ಡಿ. 27: ಗಜೇಂದ್ರಗಡದಲ್ಲಿ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಮಂಗಳೂರು, ಡಿ.25: ಮುಸ್ಲಿಮ್ ಲೇಖಕರ ಸಂಘವು ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ಕೊಡಮಾಡುವ 2024ನೇ ಸಾಲಿನ ರಾಜ್ಯ ಮಟ್ಟದ ’ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಹಾಗೂ ಕನ್ನಡ ಮತ್ತು ಉರ್ದು ಕವಿಗೋಷ್ಠಿಯು ಡಿ.27ರಂದು ಬೆಳಗ್ಗೆ 10:30ಕ್ಕೆ ಗಜೇಂದ್ರಗಡದ ಶ್ರೀಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಸ್ಪೀಕರ್ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ.ಐ.ಜೆ. ಮ್ಯಾಗೇರಿ (ಕೃತಿ: ಜೈಲ್ ಡೈರಿ) ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಡಾ.ಎಚ್.ಕೆ. ಪಾಟೀಲ್, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್, ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ಭಾಗವಹಿಸಲಿದ್ದಾರೆ. ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಉರ್ದು ಕವಿಗೋಷ್ಠಿಯಲ್ಲಿ ಎ.ಎಸ್.ಮಕಾನದಾರ, ಡಾ. ಹಸೀನಾ ಖಾದ್ರಿ, ಶಿಲ್ಪಾಮ್ಯಾಗೇರಿ, ಮುಹಮ್ಮದ್ ಅರ್ಶದ್ ಹಿರೇಹಾಳ, ಮುರ್ತುಜಾ ಬೇಗಂ ಕೊಡಗಲಿ, ಅನ್ವರ್ ಅಹ್ಮದ್ ವಣಗೇರಿ, ಖಾಝಿ ಶಬ್ಬೀರ್ ಅಹ್ಮದ್, ಶಬ್ಬೀರ್ ಮನ್ಸೂರಿ ಕವನ ವಾಚಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಡಿ.27ರಂದು ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ಚಾಲನೆ
ಮಂಗಳೂರು: ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್ ಆಶ್ರಯದಲ್ಲಿ ‘ನಶೆ ಮುಕ್ತ ಮಂಗಳೂರು’ ಅಭಿಯಾನವನ್ನು 102 ಕಾರ್ಯಕ್ರಮಗಳ ಸಹಿತ ದೊಡ್ಡ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಡಿ.27ರಂದು ಬೆಳಗ್ಗೆ 10:30ಕ್ಕೆ ಟಿ.ಎಂ.ಎ.ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಮೇಕ್ ಎ ಚೇಂಜ್ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಸುಹೈಲ್ ಕಂದಕ್ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್.ವಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ , ಮಂಗಳೂರು ಬಿಷಪ್, ರಾಮಕೃಷ್ಣ ಮಠದ ಸ್ವಾಮೀಜಿಗಳು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ, ತುಳುನಾಡಿನ ಪ್ರಸಿದ್ಧ ನಟರು ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ವಿಶೇಷವಾಗಿ ಯುವಕರಿಗೆ ,ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ. ಈ ವರೆಗೆ 6 ಕಾಲೇಜ್ ಕ್ಯಾಂಪಸ್ಗಳಲ್ಲಿ ಜಾಗೃತಿ ಕಾರ್ಯಾಗಾರ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪೋಸ್ಟರ್ ಅಭಿಯಾನ, ಸಂಘ ಮತ್ತು ಸಂಸ್ಥೆಗಳಲ್ಲಿ ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ಕಾರ್ಯಕ್ರಮವು ಯುವಕರಲ್ಲಿ ಮಾದಕದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸೃಜನಾತ್ಮಕ ಸಮಾಜವನ್ನು ಕಟ್ಟುವ ಉದ್ದೇಶವನ್ನು ಹೊಂದಿದ್ದು , ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ಸಂಬಂಧಿಸಿ ಮುಂದಿನ ಜನವರಿ ಯಲ್ಲಿ ಮ್ಯಾರಥಾನ್ ಆಯೋಜಿಸಲು ಚಿಂತನೆ ನಡೆಸಲಾಗಿದ್ದು, ಈ ಕಾರ್ಯಕ್ರಮದಲ್ಲಿ 15,000-20,000 ಮಂದಿ ಭಾಗವಹಿಸಲಿದ್ದಾರೆ ಎಂದು ಸುಹೈಲ್ ಕಂದಕ್ ವಿವರಿಸಿದರು. ಮಂಗಳೂರಿನ ಸೈಕೋಲಾಜಿಸ್ಟ್ ಡಾ. ರುಕ್ಸಾನ ಮಂಗಳೂರು, ಬಾರ್ನ್ ಅಗೇನ್ ರಿಕವರಿ ಸೆಂಟರ್ನ ಸಹ ಸ್ಥಾಪಕ ಗುರು ಪ್ರಸಾದ್, ಮೇಕ್ ಎ ಚೇಂಜ್ ಫೌಂಡೇಶನ್ನ ಸಹ ಸ್ಥಾಪಕ ಬಶೀರ್ ಡಿಎಕ್ಸ್ , ಭೀಮ್ ಅರ್ಮಿ ಕರ್ನಾಟಕ ಏಕ್ತಾ ಮಿಷನ್ನ ರಾಜ್ಯ ಸಂಯೋಜಕ ದಿನೇಶ್ ಮುಳೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹುತಾತ್ಮ ಯೋಧ ಅನೂಪ್ ಪೂಜಾರಿ ಬೀಜಾಡಿ ಪುಣ್ಯಸ್ಮರಣೆ
ಕುಂದಾಪುರ, ಡಿ.25: ದೇಶದ ರಕ್ಷಣೆಗೆ ಹೋರಾಡಿ ವೀರಮರಣವನ್ನಪ್ಪಿದ ಬೀಜಾಡಿಯ ಹೆಮ್ಮೆಯ ಪುತ್ರ ಅನೂಪ್ ಪೂಜಾರಿ ಬೀಜಾಡಿ ಅವರ ನೆನಪಿಗಾಗಿ 50 ಲಕ್ಷ ರೂ. ಅನುದಾನದೊಂದಿಗೆ ಭವ್ಯ ಸಭಾಂಗಣ ಹಾಗೂ ಅನೂಪ್ ಪುತ್ಥಳಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ಬೀಜಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಹೇಳಿದ್ದಾರೆ. ಅವರು ಬುಧವಾರ ಸಂಜೆ ಬೀಜಾಡಿಯ ಕಡಲ ತೀರದಲ್ಲಿನ ವೀರ ಹುತಾತ್ಮ ಯೋಧ ಅನೂಪ್ ಪೂಜಾರಿ ಬೀಜಾಡಿ ಅವರ ಸಮಾಧಿ ಸ್ಥಳದಲ್ಲಿ ಹಮ್ಮಿಕೊಳ್ಳಲಾದ ಮೊದಲ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದರು. ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ನಮ್ಮೂರಿನ ಹೆಮ್ಮೆಯ ಹುತಾತ್ಮ ಯೋಧ ಅನೂಪ್ ಪೂಜಾರಿಯ ಅಗಲಿಕೆ ನಮಗೆಲ್ಲ ಅತೀವ ದುಃಖ ತಂದಿದೆ. ಅವರ ಹೆಸರು ದೇಶ ಮಟ್ಟದಲ್ಲಿ ಶಾಶ್ವತವಾಗಿ ಉಳಿಯುವಲ್ಲಿ ನಾವೆಲ್ಲರೂ ಶ್ರಮವಹಿಸಬೇಕು. ಅದಕ್ಕಾಗಿ ಅವರ ಸಮಾಧಿ ಸ್ಥಳ ವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡುವುದರ ಜೊತೆಗೆ ನಾವೆಲ್ಲರೂ ಸ್ವಚ್ಛತೆಗೆ ಗಮನಕೊಡಬೇಕು. ಆ ಮೂಲಕ ಅನೂಪ್ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಬೇಕು ಎಂದರು. ಆರಂಭದಲ್ಲಿ ಗ್ರಾಮಸ್ಥರು, ಅನೂಪ್ ಅಭಿಮಾನಿಗಳು ಹಣತೆ ಹಚ್ಚಿ ಪುಣ್ಯಸ್ಮರಣೆ ಮಾಡಿದರು. ಬಳಿಕ ಅನೂಪ್ ಪೂಜಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬೀಜಾಡಿ ಗೆಳೆಯರ ಬಳಗದ ವತಿಯಿಂದ ಅನೂಪ್ ಪೂಜಾರಿ ಸಮವಸ್ತ್ರದಲ್ಲಿರುವ ಭಾವಚಿತ್ರದ ಕೀ ಚೈನ್ ಬಿಡುಗಡೆ ಗೊಳಿಸಲಾಯಿತು. ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಅನೂಪ್ ಪೂಜಾರಿ ತಾಯಿಗೆ ಕೀ ಚೈನ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅನೂಪ್ ಪೂಜಾರಿ ತಾಯಿ ಹಾಗೂ ಮನೆಯವರು, ಬೀಜಾಡಿ ಗ್ರಾಮ ಪಂಚಾಯತ್ ಪಿಡಿಒ ಪ್ರಕಾಶ್ ಪೂಜಾರಿ, ಸದಸ್ಯರಾದ ಶೇಖರ ಜಾತ್ರೆಬೆಟ್ಟು, ಮಂಜುನಾಥ ಕುಂದರ್, ಸುಮತಿ ನಾಗರಾಜ್, ಅನಿಲ್ ಚಾತ್ರಬೆಟ್ಟು, ಪತ್ರಕರ್ತ ಗಣೇಶ್ ಬೀಜಾಡಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.
Bengaluru | ಮದ್ಯ ಕುಡಿದು ಪ್ರತಿನಿತ್ಯ ಜಗಳ ಮಾಡುತ್ತಿದ್ದ ಪತಿಯನ್ನು ಇರಿದು ಕೊಂದ ಪತ್ನಿ!
ಬೆಂಗಳೂರು : ಪ್ರತಿನಿತ್ಯ ಮದ್ಯ ಕುಡಿದು ಬಂದು ವಿನಾಕಾರಣ ಜಗಳ ಮಾಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ. ಅಸ್ಸಾಂ ಮೂಲದ ರಾಜೀವ್ ರಜಪೂತ್(28) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಎಂಟು ವರ್ಷದ ಹಿಂದೆ ರುಬಿನಾ ಕೌರ್ ಎಂಬುವರನ್ನು ರಾಜೀವ್ ರಜಪೂತ್ ಮದುವೆಯಾಗಿದ್ದು, ದಂಪತಿಗೆ ಒಂದು ಮಗುವಿದೆ. ಈ ಕುಟುಂಬ ವರ್ತೂರಿನ ಮುನೇಕೊಳಲು ಶಿರಡಿ ಸಾಯಿಬಾಬಾ ದೇವಸ್ಥಾನದ ಬಳಿ ವಾಸವಾಗಿದೆ. ರಾಜೀವ್ ರಜಪೂತ್ ಕೆಲಸಕ್ಕೆ ಹೋಗದೆ ಪ್ರತಿದಿನ ಮದ್ಯ ಕುಡಿದು ಮನೆಗೆ ಬಂದು ವಿನಾಕಾರಣ ಪತ್ನಿ ರುಬಿನಾ ಜೊತೆ ಜಗಳವಾಡುತ್ತಿದ್ದನು ಎಂದು ತಿಳಿದುಬಂದಿದೆ. ಕುಟುಂಬ ನಿರ್ವಹಣೆಗಾಗಿ ತಾನು ಕೆಲಸಕ್ಕೆ ಹೋಗುವುದಾಗಿ ರುಬಿನಾ ಕೇಳಿದರೂ ಪತಿ ಕೆಲಸಕ್ಕೆ ಕಳುಹಿಸಿಲ್ಲ. ಹಾಗೆಯೇ ದಿನ ದೂಡುತ್ತಿದ್ದನು. ಬುಧವಾರ(ಡಿ.24) ರಾತ್ರಿ ಕುಡಿದು ಬಂದು ಪತ್ನಿ ಜೊತೆ ಜಗಳವಾಡಿದ್ದಾನೆ. ಗುರುವಾರ(ಡಿ.25) ಬೆಳಗಿನ ಜಾವ ರಾಜೀವ್ ಮತ್ತೆ ಪತ್ನಿ ಜೊತೆ ಜಗಳವಾಡಿದಾಗ ಆತನ ವರ್ತನೆಯಿಂದ ರೋಸಿ ಹೋದ ಆಕೆ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ಪತಿಯ ಎದೆ, ಹೊಟ್ಟೆ ಸೇರಿದಂತೆ ಇನ್ನಿತರ ದೇಹದ ಭಾಗಗಳಿಗೆ ಇರಿದಿದ್ದಾಳೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ರಾಜೀವ್ ರಜಪೂತ್ ಕುಸಿದು ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೂಗಾಟದ ಶಬ್ದ ಕೇಳಿ ಅಕ್ಕಪಕ್ಕದ ನಿವಾಸಿಗಳು ಇವರ ಮನೆ ಬಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ವ್ಯಕ್ತಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಈ ಸಂಬಂಧ ಮಾಹಿತಿ ಪಡೆದ ವರ್ತೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಖಚಿತವಾಗಿದೆ. ಈ ಬಗ್ಗೆ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ರುಬಿನಾಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿಂಚೋಳಿ | ಮನಸ್ಮೃತಿಯನ್ನು ದಹಿಸಿ ಪ್ರಗತಿಪರರಿಂದ ಪ್ರತಿಭಟನೆ
ಚಿಂಚೋಳಿ: 1927 ಡಿ.25 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಮನಸ್ಮೃತಿಯನ್ನು ದಹಿಸಿದ ಸ್ಮರಣಾರ್ಥವಾಗಿ ಚಿಂಚೋಳಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಚಿಂತಕರೆಲ್ಲರೂ ಸೇರಿಕೊಂಡು ಸಾಂಕೇತಿಕವಾಗಿ ಮನಸ್ಮೃತಿಯ ನಕಲು ಪ್ರತಿಗಳನ್ನು ದಹಿಸಿದರು. ಈ ವೇಳೆ ಬಹುಜನ ಸಮಾಜ ಪಕ್ಷದ ಮುಖಂಡ ಗೌತಮ ಬಿ ಬೊಮ್ಮನಹಳ್ಳಿ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತ ದೇಶಕ್ಕೆ ಸಂವಿಧಾನವನ್ನು ರಚಿಸುವುದಕ್ಕಿಂತ ಮುಂಚೆ ಜಾರಿಯಲ್ಲಿದ್ದ ಮನುಸ್ಮೃತಿಯು ಹಲವಾರು ಉಚ್ಚ ನೀಚ ಪದ್ಧತಿಗಳನ್ನು ಒಳಗೊಂಡಿತ್ತು. ಮನುಸ್ಮೃತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಮಹಿಳೆಯರ ಸ್ಥಿತಿ ಬಹು ಶೋಚನೀಯವಾಗಿತ್ತು. ಈ ಹಿಂದೆ ಭಾರತದಲ್ಲಿ ಗಂಡ ಸತ್ತ ನಂತರ ಅವನ ಚಿತೆಯಲ್ಲಿಯೇ ಅವನ ಹೆಂಡತಿಯನ್ನು ಸಹ ಜೀವಂತವಾಗಿ ಸುಡುವಂತಹ ಪರಿಸ್ಥಿತಿ ಜೀವಂತವಾಗಿತ್ತು. ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಯಾರಿಗೂ ಕಾಣದೆ, ಅಭಿರುಚಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಬದುಕಬೇಕಾಗಿತ್ತು ಇಂತಹ ಕಂದಾಚಾರಗಳನ್ನು ವಿರೋಧಿಸಿ ಅಂಬೇಡ್ಕರ್ ರವರು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿ ಸಮಾನತೆಯನ್ನು ಸಾರಿದರು ಎಂದರು. ಬಳಿಕ ದಲಿತ ಸೇನೆಯ ನಗರ ಘಟಕದ ಅಧ್ಯಕ್ಷ ಚೇತನ ನಿರಾಳ್ಕರ್, ಸುನೀಲ ತ್ರಿಪಾಟಿ, ಗುಂಡಪ್ಪ ಹಸಿರಗುಂಡಗಿ ಸೇರಿದಂತೆ ಇನ್ನಿತರರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಮೇಶ ದೋಟಿಕೊಳ್, ಸಂಜು ಗುರಂಪಳ್ಳಿ, ಅಕ್ಷಯ ಬೊಮ್ಮನಳ್ಳಿ, ರಾಹುಲ್ ಟಿ ಯಾಕಾಪುರ್, ನಾಗಸೇನ್ ಬೊಮ್ಮನಳ್ಳಿ, ಚಂದ್ರು ಐನೋಳ್ಳಿ, ನಾಗು ಚಿಂಚೋಳಿ, ಲಕ್ಷ್ಮಿಕಾಂತ್ ಐನಾಪುರ ಸೇರಿದಂತೆ ಇನ್ನಿತರರಿದ್ದರು.
ಉಡುಪಿ ಜಿಲ್ಲೆ, ಕುಂದಾಪುರದಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ
ಉಡುಪಿ, ಡಿ.25: ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನದ ಅಂಗವಾಗಿ ನಗರದೆಲ್ಲೆಡೆ ಗುರುವಾರ ಸಡಗರ, ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಬೆಳಗ್ಗೆ ಜಿಲ್ಲೆಯ ಬಹುತೇಕ ಎಲ್ಲ ಚರ್ಚ್ಗಳಲ್ಲಿ ಯೇಸುವಿನ ಸಾಮೂಹಿಕ ಆರಾಧನೆ ನಡೆಯಿತು. ಹೆಚ್ಚಿನ ಚರ್ಚುಗಳಲ್ಲಿ ಬುಧವಾರ ರಾತ್ರಿ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಬಲಿಪೂಜೆಗಳು ಜರುಗಿದ್ದು ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದರು. ಗುರುವಾರ ಬೆಳಿಗ್ಗೆ ನಗರದ ಶೋಕಮಾತಾ ಚರ್ಚಿನಲ್ಲಿ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿಸಿ ಕ್ರಿಸ್ಮಸ್ ಸಂದೇಶ ನೀಡಿದರು. ಅಲ್ಲದೆ ಬ್ರಹ್ಮಾವರ, ಮಲ್ಪೆ, ಬಾರ್ಕೂರು, ಬಸ್ರೂರು ಸೇರಿದಂತೆ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕ್ರಿಶ್ಚಿಯನ್ನರು ಮನೆ-ಮನೆಗಳಲ್ಲಿ ತಯಾರಿಸಿದ್ದ ವಿಶೇಷ ಸಿಹಿ ತಿನಿಸಾದ ಕುರ್ಸ್ವಾ ವಿನಿಮಯ ಮಾಡಿಕೊಂಡರು. ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭ ಕೋರಿ ಸಂಭ್ರಮಿಸಿದರು. ಮಧ್ಯಾಹ್ನ ಹಬ್ದದೂಟವನ್ನು ಕುಟುಂಬ ಸದಸ್ಯರು, ಆತ್ಮೀಯರೊಂದಿಗೆ ಸೇರಿ ಸವಿದರು. ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ಧರಿಸಿದ್ದ ಮಕ್ಕಳು, ಚರ್ಚ್ ಆವರಣದಲ್ಲಿ ಸಂಭ್ರಮಿಸಿದರು. ಪರಸ್ಪರ ಕೇಕ್ ಹಾಗೂ ಉಡುಗೊರೆ ವಿನಿಮಯ ಮಾಡಿಕೊಳ್ಳುವ ಮೂಲಕ ಶುಭಾಶಯ ಕೋರಿದರು. ಗುರುವಾರ ಸಂಜೆ ಕೆಲವು ಚರ್ಚ್ಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯಗಳು ಜರುಗಿದವು. ಕುಂದಾಪುರದಲ್ಲಿ ಕ್ರಿಸ್ಮಸ್ ಆಚರಣೆ ಸಡಗರ ಕುಂದಾಪುರ: 455 ವರ್ಷಗಳ ಇತಿಹಾಸವುಳ್ಳ ರಾಜ್ಯ ಕರಾವಳಿಯ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಇಲ್ಲಿನ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24ರ ಸಂಜೆ ಕ್ರಿಸ್ಮಸ್ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಕ್ರಿಸ್ಮಸ್ ಪ್ರಯುಕ್ತ ಮಂಗಳೂರಿನ ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ವಂ. ಐವನ್ ಡಿಸೋಜಾ ದಿವ್ಯ ಬಲಿಪೂಜೆ ಯನ್ನು ಅರ್ಪಿಸಿ ದೇವಪುತ್ರನು ಈ ಜಗತ್ತಿನಲ್ಲಿ ಮನುಷ್ಯನೊಂದಿಗೆ ಜೀವಿಸಲು ಮನುಷ್ಯನಾಗಿ ಹುಟ್ಟಿದ. ಮನುಷ್ಯ ಹೇಗೆ ಜೀವಿಸಬೇಕೆಂದು ತಿಳಿಸಲು ದೇವರು ಮನುಷ್ಯನಾಗಿ ಹುಟ್ಟಿದ್ದು, ದೇವರು ನಮ್ಮೊಂದಿಗೆ ಜೀವಿಸಲು ಬಂದಿ ದ್ದಾರೆ. ಆದರೆ ಇಂದು ದೇವರು ನಮ್ಮೊಂದಿಗೆ ಭೇಟಿ ಮಾಡುವುದಿಲ್ಲ. ಇತರ ಮನುಷ್ಯರ ಮುಖಾಂತರ ನಮಗೆ ಸಹಾಯ ಮಾಡುತ್ತಾ ಮಮತೆ ತೋರಿಸುತ್ತಾರೆ. ಕಷ್ಟ ಕಾರ್ಪ್ಯಣಗಳನ್ನು ನೀಗಿಸುತ್ತಾರೆ ಎಂದರು. ನಾವು ಪುಣ್ಯದ ಕೆಲಸಗಳನ್ನು ಮಾಡಬೇಕು. ಯೇಸು ಯಾವುದೇ ಆಡಂಬರ ಇಲ್ಲದೆ, ಹಟ್ಟಿಯಲ್ಲಿ ಜನಿಸಿದರು. ಹಟ್ಟಿಯಲ್ಲಿ ಅನ್ಯಾಯ ಇಲ್ಲ, ಗೌಜಿ ಗಲಾಟೆ ಇಲ್ಲ, ಅಹಂಕಾರ ಇಲ್ಲ, ದೊಡ್ಡಸ್ತಿಕೆ ಇಲ್ಲ, ಮೇಲು ಕೀಳು ಇಲ್ಲ, ಅಲ್ಲಿ ಶಾಂತಿಯ ವಾತವರಣವಿದೆ. ಇದರ ಸಂದೇಶ ನಾವು ಕೂಡ ಸಾಮಾನ್ಯ ರಂತೆ ಬಡವರಾಗಿ, ಜೀವಿಸಿ ಇತರರಿಗೆ ಸಹಾಯ ಮಾಡುವಂತರರಾಗಬೇಕು ಎಂದು ಸಂದೇಶ ನೀಡಿದರು. ಚರ್ಚಿನ ಧರ್ಮಗುರು ವಂ.ಪೌಲ್ ರೇಗೊ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಿ, ಶುಭಾಶಯ ಕೋರಿ ವಂದಿಸಿದರು. ಐಸಿವೈಎಂ ಸಂಘಟನೆ ಯಿಂದ ವಾಳೆಯವರಿಗೆ ಕೇಕ್ ವಿತರಿಸಲಾಯಿತು.
Bescom Outages: ಬೆಂಗಳೂರಿನಲ್ಲಿ ಪೀಣ್ಯ ಸೇರಿ 80 ಕ್ಕೂ ಅಧಿಕ ಬಡಾವಣೆಗಳಲ್ಲಿ ಶನಿವಾರ, ಭಾನುವಾರ ವಿದ್ಯುತ್ ಕಡಿತ!
ಬೆಂಗಳೂರಿನಲ್ಲಿ ಬೆಸ್ಕಾಂ ಕಾಮಗಾರಿಗಳಿಂದಾಗಿ ಶನಿವಾರ ಮತ್ತು ಭಾನುವಾರ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪೀಣ್ಯ ಮತ್ತು ಸೋಲದೇವನಹಳ್ಳಿ ಸಬ್ಸ್ಟೇಷನ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಬೆಳಿಗ್ಗೆ 10 ರಿಂದ ಸಂಜೆ 5/6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ.
ವಿಧಾನಸಭೆಗೆ ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ : ಬಿ.ವೈ.ವಿಜಯೇಂದ್ರ
ಬೆಂಗಳೂರು : ನಮ್ಮ ಸ್ವಯಂಕೃತ ಅಪರಾಧದಿಂದ ವಿಪಕ್ಷದಲ್ಲಿದ್ದೇವೆ. ನಾವು ಯಾರೂ ಆತಂಕ ಪಡಬೇಕಿಲ್ಲ. ರಾಜ್ಯದ ಜನವಿರೋಧಿ, ಬಡವರ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಕ್ರೋಶ ಹೆಚ್ಚಾಗಿದೆ. 2028ರಲ್ಲಿ ಅಥವಾ ಯಾವಾಗ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ 130-140 ಶಾಸಕರೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೆ ಜನ್ಮದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಇದಕ್ಕಾಗಿ ಪಕ್ಷವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ಸಿನವರು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎನ್ನುತ್ತಾರೆ. ವಾಜಪೇಯಿ, ನರೇಂದ್ರ ಮೋದಿ ಅಥವಾ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಯಾರು ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೋ ಅಂಥ ದೇಶದ್ರೋಹಿಗಳನ್ನು ಬಿಜೆಪಿ ವಿರೋಧಿಸುತ್ತದೆಯೆ ಹೊರತು, ಅಲ್ಪಸಂಖ್ಯಾತ ಸಮುದಾಯದವರನ್ನಲ್ಲ ಎಂದು ಅವರು ತಿಳಿಸಿದರು. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ರಾಜ್ಯದ ಪಟ್ಟಣ ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ. ಇವಿಎಂ ಇರಲಿ, ಬ್ಯಾಲೆಟ್ ಪೇಪರ್ ಇರಲಿ ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು. ಅಟಲ್ ಬಿಹಾರಿ ವಾಜಪೇಯಿ ಹಲವಾರು ಬಾರಿ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪ, ಶಂಕರಮೂರ್ತಿ, ರಾಮಚಂದ್ರೇಗೌಡ, ಜಗದೀಶ್ ಶೆಟ್ಟರ್, ಪಕ್ಷದ ಹಿರಿಯರಿಗೆ ಪ್ರೇರಣೆ ನೀಡಿದ ಮಹಾನ್ ನಾಯಕ ಅವರು. ಕರ್ನಾಟಕವು ಮುಂದೊಂದು ದಿನ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ಕೋಟೆ ಆಗಲಿದೆ ಎಂಬ ದೂರದೃಷ್ಟಿತ್ವ ಅವರಲ್ಲಿತ್ತು ಎಂದು ವಿಜಯೇಂದ್ರ ತಿಳಿಸಿದರು. ಜವಾಹರಲಾಲ್ ನೆಹರೂ ಹಿಂದೆ ಪ್ರಧಾನಮಂತ್ರಿಯಾಗಿದ್ದಾಗ ಅಟಲ್ ಜೀ ಅವರ ಮಾತು, ಭಾಷಣವನ್ನು ಸಂಸತ್ತಿನಲ್ಲಿ ಕೇಳಿದಾಗ ಮುಂದೊಂದು ದಿನ ಅಟಲ್ ಪ್ರಧಾನಿ ಆಗಲಿದ್ದಾರೆ ಎಂದು ತಿಳಿಸಿದ್ದನ್ನು ನೆನಪಿಸಿದರು. ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಮೋದಿ ಅವರ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ನಾವು ಮುನ್ನಡೆಯಬೇಕು ಎಂದು ಅವರು ಕರೆ ನೀಡಿದರು. ವಾಜಪೇಯಿ ಕುರಿತಾದ ಸಾಹಿತ್ಯ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಪೋಖ್ರಾನ್ ಅಣು ಪರೀಕ್ಷೆ ದೇಶಕ್ಕೆ ಹೆಮ್ಮೆ ತಂದ ಸಂದರ್ಭ. ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಕಾರಣ. ಅವರು ಇವತ್ತಿಗೂ ನಮ್ಮ ಮನಸ್ಸಿನಲ್ಲಿ ಇದ್ದಾರೆ. ಅವರ ಆಡಳಿತಾವಧಿಯಲ್ಲಿ ಹಿಂದುಳಿದ ವರ್ಗ, ದಲಿತರ ಒಳಿತಿಗೆ ಹೆಚ್ಚಿನ ಒತ್ತು ಕೊಡುವಂಥ ಕೆಲಸ ಮಾಡಿದ್ದಾರೆ ಎಂದರು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಮಾಜಿ ಶಾಸಕರಾದ ಎಂ.ಡಿ. ಲಕ್ಷ್ಮಿ ನಾರಾಯಣ್, ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅಟಲ್ ಶತಮಾನೋತ್ಸವ ಕಾರ್ಯಕ್ರಮದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ನಾಯಕತ್ವ ಬದಲಾವಣೆ; ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾದ ಡಿ ಕೆ ಶಿವಕುಮಾರ್: ಚರ್ಚೆಯಾಗಿದ್ದೇನು?
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿ ಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲವನ್ನ ಹುಟ್ಟಿಸಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ
ಅಶಕ್ತರಿಗೆ ಮಾನವೀಯ ನೆಲೆಯ ಸಹಾಯ ಸಮಾಜಕ್ಕೆ ಪ್ರೇರಣೆಯಾಗಲಿ: ಸ್ಪೀಕರ್ ಯು.ಟಿ. ಖಾದರ್
► ಆಶಾ ಪ್ರಕಾಶ್ ಶೆಟ್ಟಿ 'ನೆರವು' ಕಾರ್ಯಕ್ರಮ► 4 ಸಾವಿರ ಕುಟುಂಬಗಳಿಗೆ 9.5 ಕೋ.ರೂ ನೆರವು
ಚಿತ್ರದುರ್ಗ ಬಸ್ ಅಪಘಾತ: 5 ವರ್ಷದ ಮಗು ಸೇರಿ 5 ಸಾವು, ಅಪಘಾತಕ್ಕೆ ಕಾರಣ ಬಹಿರಂಗ
ಚಿತ್ರದುರ್ಗ: ಕರ್ನಾಟಕದಲ್ಲಿ ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಗ್ರಾಮದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದಿತ್ತು. ಇದೀಗ ಈ ಅಪಘಾತಕ್ಕೆ ಕಾರಣವೇನು, ಅಪಘಾತದಲ್ಲಿ ಯಾರೆಲ್ಲಾ ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡವರು ಯಾರು ಎನ್ನುವ ಬಗ್ಗೆ ಚಿತ್ರದುರ್ಗದ ಹಿರಿಯೂರು ಗ್ರಾಮಾಂತರ ಪೊಲೀಸ್
ನಾಳೆ ಚುನಾವಣೆ ನಡೆದರೂ ರಾಜ್ಯದಲ್ಲಿ ಬಿಜೆಪಿಗೆ ಬಹುಮತ: ಬಿ.ವೈ.ವಿಜಯೇಂದ್ರ ವಿಶ್ವಾಸ
ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಮೋದಿಜೀ ಅವರ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ನಾವು ಮುನ್ನಡೆಯಬೇಕು. ಕಾಂಗ್ರೆಸ್ ಪಕ್ಷದ ಅಪಪ್ರಚಾರಗಳ ನಡುವೆಯೂ ಬಿಜೆಪಿ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರವು ಭ್ರಷ್ಟಾಚಾರರಹಿತ ಆಡಳಿತವನ್ನು ನರೇಂದ್ರ ಮೋದಿಯವರು ನೀಡುತ್ತಿದ್ದಾರೆ. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ರಾಜ್ಯದ ಪಟ್ಟಣ ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ ಎಂದರು. ಇವಿಎಂ ಇರಲಿ; ಬ್ಯಾಲೆಟ್ ಇರಲಿ ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಅವರು ನುಡಿದರು.
