಲಿ ಇಸ್ರೇಲ್, ಅರ್ಜೆಂಟೀನಾ, ಸೌದಿ ಅರೇಬಿಯಾ, ಈಜಿಪ್ಟ್, ಯುಎಇ, ಪಾಕಿಸ್ತಾನ, ಟರ್ಕಿ, ಕತಾರ್, ಹಂಗೇರಿ, ವಿಯೆಟ್ನಾಂ, ಕಝಾಕಿಸ್ತಾನ್, ಮೊರಾಕೊ, ಬೆಲಾರಸ್, ಅಝರ್ಬೈಜಾನ್, ಬಹ್ರೇನ್ ಮತ್ತು ಉಝ್ಬೆಕಿಸ್ತಾನ್ ಸೇರಿವೆ. ಗಮನಾರ್ಹ ಗೈರುಹಾಜರಿ: ಭಾರತ (ಆಹ್ವಾನಿತವಾಗಿದ್ದರೂ ದೂರ ಉಳಿದಿದೆ), ಫ್ರಾನ್ಸ್, ಜರ್ಮನಿ, ಸ್ವೀಡನ್ ಮತ್ತು ನಾರ್ವೆ. ಕೆನಡಾಕ್ಕೆ ನೀಡಿದ್ದ ಆಹ್ವಾನ ಹಿಂಪಡೆದ ಟ್ರಂಪ್ ಹೊಸದಾಗಿ ರಚಿಸಲಾದ ಶಾಂತಿ ಮಂಡಳಿಗೆ ಸೇರ್ಪಡೆಯಾಗಲು ಕೆನಡಾಕ್ಕೆ ನೀಡಿದ್ದ ಆಹ್ವಾನವನ್ನು ಟ್ರಂಪ್ ಹಿಂತೆಗೆದುಕೊಂಡಿದ್ದಾರೆ. “ಈ ಪತ್ರದ ಮೂಲಕ ಕೆನಡಾ ಸೇರ್ಪಡೆಗೆ ನೀಡಿದ್ದ ಆಹ್ವಾನವನ್ನು ಶಾಂತಿ ಮಂಡಳಿ ಹಿಂತೆಗೆದುಕೊಳ್ಳುತ್ತಿದೆ” ಎಂದು ಟ್ರಂಪ್ ಟ್ರೂತ್ ಸೋಷಿಯಲ್ನಲ್ಲಿ ಪ್ರಧಾನಿ ಮಾರ್ಕ್ ಕಾರ್ನಿ ಅವರಿಗೆ ಉದ್ದೇಶಿಸಿ ಬರೆದಿದ್ದಾರೆ. ಮಂಡಳಿಗೆ ಸೇರ್ಪಡೆಯಾಗಲು ಅಗತ್ಯವಿರುವ 1 ಬಿಲಿಯನ್ ಡಾಲರ್ ಸದಸ್ಯತ್ವ ಶುಲ್ಕವನ್ನು ಕೆನಡಾ ಪಾವತಿಸುವುದಿಲ್ಲ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಆಹ್ವಾನ ಹಿಂಪಡೆಯಲು ಕಾರಣವನ್ನು ಸ್ಪಷ್ಟಪಡಿಸಿಲ್ಲ. ಟ್ರಂಪ್ ಶಾಂತಿ ಮಂಡಳಿಗೆ ಸೇರುವುದಿಲ್ಲ: ಸ್ಪೇನ್ ಜಾಗತಿಕ ಸಂಘರ್ಷಗಳನ್ನು ನಿಭಾಯಿಸಲು ಟ್ರಂಪ್ ಆರಂಭಿಸಿದ ಶಾಂತಿ ಮಂಡಳಿಯಲ್ಲಿ ಸ್ಪೇನ್ ಭಾಗವಹಿಸುವುದಿಲ್ಲ ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ. ಬಹುಪಕ್ಷೀಯತೆ ಹಾಗೂ ವಿಶ್ವಸಂಸ್ಥಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಗುರುವಾರ ಬ್ರಸೆಲ್ಸ್ನಲ್ಲಿ ನಡೆದ ಯುರೋಪಿಯನ್ ಯೂನಿಯನ್ ಶೃಂಗಸಭೆಯ ನಂತರ ಮಾತನಾಡಿದ ಸ್ಯಾಂಚೆಜ್, “ನಾವು ಆಹ್ವಾನವನ್ನು ಮೆಚ್ಚುತ್ತೇವೆ, ಆದರೆ ಅದನ್ನು ನಿರಾಕರಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಸಿದ್ದಾಪುರ ಏತ ನೀರಾವರಿ ಯೋಜನೆಗೆ ವಿರೋಧವಿಲ್ಲ: ಗೋಪಾಲ ಪೂಜಾರಿ
ಕುಂದಾಪುರ, ಜ.23: ಸಿದ್ದಾಪುರ ಏತ ನೀರಾವರಿ ಯೋಜನೆಗೆ ನನ್ನ ವಿರೋಧವಿಲ್ಲ ಎಂಬುದು ಈ ಹಿಂದೆ ಸ್ಪಷ್ಟಪಡಿ ಸಲಾಗಿದೆ. ವಾರಾಹಿ ಯೋಜನೆ ಮೂಲ ಆಶಯಕ್ಕೆ ಧಕ್ಕೆಯಾಗುವಂತೆ ಕಾಮಗಾರಿ ನಡೆದರೆ ವಾರಾಹಿ ನದಿಪಾತ್ರದ ಜನರಿಗೆ ನೀರಿಲ್ಲದಾಗುತ್ತದೆ. ತಜ್ಞರು ಸ್ಥಳ ಪರಿಶೀಲನೆ ಮಾಡಿ ಎಲ್ಲರಿಗೂ ನೀರು ಸಿಗಬೇಕೆನ್ನುವುದೇ ಕಳಕಳಿ. ಸ್ಥಳಿಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸನ್ನು ಮುಗಿಸಲು ಬಿಜೆಪಿ ಈ ಬಗ್ಗೆ ಅಪಪ್ರಚಾರ ಮಾಡುತ್ತಿದೆಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆರೋಪಿಸಿದ್ದಾರೆ. ಶುಕ್ರವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು, ಸಿದ್ದಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬೈಂದೂರು ಶಾಸಕರು ಮಾಡಿದ ಆರೋಪಗಳಿಗೆ ಉತ್ತರ ನೀಡಿದರು. ಹಲವಾರು ಅಣೆಕಟ್ಟು ತಂದು ಹಾಕಿದ್ದೇನೆ ಎಂದು ಶಾಸಕರು ಹೇಳಿದ್ದು, ಅದು ಯಾವುದು ಎಂದು ಅವರೇ ಪಟ್ಟಿಕೊಡಬೇಕು. ತಾನು ಶಾಸಕನಾಗಿದ್ದಾಗ ಸುಬ್ಬರಾಡಿ, ರಾಜಾಡಿ, ಆಜ್ರಿ, ಹೆಮ್ಮಾಡಿಕಟ್ಟು, ಶಾರದಾಪುರ, ಬಿಜೂರು ಅಣೆಕಟ್ಟಿಗೆ ಅನುದಾನ ಮಂಜೂರಾಗಿದ್ದು ಸೌಕೂರು ಏತನೀರಾವರಿ ಡಿಪಿಆರ್ ಆಗಿತ್ತು. ಈಗಿನ ಶಾಸಕರು ಮಾಡಿದ್ದು ಯಾವುದು ಎಂದು ಹೇಳಲಿ ಎಂದು ಸವಾಲು ಹಾಕಿದರು. ಈಗ ಸಿದ್ದಾಪುರದ ಶೇ.70 ಭಾಗಕ್ಕೆ ವಾರಾಹಿ ನೀರಿಲ್ಲ. ಬಲದಂಡೆ ಯೋಜನೆ, ಶಂಕರನಾರಾಯಣ, ಅಂಪಾರು ಭಾಗದ ನೀರಿಗೂ ಸಮಸ್ಯೆ ಆಗುತ್ತದೆ. ಹೊಳೆಶಂಕರನಾರಾಯಣ ದೇವಸ್ಥಾನ ಸಹಿತ ಅಣೆಕಟ್ಟಿನ ಕೆಳಭಾಗದ ರೈತರಿಗೆ ಸಮಸ್ಯೆ ಆಗಬಾರದು ಎನ್ನುವುದು ನನ್ನ ಉದ್ದೇಶ. ಹಾಗಾಗಿ 2023ರಲ್ಲಿ ನೀಡಿದ್ದ ಪತ್ರವನ್ನು 2025ರಲ್ಲಿ ನೆನಪಿಸಿದ್ದೆ. ಅದಕ್ಕಾಗಿ ತಜ್ಞರ ಸಮಿತಿ ನೇಮಿಸಿದ್ದು ಅದರಲ್ಲಿ ಸುರತ್ಕಲ್ ಎನ್ಐಟಿಕೆಯವರನ್ನೂ ಸೇರಿಸಬೇಕು ಎನ್ನುವ ಒತ್ತಾಯವು ನನ್ನದಿದೆ ಎಂದರು. ರೈತ ಮುಖಂಡ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ವಾರಾಹಿ ಮೂಲಯೋಜನೆಯಂತೆ 38 ಸಾವಿರ ಎಕರೆಗೆ ನೀರು ಹೋಗ ಬೇಕು. ಈಗ ಶೇ.30 ಕಾಮಗಾರಿ ಮಾತ್ರ ನಡೆದಿದೆ. ಹೊಸ ಕಾಮಗಾರಿಗಳು ನಡೆದರೆ ಮೂಲಯೋಜನೆಯಂತೆ ನೀರು ಸಿಗುವುದಿಲ್ಲ. ಈಗ ಅಣೆಕಟ್ಟಿಗೆ ಅಪಾಯ ಆಗುವಂತೆ ಕಲ್ಲು ಸ್ಫೋಟ ನಡೆಯುತ್ತಿದೆ. ಸೌಕೂರು ಏತ ನೀರಾವರಿಯಿಂದ 8 ಗ್ರಾಮಗಳಿಗೆ ನೀರು ಹೋಗುತ್ತದೆ. ಈಗ ಆದ ವಾರಾಹಿ ಕಾಮಗಾರಿಯಿಂದ ಕೋಟೇಶ್ವರ ವರೆಗೆ ನೀರು ಹೋಗುತ್ತದೆ ಎಂದು ತಿಳಿಸಿದರು. ವಾರಾಹಿ ಮೂಲಯೋಜನೆಯಂತೆ ಎಲ್ಲರಿಗೂ ನೀರು ಕೊಡಿ ಎನ್ನುವ ಸಲುವಾಗಿ ಜ.25ರಂದು ಕಂಡ್ಲೂರಿನಲ್ಲಿ ಬೆಳಗ್ಗೆ ವಾರಾಹಿ ನದಿ ನೀರು ಬಳಕೆದಾರರ ಜನಾಂದೋಲನ ಸಭೆ ಆಯೋಜಿಸಲಾಗಿದೆ. ಹೋರಿಯಬ್ಬೆ ಡ್ಯಾಂನ ಕೆಳ ಭಾಗದ ಮಚ್ಚಟ್ಟು, ಅಮಾಸೆಬೈಲು, ರಟ್ಟಾಡಿ, ಹಾಲಾಡಿ, 76 ಹಾಲಾಡಿ, ಹಾರ್ದಳ್ಳಿ ಮಂಡಳ್ಳಿ, ಮೊಳಹಳ್ಳಿ, ಜಪ್ತಿ, ಬಳ್ಕೂರು, ಬಸ್ರೂರು, ಹಟ್ಟಿಕುದ್ರು, ಆನಗಳ್ಳಿ, ಗುಲ್ವಾಡಿ, ಸಿದ್ದಾಪುರ, ಉಳ್ಳೂರು 74, ಶಂಕರನಾರಾಯಣ, ಕುಳ್ಳಂಜೆ, ಅಂಪಾರು, ಹಳ್ನಾಡು, ಕಾವ್ರಾಡಿಯ ರೈತರಿಗೆ ಸಮಸ್ಯೆ ಆಗಲಿದೆ. ಸಿದ್ದಾಪುರಕ್ಕೆ ಏತ ನೀರಾವರಿ ಬೇಕು ಎನ್ನುವುದು ನಮ್ಮ ಆಗ್ರಹ ಎಂದರು. ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಅರವಿಂದ ಪೂಜಾರಿ ಬೈಂದೂರು, ವಿಜಯ ಪುತ್ರನ್, ಸುದೇಶ್ ಶೆಟ್ಟಿ ಗುಲ್ವಾಡಿ, ಶ್ರೀನಿವಾಸ ಸೌಡ, ಅಕ್ಷಯ್ ಶೆಟ್ಟಿ, ಯೋಗೇಶ್ ಪೂಜಾರಿ ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ| ಭೀಕರ ರಸ್ತೆ ಅಪಘಾತ; ಮೃತರ ಸಂಖ್ಯೆ 4ಕ್ಕೆ ಏರಿಕೆ, 9 ಮಂದಿಗೆ ಗಾಯ
ಕಾರ್ಕಳ, ಜ.23: ಖಾಸಗಿ ಬಸ್ ಹಾಗೂ ತೂಫಾನ್ ವಾಹನಗಳ ಮಧ್ಯೆ ಮಿಯಾರು ಗ್ರಾಮದ ಕಂಬಳಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ 2.50ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಮಗು ಸಹಿತ 9 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ತೂಫನ್ ವಾಹನ ಚಾಲಕ ಮಣ್ಣಪ್ಪ, ಚೇತನ್(27), ರೋಹಿತ್(28) ಹಾಗೂ ಮಲ್ಲಮ್ಮ(50) ಎಂದು ಗುರುತಿಸಲಾಗಿದೆ. ಸಂಗೀತ (40), ಕವಿತಾ(38), ಬಸವರಾಜ್(56), ಕಿಶೋರ್(28), ಲಕ್ಷ್ಮೀ(25), ಜ್ಯೋತಿ(25), ಜಯಲಕ್ಷ್ಮೀ(24), ಎರಡು ವರ್ಷದ ಮಗು ಕುಶಲ್ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲ ಗುಲ್ಬರ್ಗ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ. ತೂಫಾನ್ ವಾಹನದಲ್ಲಿ ಒಂದು ಮಗು ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದು ಇವರಲ್ಲಿ ತೀವ್ರವಾಗಿ ಗಾಯ ಗೊಂಡ ಐದು ಮಂದಿ ಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಮಗು ಅಪಾಯ ದಿಂದ ಪಾರಾಗಿದ್ದು, ಉಳಿದ ಗಾಯಾಳು ಗಳನ್ನು ಕಾರ್ಕಳದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಗುಲ್ಬರ್ಗದಿಂದ ತೂಫಾನ್ ವಾಹನದಲ್ಲಿ ಹೊರಟಿದ್ದರು. ಉಡುಪಿಗೆ ಬಂದ ಅವರು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಬಳಿಕ ಧರ್ಮಸ್ಥಳಕ್ಕೆ ಹೊರಟಿದ್ದರು. ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇವರ ತೂಫಾನ್ ವಾಹನಕ್ಕೆ, ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಅತೀವೇಗದಿಂದ ಬರುತ್ತಿದ್ದ ಖಾಸಗಿ ಬಸ್, ತಿರುವಿನಲ್ಲಿ ರಸ್ತೆಯ ಬಲಭಾಗಕ್ಕೆ ಬಂದು ಮುಖಾಮುಖಿಯಾಗಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ತುಫಾನ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದವರು ತೀವ್ರವಾಗಿ ಗಾಯಗೊಂಡರೆ ನ್ನಲಾಗಿದೆ. ಇವರ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಮೃತಪಟ್ಟರು. ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಲ್ಲಮ್ಮ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ಪುಲ್ಕೆರಿ ಬೈಪಾಸ್ನಿಂದ ಮಾಳ ಘಾಟ್ವರೆಗೆ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅವೈಜ್ಞಾನಿಕವಾಗಿ ಕುಂಟುತ್ತಾ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ಹಲವಾರು ಅಪಘಾತ ನಡೆಯುತ್ತಿವೆ. ಆದರೂ ಸಂಬಂಧ ಪಟ್ಟ ಇಲಾಖೆ ಎಚ್ಚೆತುಕೊಳ್ಳುತ್ತಿಲ್ಲ. ಇದರಿಂದ ಅಪಘಾತಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಎಸ್ಜಿಐಸಿ, ನಾಬಾರ್ಡ್ ಉದ್ಯೋಗಿಗಳ ವೇತನ ಏರಿಕೆ, ಪಿಂಚಣಿ ಪರಿಷ್ಕರಣೆಗೆ ಕೇಂದ್ರದ ಅಸ್ತು
ಹೊಸದಿಲ್ಲಿ, ಜ.23: ದೀರ್ಘಾವಧಿಯಿಂದ ಬಾಕಿಯಿರುವ ಸಾರ್ವಜನಿಕ ರಂಗದ ಜನರಲ್ ಇನ್ಶೂರೆನ್ಸ್ ಕಂಪೆನಿಗಳು (ಪಿಎಸ್ಜಿಐಸಿ) ಹಾಗೂ ಕೃಷಿ,ಗ್ರಾಮೀಣ ಅಭಿವೃದ್ಧಿಗಾಗಿನ ರಾಷ್ಟ್ರೀಯ ಬ್ಯಾಂಕ್ (ನಾಬಾರ್ಡ್) ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಕೇಂದ್ರ ಸರಕಾರ ಶುಕ್ರವಾರ ಅನುಮೋದನೆ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಾಗೂ ನಾಬಾರ್ಡ್ನ ನಿವೃತ್ತ ಉದ್ಯೋಗಿಗಳ ಪಿಂಚಣಿ ಪರಿಷ್ಕರಣೆಯನ್ನು ಮಂಜೂರು ಮಾಡಿದೆ. ಸುಮಾರು 46,332 ಉದ್ಯೋಗಿಗಳು, 23,570 ಪಿಂಚಣಿದಾರರು ಹಾಗೂ 23,260 ಕುಟುಂಬ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಈ ನಡೆಯು ಸೇವಾವಧಿಯಲ್ಲಿ ಪಿಂಚಣಿದಾರರ ಸುದೀರ್ಘ ಹಾಗೂ ಸಮರ್ಪಿತ ಸೇವೆಯನ್ನು ಪರಿಗಣನೆಗೆ ತೆಗೆದುಕೊಂಡು ಅವರ ಆರ್ಥಿಕ ಕ್ಷೇಮ ಹಾಗೂ ಸಾಮಾಜಿಕ ಭದ್ರತೆಗೆ ರಾಜ್ಯ ಸರಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಪಿಎಸ್ಜಿಐಸಿಗಳ ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಅನುಮೋದನೆ 2022ರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಸಾರ್ವಜನಿಕರಂಗದ ವಿಮಾ ಕಂಪೆನಿಗಳ ಉದ್ಯೋಗಿಗಳ ವೇತನ ಪರಿಷ್ಕರಣೆಯಾಗಲಿದೆ. ಇದರಿಂದಾಗಿ ಮೂಲವೇತನ, ತುಟ್ಟಿಭತ್ತೆಯಲ್ಲಿ ಶೇ.14 ಹೆಚ್ಚಳ ಸೇರಿದಂತೆ ಒಟ್ಟಾರೆ ವೇತನದಲ್ಲಿ 12.41 ಶೇ.ಏರಿಕೆಯಾಗಲಿದೆ. 43,247 ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. 2010ರ ಎಪ್ರಿಲ್ 1ರ ಆನಂತರ ಸೇರ್ಪಡೆಗೊಂಡ ಸಿಬ್ಬಂದಿಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಉದ್ಯೋಗದಾತರ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಏರಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಏಕರೂಪವಾಗಿ ಶೇ.30ರಷ್ಟು ಪರಿಷ್ಕರಿಸಲಾಗಿದೆ. ಇದರಿಂದಾಗಿ 14,615 ಮಂದಿ ಕುಟುಂಬ ಪಿಂಚಣಿದಾರರು ಪಡೆಯಲಿದ್ದಾರೆ. ಕೇಂದ್ರದ ಬೊಕ್ಕಸಕ್ಕೆ 8,170 ಕೋಟಿ ರೂ. ಹೊರೆ ಬೀಳಲಿದೆ. ನಾಬಾರ್ಡ್ ಉದ್ಯೋಗಿಗಳ ವೇತನ, ಭತ್ತೆಯಲ್ಲಿ ಶೇ.20 ಹೆಚ್ಚಳ ನಾಬಾರ್ಡ್ನ ಗ್ರೂಪ್ ಎ, ಬಿ ಮತ್ತು ಸಿ ಉದ್ಯೋಗಿಗಳ ವೇತನ ಹಾಗೂ ಭತ್ತೆಗಳಲ್ಲಿ ಶೇ.20ರಷ್ಟು ಏರಿಕೆಯನ್ನು ಮಾಡಲಾಗಿದ್ದು, 3800 ಮಂದಿ ಸೇವಾ ನಿರತರು ಹಾಗೂ ಮಾಜಿ ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಪಿಂಚಣಿ ಪರಿಷ್ಕರಣೆಯಿಂದಾಗಿ ನಿವೃತ್ತರ ಮೂಲ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯು ಮಾಜಿ ಆರ್ಬಿಐ-ನಬಾರ್ಡ್ ನಿವೃತ್ತರಿಗೆ ಸರಿಸಮವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ನಿವೃತ್ತರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಮೂಲ ಪಿಂಚಣಿ ಹಾಗೂ ತುಟ್ಟಿಭತ್ತೆ ಪರಿಹಾರದ ಮೇಲಿನ ಶೇ.10ರಷ್ಟು ಏರಿಕೆ ಮಾಡಲಾಗಿದೆ. 2022ರ ನವೆಂಬರ್ 1ರಿಂದ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ. 22,580 ಪಿಂಚಣಿದಾರರು ಹಾಗೂ 8189 ಕುಟುಂಬ ಪಿಂಚಣಿದಾರರು ಸೇರಿದಂತೆ ಒಟ್ಟು 30,769 ಮಂದಿ ಪ್ರಯೋಜನ ಪಡೆಯಲಿದ್ದಾರೆ. ಎಲ್ಲರನ್ನೂ ಒಳಗೊಂಡ ಹಾಗೂ ಸುಸ್ಥಿರವಾದ ಆರ್ಥಿಕ ಬೆಳವಣಿಗೆಗೆ ಆಧಾರವಾಗಿರುವ ಸಂಸ್ಥೆಗಳನ್ನು ಬಲಪಡಿಸುವ ಬದ್ಧತೆಯನ್ನು ತಾನು ಹೊಂದಿರುವುದಾಗಿ ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ
ಮುಂಬೈ,ಜ.23: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿಯುತ್ತಾ ಬರುತ್ತಿದ್ದು, ಶುಕ್ರವಾರ 91.99 ರೂ.ಗೆ ಇಳಿದಿದ್ದು, ಸಾರ್ವಕಾಲಿಕವಾಗಿ ಅತ್ಯಧಿಕ ಕುಸಿತವನ್ನು ಕಂಡಿದೆ. ದಿನದ ವಹಿವಾಟಿನ ಅಂತ್ಯದ ವೇಳೆಗೆ 91.88 ರೂ.ಗೆ ಸ್ಥಿರಗೊಂಡಿದೆ. ವಿದೇಶಿ ಹೂಡಿಕೆದಾರರು ಅತ್ಯಧಿಕ ಪ್ರಮಾಣದಲ್ಲಿ ಶೇರುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಏರ್ಪಡುವ ಕುರಿತ ಅನಿಶ್ಚಿತತೆಯು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೆನ್ನಲಾಗಿದೆ. ಗುರುವಾರದಂದು ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು 7 ಪೈಸೆಯಷ್ಟು ಕುಸಿತವನ್ನು ಕಂಡಿದ್ದು, 91.58 ರೂ. ಆಗಿತ್ತು. ಜನವರಿ 21ರಂದು ರೂಪಾಯಿ ಮೌಲ್ಯವು 91.65 ಆಗಿದ್ದು, ಇದು ಈವರೆಗಿನ ಸಾರ್ವಕಾಲಿಕ ಗರಿಷ್ಠ ಕುಸಿತವಾಗಿತ್ತು.
Ukraine Peace Plan: ಅರಬ್ ನೆಲದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಮಹತ್ವದ ಮಾತುಕತೆ
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ 4 ವರ್ಷ ಮುಗಿಯುತ್ತಿದೆ, ಈ ಇಬ್ಬರ ಕದನ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಹಲವು ವಿನಾಶಕ್ಕೆ ಕೂಡ ಕಾರಣವಾಗಿದೆ. ಹೀಗಾಗಿಯೇ ರಷ್ಯಾ ಮತ್ತು ಉಕ್ರೇನ್ ಯುದ್ಧ ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದರು.
ನಿಟ್ಟೆ: ಸರಿತಾ ಶೆಟ್ಟಿಗೆ ಪಿಹೆಚ್.ಡಿ ಪದವಿ
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರಿತಾ ಶೆಟ್ಟಿ ಅವರು ‘ಡೆವಲಪ್ಮೆಂಟ್ ಆಫ್ ನ್ಯಾಚುರಲ್ ಲ್ಯಾಂಗ್ವೇಜ್ ಡಯಲಾಗ್ ಸಿಸ್ಟಮ್ ಫಾರ್ ಕನ್ನಡ ಲ್ಯಾಂಗ್ವೇಜ್ ಇನ್ ಹೆಲ್ತ್ ಕೇರ್ ಡೊಮೈನ್’ ಎಂಬ ವಿಷಯ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಘೋಷಿಸಿದೆ. ಸರಿತಾ ಅವರು ಕಂಪ್ಯೂಟರ್ ಸಾಯನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ.ಸಾರಿಕಾ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು. ಇವರು ನಿಟ್ಟೆಯ ಚಂದ್ರಹಾಸ ಶೆಟ್ಟಿ ಹಾಗೂ ಕುಮುದಾ ಶೆಟ್ಟಿ ದಂಪತಿಯ ಅವಳಿ ಪುತ್ರಿಯರಲ್ಲಿ ಒಬ್ಬರು. ಇವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿದ್ದ ದಿ.ಎನ್. ವಿನಯ ಹೆಗ್ಡೆ ಭರಿಸಿದ್ದರು. ಸರಿತಾ ಮಂಗಳೂರಿನ ಎಂಆರ್ಪಿಎಲ್. ಉದ್ಯೋಗಿ ಪ್ರಸನ್ನ ಕುಮಾರ್ ಶೆಟ್ಟಿ ಇವರ ಪತ್ನಿ.
ವಿಬಿ ಜಿ ರಾಮ್ ಜಿ ಕಾಯ್ದೆಯ ಜಾರಿ ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಕಳವಳ: ಸಿ.ಎಂ ಸಿದ್ದರಾಮಯ್ಯ ಹೇಳಿದ್ದೇನು
ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಜಾರಿಗೆ ತರಲಾಗಿದ್ದ ಮನ್ರೇಗಾ ಯೋಜನೆ(MGNREGA) ಬದಲಿಗೆ ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಗ್ರಾಮೀಣ ಉದ್ಯೋಗ ಕಾನೂನನ್ನು ಕಾಂಗ್ರೆಸ್ ವಿರೋಧಿಸಿದೆ. ಇದೀಗ ಬಿಜೆಪಿಯ ಮಿತ್ರಪಕ್ಷವಾಗಿರುವ ತೆಲುಗುದೇಶಂ ಪಕ್ಷವೂ ಸಹ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿಬಿ ಜಿ ರಾಮ್ ಜಿ
ಅಮೆರಿಕ ಜವಳಿ ಮೇಲೆ ಶೇ.50ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರಧಾನಿ ಮೋದಿ ಹೊಣೆ: ರಾಹುಲ್ ಗಾಂಧಿ
ಹೊಸದಿಲ್ಲಿ,ಜ.23: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನ್ನ ‘ಸತ್ತ ಆರ್ಥಿಕತೆ’ ದಾಳಿಯನ್ನು ಶುಕ್ರವಾರ ಪುನರಾರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಮೆರಿಕದ ಭಾರೀ ಸುಂಕಗಳು ಭಾರತದ ಜವಳಿ ಕ್ಷೇತ್ರದ ಬೀರಿರುವ ಪ್ರತಿಕೂಲ ಪರಿಣಾಮವನ್ನು ಉಲ್ಲೇಖಿಸಿದ್ದಾರೆ. ಉದ್ಯೋಗ ನಷ್ಟ ಮತ್ತು ರಫ್ತುದಾರರಿಗೆ ಎದುರಾಗಿರುವ ಹೆಚ್ಚುತ್ತಿರುವ ಅನಿಶ್ಚಿತತೆಗಳ ನಡುವೆ ಸರಕಾರದ ನಿಷ್ಕ್ರಿಯತೆಯನ್ನು ಆರೋಪಿಸಿರುವ ಅವರು, ಇದಕ್ಕಾಗಿ ಮೋದಿಯವರನ್ನು ಹೊಣೆಯಾಗಿಸಿದ್ದಾರೆ. ‘ಅಮೆರಿಕದ ಶೇ.50ರಷ್ಟು ಸುಂಕಗಳು ಮತ್ತು ಅನಿಶ್ಚಿತತೆ ಭಾರತದ ಜವಳಿ ರಫ್ತುದಾರರನ್ನು ತೀವ್ರವಾಗಿ ಬಾಧಿಸುತ್ತಿವೆ. ಉದ್ಯೋಗ ನಷ್ಟಗಳು, ಫ್ಯಾಕ್ಟರಿಗಳ ಮುಚ್ಚುವಿಕೆಗಳು ಮತ್ತು ತಗ್ಗಿದ ಬೇಡಿಕೆಗಳು ನಮ್ಮ ‘ಸತ್ತ ಆರ್ಥಿಕತೆ’ಯ ವಾಸ್ತವವಾಗಿವೆ’ ಎಂದು ರಾಹುಲ್ ಎಕ್ಸ್ಪೋಸ್ಟ್ನಲ್ಲಿ ಬರೆದಿದ್ದಾರೆ. ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಅವರು, ತೀವ್ರ ಪರಿಣಾಮದ ಹೊರತಾಗಿಯೂ ಸರಕಾರವು ಬಿಕ್ಕಟ್ಟಿಗೆ ಸ್ಪಂದಿಸುವಲ್ಲಿ ವಿಫಲಗೊಂಡಿದೆ ಎಂದು ಆರೋಪಿಸಿದ್ದಾರೆ. 4.5 ಕೋಟಿಗೂ ಅಧಿಕ ಉದ್ಯೋಗಗಳು ಮತ್ತು ಲಕ್ಷಾಂತರ ಉದ್ಯಮಗಳು ಅಪಾಯದಲ್ಲಿದ್ದರೂ ಮೋದಿ ಯಾವುದೇ ಪರಿಹಾರವನ್ನು ನೀಡಿಲ್ಲ,ಅವರು ಸುಂಕಗಳ ಬಗ್ಗೆ ಮಾತೇ ಆಡಲಿಲ್ಲ. ಮೋದಿಜಿ, ನೀವೇ ಹೊಣೆಯಾಗಿದ್ದೀರಿ, ದಯವಿಟ್ಟು ಈ ವಿಷಯದ ಬಗ್ಗೆ ನಿಮ್ಮ ಗಮನ ಹರಿಸಿ ಎಂದು ವಿಪಕ್ಷ ನಾಯಕ ರಾಹುಲ್ ಬರೆದಿದ್ದಾರೆ. ಈ ಹಿಂದೆ ಭಾರತದ ಆರ್ಥಿಕತೆಯ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀಕ್ಷ್ಣ ಟೀಕೆಯನ್ನು ಪ್ರತಿಧ್ವನಿಸಿದ್ದ ರಾಹುಲ್, ಭಾರತದ ಆರ್ಥಿಕತೆಯು ಸತ್ತಿದೆ ಮತ್ತು ಈ ಸ್ಥಿತಿಗೆ ಮೋದಿ ಸರಕಾರದ ನೀತಿಗಳೇ ಕಾರಣ ಎಂದು ಹೇಳಿದ್ದರು.
Uttar Pradesh | ರಾಜಕೀಯ ಪೋಸ್ಟ್ಗಳಿಗಾಗಿ 14 ವರ್ಷದ ಬಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ ಯೋಗಿ ಸರಕಾರ!