ದೆಹಲಿಯಲ್ಲಿ 'ಅಟಲ್ ಕ್ಯಾಂಟೀನ್'ಗೆ ಚಾಲನೆ: ಕೇವಲ 5 ರೂ.ಗೆ ಸಿಗಲಿದೆ ಹೊಟ್ಟತುಂಬ ಊಟ! ಊಟದ ಮೆನು ಏನು?
ದೆಹಲಿಯ ಬಿಜೆಪಿ ಸರ್ಕಾರ 'ಅಟಲ್ ಕ್ಯಾಂಟೀನ್' ಯೋಜನೆಯನ್ನು ಆರಂಭಿಸಿದೆ. ಇದರಡಿ ಕೇವಲ 5 ರೂಪಾಯಿಗೆ ಪೌಷ್ಟಿಕ ಆಹಾರ ಲಭ್ಯವಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ ಈ ಯೋಜನೆ ಜಾರಿಯಾಗಿದೆ. ಮುಖ್ಯಮಂತ್ರಿ ರೇಖಾ ಗುಪ್ತಾ ಅವರು 45 ಕ್ಯಾಂಟೀನ್ಗಳನ್ನು ಉದ್ಘಾಟಿಸಿದರು. ಬಡವರು ಮತ್ತು ಕಾರ್ಮಿಕರಿಗೆ ಕಡಿಮೆ ದರದಲ್ಲಿ ಉತ್ತಮ ಊಟ ಒದಗಿಸುವುದು ಇದರ ಉದ್ದೇಶವಾಗಿದೆ. ಡಿಜಿಟಲ್ ವ್ಯವಸ್ಥೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ನಡೆಯಲಿದೆ.
RCB:ಕರ್ನಾಟಕದ ಆರ್ಸಿಬಿ ಸ್ಟಾರ್ ಬೌಲರ್ 2026ನೇ ಆವೃತ್ತಿಯ ಐಪಿಎಲ್ನಿಂದ ಬ್ಯಾನ್ ಸಾಧ್ಯತೆ
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ತಂಡ ಮತ್ತಷ್ಟು ಬಲಿಷ್ಠವಾಗಿದ್ದು, ಮುಂದಿನ ಬಾರಿಯೂ ಕಪ್ ಗೆಲ್ಲುವ ಭರವಸೆಯಲ್ಲಿದೆ. ಮತ್ತೊಂದೆಡೆ, ಸ್ಟಾರ್ ಆಟಗಾರ ಬ್ಯಾನ್ ಆಗುವ ಸಾಧ್ಯತೆಯಿದೆ. ಹಾಗಾದ್ರೆ, ಯಾರು ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆರ್ಸಿಬಿ 18ನೇ
ನವಿ ಮುಂಬೈ ವಿಮಾನ ನಿಲ್ದಾಣ; ಮೊದಲ ಪ್ರಯಾಣಿಕರನ್ನ ಸ್ವಾಗತಿಸಿದ ಗೌತಮ್ ಅದಾನಿ
ಮುಂಬೈ: ನವಿ ಮುಂಬೈ ವಿಮಾನ ನಿಲ್ದಾಣ ಇಂದು(ಡಿಸೆಂಬರ್ 25) ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಮೊದಲ ಪ್ರಯಾಣಿಕರಿಗೆ ಸ್ವಾಗತಿಸಿದರು. ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಮೊದಲ ವಾಣಿಜ್ಯ ವಾಯುಯಾನ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಮೂಲಕ ಭಾರತೀಯ ವಿಮಾನಯಾನಕ್ಕೆ ಒಂದು ಮಹತ್ವದ ದಿನವನ್ನು ಕಂಡಿತು, ಐತಿಹಾಸಿಕ ಉದ್ಘಾಟನೆಯ ಸಮಯದಲ್ಲಿ ಅದಾನಿ
ಯಾದಗಿರಿ | ‘ಮನುಸ್ಮೃತಿ ದಹನ’ ದಿನಾಚರಣೆ
ಮನುಸ್ಮೃತಿ ದಹನವು ಅಂಬೇಡ್ಕರ್ ಅವರ ತಾತ್ಕಾಲಿಕ ನಿರ್ಧಾರವಲ್ಲ : ಡಾ.ಎಸ್.ಎಸ್.ನಾಯಕ
ನಾನು ಬರೀ ವೇದಿಕೆಯಲ್ಲಿ ಕೂತು ಭಾಷಣ ಮಾಡಿಲ್ಲ, ಪಕ್ಷದ ಎಲ್ಲ ಕೆಲಸ ಮಾಡಿದ್ದೇನೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಹಾಗೂ ಸದಾಶಿವನಗರದ ತಮ್ಮ ನಿವಾಸದ ಬಳಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ಪಕ್ಷದ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ್ದರ ಬಗ್ಗೆ ಕೇಳಿದಾಗ, ನಾನು ಲೈಫ್ ಟೈಮ್ ಕಾರ್ಯಕರ್ತ. ನಾನು ಒಬ್ಬ ವರ್ಕರ್. ಅಧ್ಯಕ್ಷನಾದಾಗಲೂ ಪಕ್ಷದ ಬಾವುಟ ಕಟ್ಟಿದ್ದೇನೆ. ಕಾರ್ಯಕರ್ತನಾದಾಗಲೂ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದೇನೆ ಎಂದರು. ದೆಹಲಿಯಲ್ಲಿ ನಡೆಯುವ ಸಿಡಬ್ಲ್ಯೂಸಿ ಸಭೆಗೆ ತಾವು ತೆರಳುವಿರಾ ಎಂದು ಕೇಳಿದಾಗ, ನನ್ನನ್ನು ಕರೆದರೆ ಖಂಡಿತಾ ಹೋಗುತ್ತೇನೆ. ಆದರೆ ಇದುವರೆಗೂ ಕರೆದಿಲ್ಲ ಎಂದರು. ಮುಖ್ಯಮಂತ್ರಿಯವರನ್ನು ಸಭೆಗೆ ಆಹ್ವಾನಿಸಲಾಗಿದೆಯಲ್ಲ ಎಂದು ಹೇಳಿದಾಗ, ಇರಬಹುದು, ಸಿಎಂಗೆ ಆಹ್ವಾನ ನೀಡಿದ್ದಾರೆ ಎಂದು ನನಗೂ ಗೊತ್ತಿದೆ. ಡೆಪ್ಯುಟಿ ಸಿಎಂಗೆ ಕರೆದಿಲ್ಲ ಎಂದು ತಿಳಿಸಿದರು. ಖರ್ಗೆ ಅವರ ಜತೆ ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಿದರಾ ಎಂದು ಕೇಳಿದಾಗ, ಯಾವ ವಿಚಾರವಾಗಿಯೂ ಚರ್ಚೆ ನಡೆಸಿಲ್ಲ. ನಾನು ಚರ್ಚೆ ಮಾಡುವುದೂ ಇಲ್ಲ. ಮಾಡುವ ಅವಶ್ಯಕತೆಯೂ ಇಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಈಗಾಗಲೇ ಇದರ ಬಗ್ಗೆ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಆ ರೀತಿ ಕೇಳಿಕೊಂಡು ಹೋಗುತ್ತೇವೆ ಎಂದರು. ಸ್ಥಳೀಯ ಮಟ್ಟದಲ್ಲಿ ಗೊಂದಲ ಬಗೆಹರಿಸಿಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ಬಗ್ಗೆ ಕೇಳಿದಾಗ, ಹಿರಿಯರು ಮಾರ್ಗದರ್ಶನ ನೀಡುತ್ತಾರೆ ಎಂದರು. ಶುಕ್ರವಾರದಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಿದೆ. ಈ ಸಭೆಯಲ್ಲಿ ಮನರೇಗಾ ಯೋಜನೆಯ ಹೆಸರು ಬದಲಾವಣೆ, ಅನುದಾನದಲ್ಲಿ ರಾಜ್ಯದ ಪಾಲನ್ನು ಶೇ.40ಕ್ಕೆ ಹೆಚ್ಚಿಸಿರುವುದು ಸೇರಿದಂತೆ ರೈತರಿಗೆ ಮಾರಕವಾದಂತಹ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ವಿಚಾರವಾಗಿ ಒಂದು ರಾಜ್ಯದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯಗಳನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೇನೆ. ಅವರ ಜತೆ ಯಾವ ರಾಜಕೀಯ ಮಾತುಕತೆಯೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಮನರೇಗಾ ಯೋಜನೆಯಿಂದ ಪಂಚಾಯತಿಗಳಿಗೆ ಅನುಕೂಲವಾಗುತ್ತಿತ್ತು. ಪಂಚಾಯತಿ ಸದಸ್ಯರುಗಳಿಗೆ ಶಕ್ತಿಯಿತ್ತು. ಪ್ರತಿ ಕೂಲಿ ಕಾರ್ಮಿಕರ ಖಾತೆಗೆ ಹಣ ಸಂದಾಯವಾಗಿತ್ತಿತ್ತು. ಪ್ರತಿಯೊಬ್ಬರು ಚರ್ಚೆ ನಡೆಸಿ ತಮ್ಮ ಊರಿಗೆ ಯಾವ ಕೆಲಸಗಳನ್ನು ತೆಗೆದುಕೊಳ್ಳಬೇಕು ಎನ್ನುವ ಅವಕಾಶವಿತ್ತು. ಆದರೆ ಈಗ ಕೇಂದ್ರ ಸರ್ಕಾರವೇ ಯಾವ ಜಿಲ್ಲೆಯಲ್ಲಿ ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತದಂತೆ ಎಂದು ಹೇಳಿದರು. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು, ಇಂಗುಗುಂಡಿ ತೋಡಿಕೊಳ್ಳಲು, ಕೊಟ್ಟಿಗೆ ಕಟ್ಟಿಕೊಳ್ಳಲು - ಹೀಗೆ ಅನೇಕ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು. ಇಂತಹ ಅದ್ಬುತವಾದ ಕಾರ್ಯಕ್ರಮವನ್ನು ಸೋನಿಯಾಗಾಂಧಿ ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ನೀಡಿದ್ದರು. ಮುಂದಿನ 2026 ರ ಫೆಬ್ರವರಿ ವೇಳೆಗೆ ಈ ಯೋಜನೆಗೆ 20 ವರ್ಷ ತುಂಬಲಿದೆ. ಆದ ಕಾರಣ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳಲು ಆಲೋಚಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಶೇಷ ರೈಲು: ಖಾಯಂ ಆಗಿಸಲು ಎಂ ಬಿ ಪಾಟೀಲ ಆಗ್ರಹ
ರಾಜಧಾನಿಯಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಪ್ರಪ್ರಥಮ ವಿಶೇಷ ರೈಲು ಖಾಯಂ ವ್ಯವಸ್ಥೆಗೆ ಕೋರಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಎಂ ಬಿ ಪಾಟೀಲ ಆಗ್ರಹಿಸಿದ್ದಾರೆ.ಈ ಸಂಬಂಧವಾಗಿ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್, ಸೋಮಣ್ಣ ಅವರಿಗೆ ಪತ್ರ ಬರೆದು, ವ್ಯವಹರಿಸಲಾಗುವುದು. ಬೆಂಗಳೂರಿನಿಂದ ರಾತ್ರಿ ಹೊರಡುವ ರೈಲುಗಳು ವಿಜಯಪುರಕ್ಕೆ ಬೆಳಿಗ್ಗೆ 6-7 ಗಂಟೆಯ ಹೊತ್ತಿಗೆ ತಲುಪುವಂತೆ ವೇಳಾಪಟ್ಟಿ ಬದಲಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಪಾಟೀಲ ಪ್ರತಿಪಾದಿಸಿದ್ದಾರೆ. ಇದಲ್ಲದೆ, ವಿಜಯಪುರಕ್ಕೆ ಒಂದು ಪ್ರತ್ಯೇಕ ವಿಶೇಷ ರೈಲನ್ನು ಕಾಯಂ ಆಗಿ ಓಡಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ಯಾದಗಿರಿ | ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ: ಕರುಣೇಶ್ವರ ಶಿವಾರ್ಚಾಯರು
ವಡಗೇರಾದಲ್ಲಿ ಉಚಿತ ಆರೋಗ್ಯ ಶಿಬಿರ
ಕೇವಲ ವೇದಿಕೆಯಲ್ಲಿ ಭಾಷಣ ಮಾಡಿಕೊಂಡು ಹೋಗಿಲ್ಲ, ಕಾರ್ಯಕರ್ತನಾಗಿ ಕಸ ಗುಡಿಸಿದ್ದೇನೆ: ಡಿಕೆಶಿ ಟಾಂಗ್ ಯಾರಿಗೆ
ನಾನು ಕೇವಲ ವೇದಿಕೆಗೆ ಬಂದು ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕಸ ಗುಡಿಸಿದ್ದೇನೆ. ಪಕ್ಷ ಬಾವುಟ ಕಟ್ಟಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾದ ಮೇಲೂ ಬಾವುಟ ಕಟ್ಟಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು ಪರೋಕ್ಷವಾಗಿ ಟಾಂಗ್ ಯಾರಿಗೆ ನೀಡಿದ್ದಾರೆ ಎಂಬುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಇದೇ ಸಂದರ್ಭದಲ್ಲಿ ನರೇಗಾ ವಿಚಾರವಾಗಿ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ ಅವರು ಪಕ್ಷದ ನಾಯಕತ್ವ ಈ ಸಂಬಂಧಿಸಿದಂತೆ ನಿಲುವು ಕೈಗೊಳ್ಳಲಿದೆ ಎಂದರು.
ಕುಷ್ಟಗಿ | ಬಂಡ್ರಗಲ–ಪುರತಗೇರಿ ರಸ್ತೆ, ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಕುಷ್ಟಗಿ: ಹನುಮಸಾಗರ ಸಮೀಪದ ಬಂಡ್ರಗಲ ಗ್ರಾಮದಿಂದ ಪುರತಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಕೆಕೆಆರ್ಡಿಬಿ ಅನುದಾನದಲ್ಲಿ ಮಂಜೂರು ಮಾಡಲಾಗಿದ್ದು, ಇಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಶಾಸಕರಾದ ದೊಡ್ಡನಗೌಡ ಎಚ್. ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪುರತಗೇರಿ ಗ್ರಾಮದ ವಿವಿಧ ವಾರ್ಡುಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೂ ಭೂಮಿ ಪೂಜೆ ನಡೆಸಲಾಯಿತು. ಈ ರಸ್ತೆ ಹಾಗೂ ಸಿಸಿ ರಸ್ತೆ ಕಾಮಗಾರಿಗಳು ಗ್ರಾಮೀಣ ಸಂಪರ್ಕವನ್ನು ಸುಧಾರಿಸುವುದರೊಂದಿಗೆ ಸಾರ್ವಜನಿಕರ ದಿನನಿತ್ಯದ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ದೊಡ್ಡನಗೌಡ ಎಚ್.ಪಾಟೀಲ್ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಮಲ್ಲಣ್ಣ ಪಲ್ಲೆ, ಬಸವರಾಜ ಹಳ್ಳೂರು, ನಾಗರಾಜ ಕಮತರ, ಸುರೇಶ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಗೌಡ್ರು, ಹುಲಗೇರಿ ಬಾಲನಗೌಡ್ರು ಗ್ರಾಮ ಪಂಚಾಯತ್ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವಿಜಯನಗರ | ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ‘ಮನುಸ್ಮೃತಿ ದಹನ ದಿನ’ ಆಚರಣೆ
ವಿಜಯನಗರ : ಹೊಸಪೇಟೆ ನಗರದ ಜೈ ಭೀಮ್ ವೃತ್ತದಲ್ಲಿ ಗುರುವಾರದಂದು ಸಂವಿಧಾನ ಸಂರಕ್ಷಣಾ ಸಮಿತಿಯ ವತಿಯಿಂದ ಮನುಸ್ಮೃತಿ ದಹನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡರು, ಮನುಸ್ಮೃತಿಯು ಸಮಾಜದಲ್ಲಿ ಜಾತಿ ಪದ್ಧತಿ ಮತ್ತು ಸ್ತ್ರೀ ವಿರೋಧಿ ಧೋರಣೆಗಳನ್ನು ಪ್ರತಿಪಾದಿಸುತ್ತದೆ. ಇಂತಹ ಅಸಮಾನತೆಯ ಗ್ರಂಥವನ್ನು ಸುಡುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಮಾನತೆಯ ದಾರಿಯನ್ನು ತೋರಿಸಿಕೊಟ್ಟರು, ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಹಲವು ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮತ್ತು ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವ ಸಂಕಲ್ಪ ಮಾಡಿದರು. ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಈ ವೇಳೆ ಸಂಚಾಲಕರಾದ ಸೋಮಶೇಖರ್ ಬಣ್ಣದಮನೆ, ಮರಡಿ ಜಂಬಯ್ಯ ನಾಯಕ, ಶಿವುಕುಮಾರ್, ತಾಯಪ್ಪ ನಾಯಕ, ರಾಮಚಂದ್ರ ಬಾಬು, ನಗರ ಸಭಾ ಸದಸ್ಯರಾದ ಖದೀರ್, ಗುಜರಿ ಮುಹಮ್ಮದ್, ಜೆ.ಸಿ.ಈರಣ್ಣ, ರಮೇಶ್, ವೆಂಕಟರಮಣ, ಬಿಸಾಟಿ ಮಹೇಶ್, ರವಿ ಕುಮಾರ್, ಸಜ್ಜಾದ್ ಖಾನ್, ಪ್ರಮೋದ್ ಪುಣ್ಯಮೂರ್ತಿ, ಇಂತಿಯಾಝ್, ಗಿರೀಶ್, ಹೊಬಳೇಶ್, ಯಲಪ್ಪ, ಜಬಯ್ಯ ಇನ್ನು ಅನೇಕರು ಪಾಲ್ಗೊಂಡಿದ್ದರು.
Christmas | ಅಲಪ್ಪುಳದಲ್ಲಿ ಕರೋಲ್ ವೇಳೆ ಘರ್ಷಣೆ; ಮಹಿಳೆಯರು, ಮಕ್ಕಳು ಸೇರಿ ಹಲವರಿಗೆ ಗಾಯ
ಅಲಪ್ಪುಳ: ಕ್ರಿಸ್ಮಸ್ ಮುನ್ನಾದಿನ ಬುಧವಾರ ತಡರಾತ್ರಿ ಕೇರಳದ ಅಲಪ್ಪುಳದಲ್ಲಿ ಕ್ರಿಸ್ಮಸ್ ಕರೋಲ್ ಗಾಯಕರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ, ಮಹಿಳೆಯರು ಮತ್ತು ಮಕ್ಕಳು ಸೇರಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಸುಮಾರು 11.30ರ ವೇಳೆಗೆ ನೂರಾನಾಡ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕರೋಲ್ ಸುತ್ತುಗಳ ಸಂದರ್ಭದಲ್ಲಿ ಉಂಟಾದ ಭಿನ್ನಾಭಿಪ್ರಾಯ ತೀವ್ರಗೊಂಡು ಜಗಳಕ್ಕೆ ತಿರುಗಿದೆ ಎನ್ನಲಾಗಿದೆ. ಎರಡೂ ಗುಂಪಿನ ಸದಸ್ಯರು ಪರಸ್ಪರ ಮುಖಾಮುಖಿಯಾದಾಗ ಪರಿಸ್ಥಿತಿ ಉದ್ವಿಗ್ನಗೊಂಡು ಗದ್ದಲ ಉಂಟಾಯಿತು ಎಂದು ಪೊಲೀಸರು ಹೇಳಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡವರನ್ನು ಗುರುವಾರ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Mark Movie Review: ಇದು ಕಿಚ್ಚ ಸುದೀಪ್ ಫ್ಯಾನ್ಸ್ ಬುಕ್‘ಮಾರ್ಕ್’ ಮಾಡಿಟ್ಟುಕೊಳ್ಳಬಹುದಾದ ಚಿತ್ರ!
ಸರಿಯಾಗಿ ಒಂದು ವರ್ಷದ ಹಿಂದೆ ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಕಾಂಬಿನೇಶನ್ನಲ್ಲಿ ‘ಮ್ಯಾಕ್ಸ್’ ಚಿತ್ರ ತೆರೆಗೆ ಬಂದಿತ್ತು. ಇದೀಗ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ‘ಮಾರ್ಕ್’ ಚಿತ್ರ ತೆರೆಗೆ ಅಪ್ಪಳಿಸಿದೆ. ‘ಮಾರ್ಕ್’ ಚಿತ್ರ ಹೇಗಿದೆ? ‘ಮಾರ್ಕ್’ ಮ್ಯಾಕ್ಸಿಮಂ ಮನರಂಜನೆ ನೀಡುತ್ತದೆಯೇ? ಇಲ್ಲಿದೆ ಪೂರ್ತಿ ವಿಮರ್ಶೆ…
ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ಭುವನೇಶ್ವರಿ ಅವರ ಹತ್ಯೆ ಪ್ರಕರಣ ತಕ್ಷಣಕ್ಕೆ ಅಥವಾ ಅವರ ಮೇಲಿನ ಕೋಪಕ್ಕೆ ಮಾತ್ರ ನಡೆದದ್ದಲ್ಲ. ಆರೋಪಿ ಬಾಲಮುರಗನ್ ಅವರು, ತನ್ನ ಪತ್ನಿಯನ್ನು ಸಾಯಿಸಲು ಹಲವು ತಿಂಗಳುಗಳ ಕಾಲ ನಡೆಸಿದ ಸಂಚು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಪಿಸ್ತೂಲ್ ತಂದಿದ್ದು ಎಲ್ಲಿಂದ, ಹೆಂಡತಿ ಡಿವೋರ್ಸ್ ಕೊಡಲು ಕಾರಣವೇನು? ಶೂಟ್ ಮಾಡಲು ಕಲಿತಿದ್ದೆಲ್ಲಿ ಅನ್ನೋದನ್ನ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಹೆಚ್ಚಾಗುತ್ತಿರುವ ಫೋಭಿಯ ಪ್ರಕರಣಗಳು; ಆರಂಭಿಕ ಘಟ್ಟದಲ್ಲಿ ಚಿಕಿತ್ಸೆ ಏಕೆ ಅಗತ್ಯ?
ಇತ್ತೀಚೆಗೆ ತೆಲಂಗಾಣದಲ್ಲಿ ಇರುವೆಯ ಭಯದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅತಿ ಭಯವನ್ನು ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಮುಂದುವರಿದರೆ ಹೀಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಖಿನ್ನತೆಯ ರೋಗವಾಗಿರುವ ಅತಿಯಾದ ಭಯ ಮಾನಸಿಕ ವೈಕಲ್ಯಕ್ಕೆ ಕಾರಣವಾಗಬಹುದು. ವ್ಯಕ್ತಿಯ ಸಾಮಾಜಿಕ, ಔದ್ಯೋಗಿಕ ಮತ್ತು ಇತರ ಪ್ರಮುಖ ವೃತ್ತಿಪರ ಕ್ಷೇತ್ರಗಳಲ್ಲಿ ಮಧ್ಯಪ್ರವೇಶಿಸಬಹುದು. ಅದಕ್ಕೆ ಮುಖ್ಯ ಉದಾಹರಣೆ ಇತ್ತೀಚೆಗೆ ತೆಲಂಗಾಣದಲ್ಲಿ ಇರುವೆಯ ಭಯದಿಂದ ಮೃತಪಟ್ಟ ಮಹಿಳೆ. ಅತಿ ಭಯವನ್ನು ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಮುಂದುವರಿದರೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಒಂದು ಅಂದಾಜಿನ ಪ್ರಕಾರ ಅತಿ ಭಯದ ಕುರಿತಂತೆ ಈಗಿನ ದತ್ತಾಂಶ ಬಹಳ ಸೀಮಿತವಾಗಿದೆ. 2010ರಲ್ಲಿ 13 ಭಾರತೀಯ ನಗರದಲ್ಲಿ ನಡೆಸಿದ ವಿಶ್ಲೇಷಣೆಯ ಪ್ರಕಾರ ರೋಗಪರಿಶೀಲನೆಯಲ್ಲಿ ಕಂಡುಬಂದಿರುವ ಫೋಬಿಯಾಗಳು ಶೇ 4.2ರಷ್ಟಿದ್ದವು. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯಲ್ಲಿ (2015-16) ವರದಿಯಾಗಿರುವ ಪ್ರಕಾರ ಶೇ 2.57ರಷ್ಟು ಭಾರತೀಯರು ಖಿನ್ನತೆಯ ರೋಗದಿಂದ ಬಳಲುತ್ತಿದ್ದರು. ಜಾಗತಿಕವಾಗಿ ನಿರ್ದಿಷ್ಟ ಫೋಬಿಯಗಳನ್ನು ಅತಿ ಸಾಮಾನ್ಯ ಖಿನ್ನತೆ ರೋಗ ಎಂದು ಪರಿಗಣಿಸಲಾಗಿದೆ. ʼಅತಿಭಯ ಸ್ಪಷ್ಟವಾಗಿ ಕಂಡುಬಂದಾಗʼ ಚಿಕಿತ್ಸಕರು ಹೇಳುವ ಪ್ರಕಾರ ನಿತ್ಯದ ಜೀವನಕ್ಕೆ ತೊಂದರೆಯಾಗುವವರೆಗೂ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಚೆನ್ನೈನ ರಿಲಾ ಆಸ್ಪತ್ರೆಯಲ್ಲಿ ಮನಶ್ಶಾಸ್ತ್ರಜ್ಞ ಸಲಹಾತಜ್ಞರು ಮತ್ತು ಸೈಕೊಥೆರಪಿಸ್ಟ್ ಆಗಿರುವ ಯಯತೀ ಎಸ್ ಹೇಳುವ ಪ್ರಕಾರ, ಉದಾಹರಣೆಗೆ ಕಾರಿನಲ್ಲಿ ಕೂರುವುದು ಅಥವಾ ವಿಮಾನದಲ್ಲಿ ಕೂರಲು ಭಯಪಡುವಂತಹ ರೋಗಚಿಹ್ನೆಗಳು ಕೊನೆಯ ಕ್ಷಣದವರೆಗೂ ತಿಳಿದುಬರುವುದಿಲ್ಲ. ಅತಿಭಯ ಬಹಿರಂಗವಾದಾಗ ಕಂಪನವಾಗುವುದು, ಉಸಿರಾಡಲು ಕಷ್ಟಪಡುವುದು, ಬೆವರುವುದು ಮೊದಲಾದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಚಿಕಿತ್ಸೆಯಾಗಿ ಅರಿವಿನ ವರ್ತನೆಯ ಚಿಕಿತ್ಸೆ (ಸಿಬಿಟಿ) ಬಳಸಲಾಗುತ್ತದೆ. ಕಾಲ್ಪನಿಕವಾಗಿ ಕಾರಿನೊಳಗೆ ಪ್ರವೇಶಿಸುವುದು, ಎಂಜಿನ್ ಸ್ಟಾರ್ಟ್ ಮಾಡುವುದು ಅಥವಾ ವಿಮಾನದೊಳಗೆ ಪ್ರವೇಶಿಸುವುದು ಮೊದಲಾಗಿ ಅಭ್ಯಾಸ ಮಾಡಿದ ನಂತರ ನಿಧಾನವಾಗಿ ಭಯ ನಿವಾರಣೆಯಾಗುತ್ತದೆ. ಸಾಮಾನ್ಯ ವೈದ್ಯಕೀಯ ವರದಿಗಳ ಹೊರತಾಗಿಯೂ ಒಬ್ಬ ಮಹಿಳೆ ತನಗೆ ಅನಾರೋಗ್ಯವಿದೆ ಎಂದೇ ಭಯಪಡುತ್ತಾರೆ. ಸಾಯುವ ಭಯ ಸದಾ ಕಾಡುತ್ತಿರುತ್ತದೆ. ಚಿಕಿತ್ಸಕರು ಅಂತಹ ಚಿಹ್ನೆಗಳನ್ನು ಸಾಕಷ್ಟು ಆತ್ಮವಿಶ್ವಾಸದ ಮೊರತೆ ಮತ್ತು ಭಾವನಾತ್ಮಕ ಹತಾಶೆ ಎಂದು ಹೇಳುತ್ತಾರೆ. ಭಯ vs ಫೋಬಿಯ ಎಲ್ಲರಿಗೂ ಸ್ವಲ್ಪ ಮಟ್ಟಿಗೆ ಭಯ ಇರುವುದು ನಿಜವಾದರೂ, ಫೋಬಿಯದಲ್ಲಿ ವ್ಯತ್ಯಾಸವಿದೆ. ಸಾಮಾನ್ಯ ಭಯ ಹೆಚ್ಚು ದಿನ ಇರುವುದಿಲ್ಲ. ಆದರೆ ಫೋಬಿಯ ತೀವ್ರವಾಗಿರುತ್ತದೆ. ತರ್ಕಬಾಹಿರ ಮತ್ತು ನಿರಂತರವಾಗಿರುತ್ತದೆ. ಫೋಬಿಯ ನಿಧಾನವಾಗಿ ನಿತ್ಯ ಜೀವನದ ಭಾಗವಾಗಿಬಿಡುತ್ತದೆ. ಲಿಫ್ಟ್ನಲ್ಲಿ ಹೋಗಲು ಭಯ, ಸಾಮಾಜಿಕ ಪರಿಸ್ಥಿತಿಗಳು ಅಥವಾ ವೈದ್ಯಕೀಯ ಭೇಟಿಗಳನ್ನು ತಪ್ಪಿಸುವುದು ಇತ್ಯಾದಿ ಕಂಡುಬಂದಾಗ ಚಿಕಿತ್ಸೆಪಡೆಯುವುದು ಅಗತ್ಯವಾಗುತ್ತದೆ ಎನ್ನುತ್ತಾರೆ ತಜ್ಞರು. ಫೋಬಿಯಗಳನ್ನು ಅತಿಯಾದ ಪ್ರತಿಕ್ರಿಯೆ ಎಂದು ಅಲಕ್ಷಿಸುವವರೇ ಹೆಚ್ಚು. ಆದರೆ ಚಿಕಿತ್ಸೆಗಾಗಿ ಹೋಗುವ ಸಂದರ್ಭದಲ್ಲಿ ತೀವ್ರ ಸಮಸ್ಯೆಯಾಗಿರುತ್ತದೆ. ಬಹಳಷ್ಟು ಬಾರಿ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಭಯ, ಬಯಲು ಪ್ರದೇಶದ ಭಯ ಮತ್ತು ಎತ್ತರದ ಭಯದಂತಹ ಸನ್ನಿವೇಶಗಳು ಇರಬಹುದು. ಇವು ನಿತ್ಯದ ಜೀವನಕ್ಕೆ ಸಮಸ್ಯೆ ತರಬಹುದು. ಅತಿಕಡಿಮೆ ಕಂಡುಬರುವ ಭಯ ಪ್ರಯಾಣದ ಭಯ, ಆರೋಗ್ಯದ ಭಯ, ಏಕಾಂಗಿಯಾಗಿರಲು ಭಯ ಅಥವಾ ಸಭೆಗಳಲ್ಲಿ ಭಾಗವಹಿಸಲು ಭಯ ಮೊದಲಾಗಿ ಫೋಬಿಯಗಳು ವಿವಿಧ ರೂಪದಲ್ಲಿರುತ್ತವೆ. ಹೆಚ್ಚು ಪರಿಚಿತವಲ್ಲದ ಭಯದಲ್ಲಿ ರಂಧ್ರಗಳ ಸಮೂಹದ ಭಯ, ಜನರ ಭಯ, ಕ್ಲೋನ್ಗಳ ಭಯ, ಬಲೂನ್ಗಳ ಭಯ, ವಾಹನ ಚಲಾಯಿಸಲು ಭಯ, ಮಾಲಿನ್ಯದ ಭಯ ಇತ್ಯಾದಿ ಸೇರಿವೆ. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಮಾಲಿನ್ಯದ ಭಯ ಜನರಲ್ಲಿ ಹೆಚ್ಚಾಗಿದೆ. ಅಂತಹ ಭಯವಿಲ್ಲದವರಿಗೆ ಇದು ವಿಚಿತ್ರ ಎನಿಸಬಹುದು. ಆದರೆ ಅದನ್ನು ಅನುಭವಿಸುವವರಿಗೆ ಅದು ನಿಜವಾಗಿರುತ್ತದೆ ಎನ್ನುತ್ತಾರೆ ವೈದ್ಯರು. ಮಕ್ಕಳಲ್ಲಿ ಫೋಬಿಯ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎನ್ನುತ್ತಾರೆ ತಜ್ಞರು. ಇಂಜೆಕ್ಷನ್ಗಳ ಭಯ, ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಭಯಪಡುವುದು ಅಥವಾ ಎತ್ತರದ ಸ್ಥಳಗಳಿಗೆ ಹೋಗಲು ಭಯ ಇತ್ಯಾದಿ ಮಕ್ಕಳಲ್ಲಿ ಕಂಡುಬರಬಹುದು. ಫೋಬಿಯ ಏಕೆ ಬರುತ್ತದೆ? ಅನುವಂಶಿಕವಾಗಿಯೂ ಫೋಬಿಯ ಬರಬಹುದು. ಪೋಷಕರಿಂದ ಕಲಿತ ವರ್ತನೆಯಾಗಿ ಬರಬಹುದು. ಭಯಾನಕ ಸನ್ನಿವೇಶಗಳ ಅನುಭವದಿಂದ ಬರಬಹುದು ಅಥವಾ ವರ್ಷಾನುಗಟ್ಟಲೆ ಭಯದ ಸ್ಥಿತಿಯನ್ನು ತಪ್ಪಿಸಿಕೊಳ್ಳುತ್ತಾ ಹೋದರೆ ಫೋಬಿಯವಾಗಿ ಬದಲಾಗಬಹುದು. ಫೋಬಿಯಾ ಪ್ರತ್ಯೇಕವಾಗಿ ಬರುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಖಿನ್ನತೆ, ಆತಂಕದ ಚಿಹ್ನೆಗಳು, ಹತಾಶೆಯ ಮನೋಸ್ಥಿತಿ ಅಥವಾ ಗೀಳಿನ ಪ್ರವೃತ್ತಿ ಕಂಡುಬರಬಹುದು. ಫೋಬಿಯಗೆ ಚಿಕಿತ್ಸೆ ಏನು? ತಜ್ಞರು ಹೇಳುವ ಪ್ರಕಾರ, ಎಷ್ಟೇ ಭಯವಾದರೂ ಫೋಬಿಯ ಒಂದು ಮಾನಸಿಕ ಅನಾರೋಗ್ಯವಾಗಿರುವ ಕಾರಣ ಚಿಕಿತ್ಸೆ ನೀಡಬಹುದು. ಕಾಲ್ಪನಿಕವಾಗಿ ಭಯದ ಸನ್ನಿವೇಶದ ಅನುಭವಪಡೆಯುವ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ. ಬಹಳಷ್ಟು ರೋಗಿಗಳು ಔಷಧಿಯ ಅಗತ್ಯವಿಲ್ಲದೆ ಗುಣಮುಖರಾಗುತ್ತಾರೆ. ಚಿಕಿತ್ಸೆಯು ನಿಧಾನವಾಗಿ ಭಯದ ಸನ್ನಿವೇಶದಿಂದ ಹೊರಬರಲು ನೆರವಾಗಲಿದೆ. ಕೃಪೆ: thehindu.com
ಕಾರ್ಕಳ,:ಮಿಯಾರು ಕಂಬಳ ಸಮಿತಿ ನವೋದಯ ಗ್ರಾಮ ವಿಕಾಸ ಚ್ಯಾರಿ ಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಜನವರಿ 3ರಂದು 22ನೇ ವರ್ಷದ ಮಿಯಾರು ಲವ ಕುಶ ಜೋಡು ಕೆರೆ ಕಂಬಳ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಿಯರು ಕಂಬಳವು ಅತ್ಯಧಿಕ ಸೌಲಭ್ಯಗಳನ್ನು ಹೊಂದಿರುವ ವಿಶಿಷ್ಟ ಕಂಬಳವಾಗಿದ್ದು ಸಂಪ್ರದಾಯ ಶಿಸ್ತು ಹಾಗೂ ಸಮಯ ಪಾಲನೆಗೆ ಹೆಸರಾಗಿದೆ ಸುಮಾರು 200ಕೂ ಅಧಿಕ ಜೋಡಿ ಕೋಣಗಳು ಭಾಗಿಯಾಗಲಿವೆ ಎಂದು ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬೆಳಿಗ್ಗೆ ಎಂಟು ಮೂವತ್ತಕ್ಕೆ ಕಂಬಕ್ಕೆ ಚಾಲನೇ ನೀಡಲಾಗುವುದು. ಶ್ರೀ ಮಾಹ ಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್, ಮಿಯರು ಚರ್ಚ್ ಗುರುಗಳಾದ ವಂದನಿಯ ಕ್ಯಾ ನಿಟ್ ಬರ್ಬೋಜಾ, ಮಿಯರು ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ರಾಜಿಕ್ ಅಹಮದ್ ಗ್ರಾಮ ಪಂಚಾಯತ್ ಅಧ್ಯಕ್ಷ ಸನ್ಮತಿ ನಾಯಕ್ ರಾಜ್ಯ ಸಹಕಾರ ಮಾರಾಟ ಮಂಡಳ ಅಧ್ಯಕ್ಷ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್ ಭಾಗವಹಿಸಲಿದ್ದಾರೆ. ಸಮಿತಿಯ ಕಾರ್ಯಧ್ಯಕ್ಷ ಜೀವನ್ ಅಡ್ಯಾತನ್ ತ್ಯಾ ಯ, ಉಪಾಧ್ಯಕ್ಷರಾದ ಉ ದಯ ಎಸ್. ಕೋಟಿಯಾನ್, ಅಂತೋನಿ ನಕ್ರೆ, ತೀರ್ಪುಗಾರರಾದ ರವೀಂದ್ರ ಕುಮಾರ್ ವಿಜಯ ಕುಮಾರ್ ಕಂಗಿನಮನೆ ಕೋಶಾಧಿಕಾರಿ ಶಾಮ್ ಎನ್ ಶೆಟ್ಟಿ, ಹಾಗೂ ಸಮೀತಿ ಸದಸ್ಯರು ಉಪಸ್ಥಿತರಿದ್ದರು.
ಗಿಗ್ ಕಾರ್ಮಿಕರಿಂದ ರಾಷ್ಟ್ರವ್ಯಾಪಿ ಮುಷ್ಕರ; ಕಾರ್ಮಿಕರ ಹಕ್ಕೊತ್ತಾಯಗಳೇನು?
ಕಾರ್ಮಿಕರು ಅತಿ ಮುಖ್ಯವಾಗಿ ತಾರತಮ್ಯವಿಲ್ಲದ ವೇತನ ಪಾವತಿಯ ಒತ್ತಾಯಿಸಿದ್ದಾರೆ. ವಾಸ್ತವದ ಕಾರ್ಯಕಾರಿ ಗಂಟೆಗಳು ಮತ್ತು ವೆಚ್ಚಗಳನ್ನು ಆಧರಿಸಿದ ವೇತನ, 10 ನಿಮಿಷದಲ್ಲಿ ಡೆಲಿವರಿ ಮಾಡುವ ನಿಯಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಡಿಸೆಂಬರ್ 25 ಮತ್ತು ಡಿಸೆಂಬರ್ 31ರಂದು ಗಿಗ್ ಕಾರ್ಮಿಕರು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸ್ವಿಗಿ, ಝೊಮ್ಯಾಟೊ, ಜೆಪ್ಟೊ, ಬ್ಲಿಂಕಿಟ್, ಅಮೆಝಾನ್ ಮತ್ತು ಫ್ಲಿಪ್ಕಾರ್ಟ್ ಮೊದಲಾದ ಇ-ಕಾಮರ್ಸ್ ವೇದಿಕೆಯಡಿ ಕೆಲಸ ಮಾಡುವ ಕಾರ್ಮಿಕರು ಅನೇಕ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಿದ್ದಾರೆ. ತೆಲಂಗಾಣದ ಗಿಗ್ ಮತ್ತು ಪ್ಲಾಟ್ಫಾರ್ಮ್ ವರ್ಕರ್ಸ್ ಒಕ್ಕೂಟ ಮತ್ತು ಇಂಡಿಯನ್ ಫೆಡರೇಶನ್ ಆಫ್ ಆಪ್-ಬೇಸ್ಡ್ ಟ್ರಾನ್ಸ್ಪೋರ್ಟ್ ವರ್ಕರ್ಸ್ ಕರೆದಿರುವ ಮುಷ್ಕರದಲ್ಲಿ ರಾಷ್ಟ್ರಾದ್ಯಂತ ಎಲ್ಲಾ ಮೆಟ್ರೊ ಮತ್ತು ಟೈರ್-2 ನಗರಗಳಲ್ಲಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ. ಡೆಲಿವರಿ ಕಾರ್ಮಿಕರು ಏಕೆ ಪ್ರತಿಭಟಿಸುತ್ತಿದ್ದಾರೆ? ಹಬ್ಬಗಳು ಮತ್ತು ಅತಿ ಬೇಡಿಕೆ ಅವಧಿಯಲ್ಲಿ ಕೊನೆಯ ಹಂತದ ಲಾಜಿಸ್ಟಿಕ್ಸ್ನಲ್ಲಿರುವ ಡೆಲಿವರಿ ಕಾರ್ಮಿಕರು ಬಹಳ ಅನನುಕೂಲದ ಪರಿಸರದಲ್ಲಿ ಕೆಲಸ ಮಾಡುತ್ತಾರೆ. ಅವರ ಗಳಿಕೆಗಳು ಕಡಿಮೆಯಾಗುತ್ತಿದೆ. ದೀರ್ಘವಾದ ಮತ್ತು ಅನಿಶ್ಚಿತ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಸುರಕ್ಷಿತವಲ್ಲದ ಡೆಲಿವರಿ ಗುರಿಗಳನ್ನು ನೀಡಲಾಗಿರುತ್ತದೆ. ಆರ್ಬಿಟರಿ ಐಡಿ ಬ್ಲಾಕಿಂಗ್ ಸಮಸ್ಯೆಯನ್ನು ಎದುರಿಸುತ್ತಾರೆ. ಮೂಲ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯ ಕೊರತೆಯ ನಡುವೆ ಕೆಲಸ ಮಾಡಬೇಕಾಗುತ್ತದೆ. ಕಾರ್ಮಿಕರು ಅತಿ ಮುಖ್ಯವಾಗಿ ತಾರತಮ್ಯವಿಲ್ಲದ ವೇತನ ಪಾವತಿಯ ಒತ್ತಾಯಿಸಿದ್ದಾರೆ. ವಾಸ್ತವದ ಕಾರ್ಯಕಾರಿ ಗಂಟೆಗಳು ಮತ್ತು ವೆಚ್ಚಗಳನ್ನು ಆಧರಿಸಿದ ವೇತನ, 10 ನಿಮಿಷದಲ್ಲಿ ಡೆಲಿವರಿ ಮಾಡುವ ನಿಯಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಸೂಕ್ತ ನಿಯಮಗಳಿಲ್ಲದೆ ಖಾತೆ ರದ್ದು ಮಾಡುವುದನ್ನು ನಿಲ್ಲಿಸಬೇಕು, ಅಪಘಾತ ವಿಮೆ ಮತ್ತು ಸುಧಾರಿತ ರಕ್ಷಣೆ, ಭರವಸೆ ನೀಡಿದ ಕೆಲಸದ ಹಂಚಿಕೆ ಮತ್ತು ಕಡ್ಡಾಯವಾದ ವಿರಾಮ ಅವಧಿ ಮೊದಲಾದ ಬೇಡಿಕೆ ಇಡಲಾಗಿದೆ. ಮಾತ್ರವಲ್ಲದೆ, ರೌಟಿಂಗ್ ಮತ್ತು ಪಾವತಿ ವೈಫಲ್ಯ ಸರಿಪಡಿಸಲು ಆಪ್ ಆಧರಿತ ಕುಂದುಕೊರತೆ ಕಾರ್ಯಾಚರಣೆ, ಆರೋಗ್ಯ ವಿಮೆ, ಅಪಘಾತಗಳಿಂದ ರಕ್ಷಣೆ, ಪಿಂಚಣಿ ಲಾಭದಂತಹ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಲಾಗಿದೆ. ವೇದಿಕೆಗಳಲ್ಲಿರುವ ಅನೈತಿಕ ಆಲ್ಗಾರಿದಂ ನಿಯಂತ್ರಣದ ವಿರುದ್ಧ ಪ್ರಬಲ ವಿರೋಧ ವ್ಯಕ್ತಪಡಿಸಲಾಗಿದೆ. ಸರ್ಕಾರದಿಂದ ವಿನಂತಿಸಿದ ಬೇಡಿಕೆಗಳೇನು? ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತಕ್ಷಣವೇ ಕುಂದುಕೊರತೆ ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ. ಪ್ಲಾಟ್ಫಾರ್ಮ್ ನಡೆಸುವ ಕಂಪನಿಗಳನ್ನು ನಿಯಂತ್ರಿಸುವುದುಮ ಕಾರ್ಮಿಕ ರಕ್ಷಣೆಗಳನ್ನು ಅಳವಡಿಸುವುದು, ಸಾಮಾಜಿಕ ಭದ್ರತಾ ಚೌಕಟ್ಟನ್ನು ಗಿಗ್ ಕಾರ್ಮಿಕರಿಗಾಗಿ ರೂಪಿಸಬೇಕು ಎಂದು ಒತ್ತಾಯಿಸಲಾಗಿದೆ. ಅಲ್ಲದೆ ಗಿಗ್ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರಾಗಿ ನೋಡಬೇಕು ಎಂದು ಒತ್ತಾಯಿಸಲಾಗಿದೆ. ಇತ್ತೀಚೆಗೆ ಗಿಗ್ ಕಾರ್ಮಿಕರಿಗೆ ಸರ್ಕಾರ ಏನು ಮಾಡಿದೆ? ಮೊತ್ತಮೊದಲ ಬಾರಿಗೆ ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರನ್ನು ಕಾರ್ಮಿಕ ನಿಯಮದಡಿ ತರಲಾಗಿದೆ. 2025 ನವೆಂಬರ್ 21ರಂದು ಕಾರ್ಯರೂಪಕ್ಕೆ ಬರುವಂತೆ ಸಾಮಾಜಿಕ ಭದ್ರತೆ ಸಂಹಿತೆಯನ್ನು ನವೀಕರಿಸಲಾಗಿದೆ. ಡಿಜಿಟಲ್ ವೇದಿಕೆಗಳು ಇದೀಗ ತಮ್ಮ ವಾರ್ಷಿಕ ಲಾಭದಿಂದ ಶೇ 1-2ರಷ್ಟನ್ನು ಸಾಮಾಜಿಕ ಭದ್ರತಾ ನಿಧಿಗೆ ಕೊಡುಗೆ ನೀಡಬೇಕಿದೆ. ಶೇ 5ರಷ್ಟು ಪಾವತಿಯನ್ನು (ಕ್ಯಾಪ್) ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರಿಗೆ ನೀಡಬೇಕಿದೆ. ಈ ನಿಧಿಯಲ್ಲಿ ಆರೋಗ್ಯ ರಕ್ಷಣೆ, ಅಪಘಾತ ವಿಮೆ ಮತ್ತು ಮಾತೃತ್ವ ಸೌಲಭ್ಯಗಳು ಮೊದಲಾದ ಕಲ್ಯಾಣ ಯೋಜನೆಗಳಿಗೆ ಉದ್ದೇಶಿಸಲಾಗಿದೆ. ಹೊಸ ಕಾನೂನಿನಡಿ ಆಧಾರ್-ಲಿಂಕ್ ಮಾಡಿರುವ ಸಾರ್ವತ್ರಿಕ ಖಾತೆ ಸಂಖ್ಯೆ ಒದಗಿಸುವ ನೀತಿಯನ್ನೂ ತರಲಾಗಿದೆ. ವೇದಿಕೆಗಳು ಸ್ಪಷ್ಟವಾದ ನಿಯಂತ್ರಣದ ಹಾದಿಗಳು ಮತ್ತು ಬಲವಾದ ಸಾಮಾಜಿಕ ಭದ್ರತಾ ರಕ್ಷಣೆ ಎಂದು ಈ ಕಾನೂನುಗಳನ್ನು ಸ್ವಾಗತಿಸಿವೆ. ಆದರೆ ಇದು ಮೊದಲ ಹೆಜ್ಜೆ ಮಾತ್ರ, ಕನಿಷ್ಠ ಗಳಿಕೆ, ಕಾರ್ಯಸ್ಥಳದ ಸುರಕ್ಷೆ ಮತ್ತು ಆಲ್ಗಾರಿದಂ ನಿರ್ವಹಣೆಯಂತಹ ರಚನಾತ್ಮಕವಾಗಿ ಅವುಗಳನ್ನು ಅಳವಡಿಸುವ ಕೆಲಸವಾಗಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.
ಒಡಿಶಾದ ರಾಂಪಾ ಅರಣ್ಯದಲ್ಲಿ ನಡೆದ ಭದ್ರತಾ ಕಾರ್ಯಾಚರಣೆಯಲ್ಲಿ, ನಕ್ಸಲರ ಕೇಂದ್ರ ಸಮಿತಿ ಸದಸ್ಯ ಗಣೇಶ್ ಉಯಿಕೆ ಸೇರಿದಂತೆ ಆರು ಮಂದಿ ಹತರಾಗಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಉನ್ನತ ಮಟ್ಟದ ಶಸ್ತ್ರಾಸ್ತ್ರಗಳು ವಶಪಡಿಸಿಕೊಳ್ಳಲಾಗಿದ್ದು, ನಕ್ಸಲರ ಚಟುವಟಿಕೆಗೆ ಇದು ಗಂಭೀರ ಹಿನ್ನಡೆಯಾಗಿದೆ. 2026ರೊಳಗೆ ನಕ್ಸಲ್ ಮುಕ್ತ ಭಾರತ ಸಾಧಿಸುವ ನಮ್ಮ ಗುರಿಯತ್ತ ಇದು ಮಹತ್ವದ ಹೆಜ್ಜೆಯಾಗಿದೆ.
ಅಫಜಲಪುರದ 32 ಹಳ್ಳಿಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಡಿಕೆಶಿ ಜೊತೆ ಎಂ.ವೈ.ಪಾಟೀಲ್ ಚರ್ಚೆ
ಅಫಜಲಪುರ : ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಅವರು ಭೇಟಿ ಮಾಡಿ, ಮತಕ್ಷೇತ್ರದ ಕಲಬುರಗಿ ತಾಲ್ಲೂಕಿನ ಕವಲಗಾ (ಕೆ) ಗ್ರಾಮ ಸೇರಿದಂತೆ ಒಟ್ಟು 32 ಹಳ್ಳಿಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಸುಮಾರು 400 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ಈಗಾಗಲೇ ಸಿದ್ಧಗೊಂಡು ಸಲ್ಲಿಕೆಯಾಗಿರುವ ವಿಷಯವನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದ ಶಾಸಕರು, ರೈತರ ಬದುಕಿಗೆ ನೇರವಾಗಿ ಬಲ ನೀಡುವ ಈ ಯೋಜನೆಯನ್ನು ಯಾವುದೇ ವಿಳಂಬವಿಲ್ಲದೆ ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದರು. ಈ ಯೋಜನೆಯಿಂದ ನೀರಾವರಿ ಸೌಲಭ್ಯ ದೊರೆತಲ್ಲಿ ಕೃಷಿಗೆ ಶಾಶ್ವತ ಪರಿಹಾರ ಸಿಗುವುದರೊಂದಿಗೆ ಭೂಮಿ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಗ್ರಾಮೀಣ ಆರ್ಥಿಕತೆಯ ಸಮಗ್ರ ಅಭಿವೃದ್ಧಿಗೆ ದಾರಿ ತೆರೆದುಕೊಳ್ಳಲಿದೆ ಎಂಬ ಅಂಶವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಅವರು ಉಪಸ್ಥಿತರಿದ್ದರು.
1 ಕೆಜಿ ಕೊಬ್ಬು ಕರಗಿಸಲು ಎಷ್ಟು ನಡೆಯಬೇಕು?
1 ಕೆಜಿ ಕೊಬ್ಬು ಸುಮಾರು 7700 ಕ್ಯಾಲರಿಗಳಿಗೆ ಸಮಾನ. ನಿಜವಾದ ಕೊಬ್ಬು ಸಂಗ್ರಹಿತ ಶಕ್ತಿಯಾಗಿರುವ ಕಾರಣದಿಂದ ಅದರ ನಷ್ಟಕ್ಕೆ ಸಮಯ ಬೇಕಾಗುತ್ತದೆ. ದಿನನಿತ್ಯವೂ ನಿರ್ದಿಷ್ಟ ಸಮಯ ನಡೆದರೂ ತೂಕ ಕಳೆದುಕೊಳ್ಳುವ ಸೂಚನೆಯೇ ಇರುವುದಿಲ್ಲ ಎಂದು ನಿಮಗೆ ಅನಿಸಿದ್ದಿದೆಯೆ? ಹಾಗಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ದೂರವನ್ನು ನೀವು ಕ್ರಮಿಸದೆ ಇರಬಹುದು. ಆದರೆ ಚಿಂತೆ ಬೇಡ. 1 ಕೆಜಿ ಕೊಬ್ಬನ್ನು ಕರಗಿಸಲು ಎಷ್ಟು ನಡಿಗೆ ಅಗತ್ಯವಿದೆ ಎನ್ನುವ ಲೆಕ್ಕಾಚಾರ ಬಹಳ ಸರಳ. ಕೊಬ್ಬು ಕರಗಿಸುವ ವಿಜ್ಞಾನಕ್ಕೆ ಸಂಬಂಧಿಸಿದ ತಜ್ಞರಾಗಿರುವ ಅಂಜಲಿ ಸಚನ್ ಹೇಳುವ ಪ್ರಕಾರ, ಅತಿ ಪರಿಣಾಮಕಾರಿಯಾಗಿ ಮತ್ತು ಸುಸ್ಥಿರ ರೀತಿಯಲ್ಲಿ ತೂಕ ಇಳಿಸಲು ಬಯಸುವವರಿಗೆ ನಡಿಗೆಯೇ ಔಷಧ. ಅವರು ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವೀಡಿಯೋ ಒಂದರಲ್ಲಿ 1 ಕೆಜಿ ಕೊಬ್ಬು ಕರಗಿಸಲು ಎಷ್ಟು ನಡೆಯಬೇಕು ಎನ್ನುವ ವಿವರ ನೀಡಿದ್ದಾರೆ. ನಡಿಗೆ ಮತ್ತು ಕೊಬ್ಬು ಕರಗಿಸುವ ವಿಜ್ಞಾನ ಅಂಜಲಿ ಸಚನ್ ಹೇಳುವ ಪ್ರಕಾರ, 1 ಕೆಜಿ ಕೊಬ್ಬು ಸುಮಾರು 7700 ಕ್ಯಾಲರಿಗಳಿಗೆ ಸಮಾನ. “ಈ ಸಂಖ್ಯೆ ಬಹಳ ದೊಡ್ಡದು. ಇದು ವಾಸ್ತವದಲ್ಲಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಂಶ. ಇದರಲ್ಲಿ ನೀರಿನಂಶದ ತೂಕ, ಹೊಟ್ಟೆ ಉಬ್ಬರಿಸಿದ ತೂಕ ಅಥವಾ ಗ್ಲೈಕೊಜೆನನ್ನ ತೂಕ ಸೇರಿರುವುದಿಲ್ಲ. ನಿಜವಾದ ಕೊಬ್ಬು ಸಂಗ್ರಹಿತ ಶಕ್ತಿಯಾಗಿರುವ ಕಾರಣದಿಂದ ಅದರ ನಷ್ಟಕ್ಕೆ ಸಮಯ ಬೇಕಾಗುತ್ತದೆ. ಒಮ್ಮೆ ಅದನ್ನು ಕರಗಿಸಿದರೆ ನಂತರ ಬರುವುದಿಲ್ಲ” ಎನ್ನುತ್ತಾರೆ ಅಂಜಲಿ. ಅಂಜಲಿ ಹೇಳುವ ಪ್ರಕಾರ ನಡಿಗೆಯಲ್ಲಿ ಕ್ಯಾಲರಿ ಕರಗಿಸಲು ಸಾಧ್ಯವಿದೆ. 1000 ಹೆಜ್ಜೆಗಳನ್ನು ಹಾಕಿದರೆ 50-70 ಕ್ಯಾಲರಿಗಳನ್ನು ಕರಗಿಸಬಹುದು. ಪ್ರತಿ ಹೆಜ್ಜೆ ಇಡುವಾಗಲೂ ಸ್ನಾಯುಗಳನ್ನು ಚಲಿಸಲು, ಸಮತೋಲನ ಕಾಪಾಡುವುದು ಮತ್ತು ಹೃದಯದ ದರವನ್ನು ನಿಯಮಿತವಾಗಿಡಲು ನಿಮ್ಮ ದೇಹ ಶಕ್ತಿಯನ್ನು ಬಳಸುತ್ತದೆ. ಹೀಗಾಗಿ ನೀವು 1 ಕೆಜಿ ಕೊಬ್ಬು ಕರಗಿಸಲು ಸರಿಸುಮಾರು 1,28,000 ರಿಂದ 1,50,000 ಹೆಜ್ಜೆಗಳನ್ನು ಇಡಬೇಕಾಗುತ್ತದೆ! ಇದು ಸಣ್ಣ ಕೆಲಸವೇನಲ್ಲ ಎಂದು ಅನಿಸುತ್ತದೆಯೆ? ನಿತ್ಯವೂ ಸರಿಸುಮಾರು 10,000-15,000 ಹೆಜ್ಜೆಗಳನ್ನು ಹಾಕಿದರೆ 10ರಿಂದ 12 ದಿನಗಳಲ್ಲಿ ನೀವು ಒಂದು ಕೆಜಿ ಕೊಬ್ಬನ್ನು ಕರಗಿಸಬಹುದು. ಶಿಸ್ತಿನ ಆಹಾರ, ವ್ಯಾಯಾಮ ಅಥವಾ ನಿತ್ಯದ ಸಹಜವಾದ ಕ್ಯಾಲರಿ ನಷ್ಟವನ್ನು ಹೊರತುಪಡಿಸಿ ಇಷ್ಟು ಕೊಬ್ಬನ್ನು ಕರಗಿಸಬಹುದಾಗಿದೆ. ಮುಖ್ಯವಾಗಿ ಕೊಬ್ಬು ಕರಗಿಸುವುದೆಂದರೆ ನಿರಂತರವಾಗಿ ಮಾಡುವ ಕೆಲಸ. ಒಂದು ದಿನದಲ್ಲಿ ಕೊಬ್ಬು ಕರಗಿಸುವ ಜಾದೂ ಮಾಡಲು ಸಾಧ್ಯವಿಲ್ಲ. ನಿತ್ಯವೂ ಹೆಜ್ಜೆ ಇಡುವುದು ಎಂದರೆ ನಿತ್ಯವೂ ಕ್ಯಾಲರಿ ಕರಗಿಸುವುದು ಆಗಿರುತ್ತದೆ. ನಡಿಗೆಯಿಂದ ಏನು ಲಾಭವಿದೆ? - ಕ್ಯಾಲರಿಗಳನ್ನು ಕರಗಿಸಬಹುದು - ನಿಧಾನವಾಗಿ ಕೊಬ್ಬು ಕರಗಿಸಬಹುದು - ಅತಿಯಾದ ವ್ಯಾಯಾಮದಿಂದ ಆಗುವಂತಹ ಹಸಿವೆ ಇರುವುದಿಲ್ಲ - ಹಾರ್ಮೋನುಗಳು ಮತ್ತು ಋತುಚಕ್ರದ ಮೇಲೆ ಪರಿಣಾಮ ಇರುವುದಿಲ್ಲ. - ಸುಸ್ತಾಗುವುದು ಇರುವುದಿಲ್ಲ. - ಮನೋಬಲ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಪ್ರಮುಖ ಲಾಭವೇನು? ಒಂದು ದೊಡ್ಡ ವ್ಯಾಯಾಮ ಮಾಡಿ ತೂಕ ಇಳಿಸಲು ಸಾಧ್ಯವಿಲ್ಲ. ನಿತ್ಯವೂ ನಡೆದಾಡುವುದರಿಂದ ಉತ್ತಮ ಆರೋಗ್ಯ ಲಾಭವೂ ಇರುತ್ತದೆ ಮತ್ತು ಕೊಬ್ಬು ಕೂಡ ಕರಗುತ್ತದೆ. ಕೊಬ್ಬು ಕರಗಿಸುವುದು ಜಾದೂ ತಂತ್ರವಲ್ಲ, ನಿತ್ಯವೂ ಮಾಡಬೇಕಾದ ಕೆಲಸ ಎನ್ನುವುದನ್ನು ನೆನಪಿನಲ್ಲಿಡಬೇಕು. ಕೃಪೆ; ndtv.com
ಮಸ್ಕಿ | ಹಾಲಾಪೂರ ಗ್ರಾಪಂ ವಿಭಜನೆಗೆ ಒತ್ತಾಯ : ಬೇಡಿಕೆ ಈಡೇರಿಸದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಮಸ್ಕಿ : ಮಸ್ಕಿ ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ಬಹುದೊಡ್ಡ ಗ್ರಾಪಂ ಆಗಿದ್ದು, ಸಾರ್ವಜನಿಕರಿಗೆ ಹಲವು ರೀತಿಯ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 26 ಸದಸ್ಯರನ್ನು ಹೊಂದಿರುವ ಈ ಪಂಚಾಯತಿ 16 ಗ್ರಾಮಗಳು ಹಾಗೂ ಕ್ಯಾಂಪುಗಳನ್ನು ಒಳಗೊಂಡಿದ್ದು, ಅಂದಾಜು 18 ಸಾವಿರ ಜನಸಂಖ್ಯೆ ಹೊಂದಿದೆ. ಭೌಗೋಳಿಕವಾಗಿ ವ್ಯಾಪಕವಾಗಿರುವ ಕಾರಣ ಪಂಚಾಯತಿ ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಬಸ್ ಸೌಲಭ್ಯವೂ ಇಲ್ಲದ ಸ್ಥಿತಿ ಇದೆ. ತುಗ್ಗಲದಿನ್ನಿ, ಶಂಕರನಗರ ಕ್ಯಾಂಪ್, ಹಿರೇಕಡಬೂರು, ಹಂಚಿನಾಳ, ಎಸ್.ರಾಮಲದಿನ್ನಿ ಗ್ರಾಮಗಳು ಪಂಚಾಯತಿಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದ್ದು, ಗ್ರಾಮಸ್ಥರಿಗೆ ಸಮಯಕ್ಕೆ ಸರಿಯಾಗಿ ಪಂಚಾಯತಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಂಚಾಯತಿ ಕೆಲಸಕಾರ್ಯಗಳಿಗೆ ಸಾಕಷ್ಟು ಅಡಚಣೆ ಉಂಟಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಲಾಪೂರ ಗ್ರಾಮ ಪಂಚಾಯತಿಯನ್ನು ವಿಭಜಿಸಿ ಹೊಸ ಗ್ರಾಮ ಪಂಚಾಯತಿ ರಚಿಸಬೇಕೆಂದು ಒತ್ತಾಯಿಸಿ, ಈ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯತಿ ಪಿಡಿಒ ವಿಶ್ವನಾಥ ಹೂಗಾರ, ತಾಲ್ಲೂಕು ಪಂಚಾಯತಿ ಇಒ ಅಮರೇಶ ಯಾದವ, ಮಾನ್ಯ ತಹಶೀಲ್ದಾರರು ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಶರಣೆಗೌಡ ಅವರಿಗೆ ಪಂಚಾಯತಿ ವ್ಯಾಪ್ತಿಯ ಮುಖಂಡರು, ನಾಗರಿಕರು ಹಾಗೂ ಗ್ರಾಪಂ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಗದೀಶ ತಾತ, ಕರಿಯಪ್ಪ ಬಿ, ಎರಿತಾತ, ಬಸಪ್ಪ ಜಂಗಮರಹಳ್ಳಿ, ಬಸವರಾಜ, ರವಿ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
HD Kumaraswamy: ಮದ್ಯದ ಅಂಗಡಿಗಳಿಗೆ ಪರವಾನಗಿ ನೆಪದಲ್ಲಿ ₹ 1.95 ಕೋಟಿ ಸುಲಿಗೆ: ಹೆಚ್.ಡಿ. ಕುಮಾರಸ್ವಾಮಿ
ದಾವಣಗೆರೆ: ರಾಜ್ಯ ಸರ್ಕಾರವು ಗ್ಯಾರಂಟಿಗಳಿಗೆ ಹಣ ಹೊಂದಿಸಿಕೊಳ್ಳಲು, ಖಾಲಿ ಆಗಿರುವ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ನೆಪದಲ್ಲಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪಿಸಿದರು. ದಾವಣಗೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ಮದ್ಯದಂಗಡಿ ಪರವಾನಗಿ ಒಂದಕ್ಕೆ ₹ 1.95 ಕೋಟಿ ದರವನ್ನು
ಒಂದು ತಿಂಗಳು ಬೆಳಗ್ಗೆ ಎದ್ದ ತಕ್ಷಣ ಎಳನೀರು ಕುಡಿದರೆ ಏನಾಗುತ್ತದೆ?