ಲಕ್ನೊ: ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಸರ್ಕಾರದ ನೀತಿಗಳು ಹಾಗೂ ಸಾಮಾಜಿಕ–ಆರ್ಥಿಕ ಪರಿಸ್ಥಿತಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುತ್ತಿದ್ದ 14 ವರ್ಷದ ಬಾಲಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಬಾಲಕನನ್ನು ಅಶ್ವಮಿತ್ ಗೌತಮ್ ಎಂದು ಗುರುತಿಸಲಾಗಿದೆ. ಅಶ್ವಮಿತ್ ಗೌತಮ್ನ ಆನ್ಲೈನ್ ಚಟುವಟಿಕೆಗಳ ಕುರಿತು ಲಕ್ನೊ ಪೊಲೀಸರು ತಮ್ಮ ಎಫ್ಐಆರ್ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಬಾಲಕನ ವಿರುದ್ಧ ಹೇರಿರುವ ನಿರ್ದಿಷ್ಟ ಸೆಕ್ಷನ್ಗಳು ಅಥವಾ ದೂರುದಾರರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ರಾಜ್ಯ ಸರ್ಕಾರದ ಕುರಿತು ಮಾಡಿದ್ದ ವಿಮರ್ಶಾತ್ಮಕ ಪೋಸ್ಟ್ಗೆ ಈ ಪ್ರಕರಣ ಸಂಬಂಧಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ. ಗಮನಾರ್ಹ ಪ್ರಮಾಣದ ಫಾಲೋವರ್ಗಳನ್ನು ಹೊಂದಿರುವ ಅಶ್ವಮಿತ್ ಗೌತಮ್, ತನ್ನ ದೀರ್ಘಾವಧಿಯ ವಿಶ್ಲೇಷಣಾತ್ಮಕ ವೀಡಿಯೊಗಳಲ್ಲಿ ಏರುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚ, ಯುವಜನರಲ್ಲಿನ ನಿರುದ್ಯೋಗ, ಹಿಗ್ಗುತ್ತಿರುವ ಸಾಮಾಜಿಕ ಅಸಮಾನತೆ ಹಾಗೂ ದಲಿತರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಚರ್ಚಿಸುತ್ತಿದ್ದ ಎನ್ನಲಾಗಿದೆ. ಯಾವುದೇ ಸ್ಕ್ರಿಪ್ಟ್ ಇಲ್ಲದ ಈತನ ವೀಡಿಯೊಗಳು ಉತ್ತರ ಪ್ರದೇಶದಾದ್ಯಂತ ಇರುವ ಯುವ ಪ್ರೇಕ್ಷಕರ ಗಮನ ಸೆಳೆದಿವೆ. ಅಪ್ರಾಪ್ತ ಬಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಚಾಲನೆ ನೀಡಿರುವುದಕ್ಕೆ ನಾಗರಿಕ ಸಂಘಟನೆಗಳ ಸದಸ್ಯರು, ಡಿಜಿಟಲ್ ಹಕ್ಕುಗಳ ಕಾರ್ಯಕರ್ತರು ಹಾಗೂ ವಿರೋಧ ಪಕ್ಷಗಳ ನಾಯಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಬಾಲಕನ ರಾಜಕೀಯ ಅಭಿವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಹಲವರು ಪ್ರಶ್ನಿಸಿದ್ದು, ಇದನ್ನು ಕಾನೂನು ಜಾರಿ ಕ್ರಮಕ್ಕಿಂತಲೂ ಬೆದರಿಕೆಯಾಗಿ ಅವರು ಆಕ್ಷೇಪಿಸಿದ್ದಾರೆ. ಅಶ್ವಮಿತ್ ಗೌತಮ್ ಯಾವುದೇ ಹಿಂಸೆಗೆ ಅಥವಾ ದ್ವೇಷಕ್ಕೆ ಪ್ರಚೋದನೆ ನೀಡಿಲ್ಲ. ಆತನ ವೀಡಿಯೊ ತುಣುಕುಗಳಿಗೆ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದಡಿ ರಕ್ಷಣೆ ಇದೆ ಎಂದು ಅಶ್ವಮಿತ್ ಗೌತಮ್ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ನೈಜ ಪ್ರಜಾತಂತ್ರದಲ್ಲಿ ಉದ್ಯೋಗ, ಹಣದುಬ್ಬರ ಹಾಗೂ ಸಾಮಾಜಿಕ ನ್ಯಾಯದ ಕುರಿತು ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಅಪರಾಧವಲ್ಲ ಎಂದು ಅವರು ವಾದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಜಮ್ಮುಕಾಶ್ಮೀರ ಗುಂಡಿನ ಕಾಳಗ| ಕಥುವಾದಲ್ಲಿ ಜೈಷ್ ಭಯೋತ್ಪಾದಕನ ಹತ್ಯೆ
ಹೊಸದಿಲ್ಲಿ,ಜ.23: ಕಥುವಾದ ಬಿಲಾವರ್ ಪ್ರದೇಶದಲ್ಲಿ ಶುಕ್ರವಾರ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಜೈಷ್ ಮುಹಮ್ಮದ್ಗೆ ಸೇರಿದ ಭಯೋತ್ಪಾದಕನೋರ್ವ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು. ಸೇನೆ ಮತ್ತು ಸಿಆರ್ಪಿಎಫ್ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಜಮ್ಮುಕಾಶ್ಮೀರ ಪೊಲೀಸರ ಸಣ್ಣ ತಂಡವೊಂದು ಓರ್ವ ಪಾಕಿಸ್ತಾನಿ ಜೈಷ್ ಭಯೋತ್ಪಾದಕನ್ನು ಹೊಡೆದುರುಳಿಸಿದೆ ಎಂದು ಜಮ್ಮು ಐಜಿಪಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಕಥುವಾದಲ್ಲಿ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.
ಮುಂಬೈ,ಜ.23: ವಾಯುಮಾಲಿನ್ಯವನ್ನು ತಗ್ಗಿಸುವಂತೆ ತನ್ನ ಆದೇಶಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಮುನ್ಸಿಪಲ್ ಅಧಿಕಾರಿಗಳನ್ನು ಶುಕ್ರವಾರ ತೀವ್ರ ತರಾಟೆಗೆತ್ತಿಕೊಂಡ ಬಾಂಬೆ ಉಚ್ಚ ನ್ಯಾಯಾಲಯವು, ಅವರೂ ಇದೇ ಅಶುದ್ಧ ಗಾಳಿಯನ್ನು ಸೇವಿಸುತ್ತಿದ್ದಾರೆ ಮತ್ತು ಅನ್ಯಗ್ರಹದಲ್ಲಿ ವಾಸಿಸುತ್ತಿಲ್ಲ ಎಂದು ಬೆಟ್ಟು ಮಾಡಿತು. ಇದಕ್ಕಾಗಿ ಹಿರಿಯ ಅಧಿಕಾರಿಗಳ ವೇತನಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆಯನ್ನೂ ನೀಡಿತು. ನ್ಯಾಯಾಲಯವು ಪದೇ ಪದೇ ಹೊರಡಿಸಿದ್ದ ಆದೇಶಗಳನ್ನು ಪಾಲಿಸದ್ದಕ್ಕಾಗಿ ಮತ್ತು ಹದಗೆಡುತ್ತಿರುವ ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳಲು ವಿಫಲಗೊಂಡಿದ್ದಕ್ಕಾಗಿ ಮುಂಬೈ ಮತ್ತು ನವಿ ಮುಂಬೈ ಮಹಾನಗರ ಪಾಲಿಕೆಗಳ ಆಯುಕ್ತರ ವೇತನಗಳನ್ನು ಸ್ಥಗಿತಗೊಳಿಸುವುದಾಗಿ ಮುಖ್ಯ ನ್ಯಾಯಾಧೀಶ ಶ್ರೀ ಚಂದ್ರಶೇಖರ್ ಮತ್ತು ನ್ಯಾ.ಸುಮನ್ ಶ್ಯಾಮ್ ಅವರ ಪೀಠವು ಎಚ್ಚರಿಕೆ ನೀಡಿತು. ‘ಮುಂಬೈನಲ್ಲಿರುವ ಪ್ರತಿಯೊಬ್ಬರಂತೆಯೇ ಮುನ್ಸಿಪಲ್ ಅಧಿಕಾರಿಗಳೂ ಅಶುದ್ಧ ವಾಯುವನ್ನು ಉಸಿರಾಡುತ್ತಿದ್ದಾರೆ. ನೀವು ಅನ್ಯಗ್ರಹದಲ್ಲಿ ವಾಸವಾಗಿಲ್ಲ. ನಾವೆಲ್ಲ ಇದೇ ಗಾಳಿಯನ್ನು ಉಸಿರಾಡುತ್ತಿದ್ದೇವೆ’ ಎಂದು ಪೀಠವು ಹೇಳಿತು. ಮುಂದಿನ ವಿಚಾರಣೆಯು ಜ.27ರಂದು ನಡೆಯಲಿದೆ. 2023ರಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಬಾಂಬೆ ಉಚ್ಚ ನ್ಯಾಯಾಲಯವು, ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುನ್ಸಿಪಲ್ ಸಂಸ್ಥೆಗಳಿಗೆ ಮತ್ತು ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ಹೊರಡಿಸಿತ್ತು.
ಮುಡಾ ಪ್ರಕರಣ: 20.85 ಕೋಟಿ ರೂ. ಮೌಲ್ಯದ ಆಸ್ತಿ ತಾತ್ಕಾಲಿಕ ಜಪ್ತಿ ಮಾಡಿದ ಈಡಿ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ), ಬೆಂಗಳೂರು ವಲಯ ಕಚೇರಿ ಅಧಿಕಾರಿಗಳ ತಂಡ 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ತಾತ್ಕಾಲಿಕ ಜಪ್ತಿಗೊಂಡ ಆಸ್ತಿಗಳಲ್ಲಿ ಕಾನೂನುಬಾಹಿರವಾಗಿ ಹಂಚಿಕೆಗೊಂಡ 6 ಮುಡಾ ನಿವೇಶನಗಳು, 3 ಇತರೆ ಮಾದರಿ ಆಸ್ತಿಗಳು ಹಾಗೂ ಒಂದು ವಾಣಿಜ್ಯ ಕಟ್ಟಡ ಸೇರಿವೆ. ಜನವರಿ 21ರಂದು ಈಡಿ ದಾಳಿಯನ್ನು ನಡೆಸಿದೆ. ಮೈಸೂರಿನಲ್ಲಿ ದಾಖಲಾಗಿದ್ದ ಮುಡಾ ಪ್ರಕರಣದ ಎಫ್ಐಆರ್ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಭೂಸ್ವಾಧೀನಕ್ಕೆ ಪರಿಹಾರವಾಗಿ ನಿವೇಶನ ಹಂಚಿಕೆ) ನಿಯಮಗಳು-2009 (2015ರ ತಿದ್ದುಪಡಿ ಸಹಿತ) ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವಯಂ ಭೂಸರಣಿ ಪ್ರೋತ್ಸಾಹ ಯೋಜನೆ) ನಿಯಮಗಳು-1991ರ ಘೋರ ಉಲ್ಲಂಘನೆಯೊಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಈಡಿ ಹೇಳಿದೆ. ಇದೇ ವೇಳೆ, ಮುಡಾ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವಿನ ಸಂಬಂಧ ಹಾಗೂ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಹಾಗೂ ಲೇಔಟ್ ಅನುಮೋದನೆಗಾಗಿ ನಗದು ಪಾವತಿ ನಡೆದಿರುವುದಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಈ.ಡಿ. ತಿಳಿಸಿದೆ. ಇದಕ್ಕೂ ಮುನ್ನ, ಈಡಿ 283 ಕಾನೂನುಬಾಹಿರ ಮುಡಾ ನಿವೇಶನಗಳು ಮತ್ತು ಮೂರು ಜನರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡಿತ್ತು. ನಿವೇಶನ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದ ಮೇಲೆ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು 16.09.2025ರಂದು ಪಿಎಂಎಲ್ಎ ಅಡಿಯಲ್ಲಿ ಬಂಧಿಸಲಾಗಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈವರೆಗೆ ಈ ಪ್ರಕರಣದಲ್ಲಿ ಸುಮಾರು 460 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿ ಇದಾಗಿದ್ದು, ತನಿಖೆ ಮುಂದುವರೆದಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆ ಆರೋಪ: ಅನಿಲ್ ಅಂಬಾನಿ, ADAGಗೆ ಮತ್ತೆ ಸುಪ್ರೀಂ ಕೋರ್ಟ್ನಿಂದ ನೋಟಿಸ್
ಹೊಸದಿಲ್ಲಿ,ಜ.23: ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ (ADAG) ಮತ್ತು ಅದರ ಸಮೂಹ ಕಂಪೆನಿಗಳು ಭಾಗಿಯಾಗಿರುವ ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಕೋರಿ ದಾಖಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅಂಬಾನಿ ಮತ್ತು ADAGಗೆ ಹೊಸದಾಗಿ ನೋಟಿಸ್ಗಳನ್ನು ಹೊರಡಿಸಿದೆ. ಆರೋಪಿಸಲಾಗಿರುವ ವಂಚನೆ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ) ನಡೆಸುತ್ತಿರುವ ತನಿಖೆಗಳ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಹತ್ತು ದಿನಗಳಲ್ಲಿ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಈ ತನಿಖಾ ಸಂಸ್ಥೆಗಳನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ಸೂಚಿಸಿತು. ಅರ್ಜಿದಾರರಾದ ಮಾಜಿ ಕೇಂದ್ರ ಕಾರ್ಯದರ್ಶಿ ಇಎಎಸ್ ಶರ್ಮಾ ಸಲ್ಲಿಸಿರುವ ಪಿಐಎಲ್ನ ನೋಟಿಸ್ಗಳನ್ನು ಅಂಬಾನಿ ಮತ್ತು ADAGಗೆ ಈಗಾಗಲೇ ಜಾರಿಗೊಳಿಸಲಾಗಿದೆ ಎನ್ನುವುದನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠವು ಗಮನಕ್ಕೆ ತೆಗೆದುಕೊಂಡಿತು. ಪೀಠವು ಪಿಐಎಲ್ಗೆ ಸಂಬಂಧಿಸಿದಂತೆ ಕಳೆದ ವರ್ಷದ ನ.18ರಂದು ಕೇಂದ್ರ, ಸಿಬಿಐ, ಈ.ಡಿ., ಅನಿಲ್ ಅಂಬಾನಿ ಮತ್ತು ADAGಗೆ ನೋಟಿಸ್ಗಳನ್ನು ಹೊರಡಿಸಿತ್ತು. ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ಮತ್ತು ತಮ್ಮ ಉತ್ತರಗಳನ್ನು ಸಲ್ಲಿಸಲು ತಾನು ಅನಿಲ್ ಅಂಬಾನಿ ಮತ್ತು ADAGಗೆ ಕೊನೆಯ ಅವಕಾಶವನ್ನು ನೀಡುತ್ತಿರುವುದಾಗಿ ಪೀಠವು ಸ್ಪಷ್ಟಪಡಿಸಿತು. ಮುಂದಿನ ವಿಚಾರಣೆಯನ್ನು ಹತ್ತು ದಿನಗಳ ಬಳಿಕ ನಿಗದಿಗೊಳಿಸಲಾಗಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ: ಯೂನಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಷೇಕ್ ಹಸೀನಾ ಅವರು, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು 'ವಿದೇಶಿ ಸೇವೆ ಸಲ್ಲಿಸುವ ಕೀಲುಗೊಂಬೆ ಆಡಳಿತ' ಎಂದು ತೀವ್ರವಾಗಿ ಟೀಕಿಸಿದ್ದಾರೆ. ದೇಶವು ಭಯೋತ್ಪಾದನೆ, ಅರಾಜಕತೆ ಮತ್ತು ಪ್ರಜಾಪ್ರಭುತ್ವದ ಗಡಿಪಾರಿನ ಯುಗಕ್ಕೆ ತಳ್ಳಲ್ಪಟ್ಟಿದೆ ಎಂದು ಆರೋಪಿಸಿ, ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸಲು ಅವರು ಕರೆ ನೀಡಿದ್ದಾರೆ.
ಜ.28ರಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಸಿಎಂ ಉತ್ತರ: ಸ್ಪೀಕರ್ ಯು.ಟಿ. ಖಾದರ್
ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಜ.27, 28ರಂದು ಚರ್ಚೆ ನಡೆಯಲಿದೆ. ಜ.28ರ ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಈ ಚರ್ಚೆಗೆ ಸಂಬಂಧಿಸಿದಂತೆ ಉತ್ತರ ನೀಡಲಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಕಟಿಸಿದರು. ಶುಕ್ರವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಸಮಾವೇಶಗೊಳ್ಳುತ್ತಿದ್ದಂತೆ ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಪ್ರಕಟಿಸಿದ ಅವರು, ಜ.29ರಿಂದ 31ರ ವರೆಗೆ ಸರಕಾರದಿಂದ ಸೂಚಿಸಲ್ಪಟ್ಟಿರುವ ನಿರ್ಣಯದ ಕುರಿತು ಚರ್ಚೆ ನಡೆಯಲಿದೆ. ಜ.31ರಂದು ಶನಿವಾರ ಮುಖ್ಯಮಂತ್ರಿ ನಿರ್ಣಯಕ್ಕೆ ಸಂಬಂಧಿಸಿದಂತೆ ನಡೆಯುವ ಚರ್ಚೆಗೆ ಉತ್ತರ ನೀಡಲಿದ್ದಾರೆ. ಜ.28ರಿಂದ 31ರ ವರೆಗೆ ಸದನವನ್ನು ಬೆಳಗ್ಗೆ 9.30ಕ್ಕೆ ಆರಂಭಿಸಲಾಗುವುದು ಎಂದು ಹೇಳಿದರು.
ಕರಾವಳಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಹಿರಿದು: ನಬಾರ್ಡ್ ಡಿಜಿಎಂ ಯೋಗೇಶ್
ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘಕ್ಕೆ ನಾಬಾರ್ಡ್ ತಂಡದ ಭೇಟಿ
Gold Collection: ಅಮೆರಿಕದ ಬಳಿ ಇದೆ 8000 ಟನ್ ಚಿನ್ನ: ಇದು ವಿಶ್ವದ ಅತಿಹೆಚ್ಚು ಸಂಗ್ರಹ, ಭಾರತದ ಬಳಿ ಎಷ್ಟಿದೆ
ಚಿನ್ನದ ಬೆಲೆಯು ಈಗ ಗಗನಮುಖಿಯಾಗಿದೆ. ಈ ರೀತಿ ಇರುವಾಗಲೇ ವಿಶ್ವದ ದೊಡ್ಡಣ್ಣ, ಸೂಪರ್ ನೇಷನ್ ಎನ್ನುವ ಅಮೆರಿಕದ ಬಳಿ ಎಷ್ಟಿದೆ ಹಾಗೂ ಭಾರತ ಸೇರಿದಂತೆ ವಿವಿಧ ದೇಶಗಳ ಬಳಿ ಎಷ್ಟಿದೆ ಎನ್ನುವ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ವಿವಿಧ ದೇಶಗಳು ತಮ್ಮ ಖಜಾನೆಯಲ್ಲಿ ಟನ್ಗಟ್ಟಲೆ ಚಿನ್ನವನ್ನು ಖರೀದಿ ಮಾಡಿಕೊಂಡು ಇರಿಸಿಕೊಂಡಿವೆ. ಸಂಕಷ್ಟದ ಕಾಲದಲ್ಲಿ ನಾವೆಲ್ಲರೂ ಹೇಗೆ
ಪ.ಜಾತಿ ಯುವಕರಿಗೆ ಉಚಿತ ಜಿಮ್ ತರಬೇತಿಗೆ ಅರ್ಜಿ ಆಹ್ವಾನ
ಉಡುಪಿ, ಜ.23: ಪ್ರಸಕ್ತ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿಯ ಉಪ ಯೋಜನೆಯಡಿ ಯುವ ಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಯ ಯುವಕ ರಿಗೆ 45 ದಿನಗಳ ಉಚಿತ ಜಿಮ್ ತರಬೇತಿ ಶಿಬಿರವನ್ನು ಫೆಬ್ರವರಿ 1ರಿಂದ ಮಾರ್ಚ್ 17ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಎಸೆಸೆಲ್ಸಿ ಉತ್ತೀರ್ಣರಾದ 18ರಿಂದ 35 ವರ್ಷದೊಳಗಿನ ಪರಿಶಿಷ್ಟ ಜಾತಿಯ ಅರ್ಹ ಯುವಕರು ಪ್ರಸ್ತಾವನೆ ಗಳನ್ನು ಸಲ್ಲಿಸಲು ಜನವರಿ 30 ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯ ವಾಣಿ ಸಂಖ್ಯೆ: 155265 ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9845432303 ಅನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ಅಮಾನತು
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತರಾದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನನ್ನು ಕಾಂಗ್ರೆಸ್ ಪಕ್ಷದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಶುಕ್ರವಾರ ಈ ಸಂಬಂಧ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರಾಗಿರುವ ಕೆ.ರೆಹ್ಮಾನ್ ಖಾನ್ ಅವರು ಆದೇಶ ಹೊರಡಿಸಿದ್ದು, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಬಂದಿರುವ ಆರೋಪವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಪ್ರಕರಣದ ಗಂಭೀರತೆ ಮನವರಿಕೆಯಾದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗಾಜಾ ಶಾಂತಿ ಮಂಡಳಿ ಸ್ಥಾಪಿಸಿದ ಕೂಡಲೇ ಇರಾನ್ ಮೇಲೆ ಅಟ್ಯಾಕ್ ಮಾಡಲು ಸಿದ್ಧವಾದ ಅಮೆರಿಕ!
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾದಲ್ಲಿ ಶಾಂತಿ ಮಂಡಳಿ ಸ್ಥಾಪಿಸಿದ ಬೆನ್ನಲ್ಲೇ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯ ಹೇಳಿಕೆ ನೀಡಿದ್ದಾರೆ. ಯುದ್ಧನೌಕೆಗಳು, ಕ್ಷಿಪಣಿ ವಿಧ್ವಂಸಕ ನೌಕೆಗಳು, ಫೈಟರ್ ಜೆಟ್ಗಳು ಮತ್ತು ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ಪಶ್ಚಿಮ ಏಷ್ಯಾಕ್ಕೆ ರವಾನಿಸಲಾಗಿದೆ. ಇರಾನ್ನಲ್ಲಿನ ಪ್ರತಿಭಟನೆಗಳು ಮತ್ತು ಪರಮಾಣು ಕಾರ್ಯಕ್ರಮದ ಕಾರಣ ಈ ಸಿದ್ಧತೆ ನಡೆದಿದೆ.
ಅಮೆರಿಕದ ಸಮನ್ಸ್ ವರದಿಗಳ ನಡುವೆ ನೆಲ ಕಚ್ಚಿದ ಅದಾನಿ ಗ್ರೂಪ್ ಶೇರುಗಳು: ಶೇ.14.5ರವರೆಗೆ ಕುಸಿತ
ಹೊಸದಿಲ್ಲಿ,ಜ.23: ವಂಚನೆ ಆರೋಪ ಮತ್ತು 265 ಶತಕೋಟಿ ಡಾಲರ್ ಲಂಚ ಪ್ರಕರಣದಲ್ಲಿ ಗೌತಮ ಅದಾನಿ ಮತ್ತು ಸಾಗರ ಅದಾನಿ ಅವರಿಗೆ ಸಮನ್ಸ್ ಜಾರಿಗೊಳಿಸಲು ಅಮೆರಿಕದ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ (ಯುಎಸ್ ಎಸ್ಇಸಿ) ನ್ಯಾಯಾಲಯದ ಅನುಮತಿಯನ್ನು ಕೋರಿದೆ ಎಂಬ ವರದಿಗಳ ನಡುವೆ ಶುಕ್ರವಾರ ಅದಾನಿ ಗ್ರೂಪ್ನ ಶೇರುಗಳು ಶೇ.14.5ರವರೆಗೆ ಕುಸಿದಿವೆ. ಗ್ರೂಪ್ನ ಮುಂಚೂಣಿ ಕಂಪೆನಿ ಅದಾನಿ ಎಂಟರ್ಪ್ರೈಸಸ್ನ ಶೇರುಗಳು ಶೇ.10.65ರಷ್ಟು ಕುಸಿದು 1,864.20 ರೂ.ಗೆ ತಲುಪಿದ್ದರೆ, ಅದಾನಿ ಪವರ್ 132.96 ರೂ.ಗೆ(ಶೇ.5.65 ನಷ್ಟ),ಅದಾನಿ ಪೋರ್ಟ್ಸ್ 1,308.40 ರೂ.ಗೆ (ಶೇ.7.48 ನಷ್ಟ),ಅದಾನಿ ಟೋಟಲ್ ಗ್ಯಾಸ್ 517.45 ರೂ.ಗೆ (ಶೇ.5.57 ನಷ್ಟ) ಕುಸಿದಿವೆ. ಡಿಸೆಂಬರ್ 2024ರ ತ್ರೈಮಾಸಿಕದಲ್ಲಿ 474 ಕೋ.ರೂ.ಗಳ ನಿವ್ವಳ ಲಾಭವನ್ನು ಗಳಿಸಿದ್ದ ಅದಾನಿ ಗ್ರೀನ್ ಎನರ್ಜಿ ಡಿಸೆಂಬರ್ 2025ರ ತ್ರೈಮಾಸಿಕದಲ್ಲಿ ಕೇವಲ ಐದು ಕೋ.ರೂ.ಗಳ ಕ್ರೋಡೀಕೃತ ನಿವ್ವಳ ಲಾಭವನ್ನು ವರದಿ ಮಾಡಿದ ಬಳಿಕ ಅದರ ಶೇರಿನ ಬೆಲೆ 772.80 ರೂ.ಗೆ (ಶೇ.14.54 ನಷ್ಟ) ಕುಸಿದಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ನ ಶೇರುಗಳ ಬೆಲೆ 812.70 ರೂ.ಗೆ (ಶೇ.12.12 ನಷ್ಟ) ಕುಸಿದಿದೆ. ಡಿಸೆಂಬರ್ 2024ರ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಸಕ್ತ ವಿತ್ತವರ್ಷದ ಇದೇ ಅವಧಿಯಲ್ಲಿ ಅದರ ಕ್ರೋಡೀಕೃತ ನಿವ್ವಳ ಲಾಭ ಶೇ.8ಕ್ಕೂ ಅಧಿಕ ಕುಸಿದು 574.06 ಕೋ.ರೂ.ಆಗಿದೆ. ಅದಾನಿ ಗ್ರೂಪ್ನ ಅಂಬುಜಾ ಸಿಮೆಂಟ್ಸ್ 518.60 ರೂ.ಗೆ( ಶೇ.5.12 ನಷ್ಟ) ಮತ್ತು ಎನ್ಡಿಟಿವಿ 81.12 ರೂ.ಗೆ (ಶೇ.4.71 ನಷ್ಟ) ಕುಸಿದಿವೆ. ಸಾಂಘಿ ಇಂಡಸ್ಟ್ರೀಸ್ 60.44 ರೂ.ಗೆ( ಶೇ.5.80 ನಷ್ಟ) ಮತ್ತು ಎಸಿಸಿ 1678.90 ರೂ.ಗೆ (ಶೇ.2.85 ನಷ್ಟ) ಕುಸಿದಿವೆ. ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ಇಂದು ಶೇ.0.94 ನಷ್ಟದೊಂದಿಗೆ 81,537.70 ಮತ್ತು ಎನ್ಎಸ್ಇ ಸೂಚ್ಯಂಕ ನಿಫ್ಟಿ ಶೇ.0.95 ನಷ್ಟದೊಂದಿಗೆ 25,048.65ರಲ್ಲಿ ಮುಕ್ತಾಯಗೊಂಡಿವೆ. ವರದಿಗಳ ಪ್ರಕಾರ ಗೌತಮ ಅದಾನಿ ಮತ್ತು ಸಾಗರ ಅದಾನಿ ಅವರಿಗೆ ಸಮನ್ಸ್ ಜಾರಿಗೊಳಿಸಲು ಭಾರತೀಯ ಅಧಿಕಾರಿಗಳಿಂದ ನೆರವು ಪಡೆಯಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಬ್ರೂಕ್ಲಿನ್ನಲ್ಲಿಯ ನ್ಯಾಯಾಲಯಕ್ಕೆ ತಿಳಿಸಿರುವ ಯುಸ್ ಎಸ್ಇಸಿ,ಹೀಗಾಗಿ ಇಮೇಲ್ ಮೂಲಕ ಅವರಿಗೆ ಸಮನ್ಸ್ ಜಾರಿಗೊಳಿಸಲು ಅನುಮತಿಯನ್ನು ಕೋರಿದೆ. ಅಮೆರಿಕದಲ್ಲಿ 2024ರಲ್ಲಿ ಮೊಕದ್ದಮೆ ದಾಖಲಾಗಿದ್ದು,ಗೌತಮ ಅದಾನಿ ಮತ್ತು ಸಾಗರ್ ಅದಾನಿ ಅವರು ಅದಾನಿ ಗ್ರಿನ್ ಎನರ್ಜಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳ ಮೂಲಕ ಯುಎಸ್ ಸೆಕ್ಯೂರಿಟಿ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜ.24ರಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಗೆ ಭೇಟಿ
ಉಡುಪಿ, ಜ.23: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಲಕ್ಷ್ಮೀ ಹೆಬ್ಬಾಳ್ಕರ್ ಜ.24ರ ಶನಿವಾರ ಸಂಜೆ 7:00ಗಂಟೆಗೆ ಉಡುಪಿಗೆ ಆಗಮಿಸಿ ಸರಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅವರು ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜ.25ರಂದು ಅಪರಾಹ್ನ 1:00ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಸಚಿವರು, ಸಂಜೆ 4ಗಂಟೆಗೆ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಸ್ವರಾಜ್ ಮೈದಾನದಲ್ಲಿ ನಡೆಯುವ ಕಾಂಗ್ರೆಸ್ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 7:00ಕ್ಕೆ ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆಯುವ ಬೈಂದೂರು ಉತ್ಸವ-2026ರಲ್ಲಿ ಭಾಗವಹಿಸುವರು. ಜ.26ರಂದು ಬೆಳಗ್ಗೆ 8:30ಕ್ಕೆ ದೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆಯ ಪುಷ್ಪ ಹರಾಜು ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. 9:00ಗಂಟೆಗೆ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸ ಲಾಗುವ ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಅಪರಾಹ್ನ 1:30ಕ್ಕೆ ಚಿಕ್ಕಮಗಳೂರಿನ ಹೊರನಾಡು ದೇವಸ್ಥಾನಕ್ಕೆ ಭೇಟಿ ನೀಡಿ ರಾತ್ರಿ ಉಡುಪಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಡಿ.27ರಂದು ಬೆಳಗ್ಗೆ 7:00ಗಂಟೆಗೆ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.
ಕೆಮ್ಮಿನ ಸಿರಪ್ ಕಳ್ಳಸಾಗಣೆ| ಪ್ರಮುಖ ಆರೋಪಿಯ 28.5 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ ಪೊಲೀಸರು
ವಾರಣಾಸಿ/ಸೋನಭದ್ರಾ,ಜ.23: ನ್ಯಾಯಾಲಯದ ಆದೇಶದ ಮೇರೆಗೆ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಕೋಡಿನ್ ಒಳಗೊಂಡ ಕೆಮ್ಮಿನ ಸಿರಪ್ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಭೋಲಾ ಪ್ರಸಾದ್ಗೆ ಸೇರಿದ ಸುಮಾರು 28.5 ಕೋ.ರೂ.ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ವಾರಣಾಸಿಯ ಮೂರು ವಿಭಿನ್ನ ಸ್ಥಳಗಳಲ್ಲಿ ಜಪ್ತಿ ಕಾರ್ಯಾಚರಣೆ ನಡೆಸಲಾಗಿದೆ. ವಾರಣಾಸಿ ನಿವಾಸಿ ಪ್ರಸಾದ್ ಪ್ರಸ್ತುತ ಸೋನಭದ್ರಾ ಜಿಲ್ಲಾ ಜೈಲಿನಲ್ಲಿದ್ದಾನೆ. ಪ್ರಸಾದ ಸಂಘಟಿತ ಮಾಫಿಯಾವನ್ನು ನಡೆಸುತ್ತಿದ್ದ ಮತ್ತು ಅಕ್ರಮ ವ್ಯವಹಾರದ ಮೂಲಕ 28.5 ಕೋ.ರೂ.ಮೌಲ್ಯದ ಆಸ್ತಿಗಳನ್ನು ಸಂಪಾದಿಸಿದ್ದ ಎನ್ನುವುದು ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು ಎಂದು ಸೋನಭದ್ರಾ ಎಸ್ಪಿ ಅಭಿಷೇಕ ವರ್ಮಾ ತಿಳಿಸಿದರು. ಪೊಲೀಸರ ಪ್ರಕಾರ ಜಫ್ತಿ ಮಾಡಲಾಗಿರುವ ಆಸ್ತಿಗಳಲ್ಲಿ ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿವಿ ಕ್ಯಾಂಪಸ್ನಲ್ಲಿಯ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಒಟ್ಟು 1,13,93,276 ರೂ.ಗಳ ಎರಡು ಸ್ಥಿರ ಠೇವಣಿ ರಸೀದಿಗಳು ಸೇರಿವೆ. ಇದೇ ವೇಳೆ ಇತರ ಎರಡು ಬ್ಯಾಂಕ್ಗಳಲ್ಲಿರುವ 6,89,607 ರೂ.ಗಳನ್ನು ಹಿಂದೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. 1.22 ಕೋ.ರೂ.ಮೌಲ್ಯದ ಮರ್ಸಿಡಿಸ್-ಬೆಂಝ್ ಕಾರು ಹಾಗೂ ಫೆಬ್ರವರಿ 2023ರಲ್ಲಿ ವಾರಣಾಸಿಯಲ್ಲಿ ಪ್ರಸಾದ್ನ ಪತ್ನಿ ಶಾರದಾ ಜೈಸ್ವಾಲ್ ಹೆಸರಿನಲ್ಲಿ 3.03 ಕೋ.ರೂ.ಗೆ ಖರೀದಿಸಿದ್ದ ಎರಡು ಮನೆಗಳೂ ಜಪ್ತಿ ಮಾಡಲಾಗಿರುವ ಆಸ್ತಿಗಳಲ್ಲಿ ಸೇರಿವೆ. ಪ್ರಸಾದ್ ಜುಲೈ 2025ರಲ್ಲಿ 23 ಕೋ.ರೂ.ಗಳಿಗೆ ತನ್ನ ಪತ್ನಿಯ ಹೆಸರಿನಲ್ಲಿ ಖರೀದಿಸಿದ್ದ ವಾರಣಾಸಿಯಲ್ಲಿನ ಕಟ್ಟಡವೊಂದನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. ವಿದೇಶಕ್ಕೆ ಪರಾರಿಯಾಗಲು ಪ್ರಯತ್ನಿಸಿದ್ದ ಪ್ರಸಾದ್ನನ್ನು ಕೋಲ್ಕತಾದ ಡಂ ಡಂ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಂಧಿಸಲಾಗಿತ್ತು.
ಉಡುಪಿ: ಸಾಲುಮರದ ತಿಮ್ಮಕ್ಕ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ
ಜ.26ರಿಂದ 28ರವರೆಗೆ 26 ಜಾತಿಯ ಹೂವುಗಳ ಪ್ರದರ್ಶನ
ದ್ವೇಷದ ಉಚ್ಚಾಟನೆಗೆ ಬೈಂದೂರು ಶಾಸಕ ಗಂಟಿಹೊಳೆ ಕಾರಣ: ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಆರೋಪ
ಬೈಂದೂರು: ಕಳೆದ 13 ವರ್ಷಗಳಿಂದ ಹಗಲಿರುಳು ಬಿಜೆಪಿ ಪಕ್ಷ ಸಂಘಟನೆಗಾಗಿ ದುಡಿದು ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಯಾವುದೇ ತಪ್ಪು ಮಾಡದೆ ಬಿಜೆಪಿ ಪಕ್ಷದಿಂದ ನನ್ನನ್ನು ಉಚ್ಚಾಟಿಸಿ ’ಪೊಲಿಟಿಕಲ್ ಮರ್ಡರ್’ ಮಾಡಲಾಗಿದೆ. ಈ ದ್ವೇಷದ ಉಚ್ಚಾಟನೆಗೆ ಬೈಂದೂರು ಹಾಲಿ ಶಾಸಕ ಗುರುರಾಜ ಗಂಟಿಹೊಳೆ ಕಾರಣ. ಈ ಆದೇಶಕ್ಕೆ ಯಾವುದೇ ಬೆಲೆಯಿಲ್ಲ. ಉಚ್ಚಾಟನೆ ಮಾಡಬೇಕಾಗಿರುವುದು ಬೈಂದೂರು ಶಾಸಕರನ್ನು ಎಂದು ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಟೀಕಿಸಿದ್ದಾರೆ. ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದ ವಿಚಾರದಲ್ಲಿ ಅವರು ಬೈಂದೂರು ರೈತ ಕಛೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತಿದ್ದರು. ಬಿಜೆಪಿ ಪಕ್ಷದ ನಿಯಮದ ಪ್ರಕಾರ ನನ್ನ ಉಚ್ಚಾಟನೆಯಾಗಿಲ್ಲ. ಹಲವಾರು ದಶಕಗಳಿಂದ ರೈತಪರ ಹೋರಾಟ, ಪಕ್ಷ ಸಂಘಟನೆಯಲ್ಲಿ ಮುನ್ನೆಲೆಯಾಗಿ ತೊಡಗಿಸಿಕೊಂಡವರಿಗೆ ಹೀಗಾದರೆ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರ ಗತಿಯೇನು. ರೈತರ ಪರವಾಗಿ ಹೋರಾಟ ಮಾಡಿರುವುದು ಪಕ್ಷ ವಿರೋಧಿಯಾಗುವುದು ಹೇಗೆ ಎಂದು ಪ್ರಶ್ನಿಸಿದರು. ಶಾಸಕ ಗಂಟಿಹೊಳೆ ಗೆಲುವಿನ ಹಿಂದೆ ನಮ್ಮಂತ ಸಾವಿರಾರು ಕಾರ್ಯಕರ್ತರ ಪರಿಶ್ರಮವಿದೆ. ಬಡವರ ಮನೆ ಹುಡುಗ ಗೆಲ್ಲಬೇಕೆಂದು ಹಗಲು-ರಾತ್ರಿ ದುಡಿದೆವು. ಮನೆ, ವಾರ್ಡ್ ಗೊತ್ತಿಲ್ಲದರನ್ನು ಗೆಲ್ಲಿಸಿದ್ದು ಬಡವರ ಮನೆ ಹುಡುಗ ಈಗ ಶ್ರೀಮಂತರ ಮನೆ ಪಾಲಾಗಿದ್ದಾರೆ ಎಂದ ಅವರು, ನಮ್ಮನ್ನು ತಡೆಯುವರು ಯಾರೂ ಇಲ್ಲ. ನಾನು ಹಿಂದೆ ಕೂಡ ಬಿಜೆಪಿ. ಮುಂದೆಯೂ ಬಿಜೆಪಿ ಎಂದರು. ಪಟ್ಟಣ ಪಂಚಾಯತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ರೈತರು ಮಾಡುತ್ತಿರುವ ಹೋರಾಟ 124 ದಿನ ಪೂರೈಸಿದೆ. ಸರಕಾರ, ಜಿಲ್ಲಾಡಳಿತ ರೈತರ ಬೇಡಿಕೆ ಈಡೇರಿಸುವ ಹಂತದಲ್ಲಿದ್ದರು ಕೂಡ ಯಾವುದೋ ಹಿತಾಸಕ್ತಿ ಕಾರಣಕ್ಕೆ ಅದಕ್ಕೂ ತಡೆಯೊಡ್ಡಿ ರೈತರಿಗೆ ನ್ಯಾಯ ಸಿಗದಿರುವಂತೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಬೈಂದೂರು ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕಳೆದ ಬಾರಿ ಉತ್ಸವದ ಹೆಸರಿನಲ್ಲಿ ವಿದೇಶದಲ್ಲಿ ಹಣ ಸಂಗ್ರಹಿಸಿದ್ದಾರೆ. ಈ ಬಾರಿಯೂ ಉತ್ಸವ ಮಾಡಲಾಗುತ್ತಿದೆ. ಈ ಉತ್ಸವದಿಂದ ಬೈಂದೂರಿನ ಜನರಿಗೆ ಏನು ಲಾಭ ಇಲ್ಲ. ಇವರ ಉತ್ಸವ ರೈತರ ಹೆಣದ ಮೇಲೆ ನಡೆಯುವ ನೈತಿಕತೆಯಿಲ್ಲದ ಉತ್ಸವವಾಗಿದೆ. ಆದುದರಿಂದ ಈ ಉತ್ಸವಕ್ಕೆ ಬರುವ ಸಚಿವರು, ವಿವಿಧ ನಾಯಕರುಗಳು ಪರಾಮರ್ಷಿಸಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಕುಂದಾಪುರ ತಾ.ಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಯುವಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಆಕಾಶ್ ಪೂಜಾರಿ, ಪ್ರಮುಖರಾದ ಲಿಮೋನ್ ಅತ್ಯಾಡಿ, ಭಾಸ್ಕರ ಮರಾಠಿ ಗಂಗನಾಡು ಇದ್ದರು. ‘ಶಾಸಕ ನನ್ನ ಮೇಲೆ ಕೈ ಮಾಡಿದ್ದರು’ ಮಣಿಪಾಲದಲ್ಲಿ ಬೈಂದೂರು ಶಾಸಕ ಗಂಟಿಹೊಳೆ ಸಂಸದ ಹಾಗೂ ಇತರ ಶಾಸಕರುಗಳ ಎದುರೇ ನನ್ನ ಕುತ್ತಿಗೆಗೆ ಕೈಹಾಕಿ ತಳ್ಳಿದರು. ಒಬ್ಬ ಶಾಸಕ ಮಂಡಲ ಅಧ್ಯಕ್ಷನ ಮೇಲೆ ಕೈ ಮಾಡಿರುವುದು ಶಾಸಕರ ರಾಜಕೀಯ ದುರಾಸೆಯ ವರ್ತನೆ ಎಂದು ದೀಪಕ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಬೆಳ್ತಂಗಡಿ, ಪುತ್ತೂರು, ಬಳ್ಳಾರಿ ರಿಜೆಕ್ಟೆಡ್ ಪೀಸ್ಗಳನ್ನು ಖುರ್ಚಿ ಮೇಲೆ ಕೂರಿಸಿ ಬೈಂದೂರಿನ ಸ್ವಾಭಿಮಾನಿ ಕಾರ್ಯಕರ್ತರನ್ನು ಆಳಲು ಹೊರಟಾಗ ವಿರೋಧಿಸಬೇಕಾಯಿತು. ಪಕ್ಷ ಯಾರ ಮನೆಯ ಆಸ್ತಿಯಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ನನ್ನ ಸಂಬಂಧ ಹಾಳು ಮಾಡುವ ಸಲುವಾಗಿ ಅವರ ಲೀಡ್ ಕಮ್ಮಿ ಮಾಡುವ ಹುನ್ನರವೂ ನಡೆದಿತ್ತು ಎಂದು ಅವರು ಆರೋಪಿಸಿದರು. ‘ಬರಿಗಾಲ ಸಂತ ಹೇಳಿಕೊಂಡು ಗುರುರಾಜ್ ಗಂಟಿಹೊಳೆ ಶಾಸಕರಾಗಿ ಬಂದ ಮೇಲೆ ಬೈಂದೂರಿಗೆ ಬರಗಾಲ ಬಂದಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಸೂಕ್ತ ಸಮಯದಲ್ಲಿ ಎಲ್ಲಾ ದಾಖಲೆ ಬಹಿರಂಗ ಪಡಿಸಲಾಗುವುದು’ -ದೀಪಕ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಬೈಂದೂರು ಬಿಜೆಪಿ ಮಂಡಲ
ಭೋಜಶಾಲಾ-ಕಮಾಲ್ ಮಸೀದಿ ಸಂಕೀರ್ಣದಲ್ಲಿ ಶಾಂತಿಯುತವಾಗಿ ನಡೆದ ಹಿಂದುಗಳ ಪೂಜೆ, ಮುಸ್ಲಿಮರ ನಮಾಝ್
ಧಾರ್,ಜ.23: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ-ಕಮಾಲ್ ಮೌಲಾ ಮಸೀದಿ ಸಂಕೀರ್ಣವು ಶುಕ್ರವಾರ ಶಾಂತಿಯುತವಾಗಿದ್ದು, ವಸಂತ ಪೂರ್ಣಿಮೆ ಪ್ರಯುಕ್ತ ಹಿಂದುಗಳು ಪೂಜೆಯನ್ನು ಸಲ್ಲಿಸಿದರು. ಇದೇ ವೇಳೆ ಸಂಕೀರ್ಣದ ಇನ್ನೊಂದು ಭಾಗದಲ್ಲಿ ಮುಸ್ಲಿಮರು ನಮಾಝ್ ಮಾಡಿದರು. ನಸುಕಿನಲ್ಲಿ ಭಾರೀ ಭದ್ರತೆಯ ನಡುವೆ ಆರಂಭಗೊಂಡಿದ್ದ ಪೂಜೆ ಸೂರ್ಯಾಸ್ತದ ವೇಳೆಗೆ ಅಂತ್ಯಗೊಂಡಿತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳಂತೆ ಮುಸ್ಲಿಮರು ತಮಗೆ ನಿಗದಿಗೊಳಿಸಲಾಗಿದ್ದ ಸ್ಥಳದಲ್ಲಿ ಅಪರಾಹ್ನ ಒಂದರಿಂದ ಮೂರು ಗಂಟೆಯವರೆಗೆ ನಮಾಝ್ ಸಲ್ಲಿಸಿದರು ಎಂದು ಜಿಲ್ಲಾಡಳಿತವು ಹೇಳಿಕೆಯಲ್ಲಿ ತಿಳಿಸಿದೆ. ನಗರದಲ್ಲಿ ಸುಮಾರು 8,000 ಪೊಲೀಸ್ ಮತ್ತು ಅರೆ ಸೇನಾಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಈ ವರ್ಷ ವಸಂತ ಪಂಚಮಿ ಶುಕ್ರವಾರವೇ ಬಂದಿದ್ದರಿಂದ ಸಂಭಾವ್ಯ ಸಂಘರ್ಷವನ್ನು ತಪ್ಪಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಉಭಯ ಸಮುದಾಯಗಳಿಗೆ ಸಮಯವನ್ನು ನಿಗದಿಗೊಳಿಸಿತ್ತು. ಹಿಂದುಗಳಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಮತ್ತು ಅಪರಾಹ್ನ ಒಂದರಿಂದ ಮೂರು ಗಂಟೆಯವರೆಗೆ ಮುಸ್ಲಿಮರು ನಮಾಝ್ ಮಾಡಲು ಅನುಮತಿ ನೀಡಿತ್ತು. ಸೂರ್ಯೋದಯದ ವೇಳೆಗೆ ಕೇಸರಿ ಧ್ವಜಗಳು ಮತ್ತು ಹೂವುಗಳಿಂದ ಅಲಂಕೃತವಾಗಿದ್ದ ಐತಿಹಾಸಿಕ ಸ್ಥಳದಲ್ಲಿ ಭಕ್ತರು ಸಮಾವೇಶಗೊಂಡಿದ್ದರು. ಸ್ಥಳೀಯ ಸಂಘಟನೆ ಭೋಜ ಉತ್ಸವ ಸಮಿತಿ ಸದಸ್ಯರು ವೈದಿಕ ಮಂತ್ರಗಳ ಪಠಣದ ನಡುವೆ ಸರಸ್ವತಿ ದೇವಿಯ ಚಿತ್ರವನ್ನು ಪ್ರತಿಷ್ಠಾಪಿಸುವ ಮೂಲಕ ಪೂಜೆಯನ್ನು ಆರಂಭಿಸಿದರು. ಹವನ ಕುಂಡದಲ್ಲಿ ಆಹುತಿಗಳನ್ನು ಸಲ್ಲಿಸುವ ಮೂಲಕ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಖಂಡ ಪೂಜೆಗೆ ಚಾಲನೆ ನೀಡಲಾಗಿತ್ತು. ಸಂಕೀರ್ಣದ ಮೂಲೆಮೂಲೆಯಲ್ಲಿಯೂ ಭದ್ರತಾ ಸಿಬ್ಬಂದಿಗಳು ಕಟ್ಟೆಚ್ಚರವನ್ನು ವಹಿಸಿದ್ದರು.
ಭಾರತದಲ್ಲಿ ಪ್ರತಿ ವರ್ಷ 4.6 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 1.6 ಲಕ್ಷಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಎಕ್ಸ್ಪ್ರೆಸ್ವೇಗಳು ಹೆಚ್ಚಾಗುತ್ತಿದ್ದಂತೆ, ಮೂಲಸೌಕರ್ಯ ವಿಸ್ತರಣೆ ಮಾತ್ರ ಸುರಕ್ಷಿತ ಚಾಲನೆಗೆ ಸಾಕಾಗುವುದಿಲ್ಲ ಎಂದು ನೀತಿ ನಿರೂಪಕರು ಒಪ್ಪಿಕೊಂಡಿದ್ದಾರೆ. ವಿಸ್ತರಣೆಯನ್ನು ಮೀರಿ, ವ್ಯವಸ್ಥಿತ ಸುರಕ್ಷತಾ ಸುಧಾರಣೆಗೆ ಹೆದ್ದಾರಿಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಹೇಗೆ ಮೇಲ್ವಿಚಾರಣೆ ಮಾಡಲಾಗಿದೆ, ಹೇಗೆ ನಿರ್ವಹಿಸಲಾಗಿದೆ ಎಂಬುದನ್ನು ಸರಕಾರ ಈಗ ಮರುಪರಿಶೀಲಿಸುತ್ತಿದೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ( MoRTH) ಹೆದ್ದಾರಿ ಸುರಕ್ಷತೆ ಏಕೆ ಆದ್ಯತೆಯಾಗಿದೆ? ಅದರ ಬಹುಮುಖಿ ಕಾರ್ಯತಂತ್ರವು ಜೀವಗಳನ್ನು ಉಳಿಸುವ ಗುರಿಯನ್ನು ಹೇಗೆ ಹೊಂದಿದೆ ಎಂಬುದನ್ನು ನೋಡೋಣ. ಹೆದ್ದಾರಿ ಸುರಕ್ಷತೆಯು MoRTH ಗೆ ಆದ್ಯತೆ ಭಾರತದ ರಸ್ತೆ ನೆಟ್ವರ್ಕ್ ನ ಕೇವಲ 2–3% ರಷ್ಟಿರುವ ರಾಷ್ಟ್ರೀಯ ಹೆದ್ದಾರಿಗಳು ಭೀಕರ ಅಪಘಾತಗಳಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ. ಹೆಚ್ಚಿನ ವೇಗ, ಅನಿಯಂತ್ರಿತ ಪ್ರವೇಶ ಬಿಂದುಗಳು, ಮಿಶ್ರ ಸಂಚಾರ, ಪಾದಚಾರಿಗಳು ಮತ್ತು ಪ್ರಾಣಿಗಳ ಒಳನುಗ್ಗುವಿಕೆ, ರಾತ್ರಿ ಹೊತ್ತು ಕಡಿಮೆ ಗೋಚರತೆ ಹಾಗೂ ವಿಳಂಬವಾದ ತುರ್ತು ಪ್ರತಿಕ್ರಿಯೆ ಅನೇಕ ಕಾರಿಡಾರ್ಗಳನ್ನು ಅಪಘಾತದ ತಾಣಗಳಾಗಿ ಪರಿವರ್ತಿಸಿವೆ. ಜನಸಂಖ್ಯೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಾಗಿದೆ. ರಸ್ತೆ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಸುಮಾರು 66% ಮಂದಿ 18–45 ವಯೋಮಾನದವರು. ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದು ರಸ್ತೆ ಸುರಕ್ಷತೆಯನ್ನು ಕೇವಲ ಸಾರಿಗೆ ಸಮಸ್ಯೆಯಾಗಿ ಮಾತ್ರವಲ್ಲದೆ, ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕ ಕಾಳಜಿಯನ್ನಾಗಿ ಮಾಡುತ್ತದೆ. ಚಾಲಕರನ್ನು ಮಾತ್ರ ದೂಷಿಸುವುದು ನಿಷ್ಪರಿಣಾಮಕಾರಿ ಎಂದು MoRTH ಅಭಿಪ್ರಾಯಪಟ್ಟಿದೆ. ಬದಲಾಗಿ, ಮನುಷ್ಯರಿಂದಾಗುವ ತಪ್ಪುಗಳು ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡದಂತೆ ತಡೆಯುವ ಗುರಿಯೊಂದಿಗೆ ‘ಸುರಕ್ಷಿತ ವ್ಯವಸ್ಥೆ’ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ. ಅಪಘಾತಗಳನ್ನು ತಡೆಗಟ್ಟಲು ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ? ತಂತ್ರಜ್ಞಾನ ಬಳಸಿ ಅಪಘಾತ ತಡೆಗಟ್ಟುವಿಕೆ ಈಗ MoRTH ಕಾರ್ಯತಂತ್ರದ ಕೇಂದ್ರಬಿಂದುವಾಗಿದೆ. ನೈಜ-ಸಮಯದ ವೇಗ ಮೇಲ್ವಿಚಾರಣೆ, ಘಟನೆ ಪತ್ತೆ ಮತ್ತು ಸ್ವಯಂಚಾಲಿತ ಜಾರಿಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಟೆಲಿಜೆಂಟ್ ಸಾರಿಗೆ ನಿರ್ವಹಣಾ ವ್ಯವಸ್ಥೆಗಳನ್ನು (ITMS) ಅಳವಡಿಸಲಾಗುತ್ತಿದೆ. AI-ಸಕ್ರಿಯ ಕ್ಯಾಮೆರಾಗಳು ಅತಿ ವೇಗ, ಲೇನ್ ಉಲ್ಲಂಘನೆ ಮತ್ತು ಸೀಟ್ ಬೆಲ್ಟ್ ಅನುಸರಣೆಯನ್ನು ಪತ್ತೆ ಮಾಡುತ್ತವೆ. ಆರಂಭಿಕ ಯೋಜನೆಗಳಲ್ಲಿ ಹೈ-ಸ್ಪೀಡ್ ಕಾರಿಡಾರ್ಗಳಲ್ಲಿ ವಾಹನದಿಂದ ವಾಹನಕ್ಕೆ ಹಾಗೂ ವಾಹನದಿಂದ ಮೂಲಸೌಕರ್ಯಕ್ಕೆ ಸಂವಹನ ವ್ಯವಸ್ಥೆಗಳನ್ನು ಪರೀಕ್ಷಿಸಲಾಗುತ್ತಿದೆ. ಗಮನಾರ್ಹ ಉದಾಹರಣೆಯಾಗಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜೈಪುರ–ಆಗ್ರಾ ಮತ್ತು ಜೈಪುರ–ರೇವಾರಿ ಕಾರಿಡಾರ್ ಗಳಲ್ಲಿ ಜನವರಿ 2026ರಿಂದ ನೈಜ ಸಮಯದ ಬೀದಿ ದನ ಎಚ್ಚರಿಕೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಜಾನುವಾರುಗಳಿರುವ ಪ್ರದೇಶಗಳಲ್ಲಿ ಚಾಲನೆ ಮಾಡುವಾಗ ಚಾಲಕರಿಗೆ 10 ಕಿ.ಮೀ ಮುಂಚಿತವಾಗಿ ಸ್ಥಳಾಧಾರಿತ SMS ಹಾಗೂ ಧ್ವನಿ ಎಚ್ಚರಿಕೆಗಳು ಲಭಿಸುತ್ತವೆ. ವಾಹನವನ್ನು ನಿಧಾನಗೊಳಿಸಲು ಇವು ಸಹಾಯಕವಾಗಿದ್ದು, ಆಯಾಸವಾಗದಂತೆ ಪ್ರತಿ 30 ನಿಮಿಷಗಳಿಗೊಮ್ಮೆ ಮಾತ್ರ ಎಚ್ಚರಿಕೆ ನೀಡಲಾಗುತ್ತದೆ. ಮಂಜು ಆವರಿತ ಪರಿಸ್ಥಿತಿಗಳಲ್ಲಿ ಅಪಾಯ ತಗ್ಗಿಸಲು ಪ್ರತಿಫಲಿತ ಗುರುತುಗಳು, ಸೋಲಾರ್ ಬ್ಲಿಂಕರ್ಗಳು, ಸುಧಾರಿತ ಸಂಕೇತಗಳು, ವೇರಿಯಬಲ್ ಮೆಸೇಜ್ ಸೈನ್ಬೋರ್ಡ್ಗಳು ಹಾಗೂ ಪೊಲೀಸ್ ಮತ್ತು ಆಂಬ್ಯುಲೆನ್ಸ್ಗಳನ್ನು ಒಳಗೊಂಡ ಜಂಟಿ ತುರ್ತು ಕಾರ್ಯಾಚರಣೆಗಳನ್ನು ಬಳಸಲಾಗುತ್ತಿದೆ. 2019ರ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಡಿಯಲ್ಲಿ ಇಲೆಕ್ಟ್ರಾನಿಕ್ ಜಾರಿ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಸ್ಪೀಡ್ ಕ್ಯಾಮೆರಾಗಳು, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ವ್ಯವಸ್ಥೆಗಳು, CCTV, ಕ್ರ್ಯಾಶ್ ಬ್ಯಾರಿಯರ್ಗಳು ಹಾಗೂ 2025–26ರ SASCI ಯೋಜನೆಯಡಿ 3,000 ಕೋಟಿ ರೂ. ಹಂಚಿಕೆಯೊಂದಿಗೆ ಇ-ಚಲನ್ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದೆ. ಹೆದ್ದಾರಿ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಗುತ್ತಿದೆ? ಎಲ್ಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ವಿನ್ಯಾಸ, ನಿರ್ಮಾಣ ಹಾಗೂ ಕಾರ್ಯಾಚರಣೆಯ ಹಂತಗಳಲ್ಲಿ ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆಯನ್ನು MoRTH ಕಡ್ಡಾಯಗೊಳಿಸಿದೆ. ಅಪಘಾತ-ಪೀಡಿತ ಸ್ಥಳಗಳನ್ನು ಸುಧಾರಿತ ಜ್ಯಾಮಿತಿ, ಸರ್ವೀಸ್ ರಸ್ತೆಗಳು, ಅಪಘಾತ ತಡೆಗೋಡೆಗಳು, ಪಾದಚಾರಿ ದಾಟುವಿಕೆಗಳು ಮತ್ತು ಸ್ಪಷ್ಟ ಸೂಚನಾ ಫಲಕಗಳೊಂದಿಗೆ ಮರುವಿನ್ಯಾಸಗೊಳಿಸಲಾಗುತ್ತಿದೆ. ಹೊಸ ಎಕ್ಸ್ಪ್ರೆಸ್ವೇಗಳು ಮಧ್ಯದ ತಡೆಗೋಡೆಗಳು, ವಿಶಾಲ ಶೋಲ್ಡರ್ಗಳು, ಸುರಕ್ಷಿತ ಇಳಿಜಾರುಗಳು ಹಾಗೂ ಪ್ರವೇಶ-ನಿಯಂತ್ರಿತ ವಿನ್ಯಾಸಗಳನ್ನು ಹೆಚ್ಚಾಗಿ ಅನುಸರಿಸುತ್ತಿವೆ. ವೇಗದ ಸಂಚಾರದೊಂದಿಗೆ ಸಂಘರ್ಷ ಕಡಿಮೆ ಮಾಡಲು ವಾಸಸ್ಥಳಗಳ ಬಳಿ ಪಾದಚಾರಿ ಅಂಡರ್ಪಾಸ್ಗಳು ಮತ್ತು ಸರ್ವೀಸ್ ಲೇನ್ ಗಳಿಗೆ ಆದ್ಯತೆ ನೀಡಲಾಗುತ್ತಿದೆ. ವನ್ಯಜೀವಿ-ಸೂಕ್ಷ್ಮ ವಲಯಗಳಲ್ಲಿ ನಾವೀನ್ಯತೆ ಸ್ಪಷ್ಟವಾಗಿದೆ. ವೀರಾಂಗಣ ದುರ್ಗಾವತಿ ಹುಲಿ ಅಭಯಾರಣ್ಯದ ಮೂಲಕ ಸಾಗುವ ಹೆದ್ದಾರಿಯಲ್ಲಿ, NHAI ಭಾರತದ ಮೊದಲ ‘ಟೇಬಲ್-ಟಾಪ್ ರೆಡ್ ಮಾರ್ಕಿಂಗ್’ ಪರಿಚಯಿಸಿದೆ. ಇದು ಎತ್ತರದ ಕೆಂಪು ಥರ್ಮೋಪ್ಲಾಸ್ಟಿಕ್ ಮೇಲ್ಮೈಯಾಗಿದ್ದು, ವಾಹನಗಳನ್ನು ನಿಧಾನಗೊಳಿಸಲು ದೃಶ್ಯ ಮತ್ತು ಸ್ಪರ್ಶ ಸೂಚನೆಗಳನ್ನು ನೀಡುತ್ತದೆ. ಈ ಪ್ರದೇಶದಲ್ಲಿ ಪ್ರಾಣಿಗಳ ಅಂಡರ್ಪಾಸ್ಗಳು, ಫೆನ್ಸಿಂಗ್, ಸೌರ ಬೆಳಕು ಹಾಗೂ ಕ್ಯಾಮೆರಾ ಮೇಲ್ವಿಚಾರಣೆಯೂ ಇದೆ. ನಿರ್ಮಾಣ ಗುಣಮಟ್ಟವನ್ನು ಸುಧಾರಿಸಲು NHAI ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಗುತ್ತಿಗೆದಾರರ ಕಾರ್ಯಕ್ಷಮತೆಯೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಟೋಲ್ ಮತ್ತು ಹೆದ್ದಾರಿ ಕಾರ್ಯಾಚರಣೆಗಳನ್ನು ಹೇಗೆ ಮರುವಿನ್ಯಾಸಗೊಳಿಸಲಾಗುತ್ತಿದೆ? ಟೋಲ್ ಪ್ಲಾಝಾಗಳು ಬಹುಕಾಲದಿಂದ ದಟ್ಟಣೆ ಮತ್ತು ಅಪಾಯಕಾರಿ ಲೇನ್ ಬದಲಾವಣೆಗಳಿಗೆ ಕಾರಣವಾಗಿವೆ. MoRTH ಈಗ ನಗದುರಹಿತ, ಪ್ರಯಾಣಿಕ ಸ್ನೇಹಿ ಟೋಲಿಂಗ್ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಆಗಸ್ಟ್ 2025ರಲ್ಲಿ ಪ್ರಾರಂಭವಾದ FASTag ವಾರ್ಷಿಕ ಪಾಸ್ ಮೂಲಕ, 1,150 ಟೋಲ್ ಪ್ಲಾಜಾಗಳಲ್ಲಿ ರೂ.3,000ಕ್ಕೆ 200 ಪ್ರಯಾಣಗಳು ಅಥವಾ ಒಂದು ವರ್ಷದ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ನವೆಂಬರ್ 2025ರ ವೇಳೆಗೆ 36 ಲಕ್ಷಕ್ಕೂ ಹೆಚ್ಚು ಪಾಸ್ಗಳು ಮಾರಾಟವಾಗಿವೆ. UPI ಟೋಲ್ ಪಾವತಿಗಳ ಮೇಲಿನ ಸರ್ಚಾರ್ಜ್ ಕಡಿತಗೊಳಿಸಿರುವುದು ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ನೀಡಿದ್ದು, ನಗದು ಬಳಕೆಯನ್ನು ಕಡಿಮೆ ಮಾಡಿದೆ. FASTag ಹಾಗೂ ANPR ಆಧಾರಿತ ಬಹು-ಲೇನ್ ಮುಕ್ತ ಹರಿವಿನ (MLFF) ಟೋಲಿಂಗ್ ವ್ಯವಸ್ಥೆಯತ್ತ ಭಾರತ ಸಾಗುತ್ತಿದೆ. ಮೊದಲ MLFF ಕಾರಿಡಾರ್ 2026ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಬಳಕೆದಾರರಿಗೆ ಕೇವಲ 50% ಟೋಲ್ ಶುಲ್ಕ ವಿಧಿಸುವ ನಿಯಮ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಬಲಪಡಿಸುತ್ತದೆ. ಅಪಘಾತಗಳ ನಂತರದ ಪ್ರತಿಕ್ರಿಯೆ ಅಪಘಾತದ ತೀವ್ರತೆಯಿಗಿಂತಲೂ ವೈದ್ಯಕೀಯ ಆರೈಕೆಯ ವಿಳಂಬವೇ ಅನೇಕ ಸಾವುಗಳಿಗೆ ಕಾರಣವಾಗುತ್ತಿದೆ. MoRTHನ ಅಪಘಾತಾನಂತರದ ತಂತ್ರ ‘ಗೋಲ್ಡನ್ ಅವರ್’ ಮೇಲೆ ಕೇಂದ್ರೀಕೃತವಾಗಿದೆ. ರಾಹ್-ವೀರ್ (Good Samaritan) ಯೋಜನೆಯಡಿ, ಅಪಘಾತ ಪೀಡಿತರನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡುವ ನಾಗರಿಕರಿಗೆ ಪ್ರತಿ ಘಟನೆಗೆ 25,000 ರೂ. ಪ್ರೋತ್ಸಾಹಧನ ಹಾಗೂ ಕಾನೂನು ರಕ್ಷಣೆಯನ್ನು ಒದಗಿಸಲಾಗುತ್ತದೆ. ಇತರ ಕ್ರಮಗಳಲ್ಲಿ ನಗದುರಹಿತ ಚಿಕಿತ್ಸೆ ಯೋಜನೆ, ಟ್ರಾಮಾ ಕೇರ್ ಸೆಂಟರ್ಗಳು, 112 ತುರ್ತು ಸೇವೆಗಳೊಂದಿಗೆ ಏಕೀಕರಣ ಮತ್ತು e-DAR ಡಿಜಿಟಲ್ ಅಪಘಾತ ವರದಿ ವೇದಿಕೆಯ ಕಡ್ಡಾಯ ಬಳಕೆ ಸೇರಿವೆ. ರಾಜ್ಯಗಳು, ಜಿಲ್ಲೆಗಳು ಮತ್ತು ನಾಗರಿಕರ ಪಾತ್ರ ರಸ್ತೆ ಸುರಕ್ಷತೆ ಸಮಕಾಲೀನ ವಿಷಯವಾಗಿದ್ದು, ಕೇಂದ್ರ–ರಾಜ್ಯ ಸಮನ್ವಯ ಅಗತ್ಯವಾಗಿದೆ. ಜನವರಿ 2026ರಲ್ಲಿ ಕೇಂದ್ರ ಸಾರಿಗೆ ಸಚಿವರು ಜಾರಿ, ಡಿಜಿಟಲೀಕರಣ ಮತ್ತು ಶಾಸನಾತ್ಮಕ ಸುಧಾರಣೆಗಳನ್ನು ಒಟ್ಟುಗೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ‘ಸಡಕ್ ಮಿತ್ರ’ ಯುವ ಸ್ವಯಂಸೇವಕರಿಗೆ ಅಪಘಾತ ತಾಣಗಳನ್ನು ಗುರುತಿಸಿ ಪ್ರತಿಕ್ರಿಯೆ ಕಾರ್ಯಾಚರಣೆಗಳಿಗೆ ನೆರವಾಗುವ ತರಬೇತಿ ನೀಡಲಾಗುತ್ತಿದೆ. ರಾಷ್ಟ್ರವ್ಯಾಪಿ ಸಡಕ್ ಸುರಕ್ಷಾ ಅಭಿಯಾನವು ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತು ಸುರಕ್ಷಿತ ಚಾಲನೆಯನ್ನು ಉತ್ತೇಜಿಸುತ್ತದೆ. ಚಾಲಕರ ತರಬೇತಿಯನ್ನು ಆಧುನಿಕ ಸಂಸ್ಥೆಗಳು ಮತ್ತು ಸಿಮ್ಯುಲೇಟರ್ಗಳ ಮೂಲಕ ನವೀಕರಿಸಲಾಗುತ್ತಿದೆ. ಅದೇ ವೇಳೆ, ಭಾರತ್ NCAP ರೇಟಿಂಗ್ಗಳು, ಕಡ್ಡಾಯ ಏರ್ಬ್ಯಾಗ್ಗಳು, ABS ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಹಂತ ಹಂತವಾಗಿ ಅಳವಡಿಸುವ ಮೂಲಕ ವಾಹನ ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸಲಾಗುತ್ತಿದೆ. 2030ರೊಳಗೆ ರಸ್ತೆ ಅಪಘಾತ ಸಾವುಗಳನ್ನು 50% ಕಡಿಮೆ ಮಾಡುವ ಗುರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಅವರು, ಫೆಬ್ರವರಿ 2020ರಲ್ಲಿ ನಡೆದ ರಸ್ತೆ ಸುರಕ್ಷತೆ ಕುರಿತ 3ನೇ ಜಾಗತಿಕ ಸಚಿವರ ಸಮ್ಮೇಳನದಲ್ಲಿ ಅಂಗೀಕರಿಸಲಾದ ಸ್ಟಾಕ್ಹೋಮ್ ಘೋಷಣೆಯಂತೆ, 2030ರೊಳಗೆ ರಸ್ತೆ ಸಂಚಾರ ಸಾವುಗಳು ಮತ್ತು ಗಾಯಗಳನ್ನು 50% ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಮಾಹಿತಿಯಂತೆ, 2024ರ ಕ್ಯಾಲೆಂಡರ್ ವರ್ಷದಲ್ಲಿ ದೇಶದಲ್ಲಿ ವರದಿಯಾದ ಒಟ್ಟು ರಸ್ತೆ ಅಪಘಾತ ಸಾವುಗಳ ಸಂಖ್ಯೆ 1,77,177. ಇದರಲ್ಲಿ e-DAR ಪೋರ್ಟಲ್ನಿಂದ ಪಡೆದ ಪಶ್ಚಿಮ ಬಂಗಾಳದ ಮಾಹಿತಿಯೂ ಸೇರಿದೆ ಎಂದು ಅವರು ಹೇಳಿದ್ದಾರೆ. 2023ರಲ್ಲಿ ದೇಶಾದ್ಯಂತ 4,80,583 ರಸ್ತೆ ಅಪಘಾತಗಳು ವರದಿಯಾಗಿದ್ದು, 1,72,890 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 4,62,825 ಮಂದಿ ಗಾಯಗೊಂಡಿದ್ದಾರೆ. 2024ರ ವಿಶ್ವ ರಸ್ತೆ ಅಂಕಿಅಂಶಗಳ ಪ್ರಕಾರ, ಪ್ರತಿ ಲಕ್ಷ ಜನಸಂಖ್ಯೆಗೆ ಮರಣ ಪ್ರಮಾಣ ಚೀನಾದಲ್ಲಿ 4.3, ಅಮೆರಿಕದಲ್ಲಿ 12.76 ಆಗಿದ್ದು, ಭಾರತದಲ್ಲಿ ಇದು 11.89 ಆಗಿದೆ. ರಸ್ತೆ ಸುರಕ್ಷತೆ ಸಮಸ್ಯೆಯನ್ನು ಪರಿಹರಿಸಲು ಶಿಕ್ಷಣ, ಇಂಜಿನಿಯರಿಂಗ್ (ರಸ್ತೆ ಮತ್ತು ವಾಹನ ಎರಡೂ), ಜಾರಿ ಮತ್ತು ತುರ್ತು ಆರೈಕೆ ಎಂಬ 4Eಗಳ ಆಧಾರದ ಮೇಲೆ ಸರಕಾರ ಬಹುಮುಖಿ ಕಾರ್ಯತಂತ್ರ ರೂಪಿಸಿದೆ. ಅದರಂತೆ, ದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಸಚಿವ ತಿಮ್ಮಾಪುರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಧರಣಿ; ವಿಧಾನಸಭೆಯ ಅರ್ಧದಿನದ ಕಲಾಪ ಬಲಿ