ಎಳನೀರು ಕುಡಿಯುವುದರಿಂದ ದಿನದ ಆರಂಭದಲ್ಲೇ ಫ್ಲೂಯಿಡ್ ಸಮತೋಲನಕ್ಕೆ ನೆರವಾಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಅಥವಾ ಜಡವಾದ ಅನುಭವ ಇರುವುದಿಲ್ಲ! ಬೆಳಗಿನ ಜಾವ ಎದ್ದ ತಕ್ಷಣ ದೇಹದಲ್ಲಿ ನೀರಿನಂಶದ ಕೊರತೆ ಇರುತ್ತದೆ. ಆದರೆ ನೀರು ಅಥವಾ ಕೆಫೈನ್ ಬದಲಾಗಿ ನೀವು ನಿತ್ಯವೂ ಎಳನೀರು ಕುಡಿದರೆ ಏನಾಗುತ್ತದೆ? ಮುಂಬೈನ ಥಾಣೆಯಲ್ಲಿರುವ ಕಿಮ್ಸ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾಗಿರುವ ಡಾ. ಅಮ್ರೀನ್ ಶೇಖ್ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. “ಎಳನೀರು ಕುಡಿಯುವುದರಿಂದ ದೇಹದಲ್ಲಿ ತ್ವರಿತವಾಗಿ ನೀರಿನಂಶ ತುಂಬಲು ನೆರವಾಗುತ್ತದೆ. ಏಕೆಂದರೆ ಅದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂನಂತಹ ಸಹಜವಾದ ಎಲೆಕ್ಟ್ರೊಲೈಟ್ಗಳು ಇರುತ್ತವೆ. ಇವು ದಿನದ ಆರಂಭದಲ್ಲೇ ಫ್ಲೂಯಿಡ್ ಸಮತೋಲನಕ್ಕೆ ನೆರವಾಗುತ್ತವೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಅಥವಾ ಜಡವಾದ ಅನುಭವ ಇರುವುದಿಲ್ಲ” ಎನ್ನುತ್ತಾರೆ ಅಮ್ರೀನ್. ಲಘು ಆಹಾರ ಎಳನೀರು ಎಳನೀರು ಲಘುವಾದ ಮತ್ತು ಸೌಮ್ಯವಾದ ಆಹಾರ. ಬೆಳಗಿನ ಜಾವ ಎಳನೀರು ಕುದಿದಾಗ ಜೀರ್ಣಕ್ರಿಯೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿ ಕೆಲವು ವಾರಗಳಲ್ಲಿಯೇ ಬದಲಾವಣೆ ಕಾಣಿಸುತ್ತದೆ. ಕೆಲವರ ಹೊಟ್ಟೆ ಕಡಿಮೆ ಉಬ್ಬರಿಸಿರುತ್ತದೆ. ಕರುಳಿನ ಚಲನೆ ಸರಾಗವಾಗಿ ಆಗುತ್ತದೆ. ಉತ್ತಮ ನೀರಿನಂಶವು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಜೀವಕೋಶಗಳಲ್ಲಿ ಜಲಸಂಚಯನವನ್ನು ಉತ್ತೇಜಿಸುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳು ಹೆಚ್ಚು ಪರಿಣಾಮಕಾರಿಯಾಗಿ ದೇಹಾದ್ಯಂತ ಹರಿಯಲು ನೆರವಾಗುತ್ತದೆ. “ಹಠಾತ್ ಉತ್ತೇಜನಗೊಂಡು ನಂತರ ಬರಿದಾಗುವ ಬದಲಾಗಿ ಸ್ಥಿರವಾದ ಶಕ್ತಿಯನ್ನು ಪಡೆಯಲು ಸಾಧ್ಯವಾಗಲಿದೆ” ಎನ್ನುತ್ತಾರೆ ಅಮ್ರೀನ್. ರಕ್ತದೊತ್ತಡ ಮತ್ತು ಹೃದಯ ಆರೋಗ್ಯದ ಮೇಲಿನ ಪರಿಣಾಮ? ಎಳನೀರಿನಲ್ಲಿ ಸಹಜವಾಗಿ ಪೊಟ್ಯಾಶಿಯಂ ಹೆಚ್ಚಾಗಿರುವುದರಿಂದ ಸೋಡಿಯಂನ ಸಮತೋಲನಕ್ಕೆ ನೆರವಾಗುತ್ತದೆ. ನಿತ್ಯವೂ ಸೇವಿಸುವುದರಿಂದ ಆರೋಗ್ಯಕರವಾದ ರಕ್ತದೊತ್ತಡಕ್ಕೆ ಬಲ ನೀಡುತ್ತದೆ. ಹಣ್ಣು ಮತ್ತು ತರಕಾರಿಗಳಿಂದ ಸಾಕಷ್ಟು ಪೊಟ್ಯಾಶಿಯಂ ಸಿಗದವರಿಗೆ ಎಳನೀರು ಮುಖ್ಯವಾಗುತ್ತದೆ. ಚರ್ಮ ಮತ್ತು ಕೂದಲಿನ ಮೇಲೆ ಪರಿಣಾಮ ಬೀರಲಿದೆಯೆ? ಉತ್ತಮ ಜಲಸಂಚಯನದ ಪರಿಣಾಮ ಹೊರಗೆ ಕೂಡ ಕಾಣಿಸಿಕೊಳ್ಳುತ್ತದೆ. ಕೆಲವು ವಾರಗಳಲ್ಲೇ ಚರ್ಮದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ ಮತ್ತು ತುಟಿಗಳು ಹೆಚ್ಚು ಒಣಗಿದಂತೆ ಇರುವುದಿಲ್ಲ. ಇದೇನು ಮಾಂತ್ರಿಕ ಬದಲಾವಣೆಯಲ್ಲ. ಸುಧಾರಿತ ಜಲಸಂಚಯನ ಮತ್ತು ಖನಿಜಗಳ ಸಮತೋಲನದ ಪರಿಣಾಮವಾಗಿರುತ್ತದೆ ಎನ್ನುತ್ತರೆ ಅಮ್ರೀನ್. ತೂಕ ಕಡಿಮೆ ಮಾಡಲು ಎಳನೀರು ಸಹಕಾರಿಯೆ? ಎಳನೀರು ಕೊಬ್ಬನ್ನು ತನ್ನಷ್ಟಕ್ಕೇ ಕರಗಿಸುವುದಿಲ್ಲ. ಬೆಳಗಿನ ಸಮಯದಲ್ಲಿ ಸಕ್ಕರೆ ಬೆರೆಸಿದ ಪಾನೀಯಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಜಲಸಂಚಯನ ಸುಧಾರಿಸುತ್ತಿದ್ದಂತೆ ಹೊಟ್ಟೆಯ ಸಂಕೇತಗಳೂ ಸ್ಪಷ್ಟವಾಗಿಬಿಡುತ್ತವೆ. ಅದರಿಂದ ತನ್ನಿಂತಾನಾಗೇ ಉತ್ತಮ ಆಹಾರ ಆಯ್ಕೆಗಳತ್ತ ತಿರುಗುತ್ತೇವೆ ಎನ್ನುತ್ತರೆ ಅಮ್ರೀನ್. ಏನನ್ನು ಗಮನಿಸಬೇಕು? ಬಹಳಷ್ಟು ಮಂದಿಗೆ ಬೆಳಗಿನ ಜಾವ ಎಳನೀರು ಸೇವಿಸುವುದು ಉತ್ತಮ. ಆದರೆ ಮೂತ್ರಪಿಂಡದ ಸಮಸ್ಯೆ ಇರುವವರು ಅಥವಾ ಪೊಟ್ಯಾಶಿಯಂ ಮಟ್ಟ ಹೆಚ್ಚಾಗುವ ಸಮಸ್ಯೆ ಇರುವವರು ಜಾಗರೂಕತೆ ವಹಿಸಬೇಕಾಗುತ್ತದೆ. ಮಧುಮೇಹ ಇರುವವರು ನೈಸರ್ಗಿಕವಾದ ಸಕ್ಕರೆ ಪಾನೀಯವಾಗಿರುವ ಎಳನೀರು ಸೇವಿಸುವ ಪ್ರಮಾಣವನ್ನು ಗಮನಿಸಬೇಕಾಗುತ್ತದೆ. ಒಂದು ಗ್ಲಾಸ್ (200-250 ಮಿಲೀ) ಎಳನೀರು ಸಾಕಾಗುತ್ತದೆ. ಸಕ್ಕರೆ ಹೊಂದಿರುವ ಬೆಳಗಿನ ಪಾನೀಯದ ಬದಲಾಗಿ ಸೇವಿಸುವಾಗ ಉತ್ತಮ ಪರಿಣಾಮ ಬೀರುತ್ತದೆ. ಬದಲಾಗಿ ಬೆಳಗಿನ ಸಮಯದಲ್ಲಿ ಅತಿಯಾದ ಸಕ್ಕರೆ ಸೇವಿಸಿ ಅದರ ಮೇಲೆ ಎಳನೀರು ಸೇವಿಸುವುದು ಉತ್ತಮ ಪರಿಣಾಮ ಬೀರದು. ಸಿಹಿ ಬೆರೆಸದ ತಾಜಾ ಎಳನೀರು ಉತ್ತಮ ಆಯ್ಕೆಯಾಗಿರುತ್ತದೆ. 30 ದಿನಗಳ ಕಾಲ ನಿತ್ಯವೂ ಸೇವಿಸುವುದರಿಂದ ಜಲಸಂಚಯನ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬೆಳಗಿನ ಸಮಯದಲ್ಲಿ ತಾಜಾತನ ನಿಡುತ್ತದೆ. ಸಮತೋಲಿತ ಜೀವನಶೈಲಿಯ ಜೊತೆಗೂಡಿ ಸೇವಿಸಿದರೆ ನಿಜವಾದ ಲಾಭ ಸಿಗಲಿದೆ ಎನ್ನುತ್ತಾರೆ ಅಮ್ರೀನ್. ಕೃಪೆ: indianexpress.com
ʼವೀರ್ಯ ದಾನದ ಮೂಲಕ IVF ಗೆ ಹಣಕಾಸು ನೆರವುʼ: ಜೈವಿಕ ಮಕ್ಕಳಿಗೆ ಸಮಾನ ಆಸ್ತಿ ಪಾಲು ಭರವಸೆ ನೀಡಿದ Telegram ಸಂಸ್ಥಾಪಕ
ಮಾಸ್ಕೋ: ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ರಷ್ಯಾದ ಬಿಲಿಯನೇರ್ ಪಾವೆಲ್ ಡುರೊವ್, ತಮ್ಮ ವೀರ್ಯ ದಾನವನ್ನು ಬಳಸಿಕೊಂಡು ಗರ್ಭಧರಿಸಲು ಬಯಸುವ ಮಹಿಳೆಯರಿಗೆ ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಚಿಕಿತ್ಸೆಗೆ ಹಣಕಾಸು ನೆರವು ನೀಡಲು ಮುಂದಾಗಿದ್ದಾರೆ. ಈ ಮೂಲಕ ಜನಿಸುವ ತಮ್ಮ ಎಲ್ಲಾ ಜೈವಿಕ ಮಕ್ಕಳಿಗೂ ಭವಿಷ್ಯದಲ್ಲಿ ತಮ್ಮ ಸಂಪತ್ತಿನಲ್ಲಿ ಸಮಾನ ಪಾಲು ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, 41 ವರ್ಷದ ಡುರೊವ್ 37 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವಿವಾಹಿತ ಮಹಿಳೆಯರು ತಮ್ಮ ವೀರ್ಯವನ್ನು ಬಳಸಿಕೊಂಡು ಗರ್ಭಧರಿಸಲು ಬಯಸಿದರೆ IVF ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ತನ್ನ ಮರಣದ ನಂತರ ಸುಮಾರು 30 ವರ್ಷಗಳ ಬಳಿಕ, ತಮ್ಮೊಂದಿಗೆ ಆನುವಂಶಿಕ ಸಂಪರ್ಕವನ್ನು ಕಾನೂನುಬದ್ಧವಾಗಿ ಸ್ಥಾಪಿಸಿದ ಮಕ್ಕಳು ತಮ್ಮ ಆಸ್ತಿಯ ಪಾಲನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಅವರು ಹೇಳಿದ್ದಾರೆ. ಲೆಕ್ಸ್ ಫ್ರೀಡ್ಮನ್ ಅವರ ಪಾಡ್ ಕ್ಯಾಸ್ಟ್ ಗೆ ಅಕ್ಟೋಬರ್ ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡುರೊವ್, “ನನ್ನ DNA ಹಂಚಿಕೊಂಡಿರುವ ಮಕ್ಕಳಿಗೆ ನನ್ನ ಮರಣದ ನಂತರ ಆಸ್ತಿಯಲ್ಲಿ ಪಾಲು ಸಿಗಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ. ವೀರ್ಯ ದಾನದ ಮೂಲಕ ಈಗಾಗಲೇ ಕನಿಷ್ಠ 100 ಮಕ್ಕಳಿಗೆ ತಂದೆಯಾಗಿರುವುದಾಗಿ ಡುರೊವ್ ಹೇಳಿಕೊಂಡಿದ್ದಾರೆ. ಇವರಲ್ಲಿ ಆರು ಮಕ್ಕಳು ಮೂರು ವಿಭಿನ್ನ ಸಂಗಾತಿಗಳಿಂದ ಜನಿಸಿದ್ದಾರೆ ಎನ್ನಲಾಗಿದೆ. ಫಲವತ್ತತೆ ಸಮಸ್ಯೆ ಎದುರಿಸುತ್ತಿದ್ದ ಸ್ನೇಹಿತರಿಗೆ ನೆರವಾಗುವ ಉದ್ದೇಶದಿಂದ 2010ರಲ್ಲಿ ವೀರ್ಯ ದಾನ ಆರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ. ಜಾಗತಿಕವಾಗಿ ಉತ್ತಮ ಗುಣಮಟ್ಟದ ವೀರ್ಯದ ಕೊರತೆ ಹಾಗೂ ಇಳಿಮುಖವಾಗುತ್ತಿರುವ ಜನನ ಪ್ರಮಾಣ ತಮ್ಮ ನಿರ್ಧಾರಕ್ಕೆ ಕಾರಣ ಎಂದು ಡುರೊವ್ ಹೇಳಿದ್ದಾರೆ. ಅವರ ವೀರ್ಯವನ್ನು ಮಾಸ್ಕೋದ ಒಂದು ಚಿಕಿತ್ಸಾಲಯದಲ್ಲಿ ಸಂಗ್ರಹಿಸಲಾಗಿದ್ದು, ಕಾನೂನು ತೊಡಕುಗಳನ್ನು ತಪ್ಪಿಸಲು ಅವಿವಾಹಿತ ಮಹಿಳೆಯರಿಗೆ ಮಾತ್ರ ಬಳಸಲು ಅವಕಾಶ ನೀಡಲಾಗಿದೆ. ಪರಿಸರ ಮಾಲಿನ್ಯ, ವಿಶೇಷವಾಗಿ ಪ್ಲಾಸ್ಟಿಕ್ ಮಾಲಿನ್ಯ ವೀರ್ಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ. ವೀರ್ಯ ದಾನವನ್ನು ಅವರು ‘ನಾಗರಿಕ ಕರ್ತವ್ಯ’ ಎಂದು ವರ್ಣಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಡುರೊವ್ ಅವರ ವೀರ್ಯ ದಾನಕ್ಕೆ ಗಣನೀಯ ಬೇಡಿಕೆ ಇದೆ. ಕಳೆದ ವರ್ಷ ಮಾಸ್ಕೋದ ಕ್ಲಿನಿಕ್ನಲ್ಲಿ ನೀಡಿದ ಜಾಹೀರಾತಿಗೆ ಡಝನ್ಗಟ್ಟಲೆ ಮಹಿಳೆಯರು ಪ್ರತಿಕ್ರಿಯಿಸಿದ್ದರು ಎಂದು ತಿಳಿದುಬಂದಿದೆ.
ಮದ್ಯದ ಅಂಗಡಿಗಳಿಗೆ ಪರವಾನಗಿ ನೆಪದಲ್ಲಿ ಕೋಟಿ ಕೋಟಿ ಸುಲಿಗೆ, ರಾಜ್ಯ ಸರ್ಕಾರದ ವಿರುದ್ಧ ಎಚ್ಡಿಕೆ ನೇರ ಆರೋಪ
ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರ ಖಾತೆಗೆ ಜಮಾ ಆಗಬೇಕಾದ ₹5000 ಕೋಟಿ ಎಲ್ಲಿ ಹೋಯಿತು ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಜನತೆಗೆ ಮಾಹಿತಿ ಕೊಟ್ಟಿಲ್ಲ. ನನಗೆ ಈ ವಿಷಯವೇ ಗೊತ್ತಿಲ್ಲ ಎಂದು ಸಿಎಂ ಅವರೇ ಹೇಳುತ್ತಾರೆ. ದಾಖಲೆಯ ಬಜೆಟ್ ಗಳನ್ನು ಮಂಡಿಸಿರುವ ಆವರೆಗೆ ತಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ? ಹಣ ಏನಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಇವರಂತಹ ಆರ್ಥಿಕ ತಜ್ಞರವನ್ನು ಪ್ರಪಂಚದಲ್ಲಿಯೇ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಉನ್ನಾವೊ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತಿಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ
ಹೊಸದಿಲ್ಲಿ: 2017ರ ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಗೆ ನೀಡಿರುವ ಶಿಕ್ಷೆ ಅಮಾನತಿನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸೆಂಗಾರ್ ನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ. ವಕೀಲರಾದ ಅಂಜಲೆ ಪಟೇಲ್ ಮತ್ತು ಪೂಜಾ ಶಿಲ್ಪ್ಕರ್ ಸಲ್ಲಿಸಿರುವ ಅರ್ಜಿಯಲ್ಲಿ, ವಿಚಾರಣಾ ನ್ಯಾಯಾಲಯವು ಸೆಂಗಾರ್ ತನ್ನ ಸಹಜ ಜೀವನದುದ್ದಕ್ಕೂ ಜೈಲಿನಲ್ಲೇ ಇರಬೇಕೆಂದು ಸ್ಪಷ್ಟವಾಗಿ ದಾಖಲಿಸಿದ್ದರೂ, ಆ ಅಂಶವನ್ನು ಪರಿಗಣಿಸದೇ ಹೈಕೋರ್ಟ್ ಶಿಕ್ಷೆ ಅಮಾನತುಗೊಳಿಸಿರುವುದು ಕಾನೂನು ಮತ್ತು ವಾಸ್ತವಾಂಶಗಳ ದೃಷ್ಟಿಯಿಂದ ಗಂಭೀರ ದೋಷವಾಗಿದೆ ಎಂದು ವಾದಿಸಲಾಗಿದೆ. ಅತ್ಯಾಚಾರದಂತಹ ಘೋರ ಅಪರಾಧದಲ್ಲಿ ದೋಷಾರೋಪಿತನಾಗಿರುವ ಸೆಂಗಾರ್ ನ ಕ್ರಿಮಿನಲ್ ಹಿನ್ನೆಲೆ, ಪ್ರಾಸಿಕ್ಯೂಷನ್ ಮಂಡಿಸಿದ್ದ ವಸ್ತುನಿಷ್ಠ ಸಾಕ್ಷ್ಯಗಳು ಹಾಗೂ ಆರೋಪಿಯ ಕ್ರೌರ್ಯವನ್ನು ಹೈಕೋರ್ಟ್ ಸಮರ್ಪಕವಾಗಿ ಮೌಲ್ಯಮಾಪನ ಮಾಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಂತ್ರಸ್ತೆಯ ತಂದೆ ನ್ಯಾಯಾಂಗ ಬಂಧನದಲ್ಲಿದ್ದಾಗಲೂ ಅವರನ್ನು ಸುಮ್ಮನಾಗಿಸುವ ಉದ್ದೇಶದಿಂದ ಹತ್ಯೆ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಅಂಶವನ್ನೂ ಗಮನಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ. ಸೆಂಗಾರ್ ಈಗಾಗಲೇ ಏಳು ವರ್ಷ ಐದು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾನೆ ಎಂಬ ಕಾರಣ ನೀಡಿ, ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿನ ಶಿಕ್ಷೆಯನ್ನು ಡಿಸೆಂಬರ್ 23ರಂದು ದಿಲ್ಲಿ ಹೈಕೋರ್ಟ್ ಅಮಾನತುಗೊಳಿಸಿತ್ತು. ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2019ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿಯ ಅಂತಿಮ ತೀರ್ಪು ಹೊರಬರುವವರೆಗೆ ಈ ಅಮಾನತು ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್ ತಿಳಿಸಿತ್ತು. ಆದರೆ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗಾರ್ ಗೆ ವಿಧಿಸಲಾದ 10 ವರ್ಷದ ಜೈಲು ಶಿಕ್ಷೆ ಇನ್ನೂ ಜಾರಿಯಲ್ಲಿರುವುದರಿಂದ ಹಾಗೂ ಆ ಪ್ರಕರಣದಲ್ಲಿ ಜಾಮೀನು ದೊರಕದ ಕಾರಣ, ಸೆಂಗಾರ್ ಜೈಲಿನಲ್ಲೇ ಮುಂದುವರೆಯಬೇಕಾಗಿದೆ. ಶಿಕ್ಷೆ ಅಮಾನತಿಗೆ ಸಂಬಂಧಿಸಿ ಹೈಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ. ಸೆಂಗಾರ್ 15 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಮೂರು ಜಾಮೀನುಗಳನ್ನು ಸಲ್ಲಿಸಬೇಕು. ದಿಲ್ಲಿಯಲ್ಲಿರುವ ಸಂತ್ರಸ್ತೆಯ ನಿವಾಸದ 5 ಕಿ.ಮೀ ವ್ಯಾಪ್ತಿಗೆ ಪ್ರವೇಶಿಸಬಾರದು ಮತ್ತು ಸಂತ್ರಸ್ತೆಗೂ ಆಕೆಯ ತಾಯಿಗೂ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಎಂದು ನಿರ್ದೇಶಿಸಲಾಗಿದೆ. ಷರತ್ತುಗಳ ಉಲ್ಲಂಘನೆಯಾದಲ್ಲಿ ಜಾಮೀನು ರದ್ದುಪಡಿಸಲಾಗುವುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಉನ್ನಾವೊ ಅತ್ಯಾಚಾರ ಪ್ರಕರಣ ಹಾಗೂ ಸಂಬಂಧಿತ ಇತರ ಪ್ರಕರಣಗಳನ್ನು 2019ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಉತ್ತರ ಪ್ರದೇಶದ ನ್ಯಾಯಾಲಯಗಳಿಂದ ದಿಲ್ಲಿಗೆ ವರ್ಗಾಯಿಸಲಾಗಿತ್ತು. ಇದೇ ವೇಳೆ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿಯೂ ಇನ್ನೂ ಬಾಕಿಯಿದೆ.
ಕ್ರಿಸ್ಮಸ್ ಸಂಭ್ರಮದ ಮೇಲೆ ದಾಳಿಗಳು ಆತಂಕಕಾರಿ: ಕೋಮು ಅಸಹಿಷ್ಣುತೆ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ
ತಿರುವನಂತಪುರಂ: ದೇಶದ ವಿವಿಧ ಭಾಗಗಳಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯ ಮೇಲೆ ಹೆಚ್ಚುತ್ತಿರುವ ದಾಳಿಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಂತಹ ಘಟನೆಗಳು ಕ್ರಿಸ್ಮಸ್ ಹಬ್ಬದೊಂದಿಗೆ ಬೆಸೆದುಕೊಂಡಿರುವ ಶಾಂತಿಯ ಸಾರ್ವತ್ರಿಕ ಸಂದೇಶವನ್ನು ಹಾಳು ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಘಟನೆಗಳು ತೀವ್ರ ಕಳವಳಕಾರಿಯಾಗಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರ್ಯಾಣ, ಒಡಿಶಾ, ಛತ್ತೀಸ್ಗಢ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಾದ್ಯಂತ ಇಂತಹ ದಾಳಿಗಳು ನಡೆಯುತ್ತಿವೆ ಎಂಬ ವರದಿಗಳು ಬರುತ್ತಿವೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಸರಕಾರ ಕ್ರಿಸ್ಮಸ್ ರಜೆ ಹಾಗೂ ಸಂಭ್ರಮಾಚರಣೆಯನ್ನು ರದ್ದುಗೊಳಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಿದ್ದು, ಅದೇ ದಿನ ಮಾಜಿ ಪ್ರಧಾನಿ ಅಟಲ್ ವಾಜಪೇಯಿ ಜನ್ಮ ದಿನಾಚರಣೆಯನ್ನು ಆಚರಿಸುವಂತೆ ಹಾಗೂ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸುವಂತೆ ಸೂಚಿಸಿದೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ. ಕೇರಳ ಇಂತಹ ಬೆಳವಣಿಗೆಗಳಿಂದ ಮುಕ್ತವಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆಯಾದರೂ, ಅಂತಹ ನಂಬಿಕೆಗಳನ್ನು ಹೂತು ಹಾಕುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ʼಪ್ರತಿ ನಿಮಿಷಕ್ಕೆ 194 ಬಿರಿಯಾನಿʼ: 2025ರಲ್ಲಿ 9.3 ಕೋಟಿ ಬಿರಿಯಾನಿ ಆರ್ಡರ್ ಮಾಡಿದ ಭಾರತ!
ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯಗಳ ಮಾಹಿತಿ ಇಲ್ಲಿದೆ...
ಮೇಕೆದಾಟು ಯೋಜನೆ ಆರಂಭಿಸಲು ಕೇಂದ್ರಕ್ಕೆ ಶೀಘ್ರವೇ ದಾಖಲೆ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್
ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ, ಮೇಕೆದಾಟು ಯೋಜನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ. ಪರಿಷ್ಕೃತ ಡಿಪಿಆರ್ ಅನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ರಾಮನಗರದಲ್ಲಿ ಯೋಜನೆ ಅನುಷ್ಠಾನಕ್ಕೆ ಕಚೇರಿ ಆರಂಭವಾಗಲಿದ್ದು, ಅರಣ್ಯ ಭೂಮಿ ಮತ್ತು ಪರ್ಯಾಯ ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಜಲ ಆಯೋಗ ಮುಂದಿನ ಪ್ರಕ್ರಿಯೆ ನಡೆಸಲಿದೆ.
ಕರ್ನಾಟಕ ಸರ್ಕಾರದಿಂದ ಗ್ರಾಮೀಣ ಭಾಗದ ಆಸ್ತಿದಾರರಿಗೆ ಮತ್ತೊಂದು ಗುಡ್ನ್ಯೂಸ್
ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಆಸ್ತಿದಾರರಿಗೆ ಮತ್ತೊಂದು ಭರ್ಜರಿ ಗುಡ್ನ್ಯೂಸ್ ನೀಡಿದೆ. ಕರ್ನಾಟಕ ಸರ್ಕಾರವು ಈಗಾಗಲೇ ಆಸ್ತಿಗೆ ಸಂಬಂಧಿಸಿದಂತೆ ವಿವಿಧ ಅಪ್ಡೇಟ್ಸ್ ನೀಡಿದೆ. ಬಿ ಖಾತಾದಿಂದ ಎ ಖಾತಾ, ಇ ಖಾತಾ ಹಾಗೂ ಇ - ಸ್ವತ್ತು ವಿಚಾರಗಳಲ್ಲಿ ಭರ್ಜರಿ ಗುಡ್ನ್ಯೂಸ್ ನೀಡಿದೆ. ಇದೀಗ ಮತ್ತೊಂದು ಗುಡ್ನ್ಯೂಸ್ ನೀಡುತ್ತಿದೆ. ಈ ಸೌಲಭ್ಯವು ಮುಖ್ಯವಾಗಿ ಗ್ರಾಮೀಣ ಭಾಗದ ಆಸ್ತಿದಾರರಿಗೆ
‘ಜೈಲರ್ 2’ ಸಿನಿಮಾಕ್ಕೆ 'ಬಾಲಿವುಡ್ ಬಾದ್ ಶಾ' ಎಂಟ್ರಿ? ಶಿವರಾಜ್ ಕುಮಾರ್, ಮಿಥುನ್ ಚಕ್ರವರ್ತಿ, ಸೇತುಪತಿ ಜೊತೆ ನಟನೆ
ಜೈಲರ್ 2 ಚಿತ್ರದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹಿರಿಯ ನಟ ಮಿಥುನ್ ಚಕ್ರವರ್ತಿ ನೀಡಿದ ಸುಳಿವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ರಜನಿಕಾಂತ್ ಮುಂದುವರೆಯಲಿದ್ದು, ಶಾರೂಖ್ ಖಾನ್ ಕೂಡಾ ನಟಿಸಿದರೆ ಇದು ಭಾರತೀಯ ಚಿತ್ರರಂಗದ ದೊಡ್ಡ ಸಂಗಮವಾಗಲಿದೆ. ಚಿತ್ರವು ಮೊದಲ ಭಾಗದ ಕಥೆಯನ್ನು ವಿಸ್ತರಿಸುವ ನಿರೀಕ್ಷೆಯಿದೆ. ಹಲವು ಭಾಷೆಗಳ ಸ್ಟಾರ್ಗಳು ಒಂದೇ ವೇದಿಕೆಗೆ ಬರಲಿದ್ದಾರೆ.
ವಿರಾಟ್ ಕೊಹ್ಲಿ ಅಭಿಮಾನಿಗಳು ಬೆಂಗಳೂರಿನಲ್ಲಿ ಮರ ಏರಿ ಕುಳಿತದ್ದು ನಿಜವೇ? ವೈರಲ್ ಫೋಟೋದ ಸತ್ಯಾಸತ್ಯತೆ ಏನು?
Virat Kohli Fans -ಭಾರತ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳನ್ನು ಗಳಿಸಿ ಮಿಂಚಿದ್ದಾರೆ. ಜೈಪುರದಲ್ಲಿ ರೋಹಿತ್ ಶರ್ಮಾ ಆಡಿದ ಪಂದ್ಯದ ನೇರಪ್ರಸಾರ ಇಲ್ಲದಿದ್ದರೂ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಇತ್ತು. ಅದೇ ವಿರಾಟ್ ಕೊಹ್ಲಿ ಆಡಿದ ಪಂದ್ಯವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರಲಿಲ್ಲ. ನೇರಪ್ರಸಾರವೂ ಇರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಮರ ಹತ್ತಿ ಪಂದ್ಯ ವೀಕ್ಷಿಸಿದರೆಂದು ಹೇಳಲಾಗುತ್ತಿದ್ದು ಅದರ ಫೋಟೋಗಳು ವೈರಲ್ ಆಗುತ್ತಿವೆ.
ತಮಿಳುನಾಡಿನಲ್ಲಿ ಕಮಲ ಅರಳಲು ಡಿಎಂಕೆ ಅವಕಾಶ ನೀಡಿದೆ: ನಟ ವಿಜಯ್ ವಾಗ್ದಾಳಿ
ಚೆನ್ನೈ: ತಮಿಳುನಾಡಿನಲ್ಲಿ ಕಮಲ (ಬಿಜೆಪಿಯ ಚಿಹ್ನೆ) ಅರಳಲು ಆಡಳಿತಾರೂಢ ಡಿಎಂಕೆ ಪಕ್ಷ ಅವಕಾಶ ನೀಡುತ್ತಿದೆ ಎಂದು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಪ್ರಕಟನೆಯೊಂದನ್ನು ಬಿಡುಗಡೆ ಮಾಡಿರುವ ವಿಜಯ್, ಪ್ರಮುಖ ದ್ರಾವಿಡ ಪಕ್ಷವಾದ ಡಿಎಂಕೆ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಹೆಸರಲ್ಲಿ ಜನರನ್ನು ಗೊಂದಲಗೊಳಿಸಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ನಮ್ಮನ್ನು ಕುಗ್ಗಿಸುವ ವಿಫಲ ಪ್ರಯತ್ನದ ನಂತರ, ನಾವು ಕಾಂಚೀಪುರಂ, ಪುದುಚೇರಿ ಹಾಗೂ ಈರೋಡ್ನಲ್ಲಿ ಮೂರು ಯಶಸ್ವಿ ಸಾರ್ವಜನಿಕ ಸಭೆಗಳಿಗೆ ಸಾಕ್ಷಿಯಾದೆವು. ಜನರ ನಮ್ಮೊಂದಿಗೆ ನಿಂತಿರುವುದನ್ನು ಕಂಡು ನಮ್ಮ ಬಾಯಿ ಮುಚ್ಚಿಸಲು ಯತ್ನಿಸಿದವರು ತಬ್ಬಿಬ್ಬಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. ಡಿಎಂಕೆಯ ಮುಖವಾಣಿ ಮುರಸೋಳಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಈ ಲೇಖನವು ಟಿವಿಕೆಯ ವರ್ಚಸ್ಸಿಗೆ ಕಳಂಕ ಹಚ್ಚುವ ಹಾಗೂ ಅಗೌರವ ತೋರುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕದಲ್ಲಿ ಎಚ್-1ಬಿ ವೀಸಾ ಲಾಟರಿ ಪದ್ಧತಿ ಇನ್ನು ಇರೋದಿಲ್ಲ. ಫೆಬ್ರವರಿ 27, 2026 ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತಿದೆ. ಇನ್ನು ಮುಂದೆ ಹೆಚ್ಚು ಸಂಬಳ ಮತ್ತು ವಿಶೇಷ ಕೌಶಲ್ಯ ಇರುವವರಿಗೆ ವೀಸಾ ಕೊಡಲು ಆದ್ಯತೆ ನೀಡಲಾಗುತ್ತದೆ. ಇದರಿಂದ ಭಾರತೀಯ ಉದ್ಯೋಗಿಗಳಿಗೆ ವೀಸಾ ಪಡೆಯುವುದು ಕಷ್ಟವಾಗಬಹುದು. ಅಮೆರಿಕದ ಕಾರ್ಮಿಕರ ಹಿತಾಸಕ್ತಿ ಕಾಪಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ ಅಪಘಾತ ವಿಮೆ, ಹೊರಗುತ್ತಿಗೆ ಸಿಬ್ಬಂದಿಗೆ 20 ಲಕ್ಷ ವಿಮೆ: ಈಶ್ವರ ಖಂಡ್ರೆ
ಬೆಂಗಳೂರು: ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ (ಮರಣ)ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ 20 ಲಕ್ಷ ವಿಮಾ ಸೌಲಭ್ಯ ಕಲ್ಪಿಸಲು ಬ್ಯಾಂಕ್ ಆಫ್ ಬರೋಡಾದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ತಿಳಿಸಿದ್ದಾರೆ. ವನ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಮುಂಚೂಣಿ
ಕಡಬ, ಡಿ.25. ಕಡಬ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ 2025–28ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಕೆ.ಎಸ್. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಚೆನ್ನಾವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್., ಕಾರ್ಯದರ್ಶಿಯಾಗಿ ಸುಧಾಕರ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರವೀಣ್ ರಾಜ್ ಅವರು ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಜಯ ಕುಮಾರ್, ರತ್ನಾಕರ, ಹರೀಶ್ ಬಿ., ನಾಗರಾಜ್ ಎನ್.ಕೆ., ಸ್ವಾತಿ ಕೆ.ವಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.28 : ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ʼರಜತ ರುಕ್ಮಿಣಿʼ ಸಮಾರಂಭ
ಉಳ್ಳಾಲ: ಕುಂಪಲದ ಶ್ರೀ ಬಾಲಕೃಷ್ಣ ಮಂದಿರದ ಅಂಗ ಸಂಸ್ಥೆಯಾದ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ಇದೇ ಡಿ.28 ರಂದು ಕುಂಪಲ ಬಾಲಕೃಷ್ಣ ಮಂದಿರದ ಕೃಷ್ಣಾಂಗಣದಲ್ಲಿ ರಜತ ರುಕ್ಮಿಣಿ ಸಮಾರಂಭ ನಡೆಯಲಿದೆಯೆಂದು ಕುಂಪಲ ಬಾಲಕೃಷ್ಣ ಮಂದಿರದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್.ಕುಂಪಲ ಹೇಳಿದರು. ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಡಿ.28ರ ಬೆಳಿಗ್ಗೆ 9 ಗಂಟೆಗೆ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆಗೊಂಡು ಬಳಿಕ ದಕ್ಷಿಣ ಕನ್ನಡ-ಕಾಸರಗೋಡು ಉಭಯ ಜಿಲ್ಲಾ ಮಟ್ಟದ ಮಾತೃವಾಣಿ ಮಹಿಳಾ ಭಜನಾ ಸ್ಫರ್ಧೆ ನಡೆಯಲಿದೆ ಎಂದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಮತಾನಂದಮಯೀ ಆಶೀರ್ವಚನ ನೀಡಲಿದ್ದು, ಅನ್ವಿತ್ ಇಲೆಕ್ಟ್ರಾನಿಕ್ಸ್ ತೊಕ್ಕೊಟ್ಟು ಇದರ ನಿರ್ದೇಶಕಿ ಮೋಹನ ಕುಮಾರಿ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕರಾದ ಮೀನಾಕ್ಷಿ ಸೀತಾರಾಮ ಶೆಟ್ಟಿ ಭಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶಕ್ತಿ ಕಾಂಪ್ಲೆಕ್ಸ್ ತೊಕ್ಕೊಟ್ಟು ಇದರ ಮಾಲಕರಾದ ಮಧುಶ್ರೀ ಸುರೇಶ್ ಭಟ್ನಗರ, ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಗಟ್ಟಿ ಪಿಲಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಮಧ್ಯಾಹ್ನ 3 ಗಂಟೆಯಿಂದ ನೃತ್ಯ ದಾಮಿನಿ 2025 ಜಿಲ್ಲಾ ಮಟ್ಟದ ಜನಪದ ನೃತ್ಯ ಸ್ಫರ್ಧೆ ನಡೆಯಲಿದೆ.ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ 25 ಸಾಧಕ ಮಹಿಳೆಯರು ಮತ್ತು ಮಹಿಳಾ ಸಂಘ ಸಂಸ್ಥೆಗಳಿಗೆ ರಜತ ರಾಣಿಪುರಸ್ಕಾರ ಪ್ರದಾನಿಸಲಾಗುವುದು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಶ್ರೀ ಬಾಲಕೃಷ್ಣ ಮಂದಿರದ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷರಾದ ಜಯಲಕ್ಷ್ಮಿ ಬಿ.ಜೆ, ಪ್ರಧಾನ ಕಾರ್ಯದರ್ಶಿ ಮಮತಾ ಸತೀಶ್ ಕುಂಪಲ,ಕೋಶಾಧಿಕಾರಿ ಶಾಲಿನಿ ಗಣೇಶ್ ,ಕ್ರೀಡಾ ಕಾರ್ಯದರ್ಶಿ ಗಾಯತ್ರಿ ಜಯಚಂದ್ರ ,ಬಾಲಕೃಷ್ಣ ಮಂದಿರದ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
'ನಾನು ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆʼ : ಕಾರವಾರ ಕರಾವಳಿ ಉತ್ಸವದಲ್ಲಿ ಗಾಯಕ ಸೋನು ನಿಗಮ್ ಮನದಾಳದ ಮಾತು
ಕಾರವಾರ: ನಗರದ ಟ್ಯಾಗೋರ್ ಕಡಲ ತೀರದಲ್ಲಿ ಆಯೋಜಿಸಲಾಗಿರುವ ಕರಾವಳಿ ಉತ್ಸವ ಸಪ್ತಾಹದ ಮೂರನೇ ದಿನದಂದು ಖ್ಯಾತ ಗಾಯಕ ಸೋನು ನಿಗಮ್ ತಮ್ಮ ಸುಮಧುರ ಧ್ವನಿಯ ಮೂಲಕ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದರು. ಮಯೂರ ವರ್ಮ ವೇದಿಕೆಯ ಮೇಲೆ ಹಾಡುತ್ತಲೇ ಕನ್ನಡಿಗರೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದ ಅವರು, ತಾವು ಹಿಂದಿ ಭಾಷಿಕರಾಗಿದ್ದರೂ ತಮ್ಮ ಅಂತರಾತ್ಮದಲ್ಲಿ ಕನ್ನಡ ಮನೆ ಮಾಡಿದೆ ಎಂದು ಭಾವುಕರಾಗಿ ನುಡಿದರು. ನಾನು ಈ ಜನ್ಮದಲ್ಲಿ ಹಿಂದಿ ಭಾಷಿಕನಾಗಿರಬಹುದು, ಆದರೆ ನನ್ನ ಭಾವನೆಗಳನ್ನು ಗಮನಿಸಿದರೆ ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎನಿಸುತ್ತದೆ. ಇದೇ ಕಾರಣಕ್ಕೆ ಕನ್ನಡ ಹಾಡುಗಳನ್ನು ಹಾಡುವಾಗ ಸಾಹಿತ್ಯಕ್ಕೆ ತಕ್ಕಂತೆ ಸಹಜವಾಗಿಯೇ ನನ್ನಲ್ಲಿ ಭಾವನೆಗಳು ಸ್ಫುರಿಸುತ್ತವೆ ಎಂದು ಅವರು ವೇದಿಕೆಯ ಮೇಲೆ ಮನದಾಳದ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಆರಂಭದಲ್ಲಿ ಸತತ ಎಂಟು ಹಿಂದಿ ಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದ ಸೋನು ನಿಗಮ್, ನಂತರ ಕನ್ನಡಿಗರ ನೆಚ್ಚಿನ ʼಈ ಸಂಜೆ ಯಾಕಾಗಿದೆ..ʼ ಹಾಡನ್ನು ಪ್ರಾರಂಭಿಸಿದರು. ಕಾರ್ಯಕ್ರಮದುದ್ದಕ್ಕೂ 'ನೀ ಸನಿಹಕೆ ಬಂದರೆ', 'ಪರವಶನಾದೆನು', 'ಮಿಂಚಾಗಿ ನೀ ಬರಲು' ಸೇರಿದಂತೆ ಹಲವು ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿದರು. ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಟ್ಯಾಗೋರ್ ಕಡಲತೀರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿದ್ದರು.
ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಫ್) ಅಸಿಮ್ ಮುನೀರ್ ಅವರಿಗೆ ನೀಡಿರುವ ಅನಿಯಂತ್ರಿತ ಅಧಿಕಾರ, ಕೇವಲ ಪಾಕಿಸ್ತಾನ ಮಾತ್ರವಲ್ಲದೇ ಅನ್ಯ ದೇಶಗಳಲ್ಲೂ ದುಷ್ಪರಿಣಾಮ ಬೀರತೊಡಗಿದೆ. ಇಮ್ರಾನ್ ಖಾನ್ ಸರ್ಕಾರದಲ್ಲಿ ಹೊಣೆಗಾರಿಕೆ ಸಲಹೆಹಾರರಾಗಿದ್ದ ಮಿರ್ಜಾ ಶಹಜಾದ್ ಅಕ್ಬರ್ ಅವರ ಮೇಲೆ ಯುಕೆನಲ್ಲಿ ಮಾರಣಾಂತಿಕ ದಾಳಿ ನಡೆದಿದೆ. ಅಕ್ಬರ್ ಬೆಂಬಲಿಗರು ಈ ದಾಳಿಗೆ ಅಸಿಮ್ ಮುನೀರ್ ಅವರೇ ಆದೇಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನದ ಆಂತರಿಕ ಜಗಳ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಮರಳು ಅಭಾವ; ಅನುದಾನಕ್ಕೆ ಕೊಕ್ : ಇಕ್ಕಟ್ಟಿನಲ್ಲಿ ವಸತಿ ಯೋಜನೆ ಫಲಾನುಭವಿಗಳು
ಚಿತ್ತಾಪುರ: ಮನೆ ಛತ್ತಿನ ಹಂತಕ್ಕೆ ತಲುಪಿದೆ. ಪ್ಲಾಸ್ಟರ್ ಮಾಡಲು ಮರಳಿಲ್ಲ. ಕಟ್ಟಡ ಪೂರ್ಣಗೊಳಿಸಲೂ ಆಗುತ್ತಿಲ್ಲ. ಬುಟ್ಟಿ ಮರಳೂ ಕೈಗೆಟುಕುತ್ತಿಲ್ಲ. ವಸತಿ ಯೋಜನೆಯಡಿ ನಿರ್ಮಿಸುವ ನಮ್ಮ ಮನೆಯ ಅನುದಾನ ಹಿಂದಿರುಗುವ ಭೀತಿ ಕಾಡುತ್ತಿದೆ ಎನ್ನುತ್ತಿದ್ದಾರೆ ಫಲಾನುಭವಿಗಳು. ತಾಲೂಕಿನಲ್ಲಿ ಕಳೆದ 8-10ತಿಂಗಳಿನಿಂದ ಮರಳು ಅಭಾವದಿಂದ ಮನೆ, ವಾಣಿಜ್ಯ ಮಳಿಗೆ ನಿರ್ಮಾಣ ಸೇರಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಪ್ರಧಾನಮಂತ್ರಿ ಆವಾಸ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ,ದೇವರಾಜ ಅರಸು ವಸತಿ ಯೋಜನೆ, ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮರಳಿಗೆ ಪರದಾಡುವಂತಾಗಿದೆ. ಬಹಳಷ್ಟು ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಮರಳಿನ ಕೊರತೆ ತಲೆನೋವಾಗಿ ಪರಿಣ ಮಿಸಿದೆ. ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ನಿಗಧಿತ ಅವಧಿಯೊಳಗೆ ಮುಗಿಸಬೇಕು. ಇಲ್ಲವಾದಲ್ಲಿ ಸಹಾಯಧನ ಸಿಗದೆ ಅನುದಾನ ವಾಪಸ್ ಹೋಗುವ ಸಾಧ್ಯತೆ ಇರುವುದರಿಂದ ಫಲಾನುಭವಿಗಳು ಕಂಗಾಲಾಗಿದ್ದಾರೆ. ಇನ್ನೊಂದೆಡೆ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಿಕೊಡಲು ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಗಣಿಕಾರಿಕೆ ಬಂದ್: ತಾಲೂಕಿನಲ್ಲಿ ಮರಳು ಕೊರತೆ ಹೆಚ್ಚಾಗಿದೆ. ತಾಲೂಕಿನಲ್ಲೀಗ ಮರಳು ಗಣಿಗಾರಿಕೆ ಬಂದ್ ಇರುವುದರಿಂದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಜನಸಾಮಾನ್ಯರಿಗೆ ನಾನಾ ವಸತಿ ಯೋಜನೆಯಡಿ ಮಂಜೂರಾದ ಮನೆ ಹಾಗೂ ಸ್ವಂತ ಮನೆ ನಿರ್ಮಾಣಕ್ಕೂ ತೊಡಕುಂಟಾಗಿದೆ. ಮರಳು ಗಣಿಗಾರಿಕೆ ಸ್ಥಗಿತದಿಂದ ಕಟ್ಟಡ ಕಾರ್ಮಿಕರು, ಮರಳು ಸಾಗಣೆದಾರರು, ಟ್ರ್ಯಾಕ್ಟರ್ ಮಾಲೀಕರು, ಟಿಪ್ಪರ್ ಮಾಲೀಕರು ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ಕಾರ್ಮಿಕರಿಗೆ ಕೆಲಸವಿಲ್ಲ: ಇತ್ತ ಮರಳು ಗಣಿಗಾರಿಕೆ ಸ್ಥಗಿತದಿಂದ ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ. ಸಕಾಲಕ್ಕೆ ಮರಳು ದೊರಕಿದರೆ ಕಟ್ಟಡ ಕಾರ್ಮಿಕರು ದಿನವೂ 400-500 ರೂಪಾಯಿ ಆದಾಯ ಪಡೆಯುತ್ತಿದ್ದೇವು. ಆದಾಯವಿಲ್ಲದೆ ಕಷ್ಟದ ಜೀವನ ಸಾಗಿಸುವಂತಾಗಿದೆ ಎನ್ನುತ್ತಾರೆ ಟ್ರ್ಯಾಕ್ಟರ್, ಟಿಪ್ಪರ್ ಚಾಲಕರು. ಕ್ರಮ ಕೈಗೊಳ್ಳಿ: ತಾಲೂಕಿನಲ್ಲಿ ಸೃಷ್ಟಿಯಾಗಿರುವ ಕೃತಕ ಮರಳು ಅಭಾವ ತಡೆದು, ತುರ್ತಾಗಿ ಮರಳು ಸಿಗುವಂತಾಗಲು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಖಾಸಗಿ, ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಮರಳಿನ ಪೂರೈಕೆಯಲ್ಲಿ ಆಗಿರುವ ತೀವ್ರ ಕೊರತೆ ಗಮನಹರಿಸಿ, ತಾಲೂಕಿನಲ್ಲಿ ಅಗತ್ಯವಿರುವ ಮರಳನ್ನು ಜಿಲ್ಲಾ ಉಸ್ತುವಾರಿ ಸಮಿತಿ ಗುರುತಿಸಿ ಮುಡಬೂಳ, ಭಾಗೋಡಿ, ದಂಡೋತಿ, ಕಾಟಮದೇವರಹಳ್ಳಿ ಹಾಗೂ ಕದ್ದರಗಿ ಸೇರಿ ವಿವಿಧೆಡೆ ಇರುವ ಬ್ಲಾಕ್ಗಳಲ್ಲಿ ಮರಳು ಎತ್ತುವಳಿ ಮಾಡಿ, ಬಹಿರಂಗ ಹರಾಜು ಕರೆದು ಸರ್ಕಾರಿ ಮರಳು ಬ್ಲಾಕ್ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕಿದೆ. ಅಲ್ಲದೆ ತಾಲೂಕಿನ ಮರಳನ್ನು ಬೇರೆಡೆ ಸಾಗಿಸದೆ ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿಯ ಕಾಮಗಾರಿ ನಿರ್ವಹಣೆಗೆ ಬಳಸುವಂತೆ ಸೂಚಿಸಬೇಕು ಎಂದು ಮರಳು ಸಾಗಣೆದಾರರು ಆಗ್ರಹಿಸಿದ್ದಾರೆ. ನಾವು ಮನೆ ಕಟ್ಟಡ ಕೆಲಸ ಮಾಡೋರು. ಕೆಲಸ ಹಿಡಿದ ಮೇಲೆ ಮನೆಯ ಮಾಲೀಕರು ಮರಳಿಲ್ಲ, ಮರಳು ಬಂದ ಮೇಲೆ ಕೆಲಸಕ್ಕೆ ಬನ್ನಿ ಎನ್ನುತ್ತಿದ್ದಾರೆ. ಹೀಗಾಗಿ ಜೀವನ ನಡೆಸುವುದು ತುಂಬ ಕಷ್ಟವಾಗಿದೆ. -ಮಕ್ಬೂಲ್ ಗೌಂಡಿ (ಮೇಸ್ತ್ರಿ) ಕಳೆದ ಕೆಲ ದಿನಗಳ ಹಿಂದೆಯೇ ಮರಳು ಎತ್ತುವಳಿ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ವೇ ಪ್ರಾರಂಭಿಸಲಾಗಿದೆ. ವರದಿ ಬಂದ ತಕ್ಷಣ ಜನೇವರಿ ತಿಂಗಳಲ್ಲಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಸೋಮಶೇಖರ ಎಂ. ಉಪನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಾಲೂಕಿನಲ್ಲಿ 8-10 ತಿಂಗಳಿನಿಂದ ಮರಳಿನ ಅಭಾವ ಸೃಷ್ಟಿಯಾಗಿದ್ದು, ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಆದಷ್ಟು ಬೇಗನೆ ಸ್ಥಗಿತ ಆಗಿರುವ ಮರಳು ಬ್ಲಾಕ್ಗಳನ್ನು ಪುನಃ ಪ್ರಾರಂಭಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಕಟ್ಟಡ ಕಾರ್ಮಿಕರು, ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರಿಗೆ ಅನುಕೂಲ ಕಲ್ಪಿಸಬೇಕು. -ರಾಜಶೇಖರ, ಸ್ಥಳೀಯ ನಿವಾಸಿ ಮನೆ ಕಟ್ಟುವ ಕೆಲಸ ಒಂದು ವರ್ಷದ ಹಿಂದೆ ಶುರು ಮಾಡಿದ್ದೇವೆ. ಆದರೆ ಇಲ್ಲಿಯವರೆಗೆ ಮುಗಿಯುತ್ತಿಲ್ಲ. ಮನೆ ಕಟ್ಟಲು ಮರಳು ಖಾಲಿ ಆಗಿದೆ. ಹೆಚ್ಚು ದುಡ್ಡು ಕೊಟ್ಟರೂ ಸಿಗುತ್ತಿಲ್ಲ. -ಶೈಬಾಝ್, ಮನೆ ಕಟ್ಟಡ ಮಾಲೀಕ
ಬಸ್ ಅನಾನುಕೂಲ: ವಿದ್ಯಾಭ್ಯಾಸಕ್ಕೆ ತೊಂದರೆ; ಹೆಚ್ಚಿನ ಬಸ್ ಬಿಡಲು ವಿದ್ಯಾರ್ಥಿಗಳು, ಸಾರ್ವಜನಿಕರ ಆಗ್ರಹ
ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿಯಿಂದ ಗರಗ ಮಾರ್ಗವಾಗಿ ಸಂಡೂರಿನ ಯಶವಂತನಗರಕ್ಕೆ ತೆರಳುವ ಬಸ್ಗಳ ಕೊರತೆಯಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಹಳ್ಳಿ ಭಾಗದ ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು, ಈ ಭಾಗದಲ್ಲಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಬೇಕು ಎಂಬುವುದು ಪ್ರಯಾಣಿಕರ ಒಕ್ಕೊರಲ ಆಗ್ರಹ. ನಿತ್ಯವೂ ತಳ್ಳಾಟದ ಪ್ರಯಾಣ: ಮರಿಯಮ್ಮನಹಳ್ಳಿ ವಾಣಿಜ್ಯ ಕೇಂದ್ರ ಮಾತ್ರವಲ್ಲದೆ, ಶಿಕ್ಷಣ ಕೇಂದ್ರವೂ ಆಗಿದ್ದು, ಹೋಬಳಿಯ ಜನರು ವ್ಯಾಪಾರ ವಹಿವಾಟು, ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ಪಟ್ಟಣವನ್ನು ಅವಲಂಬಿಸಿದ್ದಾರೆ. ಸಂಡೂರು ತಾಲೂಕಿನ ಯಶವಂತ ನಗರಕ್ಕೂ ನೂರಾರು ಪ್ರಯಾಣಿಕರು ನಿತ್ಯವೂ ಸಂಚರಿಸುತ್ತಾರೆ. ಇಷ್ಟಿದ್ದರೂ ಹೊಸಪೇಟೆಯ ರಸ್ತೆ ಸಾರಿಗೆ ಘಟಕದ ಇಲಾಖೆಯಿಂದ ಬೆಳಗ್ಗೆ 9:30 ಸಂಜೆ 6:30ಕ್ಕೆ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣಿಕರಿಗೆ ಇನ್ನೂ ಹೆಚ್ಚು ಬಸ್ ಓಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈಗಿರುವ ಬಸ್ಗಳಲ್ಲಿ ಜನದಟ್ಟಣೆಯಿಂದ ನೂಕಾಟ, ತಳ್ಳಾಟ ಹೆಚ್ಚುತ್ತಿದ್ದು, ಬಸ್ಸಿಗೆ ಜೋತು ಬಿದ್ದು ಪ್ರಯಾಣ ಮಾಡಬೇಕಿದೆ. ವಯೋವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಅನಿವಾರ್ಯವಾಗಿ ಆಟೋ, ಅವರಿವರ ಬೈಕ್ ಅವಲಂಬಿಸಬೇಕಾದ ಸ್ಥಿತಿ ಬಂದಿದೆ. ಸ್ಪಂದಿಸದ ಅಧಿಕಾರಿಗಳು: ಮರಿಯಮ್ಮನಹಳ್ಳಿಯಿಂದ ಗರಗ-ಯಶವಂತ ನಗರಕ್ಕೆ ಹೆಚ್ಚುವರಿ ಬಸ್ ಬಿಡುವಂತೆ ಹೊಸಪೇಟೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳೋರು ಇಲ್ಲ. ಬಸ್ ಓಡಿಸುವಂತೆ ಆಗ್ರಹ: ಹೊಸಪೇಟೆ ಸಾರಿಗೆಯಿಂದ ಅಥವಾ ಸಂಡೂರು ಡಿಪೋದಿಂದ ಬೆಳಗ್ಗೆ 7ಕ್ಕೆ ಹೆಚ್ಚುವರಿ ಬಸ್ ಬಿಡುವ ಮೂಲಕ ಅನುಕೂಲ ಕಲ್ಪಿಸಬೇಕು ಎಂಬುದು ಜನರ ಆಗ್ರಹ. ಬಸ್ ಕೊರತೆಯಿಂದವಿದ್ಯಾರ್ಥಿಗಳು ಶಾಲೆ ತಪ್ಪಿಸಿಕೊಳ್ಳುವುದು, ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆಗೆ ಹೋಗದಿರುವಂತಾಗಿದೆ. ಆಧಿಕಾರಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು. -ವಿನೋದ, ವಿದ್ಯಾರ್ಥಿ, ನಾಗಲಾಪುರ ತಾಂಡಾ ಜಿಲ್ಲೆಯಲ್ಲಿ ಜನರಿಗೆ ಬಸ್ ಸೌಕರ್ಯ ಒದಗಿಸಲು ಬಸ್ಗಳ ಕೊರತೆಯಿದ್ದು, ಸರ್ಕಾರಕ್ಕೆ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದೇವೆ. ಮರಿಯಮ್ಮನಹಳ್ಳಿ, ಯಶವಂತನಗರಕ್ಕೆ ಬಸ್ ಸಂಚಾರದ ಅವಶ್ಯವಿದ್ದರೆ, ಇನ್ನೂ ಎರಡು ಬಸ್ ಓಡಿಸಲಾಗುವುದು. -ರಾಜೇಶ ಉದ್ದಾರ್, ಕರ್ನಾಟಕ ವಿಭಾಗಿಯ ನಿಯಂತ್ರಣಾಧಿಕಾರಿ, ವಿಜಯನಗರ ಜಿಲ್ಲೆ
2005ಕ್ಕೂ ಮುಂಚೆ ತಂದೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಹೊಸ ರೂಲ್ಸ್
ಭಾರತದಲ್ಲಿ ಕುಟುಂಬದ ಆಸ್ತಿ (Ancestral Property) ಹಂಚಿಕೆ ವಿಷಯಕ್ಕೆ ಬಂದರೆ ಅಲ್ಲಿ ಗಂಡು ಮಕ್ಕಳಿಗೆ ಸಿಗುವ ಆದ್ಯತೆ ಹೆಣ್ಣುಮಕ್ಕಳಿಗೆ ಸಿಗುತ್ತಿರಲಿಲ್ಲ. ಎಷ್ಟೋ ವರ್ಷಗಳಿಂದ ತಂದೆಯ ಆಸ್ತಿಯಲ್ಲಿ ಮಗಳ ಪಾಲು ಏನು ಎಂಬ ಬಗ್ಗೆ ಗೊಂದಲಗಳು ಇದ್ದವು. ಅದರಲ್ಲೂ ಪ್ರಮುಖವಾಗಿ, 2005ಕ್ಕೂ ಮೊದಲು ತಂದೆ ತೀರಿಕೊಂಡಿದ್ದರೆ, ಆ ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಲಕ್ಷಾಂತರ ಕುಟುಂಬಗಳಲ್ಲಿತ್ತು. ಈಗ ಸುಪ್ರೀಂ ಕೋರ್ಟ್ ಈ ಗೊಂದಲಗಳಿಗೆ ತೆರೆ ಎಳೆದಿದ್ದು, ತಂದೆಯ ಮರಣದ ದಿನಾಂಕಕ್ಕೂ ಮತ್ತು ಮಗಳ ... Read more The post 2005ಕ್ಕೂ ಮುಂಚೆ ತಂದೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಹೊಸ ರೂಲ್ಸ್ appeared first on Karnataka Times .
ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿ. 29 ರಿಂದ ಎರಡು ದಿನಗಳ ಕಾಲ ಕೋಲ್ಕತ್ತಾಗೆ ಭೇಟಿ; ಎಸ್ಐಆರ್ ಬಗ್ಗೆ ಚರ್ಚೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 29 ರಿಂದ ಕೋಲ್ಕತ್ತಾಗೆ ಭೇಟಿ ನೀಡಲಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಿಧಾನಸಭಾ ಚುನಾವಣೆ ತಂತ್ರಗಾರಿಕೆ ಕುರಿತು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಅವರ ಸ್ವಾಗತಕ್ಕಾಗಿ ಬೃಹತ್ ಬೈಕ್ ಮೆರವಣಿಗೆಯನ್ನು ಆಯೋಜಿಸಲಾಗಿದೆ, ಇದು ಪಕ್ಷದ ಸಂಘಟನಾ ಶಕ್ತಿಯನ್ನು ಪ್ರದರ್ಶಿಸುವ ಗುರಿ ಹೊಂದಿದೆ.
ಪುತ್ತೂರು: ಕಳವು ಪ್ರಕರಣ; ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ
ಪುತ್ತೂರು: ತಾಲೂಕಿನ ಬಡಗನ್ನೂರು ಗ್ರಾಮದ ಈಶ್ವರಮಂಗಲ ಎಂಬಲ್ಲಿನ ರೆಸ್ಟೋರೆಂಟ್ ನಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ನೌಕರನಿಗೆ ಪುತ್ತೂರು ಎ.ಎಸ್.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು 3 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸುಳ್ಯ ತಾಲೂಕಿನ ಐವರ್ನಾಡು ನಿವಾಸಿ ಶಿವಪ್ರಸಾದ್ ಈ ಪ್ರಕರಣದ ಆರೋಪಿಯಾಗಿದ್ದು, ಈತ ಈಶ್ವರಮಂಗಲದಲ್ಲಿರುವ ಶನ್ಯ ರೆಸ್ಟೋರೆಂಟ್ನಲ್ಲಿ ಅಡುಗೆ ಕೆಲಸಗಾರನಾಗಿದ್ದ, ಆರೋಪಿಯು 2024ರ ಏಪ್ರಿಲ್ 21ರಿಂದ 24ರ ನಡುವೆ ಕಿಚನ್ ನ ಬಾಗಿಲು ಮುರಿದು ಡ್ರಾವರ್ನಲ್ಲಿದ್ದ ರೂ. 90,000 ನಗದನ್ನು ಕಳವು ಮಾಡಿದ್ದ. ಈ ದೃಶ್ಯವು ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು, ಅದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಿಕೊಂಡಿದ್ದರು. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮ ಭಂಡಾರಿ ಅವರು ಪ್ರಕರಣದ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಚೇತನಾ ದೇವಿ ಅವರು ವಾದ ಮಂಡಿಸಿದರು. ಎರಡೂ ಪಕ್ಷಗಳ ವಾದ ಆಲಿಸಿದ ನ್ಯಾಯಾಧೀಶ ದೇವರಾಜ್ ಅವರು ಆರೋಪಿಗೆ 3 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ರೂ. 10,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.