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದು, ಸಚಿವ ಆರ್.ಬಿ. ತಿಮ್ಮಾಪುರ್ ಕೂಡಲೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಧರಣಿ ನಡೆಸಿದ ಪರಿಣಾಮ ಶುಕ್ರವಾರ ವಿಧಾನಸಭೆಯ ಅರ್ಧದಿನದ ಕಲಾಪ ಬಲಿಯಾಯಿತು. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಚರ್ಚಿಸಲು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು. ಆದರೆ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣ ಮಾತನಾಡಿದ ಬಳಿಕ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, ಅಬಕಾರಿ ಸಚಿವರ ವಿಚಾರದಲ್ಲಿ ಮಾತನಾಡಲು ಅವಕಾಶ ನೀಡಿ ಎಂದರು. ಇದಕ್ಕೆ ದನಿಗೂಡಿಸಿದ ಸುನೀಲ್ ಕುಮಾರ್, ನಿಲುವಳಿ ಸೂಚನೆ ಮೇರೆಗೆ ಚರ್ಚೆಗೆ ವಿರೋಧ ಪಕ್ಷದ ನಾಯಕರು ಪತ್ರ ಕೊಟ್ಟಿದ್ದಾರೆ. ನಮಗೆ ಗೊತ್ತಿಲ್ಲದೆ ಅದನ್ನು ನಿಯಮ 69ಕ್ಕೆ ಪರಿವರ್ತನೆ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರಸ್ತಾವನೆ ಮಾಡಲು ಅವಕಾಶ ನೀಡಿ ಎಂದು ಹೇಳಿದರು. ವಿಪಕ್ಷ ನಾಯಕರು ಬೆಳಗ್ಗೆ ಈ ವಿಚಾರ ಪ್ರಸ್ತಾವನೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ವರದಿಯೂ ಆಗಿದೆ. ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಈ ವಿಷಯವನ್ನು ಮಾತನಾಡಿ, ಇಲ್ಲವೇ ಅದನ್ನು ನಿಯಮ 69ರಡಿ ಪರಿವರ್ತಿಸಿ ನೀಡುವುದಾಗಿ ಹೇಳಿದ್ದೇನೆ ಎಂದು ಸ್ಪೀಕರ್ ಉತ್ತರಿಸಿದರು. ಕೇರಳ ಹಾಗೂ ತಮಿಳುನಾಡು ರಾಜ್ಯದ ಚುನಾವಣೆಗಳಿಗೆ ಇಲ್ಲಿ ಭ್ರಷ್ಟಾಚಾರ ಮಾಡಿ ಅನುಕೂಲ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸುನೀಲ್ ಕುಮಾರ್ ದೂರಿದರು. ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ಏರ್ಪಟ್ಟಿತು. ಕೇರಳ ಹಾಗೂ ತಮಿಳುನಾಡು ಚುನಾವಣೆಗಳಿಗೆ ಇಲ್ಲಿಂದ ಹಣ ಹೋಗುತ್ತಿರುವುದು ನಿಜ. ಸರಕಾರಕ್ಕೆ ಧೈರ್ಯವಿದ್ದರೆ ಈ ಬಗ್ಗೆ ಉತ್ತರ ಕೊಡಲಿ ಎಂದು ಅಶೋಕ್ ಹೇಳಿದರು. ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ವಿರೋಧ ವ್ಯಕ್ತಪಡಿಸಿ, ಆಧಾರ ರಹಿತವಾಗಿ ಸದನದಲ್ಲಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಸುನೀಲ್ ಕುಮಾರ್ ಗೆ ಮಾತನಾಡಲು ಅವಕಾಶ ನೀಡಬೇಡಿ ಎಂದರು. ಇದಕ್ಕೆ ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ದನಿಗೂಡಿಸಿದರು. ಅಬಕಾರಿ ಇಲಾಖೆಯಲ್ಲಿ ಯಾವ ರೀತಿ ಲೂಟಿ ಹೊಡೆಯಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಬಂದಿದೆ. ನನ್ನ ಬಳಿ ಈ ಸಂಬಂಧ ಪೆನ್ಡ್ರೈವ್ ಹಾಗೂ ದಾಖಲೆಗಳು ಇವೆ. ನಾನು ಮಾಡುತ್ತಿರುವ ಆರೋಪ ಸುಳ್ಳಾದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಿ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಹಿಂದಿನ ಸರಕಾರದಲ್ಲಿ ಈಶ್ವರಪ್ಪ ವಿಚಾರ ಬಂದಾಗ ನೀವೆ ವಿಪಕ್ಷದ ಉಪನಾಯಕರಾಗಿ ಬಂದು ಇಲ್ಲಿ ಪ್ರತಿಭಟನೆ ಮಾಡಿದ್ದೀರಾ. ಈಗ ನಮಗೆ ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಗೆ ಅಶೋಕ್ ಒತ್ತಾಯಿಸಿದರು. ಸಿ.ಸಿ.ಪಾಟೀಲ್ ಏನೋ ವಿಡಿಯೋ ನೋಡಿದರು ಎಂದು ರಾಜೀನಾಮೆ ಪಡೆದರು, ಆಮೇಲೆ ತನಿಖೆ, ಈಶ್ವರಪ್ಪ ಪ್ರಕರಣದಲ್ಲಿ ಮೊದಲು ರಾಜೀನಾಮೆ ಆಮೇಲೆ ತನಿಖೆ. ಕಾಂಗ್ರೆಸ್ ಸರಕಾರದಲ್ಲಿ ಇದೊಂದು ವಿಶೇಷ ಪ್ರಕರಣವೇ, ಬಿಜೆಪಿಯವರು ಮೊದಲು ರಾಜೀನಾಮೆ ನೀಡಬೇಕು, ಕಾಂಗ್ರೆಸ್ ನವರು ರಾಜೀನಾಮೆ ನೀಡಬಾರದು ಇದು ಎಂತಹ ನ್ಯಾಯ?. ಅಬಕಾರಿ ಸಚಿವರು ಮೊದಲು ರಾಜೀನಾಮೆ ನೀಡಲಿ, ಆನಂತರ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು. ಎ.ಎಸ್.ಪೊನ್ನಣ್ಣಗೆ ಸ್ಪೀಕರ್ ಮಾತನಾಡಲು ಅವಕಾಶ ನೀಡುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಅಬಕಾರಿ ಸಚಿವರಿಗೆ ಧಿಕ್ಕಾರಗಳನ್ನು ಕೂಗಿದರು. ಆನಂತರ ಸ್ಪೀಕರ್ ಸದನವನ್ನು 15 ನಿಮಿಷ ಮುಂದೂಡಿದರು. ಸದನ ಪುನಃ ಸಮಾವೇಶಗೊಳ್ಳುತ್ತಿದ್ದಂತೆ ಮತ್ತೆ ಗದ್ದಲದ ವಾತಾವರಣ ಏರ್ಪಟ್ಟಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಲು ಅವಕಾಶ ನೀಡದಿದ್ದರೆ ರಾಜ್ಯಪಾಲರಿಗೆ ಅವಮಾನ ಮಾಡಿದಂತೆ ಎಂದು ಸ್ಪೀಕರ್ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಅಶೋಕ್, ಈಗಾಗಲೆ ನೀವು ಅವಮಾನ ಮಾಡಿ ಆಗಿದೆ. ಇನ್ನೇನು ಉಳಿದಿದೆ. ಸಂಪುಟದಲ್ಲಿ ಇಂತಹ ಭ್ರಷ್ಟ ಸಚಿವರು ಇರಬಾರದು. ಅಬಕಾರಿ ಸಚಿವರು ರಾಜೀನಾಮೆ ನೀಡುವವರೆಗೆ ನಾವು ಧರಣಿ ಹಿಂಪಡೆಯುವುದಿಲ್ಲ ಎಂದು ಹೇಳಿದರು. ಗದ್ದಲದ ನಡುವೆ ಪೊನ್ನಣ್ಣ ಮಾತನಾಡಲು ಯತ್ನಿಸಿದರು. ಆದರೆ, ಪರಿಸ್ಥಿತಿ ತಿಳಿಯಾಗದಿದ್ದರಿಂದ ಸ್ಪೀಕರ್ ಸದನವನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಸೇರುವಂತೆ ಮುಂದೂಡಿದರು.
“ಇದು Ai ವೀಡಿಯೊ ಅಲ್ಲ”: ಇಂಗ್ಲೀಷ್ನಲ್ಲೂ ಬಂತು ರವೀಶ್ ಕುಮಾರ್ ವಿಡಿಯೋ
“ನಾನು ರವೀಶ್ ಕುಮಾರ್. ನಾನೇ ಮಾತನಾಡುತ್ತಿದ್ದೇನೆ. ಇದು Ai ವೀಡಿಯೊ ಅಲ್ಲ. ಇದು ನಿಜವಾದ ವೀಡಿಯೊ…” ಎಂದು ಆರಂಭವಾಗುವ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರ ವೀಡಿಯೊ ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾಯಿತು. ಈ ವೀಡಿಯೊದ ವಿಶೇಷವೆಂದರೆ, ಅದು ಹಿಂದಿ ಭಾಷೆಯಲ್ಲಿ ಅಲ್ಲ; ಇದೇ ಮೊದಲ ಬಾರಿ ರವೀಶ್ ಕುಮಾರ್ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದಾರೆ. ಯೂಟ್ಯೂಬ್ನಲ್ಲಿನ ಪತ್ರಕರ್ತರ ಪೈಕಿ ಅತ್ಯಂತ ಜನಪ್ರಿಯರಾಗಿರುವ ರವೀಶ್ ಕುಮಾರ್, ದಶಕಗಳ ಕಾಲ ಹಿಂದಿ ಪತ್ರಕರ್ತರಾಗಿ ದೇಶಾದ್ಯಂತ ಹಾಗೂ ವಿದೇಶಗಳಲ್ಲೂ ವ್ಯಾಪಕ ಜನಮನ್ನಣೆ ಗಳಿಸಿದ್ದಾರೆ. NDTVಗೆ ರಾಜೀನಾಮೆ ನೀಡಿದ ಬಳಿಕ ಅವರು ಯೂಟ್ಯೂಬ್ ಮೂಲಕ ಜನರನ್ನು ತಲುಪುತ್ತಿದ್ದಾರೆ. ರವೀಶ್ ಕುಮಾರ್ ಅವರ ಅಧಿಕೃತ ಯೂಟ್ಯೂಬ್ ಚಾನಲ್ Ravish Kumar Officialಗೆ ಪ್ರಸ್ತುತ ಒಂದು ಕೋಟಿ ನಲವತ್ತೆರಡು ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಗಳಿದ್ದಾರೆ. ವಿಶಿಷ್ಟ ಶೈಲಿಯ ವಿಶ್ಲೇಷಣೆ ಹಾಗೂ ನಿರೂಪಣೆಯೊಂದಿಗೆ, ಹಿಂದಿ ಭಾಷೆಯನ್ನು ಬಳಸುವ ಅವರ ಮಾತಿನ ಶೈಲಿ ಅಪಾರ ಜನಪ್ರಿಯತೆ ಪಡೆದಿದೆ. ಹಿಂದಿಯಲ್ಲಿ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇಂಗ್ಲೀಷ್ನಲ್ಲಿ ಬಿಡುಗಡೆಯಾದ ಈ ವೀಡಿಯೊದಲ್ಲಿ ಅವರು ಯಾವುದೇ ನಿರ್ದಿಷ್ಟ ರಾಜಕೀಯ ಅಥವಾ ಸಾಮಾಜಿಕ ವಿಷಯದ ವಿಶ್ಲೇಷಣೆ ಮಾಡಿಲ್ಲ. ಬದಲಾಗಿ, ಇಂಗ್ಲೀಷ್ನಲ್ಲಿ ಮಾತನಾಡಬೇಕೆಂಬ ವೀಕ್ಷಕರ ಬೇಡಿಕೆ, ಆ ಭಾಷೆಯಲ್ಲಿ ಮಾತನಾಡುವಾಗ ಎದುರಾಗುವ ಸವಾಲುಗಳು ಹಾಗೂ ಅದಕ್ಕಾಗಿ ಅಗತ್ಯವಿರುವ ತಯಾರಿ ಕುರಿತು ಮಾತನಾಡಿದ್ದಾರೆ. ಇಂಗ್ಲೀಷ್ನಲ್ಲಿ ಮಾತನಾಡುವ ತಮ್ಮ ಶೈಲಿ ವೀಕ್ಷಕರಿಗೆ ಇಷ್ಟವಾಗುತ್ತದೆಯೇ ಎಂಬುದನ್ನೂ ಅವರು ಪ್ರಶ್ನಿಸಿದ್ದಾರೆ. NDTV ಹಿಂದಿ ಚಾನಲ್ ಮೂಲಕ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡ ರವೀಶ್ ಕುಮಾರ್, ಆರಂಭದಲ್ಲಿ ತಮ್ಮ ವಿಶಿಷ್ಟ ವರದಿಗಾರಿಕೆಯಿಂದ, ನಂತರ ವಿಶ್ಲೇಷಣಾ ಕಾರ್ಯಕ್ರಮಗಳ ಮೂಲಕ ವ್ಯಾಪಕ ಜನಪ್ರಿಯತೆ ಗಳಿಸಿದ್ದರು. ಅವರ ಪತ್ರಿಕೋದ್ಯಮ ಸೇವೆಗೆ ಪ್ರತಿಷ್ಠಿತ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ಲಭಿಸಿದೆ. ಇಂಗ್ಲೀಷ್ನಲ್ಲಿ ವೀಡಿಯೊ ಪ್ರಕಟಿಸಿರುವುದು, ರವೀಶ್ ಕುಮಾರ್ ಅವರ ಪತ್ರಿಕೋದ್ಯಮ ವೃತ್ತಿಯಲ್ಲಿನ ಹೊಸ ಪ್ರಯೋಗವಾಗಿ ಗಮನ ಸೆಳೆದಿದೆ.
ಹಣ ಹೂಡಿಕೆ ಹೆಸರಿನಲ್ಲಿ 18.59 ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಜ.23: ಟ್ರೆಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇರ್ಕಾಡಿ ಗ್ರಾಮದ ರವೀಂದ್ರ (31) ಎಂಬವರನ್ನು ಎಂಟು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿ 2004 ಎಂಬ ಟೆಲಿಗ್ರಾಮ್ ಗ್ರೂಪ್ಗೆ ಸೇರಿಸಿದ್ದು, ಈ ಗ್ರೂಪ್ನಲ್ಲಿ ಟ್ರೇಡಿಂಗ್ ಅಕೌಂಟ್ ಕ್ರಿಯೆಟ್ ಮಾಡಿದಲ್ಲಿ ಹಣ ಗಳಿಸುವ ವಿಧಾನದ ಬಗ್ಗೆ ಹೇಳಿ ಕೊಡುವುದಾಗಿ ಮೆಸೇಜ್ ಕಳುಹಿಸಿಸುತ್ತಿದ್ದರು. ನಂತರ ರವೀಂದ್ರ ಅವರ ವೈಯಕ್ತಿಕ ಟೆಲಿಗ್ರಾಂ ಐಡಿಗೆ ಮೆಸೇಜ್ ಮಾಡಿ ಟ್ರೇಡಿಂಗ್ ಅಕೌಂಟ್ ಕ್ರಿಯೇಟ್ ಮಾಡುವಂತೆ ತಿಳಿದ್ದು, ಅದರಂತೆ ಅವರು ಅಕೌಂಟ್ ಕ್ರಿಯೆಟ್ ಮಾಡಿದ್ದರು. ಟ್ರೇಡಿಂಗ್ನಲ್ಲಿ ಲಾಭಾಂಶ ಗಳಿಸುವ ಅಪರಿಚಿತ ವ್ಯಕ್ತಿ ಮಾತು ನಂಬಿದ ರವೀಂದ್ರ, ಅವರು ಹೇಳಿದ ವಿವಿಧ ಖಾತೆ ಗಳಿಗೆ ಒಟ್ಟು 18,59,500ರೂ. ಹಣವನ್ನು ವರ್ಗಾವಣೆ ಮಾಡಿದರು. ಆದರೆ ಆರೋಪಿಗಳು ಈವರೆಗೆ ರವೀಂದ್ರ ಹಾಕಿದ ಹಣವನ್ನಾಗಲಿ ಅಥವಾ ಲಾಭದ ಹಣವನ್ನಾಗಲಿ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
ಸದನದಿಂದ ಬಿ.ಕೆ. ಹರಿಪ್ರಸಾದ್ ಅಮಾನತಿಗೆ ಪ್ರತಿಪಕ್ಷ ಪಟ್ಟು; ಮೇಲ್ಮನೆಯಲ್ಲಿ ಭಾರೀ ಗದ್ದಲ-ಕೋಲಾಹಲ
ಬೆಂಗಳೂರು: ಕೇವಲ ಒಂದು ನಿಮಿಷದ ಭಾಷಣ ಮುಗಿಸಿ ವಿಧಾನ ಮಂಡಲದ ಜಂಟಿ ಅಧಿವೇಶನದಿಂದ ನಿರ್ಗಮಿಸುವ ವೇಳೆ ರಾಜ್ಯಪಾಲರನ್ನು ತಡೆದು ಅಗೌರವ ಸೂಚಿಸಿದ ಪರಿಷತ್ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂದು ಮೇಲ್ಮನೆಯಲ್ಲಿ ಶುಕ್ರವಾರ ಪ್ರತಿಪಕ್ಷ ಬಿಜೆಪಿ ಪಟ್ಟುಹಿಡಿದ ಕಾರಣ ಸದಸ್ಯರ ನಡುವೆ ಭಾರೀ ಗದ್ದಲ-ಕೋಲಾಹಲ ಉಂಟಾಗಿ ಕಲಾಪವನ್ನು ಎರಡು ಬಾರಿ ಮುಂದೂಡಿದ ಪ್ರಸಂಗ ಜರುಗಿತು. ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಮೇಲ್ಮನೆಯ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಈ ವಿಷಯ ಪ್ರಸ್ತಾಪಿಸಿದರು. ಉಭಯ ಸದನವನ್ನುದ್ದೇಶಿಸಿ ಚುಟುಕು ಭಾಷಣ ಮುಗಿಸಿ ಹೊರ ಹೋಗುತ್ತಿದ್ದ ರಾಜ್ಯಪಾಲರ ಎದುರು ಗೂಂಡಾಗಳ ರೀತಿ ವರ್ತಿಸಿ, ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ಮೂಲಕ ರಾಜ್ಯಪಾಲರಿಗೆ ಅಗೌರವ ಸೂಚಿಸಿದ್ದಾರೆ. ಹೀಗಾಗಿ, ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಹರಿಪ್ರಸಾದ್ ವಿರುದ್ಧ ಕ್ರಮ ಆಗಬೇಕು ಎನ್ನುತ್ತ ಒಕ್ಕೊರಲಿನಿಂದ ವಿಪಕ್ಷ ಸದಸ್ಯರು ಎದ್ದು ನಿಂತು ಆಗ್ರಹಿಸಿದರು. ಛಲವಾದಿ ನಾರಾಯಣಸ್ವಾಮಿ ಮಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ‘ಶೇಮ್.. ಶೇಮ್ ಎನ್ನುತ್ತಾ, ಗೋಬ್ಯಾಕ್ ಗವರ್ನರ್’ ಎಂದು ಘೋಷಣೆ ಕೂಗುವ ಮೂಲಕ ತಿರುಗೇಟು ನೀಡಿದರು. ಈ ವೇಳೆ ಕ್ರಿಯಾಲೋಪ ಎತ್ತಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಲು ಆರಂಭಿಸುತ್ತಿದ್ದಂತೆ, ವಿಪಕ್ಷ ಸದಸ್ಯರು ಆಕ್ಷೇಪಿಸಿದರು. ‘ಗೂಂಡಾಗಿರಿ ವರ್ತನೆ ತೋರಿದ ಹರಿಪ್ರಸಾದ್ ಅವರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಪಟ್ಟು ಹಿಡಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ಉಂಟಾಯಿತು. ಆಗ ಸಭಾನಾಯಕ ಎನ್.ಎಸ್.ಭೋಸ್ರಾಜ್ ಪ್ರತಿಪಕ್ಷದ ಸದಸ್ಯರು ಸದನವನ್ನು ಹಾಳು ಮಾಡಲು ಬಂದಿದ್ದಾರೆ. ಅವರಿಗೆ ಕಲಾಪ ನಡೆಯಬಾರದೆಂಬ ದುರುದ್ದೇಶವಿದೆ. ಹೀಗಾಗಿಯೇ ಬೇಡದ ವಿಷಯಗಳನ್ನು ಪ್ರಸ್ತಾಪಿಸಲು ಮುಂದಾಗುತ್ತಿದ್ದಾರೆ. ಸಂವಿಧಾನ ವಿರೋಧಿ ಯಾರು? ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು. ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಪ್ರತಿಕ್ರಿಯಿಸಿ, ಪ್ರತಿಪಕ್ಷದ ನಾಯಕರು ಇನ್ನೂ ಸಂಪೂರ್ಣ ವಿಷಯವನ್ನೇ ಪ್ರಸ್ತಾಪಿಸಿಲ್ಲ. ಅವರು ಏನು ಹೇಳುತ್ತಾರೆ ಎಂಬುದು ಗೊತ್ತಿಲ್ಲ. ಅದಕ್ಕೂ ಮುನ್ನವೇ ಕ್ರಿಯಾಲೋಪ ಎತ್ತಲು ಅವಕಾಶ ನೀಡಿದರೆ ಹೇಗೆ ಎಂದು ಸಭಾಪತಿಯವರನ್ನು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ, ಸಭಾ ನಾಯಕರಿಗೆ ಎಷ್ಟು ಸ್ಥಾನಮಾನ ಇರುತ್ತದೆಯೋ, ಅದೇ ರೀತಿ ಪ್ರತಿಪಕ್ಷದ ನಾಯಕರಿಗೂ ಸರಿಸಮಾನವಾದ ಸ್ಥಾನಮಾನ ಇರುತ್ತದೆ. ನೀವು ವಿಷಯ ಪ್ರಸ್ತಾಪಿಸಲು ಅವಕಾಶ ಕೊಡದಿದ್ದರೆ ಸದಸ್ಯರ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಪಕ್ಷದ ನಾಯಕರು ಪತ್ರವನ್ನು ಕೊಟ್ಟಾಗ ಅದನ್ನು ಪರಿಶೀಲಿಸಿ ಚರ್ಚೆಗೆ ಅವಕಾಶ ಕೊಡಬೇಕು. ಅದಕ್ಕೂ ಮೊದಲೇ ಕ್ರಿಯಾಲೋಪ ಪ್ರಸ್ತಾಪಿಸಲು ಅವಕಾಶ ನೀಡಿದರೆ ಸದನಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಭೋಜೇಗೌಡ ಹೇಳಿದರು. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ದನಿಗೂಡಿಸಿದರು. ಆಗ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಮಾತನಾಡಿ, ಸದನದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡವರು ಯಾರು? ರಾಷ್ಟ್ರಗೀತೆಗೆ ಅಪಮಾನ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಷ್ಟ್ರಗೀತೆಗೆ ಅವಮಾನ ಮಾಡಿದ ರಾಜ್ಯಪಾಲರಿಗೆ ಏನು ಶಿಕ್ಷೆ ಕೊಡುತ್ತೀರಾ, ಮೊದಲು ಅದು ಹೇಳಿ ಎಂದು ಒತ್ತಾಯಿಸಿದರು. ಬಳಿಕ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಸಹ ಭಾಷಣ ಮಾಡಿರಲಿಲ್ಲ, ನಾನು ಸರಕಾರದ ಗುಲಾಮನಲ್ಲ ಎಂದು ಹೇಳಿ ಹೋಗಿದ್ದರು. ಕಾನೂನು ಪ್ರಕಾರ ಹೋರಾಟ ಮಾಡಲಿ. ಅದು ಬಿಟ್ಟು ಗೂಂಡಾಗಿರಿ ಮಾಡುವುದು ಸರಿಯೇ? ರಾಜ್ಯಪಾಲರಿಗೆ ಅಪಮಾನವಾಗಿದೆ ಎಂದರು. ಇದೇ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜ್ಯಪಾಲರ ಭಾಷಣದ ಪ್ರಕ್ರಿಯೆ ಬಗ್ಗೆ ನಿಯಮಾವಳಿ ಓದುತ್ತಿದ್ದಂತೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಪೋಕ್ಸೋ ಪ್ರಕರಣದ ನಾಯಕರಿಗೆ ಹಾರ ಹಾಕುವ ಪಕ್ಷದವರು ಇವರು, ಇವರಿಂದ ಪಾಠ ಕಲಿಯಬೇಕಾ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು. ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಭಾರೀ ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಆರೋಪ, ಪ್ರತ್ಯಾರೋಪಗಳು ನಡೆದವು. ಹರಿಪ್ರಸಾದ್ ಎತ್ತಿದ್ದ ಕ್ರಿಯಾಲೋಪವನ್ನು ಸಭಾಪತಿ ಹೊರಟ್ಟಿ ಅವರು ತಿರಸ್ಕರಿಸಿ, ಸದನವನ್ನು ಮುಂದೂಡಿದರು. 10 ನಿಮಿಷಗಳ ಬಳಿಕ ಪುನಃ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸದಸ್ಯರ ಗಲಾಟೆ ಮತ್ತೆ ಜೋರಾಗಿದ್ದರಿಂದ ಸಭಾಪತಿಯವರು ಮತ್ತೊಮ್ಮೆ ಸದನ ಮುಂದೂಡಿದರು. ಅತ್ಯಾಚಾರಿ ಪಕ್ಷದವರಿಂದ ಪಾಠ ಕಲಿಯಬೇಕಿಲ್ಲ: ‘’ಸದನದಲ್ಲಿ ಬಿಜೆಪಿ ಸದಸ್ಯರು ಅಮಾನತಿಗೆ ಒತ್ತಾಯಿಸುತ್ತಿದ್ದಂತೆ ಎದ್ದು ನಿಂತು ಆಕ್ಷೇಪಿಸಿದ ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ‘ನಿಮ್ಮದು ಅತ್ಯಾಚಾರಿಗಳ ಪಕ್ಷ, ಭ್ರಷ್ಟಾಚಾರಿಗಳ ಪಕ್ಷ, ಬಲತ್ಕಾರಿ ಪಾಪಿಗಳಿವರು. ಆರೆಸ್ಸೆಸ್ನವರು ಸಂವಿಧಾನದ ಮೌಲ್ಯವನ್ನು ಕೊಲೆಗೈಯುತ್ತಿದ್ದಾರೆ. ಪೋಕ್ಸೋ ಪ್ರಕರಣದ ನಾಯಕರಿಗೆ ಹಾರ ಹಾಕುವ ಪಕ್ಷದವರು ಇವರು, ಇವರಿಂದ ನಾನು ಪಾಠ ಕಲಿಯಬೇಕೆ?’ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು, ಜ.23: ಕೋಳಿ ಅಂಕಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬೈಂದೂರು ಬಂಧಿಸಿರುವ ಘಟನೆ ಕಳವಾಡಿ ಕಂಬಳಗದ್ದೆ ಎಂಬಲ್ಲಿ ಜ.22ರಂದು ಸಂಜೆ ವೇಳೆ ನಡೆದಿದೆ. ಕಾಲ್ತೋಡು ಗ್ರಾಮದ ಅಣ್ಣಪ್ಪ(44), ನಾರಾಯಣ ಪೂಜಾರಿ(34), ಮುದೂರು ಗ್ರಾಮದ ಕೃಷ್ಣ ಪೂಜಾರಿ(38), ಯಡ್ತರೆ ಗ್ರಾಮದ ಮಂಜುನಾಥ ಪೂಜಾರಿ(39), ಸೂರಕುಂದದ ಪ್ರವೀಣ್ ಶೆಟ್ಟಿ, ಶಿವ ದೇವಾಡಿಗ ಬಂಧಿತ ಆರೋಪಿಗಳು. ಇವರಿಂದ 1200ರೂ. ಮೌಲ್ಯದ 2 ಕೋಳಿಗಳು, ಎರಡು ಕೋಳಿ ಕತ್ತಿ ಮತ್ತು 600ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಲಾರಿಯಡಿ ಸಿಲುಕಿ ಬೈಕ್ ಸವಾರ ದಾರುಣ ಮೃತ್ಯು
ಬ್ರಹ್ಮಾವರ, ಜ.23: ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜ.23ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ಉಪ್ಪೂರು ಗ್ರಾಮದ ಕೆ.ಜಿ ರೋಡ್ ಜಂಕ್ಷನ್ ಡಿವೈಡರ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಬ್ರಹ್ಮಾವರ ಮಟಪಾಡಿಯ ಅಭಿಷೇಕ್ ಡಿ.ನಾಯ್ಕ(27) ಎಂದು ಗುರುತಿಸಲಾಗಿದೆ. ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಬೆಳಗ್ಗೆ ತನ್ನ ಬೈಕಿನಲ್ಲಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ಬರುತ್ತಿದ್ದರು. ಇದೇ ಸಂದರ್ಭ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಒಮ್ಮೇಲೆ ರಸ್ತೆಯ ಎಡಕ್ಕೆ ಚಲಾಯಿಸಿದನು. ಇದರ ಪರಿಣಾಮ ಲಾರಿಯ ಎಡಬದಿಯ ಮಧ್ಯದ ಚಕ್ರ ಅಭಿಷೇಕ್ ನಾಯ್ಕ ಅವರ ಬೈಕಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಅಭಿಷೇಕ್ ನಾಯ್ಕ ಲಾರಿಯ ಚಕ್ರದ ಅಡಿ ಸಿಲುಕಿಕೊಂಡಿದ್ದು, ಅಪಘಾತದ ಭೀಕರತೆಗೆ ಅಭಿಷೇಕ್ ದೇಹದಿಂದ ತಲೆ ಪ್ರತ್ಯೇಕಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಶವ ತೆರವು ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳ ಕಾಡು ಮತ್ತು ಬ್ರಹ್ಮಾವರದ ಅಂಬುಲೆನ್ಸ್ ಚಾಲಕ ನೆರವಾದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಹಮ್ಮದ್ ನೇಮಕ
ಉಡುಪಿ, ಜ.23: ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಹಮ್ಮದ್ ಇಬ್ರಾಹಿಂ ಸಾಹೇಬ್ ಅವರನ್ನು ನೇಮಕ ಮಾಡ ಲಾಗಿದೆ. ಕಾಂಗ್ರೆಸ್ ಪಕ್ಷದ ನಾಯಕ ಪ್ರಸಾದ್ರಾಜ್ ಕಾಂಚನ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಶಿಫಾರಿಸ್ಸಿನಂತೆ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಆದೇಶದಂತೆ ಇವರನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಉಡುಪಿ, ಜ.23: ಕಾಡುಬೆಟ್ಟು ಪ್ರಗತಿನಗರ ನಿವಾಸಿ ಸುಬ್ಬಣ್ಣ ರೈ ಅವರ ಪತ್ನಿ ಪತ್ನಿ ಪ್ರೇಮಾ ಶೆಟ್ಟಿ(56) ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಉಡುಪಿ ಇಎಸ್ಐ ಆಸ್ಪತ್ರೆಯಲ್ಲಿ ಹಿರಿಯ ಮೆಡಿಸಿನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಪತಿ, ಪುತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
‘ಯುವ ಆಯೋಗ’ ಸ್ಥಾಪಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ
ಉಡುಪಿ, ಜ.23: ಕರ್ನಾಟಕದ ಯುವಜನರ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣ ಸ್ಥಾಪಿಸಬೇಕೆಂದು ಆಗ್ರಹಿಸಿ ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಉಡುಪಿ ವತಿಯಿಂದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಯುವಜನರು ವಾಸಿಸುತ್ತಿದ್ದು, ಅವರು ಶಿಕ್ಷಣ, ಉದ್ಯೋಗ, ಮಾನಸಿಕ ಆರೋಗ್ಯ, ನಾಮಾಜಿಕ ಭದ್ರತೆ ಮತ್ತು ನಾಗರಿಕ ಭಾಗವಹಿಸುವಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ, ಮಾನಸಿಕ ಒತ್ತಡ, ಮಾದಕ ವ್ಯಸನ, ಸೈಬರ್ ವಂಚನೆ, ಸಾಮಾಜಿಕ ಅಸುರಕ್ಷತೆ ಮತ್ತು ನಿರ್ಧಾರ ಪ್ರಕ್ರಿಯೆಗಳಲ್ಲಿ ಪ್ರತಿನಿಧಿತ್ವದ ಕೊರತೆ ಮುಂತಾದ ಗಂಭೀರ ಸಮಸ್ಯೆ ಗಳು ಯುವಜನರಲ್ಲಿ ಹೆಚ್ಚುತ್ತಿವೆ. 2022ರಲ್ಲಿ ರಾಜ್ಯ ಯುವ ನೀತಿ ಇದ್ದರೂ ಸಹ, ಅದರ ಪರಿಣಾಮಕಾರಿ ಅನುಷ್ಠಾನ, ವಿವಿಧ ಇಲಾಖೆಗಳ ಯುವ ಕಾರ್ಯಕ್ರಮಗಳ ಸಮನ್ವಯ, ಯುವಜನರ ಅಹವಾಲುಗಳ ಪರಿಹಾರ ಹಾಗೂ ಸಾಕ್ಷಾಧಾರಿತ ನೀತಿ ಶಿಫಾರಸು ಗಳನ್ನು ನೀಡುವ ಕಾನೂನುಬದ್ದ ಸಂಸ್ಥೆ ರಾಜ್ಯದಲ್ಲಿ ಪ್ರಸ್ತುತ ಇಲ್ಲ. ಇದರಿಂದ ಯುವ ಕಲ್ಯಾಣ ಕ್ಷೇತ್ರದಲ್ಲಿ ಗಂಭೀರ ಸಂಸ್ಥಾತ್ಮಕ ಶೂನ್ಯತೆ ಉಂಟಾಗಿದೆ. ಕೇರಳ, ಅಸ್ಸಾಂ, ಮಿಜೋರಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದು, ಅವು ಯುವ ಕಲ್ಯಾಣ, ಉದ್ಯೋಗ ಮಾರ್ಗದರ್ಶನ, ಮಾನಸಿಕ ಆರೋಗ್ಯ, ಮಾದಕ ವಸ್ತು ತಡೆ ಮತ್ತು ನಾಯಕತ್ವ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಹೆಚ್ಚಿನ ಯುವಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯಕ್ಕೂ ಸಹ ಇಂತಹ ಅಯೋಗದ ಅಗತ್ಯ ತೀವ್ರವಾಗಿದೆ. ಕರ್ನಾಟಕ ರಾಜ್ಯ ಯುವ ಆಯೋಗವು ಯುವ ನಾಗರಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿ, ಪಾರದರ್ಶಕತೆ, ಭಾಗವಹಿಸುವಿಕೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸುವುದರ ಜೊತೆಗೆ ಯುವ ಜನರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಬಲ್ಲದು. ಆದ್ದರಿಂದ, ಕರ್ನಾಟಕ ರಾಜ್ಯ ಯುವ ಆಯೋಗದ ಸ್ಥಾಪನೆಗಾಗಿ ಅಗತ್ಯ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸಾಲಿಡಾರಿಟಿ ರಾಜ್ಯಾ ಕಾರ್ಯದರ್ಶಿ ಅಫ್ವಾನ್ ಬಿ. ಹೂಡೆ, ಜಿಲ್ಲಾ ಸಮಿತಿ ಸದಸ್ಯರಾದ ಝಕ್ರಿಯಾ ನೇಜಾರು ಹಾಗೂ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.
ಅಫಜಲಪುರ | ಚಂದ್ರಶೇಖರ ಕರಜಗಿಗೆ ʼಅಫಜಲ್ ಸೇವಾ ಪ್ರಶಸ್ತಿʼ ಪ್ರದಾನ
ಅಫಜಲಪುರ: ಅಫಜಲ್ ಖಾನ್ ಟ್ರಸ್ಟ್ ವತಿಯಿಂದ ಕೊಡಮಾಡುವ ಅಫಜಲ್ ಸೇವಾ ಪ್ರಶಸ್ತಿಯನ್ನು ಸಮಾಜಸೇವಕ ಚಂದ್ರಶೇಖರ ಕರಜಗಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಕ್ಸೂದ್ ಜಾಗಿರದಾರ್ ಅವರು, 2019ರಲ್ಲಿ ಅಫಜಲ್ ಖಾನ್ ಟ್ರಸ್ಟ್ ನೋಂದಣಿ ಮಾಡಿಸಿ ಇಲ್ಲಿವರೆಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಹೇಳಿದರು. ಇತ್ತೀಚಿಗೆ ನಡೆದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಫಜಲ್ ಖಾನ್ ಟ್ರಸ್ಟ್ ವತಿಯಿಂದ 2026ನೇ ಸಾಲಿನ ಮೊದಲ ಸಾಧಕ ಎಂದು ಗುರುತಿಸಿ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕರಜಗಿ ಅವರು ಉತ್ತಮ ಸಮಾಜ ಸೇವೆ ಮಾಡುತ್ತಾ ಬಂದಿರುವುದು ಮಳೇಂದ್ರ ಶಿವಾಚಾರ್ಯರ ಮಠಕ್ಕೂ ಕೀರ್ತಿ ತಂದಿದ್ದಾರೆ. ಇವರ ಸಾಮಾಜಿಕ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮುರುಘೇಂದ್ರ ಮಸಳಿ, ಬಾಬುಮೀಯಾ ಫುಲಾರಿ, ಚನ್ನು ಮನಿಯಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಲಬುರಗಿ | ಜ.24 ರಂದು ʼಪುಸ್ತಕ ಪರಿಚಯʼ ಕಾರ್ಯಕ್ರಮ: ಅಪ್ಪಾರಾವ್ ಅಕ್ಕೋಣೆ
ಕಲಬುರಗಿ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕಲಬುರಗಿ ವತಿಯಿಂದ ನಾಳೆ ಜ.24 ರಂದು ಸಂಜೆ 5ಗಂಟೆಗೆ ಪುಸ್ತಕ ಪರಿಚಯ ಕಾರ್ಯಕ್ರಮವು ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಅವರು ತಿಳಿಸಿದ್ದಾರೆ. ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಅವರು ರಚಿಸಿದ ಮಿಸ್ಸಳ ಭಾಜಿ ಮತ್ತು ಇತರ ಲಲಿತ ಪ್ರಬಂಧಗಳುಎಂಬ ಪ್ರಬಂಧ ಸಂಕಲನ ಕುರಿತು ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರಾದ ಪ್ರೊ.ಲಿಂಗಪ್ಪ ಗೋನಾಲರು ಅವಲೋಕನ ಮಾಡುವರು. ಹಿರಿಯ ಸಾಹಿತಿಗಳಾದ ಡಾ.ಜಯದೇವಿ ಗಾಯಕವಾಡ, ಡಾ.ಚಿ.ಸಿ.ನಿಂಗಣ್ಣ ಮತ್ತು ಪ್ರೊ.ಶಾಂತಲಿಂಗಪ್ಪ ಪಾಟೀಲ ಅವರು ಪುಸ್ತಕ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಅವರು ಅಧ್ಯಕ್ಷತೆ ವಹಿಸುವರು, ಸದರಿ ಸಂಘದ ಉಪಾಧ್ಯಕ್ಷರಾದ ಡಾ.ಸ್ವಾಮಿರಾವ ಕುಲಕರ್ಣಿಯವರು ಮತ್ತು ಲೇಖಕರಾದ ಶ್ರೀನಿವಾಸ ಜಾಲವಾದಿಯವರು ಉಪಸ್ಥಿತರಿರುವರು. ಸಾಹಿತ್ಯದ ಆಸಕ್ತರು, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಆಜೀವ ಸದಸ್ಯರು ಹಾಗೂ ಸಾಹಿತಿಗಳು ಉಪಸ್ಥಿತರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gold Atm: ಎಟಿಎಂನಿಂದ ಇನ್ಮುಂದೆ ಚಿನ್ನ ಮಾರಾಟ - ಖರೀದಿ ಮಾಡಬಹುದು, ದಕ್ಷಿಣ ಭಾರತದ ಈ ನಗರದಲ್ಲಿ ಮೊದಲ ಪ್ರಯೋಗ
ಹೈದರಾಬಾದ್: ಭಾರತೀಯರಿಗೆ ಚಿನ್ನದ ಬಗ್ಗೆ ವಿಶೇಷ ಒಲವು ಇದೆ. ಭಾರತೀಯರು ಚಿನ್ನದ ಖರೀದಿ ಮಾಡುವುದರ ಹಿಂದಿನ ಉದ್ದೇಶಗಳಲ್ಲಿ ಸಂಕಷ್ಟದ ಕಾಲದಲ್ಲಿ ಚಿನ್ನದಿಂದ ಸಹಾಯವಾಗಲಿದೆ. ಸಂಕಷ್ಟದ ಸಮಯದಲ್ಲಿ ಚಿನ್ನವನ್ನು ಅಡಮಾನ ಇರಿಸಿ, ಹಣ ಪಡೆಯಬಹುದು ಎನ್ನುವುದು ಸಹ ಇದರಲ್ಲಿ ಒಂದು. ಇದೀಗ ಚಿನ್ನವನ್ನು ಅಡಮಾನ ಇರಿಸುವುದಕ್ಕೆ ಸಂಬಂಧಿಸಿದಂತೆ ಎಟಿಎಂ ಪರಿಚಯಿಸಲಾಗಿದೆ. ಎಲ್ಲಿ ಹಾಗೂ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ
ಉಡುಪಿ| ಲೋಕಾಯುಕ್ತ ಹೆಸರಿನಲ್ಲಿ ನಗರಸಭೆ ಅಧಿಕಾರಿಗೆ ವಂಚಿಸಲು ಯತ್ನ: ಪ್ರಕರಣ ದಾಖಲು
ಉಡುಪಿ, ಜ23: ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ ಉಡುಪಿ ನಗರಸಭೆ ಅಧಿಕಾರಿಗೆ ವಂಚಿಸಲು ಯತ್ನಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಕಪಿಲ್ದೇವ್ ಎಸ್.ಗೋಡೆಮನೆ ಎಂಬವರಿಗೆ ಜ.19ರಂದು ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿಯು ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಚೆಲುವರಾಜ್ ಎಂದು ಹೇಳಿಕೊಂಡು ಕರೆ ಮಾಡಿದ್ದನು. ನಿಮ್ಮ ವಿರುದ್ಧ ಇಮೇಲ್ ಮುಖಾಂತರ ದೂರು ಬಂದಿದ್ದು, ಈ ದೂರನ್ನು ಬಗೆಹರಿಸಿಕೊಳ್ಳಿ, ನಿರಾಕರಿಸಿದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಹಾಗೂ ಇಲಾಖಾ ವಿಚಾರಣೆ ಮಾಡುವುದಾಗಿ ಹೇಳಿದ್ದರು. ತದನಂತರ ಇನ್ನೊಬ್ಬ ವ್ಯಕ್ತಿಗೆ ಫೋನ್ ಕರೆ ಕೊಟ್ಟಿದ್ದು, ಆತನು ನಾನು ಇಲ್ಲಿ ಹಿರಿಯ ಅಧಿಕಾರಿಯಾಗಿದ್ದು, ಈಗಾಗಲೇ ನಮ್ಮ ಅಧಿಕಾರಿಯು ತಿಳಿಸಿದಂತೆ ನಡೆದುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ತಿಳಿಸಿದ್ದನು. ಕಪಿಲ್ದೇವ್ ಈ ಬಗ್ಗೆ ಖಚಿತಪಡಿಸಿಕೊಳ್ಳಲು ಉಡುಪಿ ಲೋಕಯುಕ್ತ ಕಚೇರಿಗೆ ಹೋಗಿ ವಾಟ್ಸಾಪ್ ಮೂಲಕ ಕರೆ ಮಾಡಿದ್ದ ವ್ಯಕ್ತಿಗಳ ಬಗ್ಗೆ ವಿಚಾರಿಸಿದರು. ಆ ಹೆಸರಿನ ವ್ಯಕ್ತಿಗಳು ನಮ್ಮ ಕಚೇರಿಯಲಿಲ್ಲ ಹಾಗೂ ನಿಮಗೆ ಬಂದಂತಹ ಕರೆ ನಮ್ಮ ಕಚೇರಿಯಿಂದಲ್ಲ ಎಂದು ಲೋಕಾಯುಕ್ತ ಕಚೇರಿಯವರು ತಿಳಿಸಿದರು. ಆದುದರಿಂದ ಕರೆ ಮಾಡಿದ ವ್ಯಕ್ತಿಗಳು ವಂಚನೆ ಮಾಡಲು ಯತ್ನಿಸಿರುವುದು ತಿಳಿದುಬಂದಿದೆ. ಅದರಂತೆ ಕಪಿಲ್ದೇವ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಕಲಬುರಗಿ | ಕ್ರೀಡಾ ಚಟುವಟಿಕೆಗಳಿಗೂ ಮಹತ್ವ ನೀಡಿ: ವರ್ಷಾ ರಾಜೀವ ಜಾನೆ
ಸಂವಿಧಾನ ಪ್ರೀಮಿಯರ್ ಲೀಗ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ರಾಜ್ಯ ರಾಜಕಾರಣಕ್ಕೆ ಕುಮಾರಣ್ಣ ಎಂಟ್ರಿ ; ಯಾವ ಕ್ಷೇತ್ರದಿಂದ, ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ರಾಮನಗರ: ರಾಜ್ಯ ರಾಜಕಾರಣಕ್ಕೆ ಹೆಚ್ ಡಿ ಕುಮಾರಸ್ವಾಮಿ ಬರ್ತಾರಾ, ಕ್ಷೇತ್ರಕ್ಕೆ ಬರ್ತಾರ ಅಂತ ಚರ್ಚೆ.ಮೊದಲು ರಾಜ್ಯಕ್ಕೆ ಬರ್ತಾರಾ ಎನ್ನುವ ವಿಚಾರಕ್ಕೆ ಉತ್ತರ ಕಂಡಿಡಿದುಕೊಳ್ಳೊಣ. ಬಳಿಕ ಯಾವ ಕ್ಷೇತ್ರಕ್ಕೆ ಬರ್ತಾರೆ ಅನ್ನೋದು ತೀರ್ಮಾನ ಆಗುತ್ತೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಈ ಕುರಿತು ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿ, ಕುಮಾರಣ್ಣ
ಬೀದರ್ | ವೇದಪ್ರಕಾಶ್ ಆರ್ಯಗೆ ಪಿಎಚ್ಡಿ ಪದವಿ
ಬೀದರ್ : ತಾಲೂಕಿನ ಘೋಡಂಪಳ್ಳಿ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೇದಪ್ರಕಾಶ್ ಆರ್ಯ ಅವರಿಗೆ ಆಂಧ್ರ ಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿದೆ. ವೇದಪ್ರಕಾಶ್ ಆರ್ಯ ಅವರು ಪ್ರೋಫೇಸರ್ ಎಂ.ಎ.ಪಾಳೇಕರ್ ಅವರ ಮಾರ್ಗದರ್ಶನದಲ್ಲಿ 'ಎ ಸ್ಟಡಿ ಆಫ್ ಹ್ಯೂಮನ್ ರೈಟ್ಸ್ ಇನ್ ಇಂಡಿಯಾ' ಎನ್ನುವ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭಿಸಿದೆ.
1 ವಾರದಲ್ಲೇ 4 ಮಿಲಿಯನ್ ಗಡಿ ದಾಟಿದ BTS ʼARIRANGʼ ಪ್ರಿ ರಿಲೀಸ್ ಆರ್ಡರ್: ದಾಖಲೆ ಮುರಿಯಲು ಸಿದ್ದತೆ
ಕೆ-ಪಾಪ್ ದೈತ್ಯ BTS ಸುಮಾರು 4 ವರ್ಷಗಳ ಬಳಿಕ ʼARIRANGʼ ಎಂಬ ತಮ್ಮ 5ನೇ ಆಲ್ಬಂನೊಂದಿಗೆ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ಮಾ.20ರಂದು ಬಿಡುಗಡೆಯಾಗಲಿದ್ದು, 14 ಹಾಡುಗಳಿರುವ ಈ ಆಲ್ಬಂನ ಪ್ರಿ-ಆರ್ಡರ್ಗಳು ಕೇವಲ ಒಂದು ವಾರದಲ್ಲಿ 4 ಮಿಲಿಯನ್ ಗಡಿ ದಾಟಿದ್ದು, ದಾಖಲೆ ಬರೆಯುವ ನಿರೀಕ್ಷೆಯಿದೆ.
ಬೀದರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸಂಚಾರ : ಎಚ್ಚರ ವಹಿಸಲು ಸಾರ್ವಜನಿರಲ್ಲಿ ಮನವಿ
ಬೀದರ್: ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಬೀದರ್ ಜಿಲ್ಲಾ ಉಪ ಸಂರಕ್ಷಣಾಧಿಕಾರಿಆಶಿಷ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿರತೆ ಸಂಚಾರ ಕಂಡುಬಂದಿರುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಡಂಗೂರಿನ ಮೂಲಕ ಎಚ್ಚರಿಕೆ ನೀಡಲಾಗುತ್ತಿದ್ದು, ಗ್ರಾಮ ಸಭೆಗಳನ್ನು ನಡೆಸಿ ಅಗತ್ಯ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸೂರ್ಯಾಸ್ತದ ನಂತರ ಮಕ್ಕಳನ್ನು ಮನೆ ಒಳಗಡೆ ಇರಿಸಿ, ರಾತ್ರಿ ಸಂಚರಿಸುವ ವೇಳೆ ಟಾರ್ಚ್ ಅಥವಾ ಬೆಳಕಿನ ವ್ಯವಸ್ಥೆ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಚಿರತೆ ಕಂಡುಬಂದಿರುವ ಬಗ್ಗೆ ಆಯಾ ಗ್ರಾಮಗಳಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ. ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಂಡುಬಂದರೆ ತಕ್ಷಣವೇ ಅರಣ್ಯ ಇಲಾಖೆಯ ಆರ್ ಎಫ್ ಓ ವಿಜಯಕುಮಾರ ಜಾಧವ್ ಫೋನ್ : 95913 17807, ಡಿ ಆರ್ ಎಫ್ ಓ ರವಿ ಫೋನ್ : 99005 61007 ಡಿ ಆರ್ ಎಫ್ ಓ ಆರ್ ಎಲ್ ರಾಠೋಡ್ 86180 02638, ಬಿಟ್ ಫಾರೇಸ್ಟರ್ ಪರಶುರಾಮ್ ಫೋನ್ : 98451 12328, ಅರಣ್ಯ ಸಹಾಯವಾನಿ ಸಂಖ್ಯೆ: 1926 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಜ.26ರಂದು ತಣ್ಣೀರುಬಾವಿಯಲ್ಲಿ ಅಂತರಾಷ್ಟ್ರೀಯ ಮುಕ್ತ ಈಜು ಸ್ಪರ್ಧೆ 'ಡೆನ್ ಡೆನ್ 2026'
ಮುಕುಂದ್ ರಿಯಾಲ್ಟಿ ಶೀರ್ಷಿಕೆ ಪ್ರಾಯೋಜಕತ್ವ
ಮಕ್ಕಳಿಗೆ ಕೆಲಸದ ಪರಿಶ್ರಮವನ್ನು ತೋರಿಸಲು ಮುಂಬೈ ಧೋಬಿ ಘಾಟ್ ಗೆ ಕರೆದೊಯ್ದ ಕೊರಿಯನ್ ತಾಯಿ
ಮುಂಬೈನ ಧೋಬಿ ಘಾಟ್ಗೆ ಭೇಟಿ ನೀಡಿದ ಕೊರಿಯನ್ ತಾಯಿ, ತನ್ನ ಮಕ್ಕಳಿಗೆ ದುಡಿಮೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಅಲ್ಲಿನ ಕಾರ್ಮಿಕರ ಕಠಿಣ ಪರಿಶ್ರಮವನ್ನು ಮಕ್ಕಳು ಕಣ್ಣಾರೆ ಕಂಡು, ಬಟ್ಟೆ ಒಗೆಯುವ ಕೆಲಸದಲ್ಲಿ ಪಾಲ್ಗೊಂಡರು. ಈ ಅನುಭವವು ಮಕ್ಕಳಿಗೆ ನಿಜವಾದ ಜೀವನ ಪಾಠವನ್ನು ನೀಡಿದೆ. ದುಡಿಮೆಗೆ ಗೌರವ ಕೊಡುವುದನ್ನು ಕಲಿಸುವುದು ಶ್ಲಾಘನೀಯವಾಗಿದೆ. ಈ ಘಟನೆ ಮಕ್ಕಳಿಗೆ ಶ್ರಮದ ಬೆಲೆ ತಿಳಿಸಿಕೊಡಲು ಉತ್ತಮ ಉದಾಹರಣೆಯಾಗಿದೆ.
ರಾಯಚೂರು | ಅನಾರೋಗ್ಯದಿಂದ ಮನನೊಂದು ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
ರಾಯಚೂರು: ಅನಾರೋಗ್ಯದಿಂದ ಮನನೊಂದು ನಗರದ ಮಾವಿನ ಕೆರೆಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಮಡ್ಡಿಪೇಟೆ ನಿವಾಸಿ ರೇಣುಕಾ (55) ಮೃತ ಮಹಿಳೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಾನಸಿಕವಾಗಿ ಕುಗ್ಗಿದ್ದರೆಂದು ತಿಳಿದುಬಂದಿದೆ. ಈ ಹಿಂದೆಯೂ ಮಾವಿನ ಕೆರೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಯಿಂದ ರೇಣುಕಾ ಮನೆದಿಂದ ಕಾಣೆಯಾಗಿದ್ದು, 11 ಗಂಟೆ ಸುಮಾರಿಗೆ ಮಾವಿನ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಕೆರೆಯ ದಡದಲ್ಲಿ ಮೃತದೇಹ ತೇಲುತ್ತಿರುವುದನ್ನು ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸದರ್ ಬಜಾರ್ ಠಾಣೆ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಜ.25ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ, ಜ.23: ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಶ್ರೀವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಕರಂಬಳ್ಳಿ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ, ಉಡುಪಿ ಜಿಲ್ಲಾ ಕೃಷಿಕ ಸಂಘ, ಪತಾಂಜಲಿ ಯೋಗ ಸಮಿತಿ ಉಡುಪಿ ಮತ್ತು ಕೆಎಂಸಿ ಆಸ್ಪತ್ರೆ ಮಣಿಪಾಲ ಇವುಗಳ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜ.25ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ತನಕ ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಮಾಜಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಎಂ.ಡಿ. ಉದ್ಘಾಟಿಸಲಿದ್ದಾರೆ. ಸಾಮಾನ್ಯ ಆರೋಗ್ಯ ತಪಾಸಣೆ, ಚರ್ಮವ್ಯಾಧಿ ತಪಾಸಣೆ, ನೇತ್ರ ತಪಾಸಣೆ ಮತುತಿ ಕಣ್ಣಿನ ಪೊರೆ ಚಿಕಿತ್ಸೆ, ಸ್ತ್ರೀರೋಗ ತಪಾಸಣೆ, ಇಸಿಜಿ, ರಕತಿದೊತ್ತಡ ಮತ್ತು ರಕ್ತ ಪರೀಕ್ಷೆಗಳನ್ನು ಈ ತಪಾಸಣಾ ಶಿಬಿರದಲ್ಲಿ ನಡೆಸಲಾಗುವುದು ಎಂದು ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ನಾಡ ಒಕ್ಕೂಟ ಕಾರ್ಕಳ ಅಧ್ಯಕ್ಷರಾಗಿ ಮುಸ್ತಫಾ ಆಯ್ಕೆ
ಕಾರ್ಕಳ, ಜ.23: ನಮ್ಮ ನಾಡ ಒಕ್ಕೂಟ ಕಾರ್ಕಳ ತಾಲೂಕು ಸಮಿತಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಕಾರ್ಕಳದ ಎನ್.ಎಸ್. ಅಕಾಡೆಮಿಯಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷ ಶಾಕಿರ್ ಶೀಶ್ ವಹಿಸಿದ್ದರು. ನೂತನ 2026- 27ನೇ ಸಾಲಿನ ಅಧ್ಯಕ್ಷರಾಗಿ ಮುಸ್ತಫಾ ಕಾರ್ಕಳ, ಉಪಾಧ್ಯಕ್ಷರಾಗಿ ರಹೀಮ್ ಭಕ್ಷ, ಅನೀಸ್ ಬೈಲೂರು, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಸಲೀಂ, ಜೊತೆ ಕಾರ್ಯದರ್ಶಿಯಾಗಿ ಮಫ್ರೋಜ್, ಕೋಶಾಧಿಕಾರಿಯಾಗಿ ಮೊಹಮ್ಮೆ ಹನೀಫ್, ಕ್ರೀಡಾ ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್, ಯುವ ಸಂಘಟಕರಾಗಿ ಅಬ್ದುಲ್ ಮನ್ನನ್, ಸಂಘಟನಾ ಕಾರ್ಯದರ್ಶಿಯಾಗಿ ಶಬ್ಬೀರ್ ಆಯ್ಕೆಯಾದರು. ಒಕ್ಕೂಟದ ಜಿಲ್ಲಾಧ್ಯಕ್ಷ ನಕ್ವ ಯಹ್ಯ, ಮಾಜಿ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಚುನಾವಣಾ ಅಧಿಕಾರಿಗಳಾಗಿ ಮುನವಾರ್ ಅಜೆಕಾರು ಹಾಗೂ ನಜೀರ್ ನೇಜಾರು ನೇತೃತ್ವದಲ್ಲಿ ಚುನಾವಣೆ ನಡೆಯಿತು. ಶಬ್ಬೀರ್ ಅಹ್ಮದ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ರಫೀಕ್ ಸ್ವಾಗತಿಸಿ ವಂದಿಸಿದರು.