ಡಿ. 27: ಗಜೇಂದ್ರಗಡದಲ್ಲಿ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ; ಕನ್ನಡ, ಉರ್ದು ಕವಿಗೋಷ್ಠಿ
ಗದಗ: ಮುಸ್ಲಿಮ್ ಲೇಖಕರ ಸಂಘವು ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ಕೊಡಮಾಡುವ 2024ನೇ ಸಾಲಿನ ರಾಜ್ಯ ಮಟ್ಟದ 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್ರದಾನ ಹಾಗೂ ಕನ್ನಡ ಮತ್ತು ಉರ್ದು ಕವಿಗೋಷ್ಠಿಯು ಡಿ 27ರಂದು ಬೆಳಿಗ್ಗೆ 10.30ಕ್ಕೆ ಗಜೇಂದ್ರಗಡದ ಶ್ರೀ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾl ಐ.ಜೆ. ಮ್ಯಾಗೇರಿ (ಕೃತಿ: ʼಜೈಲ್ ಡೈರಿʼ) ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಚಿವ ಡಾl ಎಚ್.ಕೆ. ಪಾಟೀಲ್, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಹಾಗೂ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಉರ್ದು ಕವಿಗೋಷ್ಠಿಯಲ್ಲಿ ಕವಿಗಳಾದ ಎ. ಎಸ್. ಮಕಾನದಾರ, ಡಾ. ಹಸೀನಾ ಖಾದ್ರಿ, ಶಿಲ್ಪಾ ಮ್ಯಾಗೇರಿ, ಮೊಹಮ್ಮದ್ ಅರ್ಶದ್ ಹಿರೇಹಾಳ, ಮುರ್ತುಜಾ ಬೇಗಂ ಕೊಡಗಲಿ, ಅನ್ವರ್ ಅಹ್ಮದ್ ವಣಗೇರಿ ಮತ್ತು ಖಾಝಿ ಶಬ್ಬೀರ್ ಅಹ್ಮದ್, ಶಬ್ಬೀರ್ ಮನ್ಸೂರಿ ಭಾಗವಹಿಸಲಿದ್ದಾರೆ. ಮುಸ್ಲಿಮ್ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಪ್ರಕಟಣೆ ತಿಳಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ ಅಪಘಾತ ವಿಮೆ, ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ 20 ಲಕ್ಷ : ಈಶ್ವರ ಖಂಡ್ರೆ
ವನ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಮುಂಚೂಣಿ ಹೊರಗುತ್ತಿಗೆ ಸಿಬ್ಬಂದಿ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿಗೂ 20 ಲಕ್ಷಗಳ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಅರಣ್ಯ ಇಲಾಖೆಯ ಎಲ್ಲಾ ಖಾಯಂ ಉದ್ಯೋಗಿಗಳಿಗೆ, ಅವರ ವೇತನ ಮತ್ತು ಶ್ರೇಣಿಯ ಹೊರತಾಗಿ ಎಲ್ಲರಿಗೂ 1 ಕೋಟಿ ರೂ.ಗಳ ಅಪಘಾತ ಮರಣ ವಿಮೆಯನ್ನು ಬ್ಯಾಂಕ್ ನೀಡುತ್ತದೆ, ಒಂದೊಮ್ಮೆ ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಹೆಚ್ಚುವರಿಯಾಗಿ 25ಲಕ್ಷ ರೂ.ಗಳನ್ನು ಬ್ಯಾಂಕ್ ಪಾವತಿಸಲಿದೆ ಎಂದು ರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
IMD Weather: ಕರ್ನಾಟಕ, ದೇಹಲಿ ಸೇರಿ ಈ ಭಾಗಗಳಲ್ಲಿ ಅಧಿಕ ಚಳಿ, ಶೀತ ಅಲೆ ಮುನ್ಸೂಚನೆ
ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಚಳಿಗಾಲ ತೀವ್ರಗೊಂಡಿದೆ. ಉತ್ತರ ಮತ್ತು ಪೂರ್ವ ಭಾರತದ ಹಲವು ರಾಜ್ಯಗಳಲ್ಲಿ ಶೀತ ಅಲೆಗೆ ಜನರು ನಡುಗಿದ್ದಾರೆ. ಕಡಿಮೆ ತಾಪಮಾನದ ದಿನಗಳು ಇನ್ನೂ ಐದು ದಿನ ಮುಂದುವರಿಯುವ ಸಾಧ್ಯತೆ ಇದೆ. ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹತ್ವದ ಮುನ್ಸೂಚನೆ ನೀಡಿದೆ. ಸಮುದ್ರದ ಮೇಲ್ಭಾಗದಲ್ಲಿ ಒಂದಷ್ಟು ಬದಲಾವಣೆಗಳು, ಬಿರುಗಾಳಿ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಬಿ.ಎಚ್. ಖಾದರ್ ಬಂಟ್ವಾಳ ಅವರಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ
ಬಂಟ್ವಾಳ : ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಹಿರಿಯ ಸಾಮಾಜಿಕ ರಾಜಕೀಯ ಮುಂದಾಳು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಅವರನ್ನು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳದ ಅವರ ನಿವಾಸದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಭಾಷಣ ಮಾಡಿದರು. ಸನ್ಮಾನವನ್ನು ಸ್ವೀಕರಿಸಿದ ಬಿ.ಎಚ್.ಖಾದರ್ ಮಾತನಾಡಿ, ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಕಾರ್ಯಾ ನಿರ್ವಹಿಸುವ ಅವಕಾಶ ಸಿಕ್ಕಿದಾಗ ಜನರಿಗೆ ಪ್ರಾಮಣಿಕ ಸೇವೆ ಸಲ್ಲಿಸಿದ ಪ್ರತೀಕವಾಗಿ ಈ ಪ್ರಶಸ್ತಿ ಬಂದಿದ್ದು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪ್ರೀತಿ ಗೌರವಾದರಗಳಿಗೆ ಋಣಿಯಾಗಿದ್ದೇನೆ ಎಂದರು. ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಶುಭ ಹಾರೈಸಿದರು. ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಕ್ ರಹ್ಮತುಲ್ಲಾ ಕಾವಳಕಟ್ಟೆ, ಪಿ.ಮೊಹಮ್ಮದ್ ಪಾಣೆಮಂಗಳೂರು, ಎನ್. ಮೊಹಮ್ಮದ್ ನಾರಂಗೋಡಿ, ಮೊಹಮ್ಮದ್ ಸಾಗರ್ ಮಿತ್ತಬೈಲ್, ಪ್ರಮುಖರಾದ ಹಾರೂನ್ ರಶೀದ್ ಬಂಟ್ವಾಳ, ಸವಾಝ್ ಬಂಟ್ವಾಳ, ಇಫಾಝ್ ಬಂಟ್ವಾಳ, ಅನ್ವರ್ ಕರೋಪಾಡಿ, ಎ.ಕೆ.ಮಹಮ್ಮದ್, ರಿಯಾಝ್ ಕೆ, ಅಹ್ಮದ್ ಶಾಫಿ, ಅಬ್ಬಾಸ್ ಹಾಗೂ ಬಿ.ಎಚ್ ಖಾದರ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಸಂಸ್ಥೆಯ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ವಂದಿಸಿದರು.
ದೇಪಾಪುರದಲ್ಲಿ ಬೋನಿಗೆ ಬಿದ್ದ ಹುಲಿ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಚಾಮರಾಜನಗರ : ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿಯೊಂದು ಗುಂಡ್ಲುಪೇಟೆ ತಾಲ್ಲೂಕಿನ ದೇಪಾಪುರ ಗ್ರಾಮದಲ್ಲಿಟ್ಟ ಬೋನಿನಲ್ಲಿ ಸೆರೆಯಾಗಿದೆ. ದೇಪಾಪುರ ಸೇರಿದಂತೆ ಹಲವಾರು ಗ್ರಾಮಗಳ ಜನರ ಒತ್ತಾಯದ ಮೇರೆಗೆ ಅರಣ್ಯಾಧಿಕಾರಿಗಳು ಹುಲಿ ಸೆರೆಗೆ ಬೋನಿರಿಸಿದ್ದರು. ಇದೀಗ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನ್ ಗೆ ಬಿದ್ದ ಹುಲಿಯನ್ನು ನೋಡಲು ಗ್ರಾಮಸ್ಥರು ಕುತೂಹಲದಿಂದ ನೆರೆದಿದ್ದಾರೆ. ದೂರದಿಂದಲೇ ಹುಲಿಯನ್ನು ವೀಕ್ಷಿಸಿದ ಗ್ರಾಮಸ್ಥರು ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಬೋನ್ ನಲ್ಲಿ ಸೆರೆಯಾಗಿರುವ ಹುಲಿಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲು ಮುಂದಾಗಿದ್ದಾರೆ.
ಆಲಿಗಢ ಮುಸ್ಲಿಂ ವಿವಿ ಕ್ಯಾಂಪಸ್ನಲ್ಲಿ ಗುಂಡಿಕ್ಕಿ ಅಧ್ಯಾಪಕನ ಹತ್ಯೆ
ಆಲಿಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಆಲಿಗಢದಲ್ಲಿನ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಅಪರಿಚಿತ ದುಷ್ಕರ್ಮಿಗಳು ಅಧ್ಯಾಪಕನಿಗೆ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮೃತ ಅಧ್ಯಾಪಕರನ್ನು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಎಬಿಕೆ ಶಾಲೆಯಲ್ಲಿ ಬೋಧಿಸುತ್ತಿದ್ದ ರಾವ್ ದಾನಿಶ್ ಅಲಿ ಎಂದು ಗುರುತಿಸಲಾಗಿದೆ. ಅಧ್ಯಾಪಕ ದಾನಿಶ್ ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಮೌಲಾನಾ ಆಝಾದ್ ಗ್ರಂಥಾಲಯದ ಬಳಿ ವಾಯುವಿಹಾರಕ್ಕೆಂದು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ದಾಳಿಕೋರರು ದ್ವಿಚಕ್ರವಾಹನದಲ್ಲಿ ಬಂದಿದ್ದು, ಅವರನ್ನೆಲ್ಲ ಪಿಸ್ತೂಲಿನಲ್ಲಿ ಬೆದರಿಸಿದ್ದಾರೆ. ಬಳಿಕ ಅಲಿ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದರೆ, ತಲೆಗೆ ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಗ್ರಂಥಾಲಯದ ಬಳಿ ಗುಂಡಿನ ದಾಳಿ ನಡೆದಿರುವ ಬಗ್ಗೆ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಲಾಯಿತು. ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣವೇ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು ಎಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಕ್ಟರ್ ಮುಹಮ್ಮದ್ ವಾಸೀಂ ತಿಳಿಸಿದ್ದಾರೆ. ಈ ದಾಳಿಗೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ವಿಷ್ಣು ಮೂರ್ತಿ ನಾಶವಾಗಿದೆ. ಭಾರತ ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಕಾಂಬೋಡಿಯಾ ಥೈಲ್ಯಾಂಡ್ ಸೇನೆಯನ್ನು ದೂಷಿಸಿದೆ. ಭಾರತವು ಆ ಎರಡೂ ರಾಷ್ಟ್ರಗಳಿಗೆ ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿದ್ದು, ಆ ನಿಟ್ಟಿನಲ್ಲಿ ಪರಸ್ಪರ ಶಾಂತಿ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆ ಆಗ್ರಹಿಸಿದೆ.
ಹರಿದ್ವಾರ: ಪದೇಪದೇ ವಿದ್ಯುತ್ ಕಡಿತದಿಂದ ಬೇಸತ್ತಿರುವ ಹರಿದ್ವಾರ ಜಿಲ್ಲೆಯ ಝಬ್ರೇರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಜಾತಿ, ವಿದ್ಯುತ್ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳ ನಿವಾಸಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ಮಂಗಳವಾರ ನಡೆದಿದೆ. ಈ ಸಂಬಂಧ ವಿದ್ಯುತ್ ಇಲಾಖೆ ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಶಾಸಕ ವೀರೇಂದ್ರ ಜಾತಿ ವಿರುದ್ಧ ದೂರು ದಾಖಲಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ನಿವಾಸದಲ್ಲಿ, ಇಲಾಖೆಯ ಮುಖ್ಯ ಎಂಜಿನಿಯರ್ ಅವರದ್ದೂ ಸೇರಿದೆ ಎಂದು ತಿಳಿದು ಬಂದಿದೆ. ಮಂಗಳವಾರ, ಶಾಸಕ ವೀರೇಂದ್ರ ಜಾತಿ ತಮ್ಮ ಬೆಂಬಲಿಗರೊಂದಿಗೆ ಏಣಿ ಹಾಗೂ ತಂತಿ ಕತ್ತರಿಸುವ ಉಪಕರಣಗಳನ್ನು ತೆಗೆದುಕೊಂಡು ರೂರ್ಕಿಗೆ ಆಗಮಿಸಿದರು. ಮೊದಲಿಗೆ ಬೋಟ್ ಕ್ಲಬ್ ಪ್ರದೇಶದಲ್ಲಿರುವ ಸೂಪರಿಂಟೆಂಡಿಂಗ್ ಎಂಜಿನಿಯರ್ ವಿವೇಕ್ ರಜಪೂತ್ ಅವರ ಅಧಿಕೃತ ನಿವಾಸದ ಹೊರಗಿನ ವಿದ್ಯುತ್ ಕಂಬವನ್ನು ಏರಿ, ಅವರ ಮನೆಗೆ ಹೋಗುವ ಸಂಪರ್ಕವನ್ನು ಕಡಿತಗೊಳಿಸಿದರು. ಬಳಿಕ ಮುಖ್ಯ ಎಂಜಿನಿಯರ್ ಅನುಪಮ್ ಸಿಂಗ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ಪಾಂಡೆ ಅವರ ನಿವಾಸಗಳಿಗೆ ತೆರಳಿ ಅಲ್ಲಿಯೂ ವಿದ್ಯುತ್ ಸ್ಥಗಿತಗೊಳಿಸಿದರು. ತಮ್ಮ ಕ್ಷೇತ್ರದಲ್ಲಿ ದಿನಕ್ಕೆ ಐದರಿಂದ ಎಂಟು ಗಂಟೆಗಳವರೆಗೆ ಅಘೋಷಿತ ವಿದ್ಯುತ್ ಕಡಿತ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವ್ಯಾಪಾರ ಮತ್ತು ಸಣ್ಣ ಕೈಗಾರಿಕೆಗಳಿಗೆ ಭಾರಿ ನಷ್ಟವಾಗುತ್ತಿದೆ ಎಂದು ಜಾತಿ ಆರೋಪಿಸಿದರು. ಕಳೆದ ಹತ್ತು ದಿನಗಳಿಂದ ಈ ಸಮಸ್ಯೆಯನ್ನು ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಅವರು ಹೇಳಿದರು. “ಒಂದು ಗಂಟೆ ವಿದ್ಯುತ್ ಕಡಿತಗೊಂಡರೂ ಅಧಿಕಾರಿಗಳು ಅಸಹನೀಯ ಸ್ಥಿತಿಗೆ ತಲುಪುತ್ತಾರೆ. ಆದರೆ ಸಾರ್ವಜನಿಕರು ಪ್ರತಿದಿನ ಗಂಟೆಗಟ್ಟಲೆ ವಿದ್ಯುತ್ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ,” ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯುತ್ ಇಲಾಖೆ, ಶಾಸಕರು ನಿಗದಿತ ನಿಯಮ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸದೇ ನೇರವಾಗಿ ವಿದ್ಯುತ್ ತಂತಿಗಳನ್ನು ಕತ್ತರಿಸಿದ್ದಾರೆ. ಇದರಿಂದ ದೊಡ್ಡ ಅಪಘಾತ ಸಂಭವಿಸುವ ಅಪಾಯವಿತ್ತು. ಇದು ನಿಯಮ ಉಲ್ಲಂಘನೆಯಷ್ಟೇ ಅಲ್ಲದೆ ಸರ್ಕಾರಿ ಕಾರ್ಯದಲ್ಲಿ ನೇರ ಹಸ್ತಕ್ಷೇಪವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ. ग्रामीण इलाकों में लगातार बिजली कटौती से नाराज़ होकर हरिद्वार के झबरेड़ा से कांग्रेस विधायक वीरेंद्र जाती ने अनोखा विरोध दर्ज कराया। बिजली विभाग द्वारा क्षेत्र की आपूर्ति काटे जाने पर विधायक ने बिजली विभाग के अधिकारियों के परिसरों की बिजली लाइन खुद खंभे पर चढ़कर काट दी। pic.twitter.com/XMfJsV3EN9 — Amit Bisht (@amitbisht__) December 23, 2025
3 ಹೊಸ ವಿಮಾನಯಾನ ಸಂಸ್ಥೆಗಳಿಗೆ ಹಾರಾಟ ಆರಂಭಿಸಲು ಸಿದ್ಧತೆ ನಡೆಸಲು ಕೇಂದ್ರ ಸರ್ಕಾರ ಅನುಮತಿ
ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸ್ಪರ್ಧೆಗೆ ನಾಂದಿ ಹಾಡಲು ಕೇಂದ್ರ ಸರ್ಕಾರ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಶಂಖ್ ಏರ್, ಅಲ್ ಹಿಂದ್ ಏರ್, ಫ್ಲೈಎಕ್ಸ್ಪ್ರೆಸ್ ಸಂಸ್ಥೆಗಳು NOC ಪಡೆದಿವೆ. ಇಂಡಿಗೋ ಅಡೆತಡೆಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ ನೀಡಲು ಮತ್ತು ಮಾರುಕಟ್ಟೆಯ ಏಕಸ್ವಾಮ್ಯತೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಭಾರತೀಯ ಸೇನಾ ಯೋಧರ ಇನ್ಸ್ಟಾಗ್ರಾಮ್ ಬಳಕೆಗೆ ಹೊಸ ನೀತಿ; ವೀಕ್ಷಣೆಗೆ ಅನುಮತಿ, ಪೋಸ್ಟ್ಗೆ ಅಸಮ್ಮತಿ
ಭಾರತೀಯ ಸೇನಾ ಸಿಬ್ಬಂದಿಗಾಗಿ ತನ್ನ ಡಿಜಿಟಲ್ ಚಟುವಟಿಕೆ ನಿರ್ಬಂಧ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿರುವ ರಕ್ಷಣಾ ಇಲಾಖೆ, ಯೋಧರು ಇನ್ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ವಿಕ್ಷಣೆಗೆ ಅನುಮತಿ ನೀಡಿದೆ. ಆದರೆ ಯೋಧರು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟ್ ಮಾಡುವುದು ಮತ್ತು ಅನ್ಯರ ಪೋಸ್ಟ್ಗಳಿಗೆ ಲೈಕ್ ಹಾಗೂ ಕಾಮೆಂಟ್ ಮಾಡುವುದನ್ನು ನಿರ್ಬಂಧಿಸಲಾಗಿದೆ. ಯೋಧರು ಮಾಹಿತಿ ಸಂಗ್ರಹಣೆ ಮತ್ತು ಪೋಸ್ಟ್ಗಳ ಮೇಲ್ವಿಚಾರಣೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಬಹುದಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ನಮ್ಮ ಪ್ರದೇಶದೊಳಗೇ ಪ್ರತಿಮೆ ಇತ್ತು: ವಿಷ್ಣುವಿನ ಪ್ರತಿಮೆಯನ್ನು ಧ್ವಂಸಗೊಳಿಸಿದ ಥೈಲ್ಯಾಂಡ್ ವಿರುದ್ಧ ಕಾಂಬೋಡಿಯಾ ಆರೋಪ
ಗಡಿಭಾಗದಲ್ಲಿ ಉದ್ವಿಗ್ನತೆ ತೀವ್ರ
ಗೃಹಲಕ್ಷ್ಮಿ ಹಣ ಎಲ್ಲಿಯೂ ಹೋಗಿಲ್ಲ: ಮಹಿಳೆಯರಿಗೆ ಸತೀಶ್ ಜಾರಕಿಹೊಳಿ ಭರವಸೆ
ಎರಡು ತಿಂಗಳ ಗೃಹ ಲಕ್ಷ್ಮಿ ಯೋಜನೆಗೆ ಹಣವನ್ನು ಫಲಾನುಭವಿಗಳಿಗೆ ಪಾವತಿಸಿಲ್ಲ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಹಣ ಎಲ್ಲೂ ಹೋಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕೆ ಎನ್ ರಾಜಣ್ಣ ಪತ್ರದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧಿಕಾರ ಹಂಚಿಕೆಯ ವಿವಾದಕ್ಕೆ ಅವರು ಏನಂದ್ರು ಎಂಬ ಮಾಹಿತಿ ಇಲ್ಲಿದೆ.
Harapanahalli | ಖೋಟಾ ನೋಟು ಚಲಾವಣೆ; ಬಾಲಕ ಸೇರಿ 6 ಮಂದಿಯ ಬಂಧನ
ವಿಜಯನಗರ : ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಬಾಲಕ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಿ 500 ರೂ. ಮುಖ ಬೆಲೆಯ ಒಟ್ಟು 40,000 ಮೊತ್ತದ 80 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರಸೀಕೆರೆ ಗ್ರಾಮದಲ್ಲಿ ನಡೆದ ಶ್ರೀ ದಂಡಿ ದುರ್ಗಮ್ಮ ದೇವಸ್ಥಾನದ ಜಾತ್ರಾ ಸಮಯದಲ್ಲಿ ಆಟಿಕೆ ನಡೆಸುವ ಶ್ರೀಮಾತ ಅಮ್ಯೂಸ್ಮೆಂಟ್ ಪಾರ್ಕ್ನ ಅಂಗಡಿಯಲ್ಲಿ ಅಪರಿಚಿತರು 500 ರೂ. ಮುಖ ಬೆಲೆಯ ಎರಡು ನೋಟುಗಳನ್ನು ಚಲಾವಣೆ ಮಾಡಿದ್ದರು. ಈ ಕುರಿತು ಆಟಿಕೆ ಅಂಗಡಿ ಮಾಲೀಕ ವೀರಭದ್ರಪ್ಪ ಎಚ್.ಕೆ ಅವರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅರಸೀಕೆರೆ ಕೆ.ಮಹಮ್ಮದ್ ರಿಹಾನ್ (18), ಉಚ್ಚಂಗಿದುರ್ಗದ ಮುಹಮ್ಮದ್ ಅಖಿಲ್ ( 18), ಆರಸೀಕೆರೆ ನರೇಂದ್ರ ಪ್ರಸಾದ್ ಎನ್.ಪಿ (19), ಕೂಡ್ಲಿಗಿಯ ಅಜಾದ್ ನಗರದ ಬಿ ಬಾಬು (36), ಮೊಳಕಾಲ್ಲೂರು ತಾಲ್ಲೂಕಿನ ರಾಂಪುರ ಗ್ರಾಮ ಟಿ ಕುಮಾರಸ್ವಾಮಿ (43) ಹಾಗೂ ಒಬ್ಬ ಬಾಲಕ ಎಂದು ತಿಳಿದು ಬಂದಿದೆ. ಬಂಧಿತರಿಂದ 500 ರೂ. ಮುಖಬೆಲೆ 80 ಖೋಟಾ ನೋಟುಗಳು, ಪ್ರಕರಣದಲ್ಲಿ ಭಾಗಿಯಾದ ಒಂದು ಗೂಡ್ಸ್ ವಾಹನ, ಎರಡು ಮೋಟಾರ್ ಸೈಕಲ್ಗಳು, 5 ಮೊಬೈಲ್ ಪೋನ್ಗಳು ಅಂದಾಜು 4.50.000/-ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಆರೋಪಿತರ ಪತ್ತೆಗಾಗಿ ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐಗಳಾದ ಮಹಾಂತೇಶ ಸಜ್ಜನ್, ವಿಕಾಸ್ ಲಮಾಣಿ, ಸಬ್ ಇನ್ಸ್ಪೆಕ್ಟರ್ ವಿಜಯಕೃಷ್ಣ, ಎ.ಕಿರಣ್ ಕುಮಾರ ಹಾಗೂ ಸಿಬ್ಬಂದಿಗಳಾದ ಆನಂದ, ರವಿದಾದಪುರ, ಮಾಲತೇಶ, ಸಿದ್ದಿ ಮುಬಾರಕ್, ಯರಿಸ್ವಾಮಿ, ವಸಂತಕುಮಾರ, ಯು ದಾದಪೀಠ, ಹಸನ್ಸಾಬ್, ಕೆ ಗುರುರಾಜ, ಹರೀಶ್ ದೇವರಟ್ಟಿ, ಮತ್ತಿಹಳ್ಳಿ ಕೊಟ್ರೇಶ, ಗುರಾನಾಯ್ಕ್, ರವಿನಾಯ್ಕ, ಅಜ್ಜಪ್ಪ ಎಚ್, ಹಾಗೂ ಕರಿಬಸಪ್ಪ ಇ. ಸಿ.ಡಿ.ಆರ್ ವಿಭಾಗ ಸಿಬ್ಬಂದಿ ಕುಮಾರನಾಯ್ಕ್ ಹಾಗೂ ಜೀಪ್ ಚಾಲಕರಾದ ನಾಗರಾಜನಾಯ್ಕ ಅವರುಗಳನ್ನು ಒಳಗೊಂಡ ತಂಡವನ್ನು ವಿಜಯನಗರ ಪೊಲೀಸ್ ಅಧೀಕ್ಷಕಿ ಜಾಹ್ನವಿ, ಪೊಲೀಸ್ ಹೆಚ್ಚುವರಿ ಅಧೀಕ್ಷಕರು ಮಂಜುನಾಥ ಜಿ, ಪ್ರಶಂಶಿಸಿದ್ದಾರೆ.
ಡಿಸೆಂಬರ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 25) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಭೂ ಪರಿವರ್ತನೆ ಇನ್ನು ಆನ್ಲೈನ್: ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಅಗತ್ಯವಿಲ್ಲ: ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ
ಕರ್ನಾಟಕದಲ್ಲಿ ಹೂಡಿಕೆ ಹೆಚ್ಚಿಸಲು ಮತ್ತು ಭೂ ಪರಿವರ್ತನೆ ಸುಲಭಗೊಳಿಸಲು ಹೊಸ ನಿಯಮ ಜಾರಿಯಾಗಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿ ಡಿಸಿ ಅನುಮತಿ ಇಲ್ಲದೆ ಭೂ ಪರಿವರ್ತನೆ ಸಾಧ್ಯ. ಕೈಗಾರಿಕೆ ಮತ್ತು ಇಂಧನ ಯೋಜನೆಗಳಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ನಕಲಿ ದಾಖಲೆ ನೀಡಿದರೆ ಕಠಿಣ ದಂಡ ವಿಧಿಸಲಾಗುವುದು. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನುಗುಣವಾಗಿ ಪರಿವರ್ತನಾ ಶುಲ್ಕ ನಿಗದಿಪಡಿಸಲಾಗಿದೆ.
ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಇಲ್ಲಿನ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಷನ್ ನಲ್ಲಿ ಗುರುವಾರ ಬೆಳಿಗ್ಗೆ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಪ್ರಾರ್ಥನಾ ಸಭೆಯಲ್ಲಿ ಕರೋಲ್ಗಳು, ಸ್ತುತಿಗೀತೆಗಳು ಹಾಗೂ ವಿಶೇಷ ಪೂಜಾಕ್ರಿಯೆಗಳು ನಡೆಯಿತು. ದಿಲ್ಲಿ ಮತ್ತು ಉತ್ತರ ಭಾರತದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಭಕ್ತರು ಪ್ರಾರ್ಥನೆ ಸಲ್ಲಿಸಿದರು. ದಿಲ್ಲಿಯ ಬಿಷಪ್ ಡಾ. ಪೌಲ್ ಸ್ವರೂಪ್ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು. ಈ ಸಂದರ್ಭದಲ್ಲಿ ಪ್ರಧಾನಿಗಾಗಿ ವಿಶೇಷ ಪ್ರಾರ್ಥನೆಯನ್ನೂ ನಡೆಸಲಾಯಿತು. ಪ್ರಾರ್ಥನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿ, ದಿಲ್ಲಿಯ ಕ್ಯಾಥೆಡ್ರಲ್ ಚರ್ಚ್ನಲ್ಲಿ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದೆ. ಈ ಪ್ರಾರ್ಥನೆಯು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಸಾರುತ್ತದೆ. ಕ್ರಿಸ್ಮಸ್ನ ಚೈತನ್ಯವು ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಉತ್ತೇಜಿಸಲಿ ಎಂದು ಆಶಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದರು. May Christmas bring renewed hope, warmth and a shared commitment to kindness. Here are highlights from the Christmas morning service at The Cathedral Church of the Redemption. pic.twitter.com/BzvKYQ8N0H — Narendra Modi (@narendramodi) December 25, 2025
ನಾಯಕತ್ವ ಬದಲಾವಣೆ: ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಹೈಕಮಾಂಡ್! ಕಾರಣ ಏನು
ನಮ್ಮ ನಡುವೆ ಏನೆಲ್ಲಾ ಚರ್ಚೆಯಾಗಿತ್ತು ಎಂದು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾವು ಒಟ್ಟಾಗಿ ಸೇರಿ ಕೆಲಸ ಮಾಡಿ, ಸರ್ಕಾರವನ್ನು ರಚಿಸಿದ್ದೇವೆ. ಪ್ರತಿ ಕಾರ್ಯಕರ್ತರು ಪಕ್ಷಕ್ಕಾಗಿ ತಮ್ಮ ಬೇವರು ಹರಿಸಿ ದುಡಿದಿದ್ದಾರೆ. ನಮಗೆ ಸ್ಪಷ್ಟ ಬಹುಮತ ನೀಡಿದ ರಾಜ್ಯದ ಜನರಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಮತ್ತೊಂದು ಕಡೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಮತ್ತಷ್ಟು ವಿವರ ಇಲ್ಲಿದೆ.
ಹುಣಸಗಿ: ನಿಯಮ ಮೀರಿ ಕಬ್ಬು ಹೇರಿಕೊಂಡು ಬರುವ ಟ್ರ್ಯಾಕ್ಟರ್ಗಳು ರಸ್ತೆ ಪಕ್ಕ ಸಂಚರಿಸುವ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದು, ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಕಬ್ಬು ನುರಿಸುವ ಹಂಗಾಮು ಆರಂಭವಾದಾಗಿನಿಂದ ಗ್ರಾಮದ ಮೂಲಕ ಸಮೀಪದ ಯರಗಲ್ ಸಕ್ಕರೆ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್ಗಳು ನಿಯಮ ಮೀರಿ ಕಬ್ಬು ಹೇರಿಕೊಂಡು ಬರುತ್ತಿವೆ. ಆಗಾಗ ಏಕಾಏಕಿ ಟ್ರ್ಯಾಕ್ಟರ್ಗಳು ಹೆಚ್ಚಿದ ತೂಕದಿಂದಾಗಿ ಉರುಳಿ ಬೀಳುತ್ತಿರುವ ಘಟನೆಗಳು ನಡೆಯುತ್ತಿದ್ದು, ಕಡಿವಾಣ ಬೀಳಬೇಕಿದೆ. ಸರ್ಕಾರದ ನಿಯಮ ಮೀರಿ ಸಾಗಣೆ: ನಾಲತವಾಡ ಭಾಗದ ರಸ್ತೆಗಳು ಹದಗೆಟ್ಟಿವೆ. ಆದರೂ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್ ಮಾಲೀಕರು ಮನಬಂದಂತೆ ಕಬ್ಬು ಹೇರಿಸಿ ಸಾಗಿಸುತ್ತಾರೆ. ಹೀಗಾಗಿ ಟ್ರ್ಯಾಕ್ಟರ್ ಮಾಲೀಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಮಾಸದ ಅವಘಡಗಳು: ಕಬ್ಬು ಸಾಗಣೆಯ ಟ್ರ್ಯಾಕ್ಟರ್ಗಳು ನಗರ ಮತ್ತು ಹಳ್ಳಿಗಳ ಮೂಲಕವೇ ಸಂಚರಿಸುತ್ತವೆ. ಒಮ್ಮೊಮ್ಮೆ ಟ್ರಾಫಿಕ್ ಜಾಮ್ ಸಾಮಾನ್ಯವಾಗಿರುತ್ತದೆ. ಬಹುತೇಕ ವಾಹನಗಳಿಗೆ ಇಂಡಿಕೇಟರ್, ರಿಫ್ಲೆಕ್ಟರ್ ಹಾಗೂ ರೇಡಿಯಂ ಅಂಟಿಸದೆ ಇರುವುದರಿಂದ ಜನರು ಜೀವ ಸಂರಕ್ಷಣೆಗೆ ಹೆಚ್ಚು ಕಾಳಜಿ ವಹಿಸಬೇಕಿದೆ. 2023-24 ರಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 37 ಕಬ್ಬಿನ ಗಾಡಿಗಳ ಅಪಘಾತಗಳಲ್ಲಿ 44 ಜನರು ಮೃತಪಟ್ಟಿದ್ದರೆ, 2024-25ರ ಕಬ್ಬು ನುರಿಸುವ ಹಂಗಾಮಿನಲ್ಲಿ ಒಟ್ಟು 35 ಜನ ಸಾವಿಗೀಡಾಗಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ. ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ವ್ಯಾಪ್ತಿಗಳಲ್ಲಿ 34 ರಸ್ತೆ ಅಪಘಾತಗಳಲ್ಲಿ 26 ಜನ ಮೃತಪಟ್ಟಿದ್ದು, ಮೇಲಿಂದ ಘಟನೆಗಳು ಸಂಭವಿಸುತ್ತಿದ್ದರೂ, ಮುಂಜಾಗ್ರತೆ ವಹಿಸುವಂತೆ ಕಬ್ಬು ಸಾಗಣೆ ವಾಹನ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶ ಪಾಲಿಸುವಂತೆ ಸರ್ಕಾರ, ಅಧಿಕಾರಿಗಳು ಮಾಡಬೇಕಿದೆ ಎನ್ನುತ್ತಾರೆ ಜನರು.