ದ್ವೇಷ ತುಂಬಿದ ಇಂದಿನ ಸಮಾಜದಲ್ಲಿ ಪ್ರೀತಿ ಅಗತ್ಯ: ವಂ.ಕುಮಾರ್ ಸಾಲಿನ್ಸ್
ಮಲ್ಪೆ, ಜ.23: ದ್ವೇಷ, ಕತ್ತಲು ತುಂಬಿದ ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಎಂಬ ಹಣತೆಗಳನ್ನು ಹಚ್ಚುವ ಮೂಲಕ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕನ್ನು ಕಾಣುವ ಕೆಲಸ ಇಂದಿನ ಪ್ರಮುಖ ಆದ್ಯತೆಯಾಗಬೇಕು ಎಂದು ಮಲ್ಪೆ ಯುಬಿಎಂ ಚರ್ಚಿನ ವಂ.ಕುಮಾರ್ ಸಾಲಿನ್ಸ್ ಹೇಳಿದ್ದಾರೆ. ಮಲ್ಪೆ ಸಿಎಸ್ಐ ಎಬನೇಜರ್ ಚರ್ಚ್ನಲ್ಲಿ ಗುರುವಾರ ಜರಗಿದ ಕಲ್ಯಾಣಪುರ ವಲಯ ಹಂತದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಸಭೆಯಲ್ಲಿ ಪ್ರಬೋಧನೆ ನೀಡಿ ಅವರು ಮಾತನಾಡುತಿದ್ದರು. ಬೆಳಕು ನಮ್ಮ ಸುತ್ತಲಿನ ಕತ್ತಲನ್ನು ಕರಗಿಸುತ್ತದೆ. ಯೇಸು ಸ್ವಾಮಿಯು ಮರಣವನ್ನು ಜಯಿಸಿ ಪುನರುತ್ಥಾನದ ಬೆಳಕನ್ನು ನಮಗೆ ನೀಡಿದ್ದಾರೆ. ಅಂತೆಯೇ ನಾವು ಕೂಡ ಕತ್ತಲನ್ನು ತುಂಬಿದ ದುರ್ಬಲರ ಬದುಕಿನಲ್ಲಿ ಹಣತೆ ಹಚ್ಚುವ ಕೆಲಸ ಮಾಡಿದಾಗ ನಮ್ಮ ಜೀವನ ಸಾರ್ಥಕತೆಯನ್ನು ಕಾಣುತ್ತದೆ ಎಂದರು. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನ ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೊಜ ತಮ್ಮ ಪ್ರಬೋಧನೆ ಯಲ್ಲಿ, ಪರರನ್ನು ಪ್ರೀತಿಸದ ಮಾನವ ಹೃದಯ ಸ್ಮಶಾನಕ್ಕೆ ಸಮ ಎಂಬಂತೆ ನಾವು ವಸ್ತುಗಳನ್ನು ಪ್ರೀತಿಸುವ ಬದಲು ಮಾನವರನ್ನು ಪ್ರೀತಸುವುದರ ಮೂಲಕ ಪ್ರತಿಯೊಬ್ಬರೂ ಶಾಂತಿಯ ದೂತರಾಗಿ ಜಗತ್ತಿಗೆ ದಾರಿದೀಪವಾ ಗುವ ಕೆಲಸವನ್ನು ಮಾಡಬೇಕಾಗಿದೆ. ಪರರ ಕಷ್ಟ ಸಂಕಷ್ಟಗಳಿಗೆ ನಾವು ಸ್ಪಂದಿಸುವುದರ ಮೂಲಕ ಐಕ್ಯತಾ ಮನೋಭಾವವನ್ನು ವೃದ್ಧಿಗೊಳಿಸಬೇಕು. ಪರರ ನೋವಿಗೆ ದನಿಯಾದಾಗ ಅವರಲ್ಲಿ ಪರಮಾತ್ಮನನ್ನು ಕಾಣಲು ಸಾಧ್ಯವಿದೆ. ಸಮಾಜದಲ್ಲಿ ನಿರ್ಗತಕರನ್ನು ಅನಾಥರನ್ನು ಪ್ರೀತಿಸುವ ಮೂಲಕ ಯೇಸು ಸ್ವಾಮಿ ತೋರಿಸಿದ ದಾರಿಯಲ್ಲಿ ಸಾಗಬೇಕು ಎಂದರು. ಪ್ರಾರ್ಥನಾ ಕೂಟದ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಪ್ರಧಾನ ಧರ್ಮಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ವಹಿಸಿದ್ದರು. ಪ್ರಾರ್ಥನಾ ಕೂಟ ದಲ್ಲಿ ವಂ.ಡಾ.ರೋಕ್ ಡಿಸೋಜ, ವಂ.ಜೋನ್ ಫೆರ್ನಾಂಡಿಸ್, ವಂ.ವಿಲ್ಸನ್ ಡಿಸೋಜ, ವಂ.ಅಶ್ವಿನ್ ಆರಾನ್ಹಾ, ವಂ.ಜೋಕಿಮ್ ಡಿಸೋಜ, ಸಿಎಸ್ಐ ಸಭೆಯ ಉಡುಪಿ ವಲಯ ಮುಖ್ಯಸ್ಥ ವಂ.ಕಿಶೋರ್, ವಂ.ಎಡ್ವಿನ್ ಸೋನ್ಸ್, ತೊಟ್ಟಂ ಚರ್ಚಿನ ಪಾಲನಾ ಸಮಿತಿಯ ಲೆಸ್ಲಿ ಆರೋಜ, ಸಿಸ್ಟರ್ ಸುಶ್ಮಾ, ರೋಮನ್ ಕ್ಯಾಥೊಲಿಕ್, ಸಿಎಸ್ಐ ಸಹಿತ ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡಿದ್ದರು. ಸಿಎಸ್ಐ ಎಬನೇಜರ್ ಚರ್ಚ್ ಮಲ್ಪೆ ಪಾಸ್ಟರ್ ವಂ.ವಿನಯ್ ಸಂದೇಶ್ ಸ್ವಾಗತಿಸಿದರು. ಲೂವಿಸ್ ಫೆರ್ನಾಂಡಿಸ್ ವಂದಿಸಿದರು. ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು
ರಾಯಚೂರು | ಮುಸ್ಲಿಂ ಸಮಾಜವನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ: ಲತೀಫ್ ಖಾನ್ ಪಠಾಣ ಆರೋಪ
ರಾಯಚೂರು: ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮಾಜದ ಹಿತಕ್ಕಾಗಿ ನಿಲ್ಲದೆ, ಕೇವಲ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಲತೀಫ್ ಖಾನ್ ಪಠಾಣ ಆರೋಪಿಸಿದರು. ತಾಲೂಕಿನ ಮುದಗಲ್ ಪಟ್ಟಣದ ಮಸ್ಕಿ ರಸ್ತೆಯ ಖದೀಜಾ ಫಂಕ್ಷನ್ ಹಾಲ್ನಲ್ಲಿ ನಡೆದ ಎಐಎಂಐಎಂ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳದೇ ಮುಸ್ಲಿಂ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಎಐಎಂಐಎಂ ಪಕ್ಷವನ್ನು ಬೆಂಬಲಿಸುವ ಸಮಯ ಬಂದಿದೆ ಎಂದು ಹೇಳಿದರು. ಹೋಬಳಿ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಮುದಗಲ್ ಹೋಬಳಿಗೆ ಎಐಎಂಐಎಂ ನೂತನ ಅಧ್ಯಕ್ಷರಾಗಿ ಅಬೇದ್ ಬೆಳ್ಳಿಕಟ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಮುಸ್ಲಿಂ ಸಮಾಜ ಗುಲಾಮಗಿರಿ ಮನೋಭಾವವನ್ನು ಬಿಟ್ಟು ಸ್ವತಂತ್ರವಾಗಿ ರಾಜಕೀಯ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು. ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರಿಗೆ ಸಮಾಜದ ಬಗ್ಗೆ ನಿಜವಾದ ಕಾಳಜಿ ಇದೆ. ರಾಜ್ಯ ಸರ್ಕಾರ ನೀಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಯುವಕರ ಭವಿಷ್ಯ ಹಾಳಾಗುತ್ತಿದೆ ಎಂದು ಟೀಕಿಸಿದರು. ಮುಂಬರುವ ಮುದಗಲ್ ಪುರಸಭೆ ಚುನಾವಣೆಯಲ್ಲಿ 23 ವಾರ್ಡುಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ರಾಜಕೀಯವಾಗಿ ಮುಂದೆ ಬರಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಬ್ಬಿರ್ ಅಹ್ಮದ್ ಬೆಳಗಾವಿ, ಯುವ ಘಟಕದ ಅಧ್ಯಕ್ಷ ಶಾರೂಕ್ ಪಟೇಲ್, ಮಹ್ಮದ್ ರಫಿ ಖುರೇಷಿ, ಯುವ ಘಟಕದ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್, ಮುದಗಲ್ ಘಟಕದ ಅಧ್ಯಕ್ಷ ಅಬೇದ್ ಬೆಳ್ಳಿಕಟ್ ಮಾತನಾಡಿದರು. ಮೌಲಾನಾ ಹಾಸೀಂ, ಮೌಲಾನಾ ಅತುಲ್ಲಾ ಖಾದ್ರಿ, ರೋಷನ್ ಜಹಾ, ನೂರು, ಶೇಖ್ ಚಾಂದ್ ಕಡ್ಡಿಪುಡಿ, ಮಹ್ಮದ್ ಎಂಟುಬಂಡಿ ಹಾಗೂ ಶಾರೂಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Sabarimala Gold Theft: ಶಬರಿಮಲೆ ಚಿನ್ನ ಕಳವು ಆರೋಪ, ತಪ್ಪು ಮಾಡಿದವರಿಗೆ ಶಿಕ್ಷೆ ಗ್ಯಾರಂಟಿ ಎಂದರು ಪ್ರಧಾನಿ ಮೋದಿ
ಕೇರಳ ರಾಜ್ಯ ಇಡೀ ದೇಶದಲ್ಲೇ ಅತಿಹೆಚ್ಚು ಹೆಸರು ಮಾಡಿರುವುದು ಪುಣ್ಯಕ್ಷೇತ್ರ ಶಬರಿಮಲೆ ದೇಗುಲದ ವಿಚಾರಕ್ಕೆ. ಪ್ರತಿವರ್ಷ ಶಬರಿಮಲೆ ದೇಗುಲಕ್ಕೆ ಹತ್ತಾರು ಲಕ್ಷ ಭಕ್ತರ ಭೇಟಿ ನಿಡುತ್ತಾರೆ, ಹಾಗೇ ಕೋಟಿ ಕೋಟಿ ಭಕ್ತರು ಅಯ್ಯಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸುತ್ತಾರೆ. ಹೀಗಿದ್ದಾಗ ಇಂತಹ ಪುಣ್ಯಕ್ಷೇತ್ರ ಶಬರಿಮಲೆ ದೇವಸ್ಥಾನದಲ್ಲೇ ಚಿನ್ನ ಕಳವು ಆಗಿರುವ ಆರೋಪ ಕೇಳಿಬಂದಿತ್ತು. ಇದೇ ವಿಚಾರ ದೇಶದ ಮೂಲೆ, ಮೂಲೆಯಲ್ಲೂ
ಕಾರ್ಕಳ: ಭೀಕರ ರಸ್ತೆ ಅಪಘಾತ; ಮೃತರು ಗುಲ್ಬರ್ಗದವರು
► ಮಗು ಸಹಿತ 11 ಮಂದಿಗೆ ಗಾಯ
ಜೈಲಲ್ಲಿ ತಟ್ಟೆ, ಲೋಟ, ಚಮಚಾಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಜನಾರ್ದನ ರೆಡ್ಡಿ: ಬಿ ಕೆ ಹರಿಪ್ರಸಾದ್ ವಾಗ್ದಾಳಿ
ಬೆಂಗಳೂರು: ಜೈಲಲ್ಲಿ ತಟ್ಟೆ, ಲೋಟ, ಚಮಚಾಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಜನಾರ್ದನ ರೆಡ್ಡಿಗೆ ರಾಜಕೀಯ ಜೀವನದಲ್ಲಿ ಚಮಚಾಗಿರಿ ಹೊರತುಪಡಿಸಿ ಬೇರೆ ಲೋಕದ ಪರಿಜ್ಞಾನವೇ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿ ಪ್ರಸಾದ್ ವಾಗ್ದಾಳಿ ನಡೆಸಿದರು. ಗುರುವಾರ ಸಾಮಾಜಿಕ ಜಾಲತಾಣ 'ಎಕ್'ನಲ್ಲಿ ಜನಾರ್ಧನಾ ರೆಡ್ಡಿಗೂ ನಮಗೂ ಸಂಬಂಧವಿಲ್ಲ ಎಂಬ ಅಮಿತ್ ಶಾ ಅವರ
ರಾಜ್ಯಪಾಲರು ರಾಜ್ಯದ ಜನತೆಯ ಬಳಿ ಕ್ಷಮೆ ಕೇಳಬೇಕು: ಸಚಿವ ಎಚ್.ಕೆ. ಪಾಟೀಲ್
ಬೆಂಗಳೂರು: ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ ಭಾಷಣವನ್ನು ಪೂರ್ತಿಯಾಗಿ ಓದದೆ ಸದನಕ್ಕೆ ಅಪಮಾನ ಮಾಡಿದ್ದು, ರಾಜ್ಯದ ಜನತೆಯ ಕ್ಷಮೆ ಕೇಳಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ. ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ಜಂಟಿ ಅಧಿವೇಶನ ಸಂದರ್ಭದಲ್ಲಿ ರಾಜ್ಯಪಾಲರು ಭಾಷಣ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ‘ಈ ಹಿಂದೆ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗದ್ದಲ ಮಾಡಿ ಕಾಗದ ಪತ್ರಗಳನ್ನು ಹರಿದು ಸ್ಪೀಕರ್ ಮುಖಕ್ಕೆ ತೂರಿ, ಪೀಠದ ಬಳಿಗೆ ಹೋಗಿ ಭುಜಕ್ಕೆ ಭುಜಕೊಟ್ಟು ನಿಂತಿದ್ದರು. ಆ ಮಹಾಪರಾಧಕ್ಕಾಗಿ 18 ಜನರನ್ನು ಅಮಾನತುಗೊಳಿಸಲಾಗಿತ್ತು. ಅಂದಿನ ಘಟನೆಯನ್ನು ನಿನ್ನೆ ಜಂಟಿ ಅಧಿವೇಶನದ ಬಳಿಕ ನಡೆದ ಬೆಳವಣಿಗೆಗಳಿಗೆ ಹೋಲಿಕೆ ಮಾಡಿ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ರಾಜ್ಯ ಸರಕಾರ ತನ್ನ ನೀತಿ ನಿಲುವುಗಳನ್ನು ರಾಜ್ಯಪಾಲರ ಮೂಲಕ ಭಾಷಣ ಮಾಡಿಸಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವುದು ಪ್ರಜಾಪ್ರಭುತ್ವದ ಹಾದಿಯಾಗಿದೆ. ರಾಜ್ಯಪಾಲರು ಖುಷಿಯಾಗಲಿ ಎಂದು ಸರಕಾರ ಭಾಷಣವನ್ನು ಸಿದ್ದಪಡಿಸುವುದಿಲ್ಲ. ಒಟ್ಟು 122 ಪ್ಯಾರಾಗಳ ಭಾಷಣದಲ್ಲಿ ಯಾರನ್ನೂ ವೈಯಕ್ತಿಕವಾಗಿ ನಿಂದಿಸಿರಲಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸುರೇಶ್ಕುಮಾರ್ ಮಾತನಾಡಿ, ‘ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರಿಗೆ ಆಗಿನ ಕೇಂದ್ರ ಸರಕಾರ ಯಾವ ರೀತಿ ಕರೆ ಮಾಡುತ್ತಿತ್ತು ಎಂಬುದನ್ನು ಹೇಳಬೇಕಾಗುತ್ತದೆ’ ಎಂದರು. ಇದಕ್ಕೆ ಎಚ್.ಕೆ.ಪಾಟೀಲ್ ಅವರು, ‘ಸತ್ಯ ಹೇಳಿದರೆ ನೋವುಂಟಾಗುವುದು ಸಹಜ. ಆದರೆ ರಾಜ್ಯಪಾಲರ ಜವಾಬ್ದಾರಿಯ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ. ಸುಪ್ರೀಂ ಮತ್ತು ಹೈಕೋರ್ಟ್ನಲ್ಲೂ ಸಾಕಷ್ಟು ನಿರ್ಣಯಗಳಿವೆ. ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವರು ನೀಡಿರುವ ಹೇಳಿಕೆ ಹಾಗೂ ಸಂಸತ್ನಲ್ಲಿ ರಾಷ್ಟ್ರಪತಿಯವರ ಭಾಷಣದ ಸಂಪ್ರದಾಯ ಎಲ್ಲವನ್ನೂ ಪರಿಗಣಿಸಿ ಎಲ್ಲವನ್ನೂ ಸೇರಿಸಿ ಹೇಳುವುದಾದರೆ, ನಿನ್ನೆಯ ಘಟನೆಯಲ್ಲಿ ರಾಜ್ಯಪಾಲರು ಸಂವಿಧಾನ ಉಲ್ಲಂಘಿಸಿದ್ದಾರೆ’ ಎಂದು ಹೇಳಿದರು. ವಿಷಯ ಪ್ರಸ್ತಾಪಿಸಿರುವ ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರುಗಳು ರಾಜ್ಯಪಾಲರಿಗೆ ಯಾರಿಂದ ಅವಮಾನವಾಗಿದೆ ಎಂದು ಹೆಸರನ್ನು ಉಲ್ಲೇಖಿಸಿಲ್ಲ. ಪರಿಷತ್ನ ಸದಸ್ಯ ಬಿ.ಕೆ.ಹರಿಪ್ರಸಾದ್ ಹೆಸರು ಹೇಳಿದ್ದಾರೆ. ಅವರು ಈ ಮನೆಯ ಸದಸ್ಯರಲ್ಲದ ಕಾರಣ ಚರ್ಚೆ ಮಾಡಲು ಅಥವಾ ಕ್ರಮ ತೆಗೆದುಕೊಳ್ಳಲು ಅವಕಾಶ ಇಲ್ಲ. ಇನ್ನೂ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಸೇರಿದಂತೆ ಸಂಪುಟದ ಸಚಿವರು ರಾಜ್ಯಪಾಲರಿಗೆ ಹಸ್ತಲಾಘವ ನೀಡಿ ಕಾರಿನಲ್ಲಿ ಕೂರಿಸಿ ಗೌರವಯುತವಾಗಿ ಬೀಳ್ಕೊಟ್ಟಿದ್ದೇವೆ. ಎಲ್ಲಿಯೂ ಅವರಿಗೆ ಅಪಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ‘ರಾಜ್ಯಪಾಲರು ಅಧಿವೇಶನದಿಂದ ಓಡಿಹೋಗಿದ್ದಾರೆಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಇನ್ನೊಂದೆಡೆ, ರಾಜ್ಯಪಾಲರನ್ನು ಕರೆಯಲು ಹೋಗಿದ್ದರು ಎಂದು ವಿಪಕ್ಷದವರು ಆಪಾದಿಸಿದ್ದಾರೆ. ರಾಜ್ಯಪಾಲರು ನಿರ್ಗಮಿಸುವಾಗ ಅವರನ್ನು ಹಿಂಬಾಲಿಸುವಂತೆ ಮುಖ್ಯಮಂತ್ರಿಯವರು ಸನ್ನೆ ಮಾಡಿದರು. ಅದರಂತೆ ನಾನು ವೇಗವಾಗಿ ಹೆಜ್ಜೆ ಹಾಕಿದ್ದೆ. ಬಹುಶಃ ಅದನ್ನು ಪ್ರತಿಪಕ್ಷದ ಸದಸ್ಯರು ತಪ್ಪಾಗಿ ಭಾವಿಸಿದಂತಿದೆ’ ಎಂದು ಎಚ್.ಕೆ.ಪಾಟೀಲ್ ವಿವರಣೆ ನೀಡಿದರು.
ಸುಂಕ ಸಮರ ಸೇರಿದಂತೆ ಹಲವು ವರ್ಷಗಳ ವೈಮನಸ್ಸಿನ ಬಳಿಕ ಸದ್ಯ ಚೀನಾ ಅಮೆರಿಕಾ ನಡುವಿನ ಸಂಬಂಧ ಸುಧಾರಣೆ ಕಾಣುತ್ತಿದ್ದು,ಈ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷ ಏಪ್ರಿಲ್ನಲ್ಲಿ ಚೀನಾಕ್ಕೆ ಭೇಟಿ ನೀಡಲಿದ್ದೇನೆ ಎಂದು ಘೋಷಿಸಿದ್ದಾರೆ.ಅಲ್ಲದೆ, ಕೋವಿಡ್ ಸಮಯದಲ್ಲಿ ಉದ್ಭವಿಸಿದ್ದ ವೈಮನಸ್ಸು ಈಗ ಕಡಿಮೆಯಾಗಿದ್ದು, ಉಭಯ ದೇಶಗಳ ನಡುವೆ ವ್ಯಾಪಾರ ಸಂಬಂಧ ಸುಧಾರಿಸಿದೆ ಎಂದಿದ್ದು ಚೀನಾ ಅಮೆರಿಕಾದ ಕೃಷಿ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್ 2.0 ಆಡಳಿತವಾಧಿಯಲ್ಲಿ ಮೊದಲ ಬಾರಿಗೆ ಟ್ರಂಪ್ ನ ಈ ಭೇಟಿ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯ ಬರೆಯುವ ನಿರೀಕ್ಷೆಯಿದೆ.
ಪರಿಷತ್ ಸದಸ್ಯ ಹರಿಪ್ರಸಾದ್ರ ಅಂಗಿ ಹರಿದದ್ದು ಯಾರು?: ಆರ್. ಅಶೋಕ್ ಪ್ರಶ್ನೆ
ಬೆಂಗಳೂರು: ‘ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲು ಬಂದ ರಾಜ್ಯಪಾಲರನ್ನು ಅಗೌರವದಿಂದ ಸರಕಾರ ಬೀಳ್ಕೊಟ್ಟಿದೆ. ರಾಜ್ಯಪಾಲರ ವಿರುದ್ಧ ನಿನ್ನೆ ನಡೆದ ಘಟನೆಯಲ್ಲಿ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಮ್ಮ ಬಟ್ಟೆಯನ್ನು ಬಿಜೆಪಿಗರು ಹರಿದಿದ್ದಾರೆಂದು ಆರೋಪಿಸಿದ್ದಾರೆ. ಹರಿಪ್ರಸಾದ್ರ ಅಂಗಿ(ಜುಬ್ಬ) ಹರಿದಿದ್ದು ಯಾರು?’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದರು. ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ‘ರಾಜ್ಯಪಾಲರಿಗೆ ಅಡ್ಡ ನಿಂತವರು ಕಾಂಗ್ರೆಸ್ನ ಸದಸ್ಯರೇ, ಅವರ ಹಿಂದೆ ಸುತ್ತಮುತ್ತ ಇದ್ದವರೂ ಕಾಂಗ್ರೆಸ್ನವರೇ. ಮಾರ್ಷಲ್ಗಳೊಂದಿಗೆ ಜಗ್ಗಾಡಿದವರು ಅವರೇ, ಆರೋಪ ಮಾತ್ರ ಬಿಜೆಪಿ ಮೇಲೆ. ವಿಡಿಯೋ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯರು ‘ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸುತ್ತಿದ್ದಾರೆ. ಆದರೆ, ರಾಷ್ಟ್ರಗೀತೆ ಹಾಡಿಸಬೇಕಾದವರು ಸರಕಾರವೇ ಹೊರತು ರಾಜ್ಯಪಾಲರಲ್ಲ. ಅವರು ತಮ್ಮ ಭಾಷಣ ಮುಗಿಸಿ ‘ಜೈ ಹಿಂದ್’ ಎಂದು ನಿರ್ಗಮಿಸಿದ್ದಾರೆ. ರಾಜ್ಯಪಾಲರನ್ನು ಅಬಲೆಯಂತೆ ಮಾಡಿದ್ದು, ಅವರು ಏಕಾಂಗಿಯಾಗಿ ಹೊರಹೋದರು. ಅವರ ಜೊತೆ ಯಾರು ಇರಲಿಲ್ಲ ಎಂದು ಅಶೋಕ್ ದೂರಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಅವರೇ ‘ರಾಜ್ಯಪಾಲರು ಓಡಿಹೋಗಿದ್ದಾರೆ’ ಎಂದು ಹೇಳಿರುವುದು ಸರಿಯಲ್ಲ. ಸರಕಾರ ಇರಬಹುದು, ಹೋಗಬಹುದು. ಆದರೆ, ಸಂಪ್ರದಾಯ ಮತ್ತು ನಿಯಮಗಳ ಉಲ್ಲಂಘನೆಯಾಗಬಾರದು. ಈ ಹಿಂದೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿದಂತೆ ನಿನ್ನೆ ರಾಜ್ಯಪಾಲರಿಗೆ ಅಗೌರವ ತೋರಿದ ಆಡಳಿತ ಪಕ್ಷದ ಸದಸ್ಯರ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿಯ ಡಾ.ಅಶ್ವತ್ಥನಾರಾಯಣ ಮಾತನಾಡಿ, ‘ಸ್ಪೀಕರ್ ಸದನದ ಘನತೆ, ಗೌರವವನ್ನು ಎತ್ತಿಹಿಡಿಯಬೇಕು. ಕಲಾಪಗಳ ನಿಯಮಾವಳಿ 27ರ ಅನುಸಾರ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದವರ ವಿರುದ್ಧ ಮುಂದಿನ ಸದನ ಸಮಾವೇಶದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟ ಉಲ್ಲೇಖವಿದೆ. ಹೀಗಾಗಿ ರಾಜ್ಯಪಾಲರಿಗೆ ಅಡಚಣೆ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಗಲಾಟೆ ಪ್ರಕರಣ ಖಂಡಿಸುವ ನಿರ್ಣಯ ಕೈಗೊಳ್ಳಬೇಕು. ಜತೆಗೆ ರಾಜ್ಯಪಾಲರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ರಾಜ್ಯಪಾಲರನ್ನು ಗೌರವ ಪೂರ್ವಕವಾಗಿ ಸರಕಾರ ಸ್ವಾಗತಿಸಿದೆ. ಭಾಷಣ ಮುಗಿಸಿ ಹೋಗುವ ವೇಳೆ ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯಪಾಲರು ಹೊರಗೆ ಹೋಗುವಾಗ ಕೆಲವರು ಅಡ್ಡಪಡಿಸಿರಬಹುದು. ಅದೇನೂ ದೊಡ್ಡ ಅಪರಾಧವಲ್ಲ’ ಎಂದರು. ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಆಡಳಿತ ಪಕ್ಷದ ಕಡೆಯಿಂದ ‘ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ’ ಎಂಬ ಆಕ್ಷೇಪ ಸಲ್ಲಿಕೆಯಾಗಿದೆ. ವಿಪಕ್ಷದ ಸದಸ್ಯರು ‘ರಾಜ್ಯಪಾಲರಿಗೆ ಅಗೌರವ ತೋರಲಾಗಿದೆ’ ಎಂದು ಲಿಖಿತ ದೂರು ನೀಡಿದ್ದಾರೆ. ನಾವಿಲ್ಲಿ ಉದ್ದೇಶಕ್ಕಾಗಿ ಚರ್ಚೆ ನಡೆಸಬೇಕೇ ಹೊರತು ವೈಯಕ್ತಿಕವಾಗಿ ಹಗೆತನಕ್ಕಾಗಿ ಜಗಳವಾಡಬಾರದು. ಹೀಗಾಗಿ ಈ ವಿಷಯದ ಬಗ್ಗೆ ಪರಿಶೀಲಿಸಿ ರೂಲಿಂಗ್ ನೀಡುತ್ತೇನೆ ಎಂದು ತಿಳಿಸಿದರು.
ಪದವೀಧರರಿಗೆ ಉದ್ಯೋಗ ಖಾತರಿಯ ತಿಳುವಳಿಕಾ ಒಪ್ಪಂದಕ್ಕೆ ಟಿಎಂಎಐಎಚ್ ಅಂಕಿತ
ಅಜ್ಮಾನ್: ಶಿಕ್ಷಣ ಹಾಗೂ ಉದ್ಯೋಗಾವಕಾಶದ ನಡುವಿನ ಅಂತರವನ್ನು ನಿವಾರಿಸುವ ನಿರ್ಣಾಯಕ ನಡೆಯೆಂಬಂತೆ, ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಅಧೀನದ ತುಂಬೆ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಎಐ ಇನ್ ಹೆಲ್ತ್ಕೇರ್ (the Thumbay College of Management and AI in Healthcare) ಸಂಸ್ಥೆಯು ತುಂಬೆ ಹೆಲ್ತ್ಕೇರ್ ಡಿವಿಜನ್ ಜೊತೆ ಆಯಕಟ್ಟಿನ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಈ ಒಪ್ಪಂದದ ಮೂಲಕ ಪದವೀಧರರಿಗೆ ಸಂರಚನಾತ್ಮಕ ಇಂಟರ್ನ್ಶಿಪ್ಗಳು,ಕೆಲಸದ ಸ್ಥಳದ ಅನುಭವ ಪಡೆಯಲಿದ್ದಾರೆ. ಈ ಪಾಲುದಾರಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಕಲಿಯುತ್ತಿರುವಾಗಲೇ ನೈಜವಾದ ಆಸ್ಪತ್ರೆ ಹಾಗೂ ಆರೋಗ್ಯಪಾಲನಾ ಉದ್ಯಮಿದ ಅನುಭವವನ್ನು ಪಡೆಯಲು ಸಾಧ್ಯವಾಗಲಿದೆ. ಈ ಒಪ್ಪಂದದ ಮೂಲಕ ತುಂಬೆ ಹೆಲ್ತ್ಕೇರ್, ಟಿಎಂಎಎಚ್ನ ಕನಿಷ್ಠ ಶೇ.20ರಷ್ಟು ಅರ್ಹ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ನೀಡಲಿದೆ. ಈ ಸಂದರ್ಭ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕುಲಪತಿ ಪ್ರೊ. ಮಾಂಡ ವೆಂಕಟರಮಣ ಮಾತನಾಡಿ ‘‘ ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಗಳಿಸುವುದು ಮಾತ್ರಲ್ಲದೆ, ತಮ್ಮ ವೃತ್ತಿ ಬದುಕನ್ನು ಕೂಡಾ ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು. ಈ ತಿಳುವಳಿಕಾ ಒಪ್ಪಂದವು ಭವಿಷ್ಯದಲ್ಲಿ ಶಿಕ್ಷಣವನ್ನು ಉದ್ಯೋಗಾವಕಾಶವಾಗಿ ಹಾಗೂ ತರಗತಿಯ ಕೊಠಡಿಗಳನ್ನು ಆರೋಗ್ಯಪಾಲನಾ ಕೈಗಾರಿಕಾ ಕ್ಷೇತ್ರಕ್ಕೆ ಪ್ರವೇಶದ್ವಾರಗಳಾಗಿ ಪರಿವರ್ತಿಸಲಿದೆ’’ ಎಂದು ಟಿಎಂಎಐಎಚ್ನ ಡೀನ್ ಪ್ರೊ. ಆಮೀರ್ ಝೈದ್ ಹೇಳಿದರು. ತುಂಬೆಗ್ರೂಪ್ ಹೆಲ್ತ್ಕೇರ್ನ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್ ತುಂಬೆ ಮಾತನಾಡಿ ಈ ತಿಳುವಳಿಕಾ ಒಪ್ಪಂದದ ಮೂಲಕ ತುಂಬೆ ಹೆಲ್ತ್ಕೇರ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಉದ್ಯೋಗಾವಕಾಶಗಳನ್ನು ತೆರೆದಿಡಲಿದೆ ಎಂದು ಹೇಳಿದರು. ಈ ತಿಳುವಳಿಕಾ ಒಪ್ಪಂದವು ಒಂದೇ ಪರಿಸರ ವ್ಯವಸ್ಥೆಯಡಿ ಶಿಕ್ಷಣ, ಆರೋಗ್ಯಪಾಲನೆ ಹಾಗೂ ಸಂಶೋಧನೆಯನ್ನು ಏಕೀಕರಣಗೊಳಿಸುವ ತುಂಬೆ ಗ್ರೂಪ್ನ ಸುದೀರ್ಘ ಬದ್ಧತೆಯನ್ನು ಬಲಪಡಿಸಲಿದೆ. ಕೋರ್ಸ್ಗಳಿಗೆ ಪ್ರವೇಶಗಳು ಆರಂಭಗೊಂಡಿದ್ದು, ಆಕಾಂಕ್ಷಿ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ gmu.ac.ae ಗೆ ಸಂದರ್ಶಿಸಬಹುದು. ಶೈಕ್ಷಣಿಕ ಅರ್ಹತೆ, ಸ್ಕಾಲರ್ಶಿಪ್ ಹಾಗೂ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕಗಳ ಬಗ್ಗೆ ಅರಿತುಕೊಳ್ಳಬಹುದು. ಆರೋಗ್ಯಪಾಲನೆ ಹಾಗೂ ಇಕಾನಾಮಿಕ್ಸ್ನಲ್ಲಿ ಬಿಎಸ್ಸಿ, ಹೆಲ್ತ್ಕೇರ್ನಲ್ಲಿ ಅನ್ವಯಿಕ ಎಐ, ಹೆಲ್ತ್ಕೇರ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ, ಎಐ ಹಾಗೂ ಹೆಲ್ತ್ ಇನ್ಫಾರ್ಮಾಟಿಕ್ಸ್ನಲ್ಲಿ ಸ್ನಾತಕೋತ್ತರ ಪದವಿಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Cabinet Meeting: 247 ಕೋಟಿ ವೆಚ್ಚದಲ್ಲಿ 650 ಬಸ್ ಖರೀದಿಗೆ ಸರ್ಕಾರ ಅಸ್ತು: ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ₹247 ಕೋಟಿ ವೆಚ್ಚದಲ್ಲಿ ಒಟ್ಟು 650 ಬಿಎಸ್-6 ಬಸ್ಗಳನ್ನು ಖರೀದಿಸಲು ಕರ್ನಾಟಕ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 500 ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ 150 ಬಸ್ಗಳು ಎಂದು ಮೂಲಗಳು ತಿಳಿಸಿವೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ
ವಿಜಯನಗರ | ಗಾದಿಗನೂರು ಬಳಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ: ತಪ್ಪಿದ ಅನಾಹುತ
ವಿಜಯನಗರ : ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಹೊರವಲಯದಲ್ಲಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಹೊಸಪೇಟೆಯಿಂದ ಬಳ್ಳಾರಿ ಕಡೆಗೆ ತೆರಳುತ್ತಿದ್ದ ಪೆಟ್ರೋಲ್ ಟ್ಯಾಂಕರ್ಗೆ ಹಿಂದಿನಿಂದ ಬಂದ ಲಘು ವಾಹನ ಢಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
RCB Sale: ಐಪಿಎಲ್ 2026 ಆರಂಭಕ್ಕೂ ಮುನ್ನ ಆರ್ಸಿಬಿ ಖರೀದಿಗೆ ಮುಂದಾದ ಬಿಲಿಯನೇರ್ ಉದ್ಯಮಿ
RCB Sale: ಐಪಿಎಲ್ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿ ತಂಡವನ್ನು 2026ರ ಆವೃತ್ತಿಗೂ ಮುನ್ನ ಮಾರಾಟಕ್ಕೆ ಇಡಲಾಗಿದೆ. ಇದೀಗ ಈ ಫ್ರಾಂಚೈಸಿಯನ್ನು ಕೊಂಡುಕೊಳ್ಳಲು ಖ್ಯಾತ ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ. ಹಾಗಾದ್ರೆ, ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಹಾಲಿ ಚಾಂಪಿಯನ್ ಆರ್ಸಿಬಿಯನ್ನು ಐಪಿಎಲ್ 2026 ಆರಂಭಕ್ಕೂ ಮುನ್ನ ಮಾರಾಟಕ್ಕೆ ಇಡಲಾಗಿದ್ದು, ಉದ್ಯಮಿಯೊಬ್ಬರು
ಬೆಳ್ತಂಗಡಿ| ಬೈಕ್ ಕಳ್ಳತನಕ್ಕೆ ಯತ್ನ ಆರೋಪ; ಇಬ್ಬರನ್ನು ಥಳಿಸಿ ಮರಕ್ಕೆ ಕಟ್ಟಿದ ಹಾಕಿದ ಸಾರ್ವಜನಿಕರು
ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಹಿಡಿದು ಥಳಿಸಿ, ಮರಕ್ಕೆ ಕಟ್ಟಿ ಹಾಕಿ ಬಳಿಕ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಇದೆ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದವರು ನೀಡಿದ ದೂರಿನಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ವರದಿ: ಬೆಳ್ತಂಗಡಿಯ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜ.20ರಂದು ತಡರಾತ್ರಿ 2.30ರ ಸುಮಾರಿಗೆ ಕುಳೂರು ನಿವಾಸಿಗಳಾದ ಮೊಯ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬವರು ಅನುಮಾನಾಸ್ಪದವಾಗಿ ಇವರ ಬಗ್ಗೆ ಜಯ ಪೂಜಾರಿ ಎಂಬವರ ಪತ್ನಿ ಫೋನ್ ಮಾಡಿ ತಿಳಿಸಿದಾಗ ನೇಮೋತ್ಸವ ಕಾರ್ಯಕ್ರಮದಲ್ಲಿದ್ದ ದೇವಿಪ್ರಸಾದ್ ಮತ್ತು ಇತರರು ಮನೆಯ ಬಳಿ ಬಂದಾಗ ಆರೋಪಿಗಳು ದೇವಿಪ್ರಸಾದ್ ಅವರ ಬೈಕ್ ಕಳವು ಮಾಡಿಕೊಂಡು ಹೋಗುವುದನ್ನು ಕಂಡು ಬೆನ್ನಟ್ಟಿ ತಡೆದು ನಿಲ್ಲಿಸಿದ್ದು, ಈ ವೇಳೆ ಬೈಕ್ ನೊಂದಿಗೆ ಓಡಲು ಯತ್ನಿಸಿದ ಆರೋಪದಲ್ಲಿ ಸುಮಾರು 25-30 ಜನರ ಗುಂಪು ಆರೋಪಿಗಳನ್ನು ಹಿಡಿದು ಥಳಿಸಿ, ಮರಕ್ಕೆ ಕಟ್ಟಿ ಹಾಕಿದ್ದರು. ಕೂಳೂರು ನಿವಾಸಿಗಳಾದ ಅಬ್ದುಲ್ ಸಮದ್ ಹಾಗು ಮೊಯ್ದಿನ್ ನಾಸಿರ್ ಮರೋಡಿಯಲ್ಲಿರುವ ನಾಸಿರ್ ನ ಸಂಬಂಧಿಕರ ಮನೆಗೆ ಬಂದಿದ್ದು, ತಡರಾತ್ರಿ 2.30ರ ಸುಮಾರಿಗೆ ಸಂಬಂಧಿಕರ ಮನೆ ಹುಡುಕುತ್ತಾ ಹೋಗಿದ್ದು, ನಂತರ ದಾರಿ ತಪ್ಪಿ ಪಳಾರಗೋಳಿ ಎಂಬಲ್ಲಿ ಮನೆಯ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ತೆಗೆದುಕೊಂಡು ಹೋಗುವ ವೇಳೆ ಸುಮಾರು 25 ರಿಂದ 30 ಮಂದಿಯ ತಂಡ ತಡೆದು ಹಲ್ಲೆ ಮಾಡಿ ಮರಕ್ಕೆ ಕಟ್ಟಿಹಾಕಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಈ ಬಗ್ಗೆ ಬಾಚು, ನಿತಿನ್, ನರೇಶ್ ಅಂಚನ್, ರತ್ನಾಕರ, ಸಾತ್ವಿಕ್, ದೇವಿಪ್ರಸಾದ್, ಸುಧೀರ್, ಚಂದಪ್ಪ ಹಾಗು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗವೈಕಲ್ಯ ಕೋಟಾದಡಿ ವೈದ್ಯಕೀಯ ಸೀಟಿಗಾಗಿ ತನ್ನ ಕಾಲನ್ನೇ ಕತ್ತರಿಸಿಕೊಂಡ ಭೂಪ; ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಘಟನೆ
ಉತ್ತರ ಪ್ರದೇಶದ ಜೌನ್ಪುರದಲ್ಲಿ ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳಲು 20 ವರ್ಷದ ಸೂರಜ್ ಭಾಸ್ಕರ್ ಎಂಬ ಯುವಕ ತನ್ನ ಎಡಗಾಲನ್ನು ಕತ್ತರಿಸಿಕೊಂಡಿದ್ದಾನೆ. ನೀಟ್ ಪರೀಕ್ಷೆಯಲ್ಲಿ ಪದೇ ಪದೇ ವಿಫಲನಾಗಿದ್ದು, ಅಂಗವೈಕಲ್ಯ ಪ್ರಮಾಣಪತ್ರಕ್ಕೆ ಮೊದಲೇ ಅರ್ಜಿ ಸಲ್ಲಿಸಿದ್ದರೂ ತಿರಸ್ಕೃತಗೊಂಡಿತ್ತು. ಈ ಕಾರಣದಿಂದ ಭೂಪ ತನ್ನ ಜೀವಕ್ಕೆ ಸಂಚಕಾರವಾಗುವ ಕರಾಳ ನಿರ್ಧಾರಕ್ಕೆ ಬಂದಿದ್ದಾನೆ. ಪೊಲೀಸರ ತನಿಖೆಯಿಂದ ಈ ಪ್ರಕರಣ ಬಯಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಂಡ್ಯ: ರಾಜ್ಯ ಕಾಂಗ್ರೆಸ್ನಲ್ಲಿ ಕುರ್ಚಿ ಕದನ ಹೊತ್ತಿಕೊಂಡಿರುವ ಈ ಹೊತ್ತಲ್ಲಿ ಹೆಚ್ ಡಿ ಕುಮಾರಸ್ವಾಮಿ ಆಡಿದ ಮಾತು ಭಾರೀ ಸಂಚಲನ ಮೂಡಿಸಿದೆ. ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಎಚ್.ಡಿ. ಕುಮಾರಸ್ವಾಮಿ ಅಂದ್ರೆ ಅದೊಂದು ಸಂಚಲನ. ಸದ್ಯ ದೆಹಲಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದೇ ರಾಜ್ಯ ರಾಜಕಾರಣದ ಬಗ್ಗೆಯೂ ಕಣ್ಣಾಡಿಸುತ್ತಾ ಇರ್ತಾರೆ. ಈ ನಡುವೆ ಮತ್ತೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ಆಗುವ ಬಗ್ಗೆ
ಕುಕನೂರು | ಕಲಿಕಾ ಹಬ್ಬ ಕಾರ್ಯಕ್ರಮದ ಸದ್ಬಳಕೆಗೆ ಸಹಕರಿಸಿ : ಮಹೇಶ್ ಸಬರದ
ಕುಕನೂರು : ಸರ್ಕಾರ ಹಮ್ಮಿಕೊಂಡಿರುವ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕೆಂದು ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಸಬರದ ಹೇಳಿದರು. ಪಟ್ಟಣದ ವಿನೋಬನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ 2025–26ನೇ ಸಾಲಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಶಿಕ್ಷಣ ಇಲಾಖೆ ಹಾಗೂ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿಗೆ ಶೈಕ್ಷಣಿಕ ಅಭಿವೃದ್ಧಿ ಪೂರಕವಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಕಲಿಕಾ ಹಬ್ಬ ಅತ್ಯಂತ ಪ್ರೇರಣಾದಾಯಕ ಕಾರ್ಯಕ್ರಮವಾಗಿದ್ದು, ಶಿಕ್ಷಕರು ಹಾಗೂ ಪಾಲಕರು ಇದರ ಸದ್ಬಳಕೆಗೆ ಶ್ರಮಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಗಳ ನೌಕರ ಸಂಘದ ತಾಲೂಕು ಅಧ್ಯಕ್ಷ ಮಾರುತೇಶ್ ತಳವಾರ ಮಾತನಾಡಿ, ಕಲಿಕಾ ಹಬ್ಬದಲ್ಲಿ ಕನ್ನಡ ಮತ್ತು ಗಣಿತ ವಿಷಯಗಳಿಗೆ ಒತ್ತು ನೀಡಲಾಗಿದ್ದು, 17 ಕಲಿಕಾ ಫಲಗಳನ್ನು ಒಳಗೊಂಡಿದೆ. ಹಿಂದುಳಿದ ಮಕ್ಕಳನ್ನು ಪ್ರೇರೇಪಿಸುವುದು. ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಶಿಕ್ಷಕರು ಹಾಗೂ ಪಾಲಕರು ಮಕ್ಕಳೊಂದಿಗೆ ರಸಮಂಜರಿ ಮತ್ತು ಚಟುವಟಿಕೆಗಳ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಚುಸಾಪ ಅಧ್ಯಕ್ಷ ರುದ್ರಪ್ಪ ಬಂಡಾರಿ, ಸಿಆರ್ಪಿ ಪಿರಸಾಬ್ ದಫೇದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಮರ್ಧಾನ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಾರ್ವತಿ ಅನಸಿ, ಸಹಶಿಕ್ಷಕಿಯರಾದ ಶಾಂತಾ ಹಿರೇಮಠ, ಗಿರಿಜಾ, ಮೆಹಬೂಬ್ ಗುಡಿಹಿಂದಲ, ಮುಖ್ಯಶಿಕ್ಷಕ ಶರಣಪ್ಪ ರಾವಣಕಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಈ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೊಪ್ಪಳ | ಜ.29 ರಿಂದ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ : ಶರಣು ಪಾಟೀಲ್
ಕೊಪ್ಪಳ : ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF) ವತಿಯಿಂದ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ–2026ನ್ನು ಜ.29ರಿಂದ ಫೆ.1ರ, 2026ರವರೆಗೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್ನ ವೈಟ್ ಪೆಟಲ್ಸ್ನಲ್ಲಿ ಆಯೋಜಿಸಲಾಗುತ್ತಿದೆ ಎಂದು ಐಎಲ್ ವೈಎಫ್ ಹುಬ್ಬಳ್ಳಿ ಚಾಪ್ಟರ್ ಕಾರ್ಯದರ್ಶಿ ಶರಣು ಪಾಟೀಲ್ ತಿಳಿಸಿದರು. ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಆವೃತ್ತಿಗಳ ಭಾರೀ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ 75 ಸಾವಿರಕ್ಕೂ ಅಧಿಕ ಜನರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಇದು ಪ್ರದೇಶದ ಅತಿದೊಡ್ಡ ಸಮುದಾಯಾಧಾರಿತ ಉದ್ಯಮ ಸಮ್ಮೇಳನಗಳಲ್ಲಿ ಒಂದಾಗಲಿದೆ ಎಂದರು. ಜನವರಿ 29ರಂದು ಸಂಜೆ 4:30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಲಿದ್ದಾರೆ. ಇದಲ್ಲದೆ, ವಿಆರ್ಎಲ್ ಗುಂಪಿನ ಸಿಎಂಡಿ ವಿಜಯ ಸಂಕೇಶ್ವರ, ಆದರ್ಶ ಡೆವಲಪರ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ಎಂ. ಜಯಶಂಕರ, ಸ್ಪರ್ಶ್ ಆಸ್ಪತ್ರೆಗಳ ಗುಂಪಿನ ಅಧ್ಯಕ್ಷ ಡಾ. ಶರಣ್ ಪಾಟೀಲ್, FII–TMA ಅಧ್ಯಕ್ಷ ಭಾಲಚಂದ್ರ ಸಿಂಗ್ ರಾವ್ ರಾಣೆ, CII ಪ್ರತಿನಿಧಿ ರಬೀಂದ್ರನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಫೆ.1, 2026ರಂದು ಸಂಜೆ 4:30ಕ್ಕೆ ನಡೆಯುವ ಸಮಾರೋಪ ಸಮಾರಂಭವು ಚಿಕ್ಕಮಗಳೂರಿನ ಬಸವತತ್ವ ಪೀಠದ ಪರಮಪೂಜ್ಯ ಡಾ. ಶ್ರೀ ಬಸವ ಮಾರುಳಸಿದ್ದ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಕೆವಿಎಲ್ಡಿಸಿಎಲ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ನಿವೃತ್ತ ಅಧಿಕಾರಿ ಶಂಕರ ಬಿದರಿ, ಮುರಗೇಶ್ ನಿರಾಣಿ, ಬಸವೇಶ್ವರ ಹೌಸಿಂಗ್ LLP ನ ನವೀನ್, ರಾಣಿ ಸತೀಶ್, iLYF ಸಂಸ್ಥಾಪಕ ಟ್ರಸ್ಟಿ ಹಾಗೂ ವಿಧಾನಪರಿಷತ್ ಸದಸ್ಯ ನವೀನ್ ಕೆ.ಎಸ್. ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು. ಈ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶರಣು ಪಾಟೀಲ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಐಎಲ್ ವೈಎಫ್ ಹುಬ್ಬಳ್ಳಿ ಚಾಪ್ಟರ್ ಸದಸ್ಯರಾದ ಚಿದಾನಂದ ಮುದ್ದುಕವಿ, ಅಭಿಷೇಕ್ ಅಗಡಿ, ಗುರುರಾಜ ಹಲಗೇರಿ ಉಪಸ್ಥಿತರಿದ್ದರು.
ರಾಯಚೂರು | ಯದ್ಲಾಪುರ ಗ್ರಾಮದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮ
ರಾಯಚೂರು: ಶಿಶು ಅಭಿವೃದ್ಧಿ ಯೋಜನೆ ಗಿಲ್ಲೇಸೂಗೂರು ವ್ಯಾಪ್ತಿಯಲ್ಲಿ ಬರುವ ಯದ್ಲಾಪುರ್ ಮೂರನೇ ಕೇಂದ್ರದಲ್ಲಿ ಇಂದು ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಮನ್ಸೂರ್ ಅಹ್ಮದ್ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಅಮರಮ್ಮ ಬಿ.ಪಾಟೀಲ್, ಮಕ್ಕಳು, ಕಿಶೋರಿಯರು, ಗರ್ಭಿಣಿ, ಬಾಣಂತಿಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
IMD Weather Forecast: ಶೀತಗಾಳಿ ನಡುವೆ ಭಾರತದ ಹಲವೆಡೆ ಎರಡು ದಿನ ಮಳೆ, ಹಿಮಪಾತದ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ದಟ್ಟ ಮಂಜು, ಶೀತಗಾಳಿ ವಾತಾವತಣ ನಿರ್ಮಾಣವಾಗುತ್ತಿದೆ. ಈ ನಡುವೆಯೇ ಹಲವೆಡೆ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ ಎರಡು ದಿನ ಈ ಭಾಗಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಶೀತಗಾಳಿ ನಡುವೆ ಮಳೆ:
West Bengal | S I R ಆತಂಕದಿಂದ ಪ್ರತಿದಿನ 3–4 ಮಂದಿ ಮೃತ್ಯು: ಮಮತಾ ಬ್ಯಾನರ್ಜಿ ಆರೋಪ
ಕೋಲ್ಕತ್ತಾ, ಜ. 23: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಿಂದ ಉಂಟಾಗಿರುವ ಆತಂಕದ ಕಾರಣ ರಾಜ್ಯದಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು. ಶುಕ್ರವಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಕೋಲ್ಕತ್ತಾದ ರೆಡ್ ರೋಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಾವುಗಳಿಗೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ನೈತಿಕ ಹೊಣೆಗಾರಿಕೆ ವಹಿಸಬೇಕೆಂದು ಆಗ್ರಹಿಸಿದರು. “ಇದುವರೆಗೆ 110ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪ್ರತಿದಿನ ಮೂರರಿಂದ ನಾಲ್ಕು ಮಂದಿ ಎಸ್ಐಆರ್ ಆತಂಕದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ,” ಎಂದು ಮಮತಾ ಬ್ಯಾನರ್ಜಿ ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮತದಾರರ ಪಟ್ಟಿಯ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಪಶ್ಚಿಮ ಬಂಗಾಳದ ವಿರುದ್ಧ ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ದೇಶದ ಮಹನೀಯರಾದ ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್ ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳ ಅವಮಾನ ನಡೆಯುತ್ತಿದೆ ಎಂದೂ ದೂರಿದರು. ಎಸ್ಐಆರ್ ಪ್ರಕ್ರಿಯೆ ಜನರಲ್ಲಿ ಭೀತಿ ಹಾಗೂ ಗೊಂದಲವನ್ನುಂಟು ಮಾಡಿದ್ದು, ಇದು ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಕೇರಳ ಸಾಹಿತ್ಯೋತ್ಸವ | ಈ ಆಡಳಿತವು ಭಿನ್ನಾಭಿಪ್ರಾಯದ ಶಬ್ದಕ್ಕೆ ಹೆದರುತ್ತದೆ: ಪ್ರಕಾಶ್ ರಾಜ್
ಕೋಝಿಕ್ಕೋಡ್: ಕೇರಳ ಸಾಹಿತ್ಯೋತ್ಸವದಲ್ಲಿ ರಾಜಕೀಯ ಭಿನ್ನಾಭಿಪ್ರಾಯದ ಕುರಿತು ಗುರುವಾರ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಖ್ಯಾತ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಶ್ನೆಗಳನ್ನು ಕೇಳುವವರ ಧ್ವನಿಗಳನ್ನು ವ್ಯವಸ್ಥಿತವಾಗಿ ಮೌನಗೊಳಿಸುವ ಆಡಳಿತ ಎಂದು ಅವರು ಬಣ್ಣಿಸಿದರು. ‘ಭಿನ್ನಾಭಿಪ್ರಾಯದ ಅಪರಾಧೀಕರಣ! ಧ್ವನಿಯೆತ್ತಿದ್ದಕ್ಕಾಗಿ ಯಾರು ಬಂಧನಕ್ಕೊಳಗಾಗುತ್ತಾರೆ?’ ಎಂಬ ಶೀರ್ಷಿಕೆಯ ಉದ್ಘಾಟನಾ ಅಧಿವೇಶನದಲ್ಲಿ ತನಿಖಾ ಪತ್ರಕರ್ತ ಜೋಸಿ ಜೋಸೆಫ್ ಅವರೊಂದಿಗೆ ಸಂವಾದದಲ್ಲಿ ಪ್ರಕಾಶ್ ರಾಜ್, ಸಾಮಾಜಿಕ ಕಾರ್ಯಕರ್ತರಾದ ಸೋನಂ ವಾಂಗ್ಚುಕ್ ಮತ್ತು ಉಮರ್ ಖಾಲಿದ್, ಮುಖ್ಯವಾಹಿನಿ ಮಾಧ್ಯಮಗಳ ಶರಣಾಗತಿ ಹಾಗೂ ನ್ಯಾಯಾಂಗದ ಸ್ವಾತಂತ್ರ್ಯ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ತನ್ನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿರುವ ಕುರಿತು ಜೋಸೆಫ್ ಅವರ ಆರಂಭಿಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ‘ನನ್ನನ್ನು ದೇಶವಿರೋಧಿ, ಪೆರಿಯಾರ್ವಾದಿ ಮತ್ತು ಹಿಂದೂ ವಿರೋಧಿ ಎಂದು ಕರೆಯಲಾಗಿದೆ. ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಮತ್ತು ನನ್ನ ಸಮಯವನ್ನು ವ್ಯರ್ಥ ಮಾಡುವ ಉದ್ದೇಶದಿಂದ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ನಾವು ವಿಭಿನ್ನ ಸತ್ವದಿಂದ ತಯಾರಾದವರು ಎನ್ನುವುದು ಅವರಿಗೆ ತಿಳಿದಿಲ್ಲ’ ಎಂದು ಉತ್ತರಿಸಿದರು. ಲಡಾಖ್ ನ ಶಿಕ್ಷಣ ತಜ್ಞ ಹಾಗೂ ಪರಿಸರವಾದಿ ಸೋನಂ ವಾಂಗ್ಚುಕ್ ಮತ್ತು ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕುರಿತೂ ಮಾತನಾಡಿದ ಅವರು, ಹಿಮಾಲಯದ ಸೂಕ್ಷ್ಮ ಪರಿಸರದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳ ವಿರುದ್ಧ ವಾಂಗ್ಚುಕ್ ಅವರ ಪ್ರತಿಭಟನೆಯನ್ನು ಬೆಂಬಲಿಸಲು ಲಡಾಖ್ ಗೆ ತಾನು ಕೈಗೊಂಡ ಪಯಣವನ್ನು ಮೆಲುಕು ಹಾಕಿದರು. ವಾಂಗ್ಚುಕ್ ಅವರನ್ನು ಅವರ ತವರು ಲಡಾಖ್ ನಿಂದ ಬಹುದೂರದ ರಾಜಸ್ಥಾನದಲ್ಲಿ ಮೂರು ಪದರಗಳ ಗೋಡೆಯ ಹಿಂದೆ ಬಂಧನದಲ್ಲಿ ಇರಿಸಲಾಗಿದೆ. ಅವರ ಪತ್ನಿಗೂ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಖಾಲಿದ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಬಳಕೆಯನ್ನು ಪ್ರಶ್ನಿಸಿದ ಪ್ರಕಾಶ್ ರಾಜ್, ‘ಸಿಎಎ ಪ್ರತಿಭಟನೆ ಸಂದರ್ಭದಲ್ಲಿ ರಸ್ತೆ ತಡೆ ಯಾವಾಗಿನಿಂದ ಭಯೋತ್ಪಾದಕ ಕೃತ್ಯವಾಯಿತು?’ ಎಂದು ಪ್ರಶ್ನಿಸಿದರು. ಅಧಿಕಾರದಲ್ಲಿ ಕುಳಿತಿರುವ ಈ ‘ಮಹಾಪ್ರಭು’ (ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ) ಭಿನ್ನಾಭಿಪ್ರಾಯದ ಧ್ವನಿಯನ್ನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು. ಸಾಂವಿಧಾನಿಕ ಸಂಸ್ಥೆಗಳ ಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಕಾಶ್ ರಾಜ್, ಹಿಂದಿನ ಸರ್ಕಾರಗಳು ಪೊಲೀಸರನ್ನು ದುರುಪಯೋಗ ಮಾಡಿಕೊಂಡಿದ್ದವು ಎಂದು ಒಪ್ಪಿಕೊಂಡರೂ, ಒಂದು ಕಾಲದಲ್ಲಿ ‘ಅಂತಿಮ ಭರವಸೆ’ಯಾಗಿದ್ದ ನ್ಯಾಯಾಂಗವನ್ನು ಈಗ ಅನೇಕರು ‘ತಮಾಷೆ’ಯಾಗಿ ನೋಡುತ್ತಿದ್ದಾರೆ ಎಂದು ವಿಷಾದಿಸಿದರು. ವಿಚಾರಣೆಯು ಅಪರಾಧಿಗಳ ಬಗ್ಗೆ ಮಾತ್ರವಲ್ಲ, ನ್ಯಾಯಾಧೀಶರ ಆತ್ಮಸಾಕ್ಷಿಯ ಬಗ್ಗೆಯೂ ನಡೆಯಬೇಕು ಎಂದು ಅವರು ಹೇಳಿದರು. ಚುನಾವಣಾ ಪ್ರಜಾಪ್ರಭುತ್ವದ ಪಂದ್ಯದಲ್ಲಿ ‘ಕಾಲ್ಚೆಂಡು’ಗಳಾಗುವುದನ್ನು ನಿಲ್ಲಿಸುವಂತೆ ಸಾರ್ವಜನಿಕರನ್ನು ಆಗ್ರಹಿಸಿದ ಅವರು, ರಾಜಕೀಯವಾಗಿ ಸಕ್ರಿಯರಾಗುವಂತೆ ಕರೆ ನೀಡಿದರು. ‘ಶಿಕ್ಷಣವೆಂದರೆ ಪದವಿ ಅಲ್ಲ; ಅದು ಅರಿವು ಮತ್ತು ವಿಮೋಚನೆ. ಸಣ್ಣ ಗುಂಪುಗಳಲ್ಲಿ ಮಾತನಾಡಲು ನಾವು ತುಂಬ ಸಂತೋಷ ಪಟ್ಟುಕೊಳ್ಳುತ್ತೇವೆ. ಆದರೆ ಈ ಅರಿವನ್ನು ನಮ್ಮ ನೆರೆಹೊರೆಗಳಿಗೂ ತಲುಪಿಸಬೇಕು. ದೋಣಿಯಲ್ಲಿ ಒಂದು ರಂಧ್ರವಿದ್ದರೆ, ನಾವೆಲ್ಲ ಸೇರಿ ಅದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಸಿದ್ಧಾಂತ ಏನೇ ಆಗಿದ್ದರೂ ನಾವೆಲ್ಲ ಮುಳುಗುತ್ತೇವೆ,’ ಎಂದು ಪ್ರಕಾಶ್ ರಾಜ್ ಹೇಳಿದರು.
ಖರ್ಚು ಮಾಡಿದ ನಂತರ ವೆಚ್ಚ ನೋಡುವ Gen Z
ಇದು ಬಿಲ್ ಕಟ್ಟಿದ ನಂತರ ಕಾಡುವ ಭಾವನೆ!
ಭಾರತಕ್ಕೆ ಮಾತ್ರ ವಿಶೇಷ ಸೌಲಭ್ಯ ಯಾಕೆ ಬಾಂಗ್ಲಾ ಪ್ರಶ್ನೆ: ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ ಬಹುತೇಕ ಔಟ್
ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಹಳಸಿದೆ. ಭಾರತ ಮತ್ತು ಪಾಕಿಸ್ತಾನದ ಯುದ್ಧ ಸಂದರ್ಭದಲ್ಲೂ ಬಾಂಗ್ಲಾದೇಶ ಮೂಗು ತೂರಿಸಿತ್ತು. ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀಡಿದ್ದ 24 ಗಂಟೆಗಳ ಗಡುವು ಮುಗಿದಿದ್ದು, ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶವು ಹೊರಗೆ ಉಳಿಯುವುದು ಬಹುತೇಕ ಫಿಕ್ಸ್ ಎನ್ನುವಂತೆ
ಗೋವಾ ನೈಟ್ಕ್ಲಬ್ ಅಗ್ನಿ ದುರಂತ| ಲೂಥ್ರಾ ಸೋದರರ ನಿವಾಸದ ಮೇಲೆ ಈ.ಡಿ.ದಾಳಿ
ಹೊಸದಿಲ್ಲಿ,ಜ.23: ಜಾರಿ ನಿರ್ದೇಶನಾಲಯವು (ಈ.ಡಿ.) ಶುಕ್ರವಾರ ಬೆಳಿಗ್ಗೆಯಿಂದ ಗೋವಾದ ಆರ್ಪೋರಾದಲ್ಲಿಯ ಬಿರ್ಚ್ ಬೈ ರೋಮಿಯೊ ಲೇನ್ನ ಮಾಲಿಕರಾದ ಲೂಥ್ರಾ ಸೋದರರು ಮತ್ತು ಅಜಯ ಗುಪ್ತಾ ಅವರ ನಿವಾಸಗಳು ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. 2025ರ ಡಿ.6ರಂದು ಪಾರ್ಟಿಯೊಂದರಲ್ಲಿ ಸಂಭವಿಸಿದ್ದ ಬೆಂಕಿ ಅವಘಢದಲ್ಲಿ 25 ಜನರು ಮೃತಪಟ್ಟು, 50 ಜನರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಕ್ಲಬ್ನ ಅಕ್ರಮ ಕಾರ್ಯಾಚರಣೆ ಮತ್ತು ಪ್ರವರ್ತಕರ ವಿರುದ್ಧ ದಾಖಲಿಸಿಕೊಳ್ಳಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ.ಡಿ.ತನಿಖೆ ನಡೆಸುತ್ತಿದೆ. ಗೋವಾ ಮತ್ತು ದಿಲ್ಲಿಯಾದ್ಯಂತ ಒಂಭತ್ತು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಇವುಗಳಲ್ಲಿ ದಿಲ್ಲಿಯ ಕಿಂಗ್ಸ್ವೇ ಕ್ಯಾಂಪ್,ಗುರುಗ್ರಾಮದ ತತ್ವಂ ವಿಲ್ಲಾಸ್,ಗೋವಾದಲ್ಲಿಯ ಹಿಂದಿನ ಆರ್ಪೋರಾ ಸರಪಂಚ ರೋಶನ ರೇಡ್ಕರ್ ಮತ್ತು ಪಂಚಾಯತ್ ಕಾರ್ಯದರ್ಶಿ ರಘುವೀರ ಬಾಗಕರ್ ಅವರ ನಿವಾಸಗಳು ಸೇರಿವೆ. ರೇಡ್ಕರ್ ಮತ್ತು ಬಾಗಕರ್ ನೈಟ್ಕ್ಲಬ್ಗೆ ಅಕ್ರಮವಾಗಿ ವ್ಯವಹಾರ ಪರವಾನಿಗೆಗಳು ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡಿದ್ದರು ಎಂದು ಆರೋಪಿಸಿಲಾಗಿದೆ. ಬಿರ್ಚ್ ಬೈ ರೋಮಿಯೊ ಲೇನ್ ಇರುವ ಖಝಾನ್ ಭೂಮಿಯ ಅಕ್ರಮ ಪರಿವರ್ತನೆಯಿಂದಾಗಿ ಉದ್ಭವಿಸಿರುವ ಅಕ್ರಮ ಹಣ ವರ್ಗಾವಣೆ ಕುರಿತು ಪರಿಶೀಲಿಸಲು ಈ.ಡಿ.ತಂಡಗಳು ಕ್ಲಬ್ನ ಮಾಲಿಕರಲ್ಲಿ ಒಬ್ಬರೆನ್ನಲಾದ ಬ್ರಿಟಿಷ್ ಪ್ರಜೆ ಸುರಿಂದರ್ ಕುಮಾರ್ ಖೋಸ್ಲಾ ಅವರ ನಿವಾಸದಲ್ಲಿಯೂ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
Stock Market: 6,00,000 ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು, ಷೇರು ಪೇಟೆಯಲ್ಲಿ ಭಾರಿ ತಲ್ಲಣ...