Gold Price Today: ಕ್ರಿಸ್ಮಸ್ ದಿನವು ಹೆಚ್ಚಾಯ್ತು ಚಿನ್ನ-ಬೆಳ್ಳಿ ರೇಟ್, ಬೆಂಗಳೂರಲ್ಲಿ ದರ ಎಷ್ಟಿದೆ?
ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಗುರುವಾರ ಕ್ರಿಸ್ಮಸ್ ದಿನ (ಡಿಸೆಂಬರ್ 25) ಮತ್ತೆ ಹೆಚ್ಚಾಗಿದೆ. ದರ ಎಷ್ಟೇ ಹೆಚ್ಚಾದರೂ ಬೇಡಿಕೆ ಮಾತ್ರ ಕುಸಿಯುತ್ತಿಲ್ಲ. ಭಾರತದಂತಹ ದೇಶಗಳಲ್ಲಿ ಆಭರಣ ಖರೀದಿಗೆ ಬೇಡಿಕೆ ಇದ್ದು, ವಿದೇಶಗಳಲ್ಲಿ ಹೂಡಿಕೆ ರೂಪದಲ್ಲಿ ಹೆಚ್ಚು ಖರೀದಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ನಿರಂತರ ಬೆಲೆ ಜೊತೆಗೆ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುತ್ತಿರುವ ಈ ಲೋಹಗಳ ನಗರವಾರು ಮಾಹಿತಿ ಇಲ್ಲಿದೆ.
₹2 ಲಕ್ಷ ಡೌನ್ ಪೇಮೆಂಟ್ ಮಾಡಿದರೆ Swift ಕಾರಿನ EMI ಎಷ್ಟು ಬರುತ್ತೆ?
ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಗೂ ಸ್ವಂತ ಕಾರು ಖರೀದಿಸಬೇಕು ಎಂಬುದು ಒಂದು ದೊಡ್ಡ ಕನಸು. ಅದ್ರಲ್ಲೂ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿರುವ Maruti Suzuki Swift ಎಂದರೆ ಎಲ್ಲಿಲ್ಲದ ಕ್ರೇಜ್. ಮೈಲೇಜ್ ಇರಲಿ, ಲುಕ್ ಇರಲಿ ಅಥವಾ ಮರುಮಾರಾಟದ ಮೌಲ್ಯ (Resale Value) ಇರಲಿ, ಸ್ವಿಫ್ಟ್ ಇಂದಿಗೂ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ, ಕಾರು ಇಷ್ಟವಾದ ತಕ್ಷಣ ಖರೀದಿಸಲು ಆಗುವುದಿಲ್ಲ. ಅದಕ್ಕೆ ಸರಿಯಾದ ಆರ್ಥಿಕ ಯೋಜನೆ ಬೇಕು. ಇತ್ತೀಚೆಗೆ ಶೋರೂಮ್ಗಳಿಗೆ ಭೇಟಿ ನೀಡುವ ಅನೇಕರು ಕೇಳುವ ಸಾಮಾನ್ಯ ... Read more The post ₹2 ಲಕ್ಷ ಡೌನ್ ಪೇಮೆಂಟ್ ಮಾಡಿದರೆ Swift ಕಾರಿನ EMI ಎಷ್ಟು ಬರುತ್ತೆ? appeared first on Karnataka Times .
ಐತಿಹಾಸಿಕ ಎಂಬ ಶಬ್ದ ಬಂದಾಗ ಥಟ್ಟನೆ ನೆನಪಾಗುವುದು ಗುಮ್ಮಟ ನಗರಿ ವಿಜಯಪುರ ಜಿಲ್ಲೆ. ನೂರಾರು ವೈಶಿಷ್ಟ್ಯಪೂರ್ಣ ಸ್ಮಾರಕಗಳನ್ನು ತನ್ನ ಒಡಲಲ್ಲಿರಿಸಿಕೊಂಡಿರುವ ವಿಜಯಪುರ ಸ್ಮಾರಕಗಳ ನಗರ. ಸ್ಮಾರಕಗಳ ರಾಜಧಾನಿ ಎಂದರೂ ತಪ್ಪಾಗಲಾರದು. ರೋಮ್ ನಗರದಲ್ಲಿರುವ ಸ್ಮಾರಕಗಳಂತೆ ವಿಜಯಪುರದಲ್ಲಿಯೂ ಅಮೋಘ ಸ್ಮಾರಕಗಳಿವೆ. ಹೀಗಾಗಿ ರೋಮ್ ನಗರಕ್ಕೆ ವಿಜಯಪುರವನ್ನು ಹೋಲಿಕೆ ಮಾಡಿದ ಉದಾಹರಣೆಗಳಿವೆ. ಅಲ್ಲದೆ ಶರಣರು, ಸೂಫಿ ಸಂತರ ಬೀಡು. ಸಮಬಾಳು, ಸಮಪಾಲು ತತ್ವವನ್ನು ವಿಶ್ವಕ್ಕೆ ಸಾರಿದ, ಕಾಯಕವೇ ಕೈಲಾಸವೆಂದು ಜಗತ್ತಿಗೆ ತೋರಿಸಿಕೊಟ್ಟ ವಿಶ್ವಗುರು ಬಸವಣ್ಣನವರಿಗೆ ಜನ್ಮ ನೀಡಿದ ಪುಣ್ಯಭೂಮಿ. ಐತಿಹಾಸಿಕ ಸ್ಮಾರಕಗಳ ತವರೂರು. ಗೋಳಗುಮ್ಮಟ..! ಗೋಳಗುಮ್ಮಟ ಅರ್ಧ ಗೋಲಾಕಾರದ ಬೃಹತ್ ರಚನೆಯಾಗಿದ್ದು, ಆದಿಲ್ ಶಾಹಿ ಸುಲ್ತಾನನ ಸಮಾಧಿ ಸ್ಮಾರಕವಾಗಿದೆ. ಆದಿಲ್ ಶಾಹಿ ಹಿಂದೆ ವಿಜಯಪುರ ಆಳುತ್ತಿದ್ದ ಶಾಹಿ ಸಾಮ್ರಾಜ್ಯದ ಏಳನೆಯ ದೊರೆಯಾಗಿದ್ದ. ಸರಳ ಹಾಗೂ ಅಷ್ಟೇ ಪರಿಣಾಮಕಾರಿಯಾದ ರಚನೆಯು 1656ರಲ್ಲಿ ದಾಬೂಲ್ ಪ್ರದೇಶದ ಯಾಕೂಬ್ ಎಂಬ ವಾಸ್ತುಶಿಲ್ಪಿಯಿಂದ ಕಟ್ಟಲಾಯಿತು. ಗೋಲಗುಮ್ಮಟದ ಗೋಲವು ಆಂತರಿಕವಾಗಿ 37.92 ಮೀ. ವ್ಯಾಸ, 44 ಮೀ. ಬಾಹ್ಯ ವ್ಯಾಸ ಹೊಂದಿದೆ. ಇನ್ನು ಗೋಲದ ದಪ್ಪವು ಕೆಳಗೆ 3.05 ಮೀ., ಮೇಲೆ 2.74 ಮೀ.ಗಳಷ್ಟಿದೆ. ಇದು ಗುಮ್ಮಟವು ವಿಶಾಲವಾಗಿದೆ ಎಂಬುದನ್ನು ತಿಳಿಸುವ ಮಾನದಂಡವಾಗಿದೆ. ಚೌಕಾಕಾರದ ಸ್ಮಾರಕದ ನಾಲ್ಕು ಮೂಲೆಗಳಲ್ಲಿ ಅಷ್ಟಭುಜಾಕೃತಿಯ ಎತ್ತರವಾದ ಮಿನಾರು(ಗೋಪುರ)ಗಳಿವೆ. ಈ ಗೋಪುರಗಳಲ್ಲಿ ಮೆಟ್ಟಿಲುಗಳಿದ್ದು, ಇದರ ಮೂಲಕ ಸ್ಮಾರಕದ ನೆಲದಿಂದ 33 ಮೀ. ಎತ್ತರದಲ್ಲಿರುವ ‘ವಿಸ್ಟರಿಂಗ್ ಗ್ಯಾಲರಿ’ಗೆ ( ಪಿಸುಮಾತಿನ ಸಭಾಂಗಣ) ಭೇಟಿ ನೀಡಬಹುದು. ವಿಸ್ಟರಿಂಗ್ ಗ್ಯಾಲರಿಯು ಛಾವಣಿ ಗೋಲಾಕಾರವಾಗಿದೆ. ಇನ್ನೂ ಇದು ಶಬ್ಧ ಅಥವಾ ಧ್ವನಿ ವಿಜ್ಞಾನಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ. ಈ ಗ್ಯಾಲರಿಯಲ್ಲಿ ನಿಂತು ಒಮ್ಮೆ ಚಪ್ಪಾಳೆ ತಟ್ಟಿದರೆ ಕನಿಷ್ಠ ಪಕ್ಷ ಆ ಚಪ್ಪಾಳೆಯ ಧ್ವನಿಯು ಏಳು ಬಾರಿಯಾದರೂ ಪ್ರತಿಧ್ವನಿಸುತ್ತದೆ. ಇಬ್ರಾಹಿಂ ರೋಜಾ ನಗರದಲ್ಲಿರುವ ಈ ಸ್ಮಾರಕವನ್ನು ಎರಡನೇ ಇಬ್ರಾಹಿಮ್ ಆದಿಲ್ ಶಾಹ್ ನಿರ್ಮಿಸಿದ್ದಾನೆ. ವಾಸ್ತುಶಿಲ್ಪದ ದೃಷ್ಟಿಯಿಂದಲೂ ಇಬ್ರಾಹಿಂ ರೋಜಾ ಅತ್ಯಂತ ಅಪರೂಪದ ಕಟ್ಟಡ. ಮಸೀದಿಯ ಎದುರಿಗಿರುವ 2ನೇ ಇಬ್ರಾಹಿಂ ಆದಿಲ್ ಶಾಹಿಯ ಗೋರಿಯ ಮುಂಭಾಗದಲ್ಲಿ ಕಲ್ಲಿನ ಸರಪಳಿಗಳನ್ನು ಇಳಿಬಿಡಲಾಗಿದೆ. ಇದು ದಖನಿ ಶೈಲಿಯ ಅತ್ಯಂತ ಕುಶಲ, ಸೂಕ್ಷ್ಮ, ಶ್ರೀಮಂತ ವಾಸ್ತುಶಿಲ್ಪ. ಮಸೀದಿ ಹಾಗೂ ಗೋರಿಗಳನ್ನು ಎದುರುಬದುರಾಗಿ ಹೊಂದಿರುವ ಅಪರೂಪದ ಸುಂದರ ವಾಸ್ತುಕಲಾ ಸಂಕೀರ್ಣ. ಇಲ್ಲಿನ ಮಸೀದಿ ಹಾಗೂ ಗೋರಿ ಒಂದು ದೊಡ್ಡ ಚಿಲುಮೆ ಮತ್ತು ಜಲಾಶಯದಿಂದ ಪ್ರತ್ಯೇಕಿಸಲ್ಪಟ್ಟಿವೆ. ಈ ಕಲಾಕೃತಿಗಳ ಗುಂಪು ಎತ್ತರವಾದ ಜಗಲಿಯ ಮೇಲೆ 400 ಚದರ ಅಡಿ ಆಯತಾಕಾರದ ಆವರಣದೊಳಗಿವೆೆ. ನಾಲ್ಕು ಭವ್ಯ ಮಿನಾರುಗಳಿವೆ. ಉತ್ತರ ಬದಿಯ ಮಧ್ಯದಲ್ಲಿ 54 ಚದರ ಅಡಿಯ ಕೋಣೆ ಇದ್ದು, 4 ಕಡೆಗೆ ತೆರೆದ ಕಂಬಗಳ ಮೊಗಸಾಲೆಯಿದೆ. ಈ ಕಂಬಗಳ ಸಾಲಿನ ವಾಸ್ತುಶಿಲ್ಪದ ಸ್ಮಾರಕದಲ್ಲಿ ಆಯತಾಕಾರದ ಪ್ರಾರ್ಥನಾ ಮಂದಿರ ಇದೆ. ಮಸೀದಿಯ ಪ್ರತಿಯೊಂದು ಮೂಲೆಯಲ್ಲಿಯೂ ಕೋನಾಕಾರದ ಮಿನಾರಗಳು ಚಿತ್ತಾಕರ್ಷಕವಾಗಿವೆ. ಪ್ರತಿ ಮಿನಾರವನ್ನು ಆವರಿಸಿ 6 ಕಿರು ಮಿನಾರಗಳಿವೆ. ಗಾರೆ-ಗಚ್ಚಿನಿಂದ ಇವುಗಳನ್ನು ಭವ್ಯವಾಗಿ ಅಲಂಕರಿಸಲಾಗಿದೆ. ಬಾರಾ ಕಮಾನ್ ಐತಿಹಾಸಿಕ ಸ್ಮಾರಕ ಬಾರಾ ಕಮಾನನ್ನು 1656ರಿಂದ 1686ರವರೆಗೆ ಆಳಿದ ಬಿಜಾಪುರದ ಸುಲ್ತಾನ್ ಅಲಿ ಆದಿಲ್ಶಾಹಿ ಅವರ ಅಪೂರ್ಣ ಸಮಾಧಿ. ಸಮಾಧಿಯ ಸುತ್ತಲೂ ಲಂಬವಾಗಿ ಮತ್ತು ಅಡ್ಡಲಾಗಿ ಒಟ್ಟು ಹನ್ನೆರಡು ಕಮಾನುಗಳಿವೆ.1672ರಲ್ಲಿ ಅಲಿ ಎರಡನೇ ಆದಿಲ್ ಶಾಹಿ ಬಾರಾ ಕಮಾನ್ ನಿರ್ಮಿಸಿದನು. ಆದರೆ ಬಾರಾ ಕಾಮನ್ ಪೂರ್ಣಗೊಳ್ಳುವ ಮೊದಲು, ಅವನ ಸ್ವಂತ ತಂದೆ ಮುಹಮ್ಮದ್ ಆದಿಲ್ ಶಾ ಕೊಲೆ ಮಾಡಿದನು. ಬಾರಾ ಕಮಾನ್ ನಿರ್ಮಾಣವಾದರೆ, ಗೋಲ್ ಗುಂಬಜ್ ವಾಸ್ತುಶಿಲ್ಪದ ವೈಭವ ಕಡಿಮೆಯಾಗುತ್ತದೆ ಎಂದು ಭಾವಿಸಿದ ತನ್ನ ತಂದೆಯಿಂದಲೇ ಎರಡನೇ ಆದಿಲ್ ಶಾಹಿ ಕೊಲ್ಲಲ್ಪಟ್ಟನು. ಇದರಿಂದ ಸಮಾಧಿ ಮತ್ತು ಕಮಾನುಗಳು ಅಪೂರ್ಣವಾದವು ಎಂದು ಹೇಳಲಾಗುತ್ತದೆ. ಬಾರಾ ಕಮಾನ್ ಎರಡನೇ ಅಲಿ ಆದಿಲ್ ಶಾ, ಅವನ ಪತ್ನಿ ಚಾಂದ್ ಬೀಬಿ ಮತ್ತು ಉಪಪತ್ನಿಯರು ಹಾಗೂ ಅವರ ಹೆಣ್ಣುಮಕ್ಕಳ ಸಮಾಧಿಗಳನ್ನು ಒಳಗೊಂಡಿದೆ. ಇದೊಂದು ಸಂಪೂರ್ಣಗೊಳ್ಳದ ಎರಡನೇ ಅಲಿ ಆದಿಲ್ ಶಾಹಿಯ ಭವ್ಯ ಸಮಾಧಿ. ಅಲಿ ಆದಿಲ್ ಶಾಹಿಯು ಭವ್ಯವಾಗಿ ನಿರ್ಮಿಸಲು ಆಶಿಸಿದ್ದನು. ಯೋಜನೆಯ ಪ್ರಕಾರ, 12 (ಹಿಂದಿಯಲ್ಲಿ ಬಾರಾ ಎಂದರೆ 12) ಕಮಾನುಗಳನ್ನು ಉದ್ದವಾಗಿಯೂ ಅಗಲವಾಗಿಯೂ ನಿರ್ಮಿಸಬೇಕಾಗಿತ್ತು. ಆದರೆ ಅದರ ನಿರ್ಮಾಣ ಕಾರ್ಯವು ಸಂಪೂರ್ಣಗೊಳ್ಳಲಿಲ್ಲ. ಆಸರ್ ಮಹಲ್ ಮೊಹಮ್ಮದ್ ಆದಿಲ್ ಶಾಹ್ನಿಂದ 1646ರಲ್ಲಿ ನಿರ್ಮಿಸಲಾದ ಆಸರ್ ಮಹಲ್ ನ್ಯಾಯ ಬಗೆಹರಿಸುವ ಆಲಯವಾಗಿತ್ತು. ಇಲ್ಲಿ ಮೂರು ಹೊಂಡಗಳಿವೆ. ಮಧ್ಯದಲ್ಲಿರುವ ಹೊಂಡವು 15 ಅಡಿ ಆಳ ಹೊಂದಿದ್ದು, ಉಳಿದೆರಡು ಹೊಂಡಗಳಿಗಿಂತ ದೊಡ್ಡದಾಗಿದೆ. ಇಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕೇಶಗಳನ್ನು ಇರಿಸಲಾಗಿದೆ. ಆಸಾರ್ ಮಹಲ್ನಲ್ಲಿ ಮೀಲಾದುನ್ನಬಿ ಪ್ರಯುಕ್ತ ಉರೂಸ್ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ. ಸ್ಮಾರಕದ ಛಾವಣಿಗಳ ಮೇಲೆ ಮೂಡಿ ಬಂದ ಸುಂದರ ವಿನ್ಯಾಸದ ರಚನೆಗಳು ಇಂದಿನ ಹಾಗೆ ಅತ್ಯಾಧುನಿಕ ಯಾವ ಸಲಕರಣೆಗಳಿಲ್ಲದೆಯೂ ಕರಾರುವಕ್ಕಾಗಿಸಿದ ಅಂದಿನ ಶಿಲ್ಪಿಗಳ ನೈಪುಣ್ಯ ತೋರಿಸುತ್ತವೆ. ಜಾಮಿಯಾ ಮಸೀದಿ ದಕ್ಷಿಣ ಭಾರತದ ಅತಿದೊಡ್ಡ ಮಸೀದಿಯಾಗಿದೆ. 1578ರಲ್ಲಿ ಒಂದನೇ ಅಲಿ ಆದಿಲ್ ಶಾ ಜಾಮಿಯಾ ಮಸೀದಿ ಕಟ್ಟಿಸಿದ. 1,16,300 ಚ.ಮೀ. ವಿಸ್ತಾರವಾದ ಆವರಣ ಹೊಂದಿದೆ. 2250 ಜನ ಒಟ್ಟಾಗಿ ಕುಳಿತು ಪ್ರಾರ್ಥಿಸುವ ಸಾಮರ್ಥ್ಯದ ಮಸೀದಿಯಲ್ಲಿ ಸುವರ್ಣ ಅಕ್ಷರಗಳಲ್ಲಿ ಖುರಾನ್ ಬರಹ ಬರೆಯಲಾಗಿದೆ. ಕುರಾನ್ ಜಾಮಿಯಾ ಮಸೀದಿಯ ಒಳಭಾಗದಲ್ಲಿ ಕೆತ್ತಲಾಗಿದೆ. ಜಾಮಿಯಾ ಮಸೀದಿ ಆವರಣದಲ್ಲಿ ದೊಡ್ಡ ಪ್ರಾಂಗಣ, ನೀರಿನ ತೊಟ್ಟಿ ಮತ್ತು ಆಸನ ವ್ಯವಸ್ಥೆ ಇವೆ. ಮಸೀದಿ ಕಟ್ಟಡವು 170 ಮೀಟರ್ ಉದ್ದ, 70 ಮೀಟರ್ ಅಗಲವಿದೆ. ಒಂಬತ್ತು ದೊಡ್ಡ ಕಮಾನುಗಳು, ಪ್ರಭಾವಶಾಲಿ ಗುಮ್ಮಟ, 2250 ಆಯತಾಕಾರದ ಅಂಚುಗಳು ಜಾಮಿಯಾ ಮಸೀದಿಯ ಕೆಲವು ವಿಶಿಷ್ಟ ಲಕ್ಷಣಗಳಾಗಿವೆ. ಉಪ್ಪಲಿ ಬುರುಜ 95 ಅಡಿಯ ಉಪ್ಪಲಿ ಬುರುಜನ್ನು 1583ರಲ್ಲಿ ಅಲಿ ಆದಿಲ್ಶಾಹನ ಕಾಲದಲ್ಲಿ ದಂಡಾಧಿಕಾರಿಯಾಗಿದ್ದ ಹೈದರ್ ಖಾನ್ನಿಂದ ನಿರ್ಮಿತವಾಗಿದೆ. 95 ಅಡಿ ಎತ್ತರವಿದ್ದು, ಮೆಟ್ಟಿಲುಗಳನ್ನು ಹೊಂದಿದೆ. ಇಲ್ಲಿ ಎರಡು ತೋಪುಗಳಿವೆ. ಒಂದು 30 ಅಡಿ 8 ಇಂಚಿನದಾಗಿದೆ. ಇನ್ನೊಂದು 19 ಅಡಿ 8 ಇಂಚಿನದಾಗಿದೆ. ಈ ಬುರುಜ ಕಾವಲುಗಾರರಿಗಾಗಿ ಕಟ್ಟಿಸಿದ್ದಾಗಿದೆ. ಗೋಪುರದ ಮೇಲ್ಭಾಗವು ನಗರದ ಒಂದು ವಿಹಂಗಮ ನೋಟ ನೀಡುತ್ತದೆ. ಗೋಪುರದ ಮೇಲೆ ದೊಡ್ಡ ಗಾತ್ರದ ಎರಡು ಬಂದೂಕುಗಳಿವೆ. ಮೇಲ್ವಿಚಾರಣೆ ಉದ್ದೇಶಗಳಿಗಾಗಿ ಬಳಸಲಾದ ಈ ಗೋಪುರವು ಈಗ ಬೇಲಿಯಿಂದ ಸುತ್ತುವರಿದಿದೆ. ಉಪಲಿ ಬುರುಜ್ನ ಮೇಲಕ್ಕೆ ತಲುಪಲು ವೃತ್ತಾಕಾರದ ಮೆಟ್ಟಿಲು ನಿರ್ಮಿಸಲಾಗಿದೆ. ಸುಂದರ ತಾಜ ಬಾವಡಿ..! ಬಿಜಾಪುರದ ದೊರೆ ಎರಡನೆಯ ಇಬ್ರಾಹಿಮನ ಮೊದಲನೇ ಪತ್ನಿಯಾದ ತಾಜ್ ಸುಲ್ತಾನಾಳ ಗೌರವಾರ್ಥ ಈ ಕೊಳ ನಿರ್ಮಿಸಲಾಯಿತು. ಅಷ್ಟ ಭುಜಗಳುಳ್ಳ ಎರಡು ರಚನೆಗಳಿದ್ದು, ಇದರ ಪೂರ್ವ ಹಾಗೂ ಪಶ್ಚಿಮಕ್ಕೆ ವಿರಮಿಸಲು ನಿರ್ಮಿಸಲಾದ ವಿಶಾಲವಾದ ಕೊಠಡಿಗಳಿವೆ. ಸಂಗೀತ ಸಭೆ ಸಂಗೀತ ಮಹಲ್ ಇದು ವಿಜಯಪುರದ ಪಶ್ಚಿಮಕ್ಕೆ ಸುಮಾರು 8 ಕಿ.ಮೀ. ದೂರದಲ್ಲಿರುವ ತೊರವಿ ಗ್ರಾಮದಲ್ಲಿದೆ. ಎರಡನೇ ಇಬ್ರಾಹಿಂ ಆದಿಲ್ಶಾಹಿ ಕಟ್ಟಿಸಿದ ಈ ಮಹಲ್ನಲ್ಲಿ 16ನೆ ಶತಮಾನದ ವಿಶ್ವದ ಅತಿ ದೊಡ್ಡ ಅಡಿಟೋರಿಯಂ, ದೇಶ-ವಿದೇಶದ ಪ್ರಖ್ಯಾತ ಕಲಾವಿದರು ಇಲ್ಲಿಗೆ ಬಂದು ಗಾಯನ ಪ್ರದರ್ಶನ ನೀಡುತ್ತಿದ್ದರು. ಅಲ್ಲದೆ ಇದೇ ಸ್ಥಳದಲ್ಲಿ ಪ್ರತಿ ವರ್ಷ ಜನವರಿ, ಫೆಬ್ರವರಿ ತಿಂಗಳಲ್ಲಿ ಪ್ರಸಿದ್ಧ ನವರಸಪುರ ಸಂಗೀತ ಉತ್ಸವ ಆಯೋಜಿಸಲಾಗುತ್ತದೆ. ಗಗನ್ ಮಹಲ್ ಅರಕಿಲ್ಲೆ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಟ್ಟಡವೆಂದರೆ ಗಗನ ಮಹಲ್. 1561ರ ಆಸುಪಾಸಿನಲ್ಲಿ ಸುಲ್ತಾನರ ಅರಮನೆ ಮತ್ತು ದರ್ಬಾರ್ ಹಾಲ್ ಎಂದು ಕರೆಯಲ್ಪಡುತ್ತಿತ್ತು. ಇದನ್ನು ಗುಮ್ಮಟ, ಮಿನಾರಗಳಿಲ್ಲದೆ ನಿರ್ಮಿಸಲಾಗಿದೆ. ಕೇವಲ ಕಮಾನುಗಳನ್ನು ಒಳಗೊಂಡಿದೆ. ರಾಜ ತನ್ನ ಬಿಡುವಿನ ವೇಳೆಯಲ್ಲಿ ಇಲ್ಲಿ ಕಲಾಕೃತಿ ಚಿತ್ರಿಸುತ್ತಿದ್ದ ಎಂಬ ಪ್ರತೀತಿ ಇದೆ. ಕಥೆ ಹೇಳುವ ಸಾಥ್ ಕಬರ್ ಸಾತ್ ಕಬರ್ ಎಂದರೆ 60 ಸಮಾಧಿಗಳು ಎಂದರ್ಥ. 1659ರಲ್ಲಿ ಆಲಿ ಆದಿಲ್ ಶಾಹನ ಆಸ್ಥಾನದಲ್ಲಿದ್ದ ದಳಪತಿಗಳಲ್ಲೊಬ್ಬ ಅಫೈಲ್ ಖಾನನು ತನ್ನ 60 ಪತ್ನಿಯರನ್ನು ಬಾವಿಗೆ ತಳ್ಳಿ ಕೊಂದು ಅವರಿಗಾಗಿ ನಿರ್ಮಿಸಿದ ಸಮಾಧಿ ಎಂದು ಹೇಳಲಾಗುತ್ತಿದೆ. ಇದು ಬಿಜಾಪುರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ನವರಸಪುರದಲ್ಲಿದೆ. ಮಲಿಕ್-ಎ- ಮೈದಾನ್ 1549ರಲ್ಲಿ ಅಹ್ಮದ್ನಗರದ ನಿಜಾಮಶಾಹಿಗಳು ನಿರ್ಮಿಸಿದ ಈ ತೋಪನ್ನು ವಿಜಯಪುರಕ್ಕೆ ತರಲಾಯಿತು. ಭೂಪ್ರದೇಶದ ಒಡೆಯ ಎಂಬ ಅಕ್ಷರಶಃ ಅರ್ಥ ಕೊಡುವ ಇದು ಒಂದು ಬೃಹತ್ತಾದ ಸಿಡಿಮದ್ದಿನ ತೋಪು. 4 ಮೀ. ಉದ್ದ, 1.5 ಮೀ. ವ್ಯಾಸ ಹೊಂದಿರುವ ಈ ತೋಪು 55 ಟನ್ತೂಗುತ್ತದೆ. 400 ಎತ್ತುಗಳು, 10 ಆನೆಗಳು ಹಾಗೂ ಹಲವು ಯೋಧರು ಪಾಲ್ಗೊಂಡಿದ್ದ ಯುದ್ಧದಲ್ಲಿ ಜಯಗಳಿಸಿದ ನಂತರ ವಿಜಯಪುರಕ್ಕೆ ತರಲಾಯಿತು. 17ನೇ ಶತಮಾನದಲ್ಲಿ ಮೊಘಲ ಬಾದಷಾ ಔರಂಗಜೇಬ್ ವಿಜಯಪುರದ ಮೇಲೆ ದಂಡೆತ್ತಿ ಬಂದು ದಾಳಿ ಮಾಡಿದಾಗ ಮುಹಮ್ಮದ್ ಆದಿಲ್ಶಾಹಿ ಈ ತೋಪನ್ನು ಯುದ್ಧದಲ್ಲಿ ಬಳಸಿದ್ದ ಎಂದು ಇತಿಹಾಸ ಹೇಳುತ್ತದೆ. 85 ಅಡಿ ಎತ್ತರದ ಶಿವನ ಮೂರ್ತಿ ವಿಜಯಪುರದ ಹೊರವಲಯದಲ್ಲಿ 5 ಕಿ.ಮೀ. ದೂರದಲ್ಲಿ ಉಕ್ಕಲಿ ರಸ್ತೆ ಪಕ್ಕದಲ್ಲಿ 85 ಅಡಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪಿಸ ಲಾಗಿದೆ. ದೇಶದಲ್ಲಿ ಅತಿ ಎತ್ತರದ ಎರಡನೇ ಶಿವನ ಮೂರ್ತಿ ಇದಾಗಿದೆ. ಮುರ್ಡೇಶ್ವರದಲ್ಲಿ 102 ಅಡಿ ಎತ್ತರದ ಮೊದಲ ಶಿವನಮೂರ್ತಿಯ ನಂತರ ಇದು ಎರಡನೆಯದು. ಇದು 1500 ಟನ್ ತೂಕದ್ದಾಗಿದೆ. ಶಿವನ ಮೂರ್ತಿ ಕೊರಳಲ್ಲಿ ಇರುವ ಪ್ರತಿಯೊಂದು ರುದ್ರಾಕ್ಷಿ 50 ಕೆ.ಜಿ. ತೂಕದ್ದು ಹಾಗೂ 15 ಅಡಿ ವ್ಯಾಸವುಳ್ಳದ್ದಾಗಿದೆ. ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ. 5.20 ಎಕರೆ ವಿಶಾಲವಾದ ಪ್ರದೇಶದಲ್ಲಿ ಉದ್ಯಾನ, ಚಿಕ್ಕ ಮಕ್ಕಳ ರೈಲು ಸೇರಿದಂತೆ ಇತರ ಆಟಿಕೆ ಸಾಮಗ್ರಿಗಳಿವೆ. ಉಚಿತ ಅನ್ನ ಪ್ರಸಾದ, ಉಚಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಗೋಳ ಗುಮ್ಮಟದಲ್ಲಿದೆ ಪಿಸುಮಾತಿನ ಗ್ಯಾಲರಿ ಗ್ಯಾಲರಿಯ ಒಂದು ಬದಿಯ ಗೋಡೆಗೆ ಮುಖಮಾಡಿ ಪಿಸುಧ್ವನಿಯಲ್ಲಿ ಮಾತಾಡಿದರೆ ಅಥವಾ ಕೈಗಡಿಯಾರವನ್ನು ಗೋಡೆಗೆ ತಾಕಿಸಿದರೆ, ಆ ಗೋಡೆಯ ವಿರುದ್ಧ ದಿಕ್ಕಿನಲ್ಲಿರುವ ಗೋಡೆಯಲ್ಲಿ ಕಿವಿಯನ್ನು ಗೋಡೆಗೆ ತಾಗಿಸಿದರೆ ಆ ಪಿಸುಮಾತು ಅಥವಾ ಗಡಿಯಾರದ ಟಿಕ್ಟಿಕ್ ಶಬ್ದ ಕೇಳಬಹುದು. ಇದು ಗೋಳಗುಮ್ಮಟದ ಗೋಡೆಗಳ ಮೇಲೆ ಕಂಡುಬರುವ ಮನಸೆಳೆವ ಅದ್ಭುತ ಸಂಗತಿ. ಗೋಲಗುಮ್ಮಟದ ಒಳ ಪ್ರವೇಶಿಸಲು ಬೃಹತ್ ಕಮಾನಿನ ಆಕೃತಿಯ ಗೋಡೆಯಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟ ದ್ವಾರ. ನಕ್ಕ ಖಾನಾ ಎಂಬುದೊಂದು ಅರಮನೆಯ ಎದುರಿಗೆ ನಿರ್ಮಿಸಲಾಗುವ ಮನರಂಜನಾ ಚಟುವಟಿಕೆಗಳು ನಡೆಯುವ ಸ್ಥಳ. 400ಕ್ಕೂ ಹೆಚ್ಚು ವರ್ಷ ಸದೃಢವಾಗಿ ನಿಂತಿದೆ. ಇದು ವಿಶ್ವದಲ್ಲಿ ಅಧಿಕ ಜನಪ್ರಿಯತೆ ಪಡೆಯಬೇಕಾಗಿದ್ದರೂ ಎಲೆಮರೆಯ ಕಾಯಿಯಂತೆ ಕರ್ನಾಟಕದಲ್ಲಿ ಪ್ರಶಾಂತವಾಗಿ ನೆಲೆಸಿದೆ. ಈ ಅದ್ಭುತ ಸ್ಮಾರಕವವನ್ನು ಜೀವನದಲ್ಲಿ ಒಂದೊಮ್ಮೆಯಾದರೂ ಭೇಟಿ ನೀಡಲೇಬೇಕಾದ ಆಕರ್ಷಣೆಯ ಪ್ರವಾಸಿ ತಾಣವಾಗಿಇತಿಹಾಸದಲ್ಲಿ ಹಿರಿಮೆ ಹೊಂದಿದೆ.