ಭಾರತೀಯ ಷೇರು ಮಾರುಕಟ್ಟೆ ಇಂದು ಭಾರಿ ದೊಡ್ಡ ಹಿನ್ನಡೆ ಅನುಭವಿಸಿದ್ದು, ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ನಿಫ್ಟಿ ಭಾರಿ ದೊಡ್ಡ ಕುಸಿತ ಕಂಡಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಸಂಭವಿಸುತ್ತಿದ್ದು, ಯುದ್ಧ ಹಾಗೂ ಮಧ್ಯಪ್ರಾಚ್ಯ ದೇಶಗಳ ಸೂಕ್ಷ್ಮ ಪರಿಸ್ಥಿತಿ ಮಧ್ಯೆ ಈಗ ಷೇರುಪೇಟೆ ನಷ್ಟದ ಹಾದಿ ಹಿಡಿದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 600000 ಕೋಟಿ ರೂಪಾಯಿ
ಗಣರಾಜ್ಯೋತ್ಸವ ಪರೇಡ್ನಲ್ಲಿಲ್ಲ ಕರ್ನಾಟಕದ ಸ್ತಬ್ಧಚಿತ್ರ; ಕೆಂಪುಕೋಟೆಯ 'ಭಾರತ್ ಪರ್ವ್'ಗೆ ಸೀಮಿತ
ಬೆಂಗಳೂರು: ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ ಬಾರಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಅಧಿಕೃತ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಲಭ್ಯವಾಗಿಲ್ಲ. ರಾಜ್ಯ ಸರ್ಕಾರವು ಅತೀ ಉತ್ಸಾಹದಿಂದ ಸಿದ್ಧಪಡಿಸಿದ್ದ 'ಮಿಲೆಟ್ಸ್ ಟು ಮೈಕ್ರೋಚಿಪ್' (ಸಿರಿಧಾನ್ಯದಿಂದ ಮೈಕ್ರೋಚಿಪ್ವರೆಗೆ) ಎಂಬ ಪರಿಕಲ್ಪನೆಯ ಸ್ತಬ್ಧಚಿತ್ರವು ಪರೇಡ್ನ ಭಾಗವಾಗಿರುವುದಿಲ್ಲ. ಬದಲಿಗೆ, ಪ್ರವಾಸೋದ್ಯಮ ಸಚಿವಾಲಯವು ಕೆಂಪು ಕೋಟೆಯಲ್ಲಿ ಆಯೋಜಿಸುವ
ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ; ಅಟಲ್ ಯೋಜನೆಯನ್ನು ವಿಸ್ತರಿಸಿದ ಕೇಂದ್ರ
ಯೋಜನೆಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು.ಅರ್ಜಿದಾರರು ಯಾವುದೇ ಮಾನ್ಯತೆ ಪಡೆದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಕಡ್ಡಾಯವಾಗಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರ 2030-31ರವರೆಗೆ ವಿಸ್ತರಿಸಿದೆ. ಈ ಯೋಜನೆ 18ರಿಂದ 40 ವರ್ಷ ವಯಸ್ಸಿನವರಿಗೆ ಲಭ್ಯವಿದೆ. ಈ ಯೋಜನೆಯಲ್ಲಿ 60 ವರ್ಷದ ನಂತರ ತಿಂಗಳಿಗೆ 1000 ರೂ ದಿಂದ 5000 ರೂ.ವರೆಗೆ ಪಿಂಚಣಿ ಖಚಿತ. ಈ ಯೋಜನೆಯಡಿ 8.99 ಕೋಟಿಗೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯಡಿ ಕುಟುಂಬಕ್ಕೂ ಆರ್ಥಿಕ ಭದ್ರತೆ ಸಿಗುತ್ತದೆ. ಯಾರು ಅರ್ಜಿ ಸಲ್ಲಿಸಬಹುದು? ಯೋಜನೆಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು.ಅರ್ಜಿದಾರರು ಯಾವುದೇ ಮಾನ್ಯತೆ ಪಡೆದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಕಡ್ಡಾಯವಾಗಿ ಉಳಿತಾಯ ಖಾತೆಯನ್ನು ಹೊಂದಿರಬೇಕು. 2022 ಅಕ್ಟೋಬರ್ 1ರಿಂದ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ, ಆದಾಯ ತೆರಿಗೆ ಪಾವತಿಸುವ ಭಾರತೀಯ ನಾಗರಿಕರು ಈ ಯೋಜನೆಗೆ ಹೊಸದಾಗಿ ಸೇರಲು ಅರ್ಹರಾಗಿರುವುದಿಲ್ಲ. ಒಂದು ವೇಳೆ ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ 2022 ಅಕ್ಟೋಬರ್ 1 ರ ನಂತರ ಸೇರಿದ್ದು ಕಂಡುಬಂದಲ್ಲಿ, ಅವರ ಖಾತೆಯನ್ನು ಮುಚ್ಚಿ ಅಲ್ಲಿಯವರೆಗೆ ಸಂಗ್ರಹವಾದ ಮೊತ್ತವನ್ನು ಮರುಪಾವತಿಸಲಾಗುತ್ತದೆ. ಕುಟುಂಬಕ್ಕೆ ಆರ್ಥಿಕ ಭದ್ರತೆ ಈ ಯೋಜನೆಯ ಅಡಿಯಲ್ಲಿ ಚಂದಾದಾರರು ಮರಣ ಹೊಂದಿದ ಪಕ್ಷದಲ್ಲಿ, ಅವರ ಪತಿ ಅಥವಾ ಪತ್ನಿ (ಸಂಗಾತಿ) ಜೀವಿತಾವಧಿಯವರೆಗೆ ಅದೇ ಮೊತ್ತದ ಪಿಂಚಣಿಯನ್ನು ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ಚಂದಾದಾರ ಮತ್ತು ಅವರ ಸಂಗಾತಿ ಇಬ್ಬರೂ ಮರಣ ಹೊಂದಿದರೆ, ಯೋಜನೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಅವರ ವಾರಸುದಾರರಿಗೆ ಅಥವಾ ನಾಮನಿರ್ದೇಶಿತರಿಗೆ ಹಿಂತಿರುಗಿಸಲಾಗುತ್ತದೆ. ಈ ವ್ಯವಸ್ಥೆಯು ಚಂದಾದಾರರ ನಿವೃತ್ತಿಯ ನಂತರ ಕೇವಲ ಅವರಿಗೆ ಮಾತ್ರವಲ್ಲದೆ, ಅವರ ಅನುಪಸ್ಥಿತಿಯಲ್ಲಿ ಕುಟುಂಬಕ್ಕೂ ಸುಸ್ಥಿರವಾದ ಆರ್ಥಿಕ ರಕ್ಷಣೆಯನ್ನು ಖಾತರಿಪಡಿಸುತ್ತದೆ. ಹೂಡಿಕೆ ಮತ್ತು ಪಿಂಚಣಿಯ ಮೊತ್ತ ಎಷ್ಟು? ಒಬ್ಬ ವ್ಯಕ್ತಿಯು ತನ್ನ 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿ ಪ್ರತಿ ತಿಂಗಳು 210 ರೂ. ಪಾವತಿಸುತ್ತಾ ಬಂದರೆ, ಅವರು 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಬಹುದು. ಈ ಹೂಡಿಕೆಯ ಮೂಲಕ ಸುಮಾರು 8.5 ಲಕ್ಷ ರೂ.ದಷ್ಟು ದೊಡ್ಡ ಮೊತ್ತದ ನಿಧಿಯನ್ನು ವೃದ್ಧಾಪ್ಯದ ಭದ್ರತೆಗಾಗಿ ಸೃಷ್ಟಿಸಲು ಸಾಧ್ಯವಿದೆ. ಒಂದು ವೇಳೆ ಚಂದಾದಾರರು ಪ್ರತಿ ತಿಂಗಳು 1,000 ರೂ. ಪಿಂಚಣಿ ಯೋಜನೆಯನ್ನು ಆರಿಸಿಕೊಂಡರೆ, ಅವರ ಮರಣದ ನಂತರ ಸಂಗಾತಿಗೆ 1,000 ರೂ. ಪಿಂಚಣಿ ಸಿಗುತ್ತದೆ ಮತ್ತು ಇಬ್ಬರ ಮರಣದ ನಂತರ ನಾಮನಿರ್ದೇಶಿತರಿಗೆ ಸುಮಾರು 1.7 ರೂ. ಲಕ್ಷ ಮೊತ್ತ ಹಿಂತಿರುಗಿಸಲಾಗುತ್ತದೆ. ಅದೇ ರೀತಿ, 5,000 ರೂ. ಪಿಂಚಣಿ ಯೋಜನೆಯಲ್ಲಿ ಚಂದಾದಾರರ ಮರಣದ ನಂತರ ಸಂಗಾತಿಗೆ 5,000 ರೂ. ಪಿಂಚಣಿ ಲಭ್ಯವಿದ್ದು, ಅಂತಿಮವಾಗಿ ನಾಮನಿರ್ದೇಶಿತರಿಗೆ ಅಂದಾಜು 8.5 ಲಕ್ಷ ರೂ.ದಷ್ಟು ದೊಡ್ಡ ಮೊತ್ತ ಸಿಗುತ್ತದೆ. ಈ ಯೋಜನೆಯು ಚಂದಾದಾರರು ಆಯ್ಕೆ ಮಾಡುವ ಪಿಂಚಣಿ ಮೊತ್ತಕ್ಕೆ ಅನುಗುಣವಾಗಿ ಅವರ ಕುಟುಂಬಕ್ಕೆ ಮತ್ತು ನಾಮನಿರ್ದೇಶಿತರಿಗೆ ಭರವಸೆಯ ಆರ್ಥಿಕ ನೆರವನ್ನು ಖಚಿತಪಡಿಸುತ್ತದೆ. ಯೋಜನೆಗೆ ಸೇರುವುದು ಹೇಗೆ? ಅಟಲ್ ಪಿಂಚಣಿ ಯೋಜನೆಗೆ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC, ICICI ನಂತಹ ಪ್ರಮುಖ ಬ್ಯಾಂಕುಗಳ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಆಪ್ಗಳ ಮೂಲಕ ನೀವು ನೇರವಾಗಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಮೊದಲು ನಿಮ್ಮ ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ಗೆ ಲಾಗಿನ್ ಆಗಿ, ಅಲ್ಲಿರುವ Social Security Schemes ಅಥವಾ Services ವಿಭಾಗದಲ್ಲಿ 'Atal Pension Yojana' ಎಂಬ ಆಯ್ಕೆಯನ್ನು ಹುಡುಕಿ. ನಂತರ, ಯೋಜನೆಗೆ ಲಿಂಕ್ ಮಾಡಬೇಕಾದ ನಿಮ್ಮ ಉಳಿತಾಯ ಖಾತೆಯನ್ನು ಆರಿಸಿ ಮತ್ತು ನಿಮಗೆ ಬೇಕಾದ ಪಿಂಚಣಿ ಮೊತ್ತವನ್ನು ( 1,000 ರಿಂದ ರೂ. 5,000 ರೂ.) ಹಾಗೂ ವಂತಿಗೆ ಪಾವತಿಸುವ ಅವಧಿಯನ್ನು (ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ) ಆಯ್ಕೆ ಮಾಡಿ. ಅರ್ಜಿಯಲ್ಲಿ ನಿಮ್ಮ ನಾಮನಿರ್ದೇಶಿತರ (ವಾರಸುದಾರರ) ವಿವರಗಳನ್ನು ಭರ್ತಿ ಮಾಡಿ; ಸಾಮಾನ್ಯವಾಗಿ ಸಂಗಾತಿಯು ಮೊದಲ ನಾಮನಿರ್ದೇಶಿತರಾಗಿರುತ್ತಾರೆ. ಅಂತಿಮವಾಗಿ, ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸುವ ಮೂಲಕ ಅರ್ಜಿಯನ್ನು ಸಲ್ಲಿಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಅಟಲ್ ಪಿಂಚಣಿ ಯೋಜನೆಯ ವಿಸ್ತರಣೆಯ ಪ್ರಮುಖ ಅಂಶಗಳು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಮುಂದಿನ 5 ವರ್ಷಗಳ ಕಾಲ, ಅಂದರೆ ಆರ್ಥಿಕ ವರ್ಷ 2030-31ರವರೆಗೆ ಮುಂದುವರಿಸಲು ನಿರ್ಧರಿಸಿದೆ. ಯೋಜನೆಯ ವಿಸ್ತರಣೆಯ ಜೊತೆಗೆ, ಆಡಳಿತಾತ್ಮಕ ವೆಚ್ಚಗಳು, ಜಾಗೃತಿ ಅಭಿಯಾನಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಭರಿಸಲು ಸರ್ಕಾರ ಹಣಕಾಸಿನ ನೆರವನ್ನು ನೀಡಲಿದೆ. ಇದು ಹಳ್ಳಿಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಯೋಜನೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಸಹಕಾರಿಯಾಗಲಿದೆ. ಯೋಜನೆಯ ಅಡಿಯಲ್ಲಿ ಚಂದಾದಾರರು ತಮ್ಮ 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 1,000 ರೂ. ರಿಂದ 5,000 ರೂ. ವರೆಗೆ ಗ್ಯಾರಂಟಿ ಪಿಂಚಣಿಯನ್ನು ಪಡೆಯುತ್ತಾರೆ. ಇದು ಚಂದಾದಾರರು ಆಯ್ದುಕೊಳ್ಳುವ ಪಿಂಚಣಿ ಸ್ಲ್ಯಾಬ್ ಮತ್ತು ಅವರು ನೀಡುವ ಕೊಡುಗೆಯ ಮೇಲೆ ಅವಲಂಬಿತವಾಗಿರುತ್ತದೆ. ಅಟಲ್ ಪಿಂಚಣಿಗೆ 8.66 ಕೋಟಿ ಚಂದಾದಾರರ ಸೇರ್ಪಡೆ ಅಟಲ್ ಪಿಂಚಣಿ ಯೋಜನೆಯು ಕಳೆದ ಕೆಲವು ವರ್ಷಗಳಲ್ಲಿ ಅಪಾರ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿದ್ದು, ಅಧಿಕೃತ ಅಂಕಿಅಂಶಗಳ ಪ್ರಕಾರ 2026ರ ಜನವರಿ 19ರ ವೇಳೆಗೆ ದೇಶಾದ್ಯಂತ ಸುಮಾರು 8.66 ಕೋಟಿಗೂ ಹೆಚ್ಚು ಚಂದಾದಾರರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.
ಪ್ರಯಾಗರಾಜ್ನಲ್ಲಿ ಜನಸಾಗರ: ವಸಂತ ಪಂಚಮಿ ಅಂಗವಾಗಿ 1 ಕೋಟಿಗೂ ಅಧಿಕ ಭಕ್ತರಿಂದ ಗಂಗಾ ಸ್ನಾನ
ಪ್ರಯಾಗರಾಜ್: ಪವಿತ್ರ ಮಾಘ ಮಾಸದ ಪ್ರಮುಖ ಸ್ನಾನಗಳಲ್ಲಿ ಒಂದಾದ ವಸಂತ ಪಂಚಮಿಯ ಶುಭ ಸಂದರ್ಭದಲ್ಲಿ, ಉತ್ತರ ಪ್ರದೇಶದ ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ಭಕ್ತರ ಮಹಾಪೂರವೇ ಹರಿದುಬಂದಿದೆ. ಶುಕ್ರವಾರ (ಜನವರಿ 23) ಬೆಳಿಗ್ಗೆ 8 ಗಂಟೆಯ ವೇಳೆಗೆ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು
ಹಾಸನ : ಬೀದಿ ಬದಿ ವ್ಯಾಪಾರಿಗಳಿಗೆ ಜೆಡಿಎಸ್ ಕಾರ್ಯಕರ್ತನಿಂದ ಬೆದರಿಕೆ
► ಪ್ರಮೋದ್ ವಿರುದ್ಧ ಕಾನೂನು ಕ್ರಮ ಯಾಕೆ ಆಗಿಲ್ಲ ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ ಜನರು ► ವಿದೇಶಿಗರನ್ನು ಪತ್ತೆ ಹಚ್ಚುವುದು ಪೊಲೀಸರ ಕೆಲಸ ಎಂದ ಪಕ್ಷ
ಈಗ 'ವಿಕಸಿತ ಕೇರಳಂ' ಕಡೆಗೆ ಗಮನ ಹರಿಸುವ ಸಮಯ ಬಂದಿದೆ - ಪ್ರಧಾನಿ ನರೇಂದ್ರ ಮೋದಿ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ಭ್ರಷ್ಟಾಚಾರವನ್ನು ತೀವ್ರವಾಗಿ ಟೀಕಿಸಿದರು. ಸಹಕಾರಿ ಬ್ಯಾಂಕ್ ಹಗರಣ ಮತ್ತು ശബരിമല ಚಿನ್ನ ಕಳ್ಳತನದ ಆರೋಪಗಳನ್ನು ಪ್ರಸ್ತಾಪಿಸಿ, ಬಿಜೆಪಿ ಅಧಿಕಾರಕ್ಕೆ ಬಂದರೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದರು. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಅವರು, ಕೇರಳದಲ್ಲಿ ಎನ್ಡಿಎ ಸರ್ಕಾರದ ಮೂಲಕ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಲಿದೆ ಎಂದರು. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವನ್ನು ಸ್ವಾಗತಿಸಿದರು.
ಹೊಸದಿಲ್ಲಿ: ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಶಾಂತಿ ಸೃಷ್ಟಿಸಲಾಗುವುದು ಎಂದು ಬೆದರಿಕೆ ಒಡ್ಡಿರುವ ಹಾಗೂ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಗುರುಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ. ಗುರುಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಮುನ್ನ ದಿಲ್ಲಿಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಭಂಗಗೊಳಿಸಲಾಗುವುದು ಎಂದು ಪನ್ನೂನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಬಿಡುಗಡೆಗೊಳಿಸಿದ ಬಳಿಕ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಿಲ್ಲಿಯಲ್ಲಿ ದೊಡ್ಡ ಮಟ್ಟದ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಸ್ಲೀಪರ್ ಸೆಲ್ಗಳು ವಾಯುವ್ಯ ದಿಲ್ಲಿಯ ರೋಹಿಣಿ ಹಾಗೂ ನೈರುತ್ಯ ದಿಲ್ಲಿಯ ದಾಬ್ರಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಖಲಿಸ್ತಾನ ಪರ ಭಿತ್ತಿ ಚಿತ್ರಗಳನ್ನು ಅಂಟಿಸಿದ್ದಾರೆ ಎಂದು ಆ ವೀಡಿಯೊದಲ್ಲಿ ಪನ್ನೂನ್ ಹೇಳಿಕೊಂಡಿದ್ದಾನೆ.
ಡೇಟಿಂಗ್ಗಾಗಿ ಕರೆಸಿಕೊಂಡಿದ್ದ ಹುಡುಗನನ್ನು ಹಣಕ್ಕಾಗಿ ಮಾಡೆಲ್ ಪ್ರಿಯಾ ಕೊಲೆ ಮಾಡಿದ್ದರು. ಯುವತಿಗಾಗಿ ಆಕೆಯ ಗಂಡ, ಮಕ್ಕಳು ಹಾಗೂ ಸೋದರಳಿಯನನ್ನು ಕೊಂದ ಹಂತಕರು ರಾಜಸ್ಥಾನದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಈ ಮಧ್ಯೆ ಇಬ್ಬರಿಗೂ ಪ್ರೀತಿ ಹುಟ್ಟಿದೆ. ಪ್ರೀತಿ ಹೆಚ್ಚಾಗಿ ಮುಂದಿನ ಸಂಬಂಧಕ್ಕೆ ಕಾಲಿಡಲು ಮದುವೆಗೆ ನಿರ್ಧರಿಸಿದ ಹಂತಕರು ಈಗ ಜೈಲಿನಿಂದ ಹೊರಬಂದು ಹಸೆಮಣೆ ಏರಲು ತಯಾರಾಗುತ್ತಿದ್ದಾರೆ. ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಟೆಕ್ಕಿಗಳಿಗೆ ಇನ್ಫೋಸಿಸ್ನಿಂದ ಬಂಪರ್ ಸುದ್ದಿ, ಮುಂದಿನ ಆರ್ಥಿಕ ವರ್ಷದಲ್ಲಿ 20,000 ಫ್ರೆಷರ್ಸ್ ನೇಮಕ ಘೋಷಣೆ
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ಅವರು 2027ನೇ ಆರ್ಥಿಕ ವರ್ಷದಲ್ಲಿ 20,000 ಪದವೀಧರರನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಎಐ ತಂತ್ರಜ್ಞಾನದ ಅಳವಡಿಕೆ ಹೆಚ್ಚಾಗುತ್ತಿದ್ದು, ಸಾಫ್ಟ್ವೇರ್ ಅಭಿವೃದ್ಧಿ ಮತ್ತು ಗ್ರಾಹಕ ಸೇವೆಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಪ್ರಸಕ್ತ ವರ್ಷದಲ್ಲೂ ಕಂಪನಿ 20,000 ನೇಮಕಾತಿ ಗುರಿ ಹೊಂದಿದ್ದು, ಈಗಾಗಲೇ ಬಹುತೇಕ ಟಾರ್ಗೆಟ್ ಪೂರೈಸಿರುವುದಾಗಿ ತಿಳಿಸಿದ್ದಾರೆ.
ಕಾರ್ಕಳ | ಮಿಯಾರು ಬಳಿ ಭೀಕರ ಅಪಘಾತ: ತೂಫನ್ ವಾಹನದಲ್ಲಿದ್ದ ಮೂವರು ಮೃತ್ಯು, ಆರು ಮಂದಿಗೆ ಗಾಯ
ಕಾರ್ಕಳ, ಜ.23: ಖಾಸಗಿ ಬಸ್ಸೊಂದು ತುಫಾನ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು ಆರು ಮಂದಿ ಗಾಯಗೊಂಡ ಭೀಕರ ಘಟನೆ ಮಿಯಾರು ಕಂಬಳಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ. ಧರ್ಮಸ್ಥಳದಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಖಾಸಗಿ ಬಸ್, ಕ್ರಾಸ್ನಲ್ಲಿ ಅತೀ ವೇಗದಿಂದ ಚಲಾಯಿಸಿಕೊಂಡು ಬಂದು, ರಸ್ತೆಯ ಇನ್ನೊಂದು ಬದಿಯಲ್ಲಿ ಹೋಗುತ್ತಿದ್ದ ತೂಫನ್ ವಾಹನಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ತುಫಾನ್ ಕಾರ್ಕಳ ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿತ್ತು. ಇದರಿಂದ ತುಫಾನ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದವರು ತೀವ್ರವಾಗಿ ಗಾಯಗೊಂಡರೆನ್ನಲಾಗಿದೆ. ಇವರ ಪೈಕಿ ಮೂವರು ಮೃತಪಟ್ಟು, ಆರು ಮಂದಿ ಗಾಯಗೊಂಡರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಕಾರ್ಕಳ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ) 350 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ) ಸ್ಪೆಷಲಿಸ್ಟ್ ಆಫೀಸರ್ SO ಹುದ್ದೆಯ ನೇಮಕಾತಿಗೆ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 350 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಸಿಬಿಐ ನೇಮಕಾತಿಗೆ ಅರ್ಜಿ ಸಲ್ಲಿಕೆ 2026 ಜನವರಿ 20ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಫೆಬ್ರವರಿ 03ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 2026 ಜನವರಿ 1ರಂತೆ ಕನಿಷ್ಠ ವಯಸ್ಸು 22 ವರ್ಷಗಳು ಮತ್ತು ಗರಿಷ್ಠ ವಯಸ್ಸು 30-35 ವರ್ಷಗಳು (ಹುದ್ದೆವಾರು). ಸೆಂಟ್ರಲ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2026ಕ್ಕೆ ಸಂಬಂಧಿಸಿದ ಹೆಚ್ಚುವರಿ ವಿವರವನ್ನು ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಗಮನಿಸಬಹುದು: https://ibpsreg.ibps.in/cbidec25/ ಪ್ರಮುಖ ದಿನಾಂಕಗಳು * ಆನ್ಲೈನ್ ಅರ್ಜಿ ಆರಂಭ: 20 ಜನವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಫೆಬ್ರವರಿ 2026 * ಶುಲ್ಕ ಪಾವತಿಗೆ ಕೊನೆಯ ದಿನಾಂಕ: 03 ಫೆಬ್ರವರಿ 2026 * ಪರೀಕ್ಷೆ ದಿನಾಂಕ: 2026 ಫೆಬ್ರವರಿ- ಮಾರ್ಚ್ ನಡುವೆ * ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು * ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು. * ವಿವರಗಳಿಗೆ ಅಭ್ಯರ್ಥಿಗಳು ಸಿಬಿಐ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ಅರ್ಜಿ ಶುಲ್ಕ * ಜನರಲ್/ಒಬಿಸಿ/ಇಡಬ್ಲ್ಯುಎಸ್: 850 ರೂ. * ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ: 175 ರೂ. * ಮಹಿಳೆಯರಿಗೆ: 175 ರೂ. * ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ವಯೋಮಿತಿ ಕನಿಷ್ಢ ವರ್ಷ: 22 ವರ್ಷಗಳು ಗರಿಷ್ಠ ವರ್ಷ: 30 ವರ್ಷಗಳು (ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್-1) ಗರಿಷ್ಠ ವರ್ಷ: 25-25 ವರ್ಷಗಳು (ವಿದೇಶಿ ವಿನಿಮಯ ಅಧಿಕಾರಿ) ಸೆಂಟ್ರಲ್ ಬ್ಯಾಂಕ್ ನೇಮಕಾತಿ ಹುದ್ದೆಗೆ ಅವರ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡುತ್ತದೆ. ಒಟ್ಟು ಹುದ್ದೆಗಳು 350 ಹುದ್ದೆಗಳು ಹುದ್ದೆಯ ಹೆಸರು ಒಟ್ಟು ಹುದ್ದೆಗಳು ವಿದೇಶಿ ವಿನಿಮಯ ಅಧಿಕಾರಿ 50 ಹುದ್ದೆಗಳು ಮಾರ್ಕೆಟಿಂಗ್ ಅಧಿಕಾರಿ 300 ಹುದ್ದೆಗಳು ವರ್ಗವಾರು ನೇಮಕಾತಿ ಹುದ್ದೆಯ ಹೆಸರು ಜನರಲ್| ಒಬಿಸಿ| ಇಡಬ್ಲ್ಯುಎಸ್| ಎಸ್ಸಿ| ಎಸ್ಟಿ ವಿದೇಶಿ ವಿನಿಮಯ ಅಧಿಕಾರಿ 22| 13| 05| 07| 03 ಮಾರ್ಕೆಟಿಂಗ್ ಅಧಿಕಾರಿ 122| 81| 30| 45| 22 ಅರ್ಹತೆಗಳು ವಿದೇಶಿ ವಿನಿಮಯ ಅಧಿಕಾರಿ: ಅಭ್ಯರ್ಥಿಗಳು ಪದವಿ ಜೊತೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ & ಫೈನಾನ್ಸ್ನಿಂದ ವಿದೇಶಿ ವಿನಿಮಯ ಕಾರ್ಯನಿರ್ವಹಣೆಗಳಲ್ಲಿ ಪ್ರಮಾಣಪತ್ರವನ್ನು ಹೊಂದಿರಬೇಕು. ಅವರಿಗೆ ಕನಿಷ್ಠ 5 ವರ್ಷ ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಇರಬೇಕು. ಮಾರ್ಕೆಟಿಂಗ್ ಅಧಿಕಾರಿ ಅಭ್ಯರ್ಥಿಗಳು ಪದವಿ ಜೊತೆಗೆ MBA / PGDM / PGDBM / PGPM ಅರ್ಹತೆಯನ್ನು ಹೊಂದಿರಬೇಕು. ಅವರು ಕನಿಷ್ಠ 02 ವರ್ಷಗಳ ಸಂಬಂಧಿತ ಕೆಲಸದ ಅನುಭವ ಹೊಂದಿರಬೇಕು. ಆಯ್ಕೆ ಪ್ರಕ್ರಿಯೆ * ಲಿಖಿತ ಪರೀಕ್ಷೆ * ಸಂದರ್ಶನ * ದಾಖಲೆ ಪರಿಶೀಲನೆ
ರಾಹುಲ್ ಗಾಂಧಿಯವರಿಂದ ನಿರ್ಲಕ್ಷ್ಯ ಆರೋಪ: ಕೇರಳ ಕಾಂಗ್ರೆಸ್ ಕಾರ್ಯತಂತ್ರ ಸಭೆಗೆ ಶಶಿ ತರೂರ್ ಗೈರು
ಹೊಸದಿಲ್ಲಿ: ಇತ್ತೀಚೆಗೆ ನಡೆದ ಪಕ್ಷದ ಸಮಾರಂಭವೊಂದರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮನ್ನು ಗುರುತಿಸದೆ ನಿರ್ಲಕ್ಷಿಸಿದ್ದಾರೆ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹಿರಿಯ ಸಂಸದ ಶಶಿ ತರೂರ್ ಅವರು ಕೇರಳ ವಿಧಾನಸಭಾ ಚುನಾವಣೆಯ ಕಾರ್ಯತಂತ್ರ ಚರ್ಚೆಗೆ ಪಕ್ಷದ ಕೇಂದ್ರ ನಾಯಕತ್ವ ಕರೆದಿದ್ದ ಸಭೆಗೆ ಗೈರುಹಾಜರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರೆದಿದ್ದ ಈ ಸಭೆಗೆ ಕೇರಳ ಕಾಂಗ್ರೆಸ್ನ ಹಿರಿಯ ನಾಯಕರನ್ನು ಆಹ್ವಾನಿಸಲಾಗಿತ್ತು. ರಾಜ್ಯ ಘಟಕದ ಅಧ್ಯಕ್ಷ ಸನ್ನಿ ಜೋಸೆಫ್, ವಿಧಾನಸಭಾ ಪಕ್ಷದ ನಾಯಕ ವಿ.ಡಿ. ಸತೀಶನ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಚೆನ್ನಿತ್ತಲ ಸೇರಿದಂತೆ ಶಶಿ ತರೂರ್ ಅವರನ್ನೂ ಆಹ್ವಾನಿಸಲಾಗಿತ್ತು. ಆದರೆ, ತರೂರ್ ಅವರು ಸಭೆಗೆ ಗೈರುಹಾಜರಾಗಲು ನಿರ್ಧರಿಸಿದ್ದು, ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ತಮಗೆ ಸೂಕ್ತ ಗೌರವ ದೊರಕಲಿಲ್ಲ ಎಂಬ ಅಸಮಾಧಾನವೇ ಇದಕ್ಕೆ ಹಿನ್ನೆಲೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಜನವರಿ 19ರಂದು ಕೊಚ್ಚಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯ ಸಾಧಿಸಿದವರನ್ನು ಅಭಿನಂದಿಸಲು ನಡೆದ ‘ಮಹಾ ಪಂಚಾಯತ್’ ಕಾರ್ಯಕ್ರಮದಲ್ಲಿ, ರಾಹುಲ್ ಗಾಂಧಿ ಹಲವು ನಾಯಕರನ್ನು ಹೆಸರಿನೊಂದಿಗೆ ಉಲ್ಲೇಖಿಸಿದರೂ, ನಾಲ್ಕು ಬಾರಿ ಸಂಸದರಾಗಿರುವ ತಿರುವನಂತಪುರಂ ಸಂಸದ ಶಶಿ ತರೂರ್ ಅವರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಈ ಘಟನೆಯೇ ತರೂರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ. ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದೇ ಕಾರಣದಿಂದ ತರೂರ್ ಅವರು ಶುಕ್ರವಾರ ನಡೆಯಬೇಕಿದ್ದ ಸಭೆಗೆ ಗೈರು ಹಾಜರಾಗಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದರ ನಡುವೆ, ತರೂರ್ ಅವರು ಶುಕ್ರವಾರ ಹಾಗೂ ಶನಿವಾರ ನಡೆಯುತ್ತಿರುವ ಕೇರಳ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶುಕ್ರವಾರ ಅವರು ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮತ್ತು ಮಾನಸಿ ಸುಬ್ರಮಣಿಯಂ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಅವರು ಎರಡು ಸಂವಾದ ನಡೆಸಲಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ, ಕಾಂಗ್ರೆಸ್ ಲೋಕಸಭಾ ಮುಖ್ಯ ಸಚೇತಕ ಕೊಡಿಕ್ಕುನ್ನಿಲ್ ಸುರೇಶ್, ತರೂರ್ ಅವರಿಗೆ ತಿರುವನಂತಪುರಂನಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮಗಳಿದ್ದು, ಅವುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಲಭ್ಯತೆಯ ಬಗ್ಗೆ ತರೂರ್ ಅವರು ಪಕ್ಷದ ನಾಯಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು ಎಂದು ಅವರು ಹೇಳಿದರು. ಕಾಂಗ್ರೆಸ್ ಕೇರಳ ಘಟಕದ ಅಧ್ಯಕ್ಷ ಸನ್ನಿ ಜೋಸೆಫ್ ಕೂಡ ತರೂರ್ ಅವರಿಗೆ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ವಯನಾಡಿನಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಮಾವೇಶದಲ್ಲಿ, ಕೇರಳದ ನಾಯಕರು ಒಗ್ಗಟ್ಟಿನಿಂದ ಮುಂದಿನ ಚುನಾವಣೆಯನ್ನು ಎದುರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂಬ ಸಂದೇಶ ಹೊರಬಂದಿತ್ತು. ಆ ಸಮಾವೇಶದಲ್ಲಿ ಹಿರಿಯ ನಾಯಕರು ತರೂರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಮಹತ್ವಾಕಾಂಕ್ಷೆ ಇದ್ದರೂ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಇಲ್ಲ ಎಂದು ತರೂರ್ ಅವರು ತಿಳಿಸಿದ್ದರು. ಕಳೆದ ಕೆಲವು ತಿಂಗಳಿಂದ ಶಶಿ ತರೂರ್ ಮತ್ತು ಕಾಂಗ್ರೆಸ್ ನಾಯಕತ್ವದ ನಡುವೆ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗುತ್ತಿವೆ. ವಿವಿಧ ರಾಷ್ಟ್ರೀಯ ವಿಚಾರಗಳಲ್ಲಿ ಅವರು ವ್ಯಕ್ತಪಡಿಸಿದ ನಿಲುವುಗಳು ಪಕ್ಷದ ಅಧಿಕೃತ ರೇಖೆಗೆ ವಿರುದ್ಧವಾಗಿವೆ ಎಂಬ ಟೀಕೆಗಳು ಕೇಳಿಬಂದಿದ್ದವು. ಕಳೆದ ಮೇ ತಿಂಗಳಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ‘ಆಪರೇಷನ್ ಸಿಂಧೂರ್’ ಕುರಿತು ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರಿಂದ ಪಕ್ಷದ ಅಸಮಾಧಾನ ಮತ್ತಷ್ಟು ತೀವ್ರಗೊಂಡಿತ್ತು. ಇದಲ್ಲದೆ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ರಾಜಕೀಯ ಪರಂಪರೆಯನ್ನು ಸಮರ್ಥಿಸಿಕೊಂಡು ‘ರಾಜವಂಶೀಯ ರಾಜಕೀಯ’ ಕುರಿತು ಪ್ರಶ್ನೆ ಎತ್ತಿದ ತರೂರ್ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದವು. ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರೊಂದಿಗೆ ಅಡ್ವಾಣಿಯವರನ್ನು ಸಮಾನಾಂತರವಾಗಿಡುವ ಪ್ರಯತ್ನದ ಭಾಗವಾಗಿ, ಅವರ ದೀರ್ಘಕಾಲದ ಸಾರ್ವಜನಿಕ ಸೇವೆಯನ್ನು ‘ಒಂದು ಕಂತಿಗೆ ಇಳಿಸಿ ಅಳಿಯುವುದು ಅನ್ಯಾಯ’ ಎಂದು ತರೂರ್ ಹೇಳಿದ್ದರು. ಇದಕ್ಕೂ ಮೊದಲು, ತೀವ್ರ ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರೂ ಪ್ರಧಾನಿ ಮೋದಿ ಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಿನದ ಮುಂದಿನ ದಿನವೇ, 12 ರಾಜ್ಯಗಳಲ್ಲಿ ನಡೆದ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣಾ ಪ್ರಕ್ರಿಯೆ ಪರಿಶೀಲನೆಗಾಗಿ ಕಾಂಗ್ರೆಸ್ ನಾಯಕತ್ವ ಕರೆದಿದ್ದ ಮತ್ತೊಂದು ಸಭೆಯನ್ನೂ ತರೂರ್ ಅವರು ತಪ್ಪಿಸಿಕೊಂಡಿದ್ದರು.
ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾಮಾಜಿಕ ಜಾಗೃತಿಯೂ ಬಹಳ ಮುಖ್ಯ : ಸಚಿವ ದಿನೇಶ್ ಗುಂಡೂರಾವ್
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ
ಬಿ.ಕೆ.ಹರಿಪ್ರಸಾದ್ ಅಮಾನತಿಗೆ ಬಿಜೆಪಿ ಪಟ್ಟು : ವಿಧಾನಪರಿಷತ್ನಲ್ಲಿ ಗದ್ದಲ
ಬೆಂಗಳೂರು : ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಅಮಾನತು ಮಾಡಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ವಿಧಾನಪರಿಷತ್ನಲ್ಲಿ ಭಾರೀ ಗದ್ದಲ ಉಂಟಾಯಿತು. ರಾಜ್ಯಪಾಲರು ಆಗಮಿಸಿದ ವೇಳೆ ಕಾಂಗ್ರೆಸ್ (‘ಕೈ’) ಸದಸ್ಯರು ತೋರಿದ ಗೂಂಡಾ ವರ್ತನೆ ಸರಿಯಲ್ಲ ಎಂದು ಆರೋಪಿಸಿದ ಬಿಜೆಪಿ ಸದಸ್ಯರು,ಬಿ.ಕೆ. ಹರಿಪ್ರಸಾದ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂಚಿತ ನೋಟಿಸ್ ನೀಡಲಾಗಿಲ್ಲ. ಹೀಗಾಗಿ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು. ಇದರಿಂದ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಇದರಿಂದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ನಿಯಂತ್ರಣ ತಪ್ಪುವ ಹಂತಕ್ಕೆ ತಲುಪಿದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿ ವಿಧಾನಪರಿಷತ್ ಕಲಾಪವನ್ನು ಕೆಲಕಾಲ ಮುಂದೂಡಿದರು.

21 C