ರಣವೀರ್ ಸಿಂಗ್ ಅಭಿನಯದ 'ಧುರಂಧರ' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, ದಕ್ಷಿಣ ಭಾರತದಲ್ಲಿಯೂ ಭರ್ಜರಿ ಯಶಸ್ಸು ಕಂಡಿದೆ. ಈ ಯಶಸ್ಸಿನಿಂದಾಗಿ, ಚಿತ್ರದ ಎರಡನೇ ಭಾಗ 'ಧುರಂಧರ 2' 2026ರ ಮಾರ್ಚ್ 19ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲೂ ಈ ಚಿತ್ರ ಬರಲಿದ್ದು, ಕರ್ನಾಟಕದಲ್ಲಿ ಉತ್ತಮ ಕಲೆಕ್ಷನ್ ಕಂಡಿದೆ.
ಚಿತ್ರದುರ್ಗ ಬಸ್ ದುರಂತ | ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಭೀಕರ ಅಪಘಾತದಲ್ಲಿ 5 ಮಂದಿ ಸಜೀವ ದಹನ
Explained: ಸಂಪನ್ಮೂಲಗಳಿಲ್ಲದೆ ನಾನು ವಿಜ್ಞಾನಿಯಾಗಬಹುದೇ? ತರ್ಕದ ಲೋಕದಲ್ಲಿ ವಿಹರಿಸುವ ಧೈರ್ಯವಂತರಿಗಾಗಿ..!
ವಿಜ್ಞಾನ ಕ್ಷೇತ್ರ ರೇ ಸಾಮ್ರಾಜ್ಯ ವಿಹರಿಸುವುದಿಲ್ಲ. ಅದೇನಿದ್ದರೂ ತರ್ಕ ಮತ್ತು ಭೌತಿಕ ಸಾಕ್ಷಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಅದು ಬಾಹ್ಯಾಕಾಶವೇ ಆಗಿರಲಿ ಅಥವಾ ಭೂಗರ್ಭ ಶಾಸ್ತ್ರವೇ ಆಗಿರಲಿ, ತುಲನಾತ್ಮಕ ಸಂಶೋಧನೆ, ಕರಾರುವಕ್ಕಾದ ಫಲಿತಾಂಶಗಳು ವಿಜ್ಞಾನವನ್ನು ವಿಜ್ಞಾನವನ್ನಾಗಿಸುತ್ತವೆ. ವಿಕಸಿತ ಭಾರತವು ವಿಜ್ಞಾನ ಕ್ಷೇತ್ರ ಅದರಲ್ಲೂ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಯ ಗುರಿ ಹೊಂದಿದೆ.ಈ ಗುರಿ ಸಾಧನೆಗೆ ಭಾರತದ ಯುವ ಸಮುದಾಯದ ಜ್ಞಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಯುವ ವಿಜ್ಞಾನಿ ದೀಪಕ್ ಎ.ಎಸ್. ಅವರು ವಿಜ್ಞಾನಿಯಾಗುವ ಬಗೆ ಹೇಗೆಂದು ಈ ಲೇಖನದಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ.
ಸಂಪಾದಕೀಯ | ಉನ್ನಾವೋ ಅತ್ಯಾಚಾರ ಪ್ರಕರಣ: ಸಂತ್ರಸ್ತಳೇ ಅಪರಾಧಿಯಾದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶಿಕಾರಿಪುರ: ಹೋರಿ ಹಬ್ಬದ ವೇಳೆ ಹೋರಿ ತಿವಿದು ಯುವಕನಿಗೆ ಗಂಭೀರ ಗಾಯ
ಶಿವಮೊಗ್ಗ : ಹೋರಿ ಹಬ್ಬದಲ್ಲಿ ಹೋರಿ ತಿವಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಸೊರಬ ತಾಲ್ಲುಕು ಮಾವಲಿ ಗ್ರಾಮದಲ್ಲಿ ನಡೆದಿದೆ. ಮಾವಲಿ ಗ್ರಾಮದಲ್ಲಿ ಬುಧವಾರ ಹೋರಿ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹೋರಿ ತಿವಿದು ಶಿಕಾರಿಪುರದ ಆಕಾಶ್ (25) ಗಂಭೀರ ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಟ್ಟ ಮಂಜು, ಕಡಿಮೆ ಗೋಚರತೆಯಿಂದ ವಿಮಾನಗಳ ಕಾರ್ಯಾಚರಣೆಯಲ್ಲಿ ಅಡಚಣೆ : ಪ್ರಯಾಣಿಕರಿಗೆ ಇಂಡಿಗೋ ಎಚ್ಚರಿಕೆ
ಬೆಂಗಳೂರಿನಲ್ಲಿ ದಟ್ಟ ಮಂಜು ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಉತ್ತರ ಭಾರತದಲ್ಲೂ ಹವಾಮಾನ ವೈಪರೀತ್ಯದಿಂದ ವಿಮಾನಗಳ ವೇಳಾಪಟ್ಟಿ ಈಗಾಗಲೇ ತೊಂದರೆಗೊಳಗಾಗಿದೆ. ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ವಿಮಾನಗಳ ಸ್ಥಿತಿಯನ್ನು ಪರಿಶೀಲಿಸಲು ಸೂಚಿಸಿದೆ. ಹಬ್ಬದ ಪ್ರಯಾಣದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಇಂಡಿಗೋ ತನ್ನ ಮೊದಲ ಏರ್ಬಸ್ A321XLR ವಿಮಾನವನ್ನು ಸೇರ್ಪಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.
ಕೊಪ್ಪಳ| ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮನಗೌಡ ಬುನ್ನಟ್ಟಿ ನಿಧನ
ಕನಕಗಿರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತಾಲ್ಲೂಕಿನ ಬುನ್ನಟ್ಟಿ ಗ್ರಾಮದ ಮುಖಂಡ ರಾಮನಗೌಡ ನಾಯಕ ಬುನ್ನಟ್ಟಿ (48) ಗುರುವಾರ ನಿಧನರಾದರು. ರಾಮನಗೌಡ ನಾಯಕ ಅವರು ನವಲಿ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2008ರಲ್ಲಿ ಈ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದಾಗ ನಡೆದ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಗುರುತಿಸಿಕೊಂಡು ಪ್ರಚಾರ ಮಾಡಿದರು. ಸ್ವ ಗ್ರಾಮ ಬುನ್ನಟ್ಟಿಯಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಚಿತ್ರದುರ್ಗ ಬಸ್ ದುರಂತ ಪ್ರಕರಣ: ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ: ಸಿದ್ದರಾಮಯ್ಯ ಘೋಷಣೆ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದು ಬಸ್ನಲ್ಲಿದ್ದ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಬಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ
ಚಿತ್ರದುರ್ಗ ಬಸ್ ದುರಂತ ವೇಳೆ ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ಬಸ್: ಅಪಘಾತದ ಭೀಕರತೆ ವಿವರಿಸಿದ ಕ್ಲೀನರ್
ಚಿತ್ರದುರ್ಗದ ಭೀಕರ ಬಸ್ ಅಪಘಾತದಲ್ಲಿ ಏಕಾಏಕಿ ಡೀಸೆಲ್ ಟ್ಯಾಂಕ್ ನಿಂದ ಬಸ್ಸೆಲ್ಲ ಆವರಿಸಿಕೊಂಡ ಬೆಂಕಿ, ತಕ್ಷಣ ಬಸ್ ಪೂರ್ತಿ ಸ್ಫೋಟಗೊಂಡು ಭಸ್ಮ ಆಗಿದ್ದು, ಅಲ್ಲಿದ್ದವರ ನರಳಾಟ, ಜೀವ ಉಳಿಸಲು ಮಾಡಿದ ಹರಸಾಹದ ಬಗ್ಗೆ ಬಸ್ ಹಿಂದಿದ್ದ ಮತ್ತೊಂದು ಬಸ್ ಚಾಲಕ ವಿವರಿಸಿದ್ದಾರೆ.
ಎಂಟು ವರ್ಷದ ನಂತರ ಭಾರತಕ್ಕೆ ಬಂದ ವಿದೇಶಿಗ…. ಭಾರತದ ಬೆಳವಣಿಗೆ ನೋಡಿ ಶಾಕ್!
ಅಲೋಕ್ ಜೈನ್ ಅವರ ವಿದೇಶಿ ಸ್ನೇಹಿತ ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿನ ಸಂಚಾರ, ವೈದ್ಯಕೀಯ ಸೌಲಭ್ಯ, ಇಂಟರ್ನೆಟ್ ವೇಗ ಮತ್ತು ಮೊಬೈಲ್ ಡೇಟಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಈ ಸೌಲಭ್ಯಗಳು ಅಗ್ಗವಾಗಿವೆ ಎಂದು ಅವರು ಹೇಳಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಭಾರತದ ಸಾರಿಗೆ ವ್ಯವಸ್ಥೆ ಮತ್ತು ಹೆದ್ದಾರಿಗಳಲ್ಲಿ ಭಾರೀ ಸುಧಾರಣೆ ಕಂಡುಬಂದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದ್ವೇಷ, ಹಿಂಸೆಯ ಪ್ರಕರಣಗಳ ಪೈಕಿ ಇತ್ತೀಚಿಗೆ ಬೆಂಗಳೂರಿನಲ್ಲಿ ಅಂಧ ಭಕ್ತಿಯ ಪರಾಕಾಷ್ಠೆಗೆ ತಲುಪಿದ ಕೆಲ ಹಿಂದುತ್ವ ಭಯೋತ್ಪಾದಕರು ದೈನಂದಿನ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಬಡ ವ್ಯಾಪಾರಿಗಳೊಂದಿಗೆ ಧರ್ಮ ದ್ವೇಷದ ಅಮಲೇರಿಸಿಕೊಂಡು ಪುಂಡಾಟಿಕೆ ಮೆರೆದಿರುವ ಕ್ರತ್ಯ ತೀರಾ ಅಮಾನುಷವಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಹೇಳಿದರು. ಜೀವನೋಪಾಯಕ್ಕಾಗಿ ಸಂತಾ ಟೋಪಿ ಮಾರುತ್ತಿದ್ದ ವ್ಯಾಪಾರಿಗಳನ್ನು ಬೆದರಿಸಿ , ವ್ಯಾಪಾರಕ್ಕೆ ನಿರ್ಬಂಧಿಸುವುದು ಭಯೋತ್ಪಾದನಾ ಕೃತ್ಯವಾಗಿದೆ. ಬಿಜೆಪಿ, ಸಂಘಪರಿವಾರದ ಧರ್ಮಾಂಧತೆಯ, ಹಿಂಸಾ ರೂಪಕ ರಾಜಕೀಯ ಯಾವ ರೀತಿ ಸಮಾಜದಲ್ಲಿ ಅರಾಜಕತೆಯನ್ನು ಸ್ರಷ್ಟಿ ಮಾಡುತ್ತಿದೆ ಎಂಬುದಕ್ಕೆ ಪ್ರಸ್ತುತ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಇಂತಹ ಸಮಾಜ ಘಾತುಕ ಶಕ್ತಿಗಳು ದೇಶದ ಸೌಹಾರ್ದತೆಗೆ ಮಾರಕವಾಗಿದ್ದು ಮಾತ್ರವಲ್ಲದೆ ದೇಶದ ಕಾನೂನು ಸುವ್ಯವಸ್ಥೆಯ ಮೇಲೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಇಂತಹ ಪ್ರಕರಣಗಳಿಂದಾಗಿ ದೇಶದ ಹಿರಿಮೆ, ಘನತೆಗೆ ಭಂಗ ಉಂಟಾಗುತ್ತಿದೆ. ಇಂತಹ ಅಲ್ಪಸಂಖ್ಯಾತ ವಿರೋಧಿ ಜನಾಂಗೀಯ ದ್ವೇಷ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸಿ ದೇಶದ ಪ್ರತಿಯೊಬ್ಬ ಪ್ರಜೆಯ ಭದ್ರತೆ, ಸುರಕ್ಷತೆಯನ್ನು ಖಾತರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ದೇವನಹಳ್ಳಿ ಶಾಶ್ವತ ಕೃಷಿ ವಲಯ : ಸಮವರ್ತಿತ ಅಧಿಸೂಚನೆ ಹೊರಡಿಸಲು ಮುಂದಾದ ನಗರಾಭಿವೃದ್ಧಿ ಇಲಾಖೆ
ಬೆಂಗಳೂರು, ಡಿ.24: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ವಿಸ್ತೀರ್ಣದ ಜಮೀನನ್ನು ಶಾಶ್ವತ ಕೃಷಿ ವಲಯ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಘೋಷಣೆ ಮಾಡಿರುವ ಬೆನ್ನಲ್ಲೇ ಇದೀಗ ನಗರಾಭಿವೃದ್ಧಿ ಇಲಾಖೆಯೂ ಈ ಸಂಬಂಧ ಸಮವರ್ತಿತ ಅಧಿಸೂಚನೆ ಹೊರಡಿಸಲು ಮುಂದಾಗಿದೆ. ಶಾಶ್ವತ ಕೃಷಿ ವಲಯ ಎಂದು ರಾಜ್ಯ ಕಾಂಗ್ರೆಸ್ ಸರಕಾರವು ಈಗಾಗಲೇ ಹೊರಡಿಸಿರುವ ಅಧಿಸೂಚನೆಗೆ ಚಿಂತಕರ ವಲಯವೂ ಸಹಿತ ಕೃಷಿಕರಲ್ಲಿಯೂ ಆಕ್ಷೇಪಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆಯೂ ಸಮವರ್ತಿತ ಅಧಿಸೂಚನೆ ಹೊರಡಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಬರೆದಿರುವ ಪತ್ರದ ಮೇಲೆ ‘ಯಾವುದೇ ಕಾರಣಕ್ಕೂ ಭೂ ಬಳಕೆಯ ಬದಲಾವಣೆ ಪ್ರಸ್ತಾವವನ್ನು ಸ್ವೀಕರಿಸಬಾರದು’ ಎಂದು ಷರಾ ನಮೂದಿಸಿದ್ದಾರೆ. ಹಾಗೆಯೇ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನಿನ ಸರ್ವೇ ನಂಬರ್ಗಳಿಗೆ ಸಂಬಂಧಿಸಿ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ನಲ್ಲಿಯೂ ಶಾಶ್ವತ ಕೃಷಿ ವಲಯ ಎಂದು ತುರ್ತಾಗಿ ನಮೂದಿಸಬೇಕು ಎಂದೂ ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಡತದ (UDD/651/BMR/2025- COMPUTER NUMBER 2010668) ಟಿಪ್ಪಣಿ ಹಾಳೆಗಳು he-file.inಗೆ ಲಭ್ಯವಾಗಿವೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು ಶಾಶ್ವತ ಕೃಷಿ ವಲಯ ಪ್ರದೇಶ ಎಂದು ಘೋಷಿಸಲು 2025ರ ಡಿಸೆಂಬರ್ 4ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿತ್ತು. ಈ ತೀರ್ಮಾನ ಹೊರಬಿದ್ದ ಎರಡೇ ಎರಡು ದಿನದಲ್ಲಿ ಅಂದರೆ 2025ರ ಡಿಸೆಂಬರ್ 6ರಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಅಧಿಕೃತ ಆದೇಶ ಹೊರಡಿಸಿತ್ತು. ಇದೇ ಆದೇಶದಲ್ಲಿನ ಸಿ ಭಾಗದಲ್ಲಿ ‘ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ಗುಂಟೆ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರಿಸುವ ಸಲುವಾಗಿ ಶಾಶ್ವತ ಕೃಷಿ ವಲಯ ಎಂದು ಘೋಷಿಸಿದೆ. ನಗರಾಭಿವೃದ್ಧಿ ಇಲಾಖೆಯು ಸಂಬಂಧಪಟ್ಟ ಸಮವರ್ತಿತ ಅಧಿಸೂಚನೆಯನ್ನು ಹೊರಡಿಸಬೇಕು’ ಎಂದು ತಿಳಿಸಿತ್ತು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ನಗರ ಯೋಜನೆಯ 2025ರ ಡಿಸೆಂಬರ್ 22ರಂದು ತಾಂತ್ರಿಕ ಕೋಶದ ಅಭಿಪ್ರಾಯ ಪಡೆಯಲು ಕಡತವನ್ನು ಮಂಡಿಸಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎನ್.ಸೆಲ್ವಕುಮಾರ್ ಅವರೂ ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅವರಿಗೆ 2025ರ ಡಿಸೆಂಬರ್ 12ರಂದೇ ಪತ್ರ ಬರೆದಿದ್ದರು. ‘ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ವಿಸ್ತೀರ್ಣದ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರಿಸುವ ಸಲುವಾಗಿ ಶಾಶ್ವತ ಕೃಷಿ ವಲಯ ಎಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆಯು ಸಮವರ್ತಿತ ಅಧಿಸೂಚನೆ ಹೊರಡಿಸಲು ಮತ್ತು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ನಲ್ಲಿಯೂ ಶಾಶ್ವತ ಕೃಷಿ ವಲಯ ಎಂದು ನಮೂದು ಮಾಡಬೇಕು’ ಎಂದು ಕೋರಿದ್ದರು. ಅದೇ ರೀತಿ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ನಲ್ಲಿಯೂ ಶಾಶ್ವತ ಕೃಷಿ ವಲಯ ಎಂದು ನಮೂದು ಮಾಡಬೇಕು ಎಂದು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸೆಲ್ವಕುಮಾರ್ ಅವರು ಬರೆದಿದ್ದ ಪತ್ರದ ಮೇಲೆ Urgent; Please immediately take steps to issue notification accordingly. No change of land use proposal should be entertained at any cost' ಎಂದು ಷರಾ ನಮೂದಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನ ನ್ನು ಇದರಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅದಕ್ಕೆ ಮುಕ್ತ ಅವಕಾಶವಿದೆ. ಈ ಕುರಿತು ರೈತರು ಅಪಪ್ರಚಾರ, ಗೊಂದಲ ಮತ್ತು ತಪ್ಪು ಕಲ್ಪನೆಗಳಿಗೆ ಕಿವಿಗೊಡಬಾರದು ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಹೇಳಿದ್ದರು. ಚನ್ನರಾಯಪಟ್ಟಣ ಹೋಬಳಿ ಸರಕಾರವು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಹೀಗೆ ಮಾಡುವುದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂಬುದು ಸುಳ್ಳು. ಸರಕಾರದ ಉದ್ದೇಶ ಈ ಕೃಷಿ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಮಾಡುವುದನ್ನು ಹಾಗೂ ರೈತರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುವವರಿಗೆ ಕಡಿವಾಣ ಹಾಕುವುದೇ ಆಗಿದೆ. ತಮ್ಮ ಜಮೀನನ್ನು ಮಾರಾಟ ಮಾಡುವ ರೈತರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಕಸಿದುಕೊಂಡಿಲ್ಲ’ ಎಂದು ಅವರು ವಿವರಿಸಿದ್ದರು. ದೇವನಹಳ್ಳಿ ಸಮೀಪ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ಸರಕಾರಕ್ಕೆ ಈ ಭೂಮಿಯ ಅಗತ್ಯ ಹೆಚ್ಚು ಇತ್ತು. ಆದರೂ ರೈತರ ಬೇಡಿಕೆಯನ್ನು ಪರಿಗಣಿಸಿ, ಇಲ್ಲಿ ಕೃಷಿ ಅಭಿವೃದ್ಧಿಗೆ ತೀರ್ಮಾನಿಸಲಾಗಿದೆ. ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ. ಇಷ್ಟಾದರೂ, ರೈತರು ತಾವಾಗಿಯೇ ಸರಕಾರಕ್ಕೆ ಜಮೀನು ಕೊಡಲು ಮುಂದೆ ಬಂದರೆ ಅದಕ್ಕೂ ಅವಕಾಶವಿದೆ. ಇಂತಹ ಜಮೀನುಗಳಿಗೆ ಭೂ ದರ ನಿರ್ಧಾರ ಸಮಿತಿಯ ತೀರ್ಮಾನದಂತೆ ಪರಿಹಾರ ಕೊಡಲಾಗುವುದು. ಆದರೆ, ಸರಕಾರಕ್ಕೆ ಮಾತ್ರವೇ ಜಮೀನು ಮಾರಾಟ ಮಾಡಬೇಕು ಎಂಬ ಯಾವ ನಿರ್ಬಂಧವೂ ಇಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದರು. ಈ 13 ಗ್ರಾಮಗಳ ಜಮೀನಿನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿನೋಟಿಫೈ ಮಾಡಿ, ಕೃಷಿ ವಲಯವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ವನ್ನಾಗಿ ಮಾಡಿ, ರೈತರಿಗೆ ಹೆಚ್ಚಿನ ಅನುಕೂಲ ಮಾಡಲಾಗಿದೆ. ಜೊತೆಗೆ, ಕೃಷಿ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಸಮಜಾಯಿಷಿ ನೀಡಿದ್ದರು. ಗ್ರಾಮಗಳ ಜಮೀನುಗಳು ಈಗಾಗಲೇ ಹಸಿರು ವಲಯದಲ್ಲಿವೆ. ಇಲ್ಲಿ ಕೈಗಾರಿಕೆ ಬೆಳವಣಿಗೆಗೆ ಸಮಾನಾಂತರವಾಗಿ ಕೃಷಿ ಬೆಳವಣಿಗೆಯೂ ಆಗಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ. ಹೀಗಾಗಿಯೇ ಇದನ್ನು ಶಾಶ್ವತ ವಿಶೇಷ ಕೃಷಿ ವಲಯವನ್ನಾಗಿ ಮಾಡಲಾಗಿದೆ. ಇದರಿಂದಾಗಿ ಇಲ್ಲಿ ಕೃಷಿ ಕ್ಷೇತ್ರಕ್ಕೂ ಬಂಡವಾಳ ಹೂಡಿಕೆ ಹರಿದು ಬರಲಿದೆ ಎಂದು ವಿವರಿಸಿದ್ದರು. ಶಾಶ್ವತ ವಿಶೇಷ ಕೃಷಿ ವಲಯದಲ್ಲಿ ಹೆಚ್ಚು ಇಳುವರಿ ಕೊಡುವ ಬೀಜಗಳು, ಶೀತಲಗೃಹಗಳು, ಸಾವಯವ ಕೃಷಿ, ಆಧುನಿಕ ಕೃಷಿ ತಂತ್ರಜ್ಞಾನ, ಹೈಡ್ರೋಪೋನಿಕ್ಸ್, ಮಣ್ಣು ಮತ್ತು ನೀರಿನ ಉತ್ತಮ ನಿರ್ವಹಣೆ, ನೇರ ಮಾರುಕಟ್ಟೆ ಸೌಲಭ್ಯ, ದಲ್ಲಾಳಿಗಳ ಕಾಟದಿಂದ ಮುಕ್ತಿ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ, ಇ-ಟ್ರೇಡಿಂಗ್ ಮತ್ತು ಡಿಜಿಟಲ್ ಮಾರುಕಟ್ಟೆ, ರೈತರು ಮತ್ತು ಕೃಷಿ ನವೋದ್ಯಮಗಳಿಗೆ ವಿಶೇಷ ತೆರಿಗೆ ರಿಯಾಯಿತಿ/ವಿನಾಯಿತಿ, ಕೃಷಿ-ವಾಣಿಜ್ಯ ಯೋಜನೆಗಳಿಗೆ ತ್ವರಿತ ಅನುಮೋದನೆ, ಕೃಷಿ ಆಧರಿತ ಉದ್ಯಮಗಳ ಬೆಳವಣಿಗೆ, ಕೃಷಿ ಉತ್ಪನ್ನಗಳ ರಫ್ತು ವಹಿವಾಟು, ಉಗ್ರಾಣಗಳ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗ ಇವೆಲ್ಲವೂ ಸಾಧ್ಯವಾಗಲಿವೆ ಎಂದು ಅವರು ಮಾಹಿತಿ ನೀಡಿದ್ದರು. ಈಗಾಗಲೇ ತಮಿಳುನಾಡು, ಛತ್ತೀಸ್ಗಢ, ಉತ್ತರಾಖಂಡ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ರೀತಿಯ ವಿಶೇಷ ಕೃಷಿ ವಲಯಗಳಿವೆ. ಹಾಗೆಯೇ ವಿದೇಶಗಳಲ್ಲಿಯೂ ಇರುವುದನ್ನು ಗಮನಿಸಿದ್ದೇವೆ. ಅಂತಹ ಕಡೆ ರೈತರಿಗೆ ಏನೇನು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನೂ ಸದ್ಯದಲ್ಲೇ ರಚಿಸಲಾಗುವುದು. ಅಂತಹ ಅನುಕೂಲಗಳನ್ನು ಇಲ್ಲೂ ಒದಗಿಸಲಾಗುವುದು ಎಂದು ಅವರು ಹೇಳಿದ್ದನ್ನು ಸ್ಮರಿಸಬಹುದು. ಸರಕಾರವು ಶಾಶ್ವತ ಕೃಷಿ ವಲಯ ಎಂದು ಹೊರಡಿಸಿದ್ದ ಅಧಿಸೂಚನೆಗೆ ಚಿಂತಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದ್ದವು.
ಕರ್ನಾಟಕ ಕಾಂಗ್ರೆಸ್ನ್ನು ಹೊಗಳಿದ ರಾಹುಲ್ ಗಾಂಧಿ; ಇದು ಪ್ರಧಾನಿಯವರ ದೂರದೃಷ್ಟಿ ಎಂದ ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರಿನಲ್ಲಿ ಫಾಕ್ಸ್ಕಾನ್ 30,000 ಮಹಿಳೆಯರನ್ನು ನೇಮಿಸಿಕೊಂಡಿರುವುದನ್ನು ರಾಹುಲ್ ಗಾಂಧಿ ಶ್ಲಾಘಿಸಿ, ಕರ್ನಾಟಕದ ಉದ್ಯೋಗ ಸೃಷ್ಟಿಯ ವಾತಾವರಣವನ್ನು ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವಿನಿ ವೈಷ್ಣವ್, ಇದನ್ನು ಪ್ರಧಾನಿ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದ ಯಶಸ್ಸು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಇದು ಭಾರತದ ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಉತ್ತಮ ಸಂಕೇತವಾಗಿದೆ.
Post Office Offer: ಬರಿ ₹20,000 ಹೊಡಿಕೆಗೆ ಪೋಸ್ಟ್ ಆಫೀಸ್ ನಲ್ಲಿ ಸಿಗುವ ಹಣ ಎಷ್ಟು ಗೊತ್ತಾ?
ನಾವು ಎಷ್ಟೇ ಕಷ್ಟಪಟ್ಟು ದುಡಿದರೂ, ತಿಂಗಳ ಕೊನೆಗೆ ಉಳಿತಾಯ ಮಾಡುವುದು ಕಷ್ಟದ ಕೆಲಸ. ಇನ್ನು ಹರಸಾಹಸ ಪಟ್ಟು ಒಂದಷ್ಟು ಹಣ ಉಳಿಸಿದರೂ, ಅದನ್ನು ಎಲ್ಲಿ ಇಡುವುದು ಎಂಬ ಚಿಂತೆ ಶುರುವಾಗುತ್ತದೆ. ಮನೆಯಲ್ಲಿ ಇಟ್ಟರೆ ಹಣ ಬೆಳೆಯುವುದಿಲ್ಲ, ಶೇರು ಮಾರುಕಟ್ಟೆಗೆ ಹಾಕಿದರೆ ಯಾವಾಗ ಏನಾಗುತ್ತದೋ ಎಂಬ ಭಯ, ಇನ್ನು ಬ್ಯಾಂಕ್ನಲ್ಲಿ ಇಡೋಣ ಎಂದರೆ ಬಡ್ಡಿ ದರ ತೀರಾ ಕಡಿಮೆ ಎನಿಸುತ್ತದೆ. ಹಾಗಾದರೆ ನಿಮ್ಮ ಹಣಕ್ಕೆ ಸಂಪೂರ್ಣ ರಕ್ಷಣೆ ಮತ್ತು ಉತ್ತಮ ಆದಾಯ ಎರಡೂ ಸಿಗುವ ಜಾಗ ಯಾವುದು? ನೀವು ... Read more The post Post Office Offer: ಬರಿ ₹20,000 ಹೊಡಿಕೆಗೆ ಪೋಸ್ಟ್ ಆಫೀಸ್ ನಲ್ಲಿ ಸಿಗುವ ಹಣ ಎಷ್ಟು ಗೊತ್ತಾ? appeared first on Karnataka Times .

22 C